Sunday, September 28, 2008

ನಾವು ಮಹಾ ಬುದ್ಧಿವಂತರು ಸಾರ್!

ಸೆಪ್ಟೆಂಬರ್ ಗಾಳಿ ತೇವ ಹಾಗೂ ತಂಪನ್ನು ಅದೆಲ್ಲಿಂದಲೋ ಹೊತ್ತು ತರುತ್ತಿದ್ದಂತೆ ಹೆಚ್ಚು ವಿಡಂಬನೆಗಳನ್ನು ’ಅಂತರಂಗ’ದಲ್ಲಿ ತುಂಬುವಂತೆ ಮಾಡುತ್ತಿದೆ. ಈ ವಿಡಂಬನೆಗಳ ವ್ಯಾಪ್ತಿ (ಕೊರಗು) ನಿಮಗೆ ಗೊತ್ತೇ ಇದೆ, ಈವರೆಗೆ ಬರೆದವುಗಳ ಬೆನ್ನಲ್ಲಿ ಇನ್ನೂ ಒಂದು.

***

ನಾವು ಕನ್ನಡಿಗರು ತುಂಬಾ ಬುದ್ಧಿವಂತರು ಅಂತ ಅನ್ಸಿದ್ದು ಇತ್ತೀಚೆಗಷ್ಟೇ ನೋಡಿ. ನಮ್ ಆಫೀಸಿನಲ್ಲಿ ನನ್ನ ಸಹೋದ್ಯೋಗಿ ಒಬ್ರು ತಮ್ಮ ಮಗಳ ಮಗು, ಅಂದ್ರೆ ಮೊಮ್ಮಗ ಜನಿಸಿದ ಸಂದರ್ಭದಲ್ಲಿ ’ನಾನೂ ಗ್ರ್ಯಾಂಡ್‌ಮದರ್ ಆಗಿಬಿಟ್ಟೆ!’ ಎಂದು ಸಂಭ್ರಮಿಸುತ್ತಿದ್ದರು. ನಾನೂ ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಅವರು ಯಾವ ವಯಸ್ಸಿಗೆ ’ಅಜ್ಜಿ’ಯಾದರು ಎಂದು ವಿಚಾರಿಸಿದಾಗ ಅವರಿಗೆ ಕೇವಲ ಐವತ್ತೇ ವರ್ಷ ಎಂದು ತಿಳಿದು ಒಮ್ಮೆ ಶಾಕ್ ಆದಂತಾಯಿತು, ಮತ್ತೆ ಕೇಳಿ ತಿಳಿದಾಗ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮಕ್ಕಳಾಗಿದ್ದವೆಂದು ಒಪ್ಪಿಕೊಂಡರು.

ನಿಮ್ ಕಡೆಯೆಲ್ಲ ಹೇಗೋ ಗೊತ್ತಿಲ್ಲ ನಮ್ ಕಡೆ ’ನಾನು ಅಜ್ಜ/ಅಜ್ಜಿ ಯಾದೆ’ ಎಂದು ಸಲೀಸಾಗಿ ಒಪ್ಪಿಕೊಳ್ಳೋದಿಲ್ಲ ಜನ. ಎಷ್ಟೋ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ’ದೊಡ್ಡಮ್ಮ’ ’ಅಮ್ಮಮ್ಮ’ ಎಂದು ಕರೆಸಿಕೊಳ್ಳೋದು ಪ್ರತೀತಿ.

’ಅಲ್ರೀ, ಬುದ್ಧಿವಂತ ಕನ್ನಡಿಗರಿಗೂ ನಿಮ್ಮ ಆಫೀಸ್ನಲ್ಲಿ ಯಾರೋ (ಚಿಕ್ಕ ವಯಸ್ಸಿನಲ್ಲಿ) ಅಜ್ಜಿಯಾಗಿರೋದಕ್ಕೂ ಏನ್ರೀ ಸಂಬಂಧ?’ ಅಂತ ನೀವ್ ಕೇಳ್ತೀರಿ ಅಂತ ನನಗೂ ಗೊತ್ತು. ಸ್ವಲ್ಪ ತಡೀರಿ.

ಎರಡು ವಾರದ ಹಿಂದೆ ಕನ್ನಡ ಸಂಘದ ಸಮಾರಂಭವೊಂದರಲ್ಲಿ ಯಾರೋ ಪರಿಚಯಸ್ಥರು, ’ಏನ್ಸಾರ್, ನಮ್ಮ್ ಕನ್ನಡಿಗರ ಜಾಯಮಾನ - ಮದುವೆಯಾಗಿ ಮಕ್ಕಳು ಆಗೋ ಹೊತ್ತಿಗೆಲ್ಲಾ ಸುಮಾರು ಜನಕ್ಕೆ ನಲವತ್ತು ತುಂಬಿರುತ್ತೆ ನೋಡಿ!’ ಎಂದು ನಾವೆಲ್ಲ ಮನೆ-ಮಠ-ಮಕ್ಕಳು ಎಂದು ಮಾತನಾಡುತ್ತಿದ್ದಾಗ ಹೇಳಿಕೊಂಡರು. ಅದು ನಿಜವಾದ ಅಬ್ಸರ್‌ವೇಷನ್ ಅನ್ನಿಸುವಲ್ಲಿ ನನ್ನ ಹಿಂದಿನ ಸಹೋದ್ಯೋಗಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅವನು ಆಂಧ್ರಪ್ರದೇಶದವನಾದರೂ ದಾವಣಗೆರೆಯಲ್ಲಿ ಓದಿದವನು, ಅವರ ಮೇಷ್ಟ್ರು ಒಬ್ಬರಿಗೆ ನಲವತ್ತರ ಸಮೀಪ ಮದುವೆಯಾದದ್ದನ್ನು ನೋಡಿ ಅವರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ - ಅವನ ’ಯಾಕೆ, ಕನ್ನಡ ಜನ ತಡವಾಗಿ ಮದುವೆಯಾಗೋದು?’ ಅನ್ನೋ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದೆ ಅಂತ್ಲೇ ನನಗೆ ಇಂದು ನೆನಪಿಲ್ಲ! ನನಗಿನ್ನೂ ಮದುವೆಯಾಗೇ ಇರದಿದ್ದ ಹೊತ್ತಿಗೆ ಅವನಿಗೆ ನಾಲ್ಕಾರು ವರ್ಷದ ಎರಡು ಮಕ್ಕಳಿದ್ದುದೂ ನಿಜ.

ಈಗ ನಿಮಗೇ ಅನ್ಸಲ್ವೇ? ಮುವತ್ತರ ಹೊತ್ತಿಗೆ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಐವತ್ತು ವರ್ಷಕ್ಕೆಲ್ಲ ನಾವು ಅಜ್ಜ/ಅಜ್ಜಿಯರಾಗೋದು ಕಷ್ಟಸಾಧ್ಯವಲ್ಲವೇ? ಆದ್ದರಿಂದಲೇ ಹೇಳಿದ್ದು ಕನ್ನಡಿಗರು ಬುದ್ಧಿವಂತರೆಂದು.

***

ಕನ್ನಡಿಗರು ಮಹಾ ಬುದ್ಧಿವಂತರು ಅನ್ನೋದಕ್ಕೆ ಹೀಗೇ ಹುಡುಕ್ತಾ ಹೋದ್ರೆ ಬೇಕಾದಷ್ಟು ಸಮಜಾಯಿಷಿ ಸಿಗುತ್ತೆ:
- ಈ ಮನುಕುಲದಲ್ಲಿ ಇದ್ದ ಇರದಿದ್ದ ಜಾತಿಯ ವ್ಯಾಪ್ತಿಗೆ ಕನ್ನಡಿಗರ ಕಾಂಟ್ರಿಬ್ಯೂಷನ್ನೇ ಹೆಚ್ಚು ಅಂತ ನನ್ನ ಅಭಿಪ್ರಾಯ. ಗೌಡ್ರು, ಲಿಂಗಾಯ್ತ್ರು, ಕುರುಬ್ರು... ಮುಂತಾದ ಅನೇಕ ಅನೇಕ ಜಾತಿಗಳು ನಮ್ಮಲ್ಲೇ ಇದಾವೇ ಅಂತ ನನ್ನ ನಂಬಿಕೆ. ಅವೆಲ್ಲಿಂದ ಬಂದ್ವೋ ಹೇಗೋ ಅಂತ ಗೊತ್ತಿಲ್ದೇ ಹೋದ್ರೂ ನಮ್ಮಲ್ಲಿ ಉತ್ತರ ಭಾರತದ ಹಾಗೆ ಸರ್‌ನೇಮ್ ಬಳಸ್ದೇ ಹೋದ್ರೂ ನಮ್ ಜನಗಳಿಗೆ ಯಾರು ಯಾರು ಯಾವ ಜಾತಿ ಅಂತ ಅದೆಷ್ಟು ಬೇಗ ಗೊತ್ತಾಗುತ್ತೇ ಅಂದ್ರೆ? ನೀವು ಯಾವ್ದೇ ಆರ್ಟಿಕಲ್ಲ್ ಬರೀರಿ, ಬುಕ್ ಬರೀರಿ, ಕಾಮೆಂಟ್ ಹೇಳಿ, ನಿಮ್ ಅಭಿಪ್ರಾಯ ತಿಳಿಸಿ ಇವೆಲ್ಲವನ್ನೂ ಜಾತಿಯ ಮಸೂರದಲ್ಲಿ ನೋಡೋ ವ್ಯವಸ್ಥೆ ಇದೇ ಅಂತ ನಿಮಗ್ಗೊತ್ತಾ? ಹೀಗೆ ಇದ್ದ ಮನುಕುಲದ ಜಾತಿ-ಮತಗಳಿಗೆ ಮತ್ತಿನ್ನಷ್ಟು ಕಾಂಟ್ರಿಬ್ಯೂಷನ್ನ್ ಮಾಡಿಕೊಂಡು ಎರಡು ಸಾವಿರದ ಎಂಟು ಬಂದ್ರೂ ಇನ್ನೂ ಚಿಟುಕೆ ಹೊಡೆಯುವುದರಲ್ಲಿ ಚಮ್ಮಾರ-ಕಂಬಾರ-ಕುಂಬಾರ ರನ್ನು ಗುರುತಿಸುವ ಚಾಕಚಕ್ಯತೆ ಇರೋ ನಾವು ಮಹಾ ಬುದ್ಧಿವಂತರಲ್ವೇನು?

- ನಮಗೆ ನಮ್ದೇ ಊಟ-ತಿಂಡಿ ಅಂತ ಬೇರೆ ಇರುತ್ತೇನ್ರಿ? ಬಿಸಿ ಬೇಳೆ ಬಾತ್ ಅಂತೀವಿ, ಅದಕ್ಕೊಂದಿಷ್ಟು ಮರಾಠಿ ಟಚ್ ಕೊಡ್ತೀವಿ. ಚಪಾತಿ ಅಂತ ಮಾಡ್ತೀವಿ, ಇತ್ಲಾಗ್ ನಾರ್ತೂ ಅಲ್ಲ ಸೌತೂ ಅಲ್ಲ ಅನ್ನಂಗಿರುತ್ತೆ. ಪುಳಿಯೊಗರೆ ಅಂತ ಹಳೆಗನ್ನಡಕ್ಕೆ ಜೋತು ಬೀಳ್ತೀವೋ ಅಂತ ಕೊಂಚ ತಮಿಳನ್ನೂ ಸೇರುಸ್ತೀವೋ? ಕನ್ನಡಿಗರ ಸಮಾರಂಭ ಅಂತ ಯಾರೋ ಬೇಡೇಕರ್ ಉಪ್ಪಿನಕಾಯಿ ಇಟ್ಟಿದ್ರಂತೆ ಹಾಗಾಯ್ತು! ಹೋಳಿಗೆ-ಒಬ್ಬಟ್ಟು ಅವು ಪಕ್ಕಾ ನಮ್ದೇ. ಹೀಗೆ ನಮ್ ಕರ್ನಾಟಕ ಅನ್ನೋದು ಒಂದು ಪ್ರತ್ಯೇಕ ದೇಶವಾಗಿ ಬೆಳೆಯೋಷ್ಟು ದೊಡ್ಡದಲ್ಲದಿದ್ರೂ ಎಲ್ಲೋ ಒಂದು ಮೂಲೆನಲ್ಲಿ ಚೂರೂಪಾರೂ ಉಳಿಸ್ಕೊಂಡ್ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಸೌತ್ ಇಂಡಿಯನ್ ಕೆಫೆಗಳಲ್ಲಿ ಕೆಲಸ ಮಾಡೋ ಹಿಸ್ಪ್ಯಾನಿಕ್ ಅಥವಾ ಆಫ್ರಿಕನ್ ಅಮೇರಿಕನ್ ಕುಕ್‌ಗಳೂ ಬೆಳೆದು ಬಂದಿದಾರೆ ಬಿಡಿ. ಯಾವ ಸೌತ್ ಇಂಡಿಯನ್-ನಾರ್ತ್ ಇಂಡಿಯನ್ ಪ್ರೋಗ್ರಾಮಿಗೂ ಅವ್ರೇ ಕೆಲವೊಮ್ಮೆ ಅಡುಗೆ ಮಾಡೋದು. ಅಂತಾ ಇಂಟರ್‌ನ್ಯಾಷನಲ್ ಅಡುಗೆ ವಿಷಯಕ್ಕೆ ಸೌತೂ-ನಾರ್ತೂ ಅಂತ ಲಿಮಿಟ್ ಹಾಕಕ್ಕ್ ಆಗುತ್ಯೇ, ಛೇ! ಹೀಗೆ ದೇಶದಿಂದ ದೇಶಕ್ಕೆ ಬಂದ ಕ್ಯುಲಿನರಿ ಪರ್‌ಫೆಕ್ಷನ್ನ್ ಅನ್ನೋ ಸಂಭ್ರಮಕ್ಕೆ ಇಲ್ಲಿನ ಪಟೇಲ್ ಬ್ರದರ್ಸ್ ತರಕಾರಿ ಹಾಗೂ ಸಾಮಗ್ರಿಗಳನ್ನ ಬೆರೆಸಿ ಇಲ್ಲಿಯ ’ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ’ಗಳಲ್ಲಿ ಅದೆಲ್ಲಿಂದ್ಲೋ ಬರೋ (ಒಂಥರಾ ಸ್ಮೆಲ್ಲಿರೋ) ಗ್ಯಾಸ್ ಒಲೆಯ ಮೇಲೆ ಬೇಯಿಸಿ ಅಲ್ಯುಮಿನಮ್ ಕಂಟೇನರುಗಳಲ್ಲಿ ಮುಚ್ಚಿ ಇನ್ನೂ ಬಿಸಿಬಿಸಿಯಾಗಿಯೇ ಇರೋದನ್ನ ತಂದು ಬಡಿಸಿದ್ದನ್ನ ಬಾಯಿ ಬಡಬಡಿಸದೇ ಹಪಾಹಪಿಗಳಾಗಿ ತಿಂದ್ರೆ ಅನ್ನಕ್ಕೇ ಅವಮಾನ ಅಲ್ವೇನು? ಅದ್ಕೇ ನಾವು ಊಟ-ತಿಂಡಿ ವಿಷಯದಲ್ಲಿ ಅಷ್ಟು ಶಿಸ್ತು ಹಾಗೂ ಕಟ್ಟು ನಿಟ್ಟು.

ವಾರಾಂತ್ಯದ ದಿನಗಳಲ್ಲಿ ಅದೇ ಮುರುಕುಲು ಬ್ರೆಡ್ಡಿನ ಚೂರುಗಳನ್ನು ತಳದಲ್ಲಿ ಯಾವಾಗ್ಲೂ ಸುಡ್ತಾ ಇರೋ ಬ್ರೆಡ್ಡು ಟೋಸ್ಟರಿಗೆ ಇನ್ನೊಂದು ಸ್ಲೈಸು ಬ್ರೆಡ್ಡ್ ಹಾಕಿಕೊಂಡು ಗರಮ್ ಮಾಡಿಕೊಂಡು ಅದಕ್ಕೆ ಮ್ಯಾಗೀ ಹಾಟ್ ಅಂಡ್ ಸ್ವೀಟ್ ಚಿಲ್ಲೀ ಸಾಸ್ (what's the difference!) ಹಾಕಿಕೊಂಡು ಮುಕ್ಕೋ ನಮಗೆ ಯಾರೋ ಒಂದಿಷ್ಟು ಉಸುಳಿ, ಉಪ್ಪಿಟ್ಟು, ಕೇಸರಿ ಬಾತ್, ಅವಲಕ್ಕಿ, ಇಡ್ಲಿ, ವಡೆಗಳ ರುಚಿ ತೋರಿಸಿದ್ರೆ ಸಾಕು ನಮ್ಮ ಜಾಯಮಾನವೇ ನಮ್ಮ ಮೂಗಿನ ತುದಿಗೆ ಬಂದು ಅದರಲ್ಲಿ ತಪ್ಪು ಹುಡುಕುತ್ತೆ!

ಹೀಗೆ ಅಮೇರಿಕದಿಂದ ಕರ್ನಾಟಕಕ್ಕೆ (and back) ಕೇವಲ ಒಂದು ನ್ಯಾನೋ ಸೆಕೆಂಡಿನಲ್ಲಿ ಹರಿದಾಡೋ ನಾವು ಮಹಾ ಬುದ್ಧಿವಂತರಲ್ವೇನು?

- Every other sentence ಇಂಗ್ಲೀಷ್ ಮಾತನಾಡೋ ನಾವು, ’ಹೌದು/ಅಲ್ಲ’ ಅಂತ ಬಾಯಲ್ಲಿ ಬರ್ಗರ್ ಇಟ್ಟುಕೊಂಡ ಹಾಗೆ ಪ್ರೊನೌನ್ಸ್ ಮಾಡೋ ನಮ್ಮ್ ಮಕ್ಳು ಇವುಗಳಿಗೆಲ್ಲ ನಾವು ನಮ್ಮ ಸಂಸ್ಕೃತಿ, ಪರಂಪರೆ ಅಂತ ದೊಡ್ಡ ದೊಡ್ಡದಾಗಿ ಇಂಗ್ಲೀಷ್ ನಲ್ಲಿ ಏನೇನೋ ತಿಳಿ ಹೇಳ್ತೀವಿ ನೋಡಿ. ಯಾವ್ದಾದ್ರೂ ಕನ್ನಡ ಸಂಘದ ಕಾರ್ಯಕ್ರಮ ಇದ್ದಾಗ ಮಾತ್ರ ಜರತಾರಿ ಉಡ್ರಿ ಅಂದ್ರೆ ನಮ್ ಮಕ್ಳು ಹೆಂಗಾದ್ರೂ ಕೇಳ್ತಾವ್ರೀ? ಅದೆಲ್ಲಾ ಏನೂ ಬೇಡ, ವರ್ಷಕ್ಕೊಂದೆರಡು ಕನ್ನಡ ಸಂಘದ ಕಾರ್ಯಕ್ರಮ ನೋಡ್ಕೊಂಡು ಕಂಡೋರಿಗೆಲ್ಲ ನಮಸ್ಕಾರ ಅಂದು ಹಲ್ಲು ಗಿಂಜಿಕೊಂಡು ಏನೋ ದೊಡ್ಡ ಕೆಲ್ಸ ಕಡ್ದಿದೀವಿ ಅಂದುಕೊಳ್ಳೋದು ಶ್ಯಾಣೇತನ ಅಲ್ದೇ ಇನ್ನೇನ್ರಿ? ಕನ್ನಡತನ ಉಳಿಸೋ ನಿಟ್ಟಿನಲ್ಲಿ ನಮ್ಮ ಮಕ್ಳು ಕನ್ನಡ ಮಾತನಾಡ್ತಿದ್ರೂ ಪರವಾಗಿಲ್ಲ ಭರತನಾಟ್ಯ ಕಲಿಯೋದನ್ನ ಬಿಡಬಾರ್ದು ಅನ್ನೋ ಲಿಮಿಟ್ಟಿಗೆ ಬಂದು ಬಿಟ್ಟಿದ್ದೇವೆ, ಅದು ಈ ಶತಮಾನದ ಮಹಾ ಅಚೀವ್‌ಮೆಂಟೇ ಸರಿ.

ಇಂಥವನ್ನೆಲ್ಲ ಹಾಗೂ ಇನ್ನೂ ಅನೇಕಾನೇಕ ಕನ್‌ವೆನ್ಷನ್ನುಗಳನ್ನು ಹುಟ್ಟಿ ಹಾಕಿಕೊಂಡಿರೋ ನಾವು ಕನ್ನಡಿಗರು ಹಾಗೂ ಮಹಾ ಬುದ್ಧಿವಂತರು!

Thursday, September 18, 2008

ನಿಮ್ ಮಕ್ಳೆಲ್ಲಾ ಎಸ್ಸೆಮ್ಮೆಸ್ಸ್ ಮೆಸ್ಸೇಜುಗಳಲ್ಲೇ ಅಳ್ತಾವೇನು?

ನಮ್ ಆಫೀಸಿನಲ್ಲಿ ಒಬ್ರು ಇತ್ತೀಚೆಗೆ ಹೊಸ್ತಾಗಿ ಪರಿಚಯವಾದ ಕನ್ನಡಿಗರು, ಈಗಾಗ್ಲೇ ನಮ್ಮ್ ಮಾತುಕಥೆಗಳು ಎರಡೂ ಮೂರನೇ ಭೇಟಿಯಲ್ಲಿ ಬೆಳೆಯುತ್ತಿದ್ದವುಗಳಾಗಿದ್ದರಿಂದ ಅವೇ ಕನ್ನಡಿಗರ ಸಂಕೋಚಭರಿತ ’ನಮಸ್ಕಾರ, ಚೆನ್ನಾಗಿದೀರಾ!’ ಅನ್ನೋ ಹಲ್ಲು ಗಿಂಜೋ ಪದಪುಂಜಗಳಿಂದ ಸ್ವಲ್ಪ ದೂರವಾಗಿತ್ತು ಅಂತ್ಲೇ ಹೇಳ್ಬೇಕು. ’ಏನ್ಸಾರ್ ಮತ್ತೆ ಇತ್ತೀಚೆಗೆ ಏನ್ ಓದ್ತಾ ಇದ್ದೀರಾ?’ ಎನ್ನೋ ನನ್ನ ಹುಂಬ ಪ್ರಶ್ನೆಗೆ ಅವರು ’ಏನೂ ಇಲ್ಲ, ಈ ಬ್ಲ್ಯಾಕ್‌ಬೆರ್ರಿಯಲ್ಲಿ ಬರೋವನ್ನು ಜೋಕ್‌ಗಳನ್ನ ಬಿಟ್ರೆ ಮತ್ತೇನನ್ನೂ ಓದೋದೇ ಇಲ್ಲ!’ ಎಂದು ಬಿಡಬೇಕೆ.

ಶುರುವಾಯ್ತು ತಗಳಪ್ಪ, ಅದೇ ತಾನೇ ಬೆಚ್ಚಗೆ ಕಾಫಿ ಕುಡಿದಿದ್ನಾ ಎಲ್ಲಾ ಹೊರಕ್ಕ್ ಬಂತ್ ನೋಡಿ...ಕ್ಷಮಿಸಿ ಅವ್ರಿಗೇನೂ ಬೈದಿಲ್ಲಪ್ಪ ನಾನು - ನಮ್ಮ ಕನ್ನಡಿಗರ ಜಾಯಮಾನದಂತೆ ನಕ್ಕು ಸುಮ್ಮನಾಗ್ಬಿಟ್ಟೆ.

***

ಈ ವೇಗಮಯ ಜೀವನದಲ್ಲಿ ಎಲ್ಲವೂ ಕಿರುತೆರೆಗಳಿಗೆ ಮಾತ್ರ ಸೀಮಿತವಾಗೋ ಹಾಗೆ ಕಾಣ್ತಿದೆ. ದೊಡ್ಡ ಸಿನಿಮಾ ಪರದೆ ಚಿಕ್ಕ ಟಿವಿಗೆ ಮೀಸಲಾಗೋಯ್ತು, ಈಗ ಅದರಿಂದ ಸಣ್ಣ ಮೊಬೈಲ್ ಫೋನಿನ ಮಟ್ಟಿಗೆ ಇಳಿದು ಹೋಯ್ತು. ಸೋ, ಚಿಕ್ಕದಾಗಿರದೇ ಇರೋದು ಬ್ಯಾಡವೇ ಬ್ಯಾಡಾ...ಅನ್ನೋದು ಈ ಕಾಲದ ಘೋಷಣೆ.

ಯಕ್ಷಗಾನ ಅನ್ನೋದ್ ಯಾಕೆ ಬೇಕು ಹಾಗಾದ್ರೆ? ಒಂದೇ ಒಂದು ಕ್ಷಣದಲ್ಲಿ ಪಾತಾಳ, ಭೂಲೋಕ, ಮತ್ಸ್ಯಲೋಕ, ಯಮಲೋಕ, ಸರ್ಪಲೋಕಗಳನ್ನೆಲ್ಲವನ್ನು ಯಶಸ್ವಿಯಾಗಿ ಕಲ್ಪಿಸಿಕೊಳ್ಳುವ ವೇದಿಕೆ ಇರೋವಾಗ. ಒಂದು ರಾಗ-ತಾಳದ ಹಿಮ್ಮೇಳದ ಹಾಡಿನಿಂದ ಮತ್ತೊಂದಕ್ಕೆ ಡೈನಾಮಿಕ್ ಆಗಿ ಬದಲಾವಣೆ ಇರೋವಾಗ. ಹಿಮ್ಮೇಳಕ್ಕೆ ತಕ್ಕಂತೆ ಅದೇ ಕಾಲಕ್ಕೆ ಸಂದರ್ಭವನ್ನು ಶುದ್ಧ ಕನ್ನಡ-ಸಂಸ್ಕೃತದಲ್ಲಿ ಅರ್ಥೈಸುವ ಅಭಿವ್ಯಕ್ತಿ ಇರೋವಾಗ. ಗಾನ-ನಾಟ್ಯ-ಸರ್ವ ರಸಗಳೂ ಒಂದೇ ಒಂದು ರಂಗದಲ್ಲಿ ಮೇಳೈಸುವಾಗ.

ಎಲ್ರೂ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡ್ತಾ ಇದ್ರೆ ಸಾಕಲ್ವ - ಅವೇ ಟೇಕು ರೀಟೇಕುಗಳು ಸ್ಪೆಷಲ್ ಎಫೆಕ್ಟ್‌ಗಳೆಲ್ಲ ಇರೋವಾಗ ಅದರ ಮುಂದೆ ಬಯಲು ಸೀಮೆಯಲ್ಲಿನ ನಾಟಕ ಯಾವ ಮೂಲೆಯ ಲೆಕ್ಕ. ಎಂಟು ಡಾಲರ್ ಕೊಟ್ಟು ಒಂದೂವರೆ ಘಂಟೇಲಿ ಹಾಲಿವುಡ್ಡು ಸಿನಿಮಾಗಳು ನೋಡೋಕ್ ಸಿಗೋವಾಗ ಈ ನ್ಯೂ ಯಾರ್ಕಿನ ಬ್ರಾಡ್ ವೇ ಶೋಗಳಿಗೆ ನೂರು ಡಾಲರ್ ಯಾವನ್ನ್ ಹೋಗ್ತಾನೆ ಹೇಳಿ? ಸಿನಿಮಾದಲ್ಲಿರೋ ಮತ್ತು-ಗಮ್ಮತ್ತು ಈ ಪ್ಲೇನ್ ನಾಟಕ-ಮ್ಯೂಸಿಕಲ್ಲುಗಳಲ್ಲಿರುತ್ತೇ ಅಂತ ಅಂದೋರ್ ಯಾರು?

***

ರಾಮಾಯ್ಣ ಅಂದ್ರೆ ಸುಮ್ನೇ ಹೀಗ್ ಬರೆದ್ರೆ ಸಾಕಲ್ಪ:
ರಾಮಾ ಅನ್ನೋ ರಾಜಕುಮಾರ ಮೀನ್ ಮೈಂಡೆಡ್ ಮಂಥರೆ ಹಾಗೋ ಸ್ಟೆಪ್ ಮದರ್ ಕೈಕೆಯಿ ಮಾಡಿರೋ ಕರಾಮತ್ತಿನಿಂದಾಗಿ ತನ್ನ ಹೆಂಡ್ತಿ ಜೊತೆ ಕಾಡ್ ಸೇರ್ತಾನಂತೆ. ಆ ಹದಿನಾಲ್ಕು ವರ್ಷದ ವನವಾಸ್‌ದಲ್ಲಿ ಸುಂದರವಾದ ಹೆಂಡ್ತೀನ ಶ್ರೀಲಂಕಾದ ಒಬ್ಬ ರಾಕ್ಷಸ ಅಪಹರಿಸ್ತಾನಂತೆ. ರಾಮಾ ಮತ್ತ್ ಅವನ ತಮ್ಮ ಜೊತೆಗೆ ಕಾಡಲ್ಲೇ ಸಿಗೋ ಕಪಿ ಸೈನ್ಯದ ಸಹಾಯದಿಂದ ಲಂಕೆಗೆ ಹೋಗಿ ಆ ರಾಕ್ಷಸನನ್ನು ಕೊಂದು ಸತ್ಯಾ-ಧರ್ಮಕ್ಕೆ ಇವತ್ತೂ ಕಾಲಾ ಇದೇ ಅಂತ ಸಾಧಿಸಿ ತೋರಿಸ್ತಾರಂತೆ. ಹಂಗೇ ಹೆಣ್ತೀನೂ ಕರಕಂಡ್ ಬರ್ತಾನಂತೆ, ಆದ್ರೆ ಅವಳು ಯಾರೋ ಏನೋ ಅಂದ್ರೂ ಅಂತ ಬೆಂಕಿ ಹಾರಿ ಬೀಳ್ತಾಳಂತೆ!

ಪಾಪ ಯಾಕ್ ಆ ಕುವೆಂಪು ರಾಮಕೃಷ್ಣಾಶ್ರಮದಲ್ಲಿ ಕುತಗೊಂಡು ರಾಮಾಯಣ ದರ್ಶನಂ ಬರೀಬೇಕಿತ್ತು. ಅದೂ ಸಾಲ್ದೂ ಅಂತ ವೀರಪ್ಪ ಮೊಯಿಲಿ ಯಾಕೆ ತಮ್ಮದೇ ಆದ ಒಂದು ವರ್ಷನ್ನನ್ನ ಕುಟ್ಟಬೇಕಿತ್ತು. ಒಂದೇ ರಾಮಾಯ್ಣ ಅದನ್ನ ಹೇಳೋಕ್ ಹತ್ತಾರ್ ಭಾಷೇನಾದ್ರೂ ಯಾಕ್ ಬೇಕು, ಎಲ್ಲಾನು ಇಂಗ್ಲೀಷಿಗೆ ಟ್ರಾನ್ಸ್ಲೇಟ್ ಮಾಡಿದ್ರೆ ಆಯ್ತು, ನಾವೆಲ್ಲ ಇಂಗ್ಲೀಷ್ನಲ್ಲೇ ಓದ್‌ಕಂತೀವಲ್ಲ ಅಷ್ಟೇ ಸಾಕು. ಆ ನಾರಾಯಣಪ್ಪ ಯಾಕೆ ಕುಮಾರವ್ಯಾಸ ಭಾರತ ಬರೆದ, ಅದೂ ಸಾಲ್ದೂ ಅಂತ ಭೈರಪ್ಪನೋರು ಯಾಕೆ ತಮ್ಮ ಪರ್ವ ಕೊರೆದ್ರು? ಆ ಕಾರಂತ್ರು ನಲವತ್ತರ ಮೇಲೆ ಕಾದಂಬ್ರಿ ಬರೆದ್ರಂತೆಲ್ಲ ಅದ್ರಿಂದ ಏನಾಯ್ತು? ಅದ್ರ ಬದ್ಲಿ ಒಂದಿಷ್ಟು ಹಾಸ್ಯವಾಗಿ ಮಾತಾಡಿದ್ರೆ ಸಾಲ್ತಿತಿರ್ಲಿಲ್ವಾ?

ಯಾರೂ ಓದದ ಕೇಳದ ಕಂದಪದ್ಯಗಳು ಬೇಡವೇ ಬೇಡ. ರಗಳೆಗಳ ರಗಳೆ ಹಾಗೇ ಇರಲಿ. ಚಂಪೂ ಕಾವ್ಯ ಅಂತಂದ್ರೆ ಏನು, ಚಂದ್ರಶೇಖರ ಪಾಟೀಲರ ಹೊಸ ಕಾವ್ಯ ನಾಮಾನಾ? ಷಟ್ಪದಿ-ಗಿಟ್ಪದಿ ಅಷ್ಟೇ ಅಲ್ಲಲ್ಲೇ ಇರ್ಲಿ - ವೀರರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ ತಾತಂಗರ್ಘ್ಯವನು ಕೊಡುತ - ಅಂತ ಮತ್ತಿನ್ನೆಲಾದ್ರೂ ಭಾಮಿನಿನಲ್ಲಿ ಹಾಡಿ ಬಿಟ್ಟೀರ. ದೊಡ್ಡ ನಾವೆಲ್ಲುಗಳನ್ನೆಲ್ಲ ಈ ಸರ್ತಿ ಛಳಿಗಾಲಕ್ಕೆ ಸುಟ್ಟು ಮೈ ಬೆಚ್ಚಗೆ ಮಾಡಿಕೊಳ್ಳೋಣ. ನಮ್ಮ ಸುತ್ತ ಮುತ್ಲ ಇರೋ ಲೈಬ್ರರಿಗಳನ್ನೆಲ್ಲ ಸ್ಕ್ಯಾನ್ ಮಾಡಿ ಆನ್‌ಲೈನ್‌ಗೆ ಹಾಕಿ ನಾವು ಓದ್ತೀವಿ. ಸೋಬಾನೇ ಪದ, ಸೋ ವಾಟ್? ಜನಪದ ಗೀತೆ ಹಳ್ಳಿಯೋರ್ ಗಾಥೆ ನಮಗಲ್ಲಪ್ಪ. ’ಹೊನ್ನ ಗಿಂಡಿಯ ಹಿಡಿದು ಕೈಯಲಿ...’ ಅಂದ್ರೆ ಏನ್ರಿ, ಈ ಮದ್ರಾಸಲ್ಲಿ ಗಿಂಡಿ ಇದೆಯಲ್ಲ ಅದಾ? ಆ ಡಿವಿ ಗುಂಡಪ್ಪೋರಿಗೆ ತಲೆ ನೆಟ್ಟಗಿತ್ತೋ ಇಲ್ವೋ ಅಷ್ಟೊಂದು ಬರೆಯೋದಾ? ಲೈಫು ಅಂದ್ರೆ ಸಿಂಪಲ್ಲು ಗೊತ್ತಿರಲಿಲ್ಲ ಅವ್ರಿಗೆ? ಪ್ರತಿಯೊಂದಕ್ಕೂ ಮಂಕುತಿಮ್ಮ ಅಂತ ಬರಕೊಂಡೋರ್ ಬೇರೆ, ಮಂಕುದಿಣ್ಣೇ ಅಂತ ಬರೀಲಿಲ್ಯಾಕೆ? ವಚನಾ - ಯಾರಿಗ್ ಯಾರ್ ಕೊಡೋ ಭಾಷೇ ಅದೂ?

ರೀ, ನಾಟ್ಕ ಯಾವನ್ರೀ ಬರೀತಾನೆ ಮತ್ತೆ ಅದನ್ನ ಓದೋರ್ ಯಾರು? ಸುಮ್ನೇ ಯಾವ್ದಾದ್ರೂ ಬ್ಲಾಗ್‌ನಲ್ಲೋ ಪೋರ್ಟಲಿನಲ್ಲೋ ಹಾಸ್ಯಮಯವಾಗಿ ಬರೀರಿ ಒಂದಿಷ್ಟ್ ಜನಾನಾದ್ರೂ ಓದ್ತಾರೆ. ಬಟ್, ನಿಮ್ ಬರಹ ಕೇವ್ಲ ಮುನ್ನೂರು ಪದಗಳಿಗೆ ಮಾತ್ರ ಇರ್ಲಿ, ಒಂದೊಂದು ಸಾಲೂ ಅದ್ರದ್ದೇ ಆದ ಪ್ಯಾರಾವಾಗಿರ್ಲಿ. ’ಅಂತಃಕರಣ’, ’ಅಶ್ಲೀಲ’ ಅನ್ನೋಪದಳನ್ನೇನಾದ್ರೂ ಉಪಯೋಗಿಸಿ ಬಿಟ್ಟೀರಾ ಮತ್ತೆ. ಈ ಪೋರ್ಟಲುಗಳ ಕ್ಲೈಂಟೆಲ್ಲುಗಳಿಗೆ ಗಂಟಲು ಕಟ್ಟಿಬಿಡುತ್ತೆ ಹುಷಾರು. ಮತ್ತೇ...ನಿಮ್ಮ್ ಟೈಟಲ್ಲು ಜನಪ್ರಿಯವಾಗಿರ್ಲಿ, ಯಾವ್ದಾದ್ರೂ ಹಾಡಿನ ಪಂಕ್ತಿ, ಅಲ್ಲ ಸಾಲಿದ್ರೆ ಒಳ್ಳೇದು - ’ಅನಿಸುತಿದೆ ಯಾಕೋ ಇಂದು...ಹೀಗೇ ಸುಮ್ಮನೇ’ ಅಂತ ಹಾಕಿ, ಅದು ಪ್ಯಾಪುಲ್ಲರ್ರು. ಈ ಸಾಲನ್ನು ಬರೆದ ಕವಿ ಅಂತ ಜನ ಕಾಯ್ಕಿಣಿಯವ್ರನ್ನ ಕೊಂಡಾಡೋದನ್ನ ನೋಡಿಲ್ಲ ನೀವು?

ಉತ್ತರ ಕರ್ನಾಟಕದ ಬಾಷೆ-ಮಾತು ಅದೊಂದ್ ಭಾಷೇನೇನ್ರಿ? ಏನ್ ಹೇಳೋದಿದ್ರೂ ಬೆಂಗ್ಳೂರ್ ಕನ್ನಡದಲ್ಲಿ ಹೇಳಿ. ’ನೀ ಹೀಂಗs ನೋಡಬ್ಯಾಡಾ ನನ್ನ’ ಅಂದ್ರೆ ಅದು ಕನ್ನಡಾನಾ? ಬೀದರ್-ಬೆಳಗಾವಿ ಎಲ್ಲಿವೆ? ಅಲ್ಲಿ ಯಾವ್ ಭಾಷೇ ಮಾತಾಡ್ತಾರೆ, ಜೈ ಸಿದನಾಯ್ಕ-ಮಾವೋತ್ಸೇ ತುಂಗಾ ಅಂತಾ ಕಂಬಾರರು ಅದೇನೇನೋ ಬರೆದಾರಂತಲ್ಲ?

***

ನಾವೇನೂ ಓದೋದಿಲ್ಲ ಅನ್ನೋದು ನಮ್ ಫ್ಯಾಷನ್ನ್ ಸಾರ್. ನಮ್ಮ ಸರ್ವತೋಮುಖ ಬೆಳವಣಿಗೆಗೆ ನಮ್ ನಮ್ ಮೊಬೈಲು-ಕಂಪ್ಯೂಟರ್ ಸ್ಕ್ರೀನ್‌ಗಳೇ ಸಾಕು ಸಾರ್. ಎರಡೇ ಎರಡು ಸಾಲಲ್ಲಿ ಹೇಳದ ಕಥೆ ಅದೂ ಕಥೇನಾ? ಎಸ್ಸೆಮೆಸ್ಸ್ ಮೆಸ್ಸೇಜುಗಳನ್ನು ಬಿಟ್ಟು ಇರೋವೆಲ್ಲಾ ಜೋಕಾ? ಸಂತಾ ಸಿಂಗ್, ಬಂತಾ ಸಿಂಗ್, ಕೋಲ್ಯಾ, ಸರ್ದಾರ್‌ ಜೀಗಳ ಅಜ್ಜ-ಮುತ್ತಾತರೆಲ್ಲ ಬಾವಿಯಲ್ಲಿ ಬಿದ್ದಿರೋ ಮಂದೀ ಗಡಿಯಾರಕ್ಕೆ ಕೀಲಿ ಕೊಡ್ತಾನೇ ಇದಾರ್ ಸಾರ್. ಅಲ್ಲಿಂದ ಕದ್ದು ಇಲ್ಲಿ, ಇಲ್ಲಿಂದ ತಂದು ಅಲ್ಲಿ ತುಂಬಿಸೋ ಫಾರ್ವಡ್ ಮಾಡಿರೋ ಸ್ಪ್ಯಾಮ್‌ ಸಂದೇಶಗಳೇ ಈ ಶತಮಾನದ ಅಂತಃಸತ್ವಾ ಸಾರ್...ಓಹ್ ಕ್ಷಮಿಸಿ, ಅಂತಃಸತ್ವಾ ಅಂದ್ರೆ ಏನು ಅಂತ ಯಾರಿಗ್ಗ್ ಗೊತ್ತು?

ನನ್ನದೊಂದು ಹೊಸಾ ಕವ್ನ ಬರ್ದಿದೀನಿ ಕೆಳಗೆ ನೋಡಿ: (ಪದಗಳ ಕೆಳಗೆ ಪದಗಳು ಬಂದ್ರೆ ಪದ್ಯಾ ಅಲ್ವಾ? ಪದ್ಯಾ-ಗದ್ಯಾ ಎಲ್ಲಾ ಒಂದೇ ಬಿಡಿ)
ಅಮೇರಿಕದಲ್ಲಿ ಇದೀವಿ ಕನ್ನಡ ಸಿನಿಮಾ ನೋಡಲ್ಲ
ಅಮೇರಿಕದಲ್ಲಿ ಇದೀವಿ ಕನ್ನಡ ಕಾನ್ಸರ್ಟ್ ಬ್ಯಾಡವೇ ಬ್ಯಾಡ.
ಕನ್ನಡ ಸಿಡಿ ಮಾರೋರ್ ಇದ್ರೆ ಅವರಿಂದ್ಯಾಕೆ ಕೊಳ್ಬೇಕು?
ಕನ್ನಡ ಪುಸ್ತಕ ಅನ್ನೋ ವಸ್ತೂನ ಕೊಂಡ್ ಕೊಂಡ್ ಯಾಕೆ ಓದ್ಬೇಕು?
ನಾವ್ ಇತ್ಲಾಗ್ ಕನ್ನಡ ಪ್ರೊಗ್ರಾಮ್ ನೋಡಲ್ಲ, ಇಂಗ್ಲೀಷ್ ಕಾನ್ಸರ್ಟ್ ತಿಳಿಯಲ್ಲ.
ಹಗ್ಲೂ ರಾತ್ರೀ ದುಡ್ದೂ ದುಡ್ದೂ, ಸ್ಟ್ರೆಸ್ಸಿನಿಂದ ಸೊರಗಿರೋ ಭುಜಕ್ಕೆ ಅಮೃತಾಂಜನ್ ಸ್ಟ್ರಾಂಗ್ ಲೇಪಿಸ್ಕೊಂಡು,
ನಲವತ್ತ್ ಆಗೋಕ್ಕಿಂತ ಮುಂಚೆ ಚಾಳೀಸ್ ತಗಲಾಡಿಸ್ಕೊಂಡ್
ನರನಾಡಿಗಳಲ್ಲೆಲ್ಲ ಕೊಬ್ಬು-ಕೊಲೆಸ್ಟ್ರಾಲ್ ಹೆಚ್ಚಿಸಿಕೊಂಡು
ನಮ್ಮೂರಿನ ದನಕಾಯೋ ಕೆಲಸ ಮಾಡೋರಿಗಿಂತ
ಐದೇ ಐದು ವರ್ಷ ಹೆಚ್ಗೆ ಬದುಕೋ ಬವಣೇನಾದ್ರೂ ಯಾತಕ್ಕೆ?

ಹೆಂಗಿದೆ? ನಿಮ್ಮ್ ಕಾಮೆಂಟ್ ಹಾಕಿ, ಸಕತ್ತಾಗಿದೆ ಕವ್ನಾ ಅಂತ ಬರೀರಿ. ನಿಮಿಗೆ ನಾನ್ ಕಾಮೆಂಟ್ ಹಾಕ್ತೀನಿ, ನನಿಗೆ ನೀವ್ ಹಾಕಿ. ಅದೇ ಸಂಬಂಧ ಹಂಗೇ ಬೆಳೀಲಿ. ನಾನು ಬರ್ದಾಗ್ಲೆಲ್ಲ ನೀವ್ ಬ್ಯಾಡಾ ಅಂದ್ರೂ ತಿಳಸ್ತೀನಿ - ಓದಿ, ಕಾಮೆಂಟ್ ಹಾಕಿ, ನಾನು ಅಷ್ಟೇ - ನಮ್ ಬಳಗಾ ಹಿಂಗೇ ಬೆಳೀಲಿ - ನಾಳೆ ನಮಗೆಲ್ಲರಿಗೂ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ. ಒಂದ್ ಸ್ಟೇಜ್‌ ಮೇಲೆ ಅದೆಷ್ಟು ಜನಗಳಿಗೆ ನಿಲ್ಲೋಕ್ ಆಗುತ್ತೋ ಅವರಿಗೆಲ್ಲ ಪ್ರಶಸ್ತಿ ಸಿಗುತ್ತೆ. ಜಿಲ್ಲೆಗೊಂದೊಂದು, ಜಾತಿಗೊಂದೊಂದು, ಭೀತಿಗೊಂದೊಂದು, ಸರ್ಕಾರದ ಮಿನಿಷ್ಟ್ರುಗಳ ಶಿಫಾರಸ್ಸಿಗೊಂದೊಂದು. ನಾನು ಬರೆದಿದ್ದನ್ನೆಲ್ಲ ಬುಕ್ ಮಾಡಿಸ್ತೀನಿ. ಅದ್ರ ಬಿಡುಗಡೆಗೆ ನಿಮ್ಮನ್ನ್ ಕರ್ದು ಊಟ ಹಾಕಿಸ್ತೀನಿ. ನನ್ನ ಬುಕ್ಕ್ ಕೊಂಡು ಒಂದೈದು-ಹತ್ತು ಡಾಲರ್ ಕಳ್ಸಿ! ಯಾವ್ ಶಿವರಾಮ ಕಾರಂತ್ರೂ-ಬೈರಪ್ಪಾ-ಬೇಂದ್ರೆ ಮಾಡ್ದೇ ಇರೋ ರೆಕಾರ್ಡ್ ನನ್ನ ಪುಸ್ತಕಗಳು ಮಾಡಿವೆ, ಗೊತ್ತಿಲ್ಲಾ ನಿಮಗೇ - ನಾನೇ ಬೆಶ್ಟ್ ಸೆಲ್ಲರ್ರು.

***

ನಿಮ್ಮ್ ಮಕ್ಳು, ಅಲ್ಲ ಮಕ್ಳುಗಳು, ಕನ್ನಡದಲ್ಲೇ ಮಾತಾಡ್ತಾವಾ? ಎಲ್ರೂ ಅತ್ತಂಗೇ ಅಳ್ತಾವಾ ಅಥವಾ ಅದಕ್ಕೂ ಎಸ್ಸೆಮ್ಮೆಸ್ಸ್ ವರ್ಷನ್ನ್ ಬಂದಿದೆಯಾ? ಕನ್ನಡ ಮಾಧ್ಯಮವೇ ಬ್ಯಾಡ ಅಂತ ಕೋರ್ಟುಗಳೇ ತೀರ್ಪು ಕೊಟ್ವಂತೆ? ಪ್ರಪಂಚದ ಸಾವ್ರಾರು ಭಾಷೆ ಫೈಲುಗಳನ್ನೆಲ್ಲ ಡಿಲ್ಲೀಟ್ ಮಾಡಿ ಬಿಡಿ, ಇಂಗ್ಲೀಷ್ ಒಂದೇ ಸಾಕು. ಇನ್ನೂ ಈಗ್ತಾನೆ ಕಣ್ಣ್ ಬಿಟ್ಟು ನೋಡ್ತಾ ಇರೋ ಹುಡುಗ್ರಿಗೆ ಲೋಕಲ್ ಸಿಲಬಸ್ ಬ್ಯಾಡಾ, ಸಿಬಿಎಸ್ಸಿ-ಐಸಿಎಸ್ಸಿ ಕೊಡ್ಸಿ. ದೊಡ್ಡ ಸ್ಕೂಲಲ್ಲಿ ಓದ್ಸಿ ದೊಡ್ಡ ಮನ್ಷರಾಗ್ತಾರೆ. ಪಬ್ಲಿಕ್ ಸ್ಕೂಲ್ ಅಂತ ಹೆಸ್ರು ಇಟಗೊಂಡಿರೋ ಪ್ರೈವೇಟ್ ಸ್ಕೂಲ್‌ಗಳೇ ಚೆಂದ. ವರ್ಷವಿಡೀ ಇರೋ ಉರಿಬಿಸ್ಲಲ್ಲೂ ಮಕ್ಳು ಟೈ ಕಟ್ಲಿ, ಎಷ್ಟ್ ಚೆಂದ ಕಾಣ್ತಾರ್ ಗೊತ್ತಾ? ಅಮ್ಮ-ಅಪ್ಪ ಅನ್ನೋಕ್ ಮುಂಚೆ ಮಮ್ಮೀ-ಡ್ಯಾಡೀ ಅನ್ಲೀ ಆಗ್ಲೇ ನಮಗೊಂದ್ ಘನತೆ. ಅಯ್ಯೋ ಎಲ್ಲಾದ್ರೂ ಮಕ್ಳು ಓಡಾಡೋದು ಉಂಟೇ, ಕೈ ಕಾಲ್ ಸವದು-ಗಿವದು ಹೋದ್ರೆ ಕಷ್ಟಾ - ಹೋಗ್ ಕಾರಲ್ಲ್ ಬಿಟ್ಟ್ ಬನ್ನಿ, ಏನು?

ತಪ್ಪ್ ಮಾಡ್ದೇ ಸಾರ್ ನಾನು, ಇನ್ನೊಂದ್ ಇಪ್ಪತ್ತೈದು ವರ್ಷ ಬಿಟ್ಟು ಹುಟ್ಟಬೇಕಿತ್ತು. ನಮ್ಮ್ ಜನರೇಷನ್ನಲ್ಲಿರೋಷ್ಟು ಟೆನ್ಷನ್ನ್ ಎಲ್ಲಿದೆ ಹೇಳಿ...ನಾವೇ ದೊಡ್ಡೋರು, ನಾವೇ ಸರ್ವಸ್ವ, ನಮ್ಮದೇ ದೊಡ್ದು, ಗೊತ್ತಾಯ್ತಾ?

(Take it easy now)

Sunday, September 14, 2008

ನಿಮ್ standard ನಿಮಗೆ, ನಮ್ standard ನಮಿಗೆ

ಸಾರ್‍, ನೀವಾದ್ರೂ ಒಂದಿಷ್ಟ್ ಸಹಾಯಾ ಮಾಡ್ತೀರಾ? ನಾನು ನಮ್ ದೇಶದಲ್ಲಿರೋ ಕಂಪನಿಗಳ ಬಗ್ಗೆ, ಶಾಲೆಗಳ ಬಗ್ಗೆ ಅವರ ವೆಬ್‌ಸೈಟ್‌ನಲ್ಲಿ ಓದಿದ ಹಾಗೆಲ್ಲ ಎಲ್ರೂ ’State of the art', 'Best in class', 'Best of the breed' ಮುಂತಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನ ಹೇಳ್ಕೋತಾರಲ್ಲ, ಇವುಗಳನ್ನೆಲ್ಲ ಅದರ ಫೇಸ್‌ ವ್ಯಾಲ್ಯೂ ಅಂತ ತೆಗೊಂಡ್ರೆ ಹೇಗೆ? ತೆಗೊಳ್ಳೋ ಬೇಡವೋ ಅನ್ನೋ ಸಂಕಷ್ಟ ನನ್ನದು.

State of the art - ಅಂತ ಇವ್ರಿಗೆಲ್ಲ ಯಾರು ಬಿರ್ದು ಕೊಟ್ಟೋರು? ನನ್ನ ತಲೇಲೀ ಬರೀ ಪ್ರಶ್ನೆಗಳೇ ತುಂಬಿ ಬರ್ತವೆ ನೋಡಿ - ಭಾರತದ ಕಂಪ್ನಿಗಳು-ಶಾಲೆಗಳೆಲ್ಲ ಸ್ಟೇಟ್ ಆಫ್ ದಿ ಆರ್ಟ್ ಆದ್ರೆ, ಭಾರತ ಯಾಕೆ ಇನ್ನೂ ಬಿದ್ದು ಕೊಳೀತಾನೇ ಇರೋದೂ ಅಂತ?

ನನ್ ಸ್ನೇಹಿತ್ರ ಹತ್ರ ಹೇಳಿದ್ರೆ ನಿನಗೆ ತಲೆ ಸಮ ಇದೆಯಾ ಅಂತ ನಂಗೇ ಬೈತಾರೆ! ಅದ್ಯಾವ್ದೋ ISO ಅಂತ ಸ್ಟ್ಯಾಂಡರ್ಡ್ ಹೇಳಿ ತಲೆ ತಿಂತಾರೆ. ISO-CMM ಅವೆಲ್ಲಾ ನಮ್ ದೇಶದ ಸ್ಟ್ಯಾಂಡರ್ಡುಗಳಲ್ಲ ಕಣ್ರೋ, ನಮಿಗೆ ನಮ್ ದೇಶದ ಸ್ಟ್ಯಾಂಡರ್ಡೇ ಚೆಂದ, ಆ ಅಳತೇ ಕೋಲಿನಲ್ಲಿ ಅಳೆಯೋದೇನಾದ್ರೂ ಇದ್ರೆ ಹೇಳ್ರಿ ಅಂತಂದ್ರೆ ಬೆಬ್ಬೆಬ್ಬೆ ಅಂತಾರೆ. ನಮ್ಮನ್ನ ಅಳೆಯೋದಿಕೆ ಮಂದೀ ಕೋಲ್ಯಾಕೆ? ಮಂದೀ ಕೋಲಿನ್ಯಾಗ್ ನಮ್ಮನ್ ಅಳಕೊಂಡು ನಾವು ಯಾರನ್ನ ಹೆಂಗ್ ಕಂಪೇರ್ ಮಾಡೋದು ಅಂತ ಯೋಚ್ಸೀ ಯೋಚ್ಸೀ ತಲೆ ನುಣ್ಣಗಾತೇ ಹೊರತು ಅವರಪ್ಪನಾಣೆ ಇವತ್ತಿಗೂ ಉತ್ರಾ ಹೋಳೆದಿಲ್ಲಾ ನೋಡ್ರಿ.

ನಮ್ ದೇಶದಾಗೋ ನೂರು ಕೋಟಿ ಭರ್ತಿ ಜನಾ ಸಾರ್. ನೂರು ಕೋಟಿ ಜನಕ್ಕೆ ಸಾವಿರ ಕೋಟಿ ಮನಸು ಕೊಟ್ಟಾನೆ ಆ ದೇವ್ರು. ಅಂತರದಾಗೆ ನಾನು ಅದೆಲ್ಲೋ ಕುತಗಂಡು ಈ ಇಂಟರ್ನೆಟ್ಟು ಅನ್ನೋ ಪ್ರಪಂಚದೊಳಗಿಂದ ಇಣಕಿ ಹಾಕಿ ನೋಡಿದ್ರೆ ಈ ವೆಬ್‌ಸೈಟ್‌ಗಳನ್ನ ಬರೆಯೋರು ಬರೆಸೋರಿಗೆ ಒಂದಿಷ್ಟು ಕಾಮನ್ ಸೆನ್ಸ್ ಬ್ಯಾಡಾ? ತಮಿಗೆ ಏನೇನು ಬೇಕೋ ಅವನ್ನೆಲ್ಲ ಬರಕಂಡವರೆ ಅದರ ಪ್ರಕಾರ ಎಲ್ಲರ ಶಾಲೀನೂ ಬೆಸ್ಟ್ ರೀ. ಎಲ್ಲರ ಹತ್ರನೂ ’ದ ಬೆಸ್ಟ್’ ಟೀಚರ್ಸ್ ಇದಾರ್ ರೀ. ಎಲ್ಲಾ ಕಂಪನೀ ಒಳಗೂ ’ದ ಬೆಸ್ಟ್’ ಎಂಪ್ಲಾಯೀಸ್ ಇರೋರ್ ರೀ. ಹಿಂಗೆಲ್ಲಾ ಅಂದೂ ಅಂದೂ (ಬರೆದೂ ಬರೆದೂ) ಮೂಗಿಗೆ ತುಪ್ಪಾ ಸವರೋದ್ರಲ್ಲಿ ಶ್ಯಾಣ್ಯಾರ್ ನೋಡ್ರಿ ನಮ್ ಜನ. ನನ್ ಕೇಳಿದ್ರೆ ಈ ವೆಬ್‌ಸೈಟ್‌ಗಳ ಕಂಟೆಂಟ್ ಸ್ಕ್ರೂಟಿನಿ ಮಾಡೋಕ್ ಒಂದಿಷ್ಟ್ ಜನ ಇರಬೇಕ್ರಿ ಅಪ್ಪಾ. ಹಂಗೇನಾರಾ ಸುಳ್ಳೂ-ಪಳ್ಳೂ ಬರಕೊಂಡೋರನ್ನ ಇರಾಕ್-ಇರಾನ್‌ನ್ಯಾಗೆ ಹೊಡೆದು ಕೊಂದಂಗೆ ಕಲ್‌ನ್ಯಾಗ್ ಹೊಡೀಬಕು ಅಂತೀನಿ.

ಯಾರ್ ಹತ್ರ ದ ಬೆಸ್ಟ್ ಪ್ರಾಸೆಸ್ಸ್ ಇದಾವ್ರೀ? ಮನ್ಷಾ ಆದೋನು ಭೂಮಿಯಿಂದ ಚಂದ್ರಂಗೆ ರಾಕೇಟ್ ಕಳ್ಸಿ ಆರಾಮಾಗಿ ವಾಪಾಸ್ ತರಸೋದನ್ನ ಬಲ್ಲ, ಆದ್ರೆ ನೆಟ್ಟಗೆ ಸಾಫ್ಟ್‌ವೇರ್ ಡೆವಲಪ್ ಮಾಡೋದ್ ಕಲೀಲಿಲ್ಲ ಅಂತೀನಿ. ಎಲ್ಲೆಲ್ಲಿ ಕೋಡ್ ಮಾಡ್ತಾರೋ ಅಲ್ಲಲ್ಲಿ ಬಗ್‌ಗಳು ಇರ್ತಾವೆ, ಎಲ್ಲೆಲ್ಲಿ ಬಗ್‌ಗಳು ಇರ್ತಾವೋ ಅಲ್ಲಲ್ಲಿ ಬ್ರೇಕ್‌ಗಳು ಇರ್ತಾವೆ. ಇವೆಲ್ಲ ಮನುಜಕುಲ ಅನ್ನೋದು ತಮ್ಮ ಜಾಬ್ ಸೆಕ್ಯೂರಿಟಿಗೆ ಮಾಡಿಕೊಂಡಿರೋ ಒಂದು ವ್ಯವಸ್ಥೆ ಅನ್ಸೋಲ್ಲ? ನನ್ ಕೇಳಿದ್ರೆ ನೆಟ್ಟಗೆ ಒಂದು ತುಣುಕು ಕೋಡ್ ಬರೀದಿರೋ ಜನಕ್ಕೆ ಇನ್ನೇನು ಬಂದೀತು? ಇವತ್ತೇನಾದ್ರೂ ಇದೇ ಜನ ಪಿರಮಿಡ್ಡುಗಳನ್ನ ಕಟ್ಟಿದ್ರೆ ಇಷ್ಟೊತ್ತಿನ ಮಳೀಗೆ ಆ ಸೂರು ಸೋರಿ ಹೋಗ್ತಿತ್ತೋ ಏನೋ ಯಾರಿಗ್ ಗೊತ್ತು?

ನಂಗ್ ಗೊತ್ತು ನಾನೊಬ್ಬ ಹುಂಬಾ ಅಂತಂದು. ಎಲ್ರೂ ಒಳ್ಳೊಳ್ಳೇ ಪೊಗದಸ್ತಾದ ವೆಬ್‍ಸೈಟುಗಳನ್ನ ಕಟ್ಟಿಕೊಂಡು ಅದು ಹೇಗಿದೆಯೋ ಹಾಗೇ ನಾವಿದ್ದೇವೆ ಅಂತ ನಂಬಿಸೊದಕ್ಕೆ ಹೋಗ್ತಿದ್ದಾರೆ ಆದ್ರೆ ನಾನು ಅದನ್ನೆಲ್ಲ ನಂಬೋಲ್ಲ ಅಂತ. ಚರ್ಮದ ಕೆಳಗೆ ಅದೆಷ್ಟರ ಮಟ್ಟಿಗೆ ಇವರಿವರ ತರ್ಕ ಇಳಿದಿದೆ ಅಂತ ಕೆರೆದು ನೋಡಬೇಕು ಅನ್ಸುತ್ತೆ, ಆದ್ರೆ ಏನ್ ಮಾಡ್ಲಿ ವೆಬ್ ಸೈಟಿಗೆ ಚರ್ಮಾ ಅನ್ನೋದೇ ಇಲ್ವೇ? ಚರ್ಮ ಅಂತಿಲ್ಲದ ವೆಬ್‌ಸೈಟಿನ ಮೂಲ್ಕ ಜನರನ್ನ ನಂಬಿಸಿ ಆಕರ್ಷಿಸಿ ಬಿಸಿನೆಸ್ಸು ಮಾಡೋ ಇವರಿಗೆಲ್ಲ ನನ್ನಂಥ ದಡ್ರು ಗಿರಾಕಿಗಳ್ಯಾಕ್ ಆಗ್ಬೇಕು. ಈ ಬುದ್ಧಿವಂತ ಕಂಪ್ನಿಗಳಿಗೆ ಶಾಲೆಗಳಿಗೆ ಬುದ್ಧಿವಂತ ಕಷ್ಟಮರುಗಳೇ ಇರ್ಲಿ, ನಮ್ಮಂತ ದಡ್ಡರೆಲ್ಲ ಇನ್ಯಾವ್ದೋ ಮೂಲೆ ಸೇರ್ಲಿ ಏನಂತೀರಿ?

ನಿಮ್ standard ಏನೋ ಎಂತೋ, ನಮ್‌ದಂತೂ ಫೈವ್ ಸ್ಟಾರೂ ಅಲ್ಲ, ಸ್ಟೇಟ್ ಆಫ್ ದಿ ಆರ್ಟ್ ಇರ್ಲಿ ಕಾಮರ್ಸೂ ಅಲ್ಲ. ಅದಿರ್ಲಿ ಈ best of the class ಅನ್ನೋದಕ್ಕೆ state of the science ಅನ್ನೋದನ್ನ ಬಿಟ್ಟು art ಅಂತ ಯಾಕ್ ಅಂತಾರೆ? ನಾವು ಯಾವ್ದೂ ಜರ್ಮನ್ನೂ-ಜಪಾನರ ISO ಗೂ ತಲೆ ತೂಗೋಲ್ಲ. ನಮಿಗೆ ಬದುಕನ್ನ ಕಲ್ಸೋ ಪಾಠಗಳನ್ನ ಹೇಳ್ಕೊಡೋ ಬೇಸಿಕ್ ಎಜುಕೇಶನ್ ಇರ್ಲಿ ಅಂತ ಗುರುಕುಲದ ಕಥೆ ಹೇಳ್ತಿಲ್ಲ ನಾನು, ಇದ್ದಿದ್ದರಲ್ಲಿ ತಮ್ಮ ತಮ್ಮ ವೆಬ್‌ಸೈಟುಗಳಲ್ಲಿ ’ನಮ್ ಎಂಪ್ಲಾಯಿಗಳು ಹಂಗೆ-ಹಿಂಗೆ’ ಅಂತ ನಿಜವನ್ನಾದ್ರೂ ಹೇಳ್ಲಿ ಅಂತ ಅಷ್ಟೇ. ಕಪ್ಪೆಗಳನ್ನ ತಕ್ಕಡಿಯಲ್ಲಿಟ್ಟು ತೂಕಾ ಮಾಡೋರ್ ಹಾಗೆ ಎಂಪ್ಲಾಯಿಗಳನ್ನ ಹೈರು-ಫೈರು ಮಾಡೋ ಕಂಪನಿಗಳಲ್ಲಿ ಬಿಸಿನೆಸ್ಸು ಪ್ರಾಸೆಸ್ಸುಗಳು ಹೇಗೆ ನೆಲೆ ನಿಲ್ಲುತ್ವೆ? ಎಲ್ಲಿ ಬಿಸಿನೆಸ್ಸ್ ನೆಟ್ಟಗೆ ಗೊತ್ತಿರಲ್ವೋ ಅಲ್ಲಿ ತುಂಬಿ ತುಳುಕೋ ಟೆಕ್ನಾಲಜಿ ತಗೊಂಡು ಯಾವನ್ ಉದ್ದಾರಾಗಿದಾನೆ ನೀವೇ ಹೇಳಿ.

Sunday, September 07, 2008

ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು

ಆಫೀಸಿನಲ್ಲಿ ತಲೆ ಎತ್ತಿ ನೋಡಿದೆ: ಸುಮಾರು 25X50 ಚದುರ ಅಡಿ ಆವರಣದಲ್ಲಿ ನೂರಕ್ಕಿಂತಲೂ ಹೆಚ್ಚು ಟ್ಯೂಬ್‌ಲೈಟುಗಳು ಕಣ್ಣು ಕುಕ್ಕುತ್ತಿವೆ. ನಮ್ಮ ವಾಕ್‌ವೇ (ಕಾರಿಡಾರ್) ಗಳಲ್ಲಂತೂ ಎರಡೆರಡು ಅಡಿಗಳಿಗೊಂದು ಮರ್ಕ್ಯುರಿ ಲೈಟ್ ಸೀಲಿಂಗ್‌ನ ಹೊಟ್ಟೆಯಲ್ಲಿನ ಹೊಕ್ಕಳಿನ ಹಾಗೆ ಕೋರೈಸುತ್ತದೆ. ಎಲಿವೇಟರುಗಳಲ್ಲಿ ಐದಡಿ ಚದರವಿರುವ ಸ್ಥಳದಲ್ಲಿ ಒಂಭತ್ತು ಲೈಟುಗಳು. ಆಫೀಸಿನ ವಾತಾವರಣದಲ್ಲಿ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸದೇ ಹೋದರೆ ಹಗಲೋ ರಾತ್ರಿಯೋ ಗೊತ್ತಾಗುವ ಹಾಗೇ ಇಲ್ಲ.

ಸುಮಾರು ಮುನ್ನೂರು ಮಿಲಿಯನ್ ಇರುವ ಅಮೇರಿಕನ್ ಜನಸಂಖ್ಯೆ ಬಳಸುವ ಇಂಧನ, ಶಕ್ತಿ ಸೌಲಭ್ಯಗಳು ಸುಮಾರು ಪ್ರಪಂಚದ ಕಾಲು ಭಾಗದಷ್ಟಿರಬಹುದು ಎಂದು ಎಲ್ಲೋ ಓದಿದ ನೆನಪು. ಆಫೀಸಿನ ಅಥವಾ ಮನೆಯ ವಾತಾವರಣದಲ್ಲಿ ಪವರ್ ಕಟ್ ಆಗುತ್ತದೆ ಎಂದು ಯಾವುದೇ ಮುನ್ನೆಚ್ಚರಿಕೆಯನ್ನು ನಾವು ಭಾರತದಲ್ಲಿದ್ದ ಹಾಗೆ ತೆಗೆದುಕೊಳ್ಳುತ್ತಿದ್ದಂತೆ ಇಲ್ಲಿ ತೆಗೆದುಕೊಳ್ಳುವುದಿಲ್ಲವಾದರೂ ಅಪರೂಪಕ್ಕೊಮ್ಮೆ ಚಂಡಮಾರುತವೋ, ಸುಂಟರಗಾಳಿಯೋ ಬೀಸಿ ಅಥವಾ ಜೋರಾಗಿ ಮಳೆ ಬಂದು ಕರೆಂಟು ಹೋಗೋದು ಇದೆ. ಅಕಸ್ಕಾತ್ ಹಾಗೇನೇ ಆದರೂ ಜನರೇಟರುಗಳು, ಯುಪಿಎಸ್‌ಗಳು ಮೊದಲಾದವುಗಳು ಅಪರೂಪಕ್ಕೊಮ್ಮೆ ದುಡಿಯಲು ಸಿಗುವ ತಮ್ಮ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತವೆ.

ಈ ಮೇಲಿನ ಮಾತುಗಳನ್ನು NSG ಕಳೆದ 34 ವರ್ಷಗಳಿಂದ ಭಾರತದ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದುಹಾಕಿದ ಹಿನ್ನೆಲೆಯಲ್ಲಿ ಹೇಳಬೇಕಾಗಿ ಬಂತು. ಭಾರತದಂತಹ ಅಭಿವೃದ್ಧಿಪರ ದೇಶಗಳಿಗೆ "ಪವರ್" ಅಗತ್ಯ ಬಹಳ ಹೆಚ್ಚಿದೆ. ದಿನೇ ದಿನೇ ಹೆಚ್ಚುವ ಜನಸಂಖ್ಯೆ, ತಂತ್ರಜ್ಞಾನ ಮತ್ತೊಂದೇನೇ ಇದ್ದರೂ ಕತ್ತಲ ದಿನ ಮತ್ತು ರಾತ್ರಿಗಳು ಸಮಾಜದ ಉತ್ಪಾದನೆಯನ್ನೇ ಕುಂಠಿತಗೊಳಿಸಿವೆ. ಕೇವಲ ಇಲೆಕ್ಟ್ರಿಸಿಟಿ ಒಂದೇ ಅಲ್ಲ ಅದನ್ನು ಆಧರಿಸಿದ ಅನೇಕ ಬೆಳವಣಿಗೆಗಳಲ್ಲಿ ಭಾರತ ಹಿಂದಿದೆ. ಯಾವುದೇ ಸಾಮಾನ್ಯ ಮನೆವಾರಿಕೆಯಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳಿಗೆ ಎಲೆಕ್ಟ್ರಿಸಿಟಿ ಕಡಿತ ಹಿಡಿಶಾಪವೆಂದೇ ಹೇಳಬೇಕು.

***

ನಮಗೆ ಎಲೆಕ್ಟ್ರಿಸಿಟಿ ಸಿಗಬೇಕಾದರೆ ಒಂದಲ್ಲ ಒಂದು ರೀತಿಯಿಂದ ಶಕ್ತಿಯ ಪರಿವರ್ತನೆ ನಡೆಯಲೇ ಬೇಕು. ಗಾಳಿ, ಸೋಲಾರ್, ನೀರು, ಉಷ್ಣತೆ (ಕಲ್ಲಿದ್ದಲು), ನ್ಯೂಕ್ಲಿಯರ್ ಮೊದಲಾದವುಗಳಿಂದ ಎಲೆಕ್ಟ್ರಿಕ್ ಎನರ್ಜಿ ಸಿಗಬಹುದಾದರೂ ಹೆಚ್ಚಿನ ದೇಶಗಳು ನ್ಯೂಕ್ಲಿಯರ್ ಮೂಲವೊಂದನ್ನು ಹೊರತುಪಡಿಸಿ ಮತ್ತಿನ್ನೆಲ್ಲವನ್ನೂ ಮೈಗೂಡಿಸಿಕೊಂಡಿವೆ. ಪರಿಸರವಾದಿಗಳು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವುದನ್ನು ತಡೆಯಬಹುದು, ಇಂದಲ್ಲ ನಾಳೆ ಖಾಲಿಯಾಗುವ ಕಲ್ಲಿದ್ದಲು ಎಲ್ಲರನ್ನೂ ಹೆದರಿಸಬಹುದು, ಯಥೇಚ್ಚವಾಗಿ ಸಿಗಬಹುದಾದ ಗಾಳಿ-ಸೂರ್ಯನ ಬೆಳಕಿನಿಂದ ವಿದ್ಯುತ್‌ಚ್ಛಕ್ತಿಯನ್ನು ಪಡೆಯುವುದು ನಿಧಾನವಾಗಿ ಬೆಳೆಯುತ್ತಿರಬಹುದು. ಅದೇ ನ್ಯೂಕ್ಲಿಯರ್ ಮೂಲಗಳಿಗೆ ಬಂದಾಗ ಎಲ್ಲವೂ ಸರಿ ಹೋದರೆ, ಎಲ್ಲವನ್ನೂ ವ್ಯವಸ್ಥಿತವಾಗಿ ನಿಯಂತ್ರಿಸಿದರೆ ಅಗಾಧವಾದ ಶಕ್ತಿಯ ಭಂಡಾರವನ್ನೇ ಪಡೆದಂತಾಗುವುದು ನಿಜ. ಆದರೆ ಒಂದೇ ಒಂದು ಸಣ್ಣ ತಪ್ಪಾದರೂ ಆ ದುರಂತ ಮಾನವಕುಲ ಊಹಿಸುವುದಕ್ಕಿಂತಲೂ ದೊಡ್ಡದಾದುದರಿಂದಲೇ ನ್ಯೂಕ್ಲಿಯರ್ ಶಕ್ತಿಯನ್ನು ಅದರ ಬಳಕೆ/ದುರ್ಬಳಕೆಯನ್ನು ತಡೆಯಲು ವಿಶ್ವದಾದ್ಯಂತ ಹಲವು ರಾಷ್ಟ್ರಗಳ ಸಂಘಟನೆಗಳು ನ್ಯೂಕ್ಲಿಯರ್ ಬೆಳವಣಿಗೆಯನ್ನು ಹದ್ದು ಕಾದಂತೆ ಕಾಯುತ್ತಿರುವುದು.

ಭಾರತ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಹಿ ಹಾಕದ, ಹಿಂದೆ ಅಣ್ವಸ್ತ್ರ ಪರೀಕ್ಷೆ ನಡೆಸಿ ತನ್ನಲ್ಲಿ ಅಣ್ವಸ್ತ್ರ ಇದೆ ಎಂದು ಸಾಭೀತುಗೊಳಿಸಿಕೊಂಡ ದೇಶ. ನಾನ್ ಪ್ರೊಲಿಫರೇಷನ್ ಟ್ರೀಟಿಗೆ ಸಹಿ ಹಾಕದೆಯೂ ನ್ಯೂಕ್ಲಿಯರ್ ಮೂಲವನ್ನು ನಾಗರಿಕರ ಒಳಿತಿಗೆ ಬಳಸುವ ಬಗ್ಗೆ ವಿಶ್ವವನ್ನು ಮನವೊಲಿಸುವುದು ಹೇಗೆ ಎಂಬುದು ಪಂಡಿತರ ತಲೆನೋವಾಗಿತ್ತು, ಈಗ ನಿನ್ನೆಯ (ಸೆಪ್ಟೆಂಬರ್ ಆರು) ವಿಯೆನ್ನಾ ಸಭೆಯಲ್ಲಿ ದೊರೆತ ಅನುಮೋದನೆಯಿಂದ ಭಾರತಕ್ಕೆ ಒಂದು ಮುನ್ನಡೆ ದೊರೆತಿದೆ ಎಂದೇ ಹೇಳಬೇಕು. ಭಾರತದ ಮನೆ ಮತ್ತು ಆಫೀಸುಗಳಲ್ಲಿ ಹಗಲು-ರಾತ್ರಿಗಳಿಗೆ ವ್ಯತ್ಯಾಸವಿರದ ಹಾಗೆ ಎಲೆಕ್ಟ್ರಿಸಿಟಿ ಬಳಕೆ ಆಗುವುದಕ್ಕೆ ಕೊನೇಪಕ್ಷ ಒಂದು ನೂರು ವರ್ಷವಾದರೂ ಬೇಕಿದೆ, ಆದರೆ ಆ ನಿಟ್ಟಿನಲ್ಲಿ ಭಾರತ ಮೊದಲ ಹೆಜ್ಜೆ ಇಟ್ಟಂತಾಗಿದೆ.

***

ಈ ಐತಿಹಾಸಿಕ ದಿನವನ್ನು ಎರಡೂ ನಿಟ್ಟಿನಲ್ಲಿ ನೋಡಬಹುದು: ಅಣುಶಕ್ತಿಯನ್ನು ಜನರ ಒಳಿತಿಗೆ ಬಳಸುವ ದೇಶದ ಗುಂಪಿನಲ್ಲಿ ಭಾರತಕ್ಕೆ ಸಿಕ್ಕ ಸ್ಥಾನ ಒಂದು ರೀತಿಯದಾದರೆ, ಅಂತಹ ತಂತ್ರಜ್ಞಾನವನ್ನು ಮಾರಲು ತುದಿಗಾಲಿನಲ್ಲಿ (ಅಥವಾ ಮುಂಚೂಣಿಯಲ್ಲಿ) ನಿಂತಿರುವ ಅಮೇರಿಕಾ, ರಷ್ಯಾ, ಪ್ರಾನ್ಸ್ ಮೊದಲಾದ ದೇಶಗಳಿಗೆ ದೊಡ್ಡ ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಕಾದು ನಿಂತಿದೆ. ವೇಗದಲ್ಲಿ ಬೆಳೆಯುವ ದೇಶದ ಅಗತ್ಯಗಳಿಗೆ ಶಕ್ತಿ ಪೂರೈಕೆಯನ್ನು ಮಾಡಲು ಅಣುಶಕ್ತಿಯನ್ನು ಹೊರತುಪಡಿಸಿ ಬೇರೆ ವಿಧಾನಗಳಿಂದ ಪ್ರಯತ್ನಿಸುತ್ತಾ ಸಾಗುವುದು ಒಂದು ವಿಧಾನವಾಗಿತ್ತು. ಈಗಾಗಲೇ ಇರುವ ಶಕ್ತಿ ಮೂಲಗಳ ಜೊತೆಗೆ ಅಣುಶಕ್ತಿಯನ್ನು ಬಳಸುವುದು ಮತ್ತೊಂದು ವಿಧಾನ. ಯಾವುದೇ ದೇಶ ಅದೆನೇ ತಂತ್ರಜ್ಞಾನವನ್ನು ಮಾರಿದರೂ ಚೆರ್ನೋಬೆಲ್ ದುರಂತದಂತಹ ದುರಂತವನ್ನು ದೂರವಿಡುವುದು ಭಾರತೀಯರ ಕೈಯಲ್ಲಿದೆ. ಆ ಜವಾಬ್ದಾರಿಯನ್ನು ಮುಂಬರುವ ನೂರಾರು ವರ್ಷಗಳವರೆಗೆ ಯಾವುದೇ ಕೊರತೆ ಇಲ್ಲದೇ ಒಂದೇ ಒಂದು ತಪ್ಪು ಇಲ್ಲದೇ ನಿಭಾಯಿಸುವುದು ಬಹಳ ದೊಡ್ಡ ಜವಾಬ್ದಾರಿಯೇ ಸರಿ. ಆದರೆ, ಈ ಅಣುಶಕ್ತಿಯನ್ನು ದೂರವಿಟ್ಟು ಕನ್ವೆನ್ಷನಲ್ ಶಕ್ತಿ ಮೂಲಗಳನ್ನು ಪರಿಸರವಾದಿಗಳ ಅನುಮತಿ ಪಡೆದು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಇನ್ನೂ ದೂರದ ಪ್ರಶ್ನೆಯಾಗಿಯೇ ಉಳಿಯುವುದು. ಈ ಅಣುಶಕ್ತಿಯ ಬೆಳವಣಿಗೆಗೆ ಇನ್ನೇನೇನು ಅಡೆತಡೆಗಳು ಬರುತ್ತವೆಯೋ, ಒಬ್ಬ ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಹಿಡಿದು, ರಾಜಕಾರಣಿಗಳ, ಪಕ್ಷಗಳ, ಮುತ್ಸದ್ದಿಗಳ, ವಿಚಾರವಾದಿಗಳ, ಪರಿಸರ ಸಂರಕ್ಷರು ಮೊದಲಾದವರುಗಳಿಗೆ ಸಾಂತ್ವನ ಹೇಳಿಕೊಂಡು ಭಾರತದಲ್ಲಿ ಈ ಹೊಸ ಬೆಳವಣಿಗೆ ಯಾವ ದಿಕ್ಕನ್ನು ಹಿಡಿಯುತ್ತದೆಯೋ ಕಾದು ನೋಡಬೇಕು.