Wednesday, April 11, 2007

ದಗಲ್ ಬಾಜಿಗಳು...

ಇದು ಅಪರೂಪಕ್ಕೊಮ್ಮೆ ಆಗೋ ಘಟನೆ ಅಲ್ಲ, ಅಥವಾ ಬೆಂಗಳೂರಿಗೆ ಬರೀ ಸೀಮಿತವಾದ ವಸ್ತುವೂ ಅಲ್ಲ...ಇದೇ ರೀತಿಯ ಘಟನೆಗಳನ್ನು ನಾನು ಬಾಂಬೆ, ಮದ್ರಾಸುಗಳಲ್ಲಿಯೂ ನನ್ನ ಕಣ್ಣಾರೆಯೇ ನೋಡಿದ್ದೇನೆ. ನಮ್ಮ ಅಭಿವೃದ್ಧಿ, ಬೆಳವಣಿಗೆ ನಮ್ಮನ್ನು ಈ ರೀತಿಯ ಕುತಂತ್ರಗಳಿಗೆ ಈಡು ಮಾಡಿಬಿಟ್ಟಿವೆಯೇನೋ ಅನ್ನುವಷ್ಟರ ಮಟ್ಟಿಗೆ ಆಲೋಚಿಸುವಂತಾಗಿದೆ.

ನಿಲ್ದಾಣದ್ಲಲಿ ದಗಲ್ ಬಾಜಿಗಳು...
ಮೆಜೆಸ್ಟಿಕ್ ಸುತ್ತಮುತ್ತ ಸಾಕಷ್ಟು ಬೀದಿ ವ್ಯಾಪಾರಿಗಳನ್ನು ನೀವೂ ನೋಡಿರುತ್ತೀರಿ. ಆದರೆ, ಕೆಲವು ವ್ಯಾಪಾರಿಗಳ್ದಿದಾರೆ. `ರೇಟೆಸ್ಟು?' ಅಂತ ಕೇಳಿದರೆ ಸಾಕು: ರೇಟೂ ಹೇಳುತ್ತಾರೆ; ಕೊಳ್ಳದ್ದಿದರೆ ಏಟೂ ಕೊಡುತ್ತಾರೆ. ಇವರೊಂದಿಗೆ ಪೊಲೀಸರೂ ಸೇರಿಸುತ್ತಾರೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ, `ರೇಟು ಕೇಳಿ ಏಟು ತಿಂದ' ಪ್ರಕರಣ ...

ನಾವಿರೋ ಜರ್ಸಿ ಸಿಟಿಯಲ್ಲಿ ಸರ್ವೇ ಸಾಮಾನ್ಯವಾಗಿ ನೋಡಲು ಸಿಗುವಂತಹ ಘಟನೆಯೊಂದು ನೆನಪಾಯಿತು - ಸಾಮಾನ್ಯವಾಗಿ ಹಿಸ್ಪ್ಯಾನಿಕ್ ಅಥವಾ ಕಪ್ಪು ಹುಡುಗ/ಹುಡುಗಿಯರು, ರಸ್ತೆ ಮೇಲೆ ಬೇರೆಯವರು ತಮಗೆ ಅಥವಾ ತಮ್ಮ ಕಾರಿಗೆ ಜಾಗ ಬಿಡಲಿಲ್ಲ ಎನ್ನೋ ಕಾರಣಕ್ಕೆ ಮೈಮೇಲೆ ಬಿದ್ದು ಜಗಳ ಮಾಡುವ ಅಥವಾ ಯದ್ವಾತದ್ವಾ ಬೈದು ತಮ್ಮ ಕ್ರೋಧವನ್ನು ಕಾರುವ ಪರಿಸ್ಥಿತಿ ನಮ್ಮಲ್ಲಿ ಯಾವಾಗಲು ಸರ್ವೇ ಸಾಮಾನ್ಯ. ಇಂತಹ ಘಟನೆಗಳಿಗೆ ಯಾರೂ ಗಮನ ಕೊಡೋ ಹಾಗೆ ಕಾಣೋದಿಲ್ಲ, ಸಾಮಾನ್ಯ ನ್ಯಾಯ ಅನ್ನೋದು ಇಲ್ಲಿ ಪ್ರಶ್ನೆಗೂ ನಿಲುಕದಷ್ಟು ದೂರದಲ್ಲಿರುತ್ತೆ, ಇನ್ನು ಉತ್ತರದ ಕಥೆ ಹಾಗಿರಲಿ. ಎಲ್ಲರೂ ಜಾಣಕುರುಡು-ಕಿವುಡುಗಳನ್ನು ಪ್ರದರ್ಶಿಸುವ ಸೋಗಿಗೆ ಮೊರೆ ಹೋಗುತ್ತಾರೆ.

ಈ ಮೇಲಿನ ಘಟನೆ ಬೆಂಗಳೂರಿನಲ್ಲಿ ನನ್ನ ಮುಂದೆ ನಡೆದಿದ್ದರೆ ನಾನೇನು ಮಾಡುತ್ತಿದ್ದೆ, ಪ್ರತಿಭಟನೆಯ ಹಂತ ಎಲ್ಲಿಯವರೆಗೆ ಹೋಗುತ್ತಿತ್ತು? ಇಂತಹದ್ದನ್ನು ನೋಡಿಯೂ ನೋಡದಿರುವಂತಹ ನಗರದ ಮನಸ್ಥಿತಿ ಸರಿಯೋ, ಇದರಲ್ಲಿ ಸಾಮಾಜಿಕ ನ್ಯಾಯವನ್ನು ಆಗ್ರಹಿಸುವ ಮನೋಸ್ಥಿತಿ ದುರ್ಬಲವಾದದ್ದೇ? ದಿನೇ-ದಿನೇ ಮೋಸಮಾಡುವ ಮಾರ್ಗಗಳನ್ನು ಅವಿಷ್ಕರಿಸುವ ವ್ಯಾಪಾರಿಗಳನ್ನು, ಕಾನೂನು ರಕ್ಷಕರನ್ನು ಹದ್ದುಬಸ್ತಿನಲ್ಲಿಡುವವರಾರು? ಇತ್ಯಾದಿ ಪ್ರಶ್ನೆಗಳು ಎಷ್ಟು ಬೇಗ ಮನದಲ್ಲಿ ಮೂಡುತ್ತವೆಯೋ ಅಷ್ಟೇ ಬೇಗ ಮರೆಯಾಗುತ್ತವೆ.

ಇವೆಲ್ಲ ಕಲಿಯುಗದ ಕೊಡುಗೆ - ಎಂದುಕೊಂಡು ಮತ್ತೊಂದು ಯುಗ ಬರುವವರೆಗೆ ಕಾಯುವುದು ಒಂದು ಆಲ್ಟರ್‌ನೇಟಿವ್!

ಒಂದು ನಾಗರಿಕ ಪಡೆಯನ್ನು ಕಟ್ಟಿ ಕಾನೂನನ್ನು ಕೈಗೆತ್ತಿಕೊಳ್ಳದೇ ಇಂತಹ ಕುತಂತ್ರಗಳಿಗೆ ಉತ್ತರವನ್ನು ಹೇಳುವ ಅವಕಾಶವೊಂದಿದ್ದರೆ...ಎಷ್ಟೋ ಸಾರಿ ಹಲುಬಿ ಸುಮ್ಮನಾಗಿರುವುದನ್ನು ಬಿಟ್ಟರೆ, ಅಥವಾ ಈ ರೀತಿ ಬರೆಯೋದನ್ನು ಬಿಟ್ಟರೆ ನನ್ನ ಕೈಯಲ್ಲಿ ಬೇರೇನನ್ನು ಮಾಡಲು ಸಾಧ್ಯವಿಲ್ಲದ ಅಸಹಾಯಕತೆ ಅಷ್ಟೆ.