Tuesday, March 29, 2011

ದದ್ದಾ, who made god?

ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ!

ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ
ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...

ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...

***

ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ.

ನಮ್ಮ ಮನೆಯಲ್ಲಿರೋ ಈ 5&2 client ಗಳ ಪ್ರಶ್ನೆಗಳಿಗೆ ಉತ್ತರ ಈ ಗಣನಾಥನೇ ಕೊಡಬೇಕು - 5&2 ಅಂದ್ರೆ ನನ್ನ ಐದು ಮತ್ತು ಎರಡು ವರ್ಷದ ಮಕ್ಕಳು ಅಂತ ಅರ್ಥ. ಅವರು ಕೇಳಿದಂತಾ ಪ್ರಶ್ನೆಗಳನ್ನು ನಾನು ಚಿಕ್ಕವನಾಗಿದ್ದಾಗಲೇನಾದರೂ ಕೇಳಿದ್ರೆ, ಆ ರಾವಣ ಗಣಪತಿ ತಲೆ ಮೇಲೆ ಗೋಕರ್ಣದಲ್ಲಿ ಕೊಟ್ಟನಲ್ಲ ಹಂಗೆ ನನಗೆ ಪ್ರತೀ ದಿನಾನೂ ಬೀಳೋದು ಅಂತ ಕಾಣ್ಸುತ್ತೆ... ನಾನು ಪ್ರಶ್ನೆಗಳನ್ನಂತೂ ಕೇಳೋವಾಗ ಕೇಳ್ಲಿಲ್ಲ, ಇನ್ನು ಅವುಗಳಿಗೆ ಉತ್ತರ ಎಲ್ಲಿಂದ ತರಲಿ ಹೇಳಿ.

ಈ ಮೆಲೆ ತೋರಿಸಿದ ಗಣನಾಥನ ಹಾಡಿನ ಕೆಲವು ಸಾಲುಗಳನ್ನೇ ನೋಡಿ, ಎಷ್ಟೊಂದು ಪ್ರಶ್ನೆಗಳನ್ನ ಹುಟ್ಟಿ ಹಾಕ್ಸುತ್ವೆ ಅಂತ, ನೀವು ಕೊಡೋ ಪ್ರತಿ ಒಂದು ಉತ್ತರಕ್ಕೂ ಒಂದೊಂದು sub-ಕಥೆ ಇರುತ್ತೆ, ಹಾಗೆ ನೀವು ಉತ್ತರ ಕೊಟ್ಟಂತೆಲ್ಲ, ಒಂದೊಂದು ಉತ್ತರಕ್ಕೆ ಐದೈದು WHY ಗಳು ಬಂದು ಸೇರಿಕೊಳ್ಳುತ್ವೆ, ಉದಾಹರಣೆ ಬೇಕಾ, ತೊಗೊಳ್ಳಿ:

ಪಲ್ಲವಿಯಲ್ಲಿ
- who is 'ga na nA tha'?
- why we have to worship him first ? (so you may use sub-story of kartikeya-ganesha race story, beware of more questions)
- why ganesha has so many names?
- what his friends call him?

You think these are easy questions? Be careful... and remember that classic joke about Johny?

Kid asks mom, "Mom, where am I from?"
Mom blinks her eyes and begin to answer the question starting from creation, birth, etc
Kid interrupts her, '...but Johny says he is from New Jersey..., where am I from?'

ನಮ್ಮ ಹಾಡುಗಳು ಒಂಥರಾ ಯಕ್ಷಗಾನ ಕಾರ್ಯಕ್ರಮ ಇದ್ದ ಹಾಗೆ, ಒಂದು ಪ್ಯಾರಾದಲ್ಲಿ ವರ್ತಮಾನ ಕಾಲದಲ್ಲಿರೋದು, ಮತ್ತೊಂದು ಪ್ಯಾರಾದಲ್ಲಿ ತ್ರೇತಾಯುಗಕ್ಕೆ ಹೋದ ಹಾಗೆ, ತ್ರೇತಾ ಯುಗದಿಂದ ದ್ವಾಪರ ಯುಗಕ್ಕೆ ಒಂದೆ ಕ್ಷಣದಲ್ಲಿ ಹಾರಿದ ಹಾಗೆ. ಅಥವಾ ಅತಳ, ಭೂತಳ, ಪಾತಾಳ, ಅಂತರಿಕ್ಷ, ಸ್ವರ್ಗ, ನರಕ, ಮತ್ಸ್ಯಲೋಕ, ಮೊದಲಾದವುಗಳನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿದ ಹಾಗೆ... do you think I am joking? ನಿಮ್ಮ ಮಕ್ಕಳಿಗೆ ಬಭ್ರುವಾಹನ ಚಿತ್ರದ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು..." ಹಾಡನ್ನು youtube ನಲ್ಲಿ ತೋರಿಸಿ ನೋಡಿ, ನಿಮಗೆ ಗೊತ್ತಾಗುತ್ತೆ ನನ್ನ ಕಷ್ಟ ಏನು ಅಂತ. (why did I watch or why they saw this song with me - that is a different and long story.... a topic in itself for some other day).

ಇನ್ನೂ ಪಲ್ಲವಿಯಲ್ಲೇ ಇದ್ದೇನೆ...
ಫಸ್ಟ್ ಪ್ಯಾರಾ:
-who is 'da r ma roya'?
- why that guy worship ganesha?
- what was he doing?
- how old was he?
- what is jaya? isn't that amma's friend's name? also your chikkamma has the same name?
- how does ganesh know who does pooja?
- why he helps?
- and then what happened? 'ಆ ಮೆಲೆ ಏನು?' (screaming because i don't answer the questions immediately).

ಸೆಕೆಂಡ್ ಪ್ಯಾರಾ:
-who is ravnaa?
-why he didn't do pooja? (his dad scold him?)
-why he died?
-who killed him? why?
-'rana' means what?

ಇನ್ನು ಪುರಂದರ-ಗಿರಂದರ ಅಂದ್ರೆ ಕಥೇನೇ ಮುಗೀತು, ಅದಕ್ಕೆ ಎರಡೇ ಪ್ಯಾರಾಕ್ಕೆ ಹಾಡು ಮೊಟಕು ಮಾಡಿದ್ದು.

***

ಹೀಗೆ ಪ್ರಶ್ನೆಗಳ ಯಾದಿ, ಅವುಗಳಿಗೆ ಉತ್ತರ, ಅವರದ್ದೇ ಆದ ತರ್ಕ, ಕಲ್ಪನೆ, ಕಲ್ಪನೆಯಿಂದ ಬೆಳೆಯೋ ಉತ್ತರ - ಇವೆಲ್ಲ ನಮ್ಮ ಮನೆಯಲ್ಲಿ ಬೆಳೀತಾನೇ ಇವೆ. ನಮ್ಮಮ್ಮನ್ನ "ನೀನು ಅಷ್ಟೊಂದು ಮಕ್ಳನ್ನ ಹೆಂಗ್ ಸಾಕ್ದೇ?" ಅಂತ ಕೇಳಿದ್ರೆ, ನಕ್ಕೊಂಡು "...ಈಗ ನಿಮ್ಮ ಸರದಿ, ಅನುಭವಿಸಿ!" ಅನ್ನೋ ಉತ್ರ ಕೊಡೋದೇ?

ನನಗೆ ಮೊಟ್ಟ ಮೊದಲನೇ ಬಾರಿಗೆ ಗಣೇಶನ ಕಥೆ Rated R ಅನ್ನಿಸಿದ್ದು... Youtube ನಲ್ಲಿರೋ ಗಣೇಶನ ಕಥೆ ಈಗ ಯಾಕಾದ್ರೂ ತೋರಿಸಿದ್ನೋ ಅನ್ನೋ ಹಾಗಿದೆ ನನ್ನ ಪರಿಸ್ಥಿತಿ.

Again the same series of "Why's"...

ಅದೂ ನಮ್ಮ ಗಣೇಶನ ಕಥೆಯಲ್ಲೇ ಎಷ್ಟೊಂದು ವರೈಟಿಗಳು. ಯಾಕೆ ಆನೆಯ ತಲೆಯನ್ನು ಇಟ್ರು ಅನ್ನೋದಕ್ಕೆ ಎಷ್ಟೊಂದು ಥರನ ಉತ್ತರಗಳು? ಗಜಾಸುರನೆಂಬ ರಾಕ್ಷಸನ ತಲೆಯೋ ಅಥವಾ ಉತ್ತರಕ್ಕೆ ತಲೆ ಹಾಕಿ ಮಲಗಿದ ಪ್ರಾಣಿಯ ಕತೆಯೋ? why that rAkShasa had elephant's head in the first place? (ಇವೆಲ್ಲ ನನ್ನ ಪ್ರಶ್ನೆಗಳು: isn't that head big for a small boy? who did the transplantation? ಅಷ್ಟೆಲ್ಲಾ ಮಂತ್ರಶಕ್ತಿ ಇರೋ ಶಿವನಿಗೆ ಹುಡುಗನ ಕಡಿದಿರೋ ತಲೆ ಹುಡುಕೋದಕ್ಕೆ ಆಗಲಿಲ್ಲವೇ? ಯಾಕೆ ಅಷ್ಟೊಂದು ಸಿಟ್ಟು? ತ್ರಿಶೂಲ ಹಿಡಿದಿರೋ ಶಿವನಿಗೆ ಆ ಬಾಲಕನ ಹತ್ತಿರ ನೆಗೋಶಿಯೇಟ್ ಮಾಡೋಕಾಗಲಿಲ್ವ?)

ನಿನ್ನೆ ರುದ್ರಾಭಿಷೇಕದ ಹೊತ್ತಿಗೆ ಬ್ರಿಜ್‌ವಾಟರ್ ದೇವಸ್ಥಾನದ ಅರ್ಚಕರು ತ್ರಿಶೂಲವನ್ನು ತೊಳೆದು ಶಿವನ ಬದಿಯಲ್ಲಿಟ್ಟಾಗ ನನ್ನ ಮಗಳು ಕೇಳಿಯೇ ಬಿಟ್ಟಳು: is this the same that shiva cut the boy's head?

ನಮ್ಮದೆಲ್ಲಾ ಸಂಕೀರ್ಣದೊಳಗಿನ ಸಂಕೀರ್ಣ ಅಂತ ಅನ್ನಿಸೋಲ್ವಾ? ಐದು ವರ್ಷದ ಮಕ್ಕಳಿಗೆ "ಏ, ನಿನಗೊತ್ತಾಗಲ್ಲ ಸುಮ್ಮನಿರು!" ಎಂದು ಗದ್ದರಿಸೋದನ್ನು ಬಿಟ್ಟು ನಿಧಾನವಾಗಿ ಇವನ್ನೆಲ್ಲ ತಿಳಿ ಹೇಳೋ ಉಪಾಯಗಳ ಜೊತೆಗೆ ಗಣೇಶನ ಬಗ್ಗೆ ಒಂದು comprehensive ಕಥೆ, ಅಥವಾ ಪುರಾಣವಾದರೂ ನಮ್ಮಲ್ಲಿದೆಯಾ? ಅದಕ್ಕೆ ಅದನ್ನ ಕಥೆ-ಪುರಾಣ ಅಂತ ಕರೆಯೋದಿರಬೇಕು. ಒಂಥರಾ ಇಂಡಿಯನ್ ಮಿಥಾಲಜಿ ಅಂದ್ರೆ ಇವತ್ತಿನ ವಿಕ್ಕಿಪೀಡಿಯಾ ಇದ್ದ ಹಾಗೆ, ಯಾರು ಹೇಗೆ ಬೇಕೋ ಹಾಗೆ ಎಡಿಟ್ ಮಾಡ್ಕೊಂಡು ಹೋದ್ರೆ ಆಯ್ತು, ಆದ್ರೆ, edit history ಅಥವಾ chronology ಮಾತ್ರಾ ಕೇಳ್ಬೇಡಿ.

her question - 'why ganesha's mommy want him to wait at the door? she could have locked the door herself'.

ಈ ಮಕ್ಕಳಿಗೆ ಕೃಷ್ಣ ಹೇಗೆ ಬೆಣ್ಣೆ ಕದೀತಿದ್ದ ಅಂತ ಕಥೆ ಹೇಳಿದ್ರೆ, "ಅಯ್ಯೋ ಯಾಕೆ? ಫ್ರಿಜ್ಜ್ ತೆಗೆದಿದ್ರೆ ಸಿಕ್ಕಿರೋದು" ಅಂತ ನಮಗೇ ಪ್ರಶ್ನೆ ಕೇಳ್ತಾರಲ್ಲ, ಅಲ್ಲಿಗೇ ನಿಲ್ಲದೇ, "Why they didn't have a ladder?" ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳೋ audience ಇರೋವಾಗ, ನಮ್ಮ ಕಥೆಗಳು ಇನ್ನಷ್ಟು ಸರಳವಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಲ್ವಾ? ("why he eats just ಬೆನ್ನೆ? no bread! ವೂ, that is gross!") and more questions (why that ಬೆನ್ನೆ white, ours yellow)? and more questions... why ಬಲ್ ರಾಮಾ not blue, only krishna? (you want to try that?)


***

ಇವೆಲ್ಲ ಇರಲಿ, ಹೊಂಕಣ ಸುತ್ತಿ ಮೈಲಾರಕ್ಕೆ ಬಂದಾ ಅನ್ನೋ ಹಾಗೆ, ನನ್ನ ಹೆಡ್ಡಿಂಗ್‍ಗೆ ಬರ್ತೀನಿ:

ಮೊನ್ನೆ ಬೆಳಿಗೆ ಆಫೀಸಿಗೆ ಬರೋ ತರಾತುರಿಯಲ್ಲೇ ದೇವರಿಗೆ ದೀಪ ಹಚ್ಚಿ, ತಲೆಯಲ್ಲಿ ಬರೋ ನೂರಾ ಒಂದು ಆಲೋಚನೆಗಳ ಮಧ್ಯೆಯೇ ಪೂಜೆ ಮಾಡಿದ ಹಾಗೆ ಮಾಡಿ ಬರುತ್ತಿರುವಾಗ, ಆಗಷ್ಟೇ ಎದ್ದು ಕಣ್ಣು ಒರೆಸುತ್ತಿದ್ದ ನನ್ನ ಐದು ವರ್ಷದ ಮಗಳು ಕೇಳಿದಳು, "ದದ್ದಾ, who made god?" (and that is the first question, no idea, what was in her mind).

ಆಗ ಸಧ್ಯಕ್ಕೆ ನನಗೆ ಏನೂ ತಿಳಿಯದೇ ಒಂದು ಕ್ಷಣ ಕಣ್ಣು ಪಿಳಿಪಿಳಿ ಬಿಟ್ಟೆನಾದರೂ "god made god" ಎಂದು ಉತ್ತರ ಹೇಳಿದೆ, ಉಳಿದದ್ದನ್ನ ಸಾಯಂಕಾಲ ಹೇಳ್ತೀನಿ ಎಂದು ಬೀಸೋ ದೊಣ್ಣೆಯಿಂದ ಬಚಾವ್ ಆದೆ... ಆದರೂ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಇನ್ನೂ ಯೋಚಿಸ್ತಾನೇ ಇದ್ದೀನಿ. ಪ್ರಶ್ನೆಗೆ ಉತ್ತರ ಹೇಳಲೋ, ಅಥವಾ ಇನ್ನೊಂದಿಷ್ಟು ಪ್ರಶ್ನೆಯನ್ನೇ ಕೇಳಿ ಸಮಾಧಾನ ಮಾಡಿ ಉತ್ತರವನ್ನು ಅವರ ಕಲ್ಪನೆಗೆ ಬಿಡಲೋ? who do you think made god? why do you want to know? who asked you that question?

ನಮಗೆ ಇಲ್ಲಿ ಯಾರು ಬೇಕು ಅಂದ್ರೆ, "ಅತಿಥಿ ತುಮ್ ಕಬ್ ಜಾವೋಗೇ?" ಸಿನಿಮಾದ ಪರೇಶ್ ರಾವಲ್ ಅಂತ ಸಂಬಂಧಿಕರು! ಅಥವಾ ಮಕ್ಕಳ ಎಲ್ಲಾ ಚಿಕ್ಕ-ಪುಟ್ಟ ಪ್ರಶ್ನೆಗಳಿಗೂ ಸಮಾಧಾನ ಚಿತ್ತದಿಂದ ಸಾವಧಾನವಾಗಿ ಉತ್ತರಿಸುವ ತಿಳುವಳಿಕೆ ಹಾಗೂ ಮನಸ್ಥಿತಿ ಇರುವವರು. ಅವರ ಪ್ರಶ್ನೆಗಳಿಗೆ ಉತ್ತರಕೊಡುವುದರ ಬದಲಿಗೆ ಕೆಲವೊಮ್ಮೆ ನಾವು ನಮ್ಮ ಆಫೀಸಿನ ಸಂಕಷ್ಟಗಳನ್ನೆಲ್ಲ ಮಕ್ಕಳ ಎದುರಿಗೆ ಅವರನ್ನು ಬೈಯ್ಯೋದರ ಮೂಲಕ ಪ್ರದರ್ಶಿಸುತ್ತೇವೇನೋ ಎಂದು ಹೆದರಿಕೆ ಆಗೋದೂ ಇದೆ.

ಅದಕ್ಕೆ, ದದ್ದಾ, who made god? ಅನ್ನೋ ಶೀರ್ಷಿಕೆಯನ್ನು "...ಅರ್ಥಾಥ್ ಪ್ರಶ್ನೆಗಳಿಗೆ ಉತ್ತರ ಹೇಳೋ ಅಜ್ಜ-ಅಜ್ಜಿ ಬೇಕಾಗಿದ್ದಾರೆ", ಎಂದು ಬದಲಾಯಿಸಿದರೆ ಹೇಗೆ ಎಂಬ ಯೋಚನೆ ಕೂಡಾ ಬಂತು...

***
"ದೇವ್ರುನ್ನ ಯಾರಾದ್ರೂ ಮಾಡ್ಲಿ, ಬಿಡ್ಲಿ - ಸುಮ್ನೇ ಕೆಲ್ಸ ನೋಡ್ರೋ - ಹೋಗ್ರೋ" ಅಂತ ಗದರಿಸೋದು ನಮ್ಮ ಕಾಲಕ್ಕೆ ಆಯ್ತು, ಅಲ್ಲೇ ಇರ್ಲಿ ಅದು.

ನನಗ್ಗೊತ್ತು, ದೊಡ್ಡ ದೊಡ್ಡ ಮಕ್ಕಳಿದ್ದವರೆಲ್ಲ ಈ ಬರಹವನ್ನು ನೋಡಿ ನಗತಾರೆ ಅಂತ, ದೊಡ್ಡವರಿಗೆ ದೊಡ್ಡ ಕಷ್ಟಾ, ಆನೆ ಭಾರ ಆನೆಗೆ, ಇರುವ ಭಾರ ಇರುವೆಗೆ ಅಂಥಾರಲ್ಲ ಹಾಗೆ!

ದೇವ್ರೆ, ಇವತ್ತಿನ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ದಯವಿಟ್ಟು ಬಹಿರಂಗ ಮಾಡಪ್ಪಾ ಅನ್ನೋದು "ಅಂತರಂಗ" ಈ ಹೊತ್ತಿನ ಆರ್ತ ಮೊರೆ ಅಷ್ಟೇ!

Wednesday, March 16, 2011

Facebook ಅನ್ನು ಎದುರಿಸಿ...

ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್ ಅಂತ ಓಪನ್ನ್ ಮಾಡಿಕೊಂಡು ಅದರಲ್ಲಿ ಸುಮಾರು ನಾಲ್ಕು ವರ್ಷದಿಂದ ಒಂದಿಷ್ಟು ಗೀಚಿದ್ದು ಈಗ ಇತಿಹಾಸ... ಇ-ಮೇಲ್, ಬ್ಲಾಗು, ಕಮ್ಮ್ಯೂನಿಟಿ ಕೆಲಸ ಮೊದಲಾದ ಎಲ್ಲವಕ್ಕೂ ಆಶ್ರಯಕೊಟ್ಟು ಅವುಗಳನ್ನು ನೀರೆರೆದು ಪೋಷಿಸುವ ಅನೇಕ ಗೊಂದಲಗಳ ನಡುವೆ ಈ ಫೇಸ್‌ಬುಕ್ಕ್ ಮತ್ತು ಟ್ವಿಟ್ಟರ್ ಅಕೌಂಟುಗಳು ಸೊರಗುತ್ತಲೇ ಬಂದವು.

ಅದರಲ್ಲೂ ಇತ್ತೀಚೆಗೆ ತೆಗೆದು ನೋಡಿದಾಗ ಸುಮಾರು ೪೯ ಜನ ಫ್ರೆಂಡ್ ಲಿಸ್ಟಿನಲ್ಲಿ ಕಾಯ್ದು ಕುಳಿತಿದ್ದೂ ಕಂಡುಬಂತು, ಇವರ ಜೊತೆಯಲ್ಲಿ ಇದ್ದವರಲ್ಲಿ ನನ್ನ ಹೊಸ ಬಾಸ್ ಕೂಡ ಒಬ್ಬರು! ಈ ವರ್ಚುವಲ್ಲ್ ಪ್ರಪಂಚದ ಸಂಬಂಧಗಳೂ ಸಹ ನಮ್ಮ ಉಳಿವಿಗೆ ಅಗತ್ಯವಾಗಿರೋವಾಗ, ಅದರಲ್ಲಿನ ಪ್ರತಿಯೊಂದು ಎಳೆಗಳೂ ಕೂಡ ಪೋಷಣೆಯನ್ನು ಬೇಡುತ್ತಿರುವಾಗ ನಾನೊಬ್ಬನೇ ಕಣ್ಣು ಮುಚ್ಚಿ ಕುಳಿತುಕೊಂಡರೆ ಅದು ನನ್ನ ನಷ್ಟವಲ್ಲದೇ ಇನ್ನೇನು? ಹೀಗೆ, ಯೋಚಿಸಿಕೊಂಡಾಗೆಲ್ಲ ಫೇಸ್‌ಬುಕ್ ನಂತಹ ದೈತ್ಯ ಸಾಮಾಜಿಕ ಯೋಧನೊಬ್ಬನನ್ನು ಎಷ್ಟು ದಿನವಾದರೂ ಅಲಕ್ಷಿಸಲಾದೀತು?

Facebook - ಅನ್ನೋ ಪದದಲ್ಲಿ Face ಅಂದ್ರೆ ಮುಖವೋ ಅಥವಾ Face it! ಅನ್ನೋ ಹಾಗೆ ಎದುರಿಸೋದೋ? book ಅಂದ್ರೆ ನಮಗೆ ಗೊತ್ತಿರೋ ಪುಸ್ತಕ, ಹೊತ್ತಿಗೆಗಳೋ ಅಥವಾ book it! ಅನ್ನೋ ಹಾಗೆ ಕಾದಿರಿಸೋದೋ? Face ಮತ್ತು book ಎರಡೂ ಸೇರಿ ಆಗಿರೋ ಹೊಸ ಪದವೋ ಅಥವಾ ಕ್ರಾಂತಿಯೋ? ಇದಕ್ಕೆ ಪ್ರಪಂಚಾದಾದ್ಯಂತ 500 ಕ್ಕೂ ಹೆಚ್ಚು ಮಿಲಿಯನ್ನ್ ಬಳಕೆದಾರರಿದ್ದಾರಂತೆ, ಪ್ರತಿಯೊಬ್ಬ ಬಳಕೆದಾರನ ಹೆಸರಿನಲ್ಲಿ ಸುಮಾರು $2 ರಂತೆ ವರ್ಷಕ್ಕೆ ಒಂದು ಬಿಲಿಯನ್ನ್‌ಗಿಂತ ಹೆಚ್ಚು ರೆವಿನ್ಯೂ ಇದೆಯಂತೆ, ಕೆಲವರ $38 ರಿಂದ ಹಿಡಿದು ಮೈಕ್ರೋಸಾಫ್ಟಿನ $200 ಪ್ರತಿ ಬಳಕೆದಾರರಿಂದ ಹುಟ್ಟೋ ರೆವಿನ್ಯೂವರೆಗಿನ ಲೆಕ್ಕಗಳಲ್ಲಿ ಸುಮಾರು 50 ಬಿಲಿಯನ್ನ್ ವ್ಯಾಲ್ಯೂವೇಷನ್ನಿನ ಅಂದಾಜು ಮಾಡಿದ್ದಾರಂತೆ! ಗೂಗಲ್ಲ್ ಅಂಥಾ ಕಂಪನಿಗಳಲ್ಲಿ ಒಬ್ಬೊಬ್ಬ ಬಳಕೆದಾರನ ಮೇಲೆ ಸುಮಾರು $14 ರಂತೆ ಆದಾಯ ಹುಟ್ಟಿಸುತ್ತಾರಾದರೂ, Facebook ಅಂಥ ಕಂಪನಿಗಳು ತಮ್ಮ ಇರುವನ್ನು ಬಲಪಡಿಸಿಕೊಳ್ಳಲು ಅನೇಕಾನೇಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರಂತೆ, ಇರುವ ಬಳಕೆದಾರರ ಬೇಸ್ ಅನ್ನು ಕ್ಯಾಪಿಟಲೈಸ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರಂತೆ...ಹೀಗೆ ಅನೇಕಾನೇಕ ವಿಶೇಷಗಳು Facebook ಅನ್ನು ಸುತ್ತಿಕೊಳ್ಳತೊಡಗಿದ್ದು ಗೊತ್ತಾಯಿತು.

ಅಂತರಂಗದಲ್ಲಿ ಉದ್ದುದ್ದವಾಗಿ ಬರೆದ ಹಾಗೆ ಅಲ್ಲಿ ನನಗೆ ಬರೆಯೋಕಾಗೋದಿಲ್ಲ, ಬರೆದರೂ ಚಿಕ್ಕ ಫೋನುಗಳಲ್ಲಿ ಫಾಲ್ಲೋ ಮಾಡುವವರಿಗೆ ಕಷ್ಟವಾಗುತ್ತೆ. ಆದರೂ ಸಹ, ಅಂತರಂಗ ಮತ್ತು ನನ್ನ Facebook ಅಕೌಂಟುಗಳನ್ನು ಎರಡೂ ಒಟ್ಟು ಸೇರಿಸಿ, ಇಷ್ಟು ದಿನ ಹಿಡಿದುಕೊಂಡಿದ್ದ ಸುಮಾರು ನಲವತ್ತು ಜನ ಕನ್ನಡಿಗರನ್ನು ಬರಮಾಡಿಕೊಂಡರಾಯಿತು, ಕನ್ನಡಿಗರಷ್ಟೇ ಏಕೆ ಉಳಿದವರೂ ನೋಡಲಿ - ಎಲ್ಲರೂ ಬರಲಿ, ನನ್ನ ಈಗಿನ ಬಾಸ್ ಒಬ್ಬರನ್ನು ಬಿಟ್ಟು! (ಇಲ್ಲಿ ಕನ್ನಡದಲ್ಲಿ ಬರೆಯೋಕೆ ಈತನಿಗೆ ಸಮಯವಿದೆ ಅಂಥ ಮತ್ತೊಂದಿಷ್ಟು ಕೆಲಸ ಹುಟ್ಟಿಕೊಂಡರೆ ಕಷ್ಟ, ಹಾಗಾಗಿ).

ಈ ಅಂತರ್ಜಾಲ ಯುಗದ ಸಂಬಂಧಗಳು ಬಹಳ ಸಡಿಲವಾದದ್ದು - ಉದಾಹರಣೆಗೆ ಈ ಫೇಸ್‌ಬುಕ್ಕಿನ ಮಿಲಿಯನ್ನುಗಟ್ಟಲೆ ಬಳಕೆದಾರರಿಗೆ ಮತ್ತೊಂದೇನಾದರೂ ಆಕರ್ಷಕವಾಗಿ ಕಂಡುಬಂದರೆ ಅವರೆಲ್ಲರೂ ಅಲ್ಲಿಗೆ ಒಂದೇ ನೆಗೆತದಲ್ಲಿ ಹೋಗದಂತೆ ತಡೆಯುವುದು ಕಷ್ಟ. ಹಗಲೂ ರಾತ್ರಿ ಈ ಸರ್ವರುಗಳಿಗೆ ಜನ ಮುಗಿ ಬಿದ್ದ ಹಾಗೆ, ಪ್ರಸಿದ್ಧಿ ಅಥವಾ ಪ್ರಾಬಲ್ಯದ ಉತ್ತುಂಗದಲ್ಲಿರುವುದು ಬಹಳ ಕಷ್ಟದ ಕೆಲಸ - ಸುತ್ತಲಿನ ಆಗುಹೋಗುಗಳಿಗೆ ತತ್ಕಾಲದಲ್ಲಿ ಸ್ಪಂದಿಸಿ ನಿರಂತರವಾಗಿ ಬದಲಾಗುವುದರ ಜೊತೆಗೆ ಸದಾಕಾಲ ತಮ್ಮನ್ನು ತಾವು ರಿಫೈನ್ ಮಾಡಿಕೊಳ್ಳುವ ಕರ್ಮಠತನ ಬೇಕಾಗುತ್ತದೆ. ಬರೀ ಬಳಕೆದಾರರ ಸಂಬಂಧಗಳನ್ನಷ್ಟೇ ಅಲ್ಲ, ಹಣತೊಡಗಿಸಿದವರನ್ನು ಎದುರಿಸಬೇಕಾಗುತ್ತದೆ, ಪೈಪೋಟಿ ಒಡ್ಡುವವರನ್ನು ಹಿಂದಿಕ್ಕಬೇಕಾಗುತ್ತದೆ...ಹೀಗೆ ಅನೇಕಾನೇಕ ಸವಾಲುಗಳು ಯಾವಾಗಲೂ ಇದ್ದೇ ಇರುತ್ತವೆ. ಈ ಸವಾಲುಗಳು ಹೊಸತೇನಲ್ಲ - ಆನೆಗೆ ಆನೆಯ ಭಾರ, ಇರುವೆಗೆ ಇರುವೆಯ ಭಾರ ಅಷ್ಟೇ.

ಈ ಮೂಲಕ ಅಂತರಂಗದ ಓದುಗರಿಗೂ ಫೇಸ್‌ಬುಕ್ಕ್‌ನಲ್ಲಿ ಲಿಂಕ್ ಒದಗಿಸುತ್ತಿದ್ದೇನೆ. ನಮ್ಮ ಸಂವಹನ, ಸಂಘಟನೆ ಹಾಗೂ ಸಂಘರ್ಷಗಳು ನಿರಂತರವಾಗಿರಲಿ. ನಮ್ಮ ಜಗಳಗಳಲ್ಲೂ ಸೊಗಸಿರಲಿ, ಭಾಷೆಯಲ್ಲಿ ಶುದ್ಧಿ ಇರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಸದಾ ಊರ್ಧ್ವಮುಖಿಯಾಗಿರಲಿ!

Monday, March 14, 2011

ಬಹಳ ದಿನಗಳ ಗೆಳೆಯ...







ಚುಕ್ಕು, ಚುಕ್ಕು, ಚುಕ್ಕು... ಸದ್ದು ಮಾಡುತ್ತಾ ಡೋವರ್‌ನಿಂದ ಹೊಬೋಕನ್ನ್ ಕಡೆಗೆ ಗಾಳಿಯನ್ನು ಎರಡು ಬಣವಾಗಿ ಇಬ್ಬಾಗಿಸಿಕೊಂಡು ಹಳಿಗಳ ಮೇಲೆ ಹುಳುವಾಗಿ ಹರಿದುಕೊಂಡು ಹೋಗುತ್ತಿದ್ದ ನಮ್ಮೂರಿನ ಲೋಕಲ್ ಟ್ರೇನು, ಬಹಳ ದಿನಗಳ ನಂತರ ಗೆಳೆಯನ ಮನೆಗೆ ಹೋಗುವ ಸಂಭ್ರಮವನ್ನು ನನ್ನ ಪಾಲಿಗೆ ತಂದುಕೊಟ್ಟಿತ್ತು. ಶುಕ್ರವಾರ (ಮಾರ್ಚ್ ೧೧) ಬೆಳ್ಳಂಬೆಳಿಗ್ಗೆಯೇ ಇಲ್ಲಿನ ರೇಡಿಯೋ ಸ್ಟೇಷನ್ನುಗಳು ಅರಚಿಕೊಂಡ ಪ್ರಕಾರ ಜಪಾನ್‌ನಲ್ಲಿ ದೊಡ್ಡದೊಂದು ಭೂಕಂಪ ಸಂಭವಿಸಿ ಅನೇಕ ಹಾನಿಗಳ ಬಗ್ಗೆ, ಸಾವು ನೋವುಗಳ ಬಗ್ಗೆ ಮನದಲ್ಲಿ ಒಂದು ಥ್ರೆಡ್ ಕೊರೆಯ ತೊಡಗಿದರೆ, ಕೈಯಲ್ಲಿ ಅಪರೂಪಕ್ಕೆ ಹಿಡಿದುಕೊಂಡ ಡಿ.ಆರ್. ನಾಗರಾಜ್‌ ಅವರ "ಸಂಸ್ಕೃತಿ ಕಥನ" ಭಾರವಾಗ ತೊಡಗಿತ್ತು, ತೊಡೆಯ ಮೇಲೆ ಮಲಗಿ ಸುಮ್ಮನಿದ್ದ ಲ್ಯಾಪ್‌ಟಾಪ್‌ ತನ್ನ ಮಡಿಲಲ್ಲಿನ ಬಿಸಿ ಬ್ಯಾಟರಿಯಿಂದ ಸುಟ್ಟು ತನ್ನ ಇರುವನ್ನು ಬ್ಯಾಗಿನೊಳಗಿಂದಲೇ ಸ್ಪಷ್ಟ ಪಡಿಸಿತ್ತು.

ಬಹಳ ದಿನಗಳ ಗೆಳೆಯನೆಂದರೆ, ನಮ್ಮೂರಿನಿಂದ ಕೇವಲ ಐವತ್ತು ಮೈಲು ದೂರದಲ್ಲಿರುವ ನ್ಯೂ ಯಾರ್ಕ್ ನಗರ! ನಮ್ಮ ಟ್ರೇನು ನೆವರ್ಕ್, ಜರ್ಸಿ ಸಿಟಿ, ಹೊಬೋಕನ್ನ್ ಮೊದಲಾದ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶಗಳನ್ನು ತಲುಪಿದಂತೆಲ್ಲ ಹಳಿಗಳು, ಗಾಲಿಗಳು ಆಗಾಗ್ಗೆ ತಿಕ್ಕಿಕೊಳ್ಳುತ್ತಿದ್ದ ಶಬ್ದ ಹಾಗೂ ಕಿಟಕಿಯಿಂದ ಹೊರಗೆ ಕಾಣುವ ಚಿತ್ರಣಗಳು ಇಪ್ಪತ್ತು ವರ್ಷದ ಹಿಂದಿನ ಯಶವಂತಪುರ ಮತ್ತು ಮೆಜೆಸ್ಟಿಕ್ ನಡುವಿನ ರೈಲು ಪ್ರಯಾಣದ ಅನುಭವವನ್ನು ಮನದಲ್ಲಿ ತಾಳೆ ಹಾಕಿ ಕೊಳ್ಳುತ್ತಿದ್ದವು.

ನಾಗರಾಜ್ ೧೯೯೬ ರ ನಿನಾಸಂನಲ್ಲಿ ಮಾಡಿದ ಭಾಷಣದ ಆವೃತ್ತಿಯ ನವ್ಯ ಸಾಹಿತ್ಯ ಸಂಸ್ಕೃತಿಯ ನಾಲ್ಕು ದೌರ್ಬಲ್ಯಗಳ ವಾಕ್ಯಗಳು ನನ್ನನ್ನು ಪದೇ-ಪದೇ ಓದುವಂತೆ ಮಾಡಿ ಚಿಂತನೆಗೆ ತೊಡಗಿಸಿದವು. ನಾನು ಬಹಳವಾಗಿ ಹಚ್ಚಿಕೊಂಡ ಅಡಿಗ, ಅನಂತಮೂರ್ತಿ, ಲಂಕೇಶ, ಕಂಬಾರ, ತೇಜಸ್ವಿ, ಮೊದಲಾದವರು ಶಂಬಾ ಜೋಷಿ, ಬೇಂದ್ರೆ, ಪುತಿನ, ತೀನಂಶ್ರೀ ಮೊದಲಾದವರಿಂದ ಹೇಗೆ ಭಿನ್ನರು - ಇವರ ವಿದ್ವತ್ತಿನಿಂದ ಕನ್ನಡ ಸಂಸ್ಕೃತಿಯನ್ನು ಅಖಂಡವಾಗಿ ಪುನರ್ ನಿರ್ಮಾಣ ಮಾಡಬಲ್ಲ ಒಬ್ಬ ಚಿಂತಕನೂ ನಮ್ಮಲ್ಲಿ ಮೂಡಿಬರಲಿಲ್ಲ - ಎಂಬ ವಾಕ್ಯಗಳು ಕಾಫಿ ಹೀರದ ಶುಕ್ರವಾರದ ಮುಂಜಾನೆಯ ಬಹಳ ದಿನಗಳ ನಂತರ ಕನ್ನಡವನ್ನು ಓದುತ್ತಿದ್ದ ಮನಸ್ಸಿಗೆ ಭಾರವಾಗಿ ಕಂಡುಬಂದವು. ಡಿ.ಆರ್.ಎನ್., ಎನ್ನುವ ಕನ್ನಡದ ಪ್ರವಾದಿ ಯಾರು? ನಮ್ಮಿಂದ ಅವರು ಚಿಕ್ಕ ವಯಸ್ಸಿನಲೇ ದೂರವಾದದ್ದು ಹೇಗೆ? ಯಾವಾಗಲಾದರೂ ಸಮಯ ಸಿಕ್ಕಾಗ ಅವರ ಸ್ನೇಹಿತ ಮತ್ತು ಪುಸ್ತಕದ ಸಂಪಾದಕರಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಬೇಕು, ೧೯೯೭ ರಲ್ಲಿ ನಾಗರಾಜ್ ಅವರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದ್ದ ಆಡಿಯೋ-ವೀಡಿಯೋ ಗಳಿದ್ದರೆ ಹುಡುಕಬೇಕು...ಹೀಗೆ ಅನೇಕ ಅನೇಕ ಗೊಂದಲಗಳು ತಲೆಯಲ್ಲಿ ಸುತ್ತಿಕೊಳ್ಳತೊಡಗಿದವು. ಜೊತೆಗೆ ನಾಗರಾಜ್ ಅವರ ಪುಸ್ತಕಗಳಲ್ಲಿ ಹೆಸರಿಸುವ, ಉದಾಹರಿಸುವ ಅನೇಕಾನೇಕ ಪುಸ್ತಕಗಳನ್ನೂ-ಪರಾಮರ್ಶೆಗಳನ್ನೂ ಖುದ್ದಾಗಿ ಪರಿಶೀಲಿಸಬೇಕು ಎಂಬೆಲ್ಲ ಮಲ್ಟಿ-ಜನ್ಮಗಳ ಟ್ಯಾಸ್ಕ್ ಲಿಸ್ಟುಗಳು ಹುಟ್ಟತೊಡಗಿದವು. ಜೊತೆಯಲ್ಲಿ ಒಂದು ಜನಾಂಗ, ಸಂಸ್ಕೃತಿ, ಭಾಷೆಯನ್ನು ಸ್ಥೂಲವಾಗಿ ಅರಿಯದೇ ಹುಟ್ಟಿನಿಂದ ಅದರ ಒಡನಾಟದಲ್ಲಿ ತೊಡಗದೇ ಹೊರಗಿನವರಾಗಿ ಸಂಸ್ಕೃತಿಯೊಂದನ್ನು ಅವಲೋಕಿಸುವುದರಲ್ಲಿನ ಮಿತಿಗಳು ಪರಕೀಯತೆಯನ್ನು ಹೆಚ್ಚು ದೊಡ್ಡದನ್ನಾಗಿ ಮಾಡಿ ತೋರಿಸತೊಡಗಿದ್ದು, ಒಂದು ರೀತಿ ಮ್ಯಾಪ್‌ಕ್ವೆಸ್ಟಿನಲ್ಲಿ ಚಿಕ್ಕದಾಗಿ ಕಾಣಸಿಗುವ ನ್ಯೂ ಯಾರ್ಕ್ ನಗರದ ಬಿಲ್ಡಿಂಗುಗಳು ನಮ್ಮ ಕಣ್ಣೆದುರೇ ಅವುಗಳ ಬೃಹತ್ ನೆಲೆಯನ್ನು ತೆರೆದುಕೊಂಡ ಹಾಗೆ ಬೆನ್ನ ಹುರಿಯಲ್ಲಿ ಮಿಂಚಿನ ಸಂಚಕಾರವಾಯಿತು. ನಾಗರಾಜ್ ಅವರ ಕಥನಗಳನ್ನು ಓದುತ್ತಿದ್ದ ಹಾಗೆ "ಪತ್ರಿಕೆ" ಹಾಗೂ ಅದರ ವಿಶೇಷಣಗಳ ನೆನಪುಗಳಾಗಿ - ಪುಂಡಲೀಕ ಶೇಟ್, ರವೀಂದ್ರ ರೇಶ್ಮೆ, ಕಟ್ಟೆ ಪುರಾಣ, ಬಂ, ಗುಂ, ಟೀಕೆ-ಟಿಪ್ಪಣಿ - ಮೊದಲಾದವುಗಳೆಲ್ಲ ಜಾತ್ರೆಯ ತೇರನ್ನು ಎಳೆಯಲು ತಯಾರಾಗಿ ನಿಂತ ಯುವಕರಂತೆ ಹಗ್ಗವನ್ನು ಹಿಡಿದುಕೊಂದು ಮನದಲ್ಲಿ ಪುಟಿದು ನಿಂತವು. ೧೯೯೭ರಲ್ಲಿ ಮೊದಲು ಇಂಟರ್ನೆಟ್ಟಿನಲ್ಲಿ "ಸಂಜೆವಾಣಿ"ಯನ್ನು ಓದಿದ ಪುಳಕಗಳಾಗಿ, ಅಂದೇ ಕನ್ನಡದ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿ ಅನಿವಾಸಿ ಕನ್ನಡಿಗರಿಗೆಲ್ಲ ಹೊಸ ಹುರುಪನ್ನು ನೀಡಿದ್ದ ಮಣಿಯವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವಲ್ಲಿ, ನಾಗರಾಜ್‌ರ ಅನುಭವಗಳು ಸಹಾಯಕಾರಿಯಾದವು.

ಕನ್ನಡದ ಹಿಂದಿನ ವಿದ್ವಾಂಸರ ಸಾಹಿತ್ಯ, ದಾರ್ಶನಿಕತೆ, ನವ್ಯರ ಕಲಸು ಮೇಲೋಗರ, ನವ್ಯೋತ್ತರ ಪ್ರಯೋಗಳು, ಬಂಡಾಯ-ದಲಿತರ ಧ್ವನಿಗಳು, ಜಾತಿ-ರಾಜಕೀಯದಲ್ಲಿ ಹೊರಬಂದ ಕೂಗುಗಳು, ದೊಡ್ಡ ದೊಡ್ಡ ಸಂಭ್ರಮಗಳನ್ನು ಸಣ್ಣ ಕಥೆಗಳಲ್ಲೇ ನೇಯ್ದ ಅಥವಾ ಕಟ್ಟು ಹಾಕಿದ ಬಂಧನಗಳ ರೂಪಗಳು, ಇನ್ನೂ ಹಳೆಯ ನಾಟಕಗಳಿಗೆ ಜೋತು ಬಿದ್ದು ಹೊಳಪನ್ನು ಕಾಣದ ರಂಗದ ಪರದೆಗಳು, ಸಿನಿಮಾ ಎಂಬ ಭ್ರಮಾಲೋಕಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಇತರ ಕಲಾ ಪ್ರಕಾರಗಳು - ಹೀಗೆ ಅನೇಕಾನೇಕ ಯೋಚನೆಗಳ ಅಲೆಗಳನ್ನು ನಾಗರಾಜ್‌ ಅವರ ಪುಸ್ತಕ ಕೇವಲ ಇಪ್ಪತ್ತು-ಮೂವತ್ತು ನಿಮಿಷಗಳಲ್ಲಿ ಏಳಿಸಿ ಚಲಿಸುತ್ತಿರುವ ಟ್ರೈನಿನಲ್ಲಿ ಚಲನೆಯಿಲ್ಲದ ದೇಹದೊಳಗೆ ಅನೇಕ ರೋಚಕತೆಗಳನ್ನು ಹುಟ್ಟುವಲ್ಲಿ ಯಶಸ್ವಿಯಾಗಿತ್ತು. ಪಂಡಿತರಲ್ಲದವರಿಂದ ಎಂತಹ ಸಾಹಿತ್ಯ ಬರುತ್ತದೆ, ಮಾರಿ ಜಾತ್ರೆಯನ್ನು ಕಾಣದ, ಕೋಣನ ಬಲಿಯನ್ನೆ ನೋಡದ, ಗಡಿ-ಮಾರಿಗಳನ್ನು ಅರ್ಥ ಮಾಡಿಕೊಳ್ಳದ ಸಂತತಿ ಈ ಸಮುದಾಯಕ್ಕೆ ಎಂತಹ ರೂಪವನ್ನು ಕೊಟ್ಟೀತು? ಚಂದ್ರಗುತ್ತಿಯಲ್ಲಿನ ಬೆತ್ತಲೆ ಪೂಜೆಯ ಸುತ್ತಣ ನಡೆದ ಸಾಮಾಜಿಕ ಚಳುವಳಿ, ಅದೆಷ್ಟೋ ದೂರದಲ್ಲಿಂದ "ಉಧೋ ಉಧೋ" ಹಾಡಿಕೊಂಡು ಹೊರಟು ಹೋಗುತ್ತಿದ್ದ ಎತ್ತಿನ ಗಾಡಿಗಳು, ಬೆತ್ತಲನ್ನು ಮುಚ್ಚಲು ಬಳಕೆಗೆ ಯಥೇಚ್ಛವಾಗಿ ಸಿಗುತ್ತಿದ್ದ ಬೇವಿನ ಸೊಪ್ಪು, ನಾಗರಿಕರಷ್ಟೇ ಗುರುತಿಸುವ ಅನಾಗರಿಕ ವರ್ತನೆ - ಇತ್ಯಾದಿಗಳೆಲ್ಲ ನರ್ತಿಸತೊಡಗಿದವು. ಯಾರೋ ಮನದೊಳಗೆ ಮಲಗಿದ್ದ ಬುಗುರಿಗೆ ಹುರಿಯನ್ನು ಸುತ್ತಿ ಎಂತಿ ಅಂತರ ಪಿಚ್ಚನ್ನು ಹಾಕಿದಂತೆ ಗಾಳಿಯಲ್ಲಿ ಸುತ್ತಿ ಬಂದು ಅಂಗೈನ ಮಧ್ಯೆಯಲ್ಲಿನ ನನ್ನ ಆಟಿಕೆ ಸುತ್ತಿ-ಸುತ್ತಿ ಗಿರುಕಿ ಹೊಡೆಯಲಾರಂಭಿಸುವ ಹೊತ್ತಿಗೆ ನ್ಯೂ ಯಾರ್ಕ್ ನಗರ ದುತ್ತನೆ ಎದುರಾಗಿತ್ತು.

***

ಅದೇ ನ್ಯೂ ಯಾರ್ಕ್ ನಗರ?! ಅಲ್ಲ, ಬದಲಾಗಿರುವ ಚಿತ್ರ, ಇಲ್ಲ, ಅವೇ ಬಿಲ್ಡಿಂಗುಗಳು, ಅಲ್ಲ, ಹೊಸ ವಿನ್ಯಾಸಗಳು, ಅಲ್ಲ, ಅದೇ ನಿರಂತರತೆ.... ಹೀಗೆ ಅನೇಕ ಅಲ್ಲ-ಇಲ್ಲಗಳ ನಂತರ ನಾನಿದ್ದೇನೆ ಇಲ್ಲಿಯೇ - ಶತಶತಮಾನಗಳಿಂದ ಎನ್ನುವ ಅಖಂಡತೆ ಅನುಭವಕ್ಕೆ ಬಂತು. ಅದರ ಸೌಂದರ್ಯ, ವಿಸ್ತಾರ, ಅಬ್ಬರದ ಮುಂದೆ ನಮ್ಮ ಅನುಭವಗಳು ಎಷ್ಟು ಕನಿಷ್ಠವಾದವುಗಳು ಎಂದೂ ಅನಿಸಿತು, ಒಂದು ರೀತಿ ನೊಣ ದೊಡ್ಡದೊಂದು ಆನೆಯ ದೇಹದ ಮೇಲೆ ಕಾಣುವ ಧೂಳಿನ ಹಾಗೆ. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಅದೇ ಗಾಂಭೀರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್! ಉಳಿದ ಕಟ್ಟಡಗಳು ಹಾಗೂ ಕಲರವಗಳ ನಡುವೆ ನೋಡಿದರೆ ಅದು ಅಷ್ಟೊಂದು ದೊಡ್ಡದೇ ಎಂದು ಒಮ್ಮೆ ಅನುಮಾನವಾದರೂ ಕೆಲವೊಮ್ಮೆ ದೊಡ್ಡದನ್ನು ದೂರದಿಂದ ನೋಡಿಯೇ ತಿಳಿಯಬೇಕು ಎನ್ನಿಸಿದ್ದು ನಿಜ.

ಬಿಸಿನೆಸ್ಸು ಮೀಟಿಂಗ್‌ಗೆ ಹೊಗಿ ಅಲ್ಲಿ ಕಾಫಿ ಹೀರುತ್ತಿದ್ದ ಹಾಗೆ ಸರ್ವಾಂತರ್ಯಾಮಿ ಸಿಎನ್‌ಬಿಸಿ ವರದಿಗಳೆಲ್ಲ ನನ್ನ ಸಹೋದ್ಯೋಗಿಗಳಲ್ಲೂ ಪಸರಿಸಿ ನೈಸರ್ಗಿಕ ಪ್ರಕೋಪದ ಪರಿಣಾಮದ ಚರ್ಚೆಗಳು ಜಪಾನ್‌ನಿಂದ ದೂರದ ಹವಾಯಿಯಲ್ಲಿ ಸುನಾಮಿ ಅಲೆಗಳೆದ್ದು ತೊಂದರೆಯಾದ ಬಗ್ಗೆ ವಿಸ್ತಾರಗೊಂಡಿದ್ದವು. ಎಲ್ಲೇ ಏನಾದರೂ ತಮ್ಮ ಬಾಟಮ್‌ಲೈನಿನ ಬಗ್ಗೆ ಆಲೋಚಿಸುವ ಅಮೇರಿಕನ್ನ್ ಮನಸ್ಸಿನ ಮಿತಿ ಎಂದುಕೊಂಡರೆ ತಪ್ಪಾದೀತು. ಇಂದಿನ ಗ್ಲೋಬಲ್ ವ್ಯವಸ್ಥೆಯಲ್ಲಿ ದೊಡ್ಡ-ದೊಡ್ಡ ಆಟಗಾರರಿಗೆ ನೆಗಡಿ-ಜ್ವರ ಬಂದರೇ ಕಷ್ಟವಾಗುವಾಗ ಇನ್ನು ಭೂಕಂಪ, ಸುನಾಮಿಗಳು ಬರೀ ನೀರಿನ ಅಲೆಗಳಾಗಿ ಮಾತ್ರ ತಟ್ಟದೇ ಗಾಳಿ ಹಾಗೂ ಉಳಿದ ಮಾಧ್ಯಮಗಳಲ್ಲೂ ಸಂವಹಿಸಬಲ್ಲ ಶಕ್ತಿ ಅಥವಾ ದೌರ್ಬಲ್ಯವನ್ನು ಕುರಿತು ಚಿಂತಿಸುವಂತಾಯಿತು.

ಒಟ್ಟಿನಲ್ಲಿ, ಈ ವಿಶ್ವದ ದೊಡ್ಡಣ್ಣ ನ್ಯೂ ಯಾರ್ಕ್ ನಗರದ ಒಂದು ದಿನದ ಸಹವಾಸದಿಂದಾಗಿ, ನಾಗರಾಜ್ ಅಂಥವರ ಮಹಾನ್ ಚೇತನಗಳ ಬರಹದ ದೆಸೆಯಿಂದ "ಅಂತರಂಗ"ದ ಅನಿವಾಸಿ ಮನಸ್ಸು ಒಂದು ಕ್ಷಣದ ಮಟ್ಟಿಗಾದರೂ ದಿನನಿತ್ಯದ ಜಂಜಾಟಗಳಿಂದ ದೂರಗೊಂಡು ಕನ್ನಡ-ನಮ್ಮತನ-ನಾಡಿನ ಬಗ್ಗೆ ಯೋಚಿಸುವಂತೆ ಮಾಡಿದ್ದು ದೊಡ್ಡದೆ. ಈ ಅಗಾಧತೆಗಳ ನಡುವೆ ನಮ್ಮ ನಮ್ಮ ದೊಡ್ಡದನ್ನು ಚಿಕ್ಕದಾಗಿ ಪರಿವರ್ತಿಸಬಲ್ಲ ಇಂತಹ ಮಹಾನ್ ಅವಕಾಶಗಳು ಆಗಾಗ್ಗೆ ಬರುತ್ತಿರಲಿ.