Sunday, November 23, 2008

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ


ವರ್ಷದ ಆಗಷ್ಟು ಎರಡರ ಮಧ್ಯಾಹ್ನ 1:11:25 (August 02, 08) ಇದ್ದ ನ್ಯಾಷನಲ್ ಸಾಲದ ಗಡಿಯಾರದ ಪ್ರಕಾರ US ನ ಪ್ರತಿಯೊಂದು ಫ್ಯಾಮಿಲಿಯ ದೇಶದ ಸಾಲದ ಪಾಲು ಸುಮಾರು 81 ಸಾವಿರ ಡಾಲರುಗಳು. ಟೈಮ್ ಸ್ಕ್ವಯರ್ ಹತ್ತಿರದಲ್ಲಿದ್ದ ಈ ಗಡಿಯಾರದ ಚಿತ್ರವನ್ನು ನಾನು ಬಹಳ ವರ್ಷಗಳಿಂದ ತೆಗೆಯಬೇಕು ಎಂದುಕೊಂಡರೂ ಆಗದಿದ್ದುದು ಕೊನೆಗೆ ೨೦೦೮ ರಲ್ಲಿ ಕೈಗೂಡಿತು, ಆದರೆ ಏನಾಶ್ಚರ್ಯ ಈ ಗಡಿಯಾರದ ಅವಧಿಯೂ ಮುಗಿಯುತ್ತ ಬಂದಹಾಗಿದೆಯಲ್ಲ ಎಂದುಕೊಂಡವನಿಗೆ ನನ್ನ ಊಹೆಗೆ ತಕ್ಕಂತೆ ಈ ಗಡಿಯಾರದ ಡಿಜಿಟ್ಟುಗಳೆಲ್ಲ "ಖಾಲಿ" ಆಗಿ ಮತ್ತೆ ಈ ಗಡಿಯಾರದ ಡಿಜಿಟ್ಟುಗಳನ್ನು ಹೆಚ್ಚಿಸಬೇಕಾಗಿ ಬಂದಿತೆಯಂತೆ. ಅಂದರೆ ಈ ದೇಶದ ಸಾಲ ಹತ್ತು ಟ್ರಿಲಿಯನ್ ಡಾಲರ್‌ಗಳಿಗೂ ಹೆಚ್ಚು!

ಈ ಗಡಿಯಾರದ ಮೂಲ Durst Organization ಹೇಳಿಕೆ ಪ್ರಕಾರ ಮುಂದಿನ ವರ್ಷ ಇದರಲ್ಲಿನ ಸಂಖ್ಯೆಗಳನ್ನು ಹೆಚ್ಚಿಸುತ್ತಾರಂತೆ, ಹೀಗೆ ಹೆಚ್ಚಿಸುವ ಸಂಖ್ಯೆಗಳ ಬಳಕೆ ಇನ್ನೆಷ್ಟು ಬರುತ್ತದೋ ಕಾದು ನೋಡಬೇಕು.

ಅಂದಹಾಗೆ ಈ ಗಡಿಯಾರದ ಹಿಂದಿನ ತತ್ವವನ್ನು ಪಂಡಿತರಿಗೆ ಬಿಡೋಣ, ಅಂಥವರು ಈ ಬರಹದ ಓದುಗರ ಸಮುದಾಯದಲ್ಲಿದ್ದಲ್ಲಿ ನಮಗೂ ಒಂದಿಷ್ಟು ವಿವರವನ್ನು ತಿಳಿಸಬಾರದೇಕೆ?

Friday, November 21, 2008

ದೇವ್ರು ಇಲ್ಲಾ ಅಂತ ಅಂದೋರು ಯಾರು

ನಾವೆಲ್ಲಾ ಚಿಕ್ಕವರಿದ್ದಾಗ ದೇವ್ರು-ದೆವ್ವಗಳು ಇದ್ದಾವೋ ಇಲ್ಲವೋ ಅಂತ ಚಿಂತೆ-ಚಿಂತನೆ ನಡ್ಸಿ ನಡ್ಸಿ ಬಹಳ ಟೈಮು ಕಳೀತಿದ್ವಿ, ನಮ್ಮ ನಮ್ಮ ಮಟ್ಟಿನ ತತ್ವಗಳು ತರ್ಕಗಳು ನಮ್ಮನ್ನು ವಾದ-ವಿವಾದಗಳಲ್ಲಿ ತೊಡಗಿಸಿ ಕೆಲವೊಂದು ಕಥೆಗಳನ್ನು ಬಹಳ ರೋಚಕಗೊಳಿಸಿ (ಅಂದ್ರೆ ಮಸಾಲೆ ಸೇರಿಸಿ) ಹೇಳಿ ಹಂಚಿಕೊಳ್ಳುತ್ತಿದ್ದೆವು. ಪ್ರಪಂಚದಲ್ಲಿ ಇದ್ದ ಇಲ್ಲದ ದೆವ್ವ ಭೂತಗಳು, ಕೊಳ್ಳಿ ದೆವ್ವಗಳು ಇವೆಲ್ಲಾ ನಮ್ಮ ತಂಡದ ಅನುಪಸ್ಥಿತ ಸದಸ್ಯರಾಗಿದ್ದವು. ನಮ್ಮ ನಮ್ಮ ದೇವರುಗಳ ಜೊತೆಗೆ ನಮ್ಮೂರಿನ ಶ್ಮಶಾನದಲ್ಲಿದ್ದ ದೆವ್ವಗಳು ಹಾಗೂ ಅವುಗಳ ಕಥೆಗಳು ನಮ್ಮ ಜೊತೆಗೆ ಅಮೇರಿಕಕ್ಕೆ ಹೇಗೆ ಬಂದ್ವು, ಅವುಗಳಿಗೆ ವೀಸಾ ಕೊಟ್ಟೋರು ಯಾರು ಅನ್ನೋ ಪ್ರಶ್ನೆಗಳು ಇನ್ನು ಪ್ರಶ್ನೆಗಳಾಗೇ ಉಳಿದಿವೆ ಬಿಡಿ.

ಈ ತಣ್ಣನೆ ಹೊತ್ತಿನಲ್ಲಿ ದೇವ್ರ ಬಗ್ಗೆ ನೆನೆಸಿಕೊಳ್ಳೋದಕ್ಕೆ ಏನು ಕಾರಣ ಅಂತ ನನಗೇ ಅನ್ಸಿ ಒಂದು ನಗು ಹೊರಗೆ ಬಂತು, ಅದರ ಹಿಂದೇನೇ ದೇವ್ರ ಹೆಸರನ್ನ ಹಿಡಿದು ಒಂದಿಷ್ಟು ಕೀಟಲೆ ಮಾಡೋಣ ಅಂತ್ಲೂ ಅಂದುಕೊಂಡೆ, after all ಯಾವ ದೇವ್ರ ತಂಡವೂ ನಮ್ಮನ್ನೇನು sue ಮಾಡೋಲ್ಲ ಅಲ್ವೇ?

***

Thanks to my three year old - ಪ್ರತಿಯೊಂದು ಆಲ್ಟರ್‌ನೇಟ್ ಪದ ಇಂಚರಳ ಬಾಯಿಯಿಂದ ಹೊರಡೋದು "Why?" (but why, ಮತ್ತೆ ಅದಕ್ಕೆ ಅಮೇರಿಕನ್ ಆಕ್ಸೆಂಟಿನ ಟಚ್ ಜೊತೆ ಹಲವಾರು ವೇರಿಯೇಷನ್ನುಗಳೂ ಇವೆ!). ಅವಳ ಪ್ರಶ್ನೆಗಳಿಗೆ ಉತ್ತರ ಕೊಡೋ ಹಿನ್ನೆಲೆ ಅಥವಾ ನೆಪದಲ್ಲಿ ಈ ಕೆಳಗಿನ ಪ್ರಶ್ನೆಗಳು ಅಷ್ಟೇ...(ತಮಾಷೆಗೆಂದು)

- ದೇವ್ರು ಬ್ಲಾಕೋ ವೈಟೋ ಅಥವಾ ಮಿಕ್ಸೋ? ಅಥ್ವಾ ಕಲರ್ಡ್ ಸ್ಕಿನ್ನೋ? ಹೌದೌದು, ರಾಮ-ಕೃಷ್ಣರ ಚಿತ್ರಗಳನ್ನು ನೋಡಿ ಸ್ವಲ್ಪ ನೀಲಿಯಾಗಿರುತ್ವೆ, ಶಿವನ ಕಂಠವೂ ಕೂಡಾ ನೀಲಿ.
- ಈ ಬ್ರಹ್ಮನ ತಲೆ ಕೂದಲನ್ನು ಕತ್ತರಿಸೋ ಪ್ರವೀಣ ಕಲಾವಿದ ಯಾರು? ಆ ನಾಲ್ಕು ತಲೆಗಳ ನಡುವೆ ಅವನ ಕತ್ತರಿ ಹೇಗೆ ಸಲೀಸಾಗಿ ಹರಿದಾಡುತ್ತೆ? ಯಾವ ಬಾಯಿಯಿಂದ ಹರಿಯೋ ಸಂವಾದಕ್ಕೆ ಆ ನಾಪಿತ ಯಾವ ಉತ್ತರ ಕೊಡ್ತಾನೆ?
- ಈ ನಾಲ್ಕು ಕೈ ಇರೋ ದೇವತೆಗಳಿಗೆ ಬಟ್ಟೆ ಹೊಲಿದು ಕೊಡೋರು (ಅಂದ್ರೆ ಡಿಸೈನರ್ಸ್) ಯಾರು?
- ಹತ್ತು ತಲೆ ಇರೋ ರಾವಣ ಯಾವ ಬಾಯಲ್ಲಿ ಅನ್ನಾ ಹಾಕ್ತಿದ್ದ?
- ಶಂಕರ ಕೋಪದಲ್ಲಿ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸಿದ (why?), ಭಂಟರು ಹೋಗಿ ಉತ್ತರಕ್ಕೆ ತಲೆ ಹಾಕಿ ಮಲಗಿದ ಆನೆ ತಲೆಯನ್ನು ಕತ್ತರಿಸಿ ತಂದರು (why?), ಹಾರ್ಟು, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡೋದನ್ನ ಕೇಳಿದ್ದೇವೆ, ಪ್ರಾಣಿಯಿಂದ ಮನುಷ್ಯನಿಗೆ ತಲೆ ಟ್ರಾನ್ಸ್‌ಪ್ಲಾಂಟ್ ಮಾಡಿದ್ದು ಯಾವ ಸರ್ಜನ್ನು? ಅನಸ್ತೇಷಿಯಾ ಕೊಟ್ಟೋರು ಯಾರು? ಆ ಬಾಲಕನ ಕಡಿದು ಹೋದ ತಲೆಯನ್ನೇ ಹುಡುಕಿ ಮತ್ತೇಕೆ ಜೋಡಿಸಲಿಲ್ಲ, ಆ ಆನೆಯ ಮುಂಡ ಏನಾಯ್ತು? ಇಡೀ ಬ್ರಹ್ಮಾಂಡದಲ್ಲಿ ಬರೀ ಅದೊಂದು ಬಡಪಾಯಿ ಆನೆ ಮಾತ್ರ ಉತ್ತರಕ್ಕೆ ತಲೆ ಹಾಕಿ ಮಲಗಿತ್ತೇ?
- ಈ ಕ್ಲೀನ್ ಶೇವನ್ನ್ ವಿಷ್ಣು ಬಳಸೋ ಬ್ಲೇಡ್ ಯಾವ್ದು? ಕೇವಲ ಶಿವ, ರಾಘವೇಂದ್ರ ಸ್ವಾಮಿ, ಹನುಮಂತ ಗಡ್ಡ ಬೆಳೆಸಿಕೊಂಡಿರೋ ಚಿತ್ರ ಮಾತ್ರ ನೋಡೋಕೆ ಯಾಕೆ ಸಿಗುತ್ತೆ?

ಈ ಮೇಲಿನ ಏನೆಲ್ಲ ಪ್ರಶ್ನೆಗಳು (ಹಾಗೂ ಅವುಗಳ ಉತ್ತರಗಳು) ಇದ್ರೂ ನಾವು ದೇವರನ್ನ ಘಟ್ಟಿಯಾಗಿ ನಂಬಿದವರೇ, ಪ್ರತಿನಿತ್ಯ ಶ್ರೀ ಗಣೇಶಾಯ ನಮಃ ಅಂದೇ ನಮ್ಮ ಜೀವನಗತಿಯನ್ನು ಆರಂಭಿಸುವವರೇ. ಈ ಪ್ರಶ್ನೆಗಳನ್ನ ನಾನು ಯಾವತ್ತೂ ಯಾರಿಗೂ ಕೇಳಿದ್ದಿಲ್ಲ (ಇಲ್ಲಿಯವರೆಗೆ), ಇವುಗಳೆಲ್ಲ ಹೀಗೆ ಬಾಲಿಶ ಅನ್ನಿಸಿದ್ರೂ ಪ್ರಶ್ನೆ ಕೇಳಬೇಕಾದ ವಯಸ್ಸಿನಲ್ಲಿ ಕೇಳಿದ್ರೆ ಉತ್ತರ ಕೊಡೋ ಬದಲು ’ಹೋಗೋ ತಲೆಹರಟೆ, ಅಧಿಕಪ್ರಸಂಗಿ...’ ಅಂತ ಯಾರಾದ್ರೂ ಬೈತಾರೆ ಅನ್ನೋ ಅವ್ಯಕ್ತ ಭಯವನ್ನು ಯಾರು ಹುಟ್ಟಿಹಾಕಿದ್ರೋ ಯಾರಿಗೆ ಗೊತ್ತು?

***

ಹೀಗೇ ಒಂದು ದಿನ ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಮನೆಯಲ್ಲಿ ನಮ್ಮ ಮನೆಯ ಗೋಡೆಗಳಿಗೆ ಬಣ್ಣ ಹಚ್ಚೋಣ ಅನ್ನೋ ಆಲೋಚನೆ ಬಂದಿದ್ದೇ ತಡ ಬಣ್ಣ ಹಚ್ಚಲು ಬೇಕಾದ ಪರಿಕರಗಳನ್ನೆಲ್ಲ ಜೋಡಿಸಿಕೊಂಡು ಸುಸಜ್ಜಿತನಾದೆ, ಮೊದಮೊದಲು ಇದ್ದ ಉತ್ಸಾಹ ಕೆಲ್ಸಾ ಮಾಡ್ತಾ ಮಾಡ್ತಾ ಬತ್ತಿ ಹೋಗೋದರ ಜೊತೆಗೆ ದೊಡ್ಡ ತಲೆನೋವು ಇದು ಅನ್ನೋ ಭಾವನೆ ಬಲವಾಗಿ ಮುತ್ತಿಕೊಳ್ಳತೊಡಗಿತು. ದಿನಗಳೆದ ಮೇಲೆ ಇನ್ನೇನು ಸುಮಾರಾಗಿ ಎಲ್ಲ ಕೆಲ್ಸ ಮುಗಿದು ಫಯರ್ ಪ್ಲೇಸಿನ ಮೇಲೆ ಇದ್ದ ಗೋಡೆಯನ್ನು ಅರ್ಧ ಪೈಂಟ್ ಮಾಡುವ ಹೊತ್ತಿಗೆ ಅಚಾನಕ್ಕಾಗಿ ಏರ್‌ಪೋರ್ಟಿನಿಂದ ನನ್ನ ಸ್ನೇಹಿತನ ಕರೆ ಬಂತು.

’I am hungry, tired, jet lagged, cold - come and get me out of here!' ಅನ್ನೋ ಆಜ್ಞೆ. ನಮ್ಮ ಮನೆಯಿಂದ ಡಲ್ಲಸ್ ಏರ್‌ಪೋರ್ಟಿಗೆ ಕನಿಷ್ಠ ಒಂದು ಘಂಟೆ ದೂರ, ಮೊದಲೇ ಕೆಲಸ ಕಳ್ಳ ನಾನು (ಬಣ್ಣ ಹಚ್ಚೋ ಕೆಲಸ) ಒಂದು ನೆವ ಸಿಕ್ಕಿತೆಂದು ಕೆಲಸವನ್ನು ಅಲ್ಲೇ ಬಿಟ್ಟು ಏರ್‌ಪೋರ್ಟಿನ ಕಡೆ ಹೊರಟೆ. ನಾನು ಬರುವ ಹೊತ್ತಿಗೆ ಸುಮಾರು ಮೂರ್ನಾಲ್ಕು ಘಂಟೆ ಕಳೆದು ಹೋಗಿತ್ತು, ಟ್ರೇನಲ್ಲಿ ಇದ್ದ ಪೈಂಟೂ ಹಾಗೂ ನನ್ನ ರೋಲರ್ರುಗಳು, ಬ್ರಷ್ಷೂ ಇವೆಲ್ಲ ಒಣಗಿ ಹೋಗಿ ಉಪಯೋಗಕ್ಕೆ ಬಾರದವಾಗಿತ್ತು. ನೀರಿನಲ್ಲಿ ತೊಳೆದು ಅದೇನೇನು ಮಾಡಿದರೂ ಮೊದಲಿನ ಹಾಗೆ ಬಣ್ಣ ಹಚ್ಚಲು ಬಾರದವಾಗಿ ಹೋಗಿದ್ದವು. ಅದೇ ತಾನೆ ಮನೆಗೆ ಬಂದ ನನ್ನ ಸ್ನೇಹಿತನಿಗೆ ಸಹಸ್ರ ನಾಮ ಹಾಕುತ್ತಲೇ ಮತ್ತೆ ಇದ್ದ ಬದ್ದ ಒಣಗಿ ಕೃಶವಾದ ರೋಲರುಗಳಿಂದಲೇ ಬಣ್ಣ ಹಚ್ಚುವ ಬುದ್ಧಿವಂತ ಸಾಹಸಕ್ಕೆ ತೊಡಗಿದ್ದ ನನಗೆ ಬುದ್ಧಿ ಕಲಿಸುವ ಸಲುವಾಗಿ ಫೈಯರ್ ಪ್ಲೇಸಿನ ಮೇಲಿನ ಗೋಡೆಯ ಬಣ್ಣ ಬರೆಬರೆಯಾಗಿ ಹೋಯಿತು, ಮೊದಲು ಇದ್ದದ್ದಕ್ಕಿಂತಲೂ ಹಾಳಾಗಿ ಹೋಯಿತು. ಅದೂ ಸೆಮಿ ಗ್ಲಾಸ್ ಪೈಂಟು, ಅದರ ಸ್ಥಿತಿ ಇನ್ನೂ ಕಷ್ಟವಾಗಿ ಹೋಗಿದ್ದ ಹಿನ್ನೆಲೆಯಲ್ಲಿ ನನ್ನ ಎಲ್ಲ ಕರ್ಮಾಕರ್ಮಗಳನ್ನು ಹಳಿಯುತ್ತ ಇದನ್ನೆಲ್ಲ ಹೇಗೆ ಸರಿಪಡಿಸಲಿ ಎಂದು ಯೋಚಿಸುತ್ತಿದ್ದ ನನಗೆ ಮರುದಿನ ಬಹಳ ಆಶ್ಚರ್ಯವೊಂದು ಕಾದಿತ್ತು.

ನಮ್ಮ ಮಹಡಿಯ ಮನೆಯ ಮೇಲೆ ಆಟಿಕ್‌ನಲ್ಲಿ ಆ ವರ್ಷ ಇದ್ದ ಮಹಾನ್ ಛಳಿಯಲ್ಲಿ ನೀರಿನ ಪೈಪುಗಳು ಒಡೆದು ಹೋಗಿ ಒಂದೆರಡು ಮಹಡಿಗಳ ಮನೆಗಳಲ್ಲೆಲ್ಲಾ ನೀರು-ನೀರು ಹರಿದುಹೋಗಿತ್ತು. ಎರಡು ಮಹಡಿ ಕೆಳಗಿರುವ ನಮ್ಮ ಮನೆಯಲ್ಲೂ ನೀರಿನ ಪ್ರಭಾವ ಕಾಣುತ್ತಿತ್ತು. ವಿಶೇಷವೆಂದರೆ ನಮ್ಮ ಮನೆಯ ಎಲ್ಲಾ ಗೋಡೆಯನ್ನು ಹೊರತುಪಡಿಸಿ ಕೇವಲ ಆ ಫೈಯರ್ ಪ್ಲೇಸಿನ ಮೇಲೆ ನಾನು ಕೆಟ್ಟದಾಗಿ ಪೈಂಟ್ ಮಾಡಿದ್ದೆನಲ್ಲ, ಅಲ್ಲಿ ಮಾತ್ರ ನೀರಿನ ಕಲೆ ಬಿದ್ದಿತ್ತು! It is true, ನನ್ನ ಕಣ್ಣನ್ನೇ ನಾನು ನಂಬದ ನಿಜ!

Thanks to america, it is not my problem any more! ನಮ್ಮ ಕಾಂಡೋ ಅಸೋಸಿಯೇಷನ್ನಿನ್ನ ಇನ್ಷೂರೆನ್ಸ್ ಪಾಲಿಸಿಯ ದಯೆಯಿಂದ ಎಲ್ಲೆಲ್ಲಿ ನೀರಿನ ಡ್ಯಾಮೇಜ್ ಇತ್ತೋ ಅದನ್ನೆಲ್ಲ ಅಸೋಸಿಯೇಷನ್ನ್ ನವರು ಸರಿಮಾಡಿಸಿಕೊಟ್ಟರು, ನಮ್ಮ ಫಯರ್ ಪ್ಲೇಸಿನ ಗೋಡೆಯನ್ನೂ ಸೇರಿ! ಅವತ್ತೇ ಅಂದುಕೊಂಡಿದ್ದು ನಾನು, ನನ್ನ ಆಕ್ರಂದನ ಆದ್ಯಾವ ಮುಗಿಲು (celing) ಮುಟ್ಟಿತೋ ಆ ದೇವರು ಕಣ್ಣು ಬಿಟ್ಟು ನಮ್ಮ ಗೋಡೆಯ ಬಣ್ಣವನ್ನು ಸರಿ ಮಾಡಿಕೊಟ್ಟನಲ್ಲ ಎಂದು. ಅವತ್ತಿಂದ ಇವತ್ತಿನವರೆಗೆ ದೇವರು ಇದ್ದಾನೆ ಅಂತ್ಲೇ ಅಂದುಕೊಂಡಿರೋದು ನಾನು, ಆದ್ರೆ ಅವತ್ತಿನಿಂದ ಮುಗಿಲು ನೋಡಿ ಆರ್ತನಾಗಿ ಮೊರೆ ಇಡುವಾಗ ಮನೆಯಿಂದ ಹೊರಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ, the last thing you want is another broken water pipe in the middle of a winter - that is below freezing weather.

Sunday, November 16, 2008

ತುಮಕೂರಿನ ಶಾಲೆಯೂ ಬಡ್‌ಲೇಕಿನ ವೈನ್ ಅಂಗಡಿಯೂ...

ನವೆಂಬರ್ ಮಾಸದಲ್ಲಿ ಕನ್ನಡ-ಕನ್ನಡಿಗರ ಬಗ್ಗೆ ಬರೆಯದಿದ್ದರೆ ಅಪಚಾರವಾದಂತಲ್ಲವೇ?! ನಮ್ಮ ಕನ್ನಡಿಗರು ಯಾರು ಎಂದು ವ್ಯಾಖ್ಯಾನಿಸೋದು ಹಾಗಿರಲಿ, ದೇಶ-ವಿದೇಶಗಳ ಜನರಿಗೆ ವಿದ್ಯೆ ಹಂಚುವ ನಮ್ಮ ಕರುನಾಡಿನ ಸಂಸ್ಥೆಗಳಲ್ಲಿ ಓದಿದವರನ್ನು, ಕೊನೇಪಕ್ಷ ಕರ್ನಾಟಕದಲ್ಲಿ ಒಂದೈದು ವರ್ಷ ಕಳೆದವರನ್ನು ಕನ್ನಡಿಗರು ಎಂದು ನಾವು ಗಣನೆಗೆ ತೆಗೆದುಕೊಂಡಿದ್ದೇ ಆದರೆ ಐದು ಕೋಟಿ ಕನ್ನಡಿಗರ ಸಂಖ್ಯೆ ಬೆಳೆಯೋದಂತೂ ನಿಜ, ಆದರೆ ಕರ್ನಾಟಕದಲ್ಲಿ ಒಂದೈದು ವರ್ಷ ಓದಿ ಬೆಳೆದರೂ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಅನ್ನೋ ಅಷ್ಟು ಮಟ್ಟಿಗೆ ಮಾತ್ರ ನಮ್ಮಲ್ಲಿಯ ವಿಸಿಟರುಗಳಿಗೆ ಕನ್ನಡ ಕಲಿಸೋದು ನಮ್ಮ ಉದಾರತೆ ಅಲ್ಲದೇ ಮತ್ತಿನ್ನೇನು?

ನಾವಿರುವ ಫ್ಲಾಂಡರ್ಸ್ ಊರಿನ ಅದೇ ಮೌಂಟ್ ಆಲಿವ್ ಟೌನ್‌ಶಿಪ್‌ಗೆ ಹೊಂದಿಕೊಂಡಿಂತಿರುವ ಊರೇ ಬಡ್ ಲೇಕ್. ಒಂದು ಎಂಟು ಸಾವಿರ ಜನರಿರುವ ಪುಟ್ಟ ಊರು, ಇಲ್ಲಿ ನಾವು ಕೆಲವು ಅಂಗಡಿಗಳಿಗೆ ಹೋಗಿ ಬರೋದು ಇದೆ, ಅವುಗಳಲ್ಲಿ ಸ್ಯಾಂಡಿಸ್ ಡಿಸ್ಕೌಂಟ್ ಲಿಕರ್ ಶಾಪ್ (Sandy's) ಕೂಡಾ ಒಂದು. ನಾನು ಮೊದಲು ಹೋದಾಗ ಇದು ಭಾರತೀಯ ಮೂಲದವರೊಬ್ಬರು ನಡೆಸುತ್ತಿರುವ ಸಣ್ಣ ಬಿಸಿನೆಸ್ ಎಂದು ಗೊತ್ತೇ ಇರಲಿಲ್ಲ, ಆ ಬಗ್ಗೆ ತಲೆಕೆಡಿಸಿಕೊಂಡಿರಲೂ ಇಲ್ಲ. ನಂತರ ಭೇಟಿ ನೀಡಿದಾಗ ಅಂಗಡಿಯ ಓನರ್ ಅನ್ನು ಕೇಳಿಯೇ ಬಿಟ್ಟೆ (ನಮ್ಮ ಸಂಭಾಷಣೆ ಇಂಗ್ಲೀಷ್-ಹಿಂದಿ ಮಿಶ್ರ ಭಾಷೆಯಲ್ಲಿ ನಡೆಯುತ್ತಿತ್ತು) - ತಾವು ಎಲ್ಲಿಯವರು ಎಂಬುದಾಗಿ. ಅವರು ಗುಜರಾತಿನ ಮೂಲದವರು ಎಂಬುದು ಗೊತ್ತಾಯಿತು. ನನ್ನ ಬಗ್ಗೆ ವಿಚಾರಿಸಿದ್ದಕ್ಕೆ ನಾವು ಕರ್ನಾಟಕದವರು ಎಂದು ಪರಿಚಯಿಸಿಕೊಂಡೆ. ’ಕರ್ನಾಟಕದಲ್ಲಿ ಎಲ್ಲಿ?’ ಎಂದು ಕೇಳಿದ್ದಕ್ಕೆ ಆಶ್ಚರ್ಯವಾಗಿ ’ಶಿವಮೊಗ್ಗ’ ಎಂದು ಉತ್ತರಕೊಡಲು, ’I know that place!' ಎಂಬ ಉತ್ತರ ಬಂತು.

ಶಿವಮೊಗ್ಗದ ಬಗ್ಗೆ ಹೇಗೆ ಗೊತ್ತು ಎಂದು ಕೆದಕಿ ಕೇಳಲು, ಅವರು ತುಮಕೂರಿನ ಸಿದ್ಧಗಂಗಾ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದೂ ತಿಳಿಯಿತು. ಉದ್ದೇಶ ಪೂರ್ವಕವಾಗಿ ಕೇಳಿದ ನನ್ನ ಮುಂದಿನ ಪ್ರಶ್ನೆ - ಕನ್ನಡದ ಪೆನೆಟ್ರೇಷನ್ ಅಥವಾ ಪ್ರಚಾರದ ಬಗ್ಗೆ - ’ಹಾಗಾದರೆ ನಿಮಗೆ ಕನ್ನಡ ಬರುತ್ತೆ!’ ಎನ್ನುವುದಕ್ಕೆ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಎನ್ನುವ ಉತ್ತರ ಬಂತು. ಅವರ ಶ್ರೀಮತಿಯವರ ಹೆಸರು ಸಂಧ್ಯಾ ಎಂದು, ಅದನ್ನೇ ಬದಲಾಯಿಸಿ Sandy ಮಾಡಿಕೊಂಡಿದ್ದೂ ಗೊತ್ತಾಯಿತು.

***

ನಮ್ಮ ಹುಟ್ಟು-ಬೆಳವಣಿಗೆ-ವಿದ್ಯಾಭ್ಯಾಸ ಹಾಗೂ ನಾವು ಎಲ್ಲಿ (ಎಲ್ಲೆಲ್ಲಿ) ನೆಲೆಸುತ್ತೇವೆ ಎನ್ನೋದನ್ನು ಯೋಚಿಸಿಕೊಂಡಾಗ ಬಹಳಷ್ಟು ವಿಚಾರಗಳು ತಲೆತಿನ್ನತೊಡಗುತ್ತವೆ. ಭಾರತೀಯ ಸಂಜಾತ ಇಂಜಿನಿಯರ್ ಒಬ್ಬರು ಅಮೇರಿಕದ ಒಂದು ಸಣ್ಣ ಪಟ್ಟಣದಲ್ಲಿ ಡಿಸ್ಕೌಂಟ್ ಲಿಕರ್ ಎನ್ನುವ ಸ್ಮಾಲ್ ಬಿಸಿನೆಸ್ ನಡೆಸುತ್ತಿರುವುದು ಇಲ್ಲಿಯ ಚರ್ಚೆಯ ವಿಷಯ. ಪ್ರತಿಯೊಬ್ಬರದೂ ಅವರವರ ಜೀವನ ಶೈಲಿ - ಅದರಲ್ಲಿ ತಪ್ಪೇನೂ ಇಲ್ಲ.

ಇಲ್ಲಿಗೆ ನನಗೆ ಹೊಳೆದ ಅಂಶಗಳನ್ನು ಇಲ್ಲಿ ಬರೆದು ಹಾಕುತ್ತೇನೆ, ಅವುಗಳು ಯಾವುದೇ ರೀತಿಯ ಚರ್ಚೆಯನ್ನು ಮೂಡಿಸಲೂ ಬಹುದು, ಇರದೆಯೂ ಇರಬಹುದು:
- ನಾನು ಇಂಜಿನಿಯರ್ ಆಗುತ್ತೇನೆ ಎಂದು ಕನಸುಕಂಡು ಭಾರತೀಯ ವ್ಯವಸ್ಥೆಯಲ್ಲಿ ಇಂಜಿನಿಯರ್ ಆಗಿ ಹೊರಬಹುದಾದ ಪಧವೀದರನ ಹಿನ್ನೆಲೆ
- ಭಾರತದಲ್ಲಿ ಒಬ್ಬ ಇಂಜಿನಿಯರ್ ಅನ್ನು ಹೊರತರಲು ಸಮಾಜ ತೊಡಗಿಸುವ ಸಂಪನ್ಮೂಲಗಳು
- ಅಮೇರಿಕಕ್ಕೆ ಕನಸುಗಳನ್ನು ಹೊತ್ತುಕೊಂಡು ಬಂದು ಇಲ್ಲಿಯ ವ್ಯವಸ್ಥೆಯಲ್ಲಿ ಒಂದು ಸಣ್ಣ ಉದ್ಯಮವನ್ನು ಹುಡುಕಿಕೊಂಡು ಇಲ್ಲೇ ನೆಲೆಸುವ ನಿರ್ಧಾರವನ್ನು ಕೈಗೊಳ್ಳುವುದರ ಹಿಂದಿರುವ ಮನಸ್ಥಿತಿ
- ’ತಾನೇನು ಆಗಬೇಕು’ ಎನ್ನುವ ಗುರಿ ಹಾಗೂ ’ತಾನೆಲ್ಲಿ ತಲುಪಬಲ್ಲೆ / ತಲುಪಿದ್ದೇನೆ’ ಎನ್ನುವ ನಿಜ ಸ್ಥಿತಿಗಳ ವ್ಯತ್ಯಾಸ, if any
- ಅಮೇರಿಕದಲ್ಲಿದ್ದವರದೆಲ್ಲ ಗ್ರ್ಯಾಂಡ್ ಜೀವನವವಲ್ಲ ಎನ್ನುವ ಸಮಜಾಯಿಷಿ, ಒಂದು ಸಣ್ಣ ಉದ್ಯಮ ಬಹಳ ಫ್ರಾಫಿಟೆಬಲ್ ಆಗಿಯೂ ಇರಬಹುದು ಹಾಗೆ ಇರದಿರಲೂ ಬಹುದು
- ಹೀಗೆ ವಲಸೆಗಾರರಾಗಿ ಬಂದವರು ಮತ್ತು ಅವರ ಮುಂದಿನ ಸಂತತಿಗಳು ಸಮಾಜದ ಬೇರೆ ಬೇರೆ ಸ್ಥರಗಳಲ್ಲಿ ನೆಲೆನಿಲ್ಲಬಹುದಾದ ಬೆಳವಣಿಗೆ (ಒಬ್ಬ ಉದ್ಯಮದಾರ ಅಥವಾ ಪ್ರೊಫೆಷನಲ್ ಕುಟುಂಬದ ಹಿನ್ನೆಲೆಯವರ ಸಂತತಿ ಹಾಗೇ ಮುಂದುವರೆಯಬಹುದು ಎನ್ನುವ ಕಲ್ಪನೆಯ ವಿರುದ್ಧ ಹಾಗೂ ಪೂರಕವಾಗಿ)

***

’ನೀನು ದೊಡ್ಡವನಾದ ಮೇಲೆ ಏನಾಗ್ತೀಯೋ?’ ಅಂದ್ರೆ ನಾನಂತೂ ಮೊದಲೆಲ್ಲ ’ಪೈಲಟ್!’ ಅಂತಿದ್ದೆ. ನಮ್ಮ ವಂಶದವರು ಯಾವತ್ತೂ ಹತ್ತಿ ಕೂರದಿದ್ದ ಆಕಾಶಪಕ್ಷಿಯನ್ನು ನಡೆಸುವ ಕಾಯಕವೆಂದರೆ ಸುಮ್ಮನೆಯೇ? ಅವೆಲ್ಲ ನಾಲ್ಕನೇ ಕ್ಲಾಸು ಮುಗಿಸಿ ಮಾಧ್ಯಮಿಕ ತರಗತಿಗಳನ್ನು ತಲುಪುತ್ತಿದ್ದ ಹಾಗೆ ಬದಲಾದ ಹಾಗೆ ನೆನಪು. ನಾನು ಇವತ್ತು ನಡೆಸಿಕೊಂಡು ಬರುತ್ತಿರುವ ಪ್ರಾಜೆಕ್ಟ್ ಮ್ಯಾನೇಜರ್ ಕೆಲಸವನ್ನಂತೂ ನಾನೂ ಒಂದು ದಿನ ಮಾಡಿಕೊಂಡಿರುತ್ತೇನೆ ಎಂದು ಕನಸನ್ನಂತೂ ಕಂಡಿದ್ದಿಲ್ಲ ಆದರೆ ಎಲ್ಲೋ ಇದ್ದವನು ನಾನು ಇಲ್ಲಿಗೆ ಬಂದು ತಲುಪಿದ್ದು ಈ ಸ್ಥಿತಿಯಲ್ಲಿ ಈಗ ಇರೋದಂತೂ ನಿಜವೇ.

ನಮ್ಮ ಡೆಸ್ಟಿನಿ ನಮ್ಮ ಮೂಲ ಇವುಗಳ ಬಗ್ಗೆ ನಿಮಗಂತೂ ನಂಬಿಕೆ ಇದೆಯೋ ಇಲ್ಲವೋ. ಎಲ್ಲೋ ಅಹಮದಾಬಾದಿನ ಆಸುಪಾಸಿನಲ್ಲಿ ಹುಟ್ಟಿ ಬೆಳೆದು ತುಮಕೂರಿನಲ್ಲಿ ಪದವೀಧರನಾಗಿ ಮುಂದೆ ಈ ಬಡ್‌ಲೇಕಿನ ಅಂಗಡಿಯಿಂದ ಜನರಿಗೆ ಮದ್ಯ ಸರಬರಾಜು ಮಾಡುವ Sandy's Liquor ಅಂಗಡಿಯ ಮಾಲಿಕನ ನಸೀಬನ್ನು ನೆನೆದು ಹೀಗೆ ಬರೆಯಬೇಕಾಯಿತಷ್ಟೇ.

Tuesday, November 04, 2008

ಇತ್ತೀಚಿನ ಮೂರು ಬೆಳವಣಿಗೆಗಳು ಹಾಗೂ ಪ್ರತಿಕ್ರಿಯೆ

ದಿನಗಳಲ್ಲಿ ರೆಪ್ಪೆ ಮಿಟುಕಿಸುವುದರೊಳಗೆ ಏನೇನೆಲ್ಲ ಆಗಿ ಹೋಗೋ ಸಾಧ್ಯತೆಗಳಿರುವಾಗ ಪ್ರತಿಕ್ರಿಯೆಯನ್ನು ಒಡನೆಯೇ ದಾಖಲಿಸಬೇಕಾದ ಅಗತ್ಯ ಒಮ್ಮೊಮ್ಮೆ ಕಂಡು ಬರೋದು ನಿಜ. ಅಂದರೆ ಎಲ್ಲವೂ ಆಗಿ ಹೋದ ಮೇಲೆ ಅಲ್ಲಲ್ಲಿ ಸಿಗೋ ಪ್ರತಿಕ್ರಿಯೆ ವರದಿಗಳನ್ನು ಓದಿಕೊಂಡು ನಮ್ಮ ಅನಿಸಿಕೆ ಅಭಿಪ್ರಾಯವನ್ನು ದಾಖಲಿಸೋದು ಒಂದು ರೀತಿ, ಇಲ್ಲವೇ ಎಲ್ಲವೂ ಆಗಿ ಹೋಗುತ್ತಿರುವಾಗಲೇ ನಮ್ಮ ನಿಲುವು ಅಭಿಪ್ರಾಯವನ್ನು ದಾಖಲಿಸೋದು ಮತ್ತೊಂದು ರೀತಿ.

೧. ಉತ್ತರ ಅಮೇರಿಕದ ಮುಂದಿನ ಅಧ್ಯಕ್ಷರು ಯಾರು?
ನನ್ನ ಪ್ರಕಾರ ಸೆನೆಟರ್ ಮೆಕ್ಕೈನ್ ಪಾಪ್ಯುಲಾರಿಟಿ ಮತವನ್ನು ಗೆಲ್ಲದಿದ್ದರೂ ಟ್ರೆಡಿಷನಲ್ ರಿಪಬ್ಲಿಕನ್ ಪಕ್ಷದ ಸ್ಟ್ರಾಂಗ್‌ಹೋಲ್ಡ್ ದೆಸೆಯಿಂದ ಹಾಗೂ ಇಂಡಿಯಾನ, ಫ್ಲೋರಿಡಾ, ಒಹಾಯೋ, ಪೆನ್ಸಿಲ್‌ವೇನಿಯಾ ಮೊದಲಾದ ಸ್ವಿಂಗ್ ಸ್ಟೇಟ್‌ಗಳಲ್ಲಿ ಬೇಕಾದ ಮತವನ್ನು ಗಳಿಸಿದ್ದೇ ಆದರೆ ಮುಂದಿನ ಪ್ರೆಸಿಡೆಂಟ್ ಆಗುವುದು ಖಂಡಿತ.

ಸದ್ಯದ ಸಮೀಕ್ಷೆಗಳ ಪ್ರಕಾರ ಸೆನೆಟರ್ ಒಬಾಮಾ ಪಾಪ್ಯುಲರ್ ಮತವನ್ನು ಗೆಲ್ಲುವಂತೆ ಕಂಡರೂ ಮತ್ತೆ ಈ ಸ್ವಿಂಗ್ ಸ್ಟೇಟ್‌ಗಳಲ್ಲಿಯ ಮತವೇ ಮುಖ್ಯವಾಗುತ್ತದೆ. ಈ ವರ್ಷದ ಚುನಾವಣೆಯಲ್ಲಿ ಬಹಳ ಹೆಚ್ಚಿನ ಜನರು ಮತಕಟ್ಟೆಗಳಿಗೆ ಬರುತ್ತಿರುವುದನ್ನು ನೀವೂ ಗಮನಿಸಿರಬಹುದು. ಮೊಟ್ಟ ಮೊದಲನೇ ಬಾರಿಗೆ ಅಮೇರಿಕಕ್ಕೆ ಆಫ್ರಿಕನ್ ಅಮೇರಿಕನ್ ಪ್ರೆಸಿಡೆಂಟ್ ಇರಲಿ ಎಂದು ಎಷ್ಟೋ ಜನರು ಪೋಲ್‌ಗಳಲ್ಲಿ ಹೇಳಿದ್ದರೂ ಸಹ ಕೆಲವರ ಮನಸ್ಸಿನಲ್ಲಿ ತಮ್ಮನ್ನು ರೇಷಿಯಲ್ ಎಂದು ತಿಳಿದುಕೊಳ್ಳದಿರಲಿ ಎಂದು ಸುಳ್ಳು ಸಮೀಕ್ಷೆಗಳಿಗೆ ಉತ್ತರ ಕೊಟ್ಟಿರಬಹುದು ಎಂಬ ಸಂದೇಹವೂ ಮನಸ್ಸಿನಲ್ಲಿದೆ.

ಚುನಾವಣೆಯ ಉತ್ತರವೇನಾದರೂ ಇರಲಿ - ಆಫ್ರಿಕನ್ ಅಮೇರಿಕದ ಮೂಲದ ಪ್ರೆಸಿಡೆಂಟ್ ಚುನಾಯಿತರಾದಲ್ಲಿ ಅಮೇರಿಕದ ಜನರ ಮನೋವೈಶಾಲ್ಯತೆಯನ್ನು ಜಗತ್ತಿಗೆ ಸಾರುವುದರ ಜೊತೆಗೆ ಉತ್ತರ ಅಮೇರಿಕದ ಕಾಂಗ್ರೆಸ್, ಸೆನೆಟ್ ಹಾಗೂ ಪ್ರೆಸಿಡೆನ್ಸಿ ಎಲ್ಲವೂ ಡೆಮೋಕ್ರಾಟ್‌ಮಯವಾಗುವುದು ನಿಜ. ಅಲ್ಲದೇ ಯಾವ ಪ್ರೆಸಿಡೆಂಟ್ ಹಾಗೂ ಸರ್ಕಾರ ಮುಂದೆ ಬಂದರೆ ನಮ್ಮ ದೇಶಕ್ಕೆ ಅದರಿಂದ ಏನು ಅನುಕೂಲ/ಅನಾನುಕೂಲ ಎನ್ನುವುದು ಇನ್ನೂ ದೊಡ್ಡ ಪ್ರಶ್ನೆ.

೨. ಕನ್ನಡ ಹಾಗೂ ಶಾಸ್ತ್ರೀಯ ಸ್ಥಾನಮಾನ
ಓಹ್, ಉತ್ತರ ಅಮೇರಿಕದಿಂದ ನೇರವಾಗಿ ಕರ್ನಾಟಕ್ಕೆ ಬರೋಣ. ತಮಿಳರ ಭಾಷಾ ವ್ಯಾಮೋಹ ಹಾಗೂ ಅವರು ಅಳವಡಿಸಿಕೊಂಡ ತಂತ್ರಗಳು ಕನ್ನಡದ ಔದಾರ್ಯಗಳಿಗೆ ಅನ್ವಯವಾಗುವಲ್ಲಿ ಇಷ್ಟು ಕಾಲ ಬೇಕಾಯಿತು. ಈ ಬೆಳವಣಿಗೆ ನಿಜವಾಗಿಯೂ ಸ್ವಾಗತಾರ್ಹ. ನಮಗೂ ನಮ್ಮತನವಿದೆ, ನಮ್ಮ ಭಾಷೆಗೆ ಅದರದ್ದೇ ಆದ ಇತಿಹಾಸವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಸಿಗುವ ಮನ್ನಣೆ, ಕನ್ನಡ ಸಂಬಂಧಿ ಯೋಜನಗೆಗಳು ಅಭಿವೃದ್ಧಿಗಳು ಇವೆಲ್ಲವೂ ನಮಗೆ ಬೇಕಾಗಿತ್ತು. ಕೊನೆಗೆ ಏನಿಲ್ಲವೆಂದರೂ ೨೦೦೮ ರಲ್ಲಾದರೂ ಕೇಂದ್ರದ ಅಸ್ತು ಸಿಕ್ಕಿತಲ್ಲ ಅದು ಮುಖ್ಯ.

೩. ಭಾರತ ಹಾಗೂ ನ್ಯೂಕ್ಲಿಯರ್ ಎನರ್ಜಿ ಸಂಬಂಧಿ ಬೆಳವಣಿಗೆಗಳು
ಇತ್ತೀಚೆಗಷ್ಟೇ ಅಮೇರಿಕದ ಅಪ್ರೂವಲ್ ಮೊಹರನ್ನು ಒತ್ತಿಕೊಂಡ ಕಾಗದ ಪತ್ರಗಳು ಹಾಗೂ ಮನಮೋಹನ್ ಸಿಂಗ್ ಆಡಳಿತಕ್ಕೆ ಸಿಕ್ಕ ಜಯ ವಿಶ್ವದಾದ್ಯಂತ ಭಾರತವನ್ನು ನ್ಯೂಕ್ಲಿಯರ್ ಅಪ್ರೂವ್ಡ್ ದೇಶವನ್ನಾಗಿ ನೋಡಲು ಸಹಾಯ ಮಾಡಿದವು. ಈ ಹಿಂದೆ ಅಂತರಂಗದಲ್ಲಿ ಬರೆದ ಹಾಗೆ ಹೆಚ್ಚಿನ ಎನರ್ಜಿ ಬೇಡಿಕೆಗೆ ನ್ಯೂಕ್ಲಿಯರ್ ಮೂಲ ಬೇಕೇ ಬೇಕು ಎನ್ನುವ ಪರಿಸ್ಥಿತಿ ಇರುವಾಗ ಕನ್ವೆನ್ಷನಲ್ ಹಾಗೂ ಉಳಿದ ಸೋರ್ಸ್‌ಗಳ ಜೊತೆ ನ್ಯೂಕ್ಲಿಯರ್ ತಂತ್ರಜ್ಞಾನವನ್ನು ನಾವು ಬಳಸುವಂತಾಗುವುದು ಬಹಳ ಮಹತ್ವದ ವಿಷಯ ಹಾಗೂ ಬೆಳವಣಿಗೆ. ನಾವೆಲ್ಲ ಮುಂದೆ ಏನಾಗುವುದೋ ಎಂದು ಕಾದು ನೋಡಬೇಕಷ್ಟೆ.