Monday, November 06, 2006

ಓಹ್ ಭಾರತದ ನೆನಪೇ...

ನಮ್ ಮನೇಲಿ ನನ್ನನ್ನಂತೂ ಬಹಳ ಹೆದರಿಸಿಬಿಟ್ಟಿದ್ದಾರೆ, ಭಾರತಕ್ಕೆ ಹೋಗೋಕೆ ಟಿಕೇಟ್ ಬ್ಲಾಕ್ ಮಾಡಿಟ್ರೂ, ಮನಸ್ಸಿನೊಳಗೆ ಒಂದ್ ರೀತಿ ಚಡಪಡಿಕೆಯಿಂದ್ಲೇ ತಯಾರಿ ಮಾಡಿಕೊಂಡ್ ಕೂತಿದ್ರೂ ದಿನೇದಿನೇ ಬದಲಾಗೋ ಪ್ರಾಜೆಕ್ಟ್ ಸ್ಕೋಪ್ ಮತ್ತು ಸ್ಕೆಡ್ಯೂಲ್ ಎರಡೂ ನನ್ನನ್ನು ವಾಸ್ತವದಿಂದ ದೂರಾನೇ ಇರೋ ಹಾಗೆ ಮಾಡಿಬಿಟ್ಟಿವೆ, ಎಷ್ಟೋತ್ತಿಗೆ ಬೇಕಾದ್ರೂ ನಮ್ ಕಂಪ್ನಿಯವರು ನಿನ್ನ ವೆಕೇಷನ್ನ್ ಅನ್ನು ಮುಂದಕ್ಕೆ ಹಾಕು ಅಂತ ಹೇಳಿ ನನ್ನ್ ಬೆಲೂನಿನೊಳಗಿರೋ ಗಾಳಿಯನ್ನು ಚುಚ್ಚದೇ ಹೊರತೆಗೆಯಬಲ್ಲರು, ಆದ್ದರಿಂದ್ಲೇ keep the fingers crossed ಅಂತಾರಲ್ಲ ಹಾಗೆ ಸುಮ್ಮನಿದ್ದೇನೆ - jinx, superstition, evil eye ಅಂತಾ ಏನೂ ಇಲ್ಲ, ಬರೀ ವಾಸ್ತವ ಅಷ್ಟೇ, ನನ್ನ ವೆಕೇಷನ್ನು ಯಾವತ್ತು ನಿಜ ಆಗುತ್ತೋ ಆಗ್ಲೇ ಅಗುತ್ತೆ ಅಂತ ಸುಮ್ಮನೇ ಇದ್ದೇನೆ.

ಸರಿ, ಮೂರು ನಾಲ್ಕು ವರ್ಷಗಳ ನಂತರ ಮೂರು ನಾಲ್ಕು ವಾರಕ್ಕೆ ಅಂತ ಹೋದ ಮೇಲೆ ಏನ್ ಏನ್ ಮಾಡೋದು, ಎಲ್ಲಿಲ್ಲಿಗ್ ಹೋಗೋದು, ಯಾರನ್ನ ನೋಡೋದು, ಯಾರನ್ನ ಬಿಡೋದು ಅನ್ನೋ ಆಲೋಚನೆಗಳು ಒಂದ್ ರೀತಿಯಲ್ಲಿ ಮುದ ಕೊಡೋ ಹಾಗೆ ಮತ್ತೊಂದು ರೀತಿಯಲ್ಲಿ ಆಲಸ್ಯವನ್ನೂ ಹುಟ್ಟಿಸುತ್ತವೆ. ಮೊದ್ಲೆಲ್ಲ ಪತ್ರಗಳು ಬಂದು ಸಂಬಂಧಗಳನ್ನ ಜೀವಂತ ಇಡೋವು, ನಂತರ ಅವುಗಳ ಸ್ಥಾನವನ್ನ ಫೋನ್ ಕರೆ ತುಂಬಿಕೊಡುತ್ತೇ ಅನ್ನೋದು ಒಂದು ಹುಸಿ ನಂಬಿಕೆಯೇ ವಿನಾ ನಾನು ಪತ್ರಗಳನ್ನು ಬರೆಯುತ್ತಿದ್ದ ಕಾಲದಲ್ಲಿ ನನ್ನ ಸ್ನೇಹಿತರನ್ನು ನೆನೆಸಿಕೊಂಡಷ್ಟು ಗಾಢವಾಗಿ ಫೋನ್ ಕರೆ ಮಾಡುವಾಗ ಎಲ್ಲೂ ಆ ಬಗ್ಗೆ ಅಷ್ಟೊಂದು ಯೋಚಿಸಲೇ ಇಲ್ಲ. ಫೋನ್ ಕರೆಗಳು ಕಡಿಮೆಯಾಗಿ ಕೊನೆಗೆ ಭಾರತದಲ್ಲಿ ಸ್ನೇಹಿತರು ಅನ್ನೋರು ಇಲ್ಲವೇ ಇಲ್ಲ ಅನ್ನೋ ಸ್ಥಿತಿ ಬಂದಿದೆ - ಸ್ನೇಹಿತರು ಅಂದ್ರೆ ನಿಮ್ಮ ಒಳಹೊರಗನ್ನು ಬಲ್ಲ, ನಿಮ್ಮ ಆಲೋಚನೆಗಳಿಗೆ ಇಂಬುಕೊಡಬಲ್ಲ, ನಿಮ್ಮನ್ನು ಎಂತಹ ಸ್ಥಿತಿ ಸಂದರ್ಭಗಳಲ್ಲೂ ಸಪೋರ್ಟ್ ಮಾಡಬಲ್ಲ ಹಾಗೂ ಹಲವಾರು ವರ್ಷಗಳಿಂದ ನಿಮ್ಮನ್ನು ಬೇರೆಬೇರೆ ಸ್ಥರಗಳಲ್ಲಿ ನೋಡಿದ ಮತ್ತು ನಿಮಗಿಂತ ಬೇರೆಯೇ ವೈಚಾರಿಕ ನೆಲೆಯಲ್ಲಿರುವ ಮಾನವ ಮೂರ್ತಿಗಳು! ಸದು, ವಾಸು, ರಾಘು, ಅಮಿತಾ, ಶ್ರೀಕಾಂತ, ಸುರೇಶ, ಶಂಕ್ರ, ಪ್ರೇಮಾ, ಉಮೇಶ, ಸುಂದರೇಶ, ಮೋಹನೇಶ, ಮುಂತಾದವರು ಈಗ ಎಲ್ಲೆಲ್ಲಿದ್ದಾರೋ ಅವರನ್ನೆಲ್ಲ ನೋಡಿ ಮಾತನಾಡಿಸುವಂತಿದ್ದರೆ...

If all goes well...ಸಾಕಷ್ಟು ತಿರುಗಾಡಬೇಕು, ಒಂದಿಷ್ಟು ಹೊಸ ಪುಸ್ತಕಗಳನ್ನ ಖರೀದಿ ಮಾಡಬೇಕು, ಥಿಯೇಟರುಗಳಲ್ಲಿ ನಾಟಕ ಸಿನಿಮಾಗಳನ್ನು ಯಥೇಚ್ಛವಾಗಿ ನೋಡಬೇಕು, ಇಷ್ಟು ದಿವಸ ಕಳೆದುಕೊಂಡಿರೋ ಭಾರತೀಯ ಟಿವಿ ಕಾರ್ಯಕ್ರಮಗಳನ್ನ ಹುಡುಕಿಕೊಳ್ಳಬೇಕು. ಅವರನ್ನ ಭೇಟಿ ಮಾಡಬೇಕು, ಇವರನ್ನ ನೋಡಬೇಕು ಅಂತಾ ಯೋಚನೆಗಳನ್ನ ಆರಂಭಿಸಿದೆನೋ ಅವುಗಳು ಒಂದೋ ಸಮನೆ ನಾಗಾಲೋಟದಲ್ಲಿ ಹುಚ್ಚೆದ್ದು ಓಡತೊಡಗುತ್ತಾ ಹೋದಂತೆ ಇವಲ್ಲವನ್ನೂ ಮಾಡೋಕೆ ಸಾಧ್ಯವಾ? ಎಂದು ಕೊನೆಯಲ್ಲಿ ಬಂದ ಪ್ರಶ್ನೆ ಎಂಬ ಬಂಡೆಕಲ್ಲಿಗೆ ಅಪ್ಪಳಿಸಿ ನಿಂತುಬಿಟ್ಟವು. ಈ ವೆಕೇಷನ್ನಿಗೆ ಯಾಕಾದರೂ ನಾನಾ ಅರ್ಥಗಳನ್ನು ನಿರೀಕ್ಷೆಗಳನ್ನು ಹುಟ್ಟಿಸಿಕೊಳ್ಳಬೇಕು? ಸುಮ್ಮನೇ ಹೋಗೋದು, ಪರಿಸ್ಥಿತಿಗೆ ನನ್ನನ್ನು ನಾನು ಒಪ್ಪಿಸಿಕೊಂಡು ಬಿಡೋದು, ಸಹಜವಾಗಿ ಹಾಗೂ ನಿರಾತಂಕವಾಗಿ ಏನೇನು ಸಾಧ್ಯವೋ ಅವುಗಳನ್ನು ಮಾಡೋದು ಇಲ್ಲವೆಂದರೆ ಇನ್ನೊಮ್ಮೆ ಪ್ರಯತ್ನಿಸಿದರಾಯಿತು ಎಂದು ಹಿಂತಿರುಗಿ ಬರೋದು - ಇಲ್ಲಿ ಪ್ರಾಜೆಕ್ಟ್‌ಗಳಿಗೆ ಸ್ಕೆಡ್ಯೂಲುಗಳನ್ನು ಕಿಸಿದು ದೊಡ್ಡದಾಗಿ ಮೆರೆದದ್ದು ಬಹಳಷ್ಟು ಆಗಿದೆ, ಸುಮ್ನೆ ಮುಚ್ಕೊಂಡು ನಿನ್ನಷ್ಟಕ್ಕೆ ನೀನಿರೋದನ್ನು ನೋಡು - ಎಂದು ನನ್ನ ಮತ್ತು ಕನ್ನಡಿಯ ಮಧ್ಯೆ ಬರುವ ಅವಕಾಶದಲ್ಲಿ ಇತ್ತೀಚೆಗಷ್ಟೇ ಧ್ವನಿಯೊಂದು ಕೇಳಿಬಂದಂತೆನಿಸಿದ್ದು ನನ್ನನ್ನು ಇನ್ನಷ್ಟು ಹೈರಾಣಾಗಿಸಿದೆ!

ದೊಡ್ಡ ಗಂಡಾಂತರವೆಂದರೆ ನಮ್ಮ ಊರಿಗೆ ನಾನು ಹೆದರಿಕೊಂಡು ಹೋಗಬೇಕಾಗಿ ಬಂದಿರೋದು...ಕೆಲವು ತಿಂಗಳ ಹಿಂದೆ ಇಡೀ ಆನವಟ್ಟಿಯಲ್ಲಿ ಚಿಕುನ್‌ಗುನ್ಯಾ ಖಾಯಿಲೆಯಿಂದ ಜನ ತತ್ತರಿಸಿಹೋಗಿದ್ದು ನಿಜ, ನಮ್ಮೂರಲ್ಲಿ ಎಲ್ಲ ಥರದ ಸೊಳ್ಳೆಗಳೂ ತಮ್ಮ ಅಸ್ತಿತ್ವವನ್ನು ಎಂದಿನಿಂದಲೂ ಇಟ್ಟುಕೊಂಡಿವೆಯಾದ್ದರಿಂದ ನಾನು ಹೋದಷ್ಟು ದಿನದ ಮಟ್ಟಿಗೆ ಅವುಗಳ ಜೊತೆಯಲ್ಲಿ ವಾಸಮಾಡಬೇಕಾಗಿ ಬರೋದು ಅನಿವಾರ್ಯ. ಮೈತುಂಬಾ ಗಂಧವನ್ನು ಅಥವಾ ರಿಪೆಲ್ಲಂಟ್ ಕ್ರೀಮನ್ನು ಲೇಪಿಸಿಕೊಂಡು ವಿದೇಶಿಯರ ಹಾಗೆ ನಾನು ಹುಟ್ಟಿಬೆಳದ ಊರಿನಲ್ಲಿ ಬದುಕೋದಕ್ಕೆ ನನಗೆ ಖಂಡಿತವಾಗಿ ಸಾಧ್ಯವಿಲ್ಲ, ಆದ್ದರಿಂದಲೇ ಹೆದರಿಕೆ ಹೆಚ್ಚಾಗಿದೆ! ನನ್ನ ಬಾಸು ಹೇಳಿದ 'ನೀನು ಸಂಪೂರ್ಣವಾಗಿ ರೆಸ್ಟ್ ತೆಗೆದುಕೊಂಡು ರಿಪ್ರೆಷ್ ಆಗಿ ಬಾ, ನಾನು ನೀನು ಬಂದ ನಂತರ ವೆಕೇಷನ್ ತೆಗೆದುಕೊಳ್ಳುತ್ತೇನೆ...' ಎನ್ನುವ ವಾಕ್ಯಗಳು ಇನ್ನಷ್ಟು ಹೆದರಿಸತೊಡಗುತ್ತವೆ. ಈ ಖಾಯಿಲೆಗಳೆಲ್ಲ ಆಫ್ರಿಕದ ಕಗ್ಗತ್ತಲಿನಲ್ಲೇ ಏಕೆ ಹುಟ್ಟುತ್ತವೆಯೋ, ದಿನೇದಿನೇ ಮ್ಯುಟೇಷನ್ನಿಗೊಳಗಾಗೋ ಈ ವೈರಾಣುಗಳು ಮಾನವ ಕುಲವನ್ನೇ ನಾಶಮಾಡುತ್ತೇವೆ ಎಂದು ಯಾರ ಮೇಲೆ ಪಣತೊಟ್ಟಿವೆಯೋ ಯಾರು ಬಲ್ಲರು? ಹುಟ್ಟೂರಿಗೂ ಹೆದರಿಕೊಂಡು ಹೋಗಬೇಕಾದ ಅನಿವಾರ್ಯತೆ ಬಹಳ ಸಂಕಷ್ಟಕ್ಕೀಡುಮಾಡುತ್ತದೆ ಅನ್ನೋದಂತೂ ನಿಜ -- ಖಾಯಿಲೆ ಬಂದರೆ ಬರಲಿ, ನೋಡಿಕೊಂಡರಾಯಿತು ಎನ್ನುವ ನಮ್ಮುರಿನ ನನ್ನ ಮೊಂಡ ಮನಸ್ಸಿಗೆ ನನ್ನ ಅಮೇರಿಕನ್ ಮನಸ್ಸು ತಿಳಿಸಿಹೇಳಹೋಗಿ ಸೋಲತೊಡಗುತ್ತದೆ. ಹೋದಲ್ಲಿ ಬಂದಲ್ಲಿ ಹಾಗಾದೀತು, ಹೀಗಾದೀತು ಎಂದು ಹೆದರಿಕೆಯಿಂದ ಹೋಗುವ ಬದಲು ಹೋಗದಿದ್ದರೇ ಲೇಸಲ್ಲವೇ? ಅಥವಾ ನನ್ನ ಪೂರ್ವಸಿದ್ಧತೆಗಳನ್ನು ನಾನು ಯಾವಾಗಲೂ ಮಾಡಿಕೊಂಡಿರುವುದೇ ಸರಿಯಾದ್ದೇ.

It is slowly hitting...ಏನು ಅಂದ್ರೆ ರಿಯಾಲಿಟಿ! ನನ್ನ ಭಾರತದ ಇಮೇಜ್ ಸುಮಾರು ಒಂದು ದಶಕಗಳಷ್ಟು ಹಳೆಯದು. ಒಂದು ಶ್ಯಾಂಪೂ ಬಾಟಲಿಗೆ ನಾನು ಇವತ್ತಿಗೂ ಹೆಚ್ಚೂ ಅಂದ್ರೆ ಇಪ್ಪತ್ತು ಇಪ್ಪತ್ತೈದು ರುಪಾಯಿಗಳನ್ನೇ ಕೊಡುವ ಹಾಗೆ ಯೋಚಿಸೋದು. Inflation adjusted ಅಥವಾ ಹಣದುಬ್ಬರಕ್ಕೆ ಹೊಂದಿಕೊಂಡಿರದ ಪರಿಸ್ಥಿತಿಯನ್ನಲ್ಲ ನಾನು ಹೇಳ್ತಾ ಇರೋದು - ಹಳೆಯ ಮನಸ್ಥಿತಿ ಬಗ್ಗೆ. ಎಲ್ಲಾದರೂ ಐವತ್ತು ರುಪಾಯಿಗೆ ಒಂದು ಕಾಫಿಕೊಡುತ್ತಾರೆ ಎಂದು ಓದಿದರೆ ಕುಡಿಯದೇ ಇದ್ದರೆ ಹೇಗೆ ಎಂದು ಯೋಚಿಸುವ ಸ್ವಭಾವದ ಬಗ್ಗೆ. ಇದಕ್ಕೆಲ್ಲ ಒಂದು ಉತ್ತರವಿದೆ, ನಾನು ಕೊಡೋದು-ಕೊಳ್ಳೋದು ಏನಿದ್ದರೂ ನನ್ನ ಅಣ್ಣನ ಮುಖಾಂತರವಾದ್ದರಿಂದ ಅವನಿಗೆ ಹಣಕಾಸಿನ ವಿಷಯಗಳ ಬಗ್ಗೆ ಯೋಚಿಸಲು ಬಿಟ್ಟುಬಿಡುತ್ತೇನೆ, ಅದರಿಂದ ಏನಿಲ್ಲವೆಂದರೂ ನನ್ನ ಮನದೊಳಗಿರುವ ಭಾರತದ ಇಮೇಜ್ ಹಾಗೆಯೇ ಉಳಿಯುತ್ತದೆ - ಏಕೆ, ಇಂತಹ ಇಮೇಜನ್ನು ಸಮಯದಿಂದ ಸಮಯಕ್ಕೆ ಅಪ್‌ಡೇಟ್ ಮಾಡಲು ಹೆದರಿಕೆಯೇ? ಅಥವಾ ಹಳೆಯ ಆಲೋಚನೆಗಳ ಮೇಲೆ ಮನಸ್ಸನ್ನು ನಿಲ್ಲಿಸಿ ಅದನ್ನೇ ಆಸ್ವಾದಿಸುವುದು ಸುಖವೇ? ಅಥವಾ who cares about money ಎನ್ನುವ ಹುಂಬತನವೇ? ಅಥವಾ ನಿಧಾನವಾಗಿ ಓಲ್ಡ್ ಸ್ಕೂಲ್ ಆಗುವ ಬಗೆಗಿರೋ ಸಮಾಧಾನವೇ? ಅಥವಾ ಚಿಂತಿಸಲು ಬೇಕಾದಷ್ಟಿವೆ ಎನ್ನುವ ಹುಂಬ ಧಾರಾಳತನವೇ? ಅಥವಾ ಬಲ್ಲವರು ಆ ಬಗ್ಗೆ ಚಿಂತಿಸಲಿ ಎಂದು ನಿರುಮ್ಮಳವಾಗಿರಬಹುದಾದ ಕನಸೇ?

ಅಬ್ಬಾ, ನಮ್ಮೂರಿನ ಆಲೋಚನೆಗಳು ನನ್ನನ್ನು ಎಂತಹ ನಿದ್ರೆಯಿಂದಲೂ ಏಳಿಸಿಬಿಡಬಲ್ಲವು, ಏಕೆಂದರೆ ಅಲ್ಲಿನ ಘಟನೆಗಳಿಗೆ ಸ್ಪಂದಿಸಬಯಸುವ ನಾನು ಇಲ್ಲಿ ಹಾಯಾಗಿ ನಿದ್ರೆ ಮಾಡುವುದಾದರೂ ಹೇಗೆ?

Sunday, November 05, 2006

ವೀಸಾ ವಿವಾಹ

ಕನ್ನಡ ಚಿತ್ರಗಳು ನಮ್ಮಲ್ಲಿ ಬರೋದೇ ವೀಕೆಂಡ್‌ನಲ್ಲಿ, 'ತುಳಸೀ ಕಾರ್ತೀಕದ ದಿನ ಸಿನಿಮಾ ನೋಡ್ತೀರೇನ್ರೋ?' ಅಂತ ಅಜ್ಜಿ ಎಲ್ಲಿ ಬೈತಾರೇನೋ ಅನ್ನೋ ಭಯವನ್ನು ಮನದಲ್ಲಿ ಮೂಡಿಸಿಕೊಂಡು ಸಿನಿಮಾದ ಹಾದಿ ಹಿಡಿದರೆ ನಮ್ಮೂರುಗಳಲ್ಲಿ ರಸ್ತೆಯ ಉದ್ದಗಲಕ್ಕೆ ತಮ್ಮನ್ನು ತಾವು ತೆರೆದುಕೊಂಡ ನಾನಾ ಮೋಟಾರುವಾಹನಗಳ ದೆಸೆಯಿಂದ ಇವತ್ತೂ ಲೇಟೇ, ಅದೂ ಒಂದಲ್ಲ ಎರಡಲ್ಲ ಮೂವತ್ತು ನಿಮಿಷ! ಎರಡೂ ಕಾಲು ಘಂಟೆ ಸಿನಿಮಾದಲ್ಲಿ ಮೂವತ್ತು ನಿಮಿಷ ತಡವಾಗಿ ಹೋದ್ರೆ ಅದರಲ್ಲೇನು ಉಳಿದಿರೋದು ಅನ್ನೋ ಮಾತೇ ಬರೋಲ್ಲ, ಯಾಕೆಂದ್ರೆ ಇಲ್ಲಿ ಕನಿಷ್ಠ ಪಕ್ಷ ಒಂದು ಹದಿನೈದು ನಿಮಿಷವಾದ್ರೂ ತಡವಾಗಿ ಸಿನಿಮಾ ಆರಂಭವಾಗಿ ಆಯೋಜಕರು ತಡವಾಗಿ ಬರುವವರ ಸಹಾಯಕ್ಕೆ ಬರುತ್ತಾರೆ.

ಮೂವೀಸಿಟಿಯಲ್ಲಿ ಮಧ್ಯೆ ತೂತುಬಿದ್ದ ಬೆಳ್ಳಿ ತೆರೆಗೆ ಒಂದುಕಡೆ ತೇಪೆ ಹಚ್ಚಿದ್ದು ಕಂಡಕೂಡಲೇ ಇದೇನಪ್ಪಾ ನಮ್ಮೂರಿನ ಟೆಂಟ್ ಸಿನಿಮಾಗಳ ಪರದೆಯೇ ಇದಕ್ಕಿಂತ ಚೆನ್ನಾಗಿತ್ತಲ್ಲಾ! ಅನ್ನಿಸಿದ್ದೇನೋ ನಿಜ, ಅದರಲ್ಲೂ ನಾಯಕ-ನಾಯಕಿ ಹಾಗೂ ಚಿತ್ರದಲ್ಲಿ ಹೆಚ್ಚಾಗಿ ಪಾತ್ರವಹಿಸಿದವರೆಲ್ಲರೂ ತೊದಲು ತೊದಲು ಕನ್ನಡವನ್ನು, ಅದರಲ್ಲೂ ಶುದ್ಧ ಕನ್ನಡವನ್ನು ಹಾಸ್ಯಾಸ್ಪದವಾಗುವಷ್ಟರ ಮಟ್ಟಿಗೆ, ಉಚ್ಛಾರಮಾಡಿದಾಗಲಂತೂ ತಮಿಳು ಸಿನಿಮಾಗಳಲ್ಲಿ ನಡುನಡುವೆ ಕನ್ನಡ ಸಂಭಾಷಣೆಗಳನ್ನು ತೋರಿಸಿದ್ದಕ್ಕಿಂತ ಕಟುವಾಗಿ ಕಂಡುಬಂತು. ಉಳಿದವರ ನಿರೀಕ್ಷೆಗಳು ಏನೇನಿದ್ದವೋ ನನಗಂತೂ ಒಂದೇ ಸಮನೆ ನಿರಾಶೆಯಾಗತೊಡಗಿತು. ಆದರೆ ಮಧ್ಯಂತರದ ನಂತರ ಚಿತ್ರದಲ್ಲಿ ಆಸಕ್ತಿ ಹಾಗೂ ಅಭಿಮಾನ ಮೂಡಿಬರುವಂತೆ ಮಾಡಿದವರು ಡಾ. ರಾಘವರೆಡ್ಡಿ.

***

ನಮ್ಮ "ಘಮಘಮ" ವಿಶ್ವೇಶ್ ಅವರದ್ದಾಗಲೀ, ರಾಘವರೆಡ್ಡಿ ಅವರದ್ದಾಗಲೀ ಇಬ್ಬರದೂ ಒಂದೇ ರೀತಿಯ ಹಂಬಲ, ತಮ್ಮ ಸುತ್ತಮುತ್ತಲಿನಲ್ಲಿ ಕನ್ನಡವನ್ನು ಇವರುಗಳು ಹೋಗಿ ಬಂದಲ್ಲೆಲ್ಲ ಸೃಷ್ಟಿಸಿಕೊಳ್ಳಬಲ್ಲರು. ವಿಶ್ವೇಶ್ ಸಂಗೀತವನ್ನು ಅಭ್ಯಾಸಮಾಡಿ ಆಲ್ಬಮ್‌ಗಳನ್ನು ಮಾಡಿಕೊಳ್ಳಲು ತಮ್ಮ ಮನೆಯಲ್ಲೇ ರೆಕಾರ್ಡಿಂಗ್ ಸ್ಟೂಡಿಯೋ ಸ್ಥಾಪಿಸಿಕೊಂಡಿದ್ದರೆ, ರಾಘವ ಅವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮನೆಯಲ್ಲೇ ಒಂದು ಚಿಕ್ಕ ಮೂವಿ ಸ್ಟುಡಿಯೋವನ್ನು ಕಂಡುಕೊಂಡವರು. ಮಧ್ಯಂತರದಲ್ಲಿ ರಾಘವ ಅವರನ್ನು ಪರಿಚಯಿಸಿದ ಮೋಹನ್ - 'ಈಗ ಈ ಚಿತ್ರವನ್ನು ನಿರ್ಮಿಸಿದ ರಾಘವ ಅವರಿಂದ ಒಂದೆರೆಡು ಮಾತು...' ಎಂದು ಪೀಠಿಕೆ ಹಾಕಿಕೊಟ್ಟದ್ದೇ ತಡ ಬಹಳ ಉತ್ಸಾಹದಲ್ಲಿ ರಾಘವ ಅವರು ತಮ್ಮನ್ನು ತಾವು ಪರಿಚಯಿಸಿಕೊಂಡು ಎಲ್ಲರಿಗೂ ಅಪ್ತರಾಗಿ ಹೋದರು. ಅವರದೇ ಮಾತುಗಳಲ್ಲಿ ಈ ಚಿತ್ರವನ್ನು ಯಾವುದೇ ಫಿಲ್ಮ್ ರೋಲ್‌ಗಳಿಲ್ಲದೇ ಸಂಪೂರ್ಣವಾಗಿ ವಿದ್ಯುನ್ಮಾನವಾಗಿ ಮೂರು ವರ್ಷಗಳಲ್ಲಿ ತಯಾರಿಸಿದ್ದು, ಸುಮಾರು ೮೦ ಸಾವಿರ ಡಾಲರ್‌ಗಳನ್ನು ವ್ಯಯಿಸಿ ಕೇವಲ್ ವೀಕೆಂಡ್‌ನಲ್ಲಿ ಮಾತ್ರ ಈ ಚಿತ್ರವನ್ನು ನಿರ್ಮಿಸಲು ದುಡಿದದ್ದು, ಚಿತ್ರಕ್ಕೆ ಬೇಕಾದ ನಟ-ನಟಿಯರನ್ನು ಹೆಕ್ಕಿ ಅವರಿಗೆಲ್ಲ ಕನ್ನಡವನ್ನು ಕಲಿಸಿದ್ದು ಮುಂತಾದ ವಿಷಯಗಳನ್ನು ಭಾವುಕವಾಗಿ ಹಂಚಿಕೊಂಡರು. ಕ್ಯಾಲಿಫೋರ್ನಿಯಾದಲ್ಲಿ ಅದೆಷ್ಟೇ ಜನರು ಕನ್ನಡಿಗರಿದ್ದರೂ ಯಾರೂ ಸಹಾಯಕ್ಕೆ ಬರದಿರುವ ಸ್ಥಿತಿಯನ್ನು ಅವರು ವಿವರಿಸಿದಾಗ 'ಇಲ್ಲಿ ನ್ಯೂ ಜೆರ್ಸಿಯಲ್ಲಿ ಈ ಸಿನಿಮಾವನ್ನು ಮಾಡಿದ್ದರೆ ನಾವು ಸಹಾಯ ಮಾಡುತ್ತಿದ್ದೆವು...' ಎಂದು ಕೆಲವರು ಅಂದರೆ 'ಎಲ್ಲಾ ಕಡೆ ಅದೇ ಪರಿಸ್ಥಿತಿ, ಮೂರುವರ್ಷಗಳ ಈ ಪ್ರಾಜೆಕ್ಟಿನಲ್ಲಿ ಪ್ರತೀ ವೀಕೆಂಡ್‌ನಲ್ಲೂ ತಮ್ಮ ಸಮಯವನ್ನು ಮೀಸಲಾಗಿಡುವುದಕ್ಕೆ ಇಲ್ಲೂ ಹೆಚ್ಚು ಜನರಿಗೆ ಆಗೋದಿಲ್ಲ...' ಎಂದು ಕೆಲವರು ತಿದ್ದಿ ಹೇಳಿದರು.

ರಾಘವ ಅವರು ತಮ್ಮನ್ನು ಪರಿಚಯಿಸಿಕೊಂಡ ಹಾಗೆ ಅವರ ಕಾವ್ಯನಾಮ 'ಕನ್ನಡದಾಸ'. ಈ ಹೆಸರಿಗೆ ತಕ್ಕಂತೆ ನಿಜವಾಗಿಯೂ ಅವರು ಕನ್ನಡದಾಸರೇ. ಚಿತ್ರಮಂದಿರದಲ್ಲಿ ಪ್ರೇಕ್ಷರಿಗೆ 'ಈ ಚಿತ್ರದ ಮುಂದಿನ ಭಾಗ "ಅಮೇರಿಕಾ ಅನುಬಂಧ"ವಾಗಿ ಮುಂದುವರೆಸುತ್ತಿದ್ದೇನೆ...' ಎಂದು ಮಹಾಉತ್ಸಾಹದಲ್ಲಿ ತಮ್ಮನ್ನು ತಾವು ತೆರೆದುಕೊಂಡ ಅವರು 'ನಿಮ್ಮಲ್ಲಿ ಯಾರಾದರೂ ಸಹಾಯ ಮಾಡುವವರಿದ್ದರೆ ದಯವಿಟ್ಟು ಹಾಗೆ ಮಾಡಿ, ಡಬ್ಬಿಂಗ್ ಮಾಡುವಲ್ಲಿ, ಚಿತ್ರಕಥೆಯನ್ನು ಅಳವಡಿಸಿಕೊಳ್ಳುವಲ್ಲಿ ಯಾವುದೇ ರೀತಿಯ ಸಹಾಯಗಳಿಗೂ ನಾನು ಸಿದ್ಧ, ನಿಮಗೇ ಈ ಚಿತ್ರದ ಹಾರ್ಡ್‌ಡ್ರೈವ್ ಕಳಿಸುತ್ತೇನೆ ಬೇಕಾದರೆ' ಎಂದು ವಿನಯಪೂರ್ವಕವಾಗಿ ಮನವಿಮಾಡಿಕೊಂಡರು. ಚಿತ್ರವನ್ನು ತಯಾರಿಸುವಲ್ಲಿ ತಾವು ಅದರ ಉದ್ದಗಲಕ್ಕೂ ಅನುಭವಿಸಿದ ತೊಂದರೆಗಳನ್ನು ಹಂಚಿಕೊಂಡಿದ್ದನ್ನು ನೋಡಿ ನಮಗಂತೂ ಬಹಳ ಸಂತೋಷವಾಯಿತು. ಈ ರೀತಿಯೂ ಮಾಡುವವರಿದ್ದಾರೆ, ತಮ್ಮ ಅಭಿಮಾನವನ್ನು ತಮ್ಮ ಹವ್ಯಾಸವನ್ನು ಮಾತಿನಿಂದ ಕೃತಿಗೆ ತರುವವರಿದ್ದಾರೆ ಎನ್ನುವ ವಿಷಯವನ್ನು ಪ್ರೇಕ್ಷಕರು ಬಹಳ ಸಂತೋಷದಿಂದ ಸ್ವೀಕರಿಸಿ ರಾಘವ ಅವರಿಗೆ ಚಪ್ಪಾಳೆಗಳಿಂದ ಮೆಚ್ಚುಗೆ ಸೂಚಿಸಿದರು, ಈ ಹಿನ್ನೆಲೆ ಮೊದಲೇ ತಿಳಿದ್ದಿದ್ದರೆ ಎಂದುಕೊಂಡವರಲ್ಲಿ ನಾನೂ ಒಬ್ಬ - ಆಗಿನಿಂದಲೇ ಚಿತ್ರವನ್ನು ಮತ್ತೊಂದು ಕೋನದಲ್ಲಿ ನಾನು ನೋಡತೊಡಗಿದ್ದು. ಒಟ್ಟಿನಲ್ಲಿ ರಾಘವ ಅವರ ಸಾಧನೆ ಅಮೋಘವಾದದ್ದು, ಇಂತಹ ಸಾಧನೆಯನ್ನು ಪುಲ್‌ಟೈಮ್ ಜೀವಾಣುಶಾಸ್ತ್ರ ಸಂಶೋಧನೆ ಮಾಡಿಕೊಂಡು ಕೇವಲ ವೀಕೆಂಡ್‌ನಲ್ಲಿ ಮಾಡುವುದು ಸಾಮಾನ್ಯ ಕೆಲಸವೇನಲ್ಲ, ರಾಘವರಂತಹವರಿಗೆ ಶಹಬ್ಬಾಸ್ ಗಿರಿ ಕೊಡಲೇಬೇಕು.

***

ಕೋಲಾರದ ಚಿಂತಾಮಣಿಯ ಹುಡುಗ ಕೃಷ್ಣಾರೆಡ್ಡಿ ಅರಿಜೋನಾದ ಜೆ.ಎಫ್.ಕೆ ವಿಶ್ವವಿದ್ಯಾನಿಲಯಕ್ಕೆ ಪಿ.ಎಚ್‌ಡಿ. ಮಾಡಲೆಂದು ಬರುತ್ತಾನೆ, ಅವನ ಮೇಷ್ಟ್ರು ಡಾ.ಬ್ಲ್ಯಾಕ್ (ಕರಿಯಪ್ಪ) ಅವರ ಜೊತೆ ಬೋಧನೆಯಲ್ಲಿ ಸಹಾಯಕನಾಗಿ ಸೇರಿಕೊಂಡನಂತರ ಹಲವಾರು ಶಿಷ್ಯರಲ್ಲಿ ದಿವ್ಯಪ್ರಭಾ ಪಟೇಲ್ ಎಂಬ ಹುಡುಗಿಯ ಜೊತೆ ವಿಶೇಷವಾಗಿ ಸ್ನೇಹ ಬೆಳೆಯುತ್ತದೆ. ಪರೀಕ್ಷೆಯಲ್ಲಿ ಆಕೆಗೆ 'ಬಿ' ಗ್ರೇಡ್ ಗಳಿಸಿಕೊಡಲೆಂದು ರೆಡ್ಡಿ ಐದು ಕೃಪಾಂಕಗಳನ್ನು ನೀಡಿದ್ದು ಆತನ ಮೇಷ್ಟ್ರಿಗೆ ಸರಿಯೆಂದು ಕಂಡುಬರದೇ ತನ್ನ ಕೆಲಸವನ್ನು ಕಳೆದುಕೊಳ್ಳುವಂತಾಗುತ್ತದೆ, ತನ್ನ ವೀಸಾ ಸ್ಟೇಟಸ್ ಮೂರುತಿಂಗಳಿನಲ್ಲಿ ಮುಗಿದುಹೋಗುವುದರಿಂದ ಒಂದೇ ಭಾರತಕ್ಕೆ ಹೋಗಬೇಕು, ಅಥವಾ ಇಲ್ಲೇ ಯಾರನ್ನಾದರೂ ಅಮೇರಿಕನ್ ಪ್ರಜೆಯನ್ನು ವಿವಾಹವಾಗಬೇಕು ಎನ್ನುವ ಇಬ್ಬಂದಿಗೆ ನಾಯಕ ಬೀಳುತ್ತಾನೆ. ಒಬ್ಬಳು ಕಪ್ಪು ಹೆಂಗಸು, ಇನ್ನೊಬ್ಬಳು ಬಿಳಿಯ ಹುಡುಗಿ ಇವರೆನ್ನೆಲ್ಲ ಮದುವೆಯಾಗುವ ಪ್ರಸಂಗಗಳನ್ನು ಹುಟ್ಟುಹಾಕಿಕೊಂಡು ಅದರ ಹಿನ್ನೆಲೆಯಲ್ಲಿ ನಾಯಕ ದಿವ್ಯಾಳ ಸಲಹೆಯಂತೆ ಆಕೆಯನ್ನೇ ವಿವಾಹವಾಗುತ್ತಾನೆ. ವಿವಾಹವಾದರೂ ಆಕೆಯೊಡನೆ ದೈಹಿಕ ಸಂಬಂಧವನ್ನು ಮಾಡಬಾರದು, ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎನ್ನುವ ಅನೇಕ ಮಾನಸಿಕ ಬಂಧನಗಳಲ್ಲಿ ತೊಳಲಾಡುವುದೂ ಎನ್ನುವುದರಿಂದ ಹಿಡಿದು ಭಾರತದಲ್ಲಿ ಈಗಾಗಲೇ ತನ್ನ ಜೊತೆ ಮದುವೆ ನಿಶ್ಚಯವಾಗಿರುವ ಶೋಭಾಳನ್ನೂ ಕೈ ಬಿಡಬಾರದು ಎನ್ನುವ ನಿರ್ಧಾರಕ್ಕೆ ನಾಯಕಬರುತ್ತಾನೆ. ಒಂದು ಕಡೆ ತಾನು ಮದುವೆಯಾಗಬಾರದು ಎನ್ನುವ ಹಠದಲ್ಲಿರುವ ದಿವ್ಯಾ ಕೇವಲ ಉಪಕಾರ ಸ್ಮರಣೆಗೆ ರೆಡ್ಡಿಯನ್ನು ಮದುವೆಯಾದದ್ದೂ, ಮತ್ತೊಂದು ಕಡೆ ಶೋಭಾಳನ್ನು ಕೈಬಿಡಬಾರದು ಎನ್ನುವ ಗೊಂದಲವೂ, ಜೊತೆಯಲ್ಲಿ ಇಲ್ಲಿ ಡೆನ್ವರ್ ನಲ್ಲಿ ಕೆಲಸ ಮಾಡಿಕೊಂಡು ದೂರವಿರಬೇಕಾದ ಅನಿವಾರ್ಯತೆಯೂ ಇವುಗಳೆಲ್ಲ ಚಿತ್ರದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸುತ್ತವೆ. ರೆಡ್ಡಿ ಕೊನೆಯಲ್ಲಿ ಯಾರನ್ನು ಮದುವೆಯಾಗಿ ಮುಂದುವರೆಯುತ್ತಾನೆ, ದಿವ್ಯಾಳ ಅಣ್ಣ, ಅಮ್ಮ ಅವರ ಮದುವೆಗೆ ಸಮ್ಮತಿಸುತ್ತಾರೆಯೇ, ರೆಡ್ಡಿ ಗ್ರೀನ್‌ಕಾರ್ಡು ಪಡೆಯುವುದಕ್ಕೆ ಏನೇನು ಮಾಡಬೇಕಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ಖಂಡಿತವಾಗಿ ನೋಡಲೇಬೇಕು. ಅಮೆಚ್ಯೂರ್ ಆರ್ಟಿಸ್ಟ್‌ಗಳು ಮಾಡಿರುವ ಹೋಮ್‌ವಿಡಿಯೋ ಎಂದುಕೊಂಡು ಚಿತ್ರದಲ್ಲಿರುವ ನ್ಯೂನ್ಯತೆಗಳನ್ನೆಲ್ಲ ಬದಿಗೊತ್ತಿ ರಾಘವ ರೆಡ್ಡಿಯವರ ಸಾಧನೆಯನ್ನು ಕಣ್ಣಾರೆ ನೋಡಬೇಕು ಆಗಲೇ ನಿಮಗೆ ಒಂದು ಚಿತ್ರವನ್ನು ಮಾಡುವುದಕ್ಕೆ ಏನು ಪಾಡುಪಡಬೇಕಾಗುತ್ತದೆ ಎನ್ನುವುದು ಗೊತ್ತಾಗುತ್ತದೆ.

***

ರಾಘವ ಅವರ ಕನ್ನಡಾಭಿಮಾನ ಚಿತ್ರದುದ್ದಕ್ಕೂ ಧಾರಾಳವಾಗಿ ಹರಿದುಬಂದಿದೆ. ಚಿತ್ರದಲ್ಲಿ ಎಲ್ಲವೂ ಸಂಪೂರ್ಣವಾಗಿ ಕನ್ನಡಮಯ. ವಿಶ್ವವಿದ್ಯಾನಿಲಯದ ಪ್ರಾಂಗಣದಿಂದ ಹಿಡಿದು, ಮದುವೆ ಮಾಡಿಸುವ ಚರ್ಚಿನವರೆಗೆ, ದೊಡ್ಡ ಕೊಳ್ಳ (ಗ್ರ್ಯಾಂಡ್ ಕ್ಯಾನಿಯನ್)ದಿಂದ ಹಿಡಿದು, ಅರಿಜೋನಾದ ಫಾರ್ಮ್‌ಗಳವರೆಗೆ ಬರುವ ಪಾತ್ರಧಾರಿಗಳೆಲ್ಲ ಸಂಪೂರ್ಣ ಕನ್ನಡದಲ್ಲೇ ವ್ಯವಹರಿಸೋದು. ಚಿತ್ರದಲ್ಲಿ ಬರುವ ಅಮೇರಿಕದವರು, ರಷಿಯನ್ನರು, ಬ್ರೆಜಿಲಿಯನ್ನರು, ಈಜಿಪ್ಶ್ಯನ್ನರು, ಕರಿಯರು, ಬಿಳಿಯರು, ಭಾರತೀಯರು, ಎಲ್ಲರೂ ಶುದ್ಧಕನ್ನಡವನ್ನು ಮಾತನಾಡುವ ಪ್ರಯತ್ನ ಮಾಡಿಸಿರುವುದು ರಾಘವ ಅವರ ಹೆಗ್ಗಳಿಕೆ. ಆದಷ್ಟು ಪಾರಿಭಾಷಿಕ ಪದಗಳಿಗೆ ಕನ್ನಡದ ಪದವನ್ನು ಬಳಸಿರುವುದು ಒಮ್ಮೊಮ್ಮೆ ಹಾಸ್ಯಾಸ್ಪದವೆನಿಸಿದರೂ ರಾಘವ ಅವರ ನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಿದರೆ ಎಲ್ಲೂ ಅತಿಶಯವೆನಿಸೋದಿಲ್ಲ. ಚಿತ್ರದುದ್ದಕ್ಕೂ ರಾಜ್‌ಕುಮಾರ್ ನಟಿಸಿರುವ ಬಂಗಾರದ ಮನುಷ್ಯ, ಕಸ್ತೂರಿನಿವಾಸ ಮುಂತಾದ ಹಾಡಿನ ಹಿನ್ನೆಲೆಗಳನ್ನು ಬಹಳವಾಗಿ ಬಳಸಿಕೊಂಡು ಪಾತ್ರಗಳೂ ಈ ಹಾಡುಗಳ ಕೆಲವು ಪಂಕ್ತಿಗಳನ್ನು ಅನುಮೋದಿಸುವಂತೆ ಮಾಡಿರುವುದು ಹೆಗ್ಗಳಿಕೆ. ಶಂಕರ್‌ನಾಗ್ ಅವರ 'ಇದುಸಾಧ್ಯ' ಎನ್ನುವ ಚಲನಚಿತ್ರ ಕೇವಲ ೨೪ ಘಂಟೆಗಳಲ್ಲಿ ತಯಾರುಮಾಡಿದ ಮೊದಲ ಭಾರತೀಯ ಚಲನಚಿತ್ರ ಎನ್ನುವಂತೆ, ರಾಘವ ಅವರು ಏಕವ್ಯಕ್ತಿ ಸಂಪಾದನೆಯಲ್ಲಿ ಸಂಪೂರ್ಣವಾಗಿ ವೀಕೆಂಡ್‌ನಲ್ಲಿ ತೆಗೆದಿರುವ ಮೂರುವರ್ಷಗಳ ಪ್ರಾಜೆಕ್ಟ್ 'ವೀಸಾವಿವಾಹ' ಎನ್ನಬಹುದು.

ಈ ಚಿತ್ರದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಮೆಚ್ಚಿಗೆಯಾದದ್ದು ಪಾತ್ರಗಳ ಅಮೇರಿಕನ್ ನಿಲುವು. ಚಿಕ್ಕ ಹಾಗೂ ಚೊಕ್ಕವಾಗಿ ತಾವು ಹೇಳಬೇಕಾದುದನ್ನು ಹೇಳಿ ತಮ್ಮನ್ನು ಕಟ್ಟಿಕೊಳ್ಳುವ ಪಾತ್ರಗಳ ಮನಸ್ಸಿನ್ನಲ್ಲಿ ಅಮೇರಿಕನ್ ಪ್ರಭಾವ ಧಾರಾಳವಾಗಿ ಹೊರಹೊಮ್ಮಿದೆ - 'ಅದು ನನಗೆ ಇಷ್ಟವಿಲ್ಲ' ಎನ್ನುವ ಒಂದೇ ವಾಕ್ಯ ನಾಯಕಿಯ ಪಾತ್ರದಲ್ಲಿ ಬಹಳಷ್ಟು ಗಂಭೀರವಾಗಿ ಹೊರಹೊಮ್ಮಿದೆ. ನಾನು ಮದುವೆಯಾಗೋದಿಲ್ಲ ಎನ್ನುವ ಮಗಳನ್ನು ಅಮ್ಮ, ಅತ್ತಿಗೆ, ಅಣ್ಣಂದಿರು ಅಮೇರಿಕನ್ ಸಂಪ್ರದಾಯದಲ್ಲಿ ಉಪಚರಿಸುವುದೂ, ನಾಯಕಿ ತನ್ನ ವ್ಯಕ್ತಿತ್ವವನ್ನು ಎಲ್ಲಿ ಹೋದರೂ ಕಾಪಾಡಿಕೊಳ್ಳುವುದೂ ರಾಘವ ಅವರು ಬಹಳ ಚೆನ್ನಾಗಿ ಮೂಡಿಸಿದ್ದಾರೆ. ಇಮಿಗ್ರೇಷನ್ ಅಧಿಕಾರಿ ಸಂದರ್ಶನದಲ್ಲಿ ಹದ್ದುಮೀರಿ ವರ್ತಿಸುವುದನ್ನು ನಾಯಕಿಯ ಪಾತ್ರ ಅಮೇರಿಕನ್ ಮಹಿಳೆಯಾಗಿ ಖಂಡಿಸುತ್ತದೆ. 'ನಿನಗೆ ಎಲ್ಲರೂ ಬುದ್ದೂ ಎಂದರೆ, ನಿನ್ನನ್ನು ಎಲ್ಲರೂ ಅವಮಾನಿತನನ್ನಾಗಿ ಮಾಡಿದರೆ ಅದನ್ನು ನೋಡಿ ನೀನೇಕೆ ಸಹಿಸಿಕೊಳ್ಳಬೇಕು?' ಎನ್ನುವ ಮಾತಿಗೆ ನಾಯಕ 'ನನಗೆ ನಾನೇ ಹಾಗಂದುಕೊಳ್ಳುತ್ತೇನಲ್ಲ!' ಎಂದು ಹಾಸ್ಯವಾಗಿ ತೇಲಿಸಿಬಿಡುತ್ತಾನೆ. ಭಾರತೀಯ ಹಿನ್ನೆಲೆಯಲ್ಲಿ ಯೋಚಿಸುವ ನಾಯಕ, ಅಮೇರಿಕನ್ ಹಿನ್ನೆಲೆಯಲ್ಲಿ ಯೋಚಿಸುವ ನಾಯಕಿ, ಹಾಗೂ ಹಲವಾರು ಪಾತ್ರಗಳು ಬಹಳ ಸರಳವಾಗಿ ಬಿಂಬಿತವಾಗಿವೆ, ಈ ಪಾತ್ರಗಳ ಮಾನಸಿಕ ವ್ಯಾಪಾರ ಎಲ್ಲಿಯೂ ಅತಿ ಎನ್ನಿಸುವುದಿಲ್ಲ. ಹೀಗೆ ರಾಘವ ಅವರು ಪ್ರತಿಯೊಂದು ಪಾತ್ರಗಳಿಗೂ ಒಂದು ಸೈದ್ಧಾಂತಿಕ ನೆಲೆಯನ್ನು ಒದಗಿಸುವುದರ ಜೊತೆಗೆ ಅವುಗಳನ್ನು ಇದ್ದಹಾಗೇ ತೋರಿಸುವುದಕ್ಕೆ ಮುತುವರ್ಜಿಯನ್ನೂ ವಹಿಸಿದ್ದಾರೆ.

***

ರಾಘವ ಅವರ ಸಾಧನೆ ನಿಜವಾಗಿಯೂ ಶ್ಲಾಘನೀಯವಾದುದು. ಅಲ್ಲಲ್ಲಿ ಬರುವ ಧ್ವನಿಮುದ್ರಣ ದೋಷಗಳನ್ನು ಅವರು ಮುಂಬರುವ ಚಿತ್ರಗಳಲ್ಲಿ ಖಂಡಿತವಾಗಿ ತಿದ್ದಿಕೊಳ್ಳಬಲ್ಲರು. ಛಾಯಾಗ್ರಾಹಕರಾಗಿ ವೃತ್ತಿಪರರ ಹತ್ತಿರಹತ್ತಿರ ಬಂದರೂ ಸಂಭಾಷಣೆಗಳನ್ನು ಬರೆದು ಒಪ್ಪಿಸುವಲ್ಲಿ ಅವರು ತಮ್ಮನ್ನು ತಾವು ಬಹಳಷ್ಟು ತೊಡಗಿಸಿಕೊಳ್ಳಬೇಕು. ಚಿತ್ರದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸಂಕಲನಕ್ಕೆ ಅವರು ಆಧ್ಯತೆಯನ್ನು ಕೊಡಬೇಕು, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಶೂಟ್ ಮಾಡಿರುವ ಸಿನಿಮಾವಾದ್ದಾರಿಂದ ಅವರು ದೃಶ್ಯಗಳನ್ನು ಸಂಕಲಿಸಿ ಸಹಜವಾಗಿ ಕಥೆಯ ಓಟವನ್ನು ನಿರ್ಮಿಸುವಲ್ಲಿ ಶ್ರಮಿಸಬೇಕು. ಸಂಭಾಷಣೆ ಪೂರ್ಣ ಕನ್ನಡಮಯವಾಗಿರುವುದು ರಾಘವ ಅವರನ್ನ ಬಲ್ಲವರಿಗೆ ಅತಿ ಎನ್ನಿಸುವುದಿಲ್ಲ, ಅವರ ಫೋನ್ ನಂಬರ್ ಅನ್ನು ಕೇಳಿದರೆ ಅವರು ಸಂಖ್ಯೆಗಳನ್ನು ಕನ್ನಡದಲ್ಲಿಯೇ ಹೇಳೋದು! ಮುಕ್ತ ಹಾಗೂ ಸ್ನೇಹಮಯರಾಗಿರುವ ರಾಘವ ಅವರೊಂದಿಗೆ ಬಹಳಷ್ಟು ಜನ ಸಹೃದಯರು ಕೈಗೂಡಿಸಿದರೆ ಅವರ ಮುಂದಿನ ಚಿತ್ರಗಳು ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದೇ ಪಡೆಯುತ್ತವೆ ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ. ಮುಂಬರುವ ದಿನಗಳಲ್ಲಿ 'ವೀಸಾವಿವಾಹ'ವನ್ನು ಕೆನಡಾ, ಸಿಂಗಪುರ, ಹಾಂಗ್‌ಕಾಂಗ್, ಭಾರತ ಮುಂತಾದ ದೇಶಗಳಲ್ಲಿ ಬಿಡುಗಡೆ ಮಾಡಲಿರುವ ರಾಘವ ಅವರಿಗೆ ಅಭಿನಂದನೆಗಳು ಹಾಗೂ ಅವರಿಗೆ ಯಶಸ್ಸು ಸಿಗಲಿ ಎನ್ನುವುದು ನನ್ನ ಹಾರೈಕೆ.

Friday, November 03, 2006

ಬಂದದ್ದೆಲ್ಲಾ ಬರಲಿ, ವೀಕೆಂಡ್‌ನಲ್ಲೇ ಬರಲಿ!

ಕೊನೇಪಕ್ಷ ನವೆಂಬರ್ ತಿಂಗಳು ಬಂತು ಈಗಾದರೂ ಪುರುಸೊತ್ತು ಮಾಡಿಕೊಂಡು ಕನ್ನಡವನ್ನು ಓದೋಣವೆಂದುಕೊಂಡರೆ ಟೈಮೇ ಸಿಗುತ್ತಿಲ್ಲ ಎನ್ನುವಂತಾಗಿದ್ದು ನನ್ನ ಪುಣ್ಯವೋ ಅಥವಾ ಕಾಕತಾಳೀಯವೋ ಯಾರಿಗೆ ಗೊತ್ತು ಅಂತ ಯೋಚಿಸ್ತಾ ಕೂತಿದ್ದೆ, ಸಡನ್ ಆಗಿ ನೆನಪಿಗೆ ಬಂತು, ನಮ್ಮ ರಾಜ್ಯದಲ್ಲಿ ಈ ತಿಂಗಳು ತುಂಬೆಲ್ಲಾ ಎಲ್ಲಾ ಕಡೆ ರಾಜ್ಯೋತ್ಸವ ಆಚರಿಸ್ತಾರೆ ಆದ್ದರಿಂದ ನನಗೂ ನಮ್ಮ ರಾಜ್ಯೋತ್ಸವ ಈ ವಾರಾಂತ್ಯದಲ್ಲೇ ಆಗಲೀ ಎಂದು ಕನ್ನಡ ರಾಜ್ಯೋತ್ಸವವನ್ನು ಅಮೇರಿಕನ್ ಮಯವಾಗಿ ಮಾಡಿಬಿಟ್ಟರೆ ಹೇಗೆ ಎಂದು ಯೋಚಿಸಿಕೊಂಡಾಗ ಒಮ್ಮೆ ನಗುಬಂತು. ಹೌದು ಮತ್ತೆ, ವಾರವಿಡೀ ತುಂಬಾ ವ್ಯಸ್ತರಾಗಿರೋ ನಮಗೆ ಆಗುಹೋಗೋ ಕೆಲಸಗಳೆಲ್ಲ ವೀಕೆಂಡ್‌ನಲ್ಲೇ ಬರಬೇಕಪ್ಪಾ, ವಾರದ ದಿನಗಳಲ್ಲಿ ಯಾವನಾದ್ರೂ ಮಹೂರ್ತ ನೋಡಿ ಮದುವೆ ಆಗ್ತಾನಾ ಈಗಿನ್ ಕಾಲದಲ್ಲಿ? ಹಾಗೇನಾದ್ರೂ ಆದ್ರೆ ಒಂದ್ ಲೆಕ್ಕಾ ಒಳ್ಳೇದೇ ಊಟಕ್ಕೆ ಜನ ಕಡಿಮೆ, ಖರ್ಚೂ ಕಡಿಮೆ. ಇದ್ದುದರಲ್ಲಿ ಯಾವುದು ಮಹಾಪಾಪ? ತಿಂಗಳು ತುಂಬೆಲ್ಲಾ ರಾಜ್ಯೋತ್ಸವ ಆಚರಿಸಿದೋ ಅಥವಾ ಮಾಡೋದೇನಿದ್ರೂ ವೀಕೆಂಡಿನಲ್ಲೇ ಇರಲಿ ಅನ್ನೋದೋ?

ಅದೂ ಸರಿ, ಈ ಐದು ದಿನಗಳ ಕೆಲಸ ನಡೆಯೋ ಒಂದು ವಾರಕ್ಕೆ ಎರಡು ದಿನಗಳ ಬ್ರೇಕ್ ಎಲ್ಲಿಯ ಸಮ? ಕೊನೇ ಪಕ್ಷ ಐದು ದಿನಕ್ಕೆ ಎನಿಲ್ಲಾ ಅಂದ್ರೂ ನಾಲ್ಕು ದಿನಾನಾದ್ರೂ ರಜೆ ಇರಬೇಕಪ್ಪಾ? ಹಂಗಾದ್ರೆ ಒಂದು ವಾರದಲ್ಲಿ ಒಂಭತ್ತು ದಿನಗಳು ಆದಹಾಗೆ ಆಗಲಿಲ್ವಾ? ಹೌದು ಮತ್ತೆ, ಒಂಭತ್ತು ದಿನಗಳು ಅಂದ್ರೆ ರವಿಯಿಂದ ಹಿಡಿದು ಶನಿಯವರೆಗೆ ಏಳು ಗ್ರಹಗಳಿಗೆ ಏಳುದಿನಗಳನ್ನು ಮೀಸಲಿಟ್ಟು ಒಂದು ವಾರ ಅಂತ ಕರೆದರೆ, ಇನ್ನುಳಿದ ಎರಡು ಗ್ರಹಗಳಿಗೇಕೆ ವಾರವಿಲ್ಲ? ಇದು ಅನ್ಯಾಯ, ಒಂಥರಾ ಡಿಸ್ಕ್ರಿಮಿನೇಷನ್ - ಸೈಜು ದೊಡ್ಡದಿದ್ದ ಗ್ರಹಗಳಿಗೆ ಒಂದು ರೀತಿ, ಸೂರ್ಯನಿಗೆ ಹತ್ತಿರವಿದ್ದ ಗ್ರಹಗಳಿಗೆ ಮತ್ತೊಂದು ರೀತಿ. ಇದು ಪಕ್ಕಾ ಅನ್ಯಾಯ, ಯಾವುದಾದ್ರೂ ಲಾಯರ್ ಕರೆದು ಸೂ ಮಾಡ್‌ಬೇಕು, ಕಂಪೆನ್ಸಟೋರಿ ಡ್ಯಾಮೇಜು, ಪ್ಯುನಿಟಿವ್ ಡ್ಯಾಮೇಜು ಎಲ್ಲಾ ಸೇರಿ ಸುಮಾರು ಒಂದು ನಾಲ್ಕು ನೂರು ಮಿಲಿಯನ್ ಡಾಲರ್‌ಗೆ ಸೂ ಮಾಡಿದ್ರೆ, ಅದರಲ್ಲಿ ಹತ್ತು ಪರ್ಸೆಂಟ್ ನಾನಿಟ್ಟುಕೊಂಡು ಇನ್ನು ಉಳಿದುದ್ದರಲ್ಲಿ ಅರ್ಧ ಬಾಚಿಕೊಂಡ ಲಾಯರ್‍ಗಳಿಗೆ ಗುಡ್‌ಬೈ ಹೇಳಿದ ಮೇಲೆ 'ಗ್ರಹಗಳ ಗ್ರಹಚಾರಕ್ಕೊಂದು ಫಂಡ್' ಎಂದು ಒಂದು ಚಾರಿಟೆಬಲ್ ಗ್ರೂಪ್ ಹುಟ್ಟಿಸಿದರೆ ಆಯಿತಪ್ಪಾ ಅದೇನು ಮಹಾ?

ಪಾಪ, ಆ ಪ್ಲುಟೋ ಗ್ರಹವನ್ನ ಗ್ರಹ ಅಂತಾನೇ ಕನ್ಸಿಡರ್ ಮಾಡಲ್ಲಾ ಅಂದರಂತೆ? ಛೇ, ಏನ್ ಟೈಮ್ ಬಂತಪ್ಪಾ, ನಮ್ ಕಾಲದಲ್ಲೇ ಎಷ್ಟೊಂದ್ ಚೆಂದಿತ್ತು, ನವಗ್ರಹಗಳು ಅಂತ ಪೂಜೆ ಮಾಡ್ತಿದ್ವಿ, ಪ್ಲುಟೋನೂ, ನೆಪ್ಚೂನೂ ಅಣ್ಣಾತಮ್ಮಾ ಇದ್ದಂಗೆ ಅಂತ ತಿಳಕೊಂಡು ನಮ್ ಪ್ರಪಂಚಕ್ಕೆ ನವಗ್ರಹ ಅಂತ ಹೇಳಿಕೊಂಡು ತಿರುಗುತಿದ್ವಿ, ಈಗ ನೋಡಿದ್ರೆ ನಮ್ ಪ್ರಪಂಚಕ್ಕೆ ಕೇವಲ ಎಂಟೇ ಎಂಟು ಗ್ರಹಗಳಂತೆ - ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ, ಗುರುಶುಕ್ರಶನಿಭ್ಯಶ್ಯ ರಾಹುವೇಕೇತುವೇ ನಮಃ - ಎಂದು ಹೇಳೋ ಮಂತ್ರದಲ್ಲಿ 'ರಾಹುವೇಕೇತುವೇ' ಅನ್ನೋದು ಪ್ಲುಟೋ ಜಾಗದಲ್ಲಿ ರಾಹು ಬಿಡ್ತೀರೋ ಕೇತು ಬಿಡ್ತೀರೋ ಅಂತ ಕೇಳಿದಂಗ್ ಆಗಲ್ವಾ? ನಾನು ಕೇಳಿದ ಮಟ್ಟಿಗೆ ಯಾವನಿಗಾದ್ರೂ ಗ್ರಹಗತಿಯಲ್ಲಿ ರಾಹು ಕೆಟ್ಟದಿದೆ ಅಂತ ಕೇಳಿದ್ದೀನಿಯೇ ವಿನಾ ಕೇತು ಕೆಟ್ಟದಿದೆ ಅಂತ ಎಲ್ಲೂ ಕೇಳಿಲ್ಲ, ಜೊತೆಗೆ ರಾಹುಕಾಲ ನಮಗ್ಯಾವತ್ತಿದ್ರೂ ಬೇಕು ಆದ್ರಿಂದ ಪ್ಲುಟೋಗೆ ಕೊಕ್ ಕೊಟ್ಟ್ ಹಾಗೆ ಕೇತುಗೆ ಕೊಟ್ರೆ ಹೆಂಗೆ ಅಂತ ಒಂದ್ಸರ್ತಿ ಯೋಚ್ನೆ ಬಂತು. ಆದ್ರೆ ಧರ್ಮರಾಯ ಅರ್ಜುನ, ಭೀಮರಂತ ಮಹಾ ಪರಾಕ್ರಮಿಗಳನ್ನೆಲ್ಲ ಬಿಟ್ಟು ನನಗೆ ಮಾದ್ರಿ ಮಗ ನಕುಲ ಬದುಕಿ ಬರಲಿ ಅಂತ ಆ ಮಾತನಾಡೋ ಸರೋವರದ ಹತ್ರ ಕೇಳಿರ್‌ಲಿಲ್ವೇ? ಹಂಗೆ ಕೇತುಗೆ ಏನೇನು ಲಾಬಿ ಇದೆಯೋ ಯಾರಿಗ್ ಗೊತ್ತು.

ನನ್ ಪ್ರಕಾರ ಎಂಟು ಗ್ರಹಗಳಿಗೆ ತಕ್ಕನಾಗಿ ಎಂಟು ವಾರದ ದಿನಗಳಿರಬೇಕು. ಅದ್ರಲ್ಲಿ ಐದು ದಿನ ಕೆಲ್ಸ ಇನ್ನು ಮೂರು ದಿನ ಖಾಲಿ ಇರಬೇಕು, ರಾವಣ ಅಷ್ಟ ದಿಕ್ಪಾಲಕರನ್ನೆಲ್ಲ ತನ್ನ ಕಾಲಡಿ ಕೂಡಿ ಹಾಕಿಟ್ಟುಕೊಂಡಿದ್ದ ಹಾಗೆ ನಾವೂ ಏನಾದರೊಂದು ಮಾಡಿ ನಮ್ ಹಬ್ಬ-ಹರಿದಿನ-ಆಚರಣೆಗಳೆಲ್ಲ ಈ ಮೂರುದಿನದ ವೀಕೆಂಡ್‌ನಲ್ಲೇ ಬರೋಹಾಗೆ ಮಾಡಬೇಕು. ಈ ಅಮೇರಿಕದೋರು ಆಕಾಶದಲ್ಲಿ ಸೂರ್ಯನಿಗೆ ಒಂದ್ ದೊಡ್ಡ ಕನ್ನಡಿ ಇಟ್ಟು ಯಾವತ್ ನೋಡಿದ್ರು ಇಲ್ಲಿ ೭೨ ಡಿಗ್ರೆ ಫ್ಯಾರನ್‌ಹೈಟ್ ಟೆಂಪರೇಚರ್ ಇರೋ ಹಾಗೆ ಮಾಡಬೇಕು ನೋಡಿ, ಅವಾಗಿರತ್ತೆ ಮಜಾ!

Tuesday, October 31, 2006

ನಮ್ಮ ಹಾಡು ನಮ್ಮದು!

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ!


ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ...' ಎನ್ನುವ ಈ ಹಾಡಿನ ಮೇಲಿನ ವಾಕ್ಯಗಳು ತಮ್ಮ ಸತ್ವವನ್ನೇನೂ ಕಳೆದುಕೊಂಡಂತೆನಿಸಿವುದಿಲ್ಲ. ಹುಯಿಲುಗೋಳರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು...' ಎಂಬುದು ಇಂದಿಗೂ ಪ್ರಚಲಿತದಲ್ಲಿರುವ ಮತ್ತೊಂದು ಗೀತೆಯೇ. ಹೀಗೆ ಎರಡು ಹಾಡುಗಳ ಮೇಲೆ ನಮ್ಮ ಪರಂಪರೆಯನ್ನು ಅಳೆದು ತೀರ್ಮಾನ ಮಾಡಲಾಗುವುದೇ ಎಂದು ಯಾರು ಬೇಕಾದರೂ ಹುಬ್ಬೇರಿಸಬಹುದು. ಆದರೆ ನನಗಂತೂ ನಾಡಿನ ಐಕ್ಯತೆಯಲ್ಲಿ ದಿನೇದಿನೇ ವಿಶ್ವಾಸ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚೇನೂ ಆಗುತ್ತಿಲ್ಲ.

ನಾವು ಈ ಹಿಂದಿನ ದಶಕಗಳನ್ನು ಒಂದು ಅರ್ಧ ಶತಮಾನವನ್ನು ಕಳೆದು ಬಂದಿದ್ದನ್ನು ಹಿಂತಿರುಗಿ ನೋಡಲೇ ಬೇಕು, ಅದರಿಂದ ಕಲಿಯುವುದಂತೂ ಬೇಕಾದಷ್ಟಿದೆ. ಅರ್ಧ ಶತಮಾನದ ಬಳಿಕವೂ 'ಕನ್ನಡವನ್ನು ಉಳಿಸಿ...' ಎಂದು ರಿಕ್ಷಾ, ಬಸ್ಸುಗಳ ಹಿಂದೆ ಬರೆಸಿಕೊಂಡು ಓಡಾಡುವ ಸ್ಥಿತಿಯಿಂದೆಂದೂ ಹೊರಬಂದಂತೆ ನಾವು ಕಾಣುವುದೇ ಇಲ್ಲ. ಒಂದು ಕಡೆ ಕಾಸರಗೋಡಿನಂತಹ ಪ್ರಾಂತ್ಯವನ್ನು ಕನ್ನಡನಾಡಿನ ಭಾಗವನ್ನಾಗಿ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಂಡಂತೆ ಬೆಳಗಾವಿ ಮತ್ತಿತರ ಗಡಿಪ್ರದೇಶಗಳು ಎಂದಿಗಿಂತ ಹೆಚ್ಚಿನ ಪ್ರಾಂತೀಯ ಅಸ್ಥಿರತೆಯಿಂದ ಒದ್ದಾಡುತ್ತಿವೆ, ನವೆಂಬರ್ ಒಂದರ ಏಕೀಕರಣ ದಿನವನ್ನು ಎಷ್ಟೋ ಕಡೆಗೆ ಕರಾಳದಿನವನ್ನಾಗಿ ಆಚರಿಸಲಾಗುತ್ತಿದೆ, ಕನ್ನಡತನವೆನ್ನುವುದು ಪ್ರಶ್ನಾರ್ಥಕವಾಗಿ ಹೋಗಿದೆ.

ಶಾಲೆಗಳಲ್ಲಿ ಕನ್ನಡವನ್ನು (ಮಾಧ್ಯಮವಾಗಿ)ಕಲಿಸಬೇಕೆ ಬಿಡಬೇಕೆ, ಇಂಗ್ಲೀಷ್ ಅನ್ನು ಯಾವ ವರ್ಷದಿಂದ ಭಾಷೆ ಹಾಗೂ ಮಾಧ್ಯಮವಾಗಿ ಆರಂಭಿಸಬೇಕು ಎನ್ನುವುದಕ್ಕೆ ನಾವಿನ್ನೂ ಉತ್ತರವನ್ನು ಕಂಡುಕೊಂಡಂತಿಲ್ಲ. ಒಂದು ಕಡೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಶಹರಗಳು ಬೆಳವಣಿಗೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದರೆ ಎಷ್ಟೋ ಹಳ್ಳಿಗಳಲ್ಲಿ ಸಾಕಷ್ಟು ಮೂಲಭೂತ ಅನುಕೂಲಗಳಿಲ್ಲದೇ ಇನ್ನೂ ಮುಖ್ಯವಾಹಿನಿಯಿಂದ ದೂರವೇ ಉಳಿದಿವೆ. ಕರ್ನಾಟಕದಲ್ಲೇ ಉತ್ತರ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸವಿರುವುದು ಬಲ್ಲವರ ಚಿಂತೆಗೆ ಮತ್ತೊಂದು ಕಾರಣ - ಹೀಗೆ ದೊಡ್ಡದಾಗುತ್ತಿರುವ ಕಂದಕ, ಅದರಲ್ಲೂ ಕರ್ನಾಟಕವೆಂದರೆ ಬೆಂಗಳೂರು ಎನ್ನುವ ಮನೋಭಾವನೆ ಹಲವಾರು ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿರ್ಮಿಸಿದೆ.

ರಾಜಕೀಯವಾಗಿಯೂ ಸಾಕಷ್ಟು ಸ್ಥಿರತೆಯನ್ನೇನೂ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಕಂಡಂತಿಲ್ಲ. ಭಿನ್ನ-ಭಿನ್ನ ಆಡಳಿತಗಳು, ಪಕ್ಷಗಳು-ನಾಯಕರ ಧೋರಣೆ, ಮುಂದಾಲೋಚನೆ ಹಾಗೂ ಪ್ರಗತಿಯ ದೃಷ್ಟಿಯಿಂದ ರಾಜ್ಯದ ಹಿತದೃಷ್ಟಿಯಿಂದ ಏನೇನು ಕಾರ್ಯಗಳು ಆಗಬೇಕಿತ್ತೋ ಅವುಗಳೆಲ್ಲವೂ ಅಸ್ಥಿರ ಆಡಳಿತ ವ್ಯವಸ್ಥೆಯಿಂದ ಸೊರಗಿವೆ. ಆಡಳಿತದಲ್ಲಿ ಹುಟ್ಟುವ ಅಸ್ಥಿರತೆ ರಾಜ್ಯದ ನಾಯಕರುಗಳಿಗೆ ತಮ್ಮ ಪಕ್ಷದ ಶಾರ್ಟ್ ಟರ್ಮ್ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿ ಕಂಡುಬರುತ್ತದೆಯೇ ವಿನಾ ದೆಹಲಿಯಲ್ಲಿ ಧ್ವನಿಯನ್ನು ಏರಿಸಿ ಮಾತನಾಡಿ ಕರ್ನಾಟಕದ ಒಳಿತನ್ನು ಸಾಧಿಸಿಕೊಳ್ಳುವುದಾಗಲೀ, ದೂರದೃಷ್ಟಿಯಿಂದ ಯೋಚಿಸಿ ಉತ್ತಮ ಯೋಜನೆಗಳನ್ನು ಸಿದ್ಧಪಡಿಸುವುದಾಗಲೀ ದೂರವೇ ಉಳಿಯುತ್ತದೆ.

ನಮ್ಮ ಹಾಡು ನಮ್ಮದು, ಆ ಹಾಡು ಐಕ್ಯಗಾನವಾಗಲಿ, ಆದರೆ ಕನ್ನಡವನ್ನು ಉಳಿಸಿಕೊಂಡು ಹೋಗುವುದೇ ನಮ್ಮ ಮುಖ್ಯ ಸಮಸ್ಯೆಯಾಗದಿರಲಿ. ಮುಂಬರುವ ದಿನಗಳಲ್ಲಿ ಈಗಾಗಲೇ ಬೇಕಾದಷ್ಟನ್ನು ತೆರೆದುಕೊಂಡಿರುವ ಕನ್ನಡಿಗರ ಔದಾರ್ಯವನ್ನು ಕೆಣಕುವ ಮತ್ಯಾವ ಘಟನೆಗಳೂ ಘಟಿಸದಿರಲಿ. ಹಳೆಯದನ್ನು ಐತಿಹಾಸಿಕವಾಗಿ ನೋಡಿ ಮುಂದುವರಿದು, ನಾವು ಎಡವಿದಲ್ಲೆಲ್ಲ ಪಾಠವನ್ನು ಕಲಿತು ಪ್ರಗತಿಯ ಕಡೆಗೆ ಸಾಗುವ ಕೆಚ್ಚೆದೆ ನಮಗೆ ಬರಲಿ. ದೇಶದಲ್ಲಿ ಕರ್ನಾಟಕ ಮತ್ತೆ ಮೊದಲಿನದಾಗಲಿ. ಕನ್ನಡ ನಮ್ಮ ಶಕ್ತಿಯಾಗಲಿ.

***

ರಾಜ್ಯೋತ್ಸದ ಶುಭಾಶಯಗಳು.

Monday, October 30, 2006

ತಪ್ಪಿದ ಲೆಕ್ಕ

ನಿನ್ನೆ ರಾತ್ರಿ ಗಡಿಯಾರಗಳನ್ನು ಒಂದು ಘಂಟೆ ಹಿಂದಿಟ್ಟು ಕಾಲವನ್ನು ಜಯಿಸಿದವನ ಹಾಗೆ ಯೋಚಿಸಿಕೊಂಡು ಮಲಗಿದವನಿಗೆ ನನ್ನ ಮಾಮೂಲಿ ಸಮಯಕ್ಕೇ ಎಚ್ಚರವಾಗಬೇಕೇ? ಸರಿ, ಇನ್ನೇನು ಎದ್ದು ಯಾವ ಗಡಿಬಿಡಿಯಿಲ್ಲದೇ ನಿಧಾನವಾಗಿ ಆಫೀಸಿಗೆ ಹೊರಟರಾಯಿತು ಎಂದುಕೊಂಡರೆ ಬದಲಾದ ಸಮಯದ ಪ್ರಭಾವದಿಂದ ಹೆಚ್ಚು ಬೆಳಕು ಎಲ್ಲ ಕಡೆಗೆ ಕಂಡುಬಂತು ಜೊತೆಯಲ್ಲಿ ರಸ್ತೆಯ ಮೇಲಿನ ಎಂದಿಗಿಂತ ಹೆಚ್ಚು ವಾಹನಗಳು ಬೇರೆ. ಎಲ್ಲರಿಗೂ ಒಂದು ಘಂಟೆ ಉಳಿಸಿದ ಹುರುಪು, ಹೆಚ್ಚಿನವರು ತಡವಾಗಿಯಲ್ಲದಿದ್ದರೂ ಸರಿಯಾದ ಸಮಯಕ್ಕೇ ಆಫೀಸಿಗೆ ಹೊರಡುತ್ತಾರಾದ್ದಾರಿಂದ ಯಾವ ಗಡಿಬಿಡಿಯಿರುವುದಿಲ್ಲ ಎಂದುಕೊಂಡಿದ್ದು ನನ್ನ ಭ್ರಮೆ ಮಾತ್ರ. ಒಂದು ಘಂಟೆಯೇನು ಹತ್ತು ಘಂಟೆಗಳ ಕಾಲವನ್ನು ಹಿಂದೆ ಹಾಕಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳೇನೂ ಆಗೋದಿಲ್ಲ ಅನ್ನೋದು ನನ್ನ ಅಭಿಮತ.

ಮುಕ್ತವಾಗಿ ತೆರೆದ ರಸ್ತೆಗಳಿಗೆ ನನ್ನನ್ನು ನಾನು ಒಪ್ಪಿಸಿಕೊಂಡು, ನಿಂತು ನಿಂತೂ ಹೋಗುವ ಟ್ರಾಫಿಕ್‌ಗೆ ಈಗಾಗಲೇ ರೂಢಿಯಾಗಿ ಹೋಗಿರೋದರಿಂದ ನನಗರಿವಿಲ್ಲದಂತೆ ರೆಡಿಯೋ ಡಯಲ್‌ ಒತ್ತಿ ನೋಡಿ ಏನು ಸುದ್ದಿ ಬರುತ್ತದೆಯೋ ಎಂದು ಕಾದಿದ್ದವನಿಗೆ 'October is one of the deadlist months...' ಎನ್ನುವ ಸುದ್ದಿ ಕಿವಿಗಪ್ಪಳಿಸಿತು. ಈ ತಿಂಗಳಿನಲ್ಲಿ ಇವತ್ತಿಗಾಗಲೇ (ಅಕ್ಟೋಬರ್ ೩೦) ನೂರು ಜನ ಅಮೇರಿಕನ್ ಸೈನಿಕರ್ ಹತ್ಯೆಗೀಡಾಗಿದ್ದು ಬಹಳಷ್ಟು ಜನರ ಹುಬ್ಬನ್ನು ಮೇಲಕ್ಕೇರುವಂತೆ ಮಾಡಿತ್ತು, ಅಲ್ಲದೇ ನವೆಂಬರ್ ಏಳರಂದು ನಡೆಯುವ ಎಲೆಕ್ಷನ್ ಹಿನ್ನೆಲೆಯಲ್ಲಿ ಇಂತಹ ಸುದ್ದಿಗಳು ಹೆಚ್ಚು ಹೆಚ್ಚು ಮಹತ್ವ ಪಡೆದುಕೊಳ್ಳುವುದು ಸಹಜ. ಆದರೆ, ಅಕ್ಟೋಬರ್‌ನಲ್ಲಿ ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ ಹಲವಾರು ರಿಪೋರ್ಟರುಗಳು ನ್ಯಾಷನಲ್ ಪಬ್ಲಿಕ್ ರೆಡಿಯೋದಲ್ಲಿ ಈ ವರ್ಷದ ಅಕ್ಟೋಬರ್ ಅನ್ನು ವರ್ಣಿಸುತ್ತಿದ್ದರೇ ವಿನಾ ಎಲ್ಲಿಯೂ 'so far in this month' ಎನ್ನುವ ಮಾತು ಕೇಳಿಬರಲಿಲ್ಲ. ಕೆಟ್ಟದೇನೂ ಆಗದಿರಲಿ, ಆದರೂ ಇನ್ನೂ ಎರಡು ದಿನಗಳಿರುವಂತೆ ಈ ತಿಂಗಳನ್ನು ವರ್ಣಿಸಿದ್ದು ಅಕ್ಟೋಬರ್ ತಿಂಗಳನ್ನು ಅವಮಾನ ಮಾಡಿದಂತಾದ್ದರಿಂದ ಈ ರೀತಿ ಬರೆಯಬೇಕಾಯಿತು. ನಿನ್ನೆ ಸಂಜೆಯವರೆಗೆ ಈ ತಿಂಗಳು ಇರಾಕ್ ನಲ್ಲಿ ಸತ್ತ ಅಮೆರಿಕನ್ ಸೈನಿಕರ ಸಂಖ್ಯೆ ೯೯ ಇದ್ದಿದ್ದು, ಇಂದು ಮುಂಜಾನೆ ಒಬ್ಬ ಮರೀನ್ ಸೈನಿಕನ ಮೃತ್ಯುವಿನಿಂದಾಗಿ ನೂರು ಮುಟ್ಟಿತು, ಸಂಜೆ ಅಫೀಸಿನಿಂದ ಬರುವ ಹೊತ್ತಿಗಾಗಗೇ ನೂರು ಇದ್ದುದು ನೂರಾ ಒಂದು ಆಗಿಹೋಗಿತ್ತು. ಅಲ್ಲದೇ, ಇಂದು ಎಂಪ್ಲಾಯ್‌ಮೆಂಟ್ ಅವಕಾಶಗಳಿಗಾಗಿ ನಿಂತ ಒಂದು ಗುಂಪನ್ನು ಗುರಿಪಡಿಸಿ ಗಾರ್‌ಬೇಜ್‌ ಕ್ಯಾನ್ ನಲ್ಲಿ ತುಂಬಿ ಸಿಡಿಸಿದ ಬಾಂಬ್ ಒಂದು ಸುಮಾರು ಮೂವತ್ತು ಜನಗಳಿಗೂ ಅಧಿಕ ಜನ ಇರಾಕ್ ನಾಗರಿಕರನ್ನು ಬಲಿತೆಗೆದುಕೊಂಡಿತು. ಹೀಗೆ ದಿನವೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯುವ ಇರಾಕ್ ನಾಗರಿಕರ ಸಂಖ್ಯೆಯನ್ನು ಕೇಳೋದಕ್ಕೆ ನಮಗೆ ಹೆಚ್ಚು ಅವಕಾಶಗಳಿರಲಾರವು, ಆದರೆ ಇರಾಕ್‌ನಲ್ಲಿ ಸತ್ತ ಪ್ರತಿಯೊಬ್ಬ ಅಮೇರಿಕನ್ ಸೈನಿಕನ ಲೆಕ್ಕ ಎಲ್ಲರಿಗೂ ಇರುತ್ತದೆ.

ಸಹಜವಾಗಿ ದೊರೆಯೋ ಕುಡಿಯುವ ಹಾಗೂ ಬಳಸುವ ನೀರಿನ ಪ್ರಾಮುಖ್ಯತೆ ಇತ್ತೀಚಿಗೆ ಹೆಚ್ಚಿನ ಜನರನ್ನು ತಟ್ಟಿದಂತಿದೆ. ಹೆಚ್ಚುತ್ತಿರುವ ನೀರಿನ ಬಳಕೆ ಹಾಗೂ ಬಳಸಿದ ನೀರಿನಲ್ಲಿ ಮಲಿನಗಳನ್ನು ಹೆಚ್ಚು ಹೆಚ್ಚಾಗಿ ಒಂದಲ್ಲ ಒಂದು ರೀತಿಯಿಂದ ಸೇರಿಸುತ್ತಿರುವುದು ಪ್ರತಿಯೊಬ್ಬರೂ ದಿನೇ ದಿನೇ ನೀರಿಗೋಸ್ಕರ ಹೆಚ್ಚು ಬೆಲೆಯನ್ನು ತೆರುವಂತೆ ಮಾಡಿದೆ. ಮೇಲೇರಿದ ಗ್ಯಾಸೋಲಿನ್ ಬೆಲೆ ಕಡಿಮೆಯಾದರೂ ಎಷ್ಟೋ ಜನ ಬಾಟಲಿ ನೀರೋ ಮತ್ತೊಂದರ ಹೆಸರಿನಲ್ಲಿ ಒಂದು ಲೀಟರ್ ನೀರೊಂದಕ್ಕೆ ಕೊಡುತ್ತಿರುವ ಬೆಲೆ ಒಂದು ಲೀಟರ್ ಗ್ಯಾಸೋಲಿನ್‌ಗಿಂತ ಅಧಿಕವಾಗಿ ಹೋಗುತ್ತದೆ. ಹೀಗೆ ನೈಸರ್ಗಿಕ ಸಂಪನ್ಮೂಲಗಳಲ್ಲೊಂದಾದ ನೀರನ್ನು ಉಳಿಸಿ, ಬೆಳೆಸಿ ಹಾಗೂ ಮಿತವಾಗಿ ಬಳಸದೇ ಇದ್ದರೆ ಎಲ್ಲ ಲೆಕ್ಕಗಳೂ ಅಡಿಮೇಲಾಗಿ ನೀರಿಗಾಗಿ ಹಾಹಾಕಾರ ಶುರುವಾದೀತು.

ಒಂದು ಪಕ್ಷದವರು ಮತ್ತೊಬ್ಬರನ್ನು ಆಡಿಕೊಂಡು ಎಲೆಕ್ಷನ್ ಗೆಲ್ಲುವ ಆಲೋಚನೆಯನ್ನು ಮುಂದಿಟ್ಟುಕೊಂಡು ಬೇಕಾದ ಅಂಕಿ-ಅಂಶಗಳನ್ನು ಮಾತ್ರ ಹೊರಗೆ ಹಾಕೋ ಇಲ್ಲಿನ ರಾಜಕಾರಣಿಗಳಲ್ಲಿ ಸಾಕಷ್ಟು ಬುದ್ಧಿವಂತಿಕೆಯಿದೆ, ಆದರೂ ಅವರ ಲೆಕ್ಕ ಎಲ್ಲೋ ತಪ್ಪಿದೆ ಎಂದು ಅನೇಕ ಮತದಾರರ ಒಳಮನಸ್ಸಿನ ತುಡಿತ. ರಾಜಕಾರಣಿಗಳು ಯಾವದೇಶದವರಾದರೂ ಒಂದೇ, ಅಂತೆಯೇ ಅವರ ಮತದಾರ ಕೂಡ. ಒಟ್ಟಿನಲ್ಲಿ ತಪ್ಪಿದ ಲೆಕ್ಕವನ್ನು ಹೆಚ್ಚು ಹೆಚ್ಚು ದೊಡ್ಡದಾಗಿ ಮಾಡಿ ಅದನ್ನೇ ಮುಂದಿಟ್ಟುಕೊಂಡು ವಾದ ಮಾಡಿದರೆ ತಪ್ಪೇ ಸರಿಯಾಗಿ ಬಿಡಬಹುದಾದ ವಿಪರ್ಯಾಸದ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಅಥವಾ ಈಗಾಗಲೇ ಹಾಗಾಗಿ ಬಿಟ್ಟಿದೆ!

Sunday, October 29, 2006

ಓದಿ, ಬರೆದು, ಮಾತನಾಡುವ ಅನಿವಾರ್ಯತೆ

ಯಾವುದೇ ಒಂದು ಹವ್ಯಾಸ ಬೆಳೆಯೋದಕ್ಕೆ ಕೊನೆಪಕ್ಷ ಏನಿಲ್ಲವೆಂದರೂ ಇಪ್ಪತ್ತೊಂದು ದಿನಗಳು ಬೇಕಾಗುತ್ತವಂತೆ, ಹೀಗೆ ದಿನಾಲು ಬರೆಯಬೇಕು ಎನ್ನೋದು ನನಗೂ ಒಂದು ಹವ್ಯಾಸವಾಗಿ ಬೆಳೆಯಬೇಕಾದರೆ ನನಗಂತೂ ತಿಂಗಳುಗಳೇ ಬೇಕಾದವು. ನಾಗಾಲೋಟದಲ್ಲಿ ಓಡೋ ಮನಸ್ಸು ಒಂದುಕಡೆ, ನಿಧಾನವಾಗಿ ಓಡೋ ಕೈ ಬೆರಳುಗಳು ಮತ್ತೊಂದು ಕಡೆ; ನಮ್ಮ ಸುತ್ತಲೂ ಇಂಗ್ಲೀಷ್‌ಮಯವಾಗಿರೋದು ಒಂದುಕಡೆ, ಇರೋ ಒಂದಿಷ್ಟು ಕನ್ನಡ ಪದಗಳೂ ನಿಧಾನವಾಗಿ ಆವಿಯಾಗ್ತಾ ಇರೋ ಸಂಕಟ ಮತ್ತೊಂದು ಕಡೆ. ಹೀಗೆ ಹಲವಾರು ವ್ಯತ್ಯಾಸಗಳ ನಡುವೆಯೂ ಇಷ್ಟೊಂದು ದಿನ ಏನಾದರೊಂದು ಬರೆದದ್ದಾಯಿತು ಎಂದು ಒಂದಿಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡರೆ ಯೋಚನೆಗಳು ಯಾಚನೆಗಳಾಗಿ ಕಾಡತೊಡಗಿದವು. ಮನಸ್ಸಿಗೆ ಅನ್ನಿಸಿದ್ದನ್ನು ಎಷ್ಟು ನಿಧಾನವಾಗಿಯಾದರೂ ಆಗಲಿ, ಎಷ್ಟು ತಡವಾಗಿಯಾದರೂ ಆಗಲಿ ಬರೆದೇ ತೀರಬೇಕು ಎಂದು ಹಟ ತೊಟ್ಟಿರುವವರಲ್ಲಿ ನಾನೂ ಒಬ್ಬ. ಒಂದು ರೀತಿ ಹೊರಗಿನ ಆಗುಹೋಗುಗಳಿಗೆ ಪ್ರತಿಯೊಬ್ಬರೂ ಸ್ಪಂದಿಸುತ್ತಾರೆ, ನನ್ನ ಸ್ಪಂದನ ಈ ರೀತಿ ಬರಹದ ಮೂಲಕವಾದರೂ ಇರಲಿ ಎನ್ನೋದು ದೂರದಾಸೆ.

ಇತ್ತೀಚೆಗಂತೂ ನನ್ನೊಳಗೆ ಇನ್ನೊಂದು ರೀತಿಯ ಗೊಣಗಾಟ ಆರಂಭವಾಗಿದೆ - ಯಾರೇ ಕನ್ನಡಿಗರು ಸಿಕ್ಕರೂ ನಮ್ಮ ನಡುವಿನ ಸಂಭಾಷಣೆ ಹೆಚ್ಚೂ ಕಡಿಮೆ ಇಂಗ್ಲೀಷಿನಲ್ಲೇ ನಡೆಯೋದು. ಇದನ್ನು ಸ್ವಲ್ಪ ಬಿಡಿಸಿ ನೋಡಿದಾಗ ಎರಡು ಅಂಶಗಳು ಸ್ಪಷ್ಟವಾದವು: ಒಂದು, ನನಗೆ ದೊರೆಯುವ ಕನ್ನಡಿಗರು ನನ್ನ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಲಾರದವರು, ಮತ್ತಿನ್ನೊಂದಿಷ್ಟು ಮಂದಿ ಹೇಳೋದಕ್ಕೆ ಮಾತ್ರ ಕನ್ನಡಿಗರು, ಮಿಕ್ಕೆಲ್ಲದಕ್ಕೂ ಇಂಗ್ಲೀಷನ್ನೇ ಆಧರಿಕೊಂಡಿರುವವರು. ಎಲ್ಲೋ ಅಪರೂಪಕ್ಕೆ ಸಭ್ಯ ಕನ್ನಡಿಗರು ಸಿಗುತ್ತಾರೆಂದರೆ ಅಂದು ಒಂದು ರೀತಿಯ ಹಬ್ಬದೂಟವಿದ್ದ ಹಾಗೆ, ಆ ರೀತಿಯ ಅವಕಾಶಗಳು ಬರೋದು ಕಡಿಮೆ, ಬಂದಾಗಲೆಲ್ಲ ಮನಬಿಚ್ಚಿ ಘಂಟೆಗಟ್ಟಲೆ ಹರಟಿ, ಕಥೆ ಹೊಡೆದದ್ದು ಇದ್ದೇ ಇದೆ. ನಾವು ಇಲ್ಲಿಗೆ ಬಂದು ಎಷ್ಟೇ ಕನ್ನಡ ಸಂಘಗಳನ್ನು ಯಾವುಯಾವುದೋ ಕಾರಣಗಳಿಗಾಗಿ ಕಟ್ಟಿಕೊಂಡರೂ, ಒಂದು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕನ್ನಡದಲ್ಲೇ ನಡೆಸಿಕೊಡಲಾಗದವರು, ಒಂದು ವೇಳೆ ಹಾಗೇನಾದರೂ ಪ್ರಯತ್ನಿಸಿದರೂ ನಮ್ಮ ಮಾತುಗಳಲ್ಲಿ ಇಂಗ್ಲೀಷ್ ಪದಗಳು ನುಸುಳಿಯೋ ಅಥವಾ ಪೂರ್ಣ ವಾಕ್ಯವೇ ಇಂಗ್ಲೀಷಿನಲ್ಲಿರುವುದೇ ಸಹಜವಾಗುತ್ತೆ. ಒಮ್ಮೊಮ್ಮೆ ಹೀಗೆ ಆಗುವುದು, ಆಗುತ್ತಿರುವುದು ಸರಿಯಲ್ಲವೇ ಎಂದು ಯೋಚಿಸುತ್ತೇನೆ - ಉದಾಹರಣೆಗೆ ಐವತ್ತು ವರ್ಷಗಳ ಹಿಂದೆ ಕನ್ನಡವನ್ನು ಮಾತನಾಡುತ್ತಿದ್ದವರು, ಬರೆಯುತ್ತಿದ್ದವರು ತಮ್ಮ ಮಾತು/ಬರವಣಿಗೆಗಳಲ್ಲಿ ಸಂಸ್ಕೃತದ ಪದಗಳನ್ನು ಧಾರಾಳವಾಗಿ ಬಳಸುತ್ತಿರಲಿಲ್ಲವೇ? ಆಗ ಬಳಸುತ್ತಿದ್ದ ಸಂಸ್ಕೃತ ಪದಗಳಿಗೆ ಇಂದು ನಾವು ಇಂಗ್ಲೀಷ್ ಪದಗಳನ್ನು ಬಳಸಿದರೆ ತಪ್ಪೇನು? 'ನಮ್ಮ ಕಂಪ್ಯೂಟರ್ ಕೆಟ್ಟು ಹೋಗಿದೆ' ಎನ್ನುವ ವಾಕ್ಯವನ್ನು 'ನಮ್ಮ ಗಣಕಯಂತ್ರ ಕೆಟ್ಟುಹೋಗಿದೆ' ಎಂದೂ ಹೇಳಬಹುದು ಆದರೆ ಮೊದಲಿನ ವಾಕ್ಯ ಹೆಚ್ಚು ಜನರಿಗೆ ಅರ್ಥವಾಗುವುದರ ಜೊತೆಗೆ ಮೊದಲಿನ ವಾಕ್ಯದಲ್ಲಿ ಬಳಸುವ 'ಗಣಕಯಂತ್ರ' ಪದದ ಬಳಕೆ ಅಸಹಜ ಎನ್ನಿಸೋದಿಲ್ಲ. ಹಿಂದೆಲ್ಲಾ ಕೊಂಬುಕೊಟ್ಟು ಕನ್ನಡಕ್ಕೆ ತರುತ್ತಿದ್ದ ಪದಗಳನ್ನು (ಉದಾಹರಣೆಗೆ: ಬಸ್ - ಬಸ್ಸು, ಟೇಬಲ್ - ಟೇಬಲ್ಲು, ಚೇರ್ - ಚೇರು, ಇತ್ಯಾದಿ) ಯಥೇಚ್ಛವಾಗಿ ಬಳಸುತ್ತಿದ್ದ ಕಾಲದಲ್ಲಿ ಎಷ್ಟೇ ಪ್ರತಿರೋಧವಿದ್ದರೂ ಅದನ್ನು ತಡೆಯಲಾಗಲಿಲ್ಲ, ಬಂಡಿ, ಮೇಜು, ಕುರ್ಚಿ ಮೊದಲಾದ ಪದಗಳ ಬಳಕೆ ನಿಧಾನವಾಗಿ ಮರೆಯಾಗುತ್ತಿದೆ, ಅವುಗಳ ಸ್ಥಳದಲ್ಲಿ ಅನ್ಯದೇಶೀಯ ಪದಗಳು ಆಕ್ರಮಿಸಿಕೊಳ್ಳುತ್ತಿವೆ ಎಂದು ಸುಲಭವಾಗಿ ಹೇಳಬಹುದಾದರೂ, ಈ ಬಗೆಗೆ ನಿರ್ಧಾರಪೂರ್ವಕವಾಗಿ ಹೇಳಲು ಭಾಷಾತಜ್ಞರನ್ನೇ ಆದರಿಸಬೇಕಾದೀತು.

ಮಾತಿನ ಬಗೆಗೆ ಹೇಳುವ ಹೊತ್ತಿಗೆ ಬರವಣಿಗೆ ಹಾಗೂ ಓದಿನ ಬಗ್ಗೆ ಹೇಳದಿದ್ದರೆ ಹೇಗೆ? ನನ್ನ ಹಾಗೆ ಕಂಪ್ಯೂಟರ್ ಬಳಸಿ ಕನ್ನಡವನ್ನು ಬರೆದು ಓದಬಲ್ಲವರದೆಲ್ಲಾ ಒಂದೇ ಹಾಡು - ಬರವಣಿಗೆ ನಿಧಾನ, ಅದರ ಜೊತೆಗೆ ಓದುವುದಕ್ಕೆ ಸಿಗುವ ವಸ್ತುಗಳೂ ಅತಿಕಡಿಮೆಯೇ. ಹಾಸ್ಯವಾಗಲೀ, ಗಂಭೀರ ವಿಷಯಗಳಾಗಲೀ ಯಾವುದನ್ನು ತೆಗೆದುಕೊಂಡರೂ ಅಂತರ್ಜಾಲದಲ್ಲಿ ಸಿಗುವ ವಸ್ತುಗಳು ಕಡಿಮೆಯೇ ಎನ್ನಬೇಕು. ಹಿಂದೆಲ್ಲಾ ಬಿಡುವಿನಲ್ಲಿ ಓದುತ್ತಿದ್ದ ಪುಸ್ತಕ, ಪತ್ರಿಕೆಗಳು ಇಂದು ಕೆಲಸದ ಮಧ್ಯೆಯೇ ತಮ್ಮನ್ನು ಓದಿಸಿಕೊಂಡುಹೋಗುತ್ತವೆ. ಓದುಗರ ಅಟೆಂಷನ್ ಸ್ಪ್ಯಾನ್ ಕಡಿಮೆ, ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚನ್ನು ಓದುವ ಕಾರ್ಯತತ್ಪರತೆ ಎಲ್ಲರದೂ. ಹಲವಾರು ಸಂಸ್ಥೆಗಳು ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಪ್ರಕಟಿಸುವ ಮಹಾಕಾರ್ಯವನ್ನು ಮಾಡುತ್ತಿದ್ದರೂ ಪುಸ್ತಕ/ಪೇಪರ್ ಮಾಧ್ಯಮದಲ್ಲಿ ಓದುತ್ತಿರುವ ಸಂವೇದಿಸುತ್ತಿರುವ ಕನ್ನಡಿಗರಿಗೂ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ ಕನ್ನಡವನ್ನು ಓದುವ ನನ್ನಂಥವರಿಗೂ ನಡುವೆ ದೊಡ್ಡ ಕಂದಕವೇ ಇದೆ. 'ದೂರದಲ್ಲಿರೋ ನಿಮಗ್ಗೊತ್ತಾಗಲ್ಲ' ಅನ್ನೋದು ನಾನು ಒಡನಾಡುವ ಪೇಪರ್/ಪುಸ್ತಕ ಓದುಗರ ಅಂಬೋಣ, ಅವರಿಗೆಲ್ಲ ನನ್ನಂತಹ ಓದುಗರು ಹೈಟೆಕ್ ಓದುಗರಾಗಿ ಕಂಡುಬರುತ್ತಾರೆಯೇ ವಿನಾ ಹೆಚ್ಚು ಆಳವನ್ನು ಶೋಧಿಸುವವರಾಗಿಯಾಗಲೀ, ವಿಷಯಗಳಿಗೆ ಒತ್ತುಕೊಟ್ಟು ನೋಡುವವರಾಗಿಯಾಗಲೀ ಖಂಡಿತವಾಗಿ ಕಂಡುಬರೋದಿಲ್ಲ. ಅಲ್ಲಿಯ ಮಾಧ್ಯಮಗಳು ಒಂದೇ ಹಗುರವಾಗಿ ಕಂಡೋ ಅಥವಾ ಅಲ್ಲಿ ಪ್ರಕಟವಾದ ವರದಿಗಳು ನಮ್ಮ ಎತ್ತರಕ್ಕೆ ನಿಲುಕದವುಗಳು ಎಂದುಕೊಂಡೋ ಸುಮ್ಮನಿದ್ದರೆ, ಇಲ್ಲಿನ ಆಗುಹೋಗುಗಳಿಗೆ, ಸಂವೇದನಗಳಿಗೆ ಕನ್ನಡೇತರ ಮಾಧ್ಯಮಗಳಿಗೆ ಶರಣುಹೋಗುವುದು ಅನಿವಾರ್ಯವಾಗುತ್ತದೆ. ಹೀಗೆ ಕನ್ನಡೇತರ ಮಾಧ್ಯಮಗಳ ಸಾಂಗತ್ಯದಲ್ಲಿ ಹುಟ್ಟುವ ನಮ್ಮ ಆಲೋಚನೆಗಳನ್ನು ಕನ್ನಡದಲ್ಲಿ ಬರೆದುಕೊಂಡು ಹೋಗುವುದಕ್ಕೆ ತಿಣುಕಾಡಬೇಕಾಗುತ್ತದೆ.

ಓದು, ಓದಿನ ವೇಗ, ಬರವಣಿಗೆ, ಬರೆಯುವ ಶೈಲಿ ಇವುಗಳು ಕಾಲಕ್ರಮೇಣ ಬದಲಾಗುವಂತೆ, ಒಂದು ಭಾಷೆಯನ್ನು ಬಹಳ ದಿನ/ವರ್ಷಗಳ ಆಡದೇ ಹೋದರೆ ಪದಸಂಪತ್ತಿನ ದೃಷ್ಟಿಯಿಂದ ಮರೆಯಾಗಿಹೋಗಬಹುದು. ಬೇರೆ ಯಾರಾದರೂ ಮಾತನಾಡಿದಾಗ ಆಯಾ ಪದಗಳು ನಮ್ಮ ಮನಸ್ಸಿನಲ್ಲಿ ಮರುಕಳಿಸಿದರೂ ನಾವು ಅವೇ ಪದಗಳನ್ನು ಬಳಸಿ ಹೊಸ ವಾಕ್ಯಗಳನ್ನು ಸಂಭಾಷಣೆಯ ಅಂಗವಾಗಿ ಹೊಸದಾಗಿ ಹುಟ್ಟಿಸಬೇಕಾದಲ್ಲಿ ಕಷ್ಟಪಡಬೇಕಾಗುತ್ತದೆ. ಈ ರೀತಿಯ ಹಲವಾರು ವರ್ಷಗಳ ಭಾಷಾ ಬವಣೆಯೇ ಹೊರನಾಡ ಕನ್ನಡಿಗರು ಕನ್ನಡವನ್ನು ಹೆಚ್ಚು ಹೆಚ್ಚು ತಮ್ಮ ಮಾತಿನಲ್ಲಿ ಬಳಸದಿರುವಂತೆ ಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ವಿದೇಶಕ್ಕೆ ಹೋಗಿ ಇಪ್ಪತ್ತು ವರ್ಷ ಕಳೆದವರೆಲ್ಲ ಬರೀ ಹಮ್ಮು-ಬಿಮ್ಮು ಎಂಬ ಕಾರಣಕ್ಕೆ ಮಾತಿನುದ್ದಕ್ಕೂ ಇಂಗ್ಲೀಷನ್ನೇ ಮಾತನಾಡಲಾರರು, ಹಾಗೆ ಮಾತನಾಡುವುದು ವರ್ಷಾನುಗಟ್ಟಲೆ ಹಾಗೆ ಮಾಡಿದ ಅವರಿಗೆ ಸಹಜ, ಅದು ಬೇರೊಂದು ನೆಲೆಗಟ್ಟಿನಿಂದ ನಿಂತು ನೋಡಿದಾಗ ಕೃತಕವಾಗಿ ಕಂಡುಬರಬಹುದು. ನಮ್ಮತನವನ್ನು ನಾವು ಉಳಿಸಿ, ಬೆಳೆಸಿ, ರೂಢಿಸಿಕೊಂಡು ಹೋಗುವಲ್ಲಿ ಸ್ವಲ್ಪ ಮೊಂಡುತನ ಹಾಗೂ ನಮ್ಮದು ಎನ್ನುವ ಭಾವೋದ್ವೇಗ ಅನಿವಾರ್ಯ, ನಮಗೂ ನಮ್ಮ ಭಾಷೆಗೂ ಒಂದು ರೀತಿಯ ಸಂಬಂಧ ಬೆಳೆದರೆ ಮಾತ್ರ ನಮ್ಮ ಭಾಷೆ ನಮ್ಮಲ್ಲಿ ಉಳಿಯುತ್ತದೆಯೇ ವಿನಾ ಹೋದಲ್ಲಿ ಬಂದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೆರೆದುಕೊಂಡು ಅಲ್ಲಿಯವರೊಳಗೊಂದಾಗಿ ಹೋಗುತ್ತೇವೆ ಎಂದುಕೊಂಡವರಲ್ಲಿ ಭಾಷೆ ಉಳಿಯುವುದು ಕಡಿಮೆ.

ಇತ್ತೀಚೆಗೆ ಡಿ. ಆರ್. ನಾಗರಾಜ್ ಅವರ ಬರಹಗಳಿಂದ ಪ್ರಭಾವಿತನಾದ ನಾನು ಹಲವಾರು ಕೃತಿಗಳನ್ನು ಓದಿ, ಒಂದು ಉತ್ತಮ ಲೇಖನವನ್ನು ಬರೆಯುವುದು ಎಷ್ಟು ಕಷ್ಟ ಎಂಬುದನ್ನು ಅರಿತುಕೊಂಡಿದ್ದೇನೆ. ತಾವು ಓದಿದ ಪ್ರತಿಯೊಂದು ಕೃತಿಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುವುದೂ ಅಲ್ಲದೇ ಮುಂದೆ ತಾವು ಓದಿ, ಅದರ ಬಗ್ಗೆ ಬರೆಯುತ್ತಿರುವಾಗ ಪರಾಮರ್ಶೆಯ ರೂಪದಲ್ಲೋ ಅಥವಾ ತುಲನಾತ್ಮಕವಾಗಿಯೋ ಇತರ ಕೃತಿ-ಕರ್ತೃಗಳನ್ನು ನೆನೆದು ಅವುಗಳನ್ನು ಅಲ್ಲಲ್ಲಿ ಗುರುತಿಸಿಕೊಳ್ಳುವುದು ವಿಶ್ವವಿದ್ಯಾನಿಲಯದ ಪ್ರಾಂಗಣದಲ್ಲಿ ಮಾಮೂಲಿಯಾಗಿ ಕಂಡುಬರಬಹುದು, ಆದರೆ ನನ್ನಂತಹ ಸಾಮಾನ್ಯ ಓದುಗರಿಗೆ ಬಹಳ ಹೆಚ್ಚಿನದಾಗುತ್ತದೆ. ಇಂತಹ ಪ್ರೌಢ ಪ್ರಬಂಧಗಳು ಹೆಚ್ಚು ಹೆಚ್ಚು ಬಂದಲ್ಲಿ, ಅವುಗಳನ್ನು ವಿವರವಾಗಿ ಓದಿ, ಅವುಗಳಲ್ಲಿ ಹುದುಗಿರುವ ಪರಾಮರ್ಶೆಗಳನ್ನು ಹುಡುಕಿ ತೆಗೆದು ಪುಟಗಳನ್ನು ತಿರುವಿಹಾಕಿದಲ್ಲಿ ಅಂತಹ ಪ್ರಯತ್ನ ಬಹಳ ಹೆಚ್ಚಿನ ಮೌಲ್ಯವನ್ನು ದೊರಕಿಸಿಕೊಡುವುದರಲ್ಲಿ ಯಾವುದೇ ಸಂಶಯವಂತೂ ಇಲ್ಲ. ಹೀಗೆ ಹೆಚ್ಚು ಪ್ರೌಢ ಪ್ರಬಂಧಗಳನ್ನಾಗಲೀ, ಬರಹಗಳನ್ನಾಗಲೀ ಹುಡುಕಿಕೊಂಡಲೆಯುವ ನನ್ನಂತಹವರಿಗೆ ಅಂತರ್ಜಾಲದಲ್ಲಿ ಸಾಕಷ್ಟು ಅಡೆತಡೆಗಳು ಹುಟ್ಟಿಬರುತ್ತವೆ. ಇವುಗಳನ್ನೆಲ್ಲ ಮೀರಿ ಓದುಗರ ಒಂದು ಗುಂಪೋ, ಅಥವಾ ಇಂತಹ ಸಮಾನ ಮನಸ್ಕರ ಜೊತೆಗೆ ಬೆರೆಯೋಣವೆಂದರೆ ಅಲ್ಲೂ ತೊಂದರೆಗಳು ಹಲವಾರು.

ಈ ರೀತಿಯ ಓದು ಕನ್ನಡಕ್ಕೇ ಸ್ಥೀಮಿತವಾಗಬೇಕೆಂದೇನೂ ಇಲ್ಲ, ಆದರೆ ಕನ್ನಡದಲ್ಲಿ ಓದಿ, ಬರೆದು ಮಾತನಾಡಿದಾಗ ಸಿಗುವ ಖುಷಿ ನನಗಂತೂ ಬೇರೆ ಇನ್ಯಾವ ಭಾಷೆಯಲ್ಲೂ ದೊರೆಯದಾದ್ದರಿಂದ ನನ್ನ ಓದು ಅಥವಾ ಅದರ ಮಿತಿ ಹೆಚ್ಚು ಹೆಚ್ಚು ಕನ್ನಡದ ಸುತ್ತಲೇ ಗಿರಿಕಿ ಹೊಡೆಯತೊಡಗುತ್ತದೆ, ಬೇಡವೆಂದರೂ ಸುತ್ತಲಿನಲ್ಲಿ ನನ್ನ ಕಿವಿ-ಕಣ್ಣುಗಳನ್ನು ತುಂಬುವ ಇಂಗ್ಲೀಷು ಅದರಷ್ಟಕ್ಕೆ ಅದು ಮಾಹಿತಿಯನ್ನೊದಗಿಸುವ ಕೆಲಸವನ್ನು ಮಾಡುತ್ತಲೇ ಇರುವುದು ದಿನನಿತ್ಯದ ಭಾಗವಾಗಿ ಹೋಗಿಬಿಟ್ಟಿದೆ.

Tuesday, October 24, 2006

'ಬಡವರ ಬಂಧು'ವಿನ ನೆನಪು

ಸಿನಿಮಾ ಬಿಡುಗಡೆಯಾಗಿ ಮೂವತ್ತು ವರ್ಷಗಳು ಆದವು ಎಂದು ನನಗನ್ನಿಸಿದ್ದು ಈ ದಿನ ಇಂಟರ್‌ನೆಟ್‌ನಲ್ಲಿ ಇದರ ಬಗ್ಗೆ ಹುಡುಕಿದಾಗಲೇ! ನಾನು ಈ ಸಿನಿಮಾವನ್ನು ನೋಡಿ ಕೊನೇಪಕ್ಷ ಒಂದಿಪ್ಪತ್ತು ವರ್ಷಗಳಾದರೂ ಕಳೆದಿರಬೇಕು, ಆದರೆ ಈ ಸಿನಿಮಾದ ಹೆಚ್ಚೂ ಕಡಿಮೆ ಎಲ್ಲಾ ಹಾಡುಗಳೂ, ಮುಖ್ಯವಾದ ಸೀನುಗಳು, ಪಾತ್ರಗಳು ಎಲ್ಲಾ ಚೆನ್ನಾಗಿ ಜ್ಞಾಪಕದಲ್ಲಿವೆ, ಹೇಗೆ ಮತ್ತೆ ಏಕೆ ಅನ್ನೋದೇ ಆಶ್ಚರ್ಯ.

ಹಳ್ಳಿಯಲ್ಲಿ ಕನ್ನಡಿಗನಾಗಿ ಹುಟ್ಟಿದ ಭಾಗ್ಯಕ್ಕೆ ನನಗೆ ಇಂಗ್ಲೀಷ್ ಪರಿಚಯವಾದದ್ದೇ ಐದನೇ ತರಗತಿಯಿಂದ, ಅಂದಿನಿಂದ ಇಂದಿನವರೆಗೂ ಅದು ನನ್ನ ಹೃದಯದಲ್ಲಿರೋ ಕನ್ನಡದ ಸ್ಥಾನವನ್ನು ಕಿತ್ತುಕೊಳ್ಳಲು ಹೋರಾಟ ನಡೆಸುತ್ತಲೇ ಇದೆ, ಆದ್ರೆ ಅದು ಎಂದಿಗೂ ಸಾಧ್ಯವಿಲ್ಲ ಅನ್ನೋದು ನನಗೂ ಚೆನ್ನಾಗಿ ಗೊತ್ತು, ಆದರೆ ನನಗೆ ಬರೋ ಇಂಗ್ಲೀಷಿಗೆ ಗೊತ್ತಿಲ್ಲ. ಎಷ್ಟೋ ಸಾರಿ ಬಾಯಿ ತುಂಬಾ ಅರಳು ಹುರಿದ ಹಾಗೆ ಇಂಗ್ಲೀಷನ್ನು ಗೊಣಗೋ ಪೇಟೆ ಹುಡುಗ್ರನ್ನ ನೋಡಿ ನನಗೂ ಅವರ ಥರಾ ಇಂಗ್ಲೀಷ್ ಬಂದಿದ್ರೆ ಅಂತ ಆರ್ತನಾಗಿ ಕರಬಿದ್ದರಿಂದಲೋ ಏನೋ ಇಂಗ್ಲೀಷ್ ಮಾತನಾಡುವವರ ನಡುವೆ ವರ್ಷಾನುಗಟ್ಟಲೇ ಜೀವಿಸೋ ಹಾಗೆ ಆಗಿರೋದು ಎನ್ನೋದು ನಾನು ಹೇಳೋ ಚೀಪ್ ಜೋಕು!

ಕನ್ನಡದ ಸಿನಿಮಾದ ವ್ಯಾಪ್ತಿ ನನ್ನ ಕಣ್ಣಲ್ಲಿ ಇಷ್ಟೇ: ಹೀರೋ ಆದವನು ಸರ್ವಗುಣ ಸಂಪನ್ನ, ಹಾಡ್ತಾನೆ, ಕುಣೀತಾನೇ, ದುಷ್ಟರನ್ನ ಚಚ್ತಾನೆ, ಇತ್ಯಾದಿ. ಮೊದಲೆಲ್ಲ ಆಗಿದ್ರೆ 'ಮಿಲಿಯನ್ ಡಾಲರ್ ಬೇಬಿ' ಸಿನಿಮಾದ ಕ್ಲಿಂಟ್ ಈಸ್ಟ್‌ವುಡ್ ಆಗಲೀ 'As good as it gets' ಚಿತ್ರದ ಜಾಕ್ ನಿಕೋಲ್ಸನ್ ಆಗಲಿ ಅವರೆನ್ನೆಲ್ಲ ಹೀರೋಗಳು ಅಂತ ಒಪ್ಪಿಕೊಳ್ಳೋದಕ್ಕೆ ಸಾಧ್ಯವಿರಲಿಲ್ಲ. ನನ್ನ ಮನಸ್ಸಲ್ಲಿರೋ ಕಥಾನಾಯಕನ ವ್ಯಾಪ್ತಿಯನ್ನು ಆ ರೀತಿ ಅರಳಿಸಿದ್ದಕ್ಕೆ ಇಂಗ್ಲೀಷ್ ಸಾಹಿತ್ಯ, ಸಿನಿಮಾಗಳಿಗೆ ಧನ್ಯವಾದಗಳನ್ನ ಹೇಳಲೇ ಬೇಕು. After all, ಸಿನಿಮಾ ಬದುಕಿನ ಅಂಗವೇ ಹೊರತು ಬದುಕೇ ಸಿನಿಮಾ ಅಲ್ಲವಲ್ಲ.

ಯಾವು ಯಾವುದೋ ಇವೆಂಟುಗಳು ಟ್ರಿಗ್ಗರ್ ಆದ ಹಿನ್ನೆಲೆಯಲ್ಲಿ ಇವತ್ತು ಕಾರಲ್ಲಿ ಕುಳಿತುಕೊಂಡು ಗೊಣಗುತ್ತಾ ಹೋದೆ...

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪೂ ಮೂಡಿವೆ

ತಂದೆ-ಮಗನ ಪ್ರೀತಿ, ವಾತ್ಸಲ್ಯ ಅಂದ್ರೆ ಏನು ಅಂತ ತಿಳೀಬೇಕು ಅಂದ್ರೆ ಬಡವರ ಬಂಧು ಸಿನಿಮಾದ ಈ ಹಾಡಿನ ದೃಶ್ಯವನ್ನು ನೋಡಲೇಬೇಕು. ಪಾರ್ಶ್ವವಾಯು ಪೀಡಿತ ತಂದೆ (ಸಂಪತ್) ಹಾಗೂ ಮಗ (ರಾಜ್‌ಕುಮಾರ್) ಅಭಿನಯದಲ್ಲಿ ಮನಮೋಹಕವಾದ ಅಭಿನಯ ಎಂಥವರ ಕರಳನ್ನೂ ಕೀಚುತ್ತದೆ. ಸಂಪತ್ ಅವರ ಅಭಿನಯವನ್ನು ಪೋಷಕ ಪಾತ್ರಗಳಲ್ಲಿ, ಹೆಚ್ಚಿನದರಲ್ಲಿ ಸಿರಿವಂತನಾಗಿ ಅಥವಾ ಖಳನಾಯಕನಾಗಿ ನೋಡಿದ ಎಷ್ಟೋ ಜನರು ಸಂಪತ್ ಈ ರೀತಿ ಅಭಿನಯವನ್ನೂ ಮಾಡಬಲ್ಲರು ಎಂದುಕೊಂಡಿರಲಾರರು.

ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ
ಬಿಸಿಲು ಮಳೆಗೆ ನರಳದಂತೆ ನಿನ್ನ ನೆರಳಲಿ ಬೆಳೆಸಿದೆ
ಆ ಪ್ರೀತಿಯಾ ಮನ ಮರೆವುದೆ


ರಾಜ್‌ಕುಮಾರ್ ಸಹ ಮಗನ ಪಾತ್ರದಲ್ಲಿ ಸಿದ್ಧಹಸ್ತರು, ಅವರಿಗೆ ಹೇಳಿಕೊಡುವುದಕ್ಕೇನೂ ನಿರ್ದೇಶಕರಿಗೆ ಇದ್ದಿರಲಾರದು. ಸಂಪತ್ ಪಾದಗಳನ್ನು ತೊಳೆದು, ಮೈ ಕೈ ನೀವಿ, ಒರೆಸಿ, ಕುರ್ಚಿಯಲ್ಲಿ ಕುಳ್ಳಿರಿಸಿ ಹಿಂದಿನಿಂದ ತಬ್ಬಿಕೊಂಡು ರಾಜ್ ನಿಂತ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದಿದೆ.

ಬಳ್ಳಿಯಂತೆ ಹಬ್ಬಿ ನಿನ್ನ ಆಸರೆಯಲಿ ಬೆಳೆದೆನು
ನನ್ನ ತಾಯಿಯ ಪಾದದಾಣೆ ಬೇರೆ ಏನನು ಆರಿಯೆನು
ನೀನೆ ನನ್ನಾ ದೇವನು

ತಂದೆಗೆ ಮಗನ ಆಸರೆ, ಮಗನಿಗೆ ತಂದೆಯ ಆಸರೆ, ತಲೆಯ ಮೇಲೊಂದು ಪುಟ್ಟ ಸೂರು. ಹೊಟೇಲಿನಲ್ಲಿ ಸಪ್ಲೈಯರ್ ಆಗಿ ದುಡಿದು ಬಂದ ಹಣದಲ್ಲಿ ಜೀವನ ಸಾಗಿಸಬೇಕು. ಮನೆಯ ಚಿತ್ರಣವೂ ಬಹಳ ಸರಳ. ಇಂತಹ ಹಿನ್ನೆಲೆಗೆ ಕವಿ ಕೊಡುವ ಸರಳ 'ಬಳ್ಳಿಯಂತೆ...'ಚಿತ್ರಣ ಹಾಗೂ ಈ ಅಪರಿಮಿತ ಪ್ರೇಮವನ್ನು ಬೆಲೆಕಟ್ಟಲಾಗದ 'ತಾಯಿಯ ಪಾದದ ಆಣೆ'ಯ ಸಹಾಯದಲ್ಲಿ ತಿಳಿಸಿ ಹೇಳುವ ಹಂಬಲ.

ನೀನು ನಕ್ಕರೆ ನಾನು ನಗುವೆನು, ಅತ್ತರೇ ನಾ ಆಳುವೆನು
ನಿನ್ನ ಉಸಿರಲಿ ಉಸಿರು ಬೆರೆತಿದೆ ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೆ ಬದುಕೆನು

ಮಗನ ಸೇವೆ ಹಾಗೂ ಅಗಲಿದ ಪತ್ನಿಯ ನೆನಪಿನಲ್ಲಿ ಸಂಪತ್ ಕಂಗಳಲ್ಲಾಗಲೇ ಹನಿಗೂಡಿರುತ್ತದೆ, ಅದನ್ನ ನೆನೆದು ಕವಿ ಬರೆದ 'ನಕ್ಕು-ಅಳುವ' ಸಾಲುಗಳು ಬಹಳ ಹಿಡಿಸಿದವು. ಹೀಗೆ ತಂದೆ-ಮಗನ ಪ್ರೇಮವೂ ಇದೆ ಎಂಬುದನ್ನು ತೋರಿಸಿಕೊಟ್ಟಿರುವ ಚಿತ್ರದ ಸನ್ನಿವೇಶ ಹಾಗೂ ಅದಕ್ಕೆ ತಕ್ಕ ಹಾಡು, ಸಂಗೀತ ಹೆಚ್ಚು ಚಿತ್ರಗಳಲ್ಲಿ ಬಂದಿರಲಿಕ್ಕಿಲ್ಲ.

ಇದೊಂದು ಸಿನಿಮಾದ ಸಂಭಾಷಣೆ, ಸಂಗೀತ, ಹಾಗೂ ಹಾಡುಗಳ ಲಹರಿಯೇ 'ರಂಗಾರಾವ್-ಉದಯಶಂಕರ್' ಹಲವಾರು ಫ್ಯಾನ್‌ಗಳನ್ನು ಹುಟ್ಟಿಸಿದೆ, ಅವರಲ್ಲಿ ನಾನೂ ಒಬ್ಬ. ಹೀಗೆ ದಿಢೀರನೆ ಹಾಡು ನೆನಪಾಗಿ, ಸಂಪತ್-ರಾಜ್‌ಕುಮಾರ್ ಪಾತ್ರಗಳನ್ನು ಯೋಚಿಸುತ್ತಾ ಬರುತ್ತಿದ್ದ ಹಾಗೆ ಮನೆ ಬಂದು ತಲುಪಿದೆ. ಕೊನೇಪಕ್ಷ ಉದಯ ಟಿವಿ ಇದ್ದೋರ ಮನೆಯಲ್ಲಾದರೂ ಅಪರೂಪಕ್ಕೆ ಈ ರೀತಿಯ ಹಾಡುಗಳು ಬರುತ್ತವೆಯೋ ಏನೋ ನಮ್ಮನೆಯಲ್ಲಿ ಸಧ್ಯಕ್ಕೆ ತಲೆಯಲ್ಲಿ ತುಂಬಿಕೊಂಡ ಸಾಲುಗಳನ್ನು, ದೃಶ್ಯಸರಣಿಗಳನ್ನು ನೆನಪಿಸಿಕೊಂಡು ಖುಷಿಪಡಬೇಕಷ್ಟೇ.

***

ಒಂದು ರೀತಿಯಲ್ಲಿ ನಾನು ಸಿನಿಮಾ ನೋಡೋದು ಒಳ್ಳೆಯದೇ, ಯಾಕೆಂದ್ರೆ ಯಾವುದೇ ಕಾದಂಬರಿ ಆಧರಿಸಿದ ಸಿನಿಮಾ ಇದ್ರೆ, ಉತ್ತಮ ಕಥೆಯನ್ನ ಮೂಲವಾಗಿಟ್ಟುಕೊಂಡು ಸಿನಿಮಾವನ್ನು ಮಾಡಿದ್ರೆ ಅದನ್ನು ಓದಿ ಆಹ್ಲಾದಿಸೋ ಸುಖವೇ ಬೇರೆ, ಆದರೂ ಐನೂರು ಪುಟದ ಕಾದಂಬರಿಯನ್ನು ಎರಡೂವರೆ ಘಂಟೆಗಳಲ್ಲಂತೂ ಓದೋಕಾಗಲ್ಲವಲ್ಲ! ಒಂದು ಚಿತ್ರ ಸಾವಿರ ಪದಗಳನ್ನ ಹೇಳುತ್ತಂತೆ, ಅದಕ್ಕೇ ಒಂದು ಸಿನಿಮಾ ನೋಡಿ ಅದರ ಬಗ್ಗೆ ಪುರುಸೊತ್ತು ಸಿಕ್ಕಾಗೆಲ್ಲ ಚಿಂತನೆ ಮಾಡಿದ್ರೆ ಟೈಮಾದ್ರೂ ಪಾಸ್ ಆಗುತ್ತೆ. ಹಾಗೆ ಬೇಕಾದ್ರೆ ಇನ್ನೊಮ್ಮೆ ಅದೇ ಸಿನಿಮಾವನ್ನು ನೋಡಿದ್ರೆ ಆಯ್ತು! ಇಷ್ಟೊಂದು ಚಾನೆಲ್ಲುಗಳು ಇರೋವಾಗ ನಾನು ಅದೇ ತಾನೆ ರಿಲೀಸ್ ಆಗಿರೋ ಸಿನಿಮಾಗಳನ್ನು ಹುಡುಕಿಕೊಂಡು ಹೋಗಿ ನೋಡೋದು ಕಡಿಮೆ, ಯಾಕಂದ್ರೆ ಅದು ಉತ್ತಮ ಸಿನಿಮಾ ಆಗಿದ್ರೆ ಇವತ್ತಲ್ಲ ನಾಳೆ ನಾನು ಅದನ್ನ ನೋಡೇ ನೋಡ್ತೀನಿ ಅನ್ನೋದರಲ್ಲಿ ನನಗೆ ಅಪಾರವಾದ ವಿಶ್ವಾಸವಿದೆ. ಈ ಅರ್ಥದಲ್ಲೇ ನನಗೆ ಸಿನಿಮಾಗಳು ಅಂದ್ರೆ ಇಷ್ಟವಾಗಿದ್ದು ಅನ್ಸುತ್ತೆ - ಒಂದೊಂದ್ ಸಿನಿಮಾ ಒಂದೊಂದ್ ಕಾದಂಬರಿ ಅಂತ ಅಂದ್‌ಕೊಂಡ್ರೆ ನಾವೆಲ್ಲರೂ ನೋಡಿರಬಹುದಾದ ಸಿನಿಮಾಗಳನ್ನು ಲೆಕ್ಕ ಹಾಕಿದ್ರೆ ಬಹಳಷ್ಟಾಗೋದಿಲ್ವೇ?

'ಮೌನಿ' ಸಿನಿಮಾ ನೋಡಿದಾಗಲೋ, 'ಮತದಾನ' ನೋಡಿದಾಗಲೋ ನನಗ್ಗೊತ್ತು ಸಿನಿಮಾ ಮಂದಿರದಿಂದ ಹೊರಗೆ ಬರ್ತಾ ಇದ್ದಹಾಗೇ ಕೊನೇ ಪಕ್ಷ ಒಬ್ರಾದ್ರೂ 'ಚು, ಕಾದಂಬರಿನೇ ಚೆನ್ನಾಗಿತ್ತು' ಅಂತ ಹೇಳೋದು ಕೇಳಿಸಿಕೊಂಡಿದ್ದೇನೆ. ಅಂತಹವರಿಗೆಲ್ಲ ತಾವು ಇತ್ತೀಚೆಗೆ ಓದಿರೋ ಕನ್ನಡ ಕಾದಂಬರಿ ಹೆಸರು ಹೇಳಿ ನೋಡೋಣ ಅಂತ ಸವಾಲು ಎಸೀಬೇಕು ಅನ್ಸುತ್ತೆ, ಯಾಕಂತಂದ್ರೆ ನನಗ್ಗೊತ್ತು ಅವರೆಲ್ಲ ತಾವು ಓದಿರೋ ಹಳೆ ಸರಕಿನ ಮೇಲೆ ವಿಹರಿಸ್ತಿರೋರು ಅಂತ. ಆ ಪಟ್ಟಿಗೆ ನನ್ನ ಹೆಸರೂ ಸೇರುತ್ತೆ, ಏಕಂದ್ರೆ ಇತ್ತೀಚೆಗೆ ಕನ್ನಡ ಕಾದಂಬರಿಗಳನ್ನು ಓದದೇ ಇರೋರಲ್ಲಿ ನಾನೂ ಒಬ್ಬ.

ನನ್ನ ಮನಸ್ನಲ್ಲಿ ಬರೀ ಸಿನಿಮಾ ಹಾಡುಗಳಷ್ಟೇ ಅಲ್ಲ, ನಾನು ಓದಿರೋ ಎಷ್ಟೋ ಕಾದಂಬರಿಯ ಪಾತ್ರಗಳು, ಚಿತ್ರಗಳೂ ಕೂಡಾ ಆಗಾಗ್ಗೆ ಜೀವಂತ ವ್ಯಕ್ತಿಗಳೋ ಅಥವಾ ಸಂಬಂಧಿಗಳ ಹಾಗೆ ಮನಸ್ಸಿನಲ್ಲಿ ಬಂದು ಹೋಗ್ತಲೇ ಇರ್ತವೆ, ಅದಕ್ಕೇ ಇರಬೇಕು ಒಳ್ಳೆಯ ವಸ್ತುಗಳು ಎಲ್ಲಾ ಕಾಲದಲ್ಲೂ ನಮ್ಮ ಮನಸ್ಸಿನಲ್ಲಿ ಹಸಿರಾಗಿ ಉಳಿಯೋದು!

Saturday, October 21, 2006

ದೀಪಾವಳಿಯ ನೆನಪುಗಳು

ದೀಪಾವಳಿಯ ಶುಭಾಶಯಗಳು!

***
ಮೊದಲೆಲ್ಲ ಮನೆಯಲ್ಲಾದರೆ ಅಮ್ಮ ನರಕಚತುರ್ದಶಿ ದಿನ ಇನ್ನೂ ನಾಲ್ಕೂವರೆ ಆಗುತ್ತಿದ್ದಂತೆಯೇ ನಮಗೆಲ್ಲ ಅಭ್ಯಂಜನ ಮಾಡುವಂತೆ ತಾಕೀತು ಮಾಡುತ್ತಿದ್ದಳು. ಆಗೆಲ್ಲ ಇನ್ನೂ ಛಳಿಯಲ್ಲೇ ಎದ್ದು ಯಾವುದೋ ತಪ್ಪಿಗೆ ಶಿಕ್ಷೆಯೆಂಬಂತೆ ಎಣ್ಣೆ ಹಚ್ಚಿಕೊಂಡು ಸ್ನಾನಮಾಡಿ ದೇವರಿಗೆ ಕೈ ಮುಗಿಸಿ ಉಸಿರು ಬಿಡುವುದರೊಳಗೆ ನಿದ್ರೆ ಮತ್ತೆ ಆವರಿಸಿಕೊಳ್ಳುತ್ತಿದ್ದರೂ ಯಾವುದೋ ಅವ್ಯಕ್ತ ಹೆದರಿಕೆ ಆ ನಿದ್ರೆಯನ್ನು ದೂರ ಓಡಿಸುತ್ತಿತ್ತು.

ಚುಮುಚುಮು ಛಳಿಗೆ ಬೆಂಕಿ ಕಾಯಿಸಿಕೊಳ್ಳುವುದಂದರೇನು, ಹಿತ್ತಲಲ್ಲಿ ಬಿದ್ದ ತರಗೆಲೆಗಳನ್ನೆಲ್ಲ ಒಂದೊಂದಾಗಿ ಹೆಕ್ಕಿ, ಗುಡಿಸಿ ಜೋಡಿಸಿಟ್ಟು ಬೆಂಕಿಗೆ ನಿಧಾನವಾಗಿ ತಳ್ಳಿ ಒಣಗಿದ್ದ ಎಲೆಗಳು ಮುದುರಿ ಬೂದಿಯಾಗುವುದನ್ನು ನೋಡುತ್ತಾ ಮಜಾ ಮಾಡುವುದೆಂದರೇನು. ಗೋಪೂಜೆಗೆ ತಯಾರಿ ಮಾಡುವುದರಿಂದ ಹಿಡಿದು ಮರುದಿನದ ಲಕ್ಷ್ಮೀ ಪೂಜೆಗೂ ಅದಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದವು.

***

ಬೋಸ್ಟನ್‍ನಲ್ಲಿ ಯಾವುದೋ ಹೊಟೇಲ್ ಒಂದರಲ್ಲಿ ಈ ವರ್ಷ ದೀಪಾವಳಿಯನ್ನು ಕಳೆಯುತ್ತಿರುವುದು ನನ್ನ ಹಣೆಬರಹ. ನಮ್ಮ ಪ್ರಾಜೆಕ್ಟ್‌ನ ಎರಡನೇ ಫೇಸ್ ಇಂದು ಬಿಡುಗಡೆ ಆಯ್ತು, ಹಗಲೂ-ರಾತ್ರಿ ಸಮರೋಪಾದಿಯಲ್ಲಿ ಎಷ್ಟೋ ಜನ ಕೆಲಸ ಮಾಡ್ತಾ ಇರೋದನ್ನ ನೋಡಿದ್ರೆ ಒಂದು ಕಡೆ ಸಂತೋಷವಾಗುತ್ತೆ, ಮತ್ತೊಂದು ಕಡೆ ಅಷ್ಟೇ ದುಃಖವಾಗುತ್ತೆ. ಭಾರತದಲ್ಲಿರೋ ನಮ್ಮ ಕಂಪನಿಯಲ್ಲಿ ಸುಮಾರು ನಲವತ್ತು ಜನರನ್ನು ಅಗತ್ಯ ಬಿದ್ದರೆ ಕೆಲಸಕ್ಕೆ ಕರೆಯುತ್ತೇವೆ, ನೀವು ಊರು ಬಿಟ್ಟು ಎಲ್ಲೂ ಹೋಗಬೇಡಿ ಎಂದು ಬೇರೆ ಹೇಳಿದ್ದಾರಂತೆ. ಪಾಪ, ವರ್ಷಾವಧಿ ಹಬ್ಬದ ಹೊತ್ತಿನಲ್ಲಿ ಭಾರತದಲ್ಲಿ ಎಷ್ಟೋ ಜನ ತಮ್ಮ-ತಮ್ಮ ಊರುಗಳಿಗೆ ಹೋಗದೇ ಮದ್ರಾಸ್ ಹಾಗೂ ಹೈದರಾಬಾದ್‌ನಲ್ಲಿ ಸುಮ್ಮನೇ ಕಾದುಕೊಂಡಿದ್ದೇ ಬಂತು, ನಾವೆಣಿಸಿದಂತೆ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ನಡೆದು ನಮಗೆ ಭಾರತದಲ್ಲಿನ ಕೆಲಸಗಾರರ ಅಗತ್ಯ ಇಂದು ಬೀಳಲಿಲ್ಲ.

ಸಾಲಿನಲ್ಲಿ ಮೊದಲ ವ್ಯಕ್ತಿಯಾಗಿ ನಿಂತು ಆಲೋಚಿಸುವುದನ್ನು ಕಲಿಯಬೇಕಾದ ಅಗತ್ಯ ನನಗೆ ಬಹಳಷ್ಟಿದೆ. ಯಾವುದೋ ಒಂದು ಮೀಟಿಂಗ್‌ನಲ್ಲಿ ಭಾರತದಲ್ಲಿ ದೀಪಾವಳಿ ಹಬ್ಬದ ವತಿಯಿಂದ ರಜೆ ಇರುವುದು ಗೊತ್ತಿದ್ದೋ ಇಲ್ಲದೆಯೋ ಯಾರೋ ಮೇಲಿನವರು ದಿಢೀರನೆ 'ನಾವು ಭಾರತದಲ್ಲಿನ ಕೆಲಸಗಾರರನ್ನು ನಿಮ್ಮ ಸಹಾಯಕ್ಕೆ ಅನುವಾಗಿಡುತ್ತೇವೆ' ಎಂದು ಒಪ್ಪಿಕೊಂಡಾಕ್ಷಣ, ಆ ಕ್ಷಣದಲ್ಲಿ ನನ್ನಂತಹವರಿಗೆ ಅಲ್ಲಿನವರ ಸಂಕಷ್ಟಗಳ ಪರಿಚಯವಿದ್ದೂ ಆ ಬಗ್ಗೆ ಒಂದು ಮಾತನ್ನು ಆಡಲು ಗಂಟಲು ಬಿದ್ದು ಹೋಗಿಬಿಡುತ್ತದೆ. ಇಲ್ಲಿ ಯಾರು ಯಾರು ಯಾವ ಲೆವೆಲ್‌ನಲ್ಲಿ ಇದ್ದಾರೆ ಎನ್ನುವುದು ಮುಖ್ಯವೋ? ಯಾರು ಯಾವ ಮಾತನ್ನು ಆಡಬೇಕೋ ಅಷ್ಟನ್ನೇ ಆಡಬೇಕು ಎನ್ನುವ ಪ್ರಾಕ್ಟಿಕಾಲಿಟಿ ಪ್ರಸ್ತುತವೋ? ಅಥವಾ 'ನಿಮಗೆ ಇಲ್ಲಿ ಕ್ರಿಸ್‌ಮಸ್ ಇರುವ ಹಾಗೆ ಭಾರತದಲ್ಲಿ ದೀಪಾವಳಿ' ಎಂದು ಸಾರಿ ಹೇಳುವ ಎಮೋಷನಲ್ ಒತ್ತಡವೋ? ಅಥವಾ ಈ ರೀತಿಯ ಆಲೋಚನೆಯೇ ಬರದೇ ಇರಬಹುದಾದ ಬರಡಾದ ಮನಸ್ಸೋ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಮುಂದಾಳುವಾಗಿ ತನ್ನನ್ನು ಗುರುತಿಸಿಕೊಳ್ಳುವಲ್ಲಿ ಹಲವಾರು ಮಜಲುಗಳಲ್ಲಿ ನಿಂತು ಆಲೋಚಿಸಬೇಕಾದ ಅಗತ್ಯವಿದೆ, ಈ ರೀತಿಯ ಅಗತ್ಯ ಎನ್ನೋದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಪ್ರತಿಭೆಯೋ ಅಥವಾ ತನ್ನನ್ನು ತಾನು ರೂಢಿಸಿಕೊಳ್ಳುವ ಕ್ರಮವೋ, ಯಾರು ಬಲ್ಲರು.

***

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು. ನಮ್ಮ ಸಹೋದ್ಯೋಗಿ ಅರುಣ್ ಹೊಸದಾಗಿ ಮದುವೆಯಾದ ವರ್ಷ. ಆತನಿಗೂ ಅದು ಮೊದಲ ದೀಪಾವಳಿ ಹೆಂಡತಿಯೊಂದಿಗೆ. ಮೊದಲೆಲ್ಲ ನಮ್ಮ ಜೊತೆ ನಮ್ಮ ಹಾಗೆ ಒಂದು ಊಟದ ಡಬ್ಬಿಯನ್ನು ಆಫೀಸಿಗೆ ತರುತ್ತಿದ್ದವನು ಮದುವೆಯಾದ ಮೇಲೆ ನಾಲ್ಕೈದು ಬಾಕ್ಸುಗಳನ್ನಾದರೂ ತಂದು ತನ್ನ ಮುಂದೆ ಟೇಬಲ್ಲಿನ ಮೇಲೆ ಹರವಿಕೊಳ್ಳುತ್ತಿದ್ದವನನ್ನು ನಾವು ಡ್ರಮ್ಮಿಷ್ಟ್ ಎಂದೇ ಕರೆಯತೊಡಗಿದ್ದೆವು. ಒಂದು ಬಾಕ್ಸಿನಿಂದ ನಾಲ್ಕು ಬಾಕ್ಸಿಗೆ ಬೆಳೆದ ಬಡ್ತಿ ಅಷ್ಟೇ ಬೇಗನೆ ತಿರುಗಿ ಮತ್ತೆ ಒಂದು ಬಾಕ್ಸಿಗೆ ಬಂತು, ಅದು ಬೇರೆ ವಿಚಾರ.

ಅರುಣನ ಮೊದಲ ನರಕಚತುರ್ದಶಿಯನ್ನು ನೆನಪಿಸಿ ಅವನಿಗೆ ಇವತ್ತಿಗೂ ನಾನು ತಮಾಷೆ ಮಾಡುತ್ತೇನೆ. ಅರುಣ ಯಾವುದನ್ನು ಬಿಟ್ಟರೂ ನಿದ್ರೆಯನ್ನು ಮಾತ್ರ ಬಿಡುವ ಜಾಯಮಾನದವನಲ್ಲ. ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ ಹತ್ತು ಘಂಟೆಗಳಾದರೂ ಗಡದ್ದಾಗಿ ನಿದ್ರೆ ಆಗಲೇ ಬೇಕು. ಅಂತಹವನನ್ನು ಅವನ ಹೆಂಡತಿ ಪ್ರಿಯಾ ನರಕ ಚತುರ್ದಶಿಯ ದಿನ ಬೇಗನೆ ಏಳಿಸಿದ್ದೂ ಅಲ್ಲದೇ (ಚೆನ್ನಾಗಿ) ಅಭ್ಯಂಜನವನ್ನು ಮಾಡಿಸಿ ಆದಷ್ಟು ಬೇಗನೆ ಮನೆಗೆ ಬನ್ನಿ ಎಂದು ಹೇಳಿ ಬೇಗನೆ ಆಫೀಸಿಗೆ ಕಳಿಸಿಬಿಟ್ಟಿದ್ದಳು. ಈ ಮನುಷ್ಯ ಎಂದಿಗಿಂತಲೂ ಒಂದೆರಡು ಘಂಟೆ ಮೊದಲೇ ಆಫೀಸಿಗೆ ಹೊರಟವನು ಸೀದಾ ಆಫೀಸಿಗೆ ಬಂದಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ, ಅಂತಹದುರಲ್ಲಿ ಅರುಣ ತನ್ನ ಕಾರನ್ನು ಪಾರ್ಕಿಂಗ್ ಲಾಟಿನಲ್ಲಿ ನಿಲ್ಲಿಸಿ ಅಲ್ಲೇ ಸುಮಾರು ಎರಡು ಘಂಟೆಯ ಮೇಲೆ ನಿದ್ರೆ ಮಾಡಿಬಿಡೋದೆ! ಈ ಕಡೆ ಪ್ರಿಯಾ ಆಗೆಲ್ಲ ಇನ್ನೂ ಸೆಲ್‌ಫೋನುಗಳು ಹೆಚ್ಚು ಇರಲಿಲ್ಲವಾದ್ದರಿಂದ ಅರುಣನ ಆಫೀಸಿಗೆ ಫೋನ್ ಕರೆಯ ಮೇಲೆ ಕರೆ ಮಾಡುವುದೂ ಅರುಣನ ಕಡೆಯಿಂದ ಯಾವುದೇ ಉತ್ತರ ಬಾರದಿರುವುದೂ ಸ್ವಲ್ಪ ಹೊತ್ತು ನಡೆಯಿತು. ಪಾಪ, ಪ್ರಿಯಾಳ ಮನಸ್ಸಿನಲ್ಲಿ ಏನೆನೆಲ್ಲ ಆಗುತ್ತಿರಬೇಡ, ಕೊನೆಗೂ ಪ್ರಿಯಾ ರಾಜೀವನ ನಂಬರನ್ನು ಹುಡುಕಿ ಡಯಲ್ ಮಾಡಿ ರಾಜಿವ ಎಲ್ಲರ ಜೊತೆ ಸೇರಿ ಅರುಣನನ್ನು ಹುಡುಕಿ ಏಳಿಸಿ ಆಫೀಸಿಗೆ ಕರೆದುಕೊಂಡು ಬರಬೇಕಾದರೆ ಸಾಕು ಬೇಕಾಯಿತೆನ್ನಿ!

Tuesday, October 17, 2006

mUರು ಚಿತ್ರಗಳು

ದಿನಾ ಆಫೀಸಿಗೆ ಹೋಗೋ ಇಂಟರ್‌ಸ್ಟೇಟ್ ೭೮ ರಲ್ಲಿ ಅವಿರತ ಕನ್‌ಷ್ಟ್ರಕ್ಷನ್ ನಡೆದಿದೆ. ಸುಮಾರು ದೂರ ಎಕ್ಸ್‌ಪ್ರೆಸ್ ಲೇನುಗಳನ್ನು ಮುಚ್ಚಿ ಎಲ್ಲ ಟ್ರಾಫಿಕ್ಕನ್ನು ಲೋಕಲ್ ಲೇನುಗಳಿಗೆ ಬದಲಾಯಿಸಲಾಗಿದೆ. ಮೊದಲು mUರಿದ್ದ ಲೋಕಲ್ ಲೇನುಗಳನ್ನು ಈಗ ನಾಲ್ಕು ಲೇನುಗಳನ್ನಾಗಿ ಪರಿವರ್ತಿಸಲಾಗಿದೆ. ಲೋಕಲ್ ಲೇನುಗಳಲ್ಲಿ ಎಷ್ಟೋ ದೂರ ಶೋಲ್ಡರ್ ಇಲ್ಲವಾದ್ದರಿಂದ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಟ್ರಾಫಿಕ್ ಜಾಮ್ ಅನ್ನೋದು ಆಗಲೇ ಬೇಕು. ಯಾವುದಾದರೂ ಕಾರು ಬ್ರೇಕ್‌ಡೌನ್ ಆಗುವುದರಿಂದ ಹಿಡಿದು ಸಣ್ಣಪುಟ್ಟ ಆಕ್ಸಿಡೆಂಟೋ, ಫೆಂಡರ್-ಬೆಂಡರ್‌ಗಳೋ, ಅಥವಾ ಇಡೀ ಕಾರು ನಜ್ಜುಗುಜ್ಜಾಗುವ ಯಾರಾದರೂ ನೆಗೆದುಬಿದ್ದು ಹೋದ ಘಟನೆಗಳಂತೂ ಪರಿಸ್ಥಿತಿಯನ್ನು ಇನ್ನೂ ಕೈ ಮೀರಿಸಿಬಿಡುತ್ತವೆ. ಜನರ ಜೀವಗಳು ಅಥವಾ ಸಣ್ಣಪುಟ್ಟ ಅಡೆತಡೆಗಳು ಯಾರು ಯಾರಿಗೆ ಏನೇ ಅರ್ಥವನ್ನು ಕೊಟ್ಟರೂ ಕೊನೆಯಲ್ಲಿ ನನ್ನಂತಹವರಿಗೆ ಪ್ರತಿಯೊಂದು ದುರಂತ ಅರ್ಧ ಘಂಟೆಯ ಪ್ರಯಾಣವನ್ನು ಹೆಚ್ಚಿಸಿಬಿಡುತ್ತದೆ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು, ಯಾವುದೊಂದನ್ನೂ ಭಾವನಾತ್ಮಕವಾಗಿ ನೋಡದಿರುವ ಹಾಗೆ ಇಂತಹ ಘಟನೆಗಳು ನನ್ನ ಮನೋಬಲವನ್ನು ಹೆಚ್ಚಿಸುತ್ತಿರಬಹುದು, ಒಂದು ರೀತಿ ಕಟುಕನ ಅಂಗಡಿಯಲ್ಲಿ ಮಾಂಸ ಕತ್ತರಿಸುವವನ ಮನಸ್ಥಿತಿಯ ಹಾಗೆ ಯಾವ ಕುರಿಯಾದರೇನಂತೆ? ಸುಮಾರು ಐದು ತಿಂಗಳು ನಡೆಯಬಹುದಾದ ಈ ಮೆಗಾ ಪ್ರಾಜೆಕ್ಟ್ ಬಹಳಷ್ಟನ್ನು ಒತ್ತರಿಸಿದೆ - ಹೊಸದಾಗಿ ಮೇಲ್ಮೈಯನ್ನು ಪಡೆಯುತ್ತಿರುವ ಎಕ್ಸ್‌ಪ್ರೆಸ್ ಲೇನುಗಳು ಬಡದೇಶಗಳ ವಿಮಾನ ನಿಲ್ದಾಣಗಳ ರನ್‌ವೇಗಳಿಗಿಂತಲೂ ದಪ್ಪವಾದ ಕಾಂಕ್ರೀಟ್-ಆಸ್ಪಾಲ್ಟ್ ಮಿಶ್ರಣವನ್ನು ಹೊಂದಿವೆ, ನನ್ನ ಅಂದಾಜಿನ ಪ್ರಕಾರ ಈ ಹೊಸ ರಸ್ತೆಯ ದಪ್ಪ ಸುಮಾರು ಹತ್ತು ಹನ್ನೆರಡು ಅಂಗುಲಗಳು. ಸುಮಾರು ಹದಿನೈದು ಮೈಲು ದೂರ ಹನ್ನೆರಡು ಅಂಗುಲದ ರಸ್ತೆಯಲ್ಲಿ, ಶೋಲ್ಡರ್ ಸೇರಿಸಿ ಐವತ್ತು ಅಡಿ ಅಗಲವಿರಬಹುದಾದ ಈ ಪ್ರಾಜೆಕ್ಟಿನಲ್ಲಿ ಬಳಸಬಹುದಾದ ರಿಸೋರ್ಸನ್ನು ಊಹಿಸಿ ನನ್ನ ಮನಸ್ಸಿನಲ್ಲಿರುವ ವೇರಿಯಬಲ್‌ಗಳು ಅಳತೆ ಮೀರುತ್ತವೆ. ಹೊಸ ರಸ್ತೆಯ ಹುಟ್ಟಿಗಾಗಿ ಒತ್ತರಸಿಲ್ಪಟ್ಟ ಹಾಗೂ ಬಹುವಾಗಿ ಬಳಕೆಯಾಗುವ ಲೋಕಲ್ ರಸ್ತೆಯ ಸಂಪನ್ಮೂಲಗಳು, ಹೊಸ ರಸ್ತೆಯ ಹುಟ್ಟಿಗಾಗಿ ಹೊಸದಾಗಿ ತಂದು ಹಾಕಿದ ಕಚ್ಚಾವಸ್ತುಗಳು, ಹೊಸತನ ಅನ್ನೋದು ಸುಮ್ಮನೇ ಏನಲ್ಲ ಎಂದು ನನ್ನಂತಹವರು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

***

ರಸ್ತೆಗಳ ಕೃಪೆಯಲ್ಲಿ ಯಾವುದೋ ಒಂದು ಸಮಯದಲ್ಲಿ ಆಫೀಸ್ ತಲುಪೋ ನನಗೆ ನಾನು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ಬಹಳ ಮುಖ್ಯವಾಗಿ ಕಾಣುತ್ತದೆ. ಎಷ್ಟೋ ದಿನಗಳಲ್ಲಿ ನಮ್ಮ ಪ್ರಾಜೆಕ್ಟಿನ ಯಾವುದಾದರೊಂದು ಒಂದು ಸಂದಿಗ್ಧ ಸನ್ನಿವೇಶದಲ್ಲಿ ನಾನು ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರನ್ನು ನಿರ್ಧಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತೇನೆ - ಈ ಸಂಪನ್ಮೂಲಗಳಲ್ಲಿ ಸೀನಿಯರ್ ಮ್ಯಾನೇಜರುಗಳಿಂದ ಹಿಡಿದು ಕಿರಿಯ ಸಾಫ್ಟ್‌ವೇರ್ ಇಂಜಿನಿಯರುಗಳೂ ಸೇರಿರುತ್ತಾರೆ. ಇವರೆಲ್ಲರ ದಿನನಿತ್ಯದ ಕೆಲಸ ಮಾಡುವ ಸಮಯ ಈಗಾಗಲೇ ಹಲವಾರು ಮೀಟಿಂಗ್‌ಗಳಲ್ಲೋ, ಮತ್ತೊಂದರಲ್ಲೋ ಹೆಣೆದುಕೊಂಡಿದ್ದರೂ ನನಗೆ ನನ್ನ ಟ್ಯಾಸ್ಕ್ ಬಹಳ ಅಪ್ಯಾಯಮಾನವಾಗಿ ಕಂಡು ಇವರೆಲ್ಲರೂ ತಮ್ಮತಮ್ಮ ಕೆಲಸಗಳನ್ನು ಬದಿಗೊತ್ತಿ ನಾನು ಒದ್ದಾಡುತ್ತಿರುವ ಸಮಸ್ಯೆಗೆ ಸ್ಪಂದಿಸುವಂತೆ ಕೇಳಿಕೊಳ್ಳುತ್ತೇನೆ, ಅಕಸ್ಮಾತ್ ಅವರು ಒಪ್ಪದೇ ಬೇರೆ ವಿಧಿಯೇ ಇಲ್ಲ ಏಕೆಂದರೆ ನಾನು ಮಾಡುತ್ತಿರುವ ಕೆಲಸಕ್ಕೆ ಸಂಬಂಧಿಸಿದಂತೆ ವಿಷಯಗಳನ್ನು ಎಸ್ಕಲೇಟ್ ಮಾಡಿ ಕೆಲಸವನ್ನು ಮಾಡಿಸಿಕೊಳ್ಳುವ ಕಲೆ ಅಥವಾ ಅಥಾರಿಟಿ ನನಗೆ ಎಂದೋ ಸಿದ್ಧಿಸಿದೆ. ಈ ಹೊಸದಾಗಿ ಹುಟ್ಟುತ್ತಿರುವ ಪ್ರಾಡಕ್ಟ್ ಇಂಟರ್‌ಫೇಸ್ ಸ್ಥಳೀಯ ಸಂಪನ್ಮೂಲಗಳನ್ನು ಬೇಕಾದಷ್ಟು ಬಳಸಿಕೊಂಡಿದೆ, ಎಷ್ಟೋ ಜನರ ಅನುಕೂಲ-ಅನಾನುಕೂಲಗಳನ್ನು ಬದಿಗೊತ್ತಿ ನನ್ನ ಪ್ರಾಜೆಕ್ಟಿನ ಟಾಸ್ಕುಗಳು ತಲೆ ಎತ್ತಿ ನಿಂತಿವೆ. ಎಷ್ಟೋ ಸಾರಿ ಘಂಟೆಗಟ್ಟಲೆ ನಡೆಯುವ ಮೀಟಿಂಗುಗಳು ಬೇಕಾದಷ್ಟು ಜನರಿಗೆ ಹಲವಾರು ವಿಳಂಬಗಳನ್ನು ಹುಟ್ಟಿಸಿವೆ. ನಮ್ಮಲ್ಲಿ ನಡೆಯುವ ಎಲ್ಲಾ ಪ್ರಾಜೆಕ್ಟುಗಳಿಗೆ ಅವೇ ಸಂಪನ್ಮೂಲಗಳು ಬಳಕೆಯಾದರೂ ನನ್ನ ಕಣ್ಣಿಗೆ ನನ್ನ ಪ್ರಾಜೆಕ್ಟ್ ಮಾತ್ರ (ವಿಶೇಷವಾಗಿ) ಕಾಣೋದರಿಂದ ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ನಾನು ಸಂಪನ್ಮೂಲಗಳನ್ನು ಬಳಸಿ ಬಡವರ ನಡುವಿನ ಶ್ರೀಮಂತನಂತೆ ಮಿನುಗುತ್ತೇನೆ, ಅಥವಾ ಒಳಗೊಳಗೇ ಕೊರಗುತ್ತೇನೆ.

***

ನಮ್ಮ ಡಾಕ್ಟರ್ ಆಫೀಸಿನಲ್ಲಿ ಗರ್ಭಿಣಿಯ ಚಿತ್ರವೊಂದನ್ನು ತೂಗು ಹಾಕಿದ್ದಾರೆ. ಬೆಳೆಯುತ್ತಿರುವ ಮಗುವನ್ನು ಹಲವಾರು ಕೋನಗಳಲ್ಲಿ ಸೆರೆಹಿಡಿದು ತಾಯಿಯ ಹೊಟ್ಟೆಯಲ್ಲಿ ಮಗುವಿಗೆ ಸ್ಥಳ ಮಾಡಿಕೊಡುವಂತೆ ಆಗುವ ಬದಲಾವಣೆಗಳನ್ನು ಚಿತ್ರಗಳ ಸಮೇತ ವಿವರಿಸಿದ್ದಾರೆ. ಮಗುವನ್ನು ಪೋಷಿಸಿ ಅದನ್ನು ಹೊತ್ತು ಹೆರುವುದಕ್ಕೆ ಆ ತಾಯಿಯ ಅಂಗಾಗಳಲ್ಲಿ ಆಗುವ ಮಾರ್ಪಾಟು ಅಪಾರವಾದುದು. ಸಣ್ಣ-ದೊಡ್ಡಕರುಳುಗಳು ಬದಿಗೊತ್ತಿ ಅವುಗಳ ನಡುವೆ ದಿನೇದಿನೇ ಹಿಗ್ಗುವ ಗರ್ಭಾಶಯವನ್ನು, ಅದರಲ್ಲಿ ಸದಾ ಕಾರ್ಯಪ್ರವೃತ್ತವಾಗಿರುವ ಭ್ರೂಣದ ಅಗತ್ಯಗಳನ್ನು ಪೂರೈಸುವುದಕ್ಕೆ ಏನೇನೆಲ್ಲ ಬದಲಾವಣೆಗಳಾಗುತ್ತವೆ. ಕಿಬ್ಬೊಟ್ಟೆಯಿಂದ ಹಿಡಿದು ಪುಪ್ಪುಸಗಳವರೆಗೆ, ಜಠರದಿಂದ ಹಿಡಿದು ಪಿತ್ತಜನಕಾಂಗ ಮೆದೋಜೀರಕಾಂಗಗಳವರೆಗೆ, ಪಕ್ಕೆಲೆಬುಗಳನ್ನು ಹೊರತುಪಡಿಸಿ ಮತ್ತೆಲ್ಲವೂ ಹಿಗ್ಗಿ-ಕುಗ್ಗಿ ಒಂದಲ್ಲ ಒಂದು ರೀತಿಯಿಂದ ಈ ಹೊಸಜೀವಕ್ಕೆ ದಾರಿಮಾಡಿಕೊಡೋದನ್ನ ಊಹಿಸಿಕೊಳ್ಳುತ್ತೇನೆ. ಬರೀ ಮೇಲ್ಮಟ್ಟಕ್ಕೆ ಕಾಣೋ ಬದಲಾವಣೆಗಳು ಮಾತ್ರವಲ್ಲ; ತಾಯಿಯ ಒಡಲಿನೊಳಗೆ ಬಹಳಷ್ಟು ಕಿಣ್ವಗಳು ಸೃಜಿಸಲ್ಪಟ್ಟಿವೆ, ಗ್ರಂಥಿಗಳಿಂದ ನಾನಾ ರೀತಿಯ ಹಾರ್ಮೋನುಗಳ ಹುಟ್ಟಿನಲ್ಲಿ ಬದಲಾವಣೆಗಳಾಗಿವೆ, ದೇಹದಲ್ಲಿ ನೀರು-ರಕ್ತದ ಅಂಶಗಳು ಹೆಚ್ಚಿವೆ; ಹೀಗೆ ಕಣ್ಣಿಗೆ ಕಾಣದ ಹಾಗೂ ಮೇಲ್ನೋಟಕ್ಕೆ ಕಂಡುಬರುವ ಹಲವಾರು ಬದಲಾವಣೆಗಳು ಯಾರೋ ಹೇಳಿಮಾಡಿಸಿದಂತೆ ತಮ್ಮಷ್ಟಕ್ಕೆ ತಾವೇ ಒಂದರ ನಂತರ ಮತ್ತೊಂದು ಹುಟ್ಟುತ್ತಿವೆ, ಹೊಸತಿನ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಿವೆ.

***

ಹೊಸತು ಎನ್ನೋದು ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಅದನ್ನು ಪೋಷಿಸಲು ಅಗತ್ಯವಾದ ಬದಲಾವಣೆಗಳು ಬೇಕೇ-ಬೇಕು, ಹೊಸತು ಹುಟ್ಟುವುದು ಯಾವುದೋ ಒಂದು ನಿರ್ವಾತದಲ್ಲಲ್ಲ ಅದು ಇದ್ದವುಗಳ ನಡುವೆಯೇ ಹುಟ್ಟಿ-ಬೆಳೆದು-ಬದಲಾವಣೆಗಳಿಗೊಳಪಡಬೇಕು, ಹೊಸತರ ಹುಟ್ಟು ಅಥವಾ ಬೆಳವಣಿಗೆ ಅದಕ್ಕೆ ಬೇಕಾದ ಹಾಗೆ ಸಂಪನ್ಮೂಲಗಳನ್ನು ಬಳಸಿಕೊಂಡೇ ತೀರುತ್ತದೆ ಅಥವಾ ಹಾಗಿಲ್ಲವೆಂದಾದರೆ ಅದು ಸೊರಗುತ್ತದೆ, ಈ ಬೆಳವಣಿಗೆ ಯಾವುದೋ ಪೂರ್ವ ನಿರ್ಧರಿತ ಯೋಜನೆಯಂತೆ ಕಂಡುಬಂದರೂ ನಡುನಡುವೆ ಹಲವಾರು ಬದಲಾವಣೆಗಳಿಗೆ, ಸಮಯಕ್ಕೆ ತಕ್ಕಂತೆ ಮಾರ್ಪಾಟುಹೊಂದುವಲ್ಲಿ ಸುತ್ತಮುತ್ತಲಿನ ಮೇಲೆ ನಿರೀಕ್ಷೆಗಿಂತ ಹೆಚ್ಚು ಒತ್ತಡ ಬೀಳಬಹುದು.

Sunday, October 15, 2006

ಅವರವರ ನೋಟ

ಒಂದು ದೇಶದಲ್ಲಿ ಐದು, ಹತ್ತು ಹದಿನೈದು ವರ್ಷಗಳಿದ್ದರೆ ಅವರವರ ಅನುಭವದ ಮೇಲೆ ಒಂದು ರೀತಿಯ ಇಂಪ್ರೆಷ್ಷನ್ ನಿರ್ಮಾಣವಾಗುತ್ತದೆ, ಕೆಲವರು ಅದೆಷ್ಟೇ ವರ್ಷ ಯಾವುದೇ ದೇಶದಲ್ಲಿದ್ದರೂ ತಮ್ಮ ಸುತ್ತ ಮುತ್ತಲು ತಮ್ಮದೇ ಪರಿಸರವನ್ನು ನಿರ್ಮಿಸಿಕೊಂಡು ತಮ್ಮದೇ ಬಾಳ್ವೆಯನ್ನು ಬದುಕುತ್ತಾರೆ, ಇನ್ನು ಕೆಲವರು ಮೊದಲ ದಿನದಿಂದಲೇ ತಮ್ಮ ತನವನ್ನು ತೆರೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಳ್ಳಲು ಹವಣಿಸುತ್ತಾರೆ. ಈ ಎಕ್ಸ್‌ಟ್ರೀಮ್‌ ಗುಂಪಿನಲ್ಲಿ ಸೇರುವವರು ಬಹಳ ಮಂದಿಯೇನಲ್ಲ, ಹೆಚ್ಚಿನವರು ನನ್ನ ಹಾಗೆ ಬೆಲ್ ಕರ್ವ್‌ನ ಮಧ್ಯೆ ಎಲ್ಲೋ ಬಿದ್ದು ಒದ್ದಾಡುವವರು.

ಅಮೇರಿಕಕ್ಕೆ ಪ್ರವಾಸಕ್ಕೆಂದು ಬಂದು ಇಲ್ಲಿ ನನ್ನನ್ನು ಭೇಟಿಯಾಗುವ ಹೆಚ್ಚಿನ ಜನರನ್ನು ಮಾತನಾಡಿಸಿದಾಗ ಅವರ ಕಣ್ಣುಗಳಲ್ಲಿ ನಾನು ಅಮೇರಿಕವನ್ನು 'ನೋಡಿದ್ದೇನೆ' ಎನ್ನುವ ಆಶಾಭಾವನೆ ಕಂಡುಬರುತ್ತದೆ, ಎಷ್ಟೋ ಸಾರಿ ಅವರಿಗೆ ಅಂಕಿ-ಅಂಶಗಳ ವತಿಯಿಂದ, ಇಲ್ಲಿನ ಮುಖ್ಯವಾದ ಸ್ಥಳಗಳ ಮಾಹಿತಿ-ಹಿನ್ನೆಲೆಯ ದೃಷ್ಟಿಯಿಂದ ಸ್ಥಳೀಯರಿಗಿಂತ ಹೆಚ್ಚಿನ ತಿಳುವಳಿಕೆ ಇದ್ದಿರುವುದನ್ನೂ ಗುರುತಿಸುತ್ತೇನೆ. ಜೊತೆಗೆ ಅವರಲ್ಲಿ ದಿಢೀರನೆ ನಿರ್ಧಾರಕ್ಕೆ ಬಂದು ಬಿಡಬಲ್ಲ ಒಂದು ಗುಣವನ್ನೂ ಕಂಡುಕೊಳ್ಳುತ್ತೇನೆ. ಹೆಚ್ಚಿನ ಪಕ್ಷ ಅವರ ತತ್‌ಕ್ಷಣ ನಿರ್ಧಾರಗಳು ಬೆಳ್ಳಗಿರೋದೆಲ್ಲ ಮಲ್ಲಿಗೆ, ಕಪ್ಪಗಿರೋದೆಲ್ಲ ಕೆಟ್ಟದ್ದು ಎನ್ನುವ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹುಟ್ಟಿದವೇನೋ ಅನ್ನುವ ಸಂಶಯವೂ ಬಂದಿದೆ. ಆದರೂ ಒಬ್ಬ ಪ್ರವಾಸಿಯಾಗಿ ಒಂದು ದೇಶವನ್ನು ನೋಡಿ ಅನುಭವಿಸುವುದಕ್ಕೂ, ಅಲ್ಲೇ ಸ್ಥಳೀಯರಾಗಿ ಹಲವು ವರ್ಷ ಸುತ್ತಲನ್ನು ಕೆದಕಿ ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಆದ್ದರಿಂದಲೇ ನಾನು ಪ್ರವಾಸಿ ಕಥನಗಳನ್ನು ಒಬ್ಬರ ಅನುಭವವಾಗಿ ಓದುತ್ತೇನೆಯೇ ವಿನಾ ಅದನ್ನು ಕುರಿತು ಜನರಲೈಸ್ ಮಾಡಲೇನೂ ಹೋಗೋದಿಲ್ಲ.

ನಾನು ಇಷ್ಟು ವರ್ಷ ಇಲ್ಲಿ ಇದ್ದರೂ ಒಂದು ಊರಿನಿಂದ ಮತ್ತೊಂದು ಊರಿಗೆ ಬಸ್ಸಿನಲ್ಲೆಂದೂ ಪ್ರಯಾಣಿಸಿದವನಲ್ಲ, ಟ್ರೈನಿನಲ್ಲಿ ಸಾಕಷ್ಟು ತಿರುಗಾಡಿದ್ದೇನೆ - ಇಲ್ಲಿಯ ಬಸ್ ಸ್ಟೇಷನ್‌ಗಳು ಒಂದು ರೀತಿಯ ಬಡತನದ ವರ್ಗವನ್ನು ಪ್ರತಿನಿಧಿಸುತ್ತದೆ ಎಂದರೆ ಅದು ನನ್ನ ಮಿತಿಯೇನೂ ಅಲ್ಲ. ನಾನು ವಾಷಿಂಗ್ಟನ್ ಡಿಸಿ, ನ್ಯೂ ಯಾರ್ಕ್ ಹಾಗೂ ನೆವಾರ್ಕ್ ಬಸ್ ನಿಲ್ದಾಣಗಳಲ್ಲಿ ಯಾರನ್ನಾದರೂ ಕರೆದುಕೊಂಡು ಬರಲೆಂದೋ ಅಥವಾ ಬಿಟ್ಟು ಬರಲೆಂದೋ ಬೇಕಾದಷ್ಟು ಸಲ ಹೋಗಿದ್ದೇನೆ. ಎಷ್ಟೋ ಈ ನಿಲ್ದಾಣಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಹಲವಾರು ಸೆಕ್ಷನ್‌ಗಳಿಗೆ ಹೋಗೋದಕ್ಕೂ ಹೆದರಿಕೆಯಾಗುವಂತಹ ಸಂದರ್ಭಗಳು ಉದ್ಭವವಾಗಿ ನನ್ನ ಮನಸ್ಸು 'ದುಷ್ಟರಿಂದ ದೂರ ಇರು' ಎಂದು ಎಚ್ಚರಿಕೆ ಕೊಟ್ಟಿದೆಯಾದ್ದರಿಂದ ಧುತ್ತನೆ ಎದುರುಗೊಳ್ಳಬೇಕಾದ ಸಮಸ್ಯೆಗಳಿಂದ ಬಚಾವ್ ಆಗಿದ್ದೇನೆ - ಇಂತಹ ಧುತ್ತನೆ ಎದುರಾಗುವ ಸಮಸ್ಯೆಗಳು ಅಚಾನಕ್ ಆಗಿ ಕತ್ತಲಿನಲ್ಲಿ ಕೈಯೊಂದು ಮುಂದೆ ಬಂದು 'ಡಾಲರ್ ಕೊಡು' ಎನ್ನುವಲ್ಲಿಂದ ಹಿಡಿದು 'ವಾಲೆಟ್ ತೆಗಿ' ಎನ್ನುವ ಹುಂಬ ಆಜ್ಞೆಗಳವರೆಗೆ ವಿಸ್ತರಿಸಿಕೊಳ್ಳುತ್ತವೆ. ಈ ರೀತಿ ದಿಢೀರ್ ದಂಡನೆಗೊಳಗಾಗುವಾಗ ಕೇವಲ ಆಜ್ಞೆಯನ್ನು ಪಾಲಿಸುವ ಪಶುವಾಗುತ್ತೇನೆಯೇ ವಿನಾ ಎದುರಿನಲ್ಲಿರುವ ಒಂದು ಡಿಸ್ಟರ್ಬ್ಡ್ ಮನಸ್ಥಿತಿಯಿಂದ ಮತ್ತೇನನ್ನೂ ನಾನು ನಿರೀಕ್ಷಿಸೋದಿಲ್ಲ.

'ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ನೋಟ ಚೆಂದ' ಅನ್ನೋದೇನೋ ಸರಿ, ಆದರೆ ಈ ಶ್ರೀಮಂತ ದೇಶವನ್ನು ಸರಿಯಾಗಿ ಪೂರ್ಣವಾಗಿ ನೋಡಬೇಕಾದರೆ ನೀವು ಈ ಬಡವರ ಕಣ್ಣುಗಳಿಂದ ಪ್ರತಿಫಲನವಾದ ಬೆಳಕನ್ನು ನೋಡಲೇ ಬೇಕು, ಬರೀ ಶ್ರೀಮಂತ ಗಲ್ಲಿಗಳನ್ನು ತಿರುಗಿ ಮಹಲುಗಳಿವೆ, ಮೋಡಿಯಿದೆ ಎಂದರಾದೀತೇ? ಇಲ್ಲಿ ಹಲವಾರು ವರ್ಷದಿಂದ ಮಾನಸಿಕವಾಗಿ ಅಸ್ಥವ್ಯಸ್ಥರಾದ; ಚಳಿಯಲ್ಲಿ ಜೀವವನ್ನು ಹಿಡಿಯಲ್ಲಿಟ್ಟುಕೊಂಡು ಆರು ತಿಂಗಳಿಗಿಂತಲೂ ಹೆಚ್ಚು ಸತ್ತು ಬದುಕಿದ; ಕಂಪ್ಯೂಟರ್ ನೆಟ್‌ವರ್ಕ್ ವ್ಯವಸ್ಥೆಯಲ್ಲಿ, ದಿನೇ-ದಿನೇ ದರ ಹೆಚ್ಚುವ ಹೆಲ್ತ್‌ಕೇರ್ ಇನ್ಸೂರೆನ್ಸ್ ವ್ಯವಸ್ಥೆಯಲ್ಲಿ ಸೋತ; ಮನುಷ್ಯನ ಬದುಕು ಎಂದರೆ ಅವನು ಹೊಂದಿದ ಕಾರ್ಡುಗಳು ಎನ್ನುವ ಆಧುನಿಕ ಟ್ರ್ಯಾಪ್‌ನಲ್ಲಿ ಬಿದ್ದು ಒದ್ದಾಡುವವರ ಮನದಲ್ಲಿರುವ ಅಮೇರಿಕವನ್ನು ಚಿತ್ರಿಸುವವರು ಯಾರು? ಇಲ್ಲಿಯ ದೊಡ್ಡ ಶಹರಗಳಲ್ಲಿ ಜನರು ಹೋಮ್‌ಲೆಸ್ ಹೇಗೆ, ಏಕೆ ಆಗುತ್ತಾರೆ ಎನ್ನುವುದನ್ನು ಕಂಡು ಹಿಡಿದು ಅದಕ್ಕೆ ಔಷಧಿಕೊಡಲು ಒದ್ದಾಡುತ್ತಿರುವ ಪರಂಪರೆಯಲ್ಲಿ, ಇಲ್ಲಿನ ಮಕ್ಕಳೆಲ್ಲರಿಗೆ ಕಡ್ಡಾಯವಾಗಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ರೂಢಿಸದ ಶ್ರೀಮಂತಿಕೆಯಲ್ಲಿ, ದಿನೇ-ದಿನೇ ಇದ್ದವ ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಿರುವ ಅಭಿವೃದ್ಧಿ ಎನ್ನುವ ಮರೀಚಿಕೆಯಲ್ಲಿ, ತಪ್ಪು ಮಾಡಿದವರನ್ನೆಲ್ಲ ಜೈಲಿಗೆ ತಳ್ಳಿ ಅಥವಾ ಗುಂಡು ಹೊಡೆದು ಸಾಯಿಸಿ ಸರಿಪಡಿಸುತ್ತೇನೆ ಎನ್ನುವ ಹುಂಬ ನಂಬಿಕೆಯಲ್ಲಿ - ಅಮೇರಿಕವನ್ನು ಗುರುತಿಸಿ ಈ ದೇಶದ ದೊಡ್ಡತನವನ್ನು ಉಳಿದ ದೇಶಗಳ ಸಮಾಜೋದ್ಧಾರ ಕಾರ್ಯಕ್ರಮಗಳ ಜೊತೆ ಒಂದರ ಪಕ್ಕ ಒಂದಿಟ್ಟು ತೂಗಿ ನೋಡಿದರೆ ಹೇಗೆ ಎನ್ನುವುದು ನನ್ನ ಬಹುದಿನಗಳ ಬಯಕೆ. ಒಂದು ದೇಶದಲ್ಲಿ ತುಂಬಿಕೊಂಡಿರೋ ಮಿಲಿಯನರ್, ಬಿಲಿಯನರ್‌ಗಳ ಪಟ್ಟಿ ದೊಡ್ಡರಿರಬಹುದು ಆದರೆ ಎಲ್ಲ ವರ್ಗಗಳ ಜನರನ್ನೂ ಪರಿಗಣಿಸಿ ನೋಡಿದಾಗಲೇ ಪೂರ್ಣ ಚಿತ್ರ ದೊರೆಯುತ್ತೆ ಎನ್ನುವುದು ನನ್ನ ನಂಬಿಕೆ. ಒಂದು ಆಲೂಗಡ್ಡೆ ಚಿಪ್ಸ್ ಮಾಡಿ ಮಾರುವ ಕಂಪನಿಯೂ ಇಲ್ಲಿ ದೊಡ್ಡ ಕಾರ್ಪೋರೇಷನ್ ಆಗಿರಬಹುದು, ಅದರ ಯಾದಿಯಲ್ಲಿ ಹಲವಾರು ಮಿಲಿಯನರ್‌ಗಳು ಹುಟ್ಟಿರಬಹುದು, ಆದರೆ ರಸ್ತೆ ಬದಿಯಲ್ಲಿ ಹಾಟ್‌ಡಾಗ್ ಮಾರುವವರೂ ಸಹ ಸಣ್ಣ ಉದ್ಯಮಿಗಳೇ ಅವರ ಕಷ್ಟ ಸುಖವನ್ನೂ ಗಮನದಲ್ಲಿಡಬೇಕು ಎನ್ನುವುದು ನನ್ನ ಅಡಿ ಟಿಪ್ಪಣಿ.

ಆದರೆ ಹೀಗೆ ಬರೆಯುವ ನನಗೂ ನನ್ನ ಮೂಗಿನ ನೇರವೊಂದಿದೆ - ನಾನು ಇಲ್ಲಿ ಛಳಿಯಲ್ಲೇನೂ ನೊಂದಿಲ್ಲ, ಬಿಸಿಲಿನಲ್ಲೇನೂ ಬೆಂದಿಲ್ಲ, ಹೊರಗಡೆ ಆಟವಾಡಿಲ್ಲ, ಒಂದು ಬಹಳ ಚಿಕ್ಕ ಸಮುದಾಯವನ್ನು ಬಿಟ್ಟು ಹೆಚ್ಚಿನವರೊಡಗೂಡಿಲ್ಲ, ಒಂದು ನಗರದಿಂದ ಮತ್ತೊಂದು ನಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿಲ್ಲ, ಅಮೇರಿಕದ ಐವತ್ತು ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಇನ್ನೂ ನೋಡಿಯೇ ಇಲ್ಲ. ಪೂರ್ವದಲ್ಲಿರೋ ನನ್ನ ಕಣ್ಣಿಗೆ ಪಶ್ಚಿಮ ಯಾವುದೋ ಒಂದು ಹೊಸ ದೇಶವಾಗಿ ಕಂಡು ಬಂದಿದೆ, ಅಲ್ಲಿನವರ ಸುದ್ಧಿಗಳನ್ನು 'ಹೊರಗಿನವರ' ಸುದ್ಧಿಯನ್ನಾಗೇ ನಾನು ಸ್ವೀಕರಿಸುತ್ತೇನೆ. ಕೆಲಸ ಮಾಡುವುದಕ್ಕೆಂದೇ ಬಂದ ನಾನು ಬಂದ ದಿನದಿಂದ ಇಲ್ಲಿ ದುಡಿಯುತ್ತಲೇ ಇದ್ದೇನೆ, ಬಹಳ ಮಟ್ಟಿನ ರಜಾದಿನಗಳನ್ನು ನಾನು ಭಾರತಕ್ಕೆ ಹೋಗುವುದಕ್ಕೆಂದು ಬಳಸಿರೋದರಿಂದ ನನ್ನ ವೆಕೇಷನ್ ಏನಿದ್ದರೂ ಈ ದೇಶದಿಂದ ಹೊರಗೇ ಇದೆ, ಇವತ್ತಿನವರೆಗೂ ಇಲ್ಲಿ ರೆಡಿಯೋ, ಟಿವಿಗಳಲ್ಲಿ ಬರುವ ಸಂಗೀತದ ಭಾಷೆ, ಹಿನ್ನೆಲೆ ನನಗರ್ಥವಾಗೋದಿಲ್ಲ, ಇಲ್ಲಿನ ವ್ಯವಹಾರಗಳೂ ಬಹಳ ಕಾಂಪ್ಲೆಕ್ಸ್ ಆದುದರಿಂದ ನನ್ನ ಒಂದು ಸಣ್ಣ ವರ್ತುಲವನ್ನು ಬಿಟ್ಟರೆ ನನಗೇನೂ ಗೊತ್ತಿಲ್ಲ. ಆದರೆ ಇತ್ತೀಚೆಗೆ ನನ್ನ ಸ್ನೇಹಿತರು ಹೇಳಿರೋ ಹಾಗೆ ಭಾರತದಲ್ಲಿರುವವರಿಗೇ ನಮಗಿಂತಲೂ ಅಮೇರಿಕದವರ ಬಗ್ಗೆ ಬಹಳಷ್ಟು ಗೊತ್ತಿದೆ ಎನ್ನುವಂತಾಯ್ತು. ಇಲ್ಲಿ ತೋರಿಸುವ ಫ್ಯಾಶನ್ ಅಲ್ಲಿ ತಲುಪುವುದರಿಂದ ಹಿಡಿದು, ಇಲ್ಲಿನ ಸಾಮಾಜಿಕ ಸಂಘರ್ಷಗಳಿಗೆ ಅಲ್ಲಿನವರು ಉತ್ತರವನ್ನು ಕಂಡುಕೊಂಡಿದ್ದಾರೆ ಎನ್ನುವ ಮಹಾವಾದವೂ ನನ್ನ ಕಿವಿಗೆ ಬಿತ್ತು. ನಾನು ಹತ್ತು ದೇಶಗಳನ್ನು ನೋಡಿದ್ದೇನೆ ಎಂದು ಎದೆ ತಟ್ಟಿಕೊಂಡು ಮಾತನಾಡುವಂತಹ ದೊಡ್ಡ ಮನುಷ್ಯರಿಗೆ ಒಂದು ದೇಶದ ಬಗ್ಗೆ, ಒಂದು ಧರ್ಮದ ಬಗ್ಗೆ ಮಾತನಾಡುವುದು ಒಂದು ವಸ್ತುವನ್ನು ಅಧ್ಯಯನ ಮಾಡಿ ಅದರ ಬಗ್ಗೆ ಕಾದಂಬರಿಯನ್ನು ಬರೆದಷ್ಟು ಸುಲಭದ ವಿಚಾರವಾಗಿ ಕಂಡುಬಂದಿರುವುದನ್ನು ನೋಡಿ ಹೇಸಿಗೆಯಾಗುತ್ತದೆ. ಈ ಮಹಾತ್ಮರು ಬರೆದ ಬರಹಗಳಲ್ಲಿನ ಉತ್ತುಂಗ ನಿಲುವುಗಳ ತೂಕ ಅವರ ಆಡುಮಾತಿನ ಹಗುರವಾದ ಹಂದರದಲ್ಲಿ ಸೇರಿ ಹೋಗದೇ ಬಹಳಷ್ಟು ಗೊಂದಲಕ್ಕೊಳಗಾಗಿದ್ದೇನೆ. ಅವರವರ ಕಾದಂಬರಿಯ ಪಾತ್ರಗಳಲ್ಲಿ ಇನ್ನೂರು ಮುನ್ನೂರು ಪುಟಗಳಲ್ಲಿ ಬದುಕನ್ನು ಬಿಂಬಿಸಿ ಅದರ ಅಂಕುಡೊಂಕುಗಳನ್ನು ಪ್ರದರ್ಶನಕ್ಕಿಟ್ಟು ಇವರೆಲ್ಲ ಯಶಸ್ವಿಯಾಗಿದ್ದರೆ ಬದುಕೇಕೆ ಇನ್ನೂ ಬದುಕಾಗಿಯೇ ಉಳಿಯುತ್ತಿತ್ತು ಎಂದು ಎಷ್ಟೋ ಸಾರಿ ಕುತೂಹಲಿತನಾಗಿದ್ದೇನೆ. ಓರ್ಹಾನ್ ಪಮುಕ್ ಆಗಲೀ ಎಸ್. ಎಲ್. ಭೈರಪ್ಪನವರನ್ನಾಗಲೀ ಅವರವರ ಬರಹದ ಸಂಕೀರ್ಣತೆಯಲ್ಲಿ ಗುರುತಿಸಿಕೊಳ್ಳಲೋ ಅಥವಾ ಅವರುಗಳು ಹೇಳಿ-ಮಾಡುವ ಪರಿಪಾಟದಲ್ಲಿ ಅಳವಡಿಸಿಕೊಳ್ಳಲೋ ಎನ್ನುವ ಚಿಂತೆಗೆ ಸಿಕ್ಕುಬಿದ್ದಿದ್ದೇನೆ.

ಒಬ್ಬರ ಜೊತೆಗಿನ ಸಂವಾದ ಅವರ ಆದರ್ಶಗಳನ್ನು ಕುರಿತದ್ದಾಗಿರಬೇಕೆ ಅಥವಾ ಅವರ ಸಂಘರ್ಷಗಳನ್ನು ಅನುಮೋದಿಸಬೇಕೇ? ನನ್ನ ಸಣ್ಣ ಕಿಂಡಿಯಲ್ಲಿ ಕಾಣುವುದನ್ನು ನಾನು ಬದುಕು ಎಂದು ನಂಬಿಕೊಂಡಿರುವಾಗ ಉಳಿದವರ ನಂಬಿಕೆಗಳನ್ನು ಒಂದು ಹೋರಾಟವಾಗಿ ಸ್ವೀಕರಿಸಬೇಕೇ?

ಒಂದು ಸಮಸ್ಯೆಯನ್ನು ಹೊರಗಿನಿಂದ ಅಧ್ಯಯನ ಮಾಡುವುದಕ್ಕೂ ಅಲ್ಲೇ ಇದ್ದು ಅನುಭವಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ದೇಶವನ್ನು ಸುತ್ತಲು ಬರುವ ಪ್ರವಾಸಿಗರು ತಮ್ಮ ದೃಷ್ಟಿಕೋನವನ್ನು ತಮ್ಮೊಡನೆ ತಂದು ಅದರ ಇತಿ-ಮಿತಿಯಲ್ಲಿ ಇಲ್ಲಿನವುಗಳನ್ನು ಕಂಡುಕೊಳ್ಳುವುದು ಒಂದು ರೀತಿಯಾದರೆ, ಇಲ್ಲಿಯೇ ಎಷ್ಟೋ ವರ್ಷಗಳ ಕಾಲ ಇದ್ದೂ ತಮ್ಮನ್ನು ಸುತ್ತಲಿನಿಂದ ಐಸೋಲೇಟ್ ಮಾಡಿಕೊಂಡಿರುವವರದು ಮತ್ತೊಂದು ಬಗೆ. ಈ ಹಿನ್ನೆಲೆಯಲ್ಲಿ ಹುಟ್ಟಿಬರುವ ನೋಟ ಪೂರ್ಣವಾಗಿರುತ್ತೆ ಎಂದು ನಾನು ನಂಬೋದಿಲ್ಲ, ಆ ನಂಬಿಕೆಯಲ್ಲೇ ಆದಷ್ಟು ಜನರಲೈಸ್ ಮಾಡುವುದರಿಂದ, ಹಾಗೆ ಮಾಡುವವರಿಂದ ದೂರವಿರುವ ಪ್ರಯತ್ನವನ್ನು ಬೇಕಾಗಿಯೇ ಮಾಡತೊಡಗುತ್ತೇನೆ.

Thursday, October 12, 2006

ಬಸಯ್ಯ್ ಮೇಷ್ಟ್ರು ಮಗಳು

ಪೈಪೋಟಿ ಅನ್ನೋದು ಎಲ್ಲಿ ಶುರುವಾಗಿತ್ತು ನನ್ನಲ್ಲಿ ಅನ್ನೋದನ್ನ ಯೋಚಿಸಿಕೊಂಡು ತಲೆ ಕೆರೆದುಕೊಳ್ಳುತ್ತಾ ಇದ್ದಂತೆ ನಾನು ಹತ್ತನೇ ತರಗತಿಯಲ್ಲಿದ್ದಾಗಿನ ಒಂದು ಘಟನೆ ತಟ್ಟನೆ ನೆನಪಿಗೆ ಬಂತು, ಆ ಘಟನೆಯ ಬೆನ್ನಿಗೆ ಬಂದ ಹಲವಾರು ಉಪಘಟನೆಗಳ ಗುಂಗಿಗೆ ಕಾರಿನಲ್ಲಿ ಕೂತಿದ್ದವನು ಕಾರ್‍‌ಟಾಕ್ ಕೇಳಿ ನಗುತ್ತಿರುವವರ ಹಾಗೆ ನನ್ನಷ್ಟಕ್ಕೆ ನಾನೆ ಜೋರಾಗಿ ನಕ್ಕು ಬಿಟ್ಟೆ, ಹಾಗೆ ನಕ್ಕಿದ್ದನ್ನು ಕಂಡು/ಕೇಳಿ ಇನ್ನಷ್ಟು ನಗು ಉಕ್ಕಿಬಂತು, ಸದ್ಯ ಅಕ್ಕಪಕ್ಕದ ಕಾರಿನಲ್ಲಿ ಯಾರೂ ನೋಡುತ್ತಿಲ್ಲವಲ್ಲ ಎಂದು ಒಮ್ಮೆ ಸಮಾಧಾನವಾಯಿತು!

ಆಗೆಲ್ಲ ದಿನವಿಡೀ ಕ್ರಿಕೇಟ್ ಆಡೋ ಸಂಭ್ರಮ, ಜೊತೆಯಲ್ಲಿ ಗೋಲಿ, ಬುಗುರಿ, ಚಿಣ್ಣಿದಾಂಡು ಹೀಗೆ ಆಟಗಳ ಮೇಲೆ ಆಟಗಳ ಸುರಿಮಳೆ ಒಂದೋ ಎರಡೋ. ಹೀಗೆ ಹೆಚ್ಚಿನ ದಿನಗಳೆಲ್ಲ ಶಾಲೆಗೆ ಹೋಗೋದು, ಪಾಠ ಮುಗಿಸಿ ಬಂದ ಮೇಲೆ ಆಟವಾಡೋದು, ಸಣ್ಣಪುಟ್ಟ ಮನೆಕೆಲಸ ಮಾಡಿ ರಾತ್ರಿ ಒಂಭತ್ತು ಘಂಟೆಯ ಹೊತ್ತಿಗೆ ನಿದ್ರಾದೇವಿಗೆ ಶರಣಾಗಿ ಸುಖನಿದ್ರೆಗೆ ಜಾರುವ ದಿನಗಳವು. ಯಾರಿಗುಂಟು ಯಾರಿಗಿಲ್ಲ ಅನ್ನೋ ಭಾಗ್ಯದ ಉತ್ತುಂಗದಲ್ಲಿರುವಾಗ ನಾನು ಹತ್ತನೇ ತರಗತಿಯ ಮೆಟ್ಟಿಲನ್ನೇರಿದ್ದೆ. ಅಲ್ಲಿಂದ ಶುರುವಾಯ್ತು ನೋಡಿ, ಬಿಡುವು ಸಿಕ್ಕಾಗೆಲ್ಲ 'ಓದಿಕೋ' ಎಂದು ಮೇಲಿನವರು ಮಾಡುವ ಆಜ್ಞೆ. ನನಗಂತೂ ಈ ಹತ್ತನೇ ತರಗತಿಯೊಂದು ಎಷ್ಟು ಬೇಗ ಮುಗಿಸಿದರೆ ಅಷ್ಟು ಸಾಕು ಎನ್ನುವಂತಾಗಿತ್ತು, ಹತ್ತನೇ ತರಗತಿಯ ನಂತರದ ವರ್ಷಗಳು ಬಹಳ ಒಳ್ಳೆಯವು ಎನ್ನುವ ಹುಂಬ ಕಲ್ಪನೆ ಬೇರೆ, ಅದು ಬೇರೆ ವಿಷಯ. ನಾನು ಒಂದರಿಂದ ಒಂಭತ್ತರವರೆಗೆ ಓದಿದ್ದಕ್ಕಿಂತ ಹೆಚ್ಚು ಹತ್ತನೇ ತರಗತಿಯಲ್ಲಿದ್ದಾಗಲೇ ಓದಿದ್ದು ಎನ್ನಬಹುದು. ಹಾಗಂತ ನನಗೆ ಯಾವ ವರ್ಷವು ಕಡಿಮೆ ಅಂಕಗಳು ಬಂದಿವೆ ಎಂದು ಅನ್ನಿಸಿಯೇ ಇಲ್ಲ, ಓದದಿದ್ದರೂ ಅದು ಹೇಗೋ ಮಾಡಿ ಒಳ್ಳೆಯ ಅಂಕಗಳು ಪ್ರತಿ ಪರೀಕ್ಷೆಯಲ್ಲಿಯೂ ಬರುತ್ತಿದ್ದವು!

ನಾನು ಎಷ್ಟೇ ಸಮಜಾಯಿಷಿ ಹೇಳಿದರು ನಮ್ಮ ಮನೆಯಲ್ಲಿ ಬಿಡಲೊಲ್ಲರು, ಅವೇ ಪಾಠಗಳನ್ನು ರಿವಿಜನ್ ಮಾಡುವಂತೆ ಎಲ್ಲರದೂ ಒಂದೇ ಕಾಟ ಶುರುವಾಗಿತ್ತು, ನನ್ನ ನಿದ್ರೆಗೆ ಸಂಚಕಾರ ಬಂದಿತ್ತು. ಸಂಜೆ ಏಳು ಘಂಟೆಗೆ ಆರಂಭವಾಗಿ ಒಂಭತ್ತು ವರೆಗೆ ಫಸ್ಟ್ ಶೋ ಸಿನಿಮಾ ಬಿಡುವ ಹೊತ್ತಿಗೆಲ್ಲಾ ಗೊರಕೆ ಹೊಡೆಯುತ್ತಿದ್ದ ನನಗೆ, ಹತ್ತು ಘಂಟೆಯ ಎರಡನೇ ಶೋ ಸಿನಿಮಾ ಅರಂಭವಾದರೂ ಮಲಗಬಾರದು ಎನ್ನುವ ಕಾಟ ಬೇರೆ. ಇವರ ಉಪಟಳ ಏನೇ ಇದ್ದರೂ ನಿದ್ರಾದೇವಿ ಯಾವಾಗಲೂ ನನ್ನ ಪರವಾದ್ದರಿಂದ ನಾನು ಹೆಚ್ಚೆಂದರೆ ಹತ್ತೂವರೆಗೆಲ್ಲ ನಿದ್ರೆಗೆ ಹೋಗುತ್ತಿದ್ದ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿವೆ.

ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಟಿಸಿಎಚ್ ಕಾಲೇಜಿನ ಕನ್ನಡ ಪಂಡಿತರಾದ ಬಸಯ್ಯ ಮೇಷ್ಟ್ರು ಮನೆ ಇತ್ತು. ಅವರ ಮಗಳೂ ಅಮೃತಾ ನನ್ನ ವಯಸ್ಸಿನವಳೇ. ನಮ್ಮೂರಿನಲ್ಲಿ ಕೋ ಎಜುಕೇಷನ್ ಇರಲಿಲ್ಲವಾದ್ದರಿಂದ ನಾವು ಬೇರೆಬೇರೆ ಶಾಲೆಗಳಿಗೆ ಹೋಗುತ್ತಿದ್ದೆವು. ಓದಿನಲ್ಲಿ ಬಹಳ ಚುರುಕು ಅಮೃತಾ ಎಂದು ನನಗೆ ಕೇಳಿ ಗೊತ್ತಿತ್ತು. ಒಂದು ದಿನ ಹೀಗೇ ರಾತ್ರಿ ಎರಡು ಘಂಟೆಯ ಹೊತ್ತಿಗೆ ಇರಬಹುದು, ನಾನು ಬಹಿರ್ದೆಸೆಗೆಂದು ಎದ್ದು ನಮ್ಮ ಹಿತ್ತಲಿಗೆ ಬಂದು ನೋಡಿದಾಗ ಬಸಯ್ಯ ಮೇಷ್ಟ್ರು ಮನೆಯಲ್ಲಿ ಇನ್ನೂ ದೀಪ ಉರಿಯುತ್ತಿರುವುದು ಕಾಣಿಸಿತು. ಆಗ ಪರೀಕ್ಷೆ ಸಮಯ ನಿಧಾನವಾಗಿ ಹತ್ತಿರಹತ್ತಿರ ಬರುತ್ತಿತ್ತು, ನಮ್ಮ ತರಗತಿಯ ಪಾಠ ಪ್ರವಚನಗಳೆಲ್ಲ ಮುಗಿದಿದ್ದವಾದ್ದರಿಂದ ನಾವು ತರಗತಿಗಳಿಗೆ ಹೋಗದೆ ನಮ್ಮ ಫೈನಲ್ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದೆವು. ನನ್ನ ಮನಸ್ಸಿಗೆ ಅದೇನು ಅನ್ನಿಸಿತೋ ಬಿಟ್ಟಿತೋ - ಅಬ್ಬಾ, ಅಮೃತಾ ಇನ್ನೂ ಓದುತ್ತಿದ್ದಾಳೆ, ನಾನು ಇಲ್ಲಿ ನಿದ್ದೆ ಹೊಡೆಯುತ್ತಿದ್ದೇನೆ - ಎಂದು ಅನ್ನಿಸಿದ್ದೇ ತಡ ನಾನೂ ಲಗುಬಗೆಯಿಂದ ಪುಸ್ತಕಗಳನ್ನು ತೆಗೆದು ಓದತೊಡಗಿದೆ, ಮನೆಯವರು ಇಷ್ಟೊತ್ತಿನಲ್ಲಿ ಅದೇನು ಓದ್‌ತೀಯೋ ಮಲಗೋ ಎಂದರೂ ಕೇಳದೇ ನಾನು ಬೆಳಗ್ಗಿನ ಜಾವದವರೆಗೆ ಆದಿನ ಓದಿದ ನೆನಪು. ಅಂದಿನಿಂದ ಒಂದು ಹೊಸ ಹವ್ಯಾಸವೂ ಹುಟ್ಟಿ ಬಿಟ್ಟಿತ್ತು - ಮಧ್ಯಾಹ್ನ ಒಂದಿಷ್ಟು ಹೊತ್ತು ನಿದ್ರೆ ಮಾಡಿದರೆ ಮಾತ್ರ ಸಾಕಾಗುತ್ತಿತ್ತು, ರಾತ್ರಿ ಎಲ್ಲಾ ಯಾವ ಸದ್ದು-ಗದ್ದಲವಿಲ್ಲದೇ ನಿರಂತರವಾಗಿ ಓದಬಹುದಾಗಿತ್ತು - ಬೆಳಗ್ಗಿನ ಜಾವ ಸಣ್ಣಗೆ ಜೊಂಪು ಬಂದು ಆಗಾಗ್ಗೆ ಮಲಗುವುದನ್ನು ಬಿಟ್ಟರೆ, ನನ್ನ ನಿದ್ರಾ ನಡವಳಿಕೆ ಸಂಪೂರ್ಣವಾಗಿ ಬದಲಾಗಿತ್ತು - ಅಂದಿನಿಂದ ಇಂದಿನವರೆಗೆ ನನಗೆ ನಿದ್ರೆ ಮಾಡುವುದಾಗಲಿ, ಮಾಡದೇ ಇರುವುದಾಗಲೀ ಯಾವತ್ತೂ ಸಮಸ್ಯೆ ಎಂದು ಅನ್ನಿಸಿಯೇ ಇಲ್ಲ - ನನಗೆ ಒಳ್ಳೆಯ ಅಂಕಗಳು ಬಂದಿದ್ದರ ಕ್ರ್ಡೆಡಿಟ್ ಅಮೃತಾಳಿಗೆ ಸೇರಬೇಕು.

ಹೀಗೆ ತಂಪು ಹೊತ್ತಿನಲ್ಲಿ ಬಸಯ್ಯ ಮೇಷ್ಟ್ರು ಮಗಳನ್ನು ನೆನೆಯುವುದಕ್ಕೆ ವಿಶೇಷ ಕಾರಣಗಳೇನೂ ಇಲ್ಲದಿದ್ದರೂ - ಆದಿನ ನನ್ನ ಮನಸ್ಸಿನಲ್ಲಿ ಹುಟ್ಟಿದ ಒಂದು ಮಿಥ್ಯಾ ಪೈಪೋಟಿಯ ಮನೋಭಾವ ಇಂದಿಗೂ ನನ್ನ ಮನಸ್ಸಿನಲ್ಲಿದೆ, ಅದು ಇನ್ನು ಮುಂದೆಯೂ ಇರುತ್ತದೆ. ಈ ಪೈಪೋಟಿಯಿಂದ ಏನೇನೋ ಆಗಿದೆ ಎಂದು ಯೋಚಿಸಿಕೊಂಡಂತೆಲ್ಲ ಹಲವಾರು ವಿಷಯಗಳಲ್ಲಿ ನನ್ನನ್ನು ಮೊದಲಿಗನನ್ನಾಗಿ ಕಂಡುಕೊಳ್ಳುತ್ತೇನೆ.

ನನಗೋಸ್ಕರ ನಾನು ಓದಿದ್ದರೆ, ನನ್ನ ಪಾಡಿಗೆ ನಾನು ಬದುಕಿದ್ದರೆ ಚೆನ್ನಿತ್ತು, ಅದರ ಬದಲಿಗೆ ಪೈಪೋಟಿ ಎನ್ನುವ ಮಧ್ಯವರ್ತಿಯ ಸಹವಾಸಕ್ಕೆ ಹೋದಾಗ ಬರಿ ಅಂಕೆ ಸಂಖ್ಯೆಗಳು ಮುಖ್ಯವಾಗಿ ಹೋಗುತ್ತವೆಯೇ ವಿನಾ ಆಯಾ ವಸ್ತುಗಳ ಸ್ವಾರಸ್ಯವೇ ಕಳೆದು ಹೋಗುವ ಹೆದರಿಕೆ ಇದೆ. ನಿನ್ನೆಗಳು ಎನ್ನುವ ಡ್ರಮ್‌ಗಳಲ್ಲಿ ಕುಳಿತು ಏರಿಳಿತಗಳಿರುವ ರಸ್ತೆಗಳಲ್ಲಿ ನಾಳೆಗಳು ಎಂಬ ಕನಸುಗಳ ಹೊತ್ತು ಸದ್ದು ಮಾಡುತ್ತಾ ಉರುಳಿಕೊಂಡು ಹೋಗುತ್ತಿರುವ ನನಗೆ ಪೈಪೋಟಿ ಎನ್ನುವುದು ಏರಿನಲ್ಲಿ ನೂಕುವ ತಂತ್ರವೋ ಅಥವಾ ಇಳಿಜಾರಿನಲ್ಲಿ ಜೋರಾಗಿ ಓಡುವಂತೆ ಮಾಡುವ ಅತಂತ್ರವೋ ಯಾರು ಬಲ್ಲರು?

Wednesday, October 11, 2006

ಸಹಿಸಲಾರದವುಗಳು

ಯಾವುದನ್ನ ಸಹಿಸಬಹುದು ಯಾವುದನ್ನ ಬಿಡಬಹುದು? ಈ ಪ್ರಶ್ನೆ ಎಲ್ಲರ ಮನಸಲ್ಲೂ ಆಗಿಂದಾಗ್ಗೆ ಮೂಡೋದು ಸಹಜ, ಅದಕ್ಕುತ್ತರವೂ ಅವರವರನ್ನ ಅವಲಂಭಿಸಿರುತ್ತೆ ಅನ್ನೋದು ಲೋಕೋಕ್ತಿ. ಈ ದಿನ ನನಗೆ ಸಹಿಸಲಾರದ್ದು ಎನ್ನಿಸಬಹುದಾದ ಒಂದಿಷ್ಟು ವಿಷಯಗಳನ್ನು ಹೀಗೆ ತೆರೆದಿಟ್ಟರೆ ಹೇಗೆ ಅನ್ನಿಸಿತು.

ಆಫೀಸಿಗೆ ಹೋಗೋ ಹೆಚ್ಚಿನ ದಿನಗಳಲ್ಲಿ ಒಂದೇ ಕೆಲ್ಲಾಗ್ ಅಥವಾ ಕಲ್ವರ್ ರಸ್ತೆಗಳಲ್ಲಿ ಟ್ರಾಫಿಕ್ ಲೈಟ್‌ನಲ್ಲಿ ನಾನು ಕಾರನ್ನು ನಿಲ್ಲಿಸಿದ್ರೆ ಆಗಾಗ್ಗೆ ಅತ್ತಿತ್ತ ನೋಡೋದು ನನ್ನ ರೂಢಿ. ಕೆಲವು ತಿಂಗಳುಗಳಲ್ಲಿ ಸೂರ್ಯೋದಯದ ಹೊತ್ತಿಗಾದ್ರೆ ದಿನಕ್ಕೊಂದು ಚಿತ್ರ ಅಂತಾರಲ್ಲ ಹಾಗೆ ನ್ಯೂ ಯಾರ್ಕ್ ನಗರದ ಕಡೆಯಿಂದ ಆಗಸದಲ್ಲಿ ಹೊಸ ಚಿತ್ರ ನೋಡೋಕೆ ಸಿಗುತ್ತೆ, ಕೆಲವು ಕಡೆ ಮಂಜಿನ ಹನಿಗಳು ಕಾಣ್ಸುತ್ವೆ, ಏನಿಲ್ಲಾ ಅಂದ್ರೂ ಆಯಾ ದಿನಗಳಿಗೆ ತಕ್ಕಂತೆ ಅಕ್ಕಪಕ್ಕದವರ ನಡವಳಿಕೆಗಳಾದರೂ ಕಣ್ಣಿಗೆ ಬೀಳುತ್ತವೆ. ಹೀಗೇ ಒಂದಿನಾ ಬೆಳಗ್ಗೆ ಒಬ್ರು ಕೆಲ್ಲಾಗ್ ರಸ್ತೆ ಟ್ರಾಫಿಕ್ ಲೈಟ್ ನಲ್ಲಿ ಎಲೆಕ್ಟ್ರಿಕ್ ಶೇವರ್ ಉಪಯೋಗಿಸಿ ಗಡ್ಡಾ ಶೇವ್ ಮಾಡಿಕೊಳ್ತಾ ಇದ್ರು, ಆ ದಿನ ನಾನಂದುಕೊಂಡೆ, ಛೇ ಏನಪ್ಪಾ ಬೆಳ್ಳಂಬೆಳಗ್ಗೆ ಈ ಮನುಷ್ಯನಿಗೆ ಇಷ್ಟೂ ಸಮಯ ಇಲ್ಲಾ ಅಂದ್ರೆ ಹೇಗೆ ಅಂತ. ಈ ದಿನ ಮತ್ತೆ ಅದೇ ವ್ಯಕ್ತಿಯ ದರ್ಶನವಾಯಿತು, ಹಲವಾರು ತಿಂಗಳುಗಳ ನಂತರ ಆ ವ್ಯಕ್ತಿಯನ್ನು ನೋಡಿದ ಕೂಡಲೇ ಈ ಸಾರಿ ನನಗೆ ಆಶ್ಚರ್ಯವಾಗುವುದಕ್ಕಿಂತ ಹೆಚ್ಚಾಗಿ, ಅವರ ನಡವಳಿಕೆಗೆ ತಕ್ಕನಾದ ನನ್ನದೊಂದು ನಡವಳಿಕೆಯ ನೆನಪಾಗಿ 'ನನಗೆ ಅಷ್ಟೂ ಸಮಯವಿಲ್ಲವೇ?' ಅನ್ನೋ ಮಾತನ್ನು ನಾನೇ ಕೇಳಿಕೊಳ್ಳತೊಡಗಿದೆ. ನಾನೇನೂ ಅವರ ಥರಾ ಕಾರಲ್ಲಿ ಗಡ್ಡಾ ಶೇವ್ ಮಾಡೋದಿಲ್ಲ, ಅದರ ಬದಲಿಗೆ ನನ್ನ ಶೂಸ್ ಲೇಸ್ ಅನ್ನು ಬಹಳಷ್ಟು ಸಾರಿ ಒಂದೇ ಕಲ್ವರ್ ಅಥವಾ ಕೆಲ್ಲಾಗ್ ಟ್ರಾಫಿಲ್ ಲೈಟ್ ನಲ್ಲಿಯೇ ನಾನು ಕಟ್ಟಿಕೊಳ್ಳೋದು. ಹೀಗೆ ಆ ವ್ಯಕ್ತಿ ಶೇವ್ ಮಾಡುವ ವಿಚಾರದ ಬಗ್ಗೆ ನಾನು ನನ್ನ ಅನಿಸಿಕೆಯನ್ನು ಹೊರಹಾಕುವ ಮುನ್ನ ನನ್ನ ಈ ನಡವಳಿಕೆ - ಅಂದರೆ ಟ್ರಾಫಿಕ್ ಲೈಟ್‌ನಲ್ಲಿ ಶೂ ಲೇಸ್ ಕಟ್ಟೋ ಬುದ್ಧಿ - ನೋಡಿ ನನಗೇ ಒಂದು ರೀತಿ ಮುಜುಗರವಾಗತೊಡಗಿತು.

***

ದಿನಕ್ಕೆ ಏನಿಲ್ಲ ಅಂದ್ರೂ ಹನ್ನೆರಡು ಘಂಟೆಗಿಂತಲೂ ಹೆಚ್ಚು ಆಫೀಸಿನಲ್ಲಿ ಕಳೆಯುವವರಿಗೆ ರೆಸ್ಟ್‌ರೂಮ್ ಬ್ರೇಕ್‌ಗಳು ಬಹಳ ರಿಲೀಫ್ ನೀಡುವಂತಹವು. ನಾನು ನೋಡಿರೋ ಹಾಗೆ ದಿನಕ್ಕೆ ಹಾಗೆ ಸ್ವಾಭಾವಿಕ ಎರಡೋ, ಮೂರೋ, ನಾಲಕ್ಕೋ ಬ್ರೇಕ್‌ಗಳನ್ನು ತೆಗೆದುಕೊಳ್ಳುವುದು ಎಷ್ಟೋ ಜನರ ರೂಢಿ ಕೂಡಾ. ಆದರೆ ಇಂದಿನ ದಿನಗಳಲ್ಲಿ ನಾವು ಎಷ್ಟು ಕೆಲಸ ಮಾಡಿದರೂ ಕಡಿಮೆಯೇ ಎನ್ನುವ ಪರಿಸ್ಥಿತಿಯಲ್ಲಿ, ನಾವು ಎಲ್ಲಿಗೆ ಹೋದರೂ ನಮ್ಮನ್ನು ಬಿಡದೇ ಹಿಡಿದಿಡುವ ಎಲೆಕ್ಟ್ರಾನಿಕ್ ಸಾಧನಗಳ ಹಿಡಿತದಲ್ಲಿ ರೆಸ್ಟ್‌ರೂಮ್ ಬ್ರೇಕ್‌ನಲ್ಲಿದ್ದಾಗಲೂ ಒಂದಲ್ಲ ಒಂದು ರೀತಿಯಲ್ಲಿ ಕಮ್ಮ್ಯೂನಿಕೇಟ್ ಮಾಡುವ ಅಗತ್ಯ ಬಂದೊದಗಿದೆ. ಹೀಗಿರುವಲ್ಲಿ ಎರಡು ನಿಲುವುಗಳು: ನನ್ನ ಎದುರೇ ಒಬ್ಬರು ನಾನು ರೆಸ್ಟ್‌ರೂಮ್ ನಲ್ಲಿರುವಾಗ ಫೋನ್ ಆನ್ಸರ್ ಮಾಡುವುದಿಲ್ಲ ಎನ್ನುವುದನ್ನೂ, ಮತ್ತೊಬ್ಬರು ನಿರಾಂತಕವಾಗಿ ಫೋನ್ ಹಿಡಿದು ಮಾತನಾಡುವುದನ್ನೂ ನಾನು ಕೇಳಿದ್ದೇನೆ. ನಾವು ಎಲ್ಲಿ ಇವುಗಳ ಮಧ್ಯೆ ಗೆರೆಯನ್ನು ಹಾಕುತ್ತೇವೆ ಎನ್ನುವುದು ಮುಖ್ಯ. ನನ್ನ ಪ್ರಕಾರ ಮೊದಲನೇ ನಿಲುವು, ಅಂದರೆ ರೆಸ್ಟ್‌ರೂಮ್ ನಲ್ಲಿ ನೀವು ಬಂದ ಕೆಲಸವನ್ನು ಮಾಡಿ ಆದಷ್ಟು ಕಡಿಮೆ ಸದ್ದುಗದ್ದಲಗಳನ್ನು ಮಾಡಿ ಹೊರಬರುವುದು, ಒಳ್ಳೆಯ ನಡವಳಿಕೆ, ಅದು ಸಹಿಸಬಹುದಾದ ಒಂದು ಪರಂಪರೆಯನ್ನು ಬೆಳೆಸುತ್ತದೆ. ಅದರ ಬದಲಿಗೆ ಎರಡನೆಯ ನಿಲುವು ಬಹಳಷ್ಟು ಮುಜಗರವನ್ನೂ, ಅನಾನುಕೂಲವನ್ನೂ, ಅಸಹನೆಯನ್ನೂ ಹುಟ್ಟುಹಾಕುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ನಾವು ನಡೆದುಕೊಳ್ಳುವ ರೀತಿನೀತಿ ಎಲ್ಲರಿಗೆ ಹೊಂದುವಂತಿರಬೇಕೇ ವಿನಾ ನನ್ನ ಫೋನು ನಾನು ಎಲ್ಲಿ ಬೇಕಾದರೂ ಮಾತನಾಡುತ್ತೇನೆ ಎಂದರಾಗುತ್ತದೆಯೇ? ಹೀಗೇ ಸಿನಿಮಾ ಮಂದಿರ, ಚರ್ಚು-ದೇವಸ್ಥಾನಗಳಲ್ಲಿ ಎಷ್ಟು ಬೊಬ್ಬೆ ಹೊಡೆದರೂ ಕೆಲವರು ತಮ್ಮ ಸೆಲ್ ಫೋನನ್ನು ಆರಿಸುವುದಿರಲಿ, ವೈಬ್ರೇಟ್ ಮೋಡ್‌ಗೂ ಹಾಕೋದಿಲ್ಲ. ನಾವು ಇತರರ ಅನಾನುಕೂಲಗಳಿಗೆ ಕಿವಿಗೊಡದೇ ಹೋಗುವಷ್ಟು ತಂತ್ರಜ್ಞಾನದಲ್ಲಿ ಹುದುಗಿಹೋಗಿದ್ದೇವೆಯೇ ಎಂದು ನನಗೆ ಹಲವಾರು ಬಾರಿ ಅನ್ನಿಸಿದೆ. ಸೆಲ್‌ಫೋನ್, ಪಿಡಿಎ, ಬ್ಲ್ಯಾಕ್‌ಬೆರ್ರಿ, ಲ್ಯಾಪ್‌ಟಾಪ್ ಮುಂತಾದ ಸಲಕರಣೆಗಳು ನಮ್ಮ ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಬೇಕು, ನಮ್ಮ ಸಂವಹನವನ್ನು ಅಭಿವೃದ್ಧಿಗೊಳಿಸಬೇಕು, ನಮ್ಮನ್ನು ಕಾರ್ಯತತ್ಪರರನ್ನಾಗಿಸಬೇಕು ಎಂದಲ್ಲವೇ ಇರೋದು, ಹಾಗಿದ್ದರೆ ನಮ್ಮ ನಮ್ಮ ಅಭಿವೃದ್ಧಿ ಎನ್ನುವ ಸಮೀಕರಣದಲ್ಲಿ ಇತರರ ಬೇಕುಬೇಡಗಳಿಗೆ ಸ್ಪಂದಿಸುವಷ್ಟು ವ್ಯವಧಾನ ನಮ್ಮಲ್ಲಿ ಇದೆಯೇ? ನಾವೆಲ್ಲರೂ ನಮ್ಮಷ್ಟಕ್ಕೆ ನಾವು ಕಾರ್ಯತತ್ಪರರಾದರೆ ಅದರ ಒಟ್ಟು ಮೊತ್ತ ಲೋಕದ ಕಲ್ಯಾಣವೇ? ಹೆಚ್ಚು ಸದ್ದು-ಗದ್ದಲವೇ ಪ್ರಗತಿಯ ಸಂಕೇತವೇ?

ಪ್ರತಿಯೊಂದು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಮಾಡಬಹುದಾದ ಏನೇನೆಲ್ಲ ಇದ್ದರೂ ಬಹಳಷ್ಟು ಜನ ಅದರ ಪೂರ್ಣ ಉಪಯೋಗವನ್ನು ಪಡೆದುಕೊಳ್ಳುತ್ತಾರೆ, ತಮ್ಮಲ್ಲಿರುವ ಸಾಧನಗಳನ್ನು ಪೂರ್ಣವಾಗಿ ಬಳಸುತ್ತಾರೆ ಎಂದು ನನಗೇನೂ ಅನ್ನಿಸುವುದಿಲ್ಲ - ಇದನ್ನು ವಾದಿಸಲು ನನ್ನ ಬಳಿ ಅಂಕಿಅಂಶಗಳೇನೂ ಇಲ್ಲ ಆದರೂ ಅದು ನನ್ನ ಅನುಭವ. ಅಂದರೆ ಹೆಚ್ಚು ಹೆಚ್ಚು ಆಧುನಿಕ ಪರಿಕರಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದೇನೂ ಇಲ್ಲ. ಸಾವಿರಾರು ಡಾಲರುಗಳ ರೋಲೆಕ್ಸ್ ವಾಚ್ ಕಟ್ಟಿದರೂ, ನಲವತ್ತು ರೂಪಾಯಿಗಳಿಗೆ ಶಿವಮೊಗ್ಗ ಬಜಾರಿನಲ್ಲಿ ಸಿಗುವ ಎಲೆಕ್ಟ್ರಾನಿಕ್ ವಾಚ್‌ಗಳನ್ನು ಕಟ್ಟಿಕೊಂಡರೂ ಅದರಿಂದೇನೂ ನಮ್ಮ ಸಮಯ ಪರಿಪಾಲನೆ ನಿರ್ಧಾರವೇನಾಗೋದಿಲ್ಲ, ತಡವಾಗಿ ಬಂದು ಹೋಗುವವರು ತಡ ಮಾಡಿಯೇ ಮಾಡುತ್ತಾರೆ.

***

ನಾವು ಸಂವಹನದಿಂದ ಹೇಗೆ ಬೆಳೆಯುತ್ತೇವೆಯೋ, ನಮಗೆ ಮೌನದಿಂದಲೂ ಸಹ ಅಷ್ಟೇ ಒಳ್ಳೆಯ ಅನುಕೂಲಗಳಿವೆ ಅನ್ನೋದು ನನ್ನ ಅನುಭವ. ಈ ಮೌನ ನಾವು ಇತರರ ಸಂವಹನವನ್ನು ಆಲಿಸುವಾಗ ಅಥವಾ ಏನನ್ನೋ ಗಹನವಾಗಿ ಮನದಟ್ಟು ಮಾಡಿಕೊಳ್ಳುವಾಗ ಅಪ್ಯಾಯಮಾನವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಇತರರು ನಿರ್ಮಿಸೋ ಗದ್ದಲ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ, ನಮ್ಮ ಗಮನ ಚಂಚಲವಾಗುತ್ತದೆ. ಹೀಗಿರುವಲ್ಲಿ ನಮ್ಮ ಹಾಗೇ ಇತರರು ಎಂದು ಅಂದುಕೊಳ್ಳುವುದನ್ನು ನಾವೇಕೆ ಸುಲಭವಾಗಿ ಅಳವಡಿಸಿಕೊಳ್ಳೋದಿಲ್ಲ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಿ ಮೌನದ ಮೊರೆಹೋಗತೊಡಗುತ್ತೇನೆ.

Monday, October 09, 2006

ಕಿರುಗತೆ - ಜೊತೆಗಾತಿ

'ಸರ್, ನನ್ನನ್ನು ದಯವಿಟ್ಟು ಕ್ಷಮಿಸಿ, ನಿಮ್ಮಾಕೆಯ ಪ್ರಾಣಪಕ್ಷಿ ಈಗಾಗಲೇ ಹಾರಿಹೋಗಿದೆ, ಆಕೆ ಯಾವಾಗಲೋ ಕಾಲವಾಗಿದ್ದಾರೆ!' ನಿಧಾನವಾಗಿಯಾದರೂ ತುಸು ಗಂಭೀರವಾಗೇ ಈ ವಿಷಯವನ್ನು ಈ ಮನುಷ್ಯನಿಗೆ ಹೇಳುವಲ್ಲಿ ನನ್ನ ಜೀವ ಬಾಯಿಗೆ ಬಂದಿತ್ತು. ಸುಮಾರು ಎಪ್ಪತ್ತೆರಡು ವರ್ಷ ವಯಸ್ಸಿನ ಈ ಮನುಷ್ಯ ತನ್ನ ಹೆಂಡತಿಯನ್ನು ಕಂಡರೆ ಅಪಾರವಾದ ಗೌರವ ಹಾಗೂ ಪ್ರೀತಿಯುಳ್ಳವನು ಎಂಬುದು ನಮ್ಮ ಆಸ್ಪತ್ರೆಯವರಿಗೆಲ್ಲ ಯಾವಾಗಲೋ ಗೊತ್ತಾಗಿದೆ. ಕಳೆದ ಒಂದು ವಾರ ತನ್ನ ಹೆಂಡತಿಯ ಜೊತೆ ಕಳೆದವನು ಏನೇನನ್ನೆಲ್ಲ ಮಾಡಿಲ್ಲ, ಆಕೆಯ ಕೂದಲನ್ನು ಬಾಚುವುದರಿಂದ ಹಿಡಿದು, ಗಲ್ಲವನ್ನು ತೀಡಿ ನಮ್ಮೆಲ್ಲರ ಎದುರೇ ಮಕ್ಕಳನ್ನು ಮುದ್ದಿಸುವಂತೆ ಹಣೆಯ ಮೇಲೆ ಚುಂಬಿಸುವುದೇನು, ಆಕೆ ಊಟ ಮಾಡದೇ ಈತ ಎಂದು ಬಾಯಿಗೆ ಒಂದು ತೊಟ್ಟು ನೀರನ್ನು ಸೇರಿಸಿದ್ದನ್ನೂ ನಾವ್ಯಾರೂ ಕಾಣೆವು. ಹಗಲು-ರಾತ್ರಿ ಪಾಳಿಯನ್ನು ನಾವು ಮುಗಿಸಿ ಮನೆಗೆ ಹೋಗಿ ಬರುತ್ತಿದ್ದರೇನಂತೆ, ಈ ಮುದುಕ ಅಲ್ಲ ಜಂಟಲ್‌ಮ್ಯಾನ್ ತನ್ನಾಕೆಯನ್ನು ಬಿಟ್ಟು ಒಂದು ಕ್ಷಣವೂ ಇದ್ದವನಲ್ಲ.

ಆಕೆಯದ್ದು ಟರ್ಮಿನಲ್ ಕ್ಯಾನ್ಸರ್ ಎಂದು ಈಗಾಗಲೇ ಆತನಿಗೆ ತಿಳಿದು ಹೋಗಿದ್ದು ನಮ್ಮ ಆಸ್ಪತ್ರೆಗೆ ಇನ್ನೇನು ಕೊನೆಗಾಲದ ಚಿಕಿತ್ಸೆ ಅಥವಾ ವಿಶ್ರಾಂತಿ ಎನ್ನುವ ಹಂತದಲ್ಲಿರುವಾಗ ಕರೆದುಕೊಂಡು ಬಂದಿದ್ದರು. ಎಲುಬಿನ ಹಂದರದಂತಿದ್ದ ಆಕೆ ಈಗ ತಲೆ ಕೂದಲನ್ನು ಸುಮಾರಾಗಿ ಕಳೆದುಕೊಂಡು ಅಲ್ಲಲ್ಲಿ ಬೋಳುತಲೆ ಕಂಡು ಬಂದು ಕುರೂಪವಾಗಿ ಕಂಡುಬಂದರೂ ಒಂದು ಕಾಲದಲ್ಲಿ ಆಕೆ ಸುರಸುಂದರಿಯೇ ಇದ್ದಿರಬೇಕು. ಆಕೆಯ ತಲೆಯ ಬುಡದಲ್ಲಿ ಹಾಸಿಗೆಯ ಪಕ್ಕ ಇಟ್ಟ ಎರಡು ಫೋಟೋಗಳು ಅವರ ಜೀವನ ಪರ್ಯಂತ ಆತ್ಮೀಯತೆಗೆ ಸಾಕ್ಷಿಯೆನ್ನುವಂತೆ ಜೀವಂತವಾಗಿದ್ದವು. ಸುಮಾರು ನಲವತ್ತು ವರ್ಷಗಳಿಗೂ ಅಧಿಕವಾದ ತುಂಬು ದಾಂಪತ್ಯವಂತೆ, ನಮ್ಮ ಆಸ್ಪತ್ರೆಯಲ್ಲಿ ಬೇಕಾದಷ್ಟು ಜನ ಈ ರೀತಿ ಖಾಯಿಲೆಯವರನ್ನು ನಾವು ಈ ಹಿಂದೆ ನೋಡಿದ್ದರೂ ಎಂಥವರ ಮನದಲ್ಲೂ ಮಾನವೀಯ ಸಂಬಂಧವೆಂಬ ಬಳ್ಳಿಯನ್ನು ಹಬ್ಬಿಸಿ ಬಿಡಬಲ್ಲ ಚೈತನ್ಯವನ್ನು ಈ ದಂಪತಿಗಳು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದು ಎಲ್ಲರಲ್ಲೂ ಅವರ ಮೇಲೆ ಗೌರವಾದರಗಳನ್ನು ಮೊದಲ ದಿನದಿಂದಲೇ ಹುಟ್ಟಿಸಿತ್ತು.

ಆಶ್ಚರ್ಯವೆಂದರೆ ಈ ವ್ಯಕ್ತಿ ತನ್ನಷ್ಟಕ್ಕೆ ತಾನು ವಾಸ್ತವವನ್ನು ಒಪ್ಪಿಕೊಂಡಿರುವ ಬಗೆ - ಒಂದು ರೀತಿಯಲ್ಲಿ ಹೇಳೋದಾದರೆ ಆತನಿಗೆ ನಮಗೆ ಗೊತ್ತಿರದ ಸತ್ಯದ ಮತ್ತೊಂದು ಮಗ್ಗುಲು ಗೊತ್ತಿದೆ ಎನ್ನಬೇಕು, ಸತ್ಯಕ್ಕೆ ಅದೆಷ್ಟು ಮಗ್ಗುಲುಗಳಿವೆಯೋ ನಮಗೆ ಕಾಣೋದೇ ಸತ್ಯವೆಂದು ನಾವು ನಂಬಿಕೊಂಡಿದ್ದರೆ ಈ ಭೂಮಿ ದುಂಡಗಾದರೂ ಹೇಗಿರುತ್ತಿತ್ತು? ಇಲ್ಲ, ಈ ಭೂಮಿ ದುಂಡಗಿದ್ದರೆ ಮಾತ್ರ ಸಾಲದು ಅದು ತಿರುಗಲು ಈ ರೀತಿಯ ಪ್ರೀತಿಯ ಧ್ಯೋತಕವೆನ್ನುವುದೊಂದಿದ್ದರಲೇ ಬೇಕು, ಒಂದು ರೀತಿ ಬಂಡಿಯ ಗಾಲಿಗಳಿಗೆ ಕೀಲೆಣ್ಣೆಯನ್ನು ಸವರಿದ ಹಾಗೆ ಆಗಾಗ್ಗೆ ಸಂಸಾರದಲ್ಲಿ ಹುಟ್ಟಿ ಹರಡುವ ತುಮುಲವೆಂಬ ಕುಯ್ ಕುಯ್ ಸದ್ದನ್ನು ಮರೆಸಿ ನಿರ್ಮಲವಾದ ಪ್ರೀತಿಯೆಂಬ ಶಾಂತಿಯನ್ನು ಹರಡಲು. ಇಲ್ಲ, ಆಕೆಗೆ ಹತ್ತು ವರುಷದಿಂದ ಕ್ಯಾನ್ಸರ್ ಎಂಬುದು ಗೊತ್ತಾದ ಮೇಲೆ ಈ ವ್ಯಕ್ತಿ ಎದೆಗುಂದದೇ ನಿಂತು ಎಲ್ಲವನ್ನೂ ನಿಭಾಯಿಸಿಕೊಳ್ಳುವ ಸಾಮಾನ್ಯ ನಿಲುವಿನವನು. ನನ್ನ ಪೇಷಂಟಿನ ಪೋಷಕನಾದ ಆತನಲ್ಲಿ ನನ್ನದೇನು ಮಾತು - ಆದರೂ ಆತನ ಸಂಯಮ ಸದಾ ಒಳಿತನ್ನು ಆಶಿಸುವ ಕಂಗಳು, ಸತ್ಯದ ಮತ್ತೊಂದು ಮಗ್ಗುಲನ್ನು ಅರಿತ ಶಾಂತ ಮುಖ ಇವುಗಳು ನನ್ನನ್ನು ಆ ವ್ಯಕ್ತಿಯೊಡನೆ ಮಾತನಾಡುವಂತೆ ಪ್ರಚೋದಿಸಿದವು.

'ಸರ್, ಮಾನವೀಯ ಸಂಬಂಧಗಳು ಎಷ್ಟೊಂದು ಮಧುರವೆಂದು ನಮಗೆ ಹಲವಾರು ಬಾರಿ ಅನ್ನಿಸಿದರೂ ಅಷ್ಟೇ ಸಹಜವಾಗಿ ಅವುಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದೇಕೆ?'

ನನ್ನ ಪ್ರಶ್ನೆಗೆ ಗಂಭೀರತೆಯ ಮುಖವಾಡ ಸ್ವಲ್ಪ ತರಿಸಿ, ತುಟಿಯ ಮೇಲೆ ತಿಳಿನಗೆಯನ್ನು ತೋರಿಸಿಕೊಂಡು 'ನೋಡಿ, ನಮ್ಮ ನಮ್ಮ ನಡುವಿನ ಸಂಬಂಧಗಳು ವ್ಯಾಪಾರ ಧ್ಯೋತಕವಾಗಿ ನಿರ್ಮಿತವಾದವಲ್ಲ, ಅವು ಸಹಜವಾದವು - ನೀವು ಸಹಜವಾಗಿ ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದು ಎಂದಿರಿ - ನನಗೆ ಆ ಬಗ್ಗೆ ಗೊತ್ತಿಲ್ಲ, ಆದರೆ ನನ್ನ ಮತ್ತು ಆಕೆಯ ಸಂಬಂಧಗಳ ಬಗ್ಗೆ ಬೇಕಾದರೆ ಹೇಳಬಲ್ಲೆ' ಎಂದು ಹಾಸಿಗೆಯಲ್ಲಿ ಅಂಗಾತವಾಗಿ ಔಷಧಗಳ ನೆರವಿನಿಂದ ಕಣ್ಣು ಮುಚ್ಚಿ ವೆಂಟಿಲೇಟರ್ ಸಹಾಯದಿಂದ ಎದೆಯ ತಿದಿ ಉಬ್ಬಿ ಇಳಿಯುತ್ತಿದ್ದ ಹೆಂಡತಿಯ ಕಡೆಗೆ ತೋರಿಸಿ ಹೇಳಿದರು.

ಸುಮ್ಮನೇ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತ ವ್ಯಕ್ತಿ ತೊಂದರೆ ಕೊಟ್ಟೆನೇನೋ ಎನ್ನಿಸದಿರಲಿಲ್ಲ, ಕ್ಲಿಷ್ಟವಾದ ಪ್ರಶ್ನೆಗೆ ಉತ್ತರಿಸಲು ಪೂರ್ವಭಾವಿ ಸಿದ್ಧತೆ ನಡೆಸುವ ಯಾವುದೇ ತರಾತುರಿ ಅಥವಾ ಗೊಂದಲವೂ ಈ ವ್ಯಕ್ತಿಯಲ್ಲಿ ಕಂಡುಬರಲಿಲ್ಲ. ಅವರ ಸಮಾಧಾನದ ನಿಲುವೇ ನನ್ನನ್ನು ಕೆಲಸಗಳ ಮಧ್ಯೆ ಒಂದಿಷ್ಟು ನಿಲ್ಲುವ ವ್ಯವಧಾನವನ್ನು ಕಲ್ಪಿಸಿಕೊಟ್ಟಿತ್ತು.

'ಹೇಳಿ' ಎಂದೆ...'ನಿಧಾನವಾಗಿ ಯೋಚಿಸಿ, ನಿಮ್ಮ ತಂದೆ, ತಾಯಿ, ಬಂಧು, ಬಳಗ, ಸಹೋದರ-ಸಹೋದರಿಯರ ನಡುವೆ, ಮಕ್ಕಳ ನಡುವೆ ಎಲ್ಲಕ್ಕಿಂತ ಹೆಚ್ಚು ನಿಮ್ಮ ಒಡನಾಟ, ಅದರಲ್ಲೂ ಧೀರ್ಘಕಾಲೀನವಾಗಿರುವ ಸಂಬಂಧ ಎಂದರೆ ಗಂಡ-ಹೆಂಡತಿಯದು ಮಾತ್ರ. ಉದಾಹರಣೆಗೆ ನನ್ನ ಬದುಕಿನಲ್ಲಿ ಒಂದೇ ಮನೆಯಲ್ಲಿ ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ನನ್ನ ಜೊತೆ ಈಕೆ ಬದುಕಿ ಬಂದಿದ್ದಾಳೆ, ನಾವಿಬ್ಬರೂ ಒಬ್ಬರಿಗೊಬ್ಬರಾಗಿದ್ದೇವೆ, ಇಂತಹ ಧೀರ್ಘಕಾಲೀನವಾದ ಪವಿತ್ರ ಸಂಬಂಧ ಹಾಗೋ ಮೈತ್ರಿಯನ್ನು ನೆನೆದುಕೊಂಡರೆ ಯಾವ ನೆಲೆಗಳನ್ನು ಎಲ್ಲಿ ಹೇಗೆ ಕಳೆದುಕೊಳ್ಳುತ್ತೇವೆ, ಕಳೆದುಕೊಳ್ಳಬಹುದು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಈ ಪ್ರಯಾಣದಲ್ಲಿ ನಾವಿಬ್ಬರೂ ಒಂದೇ ಬಂಡಿಯಲ್ಲಿ ಪಯಣಿಸುತ್ತಿರುವಾಗ ದಾರಿಯಲ್ಲಿ ಬರುವ ಅಡೆತಡೆಗಳು ಒಂದಿಷ್ಟು ಅಲ್ಲಲ್ಲಿ ಘರ್ಷಣೆಯನ್ನೊಡ್ಡಬಹುದೇ ವಿನಾ ಅವುಗಳನ್ನು ದೊಡ್ಡದನ್ನಾಗಿ ಮಾಡಿ ಬಂಡಿಯ ಗಾಲಿಗಳನ್ನು ಕೀಳುವುದು ಜಾಣತನವಲ್ಲ. ಬಂಡಿ ನಿರಂತರವಾಗಿ ಮುಂದೆ ನಡೆದು ಅದು ಸೇರಬೇಕಾದ ಗುರಿಯನ್ನು ಸೇರಲಿ, ಆಗ ಎಲ್ಲವೂ ಸುಸುತ್ರವಾಗಿ ನಡೆಯುತ್ತದೆ - ಅದು ಸಹಜವಾದದ್ದು, ಸಹಜವಾದದ್ದೆಂದೂ ತಮ್ಮ ನೆಲೆಗಳನ್ನು ಕಳೆದುಕೊಳ್ಳೋದಿಲ್ಲ.' ಎಂದು ಕಣ್ಣು ಮುಚ್ಚಿ ಒಮ್ಮೆ ಉಸಿರನ್ನು ಜೋರಾಗಿ ಎಳೆದುಕೊಂಡು ಮತ್ತೆ ಕಣ್ಣು ಬಿಟ್ಟು ನನ್ನೆಡೆಗೆ ನೋಡಿದರೇ ವಿನಾ ಮುಂದೇನೂ ಹೇಳಲಿಲ್ಲ. ನಾನು ಅಲ್ಲಿದ್ದು ಸ್ವಲ್ಪ ಯೋಚಿಸಿ, ಅಕೆಯ ಚಾರ್ಟಿನ ಕಡೆಗೊಮ್ಮೆ ಕಣ್ಣು ಹಾಯಿಸಿ ನನ್ನ ಕೆಲಸವನ್ನು ನೋಡಿಕೊಂಡು ಹೋದೆ, ಇಂದಿಗೂ ನನ್ನ ಮನದಲ್ಲಿ ಅವರು ಹೇಳಿದ ಮಾತುಗಳು ಅನುರಣಿಸುತ್ತಲೇ ಇವೆ.

***

'ಸ್ವಲ್ಪ ಸರಿಯಾಗಿ ನೋಡಿ!' ಎಂದು ಬೇಡುವ ಆರ್ತ ಧ್ವನಿಯೊಂದು ಬಂದಾಗಲೇ ನನಗೆ ಈ ಪ್ರಪಂಚಕ್ಕೆ ಬರುವಂತಾಗಿದ್ದು. ಆಕೆಗೆ ತಗುಲಿಕೊಂಡ ವೆಂಟಿಲೇಟರ್ ಅನ್ನು ನರ್ಸ್ ಇನ್ನೂ ನಿಲ್ಲಿಸಿರಲಿಲ್ಲವಾದ್ದರಿಂದ ಅದು ತನ್ನ ಕೆಲಸವನ್ನು ಮುಂದುವರೆಸಿತ್ತು, ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದ್ದು ನನಗೆ ಖಚಿತವಾದರೂ ವೆಂಟಿಲೇಟರ್ ಅನ್ನು ನಿಲ್ಲಿಸುವ ಮೊದಲು ಜೇಬಿನಿಂದ ಸಣ್ಣ ಫ್ಲ್ಯಾಷ್‌ಲೈಟ್ ತೆಗೆದು ಕಣ್ಣುಗಳ ಮೇಲೆ ಬೆಳಗಿಸಿ, ಒಂದು ಇಕೆಜಿಯನ್ನು ತೆಗೆದು, ಉಸಿರನ್ನು ನೋಡಿ, ನಾಡಿ ಹಿಡಿದು ನೋಡಿ 'ದಯವಿಟ್ಟು ಕ್ಷಮಿಸಿ ಸರ್' ಎಂದೆ...ಆವರಿಗೆ ಗೊತ್ತಾಗಿ ಹೋಯಿತು, ಆವರಿಗೆ ತಿಳಿದ ಸತ್ಯದ ಮಗ್ಗುಲು ಬೆಳಕಿಗೆ ಬಂದಿತ್ತು, ಅವರ ಕಣ್ಣುಗಳು ನಿಧಾನವಾಗಿ ಹನಿಗೂಡತೊಡಗಿದವು. ನಾನು ಪಶುವಿನಂತೆ ಅಥವಾ ಯಂತ್ರದಂತೆ ಚಾರ್ಟುಗಳನ್ನು ಬರೆದು ಮುಗಿಸಿ, ಡೆತ್ ಸರ್ಟಿಫಿಕೇಟ್ ಬರೆಯಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ನಾಲ್ಕು ದಶಕಗಳ ಸಂಬಂಧ ಈ ರೀತಿ ನನ್ನ ಕಣ್ಣೆದುರು ಕೊನೆಗೊಂಡುದಕ್ಕೆ ನನಗೆ ಅತೀವ ಬೇಸರವೆನಿಸಿತು. ಇದ್ದಕ್ಕಿದ್ದ ಹಾಗೆ ಎಪ್ಪತ್ತೆರಡು ವರ್ಷದ ಈ ವ್ಯಕ್ತಿ ಎಂಭತ್ತೆರಡು ವರ್ಷವಾದಂತೆ ತೋರತೊಡಗಿದರು, ನಾನು ನಿಧಾನವಾಗಿ ಮುಂದಿನ ಕೋಣೆಗೆ ಹೊರಟೆ.

Sunday, October 08, 2006

ಕೆಲಸ ಮತ್ತು ಒತ್ತಡ

ಹೀಗೇ ಮಾನಸಿಕ ಒತ್ತಡ, ದಿನದಿನಕ್ಕೆ ಹೆಚ್ಚಿದ ಕೆಲಸ, ಒಟ್ಟು ದುಡಿಮೆ, ದುಡಿಮೆಗೆ ತಕ್ಕ ಪ್ರತಿಫಲ (ಹಣ, ಸಂತೋಷ, ಸಂತೃಪ್ತಿ, ಮುಂತಾದ ಚೌಕಟ್ಟುಗಳು) ಇವುಗಳ ಬಗ್ಗೆ ಯೋಚಿಸುವಾಗ ನನ್ನ ಮನಸ್ಸಿಗೆ ಬಂದವನು ಐವನ್. ಅವನ ಲಾಸ್ಟ್ ನೇಮ್ ಏನೋ ನನಗಂತೂ ತಿಳಿಯದು, ಅವನೇ ಇಲ್ಲಿ ನಮ್ಮ ಮನೆಯನ್ನು ಕಟ್ಟಿಕೊಟ್ಟ ಮೇಸ್ತ್ರಿ ಎಂದರೂ ಅಡ್ಡಿ ಇಲ್ಲ. ಈತನ್ನದ್ದು ಬಹಳ ಸರಳ ಜೀವನ, ಹೆಚ್ಚೇನೂ ಓದಿರದವನು, ಕನ್‌ಸ್ಟ್ರಕ್ಷನ್ ಕೆಲಸದಲ್ಲಿ ಪರಿಣಿತ - ಸ್ಪ್ಯಾನಿಷ್, ಪೋರ್ಚುಗೀಸ್ ಭಾಷೆ ಚೆನ್ನಾಗಿ ಬರುತ್ತದೆ ಎಂದು ಅವನೇ ಹೇಳಿಕೊಳ್ಳುತ್ತಾನೆ, ಆದರೆ ಇಂಗ್ಲೀಷ್ ಮಾತ್ರ ಅಷ್ಟಕಷ್ಟೇ.

ಕೆಲವು ವರ್ಷಗಳ ಹಿಂದೆ ನಾವು ಮಾರ್ಕೆಟಿಂಗ್ ತರಗತಿಯಲ್ಲಿದ್ದಾಗ ನಮ್ಮ ಪ್ರೊಫೆಸರ್ ಒಬ್ಬರು ಸ್ಲಮ್‌ಗಳನ್ನು ಯಾವುದೋ ಮಾತಿಗೆ ಉದಾಹರಣೆ ಕೊಡುತ್ತಾ ಅಲ್ಲಿ ಬಡತನದ ಜೊತೆಗೆ ಪ್ರತಿಮನೆಯಲ್ಲಿ ಮಕ್ಕಳೂ ಹೆಚ್ಚು, ಸಂಪನ್ಮೂಲಗಳು ಕಡಿಮೆ ಇದ್ದಲ್ಲಿಯೇ ಅದರ ಅಗತ್ಯ ಹೆಚ್ಚಿರುತ್ತದೆ, ತಿನ್ನಲು ಹೆಚ್ಚು ಬಾಯಿಗಳು ಇದ್ದಲ್ಲಿ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿಯನ್ನು ಉದಾಹರಿಸಿದ್ದರು. ಐವನ್ ಮತ್ತು ಅವನ ಬಳಗದ ಹಿಸ್ಪ್ಯಾನಿಕ್ ಕೆಲಸಗಾರರದ್ದು ಒಂದು ರೀತಿಯ ಸ್ಕ್ವಯರ್ ಜಾಬ್ ಅಂತಾರಲ್ಲ ಹಾಗೆ, ದಿನಕ್ಕೆ ಇಂತಿಷ್ಟು ಘಂಟೆಗೆ ಬಂದು ಇಂತಿಷ್ಟು ಘಂಟೆಗೆ ಹೋದರಾಯಿತು, ಅವರ ಪ್ರಾಜೆಕ್ಟುಗಳಲ್ಲಿ ಸಣ್ಣ ಪುಟ್ಟ ಅಡೆತಡೆ, ವಿಳಂಬಳಿರುತ್ತವೆಯೇ ಹೊರತು ನಮ್ಮ ಐಟಿ ಅಥವಾ ಬಿಸಿನೆಸ್ಸು ಪ್ರಾಜೆಕ್ಟುಗಳ ಹಾಗೆ ಅವರದ್ದು ಪ್ರತಿದಿನ ಒಂದೊಂದು ಅವತಾರವನ್ನು ತಾಳುವುದಿಲ್ಲ. ಕನ್‌ಸ್ಟ್ರಕ್ಷನ್ ಕೆಲಸಗಳು ಒಂದಲ್ಲ ಒಂದು ರೀತಿಯಿಂದ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವಾದ್ದರಿಂದ ಅದಕ್ಕೂ ಚಿಂತಿಸಬೇಕಾದ್ದಿಲ್ಲ, ಐವನ್‌ನ ಹೆಂಡತಿ ಮನೆಯಲ್ಲೇ ಇರುವವಳು, ಮಕ್ಕಳೂ ಮುದ್ದಾಗಿದ್ದಾರೆ, ಸರಿಯಾಗಿ ಶಾಲೆಗೂ ಹೋಗುತ್ತಿದ್ದಾರೆ, ನಾವುಗಳು ತೆಗೆದುಕೊಂಡ ಹಾಗೆ ಐವನ್‌ನೂ ಹೊಸಹೊಸದನೆಲ್ಲ ತೆಗೆದುಕೊಳ್ಳುತ್ತಾನೆ, ಸಂತೋಷದಿಂದಿದ್ದಾನೆ ಎಂತಲೇ ನಾನು ಹೇಳೋದು. ಐವನ್‌ಗೆ ಕಡಿಮೆ ಸಂಬಳ ಬರುತ್ತದೆ ಎಂದು ನೀವು ಅಂದುಕೊಂಡರೆ ಅದು ತಪ್ಪು, ಅವನ ವಾರ್ಷಿಕ ಆದಾಯ ಇಲ್ಲಿನ ಎಷ್ಟೋ ಜನ ಡಾಕ್ಟರುಗಳಿಗಿಂತ ಕಡಿಮೆಯೇನಿಲ್ಲ.

ಈ ದಿನ ನಮಗೆ ಪರಿಚಯವಿರುವ ಚೈನೀಸ್ ಮೂಲದ ಡಾಕ್ಟರ್ ದಂಪತಿಗಳು ಸಿಕ್ಕಿದ್ದರು, ಗಂಡ ಹೆಂಡತಿ ಉತ್ತಮ ಕೆಲಸದಲ್ಲಿ ಇರುವವರು, ಅವರಿಗೆ ಆರು ವರ್ಷದ ಒಬ್ಬ ಮಗನಿದ್ದಾನೆ. ನಮಗೆ ಸ್ವಲ್ಪ ಹತ್ತಿರದವರಾದ್ದರಿಂದ ನಮ್ಮ ಬಳಿ ಅವರಿಗೆ ಮಾತನಾಡಲು ಮುಜುಗರವೇನಿಲ್ಲ. ಮೂರು ವರ್ಷಗಳಿಂದ ಮತ್ತೊಂದು ಮಗುವಾಗಲಿ ಎಂದು ಆಲೋಚಿಸುತ್ತಿದ್ದಾರೆ, ಆದರೆ ಅವರೇ ಹೇಳಿರೋ ಹಾಗೆ 'ಅದಕ್ಕೀಗ ಸಮಯವಿಲ್ಲ!'. ಇದೇನಪ್ಪಾ ನಾನು ಅವರ ಪರ್ಸನಲ್ ವಿಷಯವನ್ನು ಹೀಗೆ ಬಳಸಿಕೊಳ್ಳುತ್ತಿದ್ದೇನೆ ಎಂದುಕೊಳ್ಳಬೇಡಿ, ಈ ಮೇಲಿನ ಪಾತ್ರಗಳು ನಿಜವಲ್ಲ ಎಂದುಕೊಳ್ಳಿ, ಏಕೆಂದರೆ ನನಗೆ ಇಲ್ಲಿ ಎರಡು ಮಾನಸಿಕ ಸ್ಥಿತಿಗಳನ್ನು ನಿರ್ಮಿಸುವುದು ಮುಖ್ಯವೇ ಹೊರತು ಪಾತ್ರಗಳು, ಅವುಗಳ ಹೆಸರುಗಳು ಮುಖ್ಯವಲ್ಲ.

ಮೂವತ್ತರ ಹರೆಯದ ಕೊನೆಯ ದಿನಗಳನ್ನು ಎಣಿಸಿ ನಿಧಾನವಾಗಿ ನಲವತ್ತರ ಗಡಿ ಸಮೀಪಿಸುತ್ತಿರುವ ಚೈನೀಸ್ ಡಾಕ್ಟರ್ ದಂಪತಿಗಳನ್ನು ನೋಡಿದೊಡನೆ ಇವರು ಈ ಸ್ಥಿತಿಗೆ ಬರಲು ಎಷ್ಟೊಂದು ಕಷ್ಟಪಟ್ಟಿದ್ದಾರೆ, ಈಗ ಇಬ್ಬರಿಗೂ ಒಂದು ಒಳ್ಳೆಯ ಕೆಲಸವೆಂಬುದೊಂದಿದ್ದರೂ ಇನ್ನೂ ಅವರ ದುಗುಡ ಕಡಿಮೆಯೇನಾಗಿಲ್ಲ. ಅವರ ಹಳೆಯ ಸಾಲಗಳು ಹಾಗೂ ಇತ್ತೀಚೆಗಷ್ಟೇ ಮಾಡಿದ ಹೊಸ ಸಾಲಗಳು ಇನ್ನೂ ಹಾಗೇ ಇವೆ. ಇನ್ನು ಇಪ್ಪತ್ತು ವರ್ಷಗಳವರೆಗೆ ನಿರಂತರವಾಗಿ ದುಡಿದರೂ ಇನ್ನೂ ಸಾಲದು ಎನ್ನಿಸುವ ಸ್ಥಿತಿ ಇದೆ. ಅವರು ದಿನನಿತ್ಯ ಮಾಡುವ ಕೆಲಸವೂ ಬಹಳ ಮಾನಸಿಕ ಒತ್ತಡವನ್ನು ತರುವಂತಹುದೇ. ಹೀಗಿರುವಲ್ಲಿ ಇನ್ನು ಸಮಾಧಾನ, ಸಾಕು, ಇಷ್ಟಿರಲಿ ಎನ್ನುವ ಮಾತಾದರೂ ಎಲ್ಲಿಂದ ಬಂತು?

ಐವನ್ ಕೂಡಾ ನಾಳೆ ಅಂದರೆ ಸೋಮವಾರ ತನ್ನ ಕೆಲಸಗಳನ್ನು ಆರಂಭಿಸುತ್ತಾನೆ, ಅವನಿಗೆ ಅದರ ಬಗ್ಗೆ ಯಾವುದೇ ಯೋಚನೆ ಇದೆಯೋ ಇಲ್ಲವೋ ಯಾರು ಬಲ್ಲರು? ಅವನ ಗೋಡೆಗೆ ಹೊಡೆದ ಮೊಳೆ ನೇರವಾಗಿ ಹೋಗದಿದ್ದರೆ ಅದನ್ನು ಕಿತ್ತು ಬಿಸಾಡಿ ಅದೇ ಜಾಗದಲ್ಲಿ ಮತ್ತೊಂದನ್ನು ಹೊಡೆಯುವ ಸ್ವಾತಂತ್ರ್ಯವಂತೂ ಅವನಿಗೆ ಇದೆ. ಅವನು ಕಟ್ಟುಕೊಟ್ಟ ಮನೆಗಳು, ಗೋಡೆಗಳು ಬೀಳೋದಿಲ್ಲ, ಜನರು ಯಾರೂ ಅವನನ್ನು ಕೋರ್ಟು ಮೆಟ್ಟಿಲು ಹತ್ತಿಸೋದಿಲ್ಲ.

ಹಾಗಂತ ಬದುಕಲ್ಲಿ ಎಲ್ಲರೂ ಕನ್‌ಸ್ಟ್ರಕ್ಷನ್ ಕೆಲಸಗಾರರಾಗಲು ಆಗುತ್ತದೆಯೇ? ಎಲ್ಲರ ಕೆಲಸದಲ್ಲೂ ಅದರದ್ದೇ ಆದ ಭಿನ್ನ ಸವಾಲುಗಳಿವೆ. ಒಂದು ಕೆಲಸವನ್ನು ಮತ್ತೊಂದಕ್ಕೆ ಹಾಗೆ ತುಲನೆ ಮಾಡಲಾಗದು. ಆದರೆ ದಿನದ ಕೊನೆಯಲ್ಲಿ ಮಾನಸಿಕ ಒತ್ತಡಗಳನ್ನು ಕೆಲಸ ಮಾಡುವ ಪ್ರತಿಯೊಬ್ಬರೂ ಮನೆಗೆ ಹೊತ್ತುಕೊಂಡೇನೂ ಹೋಗುವುದಿಲ್ಲ. ದಿನದಲ್ಲಿ ಇರೋದು ಇಂತಿಷ್ಟೇ ಘಂಟೆಗಳು ಎಂದು ಗೊತ್ತಿದ್ದೂ ನಮ್ಮನ್ನೇಕೆ ನಾವು ಎಲ್ಲ ಸಾಲುಗಳಲ್ಲೂ ದೂಡಿಕೊಳ್ಳುತ್ತೇವೆ, ಗೆಲ್ಲುವ ಗೆಲ್ಲಬಲ್ಲ ಪ್ರತಿಯೊಂದು ಆಟಗಳಲ್ಲೂ ನಮ್ಮನ್ನೇಕೆ ನಾವು ಹೂಡಿಕೊಳ್ಳುತ್ತೇವೆ? ನಮ್ಮಿಂದ ನಾವೇ ಯಾವಾಗಲೂ ಹೆಚ್ಚಿನದನ್ನೇಕೆ ನಿರೀಕ್ಷಿಸುತ್ತೇವೆ? ಪ್ರತಿಯೊಂದರಲ್ಲೂ ಪ್ರತಿಭಾವಂತರಾಗಲು ನಾವೇನು ಸಿನಿಮಾ ಹೀರೋಗಳೇ, ನಮ್ಮ ಇತಿಮಿತಿಯನ್ನು ನಾವೇಕೆ ಸುಲಭವಾಗಿ ಒಪ್ಪಿಕೊಳ್ಳೋದಿಲ್ಲ, ಮೂಗಿನ ಮಟ್ಟಕ್ಕಿಂತ ಹೆಚ್ಚಿನ ನೀರಿನಲ್ಲೇ ಮುಳುಗಿ ನಾವು ನಡೆದಾಡುವುದಾದರೂ ಏತಕ್ಕೆ?

ಮಾನಸಿಕ ಒತ್ತಡಗಳನ್ನು ಅನುಭವಿಸಿ ತಾವು ಹಲವಾರು ಸಂಘರ್ಷಗಳಿಗೊಳಗಾಗುವ ಮಂದಿ ತಮ್ಮ ಕುಟುಂಬದ ಇತರರನ್ನೂ ನಿಧಾನವಾಗಿ ಕಂಪದ ಭೂಮಿಯಲ್ಲಿ ಎಳೆದುಕೊಂಡು ಎಲ್ಲರೂ ತಮ್ಮ ಹಾಗೇ ಅನುಭವಿಸುವಂತೆ ಮಾಡುತ್ತಾರೆ. ಇಂದಿನ ಕಡಿಮೆ ಸಮಯದಲ್ಲಿ ಹೆಚ್ಚನ್ನು ಮಾಡುವ ನಿರೀಕ್ಷೆಯೇನೋ ಸರಿ, ಅದೇನು ಹೆಚ್ಚು ಮಾಡುವುದಿದೆಯೋ ಅಷ್ಟನ್ನು ಮಾಡಿ ಮನೆಗೆ ಬಂದು ಮಕ್ಕಳ ಜೊತೆ ಒಂದಿಷ್ಟು ಸಮಯವನ್ನು ಕಳೆದರೆ ದೊಡ್ಡ ಮನುಷ್ಯರು ಸಣ್ಣವರೇನೂ ಆಗೋದಿಲ್ಲ. ಇರೋ ಒಬ್ಬ ಮಗನಿಗೆ ವಾರದಲ್ಲಿ ಕೇವಲ ಒಂದು ದಿನ ಮೀಸಲಿಡುವ ಚೈನೀಸ್ ವೈದ್ಯ ದಂಪತಿಗಳಿಗೆ ಹೇಳಿದೆ - 'ನಿಮ್ಮ ಚೈನಾ ಪರಂಪರೆಯಂತೆ ನೀವೆಲ್ಲಿದ್ದರೂ ನಿಮಗೆ ಒಂದೇ ಮಗು!' ಎಂದು, ಅವರಿಗೆ ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ, ಇದ್ದೊಬ್ಬ ಮಗನಿಗೆ ವಾರಕ್ಕೊಂದು ದಿನ ಸಮಯವನ್ನು ಮೀಸಲಿಡುವವರಿಗೆ ಇನ್ನೊಂದು ಮಗು ಬೇಕೇ ಎಂದೂ ನನ್ನಷ್ಟಕ್ಕೆ ನಾನೇ ಕೇಳಿಕೊಂಡೆ.

ಹಾಗಂದ ಮಟ್ಟಿಗೆ ನನಗೆ ಐವನ್ ಮಹಾ ತಂದೆಯಂತೇನೂ ಕಾಣೋದಿಲ್ಲ, ಅವನ ಮಕ್ಕಳು ಬೇಡುವ ಆಲ್ಜೀಬ್ರಾದ ಸಮಸ್ಯೆಯನ್ನು ನಿವಾರಿಸಲು ಅವನಿಗೆ ಬರೋದಿಲ್ಲ, ಹೋಮ್‌ವರ್ಕ್ ಮಾಡೋದರಲ್ಲಿ ಆ ಮಕ್ಕಳು ಹಿಂದೋ ಮುಂದೋ ಒಂದೂ ಗೊತ್ತಿಲ್ಲ, ಆದರೆ ಐವನ್ ಅದಕ್ಕೆಲ್ಲ ತಲೆ ತೂರಿಸುತ್ತಾನೆ ಎಂದೇನೂ ನನಗನ್ನಿಸುವುದಿಲ್ಲ. ಆದರೆ ಆತ ಪ್ರತಿದಿನವು ಮನೆಗೆ "ನಿಜ"ವಾಗಿಯೂ ಹೋಗುತ್ತಾನೆ, ತನ್ನ ಮಕ್ಕಳ ಜೊತೆ ಸಮಯವನ್ನು ಕಳೆಯುತ್ತಾನೆ. ತಂದೆಯಿಂದ ಮನೆಕಟ್ಟುವ ವಿದ್ಯೆಯನ್ನು ಬಳುವಳಿ ಪಡೆದ ಮಕ್ಕಳು ನಾಳೆ ಅಪ್ಪನ ಹಾಗೇ ಆಗಬಹುದು ಅಥವಾ ಮತ್ತಿನೇನೋ ಆಗಬಹುದು, ಆದರೆ ಈ ಡಾಕ್ಟರ್ ಮಗ ಏನಾಗುತ್ತಾನೋ, ಬಿಡುತ್ತಾನೋ ಎನ್ನುವುದು ನನ್ನ ಹೆದರಿಕೆ ಕೂಡಾ. ತಂದೆ-ತಾಯಿಯರಂತೆ ಅವನೂ ಡಾಕ್ಟರ್ ಆಗಿ ನಾಳೆ ಅವನೂ ಅವನ ಅಪ್ಪನ ಹಾಗೆ ವೀಕೆಂಡ್ ತಂದೆ ಆಗಿಬಿಟ್ಟರೆ ಎಂದು ನನ್ನ ಹೆದರಿಕೆ ಇನ್ನೂ ಬಲವಾಗತೊಡಗುತ್ತದೆ.

ನಾನೇನಾಗುತ್ತೇನೋ ಬಿಡುತ್ತೇನೋ, ನನ್ನ ಮಾನಸಿಕ ಒತ್ತಡಗಳನ್ನಂತೂ ಕಡಿಮೆ ಮಾಡಿಕೊಳ್ಳಬೇಕು, ಆಫೀಸಿನ ಕೆಲಸಗಳನ್ನು ಮನೆಗೆ ತರಬಾರದು, ವೀಕೆಂಡಿಗೆ ಮಾತ್ರ ಪೋಷಕನಾಗಬಾರದು ಎಂದೆಲ್ಲಾ ಏನೇನೋ ಮುಂದಾಲೋಚಿಸಿಕೊಳ್ಳುವ ಪರಿ ನನ್ನ ಮಾನಸಿಕ ಒತ್ತಡವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ!

Friday, October 06, 2006

ಔಟ್‌ಸೋರ್‌ಸಿಂಗ್ ಹಾಗೂ ಪರಕೀಯತೆ

೨೦೦೦ ನೇ ಇಸವಿ, ಯಾವುದೋ ಒಂದು ಶುಭ್ರವಾದ ದಿನದ ಮುಂಜಾನೆ, ಆಗಿನ್ನೂ ವ್ಯಾಪಾರ ಕೇಂದ್ರಗಳು ಉರುಳಿರಲಿಲ್ಲ - ಜನಗಳು ಇನ್ನೂ ನ್ಯಾಷನಾಲಿಟಿ, ಧರ್ಮಗಳ ಬಗ್ಗೆ ಇಲ್ಲಿ ಇನ್ನೂ ಹೆದರದೇ ಮಾತನಾಡುತ್ತಿದ್ದಂತಹ ಕಾಲ - ನನ್ನ ಟೀಮ್ ಮೆಂಬರ್ ಒಬ್ಬ (ವಯಸ್ಸಿನಲ್ಲಿ ನನಗಿಂತಲೂ ಬಲು ಹಿರಿಯ) ಹೀಗೇ ನನ್ನ ಜೊತೆ ಔಟ್ ಸೋರ್ಸಿಂಗ್ ವಿಷಯವನ್ನು ಕುರಿತು ವಾದ ಮಾಡಲು ಶುರುಮಾಡಿಕೊಂಡ. ಮೊದಮೊದಲು ವಿಚಾರ ವಿನಿಮಯ ಎಂದುಕೊಂಡು ಶುರುವಾದ ಮಾತು ಕೊನೆಯಲ್ಲಿ ತಾರಕ್ಕೇರಿತು, ನನಗೋ ಆದಷ್ಟು ಬೇಗ ಮಾತು ಮುಗಿಸಿ ಕೆಲಸದ ಕಡೆಗೆ ಗಮನ ಕೊಡುವ ಆಲೋಚನೆ, ಅವನಾದರೋ ನನ್ನನ್ನು ಎಷ್ಟು ಸಾಧ್ಯವೋ ಅಷ್ಟು ಕೆರಳಿಸಬೇಕು ಎಂದು ಪಣತೊಟ್ಟಂತಿತ್ತು.

ಆಗಿನ್ನೂ ಬುಷ್ ಗೆದ್ದಿರಲಿಲ್ಲ, ಚುನಾವಣಾ ಪ್ರಣಾಳಿಕೆಗಳಲ್ಲಿ ಅಮೇರಿಕನ್ನರು ಪದೇಪದೇ ಕೆಲಸಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಹಲವಾರು ಸಮೀಕ್ಷೆ, ಸುದ್ದಿಗಳು ಬಿತ್ತರವಾಗುತ್ತಿತ್ತು. ನನ್ನಂತಹ ಭಾರತೀಯರನ್ನು ನೋಡಿದರೆ, ಅದರಲ್ಲೂ ಮಾಹಿತಿ ತಂತ್ರಜ್ಜಾನದ ತುಂಬೆಲ್ಲ ಹಬ್ಬಿಕೊಂಡ ನಮ್ಮವರನ್ನು ಕಂಡು, ಹೆಚ್ಚು ಹೆಚ್ಚು ಕೆಲಸಗಳು ಭಾರತದತ್ತ ವಾಲುತ್ತಿರುವುದನ್ನು ಗಮನಿಸಿ ಕೆಲವರಿಗೆ ಸಿಟ್ಟು ಬಂದಿರಬಹುದು. ಅದನ್ನೆಲ್ಲ ತೆಗೆದು ನನ್ನ ಮೇಲೆ ತೀರಿಸಿಕೊಳ್ಳೋಕೆ ಬಂದ್ರೆ ನಾನಾದ್ರೂ ಏನ್ ಮಾಡಲಿ? ಇವರಿಗೆಲ್ಲಾ ತಮ್ಮ-ತಮ್ಮ ಕೆಲಸಗಳನ್ನ ಭಾರತಕ್ಕೆ ಕಳಿಸಿ ಅಂತ ಹೇಳಿದೋನು ನಾನಾ?

ಸರಿ, ನಮ್ಮ ಮಾತು ಯಾಕೆ ಭಾರತಕ್ಕೆ ಕೆಲಸಗಳು ಹೆಚ್ಚು ಹೋಗ್ತಾವೆ ಅಂತ ಬಂತು, ನನ್ನ ಟೀಮ್ ಮೆಂಬರ್ ಪ್ರಕಾರ ಅದಕ್ಕೆ ಒಂದೇ ಒಂದು ಕಾರಣ ಅಂದ್ರೆ ಇಂಡಿಯನ್ ಲೇಬರ್ ಬಹಳ ಚೀಪ್. ಆದರೆ ನನ್ನ ವಾದ ಹಣ ಕಡಿಮೆ ಅನ್ನೋ ಮಾತು ಸರಿ, ಅದರ ಜೊತೆಯಲ್ಲಿ ಇಂಗ್ಲೀಷ್ ಮಾತನಾಡೋ ಇಂಜಿನಿಯರುಗಳು, ಟೈಮ್ ಡಿಫರೆನ್ಸ್ ಇರೋದರಿಂದ ಆಗುವ ಅನುಕೂಲಗಳು ಜೊತೆಯಲ್ಲಿ ಒಳ್ಳೆಯ ಪ್ರಾಸೆಸ್ ಅನ್ನು ಅಳವಡಿಸಿಕೊಂಡು ಈಗಾಗಲೇ ಈ ರೀತಿಯ ಕೆಲಸಗಳಲ್ಲಿ ನುರಿತ ಅನುಭವವಿರುವ ಕಂಪನಿಗಳು, ಇತ್ಯಾದಿ. ಆದರೆ ಅವನು ಒಪ್ಪಲೊಲ್ಲ. ನಾನೆಂದೆ ಹಾಗಾದರೆ ಬರೀ ಹಣ ಕಡಿಮೆ ಅನ್ನೋ ಮಾತಿದ್ರೆ, ಭಾರತಕ್ಕಿಂತ ಕಡಿಮೆ ಹಣದಲ್ಲಿ ಕೆಲಸ ಮಾಡೋ ದೇಶದವರಿಗೆ ಇಲ್ಲಿನ ಕೆಲಸಗಳನ್ನು ಕಳಿಸಲಿ ಎಂದರೆ ಅವನ ಬಳಿ ಉತ್ತರವಿಲ್ಲ. ಅಂತೂ ಇಂತೂ ಅವನಿಗೆ ಸಮಾಧಾನ ಮಾಡಿ ಇನ್ನೇನು ಜಗಳವಾಡೋದನ್ನು ತಪ್ಪಿಸಿಕೊಳ್ಳಬೇಕಾದರೆ ಸಾಕು ಸಾಕಾಗಿ ಹೋಯಿತು.

ಕೊನೆಯಲ್ಲಿ ಒಂದು ಮಾತು ಹೇಳ್ದೆ - 'ಜಪಾನೀಸ್ ಕಾರ್ ಓಡುಸ್‌ಕೊಂಡು, ಚೈನೀಸ್ ಮೇಕ್ ಶೂಸ್ ಹಾಕ್ಕೊಂಡು, ಎಲ್ಲೆಲ್ಲೋ ಬೆಳದ ಕಾಳು, ಕಡಿ ತಿನ್ನೋರಿಗೆ ಕಾಲ್ ಸೆಂಟರ್‌ಗಳು ಎಲ್ಲಿದ್ದರೇನು, ಟೆಕ್ನಾಲಜಿ ಎಲ್ಲಿಂದ ಬಂದರೇನು?' ಇದಕ್ಕೆ ಇವತ್ತಿನವರೆಗೆ ಅವನಿಂದ ಉತ್ತರವಿಲ್ಲ.

***

ಈ ಮಾತು ಯಾಕ್ ನೆನಪಾಯ್ತು ಅಂದ್ರೆ, ನಮ್ ಆಫೀಸ್ನಲ್ಲೂ ಸಹ ಬೇಕಾದಷ್ಟು ಕೆಲಸಗಳನ್ನು ಫಿಲಿಪೀನ್ಸ್ ಮೊದಲಾದ ದೇಶಗಳಿಗೆ ಔಟ್ ಸೋರ್ಸ್ ಮಾಡಿದ್ದಾರೆ, ಆದ್ರೆ ಭಾರತದಲ್ಲಿ ನಮ್ಮ ಕಂಪನಿಯದೇ ಒಂದೆರೆಡು ಬ್ರಾಂಚ್‌ಗಳನ್ನು ತೆಗೆದು ಅಲ್ಲಿಂದ ಕೆಲಸಗಳನ್ನು ಮಾಡಿಸಿಕೊಳ್ಳೋದನ್ನ ಇನ್ ಸೋರ್ಸಿಂಗ್ ಅಂತ ಕರೆದುಕೊಂಡರೂ ಹೆಚ್ಚೂ ಕಡಿಮೆ ಇದೂ ಔಟ್ ಸೋರ್ಸಿಂಗ್ ಥರಾನೆ. ಇಲ್ಲಿ ನಮ್ ಐಟಿ ಕೆಲಸಗಾರರಿಗೆ, ಮ್ಯಾನೇಜರುಗಳಿಗೆ ವಿಪರೀತ ಕೆಲಸ, ಹಗಲು ಹೊತ್ತು ಇಲ್ಲಿನವರ ಜೊತೆ ಗೇಯಬೇಕು, ರಾತ್ರಿ ಅಲ್ಲಿನವರ ಜೊತೆ ಏಗಬೇಕು. ಹೆಚ್ಚೂ ಕಡಿಮೆ ದಿನಕ್ಕೆ ಏನಿಲ್ಲ ಅಂದ್ರೂ ಹದಿನೈದು ಘಂಟೆ ಕೆಲಸ ಮಾಡೋರುನ್ನ (ಅದರಲ್ಲೂ ವಾರಕ್ಕೆ ಕಡಿಮೆ ಅಂದ್ರೆ ಆರು ದಿವಸ) ನೋಡಿದ್ರೆ ಬಹಳ ಬೇಜಾರಾಗುತ್ತೆ. ಇಲ್ಲಿ ಕುಳಿತುಗೊಂಡು ಅಲ್ಲಿನವರಿಂದ ಕೆಲಸ ತೆಗೆಯೋದು, ಇಲ್ಲಿನ ರಿಕ್ವೈರುಮೆಂಟುಗಳನ್ನು ವಿವರಿಸಿ ಅಲ್ಲಿಂದ ಅದಕ್ಕೆ ತಕ್ಕ ಕೆಲಸ ಮಾಡಿಸಿ, ಅದನ್ನು ವೆರಿಫೈ ಮಾಡಿ ಇಲ್ಲಿನವರಿಗೆ ಪ್ರೆಸೆಂಟ್ ಮಾಡಬೇಕಾದರೆ ಅದೇನು ಕಡಿಮೆ ಕೆಲಸವಲ್ಲ, ಜವಾಬ್ದಾರಿಯೆಲ್ಲ ಇವರ ತಲೆಯ ಮೇಲೇ ಬೀಳೋದು.

ಅಲ್ಲೋ, ಕೆಲಸಗಾರರು ಬಹಳ ಬುದ್ಧಿವಂತರು, ತುಂಬಾ ಸ್ಮಾರ್ಟ್ ಹುಡುಗ/ಹುಡುಗಿಯರು ತಮ್ಮ ಎಲ್ಲಾ ಕನಸುಗಳನ್ನು ಹೊತ್ತುಕೊಂಡು ಈ ದಿನ ಕೆಲಸಕ್ಕೆ ಸೇರಿದರೆ ಇನ್ನೊಂದಿಷ್ಟು ತಿಂಗಳಲ್ಲಿ ಕಂಪನಿ ಬಿಟ್ಟು ಹೋಗೋ ಪರಿಸ್ಥಿತಿ. ಹೀಗೆ ಟೀಮಿಗೆ ಸೇರುವವರ, ಬಿಡುವವರ ಸಂಖ್ಯೆ ಬಹಳ ಹೆಚ್ಚು. ಇಂತಹ ವೇರಿಯೇಷನ್ನುಗಳ ನಡುವೆ ಟೆಕ್ನಾಲಜಿ ಜೊತೆಗೆ ಬಿಸಿನ್ನೆಸ್ಸನ್ನೂ ವಿವರಿಸಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಬಹಳ ಜಾಣತನ ಬೇಕಾಗುತ್ತದೆ. ಇದು ಬಹಳ ಮಾನಸಿಕ ಒತ್ತಡವನ್ನು ತರುವ ಕೆಲಸ ಕೂಡಾ. ಇವತ್ತಿಗೂ ಅಲ್ಲಿನ ಎಷ್ಟೋ ಕಂಪನಿಗಳಲ್ಲಿ ಕೆಲಸಗಾರರ ಅನುಭವವನ್ನು ತಿಂಗಳುಗಳಲ್ಲಿ ಅಳೆಯೋದನ್ನು ನಾವು ನೋಡಬಹುದು.

ಮೊನ್ನೆ ನಾವು ಯಾವುದೋ ಮೀಟಿಂಗ್‌ನಲ್ಲಿ ಮಾತನಾಡುತ್ತಾ ಇರಬೇಕಾದರೆ ನಮ್ಮವರಲ್ಲಿ ಒಬ್ಬರು 'ಐಟಿ ಗುಂಪಿನವರಿಗೆ ಬಿಸಿನೆಸ್ ರಿಕ್ವೈರ್‌ಮೆಂಟುಗಳು ಅರ್ಥವಾಗೋದೇ ಇಲ್ಲ, ಎಷ್ಟು ಸರ್ತಿ ಹೇಳಿದರೂ ಅಷ್ಟೇ, ಪ್ರಯೋಜನವಿಲ್ಲ!' ಎಂದು ಒಂದು ಬ್ಲಾಂಕೆಟ್ ಹೇಳಿಕೆ ಎಸೆದರು. ನಮ್ಮ ಐಟಿ ಗುಂಪಿನಲ್ಲಿ ಬಹಳಷ್ಟು ಜನ ಭಾರತೀಯರೇ ಇರೋದು. ಆ ಮೀಟಿಂಗ್ ರೂಮಿನಲ್ಲಿ ನಾನೊಬ್ಬನೇ ಭಾರತೀಯನಿದ್ದವನು, ನನಗೆ ಈ ಹೇಳಿಕೆ ಬಹಳ ಮುಜುಗರವನ್ನುಂಟು ಮಾಡಿತು. ರಾತ್ರಿ-ಹಗಲು ಕಷ್ಟ ಪಟ್ಟು ದುಡಿದ ಮೇಲೂ ನಮ್ಮವರು ಇಂತಹ ಹೇಳಿಕೆಗಳನ್ನು ಕೇಳಬೇಕಲ್ಲ ಎಂದು ಬೇಸರವಾಯಿತು. ತಮ್ಮ ಕಂಪ್ಯೂಟರ್ ಡೆಸ್ಕ್‌ಟಾಪ್ ಮೇಲೆ ಒಂದು ಐಕಾನ್ ಅನ್ನು ಎರಡು ಅಂಗುಲ ಈಚೆಗೆ ಸರಿಸಿದರೂ ಮೈ ಮೇಲೆ ಚೇಳು ಬಿದ್ದಂತೆ ಆಡುವ ಇವರುಗಳು ಭಾರತದಲ್ಲಿ ಇದೀಗ ತಾನೆ ಪದವಿ ಮುಗಿಸಿ, ಅಥವಾ ಇತ್ತೀಚೆಗಷ್ಟೇ ಕೆಲಸ ಆರಂಭಿಸಿದ ಐಟಿ ಇಂಜಿನಿಯರುಗಳಿಗೆ ಇಲ್ಲಿನ ಯಾವುದೋ ಒಂದು ಪ್ರಾಡಕ್ಟ್ ವಿವರಗಳು ಗೊತ್ತಾಗಲಿಲ್ಲವೆಂದಾಕ್ಷಣ ಅದನ್ನು ಜನರೈಲೇಷನ್ ಮಾಡುವುದು ಎಷ್ಟರಮಟ್ಟಿಗೆ ಸರಿ? ನಮ್ಮ ಪ್ರಾಡಕ್ಟ್‌ಗಳ ಕಾಂಪ್ಲೆಕ್ಸಿಟಿ ಇಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೇ ಇನ್ನೂ ಸಂಪೂರ್ಣವಾಗಿ ತಿಳಿದಿರೋದಿಲ್ಲ, ಇನ್ನು ಹತ್ತು ತಿಂಗಳು ಮದ್ರಾಸಿನಲ್ಲಿ ಕೂತು ಇಲ್ಲಿಂದ ಫೋನು, ಇ-ಮೇಲುಗಳಲ್ಲಿ ಪಡೆದ ರಿಕೈರ್‌ಮೆಂಟುಗಳನ್ನು ಅಲ್ಲಿ ಕೋಡ್ ಡೆವಲಪ್ ಮಾಡಿದವರಿಗೆ ಹೇಗೆ ಗೊತ್ತಾದೀತು? ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಇಲ್ಲಿನ ಪೋಸ್ಟ್ ಝಿಪ್ ಕೋಡ್ ನಲ್ಲಿ ೫+೪ ಸಂಖ್ಯೆಗಳಿರುತ್ತವೆ ಎಂದು ಗೊತ್ತಿರಲಿಲ್ಲ, ಇನ್ನು ಇಲ್ಲಿನ ಪ್ರಾಡಕ್ಟ್‌ಗಳು, ಇವರ ಆಕ್ಸೆಂಟುಗಳನ್ನು ಅರ್ಥ ಮಾಡಿಕೊಳ್ಳಲು ಎಷ್ಟೋ ತಿಂಗಳು ಬೇಕಾಯಿತು, ಅದೂ ಇಲ್ಲಿಗೆ ಬಂದು ಹಲವಾರು ಮುಖತಃ ಭೇಟಿಗಳನ್ನು ಮಾಡಿದ ಮೇಲೆ, ಹಾಗಿರುವಾಗ ಬಿಸಿನೆಸ್ ರಿಕ್ವೈರ್‌ಮೆಂಟ್ ಅನ್ನು ತಿಳಿದುಕೊಳ್ಳುವಲ್ಲಿ, ಅದನ್ನು ಬಿಡಿಸಿ ಹೇಳುವಲ್ಲಿ ಇಲ್ಲಿ ಕೆಲಸ ಮಾಡುವ ಮಿಡ್ ಲೆವಲ್ ಮ್ಯಾನೇಜರುಗಳ ಮೇಲೆ ಒತ್ತಡ ಹೆಚ್ಚಿದೆ ಎಂದೇ ಅರ್ಥವಲ್ಲವೆ?

ಚೈನಾದಲ್ಲಿ ಕುಳಿತು, ಯಾವುದೋ ಒಂದು 'ಸಾಕ್ಸ್ ಟೌನ್'ನಲ್ಲಿ ದಿನಕ್ಕೆ ಮಿಲಿಯನ್ನ್ ಗಟ್ಟಲೆ ಸಾಕ್ಸ್ ಹೊರತರುವಂತಹ ರಿಪೀಟೆಬಲ್ ಪ್ರಾಸೆಸ್ಸುಗಳಿಗೂ, ಪ್ರತಿದಿನ ಬದಲಾಗುವ ರಿಕ್ವೈರ್‌ಮೆಂಟುಗಳನ್ನು ಮನನ ಮಾಡಿಕೊಂಡು, ಅದನ್ನು ಅಭಿವೃದ್ಧಿ ಪಡೆಸಿ, ಪರೀಕ್ಷಿಸಿ, ಇಂಟಿಗ್ರೇಟ್ ಮಾಡಿ, ಇಲ್ಲಿಗೆ ಕಳಿಸಿ, ಮತ್ತೆ ಇಲ್ಲಿನ ಫೀಡ್‌ಬ್ಯಾಕ್ ಪ್ರಕಾರ ಅದನ್ನು ಬದಲಾಯಿಸಿ, ತಿದ್ದಿ, ಪರೀಕ್ಷಿಸಿ, ಇಂಟಿಗ್ರೇಟ್ ಮಾಡಿ ಕಳಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಜೊತೆಯಲ್ಲಿ ಈ ದಿನ ಇದ್ದಿರುವ ನಿಮ್ಮ ಚೀಫ್ ಪ್ರೋಗ್ರಾಮರ್ ನಾಳೆ ಮತ್ಯಾವುದೋ ಕಂಪನಿ/ಕೆಲಸ/ದೇಶವನ್ನು ಹುಡುಕಿಕೊಂಡು ಹೋಗುವ ಹೆದರಿಕೆಯೂ ಇದೆ. ಈ ನಿಟ್ಟಿನಲ್ಲಿ ನನ್ನಂತಹ ಕೆಲಸಗಾರರ ಮೇಲೆ ಔಟ್‌ಸೋರ್ಸಿಂಗ್ ತರುವ ಒತ್ತಡ ಅಪಾರವಾದುದು, ಕಂಪನಿಗಳಿಗೆ ಗ್ಲೋಬಲೈಜೇಷನ್ ಅಳತೆಗೋಲಿನಲ್ಲಿ ವಿಶ್ವಮಾನ್ಯತೆ ಸಿಕ್ಕರೂ, ಕೆಲಸಗಾರರಿಗೆ ಇದ್ದುದರಲ್ಲಿ ಹೊಂದಿಕೊಂಡು ದುಡಿಯುವ, ಎಷ್ಟು ದುಡಿದರೂ ಕೆಲಸ ಮುಗಿಯದ, ಕೆಲಸ ಮುಗಿದರೂ ಉತ್ಕೃಷ್ಟತೆ ಇರದಿರುವ, ಉತ್ಕ್ಟುಷ್ಟತೆ ಇದ್ದರೂ ಉತ್ತಮ ಅಭಿರುಚಿ/ಅಭಿಪ್ರಾಯವಿರದ ಮೇಲಿನವರು ಆಡುವ ಚುಚ್ಚು ಮಾತುಗಳು ಬಹಳ ದುಬಾರಿಯೆಂದೆನಿಸುತ್ತವೆ.

ಇಂತಹ ಮ್ಲಾನ ಸನ್ನಿವೇಶಗಳಲ್ಲಿ ನನ್ನ ಪರಕೀಯ ಕಂದಕಗಳು ಇನ್ನೂ ವಿಸ್ತಾರವಾಗತೊಡಗುತ್ತವೆ.