Tuesday, June 30, 2020

ನಮ್ಮೊಳಗಿನ ಶತ್ರು


ನಮ್ಮೊಳಗಿನ ಶತ್ರು (...why it is not easy to boycott Chinese products)

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಇಂದಿನವರೆಗೆ "ಸ್ವದೇಶೀ ಬಳಕೆ"ಯನ್ನು ಅನುಮೋದಿಸಲಾಗುತ್ತಿದೆ.  "ಸ್ವದೇಶಿ" ಸ್ವಾಯುತ್ತತೆ, ಸ್ವಾವಲಂಬನೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ಇತ್ತೀಚೆಗೆ ಅನೇಕ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯೋಚಿಸುವುದನ್ನು ಕಾಣಬಹುದು.  ಹೊರಗಿನವರು ಬಂದು ನಮ್ಮ jobs ಗಳನ್ನು ಕಸಿದುಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು, Make America Great Again! ಎನ್ನುವ ಕ್ಯಾಂಪೇನಿನ ಮೂಲದಲ್ಲಿ ಸ್ವದೇಶೀ ಸ್ವಾವಲಂಬನೆಯ ಅಗತ್ಯದ ಬಗ್ಗೆ ಚಿಂತನೆ ಎದ್ದು ಕಾಣುತ್ತದೆ.  ಯಾರು ಸ್ವದೇಶಿಗಳು, ಯಾರು ವಿದೇಶಿಗಳು, ಯಾವುದು "ನಮ್ಮ" ದೇಶದಲ್ಲೇ ಉತ್ಪಾದಿತವಾದದ್ದು, ಯಾವುದು ಹೊರಗಿನಿಂದ ಬಂದಿದ್ದು ಎಂಬುದನ್ನು ಕುರಿತು ಯೋಚಿಸಿದಾಗ, ಹೊರಗಿನವರನ್ನು "ಶತ್ರು"ಗಳು ಎಂದು ಕಂಡುಕೊಂಡಾಗ ಆ ಶತ್ರುಗಳು ನಮ್ಮೊಳಗೆ ಎಷ್ಟರ ಮಟ್ಟಿಗೆ ವಿಲೀನವಾಗಿಬಿಟ್ಟಿವೆಯೆಂದರೆ ಅದನ್ನು ಬೇರ್ಪಡಿಸುವುದೂ ಅಷ್ಟೇ ಕ್ಲಿಷ್ಟಕರವಾಗಿದೆ.

***

ನಾಲ್ಕು ಟ್ರಿಲಿಯನ್ ಡಾಲರಿಗಿಂತಲೂ ಹೆಚ್ಚು ವಸ್ತುಗಳನ್ನು ಉತ್ಪಾದಿಸುತ್ತಿರುವ ಚೀನಾ, ಇಡೀ ಪ್ರಪಂಚದ ಎಲ್ಲ ದೇಶಗಳಿಗೂ ತನ್ನ ವಸ್ತುಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲ ರಾಷ್ಟ್ರಗಳಿಗಿಂತ ಅಗ್ರಗಣ್ಯ ಸ್ಥಾನದಲ್ಲಿದೆ.  ಚೀನಾ ದೇಶವನ್ನು ವಿಶ್ವದ ಮ್ಯಾನುಫ್ಯಾಕ್ಚರಿಂಗ್ ದೇಶವೆಂದು ಸುಲಭವಾಗಿ ಕರೆಯಬಹುದು.  USA ಮುಖ್ಯವಾಗಿ ಯುದ್ಧ ಸಾಮಗ್ರಿಗಳ ತಯಾರಿಕೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿ 2.3 ಟ್ರಿಲಿಯನ್ ಡಾಲರ್‌ ಉತ್ಪನ್ನದಿಂದ  ನಂತರದ ಸ್ಥಾನದಲ್ಲಿ ನಿಲ್ಲುತ್ತದೆ.  ಒಂದು ಟ್ರಿಲಿಯನ್ ಉತ್ಪನ್ನದಿಂದ ಜಪಾನ್ ಮೂರನೇ ಸ್ಥಾನದಲ್ಲಿದ್ದರೆ ಕೇವಲ 412 ಬಿಲಿಯನ್ ಡಾಲರ್ ಉತ್ಪನ್ನದಿಂದ ಭಾರತ ದಕ್ಷಿಣ ಕೊರಿಯಾಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ತನ್ನನ್ನು ತಾನು ಕಂಡುಕೊಂಡಿದೆ.

ಇದು ಕೇವಲ ಭೌತಿಕ ವಸ್ತುಗಳ ಉತ್ಪಾದನೆ ಮತ್ತು ಆಮದು-ರಫ್ತಿನ ವಿಚಾರವಾಗಿರಬಹುದು.  ಇದರ ಜೊತೆಯಲ್ಲಿ ತಂತ್ರಜ್ಞಾನದ ಕೊಡು ತೆಗೆದುಕೊಳ್ಳುವಿಕೆ ಮತ್ತು ಬಳಸುವಿಕೆಯೂ ತಳುಕು ಹಾಕಿಕೊಂಡಿದೆ.  ಉದಾಹರಣೆಗೆ, ಭಾರತದಲ್ಲಿ ಜನರು ಬಳಸುವ ಮೈಕ್ರೋಸಾಫ್ಟ್ ಲೈಸನ್ಸ್ ಇರುವ ಪ್ರಾಡಕ್ಟ್‌ಗಳನ್ನು USA ಲೆಕ್ಕಕ್ಕೆ ಹಾಕಿಕೊಳ್ಳೋಣ.  ಅದೇ ರೀತಿ Boeing, Apple, Amazon ಮೊದಲಾದ ಕಂಪನಿಗಳ ಉತ್ಪನ್ನದ ಬಳಕೆಯ "ಕ್ರೆಡಿಟ್" ಅನ್ನು ಆಯಾ ಕಂಪನಿಗಳು ಹುಟ್ಟಿದ ದೇಶಗಳಿಗೆ ಕೊಡೋಣ.  ಹೀಗೆ ಮಾಡುವುದರಿಂದ ಪ್ರತಿಯೊಂದು ರಾಷ್ಟ್ರವೂ ಇನ್ನೊಂದು ರಾಷ್ಟ್ರದ ಉತ್ಪನ್ನವನ್ನು (product) ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೇಗೆ ಬಳಸುತ್ತಿದೆ ಎಂದು ಗೊತ್ತಾಗುತ್ತದೆ.  ಮೇಲ್ಮಟ್ಟದಲ್ಲಿ, ಇದು ಅಷ್ಟೊಂದು ಸುಲಭವಾಗಿ ಗೋಚರಿಸಿದರೂ, ಆಳದಲ್ಲಿ ಆಯಾ ಕಂಪನಿಗೆ ಸೇರಿಕೊಂಡ ಅನೇಕ ಎಂಟಿಟಿಗಳು ಅದೇ ಕಂಪನಿಯ ಹೆಸರಿನ subsidiary ಆಗಿ ಹಲವಾರು ದೇಶಗಳಲ್ಲಿ ನೋಂದಾವಣೆ ಮಾಡಿಕೊಂಡು ಅಲ್ಲಿಯ ಟ್ಯಾಕ್ಸ್ ಅನ್ನು ಕೊಡುವುದು ಅಥವಾ ಕೊಡದಿರುವುದು - ಟ್ಯಾಕ್ಸ್ ಸಂಬಂಧಿ ಅನುಕೂಲವಾಗಿ - ಎದ್ದು ಕಾಣುತ್ತದೆ.  ಆದ್ದರಿಂದ, ಒಂದು ಕಂಪನಿಯ ವಾರಸುದಾರಿಕೆ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಒಂದು ದೇಶದ ಅಸ್ತಿತ್ವವನ್ನು ಹೀಗೇ ಇದೆ ಎಂದು ಅಷ್ಟು ಸುಲಭವಾಗಿ ವ್ಯಾಖ್ಯಾನಿಸಲಾಗದು.

ಆದರೆ, ಇದೇ ಸೀಳು ನೋಟವನ್ನು ಇನ್ನೂ focus ಮಾಡಿ ನೋಡಿದಾಗ ಹಲವಾರು ಗೊಂದಲ ಅಥವಾ ಜಟಿಲತೆಯ (complications) ಅರಿವಾಗುತ್ತದೆ.  ಯಾವುದೇ ಕಂಪನಿಯ ನಿಜವಾದ ಮಾಲೀಕ/ಮಾಲೀಕರು ಎಂದರೆ ಆಯಾ ಕಂಪನಿಯ ಶೇರ್ ಹೋಲ್ಡರ್‌ಗಳು.  ಅಂತೆಯೇ ಒಂದು ಕಂಪನಿಯ ಶೇರುಗಳನ್ನು ಓಪನ್ ಮಾರುಕಟ್ಟೆಯಲ್ಲಿ ಯಾರು ಬೇಕಾದರೂ ಖರೀದಿಸಬಹುದು.  ನಾವು ಅಮೇರಿಕದಲ್ಲಿ ಕುಳಿತು ಚೀನಾ ದೇಶದ ಕಂಪನಿಯ ಎಕ್ಸ್‌ಚೇಂಜ್‌ನಲ್ಲಿ ಬಿಕರಿಯಾಗುವ ಕಂಪನಿಯ ಶೇರುಗಳನ್ನು ADR (American Depository Receipt) ವ್ಯಾಪ್ತಿಯಲ್ಲಿ ಖರೀದಿಸುತ್ತೇವೆ.  ಅಂತೆಯೇ ಚೀನಾದವರೂ ಸಹ ಬೇರೆ ದೇಶದ ಕಂಪನಿಗಳ ಶೇರುಗಳನ್ನು ಖರೀದಿಸುತ್ತಾರೆ.
ಇದೇ ವಿಶ್ಲೇಷಣೆಯನ್ನು ಇನ್ನೂ ತೀಕ್ಷ್ಣವಾಗಿಸಿದರೆ, ಒಂದು ದೇಶದ ಸರ್ಕಾರ ಅಥವಾ ಸರ್ವಾಧಿಕಾರಿ ರಾಜಸತ್ತೆ ಮತ್ತೊಂದು ದೇಶದ ಹೂಡಿಕೆಯ(ways to invest) ಮಾರ್ಗಗಳನ್ನು treasury, bonds, stocks, derivatives, futures, real estate, fixed assets ಹೀಗೆ ಇನ್ನೂ ಅನೇಕಾನೇಕ ಸಾಧನಗಳಲ್ಲಿ ತೊಡಗಿಸಬಹುದು.  ಉದಾಹರಣೆಗೆ, ಚೀನಾ ದೇಶದ ಪ್ರಜೆ, ತನ್ನ ಕಂಪನಿಯ ಮುಖೇನ ನ್ಯೂ ಯಾರ್ಕ್‌ನಲ್ಲಿನ ತುಂಡು ಭೂಮಿಯನ್ನು ಖರೀದಿಸಬಹುದು.  ಅದೇ ರೀತಿ, ಚೀನಾ ದೇಶದ ಸರ್ಕಾರ ತನ್ನ ಹೂಡಿಕೆಗಳನ್ನು (for hedging or for growth), ಅಮೇರಿಕದ treasury billsಗಳ ಮೇಲೆ ಮಾಡಬಹುದು.  ಹೀಗೆ ಯೋಚಿಸುತ್ತಾ ಹೋದಾಗಲೆಲ್ಲಾ ಯಾರು ಯಾವುದನ್ನು ಖರೀದಿಸುತ್ತಾರೆ, ಬಿಡುತ್ತಾರೆ, ಯಾರಿಗೆ ಎಷ್ಟು ಪರ್ಸೆಂಟ್ ಯಾವುದರ ಮೇಲೆ ownership ಇದೆ ಎಂಬುದನ್ನು ಯೋಚಿಸಿದಂತೆ ನಾವು ನಿಜವಾಗಿಯೂ ವಿಶ್ವ ಮಾನವರಾಗಿ ಕಂಡುಬರುತ್ತೇವೆ!
ಭಾರತದಲ್ಲಿ FDI (Foreign Direct Investment) ಅನ್ನೋ ಹೆಸರಿನಲ್ಲಿ ನಾವು ಹೊರ ದೇಶಗಳಿಗೆ ನಮ್ಮ ದೇಶದ "ಆಗುಹೋಗು"ಗಳಲ್ಲಿ ಹೂಡಿಕೆ ಮಾಡಲು ಅನುಮೋದಿಸಿದೆವು.  ಹೀಗೆ ಭಾರತಕ್ಕೆ ಹರಿದು ಬಂದ ಹಣವುಳ್ಳ ದೇಶಗಳ ಮುಂಚೂಣಿಯಲ್ಲಿ ಅಮೇರಿಕ, ಚೀನಾ, ರಷ್ಯಾ, ಜಪಾನ್, ಸೌದಿ, ಮೊದಲಾದ ದೇಶಗಳಿವೆ.  ಇದ್ದುದರಲ್ಲಿ, ಕನ್ಸೂಮರ್ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು-ರೈತಾಪಿ ಮಿಷೀನುಗಳವರೆಗೆ, ಆಟದ ಸಾಮಾನಿನಿಂದ ಹಿಡಿದು ಟೆಲಿಫೋನ್ ತಂತ್ರಜ್ಞಾನದ ವರೆಗೆ, ಹೀಗೆ ಅನೇಕ ಕಡೆ ವಿದೇಶಿ ಬಂಡವಾಳ ಹೂಡಿಕೆಯಾಗಿದೆ.  ಅದರಲ್ಲಿ ಚೀನಾದ ಸಿಂಹ ಪಾಲು ಇದೆ.  ನಾವೆಲ್ಲ Hero ಸೈಕಲ್ಲುಗಳನ್ನು ಓಡಿಸುತ್ತಿದ್ದಾಗ, ಜಪಾನ್ ನವರು ಬಂದು Hero ಕಂಪನಿಯ ಜೊತೆ ಸಂಬಂಧ ಕುದುರಿಸಿಕೊಂಡು Hero-Honda ಎಂಬ ಮೋಟಾರು ಬೈಕುಗಳನ್ನು ಹೊರ ತಂದರಲ್ಲ! ಹಾಗೆ ವಿದೇಶಿ ಹೂಡಿಕೆ ನೀವು ಬೇಡವೆಂದರೂ ನಮ್ಮ ಪಂಚಭೂತಗಳಲ್ಲಿ ಈಗಾಗಲೇ ಸೇರಿ ಹೋಗಿದೆ.

***
ಹಾಗಾದರೆ, ಈ ವಿದೇಶಿ ಕಂಪನಿಗಳ ನಿಜವಾದ (ಮಾಲಿಕರು) ಓನರುಗಳು ಯಾರು?  ವಿದೇಶಿ ಹೂಡಿಕೆಯಿಂದ ಒಂದು ದೇಶದ ಸ್ವಾಯುತ್ತತೆಗೆ ಭಂಗ ಬರುತ್ತದೆಯೇ? ವಿದೇಶಿ ಹೂಡಿಕೆ ಇಲ್ಲದೇ ಸ್ವಾವಲಂಬನೆಯನ್ನು ನಂಬಿಕೊಂಡೇ ಒಂದು ದೇಶದ (ಮತ್ತು ಅದರ ನಿವಾಸಿಗಳು) ಬೆಳೆಯಲು ಸಾಧ್ಯವೇ? ಚೀನಾ ದೇಶದಲ್ಲಿ ತಯಾರು ಮಾಡಿದ ಪ್ರಾಡಕ್ಟ್‌ಗಳನ್ನು ನಮ್ಮಲ್ಲಿ ನಿಜವಾಗಿಯೂ ಬ್ಯಾನ್ ಮಾಡಿ ಬದುಕಲು ಸಾಧ್ಯವೇ? ಒಂದು ವೇಳೆ,  ನಮ್ಮ ನಡೆಗೆ ಪ್ರತಿಯಾಗಿ ವಿದೇಶಿಗಳು ತಮ್ಮ ಹಣದ ಹೂಡಿಕೆಯಲ್ಲಿ ವ್ಯತ್ಯಯ ಉಂಟು ಮಾಡಿದರೆ, ಅಥವಾ ತಮ್ಮ "ಶೇರ್"ಗಳನ್ನು "ಸೆಲ್" ಮಾಡಿದರೆ ಅದರಿಂದ ನಮ್ಮ ಎಕಾನಮಿ ಮೇಲೆ ಯಾವ ರೀತಿಯ ಪ್ರಭಾವವಾಗುತ್ತದೆ?  ಹೆಚ್ಚುತ್ತಿರುವ ಗ್ಲೋಬಲೈಜೇಷನ್ ನಮ್ಮ "ವಸುಧೈವ ಕುಟುಂಬಕಂ" ಅನ್ನುವ ತತ್ವವನ್ನು ಅನುಮೋದಿಸುತ್ತದೆಯೋ ಅಥವಾ ವಿರೋಧಿಸುತ್ತದೆಯೋ?  ವಿಶ್ವವೇ ಒಂದು ಚಿಕ್ಕ ಹಳ್ಳಿಯಾಗಿ ಎಲ್ಲರಿಗೂ ಎಲ್ಲದರ access ಇರುವಾಗ ಒಂದು ದೇಶ ತನ್ನ ಬಾರ್ಡರ್ ವಿವಾದವನ್ನು ಪ್ರತಿಪಾದಿಸುವುದಕ್ಕೋಸ್ಕರ "ದೇಶೀಯ ವಸ್ತುಗಳನ್ನು ಬಳಸಿ, ಚೈನೀಸ್ ವಸ್ತುಗಳನ್ನು ತಿರಸ್ಕರಿಸಿ" ಎಂದು ಸ್ಲೋಗನ್ ಕೊಡಲು ಸಾಧ್ಯವೇ?  ಒಂದು ವೇಳೆ ಹಾಗೆ ಮಾಡಿದರೆ ಅದರ ಪರಿಣಾಮಗಳೇನಾಗಬಹುದು? ಇಂದು ಮಿತ್ರ ದೇಶವಾಗಿರುವವರನ್ನು ಒಳಕರೆದು ಮಣೆ ಹಾಕಿ ಕೂರಿಸಿಕೊಂಡ ಮೇಲೆ, ಕಾಲಾನಂತರ ಅವರು ತಿರುಗಿ ಬಿದ್ದರೆ, ಆಯಾ ಸಂಬಂಧಗಳನ್ನು ಮುರಿದುಕೊಳ್ಳುವುದು ಮತ್ತು ಕಳೆದುಕೊಂಡ ಸಂಪನ್ಮೂಲದ ಕೊಂಡಿಯನ್ನು ಇನ್ನೊಂದು ದೇಶದ ಜೊತೆಗೆ ಬೆಳೆಸಿಕೊಳ್ಳುವುದು ಅಷ್ಟು ಸುಲಭದ ವಿಚಾರವೇ?

***
ಹೀಗೆ, ಧೀರ್ಘವಾಗಿ ಯೋಚಿಸಿದಂತೆಲ್ಲ, ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತವೆ.  ನಮ್ಮ "ದೇಶಿ-ಸ್ವದೇಶಿ" ಎನ್ನುವ ನಿಲುವು ಒಂದು ರೀತಿಯ ಭಾವನಾತ್ಮಕ ಉದ್ವಿಗ್ನತೆಯಾಗಿ ಗೋಚರಿಸುತ್ತದೆಯೇ ವಿನಾ ಅರ್ಥಶಾಸ್ತ್ರದ ಯಾವುದೋ ಪುಸ್ತಕದ ಅಧ್ಯಾಯದಂತಲ್ಲ.  ನಮಗೆ ಎದುರಾಗಿರುವ ಶತ್ರು ಒಂದು ರೀತಿಯ ಕೊರೋನಾ ವೈರಸ್ಸಿನ ಹಾಗೆ ಗಾಳಿಯಲ್ಲಿ ವ್ಯಾಪಿಸಿಕೊಂಡು ತನ್ನ ಕಬಂಧ ಬಾಹುಗಳನ್ನು ದಿನೇದಿನೇ ಹರಡಿಕೊಳ್ಳುತ್ತಿರುವಾಗ ಈ ಎಲ್ಲ ವಿದೇಶಿ ಬಂಡವಾಳವನ್ನು "ಸ್ವದೇಶಿ ಬಳಸಿ" ಎನ್ನುವ ಒಂದು ಹೇಳಿಕೆಯನ್ನು ಹೇಳಿ ಪರಿಹರಿಸುತ್ತೇವೆ ಎನ್ನುವುದು ಹಾಸ್ಯಾಸ್ಪದವಾಗುತ್ತದೆ.  ಇಡೀ ಉತ್ತರ ಅಮೇರಿಕವನ್ನೇ ಅಲುಗಾಡಿಸುವಷ್ಟು ಸಾಮರ್ಥ್ಯವನ್ನು ಹೊಂದಿರುವ ಚೀನಾ ದೇಶದವರನ್ನು ನಮ್ಮ ದೇಶದ ಎಮೋಷನಲ್ ಮುತ್ಸದ್ದಿಗಳು ಇನ್ನಾದರೂ ಹಗುರವಾಗಿ ತೆಗೆದುಕೊಳ್ಳದಿದ್ದರೆ ಸಾಕು!

ನಾವು ಭಾವಜೀವಿಗಳು.  ಕ್ರೂರ ಪಾಕಿಸ್ತಾನದವರಿಗೆ ನಾವು ಭಾವನಾತ್ಮಕವಾಗಿ ಉತ್ತರಕೊಡುತ್ತೇವೆ.  ಮುಳ್ಳನ್ನು ಮುಳ್ಳಿನಿಂದ ತೆಗಿ ಎನ್ನುವ ಗಾದೆಯನ್ನು ಮರೆತು ನಮ್ಮ ಹೃದಯ ವಿಶಾಲತೆಯನ್ನು ಮೆರೆಯುತ್ತೇವೆ.  ಅದೇ ರೀತಿ ಉತ್ತರದ ಒಂದು ಆಯಕಟ್ಟಿನ ಜಾಗಕ್ಕೋಸ್ಕರ (strategic place) ಚೀನಾದವರು ಹೊಂಚು ಹಾಕಿ ನಮ್ಮ ಸೈನಿಕರನ್ನು ಮುಳ್ಳು-ಮೊಳೆಕಟ್ಟಿದ ಕಬ್ಬಿಣದ ರಾಡುಗಳಿಂದ ಹೊಡೆದಾಕ್ಷಣ ನಮ್ಮ emotional response ಅನ್ನು ಜಾಗರೂಕಗೊಳಿಸಿಕೊಂಡು ಅನೇಕ (ಸಾಮಾಜಿಕ) ಮಾಧ್ಯಮಗಳಲ್ಲಿ ದೊಡ್ಡ ಭಾಷಣವನ್ನು ಬಿಗಿಯುತ್ತೇವೆ.  ಆದರೆ, ಕಳೆದ 25 ವರ್ಷಗಳಿಂದ ಚೈನಾದವರು ನಿಧಾನವಾಗಿ ಅಮೇರಿಕ ಮತ್ತಿತರ ದೇಶಗಳಿಂದ ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಈಗ ಇಡೀ ವಿಶ್ವವೇ ತಲೆತಗ್ಗಿಸಿ ನಿಲ್ಲುವಂತ ತಮ್ಮದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡರು.  ಹಾಗೆಯೇ, ಉತ್ತರದ ಆಯಕಟ್ಟಿನ ಜಾಗದ ಹೋರಾಟದ ಹಿಂದೆಯೂ ಅವರದ್ದೇ ಆಳವಾದ ಒಂದು ಚಿಂತನೆ ಇದೆ.  ಈ "ಸಿಲ್ಕ್ ರೋಡಿ"ನ ಮಾಲಿಕತ್ವ ಅವರಿಗೆ ಬೇಕಾಗಿದೆ.  ಹಣದ ಆಮಿಶ ಒಡ್ಡಿ ಪಾಕಿಸ್ತಾನಕ್ಕೆ ನೆರವಾಗಿ ಭಾರತದ ಮೇಲೆ ಛೂ ಬಿಟ್ಟು, ಭಾರತ ಭೂಮಿಯನ್ನು ಅಸ್ಥಿರವಾಗಿಟ್ಟರೆ ಅವರ ಬೇಳೆಕಾಳುಗಳು ಸಲೀಸಾಗಿ ಬೇಯುತ್ತವೆ.  ದಿನೇದಿನೇ ಹೆಚ್ಚುವ ಜನಸಂಖ್ಯೆಯ ಹೊಟ್ಟೆ ತುಂಬುವುದು ಭಾರತದ ಸಂಕಷ್ಟವಾಗಿರುವಾಗ ಭಾರತದಲ್ಲಿ ತಯಾರಾದ ಯಾವುದೇ ಉತ್ಪನ್ನಗಳ ಮುಖದ ಮೇಲೆ ಸೆಡ್ಡು ಹೊಡೆಯುವ ಪ್ರಾಡಕ್ಟ್ ಅನ್ನು ಕಡಿಮೆ ಬೆಲೆಗೆ ತಯಾರಿಸಿ, ಬಿಡುಗಡೆ ಮಾಡಿ, ಮಾರುವ ದಕ್ಷತೆ ಇದೆ.  ಈಗಾಗಲೇ ನಮ್ಮ ಜನಜೀವನದಲ್ಲಿ ಸೇರಿಕೊಂಡ ಚೀನಾದ ಉತ್ಪನ್ನಗಳನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲಾಗದು.  ಒಳ್ಳೆಯದೋ ಕೆಟ್ಟದ್ದೋ ಒಂದು ವಸ್ತುವನ್ನು displace ಮಾಡುವುದಾದರೆ, ಅದನ್ನು ಯಾವುದರಿಂದ ಮಾಡುತ್ತೇವೆ ಅನ್ನುವುದು ಮುಖ್ಯವಾಗುತ್ತದೆ.  ಹತ್ತು ರೂಪಾಯಿಗೆ ದೊರೆಯುವ ಚೀನಾದ ವಸ್ತುವನ್ನು ನೂರು ರೂಪಾಯಿಗೆ ಸಿಗುವ ಭಾರತದಲ್ಲಿ ತಯಾರು ಮಾಡಿದ ವಸ್ತುವಿನಿಂದ displace ಮಾಡಲಾಗದು... ಯೋಚನೆ ಮಾಡಿ!

Sunday, June 14, 2020

ಓಡುವುದೇ ಗುರಿ...

ನಾವು ಗ್ರೇಡ್ ಸ್ಕೂಲಿನಲ್ಲಿದ್ದಾಗ ನಮಗೆ "ಪರೀಕ್ಷೆ" ಎನ್ನುವ ಈ ರೀತಿಯ ಒಂದು ಪದ್ಯ ಇತ್ತು...
ಸತ್ವವನು ಪರಿಕಿಸುವ ಸಮಯ ಬಂದಿಹುದು
ಬಲ ಕುಶಲ ಸಾಹಸಗಳಿವೆ ನೋಡು|
ಆರು ಯೋಜನ ನೀರನೀಜಿ ಬರಬಲ್ಯಾ?
ನೂರು ಮೈಲಿಯ ಓಟ ಓಡಬಲ್ಯಾ?
ಮದಿಸಿದ ಸಲಗವ ಕಟ್ಟಿ ಹಿಡಿಯಬಲ್ಯಾ?

ಇತ್ಯಾದಿ ಪ್ರಶ್ನೆಗಳಿಂದ ಕೊನೆಯಾಗುವ ಈ ಪರೀಕ್ಷೆಯ ಪರಿ ಬಹಳ ಇಷ್ಟವಾಗಿತ್ತು... ಇದರಲ್ಲಿ ವರ್ಣಿಸಿರುವ ಈ ಉಪಾದಿಗಳಲ್ಲಿ ಯಾವುದಾದರೊಂದನ್ನು ಯಾರಾದರೂ ಮಾಡುತ್ತಾರೆಯೇ ಎಂದು ಆಲೋಚಿಸಿ ಸೋಜಿಗಗೊಳ್ಳುವ ಕ್ಷಣಗಳನ್ನು ಅಂದಿನ ಕನ್ನಡ ತರಗತಿಗಳು ತಂದುಕೊಟ್ಟಿದ್ದವು.  ಈ ಎಲ್ಲ ಬಲ ಕುಶಲ ಸಾಹಸಗಳನ್ನು ಯೋಚಿಸಿಕೊಂಡರೆ ಇತ್ತೀಚಿನ ದಿನಗಳಲ್ಲಿ "ಓಡು"ವುದಕ್ಕೆ ಹೆಚ್ಚಿನ ಜನರು ಒಲವು ತೋರಿಸುತ್ತಾರಾದ್ದರಿಂದ, ಓಡುವುದನ್ನು ಕುರಿತು ಧೀರ್ಘವಾಗಿ ಆಲೋಚಿಸಿಕೊಂಡಾಗ ಈ ಲೇಖನ ಹುಟ್ಟಿತು.
***

ಕ್ರಿಸ್ತಪೂರ್ವ 490 ರಲ್ಲಿ ಗ್ರೀಸ್‌ನ ಫೈಡಿಪಿಡಿಸ್ ಎಂಬಾತ ಮ್ಯಾರಥಾನ ಪಟ್ಟಣದಿಂದ ರಾಜಧಾನಿ ಏಥೆನ್ಸ್‌ವರೆಗಿನ ದೂರ (26.2 ಮೈಲಿ ಅಥವಾ 42 ಕಿ.ಮಿ.) ದೂರವನ್ನು ಓಡಿ ಕ್ರಮಿಸಿದ.  ಗ್ರೀಕ್ ಸೈನಿಕರು ಪರ್ಶಿಯನ್‌ರ ವಿರುದ್ಧ ಗೆದ್ದ ಸಂದೇಶವನ್ನು ಸಾರುವುದು ಅವನ ಕೆಲಸವಾಗಿತ್ತು.  ಆ ದೂರವನ್ನು ಕ್ರಮಿಸಿ, ಅವನು ಓಡಿ ನಿತ್ರಾಣನಾದ್ದರಿಂದ ಸತ್ತು ಹೋದನೆಂದು ಪ್ರತೀತಿ ಇದೆ.  ಇದು ನಮ್ಮ ಆಧುನಿಕ "ಮ್ಯಾರಥಾನ್" ಎಂಬ ಕ್ರೀಡೆಗೆ ಹಿನ್ನೆಲೆ.  ಫೈಡಿಪಿಡಿಸ್ ಸತ್ತು ಹೋದನೆಂದು ಯಾರೂ ಹೇಳೋದಿಲ್ಲ, ಆದರೆ ಅವನ ನೆನಪಿಗಾಗಿ 26.2 ಮೈಲು ದೂರವನ್ನು ಕ್ರಮಿಸುವ ಓಟ ಇಂದಿಗೂ ಬಹಳ ಜನಪ್ರಿಯವಾಗಿದೆ.  ಅಷ್ಟೇ ಅಲ್ಲ, ದಿನೇ ದಿನೇ ಹೆಚ್ಚು ಹೆಚ್ಚು ಜನರನ್ನು ಓಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇಪ್ಪತ್ತಾರು ಮೈಲಿಯ ಮ್ಯಾರಥಾನ್ ಓಟ ಬಹಳ ಹೊತ್ತು ತೆಗೆದುಕೊಳ್ಳುತ್ತದೆ ಹಾಗೂ ಸರಿಯಾಗಿ ಟ್ರೈನಿಂಗ್ ಮಾಡದೇ ಓಡಲು ಸಾಧ್ಯವಿಲ್ಲ ಎಂಬಿತರ ಕಾರಣಗಳಿಗಾಗಿ ದೊಡ್ಡ ಮ್ಯಾರಥಾನ್ ಓಟದ ಕಸಿನ್‌ಗಳಾಗಿ ಅರ್ಧ ಮ್ಯಾರ್‌ಥಾನ್ (13.1 ಮೈಲು), 10ಕೆ (6.2 ಮೈಲು), 5ಕೆ (3.1 ಮೈಲು), ಇತ್ಯಾದಿಗಳೂ ಇವೆ.  ಮ್ಯಾರಥಾನ್ ಎನ್ನುವ ಕ್ರೀಡೆಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡ್ಯೊಯ್ಯುವ ನೆಲೆಯಲ್ಲಿ ಆಧುನಿಕ ಕ್ರೀಡಾಳುಗಳು, 50 ರಿಂದ 200 ಮೈಲಿಯ ದೂರದ ಅಲ್ಟ್ರಾ ಮ್ಯಾರಥಾನ್ ಎನ್ನುವ ಬಗೆಯನ್ನು ಕಂಡುಕೊಂಡಿದ್ದಾರೆ.  ಈ ಅಲ್ಟ್ರಾ ಮ್ಯಾರಥಾನ್‌ಗಳು ಕೆಲವೊಮ್ಮೆ ಕೆಲವು ದಿನಗಳ ವರೆಗೆ ನಡೆಯುವುದೂ ಉಂಟು (ರಾತ್ರಿ ಮತ್ತು ಹಗಲೂ ಸೇರಿ).

ಈ ಓಡುವುದರ ಹಿಂದಿನ ವಿಶೇಷತೆಯನ್ನು ತಿಳಿದುಕೊಳ್ಳೋಣ.  ಈ ಆಧುನಿಕ ಪ್ರಪಂಚದಲ್ಲಿ ಯಾರಾದರೂ ಏಕೆ 26 ಮೈಲಿಗಳ ದೂರವನ್ನು ಓಡುತ್ತಾರೆ, ಅದರಿಂದ ಸಿಗುವ ಮಜವೇನು? ಅದರ ಹಿಂದಿನ ರಹಸ್ಯವೇನು?

ಪ್ರಾಣಿ ಸಂಕುಲದಲ್ಲಿ ಎರಡು ಕಾಲಿನ ಮೇಲೆ ಓಡಾಡುವ ಅನೇಕ ಪಕ್ಷಿ-ಪ್ರಾಣಿ ಪ್ರಬೇಧಗಳಿದ್ದರೂ ಮನುಷ್ಯನಷ್ಟು ನೇರವಾಗಿ ನಿಲ್ಲುವಂತಹ ದೈಹಿಕ ಕ್ಷಮತೆ ಇನ್ನೊಂದು ಪ್ರಾಣಿಗೆ ವಿಕಾಸಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ಬಂದಿರಲಾರದು.  ಹುಟ್ಟುವಾಗ ಅತ್ಯಂತ ಅಸಹಾಯಕವಾಗಿ ಹುಟ್ಟುವ ನಾವು ಅದೆಷ್ಟು ಬೇಗ ನಮ್ಮ ದೈಹಿಕ ಸಮತೋಲನವನ್ನು ಕಂಡುಕೊಂಡು ನಿಲ್ಲುತ್ತೇವೆ.  ಒಮ್ಮೆ ನಿಂತೆವೆಂದರೆ ಓಡುವುದೇ ಗುರಿ... ಈ ಕಾರಣಕ್ಕಾಗಿಯೇ ಕವಿ ನಿಸಾರ್ ಅಹ್ಮದ್ ಅವರು ತರುಣ ಮಿತ್ರನಿಗೆ ಎಂಬ ಕವನದಲ್ಲಿ "ಓಡುವುದೇ ಗುರಿಯೇ? ಓಡುವುದಿರಲಿ, ನಡುನಡುವೆ ನಿಂತು ನೋಡುವ ತಾಳ್ಮೆಯೂ ನಿನಗೆ ಬರಲಿ" ಎಂದು ಹೇಳಿರಬೇಕು.  ಹಿಂದಿನ ಕಾಲದಲ್ಲಿ ಓಡುವುದು ನಿಜವಾಗಲೂ ಗುರಿಯಾಗಿದ್ದಿತು... ಗವಿಗಳಲ್ಲಿ ವಾಸಿಸುತ್ತಿದ್ದ ನಮ್ಮ ಪೂರ್ವಜರು ಪ್ರಾಣಿಗಳಿಗಿಂತ ಹೆಚ್ಚು ವೇಗವಾಗಿ ಓಡಬಲ್ಲವರಾಗಿದ್ದರು, ಅವರು ಅಂದಿನ ದಿನಗಳಲ್ಲಿ ಬೇಟೆಯಾಡಿ ಬದುಕಿದ್ದರಿಂದಲೇ ನಾವು ಇಂದಿಗೂ ಜೀವಂತವಾಗಿರುವುದು, ಅಷ್ಟೇ ಅಲ್ಲ, ನಮ್ಮ ವಂಶಾವಳಿಗಳಲ್ಲಿ ಓಡುವುದು ಸಹಜವಾಗಿರುವುದು... ಆದ್ದರಿಂದ ನಡೆಯಬಲ್ಲವರೆಲ್ಲ ಓಡಬಲ್ಲರು ಎಂದರೆ ತಪ್ಪೇನಿಲ್ಲ!  ಓಡುವುದಕ್ಕೋಸರವೆಂದೇ ಮಿಲಿಯನ್ನುಗಟ್ಟಲೆ ವರ್ಷಗಳ ? ಕಾಲಮಾನದಲ್ಲಿ ನಮ್ಮ ಶರೀರ ತಕ್ಕನಾಗಿ ಅನುವಾಗಿದೆ.  ನಮ್ಮ ದೈಹಿಕ ಸಮತೋಲನವನ್ನು ಕೇವಲ ಪುಟ್ಟ ಪಾದಗಳಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ನಾವು ನಿಲ್ಲುವ, ನಡೆಯುವ ಮತ್ತು ಓಡುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಕಾಸ ವಾದದಲ್ಲಿ ನಾವು ಹೇಗೆ ಬೆಳೆದು ಬಂದಿದ್ದೇವೆ ಎಂದು ಆಶ್ಚರ್ಯವಾಗುತ್ತದೆ.

ಇಂದಿನ ಟೆಕ್ನಾಲಜಿ ಕೆಲಸಗಾರರು ಹೆಚ್ಚಿನ ಮಟ್ಟಿಗೆ ಆಫೀಸುಗಳಲ್ಲಿ ದಿನಕ್ಕೆ ಎಂಟು ಘಂಟೆ ಕೂತು ಮೀಟಿಂಗುಗಳಲ್ಲಿ ಕಳೆಯುವ ಅಭ್ಯಾಸಕ್ಕೆ ಒಗ್ಗಿಕೊಂಡು ಹೋಗಿದ್ದಾರೆ ಎನ್ನಬಹುದು.  ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ರೋಗಗಳಿಗೆ ನಾವು ದಕ್ಷಿಣ ಏಷ್ಯಾದ ಜನರು ಬಲಿಯಾಗುವುದನ್ನು ನಾವು ಅಂಕಿ-ಅಂಶಗಳಲ್ಲಿ ನೋಡಬಹುದು.  ಈ ನಿಟ್ಟಿನಲ್ಲಿ ಒಳಾಂಗಣ ಜಿಮ್‌ನಲ್ಲಿ ಟ್ರೆಡ್‌ಮಿಲ್ ಉಪಯೋಗಿಸಿಕೊಂಡಾಗಲೀ, ಅಥವಾ ಹೊರಾಂಗಣದಲ್ಲಿ ಒಂದು ಸುತ್ತು ಓಡಿದರಾಗಲೀ ದೇಹದ ನರನಾಡಿಗಳಲ್ಲಿ ಸಂವೇದನೆ ಉಂಟಾಗಿ ಓಡುವವರಿಗೆ ಒಂದು ರೀತಿಯ ಸ್ಪೂರ್ತಿ ಸಿಕ್ಕಂತಾಗುವುದು ಅವರ ಅನುಭವದ ಮಾತು.  ಕೆಲವರಿಗೆ ಓಡುವುದು ಒಂದು ರೀತಿಯ ಮೆಡಿಟೇಷನ್‌ಗೆ ಸಮನಾದರೆ, ಇನ್ನು ಕೆಲವರಿಗೆ ಓಡುವುದು ಒಂದು ರೀತಿಯ "ಕೆಲಸ", ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸುವ ಆತುರ.  ಇನ್ನು ಕೆಲವರಿಗೆ ಹೊರಗಡೆ ನಿಸರ್ಗದ ಜೊತೆಗೆ ಬೆರೆಯುವ ಒಂದು ಅವಕಾಶ.  ಕೆಲವರು ಸೂರ್ಯೋದಯಕ್ಕೂ ಮೊದಲಿನ ಸದ್ದಿಲ್ಲದ, ತಣ್ಣಗಿನ ವಾತಾವರಣವನ್ನು ಆಯ್ದುಕೊಂಡರೆ, ಇನ್ನು ಕೆಲವರು ಸಂಜೆಯ ಹೊತ್ತನ್ನು ಆರಿಸಿಕೊಳ್ಳುವುದುಂಟು.

ಓಡುವುದರಿಂದ ಉಪಯೋಗಗಳು ಎಷ್ಟೋ, ಸರಿಯಾದ ರೀತಿಯಲ್ಲಿ ಓಡದಿದ್ದರೆ ಅದರಿಂದ ಅಷ್ಟೇ ಅನಾನುಕೂಲಗಳೂ ಇವೆ.  68 ಕೆಜಿ (150 ಪೌಂಡ್) ತೂಕ ಇರುವ ಒಬ್ಬ ವ್ಯಕ್ತಿ ಹತ್ತು ನಿಮಿಷಕ್ಕೆ ಒಂದು ಮೈಲು ಓಡುತ್ತಾ ಆರು ಮೈಲು (ಒಂದು ಘಂಟೆಯಲ್ಲಿ) ದೂರವನ್ನು ಓಡಿದರೆ ಸುಮಾರು 750 ಕ್ಯಾಲೊರಿ ಖರ್ಚು ಮಾಡಿದಂತಾಗುತ್ತದೆ.  ಇದೇ ಸಮಯದಲ್ಲಿ, ಆ ವ್ಯಕ್ತಿಯ ಹೃದಯದ ಬಡಿತ ಕೂಡ ಎರಡರಷ್ಟು ವೇಗವಾಗಿ ಹೊಡೆದುಕೊಳ್ಳತೊಡಗುತ್ತದೆ.  ಹೀಗೆ, ದೇಹವನ್ನು ಅತಿಯಾಗಿ "ಶಿಕ್ಷಿಸುವ" ಕಾಯಕವಾದ ಓಡುವಿಕೆ, ಎಲ್ಲರಿಗೂ ಹೇಳಿ ಮಾಡಿಸಿದ್ದಲ್ಲ.  ಅಕಸ್ಮಾತ್, ತನಗೆ ಗೊತ್ತಿಲ್ಲದೇ ಹೃದಯ ಸಂಬಂಧಿ ಖಾಯಿಲೆಗೆ ತೊಡಗಿದ ವ್ಯಕ್ತಿ, ಸ್ಥಳದಲ್ಲೇ ಸತ್ತು ಹೋಗುವ ಅಪಾಯವಿದೆ.  ಆದ್ದರಿಂದ, ಓಡುವ ಇಷ್ಟ ಇರುವ ಯಾರಾದರೂ ತಮ್ಮ ಓಡುವ ವೇಗ ಹಾಗೂ ದೂರವನ್ನು ನಿಧಾನವಾಗಿ ಹೆಚ್ಚಿಸಿಕೊಂಡು ತಮ್ಮ ಫಿಟ್‌ನೆಸ್ ಅನ್ನು ಪರೀಕ್ಷಿಸಿಕೊಳ್ಳುವುದು ಸಾಮಾನ್ಯ.

ಮೊದಮೊದಲು ಅರ್ಧ, ಒಂದು, ಎರಡು... ಮೂರು ಹೀಗೆ ನಿಧಾನವಾಗಿ ಮೈಲುಗಳನ್ನು ಓಡುತ್ತಾ ಬಂದಾಗ ದೇಹಕ್ಕೆ ಅಭ್ಯಾಸವಾಗತೊಡಗಿ ನಿಧಾನವಾಗಿ ದಿನೇದಿನೇ ಮೈಲುಗಳು ಹೆಚ್ಚುತ್ತಾ ಹೋಗುತ್ತವೆ.  ಹೀಗೆ ಒಂದೆರಡು ವರ್ಷ ವಾರಕ್ಕೆ ಕನಿಷ್ಥ ಪಕ್ಷ ಮೂರು ಬಾರಿಯಾದರೂ ಓಡುತ್ತಾ ಹೋದರೆ ಆಗ ಮ್ಯಾರಥಾನ್ ಓಡುವಷ್ಟು ಆತ್ಮವಿಶ್ವಾಸ ಮೂಡುತ್ತದೆ.  ಓಡುವುದಕ್ಕೆ ಅನುವಾಗುವಲ್ಲಿ ದೇಹದ ಕೆಲಸ ಎಷ್ಟು ಮುಖ್ಯವೋ ಮನಸ್ಸಿನ ಕೆಲಸವೂ ಅಷ್ಟೇ ಮುಖ್ಯ.  ಅವರೆಡರ ತಾಳಮೇಳವಿಲ್ಲದಿದ್ದಲ್ಲಿ ಒಂದು ಮೈಲು ಓಡುವುದೂ ಅಸಾಧ್ಯವಾದೀತು.
***

ನಾನೇಕೆ ಓಡುತ್ತೇನೆ?
ಈ ಪ್ರಶ್ನೆಯನ್ನು ಕೇಳಿಕೊಂಡಾಗಲೆಲ್ಲ ಅನೇಕ ಉತ್ತರಗಳು ಹೊಳೆಯುತ್ತವೆಯಾದರೂ, ಅವುಗಳಲ್ಲೆಲ್ಲಾ ಮುಖ್ಯವಾದುದು "ಅದು ಒಂದು ರೀತಿಯ ಮೆಡಿಟೇಶನ್ ಇದ್ದ ಹಾಗೆ".  You compete against yourself and you meditate as you run!


***
ಕಳೆದ ವರ್ಷ (2019) ಉತ್ತರ ಅಮೇರಿಕದಲ್ಲಿ ಮ್ಯಾರಥಾನ್ ಓಟವನ್ನು ಪೂರೈಸಿದವರ ಸಂಖ್ಯೆ:

    MonthRacesFinishers
    January4028,589
    February4614,220
    March7146,252
    April7355,060
    May8642,352
    June6123,344
    July259,012
    August426,744
    September9419,964
    October107122,194
    November6190,903
    December2941,050

    2019 gÀ°è 53,518 d£ÀgÀÄ £ÀÆå AiÀiÁPïð ¹n ªÀiÁågÀxÁ£ï C£ÀÄß ¥ÀÇgÉʹzÀgÀÄ.
    GvÀÛgÀ CªÉÄÃjPÀzÀ mÁ¥ï 10 ªÀiÁågÀxÁ£ï NlªÀ£ÀÄß DAiÉÆÃf¹zÀ £ÀUÀgÀUÀ¼ÀÄ ºÁUÀÆ ¥ÀÇgÉʹzÀªÀgÀÄ.

    RaceFinishers
    New York City Marathon53,518
    Chicago Marathon45,858
    Boston Marathon26,632
    Los Angeles Marathon20,081
    Honolulu Marathon18,804
    Marine Corps Marathon18,357
    Walt Disney World Marathon11,968
    Philadelphia Marathon10,068
    California International Marathon7,504
    Twin Cities Marathon6,747

    NqÀ®Ä DtªÁVgÀĪÀ d£À¸ÁUÀgÀ!

    Monday, June 08, 2020

    ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...


    ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...ಹೀಗೆನಿಸಿದ್ದು ನಮ್ಮ ಇತ್ತೀಚಿನ ಸ್ಟಾಕ್ ಮಾರ್ಕೆಟ್ ಮತ್ತು ಎಕಾನಮಿ ಇವುಗಳನ್ನು ಗಮನಿಸಿದಾಗಿನಿಂದ.  ಕೊರೋನಾ ವೈರಸ್ಸಿನ ಕೃಪೆಯಿಂದ ಎಷ್ಟೊಂದು ಜನರು ನಿರುದ್ಯೋಗಿಗಳಾಗಿದ್ದಾರೆ, ಎಷ್ಟೋ ಉದ್ಯಮಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ.  ಇನ್ನು ಎಷ್ಟೋ ಸೆಕ್ಟರುಗಳು ಚೇತರಿಸಿಕೊಳ್ಳಲಾರದ ಮಟ್ಟಕ್ಕೆ ದೈನ್ಯ ಸ್ಥಿತಿಯನ್ನು ತಲುಪಿರುವಾಗ, ಇವತ್ತಿನ ಸ್ಟಾಕ್ ಮಾರ್ಕೆಟ್ಟಿನ ಪ್ರತಿಕ್ರಿಯೆಯನ್ನು ನೋಡಿದರೆ ಒಂದಕ್ಕೊಂದು ತಾಳೆಯಂದಂತೆನಿಸುವುದಿಲ್ಲ, ಅಲ್ಲವೇ?

    ಎಕಾನಮಿ ಹದಗೆಟ್ಟಿದೆ, ಇನ್ನು ಚಿಗುರಿಕೊಳ್ಳಲು ಹಲವು ತಿಂಗಳುಗಳೇ ಬೇಕು, ವಿಶ್ವದಾದ್ಯಂತ ಎಲ್ಲ ಕಡೆಗೆ ರಿಸೆಶ್ಶನ್ನು ಎಂದು ನೀವು ಬೇಕಾದಷ್ಟು ಕಡೆ ಓದಿರುತ್ತೀರಿ, ಕೇಳಿರುತ್ತೀರಿ.  ಆದರೆ, ಇದನ್ನೆಲ್ಲ ಬದಿಗಿಟ್ಟು ವಿಶ್ವದಾದ್ಯಂತ ಮುಖ್ಯ ಮಾರುಕಟ್ಟೆಗಳು ತಮ್ಮ ಸ್ಟಾಕ್ ಇಂಡೆಕ್ಸುಗಳನ್ನು ಕಳೆದ ಎರಡು ತಿಂಗಳ ಕುಸಿತದಿಂದ ಸಂಪೂರ್ಣ ಚೇತರಿಸಿಕೊಂಡಂತೆ ಕಾಣಿಸುತ್ತಿದೆ.  ಮಾರ್ಚ್ ತಿಂಗಳ ಕೆಳ ಮಟ್ಟದ ಸೂಚ್ಯಂಕಗಳು, ಎರಡು-ಮೂರು ತಿಂಗಳುಗಳಲ್ಲಿ V ಆಕಾರದ ರಿಕವರಿಯನ್ನು ಪಡೆದುಕೊಂಡಿವೆ, ಇದಕ್ಕೆ ಏನು ಕಾರಣವಿರಬಹುದು?

    - ಬೇರೆ ಕಡೆಗೆ ಹೂಡಿಕೆ ಮಾಡಲಾರದೆ ಹೆಚ್ಚಿನ ರಿಟರ್ನ್‌ಗೋಸ್ಕರ ಸ್ಟಾಕ್ ಮಾರ್ಕೆಟ್ ನಂಬಿಕೊಂಡು ಹೆಚ್ಚು ಹೆಚ್ಚು ಹಣ ಹೂಡುವ ಶ್ರೀಮಂತರು ಇನ್ನೂ ಇರಬಹುದೇ?
    - ಮೊದಲೆಲ್ಲ ಮನುಷ್ಯರು ಮಾಡುವ ಕೆಲಸವನ್ನು ಈಗೀಗ ಕಂಪ್ಯೂಟರುಗಳು (algo trading) ಮಾಡುತ್ತಿರುವುದರಿಂದ, ಅಂತಹ ಟ್ರೇಡಿಂಗ್ ಸಿಸ್ಟಂಗಳಲ್ಲಿ ಜನ ಸಾಮಾನ್ಯರ ಯಾವುದೇ ಎಮೋಷನ್‌ಗೆ ಬೆಲೆ ನೀಡುತ್ತಿಲ್ಲವೇ?
    - ಸೊರಗಿದ ಆರ್ಥಿಕತೆ, ರಿಸೆಶನ್ ಇತರ ಪದಪುಂಜಗಳೆಲ್ಲ ಕೇವಲ ಬಡವರಿಗೆ ಮಾತ್ರ ಅನ್ವಯಿಸುವಂತಹವೇ?
    - ಕೊಳ್ಳುಬಾಕತನದ ಕನ್ಸೂಮರುಗಳು ಇಲ್ಲದಿದ್ದರೂ ಈ ಸ್ಟಾಕ್ ಮಾರ್ಕೆಟ್ ಅನ್ನು ಯಾವುದೋ ಅವ್ಯಕ್ತ ಶಕ್ತಿಯೊಂದು [ವಿದೇಶಿ ಹೂಡಿಕೆ (foreign investment), ಸರ್ಕಾರೀ ಮಧ್ಯವರ್ತಿತನ (quantitative easing), ಪುನಃ ಕೊಳ್ಳುವಿಕೆ (trade buyback), ಇತ್ಯಾದಿ] ಮುನ್ನಡೆಸುತ್ತಿರಬಹುದೇ?

    ಈ ವರ್ಷ, ಬೆಳೆಯುವ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರಿಗೂ ಹೊಸ ಬಟ್ಟೆ ಬೇಕಾಗಿರಲಾರದು.  ಎಲ್ಲರ ಸಮ್ಮರ್ ವೆಕೇಶನ್ ಕೂಡ ಒಂದಲ್ಲ ಒಂದು ರೀತಿಯಿಂದ ಕೊರೋನಾ ವೈರಸ್ಸಿನ ಪ್ರಭಾವಕ್ಕೆ ಒಳಗಾಗಿದೆ.  ಮುಂದೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಅಮೇರಿಕದಲ್ಲಿ ಶಾಲೆಗಳು ತೆರೆಯದೇ ಮಕ್ಕಳು ಮನೆಯಲ್ಲೇ ಇದ್ದರೆ, ಬ್ಯಾಕ್-ಟು-ಸ್ಕೂಲ್ ಖರೀದಿಗೂ ದಕ್ಕೆಯಾಗುತ್ತದೆ.  ಜನರು ಕಡಿಮೆ ಡ್ರೈವ್ ಮಾಡುತ್ತಿದ್ದಾರೆ, ಹೆಚ್ಚಿನ ಕಾರುಗಳನ್ನು ಕೊಳ್ಳುತ್ತಿಲ್ಲ.  ಕಾರುಗಳು ರೀಪೇರಿಗಾಗಲೀ, ಸರ್ವೀಸಿಗಾಗಲೀ ಬರುತ್ತಿಲ್ಲ.  ರೆಸ್ಟೋರಂಟುಗಳಿಗೆ ಜನರು ಹೋಗುವುದು ಕಡಿಮೆಯಾಗಿದೆ.  ಜನರ ತಿಂಗಳ ಖರ್ಚು ಕನಿಷ್ಠ ಪ್ರಮಾಣಕ್ಕೆ ಬಂದು ನಿಂತಿದೆ.  ಇನ್ನು ಏರ್‌ಲೈನ್ಸ್ ಪ್ರಯಾಣ ಹೆಚ್ಚಿನ ಪ್ರಮಾಣದಲ್ಲಿ ನೆನೆಗುದ್ದಿಗೆ ಬಿದ್ದಿದೆ. ಹೀಗೆ, ರೀಟೈಲ್-ಹೋಲ್‌ಸೇಲ್ ಎಲ್ಲ ಖರೀದಿಗಳೂ ಸಹ ಕಷ್ಟಕ್ಕೆ ಒಳಗಾಗಿ ಸೊರಗಿವೆ.  ಹಾಗಿದ್ದರೆ, ಇವುಗಳೆಲ್ಲದರ ಒಟ್ಟು ಹೊಡೆತ ಸ್ಟಾಕ್ ಮಾರ್ಕೆಟ್ಟಿನ ಮೇಲೆ ಒಂದಲ್ಲ ಒಂದು ರೀತಿಯಿಂದ ಆಗಲೇ ಬೇಕಲ್ಲವೇ?

    ಒಂದು ವರದಿಯ ಪ್ರಕಾರ, ಅಮೇರಿಕದಲ್ಲಿ ನೂರಕ್ಕೆ ಐವತ್ತೈದು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೂಡಿಕೆ ಮಾಡುತ್ತಾರೆ.  ಈ ರೀತಿ ಹೂಡಿಕೆ ಮಾಡುವವರಲ್ಲಿ individual (retail) traders ಮತ್ತು institutional traders ಎಂದು ಎರಡು ರೀತಿಯವರನ್ನು ಗುರುತಿಸಬಹುದು.  ರೀಟೈಲ್ ಟ್ರೇಡರ್ಸ್ ತಮ್ಮ ಚಿಕ್ಕ ಚಿಕ್ಕ ಪೋರ್ಟ್‌ಫೋಲಿಯೋ ಗಳನ್ನು ಸ್ವಯಂ ಮ್ಯಾನೇಜು ಮಾಡುತ್ತಾರೆ, ಹೆಚ್ಚಿನವರು ಹಣ ಕಳೆದುಕೊಳ್ಳುತ್ತಾರೆ ಎಂಬುದು ಗೊತ್ತಿರುವ ವಿಷಯ.  ಆದರೆ, Institutional traders ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿ ಬಿಲಿಯನ್ ಗಟ್ಟಲೆ ಲಾಭಗಳಿಸುತ್ತಾರೆ... ಇವರ ಪ್ರಮಾಣ ಸಾವಿರದಲ್ಲಿ ಒಬ್ಬರ ಲೆಕ್ಕ. ಇಂಥ ಶ್ರೀಮಂತರು ಎಂತಹ ಎಕಾನಮಿ ಇದ್ದರೂ ಅದರಲ್ಲಿ ಲಾಭಗಳಿಸುವ "ತಂತ್ರ" ಉಳ್ಳವರಾಗಿರುತ್ತಾರೆ.  ಇವರಿಗೆ ಸಾಧಾರಣವಾಗಿ ಯಾವುದೇ ರೀತಿಯಲ್ಲಿ ಹೊಡೆತ ಬೀಳದಂತೆ ತಮ್ಮ ಪೋರ್ಟ್‌ಫೋಲಿಯೋಗಳಲ್ಲಿ ಹೆಡ್ಜ್ (hedge) ಮಾಡಿರುತ್ತಾರೆ.

    ಈಗ ಈ ಎಲ್ಲ ವಿವರಗಳನ್ನಿಟ್ಟುಕೊಂಡು (ನಿಜವನ್ನು) ಯೋಚಿಸಿದರೆ, ಇಲ್ಲಿನ ಸ್ಟಾಕ್ ಮಾರ್ಕೆಟ್ಟುಗಳನ್ನು drive ಮಾಡುವವರು ಎಂಬುದು ನಿಮಗೆ ಗೊತ್ತಾಗುತ್ತದೆ.  ಒಂದು ಕಡೆಗೆ ಜನರ pension funds ಮತ್ತಿತರ long term investment ಗಳಿಗೆ ಕಾಲಕ್ರಮೇಣ ಹೂಡಿಕೆ ಮಾಡುವುದರ ಅಗತ್ಯ ಯಾವತ್ತೂ ಇದ್ದೇ ಇರುವಾಗ ಮಾರುಕಟ್ಟೆಗೆ ನಿಧಾನವಾಗಿ ಹಣ ಬರುತ್ತಲೇ ಇರುತ್ತದೆ.  ಮತ್ತೊಂದು ಕಡೆಗೆ, ಹಣವುಳ್ಳವರು ಇನ್ನೂ ಶ್ರೀಮಂತರಾಗುವ ಅನೇಕ ಸೌಲಭ್ಯಗಳ ವರದಾನವೇ ಅವರಿಗೆ ಸಿಗುತ್ತದೆ.   ಈ ಎಲ್ಲದರ ನಡುವೆ ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಪ್ರತಿದಿನದ ತಿಣುಕಾಟ-ಗೊಣಗಾಟಗಳು ಹಾಗೆ ಮುಂದುವರೆಯುತ್ತವೆ.  ಕಷ್ಟದ ಕಾಲದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ.  ಪ್ರಪಂಚದಾದ್ಯಂತ ನೀವು ಯಾವುದೇ ದೇಶವನ್ನು ಯಾವುದೇ "ಇಸಂ" (ism) ಮಸೂರದಲ್ಲಿ ನೋಡಿದರೂ ಎಲ್ಲ ಒಂದೇ ರೀತಿಯಲ್ಲಿ ಕಾಣುತ್ತದೆ!

    Saturday, June 06, 2020

    ಗೋಲ್ಫ್ ಆಡುತ್ತಾರೆ ಬಿಡಿ...ಗೋಲ್ಫ್ ಆಡುತ್ತಾರೆ ಬಿಡಿ

    ಉಳ್ಳವರಿಗೇನು ಬಿಡಿ ಸ್ವಾಮಿ ಬಿಸಿಲೇ ನೆರಳೇ 
    ಇನ್ಯಾರೋ ಸೃಷ್ಟಿಸಿದ ಕಷ್ಟ ಕಾರ್ಪಣ್ಯಗಳ ಗೋಳೇ
    ತಮ್ಮ ತನವನು ಇನ್ಯಾರೋ ಕಲಿತು ಬಿಟ್ಟಾರೇನೋ ಎಂದು
    ಛಲ ಬಿಡದ ತ್ರಿವಿಕ್ರಮರು ಎಲ್ಲ ಕಡೆ ಗೋಲ್ಫ್ ಆಡುತ್ತಾರೆ ಬಿಡಿ|

    ಸುತ್ತ ಮುತ್ತಲು ಮನಸುಗಳು ಚದುರಿ
    ಕನಸುಗಳು ಫಾಲ್ ಎಲೆಗಳ ತರಹ ಉದುರಿ
    ನಾವೇ ಹುಟ್ಟಿಸಿದ ರಣರಂಗ ನಮ್ಮನ್ನೇ 
    ಅಣಕಿಸುತ್ತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

    ಇವರ ತಲೆಯ ಮೇಲಿನ ಟೋಪಿ ಬಿಸಿಲನ್ನು ನಾಚಿಸಿ
    ಇವರ ಮುಖಗಳ ಮೇಲಿನ ಮಂದಹಾಸವ ಉಳಿಸಿ
    ಕಡಕ್ಕಾಗಿ ಇಸ್ತ್ರಿ ಕಾಣಿಸಿದ ಇವರ ಪೋಷಾಕುಗಳು
    ಸೆಟೆದು ನಿಂತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

    ನೆಲೆದ ಮೇಲೆ ನಿಂತ ನೀರಿರಲಿ ಇಲ್ಲದಿರಲಿ
    ಪ್ರಪಂಚದ ಆಗುಹೋಗುಗಳು ಆಗದೇ ಇರಲಿ
    ಇವರ ಶಾಂತಿಗೆಂದೂ ಭಂಗ ಬಾರದು ನಿಂತ ನೆಲವೂ
    ಕದಲದೇ ಶಾಂತವಾಗಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

    ಆಡುತ್ತಲೇ ಕಾಸು ಮಾಡುವ, ಕಾಸು ಮಾಡಲೆಂದೇ ಆಡುವ
    ತಂಪು ಕನ್ನಡಕದೊಳಗಿಂದ ದೂರದ ನೋಟ ನೋಡುವ
    ಜಡ ಹಿಡಿದ ಬಿಳಿ ಚೆಂಡು ಎನಿಸಿಕೊಳ್ಳುವ ಗಟ್ಟಿ ಉರುಳನು
    ದೂರದ ಗುಂಡಿಯಲಿ ತೂರುವ ಗಂಡಸರು ಗೋಲ್ಫ್ ಆಡುತ್ತಾರೆ ಬಿಡಿ|

    ಬಡವರೆಲ್ಲೂ ಸುತ್ತ ಸುಳಿಯದ ಶ್ರೀಮಂತರ ಆಟವಿದು
    ದುಡ್ಡು ಹೆಚ್ಚಾದಂತೆ ಚೆಂಡಿನ ಗಾತ್ರ ಚಿಕ್ಕದಾಗುವ ಸೂತ್ರವಿದು
    ಯಾರೂ ಹೇಗಾದರೂ ಇರಲಿ ಅವರವರ ನಿರ್ಲಿಪ್ತತೆಯ ಮುಸುಕಿನಲಿ
    ಸುಮ್ಮಿನಿರುವ ಪಾಠ ಉರು ಹೊಡೆದ ಸೋಗಿನಲಿ ಗೋಲ್ಫ್ ಆಡುತ್ತಾರೆ ಬಿಡಿ|

    ಇವರು ನಡೆದ ದಾರಿಯಲ್ಲಿ ಹುಲ್ಲು ಬೆಳೆಸಿ ನೀರು ಕುಡಿಸಲು ಒಬ್ಬ
    ಆಡುವುದು ಇವರೇ ಕಂಡುಕೊಂಡ ಪರಿ ಕರಗಿಸಲು ಕೊಬ್ಬ
    ತಗ್ಗಿದ್ದಲ್ಲಿ ಬಂದು ಸೇರುವ ಚೆಂಡಿನ ಹಾಗೆ ಹಣಬಂದು ಕೂಡುತಿರುವಾಗ
    ಇನ್ನೇನು ತಾನೇ ಮಾಡಬಲ್ಲರು? ಗೋಲ್ಫ್ ಆಡುತ್ತಾರೆ ಬಿಡಿ|

    Monday, June 01, 2020

    ಕೆಲಸಕ್ಕೆ ಜನರಿಲ್ಲ!



    ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತುಲನೆ ಮಾಡಿ ನೋಡಿದಾಗ, ಹಿಂದಿನ ತಲೆಮಾರಿನವರು ಕಷ್ಟ ಜೀವಿಗಳು ಅನ್ನಿಸೋದು ಸಹಜ.  ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದ ಹಾಗೆ ನಾಗರೀಕತೆ, ನಗರೀಕರಣ, ಜನರ ವಲಸೆ ಮೊದಲಾದವು ಬದಲಾಗುತ್ತಿರುತ್ತವೆ.  ನಮ್ಮ ಪೂರ್ವಜರು ತಮ್ಮ ಇಡೀ ಜೀವಮಾನದಲ್ಲಿ ಪ್ರಯಾಣಿಸಿದ ದೂರವನ್ನು ನಾವು ಒಂದು ತಿಂಗಳಲ್ಲೇ ಪ್ರಯಾಣಿಸಿ ಅವರನ್ನು ಮೀರಿಸಬಲ್ಲೆವು.  ಆದರೆ,  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೆಚ್ಚಾಗುತ್ತಿರುವ ಅಂತರವನ್ನು ಗ್ರಹಿಸಲು ಈ ಕೆಳಗಿನ ಎರಡು ಸೂಕ್ಷ್ಮಗಳನ್ನು ಗಮನಿಸಿ:


    1. ಹಿಂದೆಲ್ಲ ಕೆಲಸಗಾರರು ಸಿಗುತ್ತಿದ್ದರು, ಇಂದು ಕೆಲಸಗಾರರು ಸಿಗುವುದಿಲ್ಲ.  ಸಿಕ್ಕರೂ ಸಹ "ನಿಯತ್ತಿ"ನಿಂದ ಮೈ ಬಗ್ಗಿಸಿ ದುಡಿಯುವುದಿಲ್ಲ.  ಕಡಿಮೆ ಕೆಲಸಕ್ಕೆ ಹೆಚ್ಚು ಬೆಲೆ ಕೇಳುತ್ತಾರೆ.

    2.  ಎಲ್ಲರೂ ಓದಿದವರಾಗಿ ಮೇಲ್ಮಟ್ಟದ ಕೆಲಸಗಳನ್ನೇ ಯಾಚಿಸುವುದಾದರೆ, ಉಳಿದೆಲ್ಲ ಕೆಲಸಗಳನ್ನು ಯಾರು ಮಾಡುವವರು? ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ರಸ್ತೆ ಗುಡಿಸಲು, ನೆಲ ಒರೆಸಲು, ಬಟ್ಟೆ ಒಗೆಯಲು, ಮನೆ ಕಟ್ಟಲು, ಮರಳು ಹೊರಲು, ಕಟ್ಟಿಗೆ ಒಡೆಯಲು, ಸುಣ್ಣ-ಬಣ್ಣ ಹಚ್ಚಲು, ತೆಂಗಿನಕಾಯಿ ಕೊಯ್ಯಲು, ಮನೆ ಕೆಲಸ ಮಾಡಲು... ಕೆಲಸಕ್ಕೆ ಯಾರು ಸಿಗುತ್ತಾರೆ?

    ***



    ಕಳೆದ ಇಪ್ಪತ್ತು ವರ್ಷಗಳಲ್ಲಿ ಯು.ಎಸ್.ಎ. ಒಂದು ದೇಶದಲ್ಲಿಯೇ (ಒಂದು ಅಧ್ಯಯನದ ಪ್ರಕಾರ) ಸುಮಾರು 50 ಲಕ್ಷ ಮ್ಯಾನ್ಯುಫ್ಯಾಕ್ಚರಿಂಗ್ ಕೆಲಸಗಳು ಕಾಣೆಯಾದವು.  60 ರ ದಶಕದಲ್ಲಿ ಸುಮಾರು ನೂರಕ್ಕೆ 25% ಜನರು ಮ್ಯಾನ್ಯುಫ್ಯಾಕ್ಚರಿಂಗ್‌ನಲ್ಲಿ ತೊಡಗಿಕೊಂಡಿದ್ದರೆ, ಇಂದು ಅದರ ಪ್ರಮಾಣ ಸುಮಾರು 5% ಮಟ್ಟಿಗೆ ಇಳಿದಿದೆ.  ಒಂದು ಕಾಲದಲ್ಲಿ Ford ಅಂಥ ಕಂಪನಿಗಳು ತಮ್ಮ supply chainನಲ್ಲಿ ಬರುವ ಎಲ್ಲ ವಿಧವಾದ ಪರಿಕರ/ವಸ್ತುಗಳನ್ನು ತಮ್ಮಷ್ಟಕ್ಕೆ ತಾವೇ ತಯಾರಿಸುತ್ತಿದ್ದರು.  ಆದರೆ, ಈಗ ಅವರ ಮುಖ್ಯವಾದ components (such as engine parts) ಸಹ ಬೇರೆ ಕಡೆಯಿಂದ ಆಮದಾಗುವ ಪರಿಸ್ಥಿತಿ ಇದೆ.

    ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿರುವ ಕೆಲಸಗಾರರು ಅಮೇರಿಕದಲ್ಲಿ ಒಂದು ಘಂಟೆಗೆ 20 ಡಾಲರ್‌ ಅಷ್ಟುಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.  ಇದು, ಇಲ್ಲಿನ ಕನಿಷ್ಠ ವೇತನದ ಮೂರು ಪಟ್ಟು ಹೆಚ್ಚು ಎಂದುಕೊಳ್ಳಬಹುದು.  ಅದೇ ಗುಣಮಟ್ಟದ ವಸ್ತುಗಳು, ಹೊರದೇಶದಿಂದ ಕಡಿಮೆ ಬೆಲೆಗೆ ಸಿಗುವಂತೆ (ವಿಶೇಷವಾಗಿ ಚೀನಾದಿಂದ) ಆಮದಾಗುವ ಪರಿಸ್ಥಿತಿ ಇರುವುದಾದರೆ ಇಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಹೇಗೆ ಉಳಿಯುತ್ತದೆ? ಹೇಗೆ ಬೆಳೆಯುತ್ತದೆ?

    ***

    ಸಾಮಾನ್ಯ ಜನರ ಅನುಕೂಲ: ತೊಂಭತ್ತರ ದಶಕದ ಕೊನೆಯಲ್ಲಿ ಭಾರತದ ಬ್ಯಾಂಕುಗಳಿಗೆ ನಿಧಾನವಾಗಿ ಕಂಪ್ಯೂಟರುಗಳು ನುಸುಳತೊಡಗಿದಾಗ ನಮ್ಮನಮ್ಮಲ್ಲಿ ವಾದ-ವಿವರಣೆಗಳು ನಡೆಯುತ್ತಿದ್ದವು.  ಒಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ಕೆಲಸವನ್ನು ನುಂಗಿ ಹಾಕುತ್ತವೆ ಎಂದೂ, ಇನ್ನೊಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ದಕ್ಷತೆಯನ್ನೂ (efficiency), ಜನರ ಕೆಲಸದ ನಿಖರತೆಯನ್ನೂ (accuracy) ಹೆಚ್ಚಿಸುತ್ತವೆ ಎಂದೂ ವಾದವನ್ನು ಮಂಡಿಸುತ್ತಿದ್ದೆವು.  ಆಗಿನ ಕಾಲವೆಲ್ಲ ದಪ್ಪನಾದ ಲೆಡ್ಜರುಗಳ ಕಾಲ, ಎಲ್ಲಿ ನೋಡಿದರೂ ಅಲ್ಲಿ ಪೇಪರುಗಳದ್ದೇ ದರಬಾರು, ಅವುಗಳದ್ದೇ ಕಾರುಬಾರು.

    ನಂತರ ಕಂಪ್ಯೂಟರುಗಳು ನಿಧಾನವಾಗಿ ಎಲ್ಲ ಕಡೆಗೆ ಹರಡಿಕೊಂಡ ಮೇಲೆ ನಾವೆಲ್ಲರೂ ಅದರ ಅನುಕೂಲವನ್ನು ಪಡೆದಿದ್ದೇವೆ.  ಆದರೆ, ಕಂಪ್ಯೂಟರುಗಳು ಬಂದ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡಿಮೆ ಏನೂ ಆಗಿಲ್ಲ.  ಬ್ಯಾಂಕುಗಳು ಬೆಳೆದಂತೆ, ಬ್ರ್ಯಾಂಚುಗಳು ಹೆಚ್ಚಾದವು, ಎಟಿಎಮ್ ಮಿಷೀನುಗಳು ಎಲ್ಲ ಕಡೆ ತಲೆ ಎತ್ತಿದವು.  ಮುಂದೆ ಕ್ರೆಡಿಟ್ ಕಾರ್ಡ್, ನಂತರದಲ್ಲಿ ಆನ್‌ಲೈನ್ ಪೇಮೆಂಟ್, ಪೇಟಿಎಮ್ ನಂತಹ ಸೇವೆಗಳು ಬಂದು ಹಣ ವಿಲೇವಾರಿ ತ್ವರಿತವಾಯಿತು.  ಹಣದುಬ್ಬರ (inflation) ಹೆಚ್ಚಾದಂತೆ ಪ್ಯಾಂಟ್ ಜೇಬಿನಲ್ಲಿ ತೆಗೆದುಕೊಂಡು ಹೋಗುವ ಹಣ ಯಾವ ಕೆಲಸಕ್ಕೂ ಸಾಕಾಗದೇ ರಾಶಿ ರಾಶಿ ಹಣವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದಿಲ್ಲಿಗೆ ವಹಿವಾಟು ನಡೆಸುವಂತಾಯಿತು.  ಈ ಅನುಕೂಲಗಳೆಲ್ಲ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಅವಿಷ್ಕಾರಗಳಿಂದಲೇ ಸಾಧ್ಯವಾದದ್ದು.

    ಸಿರಿವಂತರ ನೋವು: ಯಾವುದಾದರೂ ಹಳೆಯ ಕನ್ನಡ ಸಿನಿಮಾಗಳನ್ನೋ ಅಥವಾ ಫೋಟೋಗಳನ್ನೋ ನೀವು ನೋಡಿದರೆ ಒಂದಂತೂ ನಿಮಗೆ ಗ್ಯಾರಂಟಿಯಾಗುತ್ತದೆ.  ನಾವು ನೋಡಿದ ಎಂಭತ್ತರ ದಶಕದಲ್ಲಿ ಟ್ರಾಫಿಕ್ ಜಾಮ್ ಅನ್ನೋ ಪರಿಸ್ಥಿತಿ ಇರುತ್ತಲೇ ಇರಲಿಲ್ಲ.  ಊರಿನಲ್ಲಿ ಕೆಲವೇ ಕೆಲವು ಮನೆಗಳಿಗೆ ಫೋನ್ ಕನೆಕ್ಷನ್ ಇರುತ್ತಿತ್ತು.  ದೂರದ ಊರುಗಳಿಂದ ಟ್ರಂಕ್ ಕಾಲ್ ಮಾಡಿ ಕರೆ ಮಾಡಬೇಕಿತ್ತು.  ಅದರ ಜೊತೆಗೆ ಊರಿನಲ್ಲಿ ನಿಗದಿತ ಸಮಯಕ್ಕೆ ಹೋಗಿ ಬರುತ್ತಿದ್ದ ಬಸ್ಸುಗಳು, ಆಗಾಗ್ಗೆ ಬಂದು ಹೋಗುತ್ತಿದ್ದ ಲಾರಿಗಳನ್ನು ಬಿಟ್ಟರೆ ಕೇವಲ ಶ್ರೀಮಂತರ ಮನೆಯ ಕಾರುಗಳಿಗೆ ರಸ್ತೆಗಳು ಮೀಸಲಾಗಿದ್ದವು. ಕೇವಲ ಹಳ್ಳಿಗಳಷ್ಟೇ ಏಕೆ, ಜಿಲ್ಲಾ ಕೇಂದ್ರಗಳೂ, ಬೆಂಗಳೂರಿನಲ್ಲೂ ಸಹ ಅಷ್ಟೊಂದು ಕಾರುಗಳು ಓಡಾಡುತ್ತಿರಲಿಲ್ಲ.  ಕಾರು ಇಟ್ಟುಕೊಂಡವರಿಗೆ ಯಾವತ್ತೂ ಪಾರ್ಕಿಂಗ್ ಸಮಸ್ಯೆ ಬಂದುದನ್ನು ನಾನು ನೋಡಿಲ್ಲ, ಕೇಳಿಲ್ಲ.

    ಈಗ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾರು ಇದೆ.  ಕೆಲವೊಂದು ಮನೆಗಳಲ್ಲಿ ಕಾರುಗಳನ್ನು ನಿಲ್ಲಿಸಲು ಜಾಗವಿರದಿದ್ದರೂ ಅವರ ಹತ್ತಿರ ಕನಿಷ್ಠ ಒಂದಾದರೂ ಕಾರು ಇರುವುದು ಸಾಮಾನ್ಯವಾಗಿದೆ.  ದೇಶದ ಉದ್ದಗಲಕ್ಕೂ ಇಂದು ಕಾರುಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.  ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ನಲವತ್ತು ವರ್ಷಗಳಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ವಾಹನಗಳ ಪ್ರಮಾಣ 6000% ದಷ್ಟು ಏರಿರುವುದನ್ನು ಕಾಣಬಹುದು.

    ಊರು-ಕೇರಿಯ ರಸ್ತೆಗಳು ಕೇವಲ ಸಿರಿವಂತರಿಗೆ ಮಾತ್ರ ಎನ್ನುವಂತಿದ್ದ ಒಂದು ಕಾಲಕ್ಕೂ ಈಗಿನ ಎಲ್ಲರೂ ರಸ್ತೆ ಮೇಲೆ ತಮ್ಮ ಸವಾರಿಯನ್ನು ಚಲಾಯಿಸುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಇದರಿಂದ ಸಾಮಾನ್ಯ ಜನರಿಗಂತೂ ಅನುಕೂಲವೇ ಸರಿ, ಆದರೆ ಆಗಿನ ಸಿರಿವಂತರು ತಮ್ಮ ವಿಶೇಷವಾದ ಸೌಲಭ್ಯವನ್ನು ಕಳೆದುಕೊಂಡರು ಎನ್ನುವುದು ನನ್ನ ಅಭಿಪ್ರಾಯ.

    ***
    ಇಂದಿನ ಚಿಕ್ಕದಾದ ಕುಟುಂಬಗಳಲ್ಲಿ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಲ್ಲಿ ಮೆಷೀನುಗಳ ಪಾತ್ರ ಇರುವುದು ಹಿರಿದಾಗಿದೆ.  ನಗರದ  ಹೆಚ್ಚಿನ ಮನೆಗಳಲ್ಲಿ ಇಂದು ವಾಷಿಂಗ್ ಮೆಷೀನ್ ನುಸುಳಿದೆ.  ಸೋಲಾರ್ ಪವರ್‌ನಿಂದ ನೀರು ಕಾಯಿಸಿಕೊಳ್ಳುವ ಅನೇಕರು ಸ್ವಿಚ್ ಹಾಕಿದರೆ ಬಿಸಿ ನೀರು ಪಡೆಯುವ ಸ್ಥಿತಿಯನ್ನು ಕಾಣಬಹುದು.  ನೆಲವನ್ನು ಗುಡಿಸಲು, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಪ್ರತಿದಿನ ಕೆಲಸಕ್ಕೆ ಬಂದು ಹೋಗುವವರು ಸಿಗುತ್ತಾರೆ.  ತಿಂಗಳಿಗೆ ಇಷ್ಟು ಎನ್ನುವ ನಿಗದಿತ ಸಂಬಳಕ್ಕೆ ಕೆಲಸ ಮಾಡುವ ಇವರುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ವಟಾರದ ಒಂದಿಷ್ಟು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ.  ಹೆಚ್ಚಿನವರಿಗೆ ಒಳ್ಳೆಯ ಉತ್ಪನ್ನವೂ ಇರುವುದು ಕೇಳಿ ಬರುತ್ತದೆ.  ಇನ್ನು ಮನೆಯ ಚಿಕ್ಕ-ಪುಟ್ಟ ಕೆಲಸಗಳ ಜೊತೆಗೆ ಮನೆ ಮಂದಿಗೆ ಅಡುಗೆ ಮಾಡಿಕೊಂಡು ಹೋಗುವುದು ಮನೆಯವರ ಕೆಲಸ.  ಅದರಲ್ಲೂ ಸಹ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ತೊಂದರೆ ಹೆಚ್ಚು, ಎಲ್ಲದಕ್ಕೂ ಗಂಡ ಹೆಂಡತಿ ಹೊಂದಿಕೊಂಡು ಹೋಗಬೇಕಾಗುತ್ತದೆ.  ಇನ್ನು ಮನೆಯಲ್ಲಿ ಹಿಂದಿನ ತಲೆಮಾರಿನ ಹಿರಿಯರು ಯಾರಾದರೂ ಇದ್ದರೆ, ಅಡುಗೆಯ ಕೆಲಸದಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.  ನೂರು ಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ಎಲ್ಲರ ಮನೆಯೂ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲಾಗದು.  ಆದರೆ, ಸೀನಿಯರ್ ಸಿಟಿಜನ್ಸ್ ಜನಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ವ್ಯವಸ್ಥೆ ಅಷ್ಟೊಂದು ಮುಂದುವರೆದ ಹಾಗಿಲ್ಲ.  ಇವತ್ತಿಗೂ ಹೆಚ್ಚಿನ ವೃದ್ಧ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಂಬಿಕೊಂಡಿರುವುದು ಕಂಡು ಬರುತ್ತದೆ.  ಇಂಥವರ ಪೋಷಣೆಗೆ ಅದರಲ್ಲೂ ಖಾಯಿಲೆ ಬಿದ್ದಿರುವ ಹಿರಿಯರಿಗೆ ದಿನನಿತ್ಯದ ನೆರವಿಗೆ ಕೆಲಸಗಾರರು ಸಿಗುತ್ತಿಲ್ಲ.

    ಸೀನಿಯರ್ ಸಿಟಿಜನ್ಸ್‌ಗಳನ್ನು ನೋಡಿಕೊಳ್ಳುವುದು ಬಹಳ ಸೂಕ್ಷ್ಮ ಹಾಗೂ ಕಷ್ಟದ ಕೆಲಸ.  ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಖಾಯಿಲೆ ಬಾಧಿಸುತ್ತಿರುತ್ತದೆ.  ಅವರ ಪ್ರಿನ್ಸಿಪಲ್ಸ್, ಅವರಿಗೆ ಬೇಕಾದ ಊಟ-ತಿಂಡಿ ಅಗತ್ಯಗಳು, ಅವರ ಮನರಂಜನೆ, ಇತ್ಯಾದಿ ಇವೆಲ್ಲವೂ ಬೇರೆಯ ಒಂದು ಆಯಾಮವನ್ನೇ ಪಡೆದುಕೊಂಡಿರುತ್ತವೆ.  ಹೀಗಿರುವಾಗ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಗಂಭೀರ ಸ್ವರೂಪದ ಖಾಯಿಲೆ ಏನಾದರೂ ಬಂದರೆ, ಅವರನ್ನು ಸಂತೈಸುವುದು ಬಹಳ ಕಷ್ಟದ ವಿಷಯವಾಗುತ್ತದೆ... ಈ ನಿಟ್ಟಿನಲ್ಲಿ ಭಾರತದುದ್ದಕ್ಕೂ ವೃದ್ಧಾಶ್ರಮಗಳು ಅಷ್ಟೊಂದು ಬೆಳೆಯದಿದ್ದರೂ ಇನ್ನು ಮುಂದೆ ಬೆಳೆಯುವುದನ್ನು ಊಹಿಸಬಹುದು. 

    ಆದರೆ, ಇತ್ತೀಚೆಗೆ ಮನೆಗಳಲ್ಲಿ ಕೆಲಸ ಮಾಡಲು ಸಿಗುವವರು "ನಿಯತ್ತಿ"ನಿಂದ ಕೆಲಸ ಮಾಡೋದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬರುತ್ತವೆ.  ಯುವ ಜನತೆ ಯಾವಾಗಲೂ ತಮ್ಮ ತಮ್ಮ ಮೊಬೈಲು ಫೋನುಗಳಿಗೆ ಶರಣಾಗಿರುತ್ತಾರೆ.  ಹಿಂದಿನ ಕಾಲದವರ ಹಾಗೆ ನಿಯತ್ತಿನಿಂದ ನಡೆದುಕೊಳ್ಳೋದಿಲ್ಲ, ಕೆಲಸಗಳ್ಳರು, ಯಾವಾಗಲೂ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆಯೇ ಹೊರತು ವಹಿಸಿಕೊಂಡ ಕೆಲಸವನ್ನು ಮೈಬಗ್ಗಿಸಿ ಮಾಡೋದಿಲ್ಲ.  ಹೀಗೆ ಅನೇಕ ಹೇಳಿಕೆಗಳನ್ನು ಕೇಳುವುದು ಸಾಮಾನ್ಯವಾಗಿದೆ.  ಎಲ್ಲರೂ ಐಶಾರಾಮಿ ಬದುಕಿನ ಕನಸನ್ನು ಕಂಡು ಅದರಲ್ಲೇ ಬದುಕುವ ಹಾಗಿದ್ದರೆ, ಈ ಐಶಾರಾಮಿತನಕ್ಕೆ ಅರ್ಥವೂ ಬರೋದಿಲ್ಲ. ಜೊತೆಗೆ ಅದು ಸೃಷ್ಟಿಸುವ "ಟ್ರಾಫಿಕ್ ಜಾಮ್" ಕೂಡಾ ಭೀಕರವಾಗಿರುತ್ತದೆ.  ಊರಿನಲ್ಲಿ ಕೆಲವೇ ಕೆಲವು ಕಾರುಗಳಿದ್ದಾಗ ಹೇಗೆ ಒಂದು ವ್ಯವಸ್ಥೆ ಚಾಲನೆಯಲ್ಲಿತ್ತೋ, ಅದೇ ವ್ಯವಸ್ಥೆ ಊರಿನ ಪ್ರತಿಯೊಬ್ಬರೂ ಸಮತೋಲಿತದವರಾದಾಗ ಸಂತುಲನ (equilibrium) ವನ್ನು ಕಳೆದುಕೊಳ್ಳುತ್ತದೆ.  ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡಲು ಯಾರೂ ಸಿಗದೇ ಹೋಗುವ ಪರಿಸ್ಥಿತಿ ಬರುತ್ತದೆ.  ಕಿತ್ತ ಚಪ್ಪಲಿಗಳನ್ನು ದುರಸ್ತಿ ಮಾಡಿಸುವುದಾಗಲೀ, ಬಟ್ಟೆಯನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುವುದಾಗಲೀ ಕಡಿಮೆಯಾಗಿ ಎಲ್ಲರೂ ದಿನದಿನಕ್ಕೂ "ಹೊಸ"ತನ್ನು ನಂಬಿಕೊಳ್ಳುವ ಗ್ರಾಹಕ ಪ್ರವೃತ್ತಿ (consumerism) ಬೆಳೆಯುತ್ತದೆ.  ಅದರಿಂದ ಎಕಾನಮಿ ದೊಡ್ಡದಾಗುತ್ತದೆ ಎಂದು ಎಷ್ಟೋ ಜನ ತಮ್ಮ ತತ್ವಗಳನ್ನು ಮಂಡಿಸಬಹುದು.  ಆದರೆ, ಅದರಿಂದ ನಾವು ಅನೇಕ ವ್ಯತಿರಿಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.

    ಹೀಗೆ ತಲೆಮಾರಿನಿಂದ ತಲೆಮಾರಿಗೆ ಪ್ರತಿಯೊಬ್ಬರೂ "ಸಿರಿವಂತ"ರಾಗುತ್ತಲೇ ಇದ್ದಾರೆ... ಆದರೆ, ಸಿರಿವಂತರೆನ್ನುವುದು ಒಂದು ತುಲನಾತ್ಮಕ ಹಣೆಪಟ್ಟಿ ಅಷ್ಟೇ.