Sunday, November 01, 2009

ಅದುಮಿಕೊಂಡ ಆಸೆ-ಆತಂಕ

B&H ಪ್ರೊಫೆಷನಲ್ ಕ್ಯಾಟಲಾಗ್ ಇಟ್ಟುಕೊಂಡು ಒಂದೊಂದೇ ಕೆಟಗರಿಯನ್ನು ನೋಡುತ್ತಾ ಇದ್ದಂತೆಲ್ಲಾ ಏನೇನ್ನನ್ನೆಲ್ಲ ಮಾಡಬಹುದು ಮಾಡಬಹುದಿತ್ತು ಎನ್ನಿಸಿತು. ಪ್ರೊಫೆಷನ್ ಆಡಿಯೋ, ವಿಡಿಯೋ, ಆಪ್ಟಿಕಲ್, ಕಂಪ್ಯೂಟರ್, ಸ್ಟೋರೇಜ್, ಕ್ಯಾಮೆರಾ...ಹೀಗೆ ವಿಧ ವಿಧವಾದ ವಸ್ತುಗಳನ್ನೆಲ್ಲ ನೋಡುತ್ತಿದ್ದ ಹಾಗೆ, ಅಯ್ಯೋ ಅದನ್ನು ಮಾಡಬಹುದಿತ್ತು, ಇದನ್ನು ಮಾಡಬಹುದಿತ್ತು...ಎನ್ನಬಹುದಾದ ಆಸೆಗಳೆಲ್ಲವೂ ಅದೆಲ್ಲೋ ಅದುಮಿಟ್ಟು ಹೊರಗೆ ಬಿಟ್ಟ ಸ್ಪ್ರಿಂಗಿನಂತೆ ತಮ್ಮೊಳಗಿನ ಪ್ರಚನ್ನ ಶಕ್ತಿಯನ್ನು ತೋರ್ಪಡಿಸತೊಡಗಿದವು.

ಟರ್ಮಿನಲ್ ಕಾಯಿಲೆಗೊಳಗಾದ ಕ್ಯಾನ್ಸರ್ ರೋಗಿಯ ಮನದಾಳದ ಆಸೆಗಳಂತಲ್ಲದಿದ್ದರೂ ಪ್ರತಿಯೊಬ್ಬರಿಗೂ ಅವರವರೊಳಗೆ ಮೂಲೆಗುಂಪು ಮಾಡಿದ ಅದೆಷ್ಟೋ ಮನದಾಳದ ಆಮಿಷಗಳಿದ್ದಾವು: ಅದು ಫೋಟೋ ತೆಗೆಯುವ ಹವ್ಯಾಸವಾಗಿರಬಹುದು, ಚಿತ್ರಕಲೆಯಾಗಿರಬಹುದು, ಸಂಗೀತದ ಸಾಧನೆಯ ವಿಷಯವಾಗಿರಬಹುದು, ಪುಸ್ತಕ ಬರೆದು ಪ್ರಕಟಿಸುವ ಹುನ್ನಾರವಿರಬಹುದು, ನಾಟಕ-ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಇರಬಹುದು, ಮ್ಯಾರಥಾನ ಓಡುವ ಕನಸಿರಬಹುದು, ದೊಡ್ಡ ಉದ್ಯಮಿಯಾಗುವ ಬಯಕೆ ಇರಬಹುದು, ಅಥವಾ ಊರಿನ ಪಂಚಾಯತಿಯ ಮುಖಂಡನೋ ದೊಡ್ಡ ರಾಜಕೀಯ ವ್ಯಕ್ತಿಯೋ...ಇನ್ನೂ ಏನೇನೋ ಕನಸುಗಳಿರಬಹುದು.

ನಮಗೆಲ್ಲ ಹೀಗೆ ಒಂದೊಂದು ಸಾಫ್ಟ್ ಕಾರ್ನರ್ ಇದೆ, ನಮ್ಮ ದಿನನಿತ್ಯದ ಗೊಂದಲವನ್ನು ಬದಿಗಿಟ್ಟು ಯಾವುದಾದರೊಂದು ರಿಸಾರ್ಟ್‌ನ ಹಾಸುಗಲ್ಲಿನ ಮೇಲೆ (ಅಥವಾ ಬೆಂಚ್‌ನ ಮೇಲೆ) ಮಲಗಿ ಅಗಾಧವಾದ ಮುಗಿಲನ್ನು ನೋಡುತ್ತಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾ ಇದ್ದರೆ ಒಂದು ದಿನವೋ ಅಥವಾ ಒಂದು ವಾರದ ನಂತರವಾದರೂ ಹೀಗೆ ಮಾಡಬೇಕು ಅಥವಾ ಮಾಡಬಹುದಿತ್ತು ಎನ್ನುವ ಅನೇಕಾನೇಕ ಯೋಚನೆಗಳು ಖಂಡಿತ ಬಂದೇ ಬರುತ್ತವೆ. ಆಂತೊನಿ ಬೋರ್ಡೇನ್‌ನ ಟ್ರಾವೆಲ್ ಅನುಭವದ ಬಗ್ಗೆ ಬರೆಯುತ್ತಾ ಮರಳುಗಾಡು ನಮಗೆ ಹೇಗೆ ಅತಿ ಅಗತ್ಯವಾದ ಧ್ಯಾನಕ್ಕೆ ತಕ್ಕುನಾದ ನಿಶ್ಯಬ್ದವಾದ ಒಂದು ನೆಲೆಯನ್ನು ಒದಗಿಸುವ ಬಗ್ಗೆ ಬರೆದಿದ್ದೆ. ಒಂದಲ್ಲ ಒಂದು ದಿನ ನಮ್ಮ ನಮ್ಮ ಮನಸ್ಥಿತಿಯನ್ನು ಇಂತಹ ಒಂದು ಸೈಲೆನ್ಸ್‌ಗೆ ಗುರಿಮಾಡಿ ಅದರಿಂದ ಏನು ಹೊರಬಂದೀತು ಎಂದು ಕಾದು ನೋಡುವುದು ಒಳ್ಳೆಯ ಅನುಭವವಾದೀತು.

ನನ್ನ ಹತೋಟಿಯಲ್ಲಿದ್ದ ಒಂದು ಘಂಟೆಯ ಸಮಯದಲ್ಲಿ ಸುಮಾರು ಐನೂರು ಪುಟಗಳ ಕ್ಯಾಟಲಾಗ್ ಅನ್ನು ಸೆಕ್ಷನ್ನ್‌ ನಿಂದ ಸೆಕ್ಷನ್ನ್‌ಗೆ ತಿರುವಿ ಹಾಕಿದ್ದೇ ಬಂತು: ಅದರ ಪರಿಣಾಮವಾಗಿ ನನ್ನ ಕನಸಿನ ರೆಕಾರ್ಡಿಂಗ್ ಸ್ಟುಡಿಯೋಗೆ ಬೇಕಾದ ಪರಿಕರಗಳು ಕಂಡು ಬಂದವು, ಹೆಚ್ಚಿನ ಎಕ್ಸ್‌ಟರ್ನಲ್ ಕಂಪ್ಯೂಟರ್ ಸ್ಟೋರೇಜ್ ಕಾಣಿಸಿತು, ಹಗಲು-ರಾತ್ರಿ ನೋಡಬಹುದಾದ ಬೈನಾಕ್ಯುಲರ್ ಮನದಲ್ಲಿ ಒಂದು ಕ್ಷಣ ನಿಂತಿತು, ಎಲ್ಲಾ ಮ್ಯೂಸಿಕ್ ಚಾನೆಲ್ಲಿನ ಲವಲೇಶಗಳನ್ನೂ ಬಿಡಿಬಿಡಿಯಾಗಿ ಹೊರಗೆ ಹಾಕುವ ಸುಂದರ ಹೋಮ್ ಥಿಯೇಟರ್ ಸಿಸ್ಟಮ್ಮ್‌ಗಳು ಕಂಡು ಬಂದವು, ನೂರೈವತ್ತು-ಇನ್ನೂರು ವ್ಯಾಟ್ ಪವರ್ ಇರುವ ಸ್ಪೀಕರುಗಳು ಕಂಡುಬಂದವು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು.

ಇನ್ನು ಈ ಎಕ್ಸ್‌ಪ್ಲೋರೇಷನ್ನಿನ್ನ ಮುಂದುವರಿದ ಭಾಗವಾಗಿ ಒಂದೆರಡು ಅಂಶಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ರಿಸರ್ಚ್ ಮಾಡಿದ್ದೂ ಆಯಿತು...ಒಂದು ಘಂಟೆಯ ನಂತರ ಪ್ರಚನ್ನ ಶಕ್ತಿಯ ಬಲದಿಂದಾಗಿ ಚಿಮ್ಮಿದ ಆಸೆ-ಆಕಾಂಕ್ಷೆಗಳು ಮತ್ತೆ ಗೂಡು ಸೇರಿಕೊಂಡವು. ಅದು ಮಾಡಬಹುದು-ಇದು ಮಾಡಬಹುದು ಎನ್ನುವ ಹೇಳಿಕೆಯ ಮೊದಲೇ ಅದು ಮಾಡಬೇಕು-ಇದು ಮಾಡಬೇಕು (ಭಾನುವಾರ ಮುಗಿಯುವುದರೊಳಗೆ) ಎನ್ನುವುದು ಬಲವಾಗತೊಡಗಿತು.

***
ಇಲ್ಲಿನ ಕಿರಾಣಿ ಅಂಗಡಿಯಲ್ಲಿ ನೋಡಿ-ಕೇಳಿದ್ದು: ಮಧ್ಯಮ ವಯಸ್ಸಿನ ಕಕೇಷಿಯನ್ ದಂಪತಿಗಳಿಬ್ಬರು ಅಂಗಡಿಯಲ್ಲಿ ಮಾರಟಕ್ಕೆ ಇಟ್ಟ ರಕ್ಕಸಕಳ್ಳಿಯನ್ನು (Aloe-vera) ನೋಡಿ:
"ಇದನ್ನು ಏತಕ್ಕೆ ಮತ್ತು ಹೇಗೆ ಬಳಸುತ್ತಾರೆಂದು ನಿನಗೆ ಗೊತ್ತೇನು?"
"ಇಲ್ಲ..."
"May be we will give it a shot in our next life..."

***
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು!

3 comments:

Lakshmi Shashidhar Chaitanya said...

namaste sir,

With your permission, I would want to quote this article of yours on my blog.

Thanks,

Lakshmi Shashidhar

Satish said...

Lakshmi avare,

Go ahead, you have my permission.

Satish

रामेन्द्र सिंह भदौरिया said...

ಅನ್ತರನ್ಗ್ ಕೆ ಲಿಯೆ ಕುಛ್ ಐಸಾ ಉಪಾಯ್ ಕೀಜಿಯೆ ಕಿ ವಹ್ ಹಿನ್ದೀ ಮೆ ಭೀ ಪಢಾ ಜಾ ಸಕೆ,ಹಮ್ ಆಪಕೆ ಆಭಾರೀ ರಹೆನ್ಗೆ.