Showing posts with label ಸಮುದಾಯ. Show all posts
Showing posts with label ಸಮುದಾಯ. Show all posts

Friday, April 10, 2020

ದಿನಗಳು ಬೇರೆ, ದಿನಚರಿ ಒಂದೇ...

ನಮಗೂ ನೈಬರ್ಸ್ ಇದ್ದಾರೆ ಅಂತ ಅನ್ನಿಸಿದ್ದು ಇವತ್ತು ಬೆಳಿಗ್ಗೆ ಎದ್ದ ನಂತರ ನರಿ ಮುಖ ನೋಡಿದ ಮೇಲೆ.  ಮನೆಯ ಬಾಗಿಲನ್ನು ತೆಗೆಯಲು ಹೊರಗೆ ಬಂದು ನೋಡಿದರೆ ನಮ್ಮ ಯಾರ್ಡ್‌ನಲ್ಲಿ ಒಂದು ನರಿ, ಸ್ವಲ್ಪ ದೂರದಲ್ಲಿ ಎರಡು ಕಾಡು ಟರ್ಕಿಗಳು ಹಾಗೂ ಕೆಲವು ಜಿಂಕೆಗಳು ಕಂಡು ಬಂದವು. ಇವೆಲ್ಲ ನಮ್ಮ ಮನೆಯ ಸುತ್ತ ಇರೋ ಅಂತ ಪ್ರಾಣಿಗಳೇ, ಆದರೆ ನಮ್ಮ ನಮ್ಮ ವ್ಯಸ್ತ ಬದುಕಿನಲ್ಲಿ ನಮಗೆ ಅವುಗಳನ್ನು ನೋಡಲಾಗೋದಿಲ್ಲ ಅಷ್ಟೇ. ’ಅಯ್ಯೋ, ನಮ್ಮ ಮನೆ ಹತ್ರ ಬಂದಿದ್ದಾವೆ!’ ಎಂದು ಆಶ್ಚರ್ಯ ಸೂಚಿಸಿದ ನನ್ನ ಮಗಳಿಗೆ ಹೇಳಿದೆ,’ ನಾವು ಅವುಗಳ ಮನೆಯ ಹತ್ತಿರ ಬಂದಿದ್ದೇವೆಯೇ ವಿನಾ ಅವುಗಳು ನಮ್ಮ ಮನೆ ಬಳಿ ಅಲ್ಲ’, ಎಂದು. ಅವಳು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡು ಬಂದಳು.

ಇತ್ತೀಚೆಗಂತೂ ನಮ್ಮ ನೆರೆಹೊರೆಯಲ್ಲಿ, ನಮ್ಮ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಸ್ತಬ್ಧವಾಗಿವೆ.  ಯಾವುದೇ ಮೋಟಾರು ವಾಹನದ ಸದ್ದೂ ದಿನವಿಡೀ ಕೇಳೋದಿಲ್ಲ.  ಒಂದು ಹಂತದಲ್ಲಿ ಈ ಪ್ರಪಂಚದಲ್ಲಿ ನಾವಷ್ಟೇ ಇದ್ದೇವೇನೋ ಎಂದು ಅನುಮಾನ ಬರುವಷ್ಟು ಎಲ್ಲ ಕಡೆಗೆ ತಣ್ಣಗಾಗಿ ಬಿಟ್ಟಿದೆ.  ಇವತ್ತಿಗೆ ನಾಲ್ಕು ವಾರಗಳ ಕಾಲ ಮನೆಯಲ್ಲೇ ಕುಳಿತು ದಿನ ಮತ್ತು ರಾತ್ರಿಗಳನ್ನು ಕಳೆದ ನಮಗೆ ಅವುಗಳು ಬಹಳ ಧೀರ್ಘವಾದಂತೆ ಕಂಡುಬರುತ್ತವೆ.  ಮೊದಲಾಗಿದ್ದರೆ, ವಾರದ ದಿನಗಳು ಒಂದು ರೀತಿ ಓಡುತ್ತಿದ್ದವು.  ವಾರಾಂತ್ಯದ ದಿನಗಳು ಮತ್ತಿನ್ನೊಂದು ರೀತಿ.  ಆದರೆ ಈಗೆಲ್ಲ ಬದಲಾಗಿದೆ.

ವಾರದ ದಿನಗಳಲ್ಲಿ ನಾವೊಂದು ದಿನಚರಿಯನ್ನು ಅನುಸರಿಸಲೇ ಬೇಕು.  ಮನೆಯಲ್ಲೇ ಕುಳಿತಿದ್ದೇವೆಂದಾಕ್ಷಣ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಯಾರಿಗೂ ಕೆಲಸ ಮಾಡಲಾಗದು. ಅಂತೆಯೇ ನಾವು ಎಷ್ಟು ಹೊತ್ತಿಗೆ ಕೆಲಸವನ್ನು ಆರಂಭಿಸುತ್ತೇವೆ, ಎಷ್ಟು ಹೊತ್ತಿಗೆ ಮುಗಿಸುತ್ತೇವೆ ಎಂಬುದೂ ಮುಖ್ಯ.  ನನ್ನೆಲ್ಲ ಫೋನ್‌ಕಾಲ್‌ಗಳನ್ನು ಹೆಚ್ಚಿನ ಮಟ್ಟಿಗೆ ನಾನು ಸ್ಪೀಕರ್‌ ಫೋನ್‌ನಲ್ಲಿಯೇ ಹಾಕಿರೋದರಿಂದ ದಿನದ ಉದ್ದಕ್ಕೂ ಮನೆಯಲ್ಲಿ ಒಂದು ರೀತಿಯ ’ಕಲರವ’ ಇರುತ್ತದೆ.  ಈ ದಿನ ಸಂಜೆ ಆರು ಘಂಟೆ ಆಗುವುದರೊಳಗೆ ಇಷ್ಟು ಕೆಲಸ ಮುಗಿಸುತ್ತೇನೆ ಎಂದು ಪ್ಲಾನ್‌ ಹಾಕಿಕೊಂಡು ಕೆಲಸ ಮಾಡಿದಾಗ ಎಲ್ಲ ಸುಲಭವಾಗುತ್ತದೆ.  ದಿನಕ್ಕೊಂದು ಬಾರಿ ಇಂಗ್ಲೀಷ್ ನ್ಯೂಸ್, ಮಧ್ಯೆ ಮಧ್ಯೆ ಅಲ್ಲಿಲ್ಲಿ ಒಂದಿಷ್ಟು ಪ್ರಜಾವಾಣಿ, ನ್ಯೂಯಾರ್ಕ್ ಟೈಮ್ಸ್, ವಾಟ್ಸಾಪ್ ಇವನ್ನೆಲ್ಲ ನೋಡಿಕೊಂಡು ಹೋಗುತ್ತಿರುವಾಗ ವಾರದ ದಿನಗಳು ವೇಗವಾಗೇ ಹೋಗುತ್ತಿವೆ ಎನ್ನಿಸುತ್ತದೆ.  ಇವುಗಳ ಜೊತೆಯಲ್ಲಿ ದಿನಕ್ಕೊಬ್ಬೊಬ್ಬರಿಗೆ ಫೋನ್ ಮಾಡಿ ಹಳೆಯ ಸ್ನೇಹಿತ, ಬಂಧು-ಬಳಗವರನ್ನು ಮಾತನಾಡಿಸಿಕೊಂಡು ಬರುವ ಪರಿಪಾಠ ಹುಟ್ಟಿದೆ.

ಎಲ್ಲಕ್ಕಿಂತ ಕಷ್ಟಕರವಾದುದು ಸೋಮವಾರ ಬೆಳಿಗ್ಗೆ - ಕೆಲಸ ಆರಂಭಿಸುವುದಕ್ಕೇ ಒಂದು ರೀತಿಯ ಕಷ್ಟವೆನಿಸುತ್ತದೆ.  ಅದೇ ರೀತಿ ಶುಕ್ರವಾರ ಬಂದರೆ ಮಧ್ಯಾಹ್ನವಾದಂತೆಲ್ಲ ಮೊದಲಿನ ಹುರುಪಿರೋದಿಲ್ಲ. ಯಾರಿಗಾದರೂ, Have a good weekend! ಎಂದು ಅಚಾನಕ್ಕಾಗಿ ಹೇಳಿದರೂ, Stay safe! ಎಂದು ಕೊನೆಯಲ್ಲಿ ಸೇರಿಸುವುದು ಸಹಜವಾಗಿ ಹೋಗಿದೆ.

ವೀಕೆಂಡ್ ದಿನಗಳದ್ದು ಮೊದಲಿನಂತೆ ಅಲ್ಲಿಲ್ಲಿ ಓಡಾಡುವ ವಿಶೇಷಗಳೇನೂ ಇಲ್ಲವಾದರೂ, ಈಗ ಹೊಸ ಹೊಸ ಕಾರ್ಯಕ್ರಮಗಳು ನಮ್ಮ ಕ್ಯಾಲೆಂಡರುಗಳನ್ನು ಆವರಿಸಿಕೊಳ್ಳುತ್ತಿವೆ.  ಶನಿವಾರ ಮುಂಜಾನೆ 9:30ಕ್ಕೆ ನಮ್ಮ ನೈಬರ್‌ಹುಡ್ ಜನರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ವರ್ಚುವಲ್ ಟೀ-ತಿಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ಕಳೆದ ವಾರ ಒಬ್ಬೊಬ್ಬರನ್ನೇ ಕರೆ ಕರೆದು ಅವರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ, ಅವರೆಲ್ಲರೂ ಖುಶಿಯಿಂದಲೇ ಶನಿವಾರ "ತಿಂಡಿ"ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು.  ನಂತರ ಭಾನುವಾರ (ಬೃಂದಾವನ ಕನ್ನಡ ಸಂಘದ) ಕಮ್ಯೂನಿಟಿ ಕಾಲ್ ಮತ್ತು ಕನ್ನಡ ಕಲಿ ವರ್ಚುವಲ್ ತರಗತಿಯನ್ನು ಮುಗಿಸುವಷ್ಟರಲ್ಲಿ ದಿನ ಆರಾಮವಾಗಿ ಕಳೆದು ಹೋಗುತ್ತದೆ. ಈ ನಡುವೆ, ಅವರಿವರು ಶೇರ್ ಮಾಡಿರುವ ಹಳೆ-ಹೊಸ ಸಿನಿಮಾವನ್ನೋ ಅಥವಾ ಡಾಕ್ಯುಮೆಂಟರಿಯನ್ನೋ ನೋಡುವುದು ರೂಢಿಯಾಗಿ ಬಿಟ್ಟಿದೆ.
ನಾವೆಲ್ಲ ಮನೆ ಒಳಗೆ ಸೇರಿಕೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಒಂದಿಷ್ಟು ನಿರಾಂತಕವಾಗಿ ಉಸಿರಾಡುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು.  ಈ ನಾಲ್ಕು ವಾರಗಳಲ್ಲಿ ವಾಯು-ಶಬ್ದ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವೂ ಹೊಸತಾಗಿ ಹೊಳೆಯುವಂತೆ ಕಾಣುತ್ತದೆ.  ಈ ಮೊದಲು ನಾವು ಅಷ್ಟೊಂದು ಗಮನವಿಟ್ಟು ನೋಡಲಾಗದ ನಿಸರ್ಗದ ಅದ್ಭುತಗಳನ್ನು ನೋಡುತ್ತಿದ್ದೇವೆ.  ಪಕ್ಷಿಗಳ ಚಿಲಿಪಿಲಿ ಧ್ವನಿ ಈಗಾಗಲೇ ಎಲ್ಲರ ಕಿವಿಗೂ ಬಿದ್ದಿರಬೇಕು!

ಯಾವುದು ಅತಿಯಾದರೂ ಅಷ್ಟೊಂದು ಒಳ್ಳೆಯದಲ್ಲ - ಅದೇ ರೀತಿ, ಈ ಏಕತಾನತೆಯೂ ಒಂದಿಷ್ಟು ಕಾಲದೊಳಗೆ ತನ್ನ ಮುದವನ್ನು ಕಳೆದುಕೊಂಡೀತು.  ವಿಶ್ವದಾದ್ಯಂತ ಎಷ್ಟೋ ವ್ಯವಹಾರಗಳು ನಿಂತು ಹೋಗಿವೆ, ಎಷ್ಟೋ ಜನರು ಕೆಲಸವಿಲ್ಲದೆ ಕೊರಗುತ್ತಿದ್ದಾರೆ, ಇಂತಹವರನ್ನೆಲ್ಲ ಮನೆಯಲ್ಲಿ ಕುಳಿತಿರಿ ಎಂದು ಯಾವ ಶಕ್ತಿಯೂ ಕಟ್ಟಿ ಹಾಕಲಾರದು.  ಕಣ್ಣಿಗೆ ಕಾಣುವ ಹಸಿದ ಹೊಟ್ಟೆಯ ಸಂಕಟ ಕಣ್ಣಿಗೆ ಕಾಣದ ಕ್ರಿಮಿಯ ಚಮತ್ಕಾರದ ಹೆದರಿಕೆಗಿಂತಲೂ ಬಹಳಷ್ಟು ದೊಡ್ಡದು.  ಹಸಿದ ಹೊಟ್ಟೆಗಳು ಕ್ರಾಂತಿ ಕೋಲಾಹಲವನ್ನೇ ಮಾಡಿದ ಅನೇಕ ನಿದರ್ಶನಗಳಿವೆ.  ಈ ನಮ್ಮೆಲ್ಲರ ಗೃಹ ಬಂಧನ ಆದಷ್ಟು ಬೇಗ ಮುಗಿದು, ನಾವೆಲ್ಲ ನಮ್ಮ ನಮ್ಮ ಹೊಸ ಕಲಿಕೆಯೊಂದಿಗೆ ಪ್ರಕೃತಿಯನ್ನು ಗೌರವಿಸುತ್ತಾ ಮತ್ತೆ ನಮ್ಮ ಎಂದಿನ ದಿನಚರಿಗೆ ಹಿಂತಿರುಗೋಣ!

Tuesday, April 07, 2020

ಕೊರೋನಾ ವೈರಸ್ - ಚೈನಾದ ಅತಂತ್ರವೋ, ಕುತಂತ್ರವೋ?

ಈ ವೈರಸ್ ಹಾವಳಿ ಜನವರಿಯಲ್ಲಿ ಎಲ್ಲ ಕಡೆಗೆ ಹಬ್ಬುತ್ತಿದ್ದಂತೆ ಅನೇಕ ಸಿದ್ಧಾಂತಗಳು (theories) ಹುಟ್ಟಿದವು, ಕೆಲವು ಮರು ಹುಟ್ಟು ಪಡೆದವು.  ವುಹಾನ್ ನಗರ (ಹುಬೈ ಪ್ರಾಂತ್ಯ) ಸಂಪೂರ್ಣವಾಗಿ ಮುಚ್ಚಿದ ನಂತರ, ಚೈನಾಕ್ಕೆ ಹೋಗುವ ಚೈನಾದಿಂದ ಬರುವ ಎಲ್ಲ ಪ್ರಯಾಣಿಕರು ಕಡಿಮೆಯಾದ ಮೇಲೆ, ಇಡೀ ವಿಶ್ವವೇ ಚೈನಾದ ಬೆಳವಣಿಗೆಗಳನ್ನು ಬಿಟ್ಟ ಕಣ್ಣು ಮಿಟುಕಿಸದೆ ನೋಡತೊಡಗಿತು.  ಒಂದಿಷ್ಟು ಜನ (ರಾಷ್ಟ್ರಗಳು) ತಮ್ಮ ದೇಶಕ್ಕೆ ಈ ವೈರಸ್ಸಿನಿಂದ ತೊಂದರೆಯಾದೀತೆಂದು ಮುಂಜಾಗರೂಕತೆ ಕ್ರಮವನ್ನು ಕೈಗೊಂಡರು.  ಮತ್ತಿನ್ನೊಂದಿಷ್ಟು ಜನ ಆ ನಿಟ್ಟಿನಲ್ಲಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುವಾಗ ವಿಳಂಬದಿಂದಾಗಿ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗಿ ಬಂತು.  ಈಗ ಕಳೆದ ಆರೇಳು ವಾರಗಳಿಂದ (ಮಾರ್ಚ್ ೧ ರಿಂದ ಏಪ್ರಿಲ್ ೭ ರವರೆಗೆ) ಕರೋನಾ ವೈರಸ್ (covid-19) ನಮ್ಮ ಜನ ಜೀವನದಲ್ಲಿ ನೆಲೆ ನಿಂತಿದೆ.  ಇನ್ನೂ ಎರಡು ತಲೆ ಮಾರುಗಳಿಗಾಗುವಷ್ಟು ನಮಗೆಲ್ಲ ಪಾಠವನ್ನು ಕಲಿಸಿದೆ.

ಈ ಶತಮಾನದ ದೊಡ್ಡ ದುರಂತ, ಮಹಾವ್ಯಾಧಿ, ಸೋಂಕು, ಸಾಂಕ್ರಾಮಿಕ ರೋಗ, ಶಾಪ - ಇನ್ನೂ ಮೊದಲಾದ ಹೆಸರಿನಿಂದ ಕರೆಸಿಕೊಂಡು ತನ್ನ ಪರಿಣಾಮವನ್ನು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದುಕೊಂಡು, ಇನ್ನು ಇನ್ನೂರೈವತ್ತು ವರ್ಷವಾದರೂ, 2020ರ ಈ ಅನುಭವವನ್ನು ಜನರು ತಮ್ಮ ಹಾಡು-ಹಸೆಗಳಲ್ಲಿ ಮೆಲುಕುಹಾಕುವಂತೆ ಮಾಡುವ, ಚೈನಾದಿಂದ ಆರಂಭಿಸಿದ ಈ ಪ್ರಭಾವಿ ವೈರಸ್ಸಿನ ಅಭಿಯಾನವನ್ನು ಮಾನವ ನಿರ್ಮಿತ (ಕುತಂತ್ರ) ಎನ್ನೋಣವೋ ಅಥವಾ ಮಾನವನಿಗೆ ಮೀರಿದ (ಅತಂತ್ರ)ವೆಂದು ಕರೆಯೋಣವೋ?  ಈಗ ನಮಗೆ ಲಭ್ಯವಿರುವ ವಿಚಾರಗಳ ವಿನಿಮಯವೇ ಈ ಬರಹ.  ಕುತಂತ್ರವೋ-ಅತಂತ್ರವೋ ಎನ್ನುವ ತೀರ್ಮಾನ ನಿಮ್ಮದು!

***
ಅತಂತ್ರ: ಚೈನಾದವರು ಬಹುಪ್ರಾಣಿ ಭಕ್ಷಕರು - ಒಂದು ರೀತಿಯಲ್ಲಿ ಮಾಂಸ ಪ್ರಿಯರು, ಅದರಲ್ಲೂ ಅನೇಕ ಕಾಡು ಪ್ರಾಣಿಗಳನ್ನು ಫಾರ್ಮ್‌ಗಳಲ್ಲಿ ವ್ಯವಸ್ಥಿತವಾಗಿ ಅವುಗಳನ್ನು ಬೆಳೆಸಿ ತಮ್ಮ exotic cuisine ನಲ್ಲಿ ಬಳಸುವವರು.  ಚಿಕ್ಕ ಇರುವೆಗಳಿಂದ ಹಿಡಿದು, ಹಾರುವ ಬಾವುಲಿಯವರೆಗೆ, ಮೀನುಗಳಿಂದ ಹಿಡಿದು ಸರೀಸೃಪಗಳವರೆಗೆ (ಇವರು ಮನುಷ್ಯರನ್ನು ಮಾತ್ರ ತಿಂದ ನಿದರ್ಶನಗಳು ಸಿಗವು), ಅಂದರೆ ಉಳಿದೆಲ್ಲ ಜೀವಿಗಳು ಮಿಲಿಯನ್ನುಗಟ್ಟಲೆ ಚೈನಾ ದೇಶದ ಜನರ ಉದರವನ್ನು ಪೋಷಿಸಿರುವುದಕ್ಕೆ ಬಹಳ ನಿದರ್ಶನಗಳು ಸಿಕ್ಕಾವು.

ನಾವು ಅಮೇರಿಕದಲ್ಲಿ ಇಂಡಿಯನ್ ಸ್ಟೋರು, ರೆಸ್ಟೋರಂಟುಗಳಿಗೆ ಹೋದಾಗ ಒಂದು ರೀತಿಯ (ಕಮಟು) ವಾಸನೆ ನಮಗೆ ಎದುರಾಗುತ್ತದೆ.  ನಾವು ಭಾರತೀಯರಿಗೆ ಅದು ನಮಗೆ ಗೊತ್ತಾಗದಷ್ಟು ಹೊಂದಾಣಿಕೆಯಾಗಿರುತ್ತದೆ. (ನಮ್ಮ ಪಕೋಡಾ ಅಥವಾ ದೋಸೆ ವಾಸನೆ ನಮಗೆ ಪ್ರಿಯವಾಗಿರಬಹುದು, ಆದರೆ, ಅದು ಎಲ್ಲರಿಗೂ ಇಷ್ಟವಾಗಬೇಕು ಎಂದೇನೂ ಇಲ್ಲ). ಅದೇ ರೀತಿ ನಾವು ಕೊರಿಯನ್, ವಿಯಟ್‍ನಾಮೀಸ್, ಚೈನೀಸ್ ಅಂಗಡಿಗಳಿಗೆ ಹೋದಾಗ, ಇನ್ನೊಮ್ಮೆ ಇಲ್ಲಿ ಬರಬಾರದು ಎನ್ನುವಷ್ಟರ ಮಟ್ಟಿಗೆ ಅಲ್ಲಿ ಗಬ್ಬುನಾತ ಹೊಡೆಯುತ್ತಿರುತ್ತದೆ.  ಇವರುಗಳು ಜೀವವೈವಿಧ್ಯವನ್ನು ನೋಡುವ ರೀತಿ ನಮಗಿಂತಲೂ ಭಿನ್ನ.  ಕೊಳೆಯಾದ ಗಾಜಿನ ಅಕ್ವೇರಿಯಂ‌ನಲ್ಲಿ ತುಂಬಿಕೊಂಡು ದಯನೀಯ ಸ್ಥಿತಿಯಲ್ಲಿರುವ ಮೀನುಗಳು, ಏಡಿಗಳು, ಮೊದಲಾದ ಪ್ರಾಣಿಗಳನ್ನು ಅಲ್ಲಿ ನೋಡಿ ಖೇದವೆನಿಸುತ್ತದೆ.  ಅದು ಅವರಿಗೆ ಸಹನೀಯವಾದದ್ದು, ಅವರ ಧರ್ಮದಲ್ಲಿ (ಜೀವನಕ್ರಮ) ಅದು ಯಾರಿಗೂ ದೊಡ್ಡದೆನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ, ಚೈನಾದ ವುಹಾನ್‌ನ ಒಂದು ಮಾರುಕಟ್ಟೆಯಲ್ಲಿ ಒಂದರ ಮೇಲೂಂದು ಹೇರಿಸಿಟ್ಟ ಕೇಜುಗಳಲ್ಲಿ ಒಂದು ಪ್ರಾಣಿಯ ಎಂಜಲು-ಗಲೀಜು ಮತ್ತೊಂದು ಪ್ರಾಣಿಯ ಜೊತೆ ಸಂಘರ್ಷ ಉಂಟಾದಾಗ ಹುಟ್ಟಿದ್ದು ಈ ವಿಭಿನ್ನ ವೈರಸ್ ಎಂದು ಕೆಲವು ಕಡೆ ಹೇಳಲಾಗಿದೆ.  ಅದೇ ರೀತಿ ಬಾವುಲಿಗಳನ್ನು (bats) ಕತ್ತರಿಸುವಾಗ ಅದರ ರಕ್ತದಲ್ಲಿ ಇದ್ದ ವೈರಸ್ಸು ಒಬ್ಬರಿಂದ ಮತ್ತೊಬ್ಬರಿಗೆ ತಗುಲು ಬೆಳೆಯಿತು ಎಂದೂ ಹೇಳಲಾಗುತ್ತದೆ.

ಒಮ್ಮೆ ಹೀಗೆ ಜನರಿಂದ ಜನರಿಗೆ ಬೆಳೆದ ವೈರಸ್ಸು ಡಿಸೆಂಬರ್‌ನಲ್ಲಿ ಸುದ್ದಿ ಮಾಡಿದರೂ ಚೈನಾ ಅದನ್ನು ತಕ್ಷಣ ದೊಡ್ಡದು ಮಾಡಲಿಲ್ಲ, ಅದು ಬೆಳೆದು ಪ್ರಕೋಪಕ್ಕೆ ತಿರುಗಿದ ನಂತರ ಎಲ್ಲ ಕಡೆಗೆ ಸುದ್ದಿಯಾಯಿತು.  ವುಹಾನ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು.  ಜನರನ್ನು ಮನೆಗಳಲ್ಲಿ ಅಮಾನವೀಯ ರೀತಿಯಲ್ಲಿ ಕೂಡಿ ಹಾಕಲಾಯಿತು.  ಇದು ಅವರ ಅತಂತ್ರ ಸ್ಥಿತಿಗೆ ಹಿಡಿದ ಕನ್ನಡಿ.  ಕೊನೆಗೆ ಕಡಿಮೆ ಸಾವುಗಳನ್ನು ದಾಖಲಿಸಿ (ಸೋಂಕು ತಗುಲಿದವರ ಮತ್ತು ಸತ್ತವರ percentage ಪ್ರಕಾರ ನೋಡಿದರೆ), ಈಗ ಏನೂ ಆಗೇ ಇಲ್ಲವೆನ್ನುವಂತೆ ಮೊದಲೇ expression ಇರದ ಮುಖಗಳು ಈಗಂತೂ ಮುಖ ಗಂಟು ಹಾಕಿಕೊಂಡ ಹಾಗೆ ಎಲ್ಲ ಕಡೆ ಕಂಡು ಬರುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ಸಾರ್ಸ್, H1-N1, ಹಕ್ಕಿ ಜ್ವರ ಮೊದಲಾದವುಗಳಿಂದ ಪೂರ್ವೋತ್ತರ ದೇಶಗಳು ಬಳಲಿದ್ದವು, ಅದರಿಂದಾಗಿ ಈ ಕೋವಿಡ್-19 ಅನ್ನು ಎದುರಿಸಲು ಅವೆಲ್ಲ ದೇಶಗಳು ಪರೋಕ್ಷವಾಗಿ ತಯಾರಾಗಿದ್ದವು.  ಆದರೆ, ಕೆಲವು ಯೂರೋಪಿಯನ್ ದೇಶಗಳು ಮತ್ತು ಅಮೇರಿಕದಲ್ಲಿ ಈ ರೀತಿ ಹಿಂದೆಂದೂ ಆಗಿರದ ಕಾರಣದಿಂದ, ಮೊಟ್ಟ ಮೊದಲನೇ ಬಾರಿಗೆ ಇಲ್ಲಿಯ ಜನ (ಈ ಪ್ರಮಾಣದಲ್ಲಿ) ಸಂಕಷ್ಟವನ್ನು ಅನುಭವಿಸಬೇಕಾಗಿ ಬಂತು ಎನ್ನುವುದು ಅನೇಕರ ಅಂಬೋಣ.

***
ಕುತಂತ್ರ: ಚೈನಾದವರು ಮಹಾ ಬುದ್ದಿವಂತರು.  ವುಹಾನ್ ಹತ್ತಿರದ ತಮ್ಮ ಮಿಲಿಟರಿ ಲ್ಯಾಬೋರೇಟರಿ ಒಂದರಲ್ಲಿ ಈ ಹೊಸ ವೈರಸ್ಸನ್ನು ಸೃಷ್ಟಿಸಿ ಜಗತ್ತಿಗೇ ಬಿಡುಗಡೆ ಮಾಡಿ ಜಗತ್ತನ್ನು ಆಳುವ ಯೋಚನೆ ಹೊಂದಿದ್ದರು.  ಅಥವಾ ಲ್ಯಾಬ್‍ನಲ್ಲಿದ್ದ ವೈರಸ್ಸು ಯಾರದ್ದೋ ತಪ್ಪಿನಿಂದ ಹೊರಗೆ ಬಂದಿತೆಂದು ಅನೇಕ ಕಡೆ ಓದಲು ಸಿಗುತ್ತದೆ.  ಹಾಗಾಗಿ, ಹುಬೈ ಪ್ರಾಂತ್ಯದಲ್ಲಿ ಮೊದಲು ಇದರ ಪರಿಚಯವಾಯಿತು.  ಆದರೆ, ಇದರ ಪರಿಣಾಮ ಉಳಿದ ರಾಜ್ಯಗಳ ಮೇಲೆ ಅಷ್ಟೊಂದು ಆಗಲಿಲ್ಲ.

ನೀವೇ ಯೋಚಿಸಿ: ವುಹಾನ್ ನಿಂದ ಇಂಟರ್‌ನ್ಯಾಷನಲ್ ಪ್ರಯಾಣಿಕರ ಮುಖೇನ ಅನೇಕ ದೇಶಗಳಿಗೆ ಈ ಕೊರೋನಾ ವೈರಸ್ ಹರಡಿರುವಾಗ, ಆಂತರಿಕ ಚೈನಾದೊಳಗೇ ಇದು ಬೇರೆ ಕಡೆ ಏಕೆ ಹಬ್ಬಲಿಲ್ಲ?  ಚೈನಾದ ಅಂಕಿ-ಅಂಶಗಳನ್ನು ನಂಬಬೇಕೋ ಬಿಡಬೇಕೋ ಗೊತ್ತಿಲ್ಲ, ಆದರೂ ಅವರು ಹೇಳುವ ಹಾಗೆ ಬರೀ ಹುಬೈ ಪ್ರಾಂತ್ಯದಲ್ಲಿ ಮಾತ್ರ ಸಾವುಗಳಾಗಿವೆಯೇ? ಒಂದೂವರೆ ಬಿಲಿಯನ್‌ನಷ್ಟು ಜನರಿರುವ ಚೈನಾದಲ್ಲಿ (ಈ ಲೇಖನ ಬರೆಯುವ ಹೊತ್ತಿಗೆ) ಕೇವಲ 81,802 ಜನರಿಗೆ ಸೋಂಕು ತಗಲಿದ್ದು, ಅವರಲ್ಲಿ ಕೇವಲ 3,333 ಜನರು ಮಾತ್ರ ಸಾವಿಗೆ ಈಡಾಗಿದ್ದಾರೆ ಎಂದರೆ ಹೇಗೆ ನಂಬುವುದು.  ಸೋಂಕು ತಗುಲಿದವರ ಸಂಖ್ಯೆಯಲ್ಲಿ (330 ಮಿಲಿಯನ್ ಜನರಿರುವ) ಅಮೇರಿಕ 396,981 ಒಟ್ಟು ಕೇಸುಗಳನ್ನು ದಾಖಲಿಸಿ ಅವರಲ್ಲಿ 12,758 ಜನರು ಮರಣ ಹೊಂದಿರುವುದನ್ನು ಪ್ರಕಟಿಸಿರುವುದನ್ನು ನೀವೇ ನೋಡಬಹುದು.  ಅಲ್ಲದೇ ಒಂದೂವರೆ ಬಿಲಿಯನ್ ಜನರಿರುವ ಚೈನಾ ಇವತ್ತಿಗೆ ಒಟ್ಟು ಕೇಸುಗಳಲ್ಲಿ ಉಳಿದ ರಾಷ್ಟ್ರಗಳಿಗೆ ಹೋಲಿಸಿದಾಗ ಐದನೇ ಸ್ಥಾನಕ್ಕೆ ಇಳಿದಿರುವುದನ್ನೂ ನೋಡಬಹುದು.


Image 1: COVID-19 World view (April 07, 2020 at 9:23 PM ET)



Image 2: COVID-19 China view (April 07, 2020 at 9:23 PM ET)

ಇನ್ನು ಎರಡನೆಯ ಚಿತ್ರದಲ್ಲಿ, ಹುಬೈ ಪ್ರಾಂತ್ಯದ ಒಟ್ಟು ಕೇಸುಗಳು 67,803.  ಉಳಿದ 30 ರಾಜ್ಯಗಳಲ್ಲಿ ಉಳಿದ ಹದಿಮೂರು ಸಾವಿರ ಕೇಸುಗಳು ಚದುರಿರುವುದನ್ನು ಕೂಡ ಕಾಣಬಹುದು.
ಈ ಅಂಕಿ-ಅಂಶಗಳ ಪ್ರಕಾರ, ಚೈನಾದವರು ಬರೀ ಇಂಟರ್‌ನ್ಯಾಷನಲ್ ಪ್ರಯಾಣಿಕರೆಂದೋ ಅಥವಾ ಅವರ ಪ್ಯಾಕೇಜು/ಪಾರ್ಸೆಲ್ಲುಗಳ ಮೂಲಕ ಪ್ರಪಂಚದಾದ್ಯಂತ ಕೋವಿಡ್ ಹರಡಿತೆಂದು ಊಹಿಸಬಹುದು.  ಇಲ್ಲವೆಂದರೆ, ಅವರ ನಂಬರುಗಳು ಖಂಡಿತ ನಂಬಲರ್ಹವಲ್ಲದವು.  ಉದಾಹರಣೆಗೆ, ಹುಬೈ ಪ್ರಾಂತ್ಯದಿಂದ ಚೈನಾದ ಉಳಿದ ದೊಡ್ಡ ನಗರಗಳಿಗೆ ಜನರು ಹೋಗೇ ಇಲ್ಲವೇ? ನಮ್ಮ ನ್ಯೂ ಯಾರ್ಕ್‌ ನಗರದಲ್ಲಿ ಇಷ್ಟೊಂದು ಜನರು ಬಳಲುತ್ತಿರುವಾಗ ಚೈನಾದ ನಗರಗಳು ನಿರಾತಂಕವಾಗಿರಲು ಕಾರಣವೇನು?

***
ಇದು ಚೈನಾದವರ ಅತಂತ್ರವೋ, ಕುತಂತ್ರವೋ... ಅದನ್ನು ನಿಮ್ಮ ತೀರ್ಮಾನ, ಅಭಿಪ್ರಾಯಗಳಿಗೇ ಬಿಡೋಣ.  ಆದರೆ, ಇಷ್ಟಂತೂ ಖಂಡಿತ: ಇದರಿಂದಾಗಿ/ಇವರಿಂದಾಗಿ ವಿಶ್ವದಾದ್ಯಂತ ಅನೇಕ ವ್ಯಾಪಾರ ವಹಿವಾಟುಗಳು ನೆಲಕಚ್ಚಿದವು.  ಅನೇಕರ ರಿಟೈರ್‌ಮೆಂಟ್ ಹಣ ಕೆಲವೇ ವಾರಗಳಲ್ಲಿ ಮಾಯವಾಯಿತು.  ಎಷ್ಟೋ ಜನರು ಹಸಿವಿನಿಂದ ಬಳಲುವಂತಾಯ್ತು.  ನಾವು ಇನ್ನಾರು ವಾರಗಳಲ್ಲಿ ಹೊರಗೆ ಹೊರಟರೂ ನಮ್ಮ ಅರ್ಥ ವ್ಯವಸ್ಥೆ ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಕೆಲವೇ ವರ್ಷಗಳೇ ಬೇಕಾಗುತ್ತದೆ.

ಇದು ಮಾನವನ ದೌರ್ಜ್ಯನ್ಯಕ್ಕೆ ನಿಸರ್ಗ ಕೊಟ್ಟ ಪೆಟ್ಟು ಎಂದು ಒಂದಿಷ್ಟು ಜನ ನಂಬಿಕೊಂಡಿದ್ದಾರೆ, ಇನ್ನು ಕೆಲವರು ಇದು ಮಾನವ ನಿರ್ಮಿತ ಹೊಗೆ ಬರದ ನ್ಯೂಕ್ಲಿಯರ್ ಬಾಂಬು ಎಂದು ಚೈನಾದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ!

Wednesday, April 01, 2020

ನೀರವತೆಯ ಮರಣ ಮೃದಂಗ

ಎಲ್ಲೆಲ್ಲೂ ಶೂನ್ಯತೆ, ಎಲ್ಲ ಕಡೆ ನಿಶ್ಶಬ್ಧ, ಒಂದು ರೀತಿಯಲ್ಲಿ ಇಡೀ ಪ್ರಪಂಚದ ಚಲನವಲನವೇ ನಿಂತು ಹೋದ ಹಾಗೆ, ಒಂದು ರೀತಿಯಲ್ಲಿ ಜಗತ್ತಿನ ನರನಾಡಿಗಳೇ ಸ್ತಬ್ಧವಾದ ಹಾಗೆ.  ಬೀಸುತ್ತಿರುವ ಗಾಳಿಯಿಂದ ಹಿಡಿದು, ಹರಿಯುವ ನೀರಿನವರೆಗೆ, ಪಕ್ಷಿ-ಪ್ರಾಣಿ ಸಂಕುಲಗಳು ಬೆರಗಾಗಿ, ಗಿಡ-ಮರಗಳೂ ತಮ್ಮನ್ನು ತಾವು ಚಿವುಟಿ ನೋಡಿಕೊಳ್ಳುವ ಹಾಗೆ... ಮನುಕುಲ ಸಂಪೂರ್ಣ ತಟಸ್ಥಗೊಂಡಿದೆ.  ಜೊತೆಗೆ ತನ್ನ ಜೀವಕ್ಕೇ ಕುತ್ತಾಗಿ ಹೆದರಿಕೊಂಡು ತಾನು ಕಟ್ಟಿಕೊಂಡ ಗೂಡಿನಲ್ಲೇ ಅವಿತು ಕುಳಿತಿದೆ.

ಇವೆಲ್ಲವೂ ಆಗಿರುವುದು ಯಾವುದೋ ದೈತ್ಯ ಪರಂಪರೆಯ ಬೂಟಾಟಿಕೆಯ ಆಕ್ರಮಣದಿಂದಲ್ಲ, ಯಾವುದೋ ಭೀಕರ ಶಕ್ತಿಯ ಅವ್ಯಾಹತ ಹೊಡೆತದಿಂದಲ್ಲ.  ಇವೆಲ್ಲವೂ ಆಗಿರುವುದು ಯಾವುದೋ ನೆರಳಿಗಿಂತಲೂ ಮಿಗಿಲಾದ, ಮನಸ್ಸಿಗಿಂತಲೂ ವೇಗವಾದ, ಬೆಂಕಿಗಿಂತಲೂ ತೀಕ್ಷ್ಣವಾದ, ಪ್ರಕಾಶಮಾನವಾದ ಆಯುಧದಿಂದಲ್ಲ... ಎಲ್ಲಕ್ಕೂ ಮಿಗಿಲಾಗಿ ಕಣ್ಣಿಗೆ ಕಾಣದ, ಇತ್ತ ಕಡೆ ಪೂರ್ಣ ಪ್ರಮಾಣದಲ್ಲಿ ಜೀವವೂ ಇರದ, ಎಲ್ಲೋ ಹುಟ್ಟಿ ಎಲ್ಲೋ ಪಸರಿಸಿ, ಎಲ್ಲೋ ರೂಪ ಪರಿವರ್ತನೆಯನ್ನು ಪಡೆದು ಪ್ರಪಂಚದಾದ್ಯಂತ ಇರುವ ಟ್ರಿಲಿಯನ್ನುಗಟ್ಟಲೆ ಜೀವ ಪ್ರಮಾಣದಲ್ಲಿ ಕೇವಲ ಮಾನವನನ್ನು ಆಧರಿಸಿ ಕಾಡುತ್ತಿರುವುದು ಮೈಕ್ರೋಸ್ಕೋಪಿನಲ್ಲೂ ಕಷ್ಟಪಟ್ಟು ಹುಡುಕಿದರೆ ಕಾಣುವ ಒಂದು ವೈರಾಣು, ಅಷ್ಟೇ!

ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ.  ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಬೇಧಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು!

***

ಏಳು ಬಿಲಿಯನ್‌ಗಿಂತಲೂ ಹೆಚ್ಚಿರುವ ನಾವೆಲ್ಲ ನಮ್ಮ ಪರಾಕ್ರಮದ ಉತ್ತುಂಗದಲ್ಲಿದ್ದೆವು.  ಪಕ್ಷಿಗಿಂತಲೂ ಮಿಗಿಲಾಗಿ ಹಾರಿದೆವು, ಮೀನಿಗಿಂತಲೂ ವೇಗವಾಗಿ ಈಜಿದೆವು.  ಇಡೀ ಭೂಮಂಡಲದ ಮೂಲೆ-ಮೂಲೆಗಳಲ್ಲಿ ನಮ್ಮ ಉಸಿರಿನ ಸೋಂಕನ್ನು ಪಸರಿಸಿದೆವು.  ನಾವು ಯಂತ್ರಗಳನ್ನು ಹುಟ್ಟುಹಾಕಿದೆವು, ತಂತ್ರಗಳನ್ನು ಹೆಣೆದೆವು.  ನಮ್ಮ ಇರುವಿಕೆಯನ್ನು ಪ್ರಶ್ನಿಸುವಷ್ಟರ ಮಟ್ಟಿಗೆ ಆಗಿಂದಾಗ್ಗೆ ಹೊಡೆತಗಳನ್ನೂ ತಿಂದೆವು.  ಸುಮಾರು ನೂರು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಗಾಳಿಯಲ್ಲಿ ಹರಡಿದ ಫ್ಲೂ (ಸ್ಪಾನಿಷ್ ಫ್ಲೂ) ಐವತ್ತು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡ ದಾಖಲೆಗಳಿವೆ.  ತದನಂತರ ಐವತ್ತರ ದಶಕದಲ್ಲಿ ಹಾಂಗ್‌ಕಾಂಗ್‌ನಿಂದ ಶುರುವಾಗಿ ಎಲ್ಲಕಡೆಗೆ ಹರಡಿದ ಏಷಿಯನ್ ಫ್ಲೂ, ಒಂದು ಮಿಲಿಯನ್‌ಗೂ ಹೆಚ್ಚು ಜನರನ್ನು ಕೊಂದು ಹಾಕಿತು.  ತದನಂತರ SARS, H1N1, AIDS ಮೊದಲಾದ ಖಾಯಿಲೆಗಳಿಂದ ಮನುಕುಲ ಸತತವಾಗಿ ಸಂಕಷ್ಟಕ್ಕೆ ಒಳಗಾಗಿದ್ದರೂ, ಕಳೆದ ನೂರು ವರ್ಷಗಳಲ್ಲಿ ಇಡೀ ಪ್ರಪಂಚವನ್ನೇ ಬಂದ್ ಮಾಡಿದ ಕೀರ್ತಿ ೨೦೧೯-೨೦ರ ಕೋವಿಡ್ ಕೊರ‍ೋನಾ ವೈರಸ್‌ಗೆ ಸಲ್ಲುತ್ತದೆ. ನಮ್ಮ ಇತಿಹಾಸದಲ್ಲಿ  ಬರೀ ಫ್ಲೂ ಖಾಯಿಲೆ ಒಂದೇ ಅಲ್ಲದೇ ಪ್ಲೇಗ್, ಮೀಸಲ್ಸ್, ಸ್ಮಾಲ್‌ಪಾಕ್ಸ್, ಮೊದಲಾದವೂ ಕೂಡ ತಮ್ಮ ಶಕ್ತ್ಯಾನುಸಾರ ಮಾನವನನ್ನು ಕಟ್ಟಿಹಾಕಿವೆ.  ಇವೆಲ್ಲ ಸರ್ವವ್ಯಾಪಿಯಾಗಿ ಗಾಳಿಯಲ್ಲೇ ಹರಡುವಂಥ ಮಹಾಮಾರಿಗಳ ವಿಶೇಷವೆಂದರೆ, ಈ ಎಲ್ಲ ಖಾಯಿಲೆಗಳು ಮೂಲತಃ  ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಜೀವ-ನಿರ್ಜೀವ ಹಂತದಲ್ಲಿರುವ ಕೀಟಾಣು-ಜೀವಾಣುಗಳಿಂದ ಶುರು ಆದಂತವುಗಳು.  ಹಾಗೆಯೇ, ಈ ಎಲ್ಲ ಖಾಯಿಲೆಗಳು ನಮಗೆ ಬಂದಿದ್ದರಿಂದಲೇ ನಮ್ಮ ವೈದ್ಯಕೀಯ ವಿಜ್ಞಾನ ಇಷ್ಟೊಂದು ಮುಂದುವರೆದಿರುವುದು ಎಂದರೂ ತಪ್ಪಾಗಲಾರದು.  ಒಂದು ರೀತಿಯಲ್ಲಿ ಕಣ್ಣಿಗೆ ಕಾಣದ ಈ ಸೂತ್ರಧಾರಿ ಜೀವ ವೈವಿಧ್ಯ ನಮ್ಮನ್ನು ಕಾಲಕ್ರಮೇಣ ಕುಣಿಸುತ್ತಿರುವುದು.

***

ಮನುಕುಲ ಇದನ್ನೂ ಗೆದ್ದು ನಿಲ್ಲುತ್ತದೆ.  ಆದರೆ, ಈ ಬಾರಿ ವಿಶೇಷವಾದ ಪಾಠವನ್ನು ಕಲಿಯುವುದರ ಮೂಲಕ ಇನ್ನು ಮುಂದಿನ ಐವತ್ತು-ಎಪ್ಪತ್ತೈದು ವರ್ಷಗಳಿಗಾಗುವಷ್ಟರ ಮಟ್ಟಿನ ಅನುಭವವನ್ನು ಪಡೆಯುತ್ತದೆ.  ಉತ್ತುಂಗಕ್ಕೆ ಏರುತ್ತಿರುವ ನಾವು ಎಷ್ಟು ಚಿಕ್ಕವರು ಎಂಬುದನ್ನು ನೆನಪಿಸುವುದಕ್ಕಾದರೂ ಇದು ಬೇಕಾಗುತ್ತದೆ.  ಹಿಂದಿನ ಮಹಾಮಾರಿ ರೋಗಗಳ ಮೂಲದಲ್ಲಿ ಬರೀ ನಿಸರ್ಗದ ಕೈ ಇತ್ತೋ, ಅಥವಾ ಜಾಗತಿಕ ಯುದ್ಧಗಳಲ್ಲಿ ತನ್ನನ್ನು ತಾನೇ ಹುಡುಕಿಕೊಳ್ಳುತ್ತಿರುವ ಮಾನವ ತನ್ನ ಸಂತತಿಯನ್ನೇ ಪರೀಕ್ಷೆಗೊಡ್ಡುವ ವಿಷಮ ಹಂತಕ್ಕೆ ಬಂದು ತಲುಪಿದ್ದನೋ ಯಾರು ಬಲ್ಲವರುಆದರೆ, ಇಂದಿನ ದಿನಗಳಲ್ಲಿ ಅಧಿಕವಾಗಿ ಹರಡುತ್ತಿರುವ ಕೋವಿಡ್ ಸಂತತಿಯ  ಹಿನ್ನೆಲೆಯಲ್ಲಿ ಮಾನವನ ಹುನ್ನಾರ ಖಂಡಿತ ಇದೆ - ಇದು, ಒಂದೇ ಮುಗ್ಧ ಜೀವಿಗಳ ಮಾರಣ ಹೋಮದ ಫಲ, ಅಥವಾ ಯಾವುದೋ ಒಂದು ದೇಶ, ಜಗತ್ತಿನಲ್ಲಿ ತಾನೇ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆದು ನಿಲ್ಲಬೇಕು ಎನ್ನುವುದರ ಹುನ್ನಾರ.  ಇಂದಿನ ವೈರಸ್ ವಿದ್ಯಮಾನಗಳನ್ನು ಮಾನವ ನಿರ್ಮಿತ ಎಂದುಕೊಂಡರೆ, ಕೆ.ಎಂ. ಗಣೇಶಯ್ಯನವರ ಶಿಲಾಕುಲ ವಲಸೆಯಲ್ಲಿ ಬರೆದ ಹಾಗೆ, ನಮ್ಮ ಇತಿಹಾಸವನ್ನು, "ಮಾನವ ಹುಟ್ಟಿದ, ಕಾದಾಡಿದ, ಮತ್ತೆ ಸತ್ತ" ಎಂದು ಸಂಕ್ಷಿಪ್ತವಾಗಿ ವರದಿ ಮಾಡಲೇನೂ ಅಡ್ಡಿಯಿಲ್ಲ. ಇನ್ನೂರು ವರ್ಷಗಳ ಹಿಂದೆ ಬ್ರಿಟೀಷ್ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ಎಲ್ಲ ಕಡೆ ಮೆರೆದಿತ್ತು - ಜನರ ಜಲ, ಕುಲ, ನೆಲೆ, ಭಾಷೆ, ಸಂಸ್ಕೃತಿ, ಧರ್ಮಗಳನ್ನು ಬದಿಗೊತ್ತಿ ತನ್ನ "ಧರ್ಮ"ವನ್ನು ಅದು ಹೇರಿತ್ತು.  ಆದರೆ, ಆಗ ಜಗತ್ತು ವಿಭಿನ್ನವಾಗಿತ್ತುವಿಶ್ವದೆಲ್ಲ ಕಡೆಯ ದೇಶ-ಜನರಲ್ಲಿ ಇಷ್ಟೊಂದು ಮಟ್ಟದ ಸಾಮರಸ್ಯ ಇರಲಿಲ್ಲ.  ಆದರೆ, ಇಂದು ಜಗತ್ತು ಒಂದು ಜಾಗತಿಕ ವಲಯವಾಗಿದೆ, ಪ್ರತಿಯೊಂದು ರೀತಿಯಲ್ಲಿಯೂ ನಾವು ಮತ್ತೊಬ್ಬರನ್ನುಅವಲಂಬಿಸಿದ್ದೇವೆ. ಈ ಸಂದರ್ಭದಲ್ಲಿ ಜಗತ್ತಿನ ಯಾವುದೋ ಒಂದು ಭಾಗ ತನ್ನ ಹೆಚ್ಚುಗಾರಿಕೆಯನ್ನು ಇತರರ ಸೋಲಿನಲ್ಲಿ ಪ್ರದರ್ಶಿಸುವುದು ಕಷ್ಟಸಾಧ್ಯ.

***

ಗಾಳಿ ಇರುವಲ್ಲಿ ಧೂಳು ಇರುವುದು ಸಹಜ.  ಆದರೆ, ಆ ಧೂಳೇ ನಮ್ಮನ್ನು ಸಂಕಷ್ಟಕ್ಕೆ ತಳ್ಳದಿರಲಿ.  ವಿಕಾರಿ ನಾಮ ಸಂವತ್ಸರದ ವಿಕಾರತೆ, ಅದರ ಕಾಲ ಅಂತ್ಯವಾದ ನಂತರ ಇನ್ನಾದರೂ ಕಡಿಮೆ ಆಗಲಿ.  ಕಳೆದೊಂದು ವರ್ಷದಿಂದ ಅತಿವೃಷ್ಟಿ, ಕಾಡಿನ ಬೆಂಕಿ, ಧರ್ಮ ಸಂಬಂಧಿ ಅತ್ಯಾಚಾರ-ಅನಾಚಾರಗಳಲ್ಲಿ ನೊಂದ ಎಲ್ಲರಿಗೂ ಸಾಂತ್ವನ ಸಿಗಲಿ.  ಈ ಕೊರೋನಾ ವೈರಸ್ಸು ನಮ್ಮ ನಿಜ ಸ್ಥಿತಿಯನ್ನು ಹೊರತರುತ್ತಿದೆ.  ಕುಲುಮೆಯಲ್ಲಿ ಕುದಿಸಿ ಪುಟಗಟ್ಟಿದ ಚಿನ್ನದಲ್ಲೇ ಒಂದು ಆಕರ್ಷಕ ಆಕಾರ ಮತ್ತು ಹೊಳಪು ಬರುವುದು, ಸುಪ್ಪತ್ತಿಗೆಯ ವಲಯ ಸೃಷ್ಟಿಸುವ ಆರಾಮಿನಲ್ಲಿ ಎಂದೂ ಸಂಶೋಧನೆಗಳಾಗಲೀ, ಆವಿಷ್ಕಾರಗಳಾಗಲೀ ನಡೆಯವು.  ಹಾಗೆಯೇ, ಈ ಪ್ರಸ್ತುತ (ದುಃ)ಸ್ಥಿತಿಯಲ್ಲಿ, ಮನುಕುಲ ಮತ್ತೆ ಸೆಡ್ಡು ಹೊಡೆದು ನಿಲ್ಲುವಂಥ ಸಂಶೋಧನೆಗಳು, ನವನಾವಿನ್ಯತೆಗಳು ಪ್ರಚುರಗೊಳ್ಳುತ್ತವೆ.  ಮನುಕುಲ ಹಿಂದಿಗಿಂತಲೂ ಮತ್ತಷ್ಟು ಬಲಶಾಲಿಯಾಗುತ್ತದೆ.  ಆದರೆ, ನಾವು ಬಲವಾದಷ್ಟೂ ನಿಸರ್ಗವನ್ನು ಗೌರವಿಸುವುದನ್ನು ಕಲಿಯಬೇಕು, ಇಲ್ಲವೆಂದಾದರೆ ಇದಕ್ಕಿಂತಲೂ ಹೆಚ್ಚು ಬೆಲೆ ಕೊಡಬೇಕಾದ ಕಾಲ ಬರುವುದು ದೂರವೇನಿಲ್ಲ.


Saturday, July 19, 2008

ಕಗ್ಗಂಟನ್ನು ಬಿಡಿಸುವ ಬಗೆ ಹೇಗೆ?

ಚಿತ್ರವನ್ನು ಸುಮ್ಮನೇ ಬ್ಲಾಗ್‌ನಲ್ಲಿ ಹಾಕಿದರೆ ಅದೇ ಒಂದು ಬರಹ - ಬೇರೆ ಏನೂ ಹೇಳೋದೇ ಬೇಡ!

(ಚಿತ್ರ ಕೃಪೆ: http://discussions.virtualdr.com)


ನಮ್ಮ ಕಂಪನಿಯಲ್ಲಿ ಈಗಾಗಲೇ ಕೆಲಸಗಾರರ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ನೆಗೋಷಿಯೇಷನ್ನಲ್ಲಿ ತೊಡಗಿರುವ ಮ್ಯಾನೇಜ್‌ಮೆಂಟಿನವರು ಮುಂದೆ ಒಂದುವೇಳೆ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ಸರಿಹೊಂದದಿದ್ದಲ್ಲಿ ಅವರೇನಾದರೂ ಮುಷ್ಕರ ಹೂಡಿದರೆಂದರೆ ಕೆಲಸ ಕಾರ್ಯಗಳು ನಿಲ್ಲದಿರಲಿ ಎಂದು ಮ್ಯಾನೇಜ್‌ಮೆಂಟಿನ ಎಲ್ಲರಿಗೂ ಯೂನಿಯನ್‌ನವರ ಕೆಲಸಗಳಲ್ಲಿ ತರಬೇತಿಯನ್ನು ಕೊಡುವುದು ಮಾಮೂಲಿ. ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ರಿಪೀಟ್ ಆಗುವಂತಹ ವ್ಯವಸ್ಥೆ. ಅದರಂತೆ ಈ ವರ್ಷ ನನಗೆ ಟೆಲಿಫೋನ್ ಲೈನ್‌ಗಳನ್ನು ಇನ್ಸ್ಟಾಲ್ ಹಾಗೂ ದುರಸ್ತಿ ಮಾಡುವ ಟ್ರೈನಿಂಗ್ ಕೊಡುತ್ತಿದ್ದಾರೆ. ಹಾಗೆ ನಾನು ಆ ತರಬೇತಿಗೆ ಹೋದ ಮೊದಲನೇ ದಿನ ಅಲ್ಲಿನ ಬಿಳಿ ಬೋರ್ಡಿನಲ್ಲಿ ಈ ಚಿತ್ರದ ಕಪ್ಪು-ಬಿಳಿ ಆವೃತ್ತಿಯೊಂದನ್ನು ತೂಗು ಹಾಕಿದ್ದರು. ನಾನು ಇದು ಎಲ್ಲಿಯದು ಎಂದು ಹತ್ತಿರ ಹೋಗಿ ನೋಡಲಾಗಿ ಅದು ಭಾರತದ್ದು ಎಂದು ತಿಳಿಯಿತು. ನಮ್ಮ ಕ್ಲಾಸಿನಲ್ಲಿ ನಾನೊಬ್ಬನೇ ಭಾರತೀಯ, ಈ ಚಿತ್ರವನ್ನು ನೋಡಿದ ಹೆಚ್ಚಿನವರು - ಭಾರತದಲ್ಲಿ (ಹೀಗೂ) ಹೀಗಿದೆಯೇ ಎಂದು ನನ್ನನ್ನು ಪ್ರಶ್ನಿಸುವವರಂತೆ ಮುಖ ಮುಖ ನೋಡಿಕೊಳ್ಳುತ್ತಿರಲು ನಾನೂ ಈ ಕ್ರಿಸ್‌ಕ್ರಾಸ್ ಆದ ಲೈನುಗಳು, ಅದರ ಹಿಂದಿನ ವ್ಯವಸ್ಥೆಯ ಬಗ್ಗೆ ತುಸು ಯೋಚಿಸಿಕೊಂಡೆ.

***

ಈ ಚಿತ್ರವನ್ನು ಬೇಕಾದಷ್ಟು ರೀತಿಯಲ್ಲಿ ವ್ಯಾಖ್ಯಾನಿಸಬಹುದು - ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಉತ್ತರಿಸಬಹುದು:
- ಹೀಗೆ ಗಂಟು-ಗಂಟಾದ ಫೋನ್, ಕೇಬಲ್, ಎಲೆಕ್ಟ್ರಿಕ್ ಲೈನ್‌ಗಳು ಇರುವುದೇ ಹೀಗೋ ಅಥವಾ ಯಾವುದೋ ದೊಡ್ಡ ಬಿರುಗಾಳಿಯ ನಂತರ ಹುಟ್ಟಿದ ಸ್ಥಿತಿಯೋ?
- ಇವುಗಳನ್ನು ರಿಪೇರಿ ಮಾಡುವ ಬಗೆ ಹೇಗೆ?
- ಈ ರೀತಿ ಹಾಸು ಹೊಕ್ಕಾದ ಲೈನುಗಳಲ್ಲಿ ಯಾರದ್ದು ಯಾವುದು ಎಂದು ಹೇಗೆ ಕಂಡು ಹಿಡಿಯಲಾಗುತ್ತದೆ?
- ಈ ಲೈನುಗಳಲ್ಲಿ ಯಾವುದೋ ಒಂದು ಕೆಟ್ಟು ಹೋದರೆ ಅದನು ದುರಸ್ತಿ ಹೇಗೆ ಮಾಡುತ್ತಾರೆ, ಮಾಡುವವರು ಯಾರು?
- ಇದು ಎಲ್ಲೋ ಬಾಂಬೆಯದೋ ಉತ್ತರ ಭಾರತದ್ದೋ ಚಿತ್ರವಿದ್ದಿರಬಹುದು, ಇದೇ ಚಿತ್ರವನ್ನು ಇಡೀ ಭಾರತದಾದ್ಯಂತ ಹೀಗೇ ಎಂದು ಜೆನರಲೈಸ್ ಮಾಡಲಾಗುತ್ತದೆಯೇ?
- ಅಷ್ಟೊಂದು ಜನರಿರುವ ವ್ಯವಸ್ಥೆಯಲ್ಲಿ ಒಂದು ಫೋನ್ ಲೈನ್‌ಗಳಿಗಾಗಲೀ, ಕೇಬಲ್, ಎಲೆಕ್ಟ್ರಿಕ್ ತಂತಿಗಳಿಗೆ ಸರಿಯಾದ ನೆಲೆ ಏಕಿಲ್ಲ?
- ಈ ವ್ಯವಸ್ಥೆಯ ವಿರುದ್ಧ ಅಥವಾ ಪರವಾಗಿ ನಿಮ್ಮ ಹೋರಾಟಗಳಿದ್ದಲ್ಲಿ ಎಲ್ಲಿಂದ ಆರಂಭಿಸುವಿರಿ?
- ನಿಮ್ಮ ಉದ್ಯಮ ಅಥವಾ ಮನೆಯ ಮುಖ್ಯ ಸಂಪರ್ಕ ವಾಹಿನಿಗಳು ಇದೇ ರೀತಿಯ ಕಗ್ಗಂಟಿನಲ್ಲಿ ಹಾದು ಹೋಗುವುದಾದರೆ ನಿಮ್ಮ ಪ್ರಾಸೆಸ್ಸುಗಳು ಹಾಗೂ ಅವುಗಳ ನಿಖರತೆ, ರಕ್ಷಣೆ ಮೊದಲಾದವುಗಳ ಮೇಲೆ ಎಷ್ಟರ ಮಟ್ಟಿನ ನಂಬಿಕೆ ಇಡಬಹುದು?
- ಈ ಲೈನುಗಳ ಮೇಲೆ ಹೊಸದನ್ನು ಹೇಗೆ ಇನ್ಸ್ತಾಲ್ ಮಾಡಲಾಗುತ್ತದೆ, ಹಳೆಯದನ್ನು ಹೇಗೆ ದುರಸ್ತಿ ಮಾಡಲಾಗುತ್ತದೆ?

***

ಬನಾರಸ್ಸಿನಲ್ಲಿ ನಾನಿದ್ದಷ್ಟು ದಿನಗಳಲ್ಲಿ ಅಲ್ಲಿಯ ಉತ್ತಮೋತ್ತಮ ಪ್ರೊಫೆಸರುಗಳ ಮನೆಗಳಲ್ಲಿ ಪ್ರತಿನಿತ್ಯವೂ ಸಂಜೆಯಾಗುತ್ತಿದ್ದಂತೆ ಮನೆಯ ಪಕ್ಕದ ಎಲೆಕ್ಟ್ರಿಕ್ ತಂತಿಗಳಿಗೆ ಅವರ ಮಹಡಿಯಿಂದ ಕೋಲಿನ ಸಹಾಯದಿಂದ ತಮ್ಮ ಮನೆಯ ತಂತಿಗಳನ್ನು ಸಿಕ್ಕಿಸಿ ಕರೆಂಟನ್ನು ಕದಿಯುವುದನ್ನು ಮೊಟ್ಟ ಮೊದಲು ನೋಡಿದಾಕ್ಷಣ ಅಂದೇ ನನಗೆ ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ಒಂದು ರೀತಿಯ ರೋಷ ಬಂದಿತ್ತು. ನಮ್ಮೂರಿನ ಹಳ್ಳಿಗಳಲ್ಲಿ ಎಷ್ಟೋ ಜನ ಹೀಗೆ ಕರೆಂಟ್ ಕದಿಯುವುದನ್ನು ನಾನು ಕೇಳಿದ್ದೇನೆಯೇ ವಿನಾ ಪ್ರತಿದಿನವೂ ಹಾಡಹಗಲಿನಲ್ಲಿ ಒಬ್ಬ ಉನ್ನತ ಹುದ್ದೆಯ ಪ್ರೊಫೆಸರ್ ಹೀಗೆ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿಕೊಂಡಿರಲಿಲ್ಲ. ಬನಾರಸ್ಸಿನಿಂದ ಹಾಗೇ ಬಿಹಾರದ ಕೆಲವು ಊರುಗಳಲ್ಲಿ ಸುತ್ತಿ ಬರಲಾಗಿ ನನ್ನ ಕಲ್ಪನೆಯ ಭಾರತದ ಚಿತ್ರ ಸಂಪೂರ್ಣ ಬದಲಾಗಿ ಹೋಗಿತ್ತು ಎಂದರೆ ತಪ್ಪೇನೂ ಇಲ್ಲ. ನಾವು ದಕ್ಷಿಣದವರು ಆಲೋಚಿಸುವ ರೀತಿ ಒಂದು ಥರವಾದರೆ ಉತ್ತರ ಭಾರತದವರ ಗುಂಗೇ ಮತ್ತೊಂದು ಬಗೆ. ದಕ್ಷಿಣ ಭಾರತವನ್ನು ನೋಡಿ ಅದೇ ಭಾರತ ಎಂದು ಹೇಳಲಾಗದು, ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಎಲ್ಲ ದಿಕ್ಕುಗಳಲ್ಲೂ ಸಾಕಷ್ಟು ಅಲೆದಾಡಿ ನೋಡಿದಾಗ ಭಾರತದ ಒಂದು ಸ್ವರೂಪ ಸಿಕ್ಕಬಹುದು.

Single point of failure - ಎನ್ನುವ ಒಂದು ಹೊಸ ಅನಾಲಿಸ್ಸೀಸ್ ಅನ್ನು ಮುಗಿಸಿ ನಮ್ಮ ಕಂಪನಿಯ ನೆಟ್‌ವರ್ಕ್‌ನಲ್ಲಿ ಎಲ್ಲಿ ತೊಂದರೆ ಇದೆ, ಯಾವುದು ವೀಕೆಷ್ಟ್ ಲಿಂಕ್ ಎನ್ನುವ ವರದಿಯೊಂದನ್ನು ಕಳೆದ ವರ್ಷ ಪ್ರಸ್ತುತ ಪಡಿಸಿದ್ದೆ. ಅದರಿಂದಾಗಿ ಎಲ್ಲೆಲ್ಲಿ ಕೊರತೆಗಳಿವೆಯೋ ಅವುಗಳನ್ನು ನೀಗಿಸಲು ಹಲವಾರು ಸಣ್ಣ ಯೋಜನೆಗಳನ್ನು ಜಾರಿಗೊಳಿಸಲಾಯಿತು, ಕಳೆದ ವರ್ಷದ ಈ ಚಟುವಟಿಕೆಗಳ ಫಲವಾಗಿ ಈ ವರ್ಷ ನಮ್ಮಲ್ಲಿ ದೊಡ್ಡ ತೊಂದರೆಗಳು ಕಡಿಮೆಯೇ ಎನ್ನಬಹುದು. ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ (end-to-end) ಯಾವುದೇ ವ್ಯವಸ್ಥೆಯನ್ನು ನೋಡಿದರೆ ಅದರಲ್ಲಿ ವೀಕೆಷ್ಟ್ ಲಿಂಕ್‌ನ ಸ್ಟ್ರೆಂತ್ ಏನಿದೆ ಅದೇ ಆ ನೆಟ್‌ವರ್ಕ್‌ನ ಸ್ಟ್ರೆಂತ್ ಆಗುತ್ತದೆ. ಉದಾಹರಣೆಗೆ ಈ ಚಿತ್ರದಲ್ಲಿ ತೋರಿಸಿದ ತಂತಿಗಳ ಮೂಲಕ ನಿಮ್ಮ ಸಂಪರ್ಕ, ಕೇಬಲ್, ಎಲೆಕ್ಟ್ರಿಸಿಟಿ ಹಾದು ಬರುತ್ತಿದೆಯೆಂದಾರೆ, ಅದರಲ್ಲಿನ ಕೊರತೆಯೇ ನಿಮ್ಮ ಕೊರತೆಯಾಗುತ್ತದೆ - ಯೋಚಿಸಿ ನೋಡಿ.

ನಿಜ ಜೀವನದಲ್ಲಿ ನಿಮ್ಮೆದುರಿಗೆ ಹೀಗೆ ದುತ್ತನೆ ಎದುರಾಗುವ ಸಮಸ್ಯೆಯ ಕಗ್ಗಂಟನ್ನು ಎಲ್ಲಿಂದ ಬಿಡಿಸಲು ಆರಂಭಿಸುತ್ತೀರಿ? ಯಾರನ್ನು ಕಾಣುತ್ತೀರಿ? ಯಾರಿಗೆ ಉತ್ತರ ಹೇಳುತ್ತೀರಿ?