Thursday, August 17, 2006

'ವಿಕ್ರಾಂತ ಕರ್ನಾಟಕ'ಕ್ಕೆ ಸ್ವಾಗತ ಹಾಗು ಅಭಿನಂದನೆಗಳು

ನಿಮ್ಮಲ್ಲಿ ಸಾಕಷ್ಟು ಜನರು ಈಗಾಗಲೇ ನೋಡಿರೋ ಹಾಗೆ ರವಿ ಕೃಷ್ಣಾ ರೆಡ್ಡಿಯವರ ಮನದ ಇಂಗಿತ ಮೇ ೨೧ ರಂದು ಬಂದಿತ್ತು, ಇ-ಮೇಲ್‌ನಲ್ಲಿ ವಿಕ್ರಾಂತ ಕರ್ನಾಟಕದ ಮುಖಪುಟದ ವಿನ್ಯಾಸ ಹಾಗೂ ಪತ್ರಿಕೆ-ಪ್ರಕಾಶನವನ್ನು ಆರಂಭಿಸುವುದರ ಬಗ್ಗೆ ದೀರ್ಘವಾಗಿ ತಮ್ಮ ಅನಿಸಿಕೆಗಳನ್ನು ಅಂದು ಹಂಚಿಕೊಂಡಿದ್ದರು. ಅದಾಗಿ ಕೇವಲ ಮೂರು ತಿಂಗಳ ಒಳಗೆ ಒಂದು ಪತ್ರಿಕೆ-ಪ್ರಕಾಶನವನ್ನು ಸ್ಥಾಪಿಸಿ ಲಕ್ಷಾಂತರ ಕನ್ನಡಿಗರನ್ನು ವಿಶ್ವದಾದ್ಯಂತ ತಲುಪುತ್ತಿರುವುದು ಬಹಳ ಹೆಮ್ಮೆಯ ವಿಷಯ.

ಇಂದು, ಆಗಷ್ಟ್ ೧೭ರಂದು ಅವರ ಪತ್ರಿಕೆಯ ಬಿಡುಗಡೆ ಹಾಗೂ ವೆಬ್‌ಸೈಟಿನ ಅಫಿಷಿಯಲ್ ಉದ್ಭಾಟನಾ ಸಮಾರಂಭ ಕೂಡಾ. ಈ ಸಂದರ್ಭದಲ್ಲಿ ವಿಕ್ರಾಂತ ಕರ್ನಾಟಕವನ್ನು ಆದಷ್ಟು ಬೇಗನೆ ಕನ್ನಡಿಗರ ಮನ-ಮನೆಗಳನ್ನು ತಲುಪುವಂತೆ ಮಾಡಿದ್ದಕ್ಕೆ ಅದಕ್ಕಾಗಿ ಶ್ರಮಿಸಿರುವ ಎಲ್ಲರಿಗೂ ಅಭಿನಂದನೆಗಳು.

***
ರವಿ ಅವರ ಇ-ಮೇಲಿನಲ್ಲಿ ಬೇಕಾದಷ್ಟು ಕಳಕಳಿ ಇತ್ತು, ಎಂತೆಂಥ ಅತಿರಥ-ಮಹಾರಥರೇ ಕೈ ಸುಟ್ಟುಕೊಂಡಿರುವಾಗ ನಮ್ಮಂತಹವರ ಕಥೆ ಏನು ಎನ್ನುವ ಕಾಳಜಿ ಇತ್ತು, ಪತ್ರಿಕೋದ್ಯಮದಲ್ಲಿ ಕಾಲಿಟ್ಟು ಸೋತ ಹಲವಾರು ಉದಾಹರಣೆಗಳು ಹಸಿಹಸಿಯಾಗಿ ಅವರ ಕಣ್ಣ ಮುಂದಿದ್ದವು, ಜೊತೆಗೆ ಅವರ ಸ್ನೇಹಿತರೂ ಸಹ ಮೊದಮೊದಲು 'ಅನುಭವವಿಲ್ಲದ ಈ ಕಷ್ಟದ ಕೆಲಸಕ್ಕೇಕೆ ಕೈ ಹಾಕುತ್ತೀಯೇ?' ಎಂದು ಕೇಳಿರಲಿಕ್ಕೂ ಸಾಕು. ಅವುಗಳೆಲ್ಲದರ ನಡುವೆ ಆಡಿದಂತೆ ನಡೆದು, ಮಾಡಿ ತೋರಿಸಿದ ಕೀರ್ತಿ ರವಿಯವರದು. ಎಂಟು ಸಾವಿರ ಮೈಲು ದೂರದಲ್ಲಿ ಕುಳಿತು, ಅಣ್ಣನ ಸಹಾಯದಿಂದ, ಸ್ನೇಹಿತರ ಸಹಾಯದಿಂದ ಏನೇನೆಲ್ಲವನ್ನು ಮಾಡಬಹುದು ಎಂದು ರವಿಯವರನ್ನು ನೋಡಿ ಕಲಿಯಬೇಕು. ನಾನು ಇಲ್ಲಿ ಕುಳಿತು ಒಂದು ಪುಸ್ತಕವನ್ನು ಮುದ್ರಿಸುವುದಕ್ಕೆ ಉಸಿರು ಬಿಡುತ್ತಿರುವಾಗ ಅವರು ಒಂದು ಪತ್ರಿಕೆಯನ್ನೇ ಹೊರತರುತ್ತಾರೆಂದರೆ ಅದು ಸಾಹಸವೇ ಸರಿ.

ಕನ್ನಡದಲ್ಲಿ ಬೇಕಾದಷ್ಟು ಪತ್ರಿಕೆಗಳು ಬಂದಿವೆ, ಅವುಗಳೆಲ್ಲವನ್ನೂ ಮೀರಿ ನಿಲ್ಲುವ ಗುಣಮಟ್ಟ ಎಲ್ಲ ರೀತಿಯಿಂದಲೂ ಇರಬೇಕು ಎನ್ನುವುದು ರವಿ ಹಾಗೂ ಅವರ ಅಣ್ಣ ಸುರೇಶ್ ಅವರ ಆಶಯ. ಉತ್ತಮ ಬರಹ, ಮುದ್ರಣ ಹಾಗೂ ಒಳ್ಳೆಯ ಕಾಗದದ ಬಳಕೆಯಲ್ಲೂ ಮೊದಲಿನವರಾಗಬೇಕು, ಕನ್ನಡಿಗರಿಗೆ ಉತ್ಕೃಷ್ಟತೆಯನ್ನು ಹಂಚಬೇಕು ಎನ್ನುವುದು ಅವರ ಕನಸು. 'ಪತ್ರಿಕೆಯೆಂದರೆ ಹೀಗಿರಬೇಕು' ಎಂದು ಭಾರತದ ಪತ್ರಿಕೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲಬೇಕು ಎನ್ನುವುದು ಅವರ ಗುರಿ.

ಈ ಪೋಷ್ಟನ್ನು ಬರೆಯುತ್ತಾ ಹಳೆಯ ಇ-ಮೇಲ್‌ಗಳಲ್ಲಿ ಏನನ್ನೋ ಹುಡುಕುತ್ತಾ ಹೋದ ನನ್ನ ಅದೃಷ್ಟಕ್ಕೆ ಇಂದು ಬಿಡುಗಡೆಯಾದ ವಾರಪತ್ರಿಕೆಯ pdf ಆವೃತ್ತಿ ಸಿಕ್ಕಿತು, ಇರುವ ಒಟ್ಟು 64 ಪುಟಗಳಲ್ಲಿ ಬೇಕಾದಷ್ಟು ಫೋಟೋಗಳೂ, ಆಕರ್ಷಕ ಶೀರ್ಷಿಕೆಗಳೂ, ಅಚ್ಚುಕಟ್ಟಾಗಿ ಅಲ್ಲಲ್ಲಿ ಜೋಡಿಸಿದ ಶುಭಾಶಯಗಳು ಕಂಡು ಬಂದವು. ಸಂಪಾದಕೀಯದ ಪಕ್ಕದಲ್ಲಿ ಸಂಪಾದಕರ ತಂಡದವರ ಹೆಸರನ್ನು ಓದುತ್ತಾ ಹೋದಂತೆ ನನಗಾಶ್ಚರ್ಯವಾಗುವಂತೆ ರವಿ ಅವರ ಹೆಸರೇ ಇಲ್ಲ! ಕೊನೆಗೆ ಹುಡುಕುತ್ತಾ ಹೋದಂತೆ 62 ನೇ ಪುಟದಲ್ಲಿ 'ಯಾತ್ರೆಯ ಆರಂಭಕ್ಕೆ ಸಹಕರಿಸಿದ ಎಲ್ಲರನ್ನೂ ಸ್ಮರಿಸುತ್ತಾ...' ಕಂಡುಬಂತು, ಒಂದೇ ಒಂದು ಪುಟದಲ್ಲಿ ತಮ್ಮ ಅನುಭವಗಳನ್ನು ದಾಖಲಿಸುತ್ತಾ, ಅಣ್ಣ ಸುರೇಶ್ ಒಳಗೊಂಡು ಪತ್ರಿಕೆಯ ಸಿಬ್ಬಂದಿಯವರನ್ನು ಪರಿಚಯಿಸಿದ್ದು ಬಹಳ ಇಷ್ಟವಾಯಿತು. ಪರಿವಿಡಿಯನ್ನು ನೋಡುತ್ತಿದ್ದಂತೆ ಇಡೀ ಪತ್ರಿಕೆಯನ್ನೇ ಓದೋಣವೆಂದುಕೊಂಡರೆ ಸಮಯಾಭಾವದಿಂದ ಎಲ್ಲವನ್ನೂ ಓದಲಾಗಲಿಲ್ಲ. ಆದರೆ 'ವಿಕ್ರಾಂತ ಪ್ರಕಾಶನ'ವನ್ನು ನಾವೂ ಇಲ್ಲಿಂದಲೇ ತರಿಸಿಕೊಳ್ಳಬಹುದು, ಕೇವಲ ಹತ್ತು ಡಾಲರ್‌ಗೆ ವರ್ಷಕ್ಕೆ 52 ಸಂಚಿಕೆಗಳು pdf ಆವೃತ್ತಿಯಲ್ಲಿ ದೊರೆಯುವುದನ್ನು ನಂಬಲಿಕ್ಕೇ ಸಾಧ್ಯವಿಲ್ಲ! ಅದರ ಜೊತೆಯಲ್ಲಿ ಹಣವನ್ನು PayPal ಅಕೌಂಟಿನ ಮೂಲಕವೂ ಕೊಡಬಹುದಾದ್ದರಿಂದ ಎಲ್ಲವೂ ಬಹಳ ಸುಲಭವಾಗಿದೆ. ಇಂತಹ ಬೆಳವಣಿಗೆ ನಿಜಕ್ಕೂ ಶ್ಲಾಘನೀಯ. ಹಿಂದೆ ಕನ್ನಡ ಪತ್ರಿಕೆಯ ಒಂದಿಬ್ಬರು ಸಂಪಾದಕರಿಗೆ ಬರೆದಿದ್ದೆ, ಅನಿವಾಸಿಗಳು ನಿಮ್ಮಿಂದ ಪತ್ರಿಕೆ/ಪುಸ್ತಕವನ್ನು ಕೊಂಡುಕೊಳ್ಳಬೇಕು ಎಂಬುದು ನಿಮ್ಮ ಇಂಗಿತವಾದರೆ ಆನ್‌ಲೈನ್ ಪೇಮೆಂಟ್ ಮಾಡುವ ಹಾಗಿರಲಿ, ಇಲ್ಲವಾದರೆ ವಾರಕ್ಕೊಮ್ಮೆ ಪತ್ರಗಳನ್ನು ಓದುವ ನನ್ನಂತಹವರು ಇಲ್ಲಿಂದ ಚೆಕ್ಕೋ, ಡಿಡಿಯನ್ನು ಕಳಿಸಿ ಪತ್ರಿಕೆ ಕೊಳ್ಳುವುದಾಗಲೀ, ನವೀಕರಣ ಮಾಡುವುದಾಗಲಿ ಅಷ್ಟರಲ್ಲೇ ಇದೆ ಎಂಬುದಾಗಿ. ಈ ಹೊಸ ಮಾಧ್ಯಮವನ್ನು ಅನುಸರಿಸದ ಪತ್ರಿಕೆಗಳಲ್ಲಿ ಕೆಲವು ನಿಂತು ಹೋದವು, ಇನ್ನು ಕೆಲವು ಸೊರಗಿವೆ ಎಂದು ಹೇಳಬಲ್ಲೆ. ಆದರೆ ವಿಕ್ರಾಂತ ಕರ್ನಾಟಕ ಮೊದಲಿನ ದಿನದಿಂದಲೇ ಈ ಹೊಸ ಮಾಧ್ಯಮ (ಪೇ ಪಾಲ್) ಅನ್ನು ಅಳವಂಡಿಸಿಕೊಂಡಿರುವುದು ನನ್ನಂತಹವರಿಗೆ ಬಹಳ ಅನುಕೂಲಮಾಡಿಕೊಟ್ಟಿತು.

ಹಾಗೇ ಲಗುಬಗೆಯಿಂದ ಪತ್ರಿಕೆಯನ್ನು ತಿರುಗಿಸಿದಾಗ ಪ್ರತಿಯೊಂದು ಪುಟವೂ ವರ್ಣರಂಜಿತ, ಎಲ್ಲಾ ಹಾಳೆಗಳೂ ಗ್ಲೇಜ್ಡ್ ಅಥವಾ ಶ್ರೇಷ್ಠ ಗುಣಮಟ್ಟದಿಂದ ಕೂಡಿದ್ದು ಎನ್ನುವುದನ್ನು ಅನೇಕರು ಗಮನಿಸಿ ಹೊಗಳಿರುವುದನ್ನು ಗುರುತಿಸಿದೆ. ರಾಜಕೀಯ, ರಂಜನೆ, ಪದ್ಯ-ಗದ್ಯಗಳನ್ನೆಲ್ಲವನ್ನು ಒಡಗೂಡಿದ ಸಮಗ್ರ ವಾರ ಪತ್ರಿಕೆಯಾಗಿ ಅಲ್ಲದೇ ಇತ್ತೀಚಿನ ಘಟನೆಗಳಿಂದ ಹಿಡಿದು ಅನೇಕ ಸುದ್ದಿ-ಸ್ವಾರಸ್ಯಗಳನ್ನು ಒಳಗೊಂಡಿರುವುದು ಕಂಡು ಬಂತು. 'ಕನ್ನಡತನದ ಹೊಸ ಪ್ರತಿಷ್ಠೆ' ಎನ್ನುವ ವಿಶೇಷಣ ಅಕ್ಷರಷಃ ನಿಜವಾಗಲಿ, ವರ್ಣರಂಜಿತ ಪುಟಗಳು ಹೀಗೇ ಮುಂದುವರೆಯಲಿ, ರವಿ-ಸುರೇಶ್ ಅವರ ಕನಸಿನಂತೆ ಸಕಲ ಕನ್ನಡಿಗರಿಗೂ ಹೀಗೊಂದು ಪತ್ರಿಕೆ ತಲುಪಲಿ.

***

'ವಿಕ್ರಾಂತ' ಎಂದರೆ stepped beyond ಅನ್ನೊ ಅರ್ಥದಲ್ಲಿ, ಈ ಪತ್ರಿಕೆ ಮುಂದೆ ಕನ್ನಡದ ಪತ್ರಿಕೋದ್ಯಮದಲ್ಲಿ ಮಹತ್ತರ ಮೈಲಿಗಲ್ಲೊಂದನ್ನು ಸ್ಥಾಪಿಸುವಂತಾಗಲಿ ಎಂಬುದು ನನ್ನ ಹಾರೈಕೆ.

'ಅಂತರಂಗ'ದ ಹೃತ್ಪೂರ್ವಕ ಶುಭಾಶಯಗಳು!

No comments: