Showing posts with label ಬೆಳವಣಿಗೆ. Show all posts
Showing posts with label ಬೆಳವಣಿಗೆ. Show all posts

Wednesday, May 13, 2020

Time ಇದ್ರೆ Photo organize ಮಾಡಿ!

ಹೆಚ್ಚು ಜನರಿಗೆ ಈಗ ನೆನಪಿನಲ್ಲಿರಲಿಕ್ಕಿಲ್ಲ... ಒಂದು ಕಾಲದಲ್ಲಿ ನಾವೂ ಸಹ ಕ್ಯಾಮೆರಾದಲ್ಲಿ ರೀಲುಗಳನ್ನು ಹಾಕಿ ಮತ್ತೆ ಅವುಗಳನ್ನ ಡೆವಲಪ್ ಮಾಡಿ, ಬೇಕಾದ ಚಿತ್ರಗಳನ್ನು ಪ್ರಿಂಟ್ ಹಾಕಿಸಿಕೊಂಡು ನೋಡುತ್ತಿದ್ದೆವು.  ಆದರೆ, ಒಮ್ಮೆ ಡಿಜಿಟಲ್ ಕ್ಯಾಮೆರಾ ಪ್ರಪಂಚ ತೆರೆದುಕೊಂಡ ಮೇಲೆ,  ರೀಲುಗಳು ಮತ್ತು ರೀಲು ಹಾಕುವ ಕ್ಯಾಮೆರಾಗಳು ಔಟ್‌ಡೇಟೆಡ್ ಆದವು.  ಜೊತೆಗೆ ಡಿಜಿಟಲ್ ಕ್ಯಾಮೆರಾದ ಮತ್ತೊಂದು ಕೊಡುಗೆಯೆಂದರೆ ಎಲ್ಲರ ಮನೆಯಲ್ಲೂ ಅಗಾಧವಾಗ ಚಿತ್ರ ಸಂಗ್ರಹಗಳು.  ರೀಲು ಹಾಕುತ್ತಿದ್ದಾಗ ನಾವುಗಳು ಎಷ್ಟು ಕ್ಲಿಕ್ ಮಾಡಬೇಕು, ಬಿಡಬೇಕು ಎಂದೆಲ್ಲಾ ಯೋಚಿಸುತ್ತಿದ್ದೆವು... ಆದರೆ, ಡಿಜಿಟಲ್ ಕ್ಯಾಮೆರಾದ ಶಕ್ತಿಯೆಂದರೆ ಎಷ್ಟು ಸಾಧ್ಯವೋ ಅಷ್ಟು ಪಿಕ್ಚರುಗಳನ್ನು ತೆಗೆಯೋದು... ನಂತರ ಅವುಗಳನ್ನು ಸರಿಯಾಗಿ ಆರ್ಗನೈಜ್ ಮಾಡಿ ಇಡದೇ ಇದ್ದರೆ, ಬೇಕಾದ ಚಿತ್ರ ಯಾವಾಗ ಬೇಕೋ ಆಗ ಸಿಗದೇ ತೊಂದರೆಯಾಗೋದು.  ಜೊತೆಗೆ, ಕೆಲವೊಮ್ಮೆ ಕಂಪ್ಯೂಟರ್ ಹಾರ್ಡ್‌ಡ್ರೈವ್ ಅಥವಾ ಸ್ಟೋರೇಜ್ ಏನಾದ್ರೂ ಫೇಲ್ ಆದ್ರೆ, ಹಳೆಯದೆಲ್ಲ ಚಿತ್ರಗಳನ್ನು ಕಳೆದುಕೊಳ್ಳುವುದೂ ಆಗಿ ಹೋಗಿ ಹೋಗಿದೆ.

ಹೀಗೆ, ಕೋವಿಡ್‌ಮಯವಾದ ಈಗಿನ ದಿನಗಳಲ್ಲಿ ಮಾಡುವುದಕ್ಕೆ ಏನಾದರೂ ಕೆಲಸವೊಂದಿರಬೇಕಲ್ಲ? ಅದಕ್ಕೋಸ್ಕರ ಕಳೆದ ಎರಡು ದಿನಗಳಿಂದ ಹಳೆಯ ಫೋಟೋಗಳನ್ನೆಲ್ಲ ಹರಡಿಕೊಂಡು ಕುಳಿತುಕೊಂಡಿದ್ದೇನೆ.  ಅದನ್ನು ಆರ್ಗನೈಜ್ ಮಾಡುವುದು ಹೇಗೆ ಎಂದು ಗಮನಿಸಿದಾಗ ಫೋಟೋ ಅರ್ಗನೈಜ್ ಮಾಡುವುದರ ಬಗ್ಗೆ ಓದುತ್ತಾ ಹೋದೆ.  ಅದರಲ್ಲೂ ಆರ್ಗನೈಜ್ ಮಾಡುವುದಕ್ಕೆ ಯಾವ ಯಾವ ಸಾಫ್ಟ್‌ವೇರ್‌ಗಳಿವೆ ಎಂದು ಹುಡುಕಿದಾಗ ಈ ಸೈಟು ದೊರೆಯಿತು, 25 photo organizing software & apps ಅದರಲ್ಲೂ ಮತ್ತೆ ಕೆದಕುತ್ತಾ ಹೋದ ಹಾಗೆ ಈ ಕೆಳಗಿನ ಫ್ರೀ ಸಾಫ್ಟ್‌ವೇರ್/ಅಪ್ಲಿಕೇಶನ್‌ಗಳು ಕಣ್ಣಿಗೆ ಬಿದ್ದವು:

Adobe bridge
StudioLine
DigiKam
Nomacs
Apple Photos (Mac)
Mylio
ಮತ್ತು
Google Photos

ಗೂಗಲ್ ಫೋಟೋಸ್ ಫ್ರೀ ಇರಬಹುದು, ಆದರೆ ಈ ದೊಡ್ಡ ಮನುಷ್ಯರ ಸಹವಾಸ ಬೇಡ, ಎಂದು ಸಣ್ಣ ಕಂಪನಿಗಳ ಪ್ರಾಡಕ್ಟ್‍ಗಳನ್ನು ನೋಡುತ್ತಾ ಅವುಗಳ ರಿವ್ಯೂ ಓದುತ್ತಾ ಸಮಯ ಕಳೆದೆ.  ಅಡೋಬಿ ಬ್ರಿಜ್ ಕೂಡಾ ಅಷ್ಟೊಂದು ಇಷ್ಟವಾಗಲಿಲ್ಲ.  ಅಲ್ಲದೇ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಕೆಲಸ ಮಾಡುವ ಅಪ್ಲಿಕೇಶನ್ ಬೇಕಾಗಿದ್ದರಿಂದ, ಇದ್ದವುಗಳಲ್ಲಿ Mylio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದೆ.

ಅದಕ್ಕೆ ನನ್ನಲ್ಲಿದ್ದ ಸುಮಾರು 8 TB ಸ್ಟೋರೇಜ್ ಇರುವ NAS ಅನ್ನು import ಮಾಡಿ, ಅದರ ಜೊತೆಗೆ ಒಂದೆರಡು ಹಳೆಯ 4 TB USB storageಗಳನ್ನೂ ಸಹ ಕನೆಕ್ಟ್ ಮಾಡಿಟ್ಟೆ.  ನನ್ನ ಘನಂದಾರಿ ಕಂಪ್ಯೂಟರ್ ನಿನ್ನೆಯಿಂದ ತಿರುಗುತ್ತಲೇ ಇದೆ.  ಈಗಾಗಲೇ ಸುಮಾರು 25,000ಕ್ಕೂ ಹೆಚ್ಚು photo/videoಗಳನ್ನು ಅದು ಹುಡುಕಿದ್ದು, ಕಳೆದ 15 ವರ್ಷದ ಹಳವಂಡಗಳೆಲ್ಲ ಹೊರಗೆ ಬರುತ್ತಲಿದೆ!

ಇನ್ನು ಕೆಲವೇ ದಿನಗಳಲ್ಲಿ ನನ್ನ ಎಲ್ಲ ಫೋಟೋಗಳೂ ಸಹ ಆರ್ಗನೈಜ್ ಆಗಿ, ಎಲ್ಲರ ಮುಖಗಳನ್ನೂ ಗುರುತಿಸಿ, ಎಲ್ಲ ಲೊಕೇಶನ್ನುಗಳನ್ನೂ ಸಹ ಪಟ್ಟಿ ಮಾಡಿಕೊಂಡು, ಅದರಲ್ಲಿದ್ದ ಡ್ಯೂಪ್ಲಿಕೇಟುಗಳನ್ನೆಲ್ಲ ತೆಗೆದುಹಾಕಿದ ಮೇಲೆ, ಪ್ರತಿಯೊಂದು ಇವೆಂಟುಗಳ ಟ್ಯಾಗ್ ಪ್ರಕಾರ ಆರ್ಗನೈಜ್ ಮಾಡಿ ಬಿಟ್ಟರೆ... ನನ್ನ ಕೆಲಸ ಮುಗಿದಂತೆ.  ಆದರೆ, ಈ ಸಂಪೂರ್ಣ "ಎಡಿಟಿಂಗ್" ಕೆಲಸ ಮುಗಿಯಬೇಕಾದರೆ - ನನ್ನ ಕೆಲಸ ಕಾರ್ಯಗಳ ಮಧ್ಯೆ, ಕೇವಲ ಪಾರ್ಟ್‌ಟೈಮ್ ಮಾತ್ರ ಈ ಕೆಲಸಕ್ಕೆ ವ್ಯಯಿಸುತ್ತಿರುವುದರಿಂದ - ಏನಿಲ್ಲವೆಂದರೂ ಒಂದು ತಿಂಗಳಾದರೂ ಬೇಕು!

***
ಹದಿನೈದು ಇಪ್ಪತ್ತು ವರ್ಷಗಳ ಫೋಟೋಗಳನ್ನು ಹರವಿಕೊಂಡು ಒಮ್ಮೆ ನೋಡಿ - ನಿಮ್ಮ ಪ್ರಬುದ್ಧತೆ, ಒಳ-ಹೊರಗುಗಳೆಲ್ಲ ಸ್ವಲ್ಪ ಸ್ವಲ್ಪವೇ ಬದಲಾಯಿಸುವುದನ್ನು ಕಣ್ಣಾರೆ ನೋಡಬಹುದು!

Sunday, April 19, 2020

ನಗುನಗುತಾ ನಲಿ

ಹಾಡು: ನಗುನಗುತಾ ನಲಿ 

ಚಿತ್ರ: ಬಂಗಾರದ ಮನುಷ್ಯ, 1972
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ.ಕೆ ವೆಂಕಟೇಶ್
ಗಾಯನ: ಪಿ.ಬಿ.ಶ್ರೀನಿವಾಸ್



ಎಪ್ಪತ್ತರ ದಶಕದ ಸೂಪರ್ ಹಿಟ್ ಮೂವಿಯೆಂದು ನಾವೆಲ್ಲ ಅದೆಷ್ಟು ಬಾರಿ ನೋಡಿ ನಲಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡು ಎಂದೂ ಯಾರನ್ನೂ ಮೋಡಿ ಮಾಡುವ ಹಾಡು.  ಹುಣಸೂರು ಕೃಷ್ಣಮೂರ್ತಿಯವರು ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ರಚಿಸಿ, ಒಬ್ಬ ಮನುಷ್ಯನ ಜೀವಿತಾವಧಿಯ ಮಹತ್ವದ ಹಂತಗಳನ್ನು ಅದೆಷ್ಟು ಸರಳವಾಗಿ ಈ ಹಾಡಿನಲ್ಲಿ ವರ್ಣಿಸಿದ್ದಾರೆ ಎಂದು ಖಂಡಿತ ಅನ್ನಿಸುತ್ತದೆ. ಅದಕ್ಕೆ ತಕ್ಕನಾಗಿ ಜಿ.ಕೆ.ವೆಂಕಟೇಶರ ಹಿನ್ನೆಲೆ ಸಂಗೀತ ಹಾಗೂ ಪಿ.ಬಿ. ಶ್ರೀನಿವಾಸ್ ಅವರ ಕಂಠ ಮಾಧುರ್ಯ, ನಿಮ್ಮನ್ನು ಎಂದೆಂದೂ ಈ ಹಾಡನ್ನು ಕೇಳುವಂತೆ ಮಾಡುತ್ತದೆ.


ಹಾಡಿನ ಮೊದಲಿನಲ್ಲಿ ರಾಜ್‌ಕುಮಾರ್ ಕೆಂಪು ಅಂಗಿ ಮತ್ತು ಬಿಳಿ ಪ್ಯಾಂಟು ತೊಟ್ಟು ರೈಲಿನ ಬೋಗಿಯಿಂದ ಹೊರಕ್ಕೆ ಇಣುಕುತ್ತಿದ್ದಂತೆ ಆಗಿನ ಚಿತ್ರ ಪ್ರೇಮಿಗಳು ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದಿರಬಹುದು.  ಏಳು ನಿಮಿಷದ ಈ ಹಾಡಿನಲ್ಲಿ ಮೊದಲ ಒಂದು ನಿಮಿಷದ ಇಂಟ್ರೋ ಮ್ಯೂಸಿಕ್‌ನಲ್ಲಿ ಹೀರೋ ತನ್ನ ಸುತ್ತಲಿನ ರಮಣೀಯ ಸೌಂದರ್ಯವನ್ನು  ಹೊಸ ಸ್ಥಳವನ್ನು ನೋಡಿದ ಸಹಜವಾದ ಉತ್ಸಾಹದಲ್ಲಿ ಕುಣಿದು ಕುಪ್ಪಳಿಸುವುದನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ.  ’ಆಹಾಹಾ’ ಎನ್ನುವ ಮೊದಲ ಸಾಲಿನ ಆಲಾಪನೆಯನ್ನು ಎಲ್ಲ ಕೋನಗಳಿಂದ ಚಿತ್ರಿಸಿ, ಆ ಧ್ವನಿ ಪ್ರತಿಧ್ವನಿಸುವುದನ್ನು ತೋರಿಸಲಾಗಿದೆ.

ಆಹಾಹಾ.... ಆಹಾಹಾ....ಆಹಾಆಹಾಆಹಾ....
ಬೆಟ್ಟದ ಮಗ್ಗುಲಿನಲ್ಲಿ ನಾಯಕ ಓಡಿ ಬಂದು ದಿಢೀರನೆ ನಿಂತು ಹೊರಳುವ ದೃಶ್ಯ ಹಾಗೂ ಹಾಡಿನ ವೇಗ ಕೇಳುಗರ ಹೃದಯ ಬಡಿತವನ್ನು ಹೆಚ್ಚುವಂತೆ ಮಾಡುತ್ತದೆ.  ಇಲ್ಲಿಯವರೆಗೆ ಇಷ್ಟೊಂದು ವೇಗವಾಗಿ ಹಾಡಿನ ಪಲ್ಲವಿ ಮೂಡಿ ಮರೆಯಾಯಿತೇ ಎಂದು ನೀವು ಎಣಿಸುವುದರೊಳಗೆ, ಜೀವನದ ಮಹತ್ವವಾದ ಸಂದೇಶವನ್ನು ಕವಿ ಸಾರುತ್ತಾರೆ, ಅದಕ್ಕೆ ತಕ್ಕನಾಗಿ ನೂರಕ್ಕೆ ನೂರು ಪಟ್ಟು ಹಿನ್ನೆಲೆ ಸಂಗೀತ, ಗಾಯನ ಹಾಗೂ ನಟನೆ ಸಾಥ್ ನೀಡುವುದರ ಸಂಗಮವನ್ನು ನೀವು ಬರಿ ಪಲ್ಲವಿಯಲ್ಲೇ ಕಾಣಬಹುದು.

ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆಯೆಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ
ಏನೇ ಆಗಲಿ.


ಈ ಹಾಡಿನ ಉದ್ದಕ್ಕೂ ರಾಜ್‌ಕುಮಾರ್ ಅವರ ನಟನಾ ಕೌಶಲ್ಯದ ಜೊತೆಗೆ ಅವರ ವೇಗವಾಗಿ ಓಡುವ, ಕುಣಿಯುವ, ಹಾರುವ ದೃಶ್ಯಗಳನ್ನು ಜೋಡಿಸಲಾಗಿದೆ.  ಒಂದು ತೆರೆದ ಬಯಲಿನಲ್ಲಿ ಈ ಹಾಡನ್ನು ಚಿತ್ರೀಕರಿಸಲು, ಹಾಗೂ ಹಾಡಿನ ಉದ್ದಕ್ಕೂ ತನ್ನ ಉತ್ಸಾಹ, ವೇಗವನ್ನು ಕಾಯ್ದುಕೊಂಡಿರಲು ಚಿತ್ರದ ತಂಡ ಅದೆಷ್ಟು ಕಷ್ಟಪಟ್ಟಿರಬೇಡ?  ರಾಜ್‌ಕುಮಾರ್ ಅವರ ಉತ್ಸಾಹದ ಸೆಲೆಯೇ ಈ ಹಾಡಿನ ಚಿತ್ರೀಕರಣದ ಜೀವಾಳ.  ಈ ಹಾಡಿನ ನಂತರ, ಈ ರೀತಿ ಅದೆಷ್ಟೇ ಹಾಡುಗಳು ಬಂದಿದ್ದರೂ ಕೂಡ, ಇದು ಎಂದೂ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲೂ ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ
ಹೂಗಳು ಬಿರಿದಾಗ.


ಮುಂದಿನ ಪಂಕ್ತಿಗಳಲ್ಲಿ ಜೀವನದ ಮಹತ್ವದ ಘಟ್ಟಗಳನ್ನು ವರ್ಣಿಸುವುದಕ್ಕೆ ಮೊದಲು, ಸುತ್ತಲಿನ ಹಸಿರು ಹಾಗೂ ತರು-ಲತೆಗಳ ಹಿನ್ನೆಲೆಯಲ್ಲಿ ಜಗವನ್ನು ಚೆಲುವಿನ ತಾಣವೆಂದು ವರ್ಣಿಸಿ, ಮುಂದಿನ ಚಿತ್ರಗಳನ್ನು ಹಾಡಿಗೆ ತಕ್ಕಂತೆ ಬದಲಾಗಿಸಲಾಗಿರುವುದನ್ನು ಗಮನಿಸಬಹುದು.  ಹಸಿರು ಪರಿಸರ ಕಾಂಕ್ರೀಟು, ಕಲ್ಲು ಕ್ವಾರಿಯ ಹಿನ್ನೆಲೆಗೆ ನಾಟಕೀಯವಾಗಿ ಬದಲಾಗುವುದನ್ನೂ, ಜೊತೆಯಲ್ಲಿ ಒಂದು ಚಿಕ್ಕ ಬೆತ್ತಲೆ ಮಗು ಅಳುತ್ತಾ ಹಸಿದು ಅಮ್ಮನ್ನನ್ನು ಹುಡುಕಿಕೊಂಡು ಬರುವುದನ್ನೂ, ಆ ಮಗುವಿಗೆ ತಾಯಿ ಹಾಲುಕುಡಿಸುವ ದೃಶ್ಯವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ.

ನಗುನಗುತಾ ನಲಿ ನಲಿ ಏನೇ ಆಗಲಿ.
ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ.

ನಗುನಗುತಾ ನಲಿ ನಲಿ ಏನೇ ಆಗಲಿ.

ಈ ಕೆಳಗಿನ ಪ್ರತಿಯೊಂದು ದೃಶ್ಯಾವಳಿಗಳಿಗೂ ಕಥಾ ನಾಯಕ ಮೊಟ್ಟ ಮೊದಲನೇ ಬಾರಿ ಇವನ್ನೆಲ್ಲ ನೋಡಿ ಅನುಭವಿಸಿರುವುದರ ಜೊತೆಗೆ, ದೃಶ್ಯಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಂತೆ ಚಿತ್ರಿಸಲಾಗಿದೆ.  ಒಂದೊಂದು ಚಿತ್ರದಲ್ಲಿ ಜೀವನದ ಬೆಳವಣಿಗೆಯ ಹಂತಗಳನ್ನು, ನೋವು-ನಲಿವುಗಳನ್ನು ಸಮನಾಗಿ ತೋರಿಸುವ ಜಾಣ್ಮೆ ಮರೆದಿದ್ದಾರೆ.

ಕಳಸಾಪುರದ ಶಾಲೆಯಿಂದ ಮಕ್ಕಳು ಹೊರಗಡೆ ಓಡಿಬರುವ ದೃಶ್ಯ:

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು


ಮದುವೆ ಮಂಟಪ, ಎತ್ತಿನ ಬಂಡಿಯಲ್ಲಿ ದಿಬ್ಬಣ ಹೋಗುವ ದೃಶ್ಯ:

ಮುಂದೆ ಯೌವನ ಮದುವೆ ಬಂಧನ...
ಎಲ್ಲೆಲ್ಲೂ ಹೊಸ ಜೀವನ
ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಮೈಮನ ಮರೆತಾಗ.

ನಗುನಗುತಾ ನಲಿ ನಲಿ ಏನೇ ಆಗಲಿ.

ವೃದ್ದಾಪ್ಯದ ಎರಡು ದೃಶ್ಯಗಳು:

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ
ತಂದಿತಯ್ಯ ಮುದಿತನ
ಅದರೊಳು ಹೊಸದಾದ
ರುಚಿಯಿದೆ ಸವಿಮೋದ.


ನಗುನಗುತಾ ನಲಿ ನಲಿ ಏನೇ ಆಗಲಿ.

ನೀವು ಈ ಹಾಡನ್ನು ಇಲ್ಲಿ ಕೇಳಬಹುದು/ನೋಡಬಹುದು.

Sunday, January 26, 2014

ದಿನಕ್ಕೊಂದು ಕಥೆ...

ನಮ್ಮನೇಲಿ ಮಕ್ಕಳು ಮಲಗೋ ಹೊತ್ತಿಗೆ ದಿನಕ್ಕೊಂದೆರಡು ಕಥೆಗಳು ಹುಟ್ಟೇ ಹುಟ್ಟುತ್ತವೆ. ಅವುಗಳಿಗೆ ಮೇಲ್ಮೈಯಲ್ಲಿ ಯಾವುದೇ ನಿರ್ದಿಷ್ಟವಾದ structure ಇಲ್ಲದಿದ್ದರೂ ಅವುಗಳಲ್ಲಿ ಸಸ್ಪೆನ್ಸ್ ಅಥವಾ ಹಾಸ್ಯದ ಸನ್ನಿವೇಶ ಇರೋದು ಗ್ಯಾರಂಟಿ. ಪ್ರತಿಯೊಂದು ಕಥೆಯಲ್ಲಿ ಒಂದೊಂದು ಸಮಸ್ಯೆಯನ್ನು (problem sovling) ಬಗೆಹರಿಸುತ್ತೇವೆ, I am sure some king, or prince or princess or some merchant has some problem somewhere! ಅದರಿಂದ leadership skills ಬೆಳೆಯಬಹುದು ಎಂಬುದು ನನ್ನ ನಂಬಿಕೆ. ನನ್ನ ಕಥೆಗಳು ಕುವೆಂಪು ಅವರ ಕಥಾ ಸರಿತ್ಸಾಗರ ಮಂಜಣ್ಣನ ಕಥೆಗಳಂತಲ್ಲ, ಆದರೆ ನನ್ನ ಕಥೆಗಳಲ್ಲಿ ಅಲ್ಲಿ-ಇಲ್ಲಿಯ ಟ್ವಿಸ್ಟುಗಳಿವೆ, ತಲ್ಲಣಗಳಿವೆ, ಪ್ರಯೋಗಗಳಿವೆ. ಯಕ್ಷಗಾನದ ಒಂದೇ ಅಂಕಣದಲ್ಲಿ ಕಲಾವಿದರು - ಅತಳ ಸುತಳ, ಪಾತಾಳ, ಭೂಲೋಕ, ಮತ್ಸ್ಯಲೋಕ, ಸರ್ಪಲೋಕ, ದೈವಲೋಕಗಳನ್ನೆಲ್ಲ - ಕ್ಷಣಾರ್ಧಲ್ಲಿ ಹೋಗಿ ಹಿಂತಿರುಗಿ ಬರುವಂತ ಧಕ್ಷತೆ (efficiency) ಇದೆ. ಎಲ್ಲದಕ್ಕೂ ಮುಖ್ಯವಾಗಿ ಪ್ರತಿದಿನ ಒಂದಿಷ್ಟು ಕನ್ನಡವನ್ನು ಕಲಿಸಿಯೇ ತೀರುತ್ತೇನೆಂಬ ಛಲವಿದೆ. ಜೊತೆಗೆ ವಯೋಮಾನಕ್ಕೆ ತಕ್ಕ ಫಿಲ್ಟರ್ ಇದೆ.

***

ನನ್ನ ಕೆಲವು ಕಥೆಗಳು ಮಕ್ಕಳ ಪ್ರಶ್ನೆಯನ್ನಾಧರಿಸಿ ಒಮ್ಮೊಮ್ಮೆ ದಿಢೀರ್ turnಗಳನ್ನು ತೆಗೆದುಕೊಳ್ಳುವುದುಂಟು, ನಿನ್ನೆಯ ಕಥೆಯಲ್ಲಿ ಹಾಗೇ ಆಯಿತು:

ಒಬ್ಬ ರಾಜನಿದ್ದನಂತೆ

ಅವನಿಗೆ ಮೂವರು ಗಂಡು ಮಕ್ಕಳು

ಅವರಲ್ಲಿ ಹಿರಿಯವನು ಕುರುಡ, ಮಧ್ಯದವನು ಕಿವುಡ (ಕೆಪ್ಪ), ಕಿರಿಯವನು ಮೂಕ

They were able to understand the concept of a blind boy (thanks to Dhritaraastra ?), but not deaf and mute, there were a lot of questions around why were they not able to talk or hear. it is interesting to note, these kids could not imagine why some kids are unable to speak or hear.

ರಾಜನಿಗೆ ವಯಸ್ಸಾಗುತ್ತಾ ಬಂದ ಹಾಗೆ ತನ್ನ ಉತ್ತರಾಧಿಕಾರಿ ಯಾರು ಆಗಬೇಕು, ಆಗುತ್ತಾರೆ ಎನ್ನುವುದರ ಕುರಿತು ಚಿಂತೆಯಾಗತೊಡಗಿತು.


So, we have a problem here, what do you think the Raaja should do, who should become the next king and why?

My kids took turns and tried every one of the three sons - there were a lot of pros and cons that came out of it...believe me there were quite a lot.

Finally, we didn't get a democratic conclusion between 2 kids and 3 potential alternatives (but I gave them more choices later)...the suspense started to build now -- more pressure on me, what option do I recommend, who do you think will be the next king in line and best yet, explain why?
ಕುರುಡ - ನೋ.

ಕಿವುಡ - ನೋ.

ಮೂಕ...ನೋ.


then who else? the king himself, he's old, no he can't.
ರಾಜ ಗುರೂಜಿಯನ್ನು ಕರೆದನಂತೆ..."ಗುರೂಜಿ, ಏನು ಮಾಡೋದು, ನಿಮ್ಮ ಆಜ್ಞೆ ಅನುಸಾರ ನಡೀತೀನಿ, ಯಾರನ್ನು ರಾಜನನ್ನಾಗಿ ಮಾಡಲಿ?"


Now, guruji (saint) is under stress...imagine the pressure, it is almost sleeping time...
ಗುರುಜೀ ಹೇಳಿದ್ರು, "ರಾಜ, ನಿನ್ನ ಮಕ್ಕಳಲ್ಲಿ ಯಾರೂ ಮುಂದಿನ ರಾಜನಾಗೋದಕ್ಕೆ ಸಾಧ್ಯವಿಲ್ಲ...ಯಾಕೇ ಅಂದ್ರೆ..." list the drawbacks of every one of his sons becoming the next king...

ರಾಜ, "ಹಾಗಿದ್ರೆ, ಮುಂದಿನ ರಾಜ ಯಾರು?"


Now there is pin drop silence
Guruji says, "Adopt an able kid from my Ashram, and he will be next king, however, your sons will get respective portfolios..." like ಸಬ್ ರಾಜಾಸ್


there were quite a lot of interruptions here...questions, concerns and what not.

Is the Queen okay with this?

Story takes a sub-routine, where Rama and Bharata and their mommies had issues with who can be the next king, also, Inchara pointed out that Rama himself studied in Guruji's Ashram, not in the palace, but Ninad is still not conviced with Guruji's answer.
ಗುರೂಜಿ, ಒಬ್ಬ ಒಳ್ಳೆಯ ಶಿಷ್ಯನನ್ನು ಅಪಾಯಿಂಟ್ ಮಾಡ್ತಾರೆ.

ಜೊತೆಗೆ ರಾಜನ ಮೂವರು ಮಕ್ಕಳನ್ನು ಜೂನಿಯರ್ ಕಿಂಗ್ ಆಗಿ ಕೂಡ ಮಾಡ್ತಾರೆ...

ಇಲ್ಲೇ ನಮ್ಮ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು...


So, for 3 potential sub-kings we debate which portfolio we can give them in the kingdom....for quite some time....

Finally
ಕುರುಡನಿಗೆ - News media and mail service incharge

ಕಿವುಡನಿಗೆ - Store room incharge

ಮೂಕನಿಗೆ - Palace decoration and cleanliness incharge

ಇವುಗಳಿಗೆಲ್ಲ - ಯಾಕೇ ಅಂದ್ರೆ ಅಂಥ ಸೇರಿಸಿ, ತುಂಬಾ ಕಾರಣಗಳನ್ನು ಕೊಡಬೇಕಾಗುತ್ತೆ...

ರಾಜ ಹ್ಯಾಪ್ಪೀ, ಗುರೂಜಿ ಹ್ಯಾಪ್ಪೀ, ಸಬ್ ಕಿಂಗ್ಸ್ ಹ್ಯಾಪ್ಪೀ...


The End!

ಒಂದ್ಸರ್ತಿ ಕಥೆ ಮುಗಿದ ಮೇಲೆ, ನಾವು 2 minutes silence mode ಗೆ ಹೋಗ್ತೀವಿ. ಅಷ್ಟರಲ್ಲಿ ಒಬ್ಬರಲ್ಲ ಒಬ್ರು ನಿದ್ರಾ ದೇವಿಗೆ ಶರಣು ಹೋಗಿರ್ತಾರೆ...this formula works for me - try it, rinse & repeat!
***
If it works or not, drop a line here...

Monday, April 04, 2011

ಆನವಟ್ಟಿ ಸಾಲುಮರಗಳು ಈಗ ಇತಿಹಾಸ...

ಸ್ನೇಹಿತನೊಡನೆ ಜೊತೆ ನಿನ್ನೆಯ ಮಾತುಕಥೆ: - ಜಾಗತೀಕರಣ, ವಾಲ್‌ಮಾರ್ಟ್ ಹೇಗೆ ೩೦ ವರ್ಷದ ಹಿಂದೆ ಚೈನಾದಿಂದ ಕಡಿಮೆ ಬೆಲೆಗೆ ಸಾಮಾನುಗಳನ್ನು ಆಮದು ಮಾಡಿಕೊಂಡು ಹೊಸ ಕ್ರಾಂತಿ ಸೃಷ್ಟಿಸಿತ್ತು. - ಅಮೇರಿಕದ ಕೆಲಸಗಾರರು ಪ್ರತಿ ಘಂಟೆಗೆ ೨೫ ಡಾಲರ್ ಪಡೆಯುತ್ತಿದ್ದಾಗ, ಚೈನಾದಂತಹ ದೇಶಗಳಲ್ಲಿ ಪ್ರತಿದಿನಕ್ಕೆ ಒಬ್ಬೊಬ್ಬ ಒಂದೊಂದು ಡಾಲರ್‌ಗೆ ಕೆಲಸ ಮಾಡುತ್ತಿರುವಂತೆ ಗಳಿಕೆಯಲ್ಲಿನ ವ್ಯತ್ಯಾಸ ಹೇಗೆ ರೀಟೈಲರುಗಳನ್ನು ಸ್ವಲ್ಪ ಕಡಿಮೆ ಕ್ವಾಲಿಟಿ ಆದರೂ ಕಡಿಮೆ ಬೆಲೆಗೆ ಪದಾರ್ಥಗಳನ್ನು ಕೊಳ್ಳುವಂತೆ ಮಾಡಿದ್ದು. (೨೦೦೮, ೨೦೦೯ ವಿಶ್ವ ಬ್ಯಾಂಕ್ ಮೂಲಗಳ ಪ್ರಕಾರ) -ಚೈನಾದ ಜನಸಂಖ್ಯೆ ೧.೩೩ ಬಿಲಿಯನ್, GDP $6,890 - ಭಾರತದ ಜನಸಂಖ್ಯೆ ೧.೧೭ ಬಿಲಿಯನ್, GDP $3,250 -ಚೈನಾದ ಕಮ್ಮ್ಯೂನಿಸಮ್ಮ್, ಅಲ್ಲಿನ ಮೆಗಾ ಪ್ರಾಜೆಕ್ಟುಗಳು ಮಿಲಿಯನ್ನ್‌ಗಟ್ಟಲೆ ಜನರನ್ನು ಎತ್ತಂಗಡಿ ಮಾಡಿದರೂ ವಿಶ್ವದ ಉಳಿದ ಜನರಿಗೆ ಕಿಂಚಿತ್ತೂ ಗೊತ್ತಾಗದಿರುವುದು, ಪರಿಸರ ಕಾಳಜಿ, ಸಾಮಾಜಿಕ ಮೌಲ್ಯ ಮೊದಲಾದವುಗಳ ಬಗ್ಗೆ ಇರುವ ಅವರದ್ದೇ ಆದ ವ್ಯಾಖ್ಯೆ ಪರಿಕಲ್ಪನೆ. - ಭಾರತದ ಜನತಂತ್ರ ವ್ಯವಸ್ಥೆ, ಮೆಗಾ ಮಿನಿ ಪ್ರಾಜೆಕ್ಟುಗಳು, ರಸ್ತೆ ಅಗಲೀಕರಣದ ವಾಸ್ತವ ಚಿತ್ರ - ರಾತ್ರೋ ರಾತ್ರಿ ಎದ್ದೇಳುವ ಮಂದಿರ, ಮಸೀದಿ, ಚರ್ಚುಗಳು - ಪರಿಸರ ವಾದಿಗಳು, ದಿವ್ಯ ನದಿಗಳು, ತೆರೆದ ರಾಜಕೀಯ, ಜಾತಿ-ಮತ, ಭ್ರಷ್ಟಾಚಾರಗಳಂತ ತಿಮಿಂಗಲಗಳು, ಮೊದಲಾದವುಗಳು. ಅಮ್ಮನೊಡನೆ ಇಂದಿನ ಚರ್ಚೆ: - ಈ ವರ್ಷವೆ ಕೊನೇ ಇನ್ನು ಮುಂದೆ ನಮಗೆ ಸಾಲು ಮರಗಳಿಂದ ಮಾವಿನ ಮಿಡಿ ಸಿಗೋದಿಲ್ಲ. - ಆನವಟ್ಟಿ ಇಂದ ಶಿರಾಳಕೊಪ್ಪದ ವರೆಗೆ (ಸುಮಾರು ೨೫ ಕಿ.ಮಿ.) ರಸ್ತೆಯ ಎರಡೂ ಬದಿಯ ಸಾಲು ಮರಗಳನ್ನು ಕಡಿದು ಹಾಕುತ್ತಿದ್ದಾರೆ, ರಸ್ತೆ ಅಗಲ ಮಾಡುತ್ತಿದ್ದಾರೆ. - ಯಡಿಯೂರಪ್ಪನವರ ದೊಡ್ಡ ಪ್ರಾಜೆಕ್ಟುಗಳಲ್ಲಿ ಇದೂ ಒಂದಂತೆ. - ಸುಮಾರು ನೂರು ವರ್ಷಕ್ಕೂ ಹಿಂದಿನಿಂದಲೂ ಇದ್ದ ಮರಗಳು ಅವು, ಅವನ್ನೆಲ್ಲ ಕಡಿದು ದೊಡ್ಡ ದೊಡ್ಡ ಮಿಷೀನುಗಳನ್ನು ಬಳಸಿ ಬುಡ ಸಮೇತ ಎತ್ತುತ್ತಿದ್ದಾರೆ. - ಬೋಳು-ಬೋಳು ರಸ್ತೆಗಳನ್ನು ನೋಡೋದಕ್ಕೆ ಬೇಜಾರಾಗುತ್ತೆ. - ಈ ಮರಗಳ ಬದಲಿಗೆ ಬೇರೆ ಎಲ್ಲಿಯಾದರೂ ಅಕೇಷಿಯಾ ಪಕೇಷಿಯಾ ನೆಡ್ತಾರೆ ಅಷ್ಟೇ, ನಮ್ಮ ಹಿಂದಿನವರ ಥರ ಮಾವು-ಬೇವುಗಳನ್ನು ಯಾರು ನೆಡ್ತಾರೆ ಈಗಿನ ಕಾಲದಲ್ಲಿ? - ಆ ಮರಗಳಲ್ಲಿದ್ದ ಅಷ್ಟೊಂದು ಪಕ್ಷಿಗಳು ಇನ್ನೆಲ್ಲಿ ಹೋಗ್ತಾವೋ ಏನೋ? *** ಹೂರಣ: ಭಾರತದ ಮೂಲೆ-ಮೂಲೆಗಳಿಂದ ಅಮೇರಿಕಕ್ಕೆ ಬಂದಂಥ ನಾವು, Caterpillar (CAT) ನಂತಹ ಕಂಪನಿಗಳಲ್ಲಿ ಕೆಲಸ ಮಾಡೋದು ಯೋಗ್ಯ, ಏಕೆಂದರೆ ಇವರ ಬುಲ್‌ಡೋಝರ್ ಮೊದಲಾದ ಕನ್‌ಷ್ಟ್ರಕ್ಷನ್ನ್ ಉಪಕರಣ ಹಾಗೂ ಮಿಷೀನುಗಳಿಗೆ ಜಗತ್ತಿನಾದ್ಯಂತ ಬಹಳ ಬೇಡಿಕೆ. ಅಲ್ಲದೆ, ಪರೋಕ್ಷವಾಗಿ ನೀವು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಮತ್ತೊಂದು ಮೂಲೆಯನ್ನು ಅಗೆಯಬಹುದು! ನಿಮ್ಮ ಜಾಗತಿಕರಣದ ಊಹೆ ಅಥವಾ ಕನಸನ್ನ ಎಲ್ಲರಿಗೂ ತಲುಪಿಸಬಹುದು! ಹೂರಣದ crust: CAT ನಲ್ಲಿ ಪ್ರತಿಯೊಬ್ಬರೂ ದುಡಿಯಲು ಸಾಧ್ಯವೇ? ಆ ಕಂಪನಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೇನಂತೆ? ಆ ಕಂಪನಿಯಲ್ಲಿ ಹಣ ತೊಡಗಿಸಬಹುದು, ಎಲ್ಲಾ ಒಂದೇ! *** ’ಅಂತರಂಗ’ದ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಖರನಾಮ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ!

Tuesday, June 17, 2008

ಪಾಪ, ಇಂದಿನ ಮಕ್ಕಳು!

ಆಫೀಸಿನಲ್ಲಿ ನನ್ನ ಅಕ್ಕ ಪಕ್ಕದ ಕ್ಯೂಬಿಕಲ್‌ಗಳಲ್ಲಿ ಕುಳಿತುಕೊಳ್ಳುವ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡ ನಾಲ್ಕು ಸಹೋದ್ಯೋಗಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಂಡುಕೊಂಡಿದ್ದೇನೆ. ಅವರೆಲ್ಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತನಾಲ್ಕು ವರ್ಷದ ಆಜುಬಾಜಿನವರು, ಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ಓದಿದ್ದೂ ಸಹ ಹಾಗೂ ಇವತ್ತಿಗೂ ತಮ್ಮ ತಂದೆ-ತಾಯಿಯರ ಜೊತೆಗೇ ವಾಸಿಸುತ್ತಿರುವವರು. ಈ ನಾಲ್ಕು ಜನರು ಇಲ್ಲೇ ಹುಟ್ಟಿ ಬೆಳೆದವರಾದರೂ ನಮ್ಮ ಭಾರತೀಯ ಪರಂಪರೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ತಮ್ಮ ತಮ್ಮ ಪೋಷಕರನ್ನು ಆಧರಿಸಿಕೊಂಡಿರುತ್ತಿದ್ದುದನ್ನು ಆಗಾಗ್ಗೆ ನೆನಪಿಗೆ ತಂದುಕೊಡುತ್ತಾರೆ. ಇವರನ್ನು ನೋಡಿದ ಬಳಿಕ ಅಮೇರಿಕನ್ ಮಕ್ಕಳು ಸ್ವಾತಂತ್ರ ಪ್ರಿಯರೋ ಅಥವಾ ಹದಿನೆಂಟು ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಪೋಷಕರನ್ನು ಬಿಟ್ಟು ದೂರ ಹೋಗಬಯಸುವವರೋ ಎಂದೆಲ್ಲ ಯೋಚಿಸಿಕೊಂಡಿದ್ದ ಅಥವಾ ಜೆನರಲೈಜೇಷನ್ನುಗಳ ಬಗ್ಗೆ ಕೇಳಿದ್ದು ಅಲ್ಲವೋ ಹೌದೋ ಎಂದು ಪ್ರಶ್ನೆ ಎದ್ದಿದ್ದಂತೂ ನಿಜ. ತಾವು ತಮ್ಮ ಕಾರುಗಳನು ಚಲಾಯಿಸಬಲ್ಲರಾದರೂ ತಮ್ಮ ಪೋಷಕರೊಡನೆ ಕೂಡಿ ಆಫೀಸಿಗೆ ಬಂದು ಹೋಗುವ ಅಥವಾ ಪೋಷಕರು ಮಕ್ಕಳನ್ನು ಆಫೀಸಿಗೆ ಬಿಟ್ಟು ಕರೆದುಕೊಂಡು ಹೋಗುವುದನ್ನು ನಾನು ನೋಡಿದ್ದು ಕಡಿಮೆಯೇ. ಹಿಂದೆ ನನ್ನ ಅಮೇರಿಕನ್ ಸ್ನೇಹಿತ ಕೆನ್ ಲೆನಾರ್ಡ್‌ನ ಕುಟುಂಬವನ್ನು ನಾನು ನೋಡಿದ ಹಾಗೆ ಎಷ್ಟೋ ರೀತಿಯಲ್ಲಿ ಭಾರತೀಯ ಕುಟುಂಬಗಳನ್ನು ಹೋಲುವಂತೆಯೇ ಆತನೂ ಹಲವಾರು ಗ್ರೌಂಡ್ ರೂಲ್ಸ್‌ಗಳ ಸಹಾಯ/ಆಧಾರದ ಮೇಲೆ ತನ್ನ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದುದರ ಬಗ್ಗೆ ಬರೆದಿದ್ದೆ.

ನನ್ನ ಹಾಗಿನವರು ಬಹಳಷ್ಟು ಜನ ಹತ್ತನೇ ತರಗತಿ ಮುಗಿದ ಬಳಿಕ ಪಿಯುಸಿ ವಿದ್ಯಾಭ್ಯಾಸದಿಂದ ಹಿಡಿದು ತಮ್ಮ ಮುಂದಿನ ಜೀವನವನ್ನು ಪೋಷಕರಿಂದ ದೂರವಿದ್ದೇ ನಡೆಸಿಕೊಂಡು ಬರುತ್ತಿರುವುದು ಭಾರತದಲ್ಲಿ ಸಾಮಾನ್ಯವೆಂದು ಹೇಳಲಾಗದಿದ್ದರೂ ಅಲ್ಲಲ್ಲಿ ನೋಡಲು ಸಿಗುತ್ತದೆ ಎನ್ನಬಹುದಾದ ಅಂಶ. ಹತ್ತನೇ ತರಗತಿ ಮುಗಿದರೂ ನನಗೆ ಒಂದು ಬ್ಯಾಂಕಿಗೆ ಹೋಗಿ ಹತ್ತು ರೂಪಾಯಿ ಡಿಪಾಜಿಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದುದು ಇಂದಿಗೂ ಆಶ್ಚರ್ಯ ತರಿಸುತ್ತದೆ. ಮೊದಲನೆಯದಾಗಿ ಬ್ಯಾಂಕ್ ವ್ಯವಹಾರಗಳಾಗಲೀ ಹಣಕಾಸು ಸಂಬಂಧಿ ಚರ್ಚೆಗಳಾಗಲೀ ನಮ್ಮ ಅವಿಭಕ್ತ ಕುಟುಂಬಗಳಲ್ಲಿ (ನಮ್ಮೆದುರಿಗೆ) ಆಗುತ್ತಿದ್ದುದು ಕಡಿಮೆ. ಮನೆಯ ಯಜಮಾನನಾದವನು ನಡೆಸಿಕೊಂಡು ಹೋಗಬಹುದಾದ ಚರ್ಚೆ ಹಾಗೂ ವ್ಯವಹಾರಗಳಲ್ಲಿ ನಾವು ಚಿಕ್ಕವರಿಗೆ ಯಾವ ಸ್ಥಾನವೂ ಇದ್ದಿರಲಿಲ್ಲ. ಹೈ ಸ್ಕೂಲು ಮುಟ್ಟುವ ಹೊತ್ತಿಗೆ ಒಂದೆರಡು ಬಾರಿ ಯಾರೋ ಕೊಟ್ಟ ಚೆಕ್ ಡಿಪಾಜಿಟ್ ಮಾಡಿದ್ದೋ ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡಿದ್ದನ್ನೋ ಬಿಟ್ಟರೆ ಮತ್ತೇನೂ ವಿಶೇಷ ಅನುಭವಗಳು ನಮ್ಮ ನೆನಪಿನಲ್ಲಿ ಇರಲಾರವು. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಯುವವರೆಗೆ, ಕೆಲಸ ಸಿಗುವವರೆಗೆ, ಮದುವೆಯಾಗಿ ಮಕ್ಕಳಾಗುವವರೆಗೂ ಪೋಷಕರನ್ನು ಆಧರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ವಿಭಿನ್ನ ವ್ಯವಸ್ಥೆ-ವಿಧಾನಗಳಲ್ಲಿ ತಪ್ಪು ಸರಿ ಯಾವುದು ಎನ್ನುವುದಕ್ಕಿಂತ ಹಲವು ಮನಸ್ಥಿತಿ, ನನ್ನಂತಹವರು ಬೆಳೆದು ಬಂದ ರೀತಿ ಹಾಗೂ ಬದಲಾದ ಕಾಲಮಾನಗಳ ಅವಲೋಕನವನ್ನು ಮಾಡಿಕೊಡುವ ಒಂದು ಪ್ರಯತ್ನವಿದಷ್ಟೇ.

’ಅಮೇರಿಕನ್ ಮಕ್ಕಳು ಬಹಳ ಇಂಡಿಪೆಂಡೆಂಟ್’ ಎನ್ನುವ ನೋಷನ್ನ್ ಅನ್ನು ನಾನು ಎನ್‌ಆರ್‍‌ಐ ಸಮುದಾಯಗಳಲ್ಲಿ, ನಮ್ಮ-ನಮ್ಮ ನಡುವಿನ ಮಾತುಕಥೆಗಳಲ್ಲಿ ಕೇಳಿದ್ದೇನೆ. ಈ ಬಗೆಯ ಜನರಲೈಜೇಷನ್ನಿಗಿಂತ ಇದೇ ಅವಲೋಕನವನ್ನು ಇಲ್ಲಿನ ಹಳ್ಳಿ-ಪಟ್ಟಣ-ನಗರ ಸಮುದಾಯಗಳಲ್ಲಿ ಮಾಡಿದಾಗ ಬೇಕಾದಷ್ಟು ರೀತಿಯ ಫಲಿತಾಂಶಗಳು ಹಾಗೂ ಮುಖ್ಯವಾಗಿ ಜನರಲೈಜೇಷನ್ನಿಗಿಂತ ಭಿನ್ನ ಅಂಕಿ-ಅಂಶಗಳೂ ಸಿಕ್ಕಬಹುದು. ನಮ್ಮ ಪುರೋಹಿತರು ಇಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಬಾಲಕೃಷ್ಣನ ಲೀಲೆಗಳನ್ನು, ಕೃಷ್ಣ-ಬಲರಾಮರ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ’ಕೃಷ್ಣ ಮತ್ತು ಆತನ ಸ್ನೇಹಿತರು ಬೆಣ್ಣೆಯನ್ನು ಮನೆಯಲ್ಲಿ ಹುಡುಕುತ್ತಿದ್ದರಂತೆ, ಮಡಿಕೆಯ ಕುಡಿಕೆಯನ್ನು ಯಶೋಧೆ ಮಾಳಿಗೆಯ ಕುಡಿಕೆಯಲ್ಲಿ ಬಿಗಿದು ಕಟ್ಟಿದ್ದನ್ನು ಇವರು ಕಂಡು ಹಿಡಿದರಂತೆ...’ ಎಂದು ಕಥೆ ಮುಂದುವರಿಸುತ್ತಿದ್ದಾಗ ಒಬ್ಬ ಹುಡುಗ ’ಅಂಕಲ್, ಅವರು ಬೆಣ್ಣೆಯನ್ನು ಏಕೆ ಹುಡುಕುತ್ತಿದ್ದರು, ಫ್ರಿಜ್ ಬಾಗಿಲು ತೆಗೆದು ನೋಡಿದ್ದರೆ ಅಲ್ಲೇ ಸಿಗುತ್ತಿರಲಿಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನೆ ಕೇಳಿದ್ದನ್ನು ಪುರೋಹಿತರು ನಗುತ್ತಲೇ ಇನ್ನೂ ಸ್ವಾರಸ್ಯವಾಗಿ ವಿವರಿಸಿ, ’ಇಂದಿನ ಮಕ್ಕಳು ಬಹಳ ಭಿನ್ನ ನಮ್ಮ ಕಾಲದವರ ಹಾಗಲ್ಲ’ ಎಂದು ಹೇಳಿದ್ದು ನೆನಪಿಗೆ ಬಂತು.

ಇಂದಿನ ಮಕ್ಕಳ ಪ್ರಪಂಚ ಸಣ್ಣದು, ಆದರೆ ಅದರ ಒಳ ವಿಸ್ತಾರ ಬಹಳ ಹೆಚ್ಚು - ಅವರ ಆಟಿಕೆಗಳು ಬೇರೆ, ಅವರ ಪಾಠ-ಪುಸ್ತಕ ಪ್ರವಚನಗಳು ಬೇರೆ, ಅವರ ಬದುಕೇ ಭಿನ್ನ. ಕಂಪ್ಯೂಟರ್ ಕೀ ಬೋರ್ಡಿನಿಂದ ಹಿಡಿದು ವಿಡಿಯೋ ಗೇಮ್ ಆಟಗಳವರೆಗೆ, ಅವರು ಮಾತಿನಲ್ಲಿ ಬಳಸುವ ಶಬ್ದಗಳಿಂದ ಹಿಡಿದು ಅವರವರಲ್ಲೇ ಸಂವಹನಕ್ಕೆ ಬಳಸುವ ಮಾಧ್ಯಮಗಳವರೆಗೆ ಇಂದಿನ ಮಕ್ಕಳು ಬಹಳ ಭಿನ್ನ. ನಮ್ಮ ಪೋಷಕರು ನಾವು ಬೆಳೆಯುತ್ತಿದ್ದಾಗ ಅವರಿಗೂ ನಮಗೂ ಇದ್ದ ಅಂತರಕ್ಕಿಂತಲೂ ನಮಗೂ ನಮ್ಮ ಮಕ್ಕಳಿಗೂ ಇರುವ ಅಂತರ ಹೆಚ್ಚು ಎಂದರೆ ತಪ್ಪಾಗಲಾರದು. ನಮ್ಮ ತಲೆಯಲ್ಲಿ ಬಳಸಿ ಉಳಿದುಹೋದ ಪದಗಳಾದ - ಎತ್ತು ಏರಿ ಕಣ್ಣಿ ಮಿಣಿ ಕಡಗೋಲು ಮಜ್ಜಿಗೆ ಗಿಣ್ಣ ನೊಗ ಗೋಲಿ ಬುಗುರಿ ಚೆಂಡು ಚಿತ್ರ ಪರೀಕ್ಷೆ ಹಾಡು ಹಸೆ ಸ್ನಾನ - ಮೊದಲಾದವುಗಳಿಗೆ ಈಗಿನ ಮಕ್ಕಳ ತಲೆಯಲ್ಲಿ ಪರ್ಯಾಯ ಪದಗಳು ಬಂದಿರಬಹುದು ಅಥವಾ ಅವು ಉಪಯೋಗಕ್ಕೆ ಬಾರದೇ ಇರುವವಾಗಿರಬಹುದು. ಮೆಕ್ಯಾನಿಕಲ್ ಟೈಪ್‌ರೈಟರ್ ಎಂದರೆ ಏನು? ಎನ್ನುವವರಿಂದ ಹಿಡಿದು ತಮ್ಮಿಂದ ಕೇವಲ ಇಪ್ಪತ್ತೇ ಅಡಿ ದೂರದಲ್ಲಿರುವ ಗೆಳೆಯ-ಗೆಳತಿಯರೊಡನೆ ಕೇವಲ ಟೆಕ್ಸ್ಟ್ ಮೆಸ್ಸೇಜ್ ಸಂಭಾಷಣೆಯಲ್ಲೇ ನಿರತರಾಗಿದ್ದುಕೊಂಡು ಅದರ ಮಿತಿಯಲ್ಲೇ ತಮ್ಮ ಆಗುಹೋಗು ಅನಿಸಿಕೆಗಳನ್ನು ಹಂಚಿಕೊಳ್ಳುವವರು. ವಿಶ್ವದ ಎಲ್ಲ ಸಮಸ್ಯೆಗಳನ್ನೂ ಶಾಲಾ ಮಟ್ಟದಲ್ಲೇ ಇವರಿಗೆ ಪರಿಚಯಿಸಿ ಅದರ ಉತ್ತರ ಕಂಡುಹಿಡಿಯುವಂತೆ ಮಾಡುವ ಅಸೈನ್‌ಮೆಂಟ್‌ಗಳು ಇವರವಾಗಿರಬಹುದು. ತಮ್ಮ ಹಿರಿಯರು ಮನೆಗೆ ಬಂದವರು ಅತಿಥಿಗಳು ಮೊದಲಾದವರು ಯಾವುದೋ ಒಂದು ಶುಭ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಇವರು ಅದೇ ಹಾಲ್‌ನ ಒಂದು ಮೂಲೆಯ ಸೋಫಾದ ಮೇಲೆ ಕುಳಿತು ಹ್ಯಾಂಡ್‌ಹೆಲ್ಡ್ ಡಿವೈಸ್‌ನಿಂದ ಇಂದೇ ಪ್ರಪಂಚದ ಕೊನೆಯಾದೀತೇನೋ ಎಂಬ ತನ್ಮಯತೆಯಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರು. ವಿಕಾಸವಾದದ ಮುನ್ನಡೆಯಾದಂತೆ ಇವರ ಮಿದುಳು ಪ್ರಚಂಡ ಇನ್‌ಫರ್ಮೇಷನನ್ನು ಸಂಸ್ಕರಿಸುವ ಹಾಗೂ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡುವ ಕ್ಷಮತೆಯನ್ನು ಹೊಂದಿರಬಹುದು ಅಥವಾ ವಿಡಿಯೋ ಗೇಮ್ ಆಡೀ ಆಡೀ ಇವರ ಕೈ ಬೆರಳುಗಳ ಸ್ನಾಯುಗಳು ಬಲಗೊಂಡು ಮುಂದೆ ಬ್ಲಾಕ್‌ಬೆರಿ ಉಪಯೋಗಿಸುವಲ್ಲಿ ನೆರವಾಗಬಹುದು ಅಥವಾ ಅದಕ್ಕೆಂದೇ ಹೊಸ ಸ್ನಾಯುಗಳ ಬೆಳವಣಿಗೆಯಾದರೂ ನನಗೇನೂ ಆಶ್ಚರ್ಯವಾಗೋದಿಲ್ಲ.

ಆದರೆ ಇಂದಿನ ಮಕ್ಕಳನ್ನು ನೋಡಿದರೆ ಕಷ್ಟವಿದೆ ಎನ್ನಿಸುತ್ತೆ, ಅವರ ಬದುಕಿನ ಬಗ್ಗೆ ಅನುಕಂಪ ಖಂಡಿತ ಹುಟ್ಟುತ್ತೆ. ನಾವು ಎಂಭತ್ತರ ದಶಕದಲ್ಲಿ ಸಾಗರದಂತಹ ಪಟ್ಟಣಗಳಲ್ಲಿ ಪಿಯುಸಿ ಓದುತ್ತಿರುವಾಗ ನಮ್ಮ ಕ್ಲಾಸಿನಲ್ಲಿ ಒಂದಿಷ್ಟು ’ಮುಂದುವರೆದ’ ಕುಟುಂಬದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆ ಬರೆದು ಅದರ ಫಲಿತಾಂಶ ಬಂದು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಮೊದಲೇ ಮನೆಪಾಠಗಳಲ್ಲಿ ವ್ಯವಸ್ಥಿತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನನ್ನಂತಹ ಸಾಧಾರಣ ಹಳ್ಳಿಗಾಡಿನ ವಿದ್ಯಾರ್ಥಿಗಿಂತ ಬಹಳಷ್ಟು ಮುಂದಿರುತ್ತಿದ್ದರು. ಅದು ನನಗೆ ಆಗ ಆಶ್ಚರ್ಯ ತರಿಸಿತ್ತು. ಒಂದು ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನನ್ನಂತಹವರು ಅಜ್ಜ-ಅಜ್ಜಿಯ ಜೊತೆ ಸ್ನೇಹಿತರ ಜೊತೆ ಬೇಸಿಗೆ ರಜೆ ಕಳೆಯುವ ಸಂದರ್ಭಗಳಲ್ಲಿ ಮುಂದಿನ ತರಗತಿಗಳಾಗಲೀ ಬದುಕಿನ ಬಗ್ಗೆಯಾಗಲೀ ಯೋಚಿಸಿದ್ದಿರಲಾರೆವು, ಆದರೆ ’ಮುಂದುವರೆದ’ ವಿದ್ಯಾರ್ಥಿಗಳ ಜನರೇಷನ್ನ್ ಅಲ್ಲಿ ನಮಗೆ ವಿಶೇಷವಾಗಿತ್ತು, ಅದರಲ್ಲೂ ನಾವು ಯಾವ ನಿಟ್ಟಿನಲ್ಲಿ ಆಲೋಚಿಸಿಕೊಂಡರೂ ಅವರ ಎದುರಿಗೆ ನಮ್ಮ ಸ್ಪರ್ಧೆ ನೀರಸವಾಗುತ್ತಿತ್ತು. ಇಂದಿನ ಮಕ್ಕಳಿಗೆ ಎಲಿಮೆಂಟರಿ (ಪ್ರಾಥಮಿಕ) ಹಂತದಲ್ಲೆ ಮನೆ-ಪಾಠ (ಪೈವೇಟ್ ಟ್ಯೂಷನ್) ಆರಂಭವಾಗುತ್ತದೆ ಎಂದು ಕೇಳಿದಾಗ, ಅದರ ಬಗ್ಗೆ (ವಿರುದ್ಧವಾಗಿ) ಬೇಕಂತಲೇ ವಾದ ಮಾಡಿದಾಗ ನನ್ನನ್ನು ಮೃಗಾಲಯದ ಪ್ರಾಣಿಯನ್ನು ನೋಡುವ ಹಾಗೆ ಜನರು ನೋಡುವುದನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೇ ಹೇಳಿದ್ದು ಇಂದಿನ ಮಕ್ಕಳ ಬದುಕು ಕಷ್ಟ ಎಂದು. ನಮ್ಮ ಸರ್ವತೋಮುಖ ಬೆಳವಣಿಗೆ ಎನ್ನುವುದನ್ನು ಅದೆಷ್ಟರ ಮಟ್ಟಿಗೆ ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆ ಆಧರಿಸುತ್ತದೆ ಎನ್ನುವುದು ಈ ಹೊತ್ತಿನ ಪ್ರಶ್ನೆ - ಅದರ ಬೆನ್ನ ಹಿಂದೆ ಹುಟ್ಟುತ್ತಿರುವುದೇ ಈ ಹೊತ್ತಿನ ತತ್ವ!

ನನ್ನ ಬೆಳವಣಿಗೆ ಹೇಗೇ ಇರಲಿ ಇಂದಿನ ಬದುಕು ಯಾವ ರೀತಿಯಲ್ಲೇ ಇರಲಿ, ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ. ನಮ್ಮ ನಡುವೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆಯ ಬೆನ್ನೆಲುಬಿನ ಮೇಲೆ ನಿಂತಿದ್ದ ನೀರು-ನಿಡಿ, ಪರಿಸರ-ನೆರೆಹೊರೆ, ನೆಂಟರು-ಇಷ್ಟರು, ಊರು-ಬಳಗ, ಸಂಪ್ರದಾಯ ಮೊದಲಾದವುಗಳನ್ನು ಇಂದಿನ ಮಕ್ಕಳ ಮನಸ್ಸಿಗೆ ಹೇಗೆ ಅನ್ವಯಿಸಬಹುದು ಎಂದು ಚಿಂತಿಸುತ್ತೇನೆ. ಮಕ್ಕಳು ಒಳ್ಳೆಯ ಶಾಲೆಗೆ ಸೇರಿವುದರಿಂದ ಹಿಡಿದು, ಒಳ್ಳೆಯ ಗ್ರೇಡು-ಮಾರ್ಕ್ಸ್‌ಗಳನ್ನು ಪಡೆಯುವವರೆಗೆ, ಅವರಿಗೆ ತಕ್ಕ/ಒಪ್ಪುವ/ದಕ್ಕುವ ಶಿಕ್ಷಣವನ್ನು ಆಧರಿಸುವವರೆಗೆ, ಮುಂದೆ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಸಂಸಾರ ನಡೆಸಿಕೊಂಡು ಹೋಗುವವರೆಗೆ ಎಲ್ಲೆಲ್ಲಿ ನಮ್ಮ ಇನ್‌ಫ್ಲುಯೆನ್ಸ್‌ಗಳು ನಡೆಯುತ್ತವೆ ಎಂದು ಕೊರಗುತ್ತೇನೆ. ಮನೆ-ಪಾಠ, ಕೋಚಿಂಗ್ ಮೊದಲಾದವುಗಳನ್ನು ಕೊಟ್ಟು ಇವರನ್ನು ನಾವು ಮುಂದಿನ ಬದುಕಿಗೆ ತಯಾರು ಮಾಡುವುದು ನಮ್ಮ ಕೈಯಲ್ಲಿದೆಯೋ, ಅಥವಾ ಅವರೇ ತಮ್ಮ ತಮ್ಮ ದಾರಿ/ಗುರಿಯನ್ನು ರೂಪಿಸಿಕೊಳ್ಳುತ್ತಾರೋ, ನಮ್ಮ ಪೋಷಕರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ನಾವು ಇವರನ್ನು ಬೆಳೆಸಲಾಗದಿದ್ದ ಮೇಲೆ ಇವರನ್ನು ನಾವು ಬೆಳೆಸುವ ರೀತಿಯೇ ಸರಿಯೆಂದು ನಮಗೆ ಗೊತ್ತಾಗುವುದು ಹೇಗೆ ಮತ್ತು ಎಂದು?