Sunday, December 05, 2021

ಸಾಕು ಬೇಕುಗಳ ಮರ್ಮ

ಪ್ರಪಂಚದಲ್ಲಿ ನೂರಕ್ಕೆ ಒಂಬತ್ತು ಜನ ದಿನದ ಊಟದ ಬಗ್ಗೆ ಚಿಂತೆ ಮಾಡ್ತಾರಂತೆ.  ನೂರರಲ್ಲಿ 12 ಜನಕ್ಕೆ ಅಕ್ಷರ ಬರೋದಿಲ್ಲವಂತೆ.  ಎಲ್ಲಕ್ಕಿಂತ ಮುಖ್ಯವಾಗಿ ನೂರರಲ್ಲಿ 11 ಜನ ಬಡತನದಲ್ಲಿ ಬದುಕುತ್ತಾರಂತೆ.  ಅಮೇರಿಕ ಅಭಿವೃದ್ಧಿ ಹೊಂದಿದ ದೇಶವಾದರೂ, ಇಲ್ಲಿನ ಕಾಲು ಭಾಗದಷ್ಟು ಜನರಿಗೆ ನಿವೃತ್ತಿಯಾದ ಮೇಲೆ ಬದುಕಲು ಯಾವುದೇ ಉಳಿತಾಯವೂ ಇಲ್ಲವಂತೆ.  ಈ ಅಂಕಿ ಅಂಶಗಳನ್ನೆಲ್ಲ ಸುಮ್ಮನೆ ನೀವು ಅಂತರ್ಜಾಲದಲ್ಲಿ ಹುಡುಕಿದರೆ ಅನೇಕ ಸಮೀಕ್ಷೆ ಮತ್ತು ಅಧ್ಯಯನಗಳ ಮೂಲಕ ದೊರೆಯುತ್ತವೆ.

ನಾವು ಹಣಕಾಸಿನ ವಿಚಾರದಲ್ಲಿ ನಮ್ಮ ನಿಲುವನ್ನು ಕಂಡುಕೊಳ್ಳುವಷ್ಟರಲ್ಲಿ ನಮ್ಮ ಜೀವನದ ಅರ್ಧ ಆಯಸ್ಸಿನ ಸಮೀಪ ಬಂದಿರುತ್ತೇವೆ.   ಅರ್ಧ ಜೀವನದ ತರುವಾಯ ಅನೀರೀಕ್ಷಿತವಾಗಿ ಹಲವಾರು ತೊಂದರೆಗಳು ಬಂದು, ಅವರವರ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗಬಹುದಾದರೂ ಹೆಚ್ಚಿನವರು ತಮ್ಮ ನಿವೃತ್ತಿಯ ಬದುಕಿನ ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಯೋಚಿಸಿಯೇ ಇರುತ್ತಾರೆ.  ಇಂತಹ ಸಮಯದಲ್ಲಿಯೇ ನಮ್ಮ ರಿಸ್ಕ್ ಮ್ಯಾನೇಜ್‌ಮೆಂಟ್ ಪ್ರಕ್ರಿಯೆ ಜಾಗರೂಕವಾಗಿರುವುದು.  ನಿಮ್ಮ ಬಳಿ ಇರುವ ಹಣವನ್ನು ಕೇವಲ ಐದೇ ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎನ್ನುವ ಹೂಡಿಕೆಗಳಲ್ಲಿ ತೊಡಗಿಸಲು ಇದು ಸೂಕ್ತ ಸಮಯವಾಗಿರುವುದಿಲ್ಲ.

ಹಾಗೇ, ಒಂದು ಕುಟುಂಬದ ಜೀವನ "ಸೆಟಲ್" ಆಗುವ ಕಡೆಗೆ ಹೋಗುವುದೂ ಇದೇ ಸಮಯದಲ್ಲಿಯೇ.  ಒಬ್ಬರ ವಯೋಮಾನದ ನಲವತ್ತರಿಂದ ಐವತ್ತರ ಹರೆಯದಲ್ಲಿ ಹೆಚ್ಚು ಖರ್ಚುಗಳು ಸಂಭವಿಸುತ್ತವೆ ಎಂದುಕೊಂಡರೆ, ಐವತ್ತರಿಂದ ಅರವತ್ತರ ದಶಕದಲ್ಲಿ ಖರ್ಚುಗಳು ಕಡಿಮೆ ಎಂದುಕೊಳ್ಳಬೇಕಾಗುತ್ತದೆ. ಒಮ್ಮೆ ಅರವತ್ತು ಮುಂದೆ ಎಪ್ಪತ್ತು ಕಳೆದ ನಂತರ ಖರ್ಚುಗಳು ಇನ್ನೂ ಕಡಿಮೆ ಆಗಿ, ಮುಂದೆ ಅಗತ್ಯಕ್ಕಿಂತ ಹೆಚ್ಚು ಹಣ ಬಿದ್ದು ಕೊಳೆಯತೊಡಗುತ್ತದೆ.

ಇಂತಹ ಸಮಯದಲ್ಲಿಯೇ, ಮುಂದುವರೆದ ದೇಶಗಳಲ್ಲಿ Philanthropy, Giving, Charity, Social Responsibility, Humanitarianism... ಮೊದಲಾದ ಪದಗಳ ಬಳಕೆ ಹೆಚ್ಚು ಅನ್ವಯವಾಗೋದು.  ಇಪ್ಪತ್ತರ ಹರೆಯದಲ್ಲಿರುವ ದಂಪತಿಗಳು ಚಾರಿಟಿಯ ವಿಚಾರದಲ್ಲಿ ಸ್ಪಂದಿಸಬಾರಂದೇನೂ ಇಲ್ಲ, ಆದರೆ, ಅವರು ಚಾರಿಟಿಗೆ ಸಂಬಂಧಿಸಿದ್ದನ್ನು ಹೇಗೆ ಸ್ವೀಕರಿಸುತ್ತಾರೋ, ಅದೇ ಎಪ್ಪತ್ತರ ಹರೆಯದಲ್ಲಿರುವ ದಂಪತಿಗಳು ಈ ಪದವನ್ನು ಸ್ವೀಕರಿಸುವ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ.

***

ಮಾನವ ಮಾನವನಿಗೆ ಸಹಾಯ ಮಾಡಲು ಸಾಧ್ಯವಿದೇಯೇ? ಮಾಡಬೇಕೋ ಬೇಡವೋ, ಎಷ್ಟು ಮಾಡಿದರೆ ಒಳ್ಳೆಯದು ಅಥವಾ ಇಲ್ಲ? ಯಾರು ಯಾರಿಗಾದರೂ ಏಕೆ ಸಹಾಯ ಮಾಡಬೇಕು? ದೇವರು ಸೃಷ್ಟಿಸಿದ ಈ ಸೃಷ್ಟಿಯನ್ನು ದೇವರೇ ನಿಯಂತ್ರಿಸಿಕೊಳ್ಳುತ್ತಾನಾದ್ದರಿಂದ ಅದರಲ್ಲಿ ಹುಲುಮಾನವರದ್ದೇನು ಪಾತ್ರ?  ಅಥವಾ ಖಾಯಿಲೆಗೆ ಔಷಧಿಯನ್ನು ಕಂಡು ಹಿಡಿಯುವ ವಿಜ್ಞಾನಿಯ ಕೆಲಸದ ಹಾಗೇಯೇ ಒಬ್ಬ ಔದ್ಯಮಿ ತನ್ನ ಸಂಪನ್ಮೂಲಗಳ ಸಹಾಯದಿಂದ ಸಮಾಜದ ಏಳಿಗೆಗೆ ಶ್ರಮಿಸುವುದು ನ್ಯಾಯವಲ್ಲವೇ?  ಕಣ್ಣಿಗೆ ಕಾಣದ ವೈರಾಣುಗಳ ವಿರುದ್ಧ ಇಡೀ ಪ್ರಪಂಚವೇ ಹೋರಾಡುತ್ತಿಲ್ಲವೇ ಹಾಗೇಯೇ ಮುಂದೆ ಎಂದಾದರೂ ದುಷ್ಟ ಜಂತುಗಳೋ, ಅನ್ಯ ಗ್ರಹದ ಜೀವಿಗಳೋ ಬಂದು ಆಕ್ರಮಣ ಮಾಡಿದರೆಂದರೆ ಇಡೀ ಮನುಕುಲವೇ ಒಂದಾಗಿ ನಿಂತು ಹೋರಾಡುವುದಿಲ್ಲವೇ?

ತಮ್ಮ ತಮ್ಮ ಕರ್ತ್ಯವ್ಯವನ್ನು ಎಲ್ಲರೂ ನಿಭಾಯಿಸಿಕೊಂಡು ಹೋಗುವುದು ನ್ಯಾಯ.  ಅಂತಹ ಒಂದು ಕರ್ತ್ಯವ್ಯದ ತುಣುಕಾಗಿ ನಮ್ಮ ನಮ್ಮ ಸಾಮಾಜಿಕ ಜವಾಬ್ದಾರಿಯೂ ಇದೆ.  ನಮ್ಮೆಲ್ಲರಲ್ಲಿ ಸಾಮಾನ್ಯ ಜನರೇ ಹೆಚ್ಚು, ಅಪರೂಪಕ್ಕೊಮ್ಮೆ ವಿಶೇಷವಾಗಿರುವ ಜನರನ್ನು ಭೇಟಿಯಾಗುತ್ತೇವೆಯೇ ವಿನಾ, ನಾವೆಲ್ಲರೂ ಜನ ಸಾಮಾನ್ಯರು.  ಆದರೆ, ನಮ್ಮಂತಹ ಸಾಮಾನ್ಯರಲ್ಲಿ ಒಂದು ಶಕ್ತಿ ಇದೆ, ಅದು ನಮ್ಮ ಸಂಖ್ಯೆ.  ಜನಸಾಮಾನ್ಯರೆಲ್ಲ ಒಂದು ದೊಡ್ಡ ಸಂಘಟನೆಯ ಅಡಿಯಲ್ಲಿ ಒಂದಾದಾಗ ಒಂದು ಮಹಾ ಕ್ರಾಂತಿಯಾಗುತ್ತದೆ, ಒಂದು ಸಂಗ್ರಾಮ ನಡೆಯುತ್ತದೆ, ಒಂದು ವ್ಯವಸ್ಥೆಯ ಪರವಾಗಿಯೋ ವಿರುದ್ಧವಾಗಿಯೋ ಒಂದು ಮಹಾ ಆಂದೋಲನವೇ ಹುಟ್ಟುತ್ತದೆ. ಮುಂದಾಳುತನದ ವಿಚಾರದಲ್ಲಿ ಅನೇಕ ನಾಯಕರನ್ನು ನಾವು ಹೆಸರಿಸಬಹುದಾದರೂ, ವಿಶ್ವದ ಎಲ್ಲ ಚಳವಳಿಯ ಶಕ್ತಿಯಾಗಿ ಜನಸಾಮಾನ್ಯರೇ ಇರುವುದು.  ಈ ಜನಸಾಮಾನ್ಯರನ್ನು ಯಾವುದೋ ಒಂದು ಕಾರಣಕ್ಕೆ ಬಂಧಿಸಿ ಅವರನ್ನು ಒಪ್ಪಿಸಿ ಹೋರಾಡುವಂತೆ ಮಾಡುವುದು ಇದೆಯಲ್ಲ, ಅದು ಸಾಮಾನ್ಯರಿಗೆ ಆಗುವ ಕೆಲಸವಲ್ಲ. ಆದರೆ, ಪ್ರತಿಯೊಬ್ಬ ಸಾಮಾನ್ಯನೂ ಕಡಿಮೆ ಎಂದರೆ ಒಂದಲ್ಲ ಒಂದರ ಪರ ಅಥವಾ ವಿರುದ್ಧ ಸಂಘಟಿತಗೊಳ್ಳುವ ಅವಕಾಶ ಇದೆ.  ಯಾವುದಕ್ಕೂ ಸ್ಪಂದಿಸದೇ ಬದುಕುವುದೆಂದರೆ, ಅಂತಹ ಬದುಕಿಗೆ ಒಂದು ಅರ್ಥವಾದರೂ ಹೇಗೆ ಬಂದೀತು!

ಇತ್ತೀಚೆಗೆ, ಒಂದೂವರೆ ಬಿಲಿಯನ್ ಅಷ್ಟು ಸಂಪತ್ತು (ನೆಟ್‌ವರ್ತ್) ಇರುವ ಶ್ರೀಮಂತ ಕುಟುಂಬವೊಂದು ಸುಮಾರು ಐವತ್ತು ಮಿಲಿಯನ್ ಅನ್ನು ಕ್ಯಾನ್ಸರ್‌ಗೆ ಸಂಬಂಧಿಸಿದ ಒಳ್ಳೆಯ ಬೆಳವಣಿಗೆಯೊಂದಕ್ಕೆ ದಾನ ಮಾಡಿದ ನಿದರ್ಶನವೊಂದು ಸಿಕ್ಕಿತು.  ಒಂದಿಷ್ಟು ಸೊನ್ನೆಗಳನ್ನು ಕಡಿಮೆ ಮಾಡಿ ನೋಡಿದರೆ, ಒಂದು ಮಿಲಿಯನ್ ಸಂಪತ್ತು ಇರುವ ಎಷ್ಟು ಜನರು ಸುಮಾರು 33 ಸಾವಿರ ಡಾಲರುಗಳನ್ನು ಒಂದು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಬಲ್ಲರು? ಇಂಗ್ಲೀಷಿನಲ್ಲಿ ಟೈದ್ (Tithe) ಎನ್ನುವ ಒಂದು ಪರಂಪರೆ ಕಂಡುಬರುತ್ತದೆ.  ಇದು ಮುಖ್ಯವಾಗಿ ಕ್ರಿಶ್ಚಿಯನ್ ಸಮೂಹದಲ್ಲಿ, ಆಯಾ ಕುಟುಂಬಗಳು ತಮ್ಮ ಆದಾಯದ ಮೊದಲ ಹತ್ತನೇ ಒಂದು ಭಾಗದಷ್ಟನ್ನು ಸಂಬಂಧಿಸಿದ ಚರ್ಚುಗಳಿಗೆ ದಾನವಾಗಿ ಕೊಡುವುದು ಎಂದರ್ಥ ಮಾಡಿಕೊಳ್ಳಬಹುದು.  ಆದರೆ, ನಮ್ಮ ಭಾರತೀಯ ಮೂಲದಲ್ಲಿ ಈ ರೀತಿಯ ಆಚರಣೆ ಕಡಿಮೆ.  ಫ಼ಿಲಾಂತ್ರೊಪಿ, ಚಾರಿಟಿ ಮೊದಲಾದ ಪದಗಳು ನಮಗೆ ಹೊಸದಾಗಿ ಕೇಳಿಬರಬಹುದು.  ಆದರೆ, ನಮ್ಮಲ್ಲೂ ಸಹ ಈ ರೀತಿಯ ದೇಣಿಗೆಗಳು, ಕೊಡುಗೆಗಳು ಇದ್ದವು.  ಅನೇಕ ದತ್ತಿ ಛತ್ರಗಳು ನಡೆಯುತ್ತಿದ್ದವು.  ರಾಜಾಶ್ರಯದಲ್ಲಿ ಅನೇಕ ಉಸ್ತುವಾರಿ ಯೋಜನೆಗಳು ನಡೆಯುತ್ತಿದ್ದವು, ಅನ್ನದಾಸೋಹಗಳು ಇದ್ದವು.  ಎಷ್ಟೋ ಹಳ್ಳಿ-ಪಟ್ಟಣಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ನೋಡಿಕೊಳ್ಳಲಾಗುತ್ತಿತ್ತು.  ಆದರೆ, ನಮ್ಮಲ್ಲಿ ನಮ್ಮ ಆದಾಯದ ಮೊದಲ ಹತ್ತನೇ ಒಂದು ಭಾಗವನ್ನು ನಾವೆಲ್ಲರೂ ಎಂದೂ ಯಾರಿಗೂ ಕೊಟ್ಟಿಲ್ಲ.  ಹೀಗೆ ಕೊಟ್ಟ ಹಣ ಹೇಗೆ ಬಳಕೆಗೆ ಬರುತ್ತದೆ, ಅದರಿಂದ ಏನೇನಾಗಬಹುದು, ಇಲ್ಲ ಎನ್ನುವುದನ್ನು ಇಲ್ಲಿ ಚರ್ಚಿಸುವುದಕ್ಕಿಂತ - ಹೀಗೂ ಕೊಡಬಹುದು ಎನ್ನುವ ಪ್ರಕ್ರಿಯೆಯ ಬಗ್ಗೆ ಯೋಚಿಸೋಣ. ಒಳ್ಳೆಯದೋ, ಕೆಟ್ಟದ್ದೋ - ಕೈ ಬಿಚ್ಚಿ ಕೊಟ್ಟರೆ ತಾನೇ ಅದರಿಂದ ಏನೋ ಒಂದು ಆಗುವುದು?  ಒಳ್ಳೆಯದು ಅಥವಾ ಒಳ್ಳೆಯದಲ್ಲದ್ದು ಎನ್ನುವುದನ್ನು ನೀವು ನಾಣ್ಯದ ಯಾವ ಮುಖವನ್ನು ನೋಡಿ ಮಾತನಾಡುತ್ತಿದ್ದೀರಿ ಎನ್ನುವುದರ ಮೇಲೆ ತಾನೇ ನಿರ್ಣಯವಾಗೋದು?

***

ಬಹದ್ದೂರ್ ಗಂಡು ಚಿತ್ರದಲ್ಲಿ ಚಿ. ಉದಯಶಂಕರ್ ಅವರು ಬರೆದು, ಎಂ. ರಂಗಾರಾವ್ ಸಂಗೀತ ನೀಡಿದ ಜನಪ್ರಿಯ ಹಾಡಿನೊಂದರ ಸಾಲುಗಳು ನೆನಪಾಗುತ್ತವೆ:

ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?

ಮೀಸೆ ತಿರುವಿ ಕುಣಿದೋರೆಲ್ಲ ಮಣ್ಣಾದರು!

ಈ ಸಾಲುಗಳ ಮರ್ಮವನ್ನು ಎರಡು ಕಾರಣಕ್ಕಾಗಿ ಯೋಚಿಸಿಕೊಳ್ಳಬೇಕು.  ಮೊದಲನೆಯದಾಗಿ, ಯಾರು ಎಷ್ಟೇ ಆಸ್ತಿ-ಪಾಸ್ತಿ ಮಾಡಿ ಕೂಡಿಟ್ಟರೂ ಎಲ್ಲರೂ ಒಂದು ದಿನ ಅದನ್ನು ಬಿಟ್ಟು ಹೋಗಲೇ ಬೇಕು.  ಯಾರ ಚಟ್ಟದ ಹಿಂದೆಯೂ ಒಂದು ಸರಕಿನ ಲಾರಿಯನ್ನು ಏನೂ ಅವರು ತೆಗೆದುಕೊಂಡು ಹೋಗೋದಿಲ್ಲವಲ್ಲ!  ಎರಡನೆಯದಾಗಿ, ಈಗಾಗಲೇ ಕೋಟ್ಯಾಂಟರ ರೂಪಾಯಿಗಳ ಆಸ್ತಿಯನ್ನು ಮಾಡಿಟ್ಟು, ತಮ್ಮ ಜೀವನದ ಅರ್ಧ ಆಯಸ್ಸಿಗಿಂತಲೂ ಹೆಚ್ಚನ್ನು ಕಳೆದು, ಇನ್ನೇನು ನಿವೃತ್ತಿಯ ಹೊಸ್ತಿಲಿನಲ್ಲಿ ನಿಂತು ನೋಡುತ್ತಿರುವ ಎಲ್ಲ ಮಹಾನುಭಾವರೂ ತಮ್ಮ ಆಸ್ತಿಯ ಹತ್ತನೇ ಒಂದು ಭಾಗವನ್ನು ತಮ್ಮ ತಮ್ಮ ಹೆಸರಿನ ಫ಼ೌಂಡೇಶನ್‌ನ ಹೆಸರಿನಲ್ಲಿ ಸಮಾಜದ ಏಳಿಗೆಗೆ ಏಕೆ ಬಳಸಬಾರದು?

ಕೊನೇ ಪಕ್ಷ, ವಿಶ್ವದ ಎಲ್ಲ ಮಿಲಿಯನ್-ಬಿಲಿಯನ್ನೈರುಗಳು ತಮ್ಮ ಸಂಪತ್ತಿನ ಸಾವಿರದ ಒಂದು ಭಾಗವನ್ನು ತಮ್ಮ ತಮ್ಮ ನೆರೆಹೊರೆಯನ್ನು ಚೊಕ್ಕಗೊಳಿಸುವುದಕ್ಕೆ, ಅಭಿವೃದ್ಧಿಗೊಳಿಸುವುದಕ್ಕೆ, ಆರೋಗ್ಯಪೂರ್ಣವಾಗಿಸುವುದಕ್ಕೆ ಬಳಸಿಕೊಂಡಿದ್ದೇ ಆದರೆ, ನಮ್ಮ ಸಮಾಜಕ್ಕೆ ಅಂಟಿದ ಕಷ್ಟಗಳು ಅರ್ಧಕರ್ಧ ಕಡಿಮೆಯಾದಾವು.  ಅದು ಯಾವುದೂ ಬೇಡ, ಪ್ರಪಂಚದ ಒಂಬತ್ತು ಪರ್ಸೆಂಟು ಜನ ದಿನ ರಾತ್ರಿ ಊಟವಿಲ್ಲದೇ ಮಲಗುವುದಾದರೂ ತಪ್ಪೀತು. ಸಾಕು ಮತ್ತು ಬೇಕು ಎನ್ನುವ ಈ ಎರಡು ಪದಗಳ ಮರ್ಮವನ್ನು ಬಲ್ಲವರಿಗೆ, ಕೈ ಮುಂದು ಮಾಡಿ ಕೊಡಲು ಕಷ್ಟವಾಗೋದಿಲ್ಲ.  ನಾವೆಲ್ಲರೂ ನಮ್ಮ ಆದಾಯ ಮತ್ತು ಸಂಪತ್ತಿನ ಹತ್ತು ಪರ್ಸೆಂಟು ಕೊಡೋದು ಬೇಡ, ವರ್ಷಕ್ಕೆ ಒಂದು ಪರ್ಸೆಂಟ್ ಅನ್ನು ಯಾವುದಾದರೊಂದು ಅಭ್ಯುದಯಕ್ಕೆ ಬಳಸಿದರೆ, ಅದೆಷ್ಟೋ ಅನುಕೂಲಗಳಾಗುತ್ತವೆ ಎನ್ನುವುದೇ ಈ ಹೊತ್ತಿನ ತತ್ವ.

Sunday, November 28, 2021

ಸೋಜಿಗದ ಸಮೂಹ

 ಈ ವಿಶ್ವದ ಒಂದು ಸಣ್ಣ ಗೋಲವಾದ ಭೂಮಿಯ ಪದರು-ಮಡಿಕೆ-ಪೊಟರೆಗಳಲ್ಲಿ ಅನೇಕಾನೇಕ ಜೀವರಾಶಿಗಳು... ಈ ಸಮೂಹವನ್ನ ಕೋಟ್ಯಾಂತರ ಜೀವರಾಶಿಗಳೇ ಎನ್ನಬಹುದು.  ಹೆಚ್ಚಿನವು ಮಾನವನ ಕಣ್ಣಿಗೆ ಬಿದ್ದು ಅವುಗಳ ’ಜನಗಣತಿ’ ಅಥವಾ ಅವನತಿ ಆದಂತಿದ್ದರೆ, ಇನ್ನು ಕೆಲವು ಜೀವಜಂತುಗಳನ್ನು ಇದುವರೆಗೂ ಯಾರೂ ನೋಡಿಯೂ ಇಲ್ಲ!  ಸಮುದ್ರ-ಸಾಗರಗಳ ಆಳದಿಂದ ಹಿಡಿದು, ಭೂಮಿಯ ಅನೇಕ ಮೈಲುಗಳ ಕೆಳ ಪದರಗಳಲ್ಲಿಂದ ಹಿಡಿದು, ಭೂಮಿಯ ಮೇಲಿನ ವಾತಾವರಣದಲ್ಲಿಯೂ ಬದುಕಿ ಬಾಳಬಲ್ಲ ಈ ಜೀವ ಸಮೂಹವನ್ನು ಸೃಷ್ಟಿ ಅದೆಷ್ಟು ಚೆನ್ನಾಗಿ ಹೆಣೆದುಕೊಂಡಿದೆ! ಒಂದರ ಮೇಲೆ ಮತ್ತೊಂದು ಜೀವ-ಜೀವಿಯ ಅವಲಂಭನೆಯನ್ನು ಯಾರೋ ಅದೆಷ್ಟು ಚೆನ್ನಾಗಿ ಸೃಷ್ಟಿಸಿದ್ದಾರೆ ಎನ್ನಿಸೋದಿಲ್ಲವೇ?

***

ನಮ್ಮ ನ್ಯೂ ಯಾರ್ಕ್ ನಗರದ ಎಂಪೈರ್ ‌ಸ್ಟೇಟ್ ಬಿಲ್ಡಿಂಗ್ ನೆಲದಿಂದ ಸುಮಾರು 1400 ಅಡಿ ಎತ್ತರದಲ್ಲಿದೆ.  ಒಬ್ಬ ವ್ಯಕ್ತಿಯ ಎತ್ತರ ಸುಮಾರು ಆರು ಅಡಿಗಳು ಎಂದಾದಲ್ಲಿ ಈ ಕಟ್ಟಡ ಎತ್ತರ ಸುಮಾರು 235 ಪಟ್ಟು.  ಅದೇ ಒಂದು ಇರುವೆಯ ಎತ್ತರ ಸುಮರು 0.14 ಇಂಚುಗಳು, ಅಂದರೆ, 0.012 ಅಡಿಗಳು ಎಂದಾದಲ್ಲಿ, ಆ ಇರುವೆಯ ಎತ್ತರವನ್ನು ಒಬ್ಬ ಆರು ಅಡಿಯ ಮನುಷ್ಯನಿಗೆ ಹೋಲಿಸಿದಲ್ಲಿ, ಇರುವೆಗಿಂತ ಮಾನವ ಸುಮಾರು 500 ಪಟ್ಟು ಎತ್ತರ, ಅಂದರೆ, ಮಾನವನ ಗಾತ್ರ ಇರುವೆಗೆ, ಒಂದು ಬುರ್ಜ್ ಖಲೀಫ಼ಾ ಕಟ್ಟಡವಾಗಿ ಕಾಣಬಹುದು (ಬುರ್ಜ್ ಖಲೀಫ಼ಾದ ಎತ್ತರ 2722 ಅಡಿ, ಅಂದರೆ ಮಾನವಗಿಂತ ಸುಮಾರು 453 ಪಟ್ಟು ಹೆಚ್ಚು).

ಇನ್ನು ನಮ್ಮ ಕಣ್ಣಿನ ಎತ್ತರದ ಆಕಾಶದ ವಿಚಾರಕ್ಕೆ ಬರುವುದಾದರೆ, ಸುಮಾರು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ನಾವು ಮೋಡಗಳನ್ನು ನೋಡುತ್ತೇವೆ, ಅದಕ್ಕಿಂತಲೂ ಎತ್ತರದಲ್ಲಿ ಅಂದರೆ 36,000 ಅಡಿಗಳಷ್ಟು ಎತ್ತರದಲ್ಲಿ ನಮ್ಮ ವಿಮಾನಗಳು ಹಾರಾಡುತ್ತವೆ.  ಇದಕ್ಕಿಂತಲೂ ಹೆಚ್ಚಿನದ್ದು ನಮ್ಮ ಆಕಾಶವಾಗುತ್ತದೆ.  ಅದು ಎಲ್ಲದ್ದಕ್ಕೂ ಮೀರಿದ್ದು.

ಇದೇ ಆಕಾಶವನ್ನು ನಾವು ಒಂದು ಇರುವೆಯ ಗಾತ್ರದಲ್ಲಿ ಯೋಚನೆ ಮಾಡಿದರೆ, ಆ ಇರುವೆಯ 20 ಅಡಿಗಳಲ್ಲಿ ಮೋಡಗಳು ತೇಲುತ್ತವೆ, ಹಾಗೆ 72 ಅಡಿ ಎತ್ತರದಲ್ಲಿ ಕಮರ್ಷಿಯಲ್ ವಿಮಾನಗಳು ಹಾರಾಡುತ್ತವೆ...ಉಳಿದದ್ದೆಲ್ಲ ನಭೋಮಂಡಲವಾಗುತ್ತದೆ.

ಈ ವಿಚಾರವನ್ನು ಏಕೆ ಹೇಳಬೇಕಾಗಿ ಬಂತೆಂದರೆ: ನಾವು ಹುಲು ಮಾನವರು.  ಈ ಪ್ರಾಣಿ ಪ್ರಬೇಧಗಳಲ್ಲಿ ನಾವು ನಮ್ಮನ್ನೇ ಹಿರಿದು ಎಂದುಕೊಂಡು ಹಿಗ್ಗುತ್ತೇವೆ, ಜೊತೆಗೆ ನಮಗೆ ಸಿಗಬಹುದಾದ ಸಂಪನ್ಮೂಲಗಳನ್ನು ಯಥಾ ಇಚ್ಚೆ ಬಳಸುತ್ತೇವೆ.  ಆದರೆ, ನಮಗಿಂತಲೂ ದೊಡ್ಡ ಜೀವಜಂತುಗಳು ಈ ವಿಶ್ವದಲ್ಲಿ ಇರಬಹುದೇ ಎಂದು ನಮಗೆ ಯೋಚಿಸಲು ಸಾಧ್ಯವಿದೆಯೇ? ನಾವು ನಮ್ಮನ್ನು ಒಂದು ಇರುವೆಯ ಗಾತ್ರಕ್ಕೆ ಹೋಲಿಸಿಕೊಂಡರೆ, ಆ ಇರುವೆಯ ಕಣ್ಣುಗಳಲ್ಲಿ ಒಂದು ಮಾನವನಷ್ಟು ದೊಡ್ಡ ಜೀವಿಯನ್ನು ನೋಡಲು ಸಾಧ್ಯವಿದೆಯೇ?

ಕೆಲವೊಮ್ಮೆ ಫ್ರೀವೇಗಳಲ್ಲಿ ಟ್ರಾಫ಼ಿಕ್ ಜಾಮ್ ಆದ ದೃಶ್ಯಗಳನ್ನು ನೋಡಿದಾಗ, ಅಲ್ಲಿ ಒಂದರ ಹಿಂದೆ ಒಂದರಂತೆ ನಿಧಾನವಾಗಿ ತೆವಳುವ ಕಾರುಗಳು ಇರುವೆಯ ಸಾಲುಗಳನ್ನು ನೆನಪಿಸುತ್ತವೆ.  ನೀವು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಹೋಗಿ ಅಲ್ಲಿನ ಅಬ್ಸರ್‌ವೇಟರಿಯಿಂದ ನೋಡಿದರೆ, ಕೆಳಗೆ ಹರಿದಾಡುವ ಮನುಷ್ಯರು ಚಿಕ್ಕ ಇರುವೆಗಳಂತೆಯೇ ಕಾಣುತ್ತಾರೆ.

ಇನ್ನು ಈ ಇರುವೆಯ ಹವಾಮಾನ ಮುನ್ಸೂಚನೆ ಹೇಗಿರಬಹುದು? ನಾವು ಕಸ ಹೊಡೆದರೆ ಅವಕ್ಕೆ ಬಿರುಗಾಳಿ ಬೀಸಿದ ಅನುಭವವಾಗಬಹುದು.  ನಮ್ಮ ಬಚ್ಚಲು ಮನೆಗಳಲ್ಲಿ ಸಿಕ್ಕಿ ಕೊಚ್ಚಿಕೊಂಡು ಹೋಗುವ ಅವುಗಳಿಗೆ ಮಹಾಪ್ರಪಾತದ ದೃಶ್ಯದ ಅರಿವಾಗಬಹುದು.  ತಮ್ಮ ಮೇಲೆ ಬೀಳುವ ಒಂದೊಂದು ಹನಿ ನೀರೂ ಸಹ, ದೊಡ್ಡ ಪರ್ವತದ ಗಾತ್ರವನ್ನು ಮೈ ಮೇಲೆ ಹಾಕಿದ ಹಾಗೆ ಆಗಬಹುದು.  ಇನ್ನು ಬೆಂಕಿಯ ವಿಚಾರವಂತೂ ಯೋಚಿಸಲೂ ಆಗದಷ್ಟು ದೊಡ್ಡದಿರಬಹುದು.  ಹೀಗೆ ನಮ್ಮನ್ನು ನಾವು ಒಂದು ಇರುವೆಯನ್ನಾಗಿ ಊಹಿಸಿಕೊಂಡು ನೋಡಿದರೆ, ಈ ವಿಶ್ವದಲ್ಲಿ ಅದೆಷ್ಟು ಸೋಜಿಗಗಳಿರಬಹುದು ಎನಿಸೋದಿಲ್ಲವೇ?

***

ಇನ್ನು ಆತ್ಮದ ವಿಷಯಕ್ಕೆ ಬರುವುದಾದರೆ, ಎಲ್ಲ ಜೀವಿಗಳಲ್ಲೂ "ಜೀವ" ಇರುವ ಹಾಗೆ, ಅವುಗಳಲ್ಲೂ ಒಂದೊಂದು ಆತ್ಮ ಇದೆಯೇ?  ಅಥವಾ ಆತ್ಮ ಕೇವಲ ಮಾನವರಿಗೆ ಮಾತ್ರ ಸಂಬಂಧಿಸಿದ್ದೋ?

ಈ ವಿಶ್ವದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಆತ್ಮಗಳಿದ್ದು, ಅವೇ ದೇಹದಿಂದ ದೇಹಕ್ಕೆ ವರ್ಗಾವಣೆಯಾಗುತ್ತವೆಯೋ? ಅಥವಾ ಜೀವಿಗಳು ಹೇಗೆ ಅನಿರ್ಧಿಷ್ಟ ಪ್ರಮಾಣದಲ್ಲಿರುವಂತೆ ಆತ್ಮಗಳೂ ಇದ್ದು, ಎಲ್ಲ ಜೀವಿಗೂ ಒಂದೊಂದು ಆತ್ಮ ಯಾವಾಗಲೂ ಇರುತ್ತದೆಯೋ?  ಹಾಗಾದರೆ ಮುಕ್ತಿ ಹೊಂದುವ ಆತ್ಮಗಳು ಹೋಗುವುದಾದರೂ ಎಲ್ಲಿಗೆ?  ಈ ಆತ್ಮ ಇಂದಿಗೆ ಮುಕ್ತಿ ಹೊಂದುತ್ತದೆ ಎಂದು ಲೆಕ್ಕ ಇಡುವವರಾರು?  ಇರುವೆಯ ಜೀವಿತಾವಧಿಯ ಆತ್ಮದ ಬದುಕಿಗೂ, ಮನುಷ್ಯನ ಜೀವಿತಾವಧಿಯ ಆತ್ಮದ ಬದುಕಿಗೂ ವ್ಯತ್ಯಾಸವಿದೆಯೇ? ಹಾಗಾದರೆ, ಈ ಪ್ರತಿಯೊಂದು ಜೀವಜಂತುವಿನ ಆತ್ಮದ ಜೀವಿತಾವಧಿಯ ಬೆಳವಣಿಗೆಗಳನ್ನು ಪೋಷಣೆಗಳನ್ನು ಯಾವ ವೈಟೇಜ್‌ನಲ್ಲಿ ಇಟ್ಟು ನೋಡಲಾಗುತ್ತದೆ?  ಮಾನವನ 80 ವರ್ಷದ ಆತ್ಮದ ಪರ್‌ಫಾರ್ಮೆನ್ಸ್ ಅನ್ನು ಮುಟ್ಟಲು ಇರುವೆಯ ಆರು ತಿಂಗಳಿನ ಆತ್ಮ ಯಾವ ಮಟ್ಟಕ್ಕೆ ಕಷ್ಟ ಪಡಬೇಕು?

ಈ ಭೂಮಂಡಲದಲ್ಲಿ ಇರುವ ಎಲ್ಲ ರಸಾಯನಿಕ ಪದಾರ್ಥ, ಮೂಲವಸ್ತುಗಳ ಪ್ರಮಾಣ ಯಾವಾಗಲೂ ಒಂದೇ ಇರುವುದೆಂದಾದರೆ, ಒಂದು ಕಡೆ ಹೆಚ್ಚುವುದು ಮತ್ತೊಂದು ಕಡೆ ಕಡಿಮೆ ಆಗಲೇ ಬೇಕು ಅಲ್ಲವೇ (conservation)? ಅಂದರೆ, ಹೆಚ್ಚು ಹೆಚ್ಚು ಹುಟ್ಟುವ ಮಾನವ ಸಂತತಿ ತನ್ನ ಮಡಿಲಲ್ಲಿ ಹೆಚ್ಚು ಹೆಚ್ಚು ರಸಾಯನಿಕಗಳನ್ನು ಅಡಗಿಸಿಕೊಳ್ಳುವುದರಿಂದ ಉಳಿದ ಯಾವುದೋ ಜೀವಿಯ ಸಂತತಿಗೆ ಅಥವಾ ಸಂತತಿಗಳಿಗೆ ಅದು ಕಡಿಮೆ ಆಗುತ್ತದೆಯೇ?

ಎಲ್ಲಕ್ಕಿಂತ ಮುಖ್ಯವಾಗಿ, ಸದಾ ಊರ್ದ್ವ ಮುಖಿಯಾಗಿರುವ ಈ ಆತ್ಮದ ಆತ್ಮ ಯಾಕೆ ಯಾವಾಗಲೂ ಹೋರಾಡುತ್ತಿರುತ್ತದೆ, ಆಶಾಂತವಾಗಿರುತ್ತದೆ?  "ಇಂಥವರ ಆತ್ಮಕೆ ಶಾಂತಿ ಸಿಗಲಿ!" ಎಂದು ಮೊಟ್ಟ ಮೊದಲ ಬಾರಿಗೆ ಯಾವ ನಾಗರೀಕತೆಯಲ್ಲಿ ಯಾರು ಮೊದಲು ಹೇಳಿದರು?  ಇಂದಲ್ಲ ನಾಳೆ ಮೋಕ್ಷ ಸಿಗುವುದೇ ಹೌದು ಎಂದಾದಲ್ಲಿ ಅದಕ್ಕೆಂದೇ ಹೋರಾಟವಾದರೂ ಏಕೆ ಬೇಕು?

***

ನಮಗೆ ನಾವೇ ದೇವರು! ನಮ್ಮ ದೇವರುಗಳ ಚಿತ್ರಣಗಳಲ್ಲಿ ಅವರನ್ನು ನಮಂತೆಯೇ ಸೃಷ್ಟಿಸಿಕೊಂಡಿದ್ದೇವೆ, ಆದರೆ ಸ್ವಲ್ಪ ಬಲ, ಭಿನ್ನತೆಗಳನ್ನು ತೋರುವುದರ ಮೂಲಕ ಅವರನ್ನೆಲ್ಲ ಸೂಪರ್ ಹ್ಯೂಮನ್ ಮಾಡಿದ್ದೇವೆ.  ಅದೇ ರೀತಿ ಇರುವೆಗಳಲ್ಲೂ ಸೂಪರ್ ಇರುವೆಗಳ ದೇವರುಗಳು ಇರಬಹುದು!  ನಮ್ಮ ದೇವರುಗಳೆಲ್ಲ ಸಾವನ್ನು ಗೆದ್ದವರು, ಚಿರಂತನರು ಮತ್ತು ಸರ್ವವ್ಯಾಪಿಗಳು.  ಅಂದರೆ, ನಮ್ಮ ಸುತ್ತಲಿರುವ ನಮ್ಮನ್ನು ಆವರಿಸಿರುವ ಪಂಚಭೂತಗಳು! ನಾವು ಒಂದು ಕ್ಷಣ ಇರುವೆಯಾಗಿ ಯೋಚಿಸಿದಾಗ ಈ ವ್ಯವಸ್ಥೆ ಮತ್ತು ವಿಶ್ವ ಅದೆಷ್ಟು ಅಗಾಧವಿದೆಯೆಲ್ಲ ಎಂದು ಅನ್ನಿಸುವುದು ಖಂಡಿತ.  ಆದರೆ, ನಾವು ಹುಲು ಮಾನವರಾಗಿ ಈ ಅಗಾಧತೆಯನ್ನ ಅಷ್ಟು ಸಲೀಸಾಗಿ ಗ್ರಹಿಸೋದಿಲ್ಲ. ಈ ಎತ್ತರ ಕಟ್ಟಡಗಳೂ, ಅವುಗಳ ಅತಿ ಎತ್ತರದಲ್ಲಿ ಹಾರಾಡುವ ವಿಮಾನಗಳೂ, ಅದಕ್ಕೂ ಮಿಗಿಲಾದ ಮುಗಿಲಿನಲ್ಲಿ ತೇಲುವ ಉಪಗ್ರಹಗಳು ಇವೆಲ್ಲ ನಮ್ಮ ಸೃಷ್ಟಿಯೇ!  ಹಾಗೇ ನಮ್ಮ ಸುತ್ತಲೂ ಇರುವೆಗಳು ಈಗಾಗಲೇ ಹಾರಾಡಿಸಿರುವ ಉಪಗ್ರಹಗಳೂ ಇರುಬಹುದಾದ ಸಾಧ್ಯತೆಗಳಿಲ್ಲವೆನ್ನಲಾಗದು.  ಏಕೆಂದರೆ, ಗೆದ್ದಲು ಕಟ್ಟುವ ಮಣ್ಣಿನ ಮನೆ ಆಧುನಿಕವಾಗಿರುವುದಷ್ಟೇ ಅಲ್ಲದೇ ನಮ್ಮಅನೇಕ ಬುರ್ಜ್ ಖಲೀಫ಼ಾಗಳ ಎತ್ತರವನ್ನೂ ಮೀರಿ ಬೆಳೆದಿರುತ್ತದೆ ಎನ್ನುವುದನ್ನು ಹೆಚ್ಚಿನವರು ನಂಬಲಾರರು, ಆದರೆ, ಅದು ನಿಜ.

ಹಾಗಾದರೆ, ಈ ಅಗಾಧವಾದ ಪೃಥ್ವಿಯಲ್ಲಿ ನಾವು ಒಂದು ಸಣ್ಣ ಹುಳುವಾದರೆ, ಈ ಇರುವೆಗಳು ನಮಗಿಂತ ಕನಿಷ್ಟ ಮಟ್ಟದ ಜೀವಿಗಳು ಎನ್ನಬಹುದು.  ಆಯಾ ಜೀವಿಗಳಿಗೆ ಅವುಗಳ ಬದುಕಿನ ಒಂದು ಧರ್ಮವಿದೆ, ಅದರೊಳಗೊಂದು ಮರ್ಮವಿದೆ.  ಆದರೆ, ಮನುಷ್ಯನ ಮಟ್ಟಿಗೆ ಮಾತ್ರ ತನ್ನ ಅಳಿವು ಮತ್ತು ಉಳಿವಿಗೆ ಮೊದಲಿನಿಂದಲೂ ಆತ ತನ್ನ ಸುತ್ತಲನ್ನು ದ್ವಂಸ ಮಾಡುತ್ತಲೇ ಬಂದಿದ್ದಾನೆ.  ಈ ಮನುಷ್ಯನಿಗೆ ಬದುಕಲು ವಿಶೇಷವಾದ ಹಕ್ಕನ್ನು ಕೊಟ್ಟವರಾರು? ಈ ಜಗತ್ತಿನ ನ್ಯಾಯಾಲಯದಲ್ಲಿ ನಾವೆಲ್ಲರೂ ಸಮಾನರು ಎಂದು ಇನ್ನಾದರೂ ನಮ್ಮ ಅರಿವಿಗೆ ಬರುತ್ತದೆಯೇ?

Wednesday, September 29, 2021

ಬೈಡೆನ್ ಏನ್ ಬೆಂಡೇಕಾಯ್ ತಿಂತಾನಾ?

ಬಹಳ ದಿನಗಳಿಂದ ಸುಬ್ಬೂನ ಹತ್ರ ಮಾತಾಡಿಲ್ಲ ಎಂದುಕೊಂಡು ಫ಼ೋನಾಯಿಸಲು ಯೋಚಿಸಿದೆ.  ಸುಮ್ಮನೇ ದಿಢೀರ್ ಅಂತ ಫ಼ೋನ್ ಮಾಡಿದ್ರೆ, ಎಲ್ಲಿ ಗುರ್‌ರ್ ಎಂದುಕೊಂಡು ಬಾಯಿಗೆ ಬಂದಂತೆ ಬೈತಾನೇನೋ ಎಂದುಕೊಂಡು, "ಏನಪ್ಪಾ, ಕಾಲ್ ಮಾಡ್ಲಾ?" ಎಂದು ಮೊದಲು ಮೆಸೇಜ್ ಹಾಕಿದೆ.  ಅಲ್ದೇ ಅಲ್ಲಿ ಕುತಗೊಂಡು ಅಮೇರಿಕನ್ ಕಂಪನಿಯ ಲೆಕ್ಕಾ ಚುಕ್ಕಾ ಬರೆಯೋರ್ದೆಲ್ಲಾ ಹಣೇ ಬರಾ ನಮಗೊತ್ತಿಲ್ವಾ?!  ಬೆಳಿಗ್ಗೆ ಹನ್ನೊಂದು ಗಂಟೆಗೆ ಆಫೀಸು ಎನ್ನುವ ಮನೆಯ ಮೇಜು-ಕುರ್ಚಿಗೆ ಅಂಟಿಕೊಂಡವನು ರಾತ್ರಿ ಹತ್ತು-ಹನ್ನೊಂದು ಆದ್ರೂ ಇನ್ನೂ ಊಟಾ ಸೈತಾ ಮಾಡ್ದೆ, ಇಲ್ಲಿನ ಜನರ ಸೇವೇ ಮಾಡ್ತಾನಲ್ಲ? ಇವನನ್ನ ಹಿಡಕೊಂಡು ಜಾಡಿಸಬೇಕು ಅನ್ಸುತ್ತೆ ಒಮ್ಮೊಮ್ಮೆ!  ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಮುನ್ನೂರೇ ಮಿಲಿಯನ್ ಜನರಿರುವ ಈ ದೇಶದವರಿಗೆ ಎಲ್ಲ ದೇಶದವರೂ ಯಾಕ್ ಕೆಲಸ ಮಾಡ್ಬೇಕು?  ಇರ್ಲಿ, ಅದನ್ನ ಇನ್ನೊಂದು ದಿನ ಕೇಳೋಣ ಎಂದುಕೊಂಡು ಸುಮ್ಮನಿರುವಾಗ,

"ಮಾಡು ಮಗಾ!" ಎಂದು ಆ ಕಡೆಯಿಂದ ಉತ್ರ ಬಂತು!.

ಮಲೆನಾಡಿನ ಮಾತುಕತೆಯ ಶಿಷ್ಟಾಚಾರವನ್ನೆಲ್ಲ ಬದಿಗೆ ತಳ್ಳಿ ಹಾಳು ಬೆಂಗಳೂರಿನ ವಿಚಾರವನ್ನಷ್ಟೇ ಅಲ್ಲ, ಆಚಾರವನ್ನೂ ಮೈ ಮೇಲೆ ಹೊದ್ದುಕೊಂಡವರ ಥರ ಇತ್ತೀಚೆಗೆಲ್ಲ, ಸುಬ್ಬನ ಮಾತುಕತೆಯಲ್ಲಿ "ಮಗ, ಮಗಾ" ಎನ್ನುವ ವಿಚಿತ್ರಗಳೂ ಮೂಡುತ್ತಿದ್ದವು.  ಎಷ್ಟೋ ಸರ್ತಿ, ಅಮೇರಿಕದ ಪ್ರೆಸಿಡೆಂಟ್ ಟ್ರಂಪ್‌ ನಿಂದ ಈ "ಮಗ" ಹುಟ್ಟಿತೋ, ಅಥವಾ ಬೆಂಗಳೂರಿನಲ್ಲೇ "ಮಗ" ಎನ್ನುವ ಉದ್ಗಾರ ಹುಟ್ಟಿತೋ ಎನ್ನುವ ಜಿಜ್ಞಾಸೆಯೂ ನನ್ನ ಮನದಲ್ಲಿ ಬೆಳೆದಿದ್ದಿದೆ.

" ಎನಪ್ಪ, ಏನೂ ಸುದ್ದೀನೇ ಇಲ್ಲ, ಏನ್ ಮಾಡ್ತಾ ಇದ್ದಿ, ಕೆಲ್ಸಾ ಎಲ್ಲ ಆಯ್ತಾ?" ಎಂದು ಯೋಗಕ್ಷೇಮವನ್ನು ವಿಚಾರಿಸಿದೆ.

"ಹೈ ನಿನ್ನ. ತೆಗಿ.  ಈ ಕೆಲ್ಸ ಯಾವತ್ತೂ ಮುಗಿಯಂಗ್ ಕಾಣಲ್ಲ... ಈಗಿನ್ನೂ ಒಂದು ಮೀಟಿಂಗ್ ಆಯ್ತು, ಮತ್ತೆ ಕ್ಲೈಂಟುಗಳು ರಿಕೈರ್‌ಮೆಂಟ್ ಬದ್ಲಾಯಿಸಿದ್ರಾ, ಇನ್ನೂ ಎರಡು ದಿನ ಕೋಡ್ ಕುಟ್ಟೂದು ಇದೆ ನೋಡು... ಮತ್ತಿನ್ನೇನ್ ರಿಲೀಸಿಗೆ ರೆಡಿ ಆಯ್ತು ಅನ್ನೋ ಅಷ್ಟೊತ್ತಿಗೆ, ಮತ್ತೆ ಇನ್ನೊಂದೇನೋ ತಗಾದೆ ತೆಗಿತಾವೆ ಬಡ್ಡಿ ಮಕ್ಳು... ಈ ಅಮೇರಿಕದವರನ್ನ ಸಂತೋಷ ಪಡಿಸೋ ಸುಖ ಯಾವ್ ನಮ್ ದೇರ್ವಿಗೂ ಬ್ಯಾಡ ನೋಡು!" ಎಂದು ಪೂರ್ತಿ ಕ್ಯಾತೆ ತೆಗೆದ.  ಇನ್ನೇನು, ಅಮೇರಿಕದವರ ಜನ್ಮ ಜಾಲಾಡಿದರೆ ಕಷ್ಟ ಎಂದು ನಾನು ನಿಧಾನಕ್ಕೆ ಟಾಪಿಕ್ ಬದಲಾಯಿಸ್ದೆ.

"ಅಲ್ಲೋ ಸುಬ್ಬ, ಮೋದಿ ಮತ್ತೆ ಅಮೇರಿಕಕ್ಕೆ ಬಂದು ರಾಜ ಗಾಂಭೀರ್ಯ ಮೆರೀತಾ ಇದ್ದಾರೆ... ಏನ್ ಸಮಾಚಾರ ಹೇಗಿದೆ ಇತ್ತೀಚಿಗಿನ ರಾಜಕೀಯ ಅಲ್ಲಿ?!" ಎಂದು ಓಪನ್ ಎಂಡೆಡ್ ಪ್ರಶ್ನೆ ಕೇಳಿದೆ, ಅವನ ಮನಸ್ಸಲ್ಲಿ ಏನ್ ಇದೆ ಅಂತ ನೋಡೋಣ ಎಂದು,

"ಮೋದಿಗೇನು ಬಿಡು, ವಯಸ್ಸಾಗ್ತಾ ಬಂತು.  ಇನ್ನೊಂದು ಟರ್ಮು ನಡೆಸೋ ಅಷ್ಟು ಶಕ್ತಿ ಇದೆಯೋ ಇಲ್ವೋ.  ತನ್ನ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ಎಷ್ಟೋ ದೇಶಗಳನ್ನ ಸುತ್ತಿ ಬಂದು ಒಂಥರ ರೆಕಾರ್ಡ್ ಮಾಡ್ಬಿಟ್ಟ ನೋಡು!  ಮೋದಿ ಮರ್ಮ ಈ ದೇಶಕ್ಕೆ ಅರ್ಥವಾಗಲ್ಲ, ಈ ದೇಶದ ಜನ ಕೊರಗೋದು ಬಿಡೋಲ್ಲ!" ಎಂದು ಪಕ್ಕಾ ಮೋದಿ ಭಕ್ತನ ಸ್ಟೇಟ್‌ಮೆಂಟ್ ಕೊಟ್ಟ, ಸಾಲದ್ದಕ್ಕೆ, ಏಕ್‌ದಂ ವ್ಯವಹಾರ ಪರಿಣಿತನಾದಂತೆ, 

"ಏನ್, ಸುಮ್ನೇ ಫ಼ೋನ್ ಮಾಡ್ದ್ಯ? ಏನ್ ಸಮಾಚಾರ ನಿಮ್ಮ ಕಡೆಗೆ..." ಎಂದು ಯಾರೋ ಗುಜರಾತಿ ಮಾರ್ವಾಡಿಗಳು ವ್ಯವಹಾರಕ್ಕೆ ಕುಳಿತವರ ಹಾಗೆ ಕೇಳುವಂತೆ ಕೇಳಿದ.  ನಾನು ಅಂದುಕೊಂಡೆ, ಇದು ನಮ್ಮ ಯೂಶುವಲ್ ಸುಬ್ಬನಲ್ಲ, ಮಲ್ಟಿ ಟಾಸ್ಕಿಂಗ್‌ನಲ್ಲಿ ಮುಳುಗಿ ಎದ್ದು, ಮುಂದೆ ಕುಟ್ಟಬೇಕಾದ ಕೋಡ್ ಬಗ್ಗೆ ಚಿಂತಿಸುವ ಕೊರಗಿನ ಕೋಡಂಗಿ ಎಂದು!

"ಏನಿಲ್ಲ ಕಣೋ, ಸುಮ್ನೇ ಮಾಡ್ದೆ.  ನಮ್ಮಲ್ಲಿ ಈ ಹಾಳಾದ ಹರಿಕೇನ್‌ಗಳ ಹಾವಳಿಯಿಂದ ಬಾಳಾ ಮಳೆ ಬಂದು ಹಾನಿ-ಪಾನಿ ಆದ ವಿಚಾರ ನಿಂಗ್ ಗೊತ್ತೇ ಇದೆಯಲ್ಲ?  ನಮ್ದೇನೂ ವಿಶೇಷವಿಲ್ಲ ಇಲ್ಲಿ... ಮಕ್ಳು ಶಾಲೆಗೆ ಹೋದ್ರು, ಇಲ್ಲಿ ನಾನೊಬ್ಬನೇ ಕುತಗೊಂಡು ನಿನ್ನ ಥರಾನೇ ಕಡೀತಾ ಇದ್ದೀನಿ, ದೊಡ್ಡ ಗುಡ್ಡವನ್ನ..." ಎಂದು ನಗಾಡಿದೆ.

"ಹೌದು ಮತ್ತೆ, ಹಿಂದೆಲ್ಲಾ ಈ ಕೋವಿಡ್ ಪರಿಸ್ಥಿತಿಯಿಂದ ಸ್ವಲ್ಪ ಕಷ್ಟದಲ್ಲಿದ್ದ ಅಮೇರಿಕ ಈಗ ಹೇಗಿದೆ?" ಎಂದ.

"ನಮ್ಮ ಜೆರ್ಸಿಯಲ್ಲಿ ಏನೂ ತೊಂದ್ರೆ ಇಲ್ಲ.  ಆದ್ರೆ ದಕ್ಷಿಣ ರಾಜ್ಯದಲ್ಲಿ ಇನ್ನೂ ಸಂಕಷ್ಟಾ ಇದ್ದೇ ಇದೆ.  ಅಲ್ಲಿನ ಜನ ತಮ್ಮ ಫ಼್ರೀಡಮ್-ಲಿಬರ್ಟಿ ಅಂದುಕೊಂಡು ವ್ಯಾಕ್ಸೀನೂ ತೊಗೋಳಲ್ಲ ಅಂತಾರೆ, ಯಾರೂ ಏನೂ ಮಾಡಕ್ಕಾಗಲ್ಲ..." ಎನ್ನುವಾಗಲೇ, ನನ್ನ ಮಾತನ್ನು ತುಂಡುಮಾಡಿ,

"ಥೂ, ಥರ್ಡ್ ಕ್ಲಾಸ್ ಜನಗಳು ಕಣೋ... ಪುಕ್ಕಟೆ ವ್ಯಾಕ್ಸೀನ್ ಕೊಟ್ರೂ ತೊಗೊಳೋಲ್ಲ ಅಂತಾರಲ್ಲ... ಇವರ ಜನ್ಮಕ್ಕಿಷ್ಟು..." ಎಂದು ಮುಂದೆ ಅವರ ಜನ್ಮವನ್ನು ಜಾಲಾಡುವುದರ ಒಳಗೆ ನಾನು ಮಧ್ಯ ಬಾಯಿ ಹಾಕಿ,

"ಹ್ಞಾ, ಒಂದ್ ನಿಮ್‌ಷ!  ಹಂಗೆಲ್ಲ ಜಡ್ಜ್‌ಮೆಂಟ್ ಕೊಡಬೇಡ... ನಿನಗೆ ಪೂರ್ತಿ ವಿಷ್ಯ ಗೊತ್ತಿಲ್ಲ... ಅವರು ಏನ್ ನ್ಯೂಸ್ ಕೇಳ್ತಾರೋ, ಯಾರು ಸರಿಯೋ ಯಾರು ತಪ್ಪೋ... ಒಟ್ಟಿನಲ್ಲಿ ಅವರ ದೇಶ-ಅವರ ಜೀವನ, ಕೊನೇ ಪಕ್ಷ ಅವರಿಗೆ ಇರುವ ಫ಼್ರೀಡಮ್ ಬಗ್ಗೆನಾದ್ರೂ ಸಂತೋಷ ಪಡು... ನಿಮ್ಮ ಪಕ್ಕದ ದೇಶದಲ್ಲಿ ಅಧಿಕಾರಶಾಹಿಗಳು ಹಾಕೋ ರೂಲ್ಸ್‌ನಲ್ಲಿ ಬೇಯೋ ಬದ್ಲು, ಫ಼್ರೀಡಮ್‌ನಲ್ಲಿ ಸಾಯೋದೇ ಮೇಲು... ಅದೂ ಅಲ್ದೇ,  ಸಾಯೋರು ಅವ್ರೇ ತಾನೇ?" ಎಂದು ಪ್ರಶ್ನೆ ಹಾಕಿದೆ.

"ಅವರ ಹಣೇ ಬರ, ಸಾಯಲಿ ಬಿಡು!" ಎಂದು ಅಲ್ಲಿಗೇ ಬಿಟ್ಟ.  "ಆಮೇಲೆ ನಿನ್ನ ಡಯಟ್ಟೂ-ರನ್ನಿಂಗೂ ಎರಡೂ ಎಲ್ಲಿಗೆ ಬಂತೂ?!" ಎಂದು ಸಂಭಾಷಣೆಯನ್ನು ಬೇರೆ ಕಡೆಗೆ ತಿರುಗಿಸಿದ...

"ಓ, ಅದಾ, ಅದ್ರದ್ದೊಂದ್ ದೊಡ್ಡ ಕತೆ!  ಮನೇಲೇ ಕುಂತೂ ಕುಂತೂ ಟೇಬಲ್ಲಿಗೂ ಹೊಟ್ಟೆಗೂ ಗೆಳೆತನ ಜಾಸ್ತಿ ಆದ ಪರಿಣಾಮದಿಂದ, ನನ್ನ ಹೊಟ್ಟೆ ದೊಡ್ಡದಾಗಿ ಬೆಳೆದಿದೆ ನೋಡು!" ಎಂದು ಜೋರಾಗಿ ನಕ್ಕೆ.

"ಮತ್ತೇ, ಏನ್ ಮಾಡ್ತೀ ಅದಕ್ಕೆ?"  ಎಂದು ಮಹಾ ಸ್ವಾಮಿಗಳ ಸಂಭಾಷಣೆಯ ತೀಕ್ಷ್ಣತೆಯಿಂದ ಒಂದು ಪ್ರಶ್ನೆ ಎಸೆದ.

"ಏನಿಲ್ಲ, ಸ್ವಲ್ಪ ತಿನ್ನೋದ್ ಕಡ್ಮೆ ಮಾಡಿದ್ರೆ, ಎಲ್ಲಾ ಸರಿ ಹೋಗತ್ತೇ" ಎಂದು ಸಮಜಾಯಿಷಿ ನೀಡಿದೆ.

"ಅಲ್ವೋ, ಈ ಡಯಟ್ಟೂ-ಪಯಟ್ಟೂ ಯಾವ್ದೂ ನಮಿಗೆ ವರ್ಕ್ ಆಗಲ್ಲ... ಪಕ್ಕಾ ದಕ್ಷಿಣ ಭಾರತದ ಊಟದ ಮುಂದೆ ಬೇರೇ ಏನೂ ಇಲ್ಲ ಅಂತ ಭಾಷ್ಣ ಕೊಡ್ತಾ ಇದ್ದೆಯಲ್ವಾ ಕೆಲವು ತಿಂಗಳುಗಳ ಹಿಂದೆ? ಅದಕ್ಕೇನಾಯ್ತೋ??" ಎಂದು ಕಿಚಾಯಿಸಿದ.

"ಇಲ್ಲ, ಕಾಲಕ್ರಮೇಣ ನಮ್ಮ ತಿಳುವಳಿಕೇನೂ ಬದಲಾಗುತ್ತಲ್ವಾ?! (ನಗುತ್ತಾ) ಈಗ, ಪಕ್ಕಾ ವೀಗನ್ ಮೆನ್ಯೂ ಅಂಥ ಶುರು ಮಾಡಿದೀನಿ... ಅದರಿಂದಲಾಂದ್ರೂ ಈ ಕೊಬ್ಬಿನ ಬಾಂಧವ್ಯ ಕಳಚುತ್ತೇನೋ ಅಂಥ ನೋಡೋಣ..." ಎನ್ನುವಷ್ಟರಲ್ಲಿ... ಮಧ್ಯೆ ಬಾಯಿ ಹಾಕಿ...

"ಹೋಗೋ ಸಾಕು... ನಿಮ್ಮ ಬೈಡೆನ್ ಏನಾದ್ರೂ ಬೆಂಡೇಕಾಯ್ ತಿಂತಾನ? ಟ್ರಂಪ್ ಏನಾದ್ರೂ ತೊಂಡೇ ಕಾಯ್ ತಿಂತಾನಾ? ಅವರೆಲ್ಲ ಮೇಲಿಂದ ಕೆಳಗಿನ ತನಕ ನೆಟ್ಟಗೇ ಇಲ್ವಾ, ಮತ್ತೆ?? ಈ ಮುದುಕ ಸೆಪ್ಟಾಜೆನೇರಿಯನ್ನ್‌ಗಳು ದೇಶಾನೇ ಆಳ್ತಾವಂತೆ... ನೀನು ಒಂಥರಾ ನಲವತ್ತೈದು ಐವತ್ತಕ್ಕೆ ಸೋಗ್ ಹಾಕ್ತೀಯಲ್ಲ...ನಿನ್ನ ನನ್ನ ಜೀನ್ಸ್ ಏನಿದ್ರೂ ಯಾವತ್ತೂ ಸೇವ್ ಮಾಡೋ ಮೆಂಟಾಲಿಟಿಯವು... ಅವುಗಳು ಕೊಬ್ಬನ್ನಾಗಲೀ, ದುಡ್ಡನ್ನಾಗಲೀ ಉಳಿಸೋ ಪ್ರವೃತ್ತಿಯನ್ನ ಎಂದಿಗೂ ಬಿಡಲ್ಲ, ನಮ್ಮ ಬೆಳೆದಿರೋ ಹೊಟ್ಟೆ ಒಂದು ರೀತಿ ಸಮೃದ್ಧಿಯ ಸಂಕೇತ ನೋಡು!" ಎಂದು ಗಹಗಹಿಸಿದ.

ಸುಬ್ಬ ಹೇಳಿದ್ರಲ್ಲೂ ಪಾಯಿಂಟ್ ಇದೆ... ಅಂಥ ಮೊಟ್ಟ ಮೊದ್ಲಿಗೆ ಭಯವಾಗತೊಡಗಿತು!  ಬಡ್ಡೇತ್ತಾವ ಇನ್ನೇನೇನೂ ಓದಿಕೊಂಡು ತಲೆ ದೊಡ್ಡದ್ದನ್ನಾಗಿ ಮಾಡಿಕಂಡವ್ನೋ ಅಂಥ!

"ಇರ್ಲಿ ಬಿಡೋ, ಯೋಗಿ ಪಡ್ದಿದ್ದು ಯೋಗಿಗೆ, ಜೋಗಿ ಪಡ್ದುದ್ದು ಜೋಗಿಗೆ... ನಮ್ ನಮ್ ಕಷ್ಟ-ನಷ್ಟಾ ಎಲ್ಲಾ ನಮ್ಗೇ ಇರ್ಲಿ..." ಎಂದು ಸಮಾಧಾನ ಮಾಡಿಕೊಂಡೆ.

"ಹೋಗ್ಲಿ... ಹರಿಕೇನು ಪರಿಕೇನು ಅಂಥ ಬರ್ತಾನೇ ಇರ್ತವೆ, ಹುಷಾರಾಗಿರು... ಅಲ್ದೇ ಫ಼್ರೀಡಮ್ ಲಿಬರ್ಟಿ ಮಣ್ಣೂ ಮಸಿ ಅಂದ್‌ಕೊಂಡು ಎಲ್ಲಾರು ತಿರುಗಾಡೋಕ್ ಹೋಗಿ,ಡೆಲ್ಟಾ ವೇವ್‌ನಲ್ಲಿ ಸಿಕ್ಕಾಕ್ಕೊಂಡ್ ಬಿಟ್ಟೀ, ಹುಷಾರು..., ಮತ್ತಿನ್ಯಾವಾಗಾದ್ರೂ ಮಾತಾಡಾಣಾ... ಸ್ವಲ್ಪ ಕೆಲ್ಸಾ ಜಾಸ್ತಿ ಇವತ್ತು... ಮನೆಯಲ್ಲೇ ಕುಳಿತು ಕೆಲ್ಸಾ ಮಾಡೋರ ಹಣೇ ಬರವೆಲ್ಲ ಹೀಗೇ... ಒಂದ್ ಥರ ಬೋಳ್ ತಲೆಯ ಮನುಷ್ಯ ಮುಖ ತೊಳೆದ ಹಾಗೆ... ಎಲ್ಲಿ ಶುರು ಮಾಡ್ಬೇಕೋ ಬಿಡಬೇಕೋ ಗೊತ್ತಾಗಲ್ಲ... ಮತ್ತಿನ್ಯಾವಾಗಾದ್ರೂ ಮಾತನಾಡೋಣ...", ಎಂದು ನಗುತ್ತಲೇ ಬೈ ಹೇಳಿದ.

"ಸರಿ ಮತ್ತೆ" ಎಂದು ನಾನೂ ಫ಼ೋನ್ ಕಟ್ ಮಾಡಿ, ಉಸ್ ಎಂದು ನಿಟ್ಟುಸಿರು ಬಿಟ್ಟೆ.