Showing posts with label ನೆರೆಹೊರೆ. Show all posts
Showing posts with label ನೆರೆಹೊರೆ. Show all posts

Monday, June 02, 2008

...ಪ್ರಯೋಜನಕ್ಕೆ ಬಾರದ್ದು ಅಂತ ಯಾರಂದೋರು?

ಅನುಭವ ಅನ್ನೋದರ ಲಿಮಿಟೇಷನ್ನ್ ಏನೂ ಅಂತ ನನಗೆ ಹೊಳೆದಿದ್ದು ಇತ್ತೀಚೆಗೆ ಅಂತ್ಲೇ ಹೇಳಬೇಕು, ಯಾರೋ ತಾವ್ ಕಲಿತ ಪಾಠವನ್ನು ಅನುಭವ ಅಂತ ದೊಡ್ಡ ಕರೆದುಕೊಂಡಿದ್ದಿರಬಹುದು, ಅದಕ್ಕೆ ಅದು ಇಲ್ಲದೆ ಯಾವ ಕೆಲ್ಸಾನೂ ಅಷ್ಟು ಸಲೀಸಾಗಿ ಆಗಲ್ಲ, ಒಂದ್ಸರ್ತಿ ಮಾಡಿ (ಹೊಡೆತ ತಿಂದು) ಪಾಠ ಕಲಿತ ಮೇಲೆ ಅದನ್ನೇ ಅನುಭವ ಅಂತ ದೊಡ್ಡದಾಗಿ ಬೋರ್ಡು ಬರೆಸಿ ಹಾಕ್ಕೋಬಹುದು ನೋಡಿ.

ನಮ್ಮನೇಲಿ ಒಂದೆರಡು ಕಿಟಕಿಗಳಿಗೆ ಹೊಸ ಸ್ಕ್ರೀನುಗಳನ್ನು ಹಾಕೋಣ ಅನ್ನೋ ಪ್ರಾಜೆಕ್ಟು ಹಲವಾರು ಕಾರಣಗಳಿಂದ ಮುಂದೂಡಿಕೊಂಡು ಮೊನ್ನೆ ಕೈಗೂಡಿತು ನೋಡಿ. ನಾನೋ ಹುಟ್ಟಿದಾರಭ್ಯ ಗೋಡೆಗೆ ಒಂದು ಮೊಳೆಯನ್ನೂ ಸಹ ಹೊಡೆಯದವನು, ಗೋಡೆಗೆ ಎಲ್ಲಿ ನೋವಾಗುತ್ತೋ ಅನ್ನೋ ಅರ್ಥದಿಂದಲ್ಲ, ಶಾಲೆಯಲ್ಲಿ ಮುಂದಿದ್ದ ಮಕ್ಕಳು ನಾವು ಯಾವತ್ತೂ ಹ್ಯಾಂಡಿಮ್ಯಾನ್ ಸ್ಕಿಲ್ಸ್‌ಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಇವತ್ತಿಗೂ ಸಹ ಒಂದು ಏಣಿಯನ್ನು ಹತ್ತಿ ನಿಲ್ಲೋದು ಅಂದರೆ ಮುಜುಗರ, ಸಂಕೋಚ ಎಲ್ಲಕ್ಕಿಂತ ಮುಖ್ಯವಾಗಿ ಅದೇನೋ ಹಾಳು ಹೆದರಿಕೆ ಬೇರೆ ಕೇಡಿಗೆ. ಈ ಹ್ಯಾಂಡಿಮ್ಯಾನ್ ಕೆಲ್ಸದ ವಿಚಾರಕ್ಕೆ ಬಂದಾಗ ಒಂದಂತೂ ಗ್ಯಾರಂಟಿಯಾಗಿ ಕಲಿತುಕೊಂಡಿದ್ದೇನೆ - ಆಯಾ ಕೆಲಸಕ್ಕೆ ಸರಿಯಾದ ಟೂಲ್ಸ್ ಅನ್ನು ಇಟ್ಟುಕೊಂಡಿರುವುದು. ನಿಮ್ಮ ಬಳಿ ಸರಿಯಾದ, ಅಳತೆಗೆ ತಕ್ಕ ಟೂಲ್ಸ್ ಇಲ್ಲವೆಂದಾದರೆ ಸುಮ್ಮನೇ ನೀವು ಕೆಲಸಕ್ಕೆ ಕೈ ಹಾಕಿ ಕೆಟ್ಟಿರಿ. ಅದರ ಬದಲು ಸುಮ್ಮನಿರುವುದು ಒಳ್ಳೆಯದು ಇಲ್ಲವೆಂದರೆ ಇನ್ನೊಬ್ಬರಿಂದ ದುಡ್ಡು ಕೊಟ್ಟು ಮಾಡಿಸಿದರಾಯಿತು.

ಒಂದು ಅರವತ್ತೈದು ಡಾಲರ್ ಕೊಟ್ಟು ಆರಡಿ ಎತ್ತರದ ಏಣಿಯನ್ನು ತೆಗೆದುಕೊಂಡಿರದ ಬುದ್ಧಿವಂತನಾದ ನಾನು, ಇರುವ ಕಿಚನ್ ಸ್ಟೆಪ್‌ಸ್ಟೂಲಿನಲ್ಲೇ ಎರಡು ಮೆಟ್ಟಿಲು ಹತ್ತಿ ಭಾರವಾದ ಡ್ರಿಲ್ ಸೆಟ್ ಅನ್ನು ನನ್ನ ಭುಜಕ್ಕಿಂತಲೂ ಎತ್ತರ ಮಟ್ಟದಲ್ಲಿಟ್ಟುಕೊಂಡು ಅದೆಷ್ಟು ಡ್ರಿಲ್‌ಗಳನ್ನು ಕೊರೆಯಲಾದೀತು? ಅದೆಷ್ಟು ಸ್ಕ್ರೂಗಳನ್ನು ಲೀಲಾಜಾಲವಾಗಿ ಒಳಗೆ ಸೇರಿಸಲಾದೀತು? ಇಂತಹ ಕಷ್ಟಕರ ಸನ್ನಿವೇಶಗಳಲ್ಲಿ ನನ್ನ ಬಾಯಿಯಿಂದ ಸಹಸ್ರನಾಮಾರ್ಚನೆ ತನ್ನಷ್ಟಕ್ಕೆ ತಾನೇ ಹೊರಟು ಬರುತ್ತದೆ, ಅದರ ಬೆನ್ನ ಹಿಂದೆ ಸಮಜಾಯಿಷಿ ಕೂಡ:
- ಈ ಸುಡುಗಾಡು ಭಾರತೀಯರೆಲ್ಲ ಚಿಂಕರರು, ಪಕ್ಕದ ಮನೆಯವನು ಆರೂವರೆ ಅಡಿ ಎತ್ತರವಿದ್ದಾನೆ ಅವನೋ ನೆಲದ ಮೇಲೆ ನಿಂತೇ ಬಲ್ಬ್ ಬದಲಾಯಿಸುತ್ತಾನೆ!
(ಭಾರತೀಯರರು ಕುಳ್ಳಕಿರುವುದು ಅವರ ತಪ್ಪೇ? ಪಕ್ಕದ ಮನೆಯವನು ಎತ್ತರವಿರುವುದು ಅವನ ತಪ್ಪೇ?)
- ಈ ಥರ್ಡ್‌ಕ್ಲಾಸ್ ಅಮೇರಿಕದಲ್ಲಿ ಗರಾಜಿನಲ್ಲಿ ಅಲಂಕಾರಕ್ಕಿಡುವ ಏಣಿಯು ಅರವತ್ತೈದು ಡಾಲರ್ರೇ?
(ನಿನಗೆ ಬೇಕಾದರೆ ಹತ್ತೇ ಡಾಲರಿನ ಏಣಿಯನ್ನು ತೆಗೆದುಕೊಂಡು ಬಾ, ಯಾರು ಬೇಡಾ ಅಂದೋರು?)
- ಈ ಕಿಟಕಿಗಳಿಗೆ ಸ್ಕ್ರೀನ್ ಏಕೆ ಹಾಕಬೇಕು? ಅದರಿಂದ ಯಾವ ದೇಶ ಉದ್ದಾರವಾಗುತ್ತದೆ?
(ಹಾಕೋದೇ ಬೇಡ ಬಿಡು, ಯಾರು ಹಾಕು ಅಂತ ಗಂಟುಬಿದ್ದೋರು ಈಗ).

ಮೇಲೆ ಕೈ ಎತ್ತಿ ಹಿಡಿದೂ ಹಿಡಿದೂ ನೋವಾದ ಹಾಗೆ, ಎಂದೂ ಕೀ ಬೋರ್ಡನ್ನೇ ಕುಟ್ಟುತ್ತೇವೆ ಎಂದು ಶಪಥ ತೊಟ್ಟ ಕೈ ಬೆರಳುಗಳು ಯಾವತ್ತೋ ಒಮ್ಮೆ ಸ್ಕ್ರೂ ಡ್ರೈವರ್ರನ್ನು ತಿರುಗಿಸಿ ವ್ಯಥೆ ಪಟ್ಟು ಅವುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವ ಹಾಗೆ ಬಸ್ಸಿನ ಗಡಿಬಿಡಿಯಲ್ಲಿ ನಮ್ಮೂರಿನ ದೇವಸ್ಥಾನದ ಅರ್ಚಕರು ಹೈ-ಸ್ಪೀಡ್ ಅರ್ಚನೆ ಮಾಡುವ ಹಾಗೆ ನನ್ನ ಸಹಸ್ರನಾಮ ಹೊಸಹೊಸ ರೂಪವನ್ನು ಪಡೆದುಕೊಳ್ಳುತ್ತದೆ, ಆ ಹೊತ್ತಿನಲ್ಲಿ ಯಾರೇ ಕಣ್ಣಿಗೆ ಬಿದ್ದರೂ, ಏನೇ ಕಂಡರೂ ಅವುಗಳಿಗೆಲ್ಲ ಬೈಗಳು ಗ್ಯಾರಂಟಿ! ಕೊನೆಗೆ ಬೇಸತ್ತು ನನಗೆ ನಾನೆ ಬೈದುಕೊಳ್ಳುವುದೂ ಇದೆ:
- ಒಂದ್ ದಿನಾನಾದ್ರೂ ಚಿಕ್ಕ ವಯಸ್ಸಿನಲ್ಲಿ ಒಂದಿಷ್ಟು ಹ್ಯಾಂಡಿ ಸ್ಕಿಲ್ಸ್‌ಗಳನ್ನು ಕಲಿಯಲಿಲ್ಲ, ಥೂ ನಿನ್ನ ಮುಸುಡಿಗೆ ಇಷ್ಟು ಬೆಂಕಿ ಹಾಕ!
- ಅದೇನ್ ಸ್ಕೂಲ್‌ನಲ್ಲಿ ಕಿಸಿದು ಫಸ್ಟ್‌ಕ್ಲಾಸ್ ಬಂದಿದ್ದು ಅಷ್ಟರಲ್ಲೇ ಇದೆ, ಇವತ್ತಿಗೆ ನೆಟ್ಟಗೆ ಒಂದು ರೂಮಿಗೆ ಬಣ್ಣಾ ಹಚ್ಚೋಕ್ ಬರೋಲ್ವಲ್ಲೋ!
- ಗಂಡಸು ಅಂತ ಮುಖದ ಮೇಲೆ ಮೀಸೆ ಹೊತ್ತ ಮೇಲೆ ಒಂದಿಷ್ಟು ಪ್ರಿಮಿಟಿವ್ ಕೆಲ್ಸಗಳೂ ಬರ್ದೇ ಇದ್ರೆ ಆ ಮೀಸೆಗೆ ಅವಮಾನ ಅಲ್ವಾ?!

ಅಂತೂ ಇಂತೂ ಈ ಸಹಸ್ರನಾಮಾರ್ಚನೆಗಳ ಮಧ್ಯದಲ್ಲೇ (ಕಾಟಾಚಾರಕ್ಕೆ ಎನ್ನುವಂತೆ ಆರಂಭಿಸಿ ಮುಗಿಸಿದ) ಕೈಗೆತ್ತಿಕೊಂಡುದನ್ನು ಮುಗಿಸಿ ಆಯಿತು. ಮೌಂಟ್ ಎವರೆಸ್ಟ್ ಹತ್ತಿ ಇಳಿದ ತೇನ್‌ಸಿಂಗ್ ಕೂಡ ಅಷ್ಟೊಂದು ವ್ಯಥೆ ಪಟ್ಟಿರಲಾರ, ಕೆಲಸ ಮುಗಿಯುವ ಕೊನೆಯಲ್ಲಿ ಕೈ ಬೆರಳುಗಳು ಯಕ್ಷಗಾನದ ಕಾಳಿಂಗ ನಾವುಡರನ್ನು ಮೀರಿ ಭಾಗವತಿಕೆಯನ್ನು ಶುರು ಹಚ್ಚಿಕೊಂಡಿದ್ದವು. ಅದೆಷ್ಟೋ ತಪ್ಪುಗಳು, ಅವುಗಳ ನಡುವೆ ಅಲ್ಪಸ್ವಲ್ಪ ಸರಿಗಳಿಂದ ಹಿಡಿದ ಕೆಲಸವನ್ನೇನೋ ಮಾಡಿದೆ, ಕೊನೆಗೆ ಒಂದಿಷ್ಟು ಅನುಭವವಾಯ್ತು ಬಿಡು ಎಂದು ಒಮ್ಮೆ ತಂಪೆನಿಸಿತಾದರೂ - ಥೂ ಈ ಅನುಭವದ ಮನೆಗಿಷ್ಟು ಬೆಂಕೀ ಹಾಕ! ಅಂತ ಅನ್ನಿಸದೇ ಇರಲಿಲ್ಲ.

***

ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇರದಿದ್ದರೆ ಟಿವಿಯಲ್ಲಿ ಎಷ್ಟೊಂದು ಲೀಲಾಜಾಲವಾಗಿ ಸೀಲಿಂಗ್ ಪೈಂಟ್ ಮಾಡುತ್ತಾರೆ ಎಂದುಕೊಂಡು ನೀವು ನಿಮ್ಮ ಮನೆಯಲ್ಲಿನ ಒಂದು ಸಣ್ಣ ಕೊಠಡಿಯ ಸೀಲಿಂಗ್ ಅನ್ನು ಪೈಂಟ್ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಬಳಿ ಎಂಥ ಅದ್ಭುತ ರೋಲರ್‌ಗಳು ಇದ್ದರೂ (ಪೈಂಟ್ ಹೆಂಗಾದರೂ ಇರಲಿ, ಅದರ ಕಥೆ ಬೇರೆ) ಒಂದು ಛಾವಣಿ ಮುಗಿಯುವ ಹೊತ್ತಿಗೆ ನಿಮ್ಮ ಪುಪ್ಪುಸದಲ್ಲಿನ ಗಾಳಿಯೆಲ್ಲವೂ ಬರಿದಾಗಿ ನೀವು ಇನ್ನೊಂದು ಅರ್ಧ ಘಂಟೆಯಲ್ಲಿ ಕುಸಿದು ಬೀಳುತ್ತೀರಿ ಎಂದೆನಿಸದಿದ್ದರೆ ಖಂಡಿತ ನನಗೆ ತಿಳಿಸಿ. ಸೀಲಿಂಗ್ ಪೈಂಟ್ ಮಾಡುವುದಕ್ಕೆ ಅದೆಷ್ಟು ಅಪ್ಪರ್ ಬಾಡಿ ಸ್ಟ್ರೆಂಗ್ತ್ ಬೇಕು ಎನ್ನುವುದಕ್ಕೆ ನನಗೆ ತಿಳಿದ ಯಾವ ಯುನಿಟ್ಟುಗಳಿಂದಲೂ ಮೆಜರ್ ಮಾಡುವುದಕ್ಕಾಗುತ್ತಿಲ್ಲ, ಅದೇನಿದ್ದರೂ ಅನುಭವದಿಂದಲೇ ತಿಳಿಯಬೇಕು. ಹೀಗೇ ಒಂದು ದಿನ ಪೈಂಟಿಂಗ್ ಪ್ರಾಜೆಕ್ಟ್ ಅನ್ನು ನಮ್ಮ ಅಲೆಕ್ಸಾಂಡ್ರಿಯದ ಮನೆಯಲ್ಲಿ ಕೈಗೆತ್ತಿಕೊಂಡ ನನಗೆ ನಮ್ಮ ಆ ಸಣ್ಣ ಮನೆಯ ಸೀಲಿಂಗ್ ಒಮ್ಮೊಮ್ಮೆ ಅಟ್ಲಾಂಟಿಕ್ ಮಹಾಸಾಗರಕ್ಕಿಂತಲೂ ವಿಸ್ತಾರವಾಗಿ ತೋರುತ್ತಿತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇದ್ದಿರಲಾರದು!

ಅದಕ್ಕೇ ಹೇಳಿದ್ದು, ಈ ಅನುಭವ ಅನ್ನೋದು ಪ್ರಯೋಜನಕ್ಕೆ ಬಾರದ್ದು ಅಂತಾ. ಒಮ್ಮೆ ಮಾಡಿ ಕೈ ಸುಟ್ಟುಕೊಂಡೋ ಹೊಡೆತ ತಿಂದ ಮೇಲೋ ಬರುವ ಭಾಗ್ಯವನ್ನು ನೀವು ಕರೆದುಕೊಳ್ಳಲು ನಾಲ್ಕಕ್ಷರದ ಸೌಭಾಗ್ಯ ಬೇಕೆಂದರೆ ಅದನ್ನು ಅನುಭವವೆಂದುಕೊಳ್ಳಿ. ಇಲ್ಲವೆಂದಾದರೆ ನನ್ನ ಹಾಗೆ ಚಪ್ಪಟೆ ಇರುವ ನಿಮ್ಮ ಹಣೆಯಲ್ಲಿ ಎರಡೆರಡು ಬಾರಿ ಗಟ್ಟಿಸಿಕೊಂಡು ಅದರ ಮೇಲೆ ಒಂದು ಕ್ಯೂಬ್ ಐಸ್ ಇಟ್ಟು ತಣ್ಣಗೆ ಮಾಡಿಕೊಳ್ಳಿ ಅಷ್ಟೇ.

ವೇಷ್ಟು ಸಾರ್, ಎಲ್ಲಾ ವೇಷ್ಟ್ ಉ. ನಮ್ಮೂರಿನ ಮಕ್ಳು ನಾಳೆ ಶಾಲೆಯಲ್ಲಿ ಫಸ್ಟ್ ಕ್ಲಾಸ್ ಬರದಿದ್ದರೂ ಪರವಾಗಿಲ್ಲ ಮನೆ ಒಳಹೊರಗಿನ ಕೆಲಸವನ್ನು ಮಾಡಿಕೊಳ್ಳಲು ಬರಲೇ ಬೇಕು ಅಂತ ಹೊಸ ಕಾನೂನು ತರಬೇಕು ಅಂತ ಹೊಸ ಸರ್ಕಾರಕ್ಕೆ ನಾನು ಶಿಫಾರಸ್ಸು ಮಾಡ್ತೀನಿ. ಅನುಭವ ಇಲ್ಲದವರು ಮೀಸೆ ಬಿಡಲು ತಕ್ಕವರಲ್ಲ ಅಂತ ಹೊಸ ಶಾಸನವನ್ನು ಕೆತ್ತಿಸ್ತೀನಿ. ಕೈಲಾಗ್ತೋನ್ ಮೈಯೆಲ್ಲ ಪರಚಿಕೊಂಡ ಅಂತಾರಲ್ಲ ಹಾಗೆ ನನ್ನ ಕೈಯಲ್ಲಿ ಏನೂ ಮಾಡೋಕ್ ಆಗ್ತೇ ಇದ್ರೂ ಅಮೇರಿಕದ ನೀರಿನ ಋಣದ ದಯೆಯಿಂದ ಯಾವತ್ತೂ ನಾನು ಉದ್ದುದ್ದವಾಗಿ ಮಾತಾಡ್ತಲೇ ಇರ್ತೀನಿ.

ಅನುಭವಗಳಿಗೆ ಧಿಕ್ಕಾರ, ಮೈಗಳ್ಳರ ಸಂಘಕ್ಕೆ ಜೈ!

Thursday, May 15, 2008

ಐದೇ ಐದ್ ನಿಮಿಷ...

ನಾನು ಕೆಲ್ಸಾ ಮಾಡೋ ಕಂಪ್ಯೂಟರ್ರುಗಳ ಸ್ಪೀಡೂ ಪ್ರಾಸೆಸ್ಸರ್ರುಗಳ ಪವರ್ರು ಜಾಸ್ತೀ ಆದ ಹಾಗೆ, ನಾನು ಉಪಯೋಗಿಸೋ ಸಾಫ್ಟ್‌ವೇರ್ ಅಥವಾ ಅಪ್ಲಿಕೇಷನ್ನುಗಳ ವರ್ಷನ್ನುಗಳು ಹೆಚ್ಚಾದ ಹಾಗೆ ನನ್ನ ಧಕ್ಷತೇನೂ ಹೆಚ್ಚಾಗುತ್ತೇ ಅನ್ನೋದು ಬರೀ ಕನಸೇ ಆಗಿ ಹೋಗಿದೆ ಅನ್ನೋದು ಇತ್ತೀಚಿನ ನನ್ನ ಕೊರೆತಗಳಲ್ಲೊಂದು! ಯಾವಾಗ್ ನೋಡಿದ್ರೂ ’ಟೈಮೇ ಇಲ್ಲಾ ಸಾರ್!’ ಎಂದು ರಾಗ ಎಳಿತಾ ಇರೋ ನನಗೆ ನನ್ನ ಇದ್ದ ಬದ್ದ ಟೈಮ್ ಎಲ್ಲಾ ಎಲ್ಲಿ ಕರಗಿ ಹೋಗುತ್ತೇ ಅನ್ನೋದು ಹೊಳೆಯದೇ ಬಹಳ ಸಂಕಷ್ಟಕ್ಕೆ ಬಂದಿರೋದರ ಜೊತೆಗೆ ಟೈಮೇ ಇಲ್ಲವಲ್ಲ ಅಂಥ ಯೋಚಿಸೋದಕ್ಕೂ ಟೈಮ್ ಇಲ್ಲದ ಹಾಗೆ ಆಗಿದೆ ಅನ್ನೋದು ನನ್ನ ಹೊಸ ಕೀರ್ತನೆ ಅಷ್ಟೇ.

ನೀವೇ ನೋಡಿ, ಯಾವತ್ತಾದ್ರೂ ಎಲ್ಲಿಗೋ ಹೊರಟಿರೋ ಹೊತ್ತಿನಲ್ಲಿ ಒಂದು ನಿಮಿಷ ಕಂಪ್ಯೂಟರಿನಲ್ಲಿ ಏನೋ ನೋಡೋಣ ಅಂತ ಕೂತಿರೋದಷ್ಟೇ ನೆನೆಪು, ಅದು ಹೇಗೆ ನಿಮಿಷಗಳು-ಘಂಟೆಗಳು ಉರುಳುತ್ತವೋ ಗೊತ್ತೇ ಆಗಲ್ಲ. ದಿನಾ ಆನ್ ಮಾಡಿ ಆಫ್ ಮಾಡೀರೋ ಕಂಪ್ಯೂಟರಿನಿಂದ ಹಿಡಿದು ಎರಡು ವಾರಕ್ಕೊಮ್ಮೆ ಸ್ಟ್ಯಾಂಡ್ ಬೈ ಮೋಡ್ ನಲ್ಲೇ ಇರೋ ನನ್ನ ಲ್ಯಾಪ್‌ಟಾಪಿನ ವರೆಗೆ ಅದರಲ್ಲಿರೋ ಅಪ್ಲಿಕೇಷನ್ನಿನ ಗೊಂಚಲುಗಳಲ್ಲಿ ಒಬ್ಬನಲ್ಲ ಒಬ್ಬನು ಏನನ್ನಾದರೊಂದನ್ನು ಇನ್ಸ್ಟಾಲ್ ಮಾಡಿಕೊಂಡೇ ಇರ್ತಾನೆ. ಆಂಟಿ ವೈರಸ್ಸು ಪ್ಯಾಚುಗಳಿಂದ ಹಿಡಿದು ಅಪ್ಲಿಕೇಶನ್ನ್ ಪ್ಯಾಚುಗಳವರೆಗೆ ಸದಾ ಕರಕರಕರ ಶಬ್ದ ಮಾಡ್ತಾ ಹಾರ್ಡ್ ಡ್ರೈವ್ ತಿರುಗೋ ಶಬ್ದವನ್ನು ಕೇಳ್ದೇ ಇದ್ರೆ ತಿಂದ ಅನ್ನಾನೇ ಅರಗಲ್ಲ. ಹೀಗೆ ಅವರು ಬಿಟ್ಟು ಇವರು ಬಿಟ್ಟು ಯಾರ್ಯಾರೋ ಏನನ್ನೋ ಇನ್ಸ್ಟಾಲ್ ಮಾಡಿ ಅನಂತರ ಕಂಪ್ಯೂಟರಿನ ಪ್ರಾಸೆಸ್ಸರು ಫ್ರೀ ಇರೋ ಹೊತ್ತಿಗೆ ದಿನವೇ ಮುಗಿದು ಹೋಗಿರುತ್ತೆ. ಮೊದಲೆಲ್ಲ ಸರಳವಾಗಿದ್ದ ಇ-ಮೇಲ್ ಇಂಟರ್‌ಫೇಸುಗಳು ಈಗ ಇನ್ನಷ್ಟು ಸಂಕೀರ್ಣಗೊಂಡಿವೆ, ಮೊದಲೆಲ್ಲ ಡಿಸ್ಟಿಂಕ್ಟ್ ಆಗಿ ಸಿಗುತ್ತಿದ್ದ ವ್ಯವಸ್ಥೆಯ ಪರಿಕರಗಳೆಲ್ಲ ಒಂದಕ್ಕೊಂದು ಇಂಟೆಗ್ರೇಟ್ ಆದ ಮೇಲೆ ಇಷ್ಟೆಲ್ಲ ತಲೆ ನೋವು ಬಂದಿದ್ದು ಅನ್ನೋದು ನನ್ನ ಅಂಬೋಣ.

ಕಳೆದ ನಾಲ್ಕು ವಾರಗಳಿಂದ ಅವರ ಕಾಲ್ ಹಿಡಿದು ಇವರ ಕೈ ಹಿಡಿದು ಆಫೀಸಿನಲ್ಲಿ ಪರ್‌ಚೇಸ್ ಆರ್ಡರ್ ಒಂದನ್ನು ಇನ್ನೇನು ಕೊನೆಯ ಹಂತದವರೆಗೆ ತಂದೆ, ಮೇಲಿನವರ ಅಪ್ರೂವಲ್ ಸಿಕ್ಕೇ ಬಿಟ್ಟಿತು ಎಂದು ಮೀಸೇ ಮೇಲೆ ಕೈ ಹಾಕಿ ನಗುವನ್ನು ತಂದುಕೊಂಡಿದ್ದೇ ಬಂತು, ಅಪ್ರೂವ್ ಮಾಡುವವರು ಅಪ್ರೂವ್ ಮಾಡುವ ಸಿಸ್ಟಮ್‌ಗೆ ಲಾಗ್ ಇನ್ ಮಾಡಲು ಹೋದರೆ ಅಲ್ಲಿ ಬ್ಯಾಕ್ ಎಂಡಿನಲ್ಲಿ ಮೈಕ್ರೋ ಸಾಫ್ಟ್‌ನವರ ಸರ್ವರ್ ಮುಷ್ಕರ ಹೂಡಿ ಕುಳಿತುಕೊಂಡಿದೆ. ಸಾಯಂಕಾಲ ಎಷ್ಟೊತ್ತು ಕಾದರೂ ಸರ್ವರ್ ಎದ್ದು ಬರುವಂತೆ ಕಾಣಲಿಲ್ಲ, ನಾಳೆ ಈ ಅಪ್ರೂವ್ ಮಾಡುವ ಮನುಷ್ಯ ಬೇರೆ ಆಫೀಸಿನಲ್ಲಿ ಇಲ್ಲ, ಅವನು ಇನ್ಯಾವನಿಗೆ ಹೀಗೆ ಮಾಡು ಹಾಗೆ ಮಾಡು ಎಂದು ಹೇಳಿ, ಹೇಳಿಸಿಕೊಂಡವನು ನನ್ನ ಅನುಕೂಲಕ್ಕೆ ಸ್ಪಂದಿಸಿ ’ಅಪ್ರೂವ್ ಆಯ್ತು’ ಎಂದು ಬಟನ್ ಒತ್ತುವಷ್ಟರಲ್ಲಿ ನನ್ನ ತಲೆ ಕೂದಲೆಲ್ಲ ಬೆಳ್ಳಗಾಗದಿದ್ದರೆ ಸಾಕು. ಒಂದೊಂದು ಸರ್ವರ್ರುಗಳು ಅಂದ್ರೆ ಅದೆಷ್ಟು ಪವರ್ ಇರುವ ಮೆಷಿನುಗಳು, ಅಂಥವು ದಿನಕ್ಕೊಂದಲ್ಲ ಒಂದು ಔಟ್ ಆಗುತ್ತಲೇ ಇರುತ್ತವೆ, ಅದನ್ನ ಅಡ್ಮಿನಿಶ್ಟ್ರೇಷನ್ನವರು ಬೌನ್ಸ್ ಮಾಡಿ ಮತ್ತೆ ಜೀವ ಕೊಡುತ್ತಲೇ ಇರುತ್ತಾರೆ. ಹೀಗೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲ ಕ್ಲೈಂಟು-ಸರ್ವರುಗಳ ಕೈಂಕರ್ಯಕ್ಕೆ ಅದೆಷ್ಟು ಹೊಂದಿಕೊಂಡಿವೆ ಅಂದರೆ ಇನ್ನೊಂದು ಕೆಲವು ವರ್ಷಗಳಲ್ಲಿ ಸಾಯೋರಿಗೂ ಪರ್ಮಿಷನ್ನ್ ಸಿಗುವ ಹಾಗೆ ಮಾಡುತ್ತವೆ ಈ ಸರ್ವರುಗಳು ನೋಡ್ತಾ ಇರಿ.

ಐದೇ ಐದು ನಿಮಿಷ ಅಂತ ಯಾರೂ ಹೇಳೋದಿಲ್ಲ ಬಿಡಿ...’ಒಂದು ನಿಮಿಷ ಬಂದೇ ಬಿಟ್ಟೇ!’ ಅಂತಾರೆ, ಆದರೆ ಘಂಟೆಗಟ್ಟಲೆ ಆದ್ರೂ ತಮ್ಮ ಪ್ರಪಂಚದಿಂದ ಹೊರಗೆ ಬರೋದಿಲ್ಲ. ಒಂದು ನಿಮಿಷ, ಒಂದು ಸೆಕೆಂಡು ಅನ್ನೋ ಮಾತುಗಳು ಔಪಚಾರಿಕ ಮಾತುಕಥೆಗಳಾಗಿವೆ ಅಷ್ಟೇ. ನಾವೆಲ್ಲ ’ಒಂದ್ ಸೆಕೆಂಡ್’ ಅನ್ನೋದನ್ನ ಯಾರಾದ್ರೂ ಬೇರೆ ಗ್ರಹದ ಪ್ರಾಣಿಪಕ್ಷಿಗಳು ಕೇಳಿಕೊಂಡವು ಅಂತಂದ್ರೆ ಅವರ ಹೃದಯ ನಿಂತು ಹೋಗೋದು ಗ್ಯಾರಂಟಿ - ಅದೇನು ಒಂದು ಸೆಕೆಂಡಿನಲ್ಲಿ ಅದೇನೇನೆಲ್ಲ ಮಾಡ್ತಾರಲ್ಲ ಅಂತ. ನಮ್ಮ ಒಂದೊಂದು ಸೆಕೆಂಡುಗಳು ’ಬ್ರಹ್ಮ ಶೌಚ’ದ ಯೂನಿಟ್‌ನಲ್ಲಿವೆ ಅನ್ನೋದು ಅವರಿಗೇನು ಗೊತ್ತು?

ಯಾವ್ದೇ ಮ್ಯಾಪ್ ಅಪ್‌ಲೋಡ್ ಮಾಡಿ, ಯಾವ್ದೇ ಇ-ಮೇಲ್ ಕ್ಲೈಂಟ್ ಹೊರಗೆ ತನ್ನಿ, ಯಾವ್ದೇ ವೆಬ್‌ ಪೇಜ್ ಮೇಲೆ ಕಣ್ಣಾಡಿಸಿ - ಅದು ನಿಧಾನವಾಗಿ ಲೋಡ್ ಆಗುತ್ತಿದ್ದರೆ ನಿಮ್ಮ ಇಂಟರ್ನೆಟ್ ಕನೆಕ್ಷನ್ನನ್ನೋ ಅಥವಾ ಹಳೆಯ-ಹೊಸ ಕಂಪ್ಯೂಟರನ್ನ ನೀವು ಬೈದುಕೊಳ್ಳೋ ಸನ್ನಿವೇಶ ಬಂದೇ ಬರುತ್ತೆ. ’ಕನ್ನಡಪ್ರಭ’, ’ಪ್ರಜಾವಾಣಿ’ ಅಂಥ ವೆಬ್‌ಸೈಟ್‌ಗಳು ASP ತಂತ್ರಜ್ಞಾನವನ್ನು ಮೊರೆಹೊಕ್ಕರು, ಅವರಿಗೆಲ್ಲ ಅದರಿಂದ ಏನೇನು ಅನುಕೂಲವಾಗಿದೆಯೋ ಬಿಟ್ಟಿದೆಯೋ User friendliness ಮಾತ್ರ ಮಾಯವಾಗಿ ಬಿಟ್ಟಿದೆ. ಹನ್ನೊಂದು ವರ್ಷದ ಹಿಂದೆ ನನ್ನ ಪೆಂಟಿಯಮ್ 166 MHz ಕಂಪ್ಯೂಟರಿನಲ್ಲಿ 56 Mbps ಡಯಲ್ ಅಪ್ ಕನೆಕ್ಷನ್ನ್ ನಲ್ಲಿ ನನಗೆ ವೆಬ್‌ಸೈಟ್ ಓದುವಾಗ ಸಿಗುತ್ತಿದ್ದ ಫ್ರೀಡಮ್ ಈಗ ಕಡಿಮೆ ಆಗಿದೆ. ಆಗೆಲ್ಲ HTML ಪುಟಗಳಲ್ಲಿ ಆಡ್ರಸ್ ಬಾರ್ ನಲ್ಲಿ ಯಾವ ಯಾವ ದಿನದ ಪತ್ರಿಕೆಗಳ ದಿನಾಂಕಗಳನ್ನೆಲ್ಲ ಹಾಕಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದ್ರೂ ನೇವಿಗೇಟ್ ಮಾಡುತ್ತಿದ್ದ ನನಗೆ ಇಂದಿನ ASP ಯುಗದಲ್ಲಿ ದಿಕ್ಕೇ ತೋಚದ ಹಾಗಾಗುತ್ತೆ ಎಷ್ಟೋ ಸಲ. ಅದೂ ಅಲ್ದೇ ಯಾವ್ದಾದ್ರೂ ಫ್ಲಾಶ್ ಇರೋ ಪುಟಕ್ಕೆ ಹೋದ್ರಂತೂ ಆ ಪುಟದಲ್ಲಿ ಉಪಯೋಗಿಸಿರೋ ಫ್ಲ್ಯಾಶ್ ವರ್ಶನ್ ನನ್ನ ಹತ್ರ ಇರೋಲ್ಲ, ಅವರ ಪುಟಗಳನ್ನು ನೋಡೋಕೆ ಮತ್ತೊಂದೇನನ್ನ ಇನ್ಸ್ಟಾಲ್ ಮಾಡೂ ಅಂತಾನೆ, ಅವನು ಹೇಳಿದ್ದನ್ನ ಕೇಳಿದ್ರೆ ಇನ್ನೊಬ್ರ ಪುಟ ಮತ್ತೆನ್ನೆಲ್ಲೋ ಸರಿಯಾಗಿ ಲೋಡ್ ಆಗಲ್ಲ, ಬ್ಯಾಕ್‌ವರ್ಡ್ ಕಂಪ್ಯಾಟಿಬಿಲಿಟಿ ಇದ್ರೆ ಫಾರ್‌ವರ್ಡ್ ಇರಲ್ಲ, ಇವನನ್ನ ಓಲೈಸಿದ್ರೆ ಮತ್ತೊಬ್ಬನಿಗೆ ಸಿಟ್ಟು ಬರುತ್ತೆ ಅನ್ನೋ ಹಾಗೆ.

ಇವತ್ತೆಲ್ಲ 3-4 GB RAM ಇರೋ ಲ್ಯಾಪ್ ಟಾಪ್‌ಗಳೇ ಸಿಕ್ತಾವೆ, ಅವೇ ಹಲ್ಲು ಕಿರಿದು ನಿಲ್ಲೋ ಜನರ ಫೋಟೋ ಹೊಡೆಯೋಕೆ ಹದಿನೈದ್ ಪಿಕ್ಸೆಲ್ ವರೆಗಿನ ಕ್ಯಾಮರಾಗಳು ಬಂದಿರಬಹುದು. ಒಂದೊಂದು ಫೋಟೋ ಸೈಜೂ ಹತ್ತು MB ಆಗುತ್ತೋ ಏನೋ, ಅವನ್ನ ಸ್ಟೋರ್ ಮಾಡೋಕೆ, ಕಳಿಸೋಕೆ, ಬಳಸೋಕೆ ಹೆಚ್ಚು ಹೆಚ್ಚು ಜಾಗ ಬೇಕು, ಮೆಮರಿ ಬೇಕು - ಎಲ್ಲಿಂದ ತರಾಣಾ? ಹೊಸ ಕ್ಯಾಮರ ಕೊಂಡ್ರೆ ಹೊಸ ಕಂಪ್ಯೂಟರ್ ಬೇಕು ಅಂತ ಆಗುತ್ತೆ, ಹೊಸ ಕಂಪ್ಯೂಟರ್ ಕೊಂಡ್ರೆ ಹೊಸ ಸಾಫ್ಟ್‌ವೇರ್ ಬೇಕು ಅಂತ ಆಗುತ್ತೆ, ಹೊಸ ಸಾಫ್ಟ್‌ವೇರ್ ಸಿಕ್ರೆ ನಮಗೆ ಬೇಕಾದ್ದ್ ಎಲ್ಲ ಇರಲ್ಲ, ಇದೂ ಅದೆಲ್ಲೆಲ್ಲೋ ಹುದುಗಿಸಿ ಇಡ್ತಾರೆ - ಹೊಸದರ ಜೊತೆಗೆ ಹಳೆಯದು ಕೆಲ್ಸಾ ಮಾಡಲ್ಲ...ಹೀಗೆ ಇದರ ಪಟ್ಟಿ ಇಲ್ಲಿಗೆ ನಿಲ್ಲದೆ ಮುಂದೆ ಬೆಳಿಯುತ್ಲೇ ಇರುತ್ತೆ. ನಾನು ಇವತ್ತೇ ಹೋಗಿ ಸ್ಯಾಮ್ಸ್ ಕ್ಲಬ್ಬಿನಿಂದ ಏಳ್‌ನೂರ್ ಡಾಲರ್ ಕೊಟ್ಟು ಹೊಸ ಕಂಪ್ಯೂಟರ್ ತಂದು ಬಿಸಾಕೇನು, ಅದನ್ನ ಸಂಪೂರ್ಣವಾಗಿ ಕಷ್ಟಮೈಜ್ ಮಾಡಿ ನನಗೆ ಬೇಕಾದ್ದನ್ನೆಲ್ಲ ಇನ್ಸ್ಟಾಲ್ ಮಾಡಿ ರನ್ ಮಾಡೋ ಅಷ್ಟೊತ್ತಿಗೆ ನನ್ನ ಒಂದು ದಶಕದ ಆಯಸ್ಸೇ ಮುಗಿದು ಹೋಗುತ್ತೆ, ಅಷ್ಟೊತ್ತಿಗೆ ಆ ಕಂಪ್ಯೂಟರ್ರೇ ಹಳೆಯದಾಗಿರುತ್ತೆ. ಇವುಗಳ ಮುಂದೆ ಯಾವತ್ತೂ ಗೆಲ್ಲೋಕೇ ಆಗಲ್ಲ ಅನ್ಸಲ್ವಾ?

ನಮ್ ಜೀವ್ನಾ ಎಲ್ಲಾ ಐದೇ ಐದ್ ನಿಮಿಷ ಅಂದು ಒಂದೊಂದು ಘಂಟೆ ಸವೆಸೋದ್ರಲ್ಲೇ ಆಗ್ ಹೋಯ್ತು, ಇನ್ನು ಮುಂದಿನ ಜನರೇಷಿನ್ನಿನ ಕಥೆ ದೇವ್ರೇ ಕಾಪಾಡ್ ಬೇಕು.

ನಾವು ಸಾಮಾನ್ಯರು, ನಮಗೆ ಹೆಚ್ಗೆ ಪವರ್ ಬೇಡಾ, ಇವತ್ತು ಸಾವಿರ ಡಾಲರ್ ಕೊಟ್ಟು ತಂದ ಕಾರು ಇನೈದು ವರ್ಷ ಬಿಟ್ರೂ ಇವತ್ತಿನ ಹಾಗೇ ಓಡಾಡೋಲ್ವೇ ಅದೇ ಥರ ಈ ಕಂಪ್ಯೂಟರಿಗೊಂದು ಹೊಸ ಇಕ್ವೇಷನ್ನ್ ತಂದು, ’ಇಲ್ಲಿಗೆ ಸಾಕು, ಶಿವಾ’ ಅನ್ನೋ ಒಂದು ಕಾನ್‌ಫಿಗರೇಷನ್ನಿಗೆ ನಿಲ್ಲಿಸಿಬಿಡಿ, ಅಷ್ಟೇ ಸಾಕು. ಜಗತ್ತಿನ ಒಂದೊಂದು ಇಂಚನ್ನೂ IP ಅಡ್ರಸ್ಸುಗಳಿಂದ ಅಳೀತೀವಿ ಅನ್ನೋ ಜನರಿಗೆ ಯಾವನೋ ಎಲ್ಲೋ ಬರೆದ ಕಂಪ್ಯೂಟರ್ ವೈರಸ್ಸುಗಳನ್ನು ಕಂಡು ಹಿಡಿಯೋದ್ ಕಷ್ಟಾನೇ? ಹಾಗೆ ವೈರಸ್ಸುಗಳನ್ನು ಬರೆದು ಜನರನ್ನು ಹಿಂಸಿಸೋರನ್ನ ಪಬ್ಲಿಕ್‌ನಲ್ಲಿ ಕಲ್ ತಗೊಂಡ್ ಹೊಡೀರಿ ಅವಾಗ್ಲಾದ್ರೂ ಜನರಿಗ್ ಬುದ್ಧಿ ಬರುತ್ತೋ ಏನೋ. ನಮ್ಮ್ ನಮ್ಮ್ ಇ-ಮೇಲ್ ನೋಡ್ಕೊಂಡು ಜೀವ್ನಾ ಸಾಗ್ಸದೇ ಕಷ್ಟಾ ಅನ್ಸಿರುವಾಗ ಅದ್ಯಾವನಿಗೆ ಅದೆಲ್ಲಿಂದ ವೈರಸ್ ಬರೆಯೋಕ್ ಟೈಮ್ ಸಿಗುತ್ತೋ ಯಾರಿಗ್ ಗೊತ್ತು?

Sunday, April 13, 2008

ಇಂದಿನದು ಇಂದಿರಲಿ

ಎಲ್ಲರೂ ಇಲ್ಲಿ ಬೇಸಿಗೆ ಯಾವಾಗ ಬರುತ್ತೋ ಎಂದು ಕುತೂಹಲಿತರಾಗಿ ಕಾದುಕೊಂಡು ಕುಳಿತಿರುವುದರ ಬಗ್ಗೆ ಯೋಚಿಸುತ್ತಿರುವಾಗ ನನಗನ್ನಿಸಿದ್ದು ಹೀಗೆ: ಡಿಸೆಂಬರ್ ನಿಂದ ಜೂನ್ ವರೆಗೆ ನಿಧಾನವಾಗಿ ದಿನದಲ್ಲಿ ಬೆಳಕು ಹೆಚ್ಚಾಗುತ್ತಾ ಹೋಗಿ, ಜೂನ್‌ನಿಂದ ಮತ್ತೆ ಕತ್ತಲಿನ ಆರ್ಭಟ ಹೆಚ್ಚಾಗುವುದು ಇಲ್ಲಿನ ಋತುಮಾನ. ಮಾರ್ಚ್ ಹಾಗೂ ಸೆಪ್ಟೆಂಬರ್ ನಡುವೆ ಇರುವ ಎಲ್ಲ ದಿನಗಳನ್ನು ಬೇಸಿಗೆಯೆಂದೇ ಏಕೆ ಸ್ವೀಕರಿಸಬಾರದು? ಬೇಸಿಗೆ ಬೆಳಕು ಜೂನ್ ವರೆಗೆ ಹೆಚ್ಚಾಗಿ ಮುಂದೆ ಸೆಪ್ಟೆಂಬರ್ ನಲ್ಲಿ ಎಲೆಗಳು ಉದುರಿ ನಿಧಾನವಾಗಿ ಛಳಿ ಹಿಡಿದುಕೊಳ್ಳುವಲ್ಲಿಯವರೆಗೆ ಎಲ್ಲಿಯವರೆಗೆ ಹೊರಗಿನ ಉಷ್ಣತೆ ಸಹಿಸಿಕೊಳ್ಳಬಹುದೋ ಅಲ್ಲಿಯವರೆಗೆ ಬೇಸಿಗೆಯನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

ಇಲ್ಲಿನ ಕಾರ್ಟೂನ್ ಶೋ‌ಗಳಿಂದ ಹಿಡಿದು ನಾನು ನೋಡಿದ ಬೇಕಾದಷ್ಟು ಜನರವರೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಸಂದರ್ಭಕ್ಕೆ ತಕ್ಕಂತೆ ಉಡುಪುಗಳನ್ನು ಬದಲಾಯಿಸುವವರೆ. ನಮ್ಮ ದಕ್ಷಿಣ ಭಾರತದಲ್ಲಿ ವರ್ಷದುದ್ದಕ್ಕೂ ಒಂದೇ ವೇಷ-ಭೂಷಣ ನಡೆದೀತು ಎನ್ನುವಂತಲ್ಲ. ಅಲ್ಲದೇ, ಗೋಲ್ಫ್ ಆಡುವುದಕ್ಕೆ ಹೋಗುವುದರಿಂದ ಹಿಡಿದು ಫಿಶಿಂಗ್ ಹೋಗುವಲ್ಲಿಯವರೆಗೆ, ಆಫೀಸಿಗೆ ಹೋಗುವುದರಿಂದ ಹಿಡಿದು, ಟೆನ್ನಿಸ್ ಆಡುವಲ್ಲಿಯವರೆಗೆ, ಛಳಿಗೆ-ಬಿಸಿಲಿಗೆ ಥರಾವರಿ ವೇಶಗಳು ಅವುಗಳದ್ದೇ ಆದ ಬಣ್ಣ-ವಿನ್ಯಾಸಗಳಲ್ಲಿ. ನಮ್ಮ ಉತ್ತರ ಭಾರತದ ಜನರಲ್ಲಿ ಸ್ವಲ್ಪ ಈ ರೀತಿಯ ಆದ್ಯತೆ ಇರಬಹುದು, ಛಳಿ ಇರಲಿ ಇಲ್ಲದಿರಲಿ ಆ ಒಂದು ಸೀಜನ್ ಬಂದಿತೆಂದರೆ ಕೊನೇ ಪಕ್ಷ ಒಂದು ಸ್ವೆಟರ್ ಇಲ್ಲದೆ ಜನರು ಹೊರಗೆ ಕಾಲಿಡೋದೇ ಇಲ್ಲವೇನೋ.

***

’ರಿಟೈರ್ಡ್ ಆದ ಮೇಲೆ ಬದುಕೇನಿದೆ, ಈಗ ಇದ್ದು ಬದುಕೋದೇ ಸೊಗಸು. ಮುಂದೇನಾಗುತ್ತೋ ಎಂದು ಯಾರಿಗೆ ಗೊತ್ತು?’ ಎಂದು ನನಗರಿವಿಲ್ಲದಂತೆ ನನ್ನ ಬಾಯಿಯಿಂದ ಈ ಅಣಿಮುತ್ತುಗಳು ಉದುರಿದವು. ನನ್ನ ಜೊತೆಯಲ್ಲಿ ಕಾಫಿ ಕುಡಿಯೋದಕ್ಕೆ ಬಂದ ಮತ್ತಿಬ್ಬರು ತಮ್ಮ ವೃದ್ಧ ತಂದೆ-ತಾಯಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಒಂದು ರೀತಿಯಲ್ಲಿ ಕಾರಣ ಎಂದು ಹೇಳಿದರೂ ಮಧ್ಯಾಹ್ನ ನಾಲ್ಕು ಘಂಟೆಯ ಮೇಲೆ ಹೊಟ್ಟೆಯೊಳಗೆ ಇಳಿಯುತ್ತಿದ್ದ ಗರಮ್ ಕಾಫಿಗೆ ನಾನು ಕೃತಜ್ಞತೆಯನ್ನು ಹೇಳಲೇಬೇಕು. ಪ್ರತೀ ಸಾರಿ ಮಧ್ಯಾಹ್ನದ ಕಾಫಿಯ ನಂತರ ಮನಸ್ಸು ಅದರದ್ದೇ ಒಂದು ತತ್ವವನ್ನು ಹೊಕ್ಕಿಕೊಂಡು ಅದರ ನೆಲೆಯಲ್ಲಿ ಹೊರಗಿನದನ್ನು ನೋಡೋದು ಸಹಜವೇ ನನಗೆ.

ನನ್ನ ಮಾತುಗಳು ಜೊತೆಗಿದ್ದವರಿಗೆ ಸ್ವಲ್ಪ ಆಶ್ಚರ್ಯವನ್ನು ಮೂಡಿಸಿದರೂ ಅವರು ನನ್ನ ತರ್ಕವನ್ನು ಒಪ್ಪಿಕೊಂಡ ಹಾಗಿತ್ತು, ಅದರ ವಿರುದ್ಧವಾಗಿ ಏನನ್ನೂ ಹೇಳದಿದ್ದುದನ್ನು ನೋಡಿ ನಾನು ಹಾಗಂದುಕೊಳ್ಳಬೇಕಾಯ್ತು. ಏನಿರಬಹುದು, ಈ ನಿವೃತ್ತ ಜೀವನದ ಮರ್ಮ? ಎಂದು ಮನಸ್ಸು ತನ್ನದೇ ಯಾವುದೋ ಒಂದು ಸಬ್ ರುಟೀನ್‌ನಲ್ಲಿ ಕಳೆದುಕೊಳ್ಳತೊಡಗಿತು.

ಭಾರತದಲ್ಲಿದ್ದೋರು ತಮ್ಮ ಮಕ್ಕಳ ಮದುವೆ ಯೋಗಕ್ಷೇಮಕ್ಕೆ ಒಂದಿಷ್ಟು ದುಡ್ಡು-ಕಾಸು ಉಳಿಸಿಕೊಂಡಿರುತ್ತಾರೆ. ಸರಿಯಾದ ಆಹಾರ, ದಿನಚರಿ ಇಲ್ಲದ ಶರೀರಗಳು ಕುಬ್ಜವಾಗುವುದರ ಜೊತೆಗೆ ಅಲ್ಲಲ್ಲಿ ಸಾಕಷ್ಟು ಬೊಜ್ಜು ಕಟ್ಟಿಕೊಳ್ಳತೊಡಗುತ್ತವೆ. ತಲೆಯ ಕೂದಲು ನೆರೆತೋ ಅಥವಾ ಉದುರಿಹೋಗಿ, ಹಲ್ಲುಗಳು ಸಂದುಗಳಲ್ಲಿ ಜಾಗ ಕಾಣಿಸಿಕೊಂಡು, ಮುಖದ ಮೇಲೆ ನೆರಿಗೆಗಳು ಹುಟ್ಟಿ, ಮೂಗಿನ ಮೇಲೆ ಕನ್ನಡಕ ಕುಳಿತು, ಆಗಾಗ್ಗೆ ’ಒಂದು ಕಾಲದಲ್ಲಿ ಹಾಗಿತ್ತು...’ ಎನ್ನುವ ವಾಕ್ಯಗಳು ಸಹಜವಾಗಿ ಹೋಗುವುದು ನಿವೃತ್ತ ಬದುಕಿನ ಲಕ್ಷಣವಾಗಿದ್ದಿರಬಹುದು. ಅದೇ ಭಾರತೀಯರು ವಿದೇಶಗಳಲ್ಲಿದ್ದರೂ ಈ ವಿವರಣೆಯನ್ನು ಬಿಟ್ಟು ಹೆಚ್ಚು ಬದಲಾದಂತೆ ಕಾಣಿಸಿಕೊಂಡಿಲ್ಲದಿರುವುದು ನನ್ನ ಕಲ್ಪನೆ ಅಲ್ಲವಷ್ಟೇ.

ನನಗೆ ಇಲ್ಲಿನ ಸಾಲ ಕೂಪದಲ್ಲಿ ಸೇರಿಕೊಳ್ಳುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ ಇಲ್ಲಿನ ಜನರ ಪ್ರಾಯೋಗಿಕತೆಗೆ ತಲೆಬಾಗಲೇ ಬೇಕಾಗುತ್ತದೆ. ನೀವು ಜೀವನ ಪರ್ಯಂತ ಕಷ್ಟಪಟ್ಟು ದುಡಿದು ಬಾಡಿಗೆ ಮನೆಯಲ್ಲಿದ್ದು ಎಲ್ಲ ಸಂಕಷ್ಟಗಳ ನಡುವೆ ಹಣವನ್ನು ಕೂಡಿಟ್ಟು, ಬೆಳೆಸಿ ಮುಂದೆ ನಿವೃತ್ತರಾಗುವ ಹೊತ್ತಿಗೆ ಮನೆ ಕಟ್ಟಿಸಿಕೊಂಡು ಹಾಯಾಗಿ ಇರುವ ಕನಸು ಅಥವಾ ಆಲೋಚನೆ ಹೇಗಿದೆ? ಅದರ ಜೊತೆಗೆ ಮೊದಲಿನಿಂದಲೇ ನೀವು ನಿಮಗೆ ಬೇಕಾದ ಮನೆಯನ್ನು ಸಾಲದ ಮುಖೇನ ತೆಗೆದುಕೊಂಡು ಅದನ್ನು ಕಂತುಗಳಲ್ಲಿ ಬಡ್ಡಿ-ಅಸಲನ್ನಾಗಿ ಹಲವಾರು ವರ್ಷಗಳು ತೀರಿಸುತ್ತಾ ಹೋಗುವುದು ಹೇಗೆ? ಸಾಲ ಎಲ್ಲರಿಗೂ ಇದೆ, ತಿರುಪತಿ ತಿಮ್ಮಪ್ಪನಿಂದ ಹಿಡಿದು ನಮ್ಮಂಥ ಹುಲುಮಾನವರವರೆಗೆ, ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಮುಂದುವರೆದೆ ದೇಶಗಳವರೆಗೆ. ನಮ್ಮ ಅಗತ್ಯಗಳಿಗೋಸ್ಕರ ಮುಂದಾಲೋಚನೆಯಿಂದ ಸಾಲ ಮಾಡುವುದು ತಪ್ಪಾದರೂ ಹೇಗೆ ಎಂದು ಪ್ರಶ್ನಿಸಿಕೊಳ್ಳುವಷ್ಟರ ಮಟ್ಟಿಗೆ ಈಗಾಗಲೇ ಆಲೋಚನೆಗಳು ಬೆಳೆದುಕೊಂಡಿವೆ, ಊಹೂ ಪ್ರಯೋಜನವಿಲ್ಲ - ನಿಮಗೆ ಬೇಕೋ ಬೇಡವೋ ಸಾಲದೊಳಗೆ ನೀವಿದ್ದೀರಿ, ನಿಮ್ಮೊಳಗೆ ಸಾಲವಿದೆ.

***

ನಾಳಿನದರಲ್ಲಿ ಏನಿದೆ ಏನಿಲ್ಲವೋ ಯಾರೂ ಗ್ಯಾರಂಟಿ ಕೊಡೋದಿಲ್ಲ. ಅದಕ್ಕೇ ನಮ್ಮ ಹಿರಿಯರು "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ" ಎಂದಿದ್ದು. ಇಂದಿನದು ಎಂದರೆ ವರ್ತಮಾನ, ನಾಳಿನ ಮೂರಕ್ಷರದ ಭವಿಷ್ಯವಾಗಲೀ, ನಿನ್ನೆಯ ಎರಡಕ್ಷರದ ಭೂತವಾಗಲೀ ನಾಲ್ಕಕ್ಷರದ ವರ್ತಮಾನವನ್ನು ಕ್ಷುಲ್ಲಕವಾಗೇಕೆ ಮಾಡಬೇಕು? ನಿನ್ನೆ ನಿನ್ನೆಯೇ ಆಗಿಕೊಂಡಿದ್ದರೂ ಇಂದು ನಾಳೆಯ ಸೇರುವುದರೊಳಗೆ ಆ ಇಂದನ್ನು ಇಂದೇ ಅನುಭವಿಸುವ ಮನಸ್ಥಿತಿ ನಮಗೇಕಿಲ್ಲ? ಅಷ್ಟೂ ಮಾಡಿ ನಾಳೆಯ ನಾಳೆಗಳು ಹೀಗೇ ಇರುತ್ತವೆ ಎಂದು ಯಾರೂ ಬರೆದಂತೂ ಕೊಟ್ಟಿಲ್ಲ, ಎಂತಹ ಅತಿರಥ ಮಹಾರಥರಿಗೂ ನಾಳೆಯ ಪಾಡು ಸಂಪೂರ್ಣವಾಗಿ ತಿಳಿದಿಲ್ಲ ಹಾಗಿರುವಾಗ ಎಲ್ಲವೂ ಭವಿಷ್ಯಮಯವಾಗೇ ಏಕಿರಬೇಕು? ಇಂದಿನ ದಿನವನ್ನು ’ಏನೋ ಒಂದು ಮಾಡಿ ತಿಂದರಾಯಿತು...’ ಎನ್ನುವ ಅಸಡ್ಡೆಯ ಮನೋಭಾವನೆಯಿಂದೇಕೆ ನೋಡಬೇಕು ನಾಳೆ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳೂತ್ತವೆ ಎನ್ನುವ ಗ್ಯಾರಂಟಿ ಎನೂ ಇಲ್ಲದಿರುವಾಗ?

Sunday, April 06, 2008

ಬೇವು-ಬೆಲ್ಲ ಇರದ ಹೊಸ ವರ್ಷಗಳು

ಓಹ್, ನಮಸ್ಕಾರ, ನಾವು ದಕ್ಷಿಣ ಭಾರತದ ಮಂದಿ ಹಾಗೂ ಇದು ನಮಗೆ ಹೊಸ ವರ್ಷ ಮತ್ತು ಅದರ ಆಚರಣೆ! ಅಯ್ಯೋ, ಇದೇನ್ odd ಈಗ ಏಪ್ರಿಲ್ ಮಧ್ಯೆ ಹೊಸವರ್ಷ ಶುರುವಾಯ್ತು ಅಂತೀರಾ? ಹಾಗೇ ಸಾರ್, ನಮ್ಮ ಕ್ಯಾಲೆಂಡರಿನಲ್ಲಿ ಮಹತ್ವದ ದಿನಗಳೆಲ್ಲ ಆರಂಭವಾಗೋದು ಇಂಗ್ಲೀಷಿನ ಕ್ಯಾಲೆಂಡರಿನ ಮಧ್ಯ ಭಾಗಕ್ಕೆ, ಅದನ್ನ odd ಅಂಥಾ ಬೇಕಾದ್ರೂ ಕರೆದುಕೊಳ್ಳಿ, even ಅಂಥಾನಾದ್ರೂ ಉದ್ಗರಿಸಿ ನಮಗೇನೂ ಇಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಆರಂಭವಾಗೋದಕ್ಕೆ ಮೊದಲೂ ನಮ್ಮ ದಿನಗಳು ಹೀಗೇ ಇದ್ವು ಅನ್ನೋದಕ್ಕೆ ಹಲವರು ಪುರಾವೆಗಳನ್ನೇನು ಒದಗಿಸೋ ಅಗತ್ಯ ಇಲ್ಲ, ಒಂದೇ ಮಾತ್ನಲ್ಲಿ ಹೇಳೋದಾದ್ರೆ ನಮ್ಮದು ಹಳೇ ಸಂಸ್ಕೃತಿ, ಹಳೇ ಪರಂಪರೆ, ನಾವು ಹಳಬರು ಅಷ್ಟೇ!

ನಿಮಗೆ ನಂಬಿಕೆ ಬರಲಿಲ್ಲಾಂತಂದ್ರೆ ನಿಮ್ಮ ಲಾನೋ ಗಾರ್ಡನ್ನಿನಲ್ಲಿರೋ ಗಿಡಮರಗಳನ್ನ ಹೋಗಿ ವಿಚಾರಿಸಿಕೊಂಡು ಬನ್ನಿ, ನಿಮ್ಮ Spring ಸೀಸನ್ ಮಾರ್ಚ್ ಇಪ್ಪತ್ತೊಂದಕ್ಕೇ ಶುರುವಾಗಿರಲೊಲ್ಲದ್ಯಾಕೆ, ಈ ಗಿಡಮರಗಳಿಗೆ ಏಪ್ರಿಲ್ ಆರನೇ ತಾರೀಖ್ ಚಿಗುರಿಕೊಳ್ಳೀ ಅಂಥಾ ನಾನೇನೂ ಆರ್ಡರ್ ಕಳಿಸಿಲ್ಲಪ್ಪಾ. ಈಗಾದ್ರೂ ಗೊತ್ತಾಯ್ತಾ ನಮ್ ಚೈತ್ರ ಮಾಸ, ವಸಂತ ಋತು ಅನ್ನೋ ಕಾನ್ಸೆಪ್ಟೂ, ಎನ್ ತಿಳಕೊಂಡಿದೀರಾ ನಮ್ಮ ಪರಂಪರೇನೇ ದೊಡ್ದು, ಅದರ ಮರ್ಮಾ ಇನ್ನೂ ಆಳ...ಆದ್ರೆ ನನಗೆ ಅಷ್ಟು ಡೀಟೇಲ್ ಗೊತ್ತಿಲ್ಲ ಏನ್ ಮಾಡ್ಲಿ ಹೇಳ್ರಿ?

***

ಬೇವು-ಬೆಲ್ಲ ತಿನ್ನದೇ ಯುಗಾದಿಯನ್ನೂ ಹೊಸವರ್ಷವನ್ನೂ ಆಚರಿಸಿಕೊಳ್ಳುತಿರೋ ಹಲವಾರು ವರ್ಷಗಳಲ್ಲಿ ಇದೂ ಒಂದು ನೋಡ್ರಿ. ಅವನೌವ್ವನ, ಏನ್ ಕಾನ್ಸೆಪ್ಟ್ ರೀ ಅದು, ಬದುಕಿನಲ್ಲಿ ಬೇವು-ಬೆಲ್ಲ ಎರಡೂ ಇರಬೇಕು ಅಂತ ಅದು ಯಾವನು ಯಾವತ್ತು ಕಾನೂನ್ ಮಾಡಿದ್ದಿರಬಹುದು? ಭಯಂಕರ ಕಾನ್ಸೆಪ್ಟ್ ಅಪಾ, ಎಂಥೆಂಥಾ ಫಿಲಾಸಫಿಗಳನ್ನೆಲ್ಲ ಬೇವು-ಬೆಲ್ಲದಲ್ಲೇ ಅರೆದು ಮುಚ್ಚಿ ಬಿಡುವಷ್ಟು ಗಹನವಾದದ್ದು. ನಾವೆಲ್ಲ ಹಿಂದೆ ಬೇವಿನ ಮರಾ ಹತ್ತಿ ಪ್ರೆಶ್ ಎಲೆಗಳನ್ನು ಕೊಯ್ದುಕೊಂಡು ಬಂದು ಪಂಚಕಜ್ಜಾಯದೊಳಗೆ ಅಮ್ಮ ಸೇರಿಸಿಕೊಡ್ತಾಳೆ ಅಂತಲೇ ಕಣ್ಣೂ-ಬಾಯಿ ಬಿಟಗೊಂಡು ಕಾಯ್‌ಕೊಂತ ಕುಂತಿರತಿದ್ವಿ. ನಾನಂತೂ ಬೇವಿನ ಮರದ ಮ್ಯಾಲೇ ಒಂದಿಷ್ಟು ಎಲೆಗಳನ್ನು ತಿಂದು ಒಂದ್ ಸರ್ತಿ ಕಹಿ ಕಷಾಯ ಕುಡಿದೋರ್ ಮಖಾ ಮಾಡಿದ್ರು, ಮತ್ತೊಂದು ಸರ್ತಿ ಇವನು ಬೇವಿನ ಎಲೇನೂ ಹಂಗೇ ತಿಂತಾನೇ ಭೇಷ್ ಎಂದು ಯಾರೋ ಬೆನ್ನು ಚಪ್ಪರಿಸಿದ ಹಾಗೆ ನನಗೆ ನಾನೇ ನೆನೆಸಿಕೊಂಡು ನಕ್ಕಿದ್ದಿದೆ. ನಮ್ಮೂರ್ನಾಗ್ ಆಗಿದ್ರೆ ಇಷ್ಟೊತ್ತಿಗೆ ಕಹಿ ಬೇವಿನ ಗಿಡಗಳು ಒಳ್ಳೇ ಹೂ ಬಿಟಗೊಂಡು ಮದುವೆಗೆ ಅಲಂಕಾರಗೊಂಡ ಹೆಣ್ಣಿನಂತೆ ಕಂಗೊಳಿಸುತ್ತಿದ್ದವು ಅಂತ ಆಲೋಚ್ನೆ ಬಂದಿದ್ದೆ ತಡ ಇಲ್ಲಿ ನಮ್ಮ ಗಾರ್ಡನ್ನಿನ್ಯಾಗೆ ಏನ್ ನಡದತಿ ಅಂತ ನೋಡೋ ಆಸೆ ಬಂತು. ತಕ್ಷಣ ಇನ್ನೂ ನಲವತ್ತರ ನಡುವೆ ಉಷ್ಣತೆ ಇರೋ ಈ ಊರಿನ ಛಳಿಗೆ ಹೆದರಿಕೆ ಆಗಲಿ ಎನ್ನುವಂತೆ ನನ್ನಲ್ಲಿದ ಬೆಚ್ಚನೆ ಜಾಕೆಟ್ ಒಂದನ್ನು ಹೊದ್ದು ಹೊರ ನಡೆದೆ.

ಮನೆಯ ಸುತ್ತಲಿನ ಹುಲ್ಲು ಹಾಸೋ, ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುತ್ತಿರೋ ನಿರುದ್ಯೋಗಿ ಯುವಕನ ಗಡ್ಡವನ್ನು ನೆನಪಿಗೆ ತಂದಿತು, ಈಗಲೋ ಆಗಲೋ ಚಿಗುರೊಡೆದು ಹುಲುಸಾಗಿ ಬೆಳೆಯುವ ಲಕ್ಷಣಗಳೆಲ್ಲ ಇದ್ದವು. ಹೊರಗಡೆಯ ಪೇಪರ್ ಬರ್ಚ್ ಮರಗಳು ಇಷ್ಟು ದಿನ ಗಾಳಿಗೆ ತೊನೆದೂ ತೊನೆದೂ ಕಷ್ಟಪಟ್ಟು ಕೆಲಸ ಮಾಡಿಯೂ ದಿನಗೂಲಿ ಸಂಬಳ ಪಡೆದು ಬದುಕನ್ನು ನಿಭಾಯಿಸೋ ಮನೆ ಯಜಮಾನನ ಮನಸ್ಥಿತಿಯನ್ನು ಹೊದ್ದು ನಿಂತಿದ್ದವು. ಅಕ್ಕ ಪಕ್ಕದ ಥರಾವರಿ ಹೂವಿನ ಗಿಡಗಳಲ್ಲಿ ಬದುಕಿನ ಸಂಚಾರ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟೇಷನ್ನಿನಲ್ಲಿ ಮುಂಜಾನೆ ಐದೂವರೆಗೆಲ್ಲಾ ಸಿಟಿಬಸ್ಸುಗಳು ಪ್ರಾರಂಭವಾಗಿ ಮೊದಲ ಟ್ರಿಪ್ ಹೊರಡುವಾಗ ಇರುವ ಗಲಾಟೆ ವಾತಾವರಣ ಇದ್ದಂತಿತ್ತು. ಇನ್ನು ನನಗೆ ತಿಳಿಯದ ಅನೇಕ ಹೂವಿನ ಮರಗಳು ಮುಂಬರುವ ಅದ್ಯಾವುದೋ ಜಾತ್ರೆಗೆ ಸಿದ್ಧವಾಗುವ ತೇರಿನಂತೆ ನಿಧಾನವಾಗಿ ಮೊಗ್ಗೊಡೆಯುತ್ತಿದ್ದವು. ಇಷ್ಟು ದಿನ ಬಲವಾಗಿ ಬೀಸಿದ ಗಾಳಿಯ ದೆಸೆಯಿಂದ ನಮ್ಮ ಮನೆಯ ಬದಿಯಲ್ಲಿನ ಬರ್ಚ್ ಮರವೊಂದರ ದೊಡ್ಡ ಗೆಲ್ಲು ಮುರಿದು ಸಂಪೂರ್ಣ ಕೆಳಗೆ ವಾಲಿಕೊಂಡಿದ್ದು ಸ್ವಲ್ಪ ಹಿಡಿದೆಳೆದರೂ ಕಿತ್ತು ಬರುವಂತಿತ್ತು, ಇನ್ನೇನು ಕಿತ್ತೇ ಬಿಡೋಣ ಎಂದು ಮನಸು ಮಾಡಿ ಗೆಲ್ಲನ್ನು ಮುಟ್ಟಿದವನಿಗೆ ಮುರಿದು ಬಿದ್ದರೂ ಚಿಗುರುವುದನ್ನು ಮರೆಯದ ಆ ಗೆಲ್ಲಿನ ಜೀವಂತಿಕೆಗೆ ನಾನೇಕೆ ಭಂಗ ತರಲಿ ಎಂದು ಕೀಳದೇ ಹಾಗೆ ಬಿಟ್ಟು ಬಂದದ್ದಾಯಿತು. ಒಟ್ಟಿಗೆ ವಸಂತನಾಗಮನ ನಮ್ಮ ಮನೆಗೂ ಬಂದಿದೆ, ಬೇವು-ಬೆಲ್ಲ ತಿನ್ನದಿದ್ದರೇನಂತೆ, ಆ ರೀತಿಯಲ್ಲಿ ನಾವೂ ಹೊಸವರ್ಷದ ಭಾಗಿಗಳೇ ಎಂದು ನನ್ನ ನೆರೆಹೊರೆಯೂ ಸಂತೋಷದ ಮುಖಭಾವ ಹೊದ್ದುಕೊಂಡದ್ದು ಸ್ವಲ್ಪ ಸಮಾಧಾನವನ್ನು ತಂದಿತು.

***

ನಮಗೆ ನಮ್ಮ ನೀತಿ ಚೆಂದ. ಆದರೆ ನಮ್ಮ ಹೊಸವರ್ಷ ನಮಗೆ ಗೊತ್ತಿರೋ ಒಂದಿಷ್ಟು ಜನರಿಗೆ ’ಹೊಸವರ್ಷದ ಶುಭಾಶಯಗಳು’ ಎಂದು ಹೇಳಿ ಮುಗಿಸುವಲ್ಲಿಗೆ ಸೀಮಿತವಾಗಿ ಹೋಯಿತಲ್ಲ ಎಂದು ಒಂದು ರೀತಿಯ ಕಸಿವಿಸಿ. ತೆಲುಗರೋ ಕನ್ನಡಿಗರೋ ಒಟ್ಟಿಗೆ ದಕ್ಷಿಣ ಭಾರತದ ಹೆಚ್ಚು ಜನ ಆಚರಿಸುವ ಹೊಸ ವರ್ಷದ ಆಚರಣೆ ಇದು. ಚಾಂದ್ರಮಾನ ಯುಗಾದಿ ಇರುವ ಹಾಗೆ ಸೂರ್ಯಮಾನದ ಯುಗಾದಿಯೂ ಇದೆ. ಬದುಕಿನಲ್ಲಿ ಸ್ವಾತಂತ್ರ್ಯ ಅಂದರೆ ಇದೇ ಇರಬೇಕು, ನಿಮಗೆ ಯಾವಾಗ ಬೇಕು ಆಗ ಆಚರಿಸಿಕೊಳ್ಳಿ ಎನ್ನುವ ಫ್ರೀಡಮ್! ನಿಮಗೆ ಯಾವ ದೇವರು ಬೇಕು ಅದನ್ನು ಪೂಜಿಸಿಕೊಳ್ಳಿ ಎನ್ನುವ ಧೋರಣೆ. ನಿಮ್ಮ ತರ್ಕ ನಿಮ್ಮ ನೀತಿ ನಿಮ್ಮ ಧರ್ಮ, ಅದ್ದರಿಂದಲೇ ಇರಬೇಕು ಸನಾತನ ಧರ್ಮಕ್ಕೆ ಯಾವುದೇ ಪ್ರವಾದಿಗಳಿರದಿದ್ದುದು. ಇದು ಮತವಲ್ಲ, ಧರ್ಮ, ಜೀವನ ಕ್ರಮ, ಸ್ವಭಾವ, ನಿಮ್ಮ-ನಮ್ಮ ರೀತಿ ನೀತಿ - ಅವೆಲ್ಲವೂ ಒಡಗೂಡಿಯೇ ನಾವು ಒಂದಾಗಿರೋದು - ವೈವಿಧ್ಯತೆಯಲ್ಲೂ ಏಕತೆ.

ನಿಮಗೆ ನಿಮ್ಮ ಹೊಸವರ್ಷ ಯಾವಾಗ ಬೇಕಾದರೂ ಆರಂಭವಾಗಲಿ, ನನಗಂತೂ ಹೊಸವರ್ಷ ಶುರುವಾಗಿದೆ...ಮುಂಬರುವ ದಿನಗಳು ನಮಗೆಲ್ಲ ಒಳ್ಳೆಯದನ್ನು ಮಾಡಲಿ!

ಹೊಸ ವರ್ಷದ ಶುಭಾಶಯಗಳು, ಸರ್ವಧಾರಿ ನಾಮ ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ!

Wednesday, April 02, 2008

ಚಿಲ್ರೆ ಜನಾ ಸಾರ್...

ಇವರು ಕಟ್ಟಿಕೊಂಡ ಪ್ರಾಸೆಸ್ಸುಗಳೇ ಇವರನ್ನ ಕೊನೆಗೆ ಕಟ್ಟಿಕೊಳ್ಳೋದು ಅಂತ ಅನ್ನಿಸಿದ್ದು, ಕೇವಲ ಎರಡು ಸೆಂಟುಗಳ ಸಲುವಾಗಿ ಇಪ್ಪತ್ತು ಡಾಲರ್ ಚಿಲ್ಲರೆ ಮಾಡಿಸಬೇಕಾದ ಪ್ರಸಂಗ ಒದಗಿ ಬಂದಾಗ. ನನ್ನ ಹತ್ತಿರ ಇದ್ದ ಡಾಲರ್ ಬಿಲ್ ಒಂದರಲ್ಲಿ ನಾನು ಏನನ್ನೋ ಕೊಂಡುಕೊಳ್ಳುತ್ತೇನೆ ಎಂದು ಅಂಗಡಿಯನ್ನು ಹೊಕ್ಕ ನನಗೆ ಬೇಕಾದ ವಸ್ತು ಒಂದು ಡಾಲರ್ ಒಳಗಡೆ ಇದ್ದರೂ ಅದಕ್ಕೆ ಏಳು ಪ್ರತಿಶತ ಟ್ಯಾಕ್ಸ್ ಸೇರಿಸಿ ಒಟ್ಟು ಬಿಲ್ ಡಾಲರಿನ ಮೇಲೆ ಎರಡು ಸೆಂಟ್‌ಗಳಾದಾಗ ನನ್ನ ಬಳಿ ಇದ್ದ ಹಣಕಾಸಿನ ಸಾಧನ ಸಾಮಗ್ರಿಗಳು ಒಮ್ಮೆ ಗರಬಡಿದು ಹೋಗಿದ್ದವು: ಈ ಕಡೆ ಡೆಬಿಟ್, ಕ್ರೆಡಿಟ್ ಕಾರ್ಡ್ ಉಪಯೋಗಿಸಲಾರದ ದೀನತೆ, ಆ ಕಡೆ ಇಪ್ಪತ್ತ್ ಡಾಲರುಗಳನ್ನು ಎರಡು ಸೆಂಟಿನ ಸಲುವಾಗಿ ಮುರಿಸಲು ಹಿಂಜರಿದ ಕೊಸರಾಟ ಜೊತೆಗೆ ಅಂಗಡಿಯ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲೇ ಹುಟ್ಟಿ ಬೆಳೆದವು ಎನ್ನುವಂತೆ ಆಡುವ ಒಂದು ಸೆಂಟನ್ನು ಬಿಟ್ಟೂ ಕೆಲಸ ಮಾಡಲಾರೆ ಎನ್ನುವ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಪ್ರಾಸೆಸ್ಸುಗಳು.

ಈ ಒಂದು ಅಥವಾ ಎರಡು ಸೆಂಟುಗಳ ಹಣೆಬರಹವೇ ಇಷ್ಟು - ದಾರಿಯಲ್ಲಿ ಬಿದ್ದರೂ ಯಾರೂ ಅವನ್ನು ಮೂಸಿ ನೋಡದಂಥವುಗಳು, ಅವುಗಳನ್ನು ಉತ್ಪಾದಿಸುವುದರ ಒಟ್ಟು ಮೊತ್ತ ಅವುಗಳ ಮುಖಬೆಲೆಗಿಂತ ಹೆಚ್ಚಿರುವಂತಹವು. ನಮ್ಮ ಕೆಫೆಟೇರಿಯಾ ಮೊದಲಾದ ಸ್ಥಳಗಳಲ್ಲಿ ಸೇಲ್ಸ್ ರಿಜಿಸ್ಟರ್ ಪಕ್ಕದಲ್ಲಿ ಕೆಲವರು ಚೇಂಜ್ ತೆಗೆದುಕೊಳ್ಳದೇ ಬಿಟ್ಟು ಹೋದ ಕಾಪರ್ ಕಾಯಿನ್ನುಗಳನ್ನು ಇಟ್ಟಿರುತ್ತಾರೆ, ನನ್ನಂತಹ ಕಂಜೂಸು ಮನುಷ್ಯರಿಗೆ ಉಪಯೋಗಕ್ಕೆ ಬರಲಿ ಎಂದು! ನನ್ನಂತಹವರು ಎಂದರೆ, ಅನೆಯ ಹಾಗಿನ ಡಾಲರನ್ನು ಹೇಗೆ ಬೇಕೆಂದರಲ್ಲಿ ಎಲ್ಲಿ ಬೇಕೆಂದರಲ್ಲಿ ಹೋಗಗೊಟ್ಟು, ಒಂದೆರಡು ಸೆಂಟುಗಳ ಬಾಲವನ್ನು ಹಿಡಿದು ಎಳೆಯುವಂತಹವರು - ಹೆಚ್ಚೂ ಕಡಿಮೆ ಇನ್ನೊಬ್ಬರ ಒಂದೆರಡು ಸೆಂಟುಗಳನ್ನು ಧಾರಾಳವಾಗಿ ಬಳಸಿದ್ದಿದೆಯೇ ಹೊರತು, ಊಹ್ಞೂ, ನಾವಂತೂ ಕೈ ಎತ್ತಿಯೂ ಇನ್ನೊಬ್ಬರಿಗೆ ಕೊಟ್ಟವರಲ್ಲ. ನಮ್ಮಂತಹವರಿಗೆ ಸಿಂಹಸ್ವಪ್ನವಾಗಿಯೆಂದೇ ಈ ಕಟ್ಟು ನಿಟ್ಟಿನ ಚಿಲ್ಲರೆ ಎಣಿಸಿ ಲೆಕ್ಕ ಇಟ್ಟುಕೊಳ್ಳುವ ಟರ್ಮಿನಲ್ಲುಗಳು, ಅವುಗಳನ್ನು ನಾನು ಶಪಿಸೋದೇ ಹೆಚ್ಚು.

ನೀವು ತರಕಾರಿ ತೆಗೆದುಕೊಳ್ಳೋದಕ್ಕೆ ಯಾವತ್ತಾದರೂ ಫಾರ್ಮರ್ಸ್ ಮಾರ್ಕೆಟ್ಟಿಗೆ ಹೋಗಿ ನೋಡಿ, ಅಲ್ಲಿನ ತೂಕಗಳಾಗಲೀ, ಅಳತೆಗಳಾಗಲೀ ಮೇಲಾಗಿ ಚಿಲ್ಲರೆ ಪ್ರಾಸೆಸ್ಸುಗಳಾಗಲೀ ಎಲ್ಲವೂ ಧಾರಾಳವಾಗಿರುತ್ತವೆ. ನಮ್ಮೂರಿನ ಸಂತೆಯಲ್ಲಿ ಯಾವನಾದರೂ ಬೀನ್ಸು-ಬದನೇಕಾಯಿಗಳನ್ನು ಕೆಜಿ ಕಲ್ಲಿಗೆ ನಿಖರವಾಗಿ ತೂಗಿದನೆಂದರೆ - ’ಏನೂ, ಬಂಗಾರ ತೂಗ್‌ದಂಗ್ ತೂಗ್ತೀಯಲಾ’ ಎಂದು ಯಾರಾದರೂ ಬೈದಿರೋದು ನಿಜ. ಆದರೆ, ಈ ಪಾಯಿಂಟ್ ಆಫ್ ಸೇಲ್ಸ್ ಟರ್ಮಿನಲ್ಲುಗಳಿಗೆ ಧಾರಾಳತೆಯೆನ್ನುವುದನ್ನು ಕಲಿಸಿದವರು ಯಾರು? ಒಂದು ಪೌಂಡಿಗೆ ಇಂತಿಷ್ಟು ಬೆಲೆ ಎಂದು ಮೊದಲೇ ಪ್ರೊಗ್ರಾಮ್ ಮಾಡಿಸಿಕೊಂಡಿರುವ ಇವುಗಳು, ನೀವು ಆಯ್ದುಕೊಂಡ ಪ್ರತಿಯೊಂದು ವಸ್ತುವಿನ ಅಣು-ಅಣುವಿಗೂ ಆ ರೇಟ್ ಅನ್ನು ಅನ್ವಯಿಸಿ, ಅದರ ಒಟ್ಟು ಮೊತ್ತವನ್ನು ನಿಮ್ಮ ರಶೀದಿಗೆ ಸೇರಿಸದಿದ್ದರೆ ಅವುಗಳ ಜನ್ಮವೇ ಪಾವನವಾಗದು. ಇಂತಹ ಸಂದರ್ಭಗಳಲ್ಲೇ ನನಗನ್ನಿಸೋದು, ಧಾರಾಳತೆಗೂ-ಬಡತನಕ್ಕೂ ಅನ್ಯೋನ್ಯತೆ ಇದೆ ಎಂದು. ಹೆಚ್ಚು ಹೆಚ್ಚು ಸಿರಿವಂತರ ಜೊತೆ ವ್ಯವಹಾರ ಮಾಡಿ ನೋಡಿ ಅನುಭವಿಸಿದವರಿಗೆ ಗೊತ್ತು, ಅಲ್ಲಿ ಪ್ರತಿಯೊಂದು ಪೈಸೆಗೂ ಅದರ "ವ್ಯಾಲ್ಯೂ" ಇದೆ, ಅದೇ ಬಡತನದಲ್ಲಿ ಇಂದಿನ ನೂರು ರುಪಾಯಿ ಇಂದಿದೆ, ಅದು ಒಂದಲ್ಲ ಒಂದು ರೀತಿಯಲ್ಲಿ ಕೆಲಸಕ್ಕೆ ಬಂದರಾಯಿತು, ಅದರ ಹಿಂದು-ಮುಂದಿನ ಕರ್ಮ-ಮರ್ಮವನ್ನು ನೆನೆಸಿಕೊರಗುವ ಮನಸ್ಥಿತಿಯೇ ಅಲ್ಲಿಲ್ಲ!

ಇಪ್ಪತ್ತು ಡಾಲರನ್ನು ಮುರಿಸಲಿ ಬಿಡಲಿ, ನಾನು ತೆರಬೇಕಾದರ್ ಎರಡು ಸೆಂಟ್ ಅನ್ನು ಅಂಗಡಿಯವರು ಬಿಡುವಂತಿದ್ದರೆ...ಎಂದು ಒಮ್ಮೆ ಅನ್ನಿಸಿದ್ದು ನಿಜ. ನಮ್ಮೂರಿನ ಶೆಟ್ಟರ ಕಿರಾಣಿ ಮಳಿಗೆಗಳಲ್ಲಿ ಹಾಗೆ ಹಿಂದೆ ಮಾಡಿದ ಅನುಭವ ನನ್ನ ಈ ಕಸಿವಿಸಿಗೆ ಇಂಬು ನೀಡಿರಬಹುದು, ಅಥವಾ ’ಏನು ಎರಡು ಸೆಂಟ್ ತಾನೇ...’ ಎನ್ನುವ ಧಾರಾಳ ಧೋರಣೆ (ನನ್ನ ಪರವಾಗಿ) ಕೆಲಸಮಾಡಿರಬಹುದು. ಈ ಆಲೋಚನೆಗಳ ಒಟ್ಟಿಗೇ, ಹೀಗೇ ನನ್ನಂತಹವರಿಗೆ ಎರಡೆರಡು ಸೆಂಟುಗಳನ್ನು ಬಿಡುತ್ತಾ ಬಂದರೆ ಅಂಗಡಿಯವನ ಕಥೆ ಏನಾದೀತೂ ಎನ್ನುವ ಕೊರಗೊಂದು ಹುಟ್ಟುತ್ತದೆ, ಅದರ ಜೊತೆಗೇ ಜನರೇಕೆ ಸ್ವಲ್ಪ ಉದಾರಿಗಳಾಗಬಾರದು ಎನ್ನುವ ಧಾರಾಳತೆಯೂ ಒದಗಿ ಬರುತ್ತದೆ. ಲೆಕ್ಕ ಅನ್ನೋದು ಮನುಷ್ಯನ ಸೃಷ್ಟಿ, ಧಾರಾಳತೆ ಉದಾರತೆ ಮುಂತಾದವುಗಳು ಭಾವನೆಗಳು ಅವು ಲೆಕ್ಕಕ್ಕೆ ಸಿಕ್ಕುವವಲ್ಲ ಹೀಗಿರುವಾಗ ನಮ್ಮೂರಿನ ಧಾರಾಳ ಆಲೋಚನೆ ಅನುಭವಗಳ ಸಂತೆಯಲ್ಲಿ ಈ ಶ್ರೀಮಂತರ ನಾಡಿನ ಯಂತ್ರಗಳು ತೋರುವ ನಿಖರತೆಯನ್ನು ನಾನು ಯಾವ ಮಟ್ಟದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಿ? ಬರೀ ನನ್ನೊಳಗಿನ ಉದಾರತೆಯನ್ನು ಎಲ್ಲರಿಗೂ ಸಮವೆಂದು ಹೊಸ ಸಾಮಾಜಿಕ ಚಳುವಳಿಯನ್ನು ಹುಟ್ಟು ಹಾಕಲೇ, ಅಥವಾ ಬಡವರೊಳಗಿನ ಲೆಕ್ಕಕ್ಕೆ ಸಿಗದ ಅನಂತವಾದ ಮೌಲ್ಯವನ್ನು ಎಲ್ಲರಲ್ಲೂ ಇರಲಿ ಎಂದು ಹಾರೈಸಲೇ.

ಏನೇ ಹೇಳಿ, ನನ್ನ ಅನಿಸಿಕೆಯ ಪ್ರಕಾರ ಭಿಕ್ಷುಕರಿಗೂ ಬಡವರ ಮನೆಯಲ್ಲೇ ಸುಭಿಕ್ಷವಾಗಿ ಸಿಕ್ಕೀತು, ಅದೇ ಶ್ರೀಮಂತರ ಮನೆಯ ಮುಂದೆ ’ನಾಯಿ ಇದೆ ಎಚ್ಚರಿಕೆ’ ಎನ್ನುವ ಫಲಕವನ್ನು ದಾಟಿ, ಒಂದು ವೇಳೆ ಮನೆಯವರು ಪುರುಸೊತ್ತು ಮಾಡಿಕೊಂಡು ತಮ್ಮ ದೊಡ್ಡ ಮನೆಯಲ್ಲಿನ ಮುಂಬಾಗಿಲನ್ನು ತೆರೆದು ಭಿಕ್ಷುಕರನ್ನು ಗಮನಿಸುವ ಪ್ರಸಂಗ ಬಂದರೂ ಅದು ’ನಿನಗೇನಾಗಿದೆ ಧಾಡಿ ದುಡಿದು ತಿನ್ನಲಿಕ್ಕೆ?’ ಎನ್ನುವ ತತ್ವ ಪ್ರದಾನವಾದ ಬೈಗಳ ಕೆಲವೊಮ್ಮೆ ಸ್ವಲ್ಪ ಭಿಕ್ಷೆಯನ್ನೂ ಹೊತ್ತು ತಂದೀತು. ಏನ್ ಹೇಳ್ಲಿ, ಚಿಲ್ರೇ ಜನಾ ಸಾರ್, ಪ್ರತಿಯೊಂದಕ್ಕೂ ಯೋಚಿಸೋರು - ಅವರೇ ಬಡವರು; ಹೋಗಿದ್ದು ಹೋಗ್ಲಿ ಏನ್ ಬೇಕಾದ್ರಾಗ್ಲಿ ಅನ್ನೋರೇ ಶ್ರೀಮಂತರು, ಬುದ್ಧಿವಂತರು - ಯಾಕೆಂದ್ರೆ ನಿನ್ನೆ-ನಾಳೆಗಳ ಬಗ್ಗೆ ಯೋಚಿಸಿರೋ ಧಣಿಗಳು ಕಡಿದು ಕಟ್ಟಿಹಾಕಿರೋದು ಅಷ್ಟರಲ್ಲೇ ಇದೆ, ಏನಂತೀರಿ?

Tuesday, March 11, 2008

ಈ ಮಹಾನುಭಾವರ ಬಗ್ಗೆ ಬರೆಯೋದೇ ತಪ್ಪೇ?

ನಾನು ದಿನನಿತ್ಯದ ವಿದ್ಯಮಾನಗಳ ಬಗ್ಗೆ ಓದಿ ಅವರಿವರು ಮಹಾನುಭಾವರ ಬಗ್ಗೆ ಚಿಂತಿಸಿ ಬರೆಯೋ ಪ್ರಕ್ರಿಯೆ ಹಾಗಿರಲಿ, ಪ್ರಪಂಚದಾದ್ಯಂತ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎನ್ನೋದನ್ನ ತಿಳಿದುಕೊಳ್ಳೋ ಸವಾಲೇ ಇತ್ತೀಚೆಗೆ ದೊಡ್ಡದಾಗಿ ಕಾಣಿಸ್ತಾ ಇದೆ. ಅಂತಾದ್ದರಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಯಾರ ಹೆಸರು ಹೆಚ್ಚು ಚರ್ಚೆಗೆ ಒಳಪಡುತ್ತೋ, ನಾವು ದಶಕಗಳಿಂದ ಯಾರನ್ನು ಓದಿ/ನೋಡಿ ಬಲ್ಲೆವೋ ಅವರ ಹೆಸರೇ ಮನಸ್ಸಿನಲ್ಲಿ ಉಳಿಯೋದು ಸಹಜ ಎನಿಸಿಬಿಟ್ಟಿದೆ.

ಹೀಗಿರುವಾಗ, ನನಗಾದ ಇತ್ತೀಚಿನ ಎರಡು ಮಹತ್ತರ ನಿರಾಶೆಗಳನ್ನು ಇಲ್ಲಿ ದಾಖಲು ಮಾಡಬೇಕಾಯಿತು: ಒಂದು ಅಜ್ಞಾತವಾಸದಿಂದ ಹಿಂತಿರುಗಿದ ಬೆನಝೀರ್ ಭುಟ್ಟೋರನ್ನು ವ್ಯವಸ್ಥೆ ಬಲಿ ತೆಗೆದುಕೊಂಡದ್ದು, ಮತ್ತೊಂದು ನಿನ್ನೆ ಹೊರಬಂದ ನ್ಯೂ ಯಾರ್ಕ್ ಗವರ್ನರ್ ಎಲಿಯಟ್ ಸ್ಪಿಟ್ಝರ್ (Eliot Spitzer) ಸುದ್ದಿಯ ಪ್ರಕಾರ ಆತ ವೇಷ್ಯಾವಾಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು. ಅಂದಿನ ನ್ಯೂ ಜೆರ್ಸಿಯ ಗವರ್ನರ್ ಜಿಮ್ ಮಕ್‌ಗ್ರೀವೀ (Jim McGreevey) ಆಗಷ್ಟ್ ೨೦೦೪ ರಲ್ಲಿ ತನ್ನ ಹೋಮೋ ಸೆಕ್ಸ್ಯವಲ್ ಜೀವನ ಶೈಲಿಯನ್ನು ಬಹಿರಂಗ ಪಡಿಸಿ ರಾಜೀನಾಮೆ ಕೊಟ್ಟಿದ್ದರೆ, ನಾಲ್ಕು ವರ್ಷಗಳ ಬಳಿಕ ಎಲಿಯಟ್ ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುಳಿಗೆ ಸಿಕ್ಕು ರಾಜೀನಾಮೆ ಕೊಡುವ ಸಂದರ್ಭ ಬರುತ್ತದೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ.

ಡಲ್ಲಾಸ್ ನ್ಯೂಸ್ ನಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳನ್ನು ನೋಡಿದರೆ ಇದೇನು ಅವರಿಬ್ಬರ ಜೋಡಿಯೂ ಮಾತನಾಡಿಕೊಂಡು ಈ ರೀತಿಯ ಪ್ರೆಸ್ ಕಾನ್‌ಫರೆನ್ಸ್ ಕೊಡುತ್ತಿದ್ದಾರೇನೋ ಅನ್ನಿಸುವುದು ನಿಜ.



***

ಭುಟ್ಟೋ ಬಗ್ಗೆ ಬರೆದೆ, ಆಕೆಯನ್ನು ಸಮಾಜ ಆಪೋಷನ ತೆಗೆದುಕೊಂಡಿತು, ಸ್ಪಿಟ್ಝರ್ ಬಗ್ಗೆ ಬರೆದು ಆತ ವಾಲ್ ಸ್ಟ್ರೀಟ್ ದೊರೆಗಳನ್ನು ಕಾಡಿಸಿದ್ದರ ಬಗ್ಗೆ ಬರೆದು ನಿಜವಾಗಿಯೂ ಉತ್ತಮ ಅಡ್ಮಿನಿಷ್ಟ್ರೇಟರ್ ಎಂದು ಹಾಡಿ ಹೊಗಳಿದರೆ ಆತನಿಗೆ ಈ ಸ್ಥಿತಿ ಬಂದಿತು.

ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುದ್ದಿಗಳ ಹಿಂದೆ ಅದೇನು ಅಡಗಿದೆಯೋ ಆದರೆ ಆತ ಸಾರ್ವಜನಿಕ ಕ್ಷಮೆ ಕೋರಿದ್ದಂತೂ ನಿಜ. ಅಲ್ಲಿಗೆ ಕಥೆ ಮುಗಿದಂತೆಯೇ, ಯಾವೊಬ್ಬ ಪ್ರಸಿದ್ಧ ಹಾಗೂ ಪವರ್‌ಫುಲ್ ರಾಜಕಾರಣಿ ಹಾಗೂ ವ್ಯಕ್ತಿ ದೇಶದ ರಾಜಕಾರಣದಲ್ಲಿ ಮಿಂಚುತ್ತಾನೆ ಎಂದು ಸಮಾಜ ಕನಸು ಕಂಡಿತ್ತೋ ಅದೆಲ್ಲವೂ ನೀರಿನಲ್ಲಿ ತೊಳೆದ ಹೋಮವಾಗಿ ಹೋಯಿತು. ಈ ಸ್ಕ್ಯಾಂಡಲ್ಲನ್ನು ಗೆದ್ದು ಸ್ಪಿಟ್ಝರ್ ಹೊರಬರದೇ ಇರುತ್ತಾನೆಯೇ, ಅಥವಾ ಹಾಗೆ ಹೊರಬಂದರೂ ಸಮಾಜಕ್ಕೆ ಯಾವ ಮುಖವನ್ನು ತೋರಿಸಬಲ್ಲ ಎನ್ನುವುದು ನಿಜವಾಗಿ ಇನ್ನು ಕಾಲ ನಿರ್ಣಯಿಸಬೇಕಾದ ವಿಚಾರ.

***

ಪ್ರೆಸಿಡೆಂಟ್ ಆಗಿದ್ದಾಗ ಬಿಲ್ ಕ್ಲಿಂಟನ್ ಅದೇನೇನನ್ನೋ ಮಾಡಲಿಲ್ಲವೇ ಎಂದು ಪ್ರಶ್ನೆಗಳು ಏಳುವುದು ಸಹಜ - "What I think is what I say, what I say is what I do!" ಎಂದು ಕೆಲವು ತಿಂಗಳುಗಳ ಹಿಂದೆ ಎದೆ ತಟ್ಟಿಕೊಂಡು ನ್ಯೂ ಯಾರ್ಕ್ ಗವರ್ನರ್ ಪಟ್ಟ ಏರಿ ಮುಂದೆ ಮೇಲೆ ಬರಬೇಕಾಗಿದ್ದ ಸ್ಪಿಟ್ಝರ್ ಗೂ ಅಂದಿನ ಪ್ರೆಸಿಡೆಂಟ್ ಕ್ಲಿಂಟನ್ನ್ ಗೂ ಇರೋ ಸವಾಲುಗಳು ಬೇರೆಯವೇ ಅನ್ನೋದು ನನ್ನ ಅಭಿಮತ.

ಒಟ್ಟಿನಲ್ಲಿ ನ್ಯೂ ಯಾರ್ಕ್ ರಾಜ್ಯ, ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತೊಬ್ಬ ಮುಖಂಡ/ಮುಂದಾಳುವನ್ನು ಕಳೆದುಕೊಂಡಿದೆ. ದಶಕಗಳ ಛಲ, ಮುಂಬರುವ ಪ್ರವೃತ್ತಿ, ಆಶಾವಾದ ಹಾಗೂ ಹಾವರ್ಡ್ ಶಿಕ್ಷಣ ಇವೆಲ್ಲವೂ ಒಂದೇ ಒಂದು ಸುದ್ದಿಯಲ್ಲಿ ತೊಳೆದು ಹೋದ ಹಾಗಿದೆ. ದೇಶದ ರಾಜಕಾರಣ ಒಬ್ಬ ಪ್ರಬುದ್ಧ ಲೀಡರ್‌ನನ್ನು ಇಲ್ಲದಂತಾಗಿಸಿಕೊಂಡಿದೆ.

ಅಮೇರಿಕದಲ್ಲಿ ಜನ ಇತ್ತೀಚೆಗೆ ಸ್ಟಾಕ್ ಮಾರ್ಕೆಟ್ ಸ್ಕ್ಯಾಂಡಲ್ಲುಗಳಲ್ಲಿ (ಎನ್ರಾನ್, ಎಮ್‌ಸಿಐ, ಇತ್ಯಾದಿ) ಬಳಲಿ ತಮ್ಮ ಮುಖಂಡರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ Integrity (Truthfulness, Honest and Trust worthiness) ಯನ್ನು ನಿರೀಕ್ಷಿಸುವುದು ಸಹಜವೇ. ಇರಾಕ್ ಯುದ್ಧದಲ್ಲಿ ಹಲವಾರು ಸುಳ್ಳನ್ನು ಹೇಳಿದ ಅಡ್ಮಿನಿಷ್ಟ್ರೇಷನ್ನ್ ಬಗ್ಗೆ ಹಲವಾರ ಅಸಮಧಾನವೂ ಇರಬಹುದು. ಇವೆಲ್ಲ ಹಿನ್ನೆಲೆಯಲ್ಲಿ ಸ್ಪಿಟ್ಝರ್ ಭವಿಷ್ಯವನ್ನು ಒರೆ ಹಾಕಿ ನೋಡಿದರೆ ನನಗಂತೂ ಮೂಸೆಯಲ್ಲಿ ಕರಗಿ ಹೊಳೆಯುವ ಬಂಗಾರದ ಬದಲು ಸುಟ್ಟು ಕರಕಲಾದ ಕಟ್ಟಿಗೆಯ ಅವಶೇಷವೇ ಕಾಣುತ್ತದೆ.

ಇನ್ನು ಸ್ಪಿಟ್ಝರ್ ಅನ್ನು ಆತನ ದೇವರೇ ಕಾಪಾಡಬೇಕು!

Friday, March 07, 2008

ವಿಭಕ್ತಿಯ ಬಗೆಗಿನ ಭಕ್ತಿ

ನಿಮಗೆ ಗೊತ್ತಿರಬೇಕಲ್ಲ?

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯ - ಇಂದ
ಚತುರ್ಥಿ - ಗೆ, ಇಗೆ, ಅಕ್ಕೆ
ಪಂಚಮಿ - ದೆಸೆಯಿಂದ
ಷಷ್ಠಿ - ಅ
ಸಂಬೋಧನೆ - ?


ಇತ್ಯಾದಿ...ಅವೇ ಸ್ವಾಮಿ, ವಿಭಕ್ತಿ-ಪ್ರತ್ಯಯಗಳು, ಥ್ಯಾಂಕ್ಸ್ ಟು ನಮ್ಮ ಕನ್ನಡಾ ಟೀಚರ್ಸ್...ಓಂ ಗುರುಭ್ಯೋ ನಮಃ...ಮೇಷ್ಟ್ರೇ ನಿಮಗೇ ಜೋಡಿಸ್ತೀನಿ...

ಯಾಕೆ ಇದರ ಬಗ್ಗೇ ಯೋಚಿಸ್ತಾ ಹೋದೆ ಅಂತಂದ್ರೆ, ಇತ್ತೀಚೆಗೆ ನಮ್ ಹತ್ತಿರದ ಸಂಬಂಧಿಕರ ಮಗಳೊಬ್ಬಳು, ಬೆಂಗ್ಳೂರು ಕನ್ನಡತಿ, ಅವಳ ಜೊತೆ ಮಾತನಾಡ್ತಾ ಇರಬೇಕಾದ್ರೆ ಥಟ್ಟನೆ ಅವಳು ನಮ್ಮ ಕನ್ನಡದ ವಿಭಕ್ತಿ ಪ್ರತ್ಯಯಗಳನ್ನೆಲ್ಲ ಹದಿಹರೆಯದ ಹುಡುಗ್ರು ಹೊಸ ಕಾರಿನಲ್ಲಿ ಸ್ಟಾಪ್ ಸೈನ್‌ಗಳನ್ನು ಎಗುರಿಸಿಕೊಂಡು ಹೋಗೋ ಹಾಗೆ ಹಾರಿಸುತ್ತಿದ್ದಳು. ಅವಳ ಬಳಕೆಯ ಪ್ರಕಾರ, ’ನಮ್ಮ ಅಪ್ಪ ಹತ್ರ ಅದು ಇದೆ, ಅಮ್ಮ ಕಾರು ಹಾಗಿತ್ತು, ತಮ್ಮ ಕೇಳಿ ಹೇಳ್ತೀನಿ’, ಇತ್ಯಾದಿ.

ನಾನು ಏನೂ ಹೇಳೋಕ್ ಹೋಗ್ಲಿಲ್ಲ, ಮತ್ತೇನಾದ್ರೂ ಅವಳು ಬೆಂಗ್ಳೂರು ಕನ್ನಡದಲ್ಲಿ ಬೈದ್ಲೂ ಅಂತಂದ್ರೆ? ಜೊತೆಗೆ ನಾನ್ ಕೇಳೋ ರ್ಯಾಪ್ ರೀತಿಯ ಇಂಗ್ಲೀಷೋ, ದೇವ್ರೇ ನನ್ನನ್ ಕಾಪಾಡ್‌ಬೇಕು. ನನ್ನ ಕಷ್ಟಾ ಏನೂ ಅಂತ ಹೇಳ್ಲೀ ಸ್ವಾಮೀ, ಇತ್ಲಾಗೆ ಈ ಕರಿಯರ (ಆಫ್ರಿಕನ್ ಅಮೇರಿಕನ್ನರ) ರ್ಯಾಪೂ ಅರ್ಥ ಆಗೋಲ್ಲ, ಆ ಕಡೆ ನಮ್ಮ್ ಕನ್ನಡಾ ಹಾಡ್‌ಗಳಲ್ಲಿ ಬರೋ ಇಂಗ್ಲೀಷ್ ಶಬ್ದ, ಸಾಲಿನ ಉಚ್ಛಾರಣೆಗಳೂ ಕೈಗೆ ಸಿಗೋಲ್ಲ!

ವಿಭಕ್ತಿ ವಿಷಯಕ್ಕೆ ಬರೋಣ - ನಮ್ಮ ಕನ್ನಡ ಬಹಳ ಸೊಗಸಾಗಿರೋದು ಇದ್ರಲ್ಲೇ ಅನ್ಸುತ್ತೆ. ನಾವು, ’ಅಪ್ಪನ, ಅಮ್ಮನ, ತಮ್ಮನ...’ ಅಂತೀವಿ, ಆದ್ರೆ ತಂಗಿ ವಿಷಯಕ್ಕೆ ಬಂದಾಗ ’ತಂಗಿಯ’ ಅಂತೀವಿ. (ಅಮ್ಮಂದಿರು, ಅಮ್ಮಗಳ ಬಗ್ಗೆ ಹಿಂದೊಮ್ಮೆ ಬರ್ದಿದ್ದೆ, ಅದು ಬೇರೆ ವಿಷಯ). ’ಅಪ್ಪನ ಹತ್ರ ಕೇಳಿ ನೋಡ್ತೀನಿ’ ಅನ್ನೋದು ಸರಿಯಾದ ಬಳಕೆ, ಅದನ್ನು ಬಿಟ್ಟು ಯಾರಾದ್ರೂ ’ಅಪ್ಪ ಹತ್ರ ಕೇಳ್ತೀನಿ’ ಅಂತಂದ್ರೆ ತಪರಾಕಿ ಹೊಡೀದೇ ಇರೋದಾದ್ರೂ ಹೇಗೆ? ’ತಂಗಿಯ’ ಅನ್ನೋ ಬದಲಿಗೆ ’ತಂಗೀ’ (ದೀರ್ಘ ಗಮನಿಸಿ) ಅನ್ನೋದು ಆಡು ಭಾಷೆಯಲ್ಲಿ ಬರುತ್ತೆ ಅನ್ನಬಹುದು. ಅದಕ್ಕೆ ತಕ್ಕಂತೆ, ’ಅಪ್ಪಾ’, ’ತಮ್ಮಾ’, ’ಅಮ್ಮಾ’ (ದೀರ್ಘ ಸ್ವರದ ಬಳಕೆಗಳು) ಅನ್ನೋದು ಎಷ್ಟರ ಮಟ್ಟಿಗೆ ಸರಿ?

ನಾವು ಇಂಗ್ಲೀಷೋ ಮತ್ತೊಂದು ಭಾಷೆಯನ್ನು ಕಲಿತಾದ ಮಾತ್ರಕ್ಕೆ ನಮ್ಮಲ್ಲಿರುವ ಕೆಲವೊಂದು ವಿಶೇಷವಾದ ಬಳಕೆಗಳನ್ನು ಬಿಡೋದಕ್ಕೆ ಹೇಗೆ ಸಾಧ್ಯ ನೀವೇ ಹೇಳಿ. ನಾವು ಆಫೀಸಿನಲ್ಲಿ ಸುಮ್ಮನೇ ಲೋಕಾಭಿರಾಮವಾಗಿ ಹರಟುತ್ತಿದ್ದಾಗ ನಾನು ’co-brother' ಅನ್ನೋ ಪದವನ್ನು ಬಳಸಿದೆ, ಎಲ್ಲರೂ ’what is that?' ಅನ್ನೋ ಹಾಗೆ ನನ್ನ ಮುಖವನ್ನು ನೋಡಿದ್ರು, ನಾನು ’ನನ್ನ ಹೆಂಡತಿಯ ತಂಗಿಯ ಗಂಡ’ ಎಂದು ಉತ್ತರ ಕೊಟ್ಟೆ (ಷಡ್ಡುಕ, ಷಡ್ಕ, ಸಡ್ಕ ಅನ್ನೋ ಅರ್ಥದಲ್ಲಿ). ಮತ್ತೆ ಹೋಗಿ ಆನ್‌ಲೈನ್ ಡಿಕ್ಷನರಿಗಳನ್ನು ನೋಡಲಾಗಿ ’ಅದು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಬಳಸೋ ಇಂಗ್ಲೀಷಿನ ಪದ’ವೆಂಬುದಾಗಿ ತಿಳಿಯಿತು. ಹೌದು, ಎಲ್ಲರಿಗೂ ’brother-in-law' ಎಂದು ಕರೆದೋ ’sister-in-law' ಎಂದು ಸಂಬೋಧಿಸಿಯೋ ನಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಬಹುದು, ಆದರೆ ಷಡ್ಡುಕನೇ ಬೇರೆ, ಬಾವನೆಂಟನೇ ಬೇರೆ, ಸೋದರ ಮಾವನೇ ಬೇರೆ, ದೊಡ್ಡಪ್ಪ-ಚಿಕ್ಕಪ್ಪನೇ ಬೇರೆ, ಇವರೆನ್ನೆಲ್ಲ ಒಂದೋ ಎರಡೋ ಪದಗಳನ್ನು ಬಳಸಿ ತೂಗಲಾದೀತೆ? ಅದಕ್ಕೆ ಬೆಂಗ್ಳೂರಿನ ಕನ್ನಡಿಗರು ’my ಚಿಕ್ಕಪ್ಪಾ is doing this...' ಎಂದು ಕನ್ನಡವನ್ನು ಬಳಸಿದ್ರೆ ನನಗೆ ಖುಷಿ ಆಗುತ್ತೆ ಅಂತ್ಲೇ ನಾನು ಹೇಳೋದು! (ಕೊನೇಪಕ್ಷ ಅವರ ’uncle' ಯಾರು ಅಂತ ಗೊತ್ತಾಯ್ತಲ್ಲ, ಅದಕ್ಕೆ).

***

’ಏನ್ ಸಾರ್ ನಿಮ್ ರಾಮಾಯಣ? ನೀವೇನು ಕನ್ನಡ ಕೊಂಡ್‌ಕೊಂಡೋರ್ ಹಾಗ್ ಆಡ್ತೀರಲ್ಲ? ನಿಮ್ದೊಳ್ಳೇ ರಾಮ ಜನ್ಮ ಭೂಮೀ ಜನ ಹಿಂದೂ ಧರ್ಮವನ್ನು ಕೊಂಡು ಕೊಂಡೋರ ಹಾಗಿನ ಕಥೆ ಆಯ್ತು, ತೆಗೀರಿ ಮತ್ತೆ!’ ಅಂತ ನೀವು ನನಗೆ ತಮಾಷೆ ಮಾಡ್ತೀರಿ ಅಂತ ಗೊತ್ತು. ನಾನು ಯಾವ ವೇದಿಕೆಯನ್ನು ಸೇರ್ತಾ ಇಲ್ಲ, ಕಟ್ತಾ ಇಲ್ಲ, ಏನೋ ನನ್ ಕಣ್ಣಿಗೆ ಕಂಡಿದ್ದನ್ನ ಕಂಡ ಹಾಗೆ ಹೇಳ್ದೆ ಅಷ್ಟೇ.

ನೀವ್ ಬೆಂಗ್ಳೂರ್ ಕನ್ನಡಿಗರಾದ್ರೆ ಓದಿ ನಕ್ಕ್ ಬಿಡಿ, ಇಲ್ಲಾ ನನ್ನ ಹಾಗೆ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದೋರಾದ್ರೆ ಬೇಸ್ರ ಮಾಡ್ಕೋಳ್ ಬೇಡಿ, ಅದೇ ಬದ್ಕು ಅಂದ್ಕೊಂಡು ಸುಮ್ನಾಗಿ ಅಷ್ಟೇ!

ಅಂದ ಹಾಗೆ ನಮ್ಮನೇಲೂ ಒಬ್ರು ಬೆಂಗ್ಳೂರ್ ಕನ್ನಡಿಗರಿದ್ದಾರೆ, ಅವ್ರ ಬಗ್ಗೆ ಇನ್ನೊಮ್ಮೆ ಬರೆದ್ರಾಯ್ತು!

Sunday, March 02, 2008

(ಇನ್ನೂ) ಜೀವಂತ (live) ಕ್ರಿಕೆಟ್

ಇಪ್ಪತ್ತು ವರ್ಷಗಳ ಬಳಿಕವೂ ಅದೇನೇನೆಲ್ಲ ತಂತ್ರಜ್ಞಾನದಲ್ಲಿ ನಾವು ಮುಂದೆ ಹೋಗಿದ್ದರೂ ನನ್ನ ಹಣೇ ಬರಹಕ್ಕೆ ’ಬಾಲ್ ಬೈ ಬಾಲ್’ ಕಾಮೆಂಟರಿಯೇ ಗತಿಯಾಯ್ತು! I can't believe I am (still) doing this - ಬೆಳಿಗ್ಗೆ ಮೂರು ಘಂಟೆಯಿಂದ cricinfo.com ಮುಂದೆ ಕೂತುಗೊಂಡು ಲೈವ್ ಸ್ಕೋರ್ ಕಾರ್ಡ್ ನೋಡ್ತಾ ಇದ್ದೇನೆ, ಮೊದಲ ಆಸ್ಟ್ರೇಲಿಯಾ-ಭಾರತ ಫೈನಲ್ ಮ್ಯಾಚು.

ಉತ್ತಪ್ಪ, ಗಂಭೀರ್ ಔಟಾಗಿ ಹೋದ್ರೂ ನಂತರ ಬಂದ ಯುವರಾಜ್ ತೋರಿಸಿದ ಚಾಕಚಕ್ಯತೆ ಜೊತೆಯಲ್ಲಿ ವೆಟಿರನ್ ತೆಂಡೂಲ್ಕರ್ 50 ರ ಗಡಿ ಮುಟ್ಟಿದ್ದು ಇವೆಲ್ಲ ಇನ್ನೂ ಮ್ಯಾಚ್ ಅನ್ನೂ ಕುತೂಹಲಕಾರಿಯಾಗಿಯೇ ಇಟ್ಟಿವೆ. ಯಾವಾಗಲೂ ಮ್ಯಾಚ್ ನೋಡೋವಾಗ ಅನ್ನಿಸೋ ಹಾಗೆ ಅವರು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಅನ್ಸೋದೇನೋ ನಿಜ, ಜೊತೆಗೆ ಆಸ್ಟ್ರೇಲಿಯಾದವರ ನೆಕ್ಸ್ಟ್‌ ಜನರೇಷನ್ ಕ್ರಿಕೆಟ್ ಎದಿರು ನಮ್ಮವರ ಆಟ ಏನು ನಡೆಯುತ್ತೋ ಅನ್ನೋ ಹೆದರಿಕೆ ಬೇರೆ.

***

ನೀವು ನಿಮ್ಮ ಜೀವನದಲ್ಲಿ ಇದುವರೆಗೆ ರೆಡಿಯೋ ಅನ್ನು ಕಿವಿಗೆ ಆನಿಸಿಕೊಂಡು ಕ್ರಿಕೆಟ್ ಕಾಮೆಂಟರಿ ಕೇಳಿರದಿದ್ದರೆ, ಹಾಗೆ ಮಾಡಿದವರನ್ನು ನೋಡಿರದಿದ್ದರೆ ಈ ಲೇಖನವನ್ನು ನೀವು ಅಪ್ರಿಶಿಯೇಟ್ ಮಾಡ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಅಂತರಾಳದ ಪ್ರಶ್ನೆಯೊಂದಕ್ಕಂತೂ ಇಂದು ಉತ್ತರ ಸಿಕ್ಕಂತಾಗಿದೆ.

ಭಾರತೀಯರು ಬಹಳ imaginative ಅನ್ನೋದು ನಿಜವಲ್ಲದೇ ಇನ್ನೇನು?! ತನ್ನಷ್ಟಕ್ಕೆ ತಾನೇ ಒಂದಿಷ್ಟು ಸೆಕೆಂಡುಗಳಿಗೊಮ್ಮೆ ರಿಫ್ರೆಶ್ ಆಗೋ ಕಂಪ್ಯೂಟರ್ ಪರದೇ ಮೇಲೆ ಅದ್ಯಾರೋ ವೇಗದಲ್ಲಿ ಟೈಪ್ ಮಾಡುತ್ತಿರುವ ಪುಣ್ಯವೆಂಬಂತೆ ನನ್ನ ಮತ್ತು ಕಂಪ್ಯೂಟರ್ ಪರದೆಯ ನಡುವಿನ ಜಾಗದಲ್ಲಿ ವಿಶ್ವ ಕ್ರಿಕೆಟ್ ಪಂದ್ಯವೊಂದು ಅವತರಿಸಿಕೊಳ್ಳುತ್ತಿದೆ. ಈ ಬಾಲ್ ಬೈ ಬಾಲ್ ಕಾಮೆಂಟರಿ, ಅದೂ ಟೆಕ್ಸ್ಟ್ ಮಾಧ್ಯಮದಲ್ಲಿ, ಇದನ್ನ ಅಮೇರಿಕನ್ ಮಾಧ್ಯಮದವರು ಊಹಿಸಿಕೊಳ್ಳುತ್ತಾರೋ ಇಲ್ಲವೋ, ನಾವಂತೂ ನಮ್ಮ ಮನಸ್ಸಿನಲ್ಲಿ ಅದೇನೇನೆಲ್ಲ ನಿರೀಕ್ಷೆಗಳನ್ನು ಕಲ್ಪಿಸಿಕೊಂಡು ಇಡೀ ಮ್ಯಾಚ್ ಅನ್ನೇ ನಮ್ಮ ಮುಂದೆ ತಂದುಕೊಳ್ಳುತ್ತೇವೆ. ಅಗತ್ಯಕ್ಕೆ ತಕ್ಕಂತೆ (ಇಂದಿಗೂ) ನಮ್ಮ ಎದೆ ಬಡಿತ ಹೆಚ್ಚುವುದು ಅಥವಾ ಕಡಿಮೆ ಆಗುವುದು ಇವೆಲ್ಲ ಇಂದು ನಿನ್ನೆಯ ವಿಶೇಷವೇನೂ ಅಲ್ಲ, ಅಲ್ಲವೇ?

***

Dish Network ನವರಿಗೆ 150 ಡಾಲರ್ ಕೊಟ್ಟು ವರ್ಷದ Z-Sports ಚಾನೆಲ್ ಹಾಕಿಸಿಕೊಂಡು ಮನೆಯ ಟಿವಿಯಲ್ಲಿ ಮ್ಯಾಚ್‌ಗಳನ್ನು ನೋಡೋದರಲ್ಲಿ ಮಜವಿದ್ದಿರಬಹುದು, ಅದು ಇನ್ನೂ ನನ್ನ ಮನಸ್ಸನ್ನ ಗೆದ್ದಿಲ್ಲ. ಟ್ವೆಂಟಿ-ಟ್ವೆಂಟಿ ಅಂಥಹ ಮ್ಯಾಚ್‌ಗಳನ್ನಾಗಲೀ, ವರ್ಲ್ಡ್ ಕಪ್ ಪಂದ್ಯಗಳನ್ನಾಗಲೀ ಇಲ್ಲಿನ ಸಿನಿಮಾ ಪರದೆಯ ಮೇಲೆ ನೋಡುವಷ್ಟು ದೂರವಂತೂ ಈ ವರೆಗೂ ಹೋಗಿದ್ದಿಲ್ಲ. ಆದರೆ ಅಪರೂಪಕ್ಕೊಮ್ಮೆ ಹೀಗೆ ಶನಿವಾರವೋ ಭಾನುವಾರವೋ ಬೇಗನೆ ಎದ್ದು ಸ್ಕೋರ್ ಕಾರ್ಡ್ ಅನ್ನು ನೋಡಿಕೊಂಡೋ ಅಥವಾ ಮ್ಯಾಚ್ ಬಗ್ಗೆ ಬರುವ ವರದಿ-ಚಿತ್ರಗಳನ್ನು ನೋಡಿಕೊಂಡೊ ತೃಪ್ತಿಪಟ್ಟುಕೊಂಡಿದ್ದಿದೆ.

ವಿಶೇಷವೆಂದರೆ ಅಮೇರಿಕದಲ್ಲಿ ಇಷ್ಟೊಂದು ವರ್ಷಗಳಿದ್ದಿರೂ ನಾನು ಇಲ್ಲಿನ ಬೇಸ್‌ಬಾಲ್, ಫುಟ್‌ಬಾಲ್ ಮ್ಯಾಚ್‌ಗಳನ್ನು ಟಿವಿ ಮೇಲಾಗಲಿ, ಲೈವ್ ಆಗಲಿ ನೋಡಿದ್ದೇ ಅಪರೂಪವೆನ್ನಬಹುದು. ನಾನು ಈವರೆಗೆ ನೋಡಿರೋದು ಒಂದೇ ಒಂದು ಸೂಪರ್ ಬೋಲ್, ಅದೂ ಎಷ್ಟೋ ವರ್ಷಗಳ ಹಿಂದೆ. ಯಾಕೆ ಹೀಗೆ ಎಂದು ಕೇಳಿಕೊಂಡಾಗಲೆಲ್ಲ ಉತ್ತರ ಸಿಕ್ಕಿರೋದರ ಪ್ರಕಾರ ಇಲ್ಲಿನ ನಮ್ಮ ಆಟ ರಹಿತ ಬದುಕೋ, ನಮಗೆ ಗೊತ್ತಿರದ ರುಚಿಸದ ಪಂದ್ಯಗಳೋ, ಇವಕ್ಕೆಲ್ಲ ಇನ್ನೂ ಹೆಚ್ಚು ಎನ್ನುವಂತೆ ವರ್ಷದ ಆರು ತಿಂಗಳ ಛಳಿಯೋ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ. ಬೇಸಿಗೆಯಲ್ಲಿ ನಮ್ಮಲ್ಲಿ ಕ್ರಿಕೆಟ್ ಆಡುವ ಟೀಮುಗಳಿವೆ, ಅಲ್ಲಿಗೆ ಹೋಗಿ ಬಂದು ಮಾಡೋಣವೆಂದುಕೊಂಡರೆ ಲಾಜಿಸ್ಟಿಕ್ ಸಮಸ್ಯೆ - ಆಟಕ್ಕೋಸ್ಕರ ಒಂದು ಇಡೀ ದಿನವೇ ಹಾಳಾಗಿ ಹೋದೀತೇನೋ ಎನ್ನುವ ಹೆದರಿಕೆ.

***

ನಾವೂ ಅಮೇರಿಕನ್ ಆಗಿ ಬಿಡಬಹುದು - ಹೇಳಿದಷ್ಟಂತೂ ಸುಲಭವಿಲ್ಲ. ಬುದ್ಧಿವಂತರ ಮಾತಿನ ನಡುವೆ ಕ್ರಿಕೆಟ್ ಆಟವೆನ್ನುವುದು ಸೋಮಾರಿಗಳ ಆಟವೆಂದು ನಾನು ವಾದಿಸಿದ್ದೇ ಬಂತು. ಸಮಯ ಸಿಕ್ಕಾಗಲೆಲ್ಲ ಆನ್‌ಲೈನ್ ಪೋರ್ಟಲುಗಳಲ್ಲಿ ಅಲ್ಲಲ್ಲಿ ಕಣ್ಣು ವಿಷಯಗಳಿಗಾಗಿ ಹುಡುಕುತ್ತಲೇ ಇರುತ್ತದೆ. ಇತ್ತೀಚಿನ ಆಟಗಾರರ ಜೊತೆ ನಾನು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಹೋಲಿಸಿಕೊಳ್ಳದಿರಬಹುದು, ಅವರ ಹೆಸರು, ಚಿತ್ರಗಳು ಗುರುತಿಗೆ ಬರದಿರಬಹುದು, ಆದರೆ ಆ ಆಟದಲ್ಲಿ ಅದೇನೋ ಜೀವಂತಿಕೆ ಇದೆ ಅನ್ನಿಸಿದ್ದು ಸುಳ್ಳಲ್ಲ. ಐದು ದಿನಗಳ ಟೆಸ್ಟ್ ಪಂದ್ಯಗಳನ್ನು ನೋಡುವಷ್ಟರ ಮಟ್ಟಿಗೆ ನನ್ನಲ್ಲಿ ವ್ಯವಧಾನವಿಲ್ಲದಿದ್ದರೂ ಅದರ ಸಾರಾಂಶವನ್ನು ಅದು ನಿಮಿಷ ಓದುವಷ್ಟು ಆಸಕ್ತಿಯಿದೆ. ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅದ್ಯಾರು ನೋಡುತ್ತಾರಪ್ಪಾ ಎನ್ನಿಸಿದ್ದರೂ ಈಗ ಅವುಗಳಲ್ಲಿ ಸಾಕಷ್ಟು ಒಲವಿದೆ, ಜೊತೆಗೆ ಇತ್ತೀಚಿನ ಟ್ವೆಂಟಿ-ಟ್ವೆಂಟಿ ಅಂತೂ ವೇಗವಾಗಿ ಆಡಬಹುದಾದ ಆಟ ಅನ್ನಿಸಿದೆ.

ನನ್ನ ಸಮ ವಯಸ್ಕ ತೆಂಡೂಲ್ಕರ್ ಇನ್ನೂ ಜೀವಂತವಾಗೇ ಇದ್ದಾನೆ, 65 ಬಾಲ್‌ಗಳಲ್ಲಿ 60 ರನ್‌ಗಳನ್ನು ಸಾಧಿಸಿಕೊಂಡು ಮಾಥ್ಯೂ ಹೇಡನ್‌ಗೆ ಸರಿ ಸಮಾನವಾಗಲಿದ್ದಾನೆ ಎನ್ನೋದು ಈಗ ನಡೀತಾ ಇರೋ ಪಂದ್ಯದಲ್ಲಿ ಒಂದಿಷ್ಟು ಕುತೂಹಲವನ್ನಂತೂ ಇಟ್ಟುಕೊಂಡಿದೆ. ಹೊಸಬರು ಯಾರು ಯಾರೋ ಬಂದು ಹೋದರೂ ನನಗೆ ನನ್ನ ಪರಿಚಯದ anchor ಸಿಕ್ಕೋದನ್ನು ನಾನು ಕಾಯ್ತಾ ಇರ್ತೀನಿ. ರಾಹುಲ್ ಡ್ರಾವಿಡ್, ಕುಂಬ್ಳೆ ಅವರನ್ನೆಲ್ಲ ಮತ್ತೊಮ್ಮೆ ನಾನು ಪರದೆಯಲ್ಲಿ ನೋಡ್ತೀನೋ ಬಿಡ್ತೀನೋ, ತೆಂಡೂಲ್ಕರ್ ’ಔಟ್’ ಆಗೋವರೆಗೆ ಇನ್ನೂ ಈ ಕ್ರಿಕೆಟ್ಟಿನಲ್ಲಿ ಜೀವವಿದೆ ಅನ್ನಿಸೋದು ಈ ಹೊತ್ತಿನ ತತ್ವಗಳಲ್ಲೊಂದು.

ಅದೇ ವಿಶೇಷ ನೋಡಿ - ಎಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೋ ಅಲ್ಲಿ ಆಸಕ್ತಿ ತಂತಾನೇ ಬಂದೀತು, ನಾವೂ ಅಲ್ಲಿಯವರಾದೇವು.

Sunday, February 17, 2008

ಇಲ್ಲಿಗೂ ಅಲ್ಲಿಗೂ ಏನೂ ವ್ಯತ್ಯಾಸವಿಲ್ಲಾ ಅಂತಂದ್ರೆ...

ಇನ್ನೇನು ಸೂರ್ಯ ಹುಟ್ಟಿ ಜಗತ್ತನ್ನ ಬೆಳಗಬೇಕು ಅನ್ನೋ ಸೂಚನೆಗಳು ಸಿಕ್ಕೊಡನೆ ನಮ್ಮನೇ ಮೂಲೆಯಲ್ಲಿರೋ ಮಲ್ಲಿಗೆ ಗಿಡಗಳ ಎಲೆಗಳ ಮುಖದಲ್ಲಿ ಒಂದು ಮಂದಹಾಸ ಮಿನುಗ ತೊಡಗಿತು. ಅನತಿ ದೂರದಲ್ಲಿ ಮೋಡ ಮತ್ತು ಖಾಲಿ ಆಕಾಶಗಳ ನಡುವೆ ಅದೇ ತಾನೇ ಜಗತ್ತಿಗೆ ತನ್ನನ್ನು ಸಾರಿಕೊಂಡು ಕೆಂಪನ್ನು ಸಾರುತ್ತಿರುವ ಕಿರಣಗಳು ಈ ಎಲೆಗಳ ಮೇಲೆ ಹನಿ ಹನಿ ಸೇರಿ ತೆಳುವಾಗಿ ಮಂಜು ಕಟ್ಟಿದ್ದ ಲೇಪನದಲ್ಲೂ ಪ್ರತಿಫಲನವಾಗತೊಡಗಿತು. ಇನ್ನೇನು ಸೂರ್ಯ ಜಗತ್ತಿಗೆ ಬಂದೇ ಬಿಟ್ಟ ಕತ್ತಲೆ ಅನ್ನೋದು ಹಾರಿ ಹೋಯ್ತು ಎಂದು ಈ ಮಲ್ಲಿಗೆಯಲ್ಲಿನ ಎಲೆಗಳು ಬೀಗಿದ್ದೇ ಬಂತು. ಅದೆಷ್ಟೋ ಹೊತ್ತಿನಿಂದ ಹನಿಹನಿ ನೀರಿನ ಪಸೆಯನ್ನು ತಮ್ಮ ಮೈಮೇಲೆ ಶೇಖರಿಸಿಕೊಂಡು ’ಸದ್ಯ, ಈಗಲಾದರೂ ಬಂದ ಸೂರ್ಯ!’ ಎಂದು ಉಸ್ಸ್ ಎಂದು ಉಸಿರು ಬಿಡುವಷ್ಟರಲ್ಲಿ, ಅದ್ಯಾವುದೋ ತಣ್ಣಗಿನ ಗಾಳಿಯೊಂದು ಬೀಸಿತೋ ಇಲ್ಲವೋ ಎನ್ನುವಂತೆ ಬಂದು ಹೋದಂತಾಗಿ ಎಲೆಗಳು ಸ್ವಲ್ಪ ನಲುಗಿದ್ದೇ ತಡ, ಅವುಗಳ ಮೇಲಿನ ನೀರಿನ ಪಸೆ ನಿಧಾನವಾಗಿ ಹನಿಯೊಂದಾಗಿ ಜಾರಿ ಮಣ್ಣಿಗೆ ಬಿದ್ದು ಹೋಗೋದೇ! ’ಛೇ’ ಎಂದು ಎಲೆಗಳೆಲ್ಲ ಒಮ್ಮೆ ಕಿರುಚಿಕೊಂಡು ಬೇಕೋ ಬೇಡವೋ ಎನ್ನುವಂತೆ ಗಾಳಿಗೆ ತಲೆ ಆಡಿಸತೊಡಗಿದವು. ’ಹೋಯ್ತಲ್ಲಪ್ಪಾ!’ ಎನ್ನುವ ರೋಧನ ಇನ್ನೂ ಕೇಳಿಬರುತ್ತಿತ್ತೋ ಏನೋ, ಅಷ್ಟರಲ್ಲಿ ದಿಗಂತದ ಗೆರೆಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಮೇಲೆದ್ದು ಬಂದ ಸೂರ್ಯನ ಕಿರಣಗಳು ಎಲೆಗಳ ಮುಖದ ಮೇಲೆ ಬಿದ್ದು, ಅವು ಹಸಿರು ಬಣ್ಣದವಿದ್ದರೂ ಅವನ್ನು ತನ್ನ ಕೆಂಪಿನಲ್ಲಿ ತೋಯಿಸಿಕೊಂಡವು. ಒಂದು ಕಡೆ ತಮ್ಮ ನೀರಿನ ಪಸೆಯನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ಅದ್ಯಾವುದೋ ಹೊಸದರ ಸಂಭ್ರಮ. ಎಲೆಗಳ ಕಸಿವಿಸಿ ಚೆನ್ನಾಗಿ ಅವುಗಳ ಮುಖದ ಮೇಲೆ ಹೊಸಬೆಳಕಿನಲ್ಲಿ ಗೋಚರಿಸತೊಡಗಿತ್ತು. ಇದು ಯಾವುದೂ ತನಗೆ ಗೊತ್ತಿಲ್ಲ, ತನ್ನ ಹೊನ್ನ ಕಿರಣಗಳು ಎಲ್ಲೆಲ್ಲೋ ಹರಡಿ ಅವು ಏನೇನನ್ನೋ ಕಂಡುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎನ್ನುವ ಧೋರಣೆ ತಳೆದ ಸೂರ್ಯ ಒಂದಿನಿತೂ ಎಲ್ಲೂ ನಿಲ್ಲುವಂತೇನೂ ತೋರಲಿಲ್ಲ.

***

’ಯಾಕೋ ಬೇಜಾರ್ ಮಾಡ್ಕೊಂಡಿದಿಯಾ?’ ಎಂದೆ.

’ಏನಿಲ್ಲ, ಇಲ್ಲಿದ್ರೆ ಅಲ್ಲೀ ಯೋಚ್ನೆ, ಅಲ್ಲಿದ್ರೆ ಇಲ್ಲೀ ಯೋಚ್ನೆ...’

’ಏಕೆ, ಇತ್ತೀಚೆಗಷ್ಟೇ ಅಲ್ವೇ ನೀನು ಅಮೇರಿಕ ಬಿಟ್ಟು ಇಂಡಿಯಾಕ್ ಹೋಗಿದ್ದು? ಎಲ್ಲ ಸುಖವಾಗಿರಬೇಕಲ್ಲ’.

’ಅದೇ, ಸುಖವಾಗೇನೋ ಇದೀನಿ. ಆದ್ರೆ...’

’ಆದ್ರೆ ಏನು?’

’ಏನಿಲ್ಲ, ಇಲ್ಲಿಗೆ ಹಿಂತಿರುಗಿದಂದಿನಿಂದ ನನಗೆ ಆರೋಗ್ಯನೇ ಅಷ್ಟೊಂದು ಸರಿಯಾಗಿಲ್ಲ ಕಣೋ. ಅದೇನ್ ಅಮೇರಿಕದಲ್ಲಿ ಸ್ವಚ್ಛತೆಯ ವಾತಾವರಣದಲ್ಲಿದ್ವೋ ಬಿಟ್ವೋ ಇಷ್ಟೊಂದು ವರ್ಷಾ, ಇಲ್ಲಿಗೆ ಬರ್ತಾ ಇದ್ದ ಹಾಗೆ ಪ್ರತಿದಿನವೂ ಬ್ಯಾಕ್ಟೀರಿಯಾ ವೈರಸ್ಸುಗಳ ವಿರುದ್ಧ ಸೆಣೆಸೋದೇ ಆಗಿದೆ ನೋಡು. ಒಂದಲ್ಲ ಒಂದು ರೀತಿಯ ಕಷ್ಟ, ನಾಲ್ಕು ದಿನ ನೆಟ್ಟಗಿದ್ರೆ ಇನ್ನು ನಾಲ್ಕು ದಿನ ಮಲಗಿರ್ತೀನಿ ಅನ್ನೋ ಹಾಗಿದೆ.’

’ಏ, ಇಂಡಿಯಾ ಅನ್ನೋ ವಾತಾವರಣದಲ್ಲೇ ಅಲ್ವೇ ನಾವು ಬೆಳೆದು ಬಂದಿರೋದು. ಮತ್ತೆ ಅಲ್ಲಿಗೆ ವಾಪಾಸ್ ಹೋಗಿ ಬದುಕೋದು ಯಾಕ್ ಕಷ್ಟಾ ಆಗುತ್ತೆ? ಈ ಪೊಲ್ಯೂಷನ್ನೂ ಮತ್ತಿನ್ನೊಂದು ಹಿಂದೆಯೂ ಇತ್ತು ಮುಂದೆಯೂ ಇರುತ್ತೆ ಅದರಲ್ಲೇನು ವಿಶೇಷ?’

’ಅಲ್ಲೇ ಇರೋದು ವಿಶೇಷ, ಈ ಪ್ರಪಂಚ ಬಹಳಷ್ಟು ಬೆಳೆದಿದೆ. ನಾವು ಹತ್ತು ವರ್ಷದ ಹಿಂದೆ ನೋಡಿದ ಪೊಲ್ಯೂಷನ್ನು ಇವತ್ತಿನ ಪೊಲ್ಯೂಷನ್ನಿಗೆ ಯಾವ ಹೋಲಿಕೆಯೂ ಅಲ್ಲ. ಜೊತೆಗೆ ಇಂದಿನ ಬೆಳೆದ ವಾತಾವರಣದಲ್ಲಿರೋ ಸ್ಟ್ರೆಸ್ಸೂ ಕಾರಣಾ ಅನ್ನು’.

’ಸ್ಟ್ರೆಸ್ಸೂ ಅಂದ್ರೆ...’

’ಅದೇ, ಬೆಳಿಗ್ಗೆ ಎಂಟು ಘಂಟೆಗೆ ಆಫೀಸಿಗೆ ಹೋದ್ರೆ ಸಂಜೆ ಎಂಟರ ಮೇಲಾಗುತ್ತೆ ಬರೋದು. ಈ ಟ್ರಾಫಿಕ್ ಜಾಮ್ ಅನ್ನೋ ನಕ್ಷತ್ರಿಕ ಯಾವನಿಗೂ ಬಿಡೋ ಹಾಗೇ ಕಾಣ್ಸಲ್ಲ. ದಿನಕ್ಕೆ ಒಟ್ಟಿಗೆ ಹದಿನಾಲ್ಕು ಘಂಟೆ ಒದ್ದಾಡೋದನ್ನ ವೃತ್ತಿ ಜೀವನ ಅಂತ ಕರೆಯೋದಕ್ಕೂ ಹೇಸಿಗೆ ಅನ್ಸುತ್ತೆ ನೋಡು. ಇಲ್ಲಿಗೆ ಬಂದು ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದುಕೊಂಡಿದ್ದ ಆಸೆಗಳೆಲ್ಲ ಬಲೂನಿಗೆ ಸೂಜಿ ಚುಚ್ಚಿದ ಹಾಗೆ ಠುಸ್ಸ್ ಎಂದು ಹೋದ್ವು. ಕೆಲವೊಂದು ಸರ್ತೀ ಅಂತೂ ಇಲ್ಲಿನ ಟ್ರಾಫಿಕ್ ಜಾಮಿಗೆ ಹೆದರಿ ಅಥವಾ ಅದನ್ನ ನೆನೆಸಿಕೊಂಡೇ ನಾನು ಎಷ್ಟೋ ಕಾರ್ಯಕ್ರಮಗಳಿಗೆ ಹೋಗೋದೇ ಇಲ್ಲ. ಅಲ್ಲಿಗೆ ಹೋದ್ರೂ ಪಾರ್ಕಿಂಗ್ ಮಾಡಿ ಗೆಲ್ತೀನೀ ಅಂತ ಇನ್ನೂವರೆಗೆ ನನಗೆ ಎಲ್ಲೂ ಖಾತ್ರಿ ಆಗಿದ್ದಿಲ್ಲ’.

’ಹೌದಾ, ಅಷ್ಟೊಂದು ಕಷ್ಟವೇ?’

’ಕಷ್ಟಾನಾ, ಇದಕ್ಕೆ ಕಷ್ಟಾ ಅಂತಂದ್ರೆ ಅದು ಒಂದು ಅಂಡರ್ ಸ್ಟೇಟ್‌ಮೆಂಟು’.

’ಅವೆಲ್ಲ ಇರ್ಲಿ, ಆಫೀಸ್ ವಾತಾವರಣ ಹೇಗಿದೆ?’

’ಇದರಲ್ಲಿ ಹೆಚ್ಚಿಗೆ ಬದಲಾದಂತೆ ಅನ್ಸಲ್ಲ, ಅವೇ ಮೈಂಡ್‌ಸೆಟ್ಟುಗಳು, ಜನರು ಎಲ್ಲೀವರೆಗೆ ಬದಲಾಗೋಲ್ವೋ ಅಲ್ಲೀವರೆಗೆ ಇದೇ ಪರಿಸ್ಥಿತಿ ಮುಂದುವರೆಯುತ್ತೆ. ರೆಡ್ ಟೇಪಿಸ್ಸಮ್ಮು, ಡರ್ಟೀ ಪಾಲಿಟಿಕ್ಸೂ ಅಂತ ಅಮೇರಿಕದಲ್ಲಿ ಕರಿಯರಿಗೆ-ಬಿಳಿಯರಿಗೆ ನಾನು ಬೈದುಕೊಂಡಿದ್ದೇ ಬಂತು, ಇಲ್ಲಿ ನಡೆಯೋ ರಾಜಕೀಯ ಅವಾಂತರಗಳನ್ನ ನೋಡಿದ್ರೆ ಅಲ್ಲೇ ಎಷ್ಟೋ ವಾಸಿ ಅಂತ ಅನ್ಸುತ್ತೆ’.

’ವಿದೇಶದಲ್ಲಿ ಇಷ್ಟೊಂದು ವರ್ಷ ಅನುಭವ ಇದೆ ಅಂತ್ಲೂ ನಮ್ಮಂತೋರಿಗೆ ಬೆಲೆ ಸಿಗೋದಿಲ್ವೇನು?’

’ಓಹ್ ಸಿಗುತ್ತೆ, ಯಾಕ್ ಸಿಗಲ್ಲ. ಆದ್ರೆ ನೀನು ಹತ್ತು ಅಂದ್ರೆ ಜನ ಇಪ್ಪತ್ತು ಅನ್ನೋರ್ ಸಿಕ್ಕೇ ಸಿಗ್ತಾರೆ ಎಲ್ಲ್ ಹೋದ್ರೂ. ಜೊತೆಗೆ ಕೇವಲ ಎಕ್ಸ್‌ಪೀರಿಯೆನ್ಸ್ ಅಳತೇ ಮೇಲೆ ನಿನಗೇನೂ ಸಿಗೋದಿಲ್ಲ, ಯಾವ ಅನುಭವ ಎಲ್ಲಿ ಹೇಗಿತ್ತು ಅನ್ನೋದರ ಮೇಲೆ ಬಹಳಷ್ಟು ನಿರ್ಧಾರವಾಗುತ್ತೆ’.

’ಅದೆಲ್ಲ ಇರ್ಲಿ, ಮನೆಯವ್ರು, ಮಕ್ಳಾದ್ರೂ ಆರಾಮಾಗಿದ್ದಾರಾ?’

’ಹ್ಞೂ, ಒಂದು ರೀತಿ ಅವರೇ ಅರಾಮಾಗಿರೋರು ನನಗಿಂತ. ಒಂದು ಕಾಲ್ದಲ್ಲಿ ಇಂಡಿಯಾ ಮುಖವನ್ನ ನೋಡದ ಮಕ್ಳು ಇಲ್ಲಿಗೆ ಹೊಂದಿಕೋತಾರಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಇವತ್ತು ಅವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದಾರೆ, ಕಷ್ಟಾ ಬಂದಿರೋದೇ ನನಗೆ ನೋಡು...

’ಅದೇನ್ ಅಂತಾ ಕಷ್ಟಾ?’

’ಅದೇ, ಅಮೇರಿಕದಲ್ಲೂ ಮೈ ತುಂಬಾ ಸಾಲಾ ಮಾಡ್ಕೊಂಡು ಮಾರ್ಟ್‌ಗೇಜ್ ಕೊಟಗಂಡು ಮನೆಯಲ್ಲಿದ್ವಿ, ಇಲ್ಲಿ ಬಂದು ನೋಡಿದ್ರೆ ಒಂದು ಸಾಧಾರಣ ಮನೆ ಕಟ್ಸೋಕೇ ಒಂದು ಕೋಟಿ ರೂಪಾಯ್ ಅಂತಾರೆ - ಕಾಲು ಮಿಲಿಯನ್ ಅಮೇರಿಕನ್ ಡಾಲರ್ ನನ್ಹತ್ರ ಇದ್ದಿದ್ರೆ ಇಷ್ಟೊತ್ತಿಗೆ ನಾನು ಇಲ್ಯಾಕ್ ಇರ್ತಿದ್ದೆ? ಜೊತೆಗೆ ಸೈಟ್ ಅಂತ ಒಂದು ಇದ್ರೆ ಪುಣ್ಯ, ಇಲ್ಲ ಅಂದ್ರೆ ಇನ್ನೊಂದು ಐವತ್ತು ಲಕ್ಷವಾದ್ರೂ ಹೋಗುತ್ತೆ. ಎಲ್ಲಿಂದ ತರೋದು ಇಷ್ಟೊಂದು ದುಡ್ಡು? ಅದಕ್ಕೇ ಇಲ್ಲಿನ ಬ್ಯಾಂಕುಗಳ ಮೊರೆ ಹೋಗಿ ಮೈ ತುಂಬಾ ಸಾಲಾ ಮಾಡ್ಕೊಂಡಿದ್ದೀನಿ. ಅದರ ಫಲವೇ ನನ್ನ ಅಹರ್ನಿಶಿ ದುಡಿಮೆ, ಹೀಗೇ ಸಾಲಾ-ದುಡಿಮೆಯ ಚಕ್ಕರದಲ್ಲಿ ಮುಳುಗಿ ಹೋಗಿದ್ದೇನೆ ನೋಡು’.

’ಅಷ್ಟೊಂದು ವರ್ಷ ಅಮೇರಿಕದಲ್ಲಿದ್ರೆ ಸ್ವಲ್ಪವೂ ದುಡ್ಡು ಹುಟ್ಟೋಲ್ವೇ, ಉಳಿಯೋಲ್ವೇ?’

’ಇರುತ್ತೆ ಯಾಕಿಲ್ಲ? ಅವುಗಳೆಲ್ಲ ಒಂದಲ್ಲ ಒಂದು ಕಡೆ ಈಗಾಗ್ಲೇ ತೊಡಗಿಕೊಂಡಿರುತ್ತೆ, ಇಲ್ಲಾ ಅಂತಂದ್ರೂ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲಿಡಬೇಕು ಅಂತಂದ್ರೆ ಅಮೇರಿಕದಲ್ಲಿ ಪೇ ಚೆಕ್ ನಿಂದ ಪೇ ಚೆಕ್ ಗೆ ದುಡಿಯೋರ್ ಹತ್ರ ಕಷ್ಟ ಸಾಧ್ಯವೇ ಸರಿ. ಏನೇ ಅಂದ್ರೂ ಮಿಲಿಯನ್ ಡಾಲರ್ ಯಾವನ ಹತ್ರ ಇದೆ ನೀನೇ ಹೇಳು’.

’ಮತ್ತೇ, ಅಮೇರಿಕದಲ್ಲಿರೋರು ಇಂಡಿಯಾಕ್ ಬರ್ತೀವಿ ಅಂತಂದ್ರೆ ನೀನ್ ಅವರಿಗೆ ಹೇಳೋದೇನಾದ್ರೂ ಇದೆಯೇನು?’

’ಶೂರ್, ದಿನಕ್ಕೆ ಹದಿನಾಲ್ಕು ಘಂಟೆ ದುಡಿದು ಸಾಲದ ಚಕ್ಕರದಲ್ಲಿ ಬೀಳೋ ಹಾಗಿದ್ರೆ ನೀವ್ ಎಲ್ಲಿರ್ತೀರೋ ಅಲ್ಲೇ ಇರ್ರಿ, ಅದರ ಬದ್ಲಿ ಒಂದು ಸಣ್ಣ ಊರಲ್ಲಿ ಒಂದು ಉದ್ಯಮವನ್ನ ಶುರು ಹಚ್ಚಿಕೊಂಡು ನಿಮಗೆ ನೀವೇ ಬಾಸ್ ಆಗೋ ಹಾಗಿದ್ರೆ ಇಲ್ಲಿಗೆ ಬನ್ನಿ! ಇಲ್ಲೂ-ಅಲ್ಲಿಗೂ ಏನೂ ವ್ಯತ್ಯಾಸವಿಲ್ಲ ಅನ್ನೋದು ಒಳ್ಳೆಯದೋ ಕೆಟ್ಟದ್ದೋ ಅನ್ನೋದೂ ಅವರವರಿಗೆ ಬಿಟ್ಟಿದ್ದು ಅಂತ್ಲೂ ಹೇಳ್ತೀನಿ.

’ಮತ್ತೇ, ಎಲ್ರೂ ಬೆಂಗಳೂರಿಗೇ ಬರ್ತಾರೇ ಅಂತ ಕೇಳ್ದೆ...’

’ಅದೂ ನಿಜವೇ, ಎಲ್ರೂ ಇಲ್ಲೇ ಬಂದು ಸಾಯೋದ್ರಿಂದ್ಲೇ ಬೆಂಗಳೂರಿನವರಾದ ನಮಗೆ ಈ ಕಷ್ಟ ಬಂದಿರೋದು...ನನ್ನ ಕೇಳಿದ್ರೆ ಇಂಡಿಯಾದಲ್ಲಿ ಬೇರೆ ಊರುಗಳೇ ಇಲ್ವೇ, ಅಲ್ಲಿಗೆ ಹೋಗ್ಲಿ’ .

***

ನಮ್ಮನೆಯ ಮಲ್ಲಿಗೆಯ ಗಿಡದ ಎಲೆಗಳು ಇಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಬಲಿತ ಸೂರ್ಯ ರಶ್ಮಿಯಲ್ಲಿ ತೋಯ್ದು ಹೋಗಿದ್ದವು. ಗಾಳಿ ಬೀಸುತ್ತೆ ಬೆಳಕು ಬೀಳುತ್ತೆ ಮೈ ಮೇಲೆ ಮಂಜು ಕೂರುತ್ತೆ, ಅದು ನಿಸರ್ಗ ನಿಯಮ ಅನ್ನೋ ಉಪದೇಶ ಸಾರುವ ಮುಖವನ್ನು ಮಾಡಿಕೊಂಡಿದ್ದವು. ಅವುಗಳ ವೈರಾಗ್ಯ ಮನಸ್ಸಿನ ನೆರಳಿನಲ್ಲಿ ಇವತ್ತಲ್ಲ ನಾಳೆ ಎಲ್ಲವೂ ಸರಿ ಹೋಗೇ ಹೋಗುತ್ತೆ ಎನ್ನುವ ಛಾಯೆ ಕಂಡು ಬರುತ್ತಿತ್ತು. ಅದನ್ನ ಆಶಾಭಾವನೆ ಅನ್ನೋಣವೇ ಅಥವಾ ಬದುಕಿನ ಯೋಜನೆ ಎಂದು ಕರೆದುಕೋಳ್ಳೋಣವೇ ಎಂದು ಎಲೆಗಳ ನಡುವೆ ಇನ್ನೇನು ವಾದ ಏಳುವ ಹುರುಪು ಕಂಡುಬರುತ್ತಿತ್ತು.

Sunday, February 03, 2008

...ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

’ಓಹ್, ನಿಮಗೇನ್ರಿ? ನೀವು ಅಮೇರಿಕದಲ್ಲಿದ್ದೀರ ನಿಮಗೇನು ಕಡಿಮೆ!’ ಎಂದು ಇನ್ನು ಮುಂದೆ ಯಾರಾದ್ರೂ ನಿಮಗೆ ಹೇಳಿದರಾದರೆ ಅವರಿಗೆ ನೀವು,

’ಅಮೇರಿಕದಲ್ಲಿ ವ್ಯಕ್ತಿಯೊಬ್ಬ ಒಂದು ವ್ಯವಸ್ಥೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಹೋರಾಡುತ್ತಲೇ ಜೀವನ ಸವೆಸಬೇಕಾಗುತ್ತದೆ!’ ಎಂದು ಉತ್ತರ ನೀಡಿ ಆಗ ಆ ಉತ್ತರವನ್ನು ಕೇಳಿದವರ ಹುಬ್ಬುಗಳು ಗಂಟು ಕಟ್ಟುವುದನ್ನು ನೋಡಿ ಸಂತೋಷ ಪಡಿ.

ಹಿಂದೆ ’ಅಂತರಂಗ’ದಲ್ಲಿ ಇದೇ ವಿಷಯವಾಗಿ ಹಲವಾರು ಸಾರಿ ಬರೆದರೂ ಅದರ ಬಗ್ಗೆ ಮತ್ತೂ ಬರೆಯುವಷ್ಟು ಸ್ಪೂರ್ತಿ ನೀಡುವ ಹಲವಾರು ವಿಷಯಗಳು ಒಟ್ಟೊಟ್ಟಿಗೆ ಸಂಭವಿಸಿದವಾದ್ದರಿಂದ ಮತ್ತೆ ಬರೆಯಬೇಕಾಯಿತು.

***

ನಾನು ಸೆಪ್ಟೆಂಬರ್ ೨೬, ೨೦೦೭ ರ ಶುಭದಿನ ಲ್ಯಾಬ್‌ಕಾರ್ಪ್‌ಗೆ ಖುದ್ದಾಗಿ ಹೋಗಿ ರಕ್ತದಾನ ಮಾಡಿ ಅಲ್ಲಿ ಟೆಕ್ನಿಷಿಯನ್ನ್‌ಗೆ ರಿಪೋರ್ಟಿನ ಒಂದು ಕಾಪಿಯನ್ನು ಮನೆಗೂ ಕಳಿಸುವಂತೆ ಕಿವಿಕಿವಿ ಹೇಳಿ ಅಂಗಾಲಾಚಿದ ಪ್ರಯುಕ್ತ ಆಕೆ ತನ್ನ ಕೋಮಲ ಕೈಗಳಿಂದ ".cc customer" ಎಂದು ಮೊದಲ ಪುಟದಲ್ಲೇ ಬರೆದುಕೊಂಡಳಾದರೂ ನನಗೆ ಇವತ್ತಿಗೂ, ನಾಲ್ಕು ತಿಂಗಳ ಬಳಿಕವೂ ಆ ವರದಿಯ ಕಾಪಿ ಸಿಗದಿದ್ದುದನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದಾಗಿದೆ. ಆದರೆ ಆಶ್ಚರ್ಯವೆಂಬಂತೆ ನಾನು ಕೊಡಬೇಕಾದ ೧೫ ಡಾಲರ್ ಕೋ-ಪೇಮೆಂಟ್‌ಗೆಂದು ಅವರು ಮೇಲಿಂದ ಮೇಲೆ ಬಿಲ್ ಕಳಿಸಿಯೇ ಕಳಿಸಿದರು, ಕೊನೆಗೆ ನಾನು ರೋಸಿ ಡಿಸೆಂಬರ್ ೨೬ ರಂದು ಹದಿನೈದು ಡಾಲರ್ ಕೋ-ಪೇಮೆಂಟ್ ಅನ್ನು ಕೊಟ್ಟು ಅದೇ ದಿನ ಲ್ಯಾಬ್‌ಕಾರ್ಪ್ ಕಸ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಮತ್ತೆ ರಿಪೋರ್ಟ್ ಕಳಿಸಲು ಬೇಡಿಕೊಂಡರೆ ಫೋನಿನಲ್ಲಿ ಉತ್ತರಿಸಿದ ಲಲನಾಮಣಿ ’ಆಗಲಿ, ಇನ್ನೆರಡು ವಾರಗಳಲ್ಲಿ ಕಳಿಸುತ್ತೇವೆ’ ಎಂದು ಉತ್ತರ ಕೊಟ್ಟಳಾದರೂ ಈಗ ಒಂದೂವರೆ ತಿಂಗಳ ಬಳಿಕ ಇವತ್ತಿಗೆ ನನ್ನ ಬ್ಲಡ್ ರಿಪೋರ್ಟ್ ಪತ್ತೆಯೇ ಇಲ್ಲ!

ಒಬ್ಬ ಸಾಮಾನ್ಯ ಬಳಕೆದಾರನಾಗಿ ನಾನು ಏನು ಮಾಡೋದು, ಏನು ಬಿಡೋದು...ಮೇಲಿಂದ ಮೇಲೆ ಕಾಲ್ ಮಾಡಿ ತಲೆಕೆಡಿಸಿಕೊಳ್ಳೋಣವೆಂದರೆ ನನಗೆ ಬಿಡುವಿರದ ಆಫೀಸಿನ ಕೆಲಸ, ಜೊತೆಗೆ ಮತ್ತೆ ಜನವರಿಯ ಕೊನೆಯಲ್ಲಿ ಪ್ರಯತ್ನಿಸಿದಾಗ ’ಇನ್ನೆರಡು ವಾರಗಳಲ್ಲಿ ಬಂದೇ ಬಿಡುತ್ತೆ’ ಎಂದು ಇನ್ಯಾರೋ ಆಶ್ವಾಸನೆ ನೀಡಿರೋದರಿಂದ ಮತ್ತೊಂದು ವಾರ ಕಾಯ್ದು ನೋಡೋಣವೆಂದುಕೊಂಡು ನನ್ನ ಬ್ರಹ್ಮಾಸ್ತ್ರಗಳಿಗೆ ಒಂದಿಷ್ಟು ರೆಸ್ಟ್ ಕೊಟ್ಟಿದ್ದೇನೆ ನೋಡಿ.

ನಾವು ದುಡ್ಡು ಕೊಟ್ಟು ನಾವು ಕೊಟ್ಟ ನಮ್ಮ ರಕ್ತದ ವರದಿಯನ್ನು ಕೇಳಲು ಹೋದರೆ ಅದಕ್ಕೆ ನೂರಾ ಎಂಟು ಸೆಕ್ಯೂರಿಟಿ ಪ್ರಶ್ನೆಗಳು. HIPAA (Health Insurance Portability & Accountability Act) ಮಣ್ಣೂ ಮಸಿಯೆಂದು ನಮ್ಮ ತಲೆಯೆನ್ನೆಲ್ಲ ತಿಂಥಾರಲ್ಲ ಶಿವಾ, ಎಂಥಾ ಲೋಕವಯ್ಯಾ ಇದು?

***

ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆಯ ವಿರುದ್ಧ ಹೋರಾಡೋದಕ್ಕೆ ನೀವು ರಾವಣರಾಗಬೇಕು, ಅಂದರೆ ನಿಮಗೆ ಹತ್ತು ತಲೆಗಳಿದ್ದರೂ ಸಾಲದು. ಯಾವನೋ ಬರೆದ ಬಿಸಿನೆಸ್ ರೂಲ್ಸ್‌ಗಳು, ಯಾರೋ ಅದೆಲ್ಲಿಯೋ ಕುಳಿತು ಕುಟ್ಟಿದ ಕಂಪ್ಯೂಟರ್ ವ್ಯವಸ್ಥೆ ನಿಮಗೆ ಚೆನ್ನಾಗಿ ನೀರು ಕುಡಿಸಬಲ್ಲದು. ನನ್ನ ಮಾತಿನಲ್ಲಿ ವಿಶ್ವಾಸವಿಲ್ಲದೇ ಹೋದರೆ ಕೇವಲ ಒಂದೇ ಒಂದು ಸಾರಿ ನಿಮ್ಮ ಕ್ರೆಡಿಟ್ ಕಾರ್ಡಿನ ಬಿಲ್ಲನ್ನು ಡ್ಯೂ ಡೇಟ್ ಆಗಿ ಒಂದು ತಿಂಗಳ ನಂತರ ಕಟ್ಟಿ ನೋಡಿ, ಆಗ ನಿಮಗೇ ತಿಳಿಯುತ್ತದೆ. ನೀವು ಸಾವಿರ ವರ್ಷಗಳಿಂದ ನಿರಂತರವಾಗಿ ಬಿಲ್ ಅನ್ನು ಕಟ್ಟಿಕೊಂಡು ಬಂದಿರುತ್ತೀರಿ, ಯಾವುದೋ ಒಂದು ಫ್ಯಾಮಿಲಿ ಎಮರ್ಜನ್ಸಿಯ ಸಂಬಂಧವಾಗಿ ನೀವು ಒಂದು ತಿಂಗಳು ಬಿಲ್ ಅನ್ನು ಕಟ್ಟುವುದನ್ನು ನಿರ್ಲಕ್ಷಿಸುತ್ತೀರಿ ಎಂದುಕೊಳ್ಳಿ - ಅದು ಮಾನವೀಯ ವಿಷಯವೇ ಸರಿ - ಅದನ್ನು ಫೈಟ್ ಮಾಡಬೇಕಾದೀತು, ಹಾಗೆ ಮಾಡುತ್ತಾ ಮಾಡುತ್ತಾ ನಿಮ್ಮ ಕಪ್ಪಗಿನ ಕೂದಲ ಆಯುಷ್ಯವನ್ನು ಬಲಿಕೊಡಬೇಕಾದೀತು, ನಿಮ್ಮ ಮುಖದಲ್ಲಿ ನೆರಿಗೆಗಳನ್ನು ಹೆಚ್ಚಿಸಿಕೊಳ್ಳಬೇಕಾದೀತು.

ದೊಡ್ಡ ದೊಡ್ಡ ಶಾಪ್ಪಿಂಗ್ ಮಾಲ್‌ಗಳಲ್ಲಿ ರೀಟೈಲ್-ಹೋಲ್‌ಸೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ಸಿಯರ್ಸ್ (Sears) ಅಂತಹ ಕಂಪನಿಗಳು ತಮ್ಮ ಗಿರಾಕಿಗಳಿಗೆ ವಸ್ತುಗಳನ್ನು ಮಾರಿ ಅದರಿಂದ ಬರುವ ಲಾಭಕ್ಕಿಂತಲೂ ತಮ್ಮ ಗಿರಾಕಿಗಳು ಕೊಡುವ ಲೇಟ್-ಫೀ, ಬಡ್ಡಿಗಳಿಂದ ಹೆಚ್ಚು ಸಂಪಾದನೆ ಮಾಡುತ್ತವೆ ಎನ್ನುವುದಕ್ಕೆ ನಿದರ್ಶನಗಳು ಬೇಕೇ? ಅಂತಹ ಕಂಪನಿಗಳ ಕ್ರೆಡಿಟ್ ವಿಭಾಗವನ್ನು ಕೊಂಡುಕೊಳ್ಳಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಹಾತೊರೆದುದನ್ನು ನಾವು ಕಣ್ಣಾರೆಯೇ ನೋಡಿದ್ದೇವೆ.

ನೀನು ದುಡಿ, ದುಡಿದ ದುಡ್ದಿನಲ್ಲಿ ಮನೆ ಕಟ್ಟಿಸಿ ಅನುಭವಿಸು ಎನ್ನುವ ನಮ್ಮ ತತ್ವಗಳನ್ನು ಹೊಸಕಿ ಹಾಕಿ, ನಿಮಗೆ ಮೈ ತುಂಬಾ ಸಾಲವನ್ನು ಹೊರಿಸುತ್ತೇವೆ, ಆದರೆ ಈ ಮನೆ ಇವತ್ತಿನಿಂದಲೇ ನಿಮ್ಮದು ಎನ್ನುವ ಬಂಡೆಗಲ್ಲಿನಡಿ ನಮ್ಮನ್ನು ನೂಕಿ ನಮ್ಮ ಬಡ್ಡಿ ಹಣದಿಂದ ಬದುಕುವ ವ್ಯವಸ್ಥೆಯ ಕೂಸುಗಳಾಗಿ ಹೋಗಿದ್ದೇವಲ್ಲ ನಾವು ಏನು ಹೇಳೋಣ? ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಲ್ಲಿ ಐಶಾರಾಮವಿಲ್ಲದಿದ್ದರೂ ನೆಮ್ಮದಿ ಇದ್ದೀತು, ಮನಸು ಬೇಡಿದಷ್ಟು ಮನೆ ಕೊಂಡು ಇಂದೋ ನಾಳೆಯೋ ಕೆಲಸ ಹೋದರೆ ಎನ್ನುವ ಹೆದರಿಕೆಯ ಗೂಡಿನೊಳಗೆ ಮಲಗುವುದು ಆಧುನಿಕ ಬದುಕಿನ ಬವಣೆಗಳಲ್ಲೊಂದೇ ಎಂದು ನಾನು ಹೇಳೋದು.

***

ಹೇಳಿ - ಇಡೀ ಅಮೇರಿಕದ ವ್ಯವಸ್ಥೆ ಸಾಲದಲ್ಲಿ ನಿಂತಿದೆ! ಇಲ್ಲಿಯ ಕಾರ್ಪೋರೇಷನ್ನುಗಳು ಬಿಲಿಯನ್ನುಗಟ್ಟಲೆ ಸಾಲವನ್ನು ಹೊಂದಿವೆ, ಇಲ್ಲಿ ಜೀವಿಸುವ ಪ್ರಜೆಗೂ ನೇರವಾಗಿಯೋ, ಪರೋಕ್ಷವಾಗಿಯೋ ಸಾಲ ಇದ್ದೇ ಇದೆ. ಹಾಗಾದರೆ ಯಾವ ದೇಶದಲ್ಲಿ ಪರೋಕ್ಷ ಸಾಲವಿಲ್ಲ ಎಂದು ಪ್ರಶ್ನೆ ಕೇಳಿಯೇ ಕೇಳಿರುತ್ತೀರಿ, ಪರೋಕ್ಷ ಸಾಲ ನಮ್ಮನ್ನು ಮೀರಿದ್ದು, ನಾವು ಮೈ ಮೇಲೆ ಹೇರಿಕೊಳ್ಳುವ ಸಾಲ ನಮ್ಮನ್ನು ಮಟ್ಟ ಮಾಡೋದು.

ಏನ್ ಸಾರ್, ಇಷ್ಟೊಂದ್ ದಿನಾ ಅಮೇರಿಕದಲ್ಲಿದ್ದುಕೊಂದು ಒಂದು ಬಾಯ್ ತುಂಬಾ ಒಳ್ಳೇ ಮಾತನಾದ್ರೂ ಹೇಳಬಾರ್ದಾ? ಹೇಳ್ತೀವಿ, ಯಾಕಿಲ್ಲ - ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಸ್ವಾಮೀ, ನಿಮ್ಮ ಮನೆಯಲ್ಲಿ ಕಾಫಿ ಪುಡಿ ಇದೆಯೋ ಇಲ್ಲವೋ ಅನ್ನೋದನ್ನೂ ಒಂದು ದಿನ ನೀವು ನಿಮ್ಮ ಕಂಪ್ಯೂಟರ್ ಲಾಗಿನ್ ಆಗಿ ನಿಮ್ಮ ಇನ್ವೆಂಟ್ರೆ ಚೆಕ್ ಮಾಡಿಕೊಂಡೇ ಕಾಫಿ ಡಬ್ಬವನ್ನು ಬೇಸ್‌ಮೆಂಟ್‌ನಲ್ಲಿ ಹುಡುಕಿಕೊಂಡು ಹೋಗೋ ವ್ಯವಸ್ಥೆಗೆ ದಾಸರಾಗ್ತೀರಿ ನೋಡಿ ಆಗ ನಿಮ್ಮನ್ನು ನಾನು ಇದೇ ಪ್ರಶ್ನೆ ಕೇಳ್ತೀನಿ.

***

ಈ ವರ್ಷ ಎಲೆಕ್ಷನ್ನ್ ವರ್ಷ, ನಮ್ಮನೆ-ಕಾರಿನ ರೆಡಿಯೋಗಳಿಗೆ ರಜಾ ಘೋಷಿಸಿಬಿಟ್ಟಿರೋದರಿಂದ ನಾನು ಸ್ವಲ್ಪ ನ್ಯೂಸ್ ಮಾಧ್ಯಮಗಳಿಂದ ಬಿಡುವನ್ನು ಪಡೆದುಕೊಂಡು ಹಾಯಾಗಿ ಇರೋಣಾ ಅಂತ ತೀರ್ಮಾನ ಮಾಡಿಕೊಂಡಿದ್ದೀನಿ. ನಿಮ್ಮ ಅಮೇರಿಕನ್ ಪುರಾಣ ಏನ್ ಬೇಕಾದ್ರೂ ಹೇಳಿ ಆದ್ರೆ ಮಾತ್ರ ಈ ಡೆಮೋಕ್ರಾಟೂ-ರಿಪಬ್ಲಿಕ್ಕೂ ಅಂಥಾ ಮಾತ್ರ ಶುರು ಮಾಡ್‌ಬೇಡಿ. ಕಳೆದ ವರ್ಷ ಈ ಹಾಳೂ ಮೂಳೂ ಸುದ್ಧಿಗಳನ್ನು ಕೇಳೇ ನನ್ನ ಬ್ಲಡ್ ಪ್ರೆಷರ್ ಸ್ವಲ್ಪ ಹೆಚ್ಚಾಗಿದ್ದೂ ಅಂತ ಕಾಣ್ಸುತ್ತೆ, ಅದನ್ನ ಚೆಕ್ಕ್ ಮಾಡೋಣ ಅಂತ ಹೋದ್ರೆ ಡಾಕ್ಟರೇನೋ ದೊಡ್ಡ ರಕ್ತದ ಟೆಸ್ಟ್ ಅನ್ನು ಬರೆದು ಕೊಟ್ರು, ಅಲ್ಲಿ ಹೋಗಿ ರಕ್ತದಾನ ಮಾಡಿ ಬಂದು ಐದು ತಿಂಗಳಾದ್ರೂ ಇನ್ನೂ ನನಗಾಗ್ಲೀ ನನ್ನ ಡಾಕ್ಟರಿಗಾಗ್ಲಿ ರಕ್ತದ ವರದಿಯೇ ಬಂದಿಲ್ಲವಾದ್ರಿಂದ ನನಗೆ ಖಾಯಿಲೆ ಇದ್ಯೋ ಇಲ್ಲವೋ ಅನ್ನೋದನ್ನ ಈ ವ್ಯವಸ್ಥೆಯಿಂದ ತಿಳಿದುಕೊಳ್ಳೋಕೇ ನನಗೆ ಆರು ತಿಂಗಳು ಬೇಕಾಗುತ್ತೆ. ಖಾಯಿಲೆ ಇದ್ಯೋ ಇಲ್ಲವೋ ಅನ್ನೋ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿಲ್ಲದ್ದನ್ನು ನೋಡಿ ಅದನ್ನು ಹಿಂಬಾಲಿಸಿ, ಫಾಲೋ ಅಪ್ ಮಾಡಿಕೊಂಡು ಶ್ರಮ ವಹಿಸಿದ್ದಕ್ಕೆ ಮತ್ತೇನೇನೋ ಖಾಯಿಲೆಗಳು ಅಂಟಿಕೊಡು ಮತ್ತೆ ಡಾಕ್ಟರ್ ಆಫೀಸಿಗೆ ಹೋಗೋದಕ್ಕೆ ಹೆದರಿಕೆ ಆಗುತ್ತೆ.

ನಾನು ಈ ಒಂಥರಾ ಡಾಕ್ಟರು-ಬ್ಲಡ್ ರಿಪೋರ್ಟಿನ ಚಕ್ಕರದಲ್ಲಿ ಸಿಲುಕಿ ನಾನು ಒದ್ದಾಡ್ತಾ ಇರೋದನ್ನ ನೋಡಿಕೊಂಡು ನನಗೆ ಒಂದೊಂದ್ ಸರ್ತಿ ಅನ್ಸುತ್ತೆ - ಸೀದಾ ಭಾರತದ ಏರ್‌ಪೋರ್ಟಿನಲ್ಲಿ ಹೋಗಿ ಒಂದು ಭೂತ್ ಹಾಕಿ ಬಿಡ್ಲಾ ಅಂತಾ...ಅಲ್ಲಿ ಹಸಿದ ಕಣ್ಣುಗಳನ್ನು ಹೊತ್ತುಕೊಂಡು ಫಾರಿನ್ನಿಗೆ ಹೋಗೋರನ್ನ ತಡೆಯೋ ಒಂದು ಪಡೆಯನ್ನ ಹುಟ್ಟು ಹಾಕಿದ್ರೆ ಹೇಗೆ ಅಂತ ಅನ್ಸೋದು ನಿಜ, ನಮ್ ಭೂತ್‌ನಲ್ಲಿ ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

Saturday, January 26, 2008

ಸುಂಕ ವ್ಯವಸ್ಥೆಯ ಸುಖ ದುಃಖಗಳು

ರಸ್ತೆಗಳೆಂಬ ಮಟ್ಟಗಾರರ ಬಗ್ಗೆ ಬರೆಯೋ ಹೊತ್ತಿಗೆ ಉಳಿದ ಮಟ್ಟಗಾರರ ಬಗ್ಗೆ ಯೋಚಿಸಿದಂತೆಲ್ಲಾ ಟ್ಯಾಕ್ಸ್ ಸೀಜನ್ನಿನಲ್ಲಿ ಟ್ಯಾಕ್ಸ್ ಬಗ್ಗೆ ಯೋಚಿಸಿ ಬರೆಯದೇ ಹೋದರೆ ಹೇಗೆ ಎಂದು ಅನ್ನಿಸಿದ್ದಂತೂ ನಿಜ. ಈ ಟ್ಯಾಕ್ಸ್, ತೆರಿಗೆ, ಕರ, ಸುಂಕ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಕಾನ್ಸೆಪ್ಟ್ ಮಹಾ ಮಟ್ಟಗಾರರಲ್ಲೊಂದು, ಸರ್ಕಾರ ಟ್ಯಾಕ್ಸ್ ಅನ್ನು ಹೇಗೆ ವ್ಯಾಖ್ಯಾನಿಸಿಕೊಂಡರೂ, ಜನರು ಅದನ್ನು ತಮ್ಮ ತಮ್ಮ ಮಟ್ಟಿಗೆ ಅದನ್ನು ಹೇಗೇ ಅನ್ವಯಿಸಿಕೊಂಡರೂ ಟ್ಯಾಕ್ಸ್ ಅನ್ನುವುದು ಯಾರನ್ನೂ ಬಿಟ್ಟಂತಿಲ್ಲ.

ಮೊನ್ನೆ ಹೀಗೇ ಅಫಘಾನಿಸ್ತಾನದವರ ಬಗ್ಗೆ ನನ್ನ ಸಹೋದ್ಯೋಗಿಯೊಡನೆ ಮಾತು ಬಂತು. ಅಭಿವೃದ್ಧಿ ಹೊಂದಿದ ದೇಶದ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೋಶಿಯಲ್ ಸೆಕ್ಯೂರಿಟಿ ನಂಬರ್ ಎನ್ನುವ ಒಂಭತ್ತು ಸಂಖ್ಯೆಗಳಿಂದ ಅಳೆದು ಪ್ರತಿಯೊಬ್ಬರಿಂದ ಲೆಕ್ಕಕ್ಕೆ ತಕ್ಕಂತೆ ಟ್ಯಾಕ್ಸ್ ಕೀಳುವುದು ಇರಲಿ ಕೊನೆಗೆ ವರ್ಷಕ್ಕೊಮ್ಮೆ ಅಮೇರಿಕದ ನಾಗರಿಕರು ತಮ್ಮ ವಾರ್ಷಿಕ ಆದಾಯ ಇಂತಿಷ್ಟಕ್ಕಿಂತ ಹೆಚ್ಚಿದ್ದರೆ ಅವರ ಟ್ಯಾಕ್ಸ್ ಅನ್ನು ಫೈಲ್ ಮಾಡಬೇಕಾದ ಅಗತ್ಯವನ್ನು ಮನಗಾಣುವುದು ಸುಲಭವಾಗಿತ್ತು. ನನ್ನ ಪ್ರಕಾರ (ಯಾವುದೇ ದಾಖಲೆಯ ಬೆಂಬಲವಿಲ್ಲದೆ) ತೃತೀಯ ಜಗತ್ತಿನಲ್ಲಿ ಎಷ್ಟೋ ಜನರಿಂದ ಅಪರೋಕ್ಷವಾಗಿ ವಸೂಲಿ ಮಾಡುವ ಸೇಲ್ಸ್ ಟ್ಯಾಕ್ಸ್ ಅನ್ನು ಬಿಟ್ಟರೆ ವರ್ಷಕ್ಕೊಮ್ಮೆ ಎಲ್ಲರೂ ತಮ್ಮ ತಮ್ಮ ಆದಾಯಕ್ಕನುಗುಣವಾಗಿ ಟ್ಯಾಕ್ಸ್ ಅನ್ನು ಕಟ್ಟುವುದಾಗಲೀ ಅದನ್ನು ಫೈಲ್ ಮಾಡುವುದಾಗಲೀ ಸಾಧ್ಯತೆಗಳೇ ಇಲ್ಲ. ಸೇಲ್ಸ್ ಟ್ಯಾಕ್ಸ್ ಜೊತೆಗೆ ಯಾರು ಯಾರು ನಿಜವಾದ ಪೇ ಚೆಕ್ (ಸ್ಟಬ್) ಗಳನ್ನು ತೆಗೆದುಕೊಳ್ಳುತ್ತಾರೋ ಅವರಿಂದ ಸರ್ಕಾರದವರು, ಸಂಬಂಧಿತ ಇಲಾಖೆಯವರು ಟ್ಯಾಕ್ಸ್ ಅನ್ನು ವಜಾ ಮಾಡಿಕೊಳ್ಳುವ ಸಾಧ್ಯತೆಗಳಿರಬಹುದು, ಅದನ್ನು ಬಿಟ್ಟರೆ ರೈತರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಸಣ್ಣ (ಗೃಹ) ಕೈಗಾರಿಕೆಗಳನ್ನು ನಡೆಸಿಕೊಂಡಿರುವವರು ಇತ್ಯಾದಿಗಳಿಂದ ಇಂತಿಷ್ಟೇ ಆದಾಯ ಹಾಗೂ ಅದಕ್ಕೆ ತಕ್ಕ ಟ್ಯಾಕ್ಸ್ ಎಂದು ವಸೂಲಿ ಮಾಡಿದ್ದನ್ನು ನಾನು ನೋಡಿಲ್ಲ, ಇತ್ತೀಚೆಗೇನಾದರೂ ಭಾರತದಲ್ಲಿ ಟ್ಯಾಕ್ಸ್ ಬದಲಾವಣೆಗಳಾಗಿದ್ದರೆ ಅದು ನನ್ನ ಮೌಢ್ಯವಷ್ಟೆ. ಇತ್ತೀಚೆಗಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಕ್ಕಿರುವ ಅಫಘಾನಿಸ್ತಾನದಲ್ಲಿ ಯಾವ ಮಟ್ಟದ ಟ್ಯಾಕ್ಸ್ ವ್ಯವಸ್ಥೆ ಇದೆ, ಅಲ್ಲಿನ ಪ್ರತಿಯೊಬ್ಬ ನಾಗರಿಕರು ಹೇಗೆ ಟ್ಯಾಕ್ಸ್‌ಗೆ ಒಳಪಟ್ಟಿದ್ದಾರೆ ಎನ್ನುವುದು ನನಗೆ ನಿಖರವಾಗಿ ಗೊತ್ತಿಲ್ಲದಿದ್ದರೂ, ಬಡತನದಲ್ಲಿ ಬಾಂಗ್ಲಾ ದೇಶಕ್ಕೆ ಪೈಪೋಟಿ ಕೊಡುತ್ತಿರುವ ಅಲ್ಲಿನ ಜನರ ಉತ್ಪಾದನೆಯೇ ಕಡಿಮೆ ಇದ್ದು ಇನ್ನು ಪಾಪ ಅವರಾದರೂ ಯಾವ ಟ್ಯಾಕ್ಸ್ ಅನ್ನು ಕೊಟ್ಟಾರು. ಹಾಗೆಯೇ ಅಮೇರಿಕದಲ್ಲಿನ ಪ್ರತಿ ರಾಜ್ಯದ ಪ್ರತಿಯೊಬ್ಬರೂ ನಿಖರವಾಗಿ ಟ್ಯಾಕ್ಸ್ ಕೊಡುತ್ತಾರೆ ಎಂದೇನೂ ಅಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸೋಶಿಯಲ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಷನ್ನ್ ನವರು ಒಂಭತ್ತು ಸಂಖ್ಯೆಗಳನ್ನೇನೋ ಒದಗಿಸಿಕೊಟ್ಟಿರಬಹುದು, ಆದರೆ ಅಮೇರಿಕದ ಉದ್ದಗಲಕ್ಕೂ ಪ್ರತಿಯೊಬ್ಬರಿಗೂ ಕನಿಷ್ಠ ಟ್ಯಾಕ್ಸ್ ಕೊಡುವ ಆದಾಯವಿದ್ದು, ಅವರು ಲೆಕ್ಕಕ್ಕೆ ತಕ್ಕಂತೆ ಕೊಡುತ್ತಾರೆ ಎನ್ನುವ ಜನರಲೈಜೇಷನ್ನನ್ನು ಮಾಡಲಾಗದು.

ಈ ಹಿನ್ನೆಲೆಯಲ್ಲಿಯೇ ಯೋಚಿಸಿ ಮತ್ತೊಂದು ಹೆಜ್ಜೆ ಮುಂದೆ ಹೋದಾಗ ಅಮೇರಿಕದವರಿಗೆ ಪ್ರಪಂಚದ ಉಳಿದ ದೇಶಗಳಲ್ಲಿನ ಅನುಕೂಲ, ಅನಾನುಕೂಲಗಳನ್ನು ಯೋಚಿಸಿಕೊಳ್ಳಲು ಕಷ್ಟವಾಗಬಹುದು ಎಂಬುದು ನನ್ನ ಅನಿಸಿಕೆ. ಭಾರತದಲ್ಲಿನ ಭ್ರಷ್ಟಾಚಾರವನ್ನಾಗಲೀ, ರಷ್ಯಾದಲ್ಲಿನ ಮಾಫಿಯಾವನ್ನಾಗಲೀ, ಎಷ್ಟೋ ದೇಶಗಳಲ್ಲಿನ ಅರಾಜಕತೆ, ಡಿಕ್ಟೇಟರ್‌ಶಿಪ್ಪುಗಳನ್ನಾಗಲೀ, ಅಲ್ಲಲ್ಲಿ ನಡೆಯುವ ಜನರ ದುರ್ಮರಣದ ಸಂಖ್ಯೆಯನ್ನಾಗಲೀ, ಅಥವಾ ಉಳಿದ ಮತ-ಧರ್ಮ-ಸಂಪ್ರದಾಯಗಳ ಹಿನ್ನೆಲೆಯನ್ನಾಗಲೀ ಅರ್ಥ ಮಾಡಿಕೊಳ್ಳಲು ದೊಡ್ಡ ಮನಸ್ಸೇ ಬೇಕು. ಇರಾಕ್‌ನಲ್ಲಿ ಸದ್ದಾಮನ ಸರ್ಕಾರವನ್ನು ಬೀಳಿಸಿದ್ದೇವೆ, ಅಲ್ಲಿನ ಜನರು ಸುಖವಾಗಿ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇಕೆ ಇರಬಾರದು? ಎಂದು ಕೇಳುವ ಪ್ರಶ್ನೆಗಳು ಬಾಲಿಶವೇ ಹೌದು. ಪ್ರಪಂಚದ ಎಲ್ಲರೂ ತಮ್ಮ ತಮ್ಮ ಲೆಕ್ಕದ ಟ್ಯಾಕ್ಸ್ ಅನ್ನು ನಿಖರವಾಗಿ ಕೊಟ್ಟು ಅವರವರ ಸರ್ಕಾರದ ಹುಂಡಿಯನ್ನೇಕೆ ಬೆಳೆಸಬಾರದು ಎನ್ನುವಷ್ಟೇ ಹುಂಬ ಪ್ರಶ್ನೆಯಾದೀತು. ಒಂದು ವ್ಯವಸ್ಥೆ - ಅದು ಟ್ಯಾಕ್ಸ್ ಕೊಟ್ಟು ಅದನ್ನು ಪರಿಶೀಲಿಸಿಕೊಳ್ಳುವ ಕ್ರಮವಾಗಿರಬಹುದು, ಲಂಚ ತೆಗೆದುಕೊಂಡವರನ್ನು ಗುರುತಿಸಿ ಥಳಿಸುವ ನಿಯಮವಾಗಿರಬಹುದು, ಕ್ರಿಮಿನಲ್ಲ್‌ಗಳನ್ನು ಹುಡುಕಿ ಶಿಕ್ಷಿಸುವ ಪರಿಯಾಗಿರಬಹುದು - ಅದು ಬೆಳೆದು ನಿಲ್ಲಲು ಆಯಾ ಸಮಾಜದ ಬೆಂಬಲವಂತೂ ಖಂಡಿತ ಬೇಕೇ ಬೇಕು, ಜೊತೆಗೆ ಹೆಚ್ಚಿನವರು ನಿಯಮಗಳನ್ನು ಪಾಲಿಸುವವರಾಗಿದ್ದಾಗ ಮಾತ್ರ ಹಾಗೆ ಮಾಡದವರನ್ನು ಹುಡುಕಿ ತೆಗೆಯುವುದು ಸುಲಭವಾದೀತು. ಆದರೆ ಸಮಾಜದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭ್ರಷ್ಟಾಚಾರದ ಸುಳಿಗೆ ಸಿಲುಕುವವರು ಹೆಚ್ಚಿದ್ದಾಗ, ತಮ್ಮ ಹಕ್ಕು-ಕರ್ತವ್ಯಗಳ ಬಗ್ಗೆ ತಿಳುವಳಿಕೆಯೇ ಇಲ್ಲದವರಿದ್ದಾಗ ಹಾಗೂ ಅಂತಹವರನ್ನು ಶೋಷಿಸುವ ವ್ಯವಸ್ಥೆ ಇದ್ದಾಗ ಯಾವೊಂದು ಸಮಾಜ ತಾನೇ ಆರೋಗ್ಯಕರವಾಗಿರಬಲ್ಲದು?

ಭಾರತದಲ್ಲಿ ಮಾರಾಟ ಮಾಡುವ ಬೆಂಕಿ ಪೊಟ್ಟಣದಿಂದ ಹಿಡಿದು ಉಳಿದ ವಸ್ತುಗಳಿಗೂ ಮಾರಾಟ ತೆರಿಗೆಯನ್ನು ಸೇರಿಸಿಯೇ ಮಾರಾಟ ಮಾಡುವ ವ್ಯವಸ್ಥೆಯನ್ನು ನೀವು ನೋಡಿರಬಹುದು. ಅಂಗಡಿಯಲ್ಲಿ ಕೊಂಡ ದಿನಸಿಯ ಚೀಟಿಯ ಕೊನೆಗೆ ನಾನಂತೂ ಟ್ಯಾಕ್ಸ್ ಕೊಟ್ಟಿದ್ದಿಲ್ಲ, ಇತ್ತೀಚೆಗೆ ಬಂದ ವ್ಯಾಟ್ (VAT) ಪದ್ಧತಿಯ ಪ್ರಕಾರ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ/ಸುಂಕವನ್ನು ತೆಗೆದುಕೊಳ್ಳುತ್ತಿರಬಹುದಾದರೂ ಹೆಚ್ಚಿನ ವಸ್ತುಗಳು ನನಗೆ ಗೊತ್ತಿದ್ದ ಹಾಗೆ ’inclusive of all taxes' ಎಂದು ಹಣೆ ಪಟ್ಟಿಯನ್ನು ಹಚ್ಚಿಕೊಂಡದ್ದು ನನ್ನ ನೆನಪು. ಅಮೇರಿಕದ ರೆಸ್ಟೋರೆಂಟುಗಳಲ್ಲಿ ಕೆಲಸ ಮಾಡುವ ವೇಟರ್ (ಸರ್ವರ್)ಗಳಾಗಲೀ, ಇಲ್ಲಿನ ಟ್ಯಾಕ್ಸಿ ಚಾಲಕರಾಗಲೀ ತಾವು ಪಡೆಯುವ ಟಿಪ್ಸ್ ಅನ್ನೆಲ್ಲ ನಿಖರವಾಗಿ ಲೆಕ್ಕ ಹಿಡಿದು ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎಂದು ನಾನೇನೂ ನಂಬುವುದಿಲ್ಲ. ಹಾಗೇ ಭಾರದಲ್ಲಿನ ರಿಕ್ಷಾ ಡ್ರೈವರುಗಳೂ ಜನರಿಂದ ಪಡೆಯುವ ಮೀಟರ್ ಹಣದ ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎನ್ನುವುದು ನಂಬಲು ಕಷ್ಟವಾದ ವಿಷಯವೇ. ಹಾಗಿದ್ದ ಮೇಲೆ ಈ ರೀತಿಯ ಕೆಲಸಗಾರರಿಂದ ಹಿಡಿದು ಮಹಾ ಉದ್ಯಮಿಗಳಿಗೆಲ್ಲ ಅನ್ವಯವಾಗುವಂತೆ ವ್ಯಾಟ್ ಒಂದನ್ನು ಜಾರಿಗೆ ತಂದು ಬಿಡಿ ಎನ್ನುವುದು ನಿಜವಾಗಿ ಕಷ್ಟದ ಮಾತೇ. ಒಂದು ವಸ್ತು ಹಂತಹಂತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ ಕೈಯಿಂದ ಕೈಗೆ ಸಾಗುವ ವ್ಯವಸ್ಥೆಯೇ ಬೇರೆ ಅಲ್ಲಿ ಹೊಂದುವ ಟ್ಯಾಕ್ಸ್ ಪರಿಭಾಷೆಯನ್ನು ಸಾಮಾನ್ಯ ಜನರಿಗೂ ಬಳಸಿ ಅಲ್ಲಿ ಗೆಲ್ಲುವ ಮಾತಾದರೂ ಎಲ್ಲಿ ಬರುತ್ತದೆ.

ಅಮೇರಿಕದಲ್ಲಿ ತಲೆಯಿಂದ ತಲೆಗೆ ಬರುವ ಆಸ್ತಿಗಳಿಗೂ ಅನ್ವಯವಾಗುವಂತೆ ಟ್ಯಾಕ್ಸ್ ಬಳಸುವ ವ್ಯವಸ್ಥೆ ಇದೆ, ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮಂತಹವರಿಗೆ ಕಷ್ಟವಾಗಬಹುದು. ಒಂದು ತಲೆಯಿಂದ ಮತ್ತೊಂದು ತಲೆಗೆ ವ್ಯವಸ್ಥಿತವಾಗಿ ಹಂಚಿಹೋಗುವ ಆಸ್ತಿಗೆ ಮತ್ತೇಕೆ ಅವರು ಟ್ಯಾಕ್ಸ್ ಕೊಡಬೇಕು ಎನ್ನುವುದು ನನಗಂತೂ ಕಠಿಣವಾದ ಪ್ರಶ್ನೆಯೇ. ನಾವು ಬ್ಯಾಂಕಿನಲ್ಲಿಟ್ಟ ಹಣಕ್ಕೆ ವರ್ಷಕ್ಕೆ ಹತ್ತೇ ಹತ್ತು ಡಾಲರ್ ಬಡ್ಡಿ ಬಂದರೂ ಅದನ್ನು ನಮ್ಮ ಆದಾಯವೆಂದು ಪರಿಗಣಿಸಿ ಅದಕ್ಕೂ ತಕ್ಕದಾದ ಟ್ಯಾಕ್ಸ್ ವಸೂಲಿ ಮಾಡುವ ವ್ಯವಸ್ಥೆ ನನಗಂತೂ ಮೊದಲಿನಿಂದಲೂ ಇಷ್ಟವಾಗದ ವಿಚಾರವೇ. ಇಷ್ಟವೋ ಕಷ್ಟವೋ ಅದನ್ನು ನಿಖರವಾಗಿ ತೋರಿಸಿ ಅಷ್ಟರಮಟ್ಟಿಗೆ ಟ್ಯಾಕ್ ಕೊಟ್ಟು ಇರುವುದು ಕಷ್ಟವಾಗೇನೂ ಇಲ್ಲ. ಆದರೆ ನಮ್ಮಂತಹವರು ಈ ದೇಶದಿಂದ ಹೊರಕ್ಕೆ ಗಿಫ್ಟ್ ಆಗಿಯೋ ಮತ್ತೊಂದಕ್ಕೋ ಕಳಿಸುವ ಹಣವಿದೆಯೆಲ್ಲ ಅದನ್ನು ನಾವು ಯಾವುದೇ ರೀತಿಯಿಂದಲೂ ತೋರಿಸಲು ಸಾಧ್ಯವಾಗಿಲ್ಲ. ನೀವು ಇಷ್ಟೊಂದು ಹಣವನ್ನು ದುಡಿದಿದ್ದೀರಿ ಎನ್ನುವುದರ ಹಿಂದೆ ಎಷ್ಟೊಂದು ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಳೆದುಕೊಂಡಿದ್ದೀರಿ ಎನ್ನುವುದು ನಿಜ, ಅದರ ಜೊತೆಗೆ ನೀವು ನಿಮಗೆ ಬೇಕಾದವರಿಗೆ ಕೊಡಬಹುದಾದ ಗಿಫ್ಟ್ ಭಾರತದಿಂದ ಹೊರಗಿದ್ದರೆ ಇಲ್ಲಿನ ಸರ್ಕಾರದವರಿಗೆ ಅದು ಲೆಕ್ಕಕ್ಕೆ ಸಿಗದ ಕಾರಣ ಅದನ್ನು ವೆಚ್ಚವಾಗಿ ಬಳಕೆಯಾಗಿ ನೋಡುತಾರೆಯೇ ವಿನಾ ಅದಕ್ಕೆ ತೆರಿಗೆ ವಿನಾಯಿತಿಯನ್ನು ಕೊಡಲು ಕಷ್ಟವಾದೀತು. ಒಟ್ಟಿನಲ್ಲಿ ಪೇ ಚೆಕ್ಕ್‌ನಿಂದ ಪೇ ಚೆಕ್ಕ್‌ಗೆ ಹೋಗುವ ವ್ಯವಸ್ಥೆಯಲ್ಲಿ ಉಳಿಸುವುದೇನಿದ್ದರೂ ಟ್ಯಾಕ್ಸ್ ಅನ್ನು ಕೊಟ್ಟಬಳಿಕವೇ ಎನ್ನುವುದು ನಿಜ, ನಿಮಗೆ ಬೇಕೋ ಬೇಡವೋ ಅಗತ್ಯವಾದ ಟ್ಯಾಕ್ಸ್ ಅನ್ನು ಮೊದಲೇ ಹಿಡಿದುಕೊಂಡಿರುವುದರಿಂದ ವರ್ಷದ ಕೊನೆಗೆ ನಾವು ನಾವು ಫೈಲ್ ಮಾಡಿ ಸರ್ಕಾರದಿಂದ ಹಣವೇನಾದರೂ ಹಿಂತಿರುಗಿ ಬರುತ್ತದೆಯೇನೋ ಎಂದು ಬಕಪಕ್ಷಿಯ ಹಾಗೆ ಕಾದುಕೊಂಡಿರುವುದು ತಪ್ಪೋದಂತೂ ಇಲ್ಲ.

Wednesday, January 16, 2008

ರಸ್ತೆಗಳೆಂಬ ಮಟ್ಟಗಾರರು

ಬಡವರೂ-ಬಲ್ಲಿದರೂ ಎಲ್ಲರೂ ಪ್ರಯಾಣ ಮಾಡೋ ದಾರಿ, ಮೆಟ್ಟಿ ಮುನ್ನಡೆಯುವ ನೆಲದ ಮೇಲಿನ ಡಾಂಬರಿನ ಹೊದಿಕೆ, ಅಥವಾ ನಾವುಗಳು ನಮ್ಮ ನಮ್ಮ ವಾಹನದ ಮೇಲೆ ಸವರಿಕೊಂಡು ಹೋಗುವ ಅಂಕುಡೊಂಕಾಗಿದ್ದೂ ಹಿಡಿದ ಗುರಿಯನ್ನು ತಲುಪಿಸುತ್ತೇವೆ ಎಂಬ ವಾಗ್ದಾನವನ್ನು ಎಂದೂ ನೀಡಿಕೊಂಡಿರುವ ಸಂಗಾತಿಗಳ ಮೇಲೆ ಇಂದು ಹೊಸದಾಗಿ ಯೋಚಿಸುವಂತಾಯ್ತು. ಪಂಚಭೂತಗಳಾಗಲೀ, ಸಾವಾಗಲೀ ಪ್ರತಿಯೊಂದು ಸಮುದಾಯಕ್ಕೆ ಒಂದು ಸಮಮಟ್ಟವನ್ನು ಕಾಯ್ದುಕೊಂಡು ಬಂದಿದ್ದರೆ ನಾವು ದಿನವೂ ಬಳಸುವ ರಸ್ತೆಗಳು ಮಹಾ ದೊಡ್ಡ ಮಟ್ಟಗಾರರು (ಲೆವೆಲರ್ಸ್) ಎಂದು ಈ ದಿನ ವಿಶೇಷವಾಗಿ ಅನ್ನಿಸಿದ್ದಂತೂ ನಿಜ.

ಸಂಜೆ ಸುಮಾರು ಆರು ಘಂಟೆಯ ಹೊತ್ತಿಗೆಲ್ಲಾ ಮಹಾ ಕತ್ತಲೆ ಆವರಿಸಿಕೊಂಡು ಎಲ್ಲಾ ಕಡೆ ಸೂರ್ಯನನ್ನು ಅಡಗಿಸಿ ಅಟ್ಟಹಾಸವನ್ನು ತೋರಿಸುತ್ತಿತ್ತು. ಅದರ ಜೊತೆಗೆ ಛಳಿ-ಗಾಳಿಯೂ ಸೇರಿಕೊಂಡು ನಾಳೆ ಸೂರ್ಯ ಹುಟ್ಟುತ್ತಾನೋ ಇಲ್ಲವೋ ಎಂದು ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಸೊನ್ನೆಗಿಂತ ಕೆಳಗಿನ ಛಳಿಯಿಂದ ಒಂದು ಒಣ ವಾತಾವರಣ ಸೃಷ್ಟಿಯಾಗಿತ್ತು. ನಾನು ಅದೆಷ್ಟೋ ಕಾರುಗಳ ಹಿಂದೆ, ಒಂದೇ ಒಂದು ಲೇನ್ ಇರುವ ಯಾವುದೋ ಗ್ರಾಮೀಣ ರಸ್ತೆಯೊಂದರಲ್ಲಿ ತೆವಳುತ್ತಿದ್ದವನು ಯಾವುದೋ ತಿರುವೊಂದರಲ್ಲಿ ದೂರದವರೆಗೆ ದೃಷ್ಟಿ ಹಾಯಿಸಿದ್ದಕ್ಕೆ ಸುಮಾರು ದೂರದವರೆಗೆ ಮುಂದಿರುವ ಕಾರಿನ ಟೇಲ್‌ಲೈಟುಗಳು ಕಂಡುಬಂದವು. ಇಷ್ಟು ಹೊತ್ತಿಗೆ ಅಲ್ಲಲ್ಲಿ ಪೋಲೀಸರು ಇದ್ದು ಅತಿವೇಗದಲ್ಲಿ ಹೋಗುವವರನ್ನು ಗುರುತಿಸಿ ದಂಡವಿಧಿಸುವುದು ಈ ರಸ್ತೆಗಳಲ್ಲಿ ಮಾಮಾಲಿಯಂತೂ ಅಲ್ಲ, ಆದರೂ ಮುಂದಿನ ಕಾರುಗಳೆಲ್ಲ ರಸ್ತೆಯ ಸ್ಪೀಡ್‌ಲಿಮಿಟ್‌ಗಿಂತಲೂ ಕಡಿಮೆ ವೇಗದಲ್ಲೇ ಚಲಿಸುತ್ತಿದ್ದವು ಅಥವಾ ತೆವಳುತ್ತಿದ್ದವು ಎಂದೇ ಹೇಳಬೇಕು. ಕಾರಿನ ಸ್ಟೇರಿಂಗ್ ವ್ಹೀಲ್‌ನ ಹಿಂದಿರ ಬಹುದಾದ ಹಲವಾರು ಮನಸ್ಥಿತಿಗಳು ಕಣ್ಣ ಮುಂದೆ ಸುಳಿದು ಹೋದವು: ದೂರದ ಡೇ ಕೇರ್ ಸೆಂಟರುಗಳಲ್ಲಿ ಕಾದುಕೊಂಡಿರುವ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬಹುದಾದ ತಂದೆ-ತಾಯಿಯರಿದ್ದರಬಹುದು, ವಾರದ ಮತ್ತೊಂದು ದಿನದ ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿರುವವರಿರಬಹುದು, ದೂರದ ಬಾರು-ರೆಸ್ಟೋರೆಂಟಿನಲ್ಲಿ ಕಾದುಕೊಂಡಿರುವ ಪ್ರೇಮಿಯನ್ನು ಭೇಟಿ ಮಾಡುವ ತವಕದವರಿದ್ದಿರಬಹುದು, ಇಂದಿನ ಹಾಗೇ ನಾಳೆ ಎಂದು ಲೆಕ್ಕ ಹಾಕಿಕೊಂಡು ಅಗತ್ಯ ವಸ್ತುಗಳ ಶಾಪ್ಪಿಂಗ್‌ಗೆ ಹೋಗುತ್ತಿರುವ ವೃದ್ಧರಿರಬಹುದು, ಹೀಗೆ ಅನೇಕಾನೇಕ ಮುಖಗಳು ಮನಸ್ಥಿತಿಗಳು ಕಣ್ಣ ಮುಂದೆ ಹಾದು ಹೋದವು. ಇವೆಲ್ಲಕ್ಕೂ ಇಂಬುಕೊಡುವ ಹಾಗೆ ಘಂಟೆಗೆ ನಲವತ್ತೈದು ಮೈಲು ವೇಗದ ಮಿತಿಯಲ್ಲಿನ ರಸ್ತೆಯಲ್ಲಿ ಇಪ್ಪತ್ತೈದಕ್ಕಿಂತಲೂ ಕಡಿಮೆ ವೇಗದಲ್ಲಿ ತೆವಳುತ್ತಿರುವ ನನ್ನ ಹಿಂದುಮುಂದಿನ ವಾಹನಗಳ ಸಾಲು ಅದ್ಯಾವುದೋ ಯುದ್ಧಭೂಮಿಯಲ್ಲಿ ಸಾವರಿಸಿಕೊಂಡು ಹೋಗುತ್ತಿರುವ ಕಾನ್‌ವಾಯ್‌ಯಂತೆ ಕಂಡುಬಂತು. ಈ ಆಮೆ ವೇಗಕ್ಕೆಲ್ಲಾ ಕಾರಣ ಒಬ್ಬನೇ, ಅದೇ ಮುಂದಿನ ವ್ಯಕ್ತಿ, ಎಲ್ಲರಿಗಿಂತ ಮೊದಲು ಈ ಸಾಲಿನಲ್ಲಿ ತೆವಳಿಕೊಂಡು ಹೋಗುತ್ತಿರುವವನು/ಳು. ಛೇ, ಇಂಥ ಒಬ್ಬ ನಿಧಾನವಾದ ಡ್ರೈವರಿನಿಂದ ಎಷ್ಟೊಂದು ಜನರು ಹೀಗೆ ತೆವಳಬೇಕಾಯಿತಲ್ಲ ಎಂದು ಒಮ್ಮೆಲೇ ಕೋಪ ಬಂತು, ಆ ಕೋಪದ ಬೆನ್ನ ಹಿಂದೆ, ಆ ಮುಂದಿನ ವ್ಯಕ್ತಿಯೇ ನಮ್ಮ ನಾಯಕ (ಲೀಡರ್), ಅವನ/ಳ ವೇಗವೇ ನಮಗೆಲ್ಲರಿಗೂ ಮಾದರಿ, ನಾವು ಹಿಡಿದ ದಾರಿ ಒಂದೇ ಒಂದು ಲೇನ್ ಇರುವ ವ್ಯವಸ್ಥೆ ಆದ್ದರಿಂದ ಇನ್ನು ಮುಂದೆ ಅದೆಷ್ಟೋ ದೂರದವರೆಗೆ ಈ ನಿಧಾನವಾದ ವ್ಯಕ್ತಿಯನ್ನು ಅನುಸರಿಸಿಕೊಂಡಿರಬೇಕಲ್ಲ, ಆ ವ್ಯಕ್ತಿ ಯಾರೂ ಏನೂ ಎನ್ನುವುದು ಗೊತ್ತಿರದಿದ್ದರೂ ಆ ಲೀಡರ್‌ಶಿಪ್‌ನಿಂದ ಎಷ್ಟೊಂದು ಜನರಿಗೆ ಅದೇನೇನೋ ಪರಿಣಾಮ ಬೀರುತ್ತಲ್ಲಾ ಎನ್ನಿಸಿ ಸದಾ ವೇಗಕ್ಕೆ ಹೊಂದಿಕೊಂಡ ನನ್ನ ವಸಡುಗಳು ಯೋಚನೆಯ ಭಾರಕ್ಕೆ ಕುಸಿದು ಹೋದವು.

ಒಬ್ಬ ನಾಯಕನಿಗೆ ವೇಗವೆನ್ನುವುದು ಇರಲೇ ಬೇಕೆಂದೇನೂ ಇಲ್ಲ. ಪ್ರಪಂಚದ ಅದೆಷ್ಟೋ ದೇಶದ ನಾಯಕರುಗಳು ಸ್ಲೋ, ಅನೇಕ ಕಂಪನಿಯ ಲೀಡರುಗಳು ಟೈಪ್-ಬಿ ವ್ಯಕ್ತಿತ್ವದವರೇ ಸರಿ. ವೇಗವಾಗಿ ಹೋಗುವ ರಸ್ತೆಗಳಿದ್ದೂ ಅನುಕೂಲಗಳಿದ್ದೂ ಎಲ್ಲರಿಗಿಂತ ಮುಂದಿನ ವ್ಯಕ್ತಿ ನಿಧಾನವಾಗಿ ಹೋಗುತ್ತಿರುವ ಕಾರಣಕ್ಕೆ ಎಷ್ಟೊಂದು ಜನರ ಮೇಲೆ ಅದೇನೇನು ಪರಿಣಾಮಗಳು ಬೀರುತ್ತವೆ ಎಂದು ಒಮ್ಮೆ ಯೋಚಿಸಿಕೊಂಡೆ. ಯಾವುದು ಸಾಮಾನ್ಯ ಸಂಜೆಯಾಗಿ ಪರಿವರ್ತನೆಗೊಂಡು ಎಲ್ಲವೂ ಸುಗಮವಾಗಿ ನಡೆಯಬೇಕಿತ್ತೋ ಅಲ್ಲಿ ನಿಮಿಷ-ನಿಮಿಷಗಳನ್ನು ಆಧರಿಸಿಕೊಂಡಿರುವ ಎಷ್ಟೋ ಜನರಿಗೆ ವಿಳಂಬವಾಗಿ ಹೋಗಬಹುದು. ಒಮ್ಮೆ ವಿಳಂಬಗೊಂಡವರು ಗಲಿಬಿಲಿಯಿಂದ ಹೆಚ್ಚಿನ ವೇಗದಲ್ಲಿ ಓಡಿಸಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಅಪಾರವಾದ ಸಮಯವಿದೆ ಎನ್ನುವ ಮಹಾಕಾಲದ ಮುಂದೆಯೂ ನಾವು ದಿನ, ಘಂಟೆ, ನಿಮಿಷ, ಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ನಾವೇ ಸೃಷ್ಟಿಸಿಕೊಂಡಿರುವ ಗಡಿಯಾರವನ್ನಾಧರಿಸಿದ ವ್ಯವಸ್ಥೆಯಲ್ಲಿ ಅದೇನೇನು ಅವಾಂತರಗಳಾಗಬೇಡ. ಈಗಿನ ನಾಯಕ ಅಥವಾ ಮುಂದಾಳು ಬದಲಾಗುವವರೆಗೆ ಹಿಂದಿನವರು ಸಂಯಮದಿಂದ ಕಾಯಬೇಕೇ ಅಥವಾ ಈ ಮುಂದಾಳು ಬದಲಾಗಿ ಮತ್ತೊಬ್ಬ ಬಂದು ನಮ್ಮೆಲ್ಲರ ವೇಗದ ಗತಿಯ ನಿಧಾನವಾದ ಬದಲಾವಣೆಯ ಬಗ್ಗೆ ಚಿಂತಿಸಬೇಕೇ ಅಥವಾ ನಾವೇ ಮತ್ಯಾವುದೋ ಹೊಸ ರಸ್ತೆಯೊಂದನ್ನು ಹಿಡಿದು ನಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಳ್ಳಬೇಕೆ? ಒಂದು ವೇಳೆ ಹಾಗೆ ಮಾಡಿದರೂ ಈ ರಸ್ತೆಗಳೆಂಬ ಮಟ್ಟಗಾರರೂ ಎಲ್ಲಿಯೂ ಎಲ್ಲಕಡೆಯೂ ಇರಬಹುದಲ್ಲವೇ? ಈ ಮುಂದಾಳುವನ್ನು ತೊರೆದು ಹೋದ ಮಟ್ಟಿಗೆ ಮತ್ತೊಬ್ಬ ಮುಂದಾಳು ಸಿಗುವವ ಹೇಗಿರುತ್ತಾನೋ ಏನೋ? ರಾಬರ್ಟ್ ಪ್ರಾಸ್ಟ್‌ನ ಕಾಲದ ಕಡಿಮೆ ಜನರು ಸಂಚರಿಸಿದ ಮಾರ್ಗಗಳು ಇನ್ನೂ ಇವೆಯೇ ಎಂದು ಬೇಕಾದಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.

ರಸ್ತೆ ಎನ್ನುವುದು ಕೇವಲ ನಡೆದಾಡುವ ಹಾದಿ, ಹೆಚ್ಚು ಜನರು ಬಳಸುವ ವ್ಯವಸ್ಥೆ ಎಂದು ದೊಡ್ಡ ವ್ಯಾಖ್ಯಾನವನ್ನೇನೋ ಮಾಡಬಹುದು ಆದರೆ ಪ್ರತಿಯೊಬ್ಬರನ್ನೂ ಒಂದೇ ಮಟ್ಟಕ್ಕೆ ಎಳೆದು ತರುವ ಈ ಅವತರಣಿಕೆಯನ್ನು ಒಂದು ತತ್ವವನ್ನಾಗಿ ಅಥವಾ ಸಾಧನವನ್ನಾಗಿ ನೋಡಿದ್ದು ನಾನು ಇದೇ ಮೊದಲು. ಭೂಮಿಯ ಮೇಲಿನ ರಸ್ತೆಗಳು ಹಾಗೆಯೇ ಹೆಚ್ಚು ಜನರು ಬಳಸುವಲ್ಲಿ ಸಹಾಯವಾಗುವಂತೆ ಕಡಿಮೆ ಜನರು, ಮುತ್ಸದ್ದಿಗಳು, ಚಿಂತಕರು ಮೊದಲೇ ಯೋಚಿಸಿ ರೂಪಿಸಿರುವ ವ್ಯವಸ್ಥೆ. ನನ್ನ ಭೌತಿಕ ಅಸ್ತಿತ್ವದ ಮೊದಲೂ ನಂತರವೂ ನಾವು ಇರುತ್ತೇವೆ ಎಂಬ ಹಣೆಪಟ್ಟಿಯನ್ನು ಬರೆಸಿಕೊಂಡೇ ಹುಟ್ಟಿವೆ ಈ ಮಟ್ಟಗಾರರು. ಭೂಮಿಯ ಮೇಲಿನ ರಸ್ತೆಗಳನ್ನು ಒಮ್ಮೆ ತೋಡಿಕೊಂಡರೆ ಮತ್ತೆ ಮತ್ತೆ ಅದೇ ವ್ಯವಸ್ಥೆಗೆ ಬರುವಂತೆ ಮಾಡುವ ಕಟ್ಟಿ ಹಾಕುವ ನೆರೆಹೊರೆಗಳಿವೆ, ಅದೇ ನೀರಿನ ಮೇಲಾಗಲೀ ಗಾಳಿಯಲ್ಲಾಗಲೀ ತೇಲುವವರಿಗೆ ಈ ಜಿಜ್ಞಾಸೆಗಳಿರಲಿಕ್ಕಿಲ್ಲ. ಈ ಮಟ್ಟಗಾರ ರಸ್ತೆಗಳು ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ ಎಂದು ಬೀಗುವುದನ್ನು ನೀವು ಗಮನಿಸಿರಬಹುದು, ಭೋಗೋಳದಲ್ಲಿ ಅಪರಿಮಿತವಾಗಿ ಗಾಳಿ-ನೀರಿದ್ದರೂ ನಾವು ಹೆಚ್ಚು ಹೆಚ್ಚು ಆಧರಿಸಿಕೊಂಡಿರುವುದು ನೆಲವನ್ನೇ. ಅದ್ಯಾವುದೋ ಸೈನ್ಸ್‌ಫಿಕ್ಷನ್ನ್ ಸಿನಿಮಾಗಳಲ್ಲಿ ತೋರಿಸೋ ಹಾಗೆ ನಾವೂ ಏಕೆ ಸ್ವತಂತ್ರರಾಗಿ ಕಡಿಮೆ ಖರ್ಚಿನಲ್ಲಿ ಅಂತರಿಕ್ಷದಲ್ಲಿ ತೇಲಬಾರದು? ನಮ್ಮ ಗುರಿಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ನಮ್ಮ ನಮ್ಮ ದೂರಕ್ಕೆ ತಂತ್ರಕ್ಕೆ ಆಲೋಚನೆಗಳಿಗೆ ನಾವು ನಾವೇ ಏಕೆ ನಾಯಕರಾಗಬಾರದು? ಯಾರೊಬ್ಬರ ಹಿಂದೂ ಇಲ್ಲದೇ, ಯಾರ ಮುಂದೆ ತೆವಳಿಕೊಂಡು ಹೋಗಬಹುದಾದ ಹಂಗೂ ಇಲ್ಲದೇ ಪ್ರತಿಯೊಂದು ಸಾರಿ ತೇಲುವಾಗಲೂ ನಮ್ಮ ದಾರಿಯನ್ನು ನಾವೇ ಏಕೆ ಕೊರೆದುಕೊಳ್ಳುವ ಮುಂದಾಳುಗಳಾಗಬಾರದು? ಕಡಿಮೆ ಭೂಮಿಯಲ್ಲಿ ಹೆಚ್ಚು ಹೆಚ್ಚು ಜನರು ಕೊರೆದು ಅದೆಲ್ಲಿಂದ ಅದೆಲ್ಲಿಗೋ ಹೋಗುವ ನಿರ್ಣಾಯಕ ರಸ್ತೆಗಳನ್ನು ನಿರ್ಮಿಸಿದಂತೆಲ್ಲಾ ಇವುಗಳು ಹಠ ಮಾಡುವ ಮಕ್ಕಳಿಗೆ ಒಂದೇ ಒಂದು ಆಪ್ಷನ್ನನ್ನು ಕೊಡುವ ಪೋಷಕರ ಹಾಗೆ ಯಾವತ್ತೋ ಅದೇ ಹಾಡನ್ನು ಹಾಡಿಕೊಂಡಿರುವ ಮಟ್ಟಗಾರರಾಗುವುದೇಕೆ? ಯಾವನೋ ಒಬ್ಬ ತನ್ನ ಗೌಜು-ಗದ್ದಲಗಳ ನಡುವೆ ನಿಧಾನವಾಗಿ ತೆವಳಿಕೊಂಡು ಹೋಗುತ್ತಿರುವುದನ್ನು ನಾವು ಉಳಿದವರು ಅವನ ಮುಂದಾಳುತನವನ್ನಾಗಲೀ, ನಾಯಕತ್ವವನ್ನಾಗಲೀ ಅದೇಕೆ ಒಪ್ಪಿಕೊಳ್ಳಬೇಕು? ಒಮ್ಮೆ ಸರತಿ ಸಾಲಿನಲ್ಲಿ ಸಿಕ್ಕಿಕೊಂಡಾಕ್ಷಣ ಅದರಿಂದ ಮುಕ್ತಿಯೆಂಬುದೇ ಇಲ್ಲವೇನು?

Saturday, December 29, 2007

ಕ್ರಿಸ್‌ಮಸ್ ಲೈಟೂ ಕ್ಲೀನ್ ಶೇವನ್ ಡ್ಯಾಡೂ...

೨೦೦೧ ನೇ ಸೆಪ್ಟೆಂಬರ್ ಹೊತ್ತಿಗೆ ನಾವಿನ್ನೂ ವಾಷಿಂಗ್ಟನ್ ಡಿಸಿ ಪ್ರಾಂತ್ಯದ ಹತ್ತಿರವೇ ಇದ್ದೆವು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಿಂದ ಡಿಸಿಯ ಜಾರ್ಜ್‌ಟೌನ್ ಯೂನಿವರ್ಸಿಟಿಗೆ ರೆಫೆರೆನ್ಸ್ ಪುಸ್ತಕಗಳಿಗೆಂದು ಹೋಗುತ್ತಿದ್ದ ನಮಗೆ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮುಸ್ಲಿಮ್ ಯುವಕ ಯಾವಾಗಲೂ ಕಣ್ಣಿಗೆ ಬೀಳುತ್ತಿದ್ದ. ಈತ ನಮಗೆ ಬೇಕಾದಷ್ಟು ಸಲ ನಾವು ಡಿಸಿ ಗೆ ಹೋಗುವ ಟ್ರೈನ್‌ನಲ್ಲಿ ಸಿಕ್ಕಿದ್ದೂ ಇದೆ. ಅಮೇರಿಕಾದ ಮೇಲೆ ಸೆಪ್ಟೆಂಬರ್ ೧೧ರ ಭಯೋತ್ಪಾದಕರ ಧಾಳಿ ನಡೆದ ಕೆಲವು ದಿನಗಳಲ್ಲಿ ಅಲ್ಲಲ್ಲಿ ಹೇಟ್‌ಕ್ರೈಮ್‌ಗಳ ಬಗ್ಗೆ ವರದಿಗಳು ಬರುತ್ತಿದ್ದು, ಸ್ಥಳೀಯರ ಹಾಗೆ ಎಷ್ಟೋ ಜನ ಭಾರತ ಅಥವಾ ಇತರೆ ದೇಶದ ಮೂಲದಿಂದ ಬಂದವರು ತಮ್ಮ ತಮ್ಮ ಕಾರು ಮನೆಯ ಮುಂದೆ ಅಮೇರಿಕನ್ ಧ್ವಜವನ್ನು ಹಾಕಿಕೊಳ್ಳುತ್ತಿದ್ದುದೂ ಕಂಡು ಬರುತ್ತಿದ್ದವು. ಸ್ಥಳೀಯರು ಸಾಲಿಡ್ಯಾರಿಟಿಗೆಂದು ಅಮೇರಿಕ ಧ್ವಜಗಳನ್ನು ತಮ್ಮ ಕಾರಿಗೆ ತಗುಲಿಸಿಕೊಂಡಿದ್ದರೆ ವಲಸೆ ಬಂದವರು ಹಲವಾರು ಕಾರಣಗಳಿಗೆ ಆ ರೀತಿ ತೋರಿಸಿಕೊಳ್ಳುತ್ತಿದ್ದುದು ಎದ್ದು ಕಾಣುತ್ತಿತ್ತು. ಯಾರೇ ತಮ್ಮ ತಮ್ಮ ಸ್ವರೂಪಗಳಲ್ಲಿ ಅದೇನೇ ಬದಲಾವಣೆಗಳನ್ನು ಮಾಡಿಕೊಂಡರೂ ಈ ಲೈಬ್ರರಿಯಲ್ಲಿ ಕೆಲಸ ಮಾಡುವ ಯುವಕ - ಆರು ಅಡಿಗಿಂತಲೂ ಎತ್ತರದ ನಿಲುವು, ಉದ್ದನೆಯ ಗಡ್ದದಾರಿ, ಯಾವಾಗಲೂ ಬಿಳಿ ನಿಲುವಂಗಿ (ಕುರ್ತಾ) ಧರಿಸಿರುವ, ಅವನದ್ದೇ ಆದ ಆಳವಾದ ಶುಭ್ರ ಕಣ್ಣುಗಳಲ್ಲಿ ಅದಮ್ಯ ಶಾಂತಿಯನ್ನು ಅಡಗಿಸಿಕೊಂಡು - ತಾನಾಯಿತು ತನ್ನ ಕೆಲಸವಾಯಿತು ಎಂದು ಬಾಹ್ಯ ನೋಟಕ್ಕೆ ನಿರ್ಲಿಪ್ತವಾಗಿದ್ದುದು ನನಗಂತೂ ಬಹಳ ಆಶ್ಚರ್ಯವನ್ನುಂಟುಮಾಡಿತ್ತು. ಆಗಷ್ಟೇ ಮಾಧ್ಯಮಗಳಲ್ಲಿ ತೋರಿಸುತ್ತಿದ್ದ ಬಿನ್ ಲಾಡೆನ್ ಚಿತ್ರಗಳಿಗೂ ಈ ಯುವಕನ ಗುರುತಿಗೂ ಬಹಳಷ್ಟು ಸಾಮ್ಯತೆಗಳಿದ್ದವು. ಅಪರೂಪಕ್ಕೆ ಟ್ರೈನ್‌ನಲ್ಲಿ ಸಿಕ್ಕುವ ಈತನನ್ನು ಸುತ್ತಲಿನ ಜನರು ಕಣ್ಣಿಟ್ಟು ನೋಡುವುದನ್ನು ನೋಡಿ ನನಗೇ ಮುಜುಗರವಾಗುತ್ತಿತ್ತು. ತನ್ನ ಸುತ್ತ ಮುತ್ತಲು ಅದೆಷ್ಟೇ ಕೋಲಾಹಲ ನಡೆದುಕೊಂಡಿದ್ದರೂ ಈತ ತನ್ನತನವನ್ನು ಬಿಡದೇ ಸಹಜವಾಗಿದ್ದುದು ನನಗೆ ಇಂದಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ ಜೊತೆಗೆ ಆತನ ಮೇಲಿನ ಅಭಿಮಾನವೂ ಹೆಚ್ಚುತ್ತದೆ.

***

ನಾವು ಜರ್ಸಿ ಸಿಟಿಯಿಂದ ಪ್ಲಾಂಡರ್ಸ್‌ಗೆ ಬಂದ ವರ್ಷ ಇದು. ನಾವಿರುವ ಮನೆಯ ಮೂಲ ಓನರ್ ಕ್ರಿಸ್‌ಮಸ್ ಸಮಯದಲ್ಲಿ ಬಹಳ ಚೆನ್ನಾಗಿ ಮನೆಯ ಹೊರಗೆ ಮತ್ತು ಒಳಗೆ ಲೈಟ್ ಹಾಕಿ ಅಲಂಕಾರ ಮಾಡಿರುತ್ತಿದ್ದರಂತೆ. ನಮಗೆ ಗೊತ್ತಿರುವ ಎಷ್ಟೋ ಜನ ಸ್ಥಳೀಯರು - ’ನೀವು ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡುವುದಿಲ್ಲವೇ?’, ’ಹಿಂದಿನವರು ಚೆನ್ನಾಗಿ ಲೈಟ್ ಅಲಂಕಾರ ಮಾಡಿರುತ್ತಿದ್ದರು!’ ಎನ್ನುವ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಜೊತೆಗೆ ಥ್ಯಾಂಕ್ಸ್‌ಗಿವಿಂಗ್ ಗಿಂತಲೂ ಮುಂಚೆಯೇ ಬರುವ ದೀಪಾವಳಿ ಸಂದರ್ಭದಲ್ಲಿ ನಾವು ಹೊರಗಡೆ ಹೊತ್ತಿಸಿದ ಲೈಟ್, ದೀಪಗಳನ್ನು ಪ್ರಶ್ನಿಸಿಯೂ ಇದ್ದಾರೆ. ನಮ್ಮ ನಂಬಿಕೆ ಸಂಪ್ರದಾಯಗಳ ಪ್ರಕಾರ ನಾವು ನಮ್ಮ ನಮ್ಮ ಹಬ್ಬ ಹರಿದಿನಗಳಿಗೆ ಬೇಕಾದ ಅಲಂಕಾರ ಮಾಡುವುದು ನಮಗೆ ಸೇರಿದ್ದು, ಜೊತೆಗೆ ನಮ್ಮ ನೆರೆಹೊರೆಯ ಆಚಾರ-ವಿಚಾರಗಳಿಗೆ ತಕ್ಕಂತೆ ಸ್ಪಂದಿಸಬೇಕಾದದ್ದೂ ನಮ್ಮ ಕರ್ತವ್ಯಗಳಲ್ಲೊಂದು ಎಂದು ನಂಬಿ ಥ್ಯಾಂಕ್ಸ್‌ಗಿವಿಂಗ್‌ನಿಂದ ಇಂದಿನವರೆಗೂ ಹೊರಗಡೆ ದೀಪಾಲಂಕಾರವನ್ನು ಮಾಡಿ ಅದನ್ನು ಉರಿಸಿಕೊಂಡೇ ಬಂದಿದ್ದೇವೆ. ಹಿಂದಿನ ಮನೆಯ ಮಾಲಿಕನಿಗೆ ಹೋಲಿಸಿದರೆ ನಮ್ಮ ಅಲಂಕಾರವೇನೂ ಇರಲಾರದು, ನಾವು ಕ್ರಿಸ್‌ಮಸ್ ಟ್ರೀ ಅನ್ನೂ ಇಟ್ಟಿಲ್ಲ ಆದರೆ ನಮ್ಮ ಕೈಲಾದಂತೆ ಸುತ್ತಲಿನವರಲ್ಲಿ ಒಂದಾಗಿ ಇರುವ ಪ್ರಯತ್ನವಷ್ಟೇ.

***

ನಮ್ಮ ಆಫೀಸಿನಲ್ಲಾಗಲೀ ಅಥವಾ ಹೊರಗಡೆ ಮತ್ತಿನ್ನೆಲ್ಲಾದರೂ ಸರದಾರ್‌ಜೀ ಗಳನ್ನು ನೋಡಿದಾಗ ಅವರ ಮೇಲೆ ಪ್ರಶಂಸೆಯೂ ಹಾಗೂ ಹಲವಾರು ಪ್ರಶ್ನೆಗಳು ಮನದಲ್ಲೇಳುತ್ತವೆ. ನಿಜವಾಗಿಯೂ ಪಗಡಿ ಧಾರಣೆ ಮಾಡಿರುವ ಮೀಸೆ-ಗಡ್ಡ-ತಲೆ ಕೂದಲನ್ನು ಹುಟ್ಟಿದಂದಿನಿಂದ ಬೋಳಿಸದಿರುವ ಇವರನ್ನು ತಮ್ಮ ಸಂಪ್ರದಾಯ ಹಾಗೂ ತಮ್ಮ ನೆರೆಹೊರೆ ಇವುಗಳ ನಡುವೆ ತೂಗಿ ನೋಡಿದಾಗ ದೈಹಿಕವಾಗಿ ಕೂದಲನ್ನು ಬೆಳೆಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಧರಿಸಿಕೊಂಡಿರುವುದು ಹುಟ್ಟಿದಂದಿನಿಂದ ಬಂದ ಅಭ್ಯಾಸವಾದರೂ ನಾವಿರುವ ನೆರೆಹೊರೆಯಲ್ಲಿ ’ಕ್ಲೀನ್‌ಶೇವನ್‍’ ಜನರಿಗೆ ಸಿಗುವ ಪ್ರಾಶಸ್ತ್ಯಗಳನ್ನು ನೋಡಿದಾಗ ಹಲವಾರು ರೀತಿಯಲ್ಲಿ ತರ್ಕಿಸಬಹುದು. ವಾಷಿಂಗ್ಟನ್ ಡಿಸಿಯ ಲೈಬ್ರರಿ ನೌಕರನಾಗಲೀ, ಅನ್‌ಶೇವನ್ ಸರ್ದಾರ್‌ಜೀಗಳಾಗಲೀ ನಿಜವಾಗಿಯೂ ತಮ್ಮ ಪರಂಪರೆಯನ್ನು ಪ್ರತಿಕ್ಷಣವೂ ಹೊತ್ತುಕೊಂಡೇ ತಿರುಗುತ್ತಾರೆ ಅನ್ನಿಸೋದಿಲ್ಲವೇ?

ನಾವು ಕಂಡ ನಮ್ಮ ದಕ್ಷಿಣ ಭಾರತದ ಆಚರಣೆ/ವಿಧಿಗಳ ಪ್ರಕಾರ ನಮ್ಮಲ್ಲಿನ ಗಂಡಸರು ಮುಖದ ಮೇಲೆ ಮೀಸೆಯೊಂದನ್ನು ಇಟ್ಟುಕೊಳ್ಳುವುದು ಸಹಜ. ಮೀಸೆಯ ಹೊರತಾಗಿ ಗಡ್ಡವೇನಾದರೂ ಇದ್ದರೆ ಅದು ರೋಗಿಗಳ, ವೈರಾಗಿಗಳ, ಸೋಮಾರಿಗಳ ಹಾಗೂ ಬುದ್ಧಿಜೀವಿಗಳ ಸೂಚಕವಾಗಿತ್ತಷ್ಟೇ. ನಮ್ಮಲ್ಲಿನ ಯುವಕರನ್ನು ಅವರು ಎಂದಾದರೂ ಮೀಸೆಯನ್ನು ಬೋಳಿಸಿಕೊಂಡರೆ ಉತ್ತರ ಭಾರತದ ಅಥವಾ ಹಿಂದಿ ಸಿನಿಮಾಗಳ ಹೀರೋಗಳಿಗೆ ಹೋಲಿಸಿ ಜನರು ಛೇಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈಗಲೂ ಸಹ ಅಮೇರಿಕದಲ್ಲಿಯೂ ದಕ್ಷಿಣ ಭಾರತ ಮೂಲದ ಯುವಕರು ಮೀಸೆಯನ್ನು ಇಟ್ಟುಕೊಂಡಿರುವುದು ನಮ್ಮ ಕಣ್ಣಿಗೆ ಬೀಳುತ್ತದೆ, ಅದರ ಮತ್ಯಾವುದೇ ವೇರಿಯೇಷನ್ನುಗಳೂ ಸಹ ಉಳಿದ ಕಡೆಗಳಿಂದ ಅವರವರು ಪಡೆದ ಇನ್‌ಫ್ಲುಯೆನ್ಸ್‌ಗಳ ಮೇಲೆ ಅವಲಂಭಿತವಾರುತ್ತದೆ. ಭಿನ್ನ ಪ್ರಪಂಚ ಹಾಗೂ ಸಂಸ್ಕೃತಿಯ ಸಂಗಮದಲ್ಲಿ ಬೆಳೆಯುವ ನಮ್ಮ ಮುಂದಿನ ತಲೆಮಾರಿಗೆ ಅನ್ನಿಸಬಹುದು - ನಮ್ಮ ತಂದೆಯೂ ಇಲ್ಲಿಯವರ ಹಾಗೆ ಕ್ಲೀನ್ ಶೇವನ್ ಯಾಕಿರಬಾರದೆಂದು. ಬಾಹ್ಯವಾಗೇಳುವ ಅಂತಹ ಪ್ರಶ್ನೆಗಳಿಗೆ ನಮ್ಮ ಮುಖದ ಮೀಸೆ ಏಕಿದೆ ಎಂದು ಹಲವಾರು ರೀತಿಯ ವಿವರವನ್ನು ಕೊಡಬಹುದಾದರೂ ಮನದೊಳಗಿನ ವ್ಯಾಪಾರವನ್ನು ನಾವು ಯಾವತ್ತಿಗೂ ನಿಯಂತ್ರಿಸಲಾಗೋದೇ ಇಲ್ಲ.

***

ನಾನೂ ಒಂದು ಕ್ರಿಸ್‌ಮಸ್ ಟ್ರೀ ಅನ್ನು ಇಡಬಲ್ಲೆ, ಅದನ್ನು ವಿಧವಿಧವಾಗಿ ಅಲಂಕಾರ ಮಾಡಬಲ್ಲೆ, ಅದನ್ನು ದುಡ್ಡಿನಿಂದಲೇ ಮುಚ್ಚಬಲ್ಲೆ, ಅದರ ಕೆಳಗೆ ಗಿಫ್ಟ್‌ಗಳನ್ನು ಥರಥರವಾಗಿ ಪೇಪರ್‌ಗಳಿಂದ ರ್ಯಾಪ್ ಮಾಡಿ ಅದನ್ನು ಸ್ಯಾಂಟಾಕ್ಲಾಸ್ ಹೆಸರಿನಲ್ಲಿ ಮಕ್ಕಳಿಗೆ ಹಂಚಬಲ್ಲೆ. ಆದರಿಂದ ನಮ್ಮ ಮನೆಯ ಕ್ರಿಸ್‌ಮಸ್ ಟ್ರೀಗೂ ಡಿಪಾರ್ಟ್‌ಮೆಂಟ್ ಸ್ಟೋರ್ ಕ್ರಿಸ್‌ಮಸ್ ಟ್ರೀಗೂ ಏನು ವ್ಯತ್ಯಾಸ ಉಳಿಯಿತು? ನಮ್ಮ ಮನೆಯಲ್ಲಿ ಅಲಂಕೃತಗೊಂಡ ಟ್ರೀ ನೋಡಲು ಚೆನ್ನಾಗಿರಬಹುದು, ಆದರೆ ಅದರಲ್ಲಿ ಯಾವುದೇ ಪರಂಪರೆಯಿಲ್ಲ, ಸಂಪ್ರದಾಯವಿಲ್ಲ, ಹಿನ್ನೆಲೆಯಿಲ್ಲ. ಶಾಲೆಯಲ್ಲಿ ನಮ್ಮ ಮಕ್ಕಳನ್ನು ಅವರ ಸಹಪಾಠಿಗಳು ಕೇಳಿಯಾರು ಎಂಬ ಒಂದೇ ಕಾರಣಕ್ಕೆ, ನಾವು ನಮ್ಮ ನೆರೆಹೊರೆಯವರಲ್ಲಿ ಮಿಳಿತವಾಗಿ ಬದುಕಬೇಕು ಎಂಬುದಕ್ಕೆ ನಾವು ಇನ್ನೂ ಏನೇನನ್ನು ತ್ಯಾಗ ಮಾಡಬೇಕು, ಎಷ್ಟರ ಮಟ್ಟಿಗೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಅಮೇರಿಕದಲ್ಲೇ ಬೇಕಾದಷ್ಟು ಕಡೆ ಇರುವ ಭಾರತೀಯ ಮೂಲದ ಜನರು ಬೇಕಾದಷ್ಟು ಉತ್ತರಗಳನ್ನು ಕಂಡುಕೊಳ್ಳಬಹುದು. ನ್ಯೂ ಜೆರ್ಸಿ, ನ್ಯೂ ಯಾರ್ಕ್ ಅಂತ ಪ್ರದೇಶಗಳಲ್ಲಿ ಹೆಚ್ಚು ಜನರಿರುವ ದೇಸೀ ಸ್ಥಳಗಳಲ್ಲಿ ನಮ್ಮ ಆಚರಣೆಗಳಿಗೆ ಸಂವೇದನೆಗಳಿಗೆ ಆದ್ಯತೆ ಪ್ರಾಧಾನ್ಯತೆ ಸಿಕ್ಕರೆ ಅದೇ ಅಮೇರಿಕದ ಉಳಿದೆಡೆ ಹೆಚ್ಚು ಭಾರತೀಯರಿಲ್ಲದ ಕಡೆ ಅಂತಹ ಪ್ಲೆಕ್ಸಿಬಿಲಿಟಿ ಇರದೇ ಇರಬಹುದು. ನಾವೆಲ್ಲಿ ಹೋದರೂ ಅಲ್ಲಿಯವರಾಗಿರುವುದು ಒಂದು ರೀತಿಯ ಸೂಕ್ಷ್ಮ, ನಾವು ಭಿನ್ನರಾಗಿದ್ದುಕೊಂಡೇ ನಮ್ಮ ತನವನ್ನು ಬೆಳೆಸಿ ಪೋಷಿಸಿಕೊಂಡು ಹೋಗುವುದು ಮತ್ತೊಂದು ರೀತಿಯ ಅಗತ್ಯ.

ನಮ್ಮತನವೆನ್ನುವುದನ್ನು ನಾವು ಬಿಡುವುದೋ ಹಿಡಿದುಕೊಳ್ಳುವುದೋ ಎನ್ನುವುದು ಕೆಲವರಿಗೆ ಅನಿವಾರ್ಯತೆಯ ಪ್ರಶ್ನೆ, ಇನ್ನು ಕೆಲವರಿಗೆ ಅದು ಬದಲಾವಣೆಗಳ ಅಗತ್ಯ - ಬೇರೆಲ್ಲಿ ಹೇಗಾದರೂ ಇರಲಿ ನಮ್ಮ ಮನೆಯಲ್ಲಿನ ಅನ್-ಕ್ಲೀನ್‌ಶೇವನ್ ಡ್ಯಾಡ್ ಬದಲಾಗದಿದ್ದರೆ ಸಾಕು!

Thursday, December 27, 2007

ಮರೆಯಾದಳು ಭುಟ್ಟೋ

(photo source unknown)

ನಾಡಿನ ಕತ್ತಲೆ ಎಳೆಗಳು ಕಳೆದೇ ಹೋದವು
ಇನ್ನೇನು ಸುಂದರ ದಿನಗಳು ಬಂದೆ ಬಂದವು
ಸೂರ್ಯನು ಮುಳುಗಿ ಮರುದಿನ ಹುಟ್ಟೋ
ಮೊದಲೇ ಮರೆಯಾದಳು ಭುಟ್ಟೋ.

ಕಂಬಳಿ ಹುಳುವಿನ ಹಾಗೆ ಎಂಟು ವರ್ಷ
ಕೊರೆದು ತಿಂದ ಮನದಾಳದ ಬುತ್ತಿಯ ಹರ್ಷ
ಅರವತ್ತೊಂಭತ್ತು ದಿನದ ಬಣ್ಣದ ಹಾಯಿ
ಚಿಟ್ಟೆಯನ್ನ ಕೊಂದೇ ಬಿಟ್ಟರಲ್ಲ ತಾಯಿ.

ಅಪ್ಪ ತಮ್ಮಂದಿರ ಒಡಗೂಡಿ ಕಟ್ಟಿದ ಸೇನೆಗೆ
ಶೋಷಿತ ಜನರ ಸರ್ಕಾರವನು ಎತ್ತಿ ಬಾನಿಗೆ
ಸೇನಾಡಳಿತದ ವಿರೋಧವನೇ ಎದುರಿಸಿ
ಕೊನೆಗೆ ಎಲ್ಲರನ್ನೂ ಬಲಿಗೊಟ್ಟ ಕಸಿವಿಸಿ.

ಎರಡೆರಡು ಬಾರಿ ಅಧಿಕಾರ ಕಿತ್ತುಕೊಂಡೂ
ಕಾರಾಗೃಹ ವಾಸದ ನೋವ ನುಂಗಿಕೊಂಡೂ
ಸಗಣಿಯೊಳಗಿನ ಹುಳುಗಳ ಮೇಲುತ್ತುವ ತಾಯೆ
ಮತ್ತಾರಿಗೂ ಬರದು ನೀನೆಸೆಯುವ ಮಾಯೆ.

ನಿನ್ನ ಕನಸುಗಳ ನುಂಗಿ ನೀರು ಕುಡಿದ ನಾಡನ್ನು ಬಿಟ್ಟು
ಮುಂದಿನ ಜನುಮದಲ್ಲಾದರೂ ನಮ್ಮ ನಾಡಲ್ಲಿ ಹುಟ್ಟು.
***
October 18, 2007 ರಂದು ಪ್ರಕಟಿಸಿದ ಈ ಲೇಖನವನ್ನೂ ಓದಿ: ಭುಟ್ಟೋ ಬಂದಳು ಶಾಂತಿ ತಂದಳು!
...ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.

Tuesday, December 18, 2007

ನೀರಿನ ಮತ್ತೊಂದು ಹೆಸರು

ಎಲ್ಲರ ಮಹಾತಾಯಿ ನೀರಿನ ಹಲವಾರು ರೂಪಗಳು ನಮಗೆಲ್ಲಾ ಪರಿಚಿತವೇ, ವಿಶ್ವದ ತುಂಬೆಲ್ಲಾ ತುಂಬಿಕೊಂಡು ಅನೇಕಾನೇಕ ರೂಪಗಳಲ್ಲಿ ಜೀವಕುಲದ ಬೆಳವಣಿಗೆಯ ಮಾಧ್ಯಮವಾಗಿರುವ ಅಪಾರ ಜಲರಾಶಿ ಹಾಗೂ ಅದರ ವಿಶ್ವಸ್ವರೂಪವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಘನ ಗಾಳಿ ಹಾಗೂ ದ್ರಾವಕ ರೂಪ (ಸ್ಥಿತಿ) ದಲ್ಲಿ ಮಾತ್ರ ಇರಬಹುದಾದ ಒಂದು ವಸ್ತು, ರುಚಿ ಇಲ್ಲದ್ದು, ಬಣ್ಣವಿಲ್ಲದ್ದು ಎಂದೇನೇ ಓದಿಕೊಂಡು ಬಂದು ನಮ್ಮ ಗಂಟು ಮೂಟೆಗಳ (Bags) ಸಮೇತ ಅಮೇರಿಕಕ್ಕೆ ಬಂದರೂ ಇಲ್ಲಿಗೆ ಬಂದ ಮೇಲೆ ಇವೇ ಇಷ್ಟು ಸ್ಥಿತಿಗಳಲ್ಲಿ ಇನ್ನೂ ಹಲವಾರು ರೀತಿಯ ನೀರಿನ ದರ್ಶನವಾಗಿದ್ದು ಮಹದಾಶ್ಚರ್ಯಗಳಲ್ಲೊಂದು.

ಭಾರತದಲ್ಲೂ ಹಿಮಾಲಯವಿದೆ, ಕಾಶ್ಮೀರವಿದೆ - ಆದರೆ ನಾವು ಕಂಡ ಹಿಮವೇನಿದ್ದರೂ ಚಿತ್ರ ಅಥವಾ ಟಿವಿ ಪರದೆಯ ನೋಟಕ್ಕೆ ಮಾತ್ರ ಸೀಮಿತವಾಗಿತ್ತು. ಇಲ್ಲಿಗೆ ಬಂದ ಮೇಲೇನೇ ಅದು "ಸ್ನೋ" ಎನ್ನುವ ಬೃಹತ್ ಆಕಾರವನ್ನು ತಳೆದು ವರ್ಷದ ಆರು ತಿಂಗಳ ಛಳಿಯ ವಾತಾವರಣದ ಅನುಭವಗಳ ಅವಿಭಾಜ್ಯ ಅಂಗವಾಗಿ ಹೋಯಿತು. ಸ್ನೋ, ಸ್ಲೀಟ್, ಫ್ರೀಜಿಂಗ್ ರೈನ್, ಬ್ಲ್ಯಾಕ್ ಐಸ್, ಪೌಡರಿ ಸ್ನೋ, ಸ್ಟಿಕ್ಕಿಂಗ್ ಸ್ನೋ, ಸ್ನೋ ಫ್ಲೇಕ್ಸ್, ಹೇಯಿಲ್ (Hail), ಗ್ರಾಪೆಲ್ (Graupel), ರೈಮ್ (Rime), ಸ್ಲಷ್ (Slush) ಇನ್ನೂ ಹಲವಾರು ರೀತಿ/ರೂಪಗಳಲ್ಲಿ ಕಂಗೊಳಿಸುವ ಈ ತಾಯಿಯ ವಿಶ್ವರೂಪವನ್ನು ವರ್ಣಿಸುವುದೇ ಅಸದಳ, ಅದು ನನ್ನ ಭಾಷೆಗೆ ಮೀರಿದ ಮಾತು.

***

ಮನೆಯ ಬದಿಯಲ್ಲಿನ ಕರಿಯ ಡ್ರೈವ್ ವೇ ಮುಖದ ಮೇಲೆ ನಿಸರ್ಗ ಅಗಾಧವಾದ ಸ್ನೋ ಪ್ಲೇಕ್ಸ್‌ಗಳನ್ನು ಒಂದರ ಹಿಂದೆ ಒಂದರಂತೆ ಸುರಿಸುತ್ತಲೇ ಇತ್ತು, ಈ ಮಹಾಲೀಲೆಯ ಮುಂದೆ ನಾನು ಹೋಮ್‌ಡಿಪೋದಲ್ಲಿ ಖರೀದಿಸಿ ಹರಡುತ್ತಿರುವ ಸಣ್ಣ ಸಣ್ಣ ಬಿಳಿಯ ಉಪ್ಪಿನ ಹರಳಿನ ಗುಂಡುಗಳು ಹೊಳೆಯಲ್ಲಿ ಹುಣಿಸೇಹಣ್ಣು ಕಲಿಸಿದ ಆಗಿ ಹೋಗಿಹೋಗಿತ್ತು. ಶಾಲೆಯಲ್ಲಿ ಓದಿದ ಹಾಗೆ ನೀರಿಗೆ ಉಪ್ಪು ಸೇರಿಸಿದಾಗ ಅದು ಕುದಿಯುವ ತಾಪಮಾನವನ್ನು ಹೆಚ್ಚಿಸುತ್ತದೆ, ಘನೀಭವಿಸುವ ತಾಪಮಾನವನ್ನು ಕುಗ್ಗಿಸುತ್ತದೆ ಎಂಬುದನ್ನು ಇಲ್ಲಿ ಅಕ್ಷರಷಃ ನಂಬಿಕೊಂಡು ನಿಧಾನವಾಗಿ ಉಪ್ಪಿನ ಹರಳುಗಳನ್ನು ಹರಡುತ್ತಲೇ ಹೋದೆ (elevation of boiling point, depression of freezing point), ಈ ನಿಯಮಗಳನ್ನು ನಾನು ನೆನಪಿನಲ್ಲಿಟ್ಟುಕೊಂಡಿದ್ದೆನೇನ್ನುವ ಒಂದು ಸರಳ ಅಭಿಮಾನವನ್ನೂ ಪ್ರಶಂಸಿಸದ ನಿರ್ದಯಿ ಮುಗಿಲು ನಮ್ಮ ಮನೆಯ ಮುಂದೆ ಸ್ನೋ ಸುರಿಸುತ್ತಲೇ ಹೋಯಿತು. ಇದೀಗ ಬಿದ್ದ ಸ್ನೋವನ್ನು ತೆಗೆಯುವಲ್ಲಿ ಕೆಲವೇ ಘಂಟೆಗಳ ವಿಳಂಬಕ್ಕೆ ಮನಸೋತ ನಾನು, ಕೊನೆಗೆ ಅದನ್ನು ತೆಗೆಯಲು ಒದ್ದಾಡೀ ಒದ್ದಾಡೀ ಅದನ್ನು ಹಾಗೆ ಬಿಟ್ಟು ಕರಿಯ ಡ್ರೈವ್ ವೇ ಮೇಲೆ ಬಿಳಿಯ ಕಾಂಕ್ರೀಟಿನ ಹಾಗೆ ಬಿದ್ದುಕೊಂಡು ಕಲ್ಲಿಗಿಂತಲೂ ಗಟ್ಟಿಯಾದ ಐಸ್ ಅನ್ನು ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡಿ ಅನುಭವಿಸುವ ಆಸಕ್ತಿಯಿಂದ ಚೂಪಾದ ಉಕ್ಕಿನ ಶೆವೆಲ್ ತೆಗೆದುಕೊಂಡು ಕೆದಕುತ್ತಲೇ ಹೋದರೆ ಜಪ್ಪಯ್ಯಾ-ಜುಪ್ಪಯ್ಯಾ ಎಂದರೂ ಒಂದಿಂಚೂ ಕದಲಲಿಲ್ಲ!

ಅದು ಅಲ್ಲಿಯೇ ಬಿದ್ದು ಸಾಯಲಿ ಎಂದುಕೊಂಡು ಎಷ್ಟು ಸಾಧ್ಯವೋ ಅಷ್ಟನ್ನು ಮನೆಯ ಮುಂದೆ ಹಾಗೂ ಬದಿಗೆ ಸ್ವಚ್ಛ ಮಾಡಿಕೊಂಡು ಅದರ ಮೇಲೆ ಕಾರನ್ನು ಓಡಿಸಿಕೊಂಡು ಇವತ್ತಿಗೂ ಇರುವ ನನ್ನನ್ನು ನನ್ನ ನೆರೆಹೊರೆಯವರು ಮಹಾ ಸೋಂಬೇರಿ ಎಂದು ಈಗಾಗಲೇ ಹಣೆಪಟ್ಟಿ ಕಟ್ಟಿಕೊಂಡಿರಬಹುದು, ಅವರು ಏನೆಂದುಕೊಳ್ಳುತ್ತಾರೆ ಎಂದು ನಾನಾದರೂ ಏಕೆ ಯೋಚಿಸಲಿ? ಹಾಗೆ ಯೋಚಿಸಿದ ಮಾತ್ರಕ್ಕೆ ಅವರೇನಾದರೂ ಬಂದು ಸ್ವಚ್ಛ ಮಾಡಿಕೊಡುತ್ತಾರೇನು? ಅಕ್ಕಪಕ್ಕದವರ ಮನೆಯ ಮುಂದಿನ ಲಾನ್ ಅನ್ನು ನೋಡಿದರೆ ಅಲ್ಲಿ ಈಗಷ್ಟೇ ಸಗಣಿ ಸಾರಿಸಿಟ್ಟ ಹಾಗೆ ನುಣುಪಾಗಿ ಐಸ್‌ನಿಂದ ಮಾಡಿದ ಜಗುಲಿ ಕಂಡುಬರುತ್ತಿತ್ತು. ಕೊನೇಪಕ್ಷ ಈ ಜಗುಲಿಯ ರೂಪದಲ್ಲಾದರೂ ಎಲ್ಲರ ಮನೆಯ ಮುಂದೆ ಎಷ್ಟೊಂದು ಸಾಮ್ಯತೆ ಇದೆಯಲ್ಲಾ ಎನ್ನುವ ಸಮಾಧಾನವೂ ಮನದಲ್ಲಿ ಮನೆ ಮಾಡಿಕೊಂಡಿತು.

ಕಾರನ್ನು ತೆಗೆದುಕೊಂಡು ಆಫೀಸಿಗೆ ಹೋಗುವ ಮಾರ್ಗದಲ್ಲಿ ಈಗಾಗಲೇ ಎಲೆಗಳನ್ನು ಕಳೆದುಕೊಂಡು ಬೋಳಾದ ಮರಗಳ ನಡುವೆ ಸೂರ್ಯನ ಕಿರಣಗಳು ಹೊರಗೆ ಬರಲೋ ಬೇಡವೋ ಎನ್ನುವ ಮುಜುಗರದಿಂದಲೋ ಎನ್ನುವಂತೆ ಸಾವಕಾಶವಾಗಿ ಹರಡುತ್ತಿದ್ದವು. ಹಸಿರಿನ ಹಿನ್ನೆಲೆಯಲ್ಲಿ ಕಂಗೊಳಿಸಬೇಕಾದ ಬಿಳಿಯ ಬೆಳಕು ಎತ್ತ ನೋಡಿದರತ್ತ ಬಿದ್ದ ಬಿಳಿಯ ಸ್ನೋ, ಐಸ್ ಮೇಲೆ ಬಿದ್ದು ಪ್ರತಿಫಲನವಾಗುತ್ತಲೇ ನಾನು ಇದ್ದಲ್ಲೇ ದ್ವಿಗುಣ, ತ್ರಿಗುಣನಾಗುತ್ತೇನೆ ಎಂದು ಒಮ್ಮೆ ಹೆಮ್ಮೆಯಿಂದ ಬೀಗುವಂತೆ ಕಂಡುಬಂದರೂ, ಕಾರಿನ ಡಯಲಿನಲ್ಲಿ ತೋರಿಸುತ್ತಿದ್ದ 23 ಡ್ರಿಗ್ರಿ ಫ್ಯಾರನ್‌ಹೈಟ್ ಉಷ್ಣತೆ - ನಿಮ್ಮ ಆಟವೇನೂ ನಡೆಯೋದಿಲ್ಲ - ಎಂದು ಸೂರ್ಯ ಕಿರಣಗಳ ಬಿಮ್ಮನ್ನು ಕುಸಿಯುವಂತೆ ಮಾಡಿತ್ತು. ಮರಗಳ ಮೇಲೆ ತಲೆಯೆತ್ತಿ ನೋಡುತ್ತೇನೆ, ಪ್ಲಾಟಿನಮ್‌ನಲ್ಲಿ ಮಾಡಿದ ಜುಮುಕಿ ತೊಟ್ಟ ಮದುವಣಗಿತ್ತಿಯಂತೆ ಮರಗಳ ತುದಿಗಳು ತಮ್ಮ ಮೇಲೆ ಹರಳುಕಟ್ಟಿದ ಐಸ್ ಕ್ರಿಸ್ಟಲ್ಲುಗಳನ್ನು ಹೊತ್ತುಕೊಂಡು ಬಿಸಿಲಿಗೆ ಕಂಗೊಳಿಸುತ್ತಿವೆ. ಇನ್ನೂ ಕೆಲವು ಬೃಹದಾದ ಮರದ ತುದಿ ಅದ್ಯಾವುದೋ ದೊಡ್ಡ ಹೊಟೇಲೋ ಕ್ಯಾಸಿನೋಗಳಲ್ಲಿರುವ (ಚಾ)ಶಾಂಡಲೀಯರ್‌ಗಳನ್ನು ನೆನಪಿಸುತ್ತಿದ್ದವು. ಹೊರಗಡೆ ಛಳಿ ಇದ್ದು ಈ ಮರಗಳು ಸುರುಟಿ ಹೋಗುವುದಂತೂ ನಿಜ, ಜೊತೆಗೆ ತಮ್ಮ ಮೇಲಿನ ಐಸ್‌ನ ಭಾರವನ್ನೂ ಹೊತ್ತುಕೊಂಡಿರಬೇಕಲ್ಲ ಎಂದು ಮೊದಲ ಬಾರಿಗೆ ಮರಗಳ ಬಗ್ಗೆ ಅನುಕಂಪ ಮೂಡಿತು, ಜೊತೆಗೆ ಅವರವರ ಕರ್ಮ ಅವರಿಗೆ ಎಂಬ ವೇದಾಂತದ ಅಲೋಚನೆಯೂ ಹೊರಗೆ ಬಂತು.

***

ಪುಷ್ಪಕ ವಿಮಾನ ಸಿನಿಮಾದಲ್ಲಿ ಖಳನೊಬ್ಬ ಐಸ್‌ನಲ್ಲಿ ಮಾಡಿದ ಚೂರಿಯಿಂದ ಇರಿದು ಕೊಲ್ಲಲು ಪ್ರಯತ್ನಿಸುವ ದೃಶ್ಯ ನೆನಪಿಗೆ ಬಂತು. ಆ ಸಿನಿಮಾವನ್ನು ಭಾರತದಲ್ಲಿ ನೋಡಿದವರಿಗೆ ಮಂಜು ಕಟ್ಟಿದ ನೀರು ಉಕ್ಕಿನಷ್ಟು ಗಟ್ಟಿ ಇರಬಲ್ಲದೇ ಎಂಬ ಸಂಶಯ ಮೂಡಿರಲೂಬಹುದು. ಆದರೆ ಅತಿ ಕಡಿಮೆ ತಾಪಮಾನದಲ್ಲಿ ಹರಳುಗಟ್ಟಿದ ಮಂಜೂ ಸಹ ಉಕ್ಕಿನಷ್ಟೇ ಕಠಿಣವಾದದ್ದು ಎಂದು ನೋಡಿ ಅನುಭವಿಸಿದವರಿಗೇ ಗೊತ್ತು. ವೆದರ್ ಚಾನೆಲ್ಲ್ ಅನ್ನು ತಿರುಗಿಸಿ ನೋಡಿದರೆ ಅಲ್ಲಿ ಒಮಾಹಾ, ನೆಬ್ರಾಸ್ಕಾದಲ್ಲಿ 1 ಡಿಗ್ರಿ ಫ್ಯಾರನ್‌ಹೈಟ್ ತಾಪಮಾನವನ್ನು ತೋರಿಸುತ್ತಿದ್ದರು, ಅದರ ಮುಂದೆ ನಮ್ಮೂರಿನ 26 ಡಿಗ್ರಿ ಫ್ಯಾರನ್‌ಹೈಟ್ ಭಿಕ್ಷುಕರ ಮುಂದೆ ಲಕ್ಷಾಧೀಶ್ವರನ ಹಾಗೆ ಕಾಣಿಸುತ್ತಿತ್ತು.

ಈ ನೀರು ಎನ್ನುವುದಾಗಲೀ, ಅದರ ಅಸಾಧಾರಣ ರೂಪಗಳಾಗಲೀ, ಅದರ ವಿಭಿನ್ನ ಸ್ಥಿತಿಗಳಾಗಲೀ ನನ್ನ ಮನಸ್ಸಿನಲ್ಲಿ ಯಾವತ್ತೂ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡೇ ಇರುತ್ತೆ. ನನ್ನ ಪ್ರಕಾರ ಹೊರಗಿನ ತಾಪಮಾನದ ಹಿನ್ನೆಲೆಯಲ್ಲಿ ನೀರು ಹರಳುಗಟ್ಟುವ ರೀತಿಯನ್ನು ಹಲವಾರು ವರ್ಷಗಳಿಂದ ಅನುಭವಿಸಿ ಬಲ್ಲವರು ಪ್ರಕೃತಿಯ ವಿಶೇಷವಾದ ವ್ಯವಸ್ಥೆಯೊಂದನ್ನು ಹತ್ತಿರದಿಂದ ಬಲ್ಲವರು, ನೀರನ್ನಾಗಲೀ ಅದರ ವಿಭಿನ್ನ ನೆಲೆಗಳನ್ನಾಗಲೀ ಜಯಿಸಿದವರಿಗೆ ಸೋಲೆನ್ನುವುದು ಖಂಡಿತ ಇಲ್ಲ!

ನಾವು ಓದಿದ ಓಡರ್‌ಲೆಸ್ ಕಲರ್‌ಲೆಸ್ ಟೇಸ್ಟ್‌ಲೆಸ್ ಎನ್ನುವ ಒಂದು ಮೂಲಭೂತ ಅಂಶ, ನನ್ನ ಕಣ್ಣ ಮುಂದೆಯೇ ಹಲವಾರು ವಿಸ್ತೃತ ಸ್ವರೂಪವನ್ನು ಧರಿಸಿದ್ದನ್ನು ನೋಡಿದ್ದೇನೆ. ಬಣ್ಣವಿಲ್ಲದ ನೀರು, ಘನೀಭವಿಸಿ ಬಿಳಿಯಾಗಿ ಎಲ್ಲ ಬಣ್ಣವನ್ನೂ ತನ್ನಲ್ಲಡಗಿಸಿಕೊಂಡಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೇನೆ. ಬಿಳಿಯ ಮೋಡಗಳು ಮಳೆಯನ್ನು ತಾರವು, ಕರಿಯ ಮೋಡಗಳು ಬಿಳಿಯ ಮೋಡಗಳಿಗಿಂತ ದೊಡ್ಡ ದೊಡ್ಡ ಕಣಗಳನ್ನು ಹೊಂದಿರುತ್ತವೆ, ಅವೇ ಮೋಡಗಳಿಗೂ ಬಣ್ಣವನ್ನು ಬದಲಾಯಿಸುತ್ತವೆ ಎಂದು ಓದಿಕೊಂಡು ವಿಜೃಂಭಿಸಿದ್ದೇನೆ. ನೀರಿಗೆ ಹಲವಾರು ರೂಪವಿದೆ, ಭೋಗೋಳದ ಪ್ರತಿಶತ ಎಂಭತ್ತು ಭಾಗವನ್ನು ನೀರು ಅಥವಾ ನೀರಿನ ರೂಪ ಆವರಿಸಿದೆ ಎಂದೆಲ್ಲಾ ಡಿಸ್ಕವರಿ ಚಾನೆಲ್ಲುಗಳಲ್ಲಿ ನೋಡಿದಾಗ ಹುಬ್ಬೇರಿಸಿದ್ದೇನೆ. ನಮ್ಮ ನಿಮ್ಮಲ್ಲೂ ನೀರಡಗಿದೆ, ಈ ನೀರು ನಿಜವಾಗಿಯೂ ಸರ್ವಾಂತರ್ಯಾಮಿ, ಎಲ್ಲರಿಗೂ ಜೀವಜಲವಾದ ನೀರೇ ದೇವರು! (ಬೇಸಿಗೆಯಲ್ಲಿ ಈ ಮಾತು ಬದಲಾಗಿ ಗಾಳಿ, ಮಣ್ಣು, ಅಗ್ನಿ ಮೊದಲಾದ ಪಂಚಭೂತಗಳಿಗೆ ಆದ್ಯತೆಕೊಟ್ಟರಾಯಿತು, ಈಗ ಛಳಿಗಾಲ, ಅದು ನೀರಿನ ಕಾಲ!)

Wednesday, December 05, 2007

ಪಾಪಾಸ್ ಕಳ್ಳಿಯೂ, ಬೆಲ್ ಬಾಟಮ್ ಪ್ಯಾಂಟೂ...

ಹೀಗೇ ಏನ್ ಬರೀಲೀ, ಯಾವುದರ ಬಗ್ಗೇ ಬರೀಲೀ ಅಂತ ಯೋಚಿಸ್ತಾ ಕುಳಿತಿರಬೇಕಾದ್ರೆ ಮೊನ್ನೆ ಮೊನ್ನೇ ಉದಯ ಟಿವಿಯಲ್ಲಿ ನೋಡಿದ ’ಸಿಂಗಪುರದಲ್ಲಿ ರಾಜಾಕುಳ್ಳ’ ಹಳೆಯ ಸಿನಿಮವೊಂದರ ನೆನಪಾಗಿ ಅದರಲ್ಲಿ ವಿಷ್ಣುವರ್ಧನ್-ದ್ವಾರಕೀಶ್ ಧರಿಸಿರೋ ಬೆಲ್ ಬಾಟಮ್ ಪ್ಯಾಂಟು ನೆನಪಿಗೆ ಬಂತು. ನೀವೆಲ್ಲಾ ಪ್ಯಾಂಟು ಹಾಕೋ ಜಮಾನ ಬಂದಿರೋವಾಗ ಆಗ್ಲೇ ಮುಲಂಗಿ ಪ್ಯಾಂಟಿನ ಕಾಲ ಬಂದಿತ್ತೋ ಏನೋ, ನಾನು ಹಾಕಿದ ಮೊದಲೇ ಪ್ಯಾಂಟಂತೂ ಬೆಲ್ ಬಾಟಮ್ ಪ್ಯಾಂಟೇ, ಅದೂ ಅದರ ವ್ಯಾಸ ಅಥವಾ ಬುಡ ಮುವತ್ತಾರು ಇಂಚು ಅಗಲವಾಗಿತ್ತು ಅನ್ನೋದನ್ನ ಇವತ್ತಿಗೂ ನೆನಸಿಕೊಂಡ್ರೆ ನಗುವೇ ಬರುತ್ತೆ.

ಹಿಂದೆ ಬೆಲ್ ಬಾಟಮ್ ಪ್ಯಾಂಟು ಧರಿಸಿ ಯುವ ಪೀಳಿಗೆಯಲ್ಲಿ ರೋಚಕತೆಯನ್ನು ಹೆಚ್ಚಿಸುತ್ತಿದ್ದ ರಜನೀಕಾಂತರೂ, ವಿಷ್ಣುವರ್ಧನ್ನರೂ ಕನ್ನಡದಲ್ಲಿ ಹೆಚ್ಚಿರಲಿಲ್ಲ. ಅಪರೂಪಕ್ಕೊಮ್ಮೆ ನೋಡೋ ಅಮಿತಾಬ್ ಬಚ್ಚನ್ನುಗಳ ಪರಿಣಾಮ ನಮ್ಮ ಮೇಲೆ ಆಗುತ್ತಿರಲಿಲ್ಲವೆಂದಲ್ಲ, ಆದರೂ ನಮ್ಮ ಕನ್ನಡ ನಾಯಕರ ಮುಂದೆ ಅವರುಗಳೆಲ್ಲ ಸಪ್ಪೆಯೇ ಅಲ್ಲವೇ? ನನ್ನ ಅಣ್ಣ ದೊಡ್ಡ ದೊಗಲೇ ಪ್ಯಾಂಟು ಹಾಕಿಕೊಳ್ಳುತ್ತಿದ್ದನೆಂದು ನಾನೂ ಹೈ ಸ್ಕೂಲು ಮೆಟ್ಟಿಲು ಹತ್ತುವ ಹೊತ್ತಿಗೆ ಮನೆಯಲ್ಲಿ ಹಠ ಹಿಡಿದದ್ದೇ ಬಂತು. ಅಣ್ಣನ ಪ್ಯಾಂಟುಗಳಿಗೆ ವಿಸ್ತಾರವಾದ ಬೆಲ್ ಇರೋದೂ, ಮುಂದೆ ಜೇಬುಗಳು ಇರೋದೂ, ಜೊತೆಯಲ್ಲಿ ಕೆಳಗೆ ತೂಕಕ್ಕೆಂದೋ ಅಥವಾ ಪ್ಯಾಂಟಿನ ಬುಡ ಸವೆಯ ಬಾರದೆಂದೋ ಹಾಕಿದ ಮೆಟಲ್ ಜಿಪ್ಪಿನ ತುಂಡುಗಳೋ ಇವೆಲ್ಲವೂ ಒಂದು ರೀತಿಯ ಬೆರಗನ್ನು ಹುಟ್ಟಿಸುವವೇ. ಇಂಥ ಹಿನ್ನೆಲೆಯಲ್ಲಿ ಹೈ ಸ್ಕೂಲಿಗೆ ನಾನು ಪ್ಯಾಂಟು ಧರಿಸದೇ ಹೋಗೋದು ಅಂದರೆ...

ಆನವಟ್ಟಿಯ ಬಟ್ಟೆ ಅಂಗಡಿಯಲ್ಲಿ ಬಟ್ಟೆ ತೆಗೆದಿದ್ದೂ ಆಯ್ತು, ಅದನ್ನು ದರ್ಜಿಗೆ ಕೊಟ್ಟಿದ್ದೂ ಆಯ್ತು, ’ಬೆಲ್ ಎಷ್ಟು ಬೇಕೋ?’ ಎಂದು ಕೊಟ್ಟರೂ ಕೊಡದಿದ್ದ ಹಾಗೆ ಚಾಯ್ಸ್ ಅನ್ನು ಕೊಟ್ಟ ದರ್ಜಿಗೆ ’ಮುವತ್ತಾರು ಇಂಚ್’ ಎಂದು ಉತ್ತರ ಕೊಡುವ ಧೈರ್ಯ ಬಂದಾಗಲೇ ಒಳಗೊಳಗೇ ನನಗೂ ಸಂತೋಷವಾಗಿತ್ತು. ’ಯಾವತ್ತ್ ಕೊಡ್ತೀರಿ?’ ಅಂದ್ರೆ ಅವನು ಕೊನೇಪಕ್ಷ ಎರಡು ವಾರಾನಾದ್ರೂ ಬಿಟ್ಟು ಬರ್ರಿ ಅನ್ನೋದೇ, ನನ್ನ ಪರಿಸ್ಥಿತಿಯಂತೂ ರಥದ ಗಾಲಿಗೆ ಸಿಕ್ಕ ನಿಂಬೇಹಣ್ಣಿನ ಹಾಗೆ ಆಗಿ ಹೋಗಿತ್ತು, ಅದರೂ ಕಾಯದೇ ಕೆನೆ ಕಟ್ಟುವುದೇ ಎಂದು ಮನಸ್ಸಿನಲ್ಲೇ ಅಂದುಕೊಂಡು ಮನೆಯ ಹಾದಿ ಹಿಡಿದದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.

***

ಕುತಂತ್ರಿಗಳ ಕೈಗೆ ಸಿಕ್ಕು ಆನವಟ್ಟಿ ಮಲೆನಾಡಿದ್ದುದು, ಅರೆ ಮಲೆನಾಡಾಗಿ, ಕೊನೆಗೆ ಬಯಲು ಸೀಮೆಯ ಎಲ್ಲ ಲಕ್ಷಣವನ್ನೂ ತಲುಪುವ ಹೊತ್ತಿಗೆ ನಮ್ಮೂರಿನ ಬೇಲಿಗಳಲ್ಲಿ ಬೆಳೆದುಕೊಳ್ಳುತ್ತಿದ್ದುದೇ ಹಲವಾರು ಕಳ್ಳಿ ಗಿಡಗಳು. ರಕ್ಕಸಕಳ್ಳಿ, ಪಾಪಾಸ್ ಕಳ್ಳಿ, ಆ ಕಳ್ಳಿ, ಈ ಕಳ್ಳೀ ಎಂದು ಹಲವಾರು ವಿಧಗಳನ್ನು ಗುರುತಿಸುತ್ತಿದ್ದೆವು, ಅದರಲ್ಲೇ ಕೆಲವೊಂದರಿಂದ ಎಷ್ಟೋ ಉಪಯೋಗವನ್ನೂ ಕಂಡುಕೊಂಡಿದ್ದೆವು. ಉದಾಹರಣೆಗೆ ರಕ್ಕಸಕಳ್ಳಿಯ ಎಲೆಗಳನ್ನು ಕತ್ತರಿಸಿ, ಅದನ್ನು ಉದ್ದುದ್ದವಾಗಿ ತೆಳ್ಳಗೆ ಸೀಳಿ ಅದನ್ನು ಹಗ್ಗದಂತೆ ಬಳಸುತ್ತಿದ್ದೆವು, ಹಾಗೆ ಹೊಸೆದ ಹಗ್ಗಗಳಿಂದ ಕಟ್ಟಿಗೆ ಹೊರೆಯನ್ನೋ ಅಥವಾ ಬೇಲಿಯ ಗೂಟಗಳನ್ನು ಮುಳ್ಳಿನ ಕಂಟಿಗಳಿಗೆ ಸೇರಿಸಿ ಕಟ್ಟುತ್ತಿದ್ದೆವು. ಎಂತಲ್ಲೂ ಸ್ವಚ್ಛಂದವಾಗಿ ಬೆಳೆಯುತ್ತಿದ್ದ ಈ ಕಳ್ಳಿಗಳಲ್ಲೂ ಹಾಲು ಒಸರುತ್ತಿತ್ತು, ಅಂತಹ ಹಾಲು ಕಣ್ಣಿನ ಮೇಲಾನಾದರೂ ಬಿದ್ದರೆ ಅಷ್ಟೇ ಎನ್ನುವ ಹೆದರಿಕೆಯೂ ನಮ್ಮಲ್ಲಿ ಮನೆ ಮಾಡಿತ್ತಾದರೂ ಇವತ್ತಿಗೂ ಮುಳ್ಳಿನ ಕಳ್ಳಿಗಳನ್ನು ಬರೀ ಕೈಯಲ್ಲಿ ಕತ್ತರಿಸಿ ಒಟ್ಟು ಮಾಡಿ ಗೊತ್ತೇ ವಿನಾ ಅದರಿಂದಾಗಬಹುದಾದ ಹಲವಾರು ದುಷ್ಪರಿಣಾಮಗಳಿಂದ ನಾವು ಯಾವತ್ತೂ ರಕ್ಷಣೆಯನ್ನು ಪಡೆಯದೇ ನೆಟ್ಟಗೆ ಕೈ ಕಾಲು ಮೈಯನ್ನು ಅದು ಹೇಗೆ ಇಲ್ಲಿಯವರೆಗೆ ಇರಿಸಿಕೊಂಡು ಬಂದೆವೆನ್ನುವುದು ಇವತ್ತಿಗೂ ನಿಗೂಢ.

***

ನಮ್ಮೂರಿನ ದರ್ಜಿಗಳು ಇಂದಿನ ಪ್ರಾಜೆಕ್ಟ್ ಮ್ಯಾನೇಜರುಗಳ ಹಾಗೆ ಯಾವತ್ತೂ ತಮ್ಮ ಸ್ಕೆಡ್ಯೂಲನ್ನು ಮುಂದೂಡತ್ತಲೇ ಇರುತ್ತಾರೆ ಅನ್ನೋ ಹಾಗೆ, ಎರಡು ವಾರ ಬಿಟ್ಟು ಹೋದ್ರೆ ಅವನೆಲ್ಲಿ ನನ್ನ ಪ್ಯಾಂಟನ್ನು ಕೊಟ್ಟಾನು? ಗಾಯದ ಮೇಲೆ ಉಪ್ಪು ಸವರೋ ಹಾಗೆ ಎರಡು ವಾರವಾದರೂ ನ್ಯಾಲೆಯ ಮೇಲಿನ ಬಟ್ಟೆ ನಾವು ಇಟ್ಟ ದಿನದಿಂದ ಹಾಗೇ ಧೂಳು ತಿನ್ನುತ್ತಲೇ ಕೂತಿದೆಯೇ ಹೊರತು, ಅದನ್ನವನು ಅಲುಗಾಡಿಸಿಯೂ ನೋಡಿಲ್ಲವೆಂದು ನನಗೆ ಗೊತ್ತಾದಾಗ ಇನ್ನು ಸ್ವಲ್ಪವಾದರೆ ಕೋಡಿ ತುಂಬಿ ಹರಿಯುವ ಕೆರೆಯ ಹಾಗೆ ಕಣ್ಣಾಲಿಗಳು ತುಂಬಿ ಬಂದಿದ್ದವು. ಆ ದರ್ಜಿಯನ್ನು ಫೈರ್ ಮಾಡಿ ನನ್ನ ಬಟ್ಟೆಯನ್ನು ನಾನೇ ನ್ಯಾಲೆಯಿಂದೆಳೆದುಕೊಂಡು ’ನಿನ್ನ ಸರ್ವೀಸ್ ಯ್ಯಾವನಿಗೆ ಬೇಕಲೇ?’ ಎಂದು ನಾನೇದರೂ ಅಂದು ಗಂಡೆದೆಯನ್ನು ತೋರಿಸಿದ್ದರೆ ಇಷ್ಟೊತ್ತಿಗೆ ಇಲ್ಲಿ ಕುಳಿತು ಈ ಬರಹವನ್ನೇಕೆ ಬರೆಯುತ್ತಿದ್ದೆ?! ಹಾಗಾಗಲಿಲ್ಲ ಬದಲಿಗೆ ಬದುಕು ಎಲ್ಲಿ ಹೋದರೂ ನಿರೀಕ್ಷಿಸಬಹುದಾದ ತಾಳ್ಮೆಯನ್ನು ಮೈಗೂಡಿಕೊಂಡು, ಬಾಯಿಗೆ ಬಂದ ಬೈಗಳನ್ನೂ ಎತ್ತಿ ಹೊಡೆಯಬೇಕೆಂಬ ಕೈಯನ್ನೂ ಅವರವರೊಳಗೇ ಸಮಾಧಾನ ಮಾಡಿ ನಮ್ಮ ದುಡ್ಡು, ಬಟ್ಟೆಯನ್ನು ತೆಗೆದುಕೊಂಡು ಅವನು ಹೇಳಿದ ಹೊತ್ತಿಗೆ ಹೊಲಿದು ಕೊಡುವ ದರ್ಜಿಗೂ ಬಾಯಿ/ಕೈ ತೋರಿಸದೆ ಮನೆಗೆ ಬಂದ ದಿನವೇ ದೊಡ್ಡದು. ಎರಡು ವಾರವಾಯಿತು, ಒಂದು ತಿಂಗಳಾದರೂ ’ಆ ನನ್ಮಗ ಕೊಡಂಗಿಲ್ಲ’ ಎಂದು ಎಲ್ಲರ ಎದುರು ಅವನಿಗೆ ಸಹಸ್ರನಾಮಾರ್ಚನೆ ಮಾಡಿದ್ದೇ ಬಂತು.

***

ಯಾರ ಮನೆಯಲ್ಲಿ ಏನನ್ನು ಬೆಳೆಸಿದರೂ ಕ್ಯಾಕ್ಟಾಸ್ ಅನ್ನು ಬೆಳೆಸಬಾರದು ಎನ್ನುವ ನಂಬಿಕೆ ನನ್ನ ಮನಸ್ಸಿನಲ್ಲಿ ಅದೆಲ್ಲಿಂದ ಬಂತೋ ಗೊತ್ತಿಲ್ಲ. ನಾನು ಬೇಡವೆಂದರೂ ನಮ್ಮನೆಯೊಳಗೆ ನುಸುಳಿದ ಎಲೆಯಂತಿರುವ ಅದ್ಯಾವುದೋ ಪ್ರಬೇಧವೂ ಅಪರೂಪಕ್ಕೊಮ್ಮೆ ನನ್ನನ್ನೇ ಅಣಗಿಸುತ್ತಿತ್ತು. ಡೈನಿಂಗ್ ರೂಮಿನ ಕಿಟಕಿಯ ಬಳಿ ಆ ಕಡೆಗೊಂದು ಈ ಕಡೆಗೊಂದು ಎಂದು ಇಟ್ಟ ಗಿಡಗಳು ನಳಿನಳಿಸುತ್ತಲೇನೋ ಇದ್ದವು. ಆದರೆ ನಾನು ಅದೆಷ್ಟೋ ದಿನಗಳಿಗೊಮ್ಮೆ ನಮ್ಮ ಮನೆಯಲ್ಲಿನ ತುಳಸಿ, ಮಲ್ಲಿಗೆ, ಬಸಳೆ, ಕೆಸುವು, ಅರಿಶಿಣ ಗಿಡಗಳಿಗೆ ನೀರು ಹಾಕುವ ಪದ್ದತಿಯ ಪ್ರಕಾರ ಈ ಕ್ಯಾಕ್ಟಸ್ ಗಿಡಗಳಿಗೆ ನೀರು ಹಾಕಿದ್ದೇ ಬಂತು, ಒಂದು ಮಾರನೇ ದಿನವೇ ನೆಗೆದು ಬಿದ್ದು ಹೋಯಿತು. ಈ ಸಗಣಿಯಲ್ಲಿರುವ ಹುಳುವನ್ನು ತೆಗೆದು ಮೇಲೆ ತೆಗೆದು ಬಿಟ್ಟರೆ ಮತ್ತೆ ಅದು ಸಗಣಿಯೊಳಗೇ ಹೋಗಿ ಸೇರಿಕೊಳ್ಳುತ್ತದೆಯಂತೆ ಹಾಗೇ ಈ ಮರುಭೂಮಿಯಲ್ಲಿ ಬೆಳೆದು ಹಿಗ್ಗಬೇಕಾದ ಕಳ್ಳಿ (ಕ್ಯಾಕ್ಟಸ್) ಸಸ್ಯ ಪ್ರಬೇಧಕ್ಕೆ ನಾನು ಅಪರೂಪಕ್ಕೊಮ್ಮೆ ನೀರುಣಿಸಿದ್ದೇ ತಪ್ಪಾಗಿ ಹೋಯಿತು! ಎರಡರಲ್ಲಿ ಒಂದು ಗಿಡ ನೆಗೆದು ಬಿದ್ದೇ ಹೋಯಿತು. ’ಅಂದು ನನ್ನ ಪ್ಯಾಂಟಿಗೆ ಒಂದು ಗತಿಯನ್ನು ಕಾಣಿಸಿದ ನಿಮ್ಮ ವಂಶದವರು ನನಗೆ ಕೊಡಬೇಕಾದ ಬೆಲೆಯನ್ನು ವಸೂಲಿ ಮಾಡಿದ್ದೇನೆ ಹೋಗ್’ ಎಂದು ಸತ್ತ ಗಿಡಕ್ಕೆ ನನ್ನ ಮನಸ್ಸು ಒಳಗೊಳಗೇ ಬೈದುಕೊಂಡಿದ್ದು ಸತ್ಯ.

***

ಎರಡು ವಾರ ಅಂದ ಪುಣ್ಯಾತ್ಮ ಕೊನೆಗೂ ಕೊಟ್ನಪಾ (ಸತ್ನಪಾ), ನನ್ನ ಪ್ಯಾಂಟು ಬಂತು, ಅಂಗಡಿಯಲ್ಲೇ ಹಾಕಿ ನೋಡು ಅಂತ ಅವನು ಕಿರುಚಿಕೊಂಡ್ರೆ ನನಗೂ ಮಾನಾ ಮರ್ಯಾದೆ ಅನ್ನೋದಿಲ್ವೇ, ಅಲ್ಲೇ ಎಲ್ಲರ ಮುಂದೆ ತೆಗೆದು ಹಾಕೋಕೇ? ಅಲ್ಲೇನಾದ್ರೂ ಡ್ರೆಸ್ಸಿಂಗ್ ರೂಮ್ ಗಳು ಅನ್ನೋದು ಇರೋಕೇ ನಮ್ಮೂರಿನ ಟೈಲರ್ ಅಂಗಡಿಗಳು ಮೇಸೀಸ್ ಕೆಟ್ಟೋದ್ವೇ? (ನಾನು ಮಂಡ್ಯಾ-ಮೈಸೂರಿನವರಿಂದ ಕಲಿತ ಈ ವಾಕ್ಯದ ಬಳಕೆ ಇವತ್ತಿಗೂ ನನ್ನನ್ನು ದಂಗುಬಡಿಸುತ್ತೆ, ಜೊತೆಗೆ ಒಂದು ಅವ್ಯಕ್ತ ಖುಷಿಯನ್ನೂ ಮೂಡಿಸುತ್ತೆ!). ದರ್ಜಿಯ ಅಂಗಡಿಯಿಂದ ಅವನು ಪ್ಯಾಂಟನ್ನು ತುರುಕಿಕೊಟ್ಟ ಪ್ಲಾಸ್ಟಿಕ್ ಚೀಲವನ್ನು ಹಿಡಿದು ಒಂದೇ ಉಸಿರಿಗೆ ಓಡಿದ್ದೇ ಓಡಿದ್ದು. ಮನೆಗೆ ಬಂದು ಯಾರಿಗೂ ಕಾಣದ ಜಾಗೆಯಲ್ಲಿ ನಿಂತು ಪ್ಯಾಂಟು ಹಾಕಿ ನನ್ನನ್ನು ನಾನೇ ಉದ್ದಾನುದ್ದಕ್ಕೆ ನೋಡಿಕೊಂಡಿದ್ದೇ ಕೊಂಡಿದ್ದು. ’ಓ ಪ್ರಿಯಾ...’ ಎಂದು ರಜನೀಕಾಂತ್ ಹಾಡುವಂತೆ ಹೆಜ್ಜೆ ಹಾಕಿದಲ್ಲೆಲ್ಲಾ ಓಲಾಡುವ ಬೆಲ್ ಬಾಟಮ್ ಪ್ಯಾಂಟ್ ನನ್ನನ್ನು ಬಹಳಷ್ಟು ಎತ್ತರದವನನ್ನಾಗಿ ಮಾಡಿತ್ತು. ಈ ಪ್ಯಾಂಟ್ ಹಾಕಿಕೊಂಡು ಯಾವ ಬಸ್ಸ್ ಹತ್ತಿದರೂ ಅರ್ಧ ಟಿಕೇಟ್ ಅನ್ನುವುದು ಕನಸೇ ಎಂದು ಮತ್ತೊಂದು ಥರ ಬೇಗನೇ ಬೆಳೆದು ದೊಡ್ಡವನಾಗಿ ಬಿಟ್ಟ ಹೆದರಿಕೆ ಕಾಡ ತೊಡಗಿತ್ತು.

ನೋಡಲು ಚಪಾತಿಯಂತಿದ್ದರೂ ಯ್ಯಾವನೂ ತಿನ್ನದ ಯಾವನೂ ಮುಟ್ಟದ ಈ ಕಳ್ಳಿ ಗಿಡಗಳಿಗೇಕೆ ಮುಳ್ಳು ಎನ್ನುವುದನ್ನು ಆ ಎವಲ್ಯೂಷನ್ನ್ ಪಿತಾಮಹರನ್ನೇ ಕೇಳಬೇಕು. ನನ್ನ ವಯಸ್ಸಿನ ಹುಡುಗರು ಗೋಲಿ, ಬುಗುರಿ, ಲಗೋರಿ, ಚಿಣ್ಣಿದಾಂಡುಗಳನ್ನು ಆಡುತ್ತಿದ್ದುದು ಸಾಮಾನ್ಯವಾದರೂ ಅಂದಿನ ಆಟ ಕಳ್ಳಾ-ಪೋಲೀಸ್! ಇನ್ನೇನ್ ಕೇಳೋದು, ಬೇಲಿ, ಸಂದಿಗೊಂದಿಗಳಲ್ಲಿ ಹುದುಗಿಕೊಳ್ಳೋದೇ ಆಟ. ವಿಶೇಷವೆಂದರೆ ಕಳ್ಳನಾಗಲೀ ಪೋಲೀಸಾಗಲೀ ಯಾವುದೇ ಗುಂಪಿಗೆ ಸೇರಿದರೂ ಒಬ್ಬರನ್ನೊಬ್ಬರು ಹುಡುಕೋದೆಂದೂ ತಪ್ಪಿದ್ದಿಲ್ಲ. ಹೀಗೇ ಒಂದು ಕತ್ತಲಿನ ಸೂಕ್ಷ್ಮ ಸನ್ನಿವೇಶದಲ್ಲಿ ಇನ್ನೇನು ಕಳ್ಳ ಸಿಕ್ಕಿಯೇ ಬಿಟ್ಟ ಎಂದು ನಾನು ಹುಮ್ಮಸ್ಸಿನಲ್ಲಿ ಓಡುವ ಹೊತ್ತಿಗೆ ಬೇಲಿಗೆ ಸಿಕ್ಕು ಪಾಪಾಸ್ ಕಳ್ಳಿಯ ಮುಳ್ಳಿಗೆ ಬಲಿಯಾದ ನನ್ನ ಬಲಗಾಲಿನ ಬೆಲ್ ಬಾಟಮ್ ಪ್ಯಾಂಟಿನ ಬಾಟಮ್ ಹರಿದೇ ಹೋಗೋದೇ? ಹರಿದದ್ದನ್ನು ಯಾರಿಗೂ ಗೊತ್ತಾಗದ ಹಾಗೆ ಹೇಗೆ ರಿಪೇರಿ ಮಾಡಿಸೋದು? ಅದನ್ನು ಮನೆಯಲ್ಲಿ ಹೇಳಿ ಯಾರ್ಯಾರು ಎಷ್ಟು ಹೊಡೆತವನ್ನು ಹೊಡೆಯುತ್ತಾರೋ? ಇನ್ನು ಈಗಷ್ಟೇ ಕೊಟ್ಟ ಟೈಲರ್ ಹತ್ತಿರ ಮತ್ತೆ ಹರಿದದ್ದನ್ನು ಯಾವ ಮುಖ ಹೊತ್ತುಕೊಂಡು ಹೋಗಲಿ ಎನ್ನುವ ಮೈಕ್ರೋ ಮಿನಿ ಆಲೋಚನೆಗಳೇ ತಲೆಯ ತುಂಬ. ಕಳ್ಳರನ್ನು, ಪೋಲೀಸರನ್ನೂ, ಅಂತಹವರನ್ನು ಸೃಷ್ಟಿಸಿದ ದೇವರನ್ನು ಎಲ್ಲರನ್ನು ಬೈದರೂ ನನ್ನ ಹರಿದ ಪ್ಯಾಂಟಿನ ಕಾಲು ಒಂದಾಗುವುದು ಹೇಗೆ?

ಇವತ್ತಿಗೂ ಕಳ್ಳಿಗೆ ನನ್ನ ಮನಸ್ಸಿನಲ್ಲಿ ಒಂದು ಕೋಣೆಯಲ್ಲಿ ಸ್ಥಾನವಿದೆ, ಜೊತೆಗೆ ಮನೆಯ ಮೂಲೆಯಲ್ಲಿ ಇನ್ನೂ ಅಳಿದುಳಿದ ಒಂದೇ ಒಂದು ಕಳ್ಳಿಯ ಗಿಡ ತನ್ನ ವಂಶದ ಹಿರಿಯರು ಮಾಡಿದ ತಪ್ಪಿನ ಫಲವನ್ನು ಒಬ್ಬೊಂಟಿಯಾಗಿ ಅನುಭವಿಸುತ್ತಲೇ ಇದೆ.

Sunday, December 02, 2007

ಇಂದು ರಾತ್ರಿ ಮತ್ತೆ ಆ ಮಿಣಿಮಿಣಿ ದೀಪಗಳು ಬೆಳಗದಿದ್ದರೆ ಸಾಕು!

ಈಗ್ಗೆ ಒಂದು ತಿಂಗಳಿನಿಂದ ನಾವಿರುವ ಊರಿನ ರಸ್ತೆಗಳನ್ನು ಸ್ಥಳೀಯ ಕೆಲಸಗಾರರು ಉದ್ದಕ್ಕೂ ಅಗೆಯುತ್ತಾ ಬಂದಿದ್ದಾರೆ, ಯಾವುದೋ ಪೈಪ್ ಹಾಕುವುದಕ್ಕೋ ಮತ್ತಿನ್ಯಾವುದಕ್ಕೋ ಇರಬೇಕು. ಇದರಲ್ಲಿ ಕೆಲಸ ಮಾಡುವವರದ್ದು ಕೇವಲ ರಾತ್ರಿ ಮಾತ್ರ ಡ್ಯೂಟಿ, ಹಗಲೆಲ್ಲ ರಸ್ತೆ ಅಗೆಯಲು ತೊಡಗಿದರೆ ಟ್ರಾಫಿಕ್ ನಿಲ್ಲುತ್ತದೆ, ಮತ್ತೇನೋ ಆಗುತ್ತದೆ ಎಂದು ರಾತ್ರಿ ಇಡೀ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಲೇ ಇದೆ.

ಇಂದು ಮುಂಜಾನೆ ಎರಡೂವರೆ ಹೊತ್ತಿಗೆ ಕಿಟಕಿ ಮೂಲಕ ಏನೋ ಮಿಣಿಮಿಣೀ ಬೆಳಕು ಕಂಡಿತೆಂದು ಪರದೇ ಸರಿಸಿ ನೋಡಿದರೆ ಅವರೇ ರಸ್ತೆ ಕೆಲಸಗಾರರು, ಉದ್ದಕ್ಕೂ ರಸ್ತೆಯನ್ನು ಅಗೆದು ಮುಚ್ಚುತ್ತಾ ಈಗ ನಮ್ಮ ಮನೆಯ ಮುಂದೆ ಬಂದಿದ್ದಾರೆ, ಇನ್ನು ಸ್ವಲ್ಪ ಹೊತ್ತಿನಲ್ಲೇ ಅವರ ಪಯಣ ಮತ್ತೆ ಅವ್ಯಾಹತವಾಗಿ ಮುಂದೆ ಸಾಗುತ್ತಲೇ ಇರುತ್ತದೆ, ಎಲ್ಲಿಯವರೆಗೆ ಹಿಡಿದ ಗುರಿ ಮುಟ್ಟುವವರೆಗೆ. ಬೆಳಗ್ಗೆ ಸ್ನೋ ಬೀಳುತ್ತದೆ ಎಂದು ಎಲ್ಲರೂ ಪ್ರಿಡಿಕ್ಟ್ ಮಾಡಿದ್ದರಿಂದ ವೆದರ್ ಚಾನೆಲ್ ನೋಡೋಣವೆಂದು ಟಿವಿಯನ್ನು ಚಾಲೂ ಮಾಡಿದೆ, ಅಲ್ಲಿ ನಮ್ಮೂರಿನ ದಿನದ ಉಷ್ಣಾಂಶವನ್ನು ತೋರಿಸುತ್ತಿದ್ದರು, ಅಲ್ಲಿನ ನಂಬರುಗಳನ್ನು ನೋಡಿ ಶಾಕ್ ಆದಂತಾಯಿತು - ಈ ದಿನದ ಗರಿಷ್ಠ ಉಷ್ಣಾಂಶ 27 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಫ್ಯಾರನ್‌ಹೈಟ್ - ಜೊತೆಗೆ ಬೀಸುವ ಗಾಳಿಯ ಹೊಡೆತಕ್ಕೆ ಬದಲಾಗುವ ವಿಂಡ್‌ಚಿಲ್ (feels like) ಫ್ಯಾಕ್ಟರ್ ಬೇರೆ.

ಹೀಗೆ ರಾತ್ರಿ ಇಡೀ ಕೆಲಸ ಮಾಡೋ ಕೆಲಸಗಾರರು ಅದೇನೇ ಕೋಟನ್ನು ಧರಿಸಿದ್ದರೂ ಅವರು ಒಳಗೆಳೆದುಕೊಳ್ಳುವ ಗಾಳಿಯ ಉಷ್ಣತೆ ಸೊನ್ನೆಗಿಂತ (ಸೆಂಟಿಗ್ರೇಡ್) ಕಡಿಮೆ, ಅದನ್ನವರು ಹೊರಗೆ ಬಿಡುವಾಗ 37 ಡಿಗ್ರಿ ಸೆಂಟಿಗ್ರೇಡ್ (98 ಡಿಗ್ರಿ ಫ್ಯ್ರಾರನ್‌ಹೈಟ್) ಆಗಿ ಪರಿವರ್ತಿಸಿ ಬಿಡಬೇಕಾಗುತ್ತದೆ ಎಂಬುದನ್ನು ಯೋಚಿಸಿಕೊಂಡೇ ನನ್ನ ಮೈಯಲ್ಲಿ ನಡುಕ ಹುಟ್ಟಿತು. ಎಷ್ಟೊಂದು ಅಗಾಧವಾದ ಬದಲಾವಣೆ ಉಷ್ಣತೆಯಲ್ಲಿ, ಹೀಗೆ ಪ್ರತಿ ಕ್ಷಣಕ್ಕೂ ಕಳೆದುಕೊಳ್ಳುವ ಶಕ್ತಿಯನ್ನು ಈ ಕೆಲಸಗಾರರು ಅದೆಲ್ಲಿಂದ ತುಂಬಿಕೊಳ್ಳುತ್ತಾರೋ, ಛೇ - ಪಾಪ ಎನಿಸಿತು. ನನ್ನ ಸ್ನೇಹಿತ ಕೆನ್ ಹೇಳುತ್ತಿದ್ದ ಹಾಗೆ ಅವನು ಬಲ್ಲ ಕನಷ್ಟ್ರಕ್ಷನ್ ಕೆಲಸಗಾರರು ದಿನಕ್ಕೆ ಹಲವಾರು ಊಟಗಳನ್ನು ಮಾಡುತ್ತಾರೆ, ಮುಖ್ಯವಾಗಿ ಡೋ ನಟ್ (ಸಿಹಿ) ಅನ್ನು ಬಹಳ ತಿನ್ನುತ್ತಾರೆ, ಹೀಗೆ ತಿನ್ನುವ ಹೆಚ್ಚಿನ ಗ್ಲೂಕೋಸ್ ಅಂಶ ಅವರು ಬಳಸುವ ಶಕ್ತಿಯಾಗಿ ಬದಲಾಗುತ್ತದೆ, ಮೇಲಾಗಿ ಪ್ರತಿದಿನವೂ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಳ್ಳುವ ಅವರ ದೇಹ ಮನಸ್ಸು ಎಲ್ಲವೂ ಛಳಿಗೆ ಹೊಂದಿಕೊಂಡಿರುತ್ತದೆ ಎಂಬುದು ನೆನಪಿಗೆ ಬಂದಿತು. ಅದೇನೇ ತಿನ್ನಲಿ ಬಿಡಲಿ, ಒಬ್ಬ ವ್ಯಕ್ತಿ ಸಬ್ ಝೀರೋ ಉಷ್ಣತೆಯಲ್ಲಿ ಘಂಟೆಗಟ್ಟಲೆ ದುಡಿಯುವುದು ಅಮಾನವೀಯ ಎಂದೆನಿಸಿದ್ದು ಆ ಮಟ್ಟಿಗಂತೂ ನಿಜ. ಇದೇ ಕನ್‌ಷ್ಟ್ರಕ್ಷನ್ ಕೆಲಸಗಾರರು, ತಾವು ಮಿಲಿಯನ್‌ಗಟ್ಟಲೆ ಹಣವನ್ನಂತೂ ದುಡಿಯೋದಿಲ್ಲ, ಮಧ್ಯ ವಯಸ್ಸು ದಾಟುತ್ತಲೇ ಇಂತಹ ಘೋರ ವಾತಾವರಣದಲ್ಲಿ ಕೆಲಸವನ್ನು ಮಾಡಿದ್ದರ ಪರಿಣಾಮವಾಗಿ ಅದೇನೇನು ಖಾಯಿಲೆಗಳು ಬರುತ್ತವೆಯೋ ಯಾರು ಬಲ್ಲರು?

ನಾನಂತೂ ವೆದರ್ ಚಾನೆಲ್ ನೋಡಿ, ಟಿಎಮ್‌ಸಿಯಲ್ಲಿ ಬರುತ್ತಿದ್ದ ಚಾರ್ಲ್ ಚಾಪ್ಲಿನ್ ಗೋಲ್ಡ್ ರಶ್ ಸಿನಿಮಾ ನೋಡಿಕೊಂಡೇನೋ ಕಾಲ ಕಳೆದು ಬೆಳಗು ಮಾಡಿದೆ, ಆದರೆ ಆ ಕನ್‌ಷ್ಟ್ರಕ್ಷನ್ ವಾಹನದ ಮಿಣಿಮಿಣಿ ದೀಪಗಳು ನಮ್ಮನೆಯ ಕಿಟಕಿಯಿಂದ ಮರೆಯಾಗುವವರೆಗೂ ಹೊರ ಮುಖ ಚಾಪ್ಲಿನ್ ಕಷ್ಟದಲ್ಲಿ ಸಿಕ್ಕಿಕೊಂಡಾಗಲೆಲ್ಲ ನಗುತ್ತಿದ್ದರೆ, ಒಳಗಡೆಯ ಮನಸ್ಸು ಆ ಕೆಲಸಗಾರರ ಬಗ್ಗೆ ಯೋಚಿಸುತ್ತಲೇ ಇತ್ತು. ಸಿನಿಮಾದಲ್ಲಿ ಚಾಪ್ಲಿನ್, ಹೊರಗಡೆ ಆ ಕೆಲಸಗಾರರು ಇಬ್ಬರೂ ಛಳಿಯಲ್ಲಿ ನಡುಗುತ್ತಿದ್ದರೆ ಒಂದು ಮನೋರಂಜನೆಯಾಗಿತ್ತು, ಮತ್ತೊಂದು ವಾಸ್ತವದ ಚಿತ್ರಣ ನೀಡುತ್ತಿತ್ತು.

ಮುಂಜಾನೆ ಎಲ್ಲಿಗೋ ವಾಹನವನ್ನು ತೆಗೆದು ಅವರುಗಳು ಕೆಲಸ ಮಾಡಿದ್ದ ರಸ್ತೆಯ ಮೇಲೆ ಚಲಿಸುವಾಗ ಸೂಕ್ಷ್ಮವಾಗಿ ಗಮನಿಸಿದೆ, ಅಗೆದು ಮುಚ್ಚಿದ್ದ ರಸ್ತೆಯ ಉದ್ದಾನುದ್ದಕ್ಕೆ ಗುಂಡಿ ಬಹಳ ಚೆನ್ನಾಗಿ ಮೈ ತುಂಬಿಕೊಂಡಿತ್ತು, ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ಗಲೀಜಾಗಲೀ, ಕಸಕಡ್ಡಿಗಳಾಗಲಿ ಇದ್ದಿರಲಿಲ್ಲ. ರಸ್ತೆಯ ಬದಿಯಿಂದ ಸುಮಾರು ಒಂದು ಅಡಿ ಪಕ್ಕಕ್ಕೆ ಯಾವುದೋ ಪೈಪ್ ಅನ್ನು ಹುಗಿಯಲು ತೆಗೆದ ಕಾಲುವೆ, ಮುಚ್ಚಿದ ಮೇಲೆ ತನ್ನ ಮೇಲಿನ ಹೊಸ ಟಾರ್ ಅನ್ನು ಅಲ್ಲಲ್ಲಿ ಬೀಳುವ ಬೆಳಕಿಗೆ ಪ್ರತಿಫಲಿಸಿ ಜಗಜ್ಜಾಹೀರು ಮಾಡುವ ಮುಖವನ್ನು ಹೊತ್ತುಕೊಂಡಿತ್ತು. ಹೊಳೆಯದ ಕಡೆ ಅದು ಕಷ್ಟಪಟ್ಟು ಕೆಲಸ ಮಾಡುವ ಕೆಲಸಗಾರರ ಮುಂಗೈ ಮೇಲಿನ ನರದ ಹಾಗೆ ಕಂಡುಬರುತ್ತಿತ್ತು. ಹಗಲಾಗಲೀ ರಾತ್ರಿಯಾಗಲೀ ದಿನದ ಉಷ್ಣಾಂಶದಲ್ಲೇನೂ ಅಂತಹ ಬದಲಾವಣೆ ಇಲ್ಲ, ಪ್ರಪಂಚದ ಅದ್ಯಾವ ಸೂರ್ಯರೂ ತಮ್ಮ ಬಿಸಿಯನ್ನು ತಟ್ಟಿಸದ ಹಾಗೆ ಈ ಲೋಕ ದೂರವಾಗಿದೆಯೇನೋ ಎಂದೆನಿಸಿ ಅಕಸ್ಮಾತ್ ಆ ದೂರ ಹಾಗೇ ಉಳಿದರೆ ಎಂದು ಹೆದರಿಕೆಯಾಗಿದ್ದಂತೂ ನಿಜ.

ಬಿಡಿ, ಇನ್ಯಾವತ್ತೂ ಹೇಳೋದಿಲ್ಲ ನಾನು ಮಾಡುವುದೇ ಕಷ್ಟದ ಕೆಲಸವೆಂದು. ಒಬ್ಬ ವಾಚ್‌ಮನ್‌ನಿಂದ ಹಿಡಿದು ಅಧಿಕಾರಿಯವರೆಗೆ ಆಯಾ ಕೆಲಸದ ಮಟ್ಟದ ಗೌರವವನ್ನು ನಾನು ಈ ದೇಶದಲ್ಲೇ ಕಂಡಿದ್ದು ಹಾಗೂ ಅನುಭವಿಸಿದ್ದು. ಒಬ್ಬ ಜಾನಿಟರ್‌ನ ಕೆಲಸವನ್ನು ಕೀಳು ಎಂಬುದಾಗಿ ನೋಡುವ ಮನಸ್ಥಿತಿ ನನಗೆ ಒಂದು ಕಾಲದಲ್ಲಿ ಖಂಡಿತ ಇತ್ತು, ಆದರೆ ಅದು ಬದಲಾಗಿ ಬಹಳ ವರ್ಷಗಳಾದವು. ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯನ್ನು ಕೆಲಸ ಮಾಡದಿದ್ದರೆ ಪ್ರಪಂಚ ಪೂರ್ಣವಾಗುವುದೆಂದು, ಹಾಗಿದ್ದ ಮೇಲೆ ಪ್ರತಿಯೊಬ್ಬರ ಕೆಲಸವೂ ಅಷ್ಟೇ ಮುಖ್ಯ ಹಾಗೂ ಮಹತ್ವಪೂರ್ಣವಾದುದಲ್ಲವೇ?

ಈ ಛಳಿ ಅಥವಾ ಛಳಿಗಾಲದ ವಿಶೇಷವೇ ಹಾಗೆ, ಮೂಳೆ ಕೊರೆಯುವ ಛಳಿ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ, ನಮ್ಮ ಚರ್ಮ ಅದರಡಿಯಲ್ಲಿರುವ ಚರಬಿಯನ್ನು ಮೀರಿ ಹೋಗಬಲ್ಲುದು ಛಳಿ ಮಾತ್ರ, ಬಿಸಿಲಿಗೆ ಆ ತುಲನೆ ಸಲ್ಲದು. ವರ್ಷದ ಆರು ತಿಂಗಳ ಛಳಿ ಇಲ್ಲಿನವರಿಗೆ ಅವಿಭಾಜ್ಯ ಅಂಗ, ಅದಕ್ಕನುಗುಣವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲೇ ಬೇಕು, ಹಾಗೆ ನಡೆಯಲೇ ಬೇಕು ಎಂದು ಯೋಚಿಸಿಕೊಂಡಾಗ ಮನಸ್ಸು ತುಸು ಹಗುರವಾದಂತೆನಿಸಿತು. ಸದ್ಯ, ಇಂದು ರಾತ್ರಿ ಮತ್ತೆ ಆ ಕನ್‌ಷ್ಟ್ರಕ್ಷನ್ ವಾಹನಗಳ ಮಿಣಿಮಿಣಿ ದೀಪಗಳು ಬೆಳಗದಿದ್ದರೆ ಸಾಕು!

Friday, November 30, 2007

ನವೆಂಬರ್ ನೆನಪುಗಳು

ಇನ್ನೇನು ರಾಜ್ಯೋತ್ಸವ ಮಾಸ ಕಳೀತಾ ಬಂತು, ಆದರೆ ಕನ್ನಡಿಗರ ರಾಜಕೀಯ ಆಶೋತ್ತರಗಳು ಚಿಗುರೊಡೆಯುವುದೇನಿದ್ದರೂ ಮುಂದಿನ ವರ್ಷವೇ ಗತಿ ಎನ್ನುವ ಹಾಗೆ ದುತ್ತನೇ ಆವರಿಸಿದ ರಾಜಕಾರಣಿಗಳ ಅಜ್ಞಾತವಾಸ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಎಂದೂ ನೋಡದಿದ್ದ ಉದಯ ಟಿವಿ ನ್ಯೂಸ್ ಅನ್ನೂ ಸೋಫಾದ ತುದಿಯಲ್ಲಿ ಕುಳಿತು ನೋಡುವಂತೆ ಮಾಡಿದ್ದು ಈ ವರ್ಷದ ಸೋಜಿಗಗಳಲ್ಲಿ ಒಂದು! ಅವರು ಬಿಟ್ಟು ಇವರು ಬಿಟ್ಟು ಇವರ್ಯಾರು ಎಂದು ಕೇಳಿದ ರಾಜಕೀಯ ಧುರೀಣರು ಕೊನೆಗೆ ಅಧಿಕಾರವನ್ನು ವಹಿಸಿಕೊಟ್ಟಿದ್ದು ಮತ್ತೆ ರಾಜ್ಯಪಾಲರಿಗೇ. ಅದೆಷ್ಟು ಪಕ್ಷಗಳು, ಅದೆಷ್ಟೇ ಪಕ್ವವಾದ ತಲೆಗಳು, ಸಿದ್ಧಾಂತಗಳಿದ್ದರೂ ನಮ್ಮ ರಾಜಕೀಯ ಅಧೋಗತಿ ಎಲ್ಲರ ಮುಂದೆ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿತ್ತು ಎನ್ನುವುದು ನಿಜ, ಇಲ್ಲವೆಂದಾದರೆ ಆಫೀಸಿನಲ್ಲಿ ಎಂದೂ ನನ್ನೊಡನೆ ರಾಜಕೀಯದ ಬಗ್ಗೆ ಚಕಾರವೆತ್ತದ ತೆಲುಗು ಸ್ನೇಹಿತರು, ’ಏನಯ್ಯಾ, ನಿಮ್ಮ ಮುಖ್ಯಮಂತ್ರಿಗಳಿಗೆ ಬೇಧಿ ಹಿಡಿದ ಹಾಗಿದೇ!’ ಎಂದು ಕುಚೋದ್ಯವನ್ನು ಮಾಡುತ್ತಿದ್ದರೇಕೆ?

***

ಮೊದಲೆಲ್ಲಾ ಹಿತ್ತಲಿನಲ್ಲಿ ಬಿದ್ದ ದರಲೆಗಳನ್ನು ಒಟ್ಟು ಮಾಡಿ ಬಚ್ಚಲು ಒಲೆ ತುಂಬಿಸಿ ಮೈ ಹಾಗೂ ನೀರು ಕಾಯಿಸಿಕೊಳ್ಳುತ್ತಿದ್ದ ನನಗೆ ಈಗ ದರಲೆಗಳನ್ನು ಟ್ರ್ಯಾಷ್ ರೂಪದಲ್ಲಿ ತುಂಬಿ ಚೀಲ ಕಟ್ಟಿಡುವುದೋ ಅಥವಾ ಮರಗಳ ಬುಡಕ್ಕೆ ತಳ್ಳುವುದೋ ಒಂದು ಹೊಸ ಅಭ್ಯಾಸ. ಹಗಲಿರದ ಛಳಿ ಸಂಜೆ ಅದೆಲ್ಲಿಂದಲೋ ದೂರದಿಂದ ಬಂದ ನೆಂಟನ ಹಾಗೆ ಮನೆ ತುಂಬಿಕೊಂಡಿದ್ದನ್ನು ನೋಡಿ, ತಕ್ಷಣ ಫೈರ್ ಪ್ಲೇಸ್‌ಗೆ ಕಟ್ಟಿಗೆಯನ್ನು ತುಂಬಿಸಿ ಬೆಂಕಿ ಹೊತ್ತಿಸಲು ಕಾತರನಾದೆ. ಒಂದೊಂದು ಕಟ್ಟಿಗೆಗೆ ಮತ್ತೊಂದು ಕಟ್ಟಿಗೆಯನ್ನು ಕ್ರಾಸ್ ಆಗಿ ಇಟ್ಟು ಬೆಂಕಿ ಹೊತ್ತಿಸಿದ ಹುಮ್ಮಸ್ಸಿನಲ್ಲಿ ಅದರ ಕಿಡಿ ಕಾವಿಗೆ ಇದು, ಇದರ ಕಿಡಿ ಕಾವಿಗೆ ಅದು ಎನ್ನುವ ಪೈಪೋಟಿಯಲ್ಲಿ ಒಂದರ ಬೆಂಕಿಗೆ ಮತ್ತೊಂದು ಸಿಕ್ಕು ಹೊತ್ತಿಕೊಂಡು ಉರಿಯುವುದನ್ನು ನೋಡುವುದು ರೋಚಕವಾಗಿತ್ತು. ’ಕೆಟ್ಟ ಗುಣ ಅನ್ನೋದು ಬೆಂಕಿ ಇದ್ದ ಹಾಗೆ ಕಣೋ, ಅದು ತಾನಿದ್ದ ಜಾಗವನ್ನು ಮೊದಲು ಸುಡುತ್ತದೆಯಂತೆ’ ಎಂಬ ನಮ್ಮಮ್ಮನ ಅಣಿಮುತ್ತುಗಳು ಬೇರೆ ಮನಃಪಟಲದಲ್ಲಿ ಹಾದುಹೋದವು. ಮೊದಮೊದಲು ನೋಡಲು ಗಟ್ಟಿಮುಟ್ಟಾಗಿದ್ದ ಬೊಡ್ಡೆಗಳು ಬೆಂಕಿಯ ಉರಿಗೆ ಸಿಕ್ಕು ಮೆದಗರಾದಂತಾಗಿ ಕಂಡು, ಉರಿಯುತ್ತಲೇ ನಿಗಿನಿಗಿ ಕೆಂಡಗಳನ್ನು ಪ್ರದರ್ಶಿಸಿ ತನ್ನ ವಿರೋಧಿ ಕಟ್ಟಿಗೆಗಳನ್ನಿರಲಿ ಬೆಂಕಿಯ ಜ್ವಾಲೆಯನ್ನೇ ಕೆಂಗಣ್ಣಿನಿಂದ ನೋಡಿ ಹೆದರಿಸುವಂತೆ ಕಂಡುಬಂದರೂ, ಕೊನೆಗೆ ಕೆಂಪನೆ ಕೆಂಡ ಉಳಿಸಿದ್ದು ಕಪ್ಪು ಇದ್ದಿಲು ಹಾಗೂ ಬಿಳಿ ಬೂದಿಯನ್ನೇ ಹೊರತು ಮತ್ತೀನೇನಲ್ಲ. ಇಷ್ಟು ಹೊತ್ತು ಶಕ್ತಿ ಪ್ರದರ್ಶನ ಮಾಡಿದ ಕಟ್ಟಿಗೆ ಬೊಡ್ಡೆಗಳು ಬೆಂಕಿಯ ಕಾವಿಗೆ ಕಾದು ಒಂದು ಘಂಟೆಯ ಆಸುಪಾಸಿನಲ್ಲಿ ಪೈರ್‌ಪ್ಲೇಸ್ ಖಾಲಿಯಾಗುವಂತೆ ಉರಿದು ಬೂದಿಯಾಗಿ ಹೋದವು. ಹಾಗೆ ಉರಿದ ಅದೆಷ್ಟೋ ಬೊಡ್ಡೆಗಳನ್ನು ನೋಡಿ ತನ್ನಷ್ಟಕ್ಕೆ ತಾನೇ ಋಷಿಗಳ ಮೌನವನ್ನು ತಾಳಿಕೊಂಡು ಬಿಸಿಯಿಂದ ತಣ್ಣಗಿನ ವಾತಾವರಣಕ್ಕೆ ಸಂಕ್ರಮಣಗೊಳ್ಳುತ್ತಿದ್ದ ಫೈರ್‌ಪ್ಲೇಸಿನ ಗೋಡೆಗಳಲ್ಲಿ ಭದ್ರವಾಗಿ ಕುಳಿತ ಟೈಲ್‌ಗಳು ಯಾವುದೇ ಮನೋಭಾವವನ್ನು ಹೊರಕ್ಕೆ ಪ್ರಸ್ತುತಪಡಿಸುತ್ತಿರಲಿಲ್ಲ ಎನ್ನುವುದು ನನ್ನ ಗಮನಕ್ಕೂ ಬಂತು. ಉರಿದು ಹೋದ ಬೊಡ್ಡೆಗಳು ಈಗ ಇತಿಹಾಸ, ನಾಳಿನ ದಿನಕ್ಕೆ ಒಡ್ಡಲು ಇನ್ನಷ್ಟು ಕಟ್ಟಿಗೆಗಳನ್ನು ಈಗಾಗಲೇ ಕೂಡಿಸಿಟ್ಟಿದ್ದೇನೆ ಎನ್ನುವ ನೆನಪು ಬಂದಿದ್ದೇ ತಡ, ನನ್ನ ಮನಸ್ಸಿನಲ್ಲಿ ಹುಮ್ಮಸ್ಸು ಇಮ್ಮಡಿಯಾಯಿತು.

***

ನೀವು ಈವರೆಗೆ ನೋಡಿರದಿದ್ದರೆ maps.live.com ನೋಡಿ, ಉತ್ತರ ಅಮೇರಿಕದ ಜನಪ್ರಿಯ ಸ್ಥಾನಗಳನ್ನು ಅದರಲ್ಲಿ ಒಮ್ಮೆ ವೀಕ್ಷಿಸಿ ಆಗ ಗೊತ್ತಾಗುತ್ತದೆ ತಂತ್ರಜ್ಞಾನ ಎಷ್ಟೊಂದು ಬೆಳೆದಿದೆಯೆಂದು. ನನ್ನ ಸ್ನೇಹಿತನೊಬ್ಬ ಹೇಳಿದನೆಂದು ನಾನು ನ್ಯೂ ಯಾರ್ಕ್ ನಗರದ ಹತ್ತಿರದ ಕೆಲವೊಂದು ಸ್ಥಳಗಳನ್ನು ಖುದ್ದಾಗಿ ನೋಡಿ ದಂಗುಬಡಿದಂತಾದೆ, ಅದರಲ್ಲಿನ Bird's eye ವ್ಯೂವ್ ನಲ್ಲಿ ಎಷ್ಟೊಂದು ಸುಂದರ ಹಾಗೂ ಸ್ಪಷ್ಟವಾಗಿ ಈ ಸ್ಥಳಗಳು ಕಾಣುತ್ತಿದ್ದವೆಂದರೆ ನನ್ನ ಕಣ್ಣುಗಳನ್ನು ನಾನೇ ನಂಬದವನಾದೆ. ಗೂಗಲ್ ಅರ್ಥ್ ಇದರ ಮುಂದೆ ಏನೇನೂ ಅಲ್ಲ ಎನ್ನುವಂತಿತ್ತು, ಜೊತೆಗೆ ಬೇಕಾದ ಪಾಪ್ಯುಲರ್ ಡೆಸ್ಟಿನೇಷನ್ನುಗಳನ್ನು ನಾನು ಯಾವ ದಿಕ್ಕು/ಕೋನದಲ್ಲಿ ತಿರುಗಿಸಿ ಬೇಕಾದರೂ ನೋಡಬಹುದು. ನನ್ನ ಸ್ನೇಹಿತನೊಬ್ಬನ ಮನೆಯ ಮುಂದಿನ ನಿಂತ ಕಾರಿನ ಮೇಕ್ ಮಾಡೆಲ್ ಗೊತ್ತಾಗುವಷ್ಟರ ಮಟ್ಟಿಗೆ ಚಿತ್ರ ಸ್ಪಷ್ಟವಾಗಿತ್ತು ಎನ್ನುವುದು ಅತಿಶಯೋಕ್ತಿಯೇನಲ್ಲ.

***

ರಜೆಯ ಗುಂಗು ಈಗಾಗಲೇ ಬಂದಂತಾಗಿದೆ, ಆಫೀಸಿನಲ್ಲಿ ಜನ ಸಂದಣಿ ಕಡಿಮೆ ಆಗುತ್ತಿರುವಂತೆ ತೋರುತ್ತಿದೆ, ನನಗೂ ಬೇಕಾದಷ್ಟು ರಜೆಗಳು ಹಾಕದೇ ಬಿದ್ದಿರೋದರಿಂದ ಒಂದಿಷ್ಟು ರಜೆ ತೆಗೆದುಕೊಳ್ಳೋಣವೆಂದರೆ ಯಾರಿಗೂ ಬೇಡವಾದ ಕೆಲಸ ಹಾಗೂ ಜವಾಬ್ದಾರಿಗಳು ನನಗೇ ಬಂದು ತಗುಲಿಕೊಳ್ಳಬೇಕೆ? ಕೆಲಸ ಮಾಡುತ್ತಿದ್ದರೆ ರಜೆಗಳು ಬೇಕಾಗುತ್ತವೆ, ಕೆಲಸವೇ ಇಲ್ಲದಿದ್ದರೆ ರಜೆಗಳು ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವುದು ಹಿಂದಿನ ತರ್ಕವಾಗಿತ್ತು. ಇತ್ತೀಚೆಗೆ ರಜೆಗಳು ಇದ್ದರೂ ತೆಗೆದುಕೊಳ್ಳದೇ ಕೆಲಸವನ್ನು ಮಾಡಿಕೊಂಡೇ ಇರಬೇಕಾದ್ದು ಇರೋ ಅನಿವಾರ್ಯಗಳಲ್ಲಿ ಒಂದು.

Tuesday, November 27, 2007

ದಾರೇಶ್ವರಿ ಎಂಬ ಜೊತೆಗಾತಿ

13% of 226 ಎಷ್ಟು ಎನ್ನೋ ಲೆಕ್ಕಗಳನ್ನು ಮೊದಲೆಲ್ಲಾ ನಾವು ತಲೆಯಲ್ಲೇ ಲೆಕ್ಕ ಮಾಡಿಕೊಳ್ಳುತ್ತಿದ್ದೆವು, ಇತ್ತೀಚೆಗಂತೂ ಅದೇನ್ ಆಗ್ತಾ ಇದೆಯೋ ಗೊತ್ತಿಲ್ಲ ತಲೆ ದಡ್ಡು ಬಿದ್ದು ಹೋಗಿದ್ದು ನನ್ನ ಆಫೀಸಿನ ಮೇಜಿನ ಮೇಲೆ ಯಾವಾಗ್ಲೂ ಒಂದು ಕ್ಯಾಲ್ಕುಲೇಟರ್ ಬಾಯಿ ತೆಗೆದುಕೊಂಡು ಬಿದ್ದೇ ಇರುತ್ತೆ. ಪರ್ಸೆಂಟ್ ಕ್ಯಾಲ್ಕುಲೇಷನ್ ಇರ್ಲಿ, ಉಳಿದೆಲ್ಲ ಸರಳ ಲೆಕ್ಕಗಳಿಗೂ ನಾನು ಕ್ಯಾಲ್ಕುಲೇಟರ್ ಮೊರೆ ಹೋದಾಗಲೇ ನನಗೂ ವಯಸ್ಸಾದ ಬಗ್ಗೆ ಗ್ಯಾರಂಟಿ ಆಗಿತ್ತು. ವಯಸ್ಸಾಗೋದಕ್ಕೂ ಮನಸ್ನಲ್ಲೇ ಲೆಕ್ಕಾ ಮಾಡ್ದೇ ಇರೋದಕ್ಕೂ ಏನ್ ಸಂಬಂಧಾ ಅಂತ ನೀವ್ ತಲೆ ತುರಿಸಿಕೊಳ್ಳೋಲ್ಲ ಅಂತ ನನಗೂ ಗೊತ್ತು, ’ಎಲ್ಲದಕು ಕಾರಣನು ಈ ಸೋಮಾರಿ ಪರಮಾತ್ಮಾ’ ಎಂಬು ಬಭ್ರುವಾಹನ ಶೈಲಿಯಲಿ ನುಡಿದು ಅದಕ್ಕಿನ್ನೊಂದು ಕೊಂಕನ್ನು ಸೇರಿಸಿಕೊಳ್ಳಬಹುದು ನೋಡಿ.

ಈ ನನ್ನ ಗ್ಯಾಡ್ಜೆಟ್ಟುಗಳ ಲಿಸ್ಟಿಗೆ ಹೊಸದಾಗಿ ಸೇರಿಕೊಂಡ ಪುಣ್ಯಾತ್‌ಗಿತ್ತೀನೇ ದಾರೇಶ್ವರಿ. ನನ್ನ ಸ್ನೇಹಿತರೊಬ್ಬರು ಅವರ ಬಳಿ ಇರೋ ಎಲೆಕ್ಟ್ರಾನಿಕ್ ವಸ್ತುಗಳನ್ನೆಲ್ಲ ’ಣಿ’ ಯಿಂದ ಅಂತ್ಯಗೊಳ್ಳುವಂತೆ ಹೆಸರಿಟ್ಟುಕೊಂಡು ಮನಪೂರ್ವಕವಾಗಿ ಅವುಗಳ ಜೊತೆ ಸಂಭಾಷಣೆ ನಡೆಸುತ್ತಿದ್ದುದನ್ನು ನೋಡಿದ ನಂತರ ನಾನು ನನ್ನ ಬಳಿ ಇರುವ ವಸ್ತುಗಳನ್ನೆಲ್ಲ ’ಏಶ್ವರಿ’ಯಿಂದ ಅಂತ್ಯಗೊಳ್ಳುವ ಹೆಸರಿಟ್ಟು ಕರೆಯುವುದು ಮನವರಿಕೆಯಾಯಿತು. ಉದಾಹರಣೆಗೆ, MP3 ಪ್ಲೇಯರ್ ಸಿಂಗಿಣಿ, ಸಿಂಗೇಶ್ವರಿಯರಾದರೆ, ಡೇಟಾ ಸ್ಟೋರ್ ಮಾಡುವ ಮೀಡಿಯಮ್‍ಗಳು (USB drive) ಸ್ಟೋರಿಣಿ, ಸ್ಟೋರೇಶ್ವರಿಯರಾಗಬಹುದು. ಅದೇ ರೀತಿ ಹೆಜ್ಜೆ ಹೆಜ್ಜೆಗೆ ನಮ್ಮ ದಾರಿಯನ್ನು ಕಾಯ್ದುಕೊಂಡು ದಾರಿ ತೋರಿಸುವ GPS Navigator ಸಿಸ್ಟಮ್ ದಾರಿಣಿ, ದಾರೇಶ್ವರಿಯರಾಗುತ್ತಾರೆ!

ಮೊದಲೆಲ್ಲಾ ಈ ಆನ್‌ಲೈನ್ ಮ್ಯಾಪ್‌ಗಳೆಲ್ಲ ಬರುವುದಕ್ಕಿಂತ ಮುನ್ನ ಡ್ರೈವಿಂಗ್ ಹೇಗೆ ಮಾಡುತ್ತಿದ್ದಿರಿ ಎಂದು ಎಷ್ಟೋ ಜನರನ್ನು ಕೇಳಿದ್ದೇನೆ, ಆಗ ಇನ್ನೂ ಸೆಲ್/ಮೊಬೈಲ್ ಫೋನ್ ಕೂಡಾ ಇರದಿದ್ದ ಕಾಲ. ಜನರು ಮನೆ ಬಿಡುವ ಮೊದಲೇ ತಾವು ತಲುಪಬೇಕಾದ ಸ್ಥಳ, ಕ್ರಮಿಸ ಬೇಕಾದ ದಾರಿಯ ಬಗ್ಗೆ ಮೊದಲೇ ತಿಳಿದುಕೊಂಡೋ ಬರೆದುಕೊಂಡೋ ಹೋಗುತ್ತಿದ್ದರಂತೆ. ಮಧ್ಯೆ ಎಲ್ಲಾದರೂ ದಾರಿ ತಪ್ಪಿದರೆ ಅಲ್ಲಲ್ಲಿ ಸಿಗುವ ಗ್ಯಾಸ್ ಸ್ಟೇಷನ್ನುಗಳಲ್ಲಿ ದಾರಿ ಕೇಳುವುದಾಗಲೀ ಪೇ ಫೋನ್‌ನಿಂದ ಕರೆ ಮಾಡುವುದಾಗಲೀ ಸಾಮಾನ್ಯವಾಗಿತ್ತಂತೆ. ಆದರೆ ಈಗೆಲ್ಲ ಕಾಲ ಬದಲಾಗಿದೆ, ನಿನ್ನೆ ಮೊನ್ನೆಯವರೆಗೆ ನಾನೂ ಸಹ ಆನ್‌ಲೈನ್ ಮ್ಯಾಪ್‌ಗಳಲ್ಲಿ ದಾರಿಯನ್ನು ಗುರುತಿಸಿಕೊಂಡೋ ಅಥವಾ ಪ್ರಿಂಟ್ ಹಾಕಿಕೊಂಡು ಮನೆ ಬಿಡುತ್ತಿದ್ದವನು ಈ ಎರಡು ಮೂರು ದಿನಗಳಲ್ಲಿ ಪರಿಚಯವಾದ ದಾರೇಶ್ವರಿಗೆ ಸಂಪೂರ್ಣ ಶರಣಾಗಿ ಹೋಗಿದ್ದೇನೆ. ಆಕೆಯದ್ದೇ ಆದ ’ನಯ’ವಾದ ಧ್ವನಿಯಲ್ಲಿ ’ಅಲ್ಲಿ ತಿರುಗು, ಇಲ್ಲಿ ತಿರುಗು’ ಎಂದು ಸದಾ ಆದೇಶಿಸುವ ಉಪದೇಶಿಸುವ ಈ ಜೊತೆಗಾತಿ ಯಾವುದಾದರೂ ದೊಡ್ಡ ಕೆರೆಗೆ ನನ್ನ ಕಾರನ್ನೆಲ್ಲಾದರೂ ಹಾಯಿಸಿ ಬಿಡುತ್ತಾಳೋ ಅಥವಾ ದೊಡ್ಡ ಸೇತುವೆಯೊಂದರಿಂದ ಹಾರುವಂತೆ ಹೇಳುತ್ತಾಳೋ ಎಂದು ಒಮ್ಮೊಮ್ಮೆ ಹೆದರಿಕೆಯಾದರೂ ಅಂಗೈನಲ್ಲಿ ಉಪಯೋಗಕ್ಕೆ ಬರಬಹುದಾದ ಹೊಸ ತಂತ್ರಜ್ಞಾನವನ್ನು ನೋಡಿ ನಾನಂತೂ ಬೆರಗಾಗಿ ಹೋಗಿದ್ದೇನೆ. ನನಗೆ ನಾನು ಹೋಗಬೇಕಾದ ದಾರಿ ಗೊತ್ತಿದ್ದರೂ ಅಕ್ಕಪಕ್ಕದ ರಸ್ತೆಗಳು, ಅಲ್ಲಲ್ಲಿ ಸಿಗಬಹುದಾದ ಸ್ಥಳೀಯ ಅಟ್ರಾಕ್ಷನ್ನುಗಳನ್ನು ನೋಡೋದಕ್ಕಾದರೂ ದಾರೇಶ್ವರಿಯನ್ನು ಕಾರಿನಲ್ಲಿ ಕೊಂಡೊಯ್ಯುತ್ತೇನೆ.

ನಾವು ಹೋದಲೆಲ್ಲ ನಮ್ಮ ಕಾರಿಗೆ ಅಂಟಿಕೊಂಡಂತಹ ಒಂದು ಉಪಗ್ರಹ ಸಂವಾದೀ ಎಳೆ, ಅದು ನಾವು ಹೋದ ದಿಕ್ಕನ್ನು ತೋರಿಸುತ್ತೆ, ನಮ್ಮ ವೇಗದ ಇತಿ-ಮಿತಿಗಳನ್ನು ಅಳೆಯುತ್ತೆ, ನಾವು ಹೋಗಿ ಬಂದದ್ದೆಲ್ಲವನ್ನು ಟ್ರೇಸ್ ಮಾಡುತ್ತೆ, ಎಲ್ಲೇ ತಪ್ಪಿಸಿಕೊಂಡರೂ ನಮ್ಮನ್ನು ಸುಸ್ಥಿತಿಗೆ ತಂದು ನಿಲ್ಲಿಸುವ ಪಣವನ್ನು ಹೊತ್ತುಕೊಂಡಿರುತ್ತೆ ಎನ್ನುವುದನ್ನು ಕೇಳಿಯೇ ಪುಳಕಗೊಂಡಿದ್ದ ನಾನು, ಮೊದಮೊದಲ ದಾರೇಶ್ವರಿಯ ಬಳಕೆಯಿಂದಲೇ ಕೃತಾರ್ಥನಾಗಿ ಹೋದೆ. ಇನ್ನು ಮೇಲೆ ಕತ್ತನ್ನು ಮೇಲೆತ್ತಿ ಮುಗಿಲನ್ನು ನೋಡಿ ದಿಕ್ಕನ್ನು ಹೇಳುವ ಬದಲು ನನ್ನ ಪಕ್ಕದಲ್ಲಿ ಉಪಸ್ಥಿತಳಿರುವ ದಾರೇಶ್ವರಿಗೆ ಒಂದು ಓರೆನೋಟವನ್ನು ಕೊಟ್ಟರೆ ಸಾಕು ಆಕೆ ಎಲ್ಲವನ್ನೂ ಹೇಳಿಬಿಡುತ್ತಾಳೆ. ಎಲ್ಲೆಲ್ಲಿ ಯಾವ ಯಾವ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಿದೆ ಎಂದು ರೇಡಿಯೋವನ್ನು ಕೇಳಿ ತಿಳಿದುಕೊಳ್ಳುವ ಬದಲು ದಾರೇಶ್ವರಿ ನೀನೇ ಗತಿ ಎಂದು ಆಕೆಗೆ ಮೊರೆ ಹೋದರೆ ಸಾಕು, ಎಲ್ಲವನ್ನು ಸುಲಲಿತವಾಗುವಂತೆ ಮಾಡುತ್ತಾಳೆ. ಮಧ್ಯೆ ಎಲ್ಲಾದರೂ ದಾರಿ ತಪ್ಪಿಸಿಕೊಂಡರೆ, ಹೆಚ್ಚು ಟ್ರಾಫಿಕ್ ಇರುವುದನ್ನು ತಪ್ಪಿಸಿ ಬೇರೆ ದಾರಿಯಲ್ಲಿ ಹೋಗಬೇಕೆಂದರೆ ಮತ್ತೆ ದಾರೇಶ್ವರಿಯೇ ಸಹಾಯ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿಬಿಟ್ಟಿದ್ದಾಳೆ.

ಅದ್ಯಾವ ಉಪಗ್ರಹವೋ ಅದೆಲ್ಲಿದೆಯೋ ಅದನ್ನು ಯಾರು ಎಂದು ಹಾರಿಬಿಟ್ಟಿದ್ದಾರೋ ಯಾರು ಬಲ್ಲರು? ನಾನು ಕೊಟ್ಟ ಕೆಲವೇ ಕೆಲವು ನೂರು ಡಾಲರುಗಳ ಬೆಲೆಗೆ ಹಾಗೂ ಜೀವನ ಪರ್ಯಂತ ಬ್ಯಾಟರಿ ಚಾರ್ಜ್ ಮಾಡಿ ಹೊಟ್ಟೆ ತುಂಬಿಸುತ್ತೇನೆ ಎನ್ನುವ ಆಶ್ವಾಸನೆಗೆ ನನಗೆ ಸಿಕ್ಕ ಮೌಲ್ಯ ದೊಡ್ಡದೇ. ಕ್ಯಾಲ್ಕುಲೇಟರನ್ನು ಬಳಸುವ ಮಂದಿ ಒಂದು ರೀತಿ ಸ್ನಾನಕ್ಕೆ ಬಿಸಿ ನೀರು ಸಿಕ್ಕರೂ ತಣ್ಣೀರನ್ನೇ ಮಾಡುತ್ತೇವೆ ಎಂದು ಹಠ ತೊಟ್ಟವರ ಹಾಗಿನವರು ಎನ್ನುವುದು ನನ್ನ ಸಿದ್ಧಾಂತಗಳಲ್ಲೊಂದು, ಹಾಗೆಯೇ ದಾರೇಶ್ವರಿಯಂಥವರನ್ನು ಬಳಸದೇ ಮುಗಿಲ ಮಾರಿಯನ್ನು ನೋಡಿ ಪ್ರಯಾಣ ಬೆಳೆಸುತ್ತೇವೆ ಎನ್ನುವವರೂ ಅಷ್ಟೇ ಕಟ್ಟು ನಿಟ್ಟಿನ ಉಗ್ರರು. ಬರೀ ದಾರಿ ತೋರಿಸುವ ದಾರೇಶ್ವರಿಯಷ್ಟೇ ಅಲ್ಲ, ಅಕೆಯಲ್ಲೂ ಇನ್ನೂ ಅನೇಕಾನೇಕ ಮರ್ಮಗಳಿವೆಯಂತೆ, ಆಕೆಯ ಒಡಲಿನಲ್ಲಿ ಒಂದು ಕಾದಂಬರಿಯ ಆಡಿಯೋವನ್ನು ಹಾಕಿದ್ದೇ ಆದರೆ ಅದನ್ನೂ ದಾರಿ ಉದ್ದಕ್ಕೂ ಬೊರ್ ಹೊಡೆಸದಂತೆ ಓದಿ ಹೇಳುತ್ತಾಳಂತೆ! ಮಧ್ಯೆ ಪೆಟ್ರೋಲ್ ಖಾಲಿ ಆದರೆ, ಹೊಟೇಲ್ ಬೇಕಾದರೆ, ಬ್ಯಾಂಕಿಗೆ ಹೋಗಬೇಕೆಂದೆನಿಸಿದರೆ ಅವು ಎಲ್ಲದರ ವಿಳಾಸ ಹಾಗೂ ಫೋನ್ ನಂಬರನ್ನೂ ಆಕೆ ಬಲ್ಲಳಂತೆ. ಯಾವುದೇ ಅಡ್ರಸ್ಸನ್ನು ಸ್ವಲ್ಪ ತೋರಿಸಿದರೂ ಸಾಕು, ಸು ಎಂದರೆ ಸುಕ್ಕಿನುಂಡೆ ಎನ್ನುವ ಹಾಗೆ ಆಕೆ ಸಂಪೂರ್ಣ ವಿಳಾಸವನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ Go! ಎನ್ನುವ ಹಸಿರು ನಿಶಾನೆಯನ್ನು ಮುಖದ ಮೇಲೆ ಬಿಂಬಿಸಿ ನಗುತ್ತಾಳಂತೆ!

ಈ ದಾರೇಶ್ವರಿಯ ಮೋಡಿಗೆ ನಾನಂತೂ ಒಂದೇ ದಿನದಲ್ಲಿ ಬಿದ್ದು ಹೋಗಿದ್ದೇನೆ, ಇದುವರೆಗೆ ಮಾಡಿರದಿದ್ದರೆ ನೀವೂ ಈ ಈಶ್ವರಿ, ಇಂಗಿಣಿಯರ ಸಹವಾಸ ಮಾಡಿ ನೋಡಿ ನಾನು ಹೇಳುತ್ತಿರುವುದು ಉತ್ಪ್ರೇಕ್ಷೆಯಂತೂ ಅಲ್ಲವೇ ಅಲ್ಲ!

Friday, November 23, 2007

ನಮ್ಮಲ್ಲಿನ ಬದಲಾವಣೆಗಳು

ಹೇ, ಇನ್ನೂ ನಮ್ಮ ಕನ್ನಡದ ಬಗ್ಗೆ ಬರೆಯೋದಕ್ಕೇನೂ ತಡವಾಗಿಲ್ಲ, ಈ ತಿಂಗಳ ಒಳಗೆ ಯಾವಾಗ ಬರೆದರೂ ಅದು ಕನ್ನಡಮ್ಮನ ಸೇವೆಗೆ, ಪದತಲಕ್ಕೆ ಸೇರುವ ಮಾತೇ! ಈ ತಿಂಗಳು ಆರಂಭವಾಗುವ ಮುನ್ನ ರಾಜ್ಯೋತ್ಸವ ಆಚರಣೆಗಳೇನೇ ಇದ್ದರೂ ನವೆಂಬರ್ ಒಂದಕ್ಕೆ ಸೀಮಿತವಾಗಿರಲಿ ಎಂದು ಆಶಿಸಿದ್ದೇ ಬಂತು, ಕನ್ನಡಿಗರ ಗುಂಪು, ಸಂಘಗಳು, ಸಂಘಟನೆಗಳು ಮಂತ್ರಿ ಮಾಗಧರ ದಂಡನ್ನು ತಮ್ಮ ಸಭೆ ಸಮಾರಂಭಗಳಿಗೆ ಅಮಂತ್ರಿಸಿಕೊಂಡು ಕುತೂಹಲದಿಂದ ಕಾದಿದ್ದೇ ಬಂತು, ಈ ಅಕ್ಟೋಬರ್ ಕೊನೆಯಿಂದ ನವೆಂಬರ್ ಕೊನೆಯವರೆಗೆ ತೆರೆಯ ಮರೆಯಲ್ಲಿ, ರಾಜ್ಯ ದೇಶದ ರಾಜಕೀಯದ ಲೆಕ್ಕದಲ್ಲಿ ಬೇಕಾದಷ್ಟು ಘಟಿಸಿದೆ, ಹಾಗಿದ್ದರಿಂದಲೇ ಅನೇಕ ಶಿಲಾನ್ಯಾಸಗಳು ಸಮಾರಂಭಗಳು ಮುಖ್ಯ ಅತಿಥಿಗಳಿಲ್ಲದೇ ತೊಳಲಾಡುತ್ತಿವೆ ಎನ್ನಿಸಿದ್ದು ನನ್ನ ಅನಿಸಿಕೆ ಅಥವಾ ಭ್ರಮೆ ಇದ್ದಿರಬಹುದು.

ಸುಮಾರು ಎರಡೂವರೆ ವರ್ಷದಿಂದ ಮಾತನಾಡಿಸದ ಕನ್ನಡಿಗ ಸ್ನೇಹಿತನೊಬ್ಬ ನಿನ್ನೆ ಬೆಳಿಗ್ಗೆ ಫೋನ್ ಮಾಡಿದಾಗಲೇ ನನಗೆ ಬಹಳಷ್ಟು ಆಶ್ಚರ್ಯ ಕಾದಿತ್ತು. ಯಾವುದೋ ಕೆಲಸದ ನಡುವೆಯೇ ಗೋಣಿಗೆ ಫೋನಾಯಿಸಿಕೊಂಡು ಮತ್ತೆ ಹಳೆಯ ನೆನಪುಗಳನ್ನು ಕೆದಕಿಕೊಂಡ ನಮ್ಮಿಬ್ಬರ ಮನಸ್ಸಿನಲ್ಲಿ ಬಹಳ ಸಂತಸದಾಯಕ ವಾತಾವರಣ ಮೂಡಿತ್ತು. ನಮ್ಮಿಬ್ಬರ ನಡುವಿನ ಪರಿಚಯ ಅಥವಾ ಸ್ನೇಹ ಎನ್ನುವುದು ಸುಮಾರು ಹನ್ನೆರಡು ವರ್ಷಗಳ ಹಳೆಯದು, ಅಥವಾ ಅದಕ್ಕೂ ಹಿಂದಿನದ್ದಿರಬಹುದು. ಆದರೆ ಈ ಸ್ನೇಹಿತ ನನ್ನೊಡನೆ ಮಾತನಾಡಿದ ರೀತಿ ನನ್ನಲ್ಲಿ ಬಹಳಷ್ಟು ಆಶ್ಚರ್ಯವನ್ನು ಹುಟ್ಟಿಸಿತ್ತು. ಆ ಸ್ನೇಹದ ಸಲಿಗೆ ಅಥವಾ ಸದರದಿಂದಲೇ ನನಗೆ ಅನ್ನಿಸಿದ್ದನ್ನೂ ನಿಜವಾಗಿಯೂ ಹೇಳಿಬಿಟ್ಟೆ, ಅದೇ ನನ್ನನ್ನು ಈ ಲೇಖನ ಬರೆಯುವ ಕಷ್ಟಕ್ಕೆ ಸಿಕ್ಕು ಹಾಕಿಸಿದ್ದು.

ಅವನೊಡನೆ ನಡೆಸಿದ ಹದಿನೈದು ನಿಮಿಷದ ಮಾತುಕಥೆ ನನ್ನಲ್ಲಿ ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ: ನಮ್ಮಲ್ಲಿ ಬದಲಾವಣೆಗಳು ಸಹಜವೋ ಅಥವಾ ಬದಲಾವಣೆಗಳನ್ನು ನಾವೇ ನಮ್ಮ ಮೇಲೆ ಹೇರಿಕೊಳ್ಳುತ್ತೇವೋ, ನಾವು ಯಾವ ಯಾವ ರೀತಿ/ನಿಟ್ಟಿನಲ್ಲಿ ಬದಲಾಗಬೇಕು, ಬದಲಾದರೆ ಒಳ್ಳೆಯದು, ಇತ್ಯಾದಿ.

ನನ್ನ ಸ್ನೇಹಿತನ ಧ್ವನಿಯಲ್ಲಿ ಅಗಾಧವಾದ ಬದಲಾವಣೆಯಿದ್ದುದು ನನಗೆ ಮೊದಲ ಕ್ಷಣದಿಂದಲೇ ಗೊತ್ತಾಯಿತು. ಆತನ ಜೊತೆ ಎರಡು ವರ್ಷಗಳ ಹಿಂದೆ ಮಾತನಾಡುತ್ತಿರುವಾಗ ನಮ್ಮೂರಿನವನೇ ಅನ್ನಿಸಿದ ಮನುಷ್ಯ ಕೇವಲ ಎರಡೇ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗೊಂಡಿದ್ದ. ಅವನು ಉಚ್ಚರಿಸಿದ ಪ್ರತಿಯೊಂದು ಇಂಗ್ಲೀಷ್ ಪದಗಳಲ್ಲಿ ಸ್ಥಳೀಯ (ಅಮೇರಿಕನ್) ಪ್ರಭಾವವಿತ್ತು. ನಾನೂ ಪ್ರತಿದಿನವೂ ಸ್ಥಳೀಯರೊಡನೆ ಮಾತನಾಡುತ್ತೇನಾದರೂ ನನ್ನ ಭಾಷೆಯಲ್ಲಿಲ್ಲದ ಉಚ್ಚಾರ, ಸ್ವರಗಳೆಲ್ಲವೂ ನನ್ನ ಸ್ನೇಹಿತನಿಗೆ ಮೈಗೂಡಿತ್ತು. ನನ್ನ ಅನಿಸಿಕೆಯ ಪ್ರಕಾರ ಹೊರಗಿನಿಂದ ಭಾರತೀಯರು ಕಷ್ಟಪಟ್ಟು ಸ್ಥಳೀಯ ಅಮೇರಿಕನ್ ಆಕ್ಸೆಂಟಿನಲ್ಲಿ ಭಾಷೆಯನ್ನು ಬಳಸುತ್ತಾರೇನೋ ಎಂದು ಒಮ್ಮೆ ಅನಿಸಿದರೂ ಅವನು ತರ್ಕಬದ್ಧವಾದ ಮಾತುಗಳು ಕೃತಕವೆಂದು ಎಲ್ಲಿಯೂ ಅನ್ನಿಸಿಲಿಲ್ಲ.

’ನೀನು ಇಲ್ಲಿ ಯೂನಿವರ್ಸಿಟಿಯಲ್ಲಿ ಪಾಠ-ಪ್ರವಚನಗಳನ್ನೇನಾದರೂ ಮಾಡುತ್ತೀಯೇನು?’ ಎಂದಿದ್ದಕ್ಕೆ ’ಇಲ್ಲ, ಬರೀ ರಿಸರ್ಚ್ ಮಾತ್ರ’ ಎನ್ನುವ ಉತ್ತರ ಬಂತು. ಸ್ಥಳೀಯರ ಒಡನಾಟ ಅಷ್ಟೊಂದಿಲ್ಲದೇ ಒಂದು ಕಾಲದಲ್ಲಿ ನನ್ನೊಡನೆ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ ಮನುಷ್ಯ ಆತನೇ ಮಾಡಿದ ಟೆಲಿಫೋನ್ ಕರೆಯ ಮೂಲಕವಾದರೂ ಮಾಮೂಲಿಯಾಗಿ ಹಾಗೂ ಸಹಜವಾಗಿ ಕನ್ನಡದಲ್ಲೇ ಮಾತನಾಡುತ್ತಾನೆ ಎಂದುಕೊಂಡರೆ, ಬರೀ ಸ್ಥಳೀಯ ಅಕ್ಸೆಂಟಿನಲ್ಲೇ ಇಂಗ್ಲೀಷು ತುಂಬಿರುವ ಮಾತುಗಳನ್ನು ಆಡುತ್ತಾನಲ್ಲಾ ಅದನ್ನು ಹೇಗಾದರೂ ಸ್ವೀಕರಿಸುವುದು?

ನಾನು ತಡೆಯದೇ ಹೇಳಿಯೇ ಬಿಟ್ಟೆ, ’ಅಲ್ಲಯ್ಯಾ, ನೀನು ನೀಡಿದ ಎರಡು ಶಾಕ್‌ಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ, ಸ್ವಲ್ಪ ತಡಿ.’
'What shock?'
'ಅದೇ, ಒಂದು ನೀನು ಇಷ್ಟೊಂದು ವರ್ಷ ಬಿಟ್ಟು ಫೋನ್ ಮಾಡುತ್ತೀದ್ದೀಯಲ್ಲಾ, ಹೇಗಿದ್ದೀಯಾ ಏನು ಕಥೆ? ಮತ್ತೊಂದು ನಿನ್ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ, ನಿನ್ನೂರಿನವರ ಹತ್ತಿರ ಹೀಗೇ ಮಾತನಾಡಿದೆಯಾದರೆ ಅವರು ಶಾಕ್‌ನಿಂದ ಚೇತರಿಸಿಕೊಳ್ಳುತ್ತಾರೆ ಎಂಬ ಗ್ಯಾರಂಟಿಯೇನೂ ಇಲ್ಲ’.
’ಏನ್ ಬದಲಾವಣೆ, ಗೊತ್ತಾಗಲಿಲ್ಲ...’
’ನಿನ್ನ ಇಂಗ್ಲೀಷ್ ಸ್ವರದಲ್ಲಿ ಉಚ್ಚಾರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ, ಯಾವಾಗಿನಿಂದ ಹೀಗೆ?’
’ಬದಲಾವಣೆಯಾ, ನನಗೇನೂ ಬದಲಾದ ಹಾಗೆ ಅನ್ನಿಸೋದಿಲ್ಲ!’
’ಬರೀ ಶಾಕ್‌ಗಳನ್ನೇ ಕೊಡ್ತಾ ಇರ್ತೀಯೋ, ಅಥವಾ ನಿನ್ನ ಬಗ್ಗೆ ಮತ್ತಿನ್ನೊಂದಿಷ್ಟೇನಾದರೂ ಹೇಳ್ತೀಯೋ?’

ಹೀಗೆ ನಮ್ಮ ಸಂಭಾಷಣೆ ಬೆಳೆಯುತ್ತಾ ಹೋಯ್ತು, ಆದರೆ ನನ್ನ ಸ್ನೇಹಿತನಲ್ಲಾದ ಬದಲಾವಣೆಗಳು ನನಗೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನಮ್ಮ ಮಾತಿನ ಮಧ್ಯೆ ನನ್ನ ಸ್ನೇಹಿತ ಮತ್ತೆ ಮೊದಲಿನಂತಾಗಿ ಹೋಗಿದ್ದ ಎನ್ನುವ ಬದಲಾವಣೆಗಳು ನನಗೆ ಕಾಣಿಸತೊಡಗಿದವೋ ಅಥವಾ ನಾನು ಹಾಗೆ (ನನ್ನ ಸ್ವಾರ್ಥಕ್ಕೆ) ಊಹಿಸಿಕೊಳ್ಳತೊಡಗಿದೆನೋ ಗೊತ್ತಿಲ್ಲ. ಬರೀ ನಮ್ಮ ಮಾತನ್ನು ಬದಲಾಯಿಸಿಕೊಂಡರೆ ಸಾಕೆ, ಆ ರೀತಿಯ ಬದಲಾವಣೆಗಳು ಅನಿವಾರ್ಯವೇ ಎಂದು ನನ್ನನ್ನು ಹಲವಾರು ಬಾರಿ ಕೇಳಿಕೊಂಡೆ. ಕೇವಲ ಆರೇ ಆರು ವರ್ಷ ಅಮೇರಿಕದಲ್ಲಿ ಕಳೆದ ಸ್ನೇಹಿತನ ಹಾವಭಾವ ಮಾತುಕಥೆಗಳಲ್ಲಿ ಬದಲಾವಣೆ ಏಕಾಯಿತು? ಅದರ ಅಗತ್ಯವೇನು, ಹೇಗೆ? ಎಂದೆಲ್ಲಾ ಗೊಂದಲಗಳು ಗೋಜಲುಗಳು ಹುಟ್ಟಿಕೊಂಡು ತಳುಕು ಹಾಕಿಕೊಳ್ಳತೊಡಗಿದವು.

ನಾನೂ ಬದಲಾಗಿದ್ದೇನೆ, ದಶಕದ ಮೇಲಿನ ಅನಿವಾಸಿತನ ನನ್ನನ್ನು ಬದಲಾಯಿಸಿದೆ ಇಲ್ಲವೆಂದೇನಿಲ್ಲ - ನಾನು ಭಾರತದಲ್ಲಿ ಎಷ್ಟೋ ಇಂಗ್ಲೀಷ್ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದವನು ಇಲ್ಲಿಗೆ ಬಂದು ತಿದ್ದಿಕೊಂಡಿದ್ದೇನೆ. ಆದರೆ ನನ್ನ ಕನ್ನಡದ ಬಳಕೆಯಲ್ಲಿ, ಅಥವಾ ಅದರ ಮಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಇವತ್ತಿಗೂ ಒಬ್ಬ ಸಾಮಾನ್ಯ ಮನುಷ್ಯನೊದನೆ ನಾನು ಸಹಜವಾಗಿ ಸಂವಾದವನ್ನು ಬೆಳೆಸಬಲ್ಲೆ ಎಂಬ ಹೆಗ್ಗಳಿಕೆ ನನ್ನದು. ಮಾನಸಿಕವಾಗಿ ’ಇವರು ಅಮೇರಿಕದಲ್ಲಿರುವವರು...’ ಎಂದು ಪೂರ್ವಭಾವಿ ಯೋಚನೆಯಲ್ಲಿ ಮಾತನಾಡಿಸುವವರನ್ನು ಹೊರತುಪಡಿಸಿ ಉಳಿದವರಿಗೆ ನನ್ನ ಅನಿವಾಸಿತನದ ಸೂಕ್ಷ್ಮವೂ ಗೊತ್ತಾಗದಿರುವಂತೆ ಬದುಕುವುದೂ ಸಾಧ್ಯವಿದೆ ಎಂಬುದು ಗೊತ್ತಿದೆ. ಜೊತೆಗೆ ನನ್ನ ಹಾಗೆಯೇ ಎಲ್ಲರೂ ಇರಲೇ ಬೇಕು ಎಂದೇನೂ ಇಲ್ಲ ಎನ್ನು ಸಾಮಾನ್ಯ ತಿಳುವಳಿಕೆಯೂ ಇದೆ. ಹೀಗಿದ್ದ್ಯಾಗ್ಯೂ, ನನ್ನ ಸ್ನೇಹಿತನಲ್ಲಿನ ಬದಲಾವಣೆಗಳು ನನ್ನಲ್ಲಿ ನಿರಾಶೆಯನ್ನುಂಟು ಮಾಡಿದವು ಎಂದರೆ ತಪ್ಪೇನೂ ಇಲ್ಲ. ಆತನಿಗಾದ ಬದಲಾವಣೆಗಳು ಸರಿ ತಪ್ಪು ಎನ್ನುವುದಕ್ಕಿಂತಲೂ ನನಗೇ ಗೊತ್ತಾಗುವಷ್ಟರ ಮಟ್ಟಿಗಿನ ಆತನಲ್ಲಿನ ಬದಲಾವಣೆಗಳು ಅಗತ್ಯವೇ ಎಂದು ಯೋಚಿಸತೊಡಗಿದೆ. ಇದೇ ದೇಶದಲ್ಲಿ ನೂರಾರು ವರ್ಷಗಳಿಂದ ತಲತಲಾಂತರದಿಂದ ನೆಲೆಸಿ ಬೆಳೆಯುತ್ತಿರುವ ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟುಗಳಲ್ಲಾಗಲೀ ತಮ್ಮ ವಾಕ್ಯ ರಚನೆಯ ಶೈಲಿಯಲ್ಲಾಗಲೀ ಬದಲಾವಣೆ ಮಾಡಿಕೊಳ್ಳದಿದ್ದರೂ ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲ ಮಾನ್ಯತೆಗಳನ್ನೂ ಪಡೆದುಕೊಂಡಿರುವಾಗ ನಮಗೆ ಆಕ್ಸೆಂಟು ಬದಲಾವಣೆ ಅಗತ್ಯವಿದೆಯೇ? ಬರೀ ಅಕ್ಸೆಂಟುಗಳನ್ನು ಬದಲಾಯಿಸಿಕೊಂಡ ಮಾತ್ರಕ್ಕೆ ಏನು ಸಾಧಿಸಿಕೊಂಡಂತಾಯಿತು, ಹೀಗೆ ಆರಂಭಗೊಂಡ ಬದಲಾವಣೆಯ ಆದಿ ಮತ್ತು ಅಂತ್ಯ ಎಲ್ಲಿ ಎನ್ನುವುದು ಇನ್ನೂ ಪ್ರಶ್ನೆಗಳಾಗೇ ತಲೆ ತಿನ್ನುತ್ತಲೇ ಇವೆ.

ನೀವು ಬದಲಾಗಿದ್ದೀರೇನು? ಏಕೆ ಬದಲಾಗಿದ್ದೀರಿ, ಇಲ್ಲವಾದರೆ ಏಕೆ ಬದಲಾಗಿಲ್ಲ?