Thursday, March 16, 2006

ನಮ್ಮ ಕನ್ನಡ

ಕನ್ನಡಿಗರ ಭಾಷಾ ವ್ಯಾಮೋಹ, ಅದರ ಪರಿಣಾಮಗಳನ್ನು ಕುರಿತು ಈಗಾಗಲೇ ಬಹಳಷ್ಟು ಪ್ರಕಟವಾಗಿದೆ. ದುರಭಿಮಾನವಂತೂ ನಮ್ಮಲ್ಲಿ ಮೂಡುವ ಮಾತೇ ಇಲ್ಲ, ಅದರೂ ಕೆಲವೊಮ್ಮೆ ಕನ್ನಡಿಗರಲ್ಲಿ ದುರಭಿಮಾನ ಮೂಡಿದ್ದರೆ ಎಂದು ಕುತೂಹಲ ಹುಟ್ಟುತ್ತದೆ. ನಮ್ಮ ಮಾತಿನ ಮಧ್ಯೆ ಸಾಕಷ್ಟು ಕನ್ನಡ ಬಳಸಬೇಕು - ಇದರಿಂದ ಏನಾಗುತ್ತೋ ಬಿಡುತ್ತೋ, ಕ್ರಮೇಣ ಒಂದು ಸಹಜ ವಾತಾವರಣ ಬೆಳೆಯುತ್ತೆ, ಸಹಜತೆ ಇದ್ದಲ್ಲಿ ಸೌಹಾರ್ಧತೆ ಇರುತ್ತೆ. ಕನ್ನಡವನ್ನು ಉಳಿಸಿ-ಬೆಳೆಸಿ ಅನ್ನೋ ಮಾತನ್ನು ನಿಮಗೆ ಹೇಳೋಕೆ ನಾನ್ಯಾರು? ಅದು ನಿಮ್ಮ-ನಿಮ್ಮ ಆಯ್ಕೆ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ನಾನು ಇಂಗ್ಲೀಷಿನಲ್ಲಿ ಮಾತನಾಡ್ತಾ ಇರುವಾಗ ನಿಮಗೆ ಅರ್ಥವಾಗದ ಕಷ್ಟದ ಪದಗಳನ್ನು ಬಳಸಿದ ಮಾತ್ರಕ್ಕೆ ನಾನು ದಿಢೀರನೆ ದೊಡ್ಡ ಮನುಷ್ಯನಾಗುತ್ತೇನೆ, ಅದೇ ಕನ್ನಡದ ಕಷ್ಟದ ಪದಗಳನ್ನು ಬಳಸಿದ ಮಾತ್ರಕ್ಕೆ ಹಳ್ಳಿಯವನಾಗೋ, ಕೀಳಾಗೋ ಅದು ಹೇಗೆ ಪರಿವರ್ತನೆಗೊಳ್ಳುತ್ತೇನೋ ನನಗಂತೂ ತಿಳಿಯದು. ಇಲ್ಲವೆಂದಾದರೆ ನಾನು ಮದ್ರಾಸಿನಲ್ಲಿ ಕೆಲಸ ಮಾಡುವಾಗ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ "ಕನ್ನಡಿಗ"ರಿಗೆ - ಅಂತಃಕರಣ, ಅಶ್ಲೀಲ, ಲೀಲಾಜಾಲ ಮುಂತಾದ ಕನ್ನಡ ಪದಗಳನ್ನು ಬಳಸುವ ನಾನು ಕಾಡು ಮನುಷ್ಯನಾಗಿ ಕಂಡಿರಲಿಕ್ಕೆ ಹೇಗೆ ಸಾಧ್ಯ?


ತಮ್ಮ ನಾಡು, ನುಡಿಯ ಬೆಲೆ ಅರಿಯದವರು, ಅದನ್ನು ಗೌರವಿಸಿದವರು ಎಲ್ಲೇ ಹೋದರೂ ಪ್ರಾಯೋಗಿಕವಾಗಿ ಬದುಕಿ ತಮ್ಮ-ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುತ್ತಾರೆಯೇ ವಿನಾ ಬೇರೇನನ್ನು ತಾನೇ ಮಾಡಿಯಾರು?


ನನಗಂತೂ ಕನ್ನಡ ದಿನ ನಿತ್ಯದ ಅಗತ್ಯ, ನನಗೆ ಅದರ ಬಗ್ಗೆ ಅಭಿಮಾನವಿಲ್ಲ, ಏಕೆಂದರೆ ಅದು ನನ್ನಿಂದ ಬೇರ್ಪಡದಷ್ಟರ ಮಟ್ಟಿಗೆ ನನ್ನೊಳಗೊಂದಾಗಿದೆ, ಇಂಥವರು ನಮ್ಮ ತಾಯಿ ಎಂದು ಹೇಗೆ ಹೇಳುತ್ತೇವೆಯೋ ಹಾಗೆ.

No comments: