Wednesday, October 04, 2006

ಎಲ್ರೂ ಹೇಳೋರಾದ್ರೆ ಕೇಳೋರ್ ಯಾರು?

ಇತ್ತೀಚೆಗಂತೂ ಯಾರೂ ಯಾರ ಮಾತನ್ನೂ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ, ಈ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಜೀವಾ ತೇದು-ತೇದೂ ಎಷ್ಟು ಸರ್ತಿ ಹೇಳಿದ್ರೂ ಅಷ್ಟೇ ಅನ್ನಿಸಿ ಒಂದ್ಸರ್ತಿ 'ತುಥ್' ಅಂತ ಗಟ್ಟಿಯಾಗೇ ಹೇಳಿಕೊಂಡಿದ್ದೇನೋ ನಿಜ. ಈ active listening ಅನ್ನೋದಕ್ಕೇನೋ ಬಹುವಾಗಿ ವ್ಯಾಖ್ಯೆಗಳನ್ನು ಕೊಡ್ತಾರೆ, ಆದ್ರೆ ಯಾರ ಮಾತನ್ನೂ ಯಾರೂ ಕೇಳಿಸ್‌ಕೊಳ್ಳೋದೇ ಇಲ್ಲ, ಎಲ್ರೂ ಇನ್ನೊಬ್ರು ಮಾತನಾಡ್ತಿರಬೇಕಾದ್ರೆ, ಅವರ ಮನಸ್ಸಿನಲ್ಲಿ ಹೇಗೆ ತಮ್ಮ ಮಾತುಗಳನ್ನು ಆರಂಭಿಸಬೇಕು ಅಂತ ಸರಣಿ ಹೆಣೀತಾ ಇರ್ತಾರೇ ವಿನಾ ಮನಸ್ಸು ಕೊಟ್ಟು ಕಿವಿಕೊಟ್ಟು ಯಾರೂ ಇನ್ನೊಬ್ರ ಮಾತನ್ನ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ.

'ನಮಗೆ ಎರಡು ಕಿವಿಗಳಿರೋದ್ರಿಂದ ಹೆಚ್ಚಿಗೆ ಕೇಳಿಕೊಳ್ಳಬೇಕು' ಅನ್ನೋ ಅನುಪಾತದ ಮಾತಿಗಂತೂ ಹೋಗೋದೇ ಬೇಡ, ಎಲ್ರಿಗೂ ಮಾತನ್ನಾಡಬೇಕು ಅನ್ನೋ ತವಕಾ, ತಮ್ಮ ತಮ್ಮ ಸರದಿ ಬರೋವಲ್ಲೀವರೆಗೆ ಕಾಯಬೇಕು ಅನ್ನೋ ವ್ಯವಧಾನವಿಲ್ಲದಾಗ ಹೀಗಾಗುತ್ತೇನೋ ಅನ್ನಿಸುತ್ತೆ. ನಮ್ ಸುತ್ತಮುತ್ತಲಿನಲ್ಲಿ ಎಲ್ರೂ ಮಾತನಾಡಬೇಕು ಅಂತ ಹಾತೊರೆಯೋಕೆ ಏನಾದ್ರೂ ಒಂದು ಕಾರಣ ಅಂತ ಇರಬೇಕು - ಮಾತನಾಡೋದು ಅಂದ್ರೆ ಅಭಿವ್ಯಕ್ತಿಗೊಳಿಸೋದು, ಇಲ್ಲಂತೂ ಎಲ್ಲವನ್ನೂ ಶಬ್ದ ಮಾಡಿಯೇ ಹೇಳಬೇಕು, ಸನ್ನೆ-ಸೂಕ್ಷ್ಮ ಒಂದೂ ಇಲ್ಲ. ಎಷ್ಟೋ ಸರ್ತಿ ನಮ್ ಹೈ ಸ್ಕೂಲು ಮೇಷ್ಟ್ರುಗಳು ನಮ್ಮನ್ನ ಹೆದರಿಸ್ತಾ ಇರ್ಲಿಲ್ಲ್ವಾ ಕಣ್ಣಲ್ಲೇ? ಒಮ್ಮೆ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿಯೋ, ಅಥವಾ ಕಣ್ಣನ್ನು ಕಿರಿದಾಗಿ ಮಾಡಿಯೋ ಅವರ ಸಿಟ್ಟನ್ನ ಪ್ರದರ್ಶಿಸಿಸ್ತಾ ಇರ್ಲಿಲ್ಲ್ವಾ? ಅವೆಲ್ಲ ಇಲ್ಲಿ ನಡೆಯೋಲ್ವೋ ಏನೋ ಯಾರಿಗ್ಗೊತ್ತು?

ಈ ದೇಶದಲ್ಲಂತೂ ನಾನು ಒಬ್ರೂ ಮೂಕರನ್ನ ನೋಡಲಿಲ್ಲ, ಅದರ ಬದಲಿಗೆ ಹೆಚ್ಚು ಬಾಯಿಬಡುಕರನ್ನೇ ನೋಡಿರೋದು. ಇವತ್ತಿಗೂ ನಮ್ಮನೆಯಲ್ಲಿ ಬಲಗೈ ಹೆಬ್ಬಟ್ಟೆನ್ನ ಬಾಯಿ ಹತ್ರ ತಗೊಂಡೋಗಿ ತುಟಿಗೆ ತಾಗಿಸಿದ ಹಾಗೆ ಮಾಡಿದ್ರೆ ಒಂದು ಲೋಟಾ ನೀರಂತೂ ಖಂಡಿತ ಸಿಕ್ಕುತ್ತೆ, ಆದ್ರೆ ಇಲ್ಲಿ ಯಾರೂ ನೀರು ಕೊಡು ಅನ್ನೊದಕ್ಕೆ ಸನ್ನೆ ಮಾಡಿ ಕೇಳಿದ್ದನ್ನು ನಾನು ನೋಡಿಲ್ಲ. ನಮ್ಮ ಅವಿಭಾಜ್ಯ ಕುಟುಂಬ ವ್ಯವಸ್ಥೆಯಲ್ಲಿ ದೊಡ್ಡಪ್ಪ, ಚಿಕ್ಕಪ್ಪ, ಸೋದರ ಮಾವ, ಸೋದರತ್ತೆ ಇವರೆಲ್ಲ ನಮ್ಮನ್ನು ಬೇಕಾದಷ್ಟು "ಸನ್ನೆ-ಸೂಕ್ಷ್ಮ"ಗಳಲ್ಲಿ ಬೆಳಿಸಿದವರೇ. ಇವತ್ತಿಗೂ ಸಹ 'ಊಹೂ', 'ಇಲ್ಲ'ಗಳಿಗೆ ಎಷ್ಟೋ ಜನ ತಲೆಯಾಡಿಸೋದನ್ನ ನೋಡಿದ್ದೇನೆ.

ನಾವು ಒಂದ್ ಗಡಿ ದಾಟಿ ಇನ್ನೊಂದು ಗಡಿ ಹೊಕ್ಕರೆ ಬೇರೆ-ಬೇರೆ ಭಾಷೆಗಳ ಉಗಮ ಹಾಗೂ ಬೆಳವಣಿಗೆ ಆದಂತೆ ಸನ್ನೆಗಳ ಬೆಳವಣಿಗೆ ಎಲ್ಲಾ ಕಡೇ ಏಕಾಗಲಿಲ್ಲವೋ ಯಾರಿಗೆ ಗೊತ್ತು? ನಮ್ಮಲ್ಲಿ ಓಪನ್ ಆಗಿ 'ಧನ್ಯವಾದ' ಹೇಳೋ ಪದ್ಧತಿ ಏನೂ ಇಲ್ಲ, ಅದರ ಬದಲಿಗೆ ಕಣ್ಣಲ್ಲೇ ಧನ್ಯವಾದಗಳನ್ನ ಅರ್ಪಿಸೋದಿಲ್ಲವೇ? ನಮ್ಮವರು "ಥ್ಯಾಂಕ್ಯು-ವೆಲ್‌ಕಮ್"ಗಳನ್ನ ಹೇಳದಿದ್ದರೇನಂತೆ, ತುಂಬು ಹೃದಯದಿಂದ ಉಪಕಾರ ಸ್ಮರಣೆ ಮಾಡಿದರೆ ಸಾಕಾಗೋದಿಲ್ಲವೇ? ಹೀಗೆ ಬಾಯಿ ಬಿಟ್ಟು ಹೇಳಲಾಗದ ಹಲವಾರು ಭಾವನೆಗಳನ್ನು ಕಣ್ಣಿನ ಮೂಲಕ ಅಭಿವ್ಯಕ್ತಗೊಳಿಸಿದ್ದನ್ನ rude ನಡತೆ ಎನ್ನಲಾಗುವುದೇ? ಯಾರಾದ್ರೂ ಥ್ಯಾಂಕ್ಯೂ ಅಂದ್ರೆ 'you are welcome!' ಎಂದು ಹೇಳೋದನ್ನ ರೂಢಿ ಮಾಡಿಕೊಳ್ಳೋಕೆ ಎಷ್ಟೋ ದಿನಗಳು ಹಿಡೀತು, ಆದ್ರೂ ಅದು ಸಹಜ ಪ್ರತಿಕ್ರಿಯೆ ಅಂತ ಅನ್ನಿಸಿದ್ದೇ ಇಲ್ಲ. ಇನ್ನು ಬಾಯಿಬಿಟ್ಟು ಹೇಳದೇ ಹೋದ್ರೆ ಉಪಕಾರ ಸ್ಮರಣೆ ಮಾಡದವನು ಅಂತ ಬಿರುದು ಕೊಟ್ಟರೇ ಎನ್ನೋ ಹೆದರಿಕೆ ಬೇರೆ ಕೇಡಿಗೆ.

ಭಗವಂತ ಬಾಯ್ ಕೊಟ್ಟಾ ಅಂತ ಎಲ್ರೂ ಮಾತನಾಡಬೇಕಪ್ಪಾ, ಅದರ ಜೊತೆಯಲ್ಲಿ ಇನ್ನೊಬ್ರು ಮಾತನಾಡೋದನ್ನೂ ಹಾಗೇ ಕೇಳಬೇಕು ಅನ್ನೋದು ನನ್ನ ಒಂದು ಕೂದಳೆಯ ಕೊರಗು. ಇನ್ನೊಬ್ರು ಮಾತನಾಡ್ತಾ ಇರಬೇಕಾದ್ರೆ ನಾವುಗಳು ನಮ್ಮ-ನಮ್ಮ ಲೋಕದಲ್ಲೇ ಇದ್ರೆ ಅದರಿಂದಾನಾದ್ರೂ ಏನು ಬಂತು? ಎದುರಿಗಿದ್ದವರೇ ಮಾತನ್ನು ಕೇಳದಿರುವಾಗ ಇನ್ನು ಫೋನ್‌ನಲ್ಲಿ ಮಾತನಾಡಿದ್ದನ್ನ ಕೇಳಿಸಿಕೊಳ್ತಾರೆ ಅನ್ನೋದೇನು ಗ್ಯಾರಂಟಿ. ನನ್ನೊಡನಾಡುವ ಜನರನ್ನು ಈ ರೋಗದಿಂದ ಮುಕ್ತರನ್ನಾಗಿಸಲು ನಾನು ಹೊಸ ಮಾರ್ಗವೊಂದನ್ನು ಕಂಡುಹಿಡಿದುಕೊಂಡಿದ್ದೇನೆ, ಅದೇನೆಂದರೆ ನಾನು ಮಾತನಾಡ್ತಾ ಇರೋ ವಿಷಯದ ಬಗ್ಗೇನೇ ಅಲ್ಲಲ್ಲಿ ಸೂಚ್ಯವಾಗಿ ಪ್ರಶ್ನೆಗಳನ್ನ ಕೇಳೋದು. ನೀವೂ ಹೀಗೆ ಮಾಡಿ ನೋಡಿ, ಎಲ್ಲರೂ ನಿಮ್ಮ ಮಾತುಗಳನ್ನ ಕೇಳತೊಡಗುತ್ತಾರೆ, ಅಂದರೆ ಕಿವಿಗೊಟ್ಟು ಆಲಿಸತೊಡಗುತ್ತಾರೆ - ಆದರೆ ಅದನ್ನ ಪಾಲಿಸೋದು ಬಿಡೋದು ಅವರವರಿಗೆ ಬಿಟ್ಟ ವಿಷಯ, ಆದರೆ ನಿಮ್ಮ ಮಾತುಗಳ ಮಧ್ಯೆ ಕೇಳುವ ಪ್ರಶ್ನೆ, ಅದಕ್ಕೆ ಉತ್ತರ ಆ ಸಮಯದ ಮಟ್ಟಿಗೆ ನಿಮಗೆ ನೆನಪಿದ್ದರೆ ಅಲ್ಲಿಗೆ ಅರ್ಧ ಕಾರ್ಯ ಯಶಸ್ವಿಯಾದಂತೆಯೇ ಲೆಕ್ಕ!

Tuesday, October 03, 2006

ಕರ್ನಾಟಕ "ಬಂದ್"

ಸತ್ಯಾಗ್ರಹ ಅನ್ನೋದು ಬಹಳ ದೊಡ್ಡ ಮಾತು - Insistence of truth ಎಂದು ಅನುವಾದಿಸಿ ಹೇಳಿದರೂ ಇಂಗ್ಲೀಷರಿಗೆ ಬಾಪುವಿನ ಮನಸ್ಸಿನ್ನಲ್ಲಿದ್ದ ಸತ್ಯಾಗ್ರಹ ಹಾಗೂ ಅದರ ತೀವ್ರತೆಯ ಪರಿಣಾಮವನ್ನು ಹೇಳುವಲ್ಲಿ ಅನುವಾದ ಸೋಲುತ್ತದೆಯೆಂದೇ ಹೇಳಬೇಕು. ಇಂತಹ ಒಂದು ಮೂಲಮಂತ್ರವನ್ನು ಘೇರಾವ್, ಬಂದ್, ಮತ್ತಿತರ ರಾಜಕೀಯ ಪ್ರೇರಿತ ಹರತಾಳಗಳನ್ನಾಗಿ ಪರಿವರ್ತಿಸಿ ನೋಡುವಲ್ಲಿ ನನ್ನದು ಮೊದಲಿನಿಂದಲೂ ವಿರುದ್ಧ ದೃಷ್ಟಿಕೋನವೇ. ಇಂದು ಇಲ್ಲಿಯೂ ಸಹ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತೇನೆ - ಈ ವಿಷಯದಲ್ಲಿ ನನ್ನ ಆಲೋಚನೆಗಳು ಪ್ರೈಮರಿ ಶಾಲೆಯ ಮಕ್ಕಳ ಆಲೋಚನೆಯ ಹಾಗೆ ಕೆಲವರಿಗೆ ಕಂಡುಬರಬಹುದು, ಆದರೂ 'ಬಂದ್' ನಿಂದ ಏನೇನು ಅನುಕೂಲತೆಗಳನ್ನು ಇಷ್ಟು ದಶಕಗಳಲ್ಲಿ ಸಾಧಿಸಿಕೊಂಡಿದ್ದಾರೋ ಅವುಗಳನ್ನೆಲ್ಲ ಮುಂದೆ ತೆರೆದಿಟ್ಟರೂ ನಾನು ಬಂದ್ ಅನ್ನು ಅನುಮೋದಿಸುವುದಕ್ಕೆ ಬಹಳ ಕಷ್ಟಪಡಬೇಕಾದೀತು.

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಗೋಡೆ ಬರಹ ಹಾಗೂ ಭಿತ್ತಿ ಚಿತ್ರಗಳನ್ನು ನಿಷೇಧಿಸಬೇಕು ಎಂದು ಕಾನೂನನ್ನು ಬದಲಾಯಿಸುವ ಬಗ್ಗೆ ಮಾತುಕತೆಗಳು ಆರಂಭವಾಗಿದ್ದವು. ಮುಂದೆ ಕಾನೂನನ್ನು ಬದಲಾಯಿಸಿದರೋ ಇಲ್ಲವೋ ಗೊತ್ತಿಲ್ಲ, ಆದರೆ ಇವತ್ತಿಗೂ ನಮ್ಮ ಊರುಗಳಲ್ಲಿ ಕಂಡಕಂಡಲ್ಲೆಲ್ಲ ಒಂದಲ್ಲ ಒಂದು ರೀತಿಯ ಗೋಡೆ ಬರಹಗಳು, ಚಿತ್ರಗಳು, ಪೋಸ್ಟರುಗಳು ಇವೆಲ್ಲ ಮಾಮೂಲು. ಮುಂದುವರಿದ ದೇಶಗಳಲ್ಲಿ ಜಾಹಿರಾತು ಹೋರ್ಡಿಂಗ್‌ಗಳು ಕಾಣುತ್ತವೆ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ರಸ್ತೆ, ಗೋಡೆ, ಫಲಕಗಳ ಮೇಲೆ ಬಣ್ಣಬಣ್ಣದ ಬರಹಗಳು ಕಾಣುತ್ತವೆ ಎನ್ನುವುದು ಬೇರೆ ವಿಷಯ; ಎಷ್ಟೋ ಜನ ಗೋಡೆ ಬರಹವನ್ನು ಒಂದು ಸಾಮಾನ್ಯ ಧ್ವನಿಯ ಪ್ರತೀಕ ಅದನ್ನು ನಿಯಂತ್ರಿಸಬಾರದು ಎಂದೂ ಹೋರಾಟ ನಡೆಸಿದ್ದರು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ಒಂದು ಬಣ ಯೋಚಿಸಿದರೆ, ಮತ್ತೊಂದು ಬಣದವರು ನಿಮ್ಮ ಧ್ವನಿಗಳನ್ನು ಪರಿವರ್ತಿಸಿಕೊಳ್ಳಿ, ಅದರ ಬದಲು ಸಾರ್ವಜನಿಕ ಆಸ್ತಿಪಾಸ್ತಿ ಅಥವಾ ಖಾಸಗೀ ಪ್ರಾಪರ್ಟಿಯನ್ನು ಹಾಳುಗೆಡವಬೇಡಿ ಎಂದು ವಾದ ಶುರುಮಾಡಿದ್ದರು. ಹೀಗೆ ದೇಶಾದ್ಯಂತ ಎಲ್ಲಿ ಹೋದರೂ ಸಾರ್ವಜನಿಕ ಧ್ವನಿ ಒಂದಲ್ಲ ಒಂದು ರೀತಿಯಲ್ಲಿ ಹೊರಬರುತ್ತಲೇ ಇದೆ, ಹೀಗೆ ಧ್ವನಿಯನ್ನು ಹೊರಡಿಸಿರೋದರಿಂದ ಏನಾನಾಗಿದೆ ಎನ್ನುವುದನ್ನು ಯಾರಾದರೂ ಗೊತ್ತಿದ್ದವರು ಇಲ್ಲಿ ತಿಳಿಸಿದ್ದರೆ ಒಳ್ಳೆಯದಿತ್ತು.

ಉದಾಹರಣೆಗೆ ಇಂದಿನ ಕರ್ನಾಟಕ ಬಂದ್ ವಿಷಯವನ್ನೇ ತೆಗೆದುಕೊಳ್ಳೋಣ - ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವುದು ಮುಖ್ಯವಾದ ಬೇಡಿಕೆಗಳಲ್ಲೊಂದು, ಆದರೆ ಈ ಕೆಳಗಿನ ವಿಷಯಗಳ ಹಿನ್ನೆಲೆಯಲ್ಲಿ ಈ ಬಂದ್ ಆಯೋಜಕರ ಸಂದೇಶಗಳು ಏನೇ ಇದ್ದರೂ ಅವು ಹೇಗೆ ಕನ್ನಡಿಗರಿಗೆ ಅನ್ವಯವಾಗುತ್ತವೆ ಎಂದು ನೋಡೋಣ:

* ಎರಡು ಸೆಕೆಂಡಿಗೊಂದು ಮಗು ಹುಟ್ಟುವ ನಮ್ಮ ವ್ಯವಸ್ಥೆಯಲ್ಲಿ ಆಸ್ಪತ್ರೆ, ಮುಂತಾದ ಅಗತ್ಯ ಸೇವೆಗಳಲ್ಲಿ ನಿರತವಾಗಿರುವ ಕೆಲಸಗಾರರು ಬಂದ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವಂತೆ ಮುಂಜಾಗರೂಕತೆ ತೆಗೆದುಕೊಳ್ಳುವವರಾರು?
* ವಯೋವೃದ್ಧರು, ಮಕ್ಕಳು ಖಾಯಿಲೆಗೆ ಬಿದ್ದರೆ ತುರ್ತು ಚಿಕಿತ್ಸೆಗೆಂದು ಅವರು ಎಲ್ಲಿ ಹೋಗಬೇಕು, ಅವರು afford ಬಸ್ಸು, ರಿಕ್ಷಾಗಳು ಸೇವೆಯಲ್ಲಿಲ್ಲದಿರುವಾಗ ಇಂತಹ ಅಸಹಾಯಕರು ಏನು ಮಾಡಬೇಕು?
* ಕಂಪನಿ, ಅಂಗಡಿ, ಮುಗ್ಗಟ್ಟುಗಳು ತಮ್ಮ ಆ ದಿನದ ಕೆಲಸವನ್ನು ನಿಲ್ಲಿಸಿರುವುದರಿಂದ ಆಗುವ ನಷ್ಟವನ್ನು ತುಂಬಿಕೊಡುವವರಾರು?
* ಒಂದು ದಿನ ಕೆಲಸ ಸ್ಥಗಿತಗೊಳಿಸಿರೋದರಿಂದ ಎಷ್ಟೋ ಯೋಜನೆಗಳಿಗೆ ಆಗುವ ನಷ್ಟವನ್ನು ಹೇಗೆ ವಿವರಿಸುವುದು? ಅವುಗಳನ್ನು ಮತ್ತೆ ಸ್ಕೆಡ್ಯೂಲಿನಲ್ಲಿ ಸರಿಯಾಗಿಡುವುದು ಹೇಗೆ?
* ಅಂದೇ ದುಡಿದು ಅಂದೇ ತಿನ್ನುವ ಕೂಲಿ ಕಾರ್ಮಿಕರಿಗೆ ಹೊಟ್ಟೆ ಹೊರೆಯುವವರಾರು?
* ಶಾಲೆ-ಕಾಲೇಜುಗಳಲ್ಲಿ ಪಾಠ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಯಾರು ಸ್ಪೆಷಲ್ ಕ್ಲಾಸುಗಳನ್ನು ಏರ್ಪಡಿಸಿ ಕ್ಲಾಸುಗಳನ್ನು ನಡೆಸುವ ವ್ಯವಸ್ಥೆಯನ್ನು ಮಾಡುತ್ತಾರೆ?
* ಇಂದೇ ಕೊನೇ ದಿನವಾಗಿ ಹಾಕಬೇಕಾದ ಎಷ್ಟೋ ಅರ್ಜಿಗಳನ್ನು ತುಂಬಿ ಬ್ಯಾಂಕು, ಅಂಚೆ ವ್ಯವಸ್ಥೆಯ ಸಹಾಯದಿಂದ ಕಳಿಸಬೇಕಾದವರಿಗೆ ಸಹಾಯ ಮಾಡುವವರಾರು?

ಹೀಗೆ ಬರೆಯುತ್ತಾ ಹೋದರೆ ಕೊನೇಪಕ್ಷ ಒಂದು ನೂರು ಪ್ರಶ್ನೆಗಳನ್ನು ಬರೆಯಬಹುದು. ಇವೆಲ್ಲವನ್ನೂ ಕೂಲಂಕಷವಾಗಿ ಗಮನಿಸಿದರೆ ಈ ಬಂದ್ ಆಚರಣೆಯಿಂದ ಕರ್ನಾಟಕದವರಿಗೆ (ಒಬ್ಬ ಸಾಮಾನ್ಯ ಕನ್ನಡಿಗನಿಗೆ ಎನ್ನೋ ಅರ್ಥದಲ್ಲಿ) ತೊಂದರೆಗಳಾದವೇ ವಿನಾ ಅನುಕೂಲಗಳೇನಾದವು ಎಂದು ಪ್ರಶ್ನೆ ಹುಟ್ಟುತ್ತದೆ. ಸರಿ ಈ ಬಂದ್ ಆಚರಣೆಯ ನಿರೀಕ್ಷೆ ಏನು, ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗಿದೆಯೇ? ಅಥವಾ ಕರ್ನಾಟಕದವರದ್ದೂ ಒಂದು ಧ್ವನಿ ಇದೆ ಒಂದು ತೋರಿಸಬೇಕಾಗಿದೆಯೇ? ಅಥವಾ ಮಹಾರಾಷ್ಟ್ರ ಸರ್ಕಾರದ ನಿಯೋಗಗಳು ಕೇಂದ್ರವನ್ನು ಇನ್ನೊಮ್ಮೆ ತಲುಪದಿರುವಂತೆ ಪರೋಕ್ಷವಾಗಿ ಹೇಳಬೇಕಾಗಿದೆಯೇ? ಅಥವಾ ಬರೀ ರಾಜಕೀಯ ಪ್ರೇರಿತ ಈ ಬಂದ್ ನಲ್ಲಿ ನನಗರಿವಿಗೆ ಬರದ, ಬಂದರೂ ಬರೆಯಲಾಗದ ಇನ್ನೇನಾದರೂ ಗುಟ್ಟುಗಳಿವೆಯೋ ಯಾರಿಗೆ ಗೊತ್ತು?

ಹೀಗೆ ವರ್ಷಕ್ಕೊಂದು ಬಂದ್ ನಡೆದರೆ ಅದನ್ನು ರಾಜ್ಯದ ರಜಾ ದಿನಗಳ ಸಾಲಿಗೆ ಸೇರಿಸಿಕೊಂಡು ನೆಮ್ಮದಿಯಿಂದಿರಬಹುದು. ಜಿಲ್ಲಾ, ತಾಲ್ಲೂಕುಗಳ ಮಟ್ಟದಲ್ಲಿ ಆಗಿಂದಾಗ್ಗೆ ನಡೆಯುವ ಹರತಾಳಗಳನ್ನು ಹೊರತುಪಡಿಸಿ ರಾಜ್ಯ ಮಟ್ಟದಲ್ಲಿ ಬೇಕಾದಷ್ಟು ಈ ರೀತಿ ನಡೆಯುತ್ತಲೇ ಇರುತ್ತವೆ. ಇನ್ನು ಸ್ವಲ್ಪ ದಿನಕ್ಕೆ ಕಾವೇರಿ ಗಲಾಟೆ ಆರಂಭವಾಗುತ್ತದೆ, ಯಾರೋ ಒಬ್ಬರು ಅಂಬೇಡ್ಕರ್ ಹೆಸರಿಗೆ ಮಸಿ ಬಳಿದರೆಂದು ಶುರುವಾಗುತ್ತದೆ, ಅನ್ಯಾಯವನ್ನು ಪ್ರತಿಭಟಿಸಿ ಹಲವು ಬಂದ್ ಗಳು, ಅನ್ಯಾಯವನ್ನು ಮೆಟ್ಟಿ ನಿಲ್ಲಲು ಇನ್ನು ಹಲವು, ಶಾಂತಿ ಸಂದೇಶವನ್ನು ಬಿಂಬಿಸಲು ಕೆಲವಾದರೆ, ಕೆಂಪು ಬಸ್ಸುಗಳನ್ನು ಸುಟ್ಟು, ಬೀದಿ ದೀಪಗಳನ್ನು ಪುಡಿ ಮಾಡುವ ಮತ್ತಷ್ಟು ಬಂದ್ ಗಳು. ಈ ಎಲ್ಲಾ ಬಂದ್ ಗಳು ಮಾಡಿದ ಒಟ್ಟು "ಸತ್ಯಾಗ್ರಹ"ವನ್ನು ಲೆಕ್ಕ ಹಾಕಿ ನೋಡಿದರೆ ನಮ್ಮ ದೇಶ-ರಾಜ್ಯದಲ್ಲಿ ಇಂದು ಅನ್ಯಾಯ, ಬ್ರಷ್ಟಾಚಾರ, ಇತ್ಯಾದಿಗಳು ಇರಲೇಬಾರದು, ಯಾವ ಗಡಿಯನ್ನು ಯಾರೂ ಆಕ್ರಮಿಸಬಾರದು, ಎಲ್ಲ ವರದಿಗಳೂ ಅನುಷ್ಠಾನಕ್ಕೆ ಬಂದಿರಬೇಕಿತ್ತು, ಸ್ವಾಯುತ್ತತೆ ಬೇಡಿದವರಿಗೆಲ್ಲ ಸಿಕ್ಕಿರಬೇಕಿತ್ತು - ಆದರೆ ಹಾಗೇನೂ ಆಗಲಿಲ್ಲವಲ್ಲ!

ಹಾಗಾದರೆ ಬಡ ಧ್ವನಿಗಳಿಗೆ ಒಂದು ಮಾಧ್ಯಮ ಅನ್ನೋದು ಬೇಡವೇ ಮತ್ತೆ? ಎಲ್ಲರೂ ಡೆಕ್ಕನ್ ಹೆರಾಲ್ಡ್‌ನಲ್ಲಿ ಫುಲ್ ಪೇಜ್ ಜಾಹಿರಾತು ಕೊಟ್ಟು ತಮ್ಮ ಸಂದೇಶವನ್ನು ಬಿಂಬಿಸುವಂತಿದ್ದರೆ ನಾವೇಕೇ ಹೀಗಿರುತ್ತಿದ್ದೆವು? ಹಾಗಿದ್ದ ಮೇಲೆ ಈ ಇಲ್ಲದವರ ಧ್ವನಿಯಾಗಿ ನಿಜವಾಗಿಯೂ ಬಂದ್ ಗಳು ಕೆಲಸ ಮಾಡುವಂತೆ ಮಾಡುವಲ್ಲಿ ಜನರು ಏಕೆ ಯೋಚಿಸೋದಿಲ್ಲ? ಸ್ವಾತಂತ್ರ್ಯೋತ್ತರ ದಶಕಗಳಲ್ಲಿ "ನಾವು ಇಂದು ನಮ್ಮ ಕೆಲಸವನ್ನು ಮಾಡುವುದಿಲ್ಲ" ಎನ್ನುವುದೇ ನಮಗೆ ತತ್ ತಕ್ಷಣ ಹೊಳೆಯುವ ಪ್ರತಿಭಟನೆಯ ಹಾದಿಯೇ? ಈ ಬಂದ್ ಸ್ಥಿತಿಗೆ ಬರದಿರುವಂತೆ, ಅದಕ್ಕೂ ಮೊದಲು ಯಾರು ಯಾರು ಏನೇನನ್ನು ಮಾಡಿದ್ದಾರೆ? ಎಷ್ಟು ನಿಯೋಗಗಳು ಎಲ್ಲೆಲ್ಲಿ ಹೋಗಿವೆ? ಕೇಂದ್ರ ಸರಕಾರದವರು ಏಕೆ ಉತ್ತರ ಕೊಡುತ್ತಿಲ್ಲ? ಬಂದ್ ಮಾಡಿದ ಮೇಲೂ ಮಹಾಜನ ವರದಿಯನ್ನು ಅನುಷ್ಠಾನ ಮಾಡದಿದ್ದರೆ ಮುಂದಿನ ಹೆಜ್ಜೆಗಳೇನು? ಗುರಿಗಳೇನು? ಹೀಗೆ ಹಲವಾರು ಪ್ರಶ್ನೆಗಳನ್ನು ಒಂದರ ಹಿಂದೊಂದು ಕೇಳಬಹುದು.

ಬೆಳಗಾವಿ, ಕಾಸರಗೋಡು, ಬಳ್ಳಾರಿ, ಬೆಂಗಳೂರನ್ನು "ಸಂರಕ್ಷಣೆ" ಮಾಡೋದು ಕರ್ನಾಟಕದ ಜನತೆಯ ನಿಲುವಾದರೆ, ಆಡಳಿತ ಹಾಗೂ ವಿರೋಧ ಪಕ್ಷದವರೆಲ್ಲ ಬೆಂಬಲಿಸುತ್ತಿರುವ ಈ "ಬಂದ್" ಗಿಂತ ಮೊದಲು ಅವರೆಲ್ಲ ಏನೇನು ಮಾಡಿದ್ದಾರೆ, ಇದಕ್ಕೋಸ್ಕರವೇ ಒಂದು ಸಮಿತಿ ಅನ್ನೋದು ಇದೆಯೇ, ಗಡಿ ವಿಚಾರಗಳನ್ನು ಪರಾಮರ್ಶಿಸಿ ನೇರವಾಗಿ ಸಂಬಂಧಪಟ್ಟವರಲ್ಲಿ ವ್ಯವಹಾರ ನಡೆದಿದೆಯೇ? ಒಂದು ವೇಳೆ ನಮ್ಮ "ಬಂದ್" ಕರೆಗೆ ಓಗೊಟ್ಟು ಮಹಾಜನ್ ವರದಿಯನ್ನು ಅನುಮೋದಿಸಿದರು ಎಂದೇ ಅಂದುಕೊಳ್ಳೋಣ, ಮರುದಿನ ಮಹಾರಾಷ್ಟ್ರದವರು ಬಂದ್ ಆಚರಣೆ ಮಾಡಿದರೆ ಕೇಂದ್ರ ಸರ್ಕಾರದವರು ಏನು ಮಾಡಬೇಕು?

***

ಇವೆಲ್ಲವನ್ನು ಬರೆಯುತ್ತಿರುವುದರಿಂದಲೇ ಹೇಳಿದ್ದು ನನ್ನ ಆಲೋಚನೆಗಳು ಇನ್ನೂ ಪರಿಪಕ್ವವಾಗಿಲ್ಲ, ಇಪ್ಪತ್ತೈದು ವರ್ಷಗಳ ಕಾಲ ಭಾರತದಲ್ಲಿದ್ದರೂ ನನಗಿನ್ನೂ "ಬಂದ್"ಗಳ ಜೀವಾಳ ಅರ್ಥವಾಗಿಲ್ಲ, ಪ್ರತಿ ಬಂದ್ ಅನ್ನೋದೂ ಸಹ ನನಗೆ ಸಾರ್ವಜನಿಕರಿಗೆ ನೇರವಾಗಿ ಒಡ್ಡುವ ಹಿಂಸೆಯಂತೆ ಕಂಡು ಬಂದಿದೆಯೇ ವಿನಾ ಗೆದ್ದಿರುವ ಅಂಶಗಳು ಕಡಿಮೆ. ಹೀಗೆ ನಮ್ಮ ವಿರುದ್ಧವಾಗಿ ನಡೆಯುವ ಎಲ್ಲ ಪಿತೂರಿಗಳನ್ನು ವಿರೋಧಿಸಿ ಎಷ್ಟು ಬೇಕಾದಷ್ಟು ಬಂದ್ ಗಳನ್ನು ಆಚರಿಸುವಂತಿದ್ದರೆ ಚೆನ್ನಾಗಿತ್ತು. ಭಾರತ್ ಬಂದ್, ಏಷ್ಯಾ ಬಂದ್, ವಿಶ್ವವೇ ಬಂದ್ ಅನ್ನೋ ಹಾಗೆ - ಏನೇನೆಲ್ಲವನ್ನು ಮಾಡಬಹುದಿತ್ತು, I am really looking forward to a bundh, so that I don't have to work tomorrow! ನಮ್ಮ ವ್ಯವಸ್ಥೆಯಲ್ಲಿ ನಮ್ಮ ಹಕ್ಕು ಕತ್ರ್ಯವ್ಯಗಳನ್ನು ಜ್ಞಾಪಿಸೊದಕ್ಕು 'ಬಂದ್' ಗಳು ಎಷ್ಟ್ರರ ಮಟ್ಟಿಗೆ ಪೂರಕವಾಗಿವೆ ಅನ್ನೋದು ಈ ಸಂದರ್ಭದಲ್ಲಿ ಏಳುವ ಮತ್ತೊಂದು ಅಲೆಯಷ್ಟೇ.

Monday, October 02, 2006

ಭಾಷೆ ಬಾರದವರು

ತಿಂಗಳಿಗೊಮ್ಮೆ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರನ್ನು ಸ್ವಚ್ಛಗೊಳಿಸೋದು ವಾಡಿಕೆ, ಮೊದಲ ತಿಂಗಳು ಧಿಡೀರನೇ ಹೀಗೆ ನೋಟಿಸ್ ಕೊಟ್ಟು ಒಂದು ವಾರಾಂತ್ಯದಲ್ಲಿ ಎಲ್ಲವನ್ನೂ ಸ್ವಚ್ಛಗೊಳಿಸುವ ಮುನ್ಸೂಚನೆ ನೀಡಿ ಇದ್ದು ಬದ್ದುದೆಲ್ಲವನ್ನು ತೆಗೆದೆಸೆದು ಪೂರ್ತಿ ಖಾಲಿ ಮಾಡಿ ಹಾಕಿದ್ದರು. ಅಂದಿನಿಂದ ನಾವೆಲ್ಲರೂ ತಿಂಗಳ ಕೊನೆ ಬರುತ್ತಿದ್ದಂತೆ ಅದರಲ್ಲಿ ನಮ್ಮ ವಸ್ತುಗಳನ್ನೆನೂ ಇಡದೆ ಮುಂಜಾಗರುಕತೆಯಿಂದಿರುತ್ತಿದ್ದೆವು, ಏಕೆಂದರೆ ಅವರು ಅದರಲ್ಲಿದ್ದುದೆಲ್ಲವನ್ನು ಎಸೆಯುತ್ತಾರೆ ಎಂದ ಮೇಲೆ ಹಾಗೆ ಮಾಡಿಯೇ ತೀರುತ್ತಾರೆ ಎನ್ನುವುದನ್ನು ಕಲಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ.

ಶುಕ್ರವಾರ ನಾನು ನನ್ನ ಊಟದ ಬ್ಯಾಗ್ ತೆಗೆದುಕೊಂಡು ಬರುವ ಹೊತ್ತಿಗೆ ಇನ್ನೇನು ರೆಫ್ರಿಜಿರೇಟರ್ ಬಾಗಿಲು ಮುಚ್ಚ ಬೇಕೆನ್ನುವ ಹೊತ್ತಿಗೆ ಕೆಳಗೆ ಇಟ್ಟ ಒಂದು ಪ್ಯಾಕೆಟ್ ನನ್ನ ಗಮನ ಸೆಳೆಯಿತು, ಅದರ ಮೇಲೆ ಕೆಂಪು ಇಂಕಿನಲ್ಲಿ ಬರೆದ ಅಕ್ಷರಗಳು ಕುತೂಹಲದಿಂದ ಓದಿಸಿಕೊಂಡು ಹೋದವು - 'cleaning crew, this packet contains breakfast cereal, don't throw this packet when you clean!' ನಾನು ಈ ಪ್ಯಾಕೇಟಿನ ಗತಿ ಇನ್ನೆನಾಗುತ್ತೋ ಎಂದು ಅದರ ಓನರ್ ಬಗ್ಗೆ ಹುಡುಕಿದಾಗ ಯಾವ ಸುಳಿವೂ ಸಿಗದೇ ಸುಮ್ಮನೇ ಬಿಟ್ಟೆನಾದರೂ ಅದು ಟ್ಯ್ರಾಷ್ ಕ್ಯಾನ್ ಸೇರುವುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೂ ಅದರ ಅದೃಶ್ಟವನ್ನು ನೋಡಿಯೇಬಿಡೋಣವೆಂದು ಇಂದು ಮುಂಜಾನೆ ಹೋಗಿ ನೋಡಿದರೆ ಫ್ರಿಜ್ ಎಲ್ಲಾ ಬಣಬಣ, ಆ ಕ್ಲೀನಿಂಗ್ ಕ್ರ್ಯೂ ಎಲ್ಲವನ್ನು ಎತ್ತಿ ಬಿಸಾಡಿದ್ದಾರೆ! ಸ್ವಲ್ಪ ಆ ಕಡೆ ಈ ಕಡೆ ವಿಚಾರಿಸಲಾಗಿ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರ್ ಸ್ವಚ್ಛ ಮಾಡುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ತಿಳಿಯಿತು. ಅಕಸ್ಮಾತ್ ಅವರಿಗೆ ಆ ಚೀಟಿಯಲ್ಲಿ ಬರೆದಿದ್ದ ಲೇಬಲ್ ಓದಲು ಬಂದಿದ್ದರೆ ಆ ಸಿರಿಯಲ್ ಹಾಗೇ ಉಳಿಯುತ್ತಿತ್ತೋ ಏನೋ ಯಾರಿಗೆ ಗೊತ್ತು?

ಇಂತಹ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ನಡುವೆ ಒಬ್ಬ ಮನುಷ್ಯ ಮೂಗಿನ ಮೇಲೆ ಕನ್ನಡಕವನ್ನಿಟ್ಟುಕೊಂಡು ಅವನು ತನ್ನಷ್ಟಕ್ಕೆ ತಾನು ಕೆಲಸ ಮಾಡುವ ವಿಧಿಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಾನೆ, ಅಪ್ಪಟ ಅಮೇರಿಕನ್ ಅಕ್ಸೆಂಟಿನಲ್ಲಿ ಇಂಗ್ಲೀಷನ್ನು ಮಾತನಾಡುವ ಈತನನ್ನು ನಾನು "0007 ಏಜೆಂಟ್" ಎಂದೇ ಕರೆಯೋದು, ಇಲ್ಲವೆಂದಾದರೆ ಮಧ್ಯ ವಯಸ್ಸಿನ ಈ ಮನುಷ್ಯ ಇಷ್ಟೊಂದು ಚೆನ್ನಾಗಿ ಇಂಗ್ಲೀಷನ್ನು ಮಾತನಾಡಿ ಈ "ಭಾಷೆ ಬಾರದ" ಉಳಿದವರ ಜೊತೆ ಇಂಥ ಕೆಲಸಕ್ಕೇಕೆ ಸೇರಿಕೊಳ್ಳುತ್ತಿದ್ದ? ಸಂಜೆ ಆರೂವರೆ ಏಳು ಘಂಟೆ ಆಗುತ್ತಲೇ ಟ್ರ್ಯಾಷ್ ಕಲೆಕ್ಟ್ ಮಾಡಿಕೊಂಡು ಒಂದಿಷ್ಟು ಜನ ಲಗುಬಗೆಯಲ್ಲಿ ಓಡಾಡಲು ಶುರು ಮಾಡಿಕೊಳ್ಳುತ್ತಾರೆ, ಇಷ್ಟು ದೊಡ್ಡ ಆಫೀಸನ್ನು ಆದ್ಯಾವ ಪರಿಯಲ್ಲಿ ಸ್ವಚ್ಛಗೊಳಿಸುತ್ತಾರೋ ಬಿಡುತ್ತಾರೋ ಒಂದೆರೆಡು ಘಂಟೆಗಳಲ್ಲಿ ಎಲ್ಲವೂ ಹೆಚ್ಚೂ ಕಡಿಮೆ ಸ್ವಚ್ಛವಾಗಿರುತ್ತವೆ. ಪ್ರತಿದಿನವೂ ಯಾರು ಇರಲಿ ಬಿಡಲಿ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸುವ ಈ ಕ್ಲೀನಿಂಗ್ ಕ್ರ್ಯೂ "ಮಾತು ಕಡಿಮೆ, ಕೆಲಸ ಜಾಸ್ತಿ" ಎನ್ನುವ ಪಂಗಡಕ್ಕೆ ಸೇರಿದವರೆಂದು ನಾನು ಲೇಬಲ್ ಕೊಡುತ್ತೇನೆ.

ಎಲ್ಲವೂ ಇಂಗ್ಲೀಷಿನಲ್ಲೇ ಅಧಿಕಾರಕ್ಕೊಳಗಾಗಿ ಸಂವಹನದಲ್ಲಿ ತೊಡಗಿರುವಂತೆ ಕಂಡುಬರುವ ನಮ್ಮ ಆಫೀಸಿನಲ್ಲೂ "ಭಾಷೆ ಬಾರದ" ಅಥವಾ ಇನ್ಯಾವುದೋ ಭಾಷೆಯಲ್ಲೇ ಅವರವರ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಬೇಕಾದಷ್ಟು ಗುಂಪುಗಳು ಕಂಡುಬರುತ್ತವೆ. ಕೆಲವರದು ಇಂಗ್ಲೀಷು ಬಾರದ, ಅವರದ್ದೇ ಆದ ಒಂದು ಸದಾ ತೆರೆದಿರುವ ಲೋಕ, ಇನ್ನು ಹಲವರಿಗೆ ಆಗಾಗೆ ಇಂಗ್ಲೀಷಿನ ಸಾಮ್ಯ್ರಾಜ್ಯದಲ್ಲಿ ಮಿನುಗುವ ಕಪ್ಪ ಕೊಟ್ಟು ಹದ್ದು ಬಸ್ತಿನಲ್ಲಿರುವ ಚಿಕ್ಕ ಪುಟ್ಟ ರಾಜರುಗಳಂತೆ ಅವರವರ ಮನೆ ಮಾತು ಹಾಗೂ ಇತರ ಭಾಷೆಗಳು. ಇಂತಹವುಗಳ ನಡುವೆ ನನಗೆ ನನ್ನದೇ ಆದ ಕನ್ನಡ ಲೋಕವಿದೆ, ಆಗಾಗ್ಗೆ ಈ ನಿಟ್ಟಿನಲ್ಲಿ ಆಲೋಚಿಸುವ ನನಗೂ ಈ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ಗೂ ಹೆಚ್ಚು ವ್ಯತ್ಯಾಸವಿದೆಯೆಂದೇನೂ ಅನ್ನಿಸಲಿಲ್ಲ!

Sunday, October 01, 2006

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೇ...

ಓಹ್, ಹಾ ಹ್ಞೂ ಅನ್ನೋದರೊಳಗೆ ಸೆಪ್ಟೆಂಬರ್ರೇ ಮುಗಿದು ಹೋಯ್ತಲ್ಲಪ್ಪಾ ಈ ವರ್ಷಾ ಅಂದ್‌ಕೊಂಡೋರಲ್ಲಿ ನಾನೂ ಒಬ್ಬ. ಸೆಪ್ಟೆಂಬರ್ ಮುಗಿಯುತ್ತಲೂ ಇಲ್ಲಿ ನಾವಿರೋ ಸ್ಥಳದಲ್ಲಿ ಒಂದ್ ಕಡೆ ಸ್ವೆಟರ್, ಕೋಟುಗಳು ಹೊರಗಡೆ ಬಂದು ಇನ್ನೂ ಛಳಿ ಬಿದ್ದಿಲ್ಲಾ ಅಂತ ಹೇಳಿಕೊಂಡು ಹಾಗೇ ಅಂಗಿಯನ್ನು ತೊಟ್ಟು ತಿರುಗುವ ನನ್ನಂತಹವರಿಗೂ ಒಂದು ರೀತಿಯ ಛಳಿಯ ಹೆದರಿಕೆಯನ್ನು ಹುಟ್ಟಿಸಿದರೆ ಮತ್ತೊಂದು ಕಡೆ ಬೇಸಿಗೆ ಶುರುವಾಗಿ ಆಗಲೇ ಮುಗಿದುಹೋಯಿತೇ ಎನ್ನುವಂತಾಗಿತ್ತು. ಈ ವರ್ಷದ ಸೆಪ್ಟೆಂಬರ್ ಆರಂಭದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಮಾರಂಭ ಸಡಗರದಲ್ಲಿ ಮೊದಲವಾರವನ್ನು ಆಪೋಶನವನ್ನು ತೆಗೆದುಕೊಂಡರೆ, ಕೊನೆಯಲ್ಲಿ ದಸರಾ, ವಿಜಯದಶಮಿಯನ್ನು ಹೊತ್ತು ತಂದು ಮುಂಬರುವ ದೀಪಾವಳಿಯನ್ನಾಗಲೇ ನೆನಪಿಸುವಂತಾಗಿರುವುದು ವಿಶೇಷ. ಸರಿಯಾಗಿ ಇನ್ನು ಹನ್ನೆರಡು ಹದಿಮೂರು ವಾರ ಮುಗಿದರೆ ಈ ವರ್ಷದ ಆಯಸ್ಸು ಮುಗಿದಂತೆ ಮತ್ತೊಂದು ಹೊಸವರ್ಷ ಆರಂಭವಾಗುತ್ತದೆ, ಮುಂಬರುವ ಐವತ್ತೆರಡು ಹೊಸವಾರಗಳು ತಮ್ಮ ಹೊಸಮುಖಗಳನ್ನು ಪರಿಚಯಿಸಿಕೊಳ್ಳಲು ಕಾದಿರುತ್ತವೆ.

ಹೀಗೆ ವರ್ಷಗಳನ್ನು ವಾರಗಳಲ್ಲಿ ಅಳೆಯೋದಕ್ಕೆ ಬೇರೇನು ಕಾರಣವಿಲ್ಲ - ಇಲ್ಲಿಗೆ ಬಂದ ಮೇಲೆ ಮೆಟ್ರಿಕ್ ಪದ್ಧತಿಯ ಎಲ್ಲಾ ಮೂಲಮಾನಗಳನ್ನು ಬದಿಗೊತ್ತಿ, ಆಡಿ-ಮೈಲು-ವಾರಗಳ ಅಳತೆಯ ಚಕ್ಕರದಲ್ಲಿ ಸಿಕ್ಕಿಹಾಕಿಕೊಂಡಿರುವವರು ಹಲವರು, ಅದರಲ್ಲಿ ನಾನೂ ಒಬ್ಬ. ಕ್ಯಾಮೆರಾ ಲೆನ್ಸ್ ಅಳತೆಯ ಲೆಕ್ಕಕ್ಕೆ ಮಾತ್ರ ಮಿಲಿ ಮೀಟರುಗಳನ್ನು ಬಳಸುತ್ತೇನೆಯೇ ವಿನಾ ಮತ್ತೆಲ್ಲದಕ್ಕೂ ಹೆಚ್ಚೂ ಕಡಿಮೆ ಇಂಚು, ಅಡಿ, ಮೈಲು, ಗ್ಯಾಲನ್ನುಗಳ ಲೆಕ್ಕವೇ. ಈ ಲೆಕ್ಕದ ಮಹಿಮೆಯನ್ನು ಕೊಂಡಾಡುತ್ತಾ ಹೋದಂತೆ ಎರಡು ವಿಷಯಗಳು ಗೋಚರಿಸಿದವು: ಮೊದಲನೆಯದಾಗಿ ವಿಶ್ವದಾದ್ಯಂತ ಜನರು ಉಷ್ಣತೆಯನ್ನು ಅಳೆಯಲು ಯಾವ ಸ್ಕೇಲ್ ಅನ್ನು ಬಳಸಿದರೂ (ಸೆಲ್ಶಿಯಸ್, ಫ್ಯಾರನ್‌ಹೈಟ್, ಕೆಲ್ವಿನ್) ಇಲ್ಲಿನ ಫ್ಯಾರನ್‌ಹೈಟ್ ಸ್ಕೇಲ್ ನನಗೆ ವಾತಾವರಣದ ಉಷ್ಣತೆಯನ್ನು ಅಳೆಯಲು ವಿಸ್ತೃತವಾದದ್ದು ಎನ್ನಿಸಿದ್ದು ಹಾಗೂ ಎರಡನೆಯದಾಗಿ ವಿಶ್ವದಾದ್ಯಂತ ಜನರ ಎತ್ತರವನ್ನು ಗುರುತಿಸಿ ಬಳಸುವಲ್ಲಿ ಅಡಿ-ಇಂಚುಗಳೇ ಹೆಚ್ಚು ಬಳಕೆಯಲ್ಲಿರುವುದು. ಸೆಂಟಿಗ್ರೇಡ್ ಸ್ಕೇಲಿನ ಬಳಕೆಯಲ್ಲಿ ತಪ್ಪು-ಸರಿ ಎನ್ನುವಂತದ್ದೇನೂ ಇಲ್ಲ, (ಭಾರತದಲ್ಲಿ) ನಮ್ಮೂರಿನ ಉಷ್ಣತೆ ಕಡಿಮೆ ಎಂದರೆ ಹದಿನೈದು ಡಿಗ್ರಿಯಿಂದ ಹಿಡಿದು ಹೆಚ್ಚೆಂದರೆ ನಲವತ್ತು ಮುಟ್ಟೀತು - ಅದನ್ನು ಇಲ್ಲಿಯವರ ತರಹ ಅರವತ್ತೈದರಿಂದ ನೂರಾ ಹದಿನೈದು ಎಂದು ಗುರುತಿಸಿದಾಗ ಉಷ್ಣತೆಯ ರೇಂಜ್ ಹೆಚ್ಚಾಗಿ ಇದ್ದ ಹವಾಗುಣದಲ್ಲೇ ಹೆಚ್ಚು ಆಪ್ಷನ್ನುಗಳು ಕಂಡಂತೆ ಅನ್ನಿಸೀತು. ಯಾವ ಸ್ಕೇಲನ್ನು ಎಲ್ಲಿಯಾದರೂ ಬಳಸಲಿ, ಇವತ್ತಿಗೂ ನಮ್ಮೂರುಗಳಲ್ಲಿ "ನೂರು ಡಿಗ್ರಿ ಜ್ವರ" ಎಂದರೆ ಎಲ್ಲರಿಗೂ ಜ್ವರದ ಕಾವು ಅರಿವಿಗೆ ಬರುತ್ತದೆ!

ಇನ್ನೆನು ಕೆಲವೇ ದಿನಗಳಲ್ಲಿ ಮರಗಿಡಗಳು ತಮ್ಮ ಎಲೆಗಳನ್ನು ಉದುರಿಸಲು ಆರಂಭಿಸುತ್ತವೆ, ಅದಕ್ಕೂ ಮೊದಲು ಒಂದು ರೀತಿ ಕೆಂಪು ಬಣ್ಣ ಎಲ್ಲ ಕಡೆ ತುಂಬಿಕೊಳ್ಳುತ್ತದೆ. ಅಕ್ಟೋಬರ್ ಎರಡನೇ ವಾರ ಹತ್ತಿರ ಬರುತ್ತಿದ್ದಂತೆ ನಿಧಾನವಾಗಿ ಗಾಳಿ ಬೀಸತೊಡಗುತ್ತದೆ, ನಸುಕಿನಲ್ಲಿ ಇಬ್ಬನಿ ಹೆಚ್ಚು ಕಡೆ ತೇವವನ್ನು ಹಿಡಿದಿಡುವ ಸಾಹಸ ಮಾಡುತ್ತಾ, ಒಂದೆರೆಡು ಘಂಟೆ ತಡವಾಗಿ ಉದಯಿಸುವ ಸೂರ್ಯನೇನು ಮಾಡುತ್ತಾನೆ ನೋಡುತ್ತೇನೆ ಎಂದು ಸಡ್ಡು ಹೊಡೆದಂತೆ ತೋರಿಸಿಕೊಳ್ಳುತ್ತದೆ. ಆಗಾಗ್ಗೆ ಸುರಿಯುವ ಮಳೆ ಅಥವಾ ಸುರಿಯದ ಬರೀ ನೀಲಾಕಾಶ ಮುಂಬರುವ ಥಂಡಿಕಾಲದ ಗಾಢತೆಯ ಮುನ್ಸೂಚನೆಯನ್ನು ಮಾಡಿಕೊಡುತ್ತವೆ. ಈ ದೇಶ-ಊರುಗಳಲ್ಲಿ ವೃತ್ತಪತ್ರಿಕೆಗಳನ್ನು ಓದಿದರೆ ಮಾತ್ರ ಎಲ್ಲಿ ಬರಬಿದ್ದಿದೆ, ಯಾವ ಬೆಳೆ ಏನಾಗಿದೆ ಎಂದು ತಿಳಿಯೋದು. ಅದನ್ನು ಬಿಟ್ಟರೆ ನಾವು ಓಡಾಡುವ ಊರು-ದಾರಿಗಳಲ್ಲಿ ಯಾವನೊಬ್ಬನೂ ಜಮೀನುದಾರನಂತೆ ಕಾಣಿಸೋದಿಲ್ಲ, ಎಲ್ಲೂ ಯಾರೂ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ಕೇಳಿ ಬರೋದಿಲ್ಲ. ಟಿ.ವಿ., ರೆಡಿಯೋಗಳಲ್ಲಿ ಆ ರೀತಿಯ ಕಾರ್ಯಕ್ರಮಗಳು ದಿನಾಲು ಬರಬಹುದು, ಅವುಗಳನ್ನು ನೋಡಲು/ಕೇಳಲು ಯಾರಿಗೆ ತಾನೆ ವ್ಯವಧಾನವಿದೆ? ನಮ್ಮ ಪ್ರತಿಕ್ರಿಯೆ ಏನಿದ್ದರೂ ಮಾಧ್ಯಮಗಳು ಬಿಂಬಿಸುವ ಪ್ರೈಮ್ ಟೈಮ್ ಕಾರ್ಯಕ್ರಮಗಳ ಬಗ್ಗೆ ಮಾತ್ರ.

ಒಂದು ಅಭಿವೃದ್ಧಿ ಹೊಂದಿದ ದೇಶದ ಸ್ಪಂದನಗಳೇ ಬೇರೆ, ಅವುಗಳನ್ನು ನೋಡುವಾಗ ನಮಗಿರಬೇಕಾದ ದೃಷ್ಟಿಕೋನವೇ ಬೇರೆ. ನಮ್ಮೂರುಗಳಲ್ಲಿ ನಾಡಿ ನೋಡಿ ಮದ್ದು ನೀಡುವ ವೈದ್ಯರಂತೆ ಇಲ್ಲಿಯ ಪಲ್ಸ್ ನೋಡಲು ಬೇಕಾದ ಪರದೆಗಳೇ ಬೇರೆ. ಇಷ್ಟು ವರ್ಷವೇನು ಇನ್ನೆಷ್ಟು ದಿನಗಳ ಕಾಲ ಈ ದೇಶದಲ್ಲಿ ಇದ್ದರೂ ಒಂದು ಹಸುವಿನ ಮೈದಡವಿ ನೋಡಿಲ್ಲ, ಇವತ್ತಿಗೂ ಒಂದು ಕೆಜಿ ಅಕ್ಕಿ ಬೆಲೆ ಎಷ್ಟು ಎಂದು ಅಪರೂಪಕ್ಕೊಮ್ಮೆ ಕೇಳುವ ನನ್ನ ಅಮ್ಮನಿಗೆ ಕೊಡಬೇಕಾದ ಉತ್ತರ ನನ್ನ ಬಳಿ ತಯಾರಿರುವುದಿಲ್ಲ. ಬೇರೆಲ್ಲದ್ದಕ್ಕೂ ನನ್ನ ಮನಸ್ಸಿನಲ್ಲಿ ಬೇಕಾದಷ್ಟು ಕ್ಯಾಲುಕುಲೇಶನ್‌ಗಳು ನಡೆದರೂ ಎರಡು ಪೌಂಡು ಅನ್ನೋದು ಸರಿ ಸುಮಾರು ಒಂದು ಕೆಜಿ ಹತ್ತಿರ-ಹತ್ತಿರವಾದರೂ ಇಪ್ಪತ್ತು ಪೌಂಡು ಅಕ್ಕಿಗೆ ಇಂತಿಷ್ಟು ಡಾಲರ್ ಆದರೆ ಒಂದು ಕೆಜಿ ಅಕ್ಕಿಗೆ ಎಷ್ಟು ಎನ್ನೋದನ್ನು ಲೆಕ್ಕ ಹಾಕಲು ನಾನು ಒಂದಿಷ್ಟು ಸೆಕೆಂಡುಗಳನ್ನು ಹೆಚ್ಚಾಗೇ ತೆಗೆದುಕೊಳ್ಳುತ್ತೇನೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿಯೊಬ್ಬರ ಆದಾಯದ ಸರಾಸರಿ ಎಂಟರಿಂದ ಹತ್ತರಷ್ಟನ್ನು ಮೂಲ ಆಹಾರ ಪದಾರ್ಥಗಳ ಮೇಲೆ ಬಳಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಶೇಕಡಾವಾರು ಸಂಖ್ಯೆ ಬಹಳ ಹೆಚ್ಚು. ಇಲ್ಲಿ ಆಹಾರ ಉತ್ಪನ್ನಗಳು ಒಂದು ರೀತಿಯ 'ಕಮಾಡಿಟಿ', ಅಲ್ಲಿ ಅವುಗಳು ಅತ್ಯಂತ ಹೆಚ್ಚು ಅಗತ್ಯದ ವಸ್ತುಗಳು - ಅಂದರೆ ಇಲ್ಲಿ ಆಹಾರದ ಅಗತ್ಯವಿಲ್ಲವೆಂದರ್ಥವಲ್ಲ, ಇಲ್ಲಿ it is a given, ಅಲ್ಲಿ ಅದು ದಿನವೂ derive ಮಾಡಬೇಕಾದ ಒಂದು ಸಮೀಕರಣ.

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೆ ಮೂರನೇ ಕ್ವಾರ್ಟರ್ ಮುಗಿಯಿತು ಎಂದು ವಾಲ್ ಸ್ಟ್ರೀಟ್‌ನಲ್ಲಿ ಎಂದಿಗಿಂತ ಹೆಚ್ಚು ಹುರುಪು ಕಂಡುಬರುತ್ತದೆ, ಈ ಮೂರನೇ ಕ್ವಾರ್ಟರ್ ಮುಗಿಯುವ ಹೊತ್ತಿಗೆ ಬರುವ ಅಂಕೆ-ಸಂಖ್ಯೆಗಳು ಮುಂಬರುವ ಹಾಲಿಡೇ ದಿನಗಳ ರೀಟೈಲ್ ವಾಪಾರ ವಹಿವಾಟುಗಳನ್ನು ಹೆಚ್ಚೂಕಡಿಮೆ ನಿರ್ಧರಿಸಿಬಿಡಬಲ್ಲವು, ಸೆಪ್ಟೆಂಬರ್‌ವರೆಗೆ ಮೇಲುರುತ್ತಿದ್ದ ಸೂಚ್ಯಾಂಕ ಅಕ್ಟೋಬರ್‌ನಲ್ಲಿ ಸ್ವಲ್ಪ ಕೆಳಕ್ಕಿಳಿಯಬಹುದು. ಈಗಾಗಲೇ ಸ್ವಲ್ಪ ಸೊರಗಿದ ಡಾಲರ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೂ ನೆಲಕಚ್ಚಿ ಹಿಡಿಯುವಂತೆ ಮಾಡುವ ಶಕ್ತಿಗಳು ಉದಯವಾಗಬಹುದು. ನವೆಂಬರ್ ತಿಂಗಳಿನಲ್ಲಿ ಬರುವ ಸ್ಥಳೀಯ ಚುನಾವಣೆಗಳು ಸೆನೆಟ್ ಹಾಗೂ ಕಾಂಗ್ರೆಸ್ ನಲ್ಲಿ ರಿಪಬ್ಲಿಕನ್-ಡೆಮಾಕ್ರ್ಯಾಟಿಕ್ ಪಕ್ಷಗಳ ಮೇಲುಕೈಯನ್ನು ನಿರ್ಧರಿಸಿ ಬಿಡುವ ಹಿನ್ನೆಲೆಯಲ್ಲಿ ಆಡಳಿತ, ಪಾಲಿಸಿ, ಮುಂಬರುವ ಬಿಲ್‌ಗಳು ಇವುಗಳ ಮೇಲೆಲ್ಲ ತಕ್ಕ ಮಟ್ಟಿಗೆ ಪರಿಣಾಮ ಬೀರುತ್ತವೆ. ಎಲ್ಲರೂ ನಿಚ್ಚಳ ಬಹುಮತವನ್ನು ಸಾಧಿಸಬೇಕು, ತಮ್ಮ ತಮ್ಮ ಪಕ್ಷ ಸೀಟುಗಳನ್ನು ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರನ್ನು ಇನ್ನೂ ಹೆದರಿಸುವಂತೆ ಭಯೋತ್ಪಾದಕರ ವಿಷಯಗಳ ಚರ್ಚೆ, ಅಭ್ಯರ್ಥಿಗಳ ನಿಲುವುಗಳನ್ನು ಮಾತ್ರ ಬಿಂಬಿಸಲಾಗುತ್ತದೆಯೇ ವಿನಾ ಅವುಗಳ ಹಿಂದಿನ ವಿಷಯಗಳನ್ನು ಸಗಣಿ ಸಾರಿಸಿಬಿಡುವಂತೆ ತೋರಿಸಲಾಗುತ್ತದೆ. ಭಯೋತ್ಪಾದಕತೆಯನ್ನು ನಿರ್ಮೂಲನಗೊಳಿಸಲು ಅಮೇರಿಕದವರಿಗೆ ಸಪೋರ್ಟು ನೀಡಿದ್ದಾರೆ ಅನ್ನೋ ಕಾರಣಕ್ಕೆ ಮುಷಾರಫ್‌ ಅನ್ನು ತುಂಬಿದ ಸಭೆಯಲ್ಲಿ ಗೌರವಿಸಲಾಗುತ್ತದೆ, ಆದರೆ ಈ ವ್ಯಕ್ತಿಯೂ ಒಬ್ಬ ಸರ್ವಾಧಿಕಾರಿ, ಆಳುವ ಸರ್ಕಾರದಿಂದ ಅಧಿಕಾರವನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಹತೋಟಿಗೆ ತಂದುಕೊಂಡವನು ಎನ್ನುವುದನ್ನು ಇಲ್ಲಿನ ಬುದ್ಧಿವಂತರ ಸಭೆ ಜಾಣತನದಿಂದ ಮರೆಯುತ್ತದೆ. ಮುಷಾರಫ್ ಇಲ್ಲಿ ತನಗೆ ಸಿಕ್ಕ ಆತಿಥ್ಯಕ್ಕೆ ಹಿಗ್ಗಿ ಹೋಗುತ್ತಾರೆ - ಅವರ ಮೂಗಿನ ನೇರದ ಕೆಳಗೆ ಪಾಕಿಸ್ತಾನದ ಗುಪ್ತಚಾರ ಪಡೆ ಏನೆಲ್ಲವನ್ನು ಮಾಡಿದೆ ಎನ್ನುವ ವರದಿಗಳು ಒಂದರ ಮೇಲೊಂದು ಹೊರಬೀಳುತ್ತಲೇ ಇರುತ್ತವೆ - ಇವಕ್ಕೆಲ್ಲ ಯಾರೂ ಗಮನಕೊಡುವಂತೆಯೇ ಕಾಣಿಸೋದಿಲ್ಲ.

ಈ ಬುದ್ಧಿವಂತರ ನಾಡಿನಲ್ಲಿರೋ ಮೇಧಾವಿಗಳಿಗೆ ಇರಾಕ್ ಸಮಸ್ಯೆಗೊಂದು ಗತಿ ಕಾಣಿಸೋಕಾಗೋದಿಲ್ವಾ ಅಂತ ಎಷ್ಟೋ ಸಾರಿ ಅನ್ನಿಸಿದೆ. ಅದೂ ಇತ್ತಿಚೆಗಂತೂ ಅಲ್ಲಿ ಬಹಳ ಜನ ಸಾಯ್ತಾ ಇರೋದೂ, ಸ್ಥಳೀಯ ಸರ್ಕಾರ ತನ್ನ ಕೈಯಲ್ಲಿ ಸಾಧ್ಯವಾದದ್ದೆನ್ನೆಲ್ಲ ಮಾಡಿಯೂ ಪರಿಸ್ಥಿತಿ ಹೀಗಿದೆ ಎಂದರೆ ಅದಕ್ಕೆ ಯಾರೂ ಏನನ್ನೂ ಮಾಡಲಾಗುವುದಿಲ್ಲವೇ? ಅಷ್ಟು ಚಿಕ್ಕ ದೇಶವನ್ನು ಹತೋಟಿಯಲ್ಲಿಡುವುದು ಇಷ್ಟೊಂದು ಕಷ್ಟಕರವಾದ ವಿಷಯವೆಂದು ನನಗೆ ಏಕೋ ಇನ್ನೂ ಅರಿವಿಗೆ ಬರುತ್ತಿಲ್ಲ. ಸಾಕಷ್ಟು ಸಂಕೀರ್ಣವಾದ ಸಮಸ್ಯೆ ಆದರೂ ಒಂದಲ್ಲ ಒಂದು ರೀತಿಯಿಂದ ಬಗೆ ಹರಿಸಬಹುದು ಎಂದು ನನ್ನ ಮನಸ್ಸು ಹೇಳುತ್ತೆ, ಆದರೆ ನನಗೆ ಪೂರ್ಣ ವಿಷಯದ ಅರಿವು ಇರದೆಯೂ ಇರಬಹುದು ಎನ್ನುವ ಸಮಜಾಯಿಷಿಯೂ ಹುಟ್ಟುತ್ತೆ.

ಇಷ್ಟು ಬರೆಯುವ ಹೊತ್ತಿನಲ್ಲಿ ಮುಂಬರುವ ಛಳಿಗಾಲಕ್ಕೆ ಮೈಮನಸ್ಸುಗಳು ಸಿದ್ಧವಾದಂತೆನಿಸುತ್ತೆ, ಎಲ್ಲರಂತೆ ನಾನೂ ಕೂಡಾ ಫಾಲ್ ಕೋಟ್ ತೆಗೆದು ನಾಳೆ ಆಫೀಸಿಗೆ ಹೋಗುವಾಗ ಸಿಗುವಂತೆ ತೆಗೆದಿರಿಸುತ್ತೇನೆ, ಛಳಿ ಬೀಳೋದು ನಿಸರ್ಗ ನಿಯಮ ಅದಕ್ಕೆ ತಯಾರಾರಿರಬೇಕಾದುದು ನನ್ನ ಕರ್ಮ ಎಂದುಕೊಂಡು ಸುಮ್ಮನಾಗುತ್ತೇನೆ.

Friday, September 29, 2006

ತುಣುಕು ಮಿಣುಕು

ನಟಿ ಮೋನಿಕಾ ಬೇಡಿಗೆ ಒಂದಲ್ಲ ಎರಡಲ್ಲ ಐದು ವರ್ಷ ಜೈಲಂತೆ, ಜೊತೆಗೆ ಒಂದ್ ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರಂತೆ! ನಮ್ ದೇಶದ ಈ ಹಣಕಾಸಿನ ವಿಚಾರದಲ್ಲಿ ಬಹಳ ಹಿಂದುಳಿದಿರೋ ದಂಡದ ವಿಚಾರ ಪರಿಗಣನೆಗೆ ಬರೋದ್ ಯಾವಾಗಾ? ಮೋನಿಕಾಗೆ ಒಂದ್ ಸಾವಿರ ರೂಪಾಯಿ ಅಂದ್ರೆ ಅದು ಯಾವ ಲೆಕ್ಕ, ಬಹುಷಃ ಅದು ಆಕೆಯ ಒಂದು ಲಿಪ್‌ಸ್ಟಿಕ್ ಬೆಲೆಗಿಂತಲೂ ಕಡಿಮೆ ಇದ್ದಿರಬಹುದು.

***

ಕುಮಾರ ಸ್ವಾಮಿ ಅಧಿಕಾರದಲ್ಲಿ ಬೆಂಗಳೂರಿನಲ್ಲಿ ಇಂಗ್ಲೀಷ್ ಶಾಲೆಗಳನ್ನು ಮುಚ್ಚೋದರಿಂದ ಬೆಂಗಳೂರು ಸಿಲಿಕಾನ್‌ವ್ಯಾಲಿ ಆಗಿರೋ ಹೆಸರನ್ನ ಕಳೆದುಕೊಳ್ಳುತ್ತೇ ಅಂತ ಇವತ್ತು ಮುಂಜಾನೆ ಮಾರ್ಕೇಟ್‌ಪ್ಲೇಸ್ ಮಾರ್ನಿಂಗ್ ರಿಪೋರ್ಟ್‌ನಲ್ಲಿ ವರದಿ ಬಂದಿತ್ತು! ಅಲ್ವಾ, ಬೆಂಗಳೂರಿನಲ್ಲಿ ಈ ಇಂಗ್ಲೀಷ್ ಶಾಲೆಗಳು ಮುಚ್ಚಿ ನಾಳೆ ಇಂಗ್ಲೀಷ್ ಮಾತನಾಡೋ ಗ್ರ್ಯಾಜುಯೇಟ್‌ಗಳ ಕೊರತೆಯಾಗಿ ಬಿಟ್ರೆ ಏನ್ ಮಾಡೋದು? ಅಷ್ಟೊತ್ತಿಗಾಗ್ಲೇ ಅಮೇರಿಕ ಚೈನಾ ಭಾಯಿ-ಭಾಯಿ ಆಗಿರುತ್ತೆ ಬಿಡಿ ಅದು ಬೇರೆ ಪ್ರಶ್ನೆ!

***

ಬೆಂಗಳೂರು ಬಿಟ್ರೂ ಮಂಗಗಳ ಥರ ವ್ಯವಹರಿಸೋದನ್ನ ನಮ್ ಕರ್ನಾಟಕದ ರಾಜಕಾರಣಿಗಳು ಯಾಕ್ ಬಿಡೋದಿಲ್ಲ ಅಂತ ಇವತ್ತು ಹೊಳೀತು - ಹೇಳಿ ಕೇಳಿ ಆಂಜನೇಯ ಕನ್ನಡಿಗನೇ ತಾನೆ? ಹೀಗೇ 'ಶರಣು ಶರಣು ಓ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ...' ಅಂತಾ ಹಾಡ್‌ತಾ ಇರಬೇಕಾದರೆ ತಟ್ಟನೆ ಈ ಬಲ್ಬು ಹೊತ್ತಿಕೊಂಡಿತು. ಬೆಂಗಳೂರ್ ಬಿಟ್ಟು ಬೆಳಗಾವಿ ಸೇರಿದ್ರೂ ಕಚ್ಚಾಡೋದೂ ಕೂಗಾಡೋದು ನಮ್ಮವರ ಜನ್ಮ ಸಿದ್ಧ ಹಕ್ಕು, ಅಲ್ಲಲ್ಲ, ಜನ್ಮ ಸಿದ್ಧ ಪರಂಪರೆ, ಮತ್ತಿನ್ನೇನ್ ಆಗುತ್ತೆ?

***

ಮೊನ್ನೆ ಎನ್‌ಪಿಆರ್ ನಲ್ಲಿ ಸಾರ್ವಭೌಮ ಪರ್ವೇಜ್ ಮುಷಾರಫ್ ಸಂದರ್ಶನ ನೀಡ್ತಾ ನೀಡ್ತಾ ತಮ್ಮ ಇಂಟಲಿಜೆನ್ಸ್ ಏಜನ್ಸಿ (ಐಎಸ್‌ಐ) ಗೆ ತಮಗೆ ಲಾಯಲ್ ಆದವರನ್ನು ಮಾತ್ರವೇ ನೇಮಕ ಮಾಡಿದ್ದೇನೆ ಎನ್ನುವುದನ್ನು ಅದು ಸಹಜವಾದುದು ಎನ್ನುವಂತೆ ಹೇಳಿದರು. ಮೊದಲೇ ಸರ್ವಾಧಿಕಾರಿ ತಾನು ಆಡಿದ್ದೇ ಆಟ, ಮಾಡಿದ್ದೇ ಮಾಟ, ಅಂತಾದ್ಧರಲ್ಲಿ ಇವರಿಗೆ ತಿರುಗಿ ಬೀಳೋದಾದರೂ ಯಾರು? ಲಾಯಲ್ ಇರಲಿ ಇಲ್ಲದಿರಲಿ ಅವರ ಕೆಳಗಿರೋ ಎಲ್ಲಾ ಚಮಚಾಗಳನ್ನೂ ಬಗ್ಗಿಸಿದ್ದಾರಂತೆ! ಅವರ ಪುಸ್ತಕದ ಹೆಸರು 'ಇನ್ ದಿ ಲೈನ್ ಆಫ್ ಫಯರ್' ನನ್ನ ಕಿವಿಗೆ 'ಇನ್ ದಿ ಲೈ ಆಫ್ ಫೈಯರ್' ಕೇಳಿಸಿದ ಹಾಗಾಯಿತು, ಪಾಕಿಸ್ತಾನ ಬಿಟ್ಟು ಅಮೇರಿಕಕ್ಕೆ ಬಂದ್ರೂ ಆ ಮನುಷ್ಯಾ ಹೇಳೋ ಸುಳ್ಳೇನೂ ಕಡಿಮೆಯಾದಂತಿಲ್ಲ.

Wednesday, September 27, 2006

ಕರ್ಮಯೋಗಿ ಎಂಬ ಇರುವೆ

ಇರುವೆಯೊಂದು ಬಳಲಿ ಬೆಂದು ದಿನವ ಸವೆಸಿ ಬರುತಿರೆ
ಇಂದಿನುಳಿವು ನಾಳಿನಳಿವ ಹಚ್ಚಿಕೊಂಡು ಕೊರಗಿರೆ ೧

ನಮ್ಮನುಳಿಸು ಇದರಿಂದ ಭೀಕರ ಬರಗಾಲ
ದೈವ ನೆನೆದು ನಭಕೆ ಮುಗಿದು ಚಾಚಿತು ಮುಂಗಾಲ ೨

ರೆಕ್ಕೆ ಇರುವ ಹಕ್ಕಿಗಳು ಹಾರಿ ದೂರ ಹೋದವು
ಬಾಯಿ ಬರದ ಬಡಪಾಯಿಗಳು ಕಕ್ಕಾಬಿಕ್ಕಿಯಾದವು ೩

ದೂರದಲ್ಲಿ ವಲಸೆ ಹಕ್ಕಿ ಕಂಡಿತಪ್ಪ ಕಣ್ಣಿಗೆ
ಅದರ ಜೊತೆ ಹಾರುವ ಆಲೋಚನೆ ಬಂತು ಇರುವೆಗೆ ೪

ಒಡನೆ ತಾನು ಗಡಿಬಿಡಿಯಲಿ ಓಡಲು ಶುರುಮಾಡಿತು
ವಲಸೆ ಹಕ್ಕಿ ರೆಕ್ಕೆ ಒಳಗೆ ಬೆಚ್ಚಗೆ ತಾ ಕೂತಿತು ೫

ಉರಿವ ಸೂರ್ಯ ಹೋದ ಕಡೆಗೆ ವಲಸೆ ಹಕ್ಕಿ ಹಾರಲು
ರೆಕ್ಕೆ ಒಳಗೆ ಅವಿತ ಮರಿಗೆ ಹುಟ್ಟಿತು ಎದೆ ಪುಕ್ಕಲು ೬

ಎಷ್ಟೋ ಹೊತ್ತು ಎಷ್ಟೋ ದೂರ ವಲಸೆ ಹಕ್ಕಿ ಹಾರಿತು
ಕೊನೆಗೂ ಒಂದು ಘಳಿಗೆಯಲ್ಲಿ ದೂರ ದೇಶ ಸೇರಿತು ೭

ರೆಕ್ಕೆಯಿಂದ ಜಿಗಿದ ಮರಿಗೆ ಬೆಚ್ಚನೆ ಆಹ್ವಾನ
ನೀಡಿದವು ಸುತ್ತಲಿನ ಹಸುರಾಗಿಹ ಹೂ ಬನ ೮

ತನ್ನ ಜಾಗೆ ಬಿಟ್ಟೆನೆಂದು ಒಮ್ಮೆ ದುಃಖವಾಯಿತು
ಬರದ ಬೇಗೆಯಿಂದ ಬದುಕಿ ಉಳಿದ ಖುಷಿಯೂ ಸೇರಿತು ೯

ದೂರ ದೇಶ ದೂರ ವಾಸ ಹಿಂದೆ ಹೋಗುವ ಯೋಚನೆ
ಸುತ್ತೆಲ್ಲವು ಹೊಸತರಲ್ಲಿ ತಾನು ಎಂಬ ಯಾಚನೆ ೧೦

ಕಣ್ಣು ಕಾಣುವಲ್ಲಿವರೆಗೆ ಹಲವು ಬಣ್ಣ ಗೋಚರ
ತನಗೆ ಬೇಡವಾಗಿ ಮನಸು ಇರುತ್ತಿತ್ತು ಎಚ್ಚರ ೧೧

ಹಾದಿ ಸವೆಸಿದಂತೆ ಹಲವು ಇರುವೆಗಳು ಕಂಡವು
ದಡ್ಡರೊಳಗೆ ಬುದ್ಧಿವಂತರೆಂಬ ಮರ್ಮ ನುಡಿದವು ೧೨

ಹೊಸತು ಹಳತು ಆಗುವಷ್ಟರಲ್ಲಿ ಮರಿಗೆ ತಿಳಿಯಿತು
ಒಂಟಿ ತಾನು ಎಂಬ ಭಾವ ಗಟ್ಟಿ-ಗಟ್ಟಿಯಾಯಿತು ೧೩

ಇಂದು ದುಡಿದು ಅಂದೇ ತಿನ್ನೋ ಸತ್ಯವೆಂಬ ಕನ್ನಡಿ
ಇನ್ನೂ ಬೇಕು ಎಂಬುದಕ್ಕೆ ಬರೆದಾಯಿತು ಮುನ್ನುಡಿ ೧೪

ಹಿಗ್ಗಿನಲ್ಲಿ ನಾಳೆಗಾಗಿ ಕೂಡಿ-ಕೂಡಿ ಹಾಕಲು
ಎಲ್ಲ ಕಡೆಯೂ ಸಮೃದ್ಧಿ ಹಿಡಿಯುವಷ್ಟು ಮುಗ್ಗಲು ೧೫

ಸುಖದ ಪದರಿನಲ್ಲಿ ಆಗ್ಗೆ ಒಂಟಿ ತಾನು ಎನಿಸುತಿತ್ತು
ಹಿತದ ತನ್ನ ಶಿಖರದಲ್ಲಿ ತನ್ನ ತಾನು ಮರೆಯುತಿತ್ತು ೧೬

ಹೊಸ ಜಾಗವು ಹಳೆಯದಾಗೆ ಹೊಸ ಹಾಡಿಗೆ ತೊನೆಯಿತು
ಗಾಳಿ ಇರುವಲಿ ಧೂಳೂ ಇರುವ ಸರಳ ಸತ್ಯ ಹೊಳೆಯಿತು ೧೭

ಹಿಡಿಯಬೇಕು ಕೂಡಬೇಕು ಭಲೇ ಬಂಡವಾಳ
ಅದರ ಮೇಲೇ ತಿರುಗಿ ಬೀಳಬೇಕು ಎಂಬ ಕಳವಳ ೧೮

ಮುಂದೆ ತನ್ನ ಪರಿವಾರ ದೊಡ್ಡದಾಗಿ ಬೆಳೆದೂ
ಎಲ್ಲೋ ಏನೋ ಕಳೆದುಕೊಂಡ ಭಾವ ಬಿಟ್ಟು ಹೋಗದು ೧೯

ಕರ್ಮಯೋಗಿ ಎಂಬ ಇರುವೆ ಹೊಸತನೊಪ್ಪಿಕೊಂಡಿತು
ಕೊನೆಗೆ ತಾನೇ ತಿಣುಕಿ ಗೇಯ್ದು ಪ್ರಾಣವನ್ನೆ ಬಿಟ್ಟಿತು ೨೦

***

ನವೆಂಬರ್ ೧೭, ೨೦೦೫ ರಂದು ಬರೆದ ಈ ಕವನ ೨೦೦೬ ರ ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದೆ.

Tuesday, September 26, 2006

ನಾವು ಮತ್ತು ನಮ್ಮ ವಸ್ತುನಿಷ್ಟ ನಿಲುವುಗಳು

ಅವರವರ ಸ್ಪಂದನಶೀಲತೆಯ ಮೇಲೆ ಆಗುಹೋಗುಗಳ ಕುರಿತು ಒಂದಲ್ಲಾ ಒಂದು ನಿಲುವು ನಮ್ಮೆಲ್ಲರಲ್ಲಿರೋದು ಸರ್ವೇ ಸಾಮಾನ್ಯ. ವೃತ್ತಿಪರರಾಗಿ ಯೋಚಿಸಿ ನಮ್ಮ ಅನುಭವಗಳ ಹಿನ್ನೆಲೆಯಲ್ಲಿ ಒಂದು ಸಂದರ್ಭವನ್ನು ಕುರಿತು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರಲ್ಲಿ ಹಲವಾರು ಸಂದರ್ಭಗಳು ನಮ್ಮನ್ನು ಕಟ್ಟಿಹಾಕುವುದು ಸಾಮಾನ್ಯ. ಈ ಸಾಮಾನ್ಯವನ್ನು ಮೀರಿ ನಿಂತು ಇರುವ ಆಯಾ ವಿಷಯವನ್ನು ವಸ್ತುವಿನ ನೆಲೆಯಲ್ಲಿ ಕುರಿತು ಆಲೋಚಿಸಿ ಅದರ ಮೇಲೆ ನಮ್ಮ ಅನಿಸಿಕೆ, ದೃಷ್ಟಿಕೋನವನ್ನು ಹಂಚಿಕೊಳ್ಳೋದನ್ನ ನಾವೇಕೆ ರೂಢಿಸಿಕೊಳ್ಳೋದಿಲ್ಲ ಎಂಬ ಆಲೋಚನೆ ಬಂತು.

ಇತ್ತೀಚೆಗೆ ಓದಿದ ಪುಸ್ತಕವಿರಬಹುದು, ಅಥವಾ ಪತ್ರಿಕೆಗಳಲ್ಲಿ ದಿನವೂ ಓದುವ ವರದಿಗಳಿರಬಹುದು, ಅಥವಾ ಸ್ನೇಹಿತರು ಬರೆದ ಕಥೆ-ಕವನವನ್ನು ಕುರಿತು ನಾವು ನೀಡುತ್ತಿರುವ ಅನಿಸಿಕೆಯಾಗಿರಬಹುದು, ಅಥವಾ ಯಾರದ್ದೋ ಲೇಖನಕ್ಕೆ ಬರೆಯುತ್ತಿರುವ ಕಾಮೆಂಟ್ ಇದ್ದಿರಬಹುದು ಇವೆಲ್ಲವನ್ನೂ ಸೂಕ್ಷ್ಮವಾಗಿ ಆಲೋಚಿಸುತ್ತಾ ಬಂದಾಗ ಬಹಳಷ್ಟು ಜನ ಸಮಯದ ಅಭಾವವನ್ನೋ ಮತ್ತೇನನ್ನೋ ನೆಪವಾಗಿ ಒಡ್ಡಿ ಒಂದೇ ನುಣುಚಿಕೊಂಡು ಹೋಗುತ್ತಾರೆ, ಇಲ್ಲಾ ತಿಪ್ಪೆಸಾರಿಸಿದ ಹಾಗೆ ಏನೋ ಒಂದು ಹೇಳಿಬಿಡುತ್ತಾರೆ, ಹೀಗೆ ಮಾಡುವಲ್ಲಿ ನಾನೂ ಹೊರತಲ್ಲ ಅನ್ನಿಸಿತು. ನಮಗೆ ರಚನಾತ್ಮಕವಾಗಿ (constructive) ಫೀಡ್‌ಬ್ಯಾಕ್ ಕೊಡೋದಕ್ಕೆ ಬರೋದಿಲ್ಲವೋ ಅಥವಾ ಒಂದು ವೇಳೆ ನಿಜವನ್ನೇ ಹೇಳಿದರೆ ಅದರಿಂದ ಇನ್ನೇನು ಪರಿಣಾಮಗಳಾಗುತ್ತವೆಯೋ ಎಂಬ ಹೆದರಿಕೆಯೋ ಯಾರಿಗೆ ಗೊತ್ತು? ಇರಾಕ್ ಕದನವಾಗಲೀ, ಇಸ್ರೇಲ್‌ನವರು ಹಿಜಬುಲ್ಲಾ ಮೇಲೆ ನಡೆಸಿದ ಧಾಳಿಯಂತಹ ದೊಡ್ಡ ವಿಷಯಗಳನ್ನು ತೆಗೆದುಕೊಂಡು ದೊಡ್ಡ ವಾದವಿವಾದಗಳಾಗಲೀ ಎಂದೇನೂ ಹೇಳುತ್ತಿಲ್ಲ (ಹಾಗೆ ಆಗುವುದು ಒಂದು ಲೆಕ್ಕದಲ್ಲಿ ಒಳ್ಳೆಯದೆ, ಅದು ಬೇರೆ ಪ್ರಶ್ನೆ), ನಮ್ಮ ನಡುವೆ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ನಾವು ಸ್ವಂದಿಸಬಹುದು, ನಮ್ಮ ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಆದರೆ ಅವರವರ ಅಭಿಪ್ರಾಯಗಳು ಅವರದ್ದೇ ಆದರೂ ಅದರ ಹಿಂದೆ ಸ್ಪಷ್ಟತೆ ಇದೆಯೇ, ಸರಿಯಾದ ಕಾರಣಗಳಿವೆಯೇ, ಆಧಾರಗಳಿವೆಯೇ, ಅನಿಸಿಕೆ ಬೇರೆ, ನಂಬಿಕೆ ಬೇರೆ ಎನ್ನುವ ಪ್ರಜ್ಞೆ ಇದೆಯೇ ಎಂದೆಲ್ಲಾ ಯೋಚಿಸಬೇಕಾಗುತ್ತದೆ.

ನನ್ನ ಪ್ರಕಾರ ಯಾವುದಾದರೊಂದು ಪ್ರಶ್ನೆಗೆ 'ಹೌದು' ಅಥವಾ 'ಇಲ್ಲ' ಎಂಬ ಚಿಕ್ಕ ಉತ್ತರಗಳಷ್ಟೇ ಸಾಲದು, ಅಂತಹ ಉತ್ತರಗಳ ಜೊತೆ 'ಏಕೆ?' ಎನ್ನುವುದನ್ನೂ ಸೇರಿಸಿಕೊಳ್ಳಬೇಕಾಗುತ್ತದೆ, ಎಷ್ಟೋ ಜನರು ಈ 'ಏಕೆ' ಯನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ, ಹಾಗೆ ಮಾಡುವುದರಿಂದ ಅವರ ಅನಿಸಿಕೆ/ಅಭಿಪ್ರಾಯಗಳು ಇದ್ದರೂ ಇಲ್ಲದಂತೆ ಎನ್ನುವ ಸಣ್ಣ ಸತ್ಯವೂ ಅವರನ್ನು ತಲುಪೋದಿಲ್ಲ. ಆದರೆ 'ಏಕೆ' ಎನ್ನುವ ಪ್ರಶ್ನೆಯನ್ನು ಉತ್ತರಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಸಾಧ್ಯವಾದಷ್ಟು ಆಧಾರವನ್ನು ನೀಡಬೇಕಾಗುತ್ತದೆ, ಯಾವುದಕ್ಕಾದರೂ ಹೋಲಿಕೆ ಮಾಡಿ ನೋಡಿರಬೇಕಾಗುತ್ತದೆ, ಏನಿಲ್ಲವೆಂದರೂ ಹಲವಾರು ಕೋನಗಳಿಂದ ಒಂದೇ ವಿಷಯವನ್ನು ಅಳೆದಿರಬೇಕಾಗುತ್ತದೆ. ನಿಮಗೆ George Bush ಕಂಡರೆ ಇಷ್ಟವೇ ಎಂದು ಯಾರನ್ನಾದರೂ ಕೇಳಿ ನೋಡಿ, ಆಗ ತಟ್ಟನೆ ಉತ್ತರ ಹೊರಗೆ ಬರುತ್ತದೆ, ಅವರ ಉತ್ತರದ ಬೆನ್ನ ಹಿಂದೆ 'ಏಕೆ' ಎಂದು ಕೇಳಿ ನೋಡಿ, ಕೆಲವರಿಗೆ ಸ್ವಲ್ಪ ತಡವರಿಕೆ ಶುರುವಾಗುತ್ತದೆ, ಇನ್ನೂ ಮುಂದಕ್ಕೆ ಹೋಗಿ, ವಾದ ಮಾಡಲಿಕ್ಕೋಸ್ಕರವೆಂದೇ ಅವರು ಹೇಳಿದ ಉತ್ತರಕ್ಕೆ ವಿರೋಧವಾಗಿ ವಾದಿಸಿ ನೋಡಿ, ಅವರ ಉತ್ತರದ ಆಳ ಸ್ಪಷ್ಟವಾಗುತ್ತದೆ. ಬೇಸರದ ಸಂಗತಿಯೆಂದರೆ ನಮ್ಮ ಅನುಭವಗಳನ್ನು ನಮ್ಮ ಗತ ಇತಿಹಾಸ ಆವರಿಸಿಕೊಂಡಂತೆ ನಮ್ಮ ಅಭಿಪ್ರಾಯ-ಅನಿಸಿಕೆಗಳು ಹೆಚ್ಚು ಸಮಯ ಉದ್ಭವಿಸೋದು, ಬೆಳೆಯೋದು ಈ ರೀತಿ ಅರ್ಧ ಬೆಂದ ಹೇಳಿಕೆಗಳಿಂದಲೇ, ಅಥವಾ ಅಲ್ಲಿಲ್ಲಿ ಕೇಳಿ ಬರುವ ಎಷ್ಟೋ ಸಾರಿ ಸತ್ಯವಲ್ಲದ ವರದಿಗಳಿಂದಲೇ. ಯಾವುದೇ ಒಂದು ವಿಷಯವನ್ನು ತೆಗೆದುಕೊಂಡು ಎರಡೂ ಕಡೆಯವರ ಹಾಗೆ ವಾದ ಮಂಡಿಸುವುದು ಬೇರೆ, ಆಂತರ್ಯದಲ್ಲಿ ನಮ್ಮನ್ನು ನಾವು ನಂಬಿಸಲು ನಡೆಸುವ ಸಂವಾದ, ಸಂಘರ್ಷಗಳು ಬೇರೆ - ಇಂತಹ ಆಂತರಿಕ ಹಣಾಹಣಿಗಳು ಆದಷ್ಟು ಪಕ್ವವಾಗಿರಲಿ ಅನ್ನೋದು ನನ್ನ ಆಶಯ.

Sunday, September 24, 2006

ಸಿರಿತನ-ಬಡತನ

ಮಾನವ ಸಂಸ್ಕೃತಿಯಷ್ಟೇ ಹಳೆಯದಾದರೂ ಸಿರಿತನ-ಬಡತನವೆಂಬ ಮಾನಸಿಕ ಸ್ಥಿತಿ ಅಥವಾ ಸಾಮಾಜಿಕ ಸ್ಥಿತಿಯ ಬಗ್ಗೆ ನಾನು ಓದಿದ ಕಡೆಯೆಲ್ಲ ನನಗೆ ಈ ವಿಷಯಗಳನ್ನು ಕುರಿತು ಹಲವಾರು ನೆರಳುಗಳು ಕಂಡುಬರುತ್ತವೆ, ಅವು ಆಯಾ ಆಕೃತಿಯ ಮಾನಸಿಕ ಸ್ಥಿತಿಗತಿಯ ದ್ಯೋತಕವಾಗಿರಬಹುದು ಅಥವಾ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಭೌತಿಕ ವಿಷಯ ವಸ್ತುಗಳೇ ಇಲ್ಲದೇ ಬರೀ ನೆರಳೇ ನನಗೆ ಗೋಚರಿಸಿರಬಹುದು.

ಸಿರಿತನ-ಬಡತನಗಳನ್ನು ಬರೀ ಸಾಮಾಜಿಕ ನೆಲೆಗಟ್ಟಿನಲ್ಲಿ ಉಳ್ಳವರು, ದಿಕ್ಕುಗೆಟ್ಟವರು ಎಂದಷ್ಟೇ ನಾನು ಎಂದೂ ಪರಿಗಣಿಸಿದ್ದಿಲ್ಲ, ಉದಾಹರಣೆಗೆ ಹೃದಯವಂತಿಕೆಯ ಬಡತನ-ಸಿರಿತನಗಳನ್ನೂ ಸಹ ನಾನು ಗುರುತಿಸುತ್ತೇನೆ, ಒಬ್ಬ ವ್ಯಕ್ತಿಯ ಹೃದಯವಂತಿಕೆ ಆತನ/ಆಕೆಯ ಸಾಮಾಜಿಕ ಸ್ಥಿತಿಗತಿಯ ಮೇಲೆ ನೇರವಾಗಿ ಅವಲಂಭಿತವಾಗಿದೆಯೋ ಅಥವಾ ಅವೆರಡೂ ಬೇರೆ ಬೇರೆಯೋ ಎನ್ನುವುದನ್ನು ನಿಮ್ಮ ತರ್ಕಕ್ಕೆ ಬಿಡುತ್ತೇನೆ.

ಈ ಎರಡು ವಸ್ತುಗಳನ್ನು ಕುರಿತು ಈ ಸಮಯದಲ್ಲಿ ನನಗನ್ನಿಸಿದ ಟಿಪ್ಪಣಿಗಳನ್ನು ಹೀಗೆ ಪೋಣಿಸಿಕೊಂಡು ಹೋಗುತ್ತಿದ್ದೇನೆ.

***

ಸಿರಿತನ ಎನ್ನೋದು ಕೆಲವರಿಗೆ born with a sliver spoon ಅನ್ನೋ ತರಹ ಹುಟ್ಟಿದಂದಿನಿಂದ ಸಹಜವಾಗಿದ್ದಿರಬಹುದು, ಅಥವಾ ಜೀವಿತಾವಧಿಯ ಮಧ್ಯೆ ಲಭಿಸಿದ ಸ್ಥಿತಿಯಾಗಿರಬಹುದು, ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಯೋಚಿಸಿದರೆ ಹುಟ್ಟಾ ಆಗರ್ಭ ಶ್ರೀಮಂತರಾಗಿದ್ದವರ ಆಲೋಚನೆಗಳಿಗೂ ಜೀವನ ಪರ್ಯಂತ ಹಣ ಕೂಡಿಟ್ಟು ಶ್ರೀಮಂತಿಕೆಯ ಮಟ್ಟವನ್ನು ಮುಟ್ಟಿದವರಿಗೂ ಬಹಳಷ್ಟು ವ್ಯತ್ಯಾಸಗಳನ್ನು ಗಮನಿಸಬಹುದು. ಅದರಲ್ಲೂ ತಾವೇ ಗಳಿಸಿ ಉಳಿಸಿ ಬೆಳೆಸಿದ ಹಣಕ್ಕೆ ಜನರು ಕೊಡುವ ಮರ್ಯಾದೆಗಿಂತಲೂ ದಿಢೀರನೆ ಲಾಟರಿ ತಾಗಿಯೋ ಮತ್ತಿನ್ಯಾವುದೋ ರೂಪದಲ್ಲೋ ಹಣಗಳಿಸಿದವರು ಕೊಡುವ ಮರ್ಯಾದೆ ಬೇರೆಯಾದುದು. ಹೀಗೆ ಹಲವಾರು ರೀತಿಯಲ್ಲಿ ಜನರಿಗೆ ಒಂದೊಂದು ರೂಪಾಯಿಯ ಮೌಲ್ಯ ಕಂಡು ಬರುತ್ತದೆ.

ನಮ್ಮಲ್ಲಿ ವಿವಾಹ ಮತ್ತೊಂದನ್ನು ಮಾಡುವಾಗ ಜಾತಿಯ ಜೊತೆಗೆ ಅಂತಸ್ತನ್ನೂ ಸಹ ವಿಶೇಷವಾಗಿ ಗಮನಿಸಲಾಗುತ್ತದೆ, ಮೊದಮೊದಲು ಜಾತಿ, ಗೋತ್ರ ಸರಿಯಾಗಿ ಕೂಡಿ ಬಂದರೆ ಆಯಿತು, ಅಂತಸ್ತಿನಲ್ಲೇನಿದೆ ವಿಶೇಷ ಎಂದು ಯೋಚಿಸುತ್ತಿದ್ದವನಿಗೆ ಇತ್ತೀಚೆಗೆ ನಮ್ಮ ನೆರೆಹೊರೆಯಲ್ಲಿ ಕೇಳಿದ ಒಂದು ಸಂಗತಿ ಇನ್ನಷ್ಟು ಯೋಚಿಸುವಂತೆ ಮಾಡಿತು. ಹುಡುಗಿಯ ಕಡೆಯವರು ಆಗರ್ಭ ಶ್ರೀಮಂತರು, ಊರನ್ನೇ ಕೊಳ್ಳುವಷ್ಟು ಹಣವಿದೆ ಅವರಲ್ಲಿ, ಜನಬಲವಿದೆ, ಹುಡುಗನ ಕಡೆಯವರು ಮಧ್ಯಮ ವರ್ಗದವರು, ಹುಡುಗ ದೆಹಲಿಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡಿದ್ದಾನೆ, ಆದರೆ ಈ ಎರಡೂ ಕಡೆಯವರ ಒಟ್ಟು 'ಅಂತಸ್ತನ್ನು' ತಕ್ಕಡಿಯಲ್ಲಿಟ್ಟು ತೂಗಿ ನೋಡಿದರೆ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ.

ಹೀಗಿರುವಾಗ ಹುಡುಗಿಯ ಮನೆಯವರು ಹುಡುಗಿಗೆ ಮದುವೆಗೆ ಮೊದಲು ಒಂದು ಕ್ರ್ಯಾಷ್‌ಕೋರ್ಸ್‌ನಲ್ಲಿ ಅಡುಗೆ ಮಾಡುವುದನ್ನು ಹೇಳಿಕೊಟ್ಟಿದ್ದರೇ ವಿನಾ ಒಂದು ಚಹಾ ಮಾಡುವುದನ್ನು ಕಲಿಯುವ ಅಗತ್ಯವೂ ಆ ಹುಡುಗಿಗೆ ಆ ವರೆಗೆ ಇರಲಿಲ್ಲ. ಆದರೆ ಹುಡುಗನ ಮನೆಯವರು ಆ ಹುಡುಗನನ್ನು ಬೆಳೆಸಿದ ಬಗೆ ನಾಳೆಯ ಬಗ್ಗೆ ಚಿಂತಿಸುವ ಸ್ವಭಾವವನ್ನೂ, ಒಂದೊಂದು ರೂಪಾಯಿಯ ಬಗ್ಗೆ ಆತ ಯೋಚಿಸುವ ಸ್ವಭಾವವನ್ನೂ ಗಳಿಸಿಕೊಟ್ಟಿತ್ತು. ಸಂಸಾರವೆಂದರೆ ಸಂಘರ್ಷಗಳಿಗೆ ಕೊನೆಮೊದಲೆನ್ನುವುದಿದೆಯೇ, ಹೀಗಿರುವಾಗ ಈ ಸಂಬಂಧದಲ್ಲೂ ವ್ಯತ್ಯಾಸಗಳು ಬರತೊಡಗಿದವು - ಹುಡುಗನ ಮಾವನವರು, ಅಂದರೆ ಹುಡುಗಿಯ ತಂದೆ ದೆಹಲಿಯಲ್ಲಿ ಹೊಸದಾಗಿ ಮದುವೆಯಾದವರ ಹೆಸರಿನಲ್ಲಿ ಒಂದು ಒಳ್ಳೆಯ ಫ್ಲ್ಯಾಟ್ ಒಂದನ್ನು ಖರೀದಿಸಿಕೊಟ್ಟರು - ಹುಡುಗನಿಗೆ ಅದನ್ನು ವರದಕ್ಷಿಣೆಯ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದೇನಲ್ಲ ಎನ್ನುವ ಸ್ವಯಂ ಆಲೋಚನೆಯ ಇರುಸುಮುರುಸಿನ ಜೊತೆಗೆ ತನ್ನ ಕೈಯಲ್ಲಿ ಇನ್ನು ಹತ್ತು ವರ್ಷಗಳಲ್ಲೂ ಆ ರೀತಿ ಹಣ ಸುರಿದು ಒಂದು ಫ್ಲ್ಯಾಟ್ ಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವ ನೈಜ ಸ್ಥಿತಿಯ ಅರಿವು ಹುಟ್ಟಿಸುವ ಕೈಕೈ ಹಿಸುಕಿಕೊಳ್ಳುವ ಸಂದರ್ಭ. ಹುಡುಗಿಯ ಹೆಸರಿನಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ಕೆಲಸಗಾರರೂ ಈ ಮದುಮಕ್ಕಳ ಬೆನ್ನು ಹತ್ತಿ ದೆಹಲಿ ಮುಟ್ಟಿದರೂ ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲೇ ದೆಹಲಿಯ ಹವೆ ಆ ಕೆಲಸಗಾರರನ್ನು ಮತ್ತೆಲ್ಲೋ ಹೋಗುವಂತೆ ಮಾಡಿ, ಕೊನೆಗೆ ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ಇವರಿಬ್ಬರೇ ಅಡುಗೆ ಮಾಡಿ ಊಟ ಮಾಡುವ ಸ್ಥಿತಿ ತಲುಪಿತು. ಈ ಮಧ್ಯೆ ಹೊರಗಿನಿಂದ ತರಿಸಿದ ಊಟವೂ, ಹಣ್ಣುಹಂಪಲುಗಳನ್ನು ತಿನ್ನುವುದೂ ನಡೆಯಿತು. ಇವರಿಬ್ಬರಿಗೆ ಸಹಾಯ ಮಾಡಲೆಂದು ದೆಹಲಿ ಸೇರಿದ ಹುಡುಗನ ತಾಯಿಯಿಂದ ಸಂಬಂಧಗಳು ಹದಗೆಟ್ಟವೇ ವಿನಾ ಅದರಿಂದ ಸಹಾಯವೇನೂ ಆದಂತೆ ತೋರಲಿಲ್ಲ. ಮನೆಯಲ್ಲಿ ಒಳ್ಳೆಯ ಊಟ ಸಿಗುತ್ತದೆ ಎನ್ನುವುದೊಂದನ್ನು ಬಿಟ್ಟರೆ ಒಂದು ಕಡೆ ಆಫೀಸಿನ ಕೆಲಸದೊತ್ತಡಗಳು, ಮನೆಗೆ ಬಂದರೆ ಅಮ್ಮ-ಹೆಂಡತಿಯರಿಬ್ಬರ ನಡುವೆ ಒಬ್ಬರ ಪರ ವಹಿಸಲೇ ಬೇಕಾದ ಅನಿವಾರ್ಯತೆಯ ನಡುವೆ ಹುಡುಗ ಬಳಲಿ ಹೋದ. ಬೆಳಿಗ್ಗೆ ಘಂಟೆ ಎಂಟಾದರೂ ಎದ್ದು ಮುಖಕ್ಕೆ ನೀರು ಕಾಣಿಸದ ಸೊಸೆಯನ್ನು ಕಂಡರೆ ಅತ್ತೆಗೆ ಆಗದು, ನನ್ನ ಸ್ವಾತಂತ್ರ್ಯಕ್ಕೆ ಇವರೇಕೆ ಧಕ್ಕೆ ತರುತ್ತಿದ್ದಾರೆ ಎನ್ನುವುದು ಸೊಸೆಯ ಬಗೆ ಹರಿಯಲಾರದ ಸಮಸ್ಯೆ - ಕೊನೆಗೆ ನಾನಿರುವುದು ನಮ್ಮ ಅಪ್ಪ ಕೊಟ್ಟ ಮನೆಯಲ್ಲಿ ಎನ್ನುವ ಗರ್ವ ಬೇರೆ. ಗಂಡನಿಗೆ ಒಂದು ಲೋಟಾ ಕಾಫಿಯನ್ನು ಮಾಡಿಕೊಡದ ಹೆಂಡತಿ ಎಂದು ಅತ್ತೆ ಅಂದುಕೊಂಡರೆ, ನಾನೇನು ಈ ಮನೆಯ ಕೆಲಸದವಳಲ್ಲ ಎನ್ನುವುದು ಸೊಸೆಯ ಜವಾಬು.

ಹೀಗೇ ಹಲವು ತಿಂಗಳುಗಳು ನಡೆದು ಒಂದು ದಿನ ಹುಡುಗಿಯ ತಂದೆಯ ಕಿವಿಗೆ ತಮ್ಮ ಮಗಳು ಫೋನಿನಲ್ಲಿ ಅತ್ತು ಸುದ್ದಿಯನ್ನು ಆಕೆಯ ಚೌಕಟ್ಟಿನಲ್ಲಿ ವರದಿಯನ್ನು ಒಪ್ಪಸಿದ್ದೇ ತಡ ಅವರು ಕೆಂಡಾಮಂಡಲವಾದರು - ಗಿಳಿಯನ್ನು ಸಾಕಿ ಗಿಡುಗನ ಕೈಗೆ ಕೊಟ್ಟೆ ಎಂದುಕೊಂಡರು, ನಮ್ಮ ಮಗಳು ಒಂದು ದಿನವೂ ಅತ್ತಿದ್ದಿಲ್ಲ, ನೀರು ಕುಡಿದ ಲೋಟವನ್ನು ಎತ್ತಿ ಇಟ್ಟವಳಲ್ಲ ಅಂತಹವಳನ್ನು ನೀವು ಅಡುಗೆ ಮಾಡು, ಬಾಗಿಲು ಸಾರಿಸು, ಮನೆ ಕಸ ಹೊಡಿ ಎನ್ನಲು ನಿಮಗೇನು ಹಕ್ಕಿದೆ ಎಂದವರು ಬೊಬ್ಬೆ ಹಾಕಿದರೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಆಕೆ ನಮ್ಮ ಮನೆಯ ಸೊಸೆ, ನಮ್ಮ ಮನೆಯಲ್ಲಿ ಈ ರೀತಿ ಸಂಪ್ರದಾಯ ಎಂದಿನಿಂದಲೂ ನಡೆದು ಬಂದಿದೆ ಅದಕ್ಕೆ ಆಕೆಯೇನೂ ಇಂದು ಹೊರತಲ್ಲ ಎಂದು ಹುಡುಗನ ತಂದೆಯವರು ಸಮಾಧಾನವಾಗಿಯೇ ಉತ್ತರಕೊಟ್ಟರು...ಎರಡೂ ಕಡೆಯವರ ಸಮಾಧಾನ-ಅಬ್ಬರ ಇವುಗಳ ನಡುವೆ ಹುಡುಗ-ಹುಡುಗಿಯ ಸಂಬಂಧವೂ ಬಾಡುತ್ತಾ ಹೋಗಿ ಕೊನೆಗೆ ಮದುವೆಯಾಗಿ ಒಂದು ವರುಷದ ಒಳಗೇ ಸಂಬಂಧ ಕಡಿದು ಹೋಗುವ ಸ್ಥಿತಿಗೆ ಬಂದಿದೆಯೆಂದು ತಿಳಿಯಿತು.

ಹಾಗಾದರೆ, ಈ ರೀತಿ ಅಂತಸ್ತಿನಲ್ಲಿ ವ್ಯತ್ಯಾಸವಿರುವ ಸಂಬಂಧಗಳು ಹೇಗೆ ನೆಲೆ ನಿಲ್ಲುತ್ತವೆ? ಒಂದು ವೇಳೆ ಇಬ್ಬರ ಅಂತಸ್ತು ಒಂದೇ ಆಗಿದ್ದರೂ ಅವರವರ ಸಂಪ್ರದಾಯ, ಆಚಾರ-ವಿಚಾರಗಳಲ್ಲಿ ಬದಲಾವಣೆ ಇರುವಾಗ ಯಾರು ಯಾರಿಗೆ ತಗ್ಗಿಬಗ್ಗಿ ನಡೆಯಬೇಕು, ಹೊಂದಿಕೊಂಡು ಹೋಗಬೇಕು? ಅಕಸ್ಮಾತ್ ಹುಡುಗನ ಮನೆಯವರು ಹುಡುಗನ ಜೊತೆಯಲ್ಲೇ ಇದ್ದರೆ, ಸೊಸೆ ಹುಡುಗನ ತಂದೆತಾಯಿಗಳ ಸೇವೆ ಮಾಡುವುದನ್ನು ಸಂಸಾರದ ಕಾನೂನು ಎನ್ನಲಾದೀತೇ? ಮುಂಜಾನೆದ್ದು ಮುಂಬಾಗಿಲ ಹೊಸ್ತಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಶುದ್ಧ ಹಳೆಯ ಸಂಪ್ರದಾಯದಿಂದ ಹಿಡಿದು ಇಂದಿನ ಬೆಡ್‌ಕಾಫಿ ವ್ಯವಸ್ಥೆಯಲ್ಲಿ ಎಲ್ಲಿ ನಡುವೆ ಗೆರೆಯನ್ನು ಯಾರು ಎಳೆಯಬೇಕು? ಈಗಿನ ಕಾಲದಲ್ಲಿ ಒಂದು ಮನೆಯನ್ನು ಹೊಕ್ಕ ಸೊಸೆಯ ಜವಾಬ್ದಾರಿ ಹೆಚ್ಚೋ ಅಥವಾ ಮನೆಗೆ ಬಂದವಳಿಗೆ ಸಾಧ್ಯವಾದಷ್ಟು ಆದರವನ್ನು ತೋರಿ ಎಲ್ಲರೊಳಗೊಂದಾಗಿಸಿಕೊಳ್ಳಬೇಕೆನ್ನುವ ಮಾತು ಹೆಚ್ಚೋ?

ಅಂತಸ್ತು ಹುಟ್ಟಿಸುವ ಸಂಘರ್ಷ ಈ ಬಗೆಯದಾದರೆ ಕಷ್ಟ ಪಟ್ಟು ಸಂಪಾದಿಸಿದ ಹಣದ ಹೊರೆ ಇನ್ನೊಂದು ಥರ - ಎಷ್ಟು ಗಳಿಸಿದರೂ ಸಾಲದು ಎನ್ನುವ ಸಾಮಾನ್ಯ ರೋಗದ ಜೊತೆಗೆ ಗಳಿಸಿದ್ದನ್ನು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವ ಮನಸ್ಸೂ ಬಹಳಷ್ಟು ಜನರಿಗೆ ಸಿದ್ಧಿಸೋದಿಲ್ಲ. ಸುಮಾರು ಐವತ್ತು ವರ್ಷಗಳವರೆಗೆ ಸಾಕಷ್ಟು ಹಣವನ್ನು ಕೂಡಿಸಿ ತಾವು ಕೂಡಿಟ್ಟ ಮೊತ್ತವನ್ನು ತಮ್ಮ ಜೀವನದ ಉಳಿದ ಅವಧಿಯಲ್ಲಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಅನುಭವಿಸಿ ಹೋಗುವವರು ಬಹಳ ವಿರಳ. ಜೊತೆಗೆ ತಾವೇ ಕೂಡಿ ಹಾಕಿಟ್ಟ ಸಂಪತ್ತನ್ನು ತಮ್ಮ ಮಕ್ಕಳು ಉಡಾಫೆಯಿಂದ ಹಾರಿಸಿ ತೆಗೆಯುತ್ತಿದ್ದರೆ ಇನ್ನೂ ಸಂಕಟ; ತಾವು ದುಡಿಯದ ಹಣದ ಬೆಲೆಯಿರದ ಮಕ್ಕಳು, ತಮ್ಮ ದುಡ್ಡಿನ ಅರಿವಿನ ಹೊರೆ ಹೊತ್ತ ಪೋಷಕರು ಹೀಗೆ ಮಕ್ಕಳು-ತಂದೆತಾಯಿಯರ ನಡುವೆ ಮತ್ತೊಂದು ರೀತಿಯ ಸಂಘರ್ಷವೇರ್ಪಟ್ಟಿದ್ದನ್ನು ನಾವು ನೋಡಬಹುದು.

ಒಂದು ಕಡೆ ತಮ್ಮ ಲೈಟ್‌ಬಿಲ್, ಹಾಲಿನ ಬಿಲ್‌, ತರಕಾರಿ ಬಿಲ್‌ನಲ್ಲಿ ಪ್ರತಿ ತಿಂಗಳು ಒಂದು ರೂಪಾಯಿಯೂ ಹಿಂದೆ-ಮುಂದೆ ಹೋಗದಂತೆ ಜಾಗರೂಕತೆಯಿಂದ ನೋಡಿಕೊಂಡು ಬರುವ ತಂದೆ, ಮತ್ತೊಂದು ಕಡೆ ದಿನಕ್ಕೆರಡು ಬಾರಿ ಹತ್ತತ್ತು ರೂಪಾಯಿ ಕೊಟ್ಟು ಕೋಕ್ ಅಥವಾ ಮತ್ತಿನ್ನೇನನ್ನೋ ಕುಡಿಯುವ, ಐಸ್ ಕ್ರೀಮ್ ತಿಂದು ಮಜಾ ಉಡಾಯಿಸುವ ಮಕ್ಕಳು. ಒಂದು ಕಡೆ ಒಂದು ಅಗಳು ಅನ್ನವನ್ನಾಗಲೀ, ಒಂದು ಕಾಳು ಅಕ್ಕಿಯನ್ನಾಗಲೀ ಚೆಲ್ಲಬಾರದೆಂದು ಅಚ್ಚುಕಟ್ಟಾಗಿ ಯೋಚಿಸುವ ಪೋಷಕರು, ಮತ್ತೊಂದು ಕಡೆ ತಾವು ಉರಿಸುವ ಪೆಟ್ರೋಲ್ ಮೇಲೆಯೇ ನಿಗಾ ಇರಿಸದ ಮಕ್ಕಳು. ಒಂದು ಕಡೆ ಹಳೆಯ ಮೈಂಡ್ ಸೆಟ್‌ನಲ್ಲೇ ಜೀವನ ನಡೆಸುವ ಪೋಷಕರು, ಮತ್ತೊಂದು ಕಡೆ ಹೊಸ ತಂತ್ರಜ್ಞಾನದ ಪರಿಚಯವಿರುವ ಮಕ್ಕಳು - ಹೀಗೆ ಹಲವಾರು ಏರುಪೇರುಗಳ ನಡುವೆಯೂ ಒಂದು ರೀತಿಯ ಸಮತೆ (equilibrium) ನಮಗೆ ಕಂಡುಬರುತ್ತದೆ. ಹಳೆ ಬೇರು ಹೊಸ ಚಿಗುರುಗಳ ನಡುವಿನ ಭಿನ್ನ ನಿಲುವನ್ನ ಸ್ವಲ್ಪ ಮಟ್ಟಿಗಾದರೂ ಸಾಧಿಸಿಕೊಳ್ಳಬಹುದು, ಆದರೆ ಇದ್ದೂ ಇಲ್ಲದಂತಿರುವವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ.

***

ಹಣಕಾಸಿನ ವಿಚಾರವಷ್ಟೇ ಅಲ್ಲ ಮತ್ತೆಲ್ಲಾ ರೀತಿಯಲ್ಲಿ ಸಿರಿತನ-ಬಡತನಗಳ ಆಯಾಮಗಳನ್ನು ಕಲ್ಪಿಸಿಕೊಂಡಾಗ ಈ ರೀತಿ ವಯಸ್ಸಿನ, ಇದ್ದು-ಇಲ್ಲದವರ, ಇಲ್ಲದೆ-ಇದ್ದವರ ಸಮೀಕರಣಗಳಲ್ಲಿ ಬಹಳಷ್ಟು ಪ್ಯಾರಾಮೀಟರುಗಳನ್ನು ನೋಡಬಹುದು. ಹಣ ಎನ್ನುವುದು ನಮಗಿರುವ ಹಲವಾರು ಸಾಧನಗಳಲ್ಲಿ ಒಂದು ಎಂಬುದನ್ನು ಹೆಚ್ಚು ಜನರು ಅರಿತಿರಲಾರರು, ಅಲ್ಲಿಯವರೆಗೆ ಹಣವೇ ಅಂತಹವರನ್ನು ಆಳತೊಡಗುತ್ತದೆ, ಎಲ್ಲವೂ 'ಇದ್ದವರ' ಸುತ್ತಮುತ್ತಲು ಗಿರಕಿ ಹೊಡೆಯತೊಡಗುತ್ತದೆ.

Thursday, September 21, 2006

ಕೆಲಸದ ಜೊತೆಗೆ ಬರಬಹುದಾದ ಸೋಶಿಯಲ್ ಲೈಫ್

'ನಿನಗೆ ಭಾರತದಲ್ಲಿ ಕೆಲಸಾ ಮಾಡೋದು ಅಂದ್ರೇ ಏನು ಅನ್ನೋದೇ ಮರೆತು ಹೋದ ಹಾಗಿದೆ!' ಅನ್ನೋದು ಇತ್ತೀಚೆಗೆ ನನ್ನನ್ನುದ್ದೇಶಿಸಿ ಒಂದಿಬ್ಬರು ಆಡಿದ ಮಾತುಗಳು. ಅದೇನೋ ನಿಜ, ಅಲ್ಲಿ ಕೆಲಸ ಮಾಡಿ ಅದೆಷ್ಟೋ ವರ್ಷಗಳು ಆದವು ಎಂದು ಯೋಚಿಸುತ್ತಿರುವಂತೆ, ಈ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ರಾಂತಿ, ಸೆಲ್ ಫೋನ್-ಎಸ್ಸೆಮ್ಮೆಸ್ ಕ್ರಾಂತಿ, ಬಳಕೆದಾರರ ಬೆಳವಣಿಗೆ, ಕಾಲ್‌ಸೆಂಟರ್‌ಗಳು ತಲೆ ಎತ್ತಿ ನಿಂತದ್ದು ಇವೆಲ್ಲವೂ ನಡೆದವು ಎನ್ನಿಸಿ ಒಂದು ಕಾಲು ಶತಮಾನ ನಿದ್ದೆ ಮಾಡಿಬಿಟ್ಟೆನೇನೋ ಎನ್ನುವಂತಾಯಿತು. 'ರಸ್ತೆ ಪಕ್ಕ ಎಳನೀರು ಮಾರೋರ ಸೊಂಟದಲ್ಲೂ ಒಂದೊಂದು ಮೊಬೈಲು ಫೊನಿರುತ್ತೆ' ಎಂದು ಕೇಳಿದಾಗ ಒಂದು ರೀತಿ ಆಶ್ಚರ್ಯವಾಗುತ್ತೆ, ಮತ್ತೊಂದು ಕಡೆ ಐವತ್ತು ಜನರು ತುಂಬಿರುವ ಬಸ್ಸಿನಲ್ಲಿ ಮುಕ್ಕಾಲು ಪಾಲು ಜನ ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಂತಹ ಪರಿಸ್ಥಿತಿಯ ಗಂಭೀರತೆಯನ್ನು ನೋಡಿ ಹೆದರಿಕೆಯೂ ಆಗುತ್ತೆ.

ನಾನು 'ಸಹೋದ್ಯೋಗಿಗಳು ಸ್ನೇಹಿತರಲ್ಲ' ಎಂದು ಬಲವಾಗಿ ನಂಬಿದವನು - ಈ ಮಾತು ಭಾರತದಲ್ಲಿ ಕೆಲಸ ಮಾಡುವಾಗ ಹೆಚ್ಚು ಅನ್ವಯವಾಗದಿದ್ದರೂ ಇಲ್ಲಂತೂ ಖಂಡಿತ ಎನ್ನಿಸಿಬಿಟ್ಟಿದೆ. ವಿಷಾದದ ವಿಷಯವೆಂದರೆ ಇಲ್ಲಿ ಸಹೋದ್ಯೋಗಿಗಳನ್ನು ಹೊರತು ಪಡಿಸಿದರೆ ನನ್ನಂತಹವರ ಸರ್ಕಲ್ ಬಹಳ ಚಿಕ್ಕದಾಗಿ ಹೋಗುತ್ತದೆ. ಅದಕ್ಕೆ ತಕ್ಕಂತೆ ವಾರದ ದಿನಗಳಲ್ಲಿ ಅರ್ಧಕ್ಕರ್ಧ ಸಮಯವನ್ನು ಆಫೀಸಿನಲ್ಲಿ ಕಳೆಯುವ ನಮಗೆ ಸಾಮಾಜಿಕ ಬದುಕು ಒಂದು ರೀತಿ ದೂರವೇನೋ ಎಂದು ಅನ್ನಿಸಿಬಿಡುತ್ತದೆ.

ಭಾರತದಲ್ಲಿ ಕೆಲಸ ಮಾಡುತ್ತಿದ್ದ ಮಿತ್ರನೊಬ್ಬನ ಜೊತೆ ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕ ಮಾತುಕಥೆ ನಡೆಸಿದ್ದೆ - ಹೇಗೋ ಮಾತು ಎಲ್ಲಿಂದೆಲ್ಲಿಗೋ ಬಂದು ನಾನು ಅವನಿಗೆ ಆಫೀಸಿನ ಸಮಯದಲ್ಲಿ ನಿನ್ನ ಮಿತ್ರರೊಡನೆ ವ್ಯವಹರಿಸುವುದನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳ ಕಡೆ ಗಮನ ಕೊಡು ಎಂದುದಕ್ಕೆ ಅವನು ಪ್ರತಿಯಾಗಿ ಅದೇನೋ ಒಳ್ಳೆಯ ಸಲಹೆ, ಆದರೆ ನನ್ನ ಕೆಲಸದಂತೆ ನಾನು ನನ್ನ ಸಾಮಾಜಿಕ ಬದುಕನ್ನೂ ಗೌರವಿಸಬೇಕು, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು ಎಂದಿದ್ದನ್ನು ನಾನು ಒಂದು ನಿಮಿಷ ಗಹನವಾಗಿ ಯೋಚಿಸಿದೆ. ಅವನು ಹೇಳಿದ್ದು ಬಹಳ ಸತ್ಯವಾದ ವಿಷಯ - ನನಗೇನೋ ಇಲ್ಲಿ ಆಫೀಸಿನ ಸಮಯದಲ್ಲಿ ಅದೂ ಅಪರೂಪಕ್ಕೊಮ್ಮೆ ಎನ್ನುವಂತೆ ಯಾರಾದರೊಬ್ಬರು ಹೊರಗಿನವರು ಇನ್ಸ್ಟಂಟ್ ಮೆಸ್ಸೇಜ್ ಕಳಿಸಿದರೆ ಹೆಚ್ಚು, ಅದನ್ನೂ ಕಡಿಮೆ ಮಾಡಿಕೊಳ್ಳಲು ನಾನು ಒಂದೇ 'invisible' mode ನಲ್ಲಿ ಇರುವುದೋ ಅಥವಾ ಮೆಸ್ಸೆಂಜರ್‌ಗೆ ಲಾಗಿನ್ ಆಗದೇ ಇರುವ ಸಂದರ್ಭವೇ ಹೆಚ್ಚು. ಆದರೆ ಭಾರತದಲ್ಲಿನ ಇನ್ಸ್ಟಂಟ್ ಮೆಸ್ಸೇಜ್, ಸಂದೇಶಗಳ ಯುಗದಲ್ಲಿ, ಅದರಲ್ಲೂ ಪ್ರತಿಯೊಬ್ಬರ ಪರಿವಾರ, ಗೆಳೆಯರ ಬಳಗ ದೊಡ್ಡದಾಗಿರುವ ಸಹಜ ಸ್ಥಿತಿಯಲ್ಲಿ ಅದು ಹೇಗೆ ತಾನೆ ಹೊರಗಿನ ಸಂವೇದನೆಗಳಿಗೆ ಸಂಪೂರ್ಣವಾಗಿ ಕಿವಿಗೊಡದೇ ಕೆಲಸದ ಮೇಲೆ ಗಮನವಿರಿಸಲು ಸಾಧ್ಯ? ಇಲ್ಲಿ ಕೆಲಸ ಮಾಡುತ್ತಿರುವ ನನಗೆ ಹತ್ತು ಜನರು ಪರಿಚಯವಿದ್ದು ಒಬ್ಬರು ಮೆಸ್ಸೇಜ್ ಕಳಿಸಿದರೆ, ನಾನು ಅಲ್ಲೇನಾದರೂ ಕೆಲಸ ಮಾಡುತ್ತಲಿದ್ದರೆ ಕೊನೇಪಕ್ಷ ಒಂದು ನೂರು ಜನರಾದರೂ ಪರಿಚಯವಿದ್ದು ಅವರಲ್ಲಿ ಹತ್ತು ಜನರಾದರೂ ಮೆಸ್ಸೇಜ್ ಕಳಿಸುತ್ತಿರಲಿಲ್ಲವೇ? ಅವರನ್ನೆಲ್ಲ ಹೇಗೆ ನಿಭಾಯಿಸುತ್ತಿದ್ದೆ? ಅಥವಾ ಇಲ್ಲಿನ ಹಾಗೆ ವಾರದ ದಿನಗಳಲ್ಲಿ ವಾರಾಂತ್ಯ ಬಂದರೆ ನೋಡೋಣವೆಂದೋ, ವಾರಾಂತ್ಯದ ದಿನಗಳಲ್ಲಿ 'ನಾಳೆ' ನೋಡೋಣವೆಂದೋ ತಳ್ಳಿಹಾಕಲು ಸಾಧ್ಯವಾಗುತ್ತಿತ್ತೇ? ಇನ್ಸ್ಟಂಟ್ ಮಸ್ಸೇಜ್ ವಿಂಡೋವನ್ನೋ ಅಥವಾ ಇ-ಮೇಲ್ ಮೆಸ್ಸೇಜುಗಳನ್ನೋ ಕ್ಲೋಸ್ ಮಾಡಿ ಮುಗಿಸಿದಷ್ಟು ಸುಲಭವಾಗಿ ನಮ್ಮ ಸಾಮಾಜಿಕ ಜೀವನದ ಎಳೆಗಳನ್ನು ನಿಭಾಯಿಸಬಹುದೇ? ಎನ್ನುವ ತರಾವರಿ ಪ್ರಶ್ನೆಗಳು ಮನದಲ್ಲಿ ಉದ್ಭವವಾದವು.

ಧಾರ್ಮಿಕವಾಗಿ ನನ್ನ ಬದುಕು ಆಫೀಸಿನ ಬದುಕಿಗಿಂತ ಭಿನ್ನ, ನನ್ನ ಆಚರಣೆಗಳು, ಆಚಾರ-ವಿಚಾರಗಳನ್ನು ನನ್ನ ಸಹೋದ್ಯೋಗಿಗಳ ಜೊತೆ ಹಂಚಿಕೊಳ್ಳುವುದಿಲ್ಲ; ರಾಜಕೀಯವಾಗಿ ನಾನಿಲ್ಲಿ ಯಾವ ರೀತಿಯಲ್ಲೂ ಭಾಗವಹಿಸೋದಿಲ್ಲ; ಸಾಮಾಜಿಕವಾಗಿ ನನ್ನದೇ ಆದ ಒಂದು ಜೀವನ ಶೈಲಿ ಇದೆ, ಅದು ಇಲ್ಲಿಯವರ ಹ್ಯಾಪ್ಪಿ ಅವರ್‌ಗೆ ಹೊಂದಿಕೊಳ್ಳುವುದಿಲ್ಲ, ಕಮ್ಮ್ಯೂನಿಟಿ ಸರ್ವೀಸೂ ಅಷ್ಟಕಷ್ಟೇ; ಮನೆಯಲ್ಲೊಂದು ಪ್ರಪಂಚ, ಕಾರಿನಲ್ಲೊಂದು ಪ್ರಪಂಚ ಹಾಗೂ ಅಫೀಸಿನಲ್ಲೊಂದು ಬದುಕು ಎಂದು ಮೂರು ನಾಲ್ಕು ಭಾಗವಾಗಿ ವಿಂಗಡಣೆಗೊಳಪಟ್ಟಿದ್ದೇನೆ. ಹೀಗಿರುವಾಗ 'ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು, ಮ್ಯಾನೇಜ್ ಮಾಡಬೇಕು' ಎಂದು ಉಪದೇಶ ಸಾರಲು ನನಗ್ಯಾವ ಹಕ್ಕಿದೆ ಹಾಗೂ ಅರ್ಹತೆ ಇದೆ ಎಂದೂ ಯೋಚನೆಗಿಟ್ಟುಕೊಂಡಿತು. ಈ ದಿನ ಬೆಳಗ್ಗಿನ ಜಾವ ಮೂರೂವರೆ ಹೊತ್ತಿಗೆ ನನ್ನ ಎರಡನೇ ಅಣ್ಣ ಫೋನ್ ಮಾಡಿದ್ದ, ಅವನು ಎಷ್ಟು ಸಾರಿ ಹೇಳಿದರೂ ಹೀಗೆ ಅವೇಳೆಯಲ್ಲೇ ಫೋನ್ ಮಾಡೋದು ಎಂದು ಅವನ ಮೇಲೂ ರೇಗುತ್ತೇನೆ, just because ನಾನ್ಯಾವುದೋ ಬೇರೆಯೇ 'ಪ್ರಪಂಚ'ದಲ್ಲಿದ್ದೇನೆಂದು ಅವನೂ ಸಹ ತನ್ನ ಸಂವೇದನೆಗಳನ್ನು ನನಗೆ ಅನುಕೂಲಕರವಾದ ಘಳಿಗೆ ಬರುವಲ್ಲಿಯವರೆಗೆ ಕಟ್ಟಿ ಹಾಕಿಟ್ಟುಕೊಳ್ಳಬೇಕು. ಇದೇ ಅಣ್ಣ ನಾನು ಸಾಗರದಲ್ಲಿ ರೂಮು ಮಾಡಿಕೊಂಡು ಇದ್ದಾಗ ಒಂದು ದಿನ ಬೆಳಗ್ಗಿನ ಜಾವಾ ನಾಲ್ಕೂವರೆಗೆ ಊರಿನಿಂದ ನನ್ನ ತಂದೆಯವರು ತೀರಿಕೊಂಡ ಸುದ್ದಿಯನ್ನು ಹೊತ್ತು ತಂದಿದ್ದ, ನನ್ನನ್ನೂ ಜೊತೆಯಲ್ಲಿಯೇ ಕರೆದುಕೊಂಡು ಹೋದ, ಆಗಂತೂ ನನಗೆ ಅದು ಅವೇಳೆ ಎನ್ನಿಸಿರಲಿಲ್ಲ. ಆಗಿನ ಸ್ಪಂದನಗಳಿಗೆ ಆಗ್ಗೆಯೇ ಉತ್ತರ ಅಥವಾ ಪ್ರತಿಕ್ರಿಯೆ ಸಿಗುತ್ತಿದ್ದರೆ ಸಹಜವೆನಿಸುತ್ತೆ, ಇಲ್ಲವೆಂದರೆ ತಡವಾದ ಯಾವುದರಲ್ಲಿ ಏನು ತಾನೆ ವಿಶೇಷವಿದೆ ಎನ್ನೋದು ನನಗಿನ್ನೂ ತಿಳಿಯದ ವಿಷಯ. ಹೀಗೆ 'ಅವೇಳೆ'ಯಲ್ಲಿ ಭಾರತದಿಂದ ಬರಬಹುದಾದ ಫೋನ್ ಕಾಲ್‌ಗಳ ಮೇಲೆ ನನಗೆ ಬಹಳಷ್ಟು ಭಯವಿದೆ, ಅವು ಎಂತಹ ಭಯಂಕರ ಸುದ್ದಿಯನ್ನು ಹೊತ್ತು ತರುತ್ತವೆಯೋ, ಹಾಗೆ ಬಂದಪ್ಪಳಿಸುವ ಸುದ್ದಿಗಳಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೋ ಎಂದೂ ಗುಮಾನಿಯಿದೆ.

ಸಾಮಾಜಿಕ ಸಂಬಂಧದ ಎಳೆಗಳನ್ನು ಮ್ಯಾನೇಜ್ ಮಾಡುವುದು ಎಂದರೆ ಅವುಗಳನ್ನು ಒಂದು ಡಬ್ಬಿಯಲ್ಲಿಟ್ಟು ಮುಚ್ಚಳವನ್ನು ಭದ್ರವಾಗಿ ಹಾಕಿ ಸಮಯ ಬಂದಾಗ ತೆಗೆದು ನೋಡಿದರಾಯಿತು ಎಂದಲ್ಲ, ನಮ್ಮ-ನಮ್ಮ ಕೆಲಸ ಕಾರ್ಯಗಳ ನಡುವೆಯೂ ಬದುಕು ಬೇಡುವ ಸಂಬಂಧದ ಎಳೆಗಳ ಅಗತ್ಯಗಳಿಗೆ ಸ್ಪಂದಿಸಿ ಎಷ್ಟು ಸಾಧ್ಯವೋ ಅಷ್ಟು ಅವುಗಳನ್ನು ಜೀವಂತವಾಗಿಡುವುದು. ಒಡಹುಟ್ಟಿದವರ, ಸ್ನೇಹಿತರ, ಗುರುತು-ಪರಿಚಯದವರ ಸಂಬಂಧವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳದೇ ಅವುಗಳು ಸಹಜವಾಗಿ ನಿರೀಕ್ಷಿಸುವ ಗಮನಕೊಡುವುದು. ನಾವ್ಯಾವುದೋ ಕುಬೇರನ ಲೋಕದ ಕರೆನ್ಸಿಯನ್ನು ಬಲ್ಲವರೆಂದು ಕಂಡಕಂಡದ್ದನ್ನು ನಮ್ಮ 'ಮೌಲ್ಯ'ಗಳಲ್ಲಿ ಅಳೆಯದೆ, ವಸ್ತು-ವಿಷಯಗಳನ್ನು ಅವುಗಳು ಇರುವ ಎತ್ತರಕ್ಕೆ ಬಗ್ಗಿ ನೋಡುವುದು. ಕಂಡಕಂಡವರಲ್ಲಿ ನಮ್ಮ ಬಹುಪರಾಕನ್ನು ಕೊಚ್ಚದೇ ಇತರರ ನೋವು-ನಲಿವುಗಳನ್ನೂ ಕೇಳುವ ಸಂಯಮವನ್ನು ರೂಢಿಸಿಕೊಳ್ಳುವುದು.

ಒಬ್ಬ ರಸ್ತೆ ಬದಿಯ ಭಿಕ್ಷುಕನಿಂದ ಹಿಡಿದು ಮಹಾನ್ ಚಿಂತಕನವರೆಗೆ ನಮ್ಮ ಸಂಬಂಧಗಳು, ನಾವು ಅವುಗಳನ್ನು ಬೆಳೆಸಿ-ಉಳಿಸಿಕೊಳ್ಳುವ ರೀತಿ, ನಾವು ನಮ್ಮ ನೆಟ್‌ವರ್ಕ್ ಅನ್ನು ಹಿಗ್ಗಿಸಿಕೊಳ್ಳುವ ಸಾಮರ್ಥ್ಯ ಇವೆಲ್ಲವೂ ಬಹಳಷ್ಟನ್ನು ನಿರ್ಧರಿಸಬಲ್ಲವು. ಹೋದಲ್ಲಿ ಬಂದಲ್ಲಿ 'ನಮ್ಮವರನ್ನು' ನಾವು ಹುಟ್ಟು ಹಾಕಿಕೊಳ್ಳದೇ ನಾವೇ ಕಟ್ಟಿಕೊಂಡ ಗೂಡಿನಲ್ಲಿ ಎಷ್ಟು ದಿನವಾದರೂ ಇರುವುದಕ್ಕೆ ಸಾಧ್ಯವಿದೆ? ಈ ಎಲ್ಲ ದೃಷ್ಟಿಯಿಂದಲೇ ಮೊಟ್ಟ ಮೊದಲನೇ ಬಾರಿಗೆ ಆಫೀಸಿನ ಸಮಯದಲ್ಲಿ ತನ್ನ ಪ್ರೈವೇಟ್ ಕಾನ್‌ವರ್‌ಸೇಷನ್‌ನಲ್ಲಿ ತೊಡಗಿರೋ ಸಹೋದ್ಯೋಗಿಯೊಬ್ಬ ಅಪ್ಯಾಯಮಾನವಾಗುತ್ತಾನೆ. ತನ್ನ ಮಕ್ಕಳು ಹಾಗೂ ಗಂಡನ ಬಗ್ಗೆ ಯಾವಾಗಲು ಸಂಭ್ರಮದ ಕಣ್ಣುಗಳಲ್ಲಿ ವಿವರಿಸುವ ಸಹೋದ್ಯೋಗಿ ಕಾನಿ (Connie) ವಿಶೇಷವಾಗಿ ಕಾಣಿಸುತ್ತಾಳೆ. ಎಲ್ಲೋ ಅಪರೂಪಕ್ಕೊಮ್ಮೆ ಕಾಫೆಟೇರಿಯಾದಲ್ಲಿ ಸಿಗುವ, 'ಹಾಯ್' ಎನ್ನುವ, ಇನ್ನೂ ಹೆಸರೂ ತಿಳಿಯದ ಕೆಲಸದವನೊಬ್ಬ ಅತಿ ಹತ್ತಿರದ ಬಂಧುವಾಗಿ ಕಂಡುಬರುತ್ತಾನೆ. ನಾವುಗಳು ನಮ್ಮ-ನಮ್ಮ ಸಾಮಾಜಿಕ ಸಂಬಂಧಗಳನ್ನು 'ಮ್ಯಾನೇಜ್' ಮಾಡಿದ್ದರ ಪರಿಣಾಮ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಬಾಧಿಸಿಯೇ ತೀರುತ್ತದೆ - ಎಲ್ಲವನ್ನೂ ಮ್ಯಾನೇಜ್ ಮಾಡುತ್ತೇವೆ/ಮಾಡಬಹುದು ಎನ್ನುವ ಮಾತುಗಳು ಮೊಟ್ಟ ಮೊದಲ ಬಾರಿಗೆ ದೊಡ್ಡ ಸುಳ್ಳಿನ ಕಂತೆಗಳಾಗಿ ಕಾಣತೊಡಗುತ್ತವೆ. ನಿಸರ್ಗ ನಿಯಮಗಳಾದ ಸಮಯವನ್ನಾಗಲೀ, ಸಂಬಂಧವನ್ನಾಗಲಿ, ಸಮಾಜವನ್ನಾಗಲೀ ಮ್ಯಾನೇಜ್ ಮಾಡಲು ಅವುಗಳೇನು ಬಚ್ಚಲು ಮನೆಯ ಕಲ್ಲೇ?

***

ನಾವು ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಿ ನಮ್ಮತನವನ್ನು ಗುರುತಿಸಿಕೊಂಡು ಸಹಜವಾಗಿ ಬದುಕನ್ನು ನಡೆಸೋದಕ್ಕೆ ಸಾಧ್ಯವಿದೆ, ಬರಿ ವೀಕೆಂಡಿನಲ್ಲಿ ಮಾತ್ರ ಭಾರತದಲ್ಲಿದ್ದವರೊಡನೆ ಸ್ನೇಹಿತರೊಡನೆ ಮಾತನಾಡುವುದು ಸಾಲದು ಎನ್ನುವುದು ಆ ನಿಟ್ಟಿನಲ್ಲಿ ನಾವೆಲ್ಲರೂ ಇಡಬೇಕಾದ ಮೊದಲ ಹೆಜ್ಜೆ.

Tuesday, September 19, 2006

ಮಾನವ ನಿರ್ಮಿತ ಗಡಿ

ತಮ್ಮ ದೇಶದಿಂದ ಹೊರಕ್ಕೆ ವಲಸೆ ಬಂದವರಿಗೆ ತಮ್ಮ ಮಕ್ಕಳನ್ನು ಯಾವ ಪರಿಸರ-ಸಂಸ್ಕೃತಿಯಲ್ಲಿ ಬೆಳೆಸಬೇಕು ಎನ್ನುವ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡಿರುತ್ತದೆ. ಮಕ್ಕಳು ಇನ್ನೂ ಚಿಕ್ಕವರಿದ್ದಾಗ ಒಂದು ರೀತಿಯ ಆಲೋಚನೆಗಳು ಬಂದರೆ ಮಕ್ಕಳು ಶಾಲೆಗೆ ಹೋಗುವ ವಯಸ್ಸು ಬಂದಂತೆ, ಹಾಗೆ ಮುಂದೆ ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಬ್ಬ ತಂದೆ-ತಾಯಂದಿರಿಗೂ ಎರಡು ಸಂಸ್ಕೃತಿಗಳ ಸಂಘರ್ಷ ಒಂದಲ್ಲ ಒಂದು ರೀತಿಯಿಂದ ಅನುಭವಕ್ಕೆ ಬಂದಿರುತ್ತದೆ. ಮಕ್ಕಳು ಅವರವರ ನೇಟಿವ್ ಸಂಪ್ರದಾಯದಲ್ಲಿ ಬೆಳೆಯಲಿ ಎನ್ನುವ ದೃಷ್ಟಿಕೋನದಿಂದ ಹಿಡಿದು ಪೋಷಕರ ಕಟ್ಟಾ ಸಂಪ್ರದಾಯ ನೆಲೆಗಟ್ಟಿನಲ್ಲಿಯೇ ಬೆಳೆಯಬೇಕು ಎನ್ನುವ ತನಕ ಹಲವಾರು ರೀತಿಯ ಮನಸ್ಥಿತಿಗಳು ನಮಗೆ ದೊರೆಯುತ್ತವೆ.

ನನ್ನ ಪರಿಚಯದವರೊಬ್ಬರು ಪಾಕೀಸ್ತಾನೀ ಮೂಲದ ಡಾಕ್ಟರು ಇತ್ತೀಚೆಗಷ್ಟೇ ಅಮೇರಿಕದಲ್ಲಿ ಎಂ.ಡಿ. ಪದವಿ ಮುಗಿಸಿ ಅಲ್ಲಿಲ್ಲಿ ಕೆಲಸ ಹುಡುಕುತ್ತಿದ್ದಾರೆ. ಅವರು ಮುಸ್ಲಿಮ್ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು, ತಮ್ಮ ಮಕ್ಕಳನ್ನೂ ಸಹ ಅದೇ ನೆಲೆಗಟ್ಟಿನಲ್ಲಿಯೇ ಬೆಳೆಸಬೇಕು ಎಂದು ನಿರ್ಧರಿಸಿದವರು. ಅವರಿಗೆ ಕೆಲಸ ಹುಡುಕಲು ಇರುವ ತೊಂದರೆಗಳಲ್ಲಿ ತಾವು ಕೆಲಸ ಮಾಡುತ್ತಿರುವ ಊರಿನಲ್ಲಿ ಮಸೀದಿಯೂ ಇರಬೇಕು ಎನ್ನುವುದು ಅವರ ಅಗತ್ಯಗಳಲ್ಲಿ ಒಂದು. ಆದ್ದರಿಂದ ಹೆಚ್ಚು ಅವಕಾಶಗಳು ಕೈಗೆ ಬಂದರೂ ಬಾಯಿಗೆ ಬರುತ್ತಿಲ್ಲ ಎನ್ನುವಂತಾಗಿ ಇದ್ದುದರಲ್ಲಿಯೇ ಹೊಂದಿಕೊಂಡು ಹೋಗಲು ಅವರು ತೀರ್ಮಾನಿಸಿದ್ದಾರೆಂದು ತಿಳಿಯಿತು. ಅವರಿಗಿರುವ ಇಬ್ಬರು ಮಕ್ಕಳು, ಒಬ್ಬ ಹುಡುಗ, ಒಬ್ಬ ಹುಡುಗಿ - ಬಹಳ ಸೌಮ್ಯ ಮುಖಗಳು ಹಾಗೂ ಮನಸ್ಥಿತಿ - ಸುಮಾರು ಹತ್ತು ವರ್ಷದ ಆಜುಬಾಜು ಇರಬಹುದಾದ ವಯಸ್ಸು. ಈ ಡಾಕ್ಟರ್ ಕುಟುಂಬ ಯಾವುದೋ ಸಂಬಂಧಿಕರ ಮದುವೆಗೆಂದು ವರ್ಜೀನಿಯಾಕ್ಕೆ ಹೋಗಿದ್ದರಂತೆ, ಅಲ್ಲಿ ಪಕ್ಕಾ ದೇಸೀ ವಾತಾವರಣ ಇತ್ತೆಂದು ಈ ಡಾಕ್ಟರ್ ಮೂಲಕವೇ ನನಗೆ ತಿಳಿಯಿತು, ಅವರೇ ಹೇಳಿದ ಹಾಗೆ ಅವರ ಮಗಳು ಅಲ್ಲಿ ನಡೆಯುತ್ತಿದ್ದ ಆಚರಣೆಗಳನ್ನು ನೋಡಿ, ಕಾರಿನಲ್ಲಿ ಕುಳಿತು ಎಲ್ಲಿಂದ ಎಲ್ಲಿಗೆ ಬಂದೆವೊ ಎಂದುಕೊಂಡು, 'ಅಪ್ಪಾ ಇದು ಪಾಕಿಸ್ತಾನವೇ?' ಎಂದು ಕೇಳಿದ್ದಳಂತೆ. ನನಗೆ ಈ ವಿಷಯವನ್ನು ಡಾಕ್ಟರು ತಮಾಷೆಯಾಗಿ ಹೇಳಿದರೂ ಅದರಲ್ಲಿನ ತಮಾಷೆಯ ಜೊತೆಗೆ ಆ ಮುಗ್ಧ ಮನಸ್ಸಿನಲ್ಲಾಗುವ ವ್ಯಾಪಾರಗಳೂ ಸಹ ಸ್ಪಷ್ಟವಾದಂತೆನಿಸಿತು. ಬಹುಷಃ ಆ ಮಕ್ಕಳು ಅವರ ಜೀವನದಲ್ಲಿ ನೋಡಿದ ಮೊದಲನೇ ಮದುವೆ ಇರಬೇಕು, ಅಮೇರಿಕನ್ ನೆಲೆಗಟ್ಟಿನಲ್ಲಿ ಅವರಿಗೆ ಎಲ್ಲವೂ ಹೊಸದಾಗಿ ಕಂಡಿರಬೇಕು. ಈ ಡಾಕ್ಟರ್ ಕುಟುಂಬ ಇನ್ಯಾವತ್ತೂ ಹಿಂತಿರುಗಿ ಪಾಕಿಸ್ತಾನಕ್ಕೆ ಹೋಗುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ - ಅದಕ್ಕೆ ಕಾರಣ ಅವರ ಎಕ್ಸೈಲ್ ಸಿಚುವೇಷನ್ ಇರಬಹುದು, ಅಥವಾ ಪಾಕಿಸ್ತಾನ, ಅಫಘಾನಸ್ತಾನದ ಗಡಿಯಲ್ಲಿನ ಊರಿಗೆ ಹೋಗಿ ಅವರು ಮಾಡುವುದಾದರೂ ಏನು ಎಂಬುದಿರಬಹುದು. ಒಂದು ಕಡೆ ತಂದೆ-ತಾಯಿಗಳಿಗೆ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಲೇ ತಮ್ಮ ನೇರಕ್ಕೆ ತಕ್ಕ ವಾತಾವರಣವನ್ನು ಹುಟ್ಟುಹಾಕಿಕೊಳ್ಳುವ ಸವಾಲು, ಮತ್ತೊಂದು ಕಡೆ ಈ ಪರಿಸರದಲ್ಲಿ ಬೆಳೆದ ಮಕ್ಕಳು ಎರಡೂ ಕಡೆಯಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆ. ಹೀಗೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಈ ದ್ವಂದ್ವದ ಅನುಭವವಾಗುವುದು ಸಹಜ, ಈ ಅನುಭವ ನಾವು ಬೆಳೆದಂತೆಲ್ಲ ಹಲವಾರು ರೀತಿಯಲ್ಲಿ ಹರಡಿಕೊಳ್ಳುತ್ತದೆ, ಮೂಲಭೂತವಾಗಿ ನೋಡುವುದಕ್ಕೆ ಎರಡೇ ಎನ್ನುವಂತಿದ್ದರೂ ನಮ್ಮ ಮನಸ್ಸಿನ ವ್ಯಾಪಾರಗಳು ಹಲವಾರು ನೆಲೆಗಟ್ಟಿನಲ್ಲಿ ಕೆಲಸ ಮಾಡತೊಡುಗುತ್ತವೆ.

ಕಾಮಿಡಿ ಸೆಂಟ್ರಲ್‌ನಲ್ಲಿ ಒಬ್ಬರು ತಮಾಷೆ ಮಾಡುತ್ತಾ 'ಈ ಹರಿಕೇನ್, ಸುಂಟರಗಾಳಿಗಳು ಬರುವ ಊರಿನಲ್ಲಿ ಜನರು ಏಕಿರುತ್ತಾರೆ, ಅವರೆಲ್ಲರೂ ಬೇರೆ ಊರುಗಳಿಗೆ ಏಕೆ ಹೋಗೋದಿಲ್ಲ - ಒಂದು ವೇಳೆ ಊರು ಬಿಟ್ಟು ಹೋಗದಿದ್ದರೆ ಕೊನೆಗೆ ನೀರು ಬಂತು, ಗಾಳಿ ಬಂತು ಎಂದು ಬೊಬ್ಬೆ ಹಾಕುವುದು ಏಕೆ?' ಎನ್ನುವ ಮಾತುಗಳನ್ನು ಆಡಿದರು. ಅದಕ್ಕೆ ತಕ್ಕ ಮಟ್ಟಿಗೆ ನಗುವೂ ಹುಟ್ಟಿತು, ಚಪ್ಪಾಳೆ ಸದ್ದೂ ಕೇಳಿತು. ಆದರೆ, ನಿಜವಾಗಿಯೂ ಈ ಚಂಡಮಾರುತ, ಸುಂಟರಗಾಳಿ ಬರುವ ಪ್ರದೇಶದಿಂದ ಜನರು ಊರುಬಿಟ್ಟು ಹೊರಡಲು ಸಾಧ್ಯವೇ? ಹಾಗೆ ಯೋಚಿಸಲು ಸಾಧ್ಯವೇ ಇಲ್ಲ, ಊರು ಬಿಟ್ಟು ಎಲ್ಲರೂ ಹೋಗುವುದಾದರೂ ಎಲ್ಲಿಗೆ? 'ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ' ಎಂಬಂತೆ ಅಲ್ಲಿ ವಾಸಿಸುವ ಕುಟುಂಬಗಳು ತಲತಲಾಂತರದಿಂದ ನೆಲೆಸಿವೆ, ಇನ್ನು ಮುಂದೆಯೂ ಹಾಗೆಯೇ ಇರುತ್ತದೆ. ಬದಲಾಗಬೇಕಾದವರು ಅವರಲ್ಲ, ತಾವು ಸುರಕ್ಷಿತ ಸ್ಥಳದಲ್ಲಿ ಕುಳಿತುಕೊಂಡಿದ್ದೇವೆ ಎಂದುಕೊಂಡವರು ನಿಜವಾಗಿಯೂ ಮತ್ತೊಮ್ಮೆ ಯೋಚಿಸಬೇಕು. ನಮ್ಮ ನ್ಯೂ ಜೆರ್ಸಿ-ನ್ಯೂ ಯಾರ್ಕ್ ಏರಿಯಾಗಳಲ್ಲಿ ವಾಹನ ಅಫಘಾತಗಳಲ್ಲಿ ವರ್ಷಕ್ಕೆ ಸಾಯುವವರ ಸಂಖ್ಯೆ ಉಳಿದ ಪ್ರದೇಶಗಳಲ್ಲಿ ನೈಸರ್ಗಿಕ ಪ್ರಕೋಪಗಳಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಿರಬಹುದು. ನಮ್ಮಲ್ಲಿ ಅಗತ್ಯವಾಗಿ ಕಾಣೋ (pseudo) ಮಿಥ್ಯ-ಟೈಪ್ ಎ ಮೆಂಟಾಲಿಟಿಗಳು, ನಗರದ ಬದುಕಿಗೆ ಹೊಂದಿಕೊಂಡೇ ಬರುವ ಯಾಂತ್ರಿಕ ಜೀವನ ಇವೆಲ್ಲವೂ ನಮ್ಮನ್ನು ಅಸ್ವಸ್ಥರನ್ನಾಗಿ ಮಾಡಬಹುದು, ಅಥವಾ ಧೀರ್ಘಕಾಲ ಮಾನಸಿಕ ಒತ್ತಡದಲ್ಲಿ ಬದುಕುವಂತೆ ಮಾಡಿ ಸಮಾಧಾನದ ಬದುಕು ಎಂದರೇನು ಎಂದು ಆಲೋಚಿಸುವಂತೆ ಮಾಡಬಹುದು. ಹೀಗೆ ಪ್ರತಿಯೊಂದು ಪ್ರದೇಶಗಳಲ್ಲೂ ಅದರ ಅನುಕೂಲ-ಅನಾನುಕೂಲಗಳು ಇದ್ದೇ ಇರುತ್ತವೆ.

ನಾವು ನಮ್ಮದು ಎಂದುಕೊಂಡ ಊರುಗಳ ಬಗ್ಗೆ ಇರಲಿ, ನಾವು ನಮ್ಮದು ಎಂದುಕೊಂಡ ದೇಶದ ಬಗ್ಗೆಯೇ ಎಷ್ಟೋ ಸಾರಿ ಯೋಚಿಸತೊಡಗುತ್ತೇನೆ. ಇಲ್ಲೇ ಹುಟ್ಟಿದ ಮಕ್ಕಳನ್ನು ಯಾವ ಯಾವ ತಂದೆ-ತಾಯಂದಿರು ಯಾವ ರೀತಿ ಬೆಳೆಸುತ್ತಾರೆ, ಹೇಗೆ ಬೆಳೆಸಿದರೆ ಸರಿ ಎಂಬ ಜಿಜ್ಞಾಸೆಗೊಳಗಾಗಿದ್ದೇನೆ. ಈ ಮಕ್ಕಳು ಬೆಳೆಯುವ ಪರಿಸರ ಅವರ ನೈಸರ್ಗಿಕ ಹಕ್ಕೇ ಅಥವಾ ತಂದೆತಾಯಂದಿರ ವಿಚಾರ-ಆಯ್ಕೆಗಳಿಗೆ ಬಿಟ್ಟದ್ದೇ? ನಮ್ಮ ಮಕ್ಕಳು ಏಕೆ ನಮ್ಮ ಭಾಷೆ/ಪರಂಪರೆಯನ್ನು ಕಲಿಯಬೇಕು, ಹಾಗೆ ಕಲಿಯದಿದ್ದರೆ ಅದರ ಬದಲಿಗೆ ಇನ್ನೇನನ್ನು ಕಲಿಯಬೇಕು ಕಲಿಯುತ್ತಾರೆ ಎನ್ನುವುದು ಮತ್ತಷ್ಟು ಗೋಜಲಾದ ವಿಚಾರ. ಪೋಷಕತ್ವದ ಬಗ್ಗೆ ನಾನು ಓದಿರುವ ಪುಸ್ತಕಗಳಿಗೂ ನಾನು ಬೆಳೆದು ಬಂದ ಬಗೆಗೂ ಪೂರ್ವ-ಪಶ್ಚಿಮದಷ್ಟು ವ್ಯತ್ಯಾಸವಿರುವಾಗ ಯಾರೋ ಒಬ್ಬರು ಸ್ಟ್ಯಾಂಡರ್ಡ್ ಎಂದು ಕರೆದಿರುವ ನಿದರ್ಶನಗಳನ್ನು ಎಷ್ಟರ ಮಟ್ಟಿಗೆ ನನ್ನಂತಹವರು ಕೈಗೊಂಡು ಧೀರ್ಘಕಾಲೀನವಾಗಿ ನಡೆಸಿಕೊಂಡು ಬರಬಹುದು?

ನಮ್ಮ ಹುಟ್ಟೂರು, ಅದರ ನೆನಪು ನಮಗೆಲ್ಲರಿಗೂ ಒಂದು ಹಿತವಾದ ವಾತಾವರಣದ ಗುಂಗನ್ನು ಹುಟ್ಟಿಸುತ್ತದೆ. ಆ ಊರಿನ ಉದ್ದಗಲಗಳ ಅಪಾರವಾದ ಮಾಹಿತಿ ಯಾವಾಗ ಬೇಕೋ ಆಗ ಕಣ್ಣ ಮುಂದೆ ಬರುವಂತಹ ಅಪಾರವಾದ ಸ್ಟೋರೇಜ್ ಹಾಗೂ ರಿಟ್ರೀವಲ್ ಮಾಡಬಹುದಾದ ನರಮಂಡಲವನ್ನು ನಿಸರ್ಗ ನಮಗೆ ನೀಡಿದೆ. ಊರಿನ ನೆನಪು ಒಂದು ರೀತಿಯ ಅಕ್ಷಯ ಪಾತ್ರೆಯ ಹಾಗೆ, ಮೊಗೆದಷ್ಟೂ ಬರಿದಾಗುವ ಪ್ರಶ್ನೆಯೇ ಇಲ್ಲ. ಹೀಗಿರುವ ಊರನ್ನು ಬಿಟ್ಟು ಬಂದದ್ದಾಯಿತು, ದೇಶವನ್ನು ಬಿಟ್ಟು ಬಂದದ್ದಾಯಿತು - ನನ್ನ ಪಾಕಿಸ್ತಾನದಿಂದ ಬಂದ ಡಾಕ್ಟರ್ ಸ್ನೇಹಿತರ ಹಾಗೆ, ಕ್ಯೂಬಾ ಅಥವಾ ಚೈನಾದಿಂದ ಬಂದ ಕೆಲವರಿಗೆ ಇರುವ ಹಾಗೆ ಇನ್ಯಾವತ್ತೂ ಹಿಂತಿರುಗಿ ಹೋಗದ ಪರಿಸ್ಥಿತಿಯೇ ಹುಟ್ಟಿತೆನ್ನಿ, ಅದರ ಕಲ್ಪನೆ ಹೇಗಿದ್ದಿರಬಹುದು? ನಮ್ಮ ದೇಶಕ್ಕೇ ನಾವು ಹೋಗದೇ ಇರುವ ಹಾಗಿದ್ದರೆ ಅದರ ಊಹೆಯೇ ಬಹಳಷ್ಟು ಸಂಕಷ್ಟವನ್ನು ಹುಟ್ಟಿಸಬಲ್ಲದು ಇನ್ನು ನಿಜಸ್ಥಿತಿಯ ಮಾತೇ ದೂರ. ಅಥವಾ ಇದು ಕೇವಲ ನನ್ನ ಅನುಭವ, ಅನಿಸಿಕೆ ಅಥವಾ ಸ್ಪಂದನ ಮಾತ್ರ. ತಮ್ಮ ದೇಶದ ಮೂಲ ಪಾಸ್‌ಪೋರ್ಟನ್ನು ಬ್ಯಾಂಕ್ ಪಾಸ್‌ಬುಕ್ಕಿನ ಹಾಗೆ ಬಿಸಾಡಿ ಇನ್ನೊಂದು ದೇಶವನ್ನು ಅಪ್ಪಿ ಹಿಡಿದವರನ್ನೂ ಬಲ್ಲೆ, ತಮ್ಮ ದೇಶದ ನಾಗರಿಕತೆಯನ್ನು ಕಳೆದುಕೊಳ್ಳಲಿಚ್ಛಿಸದೇ ಹಲವಾರು ತೊಂದರೆಗಳಿಗೆ ಎಡೆ ಮಾಡಿಕೊಂಡ ಭಾವುಕರನ್ನೂ ನಾನು ಬಲ್ಲೆ. ಹಾಗಾದರೆ ನಮ್ಮ ಊರು, ರಾಜ್ಯ, ದೇಶ ಇವೆಲ್ಲವೂ ಒಂದು ಭೋಗೋಳಿಕ ಗೆರೆಗಳು ಮಾತ್ರವೇನು? ಅಥವಾ ನಾವೆಂದೂ ಹೃದಯದಲ್ಲಿ ಜಾಗವಿಟ್ಟುಕೊಂಡಿರುವ ಹಾಗೆ ಮಾಡುವ ನಮ್ಮ ನಂಬಿಕೆಗಳ ಒರತೆಗಳೇ?

ನಾಡು-ನುಡಿ, ದೇಶ-ಭಾಷೆಗಳನ್ನೆಲ್ಲ ಬಿಟ್ಟು ಬಂದ ಮೇಲೆ, ನಮಗೆ ವಯಸ್ಸಾದಂತೆಲ್ಲ ಅಲ್ಲಿನ ನಮ್ಮವರೆಲ್ಲ ಅತ್ತಿತ್ತ ಚದುರಿಯೋ ಇಲ್ಲಾ ಕಾಲನ ಆಜ್ಞೆಗೆ ಮಣಿದೋ ಮರೆಯಾಗಿ ಹೋದ ಮೇಲೆ ನಮ್ಮ ಪರಂಪರೆಯ ಸ್ಮರಣೆ ಏಕಿರಬೇಕು, ಎಷ್ಟಿರಬೇಕು? ಇಷ್ಟರ ಮೇಲೆ ನಮ್ಮ ಅಂಗಳದಲ್ಲಿ ಆಟವಾಡುವ ಚಿಣ್ಣರು ಗೋಲಿ, ಬುಗುರಿ, ಚಿಣ್ಣಿದಾಂಡುಗಳನ್ನು ಆಡಲಿ ಎನ್ನುವ ಯೋಚನೆ ಏಕಿರಬೇಕು? ಹಿಂದೆಲ್ಲಾ ಯೂರೋಪಿನಿಂದಲೋ ಮತ್ತೆಲ್ಲಿಂದಲೋ ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನೆಲೆಗಟ್ಟನ್ನು ಕಳೆದುಕೊಂಡು ಬಂದವರ ಬಗ್ಗೆಯಾಗಲೀ, ಅಥವಾ ಕ್ಯೂಬಾದಿಂದಲೋ, ಚೀನಾದಿಂದಲೋ ಹಿಂದೆ ತಿರುಗಿ ಹೋಗದ ಹಾಗೆ ಬಂದವರ ಬಗ್ಗೆಯಾಗಲೀ ಹೇಳದೇ, ಕೇವಲ ವ್ಯಾಪಾರ ಹಾಗೂ ಉದ್ಯೋಗವನ್ನು ಅರಸಿಕೊಂಡು ಬಂದವರನ್ನು ಕುರಿತು ಯೋಚಿಸಿದರೆ ಸಮಸ್ಯೆ ಸ್ವಲ್ಪ ಹಗುರವಾದಂತೆ ಕಾಣಿಸಿದರೂ, ನಮಗೆ ಯಾವುದೋ ಗೊತ್ತಿಲ್ಲ ಎಂಬ ಕಾರಣ ಇನ್ಯಾರನ್ನೋ ನಮ್ಮ ನಂಬಿಕೆಗಳಿಗೆ ಸೀಮಿತವಾಗಿರುವಂತೆ ಇರಿಸುವ ಬಂಧನ ಇವರೆಡನ್ನೂ ತುಲನೆ ಮಾಡಿ ನೋಡಬೇಕಾದ ಅನಿವಾರ್ಯತೆ ಹುಟ್ಟುತ್ತದೆ.

***

ಮಾನವ ನಿರ್ಮಿತ ಗಡಿಗಳಿಗಿಂತ ನಿಸರ್ಗ ನಿರ್ಮಿತ ನಿಲುವುಗಳು ದೊಡ್ಡವು ಎಂದುಕೊಂಡು ಸುಮ್ಮನಿರುವುದೋ ಅಥವಾ ಬಹುದೊಡ್ಡ ಸಂದೇಶವನ್ನು ಸಾರುವ ಮುಖ ಮಾಡಿಕೊಳ್ಳುವುದೋ ಲೇಸು!

Saturday, September 16, 2006

ಭಕ್ತಿ ಸಂಗೀತದ ಪುನರುಜ್ಜೀವನ - Resurgence

ಕೆಲವು ತಿಂಗಳ ಹಿಂದೆ ದೂರದ ಮೆಂಫಿಸ್‌ನಿಂದ ವಿಶ್ವೇಶ್ ಮತ್ತು ಅಶ್ವಿನಿ ಅವರು ಕರೆ ಮಾಡಿ ನಮ್ಮ ಹೊಸ ಮ್ಯೂಸಿಕ್ ಆಲ್ಬಮ್ ಇನ್ನೇನು ಕೆಲವು ದಿನಗಳಲ್ಲೇ ಹೊರಬರುತ್ತದೆ, ಅದರಲ್ಲಿ ಒಂದು ಹೊಸ ಪ್ರಯೋಗವನ್ನು ಮಾಡುತ್ತಿದ್ದೇವೆ ಎಂದಾಗ ನನಗೇನು ಅತಿಶಯೋಕ್ತಿ ಎನ್ನಿಸಲಿಲ್ಲ. ಏಕೆಂದರೆ ವಿಶ್ವೇಶ್ ಅವರ ಮೊದಲ ಆಲ್ಬಮ್ 'ಘಮ ಘಮ'ವನ್ನು ಕೇಳಿದವರಿಗೆ ಅವರ ಸಂಗೀತದ ಬಗೆಗಿನ ಆಳವಾದ ಜ್ಞಾನದ ಅರಿವಿನ ಜೊತೆಗೆ ಹೊಸ ಪೀಳಿಗೆಯವರು ಮನಸ್ಸಿನಲ್ಲಿ ಯೋಚಿಸುವ ಇಲ್ಲಿನ-ಅಲ್ಲಿನ, ಹಳೆಯ-ಹೊಸ ಕಲ್ಪನೆಗಳಿಗೆ ಒಂದು ವಿಶಿಷ್ಟ ರೂಪವನ್ನು ಕೊಡುವ ಅವಿರತ ಪ್ರಯತ್ನದ ಅರಿವೂ ಇದೆ. ನಾನು ಮೊಟ್ಟ ಮೊದಲ ಬಾರಿ 'ಘಮ-ಘಮ'ದ ಟೈಟಲ್ ಸಾಂಗ್ ಕೇಳಿದಾಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಾಳಪ್ಪಾ ಹುಕ್ಕೇರಿಯವರು 'ಘಮಾ-ಘಮಾ ಘಮಾಡ್ತಿಸ್ತಾವ ಮಲ್ಲೀಗೆ...' ಎಂದು ಹಾಡಿದ ನೆನಪು ಬಂತು - ವಿಶ್ವೇಶ್ ಅವರ ಕಂಠದಲ್ಲಿ ಹುಕ್ಕೇರಿಯವರ ಕಂಠದ ಹಾಗೆಯೇ ಆಡುನುಡಿಗಳನ್ನು ಹಾಡುವ ಒರಿಜಿನಾಲಿಟಿಯನ್ನು ನಾನು ಗುರುತಿಸಿದ್ದೆ - ಸಾಮಾನ್ಯವಾಗಿ ಪಟ್ಟಣದವರಿಗೆ ಸೆರೆಹಿಡಿಯಲು ಸಾಧ್ಯವಿಲ್ಲದ ವಿಶೇಷ ಧ್ವನಿಗಳನ್ನು ವಿಶ್ವೇಶ್ ಅವರು ಆ ಹಾಡಿನಲ್ಲಿ ಸೆರೆಹಿಡಿದದ್ದು ಅವರ ಸಹಜ ಪ್ರತಿಭೆಗೆ ಹಿಡಿದ ಕನ್ನಡಿ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದುಕೊಂಡು ತಾವು ಭಾರತದಿಂದ ಬಳುವಳಿ ತಂದ ತಮ್ಮ ಸಂಗೀತ ಸಾಧನೆಯನ್ನು ಸಮಯ ಸಿಕ್ಕಾಗಲೆಲ್ಲ ಒರೆಗೆ ಹಚ್ಚಿ ಅದರಿಂದ ಹೊಸ ಕಂಪನ್ನು ಹೊರ ತರುವ ಅವರ ಪ್ರಯತ್ನ ಶ್ಲಾಘನೀಯ. ತಾವು ಚಿಕ್ಕ ಹುಡುಗನಾಗಿದ್ದಾಗಿನಿಂದ ಆರಂಭಿಸಿದ್ದ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಹಾಗೂ ಬೆಳವಣಿಗೆಯನ್ನು ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಸಂಗೀತದಲ್ಲಿ ಸಾಧನೆ ಮಾಡಿದ ವಿಶ್ವೇಶ್ ಅವರ ಪ್ರತಿಭೆ ಕೇವಲ ಸಂಗೀತಕ್ಕಷ್ಟೇ ಸೀಮಿತವಾಗಿರದೇ ಚಿತ್ರಕಲೆ ಹಾಗೂ ಸಂಘಟನೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೯೯೭ರಿಂದ ೨೦೦೦ದ ವರೆಗೆ ಡೆಕ್ಕನ್ ಹೆರಾಲ್ಡ್‌ಗೆ ನೂರಾರು ಕಾರ್ಟೂನ್‌ಗಳನ್ನು ಬರೆದ ಪ್ರತಿಭೆ ಅವರದು. ಜೊತೆಯಲ್ಲಿ ತಾವು ಮೆಂಫಿಸ್‌ಗೆ ಬಂದ ಹೊಸದರಲ್ಲಿ ಅಲ್ಲಿನ ಕನ್ನಡಿಗರೊಡಗೂಡಿ 'ತರಂಗ' ಕನ್ನಡ ಸಂಘವನ್ನು ಹುಟ್ಟು ಹಾಕಿದ ಮೊದಲಿಗರೂ ಹೌದು. ತಾವಿರುವ ಮೆಂಫಿಸ್ ಪ್ರದೇಶದಲ್ಲಿ ಹಲವಾರು ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತಗಾರರನ್ನು ಕಲೆ ಹಾಕಿ ತಮ್ಮ ಮನೆಯಲ್ಲಿಯೇ ಒಂದು ರೆಕಾರ್ಡಿಂಗ್ ಸ್ಟುಡಿಯೋವನ್ನು ನಿರ್ಮಿಸಿ ಸಂಗೀತದ ಅಲೆಗಳನ್ನು ಹೊರಡಿಸಿ ಅಮೇರಿಕದ ಉದ್ದಗಲಕ್ಕೆ ಬೇಕಾದಷ್ಟು ಕಾರ್ಯಕ್ರಮಗಳನ್ನು ಕೊಟ್ಟಿರುವ ಕೀರ್ತಿ ಅವರದು. ವಿಶ್ವೇಶ್ ಅವರ ಛಲ ಮತ್ತು ಸಾಧನೆಯಲ್ಲಿ ಸಮಭಾಗಿಗಳಾಗಿರುವ ಅವರ ಧರ್ಮಪತ್ನಿ ಅಶ್ವಿನಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ವಿಶ್ವೇಶ್ ಅವರಂತೆ ಇವರೂ ಸಹ ಚಿಕ್ಕ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ವೀಣಾವಾದನದಲ್ಲಿ ಸಾಧನೆಯನ್ನು ಮಾಡಿ, ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ವಿಶ್ವೇಶ್ ಅವರ ಹಾಡಿನಲ್ಲಿ ವೀಣೆಯ ಹಿಮ್ಮೇಳವನ್ನು ನೀಡುವುದರೊಂದಿಗೆ ತಾವೂ ಜೊತೆಯಲ್ಲಿ ದನಿಗೂಡಿಸಿರುವುದೂ ಅಲ್ಲದೇ ಈ ಧ್ವನಿ ಸುರುಳಿಗಳನ್ನು ಹೊರತರುವಲ್ಲಿ ಬೆಂಬಲಿಗರಾಗಿ ಸಾಕಷ್ಟು ಶ್ರಮಿಸಿದ್ದಾರೆ.

ಇವರ ಹೊಸ ಆಲ್ಬಮ್ "ರಿಸರ್ಜನ್ಸ್" ನಲ್ಲಿ ಐದು ಟ್ರ್ಯಾಕ್‌ಗಳಿವೆ, ಇದರಲ್ಲಿರುವ ಪ್ರಯೋಗದ ವಿಶೇಷವೆಂದರೆ ಭಕ್ತಿರಸವನ್ನು ಪ್ರಧಾನವಾಗಿಟ್ಟುಕೊಂಡು ಮರಾಠಿ, ಕನ್ನಡ, ಹಿಂದಿ ಹಾಗೂ ಸಂಸ್ಕೃತದಲ್ಲಿ ಆಯ್ದ ಗೀತೆಗಳಿಗೆ ವಿಶ್ವೇಶ್-ಅಶ್ವಿನಿಯವರೇ ಹೊಸ ರಾಗ ಸಂಯೋಜನೆ ಮಾಡಿರುವುದು. ಮೊದಲ ಟ್ರ್ಯಾಕ್‌ನಲ್ಲಿ ಡಾ. ಅಶೋಕ್ ರಾವ್ ಅವರ ಸುಂದರ ನಿರೂಪಣೆಯೊಂದಿಗೆ ದಿವ್ಯ ತಂಬೂರಿಯ ಮಧುರವಾದ ಹಿನ್ನೆಲೆ ಆರಂಭವನ್ನು ಮುದಗೊಳಿಸುತ್ತದೆ. ಡಾ. ಅಶೋಕ್ ರಾವ್ ಅವರು ಹೇಳಿದ ''There is a belief that Indian classical music is a divine vehicle that can help us reach a higher spiritual state...' ಎನ್ನುವ ಮಾತು ಅಕ್ಷರಷಃ ಸತ್ಯ. 'ರಿಸರ್ಜೆನ್ಸ್'ನಲ್ಲಿ ಹೊರ ಹೊಮ್ಮುವ ಸಂಗೀತ ಭಕ್ತಿ ರಸವನ್ನು ಪ್ರಧಾನವಾಗಿಟ್ಟುಕೊಂಡು ಕೇಳುಗರನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ. ಆಧುನಿಕ ಬದುಕಿನ ಮತ್ತೊಂದು ಮುಖವಾದ ವ್ಯಸ್ತ ಜಗತ್ತಿನಲ್ಲಿ ವಿಶ್ವೇಶ್ ಅವರ ಭಕ್ತಿರಸದ ಪ್ರಯೋಗ ನಿಜವಾಗಿಯೂ ಒಂದು ಹೊಸ ದಾರಿಯನ್ನು ತೋರಿಸುತ್ತದೆ.



ಮೊದಲ ಹಾಡು ಗುರುವಿಗೆ ಮೀಸಲಾಗಿದ್ದು, ಶ್ರೀಪಾದ ಶ್ರೀ ವಲ್ಲಭರ 'ಗುರು ವಿನಾ ನಾಹಿ ಕೋಣಿರೇ...' ಎಂದು ಗುರುವಿನ ಮಹತ್ವವನ್ನು ಹೊರ ಸೂಸುವ ಮಧುರವಾದ ಹಾಡನ್ನು ವಿಶ್ವೇಶ್ ಹಾಗೂ ಅಶ್ವಿನಿ ಅವರಿಬ್ಬರ ಸ್ವರದಲ್ಲಿ ಕೇಳಬಹುದು. ಮರಾಠಿ ಅರ್ಥವಾಗದಿದ್ದವರಿಗೂ ಗುರುವಿನ ಮಹತ್ವವನ್ನು ಸಾರಿ, ಗುರುವನ್ನು ಎಲ್ಲ ಬಂಧುಗಳಿಗಿಂತಲೂ ದೊಡ್ಡದಾಗಿ ಮಾಡುವ ತೋಡಿ-ಭಟಿಯಾರ ರಾಗಗಳಲ್ಲಿ ಹೊರ ಹೊಮ್ಮುವ ಸ್ವರಗಳು ಗುರುವನ್ನು ಎಂಥವರ ಮನದಲ್ಲೂ ಬಹಳ ಎತ್ತರದಲ್ಲಿ ನಿಲ್ಲಿಸುತ್ತದೆ. ಈ ಹಾಡಿನಲ್ಲಿರುವ ಇನ್ನೊಂದು ವಿಶೇಷವೆಂದರೆ ಎಲ್ಲೂ ಅತಿ ಎನಿಸದೇ ತಕ್ಕ ಪ್ರಮಾಣದಲ್ಲಿ ಮೂಡುವ ಹಿನ್ನೆಲೆ ಸಂಗೀತ. ತಮ್ಮ ಇತಿಮಿತಿಗಳಲ್ಲಿ, ಸಿಕ್ಕ ಅವಕಾಶಗಳಲ್ಲಿ ವಿಶ್ವೇಶ್-ಅಶ್ವಿನಿ ಅವರು ಸಾಕಷ್ಟು ಸ್ವರಗಳನ್ನು ಹೊರಡಿಸಿ ಗುರುವಿಗೆ ಒಂದು ಹೆಚ್ಚಿನ ಸ್ಥಾನವನ್ನು ವಿವಿಧ ರೀತಿಗಳಲ್ಲಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ತೋಡಿ ರಾಗಕ್ಕೆ ಪಾಶ್ಚಾತ್ಯ ಗಿಟಾರ್ ಧ್ವನಿಯನ್ನು ಹೊಂದಿಸುವಲ್ಲಿ ವಿಶ್ವೇಶ್ ಅವರ ಕೈಚಳಕ ಎದ್ದು ಕಾಣುತ್ತದೆ.



ಎರಡನೆಯ ಹಾಡು 'ನಿರಂತರ', ಹರಿ ಭಜನೆ ಮಾಡೋ ನಿರಂತರ... ಎನ್ನುವ ಶ್ರೀ ವಾದಿರಾಜರ ಕೃತಿಯನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಭೀಮ್‌ಪಲಾಸ್ ರಾಗದಲ್ಲಿ ಆರಂಭವಾಗುವ ವಿಶ್ವೇಶ್ ಅವರ ಆಲಾಪನೆ ಎಂಥವರ ಮನಸ್ಸಿನಲ್ಲೂ ಇರುವ ತಲ್ಲಣಗಳನ್ನು ಒಂದು ಕ್ಷಣ ದೂರ ಮಾಡಿ ಹರಿಭಜನೆಯ ನಿರಂತರ ಗಾನದಲ್ಲಿ ಧ್ಯಾನದ ಎತ್ತರವನ್ನು ಹುಟ್ಟುಹಾಕುತ್ತದೆ. 'ಪರಗತಿಗಿದು ಇದು ನಿರ್ಧಾರ ನೋಡೋ...' ಎನ್ನುವ ಒಂದೇ ಸಾಲಿನಲ್ಲಿ ವಿಶ್ವೇಶ್ ಪೂರ್ವ-ಪಶ್ಚಿಮದವರಿಗೆಲ್ಲ ಅಪ್ಯಾಯಮನವಾಗುತ್ತಾರೆ. ಈ ಹಾಡಿನ ಹಿನ್ನೆಲೆಯಲ್ಲಿ ಹತ್ತಾರು ವಯಲಿನ್‌ಗಳ ಮಾಧುರ್ಯವನ್ನು ಸೆರೆಹಿಡಿದು ಸಿಂಫನಿ ಎಫೆಕ್ಟ್ ಹುಟ್ಟಿಸುವ ಒಂದು ಹೊಸ ಪ್ರಯೋಗವಿದೆ. ಈ ಹಾಡಿನ ಕೊನೆಯಲ್ಲಿ 'ಹರಿ ಭಜನೆ-ಭಜನೆ...' ಅನ್ನೋದು ಹದಿನಾಲ್ಕು ಸಲ ಪುನರಾವರ್ತನೆಯಾಗುತ್ತದೆ, ಪ್ರತಿಯೊಂದು ಸಲ ಪುನರಾವರ್ತನೆಯಾದಾಗಲೂ ಹಾಗೂ ಭಜನೆ ಎನ್ನುವ ಪದವನ್ನು ವಿಶ್ವೇಶ್ ಅವರು ಭಿನ್ನವಾಗಿ ಮೂಡಿಸಿದ್ದಾರೆ, ಒಟ್ಟಿನಲ್ಲಿ ೨೮ ಸಲ ಬರುವ 'ಭಜನೆ' ನಿಜವಾಗಿಯೂ ಮನವನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ.

ಮೂರನೇ ಹಾಡು ಮೀರಾಬಾಯಿಯ 'ಗೋವರ್ಧನ್ ಗಿರಿಧಾರಿ' ಯನ್ನು ಅಶ್ವಿನಿಯವರು ಸಾಕ್ಷಾತ್ಕರಿಸಿದ್ಧಾರೆ. 'ತುಮ್ ಬಿನ್ ಮೋರಿ ಕೌನ್ ಖಬರಲೇ ಗೋವರ್ಧನ್ ಗಿರಿಧಾರಿ' ಎನ್ನುವಲ್ಲಿ ಮೀರಾಬಾಯಿ ಕೃಷ್ಣನನ್ನು ಪ್ರಶ್ನಿಸುವ ಆತ್ಮೀಯತೆಯನ್ನು ಪಲ್ಲವಿಯಲ್ಲೇ ಸಾಧಿಸಿಕೊಂಡಿದ್ದಾರೆ. ಯಮನ್ ರಾಗದಲ್ಲಿ ಹೊರಹೊಮ್ಮುವ ಸುಂದರ ಶೃತಿಯ ಜೊತೆಗೆ ಸುಂದರವಾದ ಗಿಟಾರ್ ಮತ್ತು ಕೊಳಲಿನ ಹಿನ್ನೆಲೆಯೂ ಇದೆ. ಸರಳವಾದ ರಾಗದಲ್ಲಿ ಹೊರ ಹೊಮ್ಮುವ ಅಶ್ವಿನಿಯವರ ಧ್ವನಿ ಶ್ರೀ ಕೃಷ್ಣನೊಂದಿಗೆ ತನ್ಮಯತೆಯನ್ನು ಸಾಧಿಸಿದ ಮೀರಾಬಾಯಿಯ ಮೊರೆಯನ್ನು ಕಣ್ಣಿಗೆ ಕಟ್ಟುತ್ತದೆ.

ನಾಲ್ಕನೆಯ ಹಾಡು ತುಲಸೀ ದಾಸರ 'ರಾಮ ಚರಣ ಸುಖದಾ' ವನ್ನು ವಿಶ್ವೇಶ್-ಅಶ್ವಿನಿಯವರಿಬ್ಬರ ಧ್ವನಿಯಲ್ಲಿ ಕೇಳಬಹುದು. ಭೈರವಿ ರಾಗದಲ್ಲಿ ಹೊರ ಹೊಮ್ಮುವ ಈ ಅದ್ಭುತ ಕೃತಿ ಎಂಥವರಿಗೂ ರಾಮ ಚರಣವನ್ನು ಭಜಿಸುವ ಮನಸ್ಥಿತಿಯನ್ನು ಮೂಡಿಸುತ್ತದೆ. ತುಲಸೀ ದಾಸರ ಚರಣಗಳಿಗೆ ಜಲತರಂಗದ ಹೊಸ ಅಲೆಗಳನ್ನು ಹೊಮ್ಮಿಸುವ ಪ್ರಯೋಗದಲ್ಲಿ ರಾಮ ಚರಣದ ಕಲ್ಪನೆ ಎಂಥವರಿಗೂ ಮುದನೀಡುತ್ತದೆ.

ಕೊನೆಯ ಹಾಡು ಶ್ರೀ ಜಯದೇವರ 'ನಾಥ ಹರೇ, ಜಗನ್ನಾಥ ಹರೇ' ಎನ್ನುವ ಹಾಡು ದರ್ಬಾರಿ ಕಾನಡಾ ರಾಗದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ವಿಶ್ವೇಶ್ ಅವರ ಸರಳ ಶೈಲಿ, ಜೊತೆಗೆ ಹದವಾದ ಮೃದಂಗದ ನಿನಾದ ಹಾಗೂ ಭಾವಪರವಶ ಸಂಗೀತ ಭಕ್ತಿಯ ಉತ್ತುಂಗಕ್ಕೆ ಕರೆದೊಯ್ಯುತ್ತದೆ. ಈ ಹಾಡಿನಲ್ಲಿ ಮೂಡುವ ವಿಶ್ವೇಶ್ ಅವರ ಆಲಾಪನೆಯನ್ನು ಕೇಳುವುದು ನಿಜವಾಗಿಯೂ ಒಂದು ಹೊಸ ಅನುಭವ. ಬಹಳ ಸರಳವಾಗಿ ಆರಂಭವಾಗುವ ಹಾಡು ಆಲಾಪನೆಗಳ ಸಾಂಗತ್ಯ ಜೊತೆಯಲ್ಲಿ ವೀಣೆಯ ಮಧುರವಾದ ಧ್ವನಿಯಲ್ಲಿ ಶ್ರೋತೃಗಳ ಮನಸ್ಸಿನಲ್ಲಿ ಬಹಳ ಎತ್ತರವನ್ನು ತಲುಪುತ್ತದೆ.

"ರಿಸರ್ಜೆನ್ಸ್" ಹೊರ ಬರಲು ಅಶ್ವಿನಿ-ವಿಶ್ವೇಶ್ ಅವರ ಜೊತೆಯಲ್ಲಿ ಹಲವಾರು ಸಹ ಕಲಾವಿದರೂ ದುಡಿದಿದ್ದಾರೆ: ಗಿಟಾರ್ ಸಹಗಾಯನವನ್ನು ನೀಡಿದವರು ಜಾನ್ ಓಮನ್ (John Oommen), ಮೃದಂಗದಲ್ಲಿ ಲಕ್ಷ್ಮಣ್, ತಬಲಾ ಸಾಥಿಗಳಾಗಿ ಯೋಗೇಶ್ ಹಾಗೂ ಶೇಖರ್, ಹಾರ್ಮೋನಿಯಮ್‌ನಲ್ಲಿ ಪ್ರಭಾಕರ್ ಪಾರೀಖ್, ಕೊಳಲಿನಲ್ಲಿ ಕೃಷ್ಣಾ ಪ್ರಸಾದ್, ವೀಣಾ ವಾದಕಿಯಾಗಿ ಅಶ್ವಿನಿ. ಈ ಆಲ್ಬಮ್‌ಗೆ ಸಂಗೀತ ಸಂಯೋಜಿಸಿರುವ ವಿಶ್ವೇಶ್ ತಮ್ಮ ಕೀ ಬೋರ್ಡಿನಿಂದ ಅದ್ಭುತವಾದ ಧ್ವನಿಗಳನ್ನು ಹೊರಡಿಸಿದ್ದಾರೆ. ತಾವಿರುವ ಮೆಂಫಿಸ್‌ನಲ್ಲಿ ನ್ಯೂ ಜೆರ್ಸಿ ಅಥವಾ ಕ್ಯಾಲಿಫೋರ್ನಿಯಾದಲ್ಲಿ ಸಿಕ್ಕ ಹಾಗೆ ಕಲಾವಿದರು ಸಿಕ್ಕೋದಿಲ್ಲ ಎನ್ನುವುದನ್ನು ಚೆನ್ನಾಗಿ ಮನಗಂಡಿರುವ ವಿಶ್ವೇಶ್-ಅಶ್ವಿನಿ, ಈ ಸಹ ಕಲಾವಿದರನ್ನು ಒಟ್ಟುಗೂಡಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ ಹಾಗೂ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ ಹೊಸವರ್ಷದ ಸಂದರ್ಭದಲ್ಲಿ ಸುಮಾರು ೫೦೦ ಮೈಲು ದೂರದ ಸೀಡರ್ ರಾಪಿಡ್ಸ್‌ನಿಂದ ಯೋಗೇಶ್ ಇವರ ಮನೆಗೆ ಬಂದಿದ್ದಾಗಲೇ ಅವರ ತಬಲಾವನ್ನು ರೆಕಾರ್ಡ್ ಮಾಡಿಕೊಂಡು ಮುಂದೆ ಅದನ್ನು ವಿಶ್ವೇಶ್ ಅವರು ಬಳಸಿಕೊಂಡಿದ್ದಾರೆ. ಸಾವಿರಾರು ಡಾಲರುಗಳನ್ನು ಸುರಿದು ದೊಡ್ಡ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಪ್ರೊಫೆಷನಲ್ ಆರ್ಟಿಸ್ಟುಗಳು ಮಾಡಿರುವ ಧ್ವನಿ ಮುದ್ರಣಕ್ಕೆ ಯಾವುದೇ ಕೊರತೆಯಿಲ್ಲದೇ ತಮ್ಮ ಮನೆಯಲ್ಲಿಯೇ ತಾವೇ ಹೊಂದಿಸಿಕೊಂಡ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ಗಳನ್ನು ಬಳಸುವುದರ ಮೂಲಕ ನಮ್ಮೆಲ್ಲರ ನಡುವೆ ಎದ್ದು ಕಾಣುತ್ತಾರೆ. ತಮ್ಮ ಅವಿರತ ದುಡಿಮೆಯ ಜೊತೆಗೆ ಎಲ್ಲ ಕಲಾವಿದರೂ ಸಾಕಷ್ಟು ಶ್ರಮಿಸಿದ್ದಾರೆ, ಇಲ್ಲಿ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಕಲಾವಿದರೆಲ್ಲರೂ ಒಟ್ಟಿಗೆ ಸಿಡಿ ಬಿಡುಗಡೆಯ ಸಮಾರಂಭದಲ್ಲೇ ಸೇರಿದ್ದು ಎನ್ನುವುದನ್ನೂ ವಿಶ್ವೇಶ್ ಹೆಮ್ಮೆಯಿಂದ ಸ್ಮರಿಸುತ್ತಾರೆ.

ಈ ಧ್ವನಿ ಸುರುಳಿಯಲ್ಲಿ ಭಾರತೀಯ ಸಾಹಿತ್ಯ-ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನು ಎಷ್ಟು ಚೆನ್ನಾಗಿ ಬೆರೆಸಿದ್ದಾರೆಂದರೆ ಅದು ಭಕ್ತಿ ಸಂಗೀತ ಮಾಧುರ್ಯವನ್ನು ಹೆಚ್ಚಿಸಿದೆಯೇ ವಿನಾ ಎಲ್ಲೂ ಕರ್ಕಶವೆಂದೆನಿಸಿಲ್ಲ. ಜೊತೆಗೆ ವಿಶ್ವೇಶ್ ಅವರ ರಾಗಗಳ ಬಳಕೆ ಬೆಳಗಿನ ಜಾವದ ರಾಗಗಳಿಂದ ಆರಂಭವಾಗಿ ಸರಿ ರಾತ್ರಿಯ ರಾಗಗಳವರೆಗೆ ವಿಸ್ತರಿಸಿರುವುದೂ ಅವರ ಪ್ರಯೋಗಗಳಲ್ಲೊಂದು. ವಿಶ್ವೇಶ್-ಅಶ್ವಿನಿಯವರು ತಮ್ಮ ಪ್ರಯೋಗಗಳನ್ನು ಹೀಗೆಯೇ ಮುಂದುವರೆಸಿ, ಇನ್ನೂ ಹಲವಾರು ಧ್ವನಿ ಸುರುಳಿಗಳನ್ನು ಹೊರಗೆ ತಂದು ಸಂಗೀತದಲ್ಲಿ ಸಾಧನೆಯನ್ನು ಮಾಡುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಒಟ್ಟಿನಲ್ಲಿ "ರಿಸರ್ಜೆನ್ಸ್" ನಮ್ಮ ನಡುವಿನ ಕನ್ನಡದ ಧ್ವನಿಯಾಗಿ ಹೊರಬಂದಂತೆ ಕಂಡು ಬಂದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಜನರ ಮನ್ನಣೆಗಳಿಗೆ ಪಾತ್ರವಾಗಿರೋದು ಸತ್ಯದ ಸಂಗತಿ. ವಿಶ್ವಿನಿ.ಕಾಮ್ ವೆಬ್ ಸೈಟ್‌ನಲ್ಲಿ ತೋರಿಸಿದ ಎಷ್ಟೋ ಜನರ ಅನಿಸಿಕೆಗಳು ಅತಿಶಯೋಕ್ತಿ ಎಂದು ಎಲ್ಲೂ ಅನ್ನಿಸುವುದಿಲ್ಲ. ವಿಶ್ವೇಶ್-ಅಶ್ವಿನಿಯವರ ಸಾಧನೆಗಳ ಬಗ್ಗೆ ನೀವು http://www.vishwini.com/ ನಲ್ಲಿ ವಿವರವಾಗಿ ನೋಡಬಹುದು ಹಾಗೇ "ಘಮ-ಘಮ" ಗೀತೆಗಳನ್ನು Kannada Audio.com ನಲ್ಲಿ ಕೇಳಬಹುದು.

***

ಸೂಚನೆ: ಈ ಬಗ್ಗೆ ನಿನ್ನೆ ThatsKannada.com ದಲ್ಲಿ ಪ್ರಕಟವಾದ ಬರಹವನ್ನು ಹೆಚ್ಚು ಜನರು ನೋಡಲಿ ಎಂದು 'ಅಂತರಂಗ'ದಲ್ಲಿಯೂ ಹಾಕಿದ್ದೇನೆ.

Thursday, September 14, 2006

ಓದಿ ಬರೆಯುವ ಬಗ್ಗೆ - ಧ್ವನಿಗಳು

ಬಹಳ ದಿನಗಳಾದವು 'ಸಂವಾದ'ವನ್ನು ಬರೆದು ಎಂದು ಯೋಚಿಸತೊಡಗಿದಂತೆ ಧ್ವನಿಗಳು ಹೀಗೆ ತಮ್ಮಷ್ಟಕ್ಕೆ ತಾವೇ ಹೊರಬರತೊಡಗಿದವು...

***

ಹಾಗಾದ್ರೆ, ಬರೀ ಬೇಕು ಅಂದ್ರೆ ಎಷ್ಟು ಸಾಧ್ಯವೋ ಅಷ್ಟನ್ನ ಓದಬೇಕು ಅಂತ ಆಯ್ತು!

ಹೌದು, ಮೊದಲು ಓದಬೇಕು, ಹೇಗೇ ಅಂದ್ರೆ ಬಯಲಲ್ಲಿ ಒಳ್ಳೇ ದನಗಳು ಮೇಯೋ ಹಾಗೆ, ತಿನ್ನೋ ಹೊತ್ತಿನಲ್ಲಿ ಅದೂ-ಇದೂ ಅಂತ ನೋಡಬಾರದಂತೆ...

ತಡಿ, ಉಳಿದವರು ಬರೆದದ್ದನ್ನ ಓದಿ ನಾವು ಯಾಕೆ ಬರೀ ಬೇಕು, ಹಾಗೆ ಮಾಡಿದ್ರೆ ಒಂದು ರೀತಿ ಕೃತಿಚೌರ್ಯ ಆದಂಗಾಗಲ್ವಾ?

ಇಲ್ಲ. ಇನ್ನೊಬ್ರು ಬರೆದುದನ್ನ ಓದಿ ಅದನ್ನ ಒಂಚೂರೂ ಕ್ರೆಡಿಟ್ ಕೊಡ್ದೇ ಹಾಗೇ ಇಳಿಸಿದ್ರೆ ಅದು ಕೃತಿಚೌರ್ಯಾನೇ, ಆದ್ರೆ ಇನ್ನೊಬ್ರು ಬರೆದದ್ದನ್ನ ಓದಿ ನಮ್ಮ್ ಮನಸೊಳಗೆ ಹುಟ್ಟೋ ಸಂವೇದನೆಗಳಿಗೆ ಒಂದು ರೂಪಾ ಕೊಡೋದಿದೇ ನೋಡು ಅಲ್ಲೇ ಇರೋದು ನಿಜವಾದ ಬರಹ.

ಅದರಲ್ಲೇನಿದೆ ವಿಶೇಷಾ? ಒಂಥರಾ ಹಿಂದೀ ಸಿನೆಮಾಗಳ ಹಾಗೆ ಲವ್ವರ್ರ್‌ಗಳು ಮರಾ ಸುತ್ತೋದು ಬಿಡೋಲ್ಲ, "ತುಮ್ ಮೇರಾ ಭೇಟಾ ನಹೀ, ಮೈ ತೇರಾ ಬಾಪ್ ನಹೀ!" ಅಂತ ಕಿರುಚಾಡೋ ಅಪ್ಪಂದಿರೂ ಸಹ ಹೊಸಬರಲ್ಲ - ಅದೇ ಮಸಾಲೇನೇ ಅರೆದೂ-ಅರೆದೂ ಹಾಕೋ ಹಾಗೆ...

ಸುಮ್ನೇ ಕನ್‌ಕ್ಲೂಷನ್‌ಗೆ ಬರೋದು ಬೇಕಾಗಿಲ್ಲ, ಅವರ ಮಸಾಲೇನೋ, ಗ್ರೀಸೋ ಅವರ ಹತ್ರಾನೇ ಇರಲಿ, ನಾನು ಹೇಳಿದ್ದು ನಿಜವಾದ ಸೂಕ್ಷ್ಮ ಸಂವೇದನೆಗಳು ಎಲ್ಲರಲ್ಲೂ ಇರುತ್ವೆ, ಅದಕ್ಕೊಂದು ರೂಪ ಸಿಕ್ಕುತ್ತೆ ಬರಹದ ಮೂಲಕ, ಅಲ್ದೇ ಬರಹಾ ಅನ್ನೋದು ಒಂದು ಮುಖಾ ಅಷ್ಟೇ ಹೊರತೂ ಸಂವೇದನೆಗಳು ಹೊರಗೆ ಬರೋಕೆ ಹಲವಾರು ದಾರಿಗಳಿವೆ.

ಹಾಗಾದ್ರೆ ಎಲ್ರೂ ಬರೆದ್ರೆ ಓದೋರ್ ಯಾರು? ಒಂಥರಾ ಕನ್ನಡಾ ಬ್ಲಾಗ್‌ಗಳ ಕಥೆ ಆದಂಗಾಯ್ತಲ್ಲ, ಅವರವರೇ ಬರೆದು ಅವರವರ ಬೆನ್ನು ತಟ್ಟೋಕೆ...

ಹಾಗೇನಿಲ್ಲ, ಬ್ಲಾಗ್ ಪ್ರಪಂಚ ಈಗಷ್ಟೇ ಶುರುವಾಗಿದೆ, ಇನ್ನೊಂದ್ ಹತ್ತು ವರ್ಷಾ ಬಿಟ್ರೆ ಅದರಲ್ಲಿ ಇನ್ನೇನು ಬೆಳವಣಿಗೆ ಕಾಣ್ಸುತ್ತೋ ಯಾರಿಗ್ಗೊತ್ತು, ಕನ್ನಡಾ ಬ್ಲಾಗ್‌ಗಳ ಬೆಳಿತಾ ಇರೋ ಸಂಖ್ಯೆ ಬಗ್ಗೆ ಮಾತ್ರ ಹೇಳೋದಲ್ಲ, ಅದರಲ್ಲೂ ಕೆಲವರು ಕಾಯ್ದುಕೊಂಡಿರೋ ವಿಶೇಷಗಳು ಬೇಕಾದಷ್ಟಿವೆ. ನಮ್ಮವರಲ್ಲೂ ಎಷ್ಟೊಂದು ಭಿನ್ನತೆ ಇದೆ, ಒಂದರ ಹಾಗೆ ಮತ್ತೊಂದು ಇದ್ದ ಹಾಗಿಲ್ಲ.

ಇವರು ಎಷ್ಟು ಬೇಕಾದ್ರು ಬರೆದುಕೊಂಡ್ರೂ, ಅದೆಲ್ಲಾ ಬೆಳೆಯೋದು ಅಷ್ಟರಲ್ಲೇ ಇದೆ, ಕನ್ನಡಾ ಬ್ಲಾಗ್ ಅಂದ್ರೆ ಅವುಗಳಿಗೆ ಬರೋ ವಿಸಿಟರ್ಸೂ ಅಷ್ಟಕ್ಕಷ್ಟೇ...

ಹೋಗೀ-ಹೋಗಿ ಇಂಗ್ಲೀಷಿಗೆ ನಮ್ ಬರಹಗಳನ್ನ ಹೋಲಿಸ್‌ಕೋ ಬೇಕಾದ್ ಅಗತ್ಯ ಯಾರಿಗೂ ಇಲ್ಲ. ಹೆಚ್ಚು ಜನ ನೋಡ್ತಾರೆ ಅಂದ ಮಾತ್ರಕ್ಕೆ ಅದು ಬಹಳ ವಿಶೇಷವಾದ್ದೂ ಅಂತ ನನಗೇನೂ ಅನ್ನಿಸ್ಲಿಲ್ಲ, ಕನ್ನಡಕ್ಕೆ ಅದರದ್ದೇ ಆದ ಸ್ಥಾನ ಇದೆ, ನಮ್ ಭಾರತೀಯ ಭಾಷೆಗಳಿಗೆ ಕಂಪೇರು ಮಾಡಿದ್ರೆ ಅದನ್ನಾದ್ರೂ ಒಪ್ಪಬಹುದು.

ಹೌದು, ಯಾರಾದ್ರೂ ಪುಣ್ಯಾತ್ಮರು ಆ ರೀತಿ ಒಂದು ಸ್ಟಡಿ ಯಾಕೆ ಮಾಡೋದಿಲ್ವೋ?

ಮಾತು ಎಲ್ಲಿಂದ ಎಲ್ಲಿಗೋ ಹೋಯ್ತು, ನನ್ ಪ್ರಕಾರ ನಾವುಗಳು ಪ್ರತಿ ಒಬ್ರೂ ಚೆನ್ನಾಗಿ ಓದಬೇಕು, ಹಾಗೇ ಬರೀ ಬೇಕು. ಹುಡುಕಿ ನೋಡಿದ್ರೆ ಎಲ್ರಲ್ಲೂ ಬೇಕಾದಷ್ಟು ಅನುಭವಗಳು ಕಂತೆ-ಕಂತೆಯಾಗಿ ತುಂಬಿಕೊಂಡಿರ್ತವೆ, ಅವುಗಳಿಗೆಲ್ಲ ಒಂದು ರೂಪಾ ಕೊಡೋದೇ ಒಂದು ಹವ್ಯಾಸವಾಗಬೇಕು.

ಎಲ್ರೂ ಬರೀತಾರೆ ಅನ್ನೋ ಮಾತು ಸುಳ್ಳು, ಯಾಕಂದ್ರೆ ಓದೋದಕ್ಕೆ ಒಂದ್ ರೀತಿ ತಾಳ್ಮೆ, ಮೈಂಡ್‌ಸೆಟ್ ಬೇಕು, ಆದ್ರೆ ಬರಿಯೋದೂ ಅಂದ್ರೆ ಬಹಳ ತಲೇ ನೋವಿನ್ ಸಂಗತಿ.

ಅದು ನಿಜವಾದ ಮಾತೇ, ಹೆಚ್ಚು ಓದಿದ ಹಾಗೆ ನಮ್ಮಲ್ಲಿರೋ ಧ್ವನಿಗಳಿಗೂ ಒಂದ್ ರೂಪಾ ಅಂತ ಸಿಗುತ್ತೆ ಅಂತ ನನ್ನ ಅಭಿಪ್ರಾಯ, ಅವುಗಳಿಗೆ ಸಾಧ್ಯವಾದ್ರೆ ಒಂದು ಹೊರಮುಖ ಕೊಟ್ರಾಯ್ತು, ಇಲ್ಲಾಂದ್ರೆ ಬಿಟ್ರಾಯ್ತು...ನೂರು ಜನ ಓದುಗ್ರಿದ್ರೆ, ಹತ್ತು ಜನ ಬರೆಯೋರ್ ಇರಬೇಕು, ಕೊನೇಪಕ್ಷಾ ಓದೋರಿಗೆ ಬರಹಗಳಾದ್ರು ಸಿಕ್ಕಲಿ ಅಂತ.

ಯಾರ್ ಓದ್ತಾರೆ? ಸುಮ್ನೇ ಬರೆದು ಬಿಸಾಡಿದ್ದೇ ಬೇಕಾದಷ್ಟು ಇರುವಾಗ...ಬರೆಯೋದು, ಓದೋದು ಇವೆಲ್ಲ ನಮಗಾಗಲ್ಲಾ...

ಹಾಗಲ್ಲ, ಎಲ್ಲ ಬರಹಗಳೂ ಎಲ್ರಿಗೂ ಇಷ್ಟ ಆಗಬೇಕು ಅಂತೇನೂ ಇಲ್ಲ. ಓದೋರು ತಮಗಿಷ್ಟ ಬಂದದ್ದನ್ನ ಆಯ್ಕೆ ಮಾಡ್ಕೊಳ್ತಾರೆ, ಬರೆಯೋರು ಒಂದು ನೆಲೇನಾ ತಾವ್ ಕಂಡ್ಕೋ ಬೇಕು.

ನಮ್ ಕನ್ನಡ ಪುಸ್ತಕಗಳನ್ನ ಯಾರೂ ಕೊಳ್ಳೋಲ್ಲ, ಕ್ಯಾಸೆಟ್ಟು, ಸಿಡಿ, ಡಿವಿಡಿ ಗಳ ಕಥೆ ಹಾಗಿರಲಿ...ಇನ್ನು ಬರೆದು ಹೊಟ್ಟೇ ತುಂಬಿಸಿಕೊಳ್ತೀವಿ ಅನ್ನೋ ಮಾತಂತೂ ದೂರವೇ ಉಳೀತು!

ಕ್ವಾಲಿಟಿ ವಸ್ತುಗಳಿಗೆ ಬೇಡಿಕೆ ಇದ್ದೇ ಇದೆ, ಮೊನ್ನೆ ನಡೆದ ಸಮ್ಮೇಳನದಲ್ಲಿ ನನ್ನ ಎದುರೇ ಎಷ್ಟೋ ಜನ ಅದಿಲ್ವಾ ಇದಿಲ್ವಾ ಅಂತ ವಿಚಾರಿಸ್ತಾ ಇದ್ರು. ಸುಮ್ನೇ ಎಲ್ಲರೂ ಪ್ರಕಟಿಸ್ತಾರೆ ಅಂತ ಪ್ರಕಟಿಸೋ ಬದಲು ಒಂದಿಷ್ಟು ಕ್ವಾಲಿಟಿ ಬಗ್ಗೆ ಯೋಚನೆ ಮಾಡಿ ಪರಿಶ್ರಮದದಿಂದ ಒಳ್ಳೇ ಸತ್ವವನ್ನ ಪುಸ್ತಕಗಳಲ್ಲಿ ತುಂಬಿದ್ರೆ ಯಾರು ಬೇಕಾದ್ರೂ ಕೊಳ್ತಾರೆ ಅಂತ ನನ್ನ ಅಭಿಪ್ರಾಯ.

ಅದ್ಸರಿ, ಈ ವಿದ್ಯಾವಂತ ಜನ ಕನ್ನಡದಲ್ಲಿ ಮಾತನಾಡೋದೇ ಹೆಚ್ಚು, ಇನ್ನು ಅವರೆಲ್ಲ ಓದ್ತಾರೆ, ಬರಿತಾರೆ ಅನ್ನೋದು ಮರೀಚಿಕೆ ಅಲ್ವೇ?

ಕನ್ನಡ ಮಾತನಾಡೋರ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ಯೇ ವಿನಾ ಕಡಿಮೆ ಅಂತೂ ಆಗೋಲ್ಲ, ಹಿಂದೆಲ್ಲಾ ನಾವು ಯಾವುದೋ ಸಾಮಾಜಿಕ ಸ್ಥಿತಿಗತಿಗಳಲ್ಲಿದ್ದೆವು, ಈಗ ಇನ್ಯಾವುದೋ...ಆದರೆ ಮೂಲಭೂತ ಅವಶ್ಯಕತೆಗಳು ಮಾತ್ರ ಹಾಗೇ ಇವೆ ಎನ್ನಿಸುತ್ತೆ.

ಮೊದಲು ಓದೋಣ, ಬರೆಯೋರ್ ಸಂಖ್ಯೆಗಿಂತ್ಲೂ ಓದೋರ್ ಸಂಖ್ಯೆ ಮುಖ್ಯ, ಬರೀ ಓದೋದು ಅಷ್ಟೇ ಅಲ್ಲ, ಓದಿ ಬೆನ್ನು ತಟ್ಟೋದಕ್ಕಿಂತ್ಲೂ 'ಹೀಗಲ್ಲ-ಹಾಗೆ', 'ಹೀಗೂ ಇರಬಹುದೇ?', 'ನನಗನ್ನಿಸೋ ಪ್ರಕಾರ...' ಅಂತಾನಾದ್ರೂ ಒಂದಿಷ್ಟು ಬರೆದ್ರೆ ಒಂದು ಸಣ್ಣ ಪ್ರಪಂಚ ಹುಟ್ಟತ್ತೆ, ಇಲ್ಲಾ ಅಂದ್ರೆ ಬರೆಯೋರು ಬರೀತಾನೆ ಇರ್ತಾರೆ, ಅವರಿಗೂ ಒಂದು ಫೀಡ್‌ಬ್ಯಾಕ್ ಅನ್ನೋದು ಇರಬೇಕಲ್ವಾ?

ಕನ್ನಡ ಬ್ಲಾಗುಗಳ ಮಟ್ಟಿಗಂತೂ ಆ ಮಾತು ಸತ್ಯಾ...ಹೀಗೆ ಮುಂದೆ ಎಲ್ಲರೂ ಕಂಪ್ಯೂಟರ್‌ನಲ್ಲಿ ಕನ್ನಡ ಓದಿ-ಬರೆಯುವ ಹಾಗೆ ಆಗಲಿ, ಆಗುತ್ತೇ ಅನ್ನೋದು ನನ್ನ ಆಶಯ!

Wednesday, September 13, 2006

ಏನೋ ಓದಿ ಮತ್ತಿನ್ನೇನನ್ನೋ ಮಾಡೋ ಪರಿಸ್ಥಿತಿ

ನೀವೆಲ್ಲಾ ಹೈ ಸ್ಕೂಲು ಮುಗಿಸುವಾಗ ಪರಿಸ್ಥಿತಿ ಹೇಗಿತ್ತೋ ಗೊತ್ತಿಲ್ಲ, ನಾನು ಹೈ ಸ್ಕೂಲು ಮುಗಿಸುವ ಎಂಭತ್ತರ ದಶಕದ ಕೊನೆಯ ಹೊತ್ತಿಗೆ ಹತ್ತನೇ ತರಗತಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದರೆ ಪಿ.ಯು.ಸಿ. ಯಲ್ಲಿ ಸೈನ್ಸ್; ಸೆಕೆಂಡ್ ಕ್ಲಾಸಿನಲ್ಲಿ ಪಾಸಾದರೆ ಪಿ.ಯು.ಸಿ. ಕಾಮರ್ಸ್ ಹಾಗೂ ಥರ್ಡ್ ಕ್ಲಾಸ್ ಪಾಸಾದರೆ ಪಿ.ಯು.ಸಿ.ಯಲ್ಲಿ ಆರ್ಟ್ಸ್ ತೆಗೆದುಕೊಳ್ಳಬೇಕು ಎನ್ನುವುದು ಬಹಳ ಜನರ ಮಟ್ಟಿಗೆ ನಿರ್ಧಾರ ಮಾಡಲು ಮಾನದಂಡವಾಗಿತ್ತು. ನನ್ನ ಬ್ಯಾಚಿನಲ್ಲಾಗಲೀ ಅಥವಾ ನಾನು ನೋಡಿದಂತೆ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದೂ ಸ್ವ ಇಚ್ಛೆಯಿಂದ ಕಲಾ ವಿಭಾಗವನ್ನು ಆರಿಸಿಕೊಂಡವರನ್ನೂ ನೋಡಿದ್ದೇನೆ ಅಂತಹವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಪರಿಸ್ಥಿತಿ ಈಗ ಹೇಗಿದೆಯೋ ಗೊತ್ತಿಲ್ಲ, ಆಗಂತೂ ಎಲ್ಲ ತಂದೆ ತಾಯಿಯರು ತಮ್ಮ ಮಕ್ಕಳನ್ನು ಒಂದೇ ಡಾಕ್ಟರ್ ಅಥವಾ ಇಂಜಿನಿಯರರನ್ನಾಗಿ ಮಾಡಬೇಕು ಎಂದು ಪರದಾಡುತ್ತಿದ್ದುದನ್ನು ನಾನು ಬೇಕಾದಷ್ಟು ಸಾರಿ ನೋಡಿದ್ದೇನೆ. ಇನ್ನೇನಾದರೂ ರ್ಯಾಂಕ್ ಬಂದ ವಿದ್ಯಾರ್ಥಿಗಳೇನಾದರೂ ಕಲಾ ವಿಭಾಗವನ್ನು ಆರಿಸಿಕೊಂಡಿದ್ದಿದೆಯೆಂದಾದರೆ ಅದನ್ನು ನಂಬಲೂ ಕಷ್ಟವಾಗುತ್ತಿತ್ತು.

ಹತ್ತನೇ ತರಗತಿಯಲ್ಲಿ ತೆಗೆದ ಅಂಕಗಳನ್ನು ಬಹಳಷ್ಟು ಕಡೆ ಒಂದು ಅಳತೆಗೋಲಾಗಿ ಬಳಸಲ್ಪಡುತ್ತಿತ್ತು. ಒಂದರಿಂದ ಒಂಭತ್ತನೇ ತರಗತಿಯವರೆಗೆ ಇರದ ಪಬ್ಲಿಕ್ ಪರೀಕ್ಷೆಗಳು ಹತ್ತನೇ ತರಗತಿಯಲ್ಲಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ಮಟ್ಟದ ಪರೀಕ್ಷಾ ಪತ್ರಿಕೆಗಳನ್ನು ನೀಡಿ ಅದರಿಂದ ಪ್ರತಿಯೊಬ್ಬರ ಬುದ್ಧಿಮತ್ತೆಯನ್ನು ಅಳತೆ ಮಾಡಲಾಗುತ್ತಿತ್ತು. ಪಟ್ಟಣದಲ್ಲಿ ಓದಿದವರಿಗೆ ಫಸ್ಟ್ ಕ್ಲಾಸ್ ಬಂದರೆ ಅದೇನೂ ಅಂತಹ ಆಶ್ಚರ್ಯವನ್ನು ತರದಿರಬಹುದು ಆದರೆ ನಮ್ಮ ಹಳ್ಳಿಗಳಲ್ಲಿ ಫಸ್ಟ ಕ್ಲಾಸ್ ಬರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಅತಿ ಕಡಿಮೆ, ಹೆಚ್ಚಿನವರು ಫೇಲ್ ಆಗುತ್ತಿದ್ದರೆ, ಒಂದು ಹೈಸ್ಕೂಲಿಗೆ ಒಬ್ಬರೋ ಇಬ್ಬರೋ ಅರವತ್ತು ಪರ್ಸೆಂಟ್ ಅಂಕಗಳಿಗಿಂತ ಹೆಚ್ಚು ಅಂಕಗಳಿಸಿ ಫಸ್ ಕ್ಲಾಸ್ ವಿದ್ಯಾರ್ಥಿಗಳು ಎನ್ನಿಸಿಕೊಳ್ಳುತ್ತಿದ್ದರು. ಒಮ್ಮೆ ಫೇಲಾದ ವಿದ್ಯಾರ್ಥಿಗಳು 'ಕೆರೆ'ಯ ಅಥವಾ 'ಬಾವಿ'ಯ ಮೊರೆ ಹೋಗುತ್ತಿದ್ದರು...ಅಂದರೆ 'ಹಿರೇಕೆರೆ' (ಹಿರೇಕೇರೂರು) ಹಾಗೂ ಹಂಸಬಾವಿ ಇವೆರಡೂ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿರುವ ಧಾರವಾಡ ಜಿಲ್ಲೆಯಲ್ಲಿದ್ದ ಸೆಂಟರುಗಳು, ಅಲ್ಲಿ ಪರೀಕ್ಷೆಗಳಲ್ಲಿ ಕಾಪಿ ಹೊಡೆಸುವುದು ಎಲ್ಲರಿಗೂ ಗೊತ್ತಿದ್ದರಿಂದ ನಮ್ಮ ಊರಿನಲ್ಲಿ ಯಾರಾದರೂ ಫೇಲ್ ಆದರೆ 'ಅವನಿಗೇನು, ಒಂದೇ ಕೆರೇನೋ ಇಲ್ಲಾ ಬಾವೀನೋ ನೋಡಿಕೊಂಡರಾಯಿತು!' ಎಂದು ತಮಾಷೆ ಮಾಡುತ್ತಿದ್ದುದು ನೆನಪಿಗೆ ಬಂತು. ಆದರೆ ಕಾಪಿ ಹೊಡೆಸುತ್ತಾರೆ ಎಂದು ಹೋಗಿ ಎಷ್ಟೋ ಜನ ಡಿಬಾರ್ ಸ್ಕ್ವಾಡ್‌ಗಳಿಗೆ ಸಿಕ್ಕಿಬಿದ್ದ ಘಟನೆಗಳಿಗೇನೂ ಕಡಿಮೆ ಇಲ್ಲ - ಕಾಪಿ ಹೊಡೆಯುವ ಹಲವಾರು ವಿಧಾನಗಳ ಬಗ್ಗೆ ಬರೆದರೆ ಅದು ದೊಡ್ಡ ಲೇಖನವಾಗುವ ಹೆದರಿಕೆ ಇದೆ, ಜೊತೆಯಲ್ಲಿ ನಾನು ನನ್ನ ಪರೀಕ್ಷೆಗಳನ್ನು ಹೇಗೆ ಪಾಸು ಮಾಡಿರಬಹುದು ಎಂಬ ಅನುಮಾನ ನಿಮ್ಮ ಮನಸ್ಸಿನಲ್ಲಿ ಹುಟ್ಟೋ ಸಾಧ್ಯತೆ ಇರೋದರಿಂದ ಅದರ ಬಗ್ಗೆ ಇನ್ನೊಮ್ಮೆ ಬರೆದರಾಯಿತು!

ಹೀಗೆ ಕನ್ನಡ ಮೀಡಿಯಂ ನಲ್ಲಿ ಫಸ್ಟ್ ಕ್ಲಾಸ್ ಪಾಸಾಗಿ ಮುಂದೆ ಹೋಗ ಬಯಸೋ ವಿದ್ಯಾರ್ಥಿಗಳಿಗೆ ಎರಡು ಮಾರ್ಗಗಳನ್ನು ಸೂಚಿಸಲಾಗುತ್ತಿತ್ತು, ಒಂದೇ ಡಿಪ್ಲೋಮಾ (ಪ್ಲಾಲಿಟೆಕ್ನಿಕ್) ಮಾಡುವುದು ಅಥವಾ ಪಿಯುಸಿ ಸೈನ್ಸ್ ವಿಭಾಗವನ್ನು ಸೇರಿಕೊಳ್ಳುವುದು - ಅದರಲ್ಲೂ ಪಿ.ಸಿ.ಎಮ್.ಬಿ. (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ) ಕಾಂಬಿನೇಶನ್‌ಗೆ ಮುಗಿಬೀಳುತ್ತಿದ್ದವರು ಹೆಚ್ಚು. ಹೆಚ್ಚು ಜನ ಕನ್ನಡ ಮೀಡಿಯಂ ನಿಂದ ಹೋಗಿ ಪ್ರಥಮ ಪಿಯುಸಿಯನ್ನು ಪಾಸು ಮಾಡಲಾಗದೇ ಬಂದು ಮನೆ ಸೇರುತ್ತಿದ್ದ ನಿದರ್ಶನಗಳು ಹಲವಾರು. ಎಷ್ಟೋ ಅಡೆತಡೆಗಳ ನಡುವೆ ಪಿಯುಸಿ ಪಾಸಾದರೂ, ಆಗಷ್ಟೇ ಆರಂಭಿಸಿದ್ದ ಸಿ.ಇ.ಟಿ. (ಕಾಮನ್ ಎಂಟ್ರನ್ಸ್ ಟೆಸ್ಟ್) ಮುಗಿಸಿ ಅದರಲ್ಲಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಲಿಸ್ಟ್‌ನಲ್ಲಿ ಹೆಸರು ಕಾಣಿಸಿಕೊಳ್ಳುವಂತೆ ಮಾಡುವಷ್ಟರಲ್ಲಿ ಹಳ್ಳಿ ಕಡೆಗಳಿಂದ ಬಂದವರಲ್ಲಿ ಮತ್ತೊಂದಿಷ್ಟು ಜನ ಉದುರಿಹೋಗುತ್ತಿದ್ದರು. ಅಕಸ್ಮಾತ್ ಹಾಗೇನಾದರೂ ಉತ್ತಮ ಅಂಕಗಳು ಬಂದೂ ಸರ್ಕಾರಿ ಸೀಟು ಸಿಗದೇ ಹೋದರೆ ಖಾಸಗೀ ಅಥವಾ ಅರೆ ಖಾಸಗೀ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಅಥವಾ ಡೆಂಟಲ್ ಕೋರ್ಸುಗಳನ್ನು ತೆಗೆದುಕೊಂಡು ಅದಕ್ಕೆ ತಕ್ಕ ಶುಲ್ಕ (ಫೀ) ವನ್ನು ಕಟ್ಟಲು ಸಾಮರ್ಥ್ಯ ಇರದವರು ಒಂದಿಷ್ಟು ಜನ ಬಿ.ಎಸ್ಸಿ.,ಗೋ ಮತ್ತೊಂದಕ್ಕೋ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಸರಿಯಾದ ಮಾರ್ಗದರ್ಶನವಿರದೆಯೋ ಅಥವಾ ಬೇಕಾದ ಸೀಟುಗಳು ಸಿಗದೆಯೋ ಯಾವುದೋ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಲು ಇಚ್ಛೆ ಇದ್ದಂತಹವರು ಇನ್ಯಾವುದೋ ವಿಭಾಗದಲ್ಲಿ ಸೇರಿಕೊಂಡಿದ್ದನ್ನು ನೋಡಿದ್ದೇನೆ. ಮೊದಲ ವರ್ಷದ ನಂತರ ಬದಲಾಯಿಸಬಹುದು ಎಂದುಕೊಂಡರೂ ಹಾಗೆ ಬದಲಾಯಿಸುವವರು ಕಡಿಮೆ ಎನ್ನೋದು ಮತ್ತೊಂದು ವಿಷಯ. ಒಬ್ಬ ವಿದ್ಯಾರ್ಥಿ ಕೆಮಿಕಲ್ ಇಂಜಿನಿಯರಿಂಗ್ ಅನ್ನು ಆಸೆ ಪಟ್ಟು ತೆಗೆದುಕೊಂಡು ಓದುವುದಕ್ಕೂ ಇನ್ಯಾವುದೂ ಸಿಗದೇ ಸಿಕ್ಕಿದ್ದನ್ನು ಆರಿಸಿಕೊಂಡರಾಯಿತು ಎಂದು ವಿಷಯ-ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಹೇಳಲು ಈ ಮಾತನ್ನು ಹೇಳಬೇಕಾಯಿತು. ಹೀಗೆ ಪಾಲಿಟೆಕ್ನಿಕ್, ಪಿಯುಸಿ, ಇಂಜಿನಿಯರಿಂಗ್, ಮೆಡಿಕಲ್, ಬಿಎಸ್ಸಿ ಇತರ ಸೈನ್ಸ್ ಆಧಾರಿತ ಕೋರ್ಸುಗಳನ್ನು ಹಿಡಿದು ಹೊರಟವರದು ಒಂದು ಕಥೆಯಾದರೆ, ಕಾಮರ್ಸ್ ತೆಗೆದುಕೊಂಡು ಸಿ.ಎ. ಮಾಡುತ್ತೇವೆ ಎನ್ನುವವರ ಕಥೆಗಳಾಗಲೀ, ಆರ್ಟ್ಸ್ ತೆಗೆದುಕೊಂಡು ಎಮ್.ಎ., ಬಿ.ಎಡ್., ಮಾಡುತ್ತೇನೆ ಎನ್ನುವವರದು ಮತ್ತೊಂದು ಕಥೆ.

ನನ್ನ ಬ್ಯಾಚಿನ ಒಬ್ಬ ಹುಡುಗ ೧೫ ವರ್ಷಕ್ಕೆ ಹತ್ತನೇ ತರಗತಿಯನ್ನು ಮುಗಿಸಿ ೨೧-೨೨ ವರ್ಷಕ್ಕೆ ಪದವಿಯೊಂದನ್ನು ಗಳಿಸುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೊಂದು ಅಂಶಗಳು ಪರಿಣಾಮ ಬೀರುತ್ತವೆ ಎನ್ನುವುದನ್ನು ಹೀಗೆ ವಿವರಿಸಬೇಕಾಯಿತು. ನಮ್ಮ ಆಫೀಸಿನಲ್ಲಿ ಔಟ್‌ಸೋರ್ಸಿಂಗ್ ವಿಷಯಗಳು ಚಲಾವಣೆಗೆ ಬಂದಂತೆಲ್ಲಾ 'ನಿಮ್ಮ ದೇಶದಲ್ಲೇನು ಬೇಕಾದಷ್ಟು ಜನ ಇಂಜಿನಿಯರುಗಳು ಪ್ರತಿವರ್ಷ ಹೊರಗೆ ಬರುತ್ತಾರೆ!' ಎನ್ನುವ ಆಶ್ಚರ್ಯಸೂಚಕ ಮಾತುಗಳಿಗೆ ನಾನು 'ಅಲ್ವಾ?' ಅನ್ನೋ ಥರಾ ಮುಖ ಮಾಡಿ ನಕ್ಕು ಬಿಡುತ್ತೇನೆ. ನನ್ನ ಮನಸ್ಸಿನಲ್ಲಿರೋ ದ್ವಂದ್ವ ಎಂದರೆ ಒಬ್ಬ ಡಾಕ್ಟರ್ ಅನ್ನು ತೆಗೆದುಕೊಂಡರೆ ಆ ವೃತ್ತಿಗೆ ತಕ್ಕ ತರಬೇತಿ, ಅಧ್ಯಯನವನ್ನು ನಿರಂತರವಾಗಿ ಮಾಡಿ ಎಷ್ಟೋ ವರ್ಷಗಳ ನಂತರ ಒಂದು ಕಡೆ ಪ್ರಾಕ್ಟೀಸ್ ಮಾಡುವುದಕ್ಕೆ ಆಸ್ಪದವಿರುತ್ತದೆ. ಆದರೆ ಒಬ್ಬ ಕೆಮಿಕಲ್, ಏರೋನಾಟಿಕಲ್ಸ್, ಮೆಕ್ಯಾನಿಕಲ್, ಇತ್ಯಾದಿ ಇಂಜಿನಿಯರಿಂಗ್ ತರಬೇತಿ/ಅಧ್ಯಯನವನ್ನು ಮುಗಿಸಿದವರನ್ನು ವೈಲ್ಡ್ ಕಾರ್ಡ್ ಆಗಿ ಬಳಸಲಾಗುತ್ತಿದೆ. ಇಲ್ಲಿ ಹೀಗಾದಾಗ ಹಲವಾರು ಅಂಶಗಳನ್ನು ಗಮನಿಸುತ್ತೇನೆ: ಇಂಜಿನಿಯರಿಂಗ್ ಮುಗಿಸಿದ ವ್ಯಕ್ತಿ ನಿರ್ಧಿಷ್ಟ ಗುರಿಯನ್ನೇನೂ ಇಟ್ಟುಕೊಳ್ಳದೆ 'ಯಾವುದೋ ಒಂದು' ಇಂಜಿನಿಯರಿಂಗ್ ಮುಗಿಸಿದನೆಂದೋ, ಅಥವಾ ಆತನ ಆಶೋತ್ತರಗಳನ್ನು ಗಂಭೀರವಾಗಿ ಪರಿಗಣಿಸಲಾಗದ ಪರಿಸ್ಥಿತಿ ನಿರ್ಮಾಣವಾಗುವುದೆಂದೋ, ಅಥವಾ ಪ್ರತಿಯೊಬ್ಬ ಇಂಜಿನಿಯರ್‌ಗೆ ತನ್ನತನ್ನ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕಲು/ಸೃಷ್ಟಿಸಿಕೊಳ್ಳಲಾಗದೆಂದೋ; ಅಥವಾ ನಮ್ಮಲ್ಲಿನ ಮಿನಿಮಮ್ ಅಥವಾ ಬೇಸಿಕ್ ಎಜುಕೇಶನ್ ಮಟ್ಟ ಅಂದರೇ ಇಂಜಿನಿಯರಿಂಗ್ ಆಗಿದೆಯೆಂದೋ; ವೃತ್ತಿಪರ ಕೋರ್ಸುಗಳನ್ನು ಹೆಚ್ಚು ಹೆಚ್ಚು ಆಗಿ ಕಲಿಸೋದರ ಹಿಂದೆ ಬರೀ ಒಬ್ಬ 'ಪದವೀಧರ'ನನ್ನು ಸೃಷ್ಟಿಸುವ ಅನಿವಾರ್ಯತೆ ಇದೆಯೆಂದೋ; ಇವೆಲ್ಲವನ್ನೂ ಮೀರಿ 'ಒಂದು ನಿರ್ಧಿಷ್ಟ ಕ್ಷೇತ್ರದಲ್ಲೇ ನಾನು ಓದಿ, ದುಡಿಯುತ್ತೇನೆ' ಎಂದು ಗುರಿ ಅಥವಾ ಯೋಜನೆ ಇರದವರೇ ಹೆಚ್ಚಿದ್ದಾರೇನೋ ಎಂದು ಬೇಕಾದಷ್ಟು ಆಲೋಚನೆಗಳು ಬರತೊಡಗುತ್ತವೆ.

ನನಗ್ಗೊತ್ತು ಈ ಬರವಣಿಗೆಯಲ್ಲಿ ನನ್ನ ಆಲೋಚನೆಗಳು ಔಟ್ ಡೇಟೆಡ್ ಆಗಿವೆಯೆಂದು ಆದರೆ ನಾನು ಮುಖ್ಯವಾಗಿ ಚರ್ಚಿಸಲು ಹೊರಟ ಕೆಲವು ವಿಚಾರಗಳೆಂದರೆ:
- ಕೇವಲ ಅಂಕಗಳ ಆಧಾರಿತವಾಗಿ ಸೀಟುಗಳ ಹಂಚಿಕೆ
- ಪದೇ-ಪದೇ ಬದಲಾಗುವ ವೈಯುಕ್ತಿಕ ಗುರಿಗಳು ಅಥವಾ ನಿರ್ಧಿಷ್ಟ ಗುರಿ ಅನ್ನೋದಿರದೇ ಕಲೆಕ್ಟಿವ್ ಗುರಿ ಎಲ್ಲರ ಗುರಿಯಾಗಿ ಮಾರ್ಪಡುವುದು
- ಏನನ್ನೋ ಓದಿ, ಇನ್ನೇನನ್ನೋ ವೃತ್ತಿಯನ್ನಾಗಿ ಆರಿಸಿಕೊಳ್ಳುವುದು
- ಹ್ಯುಮಾನಿಟೀಸ್, ಭಾಷೆ, ಮುಂತಾದ ವಿಷಯಗಳನ್ನು ಆಯ್ಕೆಯಿಂದ ಆರಿಸಿಕೊಂಡವರಿರದೇ ಪರಿಸ್ಥಿತಿಯ ಒತ್ತಡ ಅಥವಾ ಕೈಗೊಂಬೆಯಾಗಿ ಆಯ್ದುಕೊಳ್ಳುವುದು
- ಸರಿಯಾದ ಸಮಯಕ್ಕೆ ಸಿಗದ ಮಾರ್ಗದರ್ಶನ

ಹೀಗೆ ಹಲವಾರು ವಿಷಯಗಳು ಕಣ್ಣ ಮುಂದೆ ಬಂದು ಹೋದವು. ಇವುಗಳನ್ನೆಲ್ಲ ಹೇಗೆ ನಿರೂಪಿಸಿದ್ದೇನೋ ಗೊತ್ತಿಲ್ಲ, ಒಟ್ಟಿನಲ್ಲಿ ಸ್ಥೂಲವಾಗಿ ನನ್ನ ಮನದ ವ್ಯಾಪಾರ ನಿಮಗೆ ಅರ್ಥವಾದರೆ ಸಾಕು!

Tuesday, September 12, 2006

ಹೀಗೊಬ್ಬ ಧನಂಜಯಣ್ಣ

ಸಾಗರ ಪಟ್ಣಾ ಬಿಟ್ಟು ಕಾರ್ಗಲ್-ಜೋಗಾದ್ ಕಡೆ ಹೋಗೋ ಬಿಎಚ್ ರಸ್ತೆ ಹಿಡಿದು ಹೊರಟರೆ, ಎಲ್.ಬಿ.ಕಾಲೇಜು, ಕುಗ್ವೆ, ತಾಳಗುಪ್ಪಾ, ಹಿರೇಮನೆ ಮುಂತಾದ ಸಣ್ಣ-ಪುಟ್ಟ ಹಳ್ಳಿಗಳನ್ನೆಲ್ಲ ದಾಟಿ ರಸ್ತೆಗಳ ಅಂಕು-ಡೊಂಕು ಹೆಚ್ಚುತ್ತಾ ಕೆಲವೊಮ್ಮೆ ನಾವು ಬಂದ ದಾರಿಯನ್ನು ತೋರಿಸುವಷ್ಟರ ಮಟ್ಟಿಗೆ ತಿರುವುಗಳು ಬರಬೇಕು ಎನ್ನುವಷ್ಟರಲ್ಲಿ ಇಡುವಾಣಿ ಎಂಬ ಪುಟ್ಟ ಗ್ರಾಮ ಇರುವ ಕುರುಹಿನಂತೆ ರಸ್ತೆಯ ಪಕ್ಕದಲ್ಲೊಂದು ತಂಗುದಾಣ, ಅದರ ಇಕ್ಕೆಲಗಳಲ್ಲಿ ಕೆಲವು ಮನೆಗಳು ಕಾಣಸಿಗುತ್ತವೆ. ಇಲ್ಲಿಂದ ಹೆಚ್ಚೇನಿಲ್ಲ, ಕೆಲವೇ ಕೆಲವು ಮೈಲಿಗಳ ಪ್ರಯಾಣದಲ್ಲೇ ವಿಶ್ವಪ್ರಸಿದ್ಧ ಜೋಗ ಜಲಪಾತ ಇರೋದು. ಆದರೆ ನಾನು ಬಹಳಷ್ಟು ಬಾರಿ ಇಡುವಾಣಿಗೆ ಹೋಗಿ ಅಲ್ಲೇ ಎಷ್ಟೋ ದಿನಗಳ ವಾಸ್ತವ್ಯವನ್ನು ಹೂಡಿ ಇದ್ದಾಗ ನನ್ನ ಕೈಗೆ ನಿಲುಕುವಷ್ಟು ತತ್ವವನ್ನು ಹಂಚಿ ನನ್ನ ಸಂಸ್ಕಾರಗಳನ್ನು ತಿದ್ದುತ್ತಿದ್ದ ನನ್ನ ಸ್ನೇಹಿತ ಸದಾನಂದ ಹಾಗೂ ಅವನ ಸ್ನೇಹಿತ ಧನಂಜಯ ಹೀಗೇ ಈ ದಿನ ಒಡನೆಯೇ ನೆನಪಾದರು. ಹೌದಲ್ಲ, ನಾನು ಇಷ್ಟು ದಿನ ಬರೆದರೂ ಒಮ್ಮೆಯೂ ಈ ಪುಣ್ಯಾತ್ಮರನ್ನು ನೆನಪಿಸಿಕೊಳ್ಳದ ನನ್ನ ಮರೆವಿನ ಮೇಲೆ ನನಗೆ ಅಸಮಧಾನವಾದರೂ ಸದ್ಯ ಈ ದಿನವಾದರೂ ನೆನಪಿಸಿಕೊಂಡೆನಲ್ಲ ಅನ್ನೋ ಸಮಾಧಾನ ಗೆದ್ದಂತೆನಿಸಿತು. ಪ್ರತೀಬಾರಿ ಅವರನ್ನು ಭೇಟಿಯಾಗಿ ಬಂದಾಗಲೂ ಒಂದು ರೀತಿ ಧ್ಯಾನದ ಶಾಲೆಗೆ ಹೋಗಿ ಮನಸ್ಸಿನ ಮಡಿವಂತಿಕೆಯನ್ನು ರಿಪ್ರೆಶ್ ಮಾಡಿಕೊಂಡ ಹಾಗೆ ಅನ್ನಿಸುತ್ತಿತ್ತು.

ಸದಾನಂದ ನನ್ನ ಎರಡನೇ ಅಣ್ಣನ ಸಹಪಾಠಿ, ಆದರೆ ನನ್ನ ಅವನ ಸ್ನೇಹ ಬಹಳ ವಿಶೇಷವಾದದ್ದು. ಹೀಗೆ ನಾನು ಇಡುವಾಣಿಗೆ ಹೋಗಿ ಇರುತ್ತಿದ್ದುದು ಸದಾನಂದನ ಮನೆಯಲ್ಲೇ. ಅವರದೂ ಮೇಷ್ಟ್ರರ ಕುಟುಂಬವಾದ್ದರಿಂದ ನನಗೆ ಹೊಂದಿಕೊಳ್ಳಲು ಯಾವ ಹಿಂಜರಿಕೆಯೂ ಇರುತ್ತಿರಲಿಲ್ಲ. ಸದಾನಂದನದು ತಾಳಮದ್ದಳೆ, ಪುರಾಣ ಶಾಸ್ತ್ರದಲ್ಲಿ ಎತ್ತಿದ ಕೈ, ಮಹಾವಾದಿ, ಇಂಗ್ಲೀಷ್ ಅಷ್ಟೊಂದು ಸರಿಯಾಗಿ ಬರುತ್ತಿರಲಿಲ್ಲ, ಆದರೆ ಕನ್ನಡ ಸಂಸ್ಕೃತದಲ್ಲಿ ಬಹಳ ಮೆರೆದವನು. ಅವನ ಮನೆಯಿಂದ ಒಂದು ಗಾವುದ ದೂರದ ತೋಟಗಳ ಮಧ್ಯೆ ತೋಟವನ್ನು ನೋಡಿಕೊಂಡು ಆರಾಮವಾಗಿ ಇದ್ದವನು ಧನಂಜಯ, ಇಡುವಾಣಿಯಲ್ಲಿ ದೊಡ್ಡವರು-ಚಿಕ್ಕವರಾದಿಯಾಗಿ ಎಲ್ಲರಿಗೂ ಆತ ಧನಂಜಯಣ್ಣ. ಆದರೆ ಧನಂಜಯನ ಕಥೆ, ಕಥೆಯಲ್ಲ ನಿಜಜೀವನ ಬಹಳ ಸ್ವಾರಸ್ಯಕರವಾದುದು.

ಹವ್ಯಕರ ಸಂಪ್ರದಾಯದಲ್ಲಿ 'ನಮ್ಮನೇಗೂ ಬನ್ನಿ' ಎಂದು ಪರಿಚಯವಾದವರನ್ನು ಕರೆಯೋ ವಿನಯವಿದೆ, ಈ ಮಾತಿನಂತೆಯೇ ನಾನು ಇಡುವಾಣಿಯಲ್ಲಿ ಇದ್ದಷ್ಟು ದಿನಗಳಲ್ಲಿ ಬೇಕಾದಷ್ಟು ಜನರ ಮನೆಗೆ ಹೋಗಿದ್ದೇನೆ. ಸದಾನಂದ ಧನಂಜಯನ ಪರಿಚಯ ಮಾಡಿಕೊಡುವಾಗಲೇ ಹೇಳಿದ್ದ - ಬಹಳ ವಿಶೇಷವಾದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಡುತ್ತೇನೆಂದು, ಅಂತೆಯೇ ಅದು ನಿಜವೂ ಕೂಡಾ. ಧನಂಜಯ ತೋಟವನ್ನು ನೋಡಿಕೊಂಡು ಬದುಕನ್ನು ಕಳೆಯುವ ಬಗೆಯನ್ನು ಆರಿಸಿಕೊಳ್ಳುವ ಮೊದಲು ಬೆಂಗಳೂರಿನಲ್ಲಿದ್ದವನು. ಕನ್ನಡ, ಇಂಗ್ಲೀಷ್, ಹಾಗೂ ಸಂಸ್ಕೃತದಲ್ಲಿ ಬಹಳ ಚೆನ್ನಾಗಿ ಓದಿ-ಬರೆದು-ಮಾತನಾಡಬಲ್ಲವನು, ತತ್ವಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಪುರಾಣವನ್ನು ಅಸ್ಥೆಯಿಂದ ಅಭ್ಯಾಸಮಾಡಿದವನು. ಅವನ ಪಾಂಡಿತ್ಯಕ್ಕೆ ಎಂತಹವರೂ ಬೆರಗಾಗಬೇಕು, ಅವನ ಮುಖಾಂತರವೇ ನಾನು ಎಡ್ಗರ್ ಕೇಸಿಯ ಕರ್ಮ ಸಿದ್ಧಾಂತ, ಭಾಗವತ, ಅರ್ಥಶಾಸ್ತ್ರ ಮುಂತಾದವುಗಳನ್ನು ತಿಳಿದುಕೊಂಡಿದ್ದು. ಒಂದು ಸಣ್ಣ ವಿಷಯದ ಬಗ್ಗೆ ವೈಜ್ಞಾನಿಕವಾಗಿ ವಿವರಿಸುವುದರ ಜೊತೆಗೆ ಟಿವಿಯಲ್ಲೇನಾದರೂ ರಾಜ್‌ಕುಮಾರ್ ನಟಿಸಿದ 'ಎರಡು ಕನಸು' ಸಿನಿಮಾ ಬರುತ್ತಿದ್ದರೆ ಅದರಲ್ಲಿ ಕಲ್ಪನಾಳ ಪಾತ್ರಕ್ಕೆ ವಿಶೇಷವಾದ ವಿವರಣೆಗಳನ್ನು ಕೊಡುವವನು, ಹೀಗೆ ಬೇಕಾದಷ್ಟು ವಿಷಯಗಳ ಆಳವನ್ನು ಅರಿಯುವಲ್ಲಿ ನಾನು ಅವನೊಂದಿನ ಒಡನಾಟವನ್ನು ಸಂಭ್ರಮಿಸಿದ್ದಿದೆ. ಅವನ ಇಂಗ್ಲೀಷ್ ಓದು ಹಾಗೂ ಬರಹದ ಆಳವನ್ನು ಕಂಡರೆ ಎಂಥವರೂ ಮೂಗಿನ ಮೇಲೆ ಬೆರಳಿಡುವಂತಿತ್ತು.

ಒಂದು ದಿನ ಅವನೇ ಹೇಳಿದ ಹಾಗೆ 'ನಿಮಗ್ಗೊತ್ತಾ, ನಾನು ಒಂದ್ ಕಾಲದಲ್ಲಿ ಈ ಆಕ್ಸ್‌ಫರ್ಡ್ ಡಿಕ್ಷನರಿಯನ್ನು ಪೂರ್ತಿ ಕಂಠಪಾಟ ಮಾಡಿದ್ದೆ, ಅದರಿಂದ ಇಂಗ್ಲೀಷ್ ಚೆನ್ನಾಗಿಬರುತ್ತೆ ಅನ್ನೋ ಒಂದೇ ಕಾರಣದಿಂದ!' ಎಂದಾಗ ನನಗೆ ನಂಬಲಾಗಲಿಲ್ಲ, ಆತ ನಿಜವಾಗಿಯೂ ಡಿಕ್ಷನರಿಯ ಯಾವುದೇ ಪದವನ್ನು ಕೇಳಿದರೂ ಅರ್ಥವನ್ನು ಹೇಳಬಲ್ಲವನಾಗಿದ್ದನಂತೆ. ಅಷ್ಟೇ ಅಲ್ಲ, ಯಶವಂತ ಚಿತ್ತಾಲರ 'ಮೂರು ದಾರಿಗಳು' ಕಾದಂಬರಿಯನ್ನು ಆದರಿಸಿ ಮಾಡಿದ ಚಲನ ಚಿತ್ರದಲ್ಲಿ ಧನಂಜಯನೇ ಹೀರೋ ಕೂಡಾ. ಹೀಗೆ ಪಟ್ಟಣದ ಸಹಪಾಸ, ಚಿತ್ರಲೋಕದ ಬೆರಗು-ಮೆರುಗಳನ್ನು ಕಂಡೂ ಹಳ್ಳಿಯ ಹಾದಿ ಹಿಡಿದು ತೋಟವನ್ನು ನೋಡಿಕೊಂಡು ತಾನಾಯಿತು ತನ್ನ ಓದಾಯಿತು ಎಂದು ತತ್ವಶಾಸ್ತ್ರವನ್ನು ಮುಖ್ಯವಾಗಿ ಆಧರಿಸಿದ ಎಲ್ಲ ಹೊತ್ತಿಗೆಗಳನ್ನೂ ಕರತಾಮಲಕ ಮಾಡಿಕೊಳ್ಳುತ್ತಿದ್ದವನು. ಮನೆಗೆ ಯಾರೇ ಬಂದರೂ ಅವರನ್ನು ಫಿಲಾಸಫಿಯ ಸೌಂದರ್ಯವನ್ನು ಆಸ್ವಾದಿಸುವಂತೆ ಮಾಡುವ ಮಾತನಾಡುವ ಕಲೆ ಧನಂಜಯನದು, ಆದರೆ ಇಡುವಾಣಿಯಲ್ಲಿ ಕೆಲವರಿಗೆ ಅದು ಅತಿಯಾಗಿ ಕಂಡು ಬೇರೇನೋ ರಾದ್ಧಾಂತಗಳನ್ನು, ಊಹೆಗಳನ್ನೂ ಹುಟ್ಟಿಸಿದ್ದಿದೆ.

ಧನಂಜಯ ಒಂದು ಸಣ್ಣ ಪುಸ್ತಕವನ್ನು ಓದೋದಕ್ಕೂ ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಿದ್ದ, ಅವನು ಸಾಲಿನಿಂದ ಸಾಲಿಗೆ, ಪುಟಗಳಿಂದ ಪುಟಕ್ಕೆ ಓದಿ, ಅದರ ಕುರಿತು ಚಿಂತನವನ್ನು ನಡೆಸುವುದೋ ಅಥವಾ ಆ ಪುಸ್ತಕದಲ್ಲಿ ಉಲ್ಲೇಖಿಸಿದ ಪರಾಮರ್ಶೆಗಳನ್ನು ಹುಡುಕಿಕೊಂಡು ಹೋಗುವುದೋ, ಅಥವಾ ಒಟ್ಟಿಗೇ ಒಂದಿಷ್ಟು ವಿಷಯಗಳನ್ನು ಕಲೆಹಾಕಿಕೊಂಡು ಮನನ ಮಾಡಿಕೊಳ್ಳುವುದೋ ನಿರಂತರವಾಗಿ ನಡೆದೇ ಇರುತ್ತಿತ್ತು. ಅವನು ನನಗೆ ಓದಲು ಎಷ್ಟೋ ಪುಸ್ತಕಗಳನ್ನು ಕೊಟ್ಟು ನನ್ನಲ್ಲಿ ಭಾರತೀಯ ತತ್ವಶಾಸ್ತ್ರದ ಬಗ್ಗೆ ಹಾಗೂ ಪಾಶ್ಚಾತ್ಯ ತಿಳುವಳಿಕೆಯ ಬಗ್ಗೆ ಒಲವನ್ನು ಹುಟ್ಟಿಸಿದ ಕೀರ್ತಿ ಸದಾನಂದ ಹಾಗೂ ಧನಂಜಯಣ್ಣನಿಗೆ ಸೇರಬೇಕು. ನಾನು ರಜಾ ದಿನಗಳಲ್ಲಿ ಹೋದಾಗಲೆಲ್ಲ ನನ್ನನ್ನು ತಮ್ಮ ಮನೆಯವನಂತೆಯೇ ಸಾಕಿ ಸಲಹಿ ಜೊತೆಗೆ ನನಗೆ ಬೇಕಾದ ಎಲ್ಲ 'ಆಹಾರ'ಗಳನ್ನೂ ಒದಗಿಸಿ ನನ್ನಲ್ಲಿ ಸ್ವಲ್ಪವಾದರೂ ಓದುವ ತಿಳುವಳಿಕೆಯನ್ನು ಮೂಡಿಸಿ, ಇಡುವಾಣಿಯ ಡೊಂಕಿನ ರಸ್ತೆಗಳ ನಡುವೆ ಇರುವ ಹಳ್ಳಿಯ ಮನೆಗಳಲ್ಲಿ ಉದಾತ್ತ ಚಿಂತನೆಯ ಕಿಡಿಯನ್ನು ಹತ್ತಿಸಿದವರಿಬ್ಬರನ್ನು ಇಂದು ಎಷ್ಟು ನೆನೆದರೂ ಕಡಿಮೆಯೇ. 'ನೀವಿಲ್ಲಿ ಎಷ್ಟು ದಿನವಾದರೂ ಬೇಕಾದರೂ ಇರಿ' ಎಂದು ತೆರೆದ ಆಮಂತ್ರಣ ಕೊಟ್ಟವರನ್ನು ನಾನು ನೋಡದೇ ಅದೆಷ್ಟೋ ವರ್ಷಗಳಾದವು... ಇಲ್ಯಾರಾದರೂ ನನ್ನ ನಡುವೆ ಧನಂಜಯ ನಂತಹವರು ಇರಬಾರದಿತ್ತೇ ಎಂದು ಈಗ ಅನ್ನಿಸುತ್ತೆ. ಅಲ್ಲಿ ಅಂತಹ ಉತ್ತಮ ವ್ಯಾಖ್ಯಾನಗಳನ್ನು ಕೇಳಿದ ನನಗೆ ಇದುವರೆಗೂ ಯಾರೂ ತತ್ವಶಾಸ್ತ್ರದ ಮೇಲೆ ಅಷ್ಟೊಂದು ಅಥಾರಿಟಿಯಿಂದ ಮಾತನಾಡಿದವರು ಕಂಡಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ.

ಧನಂಜಯನ ಇನ್ನೊಂದು ಮುಖವೆಂದರೆ ಸಂಗೀತ ಪ್ರೇಮ - ಹಿಂದೂಸ್ತಾನೀ ಹಾಗೂ ಕರ್ನಾಟಕ ಸಂಗೀತ ಇವೆರಡರಲ್ಲೂ ಎತ್ತಿದ ಕೈ. ರೆಡಿಯೋದಲ್ಲಿ ಯಾವುದೇ ಹಾಡು ಬರಲಿ, ಇದು ಇಂತಹ ರಾಗ, ದಕ್ಷಿಣಾದಿಯಲ್ಲಿ ಇದನ್ನು ಈ ರಾಗದಿಂದಲು ಉತ್ತರಾದಿಯಲ್ಲಿ ಇದನ್ನು ಈ ರಾಗದಿಂದಲೂ ಹಾಡುತ್ತಾರೆ ಎಂದು ತಟ್ಟನೆ ಹೇಳಿಬಿಡೋನು. ಬರೀ ರಾಗದ ಹೆಸರಿನ ಪರಿಚಯವಷ್ಟೇ ಅಲ್ಲ, ಅದರ ಅರೋಹಣ-ಅವರೋಹಣಗಳನ್ನು ಹಾಡಿ ತೋರಿಸೋನು. ರಾಗದ ಹಿನ್ನೆಲೆಯನ್ನು ವಿವರಿಸೋನು. ರಾಗವನ್ನು ಅಭ್ಯಾಸ ಮಾಡಿದವರನ್ನು ನಾನು ಬೇಕಾದಷ್ಟು ಜನರನ್ನು ನೋಡಿದ್ದೇನೆ, ಆದರೆ ಧನಂಜಯನ ಸಂಗೀತ ಜ್ಞಾನದ ಆಳವನ್ನು ನಮ್ಮವರ ನಡುವೆ ಬದುಕುವವರಲ್ಲಿ ಬೇರೆಲ್ಲೂ ನೋಡಿಲ್ಲ. ಹೀಗೆ ಧನಂಜಯ ನನ್ನ ಕಾಲೇಜಿನ ದಿನಗಳಲ್ಲಿ ಸಾಕಷ್ಟು ಓದುವುದರ ಬಗ್ಗೆ, ಬಹಳಷ್ಟು ವಿಷಯಗಳ ಬಗ್ಗೆ ಕುತೂಹಲವನ್ನು ಹುಟ್ಟಿಸಿದ್ದ. ನಾನು ಚಾರ್ಜ್ ಕಳೆದುಕೊಂಡ ಬ್ಯಾಟರಿ ರೀ ಚಾರ್ಜ್ ಆಗಲು ಅದರ ಬೇಸ್ ಅನ್ನು ಹುಡುಕಿಕೊಂಡು ಬರುವಂತೆ ಸಾಗರದ ಕಾಲೇಜಿನಲ್ಲಿ ಓದುವಷ್ಟು ದಿನವೂ ಸಮಯ ಸಿಕ್ಕಾಗಲೆಲ್ಲ ಇಡುವಾಣಿಗೆ ಭೇಟಿಕೊಡುತ್ತಿದ್ದೆ. ಮುಂದೆ ನಾನು ಅಲ್ಲಿ-ಇಲ್ಲಿ ಅಲೆದಾಡಿ ಇಲ್ಲಿಗೆ ಬಂದರೂ ಧನಂಜಯನ ಹಾಗೆ ಸದಾನಂದನ ಹಾಗೆ ಮತ್ಯಾರೂ ಸಿಕ್ಕಿಲ್ಲ.

ಈ ಬಾರಿಯಾದರೂ ಊರಿಗೆ ಹೋದಾಗ ಧನಂಜಯ-ಸದಾನಂದರ ಭೇಟಿಯಾಗಬೇಕು ಅನ್ನೋ ಆಸೆ ಬರಿ ಯೋಜನೆಯಲ್ಲೇ ಉಳಿದುಹೋಗದಿರಲಿ ಅನ್ನೋದು ಆ ದೊಡ್ಡ ಶಕ್ತಿಗೆ ಈ ತಂಪಿನ ಹೊತ್ತಿನಲ್ಲಿ ನಾನಿಡುತ್ತಿರುವ ಮೊರೆ!

Sunday, September 10, 2006

ಕಟ್ಟಡಗಳು ಕುಸಿದು ಇಂದಿಗೆ ಐದು ವರ್ಷಗಳು ಸಂದವು

ಸೆಪ್ಟೆಂಬರ್ ೧೧, ೨೦೦೧ ನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡವರಿಗೆ ಅಬ್ಬಾ ಐದು ವರ್ಷಗಳು ಕಳೆದೇ ಹೋಯಿತೇ ಎಂದೆನಿಸಿರಲಿಕ್ಕೂ ಸಾಕು. ಈ ಐದು ವರ್ಷಗಳಲ್ಲಿ ಏನೇನೆಲ್ಲಾ ಆಗಿದೆ, ಎಷ್ಟೋ ಜನರ ಮನಸ್ಥಿತಿಗಳಲ್ಲಿ ಭಯೋತ್ಪಾದನೆ, ಯುದ್ಧದ ಭೀತಿ ಇನ್ನೂ ಹಸಿಹಸಿಯಾಗಿಯೇ ಇರುವಂತೆ, ಎಷ್ಟೋ ದೇಶಗಳ ವಿದೇಶಾಂಗ ಇಲಾಖೆಗಳು ಬಹಳಷ್ಟು ದುಡಿದು ಬದಲಾದ ಫಾರಿನ್ ಪಾಲಿಸಿಗಳನ್ನು ಮನದಟ್ಟು ಮಾಡಿಕೊಂಡಿವೆ.

೨೦೦೧ ರ ಸೆಪ್ಟೆಂಬರ್ ಹನ್ನೊಂದೂ ಒಂದು ಶುಭ್ರವಾದ ದಿನವಾಗಿತ್ತು. ಸಾಮಾನ್ಯವಾಗಿ ಈ ದಿನಗಳಲ್ಲಿ ಫಾಲ್ ಅನ್ನು ನೆನಪಿಸುವ ತಂಪು ಹವೆ ಬೆಳಗಿನ ಹೊತ್ತು ಇದ್ದರೂ ಅಂದು ಪಿಕ್ಚರ್ ಫರ್‌ಫೆಕ್ಟ್ ದಿನವಾಗಿತ್ತು, ಶುಭ್ರವಾದ ಬೆಳಗಿನಲ್ಲಿ ಎಷ್ಟೋ ಜನ ಅವರವರ ಕೆಲಸವನ್ನು ಅದಾಗಲೇ ಶುರು ಹಚ್ಚಿಕೊಂಡು ತಾವು ಹೀರಿದ ಕಾಫಿ ಅಥವಾ ತಾವು ಓದಿದ ನ್ಯೂಸ್ ಪೇಪರಿನ ಗುಂಗಿನಲ್ಲಿದ್ದರು. ಪುಣ್ಯಕ್ಕೆ ನಾನಂತೂ ಅಂದು ನ್ಯೂ ಯಾರ್ಕ್ ನಲ್ಲಿರಲಿಲ್ಲ, ಆಗ ನಾನು ಪೆಂಟಗನ್‌ಗೆ ಒಂದೈದು ಮೈಲು ದೂರದಲ್ಲಿರುವ ಆರ್ಲಿಂಗ್‌ಟನ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲ ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ್ದನ್ನು ಏನೋ ಅಫಘಾತ ಸಂಭವಿಸಿದೆ ಎಂದುಕೊಂಡು ಕೆಲಸವನ್ನು ಮುಂದುವರಿಸಿಕೊಂಡಿದ್ದವರಲ್ಲಿ ನಾನೂ ಒಬ್ಬ, ಆದರೆ ಕೆಲವೇ ನಿಮಿಷಗಳಲ್ಲಿ ನಾವಿದ್ದ ಹತ್ತನೇ ಮಹಡಿಯಿಂದ ಕಾಣಿಸುವಂತೆ ಯಾವಾಗ ಪೆಂಟಗನ್‌ನಿಂದ ದೊಡ್ಡದಾಗಿ ಹೊಗೆ ಕಾಣಿಸಿಕೊಂಡಿತೋ ಆಗ ಎಲ್ಲರ ಮನದಲ್ಲೂ ಒಂದು ರೀತಿ ಭೀತಿ ಸುಳಿದಾಡಿತ್ತು. ಇದ್ದ ಕೆಲಸಗಳನ್ನು ಇದ್ದಲ್ಲೇ ಬಿಟ್ಟು ಆಫೀಸ್ ಗರಾಜಿನಿಂದ ಕಾರ್ ತೆಗೆದು ಮನೆಯ ಕಡೆ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ವಾಷಿಂಗ್‍ಟನ್ ಬುಲವರ್ಡನ್ನು ಮುಚ್ಚಿ ಬಿಟ್ಟರು, ಬೇರೆ ಗತಿಯಿಲ್ಲದೇ ವಿಲ್ಸನ್ ಬುಲವರ್ಡ್ ಹತ್ತಿ ಕೇವಲ ಏಳು ಮೈಲು ದೂರದ ಮನೆಯನ್ನು ಸೇರುವಾಗ ಸುಮಾರು ನಾಲ್ಕು ಘಂಟೆಗಳಿಗಿಂತ ಹೆಚ್ಚು ಬೇಕಾಗಿತ್ತು. ಅಷ್ಟೊತ್ತಿಗಾಗಲೇ ಎಲ್ಲ ಕಡೆ ಅಲ್ಲೋಲ ಕಲ್ಲೋಲ ಆರಂಭವಾಗಿತ್ತು. ನಾನು ಇನ್ನೂ ಆಫೀಸಿನಿಂದ ಮನೆಗೆ ಬಂದಿದ್ದೇನೆಯೋ ಇಲ್ಲವೋ ಎಂದು ಒಂದಿಷ್ಟು ಸ್ನೇಹಿತರು ಮನೆಗೆ ಫೋನ್ ಮಾಡಿದ್ದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚಾಗಿತ್ತು. ಮನೆಗೆ ಬಂದು ಇನ್ನೇನು ಟಿವಿಗೆ ಮುಖ ಹಚ್ಚಿ ಏನೇನಾಗಿದೆ ಎಂದು ನೋಡುವಷ್ಟರಲ್ಲಿ ಭಾರತದಿಂದ ಕರೆಗಳು ಬರತೊಡಗಿದವು. ಎಲ್ಲರ ಧ್ವನಿಯಲ್ಲೂ ಆತಂಕ, ಎಲ್ಲರಿಗೂ ನಾವು ಸುರಕ್ಷಿತರಾಗಿದ್ದೇವೆ ಎಂದು ಸಮಾಧಾನ ಮಾಡುವುದೇ ನಮಗೊಂದು ಕೆಲಸವಾಗಿತ್ತು.

ಕೆಲವೇ ನಿಮಿಷಗಳಲ್ಲಿ ಆಗಬಹುದಾದುದೆಲ್ಲವೂ ಆಗಿ ಹೋಗಿತ್ತು. ಸ್ಥಳೀಯ ರಕ್ಷಣಾ ಪಡೆಯವರು ಎಚ್ಚೆತ್ತುಕೊಳ್ಳುವುದರೊಳಗೆ, ಹಾರಾಡುವ ಎಲ್ಲ ವಿಮಾನಗಳನ್ನು ಅನಿರ್ಧಿಷ್ಟ ಕಾಲ ನಿಲ್ಲಿಸಿ ತನಿಖೆ ಮಾಡುವುದರೊಳಗೆ ಶತ್ರು ಪಾಳ್ಯದಲ್ಲಿ ಗೆಲುವು ಅವರದು ಎನ್ನುವ ಸಂಭ್ರಮ ಹುಟ್ಟತೊಡಗಿತ್ತು. ಮುಂದಾಗುವ ಬದಲಾವಣೆಗಳಿಗೆಲ್ಲ ಇದೊಂದು ಬೆಂಕಿಯ ಕಿಡಿಯಾಗಿ ಅವತರಿಸುವುದನ್ನು ಹೆಚ್ಚು ಜನರು ಅಂದು ಊಹಿಸಿಕೊಂಡಿರಲಿಕ್ಕಿಲ್ಲ.

ಈ ದುರ್ಘಟನೆಯ ಹಿನ್ನೆಲೆಯಲ್ಲಿ ಅಮೇರಿಕದ ಬದಲಾದ ವಿದೇಶಾಂಗ ನೀತಿ ಹಾಗೂ ಹೊಸದಾಗಿ ಸೃಷ್ಟಿಸಿದ ಹಲವಾರು ಅಡೆತಡೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೋ ಜನರಿಗೆ ಸಾಕಷ್ಟು ಅನಾನುಕೂಲವಾಗಿದ್ದರೂ ನನ್ನಂತಹ ಕೆಲಸಗಾರರಿಗೆ ಅದರಲ್ಲೂ ವೀಸಾದಲ್ಲಿರುವವರಿಗೆ ಬೇಕಾದಷ್ಟು ತೊಂದರೆಗಳಾಗಿವೆ. ಇಲ್ಲಿನ ಲೀಡರುಗಳು ಪದೇಪದೇ ಹೇಳುವ " “the world is much better off today...” ಎನ್ನುವ ಮಾತಂತೂ ನನ್ನನ್ನು ಬಹಳವಾಗಿ ಬಾಧಿಸುತ್ತದೆ. ಅಮೇರಿಕದ ಮೇಲೆ ಧಾಳಿ ನಡೆಸಿದ ಕಾರಣ ಪುರುಷ ಇನ್ನೂ ಇವರ ಕೈಗೆ ಸಿಕ್ಕಿಲ್ಲ, ಇರಾಕಿನ ಜವಾಬ್ದಾರಿ ಅಮೇರಿಕದ ಹೆಗಲಿಗೆ ಭಾರವಾಗಿ ಕಂಡುಬರುತ್ತಿದೆ, ಇಲ್ಲಿನ ಮಾಧ್ಯಮಗಳು ನಮ್ಮೆಲ್ಲರನ್ನೂ ಏನೇನೋ ಕಥೆಗಳನ್ನು ಹೇಳಿ ನಂಬಿಸಿಕೊಳ್ಳುವಂತೆ ತೋರುತ್ತದೆ. ನಮ್ಮ ನೆರೆಹೊರೆ ಧರ್ಮ ಹಾಗೂ ಉಳ್ಳವರ ನೆರಳಿನಲ್ಲಿ ಹೊಸ ರೀತಿಯಲ್ಲಿ ಇಬ್ಬಾಗವಾದಂತೆ ತೋರುತ್ತದೆ.

೨೦೦೪ ರಲ್ಲಿ ಬುಷ್ ಮತ್ತೊಮ್ಮೆ ಅಧಿಕಾರಕ್ಕೆ ಬಂದಂತೆ, ಇರಾಕ್ ಧಾಳಿಯನ್ನು ಸಾಧಿಸಿಕೊಂಡ ಹಲವಾರು ಧುರೀಣರು ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಇವರು ತಮ್ಮ ತಮ್ಮ ಜನಗಳಿಗೆಲ್ಲ ಮೋಡಿ ಮಾಡಿದ್ದಾರೋ ಅಥವಾ ಇವರನ್ನು ಎದುರಿಸಿ ಗೆಲ್ಲಬಲ್ಲ ಸಾಮರ್ಥ್ಯದವರು ಇಲ್ಲವೇ ಎನ್ನುವ ಅನುಮಾನ ಒಮ್ಮೆ ಮೂಡುತ್ತದೆ. ಅಮೇರಿಕದವರು ತಮ್ಮ ತಪ್ಪುಗಳನ್ನು ಇಂಟಲಿಜೆನ್ಸ್ ತಪ್ಪು ಎಂದು ದೂರಿ ಜಾರ್ಜ್ ಟೆನೆಟ್‌ಗೆ ಗೂಬೆ ಕೂರಿಸಲು ನೋಡುತ್ತಾರೆ, ಯುದ್ಧ ಖೈದಿಗಳಿಗೆ ಕ್ರೂರ ಶಿಕ್ಷೆ ವಿಧಿಸಿದ ಘಟನೆಯನ್ನು ಕುರಿತು ರಮ್ಸ್‌ಫೆಲ್ಡ್‌ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ಕೊಡುವುದು ಕಷ್ಟವಾಗುತ್ತದೆ, ಹಾಗೆ ಕೊಟ್ಟಿದ್ದರೂ ಅದನ್ನು ಸ್ವೀಕರಿಸಲು ಆಡಳಿತದವರಿಗೆ ಸರಿ ಎನ್ನಿಸುವುದಿಲ್ಲ. ೨೦೦೪ರಲ್ಲಿ ಬುಷ್ ವಿರುದ್ಧದ ಅಭ್ಯರ್ಥಿ ಜಾನ್ ಕೆರ್ರಿಗೆ ಜನಗಳ ಕಣ್ಣನ್ನು ನೋಡಿ ಗೇ ಮದುವೆಗಳ ಬಗ್ಗೆ ಡಿಸೈಸಿವ್ ಆಗಿ ಹೇಳಲು ಬರದೇ ದೊಡ್ಡ ವಾಕ್ಯಗಳಲ್ಲಿ ತಿಣುಕಾಡುವುದನ್ನು ನೋಡಿ ಇವನು ಗೆಲ್ಲೋದಿಲ್ಲ ಅನ್ನೋದು ಎಂತಹವರಿಗೂ ಗ್ಯಾರಂಟಿ ಆಗುತ್ತದೆ, ಅದೇ ಪ್ರಶ್ನೆಗೆ ಬುಷ್ ಅಂತಹವರು ಪಟ್ಟನೇ ಉತ್ತರವನ್ನು ಕೊಡುವುದನ್ನು ನೋಡಿ ಆಶ್ಚರ್ಯವಾಗುತ್ತದೆ - ಎಷ್ಟೋ ಜನರು ಹೇಳಿದಂತೆ ಇದೊಂದೇ ಸನ್ನಿವೇಶ ಸಾಕು ಕೆರ್ರಿ ಸೆನೆಟರ್ ಆಗೇ ಉಳಿಯಲು.

ಅಫಘಾನಿಸ್ತಾನದವರು ಪ್ರಜಾಪ್ರಭುತ್ವದ ರುಚಿಯನ್ನು ಉಂಡದ್ದಾಯಿತು, ಊಟ ರುಚಿಸಲಿಲ್ಲವೆಂದು ಕಾಣಿಸುತ್ತೆ, ದಕ್ಷಿಣ ದಿಕ್ಕಿನಿಂದ ನಿಧಾನವಾಗಿ ಕ್ರೂರಿಗಳ ಆಟಾಟೋಪ ತಲೆ ಎತ್ತುತ್ತಿದೆ. After all, ಪ್ರಜಾಪ್ರಭುತ್ವವೇ ಜಗತ್ತಿನ ಬೆಳಕೇ? ಹಾಗಿದ್ದರೆ ಜಗತ್ತಿನಲ್ಲೇ ಹೆಚ್ಚು ಜನರಿರುವ ಚೀನಾದಂತಹ ದೇಶದಲ್ಲಿ ಪ್ರಜಾಪ್ರಭುತ್ವವೇಕಿಲ್ಲ? ಪ್ರಪಂಚದಲ್ಲಿರುವ ದೇಶಗಳೆಲ್ಲ ಭಯೋತ್ಪಾದಕರ ಸೊಲ್ಲಡಗಿಸಲು ಅಮೇರಿಕೆಯ ಜೊತೆ ಕೈ ಗೂಡಿಸಿದರೆ ಭಯೋತ್ಪಾದಕರುಗಳೇನು ಚಂದ್ರಲೋಕಕ್ಕೆ ಹೋಗೋದಿಲ್ಲವಲ್ಲ! ಪ್ರಜಾಪ್ರಭುತ್ವವನ್ನು ಆಧರಿಸಿದ, ಯುದ್ಧಕ್ಕೆ ಸನ್ನದ್ದವಾಗಿರುವ ಸೇನೆ ಯಾರ ಮೇಲೆ ಯುದ್ಧ ಮಾಡುತ್ತಿದೆ ಎನ್ನುವುದು ಇನ್ನೂ ನಿಗೂಢವೇ.

ಬುಷ್ ಆಡಳಿತದ ಇಲ್ಲೀವರೆಗಿನ ದಿನಗಳು ಬೆಂಕಿಯುನ್ನು ನಂದಿಸುವುದರಲ್ಲೇ ಕಳೆದವು. ಇತ್ತೀಚೆಗೆ ನಿವೃತ್ತರಾಗುತ್ತಿರುವವರಿಗೇನೋ ಸೋಷಿಯಲ್ ಸೆಕ್ಯುರಿಟಿ ಹಣ ಸಿಗುತ್ತಿದೆ, ಮುಂದೆ ಹೀಗೆ ಎಂದು ಯಾರೂ ಹೇಳುವವರಿಲ್ಲ. ಕಟ್ರೀನಾ ಅನ್ನೋ ಚಂಡಮಾರುತ ಈ ದೇಶದ ಎಮರ್ಜೆನ್ಸಿ ಪ್ರಿಪೇರ್ಡ್‌ನೆಸ್ಸನ್ನು ಧೂಳೀಪಟ ಮಾಡಿಹಾಕುತ್ತದೆ, ಇವರ ಹೆಚ್ಚು ಹೆಚ್ಚು ತಯಾರಿಯಲ್ಲೇ ಏನೋ ಕೊರತೆಯಾದಂತೆ ಅನ್ನಿಸುತ್ತದೆ.

... ಹೀಗೆ ಈ ಐದು ವರ್ಷಗಳಲ್ಲಿ ಜಗತ್ತು ಬಹಳ ಬದಲಾಗಿದೆ, ಅಂತಾರಾಷ್ಟ್ರೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಐದು ವರ್ಷಗಳು ಐವತ್ತು ವರ್ಷಗಳೇನೋ ಅನ್ನಿಸುವಷ್ಟು ಭಾರವಾಗಿ ಕಾಣಿಸುತ್ತವೆ.

***

ಈ ಐದು ವರ್ಷಗಳಲ್ಲಿ ಯುದ್ಧವನ್ನು ಆರಂಭಿಸಿದ ಎರಡೂ ಕಡೆಯವರು ಇನ್ನೂ ಚಲಾವಣೆಯಲ್ಲಿದ್ದು ಅವರಿಗೇನೂ ಅಂತಹ ಕೊರತೆಯಾದಂತೆ ಮೇಲ್ನೋಟಕ್ಕೆ ಕಾಣಿಸುವುದಿಲ್ಲ, ಆದರೆ ಅಮಾಯಕರಿಗೆ, ಸಾಮಾನ್ಯ ಜನರಿಗೆ ಬೇಕಾದಷ್ಟು ಅನಾನುಕೂಲಗಳಾಗಿವೆ ಎನ್ನೋದಂತೂ ನಿಜ.