Monday, March 09, 2026

ಕಾಡುವ ಹಾಡು: ಜಯಾ ಶಂಕರ

ಕಾಡುವ ಹಾಡು: ಜಯಾ ಶಂಕರ

ಹಲವು ವರ್ಷಗಳ ಹಿಂದೆ, ಒಂದು ಸುಂದರವಾದ ಶಿವರಾತ್ರಿ ಮುನ್ನಾ ದಿನದ ಮುಂಜಾವಿನ ಏಳೂವರೆ ಘಂಟೆಯ ಸಮಯ ಇರಬಹುದು.

ನಾನು ಸಹ್ಯಾದ್ರಿ ಕಾಲೇಜಿನ ಭೌತಶಾಸ್ತ್ರದ ಲ್ಯಾಬ್‌ನಲ್ಲಿ ಎಂಟು ಘಂಟೆಗೆ ಆರಂಭವಾಗುವ ತರಗತಿಯ ನಿರೀಕ್ಷೆಯಲ್ಲಿದ್ದೆ. ಆಗೆಲ್ಲ, ಒಂದು ಅರ್ಧ ಘಂಟೆ ಮುಂಚಿತವಾಗಿ ಲ್ಯಾಬ್‌ಗೆ ಹೋಗಿ, ವಿದ್ಯಾರ್ಥಿಗಳು ಬರುವುದಕ್ಕಿಂತ ಮೊದಲು ಎಲ್ಲಾ ಪರಿಕರಗಳ ತಯಾರಿ ಮಾಡಿಕೊಳ್ಳಬೇಕಾದ ಅಗತ್ಯ ಇತ್ತು.

ನನ್ನ ಕೆಲಸದಲ್ಲಿ ತಲ್ಲೀನನಾದ ನಾನು, ಮನಸಿಗೆ ಬಂದ ಈ ಹಾಡನ್ನು ನಿಧಾನವಾಗಿ ಗೊಣಗಿಕೊಂಡಿದ್ದೆ. ಆಗ, ನನ್ನ ಹಿಂದೆ ಈ ಹಾಡನ್ನು ಕೇಳಿಕೊಂಡು ಒಬ್ಬ ಲ್ಯಾಬ್ ಅಟೆಂಡರ್, ನಾನು ಹಾಡನ್ನು ಹೇಳಿ ಮುಗಿಸಿದ ತರುವಾಯ, "ಎಷ್ಟು ಒಳ್ಳೆಯ ಹಾಡು ಸರ್, ಬೆಳಬೆಳಗ್ಗೆ ಈ ಥರಾ ಹಾಡನ್ನು ಕೇಳಿದ್ರೆ, ನಮ್ಮ ದಿನವೆಲ್ಲ ಸುಲಭವಾಗಿ ನಡೆಯುತ್ತೆ!" ಎಂದು ಹೇಳಿದ ನೆನಪು.

ಅದರ ನಂತರ ಈ ಹಾಡಿನ ಗೋಜು, ಅಥವಾ ನೆನಪು ಬಂದಿದ್ದು, ಸುಮಾರು ಮೂವತ್ತು ವರ್ಷಗಳ ಮೇಲೆ ಎನ್ನಬೇಕು!

ಅದೇನೋ ಕಳೆದ ತಿಂಗಳಿನಿಂದ ಈ ಹಾಡು ನಾನು ಎಲ್ಲಿ ಹೋದರಲ್ಲಿ ಕಾಡುತ್ತಲೇ ಇದೆ, ನನ್ನಿಂದ ಅದನ್ನ ಹಾಡಿಸಿಕೊಳ್ಳುತ್ತಲೇ ಇದೆ. ನನಗೆ ಇದು ಸತಾಯಿಸಿದ ವಿಷಯವನ್ನು ನನ್ನ ತಂಗಿಗೆ ನಾನು ಮನನ ಮಾಡಿದ ದೆಸೆಯಿಂದ, ಪಾಪ, ಅವಳೂ ಕೂಡ ಈ ಹಾಡನ್ನು ಹಾಡುವಂತಾದಳು!

ಅಂತರ್ಜಾಲವನ್ನು ಪೂರ್ತಿ ಹುಡುಕಾಡಿದ ಮೇಲೆ, ಎಲ್ಲೂ ಸರಿಯಾದ ಹಾಡಿನ ಸಾಲುಗಳು ಸಿಗದಾದಾಗ, ಈ ಲೇಖನವನ್ನು ಬರೆದು, ನನ್ನ ಅರಿವಿಗೆ ಬಂದಂತೆ, ಈ ಹಾಡನ್ನು ಇಲ್ಲಿ ದಾಖಲು ಮಾಡಿದ ಮೇಲೆ ಈ ಹಾಡಿಗೆ ಒಂದು ಕಾಯಕಲ್ಪ ಸಿಗಬಹುದೇನೋ ನೋಡೋಣ.

***

ಹಾಡು: ಜಯಾ ಶಂಕರ ಭಾವ ಗೋಚರ

ಚಿತ್ರ: ಪಾರ್ವತಿ ಕಲ್ಯಾಣ, ೧೯೬೭

ಗೀತ ರಚನೆ: ಚಿ. ಸದಾಶಿವಯ್ಯ

ಹಿನ್ನೆಲೆ ಗಾಯನ: ಬಿ.ಕೆ ಸುಮಿತ್ರ

ಸಂಗೀತ: ಜಿ.ಕೆ. ವೆಂಕಟೇಶ್

ನಟಿ: ವಿಜಯಲತ (?)

ನಿರ್ದೇಶನ: ಬಿ.ಎಸ್. ರಂಗ



ಜಯಾ ಶಂಕರ ಭಾವ ಗೋಚರ

ಶಿವ ಚಿದಂಬರ ಓಂಕಾರ

ಪುಣ್ಯ ವಿಹಾರ ಪಾಪ ವಿದೂರ

ಜಗದೋದ್ಧಾರ ಫಣಿಹಾರ |ಪ|


ಸದಾ ನಿನ್ನಯ ಪದಾಂಬೋಜದ

ಜ್ಞಾನವೇ ಭವ ತಾಪಹಾರಿ

ಪೂಜೆಯೇ ಸರ್ವ ಪಾಪಹಾರಿ

ಸಕಲ ಶುಭಕಾರಿ|


ಪದಾಂಭೋಜ = ಪದಾಂಬೋಜ - ಪದ + ಅಂಬುಜ, ಪಾದವೆಂಬ ಕಮಲ


ದೇವ ನಿನ್ನಯ ದಿವ್ಯ ನಾಮ

ಶಾಂತಿ ಸೌಖ್ಯದ ಭೌವ್ಯಧಾಮ

ಶರಣ ಜನಕ ರಾಮವೂ

ಸ್ಮರಣೆಯೇ ಆನಂದವೂ|


ನಿನ್ನ ಸಿರಿಮುಡಿ ನೀಲಿ ಗಗನದಿ

ತಿರುವಡಿ ಪಾತಾಳ ತಳದಿ

ಜಟೆಗಳೇ ತರು ಮೋಡ ಮಾಲೆ

ತಾರೆ ಮಣಿಮಾಲೆ


ಚಂದ್ರ-ಸೂರ್ಯರು ನಿನ್ನ ನಯನ

ಲೋಕದಾನವು ನಿನ್ನ ವದನ

ಪಾವನ ಜಪ ಪಾವನ

ಪರಮ ಪದವಿಗೆ ಸಾಧನ||


ಜಯಾ ಶಂಕರ ಭಾವ ಗೋಚರ

ಶಿವ ಚಿದಂಬರ ಓಂಕಾರ|


ಈ ಹಾಡನ್ನು ಇಲ್ಲಿ ಕೇಳಬಹುದು.

No comments: