Showing posts with label ಸಿನಿಮಾ. Show all posts
Showing posts with label ಸಿನಿಮಾ. Show all posts

Sunday, May 03, 2020

ಸಿನಿಮಾ ವ್ಯಥೆ

ಈ ಕೋವಿಡ್ ವ್ಯಥೆಯಿಂದ ಎಷ್ಟೆಷ್ಟು ಹೊಸ ಕಥೆಗಳು ಹುಟ್ಟುತ್ತವೆಯೋ ಅಥವಾ ಕೋವಿಡ್‌ನಿಂದ ಒಂದು ಹೆಚ್ಚಿನ ಗುಣಮಟ್ಟದ ಸಿನಿಮಾ ಕಥೆಗಳು ಬರಬಹುದೋ ಎಂದು ನಿರೀಕ್ಷೆಯಲ್ಲಿದ್ದ ನನಗೆ, ನಮ್ಮ ಸಿನಿಮಾ ಉದ್ಯಮದ ಬಗ್ಗೆ ಹೆಚ್ಚು ಆಲೋಚಿಸಿದಂತೆಲ್ಲ, ನಲಿವಿಗಿಂತ ನೋವೇ ಹೆಚ್ಚಾಗಿ ಕಂಡಿತು.

ಮೊದಲೇ ಥಿಯೇಟರುಗಳಿಗೆ ಹೋಗದೇ ಹೊರಗುಳಿದಿದ್ದ ಪ್ರೇಕ್ಷಕರು ಈಗಂತೂ ಇನ್ನೂ ದೂರವೇ ಉಳಿಯುತ್ತಾರೆ.  ಎಲ್ಲ ಕಡೆಗೆ ವ್ಯವಸ್ಥಿತವಾಗಿ ಮತ್ತೆ ವ್ಯಾಪಾರ ವಹಿವಾಟುಗಳು ಓಪನ್ ಆಗುತ್ತಿದ್ದಂತೆ, ಸಿನಿಮಾ ಪ್ರಪಂಚ ಚೇತರಿಸಿಕೊಳ್ಳಲು ಇನ್ನೂ ಸಮಯ ಹಿಡಿಯುತ್ತದೆ.  ಈ ವರ್ಷವಂತೂ ನಾವೆಲ್ಲ, ಈಗಾಗಲೇ ಬಿಡುಗಡೆ ಹೊಂದಿರುವ ಸಿನಿಮಾಗಳನ್ನು ಆನ್‌ಲೈನ್ ಮಾಧ್ಯಮದಲ್ಲಿ ಮಾತ್ರ ನೋಡಿ ಖುಷಿ ಪಡಬೇಕು, ಅಷ್ಟೇ.

ಸಿನಿಮಾವನ್ನು ನಂಬಿಕೊಂಡು ಬದುಕಿದ ಕಲಾವಿದರಷ್ಟೇ ಅಲ್ಲ, ಅವರನ್ನು ಆದರಿಸಿದ ಅನೇಕ ಕುಟುಂಬ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ.  ಈ ವೇದನೆ ಕೇವಲ ರಾಜ್ಯ, ರಾಷ್ಟ್ರದ ಮಟ್ಟಿಗೆ ಸೀಮಿತವಾಗಿರದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೆ.

ಒಳ್ಳೆಯ ಸಿನಿಮಾವನ್ನು ಮಾಡಲು ಮೊದಲೇ ಹಿಂಜರಿಯುತ್ತಿದ್ದ ನಿರ್ಮಾಪಕರುಗಳು ಬಂಡವಾಳವನ್ನು ತೊಡಗಿಸಲು ಹಿಂದೆ ಹೆಜ್ಜೆ ಇಡುತ್ತಾರೆ.  ಅವರನ್ನು ನಂಬಿಕೊಂಡು ಒಳ್ಳೆಯ ಕಥೆಯನ್ನು ಕೈಯಲ್ಲಿಟ್ಟುಕೊಂಡ ನಿರ್ದೇಶಕರ ತಂಡ ಮಂಕಾಗುತ್ತದೆ.  ಒಂದು ಉತ್ತಮ ಸಿನಿಮಾಕ್ಕೆ ಬೇಕಾದ ಬಂಡವಾಳವನ್ನೇ ಹುಟ್ಟಿಸುವುದು ಕಷ್ಟವಾದಾಗ, ಕೆಲಸಗಾರರ ವೇತನ ಮತ್ತು ಕಲಾವಿದರ ಸಂಭಾವನೆಗಳಿಗೆ ಕತ್ತರಿ ಬೀಳುತ್ತದೆ. ಇದರಿಂದ ಹೊರಬರುವ ಸಿನಿಮಾಗಳ ಸಂಖ್ಯೆ ಮಿತಿಯಾಗುತ್ತದೆ.  ಕೊನೆಗೆ ಹೆಚ್ಚಿನ ಕಾರ್ಮಿಕ ವರ್ಗ, ಈಗಾಗಲೇ ನಲುಗಿರುವ ಕಲಾವಿದರ ನೋವು ಮುಗಿಲು ಮುಟ್ಟುತ್ತದೆ.

ಇದು ಒಂದು ರೀತಿಯ ಕಾಡ್ಗಿಚ್ಚಿನ ಅನುಭವವನ್ನು ಸೃಷ್ಟಿಸುತ್ತದೆ.  ಅದು ತನ್ನ ಹಾದಿಯಲ್ಲಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುತ್ತದೆ.  ಕಲಾವಿದರ/ನಟ-ನಟಿಯರ ಮಾರ್ಕೆಟ್ಟುಗಳು ಕುಸಿಯತೊಡಗಿ, ಅವರು ತಮ್ಮ ಹೈ ಮೇಂಟೆನೆನ್ಸ್ ಜೀವನವನ್ನು ನಡೆಸುವುದು ದುಸ್ತರವಾಗುತ್ತದೆ.  ಕಲೆಯಿಂದ ಬದುಕೋ ಅಥವಾ ಬದುಕಿಂದ ಕಲೆಯೋ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗುತ್ತದೆ.

ಒಮ್ಮೆ ಕಾಡ್ಗಿಚ್ಚು ಬಂದಾದನಂತರ ಅಗ್ನಿ ಆವರಿಸಿದ ಜಾಗದಲ್ಲಿ ದೈತ್ಯ ವೃಕ್ಷಗಳು ದುತ್ತನೆ ರಾತ್ರೋ ರಾತ್ರಿ ಬಂದಿಳಿಯುವುದಿಲ್ಲ.  ಮತ್ತೆ ಜೀವನ ಸಣ್ಣಸಣ್ಣ ಗಿಡಗಳಿಂದ, ನೆಲದಲ್ಲಿ ಹುದುಗಿದ ಬೀಜಗಳು ಮುಂದಿನ ಮಳೆಗಾಲದಲ್ಲಿ ಮೊಳಕೆ ಒಡೆಯುವುದರಿಂದ ಆರಂಭವಾಗುತ್ತವೆ.  ಈ ಸಂದರ್ಭದಲ್ಲಿ ಹುಟ್ಟುವ ಗಿಡಗಳು ನಿಜವಾಗಿಯೂ ಪ್ರಕೃತಿಯ ವಿಕೋಪದಿಂದಷ್ಟೇ ಅಲ್ಲ, ಪ್ರಕೃತಿಯ ಪ್ರಯೋಗಾಲಯದಲ್ಲೂ ಸಹ ಜಯಿಸಿದಂತಹವು.  ರಾತ್ರೋ ರಾತ್ರಿ ನಾಯಿಕೊಡೆಗಳಂತೆ ನೂರಾರು ಏಳದೆ, ಎಷ್ಟೋ ಚದುರ ಹೆಕ್ಟೇರ್‌ಗಳಿಗೆ ಒಂದರಂತೆ ಬೃಹತ್ ವೃಕ್ಷಗಳು ಸಸಿಗಳಾಗಿ ಹುಟ್ಟಿ ಬೆಳೆದು ಮರವಾಗಲು ಮತ್ತೆ ನೂರು ವರ್ಷವಾದರೂ ಬೇಕಾಗುತ್ತದೆ.

ನಿಜ.  ಒಂದು ನೂರು ವರ್ಷಗಳಲ್ಲಿ ಏನು ಬೇಕಾದರೂ ಆಗಬಹುದು.  ಜೀವನಗತಿ ಬದಲಾದಂತೆ ಸಿನಿಮಾವೂ ಬದಲಾಗುತ್ತದೆ.  ಸಿನಿಮಾವನ್ನು ನಂಬಿ ಬದುಕುವ ಕುಟುಂಬಗಳು ಕಡಿಮೆಯಾಗುತ್ತವೆ.  ಸಮಾಜಕ್ಕೆ ಏನನ್ನಾದರೂ ಹೊಸತೊಂದನ್ನು ಕೊಡಬೇಕು ಎನ್ನುವ ಅತೀವ ತುಡಿತದ ನಿರ್ದೇಶಕ ಕಷ್ಟಸಾಧ್ಯವಾದರೂ ತನ್ನ ಗುರಿಯನ್ನು ಕಂಡುಕೊಳ್ಳುತ್ತಾನೆ.  ಆ ನಿಟ್ಟಿನಲ್ಲಿ ಮುಂದೆ ತೆರೆಕಾಣುವ ಚಿತ್ರಗಳು ಸಮಯದ ಸಮರದಲ್ಲಿ ಬೆಂದು, ಕಷ್ಟದಲ್ಲಿ ಪುಳಕಿತವಾಗಿ ಅರಳಿದ ಹೂಗಳಂತೆ ನಮಗೆಲ್ಲರಿಗೂ ಕಾಣಿಸಿಕೊಳ್ಳಬಹುದು.

ಬಿಲಿಯನ್ ಡಾಲರ್‌ ಬಂಡಾವಾಳದ ಬಿಸಿನೆಸ್ಸ್‌ನಿಂದ ಖ್ಯಾತರಾದ ಪ್ರಪಂಚದ ಕೆಲವೇ ಕೆಲವು ಕಂಪನಿಗಳು ಈ ಕಲಾವಿದರ, ತಂತ್ರಜ್ಞರ ರಕ್ತವನ್ನು ಕುಡಿಯದಿದ್ದರೆ ಸಾಕು!

Tuesday, April 21, 2020

ನೀನಾ ಭಗವಂತ?!

ನೀನಾ ಭಗವಂತ
ಚಿತ್ರ: ತ್ರಿವೇಣಿ (1972)
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಎಚ್. ಜಿ. ಗಂಗರಾಜು (ಹಂಸಲೇಖ)
ಗಾಯಕ: ಜಿ. ಬಾಲಕೃಷ್ಣ 



ಕೊರೋನಾ ಸಂಕಷ್ಟದಲ್ಲಿರುವ ನಾವೆಲ್ಲರೂ ದೇವರನ್ನು "ನೀನಾ ಭಗವಂತ?" ಎಂದು ಕೇಳುವ ಹಾಗಿದೆ, ಈ ಹಾಡು. 48 ವರ್ಷಗಳ ಹಿಂದೆ ಬರೆದ ಹಂಸಲೇಖರ ಇದು ಮೊದಲನೆಯ ಹಾಡಗಿಯೂ ಇದ್ದಿರಬಹುದು.

***
ದೇವಸ್ಥಾನದ ಘಂಟೆಯ ಧ್ವನಿ, ಕೊಳಲಿನ ನಾದದ ಹಿನ್ನೆಲೆಯಲ್ಲಿ ಮಧುರ ಸಂಗೀತ ಮೂಡಿ ಬರುತ್ತಿದ್ದಂತೆ, ದೇವಸ್ಥಾನದ ಮುಂದೆ ಸರತಿ ಸಾಲಿನಲ್ಲಿ ಕುಳಿತ ಬಿಕ್ಷುಕರ ಸಾಲು ಕಾಣಸಿಗುತ್ತದೆ.  ಅವರಿಗೆಲ್ಲ ಯಾರೋ ಒಬ್ಬರು ಪುಣ್ಯಾತ್ಮರು ಪ್ರಸಾದವನ್ನೋ ಅಥವಾ ಕಾಸನ್ನೋ ಹಂಚುತ್ತಿರುವ ಸನ್ನಿವೇಶ.  ಮುಂದಿನ ಚಿತ್ರದಲ್ಲಿ ಊರುಗೋಲು ಹಿಡಿದು ಕುಂಟುತ್ತಿರುವವನಿಗೆ ಆಸರೆಯಾಗಿ ಒಬ್ಬರು ಸಹಾಯ ಮಾಡುವ ದೃಶ್ಯ.

"ಅಮ್ಮಾ ಸ್ವಾಮಿ, ತಾಯಿ, ಸ್ವಾಮಿ, ಭಗವಂತ ಧರ್ಮಾ ಮಾಡಿ, ಭಗವಂತ ಧರ್ಮಾ ಮಾಡಿ" ಎನ್ನುವ ಮೊರೆತ.

ಆತ "ಭಗವಂತಾ, ಭಗವಂತಾ" ಎಂದು ಅಟ್ಟಹಾಸದಿ ನಕ್ಕು, "ಜಗತ್ತಿನಲ್ಲಿ ನಡೀತಾ ಇರೋ ಅನ್ಯಾಯಗಳನ್ನೆಲ್ಲ ನೋಡ್ತಾ ಇರೋ ಕಲ್ಲು ಮೂರ್ತಿಗಳೆಲ್ಲ ಭಗವಂತಾನಾ?"

"ಏ ಭಗವಂತಾ, ನೀನಾ ಭಗವಂತಾ?" ಎನ್ನುವಲ್ಲಿ ಹಾಡು ಆರಂಭವಾಗುತ್ತದೆ.  ಮತ್ತೆ ಕೊಳಲು ಹಾಗೂ ಘಂಟಾ ನಿನಾದ, ಜಾತ್ರೆ-ತೇರಿಗೆ ಸೇರಿದ ಭಾರೀ ಜನಜಂಗುಳಿಯ ದೃಶ್ಯ.

ದೂರದಲ್ಲಿ ದೇವಸ್ಥಾನದ ಗೋಪುರ ಹಾಗೂ ಅದಕ್ಕೆ ಹೊಂದಿಕೊಂಡ ಕಲ್ಲಿನ ಕಟ್ಟೆಯ ಕೆಳಗೆ ಬಿದ್ದಿರುವ ಸಣ್ಣ ಕಲ್ಲಿನ ಮೇಲೆ ಒಂದು ಕಾಲನ್ನು ಇಟ್ಟುಕೊಂಡು ನಿಂತು, ಒಂದು ಕೈಯಲ್ಲಿ ಊರುಗೋಲನ್ನು ಹಿಡಿದು ಆಧಾರ ಮಾಡಿಕೊಂಡು, ಮತ್ತೊಂದು ಕೈಯಿಂದ ಗೋಪುರಕ್ಕೆ ತೋರಿ, ದಿಟ್ಟತನದಿಂದ ಕೇಳುವ ಮಾತು:

ನೀನಾ ಭಗವಂತ?
ನೀನಾ ಭಗವಂತ?




ಈ ಚಿತ್ರದಲ್ಲಿ ಈ ಹಾಡು ಮೂಡಿ ಬರುವವರೆಗೆ ಕನ್ನಡ ಸಾಹಿತ್ಯದಲ್ಲಿ ಈ ರೀತಿ ದೇವರನ್ನು ಸಿನಿಮಾ ಹಾಡು-ದೃಶ್ಯಗಳ ಮೂಲಕ ಪ್ರಶ್ನಿಸಿದವರು ಇರಲಾರರು.  ಕಷ್ಟದ ಸಂದರ್ಭಗಳಲ್ಲಿ ದೇವರಿಗೇ ತಿರುಗಿ ಬೀಳುವ ಕೆಲವು ಸನ್ನಿವೇಶಗಳು ದಾಖಲಾಗಿದ್ದರೂ, ಹಿನ್ನೆಲೆಯಲ್ಲಿ ಹಾಡನ್ನು ಹಾಡಿದ ಬಾಲಕೃಷ್ಣ ಅವರ ಧ್ವನಿ ಅಧಿಕಾರವಾಣಿಯಾಗಿ ಮೂಡಿ ಬಂದಿದ್ದು, ಈ ಚಿತ್ರದ ಪಾತ್ರಧಾರಿ ಉದಯ್‌ಕುಮಾರ್ ಅವರಿಗೆ ಬಹಳ ಚೆನ್ನಾಗಿ ಹಿಡಿಸಿದೆ.  ಅದಕ್ಕೆ ತಕ್ಕಂತೆ ಉದಯ್‌ಕುಮಾರ್ ಅವರ ವೇಶಭೂಷಣ ಹಾಗೂ ನಟನೆ ಕೂಡ ಅಷ್ಟೇ ಸಹಜವಾಗಿ ಮೂಡಿಬಂದಿದೆ.

ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ?


ತನಗೆ ಅಪಕಾರ, ಅನ್ಯಾಯವಾಗಿರುವುದರ ಬಗ್ಗೆ ಒಂದೇ ಸಾಲಿನಲ್ಲಿ ತನ್ನ ಬೇಗುದಿಯನ್ನು ತೋಡಿಕೊಳ್ಳುವ ಕವಿ, ಈ ಸಾಲಿನಲ್ಲಿ ದೇವರ ಉದ್ದೇಶವನ್ನು ಪ್ರಶ್ನಿಸುತ್ತಾ, ನೀನಾ ಭಗವಂತ ಎನ್ನುವಲ್ಲಿ ಎರಡು ವೇರಿಯೇಶನ್ನುಗಳನ್ನು ತೋರಿಸಿದ್ದಾರೆ.  "ಜಗದೋದ್ಧಾರಕ ನೀನೇನಾ" ಎಂದಾಗ ಪಾತ್ರಧಾರಿ ಒಂದು ಕ್ಷಣ ನಿಂತು, ಹಿಂದಕ್ಕೆ ತಿರುಗದೆಯೇ ಗೋಪುರದ ಕಡೆಗೆ ಕೈ ಮಾಡಿ ಪ್ರಶ್ನಿಸುವುದು ಮಾರ್ಮಿಕವಾಗಿ ಮೂಡಿಬಂದಿದೆ.

ನೀನೇನಾ?
ನೀನಾ ಭಗವಂತ?


ಈ ಪ್ರಶ್ನೆಗಳ ಯಾದಿಯ ಉದ್ದಕ್ಕೂ ದೇವರ ಮೂರ್ತಿಗಳಿಗೆ ಅಭಿಷೇಕ, ಅರ್ಚನೆ ಮುಂದುವರೆಯುತ್ತಲೇ ಇರುವುದನ್ನೂ ತೋರಿಸಲಾಗಿದೆ.  ಯಾರು ಪ್ರಶ್ನಿಸಲಿ ಬಿಡಲಿ, ಅದರ ಕೆಲಸಗಳು ಹಾಗೆ ಮುಂದುವರೆಯುತ್ತವೆ ಎಂದು ಸೂಚ್ಯವಾಗಿ ಹೇಳುವಂತೆ.

ಗೋರ್ಕಲ್ಲಿಗೆ ಗುಡಿ ಮಂದಿರ ನೂರು ಮಾಡಿದ ನರನಿಗೆ ನೆಲೆಯಿಲ್ಲ
ಹೂ ಸೌಗಂಧವ ಲೇಪಿಸಿ ಹಾಡಿ, ಕರೆದರು ಕರುಣಿಸೆ ಕೃಪೆಯಿಲ್ಲ
ನೀನಾ ಭಗವಂತ?


ಮೊರೆಯುವ ವಯಲ್ಲಿನ್ನುಗಳ ಹಿನ್ನೆಲೆ ಸಂಗೀತದಲ್ಲಿ, ಒಂದು ಕಾಲನ್ನು ಎಳೆದುಕೊಂಡು ಕುಂಟುತ್ತಲೇ ವೇಗವಾಗಿ ಸಾಗಿ ಒಂದು ಕಲ್ಲಿನ ಮಂಟಪ ಅಥವಾ ಬಸದಿಯನ್ನು ಸೇರಿ ಪಾತ್ರಧಾರಿ ಮತ್ತೆ ಮುಂದುವರೆಸುತ್ತಾನೆ.  ದೇವರ ಮೂರ್ತಿಯನ್ನು ಹಿನ್ನೆಲೆಯಲ್ಲಿ ತೋರಿಸುತ್ತಿದ್ದಂತೆ, ಅವುಗಳನ್ನು ಗೋರ್ಕಲ್ಲಿಗೆ ಹೋಲಿಸಿ, ಅಂತಹ ವಿಗ್ರಹಗಳಿಗೆ ನೂರಾರು ಮಂದಿರಗಳನ್ನು ಕಟ್ಟಿದ ಜನರಿಗೆ ತಲೆಯ ಮೇಲೆ ಸೂರಿಲ್ಲದೇ ಮರದ ನೆರಳಿನಲ್ಲಿ ಬದುಕುವ ವಿಪರ್ಯಾಸವನ್ನು ಕವಿ ತೋರಿಸುತ್ತಾರೆ.  ಹೀಗಿದ್ದೂ, ದೇವರನ್ನು ಒಲಿಸಲೆಂದು ಹೂವು, ಸೌಗಂಧವನ್ನು ಲೇಪಿಸಿ ಹಾಡಿ, ಕರೆದರೂ ಕೂಡ ಕರುಣಿಸುವ ನೀನು ಭಗವಂತನೇ?  ಇದೇ ಸಂದರ್ಭದಲ್ಲಿ ಹಿನ್ನೆಲೆ ಸಂಗೀತ ವಯಲಿನ್ನುಗಳು ಮೊರೆಯುತ್ತಿದ್ದಂತೆ ಮತ್ತೆ ಜನಜಂಗುಳಿಯನ್ನು ತೋರಿಸಲಾಗುತ್ತದೆ.

ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸಿದರೂ ನೀ ಕಂಡಿಲ್ಲ
ನೀನಾ? ಭಗವಂತ?


ಮುಂದಿನ ದೃಶ್ಯ ಬರುವಲ್ಲಿ, ನಾಯಕ ಒಂದು ಒಣಗಿದ ಮರದ ಕೆಳಗೆ ಆಸರೆಯಲ್ಲಿ ನಿಂತು ಹಾಡು ಮುಂದುವರೆಯುತ್ತದೆ.  ಇದು ನಾಯಕನ ಉತ್ತಮವಾದ ಬದುಕು ಕಾರಣಾಂತರಗಳಿಂದ ನರಕಸದೃಶ ರೀತಿಯನ್ನು ಪಡೆದಿದ್ದಕ್ಕೆ ದೇವರನ್ನು ದೂಷಿಸುತ್ತಲೇ, ನನಗೇಕೆ ಈ ಬೇಗೆಗಳಿಂದ ಮುಕ್ತಿ ನೀಡುತ್ತಿಲ್ಲ ಎಂದು ದೈರ್ಯದಿಂದ ಪ್ರಶ್ನಿಸುತ್ತಾನೆ.  ದೇವರು ನೀಡುತ್ತಿರುವ ಈ ಕಷ್ಟಕಾರ್ಪಣ್ಯಗಳನ್ನು ಹಾಲಾಹಲದ ವಾನಲಕ್ಕೆ ಹೋಲಿಸಿ, ಅದರಿಂದ ನಾಶವಾದರೂ ಭಗವಂತನ ಕಣ್ಣಿಗೇಕೆ ಕಾಣುತ್ತಿಲ್ಲ ಎಂದು ಪ್ರತಿಪಾದಿಸುತ್ತ, ಅವೆಲ್ಲ ಬರೀ ಕಲ್ಲಿನ ಮೂರ್ತಿಗಳು ಎಂಬುದಕ್ಕೆ ಒತ್ತುಕೊಡುತ್ತಾನೆ.

ನಶ್ವರ ಭೋಗದ ಆಸೆ ಕಡಲಲಿ ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ ದೈವೋತ್ತಮ ಬಿರುದೇಕಯ್ಯ
ದೈವೋತ್ತಮ ಬಿರುದೇಕಯ್ಯ
ನೀನಾ ಭಗವಂತ?


ಈ ಮುಂದಿನ ಸಾಲುಗಳಲ್ಲಿ ಮನುಷ್ಯನಿಗೆ ಕಷ್ಟಕಾರ್ಪಣ್ಯಗಳು ಬರುವುದೇ ನಿಜವಾದಲ್ಲಿ, ನಶ್ವರವಾದ ಭೋಗದ ಆಸೆ ಲೋಲುಪ್ತತೆಗಳನ್ನು ಯಾಕಾದರೂ ಕೊಡಬೇಕು? ಅಲ್ಲದೇ ಈ ಅಂತರ ತಿಳಿಯದೆ ಇರುವವನಿಗೆ ದೈವೋತ್ತಮ ಎನ್ನುವ ಬಿರುದಾದರೂ ಏಕೆ? ಎಂದು ದೇವರ ಅಸ್ತಿತ್ವವನ್ನೇ ಕೆಣಕುತ್ತಾನೆ.  ಈ ಹಾಡಿನ ದೃಷ್ಯೀಕರಣದ ಉದ್ದಕ್ಕೂ ಮಾರುತಿ ಹಾಗೂ ವೆಂಕಟೇಶ್ವರನ ಮೂರ್ತಿಗಳನ್ನು ವಿಶೇಷವಾಗಿ ತೋರಿಸಲಾಗಿದೆ.

ನೀನಾ ಭಗವಂತ?
ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ? ನೀನೇನಾ?



ಮತ್ತೆ ಜಗಕುಪಕರಿಸಿ ನನಗಪಕರಿಸುವ ಜಗದೋದ್ದಾರಕ ನೀನೇನಾ ಎಂದು ಒಂದು ಮರದ ನೆರಳಿನಲ್ಲಿ ಒರಗುತ್ತಿದ್ದಂತೆಯೇ, ಹಾಡಿನ ಮುಂದಿನ ಭಾಗ "ಸಿರಿನಂದನ ಏನಕೇಳಲೆ ನಾ" ಎನ್ನುವ ಬೇರೊಂದು ಗೀತೆ ಎಚ್.ಪಿ. ಗೀತ ಅವರ ದ್ವನಿಯಲ್ಲಿ ಆರಂಭವಾಗುತ್ತದೆ.

1972ರ ಹೊತ್ತಿಗೆ ಈ ಹಾಡನ್ನು ಬರೆದು ತಮ್ಮದೇ ವೈಯಕ್ತಿಕ ಜೀವನದ ತುಮುಲಗಳನ್ನೇ ಈ ಹಾಡಿನ ಮೂಲಕ ಹಂಸಲೇಖ ಅವರು ಹೇಳಿಸಿರಬಹುದು ಎನ್ನುವ ಮಾತು ಕೂಡ ಓದಲು ಸಿಗುತ್ತದೆ. ನಂತರ ಸುಮಾರು ಒಂಭತ್ತು ವರ್ಷಗಳ ತರುವಾಯ ಹಂಸಲೇಖ ಅವರು ಅದ್ಯಾವ ತಪಸ್ಸಿನಲ್ಲಿ ತೊಡಗಿದ್ದರೋ ಗೊತ್ತಿಲ್ಲ.  1981ರಲ್ಲಿ ರವಿಚಂದ್ರನ್ ಅವರು ಹುಡುಕಿ ಆರಿಸಿದ ಮಾಣಿಕ್ಯದಂತೆ ತಮ್ಮ "ಪ್ರೇಮಲೋಕ"ದ ಚಿತ್ರದಲ್ಲಿ ಹಾಡು ಹಾಗೂ ಸಂಭಾಷಣೆಯಲ್ಲಿ ಹಂಸಲೇಖರನ್ನು ತೊಡಗಿಸಿಕೊಂಡ ನಂತರ ಅವರು ಇನ್ನೆಂದೂ "ನೀನಾ ಭಗವಂತಾ?" ಎಂದು ಕೇಳಿರಲಾರರು!

ನೀವು ಈ ಹಾಡನ್ನು ಇಲ್ಲಿ ಕೇಳಬಹುದು/ನೋಡಬಹುದು.

Sunday, January 06, 2008

ಪರಿಸ್ಥಿತಿಯ ಕೈ ಗೊಂಬೆ

ಅಸಹಾಯಕತೆ ಅನ್ನೋದು ದೊಡ್ಡದು, ಆದರೆ ನಮ್ ನಮ್ ಕೈಯಲ್ಲಿ ಆಗೋಲ್ಲ ಅಂತ ಕೈ ಚೆಲ್ಲಿ ಕುಳಿತುಕೊಳ್ಳೋದು ದೊಡ್ಡದಲ್ಲ, ಆಯಾ ಪರಿಸ್ಥಿತಿಗೆ ತಕ್ಕಂತೆ ನಾವು ಏನು ಮಾಡಬಲ್ಲೆವು ಸುಮ್ಮನಿರೋದನ್ನು ಬಿಟ್ಟು ಅನ್ನೋದು ಮುಖ್ಯ. ಕೆಲವೊಮ್ಮೆ ವಿಷಯವನ್ನ ನಮ್ಮ ಕೈಗೆತ್ತಿಕೊಳ್ಳಬೇಕಾಗುತ್ತೆ, ಇನ್ನು ಕೆಲವು ಸಲ ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಸುಮ್ಮನಿರುವುದೇ ಒಳಿತು ಅನ್ನಿಸಬಹುದು ಅನುಭವಗಳ ಹಿನ್ನೆಲೆ ಇದ್ದೋರಿಗೆ. ಹೀಗೆ ಹಳೆಯ ಕನ್ನಡ ಚಿತ್ರಗಳ ಡಿವಿಡಿಯೊಂದನ್ನು ನೋಡ್ತಾ ಇರುವಾಗ ಬಹಳ ದಿನಗಳಿಂದ ಯೋಚನೆಗೆ ಸಿಕ್ಕದ ನಮ್ಮೂರುಗಳಲ್ಲಿ ಜನ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಾರೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು.

***

ಹೊಡೆದಾಟ ಬಡಿದಾಟದಲ್ಲಿ ಬೇರೆ ಯಾರೂ ಬೇಡಪ್ಪ, ನನ್ನ ದೊಡ್ಡ ಅಣ್ಣನೇ ಸಾಕು. ನಾಲ್ಕು ಹೊಡೆತ ಕೊಟ್ಟೂ ಬರಬಲ್ಲ, ಹಾಗೇ ತಿಂದುಕೊಂಡು ಬಂದಿದ್ದೂ ಇದೆ. ಒಂದು ದಿನ ಯಾವುದೋ ಕೆಲಸ ಕಾರ್ಯ ಮಾಡಿಸಿಕೊಳ್ಳಲೆಂದು ನಮ್ಮೂರಿನ ಮಂಡಲ ಪಂಚಾಯಿತಿ ಪ್ರಧಾನರನ್ನು ಹುಡುಕಿಕೊಂಡು ನಮ್ಮಣ್ಣ ಬಸ್‌ಸ್ಟ್ಯಾಂಡ್ ಹಿಂಬಾಗವಿರೋ ಜರಮಲೆಯವರ ಸಾ ಮಿಲ್‌ ಆಫೀಸಿಗೆ ಹೋಗಿದ್ದನಂತೆ. ಅಲ್ಲಿ ಶ್ರೀಮಂತರುಗಳ ದಂಡು ದೊಡ್ಡದಾಗಿ ಜಮಾಯಿಸಿತ್ತಂತೆ. ನಮ್ಮಣ್ಣ ಏನೋ ಕಾರಣಕ್ಕೆಂದು ಹೋದವನು ಮಾತಿಗೆ ಮಾತು ಬೆಳೆದು ಅಲ್ಲಿ ದೊಡ್ಡ ಮನುಷ್ಯರುಗಳ ನಡುವೆ ಉಪಸ್ಥಿತರಿದ್ದ ಮಂಡಲ ಪ್ರಧಾನರ ಬಾಯಿಂದ ಸೂಳೇಮಗನೇ ಎಂದು ಬೈಯಿಸಿಕೊಂಡನಂತೆ. ಹಾಗೆ ಅವರು ಬೈದದ್ದೇ ತಡ ಇವನಿಗೆ ಇಲ್ಲಸಲ್ಲದ ಸಿಟ್ಟು ಬಂದು ಅಷ್ಟು ಜನರಿರುವಂತೆಯೇ ಪ್ರಧಾನರನ್ನು ಹಿಡಿದೆಳೆದು ಹಿಗ್ಗಾಮುಗ್ಗಾ ಹೊಡೆದು ಹೊಟ್ಟೆಯೊಳಗಿನ ಕರುಳೂ ಕಿತ್ತುಬರುವಂತೆ ಪಂಚ್ ಮಾಡಿ ಬಂದಿದ್ದ. ಮುಂದಾಗುವ ಕಷ್ಟನಷ್ಟಗಳನ್ನರಿತವನು ಅಲ್ಲೇ ಹತ್ತಿರವಿದ್ದ ಪೋಲೀಸ್ ಸ್ಟೇಷನ್ನಿಗೆ ಓಡಿಬಂದು ಸಬ್‌ಇನ್ಸ್ಪೆಕ್ಟರ್ ಹತ್ತಿರ ಇರುವ ವಿಷಯವೆಲ್ಲವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದ.

ಅಷ್ಟೊಂದು ಜನರ ಮುಂದೆ ಮಂಡಲ ಪ್ರಧಾನರನ್ನು ಆಸ್ಪತ್ರೆಗೆ ಸೇರಿಸುವಷ್ಟರ ಮಟ್ಟಿಗೆ ಹೊಡೆದರು ಅವರು ಬಿಟ್ಟಾರೇನು? ನಮ್ಮಣ್ಣನ ಮೇಲೆ 302, 302A ಮುಂತಾದ ಸೆಕ್ಷನ್ನುಗಳನ್ನು ಹೇರಿ, ಜೀವ ತೆಗೆಯಲು ಬಂದಿದ್ದನೆಂದು ಪುರಾವೆಗಳನ್ನೊದಗಿಸಿ ಸಾಬೀತು ಮಾಡಿದ್ದೂ ಆಯಿತು. ನಮ್ಮಣ್ಣ ಜೈಲಿನಿಂದ ಹೊರಬರುವಾಗ ಮತ್ತಿನ್ಯಾರದ್ದೋ ಕೈ ಕಾಲು ಹಿಡಿದು ಜಾಮೀನು ಪಡೆಯುವಂತಾಯ್ತು. ಇವೆಲ್ಲ ಆಗಿನ ಮಟ್ಟಿಗೆ ನಡೆದ ಕಷ್ಟಗಳಾದರೆ ಒಂದೆರಡು ದಿನಗಳಲ್ಲಿಯೇ ನಮ್ಮನೆಯ ಮುಂಬಾಗಿಲ ಬೀಗ-ಚಿಲಕವನ್ನು ಕಿತ್ತು ಎಸೆಯುವುದರಿಂದ ಹಿಡಿದು ಅನೇಕಾನೇಕ ಕಿರುಕುಳಗಳನ್ನು ಕೊಟ್ಟಿದ್ದೂ ಅಲ್ಲದೆ, ಇಂದಿಗೂ ಆ ಶ್ರೀಮಂತರ ತಂಡ ನಮ್ಮ ಮನೆಯವರನ್ನು ಕಂಡರೆ ಒಂದು ರೀತಿಯ ಅಸಡ್ಡೆಯನ್ನು ಪ್ರದರ್ಶಿಸುತ್ತದೆ ಎಂದರೂ ತಪ್ಪಲ್ಲ. ಇಷ್ಟೂ ಸಾಲದು ಎಂಬಂತೆ ವಾರ-ತಿಂಗಳುಗಟ್ಟಲೆ ಸೊರಬದ ಕೋರ್ಟಿಗೆ ಅಲೆದದ್ದೂ ಆಯಿತು, ಒಂದು ಬಗೆಯ ಒಪ್ಪಂದವನ್ನೂ ಮಾಡಿಕೊಂಡಿದ್ದಾಯಿತು.

ನಾನು ಈ ಸಂಬಂಧವಾಗಿ ಈ ಘಟನೆ ನಮ್ಮ ನಡುವೆ ಮಾತಿಗೆ ಬಂದಾಗಲೆಲ್ಲ ನಮ್ಮಣ್ಣನನ್ನು ಮನಸೋ ಇಚ್ಛೆ ಬೈದಿದ್ದೇನೆ. ರಿಟೈರ್ ಆಗಿರುವ ಅಮ್ಮನಿಗೆ ಕಿರುಕುಳ ಕೊಡೋದಕ್ಕೆ ನೀನು ನಿನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತೇನು? ಇಂದು ಅವರು ನಲ್ಲಿಯ ಪೈಪ್ ಅನ್ನು ಒಡೆದು ಹೋಗುತ್ತಾರೆ, ನಾಳೆ ಮತ್ತೊಂದನ್ನು ಮಾಡುತ್ತಾರೆ ಅವುಗಳಿಂದ ನೀನು ನಮ್ಮೆಲ್ಲರನ್ನು ರಕ್ಷಿಸುವ ತಾಕತ್ತಿದೆಯೇನು? ಅವರು ದುಡ್ಡಿದ್ದೋರು, ಅವರು ಹೇಳಿದಂತೆ ನಡೆಯೋ ಪೋಲೀಸು-ಕೋರ್ಟುಗಳ ಮುಂದೆ ಕೆಲಸವಿಲ್ಲದೇ ತಿರುಗೋ ನಿನ್ನ ದರ್ಪ ನಡೆಯೋದು ಅಷ್ಟರಲ್ಲೇ ಇದೆ! ಮುಂತಾಗಿ ಬೇಕಾದಷ್ಟು ಬೈದಿದ್ದೇನೆ, ಕೊರೆದಿದ್ದೇನೆ. ಇವೆಲ್ಲಕ್ಕೂ ನಮ್ಮಣ್ಣ ಹಿಂದೆ ’ಅವರು ಏನಂದರೂ ಅನ್ನಿಸಿಕೊಂಡು ಬರೋಕಾಗುತ್ತೇನು?’ ಎಂದು ಅದೇನೇನೋ ಹೇಳುತ್ತಿದ್ದವನು ಇಂದು ಮೌನ ಅವನ ಉತ್ತರವಾಗುತ್ತದೆ. ನಾನು ಬೇಕಾದರೆ ನಾಲ್ಕು ಹೊಡೆತ ತಿಂದುಕೊಂಡೋ ಬೈಯಿಸಿಕೊಂಡೋ ಮನೆಗೆ ಅತ್ತುಕೊಂಡು ಬರುತ್ತೇನೆಯೇ ವಿನಾ ಇವತ್ತಿಗೂ ಯಾವನಿಗೋ ಹೊಡೆದು ಆಸ್ಪತ್ರೆ ಸೇರಿಸಿ ಅವರು ನನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜಾಮೀನು ಪಡೆಯೋ ಸ್ಥಿತಿ ಬರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

***

೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.

ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್‌ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.

***

ಇಂತಹ ಸಂದರ್ಭಗಳು ನಮ್ಮೂರಲ್ಲಿ ಹೊಸದೇನೂ ಅಲ್ಲ. ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು ಎಂದ ಹಾಗೆ ಕೆಲವರಿಗೆ ಏಟು ಬೀಳದೇ ಬಗ್ಗಲಾರರು. ರಾಜ್‌ ಪಾತ್ರದಲ್ಲಿ ಯಾರೇ ಇದ್ದರೂ ಏನು ಮಾಡಬಹುದಿತ್ತು? ತನ್ನ ತಂಗಿಯ ಮದುವೆ ನಿಂತು ಹೋಗುತ್ತಿರುವಾಗ ತಾನು ಕಾನೂನನ್ನು ಕೈಗೆ ತೆಗೆದುಕೊಂಡದ್ದು ಸರಿಯೇ, ತಪ್ಪೇ? ತೂಗುದೀಪ ಶ್ರೀನಿವಾಸರನ್ನು ಹೊಡೆಯದೇ ರಾಜ್ ಆತನ ಬಗ್ಗೆ ಕಂಪ್ಲೇಂಟನ್ನು ಬರೆದುಕೊಡಬಹುದಿತ್ತು, ಬೇರೆ ಯಾರಾದರೊಬ್ಬರ ಬಳಿ ಮದುವೆಯ ಮಹೂರ್ತ ಮೀರಿ ಹೋಗುವುದರೊಳಗೆ ಸಾಲ ಮಾಡಿ ಮುಂದೆ ಯೋಚಿಸಬಹುದಿತ್ತು, ಇತ್ಯಾದಿ ದಾರಿಗಳಿದ್ದರೂ ರಾಜ್ ಮಾಡಿದ್ದೇ ಸರಿ ಎನಿಸೋದಿಲ್ಲವೆ? ತನಗೆ ನ್ಯಾಯವಾಗಿ ಬರಬೇಕಾದ ಹಣವನ್ನು ಇನ್ನೊಬ್ಬರು ’ನೀನು ಕೊಟ್ಟೇ ಇಲ್ಲ’ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೇ ನಕ್ಕು ಬರುವುದಕ್ಕೆ ಉಪ್ಪು ಹುಳಿ ಖಾರ ತಿಂದ ಯಾರಿಗಾದರೂ ಸಾಧ್ಯವಿದೆಯೇನು?

Wednesday, January 02, 2008

ಹಾಡಿನ ಸವಾಲ್

ನಿನ್ನೆ ಏನನ್ನೋ ಹುಡುಕಿಕೊಂಡು ಕೂತಿರಬೇಕಾದ್ರೆ ಒಂದಿಷ್ಟು ಹಳೇ ಕನ್ನಡ ಚಲನಚಿತ್ರಗಳ ಉಗ್ರಾಣ ನನ್ನ ಕಂಪ್ಯೂಟರಿನಲ್ಲಿದ್ದದ್ದು ಕಣ್ಣಿಗೆ ಬಿತ್ತು. ಹಳೇ ಹಾಡುಗಳೂ ಅಂತಂದ್ರೆ ೯೦ ರ ದಶಕದಿಂದ ಈಚೆಯವು, ಅದಕ್ಕಿಂತ ಹಿಂದೆ ಹೋದ್ರೆ ಅದು ಪುರಾತನ ಆಗ್ಬಿಡುತ್ತೆ ಅಂತ್ಲೇ ಹೇಳ್ಬೇಕು.

’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು...’ ಅಂತ ನಾನೇನಾದ್ರೂ ಕಾರ್‌ನಲ್ಲಿ ಕೂತಾಗ ಗೊಣಗಿಕೊಂಡೇ ಅಂತಂದ್ರೆ ಪಕ್ಕದವರಿಗೆ ನನ್ನ ವಯಸ್ಸೆಲ್ಲಿ ಗೊತ್ತಾಗಿಬಿಡುತ್ತೋ ಅನ್ನೋ ಹೆದರಿಕೇ ಬೇರೆ ಕೇಡಿಗೆ.

ನನ್ನ ಉಗ್ರಾಣದಲ್ಲಿದ್ದ ಒಂದಿಷ್ಟು ಹಾಡುಗಳನ್ನ ಕೇಳ್ತಾ ಕೇಳ್ತಾ ಸಂತೋಷದ ಛಾಯೆ ಇರ್ಲಿ ಅದರ ನೆರಳೂ ಹತ್ತಿರ ಸುಳಿಯದಂತೆ ನಿರಾಶೆಯ ಮೋಡಗಳು ಆವರಸಿಕೊಳ್ಳತೊಡಗಿದವು. ನಾನು ಹುಟ್ಟಿದಾಗಿನಿಂದ ಕನ್ನಡಿಗನೇ ಹೌದು, ಆದರೆ ಇತ್ತೀಚಿನ ಸಾಹಿತ್ಯವೋ ಅಥವಾ ಅದನ್ನ ಹೇಳೋ ಅರೆಬರೆ ಕನ್ನಡಿಗರೋ ಅಸ್ಪುಟ ಕನ್ನಡವೋ ಅಥವಾ ಹಾಡಿನ ಪದಗಳನ್ನು ಮುಚ್ಚಿ ಮರೆಮಾಡುವಂತೆ ಕಿವಿಗಡಿಚಿಕ್ಕುವ ಮ್ಯೂಸಿಕ್ಕೂ - ಪದಗಳೇ ಸರಿಯಾಗಿ ಅರ್ಥವಾಗುತ್ತಿಲ್ಲ. ರಾಗ-ತಾಳವಂತೂ ನನಗೆ ಸಿಕ್ಕೋದೇ ಇಲ್ಲ ಬಿಡಿ, ಆದರೆ ಹಾಡಿನ ಸಾಹಿತ್ಯವೂ ನನಂಥ ಕೇಳುಗನಿಗೆ ಹೊಳೆಯದೇ ಹೋದರೆ ಹೇಗೆ?

ಎ.ಕೆ. ೪೭ ಸಿನಿಮಾದ ಈ ಹಾಡನ್ನು ನೀವೇ ಕೇಳಿ ನೋಡಿ ಅಥವಾ ಓದಿ ನೋಡಿ, ’ಪ್ರೇಮಪತ್ರ ರವಾನಿಸಬೇಡ’ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಪ್ರಾಸಗಳನ್ನು ಜೋಡಿಸೋದಕ್ಕೆ ಹೋಗಿ ನಮ್ಮ ಕವಿಗಳು ಈ ರೀತಿ ಹಾಡನ್ನು ಕಟ್ಟೋದಲ್ದೇ ಅದನ್ನ ಯಾರು ಯಾರೋ ಗಂಟಲಲ್ಲಿ ಹೇಳಿಸಿ ಅದಕ್ಕಿನ್ನೊಂದು ಅರ್ಥ ಬರೋ ಹಾಗ್ ಮಾಡ್ತಾರಲ್ಲಪ್ಪಾ ಅನ್ನಿಸ್ತು.

’ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು’


ಆ ನಗುವನ್ನು ಬಿಸಾಕೋದು ಅಂದ್ರೆ ಏನು, ಅದೇನು ಕಾಫಿ ಕುಡಿದು ಬಿಸಾಡೋ ಕಪ್ಪೇ? ಅಥವಾ ನಾಯಿಗಳಿಗೊಂದು ಬಿಸ್ಕಿಟ್ ಎಸೀತಾರಲ್ಲ ಹಾಗಾ? ಇಸ್ಪೀಟ್ ಎಲೇನ ಬಿಸಾಕೋದ್ ಕೇಳಿದ್ದೀನಿ...ಟ್ರಾಷ್ ಎತ್ತಿ ಬಿಸಾಕೋದು ಅಂದ್ರೆ ಗೊತ್ತು, ಆದರೆ ನಗುವನ್ನ ಚೆಲ್ಲಿ ಗೊತ್ತು, ಬಿಸಾಕಿ ಗೊತ್ತೇ ಇಲ್ಲ.

ಈ ಬಿಸಾಕೋದರ ಬಗ್ಗೆ ಇನ್ನೂ ಕೇಳಿದ್ದೀವಿ - ’ಭಯಾನ್ ಬಿಸಾಕೋದು...’, ’ದಿಗಿಲ್ ದಬ್ಬಾಕೋದು’, ಇನ್ನೂ ಏನೇನನ್ನೋ ನಾವು ಕ್ರಿಯಾ ಪದಗಳಿಗೆ ಅಳವಡಿಸೋದೇ ಸಾಹಿತ್ಯ ಕೃಷಿ! ಎಷ್ಟೋ ದಶಕದಿಂದ ಹಾಡಿಕೊಂಡ್ ಬಂದಿರೋ ಎಸ್.ಪಿ. ಅಂಥೋರೇನೋ ಸ್ವಲ್ಪ ತಮ್ಮ್ ತಮ್ಮ್ ಉಚ್ಛಾರಣೆಯಲ್ಲಿ ಸುಧಾರಿಸಿಕೊಂಡ್ರೋ ಏನೋ (ಇಷ್ಟೊಂದ್ ದಿನ ಕನ್ನಡ ನೀರ್ ಕುಡ್ದು ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಹೆಂಗೆ?), ಉಳಿದೋರ್ ಕಥೆ ಏನ್ ಹೇಳೋಣ?

ಅಪ್ತಮಿತ್ರದ ’ಇದು ಹಕ್ಕೀ ಅಲ್ಲ’ ಹಾಡಿನಲ್ಲಿ ’ಬಾಲಾ ಇದ್ರೂನೂ ಕೋತೀ ಅಲ್ಲಾ’ ಅನ್ನೋ ಸಾಲು ಇವತ್ತಿಗೂ ನನಗೆ ನೈಜವಾಗಿ ಕೇಳೋದೇ ಇಲ್ಲ - ಎಲ್ಲಾ ಉತ್ತರ ಭಾರತದವರ ದಯೆ.

ನಮ್ಮೂರಿನ ಸಿಲ್ವರ್ರು, ಗೋಲ್ಡೂ, ಪ್ಲಾಟಿನಮ್ಮ್ ಸ್ಟಾರ್‌ಗಳಿಗೆ ನಮ್ಮೋರ್ ಧ್ವನಿ, ಉಚ್ಛಾರಣೆ ಹಿನ್ನೆಲೇನಲ್ಲಿ ಇದ್ರೆ ಹೆಂಗೆ ಸ್ವಾಮೀ? ಸ್ವಲ್ಪ ಫ್ಯಾಷನ್ನೂ, ಗಿಮಿಕ್ಕೂ ಇದ್ರೇನೇ ಮಜಾ - ಅವ್ರುಗಳ ಮುಖಾಮುಸುಡಿ ಹೆಂಗಾದ್ರೂ ಇರ್ಲಿ ಹಿನ್ನೆಲೆ ಗಾಯನಕ್ಕೆ ಮಾತ್ರ ಒಂದು ದೊಡ್ಡ ಧ್ವನಿ ಬೇಕು. ಬೇರೇ ಏನೂ ಇಲ್ಲಾ ಅಂತದ್ರೂ ಧ್ವನಿ ಸುರುಳೀ ಅನ್ನೋ ಹೆಸರ್ನಲ್ಲಿ ಸೀ.ಡಿ.ಗಳನ್ನ ಮಾರೋಕಾಗುತ್ತಲ್ಲಾ ಅಷ್ಟೇ ಸಾಕು.

ಪರವಾಗಿಲ್ಲ, ಬೆಂಗ್ಳೂರ್‌ನಲ್ಲಿ ಕೂತುಗೊಂಡು ಬ್ರೂಕ್ಲಿನ್ನಲ್ಲಿ ಹುಟ್ಟಿ ಬೆಳೆದೋರ್ ಥರ ರ್ಯಾಪ್ ಮ್ಯೂಸಿಕ್ಕನ್ನ ಹಾಡ್ತಾರ್ ಸಾರ್ ನಮ್ಮೋರು. ಹಾಡ್ರೋದ್ರು ಜೊತೆಗೆ ಅದನ್ನ ಕನ್ನಡದ ಹಾಡ್ನಲ್ಲೂ ಸೇರ್ಸಿ ಒಂದ್ ಥರಾ ಹೊಸ ರಿಧಮ್ಮನ್ನೇ ಜನ್ರ ಮನಸ್ನಲ್ಲಿ ತುಂಬ್ತಾರೆ. ರ್ಯಾಪ್‌ಗೇನಾಬೇಕು ಸುಮ್ನೇ ಉದ್ದಕ್ಕೆ ಬರೆದಿದ್ದನ್ನ ಫಾಸ್ಟ್ ಆಗಿ ಓದ್ಕೊಂಡ್ ಹೋದ್ರೇ ಸಾಲ್ದೇನು? ಎಲ್ಲೋ ಒಂದು ಧ್ವನಿ ಯಾವ್ದೋ ರಾಗ್ದಲ್ಲಿ ಹುಟ್ಟಿ ಬರ್ತಾ ಇರುತ್ತೆ, ಅದರ ಮಧ್ಯೆ ಕೀರ್ಲು ಧ್ವನೀನೂ ಸೇರುಸ್ತಾರೆ, ಸುಮ್ನೇ ತಮಟೇ-ಡ್ರಮ್ಮು-ನಗಾರಿಗಳನ್ನ ಬಡೀತಾರೆ - ಇಷ್ಟೆಲ್ಲಾ ಯಾಕ್ ಮಾಡ್ತಾರೇ ಅಂತಂದ್ರೆ ಚಿತ್ರಕಥೆ ಬರೆಯೋರು ’ನಾಯಕನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು, ಸುತ್ತಲಿನಲ್ಲಿ ಕೋಲಾಹಲ ಮುತ್ತಿಕೊಂಡಿತ್ತು’ ಅಂತ ಬರೆದಿರ್ತಾರೋ ಏನೋ ಅನ್ನೋ ಅನುಮಾನ ನನ್ದು. ಹ್ಞೂ, ಅದೆಲ್ಲ ನನ್ ಲಿಮಿಟೇಷನ್ನ್ ಆಗಿದ್ರೆ ಎಷ್ಟೋ ಸೊಗಸಾಗಿರ್ತಿತ್ತು, ಆದರೆ ಚಿತ್ರವನ್ನ ನಿರ್ದೇಶನ ಮಾಡೋರ್ ಲಿಮಿಟ್ಟಾಗುತ್ತೇ ನೋಡಿ ಅದೇ ದೊಡ್ಡ ಕೊರಗು.

***

Really, this works - ಸುಮ್ನೇ ಪ್ರಾಸದ ಮೇಲೆ ಪ್ರಾಸ ಕಟ್ಟಿಕೊಂಡು ಹೋಗಿ, ಕನ್ನಡಿಗರಲ್ದೇ ಬೇರೆ ಯಾರುನ್ನೋ ಕರ್ದೋ ಇಲ್ಲಾ ಅವರ ಮನೇ ಬಾಗಿಲಿಗೆ ನೀವೇ ಹೋಗಿಯೋ ಹಾಡ್ಸಿ, ಅವರು ಹಾಡಿದ್ದನ್ನ ರೆಕಾರ್ಡ್ ಮಾಡಿಕೊಂಡು ಬಂದು ನಮ್ಮೋರಿಗೆ ಕೇಳ್ಸಿ, ಎಲ್ಲೆಲ್ಲಿ ಪದಗಳನ್ನ ಕಾಂಪ್ರೋಮೈಸ್ ಮಾಡ್ಕೊಂಡಿರ್ತೀರೋ ಅಲ್ಲೆಲ್ಲ ನಿಮ್ಮವರಿಗೆ ದೊಡ್ಡದಾಗಿ ಮ್ಯೂಸಿಕ್ ಬಾರ್ಸೋದಕ್ಕೆ ಹೇಳಿ, ಆ ಧ್ವನಿ ಸುರುಳಿ ಸೇಲ್ಸ್ ರೆಕಾರ್ಡ್ ಮುಟ್ಟುತ್ತೆ. ಬೀದರಿನಿಂದ ತಲಕಾಡಿನವರೆಗೆ ನಮ್ಮ ಕನ್ನಡದಲ್ಲಿ ಬೇಕಾದಷ್ಟು ಆಡುಭಾಷೆಗಳಿವೆ, ಅದರ ಜೊತೆಗೆ ಪದಗಳ ಸಂಪತ್ತೂ ಸಿಗುತ್ತೆ. ನಾವು ಸಾಗರ-ಶಿವಮೊಗ್ಗದಿಂದ ಮೈಸೂರಿಗೆ ಹೋದವರಿಗೆ ಅಲ್ಲಿಯವರು, ’ನಮ್ಮಪ್ಪ ಹಾರ್ಮ್‌ಕಾರ’ ಅಂತ ಹೇಳ್ದಾಗ ನಾವು ಡಿಕ್ಷನರಿ ತೆಕ್ಕೊಂಡು ನೋಡೋ, ಅವರಿವರನ್ನು ಕೇಳಿ ತಿಳಿದುಕೊಳ್ಳೋ ಹೊತ್ತಿಗೆ ಅದು ’ಆರಂಭಕಾರ’ ಎಂದು ಗೊತ್ತಾಗಿದ್ದು. ಹೀಗೇ, ’ಎಕ್ಕೂಟ್ಟೋಹೋಗೋದು’, ’ಅದೇನ್...ಕೆಟ್ಟೋಯ್ತೇ’, ಮುಂತಾದ ಪ್ರಯೋಗಗಳನ್ನೂ ಆಡುಭಾಷೆಯ ಒಂದು ವಿಧಾನ ಎಂತ್ಲೇ ನಾವು ಅರ್ಥ ಮಾಡ್ಕೊಂಡಿದ್ವಿ. ಹಾಗೇ, ನಾವು ಮಾತ್ ಮಾತಿಗೆ ’ಎಂಥಾ’ ಅನ್ನೋದನ್ನ ಅವ್ರೂ ಆಡ್ಕೋತಿದ್ರೂ ಅನ್ನಿ. ನಮ್ಮಲ್ಲಿನ್ನ ಡಯಲೆಕ್ಟುಗಳಿಗೆ ಅವುಗಳದ್ದೇ ಒಂದು ರೀತಿ ನೀತಿ ವಿಧಿ ವಿಧಾನ ಅಂತಿವೆ, ಅದು ಖಂಡಿತ ತಪ್ಪಲ್ಲ. ಹೀಗಿನ ಡಯಲೆಕ್ಟುಗಳಲ್ಲಿನ ಪದಗಳನ್ನ ನಾನು ಹಾಡಿಗೆ ತರ್ತೀನಿ ಅನ್ನೋದು ದೊಡ್ಡ ಸಾಹಸವೇ ಸರಿ.

ಏನೂ ಬೇಡಾ ಸಾರ್, ನಮ್ಮಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇದೆ, ಅದರ ಸಹಾಯದಿಂದ ಒಂದಿಷ್ಟು ಲಘು-ಗುರುಗಳನ್ನೆಲ್ಲ ಲೆಕ್ಕಾ ಹಾಕಿ ನಾವೂ ನಾಳೆಯಿಂದ ಬರೆದದ್ದೆನ್ನೆಲ್ಲ ಭಾಮಿನೀ, ವಾರ್ಧಕ ಷಟ್ಪದಿಗೆ ಬದಲಾಯಿಸಿಕೊಂಡ್ರೆ ಹೇಗಿರುತ್ತೆ? ಆ ಕುಮಾರವ್ಯಾಸ ಬರೆದದ್ದಲ್ಲ ಷಟ್ಪದಿಲೇ ಇರ್ತಿತ್ತಂತೆ, ನಾವು ಬರೆದದ್ದನ್ನು ಷಟ್ಪದಿಗೆ ಕನ್ವರ್ಟ್ ಮಾಡ್ಕೊಳ್ಳೋದಪ್ಪ - ಎಲ್ಲೆಲ್ಲಿ ಬ್ರೇಕ್ ಬೇಕೋ ಅಲ್ಲಲ್ಲಿ ಕೊಯ್‌ಕೊಂಡ್ರೆ ಆಯ್ತು! ಅದೂ ಬ್ಯಾಡ, ಪದಗಳ ಕಥೆ ಹಾಗಿರ್ಲಿ, ನಮಿಗೆ ಮಾಧುರ್ಯ-ಇಂಪು-ಕಂಪೂ ಅಂತಂದ್ರೆ ಭಾಳಾ ಆಸೆ ಅಲ್ವ? ಅದಕ್ಕೆ ಕಂಬಾರರ ’ಮರೆತೇನಂದರ ಮರೆಯಲಿ ಹೆಂಗಾs’ ಅನ್ನೋದನ್ನ ತಗೊಂಡು ಕುಮಾರ್ ಸಾನು ಹತ್ರ ಹಾಡ್ಸದಪಾ, ಭಾಳಾ ಚೆನ್ನಾಗಿರುತ್ತೆ. ಇನ್ನೂ ಚೆಂದಾ ಅಂತಂದ್ರೆ ಬೇಂದ್ರೆ ಅವರ ’ನಾಕು-ತಂತಿ’ ತಗೊಂಡ್ ಹೋಗಿ ಸೋನೂ ನಿಗಮ್‌ಗೆ ಕೊಟ್ರೆ ಆಯ್ತು.

***

ನಿಮಗ್ಯಾಕೆ? ನೀವ್ ಸಿನಿಮಾ ನೋಡಲ್ಲ, ಹಾಡಿನ ಸಿ.ಡಿ. ಕೊಳ್ಳೋಲ್ಲ, ಹಿಂಗೆ ಚೀಪ್ ಆಗಿ ಕ್ರಿಟಿಸಿಸಮ್ ಬರೆಯೋಕ್ ನಿಮಗ್ಯಾರ್ ಅಧಿಕಾರ ಕೊಟ್ರೂ? ನಮಗೂ ಭಾಷಾ ಸ್ವಾತಂತ್ರ್ಯಾ ಅನ್ನೋದ್ ಇದೆ, ನಮಿಗೆ ಹೆಂಗ್ ಬೇಕೋ ಹಂಗ್ ಬರಕಂತೀವ್, ಯಾವನ್ ಹತ್ರಾ ಬೇಕಾದ್ರೂ ಹೇಳಿಸಿಕ್ಯಂತೀವ್. ಅದನ್ನ ಕೇಳೋಕ್ ನೀವ್ ಯಾರು? ಯಾವ್ದೋ ದೇಶ್ದಲ್ಲ್ ಕುತಗಂಡು ಕನ್ನಡದ ಬಗ್ಗೇ ನೀವೇನ್ರಿ ಹೇಳೋದು? ಹಂಗಂತ ನಿಮ್ ಕನ್ನಡಾ ಚೆನ್ನಾಗಿದೆಯೇನು? ನೀವು ಬರೆದಿದ್ದೆಲ್ಲಾ ಭಯಂಕರವಾಗಿದೆಯೇನು? ಅಷ್ಟು ತಾಕತ್ತ್ ಇದ್ರೆ ನೀವೇ ಒಂದು ಸಿನಿಮಾ ಮಾಡಿ ತೋರ್ಸಿ. ಅದೂ ಬ್ಯಾಡಪ್ಪಾ - ಈ ಹಾಡಿನ್ ಚಿತ್ರೀಕರಣಕ್ಕೆ ನಲವತ್ತು ಲಕ್ಷಾ ಸುರಿದಿದ್ದೀವಿ, ಅದನ್ನ ನಿಮ್ ಕೈಗೆ ಕೊಡ್ತೀವಿ, ನಲವತ್ತ್ ಲಕ್ಷಾ ತೊಡಗಿಸಿ ನಲವತ್ತು ಹುಟ್ಟಿಸಿಕೊಡೀ ಧಂ ಇದ್ರೆ.

ಥೂ, ಎಲ್ಲೋ ಕುತಗಂಡು ಉದಯಾ ಟಿವಿ ನೋಡ್ಕಂಡು ಅದನ್ನೇ ಬದುಕು ಅಂತ ಕೊರಗೋ ನಿಮ್ಮನ್ನ್ ಕಂಡು ಏನ್ ಹೇಳಣ?!

Sunday, July 22, 2007

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.