Saturday, January 24, 2009

ಆಹಾ, ಜನವರಿ!

ಓಹ್, ಈ ಜನವರಿಯಲ್ಲಿ ಅದೇನೇನೆಲ್ಲಾ ಆಗ್ತಾ ಇದೆ! ಓಬಾಮಾ ಪಬಾಮಾ ಪ್ರೆಸಿಡೆಂಟ್ ಆಗಿರೋ ಬಗ್ಗೆ ಬೇರೆ ಎಲ್ರೂ ಬರೀತಾ ಇರೋವಾಗ ನಾನೂ ಅದನ್ನೇ ಬರೆದ್ರೆ ಏನ್ ಪ್ರಯೋಜನ? ಈ ಜನವರಿಯ ಇಪ್ಪತ್ತನಾಲ್ಕು ದಿನಗಳಲ್ಲಿ ಆಗ್ಲೇ ಹನ್ನೊಂದು ಹನ್ನೆರಡು ಪರ್ಸೆಂಟ್ ಡೌನ್ ಆಗಿರೋ ನನ್ನ ಪೋರ್ಟ್‌ಫೋಲಿಯೋ ಬಗ್ಗೆ ಚಿಂತಿಸ್ಲೋ ಅಥವಾ ಇತ್ತೀಚೆಗೆ ನನ್ನ ಜೊತೆಯಾದ ಹೊಸ ಬಾಸ್ ಹಾಗೂ ಹೊಸ ಕೆಲಸಗಳ ಬಗ್ಗೆ ಕೊರೆದರೆ ಹೇಗೆ?

ಈ ಇಂಗ್ಲೀಷ್ ಕ್ಯಾಲೆಂಡರಿನ ಜನವರಿ ಅದೆಷ್ಟು ಹೊಸದನ್ನು ತಂದಿದೆ ಈ ವರ್ಷ - ಅಮೇರಿಕದ ಹೊಸ ಪ್ರೆಸಿಡೆಂಟ್ ಓಬಾಮ ಸಿಂಹಾಸನವನ್ನೇರಿದ್ದು, ಆ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಲಕ್ಷ ಜನ ಸೇರಿದ್ರಂತಲ್ಲಪ್ಪ! ಅಬ್ಬಾ, ಅದೆಂತಾ ಪವರ್ ಇದ್ದಿರಬಹುದು?

’ಲೋ, ಸುಮ್ನಿರಯ್ಯಾ. ನಮ್ಮ್ ದೇವೇಗೌಡ್ರು ಮುಖ್ಯಮಂತ್ರಿ ಆದ ದಿನ ಇದಕ್ಕಿಂತ ಹೆಚ್ಚು ಜನಗಳನ್ನ ಸೇರಿಸಿರ್‌ಲಿಲ್ವಾ? ದಾವಣಗೆರೇಲಿ ಬಂಗಾರಪ್ಪ ಒಂದೇ ಸಮಾವೇಶಕ್ಕೆ ಹತ್ತು ಲಕ್ಷ ಜನ ಸೇರ್ಸಿದ್ ಮುಂದೆ ಅಮೇರಿಕದ ಮಿಲಿಯನ್ನು ಯಾವ ಲೆಕ್ಕ?’ ಎಂದು ಎಲ್ಲಿಂದಲೋ ಯಾವ್ದೋ ಧ್ವನಿ ಕೇಳಿದ ಹಾಗಾಯ್ತು, ಒಡನೇ ಸುಬ್ಬನ ಕಾಲ್ ಸ್ಪೀಕರ್ ಫೋನಿನಲ್ಲಿ ಬಂದ ಅನುಭವ, ಆದ್ರೆ ಇವೆಲ್ಲ ನನ್ನ ಭ್ರಮೆ ಅಂದ್‌ಕೊಂಡು ಮುಂದೆ ಯೋಚಿಸ್ತಾ ಹೋದೆ. ಆ ಪಾಟಿ ಜನ ವೋಟ್ ಹಾಕಿದ್ರಂತಲ್ಲ ಈ ಸರ್ತಿ, ಪಾಪ ಕರಿಯ ಮೇಲ್ ಬಂದವನೇ, ಮೊದಲ್ನೇ ಸರ್ತಿ ದಾಖಲೆ ನಿರ್ಮಿಸ್ಲಿ ಅಂತ ಇದ್ದಿರಬಹುದೋ ಏನೋ.

’ಯಾರ್ ಪ್ರೆಸಿಡೆಂಟ್ ಆದ್ರೆ ನಮಗೇನ್ ಸ್ವಾಮೀ? ದುಡಿಯೋ ಹೆಸರಿಗೆ ಬಂದ ಬಡ್ಡೀ ಹೈಕ್ಳು ನಾವು, ಅದೇ ನಮ್ ಕಾಯ್ಕ ನೋಡಿ!’ ಅಂತ ಮತ್ತೊಂದು ಧ್ವನಿ ಕೇಳಿಸ್ತು, ಈ ಸರ್ತಿ ನಿಜವಾಗ್ಲೂ ಯಾರೋ ನನ್ನ ತಲೆ ಒಳಗೆ ಸೇರಿಕೊಂಡು ನುಡಿದ ಅನುಭವ.

ಜನಗಳು ಅಂದ್ಕೊಂಡವರೆ, ಪ್ರೆಸಿಡೆಂಟ್ ಬದಲಾದ ಕೂಡ್ಲೆ ಎಲ್ಲವೂ ದಿಢೀರನೆ ಬದಲಾಗುತ್ತೆ ಅಂತ. ಡಿಸೆಂಬರ್ ಮುವತ್ತೊಂದರಿಂದ ಜನವರಿ ಒಂದರೊಳಗೆ ಏನೂ ಬದಲಾಗೋದಿಲ್ಲ, ಕ್ಯಾಲೆಂಡರ್ ಒಂದನ್ನು ಬಿಟ್ಟು. (ಅದೇ ಚೈತ್ರ ಮಾಸ ಶುರುವಾಗಲಿ ನೋಡಿ ಬೇಕಾದಷ್ಟು ಬದಲಾವಣೆಗಳು ನಿಮಗೆ ಅರಿವಿಗೆ ಬಂದೋ ಬರದೆಯೋ ನಡೆದೇ ಇರತ್ತೆ.)

ಸಾವಿರಾರು ಜನಗಳು ಕೆಲ್ಸ ಕಳೆದುಕೊಂಡ್ರು. ಭಾರತದಲ್ಲಿ ನಂಬರ್ ಮೂರನೇ ಕಂಪನಿಯ ಗುರುವಾಗಿದ್ದವರು ಶಾಪವಾದವರು. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗವನ್ನು ಮೆರೆದವರು ಇಂದು ಇತಿಹಾಸವಾಗಿ ಹೋದರು. ಎಂಟು ವರ್ಷ ಆಳ್ವಿಕೆ ಮಾಡಿ ಹೊರಗೆ ಹೋದ ಬುಷ್ ಸರ್ಕಾರದ ಲೆಕ್ಕಾಚಾರವನ್ನು ಯಾರೂ ಯಾಕೆ ಮಾಡುತ್ತಿಲ್ಲ? ಅಂದು ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡದ್ದರ ಲೆಕ್ಕವನ್ನು ಯಾರೂ ಯಾಕೆ ಕೇಳುತ್ತಿಲ್ಲ?

ಇನ್ನೇನು ಜನವರಿ ಮುಗಿಯುತ್ತಾ ಬಂದರೂ ಆರ್ಥಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಈಗ ಬಂದು ಹಾಗೆ ಹೋಗೋ ೨೦೦೯ ಇಸ್ವಿ ೨೦೦೮ ಕ್ಕಿಂತ ಕೆಟ್ಟದಾಗಿರುತ್ತೆ ನೋಡ್ತಾ ಇರಿ, ಅಂತ ಎಷ್ಟೋ ಜನ ಈಗಾಗ್ಲೇ ಹೆದರ್ಸಿರೋದ್ರಿಂದ್ಲೇ ಬಹಳಷ್ಟು ಜನ ಕನ್ಸರ್‌ವೇಟೀವ್ ಆಗಿ ಆಲೋಚಿಸ್ತಾ ಇರೋದು. ನೋಡೋಣ ಇನ್ನೇನು ಕಾದಿದೆ ಈ ವರ್ಷ ಅಂತ.

Thursday, January 01, 2009

ಹೊಸತು ಹಳೆಯದರ ನಡುವೆ

2008 ಅನ್ನೋದು ಈಗ ಇತಿಹಾಸ, ಇಷ್ಟೊತ್ತಿಗಾಗಲೇ ವಿಶ್ವದೆಲ್ಲಾಕಡೆ ಗಡಿಯಾರಗಳು ೨೦೦೯ ನ್ನು ತೋರಿಸ್ತಿರೋ ಹೊತ್ತಿನಲ್ಲಿ ಒಬ್ಬರೊನ್ನೊಬ್ಬರು ಕರೆ ಮಾಡಿ ’ಹೊಸ ವರ್ಷದ ಹಾರ್ಧಿಕ ಶುಭಾಶಯಗಳು’ ಎಂದು ವಿಶ್ ಮಾಡೋದು ನಿಂತು ಹೋಗಿರಬಹುದು. ಈ ಹಿಂದೆ ಹಲವಾರು ಸಾರಿ ಬರೆದ ಹಾಗೆ ನಾವು ನಮ್ಮನ್ನು ಇಂಗ್ಲೀಷ್ ಕ್ಯಾಲೆಂಡರಿಗೆ ಸಮರ್ಪಿಸಿಕೊಂಡಿದ್ದೇವೆ. ನಮ್ಮ ಮಾರ್ಚ್-ಏಪ್ರಿಲ್ ತಿಂಗಳ ನಡುವೆ ಎಲ್ಲೋ ಬರುವ ಚಂದ್ರಮಾನ ಯುಗಾದಿ, ಚೈತ್ರ ಮಾಸ ವಸಂತ ಋತು ಉತ್ತರಾಯಣ ಪುಣ್ಯಕಾಲಾರಂಭ ಇವೆಲ್ಲವೂ ನಿಧಾನವಾಗಿ ಮರೆಯಾಗುತ್ತಿವೆ. ಇದೇ ಹಾಡನ್ನು ಸ್ವಲ್ಪ ಜೋರಾಗಿ ಹಾಡಿದರೆ ’ಹಿಂದೂ ಮೂಲಭೂತವಾದಿ’ಯಾಗಿ ಬಿಡಬಹುದಾದ ಸಾಧ್ಯತೆಗಳೂ ಇವೆ, ಹಾಡನ್ನು ಹಾಡದೇ ಸುಮ್ಮನಿದ್ದರೆ ನಮ್ಮತನವನ್ನು ಕಳೆದುಕೊಂಡ ಅನುಭವಾಗುವುದೂ ನಿಜವೇ ಹೌದು.

ನಿನ್ನೆ ರಾತ್ರಿಯ ಇಪ್ಪತ್ತರ ಡಿಗ್ರಿ ಫ್ಯಾರನ್‌ಹೈಟ್ ಛಳಿಯಲ್ಲಾಗಲೀ ಇಂದು ಹೊಸ ವರ್ಷದ ದಿನದಲ್ಲಾಗಲೀ ಹೆಚ್ಚಿನ ಬದಲಾವಣೆಯೇನೂ ಇಲ್ಲ. ಬೇವುಗಳು ಇನ್ನೂ ಚಿಗುರಿಲ್ಲ, ಬೆಲ್ಲ ಮಾಡುವ ಸೀಜನ್ನೂ ಅಲ್ಲ. ಮರಗಳೆಲ್ಲ ಮರಗಟ್ಟಿ ಹೋಗೀ ನಿತ್ಯ ಹರಿದ್ವರ್ಣಿಗಳ ಮೇಲಿನ ಹಸಿರನ್ನು ಹೊರತುಪಡಿಸಿದರೆ ಮತ್ತೆಲ್ಲಾ ಛಳಿಯ ಬಣ್ಣವನ್ನು ಹೊದ್ದಿರುವ ಹೊರಗಿನ ವಾತಾವರಣ. ಅಲ್ಲಲ್ಲಿ ಬಿದ್ದ ಹಿಮ, ಮತ್ತೆ ಅದೇ ಅದರ ಛಳಿಗೆ ಹರಳುಗಟ್ಟಿ ಘನೀಭವಿಸಿ ಮತ್ತಿನ್ನಷ್ಟು ಶೀತಲತೆಯನ್ನು ಮುಖದ ಮೇಲೆ ತಂದುಕೊಂಡು ನೋಡೋಕೆ ಪುಡಿಯಂತೆ ಕಂಡುಬಂದರೂ ಒಳಗೆ ಗಟ್ಟಿಪದರವನ್ನು ಕಟ್ಟಿಕೊಂಡು ತನ್ನ ಮೈ ಶಾಖದಲ್ಲಿ ತಾನು ಯಾವುದೋ ಪ್ರಪಂಚವನ್ನು ಸೃಷ್ಟಿಸಿಕೊಂಡಿರುವ ಹೆಮ್ಮೆಯಿಂದ ಬೀಗುತ್ತಿರುವ ಹಾಗೆ ಕಂಡುಬಂತು. ಬೇಕಾದಷ್ಟು ಬೀಸುತ್ತಿರುವ ಗಾಳಿಗೆ ತಲೆ ತೂಗೀ ತೂಗೀ ಕಂಗಾಲಾದ ಮರಗಳು ಯಾವುದೋ ದಿಕ್ಕಿನಲ್ಲಿ ಅವಿತುಕೊಂಡ ವಾಯು-ವರುಣರಿಗೆ ಚಪ್ಪೆ ಮುಖವನ್ನು ತೋರಿಸುವಷ್ಟು ದೀನರಾಗಿ ಹೋಗಿದ್ದರೆ, ಕಪ್ಪಾದ ರಸ್ತೆಯ ಮೇಲ್ಮೈ ಸಹ ಇಂದು ಬೀಳದ ಬಿಸಿಲಿಗೆ ಶಪಿಸುತ್ತಾ ತಮ್ಮ ಕಳೆದುಕೊಂಡ ಕಾವಿಗೆ ಚಡಪಡಿಸಿ ತಮ್ಮ ಮೈ ಮೇಲೆ ತೆಳ್ಳಗೆ ಸವರಿದ ಬಿಳಿಯ ಮಂಜಿನ ಪುಡಿಗೆ ಹೆದರಿಕೊಂಡಿದ್ದವು. ನಿನ್ನೆ-ಇಂದಿಗೆ ಹೆಚ್ಚು ವ್ಯತ್ಯಾಸ ಕಂಡು ಬರದ ನನ್ನ ಹಾಗಿನ ಉಳಿದವೆಲ್ಲವೂ ಇದೊಂದು ದಿನ ಮತ್ತೊಂದು ದಿನ ಎಂದುಕೊಂಡು ಸುಮ್ಮನಿದ್ದವು.

ಹಳೆಯ ವರ್ಷ ಗೆದ್ದವರು ಬಿದ್ದವರೆದ್ದೆಲ್ಲವನ್ನು ಟಿವಿ ಪರದೆ ತಾನು ತೋರಿಸಿಯೇ ತೀರುತ್ತೇನೆ ಎಂದು ಸೆಡ್ಡು ಹೊಡೆದುಕೊಂಡು ನಿಂತಿತ್ತು. ಈ ವರ್ಷದ ಆರಂಭದ ಕ್ಷಣಗಣನೆ ಮುಗಿದು ಘಂಟೆಗಳೇ ಕಳೆದಿದ್ದರೂ ಹೊಸತಕ್ಕೆ ಈಗಾಗಲೇ ಹೋದವರಿಗಿಂತಲೂ ಹಳೆಯದ್ದಕ್ಕೆ ಅಂಟಿಕೊಂಡವರಿಗಿಂತಲೂ ಇನ್ನೂ ಹಳೆಯದು-ಹೊಸತರ ನಡುವೆ ಓಲಾಡುತ್ತಿರುವವರು ಓಲಾಡುತ್ತಲೇ ಇರುವವರ ಹಾಗೆ ಕೆಲವು ಚಿತ್ರಗಳಲ್ಲಿ ಕಂಡುಬಂತು. ಕ್ಯಾಲೆಂಡರಿನ ದಿನ ಬದಲಾದಂತೆ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ತೊಲಗಿ ಹೋದವು ಎಂದುಕೊಂಡು ಬೀಗಿ ನಿಂತವರು ಈ ಮೊದಲು ಹೇಳಿದ ಯಾವುದೇ ಗುಂಪಿನಲ್ಲಿ ಸೇರದೇ ತಮ್ಮದೇ ಒಂದು ಪಂಥವನ್ನು ಕಟ್ಟಿಕೊಂಡವರಂತೆ ಕಂಡುಬಂದರು. ’ಹಾಗಾದರೆ ನಮ್ಮೆಲ್ಲ ಕಷ್ಟಗಳೆಲ್ಲ ತೊಲಗಿದವೇನು ಇಂದಿಗೆ?’ ಎಂದು ನಾನೆಸೆದ ಪ್ರಶ್ನೆಯೊಂದಕ್ಕೆ ನಮ್ಮ ಬ್ಯಾಂಕಿನ ಮ್ಯಾನೇಜರಿಣಿ ’ಇದು ಕೇವಲ ಐಸ್‌ಬರ್ಗಿನ ತುದಿ ಮಾತ್ರ!’ ಎಂದು ಈಗಾಗಲೇ ಕುಸಿದ ವ್ಯವಸ್ಥೆ ಮತ್ತಿನ್ನಷ್ಟು ಕುಸಿದು ಹೋಗುವ ಮುನ್ಸೂಚನೆಯನ್ನು ನೀಡಿದಳು. ಅದೇ ಐಸ್‌ಬರ್ಗ್ - ಅದೆಷ್ಟೋ ವರ್ಷಗಳಿಂದ ಹರಳುಕಟ್ಟಿದ ಹಿಮ, ನೀರಿನ ಒಳಗೇ ತನ್ನದೊಂದು ಪುಟ್ಟ ಪ್ರಪಂಚದ ವಾಸ್ತ್ಯವ್ಯವನ್ನು ಸ್ಥಾಪಿಸಿಕೊಂಡಿರುವ ಅದು ಅಷ್ಟು ಸುಲಭವಾಗಿ ಕರಗಲಾರದು, ಅದು ಪುಡಿಯಾಗಿ-ಕರಗುವ ಮೊದಲು ಅದೆನ್ನೆಷ್ಟು ಟೈಟಾನಿಕ್ ವ್ಯವಸ್ಥೆಗಳನ್ನು ಬಲಿತೆಗೆದುಕೊಳ್ಳಬೇಕೋ ಬಲ್ಲವರಾರು?

ನಿನ್ನೆಗೆ ಕೊರಗಬಾರದು, ನಾಳೆಗೆ ನರಳಬಾರದು, ಇಂದಿನದನ್ನು ಇಂದೇ ನೋಡಿ ಅನುಭವಿಸಿ ತೀರುವ ಪುಟ್ಟದೊಂದು ತಂತ್ರ. ಆ ತಂತ್ರದಲ್ಲಿನ ಸೂತ್ರದಾರನ ಬೆನ್ನಿಗೆ ಎಲ್ಲೆಲ್ಲಿಂದಲೋ ಹೊತ್ತು ತಂದ ಈವರೆಗೆ ಶೇಖರಿಸಿಕೊಂಡ ಒಂದಿಷ್ಟು ಬ್ಯಾಗುಗಳು. ನಾಗಾಲೋಟದ ಮನಸು, ಅದಕೆ ವ್ಯತಿರಿಕ್ತವಾಗಿ ಗಟ್ಟಿಯಾದ ಭೂಮಿಗೆ ಅಂಟಿಕೊಂಡು ಅದರಲ್ಲಿನ ಘರ್ಷಣೆ ಅದರ ಮೇಲ್ಮೈ ಎತ್ತಿ ಕೊಡುವ ವಿರುದ್ಧ ಬಲದ ಸಹಾಯದಿಂದ ನಿಧಾನವಾಗಿ ಚಲಿಸುವ ಕಾಲುಗಳು, ಹೊಟ್ಟೆಗಾಗಿ ಏನೇನೋ ಮಾಡೋ ಜೀವದ ಸಂತೃಪ್ತಿಗೆ ಮತ್ತೆ ಅದೇ ನೆಲದಲ್ಲಿ ಸಿಕ್ಕ ಅಂಶಗಳಿಂದ ಪೋಷಣೆ. ಮತ್ತೆ ಎಲ್ಲರಿಗೂ ಇದ್ದು ಯಾರಿಗೂ ಸಿಗದಿರುವ ಪಂಚಭೂತಗಳು. ಈ ತಂತ್ರಗಾರಿಕೆಯ ವ್ಯವಸ್ಥೆಯನ್ನು ಚಲಾಯಿಸೋದಕ್ಕೆ ಅವರವರ ದುಡ್ಡೂ-ಕಾಸು, ಅದಕ್ಕೆ ತಕ್ಕನಾದ ಮೋಜು-ಮಸ್ತಿ. ಮನೆಯಲ್ಲಿದ್ದರೆ ಕೆಲಸದ ಬಗ್ಗೆ, ಕೆಲಸದಲ್ಲಿದ್ದರೆ ಮನೆಯ ಬಗ್ಗೆ ಚಿಂತಿಸುವ ಕೊರಗು. ಅದ್ಯಾರೋ ದೊಡ್ಡ ಮನುಷ್ಯರು ಹೇಳಿದ ಹಾಗೆ ಇರೋದನ್ನೆಲ್ಲ ಬಿಟ್ಟು ಇರುದುದರೆಡೆಗೆ ತುಡಿವ ಮರುಗು.

ಈ ಆಸೆಯದ್ದೇ ವಿಶೇಷ - ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವ ಹೋಪ್ ಬಹಳ ಪ್ರಭಲವಾದದ್ದು. ಮಾರುಕಟ್ಟೆಗೆ ಸಂಬಂಧ ಪಟ್ಟಂತೆ ಹಲವಾರು ವರ್ಷಗಳಲ್ಲಿ ಬಿದ್ದ ದಿನಗಳಿಗಿಂತಲೂ ಮೇಲೆ ಎದ್ದ ದಿನಗಳೇ ಹೆಚ್ಚಾದರೂ ಕಳೆದುಕೊಳ್ಳುವವರಿಗೆ ಕಳೆದುಕೊಂಡವರಿಗೇನೂ ಕಡಿಮೆ ಇಲ್ಲ. ಒಬ್ಬರು ಕಳೆದುಕೊಂಡರೆ ತಾನೇ ಮತ್ತೊಬ್ಬರು ಗಳಿಸೋದು - ಆದರೆ ಅದು ಯಾವ ನ್ಯಾಯ? ಹಾಗಾದರೆ ಈ ಪ್ರಪಂಚದಲ್ಲಿ ಕೂಡುವವರು ಇದ್ದಾರೆಂದರೆ ಕಳೆಯುವವರೂ ಇದ್ದಾರೆ ಎಂತಲೇ ಅರ್ಥವೇ? ಇದೆಲ್ಲದರ ಒಟ್ಟು ಮೊತ್ತ ಯಾವಾಗಲೂ ಶೂನ್ಯವೇ? ಹಾಗಿದ್ದ ಮೇಲೆ ಕೊಡು ಕೊಳ್ಳುವ ವ್ಯವಹಾರವಾದರೂ ಏಕೆ ಬೇಕು? ಕೂಡುವುದು ನಿಜವಾದ ಮೇಲೆ, ಅದರ ಜೊತೆಗೆ ಕಳೆದುಕೊಳ್ಳುವುದೂ ನಿಜವೆಂದ ಮೇಲೆ ಶ್ರೀ ಕೃಷ್ಣ ಉಪದೇಶ ಮಾಡಿದ ಸ್ಥಿತಪ್ರಜ್ಞ ಸ್ಥಿತಿಯನ್ನು ಜನರು ಅದೇಕೆ ತಲುಪೋದಿಲ್ಲ? ಸಾಕು ಎನ್ನುವುದು ಹೆಚ್ಚು ಕೇಳಿ ಬರದಿರುವಾಗ ಬೇಕು ಎನ್ನುವುದು ಪ್ರಭಲವಾಗಿ ಕಂಡರೆ ಅದೊಂದೇ ಅನನ್ಯವಾದರೆ, ಅದೇ ಸ್ಥಿತಿ ಎಲ್ಲರಲ್ಲೂ ಸೇರಿಕೊಂಡರೆ, ಬೇಕು ಎನ್ನುವುದೇ ಬದುಕಾದರೆ...ಬೇಕು ಎನ್ನುವ ಆಸೆಗೆ ಕೂಡುವುದು ಇದೇ ಜೊತೆಗೆ ಕಳೆಯುವುದೂ ಇದೆ ಎಂದ ಮೇಲೆ ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವುದು ಎಷ್ಟರ ಮಟ್ಟಿಗೆ ಸರಿ; ಜೊತೆಗೆ ಒಬ್ಬರ ಒಳಿತು ಇನ್ನೊಬ್ಬರ ಒಳಿತಾಗಬೇಕೆಂದೇನೂ ಇಲ್ಲ ಎಂದು ಯೋಚಿಸಿಕೊಂಡಾಗ ಅದೇ ಶೂನ್ಯದ ಸಂಭ್ರಮ, ಎಲ್ಲವನ್ನೂ ತನ್ನ ಹೊಟ್ಟೆಯೊಳಗೆ ತುಂಬಿಕೊಂಡ ಶುಷ್ಕ ನಗೆ.