Friday, November 30, 2007

ನವೆಂಬರ್ ನೆನಪುಗಳು

ಇನ್ನೇನು ರಾಜ್ಯೋತ್ಸವ ಮಾಸ ಕಳೀತಾ ಬಂತು, ಆದರೆ ಕನ್ನಡಿಗರ ರಾಜಕೀಯ ಆಶೋತ್ತರಗಳು ಚಿಗುರೊಡೆಯುವುದೇನಿದ್ದರೂ ಮುಂದಿನ ವರ್ಷವೇ ಗತಿ ಎನ್ನುವ ಹಾಗೆ ದುತ್ತನೇ ಆವರಿಸಿದ ರಾಜಕಾರಣಿಗಳ ಅಜ್ಞಾತವಾಸ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಎಂದೂ ನೋಡದಿದ್ದ ಉದಯ ಟಿವಿ ನ್ಯೂಸ್ ಅನ್ನೂ ಸೋಫಾದ ತುದಿಯಲ್ಲಿ ಕುಳಿತು ನೋಡುವಂತೆ ಮಾಡಿದ್ದು ಈ ವರ್ಷದ ಸೋಜಿಗಗಳಲ್ಲಿ ಒಂದು! ಅವರು ಬಿಟ್ಟು ಇವರು ಬಿಟ್ಟು ಇವರ್ಯಾರು ಎಂದು ಕೇಳಿದ ರಾಜಕೀಯ ಧುರೀಣರು ಕೊನೆಗೆ ಅಧಿಕಾರವನ್ನು ವಹಿಸಿಕೊಟ್ಟಿದ್ದು ಮತ್ತೆ ರಾಜ್ಯಪಾಲರಿಗೇ. ಅದೆಷ್ಟು ಪಕ್ಷಗಳು, ಅದೆಷ್ಟೇ ಪಕ್ವವಾದ ತಲೆಗಳು, ಸಿದ್ಧಾಂತಗಳಿದ್ದರೂ ನಮ್ಮ ರಾಜಕೀಯ ಅಧೋಗತಿ ಎಲ್ಲರ ಮುಂದೆ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿತ್ತು ಎನ್ನುವುದು ನಿಜ, ಇಲ್ಲವೆಂದಾದರೆ ಆಫೀಸಿನಲ್ಲಿ ಎಂದೂ ನನ್ನೊಡನೆ ರಾಜಕೀಯದ ಬಗ್ಗೆ ಚಕಾರವೆತ್ತದ ತೆಲುಗು ಸ್ನೇಹಿತರು, ’ಏನಯ್ಯಾ, ನಿಮ್ಮ ಮುಖ್ಯಮಂತ್ರಿಗಳಿಗೆ ಬೇಧಿ ಹಿಡಿದ ಹಾಗಿದೇ!’ ಎಂದು ಕುಚೋದ್ಯವನ್ನು ಮಾಡುತ್ತಿದ್ದರೇಕೆ?

***

ಮೊದಲೆಲ್ಲಾ ಹಿತ್ತಲಿನಲ್ಲಿ ಬಿದ್ದ ದರಲೆಗಳನ್ನು ಒಟ್ಟು ಮಾಡಿ ಬಚ್ಚಲು ಒಲೆ ತುಂಬಿಸಿ ಮೈ ಹಾಗೂ ನೀರು ಕಾಯಿಸಿಕೊಳ್ಳುತ್ತಿದ್ದ ನನಗೆ ಈಗ ದರಲೆಗಳನ್ನು ಟ್ರ್ಯಾಷ್ ರೂಪದಲ್ಲಿ ತುಂಬಿ ಚೀಲ ಕಟ್ಟಿಡುವುದೋ ಅಥವಾ ಮರಗಳ ಬುಡಕ್ಕೆ ತಳ್ಳುವುದೋ ಒಂದು ಹೊಸ ಅಭ್ಯಾಸ. ಹಗಲಿರದ ಛಳಿ ಸಂಜೆ ಅದೆಲ್ಲಿಂದಲೋ ದೂರದಿಂದ ಬಂದ ನೆಂಟನ ಹಾಗೆ ಮನೆ ತುಂಬಿಕೊಂಡಿದ್ದನ್ನು ನೋಡಿ, ತಕ್ಷಣ ಫೈರ್ ಪ್ಲೇಸ್‌ಗೆ ಕಟ್ಟಿಗೆಯನ್ನು ತುಂಬಿಸಿ ಬೆಂಕಿ ಹೊತ್ತಿಸಲು ಕಾತರನಾದೆ. ಒಂದೊಂದು ಕಟ್ಟಿಗೆಗೆ ಮತ್ತೊಂದು ಕಟ್ಟಿಗೆಯನ್ನು ಕ್ರಾಸ್ ಆಗಿ ಇಟ್ಟು ಬೆಂಕಿ ಹೊತ್ತಿಸಿದ ಹುಮ್ಮಸ್ಸಿನಲ್ಲಿ ಅದರ ಕಿಡಿ ಕಾವಿಗೆ ಇದು, ಇದರ ಕಿಡಿ ಕಾವಿಗೆ ಅದು ಎನ್ನುವ ಪೈಪೋಟಿಯಲ್ಲಿ ಒಂದರ ಬೆಂಕಿಗೆ ಮತ್ತೊಂದು ಸಿಕ್ಕು ಹೊತ್ತಿಕೊಂಡು ಉರಿಯುವುದನ್ನು ನೋಡುವುದು ರೋಚಕವಾಗಿತ್ತು. ’ಕೆಟ್ಟ ಗುಣ ಅನ್ನೋದು ಬೆಂಕಿ ಇದ್ದ ಹಾಗೆ ಕಣೋ, ಅದು ತಾನಿದ್ದ ಜಾಗವನ್ನು ಮೊದಲು ಸುಡುತ್ತದೆಯಂತೆ’ ಎಂಬ ನಮ್ಮಮ್ಮನ ಅಣಿಮುತ್ತುಗಳು ಬೇರೆ ಮನಃಪಟಲದಲ್ಲಿ ಹಾದುಹೋದವು. ಮೊದಮೊದಲು ನೋಡಲು ಗಟ್ಟಿಮುಟ್ಟಾಗಿದ್ದ ಬೊಡ್ಡೆಗಳು ಬೆಂಕಿಯ ಉರಿಗೆ ಸಿಕ್ಕು ಮೆದಗರಾದಂತಾಗಿ ಕಂಡು, ಉರಿಯುತ್ತಲೇ ನಿಗಿನಿಗಿ ಕೆಂಡಗಳನ್ನು ಪ್ರದರ್ಶಿಸಿ ತನ್ನ ವಿರೋಧಿ ಕಟ್ಟಿಗೆಗಳನ್ನಿರಲಿ ಬೆಂಕಿಯ ಜ್ವಾಲೆಯನ್ನೇ ಕೆಂಗಣ್ಣಿನಿಂದ ನೋಡಿ ಹೆದರಿಸುವಂತೆ ಕಂಡುಬಂದರೂ, ಕೊನೆಗೆ ಕೆಂಪನೆ ಕೆಂಡ ಉಳಿಸಿದ್ದು ಕಪ್ಪು ಇದ್ದಿಲು ಹಾಗೂ ಬಿಳಿ ಬೂದಿಯನ್ನೇ ಹೊರತು ಮತ್ತೀನೇನಲ್ಲ. ಇಷ್ಟು ಹೊತ್ತು ಶಕ್ತಿ ಪ್ರದರ್ಶನ ಮಾಡಿದ ಕಟ್ಟಿಗೆ ಬೊಡ್ಡೆಗಳು ಬೆಂಕಿಯ ಕಾವಿಗೆ ಕಾದು ಒಂದು ಘಂಟೆಯ ಆಸುಪಾಸಿನಲ್ಲಿ ಪೈರ್‌ಪ್ಲೇಸ್ ಖಾಲಿಯಾಗುವಂತೆ ಉರಿದು ಬೂದಿಯಾಗಿ ಹೋದವು. ಹಾಗೆ ಉರಿದ ಅದೆಷ್ಟೋ ಬೊಡ್ಡೆಗಳನ್ನು ನೋಡಿ ತನ್ನಷ್ಟಕ್ಕೆ ತಾನೇ ಋಷಿಗಳ ಮೌನವನ್ನು ತಾಳಿಕೊಂಡು ಬಿಸಿಯಿಂದ ತಣ್ಣಗಿನ ವಾತಾವರಣಕ್ಕೆ ಸಂಕ್ರಮಣಗೊಳ್ಳುತ್ತಿದ್ದ ಫೈರ್‌ಪ್ಲೇಸಿನ ಗೋಡೆಗಳಲ್ಲಿ ಭದ್ರವಾಗಿ ಕುಳಿತ ಟೈಲ್‌ಗಳು ಯಾವುದೇ ಮನೋಭಾವವನ್ನು ಹೊರಕ್ಕೆ ಪ್ರಸ್ತುತಪಡಿಸುತ್ತಿರಲಿಲ್ಲ ಎನ್ನುವುದು ನನ್ನ ಗಮನಕ್ಕೂ ಬಂತು. ಉರಿದು ಹೋದ ಬೊಡ್ಡೆಗಳು ಈಗ ಇತಿಹಾಸ, ನಾಳಿನ ದಿನಕ್ಕೆ ಒಡ್ಡಲು ಇನ್ನಷ್ಟು ಕಟ್ಟಿಗೆಗಳನ್ನು ಈಗಾಗಲೇ ಕೂಡಿಸಿಟ್ಟಿದ್ದೇನೆ ಎನ್ನುವ ನೆನಪು ಬಂದಿದ್ದೇ ತಡ, ನನ್ನ ಮನಸ್ಸಿನಲ್ಲಿ ಹುಮ್ಮಸ್ಸು ಇಮ್ಮಡಿಯಾಯಿತು.

***

ನೀವು ಈವರೆಗೆ ನೋಡಿರದಿದ್ದರೆ maps.live.com ನೋಡಿ, ಉತ್ತರ ಅಮೇರಿಕದ ಜನಪ್ರಿಯ ಸ್ಥಾನಗಳನ್ನು ಅದರಲ್ಲಿ ಒಮ್ಮೆ ವೀಕ್ಷಿಸಿ ಆಗ ಗೊತ್ತಾಗುತ್ತದೆ ತಂತ್ರಜ್ಞಾನ ಎಷ್ಟೊಂದು ಬೆಳೆದಿದೆಯೆಂದು. ನನ್ನ ಸ್ನೇಹಿತನೊಬ್ಬ ಹೇಳಿದನೆಂದು ನಾನು ನ್ಯೂ ಯಾರ್ಕ್ ನಗರದ ಹತ್ತಿರದ ಕೆಲವೊಂದು ಸ್ಥಳಗಳನ್ನು ಖುದ್ದಾಗಿ ನೋಡಿ ದಂಗುಬಡಿದಂತಾದೆ, ಅದರಲ್ಲಿನ Bird's eye ವ್ಯೂವ್ ನಲ್ಲಿ ಎಷ್ಟೊಂದು ಸುಂದರ ಹಾಗೂ ಸ್ಪಷ್ಟವಾಗಿ ಈ ಸ್ಥಳಗಳು ಕಾಣುತ್ತಿದ್ದವೆಂದರೆ ನನ್ನ ಕಣ್ಣುಗಳನ್ನು ನಾನೇ ನಂಬದವನಾದೆ. ಗೂಗಲ್ ಅರ್ಥ್ ಇದರ ಮುಂದೆ ಏನೇನೂ ಅಲ್ಲ ಎನ್ನುವಂತಿತ್ತು, ಜೊತೆಗೆ ಬೇಕಾದ ಪಾಪ್ಯುಲರ್ ಡೆಸ್ಟಿನೇಷನ್ನುಗಳನ್ನು ನಾನು ಯಾವ ದಿಕ್ಕು/ಕೋನದಲ್ಲಿ ತಿರುಗಿಸಿ ಬೇಕಾದರೂ ನೋಡಬಹುದು. ನನ್ನ ಸ್ನೇಹಿತನೊಬ್ಬನ ಮನೆಯ ಮುಂದಿನ ನಿಂತ ಕಾರಿನ ಮೇಕ್ ಮಾಡೆಲ್ ಗೊತ್ತಾಗುವಷ್ಟರ ಮಟ್ಟಿಗೆ ಚಿತ್ರ ಸ್ಪಷ್ಟವಾಗಿತ್ತು ಎನ್ನುವುದು ಅತಿಶಯೋಕ್ತಿಯೇನಲ್ಲ.

***

ರಜೆಯ ಗುಂಗು ಈಗಾಗಲೇ ಬಂದಂತಾಗಿದೆ, ಆಫೀಸಿನಲ್ಲಿ ಜನ ಸಂದಣಿ ಕಡಿಮೆ ಆಗುತ್ತಿರುವಂತೆ ತೋರುತ್ತಿದೆ, ನನಗೂ ಬೇಕಾದಷ್ಟು ರಜೆಗಳು ಹಾಕದೇ ಬಿದ್ದಿರೋದರಿಂದ ಒಂದಿಷ್ಟು ರಜೆ ತೆಗೆದುಕೊಳ್ಳೋಣವೆಂದರೆ ಯಾರಿಗೂ ಬೇಡವಾದ ಕೆಲಸ ಹಾಗೂ ಜವಾಬ್ದಾರಿಗಳು ನನಗೇ ಬಂದು ತಗುಲಿಕೊಳ್ಳಬೇಕೆ? ಕೆಲಸ ಮಾಡುತ್ತಿದ್ದರೆ ರಜೆಗಳು ಬೇಕಾಗುತ್ತವೆ, ಕೆಲಸವೇ ಇಲ್ಲದಿದ್ದರೆ ರಜೆಗಳು ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವುದು ಹಿಂದಿನ ತರ್ಕವಾಗಿತ್ತು. ಇತ್ತೀಚೆಗೆ ರಜೆಗಳು ಇದ್ದರೂ ತೆಗೆದುಕೊಳ್ಳದೇ ಕೆಲಸವನ್ನು ಮಾಡಿಕೊಂಡೇ ಇರಬೇಕಾದ್ದು ಇರೋ ಅನಿವಾರ್ಯಗಳಲ್ಲಿ ಒಂದು.

Tuesday, November 27, 2007

ದಾರೇಶ್ವರಿ ಎಂಬ ಜೊತೆಗಾತಿ

13% of 226 ಎಷ್ಟು ಎನ್ನೋ ಲೆಕ್ಕಗಳನ್ನು ಮೊದಲೆಲ್ಲಾ ನಾವು ತಲೆಯಲ್ಲೇ ಲೆಕ್ಕ ಮಾಡಿಕೊಳ್ಳುತ್ತಿದ್ದೆವು, ಇತ್ತೀಚೆಗಂತೂ ಅದೇನ್ ಆಗ್ತಾ ಇದೆಯೋ ಗೊತ್ತಿಲ್ಲ ತಲೆ ದಡ್ಡು ಬಿದ್ದು ಹೋಗಿದ್ದು ನನ್ನ ಆಫೀಸಿನ ಮೇಜಿನ ಮೇಲೆ ಯಾವಾಗ್ಲೂ ಒಂದು ಕ್ಯಾಲ್ಕುಲೇಟರ್ ಬಾಯಿ ತೆಗೆದುಕೊಂಡು ಬಿದ್ದೇ ಇರುತ್ತೆ. ಪರ್ಸೆಂಟ್ ಕ್ಯಾಲ್ಕುಲೇಷನ್ ಇರ್ಲಿ, ಉಳಿದೆಲ್ಲ ಸರಳ ಲೆಕ್ಕಗಳಿಗೂ ನಾನು ಕ್ಯಾಲ್ಕುಲೇಟರ್ ಮೊರೆ ಹೋದಾಗಲೇ ನನಗೂ ವಯಸ್ಸಾದ ಬಗ್ಗೆ ಗ್ಯಾರಂಟಿ ಆಗಿತ್ತು. ವಯಸ್ಸಾಗೋದಕ್ಕೂ ಮನಸ್ನಲ್ಲೇ ಲೆಕ್ಕಾ ಮಾಡ್ದೇ ಇರೋದಕ್ಕೂ ಏನ್ ಸಂಬಂಧಾ ಅಂತ ನೀವ್ ತಲೆ ತುರಿಸಿಕೊಳ್ಳೋಲ್ಲ ಅಂತ ನನಗೂ ಗೊತ್ತು, ’ಎಲ್ಲದಕು ಕಾರಣನು ಈ ಸೋಮಾರಿ ಪರಮಾತ್ಮಾ’ ಎಂಬು ಬಭ್ರುವಾಹನ ಶೈಲಿಯಲಿ ನುಡಿದು ಅದಕ್ಕಿನ್ನೊಂದು ಕೊಂಕನ್ನು ಸೇರಿಸಿಕೊಳ್ಳಬಹುದು ನೋಡಿ.

ಈ ನನ್ನ ಗ್ಯಾಡ್ಜೆಟ್ಟುಗಳ ಲಿಸ್ಟಿಗೆ ಹೊಸದಾಗಿ ಸೇರಿಕೊಂಡ ಪುಣ್ಯಾತ್‌ಗಿತ್ತೀನೇ ದಾರೇಶ್ವರಿ. ನನ್ನ ಸ್ನೇಹಿತರೊಬ್ಬರು ಅವರ ಬಳಿ ಇರೋ ಎಲೆಕ್ಟ್ರಾನಿಕ್ ವಸ್ತುಗಳನ್ನೆಲ್ಲ ’ಣಿ’ ಯಿಂದ ಅಂತ್ಯಗೊಳ್ಳುವಂತೆ ಹೆಸರಿಟ್ಟುಕೊಂಡು ಮನಪೂರ್ವಕವಾಗಿ ಅವುಗಳ ಜೊತೆ ಸಂಭಾಷಣೆ ನಡೆಸುತ್ತಿದ್ದುದನ್ನು ನೋಡಿದ ನಂತರ ನಾನು ನನ್ನ ಬಳಿ ಇರುವ ವಸ್ತುಗಳನ್ನೆಲ್ಲ ’ಏಶ್ವರಿ’ಯಿಂದ ಅಂತ್ಯಗೊಳ್ಳುವ ಹೆಸರಿಟ್ಟು ಕರೆಯುವುದು ಮನವರಿಕೆಯಾಯಿತು. ಉದಾಹರಣೆಗೆ, MP3 ಪ್ಲೇಯರ್ ಸಿಂಗಿಣಿ, ಸಿಂಗೇಶ್ವರಿಯರಾದರೆ, ಡೇಟಾ ಸ್ಟೋರ್ ಮಾಡುವ ಮೀಡಿಯಮ್‍ಗಳು (USB drive) ಸ್ಟೋರಿಣಿ, ಸ್ಟೋರೇಶ್ವರಿಯರಾಗಬಹುದು. ಅದೇ ರೀತಿ ಹೆಜ್ಜೆ ಹೆಜ್ಜೆಗೆ ನಮ್ಮ ದಾರಿಯನ್ನು ಕಾಯ್ದುಕೊಂಡು ದಾರಿ ತೋರಿಸುವ GPS Navigator ಸಿಸ್ಟಮ್ ದಾರಿಣಿ, ದಾರೇಶ್ವರಿಯರಾಗುತ್ತಾರೆ!

ಮೊದಲೆಲ್ಲಾ ಈ ಆನ್‌ಲೈನ್ ಮ್ಯಾಪ್‌ಗಳೆಲ್ಲ ಬರುವುದಕ್ಕಿಂತ ಮುನ್ನ ಡ್ರೈವಿಂಗ್ ಹೇಗೆ ಮಾಡುತ್ತಿದ್ದಿರಿ ಎಂದು ಎಷ್ಟೋ ಜನರನ್ನು ಕೇಳಿದ್ದೇನೆ, ಆಗ ಇನ್ನೂ ಸೆಲ್/ಮೊಬೈಲ್ ಫೋನ್ ಕೂಡಾ ಇರದಿದ್ದ ಕಾಲ. ಜನರು ಮನೆ ಬಿಡುವ ಮೊದಲೇ ತಾವು ತಲುಪಬೇಕಾದ ಸ್ಥಳ, ಕ್ರಮಿಸ ಬೇಕಾದ ದಾರಿಯ ಬಗ್ಗೆ ಮೊದಲೇ ತಿಳಿದುಕೊಂಡೋ ಬರೆದುಕೊಂಡೋ ಹೋಗುತ್ತಿದ್ದರಂತೆ. ಮಧ್ಯೆ ಎಲ್ಲಾದರೂ ದಾರಿ ತಪ್ಪಿದರೆ ಅಲ್ಲಲ್ಲಿ ಸಿಗುವ ಗ್ಯಾಸ್ ಸ್ಟೇಷನ್ನುಗಳಲ್ಲಿ ದಾರಿ ಕೇಳುವುದಾಗಲೀ ಪೇ ಫೋನ್‌ನಿಂದ ಕರೆ ಮಾಡುವುದಾಗಲೀ ಸಾಮಾನ್ಯವಾಗಿತ್ತಂತೆ. ಆದರೆ ಈಗೆಲ್ಲ ಕಾಲ ಬದಲಾಗಿದೆ, ನಿನ್ನೆ ಮೊನ್ನೆಯವರೆಗೆ ನಾನೂ ಸಹ ಆನ್‌ಲೈನ್ ಮ್ಯಾಪ್‌ಗಳಲ್ಲಿ ದಾರಿಯನ್ನು ಗುರುತಿಸಿಕೊಂಡೋ ಅಥವಾ ಪ್ರಿಂಟ್ ಹಾಕಿಕೊಂಡು ಮನೆ ಬಿಡುತ್ತಿದ್ದವನು ಈ ಎರಡು ಮೂರು ದಿನಗಳಲ್ಲಿ ಪರಿಚಯವಾದ ದಾರೇಶ್ವರಿಗೆ ಸಂಪೂರ್ಣ ಶರಣಾಗಿ ಹೋಗಿದ್ದೇನೆ. ಆಕೆಯದ್ದೇ ಆದ ’ನಯ’ವಾದ ಧ್ವನಿಯಲ್ಲಿ ’ಅಲ್ಲಿ ತಿರುಗು, ಇಲ್ಲಿ ತಿರುಗು’ ಎಂದು ಸದಾ ಆದೇಶಿಸುವ ಉಪದೇಶಿಸುವ ಈ ಜೊತೆಗಾತಿ ಯಾವುದಾದರೂ ದೊಡ್ಡ ಕೆರೆಗೆ ನನ್ನ ಕಾರನ್ನೆಲ್ಲಾದರೂ ಹಾಯಿಸಿ ಬಿಡುತ್ತಾಳೋ ಅಥವಾ ದೊಡ್ಡ ಸೇತುವೆಯೊಂದರಿಂದ ಹಾರುವಂತೆ ಹೇಳುತ್ತಾಳೋ ಎಂದು ಒಮ್ಮೊಮ್ಮೆ ಹೆದರಿಕೆಯಾದರೂ ಅಂಗೈನಲ್ಲಿ ಉಪಯೋಗಕ್ಕೆ ಬರಬಹುದಾದ ಹೊಸ ತಂತ್ರಜ್ಞಾನವನ್ನು ನೋಡಿ ನಾನಂತೂ ಬೆರಗಾಗಿ ಹೋಗಿದ್ದೇನೆ. ನನಗೆ ನಾನು ಹೋಗಬೇಕಾದ ದಾರಿ ಗೊತ್ತಿದ್ದರೂ ಅಕ್ಕಪಕ್ಕದ ರಸ್ತೆಗಳು, ಅಲ್ಲಲ್ಲಿ ಸಿಗಬಹುದಾದ ಸ್ಥಳೀಯ ಅಟ್ರಾಕ್ಷನ್ನುಗಳನ್ನು ನೋಡೋದಕ್ಕಾದರೂ ದಾರೇಶ್ವರಿಯನ್ನು ಕಾರಿನಲ್ಲಿ ಕೊಂಡೊಯ್ಯುತ್ತೇನೆ.

ನಾವು ಹೋದಲೆಲ್ಲ ನಮ್ಮ ಕಾರಿಗೆ ಅಂಟಿಕೊಂಡಂತಹ ಒಂದು ಉಪಗ್ರಹ ಸಂವಾದೀ ಎಳೆ, ಅದು ನಾವು ಹೋದ ದಿಕ್ಕನ್ನು ತೋರಿಸುತ್ತೆ, ನಮ್ಮ ವೇಗದ ಇತಿ-ಮಿತಿಗಳನ್ನು ಅಳೆಯುತ್ತೆ, ನಾವು ಹೋಗಿ ಬಂದದ್ದೆಲ್ಲವನ್ನು ಟ್ರೇಸ್ ಮಾಡುತ್ತೆ, ಎಲ್ಲೇ ತಪ್ಪಿಸಿಕೊಂಡರೂ ನಮ್ಮನ್ನು ಸುಸ್ಥಿತಿಗೆ ತಂದು ನಿಲ್ಲಿಸುವ ಪಣವನ್ನು ಹೊತ್ತುಕೊಂಡಿರುತ್ತೆ ಎನ್ನುವುದನ್ನು ಕೇಳಿಯೇ ಪುಳಕಗೊಂಡಿದ್ದ ನಾನು, ಮೊದಮೊದಲ ದಾರೇಶ್ವರಿಯ ಬಳಕೆಯಿಂದಲೇ ಕೃತಾರ್ಥನಾಗಿ ಹೋದೆ. ಇನ್ನು ಮೇಲೆ ಕತ್ತನ್ನು ಮೇಲೆತ್ತಿ ಮುಗಿಲನ್ನು ನೋಡಿ ದಿಕ್ಕನ್ನು ಹೇಳುವ ಬದಲು ನನ್ನ ಪಕ್ಕದಲ್ಲಿ ಉಪಸ್ಥಿತಳಿರುವ ದಾರೇಶ್ವರಿಗೆ ಒಂದು ಓರೆನೋಟವನ್ನು ಕೊಟ್ಟರೆ ಸಾಕು ಆಕೆ ಎಲ್ಲವನ್ನೂ ಹೇಳಿಬಿಡುತ್ತಾಳೆ. ಎಲ್ಲೆಲ್ಲಿ ಯಾವ ಯಾವ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಿದೆ ಎಂದು ರೇಡಿಯೋವನ್ನು ಕೇಳಿ ತಿಳಿದುಕೊಳ್ಳುವ ಬದಲು ದಾರೇಶ್ವರಿ ನೀನೇ ಗತಿ ಎಂದು ಆಕೆಗೆ ಮೊರೆ ಹೋದರೆ ಸಾಕು, ಎಲ್ಲವನ್ನು ಸುಲಲಿತವಾಗುವಂತೆ ಮಾಡುತ್ತಾಳೆ. ಮಧ್ಯೆ ಎಲ್ಲಾದರೂ ದಾರಿ ತಪ್ಪಿಸಿಕೊಂಡರೆ, ಹೆಚ್ಚು ಟ್ರಾಫಿಕ್ ಇರುವುದನ್ನು ತಪ್ಪಿಸಿ ಬೇರೆ ದಾರಿಯಲ್ಲಿ ಹೋಗಬೇಕೆಂದರೆ ಮತ್ತೆ ದಾರೇಶ್ವರಿಯೇ ಸಹಾಯ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿಬಿಟ್ಟಿದ್ದಾಳೆ.

ಅದ್ಯಾವ ಉಪಗ್ರಹವೋ ಅದೆಲ್ಲಿದೆಯೋ ಅದನ್ನು ಯಾರು ಎಂದು ಹಾರಿಬಿಟ್ಟಿದ್ದಾರೋ ಯಾರು ಬಲ್ಲರು? ನಾನು ಕೊಟ್ಟ ಕೆಲವೇ ಕೆಲವು ನೂರು ಡಾಲರುಗಳ ಬೆಲೆಗೆ ಹಾಗೂ ಜೀವನ ಪರ್ಯಂತ ಬ್ಯಾಟರಿ ಚಾರ್ಜ್ ಮಾಡಿ ಹೊಟ್ಟೆ ತುಂಬಿಸುತ್ತೇನೆ ಎನ್ನುವ ಆಶ್ವಾಸನೆಗೆ ನನಗೆ ಸಿಕ್ಕ ಮೌಲ್ಯ ದೊಡ್ಡದೇ. ಕ್ಯಾಲ್ಕುಲೇಟರನ್ನು ಬಳಸುವ ಮಂದಿ ಒಂದು ರೀತಿ ಸ್ನಾನಕ್ಕೆ ಬಿಸಿ ನೀರು ಸಿಕ್ಕರೂ ತಣ್ಣೀರನ್ನೇ ಮಾಡುತ್ತೇವೆ ಎಂದು ಹಠ ತೊಟ್ಟವರ ಹಾಗಿನವರು ಎನ್ನುವುದು ನನ್ನ ಸಿದ್ಧಾಂತಗಳಲ್ಲೊಂದು, ಹಾಗೆಯೇ ದಾರೇಶ್ವರಿಯಂಥವರನ್ನು ಬಳಸದೇ ಮುಗಿಲ ಮಾರಿಯನ್ನು ನೋಡಿ ಪ್ರಯಾಣ ಬೆಳೆಸುತ್ತೇವೆ ಎನ್ನುವವರೂ ಅಷ್ಟೇ ಕಟ್ಟು ನಿಟ್ಟಿನ ಉಗ್ರರು. ಬರೀ ದಾರಿ ತೋರಿಸುವ ದಾರೇಶ್ವರಿಯಷ್ಟೇ ಅಲ್ಲ, ಅಕೆಯಲ್ಲೂ ಇನ್ನೂ ಅನೇಕಾನೇಕ ಮರ್ಮಗಳಿವೆಯಂತೆ, ಆಕೆಯ ಒಡಲಿನಲ್ಲಿ ಒಂದು ಕಾದಂಬರಿಯ ಆಡಿಯೋವನ್ನು ಹಾಕಿದ್ದೇ ಆದರೆ ಅದನ್ನೂ ದಾರಿ ಉದ್ದಕ್ಕೂ ಬೊರ್ ಹೊಡೆಸದಂತೆ ಓದಿ ಹೇಳುತ್ತಾಳಂತೆ! ಮಧ್ಯೆ ಪೆಟ್ರೋಲ್ ಖಾಲಿ ಆದರೆ, ಹೊಟೇಲ್ ಬೇಕಾದರೆ, ಬ್ಯಾಂಕಿಗೆ ಹೋಗಬೇಕೆಂದೆನಿಸಿದರೆ ಅವು ಎಲ್ಲದರ ವಿಳಾಸ ಹಾಗೂ ಫೋನ್ ನಂಬರನ್ನೂ ಆಕೆ ಬಲ್ಲಳಂತೆ. ಯಾವುದೇ ಅಡ್ರಸ್ಸನ್ನು ಸ್ವಲ್ಪ ತೋರಿಸಿದರೂ ಸಾಕು, ಸು ಎಂದರೆ ಸುಕ್ಕಿನುಂಡೆ ಎನ್ನುವ ಹಾಗೆ ಆಕೆ ಸಂಪೂರ್ಣ ವಿಳಾಸವನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ Go! ಎನ್ನುವ ಹಸಿರು ನಿಶಾನೆಯನ್ನು ಮುಖದ ಮೇಲೆ ಬಿಂಬಿಸಿ ನಗುತ್ತಾಳಂತೆ!

ಈ ದಾರೇಶ್ವರಿಯ ಮೋಡಿಗೆ ನಾನಂತೂ ಒಂದೇ ದಿನದಲ್ಲಿ ಬಿದ್ದು ಹೋಗಿದ್ದೇನೆ, ಇದುವರೆಗೆ ಮಾಡಿರದಿದ್ದರೆ ನೀವೂ ಈ ಈಶ್ವರಿ, ಇಂಗಿಣಿಯರ ಸಹವಾಸ ಮಾಡಿ ನೋಡಿ ನಾನು ಹೇಳುತ್ತಿರುವುದು ಉತ್ಪ್ರೇಕ್ಷೆಯಂತೂ ಅಲ್ಲವೇ ಅಲ್ಲ!

Sunday, November 25, 2007

ಅನುಭವ ಅಮೃತವಾದದ್ದು ಯಾವಾಗ?

ಅನುಭವಗಳು ಅನ್ನೋದರ ದೊಡ್ಡಸ್ತಿಕೆ ಏನು ಅಂದ್ರೆ ಎಲ್ರೂ ಅಂದ್ಕೊಳ್ಳೋ ಹಾಗೆ ನಮಗೆ ಆಯಾ ವಿಷಯದ ಬಗ್ಗೆ ಆಳವಾಗಿ ಗೊತ್ತಿರೋದು ಅಥವಾ ನಮ್ಮದೇ ಆದ ಒಂದು ಪ್ರಯತ್ನ ಜೊತೆಗೆ ಸೇರಿ ಉಳಿದವರಿಗೆ ಆಯಾ ಕೆಲಸದ ಬಗ್ಗೆ ಏನೇನು ತಿಳಿದಿಲ್ಲವೋ ಅದರ ಬಗ್ಗೆ ತಕ್ಕಮಟ್ಟಿಗೆ ನಮಗೆ ತಿಳಿದಿರೋದು. ಅದೇ ಈ ಅನುಭವದ ಅಡಿಯಲ್ಲಿನ ವಿಷಾದವನ್ನು ಹೆಚ್ಚು ಜನ ಗುರುತಿಸಿದ ಹಾಗೇ ಕಾಣಿಸೋದಿಲ್ಲ, ನನ್ನ ಅನಿಸಿಕೆ ಪ್ರಕಾರ ಒಬ್ಬ ವ್ಯಕ್ತಿಗೆ ಅನುಭವಗಳು ಆಗಿ ಆಗೀ ಮತ್ತೆ ಅದೆ ವಿಷಯದ ಫಲಾನುಭವ ಪಡೆಯೋದಿರಲಿ ಉಳಿದವರಿಗೆ ಹೇಳೋದಕ್ಕೂ ತ್ರಾಣವಿಲ್ಲದ ಹಾಗೆ ವಯಸ್ಸಾಗಿ ಬಿಡೋದು. ಅಂದ್ರೆ, ನಿಮಗೆ ಅನುಭವವಾಗಿದೆ ನಿಜ ಆದರೆ ಅನುಭವವಾಗುವುದಕ್ಕಿಂತ ಮೊದಲು ನಿಮ್ಮಲ್ಲಿರೋ ಉತ್ಸಾಹ ಇಲ್ಲದೇ ಹೋಗಿದೆಯೇ ಅನ್ನೋ ಹೆದರಿಕೆ, ಒಂದ್ ರೀತಿ ಮ್ಯಾಜಿಕ್ ಶೋ ಮುಗಿದ ಮೇಲೆ ಮಾಂತ್ರಿಕ ತನ್ನೆಲ್ಲಾ ಗುಟ್ಟನ್ನು ಶ್ರೋತೃಗಳ ಜೊತೆ ಹಂಚಿಕೊಂಡ್ರೆ ಹೇಗಿರುತ್ತೋ ಹಾಗೆ.

ಮೊನ್ನೆ ಥ್ಯಾಂಕ್ಸ್‌ಗಿವಿಂಗ್‌ ಸಂದರ್ಭದಲ್ಲಿ ಹೀಗೇ ಹರಟೆ ಹೊಡೀತಿದ್ದಾಗ ಒಂದು ಉಪಮೆ ಹೊಳೆಯಿತು. ಭಾರತದಲ್ಲಿ ಜನರು ಸ್ಟಿಕ್‌ ಶಿಫ್ಟ್ ಇರೋ ಕಾರು/ವಾಹನಗಳನ್ನು ಓಡಿಸೋದು ಹೆಚ್ಚು. ಇಂಧನವನ್ನು ಉಳಿಸುವ ಪ್ರಯತ್ನವೋ, ವಾಹನದ ಎಫಿಷಿಯನ್ಸಿಯನ್ನು ಹೆಚ್ಚಿಸುವ ಯತ್ನವೋ, ಅಲ್ಲಿಯ ರಸ್ತೆಯಲ್ಲಿ ನಿಂತು ನಿಂತು ಹೋಗುವುದಕ್ಕೆ ಅನುಕೂಲವಾಗಲಿ ಎಂಬುದಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ತಮ್ಮ ವಾಹನಗಳ ಗಿಯರ್ ಅನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ, ಹಾಗೆ ಮಾಡದೇ ವಿಧಿಯಿಲ್ಲ. ಅಂದರೆ ಭಾರತದಲ್ಲಿ ವಾಹನದಲ್ಲಿ ಇಂಚಿಂಚು ಕದಲಿದ ಹಾಗೆ ನಮ್ಮ ಮೂವ್‌ಮೆಂಟುಗಳನ್ನು ನಾವೇ ಮೈಕ್ರೋಮ್ಯಾನೇಜ್ ಮಾಡಿಕೊಂಡಿರಬೇಕು. ಅಲ್ಲಲ್ಲಿ ನಿಂತು, ದಾರಿಯಲ್ಲಿ ಸಿಗುವ ಅಡೆತಡೆಗಳನ್ನೆಲ್ಲ ಎದುರಿಸಿ ತಲುಪಬೇಕಾದ ಸ್ಥಳ ತಲುಪುವಲ್ಲಿ ಒಂದು ಕೈ ಗಿಯರ್ ಲಿವರ್ ಮೇಲೆ ಒಂದು ಕಾಲು ಕ್ಲಚ್ ಮೇಲೆ ಇಟ್ಟು ಅದಕ್ಕೇ ಬದುಕನ್ನು ಮುಡಿಪಾಗಿಟ್ಟುಕೊಳ್ಳಬೇಕು ಎಂಬುದು ನನ್ನ ಜೋಕ್‌ಗಳಲ್ಲೊಂದು. ಅದೇ ಉತ್ತರ ಅಮೇರಿಕದಲ್ಲಿ ನೋಡಿ, ನಾವುಗಳು ಬಳಸೋ ಕಾರು/ವಾಹನಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರುವಂತಹವೇ ಹೆಚ್ಚು. ಮನೆಯಿಂದ ಆಫೀಸಿಗೆ ಹೊರಟರೆ ಮಧ್ಯೆ ಬೇಕಾದಷ್ಟು ಅಡೆತಡೆಗಳು ಬಂದೇ ಬರುತ್ತವೆ, ಆದರೆ ನಮ್ಮ ಬಲಗಾಲು ಬ್ರೇಕ್ ಆಕ್ಸಲೇಟರ್ ಮೇಲೆ ಆಗಾಗ್ಗೆ ತನ್ನಷ್ಟಕ್ಕೆ ತಾನು ಬದಲಾಗುತ್ತಿರುತ್ತದೆ, ಜೊತೆಗೆ ಹೆಚ್ಚಿನ ಮಟ್ಟಿಗೆ ಎಲ್ಲರೂ ಒಂದೇ ಕೈಯಲ್ಲೇ ಡ್ರೈವ್ ಮಾಡೋದು, ಮತ್ತೊಂದು ಕೈಯಲ್ಲಿ ಇನ್ನೇನು ಮಾಡದಿದ್ದರೂ ಆರಾಮವಾಗಿ ಕಾಫಿಯನ್ನಾದರೂ ಕುಡಿದುಕೊಂಡು ಹೋಗಬಹುದು. ಅಂದರೆ ನಮ್ಮ ದಿನನಿತ್ಯದ ಪ್ರಯಾಣವೆನ್ನುವ ರುಟೀನ್ ಕೆಲಸವನ್ನು ನಾವು ಮೈಕ್ರೋ ಮ್ಯಾನೇಜ್ ಮಾಡೋದೇ ಬೇಡ. ಕಾರು ಒಳ್ಳೆಯ ಕಂಡೀಷನ್ನಲ್ಲಿ ಇದ್ದರೆ ಪ್ರಯಾಣ ಯಶಸ್ವಿಯಾದಂತೆಯೇ ಲೆಕ್ಕ. ಭಾರತದಲ್ಲಿ ಪದೇಪದೇ ಗಿಯರ್ ಬದಲಾಯಿಸುವುದರ ಮೂಲಕ ಅದೆಷ್ಟು ಇಂಧನವನ್ನು ಉಳಿಸುತ್ತಾರೋ ಗೊತ್ತಿಲ್ಲ, ತಮ್ಮ ಕಾರು/ವಾಹನಗಳನ್ನು ಸುಸ್ಥಿತಿಯಲ್ಲಿಡದ ವಾಹನಗಳಿಗೆ ಅದ್ಯಾವ ಅನುಕೂಲವೋ ಯಾರಿಗೆ ಗೊತ್ತು, ಮತ್ತಿನ್ನೇನಿಲವೆಂದರೂ ಈ ಗಿಯರ್ ಬದಲಾವಣೆಯಿಂದ ಕೈ ನೋವಾದರೂ ಬಂದೀತು.

’ಮನೆ ಕಟ್ಟಿ(ಸಿ) ನೋಡು’ ಎನ್ನೋದು ನಮ್ಮೂರಿನ ನಾಣ್ಣುಡಿಗಳಲ್ಲೊಂದು. ಇಲ್ಲಿ ಈಗಿರೋ ನಮ್ಮನೆ ವಾರಂಟಿಯಲ್ಲಿ ಏನೋ ಹುಡುಕಿ ಮನೆ ಕಟ್ಟಿದ ಕಂಪನಿಯವರಿಗೆ ಕೇಳಿದ್ದಕ್ಕೆ ’ಮನೆಯ ಸ್ಟ್ರಕ್ಚರ್‌ಗೆ ಏನೇ ತೊಂದರೆ ಆದರೂ ಹತ್ತು ವರ್ಷಗಳವರೆಗೆ ಅದನ್ನು ಸರಿ ಮಾಡಿಸುವುದು ನಮ್ಮ ಜವಾಬ್ದಾರಿ’ ಎಂದರು. ನಮ್ಮೂರಿನ ಬೇಸಿಗೆಯಲ್ಲಿ ಧಾಂ ಧೂಮ್ ಓಪನಿಂಗ್ ಸೆರೆಮನಿ ಮಾಡಿಸಿಕೊಂಡು ಮಳೆಗಾಲ ಪೂರ್ತಿ ಸೋರಲು ತೊಡಗಿದ್ದ ಕೆನರಾ ಬ್ಯಾಂಕ್ ಕಟ್ಟಡ ನೆನಪಿಗೆ ಬಂತು, ಅದರಲ್ಲಿ ಇಂದಿಗೂ ಸೋರಿದ ಮಳೆ ನೀರನ್ನು ಹಿಡಿಯಲೆಂದು ರೂಫ್‌ಗೆಲ್ಲಾ ಟಾರ್ಪಾಲು ಕಟ್ಟಿರಬಹುದು, ’ಎಲ್ಲಿದೆಯೋ ವಾರಂಟೀ ಅಣ್ಣಾ, ಎಲ್ಲಿದೆಯೋ ವಾರಂಟೀ...’ ಎಂದು ಯಾವುದೋ ಬದಲಾದ ಹಾಡಿನ ತುಣುಕೊಂದು ತಟ್ಟನೆ ಮನದಲ್ಲಿ ಮಿನುಗಿತು. ಈ ಮನೆ ಕಟ್ಟಿಸಿದ ಅನುಭವವೇ ಅಂತದ್ದು, ಅದು ಸೋರಿದ ಮೇಲೆ ಹೀಗೆ ಕಟ್ಟಿದರೆ ಸೋರುತ್ತದೆ ಎಂದು ತಿಳಿಸುತ್ತದೆಯೇ ವಿನಾ ಒಮ್ಮೆ ಕಟ್ಟಿಸಿ ಸೋರಿದ ಮೇಲೆ ಮುಂದೆ ಏನೇ ಮಾಡಿದರೂ ತೇಪೆ ಹಚ್ಚುವುದೇನೂ ತಪ್ಪೋದಿಲ್ಲ. ನಮ್ಮ ಸ್ನೇಹಿತರು ಹೇಳುತ್ತಾರೆ, ’ಛೇ, ನೀವು ಕಂಡ ಇಂಡಿಯಾ ಭಾಳಾ ಬದಲಾಗಿದೇ, ನೀವ್ ಯಾವ ಜಮಾನದಲ್ಲಿದ್ದೀರಿ?’ ಇದ್ದಿರಬಹುದು, ಇಂದು ಕಟ್ಟಿಸಿದ ಕಟ್ಟಡಗಳು ಸೋರದಿರಬಹುದು, ಹಾಗೆ ಸೋರಿದರೂ ಕಟ್ಟಡದ ಕಾಂಟ್ರಾಕ್ಟರುಗಳು, ಇಂಜಿನಿಯರುಗಳು, ಇಟ್ಟಿಗೆ ಹೊರುವವರನ್ನೂ ಸೇರಿಸಿ ಎಲ್ಲರೂ ಭಾವನಾತ್ಮಕವಾಗಲ್ಲದಿದ್ದರೂ ಕಾನೂನಿನ ಕಟ್ಟಳೆಯಡಿಯಲ್ಲಿ ಜವಾಬ್ದಾರರಿದ್ದಿರಬಹುದು. ಒಮ್ಮೆ ಸೋರಿದ ಮಾಡನ್ನು ಮತ್ತೊಮ್ಮೆ ಸೋರದ ಹಾಗೆ ತಂತ್ರಜ್ಞಾನ ಬಂದಿರಬಹುದು, ಅಥವಾ ’ಹೇಗಿದ್ದರೂ ಮಾಡು ಸೋರೋದೇ ಒಂದಲ್ಲ ಒಂದು ದಿನ...’ ಎನ್ನುವ ಹೊಸ ಅನುಭವಾಮೃತ ಹುಟ್ಟಿ ಹೊಮ್ಮಿರಬಹುದು.

ಅದು ನಿಜವೇ, ನಾವು ಕಂಡ ಇಂಡಿಯಾದಲ್ಲಿ ದಾರಿಯ ಬದಿ ಎಳೆನೀರು ಮಾರುವವರಿಂದ ಹಿಡಿದು ಎಕ್ಸಿಕ್ಯೂಟಿವ್‌ಗಳವರೆಗೆ ಎಲ್ಲರೂ ಸೆಲ್‌ಫೋನ್‌ಗಳನ್ನು ಹಿಡಿದುಕೊಂಡು ಓಡಾಡಿದ್ದಿಲ್ಲ. ಇತ್ತೀಚಿಗೆ ಕಮ್ಮ್ಯೂನಿಕೇಷನ್ನ್ ಬದಲಾಗಿರಬಹುದು, ಜನರಲ್ಲಿ ಕನ್ಸ್ಯೂಮೆರಿಸ್ಸಮ್ಮ್, ಅಥವಾ ಇನ್ಯಾವ್ಯಾವುದೋ "ಇಸಮ್ಮು"ಗಳು ತುಂಬಿ ತುಳುಕಾಡುತ್ತಿರಬಹುದು. ಬಡವ-ಬಲ್ಲಿದರ ನಡುವಿನ ಅಂತರ ಕಿರಿದಾಗಿರಬಹುದು. ಸಾಮಾಜಿಕವಾಗಿ, ರಾಜಕೀಯವಾಗಿ ಭಾರತ ಬೆಳೆದಿರಬಹುದು. ಮತ್ತೆ, ನಮ್ಮ ಹಳೇ ಅನುಭವಗಳೇ ನಮ್ಮ ಬದುಕನ್ನು ರೌರವ ನರಕವನ್ನಾಗಿಸುತ್ತವೆಯೆಲ್ಲಾ ಎಂದು ಮನಸ್ಸು ಮಮ್ಮಲ ಮರುಗತೊಡಗಿತು. ಆ ಪ್ರಕಾರವಾಗಿ - ನಾವು ಆಟೋ ಡ್ರೈವರುಗಳನ್ನು ಮನಬಿಚ್ಚಿ ಮಾತನಾಡಿಸುವುದಿರಲಿ ನಂಬುವುದಾದರೂ ಹೇಗೆ? ನಾವು ಹೊರಟ ಬಸ್ಸು ಸರಿಯಾದ ಸಮಯಕ್ಕೆ ಡೆಸ್ಟಿನೇಷನ್ನನ್ನು ಮುಟ್ಟೀತು ಎಂದು ಸಂಕಲ್ಪಿಸುವುದು ಹೇಗೆ? ನಾವು ಕಟ್ಟಿಸೋ ಮನೆ ಸ್ಟ್ರಕ್ಚರಲಿ ಸೌಂಡ್ ಆಗಿರುತ್ತದೆ ಎಂದು ಊಹಿಸಿಕೊಂಡು ಹೋಮ್‌ವರ್ಕ್ ಮಾಡದಿರುವುದು ಹೇಗೆ? ವಾರಂಟಿ, ಗ್ಯಾರಂಟಿ ಎಂಬ ಪದಗಳಿಗೆ ಬೆಲೆ/ನೆಲೆ ಕಟ್ಟುವುದು ಹೇಗೆ? ಈಗಾಗಲೇ ಸುಟ್ಟುಕೊಂಡ ಬೆರಳ ತುದಿಯ ಚರ್ಮ ಚಿಗುರೋದಕ್ಕಿಂತ ಮುನ್ನವೇ ಅದೇ ಕೈಗಳಲ್ಲಿ ಮತ್ತೊಂದು ನಾಜೂಕಾದ ಕೆಲಸವನ್ನು ಮಾಡುವುದು ಹೇಗೆ? ನಮ್ಮ ವಾಹನದ ಹೊಗೆ ಪೈಪಿನಿಂದ ಯಾವುದೇ ರೆಗ್ಯುಲೇಷನ್ನ್ ಇಲ್ಲದೇ ಯಾವ್ಯಾವುದೋ ವಿಷಾನಿಲಗಳು ನಿರಂತರವಾಗಿ ವಾತಾವರಣಕ್ಕೆ ಹೊಮ್ಮಿ ನಮ್ಮ ವಾಹನದ ಇಂಜಿನ್ ಏನೇ ಸದ್ದು ಮಾಡಿಕೊಂಡಿದ್ದರೂ ಪದೇ ಪದೇ ಗಿಯರ್ ಬದಲಾಯಿಸುವ ನಮ್ಮ ಕೈಗಳು ಎಲ್ಲವನ್ನೂ ಮೀರುತ್ತದೆ ಎಂಬ ತತ್ವವನ್ನು ಮೈ ತುಂಬಿಕೊಳ್ಳುವುದು ಹೇಗೆ?

’ಎಲವೂ ಮೂರ್ಖ, ಅನುಭಾಮೃತದ ಬಗ್ಗೆ ಬಗ್ಗೆ ಬರೀತೀಯಾ ಅಂದುಕೊಂಡ್ರೆ ನಾವು ನಂಬಿದ ಭಾರತ ಹಂಗೇ ಹಿಂಗೇ ಅಂತ ಕೊರೀತೀಯೇನಯ್ಯಾ?’ ಎಂದು ಬಲ ಭುಜ ಹಾಗೂ ಕತ್ತಿನ ನಡುವಿನಿಂದ ಧ್ವನಿಯೊಂದು ಹೊರಬಂತು. ’Wait, ಅನುಭವ ಅಮೃತವಾಗಿದ್ದು ಯಾವಾಗ, ಅಂದ್ರೆ ಅದು ಸಾಯೋದೇ ಇಲ್ಲವೇನು?’ ಎಂದು ನಾನು ಧೃತಿಗೆಡದೆ ಮರುಪ್ರಶ್ನೆಯೊಂದನ್ನು ಹಾಕಿದೆ (thanks to present life! ಪ್ರಶ್ನೆ ಕೇಳೋಕೇನು ಅವನವ್ವನ). ’ಅನುಭವ ಯಾವತ್ತಿದ್ರೂ ಮನುಷ್ಯನ ಕಷ್ಟ ಕಾಲಕ್ಕೆ ಬರುತ್ತೆ ಗೊತ್ತಾ...’ ಎಂಬ ತೇಲಿಕೆಯ ಉತ್ತರ ಬರತೊಡಗಿದ್ದನ್ನು ನನ್ನ ಮನಸ್ಸು ಗ್ರಹಿಸಿತು. ಅಂತಹ ಹಾರಿಕೆಯ ಉತ್ತರಗಳು ಬಂದೊಡನೆ (I have really learnt to cut them loose) ಅವುಗಳನ್ನು ಹಾಗೆಯೇ ಹಾರಿಬಿಟ್ಟೆ. ನಾವು ಕಟ್ಟೋದು ಒಂದೇ ಒಂದು ಮನೆ, ಅದರ ಮಾಡಾದರೂ ನೆಟ್ಟಗಿರಲಿ ಎಂದು ಮನದಾಳದಿಂದ ಪ್ರಾರ್ಥನೆಯ ಮೊರೆಯೊಂದು ಹುಟ್ಟಿ ಬಂತು. ಈ ಪ್ರಪಂಚದಲ್ಲಿರೋ ಯಾವುದಾದರೂ ದೇವರು ಅದನ್ನು ಪುರಸ್ಕರಿಸಿಯಾನು ಎನ್ನುವ ನಂಬಿಕೆ ನನ್ನದು, ಕ್ಷಮಿಸಿ ಅದು ಯಾವುದೇ ಅನುಭವದಿಂದ ಬಂದುದಂತೂ ಅಲ್ಲ.

Friday, November 23, 2007

ನಮ್ಮಲ್ಲಿನ ಬದಲಾವಣೆಗಳು

ಹೇ, ಇನ್ನೂ ನಮ್ಮ ಕನ್ನಡದ ಬಗ್ಗೆ ಬರೆಯೋದಕ್ಕೇನೂ ತಡವಾಗಿಲ್ಲ, ಈ ತಿಂಗಳ ಒಳಗೆ ಯಾವಾಗ ಬರೆದರೂ ಅದು ಕನ್ನಡಮ್ಮನ ಸೇವೆಗೆ, ಪದತಲಕ್ಕೆ ಸೇರುವ ಮಾತೇ! ಈ ತಿಂಗಳು ಆರಂಭವಾಗುವ ಮುನ್ನ ರಾಜ್ಯೋತ್ಸವ ಆಚರಣೆಗಳೇನೇ ಇದ್ದರೂ ನವೆಂಬರ್ ಒಂದಕ್ಕೆ ಸೀಮಿತವಾಗಿರಲಿ ಎಂದು ಆಶಿಸಿದ್ದೇ ಬಂತು, ಕನ್ನಡಿಗರ ಗುಂಪು, ಸಂಘಗಳು, ಸಂಘಟನೆಗಳು ಮಂತ್ರಿ ಮಾಗಧರ ದಂಡನ್ನು ತಮ್ಮ ಸಭೆ ಸಮಾರಂಭಗಳಿಗೆ ಅಮಂತ್ರಿಸಿಕೊಂಡು ಕುತೂಹಲದಿಂದ ಕಾದಿದ್ದೇ ಬಂತು, ಈ ಅಕ್ಟೋಬರ್ ಕೊನೆಯಿಂದ ನವೆಂಬರ್ ಕೊನೆಯವರೆಗೆ ತೆರೆಯ ಮರೆಯಲ್ಲಿ, ರಾಜ್ಯ ದೇಶದ ರಾಜಕೀಯದ ಲೆಕ್ಕದಲ್ಲಿ ಬೇಕಾದಷ್ಟು ಘಟಿಸಿದೆ, ಹಾಗಿದ್ದರಿಂದಲೇ ಅನೇಕ ಶಿಲಾನ್ಯಾಸಗಳು ಸಮಾರಂಭಗಳು ಮುಖ್ಯ ಅತಿಥಿಗಳಿಲ್ಲದೇ ತೊಳಲಾಡುತ್ತಿವೆ ಎನ್ನಿಸಿದ್ದು ನನ್ನ ಅನಿಸಿಕೆ ಅಥವಾ ಭ್ರಮೆ ಇದ್ದಿರಬಹುದು.

ಸುಮಾರು ಎರಡೂವರೆ ವರ್ಷದಿಂದ ಮಾತನಾಡಿಸದ ಕನ್ನಡಿಗ ಸ್ನೇಹಿತನೊಬ್ಬ ನಿನ್ನೆ ಬೆಳಿಗ್ಗೆ ಫೋನ್ ಮಾಡಿದಾಗಲೇ ನನಗೆ ಬಹಳಷ್ಟು ಆಶ್ಚರ್ಯ ಕಾದಿತ್ತು. ಯಾವುದೋ ಕೆಲಸದ ನಡುವೆಯೇ ಗೋಣಿಗೆ ಫೋನಾಯಿಸಿಕೊಂಡು ಮತ್ತೆ ಹಳೆಯ ನೆನಪುಗಳನ್ನು ಕೆದಕಿಕೊಂಡ ನಮ್ಮಿಬ್ಬರ ಮನಸ್ಸಿನಲ್ಲಿ ಬಹಳ ಸಂತಸದಾಯಕ ವಾತಾವರಣ ಮೂಡಿತ್ತು. ನಮ್ಮಿಬ್ಬರ ನಡುವಿನ ಪರಿಚಯ ಅಥವಾ ಸ್ನೇಹ ಎನ್ನುವುದು ಸುಮಾರು ಹನ್ನೆರಡು ವರ್ಷಗಳ ಹಳೆಯದು, ಅಥವಾ ಅದಕ್ಕೂ ಹಿಂದಿನದ್ದಿರಬಹುದು. ಆದರೆ ಈ ಸ್ನೇಹಿತ ನನ್ನೊಡನೆ ಮಾತನಾಡಿದ ರೀತಿ ನನ್ನಲ್ಲಿ ಬಹಳಷ್ಟು ಆಶ್ಚರ್ಯವನ್ನು ಹುಟ್ಟಿಸಿತ್ತು. ಆ ಸ್ನೇಹದ ಸಲಿಗೆ ಅಥವಾ ಸದರದಿಂದಲೇ ನನಗೆ ಅನ್ನಿಸಿದ್ದನ್ನೂ ನಿಜವಾಗಿಯೂ ಹೇಳಿಬಿಟ್ಟೆ, ಅದೇ ನನ್ನನ್ನು ಈ ಲೇಖನ ಬರೆಯುವ ಕಷ್ಟಕ್ಕೆ ಸಿಕ್ಕು ಹಾಕಿಸಿದ್ದು.

ಅವನೊಡನೆ ನಡೆಸಿದ ಹದಿನೈದು ನಿಮಿಷದ ಮಾತುಕಥೆ ನನ್ನಲ್ಲಿ ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ: ನಮ್ಮಲ್ಲಿ ಬದಲಾವಣೆಗಳು ಸಹಜವೋ ಅಥವಾ ಬದಲಾವಣೆಗಳನ್ನು ನಾವೇ ನಮ್ಮ ಮೇಲೆ ಹೇರಿಕೊಳ್ಳುತ್ತೇವೋ, ನಾವು ಯಾವ ಯಾವ ರೀತಿ/ನಿಟ್ಟಿನಲ್ಲಿ ಬದಲಾಗಬೇಕು, ಬದಲಾದರೆ ಒಳ್ಳೆಯದು, ಇತ್ಯಾದಿ.

ನನ್ನ ಸ್ನೇಹಿತನ ಧ್ವನಿಯಲ್ಲಿ ಅಗಾಧವಾದ ಬದಲಾವಣೆಯಿದ್ದುದು ನನಗೆ ಮೊದಲ ಕ್ಷಣದಿಂದಲೇ ಗೊತ್ತಾಯಿತು. ಆತನ ಜೊತೆ ಎರಡು ವರ್ಷಗಳ ಹಿಂದೆ ಮಾತನಾಡುತ್ತಿರುವಾಗ ನಮ್ಮೂರಿನವನೇ ಅನ್ನಿಸಿದ ಮನುಷ್ಯ ಕೇವಲ ಎರಡೇ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗೊಂಡಿದ್ದ. ಅವನು ಉಚ್ಚರಿಸಿದ ಪ್ರತಿಯೊಂದು ಇಂಗ್ಲೀಷ್ ಪದಗಳಲ್ಲಿ ಸ್ಥಳೀಯ (ಅಮೇರಿಕನ್) ಪ್ರಭಾವವಿತ್ತು. ನಾನೂ ಪ್ರತಿದಿನವೂ ಸ್ಥಳೀಯರೊಡನೆ ಮಾತನಾಡುತ್ತೇನಾದರೂ ನನ್ನ ಭಾಷೆಯಲ್ಲಿಲ್ಲದ ಉಚ್ಚಾರ, ಸ್ವರಗಳೆಲ್ಲವೂ ನನ್ನ ಸ್ನೇಹಿತನಿಗೆ ಮೈಗೂಡಿತ್ತು. ನನ್ನ ಅನಿಸಿಕೆಯ ಪ್ರಕಾರ ಹೊರಗಿನಿಂದ ಭಾರತೀಯರು ಕಷ್ಟಪಟ್ಟು ಸ್ಥಳೀಯ ಅಮೇರಿಕನ್ ಆಕ್ಸೆಂಟಿನಲ್ಲಿ ಭಾಷೆಯನ್ನು ಬಳಸುತ್ತಾರೇನೋ ಎಂದು ಒಮ್ಮೆ ಅನಿಸಿದರೂ ಅವನು ತರ್ಕಬದ್ಧವಾದ ಮಾತುಗಳು ಕೃತಕವೆಂದು ಎಲ್ಲಿಯೂ ಅನ್ನಿಸಿಲಿಲ್ಲ.

’ನೀನು ಇಲ್ಲಿ ಯೂನಿವರ್ಸಿಟಿಯಲ್ಲಿ ಪಾಠ-ಪ್ರವಚನಗಳನ್ನೇನಾದರೂ ಮಾಡುತ್ತೀಯೇನು?’ ಎಂದಿದ್ದಕ್ಕೆ ’ಇಲ್ಲ, ಬರೀ ರಿಸರ್ಚ್ ಮಾತ್ರ’ ಎನ್ನುವ ಉತ್ತರ ಬಂತು. ಸ್ಥಳೀಯರ ಒಡನಾಟ ಅಷ್ಟೊಂದಿಲ್ಲದೇ ಒಂದು ಕಾಲದಲ್ಲಿ ನನ್ನೊಡನೆ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ ಮನುಷ್ಯ ಆತನೇ ಮಾಡಿದ ಟೆಲಿಫೋನ್ ಕರೆಯ ಮೂಲಕವಾದರೂ ಮಾಮೂಲಿಯಾಗಿ ಹಾಗೂ ಸಹಜವಾಗಿ ಕನ್ನಡದಲ್ಲೇ ಮಾತನಾಡುತ್ತಾನೆ ಎಂದುಕೊಂಡರೆ, ಬರೀ ಸ್ಥಳೀಯ ಅಕ್ಸೆಂಟಿನಲ್ಲೇ ಇಂಗ್ಲೀಷು ತುಂಬಿರುವ ಮಾತುಗಳನ್ನು ಆಡುತ್ತಾನಲ್ಲಾ ಅದನ್ನು ಹೇಗಾದರೂ ಸ್ವೀಕರಿಸುವುದು?

ನಾನು ತಡೆಯದೇ ಹೇಳಿಯೇ ಬಿಟ್ಟೆ, ’ಅಲ್ಲಯ್ಯಾ, ನೀನು ನೀಡಿದ ಎರಡು ಶಾಕ್‌ಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ, ಸ್ವಲ್ಪ ತಡಿ.’
'What shock?'
'ಅದೇ, ಒಂದು ನೀನು ಇಷ್ಟೊಂದು ವರ್ಷ ಬಿಟ್ಟು ಫೋನ್ ಮಾಡುತ್ತೀದ್ದೀಯಲ್ಲಾ, ಹೇಗಿದ್ದೀಯಾ ಏನು ಕಥೆ? ಮತ್ತೊಂದು ನಿನ್ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ, ನಿನ್ನೂರಿನವರ ಹತ್ತಿರ ಹೀಗೇ ಮಾತನಾಡಿದೆಯಾದರೆ ಅವರು ಶಾಕ್‌ನಿಂದ ಚೇತರಿಸಿಕೊಳ್ಳುತ್ತಾರೆ ಎಂಬ ಗ್ಯಾರಂಟಿಯೇನೂ ಇಲ್ಲ’.
’ಏನ್ ಬದಲಾವಣೆ, ಗೊತ್ತಾಗಲಿಲ್ಲ...’
’ನಿನ್ನ ಇಂಗ್ಲೀಷ್ ಸ್ವರದಲ್ಲಿ ಉಚ್ಚಾರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ, ಯಾವಾಗಿನಿಂದ ಹೀಗೆ?’
’ಬದಲಾವಣೆಯಾ, ನನಗೇನೂ ಬದಲಾದ ಹಾಗೆ ಅನ್ನಿಸೋದಿಲ್ಲ!’
’ಬರೀ ಶಾಕ್‌ಗಳನ್ನೇ ಕೊಡ್ತಾ ಇರ್ತೀಯೋ, ಅಥವಾ ನಿನ್ನ ಬಗ್ಗೆ ಮತ್ತಿನ್ನೊಂದಿಷ್ಟೇನಾದರೂ ಹೇಳ್ತೀಯೋ?’

ಹೀಗೆ ನಮ್ಮ ಸಂಭಾಷಣೆ ಬೆಳೆಯುತ್ತಾ ಹೋಯ್ತು, ಆದರೆ ನನ್ನ ಸ್ನೇಹಿತನಲ್ಲಾದ ಬದಲಾವಣೆಗಳು ನನಗೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನಮ್ಮ ಮಾತಿನ ಮಧ್ಯೆ ನನ್ನ ಸ್ನೇಹಿತ ಮತ್ತೆ ಮೊದಲಿನಂತಾಗಿ ಹೋಗಿದ್ದ ಎನ್ನುವ ಬದಲಾವಣೆಗಳು ನನಗೆ ಕಾಣಿಸತೊಡಗಿದವೋ ಅಥವಾ ನಾನು ಹಾಗೆ (ನನ್ನ ಸ್ವಾರ್ಥಕ್ಕೆ) ಊಹಿಸಿಕೊಳ್ಳತೊಡಗಿದೆನೋ ಗೊತ್ತಿಲ್ಲ. ಬರೀ ನಮ್ಮ ಮಾತನ್ನು ಬದಲಾಯಿಸಿಕೊಂಡರೆ ಸಾಕೆ, ಆ ರೀತಿಯ ಬದಲಾವಣೆಗಳು ಅನಿವಾರ್ಯವೇ ಎಂದು ನನ್ನನ್ನು ಹಲವಾರು ಬಾರಿ ಕೇಳಿಕೊಂಡೆ. ಕೇವಲ ಆರೇ ಆರು ವರ್ಷ ಅಮೇರಿಕದಲ್ಲಿ ಕಳೆದ ಸ್ನೇಹಿತನ ಹಾವಭಾವ ಮಾತುಕಥೆಗಳಲ್ಲಿ ಬದಲಾವಣೆ ಏಕಾಯಿತು? ಅದರ ಅಗತ್ಯವೇನು, ಹೇಗೆ? ಎಂದೆಲ್ಲಾ ಗೊಂದಲಗಳು ಗೋಜಲುಗಳು ಹುಟ್ಟಿಕೊಂಡು ತಳುಕು ಹಾಕಿಕೊಳ್ಳತೊಡಗಿದವು.

ನಾನೂ ಬದಲಾಗಿದ್ದೇನೆ, ದಶಕದ ಮೇಲಿನ ಅನಿವಾಸಿತನ ನನ್ನನ್ನು ಬದಲಾಯಿಸಿದೆ ಇಲ್ಲವೆಂದೇನಿಲ್ಲ - ನಾನು ಭಾರತದಲ್ಲಿ ಎಷ್ಟೋ ಇಂಗ್ಲೀಷ್ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದವನು ಇಲ್ಲಿಗೆ ಬಂದು ತಿದ್ದಿಕೊಂಡಿದ್ದೇನೆ. ಆದರೆ ನನ್ನ ಕನ್ನಡದ ಬಳಕೆಯಲ್ಲಿ, ಅಥವಾ ಅದರ ಮಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಇವತ್ತಿಗೂ ಒಬ್ಬ ಸಾಮಾನ್ಯ ಮನುಷ್ಯನೊದನೆ ನಾನು ಸಹಜವಾಗಿ ಸಂವಾದವನ್ನು ಬೆಳೆಸಬಲ್ಲೆ ಎಂಬ ಹೆಗ್ಗಳಿಕೆ ನನ್ನದು. ಮಾನಸಿಕವಾಗಿ ’ಇವರು ಅಮೇರಿಕದಲ್ಲಿರುವವರು...’ ಎಂದು ಪೂರ್ವಭಾವಿ ಯೋಚನೆಯಲ್ಲಿ ಮಾತನಾಡಿಸುವವರನ್ನು ಹೊರತುಪಡಿಸಿ ಉಳಿದವರಿಗೆ ನನ್ನ ಅನಿವಾಸಿತನದ ಸೂಕ್ಷ್ಮವೂ ಗೊತ್ತಾಗದಿರುವಂತೆ ಬದುಕುವುದೂ ಸಾಧ್ಯವಿದೆ ಎಂಬುದು ಗೊತ್ತಿದೆ. ಜೊತೆಗೆ ನನ್ನ ಹಾಗೆಯೇ ಎಲ್ಲರೂ ಇರಲೇ ಬೇಕು ಎಂದೇನೂ ಇಲ್ಲ ಎನ್ನು ಸಾಮಾನ್ಯ ತಿಳುವಳಿಕೆಯೂ ಇದೆ. ಹೀಗಿದ್ದ್ಯಾಗ್ಯೂ, ನನ್ನ ಸ್ನೇಹಿತನಲ್ಲಿನ ಬದಲಾವಣೆಗಳು ನನ್ನಲ್ಲಿ ನಿರಾಶೆಯನ್ನುಂಟು ಮಾಡಿದವು ಎಂದರೆ ತಪ್ಪೇನೂ ಇಲ್ಲ. ಆತನಿಗಾದ ಬದಲಾವಣೆಗಳು ಸರಿ ತಪ್ಪು ಎನ್ನುವುದಕ್ಕಿಂತಲೂ ನನಗೇ ಗೊತ್ತಾಗುವಷ್ಟರ ಮಟ್ಟಿಗಿನ ಆತನಲ್ಲಿನ ಬದಲಾವಣೆಗಳು ಅಗತ್ಯವೇ ಎಂದು ಯೋಚಿಸತೊಡಗಿದೆ. ಇದೇ ದೇಶದಲ್ಲಿ ನೂರಾರು ವರ್ಷಗಳಿಂದ ತಲತಲಾಂತರದಿಂದ ನೆಲೆಸಿ ಬೆಳೆಯುತ್ತಿರುವ ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟುಗಳಲ್ಲಾಗಲೀ ತಮ್ಮ ವಾಕ್ಯ ರಚನೆಯ ಶೈಲಿಯಲ್ಲಾಗಲೀ ಬದಲಾವಣೆ ಮಾಡಿಕೊಳ್ಳದಿದ್ದರೂ ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲ ಮಾನ್ಯತೆಗಳನ್ನೂ ಪಡೆದುಕೊಂಡಿರುವಾಗ ನಮಗೆ ಆಕ್ಸೆಂಟು ಬದಲಾವಣೆ ಅಗತ್ಯವಿದೆಯೇ? ಬರೀ ಅಕ್ಸೆಂಟುಗಳನ್ನು ಬದಲಾಯಿಸಿಕೊಂಡ ಮಾತ್ರಕ್ಕೆ ಏನು ಸಾಧಿಸಿಕೊಂಡಂತಾಯಿತು, ಹೀಗೆ ಆರಂಭಗೊಂಡ ಬದಲಾವಣೆಯ ಆದಿ ಮತ್ತು ಅಂತ್ಯ ಎಲ್ಲಿ ಎನ್ನುವುದು ಇನ್ನೂ ಪ್ರಶ್ನೆಗಳಾಗೇ ತಲೆ ತಿನ್ನುತ್ತಲೇ ಇವೆ.

ನೀವು ಬದಲಾಗಿದ್ದೀರೇನು? ಏಕೆ ಬದಲಾಗಿದ್ದೀರಿ, ಇಲ್ಲವಾದರೆ ಏಕೆ ಬದಲಾಗಿಲ್ಲ?

Tuesday, November 20, 2007

ರಸ್ತೇ ಮೇಲಿನ ಗುಂಡಿ

ನಮ್ಮನೆಯಿಂದ ಸ್ವಲ್ಪ ದೂರದಲ್ಲಿರೋ ಹೈವೇ ಮೇಲೆ ಹೋದಾಗ್ಲೆಲ್ಲಾ ಇತ್ತೀಚೆಗೆ ರಸ್ತೆ ನಡುವೆ ಬಿದ್ದಿರೋ ಒಂದು ಸಣ್ಣ ಗುಳಿ ಅಥವಾ ಹೊಂಡ ನನ್ನ ಪರಿಚಯ ಮಾಡ್ಕೊಂದಿದೆ, ಕಾರಿನ ಚಕ್ರಗಳು ಅದರ ಮೇಲೆ ಹೋದಂತೆಲ್ಲ ಅದರ ವೇಗದ ಆಧಾರದ ಮೇಲೆ ಒಂದೋ ಎರಡೋ ಪದವನ್ನು ಅದು ಅರಚುತ್ತೆ, ಕೆಲವೊಂದ್ ಸರ್ತಿ ಅದು ’ಹಾಯ್’, ’ಹಲೋ’ ಅಂಥಾ ಕೇಳ್ಸಿದ್ರೂ ಇನ್ನ್ ಕೆಲವು ಸಲ ಅದರದ್ದೇ ಏನೋ ಒಂದು ಗಾಥೆ ಇರಬಹುದೇನೋ ಅನ್ನೋ ಅನುಮಾನಾನೂ ಬಂದಿದೆ.

ನಿಮಗೆಲ್ಲಾ ಅನ್ನಿಸ್‌ಬೋದು, ಈ ರಸ್ತೆ ನಡುವಿನ ಹೊಂಡಗಳ ಜೊತೆ ನಮ್ಮದೇನ್ ಮಾತೂ ಅಂತ. ಅವುಗಳ ಮಾತಿನಲ್ಲೂ ಒಂದು ಲಾಲಿತ್ಯ ಇರುತ್ತೇ, ಪ್ರೀತಿ ಇರುತ್ತೆ ಎಲ್ಲದಕ್ಕಿಂತ ಮುಖ್ಯವಾಗಿ ನೆಟ್ಟಗೆ ಇದ್ದದ್ದನ್ನ ಸರಿಯಾಗಿ ಇಟ್ಟುಕೊಳ್ಳದೇ ಹೋದ್ರೆ ಒಂದಲ್ಲ ಒಂದು ಯಾವ ಸ್ಥಿತಿಯನ್ನು ತಲುಪಬಹುದು ಅನ್ನೋ ಸತ್ಯಾಂಶ ಇರುತ್ತೆ. ಇವುಗಳನ್ನೆಲ್ಲಾ ನೋಡಿ, ಕೇಳಿದಾಗಲೆಲ್ಲಾ ನಾನು ಅವುಗಳಿಂದ ಏನಾದ್ರೊಂದನ್ನ ಕಲಿಯೋದು ಇದ್ದೇ ಇರುತ್ತಾದ್ದರಿಂದ ಅವುಗಳ ಜೊತೆಗಿನ ಒಡನಾಟವನ್ನು ಪುರಸ್ಕರಿಸೋದು. ಉದಾಹರಣೆಗೆ, ದಿನವೂ ನಿಮಗೆ ಎದುರಾಗುವ ಸ್ನಾನದ ಕೋಣೆ ಅಥವಾ ಶವರ್‌ನ ಗೋಡೆಗಳಿಗೆ ಆತ್ಮೀಯತೆಯಿಂದ ಅಂಟಿಕೊಂಡಿರುವ ಕೂದಲುಗಳನ್ನು ಸ್ವಲ್ಪ ಸರಿಯಾಗಿ ನೋಡಿ. ಅವುಗಳಲ್ಲಿ ಅದೇನೋ ಒಂದು ಅದಮ್ಯ ಬಲವಿದೆ, ಚೈತನ್ಯವಿದೆ ಅಂತ ಅನ್ನಿಸಿದರೂ ಅನ್ನಿಸಬಹುದು. ಇಲ್ಲಾ ಅಂತಂದ್ರೆ ಎರಡು ನಿರ್ಜೀವ ವಸ್ತುಗಳ ನಡುವೆ ಒಂದು ಬಂಧ ಬೆಳೆಯೋದಾದ್ರೂ ಹೇಗೆ? ನಮಗೆ ಗೊತ್ತಿರೋ ಯಾವುದೋ ರಸಾಯನಿಕ ಅಥವಾ ಎಲೆಕ್ಟ್ರೋ ಸ್ಟ್ಯಾಟಿಕ್ ಸಂಬಂಧಗಳಿಂದ ಅಂಥಾ ಅನುಬಂಧಗಳನ್ನು ಅಳೆಯೋದಾದ್ರೂ ಹೇಗೆ? ಇಂಥಾ ಸಂಬಂಧಗಳ ಮೇಲೆ ಬೆಳಕು ಚೆಲ್ಲೋದಕ್ಕೋಸ್ಕರವೇನೋ ಎನ್ನೋ ಹಾಗೆ ನಮ್ಮಲ್ಲಿನ ಬಾತ್‌ರೂಮ್ ಟಬ್‌ಗಳನ್ನು ಬೆಳ್ಳಗೆ ಮಾಡಿರೋದು ಅನ್ನೋದು ನನ್ನ ಯಾವತ್ತಿನ ಅನುಮಾನ.

ಇನ್ನು ರಸ್ತೆ ಮೇಲಿನ ಗುಂಡಿ ವಿಚಾರಕ್ಕೆ ಬರೋಣ. ಅದರ ಆತ್ಮೀಯತೆಗೆ ನಾನು ಯಾವ ಹೆಸರನ್ನೂ ಇನ್ನೂ ಕೊಟ್ಟಿರಲಿಲ್ಲ. ಒಂದು ರೀತಿ ಅಕ್ವೇರಿಯಮ್‌ನಲ್ಲಿರೋ ಮೀನುಗಳಿಗೆ ನಾವು ಯಾವತ್ತೂ ಹೆಸರು ಕೊಟ್ಟಿಲ್ಲವೋ ಹಾಗೆ ಏಕೆಂದ್ರೆ ಅವು ಎಷ್ಟೊತ್ತಿಗೆ ಬೇಕಾದರೂ ಮರೆಯಾಗಿ ಹೋಗಬಹುದು ಅನ್ನೋ ಕಾರಣ. ಈ ಗುಂಡಿ ನನಗೆ ಹೇಳೋ ಒಂದೋ ಎರಡೋ ಪದಗಳಲ್ಲಿ ಬೇಕಾದಷ್ಟು ತತ್ವಗಳೇ ಅಡಗಿರುತ್ತೆ. ಎಲ್ಲವೂ ನೆಟ್ಟಗೆ ನುಣ್ಣಗೆ ಇದ್ದಂಥ ರಸ್ತೆಗಳಲ್ಲೂ ಹೊಂಡಗಳು ಬೀಳುತ್ತವೆ ಎನ್ನುವುದು ಅವುಗಳ ಧ್ಯೇಯವಾಕ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಪಂಚಭೂತಗಳಿಗೆ ತೆರೆದುಕೊಂಡಿರುವುದೂ ಅಲ್ಲದೇ ಪ್ರತಿ ನಿಮಿಷಗಳಿಗೊಮ್ಮೆ ತಮ್ಮ ಮೈಮೇಲೆ ಅದೆಷ್ಟೋ ಭಾರದ ವಾಹನದ ಗಾಲಿಗಳನ್ನು ಹರಿಯಬಿಡುವುದು ಸಾಮಾನ್ಯವೇನಲ್ಲ, ಅದಕ್ಕೆಂತಹ ಹತ್ತಾನೆಯ ಬಲದ ಗುಂಡಿಗೆ ಇರಬೇಡ. ಅದೇ ರಸ್ತೆಯಲ್ಲಿ ಹೋಗೋ ವಾಹನಗಳ ಜೊತೆಗೆ ಸಂವಾದಿಸುವ ಛಲವೊಂದಿದ್ದರೆ ಮಾತ್ರ ಸಾಲದು, ತನ್ನ ಮೈ ಮೇಲೆ ಒಂದು ಕ್ಷಣದ ಭಾಗದಷ್ಟು ಕಾಲ ಮಾತ್ರ ಸ್ಪರ್ಷಿಸಿ ಹೋಗೋ ಚಕ್ರಗಳನ್ನು ಮಾತಿಗೆ ತೊಡಗಿಸುವ ಚಾಕಚಕ್ಯತೆಯೂ ಇರಬೇಕು.

ಎಲ್ಲೂ ನನ್ನನ್ನು ಕೇಳ್ತಾರೆ, ’ಓಹ್, ಅಮೇರಿಕದ ರಸ್ತೆಗಳು ನುಣ್ಣಗಿರುತ್ತವಂತೆ!’, ಈ ರೀತಿಯ ಉದ್ಗಾರಗಳಿಗೆ ನಾನು ಸೊಪ್ಪು ಹಾಕೋದೇ ಇಲ್ಲ. ಅಮೇರಿಕನ್ ರಸ್ತೆಗಳ ಬಗ್ಗೆ ಹೀಗೆ ಹೇಳೋರಿಗೆ ಅವುಗಳ ಬಗ್ಗೆ ಏನು ಗೊತ್ತು? ಕಾರಿದ್ದೋರು ಹೈವೇ ಹತ್ತೋ ಹಾಗೆ ಹೈವೇಗಳು ಗುಂಡೀ ಬೀಳೋದು ಸಾಮಾನ್ಯ ಅದು ಯಾವತ್ತಿದ್ದರೂ ಎಲ್ಲಿದ್ದರೂ ಹೊಂದುವಂತಹ ಒಂದು ಸಣ್ಣ ತರ್ಕ ಹಾಗೂ ತತ್ವ. ಹಾಗಿದ್ದ ಮೇಲೆ ತಮ್ಮೂರಿನ ರಸ್ತೆಗಳಲ್ಲಿನ ಅಷ್ಟೊಂದು ಗುಂಡಿಗಳ ಜೊತೆಗೆ ಹಗಲೂ ಇರುಳೂ ಸಂವಾದವನ್ನು ನಡೆಸಿಕೊಂಡೂ ರಸ್ತೆಗಳ ಮೇಲಿನ ಗುಂಡಿಗಳಿಗೇ ಅವಮಾನವಾಗುವ ಹಾಗೇ ಅದ್ಯಾವುದೋ ಕಣ್ಣೂ ಕಾಣದ ದೂರದೂರಿನ ರಸ್ತೆಗಳು ನುಣುಪಾಗಿರುತ್ತವೆ ಎಂದುಕೊಳ್ಳುವುದು ಯಾವ ನ್ಯಾಯ. ನಮ್ಮೂರಿನಲ್ಲಿರುವ ರಸ್ತೆಗಳಲ್ಲಿ ಕಂಡುಬರುವ ಕೆಲವೊಮ್ಮೆ ರಸ್ತೆಗಳಿಗಿಂತ ಗುಂಡಿಗಳೇ ತುಂಬಿಕೊಂಡಿರುವ ಪ್ರದೇಶಗಳಲ್ಲಿ ದಿನವೂ ವಾರ್ತಾಲಾಪ ನಡೆಸಿಕೊಂಡು ಹೋಗುವುದಕ್ಕಿಂತ ಇಲ್ಲಿನ ರಸ್ತೆಗಳಲ್ಲಿನ ಒಂದೆರಡು ಗುಂಡಿಗಳ ಬದುಕಿನ ಬಗ್ಗೆ ಒಂದಿಷ್ಟು ಕುತೂಹಲವನ್ನು ತೋರಿದರೂ ಸಾಕು, ಅವುಗಳಲ್ಲಿ ಅದೆಷ್ಟೋ ದೊಡ್ಡ ದೊಡ್ಡ ಕಥೆಗಳೇ ಹುದುಗಿವೆ. ರಾತ್ರೋ ರಾತ್ರಿ ಹುಟ್ಟಿಬೆಳೆಯುವ ನಾಯಿಕೊಡೆಗಳ ಹಾಗೆ ಇವತ್ತಿರದ ಗುಂಡಿಗಳು ನಾಳೆ ಎಲ್ಲಿ ಬೇಕಂದರಲ್ಲಿ ಎದ್ದು ಬಿಟ್ಟಾವು, ಐದು-ಹತ್ತು ಟನ್ ಭಾರವನ್ನು ಹೊರುವ ಟ್ರಕ್‌ಗಳು ಮಾತ್ರ ಎಂದು ಫಲಕಗಳನ್ನು ಹಾಕಿದರೂ ಮುವತ್ತು-ನಲವತ್ತು ಟನ್ನ್ ತೂಕವನ್ನು ಬಡ ರಸ್ತೆಗಳ ಮೇಲೆ ಕೊಂಡೊಯ್ಯುವ ಮೂಢರಿರುವವರೆಗೆ. ರಾತ್ರೋ ರಾತ್ರಿ ಹುಟ್ಟುವ ಗುಂಡಿಗಳನ್ನು ರಾತ್ರೋ ರಾತ್ರಿ ಮುಚ್ಚಿ ಏನೇನೂ ಆಗಿಲ್ಲ ಎಂದು ತೋರಿಸುವಷ್ಟು ನಯ-ನಾಜೂಕಿನಿಂದ ಕೆಲಸ ಮಾಡುವವರನ್ನು ಕಲೆ ಹಾಕಿ ಈ ಗುಂಡಿಗಳಿಗೆ ಒಂದು ಕಾಯಕಲ್ಪ ಕೊಡದೇ ಹೋದರೆ ಗುಂಡಿಗಳು ಬೆಳೆದು ತಮ್ಮದೇ ಒಂದು ಸಂಘವನ್ನು ಕಟ್ಟಿಕೊಂಡು ಆಶ್ರಯ ನೀಡಿದ ರಸ್ತೆಗೇ ಕುತ್ತು ತಂದುಬಿಡಬಹುದಾದ ಆಪತ್ತಿದೆ. ಆದ್ದರಿಂದಲೇ ಅಮೇರಿಕದ ರಸ್ತೆಗಳು ಹಗಲೂ-ರಾತ್ರಿ ಎನ್ನದೇ ನಿರ್ಮಾಣಗೊಂಡವು ಜೊತೆಗೆ ಅವುಗಳ ದುರಸ್ತಿ ಕೂಡಾ ಹಾಗೇ ನಡೆದುಕೊಂಡು ಬಂದಿದೆ.

ಈ ಸಾರಿ ಈ ಹೆಸರಿಡದ ಗುಂಡಿ ಬಹಳ ಬೇಸರವಾಗಿದ್ದಂತೆ ಕಂಡುಬಂತು. ಹೆಚ್ಚು ಟ್ರಾಫಿಕ್ ಇರದಿದ್ದ ಕಾರಣ ನಾನು ನಿಧಾನಕ್ಕೆ ಅದರ ಮೇಲೆ ಕ್ರಮಿಸಿ ಒಂದು ಕ್ಷಣದ ಕಾಂಟ್ಯಾಕ್ಟ್‌ನಲ್ಲಿ ಅದರ ಮನದಾಳವನ್ನು ಕಣ್ಣಿನ ಡಾಕ್ಟರುಗಳು ರೆಟಿನಾವನ್ನು ನೋಡುವ ಹಾಗೆ ನೋಡಿದೆ. ಅದರಲ್ಲಿ ನಲಿವಿಗಿಂತಲೂ ಹೆಚ್ಚು ನೋವಿತ್ತು, ಹಿಂದಿನ ಚಕ್ರಗಳು ಅದೇ ಗುಂಡಿಯ ಮೇಲೆ ಹೋಗಿ ಕೆದಕಿ ನೋಡಲಾಗಿ ಇಂದು ರಾತ್ರಿ ಆ ಗುಂಡಿಯನ್ನು ಮುಚ್ಚಿ ಸರಿ ಮಾಡುತ್ತಾರೆ ಎನ್ನುವ ಮುನ್ಸೂಚನೆ ಸಿಕ್ಕಿತು. ನಾನಂದುಕೊಂಡಿದ್ದೆ, ಇಲ್ಲಿ ಈಗಾಗಲೇ ಸೊನ್ನೆಯ ತಾಪಮಾನ ಬಿದ್ದು ಕೊರೆಯುವ ಛಳಿ ಇದೆ, ಜೊತೆಗೆ ಒಂದೆರಡು ಬಾರಿ ಹಿಮಪಾತವೂ ಆಗಿದೆ. ಈ ಛಳಿ, ಮಳೆಯಲ್ಲಿ ರಸ್ತೆಯನ್ನು ಯಾರಾದರೂ ರಿಪೇರಿ ಮಾಡುವುದು ಸಾಧ್ಯವೇ ಎಂದು ಅನಿಸಿದ್ದರೂ ಕಡಿಮೆ ಜನರಿದ್ದೂ ಹೆಚ್ಚು ಮಷೀನುಗಳನ್ನು ಬಳಸುವಲ್ಲಿ, ಹಗಲೂ-ರಾತ್ರಿ, ಮಳೆ-ಛಳಿ-ಗಾಳಿಯಲ್ಲೂ ಕಷ್ಟಪಟ್ಟು ದುಡಿಯುವ ಇವರ ಡೆಡಿಕೇಷನ್ನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ’ಓಹ್, ನಮ್ಮ ಸಿಟಿ, ಕೌಂಟಿಯವರು ಟ್ಯಾಕ್ಸು ತೆಗೆದುಕೊಳ್ಳುತ್ತಾರೆ, ಅವರೇನು ರಸ್ತೆ ರಿಪೇರಿ ಮಾಡಿಸೋದು ಮಹಾ’ ಎಂದು ಯಾರು ಬೇಕಾದರೂ ಮೂಗು ಮುರಿಯಲಿ ಅವರ ಗುಂಡಿಗಳನ್ನು ನಿರ್ಮೂಲನ ಮಾಡುವ ದೃಢತೆಯನ್ನು ಮೆಚ್ಚಲೇ ಬೇಕು.

ಹಿಂದೆ ನಮ್ಮ ಅಜ್ಜೀ ಮನೆಯಲ್ಲಿನ ಸಿಮೆಂಟಿನ ಜಗುಲಿಯಲ್ಲಿ ಯಾರೋ ತೆಂಗಿನಕಾಯಿ ಸುಲಿಯಲು ಹೋಗಿ ಕತ್ತಿಯ ಕಚ್ಚು ತಾಗಿ ಒಂದು ಕಡೆ ಸಿಮೆಂಟ್ ಕಿತ್ತು ಹೋಗಿತ್ತು, ಅದನ್ನು ಎಷ್ಟು ಸರಿ ಮಾಡಿದರೂ ದಿನ ಬಿಟ್ಟು ದಿನ ಅದು ದೊಡ್ಡದಾಗಿ ಬೆಳೆಯುತ್ತಲೇ ಹೋಗಿ ಕೊನೆಗೆ ಇಡೀ ಜಗುಲಿಗೇ ಕುತ್ತು ತಂದಿತ್ತು. ಹಾಗೇ ಇಲ್ಲಿಯ ಪ್ರತಿಯೊಂದು ಗುಂಡಿಯೂ ಬೆಳೆದು ದೊಡ್ಡದಾಗೋದಿಲ್ಲವಲ್ಲ ಎಂಬ ಸಂಶಯ ನನ್ನ ಬೆನ್ನ ಹಿಂದೆ ಇತ್ತು. ಏನೇ ಆಗಲಿ ಇನ್ನೊಂದು ವಾರದಲ್ಲಿ ನೋಡೇ ಬಿಡೋಣ ಎಂದು ಸಂಕಲ್ಪ ಮಾಡಿಕೊಂಡವನಿಗೆ ಮರುದಿನವೇ ಮಹದಾಶ್ಚರ್ಯ. ನನ್ನ ಸ್ನೇಹಿತ ಗುಂಡಿಯಿರಲಿ ಅದು ಈ ಹಿಂದೆ ಅಲ್ಲಿ ಇದ್ದ ಬಗ್ಗೆಯೂ ಯಾವ ಪುರಾವೆ ಇರಲಿಲ್ಲ. ರಾತ್ರೋರಾತ್ರಿ ಯಾವುದೋ ಸೈನ್ಯವೊಂದು ರಸ್ತೆಯ ಮೇಲೆ ಬೀಡು ಬಿಟ್ಟ ಪರಿಣಾಮವೋ ಎಂಬುವಂತೆ ಪೂರ್ಣ ರಸ್ತೆ ತನ್ನ ಮಾಮೂಲಿ ಸ್ಥಿತಿಗೆ ಬಂದಂತಿತ್ತು, ಎಲ್ಲವೂ ಸ್ವಚ್ಛವಾಗಿತ್ತು. ನಮ್ಮೂರಿನಲ್ಲಿ ರಸ್ತೆ ಕಾಂಟ್ರಾಕ್ಟರುಗಳು ಆಕ್ರಮವಾಗಿ ಕಾಡನ್ನು ಕಡಿದು, ಕಟ್ಟಿಗೆಯನ್ನು ಉರಿಸಿ, ಅಳಿದುಳಿದ ಟಾರಿನ ಅಂಶವನ್ನು ರಸ್ತೆ ಬದಿಗೆ ಚೆಲ್ಲಿ ಹೋದಂತೆ ಯಾವ ಗುರುತಾಗಲೀ ಸಿಗ್ನೇಚರ್ ಆಗಲೀ ಕಾಣಸಿಗಲಿಲ್ಲ. ಕಡಿಮೆ ಜನರಿರುವ ಕಡೆ ಕೆಲಸ ಹೆಚ್ಚು ಇರಬೇಕು, ಕೆಲಸ ಹೆಚ್ಚಾದಂತೆ ಧಕ್ಷತೆ ಕಡಿಮೆ ಆಗಬೇಕು ಎಂದುಕೊಂಡಿದ್ದು ಸುಳ್ಳೇ ಆಗಿ ಹೋಯಿತು.

ಏನೇ ಇರಲಿ, ಯಾರೋ ರಾತ್ರೋ ರಾತ್ರಿ ಮಾಡಿದ ಕೆಲಸದ ಗತಿಯಿಂದಾಗಿ ರಸ್ತೆ ಮೇಲಿನ ನನ್ನ ಸ್ನೇಹಿತನೊಬ್ಬನ ತಳಮಳಗಳು ಇನ್ನು ಮುಂದೆ ನನಗೆ ತಿಳಿಯದೇ ಹೋಯಿತು. ತನ್ನ ಅಲ್ಪಾವಧಿಯಲ್ಲಿ ಅದೆಷ್ಟೋ ಜನರಿಗೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ನೆನಪಿಸಿದ ಗುಂಡಿಯನ್ನು ನಾವು ನೆನಪಿಡಬೇಕಾದ್ದು ನ್ಯಾಯವಲ್ಲವೇ?

Sunday, November 18, 2007

ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ...

ಮತ್ತದೇ ಮಬ್ಬು ಮುಸುಕಿಕೊಂಡು ಇರೋ ಒಂದು ಭಾನುವಾರವನ್ನೂ ಹೆಚ್ಚೂ ಕಡಿಮೆ ಕತ್ತಲೆಯಲ್ಲೇ ದೂಡಿ ಬಿಡುವ ಸಂಚನ್ನು ಯಾರು ಮಾಡಿದ್ದಾರೋ ಎನ್ನುವ ಅನುಮಾನ ಯಾರಿಗಾದರೂ ಬರುವಂತಿತ್ತು ಇವತ್ತಿನ ಹವಾಮಾನ. ಮೊನ್ನೆ ಒಂದಿಷ್ಟು ಸ್ನೋ ಫ್ಲೇಕ್ಸ್‌ಗಳನ್ನ ನೆಲಕ್ಕೆಲ್ಲಾ ಸಿಂಪಡಿಸಿ ಹಳೆಯ ನೆಂಟಸ್ತಿಕೆಯನ್ನು ಗುರುತಿಸಿಕೊಂಡು ಬರೋ ದೂರದ ಸಂಬಂಧಿಯ ಹಾಗೆ ಹೇಳದೇ ಕೇಳದೇ ಬಂದು ಹೆಚ್ಚು ಹೊತ್ತು ನಿಲ್ಲದ ಸ್ನೋ ಇವತ್ತು ಒಂದು ಮುಕ್ಕಾಲು ಇಂಚಿನಷ್ಟು ಬಂದು ಬಿದ್ದಾಗಲೇ ನಾನು ಮನಸ್ಸಿನಲ್ಲಿ ಮುಂಬರುವ ಕೆಟ್ಟ ಛಳಿಯನ್ನು ಯೋಚಿಸಿಕೊಂಡು ಒಮ್ಮೆ ನಡುಗಿ ಹೋಗಿದ್ದು. ಗ್ಲೋಬಲ್ ವಾರ್ಮಿಂಗ್ ಅಥವಾ ಎನ್ವೈರ್‌ಮೆಂಟನ್ನು ಚೆನ್ನಾಗಿಟ್ಟುಕೊಳ್ಳುವುದು ಹಾಗಿರಲಿ, ನಮ್ಮನೇ ಡೆಕ್ಕ್‌ನಲ್ಲಿರುವ ಥರ್ಮಾ ಮೀಟರ್ ಸೊನ್ನೆಯ ಆಜುಬಾಜುವಿನಲ್ಲಿ ತನ್ನೊಳಗೆ ಹುದುಗಿದ ಪಾದರಸವನ್ನು ಅದುಮಿಕೊಂಡಿರುವಾಗ ಫೈರ್‌ಪ್ಲೇಸ್‌ನಲ್ಲಿ ಬೆಂಕಿ ಉರಿಸದೇ ಬದುಕೋದಾದರೂ ಹೇಗೆ ಎಂದು ಇತ್ತೀಚೆಗಷ್ಟೇ ಅನ್ನಿಸಿದ್ದು.

ಮೊದಲೆಲ್ಲಾ ಶಾಲೆಗೆ ಹೋಗೋ ಹುಡುಗ್ರಾಗಿದ್ದಾಗ ಬೆಳ್ಳಂಬೆಳಗ್ಗೆ ಬಚ್ಚಲು ಮನೆ ಒಲೆಯ ಮುಂದೆ ಕುಳಿತೇ ಹಲ್ಲು ತಿಕ್ಕು ತಿದ್ದುದು. ಬಚ್ಚಲು ಮನೆಯ ಒಲೆಯೊಳಗೆ ಅದೆಷ್ಟು ಬಾರಿ ಗೋಡಂಬಿಯನ್ನೋ ಹಲಸಿನ ಬೀಜವನ್ನೋ ಸುಟ್ಟು ತಿಂದಿದ್ದಿಲ್ಲ. ಹಾಗೇ ಇಲ್ಲಿಯ ಫೈರ್‌ಪ್ಲೇಸ್‌ನೊಳಗೆ ಉರಿಯುವ ಜ್ವಾಲೆ ಹಳೆಯದನೆಲ್ಲ ನೆನಪಿಗೆ ತರುತ್ತದೆ. ಅಲ್ಲಿ ಬಚ್ಚಲ ಒಲೆಯ ಉರಿ ತನ್ನ ಮೇಲಿನ ತಣ್ಣೀರ ಹಂಡೆಯನ್ನು ಬಿಸಿ ಮಾಡಿಕೊಂಡಿರುತ್ತಿದ್ದರೆ ಇಲ್ಲಿಯ ಬೆಂಕಿ ತನ್ನೊಳಗಿನ ಉರಿ ಹಾಗೂ ಉಷ್ಟತೆಯನ್ನು ಚಿಮಣಿಯೊಳಗೆ ಏರಿಸಿಕೊಂಡು ಏದುಸಿರು ಬಿಡುವುದರಲ್ಲೇ ಸಂತೋಷ ಪಡುವಂತೆ ಕಾಣುತ್ತಿತ್ತು. ನಿಗಿ ನಿಗಿ ಉರಿದ ಬೆಂಕಿ, ತಾವೇ ಉರಿದು ತಮ್ಮನ್ನೇ ತಾವು ಅರ್ಪಿಸಿಕೊಳ್ಳುವ ಒಣಗಿದ ಕಟ್ಟಿಗೆ, ಕೆಂಪಾದ ಕೆಂಡ ಕಪ್ಪಾಗಿ ಮುಂದೆ ಬಿಳಿಯ ಬೂದಿಯಾಗೋದು, ಮಧ್ಯೆ ಯಾರಿಗೋ ಪಿಟಿಪಿಟಿ ಬಯ್ಯೋ ಮುದುಕಿಯ ಸ್ವರದ ಹಾಗೆ ಕಂಡು ಬರುವ ಚಟಪಟ ಸಿಡಿಯುವ ಸದ್ದು ಹೀಗೆ ನಮ್ಮನೆಯಲ್ಲಿನ ಫೈರ್‌ಪ್ಲೇಸ್‌ನ ಬೆಂಕಿಯದು ಒಂದೊಂದು ದಿನ ಒಂದೊಂದು ಕಥೆ. ಮೊದಲೆಲ್ಲಾ ಸ್ವಲ್ಪ ಬಿಸಿಯಾದ ನೀರನ್ನು ಸ್ನಾನ ಮಾಡಬಹುದಿತ್ತು, ಸ್ವಲ್ಪವೇ ಬೆಂಕಿ ಕಾಯಿಸಿಕೊಂಡಿದ್ದರೂ ಹಾಯ್ ಎನಿಸುತ್ತಿತ್ತು, ಇತ್ತೀಚೆಗಂತೂ ಎಷ್ಟು ಸುಡು ನೀರನ್ನು ಮೈ ಮೇಲೆ ಹೊಯ್ದುಕೊಂಡರೂ ಎಷ್ಟೇ ಬೆಂಕಿಯನ್ನು ಕಾಯಿಸಿಕೊಂಡರೂ ಮತ್ತಷ್ಟು ಬಿಸಿ ಬೇಕು ಎನ್ನಿಸುತಿದೆ. ಹೀಗೆ ವಯಸ್ಸು ಮಾಗುತ್ತಿರುವ ಹಾಗೆ ಚರ್ಮ ಸುಕ್ಕು ಸುಕ್ಕಾಗುತ್ತಿರುವಂತೆ ಮೈ ಮೇಲೆ ಬೀಳುವ ನೀರಿನ ಬಿಸಿಯೂ ಹೆಚ್ಚಾಗಬೇಕು, ಬೆಂಕಿಯ ಜ್ವಾಲೆಗೆ ಹತ್ತಿರ ಬರಬೇಕು, ಅಲ್ಲದೇ ಪ್ರತಿಯೊಂದು ವರ್ಷದ ಛಳಿಯ ಅನುಭವವೂ ಹಿಂದಿನ ವರ್ಷದ ಅನುಭವಕ್ಕಿಂತ ಕಟುವಾಗಬೇಕು.

ಕಿಟಕಿಯಿಂದ ಹೊರಗಡೆ ನೋಡಿದರೆ ಬಡವರ ಮೇಲೆ ದೌರ್ಜನ್ಯ ಮಾಡುವ ಬಿಳಿ ಬಟ್ಟೆ ತೊಟ್ಟ ರಾಜಕಾರಣಿಗಳ ಹಾಗೆ ಕೇವಲ ಹುಲ್ಲಿನ ಮೇಲೆ ಮಾತ್ರ ಅರ್ಧ ಅಂಗುಲದಷ್ಟು ಸ್ನೋ ಕಟ್ಟಿ ನಿಂತಿತ್ತು. ಹುಲ್ಲಿನ ಪಕ್ಕದಲ್ಲಿರುವ ಕರಿ ರಸ್ತೆಯಾಗಲೀ, ಗ್ರೇ ಬಣ್ಣದ ಸೈಡ್ ವಾಕ್ ಮೇಲಾಗಲೀ ಬೀಳುತ್ತಿದ್ದ ಸ್ನೋ ಕಟ್ಟಿ ನಿಲ್ಲುತ್ತಿರಲಿಲ್ಲ, ಅದೇ ಕಣ್ಣಿಗೆ ಕಾಣುವ ಕರಿದಾದ ಮನೆಯ ಛಾವಣಿಯ ಮೇಲೆ ಸ್ನೋ ತನ್ನ ಅಟ್ಟಹಾಸ ಸಾರುತ್ತಿತ್ತು. ನಿಸರ್ಗದತ್ತ ಕೊಡುಗೆಯಾದ ಹಿಮಕ್ಕೂ ಈ ಬಗೆಯ ಭಿನ್ನತೆ ಏಕೆ ಮನಸ್ಸಿನಲ್ಲಿ ಬಂತು ಎಂದು ನಾನೊಮ್ಮೆ ಯೋಚಿಸಿಕೊಂಡರೂ ಬೇರೇನೋ ಭೌತಿಕವಾದ ಬಲವಾದ ಕಾರಣವಿದೆ ಇದರ ಹಿಂದೆ ಎಂದು ತಲೆ ತೂಗಿಸಿ ಆ ವಸ್ತುವನ್ನು ಅಲ್ಲಿಗೇ ಬಿಟ್ಟೆ. ಬೆಳಗ್ಗಿನಿಂದ ಸಂಜೆವರೆಗೆ ಹೊರಗಡೇ ಪ್ರತಿಶತ ತೊಂಭತ್ತು ಭಾಗ ಆರ್ಧತೆ ಇರುವ ವ್ಯವಸ್ಥೆಯಲ್ಲಿನ ಮನೆಯೊಳಗೆ ಬೆಳಗ್ಗಿನಿಂದ ಸಂಜೆವರೆಗೆ ಉರಿಯುವ ಗ್ಯಾಸ್ ಹೀಟರ್‌ನ ಮಹಿಮೆಯೋ ಮತ್ತೊಂದು ಅತ್ಯಂತ ಡ್ರೈ ಹವೆಯಿರುವುದು ಮತ್ತೊಂದು ತಲೆತಿನ್ನುವ ಅಂಶ. ಬೇಕೋ ಬೇಡವಾಗಿಯೋ ತುರಿಸಿಕೊಳ್ಳಲೇ ಬೇಕು ಚರ್ಮವನ್ನು - ಕೆರೆದುಕೊಂಡಲ್ಲೆಲ್ಲಾ ಉರಿದುಕೊಳ್ಳೋದು ಸಾಮಾನ್ಯ, ಇನ್ನೇನಾದರೂ ಹೆಚ್ಚೂ ಕಡಿಮೆಯಾಗಿ ಘಾಯವಾಗಿ ಹೋದರೆ ಎನ್ನುವ ಹೆದರಿಕೆ ಬೇರೆ ಕೇಡಿಗೆ.

ಈಗಾಗಲೇ ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡಿರುವ ಪ್ರತಿಯೊಂದು ಮರಗಳೂ ದಿನವಿಡೀ ಬೀಳೋ ಬಿಳೀವಸ್ತುವಿನ ಎದಿರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಬೀಳುವಾಗ ಮಾತ್ರ ಶುದ್ಧ ಬಿಳಿಯಾಗಿ ಮರುದಿನದಲ್ಲೇ ಪ್ರಪಂಚದ ಕೊಳೆಯನ್ನು ತನ್ನ ಮುಖದಲ್ಲಿ ಬಿಂಬಿಸಿಕೊಳ್ಳುವ ರಸ್ತೆ ಬದಿಯ ಸ್ನೋ ಗೆ ಯಾಕೀ ಮರಗಳು ಅಷ್ಟೊಂದು ಮಹತ್ವಕೊಡುತ್ತವೆ ಎನ್ನುವುದನ್ನು ನಾನಂತೂ ಅರಿಯೆ. ತಮ್ಮ ಅಂಗುಲ ಅಂಗುಲಗಳಲ್ಲಿ ಈ ಬಿಳಿವಸ್ತುವನ್ನು ಏಕೆ ನಿಲ್ಲಿಸಿಕೊಳ್ಳಬೇಕು, ಗಾಳಿ ಬಂದ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಝಾಡಿಸಿ ಒದ್ದು ನೂಕಿದರೆ ಹೇಗೆ ಈ ಬಿಳಿವಸ್ತುವನ್ನ ಎಂದು ಮರದ ಪರವಾಗಿ ಯೋಚಿಸುತ್ತಿದ್ದ ನನ್ನ ಮನದಲ್ಲಿ ಬಂದ ಆಲೋಚನೆ. ಮನೆಯ ಹಿಂದೆ ಹಾಗೂ ಮುಂದೆ ಇರುವ ಬರ್ಚ್ ಮರಗಳಲ್ಲಿ ಯಾವುದೇ ಧಮ್ ಇದ್ದಂತಿರಲಿಲ್ಲ. ನಳಿ ನಳಿ ಬೇಸಿಗೆಯಲ್ಲೇ ತಮ್ಮ ಭಾರವನ್ನು ತಾವೇ ಹೊರಲಾರದ ಅಶಕ್ತ ಮರಗಳು ಆರು ತಿಂಗಳ ಛಳಿಯಲ್ಲಿ ಬದುಕಿ ಉಳಿದಾವೇ ಎನ್ನುವ ಸಂಶಯವೇ ಬಲವಾಗಿರುವಾಗ ಈ ಮರಗಳ ಹೊತ್ತುಕೊಂಡು ನನ್ನದಾದರೂ ಯಾವ ವಾದ? ಈ ಅಶಕ್ತ ಮರಗಳ ಬದಲಿಗೆ ಕುಬ್ಜ ನಿತ್ಯಹರಿದ್ವರ್ಣಗಲೇ ಎಷ್ಟೋ ವಾಸಿ, ತಮ್ಮ ಮೇಲೆ ಅದೆಷ್ಟೋ ಸ್ನೋ ಬಂದರೂ ಹೊತ್ತುಕೊಂಡು ಸುಮ್ಮನಿರುತ್ತವೆ, ಛಳಿಯಲ್ಲಿ ತಮ್ಮ ಎಲೆಗಳನ್ನು ಉಳಿಸಿಕೊಂಡು.

ಸಾಮಾನ್ಯ ದಿನಗಳಲ್ಲಿ ಮೂರೋ ಸಂಜೆಯ ಹೊತ್ತಿಗೆ ಗೂಡಿಗೆ ಹಿಂತಿರುಗುತ್ತಿದ್ದ ಪಕ್ಷಿಗಳ ಧ್ವನಿ, ಕಲರವ ಇಂದು ಕೇಳಿ ಬರಲಿಲ್ಲ. ಯಾವುದೇ ಸೀಜನ್ ಬಂದರೂ, ಯಾವುದೇ ಋತುಮಾನವಿದ್ದರೂ ತಮ್ಮ ಹುಟ್ಟುಡುಗೆಯಲ್ಲೇ ಕಾಳ ಕಳೆದು ಬದುಕನ್ನು ಸಾಗಿಸುವ ಈ ಪ್ರಾಣಿ-ಪಕ್ಷಿಗಳ ಬದುಕೇ ಒಂದು ಸೋಜಿಗೆ. ಇವುಗಳಿಗೆಲ್ಲಾ ಈ ಛಳಿಯಲ್ಲಿ ಕಾಳು-ಕಡಿಯನ್ನು ಯಾರು ಇಡುವವರು? ಆದ್ದರಿಂದಲೇ ಇರಬೇಕು ಶ್ರೀಮಂತ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಛಳಿ ಹೆಚ್ಚು ಇರುವುದು. ಅಳಿಲಿನಿಂದ ಹಿಡಿದು ದೊಡ್ಡ ಕರಡಿಯವರೆಗೆ ಬೇಸಿಗೆಯಲ್ಲಿ ಠೊಣಪರಂತೆ ತಿದ್ದು ಮೈ ಬೆಳೆಸಿಕೊಳ್ಳುವ ಈ ಪ್ರಾಣಿಗಳಿಗೆ ಮೊದಲು ಹಸಿವೆಂಬುದು ಏನು ಎಂದು ಕಲಿಸಿಕೊಡಬೇಕು. ಇಲ್ಲಿ ಇವುಗಳು ಹೈಬರ್‌ನೇಟ್ ಮಾಡುವುದಿರಲಿ, ಛಳಿಗಾಲಕ್ಕೆ ಆಹಾರ ಪದಾರ್ಥಗಳನ್ನು ಕೂಡಿ ಹಾಕಿಕೊಂಡರೂ ಬೇಕಾದಷ್ಟು ಜಾಗವಿದೆ, ಬಡದೇಶಗಳಲ್ಲಿನ ಸ್ಪರ್ಧೆ ಇರಬಹುದು ಇರದೆಯೂ ಇರಬಹುದು. ಆದರೆ ಇಂದು ಸಂಜೆ ಪಕ್ಷಿಗಳು ಹಿಂತಿರುಗಲೇ ಇಲ್ಲವಲ್ಲಾ, ದಿನವಿಡೀ ಓಡಾಡುವ ಅಳಿಲುಗಳು ಕಂಡುಬರಲಿಲ್ಲವಲ್ಲಾ? ಅವುಗಳೇನಾದರೂ ಬೇರೆ ಎಲ್ಲಿಯಾದರೂ ವಲಸೆ ಹೋದವೇನು? ಅಥವಾ ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಬರದೇ ಇರುವ ಶಪಥ ಮಾಡಿಕೊಂಡಿವೆಯೇನು?

ಇಲ್ಲಿನ ಮೋಡಗಳ ಅರ್ಭಟಕ್ಕೆ ಸೂರ್ಯನೂ ಇವತ್ತು ಹೆದರಿ ಸೋತು ಹೋಗಿದ್ದ. ಅವನ ಕಿರಣಗಳಿಂದಾದರೂ ನಮ್ಮ ನೆರೆಹೊರೆ ತುಸು ಗೆಲುವಾಗುತ್ತಿತ್ತು. ಇನ್ನು ಬಿದ್ದ ಬಿಳಿವಸ್ತು ನಾಳೆಗೆ ಕರಗಿ ನೀರಾಗುವುದಿರಲಿ, ಬೀಳುವಾಗ ಪುಡಿಪುಡಿಯಾಗಿದ್ದುದು ಈ ನೆಲದ ರುಚಿ ಕಂಡಕೂಡಲೇ ಗಡುಸಾಗಿ ಹೋಗುವುದು ಮತ್ತೊಂದು ವಿಶೇಷ, ತಾನು ನೆಲದ ಛಳಿಯನ್ನು ರಾತ್ರೋಹಗಲೂ ಅನುಭವಿಸಿದ ಮಾತ್ರಕ್ಕೆ ತಾನು ಎಂದು ಎಂದೆಂದಿಗೂ ಬದಲಾದ ಹಾಗೆ ಘಟ್ಟಿ ರೂಪವನ್ನು ತೋರಿಸುವುದನ್ನು ನೋಡಿದರೆ ನಮ್ಮ ನೆರೆಹೊರೆಯಲ್ಲಿ ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ ಎನ್ನಿಸಿದ್ದು ನಿಜ. ಪ್ರಪಂಚದಾದ್ಯಂತ ಬೇಕಾದಷ್ಟಿದೆ ನೀರು, ಆದರೂ ಜನ ಬರದಲ್ಲಿ ಸಾಯುತ್ತಾರೆ. ಇಂದು ಬಿದ್ದ ಹಿಮದಿಂದ ನಮ್ಮ ನೆರೆಹೊರೆಗೂ ಅಗಾಧವಾದ ನೀರು ಬಂದಿದೆ, ನೆಲವೆಲ್ಲ ಹಸಿಯಾಗಿದೆ , ಆದರೆ ಈ ತೇವ ಹುಲ್ಲನ್ನು ಹಸಿರು ಮಾಡದೇ ಒಣಗಿಸಿ ಹಾಕುತ್ತದೆ ಎನ್ನುವುದು ಇತ್ತೀಚಿಗೆ ನಾನು ಗಮನಿಸಿದ ಸತ್ಯಗಳಲ್ಲೊಂದು.

Saturday, November 17, 2007

ಒಳ್ಳೆಯ-ಕೆಟ್ಟ ಮುಂಜಾವು

ನಿನ್ನೆ, ಆಫೀಸಿಗೆ ಹೋಗೋಕೆ ಹೊತ್ತಾಯ್ತು ಎಂದು ಘಂಟೆ ಬಜಾಯಿಸುತ್ತಿದ್ದ ಎರಡೆರಡು ಅಲಾರ್ಮ್‌ಗಳ ನಡುವೆಯ ಸ್ನೂಜ್‌ ಸಮಯದಲ್ಲಿ ಪ್ರಪಂಚದ ಅದ್ಯಾವುದೋ ನಿಗೂಢ ರಹಸ್ಯವೊಂದನ್ನು ಬೇಧಿಸುವಂತಹ ಕನಸುಗಳುಳ್ಳ ನಿದ್ರೆ, ಇನ್ನೂ ಮುಗಿಯದ ಅನೇಕ ವ್ಯಾಪಾರ ವಹಿವಾಟಿನ ಕುರುಹಾಗಿ ಹೊತ್ತು ಕಳೆದಷ್ಟೂ ಅಷ್ಟೇ ಜೋರಾಗಿ ಅಮರಿಕೊಳ್ಳುತ್ತಿದ್ದ ನಿದ್ರೆಯ ಜೊಂಪು ಎಂದರೆ ಸರಿಯಾದೀತು. ಅಷ್ಟರಲ್ಲೇ ಕಿಟಕಿಯ ಕರ್ಟನ್ನುಗಳನ್ನು ತೂರಿಕೊಂಡು ಅದೆಲ್ಲಿಂದಲೋ ಬಂತು ಸೂರ್ಯನ ಕಿರಣವೊಂದು. ದಡಕ್ಕನೇ ಎದ್ದು ಇಷ್ಟು ಹೊತ್ತಾಗಿ ಹೋಗಿ ಕಳೆದ ಸಮಯವನ್ನೆಲ್ಲ ಹಲ್ಲು ತಿಕ್ಕುವುದರಲ್ಲೇ ಉಳಿಸಿಬಿಡುವ ಆತುರದಲ್ಲಿ ಬಚ್ಚಲು ಮನೆಯ ಕಡೆಗೆ ಹೊರಟ ನನಗೆ ’ಹೊರಗಡೆ ಇಷ್ಟೊಂದು ಬೆಳಕಿದೆಯೇ?!’ ಎಂದು ಪ್ರಶ್ನೆಯೂ ಅದರ ಬೆನ್ನ ಹಿಂದೆ ಆಶ್ಚರ್ಯವೂ ಹುಟ್ಟಿ ಬಂತು.

ಈ ಫಾಲ್ ಸೀಜನ್ ಹುಟ್ಟಿದಾಗಿನಿಂದ ಅಷ್ಟೊಂದು ಬೆಳಕನ್ನು ನೋಡಿದ್ದಿರಲಿಲ್ಲ. ಪ್ರತಿ ದಿನವೂ ಮಂಜನ್ನು ಮುಸುಕಿಕೊಂಡು ಅಥವಾ ಮೋಡಗಳನ್ನು ಕಟ್ಟಿಕೊಂಡು ಪ್ರಪಂಚದ ಆಶಾಭಾವನೆಗಳು ಎಂಬ ಸೂರ್ಯನ ಕಿರಣಗಳನ್ನು ಹತ್ತಿರವೂ ಸುಳಿಯಗೊಡದ ವಾತಾವರಣವೋ ಅಥವಾ ಯಾವಾಗ ಬೇಕೋ ಆಗ ಡೇ ಲೈಟ್ ಸೇವಿಂಗ್ ಸಮಯವನ್ನು ಬದಲಾಯಿಸಿ ಕೊನೆಗೂ ಕತ್ತಲ ಸಮಯವನ್ನು ಹೆಚ್ಚು ಮಾಡಿ ಬೆಳಕನ್ನು ಹೆಚ್ಚಿಸುತ್ತೇವೆ ಎಂಬ ಲಾ ಮೇಕರ್ರುಗಳ ತಂತ್ರವೋ - ಇವೆಲ್ಲವೂ ಸೇರಿ ಇದುವರೆವಿಗೂ ಇಷ್ಟು ಬೆಳ್ಳಗಿನ ಬೆಳಕನ್ನು ನೋಡಿರಲಿಲ್ಲ ನಾನು ಈ ಕೆಲವು ತಿಂಗಳುಗಳಲ್ಲಿ ಎಂಬ ಮಾತನ್ನು ನಿಜ ಮಾಡಿದ್ದವು. ಮನೆಯ ಹೊರಗಡೆ ಬಂದು ನೋಡುತ್ತೇನೆ, ಪದೇಪದೇ ಬೀಸುವ ಗಾಳಿಯ ಹೊಡೆತಕ್ಕೆ ಸಿಕ್ಕು ತತ್ತರಿಸಿಯೂ ಅದೆಷ್ಟೋ ಮರಗಿಡಗಳು ಬದಲಾದ ತಮ್ಮ ರಂಗನ್ನು ಇನ್ನೂ ಹೊತ್ತು ನಿಂತಿದ್ದವು. ಕೆಂಪು-ಕೇಸರಿ ಬಣ್ಣಕ್ಕೆ ತಿರುಗಿದ ಎಲೆಗಳ ನಡುವೆ ಹಾದು ಹೋಗುತ್ತಿದ್ದ ಸೂರ್ಯನ ಕಿರಣಗಳು ಮನಮೋಹಕವಾಗಿ ತಮ್ಮದೇ ಆದ ಕಿನ್ನರ ಲೋಕವೊಂದನ್ನು ಸೃಷ್ಟಿಸಿದ್ದವು. ಇನ್ನೂ ಹಸಿರನ್ನು ಹೆಚ್ಚಾಗಿ ಹೊದ್ದ ಮರಗಳಿಗೂ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಹೆಚ್ಚು ಕಡಿಮೆ ಬೋಳಾದ ಮರಗಳಿಗೂ ಮುಸುಡಿಯ ಮೇಲೆ ನಾಚಿಕೆಯ ಛಾಯೆ ಆವರಿಸಿದ್ದಂತಿತ್ತು. ’ಓಹ್, its a great day!' ಎನ್ನುವ ಉದ್ಗಾರ ನನಗರಿಯದಂತೆಯೇ ಹೊರಗೆ ಬಂತು.

ಮನೆಯಿಂದ ಆಫೀಸಿನ ಮಾರ್ಗಕ್ಕೆ ಹೋಗುವಲ್ಲಿ ಸಿಕ್ಕ ಸಿಕ್ಕ ಮರಗಿಡಗಳನ್ನೂ, ರಸ್ತೆ ಬದಿಯ ಪ್ರತಿಯೊಂದು ವಸ್ತುವನ್ನು ಅವುಗಳ ನೆರಳಿನ ಸಮೇತ ಇದುವರೆವಿಗೂ ಯಾವತ್ತೋ ನೋಡೇ ಇಲ್ಲ ಎನ್ನುವ ಹಾಗೆ ನೋಡಿಕೊಳ್ಳುತ್ತಲೇ ಹೋದೆ. ಇನ್ನೇನು ಮನೆಯಿಂದ ಒಂದೂವರೆ ಮೈಲು ಬಂದಿರಬಹುದು ಆಗ ನನ್ನ ಸೆಲ್ ಫೋನ್ ಹೊಡೆದುಕೊಳ್ಳಲಾರಂಭಿಸಿತು. ಒಡನೆಯೇ ನಿಸರ್ಗವನ್ನು ಆರಾಧಿಸುತ್ತಿದ್ದ ಮನಸ್ಸು ವಾಸ್ತವಕ್ಕೆ ಬಂದು ಕಾಲರ್ ಐಡಿ ನೋಡುವ ಮೊದಲೇ ಯಾರಿರಬಹುದು ಎನ್ನುವ ಊಹೆಯಂತಹ ಸರಳ ಹಾಗೂ ಕೃತ್ರಿಮ ಕೆಲಸಕ್ಕೆ ಮುಂದಾಯಿತು. ಯಾವುದೋ ಗುರುತಿಗೆ ಸಿಗದ ನಂಬರ್, ’ಹಲೋ’ ಅಂದರೂ ತಪ್ಪು, ಅನ್ನದೇ ಬಿಟ್ಟರೂ ತಪ್ಪು, ಏನಾದರಾಗಲೀ ಎಂದು ಉತ್ತರ ನೀಡಿದೆ.

’ನಿಮ್ಮ ಮನೆ ಸೆಕ್ಯುರಿಟಿಯ ಕಂಪನಿಯವರು ಕರೆ ಮಾಡುತ್ತಿದ್ದೇವೆ, ಒಂದೇ ನಿಮ್ಮ ಮನೆಯ ಮುಂದಿನ ಬಾಗಿಲೋ ಅಥವಾ ಗರಾಜಿನಿಂದ ಒಳ ಹೋಗುವ ಬಾಗಿಲೋ ತೆರೆದಿದ್ದು ಬರ್ಗ್ಲರ್ ಅಲಾರ್ಮ್ ಹೊಡೆದುಕೊಳ್ಳುತ್ತಿದೆ, ಏನು ಮಾಡಬೇಕು ಹೇಳಿ, ಪೋಲೀಸರನ್ನು ಕಳಿಸಿ ನೋಡಲು ಹೇಳೋಣವೇ?’ ಎಂಬ ಧ್ವನಿಯೊಂದು ಕೇಳಿಸಬೇಕೇ...ನನ್ನ ಎಲ್ಲ ಸೆನ್ಸುಗಳೂ ಫೋನ್ ಕರೆಯನ್ನು ಆಲಿಸುತ್ತಿದ್ದ ಕಿವಿಗೆ ಬಲವನ್ನು ನೀಡಿದವು. ನಾನು ಈಗಷ್ಟೇ ಮನೆಯಿಂದ ಹೊರಡುವಾಗ ಆಲಾರ್ಮ್ ಎನೇಬಲ್ ಮಾಡಿ ಹೊರಬಂದಿದ್ದೆ, ಎರಡರಲ್ಲೊಂದು ಬಾಗಿಲು ತೆರೆದುಕೊಂಡಿರುವುದು ಹೇಗೆ ಸಾಧ್ಯ? ’ನಾನೇ ವಾಪಾಸ್ ಹೋಗಿ ನೋಡುತ್ತೇನೆ, ನಾನು ನಿಮಗೆ ಕರೆ ಮಾಡದೇ ಇದ್ದರೆ ಎಲ್ಲವೂ ಸರಿಯಾಗಿದೇ ಎಂದುಕೊಳ್ಳಿ’ ಎಂದು ಆತನ ಧ್ವನಿಯನ್ನು ಕುಕ್ಕಿದೆ. ಯೂ ಟರ್ನ್ ತೆಗೆದುಕೊಂಡು ವಾಪಾಸು ಬಂದೆ.

ವಾಪಾಸು ಬಂದು ನೋಡಿದರೆ ಯಾವ ಕಳ್ಳ-ಕಾಕರೂ ಇರಲಿಲ್ಲ, ಗರಾಜು ಡೋರ್ ಮುಚ್ಚುವಾಗ, ಮನೆಯ ಒಳಗೆ ಹೋಗುವ ಸಣ್ಣ ಬಾಗಿಲು ಗಾಳಿಯ ಹೊಡೆತಕ್ಕೆ ತೆಗೆದುಕೊಂಡಿತ್ತು. ಅದನ್ನು ಮುಚ್ಚಿ ಮತ್ತೆ ಅಲಾರ್ಮ್ ಎನೇಬಲ್ ಮಾಡಿ ಹೊರಡುವಷ್ಟರಲ್ಲಿ ’ಓಹ್, ಆಫೀಸಿಗೆ ಲೇಟ್ ಆಗೇ ಹೋಯಿತು!’ ಎನ್ನುವ ತವಕದ ಮುಂದೆ ಇನ್ನೂ ಹೊರಗಡೆ ಭೂಲೋಕದಲ್ಲಿ ಸ್ವರ್ಗದ ಸನ್ನಿವೇಶವೊಂದರ ಶೂಟಿಂಗ್ ನಡೆಸುತ್ತಿದ್ದ ದೇವರ ಕಾರ್ಯಕ್ರಮಗಳು ಗಮನಕ್ಕೆ ಬಂದರೂ ಭೌತಿಕ ಲೋಕದ ಗಡಿಬಿಡಿ ಬೇರೆಲ್ಲವನ್ನೂ ತನ್ನಲ್ಲಿ ನುಂಗಿಕೊಂಡಿತ್ತು. ’ಛೇ, ಎಂಥಾ ಸುಂದರವಾದ ಮುಂಜಾವು...’ ಎಂದುಕೊಂಡು ಮತ್ತೆ ಗಾಡಿ ಓಡಿಸತೊಡಗಿದ್ದ ನನಗೆ ನಿರಾಶೆ ಕಾದಿತ್ತು. ಮನೆಯಿಂದ ಮತ್ತೆ ಎರಡು ಮೈಲು ಮುಂದೆ ಬರುವಷ್ಟರಲ್ಲಿ ವಿಂಡ್ ಶೀಲ್ಡಿನ ಮೇಲೆ ಹನಿಗಳು ಬೀಳ ತೊಡಗಿದ್ದವು. ಅದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ಸೂರ್ಯನ ಕಿರಣಗಳು ಕಣ್ಣಿಗೆ ಹೊಡೆಯದಿರಲಿ ಎಂದು ಏಕಾದರೂ ಕಪ್ಪು ಕನ್ನಡಕವನ್ನು ಧರಿಸಿದೆನೋ, ಅದನ್ನು ನೋಡೇ ಸೂರ್ಯನ ಕಿರಣಗಳು ಹಿಂದಕ್ಕೆ ಸರಿದವೋ ಎನ್ನುವ ಅನುಮಾನ ಮೂಡುವ ಹಾಗೆ ಒಂದೊಂದೇ ಕಿರಣಗಳು ಅದ್ಯಾವುದೋ ಮೋಡಗಳ ಹಿಂಡಿನ ಹಿಂದೆ ಮರೆಯಾಗಿ ಹೋದವು.

ಒಂದು ಒಳ್ಳೆಯ ಮುಂಜಾವು ಕೆಟ್ಟ ಮುಂಜಾವಾಗಿ ಬದಲಾಗಲು ಅಥವಾ ಅದೇ ಸಾಧಾರಣ ಮುಂಜಾವಾಗಿ ಪರಿವರ್ತನೆ ಹೊಂದಲು ಹೆಚ್ಚು ಸಮಯವಿದೆ ಎಂದು ಅನ್ನಿಸಲೇ ಇಲ್ಲ. ಜೊತೆಗೆ ಮೊಟ್ಟ ಮೊದಲನೇ ಬಾರಿಗೆ ಸೃಷ್ಟಿಯ ಪ್ರತಿಯೊಂದೂ ಸೌಂದರ್ಯ ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಸುಳ್ಳು ಎನಿಸಿದ್ದೂ ನಿಜವೂ ಹೌದು.

Tuesday, November 13, 2007

ಸಹೋದ್ಯೋಗಿಯೊಬ್ಬನಿಗೆ ತಗುಲಿಕೊಂಡ ಕ್ಯಾನ್ಸರ್

ಇವತ್ತು ನಮ್ಮ ಆಫೀಸಿನಲ್ಲಿ ನನ್ನ ಸಹೋದ್ಯೋಗಿಯೊಬ್ಬನಿಗೆ ಅವನ ಡಾಕ್ಟರ್ ಚರ್ಮದ ಕ್ಯಾನ್ಸರ್ ಇರುವುದಾಗಿ ಡಯಾಗ್ನೋಸ್ ಮಾಡಿದ್ದಾಗಿ ತಿಳಿಸಿದ, ನನಗೆ ಒಂದು ಕ್ಷಣ ಅವನ ಮಾತುಗಳನ್ನು ನಂಬಲು ಕಷ್ಟವಾಯಿತು. ಎಷ್ಟೊಂದು ಸಂತೋಷವಾಗಿ ಆಡಿಕೊಂಡು ಹಾಡಿಕೊಂಡು ಇದ್ದವನಿಗೆ ಚರ್ಮದ ಕ್ಯಾನ್ಸರ್ ಈಗಾಗಲೇ ಉಲ್ಬಣಗೊಂಡಿರುವುದರಿಂದ ಅರ್ಜೆಂಟಾಗಿ ಸರ್ಜರಿ ಮಾಡಿಸಬೇಕು ಹಾಗೂ ಅನೇಕ ಕ್ಯಾನ್ಸರ್ ಸಂಬಂಧಿ ಟ್ರೀಟ್‌ಮೆಂಟುಗಳನ್ನು ಕೊಡಿಸಿಕೊಳ್ಳಬೇಕು ಎಂದು ಅವನ ವೈದ್ಯರು ತಾಕೀತು ಮಾಡಿದ್ದಾರಂತೆ. ನಾವು ಕುಶಾಲಕ್ಕೆ ಮಾತನಾಡುತ್ತಿದ್ದಾಗಲೇ ಅವನು ತನ್ನ ಖಾಯಿಲೆಯ ಬಗ್ಗೆ ಸಹಜವಾಗಿ ಪ್ರಸ್ತಾಪ ಮಾಡಿದ್ದು ನನಗೆ ಆಶ್ಚರ್ಯ ತರಿಸಿದರೂ ಅವನ ಮನದಾಳದಲ್ಲಿನ ದುಗುಡ ಸ್ವಲ್ಪ ಇಣುಕಿ ನೋಡಿದವರಿಗೆ ತಿಳಿಯುವಂತಿತ್ತು.

ಮಾನವನ ವೈದ್ಯಕೀಯ ಜ್ಞಾನ ಬೆಳೆದಂತೆ ತಿಳುವಳಿಕೆ ಬೆಳೆದಂತೆ ಅವನಿಗೆ ತಗಲುವ ರೋಗಗಳೂ ಅವುಗಳ ಕಾಂಪ್ಲಿಕೇಷನ್ನುಗಳೂ ಹೆಚ್ಚೆನಿಸೋದಿಲ್ಲವೇ? ನನಗೆ ಮೊದಲೆಲ್ಲ ನೆಲಗಡಲೆಯನ್ನು ತಿಂದೂ ಅಲರ್ಜಿಯಾಗುತ್ತದೆ ಅಮೇರಿಕದಲ್ಲಿ ಕೆಲವರಿಗೆ ಎಂದು ಕೇಳಿ ಬಹಳಷ್ಟು ಆಶ್ಚರ್ಯವಾಗುತ್ತಿತ್ತು, ಆದರೆ ಇತ್ತೀಚೆಗೆ ಅಂತಹ ಅಲರ್ಜಿ ಪೀಡಿತ ವ್ಯಕ್ತಿಯೊಬ್ಬರನ್ನು ನೋಡಿದಾಗ ನನ್ನ ನಂಬಿಕೆಯನ್ನು ಬದಲಿಸಿಕೊಳ್ಳಬೇಕಾಗಿ ಬಂತು. ನಮ್ಮ ಸೀನಿಯರ್ ಮೆಂಬರ್ ಒಬ್ಬರಿಗೆ ಅವರ ರಿಟೈರ್‌ಮೆಂಟು ಎಂದು ನಾವೆಲ್ಲರೂ ಕೇಕ್ ತಂದಿರಿಸಿದರೆ ಅವರು ನನಗೆ ಗೋಧಿ ಅಲರ್ಜಿ ಇದೆ ಎಂದಾಗ ನಂಬಲು ಕಷ್ಟವಾಯಿತು. ವೈರಾಣುಗಳೂ, ಬ್ಯಾಕ್ಟೀರಿಯಾಗಳು ನಮ್ಮ ವಿರುದ್ಧ ಸಮರ ಸಾರಿರುವಂತಿದೆ. ನಾವು ಮುಂದುವರೆದಂತೆಲ್ಲ ಅವುಗಳ ತಳಿ ಅಷ್ಟೇ ಪ್ರಭಲವಾಗುತ್ತಿದೆ. ಈಗೆಲ್ಲ ಮೊದಲಿನ ಹಾಗೆ ಕ್ಷಯ, ಸಿಡುಬಿನ ಪ್ಯಾಂಡೆಮಿಕ್ ಸನ್ನಿವೇಶ ಇಲ್ಲದಿರಬಹುದು, ಪ್ರಪಂಚದಾದ್ಯಂತ ಮಿಲಿಯನ್ನ್ ಗಟ್ಟಲೆ ಜನರನ್ನು ಆಕ್ರಮಿಸಿಕೊಂಡಿರುವ ಏಯ್ಡ್ಸ್ ರೋಗವೊಂದೇ ಸಾಕು ಕೆಲವೊಮ್ಮೆ ಮಾನವ ಸಂತಾನವನ್ನು ನಿರ್ಮೂಲನ ಮಾಡಲು ಎಂದು ಒಮ್ಮೆ ಭಯವಾಗುತ್ತದೆ.

ಕ್ಯಾನ್ಸರ್ ಬರುವುದರ ಹಿಂದೆ ನೂರಾರು ಕಾರಣಗಳಿದ್ದಿರಬಹುದು. ಒಬ್ಬ ವ್ಯಕ್ತಿ ನಲವತ್ತು ವರ್ಷ ನಿರಂತರವಾಗಿ ಹೊಗೆಬತ್ತಿ ಸೇದಿ ಆತನಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದರೆ ಅದನ್ನು ಕೇಳಿ ಆಶ್ಚರ್ಯವಾಗುವುದಕ್ಕಿಂತ ಹೆಚ್ಚು ಯಾವುದೇ ದುಶ್ಚಟ ಉಳ್ಳವರೂ, ಮಾಂಸಾಹಾರವನ್ನೂ ಮಾಡದವರೂ ಕ್ಯಾನ್ಸರ್‌ಗೆ ತುತ್ತಾಗುವುದನ್ನು ಕೇಳಿ ಬಹಳಷ್ಟು ಬೇಸರವಾಗುತ್ತದೆ. ಅವರವರ ಕರ್ಮ ಫಲ ಎಂದು ಸುಲಭವಾಗಿ ತಳ್ಳಿ ಹಾಕುವುದಕ್ಕಿಂತ ಮೊದಲು ಯಾರಿಗೂ ಹೇಳಿ ಯಾರನ್ನೂ ಕೇಳಿ ಬರದ ಈ ರೋಗಗಳಿಂದ ಮುಕ್ತಿಯನ್ನು ಪಡೆಯುವುದಾದರೂ ಎಂದು? ಚರ್ಮದ ಕ್ಯಾನ್ಸರ್ ಬಂದೀತೆಂದು ಮುಖ, ಮೈ, ಬೆನ್ನುಗಳನ್ನು ಪ್ರತೀ ದಿನವೂ ಪರೀಕ್ಷಿಸಿಕೊಳ್ಳಲಾಗುತ್ತದೆಯೇ? ಅಲ್ಲಲ್ಲಿ ಹುಟ್ಟಿ ಸಾಯುವ ಮಚ್ಚೆಗಳಿಗೆಲ್ಲ ಚರ್ಮ ರೋಗ ತಜ್ಞರ ಬಳಿ ಹೋಗಲಾಗುತ್ತದೆಯೇ? ಬಿಸಿಲಿಗೆ ಹೋದಾಗಲೆಲ್ಲ ಮುಖಕ್ಕೆ, ಮೈ ಕೈಗೆ ಸನ್‌ಸ್ಕ್ರೀನ್ ಲೋಷನ್ ಮೆತ್ತಿಕೊಳ್ಳಲಾಗುತ್ತದೆಯೇ? ಹಾಗಿದ್ದ ಮೇಲೆ ಎಲ್ಲೋ ಒಂದು ದಿನ ಕೇರ್ ಫ್ರೀ ಆಗಿ ಬದುಕುವವರು ತಮ್ಮ ಜೀವವನ್ನೇ ಆ ಒಂದು ಕೇರ್ ಫ್ರೀ ಕ್ಷಣಕ್ಕೆ ಬಲಿಕೊಡಬೇಕಾಗಿ ಬಂದಾಗ ಬದುಕು ಬಹಳ ದುಬಾರಿ ಅನ್ನಿಸೊದಿಲ್ಲವೇ? ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಕುಟುಂದ ಹಿರಿಯರನ್ನು ಕಳೆದುಕೊಂಡ ಸದಸ್ಯರು, ಅನಾಥರಾಗುವ ಮಕ್ಕಳು ಇವುಗಳಿಗೆಲ್ಲ ಕ್ಯಾನ್ಸರ್ ಎನ್ನುವ ಮಾರಕ ರೋಗ ಯಾವ ರೀತಿಯ ಪರಿಣಾಮ ಬೀರಬಲ್ಲದು ಎನ್ನಿಸಿ ಒಮ್ಮೆ ಮರುಕ ಹುಟ್ಟಿತು.

ವೈದ್ಯಕೀಯ ಪರಿಭಾಷೆಯಲ್ಲಿ ಆಯಾ ಹಂತದ ಕ್ಯಾನ್ಸರ್‌ಗಳನ್ನು ನೋಡಿ - ’ನೀನು ಸಾಯುವುದು ಗ್ಯಾರಂಟಿ’ ಎಂದು ತೀರ್ಪು ಕೊಟ್ಟಾಗ ಆ ವ್ಯಕ್ತಿಯ ಮನಸ್ಥಿತಿ ಹೇಗಿರಬಹುದು? ಅವನನ್ನು ನಂಬಿಕೊಂಡ, ಆಧರಿಸಿಕೊಂಡ ಕುಟುಂಬದವರ ಮೇಲಿನ ಪರಿಣಾಮ ಹೇಗಿರಬಹುದು? ಯಾರದೋ ತಪ್ಪಿಗೆ ಯಾರಿಗೆ ಶಿಕ್ಷೆ ಎನ್ನುವಂತೆ ಆ ವ್ಯಕ್ತಿ ಈ ರೋಗ ತನಗೇಕೆ ತಗಲಿಕೊಂಡಿತೋ ಎಂದು ಮನಪೂರ್ತಿ ಪರಿಪರಿ ಆಲೋಚಿಸುವ ರೀತಿ ಹೇಗಿರಬಹುದು? ಇವುಗಳನ್ನೆಲ್ಲ ಯೋಚಿಸಿಕೊಂಡಷ್ಟೂ ನನ್ನ ಮೇಲಿನ ನಿರಾಶೆಯ ಮೋಡ ದಟ್ಟವಾಗತೊಡಗಿತೇ ವಿನಾ ಎಲ್ಲೂ ಬೆಳಕಿನ ಕಿರಣಗಳು ಕಾಣಿಸಲಿಲ್ಲ.

ನನ್ನ ಸಹೋದ್ಯೋಗಿ, ನಮ್ಮಿಂದ ಸಹಾನುಭೂತಿ ಬಯಸದೇ ಇರಬಹುದು, ನಮ್ಮಿಂದ ಯಾವ ಸಹಾಯವನ್ನೂ ಬಯಸದೇ ಇರಬಹುದು. ಆದರೆ ಇಷ್ಟು ವರ್ಷಗಳ ನಮ್ಮೊಡನಿದ್ದು, ಅಕಸ್ಮಾತ್ ಈ ರೋಗಕ್ಕೆ ತುತ್ತಾಗಿ ಒಂದು ಇಲ್ಲವೆಂದಾಗುತ್ತಾನೆ ಎಂದು ಯೋಚಿಸಿಕೊಂಡಾಗ ಒಂದು ಕಡೆ ಜೀವನ ಕ್ಷಣಿಕ ಎನ್ನುವ ವೈರಾಗ್ಯವೂ ಮತ್ತೊಂದು ಕಡೆ ಜೀವನ ಎಷ್ಟೊಂದು ಅಮೂಲ್ಯ ಎನ್ನುವ ಶೋಧನೆಯೂ ಹೊರಕ್ಕೆ ಬಂದವು. ನನ್ನ ಸಹೋದ್ಯೋಗಿಯೇನೋ ದಿನವಿಡೀ ನಾನಾ ರೀತಿಯಲ್ಲಿ ಕ್ಯಾನ್ಸರ್ ಅನ್ನು ನೆನೆಸಿಕೊಂಡು ನಗುತ್ತಲೇ ಇದ್ದ, ಮುಂದೊಂದು ದಿನ ಆತನಿಗೆ ಅಂಟಿದ ರೋಗದಿಂದ ಅವನಿಗೆ ಮುಕ್ತಿ ಸಿಕ್ಕೀತು ಎನ್ನೋದು ನನ್ನ ಆಶಾಭಾವನೆ ಅಷ್ಟೇ.

ಕ್ಯಾನ್ಸರ್‌ಗೆ ಸಿಕ್ಕಿ ಸಾಯುವವರಿಗಿಂತ ಮೋಟಾರು ವಾಹನಗಳ ಅಫಘಾತದಲ್ಲಿ ಸಿಕ್ಕಿ ಸಾಯುವವರು ಹೆಚ್ಚಿರಬಹುದು, ಆದರೆ ಅವೆರಡೂ ಭಿನ್ನ ನೆಲೆಗಳೇ. ಸಂಖ್ಯಾ ಆಧಾರದಲ್ಲಿ ಇಂತದೊಂದು ರೋಗ ಹೆಚ್ಚು ಅಥವಾ ಕಡಿಮೆ ಎಂದು ಹೇಳುವುದು ಸುಲಭವಾಗಿರಬಹುದು. ತಮ್ಮಷ್ಟಕ್ಕೆ ದ್ವಿಗುಣ, ತ್ರಿಗುಣಗೊಂಡು ಬೆಳೆಯುವ ಜೀವ ಕೋಶಗಳು ಒಂದು ದಿನ ಏಡಿಗಂಥಿಗಳಾಗಿ ಎಲ್ಲೆಡೆ ಹರಡಿ ಮನುಷ್ಯನ ಬದುಕನ್ನು ಧಾರುಣಗೊಳಿಸುವಂತಹ ಕೆಟ್ಟ ಖಾಯಿಲೆ ಇನ್ನೊಂದಿರಲಾರದು. ಅಂತಹ ರೋಗಗಳಿಗೆ ಏನೇನೋ ಔಷಧಿ ಮತ್ತೊಂದು ಮಾಡಿ ಸಾಯುವವರೆಗೆ ಅನುಭವಿಸುವ ಬದಲು ಇದ್ದಕ್ಕಿದ್ದ ಹಾಗೆ ಹಾರ್ಟ್ ಆಟ್ಯಾಕ್ ಆಗಿ ಸಾಯುವುದೇ ಮೇಲೆಂದು ಅನ್ನಿಸಿದ್ದಂತೂ ನಿಜ!

Friday, November 09, 2007

ನಮ್ಮ್ ದೀಪಾವಳಿ ಆಚರಣೇನೇ ಬೆಷ್ಟ್!

ನಿಮ್ಮೂರಲ್ಲೆಲ್ಲಾ ಹೇಗೋ ಗೊತ್ತಿಲ್ಲ, ನಮ್ಮೂರಲ್ಲಂತೂ ವಾತಾವರಣ ಬಹಳಷ್ಟು ತಣ್ಣಗಾಗಿ ಹೋಗಿದೆ, ನಿನ್ನೆ ಬೆಳಿಗ್ಗೆ ಬಿಲೋ ಫ್ರೀಜಿಂಗ್, ಇಪ್ಪತ್ತಾರು-ಇಪ್ಪತ್ತೇಳು ಡಿಗ್ರಿ ಫ್ಯಾರನ್‌ಹೈಟ್ ಇದ್ದಿದ್ದು ನೋಡಿ ನನಗಂತೂ ಇದ್ದ ಛಳಿ ಇನ್ನಷ್ಟು ಹೆಚ್ಚಾಗಿ ಹೋಯಿತು. ಈಗಾಗ್ಲೇ ಒಡೆದು ಹೋಗಿರೋ ಮೈ ಕೈಗೆ ನರಕ ಚತುರ್ದಶಿ ಪ್ರಯುಕ್ತವಾಗಿ ಎಣ್ಣೆ ಸವರಿ ಸ್ನಾನ ಮಾಡಿದ್ದು ಬಹಳ ಒಳ್ಳೇದೇ ಅನ್ನಿಸ್ತು. ಸದ್ಯ ನೀರ್ ತುಂಬೋ ಹಬ್ಬಾ ಎಲ್ಲಾ ವಾರದ ದಿನದಲ್ಲೇ ಬಂತು ಆದ್ರಿಂದ ಬೇಗನೇ ಸ್ನಾನಾ ಮಾಡಿ ಆಫೀಸಿಗೆ ಓಡಿದ್ದೇ ಬಂತು, ಅದರ ಬದಲಿಗೆ ವೀಕ್‌ಎಂಡ್ ಅಂಥಾ ಏನಾದ್ರೂ ಅಂದ್ಕೊಂಡಿದ್ರೆ ನಾವೆಲ್ಲಾ ಸೂರ್ಯಾ ಕಣ್ ಬಿಟ್ಟ್ ಮೇಲೆ ಏಳೋರು, ಕೊನೆಗೆ ಚತುರ್ದಶಿ ಮುಗಿದು ಹೋಗಿ ಅಮವಾಸೆ ದಿನಾ ಮಾತ್ರ ಸ್ನಾನಾ ಮಾಡಿ ನರಕ ಮಾತ್ರ ಗ್ಯಾರಂಟಿ ಸಿಗ್ತಾ ಇತ್ತು.

ನಮ್ ದೀಪಾವಳಿ ಆಚರಣೇನೇ ಬೆಸ್ಟ್ ಅಂತೀನಿ, ವಾಹನ ಪೂಜೆ, ಅಂಗಡಿ ಪೂಜೆ ಅನ್ನೋದೇನೂ ಇಲ್ಲ ಬರೀ ನಾವೆಲ್ಲ ಲಕ್ಷ್ಮೀ ಪೂಜೆಗೆ ಒತ್ತು ಕೊಡೋರು ಯಾವತ್ತಿದ್ರೂ. ಪುರುಸೊತ್ತಿದ್ರೆ ಏನಾದ್ರೂ ವಿಶೇಷವಾಗಿ ಅಡುಗೆ ಮಾಡ್ತೀವಿ, ಇಲ್ಲಾ ಅಂತಂದ್ರೆ ದೇವಸ್ಥಾನಕ್ಕ್ ಹೋಗಿ ಅಲ್ಲಿನ ಕ್ಯಾಫೆಟೇರಿಯಾದಲ್ಲೇ ಏನಾದ್ರೂ ಸಿಹಿ ತಿಂದು ಬರ್ತೀವಿ. ಪಟಾಕಿಗಳಾಗಲೀ, ಬಾಣಬಿರುಸಾಗಲೀ ಹೊಡೆಯೋದೇ ಇಲ್ಲ, ಇನ್ನು ಸುರುಸುರು ಬತ್ತಿಯೂ ಸದ್ದೂ ಇಲ್ಲ. ಎಲ್ಲವೂ ಫೈರ್ ಪ್ರೂಪ್ ಮನೆಗಳಲ್ಲಿ ಹೆದರಿಕೊಂಡು ಉರಿಯೋ ಹಾಗಿನ ಊದಿನಬತ್ತಿಯ ಥರ, ಅದರ ಹೊಗೆಯೂ ಧಾರಾಳವಾಗಿ ಎಲ್ಲಿ ಬೇಕಂದಲ್ಲಿ ಹರಡುವಂತಿಲ್ಲ, ಸೀದಾ ದೇವರ ಕೋಣೆಯ ಮಂಟಪದಿಂದ ಕಿಟಕಿಯ ಕಡೆಗೆ ನಡೆಯಬೇಕು. ಅಲ್ದೇ ಹೊರಗಡೆ ಕೊರೆಯೋ ಛಳಿಯಲ್ಲಿ ಹೆಚ್ಚು ಹೊತ್ತು ಕಿಟಕಿ ಬಾಗಿಲನ್ನು ತೆಗೆದಿಡೋಕೂ ಆಗೋದಿಲ್ಲವಾದ್ದರಿಂದ ಪೂರ್ಣ ಊದಿನಕಡ್ಡಿ ಉರಿಯೋ ಅಷ್ಟು ವ್ಯವಧಾನವೂ ನಮಗಿದ್ದಂತಿಲ್ಲ.

ಊರಿನಲ್ಲಿರೋ ಮನೇ ಮಂದಿಗಾಗಲೀ ಸ್ನೇಹಿತರಿಗಾಗ್ಲೀ ಫೋನ್ ಮಾಡಿ ಶುಭಾಶಯಗಳನ್ನು ಹೇಳಬಹುದಿತ್ತು, ಅಂತಹ ಮಹತ್ತರ ಘಳಿಗೆಗೆಲ್ಲಾ ವೀಕ್‌ಎಂಡೇ ಸಮ. ವಾರದ ದಿನಗಳಲ್ಲಿ ಫೋನ್ ತಿರುಗಿಸಿ ನಿಧಾನವಾಗಿ ಮಾತನಾಡೋದಕ್ಕೆ ಯಾರಿಗೂ ಪುರುಸೊತ್ತು ಇದ್ದ ಹಾಗೆ ಕಾಣಿಸಲಿಲ್ಲ. ಪಾಪ, ನಮಗಿಂತ ವ್ಯಸ್ತರಾಗಿರೋ ಅವರೇ ಭಾರತದಿಂದ ಕರೆ ಮಾಡಿ, ಎಸ್‌ಎಮ್ಮೆಸ್ ಕಳಿಸಿ ಶುಭಾಶಯಗಳನ್ನು ಹಂಚಿಕೊಂಡಿದ್ದು ಇತ್ತೀಚಿನ ದಿನಗಳ ವಿಶೇಷಗಳಲ್ಲೊಂದು. ಭಾರತದಲ್ಲಂತೂ ಮೊಬೈಲ್ ಫೋನ್ ಕ್ರಾಂತಿಯೇ ಕ್ರಾಂತಿ - ಮೆಸ್ಸೇಜುಗಳನ್ನು ಇಲ್ಲಿಗಿಂತಲೂ ಅಲ್ಲಿ ಹೆಚ್ಚಾಗಿಯೇ ಬಳಸುತ್ತಾರೇನೋ ಅನ್ನಿಸಿತು, ಒಂದು ಕಾಲದಲ್ಲಿ ಕಮ್ಯೂನಿಕೇಷನ್ನ್ ಅನ್ನೋದೇ ಇರಲಿಲ್ಲವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ. ಈ ಸಂವಹನಗಳಲ್ಲಿ ಎಲ್ಲ ಥರನಾದ ಮೆಸ್ಸೇಜುಗಳಿವೆ, ನವರಸ ನವಭಾವಗಳಿಗನುಗುಣವಾಗಿ.

ನಿಮ್ಮ ದೀಪಾವಳಿ ಆಚರಣೆ ಹೇಗಿತ್ತು ಅಂತ ಬರೀರಿ. ಮನೇ ಹೊರಗಡೆ ದೀಪಗಳನ್ನು ಇಟ್ಟಿದ್ರೋ ಇಲ್ವೋ? ನಿಮ್ಮ ಮನೆಯವರಿಗೆ ಮಕ್ಕಳಿಗೆ ಹೊಸ ಬಟ್ಟೆಬರೆ ತಂದಿದ್ರೋ ಹೇಗೆ? ದೇವಸ್ಥಾನಕ್ಕೆ ಹೋಗಿದ್ರಾ, ಲಕ್ಷ್ಮೀ ಪೂಜೆ ಮಾಡಿದ್ರಾ? ನಮ್ಮ್ ಹಬ್ಬಗಳ ಯಾದಿ ಇಲ್ಲಿಗೆ ಮುಗಿದ ಹಾಗೆ ಕಾಣ್ಸುತ್ತೆ, ಇನ್ನು ಬರೋದೇನಿದ್ರೂ ಅಮೇರಿಕನ್ ಹಬ್ಬಗಳು - ವೆಟಿರನ್ಸ್ ಡೇ, ಥ್ಯಾಂಕ್ಸ್‌ಗಿವಿಂಗ್, ಕ್ರಿಸ್‍ಮಸ್, ನ್ಯೂ ಇಯರ್!

ಹ್ಯಾಪ್ಫೀ ಹಾಲಿಡೇಯ್ಸ್!

Thursday, November 08, 2007

ನಾನೊಬ್ಬ ಬ್ಲಾಗಿಷ್ಟು!

ಫುಡ್ ನೆಟ್‌ವರ್ಕ್‌ನಲ್ಲಿ ರೇಚಲ್ ರೇ ನಡೆಸಿಕೊಡುವ ಮುವತ್ತು ನಿಮಿಷಗಳ ಕಾರ್ಯಕ್ರಮದ ಬಗ್ಗೆ ನಿಮಗೆ ಗೊತ್ತಿರಬಹುದು (30 Minute Meals with Rachael Ray). ಅಡುಗೆಗೆ ಬೇಕಾದ ಹೆಚ್ಚಿನ ತಯಾರಿಗಳನ್ನು ಮೊದಲೇ ಮಾಡಿಕೊಂಡು ಒಂದು ಕ್ಲೀನ್ ಕಿಚನ್ ನಿಂದ ಆರಂಭವಾಗುವ ಕಾರ್ಯಕ್ರಮ ಮುವತ್ತು ನಿಮಿಷಗಳ ತರುವಾಯ ಏನಿಲ್ಲವೆಂದರೂ ಥ್ರೀ ಕೋರ್ಸ್ ಮೀಲ್ ಒಂದನ್ನು ಫ್ಯಾಮಿಲಿಯ ಮಟ್ಟದಲ್ಲಿ ತಯಾರು ಮಾಡುತ್ತದೆ. ಅಡುಗೆ ಮಾಡುವುದು ಸುಲಭ ಹಾಗೂ ಅದು ಹೆಚ್ಚು ಸಮಯವನ್ನು ತೆಗೆದುಕೊಳ್ಳಬೇಕು ಎನ್ನುವುದೇನೂ ಇಲ್ಲ ಎನ್ನುವುದು ಕಾರ್ಯಕ್ರಮದ ಮೂಲ ಮಂತ್ರ.

ನಾನು ಬ್ಲಾಗ್ ಬರೆಯುವ ವಿಚಾರಗಳು ಬಂದಾಗಲೆಲ್ಲ ’ಅಂತರಂಗ’ದ ಅವತರಣಿಕೆಗಳನ್ನು ರೇಚಲ್ ರೇ ನಡೆಸುವ ಮುವತ್ತು ನಿಮಿಷದ ಕಾರ್ಯಕ್ರಮಕ್ಕೆ ಹೋಲಿಸಿಕೊಂಡಿದ್ದೇನೆ. ಆದರೆ ರೇಚಲ್ ಮುವತ್ತು ನಿಮಿಷಗಳ ತರುವಾಯ dazzling dishes ಅನ್ನು ಪ್ರಸ್ತುತ ಪಡಿಸಿದರೆ ಈ ಲೇಖನಗಳು ಹೊರ ಬರುವಾಗ, ಬಂದ ಮೇಲೆ ಬೋರ್ ಹೊಡೆಸುವುದೇ ಹೆಚ್ಚು. ಲೇಖನಗಳನ್ನು ಬರೆಯುವುದಕ್ಕೂ ನಾನು ಅಡುಗೆಯ ಪದಾರ್ಥಗಳನ್ನು ಮುಂಚಿತವಾಗಿ ತಯಾರು ಮಾಡಿಟ್ಟುಕೊಳ್ಳುವಂತೆ ವಿಚಾರಗಳನ್ನು ’ಪ್ರಿ-ಕುಕ್’ ಮಾಡಿಕೊಂಡಿರುತ್ತೇನೆ, ಅವಕಾಶ ಸಿಕ್ಕಾಗ ಮುವತ್ತು ನಿಮಿಷಗಳಲ್ಲಿ ಕುಟ್ಟಿ ಬಿಸಾಕುತ್ತೇನೆ.

***

ಯಾವುದೋ ಒಂದು ವಿಷಯದ ಬಗ್ಗೆ ಓದುಗರ ಗಮನವನ್ನಾಗಲೀ ಬರೆಯುವವರ ಚಿಂತನೆಯನ್ನಾಗಲೀ ಹೆಚ್ಚು ಹೊತ್ತು ಇಟ್ಟುಕೊಳ್ಳದಿರುವ ಬ್ಲಾಗಿನ ಸ್ವಭಾವದ ಮಿತಿಯಲ್ಲಿ ಗಹನವಾದ ವಿಷಯವನ್ನು ಕೇವಲ ಅರ್ಧ ಘಂಟೆಗೆ ಸೀಮಿತವಾಗಿಸಿ ಆ ವಿಷಯದ ನಾಜೂಕುತನವನ್ನು ನಾನು ಮೊಟಕುಗೊಳಿಸಲು ಸಿದ್ಧನಿಲ್ಲದಿದ್ದರೂ ಎಷ್ಟೋ ಸಾರಿ ಲೇಖನಗಳು ಇನ್ನೂ ಬೆಳೆಯಬಹುದಿತ್ತು ಎನ್ನಿಸುತ್ತದೆ. ಬರವಣಿಗೆಯ ಉಳಿದ ಪ್ರಾಕಾರಗಳಲ್ಲಿ ಸೃಷ್ಟಿಯಾಗುವ ಪಾತ್ರಗಳು ಇಲ್ಲಿಲ್ಲ, ಪಾತ್ರಗಳ ಹಿಂದಿನ ಮನಸ್ಥಿತಿಯ ತಲ್ಲಣಗಳ ಮೇಲೆ ಬೆಳಕು ಬೀರುವ ವ್ಯವಧಾನವಿಲ್ಲ. ನಾನು ಬ್ಲಾಗ್ ಪೋಷ್ಟ್ ಒಂದನ್ನು ಬರೆಯಬಲ್ಲೆ ಎನ್ನುವ ಹೆಮ್ಮೆಯ ಹಿಂದೆ ಅದು ಕೇವಲ ಅರ್ಧ ಘಂಟೆ ನನಗೊದಗಿಸುವ ಸವಾಲಿನ ಬಗ್ಗೆ ಒಮ್ಮೊಮ್ಮೆ ಹೆದರಿಕೆಯಾಗುತ್ತದೆ, ಮತ್ತೊಮ್ಮೆ ಹಿಂಸೆಯಾಗುತ್ತದೆ. ಅದೇ ರೀತಿ ದಿನೇದಿನೇ ಉಕ್ಕಿ ಬರುವ ಭಾವನೆಗಳನ್ನು ಒಂದು ಕಡೆ ಕೂಡಿಟ್ಟು ಮತ್ಯಾವುದೋ ಒಂದು ರೀತಿಯಲ್ಲಿ ತೊಡಗಿಕೊಳ್ಳುತ್ತೇನೆ ಮುಂದೊಂದು ದಿನ ಎನ್ನುವುದೂ ಕಷ್ಟದ ಮಾತಾಗುತ್ತದೆ. ಒಂದು ಕಾಲದಲ್ಲಿ ಬರವಣಿಗೆಯ ಶಿಸ್ತನ್ನು ರೂಪಿಸಿಕೊಳ್ಳುವುದಕ್ಕಾಗಿ ಹುಟ್ಟಿ ಬಂದ ಬ್ಲಾಗ್ ಬರಹಗಳು ಇಂದು ಅವೇ ಅನಿವಾರ್ಯವೇನೋ ಎನ್ನುವಂತಾಗಿದ್ದು ನಿಜವೂ ಹೌದು.

ಬ್ಲಾಗಿನ ಅನುಕೂಲವೆಂದರೆ - ಡೆಸ್ಕ್‌ಟಾಪ್ ಪಬ್ಲಿಷಿಂಗ್. ನಿಮ್ಮ ಲೇಖನಗಳು ಬೇರೆ ಯಾರ ಅವಗಾಹನೆಗೂ ಸಿಕ್ಕಬೇಕಾಗಿಲ್ಲ, ಅವು ಪ್ರಕಟವಾಗುವವರೆಗೂ ಕಾಯಬೇಕಾಗಿಲ್ಲ, ಯಾರಿಗೂ ’ದಯವಿಟ್ಟು ಪ್ರಕಟಿಸಿ’ ಎಂದು ಹಲ್ಲುಗಿಂಜಬೇಕಾದುದಿಲ್ಲ. ಆದರೆ ನಿಮ್ಮ ಲೇಖನಗಳಿಗೆ ನೀವು ಹಾಗೂ ನೀವು ತೊಡಗಿಸುವ ಸಮಯವೇ ಮಿತಿ. ನಾನಂತೂ ಒಮ್ಮೆ ಬರೆದುಕೊಂಡ ಹೋದ ಲೇಖನಗಳನ್ನು ಮತ್ತೆ ತಿದ್ದುವುದೂ ಇಲ್ಲ, ಅಲ್ಲಲ್ಲಿ ಕಾಗುಣಿತವನ್ನು ಸರಿಪಡಿಸುವುದು ಬಿಟ್ಟರೆ. ಅಲ್ಲದೇ, ಹೆಚ್ಚಿನ ಲೇಖನಗಳು ಲೇಟ್ ನೈಟ್ ಅಥವಾ ಅರ್ಲಿ ಮಾರ್ನಿಂಗ್ ಮನಸ್ಥಿತಿಯಲ್ಲೇ ಹುಟ್ಟಿ ಬಂದವುಗಳಾದ್ದರಿಂದ ಅವುಗಳಿಗೆ ಬೇಕಾದಷ್ಟು ಮಿತಿಗಳಿವೆ. ಮುನ್ನೂರಕ್ಕೂ ಮೇಲ್ಪಟ್ಟು ಲೇಖನಗಳನ್ನು ಬರೆದ ಮೇಲೆ ಬ್ಲಾಗ್ ಬರಹಗಳಷ್ಟು ಸುಲಭವಾದುದು ಇನ್ನೊಂದಿಲ್ಲವೆನ್ನಿಸಿದ್ದು ನಿಜ, ಆದರೆ ಎಲ್ಲರೂ ಬ್ಲಾಗ್ ಮಾಧ್ಯಮಕ್ಕೆ ಬಂದು ಬಿಟ್ಟಾರೇನೋ ಎಂಬ ಹೆದರಿಕೆಯೂ ಅದರ ಹಿಂದಿರುವುದು ಸ್ಪಷ್ಟ.

***

ನಾನು ಕೆಲವು ವರ್ಷಗಳ ಹಿಂದೆ ಮಯೂರ ಮಾಸಪತ್ರಿಕೆಯನ್ನು ಒಂದೆರಡು ವರ್ಷಗಳ ಕಾಲ ಅಮೇರಿಕಕ್ಕೆ ತರಿಸುತ್ತಿದ್ದೆ. ಅದರಲ್ಲಿ ಪ್ರಕಟವಾಗುತ್ತಿದ್ದ ಸಣ್ಣ ಕಥೆಗಳು ವಿಶೇಷವಾಗಿ ನನಗೆ ಇಷ್ಟವಾಗುತ್ತಿದ್ದವು. ಮೊನ್ನೆ ಬೇಸ್‌ಮೆಂಟಿನಲ್ಲಿ ಏನನ್ನೋ ಹುಡುಕುತ್ತಿದ್ದವನಿಗೆ ಹಳೆಯ ಮಯೂರವೊಂದು ಸಿಕ್ಕಿತು, ಹಾಗೇ ಅದರಲ್ಲಿನ ಕಥೆಯೊಂದನ್ನು ಓದಿಕೊಂಡು ಹೋದೆ. ಆ ಬರಹದ ಮೋಹಕತೆ ನನ್ನನ್ನು ವಿಶೇಷವಾಗಿ ಆಕರ್ಷಿಸಿತು, ಒಂದು ಸಣ್ಣಕಥೆಯ ಹಂದರದಲ್ಲಿ ಪಾತ್ರಗಳಿದ್ದವು, ಚೆನ್ನಾಗಿ ಆಲೋಚಿಸಿ ಬರೆದ ಬರವಣಿಗೆ ಇತ್ತು, ಕೊನೆಯವರೆಗೂ ಓದಿಸಿಕೊಂಡು ಹೋಗುವ ರೋಚಕತೆ ಆ ಬರಹದಲ್ಲಿತ್ತು. ಹಾಗೇ ಕಾದಂಬರಿ, ನಾಟಕ, ಕವನ, ಮುಂತಾದವುಗಳಿಗಾಗಲೀ ಅಥವಾ ಲಘು ಪ್ರಬಂಧಗಳಿಗಾಗಲೀ ಅವುಗಳದ್ದೇ ಆದ ವಿಷಯ ಸೂಕ್ಷ್ಮತೆ ಇದೆ, ಆಳವಿದೆ. ಆದರೆ ನಾನು ಓದಿದ ಬ್ಲಾಗಿನ ಬರಹಗಳಲ್ಲಿ ವಿಷಯ ಸೂಕ್ಷ್ಮತೆ, ಅವುಗಳ ಬೆಳವಣಿಗೆಗಳು ಸದಾ ಅರ್ಜೆಂಟಿನಲ್ಲಿಯೇ ಹುಟ್ಟಿ ಬಂದವುಗಳಾಗಿ ಕಂಡುಬರುತ್ತಿವೆ. ’ಕಾಯದಿದ್ದರೆ ಕೆನೆ ಕಟ್ಟದು’ ಎನ್ನುವ ಆಡು ಮಾತಿನ ಹಿನ್ನೆಲೆಯಲ್ಲಿ ಈ ಬ್ಲಾಗ್ ಪೋಸ್ಟುಗಳಿಗೆ ಯಾರಿಗೂ ಕಾಯುವ ವ್ಯವಧಾನವಾಗಲೀ, ಯಾರಿಂದ ಯಾವ ಪ್ರತಿಕ್ರಿಯೆಯನ್ನು ನೀರೀಕ್ಷಿಸುವ ತಾಳ್ಮೆಯಾಗಲೀ ಇಲ್ಲವೇ ಇಲ್ಲವೇನೋ ಎನ್ನುವುದು ನನ್ನ ಅನಿಸಿಕೆ ಅಷ್ಟೇ.

ಅನಿಸಿಕೆಯ ವಿಚಾರಕ್ಕೆ ಬಂದಾಗ - ಹೆಚ್ಚಿನ ಬ್ಲಾಗ್ ಪೋಸ್ಟ್‌ಗಳು ಅನಿಸಿಕೆಗಳು ಅಥವಾ ಅನುಭವಗಳು. ಅದರಲ್ಲಿ ಕಲಾತ್ಮಕತೆ ಇದೆಯೇ ಎನ್ನುವುದು ಸೋಜಿಗದ ಪ್ರಶ್ನೆ. ಬ್ಲಾಗ್ ಪೋಸ್ಟ್‌ನ ವಾಕ್ಯಗಳು ತುಂಡು-ತುಂಡು ವಾಕ್ಯಗಳು. ಎಲ್ಲಾದರೂ ಒಂದೆರಡು ಉದ್ದುದ್ದ ವಾಕ್ಯಗಳನ್ನು ಬಳಸಿದರೂ ಓದುಗರನ್ನು ಕಳೆದುಕೊಳ್ಳುವ ಹೆದರಿಕೆ ಈ ಬರಹಗಳಿಗೆ. ಪ್ರತಿಯೊಂದು ಬರಹವೂ ರೋಚಕವಾಗಬೇಕು, ಹೆಚ್ಚು ಜನಪ್ರಿಯವಾಗಬೇಕು, ಎಲ್ಲರ ಹಾಗೆ ನಾವೂ ಒಂದು ಪುಸ್ತಕವಾಗಬೇಕು ಎನ್ನುವ ತುಡಿತ ಬರಹದ ಹೆಡ್ಡಿಂಗ್‌ನಿಂದ ಹಿಡಿದು ಕೊನೆಯವರೆಗೂ ’ರಾಜ್ಯ ಪ್ರಶಸ್ತಿಯನ್ನು ನಮಗೇ ಕೊಡಿ’ ಎಂದು ಲಾಬಿ ಎಬ್ಬಿಸುವ ಬರಹಗಾರರ ಹಿಂಡಿನ ಹಾಗೆ ಕಾಣಿಸುತ್ತವೆ. ಈ ಬರಹಗಳಲ್ಲಿ ಕಾಂಟ್ರವರ್ಸಿಯಿಂದ ಹೊರಗುಳಿಯುವುದು ಅನಿವಾರ್ಯವಾಗುತ್ತದೆ, ಏಕೆಂದರೆ ಇಲ್ಲಿನ ಓದುಗರ ಮನಸ್ಥಿತಿ ಮೊದಲೇ ಗೊತ್ತಿರುವುದರಿಂದ ಅವರಿಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಎನ್ನುವುದರ ಬಗ್ಗೆ ಒತ್ತು ಕೊಡಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಯೋಚಿಸಿದಾಗ ಈ ಹಿಂದೆ ಒಂದಿಷ್ಟು ಬರಹಗಳನ್ನು ಬ್ಲಾಗ್ ಮೂಲಕ ಪ್ರಕಟಿಸಿ ಮರೆಗೆ ಸೇರಿದ ಎಷ್ಟೋ ಜನರ ಬಗ್ಗೆ ನನಗೆ ಗೌರವವಿದೆ, ಬ್ಲಾಗ್ ಬರಹಗಳು ಅವರಿಗೆ ಅಲ್ಟಿಮೇಟ್ ಸಂತೋಷವನ್ನು ತಂದುಕೊಡದೇ ಇರಬಹುದು, ಹಾಗೆ ಆಗದಿರಲಿ. ಅದರಿಂದಾಲಾದರೂ ಅವರು ತಮ್ಮ ಬರಹದ ಸೆಲೆಯನ್ನು ಮತ್ತಿನ್ನೆಲ್ಲಾದರೂ ಬೇರೆ ಮಾಧ್ಯಮದ ಮೂಲಕ ಉಕ್ಕಿಸಲಿ. ಎಲ್ಲೂ ಯಾವುದಕ್ಕೂ ತೊಡಗಿಕೊಳ್ಳದ ಎಷ್ಟೋ ಮಿತಿಗಳನ್ನು ಒಳಗೊಂಡ ಬ್ಲಾಗ್ ಬರಹಗಳು ನನ್ನಂತಹವರಿಗಿರಲಿ. ಒಂದಿಷ್ಟು ಲೇಖಕರಿಗೆ ನಾವೂ ಸೃಜನಶೀಲರಾಗ ಬೇಕು ಎನ್ನುವ ತುಡಿತವಿದೆ, ಮತ್ತಿನ್ನೊಂದಿಷ್ಟು ಲೇಖಕರಿಗೆ ದಿಢೀರ್ ಖ್ಯಾತಿಯನ್ನು ಪಡೆಯುವ ಅಭಿವ್ಯಕ್ತಿ ಇದೆ. ಅಮೇರಿಕದಲ್ಲಿ ದೊಡ್ಡ ಬರಹಗಾರರು ಎನ್ನುವ ಹಣೆಪಟ್ಟಿಯನ್ನು ಬಹಳ ಜನ ತಮ್ಮಷ್ಟಕ್ಕೆ ತಾವೇ ಅಂಟಿಸಿಕೊಂಡು ನಗೆಪಾಟಲಿಗೆ ಗುರಿಯಾಗಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಮತ್ತಿನ್ನೊಂದಿಷ್ಟು ಜನ ಹೇಳುವ ಹಾಗೆ ಅಮೇರಿಕದಲ್ಲೂ ಗಂಭೀರವಾದ ಕನ್ನಡ ಬರಹಗಾರರು ಇರುವುದು ಸಾಧ್ಯವೇ ಎನ್ನುವುದನ್ನು ಕುರಿತು ಆಲೋಚಿಸಿದ್ದೇನೆ.

***

ಯಾರು ಕಿವಿ ಮುಚ್ಚಿದರೂ ಎನಗಿಲ್ಲ ಚಿಂತೆ ಎನ್ನುವ ಬ್ಲಾಗ್ ಪರಿಧಿ ಇಷ್ಟೇ. ಹಾಗೆ ಹಾಡುವ ಸಂಗೀತಗಾರ ಸಭೆಯಲ್ಲಿ ಎಷ್ಟು ಹೊತ್ತು ಹಾಡಬಲ್ಲ? ನನಗೆ ಬೇಕಾದುದನ್ನು ನನಗೆ ಬೇಕಾದ ರೀತಿಯಲ್ಲಿ ಹಾಡುತ್ತೇನೆ, ಕೇಳೋರಿದ್ದರೆ ಕೇಳಿ ಇಲ್ಲದಿದ್ದರೆ ಇಲ್ಲ ಎನ್ನುವ ಕಾರ್ಯಕ್ರಮಕ್ಕೆ ಟಿಕೇಟ್ ಹಣ ಕೊಟ್ಟು ಯಾರು ಯಾಕಾದರೂ ಬರುತ್ತಾರೆ? ಬ್ಲಾಗ್ ಬರಹಗಳು ಗೊಂದಲಗಳನ್ನು ಹೊರಹಾಕಬಲ್ಲವೇ ವಿನಾ ಅವು ಇನ್ಯಾವ ಮಹಾನ್ ಸಾಧನೆಯನ್ನು ಮಾಡಿವೆ, ಕೆಲವರ ಲೇಖನಗಳು ಪ್ರವಾಸಾನುಭವ, ತಮ್ಮ ಹಳೆಯ ಲೇಖನಗಳನ್ನು ಹೊತ್ತುಕೊಳ್ಳುವ ಆಗರವಾಗಿ ಕಂಡುಬಂದರೂ ಮತ್ತಿನೊಂದಿಷ್ಟಕ್ಕೆ ಯಾವುದೇ ರೂಪುರೇಶೆಯೆಂದೇನೂ ಇಲ್ಲ. ಹಾಗೆ ಇರದಿರುವುದೇ ಬ್ಲಾಗಿನ ಲಕ್ಷಣ!

Monday, November 05, 2007

ನಿನ್ನೆ ಹೀಗಿತ್ತು - ಇಂದು ಹೀಗಿದೆ

ಬಹಳ ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಸೀಕೋ (Seiko) ರಿಸ್ಟ್ ವಾಚ್ ಒಂದನ್ನು ನನಗೆ ಉಡುಗೊರೆಯಾಗಿ ನೀಡಿದ್ದ. ಎಂಭತ್ತರ ದಶಕದಲ್ಲಿ ತಯಾರಿಸಲಾಗಿದ್ದ ಅದು ಬಹಳ ಸುಂದರವಾಗಿತ್ತು, ಅದರಲ್ಲಿ ಹೆಚ್ಚೇನು ಕಾಂಪ್ಲಿಕೇಷನ್ನುಗಳಿಲ್ಲದಿದ್ದರೂ (functions) ದಿನ ಹಾಗೂ ವಾರವನ್ನು ಸೂಚಿಸುತ್ತಿತ್ತು, ಜೊತೆಗೆ ಒಂದು ಸೆಕೆಂಡ್ ಮುಳ್ಳು ಕೂಡಾ ಇತ್ತು. ನನ್ನ ಲೇಮನ್ ಭಾಷೆಯಲ್ಲಿ ಹೇಳೋದಾದರೆ ಪ್ರಚನ್ನ ಶಕ್ತಿ (potential energy) ಯನ್ನು ಎದಿರು ಬದಿರು ಹಾಯಬಿಟ್ಟು ಕೆಲಸ ಮಾಡುವಂತಹ ಕೈ ಗಡಿಯಾರ ಅದು. ಅಂದರೆ ನಾನು ತಿಳಿದುಕೊಂಡ ಪ್ರಕಾರ ಅದರಲ್ಲಿ ಎರಡು ಸ್ಪ್ರಿಂಗ್‌ಗಳು, ಒಂದು ಅನ್ ವೈಂಡ್ ಆದ ಹಾಗೆ ಮತ್ತೊಂದು ಸುತ್ತಿಕೊಳ್ಳುತ್ತಿತ್ತು, ಹೀಗೆ ಬ್ಯಾಟರಿ ಇಲ್ಲದೆ ಎಷ್ಟೋ ವರ್ಷಗಳ ಕಾಲ ಅದು ನಡೆಯಬಲ್ಲದಾಗಿತ್ತು. ಅದು ಜಪಾನ್‌ನಲ್ಲಿ ಹುಟ್ಟಿ ಬಂದುದಾದರೂ ಸ್ಪಿಸ್‌ನಲ್ಲಿ ಹುಟ್ಟಿ ಬರುವ ಯಾವ ವಾಚುಗಳಿಗೂ ಕಡಿಮೆಯೇನೂ ಇದ್ದಿರಲಿಲ್ಲ, ಬಹಳ ನಿಖರವಾದ ಸಮಯವನ್ನು ತೋರಿಸುವ ನನ್ನ ಮೆಚ್ಚಿನ ಗಡಿಯಾರವೂ ಆಗಿತ್ತು.

ಆ ಗಡಿಯಾರದ ಬಗ್ಗೆ ಈಗ ಭೂತಕಾಲವನ್ನು ಬಳಸಿ ಬರೆಯುತ್ತಿರುವುದಕ್ಕೆ ಕಾರಣಗಳಿಲ್ಲದೇನಿಲ್ಲ. ಭಾರತದಲ್ಲಿ ಪ್ರತಿನಿತ್ಯವೂ ನನ್ನ ಒಡನಾಡಿಯಾಗಿದ್ದ ಸಮಯ ಪರಿಪಾಲಕ, ಒಂದು ದಿನವೂ ಮೈಂಟೇನನ್ಸ್ ಅನ್ನು ಬೇಡದ, ಬ್ಯಾಟರಿಯಾಗಲೀ ಮತ್ತೊಂದಾಗಲೀ ಕೇಳದ, ರಾತ್ರಿಯಲ್ಲೂ ಸಮಯ ತೋರಿಸುವ (ರೇಡಿಯಂ ಲೇಪಿಸಿದ) ಮುಳ್ಳುಗಳನ್ನು ಹೊಂದಿದ್ದ ಗಡಿಯಾರ ನಾನು ಅಮೇರಿಕಕ್ಕೆ ಬಂದ ಮೊದಮೊದಲಲ್ಲಿಯೇ ಇಲ್ಲಿನ ಸಮಯಗಳ ಬದಲಾವಣೆಯನ್ನು ತಾಳದೆ ಮಾನಸಿಕವಾಗಿ ನೊಂದು ನಿಂತು ಹೋಯಿತು. ಅದನ್ನು ಮತ್ತೆ ಭಾರತಕ್ಕೆ ಹೋದಾಗ ರಿಪೇರಿ ಮಾಡಿಸೋಣವೆಂದು ಎಲ್ಲೋ ತೆಗೆದಿರಿಸಿದ್ದರೆ ಇವತ್ತಿಗೂ ಇನ್ನೂ ಸಿಕ್ಕಿಲ್ಲ, ಅಲ್ಲಿಂದ-ಇಲ್ಲಿಂದ ಬಾಕ್ಸುಗಳಲ್ಲಿ ಬದುಕನ್ನು ಮೂವ್ ಮಾಡಿಕೊಂಡು ಅಲೆಯುವ ನಮ್ಮ ಅಮೇರಿಕದ ಬದುಕಿಗೆ, ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸುವ ಪರಿಪಾಟಲೆಗೆ ಹೆದರಿ ನನ್ನ ಪ್ರೀತಿಯ ಗಡಿಯಾರ ನನ್ನಿಂದ ದೂರವಾಯಿತು ಎಂದುಕೊಂಡು ಅದರ ನೆನಪಾದಾಗಲೆಲ್ಲ ನನ್ನ ಕಾಲಿನ ಕೆಳಗಿನ ನೆಲವನ್ನು ಗಟ್ಟಿಯಾಗಿ ತುಳಿದು ಅವಡುಗಚ್ಚುತ್ತೇನೆ. ವರ್ಷಗಳಿಂದ ಇನ್ನೂ ತೆರೆಯದ ಎಷ್ಟೋ ಬಾಕ್ಸುಗಳ ನಡುವೆ ನನ್ನ ಪ್ರೀತಿಯ ಸಮಯ ಪಾಲಕ ಎಲ್ಲೋ ಇದೆ, ಅದನ್ನು ಇವತ್ತಲ್ಲ ನಾಳೆ ಹುಡುಕಿಯೇ ತೀರುತ್ತೇನೆ ಎನ್ನುವುದು ನನ್ನ ಎಂದೂ ಬತ್ತದ ಛಲ ಅಥವಾ ಹುಂಬ ನಂಬಿಕೆ.

***

ಭಾರತದಲ್ಲಿ ನಾನು ಪಾಲಿಸುತ್ತಿದ್ದ ಸಮಯ ನಿಖರವಾಗಿತ್ತು. ಪಾಕಿಸ್ತಾನದವರು ಯಾವತ್ತೂ ನಮ್ಮಿಂದ ಅರ್ಧ ಘಂಟೆ ಹಿಂದಿದ್ದಾರೆ ಎಂದು ನಾವು ಯಾವತ್ತೂ ತಮಾಷೆ ಮಾಡಿಕೊಳ್ಳುತ್ತಿದ್ದೆವು. ಅದ್ಯಾವುದೋ ಒಂದು ವರ್ಷ ಪಾಕಿಸ್ತಾನದ ಸರ್ಕಾರ ಅಮೇರಿಕನ್ ಮಾದರಿಯಲ್ಲಿ ಸ್ಥಳೀಯ ಸಮಯವನ್ನು ಡೇ ಲೈಟ್ ಸೇವಿಂಗ್ಸ್ ನಿಯಮಕ್ಕನುಸಾರವಾಗಿ ಹಿಂದೆ-ಮುಂದೆ ಮಾಡುವ ಪ್ರಯೋಗವನ್ನು ನೆನೆನೆನೆದು ನಕ್ಕಿದ್ದಿದೆ. ನಾನು ಎನ್ನುವ ವ್ಯಕ್ತಿತ್ವ ನನ್ನ ಸಮಯ ಪಾಲನೆಗೆ ಅನುಗುಣವಾಗಿತ್ತು, ಅಥವಾ ನನ್ನ ಸಮಯಪಾಲನೆ ನನ್ನ ವ್ಯಕ್ತಿತ್ವವಾಗಿತ್ತು. ಹುಟ್ಟಿದಾಗಿನಿಂದ ನಮಗೊಂದೇ ವಾಚು, ನಾವು ಹೋದಲ್ಲಿ ಬಂದಲ್ಲಿ ಅದನ್ನು ಭಾರತದ ಉದ್ದಾನುದ್ದಕ್ಕೆ ಕೊಂಡೊಯ್ಯುತ್ತಿದ್ದೆವು, ನಮ್ಮ ಭಾಷೆ-ಸಂಸ್ಕೃತಿಗಳಲ್ಲೇನಾದರೂ ಬದಲಾವಣೆಗಳಿದ್ದರೂ, ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಉಷ್ಣತೆಯಲ್ಲಿ ಅಗಾಧವಾದ ಬದಲಾವಣೆ ಕಂಡು ಬಂದರೂ - ಭಾರತಕ್ಕೊಂದೇ ವಾಚು. ನಮ್ಮ ವಾಚಿನ ಸಮಯವನ್ನು ನಾವು ಬದಲಾಯಿಸುವ ಅಗತ್ಯವಿರಲಿಲ್ಲ. ಯಾವ ರೆಡಿಯೋ ಸ್ಟೇಷನ್ನುಗಳನ್ನು ಕೇಳಿಯಾದರೂ ನಾವು ಸಮಯವನ್ನು ತಿಳಿಯಬಹುದಿತ್ತು. ಯಾವ ಸೀಜನ್ನಿನಲ್ಲಿಯೂ ಒಂದೇ ಸಮಯ, ವರ್ಷದ ಹನ್ನೆರಡು ಮಾಸಗಳಲ್ಲಿ ಸೂರ್ಯನಿರುವ ಜಾಗೆಯನ್ನು ಇಂತಲ್ಲೇ ಎಂದು ನೆನಪಿಟ್ಟುಕೊಂಡು ಸಮಯವನ್ನು ಸೂಚಿಸುವ ಕಲೆ (instinct) ಈ ಅಕಶರೇಕ ಪ್ರಾಣಿಗಳಲ್ಲೋ ಅಥವಾ ಪಕ್ಷಿಗಳಲ್ಲೋ ವಂಶಪಾರಂಪರ್ಯವಾಗಿ ತಲೆಯಿಂದ ತಲೆಗೆ ಹರಿದು ಬಂದ ಮಹಾನ್ ಸೂತ್ರಗಳ ಹಾಗೆ ನಮಗೊಂದಾಗಿತ್ತು. ಒಮ್ಮೆ ಚೆನ್ನಾಗಿ ಸಮಯವನ್ನು ತೋರಿಸಿದ ಗಡಿಯಾರ ದೊಡ್ಡ ಹೊಡೆತ ಬಿದ್ದು ಒಡೆದು ಹೋಗಿ ಅಥವಾ ಕೆಟ್ಟು ಹೋಗದಿದ್ದರೆ ಯಾವತ್ತೂ ಸರಿಯಾದ ಸಮಯವನ್ನು ತೋರಿಸುವ ಸಂಭವನೀಯತೆಯೇ ಹೆಚ್ಚು. ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಪುನರ್‌ವಿಮರ್ಶಿಸಿಕೊಂಡು ನಮ್ಮ performance ಅನ್ನಾಗಲೀ objectives ಅನ್ನಾಗಲೀ ಜಗಜ್ಜಾಹೀರು ಮಾಡುವುದಾಗಲೀ, ನಮ್ಮತನವನ್ನು ನಾವು ಪುನರ್-ವಿಂಗಡಣೆ ಮಾಡುವ ಅಗತ್ಯವೇ ಇರಲಿಲ್ಲ. ವಾಚಿನ ಡಯಲ್ ಅನ್ನು ತಿರುಗಿಸಬೇಕಾಗಿದ್ದುದು ಫೆಬ್ರುವರಿ ತಿಂಗಳಲ್ಲಿ ಮಾತ್ರ, ಪ್ರತೀವರ್ಷ, ಹಾಗೆ ಮೂರುವರ್ಷ ಫೆಬ್ರುವರಿ ತಿಂಗಳಿನಲ್ಲಿ ಒಂದು ದಿನವನ್ನು ಮುಂದೋಡಿಸಿ ಮಾರ್ಚ್ ಒಂದನ್ನು ಸಾರುವುದೇ ಮೇಂಟೆನೆನ್ಸ್ ಆಗಿತ್ತು, ಅಷ್ಟೇ.

ಅಮೇರಿಕದ ಸಮಯವೂ ನಿಖರವಾಗೇ ಇದೆ - ಅದರ ಪಾಲನೆಯಲ್ಲಿ ಆಚರಣೆಯಲ್ಲಿ ನನ್ನಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ. ಪೀಕ್ ಅವರ್‌ನಲ್ಲಿ ಒಂದೇ ಘಂಟೆಗೆ ನಾಲ್ಕು ನಾಲ್ಕು ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡಿ ದೊಡ್ಡ ರೂಮಿನಿಂದ ಸಣ್ಣ ರೂಮು, ಸಣ್ಣ ರೂಮಿನಿಂದ ಕಿರು ರೂಮಿನಲ್ಲಿ ನಮ್ಮನ್ನು ಕೂರಿಸಿ ಕಾಯಿಸುವಂತೆ (ಧ್ಯಾನಿಸುವಂತೆ) ಮಾಡುವ ರಿಸೆಪ್ಷನಿಷ್ಟುಗಳು ನನ್ನ ಸಮಯ ಪಾಲನೆಯ ವರ್ತನೆಯನ್ನು ಬೇಕಾದಷ್ಟು ಬದಲಾಯಿಸಿದ್ದಾರೆ. ವರ್ಷಕ್ಕೆ ಆರು ತಿಂಗಳಿಗೊಂದರಂತೆ ಎರಡು ಬಾರಿ ಬದಲಾಯಿಸುವ ಸಮಯ ನಮ್ಮ ಮನೆಯಲ್ಲಿರುವ ಗಡಿಯಾರಗಳಲ್ಲಿ ಕೊನೇಪಕ್ಷ ಒಂದಾದರೂ ಒಂದು ಘಂಟೆ ಹಿಂದೆ ಅಥವಾ ಮುಂದಿರುವಂತೆ ಮಾಡುತ್ತದೆ. ಇಲ್ಲಿರುವ ವಾಷಿಂಗ್ ಮಷೀನ್, ಕಾಫಿ ಮೇಕರ್, ಮೈಕ್ರೋವೇವ್ ಅವನ್, ಅವನ್, ಕಾರಿನಲ್ಲಿರುವ ಗಡಿಯಾರಗಳು, ಕಂಪ್ಯೂಟರ್ರಿನಲ್ಲಿರುವ ಗಡಿಯಾರಗಳು, ಇವುಗಳನ್ನೆಲ್ಲವನ್ನೂ ಆರಾರು ತಿಂಗಳಿಗೊಮ್ಮೆ ತಿರುಗಿಸಿ-ಬದಲಾಯಿಸಿ ಈಗಾಗಲೇ ನನಗೆ ಚಿಟ್ಟು ಹಿಡಿಯುವಂತೆ ಮಾಡಿರುವುದೂ ಅಲ್ಲದೇ ಒಂದೊಂದು ಗಡಿಯಾರ ಒಂದೊಂದು ಸಮಯವನ್ನು ತೋರಿಸಿ ಎಷ್ಟೋ ಸಾರಿ ಹಿಂಸಿಸುತ್ತವೆ. ನಿಮ್ಮ ಮನೆಯಲ್ಲೇನಾದರೂ ಇರುವ ಗಡಿಯಾರಗಳೆಲ್ಲ ಒಂದೇ ಸಮಯವನ್ನು ತೋರಿಸುತ್ತಿದ್ದರೆ (ನಿಖರವಾಗಿ) ನನ್ನ ಹ್ಯಾಟ್ಸ್ ಅಫ್! ನಾನಂತೂ ಸಮಯಪಾಲನೆಯನ್ನೇ ಮರೆತುಬಿಟ್ಟಿದ್ದೇನೆ - ಆಫೀಸಿನ ಫ್ಲೆಕ್ಸ್ ಅವರ್ಸ್ ಕೂಡಾ ಇದಕ್ಕೆ ಕಾರಣ ಎಂದರೆ ತಪ್ಪೇನೂ ಅಲ್ಲ.

ನಾವಷ್ಟೇ ಸಮಯವನ್ನು ಬದಲಾಯಿಸಿದರೆ ಸಾಲದು, ನಮ್ಮ ತಲೆಯಲ್ಲಿನ ಭಾರತದ ಸಮಯದ ಪ್ಲೆಸ್ಸು-ಮೈನಸ್ಸುಗಳು ಬದಲಾಗಬೇಕು, ಇದೇ ದೇಶದಲ್ಲಿರುವ ನಾಲ್ಕೈದು (ಹವಾಯಿಯನ್ನು ಸೇರಿಸಿ) ಟೈಮ್ ಝೋನ್‌ಗಳ ಬಗ್ಗೆ ಚಿಂತಿಸಬೇಕು, ಅದರಲ್ಲಿ ಮೂರೋ-ನಾಲ್ಕೋ ರಾಜ್ಯಗಳನ್ನು ಸಮಯವನ್ನು ಬದಲಾಯಿಸದೇ ಇರುವುದರ ಬಗ್ಗೆ ತಿಳಿದಿರಬೇಕು. ಪ್ರತಿ ಆರು ತಿಂಗಳಿಗೊಮ್ಮೆ ’ಈವರೆಗೆ ನೀನೇನು ಮಾಡಿದ್ದೀಯೋ, ಇನ್ನಾರು ತಿಂಗಳಿನಲ್ಲಿ ಏನನ್ನು ಮಾಡುವವನಿದ್ದೀಯೋ ಆ ಬಗ್ಗೆ ಫರ್‌ಫಾರ್ಮೆನ್ಸ್ ಆಬ್ಜೆಕ್ಟೀವ್ ಅನ್ನು ಬರೆ!’ ಎಂದು ಆದೇಶಿಸುವ ಬಾಸು-ವ್ಯವಸ್ಥೆಯ ಬಗ್ಗೆ ಹೇಳಲೇ ಬೇಕಾಗುತ್ತದೆ. ನಾವೇನು ಮಾಡಿದ್ದರೂ, ನಮ್ಮ ಇತಿಹಾಸವೇನಾಗಿದ್ದರೂ ಪ್ರತಿ ಆರು ತಿಂಗಳಿನ ಮಾಪನದಲ್ಲಿ ನಮ್ಮನ್ನು ಅಳೆಯುವುದರ ಕಾರಣ ಇಲ್ಲಿ ನಾವು ಹಿಂದಿನ goodies ಮೇಲೆ ನಂಬಿ ಕೂರುವಂತೆಯೇ ಇಲ್ಲ. ’ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸು ಹಾಗೇ ನಮ್ಮ ಆದೇಶವನ್ನು ಪೂರೈಸು!’ ಎನ್ನುವ ಹುಕುಮ್ ಗಳೇ ಹೆಚ್ಚು. ನಾನು ಅಂಥವನು, ನಾನು ಇಂಥವನು ಎಂದರೆ ’who cares?!' ಎನ್ನುವವರೇ ಹೆಚ್ಚು.

***

ನನಗೆ ಇವತ್ತಿಗೂ ಅನ್ನಿಸಿದೆ, ಇಲ್ಲಿನ ಆರಾರು ತಿಂಗಳ ಸಮಯದ ಬದಲಾವಣೆಯ ಒತ್ತಡವನ್ನು ತಾಳದೆಯೇ ನನ್ನ ಮುದ್ದಿನ ಸೀಕೋ ವಾಚು ನನ್ನಿಂದ ದೂರ ಉಳಿಯುವ ತೀರ್ಮಾನ ಮಾಡಿದ್ದು ಎಂಬುದಾಗಿ. ಭಾರತದಲ್ಲಿ ಸೊಂಪಾಗಿ ಬರೀ ಒಂದೇ ಒಂದು ಸಮಯವನ್ನು ನಿಖರವಾಗಿ ಪಾಲಿಸಿಕೊಂಡು ಇದ್ದ ಒಳ್ಳೆಯ ಹೆಸರನ್ನು ಉಳಿಸಿ-ಬೆಳೆಸಿಕೊಂಡು ಹಾಯಾಗಿದ್ದ ವಾಚು, ಕೇವಲ ನನ್ನ ನಡೆವಳಿಕೆಗಳಿಂದ ಆಹಾರವನ್ನು ಪಡೆದು ತನ್ನ ಆಂತರ್ಯದ ಪ್ರಚನ್ನ ಶಕ್ತಿಗಳ ಬಲದಿಂದ ಸದಾ ಮುಂದೆ ನಡೆಯುತ್ತಿದ್ದ ವಾಚು, ಇಲ್ಲಿ ಆರಾರು ತಿಂಗಳಿಗೊಮ್ಮೆ ಘಂಟೆಗಟ್ಟಲೆ ಮುಂದೆ ಅಥವಾ ಹಿಂದೆ ಹೋಗುವುದನ್ನು ಹೇಗಾದರೂ ಮಾನಸಿಕವಾಗಿ ಸಹಿಸಿಕೊಂಡೀತು ಎಂದು ಎಷ್ಟೋ ಸಾರಿ ನನ್ನ ಮನಸ್ಸು ಮಮ್ಮಲ ಮರುಗಿದ್ದಿದೆ. ಅಂಥ ಸುಂದರವಾದ ವಾಚು ನಿಮ್ಮ ಬಳಿಯೇನಾದರೂ ಇದೆಯೇ, ಇವತ್ತಿಗೂ ಅದು ಇಲ್ಲಿನ ಬದಲಾವಣೆಯ ಬದುಕಿಗೆ ಹೊಂದಿಕೊಂಡಿದೆಯೇ? ಹಾಗೆ ಹೊಂದಿಕೊಂಡು ಇನ್ನೂ ಜೀವಂತವಾಗಿದೆಯೇ?

ಕತ್ತಲು-ಬೆಳಕು, ಉಷ್ಣತೆ, ಅಕ್ಷಾಂಶ (altitude), ಸಮಯ, ಸಂಸ್ಕೃತಿ ಮುಂತಾದವುಗಳಲ್ಲಿ ಅಗಾಧವಾಗಿ ಭಿನ್ನವಾಗಿರುವ ನೆಲೆಗಟ್ಟು ಬಹಳಷ್ಟನ್ನು ನಿರೀಕ್ಷಿಸುತ್ತದೆ, ವ್ಯವಸ್ಥೆ ಪ್ರತಿಯೊಬ್ಬರನ್ನೂ ಅವರವರ ನಿಲುವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷಿಸುತ್ತದೆ ಅಥವಾ ಪುನರ್‌ವಿಮರ್ಶಿಸುತ್ತದೆ (redefine), ಈ ಬದಲಾವಣೆಗಳನ್ನು ಜಯಿಸುತ್ತಲೇ ಇರುವುದು ಸವಾಲಾಗುವುದಕ್ಕಿಂತ ಮುಖ್ಯವಾಗಿ ಬದುಕಾಗುತ್ತದೆ. ನಿನ್ನೆ ಹೀಗಿತ್ತು ಎನ್ನುವ ಹಳೆಯದು ಹೆಚ್ಚು ಪ್ರಚಲಿತವಾಗದೇ ಇಂದು ಹೀಗಿದೆ ಎನ್ನುವ ವರ್ತಮಾನಕ್ಕೆ ಇಂಬುಕೊಟ್ಟಹಾಗನ್ನಿಸುತ್ತದೆ.

Saturday, November 03, 2007

ನಾವು ನಾನಾದದ್ದೂ, ವ್ಯಥೆಯ ಬೆನ್ನ ಹಿಂದಿನ ಸುಖವೂ...

’ಥತ್ ತೇರೀಕೇ, ನೀನೆಲ್ಲಿ ಅಮೇರಿಕ ಬಿಟ್ಟ್ ಹೋಗ್ತೀಯೋ, ಸುಮ್ನೇ ಬೆಳ್ಳಂ ಬೆಳಗ್ಗೆ ಕೊರೀತಾ ಕುತಗಂತೀ ನೋಡು!’ ಎಂದು ಯಾವುದೋ ಒಂದು ಧ್ವನಿ ನನ್ನ ಬೆನ್ನ ಹಿಂದೆ ಕೇಳಿಸಿದಂತಾಯ್ತು, ಬೆಚ್ಚಿ ಬಿದ್ದು ತಿರುಗಿ ನೋಡಿದೆ ಯಾರೂ ಕಾಣಿಸದಿದ್ದುದಕ್ಕೆ ಮತ್ತಷ್ಟು ಹೆದರಿಕೆಯಾದಂತನ್ನಿಸಿತು. ಈಗಾಗ್ಲೇ ಅಲ್ಲಲ್ಲಿ ಛಳಿ ಬಿದ್ದು ಮೈ ನಡುಕಾ ಬರೋ ಹಾಗಿದ್ರೂ ಮನೇಲಿರೋ ಯಾವ್ದೋ ಒಂದು ಶಾಲ್ ಅನ್ನು ಸುತ್ತಿಕೊಂಡು ಇನ್ನೂ ಹಬೆ ಆಡುತ್ತಿದ್ದ ಕಾಫಿ ಕಪ್ ಅನ್ನು ಹಿಡಕೊಂಡು ಡೆಕ್ ಮೇಲೆ ಹೋಗಿ ಅಲ್ಲಿರೋ ಖುರ್ಚಿಯಲ್ಲಿ ಕುಳಿತು ಸೂರ್ಯನಿಗೆ ಮುಖ ಮಾಡಿಕೊಂಡು ನನ್ನ ಯೋಚನೆ ಒಳಗೆ ನಾನೇ ಬಿದ್ದು ಹೋಗಿದ್ದೆ. ಈಗಾಗಲೇ ಸಾಕಷ್ಟು ಎಲೆಗಳನ್ನು ಕಳೆದುಕೊಂಡ ಅಕ್ಕ ಪಕ್ಕದ ಮರಗಳು ಸ್ವಲ್ಪವೇ ಗಾಳಿ ಬೀಸಿದರೂ ಇನ್ನಷ್ಟು ಎಲೆಗಳನ್ನು ಕಳೆದುಕೊಂಡು ಬೋಳಾಗುವ ದುಃಖದಲ್ಲಿದ್ದವರಂತೆ ಆಗೀಗ ಬೀಸಿ ಮಾಯವಾಗುತ್ತಿದ್ದ ಗಾಳಿಗೆ ತೊನೆಯುತಿದ್ದವು. ಇಷ್ಟು ದಿನ ಹಸಿರನ್ನು ಮೆರೆಯುತ್ತಿದ್ದ ಹುಲ್ಲು ಹಾಸಿನ ಮೇಲೆ ಅಲ್ಲಲ್ಲಿ ತೇಪೆ ಹಾಕಿದ ಕೌದಿಯನ್ನು ನೆನಪಿಸುವ ಹಾಗೆ ಹಳದಿ ಕೆಂಪು ಎಲೆಗಳು ಹರಡಿಕೊಂಡಿದ್ದವು. ಆಗಷ್ಟೇ ಚಿಗುರೊಡೆಯುತ್ತಿದ್ದ ಸೂರ್ಯನ ಕಿರಣಗಳು ಅವು ಬಿದ್ದ ವಸ್ತುಗಳ ನೆರಳನ್ನು ಯಶಸ್ವಿಯಾಗಿ ಸೃಷ್ಟಿಸುವಲ್ಲಿ ಯಶಸ್ಸು ಪಡೆದಿದ್ದವು.

ನಿನ್ನೆ ಫೋನ್‌ನಲ್ಲಿ ಯಾರಿಗೋ ಹೇಳ್ತಾ ಇದ್ದೆ - ’ಹೋಗ್ಬಿಡೋಣ, ಅಲ್ಲೇನು ಬೇಕಾದ ಹಾಗೆ ಕೆಲ್ಸಾ ಸಿಗುತ್ತೇ’ ಅಂತ. ಆದ್ರೆ ಕರೆ ಮುಗಿದ ಮೇಲೆ ಮತ್ತೆ ಅದೇ ವಾಕ್ಯಗಳನ್ನು ಮೆಲುಕು ಹಾಕಿಕೊಂಡವನಿಗೆ ವಾಸ್ತವ, ಸತ್ಯ ಇವೆರಡೂ ಹೆದರಿಸ ತೊಡಗಿದವು. ಒಂದು ಮನೆ ಕಟ್ಟಿಸೋಕೆ (ಅಪ್ಪಂತಾ ಸೈಟಿನಲ್ಲಿ) ಏನಿಲ್ಲಾ ಅಂದ್ರೂ ಒಂದು ಕೋಟಿ ರೂಪಾಯ್ ಬೇಕು ಅಂತಾರಂತೆ ಬೆಂಗ್ಳೂರಿನಲ್ಲಿ, ಅಪಾರ್ಟ್‌ಮೆಂಟುಗಳನ್ನು ತೆಗೆದುಕೊಂಡ್ರೂ ಸುಮಾರು ಐವತ್ತು ಲಕ್ಷದವರೆಗೂ ಆಗುತ್ತಂತೆ. ಅನಿವಾಸಿಗಳು ಅಂದಾಕ್ಷಣ ಅಷ್ಟೊಂದು ದುಡ್ಡು ಬಿದ್ದು ಸುರಿತಾ ಇರುತ್ತೆ ಅಂತ ಎಲ್ರೂ ಯಾಕ್ ಅಂದ್ಕೋತಾರೆ? ಕೆಲವ್ರು ಅಲ್ಲೂ ಸಾಲಾ ಮಾಡಿ ಮನೆ-ಮಠ ತಗೋತಾರಂತೆ, ಇಷ್ಟೊಂದು ವರ್ಷಾ ಕಷ್ಟಪಟ್ಟ ಮೇಲೂ ಅಲ್ಲೂ ಹೋಗೀ ಸಾಲದಲ್ಲೇ ಬದುಕೋದು ಹೇಗೆ ಸಾಧ್ಯ? ಇತ್ತೀಚಿಗಂತೂ ಅಲ್ಲಿನ ಕಂಪನಿಗಳು ಇಲ್ಲೀಗಿಂತ ಹೆಚ್ಚೇ ಕೆಲ್ಸಾ ತೆಗೀತಾರೆ, ಇನ್ನು ಅಲ್ಲಿ ಹೋಗಿ ಒದ್ದಾಡೋದ್‌ಕಿಂತ ಇಲ್ಲಿರೋ ಸ್ಟ್ಯಾಟಸ್ ಕೋ ನೇ ಸಾಕಾಗಲ್ವಾ?

ಈ ಮೇಲಿನ ಪ್ರಶ್ನೆಗಳೆಲ್ಲ ನನ್ನ ತಲೆಯನ್ನು ಬಿಸಿಮಾಡಿದ್ವು ಆದರೆ ದೇಹಕ್ಕೆ ಛಳಿ ಹೆಚ್ಚಾದಂತಾಗಿ ಇನ್ನು ಹೊರಗಡೆ ಕೂರೋದಕ್ಕೆ ಆಗೋದೇ ಇಲ್ಲ ಎಂದಾಗ ಮನೆ ಒಳಗೆ ಬಂದು ಪ್ಯಾಡಿಯೋ ಡೋರ್ ಅನ್ನು ಯಾವ್ದೋ ಶತ್ರುವನ್ನು ಮನೆಯಿಂದ ಆಚೆಗೆ ತಳ್ಳೋ ಫೋರ್ಸ್‌ನಲ್ಲಿ ಎಳೆದು ಮುಚ್ಚಿದ್ದಾಯಿತು. ಮೊಣಕೈಯಿಂದ ಮುಂಗೈವರೆಗೆ ಗೂಸ್ ಬಂಪ್ಸ್ ಬಂದು ಕೂದಲುಗಳೆಲ್ಲ ಯಾವ್ದೋ ಸಂಗೀತವನ್ನು ಆಲಿಸೋರ ಕಿವಿಗಳ ಹಾಗೆ ನಿಮಿರಿಕೊಂಡಿದ್ದವು. ಇನ್ನೂ ಮರಗಳಿಂದ ಬೀಳ್ತಾ ಇರೋ ಎಲೆಗಳು ನನ್ನ ಸೋಲನ್ನು ನೋಡಿ ಚಪ್ಪಾಳೆ ಹಾಕ್ತಾ ಇರೋರ ಹಾಗೆ ಕಂಡುಬಂದವು. ದೇಹದ ಒಳಗೆ ಕಾಫೀ ಹೋಗಿ ನರಮಂಡಲವೆಲ್ಲ ಮತ್ತಷ್ಟು ಚುರುಕಾಗಿ ಆಲೋಚನೆಗಳು ಮತ್ತಷ್ಟು ಗಾಢವಾದವು, ಆದರೆ ಹೆಚ್ಚು ಪ್ರಶ್ನೆಗಳೇ ಹೊರಬಂದವೇ ವಿನಾ ಉತ್ತರಗಳ ಸುಳಿವೂ ಕೂಡ ಅಲ್ಲಿರಲಿಲ್ಲ.

’ಅಲ್ಲಿನ್ ಶಾಲೆಗಳಿಗೆ ಮಕ್ಳುನ್ ಸೇರ್ಸೋದೂ ಅಂದ್ರೆ ಅದೇನ್ ಆಟಾ ಅಂತ ತಿಳಕೊಂಡಿದೀಯಾ?’ ಅನ್ನೋ ಮತ್ತೊಬ್ಬ ಸ್ನೇಹಿತನ ಪ್ರಶ್ನೆ. ಒಂದೊಂದು ಮಗುವಿಗೆ ವರ್ಷಕ್ಕೆ ಹೆಚ್ಚೂ ಕಡಿಮೆ ಒಂದೂವರೆ ಲಕ್ಷ ಖರ್ಚು ಮಾಡೋ ಅವನ ಹತ್ತಿರದ ಸಂಬಂಧಿಯೊಬ್ಬರ ವಿವರವನ್ನು ಹೇಳಿದ. ಆದೇನು ಅಲ್ಲಿನ ಸ್ಕೂಲೋ ನಿಯಮವೋ ನಾವು ಓದಿದ ಸರ್ಕಾರಿ ಶಾಲೆಗಳ ಜಮಾನ ಮುಗಿದಂತೇ ಎಂದು ನನಗೆ ಬಹಳ ಹಿಂದೆಯೇ ಅನ್ನಿಸಿದೆ. ಯಾವೊಬ್ಬ ಅನಿವಾಸಿ, ಅವರ ಸಂಬಂಧಿಗಳ ಮಕ್ಕಳಾಗಲೀ ಅವರ ಮಾತುಕಥೆಗಳಾಗಲೀ ಸರ್ಕಾರೀ ಶಾಲೆಯ ಹತ್ತಿರವೂ ಸುಳಿಯೋದಿಲ್ಲ. ಎಲ್ಲರೂ ಆ ಅಕಾಡೆಮಿ, ಈ ಅಕಾಡೆಮಿ ಅನ್ನೋ ಬೋರ್ಡುಗಳಿಗೆ ದುಡ್ಡು ಸುರಿಯೋರೇ. ಕಾಲ ಬದಲಾಗಿದೆ ನಿಜ, ಆದರೆ ಸರ್ಕಾರಿ ಶಾಲೆಯಲ್ಲಿ ಓದಿ ನಾವು ಮನುಷ್ಯರಾಗಲಿಲ್ಲವೇ? ನಾವು ಓದಿದ ಸರ್ಕಾರಿ ಶಾಲೆಗಳು ಸೆಕ್ಯುಲರಿಸಂ ಅನ್ನೋ ಆ ಪದದ ಅರಿವಿರದೆಯೂ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದವುಗಳು. ನಾವು ಹಾಡುವ ನಾಡಗೀತೆ, ರಾಷ್ಟ್ರಗೀತೆಗಳನ್ನು ಬಿಟ್ಟರೆ, ವರ್ಷಕ್ಕೊಮ್ಮೆ ಹಬ್ಬ ಹರಿದಿನಗಳಲ್ಲಿ ದೇವರುಗಳನ್ನು ನೆನೆಯುವುದನ್ನು ಬಿಟ್ಟರೆ ದಿನವೂ ನಮಗೆ ದೇವರ ಪ್ರಾರ್ಥನೆ ಇರಲಿಲ್ಲ. ಅಂಥ ನಿಯಮಗಳನ್ನು ಮನೆಯಲ್ಲಿಯೇ ಕಾಪಾಡಿಕೊಂಡ ನಾವುಗಳು ಇಂದು ಯಾವ ಬೋರ್ಡು, ಕಾನ್ವೆಂಟಿನಲ್ಲಿ ಓದಿದ ಮಕ್ಕಳಿಗೆ ಕಮ್ಮಿ? ನಮ್ಮ ನುಡಿಯಲ್ಲಿ ನಾವು ’ಅಗಸ-ಆಡು’ ಓದಿಕೊಂಡು ಬಂದರೂ ಇಲ್ಲಿ A for Apple ಎಂದುಕೊಂಡೇ ಬದುಕನ್ನು ನಡೆಸಿಕೊಂಡು ಹೋಗುತ್ತಿಲ್ಲವೇ? ಇನ್ನು ಕೆಲವರ ಮಕ್ಕಳು ಹೋಗುವ ಶಾಲೆಗಳಲ್ಲಿ ಇಂಗ್ಲೀಷ್ ಬಿಟ್ಟು ಬೇರೆ ಭಾಷೆಯನ್ನಾಡಿದರೆ ದಂಡ ವಿಧಿಸುತ್ತಾರಂತೆ! ಅಮೇರಿಕ, ಬ್ರಿಟನ್ನುಗಳಲ್ಲಿ ಇಲ್ಲದ ಕಾಯಿದೆ ಇಂಡಿಯಾದವರಿಗ್ಯಾಕ್ ಬೇಕಪ್ಪಾ? ಹಾಳಾದೋರು, ಇಂಗ್ಲೀಷ್ ಕಲಿಸೀ ಕಲಿಸೀ ದೇಶಾನ ಉದ್ದಾರ ಮಾಡಿರೋದನ್ನ ನೋಡೋಕ್ ಕಾಣ್ತಾ ಇಲ್ವಾ ಕಳೆದ ಅರವತ್ತು ವರ್ಷಗಳಲ್ಲಿ? ಒಂದೊಂದು ಮಗೂಗೆ ವರ್ಷಕ್ಕೆ ಒಂದೂವರೆ ಲಕ್ಷವನ್ನ ಎಲ್ಲಿಂದ ತರ್ತಾರಂತೆ, ಇವರೆಲ್ಲಾ ಹೊಟ್ಟೆಗೇನ್ ತಿಂತಾರೆ? ನಮ್ಮತನವನ್ನ ಕಲೀಲಿ ಅಂತ ಇಲ್ಲಿಂದ ಅಲ್ಲಿಗ್ ಕರ್ಕೊಂಡ್ ಹೋಗಿ ಶಾಲೇಲ್ ಇಂಗ್ಲೀಷ್ ಮಾತಾಡು, ಮನೇಲ್ ಕನ್ನಡ ಕಲಿ ಅಂದ್ರೆ ಆ ಮಗುವಿನ್ ಮೇಲೆ ಏನೇನ್ ಪರಿಣಾಮ ಆಗುತ್ತೋ?

’ಯಾಕೆ, ಇಲ್ಲಿಂದ ಹೋದೋರೆಲ್ಲಾ ಬೆಂಗ್ಳೂರ್ನಲ್ಲೇ ಸಾಯ್‌ಬೇಕೂ ಅಂತ ವಿಧಿ ನಿಯಮಾ ಏನಾದ್ರೂ ಇದೆಯೇನು?’ ಅನ್ನೋ ಪ್ರಶ್ನೆ ಮತ್ತೆಲ್ಲಿಂದಲೋ ಬಂತು. ಅದೂ ಹೊಲಸೆದ್ದು ಹೋಗಿರೋ ನಗರ, ಮೊನ್ನೇ ಹೋದಾಗ ಬೆಳಗ್ಗೆ ಆರು ಘಂಟೆಗೆ ಎಮ್.ಜಿ.ರಸ್ತೆ ನೋಡಿ ವಾಕರಿಕೆ ಬಂದಿತ್ತು. ಎಲ್ಲೆಲ್ಲಿ ನೋಡಿದ್ರೂ ಕಸ, ಮುಸುರೆ, ಒಂದಕ್ಕೂ ರೂಲ್ಸು, ನೀತಿ-ನಿಯಮಾ ಅನ್ನೋದೇನೂ ಇದ್ದಂಗೇ ಕಾಣಿಸ್ಲಿಲ್ಲ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಮನೆಗೆ ಹೊರಟ ನನಗೆ ಮೂರ್ನಾಲ್ಕು ಕಡೆ ಹಾರ್ಟ್ ಅಟ್ಯಾಕ್ ಆಗೋದೊಂದೇ ಬಾಕೀ ಇತ್ತು. ಎಲ್ಲೆಲ್ಲಿ ಕೆಂಪು ದೀಪಗಳು ಇದ್ದವೋ ಅಲ್ಲೆಲ್ಲಾ ಜನಗಳು ಸರಾಗವಾಗಿ ವಾಹನಗಳನ್ನು ನುಗ್ಗುಸ್ತಲೇ ಇದ್ದರು. ಇರೋ ಜನರನ್ನು ನೋಡಿಕೊಳ್ಳಲೇ ಯಾವುದೇ ವ್ಯವಸ್ಥೆ, ಪ್ಲಾನುಗಳು ಇಲ್ಲದ ಪ್ರದೇಶಕ್ಕೆ ಹೋಗಿ ಗೊತ್ತಿರೋರು, ಗೊತ್ತಿಲ್ಲದವರೆಲ್ಲ ತಗಲಾಕಿಕೊಂಡ್ರೆ ಹೇಗೆ? ಅನಿವಾಸಿಗಳು ತಮ್ಮ ತಮ್ಮ ಊರಿಗೋ ಅಥವಾ ಅವರವರ ಜಿಲ್ಲಾ ಕೇಂದ್ರಕ್ಕೋ ಹೋಗಿ ಅಲ್ಲೇ ಯಾಕೆ ವಾಸ್ತವ್ಯ ಹೂಡಬಾರ್ದು. ಅನಿವಾಸಿಗಳ ಶೋಕಿ ಜೋಕಿ ಆಚಾರ-ವಿಚಾರ ಏನೂ ಅಂತ ಎಲ್ಲರಿಗೂ ಸ್ವಲ್ಪ ತಿಳೀಲಿ. ಬೆಂಗ್ಳೂರಿನ ಅವ್ಯವಸ್ಥೆಯಲ್ಲಿ ಬದುಕೋದಕ್ಕಿಂತ ಮಂಗ್ಳೂರೋ-ಮೈಸೂರಿನ ಅವ್ಯವಸ್ಥೆಯಲ್ಲಿ ಇರೋದು ಸರಿ ಅನ್ಸಲ್ವಾ? ಅದೂ ಅಲ್ದೇ ಇಲ್ಲೆಲ್ಲಾ ಮಲ್ಟಿನ್ಯಾಷನಲ್ ಕಂಪನಿಗಳಿಗೆ ದುಡಿದವರು ಅಲ್ಲಿ ಹೋಗಿ ದೇಸೀ ಕಂಪನಿಗಳಿಗೋ ಅಥವಾ ತಮ್ಮದೇ ಆದ ಕಂಪನಿಗಳಿಗೆ ದುಡಿಯೋದು ಸರಿ ಅನ್ಸಲ್ವಾ? ನನಗ್ ಗೊತ್ತು, ನಾನು ಏನೇ ಅಂದ್ರೂ ಎಲ್ರೂ ಬೆಂಗ್ಳೂರಿಗೇ ವಾಪಸ್ ಹೋಗಿ ತಗಲ್ ಹಾಕ್ಕೋತಾರೇ ಅಂತ. ಅದ್ರಿಂದಾನೇ ಅಲ್ಲಿ ಮನೆ-ಮಠ-ಸೈಟುಗಳಿಗೆ ಅಷ್ಟೊಂದು ದುಡ್ಡಾಗಿರೋದು. ಇಲ್ಲಿ ಐದು ವರ್ಷ ಸಂಪಾದ್ಸಿ ಉಳ್ಸಿರೋ ದುಡ್ನಲ್ಲಿ ಊರ ಹೊರಗೆ ಒಂದು ಸಿಕ್ಸ್ಟೀ ಫಾರ್ಟೀ ಸೈಟ್ ತೆಗೊಂಡ್ರೇ, ಇನ್ನು ಅದ್ರಲ್ಲಿ ಮನೇ ಕಟ್ಟ್ಸೋದಕ್ಕೆ ಇನ್ನೂ ಹತ್ತು ವರ್ಷ ದುಡೀಬೇಕಾಗುತ್ತೆ. ಅಲ್ಲಿನ ಇನ್‌ಫ್ಲೇಷನ್ನುಗಳನ್ನು ಯಾರು ಕಾಯ್ಕೊಂಡಿರ್ತಾರೆ, ಇವತ್ತು ನೂರು ರುಪಾಯಿಗೆ ಸಿಗೋದು ನಾಳೆ ಸಾವ್ರ ರೂಪಾಯಿಗೂ ಸಿಗೋದಿಲ್ಲ, ಮುಂದೆ ಒಂದು ದಿನ ಒಂದು ಲೋಫ್ ಬ್ರೆಡ್ ತೆಗೊಳೋಕೂ ಒಂದು ಲಾರಿ ಲೋಡ್ ದುಡ್ಡು ತಗೊಂಡು ಹೋಗ್ಬೇಕಾಗುತ್ತೆ.

ಈಗಾಗ್ಲೇ ನಾನು ಮನೇ ಒಳಗೆ ಬಂದಿದ್ದರಿಂದ ಹೊರಗಿನ ಛಳಿ ಹೊರಗೇ ಇತ್ತು. ಪ್ಯಾಡಿಯೋ ಬಾಗಿಲ್ಲನ್ನ ಸ್ಲ್ಯಾಮ್ ಮಾಡಿದೆ ಎಂದು ಬಾಗಿಲಿಗೆ ಎದುರಾಗಿರುವ ಅಕ್ವೇರಿಯಮ್ ನಲ್ಲಿರೋ ಮೀನು ಒಂದು ಲುಕ್ ಕೊಟ್ಟಿತು, ಸದ್ಯ ಮನೆಯಲ್ಲಿ ಇದೊಂದು ಮಾತಾಡಲ್ಲ ಎಂದು ಉಸ್ ಎಂದೆ, ಆದರೂ ಏನೋ ವಟವಟಗುಟ್ಟುತ್ತಲೇ ಇತ್ತು. ನಾವು ವಾಪಾಸ್ ಹೋಗ್ಬೇಕು ಆದ್ರೆ ಫುಲ್‌ಟೈಮ್ ಕೆಲ್ಸಾ ಮಾಡ್ಬಾರ್ದು, ಮಕ್ಳು ಒಳ್ಳೇ ಶಾಲೇನಲ್ಲಿ ಓದ್ಬೇಕು ಆದ್ರೆ ಲಕ್ಷಗಟ್ಟಲೇ ಖರ್ಚಾಗಾಬಾರ್ದು, ಎಲ್ಲಿಗೆ ಹೋದ್ರೂ ಬೆಂಗ್ಳೂರಿಗೆ ಮಾತ್ರ ಹೋಗ್ಬಾರ್ದು-ಮತ್ತಿನ್ನ್ಯಾವ ಊರು ಒಳ್ಳೆಯದು, ಎಲ್ಲಾ ಇರೋಣ ನಮ್‌ತನಾನ ಉಳಿಸಿಕೊಳ್ಳೋಣ - ಎನ್ನೋ ಮಾತುಗಳೆಲ್ಲ ಚರ್ಚಾಸ್ಪರ್ಧೆಯ ವಾದ-ಪ್ರತಿವಾದಗಳಂತೆ ಕಣ್ಣ ಮುಂದೆ ಸುಳಿದುಹೋದವು. ’ನಾನು ಹೋಗೇ ಹೋಗ್ತೀನಿ’ ಅನ್ನೋ ಧ್ವನಿ ಇದ್ದಕ್ಕಿದ್ದ ಹಾಗೆ ಕ್ಷೀಣಿಸ ತೊಡಗಿದ್ದೂ ಅಲ್ದೇ ಇಷ್ಟೊತ್ತಿನವರೆಗೆ ಇದ್ದ ’ನಾವು’ ಎನ್ನುವ ಸ್ವರ ಏಕದಂ ’ನಾನು’ ಆದದ್ದಕ್ಕೆ ಒಮ್ಮೆ ವ್ಯಥೆಯಾಯಿತು, ಅದರ ಮಗ್ಗುಲಿನಲ್ಲಿ ಸುಖವೂ ಹಾಯಾಗಿ ನಿದ್ರಿಸುತಲಿತ್ತು.