Monday, April 20, 2020

ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್! (ಭಾಗ-೨)


ಸುಮಾರು 14 ವರ್ಷಗಳ "ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!" ಎಂಬ ಲೇಖನ ಬರೆದಿದ್ದೆ.  ಅದರಲ್ಲಿ ನನ್ನೊಬ್ಬ ಸ್ನೇಹಿತನಿಗೆ ಕೊಟ್ಟ ನಾಲ್ಕು ಲಕ್ಷ ರೂಪಾಯಿಗಳು ದೊಡ್ಡವಾಗಿ ಕಂಡಿದ್ದವು.  ಆದರೆ, ಹದಿನಾಲ್ಕು ವರ್ಷಗಳ ನಂತರ ಅವರವರ ಪ್ರಬುದ್ಧತೆಯ ಬೆಳವಣಿಗೆಯಂತೆ, ಅನೇಕ ಲಕ್ಷಗಳು ಬಂದಿರಬಹುದು, ಹೋಗಿರಬಹುದು.  ಮಾನವೀಯತೆಯೊಂದೇ ಕೊನೆಗೆ ಉಳಿಯುವುದು ಗ್ಯಾರಂಟಿ.  ಆದರೆ, ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಇದ್ದ ಹಾಗೆ ಅವರವರ ಪ್ರತಿಕ್ರಿಯೆ ಇರುತ್ತದೆ.  ಒಮ್ಮೆ ನಾಲ್ಕು ಲಕ್ಷ ರೂಪಾಯಿಗಳೇ ದೊಡ್ಡವಾಗಿ ಕಂಡರೆ, ಮತ್ತೊಮ್ಮೆ ಅದು ನಗಣ್ಯವಾದೀತು.

ಈ ಲೇಖನ ಬರೆಯುವ ಹೊತ್ತಿಗೆ ಆಗಾಗ್ಗೆ ಜಗದೀಶನಂತವರು ಏಕೆ ಹೀಗೆ ಮಾಡಿದರು, ಏಕೆ ಹೀಗಾದರೂ ಎಂದೆಲ್ಲ ಯೋಚಿಸಬೇಕಾಗುತ್ತದೆ.  ಕೊನೆಗೆ ವಿಧಿಯ ಲೀಲೆ ಹೇಗಿರುತ್ತದೆ ಎಂಬುದನ್ನು ಊಹಿಸಿದರೆ, ನಿಜಕ್ಕೂ ಜೀವನದ ಬಗ್ಗೆ ಬೇಸರ ಬಂದೀತು.

***

ಸೋಶಿಯಲಿಸ್ಟ್ ದೇಶಗಳಲ್ಲಿ ಆಗದ ಒಂದು ಮಹಾನ್ ಸಾಧನೆಯನ್ನು ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ಮಾಡಬಹುದು - ಅದು ಏನೆಂದರೆ, ನಿಮ್ಮ ಹೂಡಿಕೆ ಯನ್ನು ದ್ವಿಗುಣವೇಕೆ, ಅನೇಕ ಗುಣಗಳ ಮಟ್ಟಿಗೆ ರಾತ್ರೋ ರಾತ್ರಿ ಹೆಚ್ಚಿಸಿಕೊಳ್ಳಬಹುದು, ಹಾಗೆಯೇ ಕಡಿಮೆ ಮಾಡಿಕೊಳ್ಳಬಹುದು!  ಸೂಕ್ಷ್ಮವಾಗಿ ಹೇಳುವುದಾದರೆ, ಇದು ಒಂದು ಹಣವನ್ನು ಪ್ರಿಂಟ್ ಮಾಡುವ ವ್ಯವಸ್ಥೆಯೇ ಸರಿ.  ನಿಮ್ಮ ಹೂಡಿಕೆಗಳು, ನಿಮ್ಮ ಕಂಪನಿಗಳು, ನಿಮ್ಮ ನೆಟ್ ವರ್ತ್ ಮೊದಲಾದವು - ನಿಮ್ಮ ಹಣೇಬರಹ ನೆಟ್ಟಗಿದ್ದರೆ, ರಾತ್ರೋರಾತ್ರಿ ಬೆಳೆಯಬಲ್ಲವು ಹಾಗೂ ಕುಗ್ಗ ಬಲ್ಲವು.

ಇಂದು, ಅಮೇಜ಼ಾನ್ ಕಂಪನಿಯ ಒಂದು ಸ್ಟಾಕ್ ಇವತ್ತಿಗೆ ಎರಡು ಸಾವಿರ ಡಾಲರ್‌ಗೂ ಅಧಿಕವಾಗಿದ್ದು, ಅದು ಒಂದು ಕಾಲದಲ್ಲಿ ಒಂದು ಡಾಲರ್‌ನ ಆಸುಪಾಸು ಇತ್ತು. ಇದು ಅನೇಕ ವರ್ಷಗಳಲ್ಲಿ ಆದ ಬೆಳವಣಿಗೆ.  ಅದೇ ರೀತಿ,   ನನ್ನ ಕಣ್ಣ ಮುಂದೆಯೇ ಅನೇಕ ಕಂಪನಿಗಳು, ಒಂದೇ ದಿನದಲ್ಲಿ ನೂರು ಅಥವಾ ಸಾವಿರ ಪರ್ಸೆಂಟ್ ಮೇಲೆ ಹೋಗಿದ್ದನ್ನು ಮತ್ತೆ ಕೆಳಗೆ  ಬಿದ್ದಿದ್ದನ್ನ ನಾನು ನೋಡಿದ್ದೇನೆ.  2008-2009ರ ಮಾರ್ಕೆಟ್ ಕ್ರಾಷ್ ಆದಾಗ ಬಿಲಿಯನ್ ಡಾಲರ್‌ಗಟ್ಟಲೆ ಹಣವನ್ನು ಅನೇಕ ಹೆಡ್ಜ್‌ಫಂಡ್ ಮ್ಯಾನೇಜರುಗಳು ಕಳೆದುಕೊಂಡಿದ್ದಾರೆ, ಅಂತೆಯೇ ಮಾರ್ಕೆಟ್ ಮೇಲೆ ಹೋದಾಗ ದುಡಿದಿದ್ದಾರೆ ಕೂಡ.

ಈ ಚಿಕ್ಕ ಮಾರ್ಕೆಟ್ ಕಾಮೆಂಟರಿಯ ಉದ್ದೇಶವೆಂದರೆ - ಯಾರು ಬೇಕಾದರೂ ಹಣವನ್ನು ಗಳಿಸಬಹುದು, ಅಥವಾ ಕಳೆದುಕೊಳ್ಳಬಹುದು... ಅಂತಹುದರಲ್ಲಿ, ಒಂದು ಕಾಲದಲ್ಲಿ ಒಂದು ಡಾಲರ್ ಅನ್ನೋದು 36 ರೂಪಾಯಿಗಳು ಇದ್ದುದು, ಇವತ್ತಿಗೆ ಒಂದು ಡಾಲರ್ ಎನ್ನುವುದು 75 ರೂಪಾಯಿಗಳಾದಾಗ, ನಮ್ಮ ಹಳೆಯ ಒಂದು ಲಕ್ಷದ ಮೊತ್ತ ಇವತ್ತಿಗೆ ಬಹಳ ಕಡಿಮೆಯಾಗಿ ಕಾಣುತ್ತದೆ.  ಅದನ್ನ ಇನ್‌ಫ್ಲೇಶನ್‌ಗೆ ಅಡ್ಜಸ್ಟ್ ಮಾಡಿ ನೋಡಿದರೂ ಸಹ, ಈ ಕರೆನ್ಸಿ ಕನ್ವರ್ಷನ್‌ನಲ್ಲಿ ಅಂದಿನ ಒಂದು ಲಕ್ಷ ರುಪಾಯಿ, ಇಂದಿಗೆ ಏನೇನೂ ಸಾಕಾಗುವುದಿಲ್ಲ.

(ಅದು ಹೇಗೆ ಭಾರತದಲ್ಲಿ ಜನ ಜೀವನವನ್ನು ಸಾಗಿಸುತ್ತಾರೋ ಇಷ್ಟೊಂದು ಇನ್‌ಪ್ಲೇಶನ್ ಇಟ್ಟುಕೊಂಡು!  ಅದು ಇನ್ನೊಂದು ದಿನದ ಬರಹವಾದೀತು!)

***

ಅಂದು ದುಡ್ಡು ತೆಗೆದುಕೊಂಡ ಗೆಳೆಯರ ಸುಳಿವಿಲ್ಲ.  ಆದರೆ, ಇಂದಿಗೆ ಒಂದಂತೂ ಜ್ಞಾನೋದಯವಾಗಿದೆ... ಯಾರಿಗಾದರೂ ಹಣಕೊಟ್ಟರೆ ಅದು ಹಿಂದೆ ಬರುತ್ತದೆ ಎಂಬ ನಂಬಿಕೆಯನ್ನೇ ಬಿಟ್ಟು ಬಿಡುವಂತಾಗಿದೆ.  ಅದರ ಅರ್ಥ, ನಮ್ಮ ಕೈಯಲ್ಲಿ ಎಷ್ಟನ್ನು ಕಳೆದುಕೊಂಡರೆ ಅದು ದೊಡ್ಡದೆನಿಸುವುದಿಲ್ಲವೋ ಅಷ್ಟನ್ನು ಮಾತ್ರ ಕೊಡಲು ಸಮರ್ಥರಾಗಿದ್ದರೆ ಸಾಕು ಎನಿಸುತ್ತದೆ.  ಈ ಒಂದು ಮನೋಧರ್ಮದಿಂದ, ನಮಗೆ ಯಾವ ನಷ್ಟವೂ ಇಲ್ಲ (ಕೊಟ್ಟ ದುಡ್ಡೊಂದನ್ನು ಹೊರತು ಪಡಿಸಿ), ಯಾವ ಮನೋವ್ಯಾಧಿಯೂ ಅಂಟೋದಿಲ್ಲ.  ನಮ್ಮ ಬಂಧು-ಮಿತ್ರರ ಜೊತೆಗೆ ನಿಷ್ಟೂರವಂತೂ ಆಗೋ ಮಾತೇ ಇಲ್ಲ... ಎಲ್ಲವನ್ನೂ ದಾನವಾಗಿ ಕಂಡು ಕೊಂಡರೆ.

ಈ ಹೊತ್ತಿನಲ್ಲಿ, ಇನ್ನೂ ಒಂದು ತತ್ವ ಹೊಮ್ಮುತ್ತದೆ - ಎಲ್ಲವನ್ನು ಕರ್ಮದ ಫಲವನ್ನಾಗಿ ನೋಡುವುದು... ನಾವು ಯಾವ ಜನ್ಮದಲ್ಲಿ ಅವರಿಂದ ಉದಾರಕ್ಕೆ ಪಡೆದಿದ್ದೆವೋ ಇಂದು ಅದನ್ನು ಹಿಂತಿರುಗಿಸಿದೆವು ಎಂದು ನಿರುಮ್ಮಳವಾಗಿರುವುದು!

ಹಣವನ್ನು ಕೊಡುವ-ತೆಗೆದುಕೊಳ್ಳುವ ವಿಚಾರದಲ್ಲಿ ನನ್ನ ಹಾಗೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆ ಎನ್ನುವ ಮಹಾಸಾಗರದಲ್ಲಿದ್ದುಕೊಂಡು, ಅದರಲ್ಲಿ ಸೋಶಿಯಲಿಸ್ಟ್ ಮೌಲ್ಯದ ಹಾಯಿ ದೋಣಿಯನ್ನು ಚಲಾಯಿಸುವ ಈ ಸಾಧನೆ ನನ್ನಂಥವರನ್ನು ಬಹುದೂರ ಕೊಂಡೊಯ್ಯಲಾರದು, ಎನ್ನುವುದು ಈ ಹೊತ್ತಿನ ನಂಬಿಕೆ!

No comments: