Thursday, October 12, 2006

ಬಸಯ್ಯ್ ಮೇಷ್ಟ್ರು ಮಗಳು

ಪೈಪೋಟಿ ಅನ್ನೋದು ಎಲ್ಲಿ ಶುರುವಾಗಿತ್ತು ನನ್ನಲ್ಲಿ ಅನ್ನೋದನ್ನ ಯೋಚಿಸಿಕೊಂಡು ತಲೆ ಕೆರೆದುಕೊಳ್ಳುತ್ತಾ ಇದ್ದಂತೆ ನಾನು ಹತ್ತನೇ ತರಗತಿಯಲ್ಲಿದ್ದಾಗಿನ ಒಂದು ಘಟನೆ ತಟ್ಟನೆ ನೆನಪಿಗೆ ಬಂತು, ಆ ಘಟನೆಯ ಬೆನ್ನಿಗೆ ಬಂದ ಹಲವಾರು ಉಪಘಟನೆಗಳ ಗುಂಗಿಗೆ ಕಾರಿನಲ್ಲಿ ಕೂತಿದ್ದವನು ಕಾರ್‍‌ಟಾಕ್ ಕೇಳಿ ನಗುತ್ತಿರುವವರ ಹಾಗೆ ನನ್ನಷ್ಟಕ್ಕೆ ನಾನೆ ಜೋರಾಗಿ ನಕ್ಕು ಬಿಟ್ಟೆ, ಹಾಗೆ ನಕ್ಕಿದ್ದನ್ನು ಕಂಡು/ಕೇಳಿ ಇನ್ನಷ್ಟು ನಗು ಉಕ್ಕಿಬಂತು, ಸದ್ಯ ಅಕ್ಕಪಕ್ಕದ ಕಾರಿನಲ್ಲಿ ಯಾರೂ ನೋಡುತ್ತಿಲ್ಲವಲ್ಲ ಎಂದು ಒಮ್ಮೆ ಸಮಾಧಾನವಾಯಿತು!

ಆಗೆಲ್ಲ ದಿನವಿಡೀ ಕ್ರಿಕೇಟ್ ಆಡೋ ಸಂಭ್ರಮ, ಜೊತೆಯಲ್ಲಿ ಗೋಲಿ, ಬುಗುರಿ, ಚಿಣ್ಣಿದಾಂಡು ಹೀಗೆ ಆಟಗಳ ಮೇಲೆ ಆಟಗಳ ಸುರಿಮಳೆ ಒಂದೋ ಎರಡೋ. ಹೀಗೆ ಹೆಚ್ಚಿನ ದಿನಗಳೆಲ್ಲ ಶಾಲೆಗೆ ಹೋಗೋದು, ಪಾಠ ಮುಗಿಸಿ ಬಂದ ಮೇಲೆ ಆಟವಾಡೋದು, ಸಣ್ಣಪುಟ್ಟ ಮನೆಕೆಲಸ ಮಾಡಿ ರಾತ್ರಿ ಒಂಭತ್ತು ಘಂಟೆಯ ಹೊತ್ತಿಗೆ ನಿದ್ರಾದೇವಿಗೆ ಶರಣಾಗಿ ಸುಖನಿದ್ರೆಗೆ ಜಾರುವ ದಿನಗಳವು. ಯಾರಿಗುಂಟು ಯಾರಿಗಿಲ್ಲ ಅನ್ನೋ ಭಾಗ್ಯದ ಉತ್ತುಂಗದಲ್ಲಿರುವಾಗ ನಾನು ಹತ್ತನೇ ತರಗತಿಯ ಮೆಟ್ಟಿಲನ್ನೇರಿದ್ದೆ. ಅಲ್ಲಿಂದ ಶುರುವಾಯ್ತು ನೋಡಿ, ಬಿಡುವು ಸಿಕ್ಕಾಗೆಲ್ಲ 'ಓದಿಕೋ' ಎಂದು ಮೇಲಿನವರು ಮಾಡುವ ಆಜ್ಞೆ. ನನಗಂತೂ ಈ ಹತ್ತನೇ ತರಗತಿಯೊಂದು ಎಷ್ಟು ಬೇಗ ಮುಗಿಸಿದರೆ ಅಷ್ಟು ಸಾಕು ಎನ್ನುವಂತಾಗಿತ್ತು, ಹತ್ತನೇ ತರಗತಿಯ ನಂತರದ ವರ್ಷಗಳು ಬಹಳ ಒಳ್ಳೆಯವು ಎನ್ನುವ ಹುಂಬ ಕಲ್ಪನೆ ಬೇರೆ, ಅದು ಬೇರೆ ವಿಷಯ. ನಾನು ಒಂದರಿಂದ ಒಂಭತ್ತರವರೆಗೆ ಓದಿದ್ದಕ್ಕಿಂತ ಹೆಚ್ಚು ಹತ್ತನೇ ತರಗತಿಯಲ್ಲಿದ್ದಾಗಲೇ ಓದಿದ್ದು ಎನ್ನಬಹುದು. ಹಾಗಂತ ನನಗೆ ಯಾವ ವರ್ಷವು ಕಡಿಮೆ ಅಂಕಗಳು ಬಂದಿವೆ ಎಂದು ಅನ್ನಿಸಿಯೇ ಇಲ್ಲ, ಓದದಿದ್ದರೂ ಅದು ಹೇಗೋ ಮಾಡಿ ಒಳ್ಳೆಯ ಅಂಕಗಳು ಪ್ರತಿ ಪರೀಕ್ಷೆಯಲ್ಲಿಯೂ ಬರುತ್ತಿದ್ದವು!

ನಾನು ಎಷ್ಟೇ ಸಮಜಾಯಿಷಿ ಹೇಳಿದರು ನಮ್ಮ ಮನೆಯಲ್ಲಿ ಬಿಡಲೊಲ್ಲರು, ಅವೇ ಪಾಠಗಳನ್ನು ರಿವಿಜನ್ ಮಾಡುವಂತೆ ಎಲ್ಲರದೂ ಒಂದೇ ಕಾಟ ಶುರುವಾಗಿತ್ತು, ನನ್ನ ನಿದ್ರೆಗೆ ಸಂಚಕಾರ ಬಂದಿತ್ತು. ಸಂಜೆ ಏಳು ಘಂಟೆಗೆ ಆರಂಭವಾಗಿ ಒಂಭತ್ತು ವರೆಗೆ ಫಸ್ಟ್ ಶೋ ಸಿನಿಮಾ ಬಿಡುವ ಹೊತ್ತಿಗೆಲ್ಲಾ ಗೊರಕೆ ಹೊಡೆಯುತ್ತಿದ್ದ ನನಗೆ, ಹತ್ತು ಘಂಟೆಯ ಎರಡನೇ ಶೋ ಸಿನಿಮಾ ಅರಂಭವಾದರೂ ಮಲಗಬಾರದು ಎನ್ನುವ ಕಾಟ ಬೇರೆ. ಇವರ ಉಪಟಳ ಏನೇ ಇದ್ದರೂ ನಿದ್ರಾದೇವಿ ಯಾವಾಗಲೂ ನನ್ನ ಪರವಾದ್ದರಿಂದ ನಾನು ಹೆಚ್ಚೆಂದರೆ ಹತ್ತೂವರೆಗೆಲ್ಲ ನಿದ್ರೆಗೆ ಹೋಗುತ್ತಿದ್ದ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿವೆ.

ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಟಿಸಿಎಚ್ ಕಾಲೇಜಿನ ಕನ್ನಡ ಪಂಡಿತರಾದ ಬಸಯ್ಯ ಮೇಷ್ಟ್ರು ಮನೆ ಇತ್ತು. ಅವರ ಮಗಳೂ ಅಮೃತಾ ನನ್ನ ವಯಸ್ಸಿನವಳೇ. ನಮ್ಮೂರಿನಲ್ಲಿ ಕೋ ಎಜುಕೇಷನ್ ಇರಲಿಲ್ಲವಾದ್ದರಿಂದ ನಾವು ಬೇರೆಬೇರೆ ಶಾಲೆಗಳಿಗೆ ಹೋಗುತ್ತಿದ್ದೆವು. ಓದಿನಲ್ಲಿ ಬಹಳ ಚುರುಕು ಅಮೃತಾ ಎಂದು ನನಗೆ ಕೇಳಿ ಗೊತ್ತಿತ್ತು. ಒಂದು ದಿನ ಹೀಗೇ ರಾತ್ರಿ ಎರಡು ಘಂಟೆಯ ಹೊತ್ತಿಗೆ ಇರಬಹುದು, ನಾನು ಬಹಿರ್ದೆಸೆಗೆಂದು ಎದ್ದು ನಮ್ಮ ಹಿತ್ತಲಿಗೆ ಬಂದು ನೋಡಿದಾಗ ಬಸಯ್ಯ ಮೇಷ್ಟ್ರು ಮನೆಯಲ್ಲಿ ಇನ್ನೂ ದೀಪ ಉರಿಯುತ್ತಿರುವುದು ಕಾಣಿಸಿತು. ಆಗ ಪರೀಕ್ಷೆ ಸಮಯ ನಿಧಾನವಾಗಿ ಹತ್ತಿರಹತ್ತಿರ ಬರುತ್ತಿತ್ತು, ನಮ್ಮ ತರಗತಿಯ ಪಾಠ ಪ್ರವಚನಗಳೆಲ್ಲ ಮುಗಿದಿದ್ದವಾದ್ದರಿಂದ ನಾವು ತರಗತಿಗಳಿಗೆ ಹೋಗದೆ ನಮ್ಮ ಫೈನಲ್ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದೆವು. ನನ್ನ ಮನಸ್ಸಿಗೆ ಅದೇನು ಅನ್ನಿಸಿತೋ ಬಿಟ್ಟಿತೋ - ಅಬ್ಬಾ, ಅಮೃತಾ ಇನ್ನೂ ಓದುತ್ತಿದ್ದಾಳೆ, ನಾನು ಇಲ್ಲಿ ನಿದ್ದೆ ಹೊಡೆಯುತ್ತಿದ್ದೇನೆ - ಎಂದು ಅನ್ನಿಸಿದ್ದೇ ತಡ ನಾನೂ ಲಗುಬಗೆಯಿಂದ ಪುಸ್ತಕಗಳನ್ನು ತೆಗೆದು ಓದತೊಡಗಿದೆ, ಮನೆಯವರು ಇಷ್ಟೊತ್ತಿನಲ್ಲಿ ಅದೇನು ಓದ್‌ತೀಯೋ ಮಲಗೋ ಎಂದರೂ ಕೇಳದೇ ನಾನು ಬೆಳಗ್ಗಿನ ಜಾವದವರೆಗೆ ಆದಿನ ಓದಿದ ನೆನಪು. ಅಂದಿನಿಂದ ಒಂದು ಹೊಸ ಹವ್ಯಾಸವೂ ಹುಟ್ಟಿ ಬಿಟ್ಟಿತ್ತು - ಮಧ್ಯಾಹ್ನ ಒಂದಿಷ್ಟು ಹೊತ್ತು ನಿದ್ರೆ ಮಾಡಿದರೆ ಮಾತ್ರ ಸಾಕಾಗುತ್ತಿತ್ತು, ರಾತ್ರಿ ಎಲ್ಲಾ ಯಾವ ಸದ್ದು-ಗದ್ದಲವಿಲ್ಲದೇ ನಿರಂತರವಾಗಿ ಓದಬಹುದಾಗಿತ್ತು - ಬೆಳಗ್ಗಿನ ಜಾವ ಸಣ್ಣಗೆ ಜೊಂಪು ಬಂದು ಆಗಾಗ್ಗೆ ಮಲಗುವುದನ್ನು ಬಿಟ್ಟರೆ, ನನ್ನ ನಿದ್ರಾ ನಡವಳಿಕೆ ಸಂಪೂರ್ಣವಾಗಿ ಬದಲಾಗಿತ್ತು - ಅಂದಿನಿಂದ ಇಂದಿನವರೆಗೆ ನನಗೆ ನಿದ್ರೆ ಮಾಡುವುದಾಗಲಿ, ಮಾಡದೇ ಇರುವುದಾಗಲೀ ಯಾವತ್ತೂ ಸಮಸ್ಯೆ ಎಂದು ಅನ್ನಿಸಿಯೇ ಇಲ್ಲ - ನನಗೆ ಒಳ್ಳೆಯ ಅಂಕಗಳು ಬಂದಿದ್ದರ ಕ್ರ್ಡೆಡಿಟ್ ಅಮೃತಾಳಿಗೆ ಸೇರಬೇಕು.

ಹೀಗೆ ತಂಪು ಹೊತ್ತಿನಲ್ಲಿ ಬಸಯ್ಯ ಮೇಷ್ಟ್ರು ಮಗಳನ್ನು ನೆನೆಯುವುದಕ್ಕೆ ವಿಶೇಷ ಕಾರಣಗಳೇನೂ ಇಲ್ಲದಿದ್ದರೂ - ಆದಿನ ನನ್ನ ಮನಸ್ಸಿನಲ್ಲಿ ಹುಟ್ಟಿದ ಒಂದು ಮಿಥ್ಯಾ ಪೈಪೋಟಿಯ ಮನೋಭಾವ ಇಂದಿಗೂ ನನ್ನ ಮನಸ್ಸಿನಲ್ಲಿದೆ, ಅದು ಇನ್ನು ಮುಂದೆಯೂ ಇರುತ್ತದೆ. ಈ ಪೈಪೋಟಿಯಿಂದ ಏನೇನೋ ಆಗಿದೆ ಎಂದು ಯೋಚಿಸಿಕೊಂಡಂತೆಲ್ಲ ಹಲವಾರು ವಿಷಯಗಳಲ್ಲಿ ನನ್ನನ್ನು ಮೊದಲಿಗನನ್ನಾಗಿ ಕಂಡುಕೊಳ್ಳುತ್ತೇನೆ.

ನನಗೋಸ್ಕರ ನಾನು ಓದಿದ್ದರೆ, ನನ್ನ ಪಾಡಿಗೆ ನಾನು ಬದುಕಿದ್ದರೆ ಚೆನ್ನಿತ್ತು, ಅದರ ಬದಲಿಗೆ ಪೈಪೋಟಿ ಎನ್ನುವ ಮಧ್ಯವರ್ತಿಯ ಸಹವಾಸಕ್ಕೆ ಹೋದಾಗ ಬರಿ ಅಂಕೆ ಸಂಖ್ಯೆಗಳು ಮುಖ್ಯವಾಗಿ ಹೋಗುತ್ತವೆಯೇ ವಿನಾ ಆಯಾ ವಸ್ತುಗಳ ಸ್ವಾರಸ್ಯವೇ ಕಳೆದು ಹೋಗುವ ಹೆದರಿಕೆ ಇದೆ. ನಿನ್ನೆಗಳು ಎನ್ನುವ ಡ್ರಮ್‌ಗಳಲ್ಲಿ ಕುಳಿತು ಏರಿಳಿತಗಳಿರುವ ರಸ್ತೆಗಳಲ್ಲಿ ನಾಳೆಗಳು ಎಂಬ ಕನಸುಗಳ ಹೊತ್ತು ಸದ್ದು ಮಾಡುತ್ತಾ ಉರುಳಿಕೊಂಡು ಹೋಗುತ್ತಿರುವ ನನಗೆ ಪೈಪೋಟಿ ಎನ್ನುವುದು ಏರಿನಲ್ಲಿ ನೂಕುವ ತಂತ್ರವೋ ಅಥವಾ ಇಳಿಜಾರಿನಲ್ಲಿ ಜೋರಾಗಿ ಓಡುವಂತೆ ಮಾಡುವ ಅತಂತ್ರವೋ ಯಾರು ಬಲ್ಲರು?

Wednesday, October 11, 2006

ಸಹಿಸಲಾರದವುಗಳು

ಯಾವುದನ್ನ ಸಹಿಸಬಹುದು ಯಾವುದನ್ನ ಬಿಡಬಹುದು? ಈ ಪ್ರಶ್ನೆ ಎಲ್ಲರ ಮನಸಲ್ಲೂ ಆಗಿಂದಾಗ್ಗೆ ಮೂಡೋದು ಸಹಜ, ಅದಕ್ಕುತ್ತರವೂ ಅವರವರನ್ನ ಅವಲಂಭಿಸಿರುತ್ತೆ ಅನ್ನೋದು ಲೋಕೋಕ್ತಿ. ಈ ದಿನ ನನಗೆ ಸಹಿಸಲಾರದ್ದು ಎನ್ನಿಸಬಹುದಾದ ಒಂದಿಷ್ಟು ವಿಷಯಗಳನ್ನು ಹೀಗೆ ತೆರೆದಿಟ್ಟರೆ ಹೇಗೆ ಅನ್ನಿಸಿತು.

ಆಫೀಸಿಗೆ ಹೋಗೋ ಹೆಚ್ಚಿನ ದಿನಗಳಲ್ಲಿ ಒಂದೇ ಕೆಲ್ಲಾಗ್ ಅಥವಾ ಕಲ್ವರ್ ರಸ್ತೆಗಳಲ್ಲಿ ಟ್ರಾಫಿಕ್ ಲೈಟ್‌ನಲ್ಲಿ ನಾನು ಕಾರನ್ನು ನಿಲ್ಲಿಸಿದ್ರೆ ಆಗಾಗ್ಗೆ ಅತ್ತಿತ್ತ ನೋಡೋದು ನನ್ನ ರೂಢಿ. ಕೆಲವು ತಿಂಗಳುಗಳಲ್ಲಿ ಸೂರ್ಯೋದಯದ ಹೊತ್ತಿಗಾದ್ರೆ ದಿನಕ್ಕೊಂದು ಚಿತ್ರ ಅಂತಾರಲ್ಲ ಹಾಗೆ ನ್ಯೂ ಯಾರ್ಕ್ ನಗರದ ಕಡೆಯಿಂದ ಆಗಸದಲ್ಲಿ ಹೊಸ ಚಿತ್ರ ನೋಡೋಕೆ ಸಿಗುತ್ತೆ, ಕೆಲವು ಕಡೆ ಮಂಜಿನ ಹನಿಗಳು ಕಾಣ್ಸುತ್ವೆ, ಏನಿಲ್ಲಾ ಅಂದ್ರೂ ಆಯಾ ದಿನಗಳಿಗೆ ತಕ್ಕಂತೆ ಅಕ್ಕಪಕ್ಕದವರ ನಡವಳಿಕೆಗಳಾದರೂ ಕಣ್ಣಿಗೆ ಬೀಳುತ್ತವೆ. ಹೀಗೇ ಒಂದಿನಾ ಬೆಳಗ್ಗೆ ಒಬ್ರು ಕೆಲ್ಲಾಗ್ ರಸ್ತೆ ಟ್ರಾಫಿಕ್ ಲೈಟ್ ನಲ್ಲಿ ಎಲೆಕ್ಟ್ರಿಕ್ ಶೇವರ್ ಉಪಯೋಗಿಸಿ ಗಡ್ಡಾ ಶೇವ್ ಮಾಡಿಕೊಳ್ತಾ ಇದ್ರು, ಆ ದಿನ ನಾನಂದುಕೊಂಡೆ, ಛೇ ಏನಪ್ಪಾ ಬೆಳ್ಳಂಬೆಳಗ್ಗೆ ಈ ಮನುಷ್ಯನಿಗೆ ಇಷ್ಟೂ ಸಮಯ ಇಲ್ಲಾ ಅಂದ್ರೆ ಹೇಗೆ ಅಂತ. ಈ ದಿನ ಮತ್ತೆ ಅದೇ ವ್ಯಕ್ತಿಯ ದರ್ಶನವಾಯಿತು, ಹಲವಾರು ತಿಂಗಳುಗಳ ನಂತರ ಆ ವ್ಯಕ್ತಿಯನ್ನು ನೋಡಿದ ಕೂಡಲೇ ಈ ಸಾರಿ ನನಗೆ ಆಶ್ಚರ್ಯವಾಗುವುದಕ್ಕಿಂತ ಹೆಚ್ಚಾಗಿ, ಅವರ ನಡವಳಿಕೆಗೆ ತಕ್ಕನಾದ ನನ್ನದೊಂದು ನಡವಳಿಕೆಯ ನೆನಪಾಗಿ 'ನನಗೆ ಅಷ್ಟೂ ಸಮಯವಿಲ್ಲವೇ?' ಅನ್ನೋ ಮಾತನ್ನು ನಾನೇ ಕೇಳಿಕೊಳ್ಳತೊಡಗಿದೆ. ನಾನೇನೂ ಅವರ ಥರಾ ಕಾರಲ್ಲಿ ಗಡ್ಡಾ ಶೇವ್ ಮಾಡೋದಿಲ್ಲ, ಅದರ ಬದಲಿಗೆ ನನ್ನ ಶೂಸ್ ಲೇಸ್ ಅನ್ನು ಬಹಳಷ್ಟು ಸಾರಿ ಒಂದೇ ಕಲ್ವರ್ ಅಥವಾ ಕೆಲ್ಲಾಗ್ ಟ್ರಾಫಿಲ್ ಲೈಟ್ ನಲ್ಲಿಯೇ ನಾನು ಕಟ್ಟಿಕೊಳ್ಳೋದು. ಹೀಗೆ ಆ ವ್ಯಕ್ತಿ ಶೇವ್ ಮಾಡುವ ವಿಚಾರದ ಬಗ್ಗೆ ನಾನು ನನ್ನ ಅನಿಸಿಕೆಯನ್ನು ಹೊರಹಾಕುವ ಮುನ್ನ ನನ್ನ ಈ ನಡವಳಿಕೆ - ಅಂದರೆ ಟ್ರಾಫಿಕ್ ಲೈಟ್‌ನಲ್ಲಿ ಶೂ ಲೇಸ್ ಕಟ್ಟೋ ಬುದ್ಧಿ - ನೋಡಿ ನನಗೇ ಒಂದು ರೀತಿ ಮುಜುಗರವಾಗತೊಡಗಿತು.

***

ದಿನಕ್ಕೆ ಏನಿಲ್ಲ ಅಂದ್ರೂ ಹನ್ನೆರಡು ಘಂಟೆಗಿಂತಲೂ ಹೆಚ್ಚು ಆಫೀಸಿನಲ್ಲಿ ಕಳೆಯುವವರಿಗೆ ರೆಸ್ಟ್‌ರೂಮ್ ಬ್ರೇಕ್‌ಗಳು ಬಹಳ ರಿಲೀಫ್ ನೀಡುವಂತಹವು. ನಾನು ನೋಡಿರೋ ಹಾಗೆ ದಿನಕ್ಕೆ ಹಾಗೆ ಸ್ವಾಭಾವಿಕ ಎರಡೋ, ಮೂರೋ, ನಾಲಕ್ಕೋ ಬ್ರೇಕ್‌ಗಳನ್ನು ತೆಗೆದುಕೊಳ್ಳುವುದು ಎಷ್ಟೋ ಜನರ ರೂಢಿ ಕೂಡಾ. ಆದರೆ ಇಂದಿನ ದಿನಗಳಲ್ಲಿ ನಾವು ಎಷ್ಟು ಕೆಲಸ ಮಾಡಿದರೂ ಕಡಿಮೆಯೇ ಎನ್ನುವ ಪರಿಸ್ಥಿತಿಯಲ್ಲಿ, ನಾವು ಎಲ್ಲಿಗೆ ಹೋದರೂ ನಮ್ಮನ್ನು ಬಿಡದೇ ಹಿಡಿದಿಡುವ ಎಲೆಕ್ಟ್ರಾನಿಕ್ ಸಾಧನಗಳ ಹಿಡಿತದಲ್ಲಿ ರೆಸ್ಟ್‌ರೂಮ್ ಬ್ರೇಕ್‌ನಲ್ಲಿದ್ದಾಗಲೂ ಒಂದಲ್ಲ ಒಂದು ರೀತಿಯಲ್ಲಿ ಕಮ್ಮ್ಯೂನಿಕೇಟ್ ಮಾಡುವ ಅಗತ್ಯ ಬಂದೊದಗಿದೆ. ಹೀಗಿರುವಲ್ಲಿ ಎರಡು ನಿಲುವುಗಳು: ನನ್ನ ಎದುರೇ ಒಬ್ಬರು ನಾನು ರೆಸ್ಟ್‌ರೂಮ್ ನಲ್ಲಿರುವಾಗ ಫೋನ್ ಆನ್ಸರ್ ಮಾಡುವುದಿಲ್ಲ ಎನ್ನುವುದನ್ನೂ, ಮತ್ತೊಬ್ಬರು ನಿರಾಂತಕವಾಗಿ ಫೋನ್ ಹಿಡಿದು ಮಾತನಾಡುವುದನ್ನೂ ನಾನು ಕೇಳಿದ್ದೇನೆ. ನಾವು ಎಲ್ಲಿ ಇವುಗಳ ಮಧ್ಯೆ ಗೆರೆಯನ್ನು ಹಾಕುತ್ತೇವೆ ಎನ್ನುವುದು ಮುಖ್ಯ. ನನ್ನ ಪ್ರಕಾರ ಮೊದಲನೇ ನಿಲುವು, ಅಂದರೆ ರೆಸ್ಟ್‌ರೂಮ್ ನಲ್ಲಿ ನೀವು ಬಂದ ಕೆಲಸವನ್ನು ಮಾಡಿ ಆದಷ್ಟು ಕಡಿಮೆ ಸದ್ದುಗದ್ದಲಗಳನ್ನು ಮಾಡಿ ಹೊರಬರುವುದು, ಒಳ್ಳೆಯ ನಡವಳಿಕೆ, ಅದು ಸಹಿಸಬಹುದಾದ ಒಂದು ಪರಂಪರೆಯನ್ನು ಬೆಳೆಸುತ್ತದೆ. ಅದರ ಬದಲಿಗೆ ಎರಡನೆಯ ನಿಲುವು ಬಹಳಷ್ಟು ಮುಜಗರವನ್ನೂ, ಅನಾನುಕೂಲವನ್ನೂ, ಅಸಹನೆಯನ್ನೂ ಹುಟ್ಟುಹಾಕುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ನಾವು ನಡೆದುಕೊಳ್ಳುವ ರೀತಿನೀತಿ ಎಲ್ಲರಿಗೆ ಹೊಂದುವಂತಿರಬೇಕೇ ವಿನಾ ನನ್ನ ಫೋನು ನಾನು ಎಲ್ಲಿ ಬೇಕಾದರೂ ಮಾತನಾಡುತ್ತೇನೆ ಎಂದರಾಗುತ್ತದೆಯೇ? ಹೀಗೇ ಸಿನಿಮಾ ಮಂದಿರ, ಚರ್ಚು-ದೇವಸ್ಥಾನಗಳಲ್ಲಿ ಎಷ್ಟು ಬೊಬ್ಬೆ ಹೊಡೆದರೂ ಕೆಲವರು ತಮ್ಮ ಸೆಲ್ ಫೋನನ್ನು ಆರಿಸುವುದಿರಲಿ, ವೈಬ್ರೇಟ್ ಮೋಡ್‌ಗೂ ಹಾಕೋದಿಲ್ಲ. ನಾವು ಇತರರ ಅನಾನುಕೂಲಗಳಿಗೆ ಕಿವಿಗೊಡದೇ ಹೋಗುವಷ್ಟು ತಂತ್ರಜ್ಞಾನದಲ್ಲಿ ಹುದುಗಿಹೋಗಿದ್ದೇವೆಯೇ ಎಂದು ನನಗೆ ಹಲವಾರು ಬಾರಿ ಅನ್ನಿಸಿದೆ. ಸೆಲ್‌ಫೋನ್, ಪಿಡಿಎ, ಬ್ಲ್ಯಾಕ್‌ಬೆರ್ರಿ, ಲ್ಯಾಪ್‌ಟಾಪ್ ಮುಂತಾದ ಸಲಕರಣೆಗಳು ನಮ್ಮ ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಬೇಕು, ನಮ್ಮ ಸಂವಹನವನ್ನು ಅಭಿವೃದ್ಧಿಗೊಳಿಸಬೇಕು, ನಮ್ಮನ್ನು ಕಾರ್ಯತತ್ಪರರನ್ನಾಗಿಸಬೇಕು ಎಂದಲ್ಲವೇ ಇರೋದು, ಹಾಗಿದ್ದರೆ ನಮ್ಮ ನಮ್ಮ ಅಭಿವೃದ್ಧಿ ಎನ್ನುವ ಸಮೀಕರಣದಲ್ಲಿ ಇತರರ ಬೇಕುಬೇಡಗಳಿಗೆ ಸ್ಪಂದಿಸುವಷ್ಟು ವ್ಯವಧಾನ ನಮ್ಮಲ್ಲಿ ಇದೆಯೇ? ನಾವೆಲ್ಲರೂ ನಮ್ಮಷ್ಟಕ್ಕೆ ನಾವು ಕಾರ್ಯತತ್ಪರರಾದರೆ ಅದರ ಒಟ್ಟು ಮೊತ್ತ ಲೋಕದ ಕಲ್ಯಾಣವೇ? ಹೆಚ್ಚು ಸದ್ದು-ಗದ್ದಲವೇ ಪ್ರಗತಿಯ ಸಂಕೇತವೇ?

ಪ್ರತಿಯೊಂದು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಮಾಡಬಹುದಾದ ಏನೇನೆಲ್ಲ ಇದ್ದರೂ ಬಹಳಷ್ಟು ಜನ ಅದರ ಪೂರ್ಣ ಉಪಯೋಗವನ್ನು ಪಡೆದುಕೊಳ್ಳುತ್ತಾರೆ, ತಮ್ಮಲ್ಲಿರುವ ಸಾಧನಗಳನ್ನು ಪೂರ್ಣವಾಗಿ ಬಳಸುತ್ತಾರೆ ಎಂದು ನನಗೇನೂ ಅನ್ನಿಸುವುದಿಲ್ಲ - ಇದನ್ನು ವಾದಿಸಲು ನನ್ನ ಬಳಿ ಅಂಕಿಅಂಶಗಳೇನೂ ಇಲ್ಲ ಆದರೂ ಅದು ನನ್ನ ಅನುಭವ. ಅಂದರೆ ಹೆಚ್ಚು ಹೆಚ್ಚು ಆಧುನಿಕ ಪರಿಕರಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದೇನೂ ಇಲ್ಲ. ಸಾವಿರಾರು ಡಾಲರುಗಳ ರೋಲೆಕ್ಸ್ ವಾಚ್ ಕಟ್ಟಿದರೂ, ನಲವತ್ತು ರೂಪಾಯಿಗಳಿಗೆ ಶಿವಮೊಗ್ಗ ಬಜಾರಿನಲ್ಲಿ ಸಿಗುವ ಎಲೆಕ್ಟ್ರಾನಿಕ್ ವಾಚ್‌ಗಳನ್ನು ಕಟ್ಟಿಕೊಂಡರೂ ಅದರಿಂದೇನೂ ನಮ್ಮ ಸಮಯ ಪರಿಪಾಲನೆ ನಿರ್ಧಾರವೇನಾಗೋದಿಲ್ಲ, ತಡವಾಗಿ ಬಂದು ಹೋಗುವವರು ತಡ ಮಾಡಿಯೇ ಮಾಡುತ್ತಾರೆ.

***

ನಾವು ಸಂವಹನದಿಂದ ಹೇಗೆ ಬೆಳೆಯುತ್ತೇವೆಯೋ, ನಮಗೆ ಮೌನದಿಂದಲೂ ಸಹ ಅಷ್ಟೇ ಒಳ್ಳೆಯ ಅನುಕೂಲಗಳಿವೆ ಅನ್ನೋದು ನನ್ನ ಅನುಭವ. ಈ ಮೌನ ನಾವು ಇತರರ ಸಂವಹನವನ್ನು ಆಲಿಸುವಾಗ ಅಥವಾ ಏನನ್ನೋ ಗಹನವಾಗಿ ಮನದಟ್ಟು ಮಾಡಿಕೊಳ್ಳುವಾಗ ಅಪ್ಯಾಯಮಾನವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಇತರರು ನಿರ್ಮಿಸೋ ಗದ್ದಲ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ, ನಮ್ಮ ಗಮನ ಚಂಚಲವಾಗುತ್ತದೆ. ಹೀಗಿರುವಲ್ಲಿ ನಮ್ಮ ಹಾಗೇ ಇತರರು ಎಂದು ಅಂದುಕೊಳ್ಳುವುದನ್ನು ನಾವೇಕೆ ಸುಲಭವಾಗಿ ಅಳವಡಿಸಿಕೊಳ್ಳೋದಿಲ್ಲ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಿ ಮೌನದ ಮೊರೆಹೋಗತೊಡಗುತ್ತೇನೆ.

Monday, October 09, 2006

ಕಿರುಗತೆ - ಜೊತೆಗಾತಿ

'ಸರ್, ನನ್ನನ್ನು ದಯವಿಟ್ಟು ಕ್ಷಮಿಸಿ, ನಿಮ್ಮಾಕೆಯ ಪ್ರಾಣಪಕ್ಷಿ ಈಗಾಗಲೇ ಹಾರಿಹೋಗಿದೆ, ಆಕೆ ಯಾವಾಗಲೋ ಕಾಲವಾಗಿದ್ದಾರೆ!' ನಿಧಾನವಾಗಿಯಾದರೂ ತುಸು ಗಂಭೀರವಾಗೇ ಈ ವಿಷಯವನ್ನು ಈ ಮನುಷ್ಯನಿಗೆ ಹೇಳುವಲ್ಲಿ ನನ್ನ ಜೀವ ಬಾಯಿಗೆ ಬಂದಿತ್ತು. ಸುಮಾರು ಎಪ್ಪತ್ತೆರಡು ವರ್ಷ ವಯಸ್ಸಿನ ಈ ಮನುಷ್ಯ ತನ್ನ ಹೆಂಡತಿಯನ್ನು ಕಂಡರೆ ಅಪಾರವಾದ ಗೌರವ ಹಾಗೂ ಪ್ರೀತಿಯುಳ್ಳವನು ಎಂಬುದು ನಮ್ಮ ಆಸ್ಪತ್ರೆಯವರಿಗೆಲ್ಲ ಯಾವಾಗಲೋ ಗೊತ್ತಾಗಿದೆ. ಕಳೆದ ಒಂದು ವಾರ ತನ್ನ ಹೆಂಡತಿಯ ಜೊತೆ ಕಳೆದವನು ಏನೇನನ್ನೆಲ್ಲ ಮಾಡಿಲ್ಲ, ಆಕೆಯ ಕೂದಲನ್ನು ಬಾಚುವುದರಿಂದ ಹಿಡಿದು, ಗಲ್ಲವನ್ನು ತೀಡಿ ನಮ್ಮೆಲ್ಲರ ಎದುರೇ ಮಕ್ಕಳನ್ನು ಮುದ್ದಿಸುವಂತೆ ಹಣೆಯ ಮೇಲೆ ಚುಂಬಿಸುವುದೇನು, ಆಕೆ ಊಟ ಮಾಡದೇ ಈತ ಎಂದು ಬಾಯಿಗೆ ಒಂದು ತೊಟ್ಟು ನೀರನ್ನು ಸೇರಿಸಿದ್ದನ್ನೂ ನಾವ್ಯಾರೂ ಕಾಣೆವು. ಹಗಲು-ರಾತ್ರಿ ಪಾಳಿಯನ್ನು ನಾವು ಮುಗಿಸಿ ಮನೆಗೆ ಹೋಗಿ ಬರುತ್ತಿದ್ದರೇನಂತೆ, ಈ ಮುದುಕ ಅಲ್ಲ ಜಂಟಲ್‌ಮ್ಯಾನ್ ತನ್ನಾಕೆಯನ್ನು ಬಿಟ್ಟು ಒಂದು ಕ್ಷಣವೂ ಇದ್ದವನಲ್ಲ.

ಆಕೆಯದ್ದು ಟರ್ಮಿನಲ್ ಕ್ಯಾನ್ಸರ್ ಎಂದು ಈಗಾಗಲೇ ಆತನಿಗೆ ತಿಳಿದು ಹೋಗಿದ್ದು ನಮ್ಮ ಆಸ್ಪತ್ರೆಗೆ ಇನ್ನೇನು ಕೊನೆಗಾಲದ ಚಿಕಿತ್ಸೆ ಅಥವಾ ವಿಶ್ರಾಂತಿ ಎನ್ನುವ ಹಂತದಲ್ಲಿರುವಾಗ ಕರೆದುಕೊಂಡು ಬಂದಿದ್ದರು. ಎಲುಬಿನ ಹಂದರದಂತಿದ್ದ ಆಕೆ ಈಗ ತಲೆ ಕೂದಲನ್ನು ಸುಮಾರಾಗಿ ಕಳೆದುಕೊಂಡು ಅಲ್ಲಲ್ಲಿ ಬೋಳುತಲೆ ಕಂಡು ಬಂದು ಕುರೂಪವಾಗಿ ಕಂಡುಬಂದರೂ ಒಂದು ಕಾಲದಲ್ಲಿ ಆಕೆ ಸುರಸುಂದರಿಯೇ ಇದ್ದಿರಬೇಕು. ಆಕೆಯ ತಲೆಯ ಬುಡದಲ್ಲಿ ಹಾಸಿಗೆಯ ಪಕ್ಕ ಇಟ್ಟ ಎರಡು ಫೋಟೋಗಳು ಅವರ ಜೀವನ ಪರ್ಯಂತ ಆತ್ಮೀಯತೆಗೆ ಸಾಕ್ಷಿಯೆನ್ನುವಂತೆ ಜೀವಂತವಾಗಿದ್ದವು. ಸುಮಾರು ನಲವತ್ತು ವರ್ಷಗಳಿಗೂ ಅಧಿಕವಾದ ತುಂಬು ದಾಂಪತ್ಯವಂತೆ, ನಮ್ಮ ಆಸ್ಪತ್ರೆಯಲ್ಲಿ ಬೇಕಾದಷ್ಟು ಜನ ಈ ರೀತಿ ಖಾಯಿಲೆಯವರನ್ನು ನಾವು ಈ ಹಿಂದೆ ನೋಡಿದ್ದರೂ ಎಂಥವರ ಮನದಲ್ಲೂ ಮಾನವೀಯ ಸಂಬಂಧವೆಂಬ ಬಳ್ಳಿಯನ್ನು ಹಬ್ಬಿಸಿ ಬಿಡಬಲ್ಲ ಚೈತನ್ಯವನ್ನು ಈ ದಂಪತಿಗಳು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದು ಎಲ್ಲರಲ್ಲೂ ಅವರ ಮೇಲೆ ಗೌರವಾದರಗಳನ್ನು ಮೊದಲ ದಿನದಿಂದಲೇ ಹುಟ್ಟಿಸಿತ್ತು.

ಆಶ್ಚರ್ಯವೆಂದರೆ ಈ ವ್ಯಕ್ತಿ ತನ್ನಷ್ಟಕ್ಕೆ ತಾನು ವಾಸ್ತವವನ್ನು ಒಪ್ಪಿಕೊಂಡಿರುವ ಬಗೆ - ಒಂದು ರೀತಿಯಲ್ಲಿ ಹೇಳೋದಾದರೆ ಆತನಿಗೆ ನಮಗೆ ಗೊತ್ತಿರದ ಸತ್ಯದ ಮತ್ತೊಂದು ಮಗ್ಗುಲು ಗೊತ್ತಿದೆ ಎನ್ನಬೇಕು, ಸತ್ಯಕ್ಕೆ ಅದೆಷ್ಟು ಮಗ್ಗುಲುಗಳಿವೆಯೋ ನಮಗೆ ಕಾಣೋದೇ ಸತ್ಯವೆಂದು ನಾವು ನಂಬಿಕೊಂಡಿದ್ದರೆ ಈ ಭೂಮಿ ದುಂಡಗಾದರೂ ಹೇಗಿರುತ್ತಿತ್ತು? ಇಲ್ಲ, ಈ ಭೂಮಿ ದುಂಡಗಿದ್ದರೆ ಮಾತ್ರ ಸಾಲದು ಅದು ತಿರುಗಲು ಈ ರೀತಿಯ ಪ್ರೀತಿಯ ಧ್ಯೋತಕವೆನ್ನುವುದೊಂದಿದ್ದರಲೇ ಬೇಕು, ಒಂದು ರೀತಿ ಬಂಡಿಯ ಗಾಲಿಗಳಿಗೆ ಕೀಲೆಣ್ಣೆಯನ್ನು ಸವರಿದ ಹಾಗೆ ಆಗಾಗ್ಗೆ ಸಂಸಾರದಲ್ಲಿ ಹುಟ್ಟಿ ಹರಡುವ ತುಮುಲವೆಂಬ ಕುಯ್ ಕುಯ್ ಸದ್ದನ್ನು ಮರೆಸಿ ನಿರ್ಮಲವಾದ ಪ್ರೀತಿಯೆಂಬ ಶಾಂತಿಯನ್ನು ಹರಡಲು. ಇಲ್ಲ, ಆಕೆಗೆ ಹತ್ತು ವರುಷದಿಂದ ಕ್ಯಾನ್ಸರ್ ಎಂಬುದು ಗೊತ್ತಾದ ಮೇಲೆ ಈ ವ್ಯಕ್ತಿ ಎದೆಗುಂದದೇ ನಿಂತು ಎಲ್ಲವನ್ನೂ ನಿಭಾಯಿಸಿಕೊಳ್ಳುವ ಸಾಮಾನ್ಯ ನಿಲುವಿನವನು. ನನ್ನ ಪೇಷಂಟಿನ ಪೋಷಕನಾದ ಆತನಲ್ಲಿ ನನ್ನದೇನು ಮಾತು - ಆದರೂ ಆತನ ಸಂಯಮ ಸದಾ ಒಳಿತನ್ನು ಆಶಿಸುವ ಕಂಗಳು, ಸತ್ಯದ ಮತ್ತೊಂದು ಮಗ್ಗುಲನ್ನು ಅರಿತ ಶಾಂತ ಮುಖ ಇವುಗಳು ನನ್ನನ್ನು ಆ ವ್ಯಕ್ತಿಯೊಡನೆ ಮಾತನಾಡುವಂತೆ ಪ್ರಚೋದಿಸಿದವು.

'ಸರ್, ಮಾನವೀಯ ಸಂಬಂಧಗಳು ಎಷ್ಟೊಂದು ಮಧುರವೆಂದು ನಮಗೆ ಹಲವಾರು ಬಾರಿ ಅನ್ನಿಸಿದರೂ ಅಷ್ಟೇ ಸಹಜವಾಗಿ ಅವುಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದೇಕೆ?'

ನನ್ನ ಪ್ರಶ್ನೆಗೆ ಗಂಭೀರತೆಯ ಮುಖವಾಡ ಸ್ವಲ್ಪ ತರಿಸಿ, ತುಟಿಯ ಮೇಲೆ ತಿಳಿನಗೆಯನ್ನು ತೋರಿಸಿಕೊಂಡು 'ನೋಡಿ, ನಮ್ಮ ನಮ್ಮ ನಡುವಿನ ಸಂಬಂಧಗಳು ವ್ಯಾಪಾರ ಧ್ಯೋತಕವಾಗಿ ನಿರ್ಮಿತವಾದವಲ್ಲ, ಅವು ಸಹಜವಾದವು - ನೀವು ಸಹಜವಾಗಿ ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದು ಎಂದಿರಿ - ನನಗೆ ಆ ಬಗ್ಗೆ ಗೊತ್ತಿಲ್ಲ, ಆದರೆ ನನ್ನ ಮತ್ತು ಆಕೆಯ ಸಂಬಂಧಗಳ ಬಗ್ಗೆ ಬೇಕಾದರೆ ಹೇಳಬಲ್ಲೆ' ಎಂದು ಹಾಸಿಗೆಯಲ್ಲಿ ಅಂಗಾತವಾಗಿ ಔಷಧಗಳ ನೆರವಿನಿಂದ ಕಣ್ಣು ಮುಚ್ಚಿ ವೆಂಟಿಲೇಟರ್ ಸಹಾಯದಿಂದ ಎದೆಯ ತಿದಿ ಉಬ್ಬಿ ಇಳಿಯುತ್ತಿದ್ದ ಹೆಂಡತಿಯ ಕಡೆಗೆ ತೋರಿಸಿ ಹೇಳಿದರು.

ಸುಮ್ಮನೇ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತ ವ್ಯಕ್ತಿ ತೊಂದರೆ ಕೊಟ್ಟೆನೇನೋ ಎನ್ನಿಸದಿರಲಿಲ್ಲ, ಕ್ಲಿಷ್ಟವಾದ ಪ್ರಶ್ನೆಗೆ ಉತ್ತರಿಸಲು ಪೂರ್ವಭಾವಿ ಸಿದ್ಧತೆ ನಡೆಸುವ ಯಾವುದೇ ತರಾತುರಿ ಅಥವಾ ಗೊಂದಲವೂ ಈ ವ್ಯಕ್ತಿಯಲ್ಲಿ ಕಂಡುಬರಲಿಲ್ಲ. ಅವರ ಸಮಾಧಾನದ ನಿಲುವೇ ನನ್ನನ್ನು ಕೆಲಸಗಳ ಮಧ್ಯೆ ಒಂದಿಷ್ಟು ನಿಲ್ಲುವ ವ್ಯವಧಾನವನ್ನು ಕಲ್ಪಿಸಿಕೊಟ್ಟಿತ್ತು.

'ಹೇಳಿ' ಎಂದೆ...'ನಿಧಾನವಾಗಿ ಯೋಚಿಸಿ, ನಿಮ್ಮ ತಂದೆ, ತಾಯಿ, ಬಂಧು, ಬಳಗ, ಸಹೋದರ-ಸಹೋದರಿಯರ ನಡುವೆ, ಮಕ್ಕಳ ನಡುವೆ ಎಲ್ಲಕ್ಕಿಂತ ಹೆಚ್ಚು ನಿಮ್ಮ ಒಡನಾಟ, ಅದರಲ್ಲೂ ಧೀರ್ಘಕಾಲೀನವಾಗಿರುವ ಸಂಬಂಧ ಎಂದರೆ ಗಂಡ-ಹೆಂಡತಿಯದು ಮಾತ್ರ. ಉದಾಹರಣೆಗೆ ನನ್ನ ಬದುಕಿನಲ್ಲಿ ಒಂದೇ ಮನೆಯಲ್ಲಿ ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ನನ್ನ ಜೊತೆ ಈಕೆ ಬದುಕಿ ಬಂದಿದ್ದಾಳೆ, ನಾವಿಬ್ಬರೂ ಒಬ್ಬರಿಗೊಬ್ಬರಾಗಿದ್ದೇವೆ, ಇಂತಹ ಧೀರ್ಘಕಾಲೀನವಾದ ಪವಿತ್ರ ಸಂಬಂಧ ಹಾಗೋ ಮೈತ್ರಿಯನ್ನು ನೆನೆದುಕೊಂಡರೆ ಯಾವ ನೆಲೆಗಳನ್ನು ಎಲ್ಲಿ ಹೇಗೆ ಕಳೆದುಕೊಳ್ಳುತ್ತೇವೆ, ಕಳೆದುಕೊಳ್ಳಬಹುದು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಈ ಪ್ರಯಾಣದಲ್ಲಿ ನಾವಿಬ್ಬರೂ ಒಂದೇ ಬಂಡಿಯಲ್ಲಿ ಪಯಣಿಸುತ್ತಿರುವಾಗ ದಾರಿಯಲ್ಲಿ ಬರುವ ಅಡೆತಡೆಗಳು ಒಂದಿಷ್ಟು ಅಲ್ಲಲ್ಲಿ ಘರ್ಷಣೆಯನ್ನೊಡ್ಡಬಹುದೇ ವಿನಾ ಅವುಗಳನ್ನು ದೊಡ್ಡದನ್ನಾಗಿ ಮಾಡಿ ಬಂಡಿಯ ಗಾಲಿಗಳನ್ನು ಕೀಳುವುದು ಜಾಣತನವಲ್ಲ. ಬಂಡಿ ನಿರಂತರವಾಗಿ ಮುಂದೆ ನಡೆದು ಅದು ಸೇರಬೇಕಾದ ಗುರಿಯನ್ನು ಸೇರಲಿ, ಆಗ ಎಲ್ಲವೂ ಸುಸುತ್ರವಾಗಿ ನಡೆಯುತ್ತದೆ - ಅದು ಸಹಜವಾದದ್ದು, ಸಹಜವಾದದ್ದೆಂದೂ ತಮ್ಮ ನೆಲೆಗಳನ್ನು ಕಳೆದುಕೊಳ್ಳೋದಿಲ್ಲ.' ಎಂದು ಕಣ್ಣು ಮುಚ್ಚಿ ಒಮ್ಮೆ ಉಸಿರನ್ನು ಜೋರಾಗಿ ಎಳೆದುಕೊಂಡು ಮತ್ತೆ ಕಣ್ಣು ಬಿಟ್ಟು ನನ್ನೆಡೆಗೆ ನೋಡಿದರೇ ವಿನಾ ಮುಂದೇನೂ ಹೇಳಲಿಲ್ಲ. ನಾನು ಅಲ್ಲಿದ್ದು ಸ್ವಲ್ಪ ಯೋಚಿಸಿ, ಅಕೆಯ ಚಾರ್ಟಿನ ಕಡೆಗೊಮ್ಮೆ ಕಣ್ಣು ಹಾಯಿಸಿ ನನ್ನ ಕೆಲಸವನ್ನು ನೋಡಿಕೊಂಡು ಹೋದೆ, ಇಂದಿಗೂ ನನ್ನ ಮನದಲ್ಲಿ ಅವರು ಹೇಳಿದ ಮಾತುಗಳು ಅನುರಣಿಸುತ್ತಲೇ ಇವೆ.

***

'ಸ್ವಲ್ಪ ಸರಿಯಾಗಿ ನೋಡಿ!' ಎಂದು ಬೇಡುವ ಆರ್ತ ಧ್ವನಿಯೊಂದು ಬಂದಾಗಲೇ ನನಗೆ ಈ ಪ್ರಪಂಚಕ್ಕೆ ಬರುವಂತಾಗಿದ್ದು. ಆಕೆಗೆ ತಗುಲಿಕೊಂಡ ವೆಂಟಿಲೇಟರ್ ಅನ್ನು ನರ್ಸ್ ಇನ್ನೂ ನಿಲ್ಲಿಸಿರಲಿಲ್ಲವಾದ್ದರಿಂದ ಅದು ತನ್ನ ಕೆಲಸವನ್ನು ಮುಂದುವರೆಸಿತ್ತು, ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದ್ದು ನನಗೆ ಖಚಿತವಾದರೂ ವೆಂಟಿಲೇಟರ್ ಅನ್ನು ನಿಲ್ಲಿಸುವ ಮೊದಲು ಜೇಬಿನಿಂದ ಸಣ್ಣ ಫ್ಲ್ಯಾಷ್‌ಲೈಟ್ ತೆಗೆದು ಕಣ್ಣುಗಳ ಮೇಲೆ ಬೆಳಗಿಸಿ, ಒಂದು ಇಕೆಜಿಯನ್ನು ತೆಗೆದು, ಉಸಿರನ್ನು ನೋಡಿ, ನಾಡಿ ಹಿಡಿದು ನೋಡಿ 'ದಯವಿಟ್ಟು ಕ್ಷಮಿಸಿ ಸರ್' ಎಂದೆ...ಆವರಿಗೆ ಗೊತ್ತಾಗಿ ಹೋಯಿತು, ಆವರಿಗೆ ತಿಳಿದ ಸತ್ಯದ ಮಗ್ಗುಲು ಬೆಳಕಿಗೆ ಬಂದಿತ್ತು, ಅವರ ಕಣ್ಣುಗಳು ನಿಧಾನವಾಗಿ ಹನಿಗೂಡತೊಡಗಿದವು. ನಾನು ಪಶುವಿನಂತೆ ಅಥವಾ ಯಂತ್ರದಂತೆ ಚಾರ್ಟುಗಳನ್ನು ಬರೆದು ಮುಗಿಸಿ, ಡೆತ್ ಸರ್ಟಿಫಿಕೇಟ್ ಬರೆಯಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ನಾಲ್ಕು ದಶಕಗಳ ಸಂಬಂಧ ಈ ರೀತಿ ನನ್ನ ಕಣ್ಣೆದುರು ಕೊನೆಗೊಂಡುದಕ್ಕೆ ನನಗೆ ಅತೀವ ಬೇಸರವೆನಿಸಿತು. ಇದ್ದಕ್ಕಿದ್ದ ಹಾಗೆ ಎಪ್ಪತ್ತೆರಡು ವರ್ಷದ ಈ ವ್ಯಕ್ತಿ ಎಂಭತ್ತೆರಡು ವರ್ಷವಾದಂತೆ ತೋರತೊಡಗಿದರು, ನಾನು ನಿಧಾನವಾಗಿ ಮುಂದಿನ ಕೋಣೆಗೆ ಹೊರಟೆ.

Sunday, October 08, 2006

ಕೆಲಸ ಮತ್ತು ಒತ್ತಡ

ಹೀಗೇ ಮಾನಸಿಕ ಒತ್ತಡ, ದಿನದಿನಕ್ಕೆ ಹೆಚ್ಚಿದ ಕೆಲಸ, ಒಟ್ಟು ದುಡಿಮೆ, ದುಡಿಮೆಗೆ ತಕ್ಕ ಪ್ರತಿಫಲ (ಹಣ, ಸಂತೋಷ, ಸಂತೃಪ್ತಿ, ಮುಂತಾದ ಚೌಕಟ್ಟುಗಳು) ಇವುಗಳ ಬಗ್ಗೆ ಯೋಚಿಸುವಾಗ ನನ್ನ ಮನಸ್ಸಿಗೆ ಬಂದವನು ಐವನ್. ಅವನ ಲಾಸ್ಟ್ ನೇಮ್ ಏನೋ ನನಗಂತೂ ತಿಳಿಯದು, ಅವನೇ ಇಲ್ಲಿ ನಮ್ಮ ಮನೆಯನ್ನು ಕಟ್ಟಿಕೊಟ್ಟ ಮೇಸ್ತ್ರಿ ಎಂದರೂ ಅಡ್ಡಿ ಇಲ್ಲ. ಈತನ್ನದ್ದು ಬಹಳ ಸರಳ ಜೀವನ, ಹೆಚ್ಚೇನೂ ಓದಿರದವನು, ಕನ್‌ಸ್ಟ್ರಕ್ಷನ್ ಕೆಲಸದಲ್ಲಿ ಪರಿಣಿತ - ಸ್ಪ್ಯಾನಿಷ್, ಪೋರ್ಚುಗೀಸ್ ಭಾಷೆ ಚೆನ್ನಾಗಿ ಬರುತ್ತದೆ ಎಂದು ಅವನೇ ಹೇಳಿಕೊಳ್ಳುತ್ತಾನೆ, ಆದರೆ ಇಂಗ್ಲೀಷ್ ಮಾತ್ರ ಅಷ್ಟಕಷ್ಟೇ.

ಕೆಲವು ವರ್ಷಗಳ ಹಿಂದೆ ನಾವು ಮಾರ್ಕೆಟಿಂಗ್ ತರಗತಿಯಲ್ಲಿದ್ದಾಗ ನಮ್ಮ ಪ್ರೊಫೆಸರ್ ಒಬ್ಬರು ಸ್ಲಮ್‌ಗಳನ್ನು ಯಾವುದೋ ಮಾತಿಗೆ ಉದಾಹರಣೆ ಕೊಡುತ್ತಾ ಅಲ್ಲಿ ಬಡತನದ ಜೊತೆಗೆ ಪ್ರತಿಮನೆಯಲ್ಲಿ ಮಕ್ಕಳೂ ಹೆಚ್ಚು, ಸಂಪನ್ಮೂಲಗಳು ಕಡಿಮೆ ಇದ್ದಲ್ಲಿಯೇ ಅದರ ಅಗತ್ಯ ಹೆಚ್ಚಿರುತ್ತದೆ, ತಿನ್ನಲು ಹೆಚ್ಚು ಬಾಯಿಗಳು ಇದ್ದಲ್ಲಿ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿಯನ್ನು ಉದಾಹರಿಸಿದ್ದರು. ಐವನ್ ಮತ್ತು ಅವನ ಬಳಗದ ಹಿಸ್ಪ್ಯಾನಿಕ್ ಕೆಲಸಗಾರರದ್ದು ಒಂದು ರೀತಿಯ ಸ್ಕ್ವಯರ್ ಜಾಬ್ ಅಂತಾರಲ್ಲ ಹಾಗೆ, ದಿನಕ್ಕೆ ಇಂತಿಷ್ಟು ಘಂಟೆಗೆ ಬಂದು ಇಂತಿಷ್ಟು ಘಂಟೆಗೆ ಹೋದರಾಯಿತು, ಅವರ ಪ್ರಾಜೆಕ್ಟುಗಳಲ್ಲಿ ಸಣ್ಣ ಪುಟ್ಟ ಅಡೆತಡೆ, ವಿಳಂಬಳಿರುತ್ತವೆಯೇ ಹೊರತು ನಮ್ಮ ಐಟಿ ಅಥವಾ ಬಿಸಿನೆಸ್ಸು ಪ್ರಾಜೆಕ್ಟುಗಳ ಹಾಗೆ ಅವರದ್ದು ಪ್ರತಿದಿನ ಒಂದೊಂದು ಅವತಾರವನ್ನು ತಾಳುವುದಿಲ್ಲ. ಕನ್‌ಸ್ಟ್ರಕ್ಷನ್ ಕೆಲಸಗಳು ಒಂದಲ್ಲ ಒಂದು ರೀತಿಯಿಂದ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವಾದ್ದರಿಂದ ಅದಕ್ಕೂ ಚಿಂತಿಸಬೇಕಾದ್ದಿಲ್ಲ, ಐವನ್‌ನ ಹೆಂಡತಿ ಮನೆಯಲ್ಲೇ ಇರುವವಳು, ಮಕ್ಕಳೂ ಮುದ್ದಾಗಿದ್ದಾರೆ, ಸರಿಯಾಗಿ ಶಾಲೆಗೂ ಹೋಗುತ್ತಿದ್ದಾರೆ, ನಾವುಗಳು ತೆಗೆದುಕೊಂಡ ಹಾಗೆ ಐವನ್‌ನೂ ಹೊಸಹೊಸದನೆಲ್ಲ ತೆಗೆದುಕೊಳ್ಳುತ್ತಾನೆ, ಸಂತೋಷದಿಂದಿದ್ದಾನೆ ಎಂತಲೇ ನಾನು ಹೇಳೋದು. ಐವನ್‌ಗೆ ಕಡಿಮೆ ಸಂಬಳ ಬರುತ್ತದೆ ಎಂದು ನೀವು ಅಂದುಕೊಂಡರೆ ಅದು ತಪ್ಪು, ಅವನ ವಾರ್ಷಿಕ ಆದಾಯ ಇಲ್ಲಿನ ಎಷ್ಟೋ ಜನ ಡಾಕ್ಟರುಗಳಿಗಿಂತ ಕಡಿಮೆಯೇನಿಲ್ಲ.

ಈ ದಿನ ನಮಗೆ ಪರಿಚಯವಿರುವ ಚೈನೀಸ್ ಮೂಲದ ಡಾಕ್ಟರ್ ದಂಪತಿಗಳು ಸಿಕ್ಕಿದ್ದರು, ಗಂಡ ಹೆಂಡತಿ ಉತ್ತಮ ಕೆಲಸದಲ್ಲಿ ಇರುವವರು, ಅವರಿಗೆ ಆರು ವರ್ಷದ ಒಬ್ಬ ಮಗನಿದ್ದಾನೆ. ನಮಗೆ ಸ್ವಲ್ಪ ಹತ್ತಿರದವರಾದ್ದರಿಂದ ನಮ್ಮ ಬಳಿ ಅವರಿಗೆ ಮಾತನಾಡಲು ಮುಜುಗರವೇನಿಲ್ಲ. ಮೂರು ವರ್ಷಗಳಿಂದ ಮತ್ತೊಂದು ಮಗುವಾಗಲಿ ಎಂದು ಆಲೋಚಿಸುತ್ತಿದ್ದಾರೆ, ಆದರೆ ಅವರೇ ಹೇಳಿರೋ ಹಾಗೆ 'ಅದಕ್ಕೀಗ ಸಮಯವಿಲ್ಲ!'. ಇದೇನಪ್ಪಾ ನಾನು ಅವರ ಪರ್ಸನಲ್ ವಿಷಯವನ್ನು ಹೀಗೆ ಬಳಸಿಕೊಳ್ಳುತ್ತಿದ್ದೇನೆ ಎಂದುಕೊಳ್ಳಬೇಡಿ, ಈ ಮೇಲಿನ ಪಾತ್ರಗಳು ನಿಜವಲ್ಲ ಎಂದುಕೊಳ್ಳಿ, ಏಕೆಂದರೆ ನನಗೆ ಇಲ್ಲಿ ಎರಡು ಮಾನಸಿಕ ಸ್ಥಿತಿಗಳನ್ನು ನಿರ್ಮಿಸುವುದು ಮುಖ್ಯವೇ ಹೊರತು ಪಾತ್ರಗಳು, ಅವುಗಳ ಹೆಸರುಗಳು ಮುಖ್ಯವಲ್ಲ.

ಮೂವತ್ತರ ಹರೆಯದ ಕೊನೆಯ ದಿನಗಳನ್ನು ಎಣಿಸಿ ನಿಧಾನವಾಗಿ ನಲವತ್ತರ ಗಡಿ ಸಮೀಪಿಸುತ್ತಿರುವ ಚೈನೀಸ್ ಡಾಕ್ಟರ್ ದಂಪತಿಗಳನ್ನು ನೋಡಿದೊಡನೆ ಇವರು ಈ ಸ್ಥಿತಿಗೆ ಬರಲು ಎಷ್ಟೊಂದು ಕಷ್ಟಪಟ್ಟಿದ್ದಾರೆ, ಈಗ ಇಬ್ಬರಿಗೂ ಒಂದು ಒಳ್ಳೆಯ ಕೆಲಸವೆಂಬುದೊಂದಿದ್ದರೂ ಇನ್ನೂ ಅವರ ದುಗುಡ ಕಡಿಮೆಯೇನಾಗಿಲ್ಲ. ಅವರ ಹಳೆಯ ಸಾಲಗಳು ಹಾಗೂ ಇತ್ತೀಚೆಗಷ್ಟೇ ಮಾಡಿದ ಹೊಸ ಸಾಲಗಳು ಇನ್ನೂ ಹಾಗೇ ಇವೆ. ಇನ್ನು ಇಪ್ಪತ್ತು ವರ್ಷಗಳವರೆಗೆ ನಿರಂತರವಾಗಿ ದುಡಿದರೂ ಇನ್ನೂ ಸಾಲದು ಎನ್ನಿಸುವ ಸ್ಥಿತಿ ಇದೆ. ಅವರು ದಿನನಿತ್ಯ ಮಾಡುವ ಕೆಲಸವೂ ಬಹಳ ಮಾನಸಿಕ ಒತ್ತಡವನ್ನು ತರುವಂತಹುದೇ. ಹೀಗಿರುವಲ್ಲಿ ಇನ್ನು ಸಮಾಧಾನ, ಸಾಕು, ಇಷ್ಟಿರಲಿ ಎನ್ನುವ ಮಾತಾದರೂ ಎಲ್ಲಿಂದ ಬಂತು?

ಐವನ್ ಕೂಡಾ ನಾಳೆ ಅಂದರೆ ಸೋಮವಾರ ತನ್ನ ಕೆಲಸಗಳನ್ನು ಆರಂಭಿಸುತ್ತಾನೆ, ಅವನಿಗೆ ಅದರ ಬಗ್ಗೆ ಯಾವುದೇ ಯೋಚನೆ ಇದೆಯೋ ಇಲ್ಲವೋ ಯಾರು ಬಲ್ಲರು? ಅವನ ಗೋಡೆಗೆ ಹೊಡೆದ ಮೊಳೆ ನೇರವಾಗಿ ಹೋಗದಿದ್ದರೆ ಅದನ್ನು ಕಿತ್ತು ಬಿಸಾಡಿ ಅದೇ ಜಾಗದಲ್ಲಿ ಮತ್ತೊಂದನ್ನು ಹೊಡೆಯುವ ಸ್ವಾತಂತ್ರ್ಯವಂತೂ ಅವನಿಗೆ ಇದೆ. ಅವನು ಕಟ್ಟುಕೊಟ್ಟ ಮನೆಗಳು, ಗೋಡೆಗಳು ಬೀಳೋದಿಲ್ಲ, ಜನರು ಯಾರೂ ಅವನನ್ನು ಕೋರ್ಟು ಮೆಟ್ಟಿಲು ಹತ್ತಿಸೋದಿಲ್ಲ.

ಹಾಗಂತ ಬದುಕಲ್ಲಿ ಎಲ್ಲರೂ ಕನ್‌ಸ್ಟ್ರಕ್ಷನ್ ಕೆಲಸಗಾರರಾಗಲು ಆಗುತ್ತದೆಯೇ? ಎಲ್ಲರ ಕೆಲಸದಲ್ಲೂ ಅದರದ್ದೇ ಆದ ಭಿನ್ನ ಸವಾಲುಗಳಿವೆ. ಒಂದು ಕೆಲಸವನ್ನು ಮತ್ತೊಂದಕ್ಕೆ ಹಾಗೆ ತುಲನೆ ಮಾಡಲಾಗದು. ಆದರೆ ದಿನದ ಕೊನೆಯಲ್ಲಿ ಮಾನಸಿಕ ಒತ್ತಡಗಳನ್ನು ಕೆಲಸ ಮಾಡುವ ಪ್ರತಿಯೊಬ್ಬರೂ ಮನೆಗೆ ಹೊತ್ತುಕೊಂಡೇನೂ ಹೋಗುವುದಿಲ್ಲ. ದಿನದಲ್ಲಿ ಇರೋದು ಇಂತಿಷ್ಟೇ ಘಂಟೆಗಳು ಎಂದು ಗೊತ್ತಿದ್ದೂ ನಮ್ಮನ್ನೇಕೆ ನಾವು ಎಲ್ಲ ಸಾಲುಗಳಲ್ಲೂ ದೂಡಿಕೊಳ್ಳುತ್ತೇವೆ, ಗೆಲ್ಲುವ ಗೆಲ್ಲಬಲ್ಲ ಪ್ರತಿಯೊಂದು ಆಟಗಳಲ್ಲೂ ನಮ್ಮನ್ನೇಕೆ ನಾವು ಹೂಡಿಕೊಳ್ಳುತ್ತೇವೆ? ನಮ್ಮಿಂದ ನಾವೇ ಯಾವಾಗಲೂ ಹೆಚ್ಚಿನದನ್ನೇಕೆ ನಿರೀಕ್ಷಿಸುತ್ತೇವೆ? ಪ್ರತಿಯೊಂದರಲ್ಲೂ ಪ್ರತಿಭಾವಂತರಾಗಲು ನಾವೇನು ಸಿನಿಮಾ ಹೀರೋಗಳೇ, ನಮ್ಮ ಇತಿಮಿತಿಯನ್ನು ನಾವೇಕೆ ಸುಲಭವಾಗಿ ಒಪ್ಪಿಕೊಳ್ಳೋದಿಲ್ಲ, ಮೂಗಿನ ಮಟ್ಟಕ್ಕಿಂತ ಹೆಚ್ಚಿನ ನೀರಿನಲ್ಲೇ ಮುಳುಗಿ ನಾವು ನಡೆದಾಡುವುದಾದರೂ ಏತಕ್ಕೆ?

ಮಾನಸಿಕ ಒತ್ತಡಗಳನ್ನು ಅನುಭವಿಸಿ ತಾವು ಹಲವಾರು ಸಂಘರ್ಷಗಳಿಗೊಳಗಾಗುವ ಮಂದಿ ತಮ್ಮ ಕುಟುಂಬದ ಇತರರನ್ನೂ ನಿಧಾನವಾಗಿ ಕಂಪದ ಭೂಮಿಯಲ್ಲಿ ಎಳೆದುಕೊಂಡು ಎಲ್ಲರೂ ತಮ್ಮ ಹಾಗೇ ಅನುಭವಿಸುವಂತೆ ಮಾಡುತ್ತಾರೆ. ಇಂದಿನ ಕಡಿಮೆ ಸಮಯದಲ್ಲಿ ಹೆಚ್ಚನ್ನು ಮಾಡುವ ನಿರೀಕ್ಷೆಯೇನೋ ಸರಿ, ಅದೇನು ಹೆಚ್ಚು ಮಾಡುವುದಿದೆಯೋ ಅಷ್ಟನ್ನು ಮಾಡಿ ಮನೆಗೆ ಬಂದು ಮಕ್ಕಳ ಜೊತೆ ಒಂದಿಷ್ಟು ಸಮಯವನ್ನು ಕಳೆದರೆ ದೊಡ್ಡ ಮನುಷ್ಯರು ಸಣ್ಣವರೇನೂ ಆಗೋದಿಲ್ಲ. ಇರೋ ಒಬ್ಬ ಮಗನಿಗೆ ವಾರದಲ್ಲಿ ಕೇವಲ ಒಂದು ದಿನ ಮೀಸಲಿಡುವ ಚೈನೀಸ್ ವೈದ್ಯ ದಂಪತಿಗಳಿಗೆ ಹೇಳಿದೆ - 'ನಿಮ್ಮ ಚೈನಾ ಪರಂಪರೆಯಂತೆ ನೀವೆಲ್ಲಿದ್ದರೂ ನಿಮಗೆ ಒಂದೇ ಮಗು!' ಎಂದು, ಅವರಿಗೆ ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ, ಇದ್ದೊಬ್ಬ ಮಗನಿಗೆ ವಾರಕ್ಕೊಂದು ದಿನ ಸಮಯವನ್ನು ಮೀಸಲಿಡುವವರಿಗೆ ಇನ್ನೊಂದು ಮಗು ಬೇಕೇ ಎಂದೂ ನನ್ನಷ್ಟಕ್ಕೆ ನಾನೇ ಕೇಳಿಕೊಂಡೆ.

ಹಾಗಂದ ಮಟ್ಟಿಗೆ ನನಗೆ ಐವನ್ ಮಹಾ ತಂದೆಯಂತೇನೂ ಕಾಣೋದಿಲ್ಲ, ಅವನ ಮಕ್ಕಳು ಬೇಡುವ ಆಲ್ಜೀಬ್ರಾದ ಸಮಸ್ಯೆಯನ್ನು ನಿವಾರಿಸಲು ಅವನಿಗೆ ಬರೋದಿಲ್ಲ, ಹೋಮ್‌ವರ್ಕ್ ಮಾಡೋದರಲ್ಲಿ ಆ ಮಕ್ಕಳು ಹಿಂದೋ ಮುಂದೋ ಒಂದೂ ಗೊತ್ತಿಲ್ಲ, ಆದರೆ ಐವನ್ ಅದಕ್ಕೆಲ್ಲ ತಲೆ ತೂರಿಸುತ್ತಾನೆ ಎಂದೇನೂ ನನಗನ್ನಿಸುವುದಿಲ್ಲ. ಆದರೆ ಆತ ಪ್ರತಿದಿನವು ಮನೆಗೆ "ನಿಜ"ವಾಗಿಯೂ ಹೋಗುತ್ತಾನೆ, ತನ್ನ ಮಕ್ಕಳ ಜೊತೆ ಸಮಯವನ್ನು ಕಳೆಯುತ್ತಾನೆ. ತಂದೆಯಿಂದ ಮನೆಕಟ್ಟುವ ವಿದ್ಯೆಯನ್ನು ಬಳುವಳಿ ಪಡೆದ ಮಕ್ಕಳು ನಾಳೆ ಅಪ್ಪನ ಹಾಗೇ ಆಗಬಹುದು ಅಥವಾ ಮತ್ತಿನೇನೋ ಆಗಬಹುದು, ಆದರೆ ಈ ಡಾಕ್ಟರ್ ಮಗ ಏನಾಗುತ್ತಾನೋ, ಬಿಡುತ್ತಾನೋ ಎನ್ನುವುದು ನನ್ನ ಹೆದರಿಕೆ ಕೂಡಾ. ತಂದೆ-ತಾಯಿಯರಂತೆ ಅವನೂ ಡಾಕ್ಟರ್ ಆಗಿ ನಾಳೆ ಅವನೂ ಅವನ ಅಪ್ಪನ ಹಾಗೆ ವೀಕೆಂಡ್ ತಂದೆ ಆಗಿಬಿಟ್ಟರೆ ಎಂದು ನನ್ನ ಹೆದರಿಕೆ ಇನ್ನೂ ಬಲವಾಗತೊಡಗುತ್ತದೆ.

ನಾನೇನಾಗುತ್ತೇನೋ ಬಿಡುತ್ತೇನೋ, ನನ್ನ ಮಾನಸಿಕ ಒತ್ತಡಗಳನ್ನಂತೂ ಕಡಿಮೆ ಮಾಡಿಕೊಳ್ಳಬೇಕು, ಆಫೀಸಿನ ಕೆಲಸಗಳನ್ನು ಮನೆಗೆ ತರಬಾರದು, ವೀಕೆಂಡಿಗೆ ಮಾತ್ರ ಪೋಷಕನಾಗಬಾರದು ಎಂದೆಲ್ಲಾ ಏನೇನೋ ಮುಂದಾಲೋಚಿಸಿಕೊಳ್ಳುವ ಪರಿ ನನ್ನ ಮಾನಸಿಕ ಒತ್ತಡವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ!

Friday, October 06, 2006

ಔಟ್‌ಸೋರ್‌ಸಿಂಗ್ ಹಾಗೂ ಪರಕೀಯತೆ

೨೦೦೦ ನೇ ಇಸವಿ, ಯಾವುದೋ ಒಂದು ಶುಭ್ರವಾದ ದಿನದ ಮುಂಜಾನೆ, ಆಗಿನ್ನೂ ವ್ಯಾಪಾರ ಕೇಂದ್ರಗಳು ಉರುಳಿರಲಿಲ್ಲ - ಜನಗಳು ಇನ್ನೂ ನ್ಯಾಷನಾಲಿಟಿ, ಧರ್ಮಗಳ ಬಗ್ಗೆ ಇಲ್ಲಿ ಇನ್ನೂ ಹೆದರದೇ ಮಾತನಾಡುತ್ತಿದ್ದಂತಹ ಕಾಲ - ನನ್ನ ಟೀಮ್ ಮೆಂಬರ್ ಒಬ್ಬ (ವಯಸ್ಸಿನಲ್ಲಿ ನನಗಿಂತಲೂ ಬಲು ಹಿರಿಯ) ಹೀಗೇ ನನ್ನ ಜೊತೆ ಔಟ್ ಸೋರ್ಸಿಂಗ್ ವಿಷಯವನ್ನು ಕುರಿತು ವಾದ ಮಾಡಲು ಶುರುಮಾಡಿಕೊಂಡ. ಮೊದಮೊದಲು ವಿಚಾರ ವಿನಿಮಯ ಎಂದುಕೊಂಡು ಶುರುವಾದ ಮಾತು ಕೊನೆಯಲ್ಲಿ ತಾರಕ್ಕೇರಿತು, ನನಗೋ ಆದಷ್ಟು ಬೇಗ ಮಾತು ಮುಗಿಸಿ ಕೆಲಸದ ಕಡೆಗೆ ಗಮನ ಕೊಡುವ ಆಲೋಚನೆ, ಅವನಾದರೋ ನನ್ನನ್ನು ಎಷ್ಟು ಸಾಧ್ಯವೋ ಅಷ್ಟು ಕೆರಳಿಸಬೇಕು ಎಂದು ಪಣತೊಟ್ಟಂತಿತ್ತು.

ಆಗಿನ್ನೂ ಬುಷ್ ಗೆದ್ದಿರಲಿಲ್ಲ, ಚುನಾವಣಾ ಪ್ರಣಾಳಿಕೆಗಳಲ್ಲಿ ಅಮೇರಿಕನ್ನರು ಪದೇಪದೇ ಕೆಲಸಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಹಲವಾರು ಸಮೀಕ್ಷೆ, ಸುದ್ದಿಗಳು ಬಿತ್ತರವಾಗುತ್ತಿತ್ತು. ನನ್ನಂತಹ ಭಾರತೀಯರನ್ನು ನೋಡಿದರೆ, ಅದರಲ್ಲೂ ಮಾಹಿತಿ ತಂತ್ರಜ್ಜಾನದ ತುಂಬೆಲ್ಲ ಹಬ್ಬಿಕೊಂಡ ನಮ್ಮವರನ್ನು ಕಂಡು, ಹೆಚ್ಚು ಹೆಚ್ಚು ಕೆಲಸಗಳು ಭಾರತದತ್ತ ವಾಲುತ್ತಿರುವುದನ್ನು ಗಮನಿಸಿ ಕೆಲವರಿಗೆ ಸಿಟ್ಟು ಬಂದಿರಬಹುದು. ಅದನ್ನೆಲ್ಲ ತೆಗೆದು ನನ್ನ ಮೇಲೆ ತೀರಿಸಿಕೊಳ್ಳೋಕೆ ಬಂದ್ರೆ ನಾನಾದ್ರೂ ಏನ್ ಮಾಡಲಿ? ಇವರಿಗೆಲ್ಲಾ ತಮ್ಮ-ತಮ್ಮ ಕೆಲಸಗಳನ್ನ ಭಾರತಕ್ಕೆ ಕಳಿಸಿ ಅಂತ ಹೇಳಿದೋನು ನಾನಾ?

ಸರಿ, ನಮ್ಮ ಮಾತು ಯಾಕೆ ಭಾರತಕ್ಕೆ ಕೆಲಸಗಳು ಹೆಚ್ಚು ಹೋಗ್ತಾವೆ ಅಂತ ಬಂತು, ನನ್ನ ಟೀಮ್ ಮೆಂಬರ್ ಪ್ರಕಾರ ಅದಕ್ಕೆ ಒಂದೇ ಒಂದು ಕಾರಣ ಅಂದ್ರೆ ಇಂಡಿಯನ್ ಲೇಬರ್ ಬಹಳ ಚೀಪ್. ಆದರೆ ನನ್ನ ವಾದ ಹಣ ಕಡಿಮೆ ಅನ್ನೋ ಮಾತು ಸರಿ, ಅದರ ಜೊತೆಯಲ್ಲಿ ಇಂಗ್ಲೀಷ್ ಮಾತನಾಡೋ ಇಂಜಿನಿಯರುಗಳು, ಟೈಮ್ ಡಿಫರೆನ್ಸ್ ಇರೋದರಿಂದ ಆಗುವ ಅನುಕೂಲಗಳು ಜೊತೆಯಲ್ಲಿ ಒಳ್ಳೆಯ ಪ್ರಾಸೆಸ್ ಅನ್ನು ಅಳವಡಿಸಿಕೊಂಡು ಈಗಾಗಲೇ ಈ ರೀತಿಯ ಕೆಲಸಗಳಲ್ಲಿ ನುರಿತ ಅನುಭವವಿರುವ ಕಂಪನಿಗಳು, ಇತ್ಯಾದಿ. ಆದರೆ ಅವನು ಒಪ್ಪಲೊಲ್ಲ. ನಾನೆಂದೆ ಹಾಗಾದರೆ ಬರೀ ಹಣ ಕಡಿಮೆ ಅನ್ನೋ ಮಾತಿದ್ರೆ, ಭಾರತಕ್ಕಿಂತ ಕಡಿಮೆ ಹಣದಲ್ಲಿ ಕೆಲಸ ಮಾಡೋ ದೇಶದವರಿಗೆ ಇಲ್ಲಿನ ಕೆಲಸಗಳನ್ನು ಕಳಿಸಲಿ ಎಂದರೆ ಅವನ ಬಳಿ ಉತ್ತರವಿಲ್ಲ. ಅಂತೂ ಇಂತೂ ಅವನಿಗೆ ಸಮಾಧಾನ ಮಾಡಿ ಇನ್ನೇನು ಜಗಳವಾಡೋದನ್ನು ತಪ್ಪಿಸಿಕೊಳ್ಳಬೇಕಾದರೆ ಸಾಕು ಸಾಕಾಗಿ ಹೋಯಿತು.

ಕೊನೆಯಲ್ಲಿ ಒಂದು ಮಾತು ಹೇಳ್ದೆ - 'ಜಪಾನೀಸ್ ಕಾರ್ ಓಡುಸ್‌ಕೊಂಡು, ಚೈನೀಸ್ ಮೇಕ್ ಶೂಸ್ ಹಾಕ್ಕೊಂಡು, ಎಲ್ಲೆಲ್ಲೋ ಬೆಳದ ಕಾಳು, ಕಡಿ ತಿನ್ನೋರಿಗೆ ಕಾಲ್ ಸೆಂಟರ್‌ಗಳು ಎಲ್ಲಿದ್ದರೇನು, ಟೆಕ್ನಾಲಜಿ ಎಲ್ಲಿಂದ ಬಂದರೇನು?' ಇದಕ್ಕೆ ಇವತ್ತಿನವರೆಗೆ ಅವನಿಂದ ಉತ್ತರವಿಲ್ಲ.

***

ಈ ಮಾತು ಯಾಕ್ ನೆನಪಾಯ್ತು ಅಂದ್ರೆ, ನಮ್ ಆಫೀಸ್ನಲ್ಲೂ ಸಹ ಬೇಕಾದಷ್ಟು ಕೆಲಸಗಳನ್ನು ಫಿಲಿಪೀನ್ಸ್ ಮೊದಲಾದ ದೇಶಗಳಿಗೆ ಔಟ್ ಸೋರ್ಸ್ ಮಾಡಿದ್ದಾರೆ, ಆದ್ರೆ ಭಾರತದಲ್ಲಿ ನಮ್ಮ ಕಂಪನಿಯದೇ ಒಂದೆರೆಡು ಬ್ರಾಂಚ್‌ಗಳನ್ನು ತೆಗೆದು ಅಲ್ಲಿಂದ ಕೆಲಸಗಳನ್ನು ಮಾಡಿಸಿಕೊಳ್ಳೋದನ್ನ ಇನ್ ಸೋರ್ಸಿಂಗ್ ಅಂತ ಕರೆದುಕೊಂಡರೂ ಹೆಚ್ಚೂ ಕಡಿಮೆ ಇದೂ ಔಟ್ ಸೋರ್ಸಿಂಗ್ ಥರಾನೆ. ಇಲ್ಲಿ ನಮ್ ಐಟಿ ಕೆಲಸಗಾರರಿಗೆ, ಮ್ಯಾನೇಜರುಗಳಿಗೆ ವಿಪರೀತ ಕೆಲಸ, ಹಗಲು ಹೊತ್ತು ಇಲ್ಲಿನವರ ಜೊತೆ ಗೇಯಬೇಕು, ರಾತ್ರಿ ಅಲ್ಲಿನವರ ಜೊತೆ ಏಗಬೇಕು. ಹೆಚ್ಚೂ ಕಡಿಮೆ ದಿನಕ್ಕೆ ಏನಿಲ್ಲ ಅಂದ್ರೂ ಹದಿನೈದು ಘಂಟೆ ಕೆಲಸ ಮಾಡೋರುನ್ನ (ಅದರಲ್ಲೂ ವಾರಕ್ಕೆ ಕಡಿಮೆ ಅಂದ್ರೆ ಆರು ದಿವಸ) ನೋಡಿದ್ರೆ ಬಹಳ ಬೇಜಾರಾಗುತ್ತೆ. ಇಲ್ಲಿ ಕುಳಿತುಗೊಂಡು ಅಲ್ಲಿನವರಿಂದ ಕೆಲಸ ತೆಗೆಯೋದು, ಇಲ್ಲಿನ ರಿಕ್ವೈರುಮೆಂಟುಗಳನ್ನು ವಿವರಿಸಿ ಅಲ್ಲಿಂದ ಅದಕ್ಕೆ ತಕ್ಕ ಕೆಲಸ ಮಾಡಿಸಿ, ಅದನ್ನು ವೆರಿಫೈ ಮಾಡಿ ಇಲ್ಲಿನವರಿಗೆ ಪ್ರೆಸೆಂಟ್ ಮಾಡಬೇಕಾದರೆ ಅದೇನು ಕಡಿಮೆ ಕೆಲಸವಲ್ಲ, ಜವಾಬ್ದಾರಿಯೆಲ್ಲ ಇವರ ತಲೆಯ ಮೇಲೇ ಬೀಳೋದು.

ಅಲ್ಲೋ, ಕೆಲಸಗಾರರು ಬಹಳ ಬುದ್ಧಿವಂತರು, ತುಂಬಾ ಸ್ಮಾರ್ಟ್ ಹುಡುಗ/ಹುಡುಗಿಯರು ತಮ್ಮ ಎಲ್ಲಾ ಕನಸುಗಳನ್ನು ಹೊತ್ತುಕೊಂಡು ಈ ದಿನ ಕೆಲಸಕ್ಕೆ ಸೇರಿದರೆ ಇನ್ನೊಂದಿಷ್ಟು ತಿಂಗಳಲ್ಲಿ ಕಂಪನಿ ಬಿಟ್ಟು ಹೋಗೋ ಪರಿಸ್ಥಿತಿ. ಹೀಗೆ ಟೀಮಿಗೆ ಸೇರುವವರ, ಬಿಡುವವರ ಸಂಖ್ಯೆ ಬಹಳ ಹೆಚ್ಚು. ಇಂತಹ ವೇರಿಯೇಷನ್ನುಗಳ ನಡುವೆ ಟೆಕ್ನಾಲಜಿ ಜೊತೆಗೆ ಬಿಸಿನ್ನೆಸ್ಸನ್ನೂ ವಿವರಿಸಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಬಹಳ ಜಾಣತನ ಬೇಕಾಗುತ್ತದೆ. ಇದು ಬಹಳ ಮಾನಸಿಕ ಒತ್ತಡವನ್ನು ತರುವ ಕೆಲಸ ಕೂಡಾ. ಇವತ್ತಿಗೂ ಅಲ್ಲಿನ ಎಷ್ಟೋ ಕಂಪನಿಗಳಲ್ಲಿ ಕೆಲಸಗಾರರ ಅನುಭವವನ್ನು ತಿಂಗಳುಗಳಲ್ಲಿ ಅಳೆಯೋದನ್ನು ನಾವು ನೋಡಬಹುದು.

ಮೊನ್ನೆ ನಾವು ಯಾವುದೋ ಮೀಟಿಂಗ್‌ನಲ್ಲಿ ಮಾತನಾಡುತ್ತಾ ಇರಬೇಕಾದರೆ ನಮ್ಮವರಲ್ಲಿ ಒಬ್ಬರು 'ಐಟಿ ಗುಂಪಿನವರಿಗೆ ಬಿಸಿನೆಸ್ ರಿಕ್ವೈರ್‌ಮೆಂಟುಗಳು ಅರ್ಥವಾಗೋದೇ ಇಲ್ಲ, ಎಷ್ಟು ಸರ್ತಿ ಹೇಳಿದರೂ ಅಷ್ಟೇ, ಪ್ರಯೋಜನವಿಲ್ಲ!' ಎಂದು ಒಂದು ಬ್ಲಾಂಕೆಟ್ ಹೇಳಿಕೆ ಎಸೆದರು. ನಮ್ಮ ಐಟಿ ಗುಂಪಿನಲ್ಲಿ ಬಹಳಷ್ಟು ಜನ ಭಾರತೀಯರೇ ಇರೋದು. ಆ ಮೀಟಿಂಗ್ ರೂಮಿನಲ್ಲಿ ನಾನೊಬ್ಬನೇ ಭಾರತೀಯನಿದ್ದವನು, ನನಗೆ ಈ ಹೇಳಿಕೆ ಬಹಳ ಮುಜುಗರವನ್ನುಂಟು ಮಾಡಿತು. ರಾತ್ರಿ-ಹಗಲು ಕಷ್ಟ ಪಟ್ಟು ದುಡಿದ ಮೇಲೂ ನಮ್ಮವರು ಇಂತಹ ಹೇಳಿಕೆಗಳನ್ನು ಕೇಳಬೇಕಲ್ಲ ಎಂದು ಬೇಸರವಾಯಿತು. ತಮ್ಮ ಕಂಪ್ಯೂಟರ್ ಡೆಸ್ಕ್‌ಟಾಪ್ ಮೇಲೆ ಒಂದು ಐಕಾನ್ ಅನ್ನು ಎರಡು ಅಂಗುಲ ಈಚೆಗೆ ಸರಿಸಿದರೂ ಮೈ ಮೇಲೆ ಚೇಳು ಬಿದ್ದಂತೆ ಆಡುವ ಇವರುಗಳು ಭಾರತದಲ್ಲಿ ಇದೀಗ ತಾನೆ ಪದವಿ ಮುಗಿಸಿ, ಅಥವಾ ಇತ್ತೀಚೆಗಷ್ಟೇ ಕೆಲಸ ಆರಂಭಿಸಿದ ಐಟಿ ಇಂಜಿನಿಯರುಗಳಿಗೆ ಇಲ್ಲಿನ ಯಾವುದೋ ಒಂದು ಪ್ರಾಡಕ್ಟ್ ವಿವರಗಳು ಗೊತ್ತಾಗಲಿಲ್ಲವೆಂದಾಕ್ಷಣ ಅದನ್ನು ಜನರೈಲೇಷನ್ ಮಾಡುವುದು ಎಷ್ಟರಮಟ್ಟಿಗೆ ಸರಿ? ನಮ್ಮ ಪ್ರಾಡಕ್ಟ್‌ಗಳ ಕಾಂಪ್ಲೆಕ್ಸಿಟಿ ಇಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೇ ಇನ್ನೂ ಸಂಪೂರ್ಣವಾಗಿ ತಿಳಿದಿರೋದಿಲ್ಲ, ಇನ್ನು ಹತ್ತು ತಿಂಗಳು ಮದ್ರಾಸಿನಲ್ಲಿ ಕೂತು ಇಲ್ಲಿಂದ ಫೋನು, ಇ-ಮೇಲುಗಳಲ್ಲಿ ಪಡೆದ ರಿಕೈರ್‌ಮೆಂಟುಗಳನ್ನು ಅಲ್ಲಿ ಕೋಡ್ ಡೆವಲಪ್ ಮಾಡಿದವರಿಗೆ ಹೇಗೆ ಗೊತ್ತಾದೀತು? ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಇಲ್ಲಿನ ಪೋಸ್ಟ್ ಝಿಪ್ ಕೋಡ್ ನಲ್ಲಿ ೫+೪ ಸಂಖ್ಯೆಗಳಿರುತ್ತವೆ ಎಂದು ಗೊತ್ತಿರಲಿಲ್ಲ, ಇನ್ನು ಇಲ್ಲಿನ ಪ್ರಾಡಕ್ಟ್‌ಗಳು, ಇವರ ಆಕ್ಸೆಂಟುಗಳನ್ನು ಅರ್ಥ ಮಾಡಿಕೊಳ್ಳಲು ಎಷ್ಟೋ ತಿಂಗಳು ಬೇಕಾಯಿತು, ಅದೂ ಇಲ್ಲಿಗೆ ಬಂದು ಹಲವಾರು ಮುಖತಃ ಭೇಟಿಗಳನ್ನು ಮಾಡಿದ ಮೇಲೆ, ಹಾಗಿರುವಾಗ ಬಿಸಿನೆಸ್ ರಿಕ್ವೈರ್‌ಮೆಂಟ್ ಅನ್ನು ತಿಳಿದುಕೊಳ್ಳುವಲ್ಲಿ, ಅದನ್ನು ಬಿಡಿಸಿ ಹೇಳುವಲ್ಲಿ ಇಲ್ಲಿ ಕೆಲಸ ಮಾಡುವ ಮಿಡ್ ಲೆವಲ್ ಮ್ಯಾನೇಜರುಗಳ ಮೇಲೆ ಒತ್ತಡ ಹೆಚ್ಚಿದೆ ಎಂದೇ ಅರ್ಥವಲ್ಲವೆ?

ಚೈನಾದಲ್ಲಿ ಕುಳಿತು, ಯಾವುದೋ ಒಂದು 'ಸಾಕ್ಸ್ ಟೌನ್'ನಲ್ಲಿ ದಿನಕ್ಕೆ ಮಿಲಿಯನ್ನ್ ಗಟ್ಟಲೆ ಸಾಕ್ಸ್ ಹೊರತರುವಂತಹ ರಿಪೀಟೆಬಲ್ ಪ್ರಾಸೆಸ್ಸುಗಳಿಗೂ, ಪ್ರತಿದಿನ ಬದಲಾಗುವ ರಿಕ್ವೈರ್‌ಮೆಂಟುಗಳನ್ನು ಮನನ ಮಾಡಿಕೊಂಡು, ಅದನ್ನು ಅಭಿವೃದ್ಧಿ ಪಡೆಸಿ, ಪರೀಕ್ಷಿಸಿ, ಇಂಟಿಗ್ರೇಟ್ ಮಾಡಿ, ಇಲ್ಲಿಗೆ ಕಳಿಸಿ, ಮತ್ತೆ ಇಲ್ಲಿನ ಫೀಡ್‌ಬ್ಯಾಕ್ ಪ್ರಕಾರ ಅದನ್ನು ಬದಲಾಯಿಸಿ, ತಿದ್ದಿ, ಪರೀಕ್ಷಿಸಿ, ಇಂಟಿಗ್ರೇಟ್ ಮಾಡಿ ಕಳಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಜೊತೆಯಲ್ಲಿ ಈ ದಿನ ಇದ್ದಿರುವ ನಿಮ್ಮ ಚೀಫ್ ಪ್ರೋಗ್ರಾಮರ್ ನಾಳೆ ಮತ್ಯಾವುದೋ ಕಂಪನಿ/ಕೆಲಸ/ದೇಶವನ್ನು ಹುಡುಕಿಕೊಂಡು ಹೋಗುವ ಹೆದರಿಕೆಯೂ ಇದೆ. ಈ ನಿಟ್ಟಿನಲ್ಲಿ ನನ್ನಂತಹ ಕೆಲಸಗಾರರ ಮೇಲೆ ಔಟ್‌ಸೋರ್ಸಿಂಗ್ ತರುವ ಒತ್ತಡ ಅಪಾರವಾದುದು, ಕಂಪನಿಗಳಿಗೆ ಗ್ಲೋಬಲೈಜೇಷನ್ ಅಳತೆಗೋಲಿನಲ್ಲಿ ವಿಶ್ವಮಾನ್ಯತೆ ಸಿಕ್ಕರೂ, ಕೆಲಸಗಾರರಿಗೆ ಇದ್ದುದರಲ್ಲಿ ಹೊಂದಿಕೊಂಡು ದುಡಿಯುವ, ಎಷ್ಟು ದುಡಿದರೂ ಕೆಲಸ ಮುಗಿಯದ, ಕೆಲಸ ಮುಗಿದರೂ ಉತ್ಕೃಷ್ಟತೆ ಇರದಿರುವ, ಉತ್ಕ್ಟುಷ್ಟತೆ ಇದ್ದರೂ ಉತ್ತಮ ಅಭಿರುಚಿ/ಅಭಿಪ್ರಾಯವಿರದ ಮೇಲಿನವರು ಆಡುವ ಚುಚ್ಚು ಮಾತುಗಳು ಬಹಳ ದುಬಾರಿಯೆಂದೆನಿಸುತ್ತವೆ.

ಇಂತಹ ಮ್ಲಾನ ಸನ್ನಿವೇಶಗಳಲ್ಲಿ ನನ್ನ ಪರಕೀಯ ಕಂದಕಗಳು ಇನ್ನೂ ವಿಸ್ತಾರವಾಗತೊಡಗುತ್ತವೆ.

Wednesday, October 04, 2006

ಎಲ್ರೂ ಹೇಳೋರಾದ್ರೆ ಕೇಳೋರ್ ಯಾರು?

ಇತ್ತೀಚೆಗಂತೂ ಯಾರೂ ಯಾರ ಮಾತನ್ನೂ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ, ಈ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಜೀವಾ ತೇದು-ತೇದೂ ಎಷ್ಟು ಸರ್ತಿ ಹೇಳಿದ್ರೂ ಅಷ್ಟೇ ಅನ್ನಿಸಿ ಒಂದ್ಸರ್ತಿ 'ತುಥ್' ಅಂತ ಗಟ್ಟಿಯಾಗೇ ಹೇಳಿಕೊಂಡಿದ್ದೇನೋ ನಿಜ. ಈ active listening ಅನ್ನೋದಕ್ಕೇನೋ ಬಹುವಾಗಿ ವ್ಯಾಖ್ಯೆಗಳನ್ನು ಕೊಡ್ತಾರೆ, ಆದ್ರೆ ಯಾರ ಮಾತನ್ನೂ ಯಾರೂ ಕೇಳಿಸ್‌ಕೊಳ್ಳೋದೇ ಇಲ್ಲ, ಎಲ್ರೂ ಇನ್ನೊಬ್ರು ಮಾತನಾಡ್ತಿರಬೇಕಾದ್ರೆ, ಅವರ ಮನಸ್ಸಿನಲ್ಲಿ ಹೇಗೆ ತಮ್ಮ ಮಾತುಗಳನ್ನು ಆರಂಭಿಸಬೇಕು ಅಂತ ಸರಣಿ ಹೆಣೀತಾ ಇರ್ತಾರೇ ವಿನಾ ಮನಸ್ಸು ಕೊಟ್ಟು ಕಿವಿಕೊಟ್ಟು ಯಾರೂ ಇನ್ನೊಬ್ರ ಮಾತನ್ನ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ.

'ನಮಗೆ ಎರಡು ಕಿವಿಗಳಿರೋದ್ರಿಂದ ಹೆಚ್ಚಿಗೆ ಕೇಳಿಕೊಳ್ಳಬೇಕು' ಅನ್ನೋ ಅನುಪಾತದ ಮಾತಿಗಂತೂ ಹೋಗೋದೇ ಬೇಡ, ಎಲ್ರಿಗೂ ಮಾತನ್ನಾಡಬೇಕು ಅನ್ನೋ ತವಕಾ, ತಮ್ಮ ತಮ್ಮ ಸರದಿ ಬರೋವಲ್ಲೀವರೆಗೆ ಕಾಯಬೇಕು ಅನ್ನೋ ವ್ಯವಧಾನವಿಲ್ಲದಾಗ ಹೀಗಾಗುತ್ತೇನೋ ಅನ್ನಿಸುತ್ತೆ. ನಮ್ ಸುತ್ತಮುತ್ತಲಿನಲ್ಲಿ ಎಲ್ರೂ ಮಾತನಾಡಬೇಕು ಅಂತ ಹಾತೊರೆಯೋಕೆ ಏನಾದ್ರೂ ಒಂದು ಕಾರಣ ಅಂತ ಇರಬೇಕು - ಮಾತನಾಡೋದು ಅಂದ್ರೆ ಅಭಿವ್ಯಕ್ತಿಗೊಳಿಸೋದು, ಇಲ್ಲಂತೂ ಎಲ್ಲವನ್ನೂ ಶಬ್ದ ಮಾಡಿಯೇ ಹೇಳಬೇಕು, ಸನ್ನೆ-ಸೂಕ್ಷ್ಮ ಒಂದೂ ಇಲ್ಲ. ಎಷ್ಟೋ ಸರ್ತಿ ನಮ್ ಹೈ ಸ್ಕೂಲು ಮೇಷ್ಟ್ರುಗಳು ನಮ್ಮನ್ನ ಹೆದರಿಸ್ತಾ ಇರ್ಲಿಲ್ಲ್ವಾ ಕಣ್ಣಲ್ಲೇ? ಒಮ್ಮೆ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿಯೋ, ಅಥವಾ ಕಣ್ಣನ್ನು ಕಿರಿದಾಗಿ ಮಾಡಿಯೋ ಅವರ ಸಿಟ್ಟನ್ನ ಪ್ರದರ್ಶಿಸಿಸ್ತಾ ಇರ್ಲಿಲ್ಲ್ವಾ? ಅವೆಲ್ಲ ಇಲ್ಲಿ ನಡೆಯೋಲ್ವೋ ಏನೋ ಯಾರಿಗ್ಗೊತ್ತು?

ಈ ದೇಶದಲ್ಲಂತೂ ನಾನು ಒಬ್ರೂ ಮೂಕರನ್ನ ನೋಡಲಿಲ್ಲ, ಅದರ ಬದಲಿಗೆ ಹೆಚ್ಚು ಬಾಯಿಬಡುಕರನ್ನೇ ನೋಡಿರೋದು. ಇವತ್ತಿಗೂ ನಮ್ಮನೆಯಲ್ಲಿ ಬಲಗೈ ಹೆಬ್ಬಟ್ಟೆನ್ನ ಬಾಯಿ ಹತ್ರ ತಗೊಂಡೋಗಿ ತುಟಿಗೆ ತಾಗಿಸಿದ ಹಾಗೆ ಮಾಡಿದ್ರೆ ಒಂದು ಲೋಟಾ ನೀರಂತೂ ಖಂಡಿತ ಸಿಕ್ಕುತ್ತೆ, ಆದ್ರೆ ಇಲ್ಲಿ ಯಾರೂ ನೀರು ಕೊಡು ಅನ್ನೊದಕ್ಕೆ ಸನ್ನೆ ಮಾಡಿ ಕೇಳಿದ್ದನ್ನು ನಾನು ನೋಡಿಲ್ಲ. ನಮ್ಮ ಅವಿಭಾಜ್ಯ ಕುಟುಂಬ ವ್ಯವಸ್ಥೆಯಲ್ಲಿ ದೊಡ್ಡಪ್ಪ, ಚಿಕ್ಕಪ್ಪ, ಸೋದರ ಮಾವ, ಸೋದರತ್ತೆ ಇವರೆಲ್ಲ ನಮ್ಮನ್ನು ಬೇಕಾದಷ್ಟು "ಸನ್ನೆ-ಸೂಕ್ಷ್ಮ"ಗಳಲ್ಲಿ ಬೆಳಿಸಿದವರೇ. ಇವತ್ತಿಗೂ ಸಹ 'ಊಹೂ', 'ಇಲ್ಲ'ಗಳಿಗೆ ಎಷ್ಟೋ ಜನ ತಲೆಯಾಡಿಸೋದನ್ನ ನೋಡಿದ್ದೇನೆ.

ನಾವು ಒಂದ್ ಗಡಿ ದಾಟಿ ಇನ್ನೊಂದು ಗಡಿ ಹೊಕ್ಕರೆ ಬೇರೆ-ಬೇರೆ ಭಾಷೆಗಳ ಉಗಮ ಹಾಗೂ ಬೆಳವಣಿಗೆ ಆದಂತೆ ಸನ್ನೆಗಳ ಬೆಳವಣಿಗೆ ಎಲ್ಲಾ ಕಡೇ ಏಕಾಗಲಿಲ್ಲವೋ ಯಾರಿಗೆ ಗೊತ್ತು? ನಮ್ಮಲ್ಲಿ ಓಪನ್ ಆಗಿ 'ಧನ್ಯವಾದ' ಹೇಳೋ ಪದ್ಧತಿ ಏನೂ ಇಲ್ಲ, ಅದರ ಬದಲಿಗೆ ಕಣ್ಣಲ್ಲೇ ಧನ್ಯವಾದಗಳನ್ನ ಅರ್ಪಿಸೋದಿಲ್ಲವೇ? ನಮ್ಮವರು "ಥ್ಯಾಂಕ್ಯು-ವೆಲ್‌ಕಮ್"ಗಳನ್ನ ಹೇಳದಿದ್ದರೇನಂತೆ, ತುಂಬು ಹೃದಯದಿಂದ ಉಪಕಾರ ಸ್ಮರಣೆ ಮಾಡಿದರೆ ಸಾಕಾಗೋದಿಲ್ಲವೇ? ಹೀಗೆ ಬಾಯಿ ಬಿಟ್ಟು ಹೇಳಲಾಗದ ಹಲವಾರು ಭಾವನೆಗಳನ್ನು ಕಣ್ಣಿನ ಮೂಲಕ ಅಭಿವ್ಯಕ್ತಗೊಳಿಸಿದ್ದನ್ನ rude ನಡತೆ ಎನ್ನಲಾಗುವುದೇ? ಯಾರಾದ್ರೂ ಥ್ಯಾಂಕ್ಯೂ ಅಂದ್ರೆ 'you are welcome!' ಎಂದು ಹೇಳೋದನ್ನ ರೂಢಿ ಮಾಡಿಕೊಳ್ಳೋಕೆ ಎಷ್ಟೋ ದಿನಗಳು ಹಿಡೀತು, ಆದ್ರೂ ಅದು ಸಹಜ ಪ್ರತಿಕ್ರಿಯೆ ಅಂತ ಅನ್ನಿಸಿದ್ದೇ ಇಲ್ಲ. ಇನ್ನು ಬಾಯಿಬಿಟ್ಟು ಹೇಳದೇ ಹೋದ್ರೆ ಉಪಕಾರ ಸ್ಮರಣೆ ಮಾಡದವನು ಅಂತ ಬಿರುದು ಕೊಟ್ಟರೇ ಎನ್ನೋ ಹೆದರಿಕೆ ಬೇರೆ ಕೇಡಿಗೆ.

ಭಗವಂತ ಬಾಯ್ ಕೊಟ್ಟಾ ಅಂತ ಎಲ್ರೂ ಮಾತನಾಡಬೇಕಪ್ಪಾ, ಅದರ ಜೊತೆಯಲ್ಲಿ ಇನ್ನೊಬ್ರು ಮಾತನಾಡೋದನ್ನೂ ಹಾಗೇ ಕೇಳಬೇಕು ಅನ್ನೋದು ನನ್ನ ಒಂದು ಕೂದಳೆಯ ಕೊರಗು. ಇನ್ನೊಬ್ರು ಮಾತನಾಡ್ತಾ ಇರಬೇಕಾದ್ರೆ ನಾವುಗಳು ನಮ್ಮ-ನಮ್ಮ ಲೋಕದಲ್ಲೇ ಇದ್ರೆ ಅದರಿಂದಾನಾದ್ರೂ ಏನು ಬಂತು? ಎದುರಿಗಿದ್ದವರೇ ಮಾತನ್ನು ಕೇಳದಿರುವಾಗ ಇನ್ನು ಫೋನ್‌ನಲ್ಲಿ ಮಾತನಾಡಿದ್ದನ್ನ ಕೇಳಿಸಿಕೊಳ್ತಾರೆ ಅನ್ನೋದೇನು ಗ್ಯಾರಂಟಿ. ನನ್ನೊಡನಾಡುವ ಜನರನ್ನು ಈ ರೋಗದಿಂದ ಮುಕ್ತರನ್ನಾಗಿಸಲು ನಾನು ಹೊಸ ಮಾರ್ಗವೊಂದನ್ನು ಕಂಡುಹಿಡಿದುಕೊಂಡಿದ್ದೇನೆ, ಅದೇನೆಂದರೆ ನಾನು ಮಾತನಾಡ್ತಾ ಇರೋ ವಿಷಯದ ಬಗ್ಗೇನೇ ಅಲ್ಲಲ್ಲಿ ಸೂಚ್ಯವಾಗಿ ಪ್ರಶ್ನೆಗಳನ್ನ ಕೇಳೋದು. ನೀವೂ ಹೀಗೆ ಮಾಡಿ ನೋಡಿ, ಎಲ್ಲರೂ ನಿಮ್ಮ ಮಾತುಗಳನ್ನ ಕೇಳತೊಡಗುತ್ತಾರೆ, ಅಂದರೆ ಕಿವಿಗೊಟ್ಟು ಆಲಿಸತೊಡಗುತ್ತಾರೆ - ಆದರೆ ಅದನ್ನ ಪಾಲಿಸೋದು ಬಿಡೋದು ಅವರವರಿಗೆ ಬಿಟ್ಟ ವಿಷಯ, ಆದರೆ ನಿಮ್ಮ ಮಾತುಗಳ ಮಧ್ಯೆ ಕೇಳುವ ಪ್ರಶ್ನೆ, ಅದಕ್ಕೆ ಉತ್ತರ ಆ ಸಮಯದ ಮಟ್ಟಿಗೆ ನಿಮಗೆ ನೆನಪಿದ್ದರೆ ಅಲ್ಲಿಗೆ ಅರ್ಧ ಕಾರ್ಯ ಯಶಸ್ವಿಯಾದಂತೆಯೇ ಲೆಕ್ಕ!

Tuesday, October 03, 2006

ಕರ್ನಾಟಕ "ಬಂದ್"

ಸತ್ಯಾಗ್ರಹ ಅನ್ನೋದು ಬಹಳ ದೊಡ್ಡ ಮಾತು - Insistence of truth ಎಂದು ಅನುವಾದಿಸಿ ಹೇಳಿದರೂ ಇಂಗ್ಲೀಷರಿಗೆ ಬಾಪುವಿನ ಮನಸ್ಸಿನ್ನಲ್ಲಿದ್ದ ಸತ್ಯಾಗ್ರಹ ಹಾಗೂ ಅದರ ತೀವ್ರತೆಯ ಪರಿಣಾಮವನ್ನು ಹೇಳುವಲ್ಲಿ ಅನುವಾದ ಸೋಲುತ್ತದೆಯೆಂದೇ ಹೇಳಬೇಕು. ಇಂತಹ ಒಂದು ಮೂಲಮಂತ್ರವನ್ನು ಘೇರಾವ್, ಬಂದ್, ಮತ್ತಿತರ ರಾಜಕೀಯ ಪ್ರೇರಿತ ಹರತಾಳಗಳನ್ನಾಗಿ ಪರಿವರ್ತಿಸಿ ನೋಡುವಲ್ಲಿ ನನ್ನದು ಮೊದಲಿನಿಂದಲೂ ವಿರುದ್ಧ ದೃಷ್ಟಿಕೋನವೇ. ಇಂದು ಇಲ್ಲಿಯೂ ಸಹ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತೇನೆ - ಈ ವಿಷಯದಲ್ಲಿ ನನ್ನ ಆಲೋಚನೆಗಳು ಪ್ರೈಮರಿ ಶಾಲೆಯ ಮಕ್ಕಳ ಆಲೋಚನೆಯ ಹಾಗೆ ಕೆಲವರಿಗೆ ಕಂಡುಬರಬಹುದು, ಆದರೂ 'ಬಂದ್' ನಿಂದ ಏನೇನು ಅನುಕೂಲತೆಗಳನ್ನು ಇಷ್ಟು ದಶಕಗಳಲ್ಲಿ ಸಾಧಿಸಿಕೊಂಡಿದ್ದಾರೋ ಅವುಗಳನ್ನೆಲ್ಲ ಮುಂದೆ ತೆರೆದಿಟ್ಟರೂ ನಾನು ಬಂದ್ ಅನ್ನು ಅನುಮೋದಿಸುವುದಕ್ಕೆ ಬಹಳ ಕಷ್ಟಪಡಬೇಕಾದೀತು.

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಗೋಡೆ ಬರಹ ಹಾಗೂ ಭಿತ್ತಿ ಚಿತ್ರಗಳನ್ನು ನಿಷೇಧಿಸಬೇಕು ಎಂದು ಕಾನೂನನ್ನು ಬದಲಾಯಿಸುವ ಬಗ್ಗೆ ಮಾತುಕತೆಗಳು ಆರಂಭವಾಗಿದ್ದವು. ಮುಂದೆ ಕಾನೂನನ್ನು ಬದಲಾಯಿಸಿದರೋ ಇಲ್ಲವೋ ಗೊತ್ತಿಲ್ಲ, ಆದರೆ ಇವತ್ತಿಗೂ ನಮ್ಮ ಊರುಗಳಲ್ಲಿ ಕಂಡಕಂಡಲ್ಲೆಲ್ಲ ಒಂದಲ್ಲ ಒಂದು ರೀತಿಯ ಗೋಡೆ ಬರಹಗಳು, ಚಿತ್ರಗಳು, ಪೋಸ್ಟರುಗಳು ಇವೆಲ್ಲ ಮಾಮೂಲು. ಮುಂದುವರಿದ ದೇಶಗಳಲ್ಲಿ ಜಾಹಿರಾತು ಹೋರ್ಡಿಂಗ್‌ಗಳು ಕಾಣುತ್ತವೆ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ರಸ್ತೆ, ಗೋಡೆ, ಫಲಕಗಳ ಮೇಲೆ ಬಣ್ಣಬಣ್ಣದ ಬರಹಗಳು ಕಾಣುತ್ತವೆ ಎನ್ನುವುದು ಬೇರೆ ವಿಷಯ; ಎಷ್ಟೋ ಜನ ಗೋಡೆ ಬರಹವನ್ನು ಒಂದು ಸಾಮಾನ್ಯ ಧ್ವನಿಯ ಪ್ರತೀಕ ಅದನ್ನು ನಿಯಂತ್ರಿಸಬಾರದು ಎಂದೂ ಹೋರಾಟ ನಡೆಸಿದ್ದರು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ಒಂದು ಬಣ ಯೋಚಿಸಿದರೆ, ಮತ್ತೊಂದು ಬಣದವರು ನಿಮ್ಮ ಧ್ವನಿಗಳನ್ನು ಪರಿವರ್ತಿಸಿಕೊಳ್ಳಿ, ಅದರ ಬದಲು ಸಾರ್ವಜನಿಕ ಆಸ್ತಿಪಾಸ್ತಿ ಅಥವಾ ಖಾಸಗೀ ಪ್ರಾಪರ್ಟಿಯನ್ನು ಹಾಳುಗೆಡವಬೇಡಿ ಎಂದು ವಾದ ಶುರುಮಾಡಿದ್ದರು. ಹೀಗೆ ದೇಶಾದ್ಯಂತ ಎಲ್ಲಿ ಹೋದರೂ ಸಾರ್ವಜನಿಕ ಧ್ವನಿ ಒಂದಲ್ಲ ಒಂದು ರೀತಿಯಲ್ಲಿ ಹೊರಬರುತ್ತಲೇ ಇದೆ, ಹೀಗೆ ಧ್ವನಿಯನ್ನು ಹೊರಡಿಸಿರೋದರಿಂದ ಏನಾನಾಗಿದೆ ಎನ್ನುವುದನ್ನು ಯಾರಾದರೂ ಗೊತ್ತಿದ್ದವರು ಇಲ್ಲಿ ತಿಳಿಸಿದ್ದರೆ ಒಳ್ಳೆಯದಿತ್ತು.

ಉದಾಹರಣೆಗೆ ಇಂದಿನ ಕರ್ನಾಟಕ ಬಂದ್ ವಿಷಯವನ್ನೇ ತೆಗೆದುಕೊಳ್ಳೋಣ - ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವುದು ಮುಖ್ಯವಾದ ಬೇಡಿಕೆಗಳಲ್ಲೊಂದು, ಆದರೆ ಈ ಕೆಳಗಿನ ವಿಷಯಗಳ ಹಿನ್ನೆಲೆಯಲ್ಲಿ ಈ ಬಂದ್ ಆಯೋಜಕರ ಸಂದೇಶಗಳು ಏನೇ ಇದ್ದರೂ ಅವು ಹೇಗೆ ಕನ್ನಡಿಗರಿಗೆ ಅನ್ವಯವಾಗುತ್ತವೆ ಎಂದು ನೋಡೋಣ:

* ಎರಡು ಸೆಕೆಂಡಿಗೊಂದು ಮಗು ಹುಟ್ಟುವ ನಮ್ಮ ವ್ಯವಸ್ಥೆಯಲ್ಲಿ ಆಸ್ಪತ್ರೆ, ಮುಂತಾದ ಅಗತ್ಯ ಸೇವೆಗಳಲ್ಲಿ ನಿರತವಾಗಿರುವ ಕೆಲಸಗಾರರು ಬಂದ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವಂತೆ ಮುಂಜಾಗರೂಕತೆ ತೆಗೆದುಕೊಳ್ಳುವವರಾರು?
* ವಯೋವೃದ್ಧರು, ಮಕ್ಕಳು ಖಾಯಿಲೆಗೆ ಬಿದ್ದರೆ ತುರ್ತು ಚಿಕಿತ್ಸೆಗೆಂದು ಅವರು ಎಲ್ಲಿ ಹೋಗಬೇಕು, ಅವರು afford ಬಸ್ಸು, ರಿಕ್ಷಾಗಳು ಸೇವೆಯಲ್ಲಿಲ್ಲದಿರುವಾಗ ಇಂತಹ ಅಸಹಾಯಕರು ಏನು ಮಾಡಬೇಕು?
* ಕಂಪನಿ, ಅಂಗಡಿ, ಮುಗ್ಗಟ್ಟುಗಳು ತಮ್ಮ ಆ ದಿನದ ಕೆಲಸವನ್ನು ನಿಲ್ಲಿಸಿರುವುದರಿಂದ ಆಗುವ ನಷ್ಟವನ್ನು ತುಂಬಿಕೊಡುವವರಾರು?
* ಒಂದು ದಿನ ಕೆಲಸ ಸ್ಥಗಿತಗೊಳಿಸಿರೋದರಿಂದ ಎಷ್ಟೋ ಯೋಜನೆಗಳಿಗೆ ಆಗುವ ನಷ್ಟವನ್ನು ಹೇಗೆ ವಿವರಿಸುವುದು? ಅವುಗಳನ್ನು ಮತ್ತೆ ಸ್ಕೆಡ್ಯೂಲಿನಲ್ಲಿ ಸರಿಯಾಗಿಡುವುದು ಹೇಗೆ?
* ಅಂದೇ ದುಡಿದು ಅಂದೇ ತಿನ್ನುವ ಕೂಲಿ ಕಾರ್ಮಿಕರಿಗೆ ಹೊಟ್ಟೆ ಹೊರೆಯುವವರಾರು?
* ಶಾಲೆ-ಕಾಲೇಜುಗಳಲ್ಲಿ ಪಾಠ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಯಾರು ಸ್ಪೆಷಲ್ ಕ್ಲಾಸುಗಳನ್ನು ಏರ್ಪಡಿಸಿ ಕ್ಲಾಸುಗಳನ್ನು ನಡೆಸುವ ವ್ಯವಸ್ಥೆಯನ್ನು ಮಾಡುತ್ತಾರೆ?
* ಇಂದೇ ಕೊನೇ ದಿನವಾಗಿ ಹಾಕಬೇಕಾದ ಎಷ್ಟೋ ಅರ್ಜಿಗಳನ್ನು ತುಂಬಿ ಬ್ಯಾಂಕು, ಅಂಚೆ ವ್ಯವಸ್ಥೆಯ ಸಹಾಯದಿಂದ ಕಳಿಸಬೇಕಾದವರಿಗೆ ಸಹಾಯ ಮಾಡುವವರಾರು?

ಹೀಗೆ ಬರೆಯುತ್ತಾ ಹೋದರೆ ಕೊನೇಪಕ್ಷ ಒಂದು ನೂರು ಪ್ರಶ್ನೆಗಳನ್ನು ಬರೆಯಬಹುದು. ಇವೆಲ್ಲವನ್ನೂ ಕೂಲಂಕಷವಾಗಿ ಗಮನಿಸಿದರೆ ಈ ಬಂದ್ ಆಚರಣೆಯಿಂದ ಕರ್ನಾಟಕದವರಿಗೆ (ಒಬ್ಬ ಸಾಮಾನ್ಯ ಕನ್ನಡಿಗನಿಗೆ ಎನ್ನೋ ಅರ್ಥದಲ್ಲಿ) ತೊಂದರೆಗಳಾದವೇ ವಿನಾ ಅನುಕೂಲಗಳೇನಾದವು ಎಂದು ಪ್ರಶ್ನೆ ಹುಟ್ಟುತ್ತದೆ. ಸರಿ ಈ ಬಂದ್ ಆಚರಣೆಯ ನಿರೀಕ್ಷೆ ಏನು, ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗಿದೆಯೇ? ಅಥವಾ ಕರ್ನಾಟಕದವರದ್ದೂ ಒಂದು ಧ್ವನಿ ಇದೆ ಒಂದು ತೋರಿಸಬೇಕಾಗಿದೆಯೇ? ಅಥವಾ ಮಹಾರಾಷ್ಟ್ರ ಸರ್ಕಾರದ ನಿಯೋಗಗಳು ಕೇಂದ್ರವನ್ನು ಇನ್ನೊಮ್ಮೆ ತಲುಪದಿರುವಂತೆ ಪರೋಕ್ಷವಾಗಿ ಹೇಳಬೇಕಾಗಿದೆಯೇ? ಅಥವಾ ಬರೀ ರಾಜಕೀಯ ಪ್ರೇರಿತ ಈ ಬಂದ್ ನಲ್ಲಿ ನನಗರಿವಿಗೆ ಬರದ, ಬಂದರೂ ಬರೆಯಲಾಗದ ಇನ್ನೇನಾದರೂ ಗುಟ್ಟುಗಳಿವೆಯೋ ಯಾರಿಗೆ ಗೊತ್ತು?

ಹೀಗೆ ವರ್ಷಕ್ಕೊಂದು ಬಂದ್ ನಡೆದರೆ ಅದನ್ನು ರಾಜ್ಯದ ರಜಾ ದಿನಗಳ ಸಾಲಿಗೆ ಸೇರಿಸಿಕೊಂಡು ನೆಮ್ಮದಿಯಿಂದಿರಬಹುದು. ಜಿಲ್ಲಾ, ತಾಲ್ಲೂಕುಗಳ ಮಟ್ಟದಲ್ಲಿ ಆಗಿಂದಾಗ್ಗೆ ನಡೆಯುವ ಹರತಾಳಗಳನ್ನು ಹೊರತುಪಡಿಸಿ ರಾಜ್ಯ ಮಟ್ಟದಲ್ಲಿ ಬೇಕಾದಷ್ಟು ಈ ರೀತಿ ನಡೆಯುತ್ತಲೇ ಇರುತ್ತವೆ. ಇನ್ನು ಸ್ವಲ್ಪ ದಿನಕ್ಕೆ ಕಾವೇರಿ ಗಲಾಟೆ ಆರಂಭವಾಗುತ್ತದೆ, ಯಾರೋ ಒಬ್ಬರು ಅಂಬೇಡ್ಕರ್ ಹೆಸರಿಗೆ ಮಸಿ ಬಳಿದರೆಂದು ಶುರುವಾಗುತ್ತದೆ, ಅನ್ಯಾಯವನ್ನು ಪ್ರತಿಭಟಿಸಿ ಹಲವು ಬಂದ್ ಗಳು, ಅನ್ಯಾಯವನ್ನು ಮೆಟ್ಟಿ ನಿಲ್ಲಲು ಇನ್ನು ಹಲವು, ಶಾಂತಿ ಸಂದೇಶವನ್ನು ಬಿಂಬಿಸಲು ಕೆಲವಾದರೆ, ಕೆಂಪು ಬಸ್ಸುಗಳನ್ನು ಸುಟ್ಟು, ಬೀದಿ ದೀಪಗಳನ್ನು ಪುಡಿ ಮಾಡುವ ಮತ್ತಷ್ಟು ಬಂದ್ ಗಳು. ಈ ಎಲ್ಲಾ ಬಂದ್ ಗಳು ಮಾಡಿದ ಒಟ್ಟು "ಸತ್ಯಾಗ್ರಹ"ವನ್ನು ಲೆಕ್ಕ ಹಾಕಿ ನೋಡಿದರೆ ನಮ್ಮ ದೇಶ-ರಾಜ್ಯದಲ್ಲಿ ಇಂದು ಅನ್ಯಾಯ, ಬ್ರಷ್ಟಾಚಾರ, ಇತ್ಯಾದಿಗಳು ಇರಲೇಬಾರದು, ಯಾವ ಗಡಿಯನ್ನು ಯಾರೂ ಆಕ್ರಮಿಸಬಾರದು, ಎಲ್ಲ ವರದಿಗಳೂ ಅನುಷ್ಠಾನಕ್ಕೆ ಬಂದಿರಬೇಕಿತ್ತು, ಸ್ವಾಯುತ್ತತೆ ಬೇಡಿದವರಿಗೆಲ್ಲ ಸಿಕ್ಕಿರಬೇಕಿತ್ತು - ಆದರೆ ಹಾಗೇನೂ ಆಗಲಿಲ್ಲವಲ್ಲ!

ಹಾಗಾದರೆ ಬಡ ಧ್ವನಿಗಳಿಗೆ ಒಂದು ಮಾಧ್ಯಮ ಅನ್ನೋದು ಬೇಡವೇ ಮತ್ತೆ? ಎಲ್ಲರೂ ಡೆಕ್ಕನ್ ಹೆರಾಲ್ಡ್‌ನಲ್ಲಿ ಫುಲ್ ಪೇಜ್ ಜಾಹಿರಾತು ಕೊಟ್ಟು ತಮ್ಮ ಸಂದೇಶವನ್ನು ಬಿಂಬಿಸುವಂತಿದ್ದರೆ ನಾವೇಕೇ ಹೀಗಿರುತ್ತಿದ್ದೆವು? ಹಾಗಿದ್ದ ಮೇಲೆ ಈ ಇಲ್ಲದವರ ಧ್ವನಿಯಾಗಿ ನಿಜವಾಗಿಯೂ ಬಂದ್ ಗಳು ಕೆಲಸ ಮಾಡುವಂತೆ ಮಾಡುವಲ್ಲಿ ಜನರು ಏಕೆ ಯೋಚಿಸೋದಿಲ್ಲ? ಸ್ವಾತಂತ್ರ್ಯೋತ್ತರ ದಶಕಗಳಲ್ಲಿ "ನಾವು ಇಂದು ನಮ್ಮ ಕೆಲಸವನ್ನು ಮಾಡುವುದಿಲ್ಲ" ಎನ್ನುವುದೇ ನಮಗೆ ತತ್ ತಕ್ಷಣ ಹೊಳೆಯುವ ಪ್ರತಿಭಟನೆಯ ಹಾದಿಯೇ? ಈ ಬಂದ್ ಸ್ಥಿತಿಗೆ ಬರದಿರುವಂತೆ, ಅದಕ್ಕೂ ಮೊದಲು ಯಾರು ಯಾರು ಏನೇನನ್ನು ಮಾಡಿದ್ದಾರೆ? ಎಷ್ಟು ನಿಯೋಗಗಳು ಎಲ್ಲೆಲ್ಲಿ ಹೋಗಿವೆ? ಕೇಂದ್ರ ಸರಕಾರದವರು ಏಕೆ ಉತ್ತರ ಕೊಡುತ್ತಿಲ್ಲ? ಬಂದ್ ಮಾಡಿದ ಮೇಲೂ ಮಹಾಜನ ವರದಿಯನ್ನು ಅನುಷ್ಠಾನ ಮಾಡದಿದ್ದರೆ ಮುಂದಿನ ಹೆಜ್ಜೆಗಳೇನು? ಗುರಿಗಳೇನು? ಹೀಗೆ ಹಲವಾರು ಪ್ರಶ್ನೆಗಳನ್ನು ಒಂದರ ಹಿಂದೊಂದು ಕೇಳಬಹುದು.

ಬೆಳಗಾವಿ, ಕಾಸರಗೋಡು, ಬಳ್ಳಾರಿ, ಬೆಂಗಳೂರನ್ನು "ಸಂರಕ್ಷಣೆ" ಮಾಡೋದು ಕರ್ನಾಟಕದ ಜನತೆಯ ನಿಲುವಾದರೆ, ಆಡಳಿತ ಹಾಗೂ ವಿರೋಧ ಪಕ್ಷದವರೆಲ್ಲ ಬೆಂಬಲಿಸುತ್ತಿರುವ ಈ "ಬಂದ್" ಗಿಂತ ಮೊದಲು ಅವರೆಲ್ಲ ಏನೇನು ಮಾಡಿದ್ದಾರೆ, ಇದಕ್ಕೋಸ್ಕರವೇ ಒಂದು ಸಮಿತಿ ಅನ್ನೋದು ಇದೆಯೇ, ಗಡಿ ವಿಚಾರಗಳನ್ನು ಪರಾಮರ್ಶಿಸಿ ನೇರವಾಗಿ ಸಂಬಂಧಪಟ್ಟವರಲ್ಲಿ ವ್ಯವಹಾರ ನಡೆದಿದೆಯೇ? ಒಂದು ವೇಳೆ ನಮ್ಮ "ಬಂದ್" ಕರೆಗೆ ಓಗೊಟ್ಟು ಮಹಾಜನ್ ವರದಿಯನ್ನು ಅನುಮೋದಿಸಿದರು ಎಂದೇ ಅಂದುಕೊಳ್ಳೋಣ, ಮರುದಿನ ಮಹಾರಾಷ್ಟ್ರದವರು ಬಂದ್ ಆಚರಣೆ ಮಾಡಿದರೆ ಕೇಂದ್ರ ಸರ್ಕಾರದವರು ಏನು ಮಾಡಬೇಕು?

***

ಇವೆಲ್ಲವನ್ನು ಬರೆಯುತ್ತಿರುವುದರಿಂದಲೇ ಹೇಳಿದ್ದು ನನ್ನ ಆಲೋಚನೆಗಳು ಇನ್ನೂ ಪರಿಪಕ್ವವಾಗಿಲ್ಲ, ಇಪ್ಪತ್ತೈದು ವರ್ಷಗಳ ಕಾಲ ಭಾರತದಲ್ಲಿದ್ದರೂ ನನಗಿನ್ನೂ "ಬಂದ್"ಗಳ ಜೀವಾಳ ಅರ್ಥವಾಗಿಲ್ಲ, ಪ್ರತಿ ಬಂದ್ ಅನ್ನೋದೂ ಸಹ ನನಗೆ ಸಾರ್ವಜನಿಕರಿಗೆ ನೇರವಾಗಿ ಒಡ್ಡುವ ಹಿಂಸೆಯಂತೆ ಕಂಡು ಬಂದಿದೆಯೇ ವಿನಾ ಗೆದ್ದಿರುವ ಅಂಶಗಳು ಕಡಿಮೆ. ಹೀಗೆ ನಮ್ಮ ವಿರುದ್ಧವಾಗಿ ನಡೆಯುವ ಎಲ್ಲ ಪಿತೂರಿಗಳನ್ನು ವಿರೋಧಿಸಿ ಎಷ್ಟು ಬೇಕಾದಷ್ಟು ಬಂದ್ ಗಳನ್ನು ಆಚರಿಸುವಂತಿದ್ದರೆ ಚೆನ್ನಾಗಿತ್ತು. ಭಾರತ್ ಬಂದ್, ಏಷ್ಯಾ ಬಂದ್, ವಿಶ್ವವೇ ಬಂದ್ ಅನ್ನೋ ಹಾಗೆ - ಏನೇನೆಲ್ಲವನ್ನು ಮಾಡಬಹುದಿತ್ತು, I am really looking forward to a bundh, so that I don't have to work tomorrow! ನಮ್ಮ ವ್ಯವಸ್ಥೆಯಲ್ಲಿ ನಮ್ಮ ಹಕ್ಕು ಕತ್ರ್ಯವ್ಯಗಳನ್ನು ಜ್ಞಾಪಿಸೊದಕ್ಕು 'ಬಂದ್' ಗಳು ಎಷ್ಟ್ರರ ಮಟ್ಟಿಗೆ ಪೂರಕವಾಗಿವೆ ಅನ್ನೋದು ಈ ಸಂದರ್ಭದಲ್ಲಿ ಏಳುವ ಮತ್ತೊಂದು ಅಲೆಯಷ್ಟೇ.

Monday, October 02, 2006

ಭಾಷೆ ಬಾರದವರು

ತಿಂಗಳಿಗೊಮ್ಮೆ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರನ್ನು ಸ್ವಚ್ಛಗೊಳಿಸೋದು ವಾಡಿಕೆ, ಮೊದಲ ತಿಂಗಳು ಧಿಡೀರನೇ ಹೀಗೆ ನೋಟಿಸ್ ಕೊಟ್ಟು ಒಂದು ವಾರಾಂತ್ಯದಲ್ಲಿ ಎಲ್ಲವನ್ನೂ ಸ್ವಚ್ಛಗೊಳಿಸುವ ಮುನ್ಸೂಚನೆ ನೀಡಿ ಇದ್ದು ಬದ್ದುದೆಲ್ಲವನ್ನು ತೆಗೆದೆಸೆದು ಪೂರ್ತಿ ಖಾಲಿ ಮಾಡಿ ಹಾಕಿದ್ದರು. ಅಂದಿನಿಂದ ನಾವೆಲ್ಲರೂ ತಿಂಗಳ ಕೊನೆ ಬರುತ್ತಿದ್ದಂತೆ ಅದರಲ್ಲಿ ನಮ್ಮ ವಸ್ತುಗಳನ್ನೆನೂ ಇಡದೆ ಮುಂಜಾಗರುಕತೆಯಿಂದಿರುತ್ತಿದ್ದೆವು, ಏಕೆಂದರೆ ಅವರು ಅದರಲ್ಲಿದ್ದುದೆಲ್ಲವನ್ನು ಎಸೆಯುತ್ತಾರೆ ಎಂದ ಮೇಲೆ ಹಾಗೆ ಮಾಡಿಯೇ ತೀರುತ್ತಾರೆ ಎನ್ನುವುದನ್ನು ಕಲಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ.

ಶುಕ್ರವಾರ ನಾನು ನನ್ನ ಊಟದ ಬ್ಯಾಗ್ ತೆಗೆದುಕೊಂಡು ಬರುವ ಹೊತ್ತಿಗೆ ಇನ್ನೇನು ರೆಫ್ರಿಜಿರೇಟರ್ ಬಾಗಿಲು ಮುಚ್ಚ ಬೇಕೆನ್ನುವ ಹೊತ್ತಿಗೆ ಕೆಳಗೆ ಇಟ್ಟ ಒಂದು ಪ್ಯಾಕೆಟ್ ನನ್ನ ಗಮನ ಸೆಳೆಯಿತು, ಅದರ ಮೇಲೆ ಕೆಂಪು ಇಂಕಿನಲ್ಲಿ ಬರೆದ ಅಕ್ಷರಗಳು ಕುತೂಹಲದಿಂದ ಓದಿಸಿಕೊಂಡು ಹೋದವು - 'cleaning crew, this packet contains breakfast cereal, don't throw this packet when you clean!' ನಾನು ಈ ಪ್ಯಾಕೇಟಿನ ಗತಿ ಇನ್ನೆನಾಗುತ್ತೋ ಎಂದು ಅದರ ಓನರ್ ಬಗ್ಗೆ ಹುಡುಕಿದಾಗ ಯಾವ ಸುಳಿವೂ ಸಿಗದೇ ಸುಮ್ಮನೇ ಬಿಟ್ಟೆನಾದರೂ ಅದು ಟ್ಯ್ರಾಷ್ ಕ್ಯಾನ್ ಸೇರುವುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೂ ಅದರ ಅದೃಶ್ಟವನ್ನು ನೋಡಿಯೇಬಿಡೋಣವೆಂದು ಇಂದು ಮುಂಜಾನೆ ಹೋಗಿ ನೋಡಿದರೆ ಫ್ರಿಜ್ ಎಲ್ಲಾ ಬಣಬಣ, ಆ ಕ್ಲೀನಿಂಗ್ ಕ್ರ್ಯೂ ಎಲ್ಲವನ್ನು ಎತ್ತಿ ಬಿಸಾಡಿದ್ದಾರೆ! ಸ್ವಲ್ಪ ಆ ಕಡೆ ಈ ಕಡೆ ವಿಚಾರಿಸಲಾಗಿ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರ್ ಸ್ವಚ್ಛ ಮಾಡುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ತಿಳಿಯಿತು. ಅಕಸ್ಮಾತ್ ಅವರಿಗೆ ಆ ಚೀಟಿಯಲ್ಲಿ ಬರೆದಿದ್ದ ಲೇಬಲ್ ಓದಲು ಬಂದಿದ್ದರೆ ಆ ಸಿರಿಯಲ್ ಹಾಗೇ ಉಳಿಯುತ್ತಿತ್ತೋ ಏನೋ ಯಾರಿಗೆ ಗೊತ್ತು?

ಇಂತಹ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ನಡುವೆ ಒಬ್ಬ ಮನುಷ್ಯ ಮೂಗಿನ ಮೇಲೆ ಕನ್ನಡಕವನ್ನಿಟ್ಟುಕೊಂಡು ಅವನು ತನ್ನಷ್ಟಕ್ಕೆ ತಾನು ಕೆಲಸ ಮಾಡುವ ವಿಧಿಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಾನೆ, ಅಪ್ಪಟ ಅಮೇರಿಕನ್ ಅಕ್ಸೆಂಟಿನಲ್ಲಿ ಇಂಗ್ಲೀಷನ್ನು ಮಾತನಾಡುವ ಈತನನ್ನು ನಾನು "0007 ಏಜೆಂಟ್" ಎಂದೇ ಕರೆಯೋದು, ಇಲ್ಲವೆಂದಾದರೆ ಮಧ್ಯ ವಯಸ್ಸಿನ ಈ ಮನುಷ್ಯ ಇಷ್ಟೊಂದು ಚೆನ್ನಾಗಿ ಇಂಗ್ಲೀಷನ್ನು ಮಾತನಾಡಿ ಈ "ಭಾಷೆ ಬಾರದ" ಉಳಿದವರ ಜೊತೆ ಇಂಥ ಕೆಲಸಕ್ಕೇಕೆ ಸೇರಿಕೊಳ್ಳುತ್ತಿದ್ದ? ಸಂಜೆ ಆರೂವರೆ ಏಳು ಘಂಟೆ ಆಗುತ್ತಲೇ ಟ್ರ್ಯಾಷ್ ಕಲೆಕ್ಟ್ ಮಾಡಿಕೊಂಡು ಒಂದಿಷ್ಟು ಜನ ಲಗುಬಗೆಯಲ್ಲಿ ಓಡಾಡಲು ಶುರು ಮಾಡಿಕೊಳ್ಳುತ್ತಾರೆ, ಇಷ್ಟು ದೊಡ್ಡ ಆಫೀಸನ್ನು ಆದ್ಯಾವ ಪರಿಯಲ್ಲಿ ಸ್ವಚ್ಛಗೊಳಿಸುತ್ತಾರೋ ಬಿಡುತ್ತಾರೋ ಒಂದೆರೆಡು ಘಂಟೆಗಳಲ್ಲಿ ಎಲ್ಲವೂ ಹೆಚ್ಚೂ ಕಡಿಮೆ ಸ್ವಚ್ಛವಾಗಿರುತ್ತವೆ. ಪ್ರತಿದಿನವೂ ಯಾರು ಇರಲಿ ಬಿಡಲಿ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸುವ ಈ ಕ್ಲೀನಿಂಗ್ ಕ್ರ್ಯೂ "ಮಾತು ಕಡಿಮೆ, ಕೆಲಸ ಜಾಸ್ತಿ" ಎನ್ನುವ ಪಂಗಡಕ್ಕೆ ಸೇರಿದವರೆಂದು ನಾನು ಲೇಬಲ್ ಕೊಡುತ್ತೇನೆ.

ಎಲ್ಲವೂ ಇಂಗ್ಲೀಷಿನಲ್ಲೇ ಅಧಿಕಾರಕ್ಕೊಳಗಾಗಿ ಸಂವಹನದಲ್ಲಿ ತೊಡಗಿರುವಂತೆ ಕಂಡುಬರುವ ನಮ್ಮ ಆಫೀಸಿನಲ್ಲೂ "ಭಾಷೆ ಬಾರದ" ಅಥವಾ ಇನ್ಯಾವುದೋ ಭಾಷೆಯಲ್ಲೇ ಅವರವರ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಬೇಕಾದಷ್ಟು ಗುಂಪುಗಳು ಕಂಡುಬರುತ್ತವೆ. ಕೆಲವರದು ಇಂಗ್ಲೀಷು ಬಾರದ, ಅವರದ್ದೇ ಆದ ಒಂದು ಸದಾ ತೆರೆದಿರುವ ಲೋಕ, ಇನ್ನು ಹಲವರಿಗೆ ಆಗಾಗೆ ಇಂಗ್ಲೀಷಿನ ಸಾಮ್ಯ್ರಾಜ್ಯದಲ್ಲಿ ಮಿನುಗುವ ಕಪ್ಪ ಕೊಟ್ಟು ಹದ್ದು ಬಸ್ತಿನಲ್ಲಿರುವ ಚಿಕ್ಕ ಪುಟ್ಟ ರಾಜರುಗಳಂತೆ ಅವರವರ ಮನೆ ಮಾತು ಹಾಗೂ ಇತರ ಭಾಷೆಗಳು. ಇಂತಹವುಗಳ ನಡುವೆ ನನಗೆ ನನ್ನದೇ ಆದ ಕನ್ನಡ ಲೋಕವಿದೆ, ಆಗಾಗ್ಗೆ ಈ ನಿಟ್ಟಿನಲ್ಲಿ ಆಲೋಚಿಸುವ ನನಗೂ ಈ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ಗೂ ಹೆಚ್ಚು ವ್ಯತ್ಯಾಸವಿದೆಯೆಂದೇನೂ ಅನ್ನಿಸಲಿಲ್ಲ!

Sunday, October 01, 2006

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೇ...

ಓಹ್, ಹಾ ಹ್ಞೂ ಅನ್ನೋದರೊಳಗೆ ಸೆಪ್ಟೆಂಬರ್ರೇ ಮುಗಿದು ಹೋಯ್ತಲ್ಲಪ್ಪಾ ಈ ವರ್ಷಾ ಅಂದ್‌ಕೊಂಡೋರಲ್ಲಿ ನಾನೂ ಒಬ್ಬ. ಸೆಪ್ಟೆಂಬರ್ ಮುಗಿಯುತ್ತಲೂ ಇಲ್ಲಿ ನಾವಿರೋ ಸ್ಥಳದಲ್ಲಿ ಒಂದ್ ಕಡೆ ಸ್ವೆಟರ್, ಕೋಟುಗಳು ಹೊರಗಡೆ ಬಂದು ಇನ್ನೂ ಛಳಿ ಬಿದ್ದಿಲ್ಲಾ ಅಂತ ಹೇಳಿಕೊಂಡು ಹಾಗೇ ಅಂಗಿಯನ್ನು ತೊಟ್ಟು ತಿರುಗುವ ನನ್ನಂತಹವರಿಗೂ ಒಂದು ರೀತಿಯ ಛಳಿಯ ಹೆದರಿಕೆಯನ್ನು ಹುಟ್ಟಿಸಿದರೆ ಮತ್ತೊಂದು ಕಡೆ ಬೇಸಿಗೆ ಶುರುವಾಗಿ ಆಗಲೇ ಮುಗಿದುಹೋಯಿತೇ ಎನ್ನುವಂತಾಗಿತ್ತು. ಈ ವರ್ಷದ ಸೆಪ್ಟೆಂಬರ್ ಆರಂಭದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಮಾರಂಭ ಸಡಗರದಲ್ಲಿ ಮೊದಲವಾರವನ್ನು ಆಪೋಶನವನ್ನು ತೆಗೆದುಕೊಂಡರೆ, ಕೊನೆಯಲ್ಲಿ ದಸರಾ, ವಿಜಯದಶಮಿಯನ್ನು ಹೊತ್ತು ತಂದು ಮುಂಬರುವ ದೀಪಾವಳಿಯನ್ನಾಗಲೇ ನೆನಪಿಸುವಂತಾಗಿರುವುದು ವಿಶೇಷ. ಸರಿಯಾಗಿ ಇನ್ನು ಹನ್ನೆರಡು ಹದಿಮೂರು ವಾರ ಮುಗಿದರೆ ಈ ವರ್ಷದ ಆಯಸ್ಸು ಮುಗಿದಂತೆ ಮತ್ತೊಂದು ಹೊಸವರ್ಷ ಆರಂಭವಾಗುತ್ತದೆ, ಮುಂಬರುವ ಐವತ್ತೆರಡು ಹೊಸವಾರಗಳು ತಮ್ಮ ಹೊಸಮುಖಗಳನ್ನು ಪರಿಚಯಿಸಿಕೊಳ್ಳಲು ಕಾದಿರುತ್ತವೆ.

ಹೀಗೆ ವರ್ಷಗಳನ್ನು ವಾರಗಳಲ್ಲಿ ಅಳೆಯೋದಕ್ಕೆ ಬೇರೇನು ಕಾರಣವಿಲ್ಲ - ಇಲ್ಲಿಗೆ ಬಂದ ಮೇಲೆ ಮೆಟ್ರಿಕ್ ಪದ್ಧತಿಯ ಎಲ್ಲಾ ಮೂಲಮಾನಗಳನ್ನು ಬದಿಗೊತ್ತಿ, ಆಡಿ-ಮೈಲು-ವಾರಗಳ ಅಳತೆಯ ಚಕ್ಕರದಲ್ಲಿ ಸಿಕ್ಕಿಹಾಕಿಕೊಂಡಿರುವವರು ಹಲವರು, ಅದರಲ್ಲಿ ನಾನೂ ಒಬ್ಬ. ಕ್ಯಾಮೆರಾ ಲೆನ್ಸ್ ಅಳತೆಯ ಲೆಕ್ಕಕ್ಕೆ ಮಾತ್ರ ಮಿಲಿ ಮೀಟರುಗಳನ್ನು ಬಳಸುತ್ತೇನೆಯೇ ವಿನಾ ಮತ್ತೆಲ್ಲದಕ್ಕೂ ಹೆಚ್ಚೂ ಕಡಿಮೆ ಇಂಚು, ಅಡಿ, ಮೈಲು, ಗ್ಯಾಲನ್ನುಗಳ ಲೆಕ್ಕವೇ. ಈ ಲೆಕ್ಕದ ಮಹಿಮೆಯನ್ನು ಕೊಂಡಾಡುತ್ತಾ ಹೋದಂತೆ ಎರಡು ವಿಷಯಗಳು ಗೋಚರಿಸಿದವು: ಮೊದಲನೆಯದಾಗಿ ವಿಶ್ವದಾದ್ಯಂತ ಜನರು ಉಷ್ಣತೆಯನ್ನು ಅಳೆಯಲು ಯಾವ ಸ್ಕೇಲ್ ಅನ್ನು ಬಳಸಿದರೂ (ಸೆಲ್ಶಿಯಸ್, ಫ್ಯಾರನ್‌ಹೈಟ್, ಕೆಲ್ವಿನ್) ಇಲ್ಲಿನ ಫ್ಯಾರನ್‌ಹೈಟ್ ಸ್ಕೇಲ್ ನನಗೆ ವಾತಾವರಣದ ಉಷ್ಣತೆಯನ್ನು ಅಳೆಯಲು ವಿಸ್ತೃತವಾದದ್ದು ಎನ್ನಿಸಿದ್ದು ಹಾಗೂ ಎರಡನೆಯದಾಗಿ ವಿಶ್ವದಾದ್ಯಂತ ಜನರ ಎತ್ತರವನ್ನು ಗುರುತಿಸಿ ಬಳಸುವಲ್ಲಿ ಅಡಿ-ಇಂಚುಗಳೇ ಹೆಚ್ಚು ಬಳಕೆಯಲ್ಲಿರುವುದು. ಸೆಂಟಿಗ್ರೇಡ್ ಸ್ಕೇಲಿನ ಬಳಕೆಯಲ್ಲಿ ತಪ್ಪು-ಸರಿ ಎನ್ನುವಂತದ್ದೇನೂ ಇಲ್ಲ, (ಭಾರತದಲ್ಲಿ) ನಮ್ಮೂರಿನ ಉಷ್ಣತೆ ಕಡಿಮೆ ಎಂದರೆ ಹದಿನೈದು ಡಿಗ್ರಿಯಿಂದ ಹಿಡಿದು ಹೆಚ್ಚೆಂದರೆ ನಲವತ್ತು ಮುಟ್ಟೀತು - ಅದನ್ನು ಇಲ್ಲಿಯವರ ತರಹ ಅರವತ್ತೈದರಿಂದ ನೂರಾ ಹದಿನೈದು ಎಂದು ಗುರುತಿಸಿದಾಗ ಉಷ್ಣತೆಯ ರೇಂಜ್ ಹೆಚ್ಚಾಗಿ ಇದ್ದ ಹವಾಗುಣದಲ್ಲೇ ಹೆಚ್ಚು ಆಪ್ಷನ್ನುಗಳು ಕಂಡಂತೆ ಅನ್ನಿಸೀತು. ಯಾವ ಸ್ಕೇಲನ್ನು ಎಲ್ಲಿಯಾದರೂ ಬಳಸಲಿ, ಇವತ್ತಿಗೂ ನಮ್ಮೂರುಗಳಲ್ಲಿ "ನೂರು ಡಿಗ್ರಿ ಜ್ವರ" ಎಂದರೆ ಎಲ್ಲರಿಗೂ ಜ್ವರದ ಕಾವು ಅರಿವಿಗೆ ಬರುತ್ತದೆ!

ಇನ್ನೆನು ಕೆಲವೇ ದಿನಗಳಲ್ಲಿ ಮರಗಿಡಗಳು ತಮ್ಮ ಎಲೆಗಳನ್ನು ಉದುರಿಸಲು ಆರಂಭಿಸುತ್ತವೆ, ಅದಕ್ಕೂ ಮೊದಲು ಒಂದು ರೀತಿ ಕೆಂಪು ಬಣ್ಣ ಎಲ್ಲ ಕಡೆ ತುಂಬಿಕೊಳ್ಳುತ್ತದೆ. ಅಕ್ಟೋಬರ್ ಎರಡನೇ ವಾರ ಹತ್ತಿರ ಬರುತ್ತಿದ್ದಂತೆ ನಿಧಾನವಾಗಿ ಗಾಳಿ ಬೀಸತೊಡಗುತ್ತದೆ, ನಸುಕಿನಲ್ಲಿ ಇಬ್ಬನಿ ಹೆಚ್ಚು ಕಡೆ ತೇವವನ್ನು ಹಿಡಿದಿಡುವ ಸಾಹಸ ಮಾಡುತ್ತಾ, ಒಂದೆರೆಡು ಘಂಟೆ ತಡವಾಗಿ ಉದಯಿಸುವ ಸೂರ್ಯನೇನು ಮಾಡುತ್ತಾನೆ ನೋಡುತ್ತೇನೆ ಎಂದು ಸಡ್ಡು ಹೊಡೆದಂತೆ ತೋರಿಸಿಕೊಳ್ಳುತ್ತದೆ. ಆಗಾಗ್ಗೆ ಸುರಿಯುವ ಮಳೆ ಅಥವಾ ಸುರಿಯದ ಬರೀ ನೀಲಾಕಾಶ ಮುಂಬರುವ ಥಂಡಿಕಾಲದ ಗಾಢತೆಯ ಮುನ್ಸೂಚನೆಯನ್ನು ಮಾಡಿಕೊಡುತ್ತವೆ. ಈ ದೇಶ-ಊರುಗಳಲ್ಲಿ ವೃತ್ತಪತ್ರಿಕೆಗಳನ್ನು ಓದಿದರೆ ಮಾತ್ರ ಎಲ್ಲಿ ಬರಬಿದ್ದಿದೆ, ಯಾವ ಬೆಳೆ ಏನಾಗಿದೆ ಎಂದು ತಿಳಿಯೋದು. ಅದನ್ನು ಬಿಟ್ಟರೆ ನಾವು ಓಡಾಡುವ ಊರು-ದಾರಿಗಳಲ್ಲಿ ಯಾವನೊಬ್ಬನೂ ಜಮೀನುದಾರನಂತೆ ಕಾಣಿಸೋದಿಲ್ಲ, ಎಲ್ಲೂ ಯಾರೂ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ಕೇಳಿ ಬರೋದಿಲ್ಲ. ಟಿ.ವಿ., ರೆಡಿಯೋಗಳಲ್ಲಿ ಆ ರೀತಿಯ ಕಾರ್ಯಕ್ರಮಗಳು ದಿನಾಲು ಬರಬಹುದು, ಅವುಗಳನ್ನು ನೋಡಲು/ಕೇಳಲು ಯಾರಿಗೆ ತಾನೆ ವ್ಯವಧಾನವಿದೆ? ನಮ್ಮ ಪ್ರತಿಕ್ರಿಯೆ ಏನಿದ್ದರೂ ಮಾಧ್ಯಮಗಳು ಬಿಂಬಿಸುವ ಪ್ರೈಮ್ ಟೈಮ್ ಕಾರ್ಯಕ್ರಮಗಳ ಬಗ್ಗೆ ಮಾತ್ರ.

ಒಂದು ಅಭಿವೃದ್ಧಿ ಹೊಂದಿದ ದೇಶದ ಸ್ಪಂದನಗಳೇ ಬೇರೆ, ಅವುಗಳನ್ನು ನೋಡುವಾಗ ನಮಗಿರಬೇಕಾದ ದೃಷ್ಟಿಕೋನವೇ ಬೇರೆ. ನಮ್ಮೂರುಗಳಲ್ಲಿ ನಾಡಿ ನೋಡಿ ಮದ್ದು ನೀಡುವ ವೈದ್ಯರಂತೆ ಇಲ್ಲಿಯ ಪಲ್ಸ್ ನೋಡಲು ಬೇಕಾದ ಪರದೆಗಳೇ ಬೇರೆ. ಇಷ್ಟು ವರ್ಷವೇನು ಇನ್ನೆಷ್ಟು ದಿನಗಳ ಕಾಲ ಈ ದೇಶದಲ್ಲಿ ಇದ್ದರೂ ಒಂದು ಹಸುವಿನ ಮೈದಡವಿ ನೋಡಿಲ್ಲ, ಇವತ್ತಿಗೂ ಒಂದು ಕೆಜಿ ಅಕ್ಕಿ ಬೆಲೆ ಎಷ್ಟು ಎಂದು ಅಪರೂಪಕ್ಕೊಮ್ಮೆ ಕೇಳುವ ನನ್ನ ಅಮ್ಮನಿಗೆ ಕೊಡಬೇಕಾದ ಉತ್ತರ ನನ್ನ ಬಳಿ ತಯಾರಿರುವುದಿಲ್ಲ. ಬೇರೆಲ್ಲದ್ದಕ್ಕೂ ನನ್ನ ಮನಸ್ಸಿನಲ್ಲಿ ಬೇಕಾದಷ್ಟು ಕ್ಯಾಲುಕುಲೇಶನ್‌ಗಳು ನಡೆದರೂ ಎರಡು ಪೌಂಡು ಅನ್ನೋದು ಸರಿ ಸುಮಾರು ಒಂದು ಕೆಜಿ ಹತ್ತಿರ-ಹತ್ತಿರವಾದರೂ ಇಪ್ಪತ್ತು ಪೌಂಡು ಅಕ್ಕಿಗೆ ಇಂತಿಷ್ಟು ಡಾಲರ್ ಆದರೆ ಒಂದು ಕೆಜಿ ಅಕ್ಕಿಗೆ ಎಷ್ಟು ಎನ್ನೋದನ್ನು ಲೆಕ್ಕ ಹಾಕಲು ನಾನು ಒಂದಿಷ್ಟು ಸೆಕೆಂಡುಗಳನ್ನು ಹೆಚ್ಚಾಗೇ ತೆಗೆದುಕೊಳ್ಳುತ್ತೇನೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿಯೊಬ್ಬರ ಆದಾಯದ ಸರಾಸರಿ ಎಂಟರಿಂದ ಹತ್ತರಷ್ಟನ್ನು ಮೂಲ ಆಹಾರ ಪದಾರ್ಥಗಳ ಮೇಲೆ ಬಳಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಶೇಕಡಾವಾರು ಸಂಖ್ಯೆ ಬಹಳ ಹೆಚ್ಚು. ಇಲ್ಲಿ ಆಹಾರ ಉತ್ಪನ್ನಗಳು ಒಂದು ರೀತಿಯ 'ಕಮಾಡಿಟಿ', ಅಲ್ಲಿ ಅವುಗಳು ಅತ್ಯಂತ ಹೆಚ್ಚು ಅಗತ್ಯದ ವಸ್ತುಗಳು - ಅಂದರೆ ಇಲ್ಲಿ ಆಹಾರದ ಅಗತ್ಯವಿಲ್ಲವೆಂದರ್ಥವಲ್ಲ, ಇಲ್ಲಿ it is a given, ಅಲ್ಲಿ ಅದು ದಿನವೂ derive ಮಾಡಬೇಕಾದ ಒಂದು ಸಮೀಕರಣ.

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೆ ಮೂರನೇ ಕ್ವಾರ್ಟರ್ ಮುಗಿಯಿತು ಎಂದು ವಾಲ್ ಸ್ಟ್ರೀಟ್‌ನಲ್ಲಿ ಎಂದಿಗಿಂತ ಹೆಚ್ಚು ಹುರುಪು ಕಂಡುಬರುತ್ತದೆ, ಈ ಮೂರನೇ ಕ್ವಾರ್ಟರ್ ಮುಗಿಯುವ ಹೊತ್ತಿಗೆ ಬರುವ ಅಂಕೆ-ಸಂಖ್ಯೆಗಳು ಮುಂಬರುವ ಹಾಲಿಡೇ ದಿನಗಳ ರೀಟೈಲ್ ವಾಪಾರ ವಹಿವಾಟುಗಳನ್ನು ಹೆಚ್ಚೂಕಡಿಮೆ ನಿರ್ಧರಿಸಿಬಿಡಬಲ್ಲವು, ಸೆಪ್ಟೆಂಬರ್‌ವರೆಗೆ ಮೇಲುರುತ್ತಿದ್ದ ಸೂಚ್ಯಾಂಕ ಅಕ್ಟೋಬರ್‌ನಲ್ಲಿ ಸ್ವಲ್ಪ ಕೆಳಕ್ಕಿಳಿಯಬಹುದು. ಈಗಾಗಲೇ ಸ್ವಲ್ಪ ಸೊರಗಿದ ಡಾಲರ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೂ ನೆಲಕಚ್ಚಿ ಹಿಡಿಯುವಂತೆ ಮಾಡುವ ಶಕ್ತಿಗಳು ಉದಯವಾಗಬಹುದು. ನವೆಂಬರ್ ತಿಂಗಳಿನಲ್ಲಿ ಬರುವ ಸ್ಥಳೀಯ ಚುನಾವಣೆಗಳು ಸೆನೆಟ್ ಹಾಗೂ ಕಾಂಗ್ರೆಸ್ ನಲ್ಲಿ ರಿಪಬ್ಲಿಕನ್-ಡೆಮಾಕ್ರ್ಯಾಟಿಕ್ ಪಕ್ಷಗಳ ಮೇಲುಕೈಯನ್ನು ನಿರ್ಧರಿಸಿ ಬಿಡುವ ಹಿನ್ನೆಲೆಯಲ್ಲಿ ಆಡಳಿತ, ಪಾಲಿಸಿ, ಮುಂಬರುವ ಬಿಲ್‌ಗಳು ಇವುಗಳ ಮೇಲೆಲ್ಲ ತಕ್ಕ ಮಟ್ಟಿಗೆ ಪರಿಣಾಮ ಬೀರುತ್ತವೆ. ಎಲ್ಲರೂ ನಿಚ್ಚಳ ಬಹುಮತವನ್ನು ಸಾಧಿಸಬೇಕು, ತಮ್ಮ ತಮ್ಮ ಪಕ್ಷ ಸೀಟುಗಳನ್ನು ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರನ್ನು ಇನ್ನೂ ಹೆದರಿಸುವಂತೆ ಭಯೋತ್ಪಾದಕರ ವಿಷಯಗಳ ಚರ್ಚೆ, ಅಭ್ಯರ್ಥಿಗಳ ನಿಲುವುಗಳನ್ನು ಮಾತ್ರ ಬಿಂಬಿಸಲಾಗುತ್ತದೆಯೇ ವಿನಾ ಅವುಗಳ ಹಿಂದಿನ ವಿಷಯಗಳನ್ನು ಸಗಣಿ ಸಾರಿಸಿಬಿಡುವಂತೆ ತೋರಿಸಲಾಗುತ್ತದೆ. ಭಯೋತ್ಪಾದಕತೆಯನ್ನು ನಿರ್ಮೂಲನಗೊಳಿಸಲು ಅಮೇರಿಕದವರಿಗೆ ಸಪೋರ್ಟು ನೀಡಿದ್ದಾರೆ ಅನ್ನೋ ಕಾರಣಕ್ಕೆ ಮುಷಾರಫ್‌ ಅನ್ನು ತುಂಬಿದ ಸಭೆಯಲ್ಲಿ ಗೌರವಿಸಲಾಗುತ್ತದೆ, ಆದರೆ ಈ ವ್ಯಕ್ತಿಯೂ ಒಬ್ಬ ಸರ್ವಾಧಿಕಾರಿ, ಆಳುವ ಸರ್ಕಾರದಿಂದ ಅಧಿಕಾರವನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಹತೋಟಿಗೆ ತಂದುಕೊಂಡವನು ಎನ್ನುವುದನ್ನು ಇಲ್ಲಿನ ಬುದ್ಧಿವಂತರ ಸಭೆ ಜಾಣತನದಿಂದ ಮರೆಯುತ್ತದೆ. ಮುಷಾರಫ್ ಇಲ್ಲಿ ತನಗೆ ಸಿಕ್ಕ ಆತಿಥ್ಯಕ್ಕೆ ಹಿಗ್ಗಿ ಹೋಗುತ್ತಾರೆ - ಅವರ ಮೂಗಿನ ನೇರದ ಕೆಳಗೆ ಪಾಕಿಸ್ತಾನದ ಗುಪ್ತಚಾರ ಪಡೆ ಏನೆಲ್ಲವನ್ನು ಮಾಡಿದೆ ಎನ್ನುವ ವರದಿಗಳು ಒಂದರ ಮೇಲೊಂದು ಹೊರಬೀಳುತ್ತಲೇ ಇರುತ್ತವೆ - ಇವಕ್ಕೆಲ್ಲ ಯಾರೂ ಗಮನಕೊಡುವಂತೆಯೇ ಕಾಣಿಸೋದಿಲ್ಲ.

ಈ ಬುದ್ಧಿವಂತರ ನಾಡಿನಲ್ಲಿರೋ ಮೇಧಾವಿಗಳಿಗೆ ಇರಾಕ್ ಸಮಸ್ಯೆಗೊಂದು ಗತಿ ಕಾಣಿಸೋಕಾಗೋದಿಲ್ವಾ ಅಂತ ಎಷ್ಟೋ ಸಾರಿ ಅನ್ನಿಸಿದೆ. ಅದೂ ಇತ್ತಿಚೆಗಂತೂ ಅಲ್ಲಿ ಬಹಳ ಜನ ಸಾಯ್ತಾ ಇರೋದೂ, ಸ್ಥಳೀಯ ಸರ್ಕಾರ ತನ್ನ ಕೈಯಲ್ಲಿ ಸಾಧ್ಯವಾದದ್ದೆನ್ನೆಲ್ಲ ಮಾಡಿಯೂ ಪರಿಸ್ಥಿತಿ ಹೀಗಿದೆ ಎಂದರೆ ಅದಕ್ಕೆ ಯಾರೂ ಏನನ್ನೂ ಮಾಡಲಾಗುವುದಿಲ್ಲವೇ? ಅಷ್ಟು ಚಿಕ್ಕ ದೇಶವನ್ನು ಹತೋಟಿಯಲ್ಲಿಡುವುದು ಇಷ್ಟೊಂದು ಕಷ್ಟಕರವಾದ ವಿಷಯವೆಂದು ನನಗೆ ಏಕೋ ಇನ್ನೂ ಅರಿವಿಗೆ ಬರುತ್ತಿಲ್ಲ. ಸಾಕಷ್ಟು ಸಂಕೀರ್ಣವಾದ ಸಮಸ್ಯೆ ಆದರೂ ಒಂದಲ್ಲ ಒಂದು ರೀತಿಯಿಂದ ಬಗೆ ಹರಿಸಬಹುದು ಎಂದು ನನ್ನ ಮನಸ್ಸು ಹೇಳುತ್ತೆ, ಆದರೆ ನನಗೆ ಪೂರ್ಣ ವಿಷಯದ ಅರಿವು ಇರದೆಯೂ ಇರಬಹುದು ಎನ್ನುವ ಸಮಜಾಯಿಷಿಯೂ ಹುಟ್ಟುತ್ತೆ.

ಇಷ್ಟು ಬರೆಯುವ ಹೊತ್ತಿನಲ್ಲಿ ಮುಂಬರುವ ಛಳಿಗಾಲಕ್ಕೆ ಮೈಮನಸ್ಸುಗಳು ಸಿದ್ಧವಾದಂತೆನಿಸುತ್ತೆ, ಎಲ್ಲರಂತೆ ನಾನೂ ಕೂಡಾ ಫಾಲ್ ಕೋಟ್ ತೆಗೆದು ನಾಳೆ ಆಫೀಸಿಗೆ ಹೋಗುವಾಗ ಸಿಗುವಂತೆ ತೆಗೆದಿರಿಸುತ್ತೇನೆ, ಛಳಿ ಬೀಳೋದು ನಿಸರ್ಗ ನಿಯಮ ಅದಕ್ಕೆ ತಯಾರಾರಿರಬೇಕಾದುದು ನನ್ನ ಕರ್ಮ ಎಂದುಕೊಂಡು ಸುಮ್ಮನಾಗುತ್ತೇನೆ.

Friday, September 29, 2006

ತುಣುಕು ಮಿಣುಕು

ನಟಿ ಮೋನಿಕಾ ಬೇಡಿಗೆ ಒಂದಲ್ಲ ಎರಡಲ್ಲ ಐದು ವರ್ಷ ಜೈಲಂತೆ, ಜೊತೆಗೆ ಒಂದ್ ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರಂತೆ! ನಮ್ ದೇಶದ ಈ ಹಣಕಾಸಿನ ವಿಚಾರದಲ್ಲಿ ಬಹಳ ಹಿಂದುಳಿದಿರೋ ದಂಡದ ವಿಚಾರ ಪರಿಗಣನೆಗೆ ಬರೋದ್ ಯಾವಾಗಾ? ಮೋನಿಕಾಗೆ ಒಂದ್ ಸಾವಿರ ರೂಪಾಯಿ ಅಂದ್ರೆ ಅದು ಯಾವ ಲೆಕ್ಕ, ಬಹುಷಃ ಅದು ಆಕೆಯ ಒಂದು ಲಿಪ್‌ಸ್ಟಿಕ್ ಬೆಲೆಗಿಂತಲೂ ಕಡಿಮೆ ಇದ್ದಿರಬಹುದು.

***

ಕುಮಾರ ಸ್ವಾಮಿ ಅಧಿಕಾರದಲ್ಲಿ ಬೆಂಗಳೂರಿನಲ್ಲಿ ಇಂಗ್ಲೀಷ್ ಶಾಲೆಗಳನ್ನು ಮುಚ್ಚೋದರಿಂದ ಬೆಂಗಳೂರು ಸಿಲಿಕಾನ್‌ವ್ಯಾಲಿ ಆಗಿರೋ ಹೆಸರನ್ನ ಕಳೆದುಕೊಳ್ಳುತ್ತೇ ಅಂತ ಇವತ್ತು ಮುಂಜಾನೆ ಮಾರ್ಕೇಟ್‌ಪ್ಲೇಸ್ ಮಾರ್ನಿಂಗ್ ರಿಪೋರ್ಟ್‌ನಲ್ಲಿ ವರದಿ ಬಂದಿತ್ತು! ಅಲ್ವಾ, ಬೆಂಗಳೂರಿನಲ್ಲಿ ಈ ಇಂಗ್ಲೀಷ್ ಶಾಲೆಗಳು ಮುಚ್ಚಿ ನಾಳೆ ಇಂಗ್ಲೀಷ್ ಮಾತನಾಡೋ ಗ್ರ್ಯಾಜುಯೇಟ್‌ಗಳ ಕೊರತೆಯಾಗಿ ಬಿಟ್ರೆ ಏನ್ ಮಾಡೋದು? ಅಷ್ಟೊತ್ತಿಗಾಗ್ಲೇ ಅಮೇರಿಕ ಚೈನಾ ಭಾಯಿ-ಭಾಯಿ ಆಗಿರುತ್ತೆ ಬಿಡಿ ಅದು ಬೇರೆ ಪ್ರಶ್ನೆ!

***

ಬೆಂಗಳೂರು ಬಿಟ್ರೂ ಮಂಗಗಳ ಥರ ವ್ಯವಹರಿಸೋದನ್ನ ನಮ್ ಕರ್ನಾಟಕದ ರಾಜಕಾರಣಿಗಳು ಯಾಕ್ ಬಿಡೋದಿಲ್ಲ ಅಂತ ಇವತ್ತು ಹೊಳೀತು - ಹೇಳಿ ಕೇಳಿ ಆಂಜನೇಯ ಕನ್ನಡಿಗನೇ ತಾನೆ? ಹೀಗೇ 'ಶರಣು ಶರಣು ಓ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ...' ಅಂತಾ ಹಾಡ್‌ತಾ ಇರಬೇಕಾದರೆ ತಟ್ಟನೆ ಈ ಬಲ್ಬು ಹೊತ್ತಿಕೊಂಡಿತು. ಬೆಂಗಳೂರ್ ಬಿಟ್ಟು ಬೆಳಗಾವಿ ಸೇರಿದ್ರೂ ಕಚ್ಚಾಡೋದೂ ಕೂಗಾಡೋದು ನಮ್ಮವರ ಜನ್ಮ ಸಿದ್ಧ ಹಕ್ಕು, ಅಲ್ಲಲ್ಲ, ಜನ್ಮ ಸಿದ್ಧ ಪರಂಪರೆ, ಮತ್ತಿನ್ನೇನ್ ಆಗುತ್ತೆ?

***

ಮೊನ್ನೆ ಎನ್‌ಪಿಆರ್ ನಲ್ಲಿ ಸಾರ್ವಭೌಮ ಪರ್ವೇಜ್ ಮುಷಾರಫ್ ಸಂದರ್ಶನ ನೀಡ್ತಾ ನೀಡ್ತಾ ತಮ್ಮ ಇಂಟಲಿಜೆನ್ಸ್ ಏಜನ್ಸಿ (ಐಎಸ್‌ಐ) ಗೆ ತಮಗೆ ಲಾಯಲ್ ಆದವರನ್ನು ಮಾತ್ರವೇ ನೇಮಕ ಮಾಡಿದ್ದೇನೆ ಎನ್ನುವುದನ್ನು ಅದು ಸಹಜವಾದುದು ಎನ್ನುವಂತೆ ಹೇಳಿದರು. ಮೊದಲೇ ಸರ್ವಾಧಿಕಾರಿ ತಾನು ಆಡಿದ್ದೇ ಆಟ, ಮಾಡಿದ್ದೇ ಮಾಟ, ಅಂತಾದ್ಧರಲ್ಲಿ ಇವರಿಗೆ ತಿರುಗಿ ಬೀಳೋದಾದರೂ ಯಾರು? ಲಾಯಲ್ ಇರಲಿ ಇಲ್ಲದಿರಲಿ ಅವರ ಕೆಳಗಿರೋ ಎಲ್ಲಾ ಚಮಚಾಗಳನ್ನೂ ಬಗ್ಗಿಸಿದ್ದಾರಂತೆ! ಅವರ ಪುಸ್ತಕದ ಹೆಸರು 'ಇನ್ ದಿ ಲೈನ್ ಆಫ್ ಫಯರ್' ನನ್ನ ಕಿವಿಗೆ 'ಇನ್ ದಿ ಲೈ ಆಫ್ ಫೈಯರ್' ಕೇಳಿಸಿದ ಹಾಗಾಯಿತು, ಪಾಕಿಸ್ತಾನ ಬಿಟ್ಟು ಅಮೇರಿಕಕ್ಕೆ ಬಂದ್ರೂ ಆ ಮನುಷ್ಯಾ ಹೇಳೋ ಸುಳ್ಳೇನೂ ಕಡಿಮೆಯಾದಂತಿಲ್ಲ.

Wednesday, September 27, 2006

ಕರ್ಮಯೋಗಿ ಎಂಬ ಇರುವೆ

ಇರುವೆಯೊಂದು ಬಳಲಿ ಬೆಂದು ದಿನವ ಸವೆಸಿ ಬರುತಿರೆ
ಇಂದಿನುಳಿವು ನಾಳಿನಳಿವ ಹಚ್ಚಿಕೊಂಡು ಕೊರಗಿರೆ ೧

ನಮ್ಮನುಳಿಸು ಇದರಿಂದ ಭೀಕರ ಬರಗಾಲ
ದೈವ ನೆನೆದು ನಭಕೆ ಮುಗಿದು ಚಾಚಿತು ಮುಂಗಾಲ ೨

ರೆಕ್ಕೆ ಇರುವ ಹಕ್ಕಿಗಳು ಹಾರಿ ದೂರ ಹೋದವು
ಬಾಯಿ ಬರದ ಬಡಪಾಯಿಗಳು ಕಕ್ಕಾಬಿಕ್ಕಿಯಾದವು ೩

ದೂರದಲ್ಲಿ ವಲಸೆ ಹಕ್ಕಿ ಕಂಡಿತಪ್ಪ ಕಣ್ಣಿಗೆ
ಅದರ ಜೊತೆ ಹಾರುವ ಆಲೋಚನೆ ಬಂತು ಇರುವೆಗೆ ೪

ಒಡನೆ ತಾನು ಗಡಿಬಿಡಿಯಲಿ ಓಡಲು ಶುರುಮಾಡಿತು
ವಲಸೆ ಹಕ್ಕಿ ರೆಕ್ಕೆ ಒಳಗೆ ಬೆಚ್ಚಗೆ ತಾ ಕೂತಿತು ೫

ಉರಿವ ಸೂರ್ಯ ಹೋದ ಕಡೆಗೆ ವಲಸೆ ಹಕ್ಕಿ ಹಾರಲು
ರೆಕ್ಕೆ ಒಳಗೆ ಅವಿತ ಮರಿಗೆ ಹುಟ್ಟಿತು ಎದೆ ಪುಕ್ಕಲು ೬

ಎಷ್ಟೋ ಹೊತ್ತು ಎಷ್ಟೋ ದೂರ ವಲಸೆ ಹಕ್ಕಿ ಹಾರಿತು
ಕೊನೆಗೂ ಒಂದು ಘಳಿಗೆಯಲ್ಲಿ ದೂರ ದೇಶ ಸೇರಿತು ೭

ರೆಕ್ಕೆಯಿಂದ ಜಿಗಿದ ಮರಿಗೆ ಬೆಚ್ಚನೆ ಆಹ್ವಾನ
ನೀಡಿದವು ಸುತ್ತಲಿನ ಹಸುರಾಗಿಹ ಹೂ ಬನ ೮

ತನ್ನ ಜಾಗೆ ಬಿಟ್ಟೆನೆಂದು ಒಮ್ಮೆ ದುಃಖವಾಯಿತು
ಬರದ ಬೇಗೆಯಿಂದ ಬದುಕಿ ಉಳಿದ ಖುಷಿಯೂ ಸೇರಿತು ೯

ದೂರ ದೇಶ ದೂರ ವಾಸ ಹಿಂದೆ ಹೋಗುವ ಯೋಚನೆ
ಸುತ್ತೆಲ್ಲವು ಹೊಸತರಲ್ಲಿ ತಾನು ಎಂಬ ಯಾಚನೆ ೧೦

ಕಣ್ಣು ಕಾಣುವಲ್ಲಿವರೆಗೆ ಹಲವು ಬಣ್ಣ ಗೋಚರ
ತನಗೆ ಬೇಡವಾಗಿ ಮನಸು ಇರುತ್ತಿತ್ತು ಎಚ್ಚರ ೧೧

ಹಾದಿ ಸವೆಸಿದಂತೆ ಹಲವು ಇರುವೆಗಳು ಕಂಡವು
ದಡ್ಡರೊಳಗೆ ಬುದ್ಧಿವಂತರೆಂಬ ಮರ್ಮ ನುಡಿದವು ೧೨

ಹೊಸತು ಹಳತು ಆಗುವಷ್ಟರಲ್ಲಿ ಮರಿಗೆ ತಿಳಿಯಿತು
ಒಂಟಿ ತಾನು ಎಂಬ ಭಾವ ಗಟ್ಟಿ-ಗಟ್ಟಿಯಾಯಿತು ೧೩

ಇಂದು ದುಡಿದು ಅಂದೇ ತಿನ್ನೋ ಸತ್ಯವೆಂಬ ಕನ್ನಡಿ
ಇನ್ನೂ ಬೇಕು ಎಂಬುದಕ್ಕೆ ಬರೆದಾಯಿತು ಮುನ್ನುಡಿ ೧೪

ಹಿಗ್ಗಿನಲ್ಲಿ ನಾಳೆಗಾಗಿ ಕೂಡಿ-ಕೂಡಿ ಹಾಕಲು
ಎಲ್ಲ ಕಡೆಯೂ ಸಮೃದ್ಧಿ ಹಿಡಿಯುವಷ್ಟು ಮುಗ್ಗಲು ೧೫

ಸುಖದ ಪದರಿನಲ್ಲಿ ಆಗ್ಗೆ ಒಂಟಿ ತಾನು ಎನಿಸುತಿತ್ತು
ಹಿತದ ತನ್ನ ಶಿಖರದಲ್ಲಿ ತನ್ನ ತಾನು ಮರೆಯುತಿತ್ತು ೧೬

ಹೊಸ ಜಾಗವು ಹಳೆಯದಾಗೆ ಹೊಸ ಹಾಡಿಗೆ ತೊನೆಯಿತು
ಗಾಳಿ ಇರುವಲಿ ಧೂಳೂ ಇರುವ ಸರಳ ಸತ್ಯ ಹೊಳೆಯಿತು ೧೭

ಹಿಡಿಯಬೇಕು ಕೂಡಬೇಕು ಭಲೇ ಬಂಡವಾಳ
ಅದರ ಮೇಲೇ ತಿರುಗಿ ಬೀಳಬೇಕು ಎಂಬ ಕಳವಳ ೧೮

ಮುಂದೆ ತನ್ನ ಪರಿವಾರ ದೊಡ್ಡದಾಗಿ ಬೆಳೆದೂ
ಎಲ್ಲೋ ಏನೋ ಕಳೆದುಕೊಂಡ ಭಾವ ಬಿಟ್ಟು ಹೋಗದು ೧೯

ಕರ್ಮಯೋಗಿ ಎಂಬ ಇರುವೆ ಹೊಸತನೊಪ್ಪಿಕೊಂಡಿತು
ಕೊನೆಗೆ ತಾನೇ ತಿಣುಕಿ ಗೇಯ್ದು ಪ್ರಾಣವನ್ನೆ ಬಿಟ್ಟಿತು ೨೦

***

ನವೆಂಬರ್ ೧೭, ೨೦೦೫ ರಂದು ಬರೆದ ಈ ಕವನ ೨೦೦೬ ರ ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದೆ.

Tuesday, September 26, 2006

ನಾವು ಮತ್ತು ನಮ್ಮ ವಸ್ತುನಿಷ್ಟ ನಿಲುವುಗಳು

ಅವರವರ ಸ್ಪಂದನಶೀಲತೆಯ ಮೇಲೆ ಆಗುಹೋಗುಗಳ ಕುರಿತು ಒಂದಲ್ಲಾ ಒಂದು ನಿಲುವು ನಮ್ಮೆಲ್ಲರಲ್ಲಿರೋದು ಸರ್ವೇ ಸಾಮಾನ್ಯ. ವೃತ್ತಿಪರರಾಗಿ ಯೋಚಿಸಿ ನಮ್ಮ ಅನುಭವಗಳ ಹಿನ್ನೆಲೆಯಲ್ಲಿ ಒಂದು ಸಂದರ್ಭವನ್ನು ಕುರಿತು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರಲ್ಲಿ ಹಲವಾರು ಸಂದರ್ಭಗಳು ನಮ್ಮನ್ನು ಕಟ್ಟಿಹಾಕುವುದು ಸಾಮಾನ್ಯ. ಈ ಸಾಮಾನ್ಯವನ್ನು ಮೀರಿ ನಿಂತು ಇರುವ ಆಯಾ ವಿಷಯವನ್ನು ವಸ್ತುವಿನ ನೆಲೆಯಲ್ಲಿ ಕುರಿತು ಆಲೋಚಿಸಿ ಅದರ ಮೇಲೆ ನಮ್ಮ ಅನಿಸಿಕೆ, ದೃಷ್ಟಿಕೋನವನ್ನು ಹಂಚಿಕೊಳ್ಳೋದನ್ನ ನಾವೇಕೆ ರೂಢಿಸಿಕೊಳ್ಳೋದಿಲ್ಲ ಎಂಬ ಆಲೋಚನೆ ಬಂತು.

ಇತ್ತೀಚೆಗೆ ಓದಿದ ಪುಸ್ತಕವಿರಬಹುದು, ಅಥವಾ ಪತ್ರಿಕೆಗಳಲ್ಲಿ ದಿನವೂ ಓದುವ ವರದಿಗಳಿರಬಹುದು, ಅಥವಾ ಸ್ನೇಹಿತರು ಬರೆದ ಕಥೆ-ಕವನವನ್ನು ಕುರಿತು ನಾವು ನೀಡುತ್ತಿರುವ ಅನಿಸಿಕೆಯಾಗಿರಬಹುದು, ಅಥವಾ ಯಾರದ್ದೋ ಲೇಖನಕ್ಕೆ ಬರೆಯುತ್ತಿರುವ ಕಾಮೆಂಟ್ ಇದ್ದಿರಬಹುದು ಇವೆಲ್ಲವನ್ನೂ ಸೂಕ್ಷ್ಮವಾಗಿ ಆಲೋಚಿಸುತ್ತಾ ಬಂದಾಗ ಬಹಳಷ್ಟು ಜನ ಸಮಯದ ಅಭಾವವನ್ನೋ ಮತ್ತೇನನ್ನೋ ನೆಪವಾಗಿ ಒಡ್ಡಿ ಒಂದೇ ನುಣುಚಿಕೊಂಡು ಹೋಗುತ್ತಾರೆ, ಇಲ್ಲಾ ತಿಪ್ಪೆಸಾರಿಸಿದ ಹಾಗೆ ಏನೋ ಒಂದು ಹೇಳಿಬಿಡುತ್ತಾರೆ, ಹೀಗೆ ಮಾಡುವಲ್ಲಿ ನಾನೂ ಹೊರತಲ್ಲ ಅನ್ನಿಸಿತು. ನಮಗೆ ರಚನಾತ್ಮಕವಾಗಿ (constructive) ಫೀಡ್‌ಬ್ಯಾಕ್ ಕೊಡೋದಕ್ಕೆ ಬರೋದಿಲ್ಲವೋ ಅಥವಾ ಒಂದು ವೇಳೆ ನಿಜವನ್ನೇ ಹೇಳಿದರೆ ಅದರಿಂದ ಇನ್ನೇನು ಪರಿಣಾಮಗಳಾಗುತ್ತವೆಯೋ ಎಂಬ ಹೆದರಿಕೆಯೋ ಯಾರಿಗೆ ಗೊತ್ತು? ಇರಾಕ್ ಕದನವಾಗಲೀ, ಇಸ್ರೇಲ್‌ನವರು ಹಿಜಬುಲ್ಲಾ ಮೇಲೆ ನಡೆಸಿದ ಧಾಳಿಯಂತಹ ದೊಡ್ಡ ವಿಷಯಗಳನ್ನು ತೆಗೆದುಕೊಂಡು ದೊಡ್ಡ ವಾದವಿವಾದಗಳಾಗಲೀ ಎಂದೇನೂ ಹೇಳುತ್ತಿಲ್ಲ (ಹಾಗೆ ಆಗುವುದು ಒಂದು ಲೆಕ್ಕದಲ್ಲಿ ಒಳ್ಳೆಯದೆ, ಅದು ಬೇರೆ ಪ್ರಶ್ನೆ), ನಮ್ಮ ನಡುವೆ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ನಾವು ಸ್ವಂದಿಸಬಹುದು, ನಮ್ಮ ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಆದರೆ ಅವರವರ ಅಭಿಪ್ರಾಯಗಳು ಅವರದ್ದೇ ಆದರೂ ಅದರ ಹಿಂದೆ ಸ್ಪಷ್ಟತೆ ಇದೆಯೇ, ಸರಿಯಾದ ಕಾರಣಗಳಿವೆಯೇ, ಆಧಾರಗಳಿವೆಯೇ, ಅನಿಸಿಕೆ ಬೇರೆ, ನಂಬಿಕೆ ಬೇರೆ ಎನ್ನುವ ಪ್ರಜ್ಞೆ ಇದೆಯೇ ಎಂದೆಲ್ಲಾ ಯೋಚಿಸಬೇಕಾಗುತ್ತದೆ.

ನನ್ನ ಪ್ರಕಾರ ಯಾವುದಾದರೊಂದು ಪ್ರಶ್ನೆಗೆ 'ಹೌದು' ಅಥವಾ 'ಇಲ್ಲ' ಎಂಬ ಚಿಕ್ಕ ಉತ್ತರಗಳಷ್ಟೇ ಸಾಲದು, ಅಂತಹ ಉತ್ತರಗಳ ಜೊತೆ 'ಏಕೆ?' ಎನ್ನುವುದನ್ನೂ ಸೇರಿಸಿಕೊಳ್ಳಬೇಕಾಗುತ್ತದೆ, ಎಷ್ಟೋ ಜನರು ಈ 'ಏಕೆ' ಯನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ, ಹಾಗೆ ಮಾಡುವುದರಿಂದ ಅವರ ಅನಿಸಿಕೆ/ಅಭಿಪ್ರಾಯಗಳು ಇದ್ದರೂ ಇಲ್ಲದಂತೆ ಎನ್ನುವ ಸಣ್ಣ ಸತ್ಯವೂ ಅವರನ್ನು ತಲುಪೋದಿಲ್ಲ. ಆದರೆ 'ಏಕೆ' ಎನ್ನುವ ಪ್ರಶ್ನೆಯನ್ನು ಉತ್ತರಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಸಾಧ್ಯವಾದಷ್ಟು ಆಧಾರವನ್ನು ನೀಡಬೇಕಾಗುತ್ತದೆ, ಯಾವುದಕ್ಕಾದರೂ ಹೋಲಿಕೆ ಮಾಡಿ ನೋಡಿರಬೇಕಾಗುತ್ತದೆ, ಏನಿಲ್ಲವೆಂದರೂ ಹಲವಾರು ಕೋನಗಳಿಂದ ಒಂದೇ ವಿಷಯವನ್ನು ಅಳೆದಿರಬೇಕಾಗುತ್ತದೆ. ನಿಮಗೆ George Bush ಕಂಡರೆ ಇಷ್ಟವೇ ಎಂದು ಯಾರನ್ನಾದರೂ ಕೇಳಿ ನೋಡಿ, ಆಗ ತಟ್ಟನೆ ಉತ್ತರ ಹೊರಗೆ ಬರುತ್ತದೆ, ಅವರ ಉತ್ತರದ ಬೆನ್ನ ಹಿಂದೆ 'ಏಕೆ' ಎಂದು ಕೇಳಿ ನೋಡಿ, ಕೆಲವರಿಗೆ ಸ್ವಲ್ಪ ತಡವರಿಕೆ ಶುರುವಾಗುತ್ತದೆ, ಇನ್ನೂ ಮುಂದಕ್ಕೆ ಹೋಗಿ, ವಾದ ಮಾಡಲಿಕ್ಕೋಸ್ಕರವೆಂದೇ ಅವರು ಹೇಳಿದ ಉತ್ತರಕ್ಕೆ ವಿರೋಧವಾಗಿ ವಾದಿಸಿ ನೋಡಿ, ಅವರ ಉತ್ತರದ ಆಳ ಸ್ಪಷ್ಟವಾಗುತ್ತದೆ. ಬೇಸರದ ಸಂಗತಿಯೆಂದರೆ ನಮ್ಮ ಅನುಭವಗಳನ್ನು ನಮ್ಮ ಗತ ಇತಿಹಾಸ ಆವರಿಸಿಕೊಂಡಂತೆ ನಮ್ಮ ಅಭಿಪ್ರಾಯ-ಅನಿಸಿಕೆಗಳು ಹೆಚ್ಚು ಸಮಯ ಉದ್ಭವಿಸೋದು, ಬೆಳೆಯೋದು ಈ ರೀತಿ ಅರ್ಧ ಬೆಂದ ಹೇಳಿಕೆಗಳಿಂದಲೇ, ಅಥವಾ ಅಲ್ಲಿಲ್ಲಿ ಕೇಳಿ ಬರುವ ಎಷ್ಟೋ ಸಾರಿ ಸತ್ಯವಲ್ಲದ ವರದಿಗಳಿಂದಲೇ. ಯಾವುದೇ ಒಂದು ವಿಷಯವನ್ನು ತೆಗೆದುಕೊಂಡು ಎರಡೂ ಕಡೆಯವರ ಹಾಗೆ ವಾದ ಮಂಡಿಸುವುದು ಬೇರೆ, ಆಂತರ್ಯದಲ್ಲಿ ನಮ್ಮನ್ನು ನಾವು ನಂಬಿಸಲು ನಡೆಸುವ ಸಂವಾದ, ಸಂಘರ್ಷಗಳು ಬೇರೆ - ಇಂತಹ ಆಂತರಿಕ ಹಣಾಹಣಿಗಳು ಆದಷ್ಟು ಪಕ್ವವಾಗಿರಲಿ ಅನ್ನೋದು ನನ್ನ ಆಶಯ.

Sunday, September 24, 2006

ಸಿರಿತನ-ಬಡತನ

ಮಾನವ ಸಂಸ್ಕೃತಿಯಷ್ಟೇ ಹಳೆಯದಾದರೂ ಸಿರಿತನ-ಬಡತನವೆಂಬ ಮಾನಸಿಕ ಸ್ಥಿತಿ ಅಥವಾ ಸಾಮಾಜಿಕ ಸ್ಥಿತಿಯ ಬಗ್ಗೆ ನಾನು ಓದಿದ ಕಡೆಯೆಲ್ಲ ನನಗೆ ಈ ವಿಷಯಗಳನ್ನು ಕುರಿತು ಹಲವಾರು ನೆರಳುಗಳು ಕಂಡುಬರುತ್ತವೆ, ಅವು ಆಯಾ ಆಕೃತಿಯ ಮಾನಸಿಕ ಸ್ಥಿತಿಗತಿಯ ದ್ಯೋತಕವಾಗಿರಬಹುದು ಅಥವಾ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಭೌತಿಕ ವಿಷಯ ವಸ್ತುಗಳೇ ಇಲ್ಲದೇ ಬರೀ ನೆರಳೇ ನನಗೆ ಗೋಚರಿಸಿರಬಹುದು.

ಸಿರಿತನ-ಬಡತನಗಳನ್ನು ಬರೀ ಸಾಮಾಜಿಕ ನೆಲೆಗಟ್ಟಿನಲ್ಲಿ ಉಳ್ಳವರು, ದಿಕ್ಕುಗೆಟ್ಟವರು ಎಂದಷ್ಟೇ ನಾನು ಎಂದೂ ಪರಿಗಣಿಸಿದ್ದಿಲ್ಲ, ಉದಾಹರಣೆಗೆ ಹೃದಯವಂತಿಕೆಯ ಬಡತನ-ಸಿರಿತನಗಳನ್ನೂ ಸಹ ನಾನು ಗುರುತಿಸುತ್ತೇನೆ, ಒಬ್ಬ ವ್ಯಕ್ತಿಯ ಹೃದಯವಂತಿಕೆ ಆತನ/ಆಕೆಯ ಸಾಮಾಜಿಕ ಸ್ಥಿತಿಗತಿಯ ಮೇಲೆ ನೇರವಾಗಿ ಅವಲಂಭಿತವಾಗಿದೆಯೋ ಅಥವಾ ಅವೆರಡೂ ಬೇರೆ ಬೇರೆಯೋ ಎನ್ನುವುದನ್ನು ನಿಮ್ಮ ತರ್ಕಕ್ಕೆ ಬಿಡುತ್ತೇನೆ.

ಈ ಎರಡು ವಸ್ತುಗಳನ್ನು ಕುರಿತು ಈ ಸಮಯದಲ್ಲಿ ನನಗನ್ನಿಸಿದ ಟಿಪ್ಪಣಿಗಳನ್ನು ಹೀಗೆ ಪೋಣಿಸಿಕೊಂಡು ಹೋಗುತ್ತಿದ್ದೇನೆ.

***

ಸಿರಿತನ ಎನ್ನೋದು ಕೆಲವರಿಗೆ born with a sliver spoon ಅನ್ನೋ ತರಹ ಹುಟ್ಟಿದಂದಿನಿಂದ ಸಹಜವಾಗಿದ್ದಿರಬಹುದು, ಅಥವಾ ಜೀವಿತಾವಧಿಯ ಮಧ್ಯೆ ಲಭಿಸಿದ ಸ್ಥಿತಿಯಾಗಿರಬಹುದು, ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಯೋಚಿಸಿದರೆ ಹುಟ್ಟಾ ಆಗರ್ಭ ಶ್ರೀಮಂತರಾಗಿದ್ದವರ ಆಲೋಚನೆಗಳಿಗೂ ಜೀವನ ಪರ್ಯಂತ ಹಣ ಕೂಡಿಟ್ಟು ಶ್ರೀಮಂತಿಕೆಯ ಮಟ್ಟವನ್ನು ಮುಟ್ಟಿದವರಿಗೂ ಬಹಳಷ್ಟು ವ್ಯತ್ಯಾಸಗಳನ್ನು ಗಮನಿಸಬಹುದು. ಅದರಲ್ಲೂ ತಾವೇ ಗಳಿಸಿ ಉಳಿಸಿ ಬೆಳೆಸಿದ ಹಣಕ್ಕೆ ಜನರು ಕೊಡುವ ಮರ್ಯಾದೆಗಿಂತಲೂ ದಿಢೀರನೆ ಲಾಟರಿ ತಾಗಿಯೋ ಮತ್ತಿನ್ಯಾವುದೋ ರೂಪದಲ್ಲೋ ಹಣಗಳಿಸಿದವರು ಕೊಡುವ ಮರ್ಯಾದೆ ಬೇರೆಯಾದುದು. ಹೀಗೆ ಹಲವಾರು ರೀತಿಯಲ್ಲಿ ಜನರಿಗೆ ಒಂದೊಂದು ರೂಪಾಯಿಯ ಮೌಲ್ಯ ಕಂಡು ಬರುತ್ತದೆ.

ನಮ್ಮಲ್ಲಿ ವಿವಾಹ ಮತ್ತೊಂದನ್ನು ಮಾಡುವಾಗ ಜಾತಿಯ ಜೊತೆಗೆ ಅಂತಸ್ತನ್ನೂ ಸಹ ವಿಶೇಷವಾಗಿ ಗಮನಿಸಲಾಗುತ್ತದೆ, ಮೊದಮೊದಲು ಜಾತಿ, ಗೋತ್ರ ಸರಿಯಾಗಿ ಕೂಡಿ ಬಂದರೆ ಆಯಿತು, ಅಂತಸ್ತಿನಲ್ಲೇನಿದೆ ವಿಶೇಷ ಎಂದು ಯೋಚಿಸುತ್ತಿದ್ದವನಿಗೆ ಇತ್ತೀಚೆಗೆ ನಮ್ಮ ನೆರೆಹೊರೆಯಲ್ಲಿ ಕೇಳಿದ ಒಂದು ಸಂಗತಿ ಇನ್ನಷ್ಟು ಯೋಚಿಸುವಂತೆ ಮಾಡಿತು. ಹುಡುಗಿಯ ಕಡೆಯವರು ಆಗರ್ಭ ಶ್ರೀಮಂತರು, ಊರನ್ನೇ ಕೊಳ್ಳುವಷ್ಟು ಹಣವಿದೆ ಅವರಲ್ಲಿ, ಜನಬಲವಿದೆ, ಹುಡುಗನ ಕಡೆಯವರು ಮಧ್ಯಮ ವರ್ಗದವರು, ಹುಡುಗ ದೆಹಲಿಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡಿದ್ದಾನೆ, ಆದರೆ ಈ ಎರಡೂ ಕಡೆಯವರ ಒಟ್ಟು 'ಅಂತಸ್ತನ್ನು' ತಕ್ಕಡಿಯಲ್ಲಿಟ್ಟು ತೂಗಿ ನೋಡಿದರೆ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ.

ಹೀಗಿರುವಾಗ ಹುಡುಗಿಯ ಮನೆಯವರು ಹುಡುಗಿಗೆ ಮದುವೆಗೆ ಮೊದಲು ಒಂದು ಕ್ರ್ಯಾಷ್‌ಕೋರ್ಸ್‌ನಲ್ಲಿ ಅಡುಗೆ ಮಾಡುವುದನ್ನು ಹೇಳಿಕೊಟ್ಟಿದ್ದರೇ ವಿನಾ ಒಂದು ಚಹಾ ಮಾಡುವುದನ್ನು ಕಲಿಯುವ ಅಗತ್ಯವೂ ಆ ಹುಡುಗಿಗೆ ಆ ವರೆಗೆ ಇರಲಿಲ್ಲ. ಆದರೆ ಹುಡುಗನ ಮನೆಯವರು ಆ ಹುಡುಗನನ್ನು ಬೆಳೆಸಿದ ಬಗೆ ನಾಳೆಯ ಬಗ್ಗೆ ಚಿಂತಿಸುವ ಸ್ವಭಾವವನ್ನೂ, ಒಂದೊಂದು ರೂಪಾಯಿಯ ಬಗ್ಗೆ ಆತ ಯೋಚಿಸುವ ಸ್ವಭಾವವನ್ನೂ ಗಳಿಸಿಕೊಟ್ಟಿತ್ತು. ಸಂಸಾರವೆಂದರೆ ಸಂಘರ್ಷಗಳಿಗೆ ಕೊನೆಮೊದಲೆನ್ನುವುದಿದೆಯೇ, ಹೀಗಿರುವಾಗ ಈ ಸಂಬಂಧದಲ್ಲೂ ವ್ಯತ್ಯಾಸಗಳು ಬರತೊಡಗಿದವು - ಹುಡುಗನ ಮಾವನವರು, ಅಂದರೆ ಹುಡುಗಿಯ ತಂದೆ ದೆಹಲಿಯಲ್ಲಿ ಹೊಸದಾಗಿ ಮದುವೆಯಾದವರ ಹೆಸರಿನಲ್ಲಿ ಒಂದು ಒಳ್ಳೆಯ ಫ್ಲ್ಯಾಟ್ ಒಂದನ್ನು ಖರೀದಿಸಿಕೊಟ್ಟರು - ಹುಡುಗನಿಗೆ ಅದನ್ನು ವರದಕ್ಷಿಣೆಯ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದೇನಲ್ಲ ಎನ್ನುವ ಸ್ವಯಂ ಆಲೋಚನೆಯ ಇರುಸುಮುರುಸಿನ ಜೊತೆಗೆ ತನ್ನ ಕೈಯಲ್ಲಿ ಇನ್ನು ಹತ್ತು ವರ್ಷಗಳಲ್ಲೂ ಆ ರೀತಿ ಹಣ ಸುರಿದು ಒಂದು ಫ್ಲ್ಯಾಟ್ ಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವ ನೈಜ ಸ್ಥಿತಿಯ ಅರಿವು ಹುಟ್ಟಿಸುವ ಕೈಕೈ ಹಿಸುಕಿಕೊಳ್ಳುವ ಸಂದರ್ಭ. ಹುಡುಗಿಯ ಹೆಸರಿನಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ಕೆಲಸಗಾರರೂ ಈ ಮದುಮಕ್ಕಳ ಬೆನ್ನು ಹತ್ತಿ ದೆಹಲಿ ಮುಟ್ಟಿದರೂ ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲೇ ದೆಹಲಿಯ ಹವೆ ಆ ಕೆಲಸಗಾರರನ್ನು ಮತ್ತೆಲ್ಲೋ ಹೋಗುವಂತೆ ಮಾಡಿ, ಕೊನೆಗೆ ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ಇವರಿಬ್ಬರೇ ಅಡುಗೆ ಮಾಡಿ ಊಟ ಮಾಡುವ ಸ್ಥಿತಿ ತಲುಪಿತು. ಈ ಮಧ್ಯೆ ಹೊರಗಿನಿಂದ ತರಿಸಿದ ಊಟವೂ, ಹಣ್ಣುಹಂಪಲುಗಳನ್ನು ತಿನ್ನುವುದೂ ನಡೆಯಿತು. ಇವರಿಬ್ಬರಿಗೆ ಸಹಾಯ ಮಾಡಲೆಂದು ದೆಹಲಿ ಸೇರಿದ ಹುಡುಗನ ತಾಯಿಯಿಂದ ಸಂಬಂಧಗಳು ಹದಗೆಟ್ಟವೇ ವಿನಾ ಅದರಿಂದ ಸಹಾಯವೇನೂ ಆದಂತೆ ತೋರಲಿಲ್ಲ. ಮನೆಯಲ್ಲಿ ಒಳ್ಳೆಯ ಊಟ ಸಿಗುತ್ತದೆ ಎನ್ನುವುದೊಂದನ್ನು ಬಿಟ್ಟರೆ ಒಂದು ಕಡೆ ಆಫೀಸಿನ ಕೆಲಸದೊತ್ತಡಗಳು, ಮನೆಗೆ ಬಂದರೆ ಅಮ್ಮ-ಹೆಂಡತಿಯರಿಬ್ಬರ ನಡುವೆ ಒಬ್ಬರ ಪರ ವಹಿಸಲೇ ಬೇಕಾದ ಅನಿವಾರ್ಯತೆಯ ನಡುವೆ ಹುಡುಗ ಬಳಲಿ ಹೋದ. ಬೆಳಿಗ್ಗೆ ಘಂಟೆ ಎಂಟಾದರೂ ಎದ್ದು ಮುಖಕ್ಕೆ ನೀರು ಕಾಣಿಸದ ಸೊಸೆಯನ್ನು ಕಂಡರೆ ಅತ್ತೆಗೆ ಆಗದು, ನನ್ನ ಸ್ವಾತಂತ್ರ್ಯಕ್ಕೆ ಇವರೇಕೆ ಧಕ್ಕೆ ತರುತ್ತಿದ್ದಾರೆ ಎನ್ನುವುದು ಸೊಸೆಯ ಬಗೆ ಹರಿಯಲಾರದ ಸಮಸ್ಯೆ - ಕೊನೆಗೆ ನಾನಿರುವುದು ನಮ್ಮ ಅಪ್ಪ ಕೊಟ್ಟ ಮನೆಯಲ್ಲಿ ಎನ್ನುವ ಗರ್ವ ಬೇರೆ. ಗಂಡನಿಗೆ ಒಂದು ಲೋಟಾ ಕಾಫಿಯನ್ನು ಮಾಡಿಕೊಡದ ಹೆಂಡತಿ ಎಂದು ಅತ್ತೆ ಅಂದುಕೊಂಡರೆ, ನಾನೇನು ಈ ಮನೆಯ ಕೆಲಸದವಳಲ್ಲ ಎನ್ನುವುದು ಸೊಸೆಯ ಜವಾಬು.

ಹೀಗೇ ಹಲವು ತಿಂಗಳುಗಳು ನಡೆದು ಒಂದು ದಿನ ಹುಡುಗಿಯ ತಂದೆಯ ಕಿವಿಗೆ ತಮ್ಮ ಮಗಳು ಫೋನಿನಲ್ಲಿ ಅತ್ತು ಸುದ್ದಿಯನ್ನು ಆಕೆಯ ಚೌಕಟ್ಟಿನಲ್ಲಿ ವರದಿಯನ್ನು ಒಪ್ಪಸಿದ್ದೇ ತಡ ಅವರು ಕೆಂಡಾಮಂಡಲವಾದರು - ಗಿಳಿಯನ್ನು ಸಾಕಿ ಗಿಡುಗನ ಕೈಗೆ ಕೊಟ್ಟೆ ಎಂದುಕೊಂಡರು, ನಮ್ಮ ಮಗಳು ಒಂದು ದಿನವೂ ಅತ್ತಿದ್ದಿಲ್ಲ, ನೀರು ಕುಡಿದ ಲೋಟವನ್ನು ಎತ್ತಿ ಇಟ್ಟವಳಲ್ಲ ಅಂತಹವಳನ್ನು ನೀವು ಅಡುಗೆ ಮಾಡು, ಬಾಗಿಲು ಸಾರಿಸು, ಮನೆ ಕಸ ಹೊಡಿ ಎನ್ನಲು ನಿಮಗೇನು ಹಕ್ಕಿದೆ ಎಂದವರು ಬೊಬ್ಬೆ ಹಾಕಿದರೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಆಕೆ ನಮ್ಮ ಮನೆಯ ಸೊಸೆ, ನಮ್ಮ ಮನೆಯಲ್ಲಿ ಈ ರೀತಿ ಸಂಪ್ರದಾಯ ಎಂದಿನಿಂದಲೂ ನಡೆದು ಬಂದಿದೆ ಅದಕ್ಕೆ ಆಕೆಯೇನೂ ಇಂದು ಹೊರತಲ್ಲ ಎಂದು ಹುಡುಗನ ತಂದೆಯವರು ಸಮಾಧಾನವಾಗಿಯೇ ಉತ್ತರಕೊಟ್ಟರು...ಎರಡೂ ಕಡೆಯವರ ಸಮಾಧಾನ-ಅಬ್ಬರ ಇವುಗಳ ನಡುವೆ ಹುಡುಗ-ಹುಡುಗಿಯ ಸಂಬಂಧವೂ ಬಾಡುತ್ತಾ ಹೋಗಿ ಕೊನೆಗೆ ಮದುವೆಯಾಗಿ ಒಂದು ವರುಷದ ಒಳಗೇ ಸಂಬಂಧ ಕಡಿದು ಹೋಗುವ ಸ್ಥಿತಿಗೆ ಬಂದಿದೆಯೆಂದು ತಿಳಿಯಿತು.

ಹಾಗಾದರೆ, ಈ ರೀತಿ ಅಂತಸ್ತಿನಲ್ಲಿ ವ್ಯತ್ಯಾಸವಿರುವ ಸಂಬಂಧಗಳು ಹೇಗೆ ನೆಲೆ ನಿಲ್ಲುತ್ತವೆ? ಒಂದು ವೇಳೆ ಇಬ್ಬರ ಅಂತಸ್ತು ಒಂದೇ ಆಗಿದ್ದರೂ ಅವರವರ ಸಂಪ್ರದಾಯ, ಆಚಾರ-ವಿಚಾರಗಳಲ್ಲಿ ಬದಲಾವಣೆ ಇರುವಾಗ ಯಾರು ಯಾರಿಗೆ ತಗ್ಗಿಬಗ್ಗಿ ನಡೆಯಬೇಕು, ಹೊಂದಿಕೊಂಡು ಹೋಗಬೇಕು? ಅಕಸ್ಮಾತ್ ಹುಡುಗನ ಮನೆಯವರು ಹುಡುಗನ ಜೊತೆಯಲ್ಲೇ ಇದ್ದರೆ, ಸೊಸೆ ಹುಡುಗನ ತಂದೆತಾಯಿಗಳ ಸೇವೆ ಮಾಡುವುದನ್ನು ಸಂಸಾರದ ಕಾನೂನು ಎನ್ನಲಾದೀತೇ? ಮುಂಜಾನೆದ್ದು ಮುಂಬಾಗಿಲ ಹೊಸ್ತಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಶುದ್ಧ ಹಳೆಯ ಸಂಪ್ರದಾಯದಿಂದ ಹಿಡಿದು ಇಂದಿನ ಬೆಡ್‌ಕಾಫಿ ವ್ಯವಸ್ಥೆಯಲ್ಲಿ ಎಲ್ಲಿ ನಡುವೆ ಗೆರೆಯನ್ನು ಯಾರು ಎಳೆಯಬೇಕು? ಈಗಿನ ಕಾಲದಲ್ಲಿ ಒಂದು ಮನೆಯನ್ನು ಹೊಕ್ಕ ಸೊಸೆಯ ಜವಾಬ್ದಾರಿ ಹೆಚ್ಚೋ ಅಥವಾ ಮನೆಗೆ ಬಂದವಳಿಗೆ ಸಾಧ್ಯವಾದಷ್ಟು ಆದರವನ್ನು ತೋರಿ ಎಲ್ಲರೊಳಗೊಂದಾಗಿಸಿಕೊಳ್ಳಬೇಕೆನ್ನುವ ಮಾತು ಹೆಚ್ಚೋ?

ಅಂತಸ್ತು ಹುಟ್ಟಿಸುವ ಸಂಘರ್ಷ ಈ ಬಗೆಯದಾದರೆ ಕಷ್ಟ ಪಟ್ಟು ಸಂಪಾದಿಸಿದ ಹಣದ ಹೊರೆ ಇನ್ನೊಂದು ಥರ - ಎಷ್ಟು ಗಳಿಸಿದರೂ ಸಾಲದು ಎನ್ನುವ ಸಾಮಾನ್ಯ ರೋಗದ ಜೊತೆಗೆ ಗಳಿಸಿದ್ದನ್ನು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವ ಮನಸ್ಸೂ ಬಹಳಷ್ಟು ಜನರಿಗೆ ಸಿದ್ಧಿಸೋದಿಲ್ಲ. ಸುಮಾರು ಐವತ್ತು ವರ್ಷಗಳವರೆಗೆ ಸಾಕಷ್ಟು ಹಣವನ್ನು ಕೂಡಿಸಿ ತಾವು ಕೂಡಿಟ್ಟ ಮೊತ್ತವನ್ನು ತಮ್ಮ ಜೀವನದ ಉಳಿದ ಅವಧಿಯಲ್ಲಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಅನುಭವಿಸಿ ಹೋಗುವವರು ಬಹಳ ವಿರಳ. ಜೊತೆಗೆ ತಾವೇ ಕೂಡಿ ಹಾಕಿಟ್ಟ ಸಂಪತ್ತನ್ನು ತಮ್ಮ ಮಕ್ಕಳು ಉಡಾಫೆಯಿಂದ ಹಾರಿಸಿ ತೆಗೆಯುತ್ತಿದ್ದರೆ ಇನ್ನೂ ಸಂಕಟ; ತಾವು ದುಡಿಯದ ಹಣದ ಬೆಲೆಯಿರದ ಮಕ್ಕಳು, ತಮ್ಮ ದುಡ್ಡಿನ ಅರಿವಿನ ಹೊರೆ ಹೊತ್ತ ಪೋಷಕರು ಹೀಗೆ ಮಕ್ಕಳು-ತಂದೆತಾಯಿಯರ ನಡುವೆ ಮತ್ತೊಂದು ರೀತಿಯ ಸಂಘರ್ಷವೇರ್ಪಟ್ಟಿದ್ದನ್ನು ನಾವು ನೋಡಬಹುದು.

ಒಂದು ಕಡೆ ತಮ್ಮ ಲೈಟ್‌ಬಿಲ್, ಹಾಲಿನ ಬಿಲ್‌, ತರಕಾರಿ ಬಿಲ್‌ನಲ್ಲಿ ಪ್ರತಿ ತಿಂಗಳು ಒಂದು ರೂಪಾಯಿಯೂ ಹಿಂದೆ-ಮುಂದೆ ಹೋಗದಂತೆ ಜಾಗರೂಕತೆಯಿಂದ ನೋಡಿಕೊಂಡು ಬರುವ ತಂದೆ, ಮತ್ತೊಂದು ಕಡೆ ದಿನಕ್ಕೆರಡು ಬಾರಿ ಹತ್ತತ್ತು ರೂಪಾಯಿ ಕೊಟ್ಟು ಕೋಕ್ ಅಥವಾ ಮತ್ತಿನ್ನೇನನ್ನೋ ಕುಡಿಯುವ, ಐಸ್ ಕ್ರೀಮ್ ತಿಂದು ಮಜಾ ಉಡಾಯಿಸುವ ಮಕ್ಕಳು. ಒಂದು ಕಡೆ ಒಂದು ಅಗಳು ಅನ್ನವನ್ನಾಗಲೀ, ಒಂದು ಕಾಳು ಅಕ್ಕಿಯನ್ನಾಗಲೀ ಚೆಲ್ಲಬಾರದೆಂದು ಅಚ್ಚುಕಟ್ಟಾಗಿ ಯೋಚಿಸುವ ಪೋಷಕರು, ಮತ್ತೊಂದು ಕಡೆ ತಾವು ಉರಿಸುವ ಪೆಟ್ರೋಲ್ ಮೇಲೆಯೇ ನಿಗಾ ಇರಿಸದ ಮಕ್ಕಳು. ಒಂದು ಕಡೆ ಹಳೆಯ ಮೈಂಡ್ ಸೆಟ್‌ನಲ್ಲೇ ಜೀವನ ನಡೆಸುವ ಪೋಷಕರು, ಮತ್ತೊಂದು ಕಡೆ ಹೊಸ ತಂತ್ರಜ್ಞಾನದ ಪರಿಚಯವಿರುವ ಮಕ್ಕಳು - ಹೀಗೆ ಹಲವಾರು ಏರುಪೇರುಗಳ ನಡುವೆಯೂ ಒಂದು ರೀತಿಯ ಸಮತೆ (equilibrium) ನಮಗೆ ಕಂಡುಬರುತ್ತದೆ. ಹಳೆ ಬೇರು ಹೊಸ ಚಿಗುರುಗಳ ನಡುವಿನ ಭಿನ್ನ ನಿಲುವನ್ನ ಸ್ವಲ್ಪ ಮಟ್ಟಿಗಾದರೂ ಸಾಧಿಸಿಕೊಳ್ಳಬಹುದು, ಆದರೆ ಇದ್ದೂ ಇಲ್ಲದಂತಿರುವವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ.

***

ಹಣಕಾಸಿನ ವಿಚಾರವಷ್ಟೇ ಅಲ್ಲ ಮತ್ತೆಲ್ಲಾ ರೀತಿಯಲ್ಲಿ ಸಿರಿತನ-ಬಡತನಗಳ ಆಯಾಮಗಳನ್ನು ಕಲ್ಪಿಸಿಕೊಂಡಾಗ ಈ ರೀತಿ ವಯಸ್ಸಿನ, ಇದ್ದು-ಇಲ್ಲದವರ, ಇಲ್ಲದೆ-ಇದ್ದವರ ಸಮೀಕರಣಗಳಲ್ಲಿ ಬಹಳಷ್ಟು ಪ್ಯಾರಾಮೀಟರುಗಳನ್ನು ನೋಡಬಹುದು. ಹಣ ಎನ್ನುವುದು ನಮಗಿರುವ ಹಲವಾರು ಸಾಧನಗಳಲ್ಲಿ ಒಂದು ಎಂಬುದನ್ನು ಹೆಚ್ಚು ಜನರು ಅರಿತಿರಲಾರರು, ಅಲ್ಲಿಯವರೆಗೆ ಹಣವೇ ಅಂತಹವರನ್ನು ಆಳತೊಡಗುತ್ತದೆ, ಎಲ್ಲವೂ 'ಇದ್ದವರ' ಸುತ್ತಮುತ್ತಲು ಗಿರಕಿ ಹೊಡೆಯತೊಡಗುತ್ತದೆ.

Thursday, September 21, 2006

ಕೆಲಸದ ಜೊತೆಗೆ ಬರಬಹುದಾದ ಸೋಶಿಯಲ್ ಲೈಫ್

'ನಿನಗೆ ಭಾರತದಲ್ಲಿ ಕೆಲಸಾ ಮಾಡೋದು ಅಂದ್ರೇ ಏನು ಅನ್ನೋದೇ ಮರೆತು ಹೋದ ಹಾಗಿದೆ!' ಅನ್ನೋದು ಇತ್ತೀಚೆಗೆ ನನ್ನನ್ನುದ್ದೇಶಿಸಿ ಒಂದಿಬ್ಬರು ಆಡಿದ ಮಾತುಗಳು. ಅದೇನೋ ನಿಜ, ಅಲ್ಲಿ ಕೆಲಸ ಮಾಡಿ ಅದೆಷ್ಟೋ ವರ್ಷಗಳು ಆದವು ಎಂದು ಯೋಚಿಸುತ್ತಿರುವಂತೆ, ಈ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ರಾಂತಿ, ಸೆಲ್ ಫೋನ್-ಎಸ್ಸೆಮ್ಮೆಸ್ ಕ್ರಾಂತಿ, ಬಳಕೆದಾರರ ಬೆಳವಣಿಗೆ, ಕಾಲ್‌ಸೆಂಟರ್‌ಗಳು ತಲೆ ಎತ್ತಿ ನಿಂತದ್ದು ಇವೆಲ್ಲವೂ ನಡೆದವು ಎನ್ನಿಸಿ ಒಂದು ಕಾಲು ಶತಮಾನ ನಿದ್ದೆ ಮಾಡಿಬಿಟ್ಟೆನೇನೋ ಎನ್ನುವಂತಾಯಿತು. 'ರಸ್ತೆ ಪಕ್ಕ ಎಳನೀರು ಮಾರೋರ ಸೊಂಟದಲ್ಲೂ ಒಂದೊಂದು ಮೊಬೈಲು ಫೊನಿರುತ್ತೆ' ಎಂದು ಕೇಳಿದಾಗ ಒಂದು ರೀತಿ ಆಶ್ಚರ್ಯವಾಗುತ್ತೆ, ಮತ್ತೊಂದು ಕಡೆ ಐವತ್ತು ಜನರು ತುಂಬಿರುವ ಬಸ್ಸಿನಲ್ಲಿ ಮುಕ್ಕಾಲು ಪಾಲು ಜನ ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಂತಹ ಪರಿಸ್ಥಿತಿಯ ಗಂಭೀರತೆಯನ್ನು ನೋಡಿ ಹೆದರಿಕೆಯೂ ಆಗುತ್ತೆ.

ನಾನು 'ಸಹೋದ್ಯೋಗಿಗಳು ಸ್ನೇಹಿತರಲ್ಲ' ಎಂದು ಬಲವಾಗಿ ನಂಬಿದವನು - ಈ ಮಾತು ಭಾರತದಲ್ಲಿ ಕೆಲಸ ಮಾಡುವಾಗ ಹೆಚ್ಚು ಅನ್ವಯವಾಗದಿದ್ದರೂ ಇಲ್ಲಂತೂ ಖಂಡಿತ ಎನ್ನಿಸಿಬಿಟ್ಟಿದೆ. ವಿಷಾದದ ವಿಷಯವೆಂದರೆ ಇಲ್ಲಿ ಸಹೋದ್ಯೋಗಿಗಳನ್ನು ಹೊರತು ಪಡಿಸಿದರೆ ನನ್ನಂತಹವರ ಸರ್ಕಲ್ ಬಹಳ ಚಿಕ್ಕದಾಗಿ ಹೋಗುತ್ತದೆ. ಅದಕ್ಕೆ ತಕ್ಕಂತೆ ವಾರದ ದಿನಗಳಲ್ಲಿ ಅರ್ಧಕ್ಕರ್ಧ ಸಮಯವನ್ನು ಆಫೀಸಿನಲ್ಲಿ ಕಳೆಯುವ ನಮಗೆ ಸಾಮಾಜಿಕ ಬದುಕು ಒಂದು ರೀತಿ ದೂರವೇನೋ ಎಂದು ಅನ್ನಿಸಿಬಿಡುತ್ತದೆ.

ಭಾರತದಲ್ಲಿ ಕೆಲಸ ಮಾಡುತ್ತಿದ್ದ ಮಿತ್ರನೊಬ್ಬನ ಜೊತೆ ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕ ಮಾತುಕಥೆ ನಡೆಸಿದ್ದೆ - ಹೇಗೋ ಮಾತು ಎಲ್ಲಿಂದೆಲ್ಲಿಗೋ ಬಂದು ನಾನು ಅವನಿಗೆ ಆಫೀಸಿನ ಸಮಯದಲ್ಲಿ ನಿನ್ನ ಮಿತ್ರರೊಡನೆ ವ್ಯವಹರಿಸುವುದನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳ ಕಡೆ ಗಮನ ಕೊಡು ಎಂದುದಕ್ಕೆ ಅವನು ಪ್ರತಿಯಾಗಿ ಅದೇನೋ ಒಳ್ಳೆಯ ಸಲಹೆ, ಆದರೆ ನನ್ನ ಕೆಲಸದಂತೆ ನಾನು ನನ್ನ ಸಾಮಾಜಿಕ ಬದುಕನ್ನೂ ಗೌರವಿಸಬೇಕು, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು ಎಂದಿದ್ದನ್ನು ನಾನು ಒಂದು ನಿಮಿಷ ಗಹನವಾಗಿ ಯೋಚಿಸಿದೆ. ಅವನು ಹೇಳಿದ್ದು ಬಹಳ ಸತ್ಯವಾದ ವಿಷಯ - ನನಗೇನೋ ಇಲ್ಲಿ ಆಫೀಸಿನ ಸಮಯದಲ್ಲಿ ಅದೂ ಅಪರೂಪಕ್ಕೊಮ್ಮೆ ಎನ್ನುವಂತೆ ಯಾರಾದರೊಬ್ಬರು ಹೊರಗಿನವರು ಇನ್ಸ್ಟಂಟ್ ಮೆಸ್ಸೇಜ್ ಕಳಿಸಿದರೆ ಹೆಚ್ಚು, ಅದನ್ನೂ ಕಡಿಮೆ ಮಾಡಿಕೊಳ್ಳಲು ನಾನು ಒಂದೇ 'invisible' mode ನಲ್ಲಿ ಇರುವುದೋ ಅಥವಾ ಮೆಸ್ಸೆಂಜರ್‌ಗೆ ಲಾಗಿನ್ ಆಗದೇ ಇರುವ ಸಂದರ್ಭವೇ ಹೆಚ್ಚು. ಆದರೆ ಭಾರತದಲ್ಲಿನ ಇನ್ಸ್ಟಂಟ್ ಮೆಸ್ಸೇಜ್, ಸಂದೇಶಗಳ ಯುಗದಲ್ಲಿ, ಅದರಲ್ಲೂ ಪ್ರತಿಯೊಬ್ಬರ ಪರಿವಾರ, ಗೆಳೆಯರ ಬಳಗ ದೊಡ್ಡದಾಗಿರುವ ಸಹಜ ಸ್ಥಿತಿಯಲ್ಲಿ ಅದು ಹೇಗೆ ತಾನೆ ಹೊರಗಿನ ಸಂವೇದನೆಗಳಿಗೆ ಸಂಪೂರ್ಣವಾಗಿ ಕಿವಿಗೊಡದೇ ಕೆಲಸದ ಮೇಲೆ ಗಮನವಿರಿಸಲು ಸಾಧ್ಯ? ಇಲ್ಲಿ ಕೆಲಸ ಮಾಡುತ್ತಿರುವ ನನಗೆ ಹತ್ತು ಜನರು ಪರಿಚಯವಿದ್ದು ಒಬ್ಬರು ಮೆಸ್ಸೇಜ್ ಕಳಿಸಿದರೆ, ನಾನು ಅಲ್ಲೇನಾದರೂ ಕೆಲಸ ಮಾಡುತ್ತಲಿದ್ದರೆ ಕೊನೇಪಕ್ಷ ಒಂದು ನೂರು ಜನರಾದರೂ ಪರಿಚಯವಿದ್ದು ಅವರಲ್ಲಿ ಹತ್ತು ಜನರಾದರೂ ಮೆಸ್ಸೇಜ್ ಕಳಿಸುತ್ತಿರಲಿಲ್ಲವೇ? ಅವರನ್ನೆಲ್ಲ ಹೇಗೆ ನಿಭಾಯಿಸುತ್ತಿದ್ದೆ? ಅಥವಾ ಇಲ್ಲಿನ ಹಾಗೆ ವಾರದ ದಿನಗಳಲ್ಲಿ ವಾರಾಂತ್ಯ ಬಂದರೆ ನೋಡೋಣವೆಂದೋ, ವಾರಾಂತ್ಯದ ದಿನಗಳಲ್ಲಿ 'ನಾಳೆ' ನೋಡೋಣವೆಂದೋ ತಳ್ಳಿಹಾಕಲು ಸಾಧ್ಯವಾಗುತ್ತಿತ್ತೇ? ಇನ್ಸ್ಟಂಟ್ ಮಸ್ಸೇಜ್ ವಿಂಡೋವನ್ನೋ ಅಥವಾ ಇ-ಮೇಲ್ ಮೆಸ್ಸೇಜುಗಳನ್ನೋ ಕ್ಲೋಸ್ ಮಾಡಿ ಮುಗಿಸಿದಷ್ಟು ಸುಲಭವಾಗಿ ನಮ್ಮ ಸಾಮಾಜಿಕ ಜೀವನದ ಎಳೆಗಳನ್ನು ನಿಭಾಯಿಸಬಹುದೇ? ಎನ್ನುವ ತರಾವರಿ ಪ್ರಶ್ನೆಗಳು ಮನದಲ್ಲಿ ಉದ್ಭವವಾದವು.

ಧಾರ್ಮಿಕವಾಗಿ ನನ್ನ ಬದುಕು ಆಫೀಸಿನ ಬದುಕಿಗಿಂತ ಭಿನ್ನ, ನನ್ನ ಆಚರಣೆಗಳು, ಆಚಾರ-ವಿಚಾರಗಳನ್ನು ನನ್ನ ಸಹೋದ್ಯೋಗಿಗಳ ಜೊತೆ ಹಂಚಿಕೊಳ್ಳುವುದಿಲ್ಲ; ರಾಜಕೀಯವಾಗಿ ನಾನಿಲ್ಲಿ ಯಾವ ರೀತಿಯಲ್ಲೂ ಭಾಗವಹಿಸೋದಿಲ್ಲ; ಸಾಮಾಜಿಕವಾಗಿ ನನ್ನದೇ ಆದ ಒಂದು ಜೀವನ ಶೈಲಿ ಇದೆ, ಅದು ಇಲ್ಲಿಯವರ ಹ್ಯಾಪ್ಪಿ ಅವರ್‌ಗೆ ಹೊಂದಿಕೊಳ್ಳುವುದಿಲ್ಲ, ಕಮ್ಮ್ಯೂನಿಟಿ ಸರ್ವೀಸೂ ಅಷ್ಟಕಷ್ಟೇ; ಮನೆಯಲ್ಲೊಂದು ಪ್ರಪಂಚ, ಕಾರಿನಲ್ಲೊಂದು ಪ್ರಪಂಚ ಹಾಗೂ ಅಫೀಸಿನಲ್ಲೊಂದು ಬದುಕು ಎಂದು ಮೂರು ನಾಲ್ಕು ಭಾಗವಾಗಿ ವಿಂಗಡಣೆಗೊಳಪಟ್ಟಿದ್ದೇನೆ. ಹೀಗಿರುವಾಗ 'ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು, ಮ್ಯಾನೇಜ್ ಮಾಡಬೇಕು' ಎಂದು ಉಪದೇಶ ಸಾರಲು ನನಗ್ಯಾವ ಹಕ್ಕಿದೆ ಹಾಗೂ ಅರ್ಹತೆ ಇದೆ ಎಂದೂ ಯೋಚನೆಗಿಟ್ಟುಕೊಂಡಿತು. ಈ ದಿನ ಬೆಳಗ್ಗಿನ ಜಾವ ಮೂರೂವರೆ ಹೊತ್ತಿಗೆ ನನ್ನ ಎರಡನೇ ಅಣ್ಣ ಫೋನ್ ಮಾಡಿದ್ದ, ಅವನು ಎಷ್ಟು ಸಾರಿ ಹೇಳಿದರೂ ಹೀಗೆ ಅವೇಳೆಯಲ್ಲೇ ಫೋನ್ ಮಾಡೋದು ಎಂದು ಅವನ ಮೇಲೂ ರೇಗುತ್ತೇನೆ, just because ನಾನ್ಯಾವುದೋ ಬೇರೆಯೇ 'ಪ್ರಪಂಚ'ದಲ್ಲಿದ್ದೇನೆಂದು ಅವನೂ ಸಹ ತನ್ನ ಸಂವೇದನೆಗಳನ್ನು ನನಗೆ ಅನುಕೂಲಕರವಾದ ಘಳಿಗೆ ಬರುವಲ್ಲಿಯವರೆಗೆ ಕಟ್ಟಿ ಹಾಕಿಟ್ಟುಕೊಳ್ಳಬೇಕು. ಇದೇ ಅಣ್ಣ ನಾನು ಸಾಗರದಲ್ಲಿ ರೂಮು ಮಾಡಿಕೊಂಡು ಇದ್ದಾಗ ಒಂದು ದಿನ ಬೆಳಗ್ಗಿನ ಜಾವಾ ನಾಲ್ಕೂವರೆಗೆ ಊರಿನಿಂದ ನನ್ನ ತಂದೆಯವರು ತೀರಿಕೊಂಡ ಸುದ್ದಿಯನ್ನು ಹೊತ್ತು ತಂದಿದ್ದ, ನನ್ನನ್ನೂ ಜೊತೆಯಲ್ಲಿಯೇ ಕರೆದುಕೊಂಡು ಹೋದ, ಆಗಂತೂ ನನಗೆ ಅದು ಅವೇಳೆ ಎನ್ನಿಸಿರಲಿಲ್ಲ. ಆಗಿನ ಸ್ಪಂದನಗಳಿಗೆ ಆಗ್ಗೆಯೇ ಉತ್ತರ ಅಥವಾ ಪ್ರತಿಕ್ರಿಯೆ ಸಿಗುತ್ತಿದ್ದರೆ ಸಹಜವೆನಿಸುತ್ತೆ, ಇಲ್ಲವೆಂದರೆ ತಡವಾದ ಯಾವುದರಲ್ಲಿ ಏನು ತಾನೆ ವಿಶೇಷವಿದೆ ಎನ್ನೋದು ನನಗಿನ್ನೂ ತಿಳಿಯದ ವಿಷಯ. ಹೀಗೆ 'ಅವೇಳೆ'ಯಲ್ಲಿ ಭಾರತದಿಂದ ಬರಬಹುದಾದ ಫೋನ್ ಕಾಲ್‌ಗಳ ಮೇಲೆ ನನಗೆ ಬಹಳಷ್ಟು ಭಯವಿದೆ, ಅವು ಎಂತಹ ಭಯಂಕರ ಸುದ್ದಿಯನ್ನು ಹೊತ್ತು ತರುತ್ತವೆಯೋ, ಹಾಗೆ ಬಂದಪ್ಪಳಿಸುವ ಸುದ್ದಿಗಳಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೋ ಎಂದೂ ಗುಮಾನಿಯಿದೆ.

ಸಾಮಾಜಿಕ ಸಂಬಂಧದ ಎಳೆಗಳನ್ನು ಮ್ಯಾನೇಜ್ ಮಾಡುವುದು ಎಂದರೆ ಅವುಗಳನ್ನು ಒಂದು ಡಬ್ಬಿಯಲ್ಲಿಟ್ಟು ಮುಚ್ಚಳವನ್ನು ಭದ್ರವಾಗಿ ಹಾಕಿ ಸಮಯ ಬಂದಾಗ ತೆಗೆದು ನೋಡಿದರಾಯಿತು ಎಂದಲ್ಲ, ನಮ್ಮ-ನಮ್ಮ ಕೆಲಸ ಕಾರ್ಯಗಳ ನಡುವೆಯೂ ಬದುಕು ಬೇಡುವ ಸಂಬಂಧದ ಎಳೆಗಳ ಅಗತ್ಯಗಳಿಗೆ ಸ್ಪಂದಿಸಿ ಎಷ್ಟು ಸಾಧ್ಯವೋ ಅಷ್ಟು ಅವುಗಳನ್ನು ಜೀವಂತವಾಗಿಡುವುದು. ಒಡಹುಟ್ಟಿದವರ, ಸ್ನೇಹಿತರ, ಗುರುತು-ಪರಿಚಯದವರ ಸಂಬಂಧವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳದೇ ಅವುಗಳು ಸಹಜವಾಗಿ ನಿರೀಕ್ಷಿಸುವ ಗಮನಕೊಡುವುದು. ನಾವ್ಯಾವುದೋ ಕುಬೇರನ ಲೋಕದ ಕರೆನ್ಸಿಯನ್ನು ಬಲ್ಲವರೆಂದು ಕಂಡಕಂಡದ್ದನ್ನು ನಮ್ಮ 'ಮೌಲ್ಯ'ಗಳಲ್ಲಿ ಅಳೆಯದೆ, ವಸ್ತು-ವಿಷಯಗಳನ್ನು ಅವುಗಳು ಇರುವ ಎತ್ತರಕ್ಕೆ ಬಗ್ಗಿ ನೋಡುವುದು. ಕಂಡಕಂಡವರಲ್ಲಿ ನಮ್ಮ ಬಹುಪರಾಕನ್ನು ಕೊಚ್ಚದೇ ಇತರರ ನೋವು-ನಲಿವುಗಳನ್ನೂ ಕೇಳುವ ಸಂಯಮವನ್ನು ರೂಢಿಸಿಕೊಳ್ಳುವುದು.

ಒಬ್ಬ ರಸ್ತೆ ಬದಿಯ ಭಿಕ್ಷುಕನಿಂದ ಹಿಡಿದು ಮಹಾನ್ ಚಿಂತಕನವರೆಗೆ ನಮ್ಮ ಸಂಬಂಧಗಳು, ನಾವು ಅವುಗಳನ್ನು ಬೆಳೆಸಿ-ಉಳಿಸಿಕೊಳ್ಳುವ ರೀತಿ, ನಾವು ನಮ್ಮ ನೆಟ್‌ವರ್ಕ್ ಅನ್ನು ಹಿಗ್ಗಿಸಿಕೊಳ್ಳುವ ಸಾಮರ್ಥ್ಯ ಇವೆಲ್ಲವೂ ಬಹಳಷ್ಟನ್ನು ನಿರ್ಧರಿಸಬಲ್ಲವು. ಹೋದಲ್ಲಿ ಬಂದಲ್ಲಿ 'ನಮ್ಮವರನ್ನು' ನಾವು ಹುಟ್ಟು ಹಾಕಿಕೊಳ್ಳದೇ ನಾವೇ ಕಟ್ಟಿಕೊಂಡ ಗೂಡಿನಲ್ಲಿ ಎಷ್ಟು ದಿನವಾದರೂ ಇರುವುದಕ್ಕೆ ಸಾಧ್ಯವಿದೆ? ಈ ಎಲ್ಲ ದೃಷ್ಟಿಯಿಂದಲೇ ಮೊಟ್ಟ ಮೊದಲನೇ ಬಾರಿಗೆ ಆಫೀಸಿನ ಸಮಯದಲ್ಲಿ ತನ್ನ ಪ್ರೈವೇಟ್ ಕಾನ್‌ವರ್‌ಸೇಷನ್‌ನಲ್ಲಿ ತೊಡಗಿರೋ ಸಹೋದ್ಯೋಗಿಯೊಬ್ಬ ಅಪ್ಯಾಯಮಾನವಾಗುತ್ತಾನೆ. ತನ್ನ ಮಕ್ಕಳು ಹಾಗೂ ಗಂಡನ ಬಗ್ಗೆ ಯಾವಾಗಲು ಸಂಭ್ರಮದ ಕಣ್ಣುಗಳಲ್ಲಿ ವಿವರಿಸುವ ಸಹೋದ್ಯೋಗಿ ಕಾನಿ (Connie) ವಿಶೇಷವಾಗಿ ಕಾಣಿಸುತ್ತಾಳೆ. ಎಲ್ಲೋ ಅಪರೂಪಕ್ಕೊಮ್ಮೆ ಕಾಫೆಟೇರಿಯಾದಲ್ಲಿ ಸಿಗುವ, 'ಹಾಯ್' ಎನ್ನುವ, ಇನ್ನೂ ಹೆಸರೂ ತಿಳಿಯದ ಕೆಲಸದವನೊಬ್ಬ ಅತಿ ಹತ್ತಿರದ ಬಂಧುವಾಗಿ ಕಂಡುಬರುತ್ತಾನೆ. ನಾವುಗಳು ನಮ್ಮ-ನಮ್ಮ ಸಾಮಾಜಿಕ ಸಂಬಂಧಗಳನ್ನು 'ಮ್ಯಾನೇಜ್' ಮಾಡಿದ್ದರ ಪರಿಣಾಮ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಬಾಧಿಸಿಯೇ ತೀರುತ್ತದೆ - ಎಲ್ಲವನ್ನೂ ಮ್ಯಾನೇಜ್ ಮಾಡುತ್ತೇವೆ/ಮಾಡಬಹುದು ಎನ್ನುವ ಮಾತುಗಳು ಮೊಟ್ಟ ಮೊದಲ ಬಾರಿಗೆ ದೊಡ್ಡ ಸುಳ್ಳಿನ ಕಂತೆಗಳಾಗಿ ಕಾಣತೊಡಗುತ್ತವೆ. ನಿಸರ್ಗ ನಿಯಮಗಳಾದ ಸಮಯವನ್ನಾಗಲೀ, ಸಂಬಂಧವನ್ನಾಗಲಿ, ಸಮಾಜವನ್ನಾಗಲೀ ಮ್ಯಾನೇಜ್ ಮಾಡಲು ಅವುಗಳೇನು ಬಚ್ಚಲು ಮನೆಯ ಕಲ್ಲೇ?

***

ನಾವು ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಿ ನಮ್ಮತನವನ್ನು ಗುರುತಿಸಿಕೊಂಡು ಸಹಜವಾಗಿ ಬದುಕನ್ನು ನಡೆಸೋದಕ್ಕೆ ಸಾಧ್ಯವಿದೆ, ಬರಿ ವೀಕೆಂಡಿನಲ್ಲಿ ಮಾತ್ರ ಭಾರತದಲ್ಲಿದ್ದವರೊಡನೆ ಸ್ನೇಹಿತರೊಡನೆ ಮಾತನಾಡುವುದು ಸಾಲದು ಎನ್ನುವುದು ಆ ನಿಟ್ಟಿನಲ್ಲಿ ನಾವೆಲ್ಲರೂ ಇಡಬೇಕಾದ ಮೊದಲ ಹೆಜ್ಜೆ.

Tuesday, September 19, 2006

ಮಾನವ ನಿರ್ಮಿತ ಗಡಿ

ತಮ್ಮ ದೇಶದಿಂದ ಹೊರಕ್ಕೆ ವಲಸೆ ಬಂದವರಿಗೆ ತಮ್ಮ ಮಕ್ಕಳನ್ನು ಯಾವ ಪರಿಸರ-ಸಂಸ್ಕೃತಿಯಲ್ಲಿ ಬೆಳೆಸಬೇಕು ಎನ್ನುವ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡಿರುತ್ತದೆ. ಮಕ್ಕಳು ಇನ್ನೂ ಚಿಕ್ಕವರಿದ್ದಾಗ ಒಂದು ರೀತಿಯ ಆಲೋಚನೆಗಳು ಬಂದರೆ ಮಕ್ಕಳು ಶಾಲೆಗೆ ಹೋಗುವ ವಯಸ್ಸು ಬಂದಂತೆ, ಹಾಗೆ ಮುಂದೆ ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಬ್ಬ ತಂದೆ-ತಾಯಂದಿರಿಗೂ ಎರಡು ಸಂಸ್ಕೃತಿಗಳ ಸಂಘರ್ಷ ಒಂದಲ್ಲ ಒಂದು ರೀತಿಯಿಂದ ಅನುಭವಕ್ಕೆ ಬಂದಿರುತ್ತದೆ. ಮಕ್ಕಳು ಅವರವರ ನೇಟಿವ್ ಸಂಪ್ರದಾಯದಲ್ಲಿ ಬೆಳೆಯಲಿ ಎನ್ನುವ ದೃಷ್ಟಿಕೋನದಿಂದ ಹಿಡಿದು ಪೋಷಕರ ಕಟ್ಟಾ ಸಂಪ್ರದಾಯ ನೆಲೆಗಟ್ಟಿನಲ್ಲಿಯೇ ಬೆಳೆಯಬೇಕು ಎನ್ನುವ ತನಕ ಹಲವಾರು ರೀತಿಯ ಮನಸ್ಥಿತಿಗಳು ನಮಗೆ ದೊರೆಯುತ್ತವೆ.

ನನ್ನ ಪರಿಚಯದವರೊಬ್ಬರು ಪಾಕೀಸ್ತಾನೀ ಮೂಲದ ಡಾಕ್ಟರು ಇತ್ತೀಚೆಗಷ್ಟೇ ಅಮೇರಿಕದಲ್ಲಿ ಎಂ.ಡಿ. ಪದವಿ ಮುಗಿಸಿ ಅಲ್ಲಿಲ್ಲಿ ಕೆಲಸ ಹುಡುಕುತ್ತಿದ್ದಾರೆ. ಅವರು ಮುಸ್ಲಿಮ್ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು, ತಮ್ಮ ಮಕ್ಕಳನ್ನೂ ಸಹ ಅದೇ ನೆಲೆಗಟ್ಟಿನಲ್ಲಿಯೇ ಬೆಳೆಸಬೇಕು ಎಂದು ನಿರ್ಧರಿಸಿದವರು. ಅವರಿಗೆ ಕೆಲಸ ಹುಡುಕಲು ಇರುವ ತೊಂದರೆಗಳಲ್ಲಿ ತಾವು ಕೆಲಸ ಮಾಡುತ್ತಿರುವ ಊರಿನಲ್ಲಿ ಮಸೀದಿಯೂ ಇರಬೇಕು ಎನ್ನುವುದು ಅವರ ಅಗತ್ಯಗಳಲ್ಲಿ ಒಂದು. ಆದ್ದರಿಂದ ಹೆಚ್ಚು ಅವಕಾಶಗಳು ಕೈಗೆ ಬಂದರೂ ಬಾಯಿಗೆ ಬರುತ್ತಿಲ್ಲ ಎನ್ನುವಂತಾಗಿ ಇದ್ದುದರಲ್ಲಿಯೇ ಹೊಂದಿಕೊಂಡು ಹೋಗಲು ಅವರು ತೀರ್ಮಾನಿಸಿದ್ದಾರೆಂದು ತಿಳಿಯಿತು. ಅವರಿಗಿರುವ ಇಬ್ಬರು ಮಕ್ಕಳು, ಒಬ್ಬ ಹುಡುಗ, ಒಬ್ಬ ಹುಡುಗಿ - ಬಹಳ ಸೌಮ್ಯ ಮುಖಗಳು ಹಾಗೂ ಮನಸ್ಥಿತಿ - ಸುಮಾರು ಹತ್ತು ವರ್ಷದ ಆಜುಬಾಜು ಇರಬಹುದಾದ ವಯಸ್ಸು. ಈ ಡಾಕ್ಟರ್ ಕುಟುಂಬ ಯಾವುದೋ ಸಂಬಂಧಿಕರ ಮದುವೆಗೆಂದು ವರ್ಜೀನಿಯಾಕ್ಕೆ ಹೋಗಿದ್ದರಂತೆ, ಅಲ್ಲಿ ಪಕ್ಕಾ ದೇಸೀ ವಾತಾವರಣ ಇತ್ತೆಂದು ಈ ಡಾಕ್ಟರ್ ಮೂಲಕವೇ ನನಗೆ ತಿಳಿಯಿತು, ಅವರೇ ಹೇಳಿದ ಹಾಗೆ ಅವರ ಮಗಳು ಅಲ್ಲಿ ನಡೆಯುತ್ತಿದ್ದ ಆಚರಣೆಗಳನ್ನು ನೋಡಿ, ಕಾರಿನಲ್ಲಿ ಕುಳಿತು ಎಲ್ಲಿಂದ ಎಲ್ಲಿಗೆ ಬಂದೆವೊ ಎಂದುಕೊಂಡು, 'ಅಪ್ಪಾ ಇದು ಪಾಕಿಸ್ತಾನವೇ?' ಎಂದು ಕೇಳಿದ್ದಳಂತೆ. ನನಗೆ ಈ ವಿಷಯವನ್ನು ಡಾಕ್ಟರು ತಮಾಷೆಯಾಗಿ ಹೇಳಿದರೂ ಅದರಲ್ಲಿನ ತಮಾಷೆಯ ಜೊತೆಗೆ ಆ ಮುಗ್ಧ ಮನಸ್ಸಿನಲ್ಲಾಗುವ ವ್ಯಾಪಾರಗಳೂ ಸಹ ಸ್ಪಷ್ಟವಾದಂತೆನಿಸಿತು. ಬಹುಷಃ ಆ ಮಕ್ಕಳು ಅವರ ಜೀವನದಲ್ಲಿ ನೋಡಿದ ಮೊದಲನೇ ಮದುವೆ ಇರಬೇಕು, ಅಮೇರಿಕನ್ ನೆಲೆಗಟ್ಟಿನಲ್ಲಿ ಅವರಿಗೆ ಎಲ್ಲವೂ ಹೊಸದಾಗಿ ಕಂಡಿರಬೇಕು. ಈ ಡಾಕ್ಟರ್ ಕುಟುಂಬ ಇನ್ಯಾವತ್ತೂ ಹಿಂತಿರುಗಿ ಪಾಕಿಸ್ತಾನಕ್ಕೆ ಹೋಗುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ - ಅದಕ್ಕೆ ಕಾರಣ ಅವರ ಎಕ್ಸೈಲ್ ಸಿಚುವೇಷನ್ ಇರಬಹುದು, ಅಥವಾ ಪಾಕಿಸ್ತಾನ, ಅಫಘಾನಸ್ತಾನದ ಗಡಿಯಲ್ಲಿನ ಊರಿಗೆ ಹೋಗಿ ಅವರು ಮಾಡುವುದಾದರೂ ಏನು ಎಂಬುದಿರಬಹುದು. ಒಂದು ಕಡೆ ತಂದೆ-ತಾಯಿಗಳಿಗೆ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಲೇ ತಮ್ಮ ನೇರಕ್ಕೆ ತಕ್ಕ ವಾತಾವರಣವನ್ನು ಹುಟ್ಟುಹಾಕಿಕೊಳ್ಳುವ ಸವಾಲು, ಮತ್ತೊಂದು ಕಡೆ ಈ ಪರಿಸರದಲ್ಲಿ ಬೆಳೆದ ಮಕ್ಕಳು ಎರಡೂ ಕಡೆಯಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆ. ಹೀಗೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಈ ದ್ವಂದ್ವದ ಅನುಭವವಾಗುವುದು ಸಹಜ, ಈ ಅನುಭವ ನಾವು ಬೆಳೆದಂತೆಲ್ಲ ಹಲವಾರು ರೀತಿಯಲ್ಲಿ ಹರಡಿಕೊಳ್ಳುತ್ತದೆ, ಮೂಲಭೂತವಾಗಿ ನೋಡುವುದಕ್ಕೆ ಎರಡೇ ಎನ್ನುವಂತಿದ್ದರೂ ನಮ್ಮ ಮನಸ್ಸಿನ ವ್ಯಾಪಾರಗಳು ಹಲವಾರು ನೆಲೆಗಟ್ಟಿನಲ್ಲಿ ಕೆಲಸ ಮಾಡತೊಡುಗುತ್ತವೆ.

ಕಾಮಿಡಿ ಸೆಂಟ್ರಲ್‌ನಲ್ಲಿ ಒಬ್ಬರು ತಮಾಷೆ ಮಾಡುತ್ತಾ 'ಈ ಹರಿಕೇನ್, ಸುಂಟರಗಾಳಿಗಳು ಬರುವ ಊರಿನಲ್ಲಿ ಜನರು ಏಕಿರುತ್ತಾರೆ, ಅವರೆಲ್ಲರೂ ಬೇರೆ ಊರುಗಳಿಗೆ ಏಕೆ ಹೋಗೋದಿಲ್ಲ - ಒಂದು ವೇಳೆ ಊರು ಬಿಟ್ಟು ಹೋಗದಿದ್ದರೆ ಕೊನೆಗೆ ನೀರು ಬಂತು, ಗಾಳಿ ಬಂತು ಎಂದು ಬೊಬ್ಬೆ ಹಾಕುವುದು ಏಕೆ?' ಎನ್ನುವ ಮಾತುಗಳನ್ನು ಆಡಿದರು. ಅದಕ್ಕೆ ತಕ್ಕ ಮಟ್ಟಿಗೆ ನಗುವೂ ಹುಟ್ಟಿತು, ಚಪ್ಪಾಳೆ ಸದ್ದೂ ಕೇಳಿತು. ಆದರೆ, ನಿಜವಾಗಿಯೂ ಈ ಚಂಡಮಾರುತ, ಸುಂಟರಗಾಳಿ ಬರುವ ಪ್ರದೇಶದಿಂದ ಜನರು ಊರುಬಿಟ್ಟು ಹೊರಡಲು ಸಾಧ್ಯವೇ? ಹಾಗೆ ಯೋಚಿಸಲು ಸಾಧ್ಯವೇ ಇಲ್ಲ, ಊರು ಬಿಟ್ಟು ಎಲ್ಲರೂ ಹೋಗುವುದಾದರೂ ಎಲ್ಲಿಗೆ? 'ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ' ಎಂಬಂತೆ ಅಲ್ಲಿ ವಾಸಿಸುವ ಕುಟುಂಬಗಳು ತಲತಲಾಂತರದಿಂದ ನೆಲೆಸಿವೆ, ಇನ್ನು ಮುಂದೆಯೂ ಹಾಗೆಯೇ ಇರುತ್ತದೆ. ಬದಲಾಗಬೇಕಾದವರು ಅವರಲ್ಲ, ತಾವು ಸುರಕ್ಷಿತ ಸ್ಥಳದಲ್ಲಿ ಕುಳಿತುಕೊಂಡಿದ್ದೇವೆ ಎಂದುಕೊಂಡವರು ನಿಜವಾಗಿಯೂ ಮತ್ತೊಮ್ಮೆ ಯೋಚಿಸಬೇಕು. ನಮ್ಮ ನ್ಯೂ ಜೆರ್ಸಿ-ನ್ಯೂ ಯಾರ್ಕ್ ಏರಿಯಾಗಳಲ್ಲಿ ವಾಹನ ಅಫಘಾತಗಳಲ್ಲಿ ವರ್ಷಕ್ಕೆ ಸಾಯುವವರ ಸಂಖ್ಯೆ ಉಳಿದ ಪ್ರದೇಶಗಳಲ್ಲಿ ನೈಸರ್ಗಿಕ ಪ್ರಕೋಪಗಳಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಿರಬಹುದು. ನಮ್ಮಲ್ಲಿ ಅಗತ್ಯವಾಗಿ ಕಾಣೋ (pseudo) ಮಿಥ್ಯ-ಟೈಪ್ ಎ ಮೆಂಟಾಲಿಟಿಗಳು, ನಗರದ ಬದುಕಿಗೆ ಹೊಂದಿಕೊಂಡೇ ಬರುವ ಯಾಂತ್ರಿಕ ಜೀವನ ಇವೆಲ್ಲವೂ ನಮ್ಮನ್ನು ಅಸ್ವಸ್ಥರನ್ನಾಗಿ ಮಾಡಬಹುದು, ಅಥವಾ ಧೀರ್ಘಕಾಲ ಮಾನಸಿಕ ಒತ್ತಡದಲ್ಲಿ ಬದುಕುವಂತೆ ಮಾಡಿ ಸಮಾಧಾನದ ಬದುಕು ಎಂದರೇನು ಎಂದು ಆಲೋಚಿಸುವಂತೆ ಮಾಡಬಹುದು. ಹೀಗೆ ಪ್ರತಿಯೊಂದು ಪ್ರದೇಶಗಳಲ್ಲೂ ಅದರ ಅನುಕೂಲ-ಅನಾನುಕೂಲಗಳು ಇದ್ದೇ ಇರುತ್ತವೆ.

ನಾವು ನಮ್ಮದು ಎಂದುಕೊಂಡ ಊರುಗಳ ಬಗ್ಗೆ ಇರಲಿ, ನಾವು ನಮ್ಮದು ಎಂದುಕೊಂಡ ದೇಶದ ಬಗ್ಗೆಯೇ ಎಷ್ಟೋ ಸಾರಿ ಯೋಚಿಸತೊಡಗುತ್ತೇನೆ. ಇಲ್ಲೇ ಹುಟ್ಟಿದ ಮಕ್ಕಳನ್ನು ಯಾವ ಯಾವ ತಂದೆ-ತಾಯಂದಿರು ಯಾವ ರೀತಿ ಬೆಳೆಸುತ್ತಾರೆ, ಹೇಗೆ ಬೆಳೆಸಿದರೆ ಸರಿ ಎಂಬ ಜಿಜ್ಞಾಸೆಗೊಳಗಾಗಿದ್ದೇನೆ. ಈ ಮಕ್ಕಳು ಬೆಳೆಯುವ ಪರಿಸರ ಅವರ ನೈಸರ್ಗಿಕ ಹಕ್ಕೇ ಅಥವಾ ತಂದೆತಾಯಂದಿರ ವಿಚಾರ-ಆಯ್ಕೆಗಳಿಗೆ ಬಿಟ್ಟದ್ದೇ? ನಮ್ಮ ಮಕ್ಕಳು ಏಕೆ ನಮ್ಮ ಭಾಷೆ/ಪರಂಪರೆಯನ್ನು ಕಲಿಯಬೇಕು, ಹಾಗೆ ಕಲಿಯದಿದ್ದರೆ ಅದರ ಬದಲಿಗೆ ಇನ್ನೇನನ್ನು ಕಲಿಯಬೇಕು ಕಲಿಯುತ್ತಾರೆ ಎನ್ನುವುದು ಮತ್ತಷ್ಟು ಗೋಜಲಾದ ವಿಚಾರ. ಪೋಷಕತ್ವದ ಬಗ್ಗೆ ನಾನು ಓದಿರುವ ಪುಸ್ತಕಗಳಿಗೂ ನಾನು ಬೆಳೆದು ಬಂದ ಬಗೆಗೂ ಪೂರ್ವ-ಪಶ್ಚಿಮದಷ್ಟು ವ್ಯತ್ಯಾಸವಿರುವಾಗ ಯಾರೋ ಒಬ್ಬರು ಸ್ಟ್ಯಾಂಡರ್ಡ್ ಎಂದು ಕರೆದಿರುವ ನಿದರ್ಶನಗಳನ್ನು ಎಷ್ಟರ ಮಟ್ಟಿಗೆ ನನ್ನಂತಹವರು ಕೈಗೊಂಡು ಧೀರ್ಘಕಾಲೀನವಾಗಿ ನಡೆಸಿಕೊಂಡು ಬರಬಹುದು?

ನಮ್ಮ ಹುಟ್ಟೂರು, ಅದರ ನೆನಪು ನಮಗೆಲ್ಲರಿಗೂ ಒಂದು ಹಿತವಾದ ವಾತಾವರಣದ ಗುಂಗನ್ನು ಹುಟ್ಟಿಸುತ್ತದೆ. ಆ ಊರಿನ ಉದ್ದಗಲಗಳ ಅಪಾರವಾದ ಮಾಹಿತಿ ಯಾವಾಗ ಬೇಕೋ ಆಗ ಕಣ್ಣ ಮುಂದೆ ಬರುವಂತಹ ಅಪಾರವಾದ ಸ್ಟೋರೇಜ್ ಹಾಗೂ ರಿಟ್ರೀವಲ್ ಮಾಡಬಹುದಾದ ನರಮಂಡಲವನ್ನು ನಿಸರ್ಗ ನಮಗೆ ನೀಡಿದೆ. ಊರಿನ ನೆನಪು ಒಂದು ರೀತಿಯ ಅಕ್ಷಯ ಪಾತ್ರೆಯ ಹಾಗೆ, ಮೊಗೆದಷ್ಟೂ ಬರಿದಾಗುವ ಪ್ರಶ್ನೆಯೇ ಇಲ್ಲ. ಹೀಗಿರುವ ಊರನ್ನು ಬಿಟ್ಟು ಬಂದದ್ದಾಯಿತು, ದೇಶವನ್ನು ಬಿಟ್ಟು ಬಂದದ್ದಾಯಿತು - ನನ್ನ ಪಾಕಿಸ್ತಾನದಿಂದ ಬಂದ ಡಾಕ್ಟರ್ ಸ್ನೇಹಿತರ ಹಾಗೆ, ಕ್ಯೂಬಾ ಅಥವಾ ಚೈನಾದಿಂದ ಬಂದ ಕೆಲವರಿಗೆ ಇರುವ ಹಾಗೆ ಇನ್ಯಾವತ್ತೂ ಹಿಂತಿರುಗಿ ಹೋಗದ ಪರಿಸ್ಥಿತಿಯೇ ಹುಟ್ಟಿತೆನ್ನಿ, ಅದರ ಕಲ್ಪನೆ ಹೇಗಿದ್ದಿರಬಹುದು? ನಮ್ಮ ದೇಶಕ್ಕೇ ನಾವು ಹೋಗದೇ ಇರುವ ಹಾಗಿದ್ದರೆ ಅದರ ಊಹೆಯೇ ಬಹಳಷ್ಟು ಸಂಕಷ್ಟವನ್ನು ಹುಟ್ಟಿಸಬಲ್ಲದು ಇನ್ನು ನಿಜಸ್ಥಿತಿಯ ಮಾತೇ ದೂರ. ಅಥವಾ ಇದು ಕೇವಲ ನನ್ನ ಅನುಭವ, ಅನಿಸಿಕೆ ಅಥವಾ ಸ್ಪಂದನ ಮಾತ್ರ. ತಮ್ಮ ದೇಶದ ಮೂಲ ಪಾಸ್‌ಪೋರ್ಟನ್ನು ಬ್ಯಾಂಕ್ ಪಾಸ್‌ಬುಕ್ಕಿನ ಹಾಗೆ ಬಿಸಾಡಿ ಇನ್ನೊಂದು ದೇಶವನ್ನು ಅಪ್ಪಿ ಹಿಡಿದವರನ್ನೂ ಬಲ್ಲೆ, ತಮ್ಮ ದೇಶದ ನಾಗರಿಕತೆಯನ್ನು ಕಳೆದುಕೊಳ್ಳಲಿಚ್ಛಿಸದೇ ಹಲವಾರು ತೊಂದರೆಗಳಿಗೆ ಎಡೆ ಮಾಡಿಕೊಂಡ ಭಾವುಕರನ್ನೂ ನಾನು ಬಲ್ಲೆ. ಹಾಗಾದರೆ ನಮ್ಮ ಊರು, ರಾಜ್ಯ, ದೇಶ ಇವೆಲ್ಲವೂ ಒಂದು ಭೋಗೋಳಿಕ ಗೆರೆಗಳು ಮಾತ್ರವೇನು? ಅಥವಾ ನಾವೆಂದೂ ಹೃದಯದಲ್ಲಿ ಜಾಗವಿಟ್ಟುಕೊಂಡಿರುವ ಹಾಗೆ ಮಾಡುವ ನಮ್ಮ ನಂಬಿಕೆಗಳ ಒರತೆಗಳೇ?

ನಾಡು-ನುಡಿ, ದೇಶ-ಭಾಷೆಗಳನ್ನೆಲ್ಲ ಬಿಟ್ಟು ಬಂದ ಮೇಲೆ, ನಮಗೆ ವಯಸ್ಸಾದಂತೆಲ್ಲ ಅಲ್ಲಿನ ನಮ್ಮವರೆಲ್ಲ ಅತ್ತಿತ್ತ ಚದುರಿಯೋ ಇಲ್ಲಾ ಕಾಲನ ಆಜ್ಞೆಗೆ ಮಣಿದೋ ಮರೆಯಾಗಿ ಹೋದ ಮೇಲೆ ನಮ್ಮ ಪರಂಪರೆಯ ಸ್ಮರಣೆ ಏಕಿರಬೇಕು, ಎಷ್ಟಿರಬೇಕು? ಇಷ್ಟರ ಮೇಲೆ ನಮ್ಮ ಅಂಗಳದಲ್ಲಿ ಆಟವಾಡುವ ಚಿಣ್ಣರು ಗೋಲಿ, ಬುಗುರಿ, ಚಿಣ್ಣಿದಾಂಡುಗಳನ್ನು ಆಡಲಿ ಎನ್ನುವ ಯೋಚನೆ ಏಕಿರಬೇಕು? ಹಿಂದೆಲ್ಲಾ ಯೂರೋಪಿನಿಂದಲೋ ಮತ್ತೆಲ್ಲಿಂದಲೋ ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನೆಲೆಗಟ್ಟನ್ನು ಕಳೆದುಕೊಂಡು ಬಂದವರ ಬಗ್ಗೆಯಾಗಲೀ, ಅಥವಾ ಕ್ಯೂಬಾದಿಂದಲೋ, ಚೀನಾದಿಂದಲೋ ಹಿಂದೆ ತಿರುಗಿ ಹೋಗದ ಹಾಗೆ ಬಂದವರ ಬಗ್ಗೆಯಾಗಲೀ ಹೇಳದೇ, ಕೇವಲ ವ್ಯಾಪಾರ ಹಾಗೂ ಉದ್ಯೋಗವನ್ನು ಅರಸಿಕೊಂಡು ಬಂದವರನ್ನು ಕುರಿತು ಯೋಚಿಸಿದರೆ ಸಮಸ್ಯೆ ಸ್ವಲ್ಪ ಹಗುರವಾದಂತೆ ಕಾಣಿಸಿದರೂ, ನಮಗೆ ಯಾವುದೋ ಗೊತ್ತಿಲ್ಲ ಎಂಬ ಕಾರಣ ಇನ್ಯಾರನ್ನೋ ನಮ್ಮ ನಂಬಿಕೆಗಳಿಗೆ ಸೀಮಿತವಾಗಿರುವಂತೆ ಇರಿಸುವ ಬಂಧನ ಇವರೆಡನ್ನೂ ತುಲನೆ ಮಾಡಿ ನೋಡಬೇಕಾದ ಅನಿವಾರ್ಯತೆ ಹುಟ್ಟುತ್ತದೆ.

***

ಮಾನವ ನಿರ್ಮಿತ ಗಡಿಗಳಿಗಿಂತ ನಿಸರ್ಗ ನಿರ್ಮಿತ ನಿಲುವುಗಳು ದೊಡ್ಡವು ಎಂದುಕೊಂಡು ಸುಮ್ಮನಿರುವುದೋ ಅಥವಾ ಬಹುದೊಡ್ಡ ಸಂದೇಶವನ್ನು ಸಾರುವ ಮುಖ ಮಾಡಿಕೊಳ್ಳುವುದೋ ಲೇಸು!