Friday, September 21, 2007

ಸುಳಿವು ಕೊಡುವ ಸಂಗೀತ

ಜೇಮ್ಸ್ ಬಾಂಡ್ ಚಿತ್ರದಲ್ಲಿ ಅದರ ಥೀಮ್ ಮ್ಯೂಸಿಕ್ ಆಗಾಗ್ಗೆ ಕೇಳ್ಸುತ್ತೆ, ಬಾಂಡ್ ದುಷ್ಟರ ಕೂಟವನ್ನು ಹೊಕ್ಕಾಗ, ದುಷ್ಟರನ್ನು ಸೆದೆಬಡಿಯುತ್ತಿರುವಾಗ, ಅಪಾಯದ ಸುಳಿಯಲ್ಲಿ ಸಿಲುಕುವಾಗ, ಸುಳಿಯಿಂದ ಹೊರಬರುತ್ತಿರುವಾಗ...ಹೀಗೆ ಅನೇಕ ಸನ್ನಿವೇಶಗಳಲ್ಲಿ ಅದು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ಪ್ರೇರೇಪಿಸಿ ಮುಂಬರುವ ಅಪಾಯದ ಸುಳಿವನ್ನು ಹೀರೋಗಿಂತ ಮೊದಲೇ ಪ್ರೇಕ್ಷಕರಿಗೆ ನೀಡುವ ತಂತ್ರವದು. ನಿಜ ಜೀವನದಲ್ಲೂ ಹೀಗೇ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಲ್ವಾ? ನಮಗೆ ಬರೋ ತೊಂದರೆ ತಾಪತ್ರಯಗಳು, ನಾಳೆಯ ಕೆಲಸದ ಬಗ್ಗೆ ಇಂದೇ ಕೇಳುವ ಬಾಸಿನ ಬಗ್ಗೆ, ದೂರದಲ್ಲೆಲ್ಲೋ ಹೊಂಚು ಹಾಕಿ ಕುಳಿತು ಟ್ರಾಫಿಕ್ ವಯಲೇಷನ್‌ಗೆ ಟಿಕೇಟ್ ಕೊಡುವ ಮಾಮಾನ ಬಗ್ಗೆ, ನಮ್ಮ ಪಕ್ಕದಲ್ಲೇ ಇದ್ದು ನಮ್ಮ ವಿರುದ್ಧ ಸಂಚು ಮಸೆಯುವವರನ್ನು ಕುರಿತು...ಇತ್ಯಾದಿಯಾಗಿ ಸುಳಿವು ಸಿಕ್ಕಿದ್ದರೆ ಎಷ್ಟೊಂದು ಚೆನ್ನಿತ್ತು!

ಅಥವಾ ನಮ್ಮ ಸುತ್ತ ಮುತ್ತಲು ಬೇಕಾದಷ್ಟು ಆ ರೀತಿಯ ಸುಳಿವುಗಳು ಇರುತ್ತವೆಯೋ ಏನೋ, ಅದನ್ನು ನೋಡುವ ಕೇಳಿಸಿಕೊಳ್ಳುವ ಮನಸ್ಥಿತಿ ಇರಬೇಕಷ್ಟೇ. ಯಾವುದೋ ಒಂದು ಅವಘಡದಿಂದ ಪಾರಾಗಿ ಹೊರಬಂದ ಮೇಲೆ ಅಥವಾ ನೋವು ಅನುಭವಿಸಿ ಅದರಿಂದ ಸುಧಾರಿಸಿಕೊಂಡ ಮೇಲೆ ಅಯ್ಯೋ ಆ ಸುಳಿವು ಸಿಕ್ಕಿತ್ತು, ಅದನ್ನು ನಾನು ಗಮನಿಸಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡಿರುವ ಪ್ರಸಂಗಗಳೂ ಇಲ್ಲದೇನಿಲ್ಲ. ಇಂಗ್ಲೀಷ್‌ನಲ್ಲಿ hind site is 20/20 ಅಂತಾರಲ್ಲ ಹಾಗೆ. ಆದರೆ ಅತಿಯಾಗಿ ಇಂತಹ ಆಘಾತಕಾರಿ ಸಂಗೀತದ ಸುಳಿಯನ್ನು ಹುಡುಕಿಕೊಂಡೋ ಅಥವಾ ಪ್ರಾಬ್ಲೆಮ್ಮುಗಳನ್ನು ಆಲೋಚಿಸಿಕೊಂಡು ಅದಕ್ಕೆಲ್ಲಾ ಉತ್ತರವನ್ನೋ ಅಥವಾ ಕಾಂಟಿಜೆನ್ಸಿಯನ್ನೋ ಪ್ಲಾನು ಮಾಡಿಕೊಂಡು ಹೋಗುವುದೂ ಅಷ್ಟೇ ಅಪಾಯಕಾರಿಯಾದ ಸಮಸ್ಯೆಯಾಗಬಹುದು. ನೋಡದೇ ಬರುವ ಆಘಾತ, ಗೊತ್ತಿರುವ ಸಮಸ್ಯೆಗಳ ನಡುವೆ ಎಲ್ಲೋ ಒಂದು ಎಡೆ ಮಾಡಿಕೊಂಡು ಉಪಾಯವಾಗಿ ಕೆಲಸ ಸಾಗಿಸುವುದು ದೈನಂದಿನ ಸವಾಲು ಅಷ್ಟೇ, ಇವರೆಡರ ನಡುವೆ ಇರುವ ವ್ಯತ್ಯಾಸ ಚಿಂತೆ ಹಾಗೂ ಚಿಂತನೆಗಳಿರುವಷ್ಟೇ ಸೂಕ್ಷ್ಮವಾದದ್ದು.

ಆದರೆ, ಸಮಸ್ಯೆಗಳಿರದ ಕೆಲಸವಾಗಲೀ ಬದುಕಾಗಲೀ ಯಾವುದಿದ್ದೀತು? ಸಮಸ್ಯೆಗಳು ಬರುವುದೇ ನಮ್ಮನ್ನು ಸುಧಾರಿಸುವುದಕ್ಕೆ ಮುಂಬರುವ ಇನ್ನೊಂದ್ಯಾವುದೋ ಸನ್ನಿವೇಶಗಳಿಗೆ ನಮ್ಮನ್ನು ಅನುವು ಮಾಡುವುದಕ್ಕೆ. ನಮಗೆ ಎಂಟನೆ ತರಗತಿಯ ಕನ್ನಡ ನಾನ್ ಡೀಟೈಲ್‌ನ ’ಶಿಖರಗಾಮಿಗಳು’ ಪಾಠದಲ್ಲಿ ತೇನಸಿಂಗ್‌ ಬಗ್ಗೆ ಹೇಳುವಾಗ ಒಂದು ಮಾತು ಬರುತ್ತಿತ್ತು - ದೈಹಿಕ ಪರಿಶ್ರಮದಿಂದ ದೇಹ ಗಟ್ಟಿಯಾಗುವ ಹಾಗೆ ಮಾನಸಿಕ ಸಂಕಷ್ಟಗಳು ಮನಸ್ಸನ್ನೂ ಅಷ್ಟೇ ಗಟ್ಟಿಗೊಳಿಸುತ್ತವೆ - ಎಂಬುದಾಗಿ. ನಮ್ಮ ಭಾರತದ ಆಫೀಸುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೇಗೋ ಗೊತ್ತಿಲ್ಲ, ಇಲ್ಲಿನ ಹೆಚ್ಚೂ ಕಡಿಮೆ ಎಲ್ಲ ಕೆಲಸಗಳಲ್ಲಿ, ನನ್ನ ಸ್ನೇಹಿತನೊಬ್ಬ ಹೋಗುವ ಮರೀನ್‌ಕಾರ್ಪ್ ಮಿಲಿಟರಿ ಅಸೈನ್‌ಮೆಂಟ್‌ನಿಂದ ಹಿಡಿದು, ಕಾರ್ಪೋರೇಟ್ ಪ್ರಾಜೆಕ್ಟುಗಳವರೆಗೆ ಎಲ್ಲಿ ಹೋದರೂ lessons learned ಎಂದು ಒಂದು ವರದಿ ತಯಾರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಈ ರೀತಿ ಕಲಿತ ಪಾಠಗಳು ಹೆಚ್ಚಿದ್ದರೂ ಕಷ್ಟ, ಕಡಿಮೆಯಾದರೂ ಕಷ್ಟ ಎನ್ನಿಸಿದ್ದಿದೆ. ಇತ್ತೀಚೆಗೆ ಪ್ರಾಜೆಕ್ಟ್ ‍ ಮಾಡಿ ಮುಗಿಸಿದ ಮೇಲೆ (ತಪ್ಪಿನಿಂದ) ಕಲಿತ ಪಾಠಗಳನ್ನು ಒಪ್ಪಿಸಬೇಕಾಗಿ ಬಂದಿದ್ದು ಇನ್ನೂ ಸಂಕಷ್ಟದ ಪರಿಸ್ಥಿತಿಯೊಂದನ್ನು ಹುಟ್ಟು ಹಾಕಿತ್ತು. ಯಾರ ಮೇಲೂ (ನೇರವಾಗಿ) ಬೆರಳು ಮಾಡಿ ತೋರುವಂತಿಲ್ಲ, ಆದರೆ ವ್ಯವಸ್ಥಿತವಾದ ವರದಿಯೊಂದನ್ನು ತಯಾರಿಸಬೇಕು, ಇದೆಂಥ ಕಷ್ಟದ ಕೆಲಸ ಎಂದು ಒಮ್ಮೆ ಅನ್ನಿಸಿದ್ದೂ ಹೌದು.

ಸಮಸ್ಯೆಗಳ ಬಗ್ಗೆ ಯೋಚಿಸಿ ಒಂದು ಹೆಜ್ಜೆ ಮುಂದೆ ಹೋದರೆ ಸಮಸ್ಯೆಗಳು ಒಂದು ಮಾನಸಿಕ ನೆಲೆಗಟ್ಟೋ ಅಥವಾ ಭೌತಿಕ ಸ್ಥಿತಿಯೋ, ನಾವೇ ಹುಟ್ಟಿಸಿಕೊಂಡವುಗಳನ್ನು ಸಮಸ್ಯೆಗಳು ಎಂದು ಕರೆಯಬೇಕೋ ಅಥವಾ ನಮ್ಮಿಂದ ನಿವಾರಣೆಯಾಗಬಲ್ಲದು ಸಮಸ್ಯೆಯಾಗೇ ಹೇಗೆ ಉಳಿಯುತ್ತದೆ ಎಂದು ಹಲವಾರು ಪ್ರಶ್ನೆಗಳು ಎದುರಾದವು. ಜೊತೆಗೆ ಪ್ರತಿಯೊಂದು ಸಮಸ್ಯೆಗೂ ಉತ್ತರವೆನ್ನುವುದು ಇದೆಯೇ? ಅಥವಾ ಉತ್ತರವಿಲ್ಲದ್ದನ್ನೂ ಉತ್ತರವಿರುವಂತಹದ್ದನ್ನೂ ಸಮಸ್ಯೆ ಎಂದು ಒಂದೇ ಹೆಸರಿನಿಂದ ಹೇಗೆ ಕರೆಯಲು ಸಾಧ್ಯ? ಹೀಗೆ ಸಮಸ್ಯೆಯನ್ನು ಕುರಿತು ಯೋಚಿಸಿದಷ್ಟೂ ಸಮಸ್ಯೆ-ಉಪಸಮಸ್ಯೆಗಳು ಸೃಷ್ಟಿಯಾದವೇ ವಿನಾ ಉತ್ತರಗಳೇನೂ ದೊರಕಲಿಲ್ಲ.

’ಯೋಚಿಸಿ ಮುಂದೆ ನಡೆ...’, ’ಆಲೋಚಿಸಿ ಕೆಲಸ ಮಾಡು, ಮಾತನಾಡು...’ ಎಂದು ಹೇಳುವುದೇನೋ ಸುಲಭ, ಆದರೆ ನಿಜವಾಗಿಯೂ ಅದು ಸಾಧ್ಯವೇ? ಕೆಲವೊಮ್ಮೆ ಹಿಂದಿನ ಅನುಭವಗಳಿಂದ ಕಲಿತ ಪಾಠಗಳು ಸಮಸ್ಯೆಗಳಿಗೆ ತಂತಾನೆ ಉತ್ತರವನ್ನು ಕಂಡುಕೊಳ್ಳಬಲ್ಲವಾದರೂ ಅನುಭವದ ಒಂದೇ ಒಂದು ಸಮಸ್ಯೆ ಎಂದರೆ ಎಂದು ಪೂರ್ವಭಾವಿಯಾಗಿ ಬರದೇ ಕೆಲಸವೆಲ್ಲ ಆದ ಬಳಿಕ ಬರುವಂಥದ್ದು. ಮತ್ತೆ ಅದೇ ರೀತಿಯ ಕೆಲಸ ಮಾಡುವಲ್ಲಿಯವರೆಗೆ ಆ ಅನುಭವ ಕಲಿಸಿದ ಪಾಠದ ಅಗತ್ಯವೇನೂ ಇರಲಾರದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೀವನವೆನ್ನುವುದು ಬರೀ ನಮ್ಮ ತಪ್ಪಿನಿಂದ ಕಲಿಯುವ ಪಾಠಗಳ ಸಂಗ್ರಹ ಎಂದು ಯಾರಾದರೂ ದೊಡ್ಡ ಮನುಷ್ಯರು ಹೇಳಿದ್ದಾರು, ಹಾಗೆ ಹೇಳಿರುವ ಅವರ ಅನುಭವವನ್ನು ನಾವು ನಮ್ಮ ಅನುಭವದ ಮಸೂರದಲ್ಲಿ ನೋಡುವುದಾದರೂ ಹೇಗೆ?

ಏನೇ ಆದ್ರೂ ಜೇಮ್ಸ್ ಬಾಂಡ್‌ಗೆ ಇರೋ ಹಾಗೆ ನಮಗೂ ಒಂದು ಪರ್ಸನಲ್ ಮ್ಯೂಸಿಕ್ ರಿಮೈಂಡರ್ ಇದ್ದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು ಅಂತ ಬೇಕಾದಷ್ಟು ಸಾರಿ ಅನ್ನಿಸಿದೆ. ನಿಮಗೇನಾದ್ರೂ ಆ ರೀತಿಯ ಸಂಗೀತವನ್ನು ಸಿದ್ಧಿಸಿಕೊಳ್ಳುವ ಸಾಧನವೇನಾದ್ರೂ ತಿಳಿದಿದ್ರೆ ನಮಗೂ ಒಂದಿಷ್ಟು ತಿಳಿಸ್ತೀರಾ ತಾನೇ?

***

MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

Wednesday, September 19, 2007

ಅಂತರಂಗದಲ್ಲಿ ಆಡಿಯೋ - ಇನ್ನೂರೈವತ್ತರ ಹೊಸ ಪ್ರಯೋಗ

ಬರೀ ಹದಿನೆಂಟು ತಿಂಗಳಲ್ಲಿ ’ಅಂತರಂಗ’ದಲ್ಲಿ ಇನ್ನೂರೈವತ್ತು ಲೇಖನಗಳು ಬಂದಿವೆ ಅನ್ನೋದನ್ನ ನನಗೇ ನಂಬೋಕಾಗ್ತಾ ಇಲ್ಲ...ದಿನಾ ಸಾಯೋರಿಗೆ ಅಳೋರ್ ಯಾರು ಅನ್ನೋ ಹಾಗೆ ಕೆಲವರು ಬಂದು ಮತ್ತೆ ಬಾರದೇ ಹೋದರೂ, ಇವತ್ತಿಗೂ ತುಂಬಾ ಜನ ಇಲ್ಲಿನ ಲೇಖನಗಳನ್ನ ನೋಡ್ತಾ ಇರೋದರ ಜೊತೆಗೆ ಇಲ್ಲಿಗೆ ಒಂದು ಸೀಮಿತ ವೀಕ್ಷಕರಿದ್ದಾರೆ ಅನ್ನೋದಂತೂ ಸ್ಪಷ್ಟ. ಈ ಬರಹಗಳ ಸಂಖ್ಯೆಗೇನೂ ಮಹತ್ವವಿಲ್ಲ ಬಿಡಿ, ಆದರೆ ಹೆಚ್ಚೂ ಕಡಿಮೆ ಅರ್ಧ ಘಂಟೆಯಲ್ಲಿ ಹುಟ್ಟಿ ದಾಖಲಾಗೋ ಈ ಲೇಖನಗಳಿಗೆ ಬೇಕಾದಷ್ಟು ಮಿತಿಗಳಂತೂ ಇವೆ. ಇಲ್ಲಿನ ಲೇಖನಗಳು ಪರಿಪೂರ್ಣವಂತೂ ಅಲ್ಲವೇ ಅಲ್ಲ, ಜೊತೆಯಲ್ಲಿ ಈ ಲೇಖನಗಳು ಸಾಧಿಸೋ ತರ್ಕಕ್ಕೆ ಹೆಚ್ಚಿನ ಪಕ್ಷ ಯಾವುದಾದ್ರೂ ಹುಂಬ ತರ್ಕ ಇರುತ್ತ್ಯೇ ವಿನಾ ಸರಿಯಾದ ದಾಖಲೆಗಳಾಗಲೀ ಪರಾಮರ್ಶೆಗಳಾಗಲೀ ಸಿಗೋದಿಲ್ಲ...ಯಾಕೆ ಇಲ್ಲಾ ಅಂತಂದ್ರೆ ಅವುಗಳನ್ನ ಒಟ್ಟು ಮಾಡುತ್ತಾ ಹೋದ್ರೆ ಅದಕ್ಕೆ ಸಮಯ ತಗೊಳುತ್ತೆ, ಇದಕ್ಕಿಂತ ಹೆಚ್ಚಿನ ಸಮಯ ಯಾರ ಬಳಿಯಲ್ಲಿದೆ ಹೇಳಿ!?

ತಮಾಷೆಯ ಮಾತು ಹಾಗಿರಲಿ, ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ರೆ ಹೇಗೆ ಅನ್ನೋ ಆಸೆ ಬಂದಿದ್ದಂತೂ ನಿಜ. ನಿನ್ನೆ ಬರೆದ ’ಒಣದ್ರಾಕ್ಷಿ ಸ್ನೇಹಿತರ ಪರಸಂಗ’ ಲೇಖನದಲ್ಲಿ ಯಾವತ್ತೂ ಮಾತನಾಡದ ಒಣದ್ರಾಕ್ಷಿಗಳಿಂದ ಒಂದಿಷ್ಟು ಕಲ್ಪನೆಯ ಪಾತ್ರಗಳನ್ನು ಸೃಷ್ಟಿಸಿದ್ದೆ, ಹಾಗೆ ಮಾಡೋದರಿಂದ ಹೇಳೋದನ್ನ ನಿರ್ಭಿಡೆಯಿಂದ ಹೇಳಬಹುದು ನೋಡಿ ಒಂದು ರೀತಿ ಕಾರ್ಟೂನ್ ಶೋಗಳಲ್ಲಿ ಬರೋ ಪಾತ್ರಗಳ ಹಾಗೆ ಯಾರನ್ನೂ ಅಫೆಂಡ್ ಮಾಡದೆ. ಈ ದಿನ ಕನ್ನಡ ಬರಹಗಳಿಗೆ ಆಡಿಯೋ ಸ್ವರೂಪವನ್ನು ಕೊಟ್ಟರೆ ಹೇಗೆ ಎಂದು ಇಲ್ಲೊಂದು ತುಣುಕು ಎಮ್‌ಪಿ೩ ಪೈಲ್ ಅನ್ನು ಹಾಕಿದ್ದೇನೆ, ಈ ಪ್ರಯೋಗ ಮುಂದೆ ಬೆಳೆಯುತ್ತೋ ಬಿಡುತ್ತೋ ಗೊತ್ತಿಲ್ಲ, ಕೊನೇಪಕ್ಷ ಭಾಷೆಯ ಬಳಕೆಯ ಸಂದರ್ಭದಲ್ಲಿ ಬರೆದು ಸಿದ್ಧಪಡಿಸಲಾರದ್ದನ್ನು, ಸಾಧಿಸಿ ತೋರಿಸಲಾಗದ್ದನ್ನು ಹೇಳಿಯಾದರೂ ತೋರಿಸೋಣವೆಂಬ ಹುಂಬ ಕಲ್ಪನೆ ಅಷ್ಟೇ.

MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

ಭಾಷೆ ಅನ್ನೋದು ಬರೆದಾಗಲೇ ಚೆಂದವಂತೆ, ಆದ್ರೆ ಒಂದು ಆಡುವ ಧ್ವನಿಯಲ್ಲಿರೋ ಜೀವಂತಿಕೆಯನ್ನ ಬರವಣಿಗೆಗೆ ಹೇಗೆ ತರೋದು? ಅದರಲ್ಲಿರೋ ಸವಾಲುಗಳೇ ಬೇರೆ. ಉದಾಹರಣೆಗೆ, ’ನಮಸ್ಕಾರ ಸಾರ್ ಹೇಗಿದ್ದೀರಾ?’ ಅನ್ನೋದನ್ನ ಬರೆದ್ರೆ ಯಾವ ಧ್ವನಿಯಲ್ಲಿ ಹೊರ ಹೊಮ್ಮುತ್ತೆ ಅಂತ ಹೇಳೋದ್ ಕಷ್ಟಾ. ಪ್ರತೀ ವಾಕ್ಯವನ್ನ ಯಾರು ಯಾವಾಗ ಯಾವ ಸಂದರ್ಭದಲ್ಲಿ ಹೇಳಿದ್ರು ಅನ್ನೋದರ ಮೇಲೆ ಆಯಾ ವಾಕ್ಯದ ಹಿಂದಿನ ಜೀವಂತಿಕೆ ನಿರ್ಣಯವಾದ್ರೂ ಅದನ್ನ ಬರೆದವರಿಗಿಂತ್ಲೂ ಓದೋರಿಗೆ ತಾನೇ ಅದು ಹೆಚ್ಚು ಅರ್ಥವಾಗಬೇಕಾದ್ದು? ಓದೋರಿಗೆ ನಿಜವಾಗ್ಲೂ ಬರವಣಿಗೆಯ ಹಿಂದಿನ ಧ್ವನಿ ತಲುಪಿಸುವ ನಿಟ್ಟಿನಲ್ಲಿ ಬರವಣಿಗೆಯ ಜೊತೆಗೆ ಶಬ್ದವನ್ನೂ ಜೊತೆ ಮಾಡಿದ್ರೆ ಹೇಗೆ ಎಂಬ ಆಲೋಚನೆ ಮೂಡಿತು. ಜೊತೆಗೆ ’ಅಂತರಂಗ’ದ ಕೆಲವು ಬರಹಗಳನ್ನ ಆಡಿಯೋ ರೂಪದಲ್ಲಿ ಹಾಕಿದ್ರೆ ಹೇಗೆ ಎನ್ನೋ ಉಪಾಯ ಹೊಳೆಯಿತು, ಅದರ ಬೆನ್ನ ಹಿಂದೆ ಒಂದಿಷ್ಟು ವೆಬ್ ಸೈಟ್‌ಗಳನ್ನು ಹುಡುಕಿಕೊಂಡು ಹೋದ ನನಗೆ ಕೆಲವು ಪುಕ್ಕಟೆ ಸಾಫ್ಟ್‌ವೇರುಗಳ ಸಹಾಯದಲ್ಲಿ ಸುಲಭವಾಗಿ MP3 ಆಡಿಯೋ ಫೈಲುಗಳನ್ನು ತಯಾರ್ಸೋಕ್ ಆಯ್ತು. ಹಾಗೆ ತಯಾರಿಸಿದ್ದನ್ನ ಅಪ್‌ಲೋಡ್ ಮಾಡಿ ಅದನ್ನ ಆಡಿಯೋ ರೂಪದಲ್ಲಿ ಲಿಂಕ್ ಮಾಡಿ, ಈಗ ನಿಮ್ಮ ಮುಂದೆ ಒಂದು ತುಣುಕನ್ನ ಇಡ್ತಾ ಇದ್ದೇನೆ. ಇದನ್ನ ನೋಡಿ/ಕೇಳಿ ನಿಮಗೇನನ್ನಿಸುತ್ತೋ ತಿಳಿಸಿ.

ನಾವು ಆಡೋ ನುಡಿ, ಅದರ ಧ್ವನಿಯಲ್ಲಿನ ಬದಲಾವಣೆಗಳು, ಆಕ್ಸೆಂಟುಗಳು, ಆಡುನುಡಿಗಳು, ಡಯಲೆಕ್ಟುಗಳು, ಕೀರಲು ಸ್ವರದಿಂದ ಹಿಡಿದು ಬೋರ್ ಹೊಡೆಸುವ ಒಂದೇ ವೇಗದ ಧ್ವನಿಗಳವರೆಗೆ ಇವೆಲ್ಲವೂ ಸಾಕಷ್ಟು ವೈವಿಧ್ಯತೆಯನ್ನು ನೀಡುತ್ತವೆ. ಬರೆಯೋ ಮಾಧ್ಯಮಕ್ಕೆ ಮಾತಿನ ಮಾಧ್ಯಮಕ್ಕಿಂತ ಸಾಕಷ್ಟು ಮಿತಿಗಳಿವೆ. ಎಷ್ಟೋ ಸಾರಿ, ನಾವು ಏನು ಹೇಳಬೇಕೆಂದುಕೊಂಡಿರುತ್ತೇವೆ ಅವೆಲ್ಲವನ್ನೂ ಹೇಳೋಕೇ ಆಗೋದಿಲ್ಲ, ಇನ್ನು ಕೆಲವು ಸಾರಿ ನಾವು ಬರೆಯೋದೇ ಒಂದು ಅದರ ಅರ್ಥವೇ ಇನ್ನೊಂದು ಎನ್ನುವಂತಾಗುವುದು ಸಾಮಾನ್ಯ ಎಂದು ನನ್ನ ಅನಿಸಿಕೆ.

ಈ ಪ್ರಯೋಗ ಯಶಸ್ವಿಯಾಗದಿದ್ದರೇನಂತೆ ನಷ್ಟವಂತೂ ಇಲ್ಲ, ಆದರೆ ಬೇಕೆನಿಸಿದ್ದನ್ನು ಮಾತಿನ ರೂಪದಲ್ಲಿ ದಾಖಲಿಸಿ ಕೊನೆಗೆ ಅದನ್ನು ಸಾವಧಾನವಾಗಿ ಟೈಪ್ ಮಾಡಿಕೊಂಡು ಯಾವತ್ತಿದ್ದರೂ ಬರವಣಿಗೆಗೆ ಇಳಿಸುವುದು ಇದ್ದೇ ಇರುತ್ತೆ. ಜೊತೆಗೆ, ನೀವು ಮಾತನಾಡಿದ್ದನ್ನು ಇನ್ನೊಬ್ಬರು ವೇಗವಾಗಿ ಟೈಪ್ ಮಾಡಿಕೊಟ್ಟರೂ ನಡೆದೀತು. ಅಕ್ಷರಗಳ ಜೊತೆಗೆ ಮಾತನ್ನೂ ತೇಲಿಬಿಡುವುದು ಒಂದು ಆಲೋಚನೆಯಾದರೆ, ಬರವಣಿಗೆಯ ಶಿಸ್ತನ್ನು ಕಾಪಾಡಿಕೊಂಡು ಬಂದ ಕೆಲವರಿಗೆ ಅವರವರ ಮಾತಿನ ಶಿಸ್ತನ್ನೂ ಕಾಪಾಡಿಕೊಂಡು ಹೋಗುವುದು ಅಗತ್ಯವಾಗುತ್ತದೆ, ಇಲ್ಲವೆಂದಾದರೆ ಮೊದಲೆಲ್ಲ ಆತ್ಮವಿಶ್ವಾಸದಿಂದ ಕನ್ನಡದಲ್ಲಿ ಮಾತನಾಡುತ್ತಿದ್ದ ನನಗೆ ಆಯಾ ಸಂದರ್ಭಕ್ಕೆ ಯೋಗ್ಯ ಪದಗಳನ್ನು ಹುಡುಕುವ ಆಭಾಸವಾದಂತಾಗುತ್ತದೆಯೇನೋ ಎನ್ನುವ ಹೆದರಿಕೆ ಇತ್ತೀಚೆಗೆ ಹೆಚ್ಚಾಗುತ್ತಿತ್ತೇಕೆ?

Tuesday, September 18, 2007

ಒಣದ್ರಾಕ್ಷಿ ಸ್ನೇಹಿತರ ಪರಸಂಗ

ಬೇಯಿಸಿದ ಓಟ್‌ಮೀಲ್‌ಗೆ ಹಾಕೋಕೇ ಅಂತ ಒಣದ್ರಾಕ್ಷಿ ಡಬ್ಬದ ಮುಚ್ಚಲ ತೆಗೆದರೆ ಅಲ್ಲಿ ಎಲ್ಲವೂ ಖಾಲೀಯಾಗಿ ಡಬ್ಬದ ಕೆಳಗೆ ಒಂದು ಮೂಲೆಯಲ್ಲಿ ಎರಡು ದ್ರಾಕ್ಷಿಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ’ಏನ್ರಯ್ಯಾ, ಸಮಾಚಾರ?’ ಅಂತ ಮಾತನಾಡಿಸ್ಸಿದ್ದಕ್ಕೆ ಬೇಕೋ ಬೇಡವೋ ಎನ್ನುವಂತೆ ನನ್ನ ಕಡೆ ನೋಡಿದವು, ಅದ್ಯಾವ್ದೋ ತಪ್ಪಸ್ಸು ಮಾಡ್ತಾ ಇರೋ ಋಷಿ ಮಧ್ಯೆ ಯಾರೋ ತೊಂದ್ರೇ ಕೊಟ್ರು ಅಂತ ಕೋಪಿಸಿಕೊಂಡಿದ್ದನಂತಲ್ಲ ಹಾಗೆ. ’ನಾನೇನ್‌ರಯ್ಯಾ ಮಾಡ್ಲಿ...ಉಳಿದವ್ರೆಲ್ಲಾ ಎಲ್ಲಿ?’ ಎಂದು ಮತ್ತೊಂದು ಪ್ರಶ್ನೆ ಹಾಕಿದೆ ಅದಕ್ಕಾದ್ರೂ ಉತ್ರಾ ಕೊಡ್ಲಿ ಅನ್ನೋ ಹುಮ್ಮಸ್ಸಿನಲ್ಲಿ, ಆದ್ರೂ ಸುಮ್ನೆ ಕುಂತಿವೆ! ಎಲಾ ಇವ್ನಾ ಎಂದುಕೊಂಡು ಒಂದು ಸ್ಟೀಲ್ ಚಮಚೆಯಿಂದ ಅವುಗಳನ್ನು ತವಕದಿಂದ ಅಲುಗಾಡಿಸಿ ನೋಡಿದೆ. ನಾನು ಅವುಗಳನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಳ್ಳಿದರೆ ಕಷ್ಟಪಟ್ಟು ಒಲ್ಲದ ಮನಸ್ಸಿನಿಂದ ಹೋಗೋಕೇನೋ ತಯಾರಿದ್ದಾವೆ, ಆದ್ರೆ ಒಬ್ಬರನ್ನೊಬ್ಬರು ಬಿಟ್ಟು ಅಗಲ್ತಾ ಇಲ್ಲಾ. ’ಯಾಕ್ರೋ, ಹುಷಾರಿಲ್ವಾ?’ ಎಂದು ಇನ್ನೊಂದು ಪ್ರಶ್ನೆ ಬಿಸಾಕಿದ್ದಕ್ಕೆ ’ಈ ಮಾರಾಯಾ ಬರೀ ಪ್ರಶ್ನೆಗಳಿಂದ್ಲೇ ತಲೇ ತಿಂತಾನೇ’ ಅಂತ ಮನಸ್ಸಿನ್ನಲ್ಲೇ ಅಂದುಕೊಂಡಿರಬೇಕು, ಇದ್ದದ್ದರಲ್ಲಿ ಒಬ್ಬನಿಂದ ಧ್ವನಿಯೊಂದು ಹೊರಗೆ ಬಂತು.

’ಹುಷಾರಿಲ್ಲ ಅಂತೇನಿಲ್ಲಾ...ನಮ್ ಸ್ನೇಹಿತ್ರುಗಳು ಎಲ್ಲೋ ಕಾಣಿಸ್ತಾ ಇಲ್ಲಾ ಅಂತ ಬೇಜಾರ್ ಮಾಡ್ಕೋಂಡ್ ಕೂತೀದೀವಿ...’

ನಾನು, ’ಸ್ನೇಹಿತ್ರಾ? ಯಾರು...ನಿಮ್ ಜೊತೆ ಯಾವ್ ಸ್ನೇಹಿತ್ರಿದ್ರು?’ ಎಂದು ಕಳಕಳಿಯಿಂದ ಕೇಳಿದ್ದಕ್ಕೆ,

’ಊ, ನಾವೆಲ್ಲಾ ಒಟ್ಟಿಗೆ ಹುಟ್ಟೀ, ಬೆಳೆದು ಬಂದಿದ್ವಿ...ಇಲ್ಲೀವರೆಗೆ ಬಂದಿದ್ವಿ, ಒಬ್ಬರ ಕೈ ಒಬ್ರು ಹಿಡಕೊಂಡು...ಆದ್ರೆ ದಿನಾ ದಿನಾ ನಮ್ ಸಂಖ್ಯೆ ಖಾಲೀ ಆಗ್ತಾ ಆಗ್ತಾ ಈಗ ನೋಡಿ ನಾವಿಬ್ರೇ ಇರೋ ಹಾಗಾಗಿದೆ’ ಎಂದು ಇನ್ನು ಸ್ವಲ್ಪ ಆದ್ರೆ ಅತ್ತೇ ಬಿಡ್ತಾವೇನೋ ಅನ್ನೋ ಸ್ವರದಲ್ಲಿ ಸಮಜಾಯಿಷಿ ಸಿಕ್ಕಿತು.

ನನಗೇನು ಗೊತ್ತು, ಈ ಒಣ ದ್ರಾಕ್ಷಿಗಳಿಗೂ ಅನ್ಯೋನ್ಯತೆ, ಸ್ನೇಹ, ಸಂಬಂಧ ಇರುತ್ತೇ ಅಂತ. ಅವುಗಳ ಬಗ್ಗೆ ಇನ್ನಷ್ಟು ತಿಳಕೊಳ್ಳಬೇಕು ಅನ್ನಿಸ್ತು, ಆದ್ರೆ ಮೊದಲ ಭೇಟಿಯಲ್ಲೇ ಪೂರ್ವಾಪರ ವಿಚಾರ್ಸೋದು ಶಿಷ್ಟಾಚಾರ ಅಲ್ಲಾ ಅಂತ ಬಲವಂತವಾಗಿ ಸುಮ್ಮನಿದ್ದೆ. ಆಫೀಸಿಗೆ ಅರ್ಜೆಂಟಾಗಿ ಹೋಗ್‌ಬೇಕು ಅನ್ನೋ ತವಕ ಒಂದು ಕಡೆ, ಟೇಬಲ್ ಮೇಲೆ ಛಳಿ ಗಾಳಿ ಜೊತೆಗೆ ಫ್ರೆಂಡ್‌ಶಿಪ್ ಮಾಡ್ಕೊಂಡು ಇನ್ನೊಂದ್ ಸ್ವಲ್ಪಾ ಹೊತ್ನಲ್ಲೇ ಆರಿ ತಣ್ಣಗಾಗಿ ಬಿಡ್ತೀವಿ ಅಂತ ನನ್ ಮೇಲೆ ಪಂಥಾ ಕಟ್ಟಿರೋ ಕಾಫಿ ಗ್ಲಾಸೂ, ಓಟ್‌ಮೀಲ್ ಭರಣೀನೂ ಮತ್ತೊಂದು ಕಡೆ. ಇವತ್ತು ದ್ರಾಕ್ಷೀ ಇಲ್ಲದೇ ಓಟ್‌ಮೀಲ್ ತಿಂದ್ರೂ ಪರವಾಗಿಲ್ಲ, ಅಷ್ಟೊಂದು ಅನ್ಯೋನ್ಯತೆಯಿಂದ ಇರೋ ಸ್ನೇಹಿತರ ಬಂಧನವನ್ನ ಮುರಿಯೋದ್ ಬೇಡ ಅಂತ ಮನಸ್ಸು ಆಗಷ್ಟೇ ಇಳಿಸಿದ ಸಕ್ರೆ ಪಾಕದ ಥರ ಹರಳುಗಟ್ಟತೊಡಗಿತ್ತು.

ಇದ್ದಕ್ಕಿದ್ದ ಹಾಗೆ, ಇವರ ಸ್ನೇಹಿತ್ರೆನ್ನೆಲ್ಲ ಹಿಂತಿರುಗಿಸಿ ತಂದು ಕೊಟ್ಟಂತೆ ಮಾಡಿದ್ರೆ ಹೇಗೆ ಅನ್ನೋ ಆಲೋಚ್ನೇ ಬಂದಿದ್ದೇ ತಡ ಒಡನೆಯೇ ಪ್ಯಾಂಟ್ರಿ ಕ್ಲಾಸೆಟ್ಟಿನಿಂದ ಸನ್‌ಮೇಡ್ (sun maid) ರೇಸಿನ್ ಡಬ್ಬವನ್ನು ತಂದೆ, ಇನ್ನೇನು ಮುಚ್ಚಲವನ್ನು ತೆಗೆದು ಖಾಲಿಯಾದ ಡಬ್ಬದೊಳಗೆ ಸುರಿಯಬೇಕು ಆಗ ಈ ಸ್ನೇಹಿತರ ಭಾವನೆಗಳಿಗೆ ಸ್ವಲ್ಪವೂ ಬೆಲೆಕೊಡದೆ ಎಂಥಾ ಹುಂಬ ಕೆಲಸವನ್ನು ಮಾಡುತ್ತಿದ್ದೇನೆ ಎಂದೆನಿಸಿದ್ದರಿಂದ, ನಿಧಾನವಾಗಿ ಅಕ್ವೇರಿಯಂ‌ನಲ್ಲಿರುವ ಮೀನನ್ನು ತೆಗೆಯುವ ಹಾಗೆ ಚಮಚೆಯಿಂದ ಅಗಲದ ಸ್ನೇಹಿತರನ್ನು ತೆಗೆದು ದ್ರಾಕ್ಷಿ ಡಬ್ಬದ ಮುಚ್ಚಲದ ಮೇಲೆ ಹಾಕಿದೆ, ಸನ್‌ಮೇಡ್ ರೇಸಿನ್ ಡಬ್ಬದಿಂದ ಸುಮಾರು ಅರ್ಧ ಡಬ್ಬಿ ತುಂಬುವವರೆಗೆ ದ್ರಾಕ್ಷಿ ಡಬ್ಬವನ್ನು ತುಂಬಿದೆ, ಆಗಲಾದರೂ ತಮ್ಮ ಅಗಲಿದ ಸ್ನೇಹಿತರನ್ನು ಇವರಿಬ್ಬರೂ ಮರೆಯಲಿ ಎಂಬ ಆಸೆಯಲ್ಲಿ, ಆದರೆ ಆದದ್ದೇ ಬೇರೆ.

ನಾನು ಅರ್ಧ ಡಬ್ಬವನ್ನು ತುಂಬುತ್ತಿರುವುದನ್ನು ನೋಡಿ ಇಬ್ಬರ ಮುಖವೂ ಪೆಚ್ಚಾಯಿತು, ಏಕೆ ಎಂದು ಹೊಳೆಯಲಿಲ್ಲ, ಕೇಳಿಯೇ ಬಿಡೋಣವೆಂದು, ’ಈಗೇನಾಯ್ತು?’ ಎಂದೆ.

ಇಬ್ಬರೂ ಒಬ್ಬರನೊಬ್ಬರನ್ನು ನೋಡಿಕೊಂಡು, ’ಏನಿಲ್ಲ, ಅವರೆಲ್ಲಾ ನಮ್ ಸ್ನೇಹಿತ್ರಲ್ಲಾ...’ ಎಂದು ಒಕ್ಕೊರಲಿನಿಂದ ಉತ್ತರ ಕೊಟ್ಟವು. ಎಲಾ ಇವ್ನಾ...’ನಿಮಗೆ ಹೇಗೆ ಗೊತ್ತಾಯ್ತು?’ ಎಂದಿದ್ದಕ್ಕೆ,

’ನಮ್ ಸುತ್ಲೂ ಬಾಳಾ ವರ್ಷದಿಂದ ಇದ್ದು ಬೆಳದೋರಿಗೂ ಇವರಿಗೂ ತುಂಬಾ ವ್ಯತ್ಯಾಸ ಇದೆ, ಈಗ ಮನುಷ್ಯರನ್ನು ತಗೊಂಡ್ರೇ ಎಲ್ಲರೂ ಒಂದೇನಾ?’ ಎಂದು ನನ್ನನ್ನೇ ಪ್ರಶ್ನಿಸಿದವು. ಇದೊಳ್ಳೇ ಕಥೆಯಾಯ್ತಲ್ಲಪ್ಪಾ, ಬೆಳ್ಳಂಬೆಳಗ್ಗೆ, ಏನಾದ್ರೂ ಹಾಳ್ ಬಡಿಸಿಕೊಂಡ್ ಹೋಗ್ಲೀ, ತಿಂಡಿ ತಿನ್ನದಿದ್ರೂ ಪರವಾಗಿಲ್ಲ ಆಫೀಸಿಗೆ ಹೋಗಿ ಬಿಡಲಾ ಎಂದು ಒಂದು ಮನಸ್ಸಿಗೆ ಅನ್ನಿಸಿದ್ರೂ, ನೋಡೇ ಬಿಡೋಣ ಇವರ ಸ್ನೇಹ ಎಲ್ಲೀವರೆಗೆ ಬರುತ್ತೆ ಅಂತ ಇನ್ನೊಂದು ಮನಸ್ಸಿಗೆ ಅನ್ನಿಸಿದ್ದು ನಿಜ. ನಾನು ಮತ್ತೆ ಪ್ರಶ್ನೆ ಕೇಳತೊಡಗಿದೆ.

’ನೀವಿಬ್ರೂ ಎಲ್ಲಿ ಬೆಳದೋರು? ಯಾವೂರಿನವ್ರು?’

’ನಮ್ಮೂರು ತುಂಬಾ ದೂರಾ ಸಾರ್, ನಾವು ನಿಮ್ಮನೇ ಡಬ್ಬಿಗೆ ಹೇಗ್ ಬಂದ್ವೋ ಗೊತ್ತಿಲ್ಲಾ, ಒಂದೇ ಗದ್ದೇಲ್ ಹುಟ್ಟಿದ್ವಿ, ಒಂದೇ ಗೊಂಚಲಲ್ಲಿ ಬೆಳೆದಿದ್ವಿ, ಒಂದೇ ಕಡೆ ಒಣಗಿದ್ರೂನ್ವೆ ನಾವ್ ಯಾವತ್ತೂ ಜೊತೆ ಬಿಟ್ಟೋರಲ್ಲಾ...ಹೀಗಿರೋ ಸ್ನೇಹಿತ್ರು ಅವರವ್ರ ಕಾಲಾ ಬಂತೂ ಅಂತ ಒಂದೊಂದ್ ಕಡೇ ಹೋದ್ರು, ಕೊನೇಗ್ ನಾವ್ ಮಾತ್ರ ಉಳಿದೀದೀವ್ ನೋಡ್ರಿ, ನಮ್ ಕಥೆ ಇನ್ನೇನಾಗುತ್ತೋ ಅನ್ನೋ ಭಯ ಬೇರೆ...’ ಎಂದು ತಮ್ಮ ಅಳಲನ್ನು ತೋಡಿಕೊಂಡವು.

’ಓ ಹಾಗಾ...’ ಎಂದು ಯಾರದ್ದೋ ಪ್ರಶ್ನೆಗೆ ಉತ್ತರ ಹೊಳೆದವರ ಹಾಗೆ ಧ್ವನಿ ಹೊರಗಡೆ ಬಂದರೂ, ಈ ಸ್ನೇಹಿತರುಗಳ ಬಗ್ಗೆ ಚಿಂತಿಸೋದು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಅವರಿಗೆ ಸಮಜಾಯಿಷಿ ಹೇಳೋ ಹಾಗೆ,

’ನೋಡ್ರಪಾ, ನಿಮ್ ಸ್ನೇಹಿತ್ರು ಎಲ್ಲೆಲ್ಲಿ ಹೋಗೋವ್ರೇ ಅಂತ ನನಗೂ ತಿಳೀದೂ, ಈ ಭೂಮಿಗ್ ಬಂದೋರೆಲ್ಲಾ ಒಂದಲ್ಲ ಒಂದ್ ದಿನ ಹೋಗೋದೇ ಅಂತ ನಿಮಗೂ ತಿಳಿದಿರ್‍ಬೇಕು, ಅಂಥಾದ್ದರಲ್ಲಿ ಹೋದೋರ್ ಬಗ್ಗೆ ಮರುಕಾ ಪಟ್ಟು ಯಾರಿಗೇನ್ ಸುಖಾ ಇದೆ...’ ಎಂದು ಉಪದೇಶ ಸಾರೋ ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, ಅವರಲ್ಲೊಬ್ಬ ಹೀಗನ್ನೋದೇ,

’ನೀವೇನೋ ದೊಡ್ಡ ಮನುಷ್ಯರೂ ಅಂತ ಅಂದುಕೊಂಡಿದ್ವಿ, ಹುಟ್ಟೀ ಸಾಯೋದೇನಿದ್ರೂ ದೇಹಾ ಸಾರ್, ಆದ್ರೆ ಸಂಬಂಧ-ಬಾಂಧವ್ಯಾ ಅನ್ನೋದೂ ದೇಹಕ್ಕಿಂತ ದೊಡ್ಡದು. ನಾವು ಎಲ್ಲೋ ಕಳಕೊಂಡ ನಮ್ ಸ್ನೇಹಿತ್ರು ಬಗ್ಗೆ ಮರುಗ್ತಾ ಇದ್ರೆ ಮುಂದಿನ್ ದಾರೀ ನೋಡ್ರೀ ಅಂತ ಹೇಳ್ತೀರಲ್ಲಾ ಸಾರ್...’ ಎಂದು ಅಳುಮುಖದಿಂದ ಸಿಟ್ಟಿಗೆ ಪರಿವರ್ತನೆಗೊಂಡವು.

’ಲೋ, ಮನಸ್ಸು ಮಾಡಿದ್ರೆ ನಿಮ್ಮನ್ನ್ ಒಂದೇ ಮುಕ್ಕಿಗೆ ತಿಂದ್ ಬಿಸಾಕ್ತೀನ್ ನೋಡ್ರೀ...’ ಎಂದು ಹೆದರಿಸೋಣವೆಂದು ನಾಲಿಗೆ ತುದೀವರೆಗೆ ಬಂದರೂ ಕಷ್ಟಪಟ್ಟು ತಡೆದುಕೊಂಡೆ, ಇನ್ನೊಂದ್ ಸರ್ತಿ ಪ್ರಯತ್ನಿಸೋಣಾ ಅಂತ,

’ನೋಡ್ರೋ, ನಿಮ್ ಕಷ್ಟಾ ನನಗರ್ಥಾ ಆಗುತ್ತೇ, ಆದ್ರೆ ನಿಮ್ಮ್ ಸಮಸ್ಯೇ ಕೇಳೋಕಾಗ್ಲೀ ಅದಕ್ಕ್ ಪರಿಹಾರಾ ಹುಡುಕೋಕ್ ಆಗ್ಲಿ ನನ್ ಹತ್ರ ಟೈಮಿಲ್ಲ, ಆಫೀಸಿಗೆ ಬೇರೆ ಹೊತ್ತಾಗ್ತಾ ಇದೆ...’ ಎನ್ನೋ ಮಾತನ್ನೂ ಅರ್ಧದಲ್ಲೇ ತಡೆದು, ಅವರಿಬ್ಬರಲ್ಲಿ ಮತ್ತೊಬ್ಬ,

’ಕಂಡಿದ್ದೀವಿ ನಡೀರಿ ನಿಮ್ ಆಫೀಸ್ ಕೆಲ್ಸಾನಾ...ಆಫೀಸಲ್ಲಿದ್ದಾಗ ಮನೇ ಬಗ್ಗೆ ಕೊರಗ್ತೀರಿ, ಮನೇಲಿದ್ದಾಗ ಆಫೀಸಿನ್ ವಿಷ್ಯಾ ತೆಲೆಕೆಡಿಸಿಕಂತೀರಿ...ನಿಮ್ ಆಫೀಸೂ, ಆಫೀಸ್ ಕೆಲ್ಸಾ, ಆಫೀಸ್ ತಿರುಗಾಟಾ ಅಂತೆಲ್ಲಾ ಅಂದೂ ಅಂದೇ ನಿಮ್ಮ್ ಮನಸಿನ್ನಷ್ಟೇ ನಿಮ್ಮ್ ನಿಮ್ಮ್ ಸಂಬಂಧಗಳೂ ಸಣ್ಣವಾಗಿರೋದು...ಕೊನೇಗೆ ನಮ್ಮಂತೋರ್ ಸತ್ರೆ - ಒಳ್ಳೇ ಸ್ನೇಹಿತ್ರು, ಸಂಬಂಧಗಳ ಜೀವಂತಿಕೆಗೆ ತಡಪಡಿಸೋರು - ಅಂತ ನಮ್ ಗೋರೀ ಮೇಲೆ ಬರೀತಾರೆ, ಇನ್ನು ನಿಮ್ಮಂತೋರಿಗೆ ದಿನಾ ಆಫೀಸಿಗೆ ಹೋಗೋ ದಾಸಯ್ಯಾ ಸತ್ತಾ ಅಂತ ಬರೀತಾರೆ...’ ಎಂದು ಜೋರು ಮಾಡತೊಡಗಿದವು. ನನಗಂತೂ ಈ ಫುಟ್‍‌ಪಾತ್ ಮೇಲೆ ಇದ್ದೋರಿಗೆ ಸಹಾಯ ಮಾಡಕ್ಕೋಗಿ ಅವರೇ ಎದುರಿಗೆ ತಿರುಗಿ ಬಿದ್ದ ಅನುಭವವಾದಂತಾಗಿ, ಈ ಒಣದ್ರಾಕ್ಷಿಗಳು ನಿಜವಾಗಿಯೂ ಮಾತನಾಡುತ್ತಿವೆಯೇ ಎಂದು ಪರೀಕ್ಷಿಸುವಂತಾಯಿತು. ಮತ್ತೆ ಸಮಜಾಯಿಷಿ ಹೇಳೋ ಧ್ವನಿಯಲ್ಲಿ ಶುರು ಮಾಡಿದೆ,

’ನಿಮಗ್ಗೊತ್ತಾಗಲ್ಲ, ನಾವು ಇವತ್ತು ದುಡಿದು ನಾಳೇ ತಿನ್ನಬೇಕು, ದುಡಿದದ್ದನೆಲ್ಲ ಬಿಲ್ ಕಟ್ಟೋದಕ್ಕೇ ಆಗಿ ಹೋಗುತ್ತೇ, ಇನ್ನು ಸಂಸಾರ ತೂಗಿಸೋದೂ ಅಂದ್ರೆ...’ ಎಂದು ರಾಗ ಎಳಿಯುತ್ತಿದ್ದ ಹಾಗೆ...

’ಮತ್ತೆ ಶುರು ಮಾಡಿದ್ರಾ ನಿಮ್ ಅಳುಮುಂಜೀ ರಾಗಾನಾ...’ಎಂದು ಇಬ್ಬರೂ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಸ್ವಲ್ಪ ಖುಷಿಯನ್ನು ಕಿರುಚುವಿಕೆಯಲ್ಲಿ ಅಭಿವ್ಯಕ್ತಗೊಳಿಸಿ ಅರ್ಧ ತುಂಬಿದ ಒಣ ದ್ರಾಕ್ಷಿ ಡಬ್ಬದೊಳಗೆ ಜಿಗಿದು ಅವುಗಳಲ್ಲಿ ಒಂದಾಗಿ ಹೋದವು.

’...ನಿಮ್ಮನ್ನಾ ಒಂದ್ ಕೈ ನೋಡೇ ಬಿಡ್ತೀನಿ...’ ಎನ್ನುವ ನನ್ನ ಧ್ವನಿ ಹಲ್ಲಿನ ಹಿಂದೆಯೇ ಉಳಿದು ಹೋಗಿ, ಒಣದ್ರಾಕ್ಷಿ ಡಬ್ಬವನ್ನು ಗಟ್ಟಿಯಾಗಿ ಮುಚ್ಚುಳ ಹಾಕಿದೆ, ಮತ್ತೆನ್ನೆಲ್ಲಿಯಾದರೂ ಓಡಿ ಹೋಗಿ ಕಾರಿನ ವಿಂಡ್‌ಶೀಲ್ಡ್ ಹಿಂದೆ ಸೇರಿ ಬಿಟ್ಟಾರು ಎನ್ನುವ ಹೆದರಿಕೆಯಂತೂ ಇತ್ತು, ಸದ್ಯ ಹಾಗಾಗಲಿಲ್ಲ!

Sunday, September 16, 2007

ಪಾನೀಪೂರಿಯ ಅಲೆ

ಒಂದು ವಾರದ ಹಿಂದೆ ಸ್ನೇಹಿತರೊಬ್ಬರ ಮನೆಯಲ್ಲಿ ಪಾನೀಪೂರಿ ಮಾಡಿ ಕೊಟ್ಟಿದ್ದರು, ಅವರು ತಟ್ಟೆಯಲ್ಲಿ ತಂದು ಸುತ್ತಲೂ ಸಣ್ಣ ಸಣ್ಣ ಪೂರಿಗಳನ್ನು ಇಟ್ಟು ಮಧ್ಯೆ ಪೂರಿ ಒಳಗೆ ತುಂಬೋದಕ್ಕೆ ಈರುಳ್ಳಿ-ಕೊತ್ತುಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಇಟ್ಟು, ಪಕ್ಕದಲ್ಲಿ ಮ್ಯಾಷ್ಡ್ ಅಲೂಗಡ್ಡೆಯ ಜೊತೆಗೆ ಒಂದು ಸೂಪ್ ಬೌಲ್‌ನಲ್ಲಿ ಪಾನೀ ಅನ್ನೂ ಇಟ್ಟಿದ್ದರು. ಅವರು ಪಾನೀಪೂರಿ ತಯಾರಿಸಿದ್ದಕ್ಕಿಂತಲೂ ಅವರ ಪ್ರೆಸೆಂಟೇಷನ್ ಬಹಳ ಇಷ್ಟವಾಯ್ತು. ಒಂದೊಂದೇ ಪೂರಿ ಹೊಟ್ಟೆ ಒಳಗೆ ಹೋಗುತ್ತಿದ್ದ ಹಾಗೆ ನಾಲಗೆಗೆ ತಡೆ ಅನ್ನುವುದೇ ಇಲ್ಲವಾಗಿ ಹತ್ತರ ಮೇಲೆ ತಿಂದರೂ ಇನ್ನೂ ಬೇಕು ಅನ್ನುವಂತಾಗಿತ್ತು, ಅಷ್ಟು ರುಚಿಯಾಗಿತ್ತು! ಎಷ್ಟೇ ರುಚಿಯಾಗಿದ್ದರೂ, ನಾವು ಚಮಚೆಯಿಂದ ಪಾನಿಯನ್ನು ಪೂರಿಯೊಳಗೆ ತುಂಬಿಕೊಳ್ಳುತ್ತಿದ್ದೆವಾದ್ದರಿಂದ ಭಾರತದಲ್ಲಿ ರಸ್ತೆ ಬದಿಯಲ್ಲಿ ಪಾನೀಪೂರಿಯನ್ನು ತಿಂದಷ್ಟು ರುಚಿಯಂತೂ ಇರಲಿಲ್ಲ, ಏಕೆಂದರೆ ಅಲ್ಲಿ ಪಾನೀ ಇಟ್ಟ ಕೊಳಗದೊಳಗೆ ಆತ ಕೈ ಮುಳುಗಿಸಿ ಪೂರಿಯ ತುಂಬ ಪಾನಿಯನ್ನು ಹಾಕಿಕೊಟ್ಟಾಗಲೇ ಅದರ ರುಚಿ, ಹಿಂದೆ
ಬನಿಯನ್ ಚಹಾದ ಮಹಿಮೆಯನ್ನು
ಓದಿದವರಿಗೆ ಆಹಾರ ಪದಾರ್ಥಗಳ ರುಚಿಯ ಬಗ್ಗೆ ಮತ್ತೆ ಹೇಳುವುದೇನಿದೆ?

ಆದರೆ ಈ ದಿನ ಪಾನೀಪೂರಿಯನ್ನು ವಿಶೇಷವಾಗಿ ನೆನೆಸಿಕೊಳ್ಳಬೇಕಾಗಿ ಬಂತು ಏಕೆಂದರೆ ಅಂದು ಸ್ನೇಹಿತರ ಮನೆಯಲ್ಲಿ ಸ್ಪೂರ್ತಿ ಸಿಕ್ಕು ನಾನೂ ಮನೆಯಲ್ಲಿ ಮಾಡೋಣವೆಂದು ಪಾನೀಪೂರಿ ಪ್ರಾಜೆಕ್ಟನ್ನು ಕೈ ಹಚ್ಚಿಕೊಂಡರೆ ಗಣಪತಿ ಹಬ್ಬದ ಪ್ರಯುಕ್ತವೇನೋ ಎನ್ನುವಂತೆ ಬರೀ ವಿಘ್ನಗಳೇ ಎದುರಾಗುತ್ತಿದ್ದವು. ಅಡುಗೆಮನೆಗೆ ಬೇಕಾದಷ್ಟು ಸಾರಿ ಹೋಗಿ ಗೊತ್ತು ಆದರೆ ಯಾವ ಯಾವ ಸಾಮಾನು ಎಲ್ಲೆಲ್ಲಿದೆ ಎಂದು ಗೊತ್ತಿರಬೇಕಲ್ಲ? ಉಪ್ಪು ಸಿಕ್ಕರೆ ಸಕ್ಕರೆ ಸಿಗದು, ಸಕ್ಕರೆ ಸಿಕ್ಕರೆ ಮತ್ತಿನ್ನೇನೋ ಸಿಗದು. ಹೀಗಿದ್ದಾಗ್ಯೂ ನಾನೂ ಒಂದು ಪಾನೀಪೂರಿಯನ್ನು ಸೆಟ್ ಅನ್ನು ತಯಾರಿಸಿ ಅದರಲ್ಲಿ ಬೇಕು ಬೇಕಾದ ಅನ್ನುವುದಕ್ಕಿಂತಲೂ ಕೈಗೆ ಸಿಕ್ಕವುಗಳನ್ನು ನೀಟಾಗಿ ಜೋಡಿಸತೊಡಗಿದೆ. ಮೊದಲೇ ಅಂಗಡಿಯಿಂದ ತಂದ ಪೂರಿ - ಗೋದಿ ಹಿಟ್ಟನ್ನು ಗೋಲಿಯಾಕಾರದಲ್ಲಿ ಕಲೆಸಿ ಲಟ್ಟಣಿಗೆಯಲ್ಲಿ ನಾದು ಎಣ್ಣೆಯಲ್ಲಿ ಹುರಿಯುವಷ್ಟು ವ್ಯವಧಾನ ಈ ಪ್ರಪಂಚದಲ್ಲಿ ಯಾರಿಗಿದೆ ಹೇಳಿ - ಮೇಲೆ ಒತ್ತಿದರೆ ಕೆಳಗೂ ಬಿರುಕುಬಿಡುತ್ತಿತ್ತು. ಹಾಗೂ ಹೀಗೂ ಮಾಡಿ ಒಂದು ಹತ್ತು ಪೂರಿಯನ್ನು ತಯಾರು ಮಾಡಿ ಅದರ ಜೊತೆಯಲ್ಲಿ ಬಿಸಿ ಚಹಾವನ್ನು ಮಾಡಿಟ್ಟುಕೊಂಡು ಚುಮು ಚುಮು ಛಳಿ ಇದ್ದರೂ ಹೊರಗಡೆ ಕುಳಿತು ಸಂಜೆಯ ಹೊತ್ತಿಗೆ ಮನೆಯ ಸುತ್ತಲು ಚಿರ್ಪ್ ಚಿರ್ಪ್ ಎನ್ನುವ ಮಿಡತೆಗಳ ಸದ್ದಿನೊಂದಿಗೆ ಆಸ್ವಾದಿಸುವುದಿದೆ ನೋಡಿ, ಅದರ ಮುಂದೆ ಯಾವ ಸ್ವರ್ಗಸುಖವೂ ಇಲ್ಲ ಬಿಡಿ.

ನಾನು ಅಡುಗೆ ಮಾಡೋದೇ ಕಡಿಮೆ - ಥ್ಯಾಂಕ್ ಗುಡ್‌ನೆಸ್, ಈ ದೇಶದಲ್ಲಿ ಬ್ರೆಡ್ಡೂ-ಬನ್ನಿಗೇನೂ ಕಡಿಮೆ ಇಲ್ಲ - ಎರಡು ಘಂಟೆ ವ್ಯಯಿಸಿ ಒಂದು ಬಿಸಿಬೇಳೆ ಬಾತ್ ಮಾಡಿ ತಿಂದು ಅದರ ಪಾತ್ರೆಗಳನ್ನು ತೊಳೆದು ಒಪ್ಪ ಮಾಡುವುದಕ್ಕೆ ಇನ್ನೊಂದು ಘಂಟೆಯನ್ನು ವ್ಯಯಿಸುವುದು ನನ್ನ ಜಾಯಮಾನದಲ್ಲೇನೂ ಬರೆದ ಹಾಗಿಲ್ಲ. ತಿನ್ನುವುದಕ್ಕಾಗಿ ಬದುಕಬಾರದು, ಬದುಕುವುದಕ್ಕಾಗಿ ತಿನ್ನಬೇಕು - ಎನ್ನುವ ವೇದಾಂತವನ್ನು ಬಹಳ ವರ್ಷಗಳ ಹಿಂದೆಯೇ ಅನುಸರಿಸಿ ಅದೇ ರೀತಿ ಇವತ್ತಿಗೂ ಚಾಚೂ ತಪ್ಪದೇ ನಡೆದುಕೊಂಡು ಬಂದಿದ್ದಾಗಿದೆ. ನಾಲಗೆ ರುಚಿ ಆದೇಶಿಸೋ ಹೊರವಲಯದ ತಿನ್ನುವಿಕೆಯಲ್ಲಿ ಏನು ಸುಖ ಇದೇ ಹೇಳೀ, ಅದು ಕ್ಷಣಿಕವಾದದ್ದು, ಅದರ ಬದಲಿಗೆ ಏನೋ ಒಂದು ಪುಸ್ತಕವನ್ನು ಓದಿದರೆ ಬರೆದರೆ ಅದು ಯಾವತ್ತಿಗೂ ಇರುವಂತದ್ದು. ಅಂತಹದ್ದರಲ್ಲಿ ದಿನದ ಕಾಲು ಭಾಗವನ್ನು ತಿನ್ನುವುದಕ್ಕಾಗಿ ಬಳಸುವ ಯಾರನ್ನಾದರೂ ನೋಡಿ ಮರುಕಪಡದೇ ಇನ್ನೇನನ್ನು ಮಾಡಬೇಕೋ? ಆದರೆ, ತಿನ್ನುವವರಲ್ಲಿ ಎಲ್ಲರೂ ಒಂದೇ ರೀತಿ ಎಂದು ಹೇಳಲಾಗದು. ಕೆಲವರು ಕಂಬಳಿಹುಳುವಿನ ಥರ ಯಾವಾಗಲೂ ಕುರುಕಲುಗಳನ್ನು ಮೇಯುತ್ತಲೇ ಇದ್ದರೆ ಇನ್ನು ಕೆಲವರು ನಿಯಮಿತವಾಗಿ ಹೊತ್ತುಹೊತ್ತಿಗೆ ಊಟ-ತಿಂಡಿ ಮಾಡಿಕೊಂಡಿರುವವರು. ಆದರೆ ನಮ್ಮ ಗುಂಪಿಗೆ ಸೇರುವವರೇ ಬಹಳ ಮಂದಿ, ದಿನಕ್ಕೆ ಇಂತಿಷ್ಟೇ ಹೊತ್ತಿಗೆ ಇಂಥದ್ದನ್ನೇ ತಿನ್ನಬೇಕು ಎಂದು ಅಶ್ವಮೇಧಯಾಗ ಮಾಡುವವರನ್ನು ಬದುಕಲೇ ಅಯೋಗ್ಯರು, ತಿನ್ನಲು ಮಾತ್ರ ಯೋಗ್ಯರು ಎಂದು ಹಣೆಪಟ್ಟಿಕೊಡದೇ ಮತ್ತಿನೇನು ಮಾಡಬೇಕು.

ತಿನ್ನೋದರ ಬಗ್ಗೆಯೇ? ನನಗೂ ಗೊತ್ತು...ದಾವಣಗೆರೆ ಮಸಾಲೆ ಮಂಡಕ್ಕಿಯಿಂದ ಹಿಡಿದು, ಧಾರವಾಡಾ ಪೇಡಾದವರೆಗೆ, ಮೈಸೂರಿನ ಮಸಾಲೆ ದೋಸೆಯಿಂದ ಹಿಡಿದು, ಮದ್ದೂರುವಡೆ ವರೆಗೆ, ಯಾವುದೋ ಒಂದು ಸೀಜನ್ ನಲ್ಲಿ ಸಿಗೋ ಆನೆಬಂಡಾದಿಂದ ಹಿಡಿದು, ನೇರಳೇಹಣ್ಣಿನಿಂದ ಹಿಡಿದು, ಥರಾವರಿ ಪಲ್ಯ-ಪದಾರ್ಥಗಳಿಗೆ ಬರೋ ಕಳಲೆಯವರೆಗೆ. ಒಂದೆಲಗದ ಸೊಪ್ಪಿನಿಂದ ಹಿಡಿದು ಹರಿವೇ ಸೊಪ್ಪಿನವರೆಗೆ, ಅಪರೂಪಕ್ಕೆ ಮಾಡೋ ನುಗ್ಗೇ ಸೊಪ್ಪಿನಿಂದ ಹಿಡಿದು ಬಸಳೇ ಸೊಪ್ಪಿನವರೆಗೆ... ಇವೆಲ್ಲವನ್ನು ನೆನೆನೆನೆಸಿಕೊಂಡೇ ಬಾಯಲ್ಲಿ ಹಲವರಿಗೆ ನೀರು ಊರಿರಬಹುದು. ಆದರೆ, ಇದರ ಹಿಂದಿನ ಮರ್ಮ ಕೆಲವರಿಗೆ ಮಾತ್ರ ಗೊತ್ತು. ಅಮೇರಿಕದ ಉದ್ದಗಲಕ್ಕೂ ಭಾರತೀಯ ಮೂಲದ ಅಂಗಡಿಗಳೇನೂ ಇಲ್ಲ, ಹತ್ತಿಪ್ಪತ್ತು ವರ್ಷಗಳ ಹಿಂದೆ ಒಂದು ಪೌಂಡು ತೊಗರಿಬೇಳೆಯನ್ನು ಪೋಸ್ಟ್‌ನಲ್ಲಿ ಎಷ್ಟೋ ಜನ ತರಿಸಿಕೊಂಡು ಹೋಳಿಗೆ ಮಾಡಿಕೊಂಡು ತಿಂದಿದ್ದಿರಬಹುದು, ಇತ್ತೀಚೆಗೆ ಇಂತಹ ಅಂಗಡಿಗಳು ಹೆಚ್ಚಾಗಿರಬಹುದು, ಆದರೆ ನಮಗೆ ಬೇಕಾದ ಪದಾರ್ಥ, ತರಕಾರಿ ಮುಂತಾದವುಗಳು ಯಾವಾಗಲೂ ಸಿಗುತ್ತವೆ ಎಂದು ಗ್ಯಾರಂಟಿ ಕೊಡಲಿಕ್ಕೆ ಬಾರದು. ಹಲ್ಲಿದ್ದಾಗ ಕಡೆಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವುದನ್ನು ನಮ್ಮಂತಹವರನ್ನು ನೋಡೇ ಹೇಳಿರಬಹುದು. ಅಂದರೆ ನನ್ನ ಆಹಾರ ಪದಾರ್ಥಗಳ ವೈರಾಗ್ಯದ ಹಿಂದೆ ಅಭಾವ ಕಾರಣ, ನನ್ನ ಹಾಗೇ ಬೇಕಾದಷ್ಟು ಮಂದಿ ಇದ್ದಾರೆ ಎನ್ನೋದೂ ನನಗೆ ಗೊತ್ತು.

ಹಾಗಿಲ್ಲವೆಂದಾಗಿದ್ದರೆ, ನಮ್ಮೂರುಗಳಲ್ಲಿ ಗಣಪತಿ ಹಬ್ಬಕ್ಕೆಂದು ಎಲ್ಲರೂ ಬಿಸಿಬಿಸಿ ಹೋಳಿಗೆಯನ್ನು ತುಪ್ಪ ಹಾಲು ಹಾಕಿಕೊಂಡು ಸವಿಯುತ್ತಿದ್ದರೆ ಇಲ್ಲಿ ನಾವು ಹಗಲೂ-ರಾತ್ರಿ ಕೆಲಸವನ್ನು ಮಾಡಿಕೊಳ್ಳುವ ಪ್ರಮೇಯವೇಕೆ ಬರುತ್ತಿತ್ತು. ನಮ್ಮ ಭಾರತೀಯ ಹಬ್ಬಗಳಿಗೆ ರಜೆ ತೆಗೆದುಕೊಳ್ಳಬೇಕೆಂದರೂ ಎಷ್ಟೋ ಜನರಿಗೆ ಹಾಗೆ ಆಗದು. ಅನಿವಾಸಿಗಳ ಹಬ್ಬಗಳೆಲ್ಲ ವೀಕ್‌ಎಂಡಿನಲ್ಲೇ ಬರೋದು ಎಂದು ತಮಾಷೆ ಮಾಡುತ್ತಿರುವವರಿಗೂ ಅಣಕಿಸುವಂತೆ ಗಣೇಶನ ಹಬ್ಬ ಶನಿವಾರಕ್ಕೆ ಬಂದರೂ ಎಮರ್ಜನ್ಸಿ ಕೆಲಸದ ಮೇಲೆ ದುಡಿಯಬೇಕಾಗಿ ಬಂದವರಿಗೆ ಹಬ್ಬಗಳೆಲ್ಲ ಸೆಕೆಂಡರಿಯಾಗಿ ಕಾಣಿಸದೇ ಇನ್ನೇನಾದೀತು? ಹಬ್ಬಗಳನ್ನು ಆದರಿಸಿ, ಆಚರಿಸುವುದಕ್ಕೆ ಹಲವು ರೂಪಗಳು - ಹೊಸಬಟ್ಟೆ ಧರಿಸುವುದಾಗಲೀ, ಸುಗ್ಗಿ ಸಮೃದ್ಧಿಯ ಸೂಚಕವಾಗಿಯಾಗಲೀ, ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಆಸ್ವಾದಿಸುವುದಾಗಲೀ, ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವುದಾಗಲೀ, ಕುಲದೇವರ ಆರಾಧನೆಯಾಗಲೀ ಎಲ್ಲವೂ ಮುಖ್ಯವಾದ ಕಾರಣಗಳೇ. ಸಮಾಜದ ಹಲವು ಧ್ಯೋತಕಗಳಲ್ಲೊಂದಾಗಿ ಬರುವ ಹಬ್ಬಗಳನ್ನು ಸ್ಕಿಪ್ ಮಾಡಿಕೊಂಡು ಹೋಗುವ ನಾವೆಲ್ಲರೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಬೆಲೆಯನ್ನು ತೆತ್ತಲೇ ಬೇಕಾಗುತ್ತದೆ. ಮಕ್ಕಳು-ಮರಿ ಇದ್ದವರಿಗೆ ಹಬ್ಬಗಳು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಯನ್ನು ಒಂದು ತಲೆಯಿಂದ ಮತ್ತೊಂದು ತಲೆಗೆ ರವಾನಿಸುವ ಕೊಂಡಿಯಾಗಿರುವಾಗ ಪ್ರತಿಯೊಂದು ಹಬ್ಬವೂ, ಅದರ ವೈಶಿಷ್ಠ್ಯವೂ ಬಹಳ ಮುಖ್ಯ.

ತಿಂಡಿ-ಹಬ್ಬಗಳನ್ನು ನೆನೆಸಿಕೊಳ್ಳುತ್ತಿರುವಾಗ ಒಂದು ರೂಪಕ ನೆನಪಿಗೆ ಬಂತು. ಮಗು ಚಿಕ್ಕದಿರುವಾಗ ತಾಯಿ ಎಷ್ಟೋ ಕಷ್ಟ ಪಟ್ಟು, ಏನೇನೆಲ್ಲ ತೋರಿಸಿ, ಎಷ್ಟೇ ರಂಪ ಮಾಡಿಯಾದರೂ ಬಲವಂತವಾಗಿ ಮಗುವಿಗೆ ತಿನ್ನಿಸುತ್ತಾಳೆ. ಮುಂದೆ ಮಗು ಬೆಳೆದು ಶಾಲೆಗೆ ಹೋಗುವ ಹೊತ್ತಿಗೆ ಒಂದು ಹೋಳಿಗೆ ಹಾಕಿದಲ್ಲಿ ಎರಡು ಬೇಕು ಎಂದು ಹಠ ಹಿಡಿದರೆ ಅದಕ್ಕೆ ಬೇಕಾದಷ್ಟು ಕೊಡುವಲ್ಲಿ ತಾಯಿ ಹುಸಿ ಮುನಿಸು ತೋರಿಸುತ್ತಾಳೆ, ಅಥವಾ ಮಾಡಿದ್ದೆಲ್ಲವನ್ನೂ ನೀನೇ ತಿಂದರೆ ಮನೆಯಲ್ಲಿ ಇತರರಿಗೆ ಸಾಲದು ಎನ್ನುವ ಭಯವನ್ನು ಹುಟ್ಟಿಸುತ್ತಾಳೆ. ಮಗು ಮುಂದೆ ಬೆಳೆದು ಪ್ರಬುದ್ಧತೆಯ ಹಂತಕ್ಕೆ ಬಂದಾಗ ಮತ್ತೆ ಎಲ್ಲರೂ ಒತ್ತಾಯ ಮಾಡಿ ತಿನ್ನಿಸತೊಡಗುತ್ತಾರೆ. ಇನ್ನು ಹಾಗೇ ವಯಸ್ಸಾಗುತ್ತಾ ವಯಸ್ಸಾಗುತ್ತಾ ಏನೇನೋ ಖಾಯಿಲೆಗಳು ಬರಬಹುದು ಎನ್ನುವ ಭಯದಲ್ಲಿ ನಾಲಿಗೆಯ ರುಚಿಗೆ ಮತ್ತೆ ಕಡಿವಾಣ ಬೀಳತೊಡಗುತ್ತದೆ. ಕೊನೆಗೆ ರುಚಿಯೂ-ಚಪಲವೂ ಕಡಿಮೆಯಾಗಿ ಒಂದು ದಿನ ಈ ಲೋಕವನ್ನೇ ಖಾಲಿ ಮಾಡಬೇಕಾಗಿ ಬರುತ್ತದೆ.

ಹೀಗೆ ಪಾನೀಪೂರಿ ಮಹಿಮೆ ಎಲ್ಲಿಯವರೆಗೆ ಬಂತು ನೋಡಿ, ತಿಂದಿದ್ದೂ ಅಲ್ಲದೇ, ಮಾಡಿ ನೋಡಿದ್ದೂ ಅಲ್ಲದೆ, ಅದರ ಬಗ್ಗೆ ಬರೆದು ಓದುವುದಕ್ಕೆ ಸಮಯ ಸಿಕ್ಕಿತಲ್ಲಾ ಅಷ್ಟೇ ಸಾಕು, ಏನಂತೀರಾ?

Tuesday, September 11, 2007

ಅಯ್ಯೋ, ಅರು ವರ್ಷಗಳು ಕಳೆದು ಹೋದ್ವೇ

ಹಾ, ಹ್ಞೂ ಅಂತಾ ಇದ್ದ ಹಾಗೇ ನೋಡಿ ಆರ್ ವರ್ಷಗಳು ಕಳೆದು ಹೋದ್ವು ಎಂದೆನಿಸಿದ್ದು ಇವತ್ತು ಪ್ರಿಂಟ್ ಔಟ್ ತೆಗೆಯೋಕ್ ಹೋದಾಗ ಪ್ರಿಂಟರಿನ ಸಣ್ಣ ಡಿಸ್‌ಪ್ಲೇನಲ್ಲಿ ಕಂಡ ಸೆಪ್ಟೆಂಬರ್ ೧೧ ನ್ನು ನೋಡಿ - ’ಅಯ್ಯೋ, ಅರು ವರ್ಷಗಳು ಕಳೆದು ಹೋದ್ವೇ’ ಅಂತ ಶಬ್ದವಿಲ್ಲದ ಉದ್ಗಾರವೊಂದು ನನ್ನಲ್ಲಿ ಹುಟ್ಟಿ ಅಲ್ಲೇ ಉಳಿದುಹೋಯಿತು. ಅಬ್ಬಾ, ಏನೇನೆಲ್ಲ ಆಗಿವೆ ಈ ಆರು ವರ್ಷದೊಳಗೆ ಎಂದು ಯೋಚಿಸಿದವನಿಗೆ ೨೦೦೧ ರ ತರುವಾಯದ ಘಟನೆಗಳೆಲ್ಲ ಡಿವಿಆರ್ ನಲ್ಲಿ ಪುಲ್ ಸ್ಪೀಡ್‌ನಲ್ಲಿ ನೋಡಿದ ಸಿನಿಮಾದ ಹಾಗೆ ಕಣ್ಣ ಮುಂದೆ ಮಿಂಚಿ ಮರೆಯಾದವು.

Is the world better place now? ಎನ್ನೋ ಪ್ರಶ್ನೆಯೂ ಸಹ ಅದರಷ್ಟಕ್ಕೆ ಅದೇ ಹೊರಗೆ ಬಂತು. ಪ್ರಪಂಚವನ್ನು ಯಾವಾಗ್ಲೂ ಉತ್ತಮವಾದದನ್ನಾಗಿ ಮಾಡೋದು ಮಾನವ ಜನ್ಮದ ಇನ್ನೂ ಎಲ್ಲೂ ಅಫಿಷಿಯಲ್ ಆಗಿ ಪಬ್ಲಿಷ್ ಆಗದಿರೋ ಅಜೆಂಡಾ, ಈ ಮಾನವ ಜನ್ಮದ ಹಲವು ಬಣ್ಣದ ಜನರು ಅದನ್ನು ಮ್ಯಾನಿಫೆಷ್ಟೋ ಮಾಡಿಕೊಂಡು ಅದನ್ನು ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ, ಒಂದು ರೀತಿ ವಿಶ್ವ ಹಿಂದೂ ಪರಿಷತ್‌ನವರು ಹಿಂದೂ ಧರ್ಮವನ್ನು ಖರೀದಿಸಿಟ್ಟುಕೊಂಡ ಹಾಗೆ. ಪ್ರಪಂಚದ ಆಗು-ಹೋಗುಗಳಿಗೆಲ್ಲ ಉತ್ತರ ಹೇಳಬೇಕಾದ ಇನ್‌ಹೆರೆಂಟ್ ಕರ್ತವ್ಯವೊಂದು ಕೆಲವರಿಗೆ ಗುರಿಯಾದರೆ, ಇನ್ನು ಕೆಲವರಿಗೆ ಪ್ರಪಂಚದ ಕಣ್ಣೀರನ್ನೊರೆಸಲು ಬಟ್ಟೆ ತಯಾರು ಮಾಡುವ ಕಾಯಕ - ಕ್ಷಮಿಸಿ, ಬಟ್ಟೆಯಲ್ಲಿ ಒರೆಸಿ ಅದನ್ನು ತೊಳೆದು ಮತ್ತೆ ಬಳಸುವ ಕಷ್ಟ ಯಾರಿಗೆ ಬೇಕು, ಉಪಯೋಗಿಸಿ ಎಸೆದು ಬಿಸಾಡುವ ಟಿಷ್ಯೂಗಳಿರಲಿ.

ಧರ್ಮ - ಈ ಎಲ್ಲ ಕಾಯಕ, ಕರ್ತವ್ಯ, ಅಜೆಂಡಾ, ಮ್ಯಾನಿಫೆಷ್ಟೋ ಮುಂತಾದವುಗಳಿಗೆ ಅಡಿಗೋಲು. ಈ ಮನುಷ್ಯ ಸಂತತಿ ಹುಟ್ಟಿಸಿಕೊಂಡ ಕೆಟ್ಟ ಪರಿಸರಗಳಲ್ಲೊಂದು ಧರ್ಮ. ಕ್ಷಮಿಸಿ - ಧರ್ಮವೆನ್ನುವ ಬದಲು ಮತ ಎಂದರೆ ಸರಿ. ಧರ್ಮಕ್ಕೆ ಅನೇಕ ಅರ್ಥಗಳಿದ್ದು, ಅದು ಎಂದೂ ಕೆಟ್ಟದನ್ನು ಬಯಸೋದಿಲ್ಲ, ಆದರೆ ಧರ್ಮವೆನ್ನುವುದರ ಬದಲಿಗೆ ಮತವನ್ನು ತೆಗೆದುಕೊಂಡರೆ ಅದು ಕೆಲವು ಕಡೆ ತನ್ನನ್ನು ಪಸರಿಸು, ಸಾರು ಎಂದು ಡಿಮ್ಯಾಂಡ್ ಮಾಡುತ್ತದೆಯಂತೆ, ಇನ್ನು ಕೆಲವು ಕಡೆ ಹೊಡಿ-ಬಡಿ-ಕಡಿ ಸಂಸ್ಕೃತಿಯನ್ನು ಹೇರುತ್ತದೆಯಂತೆ, ಮತ್ತಿನ್ನಷ್ಟು ಕಡೆ ಸ್ವರ್ಗಕ್ಕೆ ದಾರಿ ಮಾಡಿಕೊಡುತ್ತದೆಯಂತೆ. ನಮ್ಮ ಮತ ಬೆಳೀ ಬೇಕು, ಅದು ಹೆಚ್ಚಿನದು, ಅದೇ ಸರ್ವಸ್ವ ಎನ್ನೋದು ಬೇಕಾದಷ್ಟು ಸಮಸ್ಯೆಗಳಿಗೆ ರೂಟ್ ಕಾಸ್. ಅದನ್ನ ಕಿತ್ತು ಎಸೆಯೋದೇನೂ ಸುಲಭದ ಮಾತಲ್ಲವೇ ಅಲ್ಲ, ಈ ತುಲನೆ ಇದ್ದಲ್ಲಿ ಪ್ರಪಂಚ ಶಾಂತಿ ಇರೋದಾದರೂ ಹೇಗೆ?

ಆಫ್ರಿಕಾದ ಕಗ್ಗತ್ತಲ್ಲನ್ನು ಓಡಿಸುತ್ತೇವೆ ಎಂದು ಒಂದೆರಡು ಮತಗಳು ಪಂಥ ಕಟ್ಟಿ ಓಡಿದವು. ಕಂಡಕಂಡವರ ಸಂಸ್ಕೃತಿಯನ್ನು ಮಕ್ಕಳಿಂದ ಆಟಿಕೆಯನ್ನು ತೆಗೆದಿರಿಸುವಷ್ಟೇ ನಾಜೂಕಾಗಿ ಆ ಮೂಲ ಜನರಿಂದ ಕಿತ್ತುಕೊಳ್ಳಲಾಯಿತು. ಇವತ್ತಿಗೆ ಆ ಖಂಡದ ಜನರು ತಮ್ಮದನ್ನು ಮರೆತರು, ತಮ್ಮದಲ್ಲದ ಇನ್ನೊಬ್ಬರದನ್ನು ತೊಟ್ಟುಕೊಂಡರು. ಆದರೆ ಅವರ ಕಣ್ಣೀರನ್ನು ಒರೆಸಲು ಯಾವ ಟಿಷ್ಯೂ ಪೇಪರುಗಳೂ ಸಾಕಾಗಲೇ ಇಲ್ಲ. ಹಸಿದ, ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡುವ ಹೆಸರಿನಲ್ಲಿ ಮತವನ್ನು ಹೇರಿದರು. ತಾವು ತಮ್ಮ ತಮ್ಮ ಮತದಿಂದ ಉದ್ದಾರವಾದದ್ದು ಎಷ್ಟಿದೆಯೋ ಪ್ರಪಂಚವೆಲ್ಲವೂ ಅವರವರ ಮತವನ್ನು ಎತ್ತಿ ಹಿಡಿಯಬೇಕು ಎನ್ನುವುದು ಇದರ ಹಿಂದಿನ ಘೋಷಣೆ. ಸರಿ, ಪ್ರಪಂಚವನ್ನೆಲ್ಲ ಪ್ರಜಾಪ್ರಭುತ್ವಗೊಳಿಸಿ ಬಿಡೋಣ, ಹೆಚ್ಚು ಜನ ಕೈ ಎತ್ತಿದ್ದೇ ಕಾನೂನಾಗಲಿ, ಇಡೀ ಪ್ರಪಂಚಕ್ಕೆ ಎರಡು ಮತಗಳೇಕೆ ಒಂದೇ ಮತವನ್ನು ಮಾಡೋಣ - ಆಗಲಾದರೂ ಜನರ ಕಣ್ಣೀರು ಕಡಿಮೆಯಾಗುತ್ತದೆಯೋ ನೋಡೋಣ.

ಯಾರದ್ದು ತಪ್ಪು, ಯಾರದ್ದು ಸರಿ? ಯಾರ ಹಾದಿ ದೊಡ್ಡದು, ಯಾರದ್ದು ಚಿಕ್ಕದು? ಒಂದು ತಪ್ಪನ್ನು ಮತ್ತೊಂದು ತಪ್ಪು ಮಾಡುವುದರ ಮೂಲಕ ಸರಿಗೊಳಿಸಲಾದೀತೆ? ನೂರು ಜನ ಕೊಂದವನನ್ನು ಸಂಹರಿಸಲು ಸಾವಿರ ಜನರನ್ನು ಬಲಿಕೊಡುವುದು ನ್ಯಾಯವೇ? ತಂದೆ ಮಾಡಿದ ತಪ್ಪಿಗೆ ಮಕ್ಕಳು, ಮೊಮ್ಮಕ್ಕಳಿಗೆ ಶಿಕ್ಷೆ ವಿಧಿಸುವುದು ಮತವೇ? ಅಮಾಯಕರ ಜೀವನ ಶೈಲಿಯನ್ನು ಕಿತ್ತೊಗೆದು ತಮ್ಮ ಬಾವುಟವನ್ನು ಪ್ರತಿಷ್ಠಾಪಿಸುವ ಹಕ್ಕನ್ನು ಯಾರು ಯಾರಿಗೆ ಕೊಟ್ಟರು? ಈ ಮತ ಪ್ರಚಾರಕರ ನೆರಳಿಗೆ ಸಿಕ್ಕು ಸತ್ತ, ಅನಾಥರಾದ, ನೊಂದವರ ಕಣ್ಣೀರನ್ನು ಯಾರು ಒರೆಸುವವರು? ತಪ್ಪು ಮಾಡಿದವರನ್ನು ಇಡೀ ಜಗತ್ತೇ ಬೆರಳಿಟ್ಟು ತೋರಿಸಿದರೂ ಅದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನೂ ಕಳೆದುಕೊಂಡವರು ಅವರವರ ಹಣ ಐಶ್ವರ್ಯ ಮುಂತಾದವುಗಳು ಗಳಿಸಿಕೊಟ್ಟ ನ್ಯಾಯ ಹೇಳಲು ಯೋಗ್ಯರಾಗುವ ಅರ್ಹತೆಯನ್ನು ಪ್ರಶ್ನಿಸುವವರು ಯಾರು?

ಇದೆಲ್ಲ ಒಂದು ಕ್ಯಾಪಿಟಲಿಷ್ಟಿಕ್ ವ್ಯವಸ್ಥೆ. ಇಲ್ಲಿರುವವರ ಅರ್ಹತೆ ಬೇರೆ, ಇಲ್ಲಿ ಕಂಪೀಟ್ ಮಾಡುವ ವಿಧಾನವೇ ಬೇರೆ. ಇಲ್ಲಿನ ಪ್ರತಿಯೊಂದು ಕ್ಷಣವೂ ಒಂದು ವ್ಯವಸ್ಥೆ, ಕಂಪನಿ, ವ್ಯಕ್ತಿ ಗುಣಮಟ್ಟವನ್ನು ಅಳತೆ ಮಾಡುತ್ತಲೇ ಇರಲಾಗುತ್ತದೆ. ಒಮ್ಮೆ "ಒಳ್ಳೆಯವನು" ಎಂದು ಹೆಸರುಗಳಿಸಿದ್ದು ಕೇವಲ ಮೂರರಿಂದ ಆರು ತಿಂಗಳು ಮಾತ್ರ ಜೀವಂತವಿರುವ ಸತ್ಯವಾಗುತ್ತದೆ. ಈಗ ಯೋಗ್ಯನಾಗಿದ್ದವನು ಮುಂದೆ ಅಯೋಗ್ಯನಾಗಿ ಹೊರಹೊಮ್ಮಬಹುದು. ಇಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಸಾಂತ್ವನವಿದೆ, ಎಲ್ಲದಕ್ಕೂ ಹೆಚ್ಚಾಗಿ ನ್ಯಾಯವಿದೆ. ಕ್ಷಮಿಸಿ, ಎಲ್ಲವನ್ನೂ ನ್ಯಾಯದ ರೀತಿಯಲ್ಲಿ ಮಾಡಬಹುದಾದ ವಿಧಾನವಿದೆ. ಯಾವ ದೇಶದಲ್ಲಿ ಅರ್ಧಕ್ಕರ್ಧ ಇರುವ ಮಹಿಳೆಯರು ಹಿಂದುಳಿದವರೋ (minority), ಯಾವ ದೇಶದಲ್ಲಿ ಇನ್ನೂರೈವತ್ತು ವರ್ಷದ ಆಳ್ವಿಕೆಯಲ್ಲಿ ಒಬ್ಬ ಯೋಗ್ಯ ಮಹಿಳೆಯೂ ಆಳಲಿಕ್ಕೆ ಯೋಗ್ಯವಿರದೇ ಹುಟ್ಟಿ ಸತ್ತಳೋ ಅಂಥ ದೇಶದಲ್ಲಿದ್ದವರಿಗೆ ಪ್ರಪಂಚದ ವಿಷಯಗಳೇನು ಗೊತ್ತು? ಸುನ್ನಿ, ಶಿಯಾ, ಕುರ್ದಿಷ್ ಇವರ ಪರಂಪರಾನುಗತವಾದ ಸಂಬಂಧಗಳ ಬಗ್ಗೇನು ಗೊತ್ತು? ಯಾವುದೋ ನಯವಂಚಕ ಮುಂಗೋಪಿ ಮಾತುಕೊಟ್ಟು ಯುದ್ಧದ ಆಳ-ಅಂತರವನ್ನು ಅರಿಯದೇ ಸೇನಾಪಡೆಯನ್ನು ಮುನ್ನುಗ್ಗಿಸಿದ ತಪ್ಪಿಗೆ ಇಂದು ನಾಳೆ ಹುಟ್ಟುವ ಹಸುಕಂದಮ್ಮಗಳೇಕೆ ಅಳಬೇಕು? ಒಂದು ಸಂಪೂರ್ಣ ಕ್ಷೇತ್ರದ (region) ಆರೋಗ್ಯವನ್ನೇ ಹದಗೆಡಿಸಿ ಅಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ದಿಕ್ಕು ತಪ್ಪಿಸಿದವರಿಗೆ ನೈತಿಕತೆ ಎನ್ನುವುದು ಎಲ್ಲಿ ಹೋಯಿತು? ಒಂದು ಕಡೆ ಕಮ್ಮ್ಯೂನಿಸಮ್ಮ್ ಅನ್ನು ಹಾಡಿ ಹೊಗಳುವ ಸ್ನೇಹಿತರು, ಮತ್ತೊಂದು ಕಡೆ ಕಮ್ಮೂನಿಸಮ್ಮೇ ಇವರ ವೈರಿ. ಒಂದು ಕಡೆ ಭಿನ್ನಾಭಿಪ್ರಾಯಗಳನ್ನು ಹುಟ್ಟಿ ಹಾಕುವ ಸರದಾರರು, ಮತ್ತೊಂದು ಕಡೆಯಲ್ಲಿ ಅಳುವ ಮಕ್ಕಳ ಕಣ್ಣೀರನ್ನು ಒರೆಸುವವರು. ಈ ರೀತಿಯ ವಿರುದ್ಧ ದಿಕ್ಕಿನ ಪಯಣಗಳನ್ನು ಫಾರಿನ್ ಪಾಲಿಸಿ ಎಂದು ಕರೆಯುವ ಗತ್ತು ಬೇರೆ ಕೇಡಿಗೆ. ಇಂಥಾ ಗತ್ತನ್ನು ಎದುರಿಸಿ ಕೇಳಲಾರದ ಹಿಜಡಾ ವ್ಯವಸ್ಥೆ ಹಾಗೂ ನೆರೆಹೊರೆ. ಅದಿಲ್ಲವೆಂದರೆ, ಯಾವನಾದರೂ ಒಬ್ಬ ಕತ್ತಿನ ಪಟ್ಟಿ ಹಿಡಿದು ಕೇಳಿದ್ದರೆ ಎಷ್ಟೋ ಚೆನ್ನಿತ್ತು - ಹಾಗಾಗೋದಿಲ್ಲ ಬಿಡಿ.

ಹೀಗೇ ಎಣಿಸ್ತಾ ಎಣಿಸ್ತಾ ಆರು ವರ್ಷಗಳು ಕಳೆದು ಹೋದುವು, ಇನ್ನು ಅರವತ್ತು ವರ್ಷಗಳು ಬಂದರೂ ಇಂದಿನ ಪರಿಸ್ಥಿತಿ ಹೀಗೇ ಉಲ್ಬಣಗೊಂಡು ಹದಗೆಡುವ ಸಾಧ್ಯತೆಗಳೇ ಹೆಚ್ಚೇನೋ ಎಂದು ನಾನು ಎಂದುಕೊಳ್ಳುತ್ತಿರುವಾಗ ನನ್ನ ಆಶಾವಾದ ಎಲ್ಲೋ ಕಳೆದು ಹೋದ ಹಾಗೆ ಕಾಣಿಸತೊಡಗುತ್ತದೆ. ಇವತ್ತಲ್ಲ ನಾಳೆ ಹೊರಗೆ ಬರೋ ವರದಿಗಳಲ್ಲಿ ಇರುವ ಸತ್ಯದ ಅರಿವು ಎಲ್ಲರಿಗೂ ಇದೆ. ನಾನು ಮಾಡಿದ್ದು ತಪ್ಪು, ಅದಕ್ಕೋಸ್ಕರ ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಯಾವುದೊಂದು ಧ್ವನಿಯೂ ಹುಟ್ಟಿಬರೋದಿಲ್ಲ. ಯುದ್ಧಕ್ಕೆ ಹೋಗಿ ಈ ವ್ಯವಸ್ಥೆಯನ್ನು ಹುಟ್ಟಿಸಿ ಈಗ ಅರಾಮಾಗಿ ನಿದ್ರಿಸುತ್ತಿರುವ ಮುಂಗೋಪಿಗಳನ್ನು ಯಾರೂ ಪ್ರಶ್ನಿಸೋದೇ ಇಲ್ಲ. ಈಗಿರುವ ದೊರೆಗಳು ಇನ್ನೊಂದು ವರ್ಷದಲ್ಲಿ ಹೊರಗೆ ಹೋಗುತ್ತಾರೆ, ಅವರ ಹೆಸರು ಎಂದೆಂದಿಗೂ ರಾರಾಜಿಸುವಂತೆ ಬರೆಯುವ ಇತಿಹಾಸಕಾರರನ್ನು ಸಾಕಿ ಸಲಹುತ್ತಿರುವುದು ಅಲ್ಲಿ ಉಪಯೋಗಕ್ಕೆ ಬರುತ್ತದೆ. ಈ ದೊರೆಗಳ ಹೆಸರು ಅಜರಾಮರರಾಗುವಲ್ಲಿ ದಿನೇ ದಿನೇ ಸತ್ತು ತಮ್ಮ ನೆತ್ತರದಿಂದ ಗಲ್ಲಿಗಲ್ಲಿಗಳಲ್ಲಿ ಅವರದ್ದೇ ಆದ ಭಾಷೆಯಲ್ಲಿ ಮಣ್ಣಿನಲ್ಲಿ ಬರೆದು ಗಾಳಿಯಲ್ಲಿ ಕಲೆತು ಹೋಗುತ್ತದೆ. ನಾವೂ-ನೀವೂ ನೋಡುತ್ತ ನೋಡುತ್ತಲೇ ಇನ್ನೂ ಏನೇನೋ ಅವಘಡಗಳು ಆಗುವ ಎಲ್ಲಾ ಸಾಧ್ಯತೆಗಳೂ ಕಾಣುತ್ತವೆ, ಏಕೆಂದರೆ ನಮ್ಮ ಮತ ದೊಡ್ಡದು, ಅದು ಬೆಳೆಯಬೇಕು, ಬದುಕಬೇಕು, ಪಸರಿಸಬೇಕು ಎನ್ನುವ ಘೋಷಣೆ ಎಂದಿಗಿಂತಲೂ ಪ್ರಭಲವಾಗಿ ಮುಗಿಲು ಮುಟ್ಟುತ್ತಿರುವುದನ್ನು ನೀವೂ ನೋಡಿರಬಹುದಲ್ಲವೇ?

Sunday, September 09, 2007

...ಮುಂದೆ ಬರುವ ಕಷ್ಟಗಳನ್ನು ಸಹಿಸಲು ಶಕ್ತಿಯನ್ನು ಕೊಡಲಿ

ಇಪ್ಪತ್ತು ತಿಂಗಳ ಅವಧಿಯಲ್ಲಿ ಎಲ್ಲಾ ಸೇರಿ ಒಟ್ಟಿ ಮಾಡಿ ಬರೆದಿದ್ದನ್ನು ಹಿಂತಿರುಗಿ ನೋಡ್ಕೊಂಡ್ ಬರ್ತಾ ಇದ್ದೆ, ನಾನು ಬರೆದಿದ್ದನ್ನು ನನಗೆ ಓದೋ ವ್ಯವಧಾನ ಇಲ್ಲದಂತೆ ಆದ್ರೂ ಸ್ವಲ್ಪ ಕಷ್ಟಾ ಪಟ್ಟು ಓದ್ತಾ ಓದ್ತಾ ಹೋದೆ. ನಾನೇ ಬರೆದ ಕೆಲವೊಂದು ಲೇಖನಗಳು ಕೆಲವು ಉದಯಾ ಟಿವಿ ಸೀರಿಯಲ್ಲಿಗಿಂತಲೂ ಕಡೆಯಾಗಿ ಕಂಡವು, ಇನ್ನು ಕೆಲವು ಲೇಖನಗಳಲ್ಲಿ ಜೀವಂತಿಗೆ ಅನ್ನೋದು ಸ್ವಲ್ಪಮಟ್ಟಿಗಾದ್ರೂ ಉಳಿದಿತ್ತು. ಅವೆಲ್ಲವುಗಳಲ್ಲಿ ಹೆಚ್ಚಿನವುಗಳನ್ನು ನೋಡಿಕೊಂಡು ಬಂದ ನಂತರ ಅನ್ನಿಸಿದ್ದೇನಂದರೆ ನಾನು ಈ ಲೇಖನಗಳಿಗೆ ಪೂರಕವಾಗಿ ಯಾವುದೇ ಕೆಲಸವನ್ನೂ ಮಾಡುತ್ತಿಲ್ಲ - ಸರಿಯಾಗಿ ಓದುತ್ತಿಲ್ಲ, ಹಾಗೂ ತಕ್ಕಮಟ್ಟಿಗೆ ಬರೆಯುತ್ತಿಲ್ಲ ಎಂಬುದಾಗಿ.

ಕೆಲವೊಂದು ಲೇಖನಗಳಲ್ಲಿ ಅನವಶ್ಯಕವಾಗಿ ಉದ್ದುದ್ದ ಸಾಲುಗಳಿದ್ದರೆ, ಇನ್ನು ಕೆಲವುಗಳಲ್ಲಿ ಪ್ರಶ್ನೆಗಳೇ ಪ್ಯಾರಾಗ್ರಾಫ್ ಉದ್ದಕ್ಕೂ ಇರುವಂತೆ ಬರೆಯುವ ಅಗತ್ಯವೇನಿತ್ತು ಎಂದು ಬಲವಾಗಿ ಅನ್ನಿಸತೊಡಗಿತ್ತು. ಓದುಗರಿಗೆ ಬೇಕಾದದ್ದನ್ನು ಕೊಡಬೇಕಾಗಿರುವ ಮಾಧ್ಯಮಗಳು ಅಂತರ್ಮುಖಿಗಳಾಗಿ ತಮ್ಮನ್ನು ತಾವು ಯಾವಾಗಲೂ ಮುಚ್ಚಿಕೊಂಡಿರುವುದು ಸಾಧ್ಯವೇ? ಓದಿನಿಂದ ಮನೋರಂಜನೆ ಸಿಗುವುದರ ಜೊತೆಗೆ ಇತರರಿಗೆ ಸಹಾಯವಾಗುವಂತಿರಬೇಕು ಮುಂತಾಗಿ ಇನ್ನೂ ಏನೇನೋ ಆಲೋಚನೆಗಳು ಮುತ್ತಿಕೊಳ್ಳತೊಡಗಿದವು. ಇಷ್ಟೊಂದು ದಿನ ಬೇಕು-ಬೇಡಗಳ ನೀರನ್ನು ಕುಡಿದಿದ್ದೇವೆ ಎನ್ನುವುದಕ್ಕೆ ತಕ್ಕಂತೆ ಪ್ರತಿಯೊಂದು ಹಂತದಲ್ಲೂ ’ಇದರಿಂದೇನಾಯ್ತು, ಅದರಿಂದೇನಾಯ್ತು’ ಎನ್ನುವ ಪ್ರಶ್ನೆಗಳು ಹುಟ್ಟಿ ಅಂತಹ ಪ್ರಶ್ನೆಗಳಿಗೆಲ್ಲ ದೊರೆಯುವ ಉತ್ತರವೇ ದೊಡ್ಡದೆನಿಸತೊಡಗಿತ್ತು.

ಹೌದು, ನಾವು ಮಾಡುವ ಪ್ರತಿಯೊಂದು ಕೆಲಸದ ಗುಣಮಾನಕ್ಕೂ ನಮದೇ ಆದ ಒಂದು ತೃಪ್ತಿ ಇರಬೇಕು. ತೆರೆದ ಪ್ರಶ್ನೆಗಳಿಗೆ ತಕ್ಕ ಉತ್ತರ ಸಿಗಬೇಕು. ಕೊನೆಯ ಪಕ್ಷ ಅಲ್ಪಾವಧಿಯಲ್ಲಿ ಏನೂ ಪ್ರಯೋಜನವಿರದಂತೆ ಕಂಡರೂ ಧೀರ್ಘಾವಧಿಯಲ್ಲಿ ಏನಾದರೊಂದು ಉದ್ದೇಶವಿರಲೇಬೇಕು. ಒಬ್ಬ ಕಾದಂಬರಿಕಾರನಾಗಲೀ, ಅಥವಾ ಬ್ಲಾಗ್ ಬರಹಗಾರನಲ್ಲಾಗಲೀ ಅಂತಹ ವ್ಯತ್ಯಾಸವೇನೂ ಇರೋದಿಲ್ಲ. ಕಾದಂಬರಿಕಾರ ತನ್ನ ಪಾತ್ರಗಳನ್ನು ಹುಟ್ಟಿಸಿ, ಬೆಳೆಸಿ ಅದರ ಮೂಲಕ ನಿಗದಿತವಾದ ಒಂದು ಚಿತ್ರಣವನ್ನು ಕೊಟ್ಟರೆ ಒಬ್ಬ ಬ್ಲಾಗ್ ಕರ್ತೃಗೆ ಸಹ ತನ್ನದೇ ಆದ ಜವಾಬ್ದಾರಿಗಳಿರುತ್ತವೆ. ಆಯಾ ಬರಹಗಳು ಪ್ರಪಂಚದ ಹಸಿವನ್ನು ಹೋಗಲಾಡಿಸದಿದ್ದರೂ ಆ ಬರಹ ಸೃಷ್ಟಿಸಬಹುದಾದ ಒಂದು ನೆಲೆಗಟ್ಟಿಗೆ, ಅದರಲ್ಲೇಳುವ ಪ್ರಶ್ನೆಗಳಿಗೆ ಪೂರಕವಾಗಿರಬೇಕಾದದ್ದು ಬಹು ಮುಖ್ಯ. ನನಗೆ ಬೇಕಾದ ರೀತಿಯಲ್ಲಿ ನಾನು ವಸ್ತು-ವಿಷಯಗಳನ್ನು ನೋಡಿ ಬರೆಯುವುದು ಹೌದಾದರೂ ಓದುಗನ ದೃಷ್ಟಿಯಲ್ಲಿ ಕಾಳಜಿಯನ್ನು ಒಳಗೊಳ್ಳದೇ ಇದ್ದರೆ ಬರಹಗಳು ಅಪೂರ್ಣಗೊಂಡಾವು.

ಹೆಚ್ಚಿನ ಗುಣಮಟ್ಟದ ಬರಹಗಳನ್ನು ಬರೆಯಲು ಹೆಚ್ಚಿನದನ್ನು ಓದಬೇಕು, ಅದಕ್ಕೆ ತಕ್ಕ ಪರಿಶ್ರಮದಿಂದ ಹೊರಗುಳಿಯಲು ಸಾಧ್ಯವೇ ಇರದ ಪರಿಸ್ಥಿತಿ. ಈ ನಿಜವನ್ನು ಅರಿಯದೇ ಬ್ಲಾಗಿಸಲು ಹೊರಟ ಬರಹಗಾರರ ಕಿಚ್ಚು ಹೆಚ್ಚು ದಿನ ಉರಿಯದೇ ಉಳಿಯೋದು ಆಶ್ಚರ್ಯವೇನೂ ತರಿಸೋದಿಲ್ಲ. ಹೆಚ್ಚು ಜನ ವೇಗವನ್ನು ಬಯಸಿ ಕೀರ್ತಿಯ ಬೆನ್ನು ಹತ್ತುತ್ತಿರುವುದಾಗಿ ಕಂಡು ಬಂದರೆ, ಇನ್ನು ಕೆಲವು ಬರಹಗಳಲ್ಲಿ ಅಂಕಿ-ಅಂಶಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಂತೆ ಕಾಣಿಸಿತು. ಇನ್ನು ಉಳಿದ ಭಾರತೀಯ ಭಾಷೆಗಳಲ್ಲಿ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ, ಆದರೆ ಕನ್ನಡದಲ್ಲಿ ಕೆಲವು ಬ್ಲಾಗ್‌ಗಳು ಒಮ್ಮೆ ಓದಿದರೆ ಮತ್ತೊಮ್ಮೆ ಬಂದು ಇಣುಕಿ ನೋಡಬೇಕು ಎನ್ನುವ ಆಸೆಯನ್ನು ಹುಟ್ಟಿಸುವಲ್ಲಿ ಸಫಲವಾದವುಗಳು. ಬ್ಲಾಗ್ ಎನ್ನುವ ಪದವನ್ನು ಅನಿವಾಸಿ ಹರಟೆಕಟ್ಟೆ ಎಂದು ಬದಲಾಯಿಸೋದಕ್ಕೆ ಬರೋದಿಲ್ಲ, ಏಕೆಂದರೆ ಕೆಲವು ಉತ್ತಮ ಬ್ಲಾಗಿಗರು ಕರ್ನಾಟಕದಲ್ಲಿಯೇ ಇರುವವರು.

ವೇಗದ ಜೀವನವನ್ನು ಅರಸಿಕೊಂಡು ಬಂದವರಿಗೆ ಅಲ್ಲಲ್ಲಿ ಅಪರೂಪಕ್ಕೆ ಸಿಗುವ ಉತ್ತಮ ಲೇಖನಗಳು ಮರುಭೂಮಿಯಲ್ಲಿನ ಓಯಸಿಸ್ಸ್ ಹಾಗೆ. ದಾಹ ತಣಿಸಿ ಒಂದಿಷ್ಟು ತಂಪನ್ನು ನೀಡಿಯೇ ನೀಡುತ್ತವೆ. ಆದರೆ ಮುಖ್ಯ ಪ್ರಯಾಣಕ್ಕೆ ಪೂರಕವಾಗಿ ಇನ್ನೂ ಸಾಕಷ್ಟು ದೂರ ಹೋಗುವುದಕ್ಕಿದೆ ಎನ್ನುವ ಸತ್ಯ ಅನೇಕರಿಗೆ ಓಯಸಿಸ್ಸೇ ಗುರಿಯನ್ನಾಗಿ ಮಾಡದಿರಲಿ, ಜೊತೆಯಲ್ಲಿ ಮರಳುಗಾಡಿನ ಪ್ರಯಾಣವನ್ನು ಸುಖಮಯವಾಗಿಸಲಿ, ಏನಿಲ್ಲವೆಂದರೆ ಈವರೆಗೂ ಗೊತ್ತಿರದ ಹಾಗೂ ಮುಂದೆ ಬರುವ ಕಷ್ಟಗಳನ್ನು ಸಹಿಸಲು ಶಕ್ತಿಯನ್ನು ಕೊಡಲಿ.

Wednesday, September 05, 2007

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

ಹೀಗೇ ಒಂದ್ ಕ್ಷಣ ಸೋಮಾರಿತನದ ಪರಮಾವಧಿಯಲ್ಲಿ ಗದ್ದಕ್ಕೆ ಕೈ ಕೊಟ್ಟು ಕುಳಿತು ಯೋಚಿಸುತ್ತಿರುವಾಗ ಈ ಸೋಮಾರಿತನವೆನ್ನುವುದು ಏಕೆ ಅಷ್ಟೊಂದು ಸಹಜವಾಗಿ ಎಲ್ಲರಿಗೂ ಅನ್ವಯವಾಗೋದು ಒಂದು ಸಣ್ಣ ಚಿಂತೆ ಶುರುವಾಯಿತು. ಮೊದಲಿಗೆ ಮಾಮೂಲಿನ ಪ್ರತಿಕ್ರಿಯೆಯಂತೆ ಯಾರಪ್ಪಾ ಅದನ್ನು ಕುರಿತು ಯೋಚನೆ ಮಾಡೋದು ಎಂದು ಒಮ್ಮೆ ಉದಾಸೀನತೆ ಪುಟಿದೆದ್ದು ನಿಂತರೆ, ಮತ್ತೊಂದು ಕಡೆ ಅದೇನ್ ಆಗೇ ಬಿಡುತ್ತೋ ನೋಡಿಯೇ ಬಿಡೋಣ ಎನ್ನುವ ಛಲ ಅದಕ್ಕೆ ವಿರುದ್ಧ ಧ್ವನಿ ಎತ್ತಿತ್ತು. ಈ ಹೊತ್ತಿನ ತತ್ವದ ಮಟ್ಟಿಗೆ ಕಂಡುಬಂದ ಸತ್ಯಗಳು ಇವು, ಉದಾಸೀನತೆ ಹಾಗೂ ಛಲದ ವಿರುದ್ಧ ನಡೆಯುವ ಮುಖಾಮುಕಿಯಲ್ಲಿ ಯಾರು ಗೆಲ್ಲುತ್ತಾರೋ ಬಿಡುತ್ತಾರೋ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧರಿತವಾಗಬೇಕಿದೆ.

ಅದೂ ನಿಜಾ ಅನ್ನಿ, ಜೀವನದಲ್ಲಿ ಪ್ರತಿಯೊಂದನ್ನೂ ಮ್ಯಾನೆಜ್ ಮಾಡಬೇಕಾಗುತ್ತೆ, ಪ್ರತಿಯೊಂದನ್ನೂ ಮೈಂಟೇನ್ ಮಾಡಬೇಕಾಗುತ್ತೆ. ಚಕ್ರದ ಹಾಗೆ ಸುತ್ತಿ ಸುತ್ತಿ ಬರೋ ಪ್ರತಿಯೊಂದು ಬದಲಾವಣೆಗಳು ಮೇಲ್ನೋಟಕ್ಕೆ ಮಾಡಿದ್ದೇ ಮಾಡು ಎಂದು ಅಣಗಿಸುವಂತೆ ತೋರಿದರೂ ಮಾಡದೇ ಇದ್ದರೇ ವಿಧಿಯಿಲ್ಲ ಎಂದು ಕಿಚಾಯಿಸುವ ಪ್ರಸಂಗಗಳೇ ಹೆಚ್ಚು. ಸವಲತ್ತುಗಳನ್ನು ಮ್ಯಾನೇಜ್ ಮಾಡಬೇಕು, ಸಂಬಂಧಗಳನ್ನು ಮ್ಯಾನೇಜ್ ಮಾಡಬೇಕು, ಇನ್ನು ಕೆಲವನ್ನು ನಿಗದಿತ ಸಮಯದಲ್ಲಿ ಮೇಂಟೈನ್ ಮಾಡಬೇಕು ಇಲ್ಲವೆಂದರೆ ಬೇಕು ಎಂದಾಗಲೇ ಕೈಕೊಡುತ್ತವೆ. ಗಾಳಿ ಇದ್ದಲ್ಲೆಲ್ಲ ಧೂಳು ಇರೋದು ಸಹಜ ಎನ್ನುವುದು ’ಅಂತರಂಗ’ ಕಂಡುಕೊಂಡ ಸರಳ ಸತ್ಯಗಳಲ್ಲೊಂದು. ಅದರ ಅರ್ಥವೇನಪ್ಪಾ ಅಂದ್ರೆ ನಾವು ಉಪಯೋಗಿಸದೇ ಬಿಟ್ಟಿರೋ ಜಾಗ ಅಥವಾ ಕೋಣೆಯನ್ನು ಗುಡಿಸಿ ಶುಭ್ರವಾಗಿಟ್ಟುಕೊಳ್ಳಲೇ ಬೇಕಾಗುತ್ತೆ. ಕಿಟಕಿ-ಬಾಗಿಲು ಎಲ್ಲವನ್ನು ಭದ್ರಪಡಿಸಿ ಯಾರೂ ಉಪಯೋಗಿಸದ ಕೋಣೆಯನ್ನು ಒಂದು ವಾರ ಬಿಟ್ಟು ತೆರೆದು ನೋಡಿ, ಅದ್ಯಾವುದೋ ಅಗೋಚರ ಶಕ್ತಿ ನಿಮಗೆ ವಿರುದ್ಧವಾಗಿ ತಿರುಗಿ ಬಿದ್ದಂತೆ ಎಲ್ಲದರ ಮೇಲೂ ತೆಳುವಾದ ಧೂಳಿನ ಒಂದು ಲೇಪನ ಮಾಡಿರುತ್ತೆ. ಹೀಗೆ ತೆಳುವಾದ ಧೂಳನ್ನು ಒಂದು ಕಡೆ ಒರೆಸಿದರಷ್ಟೇ ಸಾಲದು, ಅಲ್ಲಿ-ಇಲ್ಲಿ, ಅತ್ತ-ಇತ್ತ ಒರೆಸುತ್ತಾ ಹಿಂದೆ ಮುಂದೆ ನೋಡುವಷ್ಟರಲ್ಲಿ ಇಡೀ ಕೊಠಡಿಯೇ ಸ್ವಚ್ಛತೆಯನ್ನು ಬೇಡಲು ತೊಡಗುತ್ತದೆ. ಇದು ಎಂದೂ ಉಪಯೋಗಿಸದೇ ಇರುವ ಕೋಣೆಯ ಕಥೆಯಾದರೆ ಇನ್ನು ಪ್ರತಿದಿನವೂ ಉಪಯೋಗಿಸುವ ಕೊಠಡಿ, ಪರಿಕರಗಳ ಕಥೆ ಇನ್ನೊಂದು ರೀತಿ. ನೀವು ಆಯಾ ವಸ್ತುಗಳನ್ನು ಉಪಯೋಗಿಸಿದಂತೆಲ್ಲಾ ಅಲ್ಲೆಲ್ಲಾ ನಿಮ್ಮ ಸಿಗ್ನೇಚರ್ ಬೀಳಲುತೊಡಗುತ್ತದೆ. ಸೂಕ್ಷ್ಮವಾದವರಿಗೆ ಬೆರಳಿನ ಗುರುತು ಕಾಣತೊಡಗಿದರೆ, ಕೊಂಕಣೀ ಎಮ್ಮೆಗೆ ಕೊಡತಿ ಪೆಟ್ಟು ಅನ್ನೋ ಹಾಗೆ ಅವರವರ ಚರ್ಮದ ಥಿಕ್‌ನೆಸ್‌ಗೆ ಅನುಸಾರವಾಗಿ ಆಯಾ ವಸ್ತುವಿನ ಫಲಾನುಭವ ಕಣ್ಣಿಗೆ ರಾಚುತ್ತದೆ.

ಈ ದಿನ ನಿತ್ಯ ಉಪಯೋಗಿಸುವ ವಸ್ತುಗಳ ರಂಪಾಟವೇ ಸೋಮಾರಿತನಕ್ಕೆ ಮೂಲಭೂತ ಕಾರಣ. ಹೊಸ ಬಟ್ಟೆಗಳನ್ನು ಧರಿಸಿ ಶೋಕಿ ಮಾಡುವುದರ ಸುಖ ಕೊಳೆಯಾದ ಅದನ್ನು ಒಗೆದು, ಒಣಗಿಸಿ, ಇಸ್ತ್ರಿ ತಾಗಿಸಿ ಜೋಪಾನವಾಗಿ ಹ್ಯಾಂಗರ್‌ಗೆ ಹಾಕುವವರೆಗೂ ಇರೋದಿಲ್ಲ. ಜನರು ವಾರಕ್ಕೆ ಐದು ದಿನಗಳಿಗಾಗೋಷ್ಟು ಬಟ್ಟೆಯ ನಾಲ್ಕು ಪಟ್ಟು ಬಟ್ಟೆಯನ್ನು ಇಟ್ಟುಕೊಳ್ಳುವುದೇಕೆ ಎಂದುಕೊಂಡಿರಿ? ಉಪಯೋಗಿಸಿ ಉಪಯೋಗಿಸಿ ಕೊಳೆ ಬಟ್ಟೆಗಳು ರಾಶಿ ಬಿದ್ದ ನಂತರ ಒಂದು ದಿನ ಅವುಗಳಿಗೆಲ್ಲ ಗ್ರಹಚಾರ ಬದಲಾವಣೆಯಾದ ಪ್ರಯುಕ್ತ ನೀರಿನ ಮುಖ ಕಾಣಿಸುತ್ತದೆ. ನಂತರ ಒಗೆದು, ಒಣಗಿಸಿದಂತೆ ಮಾಡಿದ ಮೇಲೆ ಕೆಟ್ಟ ಮುಖವನ್ನು ಮಾಡಿಕೊಂಡು (ಅದೂ ಎಷ್ಟೋ ದಿನಗಳ ನಂತರ) ಬಟ್ಟೆಗಳನ್ನು ಮಡಚಿಡಲಾಗುತ್ತದೆ. ಇನ್ನು ಇಸ್ತ್ರಿ ತಾಗಿಸುವ ಅಗತ್ಯವಿದ್ದರೆ, ಅದು ಆಯಾ ದಿನದ ಮುಂಜಾನೆಯ ಕರ್ತವ್ಯಗಳಲ್ಲೊಂದು. ಈ ಕೊಳೆಯಾಗಿ ಮತ್ತೆ ಸುಸ್ಥಿತಿಯನ್ನು ಕಾಣುವ ಬಟ್ಟೆಗಳ ಗೋಳು ಬೇಡವೆಂದೇ ನ್ಯೂಡಿಷ್ಟ್ ಬೀಚುಗಳು ಇತ್ತೀಚೆಗೆ ಹೆಚ್ಚುತ್ತಿರೋದು ಎಂದು ಕಾಣಿಸುತ್ತೆ! ಮಕ್ಕಳಿದ್ದವರು ಕೊರಗುವುದನ್ನು ನೋಡಿ ನಮಗೆ ಮಕ್ಕಳೇ ಬೇಡ ಎಂದು ನಿರ್ಧರಿಸಿಬಿಡುವ ದಂಪತಿಗಳ ಹಾಗೆ ನ್ಯೂಡಿಷ್ಟ್ ಜನರು ಬಟ್ಟೆಯನ್ನೇ ಹಾಕೋದಿಲ್ಲವಂತೆ, ಬಟ್ಟೆ ಹಾಕಿದರೆ ತಾನೇ ಅದರ ಕಷ್ಟಾ-ನಷ್ಟಾ ಎಲ್ಲಾ?

ಈ ಬಟ್ಟೆಗಳ ಸವಾಸ ಬೇಕು ಆದರೆ ಕಸ ಹೊಡೆಯುವುದಾಗಲೀ ಪಾತ್ರೆ ತಿಕ್ಕುವುದರ ಸಹವಾಸ ಬೇಡವೇ ಬೇಡ. ಅದೂ ದಿನಕ್ಕೆ ಮೂರು ಹೊತ್ತು ಮುಕ್ಕಿ ಮಿಕ್ಕಿದ್ದೆಲ್ಲವನ್ನೂ ಮುಗಿಸುವ ಜಾಯಮಾನವಿರುವವರೆಗೆ ಬದುಕು ಬಹಳ ಕಷ್ಟಾ. ಎಷ್ಟೇ ನೀಟಾಗಿ ಸಿಂಕು ತೊಳೆದಿಟ್ಟರೂ ಒಂದಲ್ಲಾ ಒಂದು ಪಾತ್ರೆಗಳು ಬಂದು ಬೀಳುತ್ತಲೇ ಇರೋದನ್ನ ನೋಡಿದ್ರೆ ಯಾರೋ ನಮಗೆ ಆಗದವರು ಮಾಟಾ-ಮಂತ್ರ ಮಾಡಿಸಿಟ್ಟಿದ್ದಾರೇನೋ ಅನ್ನಿಸುತ್ತೆ. ಅದೂ ಈ ದೇಶದಲ್ಲಂತೂ ಎಲ್ಲವನ್ನೂ ನಾವೇ ಮಾಡಿಕೂಳ್ಳಬೇಕಪ್ಪ. ವಾರವಿಡೀ ದುಡಿದು ತರೋದು ಅಲ್ಲಿಂದಲ್ಲಿಗೆ ಆಗುತ್ತೆ. ವಾರಾಂತ್ಯದಲ್ಲಿ ಇರೋ ಬರೋದನ್ನೆಲ್ಲ ಮ್ಯಾನೇಜೂ ಮೇಂಟೇನೂ ಮಾಡಿಕೊಂಡೇ ಇರಬೇಕಾಗುತ್ತೆ.

ಹೀಗೆ ಸೃಷ್ಟಿಯಲ್ಲಿ ನಮ್ಮ ವಿರುದ್ಧ ನಿಲ್ಲಬಲ್ಲ ಸಂಕೋಲೆಗಳನ್ನು ಜಯಿಸಲು ವಿಕಾಸವಾದದ ಬುನಾದಿಯ ಅಡಿಯಲ್ಲಿ ನಾವು ಪಡೆದುಕೊಂಡ ಶಕ್ತಿಯ ಸ್ವರೂಪವೇ ಸೋಮಾರಿತನ. ಅದನ್ನ ನಾವೆಲ್ಲರೂ ಪೂಜಿಸೋಣ, ಆರಾಧಿಸೋಣ. ಪ್ರಾಣಿಗಳು ನಗೋದಿಲ್ಲ, ಮನುಷ್ಯರು ನಗ್ತಾರೆ ಎನ್ನುವವರಿಗೆ ನಿಜ ಸ್ಥಿತಿಯ ಪೂರ್ತಿ ಅರಿವಂತೂ ಇಲ್ಲ. ಪ್ರಾಣಿಗಳು ಸೋಮಾರಿಗಳಾಗೋದಕ್ಕೆ ಸಾಧ್ಯವೇ ಇಲ್ಲ.

***

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

Monday, September 03, 2007

ಏನು ಸುಖವಮ್ಮಾ, ಯಾವುದು ಸುಖವಮ್ಮಾ

ನಮ್ಮಮ್ಮ ತೂಕದ ಮಾತನ್ನಾಡೋದೇ ಹೆಚ್ಚು, ಯಾವಾಗ್ ನೋಡುದ್ರೂ ಈ ಥರದ ಒಂದ್ ಮಾತನ್ನ ಎಸೀತಾನೇ ಇರ್ತಾಳೆ...’ಎಲ್ಲಾ ಸುಖವಾಗಿದೀರಾ ತಾನೇ?’, ಅನ್ನೋ ಪ್ರಶ್ನೆ ಕೆಲವೊಮ್ಮೆ ’ಎಲ್ಲಾ ಅರಾಮಾ...’ ಅನ್ನೋದರ ಮುಂದಿನ ವಾಕ್ಯವಾಗಬಹುದು ಅಥವಾ ಎಷ್ಟೋ ವಾಕ್ಯಗಳನ್ನು ಅಂತ್ಯಗೊಳಿಸುವ ಒಂದು ಲಯವಾಗಿರಬಹುದು. ಒಂದೊಂದ್ ಸಾರಿ ಸಾರ್‌ಕ್ಯಾಸಮ್ ನಲ್ಲಿ ಹೇಳ್ತಾ ಇರೋ ಹಾಗೆ ಅನ್ನಿಸಿದರೆ, ಇನ್ನೊಂದಿಷ್ಟು ಸಾರಿ ನಿಜವಾದ ಕಳಕಳಿ ಅಭಿವ್ಯಕ್ತಗೊಳ್ಳುತ್ತೆ. ಅದು ಸರಿ, ’ಅರಾಮಾ?’ ಅನ್ನೋ ಪ್ರಶ್ನೆಗೆ ’ಹೂಞ್!’ ಎಂದು ಉತ್ತರ ಕೊಟ್ರೆ, ’ಸುಖವಾಗಿದ್ದೀರಾ?’ ಅನ್ನೋ ಪ್ರಶ್ನೆಗೆ ಏನಂತ ಉತ್ತರ ಕೊಡೋಣ, ಅದೂ ಹೋಗೀ ಹೋಗಿ ಅಡಿಗರ ’ಇರುವುದೆಲ್ಲವ ಬಿಟ್ಟು...’ ಬಂದ ಮನಸ್ಸಿನವರಾದ ಮೇಲೆ. ಎಷ್ಟೋ ಸಾರಿ ಅನ್ನಿಸಿದೆ, ಹೆಚ್ಚಿನ ಪಕ್ಷ ಒಂದ್ ಕೆಟ್ಟ ಸಿಟ್ಟಿನಲ್ಲೇ, ’ಯಾವುದು ಸುಖವಮ್ಮಾ?’ ಎಂದು ಕೇಳೋಣವೆನ್ನಿಸಿದೆ, ಆಕೆಯ ವೃದ್ದಾಪ್ಯದಲ್ಲಾದರೂ ಸುಖದ ಬಗ್ಗೆ ಆಕೆಗೆ ತಿಳಿದಿದೆಯೋ ಏನೋ ಎನ್ನುವ ಸ್ವಾರ್ಥ ನನ್ನದು, ಏಕೆಂದರೆ ಕೊನೆಗೆ ಸುಖಾ ಎನ್ನುವುದು ವೃದ್ದಾಪ್ಯದಲ್ಲಾದರೂ ಸಿಗುವ ನಿಧಿಯಾಗಬಹುದೇನೋ ಎನ್ನುವ ಕಾತರತೆಯಿಂದಲಾದರೂ ಕಾಲ ಕಳೆಯಬಹುದಲ್ಲಾ.

ಈ ತಳಮಳದ ಹಿಂದೆ ಅನೇಕ ಸಂವೇದನೆಗಳಿವೆ, ಭಾವನೆಗಳಿವೆ, ಅನುಭವಗಳಿವೆ. ಮನಸ್ಸು ಮತ್ತು ತಲೆಯನ್ನು ಖರ್ಚು ಮಾಡಿಕೊಂಡು ಜೀವನ ಸಾಗಿಸುವವರ ಪ್ರತಿಯೊಂದು ಸೂಕ್ಷ್ಮತೆಯೂ ಅಡಕವಾಗಿದೆ. ಅದಕ್ಕೆಂದೇ ಅನ್ನಿಸೋದು ನಾನು ದೈಹಿಕ ಶಕ್ತಿಯನ್ನು ನಂಬಿಕೊಂಡು ಪ್ರಿಮಿಟಿವ್ ಕೆಲಸವನ್ನು ಮಾಡಿಕೊಂಡಿದ್ದರೆ ಹೇಗಿತ್ತು ಎಂದು. ಒಬ್ಬ ಕಾರ್ಪೆಂಟರ್ ಆಗಿ, ದಿನಗೂಲಿ ಮಾಡುವವನಾಗಿ, ಕನ್‌ಸ್ಟ್ರಕ್ಷನ್ ಕೆಲಸಗಾರನಾಗಿ, ರಸ್ತೆ ರಿಪೇರಿ ಮಾಡುವವನಾಗಿ, ಎಲೆಕ್ಟ್ರಿಷಿಯನ್ ಆಗಿ, ಇತ್ಯಾದಿ. ಉತ್ತಮ ಆದಾಯವೇನೂ ಇರುತ್ತಿರಲಿಲ್ಲವೇನೋ, ಆದರೆ ದಿನದ ದೈಹಿಕ ಚಿಂತೆ ಅಗತ್ಯಗಳ ಮುಂದೆ ಮನಸ್ಸಿಗೆ ದೊಡ್ಡ ಕಡಿವಾಣ ಬೀಳುತ್ತಿತ್ತು. ಆ ಮಟ್ಟಿಗೆ ಗಳಿಸಿ, ಅದೇ ಮಟ್ಟದಲ್ಲಿ ಖರ್ಚು ಮಾಡಿ ಅವತ್ತಿಂದವತ್ತಿಗೆ ಬದುಕಿದರೂ ಅಲ್ಲಿ ಇನ್ಯಾವ ರೀತಿಯ ಕೊರಗುಗಳಿರುತ್ತಿದ್ದವೋ ಆದರೆ ತಲೆಯಲ್ಲಿ ಶಾಶ್ವತವಾದ ಮರಕುಟಿಗನ ಹಾಗೆ ಕುಟುಕುತ್ತಲೇ ಇರುತ್ತಿರುವ ಒಂದು ಧ್ವನಿ ಇರುತ್ತಿರಲಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಹಾಗೆ ಬೇರೆ ವೃತ್ತಿ, ಪ್ರವೃತ್ತಿಗಳಲ್ಲಿರುವ ಕಷ್ಟ ಸುಖವನ್ನು ನಾನೇನು ಬಲ್ಲೆ, ಅಲ್ಲಿನ ಪೀಕಲಾಟಗಳನ್ನು ದಿನವೂ ಏಗುತ್ತಿರುವವರಿಗೆ ನಮ್ಮ ಬದುಕು ಸುಂದರವಾಗಿ ಕಾಣುವುದೇ ಒಂದು ದೊಡ್ಡ ರಹಸ್ಯವಲ್ಲದೇ ಇನ್ನೇನು?

ಸುಖವೆನ್ನುವುದು ಏನು ಹಾಗಾದರೆ? ಅದು ಮಾನಸಿಕ ನೆಲೆಗಟ್ಟೇ, ಭೌತಿಕ ಸ್ಥಿತಿಯೇ, ಸಾಮಾಜಿಕ ಸಂಕಲ್ಪವೇ, ಬೇಕು ಎನ್ನುವವುಗಳಿಗೆಲ್ಲ ಸಿಕ್ಕ ಉತ್ತರವೇ, ಇಲ್ಲವೆನ್ನುವವುಗಳ ಬೆಂಬಿಡದ ಪ್ರಶ್ನೆಗಳೇ? ಸುಖವೆನ್ನುವುದು ಆಂತರಿಕವಾದದ್ದೇ, ಅಥವಾ ಪ್ರತಿಯೊಬ್ಬರೂ ಕಂಡು, ಅನುಭವಿಸಿ, ಗುರುತುಹಿಡಿಯಬಲ್ಲ ಬಹಿರಂಗದ ರೂಪವೇ? ಈ ಪ್ರಪಂಚದ ಮನುಷ್ಯ ಕುಲದಲ್ಲಿ ಯಾರಾದರೂ ಸುಖವಾಗಿದ್ದಾರೆಯೇ? ಅಥವಾ ಯಾರೂ ಸುಖವಾಗಿರದೇ ಸುಖವೆನ್ನುವ ಮರೀಚಿಕೆಯನ್ನು ಅರಸುವುದೇ ಬದುಕೇ? ಸುಖವೆನ್ನುವುದು ವಿಧಿ ಲಿಖಿತ ಸಂಕೋಲೆಯೇ, ಅಥವಾ ಮಾನವ ನಿರ್ಮಿತ ಬಂಧನವೇ?

ಸುಖವೆನ್ನುವುದಕ್ಕೆ ಉತ್ತರ ಕಂಡುಕೊಳ್ಳುತ್ತಾ ಹೋದಂತೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಇನ್ನೂ ಹಲವು ಸ್ಥರಗಳಲ್ಲಿ ಯೋಚಿಸಿಕೊಳ್ಳುವಂತಾಯಿತು. ಒಮ್ಮೆ ಇರುವ ಸದರಿ ಸ್ಥಿತಿಯಿಂದ ಮುಕ್ತವಾಗಿ ಒಡನೆಯೇ ಮತ್ತೊಂದು ಸ್ಥಿತಿಯನ್ನು ತಲುಪುವುದು ಸುಖವೆಂದು ಕಂಡುಬಂದರೆ, ಮತ್ತೊಮ್ಮೆ ಇನ್ನು ಎಷ್ಟೋ ವರ್ಷಗಳ ನಂತರ ಬರಬಹುದಾದ ಸಾಮಾಜಿಕ ಸಾಧ್ಯತೆಯೂ ಸುಖವಾಗಿ ಕಂಡುಬಂದಿತು. ಹಲ್ಲು ನೋವಿರುವವನಿಗೆ ತಾತ್ಕಾಲಿಕ ಉಪಶಮನಕ್ಕೆಂದು ಕೊಟ್ಟ ನೋವಿನ ಮಾತ್ರೆ ಒಡನೆಯೇ ಸುಖವನ್ನು ತಂದುಕೊಟ್ಟರೆ, ಲಾಟೀನ್ ದೀಪದ ಬೆಳಕಿನಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಹತ್ತನೇ ತರಗತಿಯ ಪರೀಕ್ಷೆಗೆ ತಯಾರಾಗುತ್ತಿರುವ ಬಡಹುಡುಗನ ಒಂದು ದಿನ ನಾನೂ ಇಂಜಿನಿಯರ್ ಆಗುತ್ತೇನೆ ಎನ್ನುವ ದೀಪದ ಬೆಳಕಿಗೆ ತೊನಲಾಡುತ್ತಿರುವ ನೆರಳಿನಂತಿರುವ ಕನಸು ಎಷ್ಟೋ ವರ್ಷಗಳ ನಂತರ ಸುಖಕ್ಕೆ ಸಂಬಂಧಿಸಿದಂತೆ ತೋರಿತು. ’ಸುಖವಾಗಿದ್ದೀಯಾ?’ ಎನ್ನುವ ಪ್ರಶ್ನೆಯನ್ನು ಪ್ರತಿದಿನವೂ ಕೇಳಿ (Rhetorical) ಅದರಿಂದ ಯಾವ ಉತ್ತರವನ್ನು ನಿರೀಕ್ಷಿಸದೆಯೂ ಇರಬಹುದು, ಅದೇ ಪ್ರಶ್ನೆಯನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, ಜನ್ಮಕ್ಕೊಮ್ಮೆ ಕೇಳಿಯೂ ವಿವರವನ್ನು ಹುಡುಕಬಹುದು. ಅದೇ ಪ್ರಶ್ನೆಯನ್ನು ಯಾರು, ಎಷ್ಟು ದೂರದಲ್ಲಿರುವವರು, ಎಲ್ಲಿರುವವರು ಕೇಳಿದರು ಎನ್ನುವುದರ ಮೇಲೆ ಉತ್ತರ ಬದಲಾಗಬಹುದು.

ನನ್ನಗ್ಗೊತ್ತು - ನಾಳೆ ಬೆಳಿಗ್ಗೆ ಮಾರ್ಗದ ಮಧ್ಯೆ ರಸ್ತೆ ರಿಪೇರಿ ಮಾಡುವ ಕೆಲಸಗಾರರಿಗೆ ಈ ಬಗೆಯ ಚಿಂತೆ ಇರುವುದಿಲ್ಲವೆಂದು. ಅಂತಹವರನ್ನು ’ಸುಖವಾಗಿದ್ದೀಯಾ?’ ಎಂದು ಯಾರೂ ಕೇಳೋದೇ ಇಲ್ಲವೇನೋ, ಅಥವಾ ಕೇಳುತ್ತಾರೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಕೆಲಸದ ಮಧ್ಯೆ ತೊಡಗಿದ ಅವರ ಮನಸ್ಸು ಒಂದಲ್ಲ ಒಂದು ಹೊಯ್ದಾಟಕ್ಕೆ ತೂಗುತ್ತಿರಬೇಕಲ್ಲ - ಅವರುಗಳಂತೂ ಖಂಡಿತ ಸಂತರಲ್ಲವೇ ಅಲ್ಲ - ಅವರ ನೆಲ ನೋಡುತ್ತಿರುವ ಕಣ್ಣುಗಳ ಹಿಂದಿನ ಮನಸ್ಸಿನಲ್ಲೇನಿದೆ? ಜ್ಯಾಕ್ ಹ್ಯಾಮರ್ ಸೃಷ್ಟಿಸುತ್ತಿರುವ ಕರ್ಕಷ ಸದ್ದಿಗೂ ಹೊಂದಿಕೊಂಡ ಒರಟುತನದ ಸುಖವೆನ್ನುವುದು ಎಲ್ಲಿ ಹುದುಗಿದೆ? ಅವರ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೊಸ ರಂಗನ್ನು ಕಣ್ಣುಗಳಲ್ಲಿ ಹುಟ್ಟಿಸಿಕೊಳ್ಳುವುದು ಅವರಿಗೆ ಸುಖವಾಗಿ ಕಂಡೀತೇ? ಇವತ್ತಲ್ಲ ನಾಳೆ ನಮ್ಮ ಮಕ್ಕಳು ಸುಖವಾಗಿರಲಿ, ಬಿಳಿ ಕಾಲರ್ ಕೆಲಸಗಾರರಾಗಲಿ ಎನ್ನುವ ಕನಸು ಅವರ ಸುಖವನ್ನು ನಿರ್ಧರಿಸೀತೇ? ರಸ್ತೆಗೆ ಟಾರು ಬಳಿಯುವ ಅವರ ಋಣಾನುಬಂಧ ಹೇಗಿದ್ದಿರಬಹುದು - ಅಕ್ಕ, ತಮ್ಮ, ತಂಗಿ, ಅಣ್ಣ ಇವರುಗಳ ಒಡನಾಟ ಅವರಿಗೆ ಏನನ್ನಿಸಬಹುದು? ಒಂದು ಕ್ಷಣ ಅವರ ಮನಸ್ಸಿನಾಳಕ್ಕಿಳಿದು ಅದರ ವ್ಯಾಖ್ಯೆಯನ್ನು ಅರಿಯಬಯಸುವ ನನ್ನ ಪ್ರಯತ್ನ ರಸ್ತೆಯ ಮೇಲೆ ಸಿಗುವ ಕೆಲವೇ ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾಗುತ್ತದೆ. ಕಣ್ಣ ಮುಂದಿನ ರಸ್ತೆ ಬದಲಾದ ಹಾಗೆ ಅದರ ವ್ಯಾಖ್ಯಾನ, ಅಂತಹ ವ್ಯಾಖ್ಯಾನದ ಹಿಂದಿನ ಅವತರಣಿಕೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ.

ಹಾಗಾದರೆ, ’...ಸುಖವಾಗಿದೀಯಾ ತಾನೇ?’ ಎನ್ನುವ ಪ್ರಶ್ನೆಗೆ ನಿಖರವಾದ ಉತ್ತರವಿದೆಯೋ ಅಥವಾ ದಿನೇದಿನೇ ಅದೂ ಬದಲಾಗುತ್ತದೆಯೋ? ಸದಾ ಬದಲಾಗುವುದನ್ನು ಏಕೆ ಒಂದೇ ಪದದಿಂದೇಕೆ ಅಳೆಯಬೇಕು? ಸುಖವೆನ್ನುವುದು ಎಲ್ಲರಿಗೂ ಸಮನಾದುದು ಎಂದಾದಲ್ಲಿ ಅವರವರಿಗೆ ತಕ್ಕ (ಮಟ್ಟಿನ) ಸುಖವನ್ನು ಬಿಂಬಿಸುವ ಪದಗಳೇಕೆ ಸೃಷ್ಟಿಯಾಗಲಿಲ್ಲ?

***

ನೀವು ಸುಖವಾಗಿದ್ದೀರಾ? ಯಾಕಿಲ್ಲ?

Friday, August 31, 2007

ಅಬ್ಬಾ, ಒಂದು ದಶಕವೆಂದರೆ...

ಕೇವಲ ಹತ್ತೇ ವರ್ಷಗಳ ಹಿಂದೆ...ಮಾರ್ರಿಸ್ ಕೌಂಟಿಯ ಪಾರ್ಸಿಪನಿ (Parsippany) ಎಂಬ ಪಟ್ಟಣದ ಮಾರ್ಕ್ ಫುಸಾರಿ ಎಂಬೊಬ್ಬರ ಮನೆಯ ಬೇಸ್‌ಮೆಂಟಿನಲ್ಲಿ ಎರಡು ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಹಿಡಿದು ಸಿಸ್ಟಮ್ ಅನಲಿಸ್ಟ್ ಕೆಲಸವನ್ನು ಕೆಲವು ತಿಂಗಳುಗಳ ಹಿಂದೆ ಆರಂಭಿಸಿ, ಇನ್ನೂ ಅಂಬೆಕಾಲಿಡುತ್ತಿದ್ದ ಇಂಟರ್‌ನೆಟ್ಟ್ ಅನ್ನು ಸರ್ಫ್ ಮಾಡುತ್ತಿದ್ದ ಕಾಲ. ನನಗ್ಗೊತ್ತು, ಇದು ’ಬೀಸ್ ಸಾಲ್ ಬಾದ್’ ನಂತಹ ಹಳೇ ಹಿಂದೀ ಸಿನಿಮಾದ ಯಾದಿಯಲ್ಲೇ ಆರಂಭವಾದ ಬರಹ ಮುಂದೆ ಎಲ್ಲಿಗೆ ಮುಟ್ಟೀತು ಎಂದು. ಆದರೆ ನಿನ್ನೆ ವಿಶೇಷವಾಗಿ ಈ ಹತ್ತು ವರ್ಷಗಳನ್ನು ನೆನಪಿಸಿಕೊಳ್ಳಬೇಕಾಯಿತು, ರೆಡಿಯೋದಲ್ಲಿ ಪ್ರಿನ್ಸೆಸ್ ಡಯಾನಾ ಸತ್ತು ಹತ್ತು ವರ್ಷವಾದ ಸುದ್ದಿಯನ್ನು ಕೇಳಿದ ಬಳಿಕ.

ಆಗೆಲ್ಲಾ ಎಂಟು ವರ್ಷಗಳ ಡೆಮಾಕ್ರಟಿಕ್ ಪಕ್ಷದ ಆಡಳಿತವನ್ನು ಸಹಿಸಿಯೋ ಸಹಿಸಲಾರೆದೆಯೋ ರಿಪಬ್ಲಿಕನ್ ಪಕ್ಷದವರು ಸೆಡ್ಡು ಹೊಡೆದು ನಿಂತು ಮುಂಬರುತ್ತಿದ್ದ ಬುಷ್ ಚುನಾವಣೆಗೆ ಹೊಂಚು ಹಾಕುತ್ತಿದ್ದ ಕಾಲ. ಕೆನೆತ್ ಸ್ಟಾರ್ ಎನ್ನುವ ಮುತ್ಸದ್ದಿ ಪ್ರತಿದಿನವೂ ಅಂದಿನ ಪ್ರೆಸಿಡೆಂಟ್ ಬಿಲ್ ಕ್ಲಿಂಟನ್ನರ ಕಾಲು ಎಳೆಯುತ್ತಿದ್ದ ಕಾಲ - ಯಾವ ನ್ಯೂಸ್ ಚಾನೆಲ್ ತಿರುಗಿಸಿದರೂ ಮೊನಿಕಾ ಲ್ಯುಯಿನ್ಸ್ಕೀಯೇ ಪ್ರತ್ಯಕ್ಷವಾಗುತ್ತಿದ್ದಳು. ಅಂತಹ ನ್ಯೂಸ್ ಹಂಗ್ರೀ ಮಾಧ್ಯಮಗಳಿಗೆ ಸ್ವಲ್ಪ ತಿರುವು ನೀಡಿದ್ದೆ ಡಯಾನ ಕಾಲವಾದ ವಿಚಾರ. ಜನಮನಗಳಲ್ಲಿ ಆಕೆ ಹೇಗೆ ನಿಂತು ಹೋಗಿದ್ದಳು, ಬೆರೆತು ಹೋಗಿದ್ದಳು ಎನ್ನುವುದಕ್ಕೆ ಸಾಕ್ಷಿಯಾಗುವಂತೆ ಜನರ ಪ್ರತಿಕ್ರಿಯೆ ವ್ಯಕ್ತವಾಗತೊಡಗಿ ಅಮೇರಿಕನ್ ಮಾಧ್ಯಮಗಳೂ ತಮ್ಮ ಕ್ಯಾಮರಾಗಳನ್ನು ಯುರೋಪಿನ ಕಡೆಗೆ ಮುಖಮಾಡಿ ನಿಂತಿದ್ದಂತಹ ಘಳಿಗೆಯೊಂದು ಸೃಷ್ಟಿಯಾಗಿತ್ತು.

ಅಂದಿನ ದಿನಗಳಲ್ಲಿ ನಾನೂ ಒಂದು ಹೊಸ ಕಂಪ್ಯೂಟರ್ ಕೊಂಡಿದ್ದೆ - ಆಫೀಸಿನಲ್ಲಿ ನನಗೆ ಬೇಕಾದ ವೆಬ್‌ಸೈಟುಗಳನ್ನು ನೋಡಿದರೆ, ನೋಡಿದ್ದು ಗೊತ್ತಾದರೆ ಎಲ್ಲಿ ಮನೆಗೆ ಕಳಿಸುತ್ತಾರೋ ಎಂಬ ಭಯ ಬೇರೆ ಇತ್ತು! ಹತ್ತು ವರ್ಷಗಳ ಹಿಂದೆ ಇಂತಹ ಪ್ರತೀ ಶುಕ್ರವಾರ ಸಂಜೆಯಿಂದ ಹಿಡಿದು ಶನಿವಾರದವರೆಗೆ ನಾನು ನಿದ್ರೆ ಮಾಡುತ್ತಿದ್ದುದೇ ಕಡಿಮೆ. ಅದರ ಬದಲಿಗೆ ಓದಲಿಕ್ಕೆ ಬೇಕಾದಷ್ಟು ವೆಬ್ ಸೈಟುಗಳು. ಮೊಟ್ಟ ಮೊದಲ ಬಾರಿಗೆ ನನ್ನ ತಮಿಳು ಸ್ನೇಹಿತ ಕಳಿಸಿದ ಲಿಂಕ್‌ನ ದಯೆಯಿಂದಾಗಿ ಸಂಜೆವಾಣಿ ಪತ್ರಿಕೆಯ ಅಂತರ್ಜಾಲ ದರ್ಶನ - ಬೆಂಗಳೂರಿನ ಸುದ್ದಿಯಾಗಿರಲಿ, ಇನ್ಯಾವುದಾಗಿರಲಿ ಕನ್ನಡವನ್ನು ಕಂಪ್ಯೂಟರ್ರ್‌ನಲ್ಲಿ ನೋಡುತ್ತಿದ್ದೇನಲ್ಲಾ ಅನ್ನೋ ಸಂತೋಷವೇ ದೊಡ್ಡದಾಗಿತ್ತು. ಯಾರೋ ಪುಣ್ಯಾತ್ಮರು ಹಾಕಿದ ’ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ...’ ಹಾಡು ರಾಜ್‌ಕುಮಾರ್ ಧ್ವನಿಯಲ್ಲಿ ಕೇಳಿದಷ್ಟೂ ತಣಿಯದು, ಅದರ ಜೊತೆಯಲ್ಲಿ ’ಅಳುವಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ’. ನನ್ನ ತೆಲುಗು ರೂಮ್ ಮೇಟ್ ಪವನ್ ಕೂಡಾ ’ಅಮೃತವಾಹಿನಿ...’, ಹಾಗೂ ’ಅಳುವಕಡಲೊಳು...’ ಹಾಡನ್ನು ಬಾಯಿಪಾಟ ಮಾಡಿಕೊಂಡಿದ್ದ, ಏಕೆಂದರೆ ಅವೇ ಪದೇ-ಪದೇ ನನ್ನ ಕಂಪ್ಯೂಟರ್‌ನಿಂದ ಕೇಳಿಬರುತ್ತಿದ್ದವು.

ಓಹ್, ಅಲ್ಲೊಂದು ದೊಡ್ಡ ಚಾಟ್ ಪ್ರಪಂಚವೇ ಇತ್ತು. ನಾನೂ, ಪವನ್ ಹಾಗೂ ನಮ್ಮನ್ನು ಬಹಳ ಮುತುವರ್ಜಿಯಿಂದ ಪದೇಪದೇ ಭೇಟಿಯಾಗುತ್ತಿದ್ದ ಆಕಾಶ್‌ಗೆ ಕಂಪ್ಯೂಟರ್‌ನಲ್ಲಿನ ಚಾಟ್ ಬಹಳ ಮಹತ್ವಪೂರ್ಣದಾಗಿತ್ತು. ಫ್ಲ್ಯಾಟ್‌ಲೈನ್ ಫೋನ್ ಸರ್ವೀಸ್‌ನಲ್ಲಿ ಡಯಲ್ ಅಪ್ ಕನೆಕ್ಷನ್ ಇದ್ದುದಾದರೂ ನಮಗೆ ವೀಕ್ ಎಂಡ್‌ಗಳಲ್ಲಿ ನಿರಂತರವಾಗಿ ಚಾಟ್ ಮಾಡಲು ಯಾವ ತೊಂದರೆಯೂ ಇರುತ್ತಿರಲಿಲ್ಲ. ಕೆಲವೊಮ್ಮೆ ಪಾಳಿಯ ಮೇಲೆ ಒಬ್ಬರಾದ ಮೇಲೆ ಒಬ್ಬರು, ನಾಲ್ಕು-ಐದು-ಆರು ಘಂಟೆಗಳ ನಿರಂತರ ಚಾಟ್‌ಗಳಲ್ಲಿ ತೊಡಗಿದ್ದೂ ಉಂಟು. ಹೀಗಿನ ನಿರಂತರ ತಪಸ್ಸಿನ ಚಾಟ್‌ನಿಂದ ನಾನೂ ಹಾಗೂ ಪವನ್ ಕೆಲವೇ ವಾರಗಳಲ್ಲಿ ಹೊರಗೆ ಬಂದು ಮುಕ್ತರಾದೆವು. ನಮ್ಮ ಪ್ರಬುದ್ಧತೆ ಬದಲಾಯಿತೋ, ಅಥವಾ ವರ್ಚುವಲ್ ಪ್ರಪಂಚದ ಇತಿಮಿತಿಗಳು ಸ್ಪಷ್ಟವಾದವೋ ಗೊತ್ತಿಲ್ಲ, ಆದರೆ ಆಕಾಶ್ ಅದರಿಂದೆಂದೂ ಮುಕ್ತನಾಗಲೇ ಇಲ್ಲ. ನಾನೂ-ಪವನ್ ಚಾಟ್‌ಗೆ ಬಳಸದ ಕಂಪ್ಯೂಟರ್ ಆಕಾಶನ ಪೂರ್ಣ ಸ್ವತ್ತಾಯಿತು. ಕೆಲವೊಮ್ಮೆ ಮಧ್ಯೆ ಯಾವುದಾದರೊಂದು ಕರೆ ಮಾಡಬೇಕೆಂದರೂ ಬಿಡುವು ಕೊಡದ ಹಾಗೆ ಆಕಾಶ್ ನಮ್ಮ ಮನೆಯ ಕಂಪ್ಯೂಟರ್ರ್ ಅನ್ನು ಬಳಸುವುದನ್ನು ನೋಡಿ ಪವನ್‌ಗೆ ಆಗಾಗ ಸಿಟ್ಟುಬರಲು ತೊಡಗಿತು. ಇದ್ದಕ್ಕಿದ್ದಂತೆ ಒಂದು ದಿನ ಪವನ್‌ಗೂ ಆಕಾಶ್‌ಗೂ ಸ್ವಲ್ಪ ಮಾತು ಬೆಳೆದಂತೆ ನೆನಪು. ನಂತರ ನಮ್ಮ ಮನೆಗೆ ಆಕಾಶ್ ಬರುವುದನ್ನು ಕಡಿಮೆ ಮಾಡಿದ, ಆದರೆ ಅಷ್ಟೊತ್ತಿಗಾಗಲೇ ಅವನ ಮನೆಯಲ್ಲೇ ಒಂದು ಕಂಪ್ಯೂಟರ್ ಇತ್ತು ಎಂದು ಕೇಳಿದ ನೆನಪು. ಆಕಾಶ್ ಚಾಟ್‌ನಿಂದ ಮುಕ್ತನಾಗಲೇ ಇಲ್ಲ ಎಂದು ಹೇಳಿದ್ದಕ್ಕೆ ಕಾರಣವಿದೆ. ಆಕಾಶ್‌ಗೂ ಹಾಗೂ ಕ್ಯಾತಿ ಎನ್ನುವ ಬಿಳಿ ಅಮೇರಿಕನ್ ಹುಡುಗಿಗೂ ಸ್ನೇಹ ಬೆಳೆದು ಅದು ಮುಂದೆ ಪ್ರೀತಿಯಾಗಿ ಮದುವೆಯಾಗುವಲ್ಲಿಯವರೆಗೂ ಹೋಯಿತು. ಆ ದಿನಗಳಲ್ಲಿ ಆಕಾಶ್ ಕ್ಯಾತಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಕ್ಕಾಗಿ ನನ್ನ ಕಂಪ್ಯೂಟರ್ರ್ ಅನ್ನು ಹೊಗಳುತ್ತಿದ್ದನೆಂದು ತೋರುತ್ತದೆ, ಈ ದಿನ ಅವನ ನಿಲುವು ಹೇಗಿದೆಯೋ ಗೊತ್ತಿಲ್ಲ. ಆಕಾಶ್ ಜೊತೆಯಲ್ಲಿ ನಾನು ಕ್ಯಾತಿಯನ್ನು ನೋಡಿದ್ದು ನ್ಯೂ ಬ್ರನ್ಸ್‌ವಿಕ್‌ನ ಒಂದು ಇಂಡಿಯನ್ ಹೊಟೇಲಿನಲ್ಲಿ, ಕೆಲವು ವರ್ಷಗಳ ನಂತರ - ಆಗ ಅವನು ಕ್ಯಾತಿಯನ್ನು ತನ್ನ ಹೆಂಡತಿ ಎಂದು ಪರಿಚಯ ಮಾಡಿಕೊಟ್ಟಿದ್ದ ನೆನಪು. ಮುಂದೆ ಆಕಾಶ್, ಪವನ್ ಅವರವರ ದಿಕ್ಕು ಹಿಡಿದು ನಡೆದವರು ಇವತ್ತಿಗೂ ಭೇಟಿಯಾದದ್ದಿಲ್ಲ. ನನ್ನ ಹಾಗೇ ಅವರೂ ಹತ್ತು ವರ್ಷಗಳನ್ನು ನೆನೆಸಿಕೊಳ್ಳುತ್ತಿರಬಹುದು.

೧೯೯೭ ರಿಂದ ೨೦೦೦-೨೦೦೧ ರ ಹೊತ್ತಿಗೆಲ್ಲಾ ಸ್ಟಾಕ್ ಮಾರ್ಕೇಟ್, ಟೆಕ್ನಾಲಜಿ ಮಾರ್ಕೇಟ್ ತುಂಬಾ ಮೇಲು ಹೋಗುತ್ತಿದ್ದ ಕಾಲ. ರಿಯಲ್ ಎಸ್ಟೇಟ್ ಸಹಾ ಆಗಷ್ಟೇ ಚಿಗುರಿಕೊಳ್ಳುತಲಿತ್ತು. ಆದರೆ ನಾನು, ಹಾಗೂ ನನ್ನ ಹಾಗಿನವರು ದಿನವೂ ಆಫೀಸಿಗೆ ಹೋಗಿ ಬರುವುದನಷ್ಟೇ ಕಾಯಕವೆಂದುಕೊಂಡು ಇವತ್ತಿನವರೆಗೂ ಅನುಸರಿಸಿಕೊಂಡು ಬಂದೆವೇ ವಿನಾ ಯಾವೊಂದು ರಿಸ್ಕ್ ಅನ್ನೂ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಿಲ್ಲ. ಉದ್ಯಮವನ್ನು ಆರಂಭಿಸುವುದಕ್ಕೆ, ತಮ್ಮದೇ ಆದ ಕಂಪನಿಯನ್ನು ಶುರು ಮಾಡಲಿಕ್ಕೆ, ಆಯಕಟ್ಟಿನ ಜಾಗಗಳಲ್ಲಿ ಹಣ ಹೂಡುವುದಕ್ಕೆ, ಮನೆ-ಮಠ ಖರೀದಿ ಮಾಡುವುದಕ್ಕೆ ಎಲ್ಲದಕ್ಕೂ ಹೇಳಿ ಮಾಡಿಸಿದ ಸಮಯವಾಗಿತ್ತು. ೨೦೦೧ ರ ಸೆಪ್ಟೆಂಬರ್ ಬರುತ್ತಿದ್ದ ಹಾಗೆ, ಅಲ್ಲ, ಬುಷ್ ಚುಕ್ಕಾಣಿ ಹಿಡಿದು ಶ್ವೇತಭವನವನ್ನು ಸೇರಿದ ಘಳಿಗೆ ಸರಿ ಇರದಿದ್ದ ಕಾರಣ ಏನೇನೋ ಅನಾಹುತಗಳಾದವು. ಪ್ರಪಂಚದ ರೀತಿ-ನೀತಿಗಳೇ ಬದಲಾಗಿ ಹೋದವು. ಎಲ್ಲವೂ ಅಮೇರಿಕಮಯವಾಯಿತು. ಉದಯವಾಣಿಯಂತಹ ಪತ್ರಿಕೆಗಳು ನಮ್ಮಲ್ಲಿನ ಬಸ್ಸುಲೋಡು ಜನರು ತುಂಬಿ ಅಮೇರಿಕದಿಂದ ಭಾರತಕ್ಕೆ ಹಿಂತಿರುಗುವ ಹಾಗೆ ವೃತ್ತಿಕರ್ಮಿಗಳನ್ನು ಬಿಂಬಿಸತೊಡಗಿ, ಆಗಾಗ್ಗೆ ಊರಿನಿಂದ ಅಣ್ಣ ಫೋನ್ ಮಾಡಿ ’ಎಲ್ಲಾ ಚೆನ್ನಾಗಿದೆಯಾ?’ ಎಂದು ಕೇಳುವಂತಾಗಿತ್ತು. ಎಷ್ಟೋ ಜನ ಕಂಪನಿಗಳನ್ನು ಬದಲಾಯಿಸಿದರು. ಎಷ್ಟೊ ಜನ ಹಿಂತಿರುಗಿ ಹೋದರು. ಇನ್ನೆಷ್ಟೋ ಜನ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿದರು. ಗ್ರೀನ್‌ಕಾರ್ಡ್ ಸುಳಿಯಲ್ಲಿ ಸಿಕ್ಕವರ ಅವಸ್ಥೆ ಹೇಳತೀರದಾಗಿತ್ತು, ಕೊನೆಯ ಹಂತದವರೆಗೆ ಬಂದು ಕಂಪನಿಯನ್ನು ಬಿಟ್ಟವರ ಕೊರಗು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಹತ್ತು ವರ್ಷಗಳಲ್ಲಿ ಏನೇನೆಲ್ಲ ಆಗಿ ಹೋದವು. ಹತ್ತು ವರ್ಷ ಕೋಮಾದಲ್ಲಿದ್ದ ವ್ಯಕ್ತಿ ಇಂದು ಎಚ್ಚೆತ್ತು ಪ್ರಪಂಚವನ್ನು ನೋಡಿದ್ದೇ ಹೌದಾದರೆ ಅಗಾಧವಾದ ವ್ಯತ್ಯಾಸ ಎಲ್ಲ ಸ್ಥರಗಳಲ್ಲಿ ಕಂಡುಬರುವುದು ಸಾಮಾನ್ಯ. ಕಂಪ್ಯೂಟಿಂಗ್ ಪವರ್‌ನಿಂದ ಹಿಡಿದು ಟೆಕ್ನಾಲಜಿವರೆಗೆ, ಜಾಗತಿಕ ವಿಷಯಗಳನ್ನು ಲೆಕ್ಕ ಹಾಕಿಕೊಂಡರೆ, ಬಂದು ಹೋದವರ, ಕಾಲವಾದವರ ನೆನಪು ಮಾಡಿಕೊಂಡರೆ ಈ ಹತ್ತು ವರ್ಷಗಳು ಬಹಳ ದೊಡ್ಡವೇ. ಅಬ್ಬಾ, ಒಂದು ದಶಕವೆಂದರೆ ಎಷ್ಟು ದೊಡ್ಡದು! ಹೀಗೆ ಹತ್ತು ದಶಕಗಳಷ್ಟು ಬಾಳ ಬಹುದಾದ ಮಾನವ ಜೀವನ ದೊಡ್ಡದೇ ಎಂದು ಈ ಹೊತ್ತಿನಲ್ಲಿ ಅನ್ನಿಸಿದ್ದು ಸುಳ್ಳಲ್ಲ.

ಹತ್ತು ವರ್ಷಗಳ ನಂತರ ನಾನು ಇಂದೂ ಮಾರ್ರಿಸ್ ಕೌಂಟಿಯ ಮತ್ತೊಂದು ಪಟ್ಟಣ ಫ್ಯ್ಲಾಂಡರ್ಸ್ (Flanders) ನಲ್ಲಿ ನೆಲೆನಿಂತಿದ್ದೇನೆ - ಒಂದು ರೀತಿ ಫುಲ್ ಸೈಕಲ್ ಬಂದ ಹಾಗನ್ನಿಸುತ್ತೆ.

Thursday, August 30, 2007

ಗಾಳಿ

ಏನು ಗೊತ್ತಾ? ಸುಮ್ನೇ ಗಾಳೀ ಮೇಲೆ ಬರೀ ಬೇಕು ಅಂತ ನಿನ್ನೆಯಿಂದ ಅನ್ನಿಸ್ತಿದ್ದದ್ದು ನಿಜ. ಅಂತಿಂತ ಗಾಳಿ ಬಗ್ಗೆ ಅಲ್ಲ, ಎಲ್ಲ ಥರದ ಗಾಳಿಯ ಬಗ್ಗೆ, ಪ್ರಪಂಚವನ್ನು ಅಲ್ಲೋಲಕಲ್ಲೋಲ ಮಾಡುವ ಗಾಳಿಯಿಂದ ಹಿಡಿದು ಚಿಗುರೆಲೆಗಳ ಮೈ ಸವರಿ ’ಹೇಗಿದ್ದೀರಿ?’ ಎಂದು ವಿಚಾರಿಸುವ ಗಾಳಿಯವರೆಗೆ, ಕೆಲವು ಕಡೆ ಕತ್ತಲು ಆರಂಭವಾಗುವ ಸೂಚನೆ ನೀಡುವ ಗಾಳಿಯಿಂದ ಹಿಡಿದು, ಇನ್ನೆಲ್ಲೋ ಬೆಳಕು ಹುಟ್ಟುವ ಮುನ್ಸೂಚನೆ ಕೊಡುವ ಗಾಳಿಯವರೆಗೆ.

ಎಷ್ಟೋ ಸಾರಿ ಯೋಚಿಸಿದ್ದಿದೆ ಹೀಗೆ: ಯಾವುದೋ ಒಂದು ದಿನ ಅಪರೂಪಕ್ಕೆ ಶನಿವಾರ ಸಂಜೆ ನಿದ್ರೆಯಿಂದ ಎದ್ದು ಹೊರಗೆ ನೋಡಿದರೆ ಪಕ್ಕನೆ ಒಂದು ದಿಕ್ಕಿನಲ್ಲಿ ಕಂಡು ಬರುವ ಸೂರ್ಯ, ಅವೇ ಮೋಡಗಳ ನಡುವಿನ ಕಿರಣಗಳು ಇವೆಲ್ಲ ಏಕ್ ದಂ ಆ ಸಮಯ ಹಗಲು ರಾತ್ರಿಯಾಗುತ್ತಿರುವುದೋ ಅಥವಾ ರಾತ್ರಿ ಇದ್ದದ್ದು ಹಗಲಾಗುವುದೊ ಎಂಬ ಗೊಂದಲವನ್ನು ಹುಟ್ಟಿಸುತ್ತದೆ. ನಿಮಗೆ ಹಾಗೆ ಆಗಿರಲೇ ಬೇಕೆಂದೇನೂ ಇಲ್ಲ ಆದರೆ ನನಗಂತೂ ಹಾಗೆ ಅನ್ನಿಸಿದೆ, ಸಂಜೆ ನಿದ್ರೆಯಿಂದ ಎದ್ದವನಿಗೆ ಅದೇ ತಾನೆ ಬೆಳಗು ಹರಿದ ಅನುಭವವಾಗಿದ್ದಿದೆ. ಆ ಸಮಯಕ್ಕೆ ಸಹಾಯಕ್ಕೆ ಬರುವ ಸ್ನೇಹಿತನೆಂದರೆ ಲಘುವಾಗಿ ತೀಡುವ ಗಾಳಿ, ಮುಂಜಾನೆ ಬೀಸುವ ಗಾಳಿಯಲ್ಲಿ ಒಂದು ರೀತಿಯ ಆರ್ದ್ರತೆ ಇದ್ದರೆ, ಅದೇ ಸಂಜೆ ಹೊತ್ತಿಗೆಲ್ಲಾ ಒಣಗಿ ಹೋಗುತ್ತಿರುವ ದಿನದಲ್ಲಿ ಈಗಾಗಲೇ ಅಲ್ಲಿಲ್ಲಿ ಸುಳಿದ ಗಾಳಿಯೇ ಹೆಚ್ಚು.

ಉತ್ತಮ ಗಾಳಿ ಅನ್ನೋದೇನಿದ್ದರೂ ಪಶ್ಚಿಮದಲ್ಲೇ ಹುಟ್ಟಬೇಕು, ಹಾಗೆ ಹುಟ್ಟಿ ಅದು ಪೂರ್ವಾಭಿಮುಖವಾಗಿ ಹರಿಯಬೇಕು ಅಲ್ಲಿನ ಜನರ ಸ್ಥಿತಿಗತಿಗಳನ್ನು ಅರಿತಂತೆ ಆಲಿಸಿ ಅವರನ್ನು ಆಳಬೇಕು - ಹೀಗೆ ಇತಿಹಾಸವಿದೆ, ಅನುಭವವಿದೆ. ಸೂರ್ಯ ಮೊದಲು ಹುಟ್ಟಿ ಬರುವ ನಾಡಿನಲ್ಲಿನ ಕತ್ತಲನ್ನು ಹೋಗಲಾಡಿಸಲು ಪಶ್ಚಿಮದಲ್ಲಿ ಅವರವರ ಕತ್ತಲಲ್ಲಿ ಬಳಲುತ್ತಿರುವ ಜನರೇ ಆಗಬೇಕು.

***
ಓಹ್, ಯಾಕ್ ನಿಲ್ಲಿಸ್ ಬಿಟ್ಟೇ ಅಂತೀರಾ? ಏನ್ ಹೇಳ್ತಾ ಇದ್ದೆ?

ಅದೇ ಗಾಳಿ ಬಗ್ಗೆ.

ಯಾವ್ ಗಾಳಿ?

ಅದೇ - ಕತ್ಲು, ಬೆಳಕೂ, ಪೂರ್ವಾ, ಪಶ್ಚಿಮಾ, ರಾತ್ರೀ, ಹಗಲೂ..

ಓ, ಅದಾ - ಏನಿಲ್ಲ, ಗಾಳಿ ಒಂದ್ ಕಡೇಯಿಂದ ಮತ್ತೊಂದ್ ಕಡೇ ಹೋಯ್ತು ಅಂತ ಇಟ್ಕೊಳ್ಳಿ...ಆಗ ಏನಾಗುತ್ತೇ ಅಂದ್ರೆ ಅಲ್ಲೊಂದು ನಿರ್ವಾತ ಹುಟ್ಟತ್ತೆ. ಆದ್ರೆ, ಆ ನಿರ್ವಾತವನ್ನು ತುಂಬೋದಕ್ಕೆ ಸುತ್ತಲಿನ ಗಾಳಿ ರಭಸದಿಂದ ನುಗ್ಗುತ್ತೆ. ಹಾಗೆ ಆಗೋದರಿಂದ ಎರಡು ಬದಲಾವಣೆ ಆಗುತ್ತೆ - ಒಂದು, ಹಳೇ ಗಾಳಿ ಇದ್ದಲ್ಲಿ ಹೊಸ ಗಾಳಿ ಬಂದಂತಾಯ್ತು, ಇನ್ನೊದು, ಇರೋ ಗಾಳೀನೇ ಹೆಚ್ಚು ವಾಲ್ಯೂಮ್ ತುಂಬಿಕೊಂಡು ಒತ್ತಡ ಕಡಿಮೆ ಆಯ್ತು. ಹೌದೋ ಅಲ್ವೋ.

ಹೌದು.

ಅದರಿಂದ ಏನ್ ಗೊತ್ತಾಗುತ್ತೇ?

ಏನ್ ಗೊತ್ತಾಗುತ್ತೇ?

ಅದೇ, ಇರೋ ಗಾಳಿಯ ಜಾಗದಲ್ಲಿ ಮತ್ತೆನೋ ಬಂದ್ ಸೇರ್ಕೊಂಡು, ವಾಲ್ಯೂಮ್ ಜಾಸ್ತಿ ಆಯ್ತು, ಒತ್ತಡಾ ಕಡಿಮೆ ಆಯ್ತು, ಇದರಿಂದ ಎಲ್ಲ ವೇರಿಯಬಲ್‌ಗಳು ಬದಲಾದ್ವೇ ಹೊರತು ಒಟ್ಟು ಸ್ಥಿತಿಗತಿಯಲ್ಲಿ ಏನೇನೂ ಬದಲಾವಣೇ ಅನ್ನೋದಾಗ್ಲಿಲ್ಲ ನೋಡಿ.

ಏನೋ ನನಗೆ ಅರ್ಥ ಆಗ್ಲಿಲ್ಲಪ್ಪಾ.

ನಿಮಗೆಲ್ರೀ ಅರ್ಥ ಆಗುತ್ತೇ ಇಂತಾ ಸುಲಭವಾದ ಸಮೀಕರಣಾ, ಅದೂ ಕಂಪ್ಯೂಟರ್ರ್ ಕಾಲದ ಜನ್ರಪ್ಪಾ ನೀವು, ಎಲ್ಲದಕ್ಕೂ ಕ್ಯಾಲ್ಕುಲೇಟರ್ ಬಳಸೋ ಪರಂಪರೆಯವರು.

***

ಈ ಪಂಚಭೂತಗಳಲ್ಲೊಂದಾದ ಗಾಳಿಗೆ ದುಡ್ಡು ಕೊಡಬೇಕಾಗಿಲ್ಲ ಅನ್ನೋ ಕಾಲ ಬಹಳ ಹಳೆಯದಾಯ್ತು. ನಾವು ನೀರನ್ನು ದುಡ್ಡುಕೊಟ್ಟು ಕೊಂಡು ಗೊತ್ತಿದೆ, ಆದರೆ ಗಾಳಿಗೆ ದುಡ್ಡುಕೊಟ್ಟಿಲ್ಲ ಅನ್ನೋಕಾಗಲ್ಲ. ನಾವು ಉಪಯೋಗಿಸೋ ಮ್ಯಾನುಫ್ಯಾಕ್ಚರ್ ಮಾಡಿರೋ ಪ್ರತಿಯೊಂದು ವಸ್ತುವೂ ವಾತಾವರಣಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡುತ್ತೆ. ಬೇಕಾದಷ್ಟು ರೀತಿಯ ಅನಿಲಗಳನ್ನು ಕಾರ್ಖಾನೆಗಳಿಂದ ಹೊರಗೆ ಬರೋದನ್ನ ನೋಡೇ ಇರ್ತೀವಿ. ಬಿಯರ್ ತಯಾರಿಕೆ, ಫರ್ಮೆಂಟೇಷನ್ ಮುಂತಾದ ಸರಳ ಮ್ಯಾನುಫ್ಯಾಕ್ಚರಿಂಗ್ ನಿಂದ ಹಿಡಿದು ಟಯರ್ ಮೊದಲಾದ ಪ್ಲಾಸ್ಟಿಕ್, ರಬ್ಬರ್ ಆಧಾರಿತ ವಸ್ತುಗಳ ಉತ್ಪಾದನೆ ಬೇಕಾದಷ್ಟು ಅನಿಲವನ್ನು ಹೊರಗಡೆ ಹರಿಯಬಿಡುತ್ತೆ. ಹೀಗೆ ಹೊರಬಂದ ಅನಿಲಗಳಲ್ಲಿ ಎಷ್ಟೋ ಒಳ್ಳೆಯವು, ಇನ್ನೆಷ್ಟೋ ಕೆಟ್ಟವು. ಅವೆಲ್ಲಾ ಸೇರಿ ಸುಮ್ಮನೇ ಇರ್ತಾವೆ ಅಂತೇನೂ ಇಲ್ಲ. ಗ್ರೀನ್‍ಹೌಸ್ ಗ್ಯಾಸ್‌ಗಳಿಂದ ಗ್ಲೋಬಲ್ ವಾರ್ಮಿಂಗ್ ಆಗೋದರ ಬಗ್ಗೆ ಎಲ್ಲರಿಗೂ ಗೊತ್ತು, ಆಸಿಡ್ ಮಳೆ ಬೀಳೋದರ ಬಗ್ಗೆ ಗೊತ್ತಿದೆ, ಇನ್ನು ವಾಯು ಮಾಲಿನ್ಯದ ಬಗ್ಗೆ ನಾವೆಲ್ಲಾ ಕೇಳೇ ಇರ್ತೀವಿ. ಹೀಗೆ ಹೊರಸೂಸಿದ ಅನಿಲಗಳ ದುಷ್ಪರಿಣಾಮವೇ ನಾವು ಗಾಳಿಗೆ ತೆರುತ್ತಿರುವ ಬೆಲೆ.

ನಮ್ಮ ಕಡೆ ದೆವ್ವ-ಭೂತ ಮೆಟ್ಟಿಕೊಂಡೋರಿಗೆ ’ಗಾಳಿ ಬಡದಿದೆ’ ಅಂತಾರೆ. ಯಾವ ಗಾಳಿಯಲ್ಲಿ ಏನೇನಿದೆಯೋ? ಆತ್ಮಗಳ ಸಂವಹನೆಗೆ, ಭೂತಗಳ ಮಾತುಕಥೆಗೆ ಈ ಗಾಳಿಯೇ ಮಾಧ್ಯಮವಾಗೇಕಿರಬಾರದು. ನೀವ್ ಮಾತ್ರ ಎಲ್ಲ್ ಹೋದ್ರೂ ಹುಶಾರಾಗಿರಿ. ಯಾವ್ ಯಾವ್ ಗಾಳೀಲೀ ಏನೇನಿದೆಯೋ? ಕೊನೆಗೆ ಬೇಡವಾದದ್ದ್ಯಾವ್ದಾದ್ರೂ ಮೆಟ್ಟಿಕೊಂಡ್ರೆ ಕಷ್ಟಾ. ಹಿಂದೆಲ್ಲಾ ಒಂದಿಷ್ಟು ಗಾಳೀಸುದ್ದೀ ಅಂತ ಹುಟ್ತಿತ್ತು, ಈಗೆಲ್ಲಾ ಟಿವಿ ಚಾನೆಲ್ಲುಗಳಿಗೆ ಜನ ಒಗ್ಗಿಕೊಂಡ್ ಹೋಗೀರೋ ಸಮಯದಲ್ಲೂ ಇನ್ನೂ ಗಾಳೀಸುದ್ದಿಯಾಗಲೀ, ಗಾಳೀಮಾತಾಗಲೀ ಪ್ರಸ್ತುತವಾಗುತ್ತಾ? ನೀವ್ ಏನೇ ಹೇಳಿ ಅವರವರು ಮೂಗಿನಲ್ಲಿ ಎಳೆದುಕೊಳ್ಳೋ ಗಾಳಿ ಅವರವರಿಗೇ ಸೇರಿದ್ದು, ನಮಗೆಲ್ಲಾ ಜೀವವಾಯುವಾದ ಆಮ್ಲಜನಕವನ್ನ ವಾತಾವರಣದಿಂದ ಯಾರಾದ್ರೂ ದೋಚಿಕೊಳ್ದೇ ಇದ್ರೆ ಸಾಕಪ್ಪಾ.

ಒಂದು ಕೆಟ್ಟ ಗಾಳಿ ಸಾಕು ಲೋಕವನ್ನ ಕಂಗೆಡಿಸೋದಕ್ಕೆ. ಅದು ಬಿರುಗಾಳಿ ಆಗಿರಬಹುದು, ಸುಂಟರಗಾಳಿ ಆಗಿರಬಹುದು, ಅಥವಾ ಮೂಡಗಾಳಿ ಆಗಿರಬಹುದು. ತುಂಬಾ ಛಳಿ ಇದ್ದಾಗ ಬೀಸೋ ಗಾಳಿ ಇಂದ ಹೇಗೆ ತೊಂದರೆ ಇದೆಯೋ ಹಾಗೇ ತುಂಬಾ ಬಿಸಿ ಇದ್ದಾಗ ಬೀಸೋ ಗಾಳಿಯಿಂದ್ಲೂ ತೊಂದರೇನೇ. ನೀವು ಎಲ್ಲೇ ಇರಿ ಹೇಗೇ ಇರಿ, ನಿಮ್ಮನ್ನ ನೀವು ಗಾಳಿಯಿಂದ ರಕ್ಷಣೆ ಮಾಡಿಕೊಳ್ಳಿ, ಅಷ್ಟೇ ಸಾಕು ಮಿಕ್ಕಿದ್ದೆಲ್ಲ ತನ್ನಷ್ಟಕ್ಕೆ ತಾನೇ ಸರಿಹೋಗುತ್ತೆ. ಯಾವುದೇ ಕೆಟ್ಟಗಾಳಿ-ಸುಳಿಗಾಳೀ ಸಹವಾಸ ಮಾಡ್ದೇ ನೀವು ಸದಾ ಒಳ್ಳೇ ವಾತಾವರಣದಲ್ಲೇ ಇರಬೇಕು ಅನ್ನೋದು ನನ್ನ ಆಶಯ.

Tuesday, August 28, 2007

ಪರಿಮಿತ ಮನಸ್ಸು ಅಪರಿಮಿತ ಜೀವಸಂಕುಲ

ಜೀವ ಸಂಕುಲ ಅನ್ನೋದು ಬಹಳ ಸ್ವಾರಸ್ಯಕರವಾದದ್ದು ಎಂದು ಅನ್ನಿಸಿದ್ದು ಪ್ರತೀ ದಿನ ಆಫೀಸಿನಿಂದ ಬರುವ ದಾರಿಯಲ್ಲಿ ಕಾಣುವ ಒಂದು ಹಸಿರುಕಟ್ಟಿದ ನೀರು ತುಂಬಿದ ಹೊಂಡವನ್ನು ನೋಡಿದಾಗ. ಮಳೆ ಬಾರದಿದ್ದ ದಿನಗಳಲ್ಲಿ ಅಲ್ಲಿ ಹೆಚ್ಚು ಪಾಚಿ ಬೆಳೆಯದೇ ಅಲ್ಲಲ್ಲಿ ತ್ಯಾಪೆ ಹಾಕಿದವರ ಹಾಗೆ ಬರಿ ನೀರು ಕಾಣಿಸುತ್ತಿತ್ತು, ಕಳೆದ ಒಂದೆರಡು ವಾರಗಳಲ್ಲಿ ಹುಲುಸಾದ ಮಳೆಯಿಂದಾಗಿ ಈಗ ಎಲ್ಲಿ ನೋಡಿದರಲ್ಲಿ ಹಸಿರೇ ಹಸಿರು, ಅಲ್ಲಿ ನೀರೇ ಇಲ್ಲವೇನೋ ಎನ್ನಿಸುವಂತೆ ಅಗಾಧವಾದ ಶಾಂತಿಯನ್ನು ತನ್ನ ಮುಖದಲ್ಲಿ ಪ್ರತಿಫಲಿಸುವ ಸಂತನ ನಿಷ್ಕಲ್ಮಷ ಮುಖದಂತೆ ಒಂದು ರೀತಿಯ ಸ್ತಬ್ದಚಿತ್ರ. ಬರೀ ಕೀಟಗಳನ್ನು ಅಧ್ಯಯನ ಮಾಡಿಯೇ ಎಷ್ಟೋ ಜನುಮಗಳನ್ನು ಕಳೆಯಬಹುದು, ಪ್ರಪಂಚದಾದ್ಯಂತ ಇರುವ ಇನ್ನೂ ಹೆಸರಿಡದ ಕೀಟಗಳ ಸಂತಾನವನ್ನು ಅವುಗಳ ಚಲನವಲನವನ್ನು ಶೋಧಿಸಿಕೊಂಡು ಹೊರಟರೆ ಕೀಟಗಳ ಸಾಮಾಜಿಕ ಬದುಕಿನ ಬಗ್ಗೆ ಏನೇನೆಲ್ಲವನ್ನು ಕಂಡುಹಿಡಿಯಬಹುದು. ಸ್ಥಿರ ಸಸ್ಯಗಳು, ನಡೆದಾಡುವ ಸಸ್ಯಗಳು, ಸಸ್ಯಗಳಂತಿರುವ ಕೀಟಗಳು, ಕೀಟದ ಹಾಗಿರುವ ಕೀಟಗಳನ್ನು ಭಕ್ಷಿಸುವ ಸಸ್ಯಗಳು ಇನ್ನೂ ಏನೇನೆಲ್ಲವನ್ನು ಅಗಾಧವಾದ ಬ್ರಹ್ಮಾಂಡ ತನ್ನ ಒಡಲಲ್ಲಿ ತುಂಬಿಕೊಂಡಿದೆ ಎಂದು ಒಮ್ಮೆ ಸೋಜಿಗವಾಯಿತು.

ಒಂದು ವೇಳೆ ಈ ಪ್ರಪಂಚದಲ್ಲಿರುವ ಅಣು ಬಾಂಬುಗಳು, ರಸಾಯನಿಕ ಬಾಂಬುಗಳು ಮತ್ತಿತರ ಆಯುಧ-ಸ್ಫೋಟಕಗಳೆಲ್ಲವನ್ನೂ ಉರಿಸಿ-ಸಿಡಿಸಿದರೆ ಏನಾಗಬಹುದು ಎಂಬ ಯೋಚನೆ ಬಂತು. ಈ ಭೂಮಿಯ ಮೇಲ್ಮೈ, ಒಳಗೆ, ನೀರಿನೊಳಗೆ ಅದೆಷ್ಟೋ ಶಾಖ ಉತ್ಪನ್ನವಾದರೂ, ಇಡೀ ಭೂಮಂಡಲದಲ್ಲಿನ ನೀರು ಕೊತಕೊತನೆ ಕುದ್ದು ಆವಿಯಾದರೂ ಅಥವಾ ಅತಿಶೀತದಲ್ಲಿ ಮಂಜುಗಡ್ಡೆಯಾಗಿ ಪರಿವರ್ತನೆಗೊಂಡು ನೂರು ವರ್ಷ ಸೂರ್ಯನ ಕಿರಣಗಳು ಕಾರ್ಮೋಡವನ್ನು ದಾಟಿ ಭೂಮಿಯನ್ನು ತಲುಪದೇ ಇದ್ದರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವುದಾದರೊಂದಿಷ್ಟು ಜೀವ ಜಂತುಗಳು ಬದುಕೇ ಇರುತ್ತವೆ ಎನ್ನುವುದು ನನ್ನ ನಂಬಿಕೆಯಾಗಿ ಹೋಗಿದೆ. ಜೀವರಾಶಿಗಳಲ್ಲಿ ಮಾನವ ಅತಿಪ್ರಭಲ, ಬುದ್ಧಿಜೀವಿ ಎಂದೇನೇನೆಲ್ಲ ಖ್ಯಾತಿಯನ್ನು ಪಡೆದುಕೊಂಡಿದ್ದರೂ, ಅದೇ ತಾನೆ ಹುಟ್ಟಿದ ಮೀನಿನ ಮರಿಯಿಂದ ಹಿಡಿದು, ಮರ್ಕಟ-ಮಾರ್ಜಾಲ ಸಂತಾನಗಳಿಗೆ ತುಲನೆ ಮಾಡಿದಲ್ಲಿ ಮಾನವ ಶಿಶು ಎಷ್ಟೊಂದು ದುರ್ಬಲವಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂದಿಲ್ಲದ ಜಾಗೆಯಲ್ಲಿ ನಾಳೆ ಹುಟ್ಟಿ ಅಂದೇ ಸತ್ತು ಜೀರ್ಣಗೊಳ್ಳುವ ನಾಯಿಕೊಡೆಗಳಿಂದ ಹಿಡಿದು, ಆಕಳಿನ ಸಗಣಿಯಲ್ಲೇ ಹುಟ್ಟಿಬೆಳೆದು ವಿಜೃಂಬಿಸುವ ಗೆದ್ದಲು ಹುಳಗಳಿಂದ ಹಿಡಿದು, ಶೀತಕಗಳಲ್ಲೂ ಸಂತಾನ ವರ್ಧಿಸುವ ಜಿರಲೆಗಳನ್ನು ನೋಡಿ ಸೋಜಿಗಗೊಂಡಿದ್ದೇನೆ. ಇಂತಹ ವಿಭಿನ್ನ ಪ್ರಾಣಿ-ಪಕ್ಷಿ ಕಶೇರುಕ-ಅಕಶೇರುಕ ಸಂತಾನಗಳ ನಡುವೆ ಅದೆಂತಹ ಸಂಭಾಷಣೆ ನಡೆದೀತು ಎಂದು ಯೋಚಿಸತೊಡಗುತ್ತೇನೆ. ಸಮುದ್ರ ತೀರದಲ್ಲಿ ನಡೆದಾಡುವವರಿಗೆ ದಿಢೀರನೆ ಸುನಾಮಿ ಅಲೆಗಳು ಕಾಣಿಸಿಕೊಂಡ ಹಾಗೆ ಬಚ್ಚಲು ಮೋರಿಯಲ್ಲಿ ಆಹಾರವನ್ನು ಹೊಂಚುತ್ತಿರುವ ಇರುವೆಗೆ ಪಕ್ಕನೆ ತನ್ನ ಮೇಲೆ ಬಿದ್ದ ನೀರು ಅದರದ್ದೇ ಆದ ಲೋಕದ ಒಂದು ಸುನಾಮಿಯ ಅನುಭವಕ್ಕೆ ಸಮನಾಗುವುದೇ ಎಂದು ತೂಗತೊಡಗುತ್ತೇನೆ.

ತಾನು ಸಾಕಿಯಾಗಲೀ, ಸಲಹಿಯಾಗಲೀ, ಬೇಟೆಯಾಡಿಯಾಗಲೀ ಉಳಿದ ಜೀವಜಂತುಗಳನ್ನು ಕೊಂದು ಬದುಕುವ ಹಕ್ಕನ್ನು ಯಾರು ಯಾರಿಗೆ ಕೊಟ್ಟರು? ಆಹಾರ ಸರಪಳಿಯ ನ್ಯಾಯದಲ್ಲಿ ಯಾರು ಯಾರನ್ನು ಬೇಕಾದರೂ ಭಕ್ಷಿಸಬಹುದಾಗಿದ್ದರೆ ಮಾನವ ಜನಾಂಗಕ್ಕೆ ಪ್ರಾಣಿಗಳಿಂದಾಗುವ ಅಪಾಯಗಳನ್ನು ವಿಶೇಷವಾಗಿ ನೋಡಬೇಕಿತ್ತೇಕೆ? ನಾವು ಯಾವ ಪ್ರಾಣಿಯ ಸಂತತಿಯನ್ನಾದರೂ ಕೊಲ್ಲಬಹುದು, ಆದರೆ ಮನುಷ್ಯನ ಸಂತತಿಗೆ ಇನ್ಯಾವುದೇ ಪ್ರಾಣಿ ಅಪಾಯ ತಂದೊಡ್ಡಿದ್ದೇ ಆದಲ್ಲಿ ಅದನ್ನು ಆಕ್ರಮಣ-ಅತಿಕ್ರಮಣ ಎಂಬ ಹಣೆಪಟ್ಟಿಯನ್ನಿಟ್ಟೇಕೆ ನೋಡುತ್ತೇವೆ?

ಪ್ರತಿಯೊಂದರಲ್ಲೂ ಜೀವವಿರುತ್ತದೆ ನೋಡುವ ಕಣ್ಣುಗಳಿದ್ದರೆ - ನಾವು ನಮ್ಮೊಳಗಿನ ಪ್ರಪಂಚದಲ್ಲೇ ಹೂತು ಹೋಗುವುದರ ಬದಲು ನಮ್ಮ ನೆರೆಹೊರಯನ್ನು ವೀಕ್ಷಿಸಿದಲ್ಲಿ ನಿಸರ್ಗದ ಒಂದು ಚಕ್ರ ಉರುಳತಲೇ ಇರುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಭುವಿಯನ್ನು ಬೆಳಗಿ ಹುಣ್ಣಿಮೆ ಚಂದ್ರ ಬರುತ್ತಾನೆ, ಒಂದು ದಿನವೂ ತಪ್ಪಿಸದೇ ಸೂರ್ಯಬರುತ್ತಾನೆ. ಈ ಸೂರ್ಯನ ಕಿರಣಗಳು ದ್ಯುತಿಸಂಶ್ಲೇಷಣೆಗೆ ಇಂಬುಕೊಡುತ್ತವೆ. ಎಂತಹ ಛಳಿ-ಮಳೆ-ಗಾಳಿಯಲ್ಲೂ ಗಿಡಮರಗಳು ಬದುಕಿ ಬಾಳುವುದೂ ಅಲ್ಲದೇ ಬುಡದಿಂದ ಹೀರಿ-ಗ್ರಹಿಸಿದ್ದನ್ನು ತಲೆಯವರೆಗೆ ಏರಿಸುವ ಯಂತ್ರರಹಿತ ತಂತ್ರವನ್ನು ತಮ್ಮೊಳಗಿಟ್ಟುಕೊಂಡಿವೆ. ಯಾರೋ ಉದುರಿಸಿ ಹಾಕಿದರೆಂದು ತಾವು ಕಟ್ಟಿದ ಜೇನುಗೂಡನ್ನು ಸಂರಕ್ಷಿಸಲು ಹೋಗಿ ಜೇನುನೊಣಗಳು ಕುಟುಕಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ, ಅಗಾಧವಾದ ಜೇನು ಹುಳಗಳ ಮಹಾಯಾಗದಲ್ಲಿ ಒಂದೇ ಒಂದು ರಾಣಿ ಜೇನು ಎಲ್ಲ ಕಾರ್ಯಗಳನ್ನೂ ನಿರ್ವಹಿಸಿ ತನ್ನ ದೊಡ್ಡತನವನ್ನು ಮೆರೆಯುತ್ತದೆ. ಈ ಕೀಟ-ಪಕ್ಷಿ-ಸಸ್ಯಗಳ ಇನ್‌ಸ್ಟಿಂಕ್ಟ್ ಏನು? ಅವುಗಳು ನಮ್ಮಂತಹ ನೀಚರ ನಡುವೆ ಬದುಕುವುದಾದರೂ ಹೇಗೆ ಎಂದೆನಿಸೋಲ್ಲವೇ?

ಯಾವುದೇ ವಾತಾವರಣದಲ್ಲಿಯೂ ಕಾರಿನ ವಿಂಡ್‌ಶೀಲ್ಡ್‌ಗೆ ಬಡಿದು ಅನೇಕ ಹುಳ-ಜೀವ-ಜಂತುಗಳ ಜೀವ ಹಾರಿ ಹೋಗುತ್ತದೆ. ಹೀಗೆ ಜೀವ ಇರುವವುಗಳಲ್ಲಿ ಒಂದು ಲೌಕಿಕ ಆತ್ಮವೆನ್ನುವುದು ಇರುವುದೇ ಹೌದಾದರೆ, ಆತ್ಮಕ್ಕೆ ಹಾಗೂ ಶರೀರಕ್ಕೆ ಸಂಬಂಧವೇ ಇಲ್ಲದೇ ಹೋದರೆ ಇರುವೆಯ ಆತ್ಮಕ್ಕೂ ಮಾನವನ ಆತ್ಮಕ್ಕೂ ವ್ಯತ್ಯಾಸವೇನು ಉಳಿಯುತ್ತದೆ ಎನ್ನುವುದು ಈ ಕ್ಷಣದ ಪ್ರಶ್ನೆ ಅಷ್ಟೇ.

ಹಸಿರುಕಟ್ಟಿದ ಪಾಚಿಯ ನೀರಿನ ಹೊಂಡ ಅಥವಾ ಕೊಳ ತನ್ನದೇ ಒಂದು ಸ್ಟೇಟ್‌ಮೆಂಟನ್ನು ಪ್ರಪಂಚಕ್ಕೆ ಪ್ರಚುರಪಡಿಸುತ್ತದೆ. ಪಾಚಿಯ ಕೆಳಗೆ ಮೇಲೆ ಹಾಗೂ ನಡುವೆ ನಡೆಯುತ್ತಿರುವ ಬೇಕಾದಷ್ಟು ಸಾಧನೆಗಳನ್ನು ನಾವು ಗಮನಿಸೋದೇ ಇಲ್ಲ. ನಮಗೆಲ್ಲ ನಮ್ಮ ನಮ್ಮ ಪ್ರಪಂಚವೇ ದೊಡ್ಡದು, ಅದರ ಸುತ್ತಮುತ್ತಲೇ ಎಲ್ಲವೂ ಸುತ್ತೋದು ಎಂದು ಪಿಚ್ಚೆನಿಸುತ್ತದೆ. ಪಾಚಿಯನ್ನು ಫೋಟೋ ತೆಗೆಯೋಣವಾ ಎಂದು ಒಮ್ಮೆ ಕ್ಯಾಮೆರಾಕ್ಕೆ ಕೈ ಚಾಚುತ್ತದೆ, ಎಲ್ಲವನ್ನೂ ಫೋಟೋ ಹೊಡೆದೂ ಹೊಡೆದೂ ನನ್ನ ಸಂಗ್ರಹಿಸಬೇಕು ಎನ್ನುವ ಸ್ವಾರ್ಥವನ್ನು ಮೊಟ್ಟಮೊದಲ ಸಾರಿ ಗೆದ್ದೆನೆಂಬ ಹರ್ಷವನ್ನು ಕಣ್ಣುಗಳು ಪ್ರತಿಬಿಂಬಿಸ ತೊಡಗುತ್ತವೆ.

Sunday, August 26, 2007

ಅಲೆಗಳು ಮತ್ತು ಹಾಸಿಗೆಗಿಂತ ಹೊರಗೆ ಚಾಚುವ ಕಾಲು

ಮಹಾಸಾಗರವನ್ನ ಅಷ್ಟೊಂದು ಹತ್ತಿರದಿಂದ ನೋಡದೇ ಅಥವಾ ಅನುಭವಿಸದೇ ವರ್ಷದ ಮೇಲೆ ಆಗಿ ಹೋಗಿತ್ತು. ನಿನ್ನೆ ಅಟ್ಲಾಂಟಿಕ್ ಮಹಾಸಾಗರದ ಹತ್ತಿರ ಹೋದಂತೆಲ್ಲ ಸೃಷ್ಟಿಯ ಅದಮ್ಯ ಶಕ್ತಿಯೆಲ್ಲಾ ಮಹಾಸಮುದ್ರದ ರೂಪದಲ್ಲಿ ನೆಲೆ ನಿಂತಿರುವಂತನ್ನಿಸಿತು. ಬೆಲ್‌ಮಾರ್ ತೀರಕ್ಕೆ ಇನ್ನೆಂದೂ ಹೋಗೋದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡಂದಾಗಿನಿಂದ ನಾವು ಹೋಗೋದು ಸ್ಯಾಂಡಿ ಹುಕ್ ಇಲ್ಲಾ ಅಟ್ಲಾಂಟಿಕ್ ಸಿಟಿ ತೀರಗಳಿಗೆ ಮಾತ್ರ. ಹಾಗೇ ನಿನ್ನೆ ಮಹಾಸಾಗರದ ಸಹವಾಸವೂ ಆಯ್ತು, ಜೊತೆಯಲ್ಲಿ ಕೈಲಿದ್ದ ದುಡ್ಡೂ (ಗ್ಯಾಂಬಲಿಂಗ್‌ನಲ್ಲಿ) ಎನ್ನುವ ಅನುಭವಕ್ಕೆ ಮತ್ತೆ ಇಂಬುಕೊಟ್ಟಿದ್ದು ಬಹಳ ತಿಂಗಳುಗಳ ನಂತರ ನಮಗೆ ನಾವೇ ಕಂಡುಕೊಂಡ ಒಂದು ವೆಕೇಷನ್ ಕ್ಷಣವಷ್ಟೇ.

ಅದ್ಯಾವುದೋ ಪುಸ್ತಕಗಳನ್ನು ಓದಿ ಬಡವ-ಬಲ್ಲಿದ, ಎಕಾನಮಿ ಮುಂತಾದವುಗಳನ್ನು ತಲೆಯಲ್ಲಿಟ್ಟು ಬೇಯಿಸುತ್ತಿದ್ದ ನನಗೆ ಮಹಾಸಾಗರದ ಸ್ವರೂಪವೂ ಭಿನ್ನವಾಗೇನೂ ಕಾಣಿಸಲಿಲ್ಲ. ದಡದಿಂದ ನೀರ ಕಡೆಗೆ ನಡೆದು ಮೊಟ್ಟ ಮೊದಲು ನೀರು ಕಾಲಿಗೆ ಸೋಕಿದಾಗ ಎಂಥಾ ಬಿಸಿಲಿನಲ್ಲೂ ಮೊದಲು ಛಳಿಯ ಅನುಭವವಾಗಿ ಕೆಲವೇ ಕ್ಷಣಗಳಲ್ಲಿ ನಾವು ಅದಕ್ಕೆ ಹೊಂದಿಕೊಂಡು ಬಿಟ್ಟೆವು. ಇನ್ನೊಂದು ಹತ್ತು ಹೆಜ್ಜೆ ಮುಂದಕ್ಕೆ ನಡೆದು ಮೊಣಕಾಲು ಮುಳುಗುವಲ್ಲಿಯವರೆಗೆ ಹೋಗಿ ನಿಂತರೆ ಅಲ್ಲಿ ಅಲೆಗಳ ರಭಸಕ್ಕೆ ಕಾಲುಗಳು ನಿಂತಲ್ಲೇ ಮರಳಿನಲ್ಲಿ ಕುಸಿದ ಅನುಭವ, ಅಥವಾ ಸುತ್ತಲಿನ ತೆರೆಗಳ ಹೊಡೆತಕ್ಕೆ ಕಾಲಿನಡಿಯ ನೆಲವೂ ಜಾರುತ್ತಿರುವ ಹಾಗೆ. ಆದರೆ ಸಮುದ್ರದ ಪ್ರತಿಯೊಂದು ಅಲೆಯೂ ಭಿನ್ನವಂತೆ, ಒಂದರ ಹಿಂದೆ ಮತ್ತೊಂದರಂತೆ ಯಾವುದೋ ವ್ರತಧರ್ಮಕ್ಕೆ ಕಟ್ಟುಬಿದ್ದವರ ಹಾಗೆ ಅಲೆಗಳು ಬರುತ್ತಲೇ ಇದ್ದವು. ತಮ್ಮ ಶಕ್ತ್ಯಾನುಸಾರ ಸುತ್ತಲಿನ ಜನರು ಹತ್ತು, ಇಪ್ಪತ್ತು, ಐವತ್ತು ಅಡಿಗಳವರೆಗೂ ನೀರಿನಲ್ಲಿ ಮುಂದಕ್ಕೆ ಹೋಗಿದ್ದರು. ದಡದಿಂದ ಹತ್ತಡಿ ನೀರಿನಲ್ಲಿ ಮೊಳಕಾಲು ಉದ್ದ ಮುಳುಗಿ ನಿಂತವರಿಗೆ ಅವರದ್ದೇ ಆದ ಸವಾಲುಗಳು, ಹಾಗೇ ಐವತ್ತು ಅಡಿ ದೂರದಲ್ಲಿ ಎದೆ ಮಟ್ಟಕ್ಕೆ ನಿಂತಿರುವವರಿಗೆ ಇನ್ಯಾವುದೋ ಸವಾಲು. ಒಟ್ಟಿನಲ್ಲಿ ನೀರನ್ನು ಅನುಭವಿಸುವವರಿಗೆ ಅವರ ಇಚ್ಛೆ ಹಾಗೂ ಶಕ್ತಿಯನ್ನು ಪ್ರತಿಬಿಂಬಿಸಬಲ್ಲ ಸ್ವರೂಪ.

ಒಮ್ಮೆ ಅನಿಸಿತು - ಮೊಳಕಾಲು ಉದ್ದದ ನೀರಿನಲ್ಲಿ ನಿಂತವರದ್ದೇನು, ಅಂತಹ ಕಷ್ಟವೇನಿದು ಎಂದು. ಆದರೆ ನಾನೇ ಹೋಗಿ ಅಲ್ಲಿ ನಿಂತ ಮೇಲೆ ಅಲ್ಲಿನ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟವಾಗಲಿಲ್ಲ. ಅಭಿಮುಖವಾಗಿ ಬರುವ ಅಲೆ ದಡವನ್ನು ಮುಟ್ಟುತ್ತಿರುವ ಹಾಗೆ ತನ್ನ ಉಬ್ಬು-ತಗ್ಗುಗಳನ್ನು ಕಳೆದುಕೊಂಡು, ಚಪ್ಪಟೆಯಾಗುವುದರ ಜೊತೆಗೆ ಸಾಕಷ್ಟು ನೊರೆಯನ್ನು, ಅದರ ಜೊತೆಯಲ್ಲಿ ಮರಳಿನ ಕಣಗಳನ್ನೂ ಎತ್ತಿಕೊಂಡು ಬರುತ್ತಿತ್ತು. ಹಾಗೆ ಬಂದ ಒಂದೊಂದು ಅಲೆಯೂ ಅದ್ಯಾವುದೋ ಸಂಕಲ್ಪ ತೊಟ್ಟವರಂತೆ ನಿಂತ ನಮ್ಮನ್ನು ದಡದ ಕಡೆಗೆ ತಳ್ಳುವುದೇ ಕಾಯಕವೆಂದುಕೊಂಡಂತಿತ್ತು. ಅಭಿಮುಖವಾಗಿ ಬಂದ ಅಲೆ ದಡದ ಕಡೆಗೆ ಎಷ್ಟು ಜೋರಾಗಿ ನೂಕುತ್ತಿತ್ತೋ ಅಷ್ಟೇ ಜೋರಾಗಿ ದಡಕ್ಕೆ ಬಡಿದು ಮತ್ತೆ ಹಿಂದೆ ಹೋಗುವಾಗಲೂ ಅದೇ ರೀತಿಯ ಒತ್ತಡವನ್ನು ಕಾಲಿನ ಮೇಲೆ ಹೇರುತ್ತಿತ್ತು. ಪಾದಗಳ ಕೆಳಗಿನ ಮರಳು ಕುಸಿಯೋದರ ಜೊತೆಗೆ ದೇಹದ ಸಮತೋಲನವೂ ತಪ್ಪಿ ಎಂಥವರೂ ಬೀಳುತ್ತಿದ್ದುದರಲ್ಲಿ ಅಚ್ಚರಿಯೇನೂ ಇರಲಿಲ್ಲ.

ದಡದಿಂದ ಮೂವತ್ತು ನಲವತ್ತು ಅಡಿ ದೂರದಲ್ಲಿರುವವರನ್ನು ನೋಡಿ ನಾನೂ ಅಲ್ಲಿಗೇಕೆ ಹೋಗಬಾರದೇಕೆನ್ನಿಸಿತಾದ್ದರಿಂದ ನಿಧಾನವಾಗಿ ಮುಂದೆ ಹೆಜ್ಜೆ ಇರಿಸತೊಡಗಿದೆ. ನೊರೆ ತುಂಬಿದ ಅಲೆಗಳನ್ನು ತಪ್ಪಿಸಿಕೊಳ್ಳುವುದು ದೊಡ್ಡ ಕಷ್ಟದ ಕೆಲಸವಾಗಿತ್ತು. ಒಮ್ಮೆ ನೊರೆಯ ವಲಯದಿಂದ ಮುಂದೆ ಹೋಗಿ ಬರೀ ನೀರಿನ ಅಲೆಗಳನ್ನು ಅನುಭವಿಸತೊಡಗಿದೆ. ಇವು ಭಾರೀ ಅಲೆಗಳು, ಅಲೆಗಳು ಸುರುಳಿಯಾಕಾರದಲ್ಲಿ ಬಂದು ಮುರಿಯುತ್ತಿದ್ದ (curl, break) ಸನ್ನಿವೇಶ ಮೋಹಕವಾಗಿತ್ತು. ಎದೆ ಮಟ್ಟದ ನೀರಿನಲ್ಲಿ ದೇಹ ಹಗುರವಾದಂತೆನಿಸಿ, ಬಂದ ಪ್ರತಿಯೊಂದು ಅಲೆಯೂ ಅದರ ಚಲನೆಗನುಗುಣವಾಗಿ ಸಾಕಷ್ಟು ಮೇಲಕ್ಕೊಯ್ದು ಕೆಳಕೆ ತರುತ್ತಿತ್ತು. ಅಲೆಯ ಮುರಿತಕ್ಕೆ ಸಿಕ್ಕು ಅದರ ಜೊತೆಯಲ್ಲಿಯೇ ದಡದ ಕಡೆಗೆ ಹೋಗುವುದು ಒಂದು ರೀತಿ, ಅಲೆಯ ಒಳಗೆ ತಲೆಯನ್ನು ತೂರಿ ಈಜಿ ಮುಂದೆ ಹೋಗುವುದು ಮತ್ತೊಂದು ರೀತಿ, ಅಲೆಯು ಮುಂದೆ ಹೋದ ಹಾಗೆಲ್ಲ ಅದರ ಎತ್ತರಕ್ಕೆ ಎತ್ತಿ ಇಳಿದು ಅಲ್ಲೇ ಇರುವುದು ಮತ್ತೊಂದು ರೀತಿ. ಮಹಾಸಾಗರದ ಆಳಕ್ಕೆ ತಕ್ಕಂತೆ ಹಾಗೂ ಪ್ರತಿಯೊಂದು ಅಲೆಯ ಏರಿಳಿತಕ್ಕೆ ಸಿಕ್ಕಂತೆ ಹಲವು ಅನುಭವಗಳನ್ನು ಎಂತಹವರೂ ಬೇಕಾದರೂ ಪಡೆದುಕೊಳ್ಳಬಹುದಾದದ್ದು ಸಹಜ ಹಾಗೂ ಮುಕ್ತವಾದದ್ದು. ಈ ಅನುಭವಗಳು ಇನ್ನೂ ನಿಸರ್ಗದತ್ತ ಕೊಡುಗೆಗಳಾಗಿ ಎಂದಿಗೂ ಹಾಗೇ ಇರಲಿ.

ದಡದಲ್ಲೋ ಸಾಕಷ್ಟು ಜನ - ಬೇಕಾದಷ್ಟು ಭಾವ ಭಂಗಿಯಲ್ಲಿ ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿದ್ದಾರೆ. ಎಲ್ಲರೂ ಸಮುದ್ರರಾಜನ ಕಡೆಗೆ ಮುಖಮಾಡಿಕೊಂಡು ಯಾವುದೋ ತಪಸ್ಸಿಗೆ ಕುಳಿತ ಹಾಗೆ. ಪ್ರತಿಯೊಬ್ಬರೂ ತಮ್ಮ ಶಕ್ತಿ, ಇಚ್ಛೆ, ಅಲೋಚನೆಗಳಿಗನುಸಾರವಾಗಿ ಮರಳಿನ ಮೇಲೆ ಹಾಸಲು ಟವೆಲ್ಲಿನಿಂದ ಹಿಡಿದು, ಪ್ಲಾಸ್ಟಿಕ್ ಶೀಟ್, ಕುಳಿತು ಕೊಳ್ಳಲು ಖುರ್ಚಿ, ತಿಂದು ಕುಡಿಯಲು ಬೇಕಾದವುಗಳು, ಮುಖ ಮೈ ಕೈಗೆ ಮೆತ್ತಿಕೊಳ್ಳುವ ಸನ್‌ಸ್ಕ್ರೀನ್ ಕ್ರೀಮ್ ಮುಂತಾದವುಗಳನ್ನು ತಂದಿದ್ದನ್ನು ಸಾಮಾನ್ಯವಾಗಿ ನೋಡಬಹುದಿತ್ತು. ಅಲ್ಲಲ್ಲಿ ಟವೆಲ್ಲನ್ನು ಹಾಸಿಕೊಂಡು ಮಲಗಿರುವವರ ಕಾಲುಗಳು ಟವೆಲ್ಲಿಂದ ಬೇಕಾದಷ್ಟು ಹೊರಗೆ ಚಾಚಿಕೊಂಡಿದ್ದವು. ಹಾಸಿಗೆಯಿದ್ದಷ್ಟೇ ಕಾಲು ಚಾಚು - ಎನ್ನುವುದು ನಮ್ಮೂರಿನ ನುಡಿಕಟ್ಟಾದ್ದರಿಂದ ಅದು ಇಲ್ಲಿ ಅನ್ವಯಿಸುವುದಿಲ್ಲವೋ ಏನೋ? ಎಲ್ಲ ದೇಶಗಳ ಹಾಗೆ ಅಮೇರಿಕವೂ ಸಾಲದ ಮೇಲೇ ಇದೆ, ಇಲ್ಲಿನ ಕಾರ್ಪೋರೇಷನ್ನುಗಳೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯೆಲ್ಲವೂ ಸಾಲದ ಮೇಲೇ ನಿಂತಿದೆ, ಇಂತಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂದರೆ ಹಾಸ್ಯಾಸ್ಪದವೆನಿಸುವುದಿಲ್ಲವೇ?

’ನಾವು ಯಾವತ್ತೂ ಸಾಲವನ್ನು ಮಾಡಬಾರದು...’ ಎಂದು ದುಡಿಮೆಯ ದುಡ್ಡನ್ನೇ ನಂಬಿಕೊಂಡ ಗವರ್ನಮೆಂಟ್ ನೌಕರ ನನ್ನ ಅಜ್ಜ, ಕೊನೆಯವರೆಗೂ ಸಂಸಾರವನ್ನು ನಡೆಸುವುದಕ್ಕೆ ಬಹಳಷ್ಟು ಶ್ರಮಿಸಿದ್ದರು, ಕಷ್ಟದ ಸಮಯದಲ್ಲಿ ಮನೆಯಲ್ಲಿದ್ದ ಸಾಮಾನುಗಳನ್ನು, ಆಭರಣಗಳನ್ನು ಮಾರಿಕೊಂಡು ಬದುಕಿದ್ದರೇ ವಿನಾ ಒಂದು ದಮಡಿಯನ್ನೂ ಸಾಲವನ್ನಾಗಿ ತಂದವರಲ್ಲ. ಆದರೆ ಆ ಪರಂಪರೆ ಅವರಷ್ಟರಮಟ್ಟಿಗೆ ಮಾತ್ರ ನಿಂತು ಹೋಯಿತು, ನಾನಾಗಲಿ, ನನ್ನ ಅಪ್ಪನಾಗಲೀ, ಸಹೋದರರಾಗಲೀ ಅಜ್ಜನ ಮನಸ್ಥಿತಿಗೆ ತದ್ವಿರುದ್ದವಾಗಿ ಸಾಲದಲ್ಲೇ ಬೆಳೆದು ಬಂದವರು. ಇವರೆಲ್ಲರ ಯಾದಿಯಲ್ಲಿ ಹೆಚ್ಚಿನ ಸಾಲದ ಬಾಬ್ತು ನನ್ನ ತಲೆಯ ಮೇಲೇ ಇರೋದು ಮತ್ತೊಂದು ವೈಶಿಷ್ಟ್ಯ. ಅರ್ಥಶಾಸ್ತ್ರದ ಬಗ್ಗೆ, ಪ್ರಪಂಚದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡಷ್ಟೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹಂತಹಂತವಾಗಿ ಮೇಲೇರಿದಂತೆಲ್ಲ ನನ್ನ ತಲೆಯ ಮೇಲಿನ ಸಾಲದ ಮೊತ್ತ ಮೇಲೇರುತ್ತಿದೆಯೇ ವಿನಾ ಕಡಿಮೆಯಾದದ್ದೇ ಇಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದಾದರೂ ಹೇಗೆ? ಅಕಸ್ಮಾತ್ ಕಾಲನ್ನು ಹಾಸಿಗೆಗಿಂತ ಮುಂದೆ ಚಾಚಿದರೆ ಏನಾದೀತು? ನಮ್ಮ ಕಾಲುಗಳು, ಅವುಗಳ ಉದ್ದ, ಚಾಚಿಕೊಳ್ಳಬೇಕೆನ್ನುವ ನಿಲುವು ನಮ್ಮ ಸ್ವಂತಿಕೆ ಹಾಗೂ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುವುದಾದರೆ ’ಇಷ್ಟಕ್ಕೇ ಇರಲಿ!’ ಎಂದು ಕಾನೂನನ್ನು ಮಾಡಿದವರಾರು? ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನಸ್ಥಿತಿಯಿಂದ ಕಾಲು ಇದ್ದಷ್ಟು ಮನಸ್ಸು ಬಯಸಿದಷ್ಟು ಹಾಸಿಗೆಯನ್ನು ಚಾಚುವ ಸಮಯಬರೋದು ಯಾವಾಗ? ಅಂತಹ ಸಮಯ ಬಂದರೂ ಆ ರೀತಿ ಕಳೆಯಬಹುದಾದ ಒಂದೆರಡು ಕ್ಷಣಗಳಿಗೋಸ್ಕರ ಜೀವಮಾನವನ್ನೇಕೆ ಮುಡುಪಾಗಿಡಬೇಕು?

ಈ ಪ್ರಶ್ನೆಗಳ ಯಾದಿಯೇ ಇಷ್ಟು - ಅಲೆಗಳ ಥರ, ಒಂದಾದ ಮೇಲೊಂದು ಬಂದು ಅಪ್ಪಳಿಸುತ್ತಲೇ ಇರುತ್ತವೆ, ನೀವು ಯಾವ ನೀರಿನಲ್ಲಿ ಎಷ್ಟೇ ಆಳದಲ್ಲಿ ನಿಂತಿದ್ದರೂ ಈ ಅಲೆಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಸ್ಥಿತಿಗತಿಯಲ್ಲಿಯೂ ಸಾಲದ ಹೊರೆ, ಬರುವ ಸಂಬಳಕ್ಕಾಗಿ ಬಕಪಕ್ಷಿಯಂತೆ ಕಾದುಕೊಂಡಿರುವುದು ಒಂದು ಮಾನಸಿಕ ನೆಲೆಗಟ್ಟು ಅಷ್ಟೇ, ಅದನ್ನು ಮೀರಿ ಮುಂದೆ ಹೋಗುವುದಿದೆಯಲ್ಲಾ ಅದು ಸ್ವಾತ್ಯಂತ್ರ್ಯಕ್ಕಿಂತಲೂ ಹೆಚ್ಚಿನದು. ಸಾಲದ ಜೊತೆಗೆ ಬರುವ ಸ್ವಾತಂತ್ರ್ಯ ಒಂದು ರೀತಿ ಪ್ರಿವಿಲೇಜಿನ ಹಾಗೆ, ಅದು ನಿಜವಾದ ಮುಕ್ತಿಯಲ್ಲ, ಅದೇ ಯಾವುದೇ ಹೊರೆಯಿಲ್ಲದ ಬದುಕು, ಸಾಲವಿಲ್ಲದೇ ಇನ್ನೊಬ್ಬರಿಗೆ ಕೊಡಬೇಕು ಎನ್ನುವ ಕಾಟವಿಲ್ಲದೇ ಇರುವ ಬದುಕು ನಿಜವಾಗಿಯೂ ಸ್ವತಂತ್ರವಾದದ್ದು. ಈ ನಿಜ, ನನ್ನ ಅಜ್ಜ, ಮುತ್ತಜ್ಜರಿಗೆ ಅದ್ಯಾವಾಗಲೋ ಹೊಳೆದು ಹೋಗಿದ್ದರೆ, ನಂತರದ ಸಂತತಿಯ ಪ್ರತೀಕವಾಗಿರುವ ನಾವುಗಳು ಇನ್ನೂ ಸಾಲದ ಕೂಪದಲ್ಲೇ ಬಿದ್ದು ತೊಳಲಾಡುತ್ತಿರುವುದೇಕೋ?

Friday, August 24, 2007

ವರ್ಷಾವಧಿ ಶ್ರಾವಣ...ಬೋರ್ ಹೊಡೆಸೋ ಮಾಧ್ಯಮ

ಹಾಳಾದ್ದು, ಈ ವಾರ ಏನ್ ಬರೆದ್ರೂ ಅನಿವಾಸಿ ವಿಷಯಗಳೇ ತುಂಬ್‌ಕೊಂಡ್ ಬರ್ತಾ ಇವೆ, ಒಂಥರಾ ಈ ರಸ್ತೆ ಸುರಕ್ಷಾ ಸಪ್ತಾಹ ಇದ್ದ ಹಾಗೆ - ಎಲ್ಲಿ ನೋಡಿದ್ರೂ ಪರಕೀಯತೆ ಪ್ರತಿಬಿಂಬವಾಗದೇ ಇದ್ರೆ ಸಾಕು! ಆ ಕಡೆ ಕರ್ನಾಟಕದಲ್ಲಿ ರಾಜಕೀಯ ಗೊಂದಲಗಳಿವೆ ಬೇಕಾದಷ್ಟು ಆಲೋಚಿಸೋದಕ್ಕೆ, ಕೂತಗೊಂಡ್ ಓದಿದ್ರೆ ಇನ್ನೂ ಮುಗಿಸದೇ ಇರೋ 'ಆವರಣ' ಇದೆ, ಬರೆಯದೇ ಬಿಟ್ಟು ಮಾಡೋದಕ್ಕೆ ಸಾವಿರ ಕೆಲಸಾ ಇದೆ, ಇತ್ತೀಚೆಗಂತೂ ಹುಲುಸಾಗಿ ಬೆಳಿತಾ ಇರೋ ಕನ್ನಡ ಬ್ಲಾಗ್ ಪ್ರಪಂಚಾ ಇದೆ ವಾರಗಟ್ಟಲೇ ಓದೋದಕ್ಕೆ. ಇವೆಲ್ಲಾ ಇದ್ರೂ ಜೋನೀ ಮಳೇ ಹೊಡೆದ ಹಾಗೆ ಅನಿವಾಸಿತನದ ಬಗ್ಗೆ ಬರೆಯಲೇ ಬೇಕೆನ್ನುವ ಹುಮ್ಮಸ್ಸು ಹುಟ್ಟಿ ಬರ್ತಾ ಇದೆ ಮನದೊಳಗೆ. ಗೊತ್ತಲ್ಲಾ, ಶ್ರಾವಣದ ಮಳೆ ಹೊಡ್ತಾ - ಎಲ್ಲಿ ನೋಡಿದ್ರೂ ಗಿಚಿಪಿಚಿ ಮಳೆ, ಕಿಚಿಪಿಚಿ ಕೆಸರು? ಕಾಲು ಬೆರಳಿನ ಸಂದಿಗಳಲ್ಲಿ ಆ ಕೆಸರು ಮೆತ್ತಿಕೊಂಡು ಆಗೋ ಸ್ಲರ್‌ಪೀ ಅನುಭವ? ಪ್ಯಾಂಟಿನ ತುದಿ ಹಸಿಯಾಗೇ ಇರೋದು ಮಳೆಯಲ್ಲಿ ನೆನೆದು? ಏನೂ ಬ್ಯಾಡಪ್ಪಾ - ಬಟ್ಟೆಗಳು ಒಗೆದು ಒಣಗಿ ಹಾಕಿದಾಗ ಅವು ಸರಿಯಾಗಿ ಒಣಗದೇ ಹುಟ್ಟೋ ಕುಮಟು ವಾಸನೆ? ಏನಾದ್ರೂ ನೆನಪಿಗ್ ಬರುತ್ತಾ ಅಥವಾ ಎಲ್ಲವನ್ನೂ ಅಮೇರಿಕನ್ ಮಯಮಾಡಿಕೊಂಡು ಬಿಟ್ಟಿದ್ದೇವಾ?

ಅಟ್ಟದ ಮೇಲಿನಿಂದ ಪ್ಲಾಸ್ಟಿಕ್ ಚಪ್ಪಲಿಗಳನ್ನು ಇಳಿಸ್ತಿದ್ವಿ, ಕೊಡೇ ರಿಪೇರಿ ಮಾಡಿಸಿಕೊಂಡು ಮನೆ ಮಂದಿಗೊಂದರಂತೆ ಶಸ್ತ್ರ ಸಜ್ಜಿತರಾಗ್ತಿದ್ವಿ. ಬಚ್ಚಲುಮನೆ ಒಲೆಯ ಮುಂದೆ ಬೆಳ್ಳಂಬೆಳಗ್ಗೆ ಬೇಕಾದಷ್ಟು ಹೊತ್ತು ಕೂತು ಛಳಿ ಕಾಯಿಸಿಕೊಳ್ತಿದ್ವಿ. ಒಣಗಿದ ಕಟ್ಟಿಗೆಯಾದ್ರೂ ಅದೆಲ್ಲಾದ್ರೂ ನೀರಿನ ಪಸೆ ತಾಗಿ ಹಸಿಯಾಗಿದ್ದಕ್ಕೆ ಉರಿಯದ ಬೆಂಕಿಯನ್ನ ಊದುಗೊಳಪೆಯಿಂದ ಊಸೀ ಊಸೀ ಆ ಬೆಂಕಿಯ ಜ್ವಾಲೆಯ ಜೊತೆಗೆ ಹುಟ್ಟೋ ಹೊಗೆ ಕಣ್ಣಿನಲ್ಲಿ ನೀರು ತರುಸ್ತಿದ್ದದ್ದು? ಏನಾದ್ರೂ ನೆನೆಪಿದೆಯಾ...ಅಥವಾ ಅವೆಲ್ಲಾ ಪ್ರಾಚೀನ ಕಾಲದ ಕಥೆಯಾಗಿ ಹೋದವೋ? ಮಜಾ ಅಂತಂದ್ರೆ, ಹಳೇ ಕೊಡೇ ಕಡ್ಡಿಗೆ ಸಿಕ್ಕಿಸಿ ಸುಟ್ಟು ತಿನ್ನೋ ಹಲಸಿನ ಬೀಜ, ಗೋಡಂಬಿ ಬೀಜಗಳದ್ದು. ವಾವ್, ಏನ್ ರುಚಿ - ಎಂಥಾ ಪ್ರಾಸೆಸ್ಸದು? ಗೋಡಂಬಿ ಬೀಜ ಸುಟ್ಟಾಗ ಸಿಟ್ಟು ಮಾಡಿಕೊಂಡು ಅದರಲ್ಲಿರೋ ಎಣ್ಣೆ ಸುಟ್ಟು ಹೋದ ಹಾಗೆಲ್ಲಾ ಬೆಂಕಿ ಒಂದ್ ರೀತಿ ಗ್ಯಾಸ್ ಬರ್ನರ್‌ನಲ್ಲಿ ಹೊರ ಬರೋ ಜ್ವಾಲೆ ಥರಾ ಹೊರಗೆ ಬರ್ತಿತ್ತು ಯಾವ್ ಯಾವುದೋ ದಿಕ್ಕಿನಲ್ಲಿ ಕೆಲವೊಂದ್ ಸಮಯ ಹೆದರಿಸೋ ಅಷ್ಟರ ಮಟ್ಟಿಗೆ, ಆ ರೀತಿ ಸುಟ್ಟ ಹಸಿ ಗೋಡಂಬಿ ಬೀಜದ ಟೇಸ್ಟು ಇಲ್ಲಿ ಸಿಕ್ಕೋ ಪ್ಲಾಂಟರ್ಸ್ ಡಬ್ಬದಲ್ಲಿರೋ ಹುರಿದ ಹಾಗೂ ಸಂಸ್ಕರಿಸಿದ ಗೋಡಂಬಿ ಬೀಜಗಳಲ್ಲೂ ಇರೋದಿಲ್ಲ, ಅದರ ರುಚಿ ಬಲ್ಲವರೇ ಬಲ್ಲರು. ಇನ್ನೂ ಚುಮು ಚುಮು ಕತ್ತಲು ಇದ್ದ ಹಾಗೆ ಎದ್ದೇಳಿಸೋ ಅಮ್ಮನನ್ನು ಬೈದುಕೊಂಡು ಎಷ್ಟು ಸಾರಿ ಹೊದ್ದುಕೊಂಡು ಮಲಗಿದರೂ ಮುಗಿಯಲಾರದ ಸಿಹಿನಿದ್ರೆ, ಅಡುಗೆ ಮನೆಯಿಂದ ಈಗಾಗಲೇ ತಯಾರಾಗಿದ್ದೇವೆ ಎಂದು ಬರ್ತಾ ಇದ್ದ ದೋಸೆಯ ಗಮಲು, ಅದರ ಜೊತೆಯಲ್ಲಿ ಕಾಫಿ ಪರಿಮಳ - ಮೊನ್ನೇ ಇನ್ನೂ ಮುಗಿದು ಹೋದ ನಾಗರ ಪಂಚಮಿ ಹಬ್ಬದ ಥರಾವರಿ ಉಂಡೆಗಳು - ತಿನ್ನೋದಕ್ಕೆ ಯಾವತ್ತೂ ಕಮ್ಮೀ ಅಂತಾನೇ ಇರಲಿಲ್ಲ ನೋಡಿ. ಇವತ್ತಿಗೂ ಇಲ್ಲಿ ನಮ್ಮನೇನಲ್ಲಿ ಯಾವತ್ತೂ ಏನೂ ಕಡಿಮೆ ಅಂತ ಏನಿಲ್ಲ, ಆದರೆ ನಮ್ಮನೇ ಡಬ್ಬಗಳನ್ನು ತಡಕಾಡಿದ್ರೆ ಅವುಗಳಲ್ಲಿ ಯಾವ ಉಂಡೆಗಳೂ ಕಾಣೋದಿಲ್ಲ. ಇಡೀ ಮನೆಯಲ್ಲಿರೋ ಎಲ್ಲರಿಗೂ ಸಕ್ಕರೇ ಕಾಯಿಲೆ ಬಂದು ಅದ್ಯಾವುದೋ ಕಣ್ಣ್ ಕಾಣದ ಡಾಕ್ಟರು ಆರ್ಡರು ಮಾಡಿದ ಹಾಗೆ ಈ ಸೀಜನ್ನಿನಲ್ಲಿ ಉಂಡೆಗಳನ್ನು ತಿನ್ನೋದಿರಲಿ ನೋಡೋದಕ್ಕೂ ಸಿಕ್ಕಿಲ್ಲ ನೋಡಿ, ನಮ್ ಹಣೇಬರಾನ. ಇವತ್ತು ವರಮಹಾಲಕ್ಷ್ಮಿ ಪೂಜೆ ಅಂತೆ, ಅದ್ಯಾಕಪ್ಪಾ ನೀನು ಗಂಡುಹುಡುಗ ತಲೆಕೆಡಿಸಿಕೊಳ್ತೀ ಅಂತ ಯೋಚಿಸ್ತೀರೋ? ಅಲ್ಲಾಗಿದ್ರೆ ಅದನ್ನ್ ಮಾಡು, ಇದನ್ನು ಮಾಡು ಅಂತ ಅಕ್ಕ-ತಂಗಿ-ಅಮ್ಮ ಇವರೆಲ್ಲ ತಲೆ ತಿಂದಿರೋರು. ಮಾವಿನ ಎಲೆ ತೋರಣ ಮಾಡಿಕೊಡಬೇಕಿತ್ತು. ಬೆಳಿಗ್ಗೆ ಎದ್ದೋರೇ ಸಾರಿಸೋದಕ್ಕೆ ಸಗಣಿ ಒಟ್ಟು ಮಾಡಿಕೊಡಬೇಕಿತ್ತು. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಕಟ್ಟಿರೋ ಜೋಕಾಲಿ ಬಿಚ್ಚಿ ಹಾಕ್ತೀನಿ ನೋಡು ಅಂತ ಹೆದರ್ಸಿ ಹೆದರ್ಸಿ ಕೆಲಸ ಮಾಡಿಸ್ಕೊಳ್ಳೋರುದ್ದೇನು ಕಾರುಬಾರು ಇರ್ತಿತ್ತು...ಅವೆಲ್ಲಾ ಈಗ ಇತಿಹಾಸ ಆಗ್ತಾ ಇದೆಯಲ್ಲಪ್ಪಾ.

'ಹೋಗ್ ಹೋಗು, ಬಂದ್ ಬಿಟ್ಟಾ ಶುಕ್ರವಾರ...' ಅಂತ ಇಷ್ಟೊತ್ತಿಗೆ ಕೊನೇಪಕ್ಷ ಒಬ್ರರಾದ್ರೂ ಬೈಸಿಕೊಳ್ತಾ ಇದ್ರು ಅಮ್ಮನ ಹತ್ರ ದುಡ್ಡು ಕೇಳೋದಕ್ಕೆ ಹೋಗಿ. ಅದೇನೋ ನಮ್ಮ ಮನೆತನದ ಪದ್ಧತಿಯಾಗಿ ಹೋಗಿದೆ, ನಾನೂ ಅಷ್ಟೇ ಇಲ್ಲಿರೋ ಅಟೋಮ್ಯಾಟಿಕ್ ಬಿಲ್ ಪೇಯರ್‌ನಲ್ಲೂ ಸಹ ಶುಕ್ರವಾರ ಯಾವ ಪೇಮೆಂಟನ್ನೂ ಮಾಡೋದಿಲ್ಲ. ಲಕ್ಷ್ಮೀ ಕಟಾಕ್ಷ ಅಂದ್ರೆ ಸುಮ್ಮನೇನಾ? ಅದೂ ಹೋಗೀ ಹೋಗೀ ಅವಳೇನಾದ್ರೂ ನಮ್ಮನೇ ಪಕ್ಕದಲ್ಲಿರೋ ಯಹೂದಿಗಳ ಮನೆಗೋ ಕ್ರಿಶ್ಚಿಯನ್ನರ ಮನೆಗೋ ಹೋಗಿಬಿಟ್ರೆ? ಅಯ್ಯಪ್ಪಾ, ಸುಮಂಗಲಿ ಹಿಂದೂ ದೇವತೆಯನ್ನ ಹೇಗ್ ಬೇಕ್ ಹಾಗೆ ನಡೆಸಿಕೊಳ್ಳೋಕ್ ಬರುತ್ತೇನ್ರಿ? ನೀವೊಂದು. ನೀವ್ ದೇವ್ರನ್ನ ನಂಬಾಂದ್ರೂ ನಂಬ್ರಿ, ಬಿಟ್ಟಾದ್ರೂ ಬಿಡ್ರಿ...ಕೊನೇ ಪಕ್ಷ ಲಕ್ಷ್ಮೀನಾದ್ರೂ ಒಲಿಸಿಕೊಳ್ರಿ, ಈ ದೇಶ್ದದಲ್ಲಿ ಬಾಳಾ ಮುಖ್ಯಾ ಸ್ವಾಮಿ...ಕೊನೆಗೆ ಲಕ್ಷ್ಮೀ ಗಂಡ ಶ್ರೀಮನ್ ನಾರಾಯಣನ್ನ ಬಿಟ್ರೂ ಪರವಾಗಿಲ್ಲ, ಲಕ್ಷ್ಮೀನ ಏನಾದ್ರೂ ಮಾಡಿ ಉಳಿಸ್ಕೊಳ್ರಿ. ಶುಕ್ರವಾರ ದುಡ್ಡ್ ಕೊಡಬಾರ್ದು ಅಂತ ಕಾನೂನ್ ಇದೆಯಾ? ಹ್ಞೂ, ಅಂತೀನ್ ನಾನು. ಇಲ್ಲಾ ಅಂದ್ರೆ, ನಮ್ ಭಾರತೀಯರು Saturn ಕಾರನ್ನ್ ಯಾಕ್ ತಗೊಳೊಲ್ಲಾ ಹೇಳಿ ನೊಡಾಣಾ? 'ಏನ್ ಕಾರ್ ತಗೊಂಡಿಯೋ?' ಅಂತ ಕೇಳೋ ನಿಮ್ಮ್ ಅಜ್ಜಿಗೆ, 'ಅಜ್ಜೀ, ನನ್ ಕಾರು ಹೆಸ್ರೂ, - ಶನಿ' ಅಂದ್ ನೋಡಿ, ಏನಾಗುತ್ತೇ ಅಂತ ನಿಮಗೇ ಗೊತ್ತಾಗುತ್ತೆ!

'ಏನ್ ಸಾರ್ ನೀವು, ಬರೀ ಹಳೇದನ್ನೇ ಹೇಳೀ ಹೇಳೀ ಕೊರೀತರಲ್ಲಾ?' ಅಂತ ಅನ್ನಬೇಡಿ. ನೀವು ಶ್ರಾವಣದ ಮಳೆಯಲ್ಲಿ ನೆನೀದೇ ಇದ್ರೇನಂತೆ, ಉಂಡೆ ತಿನ್ನದೇ ಇದ್ರೇನಂತೆ? ಉಪಾಕರ್ಮಕ್ಕೆ ಜನಿವಾರ ಬದಲಾಯಿಸ್ದಿದ್ರೇನಂತೆ? ವರಮಹಾಲಕ್ಷ್ಮೀ ವ್ರತಕ್ಕೆ ಅಕ್ಕ-ತಂಗಿಯರಿಗೆ ಸಹಾಯ ಮಾಡದಿದ್ರೇನಂತೆ? ಕೊನೇಪಕ್ಷಾ ನಿಮ್ ಮನಸಿಗೆ ವರ್ಷಾವಧಿ ಶ್ರಾವಣವನ್ನಾದ್ರೂ ಈ ಬೋರ್ ಹೊಡೆಯೋ ಆನ್‌ಲೈನ್ ಮಾಧ್ಯಮದ ಮೂಲಕಾ ನೆನಪಿಸ್ತೀನಾ? ಮತ್ತಿನ್ಯಾಕ್ ತಡಾ, ಆ ಫೋನ್ ಎತ್ತಿಕೊಳ್ಳಿ, ಮಾಡೀ ಒಂದ್ ಕರೇನಾ ಇಂಡಿಯಾಕ್ಕೆ - ನೆನೆಸಿಕೊಳ್ಳೀ ಎಲ್ಲಾ ಅಕ್ಕ-ತಂಗಿ ದೇವತೆಗಳನ್ನ...ಸುಮ್ನೇ, 'ಹೆಂಗಿದೀರಾ...' ಅಂತ ಕೇಳಿ...ನೋಡಿ ಅದ್ರ ಮಜಾನ. ಅವರೇನಾದ್ರೂ ತಮ್ಮ್ ತಮ್ಮ್ ಡಬ್ಬದಲ್ಲಿರೋ ಉಂಡೆಗಳನ್ನ ಕಳಿಸಿದ್ರೆ ನನಗೂ ಒಂದೆರಡನ್ನ ಕಳಿಸೋಕೆ ಮರೀ ಬೇಡಿ ಮತ್ತೆ, ಏನು?

Tuesday, August 21, 2007

ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ

'ಅರೆ! ಏನಪ್ಪಾ ಇದು ಇಷ್ಟು ಬೇಗ ಬಂದೀದೀಯಾ?' ಅನ್ನೋ ಪ್ರಶ್ನೆ ಬೇರೆ ಯಾರನ್ನೂ ಕುರಿತು ಬಂದದ್ದಲ್ಲ, ಈ ಅವಧಿಗೆ ಮುಂಚೆ ಬರಬೇಕಾದ ಛಳಿಗಾಲವನ್ನು ಕುರಿತು. ಇನ್ನೂ ಸೆಪ್ಟೆಂಬರ್ ಬಂದಿಲ್ಲಾ ಆಗ್ಲೇ ಹತ್ತ್‌ಹತ್ರ ಐವತ್ತು ಡಿಗ್ರಿ (ಫ್ಯಾರನ್‌ಹೈಟ್) ವರೆಗೆ ಪಾದರಸ ಇಳಿದು ಹೋಗಿದೆಯೆಲ್ಲಾ ಏನನ್ನೋಣ? ಅದೂ ಮೊನ್ನೆ ದಿನಾ ರಾತ್ರಿ ನಲವತ್ತೊಂದರ ಹತ್ರ ಹೋಗಿ ಬಿಟ್ಟಿತ್ತು. ಬೇಸಿಗೆ ನಂಬಿ ಬದುಕೋನ್ ನಾನು, ಛಳಿಗಾಲ ಬಂತೂ ಅಂತಂದ್ರೆ ಅದೆಷ್ಟು ಜನರಿಗೆ ಕತ್ತಲು, ಕೊರೆಯೋ ಛಳಿ, ಕಿತ್ತು ತಿನ್ನೋ ಬೇಸರ ಹೆದರಿಸೋದೂ ಅಲ್ದೇ ಡಿಪ್ರೆಷ್ಷನ್ ತರುತ್ತೋ ಯಾರಿಗ್ ಗೊತ್ತು?

ಈ ಕಂಟ್ರಿ ಲಿವಿಂಗ್ ಅಂದ್ರೆ ಸುಮ್ನೇ ಬರಲ್ಲ. ನ್ಯೂ ಯಾರ್ಕ್ ಸಿಟಿಗೂ ನಮ್ಮನೇಗೂ ಕೊನೇ ಪಕ್ಷಾ ಆರೇಳ್ ಡಿಗ್ರಿನಾದ್ರೂ ವ್ಯತ್ಯಾಸಾ ಇರುತ್ತೆ, ಬೇಸಿಗೆಯಲ್ಲಿ ಎಷ್ಟು ತಣ್ಣಗಿರುತ್ತೋ ಛಳಿಯಲ್ಲೂ ಅದಕ್ಕಿಂತ ಹೆಚ್ಚು ತಣ್ಣಗಿನ ಅನುಭವವಾಗುತ್ತೆ. ಒಂಥರಾ ಈ ಅಮೇರಿಕದ ಬೇಸಿಗೆ ಅನ್ನೋದು ಕೆಟ್ಟ ಕಾನ್ಸೆಪ್ಟಪಾ, ಯಾಕೆ ಅಂದ್ರೆ ಜೂನ್ ಇಪ್ಪತ್ತೊಂದಕ್ಕೆ ಆರಂಭವಾಗೋ ಬೇಸಿಗೆ ಅದೇ ದಿನವೇ ಹೆಚ್ಚು ದೊಡ್ಡ ದಿನವಾಗಿ (ಡೇ ಲೈಟ್ ಘಂಟೆಗಳಲ್ಲಿ) ಬೇಸಿಗೆ ಆರಂಭವಾದ ದಿನದಿಂದ್ಲೇ ದಿನಗಳು ಸಂಕುಚಿತಗೊಳ್ತಾ ಹೋಗೋದು. ಒಂಥರಾ ಬಿರು ಬೇಸಿಗೆಯಲ್ಲಿ ಐಸ್ ಕ್ಯಾಂಡಿಯನ್ನು ಡಬ್ಬದಿಂದ ಹೊರಗೆ ತೆಗೆದ ಹಾಗೆ, ತೆಗೆದ ಘಳಿಗೆಯಿಂದ್ಲೂ ಅದು ಕರಗ್ತಾನೇ ಹೋಗುತ್ತೆ - ಅನುಭವಿಸಿ ಅಥವಾ ಬಿಡಿ. ಇತ್ತೀಚೆಗೆಲ್ಲಾ ಎಷ್ಟೊಂದ್ ಕತ್ಲು ಅಂತಂದ್ರೆ ಬೆಳಿಗ್ಗೆ ಏಳ್ ಘಂಟೆ ಆದ್ರೂ ಲೈಟ್ ಹಾಕ್ಕೋಂಡೇ ಇರಬೇಕು, ಸಂಜೇನೂ ಅಷ್ಟೇ ಬೇಗ ಕತ್ಲಾಗುತ್ತೆ.

ಓಹ್, ಅಮೇರಿಕದ ಬೇಸ್ಗೇನಾ? ಇಲ್ಲ್ಯಾವನೂ ಶೇಕ್ಸ್‌ಪಿಯರ್ ಇಲ್ಲಾ - Shall I Compare Thee To A Summer's Day? ಅಂತ ಬರೆಯೋಕೆ. ಅದೂ ಅಲ್ದೇ ಈ ದೊಡ್ಡ ದೇಶದಲ್ಲಿ ಕೆಲವರು ಯಾವಾಗ್ಲೂ ಬೇಸಿಗೆಯಲ್ಲೇ ನಲುಗ್ತಾ ಇದ್ರೆ, ಇನ್ನ್ ಕೆಲವರು ಛಳಿಯಲ್ಲೇ ಮುಲುಗ್ತಾ ಇರ್ತಾರೆ - ಅದೇನ್ ದೇಶಾನೋ ಕಾಣೆ. ನಮ್ ದೇಶ್ದಲ್ಲೂ ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಥರ್ಮಾಮೀಟರ್‌ನಲ್ಲಿ ಅಗಾಧವಾದ ವೇರಿಯೇಷನ್ನೇನೋ ಇತ್ತು, ಆದ್ರೆ ಆ ಹಿಮಾಲಯಾನಾ ಯಾವ್ ಯಾವ್ದೋ ದೇಶ್ದೋರು ಹತ್ತಿ ಇಳಿಯೋಕ್ ಪ್ರಾಕ್ಟೀಸ್ ಮಾಡೋ ಜಾಗ ಮಾಡ್ಕಂಡ್ರೇ ವಿನಾ ನಾವ್ ನೋಡ್ಲೇ ಇಲ್ಲಾ ಒಂದಿನಾನು. ಅಲ್ಲಿ ಕಾಣದ ಮಂಜು, ಹಿಮವನ್ನ ಇಲ್ಲಿ ಕಾಣು ಎಂದು ಯಾರೋ ಬರೆದಿಟ್ಟ ಹಾಗೆ (ಹಣೇ ಮೇಲೆ), ಅಲ್ಲಿ ಕುಡಿಯದ ನೀರನ್ನ ಇಲ್ಲಿ ಬೇರೆ ಬೇರೆ ಫಾರ್ಮಿನಲ್ಲಿ ಕುಡಿದು ಅನುಭವಿಸು ಎಂದು ಯಾವುದೋ ಕಾನೂನಿಗೆ ಒಳಪಟ್ಟವರ ಹಾಗೆ ನಮ್ಮ ಬದುಕು...ಬ್ಯಾಡಾ ಅನ್ನೋದು ಆಪ್‌ಷನ್ನಿನ್ನಲ್ಲೇ ಇಲ್ಲಾ ಅಂತ ಪರೀಕ್ಷೆಗೆ ತಯಾರಾಗ್ತಾ ಇರೋ ಹುಡುಗನ್ನ ಹೆದರಿಸೋ ವರಸೇ ಬೇರೆ ಕೇಡಿಗೆ!

'ಏನ್ ಸಾರ್ ನೀವು? ಇಷ್ಟ್ ವರ್ಷಾ ಆಯ್ತು ಇಲ್ಲಿಗ್ ಬಂದು, ಇನ್ನೂ ಸುತ್ಲನ್ನ್ ನೋಡ್ಕಂಡ್ ಕೊರಗ್ತಾನೇ ಇರ್ತೀರಲ್ಲಾ... (ನಿಮ್ ಬಂಡ್ ಬಾಳ್ವೇಗ್ ಇಷ್ಟ್ ಬೆಂಕೀ ಹಾಕಾ). ಪುಲ್ ಪ್ಯಾಕೇಜ್ ಡೀಲ್ ಅಂತ ಪಡಕಂಡ್ ಬಂದ್ ಮೇಲೆ ಅನುಭವಿಸ್ ಬೇಕಪ್ಪಾ, ಅದನ್ನ್ ಬಿಟ್ಟು ಕೊರಗಿದ್ರೆ?' ಎಂದು ಯಾವ್ದೋ ಧ್ವನಿಯೊಂದು ಕೇಳಿಸಿದಂತಾಗಿ ಸುತ್ಲೂ ನೋಡ್ದೆ ಯಾರೂ ಕಾಣ್ಲಿಲ್ಲ. 'ಹಂಗಲ್ಲ್ ರೀ...' ಎಂದು ಸಮಾಧಾನ ಹೊರಡ್ತು, ಆದ್ರೆ ಅದು ಯಾರನ್ನ್ ಉದ್ದೇಶಿಸಿ ಎನ್ನೋ ಪ್ರಶ್ನೇ ಬಂದಿದ್ದೇ ತಡಾ ಒಂಥರಾ ಹೋಟ್ಲು ಮಾಣಿ ತಪ್ಪಾಗಿ ತಂದು ದೋಸೆಯನ್ನ ನಮ್ಮ ಮುಂದೆ ಇಟ್ಟು ಹಿಂದೆ ತೆಗೆದುಕೊಂಡು ಹೋದ ಹಾಗೆ, ಆ ಸಮಜಾಯಿಷಿ ಅಲ್ಲೇ ಅಡಗಿಕೊಂಡಿತು. ಅದ್ಯಾವ್ದೋ ಗೀತೇನಲ್ಲಿ ಬರೆದವ್ರೆ ಅನ್ನೋ ಥರ ನಮ್ಮ್ ಭಾರತೀಯರ ಮನೆಗಳಲ್ಲಿ (ಎಲ್ಲೆಲ್ಲಿ ಅವರವರೇ ಗ್ಯಾಸೂ-ಕರೆಂಟ್ ಬಿಲ್ಲ್ ಕೊಡಬೇಕೋ ಅಲ್ಲಿ) ಯಾವತ್ತಿದ್ರೂ ಒಂದ್ ಡಿಗ್ರಿ ಕಮ್ಮೀನೇ ಇರುತ್ತೇ ಥರ್ಮೋಸ್ಟ್ಯಾಟು, ಸೋ ನಡುಗೋದು ನಮ್ಮ್ ಹಣೇಬರ, ಇನ್ನು ಆರು ತಿಂಗ್ಳು.

ನಮ್ಮ್ ತಲೇಲ್ ಬರೆದಿದ್ದು ಇಷ್ಟೂ ಅಂತ ಬೇಸರಾ ಮಾಡ್ಕೊಂಡು ಕಿಟಕಿಯಿಂದ ದೂರ ನೋಡಿದ್ರೆ, ನಿಧಾನವಾಗಿ ಪಕ್ಕದ ಮರಗಳಿಂದ ಎಲೆಗಳೆಲ್ಲಾ ಒಂದೊಂದೇ ನೆಲದ ಹಾದಿ ಹಿಡಿಯುತ್ತಿದ್ದವು. ಈ ತಣ್ಣಗೆ ಕೊರೆಯೋ ಗಾಳಿ ಒಂದೇ ಒಂದು ದಿನದಲ್ಲೇ ಅದೆಷ್ಟು ಎಲೆಗಳ ಬದುಕನ್ನು ಬದಲಾಯಿಸಿಬಿಡ್ತಲ್ಲಾ ಅಂತ ಅನ್ನಿಸ್ತು. ಪಾಪ, ಈ ಛಳಿಯಲ್ಲಿ ಎಲೆ ಕಳೆದುಕೊಳ್ಳೋ ಮರಗಳೂ, ಪ್ರವಾಹದಲ್ಲಿ ಕೊಚ್ಚೆ ತುಂಬಿ ಹರಿಯೋ ನದಿಗಳಿಗೂ ಅದ್ಯಾವತ್ತ್ ಮುಕ್ತಿ ಸಿಗುತ್ತೋ, ಅದ್ಯಾವ್ ಋಷಿ ಶಾಪ ಕೊಟ್ಟಿದ್ನಪಾ? ಹೂಞ್, ಇಲ್ಲಾ, ಇಲ್ಲಾ...ಈ ಮುಂದೆ ಬೀಳೋ ಛಳಿಗೆ, ಅದ್ರಲ್ಲೂ ರಾಶಿ ರಾಶಿ ಬೀಳೋ ಹಿಮಕ್ಕೆ, ಅದರ ಭಾರಕ್ಕೆ ಮರದ ಟೊಂಗೆಗಳು ಮುರಿದು ಬೀಳದಿರಲಿ ಎಂದು ನೇಚರ್ ಕಂಡುಕೊಂಡ ಪರಿಹಾರವಿದ್ದಿರಬಹುದು...ಹಗುರವಾದವನು ಎಂತಹ ಭಾರವನ್ನೂ ಸಹಿಸಬಲ್ಲ ಎನ್ನೋ ಅದರದ್ದೇ ಆದ ತತ್ವ ಅಂತ ಏನಾದ್ರೂ ಇದ್ದಿರಬಹುದಾ ಅನ್ನೋ ಶಂಕೆ ಬಂತು. ಈ ನಿತ್ಯಹರಿದ್ವರ್ಣ (ಎವರ್‌ಗ್ರೀನ್) ಗಳದ್ದು ಇನ್ನೊಂದ್ ಪರಿ - ತಾವ್ ಎವರ್‌ಗ್ರೀನ್ ಏನೋ ಆದ್ವು, ಆದ್ರೆ ಅವು ಚಿಗುರಿ ಬೆಳೆಯೋ ಬೆಳವಣಿಗೆ ಇದೇ ನೋಡಿ ಬಾಳಾ ಸ್ಲೋ ಒಂಥರಾ ಥರ್ಡ್‍ವರ್ಲ್ಡ್ ದೇಶಗಳು ಮುಂದೆ ಬರೋ ಹಾಗೆ. ನಾವು ಏನೇ ಆದ್ರೂ ಹಸಿರಾಗೇ ಇರ್ತೀವಿ ಅಂತ ಹಠವನ್ನೇನೋ ತೊಟ್ವು, ಆದ್ರೆ ಮಂಜಿನ ಭಾರಕ್ಕೆಲ್ಲಾ ಕುಬ್ಜರಾಗಿ ಹೋದ್ವು. ಆದ್ರೂ ಅವುಗಳದ್ದೂ ಒಂದು ಧೈರ್ಯಾ ಸ್ವಾಮೀ, ಎಂಥಾ ಛಳೀನಲ್ಲೂ ಬದುಕಿ ಉಳೀತಾವೆ. ಹೊರಗಡೇ ಮೈನಸ್ ಇಪ್ಪತ್ತ್ ಡಿಗ್ರಿ ಇರೋ ಛಳೀನಲ್ಲಿ ಅದೆಂಗ್ ಬದುಕ್ತಾವೋ ಯಾರಿಗ್ಗ್ ಗೊತ್ತು?

ನಿಮ್ಮೂರಲ್ಲಿ ಹೆಂಗಿದೆ ಈಗ? ಮಳೇಬೆಳೇ ಬಗ್ಗೆ ತಲೆಕೆಡಿಸಿಕೊಳ್ತೀರೋ ಇಲ್ವೋ? ಮಳೇಬೆಳೆ ಬಗ್ಗೆ ತಲೆಕೆಡಿಸಿಕೊಂಡ್ ಯಾರಿಗ್ ಏನಾಗಿದೇ ಅಂತೀರಾ, ಅದೂ ಸರೀನೇ...ನಮ್ಮೂರ್‌ನಲ್ಲ್ ನೋಡಿ, ಯಾವತ್ತಿದ್ರೂ ಜನ ಮುಗಿಲ್ ನೋಡ್ತಾನೇ ಇರ್ತಾರೆ ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ.

Sunday, August 19, 2007

ರಿವರ್ಸ್ ಮೈಂಗ್ರಟ್ ಎನ್ನುವ ಹೊಸ ಆಯಾಮ

ಇದನ್ನು ಬರೀತಾ ಇರಬೇಕಾದ್ರೆ ಭಾನುವಾರ ಸಾಯಂಕಾಲ - ಇನ್ನೇನು ನಾಳೆ ಬರೋ ಸೋಮವಾರ ಹೆದರ್ಸೋ ಹೊತ್ತಿಗೆ ಇವತ್ತಿನ ಉಳಿದ ಭಾನುವಾರವನ್ನಾದ್ರೂ ಅನುಭವಿಸೋಣ ಎಂದುಕೊಂಡು ಕುಳಿತ್ರೆ ಹಾಳಾದ್ ಆಲೋಚ್ನೆಗಳು ಬಹಳ ದಿನಗಳ ನಂತರ ಸಿಕ್ಕಿರೋ ಸ್ನೇಹಿತ್ರ ಥರ ತಬ್ಬಿಕೊಂಡ್ ಬಿಡೋದೂ ಅಲ್ದೇ ಒಂದೇ ಉಸಿರಿನಲ್ಲಿ ಏನೇನೆಲ್ಲ ಪ್ರಶ್ನೆಗಳನ್ನು ಕೇಳೋ ಹಾಗೆ ಅಲೆಗಳನ್ನು ಹುಟ್ಟಿಸ್ತಾವೆ! ಭಾನುವಾರ ರಾತ್ರೆ ಆಗುತ್ತಿದ್ದ ಹಾಗೆ ಸುಬ್ಬನ ಆಲಾಪನೆ ಆರಂಭಿಸಿ ಹಗುರವಾದ ಹಾಸ್ಯಕ್ಕೆ ಕೈ ಹಾಕ್ಲೋ ಅಥವಾ ಮನದ ಮೂಲೆಯಲ್ಲಿ ಕೊರೀತಾ ಇರೋ ರಿವರ್ಸ್ ಮೈಗ್ರಂಟ್ ಅನ್ನೋ ಹುಳುವನ್ನು ಹೊರಕ್ಕೆ ಹಾಕ್ಲೋ ಅಂತ ಯೋಚಿಸ್ತಿದ್ದಾಗ ರಿವರ್ಸ್ ಮೈಗ್ರಂಟೇ ಫುಲ್ ಸ್ವಿಂಗ್‌ನಲ್ಲಿ ಹೊರಗ್ ಬರ್ತಾ ಇದೆ...ನಿಮ್ಮ ಕಷ್ಟ ನಿಮಗೆ!

***

ಈ ರಿವರ್ಸ್ ಮೈಗ್ರಂಟ್‌ ಅನ್ನೋ ಮಹಾನುಭಾವರು ಮತ್ಯಾರೂ ಅಲ್ಲಾ - ನಾವೂ ನೀವೂ ಹಾಗೂ ನಮ್ಮೊಳಗಿನ ಇವತ್ತಲ್ಲಾ ನಾಳೆ, ನಾಳೆ ಅಲ್ಲಾ ನಾಳಿದ್ದು ವಾಪಾಸ್ ಹೋಗ್ತೀವಿ ಅನ್ನೋ ಧ್ವನಿ ಅಷ್ಟೇ. ಯಾಕ್ ವಾಪಾಸ್ ಹೋಗ್ತೀವಿ, ಹೋಗ್ಬೇಕು ಅನ್ನೋ ಪ್ರಶ್ನೆಗಳಿಗೆ ಉತ್ರ ಸುಲಭವಾಗಿ ಮೆಲ್ನೋಟಕ್ಕೆ ಸಿಕ್ಕಂತೆ ಕಂಡ್ರೂ ಅದರ ಆಳ ಅವರವರ ಎತ್ರದಷ್ಟೇ ಇರುತ್ತೆ. ಸ್ಯಾಟಿಸ್‌ಫ್ಯಾಕ್ಷನ್ ಅಥವಾ ತೃಪ್ತಿ ಅನ್ನೋದು ಉತ್ತರಗಳ ಯಾದಿಯಲ್ಲಿ ಮೊದಲು ನಿಲ್ಲೋ ಭೂಪ ಅಷ್ಟೇ, ಅಲ್ಲಿಂದ ಆರಂಭವಾದದ್ದು - ಸುಖವಾದ ಜೀವನ (whatever that means), ಮಕ್ಕಳ ವಿದ್ಯಾಭ್ಯಾಸ, ಬಂಧು-ಬಳಗದ ಆಸರೆ ಆರೈಕೆ, ಸಾಯೋದ್ರೊಳಗೆ ಏನಾದ್ರೊಂದ್ ಮಾಡಿ ಸಾಯ್‌ಬೇಕು ಅನ್ನೋ ಬಯಕೆ, ನಮ್ ನಮಗೆ ಬೇಕಾದ ವೃತ್ತಿ-ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು ಅನ್ನೋ ಆಸೆ, ಇಲ್ಲಿಯಷ್ಟೇ ಅಲ್ಲೂ ಕಮಾಯಿಸಬಹುದು ಅನ್ನೋ ಅದಮ್ಯ ಉತ್ಸಾಹ - ಇತ್ಯಾದಿ ಹೀಗೆ ಈ ಸಾಲಿನಲ್ಲಿ ತುಂಬುವ ಪದಗಳಿಗೆ ಕೊರತೆಯೇ ಇರೋದಿಲ್ಲ. ನಾವು, ನಮ್ಮ ಸಂಸ್ಕೃತಿ, ನಮ್ಮ ಜನ, ನಮ್ಮ ನೆರೆಹೊರೆ, ನಮ್ಮ ಸಮಾಜ ಮುಂತಾಗಿ ನಮ್ಮನ್ನು ಸುತ್ತುಬಳಸಿಕೊಂಡಿರೋ ಕನಸುಗಳು ಇವತ್ತಿಗೂ ನಮ್ಮೂರಿನ ಸುತ್ಲೂ ಗಿರಕಿ ಹೊಡೆಯೋದು ನನ್ನಂತಹವರ ಅನುಭವ, ಅದಕ್ಕೆ ತದ್ವಿರುದ್ಧವಾಗಿ ಕೆಲವರಿಗೆ ಇನ್ನು ಬೇರೆಬೇರೆ ರೀತಿಯ ಕನಸುಗಳು ಇರಬಹುದು. ಕನಸುಗಳು ಹೇಗೇ ಬೀಳಲಿ - ಅವುಗಳು ಬಣ್ಣದವೋ, ಅಥವಾ ಕಪ್ಪು-ಬಿಳಿಪಿನವೋ ಯಾರು ಹೇಳಬಲ್ಲರು? ಒಂದೇ ಸಾಲಿನಲ್ಲಿ ಹೇಳಬೇಕೆಂದರೆ (ಕಡ್ಡಿ ಮುರಿದ ಹಾಗೆ), ಇಲ್ಲಿ ಬಂದು ಕಲಿತ ವಿದ್ಯೆ-ಅನುಭವವನ್ನು ಬೇರೆಡೆ ಬಳಸಿ ಅಲ್ಲಿ ಬದಲಾವಣೆಗಳನ್ನು ಮಾಡುವುದು ರಿವರ್ಸ್ ಮೈಂಗ್ರಂಟುಗಳ ಮನಸ್ಸಿನಲ್ಲಿ ಇರುವ ಮತ್ತೊಂದು ಚಿಂತನೆ.

ಭಾರತದಿಂದ ಅಮೇರಿಕಕ್ಕೆ ಬರೋದು ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೋ ಅಥವಾ ಇಸ್ಲಾಮಿಗೋ ಮತಾಂತರವಾದಷ್ಟೇ ಸುಲಭ (ಅಥವಾ ಕಷ್ಟ) - ಅದೇ ಅಮೇರಿಕದಿಂದ ಭಾರತಕ್ಕೆ ಹಿಂತಿರುಗಿ ಹೋಗೋದಿದೆಯಲ್ಲಾ ಅದು ಬೇರೆ ಯಾವುದೋ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಷ್ಟೇ ಸಂಕೀರ್ಣವಾದದ್ದು. ಹಿಂದೂ ಧರ್ಮಕ್ಕೆ ಮತಾಂತರಗೊಂಡವರು ಯಾವ ಜಾತಿಗೆ ಸೇರುತ್ತಾರೆ, ಯಾವ ಭಾಷೆ, ಸಂಸ್ಕೃತಿಯನ್ನು ಅನುಸರಿಸುತ್ತಾರೆ? ಹಾಗೇ ನಮ್ಮ ಅನಿವಾಸಿ ನೆಲೆಯಿಂದ ನಾವು ಹಿಂತಿರುಗುವುದೆಲ್ಲಿಗೆ? ಬರೀ ಭಾರತದ ಗಡಿಯೊಳಗೆ ನುಸುಳೋಣವೋ, ದೆಹಲಿ, ಬಾಂಬೆ, ಮದ್ರಾಸ್‌ನಲ್ಲಿ ನೆಲೆಸೋಣವೋ? ನಮ್ಮದಲ್ಲದ ಬೆಂಗಳೂರಿಗೆ ಹಿಂತಿರುಗೋಣವೋ? ವೃದ್ದಾಪ್ಯದ ಹೊಸ್ತಿಲಲ್ಲಿರುವವರನ್ನು ಹೊರತು ಪಡಿಸಿ ಬೇರೆ ಯಾರೂ ನಮ್ಮನ್ನು ಗುರುತಿಸದ ನಮ್ಮೂರಿಗೆ ಹೋಗೋಣವೋ? ಎಲ್ಲಿ ಕೆಲಸ ಮಾಡುವುದು? ಯಾವ ಕೆಲಸ ಮಾಡುವುದು? ಎಲ್ಲಿ ನೆಲೆಸುವುದು? ಯಾವ ಭಾಷೆ ಮಾತನಾಡುವುದು? ಹೀಗೆ ಪ್ರಶ್ನೆಗಳ ಯಾದಿ ಬೆಳೆಯುತ್ತಾ ಹೋಗುತ್ತೇ ವಿನಾ ಅವುಗಳ ಹಿಂದಿನ ಉತ್ತರದ ವ್ಯಾಪ್ತಿ ಕಡಿಮೆ ಏನೂ ಆಗೋದಿಲ್ಲ.

***

ನಾವು ಅಲ್ಲಿಗೆ ಹೋಗಿ ಮಾಡಬೇಕಾದ ಬದಲಾವಣೆಯ ಬಗ್ಗೆ, ಅಂತಹ ಉನ್ನತವಾದ ಪರಿಕಲ್ಪನೆಗಳ ಬಗ್ಗೆ ಒಂದಿಷ್ಟು ಯೋಚಿಸಬೇಕು. ನಾವು ಸಾಮಾಜಿಕ ಹರಿಕಾರರಲ್ಲ - ಬಸವಣ್ಣ, ಬುದ್ಧ, ಗಾಂಧಿಯವರು ಕಲಿಯುಗದಲ್ಲಿ ಮತ್ತೆ ಹುಟ್ಟೋಲ್ಲ. ನಮ್ಮ ನೆರೆಹೊರೆ, ನಮ್ಮ ಆಸುಪಾಸು, ನಮ್ಮ ಹಿತ್ತಲು-ಅಂಗಳಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಒಂದು ಬದಲಾವಣೆ, ನಾವು ಶಿಸ್ತಿನ ಜೀವನವನ್ನು ಸಾಗಿಸಿಕೊಂಡು ಹೋಗಬೇಕಾದ್ದು ಮತ್ತೊಂದು ಬದಲಾವಣೆ, ದೊಡ್ಡ ಸಾಗರದ ಅಲೆಗಳಲ್ಲಿ ಮಾತ್ರ ನಮ್ಮನ್ನು ನಾವು ಕಳೆದುಕೊಳ್ಳದೇ ಅಗಾಧವಾದ ಸಮುದ್ರದಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಂಡು ಅದರಲ್ಲಿ ಈಸಿ-ಜಯಿಸುವುದು ದೊಡ್ಡ ಬದಲಾವಣೆ. ಇಷ್ಟೆಲ್ಲಾ ಆಗುತ್ತಿರುವಲ್ಲೇ ಏನಾದರೊಂದನ್ನು ಮಾಡಬೇಕು ಎನ್ನುವ ತುಡಿತಕ್ಕೆ ಉತ್ತರವನ್ನು ಕಂಡುಕೊಳ್ಳಬೇಕು, ಅದು ಇನ್ನೂ ದೊಡ್ಡ ಬದಲಾವಣೆ - ಒಂಥರಾ ಕಷ್ಟಪಟ್ಟು ಜೀಕೀ ಜೀಕಿ ಹಳೆಯ ಸೈಕಲ್ಲ್‌ನಲ್ಲಿ ಬೆಟ್ಟವನ್ನು ಹತ್ತುತ್ತಿರುವ ಹುಡುಗನಿಗೆ ಹಾಗೆ ಹತ್ತುತ್ತಿರುವಾಗಲೇ ರಾಷ್ಟ್ರಗೀತೆಯನ್ನು ಹಾಡು ಎಂದು ಆದೇಶಿಸಿದ ಹಾಗೆ. ಓಹ್, ಈ ಮೇಲಿನ ವಾಕ್ಯಗಳಲ್ಲಿ ಬದಲಾವಣೆಯ ಬಗ್ಗೆ ಬರೆಯಬೇಕಿತ್ತು, ಕ್ಷಮಿಸಿ - ಸವಾಲುಗಳು ಬದಲಾವಣೆಗಳಾಗಿ ನನಗರಿವಿಲ್ಲದಂತೆಯೇ ಹೊರಬಂದುಬಿಟ್ಟವು. ಇಲ್ಲಿನದನ್ನು ಕಂಡು ಅನುಭವಿಸಿ, ಅಲ್ಲಿ ಬದಲಾವಣೆಯನ್ನು ತರಬಯಸುವ ನಾವು ಅದಕ್ಕೆ ಮೊದಲು ಅಲ್ಲಿಯದನ್ನು ಪುನಃ ಅವಲೋಕಿಸಬೇಕಾಗುತ್ತದೆ, ಏಕೆಂದರೆ ನಮ್ಮ ಅನುಭವದ ಭಾರತ ಬಹಳಷ್ಟು ಬದಲಾಗಿದೆ ಈಗಾಗಲೇ. ಮೊದಲು ಅಲ್ಲಿ ಹೋಗಿ ನೆಲೆಸಿ, ಅಲ್ಲಿಯದನ್ನು ಅನುಭವಿಸಿ, ನಂತರ ಎರಡನ್ನೂ ಕಂಡ ಮನಸ್ಸಿಗೆ ಅಲ್ಲಿನ ಸವಾಲುಗಳನ್ನು ಎದುರಿಸಿ ಇನ್ನೂ ಚೈತನ್ಯವೆನ್ನೋದೇನಾದರೂ ಉಳಿದಿದ್ದರೆ, ಮುಂದೆ ಬದಲಾವಣೆಯ ಮಾತು ಬರುತ್ತದೆ!

ನಿಮಗ್ಗೊತ್ತಾ, ಎಷ್ಟೋ ಜನ ಇಲ್ಲಿಂದ ಹಿಂತಿರುಗಿ ಹೋದವರು ಇಲ್ಲಿ ಸುಖವಾಗೇ ಇದ್ದರು - ಒಳ್ಳೆಯ ಸಂಬಳ ಮನೆ ಎಲ್ಲವೂ ಇತ್ತು. ಅಂಥಹದ್ದನ್ನು ತೊರೆದು ತಮ್ಮ ತಾಯ್ನಾಡಿಗೆ ಮರಳುವುದು ಬಹಳ ಕಷ್ಟದ ನಿರ್ಧಾರ. ಒಂದೆರಡು ವರ್ಷಗಳ ದುಡಿಮೆಗೆ ಬಂದು ಹಿಂತಿರುಗಿದವರ ಬಗ್ಗೆ ಹೇಳ್ತಾ ಇಲ್ಲಾ ನಾನು. ಸುಮಾರು ಹತ್ತು-ಹದಿನೈದು ವರ್ಷ ಇದ್ದು ಇಲ್ಲಿನದ್ದನ್ನು ಸಾಕಷ್ಟು ಕಂಡು ಅನುಭವಿಸಿ ಮುಂದೆ ಆ ಮಹತ್ತರ ನಿರ್ಧಾರವನ್ನು ಕೈಗೊಂಡ ಮಹಾನುಭಾವರ ಬಗ್ಗೆ. ಕೆಲವರು ಅವರವರ ಹೆಂಡತಿ ಮಕ್ಕಳು ತಮ್ಮ ವೃತ್ತಿಯ ಬಗ್ಗೆ ಮಾತ್ರ ಯೋಚಿಸಿ ಅಂತಹ ನಿರ್ಧಾರವನ್ನು ಸೆಪ್ಪೆಯಾಗಿಸಿಬಿಡುತ್ತಾರೆ, ಆದರೆ ಒಟ್ಟಾರೆ ಕುಟುಂಬದ ಮೇಲಿನ ಪರಿಣಾಮ - ಲಾಂಗ್‌ಟರ್ಮ್ ಹಾಗೂ ಶಾರ್ಟ್‌ಟರ್ಮ್ - ಬಹಳ ಹೆಚ್ಚಿನದ್ದು. ಹೀಗೆ ಹಿಂತಿರುಗುವ ಮನಸ್ಥಿತಿಗಳು ಹಲವು, ಅವುಗಳ ಹಿಂದಿನ ಕಾರಣಗಳು ಬೇಕಾದಷ್ಟಿರುತ್ತವೆ, ಇಂತಹ ಕಾರಣಗಳ ಹಿಂದಿನ ಸ್ವರೂಪವನ್ನು ಶೋಧಿಸಿ ನೋಡಿದಾಗ, ಅಂತಹ ಮನಸ್ಥಿತಿಗಳ ಆಳಕ್ಕೆ ಇಳಿದಾಗಲೇ ಅದರಲ್ಲಿನ ಸೊಗಸು ಗೊತ್ತಾಗೋದು. ಇಲ್ಲವೆಂದಾದರೆ ಈ ರಿವರ್ಸ್ ಮೈಂಗ್ರಂಟ್‌ಗಳ ಮನಸ್ಸು ಯಾವುದೋ ಒಂದು ಸಣ್ಣಕಥೆಯ ನಾಯಕಪಾತ್ರವಾಗಿ ಹೋದೀತು, ಅಥವಾ ಯಾರೋ ಒಬ್ಬರು ಅಮೇರಿಕವನ್ನು ಆರು ತಿಂಗಳ ಪ್ರವಾಸದಲ್ಲಿ ನೋಡಿ ಬರೆದ ಕಥನವಾದೀತು. ಮುಗಿಲಿನಿಂದ ಬೀಳುವ ಮಳೆ ಹನಿಯನ್ನು ಕೇವಲ ಕೆಲವೇ ಅಡಿಗಳ ಎತ್ತರದಲ್ಲಿ ನೋಡಿ ಅದು ನೆಲವನ್ನು ಅಪ್ಪುವುದನ್ನು ಪೂರ್ಣ ಅನುಭವ ಎಂದು ಹೇಗೆ ಒಪ್ಪಲಾದೀತು, ಆ ನೀರು ಎಲ್ಲಿಂದ ಬಂತು ಎಲ್ಲಿಗೆ ಸೇರುತ್ತೆ, ಹೇಗೆ ಸೇರುತ್ತೆ ಎಂದು ಕೆದಕಿ ನೋಡದ ಹೊರತು?

ಅದಕ್ಕೋಸ್ಕರವೇ ಅನಿವಾಸಿಗಳ ಮನಸ್ಥಿತಿ ಅನಿವಾಸಿಗಳಿಗೇ ತಿಳಿಯದಷ್ಟು ಸಂಕೀರ್ಣವಾಗಿ ಹೋಗೋದು. ನಾವು ಅಂಚೆಗೆ ಹಾಕಬೇಕಾದ ಪತ್ರಗಳು ಸಾಕಷ್ಟು ತಡವಾಗೋದು, ನಾವು ಕರೆ ಮಾಡುತ್ತೇವೆ ಎಂದು ಮಾತುಕೊಟ್ಟದ್ದು ತಪ್ಪೋದು ಅಥವಾ ವಿಳಂಬವಾಗೋದು, ಅಥವಾ ನಮ್ಮವರೊಡಗೋಡಿ ಒಂದಿಷ್ಟರ ಮಟ್ಟಿಗೆ ನಕ್ಕು ನಲಿಯದೇ ಹೋಗೋ ಹಾಗೆ ಚಪ್ಪಟೆ ಮುಖವನ್ನು ಹೊರಹಾಕೋದು, ಸಮಯವನ್ನು ಜಯಿಸುತ್ತೇವೆ ಅನ್ನೋ ಉತ್ಸಾಹ ಕ್ರಮೇಣ ಕಡಿಮೆಯಾಗೋದು, ಊಟ-ತಿಂಡಿ ಆಚಾರ-ವಿಚಾರಗಳ ವಿಷಯದಲ್ಲಿ ಸಾಕಷ್ಟು ಕಲಸುಮೇಲೋಗರವಾಗೋದು. ಇಲ್ಲವೆಂದಾದರೆ ಮನೆಯಲ್ಲಿ ಯಾವ ಆರ್ಡರಿನಲ್ಲಿ ಹುಟ್ಟಿಬೆಳೆದಿದ್ದರೂ ಉಳಿದವರೆಲ್ಲರಿಗೂ ಆದೇಶಿಸುವಷ್ಟು ದಾರ್ಷ್ಟ್ಯವೆಲ್ಲಿಂದ ಬರುತ್ತಿತ್ತು? ಪ್ರತಿಯೊಂದು ಸವಾಲುಗಳಿಗೂ ನಮ್ಮಲ್ಲಿ ಉತ್ತರವಿದೆಯೆನ್ನೋ ಭ್ರಮೆಯಲ್ಲಿ ನಾವು ಸ್ವಲ್ಪ ಕಾಲ ಬಳಲಿ, ನಮ್ಮನ್ನು ನಂಬಿದವರು ಅದನ್ನು ಕೊನೆಯವರೆಗೂ ನಂಬಿಕೊಂಡೇ ಇರುವಂತೇಕಾಗುತ್ತಿತ್ತು? ಅಥವಾ ನಾವು ಹೀಗೆ ಮಾಡುತ್ತೇವೆ, ಹಾಗೆ ಮಾಡುತ್ತೇವೆ ಎನ್ನೋ ಮಾತುಗಳು 'ಹಾಗೆ ಮಾಡಬಲ್ಲೆವು' ಎಂದು ಬದಲಾಗಿ, ಮುಂದೆ 'ಹಾಗೆ ಮಾಡಬಹುದಿತ್ತು' ಎಂದು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಗೊಳ್ಳುತ್ತಿತ್ತೇಕೆ?

***

ರಿವರ್ಸ್ ಮೈಂಗ್ರಂಟುಗಳ ಮನದಾಳದಲ್ಲೇನಿದೆ, ಸುಖವಾಗಿ ಬದುಕುವ ಅದಮ್ಯ ಆಸೆಯೊಂದನ್ನು ಹೊರತುಪಡಿಸಿ? ಸರಿ, ಸುಖವಾಗಿ ಬದುಕುವುದು ಎಂದರೇನು - ಇಲ್ಲದ್ದನ್ನು ಊಹಿಸಿ ಕೊರಗದಿರುವುದೇ? ಇನ್ನೂ ಸರಳವಾದ ಪ್ರಶ್ನೆ - ನಮಗೆ ಎಂದಿದ್ದರೂ ಯಾವುದೋ ಒಂದು ವಸ್ತುವಿನ ಕೊರತೆ ಇದ್ದೇ ಇರುತ್ತದೆ ಎನ್ನುವುದು ಸತ್ಯವಾದರೆ, ಅದನ್ನು ಆದಷ್ಟು ಬೇಗ ಮನಗಂಡು ಅದರ ಬಗ್ಗೆ ಮುಂದೆ ಯೋಚಿಸದೇ ಇರುವಂತೇಕೆ ಸಾಧ್ಯವಾಗುವುದಿಲ್ಲ?

***

ಸದ್ಯಕ್ಕೆ ಇವೆಲ್ಲ ಪ್ರಶ್ನೆಗಳ ರೂಪದಲ್ಲೇ ಕೂತಿವೆ, ಒಂದು ರೀತಿ ತನ್ನ ಸುತ್ತಲಿನ ಎಲೆಗಳನ್ನು ಕಬಳಿಸುತ್ತಾ ಬೆಳೀತಾ ಇರೋ ಕಂಬಳಿ ಹುಳುವಿನ ಥರ. ಮುಂದೆ ಅದೊಂದು ಗೂಡನ್ನು ಸೇರಿ ಅಲ್ಲಿ ಸುಖನಿದ್ರೆಯನ್ನು ಅನುಭವಿಸುತ್ತೆ. ಒಂದುವೇಳೆ, ನಿದ್ರೆಯಿಂದ ಎಚ್ಚರವಾಗಿ ನೆರೆಹೊರೆ ಕಂಬಳಿಹುಳು ಚಿಟ್ಟೆಯಾಗುವ ಬದಲಾವಣೆಯನ್ನು ಸಹಿಸಿಕೊಳ್ಳುವುದೆಂದಾದರೆ ಒಂದಲ್ಲ ಒಂದು ಆ ಚಿಟ್ಟೆ ತನ್ನ ಪಯಣವನ್ನು ಆರಂಭಿಸುವುದು ನಿಜ - ಆದರೆ ಈ ಪರಿವರ್ತನೆ ಬಹಳ ದೊಡ್ಡದು, ಅದರ ವ್ಯಾಪ್ತಿ ಇನ್ನೂ ಹೆಚ್ಚು ಹಾಗೂ ಅದರ ಹಿಂದಿನ ಮನಸ್ಥಿತಿಯ ಸಂಕೀರ್ಣತೆ ಬಹಳ ಮುಖ್ಯವಾದದ್ದು.