Saturday, May 16, 2020

ಹಾಲು-ನೀರಿನ ಅನ್ಯೋನ್ಯತೆ!

"ಕಾಯದಿದ್ರೆ ಕೆನೆ ಕಟ್ಟೋದಿಲ್ಲ!" ಎಂದು ಎನಿಸಿದ್ದು ಇವತ್ತು ಚಹಾ ಮಾಡೋದಕ್ಕೋಸ್ಕರ ಹಾಲು ಕಾಯಿಸುತ್ತಿರುವಾಗ.  ನಾವು ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟು ಸಲ ನೀರು ಅಥವಾ ಹಾಲನ್ನು ಬಿಸಿ ಮಾಡಿರೋದಿಲ್ಲ?  ಕೆಲವೊಮ್ಮೆ ಈ ಗೊತ್ತಿರುವ ವಿಷಯಗಳನ್ನೂ ಗಹನವಾಗಿ ನೋಡಿದಾಗ, ಅವುಗಳಲ್ಲಿನ ಜೀವನ ಸೂಕ್ಷ್ಮ ನಮಗೆ ಗೊತ್ತಾಗುತ್ತದೆ.  ಈ ವಿಚಾರದಲ್ಲಿ ನಿಸರ್ಗ ನಮಗೆಲ್ಲರಿಗೂ ಕಲಿಸೋ ಪಾಠಗಳು ಜೀವನ ಪರ್ಯಂತ ಅನೇಕಾನೇಕ ಇದ್ದೇ ಇರುತ್ತವೆ, ನಾವು ನೋಡಬೇಕು, ಗಮನಿಸಬೇಕು ಅಷ್ಟೇ.

ನಮ್ಮ ಕಡೆ ನೀರು ಕುದ್ದು (ಕುದಿದು) ಮರಳುತ್ತದೆ ಎನ್ನುತ್ತಾರೆ... ಅದನ್ನು ಇಂಗ್ಲೀಷಿನಲ್ಲಿ rolling boil ಅಂತಲೂ ಹೇಳ್ತಾರೆ.  ಕಾಯುವ, ಕುದಿಯುವ ಪ್ರಕ್ರಿಯೆ ಬಹಳ ಸುಲಭವಾದದ್ದು.  ನಾವು ಒಲೆ/ಸ್ಟೋವ್ ಮೇಲೆ ನೀರನ್ನು ಕಾಯಲು ಇಟ್ಟಾಗ ಅದರ ತಳ ಬೆಂಕಿಯಿಂದ ಬಿಸಿಯಾಗಿ ತಳಕ್ಕೆ ಹತ್ತಿರವಿರುವ ನೀರಿನ ಅಣುಗಳು ಬಿಸಿಯನ್ನು ತಗುಲಿಕೊಂಡು ಮೇಲೆ ಬರುತ್ತವೆ.  ಅವುಗಳು ಮೇಲೆ ಬಂದಂತೆಲ್ಲ, ಮೇಲಿನ ತಂಪಾಗಿರುವ (relatively) ಅಣುಗಳು ಕೆಳಗೆ ಹೋಗುತ್ತವೆ.  ಹೀಗೆ ನೀರು ಕುದಿಯುವ ಮಟ್ಟವನ್ನು ತಲುಪಿದ ಹಾಗೆ, ಈ ನೀರಿನ ಅಣುಗಳು, ಕೆಳಗೆ ಹೋದವು, ಮತ್ತೆ "ಮರಳು"ವ ಹೊತ್ತಿಗೆ ಅವುಗಳ ವೇಗ ಹೆಚ್ಚಾಗುತ್ತದೆ... ನಂತರ ನೀರು ಕೊತ ಕೊತ ಕುದಿಯತೊಡಗುತ್ತದೆ.

ಆದರೆ, ಹಾಲನ್ನು ಬಿಸಿ ಮಾಡಿದಾಗ ಅದೇ ರೀತಿ ಹಾಲಿನ ಕಣಗಳು ಮೇಲೆ ಕೆಳಗೆ ಹೋಗುತ್ತಿದ್ದರೂ ಸಹ, ಹಾಲು ಬಿಸಿ ಆದಂತೆಲ್ಲ, ಅದರ ಮೇಲ್ಮೈ ಮೇಲೆ ಒಂದು ತೆಳುವಾದ ಕೆನೆಯ ಪರದೆ ಹುಟ್ಟಲು ಆರಂಭವಾಗುತ್ತದೆ.  ಹಾಲು ನೀರಿಗಿಂತ ಸ್ವಲ್ಪ "ದಪ್ಪ"ನಾದ ದ್ರವ ಪದಾರ್ಥವಾದರೂ ಕೂಡ, ಹಾಲಿನ boiling point ನೀರಿಗಿಂತ ಹೆಚ್ಚೇನೂ ಭಿನ್ನವಾಗಿರೋದಿಲ್ಲ, ಆದರೆ ಈ ಎರಡೂ ದ್ರವ ಪದಾರ್ಥಗಳು ಕುದಿಯುವ ಹೊರಮುಖ ಬೇರೆ ಬೇರೆ ಅಷ್ಟೇ.

ಹಾಲು ಕುದಿಯುತ್ತಾ ಹೋದಂತೆಲ್ಲ ಅದರ ಮೇಲ್ಮೈಯಲ್ಲಿರುವ ಕೆನೆಯ ದಪ್ಪ ಹೆಚ್ಚಾಗುತ್ತಾ ಹೋಗುತ್ತದೆ.  ಪಾತ್ರೆಯ ಬುಡದಲ್ಲಿ ಬಿಸಿ ಎಲ್ಲ ರೀತಿಯಲ್ಲೂ ಒಂದೇ ಸಮನಾಗಿ ಇದೆಯೆಂದು ಭಾವಿಸಿದರೆ, ಹಾಲು ಕುದಿಯುವ ಮಟ್ಟವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಕಟ್ಟಿರುವ ಕೆನೆಯ ಪರದೆ ಒಡೆದು ಒಂದೇ ಸಮನೆ ಮೇಲೆ ಉಕ್ಕಲು ಆರಂಭಿಸುತ್ತದೆ.  ಆದರೆ ನೀರು ಹೀಗು ಕುದ್ದು ಉಕ್ಕೋದಿಲ್ಲ.


ಇದನ್ನು ಇಬ್ಬರು ಗೆಳೆಯರ ಅನಾಲಜಿಯನ್ನು ಉಪಯೋಗಿಸಿಯೂ ವಿವರಿಸಬಹುದು!  ಹಾಲು ಮತ್ತು ನೀರು ಇಬ್ಬರೂ ಜೀವದ ಗೆಳೆಯರು. ಹಾಲಿನಲ್ಲಿ ಸಾಮಾನ್ಯವಾಗಿ ನೀರನ್ನು ಮಿಶ್ರ ಮಾಡಿರುತ್ತಾರೆ, ಅಥವಾ ನೀರಿನ ಪ್ರಮಾಣ ಇದ್ದೇ ಇರುತ್ತದೆ. ಹಾಲು ಕುದಿಯುತ್ತಾ ಬಂದ ಹಾಗೆ ನಿಧಾನವಾಗಿ ಹಬೆಯಾಡತೊಡಗುತ್ತದೆ... ಅಂದರೆ, ಅದರಲ್ಲಿನ ನೀರು ಆವಿಯಾಗಲು ತೊಡಗುತ್ತದೆ... ಅಂದರೆ, ಹಾಲಿನ ಸ್ನೇಹಿತ ನಿಧಾನವಾಗಿ ಹೊರಗಡೆ ಹೋಗುತ್ತಾನೆ.  ಆದರೆ, ತನ್ನ ಸ್ನೇಹಿತ ನೀರು ಇನ್ನೇನು ಪೂರ್ಣ ಪ್ರಮಾಣದಲ್ಲಿ ಆವಿಯಾಗಿ ಹೋಗೇ ಬಿಟ್ಟಿತು ಎಂದು ಹೆದರಿಕೆಯಿಂದ ಹಾಲೂ ಸಹ "ನೀನು ಹೋದಲ್ಲಿಗೆ ನಾನೂ ಬರುತ್ತೇನೆ!" ಎಂದು ಹಠ ಹಿಡಿದು ಉಕ್ಕುತ್ತಾನಂತೆ.  ಅದೇ ಸಮಯಕ್ಕೆ ನೀವು ಸ್ವಲ್ಪ ನೀರನ್ನು ಪಾತ್ರೆಯ ಮೇಲೆ ಚಿಮುಕಿಸಿದರೆ ಉಕ್ಕುವ ಹಾಲು ಸುಮ್ಮನಾಗುತ್ತಾನಂತೆ!

ಹೀಗೆ, ಈ ದಿನ ಚಹಾ ಮಾಡಲು ಹೋಗಿ, ಹಾಲು-ನೀರಿನ ಜೋಡಿಗಳನ್ನು ಬೆಂಕಿಯ ಸಹವಾಸದಲ್ಲಿ ಕುದಿಯುವಂತೆ ಮಾಡಿದ್ದು, ಅವುಗಳ ಅನ್ಯೋನ್ಯ ಗೆಳೆತನವನ್ನು ಪರೀಕ್ಷೆಗೆ ಒಡ್ಡಿ ಹತ್ತಿರದಿಂದ ನೋಡಿದ್ದು ಕೋವಿಡ್ ಕವಿದು ಮನೆಯಲ್ಲೇ ಮುದುರಿಕೊಂಡಿರುವ ನಮ್ಮಂತಹವರು ಮಾಡಿದ ದೊಡ್ಡ ಕಾರ್ಯ!

Wednesday, May 13, 2020

Time ಇದ್ರೆ Photo organize ಮಾಡಿ!

ಹೆಚ್ಚು ಜನರಿಗೆ ಈಗ ನೆನಪಿನಲ್ಲಿರಲಿಕ್ಕಿಲ್ಲ... ಒಂದು ಕಾಲದಲ್ಲಿ ನಾವೂ ಸಹ ಕ್ಯಾಮೆರಾದಲ್ಲಿ ರೀಲುಗಳನ್ನು ಹಾಕಿ ಮತ್ತೆ ಅವುಗಳನ್ನ ಡೆವಲಪ್ ಮಾಡಿ, ಬೇಕಾದ ಚಿತ್ರಗಳನ್ನು ಪ್ರಿಂಟ್ ಹಾಕಿಸಿಕೊಂಡು ನೋಡುತ್ತಿದ್ದೆವು.  ಆದರೆ, ಒಮ್ಮೆ ಡಿಜಿಟಲ್ ಕ್ಯಾಮೆರಾ ಪ್ರಪಂಚ ತೆರೆದುಕೊಂಡ ಮೇಲೆ,  ರೀಲುಗಳು ಮತ್ತು ರೀಲು ಹಾಕುವ ಕ್ಯಾಮೆರಾಗಳು ಔಟ್‌ಡೇಟೆಡ್ ಆದವು.  ಜೊತೆಗೆ ಡಿಜಿಟಲ್ ಕ್ಯಾಮೆರಾದ ಮತ್ತೊಂದು ಕೊಡುಗೆಯೆಂದರೆ ಎಲ್ಲರ ಮನೆಯಲ್ಲೂ ಅಗಾಧವಾಗ ಚಿತ್ರ ಸಂಗ್ರಹಗಳು.  ರೀಲು ಹಾಕುತ್ತಿದ್ದಾಗ ನಾವುಗಳು ಎಷ್ಟು ಕ್ಲಿಕ್ ಮಾಡಬೇಕು, ಬಿಡಬೇಕು ಎಂದೆಲ್ಲಾ ಯೋಚಿಸುತ್ತಿದ್ದೆವು... ಆದರೆ, ಡಿಜಿಟಲ್ ಕ್ಯಾಮೆರಾದ ಶಕ್ತಿಯೆಂದರೆ ಎಷ್ಟು ಸಾಧ್ಯವೋ ಅಷ್ಟು ಪಿಕ್ಚರುಗಳನ್ನು ತೆಗೆಯೋದು... ನಂತರ ಅವುಗಳನ್ನು ಸರಿಯಾಗಿ ಆರ್ಗನೈಜ್ ಮಾಡಿ ಇಡದೇ ಇದ್ದರೆ, ಬೇಕಾದ ಚಿತ್ರ ಯಾವಾಗ ಬೇಕೋ ಆಗ ಸಿಗದೇ ತೊಂದರೆಯಾಗೋದು.  ಜೊತೆಗೆ, ಕೆಲವೊಮ್ಮೆ ಕಂಪ್ಯೂಟರ್ ಹಾರ್ಡ್‌ಡ್ರೈವ್ ಅಥವಾ ಸ್ಟೋರೇಜ್ ಏನಾದ್ರೂ ಫೇಲ್ ಆದ್ರೆ, ಹಳೆಯದೆಲ್ಲ ಚಿತ್ರಗಳನ್ನು ಕಳೆದುಕೊಳ್ಳುವುದೂ ಆಗಿ ಹೋಗಿ ಹೋಗಿದೆ.

ಹೀಗೆ, ಕೋವಿಡ್‌ಮಯವಾದ ಈಗಿನ ದಿನಗಳಲ್ಲಿ ಮಾಡುವುದಕ್ಕೆ ಏನಾದರೂ ಕೆಲಸವೊಂದಿರಬೇಕಲ್ಲ? ಅದಕ್ಕೋಸ್ಕರ ಕಳೆದ ಎರಡು ದಿನಗಳಿಂದ ಹಳೆಯ ಫೋಟೋಗಳನ್ನೆಲ್ಲ ಹರಡಿಕೊಂಡು ಕುಳಿತುಕೊಂಡಿದ್ದೇನೆ.  ಅದನ್ನು ಆರ್ಗನೈಜ್ ಮಾಡುವುದು ಹೇಗೆ ಎಂದು ಗಮನಿಸಿದಾಗ ಫೋಟೋ ಅರ್ಗನೈಜ್ ಮಾಡುವುದರ ಬಗ್ಗೆ ಓದುತ್ತಾ ಹೋದೆ.  ಅದರಲ್ಲೂ ಆರ್ಗನೈಜ್ ಮಾಡುವುದಕ್ಕೆ ಯಾವ ಯಾವ ಸಾಫ್ಟ್‌ವೇರ್‌ಗಳಿವೆ ಎಂದು ಹುಡುಕಿದಾಗ ಈ ಸೈಟು ದೊರೆಯಿತು, 25 photo organizing software & apps ಅದರಲ್ಲೂ ಮತ್ತೆ ಕೆದಕುತ್ತಾ ಹೋದ ಹಾಗೆ ಈ ಕೆಳಗಿನ ಫ್ರೀ ಸಾಫ್ಟ್‌ವೇರ್/ಅಪ್ಲಿಕೇಶನ್‌ಗಳು ಕಣ್ಣಿಗೆ ಬಿದ್ದವು:

Adobe bridge
StudioLine
DigiKam
Nomacs
Apple Photos (Mac)
Mylio
ಮತ್ತು
Google Photos

ಗೂಗಲ್ ಫೋಟೋಸ್ ಫ್ರೀ ಇರಬಹುದು, ಆದರೆ ಈ ದೊಡ್ಡ ಮನುಷ್ಯರ ಸಹವಾಸ ಬೇಡ, ಎಂದು ಸಣ್ಣ ಕಂಪನಿಗಳ ಪ್ರಾಡಕ್ಟ್‍ಗಳನ್ನು ನೋಡುತ್ತಾ ಅವುಗಳ ರಿವ್ಯೂ ಓದುತ್ತಾ ಸಮಯ ಕಳೆದೆ.  ಅಡೋಬಿ ಬ್ರಿಜ್ ಕೂಡಾ ಅಷ್ಟೊಂದು ಇಷ್ಟವಾಗಲಿಲ್ಲ.  ಅಲ್ಲದೇ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಕೆಲಸ ಮಾಡುವ ಅಪ್ಲಿಕೇಶನ್ ಬೇಕಾಗಿದ್ದರಿಂದ, ಇದ್ದವುಗಳಲ್ಲಿ Mylio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದೆ.

ಅದಕ್ಕೆ ನನ್ನಲ್ಲಿದ್ದ ಸುಮಾರು 8 TB ಸ್ಟೋರೇಜ್ ಇರುವ NAS ಅನ್ನು import ಮಾಡಿ, ಅದರ ಜೊತೆಗೆ ಒಂದೆರಡು ಹಳೆಯ 4 TB USB storageಗಳನ್ನೂ ಸಹ ಕನೆಕ್ಟ್ ಮಾಡಿಟ್ಟೆ.  ನನ್ನ ಘನಂದಾರಿ ಕಂಪ್ಯೂಟರ್ ನಿನ್ನೆಯಿಂದ ತಿರುಗುತ್ತಲೇ ಇದೆ.  ಈಗಾಗಲೇ ಸುಮಾರು 25,000ಕ್ಕೂ ಹೆಚ್ಚು photo/videoಗಳನ್ನು ಅದು ಹುಡುಕಿದ್ದು, ಕಳೆದ 15 ವರ್ಷದ ಹಳವಂಡಗಳೆಲ್ಲ ಹೊರಗೆ ಬರುತ್ತಲಿದೆ!

ಇನ್ನು ಕೆಲವೇ ದಿನಗಳಲ್ಲಿ ನನ್ನ ಎಲ್ಲ ಫೋಟೋಗಳೂ ಸಹ ಆರ್ಗನೈಜ್ ಆಗಿ, ಎಲ್ಲರ ಮುಖಗಳನ್ನೂ ಗುರುತಿಸಿ, ಎಲ್ಲ ಲೊಕೇಶನ್ನುಗಳನ್ನೂ ಸಹ ಪಟ್ಟಿ ಮಾಡಿಕೊಂಡು, ಅದರಲ್ಲಿದ್ದ ಡ್ಯೂಪ್ಲಿಕೇಟುಗಳನ್ನೆಲ್ಲ ತೆಗೆದುಹಾಕಿದ ಮೇಲೆ, ಪ್ರತಿಯೊಂದು ಇವೆಂಟುಗಳ ಟ್ಯಾಗ್ ಪ್ರಕಾರ ಆರ್ಗನೈಜ್ ಮಾಡಿ ಬಿಟ್ಟರೆ... ನನ್ನ ಕೆಲಸ ಮುಗಿದಂತೆ.  ಆದರೆ, ಈ ಸಂಪೂರ್ಣ "ಎಡಿಟಿಂಗ್" ಕೆಲಸ ಮುಗಿಯಬೇಕಾದರೆ - ನನ್ನ ಕೆಲಸ ಕಾರ್ಯಗಳ ಮಧ್ಯೆ, ಕೇವಲ ಪಾರ್ಟ್‌ಟೈಮ್ ಮಾತ್ರ ಈ ಕೆಲಸಕ್ಕೆ ವ್ಯಯಿಸುತ್ತಿರುವುದರಿಂದ - ಏನಿಲ್ಲವೆಂದರೂ ಒಂದು ತಿಂಗಳಾದರೂ ಬೇಕು!

***
ಹದಿನೈದು ಇಪ್ಪತ್ತು ವರ್ಷಗಳ ಫೋಟೋಗಳನ್ನು ಹರವಿಕೊಂಡು ಒಮ್ಮೆ ನೋಡಿ - ನಿಮ್ಮ ಪ್ರಬುದ್ಧತೆ, ಒಳ-ಹೊರಗುಗಳೆಲ್ಲ ಸ್ವಲ್ಪ ಸ್ವಲ್ಪವೇ ಬದಲಾಯಿಸುವುದನ್ನು ಕಣ್ಣಾರೆ ನೋಡಬಹುದು!

Tuesday, May 12, 2020

ಕೊರೋನಾ ಹೇರ್ ಕಟಿಂಗ್ ಪ್ರಹಸನ...

ಹತ್ತು ವರ್ಷಗಳ ಹಿಂದೆ ಪೋಸ್ಟ್ ಡಾಕ್ ಕೆಲಸಕ್ಕೋಸ್ಕರ ಜರ್ಮನಿಯಲ್ಲಿ ಕೆಲವು ತಿಂಗಳು ಶ್ರಮಿಸಬೇಕಾಗಿದ್ದ ಡಾ. ಪೆರುಮಾಳ್‌ಗೆ ಅಲ್ಲಿನ ಭಾಷಾ ಸಮಸ್ಯೆಗಿಂತ ಹೆಚ್ಚಾಗಿ, ತಲೆ ಕೂದಲು ಕತ್ತರಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿತ್ತಂತೆ!  ಮೊದಲೇ ತಲೆಯಲ್ಲಿ ಕೂದಲು ವಿರಳವಾಗಿದ್ದ ಮನುಷ್ಯ, ಮತ್ತು ತಾನು ಹೇಳಿದ್ದೊಂದು, ಕತ್ತರಿಸುವಾತ/ಕತ್ತರಿಸುವಾಕೆ ಮತ್ತೊಂದನ್ನು ಮಾಡಿ ಬಿಟ್ಟರೆ? ಅದಕ್ಕೆ ತನ್ನಷ್ಟಕ್ಕೆ ತಾನೇ ತನ್ನ ಕೂದಲನ್ನು ಕತ್ತರಿಸುವುದನ್ನು ಕಲಿತುಕೊಂಡಿದ್ದರಂತೆ.  ಮೊದ ಮೊದಲು ಕಷ್ಟವಾಗುತ್ತಿತ್ತಾದರೂ ಕೊನೆಗೆ ಅದೇ ಅಭ್ಯಾಸವಾಗಿ, ಈ ಜರ್ಮನಿಯವರ ದೆಸೆಯಿಂದ ಜೀವನ ಪರ್ಯಂತ ತನ್ನ ಕೂದಲನ್ನು ತಾನೇ ಕತ್ತರಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಸ್ಕಿಲ್ಸ್ ಸಿಕ್ಕಂತಾಗಿತ್ತಂತೆ!

ಈ ಕೊರೋನಾ ವೈರಸ್ ಹೇರಿದ ವರ್ಕಿಂಗ್ ಫ್ರಮ್ ಹೋಮ್ ಕಟ್ಟಳೆಯನ್ನು ಆಚರಿಸುತ್ತಾ ನಾನೂ ಋಷಿ ಮುನಿಗಳ ಹಾಗೆ ಉದ್ದ ಕೂದಲನ್ನೂ ಹಾಗೇ ಗಡ್ಡವನ್ನೂ ಬಿಟ್ಟು ಎಂಟು ವಾರಗಳಾಗಿತ್ತು.  ಮತ್ತೆ ನಮ್ಮ ಆಫೀಸಿನಲ್ಲಿ ವಿಡಿಯೋ ಕಾನ್‌ಫರೆನ್ಸ್‌ಗಳು ಹೆಚ್ಚಾಗ ತೊಡಗಿ, ನಾನೂ ಕೂದಲು ಕತ್ತರಿಸಿಕೊಳ್ಳೋದು ಅನಿವಾರ್ಯವಾಯಿತು.

ತಲೆಯ ಮೇಲೆ ಕೂದಲು ಕಡಿಮೆ ಇದ್ದವರದ್ದು ಒಂದು ರೀತಿಯ ಸಂಕಟವಾದರೆ, ನನ್ನಂತಹವರಿಗೆ ಹುಲುಸಾಗಿ ಕೂದಲು ಬೆಳೆಯುವುದು ಇನ್ನೊಂದು ರೀತಿಯ ಸಂಕಟ.  ಸರಿಯಾಗಿ ಮೂರು ಹೆಚ್ಚೆಂದರೆ ನಾಲ್ಕು ವಾರಗಳಲ್ಲಿ ಕೂದಲು ಕತ್ತರಿಸದಿದ್ದರೆ ತಲೆಯ ಮೇಲೆ ಒಂದು ಕಿರೀಟ ಬಂದ ಹಾಗಿರುತ್ತದೆ.  ಹಾಗಿರುವಾಗ, ನಾನೂ ಏಕೆ ಪ್ರಯತ್ನ ಮಾಡಬಾರದು ಎಂದು ಕಳೆದ ಶನಿವಾರ ಮನೆಯಲ್ಲಿದ್ದ ಹತ್ಯಾರಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಬಚ್ಚಲು ಮನೆಯಲ್ಲಿ ಉಪಸ್ಥಿತನಾದೆ.

ಇಲ್ಲೇ ಯಡವಟ್ಟಾಗಿದ್ದು, ನೋಡಿ!  ನಮ್ಮ ಕೂದಲನ್ನು ನಾವೇ ಕತ್ತರಿಸುವುದು ನಾನು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ.  ಮೊದಲು ಕಿವಿಯ ಅಕ್ಕ-ಪಕ್ಕ ಒಂದು ಕಡೆಯಿಂದ ಟ್ರಿಮ್ಮರ್ ಹಿಡಿದುಕೊಂಡು ಕತ್ತರಿಸಲು ಶುರುಮಾಡಿದ ನನಗೆ ಸ್ವಲ್ಪ ಸಮಯದ ನಂತರ ಮೆಟ್ಟಿಲು-ಮೆಟ್ಟಿಲಿನ ಹಾಗೆ ಕೂದಲು ಕತ್ತರಿಸಿಕೊಂಡು ಅಲ್ಲಲ್ಲಿ ಸ್ಟೆಪ್ಪುಗಳಾದವು.  ಒಮ್ಮೊಮ್ಮೆ ಸ್ವಲ್ಪ ಒತ್ತಿ ತೆಗೆದಿದ್ದಕ್ಕೋ ಏನೋ ಕೆಲವು ಕಡೆ ಬುರುಡೆ ಕಾಣುವಷ್ಟು ಸಣ್ಣಕೂ ಅದರ ಪಕ್ಕದಲ್ಲಿ ಸ್ವಲ್ಪ ಉದ್ದಕೂ ಬಿಟ್ಟುಕೊಂಡು ಹೋಯಿತು.  ಸೈಡು ಮತ್ತೆ ಮುಂದೇನೋ ಸರಿ, ಆದರೆ ಹಿಂದಿನ ಭಾಗವನ್ನು ಹೇಗೆ ಕತ್ತರಿಸೋದು?  ಅದರಲ್ಲೂ ಮಿರರ್ ಇಮೇಜ್ ನೋಡಿಕೊಂಡು?  ಸ್ವಲ್ಪ ಹೊತ್ತಿನ ನಂತರ ಕೈ ಮತ್ತು ಬೆರಳುಗಳೂ ಕೂಡ ನೋವು ಕೊಡತೊಡಗಿದವು.  ಕೊನೆಗೆ ಅರ್ಧ ಘಂಟೆಯ ಹೊತ್ತಿಗೆಲ್ಲ ಸುಮಾರು ಒಂದು ಪೌಂಡ್ ಅಷ್ಟು ಕೂದಲು ನೆಲದ ಮೇಲೆ ಕರಿಮುಗಿಲು ಕವುಚಿಕೊಂಡ ಹಾಗೆ ಬಿದ್ದುಕೊಂಡಿತ್ತು!

ಇಷ್ಟು ಹೊತ್ತಿಗಾಗಲೇ ನಮ್ಮ ಮನೆಯವರಿಗೆಲ್ಲ ನಾನು ಹಾಸ್ಯದ ವಸ್ತುವಾಗಿದ್ದೆ.  ತಲೆಯ ಹಿಂದಿನ ಭಾಗವಷ್ಟೇ ಏನೂ ಪೂರ್ಣ ತಲೆಯನ್ನೇ ನನ್ನ ಹನ್ನೊಂದು ವರ್ಷದ ಮಗನಿಗೂ ಮತ್ತು ಹೆಂಡತಿಗೂ ವಹಿಸಿ (ಏನು ಬೇಕಾದರೂ ಮಾಡಿ, ಆದರೆ ಇದಕ್ಕಿಂತ ಕೆಟ್ಟದಾಗಿ ಮಾಡಬೇಡಿ), ಆರ್ತನಾಗಿ ಒಪ್ಪಿಸಿಕೊಂಡ ಮೇಲೆ ನನಗೆ ಸಮಾಧಾನವಾಗುವ ಮಟ್ಟವನ್ನು ತಲುಪಿದೆ.  ಒಟ್ಟು ನಲವತ್ತೈದು ನಿಮಿಷಗಳ ನಂತರ ತಲೆ ಹಗುರವಾಗಿ ಸ್ನಾನ ಮಾಡಿ ಹೊರಬಂದೆ.  ಅದಕ್ಕಿಂತ ಮುಂಚೆ, ಹತ್ತು ನಿಮಿಷ ಇಡೀ ಬಚ್ಚಲುಮನೆಯನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛ ಮಾಡಿದ್ದೂ ಸಹ ತುಸು ಹೆಚ್ಚೇ ಕೆಲಸವೆನಿಸಿತು.

ಸ್ನಾನ ಮಾಡಿ ಎಂದಿನಂತೆ ತಲೆ ಬಾಚಿ ನೋಡಿದರೆ, ಕೆಲವು ಕಡೆ ಕಡಿಮೆ, ಕೆಲವು ಕಡೆ ಹೆಚ್ಚು ಕೂದಲು ಇದ್ದ ನಾನು ಎಲ್ಲೋ ಇಲಿಗಳು ಭತ್ತದ ಚೀಲವನ್ನು ತಿಂದು ಹಾಕಿ ಧ್ವಂಸಮಾಡಿದ ವಿಷಯವನ್ನು ನೆನಪಿಗೆ ತಂದವು.  ಮೊದಲೆಲ್ಲ ಸ್ಟೆಪ್ಪುಗಳಾಗಿ ಕೆಟ್ಟದಾಗಿ ಕಾಣುತ್ತಿದ್ದ ಬದಿಯ ಕೂದಲು, ಈಗ ಯಾವುದೋ ಪುರಾತನ ದೇವಸ್ಥಾನದ ಅವಶೇಷದಂತೆ ಕಂಡುಬಂದು, ನಗುಬಂದಿತು.  ಅಲ್ಲದೇ, ಒಂದು ಬದಿಯ ಕೋನದಲ್ಲಿ ನೋಡಿದಾಗ ನನ್ನ ತಲೆ, ಮಾಗಿದ ಉತ್ತುತ್ತಿಯಂತೆ ಕಂಡುಬಂತು!

ಆದರೆ ಕೊರೋನಾ ಮಹಿಮೆ ಇಲ್ಲಿಗೇ ಮುಗಿಯಲಿಲ್ಲ... ಹೇರ್ ಕಟ್ ಕೆಟ್ಟದಾಗಿರಲಿ, ಬಿಡಲಿ... ಇನ್ನೆರಡು ವಾರಗಳಲ್ಲಿ ಮತ್ತೆ ಪ್ರಯತ್ನಿಸುವ ಛಲವಂತೂ ಹುಟ್ಟಿದೆ!  ದಿನೇದಿನೇ ನೋಡುವ ಮನೆಮಂದಿಗೆ ಇದೀಗ ಕೆಟ್ಟ ಹೇರ್ ಕಟ್ಟೂ ಸಹ ಒಗ್ಗಿ ಹೋಗಿ ಅದೇ ಒಂದು ಸ್ಟೈಲ್ ಆಗಿದೆ!  ಇನ್ನೆರಡು ವಾರಗಳಲ್ಲಿ ಒಂದಿಷ್ಟು ಒಳ್ಳೆಯ ಟ್ರಿಮ್ಮರ್ ಮೇಲೆ ಹಣ ಹೂಡಿದರೆ, ಜೀವಮಾನ ಪರ್ಯಂತ ಹೊರಗೆ ಕೂದಲು ಕತ್ತರಿಸುವ ಪ್ರಸಂಗ ಬರದೆಯೂ ಇರಬಹುದು! ಯಾರು ಬಲ್ಲರು?

Monday, May 11, 2020

ಕೊರೋನಾ ಕೃಪೆ: ಸಾಲುಗಟ್ಟಿದ To-do list

ನಿಮಗೂ ಹೀಗೆ ಅನಿಸಿರಬಹುದು... ಈ ಕೊರೋನಾ ವೈರಸ್ಸಿನ ಉಪಟಳ ಬಹಳ ಹೆಚ್ಚಾಗಿದೆ, ಅದರ ಉಪದ್ರವಕ್ಕಿಂತ ಉಪಟಳವೇ ಹೆಚ್ಚು!

ಕಳೆದ ಎಂಟು ವಾರಗಳಿಂದ ಮನೆಯಲ್ಲೇ ಕುಳಿತ ನಮಗೆ ನಿಧಾನವಾಗಿ ನಮ್ಮೆಲ್ಲ ಚಟುವಟಿಕೆಗಳು online ಮಾಧ್ಯಮದಲ್ಲಿ ಹೊರಹೊಮ್ಮತೊಡಗಿದವು.  ಆಫೀಸಿನ ಕಾನ್‌ಫರೆನ್ಸ್‌ಗೆಂದು ಅಣಿವಾಗಿದ್ದ ಟೂಲ್‍ಗಳೆಲ್ಲ ಏಕ್‌ದಂ ಮನರಂಜನಾ ಮಾಧ್ಯಮಗಳಾಗಿ ಬದಲಾದವು.  ಮಾಹಿತಿ, ಮನರಂಜನೆ, ಕಮ್ಯೂನಿಟಿ ಚಟುವಟಿಕೆ, ಆಟ-ಪಾಠ, ದೇಣಿಗೆ, ಚಾರಿಟಿ... ಮೊದಲಾದ ವಿಷಯಗಳೆಲ್ಲ ಈ ಆನ್‌ಲೈನ್ ಮಾಧ್ಯಮಗಳಲ್ಲೇ ಆಗತೊಡಗಿ ಒಂದು ತಲೆ ಚಿಟ್ಟು ಹಿಡಿದಂತಾಗಿದೆ.

ವಾರದ ಉದ್ದಕ್ಕೂ ಆಫೀಸಿನ ಕಾಲ್‌ಗಳು.  ವಾರಾಂತ್ಯ ಹತ್ತಿರ ಬರುತ್ತಿದ್ದಂತೆ ಕಮ್ಯುನಿಟಿಗೆ ಸಂಬಂಧಿಸಿದ Zoom, WebEx, Group ಮೀಟಿಂಗ್‍ಗಳು.  ಇವೆಲ್ಲದರ ಮಧ್ಯೆ ನೋಡ(ಲೇ) ಬೇಕಾದ ಅದೆಷ್ಟೋ ಸಿನಿಮಾಗಳು, ಓದಬೇಕಾದ ಅದೆಷ್ಟೋ ಪುಸ್ತಕಗಳು, ತೆಗೆದುಕೊಳ್ಳಬಹುದಾದ ಅದೆಷ್ಟೋ ಟ್ರೈನಿಂಗ್‌ಗಳು, ಮಾತನಾಡಿಸಬೇಕಾದ ಅದೆಷ್ಟೋ ನೆಂಟರು-ಇಷ್ಟರುಗಳು, ಕೇಳಬೇಕಾದ ಹಾಡುಗಳು, ಪಾಡ್‌ಕ್ಯಾಸ್ಟ್‌ಗಳು, ಸಂಶೋಧಿಸ ಬೇಕಾದ ವಿಷಯಗಳು, ಕ್ಲೀನ್ ಮಾಡಬಹುದಾದ ಕ್ಲಾಸೆಟ್ಟುಗಳು, ಹೇಳಬಹುದಾದ ಅದೆಷ್ಟೋ ಹಾಡುಗಳು, ಕೇಳಬೇಕಾದ ಪ್ರವಚನಗಳು... ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ.  ಈ ಪಟ್ಟಿಗೆ ತಿಲಕ ಪ್ರಾಯವಾಗಿ ಮಾಡಬಹುದಾದ ಮೆಡಿಟೇಷನ್‍ ಅನ್ನು ಸೇರಿಸಿ ಬಿಟ್ಟರೆ, ದಿನದ 24 ಘಂಟೆಗಳು ನಿಜವಾಗಿಯೂ ಸಾಲವು ಎಂದೆನಿಸೋದಿಲ್ಲವೇ?

ಹೀಗೆ ದೊಡ್ಡದಾಗುವ ಹಳವಂಡಗಳ ಪಟ್ಟಿ ನನಗೊಬ್ಬನಿಗೆ ಮಾತ್ರ ಸೀಮಿತವಲ್ಲ ಎಂದು ಖಂಡಿತವಾಗಿ ಹೇಳಬಹುದು.  ಮೊದಲೇ "ಓಡುವುದೇ ಗುರಿ"ಯಾಗಿದ್ದ ನಮಗೆ, ಇದು ಮನೆಯಲ್ಲೇ ಕುಳಿತು ಸದಾ ಓಡುತ್ತಲೇ ಇರಿ ಎಂದು ಒಂದು ರೀತಿಯಲ್ಲಿ ಟ್ರೆಡ್‌ಮಿಲ್ ಹತ್ತಿಸಿ ಕುಳಿತಂತಿದೆ.

ಏನೇ ಹೇಳಲಿ, ಈಗಿನ ತಂತ್ರಜ್ಞಾನದ ಪ್ರಕಾರ ಜನರು 4K videoಗೆ ಹೆಚ್ಚು ಆದ್ಯತೆ ಕೊಟ್ಟರೇ ವಿನಾ, ಈ ಗ್ರೂಪ್‌ ಮೀಟಿಂಗುಗಳ ಆಡಿಯೋ ಕ್ವಾಲಿಟಿ ಸ್ವಲ್ಪವೂ ಚೆನ್ನಾಗಿರೋದಿಲ್ಲ... ಅದರಲ್ಲೂ ನಮ್ಮನೆಯ ಸೊರಗಿದ ಇಂಟರ್‌ನೆಟ್ ವೇಗದ ಮುಂದೆ ಗಂಟಲು ಕೊಸರಿಕೊಂಡು ಮಾನೋ ಟ್ಯೂನ್‌ನಲ್ಲಿ ಹಾಡುಗಳು ಕೇಳಿಸುವಂತೆ ಅನುಭವವಾಗುತ್ತವೆ.

ನಿಮ್ಮ (catch up ಮಾಡುತ್ತಿರುವ) ಹಳವಂಡಗಳ ಪಟ್ಟಿ ಉದ್ದವಿದೆಯೇ? ಅದನ್ನು ಇಲ್ಲಿ ಹಂಚಿಕೊಳ್ಳಬಹುದಲ್ಲ?

Friday, May 08, 2020

ಕೊರೋನಾಗೂ ಮತ್ತು ಊಟ-ತಿಂಡಿಗೂ ಎತ್ತಣ ಸಂಬಂಧ?

ಊಟ-ತಿಂಡಿಯ ವಿಷಯವನ್ನು ಎಂದೂ ಲಘುವಾಗಿ ತೆಗೆದುಕೊಳ್ಳಲೇ ಬಾರದು ಎನ್ನುವುದು ಈ ಹೊತ್ತಿನ ತತ್ವ.  ಈ ಕೋವಿಡ್ ದೆಸೆಯಿಂದ ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಹೊತ್ತು ಮನೆಯ ಪಾಕವೇ ಗತಿಯಾದ್ದರಿಂದ ಎಲ್ಲರಂತೆ ನಾನೂ ಸಹ ಕುಕಿಂಗ್ ಶೋ, ರೆಸಿಪಿಗಳನ್ನು ಹುಡುಕಿಕೊಂಡು ಹೋಗಿರುವುದು ಇತ್ತೀಚಿನ ಬೆಳವಣೆಗೆಗಳಲ್ಲೊಂದು!  ಮೊದಲೆಲ್ಲವಾದರೆ, ಮಧ್ಯಾಹ್ನದ ಊಟಕ್ಕೆ ಸಾಕಾಗುವಷ್ಟು ಬೆಳಿಗ್ಗೆಯೇ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಿ, ಆಫೀಸಿನ ಕೆಲಸದ ಮಧ್ಯೆ ಮೈಕ್ರೋವೇವ್ ಅವನ್‌ನಲ್ಲಿ ಬಿಸಿಮಾಡಿಕೊಂಡು ತಿಂದ ಹಾಗೆ ಶಾಸ್ತ್ರ ಮಾಡುವುದನ್ನು ಊಟವೆಂದು ಕರೆಯುತ್ತಿದ್ದೆವು.  ಕೊರೋನಾ ವೈರಸ್ಸಿನ ಸಹಾಯದಿಂದಾಗಿ ನಾವು ಈಗ ಮನೆಯಲ್ಲೇ ಬಿಸಿಬಿಸಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೀತಿಯಲ್ಲಿ "ಸಾತ್ವಿಕ"ವಾಗಿ ಆಹಾರವನ್ನು ಸವಿದು ಸೇವಿಸುತ್ತಿದ್ದೇವೆಂದರೆ ಅತಿಶಯೋಕ್ತಿಯೇನಲ್ಲ!

***
ಅಮೇರಿಕಕ್ಕೆ ಬಂದು ಎರಡು ದಶಕದ ಮೇಲಾದರೂ ಇವತ್ತಿಗೂ ನಾನು ಭಾರತದ ಅನುಕೂಲಗಳ ಪೈಕಿ ಅತ್ಯಂತ ಮಿಸ್ ಮಾಡಿಕೊಳ್ಳುವುದೆಂದರೆ ಹೊಟೆಲ್/ಖಾನಾವಳಿಯಲ್ಲಿ ದೊರೆಯುವ ಸಾಂಬಾರು, ಪಲ್ಯಗಳು, ಸರಿ ರಾತ್ರಿ ಎರಡು-ಮೂರು ಘಂಟೆಯವರೆಗೂ ಬಸ್‌ಸ್ಟ್ಯಾಂಡಿನ ಬದಿಯಲ್ಲಿ ಇಟ್ಟುಕೊಂಡ ಚಾ ಅಂಗಡಿಗಳು, ಯಾವತ್ತಿಗೂ ಎಲ್ಲೆಲ್ಲಿಯೂ ಸಿಗುವ ಇಡ್ಲಿ-ಚಟ್ಣಿಗಳು!  ನಾನು ವಿದ್ಯಾರ್ಥಿ ದೆಸೆಯಿಂದಲೇ (ಸುಮಾರು ಹದಿನೈದು ವರ್ಷ ವಯಸ್ಸಿನವಾಗಿದ್ದಾಗಿನಿಂದ) ಮನೆಯಿಂದ ಹೊರಗೆ ಉಳಿದವನಾಗಿದ್ದರಿಂದ ಈ ಹೊಟೇಲು-ಖಾನಾವಳಿಗಳಲ್ಲಿ ಎರಡು ರೂಪಾಯಿಗೆ ಕೊಡುತ್ತಿದ್ದ ಸಾಂಬಾರು-ಪಲ್ಯಗಳು ಎಷ್ಟೋ ಸಾರಿ ದಿನದ ಹಸಿವನ್ನ ತಣಿಸಿವೆ ಎನ್ನಬಹುದು.  ಅದೂ ಪರೀಕ್ಷೆ ಹತ್ತಿರ ಬರುತ್ತಿದ್ದ ಸಂದರ್ಭಗಳಲ್ಲಿ ನನ್ನ ರೂಮಿನಲ್ಲಿ ಒಂದಿಷ್ಟು ಅನ್ನ ಮಾಡಿಕೊಂಡು ಹತ್ತಿರದ ಹೊಟೇಲಿನಿಂದ ಸಾರು ತಂದು ಊಟ ಮಾಡಿದ ದಿನಗಳು ಎಷ್ಟೋ ಇವೆ. ಅಲ್ಲದೇ ರಾತ್ರಿಯ ಹೊತ್ತು ಓದಿ ಬೋರಾದರೆ ಸ್ನೇಹಿತರ ಜೊತೆಗೆ ಎಷ್ಟು ಹೊತ್ತಿಗೆ ಬೇಕಾದರೂ ಟೀ ಕುಡಿಯಲು ಕೈಗಾಡಿಗಳ ಬಳಿಗೆ ಹೋಗಬಹುದಿತ್ತು.

ಅಮೇರಿಕದಲ್ಲಿ ಊಬರ್ ಈಟ್ಸ್ ಇರಲಿ ಮತ್ತೊಂದು ಇರಲಿ, ಆಗ ಅಲ್ಲಿ ಸಿಗುತ್ತಿದ್ದ ಅನುಕೂಲಗಳನ್ನು ಮಾತ್ರ ಸೃಷ್ಟಿಸಲಾರವು.  ಒಂದು ರೀತಿಯಲ್ಲಿ ಇವತ್ತಿಗೂ ಭಾರತದಲ್ಲಿ ಈ ರೀತಿಯ ಸರ್ವಿಸುಗಳು ಇರಬಹುದೇನೋ.  ಆಗ ಜೇಬಿನಲ್ಲೆಲ್ಲಾ ಹತ್ತು ರೂಪಾಯಿ ಇದ್ದರೆ ಅದು ಬಹಳ "ದೂರ" ಬರುತ್ತಿತ್ತು... ಈಗಂತೂ ಹಣದುಬ್ಬರ ಹಣದ ಬೆಲೆಯನ್ನೇ ತಿಂದು ಹಾಕಿತಂತಾಗಿ, ನೂರು ರೂಪಾಯಿ ನೋಟಿನಲ್ಲಿ ಗಾಂಧೀ ಮುಖವೂ ಬಾಡಿದಂತಿದೆ.

***
ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಎಷ್ಟು ಕೊಂಡಾಡಿದರೂ ಸಾಲದು.  ಈ ಸಾಲನ್ನು ಬರೆಯಲು ನನಗೆ ಯಾವ ಅಥಾರಿಟಿಯೂ ಇಲ್ಲ, ಹಾಗೆ ಇರಬೇಕೆಂದೇನೂ ಇಲ್ಲ... ಶತಮಾನಗಳಿಂದ ನಮ್ಮ ಆಹಾರ ಪದ್ದತಿ ಬಹಳಷ್ಟು ಬೆಳೆದು ಬಂದಿದೆ.  ಈ ಕೊರೋನಾ ವೈರಸ್ ಸೃಷ್ಟಿಸಿದ ಒಂದು ತಾತ್ಕಾಲಿಕ ನಿರ್ವಾತವನ್ನು ಮುಚ್ಚಿಕೊಳ್ಳಲು ನಾವೆಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಂತೆ, ಇತ್ತೀಚೆಗೆ ನಾನು ನಡೆಸಿದ "ಸಾತ್ವಿಕ" ಆಹಾರದ ಬಗ್ಗೆ "ಸಂಶೋಧನೆ"ಯೂ ಒಂದು... ಅದರ ಬಗ್ಗೆ ಇನ್ನೊಮ್ಮೆ ಬರೆದರೆ ಆಗದೇ?!

ನಿಮಗೆ ಹೊತ್ತು ಹೊತ್ತಿಗೆ ಊಟ-ತಿಂಡಿಯ ಅಗತ್ಯವೇನು ಅದರ ಮಹತ್ವವೇನು ಎಂದು ತಿಳಿಯಲು ಹೆಚ್ಚಿನ ಅಧ್ಯಯನವನ್ನೇನೂ ಮಾಡಬೇಕಾಗಿಲ್ಲ... ಇಬ್ಬರು ಮಿಡ್ಲ್‌ಸ್ಕೂಲ್ ಮಕ್ಕಳನ್ನು ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಊಟಕೊಟ್ಟು ಅವರನ್ನು ಸಾಕಿ ನೋಡಿ... ನಿಮಗೆ ಗೊತ್ತಿರದಂತೆ ನೀವೊಬ್ಬ ದೊಡ್ಡ ಎಕ್ಸ್‌ಪರ್ಟ್ ಆಗಿರುತ್ತೀರಿ!

Thursday, May 07, 2020

ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

***
ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

***

ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!

Wednesday, May 06, 2020

ಗೌಡರು ಚಹಾ ಪುಡಿ ಕದ್ದ ಪ್ರಸಂಗವು...

ಇದು ಮೂರು ದಶಕಗಳ ಹಳೆಯ ಕಥೆಯಾದರೂ ಇವತ್ತಿಗೂ ನಮ್ಮನೆಯಲ್ಲಿ ನಗೆ ಉಕ್ಕಿಸುತ್ತದೆ.  ಮೊನ್ನೆ ಕೊರೋನಾ ವೈರಸ್ ಸ್ಪೆಷಲ್ ಎಂದು ನಮ್ಮ ಹಳವಂಡಗಳನ್ನೆಲ್ಲ ಹರಡಿಕೊಂಡು ಅಕ್ಕ-ತಮ್ಮ ಮಾತನಾಡುತ್ತಿದ್ದಾಗ, ಅಲ್ಲಿಯೂ ನುಸುಳಿತು, ಈ ಚಹಾ ಪುಡಿಯ ಕಥೆ... ಇದನ್ನು ನೆನಪಿಸಿಕೊಂಡಾಗಲೆಲ್ಲ ಇವತ್ತಿಗೂ ನಮ್ಮಲ್ಲಿ ನಗೆ ಉಕ್ಕಿಸುವುದು ಖಂಡಿತ.

***

ನನ್ನ ಅಕ್ಕ ಆನವಟ್ಟಿಯಿಂದ ಹನ್ನೆರೆಡು ಕಿಲೋ ಮೀಟರ್ ದೂರದ ಜಡೆ ಗ್ರಾಮದಲ್ಲಿ ಟೀಚರ್ ಆಗಿ ನೇಮಕಗೊಂಡಾಗ, ಪ್ರತಿನಿತ್ಯವೂ ಬಸ್ಸಿನಲ್ಲಿ ಹೋಗಿ ಬರುವ ಕಷ್ಟವೇಕೆ ಎಂದು ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಇದ್ದಳು.  ಆಗೆಲ್ಲಾ ಬಸ್ಸುಗಳ ಅನುಕೂಲ ಅಷ್ಟು ಇರಲಿಲ್ಲ.  ಬಸ್ಸುಗಳ ಅನುಕೂಲವಿದ್ದರೂ ಹನ್ನೆರಡು ಕಿಲೋಮೀಟರ್ ಅನ್ನು ಕಾಲುನಡಿಗೆಯಲ್ಲಿ ಎರಡೂ ಕಾಲು ಘಂಟೆಯೊಳಗೆ ಕ್ರಮಿಸಬಹುದಿತ್ತು, ಅದೇ ದೂರಕ್ಕೆ ಬಸ್ಸಿನಲ್ಲಿ ಮೂರು ಘಂಟೆಗಳ ಕಾಲ ತೆಗೆದುಕೊಳ್ಳುತ್ತಿತ್ತು.  ಅಲ್ಲದೇ ಎರಡು ಬಸ್ಸುಗಳನ್ನು ಬದಲಾಯಿಸಬೇಕಾಗಿತ್ತು: ಆನವಟ್ಟಿಯಿಂದ ತವನಂದಿಗೆ ಒಂದು, ತವನಂದಿಯಿಂದ ಜಡೆಗೆ ಹೋಗುವ ಬಸ್ಸು ಮತ್ತೊಂದು.

ಮನೆ ಅಂದ ಮೇಲೆ ಒಂದಿಷ್ಟು ಪಾತ್ರೆ-ಪಡಗ ಇವೆಲ್ಲ ಇರಬೇಕಾದ್ದೆ.  ಅಡುಗೆ ಮಾಡಿಕೊಳ್ಳುತ್ತೇವೆ ಎಂದ ಮೇಲೆ, ಎಲ್ಲ ಸೌಲಭ್ಯಗಳ ಜೊತೆಗೆ ಕಾಫಿ-ಟೀ ಮಾಡಿಕೊಳ್ಳುವುದಕ್ಕೂ ಅನುಕೂಲವಿಲ್ಲದಿದ್ದರೆ ಹೇಗೆ? ಈ ರೀತಿ, ನನ್ನ ಅಕ್ಕ ಒಂದು ಸಣ್ಣ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟು ಸಾಮಾನುಗಳ ಜೊತೆಗೆ ಒಂದು ಸಣ್ಣ ವ್ಯವಸ್ಥಿತ ಕುಟುಂಬಕ್ಕೆ ಏನೇನು ಬೇಕೋ ಅಷ್ಟನ್ನೂ ಹೊಂದಿಸಿಕೊಂಡು ನೆಮ್ಮದಿಯಿಂದ ಇದ್ದಳು.

ಹೀಗಿರುವಾಗ ಒಂದು ಸಣ್ಣ ತೊಂದರೆ ಕಾಣಿಸಿಕೊಳ್ಳತೊಡಗಿತು.  ಆಗಿನ ಕಾಲದಲ್ಲಿ ಕಾಫಿ ಪುಡಿ, ಟೀ-ಪುಡಿಯನ್ನು ಬಹಳಷ್ಟು ದಾಸ್ತಾನು ಮಾಡಿ ಯಾರೂ ಇಟ್ಟುಕೊಳ್ಳುತ್ತಿರಲಿಲ್ಲವೆನಿಸುತ್ತದೆ.  ಅಕ್ಕ ತಂದಿಟ್ಟುಕೊಂಡ ಚಾಪುಡಿ ಡಬ್ಬದಲ್ಲಿ ದಿನೇದಿನೇ ಪುಡಿಯ ಪ್ರಮಾಣ ಕಡಿಮೆ ಆಗುವುದನ್ನು ಇವಳು ಗಮನಿಸಿದಳು.  ಇವಳು ಬಿಟ್ಟರೆ ಮತ್ತೆ ಬೇರೆ ಯಾರೂ ಇರದ ಮನೆಯಲ್ಲಿ ಅದು ಖಾಲಿ ಆಗಲು ಹೇಗೆ ತಾನೆ ಸಾಧ್ಯ? ಅದರೂ ಇರಲಿ ಎಂದು ಡಬ್ಬದಲ್ಲಿ ಒಂದು ಗುರುತು ಮಾಡಿ ಮರುದಿನ ಶಾಲೆಗೆ ಹೋಗಿ ಬಂದು ನೋಡುತ್ತಾಳೆ ಮತ್ತೆ ಕಡಿಮೆ ಆಗಿದೆ.  ಇದು ಏನೇ ಕಿತಾಪತಿ ಇದ್ದರೂ ಪಕ್ಕದ ಮನೆ ಗೌಡರ ಕಿತಾಪತಿಯೇ ಸೈ ಎಂದು, ಇವರಿಗೆ ಬುದ್ಧಿ ಕಲಿಸಬೇಕೆಂದು ಯೋಚನೆ ಮಾಡಿದಳು.

ಒಂದು ಪೋರ್ಶನ್ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸೋದು ಸಹಜ.  ಬಾಡಿಗೆ ಕೊಡುವ ಮುಖೇನ ಅರ್ಧ ಮನೆಯನ್ನು ಇನ್ನೊಬ್ಬರಿಗೆ ವಾಸಿಸಲಿಕ್ಕೆ ಕೊಟ್ಟು ಅದರಿಂದ ಒಂದು ನಿರ್ದಿಷ್ಟ ಆದಾಯ ಪಡೆಯುವುದು ಎಲ್ಲರೂ ಬಲ್ಲ ವಾಡಿಕೆ.  ಆದರೆ, ಈ ರೀತಿ ಬಾಡಿಗೆ ಮನೆ ಕೊಟ್ಟವರು, ಟೀ ಪುಡಿಯನ್ನು ಕದಿಯುತ್ತಾರೆ ಎಂದು ಯಾರು ತಾನೇ ಯೋಚಿಸಲಿಕ್ಕೆ ಸಾಧ್ಯ?

ನನ್ನ ಅಕ್ಕ ಅಂದಿನಿಂದ ಟೀ ಮಾಡಿ ಉಪಯೋಗಿಸಿದ್ದ ಪುಡಿಯನ್ನು ಸಂಗ್ರಹಿಸಿ ಇಡಲಾರಂಭಿಸಿದಳು.  ಅದು ಸುಮಾರು ಒಂದು ಡಬ್ಬ ತುಂಬುವ ಪ್ರಮಾಣ ಬರುತ್ತಲೇ, ಅದನ್ನು ಒಟ್ಟು ಗೂಡಿಸಿ, ಎರಡು ಮೂರು ಸಾರಿ ಚೆನ್ನಾಗಿ ಕುದಿಸಿ ಅದರಲ್ಲಿದ್ದ ಚಹಾದ ಗುಣವನ್ನೆಲ್ಲಾ ತೆಗೆದುಬಿಟ್ಟು, ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿ ಹಾಕಿದಳು.  ಅದು ಚೆನ್ನಾಗಿ ಒಣಗಿದ ನಂತರ, ಮೇಲ್ನೋಟಕ್ಕೆ ಕಪ್ಪು ಚಹಾಪುಡಿಯಂತೆ ಕಂಡು ಬಂದರೂ ಅದರಲ್ಲಿ ಚಹಾದ ಒಂದು ಲವಲೇಶ ಅಂಶವೂ ಇದ್ದಿರಲಿಲ್ಲ.  ನಂತರ ಆ ಪುಡಿಯನ್ನೆಲ್ಲ ತನ್ನ ಚಹಾಪುಡಿ ಡಬ್ಬದಲ್ಲಿ ಹಾಕಿಟ್ಟು ಕಳ್ಳ ಬಂದು ಕದಿಯುವುದನ್ನು ನಿರೀಕ್ಷಿಸಿದಳು.

ಒಂದೆರಡು ದಿನದಲ್ಲಿ ಕಳ್ಳ ಬಂದು ಟೀಪುಡಿಯನ್ನು ಕದ್ದಿದ್ದಾಯಿತು.  ಆದರೆ, ಪಕ್ಕದ ಮನೆಯಲ್ಲಿ ಟೀ ಕುದಿಸುತ್ತಿದ್ದವರು ಬೈಯುವುದು ಕೇಳಿ ಬಂದು ಇವಳಿಗೆ ನಗುತಡೆಯದಾಯಿತು.  ಇವಳ ಮನೆಯಿಂದ ಕದ್ದ ಟೀ ಪುಡಿಯಲ್ಲಿ ಟೀ ಅಂಶ ಇದ್ದರೆ ತಾನೆ ಅದು ತನ್ನ ಗುಣವನ್ನು ತೋರಿಸುವುದು.  ಅಂದಿನಿಂದ ಇವಳ ಮನೆಯಲ್ಲಿ ಟೀ ಪುಡಿ ಕಳ್ಳತನವಾಗುವುದು ನಿಂತು ಹೋಯಿತಂತೆ!

Tuesday, May 05, 2020

ಪಕ್ಕದ ಮನಿ ಚೈನಾದ್ ಮಂದಿ ಸುಳ್ಳ ಹೇಳ್ಯಾರ್ ರೀ

ಪಕ್ಕದ ಮನಿ ಚೈನಾದ್ ಮಂದಿ ಸುಳ್ಳ ಹೇಳ್ಯಾರ್ ರೀ
ವೈರಸ್ ಇಲ್ಲ ವೈರಸ್ ಇಲ್ಲಾಂತ ಸಾರಿ ಹೇಳ್ಯಾರ್ ರೀ|

ಇಂಗ್ಲೀಸ್ ಬರದ ಮಾತಾಡೋ ಮಂದೀನ
ಇಂಗ್ಲೀಸ್ ಪಿರಂಗಿಗಳು ನಂಬಂಗಿಲ್ಲಾರೀ
ಬ್ಯಾರೇ ದೇಶ್‌ದಾಗ್ ಏನಾರಾ ಆಗ್ಲೀ
ನಮಗ್ಯಾಕ್ ಉಸಾಬರೀ ಅಂತಾರ್ ರೀ|

ಹಿಂದಿನ ಸಾಲ ಕಟ್ಟಂಗಿಲ್ಲ ಇಂದಿನ ವ್ಯಾಪಾರ ಬಿಡಂಗಿಲ್ಲ
ಎಲ್ಲಾ ಕೆಲ್ಸಕೂ ಚೈನಾ ಮಂದೀನೆ ಬೇಕು ಅಂತಾರ್ ರೀ
ಎಡವಟ್ಟಾಗಿ ಕಾರ್ಖಾನೆ ಮುಚ್ಚಿದ ಎಡಬಿಡಂಗಿ ಮಕ್ಳೆಲ್ಲ
ಎಲ್ಲಾ ವಸ್ತೂನೂ ಚೈನಾದಿಂದಾನೆ ತರಸ್ತಾರ್ ರೀ| 

ಸರಕು ಸಾಗಣೆ ಎಲ್ಲಾ ಕಡೆಗೂ ಚೈನಾದಿಂದ್ಲೇ ಹೋಗುತಲಿತ್ತು
ಭಾರೀ ಭಾರೀ ವ್ಯಾಪಾರ್‌ದ ಹಡಗೂ ಬಂದು ನಿಲ್ತಿದ್ವು ರೀ
ಸ್ವಲ್ಪ ರೊಕ್ಕಕ ಬಾಳಾ ಸಾಮಾನು ತಂದ್ರು ಮುಂದ ಹಾಕ್ಕೊಂಡ್ರು
ಮೈ ಚರಬಿ ಬೆಳಸಿಕೊಂಡು ಕೆಲ್ಸಾ ಇಲ್ಲದೆ ಅಡ್ಡ್ಯಾಡಾರ್ ರೀ|

ಕೊರೋನಾ ವೈರಸ್ ಹಾವಳಿ ನೋಡ್ರಿ ಎಲ್ಲಾ ಆಟ ಬಂದ್ ಆತು
ಇತ್ಲಾಗ್ ಉಗಿಯಂಗಿಲ್ಲ ನುಂಗಂಗಿಲ್ಲ ಅನ್ನೋ ಹಂಗಾತ್ ರೀ
ಚೈನಾ ದೇಶದ್ ಸಾವಾಸಾ ಬ್ಯಾಡಾಂತ ಎಲ್ಲರೂ ಅಂದ್ಕೊಂಡ್ರೂ
ಅಷ್ಟು ಸುಲಭ್‌ದಾಗ ಕಳಚಕಣಂಗಿಲ್ಲ ಚೈನಾ ಮಂದಿ ಅಂತೋರ್ ರೀ|

ಏನಾರ ಆಗ್ಲಿ, ಏನಾರ ಹೋಗ್ಲಿ ನಿಯತ್ತು ಇರಬೇಕ್ರಿ
ದೊಡ್ಡ ಮಂದಿಗೆ ಇಷ್ಟು ಸಣ್ಣ ವಿಷ್ಯ ತಿಳಿದಂಗ್ ಆಗೇತ್ರಿ
ಇಂಥವ್ರನ್ನೆಲ್ಲ ನೋಡಿ ನೋಡಿ ಕಣ್ಣ್ ಕಣ್ಣ್ ಬಿಡಬೇಕ್ರಿ
ಮಾಡಿದ್ದುಣ್ಣೋ ಮಾರಾಯಾ ಅಂದು ಸುಮ್ಮನಿರಬೇಕ್ರಿ|

Monday, May 04, 2020

ತಿನ್ನಬಾರದ್ದನ್ನ ತಿಂದರೆ...

ತಿನ್ನಬಾರದ್ದನ್ನ ತಿಂದರೆ... ಆಗಬಾರದ್ದು ಆದೀತು... ಇದು ಈ ಹೊತ್ತಿನ ತತ್ವ.  ಮುನ್ನೂರು ಮಿಲಿಯನ್‌ಗೂ ಹೆಚ್ಚು ಜನಸಂಖ್ಯೆ ಹೊಂದಿದ ಯುಎಸ್‌ಎ ನಂತಹ ಮುಂದುವರಿದ ದೇಶದಲ್ಲಿ ವರ್ಷಕ್ಕೆ 60 ರಿಂದ 75 ಸಾವಿರ ಜನರು ತೀರಿಕೊಳ್ಳುತ್ತಿರುವ ವರದಿಗಳು CDCಯ ಸೈಟ್‌ನಲ್ಲಿ ಸಿಗುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಫ್ಲೂ ಎನ್ನುವ ಮಹಾಮಾರಿ (pandemic, ಸರ್ವವ್ಯಾಪಿ ವ್ಯಾಧಿ) ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಂಟಿಕೊಳ್ಳುವ ಈ ಖಾಯಿಲೆಯ ಸೋಂಕು ವೈರಸ್ಸುಗಳು ವರ್ಷಕ್ಕೊಂದು strain ನಂತೆ ಬದಲಾಗಿ ಮನುಕುಲಕ್ಕೆ ಸೆಡ್ಡುಹೊಡೆದಿವೆ ಎಂದರೆ ಅತಿಶಯವೇನೂ ಅಲ್ಲ. ಹೀಗೆ ಹಬ್ಬಿಕೊಳ್ಳುವ ಮತ್ತು ವರ್ಷದಿಂದ ವರ್ಷಕ್ಕೆ ವೃದ್ಧಿಸುವ ವ್ಯಾಧಿಯ ಹಿನ್ನೆಲೆಯಲ್ಲಿ ಚೈನಾದಂತಹ ರಾಷ್ಟ್ರಗಳು ಎದ್ದು ಕಾಣುತ್ತವೆ. ಫ್ಲೂ ಹೇಗೆ ಹುಟ್ಟಿ ಹೇಗೆ ಬೆಳೆಯುತ್ತದೆ ಎಂದು ನೋಡಿದಾಗ ಅದರ ಹಿನ್ನೆಲೆಯಲ್ಲಿ ಅನೇಕ ಪ್ರಾಣಿಗಳೂ ಕಂಡುಬರುತ್ತವೆ!
***


ಚೀನಾದಲ್ಲಿ ಏನೇನಾಗುತ್ತೋ, ಅದೆಷ್ಟು ಸತ್ಯ ಹೊರಗೆ ಬರುತ್ತೋ ಎನ್ನುವುದು ನಮಗೆಲ್ಲ ಮೊದಲಿಂದಲೂ ಇದ್ದ ಸಂಶಯ. ಕಮ್ಯುನಿಸ್ಟ್ ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿ ನಲುಗುವ ಈ ರೀತಿಯ ದೇಶಗಳು ವಿಶ್ವದ ಆರ್ಥಿಕ ಮಾನದಂಡದಲ್ಲಿ ಎಲ್ಲರಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೇಶವಾಗಿವೆ. ಕೆಲವೊಮ್ಮೆ ಸರ್ವಾಧಿಕಾರದ ನಡೆ ಅನೇಕ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದೆ. ರಾತ್ರೋ ರಾತ್ರಿ ಎಲ್ಲರನ್ನು ತೆರವುಗೊಳಿಸಿ ಹೊಸ ಅಣೆಕಟ್ಟುಗಳನ್ನು ಕಟ್ಟಿದ್ದಿದೆ. ಅಲ್ಲದೇ ಈ ರೀತಿಯ ಅಣೆಕಟ್ಟುಗಳು ಒಡೆದು ಹೋದಾಗ ಲೆಕ್ಕಕ್ಕೆ ಸಿಗದ ಮಿಲಿಯನ್ನುಗಟ್ಟಲೆ ಜನರನ್ನು ಇನ್ನೂ ಹುಡುಕುತ್ತಿರುವವರು ಇದ್ದಾರೆ. ಮನೆಗೆ ಒಂದೇ ಮಗು, ಎಂದು ಕಾನೂನನ್ನು ಬಳಸಿ ದೇಶದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳುವಂತಹ ನಿಸರ್ಗದೊಂದಿಗೆ ಹೊಡೆದಾಡುವ ದಾರ್ಷ್ಟ್ಯವನ್ನೂ ಈ ದೇಶ ಪ್ರಕಟಿಸಿದ್ದಿದೆ. ಇಂತಹುದರಲ್ಲಿ ಅಲ್ಲಿನ ದೇಶವಾಸಿಗಳು ತಮಗೆ ಇಷ್ಟವಾದುದ್ದನ್ನು ತಿನ್ನಬೇಕು, ತಿನ್ನಬಾರದು ಎಂದು ಏಕೆ ತಾನೆ ಕಾನೂನನ್ನು ನಿರ್ಮಿಸೀತು?

ಹನ್ನೊಂದು ಮಿಲಿಯನ್ ಜನರಿರುವ ವುಹಾನ್ ನಗರದ ಮಾರ್ಕೆಟ್ಟಿನಲ್ಲಿ ಯಾವ ಯಾವ ಪ್ರಾಣಿಗಳನ್ನು ಮಾರುತ್ತಾರೆ ಎಂದು ಶೋಧಿಸಿದಾಗ ನಾಯಿ, ನವಿಲು, ಆಟರ್ಸ್, ಒಂಟೆ, ಕೊವಾಲ, ಹಾವುಗಳ ಜೊತೆಗೆ ತೋಳದ ಮರಿಗಳು, ಕಾಡು ಬೆಕ್ಕುಗಳು ಕಂಡುಬಂದವು. ಈ ಜನರ ಹೊಟ್ಟೆ ಹೊರೆಯಲು ಅಗಾಧವಾದ ಸೀ ಫುಡ್ ಇದ್ದರೂ ಸಹ ಇಲ್ಲಿನ ಜನರಿಗೆ ಕಾಡಿನಲ್ಲಿ ವಾಸಿಸುವ ಡೆಲಿಕಸಿಗಳೇ ಇಷ್ಟ! ಯುಎಸ್‌ಎನಲ್ಲಿಯೇ ಚೈನಾದ ರೆಸ್ಟೋರೆಂಟುಗಳಲ್ಲಿ ಮೀನು, ಕಪ್ಪೆ, ಲಾಬ್‌ಸ್ಟರ್‌ಗಳನ್ನು ದಯನೀಯ ಸ್ಥಿತಿಯಲ್ಲಿ ತುಂಬಿಟ್ಟುಕೊಂಡು ತಮ್ಮ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಇವರುಗಳು ಇನ್ನು ಮೈನ್ ಲ್ಯಾಂಡ್ ಚೈನಾದ ನೆಲದಲ್ಲಿ ಪ್ರಾಣಿಗಳನ್ನು ಯಾವ ರೀತಿ ಸತಾಯಿಸುತ್ತಿರಬೇಡ. ಒಂದು ಲೆಕ್ಕದಲ್ಲಿ ಇವರೇ ಫಾರ್ಮ್‌ನಲ್ಲಿ ಬೆಳೆಸಿ ಕೊಂದು ತಿನ್ನುವುದಿದ್ದರೆ ಹೇಗಾದರೂ ಇದ್ದುಕೊಂಡಿರಲಿ ಎನ್ನಬಹುದಿತ್ತು. ಆದರೆ, ಕಾಡು ಪ್ರಾಣಿಗಳನ್ನ ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳುವ ಇವರ ಈ ದುರ್ಗುಣವನ್ನ ಯಾವ ರೀತಿಯಿಂದಲೂ ಸಹಿಸಲಾಗದು.  ಮೇಲಾಗಿ ಕಾಡಿನಲ್ಲಿನ ಪ್ರಾಣಿಗಳನ್ನು ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳಲು ಇವರಿಗೆ ಯಾರು ಲೈಸನ್ಸ್ ಕೊಟ್ಟವರು?  ಬಿಲಿಯನ್ನುಗಟ್ಟಲೆ ಬೆಳೆಯುತ್ತಿರುವ ಇವರ ಜನಸಂಖ್ಯೆಯನ್ನು ಮತ್ತಿನ್ಯಾವುದೋ ಜೀವಿ ಕೊಲ್ಲುವದು ನ್ಯಾಯ ಸಮ್ಮತವೇ?

ನಿಸರ್ಗದ ನಿಯಮಗಳನ್ನು ಗಾಳಿಗೆ ತೂರಿ ಅನೇಕ ಇಂಡಸ್ಟ್ರಿಗಳನ್ನು ಕಟ್ಟಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಪೊಲ್ಯೂಷನ್ ಅನ್ನು ಹುಟ್ಟಿಸುವ ಈ ದೇಶದ ವಿರುದ್ಧ ಯಾವುದೇ ಶಕ್ತಿಯೂ ತನ್ನ ಧ್ವನಿ ಎತ್ತುವುದಿಲ್ಲ. ಮಾರುಕಟ್ಟೆಯ ಬೆಲೆ ಮತ್ತು ತನ್ನ ಕರೆನ್ಸಿಯನ್ನು ಡಾಲರ್ ಒಂದಿಗೆ ತುಲನೆ ಮಾಡಿಕೊಂಡು ರಾತ್ರೋ ರಾತ್ರಿ ಡೀವ್ಯಾಲ್ಯೂ ಮಾಡುವ ಈ ದೇಶವನ್ನು ಯಾವ ವಿಶ್ವ ಸಂಸ್ಥೆಯೂ ಎಚ್ಚರಿಸುವ ಗೋಜಿಗೆ ಹೋಗುವುದಿಲ್ಲ. ಮಿತಿಮೀರಿ ಕಟ್ಟಡ, ರಸ್ತೆ, ಡ್ಯಾಮ್ ಮೊದಲಾದವುಗಳನ್ನು ಕಟ್ಟಿ ತನ್ನ ಕಾಡನ್ನು ನಾಶಮಾಡಿಕೊಳ್ಳುವುದು ಬರೀ ಆಂತರಿಕ ಸಮಸ್ಯೆಯಾಗುತ್ತದೆ. ಯಾವುದೇ ಪೊಲ್ಯೂಷನ್ ಕಂಟ್ರೋಲ್ ಅಥವಾ ನ್ಯೂಕ್ಲಿಯರ್ ಪ್ರೊಲಿಫಿರೇಷನ್ ಕಾನೂನಿಗೆ ಸಿಗದೇ ಮನಬಂದಂತೆ ವರ್ತಿಸುವುದರಿಂದ ಹೆಚ್ಚಾಗುವ ಗ್ಲೋಬಲ್ ವಾರ್ನಿಂಗ್ ಎದುರಿಗೆ ಯಾರು ಜವಾಬು ಕೊಡುತ್ತಾರೆ?

***

ಕೊರೋನಾ ವೈರಸ್ ಇಂದು ನಿನ್ನೆಯದಲ್ಲ, ಅದು ಎಂದಿಗೂ ಸಾಯುವುದಿಲ್ಲ. ಎಲ್ಲಿಯವರೆಗೆ ಮನುಕುಲ ತನ್ನನ್ನು ತಾನು ಜನಸಂಖ್ಯೆಯ ಸ್ಫೋಟದ ಮುಖಾಂತರ ದ್ವಿಗುಣ ತ್ರಿಗುಣಗೊಳ್ಳುತ್ತಾ ತನ್ನ ಸುತ್ತಲಿನ ಸಂಪನ್ಮೂಲವನ್ನೆಲ್ಲ ತಿಂದು ತೇಗುತ್ತದೆಯೋ,  ಅಲ್ಲಿಯವರೆಗೆ ಈ ವಿಶ್ವದ ಉಳಿದ ಜೀವಿಗಳಿಗೆ ಉಳಿಗಾಲವಿಲ್ಲ. ಸಣ್ಣ ಏಕಾಣುಕೋಶದ ಜೀವಿಯಿಂದ ಹಿಡಿದು ಆನೆಯವರೆಗೆ, ತಿಮಿಂಗಲದವರೆಗೆ ಎಲ್ಲ ಪ್ರಾಣಿ-ಪಕ್ಷಿಗಳೂ ನಮ್ಮ ಕೃಪೆಯಲ್ಲಿ ಬದುಕುವಂತೆ ಮಾಡಿಕೊಂಡಿರುವುದು ನಮ್ಮ ಮುಂದುವರಿದ ಪೀಳಿಗೆಯ ಹೆಗ್ಗಳಿಕೆ.

***
ಈ ಕೆಳಗಿನ ಚಿತ್ರಗಳನ್ನು ನೋಡಿ:


ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಒಂದು ರೇಟ್ ಫಲಕವನ್ನು ನೋಡಿ!  ನಿಜವೋ ಸುಳ್ಳೋ ಆದರೆ ಇಲ್ಲಿ ಎಲ್ಲ ರೀತಿಯ ಪ್ರಾಣಿಗಳೂ ಕಾಣ ಸಿಗುತ್ತವೆ.




ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಮೀಟ್ ಮಾರ್ಕೆಟ್ಟಿನ ಫೋಟೋ.  

Sunday, May 03, 2020

ಸಿನಿಮಾ ವ್ಯಥೆ

ಈ ಕೋವಿಡ್ ವ್ಯಥೆಯಿಂದ ಎಷ್ಟೆಷ್ಟು ಹೊಸ ಕಥೆಗಳು ಹುಟ್ಟುತ್ತವೆಯೋ ಅಥವಾ ಕೋವಿಡ್‌ನಿಂದ ಒಂದು ಹೆಚ್ಚಿನ ಗುಣಮಟ್ಟದ ಸಿನಿಮಾ ಕಥೆಗಳು ಬರಬಹುದೋ ಎಂದು ನಿರೀಕ್ಷೆಯಲ್ಲಿದ್ದ ನನಗೆ, ನಮ್ಮ ಸಿನಿಮಾ ಉದ್ಯಮದ ಬಗ್ಗೆ ಹೆಚ್ಚು ಆಲೋಚಿಸಿದಂತೆಲ್ಲ, ನಲಿವಿಗಿಂತ ನೋವೇ ಹೆಚ್ಚಾಗಿ ಕಂಡಿತು.

ಮೊದಲೇ ಥಿಯೇಟರುಗಳಿಗೆ ಹೋಗದೇ ಹೊರಗುಳಿದಿದ್ದ ಪ್ರೇಕ್ಷಕರು ಈಗಂತೂ ಇನ್ನೂ ದೂರವೇ ಉಳಿಯುತ್ತಾರೆ.  ಎಲ್ಲ ಕಡೆಗೆ ವ್ಯವಸ್ಥಿತವಾಗಿ ಮತ್ತೆ ವ್ಯಾಪಾರ ವಹಿವಾಟುಗಳು ಓಪನ್ ಆಗುತ್ತಿದ್ದಂತೆ, ಸಿನಿಮಾ ಪ್ರಪಂಚ ಚೇತರಿಸಿಕೊಳ್ಳಲು ಇನ್ನೂ ಸಮಯ ಹಿಡಿಯುತ್ತದೆ.  ಈ ವರ್ಷವಂತೂ ನಾವೆಲ್ಲ, ಈಗಾಗಲೇ ಬಿಡುಗಡೆ ಹೊಂದಿರುವ ಸಿನಿಮಾಗಳನ್ನು ಆನ್‌ಲೈನ್ ಮಾಧ್ಯಮದಲ್ಲಿ ಮಾತ್ರ ನೋಡಿ ಖುಷಿ ಪಡಬೇಕು, ಅಷ್ಟೇ.

ಸಿನಿಮಾವನ್ನು ನಂಬಿಕೊಂಡು ಬದುಕಿದ ಕಲಾವಿದರಷ್ಟೇ ಅಲ್ಲ, ಅವರನ್ನು ಆದರಿಸಿದ ಅನೇಕ ಕುಟುಂಬ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ.  ಈ ವೇದನೆ ಕೇವಲ ರಾಜ್ಯ, ರಾಷ್ಟ್ರದ ಮಟ್ಟಿಗೆ ಸೀಮಿತವಾಗಿರದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೆ.

ಒಳ್ಳೆಯ ಸಿನಿಮಾವನ್ನು ಮಾಡಲು ಮೊದಲೇ ಹಿಂಜರಿಯುತ್ತಿದ್ದ ನಿರ್ಮಾಪಕರುಗಳು ಬಂಡವಾಳವನ್ನು ತೊಡಗಿಸಲು ಹಿಂದೆ ಹೆಜ್ಜೆ ಇಡುತ್ತಾರೆ.  ಅವರನ್ನು ನಂಬಿಕೊಂಡು ಒಳ್ಳೆಯ ಕಥೆಯನ್ನು ಕೈಯಲ್ಲಿಟ್ಟುಕೊಂಡ ನಿರ್ದೇಶಕರ ತಂಡ ಮಂಕಾಗುತ್ತದೆ.  ಒಂದು ಉತ್ತಮ ಸಿನಿಮಾಕ್ಕೆ ಬೇಕಾದ ಬಂಡವಾಳವನ್ನೇ ಹುಟ್ಟಿಸುವುದು ಕಷ್ಟವಾದಾಗ, ಕೆಲಸಗಾರರ ವೇತನ ಮತ್ತು ಕಲಾವಿದರ ಸಂಭಾವನೆಗಳಿಗೆ ಕತ್ತರಿ ಬೀಳುತ್ತದೆ. ಇದರಿಂದ ಹೊರಬರುವ ಸಿನಿಮಾಗಳ ಸಂಖ್ಯೆ ಮಿತಿಯಾಗುತ್ತದೆ.  ಕೊನೆಗೆ ಹೆಚ್ಚಿನ ಕಾರ್ಮಿಕ ವರ್ಗ, ಈಗಾಗಲೇ ನಲುಗಿರುವ ಕಲಾವಿದರ ನೋವು ಮುಗಿಲು ಮುಟ್ಟುತ್ತದೆ.

ಇದು ಒಂದು ರೀತಿಯ ಕಾಡ್ಗಿಚ್ಚಿನ ಅನುಭವವನ್ನು ಸೃಷ್ಟಿಸುತ್ತದೆ.  ಅದು ತನ್ನ ಹಾದಿಯಲ್ಲಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುತ್ತದೆ.  ಕಲಾವಿದರ/ನಟ-ನಟಿಯರ ಮಾರ್ಕೆಟ್ಟುಗಳು ಕುಸಿಯತೊಡಗಿ, ಅವರು ತಮ್ಮ ಹೈ ಮೇಂಟೆನೆನ್ಸ್ ಜೀವನವನ್ನು ನಡೆಸುವುದು ದುಸ್ತರವಾಗುತ್ತದೆ.  ಕಲೆಯಿಂದ ಬದುಕೋ ಅಥವಾ ಬದುಕಿಂದ ಕಲೆಯೋ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗುತ್ತದೆ.

ಒಮ್ಮೆ ಕಾಡ್ಗಿಚ್ಚು ಬಂದಾದನಂತರ ಅಗ್ನಿ ಆವರಿಸಿದ ಜಾಗದಲ್ಲಿ ದೈತ್ಯ ವೃಕ್ಷಗಳು ದುತ್ತನೆ ರಾತ್ರೋ ರಾತ್ರಿ ಬಂದಿಳಿಯುವುದಿಲ್ಲ.  ಮತ್ತೆ ಜೀವನ ಸಣ್ಣಸಣ್ಣ ಗಿಡಗಳಿಂದ, ನೆಲದಲ್ಲಿ ಹುದುಗಿದ ಬೀಜಗಳು ಮುಂದಿನ ಮಳೆಗಾಲದಲ್ಲಿ ಮೊಳಕೆ ಒಡೆಯುವುದರಿಂದ ಆರಂಭವಾಗುತ್ತವೆ.  ಈ ಸಂದರ್ಭದಲ್ಲಿ ಹುಟ್ಟುವ ಗಿಡಗಳು ನಿಜವಾಗಿಯೂ ಪ್ರಕೃತಿಯ ವಿಕೋಪದಿಂದಷ್ಟೇ ಅಲ್ಲ, ಪ್ರಕೃತಿಯ ಪ್ರಯೋಗಾಲಯದಲ್ಲೂ ಸಹ ಜಯಿಸಿದಂತಹವು.  ರಾತ್ರೋ ರಾತ್ರಿ ನಾಯಿಕೊಡೆಗಳಂತೆ ನೂರಾರು ಏಳದೆ, ಎಷ್ಟೋ ಚದುರ ಹೆಕ್ಟೇರ್‌ಗಳಿಗೆ ಒಂದರಂತೆ ಬೃಹತ್ ವೃಕ್ಷಗಳು ಸಸಿಗಳಾಗಿ ಹುಟ್ಟಿ ಬೆಳೆದು ಮರವಾಗಲು ಮತ್ತೆ ನೂರು ವರ್ಷವಾದರೂ ಬೇಕಾಗುತ್ತದೆ.

ನಿಜ.  ಒಂದು ನೂರು ವರ್ಷಗಳಲ್ಲಿ ಏನು ಬೇಕಾದರೂ ಆಗಬಹುದು.  ಜೀವನಗತಿ ಬದಲಾದಂತೆ ಸಿನಿಮಾವೂ ಬದಲಾಗುತ್ತದೆ.  ಸಿನಿಮಾವನ್ನು ನಂಬಿ ಬದುಕುವ ಕುಟುಂಬಗಳು ಕಡಿಮೆಯಾಗುತ್ತವೆ.  ಸಮಾಜಕ್ಕೆ ಏನನ್ನಾದರೂ ಹೊಸತೊಂದನ್ನು ಕೊಡಬೇಕು ಎನ್ನುವ ಅತೀವ ತುಡಿತದ ನಿರ್ದೇಶಕ ಕಷ್ಟಸಾಧ್ಯವಾದರೂ ತನ್ನ ಗುರಿಯನ್ನು ಕಂಡುಕೊಳ್ಳುತ್ತಾನೆ.  ಆ ನಿಟ್ಟಿನಲ್ಲಿ ಮುಂದೆ ತೆರೆಕಾಣುವ ಚಿತ್ರಗಳು ಸಮಯದ ಸಮರದಲ್ಲಿ ಬೆಂದು, ಕಷ್ಟದಲ್ಲಿ ಪುಳಕಿತವಾಗಿ ಅರಳಿದ ಹೂಗಳಂತೆ ನಮಗೆಲ್ಲರಿಗೂ ಕಾಣಿಸಿಕೊಳ್ಳಬಹುದು.

ಬಿಲಿಯನ್ ಡಾಲರ್‌ ಬಂಡಾವಾಳದ ಬಿಸಿನೆಸ್ಸ್‌ನಿಂದ ಖ್ಯಾತರಾದ ಪ್ರಪಂಚದ ಕೆಲವೇ ಕೆಲವು ಕಂಪನಿಗಳು ಈ ಕಲಾವಿದರ, ತಂತ್ರಜ್ಞರ ರಕ್ತವನ್ನು ಕುಡಿಯದಿದ್ದರೆ ಸಾಕು!

Friday, May 01, 2020

ಸಾಲವೆಂಬ ಶೂಲ!

ನಮ್ಮ ಹಳ್ಳಿಕಡೆಯಲ್ಲಿ ಒಂದು ಮಾತು ಬರುತ್ತಿತ್ತು, "ಸಾಲಾ-ಸೂಲಾ ಮಾಡಿಯಾದ್ರೂ...".  ಇದನ್ನ ಹೆಗ್ಗಳಿಕೆಯ ವಿಷಯವಾಗಿ ಬಳಸಬಹುದಿತ್ತು, ಅಥವಾ ತೆಗಳಿಕೆಯ ಮಾತಾಗಿಯೂ ಬಳಸಬಹುದಾಗಿತ್ತು.  "ಸಾಲಾ-ಸೂಲಾ ಮಾಡಿ ಓದ್ಸಿದ್ರೂ ನನ್ನ ಮಗ ಕೈಗೆ ಹತ್ತದವನಾದ!" ಎಂದು ತಲೆ ಮೇಲೆ ಕೈ ಇಟ್ಟುಕೊಂಡವರನ್ನು ನೋಡಿದ್ದೇನೆ.  ಅಂತೆಯೇ, "ಸಾಲಾ-ಸೂಲಾ ಮಾಡಿ, ದೊಡ್ಡ ಮನೆ ಕಟ್ಟಿಸಿದವರು..", ಅಂತಹವರನ್ನೂ ಸಹ ನೋಡಿದ್ದೇನೆ.  ಒಟ್ಟಿನಲ್ಲಿ ಆಗಿನ ನಮ್ಮ ಸಾಮಾಜಿಕ ವ್ಯಾಪ್ತಿಯಲ್ಲಿ ಸಾಲವೆಂಬುದು ಯಾವತ್ತಿಗೂ ಶೂಲವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.

ಸಾಲವನ್ನು ಕೈಗಡ ಎಂದು ತೆಗೆದುಕೊಳ್ಳಬಹುದಿತ್ತು. ಉದ್ರಿ ಎಂದು ಅಂಗಡಿಗಳಲ್ಲಿ ಬರೆಸಬಹುದಿತ್ತು.  ಎರವಲು ಪಡೆಯಬಹುದಿತ್ತು. ಕಡ ತೆಗೆದುಕೊಳ್ಳಬಹುದಿತ್ತು. ಕಯ್ಬದಲು ಮಾಡಿಕೊಂಡು "ಋಣ" ಹೆಚ್ಚಿಸಿಕೊಳ್ಳಬಹುದಿತ್ತು.  ಹೀಗೆ ತೆಗೆದುಕೊಂಡ ಸಾಲ ಎಲ್ಲವೂ "ಋಣ"ಮಯ ವಾಗಿತ್ತು ಎಂದರೆ ತಪ್ಪಾಗಲಾರದು.  ಆದ್ದರಿಂದ, ಸಹಜವಾಗೇ ಸಾಲಕ್ಕೆ ನೆಗೆಟಿವ್ ಕನ್ನೋಟೇಷನ್ ಇದ್ದೇ ಇದೆ.

***
ನಮ್ಮ ವಂಶಜರಲ್ಲಿ ಕಳೆದ ಎರಡು ತಲೆಮಾರುಗಳಲ್ಲಿ ಸಾಲ ಮಿತಿ ಮೀರಿದೆ.  ಎರಡು ತಲೆಮಾರುಗಳ ಹಿಂದೆ, ಕೈಗಡ ತೆಗೆದುಕೊಳ್ಳುವುದು ಎಂದರೆ ಅದೊಂದು ಅಕ್ಷಮ್ಯ ಅಪರಾಧವಾಗಿತ್ತು.  ಮೂಲತಃ ಸರ್ಕಾರಿ ಕೆಲಸದ ಸಂಬಳದಲ್ಲಿ (ನನಗೆ ಗೊತ್ತಿರುವ ಹಾಗೆ) ನಾಲ್ಕು ತಲೆಮಾರುಗಳಿಂದ ಬದುಕಿದ್ದ ನನ್ನ ಹಿರಿಯರು, ಯಾವಾಗಲೂ "ಹಾಸಿಗೆ ಇದ್ದಷ್ಟೇ ಕಾಲು ಚಾಚು!" ಎನ್ನುವುದನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು.  ನನ್ನ ತಾತನವರು ತಮ್ಮ ಟ್ರಂಕಿನಲ್ಲಿರುವ ಒಂದು ಪುಸ್ತಕದಲ್ಲಿ ತಮ್ಮ ಸಂಬಳ ಬಂದ ದಿನ ಎಲ್ಲ ರೂಪಾಯಿಗಳನ್ನು ಅಚ್ಚುಕಟ್ಟಾಗಿ ತೆಗೆದಿಟ್ಟು, ತಿಂಗಳು ಕಳೆದಂತೆ ಒಂದೊಂದೇ ನೋಟನ್ನು ಮನೆಯ ಒಂದೊಂದು ಖರ್ಚುಗಳಿಗೋಸ್ಕರ ಬಳಸುತ್ತಾ ಬರುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.  ಕೊನೆಯಲ್ಲಿ ನನ್ನ ತಾತನವರು ತೀರಿಕೊಂಡಾಗ ಆ ಪುಸ್ತಕದಲ್ಲಿದ್ದ ಗರಿಗರಿಯಾದ ಹತ್ತು ರುಪಾಯಿ ನೋಟುಗಳು ನಮ್ಮ ಮನೆಯಲ್ಲಿ ಇವತ್ತಿಗೂ ಹಾಗೆಯೇ ಇದೆ.  ಆಗೆಲ್ಲ ಹತ್ತು ರುಪಾಯಿಗಳು ಬಹಳ ದೊಡ್ಡ ಮೊತ್ತವಾಗಿರುತ್ತಿತ್ತು.  ಬೇಸಿಗೆಗೆಂದು ಅಜ್ಜನ ಮನೆಗೆ ಹೋದಾಗ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತಂದದ್ದು ನನಗೆ ನೆನಪಿದೆ.

ನನ್ನ ತಾತನವರು, ಇನ್ನೊಂದು ಮಾತನ್ನು ಯಾವಾಗಲೂ ಹೇಳುತ್ತಿದ್ದುದು, ಈಗ ಪ್ರಸ್ತುತವೆನಿಸುತ್ತಿದೆ, "ಆಳಾಗಿ ದುಡಿ, ಅರಸಾಗಿ ಉಣ್ಣು".  ತಮ್ಮ ಜೀವಿತಾವಧಿಯಲ್ಲಿ ಎಷ್ಟೊಂದು ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲವೊಮ್ಮೆ ಗಂಜಿ-ಅಂಬಲಿಯನ್ನು ಕುಡಿದು ಬದುಕಿದ್ದರೂ ಅದು ಪರಮಾನ್ನ, ಪರಮಾತ್ಮನ ಪ್ರಸಾದವೆಂದೇ ನಂಬಿಕೊಂಡು ಇದ್ದುದರಲ್ಲಿ ಹಂಚಿಕೊಂಡು ಉಂಡು ಬದುಕಿ ಬಂದ ಕುಟುಂಬದವರು ಅವರೆಲ್ಲರು.  ಮಾನ-ಮರ್ಯಾದೆಗಳು ಎಲ್ಲಕ್ಕಿಂತ ಹೆಚ್ಚು.  ದಿನನಿತ್ಯ ತಪ್ಪದ ಶುಚಿಕರ್ಮಗಳು, ದೇವರ ಪೂಜೆ, ಶುಭ್ರವಾದ ಬಟ್ಟೆ, ಪ್ರತಿನಿತ್ಯವೂ ಗುಡಿಸಿ ಒರೆಸಿ ಸ್ವಚ್ಛ ಮಾಡಿಕೊಂಡು ಬರುತ್ತಿದ್ದ ಮನೆಯ ಒಳಗೆ-ಹೊರಗೆ, ಓದುವುದಕ್ಕೆ ಸಾಕಷ್ಟು ಪುಸ್ತಕಗಳು.  ಆಗಾಗ್ಗೆ ಬಂದು ಹೋಗುತ್ತಿದ್ದ ನೆಂಟರು-ಇಷ್ಟರು... ಬೇಡವೆಂದರೂ ಒಂದರಲ್ಲೊಂದು ತೊಡಗಿಕೊಳ್ಳ ಬೇಕಾದಂಥ ಪೂಜಾ ಕರ್ಮಗಳು, ಹಬ್ಬ ವಿಧಿ-ವಿಧಾನಗಳು -- ಹೀಗೇ ಅನೇಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುಖವಾದ ಜೀವನ, ತುಂಬು ಕಣ್ಣಿನ ನಿದ್ರೆ, ದೈವದತ್ತ ಆರೋಗ್ಯ - ಇವೆಲ್ಲದರ ಜೊತೆ ಸಾಲರಹಿತ ಜೀವನ!  ಅವರೆಲ್ಲರೂ ಪರಿಪೂರ್ಣರು ಎಂದು ನಾನು ಬಲವಾಗಿ ನಂಬಿಕೊಂಡಿದ್ದೇನೆ.

ಲಂಚ ಅಥವಾ ಗಿಂಬಳವಿಲ್ಲದ ಸರ್ಕಾರಿ ನೌಕರಿಯಲ್ಲಿ ಸಾಲವಿಲ್ಲದೇ ಅನೇಕ ಹೊಟ್ಟೆಗಳನ್ನು ಹೊರೆಯುತ್ತಾ ದೊಡ್ಡ ಕುಟುಂಬವನ್ನು ಸಾಕುವುದು ಸುಲಭದ ಮಾತಲ್ಲ.  ಆಗೆಲ್ಲಾ ಅವಿಭಾಜ್ಯವಾಗಿ ಬದುಕುತ್ತಿದ್ದ ತುಂಬಿದ ಕುಟುಂಬಗಳಲ್ಲಿ ಬರೀ ತಮ್ಮ ತಮ್ಮ ಪರಿವಾರವನ್ನು ಹೊಟ್ಟೆ ಹೊರೆಯುವುದು ಯಾವ ದೊಡ್ಡ ವಿಚಾರವೂ ಅಲ್ಲವೇ ಅಲ್ಲ... ಅವರವರ ಕುಟುಂಬಗಳ ಜೊತೆ, ಅಜ್ಜ-ಅಜ್ಜಿ, ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ, ಹೀಗೆ... ಅನೇಕರು ಬೇಕು-ಬೇಡವೆಂದರೂ ಆಯಾ ಕುಟುಂಬಗಳಲ್ಲಿ ಸೇರಿ ಹೋಗಿರುತ್ತಿದ್ದರು.  ಆದುದರಿಂದಲೇ ಮನೆಯಲ್ಲಿ ಒಂದಿಷ್ಟು ಜನರಿಗೆ ಯಾವಾಗಲೂ ಅಡುಗೆ ಮನೆಯನ್ನು ಬಿಟ್ಟು ಹೊರಬರಲು ಸಾಧ್ಯವಾಗದಿದ್ದುದು.  ಏಕಾದಶಿ ಅಥವಾ ಸೂತಕದ ಸಮಯದಲ್ಲೂ ಸಹ ಮನೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳು ಇರುತ್ತಿದ್ದವು.  ಮನೆಯವರಿಗೆಲ್ಲಾ ಸ್ನಾನಕ್ಕೆ ನೀರು ಕಾಸಿಕೊಟ್ಟು, ತಿಂಡಿ ಮಾಡಿ, ಕಾಫಿ ಕುಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತೇನೋ? ಅವುಗಳ ಜೊತೆಯಲ್ಲಿ ಜಾನುವಾರುಗಳಿಗೆ ಬಾಯಾರು ಕೊಡುವುದು, ನಾಯಿ-ಬೆಕ್ಕುಗಳಿಗೆ ಊಟವಿಕ್ಕುವುದು.  ಹೀಗೆ ಪ್ರತಿನಿತ್ಯ ಅನೇಕ ಬಾಯಿ ಮತ್ತು ಕೈಗಳಿಗೆ ಉಸಿರಾಗಬೇಕಿತ್ತು, ಉತ್ತರ ಕೊಡಬೇಕಿತ್ತು.  ಯಾರೂ ಯಾವತ್ತೂ ಉದಾಸೀನತೆ, ಆಲಸ್ಯಗಳಿಂದಾಗಿ ನಟ್ಟ ನಡುವಿನ ದಿನ ಮಲಗಿದ್ದನ್ನು ನಾನು ನೋಡಿಲ್ಲ!

ಸರಳ ಜೀವನವೇನೋ ಹೌದು, ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಒಂದು ಕ್ಷಣವೂ ಬಿಡುವಿರದೇ ದುಡಿದು ದಣಿಯುವ ದಿನಗಳು ಅವರದಾಗಿದ್ದವು.  ವಾರದ ದಿನಗಳು, ವಾರಾಂತ್ಯದ ದಿನಗಳಲ್ಲಿ ಕಛೇರಿಗೆ ಹೋಗಿ ಬರುವುದರ ಹೊರತಾಗಿ ಮತ್ತೇನೂ ವ್ಯತ್ಯಾಸವಿರಲಿಲ್ಲ.

***
ಇಂತಹ ಸೋಶಿಯಲಿಸ್ಟಿಕ್ ವ್ಯವಸ್ಥೆಯಲ್ಲಿ ಬೆಳೆದು ಬಂದ ನನಗೆ, ಅಮೇರಿಕಕ್ಕೆ ಬಂದ ಹೊಸತರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕ್ರೆಡಿಟ್ ಕಾರ್ಡ್ ಬಂದಾಗ ಅದೇಕೆ ಅಷ್ಟೊಂದು ಸಂಭ್ರಮವಾಗಿತ್ತೋ ಗೊತ್ತಿಲ್ಲ.  ಆಗ ನಮ್ಮ ಕ್ರೆಡಿಟ್ ಹಿಸ್ಟರಿ ಎಲ್ಲೂ ಇರದ ಸಮಯದಲ್ಲಿ ನಾವೇ ಅಡ್ವಾನ್ಸ್ ಆಗಿ ದುಡ್ಡು ಕೊಟ್ಟು, ನಮ್ಮ ಕ್ರೆಡಿಟ್ ಹಾಗಾದರೂ ಬೆಳೆಯಲಿ ಎಂದು, ಒಂದು ಬಂಗಾರದ ಬಣ್ಣದ ಕ್ರೆಡಿಟ್ ಕಾರ್ಡ್ ಅನ್ನು "ಕೊಂಡಿದ್ದೆವು"!  ನಮ್ಮ ರೂಮ್‌ಮೇಟ್‌ಗಳಲ್ಲಿ ನನಗೇ ಮೊದಲು ಅಂತಹ ಕಾರ್ಡ್ ಬಂದಿದ್ದರ ಸಂತೋಷವನ್ನು ಆಚರಿಸಲು, ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಹೋಗಿ, ಅಲ್ಲಿನ ಬಿಲ್ ಅನ್ನು ನನ್ನ ಹೊಸ ಕಾರ್ಡ್‌ನಲ್ಲಿ ಪಾವತಿಸಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

ಡೆಬಿಟ್ ಕಾರ್ಡ್ ಆದ್ದರಿಂದ, ಅದು ಒಂದು ರೀತಿಯ ಸಾಲವಲ್ಲ ಎನ್ನುವ ನಂಬಿಕೆಯಲ್ಲಿ ನಮ್ಮ ಸೋಶಿಯಲಿಸ್ಟಿಕ್ ನೆಲೆಗಟ್ಟಿನ ಮೌಲ್ಯಗಳಿಗೆ ನಾನು ಇನ್ನೂ ಗಟ್ಟಿಯಾಗಿ ಅಂಟಿಕೊಂಡಿದ್ದ ಕಾಲವದು.

ಒಂದು ದಿನ ನಾನು ನನ್ನ ಸಹಪಾಠಿ, ಪಾಕಿಸ್ತಾನದ ಆಲಿ ನಾಕ್ವಿಯ ಜೊತೆಗೆ ಸ್ಟೀವನ್ಸ್ ಇನ್ಸ್‌ಟಿಟ್ಯೂಟ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಾನು ಅವನಿಗೆ ಹೇಳಿದ್ದು ಚೆನ್ನಾಗಿ ನೆನಪಿದೆ.  "ಹೀಗೆ ಬಂದು ಸ್ವಲ್ಪ ಕಾಲದಲ್ಲೇ ಮತ್ತೆ ವಾಪಾಸ್ ಹೋಗುವ ನನಗೆ ಯಾವ ಸಾಲದ ಹೊರೆಯೂ ಬೇಕಾಗಿಲ್ಲ.  ಕೊನೆಯವರೆಗೂ ಹೀಗೇ ಬಾಡಿಗೆಯ ಮನೆಯಲ್ಲಿ ಇರುತ್ತೇನೆ!" ಎಂಬುದಾಗಿ.

ಅದೇ ದಿನ, ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ, ಪ್ರೊಫೆಸರ್ ಸ್ಟಾಕರ್ಟ್ ಅವರು, ಫೈನಾನ್ಸಿಯಲ್ ಅನಾಲಿಸಿಸ್ ಮಾಡುತ್ತಾ, ನಾವೆಲ್ಲರೂ ಏಕೆ/ಹೇಗೆ 401Kಯಲ್ಲಿ ಹಣವನ್ನು ತೊಡಗಿಸಬೇಕು,  ಎಲ್ಲರೂ ಕಡಿಮೆ ಇಂಟರೆಸ್ಟ್‌ನಲ್ಲಿ ಮಾರ್ಟ್‌ಗೇಜ್‌ ತೆಗೆದುಕೊಂಡು, ಅದರಿಂದ ಮನೆಯನ್ನು ಕೊಳ್ಳಬೇಕು,  ಹಾಗೆ ಮಾಡುವುದರಿಂದ ಟ್ಯಾಕ್ಸ್‌ ಕೊಡುವುದರಲ್ಲಿ ಹೇಗೆ ಅನುಕೂಲವಾಗುತ್ತದೆ, ಇತ್ಯಾದಿ, ಇತ್ಯಾದಿ... ಹಾಗೆ, ಹಣಕಾಸಿನ ವಿಚಾರಗಳನ್ನು ಕೇಳುತ್ತಲೇ ಅದೇ ದಿನ ಮುಂಜಾನೆ ಮಾಡಿದ ನನ್ನ "ಭೀಷ್ಮ ಪ್ರತಿಜ್ಞೆ" ಗಾಳಿಗೆ ತೂರಿ ಹೋಗಿ, ಅಂದಿನಿಂದ ಕೇವಲ ಮೂರೇ ತಿಂಗಳುಗಳಲ್ಲಿ ನನ್ನ ಮೊದಲ "ಮನೆ"ಯನ್ನು ಖರೀದಿ ಮಾಡಿಯಾಗಿತ್ತು!

ಕೇವಲ 250 ಡಾಲರ್ ಕೊಟ್ಟರೆ ತಿಂಗಳ ಬಾಡಿಗೆ ಮುಗಿದು ಹೋಗುತ್ತದೆ,  ಇವತ್ತು ಕೆಲಸವಿದ್ದರೆ ನಾಳೆ ಇಲ್ಲ, ಹೇಳೀ ಕೇಳಿ H1B ವೀಸಾದಲ್ಲಿರುವವರು ನಾವು, ಈ ಮಾರ್ಟ್‌ಗೇಜ್ ಸಹವಾಸ ನಿನಗೇಕೆ? ಎಂದು ನನ್ನ ರೂಮ್‌ಮೇಟ್‌ಗಳು ಹೇಳಿದ್ದನ್ನು ಕೇಳಲಿಲ್ಲ!  (ಆಗಿನ ಕಾಲದಲ್ಲಿ ಕಾರ್ ಅನ್ನು ಕ್ಯಾಶ್ ಕೊಟ್ಟು ಕೊಂಡಿದ್ದರೂ, ನನ್ನ ತಿಂಗಳ ಫೋನ್ ಬಿಲ್, ಮನೆಯ ಬಾಡಿಗೆಗಿಂತ ಹೆಚ್ಚು ಇರುತ್ತಿತ್ತು!).  ಅಂತೂ-ಇಂತೂ ನಾನೂ ಸಾಲದ ಕೂಪದಲ್ಲಿ ಬಿದ್ದು, ಒಂದಲ್ಲ ಎರಡಲ್ಲ ನೂರು ಸಾವಿರ ಡಾಲರ್ ಸಾಲ ಮಾಡಿ, ಮನೆಯನ್ನು ಕೊಂಡುಕೊಂಡೆ!  ಆಗ ಒಂದು ಡಾಲರ್‌ಗೆ 34 ರುಪಾಯಿಯ ಸಮವಿತ್ತು.  ಅಂದರೆ, ಏಕ್‌ದಮ್, ಬರೋಬ್ಬರಿ 34 ಲಕ್ಷ ರುಪಾಯಿಯ ಸಾಲ!

ಸುಮಾರು 21 ವರ್ಷಗಳ ಹಿಂದೆ ಆರಂಭವಾದ ಈ ಸಾಲದ ಬಾಬತ್ತು ಯಾವತ್ತಿಗೂ ನೂರು ಸಾವಿರ ಡಾಲರಿಗಿಂತ ಕಡಿಮೆಯಾಗಲೇ ಇಲ್ಲ!  ಚಿಕ್ಕ ಮನೆಗಳು ದೊಡ್ಡವಾದಂತೆ, ಚಿಕ್ಕ ಕುಟುಂಬ ದೊಡ್ಡದಾಯಿತು.  ಚಿಕ್ಕ ಕಾರುಗಳ ಬದಲು ದೊಡ್ಡ ಕಾರು ಬಂದಿತು... ಅಂತೆಯೇ ನನ್ನ ತಲೆಯ ಮೇಲಿನ ಸಾಲವೂ ದೊಡ್ಡದಾಗುತ್ತಲೇ ಹೋಯಿತು... ವರ್ಷಗಳು ಕಳೆದಂತೆ ಒಂದರ ಮುಂದೆ ಅನೇಕ ಸೊನ್ನೆಗಳು ಸೇರುತ್ತಲೇ ಹೋದವು.  ಇವತ್ತಿಗೇನಾದರೂ ನನ್ನ ಒಟ್ಟು ಸಾಲದ ಮೊತ್ತವನ್ನೇನಾದರೂ ನನ್ನ ಹಿರಿಯರು ಬಂದು ನೋಡಿದರೆ, ಅವರೆಂದೂ ನನ್ನನ್ನು ಕ್ಷಮಿಸುವುದಿಲ್ಲ!

ಒಟ್ಟಿನಲ್ಲಿ ನನ್ನ ಪರಿವಾರದಲ್ಲಿ ಯಾರೂ ಮಾಡಿರದ ಸಾಲವನ್ನು ನಾನು ಮಾಡಿದ್ದೇನೆ... ಇನ್ನು ಮುಂದಿನ ತಲೆಮಾರುಗಳು ಹೇಗೋ ಏನೋ... ಸಾಲರಹಿತ ತಲೆಮಾರಿನಿಂದ ಸಾಲದ ತಲೆಮಾರಿಗೆ ದೊಡ್ಡ ಲಂಘನವನ್ನು ಮಾಡಿರುವಲ್ಲಿ ನನ್ನ ಪಾತ್ರ ದೊಡ್ಡದು!

***
ನಮ್ಮ ಸುತ್ತಲೂ ಈಗ ಯಂತ್ರಗಳಿವೆ:  ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಒಣಗಿಸಲು, ಇಸ್ತ್ರಿ ಮಾಡಲು, ಇತ್ಯಾದಿ. ಇಲ್ಲಿ ನಾವುಗಳು  ಹೆಚ್ಚು ಕೈ-ಬಾಯಿಗಳಿಗೆ ಉತ್ತರ ಕೊಡಬೇಕಾಗಿಲ್ಲ... ಹೆಚ್ಚೂ-ಕಡಿಮೆ, ಅಡುಗೆ ಮಾಡುವುದಕ್ಕೆ ಎಷ್ಟು ಸಮಯಬೇಕೋ, ತಿನ್ನುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ!  ಸಾಲ ದೊಡ್ಡದಿದೆ.  ಹೂಡಿಕೆಗಳು ಹಲವಿವೆ.  ಆದರೂ, ಮಾರ್ಕೆಟ್‌ನ ತೂಗುಯ್ಯಾಲೆಯಲ್ಲಿ ನಮ್ಮ ನಮ್ಮ ಮನಸೂ ಕನಸೂ ತೂಗುತ್ತಿರುತ್ತವೆ... ಮೊದಮೊದಲ ಕೆಲವು ವಾರಗಳಲ್ಲಿ, ಈ ಕೊರೋನಾ ವೈರಸ್ ದೆಸೆಯಿಂದಾಗಿ, ಮನೆಯಲ್ಲೇ ಕುಳಿತು, ದಿನದ ಮೂರು ಹೊತ್ತು ಅಡುಗೆ ಮಾಡಿ, ಉಂಡು, ತೊಳೆದಿಡುವ ಕಾಯಕ ದೊಡ್ಡದೆನಿಸಿತ್ತಿತ್ತು, ಈಗ ಅದಕ್ಕೂ ಹೊಂದಿಕೊಂಡಿದ್ದಾಗಿದೆ... ಆದರೆ, "ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚುವುದು" ಬದುಕಾಗಿ ಹೋಗಿದೆ.  "ಆಳಾಗಿ ದುಡಿಯುವುದು ಇದ್ದರೂ ಅರಸಾಗಿ ಉಣ್ಣುವ" ಸಮಾಧಾನ ಚಿತ್ತ ಇನ್ನೂ ಕಾಣಬಂದಿಲ್ಲ!  ಅಂದು ಸಾಲರಹಿತ ಹಿರಿಯರು ಕಣ್ತುಂಬ ನಿದ್ರೆಯನ್ನು ಮಾಡುತ್ತಿದ್ದರೂ, ಮೈ ತುಂಬ ಸಾಲವಿರುವ ನಮಗೆ ಇಂದು ಅನೇಕ ಚಿಂತೆಗಳು ಕೊರಗುವಂತೆ ಮಾಡುತ್ತವೆ... ನಾಳೆ ಹೇಗೋ ಎನ್ನುವ ಬವಣೆ ನಮ್ಮ ನಾಳೆಯನ್ನು ಮರೀಚಿಕೆಯನ್ನಾಗಿ ದೂರದಲ್ಲೇ ಇಡುತ್ತಿದೆ!

ಇಲ್ಲಿ ನಾವಿರುವ ನೆಲ, ನೆಲೆ, ನೆರೆಹೊರೆ, ದೇಶ, ಭಾಷೆ, ಕಂಪನಿಗಳು ಮೊದಲಾದ ಎಲ್ಲವೂ ಕ್ಯಾಪಿಟಲಿಸಮ್ಮಿನಲ್ಲಿ ಮಿಂದು ಪುಳಕಗೊಂಡವುಗಳು... ಇಲ್ಲಿ ಸಾಲವೆಂಬುದು ಶೂಲ ಅಲ್ಲವೇ ಅಲ್ಲ... ಸಾಲದು ಎನ್ನುವುದು ಬೇಕು ಎಂಬುದಕ್ಕೆ ತಾಯಿಯಾದಂತೆ, ನಮಗೆಲ್ಲ ಸಾಲ ಎನ್ನುವುದು ಒಂದು ರೀತಿಯ ತೆವಲಾಗಿ (addiction) ಬಿಟ್ಟಿದೆ... ಇದನ್ನು ಬಿಟ್ಟಿರುವುದು ಸಾಧ್ಯವೇ?

Thursday, April 30, 2020

ಬರಹದತ್ತ ಮುಖ ಮಾಡಿಸಿದ ಕೋವಿಡ್

ಇವತ್ತಿಗೆ ಬರೋಬ್ಬರಿ ಏಳು ವಾರವಾಯಿತು... ನನ್ನಂಥವರು ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿ.  ಈ ಕೋವಿಡ್‌ನಿಂದ ಯಾರು ಯಾರಿಗೆ ಏನೇನು ಅನುಕೂಲ-ಅನಾನುಕೂಲವಾಗಿದೆಯೋ, ನನಗಂತೂ ಇದು ಬರಹ-ಓದು-ಸಂಭಾಷಣೆಗಳಲ್ಲಿ ತೊಡಗಿಸಿದೆ.

ಏನೇನು ಹೊಸತುಗಳು ಈ ಏಳು ವಾರದಲ್ಲಿ ಶುರುವಾದವು ಎಂದು ಪಟ್ಟಿ ಮಾಡುತ್ತಾ ಹೋದಾಗ ಈ ಕೆಳಗಿನವು ಕಂಡು ಬಂದವು:
- ಮೂರು ಹೊತ್ತೂ ಮನೆ ಊಟ ನಮಗೆ ಬೇಕಾದಂತೆ ಮಾಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ಕುಕಿಂಗ್ ಶೋಗಳನ್ನು ನೋಡಲು ಶುರು ಮಾಡಿದ್ದು, ಜೊತೆಗೆ ರೆಸಿಪಿಗಳನ್ನು ಹುಡುಕಿದ್ದು
- ಮನೆಯಲ್ಲೇ ಇದ್ದುದರಿಂದ ನಾಲ್ಕೈದು ಜೊತೆ ಬಟ್ಟೆಗಳನ್ನೇ ಪುನರಾವರ್ತನೆಯಾಗಿ ಬಳಸಿದ್ದು
- ಈ ವರೆಗೆ ಮರೆತು ಹೋಗಿದ್ದ ಅನೇಕ ಬ್ಲಾಗುಗಳನ್ನು ತೆರೆದು ಓದಿದ್ದು
- ಈ ವರೆಗೆ ಮರೆತಂತಿದ್ದ "ಅಂತರಂಗ"ದ ಬಾಗಿಲು ತೆಗೆದು ಮತ್ತೆ ಬರೆಯಲು ಶುರು ಮಾಡಿದ್ದು (ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೊಂದು ಲೇಖನವನ್ನು ಹಾಕಿದ್ದು)
- ಸ್ನೇಹಿತರ ಬಳಿ ಒಳ್ಳೆಯ ಸಿನಿಮಾಗಳ ರೆಕಮೆಂಡೇಷನ್ ಅನ್ನು ಕೇಳಿ ಸಿನಿಮಾ ನೋಡಿದ್ದು
- ಬಂಧುಗಳ ಜೊತೆ, ಸ್ನೇಹಿತರ ಜೊತೆ ದೀರ್ಘಕಾಲ ಮಾತನಾಡಿದ್ದು
- ವಾರದಲ್ಲಿ ಒಂದು ನಿಮಿಷವೂ ಕೂಡ ಕಾರಿನಲ್ಲಿ  ಪ್ರಯಾಣಿಸದೇ ಇದ್ದದ್ದು
- ಬಂದಂತ ವಾಟ್ಸಾಪ್ ಮೆಸ್ಸೇಜುಗಳನ್ನೆಲ್ಲ ನೋಡಿದ್ದು
- ವೀಕೆಂಡ್ ದಿನಗಳನ್ನು ಹೇಗೆ ಕಳೆಯುವುದಪ್ಪಾ ಎಂದು ಚಿಂತಿಸಿದ್ದು
- ನಮ್ಮ ಪಕ್ಕದ ಮನೆಯವರ ಜೊತೆ ವೆಬೆಕ್ಸ್ ಕಾನ್‌ಫರೆನ್ಸಿನಲ್ಲಿ ಮಾತನಾಡಿದ್ದು
- ಮನೆಯ ಮೂಲೆ ಮೂಲೆಯನ್ನೂ (ಸ್ಟೆಪ್ಸ್ ಕೌಂಟ್ ಆಗಲೆಂದು) ತಿರುಗಿದ್ದು
- (ಅನೇಕ ವರ್ಷಗಳ ನಂತರ) ಮನೆಯನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ್ದು

ಇವೆಲ್ಲ ಏನೋ ದೊಡ್ಡ ವಿಷಯ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರಬಹುದು.  ಆದರೆ, ಎರಡು ತಿಂಗಳ ಹಿಂದಿನ (ವ್ಯವಸ್ಥಿತ) ವ್ಯಸ್ತ ಜೀವನ ಇಂದು ಅವ್ಯಸ್ತವಾಗಿದೆ ಎಂದು ಹೇಳಲು ಬಾರದು.  ಆದರೆ, ನಮ್ಮೆಲ್ಲರಿಗೂ ಸಿಗುವುದು ಇಂತಿಷ್ಟೇ ಸಮಯವಾದರೂ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.  ನಾವು ನಮ್ಮ ಬದುಕಿನಲ್ಲಿ ಸಾಧಿಸಿರುವುದು ಒಂದು ಸಾಸಿವೆ ಕಾಳು ಗಾತ್ರದಷ್ಟು ಮಾತ್ರ ಎನ್ನುವ ಭಾವನೆ ಮೂಡಲು ಗುರು ಶಂಕರಾಚಾರ್ಯರು ಕೇವಲ 32 ವರ್ಷದ ಅವರ ಜೀವಿತದಲ್ಲಿ ಎಷ್ಟೊಂದನ್ನು ಸಾಧಿಸಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತದೆ.  ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, ಭರತ ಖಂಡದ ಉದ್ದಕ್ಕೂ ಅಲೆದಾಡಿ ಅದೆಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.


***
ಈ ಕೋವಿಡ್‌ ದಯೆಯಿಂದ ನಿಮ್ಮ ನಿಮ್ಮ ಹೊಸ ಅನುಭವಗಳೇನೇನಿವೆ? ಹಂಚಿಕೊಳ್ಳಬಹುದೇ?

Wednesday, April 29, 2020

ಅಕ್ಕಿ ಆರಿಸುವಾಗ...

ಅಕ್ಕಿ ಆರಿಸುವಾಗ...
ಕವಿ: ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್


 ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಮನಸ್ಸಿಗೆ ಹಿಡಿಸುವ ಕವನಗಳಲ್ಲಿ ಇದೂ ಒಂದು.  ಈ ಹಾಡನ್ನು ಸುಗಮ ಸಂಗೀತಕ್ಕೆ ಒಳಪಡಿಸಿದ ಸಿ. ಅಶ್ವಥ್ ಅವರು ಒಂದು ಬಡತನದ ವಾತಾವರಣದಲ್ಲಿ ಬೆಳೆದು ನಿಂತ ಹೆಣ್ಣುಮಗಳ ಮನದಾಳವನ್ನು ವಿಷದ ಪಡಿಸುವಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಖಂಡಿತವಾಗಿ ಹೇಳಬಹುದು.  ಹೆಣ್ಣಿನ ಅಂತರಾಳದ ಒಳತೋಟಿಯನ್ನು ಹೊರಹೊಮ್ಮಿಸುವ ಗಾಯನಕ್ಕೆ ಗಂಡು ಧ್ವನಿ ಎಷ್ಟು ಹೊಂದೀತು ಎಂಬ ಪ್ರಶ್ನೆ ಪಲ್ಲವಿಯಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭಸಿದರೂ, ಹಾಡು ಮುಂದುವರಿದತೆಲ್ಲ ಅಶ್ವಥ್ ಅವರ ಗಾಯನ ಹೆಣ್ಣಿನ ನಿರ್ಲಿಪ್ತತೆಯನ್ನು ವರ್ಣಿಸುವುದರ ಮೂಲಕ ನಿರಾಯಾಸವಾಗಿ ಕೇಳುಗರನ್ನು ಕಟ್ಟಿ ಹಾಕುತ್ತದೆ.  ಇದು ಈ ಹಾಡಿನ ಮಹತ್ವದ ಅಂಶ ಎಂದರೆ ತಪ್ಪಾಗಲಾರದು.

ಹಾಡಿನ ಮೊದಲಿಗೆ ಕೆಲವು ಕ್ಷಣಗಳ ಕಾಲ ಕೇಳಿಸುವ ದನಕರುಗಳ ಕೂಗು, ಒಂದು ಕೊಟ್ಟಿಗೆಯ ಪರಿಸರವನ್ನು ಕೇಳುಗರಿಗೆ ಕಟ್ಟಿಕೊಡುತ್ತದೆ.  ನಿಧಾನವಾಗಿ ಒಂದು ಸರಳ ಸಂಭ್ರಮವನ್ನು ಸೂಚಿಸುವಂತೆ ಆರಂಭವಾಗುವ ಕೊಳಲಿನ ಧ್ವನಿ, ನಂತರ ಮುಂಬರುವ ವಯಲಿನ್‌ಗಳ ಮೊರೆತಕ್ಕೆ ಸೋತು ಹೋಗುವುದಕ್ಕೆ ಮೊದಲು ಭಾರವಾದಂತೆನಿಸಿ, ಈ ಹಾಡಿಗೆ ಒಂದು ಗಟ್ಟಿಯಾದ ತಳಹದಿಯನ್ನು ಒದಗಿಸುತ್ತದೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು


ಇತ್ತೀಚಿನ ಕಾಲದಲ್ಲಿ ಅಕ್ಕಿಯನ್ನು ಜನರು ಜರಡಿಯಾಡಿ, ಮೊರದಲ್ಲಿ ಆರಿಸುತ್ತಾರೋ ಇಲ್ಲವೋ, ಆದರೆ ಆಗಿನ ಕಾಲದ ಒಂದು ಹಳ್ಳಿಯ ಪರಿಸರದಲ್ಲಿ ಮೊರದಲ್ಲಿ ಅಕ್ಕಿಯನ್ನು ಗೇರಿ ಅಥವಾ ಜರಡಿ ಹಿಡಿದು, ನುಚ್ಚು ಮತ್ತು ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಪ್ರತಿನಿತ್ಯವೂ ನಮ್ಮ ಹೆಣ್ಣು ಮಕ್ಕಳು ಮಾಡುವಂಥದಾಗಿತ್ತು.  ಕವಿ ಈ ಹಾಡಿನಲ್ಲಿ ಬರೆದಂತೆ "ಅಕ್ಕಿ ಆರಿಸುವುದು" ಒಂದು ವಿಶೇಷ ಸೂಚಕ.     ಏಕೆಂದರೆ ಅಕ್ಕಿಯ ನಡುವೆ ಸಿಕ್ಕುವ ಕಲ್ಲು, ನುಚ್ಚನ್ನು ಆರಿಸುವ ಕೆಲಸಕ್ಕೂ ನಾವು "ಅಕ್ಕಿ ಆರಿಸುವುದು" ಎಂದೇ ಹೇಳುವುದು ಸಾಮಾನ್ಯ.  ಒಂದು ರೀತಿಯಲ್ಲಿ ಅಮೇರಿಕದಲ್ಲಿ ನಾವೆಲ್ಲ "hot water heater" ಎಂದು ಹೇಳುತ್ತೇವಲ್ಲ ಹಾಗೆ, ನಾವು ನಿಜವಾಗಿಯೂ cold water ಅನ್ನು heat ಮಾಡುತ್ತಿದ್ದರೂ, ಅದನ್ನು "hot water heater" ಎಂದೇ ಕರೆಯುತ್ತೇವೆ!  ಭತ್ತವನ್ನು ತೆಗೆದುಕೊಂಡು ಹೋಗಿ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ, ಅಕ್ಕಿಗೆ ಪಾಲೀಷ್ ಕೊಟ್ಟ ಮೇಲೆ ನುಚ್ಚು ಉತ್ಪಾದನೆ ಆಗುವುದು ಸಹಜ.  ಆದರೆ ಮಾಡಿದ ಅನ್ನ ಬಿಡಿ ಬಿಡಿಯಾಗಿ, ಉದುರಾಗಿ ಇರಬೇಕು ಎನ್ನುವುದಾದರೆ ಅದರಲ್ಲಿ ನುಚ್ಚು ಇರಬಾರದು.  ಅದು ಎಂಥಾ ನುಚ್ಚು? "ಚಿಕ್ಕ ನುಚ್ಚು", ಅದನ್ನು ಆರಿಸಿ, ಜೊತೆಗೆ ಕಲ್ಲನ್ನೆಲ್ಲ ಹೆಕ್ಕಿದ ಮೇಲೆ ಉಳಿದ ಬರೀ ಅಕ್ಕಿಯನ್ನು ಮಾತ್ರ ಅನ್ನ ಮತ್ತಿನ್ನ್ಯಾವುದೋ ಅಡುಗೆಗೆ ಬಳಸೋದು ವಾಡಿಕೆ.  ಇಂಥಾ ಚಿಕ್ಕ ನುಚ್ಚಿನ ನಡುವೆ ಹೋರಾಟಕ್ಕೆ ಇರುವುವು "ಬಂಗಾರವಿಲ್ಲದ ಬೆರಳು"ಗಳು.  ಕವಿ ಬಂಗಾರವಿಲ್ಲದ ಬೆರಳು ಎನ್ನುವಾಗ ಅದೇ ಹಳ್ಳಿಯ ಪರಿಸರದ ಲೇಪಕ್ಕೆ ಮತ್ತೆ ಬಡತನದ ವಾತಾವರಣದ ಕಳೆಯನ್ನು ಕಟ್ಟುತ್ತಾರೆ.  ಎಷ್ಟೇ ಶ್ರೀಮಂತರಿದ್ದರೂ, ಅಕ್ಕಿ ಆರಿಸುವಾಗ ಅಂದರೆ ಮನೆ ಕೆಲಸ ಮಾಡುವಾಗ ಬಂಗಾರ ಧರಿಸುವುದು ಸಹಜವಲ್ಲ.  ಒಂದು ವೇಳೆ ಮನೆಯಲ್ಲಿದ್ದಾಗಲೂ ಬಂಗಾರವನ್ನು ಧರಿಸಿಯೇ ಇರುತ್ತಾರೆಂದರೆ ಅವರು ಬಡತನದ ವಾತಾವರಣವನ್ನು ಮೀರಿದವರಾಗಿರುತ್ತಾರೆ ಎನ್ನುವುದು ವಾಡಿಕೆ.  ಇಲ್ಲಿ ಕವಿ ಬಂಗಾರವಿಲ್ಲದ ಬೆರಳನ್ನು (ಬೆರಳುಗಳನ್ನು), ಒಂದು ರೀತಿಯ ದೈನಂದಿನ ಹೋರಾಟದ ಸಿಪಾಯಿಗಳನ್ನಾಗಿ ಬಿಂಬಿಸಿದ್ದಾರೆ. ಹಾಗೂ ಅದೇ ಸಾಲನ್ನು ಸುಗಮ ಸಂಗೀತದ ಗಾಯಕರು ಪ್ರತಿ ಪ್ಯಾರಾದ ನಂತರ ಹಾಡಿ ಅದನ್ನೇ ಒಂದು ಚುಟುಕು ಪಲ್ಲವಿಯನ್ನಾಗಿಸುವುದುರ ಮೂಲಕ ಈ ಸಿಪಾಯಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ಹೊರೆಸಿದಂತೆ ಕಾಣುತ್ತದೆ.

ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ
ಸಿಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳೂ|

ಯಾವುದೇ ಭಂಗಿಯಲ್ಲಿ ಕುಳಿತರೂ ಮೊರದಲ್ಲಿ ಅಕ್ಕಿಯನ್ನು ಆರಿಸುವಾಗ ಕೊರಳು ತಗ್ಗಿರುತ್ತದೆ.  ಅಂತಹ ಕೊರಳಿನ ಸುತ್ತ ಕರಿಮಣಿ ಒಂದೇ ಇರುವುದು ಮತ್ತ್ಯಾವ ಬಂಗಾರದ ಆಭರಣಗಳೂ ಇಲ್ಲದಿರುವುದನ್ನು ಸೂಚಿಸಿ ಮತ್ತೆ ಬಡತನದ ವಾತಾವರಣದ ಪ್ರತಿಮೆಯನ್ನು ಕೇಳುಗರ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಕರಿಮಣಿ ಒಂದೆ ಎನ್ನುವುದು ಕರಿಮಣಿ ಸರದ ರೂಪಕ, ಅದರಲ್ಲಿ ಅನೇಕ ಕಪ್ಪು ಮಣಿಗಳಿದ್ದರೂ ಅದನ್ನು ಕರಿಮಣಿ ಎಂದೇ ಕರೆಯುವುದು ರೂಢಿ. ಈ ಬಡತನದ ಚಿತ್ರಣದ ಜೊತೆ ಜೊತೆಗೆ ಸಿಂಗಾರ ಕಾಣದ ಹೆರಳು ಹೊಸತಾಗಿ ಈ ಹೆಣ್ಣಿನ ಅಂತರಂಗದ ಅಭಿವ್ಯಕ್ತಿಯನ್ನು ಸಾಬೀತು ಮಾಡಲು ಪ್ರಯತ್ನಿಸುತ್ತದೆ.  ಮನೆಯಲ್ಲೇ ಕೆಲಸದ ನಡುವೆ ಇರುವವರು ಸಾಮಾನ್ಯವಾಗಿ ಹೆರಳನ್ನು ಸಿಂಗರಿಸಿಕೊಳ್ಳದಿದ್ದರೂ ಒಂದಿಷ್ಟು ಮೇಲು ಬಾಚಣಿಕೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ವಾಡಿಕೆ, ಆದರೆ ಇಲ್ಲಿ ಈ ಹೆಣ್ಣಿನ ಅಂಗ-ಭಂಗಿಗಳ ಮೂಲಕ ಮನದಾಳದಲ್ಲಿ ಹುದುಗಿದ ಅವ್ಯಕ್ತ ಯಾತನೆ ಅಥವಾ ತವಕವನ್ನು ಹೊರಕಾಕುವ ಕವಿಯ ಚಾಕಚಕ್ಯತೆ ಎದ್ದು ಕಾಣುತ್ತದೆ.  ಮತ್ತೆ ಹೊರ ಹೊಮ್ಮುವ "ಬಂಗಾರವಿಲ್ಲದ ಬೆರಳು" ಮೇಲಿನ ಅಂಶಗಳಿಗೆ ಪುಷ್ಠಿಕೊಡುತ್ತದೆ.


ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳೂ|

ಸಿಂಗಾರ ಕಾಣದ ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆ ಕಥಾನಾಯಕಿಯ ಯೌವನವನ್ನು ಪ್ರಚುರಪಡಿಸುತ್ತದೆ, ಸುಮಾರು ಹದಿನಾರು ವರ್ಷದ ಆಸುಪಾಸು ಇರಬಹುದಾದ ವಯಸ್ಸು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಬೇಗನೆ ಲಗ್ನ ಮಾಡುತ್ತಿದ್ದರಾದ್ದರಿಂದ ಹದಿನಾರು ವರ್ಷಕ್ಕೆಲ್ಲ ಸಾಕಷ್ಟು ಪ್ರಬುದ್ಧತೆ ಈ ಹೆಣ್ಣು ಮಕ್ಕಳಿಗೆ ಇರುತ್ತಿದ್ದುದು ಸಹಜ.  ಎರಡು ಬಾರಿ ಹಾಡಿದ ದೀಪದಂತೆ ಅರಳಿದ ಸಿರಿಗಣ್ಣ ಸನ್ನೆ ಏನನ್ನೋ ನೆನಪಿಸಿಕೊಳ್ಳುತ್ತವೆಯೇನೋ ಎಂದು ಕೊಂಡರೆ ನಿಲ್ಲದ ಮುಂಗಾರಿನಲ್ಲಿ ತುಂಬಿ ಹರಿಯುವ ಹೊಳೆಯ ರೀತಿಯಲ್ಲಿರುವ ಮುಂಗುರಳನ್ನು ನೆನಪಿಗೆ ತರುತ್ತವೆ.  ತಲೆ ಹಾಗೂ ಕಣ್ಣು ಅತ್ತಿತ್ತ ಚಲಿಸಿದಂತೆಲ್ಲ ಮುಖದೊಂದಿಗೆ ಆಟವಾಡುವ ಈ ಮುಂಗುರುಳು ಒಮ್ಮೊಮ್ಮೆ ಕಾಡುವ ಮಳೆಯಂತಾಗಿರುವುದನ್ನು ಇಲ್ಲಿ ಗಮನಿಸಬಹುದು. ಮತ್ತೆ ಬಂಗಾರವಿಲ್ಲದ ಬೆರಳನ್ನು ಪುನರಾವರ್ತಿಸಿ ಗಾಯಕ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿರುವ ಮನಸ್ಸನ್ನು ಅಭಿವ್ಯಕ್ತಗೊಳಿಸಿದ್ದಾರೆ.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು

ನಿಮಗೆ ಗೊತ್ತಿರುವಂತೆ ನಮಗೆ ಭಾರತದಲ್ಲಿ ಟ್ರ್ಯಾಷ್ ಎಸೆಯೋದಕ್ಕೆ ಮನೆಯ ಒಳಗೆ ಒಂದು ನಿಖರವಾದ ಜಾಗ ಅಂತೇನು  ಇರುತ್ತಿರಲಿಲ್ಲ.  ಅದರಲ್ಲೂ ಅಕ್ಕಿಯಲ್ಲಿ ಸಿಗುವ ಕಲ್ಲನ್ನು ಇಂತಲ್ಲೇ ಎಸೆಯಬೇಕು ಎಂಬ ನಿಯಮವೇನೂ ಇರಲಿಲ್ಲ.  ಆದರೆ ಮನೆಯನ್ನು ದಿನಕ್ಕೆರಡು ಬಾರಿಯಾದರೂ ಗುಡಿಸಿ-ಒರೆಸಿ ಇಟ್ಟುಕೊಂಡಿರುವಾಗ ಅಕ್ಕಿಯಲ್ಲಿ ಆರಿಸಿದ ಕಲ್ಲು ಗೌಣವಾಗುತ್ತಿತ್ತು.  ಅದು ಎಲ್ಲ ಕಸದ ಜೊತೆಗೆ ತಿಪ್ಪೆ ಸೇರುತ್ತಿತ್ತು.  ಆದರೆ ಇಲ್ಲಿ, ಕಲ್ಲ ಹರಳನು ಹುಡುಕಿ ತೆಗೆದ ಕೈಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ, ಅದನ್ನು ಇಂತಲ್ಲಿಗೆ ಎಸೆಯಬೇಕು ಎಂಬ ನಿಯಮವೇನೂ ಇಲ್ಲ, ಜೊತೆಗೆ ಕಲ್ಲು ಅಕ್ಕಿಯಿಂದ ಬೇರ್ಪಡುವ ಪ್ರಕ್ರಿಯೆಗೆ ಮಾತ್ರ ಪ್ರಾಮುಖ್ಯತೆ ಇದೆ, ಕಲ್ಲು ಹೊರ ಹೋಗುವಾಗ ಎಲ್ಲಿಗೆ ಬೇಕಾದರೂ ಹೋಗಬಹುದು.  ಇಂಥ ಸಂದರ್ಭದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿರುತ್ತದೆ, ಆದರೆ ಆ ಕಲ್ಲನ್ನು ಎಸೆದ ಕೈಗಳಲ್ಲಿದ್ದ ಬಳೆಗಳು ಝಲ್ಲೆಂದು ಸದ್ದು ಮಾಡುವುದು ಸ್ವಾಭಾವಿಕ... ಆದರೆ ಇಲ್ಲಿ ಝಲ್ಲೆಂದು ಸದ್ದು ಮಾಡುವ ಬಳೆಗಳು ಗಾಜಿನ ಬಳೆಗಳು, ಮತ್ತೆ ಬಡತನದ ವಾತವರಣವನ್ನು ಶ್ರೋತೃಗಳ ಗಮನಕ್ಕೆ ತರುತ್ತವೆ.


ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿತ್ತು
ಬಂಗಾರವಿಲ್ಲದ ಬೆರಳೂ|

ಸಾಮಾನ್ಯವಾಗಿ ಮನೆಯ ಜಗುಲಿ ಅಥವಾ ಮುಂಗಟ್ಟುಗಳಲ್ಲಿ ಕುಳಿತು ಅಕ್ಕಿ ಆರಿಸುವುದು ಸಹಜ.  ಒಳಮನೆ ಹಾಗೂ ಆಡುಗೆ  ಮನೆಗಳಲ್ಲಿ ಅಷ್ಟೊಂದು ಬೆಳಕಿಲ್ಲದಿರಬಹುದು, ಅಲ್ಲದೇ ಹಿತ್ತಲ ಬಾಗಿಲನ್ನು ಈ ರೀತಿಯ ಕೆಲಸಗಳಿಗೆ ಹೆಚ್ಚಿನ ಜನರು ಆಯ್ಕೆ ಮಾಡಿಕೊಂಡಿರಲಾರರು.  ಈ ನಿರ್ಲಿಪ್ತತೆಯಲ್ಲಿ ಕಾರ್ಯತತ್ಪರವಾಗಿರುವ ಹೆಣ್ಣಿಗೆ ಊರಿನ ಬೀದಿಯಲ್ಲಿ ಆ ಕಡೆ ಈ ಕಡೆ ಜನರು ಓಡಾಡಿದ ದೃಶ್ಯ ಅರಿವಿಗೆ ಬರುತ್ತದೆ.  ಅವರು ಹೋದಕಡೆ, ಬಂದಕಡೆಗೆಲ್ಲ ಕಣ್ಣು ಬೀಳುವುದು ಮತ್ತೆ ಯಾವುದೋ ದುಗುಡವನ್ನು ಹೊತ್ತು ಕೊಂಡ ಭಾರದ ಮನಸ್ಸಿನ ಹೆಣ್ಣಿನ ಚಿತ್ರಣವನ್ನು ಸಾಬೀತು ಮಾಡುತ್ತವೆ.  ಕೊನೆಯಲ್ಲಿ ಬರುವ "ಬಂಗಾರವಿಲ್ಲದ ಬೆರಳು" ಈ ಬಾರಿ ಚಂಚಲ ಮನಸ್ಸು ಮತ್ತೆ ಕಾರ್ಯಮಗ್ನವಾಗುವುದನ್ನು ಬಿಂಬಿಸುತ್ತದೆ.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು

ಇಲ್ಲಿ ಮನಸ್ಸಿನ ಭಾರದ ಭಾವಕ್ಕೆ ಕಾರಣವೇನೋ ಎನ್ನುವಂತೆ ಬೆಟ್ಟದಷ್ಟಿರುವ ಮನೆಕೆಲಸವನ್ನು ಕವಿ ಸೂಕ್ಷ್ಮವಾಗಿ ಹೊರಹೊಮ್ಮಿಸುತ್ತಾರೆ. ಹಾಗಿದ್ದರೂ ಕೂಡ ಶೀಘ್ರವಾಗಿ ಹಿಡಿದ ಕೆಲಸವನ್ನು ಮುಂದುವರೆಸಬೇಕು ಎನ್ನುವ ಯೋಚನೆಯಿಲ್ಲದೆ, ನಿಶ್ಚಲವಾಗಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ಚಿತ್ರದಲ್ಲಿರುವ ಬೊಂಬೆಯಂತೆ ಇರುವ ಹೆಣ್ಣಿನ ವರ್ಣನೆಯಲ್ಲಿ ಉದಾಸೀನತೆ ಹೊರಹೊಮ್ಮುತ್ತದೆ.  ಮನೆಕೆಲಸ ಬೆಟ್ಟದಷ್ಟಿವೆ, ಎನ್ನುವ ಮಾತು ಸಾಮಾನ್ಯವಾಗಿ ಬಳಕೆಯಲ್ಲಿರುವುದೇ ಆದರೂ, ಸುಮ್ಮನೆ ಇರುವ ಇವಳು, ಅದನ್ನು ಗೌಣವಾಗಿಸುತ್ತಾಳೆ.

ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳೂ|

ಈ ಕಥಾನಾಯಕಿಯ ಬೇಸರಿಕೆಯನ್ನು ಮುಚ್ಚಿಡುವಂತೆ ಈ ಬಾರಿ ಎಲ್ಲಾ ಹತ್ತು ಬೆರಳುಗಳೂ ಶ್ರಮಿಸುತ್ತವೆ ಎನ್ನುವ ಮಾತು ಒಂದು ರೀತಿಯಲ್ಲಿ ನಿರಂತರವಾಗಿ ತನ್ನ ಕೆಲಸದಲ್ಲಿ ತೊಡಗಿದ ಹೆಣ್ಣಿನ ಚಿತ್ರಣವನ್ನು ಮುಂದುವರೆಸುತ್ತದೆ, ಮತ್ತೊಂದು ರೀತಿಯಲ್ಲಿ   ಅಕ್ಕಿಯಲ್ಲಿರುವ ಕಲ್ಲನ್ನು ಹುಡುಕುವುದು, ಅದೇ ಅಕ್ಕಿಯ ನುಚ್ಚಿನಲ್ಲಿ ಅದೇನನ್ನೋ ಮುಚ್ಚಿಡುವಂತೆ ಕಾಣಿಸುವುದು ವಿಶೇಷ.  ಮತ್ತೆ ಕೊನೆಯಲ್ಲಿ ಬರುವ ಬಂಗಾರವಿಲ್ಲದ ಬೆರಳು ಈ ಬಾರಿ ಬಡತನವನ್ನು ಮೀರಿ ಸಹಜತೆಗೆ ಒತ್ತು ಕೊಡುತ್ತದೆ.  ಕೊನೆಗೂ ಈ ಕಥಾ ನಾಯಕಿಯ ಬೇಸರಕ್ಕೆ ಇಂಥದೇ ಕಾರಣವೆಂಬುದು ವ್ಯಕ್ತವಾಗದಿದ್ದರೂ ಆಕೆಯ ಮನಸ್ಥಿತಿಯನ್ನು ಅವಳ ಭಾವ-ಭಂಗಿಗಳಿಂದ ವ್ಯಕ್ತಪಡಿಸಲು ಪ್ರಯತ್ನಿಸಲಾಗಿದೆ.  ಅಕ್ಕಿ ಆರಿಸುವ ಈಕೆ ಚಿಕ್ಕ ನುಚ್ಚಿನ ಜೊತೆಗೆ ತನ್ನ ಮನಸ್ಸಿನ ತಳಮಳವನ್ನು ಅವ್ಯಕ್ತವಾಗಿ ಹಂಚಿಕೊಳ್ಳುತ್ತಿದ್ದಾಳೇನೋ ಎನ್ನಿಸಿ, ನಡು ನಡುವೆ ಅಕ್ಕಿಯಲ್ಲಿ ಸಿಗುವ ಚಿಕ್ಕ ಕಲ್ಲುಗಳು ಅವಳ ಕಷ್ಟ ಅಥವಾ ಬೇಸರಿಕೆಯ ಕುರುಹಾಗಿ ಎತ್ತಲೋ ಎಸೆಯುವುದರ ಮೂಲಕ ಹೊರಹಾಕಲ್ಪಡುತ್ತವೆ.  ಹಾಡಿನ ಕೊನೆಯಲ್ಲಿ ಕೊಳಲು ಮತ್ತೆ ಹಾಡಿನಲ್ಲಿ ವ್ಯಕ್ತವಾದ ಭಾವನೆಗಳನ್ನೇ ಮುಂದುವರೆಸುವುದು ವಿಶೇಷ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Tuesday, April 28, 2020

How to clean old email accounts?

ಕೋವಿಡ್ ಸಂಬಂಧಿ ಲಾಕ್‌ಡೌನ್/ಕ್ವಾರಂಟೈನ್ ಇರೋದ್ರಿಂದ ಗಂಗೆ-ಜಮುನೆಯರೂ ಕ್ಲೀನ್ ಆಗ್ತಾ ಇದ್ದಾರೆ ಅಂತ ತಿಳಿದು... ನಾನೂ ಒಂದು ಸಣ್ಣ ಕ್ಲೀನಿಂಗ್ ಪ್ರಾಜೆಕ್ಟ್ ಕೈಗೆತ್ತಿಕೊಂಡೆ - ಅದೇನೆಂದರೆ ನನ್ನ ಹಳೆಯ ಇ-ಮೇಲ್ ಅಕೌಂಟುಗಳನ್ನು ಕ್ಲೀನ್ ಮಾಡುವುದು!

ಸುಮಾರು 20 ವರ್ಷಗಳಿಗಿಂತ ಹೆಚ್ಚು ಹಳೆಯದಾದ ನನ್ನ ಯಾಹೂ ಅಕೌಂಟು ಬಹಳ ದಿನಗಳಿಂದ ಸ್ಪ್ಯಾಮ್ ಇ-ಮೇಲ್‌ಗಳ ಕಾಟದಿಂದ ನಲುಗಿ ಹೋಗಿತ್ತು.  ಕೇವಲ ಅರ್ಧ ಘಂಟೆಯ ಪರಿಶ್ರಮದಲ್ಲಿ ಹಳೆಯ ಅಕೌಂಟು ಚೊಕ್ಕವಾಯಿತು ಮತ್ತು ಬೇಕಾದ ವಿಷಯ-ವಸ್ತುಗಳು ಆರ್ಗನೈಜ್ ಆದವು.  ಇದೇ ಸುಸಂದರ್ಭ ಎಂದುಕೊಂಡು, ನನ್ನ ಜೀ-ಮೇಲ್ ಮತ್ತು ಔಟ್‌ಲುಕ್ ಅಕೌಂಟುಗಳನ್ನೂ ಸಹ ಕ್ಲೀನ್ ಮಾಡಿದೆ... ಈಗ ಎಲ್ಲವೂ ಸ್ವಚ್ಛವಾಗಿದೆ ನೋಡಿ!

ನನಗೆ ಉಪಯುಕ್ತವಾದ ಈ ಮೆತಡ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ... ಪ್ರಯತ್ನಿಸಿ ನೋಡಿ, ವರ್ಕ್ ಆಯಿತೋ ಇಲ್ಲವೋ ತಿಳಿಸಿ.

***
Just because you bought a thing from someone, several years ago... they have been sending you emails non-stop!  And, your never ever read them!

The usual grouping, labeling, archiving, moving to folders, etc methods are only superficial, I mean, they don't address the root cause.  While everyone wants keep their inbox clean and crisp, their remaining labels, folders, and more importantly, storage gets messed up and becomes full.

These unwanted, unsolicited emails are spams - no one ever wants them, but the spammers keep sending them anyway!

Here's what you need to do:
1. Go to All Mails or your Inbox or your largest folder
2. Look for repeating offenders: like merchants, online stores, etc that you have used once or twice in the past
3. Open one of the emails and look for "Unsubscribe" link in the bottom (sometimes it is hidden, sometimes they use very small font)
4. Click unsubscribe, it mostly opens a new window; either they confirm you're unsubscribed or you need to make another choice/click to "unsubscribe" fully (watch out for daily/weekly/monthly traps)
5. Go back to your Inbox (or largest folder), Search for that merchant (or sender) that you just unsubscribed
6. Select all the mails and click Delete/Trash

You need to repeat steps 2-6 as many times as possible, you will see the clutter reduce like a magic.

The best is yet to come - there won't be any more new emails from the ones that you just unsubscribed!

So, in the end, it is all a happy ending... I bet, your time was well spent and your inbox (including your storage) is fully recovered!

Monday, April 27, 2020

ಮೊದಲ ದಿನ ಮೌನ

ಮೊದಲ ದಿನ ಮೌನ
ಕವಿ: ಕೆ. ಎಸ್. ನರಸಿಂಹ ಸ್ವಾಮಿ



ಮೊದಲ ದಿನ ಮೌನ... ಮೈಸೂರ ಮಲ್ಲಿಗೆಯ ಈ ಹಾಡನ್ನು ಕೇಳಿದಾಗೆಲ್ಲ ಹೊಸದಾಗಿ ಮದುವೆಯಾಗಿ ಗಂಡನ ಮನೆಯನ್ನು ಪ್ರವೇಶಿಸಿದ ಹೆಣ್ಣುಮಗಳ ತಳಮಳ ಅರಿವಾಗುತ್ತದೆ.  ಆಗಿನ ಕಾಲದಲ್ಲಿ ತವರು ಮನೆ ತೊರೆದು ಮತ್ತು ಗಂಡನ ಮನೆಯನ್ನು ಸೇರಿ  ಅಲ್ಲಿ ಅವಿಭಕ್ತ ಕುಟುಂಬದಲ್ಲಿ ಹೊಸ ಜೀವನವನ್ನು ಸಾಗಿಸುವುದು ಪ್ರತಿ ಹೆಣ್ಣುಮಗಳ ಬದುಕಿನಲ್ಲಿ ಮಹತ್ವದ ಬದಲಾವಣೆಯೇ ಸರಿ.  ಈ ಹಾಡಿನ ಉದ್ದಕ್ಕೂ ಬರುವ ಅಲಂಕಾರಗಳು ಒಂದೊಂದು ಹಂತದಲ್ಲಿಯೂ ಹೊಸತನ್ನೇನೋ ಸಾರುತ್ತಿವೆ ಎನ್ನಿಸುತ್ತದೆ.  ಕನ್ನಡ ಸಾಹಿತ್ಯದಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳ ಮನದ ತಲ್ಲಣವನ್ನು ಮೈಸೂರ ಮಲ್ಲಿಗೆಯ ಈ ಕವನ ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ಈ ಮೂರು ದಿನಗಳ ಪರಿವರ್ತನೆಯ ಸಮಯದಲ್ಲಿ ಸಾಂದರ್ಭಿಕವಾಗಿ ಆಕೆಯ ಒಳತೋಟಿಯನ್ನು ಇಣುಕಿ ನೋಡುತ್ತದೆ.  ಹಲವು ದಶಕಗಳ ಹಿಂದೆ ಎಲ್ಲರೂ ಸಹಜವಾಗಿ ಗಮನಿಸಬಹುದಾದ ಭಾವನೆಯೇನೋ ಎನ್ನುವಂತಿದ್ದ ಕಾಲದಲ್ಲಿ ಈ ಹಾಡು ಜನಮಾನಸದಲ್ಲಿ ಅದರ ಸ್ಥಾನವನ್ನು ಪಡೆದುಕೊಂಡಿದ್ದಿರಬಹುದು, ಆದರೆ ಈ ಹಾಡಿನ ಭಾವನೆಗಳ ಸಾಂದ್ರತೆಯ ವಸ್ತುನಿಷ್ಠತೆ ಇಂದಿನ ಆಧುನಿಕ ಯುಗದಲ್ಲೂ ಕೇಳುಗರನ್ನು ತನ್ನೊಳಗೆ ತಲ್ಲೀನಗೊಳಿಸಿಕೊಂಡು ಒಂದು ಕ್ಷಣ ಈ  ಹಾಡಿನಲ್ಲಿ ಅಡಗಿದ ಭಾವನೆಗಳ ಕೋಟಲೆಗಳೊಳಗೆ ಒಂದು ಮಾಡಿ ಬಿಡುತ್ತದೆ.

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 

ಗಂಡನ ಮನೆ ಸೇರಿದ ಮೊದಲ ದಿನ ಹೆಚ್ಚೂ ಕಡಿಮೆ ಮೌನದಲ್ಲೇ ಕಳೆದು ಹೋಗುತ್ತದೆ.  ಗುರುತು ಪರಿಚಯವಿಲ್ಲದ ಊರು,  ಮನೆಯಲ್ಲಿ ಮದುಮಗಳು ಅಲಂಕಾರಕ್ಕಿಟ್ಟ ಬೊಂಬೆಯೇನೋ ಎನ್ನುವಂತೆ ಎಲ್ಲರೂ ನೋಡುವವರೇ.  ಕುಳಿತರೂ ಕಷ್ಟ, ನಿಂತರೂ ಕಷ್ಟ.  ನಡುನಡುವೆ ತವರಿನ ಜ್ಞಾಪಕದಿಂದ ಕಣ್ಣು ಹನಿಗೂಡುತ್ತವೆ.  ಅಳು ತುಟಿಗೆ ಬರುತ್ತದೆ, ಆದರೆ ಗಟ್ಟಿಯಾಗಿ ಅಳಲಾಗದು.  ಚಿಂತೆ ಬಿಡಿ ಹೂವು ಮುಡಿದಂತೆ ಸಣ್ಣಗೆ ಇದ್ದರೂ ಇಲ್ಲದಂತೆ ತಲೆ ಏರಿ ಕುಳಿತಿರುತ್ತದೆ.

ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ|

ನೆರೆ ಹೊರೆಯವರು ಹಾಗೂ ಮನೆ ಮಂದಿ ಎಲ್ಲರೂ ಬಂದು ನೋಡುವವರೇ.  ನವ ವಧು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಎನ್ನುವ ಕುತೂಹಲ ಚಿಕ್ಕವರಿಂದ ದೊಡ್ಡವರ ವರೆಗೆ.  ಎಲ್ಲ ಕಡೆಯಿಂದ ಇಣುಕಿ ನೋಡುವ ಕಣ್ಣುಗಳು ಸಣ್ಣಗೆ ದೀಪ ಉರಿದಂತೆ ಕಂಡರೆ, ತಳಮಳದ ಜೀವದಲ್ಲಿ ಜಾತ್ರೆ ಮುಗಿದಂತೆನಿಸುತ್ತದೆ.  ಜಾತ್ರೆ ಮುಗಿದಾಗ ಏನೇನಾಗಬಹುದು... ಜಾತ್ರೆಗೆಂದು ತಲೆ ಎತ್ತಿದ್ದ ಅಂಗಡಿ ಮುಗ್ಗಟ್ಟುಗಳು ತಮ್ಮ ಟೆಂಟನ್ನು ಕಿತ್ತು ಗಂಟು ಮೂಟೆ ಕಟ್ಟುವುದು, ಅಲ್ಲಲ್ಲಿ ನಿಲ್ಲಿಸಿದ ಎತ್ತಿನ ಬಂಡಿ ಜಾನುವಾರುಗಳು ಪುನಃ ಮನೆ ಕಡೆಗೆ ದಾರಿ ಹಿಡಿವುದು, ಇಷ್ಟೊಂದು ಹೊತ್ತು ಗಿಜುಗಿಟ್ಟುತ್ತಿದ್ದ ಬೀದಿ-ವಠಾರಗಳು ನಿಧಾನವಾಗಿ ಖಾಲಿ ಆಗುವುದು.  ಊರಿನ ತೇರು ಆಗಲೇ ಗುಡಿ ಸೇರಿ ಜನರು ದೇವಸ್ಥಾನದಿಂದ ಪುನಃ ಮನೆಗೆ ಮರಳುವುದು.  ಜನಜಂಗುಳಿಯಿಂದ ಮೇಲೆದ್ದಿದ್ದ ಧೂಳು ನಿಧಾನವಾಗಿ ತಿಳಿಯಾಗುವುದು...ಹೀಗೆ ಒಂದು ಸಂಭ್ರಮದ ಕ್ಷಣ ಸಹಜವಾಗಿ ಮುಂದಿನ ಗತಿಯಲ್ಲಿ ಲೀನವಾಗುವುದರ ಚಿತ್ರಣದ ಮೂಲಕ ಈ ಸಾಲುಗಳು ಅನೇಕ ನೆನಪುಗಳನ್ನು ಹಲವು ರೂಪಕಗಳ ಮುಖೇನ ಕಣ್ಣಿಗೆ ಕಟ್ಟಿಕೊಡುತ್ತದೆ.

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ|

ಅಂತೂ ಕಷ್ಟದ ಮೊದಲ ದಿನ ಮುಗಿದು ಎರಡನೆಯ ದಿನ ಸ್ವಲ್ಪ ಚೇತರಿಕೆ ಶುರುವಾಗುತ್ತದೆ.  ಎರಡನೆಯ ಹಗಲು ಎಂದು ಶುರುವಾಗುವ ಸಾಲುಗಳು ಬಹಳ ನಿಧಾನವಾಗಿ ಸಾಗುವ ಉದ್ದದ ದಿನಗಳನ್ನು ತೋರಿಸುತ್ತವೆ.  ಸುತ್ತಲಿನ ಪರಿಸರ ನಿನ್ನೆಯಷ್ಟು ಹೊಸತೆನಿಸುವುದಿಲ್ಲ, ಆದ್ದರಿಂದ ಇಳಿ ಮುಖವಿರದೆ ಸ್ವಲ್ಪ ಕೊರಗು ಕಡಿಮೆಯಾದಂತೆನಿಸುತ್ತದೆ.  ಮನೆಯ ಒಳ ಹೊರಗೆ ಓಡಾಡಿದಂತೆಲ್ಲ ಹೊಸ ಮೂಗುತಿಯ ಮಿಂಚು ಅಲ್ಲಲ್ಲಿ ಕಾಣಸಿಗುತ್ತದೆ.  ಆದರೂ ಅವರಿವರ ಮಾತುಗಳಲ್ಲಿ ಅಷ್ಟೊಂದು ಸ್ಪಷ್ಟತೆ ಇಲ್ಲ, ಈ ಕಡೆ ಮಾತನಾಡಿದಂತೆಯೂ ಇರಬೇಕು, ಆಡದಂತೆಯೂ ಇರಬೇಕು.  ತೆಳುವಾದ ದುಃಖದ ಗುಂಗಿನಲ್ಲಿ ತೇಲುವ ಮನಸಿಗೆ ಆಡಿದ ಮಾತುಗಳು ಬರೀ ತುಟಿಯ ಚಲನೆಯಂತೆ ಕಂಡು ಬರಬಹುದು.  ಈ ಸಂದರ್ಭಗಳಲ್ಲಿ ಸಮಯ ಬಹಳ ನಿಧಾನವಾಗಿ ಚಲಿಸುತ್ತದೆ.  ಬೇಲಿಯಲ್ಲಿ ಹಾವು ಸರಿದಂತೆ ಎನ್ನುವ ರೂಪಕ ತವರು ಮತ್ತು ಗಂಡನ ಮನೆಯ ಎರಡು ಕಡೆಗಳಲ್ಲಿ ಹರಿದಾಡುವ ಮನಸ್ಸಿನ ಪ್ರತೀಕವಿರಬಹುದು.  ಜೊತೆಗೆ ಬೇಲಿಯಲ್ಲಿ ಹರಿದಾಡುವ ಹಾವು ಜೊತೆಗೆ ಅಲ್ಲಿ ಹರಡಿದ ಹೂವು-ಮುಳ್ಳುಗಳ ಜೊತೆಗೆ ಸಹ ಪರಿಸರದಲ್ಲಿ ಹೊಂದಿಕೊಂಡಿರುವುದನ್ನು ಕಣ್ಣಿಗೆ ಕಟ್ಟುತ್ತದೆ.

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂದಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ 
ಹುಣ್ಣಿಮೆಯ ಹಾಲು ಹರಿದಂತೆ|

ಇನ್ನು ಮೂರನೆ ದಿನ ನಿಜವಾಗಿಯೂ ಚೇತರಿಕೆಯ ದಿನ.  ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈಗೂಡಿಸಿ ಮನೆಯವರೊಂದಿಗೆ ಸೇರಿಕೊಳ್ಳುವ ಪರಿ.  ಅತ್ತೆ, ಮಾವ, ಗಂಡ, ನಾದಿನಿ, ಮೈದುನರನ್ನೆಲ್ಲ ಸಂಬಾಳಿಸಿಕೊಂಡು ಹೋಗುವ ಪರಿ.  ಹೆರಳಿನ ತುಂಬಾ ಹೂ ಮುಡಿದಂತೆ ಆ ಹೂವಿಗೂ ಜೀವ ಬಂದಂತೆ ಎನ್ನುವ ಸಾಲುಗಳು ತಾಜಾ ಹೂಗಳು ಗುಂಪಾಗಿ ದಂಡೆಯ ರೂಪದಲ್ಲಿ ಸಂಭ್ರಮಿಸುವುದನ್ನು ನೋಡಬಹುದು, ಕೇವಲ ಮೂರೇ ದಿನಗಳಲ್ಲಿ ಇದು ಬಿಡಿ ಹೂವಿನ ಚಿಂತೆಯಿಂದ ಬಹಳ ದೂರ ಬಂದ ಮನಸ್ಸಿನ ಪರಿವರ್ತನೆಯನ್ನು ತೋರಿಸುತ್ತದೆ.  ಮೂರನೆಯ ಸಂಜೆ ಎಂದು ಆರಂಭವಾಗುವ ಪದಗಳು ಎರಡನೆಯ ಭಾರವಾದ ಹಗಲಿನಿಂದ ಬಹಳಷ್ಟು ಮುಂದೆ ಬಂದ ಸೂಚನೆಯನ್ನು ಕೊಡುತ್ತದೆ.  ಜೊತೆಗೆ ರಾತ್ರಿ ಇಳಿದಂತೆ ಕತ್ತಲಾದರೂ ಇಡೀ ಬಾನನ್ನು ಆವರಿಸುವ ಹುಣ್ಣಿಮೆಯ ಹಾಲು   ಬೆಳದಿಂಗಳ ಕೊರಗುವ ಕತ್ತಲಿನಿಂದ ಮನಸ್ಸು ದೂರಸರಿದಿರುವುದನ್ನು ಪ್ರತಿಬಿಂಬಿಸುತ್ತದೆ.

ಈ ಹಾಡನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು/ಕೇಳಬಹುದು.