Showing posts with label ಬದುಕು. Show all posts
Showing posts with label ಬದುಕು. Show all posts

Saturday, March 02, 2024

ಸರಿಯಾದ ದಾರಿ...

"ಬೆಳ್ಳಂಬೆಳಗ್ಗೆ ಇವ್ರು ಯಾರೋ ನಿಧಾನವಾಗಿ ಡ್ರೈವ್ ಮಾಡಿಕೊಂಡ್ ಹೋಗೋರು ಸಿಕ್ಕಿಕೊಂಡ್ರಲ್ಲ!" ಎಂದು ಪ್ರಲಾಪನೆಗೆ ಮೊರೆ ಹೋದವನಿಗೆ, "ಅಷ್ಟಕ್ಕೂ ಅವರು ಮಾಡುತ್ತಿರುವ ತಪ್ಪಾದರೂ ಏನು?" ಎನ್ನುವ ತಂತಾನೆ ಹುಟ್ಟಿದ ಉತ್ತರ, ಆಂತರಿಕ ತಲ್ಲಣಗಳಿಗೆ ಸೂಕ್ಷ್ಮವಾಗಿ ಪೂರ್ಣ ವಿರಾಮವನ್ನು ನೀಡುವ ಹಾಗೆ ಕಂಬದ ನೆರಳಿನಂತೆ ಎದ್ದು ನಿಂತಿತ್ತು.



ನಾನು ದಿನಾ ಡ್ರೈವ್ ಮಾಡಿಕೊಂಡು ಫ಼್ರೀವೇ ದಾಟಿ ಎಕ್ಸಿಟ್ ತೆಗೆದುಕೊಂಡ ಕೂಡಲೇ ದುತ್ತನೇ ಎದುರಾಗುವ ಸ್ಟಾಪ್ ಸೈನಿಗೆ ಮರ್ಯಾದೆ ತೋರಿಸಿದಂತೆ ಮಾಡಿ, ಏದುಸಿರು ಬಿಡುತ್ತಾ ಏರಿಯನ್ನು ಹತ್ತುವ ಓಟಗಾರನಂತೆ ಮುಂದೆ ಹೋಗುವ ಕಾರು. ಮುಂದಿನ ಅರ್ಧ-ಮುಕ್ಕಾಲು ಮೈಲು ಏನಿದ್ದರೂ ಬರೀ ಇಪ್ಪತ್ತೈದರ ಸ್ಪೀಡೇ ಎಂದು ಅದು ತನಗೆ ಎದುರಾಗುವ ಸ್ಪೀಡ್ ಸೈನುಗಳಿಗೆ ಮೂತಿ ತಿರುವಿ ಅಣಗಿಸಿಕೊಂಡು ಹೋಗೋ ರೀತಿ ಕಾಣುತ್ತದೆ. ಅಪರೂಪಕ್ಕೊಮ್ಮೆ ಕ್ರಾಸಿಂಗ್‌ನಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾ ನಿಧಾನವಾಗಿ ನಡೆದು ರಸ್ತೆ ದಾಟುವ ಪಾದಚಾರಿಗಳಿಗೆ ಒಮ್ಮೊಮ್ಮೆ ಹಿಡಿ ಶಾಪ ಹಾಕಿದ್ದೂ ಉಂಟು. ಆದರೆ, ಮರೆಯಲ್ಲಿ ನಿಂತು ಕಾಯುವ ಮಾಮಾಗಳನ್ನು ಯಾವತ್ತೂ ನಾವು ದೂರದೃಷ್ಟಿಯಿಂದ ನೋಡುತ್ತೇವೆಯೇ ಹೊರತು, ದುರುಳ ದೃಷ್ಟಿಯಿಂದಂತೂ ಅಲ್ಲ!

ಈ ಜಾಗದಲ್ಲಿ (ಮತ್ತು ಎಲ್ಲಕಡೆ), ಸ್ಪೀಡ್ ಲಿಮಿಟ್ ಇಪ್ಪತ್ತೈದು ಇದ್ದರೂ ಎಲ್ಲರೂ ಮೂವತ್ತರ ಮೇಲೇ ಹೋಗುವವರು. ಹಾಗಾಗಿ, ಎಲ್ಲರೂ ವೇಗವಾಗಿ ಹೋದಾಗ ಅದು ಸರಿಯಾಗಿ ತೋರುವುದರ ಜೊತೆಗೆ, ಅಪರೂಪಕ್ಕೊಮ್ಮೆ ಸರಿಯಾದ ವೇಗದಲ್ಲಿ ಹೋಗುವವರು ತಪ್ಪಾಗಿ ಕಂಡು ಬರುವುದು, ಒಂದು ರೀತಿಯಲ್ಲಿ ವಿಚಕ್ಷಣೆ ಇಲ್ಲದ ವ್ಯಾಖ್ಯಾನ ಎಂದರೆ ತಪ್ಪೇನೂ ಇಲ್ಲ!

ಆದರೆ, ಇಂದು ನನ್ನ ಮುಂದಿನ ಕಾರು ಅದೇನೇ ಆಗಲಿ, ಈ ದಾರಿಯಲ್ಲಿ ನಾನು ಇಪ್ಪತ್ತೈದರ ಲಿಮಿಟ್ ಅನ್ನು ದಾಟುವುದಿಲ್ಲ ಎಂದು ಯಾರಿಗೋ ಪ್ರತಿಜ್ಞೆ ಮಾಡಿ ಬಂದಂತಿದೆ. ಒಬ್ಬರು ಸರಿಯಾದ ದಾರಿಯಲ್ಲಿ, ಸರಿಯಾದ ವೇಗದಲ್ಲಿ ನಡೆದರೆ, ಅವರ ಹಿಂಬಾಲಕರಿಗೆ ಅವರನ್ನು ವ್ಯವಸ್ಥಿತವಾಗಿ ಹಿಂಬಾಲಿಸದೇ ಬೇರೆ ದಾರಿಯೇನಿದೆ ಎಂಬ ಯೋಚನೆ ಬಂತು. ಬೇರೆ ದಾರಿ ಎನ್ನುವುದು ಇಲ್ಲದಿದ್ದಾಗ ಇರುವುದು ಸರಿಯಾದ ದಾರಿ ಆಗುತ್ತದೆ ಎನ್ನುವ (corollary) ಉಪಸಿದ್ಧಾಂತ ಬೇರೆ ಹುಟ್ಟಿತು.

ಜನ ವೇಗವಾಗಿ ಏಕೆ ಡ್ರೈವ್ ಮಾಡುತ್ತಾರೆ? ಸ್ಪೀಡ್ ಲಿಮಿಟ್ ಇಷ್ಟೇ ಎಂದು ಸೈನ್‌ಗಳು ಸಾರಿ ಸಾರಿ ಹೇಳುತ್ತಲೇ ಇದ್ದರೂ ಜನರು ಅದಕ್ಕಿಂತ ಹೆಚ್ಚು ವೇಗವಾಗಿ ಏಕೆ ಚಲಾಯಿಸುತ್ತಾರೆ? ಹೀಗೆ ವೇಗವಾಗಿ ಹೋಗುವ ಗಾಡಿಗಳು ಮತ್ತುಅವುಗಳ ಸವಾರರು ಅದೇನನ್ನು ಕಟ್ಟಿ-ಕಡಿದು ಹಾಕುತ್ತಾರೆ? ಹಾಕಿರಬಹುದು? Conditions permitting... ಎಂದು ತಮ್ಮ ಆಂತರ್ಯದಲ್ಲಿ ಮೇಳೈಸಿದ ಸತ್ಯದ ಹಿನ್ನೆಲೆಯಲ್ಲಿ ಮಿತಿಯನ್ನು ತೋರಿ ಜನರ ಸುರಕ್ಷತೆಗೆ ಆದ್ಯತೆ ಕೊಡುವ ಈ ಮೂಕ ಜೀವಿಗಳನ್ನು ಜನರು ಅಷ್ಟೊಂದು ಅಗೌರವದಿಂದ ನೋಡುವುದಾದರೂ ಏಕೆ? ದಿನದ 24 ಗಂಟೆ ತಮ್ಮ ಕೆಲಸವನ್ನು ತಾವು ಮಾಡಿಕೊಂಡಿರುವ ಈ ರಕ್ಷಕರನ್ನು ಆರಕ್ಷಕರ ಸಹಾಯವಿಲ್ಲದೇ ಆದರಿಸುವವರು ಇಲ್ಲವೇ?... ಹೀಗೆ ಪ್ರಶ್ನೆಗಳೋಪಾದಿಯಲ್ಲಿ ಮತ್ತಿಷ್ಟು ಪ್ರಶ್ನೆಗಳು ಮೂಡಿದವು.

***

ಬೇರೆಯವರು ತಮ್ಮ ಕಾರನ್ನು ವೇಗವಾಗಿ ಚಲಾಯಿಸುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ, ನಾನು ಮತ್ತಿನ್ನೆಲ್ಲೋ ತಡವಾಗಿ ಹೋಗಬಾರದಲ್ಲ ಎಂಬ ಕಾರಣಕ್ಕೆ ವೇಗವಾಗಿ ಚಲಾಯಿಸುತ್ತೇನೆ. ಹಾಗಾದರೆ, ವೇಗದ ಮಿತಿಯಲ್ಲಿ ಚಲಾಯಿಸುವುದು ಎಂದಾದರೆ, ಮನೆಯನ್ನು ಐದು-ಹತ್ತು ನಿಮಿಷ ಮೊದಲೇ ಬಿಡಬಹುದಲ್ಲ? ಹಾಗೆ ಹೆಚ್ಚಿನ ಸಮಯ ಆಗೋದಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹೋಗುವವರು ಮತ್ತು ಸೂಚಿಸಿದ ಸಮಯಕ್ಕೆ ಮೊದಲೇ ಹೋಗಿ ತಲುಪುವವರು ವಿರಳ. ಅಂದ ಮೇಲೆ ಎಲ್ಲರೂ (ಮಿತಿಯನ್ನು ಮೀರಿ) ವೇಗವಾಗಿ ಚಲಾಯಿಸುತ್ತಾರೆ ಅಂತಲೇ ಆಯಿತು.

ಇನ್ನು ಸಮಯಕ್ಕೆ ಸರಿಯಾಗಿ ತಲುಪುವವರು, ಸಮಯ ಪಾಲನೆಯನ್ನು ಮಾಡುವವರು, ತಮ್ಮ ತಮ್ಮ ರಸ್ತೆಯಲ್ಲಿ ವೇಗದ ಮಿತಿಗೆ ಅನುಸಾರವಾಗಿ ಚಲಿಸಿದರೆ, ಅದರಿಂದ ಅವರಿಗೇನೂ ಹಾನಿ ಇಲ್ಲ - ಆದರೆ ಅವರ ಬೆನ್ನಿಗೆ ಬಿದ್ದ ವೇಗಿಗಳ ರಕ್ತದೊತ್ತಡ ಹೆಚ್ಚಾಗುವುದಂತೂ ನಿಜ.

ನನ್ನ ಇಪ್ಪತ್ತೈದು ವರ್ಷಗಳ ಡ್ರೈವಿಂಗ್ ಜೀವನದಲ್ಲಿ ಎಲ್ಲ ರೀತಿಯ ಡ್ರೈವರುಗಳನ್ನು ನೋಡಿದ್ದೇನೆ. ಮಿರಿ ಮಿರಿ ಮಿಂಚುವ ಸ್ಪೋರ್ಟ್ಸ್ ಕಾರುಗಳನ್ನು ಓಡಿಸುವ ಹದಿಹರೆಯದವರಿಂದ ಹಿಡಿದು, ತಮಗೆ ಬೇಕಾದಕ್ಕಿಂತಲೂ ದೊಡ್ಡ ಸೈಜಿನ ಹಳೆಯ ಕಾರುಗಳನ್ನು ಓಡಿಸುವ ಹಿರಿಯವರೆಗೆ. ಕಾರಿನಲ್ಲಿ ಹುಷಾರಿಲ್ಲದೆ ರಚ್ಚೆ ಹಿಡಿದು ಅಳುವ ಮಗುವನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ಪೋಷಕರಿಂದ ಹಿಡಿದು, ಹೆರಿಗೆ ನೋವು ಅನುಭವಿಸುತ್ತಿರುವ ಗರ್ಬಿಣಿ ಹೆಂಡತಿಯನ್ನು ತುರಂತಾಗಿ ಆಸ್ಪತ್ರೆ ಸೇರಿಸುವ ಗಂಡಂದಿರವರೆಗೆ. ಶವವನ್ನು ಸಾಗಿಸುತ್ತಿರುವ ಹರ್ಸ್ (hearse) ವಾಹನದ ಹಿಂದೆ ಮೌನವಾಗಿ ದುಃಖತಪ್ತರಾಗಿ ರೋಧಿಸುತ್ತಾ ಡ್ರೈವ್ ಮಾಡುವ ಕುಟುಂಬಸ್ಥರಿಂದ ಹಿಡಿದು, ತಮ್ಮ ಕುಟುಂಬಕ್ಕೆ ಇದೀಗ ತಾನೇ ಸೇರಿಕೊಂಡ ಹೊಸ ಮಗುವನ್ನು ಹೆಮ್ಮೆಯಿಂದ ಜೋಪಾನವಾಗಿ  ಕಾರು ಸೀಟಿನಲ್ಲಿ ಕರೆದುಕೊಂಡು ಹೋಗುತ್ತಿರುವ ದಂಪತಿಗಳವರೆಗೆ. ಎರಡು ಚಕ್ರದವರ ಆಟಾಟೋಪಗಳಿಂದ ಹಿಡಿದು ಹದಿನಾರು ಚಕ್ರದ (ಶೋಡಷ/ಷಿ) ಒಡೆಯರ ಒನಪು-ವೈಯಾರದಿಂದ ರಸ್ತೆಯನ್ನು ಅಪ್ಪಿಕೊಳ್ಳುವ ವರೆಗೆ...

ಹೀಗೆ, ಪ್ರತಿಯೊಂದು ಸಂದರ್ಭಕ್ಕೂ ಈ ರಸ್ತೆಗಳು ಒಂದು ರೀತಿಯಲ್ಲಿ ಸಾಮಾಜಿಕ ಸ್ಥಿತಿ-ಗತಿಯನ್ನು ಮಟ್ಟ ಮಾಡುವ ಲೆವೆಲ್ಲರುಗಳು ಇದ್ದ ಹಾಗೆ. ಈ ರಸ್ತೆಗಳ ಮೇಲೆ ನಿಮ್ಮ ನಿಮ್ಮ ಖಾಸಗೀ ವಿಚಾರಗಳು, ಅವುಗಳನ್ನು ಕುರಿತು ಶಾಂತವಾಗಿಯಾಗಲೀ ಉದ್ವೇಗದಿಂದಾಗಲೀ ಏಳುವ ನಿಮ್ಮ ಸ್ಪಂದನೆಗಳು ಇವೆಲ್ಲಕ್ಕೂ ಯಾವ ಬಿಡಿಗಾಸು ಬೆಲೆಯೂ ಇಲ್ಲ. ಈ ರಸ್ತೆಗಳು, ತಮ್ಮ ಹೊಳೆಯುವ ಕಪ್ಪು ಮುಖದ ಮೇಲೆ ನಿರ್ಧಾಕ್ಷಿಣ್ಯವನ್ನು ಮೈವೆತ್ತುಕೊಂಡಂತೆ ಸದಾ ಸುಮ್ಮನಿರುವ ಸರದಾರರು. ಇಂಥ ರಸ್ತೆಗಳಿಗೆ ಸಾತ್ ಕೊಡುವ ಬದಿಯ ವಾರ್ನಿಂಗ್ ಸೈನುಗಳು! ಇವೆಲ್ಲವೂ ಒಂದು ವ್ಯವಸ್ಥೆ - ಇವುಗಳನ್ನು ಮೀರಿದರೆ ಆಪತ್ತು ಕಾದಿದೆ, ಎನ್ನುವ ಕುತಂತ್ರವನ್ನು ತಮ್ಮೊಡಲೊಳಗೆ ಹೂತುಕೊಂಡಿರುವ ಸಭ್ಯರು ಎನ್ನಬೇಕು.

***



ಎಲ್ಲರೂ ಮಿತಿಗಿಂತ ಹೆಚ್ಚು ವೇಗವಾಗಿ ಹೋಗುತ್ತಿರುವಾಗ, ವೇಗದ ಮಿತಿಗೆ ಸರಿಯಾಗಿ ಹೋಗುವವರು ನಮ್ಮ ಸಮಾಜದಲ್ಲಿ ಒಂದು ರೀತಿಯ ಉಪಟಳ ಕೊಡುವ ಉಪದ್ರವಿಗಳಾಗಿ (nuisance) ಕಂಡುಬರುತ್ತಾರೆ.  ಇವರೊಬ್ಬರು ಸರಿಯಾದ ಹಾದಿಯಲ್ಲಿ ಸರಿಯಾದ ವೇಗದಲ್ಲಿ ನಡೆದು ಬಿಟ್ಟರೆ... ಎಲ್ಲವೂ ಸರಿ ಹೋದೀತೇ? ಮೇಲೆ ಹೇಳಿದ ವೇಗಿಗಳು, ದುಃಖಿಗಳು, ಸುಖಿಗಳು, ತೀವ್ರವಾಗಿ ಬದಲಾವಣೆಯನ್ನು ಅಪ್ಪಿಕೊಳ್ಳುತ್ತಿರುವ ಜನಸಮುದಾಯ ಇವರನ್ನು ಒಪ್ಪಿಕೊಳ್ಳಲು ಸಾಧ್ಯವೇ? ಮೌನದ ಮೊರೆಯಲ್ಲಿಯೇ ವೇಗದ ಮಿತಿಯನ್ನು ತೋರಿಸುವ, Conditions permitting...ಎನ್ನುವ ಅದಮ್ಯ ತತ್ವವನ್ನು ಯಾರು ಗೌರವಿಸುತ್ತಾರೆ ಈಗಿನ ಕಾಲದಲ್ಲಿ? ಒಬ್ಬ ಮಿತಿಗಿಂತ ಹೆಚ್ಚಾಗಿ ವೇಗವಾಗಿ ಹೋದರೆ, ಅವನನ್ನು ಅನುಸರಿಸಲು ಹಿಂಬಾಲಿಕರಿಗೇನೂ ಕೊರತೆ ಇಲ್ಲ... ಆದರೆ, ಒಬ್ಬ ಸರಿಯಾದ ವೇಗದಲ್ಲಿ ಹೋದಾಗ ಅವನನ್ನು ಹಿಂಬಾಲಿಸಲು ಹಿಂಜರಿಯುವ ಜನ ಹೆಚ್ಚು! ಹಾಗಾದರೆ, ಸರಿಯಾದ ವೇಗದಲ್ಲಿ ಹೋಗುವುದು ಹೆಚ್ಚು ಜನರಿಗೆ ಇಷ್ಟವಾಗದಂಥ ವ್ಯವಸ್ಥೆಯನ್ನು, ಹೆಚ್ಚು ಜನರ ಮೇಲೆ ಇಲ್ಲಿನ ಜನತಂತ್ರ ವ್ಯವಸ್ಥೆ ಹೇರುವುದಾದರೂ ಏಕೆ?

ತಮ್ಮ ತಮ್ಮ ನಿಧಾನಗಳನ್ನು, ತಮ್ಮ ಯೋಜನೆಯ ಹುಳುಕುಗಳನ್ನು, ತಾವು ತಡವಾಗಿ ಹೊರಟಿರುವುದರ ಕಾರಣ ಮತ್ತು ಪರಿಣಾಮಗಳನ್ನು ಈ ಮೌನವಾಗಿ ಬಿದ್ದುಕೊಂಡ ರಸ್ತೆಗಳ ಮೇಲೆ ತೀರಿಸಿಕೊಳ್ಳುವ ಹಕ್ಕನ್ನ  (ಸಿಕ್ಕಿ ಬಿದ್ದರೆ, ಕಾನೂನಿನ ದೃಷ್ಟಿಯಲ್ಲಿ ತಪ್ಪಾಗುವ) ಈ ವೇಗಿಗಳಿಗೆ ಯಾರು ಕೊಟ್ಟಿದ್ದು? ವ್ಯವಸ್ಥೆಯ ಮಿತಿಯನ್ನು ಮೀರಿ ವೇಗವಾಗಿ ಹೋಗುವವರಿಗೆ ಹಲವಾರು ಕಾರಣಗಳಿರಬಹುದು, ಆದರೆ, ಸಮಾಜದಲ್ಲಿ ನೆಟ್ಟಗೆ, ನ್ಯಾಯವಾಗಿ ಬದುಕುವರಿಗೆ ಕಾರಣಗಳು ಬೇಕಿಲ್ಲ.

***

ನಿಮ್ಮ ಮುಂದೆ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವವರು ನಿಮ್ಮಲ್ಲಿ ಅದ್ಯಾವ ತುಡಿತ-ತಲ್ಲಣಗಳನ್ನು ರೂಪಿಸುತ್ತಾರೆಯೋ ಗೊತ್ತಿಲ್ಲ. ಆದರೆ, ಇಂದು ನನ್ನ ಮುಂದೆ, ಮಿತಿಗೆ ತಕ್ಕಂತೆ ಒಂದು ಅರ್ಧ-ಮುಕ್ಕಾಲು ಮೈಲು ದೂರ ಡ್ರೈವ್ ಮಾಡಿಕೊಂಡು ಹೋದ ಮನುಷ್ಯ ನನಗೊಬ್ಬ ಹೀರೋ ಆಗಿ ಕಂಡು ಬಂದ. ಇಂಥ ನಗಣ್ಯ (unsung) ಹೀರೋಗಳನ್ನು ನಾವು ಗೌರವಿಸುವುದನ್ನು ಮೈಗೂಡಿಸಿಕೊಳ್ಳಲು ಕಲಿಯದಿದ್ದರೆ, ಸಮಾಜದಲ್ಲಿ ನ್ಯಾಯ-ನೀತಿಯಿಂದ ನಡೆಯುತ್ತೇವೆ ಎಂದು ಜೀವನವನ್ನೇ ಮುಡಿಪಾಗಿಟ್ಟಿರುವವರನ್ನು ಗೌರವಿಸುವುದನ್ನು ಕಲಿಯುವುದು ಯಾವಾಗ?

Saturday, February 10, 2024

3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!

ಇದೇನಪ್ಪಾ, ಇತ್ತೀಚೆಗಷ್ಟೇ ಟೆಕ್ನಾಲಜಿ ಜ್ವರದಲ್ಲಿ ಬೆಂದು ಬಳಲಾಡುತ್ತಿರುವ ನಮ್ಮಂಥವರಿಗೆ ದಿಢೀರನೇ ನಿವೃತ್ತಿಯ ಬಗ್ಗೆ ಕಿವಿಮಾತೇ ಎಂದು ಹುಬ್ಬೇರಿಸಬೇಡಿ, ಮುಂದೆ ಓದಿ ನೋಡಿ. ಇತ್ತೀಚೆಗೆ ಒಂದಿಷ್ಟು ಕಮ್ಮ್ಯೂನಿಟಿ ಸೇವೆಯ ಹೆಸರಿನಲ್ಲಿ ನನಗೆ ಸೀನಿಯರ್ ಸಿಟಿಜನ್‌ಗಳ ಸೇವೆ ಮಾಡೋ ಭಾಗ್ಯ ಒದಗಿತ್ತು, ಈ ಸಂದರ್ಭದಲ್ಲಿ ಕಮ್ಯೂನಿಟಿ ಸೇವೆ ಮಾಡುತ್ತಲೇ ನಾನು ಮುಂದೆ ನಿವೃತ್ತನಾಗಿ ಇದೇ ಅವಸ್ಥೆಗೆ ಬಂದರೆ ಹೇಗಿರಬಹುದು ಎಂದು ಯೋಚಿಸಿ ಸ್ವಲ್ಪ ರಿಸರ್ಚ್ ಮಾಡಿ ನೋಡಲಾಗಿ ಹಲವಾರು ಅಂಶಗಳು ಹೊರಬಂದವು, ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಈ ಎಕಾನಮಿಯಲ್ಲಿ ನಿವೃತ್ತರಾಗೋ ಮಾತೇ ಬರೋದಿಲ್ಲ, ಆ ಮಾತು ಬಿಡಿ. ಮುಂದೆಯಾದರೂ ಸುಧಾರಿಸೀತು, ಇಲ್ಲವೆಂದಾದರೆ ನಮ್ಮಂಥವರ ಕಷ್ಟ ಯಾರಿಗೂ ಬೇಡ. ಎಷ್ಟೋ ಜನ ರಿಟೈರ್‌ಮೆಂಟ್ ಬದುಕಿಗೆ ಪ್ಲಾನ್ ಮಾಡೋದೇ ಇಲ್ಲ. ರಿಟೈರ್‌ಮೆಂಟ್ ಬದುಕಿನಲ್ಲಿ ಹಣ, ಹೊಣೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಆರೋಗ್ಯದ ಜೊತೆಗೆ ಇಷ್ಟೆಲ್ಲ ದಿನಗಳಲ್ಲಿ ವ್ಯಸ್ತರಾಗಿ ಕೆಲಸ ಮಾಡಿ ಕರ್ಮಜೀವನವನ್ನು ತೇಯ್ದ ನಮಗೆ ಮುಂದೆ ಕಾಲ ಕಳೆಯೋದಕ್ಕೆ ಏನು ಬೇಕು ಏನು ಬೇಡ ಅನ್ನೋದರ ತೀರ್ಮಾನವೂ ಬಹಳ ಮುಖ್ಯ.  ಹಣವನ್ನಾದರೂ ಉಳಿಸಬಹುದು, ಗಳಿಸಬಹುದು, ಬೆಳೆಸಬಹುದು. ಆದರೆ, ಒಮ್ಮೆ ಹದಗೆಟ್ಟ ಆರೋಗ್ಯವನ್ನು ಹದ್ದುಬಸ್ತಿಗೆ ತರುವುದು ಭಗೀರಥ ಪ್ರಯತ್ನವೇ ಆಗಬಹುದು. ಎಲ್ಲಕ್ಕಿಂತ ಮುಖ್ಯ ಕೈಕಾಲು ಗಟ್ಟಿ ಇರಬೇಕು, ದೃಢವಾದ ಮನಸ್ಸಿಗೆ ಬೆಂಬಲ ನೀಡುವ ತಕ್ಕ ಮಟ್ಟಿನ ಶರೀರ ಬೇಕೇ ಬೇಕು. ಇದ್ದಕ್ಕಾಗಿ ಒಂದಿಷ್ಟು ಕಾಲ ವ್ಯಾಯಾಮ, ಯೋಗ, ಮೊದಲಾದ ದೈಹಿಕ ದಂಡನೆ ಜೊತೆ ಜೊತೆಗೆ ಮಾನಸಿಕ ಸ್ಥಿತಿಯ ಸ್ಥಿಮಿತಕ್ಕೆ ಧ್ಯಾನವೂ ಬೇಕಾಗುತ್ತದೆ.

***

ಸರಿ, ಈಗ ಮುತ್ತಿನಂತಹ ಮೂರು ಪ್ರಶ್ನೆಗಳಿಗೆ ಬರೋಣ:

೧. ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಹಾಗೂ ನಿಮಗೆ ಬೇಕಾದ ಹಣದ ಮೊತ್ತವೆಷ್ಟು?

೨. ರಿಟೈರ್ ಆದ ನಂತರ ಹೇಗೆ ಸಮಯವನ್ನು ವ್ಯಯಿಸುತ್ತೀರಿ, ಯಾವ ಯಾವ ಹವ್ಯಾಸಗಳನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸಿಕೊಳ್ಳುತ್ತೀರಿ?

೩. ನಿಮ್ಮ ಕಾಲಾನಂತರ ಯಾರು ಯಾರಿಗೆ ಏನನ್ನು ಬಿಟ್ಟು ಹೋಗುತ್ತೀರಿ?

ಈ ಮೂರು ಪ್ರಶ್ನೆಗಳನ್ನು ವಿಸ್ತರಿಸುವುದಕ್ಕೆ ಮೊದಲು "ILI ಪಾಷಾಣ"ಗಳ ವಿಷಯಕ್ಕೆ ಬರೋಣ. ಏನು, ಇಲಿ ಪಾಷಾಣ ಇದು?! ಎಂದು ಬೆರಗಾದಿರೋ, ಸುಲಭವಾಗಿ ನೆನಪಿಗೆ ಬರುವಂತೆ ಸುಮ್ಮನೆ ಒಂದು ಉಪಮೆಯ ಸೃಷ್ಟಿ ಅಷ್ಟೇ:

I: Investment risk

L: Longevity risk

I: Inflation risk

ಈ ಮೇಲೆ ಹೇಳಿದ ಮೂರು ರಿಸ್ಕ್‌ಗಳೇ ಪಾಷಾಣವಿದ್ದ ಹಾಗೆ. ಪ್ರತಿಯೊಬ್ಬರೂ ತಾವು ನಿವೃತ್ತರಾಗಲು ತಯಾರಾಗುತ್ತ ಇದ್ದ ಹಾಗೆ, ಇಪ್ಪತ್ತರ ಹರೆಯದಿಂದ ಎಪ್ಪತ್ತರವರೆಗೆ ಈ ಮೂರು ರಿಸ್ಕ್‌ಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಲೇ ಇರಬೇಕಾಗುತ್ತದೆ. Investment risk ನಲ್ಲಿ ನೀವು ಹೂಡಿದ ಹಣ ನೀವು ರಿಟೈರ್ ಆಗುವ ಹೊತ್ತಿಗೆ ಯಾವುದೋ ಒಂದು ರಿಸೆಷ್ಷನ್ನೋ ಇಲ್ಲಾ ಡಿಪ್ರೆಷ್ಷನ್ನ್ ಚಕ್ರದಲ್ಲಿ ಸಿಕ್ಕು ನರಳುತ್ತಿರಬಹುದು. Longevity risk ಅಂದರೆ ನೀವು ಎಂಭತ್ತು ವರ್ಷ ಬದುಕುತ್ತೀರಿ ಎಂದು ಅದಕ್ಕೆ ತಕ್ಕಂತೆ ಹಣ ಹೂಡಿ ಕೂಡಿ ಹಾಕಿ ಮುಂದೆ ಇಳಿ ವಯಸ್ಸಿನಲ್ಲಿ ನೀವು ತೊಂಭತ್ತು ಆದರೂ ಗೊಟಕ್ ಎನ್ನದೇ ಇರಬಹುದು. Inflation risk ನಲ್ಲಿ ಈಗ ಎರಡು ರುಪಾಯಿ ಅಥವಾ ಡಾಲರ್‌ಗೆ ಸಿಗಬಹುದಾದ ಪದಾರ್ಥ ಮುಂದೆ ಇಪ್ಪತ್ತು ರುಪಾಯಿ ಅಥವಾ ಇಪ್ಪತ್ತು ಡಾಲರ್  ಗಿಂತಲೂ ದುಬಾರಿಯಾಗಬಹುದು.

ಮೊದಲನೆಯ ಪ್ರಶ್ನೆ: ಹೂಡಿಕೆಯ ಹಣಕ್ಕೆ ಅಂಟಿಕೊಂಡ ತೊಂದರೆಗಳು ಯಾವು ಯಾವು? ಇಂಟರ್‌ನೆಟ್ ನಲ್ಲಿ ಹುಡುಕಿದರೆ ಬೇಕಾದಷ್ಟು ರಿಟೈರ್‌ಮೆಂಟ್ ಕ್ಯಾಲ್ಕುಲೇಟರುಗಳು ಸಿಗುತ್ತವೆ, ನಿಮ್ಮ ಈಗಿನ ಆದಾಯ ಹಾಗೂ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ಜೀವನಕ್ಕೆ ಎಷ್ಟು ಬೇಕು ಎಂದು ಅಂದಾಜು ಹಾಕುವುದಕ್ಕೆ. ಅಲ್ಲದೇ, ನಿವೃತ್ತ ಜೀವನದ ಪ್ರತಿವರ್ಷದ ಖರ್ಚಿಗೆ ಎಷ್ಟು ಬೇಕಾಗುತ್ತದೆ ಎನ್ನುವುದರ ಜೊತೆಗೆ ಇಂತಿಷ್ಟು ಹಣದಲ್ಲಿ ಕೇವಲ 4 ಅಥವಾ 5% ಹಣವನ್ನು ಮಾತ್ರ ತೆಗೆಯುವಂತೆ ಬೇಕಾಗುವ ಇಡುಗಂಟನ್ನು ರೂಪಿಸುವ ತಯಾರಿ ಹಾಗು 5% ನ ಮಿತಿಯಲ್ಲಿರುವಂತೆ ಒಂದು ಮೂಲಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಎರಡನೆಯ ಪ್ರಶ್ನೆ: ಸರಿ, ಕಷ್ಟದ ಜೀವನವನ್ನು ಸವೆಸಿ ನಿವೃತ್ತರೇನೋ ಆದಿರಿ, ಮುಂದೆ ಏನು? ದಿನಾ ಕೆಲಸ ಕೆಲಸ ಎಂದು ಗೋಗರೆದು ಹತ್ತಿರ ಬಂದ ಹವ್ಯಾಸಗಳು, ಅವಕಾಶಗಳು ಹಾಗೂ ಕನಸುಗಳನ್ನೆಲ್ಲ ದೂರ ತಳ್ಳಿಕೊಂಡು ಮೂರು ನಾಲ್ಕು ದಶಗಳನ್ನು ದೂರ ತಳ್ಳಿದ ನಂತರ ಒಂದು ದಿನ ದಿಢೀರ್ ಎಂದು ಹಳೆಯ ಹವ್ಯಾಸಗಳಿಗೆ ಅಂಟಿಕೊಳ್ಳುತ್ತೇನೆ ಎನ್ನುವುದು ಹುಡುಗಾಟಿಕೆಯೇ ಸರಿ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ, ದೇಹಸ್ಥಿತಿ ನೆಟ್ಟಗಿರಬೇಕು. ಓದುವುದಕ್ಕೆ, ಬರೆಯುವುದಕ್ಕೆ, ತಿರುಗಾಡುವುದಕ್ಕೆ, ಆಡುವುದಕ್ಕೆ ಸಮಯ ಒಂದಿದ್ದರೆ ಸಾಲದು - ಹಣ ಬೇಕು ಹಾಗೂ ದೇಹದಲ್ಲಿ ಬಲಬೇಕು ಜೊತೆಗೆ ಎಲ್ಲವೂ ಸುಸ್ಥಿತಿಯಲ್ಲಿರಬೇಕು. ಸುಮ್ಮನೆ ಒಂದು ನಿಮಿಷ ಕಣ್ಣು ಮುಚ್ಚಿ ನೀವು ನಿವೃತ್ತರಾದ ಹಾಗೆ ಊಹಿಸಿಕೊಳ್ಳಿ: ಮನೆ ಇದೆ, ಸಾಲವೆಲ್ಲ ತೀರಿದೆ, ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಸುಂದರವಾದ ಬೇಸಿಗೆಯ ದಿನ, ಊಟ ತಿಂಡಿ ಮನೆ ಕೆಲಸ ಎಲ್ಲವೂ ಆಗಿ ನಿಮ್ಮ ಬಳಿ ಐದರಿಂದ ಎಂಟು ಘಂಟೆ ಖಾಲಿ/ಫ್ರೀ ಇದೆ - ಏನು ಮಾಡುತ್ತೀರಿ? ನಿಮ್ಮ ಸ್ನೇಹಿತರು ಯಾರು, ನಿಮ್ಮ ಹವ್ಯಾಸಗಳೇನು, ನಿಮಗೇನು ಇಷ್ಟ, ನಿಮಗೇನು ಕಷ್ಟ, ನಿಮಗೇನು ಬೇಕು, ಎಲ್ಲಿ ಹೋಗುತ್ತೀರಿ, ಹೇಗೆ ಹೋಗುತ್ತೀರಿ, ಇತ್ಯಾದಿ. ಹೆದರಿಕೆಯಾಯಿತೇ? ಅಥವಾ ಸಂತೋಷವಾಯಿತೇ? ಈ ಒಂದು ನಿಮಿಷದ ನಿವೃತ್ತ ಬದುಕಿನ ಪಯಣದ ಬಗ್ಗೆ ಏನೆನ್ನೆಸಿತು?

ಮೂರನೆಯ ಪ್ರಶ್ನೆ: ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದೋರು ಈ ಕಾಲದವರಂತೂ ಖಂಡಿತ ಅಲ್ಲ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎನ್ನೋದೂ ಪೂರ್ತಿ ನಿಜವಲ್ಲ - ಎಂದು ವಾದ ಮಾಡೋ ಸಮಯವಿದಲ್ಲ. ನೀವು ಇಷ್ಟು ವರ್ಷ ಇದ್ದು ಅದೇನೇನೋ ಮಾಡಿ ಹೋಗುವಾಗ ನಿಮ್ಮನ್ನು ಆಧರಿಸಿಕೊಂಡವರಿಗೆ ಸ್ವಲ್ಪವನ್ನೂ ಬಿಟ್ಟು ಹೋಗೋದಿಲ್ಲವೇನು? ಮುಂದೆ ನಿಮ್ಮ ರಿಟೈರ್ ಮೆಂಟ್ ಅಕೌಂಟಿನಲ್ಲಿ ಪ್ರತಿವರ್ಷ 4 ರಿಂದ 5 % ಹಣವನ್ನು ತೆಗೆದು ಜೀವನ ನಡೆಸುತ್ತೀರಲ್ಲ, ನಿಮ್ಮ ನಂತರ ಅದರ ಬಂಡವಾಳ ಅಥವಾ ಮೂಲಧನ ಯಾರಿಗೆ ಸಿಗಬೇಕು? ಅದರಲ್ಲಿ ಟ್ಯಾಕ್ಸ್‌ನ ಪಾಲು ಎಷ್ಟು? ಯಾವ ಯಾವ ಬೆನಿಫಿಷಿಯರಿಗೆ ಎಷ್ಟು ಹಣ/ವರಮಾನ/ಆಸ್ತಿ ಇತ್ಯಾದಿಗಳನ್ನು ಯಾವ ರೂಪದಲ್ಲಿ ಬಿಟ್ಟು ಹೋಗುತ್ತೀರಿ ಎನ್ನುವುದಕ್ಕೂ ಬಹಳ ಯೋಚಿಸಬೇಕಾಗುತ್ತದೆ. ಅದಕ್ಕೆ ತಕ್ಕ ಒಳ್ಳೆಯ ಪ್ಲಾನ್ ಅಥವಾ ಸಿದ್ಧತೆ ಬೇಕಾಗುತ್ತದೆ. ಇದರಿಂದ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ, ಅವರವರ ಉಯಿಲು (ಮರಣ ಶಾಸನ ಪತ್ರ, ಅಥವಾ will) ಇರಬೇಕಾದ ಅಗತ್ಯವಿದೆ.

***

ಈಗೆನ್ನನ್ನಿಸಿತು? ಮೊದಲು ಯಾವುದಾದರು ಒಂದು ಕಮ್ಯೂನಿಟಿ ಸೆಂಟರಿನಲ್ಲಿ ಸೀನಿಯರ್ ಸಿಟಿಜನ್ ಸೇವೆಗೆ ವಾಲೆಂಟಿಯರ್ ಆಗಿ. ನಿಮ್ಮ ನಿವೃತ್ತ ಜೀವನದ ಮುಂಬರುವ ದಿನಗಳನ್ನು ನೀವೇ ತ್ರೀ ಡೀ ಕಲರ್ ಚಿತ್ರಗಳಲ್ಲಿ ನೋಡಿ. ಅವರ ಸ್ಥಾನದಲ್ಲಿ ನಿಮ್ಮನ್ನು ಗುರುತಿಸಿಕೊಂಡು, ಈಗಿನ ಕಾದಾಟ/ಬಡಿದಾಟಗಳನ್ನು ಕಡಿಮೆ ಮಾಡಿ, ಮುಂದಿನ ಜೀವನದ ILI ಪಾಷಾಣದ ಬಗ್ಗೆ ಸ್ವಲ್ಪ ಚಿಂತಿಸಿ.

ನಾನು ಯಾವಾಗಲೂ ಬರೆಯೋ ಹಾಗೆ ಅಥವಾ ಹೇಳೋ ಹಾಗೆ ಬದುಕು ಬಹಳ ದೊಡ್ಡದು - ಮೈ ತುಂಬ ಸುಕ್ಕುಗಳನ್ನು ಕಟ್ಟಿಕೊಂಡು ಹುಟ್ಟಿ ಬಂದ ನಾವು ಸುಕ್ಕು ಸುಕ್ಕಾಗೇ ಸಾಯೋದು, ಪ್ರಾಣಿ ಸಂಕುಲದಲ್ಲಿ ಮಾನವರು ಈಗ ತಾನೆ ಹುಟ್ಟಿದ ಅಸಹಾಯಕ ಮಕ್ಕಳಿಂದ ಹಿಡಿದು ಅಸಹಾಯಕ ವೃದ್ದಾಪ್ಯದ ಅವಸ್ಥೆಯವರೆಗೆ ಅನುಭವಿಸೋದು ಬಹಳಷ್ಟಿದೆ. ಮಿದುಳು ಘಂಟೆಗೆ ನೂರು ಮೈಲಿ ವೇಗದಲ್ಲಿ ಓಡಿದರೂ ಮೈ ಬಗ್ಗೋದಿಲ್ಲ. ಮುವತ್ತರ ನಂತರ ಒಂದೊಂದೇ ಕೀಲುಗಳೂ ಕಿರುಗುಟ್ಟುವುದು ಸಾಮಾನ್ಯ. ಅಟೋಮೊಬೈಲನ್ನು ಆಗಾಗ್ಗೆ ಸರ್ವಿಸ್ ಮಾಡಿಸೋ ಹಾಗೆ ನಮ್ಮ ದೇಹಕ್ಕೂ ನಿರಂತರ ಸರ್ವಿಸ್/ಸೇವೆ ಅಗತ್ಯ. ಮಕ್ಕಳಿಂದ ಮುದುಕರ ಅನೇಕ ಅವಸ್ಥೆಯಲ್ಲಿ ಆಯಾ ಅಗತ್ಯಗಳು ಬೇರೆ ಬೇರೆ. ಧೀರ್ಘ ಆಯುಷ್ಯ ಅನ್ನೋದು ದೊಡ್ಡದು, ಆದರೆ ಅಲ್ಲಿಯವರೆಗೆ ಹೋಗಿ ಸಸ್ಟೈನ್ ಆಗಿ ನೆಮ್ಮದಿಯ ಜೀವನ ನಡೆಸುವುದು ಇನ್ನೂ ದೊಡ್ಡದು!

Friday, April 10, 2020

ದಿನಗಳು ಬೇರೆ, ದಿನಚರಿ ಒಂದೇ...

ನಮಗೂ ನೈಬರ್ಸ್ ಇದ್ದಾರೆ ಅಂತ ಅನ್ನಿಸಿದ್ದು ಇವತ್ತು ಬೆಳಿಗ್ಗೆ ಎದ್ದ ನಂತರ ನರಿ ಮುಖ ನೋಡಿದ ಮೇಲೆ.  ಮನೆಯ ಬಾಗಿಲನ್ನು ತೆಗೆಯಲು ಹೊರಗೆ ಬಂದು ನೋಡಿದರೆ ನಮ್ಮ ಯಾರ್ಡ್‌ನಲ್ಲಿ ಒಂದು ನರಿ, ಸ್ವಲ್ಪ ದೂರದಲ್ಲಿ ಎರಡು ಕಾಡು ಟರ್ಕಿಗಳು ಹಾಗೂ ಕೆಲವು ಜಿಂಕೆಗಳು ಕಂಡು ಬಂದವು. ಇವೆಲ್ಲ ನಮ್ಮ ಮನೆಯ ಸುತ್ತ ಇರೋ ಅಂತ ಪ್ರಾಣಿಗಳೇ, ಆದರೆ ನಮ್ಮ ನಮ್ಮ ವ್ಯಸ್ತ ಬದುಕಿನಲ್ಲಿ ನಮಗೆ ಅವುಗಳನ್ನು ನೋಡಲಾಗೋದಿಲ್ಲ ಅಷ್ಟೇ. ’ಅಯ್ಯೋ, ನಮ್ಮ ಮನೆ ಹತ್ರ ಬಂದಿದ್ದಾವೆ!’ ಎಂದು ಆಶ್ಚರ್ಯ ಸೂಚಿಸಿದ ನನ್ನ ಮಗಳಿಗೆ ಹೇಳಿದೆ,’ ನಾವು ಅವುಗಳ ಮನೆಯ ಹತ್ತಿರ ಬಂದಿದ್ದೇವೆಯೇ ವಿನಾ ಅವುಗಳು ನಮ್ಮ ಮನೆ ಬಳಿ ಅಲ್ಲ’, ಎಂದು. ಅವಳು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡು ಬಂದಳು.

ಇತ್ತೀಚೆಗಂತೂ ನಮ್ಮ ನೆರೆಹೊರೆಯಲ್ಲಿ, ನಮ್ಮ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಸ್ತಬ್ಧವಾಗಿವೆ.  ಯಾವುದೇ ಮೋಟಾರು ವಾಹನದ ಸದ್ದೂ ದಿನವಿಡೀ ಕೇಳೋದಿಲ್ಲ.  ಒಂದು ಹಂತದಲ್ಲಿ ಈ ಪ್ರಪಂಚದಲ್ಲಿ ನಾವಷ್ಟೇ ಇದ್ದೇವೇನೋ ಎಂದು ಅನುಮಾನ ಬರುವಷ್ಟು ಎಲ್ಲ ಕಡೆಗೆ ತಣ್ಣಗಾಗಿ ಬಿಟ್ಟಿದೆ.  ಇವತ್ತಿಗೆ ನಾಲ್ಕು ವಾರಗಳ ಕಾಲ ಮನೆಯಲ್ಲೇ ಕುಳಿತು ದಿನ ಮತ್ತು ರಾತ್ರಿಗಳನ್ನು ಕಳೆದ ನಮಗೆ ಅವುಗಳು ಬಹಳ ಧೀರ್ಘವಾದಂತೆ ಕಂಡುಬರುತ್ತವೆ.  ಮೊದಲಾಗಿದ್ದರೆ, ವಾರದ ದಿನಗಳು ಒಂದು ರೀತಿ ಓಡುತ್ತಿದ್ದವು.  ವಾರಾಂತ್ಯದ ದಿನಗಳು ಮತ್ತಿನ್ನೊಂದು ರೀತಿ.  ಆದರೆ ಈಗೆಲ್ಲ ಬದಲಾಗಿದೆ.

ವಾರದ ದಿನಗಳಲ್ಲಿ ನಾವೊಂದು ದಿನಚರಿಯನ್ನು ಅನುಸರಿಸಲೇ ಬೇಕು.  ಮನೆಯಲ್ಲೇ ಕುಳಿತಿದ್ದೇವೆಂದಾಕ್ಷಣ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಯಾರಿಗೂ ಕೆಲಸ ಮಾಡಲಾಗದು. ಅಂತೆಯೇ ನಾವು ಎಷ್ಟು ಹೊತ್ತಿಗೆ ಕೆಲಸವನ್ನು ಆರಂಭಿಸುತ್ತೇವೆ, ಎಷ್ಟು ಹೊತ್ತಿಗೆ ಮುಗಿಸುತ್ತೇವೆ ಎಂಬುದೂ ಮುಖ್ಯ.  ನನ್ನೆಲ್ಲ ಫೋನ್‌ಕಾಲ್‌ಗಳನ್ನು ಹೆಚ್ಚಿನ ಮಟ್ಟಿಗೆ ನಾನು ಸ್ಪೀಕರ್‌ ಫೋನ್‌ನಲ್ಲಿಯೇ ಹಾಕಿರೋದರಿಂದ ದಿನದ ಉದ್ದಕ್ಕೂ ಮನೆಯಲ್ಲಿ ಒಂದು ರೀತಿಯ ’ಕಲರವ’ ಇರುತ್ತದೆ.  ಈ ದಿನ ಸಂಜೆ ಆರು ಘಂಟೆ ಆಗುವುದರೊಳಗೆ ಇಷ್ಟು ಕೆಲಸ ಮುಗಿಸುತ್ತೇನೆ ಎಂದು ಪ್ಲಾನ್‌ ಹಾಕಿಕೊಂಡು ಕೆಲಸ ಮಾಡಿದಾಗ ಎಲ್ಲ ಸುಲಭವಾಗುತ್ತದೆ.  ದಿನಕ್ಕೊಂದು ಬಾರಿ ಇಂಗ್ಲೀಷ್ ನ್ಯೂಸ್, ಮಧ್ಯೆ ಮಧ್ಯೆ ಅಲ್ಲಿಲ್ಲಿ ಒಂದಿಷ್ಟು ಪ್ರಜಾವಾಣಿ, ನ್ಯೂಯಾರ್ಕ್ ಟೈಮ್ಸ್, ವಾಟ್ಸಾಪ್ ಇವನ್ನೆಲ್ಲ ನೋಡಿಕೊಂಡು ಹೋಗುತ್ತಿರುವಾಗ ವಾರದ ದಿನಗಳು ವೇಗವಾಗೇ ಹೋಗುತ್ತಿವೆ ಎನ್ನಿಸುತ್ತದೆ.  ಇವುಗಳ ಜೊತೆಯಲ್ಲಿ ದಿನಕ್ಕೊಬ್ಬೊಬ್ಬರಿಗೆ ಫೋನ್ ಮಾಡಿ ಹಳೆಯ ಸ್ನೇಹಿತ, ಬಂಧು-ಬಳಗವರನ್ನು ಮಾತನಾಡಿಸಿಕೊಂಡು ಬರುವ ಪರಿಪಾಠ ಹುಟ್ಟಿದೆ.

ಎಲ್ಲಕ್ಕಿಂತ ಕಷ್ಟಕರವಾದುದು ಸೋಮವಾರ ಬೆಳಿಗ್ಗೆ - ಕೆಲಸ ಆರಂಭಿಸುವುದಕ್ಕೇ ಒಂದು ರೀತಿಯ ಕಷ್ಟವೆನಿಸುತ್ತದೆ.  ಅದೇ ರೀತಿ ಶುಕ್ರವಾರ ಬಂದರೆ ಮಧ್ಯಾಹ್ನವಾದಂತೆಲ್ಲ ಮೊದಲಿನ ಹುರುಪಿರೋದಿಲ್ಲ. ಯಾರಿಗಾದರೂ, Have a good weekend! ಎಂದು ಅಚಾನಕ್ಕಾಗಿ ಹೇಳಿದರೂ, Stay safe! ಎಂದು ಕೊನೆಯಲ್ಲಿ ಸೇರಿಸುವುದು ಸಹಜವಾಗಿ ಹೋಗಿದೆ.

ವೀಕೆಂಡ್ ದಿನಗಳದ್ದು ಮೊದಲಿನಂತೆ ಅಲ್ಲಿಲ್ಲಿ ಓಡಾಡುವ ವಿಶೇಷಗಳೇನೂ ಇಲ್ಲವಾದರೂ, ಈಗ ಹೊಸ ಹೊಸ ಕಾರ್ಯಕ್ರಮಗಳು ನಮ್ಮ ಕ್ಯಾಲೆಂಡರುಗಳನ್ನು ಆವರಿಸಿಕೊಳ್ಳುತ್ತಿವೆ.  ಶನಿವಾರ ಮುಂಜಾನೆ 9:30ಕ್ಕೆ ನಮ್ಮ ನೈಬರ್‌ಹುಡ್ ಜನರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ವರ್ಚುವಲ್ ಟೀ-ತಿಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ಕಳೆದ ವಾರ ಒಬ್ಬೊಬ್ಬರನ್ನೇ ಕರೆ ಕರೆದು ಅವರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ, ಅವರೆಲ್ಲರೂ ಖುಶಿಯಿಂದಲೇ ಶನಿವಾರ "ತಿಂಡಿ"ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು.  ನಂತರ ಭಾನುವಾರ (ಬೃಂದಾವನ ಕನ್ನಡ ಸಂಘದ) ಕಮ್ಯೂನಿಟಿ ಕಾಲ್ ಮತ್ತು ಕನ್ನಡ ಕಲಿ ವರ್ಚುವಲ್ ತರಗತಿಯನ್ನು ಮುಗಿಸುವಷ್ಟರಲ್ಲಿ ದಿನ ಆರಾಮವಾಗಿ ಕಳೆದು ಹೋಗುತ್ತದೆ. ಈ ನಡುವೆ, ಅವರಿವರು ಶೇರ್ ಮಾಡಿರುವ ಹಳೆ-ಹೊಸ ಸಿನಿಮಾವನ್ನೋ ಅಥವಾ ಡಾಕ್ಯುಮೆಂಟರಿಯನ್ನೋ ನೋಡುವುದು ರೂಢಿಯಾಗಿ ಬಿಟ್ಟಿದೆ.
ನಾವೆಲ್ಲ ಮನೆ ಒಳಗೆ ಸೇರಿಕೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಒಂದಿಷ್ಟು ನಿರಾಂತಕವಾಗಿ ಉಸಿರಾಡುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು.  ಈ ನಾಲ್ಕು ವಾರಗಳಲ್ಲಿ ವಾಯು-ಶಬ್ದ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವೂ ಹೊಸತಾಗಿ ಹೊಳೆಯುವಂತೆ ಕಾಣುತ್ತದೆ.  ಈ ಮೊದಲು ನಾವು ಅಷ್ಟೊಂದು ಗಮನವಿಟ್ಟು ನೋಡಲಾಗದ ನಿಸರ್ಗದ ಅದ್ಭುತಗಳನ್ನು ನೋಡುತ್ತಿದ್ದೇವೆ.  ಪಕ್ಷಿಗಳ ಚಿಲಿಪಿಲಿ ಧ್ವನಿ ಈಗಾಗಲೇ ಎಲ್ಲರ ಕಿವಿಗೂ ಬಿದ್ದಿರಬೇಕು!

ಯಾವುದು ಅತಿಯಾದರೂ ಅಷ್ಟೊಂದು ಒಳ್ಳೆಯದಲ್ಲ - ಅದೇ ರೀತಿ, ಈ ಏಕತಾನತೆಯೂ ಒಂದಿಷ್ಟು ಕಾಲದೊಳಗೆ ತನ್ನ ಮುದವನ್ನು ಕಳೆದುಕೊಂಡೀತು.  ವಿಶ್ವದಾದ್ಯಂತ ಎಷ್ಟೋ ವ್ಯವಹಾರಗಳು ನಿಂತು ಹೋಗಿವೆ, ಎಷ್ಟೋ ಜನರು ಕೆಲಸವಿಲ್ಲದೆ ಕೊರಗುತ್ತಿದ್ದಾರೆ, ಇಂತಹವರನ್ನೆಲ್ಲ ಮನೆಯಲ್ಲಿ ಕುಳಿತಿರಿ ಎಂದು ಯಾವ ಶಕ್ತಿಯೂ ಕಟ್ಟಿ ಹಾಕಲಾರದು.  ಕಣ್ಣಿಗೆ ಕಾಣುವ ಹಸಿದ ಹೊಟ್ಟೆಯ ಸಂಕಟ ಕಣ್ಣಿಗೆ ಕಾಣದ ಕ್ರಿಮಿಯ ಚಮತ್ಕಾರದ ಹೆದರಿಕೆಗಿಂತಲೂ ಬಹಳಷ್ಟು ದೊಡ್ಡದು.  ಹಸಿದ ಹೊಟ್ಟೆಗಳು ಕ್ರಾಂತಿ ಕೋಲಾಹಲವನ್ನೇ ಮಾಡಿದ ಅನೇಕ ನಿದರ್ಶನಗಳಿವೆ.  ಈ ನಮ್ಮೆಲ್ಲರ ಗೃಹ ಬಂಧನ ಆದಷ್ಟು ಬೇಗ ಮುಗಿದು, ನಾವೆಲ್ಲ ನಮ್ಮ ನಮ್ಮ ಹೊಸ ಕಲಿಕೆಯೊಂದಿಗೆ ಪ್ರಕೃತಿಯನ್ನು ಗೌರವಿಸುತ್ತಾ ಮತ್ತೆ ನಮ್ಮ ಎಂದಿನ ದಿನಚರಿಗೆ ಹಿಂತಿರುಗೋಣ!

Wednesday, April 08, 2020

ಮೀರದಿರಲಿ ಮಾನವನ ಆಸೆಗಳು...



ಕ್ಷುದ್ರ ಜೀವಿಯಿಂದ ಹೆದರಿ ಕುಳಿತ ಮಾನವ
ಹೆದರಿರುವ ಈ ಸ್ಥಿತಿಗೆ ತಾನು ತಾನೆ ದಾನವ

ಹುಟ್ಟಿನಿಂದ ಹಾರಾಡಿ ಹುಟ್ಟುತ್ತಲೇ ಹೋರಾಡಿ
ಜಗವ ಅಳಿಸಲು ದಿನಕೊಂದು ಕುಂಟು ನೆಪಮಾಡಿ

ತನ್ನ ಕಾಲ ಮೇಲೆ ತಾನು ನಿಂತೆನೆಂದು ಅಂದರೂ
ಇತರ ಹೊಟ್ಟೆ ಮೇಲೆ ತಾನು ಕಲ್ಲು ಹಾಕಿ ಕೊಂದರೂ

ಇನ್ನೂ ಬುದ್ಧಿ ಬಾರದು, ದಾಹ ಎಂದೂ ತೀರದು
ಎಷ್ಟೇ ಹೇಳಿ ಕೊಟ್ಟರೂ ಬುದ್ಧಿ ಮುಂದೆ ಓಡದು

ಇರುವುದೊಂದೇ ಭೂಮಿ, ಇರುವುದಷ್ಟೇ ವಸ್ತುಗಳು
ಸಕಲ ಜೀವ ರಾಶಿಗಳಲ್ಲಿ ಹಂಚಬೇಕು ನಾವುಗಳು

ನಾವು ನಾವೇ ಹೆಚ್ಚಾಗಿ ನಮ್ಮವರೇ ದ್ವಿಗುಣಗೊಂಡು
ಮತ್ತೆಲ್ಲೋ ತಳಮಳ ಇನ್ನು ಕೆಲವು ನಾಶ ಕಂಡು

ಕಳೆದಿದೆ ಭೂಮಿಯ ಸಮತೂಕ, ನಿರ್ವಾತದಲ್ಲೂ ನರಕ
ಎಲ್ಲರಲ್ಲಿ ಹಂಚಿಕೊಂಡು ಬಾಳದಿರೆ ಸಿಗದು ಸುಖ

ಕೋಟಿ ಕಾಲ ಬದುಕುವ ಸೂರ್ಯ ಚಂದ್ರರಿಗಿರದ ಹಮ್ಮು
ಭೂಮಿಯಲಿ ಕೆಲವೇ ದಿನ ಬದುಕುವ ನಮಗೇಕೆ ಅಹಮ್ಮು

ಶಾಖಾಹಾರ, ಮಿತಾಹಾರ ಆಗಲಿ ನಮ್ಮ ನಿಯಮ
ಭೂಮಂಡಲ ಎಲ್ಲರಿಗೂ ಸೇರಿದ್ದು ಎಂಬ ಸಂಯಮ

ಮಕ್ಕಳಿಂದ ಕಲಿಸಿ, ಮಕ್ಕಳಿಗೆ ತಿಳಿಸಿ, ಸಸ್ಯ ಶೋಧ ನಡೆಸಿ
ನಮ್ಮ ನಭೋಮಂಡಲಕೆ ಕಡಿಮೆ ಕಾರ್ಬನ್ ಉರಿಸಿ

ಈ ಅಪರಿಮಿತ ಸೃಷ್ಟಿಯ ಗೌರವಿಸಿ ನಾವೆಲ್ಲ ಕೈ ಜೋಡಿಸಿ
ಈ ಪರಿಮಿತ ಬದುಕಿನಲಿ ಕಷ್ಟ-ಸುಖವನು ಸರಿ ತೂಗಿಸಿ

ಜಗದ ನಿಯಮ ಪಾಲಿಸುತ ಮೀರದಿರಲಿ ಮಾನವನ ಆಸೆಗಳು
ತಿರುಗುತ್ತಲೇ ತಿಳಿ ಹೇಳುವ ಸೃಷ್ಟಿ ಸಿಟ್ಟಾದರೆ ಪಾಶಗಳು

ಈ ಜಗವನು ಹೇಗೆ ಬಂದೆವೋ ಹಾಗೆ ಬಿಟ್ಟು ಹೋಗೋಣ
ಈ ಜಗದಲಿ ಎಲ್ಲರಿಗೂ ಬದುಕಲು ಅವಕಾಶ ಕೊಡೋಣ|

Saturday, April 04, 2020

ಹವ್ಯಾಸ-ದೇವರು-ಸ್ವಾತಂತ್ರ್ಯ

ಯಾವುದೇ ಒಂದು ಹವ್ಯಾಸ ಬೆಳೆಯ ಬೇಕಾದರೂ ಕನಿಷ್ಠ ಮೂರು ವಾರಗಳ ಕಾಲ ಬೇಕಾಗುತ್ತದೆ ಎಂಬುದು ಹಲವರ ಅನುಭವ.  ಈ ಕಳೆದ ಮೂರು ವಾರಗಳಲ್ಲಿ (ಮನೆಯಲ್ಲಿಯೇ ಕುಳಿತು) ಮನೆಯಿಂದಲೇ ಕೆಲಸ ಮಾಡುವ ನನ್ನಂಥ ಎಷ್ಟೋ ಜನ ಟೆಕ್ನಾಲಜಿ ಮ್ಯಾನೇಜರುಗಳು ಈ ಹೊಸ ಪರಿಯ ಕೆಲಸಕ್ಕೆ ರೂಢಿಯಾಗಿಲ್ಲ?  ಆದರೆ, ಮನೆಯಲ್ಲಿಯೇ ಅಥವಾ ಮನೆಯಿಂದಲೇ ಕೆಲಸ ಮಾಡುವ ಜನರಿಗೆಲ್ಲ ’ಅಂತರಂಗ’ದ ಹೇಳಲೇ ಬೇಕಾದ ಕಿವಿ ಮಾತೊಂದಿದೆ: ಮನೆಯಿಂದಲೇ ಕುಳಿತು ಕೆಲಸ ಮಾಡುವುದೆಂದರೆ ಬೊಕ್ಕ ತಲೆಯ ವ್ಯಕ್ತಿ ಮುಖ ತೊಳೆದ ಹಾಗೆ!  ಎಲ್ಲಿ ಶುರು ಮಾಡಿ ಎಲ್ಲಿ ನಿಲ್ಲಿಸಬೇಕು ಎಂಬುದು ಅಷ್ಟು ಸುಲಭವಾಗಿ ತಿಳಿಯದು.  ಘಂಟೆಗೊಂದರಂತೆ ಟ್ಯಾಸ್ಕುಗಳು ನಮ್ಮ ತಲೆ ಏರಿ ಕುಳಿತಿರುವಾಗ, ಕೊನೆಯಿಲ್ಲದ ಹಾಗೆ ಇ-ಮೇಲ್‌ಗಳು ಇನ್‌ಬಾಕ್ಸ್‌ನಲ್ಲಿ ಬಂದು ಇಳಿಯುತ್ತಿರುವಾಗ, ಕಂಪನಿಯಲ್ಲಿದ್ದವರೆಲ್ಲ ನಾಳೆಯೇ ಪ್ರಪಂಚದ ಕೊನೆಯೆಂಬಂತೆ ಇನ್ಸ್ಟಂಟ್ ಮೆಸೇಜುಗಳಲ್ಲಿ ತಮ್ಮ ಕಥನಗಳನ್ನೇ ಹೆಣೆಯುತ್ತಿರುವಾಗ - ಎಲ್ಲಿಂದ ಆರಂಭಿಸುವುದು, ಎಲ್ಲಿ ನಿಲ್ಲಿಸುವುದು?  ಆಫೀಸಿನಲ್ಲಿದ್ದವರಾದರೆ ಮನೆಗೆ ಹೋಗುತ್ತೇವೆಂದಾದರೂ, ಕಾಫಿ-ಟೀ-ಲಂಚ್ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತೇವೆಂದಾದರೂ ಅತ್ತಿಂದಿತ್ತ ಓಡಾಡುತ್ತಿದ್ದೆವು.  ಈಗ ಹಾಗಿಲ್ಲ.  ಡೆಸ್ಕ್ ಅನ್ನು ಬಿಟ್ಟು ಬದಿಗೆ ಬಂದರೆ, ಯಾರದ್ದಾದರೊಬ್ಬರದ್ದು ಕಾಟ ತಪ್ಪಿದ್ದಲ್ಲ.  ಮನೆಯೇ ಆಫೀಸು, ಆಫೀಸಿನ ಪಕ್ಕದಲ್ಲೇ ಅಡುಗೆ ಮನೆ, ಅದರ ಮಗ್ಗುಲಲ್ಲೇ ಬಾತ್‌ರೂಮು... ಹೀಗೆ ಗೂಟಕ್ಕೆ ಕಟ್ಟಿ ಹಾಕಿದ ಘೂಳಿಯಂತಾದ ಮನಸ್ಸು ಇದ್ದ ಸಣ್ಣ ಆವರಣದಲ್ಲೇ ಸದಾ ಗಿರಕಿ ಹೊಡೆಯುತ್ತಿರುತ್ತದೆ.  ಮೊನ್ನೆ ಯಾವುದೇ ಕಾರಣಕ್ಕೋ ಏನೋ ಚಪ್ಪಲಿ ಇಡುವ ಕ್ಲಾಸೆಟ್ಟಿನ ಬಾಗಿಲು ತೆಗೆದು ನೋಡಿದರೆ, ಅಲ್ಲಿ ನಾನು ಹಾಕುವ ಡ್ರೆಸ್ ಶೂ‌ಗಳು, ಹಳೆಯ ಕಸ್ಟಮರ್‌ ಅನ್ನು ನಕ್ಕು ಸ್ವಾಗತಿಸುವ ಗೂಡು ಅಂಗಡಿಯ ಮಾಲಿಕನಂತೆ ಕಂಡುಬಂದವು.  ನಾನು ಅವುಗಳನ್ನು ಮುಟ್ಟಿಯೂ ಸಹ ನೋಡಲಿಲ್ಲವಲ್ಲ ಎನ್ನುವ ಕಳಕಳಿಯಲ್ಲಿಯೇ ಕ್ಲಾಸೆಟ್ ಬಾಗಿಲು ಹಾಕುತ್ತಿದ್ದಂತೆ ಅನ್‌ಲೈನ್ ಅಡ್ವರ್‌ಟೈಸ್‌ಮೆಂಟ್‌‍ನಲ್ಲಿ ಬಂದು ಹೋಗುವ ಮುಖಗಳಾಗಿ ಮಾಯವಾದವು॒!  ಇನ್ನು ಬಾಗಿಲ ಬಳಿಯೇ ಬಿಡುವ ಶೂಗಳ ಕಥೆ ಇದಾದರೆ, ಮೇಲೆ ಕೊಂಡೊಯ್ದು (ಅಚ್ಚುಕಟ್ಟಾಗಿ) ಇಟ್ಟಿದ್ದ ಕೋಟು-ಸೂಟುಗಳು, ನಾನು ಇನ್ಯಾರದೋ ಮನೆಯನ್ನು ಹೊಕ್ಕೆನೇನೋ ಎಂಬ ಆಶ್ಚರ್ಯ ಸೂಚಕ ಭಾವನೆಯನ್ನು ನನ್ನ ಮುಖದ ಮೇಲೆ ಹೊರಡಿಸಿದವು.  ಕಳೆದ ಮೂರು ವಾರಗಳಲ್ಲಿ ನಾವು ಬಳಸಿದ ಸಂಪನ್ಮೂಲಗಳನ್ನು ನೆನೆದುಕೊಂಡರೆ "ಸಮರಸದ ಬಾಳುವೆಗೆ ಸರಳ ಜೀವನವೇ ಕಾರಣ॒!" ಎಂಬ ಪುಸ್ತಕವನ್ನು ಬರೆಯುವಷ್ಟು ಮಟೀರಿಯಲ್ ಸಿಗುವುದಂತೂ ಖಂಡಿತ!


***
ಈ ಕೋರೋನಾ ವೈರಸ್ಸಿನ ದೆಸೆಯಿಂದ ನಮ್ಮ ದೇವರುಗಳಿಗೆ ಒಂದು ಹೊಸದಾದ ಪ್ರೌಢಿಮೆ ಬಂದಿದೆ.  ಸಂಕಟಕಾಲದಲ್ಲಿ ವೆಂಕಟರಮಣ ಎನ್ನುವಂತೆ ಎಲ್ಲ ಮಾನವ ಆತ್ಮಗಳೂ ಸಹ ಅವುಗಳ ನೆಚ್ಚಿನ ದೇವರನ್ನು ನೆನೆಯುತ್ತಿರುವಾಗ, ನಮ್ಮೆಲ್ಲರ ಮೊರೆಯನ್ನು ಏಕ ಕಾಲದಲ್ಲಿ ದೇವರುಗಳನ್ನು ತಲುಪಿಸುತ್ತಿರುವ  ಕಮ್ಯುನಿಕೇಷನ್ ನೆಟ್‌ವರ್ಕ್‌ನಲ್ಲಿಯೂ ಸಹ ಕಂಜೆಷನ್ ಇರುವುದರಿಂದ, ಬ್ಯಾಂಡ್‌ವಿಡ್ತ್ ಸಮಸ್ಯೆಗಳು ಖಂಡಿತ ಇರಬಹುದು.  ಅಂತೆಯೇ ವಿಶ್ವದ ಏಳೂ ಮುಕ್ಕಾಲು ಬಿಲಿಯನ್ ಮಾನವ ರೂಪದಲ್ಲಿನ ಆತ್ಮಗಳು ಅರ್ಧ ಸತ್ತ (ಅಥವಾ ಅರ್ಧ ಬದುಕಿರಬಹುದಾದ) ಜೀವಿಯ ವಿರುದ್ಧ ರಕ್ಷಿಸು ಎಂದು ಮೊರೆ ಹೊತ್ತಿರುವಾಗ, ದಶಾವತಾರದ ನಂತರ ಮುಂದಿನ ಅವತಾರ ಏನಾಗಬಹುದು ಎಂದು ದೇವರೂ ಯೋಚಿಸಬೇಕಾಗುತ್ತದೆ.

೧. ಮೀನಾಗಿ ಬಂದವನು ಪ್ರಳಯದಿಂದ ರಕ್ಷಿಸಿದ
೨. ಆಮೆಯಾಗಿ ಬಂದವನು ಸಮುದ್ರ ಮಂಥನದ ಭಾರವನ್ನು ಹೊತ್ತ
೩. ಹಂದಿಯಾಗಿ ಬಂದವನು ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ
೪. ನರಸಿಂಹನಾಗಿ ಬಂದವನು ಸಾವೇ ಇಲ್ಲದ ಹಿರಣ್ಯಕಷ್ಯಪುವನ್ನು ಸಂಹರಿಸಿದ
೫. ಕುಳ್ಳನಾಗಿ ಬಂದವನು ಬಲಿಯನ್ನು ಪಾತಾಳಕ್ಕೆ ತಳ್ಳಿದ
೬. ಕೊಡಲಿ ರಾಮನಾಗಿ ಬಂದು ಕ್ಷತ್ರಿಯ ಸಂಹಾರಕ್ಕೆ ಇಳಿದು, ಮಹೇಂದ್ರಗಿರಿಯಲ್ಲಿ ಚಿರಂಜೀವಿಯಾಗಿ ನೆಲೆಸಿದ
೭. ರಾಮನಾಗಿ ರಾವಣ ಸಂಹಾರ ಮಾಡಿದ
೮. ಕೃಷ್ಣನಾಗಿ ಕೌರವ ಸಂಹಾರ ಮಾಡಿದ (ಬಲರಾಮನ ಶೇಷನ ಅವತಾರವೂ ಇದೇ ಅವಧಿಯಲ್ಲಿ ಸೇರುತ್ತದೆ)
೯.  ಬುದ್ಧನಾಗಿ ಎಲ್ಲರಿಗೂ ಬೋಧಿಸಿದ
೧೦. ಕಲ್ಕಿಯಾಗಿ ಬಿಳಿಯ ಕುದುರೆಯನ್ನೇರಿ ಕಲಿಯುಗದ ಉದ್ದಕ್ಕೂ ಉಲ್ಕಾಪಾತವಾಗಿ ತಿರುಗುತ್ತಿದ್ದಾನೆ... ಕಲಿಯುಗದಲ್ಲಿ ಅಧರ್ಮ ತಾಂಡವವಾಡಿದರೆ ಮತ್ತೆ ಬಂದೇ ಬಿಟ್ಟಾನು, ಉಲ್ಕೆಯಾಗಿ ಅಪ್ಪಳಿಸುವ ಮುಖೇನ ಪ್ರಜ್ವಲಿಸಿಬಿಟ್ಟಾನು!

ಪ್ರಭೂ! ಈ ಕಣ್ಣಿಗೆ ಕಾಣದ ಜೀವಿಯಿಂದ ನಮ್ಮೆಲ್ಲರ ರಕ್ಷಣೆ ಹೇಗೆ ಸಾಧ್ಯ? ನೀನೇನಾದರೂ ವಿಶೇಷ ವಿಕಿರಣಗಳನ್ನು ಹೊರಸೂಸಿ ಗಾಳಿಯಲ್ಲಿನ ಈ ಅಣುಜೀವಿಗಳನ್ನು ಮಾತ್ರ ನಾಶಪಡಿಸಿದರೆ ಆಗಬಹುದು! (ಮಾನವನಿಂದ ನಿರ್ನಾಮವಾಗುತ್ತಿರುವ ಜೀವಿಗಳ ಮೊರೆಯನ್ನೇಕೆ ನೀನು ಆಲಿಸುತ್ತಿಲ್ಲ? ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ, ಅದೇಕೆ? ಮಾನವರಲ್ಲದ ಜೀವಿಗಳು ನಿನ್ನ ಮಕ್ಕಳಲ್ಲವೇನು?)

***
ಒಂದು ವಸ್ತು ಇಲ್ಲದಾಗಲೇ ಅದರ ಬೆಲೆ ಗೊತ್ತಾಗುವುದಂತೆ.  ಈ "ವಸ್ತು"ಗಳ ಪಟ್ಟಿಯಲ್ಲಿ ನಮ್ಮ "ಸ್ವಾತಂತ್ರ್ಯ"ವೂ ಸೇರಿದೆ.  ನಾವೆಲ್ಲ ಸಂಘಜೀವಿಗಳು.  ನಮ್ಮ ನಮ್ಮ ಮನೆಗಳಲ್ಲಿ ನಮಗೆ ಬೇಕಾದ ಐಶಾರಾಮ, ಭೌತಿಕವಸ್ತುಗಳು, ನಮ್ಮವರು, ಮುಖ್ಯವಾಗಿ ಸಮಯ, ಇವೆಲ್ಲ ಇದ್ದಾಗಲೂ ಕೂಡ ನಮ್ಮಲ್ಲಿ ಏನೋ ಒಂದು ಅಪರಿಪೂರ್ಣ ಭಾವನೆ ತುಂಬಿಕೊಳ್ಳೋದಿಲ್ಲವೇ? ಹಾಗೆ. ಈ ಆಯ್ಕೆಯನ್ನು -  ಸ್ವಾತಂತ್ರ್ಯ, ಮುಕ್ತಿ, ತೆರವು, ಬಿಡುಗಡೆ, ಅನಿರ್ಬಂಧಿತ ಸ್ಥಿತಿ, ವಿಮೋಚನೆ, ಸ್ವಚ್ಛಂದತೆ, ಸ್ವತಂತ್ರತೆ - ಎನ್ನುವ ಅನೇಕ ಪದಗಳಲ್ಲಿ ನಾವು ಅಳೆದರೂ ಅದರ ಮಹತ್ವವನ್ನು ಅಷ್ಟು ಸುಲಭವಾಗಿ ಸಾರಲಾಗುವುದಿಲ್ಲ.  ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿರುವ ಯಾವುದೇ ಮಾಹಿತಿ-ಮನರಂಜನೆಯನ್ನು ನೋಡಿದರೂ ಮನ ತುಂಬದು.  ಅದೇ, ಅಪರೂಪಕ್ಕೊಮ್ಮೆ ಕರೆ ಮಾಡುವ ಹಳೆಯ ಸ್ನೇಹಿತರನ್ನು ಯಾವಾಗ ಬೇಕಾದರೂ ಆಗ ಕರೆ ಮಾಡಿ ಮಾತನಾಡಿ, ನಿಮಗೆ ಗೊತ್ತಿಲ್ಲದಂತೆ ಒಂದು ಘಂಟೆ ಆರಾಮವಾಗಿ ಕಳೆದುಹೋಗುತ್ತದೆ.  ನಮ್ಮ ನಮ್ಮ ಗೂಡುಗಳಲ್ಲಿ ನಮ್ಮನ್ನು ಕಟ್ಟಿ ಹಾಕಿದ್ದರೂ ಸಹ, ಈ ಕೋವಿಡ್ ದೆಸೆಯಿಂದ ನಾವೆಲ್ಲರೂ ದೂರವಿದ್ದೂ ಹತ್ತಿರವಾಗಿದ್ದೇವೆ ಎನ್ನಬಹುದು.  ಆಯ್ಕೆ, ಸ್ವಾತಂತ್ರ್ಯ, ಸಹಬಾಳ್ವೆಯ ಸಮತೋಲನದಲ್ಲಿ ನಮಗೆಲ್ಲ ಬದುಕಿನ ಗಂಭೀರ ಮುಖವನ್ನು ದರ್ಶನ ಮಾಡಿಸಿದ ಕೋವಿಡ್‌ಗೆ ಜೈ॒!

Wednesday, August 18, 2010

ಎಂಥಾ ಪ್ರಖರವಾದ ಸೂರ್ಯನೂ ಒಂದು ದಿನ ಸತ್ತು ಹೋಗುತ್ತಾನಂತೆ...

ಇದೇ ನಮ್ಮ ತಪ್ಪು ಎನಿಸಿದ್ದು - ಬಿರು ಬೇಸಿಗೆಯ ನಡುವೆ ಮುಂಬರುವ ಛಳಿಗಾಲದ ಬಗ್ಗೆ ಮನದಲ್ಲಿ ಚಿಂತೆಯ ಬುಗ್ಗೆಗಳು ಏಳುತ್ತಿದ್ದಾಗ. ಮನೆಯ ಹೊರಗಿರುವ ಟಪಾಲು ಡಬ್ಬದಲ್ಲಿ ಕೈಯಾಡಿಸಿ ಅದರ ಅಂತಃಸತ್ವವನ್ನು ಎತ್ತಿ ಹಿಡಿದುಕೊಂಡು ಬರುತ್ತಿದ್ದಾಗ ಗಾಳಿಯ ಪದರಗಳಲ್ಲಿ ನಿಧಾನವಾಗಿ ತೇಲುತ್ತಾ ನನ್ನ ಮುಂದೆ ಬಿದ್ದಿದ್ದು ಒಂದು ಹಳದಿ ಎಲೆ. ಓಹ್, ಇನ್ನೂ ಕೆಲವೇ ದಿನಗಳಲ್ಲಿ ಹಣ್ಣಾಗಿ (ಕೆಂಪಾಗಿ) ಮಾಗಿ ಉದುರ ಬೇಕಾಗಿದ್ದ ಎಲೆಗಳಿಗೇಕೆ ಬದುಕಿನ ನಡುವಿನ ಹಳದಿಯಲ್ಲೇನು ವಿಯೋಗ ಎಂದು ಯೋಚಿಸಲಾರಂಭಿಸಿ, ಮುಂದಿನ ಕೆಲವು ಕ್ಷಣಗಳಲ್ಲಿ ನನ್ನ ಮನಸ್ಸು - ಇಂಥಾ ಬಿರು ಬೇಸಿಗೆಯ ನಡುವೆಯೂ ಮುಂಬರುವ ಛಳಿಗಾಲದ ಬಗ್ಗೆ ಯೋಚಿಸೋದೇ? ಛೇ, ಎನಿಸದೆ ಇರಲಿಲ್ಲ.

ನಾನು ಮೂರು ತಿಂಗಳ ಕೆಟ್ಟ ಛಳಿಗಾಲದ ನಡುವೆ ಎಷ್ಟೋ ಸಾರಿ ಬೇಸಿಗೆಯ ನೆನಪು ಮಾಡಿಕೊಂಡಿದ್ದೇನೆ, ಆದರೆ ಕೊರೆಯುವ ಛಳಿಯಲ್ಲಿ ನಿಂತು ಹಂಬಲಿಸುವ ಬೇಸಿಗೆಯ ನಿರೀಕ್ಷೆಗೂ, ಬಿಸಿಲಿನಲ್ಲಿ ಬಾಡುತ್ತಲೇ ದೂರ ತಳ್ಳುವ ಛಳಿಯ ಅರಿವಿಗೂ ವ್ಯತ್ಯಾಸವಿದೆ ಎನ್ನುವುದು ಈ ಹೊತ್ತಿನ ತತ್ವ. ಹಿತವಾದ ಅನುಭವಗಳು ಅಥವಾ ಅಹಿತವಾದ ನೆನಪುಗಳು ಇವುಗಳ ಸಂಗ್ರಹಣೆಗಾರ ಮಿದುಳಿನಲ್ಲಿ ಏನಾದರೂ ಭಿನ್ನವಾದ ಸಂಸ್ಕರಣೆ ಇದೆಯೇನು? ನಾವು ಆಶಾವಾದ, ಸುಖ, ಸಂತೋಷ, ನಗು, ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಪೇರಿಸಿಕೊಳ್ಳುತ್ತೇವೋ ಅಥವಾ ನಿರಾಶೆ, ದುಃಖ, ಅಳು ಮೊದಲಾದವುಗಳನ್ನು ಒಂದು ಕಡೆ ಒಟ್ಟುಗೂಡಿ ಮುನ್ನಡೆಯುತ್ತೇವೋ ಯಾರು ಬಲ್ಲರು?

ಇದು ಇಂದು-ನಿನ್ನೆಯ ಸತ್ಯವಷ್ಟೇ ಅಲ್ಲ, ನನ್ನ ಯಾವತ್ತಿನ ಅನುಭವವೂ ಹೌದು; ಈ ಕ್ಷಣದಲ್ಲಿನ ನಮ್ಮ ಅಗತ್ಯಗಳು ಎಂದಿಗೂ ಮಲತಾಯಿ ದೋರಣೆಗಳಿಗೆ ಒಳಪಟ್ಟು ಮನಸ್ಸು ಯಾವಾಗಲೂ ಮುಂಬರುವ ಕಾಲಮಾನದ ಬಗ್ಗೆ ಹೆಚ್ಚು ಸ್ಪಂದಿಸುತ್ತದೆ. ನಾವು ಆಧುನಿಕ ಬದುಕಿನ ಏನೇನೋ ಗೊಂದಲಗಳಲ್ಲಿ ಮುಂಬರುವ ದಿನಗಳ ಬಗ್ಗೆ ವಿಸ್ತಾರವಾದ ಯೋಜನೆಗಳನ್ನು ರೂಪಿಸುವ ಸಂಕೀರ್ಣದಲ್ಲಿ ತೊಡಗಿಕೊಂಡು ಪ್ರಸ್ತುತ ಸ್ಥಿತಿಯನ್ನು ಭೂತ(ಕಾಲ)ರಾಯನಿಗೆ ಬಲಿಕೊಡುತ್ತಾ ಹೋಗುತ್ತೇವೆ. ’ಇಂದು’ ಎನ್ನುವ ಹಲವಾರು ಉಗಿಬಂಡಿಯ ಡಬ್ಬಿಗಳು ಅನತಿ ದೂರದವರೆಗೆ ಹಾಸಿದ ಕಂಬಿಗಳ ಮೇಲೆ ಓಡುತ್ತಾ ನಿನ್ನೆಗಳಾಗಿ ಹಿಂದೆ ಸರಿಯುತ್ತಾ ಹೋದಂತೆ ಮಾತ್ರ, ಮುಂದೆ ಅಥವಾ ’ನಾಳೆ’ ಎನ್ನುವ ಅವಕಾಶ ಬರುತ್ತದೆ. ಅಗಮ್ಯವಾದ ನಾಳೆಗಳಲ್ಲಿ ಸಣ್ಣ ಪ್ರಮಾಣದ ’ಇಂದು’ ನಗಣ್ಯವಾಗುತ್ತದೆ.

ಎಂಥಾ ಪ್ರಖರವಾದ ಸೂರ್ಯನೂ ಸಹ ಒಂದಲ್ಲ ಒಂದು ದಿನ ಸತ್ತು ಹೋಗುತ್ತಾನಂತೆ. ಸಂಜೆ ಇನ್ನೂ ಹೊಳಪು ಕಳೆದುಕೊಳ್ಳದ ಅಲ್ಲಲ್ಲಿ ನಕ್ಷತ್ರಗಳನ್ನು ಚದುರಿಕೊಂಡು ಮುಸ್ಸಂಜೆಯಲ್ಲಿ ಮನೆಯ ಮುಂದಿನ ಅಂಗಳದಲ್ಲಿ ನೀರೆರಚಿ ಚಿತ್ರ ಬರೆದಂತೆ ಹರವಿಕೊಂಡಿದ್ದ ಆಕಾಶವನ್ನು ನೋಡಿದಾಗ ದೂರದ ಸಂಬಂಧಿಯೊಬ್ಬರು ದಿಢೀರನೆ ಪ್ರತ್ಯಕ್ಷವಾದ ಅನುಭವ ಬಂತು. ನಮ್ಮ ವ್ಯಸ್ತ ಬದುಕಿನಲ್ಲಿ ನಾವು ನೋಡೋದೇನಿದ್ದರೂ ನಮ್ಮ ಸುತ್ತಮುತ್ತಲು ಹರವಿದ ಸಣ್ಣಪುಟ್ಟ ಪರದೆಗಳು - ಕಿರುತೆರೆಗಳು, ಅನತಿ ದೂರದಲ್ಲಿ ಅಮಿತವಾಗಿ ಹರಡಿದ ಆ ವಿಶಾಲ ಪರದೆಯನ್ನು ನೋಡಿ ಅದೆಷ್ಟು ದಿನವಾಗಿತ್ತೋ ಎನ್ನುವ ಸೋಜಿಗದ ಜೊತೆಗೆ ಈ ನಕ್ಷತ್ರಗಳೂ ಒಂದಲ್ಲ ಒಂದು ಆ ಹಳದಿ ಎಲೆಯಂತೆ ಉದುರುತ್ತಾವೇನೂ ಎನ್ನಿಸದೆಯೂ ಇರಲಿಲ್ಲ. ನಿಶ್ಶಬ್ದದ ನಡುವೆ ಎದ್ದು ಬರುವ ಸಂಗೀತದ ಅಲೆಯಂತೆ ಸೂರ್ಯ-ಮೋಡಗಳಿಲ್ಲದ ನೀಲಾಕಾಶದಲ್ಲಿ ಅಲ್ಲಲ್ಲಿ ಮಿಂಚುವ ನಕ್ಷತ್ರಗಳು ತಮ್ಮದೇ ರಾಗದಲ್ಲಿ ತೊಡಗಿಕೊಂಡಿದ್ದವು. ನಮ್ಮನ್ನು ಸುತ್ತಿಕೊಂಡಿರುವ ಗೋಲಾಕಾರದ ಎಲ್ಲ ಅವಕಾಶಗಳಲ್ಲಿ ಆ ನಕ್ಷತ್ರಗಳು ನನ್ನಿಂದ ಎಷ್ಟು ದೂರವಿರಬಹುದು ಎಂಬ ಸರಳರೇಖೆಯ ಪ್ರಶ್ನೆಯನ್ನು ಹಾಕುವಷ್ಟು ಮನಸ್ಸು ಕ್ಷುಲ್ಲಕವಾಗಲಿಲ್ಲ, ಬದಲಿಗೆ ಸುತ್ತಲಿನಲ್ಲಿ ಎಲ್ಲವೂ ಸುತ್ತಿಕೊಂಡಿರುವಾಗ ನೇರದ ನೆರವೇಕೆ ಎಂದು ಜಗಳಕಾಯದೇ ಸುಮ್ಮನಾದ ಹಠವಾದಿಯಂತಾಯಿತು.

ಮುಂಬರುವ ನಾಳೆಗಳ ಪ್ರಶಂಸೆಗೋಸ್ಕರ ನಾವು ಇಂದನ್ನು ಬಲಿಕೊಡುತ್ತಾ ಇದ್ದೇವೇನೋ ಎಂದು ಯೋಚಿಸಿಕೊಳ್ಳುವಷ್ಟರಲ್ಲಿ ಮನಸ್ಸು ಒಂದು ಕಡೆ ಅರ್ಧ ದಾರಿ ಸವೆಸಿ ಮುಂದೆ ಎಲ್ಲಿ ಹೋಗಬೇಕು ಅಥವಾ ಹೋಗಬಾರದು ಎಂದು ಗೊಂದಲಕ್ಕೆ ಬಿದ್ದ ಪ್ರವಾಸಿಯಾದಂತಾಯಿತು. ಚಿಕ್ಕ-ಚಿಕ್ಕ ತೆರೆಗಳ ಮರೆಯಲ್ಲಿ, ಸಣ್ಣ-ಪುಟ್ಟವುಗಳಿಗೆ ಸ್ಪಂದಿಸಿ ಸೊರಗುವ ನಾವು ದೊಡ್ಡದರುಗಳ ಬಗ್ಗೆ ಆಲೋಚಿಸುವುದಾದರೂ ಎಂದು? ಈ ಇವತ್ತಿನ ದಿನದಲ್ಲಿ ಬದುಕುತ್ತ, ಈ ಘಳಿಗೆಯ ಮಹತ್ವವನ್ನು ಮೆರೆಯುವ ಒಂದು ಸಂಸ್ಕೃತಿಯ ದಾರಿಯಲ್ಲಿ, ನಿನ್ನೆ-ಇಂದು-ನಾಳೆಗಳ ಚೀಲಗಳ ಹೆಗಲಿಗ್ಯಾವಾಗಲೂ ಏರಿಸಿಕೊಂಡು ಬದುಕು ನೂಕಿದಂತೆ ಓಡುತ್ತಿರುವಾಗ ಉಬ್ಬಸ ಬರದೇ, ಆಯಾಸವಾಗದೇ ಇನ್ನೇನಾದೀತು?

Sunday, July 19, 2009

3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!

ಇದೇನಪ್ಪಾ, ಇತ್ತೀಚೆಗಷ್ಟೇ ಟೆಕ್ನಾಲಜಿ ಜ್ವರದಲ್ಲಿ ಬೆಂದು ಬಳಲಾಡುತ್ತಿರುವ ನಮ್ಮಂಥವರಿಗೆ ’ಅಂತರಂಗ’ದಲ್ಲಿ ನಿವೃತ್ತಿಯ ಬಗ್ಗೆ ಕಿವಿಮಾತೇ ಎಂದು ಹುಬ್ಬೇರಿಸಬೇಡಿ, ಮುಂದೆ ಓದಿ ನೋಡಿ. ಇತ್ತೀಚೆಗೆ ಒಂದಿಷ್ಟು ಕಮ್ಮ್ಯೂನಿಟಿ ಸೇವೆಯ ಹೆಸರಿನಲ್ಲಿ ನನಗೆ ಸೀನಿಯರ್ ಸಿಟಿಜನ್‌ಗಳ ಸೇವೆ ಮಾಡೋ ಭಾಗ್ಯ ಒದಗಿತ್ತು, ಈ ಸಂದರ್ಭದಲ್ಲಿ ಕಮ್ಯೂನಿಟಿ ಸೇವೆ ಮಾಡುತ್ತಲೇ ನಾನು ಮುಂದೆ ನಿವೃತ್ತನಾಗಿ ಇದೇ ಅವಸ್ಥೆಗೆ ಬಂದರೆ ಹೇಗಿರಬಹುದು ಎಂದು ಯೋಚಿಸಿ ಸ್ವಲ್ಪ ರಿಸರ್ಚ್ ಮಾಡಿ ನೋಡಲಾಗಿ ಹಲವಾರು ಅಂಶಗಳು ಹೊರಬಂದವು, ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಈ ಎಕಾನಮಿಯಲ್ಲಿ ನಿವೃತ್ತರಾಗೋ ಮಾತೇ ಬರೋದಿಲ್ಲ, ಆ ಮಾತು ಬಿಡಿ. ಮುಂದೆಯಾದರೂ ಸುಧಾರಿಸೀತು, ಇಲ್ಲವೆಂದಾದರೆ ನಮ್ಮಂಥವರ ಕಷ್ಟ ಯಾರಿಗೂ ಬೇಡ. ಎಷ್ಟೋ ಜನ ರಿಟೈರ್‌ಮೆಂಟ್ ಬದುಕಿಗೆ ಪ್ಲಾನ್ ಮಾಡೋದೇ ಇಲ್ಲ. ರಿಟೈರ್‌ಮೆಂಟ್ ಬದುಕಿನಲ್ಲಿ ಹಣ, ಹೊಣೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಆರೋಗ್ಯದ ಜೊತೆಗೆ ಇಷ್ಟೆಲ್ಲ ದಿನಗಳಲ್ಲಿ ವ್ಯಸ್ತರಾಗಿ ಕೆಲಸ ಮಾಡಿ ಕರ್ಮಜೀವನವನ್ನು ತೇಯ್ದ ನಮಗೆ ಮುಂದೆ ಕಾಲ ಕಳೆಯೋದಕ್ಕೆ ಏನು ಬೇಕು ಏನು ಬೇಡ ಅನ್ನೋದರ ತೀರ್ಮಾನವೂ ಬಹಳ ಮುಖ್ಯ.

ಸರಿ, ಈಗ ಮುತ್ತಿನಂತಹ ಮೂರು ಪ್ರಶ್ನೆಗಳಿಗೆ ಬರೋಣ:
೧. ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಹಾಗೂ ನಿಮಗೆ ಬೇಕಾದ ಹಣದ ಮೊತ್ತವೆಷ್ಟು?
೨. ರಿಟೈರ್ ಆದ ನಂತರ ಹೇಗೆ ಸಮಯವನ್ನು ವ್ಯಯಿಸುತ್ತೀರಿ, ಯಾವ ಯಾವ ಹವ್ಯಾಸಗಳನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸಿಕೊಳ್ಳುತ್ತೀರಿ?
೩. ನಿಮ್ಮ ಕಾಲಾನಂತರ ಯಾರು ಯಾರಿಗೆ ಏನನ್ನು ಬಿಟ್ಟು ಹೋಗುತ್ತೀರಿ?


ಈ ಮೂರು ಪ್ರಶ್ನೆಗಳನ್ನು ವಿಸ್ತರಿಸುವುದಕ್ಕೆ ಮೊದಲು "ILI ಪಾಷಾಣ"ಕ್ಕೆ ಬರೋಣ, ಏನು ಇಲಿ ಪಾಷಾಣ ಇದು ಎಂದು ಬೆರಗಾದಿರೋ, ಸುಲಭವಾಗಿ ನೆನಪಿಗೆ ಬರುವಂತೆ ಸುಮ್ಮನೆ ಒಂದು ಉಪಮೆಯ ಸೃಷ್ಟಿ ಅಷ್ಟೇ:
I: investment risk
L: longevity risk
I: inflation risk


ಈ ಮೇಲೆ ಹೇಳಿದ ಮೂರು ರಿಸ್ಕ್‌ಗಳೇ ಪಾಷಾಣವಿದ್ದ ಹಾಗೆ. ಪ್ರತಿಯೊಬ್ಬರೂ ತಾವು ನಿವೃತ್ತರಾಗಲು ತಯಾರಾಗುತ್ತ ಇದ್ದ ಹಾಗೆ, ಇಪ್ಪತ್ತರ ಹರೆಯದಿಂದ ಎಪ್ಪತ್ತರವರೆಗೆ ಈ ಮೂರು ರಿಸ್ಕ್‌ಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಲೇ ಇರಬೇಕಾಗುತ್ತದೆ. Investment risk ನಲ್ಲಿ ನೀವು ಹೂಡಿದ ಹಣ ನೀವು ರಿಟೈರ್ ಆಗುವ ಹೊತ್ತಿಗೆ ಯಾವುದೋ ಒಂದು ರಿಸೆಷ್ಷನ್ನೋ ಇಲ್ಲಾ ಡಿಪ್ರೆಷ್ಷನ್ನ್ ಚಕ್ರದಲ್ಲಿ ಸಿಕ್ಕು ನರಳುತ್ತಿರಬಹುದು. Longevity risk ಅಂದರೆ ನೀವು ಎಂಭತ್ತು ವರ್ಷ ಬದುಕುತ್ತೀರಿ ಎಂದು ಅದಕ್ಕೆ ತಕ್ಕಂತೆ ಹಣ ಹೂಡಿ ಕೂಡಿ ಹಾಕಿ ಮುಂದೆ ಇಳಿ ವಯಸ್ಸಿನಲ್ಲಿ ನೀವು ತೊಂಭತ್ತು ಆದರೂ ಗೊಟಕ್ ಎನ್ನದೇ ಇರಬಹುದು. Inflation risk ನಲ್ಲಿ ಈಗ ಎರಡು ರುಪಾಯಿ ಅಥವಾ ಡಾಲರ್‌ಗೆ ಸಿಗಬಹುದಾದ ಪದಾರ್ಥ ಮುಂದೆ ಇಪ್ಪತ್ತು ರುಪಾಯಿ ಅಥವಾ ಡಾಲರ್ ಗಿಂತಲೂ ದುಬಾರಿಯಾಗುವುದು.

ಮೊದಲನೆಯ ಪ್ರಶ್ನೆ: ಹೂಡಿಕೆಯ ಹಣಕ್ಕೆ ಅಂಟಿಕೊಂಡ ತೊಂದರೆಗಳು ಯಾವು ಯಾವು? ಇಂಟರ್‌ನೆಟ್ ನಲ್ಲಿ ಹುಡುಕಿದರೆ ಬೇಕಾದಷ್ಟು ರಿಟೈರ್‌ಮೆಂಟ್ ಕ್ಯಾಲ್ಕುಲೇಟರುಗಳು ಸಿಗುತ್ತವೆ, ನಿಮ್ಮ ಈಗಿನ ಆದಾಯ ಹಾಗೂ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ಜೀವನಕ್ಕೆ ಎಷ್ಟು ಬೇಕು ಎಂದು ಅಂದಾಜು ಹಾಕುವುದಕ್ಕೆ. ಅಲ್ಲದೇ, ನಿವೃತ್ತ ಜೀವನದ ಪ್ರತಿವರ್ಷದ ಖರ್ಚಿಗೆ ಎಷ್ಟು ಬೇಕಾಗುತ್ತದೆ ಎನ್ನುವುದರ ಜೊತೆಗೆ ಇಂತಿಷ್ಟು ಹಣದಲ್ಲಿ ಕೇವಲ 4 ಅಥವಾ 5% ಹಣವನ್ನು ಮಾತ್ರ ತೆಗೆಯುವಂತೆ ಬೇಕಾಗುವ ಇಡುಗಂಟನ್ನು ರೂಪಿಸುವ ತಯಾರಿ ಹಾಗು 5% ನ ಮಿತಿಯಲ್ಲಿರುವಂತೆ ಒಂದು ಮೂಲಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಎರಡನೆಯ ಪ್ರಶ್ನೆ: ಸರಿ, ಕಷ್ಟದ ಜೀವನವನ್ನು ಸವೆಸಿ ನಿವೃತ್ತರೇನೋ ಆದಿರಿ, ಮುಂದೆ ಏನು? ದಿನಾ ಕೆಲಸ ಕೆಲಸ ಎಂದು ಗೋಗರೆದು ಹತ್ತಿರ ಬಂದ ಹವ್ಯಾಸಗಳು, ಅವಕಾಶಗಳು ಹಾಗೂ ಕನಸುಗಳನ್ನೆಲ್ಲ ದೂರ ತಳ್ಳಿಕೊಂಡು ಮೂರು ನಾಲ್ಕು ದಶಗಳನ್ನು ದೂರ ತಳ್ಳಿದ ನಂತರ ಒಂದು ದಿನ ದಿಢೀರ್ ಎಂದು ಹಳೆಯ ಹವ್ಯಾಸಗಳಿಗೆ ಅಂಟಿಕೊಳ್ಳುತ್ತೇನೆ ಎನ್ನುವುದು ಹುಡುಗಾಟಿಕೆಯೇ ಸರಿ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ, ದೇಹಸ್ಥಿತಿ ನೆಟ್ಟಗಿರಬೇಕು. ಓದುವುದಕ್ಕೆ, ಬರೆಯುವುದಕ್ಕೆ, ತಿರುಗಾಡುವುದಕ್ಕೆ, ಆಡುವುದಕ್ಕೆ ಸಮಯ ಒಂದಿದ್ದರೆ ಸಾಲದು - ಹಣ ಬೇಕು ಹಾಗೂ ದೇಹದಲ್ಲಿ ಬಲಬೇಕು ಜೊತೆಗೆ ಎಲ್ಲವೂ ಸುಸ್ಥಿತಿಯಲ್ಲಿರಬೇಕು. ಸುಮ್ಮನೆ ಒಂದು ನಿಮಿಷ ಕಣ್ಣು ಮುಚ್ಚಿ ನೀವು ನಿವೃತ್ತರಾದ ಹಾಗೆ ಊಹಿಸಿಕೊಳ್ಳಿ: ಮನೆ ಇದೆ, ಸಾಲವೆಲ್ಲ ತೀರಿದೆ, ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಸುಂದರವಾದ ಬೇಸಿಗೆಯ ದಿನ, ಊಟ ತಿಂಡಿ ಮನೆ ಕೆಲಸ ಎಲ್ಲವೂ ಆಗಿ ನಿಮ್ಮ ಬಳಿ ಐದರಿಂದ ಎಂಟು ಘಂಟೆ ಖಾಲಿ/ಫ್ರೀ ಇದೆ - ಏನು ಮಾಡುತ್ತೀರಿ? ನಿಮ್ಮ ಸ್ನೇಹಿತರು ಯಾರು, ನಿಮ್ಮ ಹವ್ಯಾಸಗಳೇನು, ನಿಮಗೇನು ಇಷ್ಟ, ನಿಮಗೇನು ಕಷ್ಟ, ನಿಮಗೇನು ಬೇಕು, ಎಲ್ಲಿ ಹೋಗುತ್ತೀರಿ, ಹೇಗೆ ಹೋಗುತ್ತೀರಿ, ಇತ್ಯಾದಿ. ಹೆದರಿಕೆಯಾಯಿತೇ? ಅಥವಾ ಸಂತೋಷವಾಯಿತೇ? ಈ ಒಂದು ನಿಮಿಷದ ನಿವೃತ್ತ ಬದುಕಿನ ಪಯಣದ ಬಗ್ಗೆ ಏನೆನ್ನೆಸಿತು?

ಮೂರನೆಯ ಪ್ರಶ್ನೆ: ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದೋರು ಈ ಕಾಲದವರಂತೂ ಖಂಡಿತ ಅಲ್ಲ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎನ್ನೋದೂ ಪೂರ್ತಿ ನಿಜವಲ್ಲ - ಎಂದು ವಾದ ಮಾಡೋ ಸಮಯವಿದಲ್ಲ. ನೀವು ಇಷ್ಟು ವರ್ಷ ಇದ್ದು ಅದೇನೇನೋ ಮಾಡಿ ಹೋಗುವಾಗ ನಿಮ್ಮನ್ನು ಆಧರಿಸಿಕೊಂಡವರಿಗೆ ಸ್ವಲ್ಪವನ್ನೂ ಬಿಟ್ಟು ಹೋಗೋದಿಲ್ಲವೇನು? ಮುಂದೆ ನಿಮ್ಮ ರಿಟೈರ್ ಮೆಂಟ್ ಅಕೌಂಟಿನಲ್ಲಿ ಪ್ರತಿವರ್ಷ 4 ರಿಂದ 5 % ಹಣವನ್ನು ತೆಗೆದು ಜೀವನ ನಡೆಸುತ್ತೀರಲ್ಲ, ನಿಮ್ಮ ನಂತರ ಅದರ ಬಂಡವಾಳ ಅಥವಾ ಮೂಲಧನ ಯಾರಿಗೆ ಸಿಗಬೇಕು? ಅದರಲ್ಲಿ ಟ್ಯಾಕ್ಸ್‌ನ ಪಾಲು ಎಷ್ಟು? ಯಾವ ಯಾವ ಬೆನಿಫಿಷಿಯರಿಗೆ ಎಷ್ಟು ಹಣ/ವರಮಾನ/ಆಸ್ತಿ ಇತ್ಯಾದಿಗಳನ್ನು ಯಾವ ರೂಪದಲ್ಲಿ ಬಿಟ್ಟು ಹೋಗುತ್ತೀರಿ ಎನ್ನುವುದಕ್ಕೂ ಬಹಳ ಯೋಚಿಸಬೇಕಾಗುತ್ತದೆ, ಒಳ್ಳೆಯ ಪ್ಲಾನ್ ಅಥವಾ ಸಿದ್ಧತೆ ಬೇಕಾಗುತ್ತದೆ.

***

ಈಗೆನ್ನನ್ನಿಸಿತು? ಮೊದಲು ಯಾವುದಾದರು ಕಮ್ಯೂನಿಟಿ ಸೆಂಟರಿನಲ್ಲಿ ಸೀನಿಯರ್ ಸಿಟಿಜನ್ ಸೇವೆಗೆ ವಾಲೆಂಟಿಯರ್ ಆಗಿ. ನಿಮ್ಮ ನಿವೃತ್ತ ಜೀವನದ ಮುಂಬರುವ ದಿನಗಳನ್ನು ನೀವೇ ತ್ರೀ ಡೀ ಕಲರ್ ಚಿತ್ರಗಳಲ್ಲಿ ನೋಡಿ. ಅವರ ಸ್ಥಾನದಲ್ಲಿ ನಿಮ್ಮನ್ನು ಗುರುತಿಸಿಕೊಂಡು ಈಗಿನ ಕಾದಾಟ/ಬಡಿದಾಟಗಳನ್ನು ಕಡಿಮೆ ಮಾಡಿ ILI ಪಾಷಾಣದ ಬಗ್ಗೆ ಕೊರಗಿ.

ನಾನು ಯಾವಾಗಲೂ ಬರೆಯೋ ಹಾಗೆ ಅಥವಾ ಹೇಳೋ ಹಾಗೆ ಬದುಕು ಬಹಳ ದೊಡ್ಡದು - ಮೈ ತುಂಬ ಸುಕ್ಕುಗಳನ್ನು ಕಟ್ಟಿಕೊಂಡು ಹುಟ್ಟಿ ಬಂದ ನಾವು ಸುಕ್ಕು ಸುಕ್ಕಾಗೇ ಸಾಯೋದು, ಪ್ರಾಣಿ ಸಂಕುಲದಲ್ಲಿ ಮಾನವರು ಈಗ ತಾನೆ ಹುಟ್ಟಿದ ಅಸಹಾಯಕ ಮಕ್ಕಳಿಂದ ಹಿಡಿದು ಅಸಹಾಯಕ ವೃದ್ದಾಪ್ಯದ ಅವಸ್ಥೆಯವರೆಗೆ ಅನುಭವಿಸೋದು ಬಹಳಷ್ಟಿದೆ. ಮಿದುಳು ಘಂಟೆಗೆ ನೂರು ಮೈಲಿ ವೇಗದಲ್ಲಿ ಓಡಿದರೂ ಮೈ ಬಗ್ಗೋದಿಲ್ಲ. ಮುವತ್ತರ ನಂತರ ಒಂದೊಂದೇ ಕೀಲುಗಳೂ ಕಿರುಗುಟ್ಟುವುದು ಸಾಮಾನ್ಯ. ಅಟೋಮೊಬೈಲನ್ನು ಆಗಾಗ್ಗೆ ಸರ್ವಿಸ್ ಮಾಡಿಸೋ ಹಾಗೆ ನಮ್ಮ ದೇಹಕ್ಕೂ ನಿರಂತರ ಸರ್ವಿಸ್/ಸೇವೆ ಅಗತ್ಯ. ಮಕ್ಕಳಿಂದ ಮುದುಕರ ಅವಸ್ಥೆಯಲ್ಲಿ ಅಗತ್ಯಗಳು ಬೇರೆ ಬೇರೆ. ಧೀರ್ಘ ಆಯುಷ್ಯ ಅನ್ನೋದು ದೊಡ್ಡದು, ಆದರೆ ಅಲ್ಲಿಯವರೆಗೆ ಹೋಗಿ ಸಸ್ಟೈನ್ ಆಗೋದು ಇನ್ನೂ ದೊಡ್ಡದು.

Sunday, November 16, 2008

ತುಮಕೂರಿನ ಶಾಲೆಯೂ ಬಡ್‌ಲೇಕಿನ ವೈನ್ ಅಂಗಡಿಯೂ...

ನವೆಂಬರ್ ಮಾಸದಲ್ಲಿ ಕನ್ನಡ-ಕನ್ನಡಿಗರ ಬಗ್ಗೆ ಬರೆಯದಿದ್ದರೆ ಅಪಚಾರವಾದಂತಲ್ಲವೇ?! ನಮ್ಮ ಕನ್ನಡಿಗರು ಯಾರು ಎಂದು ವ್ಯಾಖ್ಯಾನಿಸೋದು ಹಾಗಿರಲಿ, ದೇಶ-ವಿದೇಶಗಳ ಜನರಿಗೆ ವಿದ್ಯೆ ಹಂಚುವ ನಮ್ಮ ಕರುನಾಡಿನ ಸಂಸ್ಥೆಗಳಲ್ಲಿ ಓದಿದವರನ್ನು, ಕೊನೇಪಕ್ಷ ಕರ್ನಾಟಕದಲ್ಲಿ ಒಂದೈದು ವರ್ಷ ಕಳೆದವರನ್ನು ಕನ್ನಡಿಗರು ಎಂದು ನಾವು ಗಣನೆಗೆ ತೆಗೆದುಕೊಂಡಿದ್ದೇ ಆದರೆ ಐದು ಕೋಟಿ ಕನ್ನಡಿಗರ ಸಂಖ್ಯೆ ಬೆಳೆಯೋದಂತೂ ನಿಜ, ಆದರೆ ಕರ್ನಾಟಕದಲ್ಲಿ ಒಂದೈದು ವರ್ಷ ಓದಿ ಬೆಳೆದರೂ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಅನ್ನೋ ಅಷ್ಟು ಮಟ್ಟಿಗೆ ಮಾತ್ರ ನಮ್ಮಲ್ಲಿಯ ವಿಸಿಟರುಗಳಿಗೆ ಕನ್ನಡ ಕಲಿಸೋದು ನಮ್ಮ ಉದಾರತೆ ಅಲ್ಲದೇ ಮತ್ತಿನ್ನೇನು?

ನಾವಿರುವ ಫ್ಲಾಂಡರ್ಸ್ ಊರಿನ ಅದೇ ಮೌಂಟ್ ಆಲಿವ್ ಟೌನ್‌ಶಿಪ್‌ಗೆ ಹೊಂದಿಕೊಂಡಿಂತಿರುವ ಊರೇ ಬಡ್ ಲೇಕ್. ಒಂದು ಎಂಟು ಸಾವಿರ ಜನರಿರುವ ಪುಟ್ಟ ಊರು, ಇಲ್ಲಿ ನಾವು ಕೆಲವು ಅಂಗಡಿಗಳಿಗೆ ಹೋಗಿ ಬರೋದು ಇದೆ, ಅವುಗಳಲ್ಲಿ ಸ್ಯಾಂಡಿಸ್ ಡಿಸ್ಕೌಂಟ್ ಲಿಕರ್ ಶಾಪ್ (Sandy's) ಕೂಡಾ ಒಂದು. ನಾನು ಮೊದಲು ಹೋದಾಗ ಇದು ಭಾರತೀಯ ಮೂಲದವರೊಬ್ಬರು ನಡೆಸುತ್ತಿರುವ ಸಣ್ಣ ಬಿಸಿನೆಸ್ ಎಂದು ಗೊತ್ತೇ ಇರಲಿಲ್ಲ, ಆ ಬಗ್ಗೆ ತಲೆಕೆಡಿಸಿಕೊಂಡಿರಲೂ ಇಲ್ಲ. ನಂತರ ಭೇಟಿ ನೀಡಿದಾಗ ಅಂಗಡಿಯ ಓನರ್ ಅನ್ನು ಕೇಳಿಯೇ ಬಿಟ್ಟೆ (ನಮ್ಮ ಸಂಭಾಷಣೆ ಇಂಗ್ಲೀಷ್-ಹಿಂದಿ ಮಿಶ್ರ ಭಾಷೆಯಲ್ಲಿ ನಡೆಯುತ್ತಿತ್ತು) - ತಾವು ಎಲ್ಲಿಯವರು ಎಂಬುದಾಗಿ. ಅವರು ಗುಜರಾತಿನ ಮೂಲದವರು ಎಂಬುದು ಗೊತ್ತಾಯಿತು. ನನ್ನ ಬಗ್ಗೆ ವಿಚಾರಿಸಿದ್ದಕ್ಕೆ ನಾವು ಕರ್ನಾಟಕದವರು ಎಂದು ಪರಿಚಯಿಸಿಕೊಂಡೆ. ’ಕರ್ನಾಟಕದಲ್ಲಿ ಎಲ್ಲಿ?’ ಎಂದು ಕೇಳಿದ್ದಕ್ಕೆ ಆಶ್ಚರ್ಯವಾಗಿ ’ಶಿವಮೊಗ್ಗ’ ಎಂದು ಉತ್ತರಕೊಡಲು, ’I know that place!' ಎಂಬ ಉತ್ತರ ಬಂತು.

ಶಿವಮೊಗ್ಗದ ಬಗ್ಗೆ ಹೇಗೆ ಗೊತ್ತು ಎಂದು ಕೆದಕಿ ಕೇಳಲು, ಅವರು ತುಮಕೂರಿನ ಸಿದ್ಧಗಂಗಾ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದೂ ತಿಳಿಯಿತು. ಉದ್ದೇಶ ಪೂರ್ವಕವಾಗಿ ಕೇಳಿದ ನನ್ನ ಮುಂದಿನ ಪ್ರಶ್ನೆ - ಕನ್ನಡದ ಪೆನೆಟ್ರೇಷನ್ ಅಥವಾ ಪ್ರಚಾರದ ಬಗ್ಗೆ - ’ಹಾಗಾದರೆ ನಿಮಗೆ ಕನ್ನಡ ಬರುತ್ತೆ!’ ಎನ್ನುವುದಕ್ಕೆ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಎನ್ನುವ ಉತ್ತರ ಬಂತು. ಅವರ ಶ್ರೀಮತಿಯವರ ಹೆಸರು ಸಂಧ್ಯಾ ಎಂದು, ಅದನ್ನೇ ಬದಲಾಯಿಸಿ Sandy ಮಾಡಿಕೊಂಡಿದ್ದೂ ಗೊತ್ತಾಯಿತು.

***

ನಮ್ಮ ಹುಟ್ಟು-ಬೆಳವಣಿಗೆ-ವಿದ್ಯಾಭ್ಯಾಸ ಹಾಗೂ ನಾವು ಎಲ್ಲಿ (ಎಲ್ಲೆಲ್ಲಿ) ನೆಲೆಸುತ್ತೇವೆ ಎನ್ನೋದನ್ನು ಯೋಚಿಸಿಕೊಂಡಾಗ ಬಹಳಷ್ಟು ವಿಚಾರಗಳು ತಲೆತಿನ್ನತೊಡಗುತ್ತವೆ. ಭಾರತೀಯ ಸಂಜಾತ ಇಂಜಿನಿಯರ್ ಒಬ್ಬರು ಅಮೇರಿಕದ ಒಂದು ಸಣ್ಣ ಪಟ್ಟಣದಲ್ಲಿ ಡಿಸ್ಕೌಂಟ್ ಲಿಕರ್ ಎನ್ನುವ ಸ್ಮಾಲ್ ಬಿಸಿನೆಸ್ ನಡೆಸುತ್ತಿರುವುದು ಇಲ್ಲಿಯ ಚರ್ಚೆಯ ವಿಷಯ. ಪ್ರತಿಯೊಬ್ಬರದೂ ಅವರವರ ಜೀವನ ಶೈಲಿ - ಅದರಲ್ಲಿ ತಪ್ಪೇನೂ ಇಲ್ಲ.

ಇಲ್ಲಿಗೆ ನನಗೆ ಹೊಳೆದ ಅಂಶಗಳನ್ನು ಇಲ್ಲಿ ಬರೆದು ಹಾಕುತ್ತೇನೆ, ಅವುಗಳು ಯಾವುದೇ ರೀತಿಯ ಚರ್ಚೆಯನ್ನು ಮೂಡಿಸಲೂ ಬಹುದು, ಇರದೆಯೂ ಇರಬಹುದು:
- ನಾನು ಇಂಜಿನಿಯರ್ ಆಗುತ್ತೇನೆ ಎಂದು ಕನಸುಕಂಡು ಭಾರತೀಯ ವ್ಯವಸ್ಥೆಯಲ್ಲಿ ಇಂಜಿನಿಯರ್ ಆಗಿ ಹೊರಬಹುದಾದ ಪಧವೀದರನ ಹಿನ್ನೆಲೆ
- ಭಾರತದಲ್ಲಿ ಒಬ್ಬ ಇಂಜಿನಿಯರ್ ಅನ್ನು ಹೊರತರಲು ಸಮಾಜ ತೊಡಗಿಸುವ ಸಂಪನ್ಮೂಲಗಳು
- ಅಮೇರಿಕಕ್ಕೆ ಕನಸುಗಳನ್ನು ಹೊತ್ತುಕೊಂಡು ಬಂದು ಇಲ್ಲಿಯ ವ್ಯವಸ್ಥೆಯಲ್ಲಿ ಒಂದು ಸಣ್ಣ ಉದ್ಯಮವನ್ನು ಹುಡುಕಿಕೊಂಡು ಇಲ್ಲೇ ನೆಲೆಸುವ ನಿರ್ಧಾರವನ್ನು ಕೈಗೊಳ್ಳುವುದರ ಹಿಂದಿರುವ ಮನಸ್ಥಿತಿ
- ’ತಾನೇನು ಆಗಬೇಕು’ ಎನ್ನುವ ಗುರಿ ಹಾಗೂ ’ತಾನೆಲ್ಲಿ ತಲುಪಬಲ್ಲೆ / ತಲುಪಿದ್ದೇನೆ’ ಎನ್ನುವ ನಿಜ ಸ್ಥಿತಿಗಳ ವ್ಯತ್ಯಾಸ, if any
- ಅಮೇರಿಕದಲ್ಲಿದ್ದವರದೆಲ್ಲ ಗ್ರ್ಯಾಂಡ್ ಜೀವನವವಲ್ಲ ಎನ್ನುವ ಸಮಜಾಯಿಷಿ, ಒಂದು ಸಣ್ಣ ಉದ್ಯಮ ಬಹಳ ಫ್ರಾಫಿಟೆಬಲ್ ಆಗಿಯೂ ಇರಬಹುದು ಹಾಗೆ ಇರದಿರಲೂ ಬಹುದು
- ಹೀಗೆ ವಲಸೆಗಾರರಾಗಿ ಬಂದವರು ಮತ್ತು ಅವರ ಮುಂದಿನ ಸಂತತಿಗಳು ಸಮಾಜದ ಬೇರೆ ಬೇರೆ ಸ್ಥರಗಳಲ್ಲಿ ನೆಲೆನಿಲ್ಲಬಹುದಾದ ಬೆಳವಣಿಗೆ (ಒಬ್ಬ ಉದ್ಯಮದಾರ ಅಥವಾ ಪ್ರೊಫೆಷನಲ್ ಕುಟುಂಬದ ಹಿನ್ನೆಲೆಯವರ ಸಂತತಿ ಹಾಗೇ ಮುಂದುವರೆಯಬಹುದು ಎನ್ನುವ ಕಲ್ಪನೆಯ ವಿರುದ್ಧ ಹಾಗೂ ಪೂರಕವಾಗಿ)

***

’ನೀನು ದೊಡ್ಡವನಾದ ಮೇಲೆ ಏನಾಗ್ತೀಯೋ?’ ಅಂದ್ರೆ ನಾನಂತೂ ಮೊದಲೆಲ್ಲ ’ಪೈಲಟ್!’ ಅಂತಿದ್ದೆ. ನಮ್ಮ ವಂಶದವರು ಯಾವತ್ತೂ ಹತ್ತಿ ಕೂರದಿದ್ದ ಆಕಾಶಪಕ್ಷಿಯನ್ನು ನಡೆಸುವ ಕಾಯಕವೆಂದರೆ ಸುಮ್ಮನೆಯೇ? ಅವೆಲ್ಲ ನಾಲ್ಕನೇ ಕ್ಲಾಸು ಮುಗಿಸಿ ಮಾಧ್ಯಮಿಕ ತರಗತಿಗಳನ್ನು ತಲುಪುತ್ತಿದ್ದ ಹಾಗೆ ಬದಲಾದ ಹಾಗೆ ನೆನಪು. ನಾನು ಇವತ್ತು ನಡೆಸಿಕೊಂಡು ಬರುತ್ತಿರುವ ಪ್ರಾಜೆಕ್ಟ್ ಮ್ಯಾನೇಜರ್ ಕೆಲಸವನ್ನಂತೂ ನಾನೂ ಒಂದು ದಿನ ಮಾಡಿಕೊಂಡಿರುತ್ತೇನೆ ಎಂದು ಕನಸನ್ನಂತೂ ಕಂಡಿದ್ದಿಲ್ಲ ಆದರೆ ಎಲ್ಲೋ ಇದ್ದವನು ನಾನು ಇಲ್ಲಿಗೆ ಬಂದು ತಲುಪಿದ್ದು ಈ ಸ್ಥಿತಿಯಲ್ಲಿ ಈಗ ಇರೋದಂತೂ ನಿಜವೇ.

ನಮ್ಮ ಡೆಸ್ಟಿನಿ ನಮ್ಮ ಮೂಲ ಇವುಗಳ ಬಗ್ಗೆ ನಿಮಗಂತೂ ನಂಬಿಕೆ ಇದೆಯೋ ಇಲ್ಲವೋ. ಎಲ್ಲೋ ಅಹಮದಾಬಾದಿನ ಆಸುಪಾಸಿನಲ್ಲಿ ಹುಟ್ಟಿ ಬೆಳೆದು ತುಮಕೂರಿನಲ್ಲಿ ಪದವೀಧರನಾಗಿ ಮುಂದೆ ಈ ಬಡ್‌ಲೇಕಿನ ಅಂಗಡಿಯಿಂದ ಜನರಿಗೆ ಮದ್ಯ ಸರಬರಾಜು ಮಾಡುವ Sandy's Liquor ಅಂಗಡಿಯ ಮಾಲಿಕನ ನಸೀಬನ್ನು ನೆನೆದು ಹೀಗೆ ಬರೆಯಬೇಕಾಯಿತಷ್ಟೇ.

Thursday, September 18, 2008

ನಿಮ್ ಮಕ್ಳೆಲ್ಲಾ ಎಸ್ಸೆಮ್ಮೆಸ್ಸ್ ಮೆಸ್ಸೇಜುಗಳಲ್ಲೇ ಅಳ್ತಾವೇನು?

ನಮ್ ಆಫೀಸಿನಲ್ಲಿ ಒಬ್ರು ಇತ್ತೀಚೆಗೆ ಹೊಸ್ತಾಗಿ ಪರಿಚಯವಾದ ಕನ್ನಡಿಗರು, ಈಗಾಗ್ಲೇ ನಮ್ಮ್ ಮಾತುಕಥೆಗಳು ಎರಡೂ ಮೂರನೇ ಭೇಟಿಯಲ್ಲಿ ಬೆಳೆಯುತ್ತಿದ್ದವುಗಳಾಗಿದ್ದರಿಂದ ಅವೇ ಕನ್ನಡಿಗರ ಸಂಕೋಚಭರಿತ ’ನಮಸ್ಕಾರ, ಚೆನ್ನಾಗಿದೀರಾ!’ ಅನ್ನೋ ಹಲ್ಲು ಗಿಂಜೋ ಪದಪುಂಜಗಳಿಂದ ಸ್ವಲ್ಪ ದೂರವಾಗಿತ್ತು ಅಂತ್ಲೇ ಹೇಳ್ಬೇಕು. ’ಏನ್ಸಾರ್ ಮತ್ತೆ ಇತ್ತೀಚೆಗೆ ಏನ್ ಓದ್ತಾ ಇದ್ದೀರಾ?’ ಎನ್ನೋ ನನ್ನ ಹುಂಬ ಪ್ರಶ್ನೆಗೆ ಅವರು ’ಏನೂ ಇಲ್ಲ, ಈ ಬ್ಲ್ಯಾಕ್‌ಬೆರ್ರಿಯಲ್ಲಿ ಬರೋವನ್ನು ಜೋಕ್‌ಗಳನ್ನ ಬಿಟ್ರೆ ಮತ್ತೇನನ್ನೂ ಓದೋದೇ ಇಲ್ಲ!’ ಎಂದು ಬಿಡಬೇಕೆ.

ಶುರುವಾಯ್ತು ತಗಳಪ್ಪ, ಅದೇ ತಾನೇ ಬೆಚ್ಚಗೆ ಕಾಫಿ ಕುಡಿದಿದ್ನಾ ಎಲ್ಲಾ ಹೊರಕ್ಕ್ ಬಂತ್ ನೋಡಿ...ಕ್ಷಮಿಸಿ ಅವ್ರಿಗೇನೂ ಬೈದಿಲ್ಲಪ್ಪ ನಾನು - ನಮ್ಮ ಕನ್ನಡಿಗರ ಜಾಯಮಾನದಂತೆ ನಕ್ಕು ಸುಮ್ಮನಾಗ್ಬಿಟ್ಟೆ.

***

ಈ ವೇಗಮಯ ಜೀವನದಲ್ಲಿ ಎಲ್ಲವೂ ಕಿರುತೆರೆಗಳಿಗೆ ಮಾತ್ರ ಸೀಮಿತವಾಗೋ ಹಾಗೆ ಕಾಣ್ತಿದೆ. ದೊಡ್ಡ ಸಿನಿಮಾ ಪರದೆ ಚಿಕ್ಕ ಟಿವಿಗೆ ಮೀಸಲಾಗೋಯ್ತು, ಈಗ ಅದರಿಂದ ಸಣ್ಣ ಮೊಬೈಲ್ ಫೋನಿನ ಮಟ್ಟಿಗೆ ಇಳಿದು ಹೋಯ್ತು. ಸೋ, ಚಿಕ್ಕದಾಗಿರದೇ ಇರೋದು ಬ್ಯಾಡವೇ ಬ್ಯಾಡಾ...ಅನ್ನೋದು ಈ ಕಾಲದ ಘೋಷಣೆ.

ಯಕ್ಷಗಾನ ಅನ್ನೋದ್ ಯಾಕೆ ಬೇಕು ಹಾಗಾದ್ರೆ? ಒಂದೇ ಒಂದು ಕ್ಷಣದಲ್ಲಿ ಪಾತಾಳ, ಭೂಲೋಕ, ಮತ್ಸ್ಯಲೋಕ, ಯಮಲೋಕ, ಸರ್ಪಲೋಕಗಳನ್ನೆಲ್ಲವನ್ನು ಯಶಸ್ವಿಯಾಗಿ ಕಲ್ಪಿಸಿಕೊಳ್ಳುವ ವೇದಿಕೆ ಇರೋವಾಗ. ಒಂದು ರಾಗ-ತಾಳದ ಹಿಮ್ಮೇಳದ ಹಾಡಿನಿಂದ ಮತ್ತೊಂದಕ್ಕೆ ಡೈನಾಮಿಕ್ ಆಗಿ ಬದಲಾವಣೆ ಇರೋವಾಗ. ಹಿಮ್ಮೇಳಕ್ಕೆ ತಕ್ಕಂತೆ ಅದೇ ಕಾಲಕ್ಕೆ ಸಂದರ್ಭವನ್ನು ಶುದ್ಧ ಕನ್ನಡ-ಸಂಸ್ಕೃತದಲ್ಲಿ ಅರ್ಥೈಸುವ ಅಭಿವ್ಯಕ್ತಿ ಇರೋವಾಗ. ಗಾನ-ನಾಟ್ಯ-ಸರ್ವ ರಸಗಳೂ ಒಂದೇ ಒಂದು ರಂಗದಲ್ಲಿ ಮೇಳೈಸುವಾಗ.

ಎಲ್ರೂ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡ್ತಾ ಇದ್ರೆ ಸಾಕಲ್ವ - ಅವೇ ಟೇಕು ರೀಟೇಕುಗಳು ಸ್ಪೆಷಲ್ ಎಫೆಕ್ಟ್‌ಗಳೆಲ್ಲ ಇರೋವಾಗ ಅದರ ಮುಂದೆ ಬಯಲು ಸೀಮೆಯಲ್ಲಿನ ನಾಟಕ ಯಾವ ಮೂಲೆಯ ಲೆಕ್ಕ. ಎಂಟು ಡಾಲರ್ ಕೊಟ್ಟು ಒಂದೂವರೆ ಘಂಟೇಲಿ ಹಾಲಿವುಡ್ಡು ಸಿನಿಮಾಗಳು ನೋಡೋಕ್ ಸಿಗೋವಾಗ ಈ ನ್ಯೂ ಯಾರ್ಕಿನ ಬ್ರಾಡ್ ವೇ ಶೋಗಳಿಗೆ ನೂರು ಡಾಲರ್ ಯಾವನ್ನ್ ಹೋಗ್ತಾನೆ ಹೇಳಿ? ಸಿನಿಮಾದಲ್ಲಿರೋ ಮತ್ತು-ಗಮ್ಮತ್ತು ಈ ಪ್ಲೇನ್ ನಾಟಕ-ಮ್ಯೂಸಿಕಲ್ಲುಗಳಲ್ಲಿರುತ್ತೇ ಅಂತ ಅಂದೋರ್ ಯಾರು?

***

ರಾಮಾಯ್ಣ ಅಂದ್ರೆ ಸುಮ್ನೇ ಹೀಗ್ ಬರೆದ್ರೆ ಸಾಕಲ್ಪ:
ರಾಮಾ ಅನ್ನೋ ರಾಜಕುಮಾರ ಮೀನ್ ಮೈಂಡೆಡ್ ಮಂಥರೆ ಹಾಗೋ ಸ್ಟೆಪ್ ಮದರ್ ಕೈಕೆಯಿ ಮಾಡಿರೋ ಕರಾಮತ್ತಿನಿಂದಾಗಿ ತನ್ನ ಹೆಂಡ್ತಿ ಜೊತೆ ಕಾಡ್ ಸೇರ್ತಾನಂತೆ. ಆ ಹದಿನಾಲ್ಕು ವರ್ಷದ ವನವಾಸ್‌ದಲ್ಲಿ ಸುಂದರವಾದ ಹೆಂಡ್ತೀನ ಶ್ರೀಲಂಕಾದ ಒಬ್ಬ ರಾಕ್ಷಸ ಅಪಹರಿಸ್ತಾನಂತೆ. ರಾಮಾ ಮತ್ತ್ ಅವನ ತಮ್ಮ ಜೊತೆಗೆ ಕಾಡಲ್ಲೇ ಸಿಗೋ ಕಪಿ ಸೈನ್ಯದ ಸಹಾಯದಿಂದ ಲಂಕೆಗೆ ಹೋಗಿ ಆ ರಾಕ್ಷಸನನ್ನು ಕೊಂದು ಸತ್ಯಾ-ಧರ್ಮಕ್ಕೆ ಇವತ್ತೂ ಕಾಲಾ ಇದೇ ಅಂತ ಸಾಧಿಸಿ ತೋರಿಸ್ತಾರಂತೆ. ಹಂಗೇ ಹೆಣ್ತೀನೂ ಕರಕಂಡ್ ಬರ್ತಾನಂತೆ, ಆದ್ರೆ ಅವಳು ಯಾರೋ ಏನೋ ಅಂದ್ರೂ ಅಂತ ಬೆಂಕಿ ಹಾರಿ ಬೀಳ್ತಾಳಂತೆ!

ಪಾಪ ಯಾಕ್ ಆ ಕುವೆಂಪು ರಾಮಕೃಷ್ಣಾಶ್ರಮದಲ್ಲಿ ಕುತಗೊಂಡು ರಾಮಾಯಣ ದರ್ಶನಂ ಬರೀಬೇಕಿತ್ತು. ಅದೂ ಸಾಲ್ದೂ ಅಂತ ವೀರಪ್ಪ ಮೊಯಿಲಿ ಯಾಕೆ ತಮ್ಮದೇ ಆದ ಒಂದು ವರ್ಷನ್ನನ್ನ ಕುಟ್ಟಬೇಕಿತ್ತು. ಒಂದೇ ರಾಮಾಯ್ಣ ಅದನ್ನ ಹೇಳೋಕ್ ಹತ್ತಾರ್ ಭಾಷೇನಾದ್ರೂ ಯಾಕ್ ಬೇಕು, ಎಲ್ಲಾನು ಇಂಗ್ಲೀಷಿಗೆ ಟ್ರಾನ್ಸ್ಲೇಟ್ ಮಾಡಿದ್ರೆ ಆಯ್ತು, ನಾವೆಲ್ಲ ಇಂಗ್ಲೀಷ್ನಲ್ಲೇ ಓದ್‌ಕಂತೀವಲ್ಲ ಅಷ್ಟೇ ಸಾಕು. ಆ ನಾರಾಯಣಪ್ಪ ಯಾಕೆ ಕುಮಾರವ್ಯಾಸ ಭಾರತ ಬರೆದ, ಅದೂ ಸಾಲ್ದೂ ಅಂತ ಭೈರಪ್ಪನೋರು ಯಾಕೆ ತಮ್ಮ ಪರ್ವ ಕೊರೆದ್ರು? ಆ ಕಾರಂತ್ರು ನಲವತ್ತರ ಮೇಲೆ ಕಾದಂಬ್ರಿ ಬರೆದ್ರಂತೆಲ್ಲ ಅದ್ರಿಂದ ಏನಾಯ್ತು? ಅದ್ರ ಬದ್ಲಿ ಒಂದಿಷ್ಟು ಹಾಸ್ಯವಾಗಿ ಮಾತಾಡಿದ್ರೆ ಸಾಲ್ತಿತಿರ್ಲಿಲ್ವಾ?

ಯಾರೂ ಓದದ ಕೇಳದ ಕಂದಪದ್ಯಗಳು ಬೇಡವೇ ಬೇಡ. ರಗಳೆಗಳ ರಗಳೆ ಹಾಗೇ ಇರಲಿ. ಚಂಪೂ ಕಾವ್ಯ ಅಂತಂದ್ರೆ ಏನು, ಚಂದ್ರಶೇಖರ ಪಾಟೀಲರ ಹೊಸ ಕಾವ್ಯ ನಾಮಾನಾ? ಷಟ್ಪದಿ-ಗಿಟ್ಪದಿ ಅಷ್ಟೇ ಅಲ್ಲಲ್ಲೇ ಇರ್ಲಿ - ವೀರರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ ತಾತಂಗರ್ಘ್ಯವನು ಕೊಡುತ - ಅಂತ ಮತ್ತಿನ್ನೆಲಾದ್ರೂ ಭಾಮಿನಿನಲ್ಲಿ ಹಾಡಿ ಬಿಟ್ಟೀರ. ದೊಡ್ಡ ನಾವೆಲ್ಲುಗಳನ್ನೆಲ್ಲ ಈ ಸರ್ತಿ ಛಳಿಗಾಲಕ್ಕೆ ಸುಟ್ಟು ಮೈ ಬೆಚ್ಚಗೆ ಮಾಡಿಕೊಳ್ಳೋಣ. ನಮ್ಮ ಸುತ್ತ ಮುತ್ಲ ಇರೋ ಲೈಬ್ರರಿಗಳನ್ನೆಲ್ಲ ಸ್ಕ್ಯಾನ್ ಮಾಡಿ ಆನ್‌ಲೈನ್‌ಗೆ ಹಾಕಿ ನಾವು ಓದ್ತೀವಿ. ಸೋಬಾನೇ ಪದ, ಸೋ ವಾಟ್? ಜನಪದ ಗೀತೆ ಹಳ್ಳಿಯೋರ್ ಗಾಥೆ ನಮಗಲ್ಲಪ್ಪ. ’ಹೊನ್ನ ಗಿಂಡಿಯ ಹಿಡಿದು ಕೈಯಲಿ...’ ಅಂದ್ರೆ ಏನ್ರಿ, ಈ ಮದ್ರಾಸಲ್ಲಿ ಗಿಂಡಿ ಇದೆಯಲ್ಲ ಅದಾ? ಆ ಡಿವಿ ಗುಂಡಪ್ಪೋರಿಗೆ ತಲೆ ನೆಟ್ಟಗಿತ್ತೋ ಇಲ್ವೋ ಅಷ್ಟೊಂದು ಬರೆಯೋದಾ? ಲೈಫು ಅಂದ್ರೆ ಸಿಂಪಲ್ಲು ಗೊತ್ತಿರಲಿಲ್ಲ ಅವ್ರಿಗೆ? ಪ್ರತಿಯೊಂದಕ್ಕೂ ಮಂಕುತಿಮ್ಮ ಅಂತ ಬರಕೊಂಡೋರ್ ಬೇರೆ, ಮಂಕುದಿಣ್ಣೇ ಅಂತ ಬರೀಲಿಲ್ಯಾಕೆ? ವಚನಾ - ಯಾರಿಗ್ ಯಾರ್ ಕೊಡೋ ಭಾಷೇ ಅದೂ?

ರೀ, ನಾಟ್ಕ ಯಾವನ್ರೀ ಬರೀತಾನೆ ಮತ್ತೆ ಅದನ್ನ ಓದೋರ್ ಯಾರು? ಸುಮ್ನೇ ಯಾವ್ದಾದ್ರೂ ಬ್ಲಾಗ್‌ನಲ್ಲೋ ಪೋರ್ಟಲಿನಲ್ಲೋ ಹಾಸ್ಯಮಯವಾಗಿ ಬರೀರಿ ಒಂದಿಷ್ಟ್ ಜನಾನಾದ್ರೂ ಓದ್ತಾರೆ. ಬಟ್, ನಿಮ್ ಬರಹ ಕೇವ್ಲ ಮುನ್ನೂರು ಪದಗಳಿಗೆ ಮಾತ್ರ ಇರ್ಲಿ, ಒಂದೊಂದು ಸಾಲೂ ಅದ್ರದ್ದೇ ಆದ ಪ್ಯಾರಾವಾಗಿರ್ಲಿ. ’ಅಂತಃಕರಣ’, ’ಅಶ್ಲೀಲ’ ಅನ್ನೋಪದಳನ್ನೇನಾದ್ರೂ ಉಪಯೋಗಿಸಿ ಬಿಟ್ಟೀರಾ ಮತ್ತೆ. ಈ ಪೋರ್ಟಲುಗಳ ಕ್ಲೈಂಟೆಲ್ಲುಗಳಿಗೆ ಗಂಟಲು ಕಟ್ಟಿಬಿಡುತ್ತೆ ಹುಷಾರು. ಮತ್ತೇ...ನಿಮ್ಮ್ ಟೈಟಲ್ಲು ಜನಪ್ರಿಯವಾಗಿರ್ಲಿ, ಯಾವ್ದಾದ್ರೂ ಹಾಡಿನ ಪಂಕ್ತಿ, ಅಲ್ಲ ಸಾಲಿದ್ರೆ ಒಳ್ಳೇದು - ’ಅನಿಸುತಿದೆ ಯಾಕೋ ಇಂದು...ಹೀಗೇ ಸುಮ್ಮನೇ’ ಅಂತ ಹಾಕಿ, ಅದು ಪ್ಯಾಪುಲ್ಲರ್ರು. ಈ ಸಾಲನ್ನು ಬರೆದ ಕವಿ ಅಂತ ಜನ ಕಾಯ್ಕಿಣಿಯವ್ರನ್ನ ಕೊಂಡಾಡೋದನ್ನ ನೋಡಿಲ್ಲ ನೀವು?

ಉತ್ತರ ಕರ್ನಾಟಕದ ಬಾಷೆ-ಮಾತು ಅದೊಂದ್ ಭಾಷೇನೇನ್ರಿ? ಏನ್ ಹೇಳೋದಿದ್ರೂ ಬೆಂಗ್ಳೂರ್ ಕನ್ನಡದಲ್ಲಿ ಹೇಳಿ. ’ನೀ ಹೀಂಗs ನೋಡಬ್ಯಾಡಾ ನನ್ನ’ ಅಂದ್ರೆ ಅದು ಕನ್ನಡಾನಾ? ಬೀದರ್-ಬೆಳಗಾವಿ ಎಲ್ಲಿವೆ? ಅಲ್ಲಿ ಯಾವ್ ಭಾಷೇ ಮಾತಾಡ್ತಾರೆ, ಜೈ ಸಿದನಾಯ್ಕ-ಮಾವೋತ್ಸೇ ತುಂಗಾ ಅಂತಾ ಕಂಬಾರರು ಅದೇನೇನೋ ಬರೆದಾರಂತಲ್ಲ?

***

ನಾವೇನೂ ಓದೋದಿಲ್ಲ ಅನ್ನೋದು ನಮ್ ಫ್ಯಾಷನ್ನ್ ಸಾರ್. ನಮ್ಮ ಸರ್ವತೋಮುಖ ಬೆಳವಣಿಗೆಗೆ ನಮ್ ನಮ್ ಮೊಬೈಲು-ಕಂಪ್ಯೂಟರ್ ಸ್ಕ್ರೀನ್‌ಗಳೇ ಸಾಕು ಸಾರ್. ಎರಡೇ ಎರಡು ಸಾಲಲ್ಲಿ ಹೇಳದ ಕಥೆ ಅದೂ ಕಥೇನಾ? ಎಸ್ಸೆಮೆಸ್ಸ್ ಮೆಸ್ಸೇಜುಗಳನ್ನು ಬಿಟ್ಟು ಇರೋವೆಲ್ಲಾ ಜೋಕಾ? ಸಂತಾ ಸಿಂಗ್, ಬಂತಾ ಸಿಂಗ್, ಕೋಲ್ಯಾ, ಸರ್ದಾರ್‌ ಜೀಗಳ ಅಜ್ಜ-ಮುತ್ತಾತರೆಲ್ಲ ಬಾವಿಯಲ್ಲಿ ಬಿದ್ದಿರೋ ಮಂದೀ ಗಡಿಯಾರಕ್ಕೆ ಕೀಲಿ ಕೊಡ್ತಾನೇ ಇದಾರ್ ಸಾರ್. ಅಲ್ಲಿಂದ ಕದ್ದು ಇಲ್ಲಿ, ಇಲ್ಲಿಂದ ತಂದು ಅಲ್ಲಿ ತುಂಬಿಸೋ ಫಾರ್ವಡ್ ಮಾಡಿರೋ ಸ್ಪ್ಯಾಮ್‌ ಸಂದೇಶಗಳೇ ಈ ಶತಮಾನದ ಅಂತಃಸತ್ವಾ ಸಾರ್...ಓಹ್ ಕ್ಷಮಿಸಿ, ಅಂತಃಸತ್ವಾ ಅಂದ್ರೆ ಏನು ಅಂತ ಯಾರಿಗ್ಗ್ ಗೊತ್ತು?

ನನ್ನದೊಂದು ಹೊಸಾ ಕವ್ನ ಬರ್ದಿದೀನಿ ಕೆಳಗೆ ನೋಡಿ: (ಪದಗಳ ಕೆಳಗೆ ಪದಗಳು ಬಂದ್ರೆ ಪದ್ಯಾ ಅಲ್ವಾ? ಪದ್ಯಾ-ಗದ್ಯಾ ಎಲ್ಲಾ ಒಂದೇ ಬಿಡಿ)
ಅಮೇರಿಕದಲ್ಲಿ ಇದೀವಿ ಕನ್ನಡ ಸಿನಿಮಾ ನೋಡಲ್ಲ
ಅಮೇರಿಕದಲ್ಲಿ ಇದೀವಿ ಕನ್ನಡ ಕಾನ್ಸರ್ಟ್ ಬ್ಯಾಡವೇ ಬ್ಯಾಡ.
ಕನ್ನಡ ಸಿಡಿ ಮಾರೋರ್ ಇದ್ರೆ ಅವರಿಂದ್ಯಾಕೆ ಕೊಳ್ಬೇಕು?
ಕನ್ನಡ ಪುಸ್ತಕ ಅನ್ನೋ ವಸ್ತೂನ ಕೊಂಡ್ ಕೊಂಡ್ ಯಾಕೆ ಓದ್ಬೇಕು?
ನಾವ್ ಇತ್ಲಾಗ್ ಕನ್ನಡ ಪ್ರೊಗ್ರಾಮ್ ನೋಡಲ್ಲ, ಇಂಗ್ಲೀಷ್ ಕಾನ್ಸರ್ಟ್ ತಿಳಿಯಲ್ಲ.
ಹಗ್ಲೂ ರಾತ್ರೀ ದುಡ್ದೂ ದುಡ್ದೂ, ಸ್ಟ್ರೆಸ್ಸಿನಿಂದ ಸೊರಗಿರೋ ಭುಜಕ್ಕೆ ಅಮೃತಾಂಜನ್ ಸ್ಟ್ರಾಂಗ್ ಲೇಪಿಸ್ಕೊಂಡು,
ನಲವತ್ತ್ ಆಗೋಕ್ಕಿಂತ ಮುಂಚೆ ಚಾಳೀಸ್ ತಗಲಾಡಿಸ್ಕೊಂಡ್
ನರನಾಡಿಗಳಲ್ಲೆಲ್ಲ ಕೊಬ್ಬು-ಕೊಲೆಸ್ಟ್ರಾಲ್ ಹೆಚ್ಚಿಸಿಕೊಂಡು
ನಮ್ಮೂರಿನ ದನಕಾಯೋ ಕೆಲಸ ಮಾಡೋರಿಗಿಂತ
ಐದೇ ಐದು ವರ್ಷ ಹೆಚ್ಗೆ ಬದುಕೋ ಬವಣೇನಾದ್ರೂ ಯಾತಕ್ಕೆ?

ಹೆಂಗಿದೆ? ನಿಮ್ಮ್ ಕಾಮೆಂಟ್ ಹಾಕಿ, ಸಕತ್ತಾಗಿದೆ ಕವ್ನಾ ಅಂತ ಬರೀರಿ. ನಿಮಿಗೆ ನಾನ್ ಕಾಮೆಂಟ್ ಹಾಕ್ತೀನಿ, ನನಿಗೆ ನೀವ್ ಹಾಕಿ. ಅದೇ ಸಂಬಂಧ ಹಂಗೇ ಬೆಳೀಲಿ. ನಾನು ಬರ್ದಾಗ್ಲೆಲ್ಲ ನೀವ್ ಬ್ಯಾಡಾ ಅಂದ್ರೂ ತಿಳಸ್ತೀನಿ - ಓದಿ, ಕಾಮೆಂಟ್ ಹಾಕಿ, ನಾನು ಅಷ್ಟೇ - ನಮ್ ಬಳಗಾ ಹಿಂಗೇ ಬೆಳೀಲಿ - ನಾಳೆ ನಮಗೆಲ್ಲರಿಗೂ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ. ಒಂದ್ ಸ್ಟೇಜ್‌ ಮೇಲೆ ಅದೆಷ್ಟು ಜನಗಳಿಗೆ ನಿಲ್ಲೋಕ್ ಆಗುತ್ತೋ ಅವರಿಗೆಲ್ಲ ಪ್ರಶಸ್ತಿ ಸಿಗುತ್ತೆ. ಜಿಲ್ಲೆಗೊಂದೊಂದು, ಜಾತಿಗೊಂದೊಂದು, ಭೀತಿಗೊಂದೊಂದು, ಸರ್ಕಾರದ ಮಿನಿಷ್ಟ್ರುಗಳ ಶಿಫಾರಸ್ಸಿಗೊಂದೊಂದು. ನಾನು ಬರೆದಿದ್ದನ್ನೆಲ್ಲ ಬುಕ್ ಮಾಡಿಸ್ತೀನಿ. ಅದ್ರ ಬಿಡುಗಡೆಗೆ ನಿಮ್ಮನ್ನ್ ಕರ್ದು ಊಟ ಹಾಕಿಸ್ತೀನಿ. ನನ್ನ ಬುಕ್ಕ್ ಕೊಂಡು ಒಂದೈದು-ಹತ್ತು ಡಾಲರ್ ಕಳ್ಸಿ! ಯಾವ್ ಶಿವರಾಮ ಕಾರಂತ್ರೂ-ಬೈರಪ್ಪಾ-ಬೇಂದ್ರೆ ಮಾಡ್ದೇ ಇರೋ ರೆಕಾರ್ಡ್ ನನ್ನ ಪುಸ್ತಕಗಳು ಮಾಡಿವೆ, ಗೊತ್ತಿಲ್ಲಾ ನಿಮಗೇ - ನಾನೇ ಬೆಶ್ಟ್ ಸೆಲ್ಲರ್ರು.

***

ನಿಮ್ಮ್ ಮಕ್ಳು, ಅಲ್ಲ ಮಕ್ಳುಗಳು, ಕನ್ನಡದಲ್ಲೇ ಮಾತಾಡ್ತಾವಾ? ಎಲ್ರೂ ಅತ್ತಂಗೇ ಅಳ್ತಾವಾ ಅಥವಾ ಅದಕ್ಕೂ ಎಸ್ಸೆಮ್ಮೆಸ್ಸ್ ವರ್ಷನ್ನ್ ಬಂದಿದೆಯಾ? ಕನ್ನಡ ಮಾಧ್ಯಮವೇ ಬ್ಯಾಡ ಅಂತ ಕೋರ್ಟುಗಳೇ ತೀರ್ಪು ಕೊಟ್ವಂತೆ? ಪ್ರಪಂಚದ ಸಾವ್ರಾರು ಭಾಷೆ ಫೈಲುಗಳನ್ನೆಲ್ಲ ಡಿಲ್ಲೀಟ್ ಮಾಡಿ ಬಿಡಿ, ಇಂಗ್ಲೀಷ್ ಒಂದೇ ಸಾಕು. ಇನ್ನೂ ಈಗ್ತಾನೆ ಕಣ್ಣ್ ಬಿಟ್ಟು ನೋಡ್ತಾ ಇರೋ ಹುಡುಗ್ರಿಗೆ ಲೋಕಲ್ ಸಿಲಬಸ್ ಬ್ಯಾಡಾ, ಸಿಬಿಎಸ್ಸಿ-ಐಸಿಎಸ್ಸಿ ಕೊಡ್ಸಿ. ದೊಡ್ಡ ಸ್ಕೂಲಲ್ಲಿ ಓದ್ಸಿ ದೊಡ್ಡ ಮನ್ಷರಾಗ್ತಾರೆ. ಪಬ್ಲಿಕ್ ಸ್ಕೂಲ್ ಅಂತ ಹೆಸ್ರು ಇಟಗೊಂಡಿರೋ ಪ್ರೈವೇಟ್ ಸ್ಕೂಲ್‌ಗಳೇ ಚೆಂದ. ವರ್ಷವಿಡೀ ಇರೋ ಉರಿಬಿಸ್ಲಲ್ಲೂ ಮಕ್ಳು ಟೈ ಕಟ್ಲಿ, ಎಷ್ಟ್ ಚೆಂದ ಕಾಣ್ತಾರ್ ಗೊತ್ತಾ? ಅಮ್ಮ-ಅಪ್ಪ ಅನ್ನೋಕ್ ಮುಂಚೆ ಮಮ್ಮೀ-ಡ್ಯಾಡೀ ಅನ್ಲೀ ಆಗ್ಲೇ ನಮಗೊಂದ್ ಘನತೆ. ಅಯ್ಯೋ ಎಲ್ಲಾದ್ರೂ ಮಕ್ಳು ಓಡಾಡೋದು ಉಂಟೇ, ಕೈ ಕಾಲ್ ಸವದು-ಗಿವದು ಹೋದ್ರೆ ಕಷ್ಟಾ - ಹೋಗ್ ಕಾರಲ್ಲ್ ಬಿಟ್ಟ್ ಬನ್ನಿ, ಏನು?

ತಪ್ಪ್ ಮಾಡ್ದೇ ಸಾರ್ ನಾನು, ಇನ್ನೊಂದ್ ಇಪ್ಪತ್ತೈದು ವರ್ಷ ಬಿಟ್ಟು ಹುಟ್ಟಬೇಕಿತ್ತು. ನಮ್ಮ್ ಜನರೇಷನ್ನಲ್ಲಿರೋಷ್ಟು ಟೆನ್ಷನ್ನ್ ಎಲ್ಲಿದೆ ಹೇಳಿ...ನಾವೇ ದೊಡ್ಡೋರು, ನಾವೇ ಸರ್ವಸ್ವ, ನಮ್ಮದೇ ದೊಡ್ದು, ಗೊತ್ತಾಯ್ತಾ?

(Take it easy now)

Sunday, April 27, 2008

ನಮ್ಮ ನಡುವಿನ ಸಂಬಂಧ-ಸೂಕ್ಷ್ಮತೆ

ನನ್ನ ಸ್ನೇಹಿತ, ಸಹೋದ್ಯೋಗಿಯಾಗಿದ್ದವನು ಇಂದು ಕರೆ ಮಾಡಿ ಏನೋ ಹೊಸ ಸುದ್ದಿಯನ್ನು ಹೇಳುತ್ತಾನೆ ಅಂದುಕೊಂಡರೆ ನನಗೆ ಖಂಡಿತವಾಗಿ ಆಶ್ಚರ್ಯ ಕಾದಿತ್ತು. ಆತನ ಮಾತನ್ನು ಕೇಳಿದ ಮೇಲೆ ಮಾನವ ಸಂಬಂಧಗಳನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುವಂತೆ ಆಗಿದ್ದು ನಿಜ. ಒಮ್ಮೆ ಆ ಮಟ್ಟಿಗಿನ ವೈರಾಗ್ಯ ನನ್ನನ್ನು ಹಾಗೆ ಆಲೋಚಿಸುವಂತೆ ಸ್ಪೂರ್ತಿ ನೀಡಿದ್ದಿರಬಹುದು, ಅಥವಾ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸುವ ನನ್ನ ರೀತಿ ಹಾಗೆಯೇ ಇರಬಹುದು.

ಈಗ್ಗೆ ಕಳೆದ ಹದಿನಾರು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿ ಕಳೆದು ಹನ್ನೊಂದು ವರ್ಷಗಳ ವೈವಾಹಿಕ ಜೀವನದಲ್ಲಿ ಮುದ್ದಾದ ಎರಡು ಮಕ್ಕಳನ್ನು ಪಡೆದ ನನ್ನ ಸ್ನೇಹಿತನ ಬದುಕು ಗಂಭೀರವಾಗಿದೆಯಂತೆ. ಆತನ ಹೆಂಡತಿ ಇದ್ದಕ್ಕಿದ್ದಂತೆ ಕಳೆದೊಂದು ವಾರದಲ್ಲಿ ಮಾತಿಗೆ ಮಾತು ಬೆಳೆಸಿ ತನ್ನ ಮಕ್ಕಳನ್ನು ಕರೆದುಕೊಂಡು ಇನ್ನೊಮ್ಮೆ ಬರುವುದಿಲ್ಲ ಎಂದುಕೊಂಡು ಒನ್ ವೇ ಟಿಕೇಟ್ ತೆಗೆದುಕೊಂಡು ಹೋಗಿದ್ದಾಳಂತೆ. ಮೊದಲಿನಿಂದಲೂ ಎರಡೂ ಮನೆಯವರಿಗೂ ಸಂಬಂಧಗಳಲ್ಲಿ ಅಷ್ಟೊಂದು ವಿಶ್ವಾಸವಿರಲಿಲ್ಲವೆಂದೂ ಯಾವಾಗಲೂ ಗಂಡ-ಹೆಂಡತಿಯರ ನಡುವೆ ಜಗಳವಿತ್ತೆಂದೂ, ಎಷ್ಟೋ ಸಾರಿ ಜಗಳ ತಾರಕಕ್ಕೇರಿ ವಿಚ್ಛೇದನದ ಮಾತಿನವರೆಗೂ ಹೋಗಿದೆ ಎಂದು ತಿಳಿದು ನನಗಂತೂ ಏನೂ ಹೇಳಲು ತೋಚದಂತಾಯಿತು.

***

ಇಂದಿನ ಯುಗದಲ್ಲಿ ನಮ್ಮ ನಮ್ಮ ನಡುವಿನ ಕಮ್ಮ್ಯುನಿಕೇಷನ್‌ಗೆ ಆದ್ಯತೆ ಕೊಡುವ ಕಾಲ, ನಮ್ಮ ಅಂತರಾಳದ ಸಂವಹನಕ್ಕೆ ಬೇಕಾದ ಸೂತ್ರಗಳಿವೆ, ಉಪಕರಣಗಳಿವೆ. ಹೀಗೆಲ್ಲ ಇರುವಾಗಲೇ ನಾನು ಗಂಡ-ಹೆಂಡತಿ ನಡುವೆ ಆಗಿ ಹೋಗದ ಮಾತುಗಳನ್ನೋ ಅಥವಾ ಹೆಚ್ಚು ವಿಚ್ಛೇದನದ ವಿಷಯವನ್ನೋ ಅಲ್ಲಲ್ಲಿ ಸುದ್ಧಿ-ವಿಚಾರವಾಗಿ ಕೇಳೋದೇ ಹೆಚ್ಚು. ಅಂದರೆ ಹಿಂದಿನ ಕಾಲದವರು ಕಷ್ಟವೋ-ಸುಖವೋ ಹೊಂದಿಕೊಂಡಿರುತ್ತಿದ್ದರೋ ಅಥವಾ ಅವರ ರಾದ್ಧಾಂತಗಳು ಹೊರಗೆ ಬರುತ್ತಿರಲಿಲ್ಲವೋ, ಅಥವಾ ಇಂದಿನವರ ಸವಾಲಿಗೂ ಅಂದಿನವರ ಸವಾಲಿಗೂ ವ್ಯತ್ಯಾಸವಿದೆಯೋ, ಅಥವಾ ಇವೆಲ್ಲ ನಿಜವೋ ಎನ್ನುವ ಆಲೋಚನೆ ಸಹಜವಾಗೇ ಬರುತ್ತದೆ. ಅದೂ ಇತ್ತೀಚಿನ ಗಂಡ-ಹೆಂಡತಿ ಇಬ್ಬರೂ ದುಡಿದು ಬರುವ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಮಕ್ಕಳಿರಲಿ ಬಿಡಲಿ ಮನೆಯ ಹಿರಿಯ ಅಥವಾ ಯಜಮಾನರಾಗಿ ಅವರೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಸಂಸಾರ ರಥವನ್ನು ನಡೆಸುವ ಕಾಯಕವನ್ನು ಅನುಸರಿಸುತ್ತಿರುವಾಗ ಸಂಬಂಧಗಳ ಹೆಣಿಕೆಯಲ್ಲಿ ಒಂದು ಚೂರು ಊನವಾದರೂ ಸಂಸಾರ ರಥಕ್ಕೆ ಸಂಚಕಾರ ಬಂದಂತೆಯೇ ಎಂದು ಎಷ್ಟೋ ಸರತಿ ಅನ್ನಿಸಿದ್ದಿದೆ.

ನಾನೇನೂ ಹೇಳೋದಿಲ್ಲ, ಹೇಳೋದಕ್ಕೆ ಉಳಿದಿರೋಲ್ಲ ಬಿಡಿ. ಈ ಸಂಸಾರ ತಾಪತ್ರಯದ ಒಡಕಲಿನ ವಿಷಯ ನನ್ನ ಕಿವಿಗೆ ಬೀಳುವ ಹೊತ್ತಿಗೆ ಆಗಬೇಕಾದ್ದದೆಲ್ಲ ಆಗಿ ಹೋಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ನನಗೆ ಪರಿಚಿತರೇ ಆದ ಸಂದರ್ಭಗಳಲ್ಲಿ ನಾವು ಯಾರೊಬ್ಬರ ಪರವನ್ನು ವಹಿಸಿ ಮಾತನಾಡುವುದು ತಪ್ಪಾದೀತು - ಬೆಂಕಿ ಇಲ್ಲದೇ ಹೊಗೆ ಬಾರದು ಎನ್ನುವಂತೆ ಏನೋ ಕ್ಷುಲ್ಲಕ ಕಾರಣ ಇದ್ದು ಅದು ದೊಡ್ಡ ಹೆಮ್ಮರವಾಗಿ ಬೆಳೆಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

***

ಇಂದಿನ ಗಂಡ-ಹೆಂಡತಿ ಸಂಬಂಧವೆಂದರೆ ಸಾವಿರದ ಒಂಭೈನೂರ ಐವತ್ತರ ಸಮಯದ ಸಂಬಂಧಗಳ ಹಾಗೆ ಇರಬೇಕಾಗಿಲ್ಲ. ಗಂಡ ಉಂಡಾದ ನಂತರವೇ ಹೆಂಡತಿ ಊಟ ಮಾಡುವುದು ಎಂಬ ಕಾನೂನನ್ನು ತಲೆ ಸರಿ ಇರುವ ಯಾರೂ ಪಾಲಿಸಿಕೊಂಡು ಹೋಗಲಾರರು. ಆದರೆ ಗಂಡ-ಹೆಂಡತಿಯ ನಡುವೆ ವ್ಯತ್ಯಾಸವಿದ್ದಿರಲೇ ಬೇಕು, ಹಾಗಿದ್ದಾಗಲೇ ಚೆನ್ನು, ಆ ವ್ಯತ್ಯಾಸವನ್ನು ಆ ಕುಟುಂಬದ ಏಳಿಗೆಗೆ ಬಳಸದೇ ಅದನ್ನು ವಾದದ ಬೆಂಕಿಗೆ ಇಂಬುಕೊಡುವ ತುಪ್ಪವನ್ನಾಗಿ ಸುರಿದು ಮಾತಿಗೆ ಮಾತು ಬೆಳೆಸಿ ಕೋರ್ಟು ಕಛೇರಿ ಹತ್ತುವುದು ಆಯಾ ವ್ಯಕ್ತಿಯ ಹಿನ್ನೆಲೆಯಲ್ಲಿ ಸುಲಭವಾಗಿ ಕಾಣಿಸಿದರೂ ಇಡೀ ಕುಟುಂಬದ ಹಂದರಕ್ಕೆ ಅದರಿಂದ ಸಂಚಕಾರ ಬರುತ್ತದೆ. ಭಾರತದಲ್ಲೂ ಸಹ ಗಂಡ-ಹೆಂಡತಿ ಅಮೇರಿಕನ್ ಶೈಲಿಯಲ್ಲಿ ಮಕ್ಕಳನ್ನು ವಾರಾಂತ್ಯದಲ್ಲಿ ಕಷ್ಟಡಿಗೆ ತೆಗೆದುಕೊಂಡು ಸಾಕುತ್ತಾರೆ ಎನ್ನುವುದನ್ನು ಕೇಳಿದ ಮೇಲೆ ಎಲ್ಲೋ ನಮ್ಮ ಸಂಸ್ಕೃತಿಗೆ ವಿದೇಶಿ ಶಿಫಾರಸ್ಸು ಹೆಚ್ಚಾಗಿಯೇ ಸಿಕ್ಕಿದೆಯೆಂದು ಅರ್ಥವಾಯಿತು. ಮೊದಲೆಲ್ಲಾ ಹೇಗಿತ್ತೋ ಗೊತ್ತಿಲ್ಲ, ಆದರೆ ನಾನು ಭಾರತದಲ್ಲಿ ಮಕ್ಕಳನ್ನು ಕಷ್ಟಡಿಗೆ ತೆಗೆದುಕೊಂಡು ಸಾಕುವುದನ್ನು ಕೇಳಿದ್ದು ಇಂದೇ ಮೊದಲು.

ಯಾವುದು ಎಲ್ಲಿ ತಪ್ಪಿತೋ ಎಂದು ಸೋಜಿಗ ಪಡುವ ಸಮಯವೋ, ಆದದ್ದಾಗಲಿ ಮುಂದಿನದು ಮುಖ್ಯ ಎನ್ನುವ ಧೋರಣೆಯನ್ನು ಬಿಗಿದಪ್ಪುವ ನಿಲುವೋ, ಈ ಸಂಬಂಧಗಳ ಗೊಂದಲವೇ ಬೇಡ ಎನ್ನುವ ಹಣಾಹಣಿಯೋ ಮತ್ತೊಂದೋ ತಪ್ಪಿದ್ದಲ್ಲ. ಅದು ಬದುಕು, ಅದೇ ಅದರ ನಿಯಮ ಹಾಗೋ ಅದರಲ್ಲಿರುವ ಸೂಕ್ಷ್ಮತೆಯ ಒಂದಲ್ಲ ಒಂದು ರೀತಿಯಲ್ಲಿ ನಾವು ಯೋಚಿಸುವುದು ನಮಗೆ ಅಂಟಿದ ಕಾಯಕ ಎಂದರೆ ತಪ್ಪೇನಿಲ್ಲ.

Sunday, April 06, 2008

ಬೇವು-ಬೆಲ್ಲ ಇರದ ಹೊಸ ವರ್ಷಗಳು

ಓಹ್, ನಮಸ್ಕಾರ, ನಾವು ದಕ್ಷಿಣ ಭಾರತದ ಮಂದಿ ಹಾಗೂ ಇದು ನಮಗೆ ಹೊಸ ವರ್ಷ ಮತ್ತು ಅದರ ಆಚರಣೆ! ಅಯ್ಯೋ, ಇದೇನ್ odd ಈಗ ಏಪ್ರಿಲ್ ಮಧ್ಯೆ ಹೊಸವರ್ಷ ಶುರುವಾಯ್ತು ಅಂತೀರಾ? ಹಾಗೇ ಸಾರ್, ನಮ್ಮ ಕ್ಯಾಲೆಂಡರಿನಲ್ಲಿ ಮಹತ್ವದ ದಿನಗಳೆಲ್ಲ ಆರಂಭವಾಗೋದು ಇಂಗ್ಲೀಷಿನ ಕ್ಯಾಲೆಂಡರಿನ ಮಧ್ಯ ಭಾಗಕ್ಕೆ, ಅದನ್ನ odd ಅಂಥಾ ಬೇಕಾದ್ರೂ ಕರೆದುಕೊಳ್ಳಿ, even ಅಂಥಾನಾದ್ರೂ ಉದ್ಗರಿಸಿ ನಮಗೇನೂ ಇಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಆರಂಭವಾಗೋದಕ್ಕೆ ಮೊದಲೂ ನಮ್ಮ ದಿನಗಳು ಹೀಗೇ ಇದ್ವು ಅನ್ನೋದಕ್ಕೆ ಹಲವರು ಪುರಾವೆಗಳನ್ನೇನು ಒದಗಿಸೋ ಅಗತ್ಯ ಇಲ್ಲ, ಒಂದೇ ಮಾತ್ನಲ್ಲಿ ಹೇಳೋದಾದ್ರೆ ನಮ್ಮದು ಹಳೇ ಸಂಸ್ಕೃತಿ, ಹಳೇ ಪರಂಪರೆ, ನಾವು ಹಳಬರು ಅಷ್ಟೇ!

ನಿಮಗೆ ನಂಬಿಕೆ ಬರಲಿಲ್ಲಾಂತಂದ್ರೆ ನಿಮ್ಮ ಲಾನೋ ಗಾರ್ಡನ್ನಿನಲ್ಲಿರೋ ಗಿಡಮರಗಳನ್ನ ಹೋಗಿ ವಿಚಾರಿಸಿಕೊಂಡು ಬನ್ನಿ, ನಿಮ್ಮ Spring ಸೀಸನ್ ಮಾರ್ಚ್ ಇಪ್ಪತ್ತೊಂದಕ್ಕೇ ಶುರುವಾಗಿರಲೊಲ್ಲದ್ಯಾಕೆ, ಈ ಗಿಡಮರಗಳಿಗೆ ಏಪ್ರಿಲ್ ಆರನೇ ತಾರೀಖ್ ಚಿಗುರಿಕೊಳ್ಳೀ ಅಂಥಾ ನಾನೇನೂ ಆರ್ಡರ್ ಕಳಿಸಿಲ್ಲಪ್ಪಾ. ಈಗಾದ್ರೂ ಗೊತ್ತಾಯ್ತಾ ನಮ್ ಚೈತ್ರ ಮಾಸ, ವಸಂತ ಋತು ಅನ್ನೋ ಕಾನ್ಸೆಪ್ಟೂ, ಎನ್ ತಿಳಕೊಂಡಿದೀರಾ ನಮ್ಮ ಪರಂಪರೇನೇ ದೊಡ್ದು, ಅದರ ಮರ್ಮಾ ಇನ್ನೂ ಆಳ...ಆದ್ರೆ ನನಗೆ ಅಷ್ಟು ಡೀಟೇಲ್ ಗೊತ್ತಿಲ್ಲ ಏನ್ ಮಾಡ್ಲಿ ಹೇಳ್ರಿ?

***

ಬೇವು-ಬೆಲ್ಲ ತಿನ್ನದೇ ಯುಗಾದಿಯನ್ನೂ ಹೊಸವರ್ಷವನ್ನೂ ಆಚರಿಸಿಕೊಳ್ಳುತಿರೋ ಹಲವಾರು ವರ್ಷಗಳಲ್ಲಿ ಇದೂ ಒಂದು ನೋಡ್ರಿ. ಅವನೌವ್ವನ, ಏನ್ ಕಾನ್ಸೆಪ್ಟ್ ರೀ ಅದು, ಬದುಕಿನಲ್ಲಿ ಬೇವು-ಬೆಲ್ಲ ಎರಡೂ ಇರಬೇಕು ಅಂತ ಅದು ಯಾವನು ಯಾವತ್ತು ಕಾನೂನ್ ಮಾಡಿದ್ದಿರಬಹುದು? ಭಯಂಕರ ಕಾನ್ಸೆಪ್ಟ್ ಅಪಾ, ಎಂಥೆಂಥಾ ಫಿಲಾಸಫಿಗಳನ್ನೆಲ್ಲ ಬೇವು-ಬೆಲ್ಲದಲ್ಲೇ ಅರೆದು ಮುಚ್ಚಿ ಬಿಡುವಷ್ಟು ಗಹನವಾದದ್ದು. ನಾವೆಲ್ಲ ಹಿಂದೆ ಬೇವಿನ ಮರಾ ಹತ್ತಿ ಪ್ರೆಶ್ ಎಲೆಗಳನ್ನು ಕೊಯ್ದುಕೊಂಡು ಬಂದು ಪಂಚಕಜ್ಜಾಯದೊಳಗೆ ಅಮ್ಮ ಸೇರಿಸಿಕೊಡ್ತಾಳೆ ಅಂತಲೇ ಕಣ್ಣೂ-ಬಾಯಿ ಬಿಟಗೊಂಡು ಕಾಯ್‌ಕೊಂತ ಕುಂತಿರತಿದ್ವಿ. ನಾನಂತೂ ಬೇವಿನ ಮರದ ಮ್ಯಾಲೇ ಒಂದಿಷ್ಟು ಎಲೆಗಳನ್ನು ತಿಂದು ಒಂದ್ ಸರ್ತಿ ಕಹಿ ಕಷಾಯ ಕುಡಿದೋರ್ ಮಖಾ ಮಾಡಿದ್ರು, ಮತ್ತೊಂದು ಸರ್ತಿ ಇವನು ಬೇವಿನ ಎಲೇನೂ ಹಂಗೇ ತಿಂತಾನೇ ಭೇಷ್ ಎಂದು ಯಾರೋ ಬೆನ್ನು ಚಪ್ಪರಿಸಿದ ಹಾಗೆ ನನಗೆ ನಾನೇ ನೆನೆಸಿಕೊಂಡು ನಕ್ಕಿದ್ದಿದೆ. ನಮ್ಮೂರ್ನಾಗ್ ಆಗಿದ್ರೆ ಇಷ್ಟೊತ್ತಿಗೆ ಕಹಿ ಬೇವಿನ ಗಿಡಗಳು ಒಳ್ಳೇ ಹೂ ಬಿಟಗೊಂಡು ಮದುವೆಗೆ ಅಲಂಕಾರಗೊಂಡ ಹೆಣ್ಣಿನಂತೆ ಕಂಗೊಳಿಸುತ್ತಿದ್ದವು ಅಂತ ಆಲೋಚ್ನೆ ಬಂದಿದ್ದೆ ತಡ ಇಲ್ಲಿ ನಮ್ಮ ಗಾರ್ಡನ್ನಿನ್ಯಾಗೆ ಏನ್ ನಡದತಿ ಅಂತ ನೋಡೋ ಆಸೆ ಬಂತು. ತಕ್ಷಣ ಇನ್ನೂ ನಲವತ್ತರ ನಡುವೆ ಉಷ್ಣತೆ ಇರೋ ಈ ಊರಿನ ಛಳಿಗೆ ಹೆದರಿಕೆ ಆಗಲಿ ಎನ್ನುವಂತೆ ನನ್ನಲ್ಲಿದ ಬೆಚ್ಚನೆ ಜಾಕೆಟ್ ಒಂದನ್ನು ಹೊದ್ದು ಹೊರ ನಡೆದೆ.

ಮನೆಯ ಸುತ್ತಲಿನ ಹುಲ್ಲು ಹಾಸೋ, ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುತ್ತಿರೋ ನಿರುದ್ಯೋಗಿ ಯುವಕನ ಗಡ್ಡವನ್ನು ನೆನಪಿಗೆ ತಂದಿತು, ಈಗಲೋ ಆಗಲೋ ಚಿಗುರೊಡೆದು ಹುಲುಸಾಗಿ ಬೆಳೆಯುವ ಲಕ್ಷಣಗಳೆಲ್ಲ ಇದ್ದವು. ಹೊರಗಡೆಯ ಪೇಪರ್ ಬರ್ಚ್ ಮರಗಳು ಇಷ್ಟು ದಿನ ಗಾಳಿಗೆ ತೊನೆದೂ ತೊನೆದೂ ಕಷ್ಟಪಟ್ಟು ಕೆಲಸ ಮಾಡಿಯೂ ದಿನಗೂಲಿ ಸಂಬಳ ಪಡೆದು ಬದುಕನ್ನು ನಿಭಾಯಿಸೋ ಮನೆ ಯಜಮಾನನ ಮನಸ್ಥಿತಿಯನ್ನು ಹೊದ್ದು ನಿಂತಿದ್ದವು. ಅಕ್ಕ ಪಕ್ಕದ ಥರಾವರಿ ಹೂವಿನ ಗಿಡಗಳಲ್ಲಿ ಬದುಕಿನ ಸಂಚಾರ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟೇಷನ್ನಿನಲ್ಲಿ ಮುಂಜಾನೆ ಐದೂವರೆಗೆಲ್ಲಾ ಸಿಟಿಬಸ್ಸುಗಳು ಪ್ರಾರಂಭವಾಗಿ ಮೊದಲ ಟ್ರಿಪ್ ಹೊರಡುವಾಗ ಇರುವ ಗಲಾಟೆ ವಾತಾವರಣ ಇದ್ದಂತಿತ್ತು. ಇನ್ನು ನನಗೆ ತಿಳಿಯದ ಅನೇಕ ಹೂವಿನ ಮರಗಳು ಮುಂಬರುವ ಅದ್ಯಾವುದೋ ಜಾತ್ರೆಗೆ ಸಿದ್ಧವಾಗುವ ತೇರಿನಂತೆ ನಿಧಾನವಾಗಿ ಮೊಗ್ಗೊಡೆಯುತ್ತಿದ್ದವು. ಇಷ್ಟು ದಿನ ಬಲವಾಗಿ ಬೀಸಿದ ಗಾಳಿಯ ದೆಸೆಯಿಂದ ನಮ್ಮ ಮನೆಯ ಬದಿಯಲ್ಲಿನ ಬರ್ಚ್ ಮರವೊಂದರ ದೊಡ್ಡ ಗೆಲ್ಲು ಮುರಿದು ಸಂಪೂರ್ಣ ಕೆಳಗೆ ವಾಲಿಕೊಂಡಿದ್ದು ಸ್ವಲ್ಪ ಹಿಡಿದೆಳೆದರೂ ಕಿತ್ತು ಬರುವಂತಿತ್ತು, ಇನ್ನೇನು ಕಿತ್ತೇ ಬಿಡೋಣ ಎಂದು ಮನಸು ಮಾಡಿ ಗೆಲ್ಲನ್ನು ಮುಟ್ಟಿದವನಿಗೆ ಮುರಿದು ಬಿದ್ದರೂ ಚಿಗುರುವುದನ್ನು ಮರೆಯದ ಆ ಗೆಲ್ಲಿನ ಜೀವಂತಿಕೆಗೆ ನಾನೇಕೆ ಭಂಗ ತರಲಿ ಎಂದು ಕೀಳದೇ ಹಾಗೆ ಬಿಟ್ಟು ಬಂದದ್ದಾಯಿತು. ಒಟ್ಟಿಗೆ ವಸಂತನಾಗಮನ ನಮ್ಮ ಮನೆಗೂ ಬಂದಿದೆ, ಬೇವು-ಬೆಲ್ಲ ತಿನ್ನದಿದ್ದರೇನಂತೆ, ಆ ರೀತಿಯಲ್ಲಿ ನಾವೂ ಹೊಸವರ್ಷದ ಭಾಗಿಗಳೇ ಎಂದು ನನ್ನ ನೆರೆಹೊರೆಯೂ ಸಂತೋಷದ ಮುಖಭಾವ ಹೊದ್ದುಕೊಂಡದ್ದು ಸ್ವಲ್ಪ ಸಮಾಧಾನವನ್ನು ತಂದಿತು.

***

ನಮಗೆ ನಮ್ಮ ನೀತಿ ಚೆಂದ. ಆದರೆ ನಮ್ಮ ಹೊಸವರ್ಷ ನಮಗೆ ಗೊತ್ತಿರೋ ಒಂದಿಷ್ಟು ಜನರಿಗೆ ’ಹೊಸವರ್ಷದ ಶುಭಾಶಯಗಳು’ ಎಂದು ಹೇಳಿ ಮುಗಿಸುವಲ್ಲಿಗೆ ಸೀಮಿತವಾಗಿ ಹೋಯಿತಲ್ಲ ಎಂದು ಒಂದು ರೀತಿಯ ಕಸಿವಿಸಿ. ತೆಲುಗರೋ ಕನ್ನಡಿಗರೋ ಒಟ್ಟಿಗೆ ದಕ್ಷಿಣ ಭಾರತದ ಹೆಚ್ಚು ಜನ ಆಚರಿಸುವ ಹೊಸ ವರ್ಷದ ಆಚರಣೆ ಇದು. ಚಾಂದ್ರಮಾನ ಯುಗಾದಿ ಇರುವ ಹಾಗೆ ಸೂರ್ಯಮಾನದ ಯುಗಾದಿಯೂ ಇದೆ. ಬದುಕಿನಲ್ಲಿ ಸ್ವಾತಂತ್ರ್ಯ ಅಂದರೆ ಇದೇ ಇರಬೇಕು, ನಿಮಗೆ ಯಾವಾಗ ಬೇಕು ಆಗ ಆಚರಿಸಿಕೊಳ್ಳಿ ಎನ್ನುವ ಫ್ರೀಡಮ್! ನಿಮಗೆ ಯಾವ ದೇವರು ಬೇಕು ಅದನ್ನು ಪೂಜಿಸಿಕೊಳ್ಳಿ ಎನ್ನುವ ಧೋರಣೆ. ನಿಮ್ಮ ತರ್ಕ ನಿಮ್ಮ ನೀತಿ ನಿಮ್ಮ ಧರ್ಮ, ಅದ್ದರಿಂದಲೇ ಇರಬೇಕು ಸನಾತನ ಧರ್ಮಕ್ಕೆ ಯಾವುದೇ ಪ್ರವಾದಿಗಳಿರದಿದ್ದುದು. ಇದು ಮತವಲ್ಲ, ಧರ್ಮ, ಜೀವನ ಕ್ರಮ, ಸ್ವಭಾವ, ನಿಮ್ಮ-ನಮ್ಮ ರೀತಿ ನೀತಿ - ಅವೆಲ್ಲವೂ ಒಡಗೂಡಿಯೇ ನಾವು ಒಂದಾಗಿರೋದು - ವೈವಿಧ್ಯತೆಯಲ್ಲೂ ಏಕತೆ.

ನಿಮಗೆ ನಿಮ್ಮ ಹೊಸವರ್ಷ ಯಾವಾಗ ಬೇಕಾದರೂ ಆರಂಭವಾಗಲಿ, ನನಗಂತೂ ಹೊಸವರ್ಷ ಶುರುವಾಗಿದೆ...ಮುಂಬರುವ ದಿನಗಳು ನಮಗೆಲ್ಲ ಒಳ್ಳೆಯದನ್ನು ಮಾಡಲಿ!

ಹೊಸ ವರ್ಷದ ಶುಭಾಶಯಗಳು, ಸರ್ವಧಾರಿ ನಾಮ ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ!

Wednesday, April 02, 2008

ಚಿಲ್ರೆ ಜನಾ ಸಾರ್...

ಇವರು ಕಟ್ಟಿಕೊಂಡ ಪ್ರಾಸೆಸ್ಸುಗಳೇ ಇವರನ್ನ ಕೊನೆಗೆ ಕಟ್ಟಿಕೊಳ್ಳೋದು ಅಂತ ಅನ್ನಿಸಿದ್ದು, ಕೇವಲ ಎರಡು ಸೆಂಟುಗಳ ಸಲುವಾಗಿ ಇಪ್ಪತ್ತು ಡಾಲರ್ ಚಿಲ್ಲರೆ ಮಾಡಿಸಬೇಕಾದ ಪ್ರಸಂಗ ಒದಗಿ ಬಂದಾಗ. ನನ್ನ ಹತ್ತಿರ ಇದ್ದ ಡಾಲರ್ ಬಿಲ್ ಒಂದರಲ್ಲಿ ನಾನು ಏನನ್ನೋ ಕೊಂಡುಕೊಳ್ಳುತ್ತೇನೆ ಎಂದು ಅಂಗಡಿಯನ್ನು ಹೊಕ್ಕ ನನಗೆ ಬೇಕಾದ ವಸ್ತು ಒಂದು ಡಾಲರ್ ಒಳಗಡೆ ಇದ್ದರೂ ಅದಕ್ಕೆ ಏಳು ಪ್ರತಿಶತ ಟ್ಯಾಕ್ಸ್ ಸೇರಿಸಿ ಒಟ್ಟು ಬಿಲ್ ಡಾಲರಿನ ಮೇಲೆ ಎರಡು ಸೆಂಟ್‌ಗಳಾದಾಗ ನನ್ನ ಬಳಿ ಇದ್ದ ಹಣಕಾಸಿನ ಸಾಧನ ಸಾಮಗ್ರಿಗಳು ಒಮ್ಮೆ ಗರಬಡಿದು ಹೋಗಿದ್ದವು: ಈ ಕಡೆ ಡೆಬಿಟ್, ಕ್ರೆಡಿಟ್ ಕಾರ್ಡ್ ಉಪಯೋಗಿಸಲಾರದ ದೀನತೆ, ಆ ಕಡೆ ಇಪ್ಪತ್ತ್ ಡಾಲರುಗಳನ್ನು ಎರಡು ಸೆಂಟಿನ ಸಲುವಾಗಿ ಮುರಿಸಲು ಹಿಂಜರಿದ ಕೊಸರಾಟ ಜೊತೆಗೆ ಅಂಗಡಿಯ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲೇ ಹುಟ್ಟಿ ಬೆಳೆದವು ಎನ್ನುವಂತೆ ಆಡುವ ಒಂದು ಸೆಂಟನ್ನು ಬಿಟ್ಟೂ ಕೆಲಸ ಮಾಡಲಾರೆ ಎನ್ನುವ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಪ್ರಾಸೆಸ್ಸುಗಳು.

ಈ ಒಂದು ಅಥವಾ ಎರಡು ಸೆಂಟುಗಳ ಹಣೆಬರಹವೇ ಇಷ್ಟು - ದಾರಿಯಲ್ಲಿ ಬಿದ್ದರೂ ಯಾರೂ ಅವನ್ನು ಮೂಸಿ ನೋಡದಂಥವುಗಳು, ಅವುಗಳನ್ನು ಉತ್ಪಾದಿಸುವುದರ ಒಟ್ಟು ಮೊತ್ತ ಅವುಗಳ ಮುಖಬೆಲೆಗಿಂತ ಹೆಚ್ಚಿರುವಂತಹವು. ನಮ್ಮ ಕೆಫೆಟೇರಿಯಾ ಮೊದಲಾದ ಸ್ಥಳಗಳಲ್ಲಿ ಸೇಲ್ಸ್ ರಿಜಿಸ್ಟರ್ ಪಕ್ಕದಲ್ಲಿ ಕೆಲವರು ಚೇಂಜ್ ತೆಗೆದುಕೊಳ್ಳದೇ ಬಿಟ್ಟು ಹೋದ ಕಾಪರ್ ಕಾಯಿನ್ನುಗಳನ್ನು ಇಟ್ಟಿರುತ್ತಾರೆ, ನನ್ನಂತಹ ಕಂಜೂಸು ಮನುಷ್ಯರಿಗೆ ಉಪಯೋಗಕ್ಕೆ ಬರಲಿ ಎಂದು! ನನ್ನಂತಹವರು ಎಂದರೆ, ಅನೆಯ ಹಾಗಿನ ಡಾಲರನ್ನು ಹೇಗೆ ಬೇಕೆಂದರಲ್ಲಿ ಎಲ್ಲಿ ಬೇಕೆಂದರಲ್ಲಿ ಹೋಗಗೊಟ್ಟು, ಒಂದೆರಡು ಸೆಂಟುಗಳ ಬಾಲವನ್ನು ಹಿಡಿದು ಎಳೆಯುವಂತಹವರು - ಹೆಚ್ಚೂ ಕಡಿಮೆ ಇನ್ನೊಬ್ಬರ ಒಂದೆರಡು ಸೆಂಟುಗಳನ್ನು ಧಾರಾಳವಾಗಿ ಬಳಸಿದ್ದಿದೆಯೇ ಹೊರತು, ಊಹ್ಞೂ, ನಾವಂತೂ ಕೈ ಎತ್ತಿಯೂ ಇನ್ನೊಬ್ಬರಿಗೆ ಕೊಟ್ಟವರಲ್ಲ. ನಮ್ಮಂತಹವರಿಗೆ ಸಿಂಹಸ್ವಪ್ನವಾಗಿಯೆಂದೇ ಈ ಕಟ್ಟು ನಿಟ್ಟಿನ ಚಿಲ್ಲರೆ ಎಣಿಸಿ ಲೆಕ್ಕ ಇಟ್ಟುಕೊಳ್ಳುವ ಟರ್ಮಿನಲ್ಲುಗಳು, ಅವುಗಳನ್ನು ನಾನು ಶಪಿಸೋದೇ ಹೆಚ್ಚು.

ನೀವು ತರಕಾರಿ ತೆಗೆದುಕೊಳ್ಳೋದಕ್ಕೆ ಯಾವತ್ತಾದರೂ ಫಾರ್ಮರ್ಸ್ ಮಾರ್ಕೆಟ್ಟಿಗೆ ಹೋಗಿ ನೋಡಿ, ಅಲ್ಲಿನ ತೂಕಗಳಾಗಲೀ, ಅಳತೆಗಳಾಗಲೀ ಮೇಲಾಗಿ ಚಿಲ್ಲರೆ ಪ್ರಾಸೆಸ್ಸುಗಳಾಗಲೀ ಎಲ್ಲವೂ ಧಾರಾಳವಾಗಿರುತ್ತವೆ. ನಮ್ಮೂರಿನ ಸಂತೆಯಲ್ಲಿ ಯಾವನಾದರೂ ಬೀನ್ಸು-ಬದನೇಕಾಯಿಗಳನ್ನು ಕೆಜಿ ಕಲ್ಲಿಗೆ ನಿಖರವಾಗಿ ತೂಗಿದನೆಂದರೆ - ’ಏನೂ, ಬಂಗಾರ ತೂಗ್‌ದಂಗ್ ತೂಗ್ತೀಯಲಾ’ ಎಂದು ಯಾರಾದರೂ ಬೈದಿರೋದು ನಿಜ. ಆದರೆ, ಈ ಪಾಯಿಂಟ್ ಆಫ್ ಸೇಲ್ಸ್ ಟರ್ಮಿನಲ್ಲುಗಳಿಗೆ ಧಾರಾಳತೆಯೆನ್ನುವುದನ್ನು ಕಲಿಸಿದವರು ಯಾರು? ಒಂದು ಪೌಂಡಿಗೆ ಇಂತಿಷ್ಟು ಬೆಲೆ ಎಂದು ಮೊದಲೇ ಪ್ರೊಗ್ರಾಮ್ ಮಾಡಿಸಿಕೊಂಡಿರುವ ಇವುಗಳು, ನೀವು ಆಯ್ದುಕೊಂಡ ಪ್ರತಿಯೊಂದು ವಸ್ತುವಿನ ಅಣು-ಅಣುವಿಗೂ ಆ ರೇಟ್ ಅನ್ನು ಅನ್ವಯಿಸಿ, ಅದರ ಒಟ್ಟು ಮೊತ್ತವನ್ನು ನಿಮ್ಮ ರಶೀದಿಗೆ ಸೇರಿಸದಿದ್ದರೆ ಅವುಗಳ ಜನ್ಮವೇ ಪಾವನವಾಗದು. ಇಂತಹ ಸಂದರ್ಭಗಳಲ್ಲೇ ನನಗನ್ನಿಸೋದು, ಧಾರಾಳತೆಗೂ-ಬಡತನಕ್ಕೂ ಅನ್ಯೋನ್ಯತೆ ಇದೆ ಎಂದು. ಹೆಚ್ಚು ಹೆಚ್ಚು ಸಿರಿವಂತರ ಜೊತೆ ವ್ಯವಹಾರ ಮಾಡಿ ನೋಡಿ ಅನುಭವಿಸಿದವರಿಗೆ ಗೊತ್ತು, ಅಲ್ಲಿ ಪ್ರತಿಯೊಂದು ಪೈಸೆಗೂ ಅದರ "ವ್ಯಾಲ್ಯೂ" ಇದೆ, ಅದೇ ಬಡತನದಲ್ಲಿ ಇಂದಿನ ನೂರು ರುಪಾಯಿ ಇಂದಿದೆ, ಅದು ಒಂದಲ್ಲ ಒಂದು ರೀತಿಯಲ್ಲಿ ಕೆಲಸಕ್ಕೆ ಬಂದರಾಯಿತು, ಅದರ ಹಿಂದು-ಮುಂದಿನ ಕರ್ಮ-ಮರ್ಮವನ್ನು ನೆನೆಸಿಕೊರಗುವ ಮನಸ್ಥಿತಿಯೇ ಅಲ್ಲಿಲ್ಲ!

ಇಪ್ಪತ್ತು ಡಾಲರನ್ನು ಮುರಿಸಲಿ ಬಿಡಲಿ, ನಾನು ತೆರಬೇಕಾದರ್ ಎರಡು ಸೆಂಟ್ ಅನ್ನು ಅಂಗಡಿಯವರು ಬಿಡುವಂತಿದ್ದರೆ...ಎಂದು ಒಮ್ಮೆ ಅನ್ನಿಸಿದ್ದು ನಿಜ. ನಮ್ಮೂರಿನ ಶೆಟ್ಟರ ಕಿರಾಣಿ ಮಳಿಗೆಗಳಲ್ಲಿ ಹಾಗೆ ಹಿಂದೆ ಮಾಡಿದ ಅನುಭವ ನನ್ನ ಈ ಕಸಿವಿಸಿಗೆ ಇಂಬು ನೀಡಿರಬಹುದು, ಅಥವಾ ’ಏನು ಎರಡು ಸೆಂಟ್ ತಾನೇ...’ ಎನ್ನುವ ಧಾರಾಳ ಧೋರಣೆ (ನನ್ನ ಪರವಾಗಿ) ಕೆಲಸಮಾಡಿರಬಹುದು. ಈ ಆಲೋಚನೆಗಳ ಒಟ್ಟಿಗೇ, ಹೀಗೇ ನನ್ನಂತಹವರಿಗೆ ಎರಡೆರಡು ಸೆಂಟುಗಳನ್ನು ಬಿಡುತ್ತಾ ಬಂದರೆ ಅಂಗಡಿಯವನ ಕಥೆ ಏನಾದೀತೂ ಎನ್ನುವ ಕೊರಗೊಂದು ಹುಟ್ಟುತ್ತದೆ, ಅದರ ಜೊತೆಗೇ ಜನರೇಕೆ ಸ್ವಲ್ಪ ಉದಾರಿಗಳಾಗಬಾರದು ಎನ್ನುವ ಧಾರಾಳತೆಯೂ ಒದಗಿ ಬರುತ್ತದೆ. ಲೆಕ್ಕ ಅನ್ನೋದು ಮನುಷ್ಯನ ಸೃಷ್ಟಿ, ಧಾರಾಳತೆ ಉದಾರತೆ ಮುಂತಾದವುಗಳು ಭಾವನೆಗಳು ಅವು ಲೆಕ್ಕಕ್ಕೆ ಸಿಕ್ಕುವವಲ್ಲ ಹೀಗಿರುವಾಗ ನಮ್ಮೂರಿನ ಧಾರಾಳ ಆಲೋಚನೆ ಅನುಭವಗಳ ಸಂತೆಯಲ್ಲಿ ಈ ಶ್ರೀಮಂತರ ನಾಡಿನ ಯಂತ್ರಗಳು ತೋರುವ ನಿಖರತೆಯನ್ನು ನಾನು ಯಾವ ಮಟ್ಟದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಿ? ಬರೀ ನನ್ನೊಳಗಿನ ಉದಾರತೆಯನ್ನು ಎಲ್ಲರಿಗೂ ಸಮವೆಂದು ಹೊಸ ಸಾಮಾಜಿಕ ಚಳುವಳಿಯನ್ನು ಹುಟ್ಟು ಹಾಕಲೇ, ಅಥವಾ ಬಡವರೊಳಗಿನ ಲೆಕ್ಕಕ್ಕೆ ಸಿಗದ ಅನಂತವಾದ ಮೌಲ್ಯವನ್ನು ಎಲ್ಲರಲ್ಲೂ ಇರಲಿ ಎಂದು ಹಾರೈಸಲೇ.

ಏನೇ ಹೇಳಿ, ನನ್ನ ಅನಿಸಿಕೆಯ ಪ್ರಕಾರ ಭಿಕ್ಷುಕರಿಗೂ ಬಡವರ ಮನೆಯಲ್ಲೇ ಸುಭಿಕ್ಷವಾಗಿ ಸಿಕ್ಕೀತು, ಅದೇ ಶ್ರೀಮಂತರ ಮನೆಯ ಮುಂದೆ ’ನಾಯಿ ಇದೆ ಎಚ್ಚರಿಕೆ’ ಎನ್ನುವ ಫಲಕವನ್ನು ದಾಟಿ, ಒಂದು ವೇಳೆ ಮನೆಯವರು ಪುರುಸೊತ್ತು ಮಾಡಿಕೊಂಡು ತಮ್ಮ ದೊಡ್ಡ ಮನೆಯಲ್ಲಿನ ಮುಂಬಾಗಿಲನ್ನು ತೆರೆದು ಭಿಕ್ಷುಕರನ್ನು ಗಮನಿಸುವ ಪ್ರಸಂಗ ಬಂದರೂ ಅದು ’ನಿನಗೇನಾಗಿದೆ ಧಾಡಿ ದುಡಿದು ತಿನ್ನಲಿಕ್ಕೆ?’ ಎನ್ನುವ ತತ್ವ ಪ್ರದಾನವಾದ ಬೈಗಳ ಕೆಲವೊಮ್ಮೆ ಸ್ವಲ್ಪ ಭಿಕ್ಷೆಯನ್ನೂ ಹೊತ್ತು ತಂದೀತು. ಏನ್ ಹೇಳ್ಲಿ, ಚಿಲ್ರೇ ಜನಾ ಸಾರ್, ಪ್ರತಿಯೊಂದಕ್ಕೂ ಯೋಚಿಸೋರು - ಅವರೇ ಬಡವರು; ಹೋಗಿದ್ದು ಹೋಗ್ಲಿ ಏನ್ ಬೇಕಾದ್ರಾಗ್ಲಿ ಅನ್ನೋರೇ ಶ್ರೀಮಂತರು, ಬುದ್ಧಿವಂತರು - ಯಾಕೆಂದ್ರೆ ನಿನ್ನೆ-ನಾಳೆಗಳ ಬಗ್ಗೆ ಯೋಚಿಸಿರೋ ಧಣಿಗಳು ಕಡಿದು ಕಟ್ಟಿಹಾಕಿರೋದು ಅಷ್ಟರಲ್ಲೇ ಇದೆ, ಏನಂತೀರಿ?

Monday, March 24, 2008

ಮೀನಿನ ತೊಟ್ಟಿ...

ಮೀನಿನ ತೊಟ್ಟಿಯ ಚಿತ್ರ ಒಂದು ವಾರದ ಹಿಂದೆ ನನ್ನ ಆಫೀಸಿನ ಹತ್ತಿರವೇ ಕುಳಿತುಕೊಳ್ಳೋ ಆಡಮ್ ಆಫೀಸಿನ ಗಾಜಿನ ಗೋಡೆಯ ಮೇಲೆ ಹುಟ್ಟಿಕೊಂಡಿದ್ದು ನಮಗೆಲ್ಲರಿಗೂ ಆಶ್ಚರ್ಯ ತರಿಸಿತ್ತು. ಆಡಮ್ ತನ್ನ ಆಫೀಸಿನ ಒಳಗಡೆಯಿಂದ ಗಾಜಿನ ಮೇಲೆ ಚಿತ್ರ ಬರೆದಿದ್ದ, ಉಳಿದವರಿಗೆ ಹೊರಗಡೆಯಿಂದ ತಮಗೆ ಬೇಕಾದ ಅವತರಣಿಕೆಗಳನ್ನು ಸೇರಿಸುವ ಮುಕ್ತ ಅವಕಾಶ ಇತ್ತು. ಗಾಜಿನ ಗೋಡೆಯ ಮೇಲೆ ಎರಡೂ ಕಡೆಯಿಂದಲೂ ಚಿತ್ರಗಳನ್ನು ಬರೆಯಬಹುದು ಎಂದು ನನಗನ್ನಿಸಿದ್ದು ಆಗಲೆ.

ಎರಡು ಮಕ್ಕಳಿರೋ ಆಡಮ್ ತನ್ನ ಚಿತ್ರದಲ್ಲಿ ನಾಲ್ಕು ಗೋಲ್ಡ್ ಫಿಶ್‌ಗಳು, ಅವುಗಳು ಉಸಿರಾಡೋದಕ್ಕೆ ಅನುಕೂಲವಾಗುವ ಹಾಗೆ ಏರ್ ಬಬಲ್ ಬರುವಂತೆ ಜೊತೆಗೆ ಒಂದು ಗಿಡವನ್ನೂ ಅದರ ಪಕ್ಕದಲ್ಲಿ ಬರೆದಿದ್ದ. ನೀರಿನ ಮಟ್ಟವನ್ನು ಸಾಕಷ್ಟು ಎತ್ತರಕ್ಕೆ ಏರಿಸಿ ’ಸ್ವಲ್ಪ ದಿನಗಳಲ್ಲಿ ನೀರು ಬತ್ತಿ ಹೋದರೂ ಅಡ್ಡಿ ಇಲ್ಲ’ ಎಂದಿದ್ದ. ನಾನು ಕೇಳಿದೆ, ’ನಮ್ಮ ಮನೆಯಲ್ಲಂತೂ ಮೇಂಟೆನೆನ್ಸ್‌ಗೆ ಸುಲಭವೆಂದು ಗೋಲ್ಡ್ ಫಿಶ್‌ ಇಟ್ಟಿದ್ದೇವೆ, ಚಿತ್ರದಲ್ಲಾದರೂ ಬೇರೆ ಮೀನುಗಳನ್ನು ಬರೆಯಬಹುದಿತ್ತಲ್ಲ?’ ಎಂದು. ಆಡಮ್ ’That's a good observation...' ಎಂದು ಚಿಕ್ಕದಾಗಿ ಹೇಳಿ ನಕ್ಕು ಬಿಟ್ಟಿದ್ದ. ಆತ ಬರೆದ ಚಿತ್ರ ಕೇವಲ ಒಂದೇ ಒಂದು ಅದರ ಮೂಲ ಸ್ವರೂಪದಲ್ಲಿ ಉಳಿದಿತ್ತು ಎಂದು ಹೇಳಬಹುದು. ಮರುದಿನ ಆತನೇ ಒಂದು ಗಿಡದ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗಿಡವನ್ನು ಬರೆದ ಹಾಗೂ ಯಾರಿಗಾದರೂ ಸ್ಕೂಬಾ ಡೈವರ್‌ನ ಚಿತ್ರವನ್ನು ಬರೆಯಲು ಬರೆಯುತ್ತದೆಯೇ ಎಂದು ಕೇಳಿದ್ದೂ ಆಯಿತು. ಹೆಚ್ಚಿನ ನಮಗೆ ಬರೋದಿಲ್ಲ ಎಂದು ಹೆಗಲು ಕುಣಿಸಿದೆವು, ಪಕ್ಕದ ಆಫೀಸಿನ ಜೆಫ್ ಬಂದು ಕೇವಲ ಎರಡೇ ನಿಮಿಷಗಳಲ್ಲಿ ಸ್ಕೂಬಾ ಡೈವರ್ ಅನ್ನು ಸೇರಿಸಿಬಿಟ್ಟ. ಜೆಫ್ ಚಿತ್ರ ಬರೆಯೋದಕ್ಕೆ ಮೊದಲು ಸ್ಕೂಬಾ ಡೈವರ್ ಎಂದರೆ ಹೇಗೆ ಬರೆಯಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದ ನನಗೆ ಆತ ಚಿತ್ರ ಬರೆದ ಮೇಲೆ ’ಅಯ್ಯೋ ಇಷ್ಟು ಸುಲಭವೇ!’ ಎನ್ನಿಸಿದ್ದು ನಿಜ.

ಮರುದಿನ ಮುಂಜಾನೆ ನೋಡಿದಾಗ, ಅಕ್ವೇರಿಯಮ್ ತಳಕ್ಕೆ ಒಂದೆರಡು ಹಸಿರು ಸ್ಟಿಕ್ಕರುಗಳು ಅಂಟಿಕೊಂಡಿದ್ದವು. ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಮೀನಿನ ಮುಖವೂ ಬದಿಯಿಂದ ಎದ್ದು ಕಾಣತೊಡಗಿತ್ತು, ಇನ್ನೇನು ಸಣ್ಣ ಮೀನನ್ನು ನುಂಗಿ ಬಿಡುವ ಹಾಗೆ. ಇದಾದ ತರುವಾಯ ಆಡಮ್ ಹಸಿರು ಗಿಡಗಳ ಎಲೆಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಹೋದ. ಮುಂದಿನ ದಿನಗಳಲ್ಲಿ ಗಾಜಿನ ತೊಟ್ಟಿಯ ಮೇಲೆ ಮೀನು ಹಿಡಿಯಲು ಗಾಳ ಹಾಕಿ ಕುಳಿತ ಚಿತ್ರವೂ ಹಾಗೂ ಗಾಜಿನ ತೊಟ್ಟಿಗೆ ಅಡಿಯಿಂದ ಬಿಸಿ ಮಾಡುವಂತೆ ಯಾರೋ ಒಬ್ಬರು ಮೊಂಬತ್ತಿ (ಕ್ಯಾಂಡಲ್ಲ್) ಯನ್ನೂ ಹಚ್ಚಿ ಬಿಟ್ಟಿದ್ದರು! ಈ ಚಿತ್ರಕ್ಕೆ ಕೊನೆಯ ಬದಲಾವಣೆ ಎಂಬಂತೆ ಸಣ್ಣ ಮೀನನ್ನು ನುಂಗಲು ಹವಣಿಸುವ ದೊಡ್ಡ ಮೀನಿನ ಬಾಯಿಯಿಂದ ರಕ್ತ ಜಿನುಗಿದ ಹಾಗೆ ಮತ್ತು ದೊಡ್ಡ ಮೀನಿನ ಕಣ್ಣಿರುವ ಜಾಗೆಯಲ್ಲಿ ಒಂದು ಸ್ಮೈಲಿ ಸ್ಟಕ್ಕರ್ರೂ ಪ್ರತ್ಯಕ್ಷವಾದವು.

ಹೀಗೆ ಒಂದು ವಾರದಲ್ಲಿ ಒಳಗಡೆಯಿಂದ ಆಡಮ್ ಚಿತ್ರವನ್ನು ಬೆಳೆಸುತ್ತಾ ಹೋದ ಹಾಗೆ ಹೊರಗಡೆಯಿಂದ ಅದೇ ಗಾಜಿನ ಮೇಲೆ ಅಕ್ಕ ಪಕ್ಕದ ಜನರು ತಮಗೆ ಬೇಕಾದ ’ಎಲಿಮೆಂಟು’ಗಳನ್ನು ಸೇರಿಸುತ್ತಾ ಹೋದರು. ಆಕ್ವೇರಿಯಮ್ ಎನ್ನುವುದು ನಿಜ ಜೀವನದಲ್ಲಿ ಒಂದು ಜೈವಿಕ ವ್ಯವಸ್ಥೆಯೆಂಬಂತೆ ಈ ಗಾಜಿನ ಮೇಲೆ ಬರೆದ ಚಿತ್ರವೂ ಚಿತ್ರದಲ್ಲಿ ಜೀವಂತವಾಗಿಯೇ ಇತ್ತು.

***

ಚಿತ್ರ ಬರೆಯುವವರ ಮನಸ್ಸಿನಲ್ಲಿದೆ ಎಲ್ಲ ಥರದ ಕಲ್ಪನೆಗಳು, ಅವು ದಿನಕ್ಕೆ, ಘಳಿಗೆಗೊಮ್ಮೆ ಬದಲಾಗುವುದು ಸಹಜ. ಜೊತೆಗೆ ನಿಜ ಜೀವನವೂ ಸಹ ನಾನಾ ರೀತಿಯ ಸವಾಲುಗಳನ್ನು ಒಡ್ಡುವುದು ಇದ್ದೇ ಇದೆ. ಒಂದು ಚಿತ್ರದ ವ್ಯವಸ್ಥೆಯಲ್ಲಿ ಹಲವಾರು ಸರಿ ಉತ್ತರಗಳಿವೆ, ಹೀಗೆ ಬರೆದರೆ ತಪ್ಪು ಎಂಬುವುದು ದೂರದ ಮಾತು. ನೀವು ವಾಷಿಂಗ್ಟನ್ ಡಿಸಿಯ ಕಲಾ ಮ್ಯೂಸಿಯಮ್‌ಗಳನ್ನು ನೋಡಿದ್ದರೆ ನಿಮಗೆ ಗೊತ್ತು, ಪುರಾತನ ಚಿತ್ರಕಲೆಯಿಂದ ಹಿಡಿದು ಆಧುನಿಕ (abstract) ಕಲೆಯವರೆಗೆ ಬೇಕಾದಷ್ಟು ವೇರಿಯೇಷನ್ನುಗಳಿಗೆ ಒಳಪಟ್ಟ ಮಾಧ್ಯಮವದು. ಆಕ್ವೇರಿಯಮ್ ಒಂದು ಜೈವಿಕ ವ್ಯವಸ್ಥೆ, ಅದರ ಹಲವಾರು ವಸ್ತುಗಳು ಅದರದ್ದೇ ಆದ ಒಂದು ವಿಶೇಷ ವಾತಾವರಣವನ್ನು (eco system) ಸೃಷ್ಟಿಸುತ್ತದೆ.

ನೀವು ಬರ್ಲಿನ್ ಗೋಡೆಯ ಮೇಲೆ ಉದ್ದಾನುದ್ದಕ್ಕೂ ಜನರು ಥರಾವರಿ ಚಿತ್ರಗಳನ್ನು ಗೋಡೆಯ ಎರಡೂ ಬದಿಗೆ ಜನರು ಬರೆದ ಡಾಕ್ಯುಮೆಂಟರಿಯನ್ನು ನೋಡಿರಬಹುದು, ಆ ಬಗ್ಗೆ ಕೇಳಿರಬಹುದು. ಅದು ಒಂದು ರೀತಿಯ ಓಪನ್ ಕ್ಯಾನ್‌ವಾಸ್ ಇದ್ದ ಹಾಗೆ. ನಮ್ಮ ಆಫೀಸಿನಲ್ಲೂ ಬೇಕಾದಷ್ಟು ಜನರ ಆಫೀಸಿನಲ್ಲೂ ಈ ರೀತಿಯ ದೊಡ್ಡ ಗಾಜಿನ ಗೋಡೆಗಳಿದ್ದರೂ ಕೇವಲ್ ಆಡಮ್ ಮಾತ್ರ ನಾನು ಕಂಡಂತೆ ಮೊದಲ ಬಾರಿಗೆ ತನ್ನ ಬದಿಗಿದ್ದ ಗಾಜಿನ ಮೇಲ್ಮೈ ಮೇಲೆ ಚಿತ್ರ ಬರೆದು ಉಳಿದವರು ಅದಕ್ಕೇನೇನೋ ರೂಪಗಳನ್ನು ಕೊಡುತ್ತಿದ್ದರೂ ಅದನ್ನು ಪುರಸ್ಕರಿಸುತ್ತಿದ್ದ. ಹೀಗೆ ಒಂದು ವಾರ ಕಳೆದ ನಂತರ ನಿನ್ನೆ ನನ್ನ ಕಣ್ಣೆದೆರಿಗೇ ಈ ಚಿತ್ರವನ್ನು ಅಳಿಸಿ ಹಾಕಿದ, ಏಕೆ ಎಂದು ಕೇಳಿದ್ದಕ್ಕೆ ’ಚಿತ್ರ ಬರೆದದ್ದಾಯಿತು, ಅದು ಬೆಳೆದದ್ದೂ ಆಯಿತು, ಈಗ ಅದು ತನ್ನ ಚಾರ್ಮ್ ಕಳೆದುಕೊಂಡಿದೆ’ ಎಂದ. ಅದು ನಿಜವೂ ಹೌದು ಮೊದಮೊದಲು ಈ ಚಿತ್ರದ ಹತ್ತಿರ ಸುಳಿದಾಡುವವರು ಒಂದಲ್ಲ ಒಂದು ರೀತಿಯ ಕಾಮೆಂಟುಗಳನ್ನು ಹಾಕಿ ಹೋಗುತ್ತಿದ್ದರು, ಅನಂತರ ಈ ಚಿತ್ರ ಗೌಣವಾಯಿತು.

***

ನನಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಈ ಚಿತ್ರ ಆಫೀಸಿನ ಕ್ರಿಯೇಟಿವಿಟಿಗೆ ಒಂದು ಮಾದರಿಯಾಗಿತ್ತು. ಕೆಲವರು ಮಾರ್ಕರ್ ಪೆನ್ನುಗಳಿಂದ ಚಿತ್ರಕ್ಕೆ ತಮ್ಮದೊಂದು ಕೊಡುಗೆಯನ್ನು ನೀಡಿದ್ದರೆ, ಇನ್ನು ಕೆಲವರು ವರ್ಬಲ್ ಕಾಮೆಂಟುಗಳನ್ನು ಹಂಚಿಕೊಂಡರು. ಕೆಲವರು ಚಿತ್ರವನ್ನು ಬೆಳೆಸಿದರೆ (constructive), ಇನ್ನು ಕೆಲವರು ಅದನ್ನು ಧ್ವಂಸ ಮಾಡಲು ನೋಡಿದರು (destructive). ಜನರ ಸೃಜನಶೀಲತೆ, ಅವರ ಮನಸ್ಸಿಗೆ ಹಿಡಿದ ಕನ್ನಡಿ ಎನ್ನುವುದು ಇಲ್ಲಿ ನನಗಂತೂ ಸ್ಪಷ್ಟವಾಗಿತ್ತು.

Wednesday, March 19, 2008

ಮೀನಿನ ತೊಟ್ಟಿ, ಬದುಕು ಮತ್ತು ಸೃಜನಶೀಲತೆ


ಇದರ ಬಗ್ಗೆ ಲೇಖನ ಬರೀತೀನಿ, ಈ ಚಿತ್ರವನ್ನು ನೋಡಿ ನಿಮಗೇನನ್ನಿಸುತ್ತೋ ಅನ್ನೋದನ್ನ ತಿಳಿಸಿ.

Sunday, January 06, 2008

ಪರಿಸ್ಥಿತಿಯ ಕೈ ಗೊಂಬೆ

ಅಸಹಾಯಕತೆ ಅನ್ನೋದು ದೊಡ್ಡದು, ಆದರೆ ನಮ್ ನಮ್ ಕೈಯಲ್ಲಿ ಆಗೋಲ್ಲ ಅಂತ ಕೈ ಚೆಲ್ಲಿ ಕುಳಿತುಕೊಳ್ಳೋದು ದೊಡ್ಡದಲ್ಲ, ಆಯಾ ಪರಿಸ್ಥಿತಿಗೆ ತಕ್ಕಂತೆ ನಾವು ಏನು ಮಾಡಬಲ್ಲೆವು ಸುಮ್ಮನಿರೋದನ್ನು ಬಿಟ್ಟು ಅನ್ನೋದು ಮುಖ್ಯ. ಕೆಲವೊಮ್ಮೆ ವಿಷಯವನ್ನ ನಮ್ಮ ಕೈಗೆತ್ತಿಕೊಳ್ಳಬೇಕಾಗುತ್ತೆ, ಇನ್ನು ಕೆಲವು ಸಲ ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಸುಮ್ಮನಿರುವುದೇ ಒಳಿತು ಅನ್ನಿಸಬಹುದು ಅನುಭವಗಳ ಹಿನ್ನೆಲೆ ಇದ್ದೋರಿಗೆ. ಹೀಗೆ ಹಳೆಯ ಕನ್ನಡ ಚಿತ್ರಗಳ ಡಿವಿಡಿಯೊಂದನ್ನು ನೋಡ್ತಾ ಇರುವಾಗ ಬಹಳ ದಿನಗಳಿಂದ ಯೋಚನೆಗೆ ಸಿಕ್ಕದ ನಮ್ಮೂರುಗಳಲ್ಲಿ ಜನ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಾರೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು.

***

ಹೊಡೆದಾಟ ಬಡಿದಾಟದಲ್ಲಿ ಬೇರೆ ಯಾರೂ ಬೇಡಪ್ಪ, ನನ್ನ ದೊಡ್ಡ ಅಣ್ಣನೇ ಸಾಕು. ನಾಲ್ಕು ಹೊಡೆತ ಕೊಟ್ಟೂ ಬರಬಲ್ಲ, ಹಾಗೇ ತಿಂದುಕೊಂಡು ಬಂದಿದ್ದೂ ಇದೆ. ಒಂದು ದಿನ ಯಾವುದೋ ಕೆಲಸ ಕಾರ್ಯ ಮಾಡಿಸಿಕೊಳ್ಳಲೆಂದು ನಮ್ಮೂರಿನ ಮಂಡಲ ಪಂಚಾಯಿತಿ ಪ್ರಧಾನರನ್ನು ಹುಡುಕಿಕೊಂಡು ನಮ್ಮಣ್ಣ ಬಸ್‌ಸ್ಟ್ಯಾಂಡ್ ಹಿಂಬಾಗವಿರೋ ಜರಮಲೆಯವರ ಸಾ ಮಿಲ್‌ ಆಫೀಸಿಗೆ ಹೋಗಿದ್ದನಂತೆ. ಅಲ್ಲಿ ಶ್ರೀಮಂತರುಗಳ ದಂಡು ದೊಡ್ಡದಾಗಿ ಜಮಾಯಿಸಿತ್ತಂತೆ. ನಮ್ಮಣ್ಣ ಏನೋ ಕಾರಣಕ್ಕೆಂದು ಹೋದವನು ಮಾತಿಗೆ ಮಾತು ಬೆಳೆದು ಅಲ್ಲಿ ದೊಡ್ಡ ಮನುಷ್ಯರುಗಳ ನಡುವೆ ಉಪಸ್ಥಿತರಿದ್ದ ಮಂಡಲ ಪ್ರಧಾನರ ಬಾಯಿಂದ ಸೂಳೇಮಗನೇ ಎಂದು ಬೈಯಿಸಿಕೊಂಡನಂತೆ. ಹಾಗೆ ಅವರು ಬೈದದ್ದೇ ತಡ ಇವನಿಗೆ ಇಲ್ಲಸಲ್ಲದ ಸಿಟ್ಟು ಬಂದು ಅಷ್ಟು ಜನರಿರುವಂತೆಯೇ ಪ್ರಧಾನರನ್ನು ಹಿಡಿದೆಳೆದು ಹಿಗ್ಗಾಮುಗ್ಗಾ ಹೊಡೆದು ಹೊಟ್ಟೆಯೊಳಗಿನ ಕರುಳೂ ಕಿತ್ತುಬರುವಂತೆ ಪಂಚ್ ಮಾಡಿ ಬಂದಿದ್ದ. ಮುಂದಾಗುವ ಕಷ್ಟನಷ್ಟಗಳನ್ನರಿತವನು ಅಲ್ಲೇ ಹತ್ತಿರವಿದ್ದ ಪೋಲೀಸ್ ಸ್ಟೇಷನ್ನಿಗೆ ಓಡಿಬಂದು ಸಬ್‌ಇನ್ಸ್ಪೆಕ್ಟರ್ ಹತ್ತಿರ ಇರುವ ವಿಷಯವೆಲ್ಲವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದ.

ಅಷ್ಟೊಂದು ಜನರ ಮುಂದೆ ಮಂಡಲ ಪ್ರಧಾನರನ್ನು ಆಸ್ಪತ್ರೆಗೆ ಸೇರಿಸುವಷ್ಟರ ಮಟ್ಟಿಗೆ ಹೊಡೆದರು ಅವರು ಬಿಟ್ಟಾರೇನು? ನಮ್ಮಣ್ಣನ ಮೇಲೆ 302, 302A ಮುಂತಾದ ಸೆಕ್ಷನ್ನುಗಳನ್ನು ಹೇರಿ, ಜೀವ ತೆಗೆಯಲು ಬಂದಿದ್ದನೆಂದು ಪುರಾವೆಗಳನ್ನೊದಗಿಸಿ ಸಾಬೀತು ಮಾಡಿದ್ದೂ ಆಯಿತು. ನಮ್ಮಣ್ಣ ಜೈಲಿನಿಂದ ಹೊರಬರುವಾಗ ಮತ್ತಿನ್ಯಾರದ್ದೋ ಕೈ ಕಾಲು ಹಿಡಿದು ಜಾಮೀನು ಪಡೆಯುವಂತಾಯ್ತು. ಇವೆಲ್ಲ ಆಗಿನ ಮಟ್ಟಿಗೆ ನಡೆದ ಕಷ್ಟಗಳಾದರೆ ಒಂದೆರಡು ದಿನಗಳಲ್ಲಿಯೇ ನಮ್ಮನೆಯ ಮುಂಬಾಗಿಲ ಬೀಗ-ಚಿಲಕವನ್ನು ಕಿತ್ತು ಎಸೆಯುವುದರಿಂದ ಹಿಡಿದು ಅನೇಕಾನೇಕ ಕಿರುಕುಳಗಳನ್ನು ಕೊಟ್ಟಿದ್ದೂ ಅಲ್ಲದೆ, ಇಂದಿಗೂ ಆ ಶ್ರೀಮಂತರ ತಂಡ ನಮ್ಮ ಮನೆಯವರನ್ನು ಕಂಡರೆ ಒಂದು ರೀತಿಯ ಅಸಡ್ಡೆಯನ್ನು ಪ್ರದರ್ಶಿಸುತ್ತದೆ ಎಂದರೂ ತಪ್ಪಲ್ಲ. ಇಷ್ಟೂ ಸಾಲದು ಎಂಬಂತೆ ವಾರ-ತಿಂಗಳುಗಟ್ಟಲೆ ಸೊರಬದ ಕೋರ್ಟಿಗೆ ಅಲೆದದ್ದೂ ಆಯಿತು, ಒಂದು ಬಗೆಯ ಒಪ್ಪಂದವನ್ನೂ ಮಾಡಿಕೊಂಡಿದ್ದಾಯಿತು.

ನಾನು ಈ ಸಂಬಂಧವಾಗಿ ಈ ಘಟನೆ ನಮ್ಮ ನಡುವೆ ಮಾತಿಗೆ ಬಂದಾಗಲೆಲ್ಲ ನಮ್ಮಣ್ಣನನ್ನು ಮನಸೋ ಇಚ್ಛೆ ಬೈದಿದ್ದೇನೆ. ರಿಟೈರ್ ಆಗಿರುವ ಅಮ್ಮನಿಗೆ ಕಿರುಕುಳ ಕೊಡೋದಕ್ಕೆ ನೀನು ನಿನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತೇನು? ಇಂದು ಅವರು ನಲ್ಲಿಯ ಪೈಪ್ ಅನ್ನು ಒಡೆದು ಹೋಗುತ್ತಾರೆ, ನಾಳೆ ಮತ್ತೊಂದನ್ನು ಮಾಡುತ್ತಾರೆ ಅವುಗಳಿಂದ ನೀನು ನಮ್ಮೆಲ್ಲರನ್ನು ರಕ್ಷಿಸುವ ತಾಕತ್ತಿದೆಯೇನು? ಅವರು ದುಡ್ಡಿದ್ದೋರು, ಅವರು ಹೇಳಿದಂತೆ ನಡೆಯೋ ಪೋಲೀಸು-ಕೋರ್ಟುಗಳ ಮುಂದೆ ಕೆಲಸವಿಲ್ಲದೇ ತಿರುಗೋ ನಿನ್ನ ದರ್ಪ ನಡೆಯೋದು ಅಷ್ಟರಲ್ಲೇ ಇದೆ! ಮುಂತಾಗಿ ಬೇಕಾದಷ್ಟು ಬೈದಿದ್ದೇನೆ, ಕೊರೆದಿದ್ದೇನೆ. ಇವೆಲ್ಲಕ್ಕೂ ನಮ್ಮಣ್ಣ ಹಿಂದೆ ’ಅವರು ಏನಂದರೂ ಅನ್ನಿಸಿಕೊಂಡು ಬರೋಕಾಗುತ್ತೇನು?’ ಎಂದು ಅದೇನೇನೋ ಹೇಳುತ್ತಿದ್ದವನು ಇಂದು ಮೌನ ಅವನ ಉತ್ತರವಾಗುತ್ತದೆ. ನಾನು ಬೇಕಾದರೆ ನಾಲ್ಕು ಹೊಡೆತ ತಿಂದುಕೊಂಡೋ ಬೈಯಿಸಿಕೊಂಡೋ ಮನೆಗೆ ಅತ್ತುಕೊಂಡು ಬರುತ್ತೇನೆಯೇ ವಿನಾ ಇವತ್ತಿಗೂ ಯಾವನಿಗೋ ಹೊಡೆದು ಆಸ್ಪತ್ರೆ ಸೇರಿಸಿ ಅವರು ನನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜಾಮೀನು ಪಡೆಯೋ ಸ್ಥಿತಿ ಬರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

***

೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.

ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್‌ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.

***

ಇಂತಹ ಸಂದರ್ಭಗಳು ನಮ್ಮೂರಲ್ಲಿ ಹೊಸದೇನೂ ಅಲ್ಲ. ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು ಎಂದ ಹಾಗೆ ಕೆಲವರಿಗೆ ಏಟು ಬೀಳದೇ ಬಗ್ಗಲಾರರು. ರಾಜ್‌ ಪಾತ್ರದಲ್ಲಿ ಯಾರೇ ಇದ್ದರೂ ಏನು ಮಾಡಬಹುದಿತ್ತು? ತನ್ನ ತಂಗಿಯ ಮದುವೆ ನಿಂತು ಹೋಗುತ್ತಿರುವಾಗ ತಾನು ಕಾನೂನನ್ನು ಕೈಗೆ ತೆಗೆದುಕೊಂಡದ್ದು ಸರಿಯೇ, ತಪ್ಪೇ? ತೂಗುದೀಪ ಶ್ರೀನಿವಾಸರನ್ನು ಹೊಡೆಯದೇ ರಾಜ್ ಆತನ ಬಗ್ಗೆ ಕಂಪ್ಲೇಂಟನ್ನು ಬರೆದುಕೊಡಬಹುದಿತ್ತು, ಬೇರೆ ಯಾರಾದರೊಬ್ಬರ ಬಳಿ ಮದುವೆಯ ಮಹೂರ್ತ ಮೀರಿ ಹೋಗುವುದರೊಳಗೆ ಸಾಲ ಮಾಡಿ ಮುಂದೆ ಯೋಚಿಸಬಹುದಿತ್ತು, ಇತ್ಯಾದಿ ದಾರಿಗಳಿದ್ದರೂ ರಾಜ್ ಮಾಡಿದ್ದೇ ಸರಿ ಎನಿಸೋದಿಲ್ಲವೆ? ತನಗೆ ನ್ಯಾಯವಾಗಿ ಬರಬೇಕಾದ ಹಣವನ್ನು ಇನ್ನೊಬ್ಬರು ’ನೀನು ಕೊಟ್ಟೇ ಇಲ್ಲ’ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೇ ನಕ್ಕು ಬರುವುದಕ್ಕೆ ಉಪ್ಪು ಹುಳಿ ಖಾರ ತಿಂದ ಯಾರಿಗಾದರೂ ಸಾಧ್ಯವಿದೆಯೇನು?

Wednesday, January 02, 2008

ಹಾಡಿನ ಸವಾಲ್

ನಿನ್ನೆ ಏನನ್ನೋ ಹುಡುಕಿಕೊಂಡು ಕೂತಿರಬೇಕಾದ್ರೆ ಒಂದಿಷ್ಟು ಹಳೇ ಕನ್ನಡ ಚಲನಚಿತ್ರಗಳ ಉಗ್ರಾಣ ನನ್ನ ಕಂಪ್ಯೂಟರಿನಲ್ಲಿದ್ದದ್ದು ಕಣ್ಣಿಗೆ ಬಿತ್ತು. ಹಳೇ ಹಾಡುಗಳೂ ಅಂತಂದ್ರೆ ೯೦ ರ ದಶಕದಿಂದ ಈಚೆಯವು, ಅದಕ್ಕಿಂತ ಹಿಂದೆ ಹೋದ್ರೆ ಅದು ಪುರಾತನ ಆಗ್ಬಿಡುತ್ತೆ ಅಂತ್ಲೇ ಹೇಳ್ಬೇಕು.

’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು...’ ಅಂತ ನಾನೇನಾದ್ರೂ ಕಾರ್‌ನಲ್ಲಿ ಕೂತಾಗ ಗೊಣಗಿಕೊಂಡೇ ಅಂತಂದ್ರೆ ಪಕ್ಕದವರಿಗೆ ನನ್ನ ವಯಸ್ಸೆಲ್ಲಿ ಗೊತ್ತಾಗಿಬಿಡುತ್ತೋ ಅನ್ನೋ ಹೆದರಿಕೇ ಬೇರೆ ಕೇಡಿಗೆ.

ನನ್ನ ಉಗ್ರಾಣದಲ್ಲಿದ್ದ ಒಂದಿಷ್ಟು ಹಾಡುಗಳನ್ನ ಕೇಳ್ತಾ ಕೇಳ್ತಾ ಸಂತೋಷದ ಛಾಯೆ ಇರ್ಲಿ ಅದರ ನೆರಳೂ ಹತ್ತಿರ ಸುಳಿಯದಂತೆ ನಿರಾಶೆಯ ಮೋಡಗಳು ಆವರಸಿಕೊಳ್ಳತೊಡಗಿದವು. ನಾನು ಹುಟ್ಟಿದಾಗಿನಿಂದ ಕನ್ನಡಿಗನೇ ಹೌದು, ಆದರೆ ಇತ್ತೀಚಿನ ಸಾಹಿತ್ಯವೋ ಅಥವಾ ಅದನ್ನ ಹೇಳೋ ಅರೆಬರೆ ಕನ್ನಡಿಗರೋ ಅಸ್ಪುಟ ಕನ್ನಡವೋ ಅಥವಾ ಹಾಡಿನ ಪದಗಳನ್ನು ಮುಚ್ಚಿ ಮರೆಮಾಡುವಂತೆ ಕಿವಿಗಡಿಚಿಕ್ಕುವ ಮ್ಯೂಸಿಕ್ಕೂ - ಪದಗಳೇ ಸರಿಯಾಗಿ ಅರ್ಥವಾಗುತ್ತಿಲ್ಲ. ರಾಗ-ತಾಳವಂತೂ ನನಗೆ ಸಿಕ್ಕೋದೇ ಇಲ್ಲ ಬಿಡಿ, ಆದರೆ ಹಾಡಿನ ಸಾಹಿತ್ಯವೂ ನನಂಥ ಕೇಳುಗನಿಗೆ ಹೊಳೆಯದೇ ಹೋದರೆ ಹೇಗೆ?

ಎ.ಕೆ. ೪೭ ಸಿನಿಮಾದ ಈ ಹಾಡನ್ನು ನೀವೇ ಕೇಳಿ ನೋಡಿ ಅಥವಾ ಓದಿ ನೋಡಿ, ’ಪ್ರೇಮಪತ್ರ ರವಾನಿಸಬೇಡ’ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಪ್ರಾಸಗಳನ್ನು ಜೋಡಿಸೋದಕ್ಕೆ ಹೋಗಿ ನಮ್ಮ ಕವಿಗಳು ಈ ರೀತಿ ಹಾಡನ್ನು ಕಟ್ಟೋದಲ್ದೇ ಅದನ್ನ ಯಾರು ಯಾರೋ ಗಂಟಲಲ್ಲಿ ಹೇಳಿಸಿ ಅದಕ್ಕಿನ್ನೊಂದು ಅರ್ಥ ಬರೋ ಹಾಗ್ ಮಾಡ್ತಾರಲ್ಲಪ್ಪಾ ಅನ್ನಿಸ್ತು.

’ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು’


ಆ ನಗುವನ್ನು ಬಿಸಾಕೋದು ಅಂದ್ರೆ ಏನು, ಅದೇನು ಕಾಫಿ ಕುಡಿದು ಬಿಸಾಡೋ ಕಪ್ಪೇ? ಅಥವಾ ನಾಯಿಗಳಿಗೊಂದು ಬಿಸ್ಕಿಟ್ ಎಸೀತಾರಲ್ಲ ಹಾಗಾ? ಇಸ್ಪೀಟ್ ಎಲೇನ ಬಿಸಾಕೋದ್ ಕೇಳಿದ್ದೀನಿ...ಟ್ರಾಷ್ ಎತ್ತಿ ಬಿಸಾಕೋದು ಅಂದ್ರೆ ಗೊತ್ತು, ಆದರೆ ನಗುವನ್ನ ಚೆಲ್ಲಿ ಗೊತ್ತು, ಬಿಸಾಕಿ ಗೊತ್ತೇ ಇಲ್ಲ.

ಈ ಬಿಸಾಕೋದರ ಬಗ್ಗೆ ಇನ್ನೂ ಕೇಳಿದ್ದೀವಿ - ’ಭಯಾನ್ ಬಿಸಾಕೋದು...’, ’ದಿಗಿಲ್ ದಬ್ಬಾಕೋದು’, ಇನ್ನೂ ಏನೇನನ್ನೋ ನಾವು ಕ್ರಿಯಾ ಪದಗಳಿಗೆ ಅಳವಡಿಸೋದೇ ಸಾಹಿತ್ಯ ಕೃಷಿ! ಎಷ್ಟೋ ದಶಕದಿಂದ ಹಾಡಿಕೊಂಡ್ ಬಂದಿರೋ ಎಸ್.ಪಿ. ಅಂಥೋರೇನೋ ಸ್ವಲ್ಪ ತಮ್ಮ್ ತಮ್ಮ್ ಉಚ್ಛಾರಣೆಯಲ್ಲಿ ಸುಧಾರಿಸಿಕೊಂಡ್ರೋ ಏನೋ (ಇಷ್ಟೊಂದ್ ದಿನ ಕನ್ನಡ ನೀರ್ ಕುಡ್ದು ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಹೆಂಗೆ?), ಉಳಿದೋರ್ ಕಥೆ ಏನ್ ಹೇಳೋಣ?

ಅಪ್ತಮಿತ್ರದ ’ಇದು ಹಕ್ಕೀ ಅಲ್ಲ’ ಹಾಡಿನಲ್ಲಿ ’ಬಾಲಾ ಇದ್ರೂನೂ ಕೋತೀ ಅಲ್ಲಾ’ ಅನ್ನೋ ಸಾಲು ಇವತ್ತಿಗೂ ನನಗೆ ನೈಜವಾಗಿ ಕೇಳೋದೇ ಇಲ್ಲ - ಎಲ್ಲಾ ಉತ್ತರ ಭಾರತದವರ ದಯೆ.

ನಮ್ಮೂರಿನ ಸಿಲ್ವರ್ರು, ಗೋಲ್ಡೂ, ಪ್ಲಾಟಿನಮ್ಮ್ ಸ್ಟಾರ್‌ಗಳಿಗೆ ನಮ್ಮೋರ್ ಧ್ವನಿ, ಉಚ್ಛಾರಣೆ ಹಿನ್ನೆಲೇನಲ್ಲಿ ಇದ್ರೆ ಹೆಂಗೆ ಸ್ವಾಮೀ? ಸ್ವಲ್ಪ ಫ್ಯಾಷನ್ನೂ, ಗಿಮಿಕ್ಕೂ ಇದ್ರೇನೇ ಮಜಾ - ಅವ್ರುಗಳ ಮುಖಾಮುಸುಡಿ ಹೆಂಗಾದ್ರೂ ಇರ್ಲಿ ಹಿನ್ನೆಲೆ ಗಾಯನಕ್ಕೆ ಮಾತ್ರ ಒಂದು ದೊಡ್ಡ ಧ್ವನಿ ಬೇಕು. ಬೇರೇ ಏನೂ ಇಲ್ಲಾ ಅಂತದ್ರೂ ಧ್ವನಿ ಸುರುಳೀ ಅನ್ನೋ ಹೆಸರ್ನಲ್ಲಿ ಸೀ.ಡಿ.ಗಳನ್ನ ಮಾರೋಕಾಗುತ್ತಲ್ಲಾ ಅಷ್ಟೇ ಸಾಕು.

ಪರವಾಗಿಲ್ಲ, ಬೆಂಗ್ಳೂರ್‌ನಲ್ಲಿ ಕೂತುಗೊಂಡು ಬ್ರೂಕ್ಲಿನ್ನಲ್ಲಿ ಹುಟ್ಟಿ ಬೆಳೆದೋರ್ ಥರ ರ್ಯಾಪ್ ಮ್ಯೂಸಿಕ್ಕನ್ನ ಹಾಡ್ತಾರ್ ಸಾರ್ ನಮ್ಮೋರು. ಹಾಡ್ರೋದ್ರು ಜೊತೆಗೆ ಅದನ್ನ ಕನ್ನಡದ ಹಾಡ್ನಲ್ಲೂ ಸೇರ್ಸಿ ಒಂದ್ ಥರಾ ಹೊಸ ರಿಧಮ್ಮನ್ನೇ ಜನ್ರ ಮನಸ್ನಲ್ಲಿ ತುಂಬ್ತಾರೆ. ರ್ಯಾಪ್‌ಗೇನಾಬೇಕು ಸುಮ್ನೇ ಉದ್ದಕ್ಕೆ ಬರೆದಿದ್ದನ್ನ ಫಾಸ್ಟ್ ಆಗಿ ಓದ್ಕೊಂಡ್ ಹೋದ್ರೇ ಸಾಲ್ದೇನು? ಎಲ್ಲೋ ಒಂದು ಧ್ವನಿ ಯಾವ್ದೋ ರಾಗ್ದಲ್ಲಿ ಹುಟ್ಟಿ ಬರ್ತಾ ಇರುತ್ತೆ, ಅದರ ಮಧ್ಯೆ ಕೀರ್ಲು ಧ್ವನೀನೂ ಸೇರುಸ್ತಾರೆ, ಸುಮ್ನೇ ತಮಟೇ-ಡ್ರಮ್ಮು-ನಗಾರಿಗಳನ್ನ ಬಡೀತಾರೆ - ಇಷ್ಟೆಲ್ಲಾ ಯಾಕ್ ಮಾಡ್ತಾರೇ ಅಂತಂದ್ರೆ ಚಿತ್ರಕಥೆ ಬರೆಯೋರು ’ನಾಯಕನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು, ಸುತ್ತಲಿನಲ್ಲಿ ಕೋಲಾಹಲ ಮುತ್ತಿಕೊಂಡಿತ್ತು’ ಅಂತ ಬರೆದಿರ್ತಾರೋ ಏನೋ ಅನ್ನೋ ಅನುಮಾನ ನನ್ದು. ಹ್ಞೂ, ಅದೆಲ್ಲ ನನ್ ಲಿಮಿಟೇಷನ್ನ್ ಆಗಿದ್ರೆ ಎಷ್ಟೋ ಸೊಗಸಾಗಿರ್ತಿತ್ತು, ಆದರೆ ಚಿತ್ರವನ್ನ ನಿರ್ದೇಶನ ಮಾಡೋರ್ ಲಿಮಿಟ್ಟಾಗುತ್ತೇ ನೋಡಿ ಅದೇ ದೊಡ್ಡ ಕೊರಗು.

***

Really, this works - ಸುಮ್ನೇ ಪ್ರಾಸದ ಮೇಲೆ ಪ್ರಾಸ ಕಟ್ಟಿಕೊಂಡು ಹೋಗಿ, ಕನ್ನಡಿಗರಲ್ದೇ ಬೇರೆ ಯಾರುನ್ನೋ ಕರ್ದೋ ಇಲ್ಲಾ ಅವರ ಮನೇ ಬಾಗಿಲಿಗೆ ನೀವೇ ಹೋಗಿಯೋ ಹಾಡ್ಸಿ, ಅವರು ಹಾಡಿದ್ದನ್ನ ರೆಕಾರ್ಡ್ ಮಾಡಿಕೊಂಡು ಬಂದು ನಮ್ಮೋರಿಗೆ ಕೇಳ್ಸಿ, ಎಲ್ಲೆಲ್ಲಿ ಪದಗಳನ್ನ ಕಾಂಪ್ರೋಮೈಸ್ ಮಾಡ್ಕೊಂಡಿರ್ತೀರೋ ಅಲ್ಲೆಲ್ಲ ನಿಮ್ಮವರಿಗೆ ದೊಡ್ಡದಾಗಿ ಮ್ಯೂಸಿಕ್ ಬಾರ್ಸೋದಕ್ಕೆ ಹೇಳಿ, ಆ ಧ್ವನಿ ಸುರುಳಿ ಸೇಲ್ಸ್ ರೆಕಾರ್ಡ್ ಮುಟ್ಟುತ್ತೆ. ಬೀದರಿನಿಂದ ತಲಕಾಡಿನವರೆಗೆ ನಮ್ಮ ಕನ್ನಡದಲ್ಲಿ ಬೇಕಾದಷ್ಟು ಆಡುಭಾಷೆಗಳಿವೆ, ಅದರ ಜೊತೆಗೆ ಪದಗಳ ಸಂಪತ್ತೂ ಸಿಗುತ್ತೆ. ನಾವು ಸಾಗರ-ಶಿವಮೊಗ್ಗದಿಂದ ಮೈಸೂರಿಗೆ ಹೋದವರಿಗೆ ಅಲ್ಲಿಯವರು, ’ನಮ್ಮಪ್ಪ ಹಾರ್ಮ್‌ಕಾರ’ ಅಂತ ಹೇಳ್ದಾಗ ನಾವು ಡಿಕ್ಷನರಿ ತೆಕ್ಕೊಂಡು ನೋಡೋ, ಅವರಿವರನ್ನು ಕೇಳಿ ತಿಳಿದುಕೊಳ್ಳೋ ಹೊತ್ತಿಗೆ ಅದು ’ಆರಂಭಕಾರ’ ಎಂದು ಗೊತ್ತಾಗಿದ್ದು. ಹೀಗೇ, ’ಎಕ್ಕೂಟ್ಟೋಹೋಗೋದು’, ’ಅದೇನ್...ಕೆಟ್ಟೋಯ್ತೇ’, ಮುಂತಾದ ಪ್ರಯೋಗಗಳನ್ನೂ ಆಡುಭಾಷೆಯ ಒಂದು ವಿಧಾನ ಎಂತ್ಲೇ ನಾವು ಅರ್ಥ ಮಾಡ್ಕೊಂಡಿದ್ವಿ. ಹಾಗೇ, ನಾವು ಮಾತ್ ಮಾತಿಗೆ ’ಎಂಥಾ’ ಅನ್ನೋದನ್ನ ಅವ್ರೂ ಆಡ್ಕೋತಿದ್ರೂ ಅನ್ನಿ. ನಮ್ಮಲ್ಲಿನ್ನ ಡಯಲೆಕ್ಟುಗಳಿಗೆ ಅವುಗಳದ್ದೇ ಒಂದು ರೀತಿ ನೀತಿ ವಿಧಿ ವಿಧಾನ ಅಂತಿವೆ, ಅದು ಖಂಡಿತ ತಪ್ಪಲ್ಲ. ಹೀಗಿನ ಡಯಲೆಕ್ಟುಗಳಲ್ಲಿನ ಪದಗಳನ್ನ ನಾನು ಹಾಡಿಗೆ ತರ್ತೀನಿ ಅನ್ನೋದು ದೊಡ್ಡ ಸಾಹಸವೇ ಸರಿ.

ಏನೂ ಬೇಡಾ ಸಾರ್, ನಮ್ಮಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇದೆ, ಅದರ ಸಹಾಯದಿಂದ ಒಂದಿಷ್ಟು ಲಘು-ಗುರುಗಳನ್ನೆಲ್ಲ ಲೆಕ್ಕಾ ಹಾಕಿ ನಾವೂ ನಾಳೆಯಿಂದ ಬರೆದದ್ದೆನ್ನೆಲ್ಲ ಭಾಮಿನೀ, ವಾರ್ಧಕ ಷಟ್ಪದಿಗೆ ಬದಲಾಯಿಸಿಕೊಂಡ್ರೆ ಹೇಗಿರುತ್ತೆ? ಆ ಕುಮಾರವ್ಯಾಸ ಬರೆದದ್ದಲ್ಲ ಷಟ್ಪದಿಲೇ ಇರ್ತಿತ್ತಂತೆ, ನಾವು ಬರೆದದ್ದನ್ನು ಷಟ್ಪದಿಗೆ ಕನ್ವರ್ಟ್ ಮಾಡ್ಕೊಳ್ಳೋದಪ್ಪ - ಎಲ್ಲೆಲ್ಲಿ ಬ್ರೇಕ್ ಬೇಕೋ ಅಲ್ಲಲ್ಲಿ ಕೊಯ್‌ಕೊಂಡ್ರೆ ಆಯ್ತು! ಅದೂ ಬ್ಯಾಡ, ಪದಗಳ ಕಥೆ ಹಾಗಿರ್ಲಿ, ನಮಿಗೆ ಮಾಧುರ್ಯ-ಇಂಪು-ಕಂಪೂ ಅಂತಂದ್ರೆ ಭಾಳಾ ಆಸೆ ಅಲ್ವ? ಅದಕ್ಕೆ ಕಂಬಾರರ ’ಮರೆತೇನಂದರ ಮರೆಯಲಿ ಹೆಂಗಾs’ ಅನ್ನೋದನ್ನ ತಗೊಂಡು ಕುಮಾರ್ ಸಾನು ಹತ್ರ ಹಾಡ್ಸದಪಾ, ಭಾಳಾ ಚೆನ್ನಾಗಿರುತ್ತೆ. ಇನ್ನೂ ಚೆಂದಾ ಅಂತಂದ್ರೆ ಬೇಂದ್ರೆ ಅವರ ’ನಾಕು-ತಂತಿ’ ತಗೊಂಡ್ ಹೋಗಿ ಸೋನೂ ನಿಗಮ್‌ಗೆ ಕೊಟ್ರೆ ಆಯ್ತು.

***

ನಿಮಗ್ಯಾಕೆ? ನೀವ್ ಸಿನಿಮಾ ನೋಡಲ್ಲ, ಹಾಡಿನ ಸಿ.ಡಿ. ಕೊಳ್ಳೋಲ್ಲ, ಹಿಂಗೆ ಚೀಪ್ ಆಗಿ ಕ್ರಿಟಿಸಿಸಮ್ ಬರೆಯೋಕ್ ನಿಮಗ್ಯಾರ್ ಅಧಿಕಾರ ಕೊಟ್ರೂ? ನಮಗೂ ಭಾಷಾ ಸ್ವಾತಂತ್ರ್ಯಾ ಅನ್ನೋದ್ ಇದೆ, ನಮಿಗೆ ಹೆಂಗ್ ಬೇಕೋ ಹಂಗ್ ಬರಕಂತೀವ್, ಯಾವನ್ ಹತ್ರಾ ಬೇಕಾದ್ರೂ ಹೇಳಿಸಿಕ್ಯಂತೀವ್. ಅದನ್ನ ಕೇಳೋಕ್ ನೀವ್ ಯಾರು? ಯಾವ್ದೋ ದೇಶ್ದಲ್ಲ್ ಕುತಗಂಡು ಕನ್ನಡದ ಬಗ್ಗೇ ನೀವೇನ್ರಿ ಹೇಳೋದು? ಹಂಗಂತ ನಿಮ್ ಕನ್ನಡಾ ಚೆನ್ನಾಗಿದೆಯೇನು? ನೀವು ಬರೆದಿದ್ದೆಲ್ಲಾ ಭಯಂಕರವಾಗಿದೆಯೇನು? ಅಷ್ಟು ತಾಕತ್ತ್ ಇದ್ರೆ ನೀವೇ ಒಂದು ಸಿನಿಮಾ ಮಾಡಿ ತೋರ್ಸಿ. ಅದೂ ಬ್ಯಾಡಪ್ಪಾ - ಈ ಹಾಡಿನ್ ಚಿತ್ರೀಕರಣಕ್ಕೆ ನಲವತ್ತು ಲಕ್ಷಾ ಸುರಿದಿದ್ದೀವಿ, ಅದನ್ನ ನಿಮ್ ಕೈಗೆ ಕೊಡ್ತೀವಿ, ನಲವತ್ತ್ ಲಕ್ಷಾ ತೊಡಗಿಸಿ ನಲವತ್ತು ಹುಟ್ಟಿಸಿಕೊಡೀ ಧಂ ಇದ್ರೆ.

ಥೂ, ಎಲ್ಲೋ ಕುತಗಂಡು ಉದಯಾ ಟಿವಿ ನೋಡ್ಕಂಡು ಅದನ್ನೇ ಬದುಕು ಅಂತ ಕೊರಗೋ ನಿಮ್ಮನ್ನ್ ಕಂಡು ಏನ್ ಹೇಳಣ?!

Sunday, December 23, 2007

ಅದು ಅವರವರ ಕರ್ಮ

’ಅದು ಅವರವರ ಕರ್ಮ’ ಅನ್ನೋ ಮಾತನ್ನ ಅವರೂ ಇವರೂ ಬಳಸಿದ್ದನ್ನ ಕೇಳಿ ಅಭ್ಯಾಸವಿದ್ದ ನನಗೆ ಇತ್ತೀಚೆಗೆ ರಿಪೀಟ್ ಆಗುವಷ್ಟರ ಮಟ್ಟಿಗೆ ಈ ವಾಕ್ಯವನ್ನು ನಾನೇ ಬಳಸುತ್ತಿದ್ದೇನೆ ಎಂಬುದು ನಂಬಲಾಗದ ಮಾತೇ ಸರಿ. ಯಾವುದೇ ಕೆಟ್ಟ ಸುದ್ದಿ ಇರಲಿ ಒಳ್ಳೆಯ ಸುದ್ದಿ ಇರಲಿ, ಅವೆಲ್ಲಕ್ಕೂ ’ಅದನ್ನು ಅವರು ಪಡೆದುಕೊಂಡು ಬಂದಿದ್ದಾರೆ’ ಎನ್ನುವ ಅರ್ಥದಲ್ಲಿ ಬಳಸುವಂತೆ ’ಕರ್ಮ’ವೆಂಬ ಪದವನ್ನು ನಾನು ಉಪಯೋಗಿಸಿದ್ದು ನೋಡಿ ನನಗೇ ನಗು ಹಾಗೂ ಆಶ್ಚರ್ಯವೂ ಆಯಿತು.

ಭಾರತ ದೇಶದಲ್ಲಿ ಬೆಳೆದು ಬಂದ ಹಿನ್ನೆಲೆಯವರಿಗೆ ತಮ್ಮ ಫಿಲಾಸಫಿಯಲ್ಲಿ ಸಿಕ್ಕುವ ಉಪಮೆ, ರೂಪಕ, ಉಪಮಾನ, ತತ್ವ, ಆದರ್ಶಗಳ ಪಟ್ಟಿಯನ್ನು ಮಾಡುತ್ತಲೇ ಹೋದರೆ ಎಂಥ ಪುಸ್ತಕವೂ ಸಾಕಾಗದು. ನಮ್ಮ ತತ್ವಗಳೇ ಬೇರೆ, ನಮ್ಮ ಆದರ್ಶಗಳೇ ಬೇರೆ. ಭಾರತವೆನ್ನುವುದು ಹೀಗೇ ಇದೆ ಎಂದು ಒಂದೆರಡು ಹೋಲಿಕೆ, ಉದಾಹರಣೆಗಳನ್ನು ಕೊಟ್ಟು ಮುಗಿಸಲಾರದ ಮಾತು. ನಮ್ಮ ದೇಶ ಒಂದು ಅಗಾಧವಾದ ಸಾಗರ ಅಥವ ಸಮುದ್ರ, ಅದರ ಅಲೆಗಳನ್ನು ನೋಡಿ ಸಾಗರವನ್ನು ಅಳೆಯಲಾಗುವುದೇ? ವಿಶೇಷವೆಂದರೆ, ಒಂದು ಬಹುರಾಷ್ಟ್ರೀಯ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಆಫ್ರಿಕಾದಿಂದ ಹಿಡಿದು ಚೀನಾದವರೆಗೆ, ಇಸ್ರೇಲ್‌ನಿಂದ ಹಿಡಿದು ಚಿಲಿಯವರೆಗಿನ ಜನರನ್ನು ಕಂಡು ಮಾತನಾಡಿಸಿ, ಅವರೊಡನೆ ವ್ಯವಹರಿಸಿ ಒಡನಾಡುವ ಸಂದರ್ಭಗಳು ಬಂದಾಗಲೆಲ್ಲ ನಮಗೆಲ್ಲ ನಮ್ಮ ಬೆನ್ನ ಮೇಲೆ ಮೂಟೆಗಳು ಇರುವ ಹಾಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಂಸ್ಕೃತಿಯ ಹಿನ್ನೆಲೆ ಇದೆ, ಜೊತೆಗೆ ಅದು ನಮಗಿಂತಲೂ ಬೇರೆಯದೇ ಆಗಿದೆ ಎನ್ನುವುದು ಗಮನಕ್ಕೆ ಬರುವ ಅಂಶ. ಉದಾಹರಣೆಗೆ, ಭಾರತದ ಹಿನ್ನೆಲೆಯಿಂದ ಬಂದವರಿಗೆ ಒಂದು ಕಡೆ ಶ್ರೀ ರಾಮಚಂದ್ರ ಮರ್ಯಾದಾಪುರುಷೋತ್ತಮನೆಂಬ ಆದರ್ಶವೂ ಮತ್ತೊಂದು ಕಡೆ ವಿಭಿನ್ನ ನೆಲೆಯ ಶ್ರೀಕೃಷ್ಣನೂ ಇಬ್ಬರೂ ಒಂದೇ ವ್ಯಕ್ತಿಯ ಆದರ್ಶಗಳಾಗಿ ಕಂಡುಬರುವುದು ಸಾಮಾನ್ಯವಾಗಿ ಕಾಣಬಹುದು. ಅದೇ ಅಂಶವನ್ನು ನೈಜೀರೀಯಾದವರಿಗೋ, ರಷ್ಯನ್ನರಿಗೋ ವಿವರಿಸಿ ಹೇಳುವಾಗ ’ಹೌದಲ್ಲಾ!’ ಎನ್ನುವ ಲೈಟ್‌ಬಲ್ಬ್ ಎಷ್ಟೋ ಜನರ ಮನಸ್ಸಿನ್ನಲ್ಲಿ ಹೊತ್ತಿಕೊಳ್ಳಬಹುದು. ’...ಇತರರ ಸಂಸ್ಕೃತಿಯನ್ನು ಪ್ರೀತಿಸು’ ಎಂದು ಎಷ್ಟೋ ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಿದ ಗಾಂಧಿ ಮುಂಬರುವ ಗ್ಲೋಬಲೈಜೇಷನ್ನಿನ್ನ ಬಗ್ಗೆ ಆಲೋಚಿಸಿದ್ದರೇ ಅಥವಾ ನಮ್ಮೊಳಗೇ ಇರುವ ಅಪಾರ ಸಂಸ್ಕೃತಿಗಳ ಬಗ್ಗೆ ಬೆಳಕು ಚೆಲ್ಲಿದ್ದರೇ?

ನಿಮ್ಮ ಕುಟುಂಬದಲ್ಲಿ ಯಾರಾದರೂ ಪೊಲೀಸ್ ಇಲಾಖೆಯಲ್ಲೋ, ವೈದ್ಯಕೀಯ ವೃತ್ತಿಯಲ್ಲೋ ಕೆಲಸ ಮಾಡುತ್ತಿದ್ದರೆ ದಿನಕ್ಕೊಂದು ಬಗೆಯ ಮನಕರಗುವ ವರದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾರೋ ಸತ್ತರು, ಯಾರೋ ಧಾರುಣವಾಗಿ ಅಪಘಾತದಲ್ಲಿ ಅನುಭವಿಸಿದರು, ಇಂಥವರು ತಮ್ಮ ಮಕ್ಕಳಿಂದ ನರಳುತ್ತಿದ್ದಾರೆ, ಅಂಥವರು ತಮ್ಮ ಪೋಷಕರಿಂದ ಕಂಗಾಲಾಗಿ ಹೋಗಿದ್ದಾರೆ ಇತ್ಯಾದಿ ಇತ್ಯಾದಿ - ಈ ಮನಕಲಕುವ ಸಂಗತಿಗಳು ನಿಲ್ಲುವುದೇ ಇಲ್ಲ. ಮೇಲಿಂದ ಮೇಲೆ ಒಂದಲ್ಲ ಒಂದು ಘಟನೆಯನ್ನು ನೋಡುತ್ತ ನೋಡುತ್ತಲೇ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವವರ ಮನಸ್ಸು ರೋಸಿ ಹೋಗಿ, ’ಅದು ಅವರವರ ಕರ್ಮ’ ಎಂಬ ಜನರಲೈಸ್ಡ್ ಹೇಳಿಕೆಗಳು ಹೊರಬರುವುದೂ ಸಾಮಾನ್ಯವಾಗಿ ಹೋಗಿರಬಹುದು. ನಮ್ಮಲ್ಲಿ ಹೇಳೋ ಹಾಗೆ ’ದಿನಾ ಸಾಯೋರಿಗೆ ಅಳೋರು ಯಾರು?’. ಮೊನ್ನೆ ಇಲ್ಲಿ ಯಾವುದೋ ಒಂದು ಆಸ್ಪತ್ರೆಯ ಬಗ್ಗೆ ಓದುತ್ತಿದ್ದೆ ದಿನಕ್ಕೆ ಹದಿನಾರರಿಂದ-ಇಪ್ಪತ್ತು ಮಕ್ಕಳಿಗೆ ಹೆರಿಗೆ ಮಾಡಿಸುವ ಫೆಲಿಲಿಟಿ ಅದಂತೆ, ಅಲ್ಲಿ ಕೆಲಸ ಮಾಡುವ ನರ್ಸ್ ಅಥವಾ ಆಯಾಗಳ ಬದುಕನ್ನು ಊಹಿಸಿಕೊಂಡು ನೋಡಿ - ಮುಂಜಾನೆಯಿಂದ ಸಂಜೆ ಡ್ಯೂಟಿ ಮುಗಿಯುವವರೆಗೆ ಮಕ್ಕಳನ್ನು ಹೆರುವವರಿಗೆ ಸಹಾಯ ಮಾಡುವುದೇ ಕಾಯಕ - ಅವರ ಮನಸ್ಸಿನ ಚರ್ಮ ಅದೆಷ್ಟು ದಪ್ಪವಿರಬೇಡ!

***

’ಏನಮ್ಮಾ, ಒಂದಿಷ್ಟು ಹಾಲೂ ಮೊಸರನ್ನು ಚೆನ್ನಾಗಿ ತಗೋ, ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ...’ ಅನ್ನೋದು ನಾನು ನನ್ನಮ್ಮನಿಗೆ ವಾರಕ್ಕೊಮ್ಮೆ ಹೇಳೋ ಮಾತು. ಎಷ್ಟು ಹೇಳಿದ್ರೂ ನಮ್ಮಮ್ಮ ದಿನಕ್ಕೆ ಅರ್ಧ ಲೀಟರ್ ಹಾಲಿಗಿಂತ ಹೆಚ್ಚು ತೆಗೆದುಕೊಳ್ಳೋದೇ ಇಲ್ಲ, ಅದೂ ಸ್ಥಳೀಯ ಗೌಳಿಗರು ಕೊಡೋ ನೀರು ಹಾಲು (ಸಹಜವಾಗಿ ಫ್ಯಾಟ್ ಫ್ರೀ). ಅಯ್ಯೋ ನಾವಿಲ್ಲಿ ಎಷ್ಟೊಂದು ಐಶಾರಾಮದಲ್ಲಿ ಇದ್ದೇವೆ, ಅವರು ಅಲ್ಲಿ ಬಡವರಾಗಿ ಬದುಕುತ್ತಾರಲ್ಲ ಅನ್ನೋ ಒಂದು ನೋವು ನನ್ನ ಮನದಲ್ಲಿ ಯಾವತ್ತೂ ಇದ್ದೇ ಇರುತ್ತೆ. ನನ್ನನ್ನು ಹತ್ತಿರದಿಂದ ಬಲ್ಲವರು ಆ ನೋವನ್ನು ’ನೀವೇನೂ ನಿಮ್ಮ ಕುಟುಂಬಕ್ಕೆ ಮಾಡಿಲ್ಲ’ ಅನ್ನೋದು ನಿಮ್ಮ ಗಿಲ್ಟಿ ಮನೋಭಾವನೆ ಎಂದು ಸುಲಭವಾಗಿ ಹೇಳಿ ಬಿಡುತ್ತಾರಾದರೂ ನಾನು ಅಷ್ಟೊಂದು ಸುಲಭವಾಗಿ ಆ ಪಂಥದ ವಾದವನ್ನು ಒಪ್ಪಿಕೊಂಡಿಲ್ಲ. ದುಡ್ಡು ಕಳಿಸಿದರೂ ಎಷ್ಟೊಂದು ಹೇಳಿದರೂ ನನ್ನ ಅಮ್ಮ ಹಳ್ಳಿಯಲ್ಲಿನ ಬದುಕಿಗೆ ಒಗ್ಗಿ ಹೋಗಿದ್ದಾಳೆ, ಆಕೆಗೆ ಅದನ್ನು ಬಿಟ್ಟು ಬೇರೇನೇ ಇದ್ದರೂ ಅದು ಅಸಹಜ ಹಾಗೂ ಅಸಾಮಾನ್ಯ ಎನಿಸುವಾಗ ನಾನು ಏನೇ ಮಾಡಿದರೂ ಅದು ಹೊರಗೇ ಉಳಿದು ಹೋಗುತ್ತದೆ, ಹೋಗುತ್ತಿದೆ. ಆಫೀಸಿನಲ್ಲಿ ಬರೀ ಲೋಟಸ್ ನೋಟ್ಸ್‌ನಿಂದ ಔಟ್‌ಲುಕ್‌ಗೆ ಇ-ಮೇಲ್ ಬದಲಾಯಿಸಿದರೆನ್ನುವ ಬದಲಾವಣೆಯನ್ನು ಸ್ವೀಕರಿಸುವಾಗಲೇ ನನಗೆ ರೋಸಿ ಹೋಗುವಷ್ಟರ ಮಟ್ಟಿಗೆ ಉರಿದುಕೂಳ್ಳುವಾಗ ಇನ್ನು ಹಳ್ಳಿಯಲ್ಲೇ ತನ್ನ ಬದುಕನ್ನು ಸವೆಸಿದವಳನ್ನು ತೆಗೆದು ಪಟ್ಟಣದ ಬಂಗಲೆಯಲ್ಲಿ ಬಿಟ್ಟೆನಾದರೆ ಇಳಿ ವಯಸ್ಸಿನ ಆಕೆಯ ಮನಸ್ಸಿನ ಮೇಲೆ ಏನೇನು ಪರಿಣಾಮಗಳಾಗಲಿಕ್ಕಿಲ್ಲ? ಆ ಒಂದು ಸೆನ್ಸಿಟಿವಿಟಿಯಿಂದಲೇ ಆಕೆ ತನಗೆ ಬೇಕಾದ ಹಾಗೆ ಬದುಕಲಿ ಎಂದು ಸುಮ್ಮನಿದ್ದೇನೆ. ಅಲ್ಲಿ ಹೋಗಿ ಆಕೆಯ ಜೊತೆಯಲ್ಲಿ ಜೀವಿಸುವುದು ನನಗಾಗದ ವಿಚಾರ, ಆಕೆ ಇಲ್ಲಿಗೆ ಬಂದೋ ಅಥವಾ ನಾನಿರುವಲ್ಲಿಗೆ ಬಂದು ಬದುಕುವುದು ಆಗದ ಮಾತು. ಅದೇ ಅವರವರ ಕರ್ಮ, ಅದು ಅವರವರು ಪಡೆದುಕೊಂಡು ಬಂದುದು.

ನಿಮ್ಮ ಸುತ್ತ ಮುತ್ತಲೂ ’ಪರಾಕ್’ ಹೇಳುವ ಏನೇನೇ ವ್ಯವಸ್ಥೆಗಳಿದ್ದರೂ ಕೊನೆಗೆ ನಿಮ್ಮನ್ನು ಸರಳತೆಯಲ್ಲದೇ ಮತ್ತೆನೇ ಆವರಿಸಿಕೊಂಡರೂ ನಿಮ್ಮ ಬದುಕು ಅಷ್ಟೇ ಸಂಕೀರ್ಣವಾಗಿ ಹೋಗುತ್ತದೆ. ಒಂದು ಕಾಲದಲ್ಲಿ ಹಳ್ಳಿಯ ಬದುಕು ಹಾಗಿದ್ದವು, ಬಹಳ ಸರಳವಾಗಿ ಒಮ್ಮುಖವಾಗಿ ಹೋಗುತ್ತಿದ್ದವು. ದಿನಕ್ಕೆ ಹತ್ತು ಬಾರಿ ಗಡಿಯಾರ ನೋಡದೆಯೂ, ಆಧುನಿಕ ಬದುಕು ಸೃಷ್ಟಿಸಿದ ಹಣಕಾಸು ಎಂಬ ಗೊಂದಲವಿರದೆಯೂ ಬದುಕು ನಡೆಯುತ್ತಲೇ ಇತ್ತು. ಹಾಗಂತ ಕಷ್ಟ-ನಷ್ಟಗಳು ಇರಲಿಲ್ಲವೆಂದೇನಲ್ಲ: ಮೇಷ್ಟ್ರಾಗಿ ಇಬ್ಬರೂ-ಮೂರು ಹೆಣ್ಣು ಮಕ್ಕಳ ಮದುವೆ ಮಾಡಿದವರಿಗೆ ಗೊತ್ತು, ಮಕ್ಕಳನ್ನು ಕಾಲೇಜಿನವರೆಗೆ ಜನರಲ್ ಮೆರಿಟ್‌ನಲ್ಲಿ ಓದಿಸಿದವರಿಗೆ ಗೊತ್ತು, ಜೀವನ ಪರ್ಯಂತ ಒಂದು ದಮಡಿ ಸಾಲವೆನ್ನದೇ ಇದ್ದಷ್ಟು ಚಾಚಿಕೊಂಡಿದ್ದವರಿಗೆ ಗೊತ್ತು ಕಷ್ಟಗಳು ಏನೆಂಬುದು. ನಮ್ಮ ಕಾಲದ ಜೀವನ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತಿವೆ ಎನ್ನುವುದಕ್ಕೆ ಮೊನ್ನೆ ರೆಡಿಯೋದಲ್ಲಿ ಕೇಳಿದ ಒಂದೆರಡು ಅವತರಣಿಕೆಗಳು ಸಾಕ್ಷಿಯಾಗಿದ್ದವು: ನಾವು ಹಿಂದಿಗಿಂತಲೂ ಅಧಿಕ ಮಾನಸಿಕ ಒತ್ತಡದಲ್ಲಿ ಬದುಕನ್ನು ಸವೆಸುತ್ತೇವೆ, ನಮ್ಮ ವಯೋಮಾನದಲ್ಲಿ ತಡವಾಗಿ ಮದುವೆಯಾಗಿ ಮಕ್ಕಳಾಗುತ್ತಿವೆ, ಹಿಂದಿಗಿಂತಲೂ ಹೆಚ್ಚು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ಅಗತ್ಯ ನಮಗಿದೆ. ಹಳೆಯದೆಲ್ಲ ಒಳ್ಳೆಯದು ಎನ್ನುವ ಮಾತಿನ ಹಿಂದೆ ಬರೀ ಇನ್‌ಫ್ಲೇಷನ್ನ್ ಸಂಬಂಧದ ಸುಖ ನೆನಪುಗಳನ್ನು ಮೆಲುಕು ಹಾಕುತ್ತಿದ್ದವನಿಗೆ ಬರೀ ಹಣದುಬ್ಬರವೊಂದೇ ಅಲ್ಲ, ಕೆಸರಿನಲ್ಲಿ ನಮ್ಮನಡರಿಕೊಂಡ ಬಳ್ಳಿಯ ಹಾಗಿನ ಅನೇಕ ಬೆಳವಣಿಗೆಗಳೂ ಕಾರಣ ಎನ್ನುವುದು ಹೊಳೆಯಿತು. ಇಪ್ಪತ್ತು ವರ್ಷದ ಹಿಂದೆ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತರುತ್ತಿದ್ದವನು ಈಗ ಒಂದು ಕೆಜಿ ಅಕ್ಕಿಗೆ ಮೂವತ್ತು ರುಪಾಯಿ ಕೊಡಬೇಕಾಗಿ ಬಂದುದು ದೊಡ್ಡ ವಿಷಯ, ಆದರೆ ಆಗಿನ ವ್ಯವಸ್ಥೆ ಅಲ್ಲಿ ಒಬ್ಬ ಮನೆಯ ಯಜಮಾನ/ನಿಯ ಮನದಲ್ಲಿ ಆಗುತ್ತಿದ್ದ ಮಾನಸಿಕ ಕ್ಷೋಭೆಗಳಿಗೂ ಈಗಿನ ಕುಟುಂಬದ ಆರೋಗ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ಅಭ್ಯಸಿಸಿದ ಇಂಥ ವಿಷಯಗಳನ್ನು ಈ ಬ್ಲಾಗ್ ಪರಿಧಿಯಲ್ಲಿ ಹೇಳುವುದಕ್ಕಾಗಲೀ ಕೇಳುವುದಕ್ಕಾಗಲೀ ಸರಿಯಾದ ವೇದಿಕೆ ಅಲ್ಲವೆಂಬುದರ ಅರಿವು ನನಗಿದೆ, ನನ್ನ ಸೋಲುತ್ತಿರುವ ಭಾಷೆಯಲ್ಲೇ ’ಅವರವರು ಪಡೆದುಕೊಂಡು ಬಂದದ್ದರ’ ಬಗ್ಗೆ, ನಮ್ಮ ಕರ್ಮದ ಬಗ್ಗೆ ಹೇಳುವ ಪ್ರಯತ್ನವನ್ನು ಮಾಡಿದ್ದೇನಷ್ಟೇ.

ಇದನ್ನು ಓದುವುದೂ ಬಿಡುವುದೂ ನಿಮಗೆ ಬಿಟ್ಟಿದ್ದು!

Monday, November 05, 2007

ನಿನ್ನೆ ಹೀಗಿತ್ತು - ಇಂದು ಹೀಗಿದೆ

ಬಹಳ ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಸೀಕೋ (Seiko) ರಿಸ್ಟ್ ವಾಚ್ ಒಂದನ್ನು ನನಗೆ ಉಡುಗೊರೆಯಾಗಿ ನೀಡಿದ್ದ. ಎಂಭತ್ತರ ದಶಕದಲ್ಲಿ ತಯಾರಿಸಲಾಗಿದ್ದ ಅದು ಬಹಳ ಸುಂದರವಾಗಿತ್ತು, ಅದರಲ್ಲಿ ಹೆಚ್ಚೇನು ಕಾಂಪ್ಲಿಕೇಷನ್ನುಗಳಿಲ್ಲದಿದ್ದರೂ (functions) ದಿನ ಹಾಗೂ ವಾರವನ್ನು ಸೂಚಿಸುತ್ತಿತ್ತು, ಜೊತೆಗೆ ಒಂದು ಸೆಕೆಂಡ್ ಮುಳ್ಳು ಕೂಡಾ ಇತ್ತು. ನನ್ನ ಲೇಮನ್ ಭಾಷೆಯಲ್ಲಿ ಹೇಳೋದಾದರೆ ಪ್ರಚನ್ನ ಶಕ್ತಿ (potential energy) ಯನ್ನು ಎದಿರು ಬದಿರು ಹಾಯಬಿಟ್ಟು ಕೆಲಸ ಮಾಡುವಂತಹ ಕೈ ಗಡಿಯಾರ ಅದು. ಅಂದರೆ ನಾನು ತಿಳಿದುಕೊಂಡ ಪ್ರಕಾರ ಅದರಲ್ಲಿ ಎರಡು ಸ್ಪ್ರಿಂಗ್‌ಗಳು, ಒಂದು ಅನ್ ವೈಂಡ್ ಆದ ಹಾಗೆ ಮತ್ತೊಂದು ಸುತ್ತಿಕೊಳ್ಳುತ್ತಿತ್ತು, ಹೀಗೆ ಬ್ಯಾಟರಿ ಇಲ್ಲದೆ ಎಷ್ಟೋ ವರ್ಷಗಳ ಕಾಲ ಅದು ನಡೆಯಬಲ್ಲದಾಗಿತ್ತು. ಅದು ಜಪಾನ್‌ನಲ್ಲಿ ಹುಟ್ಟಿ ಬಂದುದಾದರೂ ಸ್ಪಿಸ್‌ನಲ್ಲಿ ಹುಟ್ಟಿ ಬರುವ ಯಾವ ವಾಚುಗಳಿಗೂ ಕಡಿಮೆಯೇನೂ ಇದ್ದಿರಲಿಲ್ಲ, ಬಹಳ ನಿಖರವಾದ ಸಮಯವನ್ನು ತೋರಿಸುವ ನನ್ನ ಮೆಚ್ಚಿನ ಗಡಿಯಾರವೂ ಆಗಿತ್ತು.

ಆ ಗಡಿಯಾರದ ಬಗ್ಗೆ ಈಗ ಭೂತಕಾಲವನ್ನು ಬಳಸಿ ಬರೆಯುತ್ತಿರುವುದಕ್ಕೆ ಕಾರಣಗಳಿಲ್ಲದೇನಿಲ್ಲ. ಭಾರತದಲ್ಲಿ ಪ್ರತಿನಿತ್ಯವೂ ನನ್ನ ಒಡನಾಡಿಯಾಗಿದ್ದ ಸಮಯ ಪರಿಪಾಲಕ, ಒಂದು ದಿನವೂ ಮೈಂಟೇನನ್ಸ್ ಅನ್ನು ಬೇಡದ, ಬ್ಯಾಟರಿಯಾಗಲೀ ಮತ್ತೊಂದಾಗಲೀ ಕೇಳದ, ರಾತ್ರಿಯಲ್ಲೂ ಸಮಯ ತೋರಿಸುವ (ರೇಡಿಯಂ ಲೇಪಿಸಿದ) ಮುಳ್ಳುಗಳನ್ನು ಹೊಂದಿದ್ದ ಗಡಿಯಾರ ನಾನು ಅಮೇರಿಕಕ್ಕೆ ಬಂದ ಮೊದಮೊದಲಲ್ಲಿಯೇ ಇಲ್ಲಿನ ಸಮಯಗಳ ಬದಲಾವಣೆಯನ್ನು ತಾಳದೆ ಮಾನಸಿಕವಾಗಿ ನೊಂದು ನಿಂತು ಹೋಯಿತು. ಅದನ್ನು ಮತ್ತೆ ಭಾರತಕ್ಕೆ ಹೋದಾಗ ರಿಪೇರಿ ಮಾಡಿಸೋಣವೆಂದು ಎಲ್ಲೋ ತೆಗೆದಿರಿಸಿದ್ದರೆ ಇವತ್ತಿಗೂ ಇನ್ನೂ ಸಿಕ್ಕಿಲ್ಲ, ಅಲ್ಲಿಂದ-ಇಲ್ಲಿಂದ ಬಾಕ್ಸುಗಳಲ್ಲಿ ಬದುಕನ್ನು ಮೂವ್ ಮಾಡಿಕೊಂಡು ಅಲೆಯುವ ನಮ್ಮ ಅಮೇರಿಕದ ಬದುಕಿಗೆ, ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸುವ ಪರಿಪಾಟಲೆಗೆ ಹೆದರಿ ನನ್ನ ಪ್ರೀತಿಯ ಗಡಿಯಾರ ನನ್ನಿಂದ ದೂರವಾಯಿತು ಎಂದುಕೊಂಡು ಅದರ ನೆನಪಾದಾಗಲೆಲ್ಲ ನನ್ನ ಕಾಲಿನ ಕೆಳಗಿನ ನೆಲವನ್ನು ಗಟ್ಟಿಯಾಗಿ ತುಳಿದು ಅವಡುಗಚ್ಚುತ್ತೇನೆ. ವರ್ಷಗಳಿಂದ ಇನ್ನೂ ತೆರೆಯದ ಎಷ್ಟೋ ಬಾಕ್ಸುಗಳ ನಡುವೆ ನನ್ನ ಪ್ರೀತಿಯ ಸಮಯ ಪಾಲಕ ಎಲ್ಲೋ ಇದೆ, ಅದನ್ನು ಇವತ್ತಲ್ಲ ನಾಳೆ ಹುಡುಕಿಯೇ ತೀರುತ್ತೇನೆ ಎನ್ನುವುದು ನನ್ನ ಎಂದೂ ಬತ್ತದ ಛಲ ಅಥವಾ ಹುಂಬ ನಂಬಿಕೆ.

***

ಭಾರತದಲ್ಲಿ ನಾನು ಪಾಲಿಸುತ್ತಿದ್ದ ಸಮಯ ನಿಖರವಾಗಿತ್ತು. ಪಾಕಿಸ್ತಾನದವರು ಯಾವತ್ತೂ ನಮ್ಮಿಂದ ಅರ್ಧ ಘಂಟೆ ಹಿಂದಿದ್ದಾರೆ ಎಂದು ನಾವು ಯಾವತ್ತೂ ತಮಾಷೆ ಮಾಡಿಕೊಳ್ಳುತ್ತಿದ್ದೆವು. ಅದ್ಯಾವುದೋ ಒಂದು ವರ್ಷ ಪಾಕಿಸ್ತಾನದ ಸರ್ಕಾರ ಅಮೇರಿಕನ್ ಮಾದರಿಯಲ್ಲಿ ಸ್ಥಳೀಯ ಸಮಯವನ್ನು ಡೇ ಲೈಟ್ ಸೇವಿಂಗ್ಸ್ ನಿಯಮಕ್ಕನುಸಾರವಾಗಿ ಹಿಂದೆ-ಮುಂದೆ ಮಾಡುವ ಪ್ರಯೋಗವನ್ನು ನೆನೆನೆನೆದು ನಕ್ಕಿದ್ದಿದೆ. ನಾನು ಎನ್ನುವ ವ್ಯಕ್ತಿತ್ವ ನನ್ನ ಸಮಯ ಪಾಲನೆಗೆ ಅನುಗುಣವಾಗಿತ್ತು, ಅಥವಾ ನನ್ನ ಸಮಯಪಾಲನೆ ನನ್ನ ವ್ಯಕ್ತಿತ್ವವಾಗಿತ್ತು. ಹುಟ್ಟಿದಾಗಿನಿಂದ ನಮಗೊಂದೇ ವಾಚು, ನಾವು ಹೋದಲ್ಲಿ ಬಂದಲ್ಲಿ ಅದನ್ನು ಭಾರತದ ಉದ್ದಾನುದ್ದಕ್ಕೆ ಕೊಂಡೊಯ್ಯುತ್ತಿದ್ದೆವು, ನಮ್ಮ ಭಾಷೆ-ಸಂಸ್ಕೃತಿಗಳಲ್ಲೇನಾದರೂ ಬದಲಾವಣೆಗಳಿದ್ದರೂ, ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಉಷ್ಣತೆಯಲ್ಲಿ ಅಗಾಧವಾದ ಬದಲಾವಣೆ ಕಂಡು ಬಂದರೂ - ಭಾರತಕ್ಕೊಂದೇ ವಾಚು. ನಮ್ಮ ವಾಚಿನ ಸಮಯವನ್ನು ನಾವು ಬದಲಾಯಿಸುವ ಅಗತ್ಯವಿರಲಿಲ್ಲ. ಯಾವ ರೆಡಿಯೋ ಸ್ಟೇಷನ್ನುಗಳನ್ನು ಕೇಳಿಯಾದರೂ ನಾವು ಸಮಯವನ್ನು ತಿಳಿಯಬಹುದಿತ್ತು. ಯಾವ ಸೀಜನ್ನಿನಲ್ಲಿಯೂ ಒಂದೇ ಸಮಯ, ವರ್ಷದ ಹನ್ನೆರಡು ಮಾಸಗಳಲ್ಲಿ ಸೂರ್ಯನಿರುವ ಜಾಗೆಯನ್ನು ಇಂತಲ್ಲೇ ಎಂದು ನೆನಪಿಟ್ಟುಕೊಂಡು ಸಮಯವನ್ನು ಸೂಚಿಸುವ ಕಲೆ (instinct) ಈ ಅಕಶರೇಕ ಪ್ರಾಣಿಗಳಲ್ಲೋ ಅಥವಾ ಪಕ್ಷಿಗಳಲ್ಲೋ ವಂಶಪಾರಂಪರ್ಯವಾಗಿ ತಲೆಯಿಂದ ತಲೆಗೆ ಹರಿದು ಬಂದ ಮಹಾನ್ ಸೂತ್ರಗಳ ಹಾಗೆ ನಮಗೊಂದಾಗಿತ್ತು. ಒಮ್ಮೆ ಚೆನ್ನಾಗಿ ಸಮಯವನ್ನು ತೋರಿಸಿದ ಗಡಿಯಾರ ದೊಡ್ಡ ಹೊಡೆತ ಬಿದ್ದು ಒಡೆದು ಹೋಗಿ ಅಥವಾ ಕೆಟ್ಟು ಹೋಗದಿದ್ದರೆ ಯಾವತ್ತೂ ಸರಿಯಾದ ಸಮಯವನ್ನು ತೋರಿಸುವ ಸಂಭವನೀಯತೆಯೇ ಹೆಚ್ಚು. ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಪುನರ್‌ವಿಮರ್ಶಿಸಿಕೊಂಡು ನಮ್ಮ performance ಅನ್ನಾಗಲೀ objectives ಅನ್ನಾಗಲೀ ಜಗಜ್ಜಾಹೀರು ಮಾಡುವುದಾಗಲೀ, ನಮ್ಮತನವನ್ನು ನಾವು ಪುನರ್-ವಿಂಗಡಣೆ ಮಾಡುವ ಅಗತ್ಯವೇ ಇರಲಿಲ್ಲ. ವಾಚಿನ ಡಯಲ್ ಅನ್ನು ತಿರುಗಿಸಬೇಕಾಗಿದ್ದುದು ಫೆಬ್ರುವರಿ ತಿಂಗಳಲ್ಲಿ ಮಾತ್ರ, ಪ್ರತೀವರ್ಷ, ಹಾಗೆ ಮೂರುವರ್ಷ ಫೆಬ್ರುವರಿ ತಿಂಗಳಿನಲ್ಲಿ ಒಂದು ದಿನವನ್ನು ಮುಂದೋಡಿಸಿ ಮಾರ್ಚ್ ಒಂದನ್ನು ಸಾರುವುದೇ ಮೇಂಟೆನೆನ್ಸ್ ಆಗಿತ್ತು, ಅಷ್ಟೇ.

ಅಮೇರಿಕದ ಸಮಯವೂ ನಿಖರವಾಗೇ ಇದೆ - ಅದರ ಪಾಲನೆಯಲ್ಲಿ ಆಚರಣೆಯಲ್ಲಿ ನನ್ನಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ. ಪೀಕ್ ಅವರ್‌ನಲ್ಲಿ ಒಂದೇ ಘಂಟೆಗೆ ನಾಲ್ಕು ನಾಲ್ಕು ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡಿ ದೊಡ್ಡ ರೂಮಿನಿಂದ ಸಣ್ಣ ರೂಮು, ಸಣ್ಣ ರೂಮಿನಿಂದ ಕಿರು ರೂಮಿನಲ್ಲಿ ನಮ್ಮನ್ನು ಕೂರಿಸಿ ಕಾಯಿಸುವಂತೆ (ಧ್ಯಾನಿಸುವಂತೆ) ಮಾಡುವ ರಿಸೆಪ್ಷನಿಷ್ಟುಗಳು ನನ್ನ ಸಮಯ ಪಾಲನೆಯ ವರ್ತನೆಯನ್ನು ಬೇಕಾದಷ್ಟು ಬದಲಾಯಿಸಿದ್ದಾರೆ. ವರ್ಷಕ್ಕೆ ಆರು ತಿಂಗಳಿಗೊಂದರಂತೆ ಎರಡು ಬಾರಿ ಬದಲಾಯಿಸುವ ಸಮಯ ನಮ್ಮ ಮನೆಯಲ್ಲಿರುವ ಗಡಿಯಾರಗಳಲ್ಲಿ ಕೊನೇಪಕ್ಷ ಒಂದಾದರೂ ಒಂದು ಘಂಟೆ ಹಿಂದೆ ಅಥವಾ ಮುಂದಿರುವಂತೆ ಮಾಡುತ್ತದೆ. ಇಲ್ಲಿರುವ ವಾಷಿಂಗ್ ಮಷೀನ್, ಕಾಫಿ ಮೇಕರ್, ಮೈಕ್ರೋವೇವ್ ಅವನ್, ಅವನ್, ಕಾರಿನಲ್ಲಿರುವ ಗಡಿಯಾರಗಳು, ಕಂಪ್ಯೂಟರ್ರಿನಲ್ಲಿರುವ ಗಡಿಯಾರಗಳು, ಇವುಗಳನ್ನೆಲ್ಲವನ್ನೂ ಆರಾರು ತಿಂಗಳಿಗೊಮ್ಮೆ ತಿರುಗಿಸಿ-ಬದಲಾಯಿಸಿ ಈಗಾಗಲೇ ನನಗೆ ಚಿಟ್ಟು ಹಿಡಿಯುವಂತೆ ಮಾಡಿರುವುದೂ ಅಲ್ಲದೇ ಒಂದೊಂದು ಗಡಿಯಾರ ಒಂದೊಂದು ಸಮಯವನ್ನು ತೋರಿಸಿ ಎಷ್ಟೋ ಸಾರಿ ಹಿಂಸಿಸುತ್ತವೆ. ನಿಮ್ಮ ಮನೆಯಲ್ಲೇನಾದರೂ ಇರುವ ಗಡಿಯಾರಗಳೆಲ್ಲ ಒಂದೇ ಸಮಯವನ್ನು ತೋರಿಸುತ್ತಿದ್ದರೆ (ನಿಖರವಾಗಿ) ನನ್ನ ಹ್ಯಾಟ್ಸ್ ಅಫ್! ನಾನಂತೂ ಸಮಯಪಾಲನೆಯನ್ನೇ ಮರೆತುಬಿಟ್ಟಿದ್ದೇನೆ - ಆಫೀಸಿನ ಫ್ಲೆಕ್ಸ್ ಅವರ್ಸ್ ಕೂಡಾ ಇದಕ್ಕೆ ಕಾರಣ ಎಂದರೆ ತಪ್ಪೇನೂ ಅಲ್ಲ.

ನಾವಷ್ಟೇ ಸಮಯವನ್ನು ಬದಲಾಯಿಸಿದರೆ ಸಾಲದು, ನಮ್ಮ ತಲೆಯಲ್ಲಿನ ಭಾರತದ ಸಮಯದ ಪ್ಲೆಸ್ಸು-ಮೈನಸ್ಸುಗಳು ಬದಲಾಗಬೇಕು, ಇದೇ ದೇಶದಲ್ಲಿರುವ ನಾಲ್ಕೈದು (ಹವಾಯಿಯನ್ನು ಸೇರಿಸಿ) ಟೈಮ್ ಝೋನ್‌ಗಳ ಬಗ್ಗೆ ಚಿಂತಿಸಬೇಕು, ಅದರಲ್ಲಿ ಮೂರೋ-ನಾಲ್ಕೋ ರಾಜ್ಯಗಳನ್ನು ಸಮಯವನ್ನು ಬದಲಾಯಿಸದೇ ಇರುವುದರ ಬಗ್ಗೆ ತಿಳಿದಿರಬೇಕು. ಪ್ರತಿ ಆರು ತಿಂಗಳಿಗೊಮ್ಮೆ ’ಈವರೆಗೆ ನೀನೇನು ಮಾಡಿದ್ದೀಯೋ, ಇನ್ನಾರು ತಿಂಗಳಿನಲ್ಲಿ ಏನನ್ನು ಮಾಡುವವನಿದ್ದೀಯೋ ಆ ಬಗ್ಗೆ ಫರ್‌ಫಾರ್ಮೆನ್ಸ್ ಆಬ್ಜೆಕ್ಟೀವ್ ಅನ್ನು ಬರೆ!’ ಎಂದು ಆದೇಶಿಸುವ ಬಾಸು-ವ್ಯವಸ್ಥೆಯ ಬಗ್ಗೆ ಹೇಳಲೇ ಬೇಕಾಗುತ್ತದೆ. ನಾವೇನು ಮಾಡಿದ್ದರೂ, ನಮ್ಮ ಇತಿಹಾಸವೇನಾಗಿದ್ದರೂ ಪ್ರತಿ ಆರು ತಿಂಗಳಿನ ಮಾಪನದಲ್ಲಿ ನಮ್ಮನ್ನು ಅಳೆಯುವುದರ ಕಾರಣ ಇಲ್ಲಿ ನಾವು ಹಿಂದಿನ goodies ಮೇಲೆ ನಂಬಿ ಕೂರುವಂತೆಯೇ ಇಲ್ಲ. ’ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸು ಹಾಗೇ ನಮ್ಮ ಆದೇಶವನ್ನು ಪೂರೈಸು!’ ಎನ್ನುವ ಹುಕುಮ್ ಗಳೇ ಹೆಚ್ಚು. ನಾನು ಅಂಥವನು, ನಾನು ಇಂಥವನು ಎಂದರೆ ’who cares?!' ಎನ್ನುವವರೇ ಹೆಚ್ಚು.

***

ನನಗೆ ಇವತ್ತಿಗೂ ಅನ್ನಿಸಿದೆ, ಇಲ್ಲಿನ ಆರಾರು ತಿಂಗಳ ಸಮಯದ ಬದಲಾವಣೆಯ ಒತ್ತಡವನ್ನು ತಾಳದೆಯೇ ನನ್ನ ಮುದ್ದಿನ ಸೀಕೋ ವಾಚು ನನ್ನಿಂದ ದೂರ ಉಳಿಯುವ ತೀರ್ಮಾನ ಮಾಡಿದ್ದು ಎಂಬುದಾಗಿ. ಭಾರತದಲ್ಲಿ ಸೊಂಪಾಗಿ ಬರೀ ಒಂದೇ ಒಂದು ಸಮಯವನ್ನು ನಿಖರವಾಗಿ ಪಾಲಿಸಿಕೊಂಡು ಇದ್ದ ಒಳ್ಳೆಯ ಹೆಸರನ್ನು ಉಳಿಸಿ-ಬೆಳೆಸಿಕೊಂಡು ಹಾಯಾಗಿದ್ದ ವಾಚು, ಕೇವಲ ನನ್ನ ನಡೆವಳಿಕೆಗಳಿಂದ ಆಹಾರವನ್ನು ಪಡೆದು ತನ್ನ ಆಂತರ್ಯದ ಪ್ರಚನ್ನ ಶಕ್ತಿಗಳ ಬಲದಿಂದ ಸದಾ ಮುಂದೆ ನಡೆಯುತ್ತಿದ್ದ ವಾಚು, ಇಲ್ಲಿ ಆರಾರು ತಿಂಗಳಿಗೊಮ್ಮೆ ಘಂಟೆಗಟ್ಟಲೆ ಮುಂದೆ ಅಥವಾ ಹಿಂದೆ ಹೋಗುವುದನ್ನು ಹೇಗಾದರೂ ಮಾನಸಿಕವಾಗಿ ಸಹಿಸಿಕೊಂಡೀತು ಎಂದು ಎಷ್ಟೋ ಸಾರಿ ನನ್ನ ಮನಸ್ಸು ಮಮ್ಮಲ ಮರುಗಿದ್ದಿದೆ. ಅಂಥ ಸುಂದರವಾದ ವಾಚು ನಿಮ್ಮ ಬಳಿಯೇನಾದರೂ ಇದೆಯೇ, ಇವತ್ತಿಗೂ ಅದು ಇಲ್ಲಿನ ಬದಲಾವಣೆಯ ಬದುಕಿಗೆ ಹೊಂದಿಕೊಂಡಿದೆಯೇ? ಹಾಗೆ ಹೊಂದಿಕೊಂಡು ಇನ್ನೂ ಜೀವಂತವಾಗಿದೆಯೇ?

ಕತ್ತಲು-ಬೆಳಕು, ಉಷ್ಣತೆ, ಅಕ್ಷಾಂಶ (altitude), ಸಮಯ, ಸಂಸ್ಕೃತಿ ಮುಂತಾದವುಗಳಲ್ಲಿ ಅಗಾಧವಾಗಿ ಭಿನ್ನವಾಗಿರುವ ನೆಲೆಗಟ್ಟು ಬಹಳಷ್ಟನ್ನು ನಿರೀಕ್ಷಿಸುತ್ತದೆ, ವ್ಯವಸ್ಥೆ ಪ್ರತಿಯೊಬ್ಬರನ್ನೂ ಅವರವರ ನಿಲುವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷಿಸುತ್ತದೆ ಅಥವಾ ಪುನರ್‌ವಿಮರ್ಶಿಸುತ್ತದೆ (redefine), ಈ ಬದಲಾವಣೆಗಳನ್ನು ಜಯಿಸುತ್ತಲೇ ಇರುವುದು ಸವಾಲಾಗುವುದಕ್ಕಿಂತ ಮುಖ್ಯವಾಗಿ ಬದುಕಾಗುತ್ತದೆ. ನಿನ್ನೆ ಹೀಗಿತ್ತು ಎನ್ನುವ ಹಳೆಯದು ಹೆಚ್ಚು ಪ್ರಚಲಿತವಾಗದೇ ಇಂದು ಹೀಗಿದೆ ಎನ್ನುವ ವರ್ತಮಾನಕ್ಕೆ ಇಂಬುಕೊಟ್ಟಹಾಗನ್ನಿಸುತ್ತದೆ.

Wednesday, October 24, 2007

ಅಕ್ಟೋಬರ್ ಮುಗೀತು, ದೀಪಾವಳಿ ಬಂತು!

ಏನಪ್ಪಾ ಇದು ನೋಡ್ ನೋಡ್ತಾನೇ ಅಕ್ಟೋಬರ್ ಬಂತು ಹಂಗೇ ಮಾಯವೂ ಆಗ್ತಾ ಇದೆಯಲ್ಲಾ ಅಂತ ಅನ್ಸಿದ್ದು ಇವತ್ತು ಬೆಳಿಗ್ಗೆ. ನಾನು ಅಕ್ಟೋಬರ್ ಅನ್ನು ಜೀರ್ಣಿಸಿಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಅದು ಮುಗಿತಾನೇ ಬಂದೋಯ್ತು. ಈ ಅಮೇರಿಕದ್ ಲೈಫ್ ಬಗ್ಗೆ ಒಂದೇ ಸಾಲ್ನಲ್ಲಿ ಹೇಳ್ಬೇಕು ಅಂದ್ರೆ ಇಲ್ಲಿ ಬದುಕು ವಾರದಿಂದ ವಾರಕ್ಕೆ ಉರುಳ್ತಾ ಉರುಳ್ತಾ ಕೊನೆಗೆ ತಿಂಗಳು, ವರ್ಷಗಳು ಮುಗಿದು ಹೋಗೋದೇ ಗೊತ್ತಾಗಲ್ಲ. ಇವತ್ತೂ ನಾಳೇ ಅಂತ ಕಾಲ ತಳ್ಳೀ ತಳ್ಳೀ ವರ್ಷದ ಮೇಲೆ ವರ್ಷಾ ಉರುಳಿ ಅದ್ಯಾವ್ದೋ ಹಳೇ ಫೋಟೋ ನೋಡ್ದಾಗ್ಲೇ ಅನ್ಸೋದು ’ಓಹ್, ನಾನು ಹಿಂಗಿದ್ನಾ’ ಅಂತ! ಮೊನ್ನೇ ಇನ್ನೂ ವಯಸ್ಸಾದವರ ಸಂಘದ ಬಗ್ಗೆ ಬರೆದು ಇನ್ನೊಂದು ಸರ್ತಿ ಅದೇ ಸಬ್ಜೆಕ್ಟ್ ಹಿಡಕೊಂಡ್ ಬೈರಿಗಿ ಬಿಡೋದಿಲ್ಲ ಹೆದರ್ಕೋ ಬೇಡಿ, ಇವತ್ತಿನ ಸಮಾಚಾರ ಬೇರೇನೇ...ಬಟ್ ಯಾವ್ದೇ ಸಮಾಚಾರ ಹಿಡ್ಕೊಂಡ್ ಹೊರಟ್ರೂ ಒಂದ್ ರೀತಿ ’ಅಳುಮುಂಜಿ’ ಫ್ಲೇವರ್ ಇರೋದಿಲ್ಲಾ ಅಂತಂದ್ರೆ ’ಅಂತರಂಗ’ದ ವಿಶೇಷವಾದ್ರೂ ಏನ್ ಉಳಿಯುತ್ತೆ ಹೇಳಿ.

ನನಗೆ ಈ ಪ್ರಶ್ನೆಯನ್ನ ಬೇಕಾದಷ್ಟು ಜನ ಕೇಳಿದ್ದಾರೆ, ’ನೀವು ಅಮೇರಿಕದಲ್ಲಿ ಸೆಟ್ಲ್ ಆಗಿದ್ದೀರಾ?’ ಅಂತ. ಈ ಪ್ರಶ್ನೆಗೆ ನನಗೆ ಹೇಗ್ ಉತ್ರಾ ಕೊಡಬೇಕು ಅನ್ನೋದೇ ಗೊತ್ತಾಗಲ್ಲ. ಒಂದು ಕಡೆ ’ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು’ ಅನ್ನೋ ಚೇತನಾ ನಮ್ದು. ಅದರ ಜೊತೆಯಲ್ಲಿ ಹೋದಕಡೆ ನಮ್ಮ ಬೇರುಗಳನ್ನ ಆದಷ್ಟು ಆಳವಾಗಿ ಬಿಟ್ಟು ನೆಲ-ನೀರಿನ ರುಚಿ ನೋಡೋ ಗುಣವೂ ನಮ್ಮದು. ಇದು ನಮ್ಮ ದೇಶವಲ್ಲ ಅನ್ನೋ ವಿದೇಶೀ ಭಾವನೆ ಒಂದು ಕಡೆ, ದಿನೇದಿನೇ ನಾವೂ ಇಲ್ಲಿಯವರೇ ಆಗಿ ಹೋಗಿದ್ದೇವೆ ಅನ್ನೋ ಅನಿವಾಸಿಗಳ ಪೆಚ್ಚುಮೋರೆ ಮತ್ತೊಂದು ಕಡೆ. ಈ ಕಾನ್‌ಫ್ಲಿಕ್ಟ್ ಮೆಂಟಾಲಿಟಿ ಇಟ್ಕೊಂಡ್ ಯಾರಾದ್ರೂ ಎಲ್ಲಾದ್ರೂ ಸೆಟ್ಲೂ ಅನ್ನೋದೇನಾದ್ರೂ ಇದೆಯಾ ಅನ್ನೋದು ನನ್ನ ಪ್ರಶ್ನೆ. ಎಷ್ಟು ದುಡುದ್ರೂ ಎಲ್ಲಿಗೂ ಸಾಲಲ್ಲ ಅಂತ ಹಿಂದೆ ಎಲ್ಲೋ ಒಂದು ಕಡೆ ಬರೆದಿದ್ದೆ, ಇವತ್ತು ನಮ್ ಸ್ನೇಹಿತ್ರೊಬ್ರ ಜೊತೆ ಮಾತಾಡ್ತಾ ಇರಬೇಕಾದ್ರೆ ಅವರೇ ಅಂದ್ರು ’ದುಡ್ಡೂ ಅಂದ್ರೆ ಏನು ಅಂತ ಕೇಳೋ ಹಂಗ್ ಆಗಿದೆ’ ಅಂತ.

ದುಡ್ಡೂ ಅಂದ ಮೇಲೆ ನೆನಪಿಗೆ ಬಂತು, ನಮ್ಮೂರಲ್ಲಿ ನಾವು ಚಿಕ್ಕವರಿರಬೇಕಾದ್ರೇ ಆಯುಧಪೂಜೆಗೆ ನಮ್ ನಮ್ ಪೆನ್ನೂ, ಪುಸ್ತಕಾ ಎಲ್ಲಾ ಇಟ್ಟು ಅರಿಶಿಣ ಕುಂಕುಮ ಹಚ್ಚಿ ’ಆಯುಧ’ ಅನ್ನೋ ಭಾವನೇನಲ್ಲಿ ಪೂಜೆ ಮಾಡ್‌ತಿದ್ವಿ, ಆದ್ರೆ ಇಲ್ಲಿ ಅದೇನನ್ನು ಇಟ್ಟು ಪೂಜೇ ಮಾಡೋಣ ಹೇಳಿ. ಡಾಕ್ಟ್ರಾದ್ರೇ ಸ್ಟೆತಾಸ್ಕೋಪ್ ಇಟ್ಟು ಪೂಜೆ ಮಾಡ್ತಾರೋ ಏನೋ, ನಾವು ಬೆಳಿಗ್ಗಿಂದ ಸಂಜೇವರೆಗೂ ಸಣ್ಣ ಪರದೇ ನೋಡ್ಕೊಂಡು ಕುಟ್ಟುತಾ ಕೂರೋರು ಯಾವ್ದಾದ್ರೂ ಹಳೇ ಕಂಪ್ಯೂಟರ್ ಕೀ ಬೋರ್ಡ್ ಇಟ್ಟು ಪೂಜೆ ಮಾಡಿದ್ರೆ ಹೇಗೆ ಅಂತ ಮೊನ್ನೆ ನೆನಪಿಗೆ ಬಂತು. ಇವತ್ತಿಗೂ ನಮ್ಮನೇನಲ್ಲಿ ದೀಪಾವಳಿಯ ಲಕ್ಷ್ಮೀಪೂಜೆಗೆ ಭಾರತದ ದುಡ್ಡೂ-ಕಾಸನ್ನೇ ಇಟ್ಟು ಪೂಜೇ ಮಾಡೋರ್ ನಾವು, ಜೊತೆಗೆ ಅಮೇರಿಕನ್ ಡಾಲರ್ರೂ, ಕಾಯಿನ್ನುಗಳನ್ನೂ ಸೇರ್ಸಿಡ್‌ತೀವಿ, ಪಾಪ ಆ ಲಕ್ಷ್ಮಿಗೆ ಎಷ್ಟೊಂದ್ ಕನ್‌ಫ್ಯೂಷನ್ ಆಗುತ್ತೋ ಯಾರಿಗ್ ಗೊತ್ತು?

ದಿನಗಳು ಬರ್ತಾವ್ ಸಾರ್, ಮತ್ತೆ ಹಂಗೇ ಹೋಗ್ತಾವೇ...ನಾವು ಎಲ್ಲೂ ಸೆಟ್ಲ್ ಆಗಲ್ಲ, ಇಲ್ಲೂ ಇರಲ್ಲ ಅಲ್ಲೂ ಹೋಗಲ್ಲ. ಅಪರೂಪಕ್ಕೊಮ್ಮೆ ಪ್ರೆಂಡ್ಸ್‌ಗಳು ಸೇರ್ಕೊಂಡಾಗ ಮೊದಲೆಲ್ಲಾ ಗ್ರೀನ್‌ಕಾರ್ಡ್ ಬಗ್ಗೆ ಮಾತಾಡ್ಕೊಂಡು ಹೊಟ್ಟೇ ತುಂಬುಕೊಳ್ತಾ ಇದ್ದ ನಮಗೆ ಇವತ್ತು ಬುಷ್-ಬ್ರೌನುಗಳ ಬಗ್ಗೆ ನೆನಸಿಕೊಂಡು ಮಾತನಾಡೋ ಸ್ಥಿತಿ ಬಂದಿರೋದನ್ನ ನೋಡಿ, ಇನ್ನೊಂದ್ ಸ್ವಲ್ಪ ದಿನದಲ್ಲೇ ’ನಾನೂ ಅಮೇರಿಕನ್ ಆಗಿ ಬಿಟ್ಟೇ!’ ಅನ್ನೋ ಮಾತುಗಳು ದೂರವೇ ಇಲ್ಲ ಅಂತ ಅನ್ಸುತ್ತೆ. ದೂರವಾದ ಅಲ್ಲಿಯದು ದಿನಗಳು ಕಳೆದಂತೆ ಇನ್ನಷ್ಟು ದೂರವಾಗ್ತಾ ಹೋಗುತ್ತೆ, ಹತ್ತಿರವಾದ ಇಲ್ಲಿಯದು ಯಾವತ್ತಿದ್ರೂ ಅಷ್ಟೊಂದ್ ಹತ್ರಾ ಬರೋದೇ ಇಲ್ಲ! ಕಮ್ಮ್ಯೂನಿಟಿ ಸರ್ವೀಸುಗಳಲ್ಲಿ ತೊಡಗಿಸಿಕೊಳ್ಳಬೇಕು, ರಾಜಕೀಯ ಪ್ರೇರಣೆಯನ್ನು ಪಡೆದುಕೊಂಡು ಒಂದು ರೀತಿಯ ’ಆಕ್ಟಿವಿಷ್ಟ್’ ಆಗಬೇಕು ಅಂತ ಎಷ್ಟೊಂದು ಸರ್ತಿ ಅನ್ಸುತ್ತೆ. ಸೋಮವಾರದಿಂದ ಶುಕ್ರವಾರದವರೆಗೆ ದುಡಿದು ಶನಿವಾರ, ಭಾನುವಾರ ಬದುಕೋ ನಮಗೆ ಇತ್ತೀಚೆಗೆ ನಮ್ಮೂರಿನ ಖೋತಾಸ್ ಕಾಫೀನೂ ರುಚಿಸದೇ ಇಲ್ಲಿಯ ಕಾಫಿಯ ಪರಿಮಳವೇ ಆಗಬೇಕು ಅನ್ನೋ ಮನಸ್ಥಿತಿಯಲ್ಲಿ ಏನೋ ಕಡಿಮೆ ಆಗಿದೆ ಅಂತ್ಲೇ ನನಗೆ ಅನುಮಾನ. ನಾಲಿಗೆ ರುಚಿ ಹೆಚ್ಚಾಗ್ಲೀ ಅಂತ ಇಡ್ಲೀ-ದೋಸೆ ಮಾಡ್ಕೊಂಡ್ ತಿಂದ್ರೂ ಅದರ ಹಿಂದೇನೂ ಯಾವ್ದೋ ಸಮಾಧಾನ ಅನ್ನೋದೇ ಇಲ್ಲ. ಭಾರತದಲ್ಲಿದ್ದಾಗ ಒಂದೇ ಒಂದು ದಿನ ಓಟ್‌ಮೀಲ್ ತಿನ್ನದ ನಾವು ಇಲ್ಲಿ ಅದನ್ನ ಫುಲ್ ಮೀಲ್ ಮಾಡ್ಕೊಂಡು ತಿನ್ನೋ ಕಾಯಕದಲ್ಲಿ ಯಾಕೋ ಒಂದು ವ್ಯತಿರಿಕ್ತ ಮನಸ್ಥಿತಿ ಕಾಣಿಸ್ತಾ ಇರೋದು ನನ್ನೊಬ್ಬನಿಗೆ ಮಾತ್ರಾ ಅಲ್ಲಾ ತಾನೆ?

ನೀವ್ ಕೇಳ್ತೀರಾ, ’ನೀವ್ ಅಮೇರಿಕದಲ್ಲಿ ಸೆಟ್ಲ್ ಆಗಿದ್ದೀರಾ?’ ಅಂತ, ಅದಕ್ಕೇನಂತ ಉತ್ರ ಹೇಳೋಣ? ’ಹೌದು’, ಎಂದರೆ ’ಹಾಗಾದ್ರೇ ಹಿಂತಿರುಗಿ ಬರಲ್ವಾ?’ ಅನ್ನೋ ಪ್ರಶ್ನೆ ರೆಡಿ ಇಟ್ಟುಕೊಂಡಿರ್ತೀರಿ. ’ಇಲ್ಲ’, ಎಂದರೆ ’ಹಾಗಾದ್ರೆ ಯಾವತ್ತು ಬರ್ತೀರಾ ವಾಪಾಸ್ಸು?’ ಅಂತ ಕೇಳ್ತೀರಿ. ಈ ಎಲ್ಲ ಪ್ರಶ್ನೆಗಳಿಗೆ ನಾನಂತೂ ನಿಖರವಾಗಿ ಉತ್ತರ ಕೊಡದ ಸ್ಥಿತಿಗೆ ಬಂದುಬಿಟ್ಟಿದ್ದೇನೆ ಅಂತ ಸಹಜವಾಗೇ ಹೇಳ್ತೀನಿ. ಅದನ್ನ ಕೇಳಿ ಉತ್ತರವನ್ನ ಯಾರು ಯಾರು ಹೇಗೆ ಹೇಗೆ ಜೀರ್ಣಿಸಿಕೊಳ್ತಾರೋ ಅದು ಅವರ ಸಮಸ್ಯೆ. ಆದ್ರೆ ಒಂದ್ ವಿಷಯವಂತೂ ನಿಜ, ಇಲ್ಲಿ ಸೆಟ್ಲ್ ಆದವರಿಗೆ, ಇಲ್ಲಿನಂತೆಯೇ ಬದುಕೋರಿಗೆ ಅಷ್ಟೇ ಕಷ್ಟನಷ್ಟಗಳು ಇರ್ತಾವೆ. ನಾವು ಯಾವತ್ತಿದ್ರೂ ಇಮಿಗ್ರೆಂಟ್ಸೇ ಅಂದ್ಕೊಂಡು ಚಿಕ್ಕದಾಗಿ ಚೊಕ್ಕದಾಗಿ ಜೀವ್ನಾ ನಡೆಸಿಕೊಂಡಿರೋರಿಗೆ ಹಿಂತಿರುಗಿ ಹೋಗೋದು ಸುಲಭಾ ಅಗುತ್ತೇ ಅನ್ನೋದು ನನ್ನ ಅನಿಸಿಕೆ. ಆದ್ರೆ, ನಮ್ಮೆಲ್ಲರ ಮನಸ್ನಲ್ಲೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಕಡೆ ಸೆಟ್ಲ್ ಆಗಬೇಕು ಅನ್ನೋ ಆಶಯ ಯಾವತ್ತಿದ್ರೂ ಜೀವಂತ ಇದ್ದೇ ಇರುತ್ತೇ ಅನ್ನೋದೇನೋ ನಿಜವೇ.

ಅಕ್ಟೋಬರ್ ಬಂದು ಹೋದ ಮೇಲೆ ಏನಿದ್ರೂ ರಜಾದಿನಗಳ ಸುಗ್ಗಿ, ಮುಂಬರುವ ಥ್ಯಾಂಕ್ಸ್ ಗಿವಿಂಗ್, ಕ್ರಿಸ್ಮಸ್, ಹೊಸವರ್ಷ ಇವೆಲ್ಲ ತಮ್ಮ ಒಡಲಲ್ಲಿ ಒಂದಿಷ್ಟು ಸಂತೋಷ ಸಡಗರಗಳನ್ನು ತರುತ್ವೆ. ಯಾವ ಧರ್ಮದವರೇ ಇರಲಿ ಮಕ್ಕಳಿದ್ದೋರ್ ಮನೇನಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು ಅಲಂಕಾರ ಮಾಡೋದನ್ನ ನಾನು ನೋಡಿದ್ದೀನಿ, ಅದೂ ಭಾರತೀಯರ ಮನೆಗಳಲ್ಲಿನ ಕ್ರಿಸ್ಮಸ್ ಪರಂಪರೆಯನ್ನು ಕಂಡು ಬೆರಗಾಗಿದ್ದೀನಿ. ನಮ್ಮನೇನಲ್ಲಿ ನಾವು ಕ್ರಿಸ್ಮಸ್ ಟ್ರೀ ಇಡೋಲ್ಲ, ಬದಲಿಗೆ ದೀಪಾವಳಿ ಹಾಗೂ ಯುಗಾದಿ ಹಬ್ಬಗಳಿಗೆ ಹೊರಗಡೆ ಸೀರಿಯಲ್ ಸೆಟ್ ಹಾಕಿ ಲೈಟ್‌ಗಳನ್ನು ಹಾಕ್ತೀನಿ, ಬಾಗಿಲಿಗೆ ಒಂದು ಸ್ವಲ್ಪ ಹೊತ್ತಾದ್ರೂ ಕುಡಿಕೆ ದೀಪವನ್ನು ಹಚ್ಚಿಡ್ತೀನಿ. ದೀಪಾವಳಿ ವರ್ಷದ ಯಾವ ದಿನ ಬಂದ್ರೂ ಯಾವ್ದೇ ಪ್ರೊಡಕ್ಷನ್ ಕೆಲ್ಸಾ ಇಲ್ಲಾ ಅಂತಂದ್ರೆ ಅವತ್ತಿನ ದಿನಾ ಒಂದು ರಜೆಯನ್ನು ಬಿಸಾಕಿ ನಮ್ಮ ನಮ್ಮ್ ಮಟ್ಟಿಗೆ ಹಬ್ಬದ ಆಚರಣೆಯನ್ನೂ ಮಾಡ್ತೀವಿ. ಅದೇ ಲಕ್ಷ್ಮೀ ಪೂಜೆ ಬಗ್ಗೆ ಹೇಳಿದ್ನಲ್ಲಾ, ಅದನ್ನ ಮಾತ್ರ ತಪ್ಪಿಸೋದಿಲ್ಲ ಏನಾದ್ರೂ! ದಸರೆ ಮುಗಿದ ಮೇಲೆ ಇಪ್ಪತ್ತು ದಿನಕ್ಕೆ ದೀಪಾವಳಿ, ಇನ್ನೊಂದೆರಡು ವಾರದಲ್ಲಿ ಬರೋ ದೀಪಾವಳಿ ಎಲ್ಲರಿಗೂ ಸಡಗರ ತರಲಿ.

Sunday, October 14, 2007

ವಯಸ್ಸಾದವರ ಸಂಘಕ್ಕೆ - ಜೈ!

ಒಂದಂತೂ ನಿಜ, ನನ್ನ ತಲೆ ಜಡ್ಡು ಬಿದ್ದು ಹೋಗಿರೋದು. ಮೊದಲೆಲ್ಲಾ ಎಂಥಾ ಲೆಕ್ಕಗಳೂ ತಲೆಯಲ್ಲಿ ಹೊಳೆದು ಮಿಂಚಿ ಮಾಯವಾಗುತ್ತಿದ್ದರೆ ಈಗ ಎರಡರ ಮಗ್ಗಿಗೂ ಕ್ಯಾಲ್ಕುಲೇಟರ್ ಹಿಡಿಯುವ ಪರಿಸ್ಥಿತಿ! ಛೇ, ಛೇ, ಅಮೇರಿಕಕ್ಕೆ ಬಂದು ಹೀಗಾಯ್ತು ಅಂತ ಅಂದ್ರೆ ಅದು ನನ್ನ ತಪ್ಪಾಗಿ ಹೋದೀತು, ಬದಲಿಗೆ ನನ್ನನ್ನು ನಾನೇ ತಪ್ಪಿತಸ್ಥನನ್ನಾಗಿ ಮಾಡ್ಕೊಂಡ್ರೇ ಎಷ್ಟೋ ಚೆನ್ನ.

ನಿಮಗೂ ಹೀಗಾಗಿರಬಹುದು ಅಂತ ಕೇಳ್ದೆ ಅಷ್ಟೇ - ಮೊದಲೆಲ್ಲ ಎಷ್ಟೊಂದು ಕಷ್ಟ ಪಡ್ತಾ ಇದ್ದ ನೀವುಗಳು ಈಗೀಗ ಸುಲಭದ ದಾರಿ ಹಿಡಿಯೋದೂ ಅಲ್ದೇ ಬೆಚ್ಚಗಿನ ತಾಣ ಸಿಕ್ಕಿದ್ದನ್ನ ಬದಲಿಸಲಿಕ್ಕೆ ಹಿಂಜರಿತೀರೇನೋ? ಬರೀ ಬದಲಾವಣೆಯನ್ನಷ್ಟೇ ದ್ವೇಷಿಸದೇ ಬದಲಾವಣೆಯನ್ನು ಹೇರುವವರನ್ನೂ ಸಹ ನಿಮ್ಮ ಶತ್ರುಗಳ ಯಾದಿಗೆ ಸೇರಿಸಿಕೊಳ್ತೀರಾ? ಅಷ್ಟೇ ಅಲ್ಲ, ಅವರೆಲ್ಲರ ಹೆಸರಿನಲ್ಲಿ ಆಗಾಗ್ಗೆ ಶತನಾಮಾವಳಿಯನ್ನು ಉದುರಿಸುತ್ತಲೇ ಇರ್ತೀರಾ?

ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಅಂತ ಆಗ್ಲೇ ಬೇಕು ಅಂತ ಏನಿಲ್ಲ, ಆ ವಾಕ್ಯಗಳನ್ನು ಓದುತ್ತಾ ಇರೋವಾಗ ಸ್ವಲ್ಪ ಸಿಂಪತಿ ತೋರ್ಸಿದ್ರೂನೂ ನಿಮ್ಮನ್ನ ನಮ್ಮ ಗುಂಪಿಗೆ ಸೇರಿಸಿಕೊಳ್ಳೋ ಹುನ್ನಾರವೊಂದು ನಮ್ಮ ಮನದಲ್ಲಿ ಮಿಂಚಿ ಮಾಯವಾಗ್ತಾ ಇರುತ್ತೆ - ಅಂದ್ರೆ ’ವಯಸ್ಸಾದವರ ಪ್ರಪಂಚದ’ ಸದಸ್ಯತ್ವ - ನಿಮಗೋಸ್ಕರ ಕಾಯ್ತಾ ಇರುತ್ತೆ. ಎಪ್ಪತ್ತರ ದಶಕದಲ್ಲಿ ಹುಟ್ಟಿದ ನಾವುಗಳು ಈಗಾಗ್ಲೇ ನಮ್ಮ ಎದುರಿನಲ್ಲಿ ಶೋಕಿ ಮಾಡೋ ಎಂಭತ್ತು ತೊಂಭತ್ತರ ದಶಕದವರನ್ನು ನೋಡಿ ’ಛೇ, ಅನುಭವವಿಲ್ಲದ ಜನ!’ ಎಂದು ಲೇವಡಿ ಮಾಡೋ ಹಾಗೆ ಮೇಲ್ನೋಟಕ್ಕೆ ಕಂಡ್ರೂನೂವೇ ಒಳಗೊಳಗೆ ಹೊಟ್ಟೇಕಿಚ್ಚು ಇರೋದೇ ಎಂದು ನಮ್ಮ ಸಂಘದ ಕರಾರುಗಳನ್ನು ಗಾಳಿಗೆ ತೂರಿ ನಿಮ್ಮ ನಡುವೆ ರಹಸ್ಯವನ್ನು ಓಪನ್ ಆಗಿ ಹಂಚಿಕೊಳ್ತಾ ಇದ್ದೀನ್ ನೋಡಿ, ನನ್ನ ಭಂಡ ಧೈರ್ಯಾನಾ. ಯಾಕೆ ಗೊತ್ತಾ, ಇವತ್ತಲ್ಲ ನಾಳೆ ನಮ್ಮ ಸಂಘವನ್ನು ಸೇರೋ ನಿಮಗೂ ಮೂಗಿನ ಮೇಲೆ ಒಂದಿಷ್ಟು ತುಪ್ಪಾ ಅಂತ ಹಚ್ಚದೇ ಇದ್ರೆ ಹೇಗೆ!

ಈ ’ವಯಸ್ಸಾದವರ ಪ್ರಪಂಚ’ದಲ್ಲಿ ಇನ್ನೇನೇನಿದೆ ಎಂದು ನಿಮಗೇನಾದ್ರೂ ಅನ್ಸಿರಬಹುದು - ಒಂದು ರೀತಿ ಪೀಕ್ ಪ್ರಿವ್ಯೂವ್ ಕೊಟ್ತೀನ್ ನೋಡಿ - ಈ ಪ್ರಪಂಚದಲ್ಲಿ ಬರೀ ಕೆಲ್ಸಾ ಸಾರ್. ಕೆಲ್ಸಾ ಇಲ್ದೇ ಹೋದ್ರೂ ಬರೀ ಜವಾಬ್ದಾರಿ. ಯಾರಿಗಪ್ಪಾ ಬೇಕು ಇದು ಅಂತ ಎಷ್ಟೋ ಸರ್ತಿ ಅನ್ಸಿ ಎಲ್ಲಾದ್ರೂ ಓಡ್ ಹೋಗೋಣ ಅನ್ನೋಷ್ಟರ ಮಟ್ಟಿಗೆ ಬೇಸರ ಹುಟ್ಟೋಷ್ಟು ಕೆಲ್ಸ, ಅದರ ಜೊತೆಗೆ ಜವಾಬ್ದಾರಿ. ನಿಮಗೋಸ್ಕರ ಒಂದು ಸ್ಪೆಷಲ್ ಉದಾಹರಣೆ ಕೊಡ್ತೀನ್ ನೋಡಿ - ಎಲ್ಲಿ ಜೋರಾಗಿ ಕಾರ್ ಓಡ್ಸಿದ್ರೆ ಮಾಮಾ ಬೆನ್ನ ಹಿಂದೆ ಬಿದ್ದು ಟಿಕೇಟ್ ಕೊಡ್ತಾನೋ ಅನ್ನೋ ಹೆದರಿಕೆ ಯಾಕೆ ಬರುತ್ತೇ ಅಂದ್ರೆ ಒಂದು ಆ ಟಿಕೆಟ್ಟಿಗೆ ಕಟ್ಟೋ ದುಡ್ಡನ್ನ ಹೇಗೆ ಹೊಂದಿಸೋದು ಅನ್ನೋ ಕಷ್ಟದಿಂದ ಮತ್ತೆ ನಮ್ಮ ಮನೆಯ ಸಣ್ಣವರೆದುರು ನಮಗೆ ಶಿಕ್ಷೆ ವಿಧಿಸಿದ್ದನ್ನ ಒಪ್ಪಿಕೊಳ್ಳಬೇಕಲ್ಲಾ ಅಂತ - ಗಂಡ್ ಸತ್ತ ದುಕ್ಕಾ ಒಂದ್ ಕಡೆ, ಬೊಡ್ ಕೂಪಿನ್ ಉರಿ ಮತ್ತೊಂದು ಕಡೆ ಅಂತಾರಲ್ಲ ಹಾಗೆ. ಆದ್ರೆ, ಜೀವನದಲ್ಲಿ ಸುಮಾರಾಗಿ ಎಲ್ಲ ಅಡ್ರಿನಲಿನ ಅಗತ್ಯಗಳನ್ನು ಪೂರೈಸಿಕೊಂಡ ನಮಗೆ ಕಾರನ್ನು ಜೋರಾಗಿ ಓಡಸಲೇ ಬೇಕಾದ್ದು ಮತ್ತೊಂದು ಅಗತ್ಯ ಏಕೆಂದ್ರೆ ಅವರೂ-ಇವರೂ ಇವರೆಲ್ಲರನ್ನೂ ಸಂತೈಸಿ ಖುಷಿ ಪಡಿಸಿ ನಾವ್ ಹೊರಡೋ ಅಷ್ಟರಲ್ಲಿ ಯಾವತ್ತೂ ನಿಧಾನ-ತಡ-ಲೇಟ್ ಅನ್ನೋದು ಕಾಮನ್ನಾಗಿ ಹೋಗಿಬಿಟ್ಟಿದೆ.

ಮೊನ್ನೆ ಪಾರ್ಕಿನಲ್ಲಿ ನಮ್ಮ ಸಂಘದ ಹಿರಿಯ ವ್ಯಕ್ತಿ ಒಬ್ಬ - ನಾಲ್ಕು ಮಕ್ಕಳ ತಂದೆ ಸಿಕ್ಕಿದ್ದ. ಅವನ ಕಷ್ಟಾ ನೋಡಲಾರ್ದೆ ನನಗೇ ಕರುಳು ಚುರುಕ್ ಅಂದು ಹೋಗಿ ಕರಕೊಂಡ್ ಹೋಗಿ ಒಂದು ಕಾಫಿ ಕುಡಿಸಿದೆ. ’ಬೇಜಾರ್ ಮಾಡ್ಕೋಬೇಡ ಕಣಣ್ಣಾ!’ ಎಂದು ನನ್ನ ಸಂತಾಪದ ಮಾತು ಕೇಳ್ಸಿಕೊಂಡು ಇನ್ನೇನು ಅಳೋ ಮುಸುಡಿ ಮಾಡಿಕೊಂಡಿದ್ದ ಪುಣ್ಯಾತ್ಮ. ಒಂದು ಕಾಲದಲ್ಲಿ ಗರಿಗರಿ ಇಸ್ತ್ರಿ ತಾಗಿಸಿಕೊಂಡ ಬಟ್ಟೆ ಹಾಕುತ್ತಿದ್ದ ಅವನು ಇವತ್ತು ಕೇವಲ ಡ್ರೈಯರಿನಿಂದ ಕೊರಳಿಗೆ ಇಳಿಯೋ ಟೀಶರ್ಟುಗಳಿಗೆ ಮೊರೆ ಹೊಕ್ಕಿದ್ದಾನೆ. ಒಂದು ಕಾಲದಲ್ಲಿ ಒಳ್ಳೇ ಹಳೇ ಕನ್ನಡ ಸಿನಿಮಾದ ಹೀರೋ ಥರ ಕ್ರಾಪು ತೆಗೆದು ಬಾಚುತ್ತಿದ್ದವನು ಇವತ್ತು ಕಪ್ಪು ಕೂದಲಿಗಿಂತ ಬಿಳಿ ಕೂದಲು ಹೆಚ್ಚಾದ ತಲೆಯನ್ನು ಕಾಲು ಇಂಚಿಗಿಂತ ತುಸು ಎತ್ತರದಲ್ಲಿ ಕೂದಲು ಇರುವಂತೆ ಎಲ್ಲ ಕಡೆ ಒಂದೇ ಎತ್ತರಕ್ಕೆ ಚೀಪ್ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದಾನೆ. ಇನ್ನು ಅವನು ಹಾಕಿದ ಶೂ ಮೇಲೆಲ್ಲ ಮಕ್ಕಳ ಆಹಾರದ ಕಲೆಗಳಿದ್ದವು, ಜೊತೆಗೆ ಅವನ ಪ್ಯಾಂಟೂ-ಸಾಕ್ಸು ಮ್ಯಾಚ್ ಆಗುವುದಿರಲಿ ಸದ್ಯ ಎರಡೂ ಒಂದೇ ಬಣ್ಣದವನ್ನು ಹಾಕಿಕೊಂಡಿದ್ದಾನೇ ಅನ್ನೋದೇ ನಮ್ಮ ಮಾತಿನ ನಡುವೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ’ಬಾ, ನಮ್ಮನೇಗೇ...’ ಎಂದು ಅವನು ಕೊಟ್ಟ ಔತಣದ ಹಿಂದಿನ ಸ್ವಗತ ’ಇನ್ನು ಇವನು ಬಂದ್ರೆ ಮನೆ ಕ್ಲೀನ್ ಮಾಡಬೇಕಲ್ಲಪ್ಪಾ ನಾನು...’ ಎನ್ನೋದು ನನಗೂ ಕೇಳಿಸಿತ್ತು. ನಾನು ಹೇಳಿದ ’ಇರು ಗುರೂ, ಇನ್ನೂ ಸ್ವಲ್ಪ ಹೊತ್ತು ಮಾತಾಡೋಣ...’ ಎನ್ನೋ ಮಾತುಗಳು ಕೇಳಿದ್ರೂ ಕೇಳಿಸದ ಹಾಗೆ ’ನನ್ನ ಚಿಕ್ಕ ಮಗಳಿಗೆ ಅದೇನೋ ಪ್ರಾಕ್ಟೀಸ್ ಇದೆ...’ ಎಂದು ಗೊಗ್ಗರು ಧ್ವನಿಯಲ್ಲಿ ಹೇಳಿಕೊಳ್ಳುತ್ತಲೇ ಅವನ ಕಾರಿನ ಹತ್ತಿರ ಹೋದ. ನಾನು ’ಬೈ’ ಹೇಳೋಣವೆಂದು ಅವನ ಕಾರಿನ ಹತ್ತಿರ ಹೋದರೆ ಅಲ್ಲಿ ಹಿಂದಿನ ಸೀಟಿನಲ್ಲಿ ಹಲವು ಶತಮಾನದ ಆಹಾರದ ಪದಾರ್ಥಗಳ ಪುಡಿ-ಸ್ಯಾಂಪಲ್ಲು-ವಾಸನೆ ಇವೆಲ್ಲ ಸೇರಿಕೊಂಡು ಬಿಸಿಲಿಗೆ ಮೀಟಿಂಗ್ ನಡೆಸುತ್ತಿದ್ದವು. ಅವನ ಕಾರಿನ ಸೀಟುಗಳು ಎಷ್ಟು ಕೊಳೆಯಾಗಿದ್ದವೆಂದರೆ ಒಂದೊಂದು ಸೀಟಿನ ಫ್ಯಾಬ್ರಿಕ್ ಅದರ ಒದರ ಒರಿಜಿನಲ್ ಕಲರ್ ಕಳೆದುಕೊಂಡು ಜವರಕ್ಕನ ಮನೆಯ ಕೌದಿಯಂತೆ ಬಿಸಿಲ ಕಾಯಿಸಿಕೊಳ್ಳುತ್ತಿದ್ದವು. ನಾನು ಹತ್ರ ಹೋದ್ರೆ ಇನ್ನೆಲ್ಲಿ ಕಾಯ್ಲೆ ಬರುತ್ತೋ ಅಂತ ದೂರದಿಂದಲೇ ’ನಮಸ್ಕಾರ ಸಿಗೋಣ ಮತ್ತೆ!’ ಎಂದು ಗಟ್ಟಿಯಾಗೇನೋ ಅಂದ್ರೆ, ಆದರೆ ’ಮತ್ತೆ...’ ಎಂದು ಹೇಳಿದ್ದನ್ನು ಮತ್ತೆ-ಮತ್ತೆ ನನ್ನ ಮನಸ್ಸು ಪ್ರಶ್ನಿಸಿಕೊಳ್ಳುತ್ತಲೇ ಇತ್ತು ಎಷ್ಟೋ ಹೊತ್ತು.

ನೋಡಿ ಎಂಥಾ ಅದ್ಭುತ - ಬ್ರಾಡ್‌ವೇ ಶೋಗಳನ್ನು ನೋಡಿ ಬದುಕನ್ನು ಸಾಗಿಸಬೇಕಾದವರು ’ಬಾರ್ನಿ ಅಂಡ್ ಫ್ರೆಂಡ್ಸ್’ ನೋಡೋ ಹಾಗಾಯ್ತು. ದಿನಾ ಸ್ಟಾರ್‌ಬಕ್ಸ್ ಕಾಫಿ ಕುಡಿಯೋರು ಸ್ಯಾಮ್ಸ್ ಕ್ಲಬ್ಬಿನ ಮೆಂಬರ್ಸ್ ಮಾರ್ಕ್ ಕಾಫಿಗೆ ಜೋತು ಬಿದ್ದಾಯ್ತು. ರೇಟೆಡ್ R ಇರಲಿ, PG-13 ಕಥೆ/ಸಿನಿಮಾಗಳನ್ನೂ ನೋಡೋಕೆ ಟೈಮೇ ಸಿಗದೇ, ಬರೀ G ರೇಟೇಡ್ ಕಾರ್ಟೂನುಗಳನ್ನು ನೋಡೋದೇ ಬದುಕಾಯ್ತು. ಇನ್ನೊಂದೇನ್ ಗೊತ್ತಾ ಈ ಸಂಘದಲ್ಲಿ ಹೆಚ್ಚು ಹೆಚ್ಚು ಸೀನಿಯಾರಿಟಿ ದೊರೆತಂತೆಲ್ಲಾ ಯಾರೂ ಯಾರಿಗೂ ಸಿಂಪತಿ ಹೇಳೋದೇ ಇಲ್ಲಾ! ನಮ್ಮ್ ನಮ್ಮ್ ಮೀಟಿಂಗ್‌ಗಳಲ್ಲಿ ಯಾವ್ದೇ ಅಜೆಂಡಾ ಅಂತ ಇರೋದೇ ಇಲ್ಲ. ಮೀಟಿಂಗುಗಳಿಗೆ ಕೆಲವರು ಹಲವು ನಿಮಿಷ ಲೇಟಾಗಿ ಬರೋದು ಖಾಯಂ, ಇನ್ನು ಕೆಲವರು ಸೋಮವಾರದ ಮೀಟಿಂಗ್‌ಗೆ ಮಂಗಳವಾರ ಬಂದಿದ್ದೂ ಉಂಟು! ಮರ್ಸೇಡಿಸ್ಸೂ, ಬಿಎಮ್‌ಡಬ್ಲೂ ಕಾರುಗಳನ್ನು ಹೊಡೀ ಬೇಕು ಅನ್ನೋ ಆಸೆ ಇರೋ ನಮಗೆಲ್ಲಾ ಸಿಗೋದು ಯಾವ್ದೋ ತಗಡು ಮಿನಿವ್ಯಾನುಗಳು. ನಮ್ಮನ್ನು ದಾರಿಯಲ್ಲಿ ನೋಡೋ ಜನಗಳೂ ಸಹ ದೂರವೇ ಇರ್ತಾರೆ. ಪೋಲೀಸ್ನೋರೂ ಸಹ ಟಿಕೇಟ್ ಕೊಡಬೇಕಾದ್ರೆ ಯೋಚಿಸ್ತಾರೆ - Poor soul - ಅಂತ ಸಂತಾಪ ಸೂಚಿಸ್ತಾರೆ. ಟಿಕೇಟ್ ಕೊಡೋದ್ ಹಾಗಿರ್ಲಿ ನೀವ್ ಯಾವತ್ತಾದ್ರೂ ಒಂದು ಮಿನಿವ್ಯಾನ್ ಹಿಂದೆ ಪೋಲೀಸ್ ಚೇಸ್ ಮಾಡಿಕೊಂಡು ಹೋಗಿದ್ದನ್ನ ನೋಡಿದಿರೇನು? ಉಳಿದೆಲ್ಲ ಕಾರುಗಳು ಝೀರೋದಿಂದ ಅರವತ್ತಕ್ಕೆ ಹೋಗೋಕೆ ಆರು ಸೆಕೆಂಡ್ ತಗೊಂಡ್ರೆ ಈ ಮಿನಿವ್ಯಾನುಗಳು ಅದರಲ್ಲಿ ಕೂತಿರೋರ ಸಂಕಷ್ಟವನ್ನು ಅರವತ್ತು ಮೈಲಿ ವೇಗದಲ್ಲಿ ಓಡಿಸೋಕೆ ಅರವತ್ತು ನಿಮಿಷಗಳಾದ್ರೂ ಬೇಕು - ಅಂತಾ ಪರಿಸ್ಥಿತಿ.

ನಾನು ಈ ಲೇಖನವನ್ನು ಯಂಗ್ ಅಂಡ್ ಎನರ್ಜೆಟಿಕ್ ಆಗಿರೋ ಓದುಗರಿಗೆ ಬರೆದಿರೋದು ಅನ್ನೋದರಲ್ಲಿ ಸಂಶಯವೇನೂ ಇಲ್ಲ. ಆದ್ರೆ ನಮ್ಮ ಸಂಘದ ಯಾರಾದ್ರೂ ಇದನ್ನ ಓದಿ ನನ್ನ ಮೇಲೆ ಕಂಪ್ಲೇಂಟ್ ಮಾಡಿದ್ರೆ ಅನ್ನೋ ಹೆದರಿಕೆ ನನಗೆ ಇಲ್ಲವೇ ಇಲ್ಲ. ಏಕೆಂದ್ರೆ ಒಂದು - ಅವರ ಮನೆಯ ಕಂಪ್ಯೂಟರ್‌ಗೆ ಅವರು ಲಾಗಿನ್ ಆಗಿ ಈ ಕನ್ನಡವನ್ನು ಓದೋದು ಅಷ್ಟರಲ್ಲೇ ಇದೆ, ಎರಡು - ಅಕಸ್ಮಾತ್ ಅವರು ಓದಿದ್ರೂ ’ಸರಿಯಾಗೇ ಹೇಳ್ದ’ ಅನ್ನೋ ಸಾಂತ್ವನದ ಮುಂದೆ ಅವರು ನಮ್ಮ ಸಂಘಕ್ಕೆ ಹೋಗಿ ಕಂಪ್ಲೇಂಟ್ ಮಾಡೋದೇ ಇಲ್ಲ ಅನ್ನೋ ಭರವಸೆ ನನಗಂತೂ ಖಂಡಿತ ಇದೆ.

ನೀವ್ ಯಾವ ಸಂಘಕ್ಕೆ ಸೇರಿದವರು? ನಿಮ್ಮ ಸಂಘದ ಬಗ್ಗೆ ಒಂದಿಷ್ಟು ಬರೀತೀರಾ ತಾನೆ?