Showing posts with label ಸುತ್ತಮುತ್ತ. Show all posts
Showing posts with label ಸುತ್ತಮುತ್ತ. Show all posts

Tuesday, May 19, 2020

ಯಾರನ್ನ ನಂಬುವುದು? ಬಿಡುವುದು?

ಈಗಿನ ಕಾಲದ ನ್ಯೂಸ್ ಚಾನೆಲ್‌ಗಳನ್ನ ನೋಡ್ತಾ ಇದ್ರೆ ಒಂದು ರೀತಿ ವಾಕರಿಕೆ ಬಂದಂಗೆ ಆಗೋಲ್ಲ?  ಒಂದು ಕಾಲದಲ್ಲಿ ಎಷ್ಟೊಂದು ಚೆನ್ನಾಗಿ ನಾವು ವಿಶ್ವದ ಆಗುಹೋಗುಗಳನ್ನು ಫಾಲೋ ಮಾಡುತ್ತಿದ್ದೆವು.  ರೇಡಿಯೋ ಇಟ್ಟುಕೊಂಡು BBC, VoA, SLBC, AIR ಮೊದಲಾದ ಸ್ಟೇಷನ್ನುಗಳನ್ನು ತಿರುಗಿಸಿ ನೋಡುತ್ತಿದ್ದೆವು.  ಆಗಿನ ಕಾಲದಲ್ಲಿ ಮ್ಯಾಗಜೀನುಗಳು, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದುತ್ತಿದ್ದೆವು.  ಆಗಿನ ಕಾಲದ ಜರ್ನಲಿಸಮ್ ಅಂದ್ರೆ ಅದರಲ್ಲಿ ತಿರುಳಿತ್ತು, ಹುರುಳಿತ್ತು, ಎಲ್ಲಕ್ಕಿಂತ ಮುಖ್ಯವಾಗಿ ನ್ಯೂಸ್ ಇತ್ತು.  ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡುವ ಪ್ರಕ್ರಿಯೆ ಇತ್ತು.  ಓದುಗರನ್ನು, ಕೇಳುಗರನ್ನು ಪತ್ರಿಕಾ ಸಿಬ್ಬಂದಿ ಸೀರಿಯಸ್ ಆಗಿ ಪರಿಗಣಿಸುತ್ತಿದ್ದರು, ಗಮನಿಸುತ್ತಿದ್ದರು.

ಇದನ್ನು ಬೇಕಾದ್ರೆ, ನಾಸ್ಟಾಲ್ಜಿಯಾ ಎಂದು ಕರೆದು ಬದಿಗೆ ತಳ್ಳಬಹುದು, ಆದರೆ ಇಂದಿನ ನ್ಯೂಸ್‌ ನೆಟ್‌ವರ್ಕ್‌ಗಳಲ್ಲಿ  ಯಾವುದೇ ಹುರುಳಿದ್ದಂತೆ ನನಗನ್ನಿಸೋದಿಲ್ಲ.  ನ್ಯೂಸ್‌ಗಿಂತ ಹೆಚ್ಚಾಗಿ ಒಪಿನಿಯನ್ (Op Ed) ನಿಂದ ಎಲ್ಲ ಅಂಕಣಗಳು ತುಂಬಿರುತ್ತವೆ.  ಕೆಲವೊಂದು ನ್ಯೂಸ್ ಪೇಪರುಗಳು, ಚಾನೆಲ್ಲುಗಳಂತೂ ಆಯಾ ಪೊಲಿಟಿಕಲ್ ಮ್ಯಾನಿಫೆಸ್ಟೋ ಅನ್ನು ಸಪೋರ್ಟ್ ಮಾಡುತ್ತಾ, ತಮ್ಮ ರಾಜಕೀಯ/ದುರೀಣರ ಮೌತ್‌ಪೀಸ್ ಆಗಿ ಬಿಟ್ಟಿವೆ.

***
ನಾನು ಈ ಕೊರೋನ ಬೆಳವಣಿಗೆಯನ್ನು ಪ್ರತಿದಿನ ರಾತ್ರಿ ಒಂಭತ್ತು ಘಂಟೆಗೆ ಪ್ರಸಾರವಾಗುವ ABD News Live ನೋಡುತ್ತೇನೆ.  Linsey Davis ಇದ್ದವರಲ್ಲಿ ಒಳ್ಳೆಯ anchor ಎಂದೇ ಹೇಳಬೇಕು.  ಸ್ಫುಟವಾಗಿ ಯಾವ ತಪ್ಪೂ ಇಲ್ಲದೇ ಉತ್ತಮ ಧ್ವನಿಯಿಂದ ಈಕೆ ABC ನ್ಯೂಸ್ ನೋಡುಗರಿಗೆ ಇಷ್ಟವಾಗುತ್ತಾರೆ.  ಜೊತೆಗೆ, ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವಷ್ಟರ ಮಟ್ಟಿನ objectivity ಯನ್ನು ನಾನು ಈವರೆಗೆ ಕಂಡಿದ್ದೇನೆ, ಅದರಲ್ಲೂ ಯಾವುದೇ "ಸ್ವಾಮಿನಿಷ್ಠೆ" ಈವರೆಗೆ ನನ್ನ ಅರಿವಿಗೆ ಬಂದಿಲ್ಲ.


ಒಂದು ಮೂವತ್ತು ನಿಮಿಷದ ನ್ಯೂಸ್ ದಿನಕ್ಕೊಮ್ಮೆ ಸಿಕ್ಕರೆ ಸಾಕು ಪ್ರಪಂಚದಲ್ಲಿ ಏನಾಗುತ್ತದೆ ಎಂದು ಗೊತ್ತಾಗಲು.  ಅದಲ್ಲದೇ ನಮ್ಮನ್ನೆಲ್ಲ ಯಾವಾಗಲೂ ತಮ್ಮ ಕಡೆಗೆ ತಿರುಗಿಕೊಂಡಿರುವಂತೆ ಮಾಡುವ ಸೋಶಿಯಲ್ ಮೀಡಿಯಾ "ಚಾನಲ್ಲು"ಗಳಂತೂ ಇದ್ದೇ ಇರುತ್ತಾವಲ್ಲ, ನೀವು ಬೇಡವೆಂದರೂ ನಿಮ್ಮನ್ನು ಸುತ್ತಿಕೊಳ್ಳಲು?!

ಅಪ್ಪಿ-ತಪ್ಪಿಯೇನಾದರೂ ಒಳ್ಳೆಯ ಇಂಗ್ಲೀಷ್ ಬರವಣಿಗೆ ಸಿಗುತ್ತದೆಯೆಂದು NY Times ಏನಾದರೂ ನೋಡಿದರೆ ಸಾಕು, Trump ಮಹಾಶಯ ತಪ್ಪು ಮಾಡುವುದನ್ನೇ ಕಾಯುತ್ತಿರುವವರ ಹಾಗೆ ಇಲ್ಲಿನ ರಿಪೋರ್ಟರುಗಳು, ಅಲ್ಲ ಬರಹಗಾರರು ವರದಿ ಒಪ್ಪಿಸಿಯಾರು.  ಅವರಿಗೆ ಮತಿ ಇಲ್ಲ, ಇವರಿಗೆ ಗತಿ ಇಲ್ಲ ಎನ್ನುವುದು ಖಚಿತವಾಯಿತು.

ಅಲ್ಲದೇ ಈ ಸೊಫೆಸ್ಟಿಕೇಟೆಡ್ ಚಾನೆಲ್‌ನ anchor ಗಳೆಲ್ಲ ಯಾವಾಗಲೂ breaking news ಗಳಲ್ಲೇ ತಮ್ಮನ್ನೇ ಕಳೆದುಕೊಂಡು ಅದು ಯಾಕಾದರೂ ಅರಚುತ್ತಿರುತ್ತಾರೋ, ಯಾರು ಬಲ್ಲರು?

Monday, May 18, 2020

ಹುಲು ಮಾನವರು ಹೊರಗಡೆ ಬರುತ್ತಿದ್ದಾರೆ, ಹುಷಾರ್!


... ಹೀಗನಿಸಿದ್ದು, ನಮ್ಮ ಹಿತ್ತಲಿನ ಹಿಂಬಾಗದಲ್ಲಿ ಮೇಯುತ್ತಿದ್ದ ಎರಡು ಜಿಂಕೆಗಳು ಹಟಾತ್ತನೆ ಹೊರಗೆ ಬಂದ ನನ್ನನ್ನು ನೋಡಿ ಓಡಿ ಹೋಗಿದ್ದನ್ನು ಕಂಡು.  ಸುಮಾರು ಎಂಟು ವಾರಗಳ ಕಾಲ ನಾವೆಲ್ಲ ನಮ್ಮ ಚಲನವಲನಗಳನ್ನು ಮನೆಯ ಒಳಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೆವು.  ಈ ಎರಡು ತಿಂಗಳುಗಳಲ್ಲಿ ಹೆಚ್ಚೆಂದರೆ ಇಪ್ಪತ್ತು ಮೈಲುಗಳ ದೂರವನ್ನು ಕಾರಿನಲ್ಲಿ ಕ್ರಮಿಸಿರಬಹುದು, ಅದೂ ಸಹ ಮನೆಯ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಬರುವುದಕ್ಕೆ ಮಾತ್ರ.  ಎರಡು ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದ ಪ್ರಾಣಿ-ಪಕ್ಷಿಗಳು ಮತ್ತೆ ಈ ಮಾನವ ಪ್ರಾಣಿಯ ಸಹವಾಸಕ್ಕೆ ಮರು-ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆಯೋ, ಏನೋ?

ಕೊರೋನಾ ವೈರಸ್ ಹಲವಾರು ತೊಂದರೆಗಳನ್ನು ಮನುಕುಲಕ್ಕೆ ಬಳುವಳಿಯಾಗಿ ಕೊಟ್ಟರೂ ಸಹ, ಅದು ನಿಸರ್ಗಕ್ಕೆ ಒಳ್ಳೆಯದನ್ನೇ ಮಾಡಿದೆ. ಗಾಳಿಯಲ್ಲಿ  ಪೊಲ್ಯೂಷನ್ ಲೆವೆಲ್‌ಗಳು ಕಡಿಮೆಯಾಗಿರುವುದು, ಸಮುದ್ರದಲ್ಲಿ ಮತ್ಸ್ಯ ಸಂತತಿ ಹೆಚ್ಚಾಗಿರುವುದು, ಅಲ್ಲಲ್ಲಿ ಎಸೆಯುವ ಕಸ-ಪ್ಲಾಸ್ಟಿಕ್‌ಗಳ ಕಡಿಮೆಯಾಗಿರುವುದು, ವಾಹನಗಳ ಸಂಚಾರವಿಲ್ಲದೆ ಇಂಧನ ಉಳಿತಾಯವಾಗಿರುವುದು... ಹೀಗೆ ಅನೇಕಾನೇಕ ಅನುಕೂಲಗಳಾಗಿವೆ.

ಆದರೆ, ಈ ಪ್ರಶ್ನೆ ಆಗಾಗ್ಗೆ ಎದ್ದು ನಿಲ್ಲುತ್ತದೆ - ನಮ್ಮ ನಡವಳಿಕೆಯಲ್ಲಿ ಇನ್ನು ಮುಂದಾದರೂ ಬದಲಾವಣೆಗಳನ್ನು ಕಾಣುತ್ತೇವೆಯೋ ಅಥವಾ ಎರಡು ತಿಂಗಳ ನಂತರ ಏನೂ ಆಗಿರದವರಂತೆ ಮೈ ಕೊಡವಿಕೊಂಡು ಮತ್ತೆ ನಮ್ಮ ನಮ್ಮ ಜೀವನಕ್ರಮದಲ್ಲಿ ತೊಡಗಿಕೊಳ್ಳುತ್ತೇವೆಯೋ? ಈ ಕೊರೋನಾ ವೈರಸ್ ಸುದ್ದಿ ಹೆಚ್ಚು ಮಾಡಿತೇ ವಿನಾ, ಹಿಂದಿನ ಮಹಾಮಾರಿಗಳಿಗೆ ಹೋಲಿಸಿದರೆ ಇದರ ಪರಿಣಾಮ ಕಡಿಮೆ ಎಂದೇ ಹೇಳಬೇಕು.  ಹದಿನಾರು ವರ್ಷಗಳ ಹಿಂದೆ ಸುನಾಮಿ ಬಂದಾಗ ಇಷ್ಟೇ ಜನ ಸತ್ತು ಹೋಗಿದ್ದ ನೆನಪು... ಆದರೆ, ಆ ನೆನಪು ನಮ್ಮ ಅವಶೇಷಗಳ ಅಡಿಯಲ್ಲಿ ಅದೆಂದೋ ಸಿಕ್ಕಿ ನಲುಗಿ ಹೋಗಿದೆ. ಅಂತೆಯೇ, ಈ ಕೊರೋನಾ ವೈರಸ್ಸಿನ ಸಾಹಸವೂ ಕೂಡ.   ಕೇವಲ ಮೂರು ಲಕ್ಷ ಜನರು ವಿಶ್ವದಾದ್ಯಂತ ಸತ್ತು ಹೋದರಲ್ಲ ಎಂದು ಸಾಡಿಸ್ಟ್ ಆಗಿ ಈ ಮಾತನ್ನು ಹೇಳುತ್ತಿಲ್ಲ... ಸಾವು ಯಾವತ್ತಿದ್ದರೂ ನೋವಿನ ವಿಚಾರವೇ, ಆದರೆ ನಾವು ಈ ಮಹಾಮಾರಿಯಿಂದೇನೂ ಒಳ್ಳೆಯದನ್ನು ಕಲಿಯದೇ ಇರುವಂತಾದರೆ, ಅದು ನಮ್ಮ ದುರ್ದೈವ ಅಷ್ಟೇ.



ಈ ಕೋವಿಡ್‌ನಿಂದಾಗಿ ವಾಹನ ಅಪಘಾತಗಳು ಕಡಿಮೆಯಾಗಿವೆ.  ತುರ್ತಾಗಿ ಬೇಕಾಗಿಲ್ಲದ ಶಸ್ತ್ರ ಚಿಕಿತ್ಸೆಗಳು ಮುಂದೂಡಲ್ಪಟ್ಟಿವೆ.  ಅನಗತ್ಯವಾಗಿ ಆಸ್ಪತ್ರೆಗಳನ್ನು ಸುತ್ತುವವರ ಸಂಖ್ಯೆ ಕಡಿಮೆ ಆಗಿದೆ.  ಅಂಥವರನ್ನು ಸುಲಿಯುವ ಬಿಸಿನೆಸ್ ಮೈಂಡೆಡ್ ನರ್ಸಿಂಗ್ ಹೋಮ್‌ಗಳು ಬಾಗಿಲು ಹಾಕಿ ಸುಮ್ಮನಿದ್ದವು.  ಎಲ್ಲದಕ್ಕಿಂತ ಮುಖ್ಯ ಅನಗತ್ಯ ಖರ್ಚುಗಳು ಕಡಿಮೆ ಆಗಿದ್ದವು.  ಹೊರಗಡೆಯ ಚಟುವಟಿಕೆಳೆಲ್ಲ ಕಡಿಮೆಯಾದ್ದರಿಂದ ಜೇಬಿಗೂ ಒಂದಿಷ್ಟು ಹೊರೆ ಕಡಿಮೆ ಎನಿಸಿತ್ತು.

ಇದೀಗ ತಾನೆ ಹೊರಬರುತ್ತಿರುವ ನಮ್ಮನ್ನೆಲ್ಲ ನೋಡಿ - ಹುಲುಮಾನವರು ಹೊರಗೆ ಬರುತ್ತಿದ್ದಾರೆ, ಹುಷಾರ್! ಎಂದು ನಮ್ಮ ಸುತ್ತಲಿನ ಎಲ್ಲ ಜೀವಿಗಳೂ ಸಹ ಒಂದು ಕ್ಷಣ ದಂಗಾಗಿರಬಹುದಲ್ಲವೇ?

Wednesday, May 06, 2020

ಗೌಡರು ಚಹಾ ಪುಡಿ ಕದ್ದ ಪ್ರಸಂಗವು...

ಇದು ಮೂರು ದಶಕಗಳ ಹಳೆಯ ಕಥೆಯಾದರೂ ಇವತ್ತಿಗೂ ನಮ್ಮನೆಯಲ್ಲಿ ನಗೆ ಉಕ್ಕಿಸುತ್ತದೆ.  ಮೊನ್ನೆ ಕೊರೋನಾ ವೈರಸ್ ಸ್ಪೆಷಲ್ ಎಂದು ನಮ್ಮ ಹಳವಂಡಗಳನ್ನೆಲ್ಲ ಹರಡಿಕೊಂಡು ಅಕ್ಕ-ತಮ್ಮ ಮಾತನಾಡುತ್ತಿದ್ದಾಗ, ಅಲ್ಲಿಯೂ ನುಸುಳಿತು, ಈ ಚಹಾ ಪುಡಿಯ ಕಥೆ... ಇದನ್ನು ನೆನಪಿಸಿಕೊಂಡಾಗಲೆಲ್ಲ ಇವತ್ತಿಗೂ ನಮ್ಮಲ್ಲಿ ನಗೆ ಉಕ್ಕಿಸುವುದು ಖಂಡಿತ.

***

ನನ್ನ ಅಕ್ಕ ಆನವಟ್ಟಿಯಿಂದ ಹನ್ನೆರೆಡು ಕಿಲೋ ಮೀಟರ್ ದೂರದ ಜಡೆ ಗ್ರಾಮದಲ್ಲಿ ಟೀಚರ್ ಆಗಿ ನೇಮಕಗೊಂಡಾಗ, ಪ್ರತಿನಿತ್ಯವೂ ಬಸ್ಸಿನಲ್ಲಿ ಹೋಗಿ ಬರುವ ಕಷ್ಟವೇಕೆ ಎಂದು ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಇದ್ದಳು.  ಆಗೆಲ್ಲಾ ಬಸ್ಸುಗಳ ಅನುಕೂಲ ಅಷ್ಟು ಇರಲಿಲ್ಲ.  ಬಸ್ಸುಗಳ ಅನುಕೂಲವಿದ್ದರೂ ಹನ್ನೆರಡು ಕಿಲೋಮೀಟರ್ ಅನ್ನು ಕಾಲುನಡಿಗೆಯಲ್ಲಿ ಎರಡೂ ಕಾಲು ಘಂಟೆಯೊಳಗೆ ಕ್ರಮಿಸಬಹುದಿತ್ತು, ಅದೇ ದೂರಕ್ಕೆ ಬಸ್ಸಿನಲ್ಲಿ ಮೂರು ಘಂಟೆಗಳ ಕಾಲ ತೆಗೆದುಕೊಳ್ಳುತ್ತಿತ್ತು.  ಅಲ್ಲದೇ ಎರಡು ಬಸ್ಸುಗಳನ್ನು ಬದಲಾಯಿಸಬೇಕಾಗಿತ್ತು: ಆನವಟ್ಟಿಯಿಂದ ತವನಂದಿಗೆ ಒಂದು, ತವನಂದಿಯಿಂದ ಜಡೆಗೆ ಹೋಗುವ ಬಸ್ಸು ಮತ್ತೊಂದು.

ಮನೆ ಅಂದ ಮೇಲೆ ಒಂದಿಷ್ಟು ಪಾತ್ರೆ-ಪಡಗ ಇವೆಲ್ಲ ಇರಬೇಕಾದ್ದೆ.  ಅಡುಗೆ ಮಾಡಿಕೊಳ್ಳುತ್ತೇವೆ ಎಂದ ಮೇಲೆ, ಎಲ್ಲ ಸೌಲಭ್ಯಗಳ ಜೊತೆಗೆ ಕಾಫಿ-ಟೀ ಮಾಡಿಕೊಳ್ಳುವುದಕ್ಕೂ ಅನುಕೂಲವಿಲ್ಲದಿದ್ದರೆ ಹೇಗೆ? ಈ ರೀತಿ, ನನ್ನ ಅಕ್ಕ ಒಂದು ಸಣ್ಣ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟು ಸಾಮಾನುಗಳ ಜೊತೆಗೆ ಒಂದು ಸಣ್ಣ ವ್ಯವಸ್ಥಿತ ಕುಟುಂಬಕ್ಕೆ ಏನೇನು ಬೇಕೋ ಅಷ್ಟನ್ನೂ ಹೊಂದಿಸಿಕೊಂಡು ನೆಮ್ಮದಿಯಿಂದ ಇದ್ದಳು.

ಹೀಗಿರುವಾಗ ಒಂದು ಸಣ್ಣ ತೊಂದರೆ ಕಾಣಿಸಿಕೊಳ್ಳತೊಡಗಿತು.  ಆಗಿನ ಕಾಲದಲ್ಲಿ ಕಾಫಿ ಪುಡಿ, ಟೀ-ಪುಡಿಯನ್ನು ಬಹಳಷ್ಟು ದಾಸ್ತಾನು ಮಾಡಿ ಯಾರೂ ಇಟ್ಟುಕೊಳ್ಳುತ್ತಿರಲಿಲ್ಲವೆನಿಸುತ್ತದೆ.  ಅಕ್ಕ ತಂದಿಟ್ಟುಕೊಂಡ ಚಾಪುಡಿ ಡಬ್ಬದಲ್ಲಿ ದಿನೇದಿನೇ ಪುಡಿಯ ಪ್ರಮಾಣ ಕಡಿಮೆ ಆಗುವುದನ್ನು ಇವಳು ಗಮನಿಸಿದಳು.  ಇವಳು ಬಿಟ್ಟರೆ ಮತ್ತೆ ಬೇರೆ ಯಾರೂ ಇರದ ಮನೆಯಲ್ಲಿ ಅದು ಖಾಲಿ ಆಗಲು ಹೇಗೆ ತಾನೆ ಸಾಧ್ಯ? ಅದರೂ ಇರಲಿ ಎಂದು ಡಬ್ಬದಲ್ಲಿ ಒಂದು ಗುರುತು ಮಾಡಿ ಮರುದಿನ ಶಾಲೆಗೆ ಹೋಗಿ ಬಂದು ನೋಡುತ್ತಾಳೆ ಮತ್ತೆ ಕಡಿಮೆ ಆಗಿದೆ.  ಇದು ಏನೇ ಕಿತಾಪತಿ ಇದ್ದರೂ ಪಕ್ಕದ ಮನೆ ಗೌಡರ ಕಿತಾಪತಿಯೇ ಸೈ ಎಂದು, ಇವರಿಗೆ ಬುದ್ಧಿ ಕಲಿಸಬೇಕೆಂದು ಯೋಚನೆ ಮಾಡಿದಳು.

ಒಂದು ಪೋರ್ಶನ್ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸೋದು ಸಹಜ.  ಬಾಡಿಗೆ ಕೊಡುವ ಮುಖೇನ ಅರ್ಧ ಮನೆಯನ್ನು ಇನ್ನೊಬ್ಬರಿಗೆ ವಾಸಿಸಲಿಕ್ಕೆ ಕೊಟ್ಟು ಅದರಿಂದ ಒಂದು ನಿರ್ದಿಷ್ಟ ಆದಾಯ ಪಡೆಯುವುದು ಎಲ್ಲರೂ ಬಲ್ಲ ವಾಡಿಕೆ.  ಆದರೆ, ಈ ರೀತಿ ಬಾಡಿಗೆ ಮನೆ ಕೊಟ್ಟವರು, ಟೀ ಪುಡಿಯನ್ನು ಕದಿಯುತ್ತಾರೆ ಎಂದು ಯಾರು ತಾನೇ ಯೋಚಿಸಲಿಕ್ಕೆ ಸಾಧ್ಯ?

ನನ್ನ ಅಕ್ಕ ಅಂದಿನಿಂದ ಟೀ ಮಾಡಿ ಉಪಯೋಗಿಸಿದ್ದ ಪುಡಿಯನ್ನು ಸಂಗ್ರಹಿಸಿ ಇಡಲಾರಂಭಿಸಿದಳು.  ಅದು ಸುಮಾರು ಒಂದು ಡಬ್ಬ ತುಂಬುವ ಪ್ರಮಾಣ ಬರುತ್ತಲೇ, ಅದನ್ನು ಒಟ್ಟು ಗೂಡಿಸಿ, ಎರಡು ಮೂರು ಸಾರಿ ಚೆನ್ನಾಗಿ ಕುದಿಸಿ ಅದರಲ್ಲಿದ್ದ ಚಹಾದ ಗುಣವನ್ನೆಲ್ಲಾ ತೆಗೆದುಬಿಟ್ಟು, ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿ ಹಾಕಿದಳು.  ಅದು ಚೆನ್ನಾಗಿ ಒಣಗಿದ ನಂತರ, ಮೇಲ್ನೋಟಕ್ಕೆ ಕಪ್ಪು ಚಹಾಪುಡಿಯಂತೆ ಕಂಡು ಬಂದರೂ ಅದರಲ್ಲಿ ಚಹಾದ ಒಂದು ಲವಲೇಶ ಅಂಶವೂ ಇದ್ದಿರಲಿಲ್ಲ.  ನಂತರ ಆ ಪುಡಿಯನ್ನೆಲ್ಲ ತನ್ನ ಚಹಾಪುಡಿ ಡಬ್ಬದಲ್ಲಿ ಹಾಕಿಟ್ಟು ಕಳ್ಳ ಬಂದು ಕದಿಯುವುದನ್ನು ನಿರೀಕ್ಷಿಸಿದಳು.

ಒಂದೆರಡು ದಿನದಲ್ಲಿ ಕಳ್ಳ ಬಂದು ಟೀಪುಡಿಯನ್ನು ಕದ್ದಿದ್ದಾಯಿತು.  ಆದರೆ, ಪಕ್ಕದ ಮನೆಯಲ್ಲಿ ಟೀ ಕುದಿಸುತ್ತಿದ್ದವರು ಬೈಯುವುದು ಕೇಳಿ ಬಂದು ಇವಳಿಗೆ ನಗುತಡೆಯದಾಯಿತು.  ಇವಳ ಮನೆಯಿಂದ ಕದ್ದ ಟೀ ಪುಡಿಯಲ್ಲಿ ಟೀ ಅಂಶ ಇದ್ದರೆ ತಾನೆ ಅದು ತನ್ನ ಗುಣವನ್ನು ತೋರಿಸುವುದು.  ಅಂದಿನಿಂದ ಇವಳ ಮನೆಯಲ್ಲಿ ಟೀ ಪುಡಿ ಕಳ್ಳತನವಾಗುವುದು ನಿಂತು ಹೋಯಿತಂತೆ!

Monday, May 04, 2020

ತಿನ್ನಬಾರದ್ದನ್ನ ತಿಂದರೆ...

ತಿನ್ನಬಾರದ್ದನ್ನ ತಿಂದರೆ... ಆಗಬಾರದ್ದು ಆದೀತು... ಇದು ಈ ಹೊತ್ತಿನ ತತ್ವ.  ಮುನ್ನೂರು ಮಿಲಿಯನ್‌ಗೂ ಹೆಚ್ಚು ಜನಸಂಖ್ಯೆ ಹೊಂದಿದ ಯುಎಸ್‌ಎ ನಂತಹ ಮುಂದುವರಿದ ದೇಶದಲ್ಲಿ ವರ್ಷಕ್ಕೆ 60 ರಿಂದ 75 ಸಾವಿರ ಜನರು ತೀರಿಕೊಳ್ಳುತ್ತಿರುವ ವರದಿಗಳು CDCಯ ಸೈಟ್‌ನಲ್ಲಿ ಸಿಗುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಫ್ಲೂ ಎನ್ನುವ ಮಹಾಮಾರಿ (pandemic, ಸರ್ವವ್ಯಾಪಿ ವ್ಯಾಧಿ) ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಂಟಿಕೊಳ್ಳುವ ಈ ಖಾಯಿಲೆಯ ಸೋಂಕು ವೈರಸ್ಸುಗಳು ವರ್ಷಕ್ಕೊಂದು strain ನಂತೆ ಬದಲಾಗಿ ಮನುಕುಲಕ್ಕೆ ಸೆಡ್ಡುಹೊಡೆದಿವೆ ಎಂದರೆ ಅತಿಶಯವೇನೂ ಅಲ್ಲ. ಹೀಗೆ ಹಬ್ಬಿಕೊಳ್ಳುವ ಮತ್ತು ವರ್ಷದಿಂದ ವರ್ಷಕ್ಕೆ ವೃದ್ಧಿಸುವ ವ್ಯಾಧಿಯ ಹಿನ್ನೆಲೆಯಲ್ಲಿ ಚೈನಾದಂತಹ ರಾಷ್ಟ್ರಗಳು ಎದ್ದು ಕಾಣುತ್ತವೆ. ಫ್ಲೂ ಹೇಗೆ ಹುಟ್ಟಿ ಹೇಗೆ ಬೆಳೆಯುತ್ತದೆ ಎಂದು ನೋಡಿದಾಗ ಅದರ ಹಿನ್ನೆಲೆಯಲ್ಲಿ ಅನೇಕ ಪ್ರಾಣಿಗಳೂ ಕಂಡುಬರುತ್ತವೆ!
***


ಚೀನಾದಲ್ಲಿ ಏನೇನಾಗುತ್ತೋ, ಅದೆಷ್ಟು ಸತ್ಯ ಹೊರಗೆ ಬರುತ್ತೋ ಎನ್ನುವುದು ನಮಗೆಲ್ಲ ಮೊದಲಿಂದಲೂ ಇದ್ದ ಸಂಶಯ. ಕಮ್ಯುನಿಸ್ಟ್ ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿ ನಲುಗುವ ಈ ರೀತಿಯ ದೇಶಗಳು ವಿಶ್ವದ ಆರ್ಥಿಕ ಮಾನದಂಡದಲ್ಲಿ ಎಲ್ಲರಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೇಶವಾಗಿವೆ. ಕೆಲವೊಮ್ಮೆ ಸರ್ವಾಧಿಕಾರದ ನಡೆ ಅನೇಕ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದೆ. ರಾತ್ರೋ ರಾತ್ರಿ ಎಲ್ಲರನ್ನು ತೆರವುಗೊಳಿಸಿ ಹೊಸ ಅಣೆಕಟ್ಟುಗಳನ್ನು ಕಟ್ಟಿದ್ದಿದೆ. ಅಲ್ಲದೇ ಈ ರೀತಿಯ ಅಣೆಕಟ್ಟುಗಳು ಒಡೆದು ಹೋದಾಗ ಲೆಕ್ಕಕ್ಕೆ ಸಿಗದ ಮಿಲಿಯನ್ನುಗಟ್ಟಲೆ ಜನರನ್ನು ಇನ್ನೂ ಹುಡುಕುತ್ತಿರುವವರು ಇದ್ದಾರೆ. ಮನೆಗೆ ಒಂದೇ ಮಗು, ಎಂದು ಕಾನೂನನ್ನು ಬಳಸಿ ದೇಶದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳುವಂತಹ ನಿಸರ್ಗದೊಂದಿಗೆ ಹೊಡೆದಾಡುವ ದಾರ್ಷ್ಟ್ಯವನ್ನೂ ಈ ದೇಶ ಪ್ರಕಟಿಸಿದ್ದಿದೆ. ಇಂತಹುದರಲ್ಲಿ ಅಲ್ಲಿನ ದೇಶವಾಸಿಗಳು ತಮಗೆ ಇಷ್ಟವಾದುದ್ದನ್ನು ತಿನ್ನಬೇಕು, ತಿನ್ನಬಾರದು ಎಂದು ಏಕೆ ತಾನೆ ಕಾನೂನನ್ನು ನಿರ್ಮಿಸೀತು?

ಹನ್ನೊಂದು ಮಿಲಿಯನ್ ಜನರಿರುವ ವುಹಾನ್ ನಗರದ ಮಾರ್ಕೆಟ್ಟಿನಲ್ಲಿ ಯಾವ ಯಾವ ಪ್ರಾಣಿಗಳನ್ನು ಮಾರುತ್ತಾರೆ ಎಂದು ಶೋಧಿಸಿದಾಗ ನಾಯಿ, ನವಿಲು, ಆಟರ್ಸ್, ಒಂಟೆ, ಕೊವಾಲ, ಹಾವುಗಳ ಜೊತೆಗೆ ತೋಳದ ಮರಿಗಳು, ಕಾಡು ಬೆಕ್ಕುಗಳು ಕಂಡುಬಂದವು. ಈ ಜನರ ಹೊಟ್ಟೆ ಹೊರೆಯಲು ಅಗಾಧವಾದ ಸೀ ಫುಡ್ ಇದ್ದರೂ ಸಹ ಇಲ್ಲಿನ ಜನರಿಗೆ ಕಾಡಿನಲ್ಲಿ ವಾಸಿಸುವ ಡೆಲಿಕಸಿಗಳೇ ಇಷ್ಟ! ಯುಎಸ್‌ಎನಲ್ಲಿಯೇ ಚೈನಾದ ರೆಸ್ಟೋರೆಂಟುಗಳಲ್ಲಿ ಮೀನು, ಕಪ್ಪೆ, ಲಾಬ್‌ಸ್ಟರ್‌ಗಳನ್ನು ದಯನೀಯ ಸ್ಥಿತಿಯಲ್ಲಿ ತುಂಬಿಟ್ಟುಕೊಂಡು ತಮ್ಮ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಇವರುಗಳು ಇನ್ನು ಮೈನ್ ಲ್ಯಾಂಡ್ ಚೈನಾದ ನೆಲದಲ್ಲಿ ಪ್ರಾಣಿಗಳನ್ನು ಯಾವ ರೀತಿ ಸತಾಯಿಸುತ್ತಿರಬೇಡ. ಒಂದು ಲೆಕ್ಕದಲ್ಲಿ ಇವರೇ ಫಾರ್ಮ್‌ನಲ್ಲಿ ಬೆಳೆಸಿ ಕೊಂದು ತಿನ್ನುವುದಿದ್ದರೆ ಹೇಗಾದರೂ ಇದ್ದುಕೊಂಡಿರಲಿ ಎನ್ನಬಹುದಿತ್ತು. ಆದರೆ, ಕಾಡು ಪ್ರಾಣಿಗಳನ್ನ ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳುವ ಇವರ ಈ ದುರ್ಗುಣವನ್ನ ಯಾವ ರೀತಿಯಿಂದಲೂ ಸಹಿಸಲಾಗದು.  ಮೇಲಾಗಿ ಕಾಡಿನಲ್ಲಿನ ಪ್ರಾಣಿಗಳನ್ನು ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳಲು ಇವರಿಗೆ ಯಾರು ಲೈಸನ್ಸ್ ಕೊಟ್ಟವರು?  ಬಿಲಿಯನ್ನುಗಟ್ಟಲೆ ಬೆಳೆಯುತ್ತಿರುವ ಇವರ ಜನಸಂಖ್ಯೆಯನ್ನು ಮತ್ತಿನ್ಯಾವುದೋ ಜೀವಿ ಕೊಲ್ಲುವದು ನ್ಯಾಯ ಸಮ್ಮತವೇ?

ನಿಸರ್ಗದ ನಿಯಮಗಳನ್ನು ಗಾಳಿಗೆ ತೂರಿ ಅನೇಕ ಇಂಡಸ್ಟ್ರಿಗಳನ್ನು ಕಟ್ಟಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಪೊಲ್ಯೂಷನ್ ಅನ್ನು ಹುಟ್ಟಿಸುವ ಈ ದೇಶದ ವಿರುದ್ಧ ಯಾವುದೇ ಶಕ್ತಿಯೂ ತನ್ನ ಧ್ವನಿ ಎತ್ತುವುದಿಲ್ಲ. ಮಾರುಕಟ್ಟೆಯ ಬೆಲೆ ಮತ್ತು ತನ್ನ ಕರೆನ್ಸಿಯನ್ನು ಡಾಲರ್ ಒಂದಿಗೆ ತುಲನೆ ಮಾಡಿಕೊಂಡು ರಾತ್ರೋ ರಾತ್ರಿ ಡೀವ್ಯಾಲ್ಯೂ ಮಾಡುವ ಈ ದೇಶವನ್ನು ಯಾವ ವಿಶ್ವ ಸಂಸ್ಥೆಯೂ ಎಚ್ಚರಿಸುವ ಗೋಜಿಗೆ ಹೋಗುವುದಿಲ್ಲ. ಮಿತಿಮೀರಿ ಕಟ್ಟಡ, ರಸ್ತೆ, ಡ್ಯಾಮ್ ಮೊದಲಾದವುಗಳನ್ನು ಕಟ್ಟಿ ತನ್ನ ಕಾಡನ್ನು ನಾಶಮಾಡಿಕೊಳ್ಳುವುದು ಬರೀ ಆಂತರಿಕ ಸಮಸ್ಯೆಯಾಗುತ್ತದೆ. ಯಾವುದೇ ಪೊಲ್ಯೂಷನ್ ಕಂಟ್ರೋಲ್ ಅಥವಾ ನ್ಯೂಕ್ಲಿಯರ್ ಪ್ರೊಲಿಫಿರೇಷನ್ ಕಾನೂನಿಗೆ ಸಿಗದೇ ಮನಬಂದಂತೆ ವರ್ತಿಸುವುದರಿಂದ ಹೆಚ್ಚಾಗುವ ಗ್ಲೋಬಲ್ ವಾರ್ನಿಂಗ್ ಎದುರಿಗೆ ಯಾರು ಜವಾಬು ಕೊಡುತ್ತಾರೆ?

***

ಕೊರೋನಾ ವೈರಸ್ ಇಂದು ನಿನ್ನೆಯದಲ್ಲ, ಅದು ಎಂದಿಗೂ ಸಾಯುವುದಿಲ್ಲ. ಎಲ್ಲಿಯವರೆಗೆ ಮನುಕುಲ ತನ್ನನ್ನು ತಾನು ಜನಸಂಖ್ಯೆಯ ಸ್ಫೋಟದ ಮುಖಾಂತರ ದ್ವಿಗುಣ ತ್ರಿಗುಣಗೊಳ್ಳುತ್ತಾ ತನ್ನ ಸುತ್ತಲಿನ ಸಂಪನ್ಮೂಲವನ್ನೆಲ್ಲ ತಿಂದು ತೇಗುತ್ತದೆಯೋ,  ಅಲ್ಲಿಯವರೆಗೆ ಈ ವಿಶ್ವದ ಉಳಿದ ಜೀವಿಗಳಿಗೆ ಉಳಿಗಾಲವಿಲ್ಲ. ಸಣ್ಣ ಏಕಾಣುಕೋಶದ ಜೀವಿಯಿಂದ ಹಿಡಿದು ಆನೆಯವರೆಗೆ, ತಿಮಿಂಗಲದವರೆಗೆ ಎಲ್ಲ ಪ್ರಾಣಿ-ಪಕ್ಷಿಗಳೂ ನಮ್ಮ ಕೃಪೆಯಲ್ಲಿ ಬದುಕುವಂತೆ ಮಾಡಿಕೊಂಡಿರುವುದು ನಮ್ಮ ಮುಂದುವರಿದ ಪೀಳಿಗೆಯ ಹೆಗ್ಗಳಿಕೆ.

***
ಈ ಕೆಳಗಿನ ಚಿತ್ರಗಳನ್ನು ನೋಡಿ:


ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಒಂದು ರೇಟ್ ಫಲಕವನ್ನು ನೋಡಿ!  ನಿಜವೋ ಸುಳ್ಳೋ ಆದರೆ ಇಲ್ಲಿ ಎಲ್ಲ ರೀತಿಯ ಪ್ರಾಣಿಗಳೂ ಕಾಣ ಸಿಗುತ್ತವೆ.




ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಮೀಟ್ ಮಾರ್ಕೆಟ್ಟಿನ ಫೋಟೋ.  

Sunday, February 28, 2016

ಆಜಾದಿಯಿಂದ ಬರಬಾದಿಯವರೆಗೆ...

ಈ ತಿಂಗಳ ೯ನೇ ತಾರೀಖಿನಿಂದ ಜೆಎನ್‌ಯು ನಲ್ಲಿ ಕೆಲವು ವಿದ್ಯಾರ್ಥಿಗಳು ಕವನಗಳನ್ನು ಓದುತ್ತೇವೆ ಎಂದು ಪರ್ಮಿಷನ್ ತೆಗೆದುಕೊಂಡು ಅಫಝಲ್ ಗುರುವನ್ನು ಗಲ್ಲಿಗೇರಿಸಿದ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಅನೇಕ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಕೂಗಲಾಯ್ತು (ಈ ಹೇಳಿಕೆಗಳನ್ನು ಯಾರು ಕೂಗಿದರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದ್ದು, ಈ ಸಂಬಂಧ ಇನ್ನೂ ಪೋಲೀಸ್ ಇನ್ವೆಸ್ಟಿಗೇಷನ್ ನಡೆಯುತ್ತಿದೆ).  ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಜೊತೆಗೆ ವಿದ್ಯಾರ್ಥಿ ನಾಯಕನನ್ನು ಬಂಧಿಸಲಾಯ್ತು.  ನಂತರ ಕೋರ್ಟಿನ ಆವರಣದಲ್ಲೇ ವಿದ್ಯಾರ್ಥಿ ನಾಯಕನನ್ನು ಥಳಿಸಲಾಯ್ತು.  ಈಗ ಐವರು ವಿದ್ಯಾರ್ಥಿಗಳು ತಿಹಾರ್ ಜೈಲಿನಲ್ಲಿ ದಿನಗಳನ್ನು ಎಣಿಸುತ್ತಿದ್ದರೆ, ದೇಶದಾದ್ಯಂತ ಅವರನ್ನು ಮುಕ್ತಗೊಳಿಸಲು ಅನೇಕ ಚಳುವಳಿ/ಆಂದೋಲನಗಳು ನಡೆದಿವೆ.  ಇದು ರಾಜಕೀಯವಾಗಿಯೂ ತೀವ್ರವಾಗಿ ಬೆಳೆದಿದ್ದು ಸಂಸತ್ತಿನಲ್ಲಿ ಪಕ್ಷ-ಪ್ರತಿಪಕ್ಷಗಳ ನಾಯಕರುಗಳು ಅನೇಕ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದು, ದೇಶದಾದ್ಯಂತ ಇದು ಅನೇಕ ವಿಚಾರಧಾರೆಗಳನ್ನು ಹರಿಸಿದೆ.  ಇದಕ್ಕೆಲ್ಲ ಒಂದು ರೀತಿಯ ಟ್ರಿಗ್ಗರ್ ಆಗಿ ಕಳೆದ ತಿಂಗಳು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲ ಹಾಗೂ ಅದನ್ನು ಸರ್ಕಾರ ನಿಭಾಯಿಸಿದ ವಿಧಾನ ಎಂಬ ಮಾತುಗಳೂ ಜಾರಿಯಲ್ಲಿವೆ.  ಇಷ್ಟಕ್ಕೂ ಅಫಝಲ್ ಗುರು, ರೋಹಿತ್ ವೇಮುಲ, ಕನ್ಹೈಯಾ ಕುಮಾರ್, ಉಮರ್ ಖಾಲೀದ್, ಅನಿರ್ಬಾನ್ ಭಟ್ಟಾಚಾರ್ಯ, ಯಾಕೂಬ್ ಮೆಮನ್ ಇವರಿಗೆಲ್ಲ ಏನು ಸಂಬಂಧ?  ಇವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇರಬೇಕೇ? ಅದರಲ್ಲೂ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಯಾರಾದರೂ ಕೂಗಬಹುದೇ?  ಅಕಸ್ಮಾತ್ ಇದು ಒಂದು ರಾಷ್ಟ್ರ ವಿರೋಧೀ ಕಾರ್ಯಾಚರಣೆಯೇ ಆಗಿದ್ದಲ್ಲಿ, ಇದರ ಮೂಲ ಎಲ್ಲಿದೆ? ಇದಕ್ಕೆಲ್ಲ ಹಣಕಾಸು ಒದಗಿಸುವವರು ಯಾರು? ಈ ಘರ್ಷಣೆ ಕೇವಲ ಕಳೆದೆರಡು-ಮೂರು ವರ್ಷಗಳಲ್ಲಿ ಹುಟ್ಟಿದ್ದೇ? ಅಥವಾ ಇದರ ಹಿಂದೆ ಹಲವಾರು ವರ್ಷಗಳಿಂದ ಅನೇಕ ಕಾರಣಗಳು ಇವೆಯೋ?

ಈ ನಿಟ್ಟಿನಲ್ಲಿ ಮೊದಲು ಮುಖ್ಯ ವಿದ್ಯಾರ್ಥಿಗಳ ಬಗ್ಗೆ ತಿಳಿಯೋಣ:
ಕನ್ಹೈಯಾ ಕುಮಾರ್ ಮೂಲತಃ ಬಿಹಾರ್‌ನವನು. ವಿದ್ಯಾರ್ಥಿ ದಿನಗಳಿಂದಲೂ ಕಮ್ಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತನಾಗಿ ದುಡಿದವನು.

ಕೆಲವು ವರ್ಷಗಳಿಂದ ಜೆಎನ್‌ಯು ನಲ್ಲಿ ಆಫ್ರಿಕನ್ ಸ್ಟಡೀಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ೨೦೧೫ ರಲ್ಲಿ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ಆಗಿ ಚುನಾಯಿತನಾದವನು.  ತನ್ನ ಪ್ರಚೋದನಾಕಾರಿ ಭಾಷಣಳಿಂದ ಮುಂದೆ ಬಂದವನು.
ಉಮರ್ ಖಾಲೀದ್ ಮೂಲತಃ ಮಹಾರಾಷ್ಟ್ರದವನು.  ವಿದ್ಯಾರ್ಥಿ ದಿನಗಳಿಂದಲೂ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ ಕಾರ್ಯಕರ್ತನಾಗಿ ದುಡಿದವನು.  ಜೆಎನ್‌ಯುನಲ್ಲಿ ಕೆಲವು ವರ್ಷಗಳಿಂದ ಎಮ್‌ಎ, ಎಮ್‌ಫಿಲ್ ಮಾಡಿ ಮುಗಿಸಿದ್ದು, ಈಗ ಸೋಶಿಯಲ್ ಸೈನ್ಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ಅಫ್‌ಝಲ್ ಗುರು ಕಾರ್ಯಕ್ರಮ ನಡೆಸುವ ಬಗ್ಗೆ ಮೊದಲು ಈತನೇ ಜೆಎನ್‌ಯು ಪರ್ಮಿಷನ್ ಕೇಳಿದ್ದು,  ವಿಶ್ವ ವಿದ್ಯಾನಿಲಯದ ಅಡ್ಮಿನಿಸ್ಟ್ರೇಷನ್ ನಿರಾಕರಿಸಿದ ಮೇಲೆ, ಈತ ಪಾಂಪ್ಲೆಟ್ಟುಗಳನ್ನು ಮುದ್ರಿಸಿ, ಸೋಶಿಯಲ್ ಮೀಡಿಯಾ ಮಾಧ್ಯಮಗಳ ಮೂಲಕ ಅನೇಕ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಎಂದು ಇವನ ಮೇಲೆ ಆರೋಪವಿದೆ.

***

ಭಾರತ ಒಂದು ಪ್ರಬಲವಾದ ರಾಷ್ಟ್ರ, ಪ್ರಜಾಪ್ರಭುತ್ವವನ್ನು ಎಲ್ಲ ಕೋನಗಳಿಂದಲೂ ಅಳೆದರೆ ನಿಜವಾದ ಸ್ವಾತ್ರಂತ್ರ್ಯ ಎಲ್ಲರಿಗೂ ಇದೆ. ಅದು ಅಭಿವ್ಯಕ್ತಿ ಸ್ವಾತ್ರಂತ್ರ್ಯವಾಗಿರಬಹುದು, ಅಥವಾ ಸಂಘಟನಾ ಸ್ವಾತಂತ್ರ್ಯವಾಗಿರಬಹುದು.  ಈ ಮೂಲಭೂತ ಸ್ವಾತಂತ್ರ್ಯವೇ ಒಂದು ಕಾಲದಲ್ಲಿ ನಮ್ಮ ಸ್ವತಂತ್ರ ಹೋರಾಟಗಾರರ ಹಕ್ಕು ಆಗಿತ್ತು.  ಅದರ ಮುಖಾಂತರವೇ ದೇಶವನ್ನು ಆಳುತ್ತಿದ್ದ ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದು, ಸತ್ಯಾಗ್ರಹಗಳನ್ನು ಸಂಘಟಿಸಿ, ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದರಿಂದಲೇ ನಾವು ಬ್ರಿಟೀಷ್ ರಾಜ್ಯದಿಂದ ಮುಕ್ತಿ ಪಡೆದದ್ದು.  ಈ ಸ್ವಾತಂತ್ರ್ಯ ಹೋರಾಟ ಒಂದೆರಡು ವರ್ಷದ್ದಲ್ಲ, ಬದಲಿಗೆ ಹಲವು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಹರಡಿ ಅನೇಕರ ತ್ಯಾಗ ಬಲಿದಾನಗಳಿಂದ ಈಗಿರುವ ಮುಕ್ತ ದೇಶ ಹುಟ್ಟಲು ಸಾಧ್ಯವಾಯ್ತು.  ಆದರೆ ಅಲ್ಲಿ, ಪರ-ವಿರೋಧಗಳ ಬಗ್ಗೆ ಒಮ್ಮತವಿತ್ತು, ಯಾರು ನಮ್ಮವರು ಯಾರು ಪರಕೀಯರು ಎನ್ನುವುದು ಗೊತ್ತಿತ್ತು.  ಜೊತೆಗೆ ನಮ್ಮ ನಾಯಕರೂ ಸಹ ಮಂದವಾದ ಮತ್ತು ತೀವ್ರವಾದದ ಭಿನ್ನತೆಯನ್ನು ಹೊರತು ಪಡಿಸಿದರೆ ದೇಶದ ಸಮಸ್ಯೆಗಳ ಆಳವನ್ನು ತಿಳಿದವರಾಗಿದ್ದರು.  ನಿಜವಾದ ದೇಶಭಕ್ತರಾಗಿದ್ದರು.  ನಮಗೆ ಸ್ವಾತ್ರಂತ್ರ್ಯ ಸಿಗುವುದಕ್ಕೆ ನೂರು ವರ್ಷಗಳ ಮೊದಲೇ ಈ ಮನೋಭಾವ ದೇಶದ ಉದ್ದಗಲಕ್ಕೂ ಹರಡಿತ್ತು.  ವೈಚಾರಿಕ ಪಂಥ, ಭಕ್ತಿ ಪಂಥ, ಉಗ್ರ ಪಂಥ, ಶಾಂತಿ ಪಂಥ - ಈ ಎಲ್ಲರ ಗುರಿ ಬ್ರಿಟೀಷರಿಂದ ನಮ್ಮನ್ನು ಮುಕ್ತಗೊಳಿಸುವುದೊಂದೇ ಆಗಿತ್ತು.  ಅದು ನಿಜವಾದ ದೇಶ ಪ್ರೇಮ, ನಿಜವಾದ ದೇಶಭಕ್ತಿ.  ಲಕ್ಷಾಂತರ ಕುಟುಂಬಗಳು ಸಾವಿಗೀಡಾದವು.  ಯಾವೊಂದು ನೇರ ಲಾಭ ಅಥವಾ ದುರ್ಬಳಕೆ ಇಲ್ಲದ ಶುದ್ಧ ಮನೋಭಾವದ ಅನೇಕ ಯೋಧರು ಹಿಂದೆ ಮುಂದೆ ನೋಡದೆ ಜೀವ ತೆತ್ತರು.

ನಾವು ಇಂದಿನ ರಾಷ್ಟೀಯವಾದಿ ಚಳುವಳಿಗಳನ್ನು ಈ ಒಂದು ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.  ಈ ಮೇಲೆ ಹೇಳಿದ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಬೇಕಾಗಿರುವುದು ಏನು?  ಭಾರತ ಸರ್ಕಾರ ಮತ್ತು ಭಾರತದ ಟ್ಯಾಕ್ಸ್ ಪೇಯರ್ಸ್ ಹಣ ಕೊಟ್ಟು ಓದಿಸುತ್ತಿರುವ ಇವರಿಗೆಲ್ಲ ಅಫಝಲ್ ಗುರು, ಯಾಕೂಬ್ ಮೆಮನ್ ಆಪ್ತರೇಕಾಗುತ್ತಾರೆ?  ಈ ತೀವ್ರತರ ಆಲೋಚನೆಗಳು ಕೇವಲ ಒಂದೆರಡು ವರ್ಷಗಳಲ್ಲಿ ಹುಟ್ಟದೇ ಅನೇಕ ಮೈತ್ರಿ ಪಕ್ಷಗಳು ಹಲವು ವರ್ಷಗಳಿಂದ ರಾಜಕೀಯ ವಾತಾವರಣವನ್ನು ದೇಶದಾದ್ಯಂತ ಹುಟ್ಟು ಹಾಕಿರುವುದು ನಿದರ್ಶನಕ್ಕೆ ಬರುತ್ತದೆ.  ವಿಶ್ವ ವಿದ್ಯಾನಿಲಯಗಳಲ್ಲಿ ರಾಜಕೀಯ ಪ್ರೇರಣೆ ಇರಬೇಕೆ ಬೇಡವೇ?  ವಿಶ್ವವಿದ್ಯಾನಿಲಯ ಮುಕ್ತ ಆಲೋಚನೆಗಳನ್ನು ಬೆಳೆಸಬೇಕೆ ಅಥವಾ ಕೇವಲ ಶೈಕ್ಷಣಿಕ ಸಂಬಂಧಿ ಆಲೋಚನೆಗಳನ್ನು ಮಾತ್ರ ಬೆಳೆಸಬೇಕೆ?  ಈ ಪ್ರಶ್ನೆಗಳು ನಮ್ಮ ನಂಬಿಕೆಯ ಬುಡವನ್ನು ಅಲುಗಾಡಿಸುತ್ತವೆ.
ಈ ಹೈದರಾಬಾದ್ ಮತ್ತು ಜೆಎನ್‌ಯು ವಿದ್ಯಮಾನಗಳನ್ನು ಕೂಲಂಕಶವಾಗಿ ನೋಡಿದಾಗ ಅನೇಕ ಮೂಲ ಕಾರಣಗಳು ಗೊತ್ತಾಗುತ್ತವೆ:

ಭಾರತ ಸರ್ಕಾರದ ಎಚ್.ಆರ್.ಡಿ. ಮಿನಿಸ್ಟ್ರಿ ಅನೇಕ ದಲಿತ ಸಂಘಟನೆಗಳನ್ನು ಮಟ್ಟ ಹಾಕಲು ಪ್ರಯತ್ನಿಸಿತು ಎನ್ನುವ ಆರೋಪವಿದೆ.  ತಮಗೆ ಬೇಕಾದವರನ್ನು ಮಾತ್ರ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ ಎಂಬ ಆರೋಪವಿದೆ.  ರೋಹಿತ್ ವೇಮುಲನ ಸಾವನ್ನು ರಾಜಕೀಯ ದಾಳವಾಗಿ ಬಳಸಲಾಯ್ತು ಎನ್ನುವ ಆಲೋಚನೆಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಮೂಲ ಸ್ಥಂಭಗಳಾದ ಮುಕ್ತ ಆಲೋಚನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂಬುದು.  ಇದಕ್ಕೂ ಒಂದು ಹೆಜ್ಜೆ ಹಿಂದೆ ಹೋಗಿ ನೋಡಿದರೆ ದೇಶದ ಉದ್ದಗಲಕ್ಕೂ ಮಕ್ಕಳಿಗೆ ಯಾವ ರೀತಿಯಲ್ಲಿ ಇತಿಹಾಸವನ್ನು ಬೋಧಿಸಲಾಗಿದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.  ಈ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಬಲಿ ಕೊಟ್ಟು ದೇಶದ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ         ಗಲ್ಲಿಗೊಳಗಾದ ಅಫಝಲ್ ಗುರು ಮತ್ತು ಯಾಕೂಬ್ ಮೆಮನ್ ಪರ ಏಕೆ ನಿಲ್ಲುತ್ತಾರೆ ಎಂಬುದನ್ನು ಯೋಚಿಸಬೇಕಾಗುತ್ತದೆ.  ನಾವೊಂದು ಸಮಸ್ಯೆಯ ವಿರುದ್ಧ ಹೋರಾಟ ಮಾಡಿದಾಗ, ನಾವು ಎಲ್ಲಿ ಗೆರೆಯನ್ನು ದಾಟುತ್ತಿದ್ದೇವೆ ಎನ್ನುವ ತಿಳುವಳಿಕೆ ಈ ವಿದ್ಯಾರ್ಥಿಗಳಿಗೆ ಇಲ್ಲದಿರುವುದು ಗೊತ್ತಾಗುತ್ತದೆ, ಜೊತೆಗೆ ರಾಜಕೀಯ ದಾಳಗಳಿಗೆ ಬಲಿಪಶುಗಳಾದ ಮೌಢ್ಯವೂ ಎದ್ದು ಕಾಣುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ವಿದ್ಯಾರ್ಥಿಗಳು ನಡೆಸುವ ಧರಣಿ ಕಾರ್ಯಕ್ರಮಗಳಿಗೆ ಹಣಕೊಡುವವರಾರು? ಅಫಝಲ್ ಗುರುವಿನ ಸಾವಿರಾರು ಫೋಟೋಗಳನ್ನು ಪ್ರಿಂಟ್ ಮಾಡಲು ಯಾರು ಹಣಕೊಟ್ಟರು?  ಅಫಝಲ್ ಗುರುವಿಗೆ ಅನ್ಯಾಯವಾಗಿದೆ ಎಂದುಕೊಂಡರೆ ಅದನ್ನು ಅವನು ಬದುಕಿದ್ದಾಗ ಸುಪ್ರೀಮ್ ಕೋರ್ಟ್‌ನಲ್ಲಿ ಕಂಟೆಸ್ಟ್ ಏಕೆ ಮಾಡಲಿಲ್ಲ?  ಇದರ ಹಿಂದೆ ನಮ್ಮ ದೇಶದ ವಿವಿಧ ರಾಜಕೀಯ ಶಕ್ತಿಗಳು ಮಾತ್ರ ಇವೆಯೇ? ಅಥವಾ ಹೊರ ದೇಶಗಳ ಹುನ್ನಾರವಿದೆಯೇ? ಇಷ್ಟು ದಿನ ಕೇವಲ ಮೂಲಭೂತವಾದದ ಬಗ್ಗೆ ಓದುತ್ತಿದ್ದ ನಮಗೆ ಈಗ ಹಿಂದೂ ವಿದ್ಯಾರ್ಥಿಗಳು ಒಂದು ದೇಶದ ಉಚ್ಛ ನ್ಯಾಯಾಲಯ ದೇಶದ್ರೋಹಿಯೆಂದು ಪರಿಗಣಿಸಿದ ಕೆಲವು ಮುಸ್ಲಿಂ ಪ್ರತಿವಾದಿಗಳನ್ನು ದೈವತಾ ಸ್ವರೂಪಿಗಳೆಂದು ಕರೆಯುವಷ್ಟರ ಮಟ್ಟಿಗೆ ದೇಶದ ವಿದ್ಯಾರ್ಥಿಗಳ ನೈತಿಕ ತಿಳುವಳಿಕೆಯ ಬಗ್ಗೆ ಚಿಂತೆ ಪಡುವಂತೆ ಮಾಡಿದೆ.

***
ಘೋಷಣೆಗಳನ್ನು ಯಾರೇ ಕೂಗಿರಲಿ, ಅವುಗಳನ್ನು ಕೂಗಿದ್ದಂತೂ ನಿಜ.  ಒಬ್ಬನ ವಾಕ್ ಸ್ವಾತಂತ್ರ್ಯದಲ್ಲಿ ಏನೇನೆಲ್ಲ ಮಾಡಲು ಸಾಧ್ಯವಿದೆ?  ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರಿಗೆ ಜಗತ್ತಿನಾದ್ಯಂತ ಉಳಿದ ದೇಶಗಳು ಯಾವ ರೀತಿಯ ಟ್ರೀಟ್‌ಮೆಂಟ್ ಅನ್ನು ಕೊಡುತ್ತವೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ.  ನಮ್ಮ ಸುತ್ತ ಮುತ್ತ ಕಮ್ಯೂನಿಷ್ಟ್ ದೇಶಗಳಿವೆ, ಅವುಗಳಲ್ಲಿ ನಡೆಯುವ ಸುದ್ದಿಯೂ ಹೊರಬರದಂತೆ ನರಮೇಧ ನಡೆದಾಗಲೆಲ್ಲ ಇದೇ ವಿದ್ಯಾರ್ಥಿಗಳು ಚಳುವಳಿ ನಡೆಸುತ್ತಾರೆಯೇ? ಅವರ ಪ್ರತೀಕಾರದ ಪರಿಮಿತಿ ಎಷ್ಟು?  ನಮ್ಮ ಪಕ್ಕದ ದೇಶಗಳಲ್ಲಿ ನೂರಾರು ಜನ ಅಮಾಯಕರು ಸತ್ತಾಗ ಇದೇ ವಿದ್ಯಾರ್ಥಿಗಳ ತಿಳುವಳಿಕೆಗೆ ಅದು ನಿಲುಕದ ವಿಷಯವಾಗಿರುವುದೇಕೆ?  ಕಮ್ಯೂನಿಸಮ್‌ನ ತತ್ವಗಳೇನು? ಹಾಗೂ ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರವೇನು ಎಂಬುದನ್ನು ಯೋಚಿಸಲಾರದಷ್ಟು ಈ ವಿದ್ಯಾರ್ಥಿಗಳು ಶೂನ್ಯರಾದರೇಕೆ?
ಈ ವಿದ್ಯಾರ್ಥಿಗಳು ಅನವಶ್ಯಕವಾಗಿ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವಾಗ ನನಗೆ ಬೇಸರವಾಗುವ ಒಂದು ಸಂಗತಿ ಎಂದರೆ ನಮ್ಮ ದೇಶದಲ್ಲೇ ಅನೇಕ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿರುವಾಗ ಅವುಗಳನ್ನು ನಿರ್ಮೂಲನ ಮಾಡಲು ಈ ವಿದ್ಯಾರ್ಥಿಗಳು ಯಾಕೆ ಯೋಚಿಸಬಾರದು?  ವಿಜ್ಞಾನ, ತಂತ್ರಜ್ಞಾನ ಮುಂದುವರೆದು ಜಗತ್ತಿನ ಉಳಿದ ಯುವಜನತೆ ಅನೇಕ ಉನ್ನತ ಚಿಂತನೆ, ಧೋರಣೆಗಳಲ್ಲಿ ತೊಡಗಿದ್ದರೆ ನಮ್ಮ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಫಝಲ್ ಗುರುವಿನ ಹಿಂದೆ ಏಕೆ ಬಿದ್ದಿದ್ದಾರೆ?  ಇವರೇ ನಮ್ಮ ಮುಂದಿನ ನಾಗರೀಕರೆ? ಇವರೇ ನಮ್ಮ ಮುಂದಿನ   ಲೀಡರುಗಳೇ?

ಒಂದು ದೇಶದ ಸತ್ಯಾನಾಶ ಎಂದರೆ ಏನು? ಭಾರತವನ್ನು ಸಂಪೂರ್ಣ ಬುಡಮೇಲು ಮಾಡುವುದೇ? ಅಥವಾ ಅದನ್ನು ತುಂಡು ತುಂಡು ಮಾಡಿ ವಿಭಜನೆ ಮಾಡುವುದೇ?  ನಾವೆಲ್ಲ ಇಂದೂ ಸಹ ಬೇರೆ ಬೇರೆ ಪ್ರಾಂತ್ಯದವರೇ? ಅನೇಕ ಭಾಷೆ ಸಂಸ್ಕೃತಿ ವೈವಿಧ್ಯತೆಗಳ ಪ್ರತೀಕ ಭಾರತ, ಇಂಥ ಭೂಮಿಯಲ್ಲಿ ಅನೇಕ ವೈರುಧ್ಯಗಳೂ ಇರುವುದು ಸಹಜ.  ಆ ವೈರುಧ್ಯಗಳನ್ನು ನಾವು ವಿಚಾರವಾದಿಗಳಾಗಿ ಬಗೆಹರಿಸಿಕೊಳ್ಳುತ್ತೇವೆಯೋ ಅಥವಾ ಕಾನೂನು ಅಧಿಕಾರಗಳಿಂದ ಸಂಭ್ರಮಿಸಿಕೊಳ್ಳುತ್ತೇವೆಯೋ ಅನ್ನುವುದು ಮುಖ್ಯವಾಗುತ್ತದೆ.  ಇಂದಿನ ಮಾಧ್ಯಮಗಳು ದೂರದ ದೇಶಗಳಿಗೆ ಹರಡುತ್ತಿರುವ ಬಿಸಿಬಿಸಿ ಸುದ್ದಿ ಈ ವರೆಗೆ ನಮ್ಮ ದೇಶದ ವಿದ್ಯಾರ್ಥಿಗಳ ಬಗ್ಗೆ ಒಳ್ಳೆಯ ಮನೋಭಾವನೆಯನ್ನು ಮೂಡಿಸಲು ಸೋತಿವೆ ಎಂದು ಹೇಳಲು ಖೇದವಾಗುತ್ತದೆ.

ಒಟ್ಟಿನಲ್ಲಿ ಕಳೆದ ಇನ್ನೂರು ವರ್ಷಗಳ ಸತತ ಹೋರಾಟದ ಬಳಿಕ ದೊರೆತ ನಮ್ಮ ಆಜಾದಿ, ಸ್ವಾತಂತ್ರ್ಯಾ ನಂತರ ಕೇವಲ ಆರು ದಶಕಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ದೇಶದ ಬರಬಾದಿಯ ಕಡೆಗೆ ಯೋಚಿಸುವಂತೆ ಮಾಡಿದ್ದು ನಿಜವಾಗಿಯೂ ನಮ್ಮ ದುರ್ದೆಶೆ.

***
ಈ ಲೇಖನ ಈ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.
 

Saturday, January 24, 2009

ಆಹಾ, ಜನವರಿ!

ಓಹ್, ಈ ಜನವರಿಯಲ್ಲಿ ಅದೇನೇನೆಲ್ಲಾ ಆಗ್ತಾ ಇದೆ! ಓಬಾಮಾ ಪಬಾಮಾ ಪ್ರೆಸಿಡೆಂಟ್ ಆಗಿರೋ ಬಗ್ಗೆ ಬೇರೆ ಎಲ್ರೂ ಬರೀತಾ ಇರೋವಾಗ ನಾನೂ ಅದನ್ನೇ ಬರೆದ್ರೆ ಏನ್ ಪ್ರಯೋಜನ? ಈ ಜನವರಿಯ ಇಪ್ಪತ್ತನಾಲ್ಕು ದಿನಗಳಲ್ಲಿ ಆಗ್ಲೇ ಹನ್ನೊಂದು ಹನ್ನೆರಡು ಪರ್ಸೆಂಟ್ ಡೌನ್ ಆಗಿರೋ ನನ್ನ ಪೋರ್ಟ್‌ಫೋಲಿಯೋ ಬಗ್ಗೆ ಚಿಂತಿಸ್ಲೋ ಅಥವಾ ಇತ್ತೀಚೆಗೆ ನನ್ನ ಜೊತೆಯಾದ ಹೊಸ ಬಾಸ್ ಹಾಗೂ ಹೊಸ ಕೆಲಸಗಳ ಬಗ್ಗೆ ಕೊರೆದರೆ ಹೇಗೆ?

ಈ ಇಂಗ್ಲೀಷ್ ಕ್ಯಾಲೆಂಡರಿನ ಜನವರಿ ಅದೆಷ್ಟು ಹೊಸದನ್ನು ತಂದಿದೆ ಈ ವರ್ಷ - ಅಮೇರಿಕದ ಹೊಸ ಪ್ರೆಸಿಡೆಂಟ್ ಓಬಾಮ ಸಿಂಹಾಸನವನ್ನೇರಿದ್ದು, ಆ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಲಕ್ಷ ಜನ ಸೇರಿದ್ರಂತಲ್ಲಪ್ಪ! ಅಬ್ಬಾ, ಅದೆಂತಾ ಪವರ್ ಇದ್ದಿರಬಹುದು?

’ಲೋ, ಸುಮ್ನಿರಯ್ಯಾ. ನಮ್ಮ್ ದೇವೇಗೌಡ್ರು ಮುಖ್ಯಮಂತ್ರಿ ಆದ ದಿನ ಇದಕ್ಕಿಂತ ಹೆಚ್ಚು ಜನಗಳನ್ನ ಸೇರಿಸಿರ್‌ಲಿಲ್ವಾ? ದಾವಣಗೆರೇಲಿ ಬಂಗಾರಪ್ಪ ಒಂದೇ ಸಮಾವೇಶಕ್ಕೆ ಹತ್ತು ಲಕ್ಷ ಜನ ಸೇರ್ಸಿದ್ ಮುಂದೆ ಅಮೇರಿಕದ ಮಿಲಿಯನ್ನು ಯಾವ ಲೆಕ್ಕ?’ ಎಂದು ಎಲ್ಲಿಂದಲೋ ಯಾವ್ದೋ ಧ್ವನಿ ಕೇಳಿದ ಹಾಗಾಯ್ತು, ಒಡನೇ ಸುಬ್ಬನ ಕಾಲ್ ಸ್ಪೀಕರ್ ಫೋನಿನಲ್ಲಿ ಬಂದ ಅನುಭವ, ಆದ್ರೆ ಇವೆಲ್ಲ ನನ್ನ ಭ್ರಮೆ ಅಂದ್‌ಕೊಂಡು ಮುಂದೆ ಯೋಚಿಸ್ತಾ ಹೋದೆ. ಆ ಪಾಟಿ ಜನ ವೋಟ್ ಹಾಕಿದ್ರಂತಲ್ಲ ಈ ಸರ್ತಿ, ಪಾಪ ಕರಿಯ ಮೇಲ್ ಬಂದವನೇ, ಮೊದಲ್ನೇ ಸರ್ತಿ ದಾಖಲೆ ನಿರ್ಮಿಸ್ಲಿ ಅಂತ ಇದ್ದಿರಬಹುದೋ ಏನೋ.

’ಯಾರ್ ಪ್ರೆಸಿಡೆಂಟ್ ಆದ್ರೆ ನಮಗೇನ್ ಸ್ವಾಮೀ? ದುಡಿಯೋ ಹೆಸರಿಗೆ ಬಂದ ಬಡ್ಡೀ ಹೈಕ್ಳು ನಾವು, ಅದೇ ನಮ್ ಕಾಯ್ಕ ನೋಡಿ!’ ಅಂತ ಮತ್ತೊಂದು ಧ್ವನಿ ಕೇಳಿಸ್ತು, ಈ ಸರ್ತಿ ನಿಜವಾಗ್ಲೂ ಯಾರೋ ನನ್ನ ತಲೆ ಒಳಗೆ ಸೇರಿಕೊಂಡು ನುಡಿದ ಅನುಭವ.

ಜನಗಳು ಅಂದ್ಕೊಂಡವರೆ, ಪ್ರೆಸಿಡೆಂಟ್ ಬದಲಾದ ಕೂಡ್ಲೆ ಎಲ್ಲವೂ ದಿಢೀರನೆ ಬದಲಾಗುತ್ತೆ ಅಂತ. ಡಿಸೆಂಬರ್ ಮುವತ್ತೊಂದರಿಂದ ಜನವರಿ ಒಂದರೊಳಗೆ ಏನೂ ಬದಲಾಗೋದಿಲ್ಲ, ಕ್ಯಾಲೆಂಡರ್ ಒಂದನ್ನು ಬಿಟ್ಟು. (ಅದೇ ಚೈತ್ರ ಮಾಸ ಶುರುವಾಗಲಿ ನೋಡಿ ಬೇಕಾದಷ್ಟು ಬದಲಾವಣೆಗಳು ನಿಮಗೆ ಅರಿವಿಗೆ ಬಂದೋ ಬರದೆಯೋ ನಡೆದೇ ಇರತ್ತೆ.)

ಸಾವಿರಾರು ಜನಗಳು ಕೆಲ್ಸ ಕಳೆದುಕೊಂಡ್ರು. ಭಾರತದಲ್ಲಿ ನಂಬರ್ ಮೂರನೇ ಕಂಪನಿಯ ಗುರುವಾಗಿದ್ದವರು ಶಾಪವಾದವರು. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗವನ್ನು ಮೆರೆದವರು ಇಂದು ಇತಿಹಾಸವಾಗಿ ಹೋದರು. ಎಂಟು ವರ್ಷ ಆಳ್ವಿಕೆ ಮಾಡಿ ಹೊರಗೆ ಹೋದ ಬುಷ್ ಸರ್ಕಾರದ ಲೆಕ್ಕಾಚಾರವನ್ನು ಯಾರೂ ಯಾಕೆ ಮಾಡುತ್ತಿಲ್ಲ? ಅಂದು ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡದ್ದರ ಲೆಕ್ಕವನ್ನು ಯಾರೂ ಯಾಕೆ ಕೇಳುತ್ತಿಲ್ಲ?

ಇನ್ನೇನು ಜನವರಿ ಮುಗಿಯುತ್ತಾ ಬಂದರೂ ಆರ್ಥಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಈಗ ಬಂದು ಹಾಗೆ ಹೋಗೋ ೨೦೦೯ ಇಸ್ವಿ ೨೦೦೮ ಕ್ಕಿಂತ ಕೆಟ್ಟದಾಗಿರುತ್ತೆ ನೋಡ್ತಾ ಇರಿ, ಅಂತ ಎಷ್ಟೋ ಜನ ಈಗಾಗ್ಲೇ ಹೆದರ್ಸಿರೋದ್ರಿಂದ್ಲೇ ಬಹಳಷ್ಟು ಜನ ಕನ್ಸರ್‌ವೇಟೀವ್ ಆಗಿ ಆಲೋಚಿಸ್ತಾ ಇರೋದು. ನೋಡೋಣ ಇನ್ನೇನು ಕಾದಿದೆ ಈ ವರ್ಷ ಅಂತ.

Sunday, August 10, 2008

ನಯಾಗರ ಜಲಪಾತ, ಕಾಮನಬಿಲ್ಲು ಹಾಗೂ ಡೆಲಾವೇರ್ ವ್ಯಾಲಿ

ಅಮೇರಿಕಕ್ಕೆ ಬಂದ ಹೊಸದರಲ್ಲಿ ಮೊಟ್ಟಮೊದಲು ನಾನು ನಯಾಗರ ಜಲಪಾತವನ್ನು ನೋಡಲು ಹೋಗಿದ್ದು ೧೯೯೮ ರಲ್ಲಿ, ಹತ್ತು ವರ್ಷಗಳಲ್ಲಿ ನಾನು ಒಂದಲ್ಲ ಒಂದು ಕಾರಣದಿಂದ ನಯಾಗರಕ್ಕೆ ಹೋಗಿ ಬರುತ್ತಲೇ ಇದ್ದೇನಾದರೂ ಮೊದಲ ಸಲವೊಂದನ್ನು ಬಿಟ್ಟು ಇನ್ನುಳಿದ ಸಲವೆಲ್ಲ ನಾನು ಹೊಸದಾಗಿ ನಯಾಗರ ಫಾಲ್ಸ್ ಅನ್ನು ನೋಡಲು ಹೋಗುವವರ ಜೊತೆಗೆ ಹೋಗಿದ್ದೇನೇದ್ದಾರಿಂದ ನನ್ನ ಪಾಲಿನ ಪ್ರವಾಸವನ್ನು ನಯಾಗರವನ್ನು ನೋಡುವವರನ್ನು ನೋಡಲು ಹೋಗುವುದು ಎಂದು ವರ್ಣಿಸುವುದು ಸರಿ ಎನ್ನಿಸುತ್ತೆ.

ನಮ್ಮ ಮಲೆನಾಡಿನ ಆಜುಬಾಜಿನವರು, ಈಗಾಗಲೇ ನಮ್ಮೂರಿನ ಹತ್ತಿರವಿರುವ ಜೋಗ ಗೇರುಸೊಪ್ಪೆ ಜಲಪಾತವನ್ನು ನೋಡಿದವರು ನಯಾಗರವನ್ನು ನೋಡಿ ’ಇಷ್ಟೇನಾ!’ ಎಂದು ಉದ್ಗರಿಸುವುದನ್ನು ನಾನು ಗಮನಿಸಿದ್ದೇನೆ. ಕೃತಕವಾಗಿ ನಿರ್ಮಿತಗೊಂಡ ಜಲಪಾತಗಳ ಮಜಲು ಹಾಗೂ ಮನರಂಜನೆಗೆಂದು ಹೆಚ್ಚು ನೀರನ್ನು ಹಾಯಬಿಟ್ಟಿರುವುದು ಮುಂದುವರೆದ ದೇಶಗಳಲ್ಲಿ ಕಣ್ಣಿಗೆ ಕೊಬ್ಬಿದಂತೆ ಕಾಣುವ ಎಲ್ಲ ಅಂಶಗಳಲ್ಲಿ ಒಂದಾಗುವುದಕ್ಕೆ ಮೊದಲು ನಾವು ಬೇಡವೆಂದರೂ ನಮ್ಮವರ ಮನಸ್ಸು ಒಂದಲ್ಲ ಒಂದು ತುಲನೆಯಲ್ಲಿ ತೊಡಗಿರುತ್ತದೆ. ಆ ತುಲನೆಯ ಹಿನ್ನೆಲೆಯಲ್ಲೇ ನಮ್ಮೂರಿನ ಸಹಜವಾದ ಜೋಗದ ಆರ್ಭಟದ ಮುಂದೆ ಇಲ್ಲಿನ ಕೊಬ್ಬಿನ ಜಲಪಾತಗಳು ಸಪ್ಪೆಯಾಗಿ ಕಾಣುತ್ತವೆ, ಇದು ನನ್ನೊಬ್ಬನ ಮಾತಂತೂ ಖಂಡಿತ ಅಲ್ಲ.

(ಜೊತೆಗೆ, ನಾವು ಇಲ್ಲಿ ಏನನ್ನೇ ಮಾಡಿದರೂ ದುಡಿದರೂ ಕಡಿದರೂ ಅವುಗಳಿಗೆಲ್ಲ ಒಂದು ಅರ್ಥ ಸಿಗುವುದು ನಮ್ಮ ಅದೇ ತುಲನೆಯಲ್ಲೇ ಎಂಬುದು ಇನ್ನೊಂದು ದಿನದ ವಿಚಾರವಾಗಲಿ!).


ನಯಾಗರದಿಂದ ಮರಳಿಬರುತ್ತಿರುವಾಗ ರೂಟ್ ೮೧ ರಿಂದ ರೂಟ್ ೮೦ ಕ್ಕೆ ಇನ್ನೇನು ಬಂದು ತಲುಪಬೇಕು ಎನ್ನುವ ಹೊತ್ತಿಗೆ ಪೆನ್ಸಿಲ್‌ವೇನಿಯಾ-ನ್ಯೂ ಜೆರ್ಸಿ ರಾಜ್ಯಗಳ ಗಡಿಯಲ್ಲಿ ಸಿಕ್ಕ ಕಾಮನಬಿಲ್ಲಿನ ಚಿತ್ರ.

ನಾನು ಇಂತಹ ಸುಂದರವಾದ ಕಾಮನಬಿಲ್ಲನ್ನು ನೋಡಿ ಅದೆಷ್ಟು ವರ್ಷವಾಗಿತ್ತೋ ಏನೋ? ಇತ್ತೀಚೆಗಂತೂ ಮಳೆಯಲ್ಲಿ ನೆನೆಯುವುದೂ ದಶಕಕ್ಕೊಂದು ದಿನದ ಅನುಭವವಾಗಿ ಹೋಗಿದೆ ಎನ್ನೋದು ನನ್ನೊಳಗಿನ ಮತ್ತೊಂದು ಕೊರಗು, ಇನ್ನು ಮಳೆ ಬೀಳುವಾಗ ಬಿಸಿಲಿದ್ದು, ಬಿಸಿಲಿರುವಾಗ ನಾವಿದ್ದು, ನಾವಿರುವಾಗ ಪುರುಸೊತ್ತು ಇದ್ದು, ಪುರುಸೊತ್ತು ಇದ್ದಾಗ ಹೊರಗಡೆ ಹೋಗಿ ನೋಡುವ ಮನಸ್ಸಿರುವ ಸಾಧ್ಯತೆ ಎಷ್ಟರ ಮಟ್ಟಿಗೆ ಸಾಧ್ಯ ನೀವೇ ಹೇಳಿ.

ಊಹ್ಞೂ, ’ಮಳೆ ಬಿಲ್ಲು ಬಂದರೇನು, ಮತ್ತೇನೇ ಆದರೇನು, ಕಾರು ನಿಲ್ಲೋಲ್ಲ, ಬ್ರೇಕು ಹಿಡಿಯೋಲ್ಲ’ ಎಂದು ಡ್ರೈವರ್ ಬದಿಯ ಕಿಟಕಿಯ ಗಾಜನ್ನು ಇಳಿಸಿ ಘಂಟೆಗೆ ಅರವತ್ತೈದು ಮೈಲು ವೇಗವಾಗಿ ಹೋಗುವ ಕಾರಿನಲ್ಲೇ ಈ ಚಿತ್ರವನ್ನು ಹಿಡಿಯುವಂತಾಯ್ತು. ಆ ತುದಿಯಿಂದ ಈ ತುದಿಗೆ ಬಾಗಿದ ಬಿಲ್ಲನ್ನು ಸೆರೆ ಹಿಡಿಯಲು ಹಲವಾರು ಆತಂಕಗಳು, ಅವುಗಳ ಮಧ್ಯೆ ಚಿತ್ರವನ್ನೂ ಹಿಡಿದದ್ದಾಯ್ತು, ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಮ್ಮ ಜೊತೆಗೇ ಪಯಣಿಸಿದ ಕಾಮನಬಿಲ್ಲನ್ನು ನೋಡಿ ಹರ್ಷಿಸಿದ್ದೂ ಆಯ್ತು.





ಇನ್ನೇನು ರೂಟ್ ೮೦ ಹತ್ತಿ ಮನೆಯಿಂದ ಮುವತ್ತು ಮೈಲು ದೂರವಿದೆ ಎನ್ನುವಾಗ ಡೆಲಾವರ್ ರಿವರ್ ವ್ಯಾಲಿಯಲ್ಲಿ ಸೆರೆಹಿಡಿದದ್ದೇ ಮೂರನೇ ಚಿತ್ರ. ಈ ತಾಣ ಯಾವತ್ತೂ ನನ್ನ ಮನಸ್ಸಿಗೆ ಮುದಕೊಡುತ್ತದೆ. ನಮ್ಮ ಕೊಡಚಾದ್ರಿಯ ಚಾರಣದ ಅನುಭವವನ್ನು ಕೊಡುವ ಅನೇಕ ಹೈಕಿಂಕ್ ಟ್ರೇಲ್‌ಗಳನ್ನು ಇಲ್ಲಿ ಕಂಡುಕೊಂಡಿದ್ದೇನೆ. ಅಪರೂಪಕ್ಕೊಮ್ಮೆ ಅಲ್ಲಲ್ಲಿ ಇನ್ನೂ ಹೆಸರಿಡದ ಝರಿಗಳನ್ನು ಕಂಡು ಖುಷಿಪಟ್ಟಿದ್ದೇನೆ. ಎಂತಹ ಬೇಸಿಗೆಯಲ್ಲೂ ತನ್ನೊಡಲಲ್ಲಿ ತಂಪನ್ನು ಕಾಯ್ದುಕೊಂಡು ಇರುವ ತಾಣಗಳಲ್ಲಿ ಕೆಲವೆಡೆ ನಿಂತು ಹರಿಯುವ ಐಸ್ ಕೋಲ್ಡ್ ನೀರಿನಲ್ಲಿ ಸ್ವಚ್ಛಂದವಾಗಿ ಆಡಿದ್ದೇನೆ.

Tuesday, July 24, 2007

ಖಾಲೀ ಹಾಳೆ

ಓಹ್, ಬೇಡವೆಂದರೂ ತೆರೆದುಕೊಂಡು ಕುಳಿತಿದೆ ಖಾಲೀ ಹಾಳೆ! ಪಕ್ಕದಲ್ಲಿರುವ ದೀಪ ತನ್ನ ಸುತ್ತಲು ಚೆಲ್ಲುತ್ತಿರುವ ಬೆಳಕೆಷ್ಟೋ, ಅಪರಿಮಿತದಲ್ಲಿ ಪರಿಮಿತವಾಗಿರುವ ಈ ಬೆಳಕಿಗೆ ಬಿದ್ದ ನಾನಾ ವಸ್ತುಗಳು ಹೊಳೆಯ ತೊಡಗಿವೆ, ಅಂದರೆ ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿಕೊಂಡು. ಹಾಗೆ ಪ್ರತಿಫಲಿಸಿದ ಬೆಳಕು ಮತ್ತಿನ್ನೆಲ್ಲೋ ಬಿದ್ದು, ಮತ್ತೆ ಪ್ರತಿಫಲನ - ಹೀಗೆ ಕೋಣೆಯುದ್ದಕ್ಕೂ ತುಂಬಿದ ಹಲವು ರೇಖೆಗಳು. ಊಹ್ಞೂ, ರೇಖೆಗಳು ಅಂದರೆ ಅದು ನಮ್ಮ ಮಿತಿಯಾದೀತು, ಕಂಡಕಂಡಲ್ಲಿ ಹರಡಿಕೊಂಡಿರುವ ಒಂದು ವಸ್ತು ಎಂದು ಬಿಟ್ಟರೆ ಬೆಳಕಿಗೆ ಜೀವವಿಲ್ಲವೇ ಎಂದು ಯಾರಾದರೂ ಕೇಳಿಬಿಟ್ಟಾರು ಎಂಬ ಹೆದರಿಕೆ. ಇವೆಲ್ಲದರ ನಡುವೆ ಇದೊಂದು ಖಾಲೀ ಹಾಳೆ, ನನ್ನನ್ನು ತುಂಬಿಸು, ತುಂಬಿಸಿಕೋ ಎಂದು ಗೋಗರೆದರೆಂತೆ ಮೇಲ್ನೋಟಕ್ಕೆ ಕಂಡುಬಂದರೂ ಅದರ ಮನಸ್ಸು, ಅದರ ಹಿಂದಿನ ಸತ್ವವೆಲ್ಲ ಒಬ್ಬ ಋಷಿಯ ಹಾಗೆ - ಎಲ್ಲವನ್ನೂ ಬಲ್ಲೆ, ಎಲ್ಲವನ್ನೂ ಒಳಗೊಂಡಿಹೆ, ಆದರೆ ಏನನ್ನೂ ಅರಿಯದವನು ಎಂಬ ಸದಾ ಮುಗ್ಧ ಮುಖವನ್ನು ತೋರಿಸಿಕೊಂಡಿರುವಂತಹದು.

ಎಷ್ಟೇ ನಿಧಾನವಾಗಿ ಉಸಿರಾಡಿದರೂ ಕೇಳಿಸಬಹುದಾದಂತಹ ಮೌನ. ಬೆಳಕಿಗೆ ಹೊಳೆಯುತ್ತಿರುವ ಸುತ್ತಲಿನ ವಸ್ತುಗಳೆಲ್ಲ ನನ್ನ ಬಗ್ಗೆ ಬರಿ ನನ್ನ ಬಗ್ಗೆ...ಎಂದು ಕೂಗುತ್ತಿರುವವೇನೋ ಎಂಬ ಕೊರಗನ್ನು ಹೊತ್ತುಕೊಂಡಿರುವ ಭಾರವಾದ ಮೌನ. ನಮ್ಮ ಸುತ್ತಲಿನ ವಸ್ತು ವಿಷಯಗಳಿಗೆಲ್ಲ ಭಾಷೆ ಇದೆಯೇ ಎಂದು ಸೋಜಿಗಪಡುವಷ್ಟರ ಮಟ್ಟಿಗಿನ ಸಂಕೀರ್ಣವಾದ ಸಂವಾದ, ಅವುಗಳನ್ನು ಅರ್ಥ ಮಾಡಿಕೊಂಡಿದ್ದೇವೆಂಬ ಭ್ರಮೆಯಲ್ಲಿರಬಹುದಾದ ನಾವುಗಳು. ಜೊತೆಯಲ್ಲಿ ವಸ್ತುವಿನ ರೂಪ ನೋಡುಗರ ಕಣ್ಣಲ್ಲಿ ಎಂಬ ತಿಪ್ಪೆ ಸಾರಿಸುವ ಪ್ರಕ್ರಿಯೆ ಬೇರೆ!

ಈ ಖಾಲೀ ಹಾಳೆ ಯಾರಿಗೋಸ್ಕರ ತೆರೆದುಕೊಂಡಿದೆ? ಈ ಹಾಳೆಯ ಮೂಲೆ ಮೂಲೆಗಳಿಗೆ ಅಕ್ಷರವನ್ನು ಸ್ಥಾಪಿಸುತ್ತೇವೆಂದು ಯಾರೂ ಈ ವರೆಗೆ ಭಾಷೆ ನೀಡಿರದಿದ್ದರೂ ಬೆಳಕಿಗೆ ಹೊಳೆದು ಅದು ಬೀಗಿದಂತೆ ತೋರುವುದೇಕೆ? ಬಿಳಿ ಬಣ್ಣವೇ, ಅಂದರೆ ಖಾಲೀ ಹಾಳೆಗೂ ಒಂದು ಸ್ವರೂಪವಿದೆಯೆಂದಾಯಿತೇ? ಬಿಳಿಯಲ್ಲಿ ಬೇರೆಲ್ಲ ಬಣ್ಣಗಳಡಗಿವೆಯೆಂದಾದರೆ ಖಾಲೀ ಹಾಳೆಯಲ್ಲಿ ಎಲ್ಲವೂ ಇವೆಯೆಂದೇ? ಎಲ್ಲವೂ ಇದ್ದ ಮೇಲೆ ಅದು ಖಾಲೀ ಹೇಗಾಯಿತು? ಓಹ್, ಅಕ್ಷರಗಳು - ಇಂತಹ ಖಾಲೀ ಹಾಳೆಯನ್ನು ತುಂಬಿಸಿ ಮೋಕ್ಷ ನೀಡಬಲ್ಲ ಏಕೈಕ ಮಾರ್ಗ.

ಈ ಖಾಲೀ ಹಾಳೆಯ ಹೊರ ಮೈ ಹೀಗಿದ್ದರೆ ಒಳ ಮೈ ಹೇಗಿದ್ದಿರಬಹುದು ಎಂದು ಅನೇಕ ಸಾರಿ ಯೋಚನೆ ಬಂದಿದ್ದಿರಬಹುದು. ಹಾಳೆಗೆ ಎಷ್ಟು ಮುಖವೆಂದು ಕೇಳಿದರೆ ಎರಡು ಎಂದು ಮಕ್ಕಳು ಬೇಕಾದರೂ ಉತ್ತರಿಸಿಯಾರು, ಇದ್ದರೂ ಇಲ್ಲದಂತೆ ತೋರುವ ಇನ್ನು ನಾಲ್ಕು ಮುಖಗಳನ್ನು ಯಾರೋ ಹಾಗಾದರೇ ನೋಡೋದೇ ಇಲ್ಲವೇನು? ದೊಡ್ಡದಾಗಿ ಕಂಡ ಎರಡೇ ಎರಡು ಮುಖಗಳು ಇನ್ನುಳಿದ ನಾಲ್ಕು ಮುಖಗಳಿಗೆ ಧ್ವನಿಯಾಗಬೇಕು ಎಂದರೆ? ಯಾವುದೋ ಕಾಡಲ್ಲಿ ನೀರುಂಡು ಬೆಳಿದಿದ್ದ ಮರದ ಕಾಂಡ, ಅಥವಾ ತೊಗಟೆಯ ಪರಿಶ್ರಮವಿದಾಗಿರಬಹುದು, ಅಥವಾ ಮಾನವನ ಊಹೆಯ ಮಿತಿಯಲ್ಲಿ ಸಿಕ್ಕ ಅನೇಕ ವಸ್ತುಗಳ ಸಂಗಮದ ಸ್ವರೂಪವಾಗಿರಬಹುದು, ಬಿಳಿ ಅಲ್ಲದ್ದನ್ನು ಮೂಳೇ-ಇದ್ದಿಲನ್ನು ಹಾಕಿ ತೆಗೆದ ಹೊಸ ಮೇಲ್ಮೈ ಇದ್ದಿರಬಹುದು.

ಈ ಖಾಲೀ ಹಾಳೆ ತೆಳ್ಳಗಿದೆ, ಬೆಳ್ಳಗಿದೆ. ಬಳುಕುತ್ತದೆ, ಜೊತೆಗೆ ಗಾಳಿ ಬಂದೆಡೆಯೆಲ್ಲಾ ಹಾರಿ ಹೋಗುತ್ತದೆ. ಅದೊಂದು ಮಿತಿಯೇ ಸರಿ, ನಿರ್ವಾತದಲ್ಲಿ ಈ ಹಾಳೆಯ ಆಟವೇನೂ ನಡೆಯದು. ತನ್ನ ತೂಕಕ್ಕೆ ತಾನೇ ತೊನೆಯದ ಇದೂ ಒಂದು ವಸ್ತು, ಅದರದ್ದೂ ಒಂದು ಅಸ್ತಿತ್ವ. ಬರೀ ಅಕ್ಷರಗಳನ್ನು ಮೂಡಿಸಿ ಇದರ ಬದುಕನ್ನು ಪರಮಪಾವನ ಮಾಡಬೇಕೆಂದೇನೂ ಎಲ್ಲಾ ಸಮಯದಲ್ಲಿ ವಿಧಿ ಬರೆಯೋದಿಲ್ಲ, ಎಷ್ಟೋ ಸಾರಿ ಮೂಗು ಒರೆಸಿಯೋ, ಇಲ್ಲಾ ಕೈ ತೊಳೆದು ಹಸಿಯನ್ನು ವರ್ಗಾಯಿಸಿಯೋ ತಿಪ್ಪೆಗೆ ಬಿಸಾಡಿದ ಸನ್ನಿವೇಶಗಳು ಬೇಕಾದಷ್ಟಿವೆ. ತನ್ನ ಅಗಲವಾದ ಮುಖದ ಮೇಲೆ ಅಕ್ಷರಗಳನ್ನು ತುಂಬಿಸಿ ಹಾಗೆ ಮೋಕ್ಷ ಸಿಗುತ್ತದೆ ಎಂದು ಕಾದದ್ದು ಹುಸಿಯಾಗಿದೆ. ಬಾಯಿಂದಾಡಿದ್ದಷ್ಟೇ ಬಾಷೆಯಾಗುಳಿಯದೇ ಚಲನವಲನಗಳು ಸೃಷ್ಟಿಸೋ ಸ್ಪಂದನಗಳನ್ನು ಖಾಲೀ ಹಾಳೆ ತೆರೆದಿಡುವಲ್ಲಿ ಸೋತಿದೆ, ಮಸಿ ಬಿದ್ದರೇನೂ ಮೂಡುವುದು ಅಕ್ಷರವಾದರೆ ಇನ್ನು ಮಸಿಗೆ ಮೀರಿದ ಮಾತುಗಳಿಗೆ ಈ ಹಾಳೆ ಯಾವ ನೆಲೆಗಟ್ಟನ್ನು ಒದಗಿಸಿಕೊಡಬಲ್ಲದು? ಹೋಗಲಿ, ಅಂತಹವುಗಳನ್ನು ಈವರೆಗೆ ಯಾರಾದರೂ ಎಲ್ಲಾದರೂ ಹೇಗಾದರೂ ಬರೆಯಲು ಯತ್ನಿಸಿದ್ದಾರೇನು?

ಇಂತಹ ಖಾಲೀ ಹಾಳೆ ಯಾರಾದರೂ ನನ್ನ ಮುಖದ ಮೇಲೆ ಬರೆದಾರೇನೋ ಎಂದು ನಿರುಕಿಸುತ್ತದೆ - ಹೊರಗಿನ ಹವಾಮಾನವನ್ನು ಒಂದೇ ನೋಟದಲ್ಲಿ ಅಳೆಯೋ ಹುಡುಗನ ಹಾಗೆ, ಮುಂದೆ ಮಳೆಬರಬಹುದಾದ ಸೂಚನೆಯನ್ನು ಕಂಡು ಆಡಲು ಹೋಗಲಾಗುವುದಿಲ್ಲವಲ್ಲಾ ಎಂದು ಹಪಹಪಿಸೋ ದಾರುಣ ನೋಟವನ್ನು ನೀಡುತ್ತದೆ. ಎಷ್ಟೋ ಸಾರಿ ಅನ್ನಿಸಿದೆ, ಈ ಖಾಲೀ ಹಾಳೆಯದು ದೇವಸ್ಥಾನದ ಆವರಣದಲ್ಲಿ ಭಿಕ್ಷೆ ಬೇಡುವ ಭಿಕ್ಷುಕರ ಹಾಗಿನ ಪರಿಸ್ಥಿತಿ ಎಂದು. ಖಾಲೀ ಹಾಳೆಯ ಈ ಖಾಲೀ ತನ ಮುಖ್ಯ ಮುಂದೆ ಹೊಸದನ್ನೇನಾದರೂ ತುಂಬಿಕೊಳ್ಳಲು, ಒಮ್ಮೆ ತುಂಬಿಸಿಕೊಂಡ ಮೇಲೆ ಮತ್ತೆ ಖಾಲೀಯಾಗುವುದು ಎಂಬುದೇನೂ ಇಲ್ಲ, ಆದ್ದರಿಂದಲೇ ಬೇಡುವವನಿಗೆ ತನಗೇನು ಸಿಗಬಹುದು ಎಂಬ ಸೂಕ್ಷ್ಮವಿರಬೇಕು ಎನ್ನುವುದು. ಒಂದು ವೇಳೆ ಬಯಸಿದ್ದು ಸಿಕ್ಕೇ ಬಿಟ್ಟಿತು ಎನ್ನೋಣ ಆಗ ಖಾಲಿ ಇದ್ದದೂ ತುಂಬಿಕೊಳ್ಳುತ್ತದೆ, ಒಮ್ಮೆ ತುಂಬಿಕೊಂಡದ್ದು ಮತ್ತೆ ಖಾಲಿಯಾಗದು ಎಂಬ ಅಳುಕನ್ನು ಈವರೆಗೆ ಎಲ್ಲಿಯೂ ಯಾರಲ್ಲಿಯೂ ನೋಡಿದ್ದಿಲ್ಲ!