Sunday, June 11, 2006

ಒಂದು ನೊಣದ ಕಥೆ

ನನ್ನ ಸ್ನೇಹಿತರೊಬ್ಬರು ಎರಡು ತಿಂಗಳ ಹಿಂದೆ ಮಾತನಾಡುತ್ತಿದ್ದಾಗ ಸಾಕ್ಷ್ಯಚಿತ್ರ, ಕಿರುಚಿತ್ರಗಳನ್ನು ಮಾಡುವುದನ್ನು ಕುರಿತು ಹೇಳುವಾಗ 'ಒಂದು ಚಿಕ್ಕ ಘಟನೆಯನ್ನೂ ಒಂದೈದು ನಿಮಿಷಗಳ ಕಿರುಚಿತ್ರವನ್ನಾಗಿ ರೂಪಿಸಬಹುದು, ಈಗ ಉದಾಹರಣೆಗೆ ಇಲ್ಲಿ ಯಾರದ್ದೋ ಮನೆಯಲ್ಲಿ ಜೇಡವೊಂದು ಬಂದಿದೆಯೆಂದುಕೊಳ್ಳಿ, ಅದಕ್ಕೆ ಯಾವುದೇ ತೊಂದರೆ ಕೊಡದೇ ಜೀವಂತವಾಗಿ ಮನೆಯ ಮಾಲೀಕ ಅದನ್ನು ಹೊರಹಾಕುವುದಕ್ಕೆ ಪ್ರಯತ್ನ ಪಡುವುದನ್ನೂ, ಜೇಡ ಮತ್ತು ಮಾಲೀಕ ಇಬ್ಬರಲ್ಲೂ ಇರುವ ಪರಸ್ಪರ ಹೆದರಿಕೆಗಳನ್ನೂ, ಈ ಘಟನೆಯ ಅಂತ್ಯವನ್ನು ನಾನಾ ರೀತಿಯಲ್ಲಿ ಸೆರೆಹಿಡಿದು ಅಂತ್ಯಗೊಳಿಸೋದರಿಂದ ಹಿಡಿದು ನೆಳಲು-ಬೆಳಕು, ಮಾಲೀಕನ ಮುಖದ ಮೇಲೆ ತೋರಿಸಲಾಗುವ ಆಂತರಿಕ ಸಂವಾದ, ಜೇಡಕ್ಕೆ ಹಾನಿಯಾಗಬಾರದೆಂಬ ಆತನ ಕಳಕಳಿ ಮುಂತಾದವುಗಳನ್ನೆಲ್ಲ ಸೇರಿಸಿ ಸೊಗಸಾಗಿ ಒಂದು ಚಿತ್ರವನ್ನು ಮಾಡಬಹುದು...' ಎಂದು ವಿವರಿಸಿದರು. ಹೀಗೇ ಮುಂದೆ ಡಿಸ್ಕವರಿಯಲ್ಲಿ ಬರುವ ಕಿರುಚಿತ್ರಗಳು, ಕಿರುಚಿತ್ರಗಳನ್ನು ಮಾಡುವಾಗ ಬೇಕಾಗುವ ಕುರಿತು ಸ್ವಲ್ಪ ಚರ್ಚೆಯನ್ನು ಮುಂದುವರೆಸಿದ್ದೆವು.

ಕಳೆದ ವಾರ ಹೊಸದಾಗಿ ಬಣ್ಣ ಹಚ್ಚಿದ್ದ ಕೋಣೆಯಲ್ಲಿ ತಾಜಾ ಹವೆ ಬರಲೆಂದು ಸ್ವಲ್ಪ ಕಾಲ ಕಿಟಕಿ-ಬಾಗಿಲುಗಳನ್ನು ತೆರೆದಿಟ್ಟಿದ್ದೆ. ಆಗ ಅದೆಲ್ಲಿಂದ ಬಂದು ಸೇರಿಕೊಂಡಿತೋ ಎನ್ನುವಂತೆ ಒಂದು ನೊಣ - ಮೀಡಿಯಮ್ ಸೈಜಿನದು - ಬಂದು ನಮ್ಮ ಮನೆಯನ್ನು ಸೇರಿಕೊಂಡಿಬಿಟ್ಟಿತು. ಅಡಿಗೆಮನೆ, ಬಚ್ಚಲುಮನೆ ಎಲ್ಲೆಂದರಲ್ಲಿ ಸರ್ವವ್ಯಾಪಿಯಾಗಿ ಕಂಡುಬಂದ ಈ ನೊಣವನ್ನು ನಾನು ಪೂರ್ಣ ಫ್ಯಾಮಿಲಿ ಸಮೇತವೇನಾದರೂ ಬಂದಿದೆಯೇನೋ ಎಂದು ಒಮ್ಮೆ ಸಂಶಯಪಟ್ಟೆನಾದರೂ ಸ್ವಲ್ಪ ಹತ್ತಿರದಲ್ಲಿ ಫಾಲೋ ಮಾಡಿ ನೋಡಿದಾಗ ಅದು ಒಂದೇ ನೊಣವೆಂದು ಗೊತ್ತಾಯಿತು. ಕಳೆದ ಶನಿವಾರ-ಭಾನುವಾರ ಈ ನೊಣ ಬಂದು ಹೊಕ್ಕ ಮೇಲೆ ಅದನ್ನು (ಜೀವಂತವಾಗಿ) ತೊಲಗಿಸಲು ನಾನಾ ಪ್ರಯತ್ನಗಳನ್ನು ಮಾಡಿದೆ - ಮನೆಯನ್ನು ಕತ್ತಲು ಮಾಡಿ ನೆರಳು ಬೆಳಕಿನ ಆಟ ತೋರಿಸಿದೆ, ಒಂದು ನ್ಯೂಸ್ ಪೇಪರನ್ನು ತೆಗೆದುಕೊಂಡು ಗಾಳಿ ಹಾಕಿ ಅದರ ಫ್ಲೈಟ್ ಪಾತನ್ನು ಬದಲಾಯಿಸಿ ತಲೆತಿರುಗಿಸಲು ನೋಡಿದೆ, ಊಹೂ ಯಾವುದಕ್ಕೂ ಜಗ್ಗಲಿಲ್ಲ. ಕಪ್ಪು ಬಣ್ಣದ ಈ ನೊಣ ಎಲ್ಲಿ ಬೇಕಂದರಲ್ಲಿ ಹಾರಾಡುತ್ತಾ ಕೆಲವೊಮ್ಮೆ ಗೋಡೆಯ ಬಣ್ಣದ ಹಿನ್ನೆಲೆಯಲ್ಲಿ, ಫರ್ನೀಚರ್‌ನ ಹಿಂದೆ ಮುಂದೆ ತನ್ನನ್ನು ಮರೆಸಿಕೊಂಡು ನನಗೆ ಮೋಡಿ ಹಾಕಿತ್ತು. ಅದನ್ನು ಕೊಂದು ಬಿಸಾಕುವುದಾದರೆ ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ, ಆದರೂ ಅದರ ಜೀವ ತೆಗೆಯುವ ಉಸಾಬರಿ ನನಗೇಕೆ ಎಂದು ಸುಮ್ಮನೇ ಬಿಟ್ಟೆ. 'ಅಹಿಂಸೆ ಆಚರಣೆ, ಓತಿಕ್ಯಾತಕ್ಕೆ ಕಲ್ಲು ಸಂತರ್ಪಣೆ' ಅನ್ನೋ ಹಾಗೆ ನನ್ನ ರಕ್ತ ಹೀರುವ ಸೊಳ್ಳೆಗಳಿಗೆ ಮಾತ್ರ ನಾನು ಒಂದೇ ಏಟಿಗೆ ಮೋಕ್ಷ ಕಾಣಿಸುವುದು, ಅದಿಲ್ಲವಾದರೆ ನನ್ನಂಥ ಅಹಿಂಸಾ ಪ್ರೇಮಿ ಮತ್ತೊಬ್ಬನಿಲ್ಲ!

ಈ ನೊಣ ಅಥವಾ ಸೊಳ್ಳೆಗಳು ಹಾರಾಡುವಾಗ ಅವುಗಳ ರೆಕ್ಕೆಗಳ ಬಡಿತದಿಂದಾಗಿ 'ಗುಯ್' ಶಬ್ದ ಸೃಷ್ಟಿಯಾಗುತ್ತೆ, ಆದರೆ ನನ್ನಂಥ ಟ್ಯೂಬ್‌ಲೈಟಿಗೆ ಈ ಶಬ್ದ ಅವುಗಳು ಬರೀ ನನ್ನ ಕಿವಿಯ ಹತ್ತಿರ ಬಂದಾಗ ಮಾತ್ರ ಮಾಡುತ್ತವೇನೋ ಎಂದು ಅನ್ನಿಸಿಬಿಟ್ಟಿತ್ತು. ಈ ಸೊಳ್ಳೆ-ನೊಣಗಳ ಸಹವಾಸ ನನಗೆ ಮೊದಲಿನಿಂದಲೂ ಇದ್ದದ್ದೇ, ಅಡಿಕೆ ತೋಟಗಳಿಗೆ ಹೋದವರಿಗೆ ಗೊತ್ತು, ತೋಟದೊಳಗೆ ಕಾಲಿಡುತ್ತಿದ್ದಂತೇ ನೂರಾರು ಸಾವಿರಾರು ಸೊಳ್ಳೆಗಳ ಕಾಟ ಶುರುವಾಗೋದು, ಒಮ್ಮೊಮ್ಮೆ ಕಾಲಿನ ಮೇಲೆ ಅಪ್ಪಳಿಸಿದ ಹೊಡೆತಕ್ಕೆ ಒಂದೇ ಬಾರಿಗೆ ಹತ್ತಾರು ಸೊಳ್ಳೆಗಳನ್ನು ಉರುಳಿಸಿಹಾಕಿದ್ದೂ ಇದೆ. ನಾನು ಅಹಿಂಸಾಪ್ರಿಯನಾದರೂ ನನ್ನ ರಕ್ತವನ್ನು ಇನ್ಯಾರಾದರೂ ಹೀರುತ್ತಾರೆಂಬ ವಿಷಯಕ್ಕೆ ಬಂದಾಗ ನನ್ನ ತತ್ವಗಳು ನನಗೆ ಅನ್ವಯಿಸುತ್ತಲೇ ಇರುತ್ತಿರಲಿಲ್ಲ! ಮಾನಸಗಂಗೋತ್ರಿಯಲ್ಲಿ ನಮ್ಮ ಹೊಸ ಪಿ.ಜಿ. ಹಾಸ್ಟೆಲ್ ಮತ್ತು ಜೆಸಿಇ ಕಾಲೇಜಿನ ಮಧ್ಯೆ ಇದ್ದ 'ಡೌನ್ಸ್'ಗೆ ಕಾಫಿ ಕುಡಿಯುವುದಕ್ಕೆಂದು ಹೋಗುವಾಗ ಮಧ್ಯೆ ಒಂದು ತೆಂಗಿನ ತೋಪು ಬರುತ್ತಿತ್ತು, ಅದರಲ್ಲಿ ಒಂದು ಸೀಜನ್‌ನಲ್ಲಿ ಕಪ್ಪು-ಕೆಂದು ಬಣ್ಣದ ಹುಳುಗಳು ನೆಲದಲ್ಲಿ ಹರಿದಾಡುತ್ತಿದ್ದವು. ಕಿರುಬೆರಳು ಅಥವಾ ತೋರುಬೆರಳಿನ ಗಾತ್ರದಲ್ಲಿ ಇರುತ್ತಿದ್ದ ಈ ಹುಳಗಳು ನಿಧಾನವಾಗಿ ನೆಲದ ಮೇಲೆ ಹರಿದಾಡುತ್ತಿದ್ದವು. ಕಾಫಿಗೆಂದು ಅಲೆದಾಡುತ್ತಿದ್ದ ನಮ್ಮ ಚಪ್ಪಲಿಗೆ ಎಷ್ಟೋ ಬಾರಿ ಸಿಕ್ಕಿ ಚಪ್ಪಟೆಯಾಗುತ್ತಿದ್ದವು, ಆದರೆ ನಾನು ಉಮೇಶ ಹಾಗೂ ಸುಂದರೇಶರಿಗೆ ಒಂದೇ ಒಂದು ಹುಳವನ್ನೂ ತುಳಿಯದೇ ಬರುವಂತೆ ತಾಕೀತು ಮಾಡುತ್ತಿದ್ದೆ. ನಮ್ಮ ಗುಂಪಿಗೆ ಹೊಸದಾಗಿ ಯಾರಾದರೂ ಸೇರಿಕೊಂಡರೆ ಉಮೇಶ ಅವರಿಗೆಲ್ಲರಿಗೂ ಎಚ್ಚರಿಕೆ ಕೊಡುತ್ತಿದ್ದ 'ಈ ಹುಳುಗಳನ್ನ ಮಾತ್ರ ತುಳುದು ಇವನ ಮೂಡನ್ನ ಅಪ್‌ಸೆಟ್ ಮಾತ್ರ ಮಾಡ್‌ಬೇಡ್ರ್‍ಓ...' ಎನ್ನುತ್ತಿದ್ದ. ನನ್ನ ವಾದ 'ಈ ಪ್ರಪಂಚದಲ್ಲಿ ನಮಗೆಷ್ಟು ಬದುಕುವ ಹಕ್ಕು ಇದೆಯೋ ಅವುಗಳಿಗೂ ಅಷ್ಟೇ ಇದೆ...' ಎನ್ನುವ ಸಾಲಿನಿಂದ ಶುರುವಾಗುತ್ತಿತ್ತು, ಏನೇ ಆದರೂ ತೆಂಗಿನ ತೋಪಿನಲ್ಲಿ ಆ ಹುಳುಗಳನ್ನು ತುಳಿದು ಕೊಲ್ಲಬಾರದು ಎನ್ನುವ ಅಗೋಚರ ಒಡಂಬಡಿಕೆಗೆ ನನ್ನ ಮೈಮನಗಳು ಸಹಿ ಹಾಕಿಬಿಟ್ಟಿದ್ದವು. ಈ ಅಹಿಂಸಾ ವಾದದ ಮೂಲ ಎಲ್ಲಿ ಎಂದು ಹುಡುಕುತ್ತಾ ಹೋದಂತೆಲ್ಲ ನಾನು ನನ್ನ ಬಾಲ್ಯದಲ್ಲಾದ - ಅವರಿವರು ಹೇಳಿ ಇನ್ನೂ ನೆನಪಿನಲ್ಲುಳಿದ - ಅನುಭವ ಮೂಲದಲ್ಲಿ ಕಂಡುಬರುತ್ತದೆ. ಆನವಟ್ಟಿಯಲ್ಲಿ ಶನಿವಾರ ಸಂತೆಯ ದಿನ ಒಂದೇ ನನ್ನ ಅಕ್ಕಂದಿರ ಜೊತೆಗೋ ಅಥವಾ ನನ್ನ ಅಣ್ಣನ ಜೊತೆಗೋ ನಾನೂ ಸಂತೆಗೆ ಹೋಗುವ ರೂಢಿಯನ್ನಿಟ್ಟುಕೊಂಡಿದ್ದೆ. ಆಗೆಲ್ಲ ನಾನು ಒಂದನೇ ಕ್ಲಾಸು ಮುಟ್ಟುವಷ್ಟು ದೊಡ್ಡ ಹುಡುಗನಾದರೂ ನನ್ನನ್ನು ಕಂಡಕಂಡವರೆಲ್ಲ ಎತ್ತಿಕೊಂಡು ಹೋಗುತ್ತಿದ್ದರಂತೆ. ಶನಿವಾರ ಸಂತೆಯದಿನ ಹೋದವನಿಗೆ ಅಲ್ಲಿದ್ದ ಟೈಲರ್ ಒಬ್ಬರಲ್ಲಿ ಪುಟ್ಟಯ್ಯ ಎಂಬುವವನು ನನ್ನನ್ನು ಒಂದು ದಿನ ಮಾಂಸದ ಅಂಗಡಿಗೆ ಕರೆದುಕೊಂಡು ಹೋಗಿದ್ದನಂತೆ. ಆಗ ಆನವಟ್ಟಿಯ ಸಂತೆಯ ದಿನ ಮಾಂಸ ಮಾರುವ ಅಂಗಡಿಯಲ್ಲಿ ಮೂರು ಚಿಕ್ಕ-ಚಿಕ್ಕ ಅಂಗಡಿಗಳಿದ್ದವು, ಅದರ ಮಾಲೀಕರಾಗಿ ಒಂದರಲ್ಲಿ ನಾಗೇಂದ್ರಪ್ಪ, ಮತ್ತೊಂದರಲ್ಲಿ ಜಲೀಲ ಹಾಗೂ ಕೊನೆಯದರಲ್ಲಿ ಹಸೇನಿ ಇದ್ದರು. ನಾನು ಮೊಟ್ಟ ಮೊದಲು ಕುರಿ ಮಾಂಸವನ್ನು ಅಲ್ಲಿ ಕಬ್ಬಿಣದ ಕೊಕ್ಕೆಗೆ ನೇತುಹಾಕಿ ಈ ಅಂಗಡಿಯಲ್ಲಿ ಕೆಲಸ ಮಾಡುವವರು ತಮ್ಮ ಹರಿತವಾದ ಕತ್ತಿಗಳಿಂದ (ಸತ್ತ) ಕುರಿಯ ಮಾಂಸವನ್ನು ಕತ್ತರಿಸಿ ತೂಕ ಮಾಡುವುದನ್ನು ನೋಡಿ ಕಣ್ಣಿನಲ್ಲಿ ಒಂದೇ ಸಮನೆ ನೀರನ್ನು ತಂದುಕೊಂಡು 'ಕೊಯ್ ಬೇಡ್ರೀ ರೀ, ಕೊಯ್ ಬೇಡ್ರಿ...' ಎಂದು ಬೇಡಿಕೊಂಡಿದ್ದನ್ನು ನೋಡಿ ಎಲ್ಲರೂ ಜೋರಾಗಿ ನಕ್ಕಿದ್ದರಂತೆ. ಮೊದಲು ಹೀಗೆ ನನ್ನ ಆರ್ತನಾದದ ಅನುಭವಕ್ಕೆ ಬಂದ ಪುಟ್ಟಯ್ಯ ಕೊನೆಕೊನೆಗೆ ಮಜಾ ತೆಗೆದುಕೊಳ್ಳಲು ನನ್ನನ್ನು ಅಲ್ಲಿಗೆ ಎತ್ತಿಕೊಂಡುಹೋಗುತ್ತಿದ್ದನಂತೆ, ಪ್ರತೀ ಸಾರಿಯೂ ನಾನು 'ಕೊಯ್ ಬೇಡ್ರಿ...' ಎಂದುಕೊಂಡು ಅಳುತ್ತಿದ್ದೆನಂತೆ. ಅದೇ ಸಂತೇ ಮೈದಾನದ ಹೊರವಲಯದಲ್ಲಿ ಹಂದಿಗೊಲ್ಲರು ಜೀವಂತವಾಗಿ ಒಂದು ಹಂದಿಯನ್ನು ಹಿಡಿದು, ಕೊಂದು ಅದನ್ನು ಬೆಂಕಿಯಲ್ಲಿ ಸುಟ್ಟಿದ್ದನ್ನೂ ನನ್ನ ಕಣ್ಣುಗಳಿಂದಲೇ ನೋಡಿದ್ದೇನೆ - ಹೀಗೆ ಅಲ್ಲಲ್ಲಿ ಮಾರಿಹಬ್ಬ, ಹಿರೇರ ಹಬ್ಬ ಮುಂತಾದ ದಿನಗಳಲ್ಲಿ ನೋಡಿದ ಅನೇಕ 'ಪ್ರಾಣಿಬಲಿ' ಅನುಭವಗಳೇ ನನ್ನ ಅಹಿಂಸಾವಾದಕ್ಕೆ ಮೂಲವಾಗಿದ್ದರೂ, ನನ್ನ ರಕ್ತವನ್ನು ಹೀರುವ ಯಾವ ಸೊಳ್ಳೆ, ತಿಗಣೆ, ಜಿಗಣೆಗಳಿಗೆ ನಾನು ಯಾವ ರಿಯಾಯಿತಿಯನ್ನೂ ತೋರೋದಿಲ್ಲ!

***

ಈ ದಿನ ಏನೇ ಆದರೂ ನಮ್ಮ ಮನೆಯಲ್ಲಿ ಏಳುದಿನ ಏಳುರಾತ್ರಿಗಳನ್ನು ಅತಿಥಿಯಾಗಿ ಕಳೆದ ಈ ನೊಣವನ್ನು ಜೀವಂತವಾಗಿ ಪಣತೊಟ್ಟು ಅದು ಹೋದಲೆಲ್ಲ ಹೋಗಿ ಒಂದೆರಡು ಟವೆಲುಗಳಿಂದ ಅದರ ಫ್ಲೈಟ್ ಪಾತನ್ನು ಬದಲಾಯಿಸಿ, ಮಿಕ್ಕೆಲ್ಲ ಕಿಟಕಿಗಳನ್ನು ಮುಚ್ಚಿ ಒಂದೇ ಒಂದು ಕಿಟಕಿಯನ್ನು ತೆರೆದು ಆ ಕಿಟಕಿಯ ಕಡೆಗೆ ಈ ನೊಣ ಹಾರಲಿ ಎಂದು ಗುರಿಯನ್ನಿಟ್ಟುಕೊಂಡು ಅದರ ಬೆನ್ನುಹತ್ತಿದೆ. ಮೊದಮೊದಲು 'ಇಲ್ಲಿಂದ ಹೋಗುವುದಕ್ಕೆ ಮನಸ್ಸಿಲ್ಲ' ಎಂದು ಗುಯ್ ರಾಗ ಮಾಡಿಕೊಂಡು ಮತ್ತೆ-ಮತ್ತೆ ಒಳಗೆ ಬರುತ್ತಾ ನನ್ನ ಸಂಯಮವನ್ನು ಪರೀಕ್ಷೆ ಮಾಡುವಂತೆ ಕಂಡುಬಂದರೂ ಕೊನೆಗೆ ಬ್ರಹ್ಮ ಅದರ ಆಯಸ್ಸನ್ನು ಇನ್ನೂ ಹೆಚ್ಚು ಬರೆದಿದ್ದ ಒಂದೇ ಕಾರಣಕ್ಕೆ ತನಗಿಷ್ಟವಿಲ್ಲದಿದ್ದರೂ ತೆರೆದ ಕಿಟಕಿಯಿಂದ ಹೊರಗಿನ ಪ್ರಪಂಚಕ್ಕೆ ಅದು ಹಾರಿಹೋಯಿತು. 'ಅಬ್ಬಾ ಹೋಯಿತಲ್ಲ' ಎಂದು ಉಸಿರು ಬಿಟ್ಟು ಕಿಟಕಿಯನ್ನು ಮುಚ್ಚಿ ಪರದೆಯನ್ನು ಎಳೆಯುವಾಗ ಯಾವ ಜನ್ಮದ ಋಣಾನುಬಂಧವಿದ್ದಿರಬಹುದು ಈ ನೊಣಕ್ಕೂ ನನಗೂ ಎಂಬ ಪ್ರಶ್ನೆಯೂ ಏಳುತ್ತಾ ೧೯೯೯ರಲ್ಲಿ ನನ್ನ ಸಹೋದ್ಯೋಗಿಯಾದ ಪಕ್ಕಾ ಕ್ಯಾಥೋಲಿಕ್ ಮನುಷ್ಯ ಪಿಲಿಪಿನೋ ಅಲೆಕ್ಸ್ ಪಿಂಗಾಯ್ ಅನ್ನು ನೆನಪಿಗೆ ತಂದಿತು. ಧರ್ಮ, ಆತ್ಮಗಳ ಬಗ್ಗೆ ಅಲೆಕ್ಸ್‌ಗೂ ನನಗೂ ಘಂಟೆಗಟ್ಟಲೆ ವಿಚಾರ ವಿನಿಮಯ ನಡೆದಿದ್ದರೂ ದಿನದ ಕೊನೆಯಲ್ಲಿ ಆತ ತನ್ನ ಕ್ಯಾಥೋಲಿಸಿಟಿಗೆ ಭದ್ರವಾಗಿ ಅಂಟಿಕೊಂಡುಬಿಡುತ್ತಿದ್ದುದೂ, ಇವನಿಗೆ ಮನವರಿಕೆ ಮಾಡಿಕೊಡಲೆಂದೇ ಈ ಸಂದರ್ಭದಲ್ಲಿ ಹುಟ್ಟಿದ ನನ್ನ ಒಂದು ಥಿಯರಿಯೂ ನೆನಪಿಗೆ ಬಂತು.

ನನ್ನ ಮನಸ್ಸಿನಲ್ಲಿ ಈ ಸಿದ್ಧಾಂತ ಹೇಗೆ ಬಂದಿತೆಂದು ಇನ್ನೂ ಹುಡುಕುತ್ತಿದ್ದೇನೆ ಆದರೂ ಅದನ್ನು ಎಲ್ಲಾದರೂ ಒಂದು ಕಡೆ ಬರೆದಿಟ್ಟರೆ ಒಳ್ಳೆಯದು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ - ಈ ನೊಣದ ಸಹವಾಸ ಅದಕ್ಕೆ ಸಹಾಯ ಮಾಡಿತು. ನನ್ನ ಪ್ರಕಾರ ಪ್ರಪಂಚದಲ್ಲಿ ಇರುವ ಆತ್ಮಗಳು ಕೆಲವೇ ಕೆಲವು (ಫೈನೈಟ್), ಅಂತೆಯೇ ಪ್ರಪಂಚದಲ್ಲಿರೋ ಮೂಲವಸ್ತುಗಳೂ (ಎಲಿಮೆಂಟ್ಸ್) ಫೈನೈಟ್. ಅಂದರೆ ಟ್ರಿಲಿಯನ್‌ಗಟ್ಟಲೆ ಇರೋ ಜೀವಸಂಕುಲದಲ್ಲಿ ಕೇವಲ ಆರು ಬಿಲಿಯನ್ ಮಾತ್ರ ಮನುಷ್ಯರಿರೋದು, ಇನ್ನುಳಿದವೆಲ್ಲ ಏಕಕೋಶ ಭಿತ್ತಿಗಳಿಂದ ಹಿಡಿದು ಥರಾವರಿ ಜೀವಜಂತುಗಳು. ಕಶೇರುಕ-ಅಕಶೇರುಕ, ಪ್ರಾಣಿ-ಸಸ್ಯ, ಬದುಕಿಯೂ ಸತ್ತ, ಸತ್ತೂ ಬದುಕಿದ ಜೀವಿಗಳನ್ನೆಲ್ಲ ಒಂದು ಪಟ್ಟಿ ಮಾಡಿದರೆ, ಪ್ರತಿಯೊಂದು ಜೀವವಿದ್ದಲ್ಲಿ ಒಂದೊಂದು ಆತ್ಮವಿದೆಯೆನ್ನುವುದಾದರೆ, ನನಗೊಂದು ಆತ್ಮವಿದ್ದ ಹಾಗೆ ಈ ನೊಣಕ್ಕೂ ಇರಬೇಕು ಹಾಗೇ ಪ್ರತಿಯೊಂದು ಪ್ರಾಣಿ, ಪಕ್ಷಿ, ಸಸ್ಯಗಳಿಗೂ ಇರಬೇಕು. ಒಂದು ಜೀವಿ ಸತ್ತನಂತರ ಆತ್ಮ ಲಿಬರೇಟ್ ಆಗಿ ಅದೇ ತಾನೇ ಮತ್ತೆಲ್ಲೋ ಹುಟ್ಟುವ ಮತ್ತೊಂದು ಜೀವವನ್ನು ಸೇರಿಕೊಂಡುಬಿಡುತ್ತದೆ. ಎಲ್ಲಾ ಜೀವಿಗಳಲ್ಲಿ ಆತ್ಮ ಅವುಗಳ ಜೀವಿತವನ್ನಾಧರಿಸಿ ಒಂದು ಸೆಕೆಂಡಿನಿಂದ ಸಾವಿರಾರು ವರ್ಷಗಳವರೆಗೂ ಇರಬಹುದು, ಈ ಆತ್ಮದ ಒಂದೊಂದು ಲೈಫ್‌ಸೈಕಲ್‌ನಲ್ಲಿ ಅದಕ್ಕೆ ಅದರದೇ ಆದ ಸಂಸ್ಕಾರಗಳಿಂದ ಆರಂಭವಾಗಿ ಆ ಸಂಸ್ಕಾರಗಳು ಪ್ರತಿಬದುಕಿನಲ್ಲಿ ಬದಲಾವಣೆಗೊಂಡು ಹೀಗೆ ಬದಲಾವಣೆಗೊಂಡ ಸಂಸ್ಕಾರಗಳನ್ನೊಳಗೊಂಡ ಆತ್ಮ ಮತ್ತೆಲ್ಲೋ ಹುಟ್ಟುವ ಜೀವಿಯೊಳಗೆ ಸೇರಿಕೊಂಡುಬಿಡುವುದು. ಆದರೆ ಈ ಒಟ್ಟು ಆತ್ಮಗಳ ಮೊತ್ತ ಹಾಗೂ ಈ ಆತ್ಮಗಳು ಯಾವತ್ತೂ ಬಂದು ಸೇರಿಕೊಳ್ಳುವ ಜೀವಿಗಳಲ್ಲಡಗಿದ ಜೀವಕೋಶಗಳ ಮೂಲವಸ್ತುಗಳ ಮೊತ್ತ ಯಾವಾಗಲೂ ಒಂದೇ. ಅಂದರೆ ಈ ಪ್ರಪಂಚ (ಅಥವಾ ವಿಶ್ವ)ದಲ್ಲಿ ೫೦೦ ಜೀವಿಗಳಿದ್ದರೆ, ಆ ಜೀವಿಗಳಿಗೆ ಐನೂರು ಆತ್ಮಗಳಿರಬೇಕು, ಹೀಗೆ ಆತ್ಮ ಸೇರಿಕೊಂಡ ಆ ಜೀವಿಯ ಭೌತಿಕ ಶರೀರದ ಮೂಲವಸ್ತು (ಕೆಮಿಕಲ್ಸ್ ರೂಪದಲ್ಲಿರುವ)ಗಳ ಒಟ್ಟು ಮೊತ್ತ ಒಂದೇ. ಮಾನವ ಜನ್ಮ ದೊಡ್ಡದು ಎಂದು ನನಗನ್ನಿಸುವುದಿಲ್ಲ, ಜೀವಿಗಳ ದೇಹಗಳ ನಡುವೆ ವಿನಿಮಯವಾಗುವ ಈ ಆತ್ಮಗಳ ವಿಲೇವಾರಿಯ ಹಿಂದಿನ ಆಲ್ಗೋರಿದಮ್ ನನಗೆ ಗೊತ್ತಿಲ್ಲ! ನನ್ನ ಪ್ರಕಾರ ಆತ್ಮಕ್ಕೆ 'ಅಪ್‌ವರ್ಡ್' ಮೊಬಿಲಿಟಿ ಎನ್ನುವುದೇನೂ ಇಲ್ಲ, ಅದು ಹಾರಿಝಾಂಟಲಿ ಎಲ್ಲಿಬೇಕಾದಲ್ಲಿ ಸ್ವೇಚ್ಛೆಯಿಂದ ತಿರುಗಾಡಬಲ್ಲದು. ಇದಕ್ಕೆ ಪುಷ್ಠಿಕೊಡುವ ಮತ್ತೂ ಒಂದು ಅಂಶವೆಂದರೆ ಮಾನವ ಇನ್ನೂ ಎಕ್ಸ್‌ಪ್ಲೋರ್ ಮಾಡಿರದ ಅವಕಾಶಗಳು (ಸ್ಪೇಸ್, ಸಾಗರದ ಆಳ ಅನಂತಗಳು ಇತ್ಯಾದಿ) - ಯಾರಿಗೆ ಗೊತ್ತು ಮಾನವನೇ ಮಿಗಿಲೆಂದು? ಒಂದು ಜೇನುಗೂಡಿನ ರಹಸ್ಯವನ್ನು ಅರಿತುಕೊಂಡರೆ ಅದರ ಮುಂದೆ ನಮ್ಮ ಶ್ರಮ ಏನೇನೂ ಅನ್ನಿಸುವುದಿಲ್ಲ - ಉದಾಹರಣೆಗೆ ಗೆದ್ದಲು ಹುಳುಗಳು ಸುವ್ಯವಸ್ಥಿತವಾಗಿ ಕಟ್ಟುವ ಹುತ್ತದಷ್ಟು ದೊಡ್ಡದಾದ ಕಟ್ಟಡವನ್ನು ನಾವೇನಾದರೂ ಕಟ್ಟಬೇಕೆಂದರೆ ಅದು ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಇಪತ್ತೈದು ಪಟ್ಟು ಎತ್ತರವಾಗಿರುತ್ತದೆಯಂತೆ! ಈ ನನ್ನ ಥಿಯರಿಯಲ್ಲಿ ದೇವರನ್ನು ಎಲ್ಲಿ ಬೇಕಾದರೂ ತರಬಹುದು, ಬಿಡಬಹುದು! ಆದರೆ ನನ್ನಷ್ಟೇ ಪ್ರಬುದ್ಧನಾದ ಅಲೆಕ್ಸ್ ಪಿಂಗಾಯ್‌ಗೆ ನನ್ನ ವಾದ ಅಷ್ಟೊಂದು ರುಚಿಸುತ್ತಿರಲಿಲ್ಲ, ಎದ್ದೂ-ಬಿದ್ದು ಕ್ರಿಶ್ಚಿಯಾನಿಟಿಗೆ ತಗಲಿಕೊಂಡ ಅವನ ದಪ್ಪ ಚರ್ಮವೂ ಕಾರಣವಿದ್ದಿರಬಹುದು.

ನಮ್ಮ ಮನೆಯನ್ನು ಸೇರಿ ಒಂದು ವಾರ ಯಾವುದೇ ಬಾಡಿಗೆಯನ್ನೂ ಕೊಡದೆ ಒಂದು ಹಾಯಾಗಿ ಓಡಾಡಿಕೊಂಡಿದ್ದ ಈ ನೊಣದ ಆತ್ಮಕ್ಕೂ ನನ್ನ ಆತ್ಮಕ್ಕೂ ಯಾವ ಜನ್ಮದ ನಂಟೋ ಯಾರಿಗೆ ಗೊತ್ತು? ಅದರ ಜೀವವನ್ನು ನೋಯಿಸಬಾರದೆನ್ನುವ ನನ್ನ 'ಜಾಣತನ'ದ ಪ್ರತಿಕ್ರಿಯೆ ಆ ನೊಣಕ್ಕೆ ತನ್ನ ಜೀವಸಂಚಕಾರಕ್ಕೆ ಬಂದಂತೆ ಕಂಡಿರಲೂಬಹುದು. ಈ ನೊಣದಿಂದ ನನಗೇನೂ ತೊಂದರೆಯಾಗದಿರುವಂತೆ ನಾನು ಜಾಗೃತನಾಗಿದ್ದಂತೆ ಅದೂ ನನ್ನಿಂದ ಬದುಕುಳಿಯಲು ಒದ್ಡಾಡಿಹೋಗಿರಬಹುದು, ಕೊನೆಗೆ ಬೇರೇನು ಇಲ್ಲವೆಂದರೂ ಈ ನೊಣ ಸುಖವಾಗಿ ನಮ್ಮ ಮನೆಯನ್ನು ತೊರೆದದ್ದು ನನಗೆ ಸಮಾಧಾನ ನೀಡಿತು, ಆದರೆ ಕರೆಯದೇ ಬಂದು ಒಂದು ವಾರ ಠಿಕಾಣಿ ಹೂಡಿದ ನೊಣದ ಮನಸ್ಸಿನಲ್ಲಿ, ಆತ್ಮದ ಹಿಂದೆ ಯಾವ ಹುನ್ನಾರವಿತ್ತೋ ಯಾರು ಬಲ್ಲರು?

Saturday, June 10, 2006

ಮಾರ್ಗದ ಮಧ್ಯದಲ್ಲಿ breakdown ಆದ ಪ್ರಸಂಗ

ನಿನ್ನೆ ಆಫೀಸಿನಿಂದ ಮನೆಗೆ ಬರುತ್ತಿರುವಾಗ ಈ ವಾರ ಶುರು ಮಾಡಿದ ಹೊಸ ಕೆಲಸದ ವಿಷಯಗಳು, ಹಳೆಯದ್ದನ್ನು ಬೇಕಾದಷ್ಟು ಓದಬೇಕಾಗಿ ಬಿದ್ದುಕೊಂಡಿರೋ ಬ್ಯಾಕ್‌ಲಾಗ್, ಹನೂರು ಘಟನೆಯನ್ನು ಏಕಾದರೂ ಪ್ರಜಾವಾಣಿಯಲ್ಲಿ ಓದಿದೆನೋ, ಅದಕ್ಕೆ ಪ್ರತಿಕ್ರಿಯೆಯನ್ನು ಏಕಾದರೂ ತೋರಿದೆನೋ ಅನ್ನುವ ಪದೇ-ಪದೇ ರಿಯರ್‌ವ್ಯೂವ್ ಮಿರರ್ ನಲ್ಲಿ ಇಣುಕುವ ಪ್ರಶ್ನೆಹಾಕುವ ಮುಖಗಳು, ಸದ್ಯ ವಾರಾಂತ್ಯ ಬಂತಲ್ಲ ಅನ್ನೋ ಸಮಾಧಾನ ಇವೆಲ್ಲವೂ ನನ್ನ ಮನಸ್ಸಿನಲ್ಲಿ ಸುತ್ತಾಡುತ್ತಿದ್ದವು. (ಸದ್ಯ, ಈ ರಿಯರ್ ವ್ಯೂ ಮಿರರ್ ಅನ್ನು ಚಿಕ್ಕದಾಗಿ ಮಾಡಿಟ್ಟಿದ್ದಾರೆ, ಒಂದು ವೇಳೆ ಅದೇನಾದರೂ ಇನ್ನೂ ದೊಡ್ಡದಿದ್ದರೆ ಎಂದು ಹೆದರಿಕೆಯಾಗುತ್ತದೆ, ಆದರೂ get off the rear view mirror ಎನ್ನುವುದು ಎಲ್ಲರಿಗಿಂತಲೂ ಹೆಚ್ಚು ನನಗೆ ಅನ್ವಯವಾಗುತ್ತದೆ.)

ನಾನು ಒಂದು ವಾರಕ್ಕೆ ಒಂದೇ ಬದಲಾವಣೆಯನ್ನು ಮಾಡಿಕೊಂಡಿದ್ದರೆ ಚೆನ್ನಾಗಿತ್ತು, ಆದರೆ ಈ ವಾರ ಹೊಸ ಕೆಲಸದ ಜೊತೆಗೆ ಒಂದು ನನಗೆ ಹೊಸದಾದ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನೂ ಕೂಡ ಚಲಾಯಿಸತೊಡಗಿದ್ದು ವಾರ ಪೂರ್ತಿ ಎಲ್ಲೂ ತೊಂದರೆ ಕೊಡದಿದ್ದರೂ ನಿನ್ನೆ ಸಂಜೆ ಸರಿಯಾಗಿ ಕೈಕೊಟ್ಟಿತು. ನಿನ್ನೆ ಆಫೀಸಿನಿಂದ ದಾರಿಯಲ್ಲಿ ಸಿಗುವ ಡ್ರೈ ಕ್ಲೀನರ್ ಹತ್ತಿರ ಹೋಗಿ ಬಟ್ಟೆಯನ್ನು ಹಿಂದಕ್ಕೆ ತರೋಣವೆಂದು ಯೋಚಿಸಿದ್ದು ನನ್ನನ್ನು ಕಷ್ಟಕ್ಕೀಡು ಮಾಡಿತು. ಈ ಹಳೆಯ ಕಾರಿನಲ್ಲಿ ಸ್ವಲ್ಪ ಸ್ಟಾರ್ಟಿಂಗ್ ಟ್ರಬಲ್ ಇದ್ದಿದ್ದು ನನ್ನ ಅರಿವಿಗೆ ಬಂದಿದ್ದರೂ ಶೋ ಸ್ಟಾಪರ್ ಎನ್ನಿಸಿರಲಿಲ್ಲ. ಬೆಳಿಗ್ಗೆ ಮನೆಯಿಂದ ಹೊರಟಾಗ ಚೆನ್ನಾಗಿದ್ದ ಕಾರು, ಸಂಜೆ ಆಫೀಸಿನಿಂದ ಸುಲಭವಾಗೇ ಸ್ಟಾರ್ಟ್ ಆಗುತ್ತಿದ್ದ ಕಾರು ಶುಕ್ರವಾರ ಸಂಜೆ ಡ್ರೈ ಕ್ಲೀನರ್ ಅಂಗಡಿಯ ಮುಂದೆಯೇ ಏನಾದರೂ ಸ್ಟಾರ್ಟ್ ಆಗಲೊಲ್ಲದು. ಈಗಾಗುತ್ತೆ, ಇನ್ನೊಂದು ಘಳಿಗೆಯಲ್ಲಾಗುತ್ತೆ ಎಂದು ಪದೇ-ಪದೇ ಪ್ರಯತ್ನಿಸಿದ ನನ್ನ ಪ್ರಯತ್ನಗಳೆಲ್ಲ ವ್ಯರ್ಥವಾದವು. ಬಹಳ ಬೇಸರದಿಂದ ಸ್ಟಿಯರಿಂಗ್ ವೀಲನ್ನು ಹಿಡಿದು ಸ್ವಲ್ಪ ತಿರುಗಿಸಿದೆನೆಂದು ಅದೂ ಕೂಡ ಲಾಕ್ ಆಯಿತು, ಇನ್ನೇನೂ ಮಾಡೋದಕ್ಕೆ ವಿಧಿ ಕಾಣದೇ ಟ್ರಿಪಲ್ ಎ.ಗೆ ಫೋನ್ ಮಾಡಿದರೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ನನ್ನನ್ನು ಐದು ನಿಮಿಷಗಳಿಗಿಂತ ಹೆಚ್ಚು ಸಮಯ ಹೋಲ್ಡ್‌ನಲ್ಲಿ ಇಟ್ಟ ಆ ಕಡೆಯ ಕಸ್ಟಮರ್ ಸರ್ವೀಸ್ ರೆಪ್ ಮೇಲೂ ಒಮ್ಮೆ ಸಿಟ್ಟು ಬಂತು. ನನ್ನ ಹಣೇಬರಕ್ಕೆ ನಾನೇ ಜವಾಬ್ದಾರ ಎಂದುಕೊಂಡು ಟ್ರಿಪಲ್ ಎ. ಕಾಲನ್ನು ಡಿಸ್‌ಕನೆಕ್ಟ್ ಮಾಡಿ ಅದೇನಾಗಿದೆಯೋ ನೋಡಿಯೇ ಬಿಡುತ್ತೇನೆ ಎಂದು ತೋಳನ್ನು ಮೇಲೇರಿಸಿದೆ.

ಇದು ನಿಸ್ಸಾನ್ ಮ್ಯಾಕ್ಸಿಮಾ ಕಾರು, ೧೯೯೫ ರ ಮಾಡೆಲ್, ೧೭೨,೦೦೦ ಸಾವಿರಕ್ಕೂ ಹೆಚ್ಚು ಮೈಲು ಓಡಿದ್ದರೂ ಟೆಸ್ಟ್ ಡ್ರೈವಿನಲ್ಲಿ ನನಗೆ ಎಲ್ಲಾ ಥರದ ಭರವಸೆ ಕೊಟ್ಟಿದ್ದರಿಂದ ಹಿಂದೂ-ಮುಂದೆ ನೋಡದೆ ತೆಗೆದುಕೊಂಡೆ (ಈ ಕಾರನ್ನು ನನಗೆ ಮಾರಿದವರು ಮತ್ತೊಬ್ಬ ಕನ್ನಡಿಗರು, ಅವರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ). ಹೀಗೆ ಅಪರೂಪಕ್ಕೊಮ್ಮೆ ಇಂಜಿನ್ ಸ್ಟಾರ್ಟ್ ಆಗಲು ಕಷ್ಟಕೊಡುತ್ತಿದ್ದುದನ್ನು ಅವರು ಮೊದಲೇ ತಿಳಿಸಿದ್ದರಿಂದ ಇದರಲ್ಲಿ ಅವರದ್ದೇನೂ ತಪ್ಪಿಲ್ಲ. ಕಳೆದ ಶನಿವಾರ ರಾತ್ರಿ ಕಾರನ್ನು ತೆಗೆದುಕೊಂಡು, ಸೋಮವಾರ ಸಂಜೆ ಅಫಿಷಿಯಲ್ ಆಗಿ ನನ್ನ ಹೆಸರಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವವರೆಗೆ ಆ ಕಾರನ್ನು ಓಡಿಸುವುದು ಅಷ್ಟೊಂದು ಸರಿ ಎನಿಸಲಿಲ್ಲ - ಇನ್ಸೂರೆನ್ಸ್ ಕಂಪನಿಯವರು ಓಡಿಸಬಹುದು ಎಂದಿದ್ದರೂ, ಆ ಕಾರನ್ನು ಓಡಿಸಿ ಏನಾದರೂ ಹೆಚ್ಚೂ ಕಡಿಮೆ ಆದರೆ ಆ ಕಷ್ಟ ಯಾರಿಗೆ ಬೇಕು ಎಂದು ಸುಮ್ಮನೇ ಇದ್ದೆ. ಸರಿ, ಸೋಮವಾರ ಸಂಜೆ ಈ ಕಾರನ್ನು ನನ್ನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದೆನಾದರೂ ಸಂಜೆ ಐದೂವರೆಗೆಲ್ಲ ತನ್ನ ಅಂಗಡಿಯನ್ನು ಕ್ಲೋಸ್ ಮಾಡುವ ನನಗೆ ಗೊತ್ತಿರುವ ಮೆಕ್ಯಾನಿಕ್ ಹ್ಯಾರಿಯನ್ನು ನೋಡಲು ಶನಿವಾರದವರೆಗೆ ಕಾಯಬೇಕಾಗುತ್ತದೆಯೆಲ್ಲಾ, ಅಲ್ಲಿಯವರೆಗೆ ಈ ಕಾರು ಹೇಗೋ ಏನೋ ಎಂದು ಅಳುಕಾಯಿತು. ಆದರೂ ನಿನ್ನೆ ಸಂಜೆ ಆಫೀಸಿನಿಂದಲೇ ಹ್ಯಾರಿಗೆ ಶನಿವಾರ ಬೆಳಿಗ್ಗೆ ಎಂಟು ಘಂಟೆಗೆಲ್ಲಾ ಬಂದು ಬಿಡುತ್ತೇನೆ, ಕಾರನ್ನು ಸರಿ ಮಾಡಿಕೊಡು ಎಂದು ನೆನಪಿಸಿದ್ದೆ. ನನಗೆ ಆಪೀಸಿನಿಂದ ಮನೆಗೆ ೩೩ ಮೈಲು ಉದ್ದದ ಪ್ರಯಾಣವಿದೆ, ನನ್ನ ಸ್ನೇಹಿತ ಗಾರ್‌ಫೀಲ್ಡ್ 'ಹುಷಾರಾಗಿರು' ಎಂದೂ ಸಹ ಹೇಳಿದ್ದ. ಆದರೆ ದೇವರ ದಯದಿಂದ ಶುಕ್ರವಾರ ಸಂಜೆಯವರೆಗೂ ಯಾವ ತೊಂದರೆಯೂ ಆಗಲಿಲ್ಲ.

ಈ ಟ್ರಿಪಲ್ ಎ. ಅವರು ಸಹಾಯ ಮಾಡಿದರೆಷ್ಟು ಬಿಟ್ಟರೆಷ್ಟು ಎಂದು ಬೈದುಕೊಂಡು ವಿಷಯಗಳನ್ನು ನನ್ನ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ರಾತ್ರಿ ಒಂಭತ್ತು ಘಂಟೆಯಾಗಿ ಹೋಗಿತ್ತು. ನಾನೇನೂ ಯಾವ ಮೆಕ್ಯಾನಿಕ್ಕೂ ಅಲ್ಲ, ಆದರೆ ಒಂದು ಕೈ ನೋಡೋಣವೆಂದುಕೊಂಡು ಸ್ಟಿಯರಿಂಗ್ ವ್ಹೀಲ್ ಲಾಕ್ ಆಗಿದ್ದನ್ನು ಪದೇ-ಪದೇ ತಿರುಗಿಸಿ ನೋಡಿದೆ, ಅದು ಅಲುಗಾಡಲೂ ಇಲ್ಲ. ಕೊನೆಗೆ ಅದೇನು ಹೊಳೆಯಿತೋ ಏನೋ, ಕೀಯನ್ನು ಇಗ್ನಿಷನ್ನಲ್ಲಿಟ್ಟು, ಇಂಜಿನ್ ಕ್ರ್ಯಾಂಕ್ ಮಾಡದೇ ಸ್ಟಿಯರಿಂಗ್ ವ್ಹೀಲನ್ನು ತಿರುಗಿಸಿದಾಗ ಅದು ಮೊದಲಿನ ಸ್ಥಿತಿಗೆ ಬಂದಿದ್ದರಿಂದ ಸ್ವಲ್ಪ ಸಮಾಧಾನವಾಯಿತು. ಆದರೆ ಕಾರು ಶುರುವಾಗದಿರುವ ಮುಖ್ಯ ಸಮಸ್ಯೆ ಇನ್ನೂ ಹಾಗೇ ಉಳಿಯಿತು - ಕೀ ಇಗ್ನಿಷನ್ನಲ್ಲಿರುವಂತೆಯೇ ಅಲ್ಲಿಯವರೆಗೂ ಲಾಕ್ ಆಗಿದ್ದ ಗಿಯರ್ ಸ್ಟಿಕ್ಕನ್ನು ಆಕಡೆ-ಈಕಡೆ ಅಲುಗಾಡಿಸಿ ನ್ಯೂಟ್ರಲ್‌ಗೆ ತಂದೆ, ಕೊನೆಗೆ ಡ್ರೈವರ್ ಬಾಗಿಲನ್ನು ಓಪನ್ನಿಟ್ಟು ನಮ್ಮ ಊರುಗಳಲ್ಲಿ ಅಟೋರಿಕ್ಷಾಗಳನ್ನು ಡ್ರೈವರುಗಳು ತಳ್ಳಿಕೊಂಡು ನಡೆಯುವ ಹಾಗೆ ಪಾರ್ಕಿಂಗ್ ಲಾಟಿನಲ್ಲೇ ಕಾರನ್ನು ಒಂದು ಅಡಿ ಹಿಂದೇ-ಮುಂದೇ ಓಡಿಸಿದೆ, ನನ್ನ ಪ್ರಕಾರ ಆ ಚಾಲನೆಯಿಂದ ಕೊನೇಪಕ್ಷ ಲಾಕ್ ಆದ ಬ್ರೇಕ್ ಪೆಡಲ್ ಆದರೂ ಸರಿಯಾದೀತು, ಮುಂದೆ ಗಿಯರ್ ಸ್ಟಿಕ್ ಅನ್ನು ಪಾರ್ಕಿಂಗ್‌ಗೆ ಹಾಕಿ ಇಂಜಿನ್ ಶುರುಮಾಡಿದರೆ ಆದೀತು ಎನ್ನುವ ಹುಂಬ ನಂಬಿಕೆ ಬಲವಾಗತೊಡಗಿತು. ಅದೇ ಡ್ರೈ ಕ್ಲೀನರ್ ಅಂಗಡಿಗೆ ಬಂದು ಹೋಗುತ್ತಿದ್ದ ಗಿರಾಕಿಗಳು ನನ್ನನ್ನು ನೋಡಿ ತಮ್ಮ ಮುಖದಲ್ಲಿ ಪ್ರಶ್ನೆ-ಆಶ್ಚರ್ಯಗಳ ಗೆರೆಯನ್ನು ವ್ಯಕ್ತ ಪಡಿಸುತ್ತಿದ್ದರೂ ಅವರನ್ನು ಸಹಾಯಕ್ಕೆ ಕೇಳುವ ಗೋಜಿಗೆ ನಾನು ಹೋಗಲಿಲ್ಲ, ಅವರು ಏನಾಗಿದೆ ಎಂದು ಕೇಳಲಿಲ್ಲ.

ಏನಾಶ್ಚರ್ಯ, ಹಾಗೆ ನಾನು ಕಾರನ್ನು ಪಾರ್ಕಿಂಗ್ ಗಿಯರ್‌ಗೆ ತಂದು ಇಂಜಿನ್ ಶುರುಮಾಡಿದ ಮೊದಲ ಯತ್ನದಲ್ಲೇ ಇಂಜಿನ್ ಆನ್ ಆಗಿ ಈಗಾದರೂ ಮನೆಗೆ ಹೋಗುತ್ತೇನಲ್ಲಾ ಎಂದು ಬಹಳ ಖುಷಿಯಾಯಿತು. ಸದ್ಯ, ಆ ತ್ರಿಪಲ್ ಎ. ನವರು ಬರುತ್ತಾರೆ ಎಂದು ಕಾದಿದ್ದರೆ ಇನ್ನೊಂದು ಘಂಟೆಯಾದರೂ ಅಲ್ಲೇ ಒದ್ದಾಡಬೇಕಿತ್ತು ಎಂದು ಅವರನ್ನು ಮಧ್ಯದಲ್ಲಿಯೇ ತುಂಡುಮಾಡಿದ ನನ್ನ ನಿರ್ಧಾರಕ್ಕೆ ಒಳಗೊಳಗೆ ಮೆಚ್ಚುಗೆಯೂ, ನಾನು ಹಾಗೆ ಮಾಡಿದ್ದು ಮೂರ್ಖತನವೂ ಎನ್ನಿಸಿತು. ಮನೆಗೆ ಬರುವಾಗೆಲ್ಲ ಸುಮಾರು ಹತ್ತು ಘಂಟೆಯ ಹತ್ತಿರವಾಗಿತ್ತು, ನನ್ನ ಮಗಳು ಅದ್ಯಾವಗಲೋ ನಿದ್ರೆಗೆ ಶರಣುಹೋಗಿದ್ದಳು. ಡ್ರೈ ಕ್ಲೀನರ್‌ನಿಂದ ತಂದ ಬಟ್ಟೆಗಳನ್ನು ಇಡಬೇಕಾದ ಸ್ಥಳದಲ್ಲಿಟ್ಟು, ಕೈ ಕಾಲು ಮುಖ ತೊಳೆದುಕೊಂಡು, ಡಿ.ವಿ.ಆರ್.ನಲ್ಲಿ ರೇಕಾರ್ಡ್ ಆಗಿದ್ದ ನೈಟ್ಲೀ ಬ್ಯುಸಿನೆಸ್ ರಿಪೋರ್ಟನ್ನು ನೋಡುತ್ತಾ ಊಟ ಮಾಡಿ ನೀರುಕುಡಿಯುವಷ್ಟರಲ್ಲಿ ವಾರದ ನಿದ್ದೆಯಲ್ಲಾ ಒಮ್ಮೆಲೇ ಕಣ್ಣಿಗೆ ಹತ್ತಿಕೊಂಡಂತೆ ಕಣ್ಣು ರೆಪ್ಪೆಗಳು ತಮ್ಮ ಮೇಲೆ ಇಟ್ಟಿಗೆಯನ್ನು ಹೊತ್ತಿವೆಯೇನೋ ಎನ್ನುವಂತೆ ಭಾರವಾದವು. ಮೇಲೆ ಹೋಗಿ ಹಾಸಿಗೆಯ ಮೇಲೆ ಮಲಗಲೂ ಸೋಮಾರಿಯಾದವನನ್ನು ನನ್ನ ಹೆಂಡತಿ ಸುಮ್ಮನೇ ಹಾಗೇ ಬಿಟ್ಟಿದ್ದರಿಂದ ಸೋಫಾದಲ್ಲಿಯೇ ಕಣ್ಣುಮುಚ್ಚಿ ಕಣ್ಣು ತೆರೆಯುವಂತಹ ಸುಖ ನಿದ್ರೆಯನ್ನು ಮುಗಿಸಿ ನೋಡುವುದರೊಳಗೆ ಹಿಂದಿನ ದಿನವೇ ಬ್ಯಾಟರಿ ಬದಲಾಯಿಸಿದ ರಘುವಿನ ಗಡಿಯಾರ ಹಾಗೂ ಕಾಮ್‌ಕ್ಯಾಸ್ಟಿನ ಡಿವಿಆರ್ ಎರಡರಲ್ಲೂ ರಾತ್ರಿ ಒಂದು ಘಂಟೆಯ ಹೊತ್ತಾಗಿಹೋಗಿತ್ತು! ಮತ್ತೆ ಎದ್ದು ಸ್ವಲ್ಪ ನೀರು ಕುಡಿದು ಮೇಲೆ ಹೋಗಿ ಈ ಬಾರಿ ಸರಿಯಾಗಿ ಮಲಗಿದವನಿಗೆ ಮತ್ತೆ ಎಚ್ಚರವಾದದ್ದು ಬೆಳಿಗ್ಗೆ ಐದೂವರೆಯ ನಂತರವೇ.

***

ಕಾಕತಾಳೀಯವೋ ಎಂಬಂತೆ ನಾನು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾರಾಗಿದ್ದೇನೆ, ಕೆಲವೊಮ್ಮೆ ಊಹಿಗೆ ನಿಲುಕದ ಮೂಲಗಳಿಂದ ಸಹಾಯವೂ ದೊರೆಯುತ್ತದೆ. ನಿನ್ನೆಯ ಘಟನೆ ದೊಡ್ಡ ವಿಷಯವೇನಲ್ಲ, ಆದರೂ ಒಂದು ವ್ವವಸ್ಥಿತವಾದ ಕಾರು ದಿನನಿತ್ಯದಲ್ಲಿ ಎಷ್ಟು ಮುಖ್ಯ ಎನ್ನುವ ಪಾಠವನ್ನು ಈ ರೀತಿ ಕಲಿತುಕೊಂಡಿದ್ದೇನೆ.

ಈ ಬೆಳಿಗ್ಗೆ ಎದ್ದು ಓದುವ ಬ್ಯಾಕ್‌ಲಾಗನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದೇನೆ, ಎಲ್ಲಕ್ಕಿಂತ ಮುಖ್ಯವಾಗಿ ಯಾರನ್ನು ಬಿಟ್ಟರೂ ಹ್ಯಾರಿಯನ್ನು ನೋಡದೇ ಇರಬಾರದು ಎಂದು ಇನ್ನು ಕೆಲವೇ ನಿಮಿಷಗಳಲ್ಲಿ ಅವನ ಮುಂದೆ ಹಾಜರಾಗುವ ಸಿದ್ಧತೆಯನ್ನು ನಡೆಸತೊಡಗುತ್ತೇನೆ.

Thursday, June 08, 2006

ಚಾಟ್ ವಿಂಡೋನಲ್ಲಿ ಜೀವಂತವಾಗಿರಬಯಸುವ ಸಂಬಂಧಗಳು

ಇತ್ತೀಚೆಗಂತೂ ವೈಯುಕ್ತಿಕವಾಗಿಯೂ ಹಾಗೂ ಅಫೀಸಿನ ಕೆಲಸಕ್ಕೆ ಸಂಬಂಧಿಸಿದಂತೆಯೂ ಮಾಡುವ ಮಾತುಕತೆಯ ಮುಖ್ಯ ಅಂಗವಾಗಿ ಇನ್ಸ್ಟಂಟಂಟ್ ಮೆಸ್ಸೇಜುಗಳು ಹೆಚ್ಚಾಗಿವೆಯೇನೋ ಎನ್ನಿಸಿ ಬೇರೆ ಎಲ್ಲ ಕಮ್ಮ್ಯೂನಿಕೇಷನ್ ಡಿವೈಸ್‌ಗಳಿಗಿಂತ ಅದೇ ಮುಖ್ಯವಾಗಿ ಕಂಡುಬರುತ್ತಿದೆ. ಈ ಚಿಕ್ಕ ಚಿಕ್ಕ ಮೆಸ್ಸೇಜ್ ವಿಂಡೋಗಳಲ್ಲಿ ತೆರೆದುಕೊಳ್ಳುವ ಸಂಬಂಧಗಳು, ಅವುಗಳು ಬೆಳೆಯುವ ಬಗೆ, ಅವುಗಳನ್ನು ನಿಭಾಯಿಸುವ ಜಾಣತನ ಇವುಗಳೆಲ್ಲವೂ ನನ್ನೊಬ್ಬನ ಸವಾಲುಗಳು ಮಾತ್ರವಲ್ಲ, ಹೆಚ್ಚೂಕಡಿಮೆ ಎಲ್ಲರದ್ದೂ ಆಗಿದ್ದರಿಂದ ಈ ಕುರಿತು ಬರೆಯೋಣವೆಂದುಕೊಂಡೆ.

ಉಳಿದ ಆಫೀಸುಗಳಲ್ಲೂ ಹೀಗೆ ಇರಬಹುದು, ನಮ್ಮ ಆಫೀಸಿನಲ್ಲಂತೂ ಈ ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕವೇ ಜನರ ನಡುವೆ ವಿಚಾರ ವಿನಿಮಯಗಳು ಹೆಚ್ಚು ಆಗೋದು. ಮುಂಜಾನೆ ಒಮ್ಮೆ ಲಾಗಿನ್ ಆದರೆ ಆಯಿತು, ಮೇಲಿಂದ ಮೇಲೆ ಬಂದು ಹೋಗುವ ಈ ಮೆಸ್ಸೆಜುಗಳಿಗೆ ಬಿಡುವೆಂಬುದಿಲ್ಲ. ಇಂತಹ ಮೆಸ್ಸೇಜುಗಳನ್ನು ಹೊತ್ತುಕೊಂಡ ಪುಟ್ಟ ಪುಟ್ಟ ವಿಂಡೋಗಳಿಗೂ ತರಾವರಿ ಆಯುಷ್ಯವಿದೆ. ಕೆಲವೊಂದು ಹೀಗೆ ಇಣುಕಿ ಹಾಗೆ ಮಾಯವಾದರೆ ಮತ್ತೆ ಕೆಲವು ದಿನಪೂರ್ತಿ ಪರದೆಯ ಮೇಲೆ ಇರುತ್ತವೆ. ದಿನದ ಕೊನೆಯಲ್ಲಿ ಕಂಪ್ಯೂಟರ್‌ನ್ನು ನಿಲ್ಲಿಸಬೇಕಾದ ಸಂದರ್ಭ ಬಂದರೂ ಜೀವಂತವಾಗಿರಬೇಕಾದ ಸಂದೇಶಗಳಿಗೋಸ್ಕರ ಕೆಲವನ್ನು ಮತ್ತ್ಯಾವಾಗಲೋ ಬಳಸುವ ಆಲೋಚನೆಯಿಂದ ಉಳಿಸಿಕೊಂಡಿದ್ದೇನೆ. ಒಂದಂತೂ ನಿಜ - ನಮ್ಮ ನಡುವಿನ ಜನರು, ಅವರ ಭಾವನೆಗಳು ಎಷ್ಟು ಭಿನ್ನವೋ, ಈ ಮೆಸ್ಸೇಜುಗಳೂ ಅಷ್ಟೇ ಭಿನ್ನ. ಪ್ರತಿ ಕ್ಷಣದಲ್ಲಿ ತರಾವರಿ ಅವತಾರಗಳನ್ನು ಬದಲಾಯಿಸಿಕೊಳ್ಳುವ ಈ ಸಂದೇಶಗಳು ಆ ಕಡೆಯಿಂದ ಎಷ್ಟೋ ದೂರ (ಅಥವಾ ಹತ್ತಿರ)ದಿಂದ ಮಾತುಕಥೆಯಲ್ಲಿ ತೊಡಗಿದ ವ್ಯಕ್ತಿಯನ್ನು ಹತ್ತಿರ ತರದಿದ್ದರೂ, ಎಲ್ಲವೂ ಒಂದೇ ಪರದೆಯ ಮೇಲೆ ಹುಟ್ಟಿ ಮಾಯವಾಗುವ ಪ್ರಕ್ರಿಯೆಯಲ್ಲಂತೂ ಸಮಾನತೆಯಿದೆ.

ಮಾನವೀಯ ಸಂಬಂಧಗಳನ್ನು ಮೇಂಟೇನ್ ಮಾಡಿದ ಹಾಗೆ ಈ ಚಿಕ್ಕ ಚಿಕ್ಕ ವಿಂಡೋಗಳಲ್ಲಿ ಹುಟ್ಟಿ ಮಾಯವಾಗುವ ಸಂದೇಶಗಳನ್ನೂ ಮೇಂಟೇನ್ ಮಾಡಬೇಕಾಗುತ್ತದೆ. ನಾನು ಚಾಟ್ ಮಾಡುವುದು ಅನಿವಾರ್ಯವಾದ ಮೇಲಂತೂ, ಎಲ್ಲೋ ವರ್ಚುವಲ್ ಪ್ರಪಂಚದಲ್ಲಿ ಯಾರೋ ಮಾತನಾಡುತ್ತಿದ್ದಾರೆ ಎಂಬ ಭಾವನೆಯಿಂದ ಯಾವುದನ್ನೂ ನೆಗ್ಲೆಕ್ಟ್ ಮಾಡಲಾಗುವುದಿಲ್ಲ. ವೈಯುಕ್ತಿಕ ವಿಷಯಗಳನ್ನು, ಅದಕ್ಕೆ ಸಂಬಂಧಿಸಿದ ಸಂದೇಶಗಳನ್ನು ಹೇಗಾದರೂ ನಿಭಾಯಿಸಿಕೊಂಡರೂ ಪರವಾಗಿಲ್ಲ, ಆದರೆ ಅಫೀಸಿನ ವಿಷಯದಲ್ಲಿ ಮಾತ್ರ ಹೀಗಾಗದೆ ಎಷ್ಟೋ ಕಂಪನಿಗಳಲ್ಲಿ ಚಾಟ್ ಮಾಡುವುದಕ್ಕೆ ಹಲವಾರು ಗ್ರೌಂಡ್ ರೂಲ್ಸುಗಳನ್ನು ಬರೆದೂ ಇಟ್ಟಿದ್ದಾರಾದ್ದರಿಂದ ನಾವು ಬರೆಯುವ, ಪ್ರತಿಕ್ರಿಯಿಸುವ ರೀತಿಯ ಮೇಲೆ ಒಂದು ಕಣ್ಣಿಡಬೇಕಾಗುತ್ತದೆ. ಒಂದು ಕಾಲದಲ್ಲಿ ಚಾಟ್ ಅನ್ನುವುದು ನನಗೆ ದೂರದ ಸ್ನೇಹಿತರನ್ನು ಅಪರೂಪಕ್ಕೆ ಮಾತನಾಡಿಸುವ ಸಾಧನವಾಗಿ ಕಂಡುಬಂದಿತ್ತು, ಆದರೆ ಈ ದಿನಗಳಲ್ಲಿ ಅದರ ವ್ಯಾಖ್ಯೆ ಸಂಪೂರ್ಣ ಬದಲಾಗಿ ನನ್ನಿಂದ ಕೆಲವೇ ಅಡಿಗಳ ದೂರದಲ್ಲಿ ಕುಳಿತವರಿಂದಲೂ ಹಿಡಿದು, ಗ್ಲೋಬಲ್ ಮಟ್ಟದಲ್ಲಿ ಕೆಲಸ ಮಾಡುವ ನಮ್ಮ ಕಂಪನಿಯ ವಿಷಯಗಳಿಗಾಗಿ ಸಾವಿರಾರು ಮೈಲುಗಳ ದೂರವಿರುವವರನ್ನೂ ಚಾಟ್ ಮೂಲಕವೇ ಸಂಪರ್ಕಿಸಬೇಕಾಗಿ ಬಂದಿದೆ.

ಈ ಚಾಟ್‌ಗೆ ಸಂಬಂಧಿಸಿದಂತೆ ನಾನು ಬರೆಯುವ ಸಂದೇಶಗಳಲ್ಲಿ ನನ್ನ ಪ್ರೊಫೆಷನಲಿಸಮ್, ಕಮ್ಮ್ಯೂನಿಕೇಷನ್ ಸ್ಕಿಲ್ಸ್, ನಯ-ನಾಜೂಕುತನ, ಫಾರ್ಮಾಲಿಟಿ ಇವುಗಳನ್ನೆಲ್ಲ ಯಾರಾದರೂ ಗಮನಿಸಿ ಅದಕ್ಕೆಲ್ಲ ಅಷ್ಟೊಂದು ಮಹತ್ವವನ್ನು ಕೊಡುತ್ತಾರೆ ಎಂದು ಐದು ವರ್ಷಗಳ ಹಿಂದೆ ನಾನು ಎಣಿಸಿರಲಿಲ್ಲ. ಆದರೆ ಇಂದು ನಾನು ಚಾಟ್ ಮಾಡುತ್ತಿರುವ ವ್ಯಕ್ತಿಯ ಸಂವೇದನೆಗಳಿಗೆ ತಕ್ಕಂತೆ, ಅವರ ಲೆವೆಲ್‌ಗೆ ತಕ್ಕಂತೆ, ಅವರ ಬ್ಯಾಕ್‌ಗ್ರೌಂಡಿಗೆ ತಕ್ಕಂತೆ ಹಾಗೂ ಅವರು ಇರುವ ಊರು/ದೇಶ/ಟೈಮ್ ಝೋನ್‌ಗಳಿಗೆ ತಕ್ಕಂತೆ ಬರೆಯುವಲ್ಲಿ ಬದಲಾಯಿಸಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ನಮ್ಮ ಆಫೀಸಿನಲ್ಲಿ ಕೆಲವರು ಏನೋ ಸಹಾಯ ಮಾಡಿದರೆಂದು 'ಥ್ಯಾಂಕ್ಯೂ' ಎಂದು ಬರೆದರೆ 'ದಯವಿಟ್ಟು ಹಾಗೆ ಬರೆಯಬೇಡ, ವೇಸ್ಟ್ ಆಫ್ ಟೈಮ್' ಎಂದು ಹೇಳಿದವರೂ ಇದ್ದಾರೆ, ಇನ್ನು ಕೆಲವರು ನಾನು ಒಂದು ಚಿಕ್ಕ ಥ್ಯಾಂಕ್ಯೂವನ್ನೂ ಬರೆಯಲ್ಲಿಲ್ಲವೆಂದು ನನ್ನನ್ನು ಸತಾಯಿಸಲು, ಅಥವಾ ನನಗೆ ಶಿಷ್ಟಾಚಾರದ ಪಾಠವೊಂದನ್ನು ಕಲಿಸಲು ಅವರೇ 'ಯೂ ಆರ್ ವೆಲ್‌ಕಮ್!' ಎಂದು ಬರೆದುಕೊಂಡಿದ್ದೂ ಇದೆ! ಹೆಚ್ಚಿನ ಪಕ್ಷ, ಯುವ ಜನರು ಶಿಷ್ಟಾಚಾರಕ್ಕೆ ಅಷ್ಟೊಂದು ಗಮನ ಕೊಡದಿದ್ದಂತೆ ಕಂಡುಬಂದರೆ ಅದೇ ಸ್ವಲ್ಪ ವಯಸ್ಸಾದವರಿಗೆ 'ಮಾನ ಮರ್ಯಾದೆ'ಯ ವಿಷಯ ಬಹಳ ಮುಖ್ಯವಾಗುತ್ತದೆ. ನಮ್ಮ ಆಫೀಸಿನಲ್ಲಿ ಕೆಲವರು 'ಗುಡ್ ಮಾರ್ನಿಂಗ್' ಎಂದು ಸಂದೇಶವನ್ನು ಆರಂಭಿಸಿದರೆ ಇನ್ನು ಕೆಲವರು ಬರೀ 'ಜಿ.ಎಮ್.' ಎಂದು ಬರೆಯುತ್ತಾರೆ, ಇಂಥವರುಗಳಿಗೆ ಅವರ ಮನಸ್ಥಿತಿಗೆ ತಕ್ಕಂತೆ ನೀವು ಸ್ಪಂದಿಸದೇ ಹೋದರೆ ದೊಡ್ಡ ಅನಾಹುತವೇನೂ ಆಗದಿದ್ದರೂ ಸ್ವಲ್ಪ ಇರಿಸುಮುರಿಸಾಗುವುದಂತೂ ಗ್ಯಾರಂಟಿ.

ಆದರೆ ಇಂತಹ ಇರಿಸು-ಮುರಿಸುಗಳನ್ನು ಹಗುರಗೊಳಿಸಲೆಂದೇ ಹುಟ್ಟಿದವುಗಳು ಎಂದು ಕರೆಯಬಹುದಾದ ಸ್ಮೈಲೀ ಪ್ಯಾರಂಥೀಸೀಸುಗಳನ್ನು ಕಂಡರೆ ನನಗೆ ಬಹಳ ಇಷ್ಟ, ಅವುಗಳಿಗೆ ಎಂತಹ ಕೆಟ್ಟ ಸನ್ನಿವೇಶವನ್ನೂ ತಿಳಿಮಾಡುವ ತಾಕತ್ತಿದೆ - ಮೆಸ್ಸೇಜಿನಲ್ಲಿ ಏನನ್ನು ಬೇಕಾದರೂ ಬರೆದು ಕೊನೆಗೆ :-) ಎಂದು ಸೇರಿಸಿದರೆ, ಆ ಕಡೆಯಿಂದ ಓದುವ ವ್ಯಕ್ತಿಗೆ ಏನು ಸುಳಿವು ಸಿಗುತ್ತದೆಯೋ ಯಾರಿಗೆ ಗೊತ್ತು, ಒಂದು ಥರಾ ಮಾದಕ ವಸ್ತುಗಳನ್ನು ಸೇವಿಸಿದಾಗ ಅಥವಾ ಮದ್ಯಪಾನ ಮಾಡಿದಾಗ ಆಗುವ ಅನುಭವದ ಹಾಗೆ ನೋವಿದ್ದದ್ದೂ ಹೆಚ್ಚು ನೋವಾಗಿಯೂ ನಲಿವಿದ್ದದ್ದು ಹೆಚ್ಚಿನ ನಗೆಯನ್ನೂ ಉಕ್ಕಿಸುತ್ತದೆ. ಬೇರೇನು ಆಗದಿದ್ದರೂ ಟೇಕ್ ಇಟ್ ಈಸಿ ಎಂದು ಘಂಟಾಘೋಷವಾಗಿ ಈ ಪ್ಯಾರಂಥೀಸೀಸುಗಳು ಅದೆಷ್ಟೋ ವರ್ಷಗಳಿಂದ ಸಾರುತ್ತಲೇ ಇವೆ, ಯಾರು ಯಾರು ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೋ ಬಿಡುತ್ತಾರೋ ನನ್ನಂತೂ ಬಹಳಷ್ಟು ಬಾರಿ ಸಂಕಷ್ಟದಿಂದ ಈ ಸ್ಮೈಲೀ ಮುಖಗಳು ಪಾರು ಮಾಡಿವೆ. ಈ ಚಾಟ್ ವಿಂಡೋಗಳಿಂದ ನನ್ನ ಓದುವಿಕೆಯ ಪರಿಧಿ, ಪದಗಳ ವ್ಯಾಪ್ತಿ ವಿಸ್ತಾರವಾಗಿದೆ, ಯಾರು ಎಷ್ಟೇ ಕೆಟ್ಟ ಸ್ಪೆಲ್ಲಿಂಗನ್ನು ಉಪಯೋಗಿಸಿಬರೆದರೂ, ಯಾರು ಎಷ್ಟೇ ಚಿಕ್ಕ ಅಥವಾ ಚೊಕ್ಕದಾಗಿ ಬರೆದರೂ ಹಾಗೆ ಬರೆದದ್ದನ್ನು ಆಕಡೆಯಿರುವ ವ್ಯಕ್ತಿ ಅರ್ಥ ಮಾಡಿಕೊಂಡೇ ತೀರುತ್ತಾನೆ ಅನ್ನೋದು ಎಲ್ಲೂ ಬರೆಯದ ಸತ್ಯವೆಂದು ಎಲ್ಲರೂ ನಂಬಿಕೊಂಡಿರುವುದರಿಂದ ಆ ವಿಂಡೋಗಳಲ್ಲಿ ಬಂದಂತಹ ಸಂದೇಶಗಳನ್ನೇ ಹೇಗಾದರೂ ಮಾಡಿ ಅರ್ಥಮಾಡಿಕೊಳ್ಳುವ ಸಂಕಷ್ಟಕ್ಕೆ ಬೀಳುತ್ತೇನೇ ವಿನಾ 'ಅರ್ಥವಾಗಲಿಲ್ಲ, ಮತ್ತೊಮ್ಮೆ ಹೇಳಿ' ಎಂದಿದ್ದು ಕಡಿಮೆ.

ಹೀಗೆ ಈ ಚಾಟ್ ವಿಂಡೋಗಳು ತಮ್ಮಲ್ಲಿನ ವಿಸೃತವಾದ ವರ್ಚುವಲ್ ಪ್ರಪಂಚದಲ್ಲೇ ಹಲವಾರು ರೀತಿಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ನನಗೆ ಬೇಕಾದಷ್ಟು ಜನ ಅಪ್ತರನ್ನು ಹತ್ತಿರ ತಂದುಕೊಟ್ಟಿವೆ. ಕೆಲವೊಂದು ಹೀಗೆ ಹುಟ್ಟಿ ಹಾಗೆ ಸಾಯುತ್ತವೆ, ಇನ್ನು ಕೆಲವು ಎಂದಿಗೂ ಜೀವಂತವಾಗಿರುತ್ತವೆ. ಆ ಕಡೆಯಿರುವ ವ್ಯಕ್ತಿ ಹೇಗೇ ಇರಲಿ ಅವರು ಬಳಸುವ ಸಾಧನಗಳಲ್ಲಿ ಹೆಚ್ಚು ವ್ಯತ್ಯಾಸವಿರದಿದ್ದುದರಿಂದ ಒಂದು ಕಡೆ ಸಮಾನತೆಯ ವಕ್ತಾರನಂತೆ ಕಾಣಿಸಿಕೊಳ್ಳುವ ಈ ಚಾಟ್ ವಿಂಡೋಗಳು ಮೇಲು ನೋಟಕ್ಕೆ ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ಹೇಳಿಬಿಡಬಹುದಾದ ವೇದಿಕೆಯನ್ನು ಸೃಷ್ಟಿಸಿದಂತೆ ಕಂಡುಬಂದರೂ ಎಷ್ಟೇ ಮಾಡಿದರೂ ಪದಗಳ ಬಳಕೆಯಲ್ಲೇ ಸೆಣೆಸಬೇಕಾದ ಮಿತಿಯಲ್ಲಿ ಒಂದು ಅವ್ಯಕ್ತವಾದ ಚೌಕಟ್ಟನ್ನು ಹಾಕಿಕೊಂಡುಬಿಡುತ್ತವೆ. ಈ ಚಾಟ್ ಮೆಸ್ಸೇಜುಗಳಲ್ಲಿ ಬಂದು ಹೋಗಬಹುದಾದ ಹಲವಾರು ಸಂದೇಶಗಳೇನೇ ಇದ್ದರೂ ಯಾರಾದರೊಬ್ಬರನ್ನು ಮೊಟ್ಟ ಮೊದಲಬಾರಿಗೆ ಭೇಟಿಯಾಗುವ ಅಥವಾ ಕೊನೆಯಬಾರಿಗೆ ನೋಡಿ ಬೀಳ್ಕೊಡುವ ಸಂವೇದನೆಗಳಲ್ಲಿ ಕೆಟ್ಟದಾಗಿ ಸೋತುಬಿಡುತ್ತವೆ.

ಪ್ರತಿ ದಿನವೂ ಒಂದಲ್ಲ ಒಂದು ಚಾಟ್ ಮೆಸ್ಸೇಜು ಬಂದು ವಿಂಡೋ ಟಾಸ್ಕ್‌ಬಾರ್‌ನಲ್ಲಿ ಬ್ಲಿಂಕ್ ಆಗುತ್ತಲೇ ಇರುವುದು ಈ ವಿಂಡೋನಲ್ಲೇ ಹುಟ್ಟಿ ಆ ಕ್ಷಣದಲ್ಲೇ ಸಾಯಬಹುದಾದ ಸಂಬಂಧದ ಪಲ್ಸ್‌ನ ಹಾಗೆ ಕಂಡುಬರುತ್ತದೆ, ಆದರೆ ಆಗಾಗೆ ಸತ್ತು ಮತ್ತೆ ಹುಟ್ಟುವ ಅವೇ ಸಂಬಂಧಗಳು ನಿಜವಾಗಿಯೂ ಜೀವಂತವಾಗಿರಬೇಕೆಂದು ಶ್ರಮಿಸುವ ನನ್ನಂತಹವರಿಗೆ ಕ್ಷಣ-ಕ್ಷಣಕ್ಕೂ ಬದಲಾಗುವ ಒಂದು ದೊಡ್ಡ ಸವಾಲನ್ನು ಒಡ್ಡುತ್ತವೆ - ಈ ಸವಾಲಿನಲ್ಲಿ ಭಾಗವಹಿಸುವುದು ಹಾಗೂ ಜಯಿಸುವುದು ದಿನನಿತ್ಯದ ಇತರ ಕೆಲಸಗಳಂತೆ ಮಾಮೂಲಿಯಾಗಿಬಿಟ್ಟಿವೆ!

Wednesday, June 07, 2006

ಗಡಿಯಾರ ರಹಿತ ದಿನಗಳ ಮುನ್ನೋಟ

ನಮ್ಮನೇಲಿರೋ ಗಡಿಯಾರಗಳಿಗೆಲ್ಲಾ ಏನೋ ಖಾಯಿಲೆ ಬಂದ ಹಾಗೆ ಒಂದರ ಮೇಲೊಂದು ನಿಲ್ಲುವುದನ್ನು ನೋಡಿದ ನನಗೆ ಖಾಯಿಲೆ ಬಂದಿರುವುದು ಗಡಿಯಾರಗಳಿಗೋ ಅಥವಾ ನನಗೋ ಎಂದು ಎಷ್ಟೋ ಬಾರಿ ಸಂಶಯವಾಗಿದೆ. ಆದರೂ ಕೈ ಗಡಿಯಾರ, ಗೋಡೆ ಗಡಿಯಾರ ಎಂದೆಲ್ಲ ಗುಡಿಸಿ ಲೆಕ್ಕ ಹಾಕಿದರೆ ಒಟ್ಟು ಒಂಭತ್ತು ಗಡಿಯಾರಗಳಿರುವ ನಮ್ಮನೆಯಲ್ಲಿ ಈ ಕ್ಷಣದಲ್ಲಿ ನೋಡಿದರೆ ಯಾವೊಂದೂ ಸರಿಯಾಗಿ ನಡೆಯುತ್ತಿಲ್ಲ, ಹೆಚ್ಚಿನವು ಬ್ಯಾಟರಿ ಕಡಿಮೆಯಾಗಿ ನಿಂತುಹೋಗಿದ್ದರೆ ಇನ್ನು ಕೆಲವು ಕಾವು ಕೊಡುತ್ತಾ ನಿದ್ದೆ ಮಾಡುತ್ತಿರುವ ಕೋಳಿಯ ಹಾಗೆ ಈಗೋ ಆಗೋ ನಿಂತು ಬಿಡುವ ಸೂಚನೆಗಳನ್ನು ಕೊಡುತ್ತಿವೆ.

ನನ್ನ ಬಳಿ ಇರುವವು ನಾಲ್ಕು ಕೈ ಗಡಿಯಾರಗಳು, ಅವುಗಳಲ್ಲಿ ಒಂದೊದಕ್ಕೆ ಒಂದು ಕಥೆಯನ್ನು ಹೇಳಬಲ್ಲೆನಾದರೂ ನಾನು ಮದುವೆಯಾದಾಗ ಕೊಂಡ ಟೈಮೆಕ್ಸ್ ಗಡಿಯಾರದ ಬಗ್ಗೆ ಹೇಳದಿದ್ದರೆ ನನಗಂತೂ ಸಮಾಧಾನವೇ ಆಗೋದಿಲ್ಲ. ೧೮ ಕ್ಯಾರೆಟಿನ ಬಂಗಾರದಿಂದ ಮಾಡಿದ ಈ ಗಡಿಯಾರಕ್ಕೆ ಹನ್ನೊಂದು ಸಾವಿರದ ನಾನ್ನೂರು ರೂಪಾಯಿಗಳನ್ನು ಕೊಟ್ಟು, ಅದಕ್ಕೆ ಹಾಕಿದ್ದ ಚರ್ಮದ ಸ್ಟ್ರ್ಯ್ರ್‍ಆಪನ್ನು ತೆಗೆದು ಬಂಗಾರದ್ದೇ ಯಾಕೆ ಹಾಕಿಸಬಾರದು ಎಂದು ಯಾರೋ ಹೇಳಿದರೆಂದು ಅದಕ್ಕಿನ್ನಷ್ಟು ದುಡ್ಡು ಸುರಿದದ್ದಾಯ್ತು, ಆದರೆ ತೆಗೆದುಕೊಂಡು ಐದು ವರ್ಷದ ಮೇಲಾದರೂ ಐವತ್ತು ದಿನಗಳ ಮಟ್ಟಿಗೂ ಈ ಗಡಿಯಾರವನ್ನು ಕಟ್ಟಿಕೊಳ್ಳಲೇ ಇಲ್ಲ. ಅದನ್ನು ಖರೀದಿಸಿ ಇಲ್ಲಿಗೆ ಬಂದ ಮೇಲೆ ಬ್ಯಾಟರಿ ಕಡಿಮೆಯಾಗಿ ನಿಂತು ಹೋಯಿತು, ಮುಂದೆ ಯಾವಾಗಲಾದರೂ ಬ್ಯಾಟರಿ ಹಾಕಿಸೋಣವೆಂದು ದಿನಗಳನ್ನು ತಳ್ಳೀ-ತಳ್ಳಿ ಯಾವತ್ತೋ ಒಂದು ದಿನ ಬ್ಯಾಟರಿಯನ್ನು ಹಾಕಿಸಿದರೂ ಸ್ವಲ್ಪ ದಿನ ಕಟ್ಟುವುದರಲ್ಲಿಯೇ ಇದ್ದಕ್ಕಿದ್ದ ಹಾಗೆ ಅದರ ನಿಮಿಷದ ಮುಳ್ಳು ಮುರಿದು ಡೊಂಕಾಗಿ ವಾಚಿನಲ್ಲಿಯೇ ಬಿದ್ದು ಹೋಗುವುದೇ? ನನಗಂತೂ ಆ ರೀತಿ ಹೇಗೆ/ಏಕಾಯಿತು ಎಂಬುದು ಇನ್ನೂ ಅರ್ಥವಾಗಿಲ್ಲ. ಸಫ್ಪೈರ್ ಕ್ರಿಸ್ಟಲ್‌ನಿಂದ ಮಾಡಿದ ಗಾಜಿಗಾಗಲಿ, ಲೋಹದ ಸುತ್ತಲಿನ ಕವಚಕ್ಕಾಗಲೀ ಎಲ್ಲೂ ಒಂದು ಗೆರೆ ಸಹ ಬೀಳದೇ ಅದರ ಒಳಗಿನ ಮುಳ್ಳು ಹೇಗೆ ಮುರಿಯಿತು ಎನ್ನುವುದು ಇನ್ನೂ ಸೋಜಿಗದ ವಿಷಯವೇ. ಇಂಡಿಯಾಕ್ಕೆ ತೆಗೆದುಕೊಂಡು ಹೋಗಿ ತೋರಿಸಿದರಾಯಿತು ಎಂದು ಕೊಂಡಿದ್ದರಿಂದ ಅದು ಎಲ್ಲೋ ಒಂದು ಮೂಲೆಯಲ್ಲಿ ಬಿದ್ದು ಧೂಳು ತಿನ್ನುತ್ತಿದೆ - ಅಪರೂಪಕ್ಕೊಮ್ಮೆ ನನ್ನ ದರ್ಶನವಾದಾಗಲೆಲ್ಲ 'ಏನು, ಊರಿಗೆ ಹೋಗೋಲ್ವಾ?' ಎಂದು ಪ್ರಶ್ನೆ ಹಾಕಿದವರ ಥರ ಕಂಡುಬರುತ್ತದೆ.

ಇನ್ನುಳಿದ ಮೂರು ಗಡಿಯಾರಗಳು ಅಷ್ಟಕಷ್ಟೇ - ಅವೂ ಕೂಡ ಬ್ಯಾಟರಿ ಸೊರಗಿ ತಮ್ಮ ಕೆಲಸವನ್ನು ಮಾಡುವುದಿಲ್ಲ ಎಂದು ಶಪಥ ತೊಟ್ಟುಕೊಂಡು ಬಹಳ ದಿನಗಳಾದವು. ವಾರಾಂತ್ಯದಲ್ಲಿ ಮಾಡೋಣವೆಂದು ಬಹಳ ದಿನಗಳಿಂದ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡು ಅಲೆದೆ, ಊಹೂ, ಎಲ್ಲೂ ನನ್ನ ಕಣ್ಣಿಗೆ ಬ್ಯಾಟರಿ ಬದಲಾಯಿಸುವ ಒಂದು ಅಂಗಡಿಯೂ ಕಾಣಲಿಲ್ಲ, ಮೊನ್ನೆ ಶನಿವಾರ ಐದಾರು ಅಂಗಡಿಗಳ ಬಾಗಿಲನ್ನು ಹೊಕ್ಕು ಕೇಳಿ ನೋಡಿದೆ, ಯಾರೂ ಬ್ಯಾಟರಿ ಬದಲಾಯಿಸುತ್ತೇವೆ ಎಂದು ಒಪ್ಪಿಕೊಳ್ಳಲಿಲ್ಲ. ಇನ್ನು ನನಗೆ ಗೊತ್ತಿರುವ ಒಂದು ಮಾಲ್‌ನ ಒಂದು ಅಂಗಡಿಯಲ್ಲಿ ಬದಲಾಯಿಸುತ್ತಾರೆ ಅಲ್ಲಿಗೆ ಹೋಗಿ ಬರಲು ಕನಿಷ್ಠ ಪಕ್ಷ ಒಂದು ಘಂಟೆಯಾದರೂ ಬೇಕು, ಅಲ್ಲದೇ ಇಪ್ಪತ್ತೈದು ಡಾಲರಿನ ಆಸು-ಪಾಸಿರುವ ಗಡಿಯಾರಕ್ಕೆ ಏಳು ಡಾಲರನ್ನು ಕೊಟ್ಟು ಬ್ಯಾಟರಿ ಬದಲಾಯಿಸಲು ಮನಸ್ಸು ಒಮ್ಮೆ ಹಿಂದೆ ಮುಂದೆ ನೋಡುತ್ತದೆ. ಈ ಕಡೆ ಅವುಗಳನ್ನು ಎಸೆದು ಹೊಸತನ್ನು ಕೊಳ್ಳುವುದೂ ಇಲ್ಲ, ಅವುಗಳಿಗೆ ಮತ್ತೆ ಚಲನೆಯನ್ನು ಮೂಡಿಸಲು ಬ್ಯಾಟರಿಯನ್ನು ಹಾಕಿಸಲೂ ಆಗುತ್ತಿಲ್ಲ, ಇಂಥಾ ತುಂಬಾ ಸಣ್ಣ ವಿಷಯವೂ 'ಕೈಯಲ್ಲಿ ಗಡಿಯಾರವಿಲ್ಲದವನ' ಹಣೆಬರಹವನ್ನು ಜಗಜ್ಜಾಹೀರು ಮಾಡಿಬಿಡುತ್ತೇವೆ ಎಂದು ಹಠ ತೊಟ್ಟವರಂತೆ ಕಾಡುತ್ತಿವೆ. ಬರೀ ನನ್ನ ಕೈ ಗಡಿಯಾರಗಳ ಕಥೆಯೇ ಹೀಗೆ ಎಂದು ಕೊಂಡರೆ ನನ್ನ ಹೆಂಡತಿಯ ಗಡಿಯಾರಗಳೇನು ಬೇರೆಯಲ್ಲ, ಅವುಗಳದೂ ಇದೇ ಕಥೆ, ನನ್ನ ಕಣ್ಣಿಗೆ ಕಾಣುವಂತೆ ಅವಳ ಮೂರು ಗಡಿಯಾರಗಳು ಮೋಕ್ಷದ ದಾರಿಯನ್ನು ಕಾಯುತ್ತಾ ಬಿದ್ದುಕೊಂಡಿರುವುದು ನನಗೆ ಚೆನ್ನಾಗಿ ಗೊತ್ತು.

ಏಳು ಕೈಗಡಿಯಾರಗಳ ಕಥೆ ಹೀಗಾದರೆ ಇನ್ನು ಗೋಡೆ ಗಡಿಯಾರಗಳಿಗೇನು ಸಬೂಬು ಹೇಳುತ್ತೇನೆ ಎಂದು ಕುತೂಹಲವಿದ್ದಿರಬಹುದು. ಅವುಗಳ ಕಥೆಯೂ ಅಷ್ಟೇ, ಬ್ಯಾಟರಿ ಹೀನತೆ. ಆದರೆ ಅದರ ಹಿಂದೆ ಒಂದು ಸಣ್ಣ ಕಥೆಯಿದೆ. ಕೆಲವು ತಿಂಗಳ ಹಿಂದೆ ನಾನು ರಜಾ ಹಾಕಿ ಮನೆಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆ ಚೈನಾ ಟೌನಿಗೆ ಹೋಗಿ ಬಂದರೆ ಹೇಗೆ ಎಂದುಕೊಂಡು ಹೋಗಿ ಬಂದಿದ್ದೆ. ಅಲ್ಲಿ ಅತಿಕಡಿಮೆ ಬೆಲೆಗೆ ಸಿಗುವ ಅನೇಕ ಪದಾರ್ಥಗಳನ್ನು ಖರೀದಿ ಮಾಡಿಕೊಂಡು ನ್ಯೂ ಯಾರ್ಕಿನ ಡೌನ್ ಟೌನ್‌ಗೆ ಕೆಲವೇ ಮೈಲಿಗಳ ದೂರದಲ್ಲಿ ನಾಲ್ಕು ಡಾಲರ್ ಕೊಟ್ಟು ಮನಪೂರ್ತಿ ಅದೇನೇನೋ ಚೈನೀಸ್ ಊಟವನ್ನು ಮಾಡಿಕೊಂಡು ಕಂಡ ಕಂಡ ಅಂಗಡಿಗಳಿಗೆ 'ನಾಳೆ ಬಂದು ಕದ್ದುಕೊಂಡು ಹೋಗುವವರ ಹಾಗೆ' ಭೇಟಿಕೊಟ್ಟು ಏನೇನೆಲ್ಲ ಕೊಳ್ಳುತ್ತಿರುವಾಗ ಒಂದು ಡಾಲರ್‌ಗೆ ಹದಿನಾರು ಬ್ಯಾಟರಿ ಇರುವ ಒಂದು ಪ್ಯಾಕೇಟ್ ನನ್ನನ್ನು ಆಕರ್ಷಿಸಿತು. ಹೊರಗಡೆ ಅಂಗಡಿಯಲ್ಲಿ ಏನಿಲ್ಲವೆಂದರೂ ಅದಕ್ಕೆ ಹತ್ತು ಡಾಲರ್‌ಗಳಾದರೂ ಇರುವಾಗ ಒಂದೇ ಒಂದು ಡಾಲರ್‌ಗೆ ಹದಿನಾರು ಬ್ಯಾಟರಿ ಸೆಲ್‌ಗಳೇ! ನಂಬುವುದಕ್ಕೆ ಕಷ್ಟವಾದರೂ ತಂದೆ, ಕೊನೆಗೆ ಬೇರೆ ಯಾವುದಕ್ಕೆ ಹಾಕಲು ಆಗದಿದ್ದರೂ ಮನೆಯಲ್ಲಿದ್ದ ನಾಲ್ಕು ರಿಮೋಟ್ ಕಂಟ್ರ್‍ಓಲ್‌ಗಳಿಗಾದರೂ ಹಾಕಲು ಬರುತ್ತದೆಯೆಂದು ಅಂದುಕೊಂಡಿದ್ದವನಿಗೆ ಆಶ್ಚರ್ಯಕಾದಿತ್ತು. ಆದಿನ ಮೂರನೇ ರಘು ಕೊಟ್ಟ ಗೋಡೆ ಗಡಿಯಾರಕ್ಕೆ ಬ್ಯಾಟರಿ ಬದಲಾಯಿಸಿದ್ದೆ, ಅಂದಿನಿಂದ ಇಂದಿನವರೆಗೆ, ಇನ್ನು ಒಂದು ತಿಂಗಳೂ ಆಗಿಲ್ಲ ಆಗಲೇ ಎರಡು ಬಾರಿ ಬ್ಯಾಟರಿಗಳನ್ನು ಬದಲಾಯಿಸಿದ್ದೇನೆ! ಗಡಿಯಾರದಲ್ಲಿ ಏನೂ ಸಮಸ್ಯೆ ಇಲ್ಲ, ಇರೋದು ಏನಿದ್ದರೂ ಡಾಲರ್‌ಗೆ ಹದಿನಾರರಂತೆ ತಂದ ಬ್ಯಾಟರಿಯಲ್ಲಿಯೇ. ಈ ಕನಿಷ್ಟ ಬ್ಯಾಟರಿಗಳು ನನಗೆ ಎಷ್ಟು ತೊಂದರೆ ಕೊಟ್ಟಿವೆಯೆಂದರೆ ನಾನು ಯಾವಾಗಲೂ ರಘುವಿನ ಗಡಿಯಾರವನ್ನು ನೋಡಿ ಸಮಯ ಹೇಳುವವನು ಈಗ ಅದನ್ನು ನೋಡುವುದೇ ಇಲ್ಲ, ಅದರ ಬದಲಿಗೆ ಕಾಮ್‌ಕ್ಯಾಸ್ಟಿನ ಡಿವಿಆರ್ ಅನ್ನು ನೋಡುತ್ತೇನೆ. ಅಂದರೆ ತಲೆ ಎತ್ತಿ ಗಡಿಯಾರ ನೋಡುವ ಅಭ್ಯಾಸವನ್ನು ಬದಲಾಯಿಸಲು ಹಾಗೂ ತಲೆ ತಗ್ಗಿಸಿ ಸಮಯವನ್ನು ನೋಡುವ ಅಭ್ಯಾಸವನ್ನು ಹುಟ್ಟಿ ಹಾಕಿದ್ದಕ್ಕೆ ನಾನು ಈ ಚೈನಾ ಟೌನ್‌ನ ಬ್ಯಾಟರಿಗಳನ್ನು ಪ್ರಶಂಸಿಸುತ್ತೇನೆ, ಏಕೆಂದರೆ ಇಂತಹ ಕಳಪೆ ಗುಣಮಟ್ಟದ ಬ್ಯಾಟರಿಗಳನ್ನು ತಂದಿದ್ದಕ್ಕೆ ಬಯ್ಯಲು ಬೇರೆ ಯಾರೂ ಸಿಗದಿದ್ದುದರಿಂದ!

***

ನಾನು ಒಂದು ಕಾಲದಲ್ಲಿ ಸಮಯಕ್ಕೇ ಹುಟ್ಟಿದವರ ಹಾಗೆ ಆಡುತ್ತಿದ್ದೆ, ಎಲ್ಲಿಗೆ ಹೋಗುವುದಾದರೂ ಡಾಟ್ ಮೇಲೆ ಸರಿಯಾಗಿ ಹೋಗದಿದ್ದರೆ ಸಂಕಟವಾಗುತ್ತಿತ್ತು. ಆಗೆಲ್ಲ ನನ್ನ ಕೈಯಲ್ಲಿ ಮೂವತ್ತೈದು ರೂಪಾಯಿಗಳ ಎಲ್ಕೆಕ್ಟ್ರಾನಿಕ್ ಗಡಿಯಾರಗಳು ಇದ್ದುದೇ ಹೆಚ್ಚು. ಒಂದು ದಿನ ಸೊರಬದಿಂದ ಸಾಗರಕ್ಕೆ ಮಧ್ಯಾಹ್ನ ಹನ್ನೆರಡೂವರೆಗೆ ಹೊರಡೋ ಮಲ್ಲಿಕಾರ್ಜುನ ಬಸ್ಸಿನಲ್ಲಿ ೨೯ ಕಿ.ಮೀ.ಗಳ ದೂರವನ್ನು ೫೧ ನಿಮಿಷಗಳಲ್ಲಿ ತಂದು ಮುಟ್ಟಿಸಿದ್ದಕ್ಕಾಗಿ ಬಸ್ಸಿನ ಕಂಡಕ್ಟರ್ ಶಿವಪ್ರಸಾದ ಹಾಗೂ ಟಿಕೇಟ್ ಏಜೆಂಟ್ ಸಿದ್ದಪ್ಪನ ಹತ್ತಿರ ಜಗಳವಾಡಿದ್ದೆ. '೨೯ ಕಿಲೋ ಮೀಟರ್‌ಗೆ ಐವತ್ತೊಂದು ನಿಮಿಷ ತಗೊಂತೀರಲ್‌ರೀ, ಈ ಬಸ್ಸಿನ ಬದಲಿಗೆ ಓಡಿಕೊಂಡು ಬರಬಹುದಿತ್ತು!' ಎಂದು ಸಿಟ್ಟು ಮಾಡಿಕೊಂಡ ಮುಖವನ್ನು ತೊಟ್ಟುಕೊಂಡಿದ್ದೆ. ಅದೇ ಇಲ್ಲಿ ಈ ಊರಿನಲ್ಲಿ ಕೆಲವೊಮ್ಮೆ ನಾನು ಹತ್ತುವ ಸಿಟಿ ಬಸ್ಸುಗಳು, ಮೀನು ಮಾರೋರ ಸೈಕಲ್ಲಿನ ಹಾಗೆ ಅಲ್ಲಿ ನಿಂತು ಇಲ್ಲಿ ನಿಂತು ನಮ್ಮ ಮನೆಯ ಬಸ್ ಸ್ಟಾಪ್‌ನಿಂದ ಕೇವಲ ನಾಲ್ಕೇ ಮೈಲು ದೂರವಿರುವ ರೈಲು ನಿಲ್ದಾಣಕ್ಕೆ ಹೋಗಲು ಕೆಲವೊಮ್ಮೆ ಇಪ್ಪತ್ತೈದು ನಿಮಿಷಗಳ ಮೇಲೆ ತೆಗೆದುಕೊಂಡರೂ ನಾನು ಜಪ್ಪಯ್ಯ ಎನ್ನುವುದಿಲ್ಲ, ಒಂದು ಬಿಸಿಯುಸಿರನ್ನೂ ಬಿಡುವುದಿಲ್ಲ, ಬದಲಿಗೆ ಪ್ರಪಂಚದ ಯಾವುದೋ ಭಾರವೊಂದು ನನ್ನ ತಲೆಯನ್ನು ಸುತ್ತಿಕೊಂಡವನ ಹಾಗೆ ಮುಖ ಮಾಡಿಕೊಂಡು ಏನನ್ನೋ ಓದಿಕೊಳ್ಳುವ ಹಾಗೆ ಕುಳಿತಲ್ಲೇ ಚಡಪಡಿಸುತ್ತಿರುತ್ತೇನೆ.

ನನ್ನ ಡಾಟ್ ಮೇಲೆ ಹೋಗುವ ಅಭ್ಯಾಸ ಇಲ್ಲಿಗೆ ಬಂದ ಮೇಲೂ ಕೆಲವು ವರ್ಷ ಮುಂದುವರೆದಿತ್ತು, ಯಾವುದಾದರೂ ಡಾಕ್ಟರ್ ಆಫೀಸಿಗೆ ಹೋದರೆ, ಅಥವಾ ಕಾರನ್ನು ಸರ್ವೀಸ್ ಮಾಡಿಸುವುದಕ್ಕೋಸ್ಕರ ತೆಗೆದುಕೊಂಡು ಹೋದರೆ ಅಲ್ಲೂ ಸಮಯಕ್ಕೆ ಸರಿಯಾಗಿ ಹೋಗಬೇಕು ಎಂದು ಛಲ ತೊಟ್ಟುಕೊಂಡಿರುತ್ತಿದ್ದೆ. ಆದರೆ ಡಾಕ್ಟರ್ ಆಫೀಸಿನಲ್ಲಿ ದೊಡ್ಡ ರೂಮಿನಿಂದ ಚಿಕ್ಕ ರೂಮೂ, ಚಿಕ್ಕ ರೂಮಿನಿಂದ ಮತ್ತೊಂದು ರೂಮೂ ಎಂದು ಅಲ್ಲಲ್ಲಿ ಕೂರಿಸಿ ಕಾಯಿಸುತ್ತಿದ್ದುದ್ದನ್ನು ನೋಡಿ ಹಾಗೂ ಮೆಕ್ಯಾನಿಕ್‌ಗಳು ಡಾಟ್ ಮೇಲೆ ಬಂದವನಿಗೆ ಯಾವುದೇ ವಿಶೇಷ ಮಣೆಯನ್ನು ಹಾಕದಿರುವುದನ್ನು ಕಂಡು ಕೊನೆಗೆ ನಾನೂ ಅಮೇರಿಕನ್ ಆಗಿ ಹೋದೆ! ಅಂದಿನಿಂದ ನಾನು ಡಾಟ್ ಮೇಲೆ ಹೋಗಲಿ ಬಿಡಲಿ ನನಗಂತೂ ಕಸಿವಿಸಿ ಆಗಿದ್ದಿಲ್ಲ, ಎಲ್ಲಾದರೂ ಯಾರಾದರೂ ಏಕೆ ತಡವೆಂದು ಕೇಳಿದರೆ ಹುಡುಕೋದಕ್ಕೆ ನೆಪಗಳೇನು ಸಾವಿರಾರು ಸಿಗುತ್ತವಾದ್ದರಿಂದ ನನ್ನ ಡಾಟ್ ಸಂಸ್ಕೃತಿ ಹೋಗುವುದಿರಲಿ ಇತ್ತೀಚೆಗೆ ಗಡಿಯಾರ ರಹಿತನಾಗಿ ಬದುಕುವ ಧೈರ್ಯವೂ ಸಿದ್ಧಿಸಿಬಿಟ್ಟಿದೆ!

***

ಸಮಯ ಪರಿಪಾಲನೆ ಅನ್ನೋದು ಒಂದು ರೀತಿಯ ರೋಗವಿದ್ದ ಹಾಗೆ, ಆ ರೋಗಕ್ಕೆ ಗುರಿಯಾದವರನ್ನು ಸಮಾಧಾನ ಮಾಡುವುದು ಬಹಳ ಕಷ್ಟ. ಆನ್ ಟೈಮ್ ಮೆಂಟಾಲಿಟಿ ಹೋಗಿ ವೆನ್‌ಎವರ್ ಟೈಮ್ ಮೆಂಟಾಲಿಟಿ ಬಂದರೆ ಅದರಂತ ಸ್ವರ್ಗ ಸುಖ ಇನ್ನೊಂದಿಲ್ಲ - ಈ ಪ್ರಪಂಚದಲ್ಲಿ ಎಷ್ಟೋ ಜನ ಕೇರ್ ಮಾಡದ ಸಮಯಕ್ಕೆ ನಾನಾದರೂ ಏಕೆ ತಲೆ ಕೆಡಿಸಿಕೊಳ್ಳಬೇಕು? ಎಷ್ಟೊಂದು ವರ್ಷ ಡಾಟ್ ಮೇಲೆ ಬದುಕಿದ್ದೇನೆ ಎಂದು ಯಾರೂ ಏನು ಸನ್ಮಾನವನ್ನು ಮಾಡೋದಿಲ್ಲವಲ್ಲ.

ಸಮಯ ಪರಿಪಾಲನೆಯನ್ನು ಮಾಡಲು ಹೆಣಗಬೇಕಾದವನು ನಾನೊಬ್ಬನೇ, ಆದರೆ ನನ್ನ ವ್ರತವನ್ನು ಹಾಳು ಮಾಡಲು ಹಲವಾರು ತಂತ್ರ, ಪ್ರತಿ ತಂತ್ರಗಳು ಯಾವಾಗಲೂ ಕಾರ್ಯರೂಪಿಯಾಗಿರೋದರಿಂದ ಹೆಚ್ಚಿನ ಪಾಲು ಸೋಲು ನನ್ನದೇ ಆಗುತ್ತಿತ್ತು, ನನ್ನ ಎದುರಾಳಿಗಳ ಜೊತೆಯಲ್ಲಿ ರಾಜಿ ಮಾಡಿಕೊಂಡಿದ್ದರಿಂದ ಮೇಲ್ನೋಟಕ್ಕೆ ಬದುಕೇನೋ ಸುಗಮವೆನಿಸಿದಂತೆ ಕಂಡುಬಂದರೂ ರಾಜಿ ಮಾಡಿಕೊಂಡ ಫಲದ ಪರಿಣಾಮವಾಗಿ ಸಮಸ್ಯೆ ಇನ್ನೂ ಸಮಸ್ಯೆಯಾಗೇ ಉಳಿದಿದೆ!

Tuesday, June 06, 2006

ಮಾಡುವ ಕೆಲಸವೂ ಹೋಗಿ ಇಮಿಗ್ರೇಷನ್ ಸ್ಟೇಟಸ್ಸೂ ಹೋದರೆ?

ದಿನ ನನ್ನ ಸಹೋದ್ಯೋಗಿ ಮಿತ್ರರಿಬ್ಬರ ಜೊತೆ ಚಾಟ್ ಮಾಡುತ್ತಿದ್ದಾಗ ಇದೇ ಸೋಮವಾರ ಬಂದ, ಪ್ರಸ್ತುತ ಹಣಕಾಸಿನ ಸನ್ನಿವೇಶ ಹಾಗೂ ಕಾಸ್ಟ್ ಕಟ್ಟಿಂಗ್‌ಗಳನ್ನು ಮುಖ್ಯವಾಗಿ ಕಾರಣವಾಗಿ ನೀಡಿ ಮುಂಬರುವ ಲೇ ಆಫ್ ಅನ್ನು ಕುರಿತ ಮೇಲಿನವರೊಬ್ಬರ ಇ-ಮೇಲ್ ಬಗ್ಗೆ ಚರ್ಚಿಸುತ್ತಿದ್ದೆ. ಅವರಿಬ್ಬರೂ ಚಾಟ್ ವಿಂಡೋನಲ್ಲಿ ತಮ್ಮ ಭಾವನೆಗಳನ್ನೇನೂ ಹೇಳಿಕೊಳ್ಳದಿದ್ದರೂ ಇನ್ನೂ ಗ್ರೀನ್‌ಕಾರ್ಡ್‌ನ ಪ್ರೋಸೆಸ್ಸಿಂಗ್ ಗೊಂದಲದಲ್ಲಿ ಸಿಕ್ಕು ಪ್ರತಿವರ್ಷವೂ h1B ವೀಸಾವನ್ನು ಅವಧಿ ವಿಸ್ತರಿಸಿಕೊಳ್ಳುತ್ತಿರುವ ಅವರ ಕಷ್ಟಗಳು ಸ್ಪಷ್ಟವಾಗಿ ಗೋಚರಿಸತೊಡಗಿತು. ಅವರಿಗೆ ಬೇಕಾಗಿಯೋ ಬೇಡವಾಗಿಯೋ ಇಲ್ಲಿರಲೇ ಬೇಕಾದ ಸಂದರ್ಭವನ್ನು ನೆನೆದು, ಒಂದುವೇಳೆ ಈ ಲೇ ಆಫ್‌ನಲ್ಲಿ ಅವರೇದೇನಾದರೂ ಕೆಲಸ ಹೋದರೆ ಮುಂದೆ ಏನು ಮಾಡುತ್ತಾರೋ ಎಂದೆನಿಸಿ ಸ್ವಲ್ಪ ಬೇಸರವೂ ಆಯಿತು.


೨೦೦೧ ರಲ್ಲಿ ಅಮೇರಿಕಕ್ಕೆ ಭಯೋತ್ಪಾದಕರು ಧಾಳಿ ಮಾಡುವ ಮುನ್ನ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ೯೦ ರ ದಶಕದ ಮಧ್ಯದ ತರುವಾಯ ಅನೇಕಾನೇಕರು ನನ್ನ ಹಾಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾಗೆ ಒಂದಲ್ಲ ಒಂದು ವೀಸಾದಲ್ಲಿ (ಹೆಚ್ಚಿನವರು h1B ವೀಸಾದಲ್ಲಿ) ಇಲ್ಲಿಗೆ ಬಂದಿದ್ದೆವು. ಹೀಗೆ ಬಂದವರಲ್ಲಿ ಕೆಲವರು ೨೦೦೦ ಇಸವಿಯ ಹೊತ್ತಿಗೆ ಶುರುವಾದ ಡೌನ್ ಟೈಮ್‌ನ್ನು ನೆಪಮಾಡಿಕೊಂಡು ಭಾರತಕ್ಕೆ ಹೊರಟುಹೋದರು, ಇನ್ನು ಕೆಲವರು ಒಂದಲ್ಲ ಒಂದರಲ್ಲಿ ಕೆಲಸ ಮುಂದುವರೆಸಿಕೊಂಡು (ನನ್ನ ಹಾಗೆ) ಇಲ್ಲೇ ಉಳಿದುಕೊಂಡರು, ಮತ್ತೆ ನನಗೆ ಗೊತ್ತಿರುವಂತೆ ಸ್ವಲ್ಪ ಜನ ಆರು ವರ್ಷಗಳ h1B ವೀಸಾದ ಅವಧಿಯ ನಂತರ ಹಿಂತಿರುಗಿದವರೂ ಇದ್ದಾರೆ. ೨೦೦೧ ರ ಹೊತ್ತಿಗೆ ಅಥವಾ ಅದಕ್ಕಿಂತ ಮೊದಲು ಗ್ರೀನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚೂ ಕಡಿಮೆ ಎಲ್ಲರಿಗೂ ಒಂದೆರಡು ವರ್ಷಗಳಲ್ಲಿ ಗ್ರೀನ್‌ಕಾರ್ಡ್ ಬಂದಿರಬಹುದು ಎಂಬುದು ನನ್ನ ಊಹೆ, ೨೦೦೨, ೨೦೦೩ ರ ನಂತರವೇ ಗ್ರೀನ್‌ಕಾರ್ಡ್ ಪ್ರಾಸೆಸ್ಸಿಂಗ್‌ನಲ್ಲಿ ಹಿಂದೆಂದಿಗೂ ಆಗದ ವಿಳಂಬವೂ, ಬ್ಯಾಕ್‌ಗ್ರೌಂಡ್ ಚೆಕ್ಕೂ ಅದೂ-ಇದೂ ಎಂದು ವಿಪರೀತ ಸಮಯ ತೆಗೆದುಕೊಳ್ಳುವುದೂ ನಡೆದು ಕೆಲವರು ಲೇಬರ್ ಪ್ರಾಸೆಸ್ಸಿಂಗ್‌ನಿಂದಲೇ ಇನ್ನೂ ಹೊರಬಂದಿಲ್ಲ, ಇನ್ನು ಕೆಲವರು ಎರಡನೇ ಅಥವಾ ಮೂರನೇ ಹಂತದಲ್ಲೂ ಸಾಕಷ್ಟು ವಿಳಂಬವನ್ನು ಅನುಭವಿಸಿದ್ದಾರೆ. ಈ ವಿಳಂಬದ ಚಕ್ರದಲ್ಲಿ ಸಿಕ್ಕಿಕೊಂಡು ಒಮ್ಮೆ ತಮ್ಮ h1B ವೀಸಾದ ಆರು ವರ್ಷಗಳನ್ನು ಮುಗಿಸಿಕೊಂಡರೆ ಅದರಷ್ಟು ನೋವಿನ ಕೆಲಸ ಮತ್ತೊಂದಿಲ್ಲ. ಒಂದು ಕಡೆ ಕಂಪನಿಗಳು ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಕಡಿಮೆ ಖರ್ಚು ಮಾಡಲು ಹೆಣಗುತ್ತಿರುವಾಗ ಹೀಗೆ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳಬಯಸುವ ಪ್ರತಿಯೊಬ್ಬನ ಮೇಲೂ ಕಡಿಮೆ ಎಂದರೆ ಒಂದು ಸಾವಿರ ಡಾಲರನ್ನಾದರೂ ಖರ್ಚು ಮಾಡಬೇಕು, ಹೀಗೆ ಎಷ್ಟು ಬಾರಿ ಮಾಡಬಹುದು, ಒಮ್ಮೆ, ಎರಡು ಬಾರಿ ಅಥವಾ ಮೂರು ಬಾರಿ. ಕೊನೆಗೆ ಒಂದು ದಿನ ಇವನಿಗೆ ವೀಸಾ ಅವಧಿಯನ್ನು ವಿಸ್ತರಿಸುವ ಬದಲು ಇವನ ಬದಲಿಗೆ ಬೇರೆ ಯಾರನ್ನಾದರೂ ಕೆಲಸಕ್ಕೆ ತೆಗೆದುಕೊಂಡರೆ ಹೇಗೆ ಎಂದು ಅನ್ನಿಸದೇ ಇರದು.

ಟೆಕ್ನಾಲಜಿಯೇ ಮುಖ್ಯ ವ್ಯವಹಾರವಾಗಿ ಮಾಡಿಕೊಂಡಿರದ ಕಂಪನಿಗಳು, ಅವುಗಳಲ್ಲಿನ IT ಡಿವಿಜನ್ನುಗಳು ತಮ್ಮಲ್ಲಿನ ಕೆಲಸಗಾರರನ್ನು ಕಳೆದುಕೊಂಡು ಸಣ್ಣವಾಗುತ್ತಿರುವುದಕ್ಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಜೆಟ್ ಒಂದೇ ಕಾರಣವಲ್ಲ, ಅದರ ಜೊತೆಯಲ್ಲಿ (ಅದಕ್ಕೆ ಪೂರಕವಾಗೇ ಇರುವ) ಔಟ್‌ಸೋರ್ಸಿಂಗ್ ಅಥವಾ ಆಫ್‍ಶೋರಿಂಗ್ ಕೂಡಾ ಅಷ್ಟೇ ಮುಖ್ಯವಾದ ಕಾರಣವಾಗುತ್ತದೆ. ಎಲ್ಲೋ ಓದಿದ/ಕೇಳಿದ ಹಾಗೆ ಭಾರತದ ಒಬ್ಬ IT ಉದ್ಯೋಗಿಯ ಮೇಲೆ ಒಂದು ಘಂಟೆಗೆ ೧೨ ಡಾಲರ್ ಅಂತೆ ಖರ್ಚು ಮಾಡುವುದಕ್ಕೆ ಈಗಾಗಲೇ ಹೊಂದಿಕೊಂಡಿರುವ ಕಂಪನಿಗಳು ಹಣವನ್ನು ಉಳಿಸುವ ಪ್ರಕ್ರಿಯೆಯಲ್ಲಿ ಭಾರತದಂತಹ ದೇಶಗಳೆಡೆಗೆ ಮುಖ ಮಾಡಿ ಈಗಾಗಲೇ ನಿಂತುಬಿಟ್ಟಿವೆ. ಭಾರತದಲ್ಲಿ ಕೆಲಸ ಮಾಡುತ್ತಿರುವವರಿಗೇನೋ ಇದು ಒಳ್ಳೆಯ ಕಾಲವಾಗಿರಬಹುದು, ಆದರೆ ಆಗಿಂದಾಗ್ಗೆ 'ಇಲ್ಲಿ ಜನರನ್ನು ಕಡಿಮೆ ಮಾಡಿ ಅಲ್ಲಿ ಜನರನ್ನು ಹೆಚ್ಚು ಮಾಡುತ್ತೇವೆ' ಎನ್ನುವ ಮಾತನ್ನು ಕೇಳಿದಂತೆಲ್ಲ ನಮಗೂ ಈ ದೇಶದಲ್ಲಿ ಹುಟ್ಟಿ ಬೆಳೆದವರಿಗಾಗುವಂತೆಯೇ 'ಅಯ್ಯೋ' ಎನಿಸುತ್ತದೆ. ಸಿಟಿಜನ್‌ಶಿಪ್, ಗ್ರೀನ್‌ಕಾರ್ಡ್ ಇದ್ದವರು ಹೇಗಾದರೂ ಅದೂ-ಇದೂ ಕೆಲಸ ಮಾಡಿ ಬದುಕಿಕೊಳ್ಳುತ್ತೇವೆ ಎಂದುಕೊಂಡರೂ ಯಾವುದೇ ಇಮಿಗ್ರೇಷನ್ ಸ್ಟೇಟಸ್ ಇರಲಿ, ಕೈಲಿದ್ದ ಕೆಲಸ ದಿಢೀರ್ ಮಾಯವಾಗುತ್ತದೆಯೆಂದಾದರೆ ಅದರಿಂದಾಗುವ ಪರಿಣಾಮ ಮಾತ್ರ ಎಲ್ಲರ ಮೇಲೂ ಒಂದೇ. ಒಂದು ಕೆಲಸವನ್ನು ಬಿಟ್ಟು ಅಥವಾ ಬದಲಾಯಿಸಿ ಮತ್ತೊಂದು ಕೆಲಸವನ್ನು ಸಂಪಾದಿಸುವುದು ಮಹಾ ಸ್ಟ್ರೆಸ್ಸಿನ ವಿಷಯಗಳಲ್ಲೊಂದು, ಅದರಲ್ಲೂ ಕೈಲಿದ್ದ ಕೆಲಸ ಹೋಗಿ ಮತ್ತೊಂದನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕೆಂದರೆ ಅದು ಇನ್ನೂ ಕಷ್ಟ. ಮೊದಲಿದ್ದ ಹಾಗೆ ಈಗ ದಿನಕ್ಕೊಂದು ಕೆಲಸ ಸಿಗುವುದಿಲ್ಲ, ಒಂದು ಅಂದಾಜಿನಲ್ಲಿ ಹೇಳುವುದಾದರೆ ಒಳ್ಳೆಯ ನೆಟ್‌ವರ್ಕ್ ಇದ್ದೂ, ಕಂಡಕಂಡಲ್ಲಿ ಅರ್ಜಿ ಗುಜರಾಯಿಸಿ, ಹಗಲಿಡೀ ಫುಲ್‌ಟೈಮ್ ಎಫರ್ಟ್ ಹಾಕಿದರೂ ಒಂದು ತಿಂಗಳ ಒಳಗೆ ಮತ್ತೊಂದು ಕೆಲಸ ಸಿಗುವುದು ಕಷ್ಟವೇ.

ಹೀಗೆ ವೀಸಾ-ಗ್ರೀನ್‍ಕಾರ್ಡ್ ವಿಷ ವರ್ತುಲದಲ್ಲಿ ಸಿಕ್ಕಿಕೊಂಡು ಬಳಲುತ್ತಿರುವ ಅನೇಕರಿಗೆ ಶಾಲೆಗೆ ಹೋಗುವ ಮಕ್ಕಳಿದ್ದಾರೆ, ಮಾರ್ಟ್‌ಗೇಜೂ ಮತ್ತೊಂದು ಅಂತ ಮೈ ತುಂಬಾ ಸಾಲವಿದೆ, ಇಷ್ಟು ವರ್ಷ ಇಲ್ಲಿ ದುಡಿದು ಸಾಕಷ್ಟು ಹಣ ಉಳಿಸಿದ್ದರು ಅವೆಲ್ಲವೂ ಕೈಗೆ ಬೇಕೆಂದಾಗ ಸಿಗದಿರುವ ಹಾಗೆ ಅಲ್ಲಲ್ಲಿ ತೊಡಗಿಕೊಂಡಿವೆ. ಒಂದು ವೇಳೆ h1B ಯ ಎಕ್ಸ್‌ಟೆನ್ಷನ್‌ನಲ್ಲಿ ಇರುವ ಯಾರಿಗಾದರೂ ಈಗಿರುವ ಕೆಲಸ ಕೈ ತಪ್ಪಿದರೆ ಅವರಿಗೆ ಅದೇ ಕಂಪನಿಯಲ್ಲೇ ಎಲ್ಲಾದರೂ ಮತ್ತೊಂದು ಕೆಲಸ ಸಿಗಬೇಕು (ಅದೂ ಒಂದು ತಿಂಗಳ ಒಳಗೆ), ಇಲ್ಲಾ ಆದಷ್ಟು ಬೇಗ ಗಂಟು-ಮೂಟೆ ಕಟ್ಟಬೇಕು. ಮುಂಬರುವ ಪರಿಸ್ಥಿತಿಗಳಿಗೆ ನಾವೆಷ್ಟೇ ತಯಾರಾಗಿದ್ದರೂ ನಾವಾಗೇ ಆರಂಭಿಸದೇ ಹುಟ್ಟಿಕೊಂಡ ಬದಲಾವಣೆಗಳಿಗೆ ಸ್ಪಂದಿಸುವುದು ಬಲು ಕಷ್ಟದ ಕೆಲಸ. ನನಗೇ ಯಾರಾದರೂ ದಿಢೀರನೆ ಇನ್ನೊಂದು ತಿಂಗಳಲ್ಲಿ ಅಮೇರಿಕವನ್ನು ಬಿಟ್ಟು ಹೋಗು ಎಂದರೆ ಹೇಗಿರಬಹುದು ಎಂದು ಊಹಿಸಿಕೊಳ್ಳಬಲ್ಲೆನಾದರೂ, ನಿಜಸ್ಥಿತಿಯ ಅರಿವು ನನಗೆ ಪೂರ್ಣವಾಗಿ ಆಗಲಾರದು.

***

ಒಬ್ಬ ಕೆಲಸಗಾರನಾಗಿ ಹೆಚ್ಚು ಸಮಯವನ್ನು ಇಲ್ಲಿಯೇ ಕಳೆದದ್ದರಿಂದ ನನಗೆ ನಮ್ಮ ದೇಶದಲ್ಲಿ ಕೆಲಸವನ್ನು ಕಳೆದುಕೊಳ್ಳುವುದು, ಹಾಗೆ ಕಳೆದುಕೊಂಡು ಮತ್ತೊಂದನ್ನು ಹುಡುಕಿಕೊಳ್ಳುವಾಗಿನ ಮನಸ್ಥಿತಿ ಹೇಗಿರಬಹುದು ಎಂದು ಗೊತ್ತಿಲ್ಲ (ಸಮಸ್ಯೆಗಳ ವ್ಯಾಪ್ತಿ ಎಲ್ಲಿದ್ದರೂ ಒಂದೇ ಎನ್ನುವುದು ಚೆನ್ನಾಗಿ ಗೊತ್ತು). ಆದರೆ ಇಲ್ಲಿ ಕೆಲಸ ಕಳೆದುಕೊಂಡವರು ಗಾಯದ ಮೇಲೆ ಉಪ್ಪು ಸುರಿದಂತೆ ತಮ್ಮ-ತಮ್ಮ ಇಮಿಗ್ರೇಷನ್ ಸ್ಟೇಟಸ್ಸನ್ನೂ ಕಳೆದುಕೊಂಡು ಲಗುಬಗೆಯಿಂದ ದೇಶವನ್ನು ತೊರೆದಿರುವುದನ್ನು ನೋಡಿ ಬಲ್ಲೆ. ಹೆಚ್ಚಿನವರು ಈ ವೀಸಾದ ಗೊಂದಲ ಮುಗಿಯುವವರೆಗೆ ಮನೆಯನ್ನು ಕೊಂಡುಕೊಳ್ಳುವ ಗೋಜಿಗೆ ಹೋಗೋದಿಲ್ಲ, ಹಾಗೆ ಕೊಂಡುಕೊಂಡರೂ ಆದಷ್ಟು ಬೇಗ ಮಾರುವ ಪೀಕಲಾಟಕ್ಕೆ ಸಿಕ್ಕಿಕೊಳ್ಳುತ್ತಾರೆ, ಅಲ್ಲದೇ ಇರುವ ಕೆಲವೇ ಕೆಲವು ದಿನಗಳಲ್ಲಿ ತಮ್ಮ ಕಾರನ್ನು ಮಾರಬೇಕಾಗಿ ಬರುತ್ತದೆ, ಮನೆಯಲ್ಲಿನ ಸಾಮಾನುಗಳೂ ಅವರಿವರ ಪಾಲಾಗುತ್ತದೆ. ಇಲ್ಲೇನೋ ಕೆಲಸ ಹೋಯಿತು ಇನ್ನು ಅಲ್ಲಾದರೂ ಒಳ್ಳೆಯ ಕೆಲಸವೇನಾದರೂ ಸಿಕ್ಕರೆ ಸಿಗಲಿ ಎಂದು ಇಲ್ಲಿ ಇದ್ದಷ್ಟು ದಿನಗಳಲ್ಲೇ ಪ್ರಯತ್ನ ಸಾಗಿರುತ್ತದೆ.

ಒಂದು ಕಾಲದಲ್ಲಿ ವರ್ಷಕ್ಕೆ ಅರವತ್ತೈದು ಸಾವಿರದಷ್ಟು ಮಾತ್ರ H1B ವೀಸಾಗಳನ್ನು ನೀಡುತ್ತಿದ್ದವರು ಕೆಲವು ವರ್ಷಗಳ ವರೆಗೆ ಅದನ್ನು ಲಕ್ಷದ ಮೇಲೆ ಹೆಚ್ಚಿಸಿದ್ದರು, ಮುಂದೆ ೨೦೦೧ರ ನಂತರ ಅದು ಮತ್ತೆ ಅರವತ್ತೈದು ಸಾವಿರಕ್ಕೆ ಬಂದು ನಿಂತಿತು. ಹೀಗೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಬಂದವರಲ್ಲಿ ನೂರಕ್ಕೆ ನಲವತ್ತೈದು ಜನರಾದರೂ ಭಾರತೀಯರೇ. ಹೀಗೆ ಬಂದವರಲ್ಲಿ ಇನ್ನೂ ಬೇಕಾದಷ್ಟು ಜನ ತಮ್ಮ ಆರು ವರ್ಷಗಳನ್ನು ಮುಗಿಸಿಕೊಂಡು ವರ್ಷಕ್ಕೊಮ್ಮೆ ವೀಸಾದ ಅವಧಿ ವಿಸ್ತರಣೆಯನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಒಮ್ಮೆ ವೀಸಾದ ಅವಧಿ ಮುಗಿದ ಮೇಲೆ ತಮ್ಮ-ತಮ್ಮ್ ಬಾಸ್ ಮೂಲಕ ಅವರು ಎಕ್ಸ್ಟೆಂಷನ್ನಿಗೆ ಅರ್ಜಿ ಗುಜರಾಯಿಸಬೇಕು, ಮುಂದೆ ವೀಸಾ ಬಂದ ನಂತರ ಪಾಸ್‌ಪೋರ್ಟ್ ಸ್ಟ್ಯಾಂಪಿಂಗ್ ಮಾಡಿಸಬೇಕು, ಹಾಗೆ ಮಾಡಲು ಮದ್ರಾಸಿನ ಕನ್ಸಲೇಟಿನಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು, ಹೀಗೆಲ್ಲಾ ಮಾಡಿ ಮುಗಿಸುತ್ತಿರುವಾಗಲ್ಲೇ ಮತ್ತೆ ವೀಸಾದ ಅವಧಿ ಮುಗಿಯುತ್ತದೆ - ಒಂದು ರೀತಿಯ ಚಿತ್ರಹಿಂಸೆಯ ಚಕ್ರದ ಆರಂಭವಾಗುತ್ತದೆ. ಇನ್ನು ಭಾರತಕ್ಕೆ ಹೋದರೆ ತಾನೆ ತೊಂದರೆ ಎಂದು ನಾಲ್ಕು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿರುವ ವ್ಯಕ್ತಿಗಳನ್ನೂ ನಾನು ಬಲ್ಲೆ.

ಹೀಗೆ ಹಸಿರು ಕಾರ್ಡಿನ ಬೆನ್ನ ಹತ್ತಿ ಹಪಾಪಿಗಳಾದವರು ಸಂಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ, ಅನಿಶ್ಚಿತತೆಯಿಂದ ಬದುಕುವ ಕಷ್ಟವನ್ನು ಅನುಭವಿಸಿದವರೇ ಬಲ್ಲರು!

Monday, June 05, 2006

ಎರಡು ಸೈಟಿನ ಗೋಳು

ಬೆಂಗಳೂರಿನಲ್ಲಿ ಕಷ್ಟಾ ಪಟ್ಟು ತೆಗೆದುಕೊಂಡ ಸೈಟನ್ನು ನಾನು ಇನ್ನೂ ರಿಜಿಸ್ಟ್ರೇಷನ್ ಮಾಡ್ಸಿಲ್ಲ, ಅಲ್ಲಿಗೆ ರಜೆಗೆ ಹೋದಾಗ ಮಾಡಿಸೋಣ ಎಂದುಕೊಂಡು ಇಷ್ಟು ದಿನ ತಳ್ಳಿದ್ದಾಯ್ತು, ಆದ್ರೆ ಇತ್ತಿಚಿಗಂತೂ ನಮ್ಮನೆಯವರು 'ರಿಜಿಸ್ಟ್ರೇಷನ್ ಮಾಡಿಸ್ದೇ ಹಾಗೇ ಬಿಟ್ರೆ ಆ ಸೈಟು ಹೋದ ಹಾಗೆಯೇ!' ಎಂದು ಹೆದರಿಸತೊಡಗಿದ ಮೇಲೆ ದಿಗಿಲು ಇನ್ನೂ ಹೆಚ್ಚಾಗಿದೆ. ಒಂದೇ ಯಾರಿಗಾದ್ರೂ ಪವರ್ ಆಫ್ ಆಟಾರ್ನಿ ಕೊಟ್ಟು ಅವರ ಹೆಸರಿಗೆ ಮಾಡಿಸಿ ಆಮೇಲೆ ನನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು, ಇಲ್ಲಾ ಅಲ್ಲಿಗೆ ಹೋದಮೇಲೆ ನೋಡೋಣವೆಂದು ಸುಮ್ಮನಿರಬೇಕು, ಅಲ್ಲಿಯವರೆಗೆ ಮತ್ತು ಅದರ ನಂತರ ರಿಸ್ಕ್‌ಗಳು ಎಷ್ಟು ದೊಡ್ಡದಾದರೂ ಬರಬಹುದು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೈಟುಗಳಿಗೆ ಸಂಬಂಧಿಸಿದಂತೆ ನಡೆದ ಇನ್ನೂ ಎರಡು ಘಟನೆಗಳನ್ನು ಹೇಳಿಬಿಟ್ಟರ್‍ಏನೇ ನನಗೊಂದು ಸಮಾಧಾನ. ಮೊದಲನೆಯದಾಗಿ ನನ್ನ ಸಂಬಂಧಿಕರೊಬ್ಬರು ೧೯೮೫ ರಲ್ಲಿ ಅವರ ಕೋ ಆಪರೇಟಿವ್ ಸೊಸೈಟಿ ಮೂಲಕ ಅವರ ಆಫೀಸಿನಲ್ಲಿ ತುಂಬಾ ಜನ ಸೇರಿ ಹಲವಾರು ಸೈಟುಗಳನ್ನು ಖರೀದಿಸಿದ್ದರು. ಖರೀದಿಸಿ, ರಿಜಿಸ್ಟರೇಷನ್ ಆಗಿದ್ದರೂ ಸ್ವಲ್ಪ ದಿನಗಳಲ್ಲಿ ಆಗ ಊರಿನ ಹೊರವಲಯದಲ್ಲಿದ್ದ ಆ ಸೈಟುಗಳಲ್ಲಿ ಒಂದು ಜಾತಿಯ ಜನರು ಬಂದು ಗುಡಿಸಲನ್ನೆಬ್ಬಿಸಿದರು. ಆಗಲೇ ಕಾನೂನಿನೆ ವಿರುದ್ಧವಾಗಿ ಆಕ್ರಮಿಸಿಕೊಂಡಿದ್ದ ಸೈಟುಗಳನ್ನು ತೆರವುಗೊಳಿಸಲು ಸೊಸೈಟಿ ಹಾಗೂ ಅದರ ನೌಕರರು ಕಾನೂನಿನ ಮೊರೆಗೆ ಹೋಗಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ. ಆದರೆ ಕಳೆದ ತಿಂಗಳು, ಅಂದರೆ ಸುಮಾರು ೧೫ ವರ್ಷಗಳ ನಂತರ 'ನ್ಯಾಯ' ತೀರ್ಮಾನವಾಗಿ ಕೋರ್ಟು ಆಕ್ರಮವಾಗಿ ಜಾಗಕ್ಕೆ ನುಗ್ಗಿ ಗುಡಿಸಲು ಕಟ್ಟಿಕೊಂಡವರ ಪರವಾಗಿ ತೀರ್ಪು ನೀಡಿದೆಯಂತೆ. ಇದರಿಂದಾಗಿ ತುಂಬಾ ನೋವಿನಲ್ಲಿದ್ದ ನನ್ನ ಸಂಬಂಧಿಕರು ಇಷ್ಟು ವರ್ಷ ಕಾದಿದ್ದಕ್ಕೆ ಅಸಲೂ ಇಲ್ಲ, ಬಡ್ಡಿಯೂ ಇಲ್ಲ, ನಮ್ಮ ಹಣವೂ ಹೋಯಿತು ಹಾಗೂ ಸುಮ್ಮನೇ ಕಾಲಹರಣವಾಯಿತು ಎಂದು ನನ್ನಲ್ಲಿ ಗೋಳುತೋಡಿಕೊಂಡರು.

ಎರಡನೆಯದಾಗಿ, ನನ್ನ ಸ್ನೇಹಿತರೊಬ್ಬರು, ಸುಮಾರು ೨೫ ವರ್ಷದ ಹಿಂದೆಯೇ ಅಮೇರಿಕೆಗೆ ಬಂದು ಇಲ್ಲಿಯೇ ನೆಲೆಸಿದವರು, ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ೬೦ ಬೈ ೪೦ ವಿಸ್ತೀರ್ಣದ ಒಂದು ಸೈಟನ್ನು ತೆಗೆದುಕೊಂಡಿದ್ದರಂತೆ. ಈಗ ನಿವೃತ್ತರಾಗಿರುವ ಅವರು ಮೊನ್ನೆ-ಮೊನ್ನೆ ಅದನ್ನು ಮಾರಿ ಬಂದ ಹಣದಿಂದ ಏನೇನನ್ನೋ ಮಾಡಬಹುದು ಎಂದು ಯೋಜನೆ ಹಾಕಿಕೊಂಡಿದ್ದವರಿಗೆ ಆಶ್ಚರ್ಯಕಾದಿತ್ತು. ಅವರು ಅಮೇರಿಕೆಯಲ್ಲಿರುವಾಗಲೇ ಅವರ ಹೆಸರಿನಲ್ಲಿ ರಿಜಿಸ್ಟರಾಗಿ, ಖಾತ್ರೆ ಪತ್ರಗಳಿದ್ದ ಸೈಟನ್ನು ಈಗಾಗಲೇ ಯಾರೋ ಬೇರೆಯವರಿಗೆ ಮಾರಿಬಿಟ್ಟಿದ್ದಾರಂತೆ! ಇವರು ಎಲ್ಲದರಲ್ಲೂ ನೇರವಾಗಿ, ನ್ಯಾಯವಾಗಿರುವ ತಮ್ಮ ದಾಖಲೆಗಳನ್ನು ತೋರಿಸಿ ಎಷ್ಟೇ ಹಣವನ್ನು ಖರ್ಚು ಮಾಡಿದರೂ, ಇವರ ವಿರುದ್ಧವಾಗಿ ಕೆಲಸಮಾಡುವ ಶಕ್ತಿಗಳು ನ್ಯಾಯಾಧೀಶರಿಗೆ ಲಂಚವನ್ನು ಕೊಟ್ಟು ಆದಷ್ಟು ದಿನ ಒಂದಲ್ಲ ಒಂದು ಕಾರಣದಿಂದ ಕೇಸನ್ನು ಮುಂದೆ ಹಾಕಿಸುತ್ತಲೇ ಇದ್ದಾರಂತೆ. ಇವತ್ತು ಮೂವತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಆ ಸೈಟನ್ನು ಹೇಗಾದರೂ ಮಾಡಿ ಪಡೆದುಕೊಂಡೇ ತೀರುವ ಸಂಚನ್ನು ಹೂಡಿದ್ದಾರಂತೆ.

ಇವರ ಮಾತನ್ನು ಕೇಳಿ ಪಿಚ್ಚೆನಿಸಿದಾಗ ನನ್ನ ಸ್ನೇಹಿತರು ತಮ್ಮ ಮಾತನ್ನು ಮುಂದುವರೆಸುತ್ತಾ 'ಇವರೆಲ್ಲಾ ಏನನ್ನು ಕಾಯುತ್ತಿದ್ದಾರೆ, ಗೊತ್ತೇ?' ಎಂದರು. ನಾನು ಸುಮ್ಮನಿದ್ದೆ. ಮತ್ತೆ ಅವರೇ 'ಹೀಗೇ ಕೇಸನ್ನು ಮುಂದುವರೆಸುತ್ತಾ ಇದ್ದರೆ, ಒಂದಲ್ಲ ಒಂದು ದಿನ ನಾನು ಗೊಟಕ್ ಅನ್ನುತ್ತೇನೆ, ಆಗ ನನ್ನ ಹೆಂಡತಿ ಮಕ್ಕಳು ಈ ಸೈಟಿನ ವಿಚಾರಕ್ಕೆ ಹೋಗುವುದಿಲ್ಲ, ಹಾಗಾದರೂ ಸಿಗಲಿ ಎಂದುಕೊಂಡಿದ್ದಾರೆ' ಎಂದರು. ಹಾಗೇ ಮುಂದುವರೆಸಿ 'ಅದೇ ಕೋರ್ಟಿನ ಆವರಣದಲ್ಲೇ, ಎಲ್ಲಾ ನ್ಯಾಯಾಧೀಶರ ಎದುರೇ ಕ್ಲರ್ಕುಗಳು ಲಂಚವನ್ನು ಕೇಳಿ ಪಡೆದು, ಅಲ್ಲೇ ಟೇಬಲ್ಲಿನ ಮೇಲಿರುವ ಗಲ್ಲಾ ಪೆಟ್ಟಿಗೆಯಲ್ಲಿ ಸಾಮಾನ್ಯ ವ್ಯವಹಾರವೇನೋ ಎನ್ನುವಂತೆ ದುಡ್ಡನ್ನು ಪಡೆದು ಜೋಡಿಸಿಡುವುದನ್ನು ನೋಡಿದರೆ, ಅಲ್ಲಿಯ ಯಾವುದೇ ನ್ಯಾಯಾನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯನ್ನೇ ಕಳೆದುಕೊಂಡುಬಿಟ್ಟಿದ್ದೇನೆ' ಎಂದರು. 'ಸರಿ, ಈಗೇನು ಮಾಡುತ್ತೀರಿ?' ಎಂದುದಕ್ಕೆ 'ಮತ್ತೇನಿಲ್ಲ, ಆಕ್ರಮವಾಗಿ ಈ ಸೈಟನ್ನು ಕಬಳಿಸಿಕೊಂಡಿರುವವನ ಹತ್ತಿರವೇ ಒಂದು ಡೀಲ್ ಕುದುರಿಸಿ, ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಆದಷ್ಟು ಬೇಗ ಹಿಂತಿರುಗಿ ಪಡೆಯುವುದೇ ಜಾಣತನ ಅನ್ನಿಸುತ್ತೆ' ಎಂದರು.

***

ಕಾಸ್ಮೋಪಾಲಿಟನ್ ವಾತಾವರಣದ ಬೆಂಗಳೂರಿನಲ್ಲಿ ನಾನು ಸೈಟು ತೆಗೆದುಕೊಳ್ಳುವಾಗಿನ ಸ್ಪರ್ಧೆಯಲ್ಲಿ ಕನ್ನಡಿಗರಿಗಿಂತ ಉಳಿದವರೇ ಹೆಚ್ಚು ಕಂಡುಬರುತ್ತಾರೆ. ನಿವೇಶನಗಳ ಅಭಾವದಲ್ಲಿ ಕೇಳಿದ ಹಣಕ್ಕೆ ತಕ್ಕಂತೆ ಒಂದೇ ಬಿಡಿಎ ಸೈಟೋ ಅಥವಾ ಖಾಸಗೀ ಸಹಕಾರ ಸಂಘಗಳ ಮೂಲಕವೋ ತೆಗೆದುಕೊಂಡರೂ ಹೆಚ್ಚು ಬೆಲೆಯನ್ನು ತೆರದೇ ಬೇರೆ ದಾರಿಯೇ ಇಲ್ಲ. ನನ್ನ ಅಮೇರಿಕನ್ ಡಾಲರ್‌ಗೇನೆ ಈ ಸ್ಥಿತಿ ಇದ್ದರೆ ಇನ್ನು ಅಲ್ಲಿಯೇ ದುಡಿದು, ಹಣ ಉಳಿಸಿ ಅದರಿಂದ ಇವೇ ಸೈಟುಗಳನ್ನು ಖರೀದಿಸುವವರ ಗತಿಯೇನು ಎಂದು ಹೆದರಿಕೆಯಾಗುತ್ತದೆ. ನಿವೇಶನವನ್ನು ತೆಗೆದುಕೊಳ್ಳುವುದು ಬರೀ ಅರ್ಧ ಕೆಲಸ, ಇನ್ನು ಅಲ್ಲಿ ಮನೆಯನ್ನು ಕಟ್ಟಿ ಇರಲು ವ್ಯವಸ್ಥೆ ಮಾಡಿಕೊಳ್ಳುವುದು ಎಂದರೆ ಸಾಕುಬೇಕಾಗಿ ಹೋಗುತ್ತದೆ. ಅಂತದ್ದರಲ್ಲಿ ಇದ್ದಬದ್ದ ದುಡ್ಡನ್ನೆಲ್ಲ ಸುರಿದು ನಿವೇಶನ ತೆಗೆದುಕೊಂಡವರು ಮೋಸ ಹೋಗದೇ ಇರಲು ಬಹಳ ಪರದಾಡಬೇಕಾಗುತ್ತದೆ. ಈ ಪರದಾಟ ನನ್ನಂತಹವರಿಗೆ ಅರ್ಥವಾಗೋದಿಲ್ಲ, ಜೀವನ ಪರ್ಯಂತ ದುಡಿದು, ಬಂದ ಪೆನ್ಷನ್ ಹಣದಲ್ಲಿ ಕೊಂಡ ಸೈಟನ್ನೋ ಅಥವಾ ಮಗಳ ಮದುವೆಯ ಖರ್ಚಿಗೆಂದು ಇಟ್ಟ ಸೈಟನ್ನು ಯಾರೋ ಅನ್ಯಾಯವಾಗಿ ಆಕ್ರಮಿಸಿಕೊಂಡಿದ್ದು ಗೊತ್ತಾದರೂ ಒಂದೇ ನ್ಯಾಯ ದೊರೆಯುವುದಿಲ್ಲ, ಹಾಗೆ ದೊರೆತರೂ ಸುಮಾರು ಹತ್ತು ವರ್ಷಗಳ ಮೇಲೆ ಆಗುತ್ತದೆ ಎನ್ನುವುದನ್ನು ನೆನೆಸಿಕೊಂಡಾಗೆಲ್ಲ ಮೈನಡುಗುತ್ತದೆ.

ಜೀವನದಲ್ಲಿ ನೆಟ್ಟಗೆ ಬದುಕಬೇಕು ಎನ್ನುವುದೇ ದೊಡ್ಡ ಹೋರಾಟ, ಅದರ ಜೊತೆಯಲ್ಲಿ ದುರ್ಮಾರ್ಗಿಗಳ ಹಾವಳಿಯಿಂದ ತಪ್ಪಿಸಿಕೊಂಡು ನಿಶ್ಚಿಂತವಾಗಿರೋದಕ್ಕೆ ಸಾಧ್ಯವೇ ಇಲ್ಲ ಎನ್ನಿಸಿಬಿಟ್ಟಿದೆ. ಅದೆಷ್ಟೋ ಸಾವಿರ ವರ್ಷಗಳ ಪರಂಪರೆ ಇರುವ ನಮ್ಮಲ್ಲಿ ಇಷ್ಟೊಂದು ವರ್ಷಗಳಲ್ಲಿ ಜನರ ಮನಸ್ಥಿತಿ ವಿಕಾಸಗೊಂಡರೂ 'ಕೆಟ್ಟದಾಗಿ ಬದುಕುವ' ವಿಧಿ ವಿಧಾನಗಳಲ್ಲಿ ಹೆಚ್ಚು ಪ್ರಗತಿಯಾಗಿದೆಯೇ ವಿನಾ ಅವುಗಳನ್ನು ಎದುರಿಸಿ ಗೆಲ್ಲುವ ವ್ಯವಸ್ಥೆಯಲ್ಲಲ್ಲ. ಬೆಂಗಳೂರಿನ ನ್ಯಾಯಾಧೀಶರ ಮುಂದೆ ಅನ್ಯಾಯವಾಗಿ ಸೈಟನ್ನು ಆಕ್ರಮಿಸಿಕೊಂಡಿದ್ದಾರೆಂದು ಸಾವಿರ ಕೇಸುಗಳು ಸಾಲು ಕಟ್ಟಿ ಇರಲಿ, ಕೊನೇ ಪಕ್ಷ ದಿನಕ್ಕೆ ಎರಡು ಇಂತಹ ಕೇಸುಗಳಿಗೆ ಮುಕ್ತಿ ಸಿಕ್ಕು 'ನಿಜವಾದ' ನ್ಯಾಯ ಸಿಕ್ಕುವಂತಾಗಿದ್ದರೆ ಎಷ್ಟೋ ಚೆನ್ನಾಗಿತ್ತು.

***

ನಿಮ್ಮ ಯಾವುದೇ ನಿವೇಶನವನ್ನು ಆಕ್ರಮಿಸಿಕೊಳ್ಳುವುದು ಬಹಳ ಸುಲಭ, ಒಂದೇ ಅಲ್ಲಿ ಹಾಡು ಹಗಲೇ ಕಲ್ಲೊಂದನ್ನು ಪ್ರತಿಷ್ಟಾಪಿಸಿ ಪೂಜೆ ಮಾಡಿಸಿಬಿಡಬೇಕು, ಅಥವಾ ಸರ್ಕಾರದ ಪೋಷಣೆಯಲ್ಲಿರುವ ಯಾವುದೋ ಒಂದು ಗುಂಪಿನವರು ಬಂದು ರಾತ್ರೋ ರಾತ್ರಿ ವಕ್ಕರಿಸಿಬಿಡಬೇಕು, ಅಷ್ಟೇ. ಆದರೆ ಕೇವಲ ನಿಮಿಷಗಳಲ್ಲಿ ಆಗುವ ಈ ಆಕ್ರಮಣದ ಪ್ರಕ್ರಿಯೆಯನ್ನು ಎದುರಿಸಿ ನೀವು ವರ್ಷಗಟ್ಟಲೇ ಏಗಿದರೂ ಕೊನೆಗೆ ಜಯಸಿಗುವುದೇನೂ ಗ್ಯಾರಂಟಿಯಲ್ಲ, ಅಲ್ಲದೇ ಈ ತೀರ್ಪಿನ ಕೊನೆಯವರೆಗೂ ಫಲಾನುಭವಿಸುವ ಹಕ್ಕು ಆಕ್ರಮವಾಗಿ ಸೇರಿಕೊಂಡವರದ್ದೇ.

Sunday, June 04, 2006

ನನಗ್ಗೊತ್ತು "ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎಂದು...

ಇಂದು (ಜೂನ್ ೪, ೨೦೦೬ - ಭಾನುವಾರ) ಮುಂಜಾನೆ ಸಾಪ್ತಾಹಿಕ ಪುರವಣಿಯನ್ನು ತಿರುವಿಹಾಕುತ್ತಿದ್ದಾಗ ಎಸ್. ದಿವಾಕರ್ ಬರೆದಿರೋ "ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎನ್ನುವ ಲೇಖನ ಶೀರ್ಷಿಕೆಯಲ್ಲೇ ಆಕರ್ಷಿಸಿ ಮುಂದೆ ಓದುವಂತೆ ಮಾಡಿತು, ಈ ಲೇಖನವನ್ನು ನಾನು ಓದದಿದ್ದರೇನೇ ಎಷ್ಟೋ ಚೆನ್ನಾಗಿತ್ತು ಎಂದುಕೊಂಡೆ. ಲೇಖನವನ್ನು ಓದಿದ ಮೇಲೆ ಭಯಂಕರ ಉರಿ ಹತ್ತಿದ್ದರಿಂದ ಈ ಪ್ರತಿ ಲೇಖನವನ್ನು ಬರೆಯಬೇಕಾಯ್ತು, ಇದು ದಿವಾಕರ್ ಹಾಗೂ ಕೃಷ್ಣಮೂರ್ತಿ ಹನೂರು ಅವರುಗಳಿಗೆ ತಲುಪುತ್ತದೆಯೋ ಇಲ್ಲವೋ ಅವರುಗಳಂತೆ ನಾನು ಅಡ್ಡಗೋಡೆಯ ಮೇಲೆ ದೀಪವಿಡದೇ, ಇಬ್ಬರನ್ನೂ ಮಹಾನೀಚರೆಂದು ಬಹಿರಂಗವಾಗಿ ಉಗಿಯುವ ಸಾಹಸಕ್ಕೆ ಇಳಿದಿದ್ದೇನೆ, ಇದರ ಪರಿಣಾಮಗಳು ಏನಾದರೂ ಆಗಲಿ ಅದನ್ನೊಂದು ಕೈ ನೋಡಿಕೊಂಡೇ ಬಿಡುತ್ತೇನೆ.

***

ದಿವಾಕರ್ ಅವರ ಲೇಖನದಲ್ಲಿ ಬರೆದಿರುವಂತೆ ಡಾ. ಕೃಷ್ಣಮೂರ್ತಿ ಹನೂರು ಯಾವ ಸಂದರ್ಭದಲ್ಲಿ (ಕಾಂಟೆಕ್ಸ್ಟ್) "ಪುತಿನ ಹೇಳಲಿಕ್ಕೇನೂ ಇಲ್ಲದಿದ್ದರೂ ಏನೇನೋ ಇದೆಯೆಂದು ಭಾಸವಾಗುವಂತೆ ಸಂಕೃತಭೂಯಿಷ್ಠವಾದ ಭಾಷೆಯನ್ನು ರೂಢಿಸಿಕೊಂಡವರು. ನಿಜಕ್ಕೂ ಓದಲರ್ಹವಾದ ಒಂದೇ ಒಂದು ಸಾಲನ್ನೂ ಅವರು ಬರೆದಿಲ್ಲ" ಎಂದು ಹೇಳಿದರೋ ಸ್ಪಷ್ಟವಾಗಿರದಿದ್ದರೂ ಪುತಿನರವರ ಜನ್ಮಶತಾಬ್ಧಿಯ ಸಂದರ್ಭದಲ್ಲಿ ವಿಚಾರಗೋಷ್ಠಿಯಲ್ಲಿ ಸುಮಾರು ಮೂವತ್ತು ನಿಮಿಷಗಳ ಕಾಲ ಮಾತನಾಡಿದರು ಎಂದು ಬರೆದಿದ್ದಾರೆ. ಕಳೆದ ವರ್ಷ ಎಂದು ಬರೆದದ್ದರಿಂದ ೨೦೦೫ ರಲ್ಲಿ ಆಗಿರಬಹುದಾದ ಘಟನೆ ಎಂದುಕೊಂಡರೂ ಸುಮಾರು ಆರೇಳು ತಿಂಗಳುಗಳ ನಂತರ ಈ ಪ್ರತಿಕ್ರಿಯೆಯನ್ನು ದಿವಾಕರ್ ಹೀಗೇಕೆ ಬರೆದಿದ್ದಾರೆ ಎಂದು ತಲೆಕೆಡಿಸಿಕೊಂಡಷ್ಟೂ ಉತ್ತರ ಗೋಜಲಾಗತೊಡಗಿತು. ಅದೂ ಅಲ್ಲದೇ ಒಂದು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದಾಗ ಪುತಿನರವರ ಬಗ್ಗೆಯೇ ವಿಚಾರಗಳನ್ನು ಉಳಿದವರೆಲ್ಲರೂ ಮಂಡಿಸಿ ಮಾತನಾಡುತ್ತಿದ್ದಾಗ ಬೇರೆಯವರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ದಿವಾಕರ್ ಬರೆದಿಲ್ಲ, ಅಲ್ಲದೇ ಅಧ್ಯಕ್ಷರಾಗಿ ಕೃಷ್ಣಮೂರ್ತಿಯವರಿಗೆ ಅದೇ ಸಭೆಯಲ್ಲಿಯೇ ಏನನ್ನಾದರೂ ಇವರು ಹೇಳಿದರೇ, ಏಕಿಲ್ಲ? ಅಲ್ಲದೇ ಹೀಗೆ ಹಳತಾದ ಘಟನೆಗಳನ್ನು ಇಂದು ಇವರು ನೆನೆಸಿಕೊಳ್ಳುವ ಔಚಿತ್ಯವೇನು?

ಅದೇ ಸಭೆಯಲ್ಲಿ ನಾನೇನಾದರೂ ಅಧ್ಯಕ್ಷ ಅಥವಾ ಸಭಿಕನಾಗಿದ್ದರೆ ಕೃಷ್ಣಮೂರ್ತಿಯವರನ್ನು ಮಾತನಾಡಿಸುತ್ತಿದ್ದೆ - ಅವರ ಮನದ ಇಂಗಿತವನ್ನು ಅರಿಯಲು ಪ್ರಯತ್ನಪಡುತ್ತಿದ್ದೆ. ಸಾರ್‌ಕ್ಯಾಷ್ಟಿಕ್ ಆಗಿ ಹೇಳಿದ್ದಾರೇನೂ ಎಂದು ಕೊಂಚ ಯೋಚಿಸುತ್ತಿದ್ದೆ. ಒಳಮನಸ್ಸು ಅಲ್ಲೆ ವೇದಿಕೆಯಿಂದ ಅವರನ್ನು ಹಿಡಿದೆಳೆದು ಕೊರಳಪಟ್ಟಿ ಹಿಡಿದು ಎರಡು ಬಾರಿಸೋಣವೆಂದು ಹೇಳುತ್ತಿದ್ದರೂ ಅದಕ್ಕೆ ಸಮಾಧಾನ ಹೇಳಿಕೊಂಡು ಮಾತಿಗೆ ತೊಡಗಿಸುತ್ತಿದ್ದೆ. ಹಾಗೇನೂ ಆಗಲಿಲ್ಲವಲ್ಲಾ, ಅಂದರೆ ಆ ಸಭೆಯಲ್ಲಿದ್ದವರೆಲ್ಲ ಬಾಯಿಗೆ ಕಡುಬು ತುಂಬಿಕೊಂಡಿದ್ದರೇ? ದಿವಾಕರ್ ಅವರು ಹಿಂದಿನದನ್ನು ಸ್ಮರಿಸುತ್ತಾ 'ಇಪ್ಪತ್ತೈದು ವರ್ಷಗಳ ಹಿಂದೆ ಹೀಗೆಲ್ಲೂ ಆಗುತ್ತಿರಲಿಲ್ಲ" ಎಂದು ಪದೇ-ಪದೇ ಲೇಖನದುದ್ದಕ್ಕೂ ಬರೆದಿದ್ದಾರೆ - ಅದು ನಿಜ, ಇಪ್ಪತ್ತೈದು ವರ್ಷಗಳ ಹಿಂದೆ ಇಂತಹ ಸೂಕ್ಷ್ಮ ವಿಷಯಕ್ಕೆ ಸ್ಪಂದಿಸಲು ವರ್ಷದ ಮೇಲೆ ಹಿಡಿಯುತ್ತಿರಲಿಲ್ಲ ಎನ್ನುವುದನ್ನೂ ಅವರು ಮರೆತಂತಿದೆ. ಇದು ಬರೀ 'ಬೂಸಾ ಬಸವಲಿಂಗಪ್ಪನ ಕಥೆ'ಯಲ್ಲ, ಕನ್ನಡ ಸಾಹಿತ್ಯವನ್ನು ಬೋಧಿಸುವ ಒಬ್ಬ ಪಿ.ಎಚ್‌ಡಿ ಮಾಡಿರೋ ಒಬ್ಬರು ಒಂದು ವಿಶ್ವವಿದ್ಯಾನಿಲಯದ ಬಹಿರಂಗ ವೇದಿಕೆಯಲ್ಲಿ ಈ ಮಾತನ್ನು ಹೇಳಿದ್ದು, ಅದನ್ನು ಕನ್ನಡದ ಸಾಹಿತ್ಯವನ್ನು ಅಭ್ಯಸಿಸುವ ಯಾವೊಬ್ಬ ವಿದ್ಯಾರ್ಥಿಯಾಗಲೀ, ಕನ್ನಡವನ್ನು ಅಲ್ಪಸ್ವಲ್ಪ ಓದಿಕೊಂಡಿರೋ ಒಬ್ಬ ಸಾಮಾನ್ಯನಾಗಲೀ, ವೇದಿಕೆಯ ಮೇಲೆ ಕುಳಿತ ಇತರ ಗಣ್ಯರಾಗಲೀ ಅಥವಾ ಅಧ್ಯಕ್ಷರಾಗಲೀ ಈ ಮಾತಿನ ಹಿಂದಿನ ಔಚಿತ್ಯವನ್ನು ಪ್ರಶ್ನಿಸಬಹುದಿತ್ತು, ಕೊನೆಗೆ ಏನಿಲ್ಲವೆಂದರೂ ತಮ್ಮ ಅಧ್ಯಕ್ಷ ಭಾಷಣದಲ್ಲಿ ಪುತಿನರವರ ಬಗೆಗೆ ಹೇಳಿದ್ದನ್ನೆಲ್ಲಾ ಸಮರೈಸ್ ಮಾಡುತ್ತಾ ಕೃಷ್ಣಮೂರ್ತಿಯವರನ್ನು ಕೆಣಕಬಹುದಿತ್ತು, ಹಾಗೇನೂ ಆಗಲಿಲ್ಲ, ಆದರೆ ಹಲವಾರು ತಿಂಗಳುಗಳ ಮೇಲೆ ಯಾರದ್ದೋ ಕಣ್ಣೀರು ಒರೆಸುವ ಹಾಗೆ, ಕನ್ನಡಸಾಹಿತ್ಯವನ್ನು ಕೊಂಡುಕೊಂಡೋರ ಹಾಗೆ ದೊಡ್ಡದಾಗಿ ಲೇಖನವನ್ನು ಬರೆದಿದ್ದಾರೆ ಅದಕ್ಕೇ ಅವರನ್ನು ಮಹಾನೀಚ ಎಂದು ಕರೆದದ್ದು.

ಇನ್ನು ಕೃಷ್ಣಮೂರ್ತಿಯವರಿಗೆ ಈ ಮಾತು ಅನ್ವಯವಾಗುತ್ತದೆ - ಅವರು ನಿಜಕ್ಕೂ 'ಪುತಿನ ಅವರು ಓದಲರ್ಹವಾದ ಒಂದೇ ಒಂದು ಸಾಲನ್ನೂ ಬರೆದಿಲ್ಲ' ಎಂದರೆ ಖಂಡಿತ ತಪ್ಪುತಿಳಿದುಕೊಂಡಿದ್ದಾರೆ, ಆ ಮಾತು ನಿಜವಲ್ಲ. ಪುತಿನ ಅವರು ಬರೆದದ್ದು ಬೇಕಾದಷ್ಟಿದೆ, ದಶಕಗಳ ಕಾಲ ಸಾಹಿತ್ಯ ಕೃಷಿಯನ್ನು ಮಾಡಿದವರು ಪುತಿನ. ವಿದೇಶದ ಮ್ಯೂಸಿಕಲ್‌ಗಳಿಂದ ಪ್ರೇರೇಪಿತರಾಗಿ ಕನ್ನಡದಲ್ಲಿ ಅವತರಣಿಕೆಗಳನ್ನು ಬರೆದವರು ಪುತಿನ. ತೀನಂಶ್ರೀ ಯವರ ಗರಡಿಯಲ್ಲಿ ಪಳಗಿ ಮೈಸೂರಿನ ಮಹಾ ಸಾಹಿತಿಗಳ ಯಾದಿಯಲ್ಲಿ ನಿಲ್ಲುವವರು ಪುತಿನ. ಅವರ ಹಲವಾರು ಪದ್ಯಗಳು, ನಾಟಕಗಳು ಇವತ್ತಿಗೂ ಜನಜನಿತ. ಇಂಥವರು 'ಒಂದೇ ಒಂದು ಓದಲರ್ಹವಾದ ಸಾಲನ್ನೂ ಬರೆದಿಲ್ಲವೇ?'. ನನಗೆ ಇದರಿಂದ ಕೃಷ್ಣಮೂರ್ತಿಯವರಲ್ಲಿಯೇ ನಂಬಿಕೆ ಕಡಿಮೆ ಆಯಿತೇ ವಿನಾ ಪುತಿನರವರ ಮೇಲಿರುವ ಗೌರವ ಇನ್ನೂ ಇಮ್ಮಡಿಗೊಂಡಿತು. ಕೃಷ್ಣಮೂರ್ತಿಯವರು 'ಓದಲರ್ಹ' ಎಂದು ಯಾವುದನ್ನು ಕರೆಯುತ್ತಾರೆ? ಅವರ ಪಿಎಚ್‌ಡಿ ಥೀಸೀಸ್ ಏನಾದರೂ ಸಿಕ್ಕಿದ್ದರೆ ನೋಡಬಹುದಿತ್ತು, ಅಥವಾ ಅದನ್ನೆಲ್ಲಾದರೂ 'ಸಂಪಾದನೆ' ಮಾಡಿದ್ದಾರೆಯೇ ಎನ್ನುವ ಅನುಮಾನವೂ ಬರದೇ ಇಲ್ಲ. ನಾನು ಅಲ್ಪಸ್ವಲ್ಪ ಕನ್ನಡ ಸಾಹಿತ್ಯವನ್ನು ಓದಿಕೊಂಡವನು, ನನಗೇ ಇಷ್ಟೊಂದು ಉರಿಸಿದ ಅವರನ್ನು ಉಳಿದವರು ಅದು ಹೇಗೆ ಸುಮ್ಮನೇ ಬಿಟ್ಟರು ಎಂದು ಆಶ್ಚರ್ಯವಾಗುತ್ತದೆ. ಇನ್ನು ಮುಂದೆಂದಾದರೂ ಹೀಗೆ ಅಯೋಗ್ಯ ಹೇಳಿಕೆಗಳನ್ನು ಹೇಳದಿದ್ದರೆ ಅವರಿಗೇ ಒಳ್ಳೆಯದು. ದಿವಾಕರ್ ಹೇಳಿದ್ದೆಲ್ಲವೂ ನಿಜವಾದರೆ ಕೃಷ್ಣಮೂರ್ತಿಯಂತಹ ಮಹಾನೀಚ ಕನ್ನಡ ಅಧ್ಯಾಪಕರನ್ನು ನಾನೆಲ್ಲೂ ನೋಡಿಲ್ಲ.

***

"ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎನ್ನುವ ಪ್ರಶ್ನೆಗೆ ನನ್ನಲ್ಲಿ ಉತ್ತರವಿದೆ: ಇಪ್ಪತ್ತೈದು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ, ಕನ್ನಡಕ್ಕೆ ಈಗೆಲ್ಲ ಇರುವವರು ನನ್ನಂತಹ ಕೈಲಾಗದವರು, ದಿವಾಕರ್ ಅಂತಹ ಬಸವನಹುಳುವಿನ ತರಹ ಕೊರಗಿ ಪ್ರತಿಕ್ರಿಯೆ ನೀಡುವ ಅಧಕ್ಷರು, ಕೃಷ್ಣಮೂರ್ತಿಯವರಂತಹ ನಾಲಿಗೆಯ ಮೇಲೆ ಹತೋಟಿಯಿರದ, ಬಾಯಿಗೆ ಬಂದಿದ್ದನ್ನು ಆಡುವ ಮೇಷ್ಟ್ರುಗಳು. 'ಕೈಲಾಗದವನು ಮೈ ಪರಚಿಕೊಂಡನಂತೆ' ಎಂದು ನನ್ನಂಥವರು ಈ ಪ್ರತಿ ಲೇಖನವನ್ನು ಬರೆದು ಕೈ ತೊಳೆದುಕೊಳ್ಳುತ್ತಾರೆ, ದಿವಾಕರ್ ಅಂಥವರು ಹಲವಾರು ತಿಂಗಳುಗಳ ನಂತರವಾದರೂ ಒಂದು ಕೆಟ್ಟ ಲೇಖನದಲ್ಲಿ ಸ್ಪಂದಿಸುತ್ತಾರೆ, ಕೃಷ್ಣಮೂರ್ತಿಯಂಥವರಿಗೆ ಸೂಕ್ಷ ಸಂವೇದನೆಗಳು ಅರ್ಥವೇ ಆಗೋದಿಲ್ಲ, ಆ ಸಭೆಯಲ್ಲಿದ್ದ ಸಭಿಕರು ಒಂದು ಕ್ಷಣದ ಮಟ್ಟಿಗೆ ನರಸತ್ತವರಾಗಿ ಬಿಡುತ್ತಾರೆ. ನಮ್ಮ ಸಾಹಿತ್ಯ ಲೋಕಕ್ಕೆ ಏನಾಗಿದೆ ಎಂದರೆ ಇಂಥ ನರಸತ್ತವರ ಕೊಡುಗೆ ಹೆಚ್ಚಾಗಿದೆ, ಸತ್ವವಿರುವವರು ಸಮಸ್ಯೆಗಳಿಂದ ದೂರವೇ ಉಳಿದಿದ್ದಾರೆ, ಸತ್ವವಿರದವರು ತುಂಬದ ಕೊಡದ ಹಾಗೆ ಬಡಬಡಿಸುತ್ತಾರೆ. ಇಪ್ಪತ್ತೈದೇನೂ ಇನ್ನೂರೈವತ್ತು ವರ್ಷಗಳು ಹೋದರೂ ಇದರಿಂದ ಪರಿಸ್ಥಿತಿಯ ಬದಲಾವಣೆ ಆಗೋದಿಲ್ಲ. ಅಷ್ಟೂ ಮಾಡಿ ದಿವಾಕರ್ ಅಂತಹವರಿಗೆ "ಏನಾಗಿದೆ" ಎನ್ನುವ ಪ್ರಶ್ನೆಯನ್ನು ಕೇಳುವ ಹಕ್ಕೂ ಇಲ್ಲ, ಏಕೆಂದರೆ ಅವರ ವ್ಯಾಖ್ಯೆಯಲ್ಲಿ ಎಲ್ಲವೂ ಇಪ್ಪತ್ತೈದು ವರ್ಷಗಳ ಹಿಂದಿನ ಸಂದರ್ಭಗಳಿಗೆ ಸ್ಪಂದಿಸಬೇಕಾಗುತ್ತದೆ.

ದಿವಾಕರ್ ಅವರ ಲೇಖನಕ್ಕೆ 'ವಾಚಕರ ವಾಣಿ'ಯಲ್ಲಿ ಯಾರಾದರೂ ಸ್ಪಂದಿಸುತ್ತಾರೆಯೋ ಎಂದು ದಿನವೂ ಕಾದು ನೋಡುತ್ತೇನೆ. ಇಲ್ಲವೆಂದರೆ ಸಾಮಾನ್ಯ ಜನರೂ ತಮ್ಮ-ತಮ್ಮ ಗಂಟಲನ್ನು ವ್ಯಸ್ತ ಜೀವನಕ್ಕೆ ಧಾರೆ ಎರೆದುಕೊಟ್ಟುಬಿಟ್ಟಿದ್ದಾರೆಂದುಕೊಂಡು ದೊಡ್ಡ ನಿಟ್ಟುಸಿರೊಂದನ್ನು ಬಿಡುತ್ತೇನೆ.

Saturday, June 03, 2006

ಕರುಣಾನಿಧಿಯ ಕಣ್ಣನ್ನು ಕಂಡವರು ಯಾರು?


ಕಂಪ್ಯೂಟರ್ ಶುರುಮಾಡಿದೊಡನೆ ಕನ್ನಡಪ್ರಭದ ಮುಖಪುಟದಲ್ಲಿ "೨ ರೂ. ಗೆ ಕೆಜಿ ಅಕ್ಕಿ ಯೋಜನೆ ಉದ್ಭಾಟಿಸಿದ ಕರುಣಾನಿಧಿ" ಬರಹ ದುತ್ತನೆ ಎದುರಾಗಿ ನಮ್ಮ ರಾಮಕೃಷ್ಣ ಹೆಗಡೆಯವರ ಆಡಳಿತ ಕನಸನ್ನು ನೆನಪಿಗೆ ತಂದಿತು. ನಮ್ಮ ಕರ್ನಾಟಕ ರಾಜ್ಯ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗಡೆಯವರದು ಅಗ್ರಮಾನ್ಯ ಹೆಸರು. ನಾನು ಶಾಲಾದಿನಗಳಿಂದಲೂ ಅವರ ದೊಡ್ಡ ಫ್ಯಾನ್. ವಿದ್ಯಾಭ್ಯಾಸ, ಅನುಭವ, ಅರ್ಹತೆ ಹಾಗೂ ಧುರೀಣರಾಗಿ ಅವರನ್ನು ಮೀರಿಸುವ ಮತ್ತೊಬ್ಬ ರಾಜಕಾರಣಿ ನಮ್ಮ ರಾಜ್ಯದಲ್ಲಿ ಮತ್ತೊಬ್ಬರು ಇರಲಾರರು. ಹೆಗಡೆಯವರನ್ನು ನೆನಪಿಗೆ ತಂದುಕೊಂಡಾಗ ಅವರ ಕ್ಷಿಪ್ರ ಹಾಸ್ಯ, ಅತ್ಯುತ್ತಮ ಇಂಗ್ಲೀಷ್ ಮಾತು, ಬರಹಗಳ ಜೊತೆಗೆ ಮಂಡಲ ಪಂಚಾಯತಿಯನ್ನು ರಾಜ್ಯದ ಮೂಲೆಮೂಲೆಯಲ್ಲಿ ಹುಟ್ಟು ಹಾಕಿಸಿ ಬೆಳೆಸಿ 'ಹಳ್ಳಿಗಳ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ' ಎನ್ನುವ ಗಾಂಧೀಜಿಯವರ ಕನಸನ್ನು ನನಸು ಮಾಡಿದ ಮೊಟ್ಟ ಮೊದಲ ಆಡಳಿತಗಾರನಾಗಿ ಅವರು ನನಗೆ ಕಂಡುಬರುತ್ತಾರೆ. ಅವರ ಕಾಲದಲ್ಲಿಯೇ(ಯೂ) ಹಸಿರು-ಕೇಸರಿ ಕಾರ್ಡುಗಳ ಜೊತೆಗೆ ಬಡಬಗ್ಗರಿಗೆ ಎರಡು ರೂಪಾಯಿಗೆ ಒಂದು ಕೆಜಿ ಅಕ್ಕಿ ಹಾಗೂ ವಿದ್ಯಾರ್ಥಿಗಳಿಗೆ ಪುಕ್ಕಟೆ ಪುಸ್ತಕ ವಿತರಣೆ ಮುಂತಾದ ಮಹಾಯೋಜನೆಗಳು ಅನುಷ್ಟಾನಕ್ಕೆ ಬಂದದ್ದು.

***

ತಮಿಳುನಾಡಿನ ರಾಜಕೀಯದಲ್ಲಿ ನನ್ನ ತಲೆಮಾರಿನವರಿಗೆ ರಾಜಕಾರಣಿಗಳಾಗಿ ಪರಿಚಯವಿರೋರಲ್ಲಿ ಇಬ್ಬರು ಬಹು ಮುಖ್ಯವಾದವರು: ಒಬ್ಬರು ಕರುಣಾನಿಧಿ, ಇನ್ನೊಬ್ಬರು ಜಯಲಲಿತಾ. ೧೯೮೯ರಿಂದ, ಇತ್ತೀಚೆಗೆ ೨೦೦೧ರಲ್ಲಿ ಪನ್ನೀರ್ ಸೆಲ್ವಮ್ ಅವರ ಐದು ತಿಂಗಳ ಆಡಳಿತವನ್ನು ಬಿಟ್ಟರೆ, ಇಲ್ಲಿಯವರೆಗೂ ಒಂದೇ ಕರುಣಾನಿಧಿ ಅಥವಾ ಜಯಲಲಿತಾ ಮುಖ್ಯಮಂತ್ರಿಗಳಾಗಿ ಆಡಳಿತವನ್ನು ಹಂಚಿಕೊಂಡು ಬರುತ್ತಲೇ ಇದ್ದಾರೆ. ಸುಮಾರು ಈ ಎರಡು ದಶಕಗಳಲ್ಲಿ ಐದಾರು ಬಾರಿ ಸರ್ಕಾರಗಳು ಬದಲಾಗಿದ್ದರೂ ಒಮ್ಮೆ ಸೋತ ಕರುಣಾನಿಧಿ ಅಥವಾ ಜಯಲಲಿತಾ ಹಾಗೂ ಅವರ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಜಯಗಳಿಸಿಯೇ ತೀರುತ್ತವೆ. ಹೀಗೆ ನಾನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಕರುಣಾನಿಧಿಗೂ ೮೪ ವರ್ಷವಾಯಿತು ಎಂದು ಗೊತ್ತಾದ ಮೇಲಂತೂ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಾನು ಶಾಲೆಗೆ ಹೋಗುತ್ತಿದ್ದಾಗ ಐವತ್ತು ಅರವತ್ತರ ಹರೆಯದಲ್ಲೇ ಅಷ್ಟೊಂದು 'ಉರಿದ' ಕರುಣಾನಿಧಿಯ ದೀಪದ ಬುಡ್ಡಿ ಇನ್ನೂ ಸೊರಗಿಲ್ಲವೆಂದರೆ? ಕರುಣಾನಿಧಿಯನ್ನು ಯಾರು ಏನಾದರೂ ಅಂದುಕೊಳ್ಳಲಿ ಅವರ ತಮಿಳು ಭಕ್ತಿ ಅಪಾರವಾದುದು, ಒಂದುಕಡೆ ಜಯಲಲಿತಾ ಇಂಗ್ಲೀಷ್‌ನಲ್ಲಿ ನಿರರ್ಗಳವಾಗಿ ಮಾತನಾಡಿ ದಿಲ್ಲಿಯಲ್ಲಿದ್ದವರಿಗೆ ಮಂಕು ಕವಿದರೆ ಮತ್ತೊಂದು ಕಡೆ ಕರುಣಾನಿಧಿ ತಮಿಳಿನಲ್ಲೇ ಎಲ್ಲವನ್ನೂ ನಡೆಸಿಕೊಂಡು ಬಂದಿದ್ದಾರೆ. ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಈ 'ಮಹಾ' ಮುತ್ಸದ್ಧಿಗಳಿಬ್ಬರೂ ಮೊದಲೇ ಯಾವುದೋ ಅವ್ಯಕ್ತ ಸಂಚಿನಲ್ಲಿ ಪಾಲುದಾರರಾದಂತೆ ದೆಹಲಿಯ ಭೂಪರಿಗೆ ಮಂಕುಬೂದಿ ಎರಚಿ ತಮ್ಮ ನಾಡಿನ ಹಿತಗಳನ್ನು ಸಾಧಿಸಿಕೊಳ್ಳಬಲ್ಲರು. ಅದು ಹೊಸ ರೈಲು ಯೋಜನೆ ಇರಲಿ, ನೆರೆ ಸಂತ್ರಸ್ಥರಿಗೆ ಪರಿಹಾರವಿರಲಿ, ನೀರಿನ ವಿಷಯವಾಗಲಿ, ಮತ್ತೊಂದಾಗಲಿ ತಮಿಳು ನಾಡಿನ ಜನರನ್ನು ಕರುಣಾನಿಧಿ ಹಾಗೂ ಅವರ ಪಕ್ಷಗಳು ಬಿಟ್ಟುಕೊಡುವುದಿಲ್ಲ, ಜನರ ಹಿತಕ್ಕೋಸ್ಕರ ಕೆಲಸ ಮಾಡುವ ಅವರ ಪರಂಪರೆಯೇ ಅವರನ್ನು ಸದಾ ಗೆಲ್ಲಿಸುವುದು, ಯಾರ ವಿರುದ್ಧ ಯಾವುದೇ ಮೊಕದ್ದಮೆಗಳಿರಲಿ, ಜಯಲಲಿತಾ ಹಾಗೂ ಕರುಣಾನಿಧಿ ತಮ್ಮನ್ನು ಶರಣಾಗತರನ್ನಾಗಿಸಿಕೊಳ್ಳೋದಿಲ್ಲ, ಅವರಿಗೋಸ್ಕರವೇ ಸುದ್ದಿಗಳನ್ನು ತಿದ್ದಿ ಬಿತ್ತರಿಸುವ ಟೆಲಿವಿಜನ್ ನೆಟ್‌ವರ್ಕ್‌ಗಳಿವೆ, ಪೇಟೆಯಲ್ಲಿ 'ಥೂ' ಎಂದರೂ ಹಳ್ಳಿಗಳಲ್ಲಿ ಆರಾಧಿಸುವವ ಜನರಿದ್ದಾರೆ, ವಿತರಿಸಲು ಬೇಕಾದಷ್ಟು ಅಕ್ಕಿ ಇದೆ, ಹಂಚಲು ಭೂಮಿ ಇದೆ, ಇಬ್ಬರೂ ಹೊಟ್ಟೆ ತುಂಬಿದವರು, ಹಾಗೂ ಎಲ್ಲಕ್ಕೂ ಮಿಗಿಲಾಗಿ ಇವರ ಭಿನ್ನಾಭಿಪ್ರಾಯಗಳನ್ನು ಹೆಣೆದು ಜೋಡಿಸುವ ತಮಿಳು ಪರಂಪರೆ ಇದೆ - ಯಶಸ್ವಿಯಾಗಲು ಇನ್ನೇನು ಬೇಕು?

***

೨೦೦೧ ರಲ್ಲಿ ಕರುಣಾಧಿಯನ್ನು ಜೂನ್ ೩೦ ರ ಬೆಳಗಿನ ಜಾವ ಅವರ ಮನೆಯಲ್ಲಿ ಪೋಲೀಸರು ಹೊಡೆದು ಬಡಿದು ಬಂಧಿಸಿದ ಘಟನೆ ಯಾರಿಗೆ ತಾನೆ ಗೊತಿಲ್ಲ? ಇದಕ್ಕೆ ಕೆಲವು ವರ್ಷಗಳ ಹಿಂದೆ ಜಯಲಲಿತಾರನ್ನು ಬಂಧಿಸಿ ಜೈಲು ಸೇರಿಸಿದ್ದ ಅಪ್ಪ ಮಗನ ಮೇಲೆ ಸೇಡು ತೀರಿಸಿಕೊಳ್ಳುವ ಜಯಲಲಿತಾರ ಪ್ಲಾನು ಅದಾಗಿತ್ತು, ಅದಕ್ಕೆ ೧೨ ಕೋಟಿ ರುಪಾಯಿಗಳ ಫ್ಲೈ ಓವರ್ ಸ್ಕ್ಯಾಮ್ ಎನ್ನುವುದು ಬರೀ ನೆಪಮಾತ್ರ. ಈ ಸಂದರ್ಭದಲ್ಲಿ ರಿಡಿಫ್‌ನಲ್ಲಿ ಘಟನೆಗಳ ಗ್ರಾಫಿಕ್ ವರದಿಯನ್ನು ನಾನು ನೋಡಿದ್ದೆ, ಆ ಸಂದರ್ಭದಲ್ಲಿ ತೆಗೆದ ಹಲವಾರು ಚಿತ್ರಗಳಲ್ಲಿ ಯಾವುದೋ ಒಂದರಲ್ಲಿ ಕರುಣಾನಿಧಿಯ ಕಪ್ಪು ಕನ್ನಡಕ ಜಾರಿ ಹೋಗಿ ಅವರ ಯಾವತ್ತೂ ಕಾಣದ ಕಣ್ಣುಗಳ ದರ್ಶನ ಎಲ್ಲರಿಗೂ ಆಗಿತ್ತು. ಈ ಚಿತ್ರವನ್ನು ಎಷ್ಟು ಹುಡುಕಿದರೂ ಇಂದು ಸಿಗದೇ ಹೋಗಿ ಆ ಘಟನೆಯನ್ನು ನೆನಪಿಗೆ ತರುವ ಕೆಲವು ಚಿತ್ರಗಳನ್ನು ಇಲ್ಲಿ ತೋರಿಸಿದ್ದೇನೆ.

ನಮ್ಮಲ್ಲಿಯ ಮಕ್ಕಳು 'ಅಮ್ಮಾ ಸದಾ ಅವರೇಕೆ ಕಪ್ಪು ಕನ್ನಡಕವನ್ನು ಹಾಕಿಕೊಂಡಿರುತ್ತಾರೆ?' ಎಂದು ಪ್ರಶ್ನಿಸುತ್ತಾರೋ ಇಲ್ಲವೋ ಕರುಣಾನಿಧಿಯ ಕಪ್ಪು ಕನ್ನಡಕದ ಹಿಂದಿನ ರಹಸ್ಯ ಹೆಚ್ಚು ಜನರಿಗೆ ಗೊತ್ತಿಲ್ಲ, ನಾನು ಮದ್ರಾಸಿನಲ್ಲಿ ಕೆಲಸಮಾಡುತ್ತಿರುವಾಗ ನನ್ನ ಸ್ಥಳೀಯ ಸಹೋದ್ಯೋಗಿಗಳಿಗೆ ಕೇಳಿದಾಗ ಯಾರೊಬ್ಬರೂ ಸಮಾಧಾನಕರವಾಗಿ ಉತ್ತರಿಸಿಲ್ಲ - ಕರುಣಾನಿಧಿಯ ಒಂದು ಕಣ್ಣು ಕುರಿಗಣ್ಣು, ಒಂದು ಕಣ್ಣು ಕಾಣೋದೇ ಇಲ್ಲ ಮುಂತಾದ ದಂತ ಕಥೆಗಳನ್ನು ಕೇಳಿ ಸುಮ್ಮನಿರಬೇಕಾಗಿತ್ತು. ಏನನ್ನು ಕೇಳಿದರೂ ಅವರದೇ ಆದ ರೀತಿಯಲ್ಲಿ ಉತ್ತರ ಕೊಡುವ ತಮಿಳರಿಂದ ತಿಳಿದುಕೊಂಡ ವಿಷಯವನ್ನು ಪರಾಮರ್ಶಿಸದೇ ನಂಬುವುದೇ ಬಲು ಕಷ್ಟ, ನನ್ನ ಜೊತೆಯಲ್ಲಿ ಇಂಜಿನಿಯರಿಂಗ್ ಮುಂತಾದ ಪದವಿಗಳನ್ನು ಓದಿಕೊಂಡವರೂ ಮಣಿರತ್ನಮ್ಮೇ 'ಪ್ರಪಂಚ'ದಲ್ಲಿನ ಬೆಸ್ಟ್ ಡೈರೆಕ್ಟರ್, ಎ.ಆರ್. ರೆಹಮಾನೇ 'ಪ್ರಪಂಚ'ದ ಬೆಸ್ಟ್ ಮ್ಯೂಸಿಕ್ ಕಂಪೋಸರ್, ಮೌಂಟ್ ರೋಡಿನ ಹತ್ತು-ಹನ್ನೊಂದು ಮಹಡಿಗಳ ಎಲ್.ಐ.ಸಿ. ಕಟ್ಟಡವೇ 'ಪ್ರಪಂಚ'ದಲ್ಲಿ ದೊಡ್ಡ ಕಟ್ಟಡ ಎಂದು ರಾಜಾರೋಷವಾಗಿ ಇತರರ ನಂಬಿಕೆಗಳನ್ನೆಲ್ಲ ಒಂದೇ ಸಮನೆ ಬುಡಮೇಲು ಮಾಡುವಂತೆ ಪುಂಕಾನುಪುಂಕವಾಗಿ ಹೊರಬರುತ್ತಿದ್ದ ಇತರ ಇನ್ನಿತರ ಅವರ ಪ್ರಪಂಚದ ದೊಡ್ಡಸ್ತಿಕೆಗಳನ್ನೆಲ್ಲ ಕೇಳಿ ಸಹಿಸಿಕೊಳ್ಳಬೇಕೆಂದರೆ ಅಪಾರ ತಾಳ್ಮೆ ಇರಲೇಬೇಕು. ಆದ್ದರಿಂದಲೇ ಮೋಕ್ಷವನ್ನು ಪಡೆಯಲು ತಪಸ್ಸು ಮಾಡುವುದಕ್ಕಾಗಿ ಹಿಮಾಲಯಕ್ಕೆ ಹೋಗುವುದರ ಬದಲಾಗಿ ಮದ್ರಾಸಿಗೆ ಹೋಗಿ ಎಂದು ನನ್ನ ಸ್ನೇಹಿತರಿಗೆ ನಾನು ತಮಾಷೆ ಮಾಡೋದು.

***

ಯಾವ ಪತ್ರಿಕೆಗಳವರ ಕಿಡು ನುಡಿಗೂ ಕರುಣಾನಿಧಿಯ ಕನ್ನಡಕದ ಹಿಂದಿನ ಮರ್ಮವನ್ನು ಅರಿಯಲಾಗಲಿಲ್ಲ, ಎಂತಹ ಅದ್ಭುತವಾದ ಬೆಳಕಿಗೂ ಅವರ ಕಪ್ಪು ಕನ್ನಡಕವನ್ನೆದುರಿಸುವ ಸಾಹಸ ಒದಗಿ ಬಂದಿಲ್ಲ, ಜಯಲಲಿತಾ ಕರುಣಾನಿಧಿಯನ್ನು ಜೈಲಿಗೆ ಹಾಕಿ ಉಸ್ಸಂತ ಉಸಿರು ಬಿಟ್ಟಿದ್ದೂ ಹೆಚ್ಚು ಕಾಲ ನಿಲ್ಲಲಿಲ್ಲ. ಈ ಕರುಣಾನಿಧಿ ಮತ್ತೆ-ಮತ್ತೆ ಅಧಿಕಾರಕ್ಕೆ ಬರುತ್ತಲೇ ಇರುತ್ತಾರೆ, ಅವರ ಬಳಿಕ ಅವರ ಮಗನಿಗೆ ಮುಂದೆ ಬರುವ ಎಲ್ಲ ಅವಕಾಶಗಳೂ ಇವೆ. ೮೫ ವರ್ಷದ ಹತ್ತಿರ-ಹತ್ತಿರ ಇದ್ದು ಇನ್ನೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಕರುಣಾನಿಧಿ ಭಾರತದ ರಾಜಕಾರಣಿಗಳ ಯಾದಿಯಲ್ಲಿ ಬಹಳ ದೊಡ್ಡ ಮನುಷ್ಯರಾಗಿ ಉಳಿಯುತ್ತಾರೆ, ಅವರ ಶಿಸ್ತು, ಹಿಂದೆ ಬಿದ್ದು ಮುಂದೆ ಬರಬಹುದಾದ ಕೆಚ್ಚು ಹಾಗೂ ತಮಿಳುನಾಡಿನ ಬಡವರ ಮೇಲಿನ ಅಪಾರ ಕಳಕಳಿ ಇವೆಲ್ಲದರ ಹತ್ತನೇ ಒಂದು ಭಾಗದಷ್ಟು ಕರ್ನಾಟಕದ ರಾಜಕಾರಣಿಗಳಲ್ಲಿದ್ದರೆ ಅದರ ಕಥೆಯೇ ಬೇರೆಯಿರುತ್ತಿತ್ತು.

Friday, June 02, 2006

ಬನಾರಸ್ಸಿನ ಬದುಕು - ಭಾಗ ೨

ಹೀಗೇ ಬನಾರಸ್ಸಿನ ಬಗ್ಗೆ ಯೋಚಿಸಿ ಎರಡನೇ ಭಾಗವನ್ನು ಬರೆದರೆ ಹೇಗೆ ಯೋಚಿಸುತ್ತಿದ್ದಾಗ ಕಾಕತಾಳೀಯವಾಗಿ ನಿನ್ನೆ ರಾಮಚಂದ್ರ ಸಿಂಗ್‌ನಿಂದ ಒಂದು ಇ-ಮೇಲ್ ಬಂದಿತು. 'ನಾನು ರಾಮ್ ಸಿಂಗ್, ಪ್ರೊಫೆಸ್ಸರ್ ವೈ.ಸಿಂಗ್ ಕೆಳಗೆ ಕೆಲಸ ಮಾಡುತ್ತಿದ್ದವ, ನಿನ್ನ ಸೀನಿಯರ್ ಆಗಿದ್ದೆ, ಯಾರೋ ನಿನ್ನ ಇ-ಮೇಲ್ ಐಡಿಯನ್ನು ಕೊಟ್ಟರು, ನೀನೇನಾ ಆ ಮನುಷ್ಯ, ನನ್ನ ಪರಿಚಯವಿದ್ದರೆ ಉತ್ತರಿಸು' ಎಂದು ಚಿಕ್ಕದಾಗಿ ಒಂದು ಇ-ಮೇಲ್ ಬರೆದಿದ್ದ (ಕೆಳಗೆ ಸಿಗ್ನೇಚರ್ ಆಗ್ರಾದ ಆನಂದ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸ್ಸರ್ ಎಂಬ ಟೈಟಲ್ ಅನ್ನು ಹೊತ್ತುಕೊಂಡಿತ್ತು). ಪಾಪ, ರಾಮ್ ಸಿಂಗ್ ಹೋಗೀ-ಹೋಗಿ ಪ್ರೊಫೆಸರ್ ವೈ.ಸಿಂಗ್ ಕೆಲಗಡೆ ಸಿಕ್ಕಿಹಾಕಿಕೊಂಡು ಥಿಯರಿಟಿಕಲ್ ಫಿಸಿಕ್ಸ್‌ನಲ್ಲಿ ಪಿ.ಎಚ್.ಡಿ. ಮುಗಿಸುವಾಗ ಸುಮಾರು ಎಂಟು ವರ್ಷಕ್ಕೂ ಮೇಲೆ ಹಿಡಿದಿತ್ತು. ರಾಮ್ ಸಿಂಗ್ ತಂದೆ ಬನಾರಸ್ಸಿನ ಎಕನಾಮಿಕ್ಸ್ ವಿಭಾಗದಲ್ಲಿ ದೊಡ್ಡ ಪ್ರೊಫೆಸರ್ ಆಗಿದ್ದವರು, ರಾಮ್ ಸಿಂಗ್ ಹುಟ್ಟಿ ಬೆಳೆದದ್ದೆಲ್ಲ ಬಿ.ಎಚ್.ಯು. ವಾತಾವರಣದಲ್ಲಿಯೇ.

ನಾನು ಬನಾರಸ್ಸನ್ನು ಸೇರಿಕೊಂಡಿದ್ದು ಜ್ಯೂನಿಯರ ರಿಸರ್ಚ್ ಫೆಲ್ಲೋ ಆಗಿ, ಆದರೆ ಅಲ್ಲಿ ಸೇರಿಕೊಳ್ಳುವುದಕ್ಕಿಂತ ಮೊದಲು ರಾಮ್ ಸಿಂಗ್‌ನ ಯಾವುದೇ ಪರಿಚಯವಿರಲಿಲ್ಲ. ನಾನು ಡಿಪಾರ್ಟ್‌ಮೆಂಟಿನ ಮೊದಲ ದಿನವೇ ಪ್ರೊಫೆಸ್ಸರ್ರನ್ನು ಭೇಟಿ ಮಾಡಿ, ಅವರ ಮೂಲಕವೇ ಎಲ್ಲರಿಗೂ ಪರಿಚಿತನಾದದ್ದರಿಂದ ರಾಮ್ ಸಿಂಗ್ ನನಗೆ ಗೊತ್ತಾಗಿದ್ದು ಅಲ್ಲಿಗೆ ನಾನು ಸೇರಿಕೊಂಡ ಮೇಲೆಯೆ. ನನ್ನ ಬಳಿ ರಾಮ್ ಸಿಂಗ್ ಎಷ್ಟೋ ಸಾರಿ ತನ್ನ ಕಷ್ಟಗಳನ್ನು ತೋಡಿಕೊಂಡಿದ್ದ - ಅದು ಹೇಗೆ ಅವನು ಈ ವೈ. ಸಿಂಗ್ ರ ಚಕ್ರದಲ್ಲಿ ಸಿಕ್ಕಿ ಬಿದ್ದನೋ ಏನೋ ನಾನು ಹೋಗಿ ಸೇರುವಾಗ ಅವನು ವೈ. ಸಿಂಗರ ಜೊತೆ ನಾಲ್ಕು ವರ್ಷದ ಮೇಲೆ ಕೆಲಸ ಮಾಡಿದ್ದರೂ ಅವನ ಬಳಿ ಅಂತಾರಾಷ್ಟ್ರ್‍ಈಯ ಮಟ್ಟದಲ್ಲಿ ಪ್ರಕಟವಾದಂತೆ ಇದ್ದದ್ದು ಕೇವಲ ಎರಡೇ ಎರಡು ಪೇಪರುಗಳು. ಅವನ ಕಣ್ಣ ಮುಂದೆಯೇ ಎಷ್ಟೋ ಜನ ಎಮ್.ಎಸ್ಸಿ., ಮುಗಿಸಿ ಪಿ.ಎಚ್.ಡಿಯ ಥೀಸೀಸ್ ಅನ್ನು ಪ್ರೆಸೆಂಟ್ ಮಾಡಿದಾಗ ಬಹಳ ನೊಂದುಕೊಂಡೇ ಅವೆಲ್ಲವನ್ನೂ ಸಹಿಸಿಕೊಂಡು ಒಂದು ರೀತಿಯ ರೆಬೆಲ್ ಥರಾ ಆಗಿ ಹೋಗಿದ್ದ. ತನಗೆ ಪಿ.ಎಚ್.ಡಿ ಬರುವ ಮುನ್ನ ಬೇರೆ ಯಾರಿಗೂ ವೈ. ಸಿಂಗ್ ಅಡಿಯಲ್ಲಿ ಕೆಲಸ ಸಿಗಬಾರದು, ತನ್ನನ್ನು 'ಈ' ಸ್ಥಿತಿಗೆ ತಂದ ವೈ. ಸಿಂಗ್‌ಗೆ ಒಂದು ಕೈ ತೋರಿಸಿಯೇ ಬಿಡುತ್ತೇನೆ ಎಂದು ಅವನ ರಜಪೂತ ರಕ್ತ ಕುದಿಯುತ್ತಿತ್ತು. ಹೀಗೆ ಉತ್ತರ ಭಾರತದ ಎಲ್ಲೆಲ್ಲಿಂದಲೋ ಅದೆಷ್ಟೋ ಜನರು ಬಂದು ವೈ. ಸಿಂಗ್ ಅಡಿಗೆ ಸೇರಿಕೊಂಡಿದ್ದರೂ ಅವರೆಲ್ಲರನ್ನೂ ರಾಮ್ ಸಿಂಗ್ ಒಂದಲ್ಲ ಒಂದು ರೀತಿಯಲ್ಲಿ ತೊರೆಯುವಂತೆ ಮಾಡಿದ್ದ. ಈ ವಿಷಯ್ ವೈ. ಸಿಂಗ್‌ಗೂ ಗೊತ್ತಿತ್ತೆಂದು ಕಾಣುತ್ತದೆ, ಆದ್ದರಿಂದಲೇ ರಾಮ್ ಸಿಂಗ್ ಮತ್ತು ವೈ ಸಿಂಗ್ ರ ಸಂಬಂಧ ಅಷ್ಟಕಷ್ಟೇ ಇತ್ತು - ಈ ಪಿ.ಎಚ್.ಡಿ. ಮಾಡುವ ವಿಷಯದಲ್ಲಿ ಬೇರೆ ಏನನ್ನು ಹಾಳು ಮಾಡಿಕೊಂಡರು ಪ್ರೊಫೆಸರ್ ಜೊತೆಗಿರುವ ಸಂಬಂಧವನ್ನು ಹಾಳು ಮಾಡಿಕೊಂಡರೆ ಕಥೆ ಮುಗಿದಂತೆಯೇ ಎಂದು ಹೇಳಬೇಕು ಏಕೆಂದರೆ ಡಿಪಾರ್ಟ್‌ಮೆಂಟಿನ ತುಂಬಾ 'ಹೀಗಾಯಿತೇ, ಛೇ!' ಎಂದು ಬೇಕಾದಷ್ಟು ಸಹಾನುಭೂತಿಯನ್ನು ಅನುಭವಿಸಿಕೊಂಡು ಕಾಲ ತಳ್ಳಬೇಕೇ ವಿನಾ ಅದರಿಂದ ಮತ್ತೇನೂ ಆಗುವುದಿಲ್ಲ, ಪ್ರೊಫೆಸರುಗಳು ಎಷ್ಟಿದ್ದರೂ ಅವರವರನ್ನು ಬಿಟ್ಟುಕೊಡುವುದಿಲ್ಲ, ವಿದ್ಯಾರ್ಥಿಗಳಲ್ಲಿ ಎಲ್ಲರಿಗೂ ಅವರವರದೇ ಪೀಕಲಾಟವಿರುವುದರಿಂದ ಅವರು ತಮ್ಮ ಪಾಡಿಗೆ ಒಂದೇ ಸುಮ್ಮನಿರುತ್ತಾರೆ, ಅಥವಾ ಯಾವುದಕ್ಕೂ ಬೇಡವಾದ ಪುಕ್ಕಟೆ ಸಲಹೆಗಳನ್ನು ಎಸೆಯುತ್ತಿರುತ್ತಾರೆ - ಅವರಿಗೇನು ಅದರಿಂದ ನಷ್ಟವೇನೂ ಇರೋದಿಲ್ಲವಲ್ಲ.

ಹೀಗೆ ವೈ. ಸಿಂಗ್ ರ ಅಡಿಯಲ್ಲಿ 'ದಕ್ಷಿಣ್ ಕಾ ಬಂದಾ' ಎಂದು ನಾನು ಸೇರಿಕೊಂಡಿದ್ದೆ - ನನ್ನಲ್ಲಿ ಬೇಕಾದಷ್ಟು ಕನಸುಗಳೂ ಆದರ್ಶಗಳೂ ಅದೇ ತಾನೇ ರೂಪ ತಳೆಯುತ್ತಿದ್ದುದರಿಂದ ಒಂದು ರೀತಿ 'ಗಂಭೀರ ಹಾಗೂ ರಚನಾತ್ಮಕ ಉದ್ದೇಶದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವನು ಸಾಕಷ್ಟು ಬೇಸರವನ್ನೂ ಸಹಿಸಿಕೊಳ್ಳಬೇಕು' ಎಂದು ಎಲ್ಲದಕ್ಕೂ ತಯಾರಾಗಿಯೇ ಇದ್ದೆ. ಆರೇನು ಎಂಟು ವರ್ಷಬೇಕಾದರೂ ಆಗಲಿ, ಪಿ.ಎಚ್.ಡಿ. ಮಾಡಿ ಮುಗಿಸುತ್ತೇನೆ ಎಂದುಕೊಂಡವನಿಗೆ ಆಸರೆಯಾದವರು ಮೂರು ಜನ - ನನ್ನದೇ ಡಿಪಾರ್ಟ್‌ಮೆಂಟಿನ ರಾಮ್ ಸಿಂಗ್, ಪ್ರೊಫೆಸ್ಸರ್ ಶ್ರೀ ವಾಸ್ತವರ ಕೆಳಗೆ ಹೈಡ್ರೋಜನ್ ಎನರ್ಜಿಯ ಬಗ್ಗೆ ಕೆಲಸ ಮಾಡುತ್ತಿದ್ದ ಶೇಷ ಸಾಯಿ ರಾಮನ್ ಹಾಗೂ ಪ್ರೊ. ಡಿ.ಎನ್. ತ್ರಿಪಾಟಿಯವರ ಕೆಳಗೆ ಕೆಲಸ ಮಾಡುತ್ತಿದ್ದ ಪೆರುಮಾಳ್. ರಾಮನ್ ಹಾಗೂ ಪೆರುಮಾಳ್ ಇಬ್ಬರೂ ತಮಿಳರು, ಇವತ್ತಿಗೂ ಸಹ ನನ್ನ ಅತ್ಯಂತ ಆತ್ಮೀಯ ಸ್ನೇಹಿತರು, ರಾಮ್ ಸಿಂಗ್ ನನ್ನ ದೊಡ್ಡ ಅಣ್ಣನ ಹಾಗೆ. ನಮ್ಮ ಗ್ರೂಪ್‌ನಲ್ಲಿ ಕಂಪ್ಯೂಟರ್ ಸಿಮಿಲೇಶನ್ ಮಾಡುತ್ತಿದ್ದುದರಿಂದ ಬನಾರಸ್ ವಿಶ್ವವಿಧ್ಯಾನಿಲಯದಲ್ಲೇ ಒಳ್ಳೆಯ ಕಂಪ್ಯೂಟರುಗಳು ನಮ್ಮಲ್ಲಿ ಇದ್ದವು. ಎಚ್.ಪಿ. ಮ್ಯಾಗ್ನಮ್ ಮಲ್ಟಿ ರಿಸ್ಕ್ ಎನ್ನುವ ಒಂದು ಮಿಡ್ ರೇಂಜ್ ಕಂಪ್ಯೂಟರ್ರೂ ಹಾಗೂ ಎರಡು ಪಿ.ಸಿ. ಯೂ ಇದ್ದವೂ. ೧೯೯೪-೧೯೯೫ ರಲ್ಲಿ ಇದೇ ದೊಡ್ಡ ವಿಷಯವಾಗಿತ್ತು. ಅಲ್ಲಿನ ದೊಡ್ಡ ಕಂಪ್ಯೂಟರ್ ಗೆ ಒಂದು ಕನ್ಸೋಲ್ ರೂಮ್ ಇತ್ತು, ಹಾಗೂ ಅರ್ಧ ದಿನದ ಮಟ್ಟಿಗೆ ಪವರ್ ಸಪ್ಲೈ ಮಾಡುವಷ್ಟು ದೊಡ್ಡ ಯು.ಪಿ.ಎಸ್. ಕೂಡಾ ಇತ್ತು. ಬನಾರಸ್ಸಿನಲ್ಲಿ ಬೇಸಿಗೆಯಲ್ಲಿ ಹೊರಗೆ ೪೫ ಡಿಗ್ರಿ ಬೇಸಿಗೆ ಬಿಸಿಲಿರುತ್ತಿದ್ದರೆ ನಾವು ಏರ್ ಕಂಡೀಷನ್ ರೂಮಿನಲ್ಲಿ ತಣ್ಣಗೆ ಕೂತಿರುತ್ತಿದ್ದೆವು ಹಾಗೂ ಎಲ್ಲ ಕಡೆ ಕರೆಂಟ್ ಹೋದರೂ ನಮ್ಮಲ್ಲಿ ಆ ರೀತಿಯ ತೊಂದರೆ ಎಂದೂ ಇದ್ದಿದ್ದಿಲ್ಲ.

ರಾಮ್ ಸಿಂಗ್ ಯುನಿಕ್ಸ್‌ನಲ್ಲಿ ಗುರು, ಆಪರೇಟಿಂಗ್ ಸಿಸ್ಟಂ‌ನಿಂದ ಹಿಡಿದು ಅದರಲ್ಲಿ ಲೋಡ್ ಮಾಡಲಾಗಿದ್ದ ಫೋರ್ಟಾನ್, ಹಾಗೂ ಸಿ. ಯಲ್ಲೂ ಆತನಿಗೆ ಅಗಾಧವಾದ ಪರಿಣಿತಿ ಇತ್ತು. ಅವನ ಜೊತೆಯಲ್ಲಿ ಪಿ.ಸಿ.ಯನ್ನೂ ಅದರಲ್ಲೂ ಆಗಿನ ಡಾಸ್ ಆಪರೇಟಿಂಗ್ ಸಿಸ್ಟಂ ಅನ್ನು ಒಳಗೂ-ಹೊರಗೂ ತಿಳಿದುಕೊಂಡ ನಾನು ಒಂದು ರೀತಿಯಲ್ಲಿ ಭಲೇಜೋಡಿಯಾಗಿದ್ದೆವು. ಕ್ಯಾಂಪಸ್ಸಿನಲ್ಲಿ, ನಮ್ಮ ವಿಭಾಗದಲ್ಲಿ ಯಾರದ್ದೇ ಕಂಪ್ಯೂಟರ್ ತೊಂದರೆಗಳಿದ್ದರೂ ರಾಮ್ ಸಿಂಗ್‌ಗೆ ಕರೆ ಬರುತ್ತಿತ್ತು, ಅವನ ಜೊತೆಯಲ್ಲಿ ನಾನೂ ಹೋಗುತ್ತಿದ್ದೆ, ಆಗಿನ್ನೂ ವಿಂಡೋಸ್ ೩.೧ ಮಟ್ಟದಲ್ಲಿ ಇದ್ದು ಒಂದು ಅಪ್ಲಿಕೇಷನ್ ಅಂತೆ ನಡೆಯುತ್ತಿದ್ದರೂ ಡಾಸ್ ೫.೦, ೬.೦ ಹಾಗೂ ಆಗಿನ ಕಾಲದ ಹಾರ್ಡ್‌ವೇರುಗಳಿಗೂ ಅಷ್ಟೊಂದು ಆಗದಿದ್ದುದರಿಂದ ಒಬ್ಬರಲ್ಲ ಒಬ್ಬರಿಗೆ ತೊಂದರೆ ಆಗುತ್ತಿದ್ದುದೂ ಅವುಗಳಲ್ಲಿ ಕೆಲವನ್ನು ನಿಖರವಾಗಿ, ಉಳಿದವುಗಳನ್ನು ಪದೇ-ಪದೇ ಪ್ರಯತ್ನಿಸಿ ಒಂದಲ್ಲ ಒಂದು ರೀತಿಯಲ್ಲಿ ಸರಿ ಮಾಡೇ ತೀರುತ್ತಿದ್ದೆನಾದ್ದರಿಮ್ದ ಎಲ್ಲರೂ ನನ್ನನ್ನು ದೊಡ್ಡ ಮನುಷ್ಯನೆಂದು ಗೌರವಿಸುತ್ತಿದ್ದರು - ಕಂಪ್ಯೂಟರ್‌ಗಳು ಕೆಟ್ಟು ಹೋಗುವುದನ್ನು ತಪ್ಪು ಎಂದವರ್‍ಯಾರು? ನನ್ನನ್ನು ರಾಮ್ ಸಿಂಗ್ ಉಳಿದವರಿಗೆ ಪರಿಚಯಿಸುತ್ತಿದ್ದುದು ಇನ್ನೂ ಚೆನ್ನಾಗಿ ನೆನಪಿದೆ, ಯಾವುದೇ ಲಾಸ್ಟ್ ನೇಮ್ ನನ್ನ ಹೆಸರಿನಲ್ಲಿಲ್ಲವಾದ್ದರಿಂದ ನನ್ನ ಹೆಸರನ್ನು ಕೇಳಿದವರು 'ಆಗೇ ಕ್ಯಾ ಹೈ' ಎನ್ನುತ್ತಿದ್ದರು, ರಾಮ್ ಸಿಂಗ್ 'ಆಗೇ ಕುಛ್ ನಹೀನಾ ಹೈ, ಏ ದಕ್ಷೀಣ್‌‍ಸೆ ಆಯಾ ಹೈ' ಎನ್ನುತ್ತಿದ್ದ ಅವರೆಲ್ಲರೂ ಮುಖದಲ್ಲಿ ಬರೆಯಲಾಗದ ಅದ್ಯಾವುದೋ ಭಾವನೆಯನ್ನು ಪ್ರಕಟಿಸಿ ಸುಮ್ಮನಾಗುತ್ತಿದ್ದರು.

ರಾಮ್ ಸಿಂಗ್‌ಗೆ ಅಮೇರಿಕೆಗೆ ಬರಬೇಕೆನ್ನುವ ಆಸೆ ಬಹಳಷ್ಟಿತ್ತು, ತನ್ನ ಪಿ.ಎಚ್.ಡಿ. ಬೇಗ ಬೇಗನೆ ಆಗಲಿ, ಮುಂದೆ ಎಲ್ಲಾದರೂ ಕೆಲಸ ಹುಡುಕಿಕೊಂಡು ಹೇಗಾದರೂ ಇರುತ್ತೇನೆ ಎನ್ನುವಂತಾಗಿದ್ದ. ರಾಮ್ ಸಿಂಗ್‌ಗೆ ಪಿ.ಎಚ್‌ಡಿ. ಇನ್ನೂ ಮುಗಿಯುವುದಕ್ಕಿಂತ ಮುಂಚೆಯೇ ಮದುವೆಯೂ ಆಗಿತ್ತು, ನಾನು ಪರಿಚಯವಾಗುವ ಹೊತ್ತಿಗೆ ಆಯುಷ್ ಎನ್ನುವ ಒಬ್ಬ ಮಗನೂ ಇದ್ದ. ನಮ್ಮ ಲ್ಯಾಬ್‌ನಲ್ಲಿರುವ ಎರಡು ಪಿ.ಸಿ.ಗಳಲ್ಲೊಂದರಲ್ಲಿ ಯಾರೋ ಗುಪ್ತ ಎಂಬುವವರು ಸಿ ಯಲ್ಲಿ ಬರೆದ ಹಾರೋಸ್ ಎನ್ನುವ ಅಪ್ಲಿಕೇಶನ್ ಇತ್ತು, ಅದರಲ್ಲಿ ನಮ್ಮ ಹುಟ್ಟಿದ ತಾರೀಖು, ಜನ್ಮ ಸ್ಥಳ, ಮುಂತಾದ ವಿವರಗಳನ್ನು ಕೊಟ್ಟರೆ ಕುಂಡಲಿ ಬರುತ್ತಿತ್ತು. ನಾನೇನು ದೊಡ್ಡ ಅಸ್ಟ್ರಾಲಜರ್ ಅಲ್ಲದಿದ್ದರೂ ಅಗಾಗ್ಗೆ ಬಿಡುವಿನಲ್ಲಿ ಓದಿ ಯಾರು ಉಚ್ಛ, ಯಾರು ನೀಚ, ಯಾವ ಗ್ರಹ ಎಲ್ಲಿದ್ದರೆ ಒಳ್ಳೆಯದು ಮುಂತಾದವುಗಳನ್ನು ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದೆ. ಇದೇ ಸಾಫ್ಟ್‌ವೇರ್‌ನಲ್ಲಿ ನನ್ನ ಜನ್ಮ ವಿವರಗಳನ್ನು ಹಾಕಿ ನೋಡಿದರೆ ನಾನು ಕೆಟ್ಟ ಶನಿ ದೆಸೆಯ ಮಧ್ಯೆದಲ್ಲಿರುವಂತೆಯೂ, ಹತ್ತೊಂಬತ್ತು ವರ್ಷಗಳ ದೀರ್ಘವಾದ ಮಹಾದೆಸೆ, ಅಂತರದೆಸೆ, ಪ್ರತ್ಯಾಂತರ ದೆಸೆಗಳ ವಿವರಗಳೆಲ್ಲವನ್ನು ಇಟ್ಟುಕೊಂಡು ನನ್ನ ತಿಳುವಳಿಕೆಯಲ್ಲೇ ನೋಡಲಾಗಿ 'ಟನಲಿನ ಕೊನೆಯಲ್ಲಿ ಬೆಳಕು ಇದ್ದುದು ಸ್ಪಷ್ಟವಾದರೂ ಟನಲ್ ತುಂಬಾ ಉದ್ದವಿದ್ದಂತೆ' ಕಂಡುಬಂದಿತು! ಹಿಂದೆ ಕಳೆದು ಹೋದ ಶನಿದೆಸೆಯ ಅಂಶಗಳನ್ನು ರೆಟ್ರ್‍ಓಸ್ಪೆಕ್ಟಿವ್ ಆಗಿ ನೋಡಿದಾಗ ಎಲ್ಲವೂ ನಿಜವೆಂದೂ ಅನ್ನಿಸಿತು. ನನ್ನ ಈ ಕುತೂಹಲವನ್ನು ನೋಡಿ ರಾಮ್ ಸಿಂಗ್ ತನ್ನ ಕುಂಡಲಿಯನ್ನೂ ಅನಲೈಜ್ ಮಾಡಬೇಕಾಗಿ ಕೇಳಿಕೊಂಡಿದ್ದರಿಂದ ಅವನ ಕುಂಡಲಿಯನ್ನು ನೋಡಿದೆನಾದರೂ ಅವನ 'ನಾನು ಫಾರಿನ್‌ಗೆ ಹೋಗ್ತೀನಾ' ಎನ್ನುವ ಅವನ ಖಚಿತವಾದ ಉತ್ತರಬೇಡುವ ಪ್ರಶ್ನೆಗೆ ನಾನು ಯಾವತ್ತೂ ಖಚಿತವಾದ ಉತ್ತರವನ್ನು ಕೊಡುವುದು ಸಾಧ್ಯವಾಗಲೇ ಇಲ್ಲ - ಅದೂ ಅಲ್ಲದೇ ಜಾತಕಗಳನ್ನು ನೋಡಿ ನಿಖರವಾದ ಉತ್ತರಗಳನ್ನು ಕೊಡುವುದು ನನಗೆ ಗೊತ್ತೂ ಇರಲಿಲ್ಲ.

ಆದರೆ ಅದೇ ಸಾಫ್ಟ್‌ವೇರ್ 'ನಿಮಗೆ ಶನಿ ದೆಸೆ ಇದೆ, ನೀಲವನ್ನು ಧರಿಸಿ' ಎಂದು ಸಲಹೆ ಕೊಟ್ಟ ಹಾಗೆ ನಾನು ಏಕೆ ಒಂದು ಕೈ ನೋಡಬಾರದು ಎಂದುಕೊಂಡು ರ್‍ಆಮ್ ಸಿಂಗ್ ಜೊತೆಯಲ್ಲಿ ಒಮ್ಮೆ ಗೊದೋಲಿಯಾದ ಚಿನ್ನ-ರತ್ನಗಳ ವರ್ತಕರ ಬಳಿ ಹೋದೆ. ಅಲ್ಲಿ ನೀಲದ ಬಗ್ಗೆ ವಿಚಾರಿಸಲಾಗಿ ೫೦೦ ರೂಪಾಯಿಗಳಿಂದ ೫೦೦೦ ರೂಪಾಯಿಗಳವರೆಗಿನ ಎಲ್ಲ ಹರಳುಗಳನ್ನೂ ಅಂಗಡಿಯವರು ತೋರಿಸಿದರು, ನಾನು ಅವುಗಳಲ್ಲೇ ಒಂದು ರತ್ತಿಗೂ (ಕ್ಯಾರೆಟ್) ಸ್ವಲ್ಪ ಕಡಿಮೆ ತೂಕವಿರುವ ನೀರಿನ ಬಣ್ಣವಿರುವ ಕೊಲಂಬೋ ನೀಲವನ್ನು ೬೫೦ ರೂಪಾಯಿಗೆ ಖರೀದಿಸಿ ಅದನ್ನು ಬೆಳ್ಳಿಯಲ್ಲಿ ಉಂಗುರವನ್ನಾಗಿ ಕಟ್ಟಿಸಿದೆ. ನಮ್ಮಲ್ಲಿ ಒಂದು ಮಾತನ್ನು ಹೇಳುತ್ತಾರೆ, ನೀಲ ತುಂಬಾ ಪ್ರಭಾವಶಾಲಿಯಾದ ರತ್ನ, ಅದರ ಜೊತೆ ಹುಡುಗಾಟವಾಡಬಾರದೆಂದು - 'ಒಲಿದರೆ ನೀಲ, ಮುನಿದರೆ ಮೂಲ' ಎನ್ನುತ್ತಾರೆ. ನಾನು ಬೇರೆಯವರು ನೀಲವನ್ನು ಮೊದಲು ತಮ್ಮ ಜೇಬಿನಲ್ಲೋ, ರಾತ್ರಿ ಮಲಗಿದಾಗ ತಲೆ ದಿಂಬಿನ ಕೆಳಗೆ ಇಟ್ಟುಕೊಂಡೋ ಒಂದಿಷ್ಟು ದಿನ 'ಟ್ರೈ' ಮಾಡಿ ನಂತರ ಧರಿಸುತ್ತಾರೆ. ಆದರೆ ಇವೆಲ್ಲವೂ ಗೊತ್ತಿದ್ದೂ ಗೊತ್ತಿದ್ದೂ ನಾನು 'ಏನು ಬೇಕಾದ್ದಾಗಲಿ' ಎಂದು ನೀಲದ ಉಂಗುರವನ್ನು ಧರಿಸಿಕೊಂಡು ಓಡಾಡತೊಡಗಿದೆ. ಆ ಉಂಗುರವನ್ನು ಧರಿಸಿದಂದಿನಿಂದ ನಾನು ನಿಂತ ಜಾಗದಲ್ಲಿ ನಿಂತಿಲ್ಲ, ಕೆಲವೇ ತಿಂಗಳುಗಳಲ್ಲಿ ಲಗುಬಗೆಯಿಂದ ಬನಾರಸ್ಸನ್ನು ಬಿಟ್ಟು, ಎಲ್ಲೆಲ್ಲೋ ಹೋಗಿ, ನನಗೆ ಈ ಉಂಗುರವನ್ನು ಧರಿಸಲು ಸಹಾಯ ಮಾಡಿದ ರಾಮ್ ಸಿಂಗ್ ಬರದೇ ಇದ್ದರೂ ನಾನಂತೂ ಅಮೇರಿಕೆಗೆ ಬಂದೇ ಬಿಟ್ಟೆ! ಈ ಉಂಗುರದಿಂದ ಒಳ್ಳೆಯದಾಯಿತೋ ಕೆಟ್ಟದಾಯಿತೋ ಯಾರು ಬಲ್ಲರು, ಬನಾರಸ್ಸಿನಲ್ಲಿ ಕೈಯಲ್ಲಿ ಬೆಳ್ಳಿಯ ಉಂಗುರವನ್ನು ಧರಿಸುತ್ತಿದ್ದುದರಿಂದ ಉತ್ತರಭಾರತದವರ ಸಂಪ್ರದಾಯದಲ್ಲಿ ನಾನೂ ಒಂದಾಗಲು ಖಂಡಿತವಾಗಿ ಸಹಾಯವಾಗಿತ್ತು (ಅಲ್ಲಿ ಹೆಚ್ಚಿನ ಜನರು ಒಂದಲ್ಲ ಒಂದು ರತ್ನವನ್ನು ಕೈಯಲ್ಲಿ ಧರಿಸುತ್ತಾರೆ ಎನ್ನೋ ಅರ್ಥದಲ್ಲಿ).

***

ಇವತ್ತಿಗೂ ನನ್ನ ದೊಡ್ಡ ಅಣ್ಣನಿಗೆ ಫೋನ್ ಮಾಡಿ ಕೇಳಿದರೆ, ನಾನು ಅಮೇರಿಕೆಗೆ ಬಂದದ್ದು ಈ ಉಂಗುರದ ದೆಸೆಯಿಂದಲೇ ಎಂದು ಅವನು ಹೇಳುತ್ತಾನೆ! ಬನಾರಸ್ಸಿನ ಪ್ರಭಾವ ನನ್ನ ಮೇಲೆ ಎಷ್ಟಿದೆಯೆಂದರೆ ಇಂದಿಗೂ ಸಹ ನಾನು ನನ್ನ ಕೈಯಲ್ಲಿ ಬೆಳ್ಳಿಯಲ್ಲಿ ಮಾಡಿಸಿದ ಉಂಗುರವೊಂದರಲ್ಲಿ ನೀಲವನ್ನು ಧರಿಸುತ್ತೇನೆ, ಆ ಹಳೇ ಉಂಗುರ ನನ್ನ ಹತ್ತಿರವೇ ಇನ್ನೂ ಇದ್ದರೂ ಅದರ ಬದಲಿಗೆ ಬೇರೆಯ ಹರಳನ್ನು ಹಾಕಿಕೊಂಡಿದ್ದೇನೆ.

ನನಗೆ ಒಳ್ಳೆಯದೇನಾದರೂ ಆಗಿದ್ದರೆ ಅದು ನೀಲದ ಮಹಿಮೆ ಇರಬಹುದು, ಅಥವಾ ಅದೆಷ್ಟೋ ಸಾರಿ ಬನಾರಸ್ಸಿನ ಗಂಗೆಯಲ್ಲಿ ಮಿಂದು ಪಾಪಗಳನ್ನು ಕಳೆದುಕೊಂಡಿದ್ದಕ್ಕಿರಬಹುದು!

Thursday, June 01, 2006

ಅಂತರಂಗದ ಹಾಡು

ಸುಮಾರು ಆರು ವರ್ಷಗಳ ಹಿಂದೆ ನನ್ನ ಸ್ನೇಹಿತ ವಾಸು ಮತ್ತು ಅವನ ತಂದೆ-ತಾಯಿಯರನ್ನು ನೋಡೋಣವೆಂದು ತಾಳಗುಪ್ಪಕ್ಕೆ ಹೋದಾಗ ವಾಸುವಿನ ತಾಯಿ ಗೌರಮ್ಮನವರು ಒಂದು ಹೊಸ ಹಸೆಯನ್ನು ಬರೆಯುತ್ತಿದ್ದರು (ವಾಸುವಿನ ಬಗ್ಗೆ ಇನ್ನೂ ಹೆಚ್ಚು ಜ್ಞಾನಪೀಠ ಲೇಖನದಲ್ಲಿ ಬರೆದಿದ್ದೇನೆ). ನಾನೂ ನನ್ನ ಎರಡನೇ ಅಣ್ಣನೂ ಅವರ ಮನೆ, ಮನೆ ಸುತ್ತಲಿನ ತೋಟ, ಹಾಗೂ ಅವರ ಜೊತೆಯಲ್ಲಿ ಕೆಲವೊಂದು ಫೋಟೋಗಳನ್ನು ತೆಗೆದುಕೊಂಡು ಬಂದಿದ್ದೆವು, ಅವರು ಬಿಡಿಸುತ್ತಿದ್ದ ಹಸೆಯನ್ನು ನೋಡಿ (ಹಸೆ ಎಂದರೆ ಮಲೆನಾಡಿನಲ್ಲಿ ಕೆಲವು ಜಾತಿಯ ಜನರಲ್ಲಿ ಹೆಂಗಸರು ಮದುವೆ ಮೊದಲಾದ ವಿಶೇಷ ಕಾರ್ಯಗಳಿಗೆ ಬಿಡಿಸುವ ಚಿತ್ತಾರ, ವಿವರಗಳಿಗೆ ಇಲ್ಲಿ, ಇಲ್ಲಿ ನೋಡಿ) ನನಗೇನನ್ನಿಸಿತೋ ಏನೋ, ಅದೇ ದಿನ ಈ ಕೆಳಗಿನ ಕವನವನ್ನು ಬರೆದಿದ್ದೆ, ಈ ದಿನ ಎಲ್ಲ ಹಳೆಯ ಫೈಲುಗಳನ್ನು ಎತ್ತಿ ಝಾಡಿಸುತ್ತಿರುವಾಗ 'ನಾನಿನ್ನೂ ಬದುಕಿದ್ದೇನೆ!' ಎಂದು ಕಣ್ಣಿಗೆ ಬಿತ್ತು. ಇವತ್ತಿನ ಬದಲಾದ ಪ್ರಬುದ್ಧತೆ, ಸ್ಥಿತಿ-ಗತಿಗಳಲ್ಲಿ 'ಹುಟ್ಟು, ಪ್ರೀತಿ ಮತ್ತು ಬದುಕನ್ನು' ಓದಿದಾಗ ಇದರ ಹಿನ್ನೆಲೆ ಏನಿರಬಹುದು ಎಂದು ಬೇರೆ ಯಾರದ್ದೋ ಕವನವನ್ನು ಓದುವಂತೆ ಹಲವಾರು ಬಾರಿ ಓದಿಕೊಂಡರೂ ಇಲ್ಲಿನ ಮೂರು ಪ್ಯಾರಾಗಳು ಹೆಚ್ಚು ಗುಟ್ಟೇನನ್ನೂ ಬಿಡಲಿಲ್ಲ. ಅಲ್ಲದೇ ಕೊನೆಯ ಎರಡು ಸಾಲುಗಳಲ್ಲಿ ಬರೆದಂತೆ '...ನಿರಂತರ ನಡೆವ ಬಹಿರಂಗಕೆ ಬಾರದ ಅಂತರಂಗದ ಹಾಡೇ?' ಎನ್ನುವ ಸಾಲುಗಳು 'ಅಂತರಂಗ'ಕ್ಕೆ ಹೊಂದಿಕೊಳ್ಳಬಹುದು ಎಂದೂ ಈ ಪದ್ಯವನ್ನು ಇಲ್ಲಿ ತೋರಿಸಿದ್ದೇನೆ. ಎಲ್ಲಾದರೂ ಧೂಳು ತಿನ್ನುತ್ತಾ ಬೀಳುವ ಬದಲಿಗೆ ಹೀಗೆ ಒಂದು ಸ್ಥಳದಲ್ಲಿ ಇದ್ದರೆ ಒಳ್ಳೆಯದು ಎಂದು ಕೂಡಾ ಅನ್ನಿಸಿದ್ದರಿಂದ ಇನ್ನು ಮುಂದೆ ಹಲವು ಹೊಸ ಹಾಗೂ ಹಳೆಯ ಕವನಗಳನ್ನು ಅಲ್ಲಲ್ಲಿ ತೋರಿಸೋಣವೆಂದುಕೊಂಡಿದ್ದೇನೆ.

ತಮ್ಮ ತೋಟದಲ್ಲಿ ನಾನಾ ವಿಧವಾದ ಹೂವುಗಳನ್ನು ಬೆಳೆದೂ ನನಗೆ ಗೊತ್ತಿರುವಂತೆ ಬೇರೆ ಯಾರಿಗೂ ಒಂದು ಹೂವನ್ನು ಮುಟ್ಟಲು ಕೊಡದಿದ್ದ ಗೌರಮ್ಮನವರ ಬುದ್ಧಿ ತಿಳಿದೂ-ತಿಳಿದೂ ಆದಿನ ನಾನು 'ಒಂದು ಹೂವನ್ನು ಕೊಯ್ದುಕೊಳ್ಳಲೇ?' ಎಂದು ನಗುತ್ತಾ ಕೇಳಿದ್ದೆ, ಅವರು 'ಆಯ್ತು' ಎಂದಿದ್ದನ್ನೇ ಕಾಯುತ್ತಾ ಯಾವುದೋ ವ್ರತ ಭಂಗ ಮಾಡುವ ಹರ್ಷದಿಂದ ಹತ್ತಿರದಲ್ಲೇ ಸುಂದರವಾಗಿ ಅರಳಿದ್ದ ಡೇಲಿಯಾ ಹೂವೊಂದನ್ನು ಕೊಯ್ದುಕೊಂಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಅವರು 'ಮತ್ತೆ ಬಂದಾಗ ಬಾ' ಎಂದಿದ್ದರೂ ಅವರನ್ನು ನೋಡದೇ ಅದೆಷ್ಟೋ ವರ್ಷಗಳಾಗಿ ಹೋಗಿಬಿಟ್ಟವು. ವಾಸುವಿನ ತಾಯಿ ಗೌರಮ್ಮನವರಲ್ಲಿ ನನ್ನದು ಯಾವಾಗಲೂ ಸಲಿಗೆಯೇ, ಹಿಂದೆ ಯಾವತ್ತೋ 'ನೀವು ಕೋಳಿಸಾರನ್ನು ಮಾಡುವಾಗ ಮಸಾಲೆಯನ್ನು ಬೇರೆಯಾಗಿ ರುಬ್ಬಿ ಸಾರು ಮಾಡುವುದಕ್ಕಿಂತ ಕೋಳಿಗೇ ಮಸಾಲೆಯನ್ನು ತಿನ್ನಿಸಿ ಅಂತಹ ಕೋಳಿಯನ್ನು ಬೇಯಿಸಿದರೆ ಹೇಗೆ?' ಎಂದು ತಮಾಷೆಗೆ ಕೇಳಿ ಬಯ್ಯಿಸಿಕೊಂಡಿದ್ದನ್ನು ನೆನೆಸಿಕೊಂಡರೆ ಇವತ್ತಿಗೂ ಜೋರಾಗಿ ನಗುಬರುತ್ತದೆ.

***

ಹುಟ್ಟು, ಪ್ರೀತಿ ಮತ್ತು ಬದುಕು
(ಜುಲೈ ೨೦೦೦)

ಮೈ ಮನಗಳ ತೃಷೆ ತೀರಿಸೋ ಮಿಲನ
ಮಹೋತ್ಸವದಂದು ಹುಟ್ಟಿ ಬಂದಿಹ ಧೀರ;
ಸುತ್ತೆಲ್ಲ ಕಬಳಿಸಿ ವಕ್ಕರಿಸಿಕೊಂಡಿರುವೆದೆಯಲಿ
ತನ್ನನ್ನೇ ತಾನು ತಿಳಿಯದ ಶೂರ.
ಹಿಂಗಿದ ಬಾಯಾರಿಕೆ, ಮನಸ್ಸಿನ ಚಡಪಡಿಕೆ
ಯಾರಿಂದಲೂ ತಿದ್ದಲಾಗದೀ ಹುಟ್ಟು;
ಸೂತ್ರವೂ ಗೋತ್ರವೂ ಬರಿದೆ ಬಯಲಾದರೂ
ಯಾರಿಗೂ ಬಿಡಿಸಲಾಗದೀ ಗುಟ್ಟು.

ದಕ್ಕಿದ್ದು ಸಿಕ್ಕದಿರುವ, ಸಿಕ್ಕಿದ್ದು ಸೊಗಸಾಗಿರದ
ಉನ್ಮತ್ತತೆಯೇ ಮೈವೆತ್ತ ಪ್ರಬುದ್ಧತೆ;
ಅರಿಕೆ ಅರಿವುಗಳಲ್ಲಿ ಬೆರಕೆ ತಿರುವುಗಳಿಲ್ಲಿ
ತನ್ನನೇ ಮರೆಯಿಸುವ ಉತ್ಕಂಠತೆ.
ತನು-ಮನಗಳ ನಿಲ್ಲಿಸಿಕೊಳ್ಳದ, ನೇರವನ್ನು
ತಿರುವಿಕೊಂಡ, ನಭವೇ ತನ್ನದಾಗುವ ಆಸೆ;
ಕುದಿಯುತಿದೆ ಧಮನಿಗಳಲಿ ಸರ್ವಾಕಾಂಕ್ಷೆಯ ಛಲ
ಬಿಸಿಯಿಲ್ಲದೆ ಬಿರುಕುಬಿಟ್ಟಿಹ ಮೂಸೆ.

ಅರಿಯುವ ಉರಿಯಲ್ಲಿ, ಒಟ್ಟಿಗಿದ್ದರೂ ಬೇರೆ
ಬಯಸುವ ದೇಹ-ಮನಗಳ ಮೂಲ ಕಾಣುವಾಸೆ;
ನೆನಪುಗಳಿರಲಿ, ನವಿರಾಗಿ ಏಳುತಿಹ ನಲುಮೆಗಳಲಿ
ತ್ರಿಕೋನ, ವೃತ್ತಾದಿಗಳಾಕೃತಿಯ ಬರೆವ ಹಸೆ.
ಹಸಿಯಿದೆ, ಹಸಿವೆಯಿದೆ, ಹಿಂಗದ ದಾಹವಿದ್ದರೂ
ಎದುರಾಗುವ ಅಡ್ಡಿ ಬರೀ ಜಿಗಿವ ಮೋಟುಗೋಡೆ;
ಕತ್ತಲೆಕೋಟೆ ಕೋಮಲತೆಗಳ ನಡುವೆ ನಿರಂತರ
ನಡೆವ ಬಹಿರಂಗಕೆ ಬಾರದ ಅಂತರಂಗದ ಹಾಡೇ?

Wednesday, May 31, 2006

ಎಲಿಯಟ್ ಸ್ಪಿಟ್‌ಝರ್ ಎನ್ನುವ ಅಟಾರ್ನಿ ಜನರಲ್


"We cannot afford to be cautious because you don't change the world by whispering.”

"You will not change the world by whispering. In order to make that change, you need to put your heart and soul into it, you need to talk back to authority, and you need to do it with passion and vigor and determination."

- Eliot Spitzer


ನ್ಯೂ ಯಾರ್ಕ್ ನಗರದಲ್ಲಿ ಕೆಲಸ ಮಾಡುವ ನನ್ನ ಸಹೋದ್ಯೋಗಿ ಒಬ್ಬಳು ಬ್ಯಾಂಕಿನವರು ಆಕೆಗೆ ಕೊಡಬೇಕಾದ ಬಡ್ಡಿಯನ್ನು ಸರಿಯಾಗಿ ಕೊಡುತ್ತಿಲ್ಲ, ಅವರು ಹೀಗೇ ಮಾಡಿದರೆ ನಾನು ನ್ಯೂ ಯಾರ್ಕ್ ಸ್ಟೇಟಿನ ಅಟಾರ್ನಿ ಜನರಲ್ ಆಫೀಸಿಗೆ ಕಂಪ್ಲೇಂಟು ಕೊಡುವುದಾಗಿ ಹೇಳಿದ್ದಳು. ಇದಾದ ಒಂದು ವಾರದ ಮೇಲೆ ಮಾತು ಎಲ್ಲಿಗೋ ಬಂದು ಆಕೆಗೆ ಬ್ಯಾಂಕಿನವರು ಕೊಡಬೇಕಾದ ಬಡ್ಡಿಯ ವಿಷಯವನ್ನು ಕೇಳಿದೆ, ಆಕೆಗೆ ಬ್ಯಾಂಕಿನವರು ಮತ್ತೆ ಸತಾಯಿಸಿದರೆಂದೂ ಅವರಿಗೆ ಬುದ್ಧಿ ಕಲಿಸುವುದಕ್ಕೋಸ್ಕರ ಒಂದು ಮಧ್ಯಾಹ್ನ ಈಕೆ ಬ್ಯಾಂಕಿಗೆ ಹೋಗಿ ಜಗಳವಾಡಿ ಬಂದಿದ್ದಳಂತೆ, ಅಲ್ಲದೇ ನನಗೆ ಬರಬೇಕಾದ ಹಣ ಬರದಿದ್ದರೆ ನಿಮ್ಮ ಕೆಟ್ಟ ಪ್ರಾಕ್ಟೀಸುಗಳನ್ನು ಅಟಾರ್ನಿ ಜನರಲ್ ಆಫೀಸಿಗೆ ತಿಳಿಸುವುದಾಗಿ ಹೇಳಿ ಬಂದಿದ್ದಳಂತೆ, ಆಕೆಗೆ ಆಶ್ಚರ್ಯವಾಗುವಂತೆ ಬ್ಯಾಂಕಿನ ಮೇಲಾಧಿಕಾರಿಗಳು ಆಕೆಯಲ್ಲಿ ತಪ್ಪು ಒಪ್ಪಿಕೊಂಡರೆಂದೂ ಆಕೆಗೆ ಬರಬೇಕಾದ ದುಡ್ಡನ್ನು ಕೊಡಲು ಒಪ್ಪಿಕೊಂಡರೆಂದೂ ಬಹಳ ಸಂತಸದಿಂದ ಹೇಳಿದಳು. ನಾನು 'ಈ ರೀತಿ ಅವರು ಅದೆಷ್ಟು ಜನರಿಗೆ ಕೆಟ್ಟ ಲೆಕ್ಕದಿಂದ ಮೋಸ ಮಾಡಿದ್ದಾರೋ, ಅಟಾರ್ನಿ ಜನರಲ್ ಆಫೀಸಿಗೆ ದೂರು ಕೊಟ್ಟಿದ್ದರೆ ಅವರು ವಿಚಾರಿಸಿಕೊಳ್ಳುತ್ತಿದ್ದರು' ಎಂದೆ, ಆಕೆ 'ಅಲ್ಲಿಗೆ ಒಂದು ಕಾಲ್ ಮಾಡುತ್ತೇನೆ' ಎಂದು ಹೇಳಿದ ನೆನಪು, ಮುಂದೆ ಏನಾಯಿತೋ ಗೊತ್ತಿಲ್ಲ.

ನಿನ್ನೆ ಎನ್.ಪಿ.ಆರ್.ನಲ್ಲಿ ಸಂಜೆ ಸುದ್ದಿ ಕೇಳುತ್ತಿರುವಾಗ ನ್ಯೂ ಯಾರ್ಕ್ ರಾಜ್ಯದಿಂದ ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಎಲಿಯಟ್ ಸ್ಪಿಟ್‌ಝರ್ ಅನ್ನು ನಿಲ್ಲಿಸಿದ್ದಾರೆಂದೂ ಹಾಗೂ ...you don't change the world by whispering... ಎನ್ನುವ ಅವರ ಭಾಷಣದ ತುಣುಕೂ ಕೇಳಿಸಿತು. ತಾನು ೨೦೦೬ ರ ಚುನಾವಣೆಯಲ್ಲಿ ಗವರ್ನರ್ ಆಗಿ ಸ್ವರ್ಧಿಸುತ್ತೇನೆಂದು ಈ ಮೊದಲೇ ಅನೌನ್ಸ್ ಮಾಡಿದ್ದರಿಂದ ಈ ಸುದ್ದಿಯಲ್ಲಿ ಯಾವುದೇ ವಿಶೇಷವಿರಲಿಲ್ಲ, ಆದರೆ ಈ ಸುದ್ದಿಯ ಹಿನ್ನೆಲೆಯಲ್ಲಿ ಸ್ಪಿಟ್‌ಝರ್ ಅಟಾರ್ನಿ ಜನರಲ್ ಆಗಿ ಇಲ್ಲಿಯವರೆಗೆ ನ್ಯೂ ಯಾರ್ಕ್ ರಾಜ್ಯ ಹಾಗೂ ದೇಶಕ್ಕೆ ನೀಡಿದ ಕೆಲವು ಕೊಡುಗೆಗಳನ್ನು ಮೆಲುಕು ಹಾಕುವಂತಾಯ್ತು. ೨೦೦೦-೨೦೦೧ರಲ್ಲಿ ಆದ ಕಾರ್ಪೋರೇಟ್ ಸ್ಕ್ಯಾಂಡಲ್ ಹಿನ್ನೆಲೆಯಲ್ಲಿ ಇತ್ತೀಚೆಗಂತೂ ವಾಲ್ ಸ್ಟ್ರೀಟಿನ ಎಷ್ಟೋ ಜನರಿಗೆ ಸ್ಪಿಟ್‌ಝರ್ ಹೆಸರು ಕೇಳಿದರೆ ನಡುಕ ಉಂಟಾಗುತ್ತಿದ್ದುದರಲ್ಲಿ ಅತಿಶಯವೇನಿಲ್ಲ.

ಸ್ಪಿಟ್‌ಝರ್‌ನ ಯಶೋಗಾಥೆಗಳನ್ನು ಬರೆಯುವ ಮುನ್ನ ಅಂತರ್ಜಾಲದಲ್ಲಿ ಈತ ಬೆಳೆದು ಬಂದ ಬಗೆಯನ್ನು ಓದಿದೆ - ಸ್ಪಿಟ್‌ಝರ್ ಹುಟ್ಟಿದಾಗಿನಿಂದ ಕಟ್ಟಾ ನ್ಯೂ ಯಾರ್ಕ್ ಮನುಷ್ಯ, ಬ್ರಾಂಕ್ಸ್‌ನ ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಹೂಡಿದ್ದ ತಂದೆಯ ಮಗನಾಗಿ ಈತ ಓದಿದ್ದು ಪ್ರೈವೇಟು ಸ್ಕೂಲುಗಳಲ್ಲಿಯೇ. ಪ್ರಿನ್ಸ್‌ಟನ್ ಯೂನಿವರ್ಸಿಟಿ ಹಾಗೂ ಹಾರ್ವರ್ಡ್ ಲಾ ಸ್ಕೂಲಿನಲ್ಲಿ ಗ್ರಾಜುಯೇಷನ್ ಮುಗಿಸಿದ ತರುವಾಯ ಕೆಲವು ವರ್ಷ ಪ್ರವೇಟ್ ಪ್ರಾಕ್ಟೀಸು ಮಾಡಿಕೊಂಡು ರಾಜಕೀಯದ ಗಂಧಗಾಳಿ ಅಷ್ಟೊಂದು ಇಲ್ಲದಿದ್ದರೂ ೧೯೯೪ರಲ್ಲಿ ಅಟಾರ್ನಿ ಜನರಲ್ ಎಲೆಕ್ಷನ್‌ನಲ್ಲಿ ಸ್ಪರ್ಧಿಸಿ ಸೋತ ನಂತರ ಮತ್ತೆ ೧೯೯೮ ರಲ್ಲಿ ಅದೇ ಎಲೆಕ್ಷನ್‌ನಲ್ಲಿ ಗೆದ್ದ ವ್ಯಕ್ತಿ ಈವರೆಗೆ ಹಿಂತಿರುಗಿ ನೋಡಿಲ್ಲ. ೧೯೯೮ ರಲ್ಲಿ ಸ್ವಲ್ಪವೇ ಮಾರ್ಜಿನ್‌ನಲ್ಲಿ ಗೆದ್ದರೂ ನಾಲ್ಕು ವರ್ಷಗಳ ಕಾಲ ಜನರನ್ನು ಗೆದ್ದು ೨೦೦೨ರಲ್ಲಿ ಮತ್ತೆ ಅಟಾರ್ನಿ ಜನರಲ್ ಆಗಿ ಪುನಃ ಆಯ್ಕೆಯಾಗುವಂತಾಗಿದ್ದು ಸ್ಪಿಟ್‌ಝರ್‌ಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿತ್ತು.

ಸ್ಪಿಟ್‌ಝರ್‌ಗೆ ತಕ್ಕ ಮಟ್ಟಿನ ಕೀರ್ತಿಯನ್ನು ತಂದು ಕೊಟ್ಟಿದ್ದು ಮೇ, ೨೦೦೪ರಲ್ಲಿ ಆತ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್‌ಚೇಂಜಿನ ಮುಖ್ಯಸ್ಥ ರಿಚರ್ಡ್ ಗ್ರಾಸ್ಸೋ ವನ್ನು ಥರಾಟೆಗೆ ತೆಗೆದುಕೊಂಡಾಗ, ವರ್ಷದಿಂದ ವರ್ಷಕ್ಕೆ 'I am blessed!' ಎಂದುಕೊಂಡು ಬಹಳ ಹೆಚ್ಚಿನ ಸಂಬಳ ಮತ್ತು ಬೋನಸ್ಸನ್ನು ಪಡೆದ ಗ್ರಾಸ್ಸೋ ಮೇಲೆ ಸ್ಪಿಟ್‌ಝರ್‌ನ ದೃಷ್ಟಿಗೆ ಬಿದ್ದಾಗ ವರ್ಷಕ್ಕೆ ಡಾಲರ್ ೧೮೭ ಮಿಲಿಯನ್ ಅನ್ನು ಪಡೆಯುತ್ತಿದ್ದ (ಸಂಬಳ, ಬೋನಸ್, ಅನುಕೂಲಗಳೆಲ್ಲ ಸೇರಿ), ಅದು ನಿಜವಾಗಿಯೂ ಬಹುದೊಡ್ಡ ಮೊತ್ತ, ಆ ಮೊತ್ತವನ್ನು ತೀರ್ಮಾನಿಸುವಲ್ಲಿ ಯಾವ ಲೆಕ್ಕವೂ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್‌ಚೇಂಜಿನ ಬೋರ್ಡಿಗೆ ಇದ್ದಂತಿರಲಿಲ್ಲ, ಇದರಲ್ಲಿ ಗ್ರಾಸ್ಸೋ ತಪ್ಪಿದೆಯೋ ಇಲ್ಲವೋ, ಆ ಮೊತ್ತವಂತೂ ಅತಿ ಹೆಚ್ಚು, ಇಲ್ಲಿಯವರೆಗೆ ಬೇರೆ ಯಾರಿಗೂ ಈ ವಿಷಯ ಅದೇಕೆ ಹೊಳೆಯಲಿಲ್ಲ ಎಂದು ಹಲವಾರು ಕಡೆಗಳಲ್ಲಿ ಚರ್ಚೆ ನಡೆಯಿತು. ಸ್ಪಿಟ್‌ಝರ್‌ನ ಈ ಪ್ರಯತ್ನದಿಂದ ಬೇರೆ ಏನಾಗದಿದ್ದರೂ ಗ್ರಾಸ್ಸೋ ರಾಜೀನಾಮೆ ನೀಡಿ ಮುಂದೆ ಸ್ಟಾಕ್ ಎಕ್ಸ್‌ಚೇಂಜಿನ ಅಧಿಕಾರಿಗಳನ್ನು ಬದಲಾಯಿಸಿ, ಅವರುಗಳಲ್ಲಿ ಯಾರೂ ವರ್ಷಕ್ಕೆ ಇನ್ನೂರು ಮಿಲಿಯನ್ ಇರಲಿ ಅದರ ಅರ್ಧದಷ್ಟನ್ನೂ ಗಳಿಸುತ್ತಿಲ್ಲ.

ಹೀಗೆ ಎಲಿಯಟ್ ಸ್ಪಿಟ್‌ಝರ್ ಹಾಕಿದ ಕೇಸುಗಳು ಒಂದೇ ಎರಡೇ - ಇಂಟರ್‌ಮಿಕ್ಸ್ ಎನ್ನುವ ಕಂಪನಿಯ ಮೇಲೆ ಸ್ಪೈ ವೇರ್ ಕುರಿತಂತೆ, ಗ್ಲಾಕ್ಸೋ ಸ್ಮಿತ್ ಕ್ಲೈನ್ ಎನ್ನುವ ಕಂಪನಿಯ ಮೇಲೆ ಪ್ಯಾಕ್ಸಿಲ್ ಡ್ರಗ್‌ಗೆ ಸಂಬಂಧಿಸಿದಂತೆ, ಗೈಡಂಟ್ ಕಂಪನಿಯವರು ಕಾರ್ಡಿಯಾಕ್ ಡಿಫಿಬ್ರಿಲೇಟರ್‌ಗಳ ಮಾರಾಟದಲ್ಲಿ ಮೋಸ ಮಾಡುತ್ತಿರುವುದನ್ನು ಕುರಿತು, ಎಂಟೆರ್‌ಕಾಮ್ ರೇಡಿಯೋ ಸ್ಟೇಷನ್ ಕಂಪನಿಯ ಮೇಲೆ, ಎಚ್ ಎಂಡ್ ಆರ್ ಬ್ಲಾಕ್‌ನವರು ಇಂಡಿವಿಜುಯಲ್ ರಿಟೈರ್‌ಮೆಂಟ್ ಅಕೌಂಟುಗಳಲ್ಲಿ ತಪ್ಪು ಮಾಡಿದ್ದಾರೆಂದು, ಎಲ್ಲಕ್ಕಿಂತ ಮುಖ್ಯವಾಗಿ ಎ.ಐ.ಜಿ. ಕಂಪನಿ ತಪ್ಪು ಮಾಡಿದೆಯೆಂದೂ ಹಾಗೂ ಅದರ ಮುಖ್ಯಸ್ಥನ ಮೇಲೆ ಹೂಡಿದ ಮೊಕದ್ದಮೆಗಳಲ್ಲಿ ಸ್ಪಿಟ್‌ಝರ್ ಸೋತಿದ್ದನ್ನು ನಾನು ಕೇಳಿಲ್ಲ. ಮೇಲೆ ತಿಳಿಸಿರುವುಗಳು ಬರೀ ಉದಾಹರಣೆಗಳಷ್ಟೇ, ಆತ ಮೊಕದ್ದಮೆ ಹೂಡಿದ ಕಂಪನಿಗಳ ಯಾದಿಯನ್ನೇ ಕೊಟ್ಟರೆ ಪಟ್ಟಿ ಬಹಳ ಉದ್ದವಾಗುತ್ತದೆ. ಹೆಚ್ಚಿನ ಕೇಸುಗಳಲ್ಲಿ ಕಂಪನಿಗಳು ಮೊಕದ್ದಮೆಗಳನ್ನು 'ಸೆಟಲ್' ಮಾಡಿಕೊಂಡು ಸರ್ಕಾರಕ್ಕೆ ಇಂತಿಷ್ಟು ಎಂದು (ಹೆಚ್ಚಿನ ಕೇಸುಗಳಲ್ಲಿ ಮಿಲಿಯನ್‌ಗಟ್ಟಲೆ) ದಂಡಕಟ್ಟಿ ಬದುಕಿಕೊಂಡರು. ಮೊದಮೊದಲು ಸ್ಪಿಟ್‌ಝರ್‌ನ್ನು 'ಇವನೇನು ಮಾಡುತ್ತಾನೆ ನೋಡೋಣ' ಎಂದು ಎದೆಯುಬ್ಬಿಸಿದ ಎಐಜಿ ಕಂಪನಿಯ ಗ್ರೀನ್‌ಬರ್ಗ್ ಅಂಥವರು ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದೂ ಅಲ್ಲದೆ ಸಾಕಷ್ಟು ಹಣವನ್ನೂ ಕಳೆದುಕೊಂಡರು. ಇನ್ನು ಕೆಲವರು ಕೇಂದ್ರದಲ್ಲಿ ಆಡಳಿತದಲ್ಲಿರೋ ರಿಪಬ್ಲಿಕನ್ ಪಕ್ಷದ ಮೊರೆ ಹೋದರು, ಮತ್ತೆ ಕೆಲವರು 'ಸ್ಪಿಟ್‌ಝರ್ ತನ್ನ ರಾಜಕೀಯ ಅನುಕೂಲಕ್ಕೆ ಈ ರೀತಿ ಕಂಪನಿಗಳನ್ನು ಸತಾಯಿಸಿ ಹೆಸರು ಮಾಡಿಕೊಳ್ಳುತ್ತಿದ್ದಾನೆ' ಎಂದು ಆರೋಪಿಸಿದರು, ಇನ್ನು ಕೆಲವರು 'ಇವನು ಹೀಗೆಲ್ಲ ಮಾಡಿದ್ದರಿಂದ ಹಲವಾರು ಕೆಲಸಗಳನ್ನು ಜನರು ಕಳೆದುಕೊಳ್ಳುವಂತಾಯ್ತು, ಕಂಪನಿಗಳು ಮುಚ್ಚುವಂತಾಯ್ತು' ಎಂದು ದೂರಿದರು, ಅವನ ಮೇಲೆ ಹಲವಾರು ಆರೋಪಗಳನ್ನು ಹೊರಿಸಿ ಕೇಸು ಹಾಕಿದರು - ಇವೆಲ್ಲಕ್ಕೂ ಸ್ಪಿಟ್‌ಝರ್ ಈವರೆಗೆ ತಲೆಕೆಡಿಸಿಕೊಂಡಂತಿಲ್ಲ, ಎಲ್ಲೂ ತನ್ನ ಬೇಟೆಯನ್ನು ನಿಲ್ಲಿಸಿದ ಹಾಗೆ ಕಂಡುಬಂದಿಲ್ಲ.

ಎಲಿಯಟ್ ಸ್ಪಿಟ್‌ಝರ್ ಹೆಸರೇನಾದರೂ ಸಮೂಹ ಮಾಧ್ಯಮದಲ್ಲಿ ಕಾಣಿಸಿಕೊಂಡರೆ ನಾನು ಆ ಸುದ್ದಿಗಳಿಗೆ ಕಿವಿಕೊಡುತ್ತೇನೆ. ಈ ವ್ಯಕ್ತಿ ಡೆಮೋಕ್ರಾಟಿಕ್ ಪಕ್ಷದಿಂದ ಗೆದ್ದು ನ್ಯೂ ಯಾರ್ಕ್ ರಾಜ್ಯದ ಗವರ್ನರ್ ಆಗಲಿ, ಜಾರ್ಜ್ ಪಟಾಕಿಯ ನಿಧಾನ ಆಡಳಿತಕ್ಕೆ ಬೇಸತ್ತ ಜನರಲ್ಲಿ ಸ್ವಲ್ಪ ಹುರುಪು ಹುಟ್ಟಿಸಲಿ ಎಂದು ಆಶಿಸುತ್ತೇನೆ. ನನಗೇನೂ ಡೆಮೋಕ್ರಾಟ್ ಅಥವಾ ರಿಪಬ್ಲಿಕನ್ ಎಂದು ಯಾವ ಪಕ್ಷದ ಮೇಲೂ ಒಲವಿಲ್ಲ - ಇನ್ನೊಮ್ಮೆ ಯಾವಾಗಲಾದರೂ ಹುಟ್ಟಾ ರಿಪಬ್ಲಿಕನ್ ನ್ಯೂ ಯಾರ್ಕ್ ನಗರದ ಮಾಜಿ ಮೇಯರ್ ರೂಡಿ ಜೂಲಿಯಾನಿಯ ಬಗ್ಗೆ ಬರೆಯುತ್ತೇನೆ.

***

ಅಮೇರಿಕದಲ್ಲಿ ಐವತ್ತು ರಾಜ್ಯಗಳಿವೆ, ಪ್ರತಿ ರಾಜ್ಯಕ್ಕೂ ಹೀಗೆ ರಾಜ್ಯದ ಅಟಾರ್ನಿ ಜನರಲ್ ಆಫೀಸರ್ ಎಂದು ಒಬ್ಬೊಬ್ಬರು ಇರುತ್ತಾರೆ, ಆದರೆ ನಾನು ಸ್ಪಿಟ್‌ಝರ್ ಬಗ್ಗೆ ಕೇಳಿದಷ್ಟು ಸುದ್ದಿಯಲ್ಲಿ ಬೇರೆ ಯಾರ ಬಗ್ಗೆಯೂ ಕೇಳಿಲ್ಲ, ಈತ ಮೊಕದ್ದಮೆಗಳನ್ನು ಹೂಡಿ ಗೆದ್ದಷ್ಟು ಮತ್ತಿನ್ಯಾರೂ ಗೆದ್ದಿಲ್ಲ. ೪೬ ವರ್ಷ ವಯಸ್ಸಾಗಿರುವ ಈತ ಗವರ್ನರ್ ಆಗಿ ಗೆದ್ದು ಇನ್ನೇನನ್ನು ಮಾಡುವುದಿದೆಯೋ, ಆರು ಅಡಿ ಎತ್ತರವಿರುವ, ನಿರರ್ಗಳವಾಗಿ ಮಾತನಾಡಿ ಗುಂಪನ್ನು ಗೆಲ್ಲಬಲ್ಲ ಹಾಗೂ ಪಾರ್ಟಿಗೆ ಬೇಕಾದ ಹಣವನ್ನು ಕೂಡಿಸಬಲ್ಲ ಚೈತನ್ಯವಿರುವ ಈ ವ್ಯಕ್ತಿ ಇದೇ ವರ್ಷ ನವೆಂಬರ್ ೭ ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲಬಲ್ಲನೇ ಎಂದು ಕಾದು ನೋಡಬೇಕಷ್ಟೇ.

Tuesday, May 30, 2006

ಎಕ್ಸಿಟ್ ಇಂಟರ್‌ವ್ಯೂವೂ, ಅದರಿಂದ ಹೊರಬಂದ ಸತ್ಯಗಳೂ...

ಕಳೆದ ವಾರ ನಮ್ಮ ಅತ್ತೆಯವರು ಇಲ್ಲಿಂದ ಭಾರತಕ್ಕೆ ಹಿಂತಿರುಗಿದರು, ಆರು ತಿಂಗಳು ಅವರು ನಮ್ಮ ಮನೆಯಲ್ಲಿ ಇದ್ದು ಹಿಂತಿರುಗುವ ತಯ್ಯಾರಿ ನಡೆಸುತ್ತಿರುವಾಗ ಮ್ಯಾನೇಜ್‌ಮೆಂಟ್ ಶೈಲಿಯಲ್ಲಿ ಒಂದು ಎಕ್ಸಿಟ್ ಇಂಟರ್‌ವ್ಯೂವ್ ಮಾಡಿದರೆ ಹೇಗೆ ಎಂದು ಅನ್ನಿಸಿದ್ದೇ ತಡ ಅವರಿಗೆ ನೋವಾಗದ ಹಾಗೆ ಏನೇನು ಪ್ರಶ್ನೆಗಳನ್ನು ಕೇಳಬಹುದು, ಅವರಿಂದ ಏನೇನು ಉತ್ತರ ಬರಬಹುದು ಎಂದೆಲ್ಲಾ ಮೊದಲೇ ಯೋಚಿಸಿಕೊಂಡಿದ್ದೆ. ನನಗೆ ಅನಿಸಿದ ಎಲ್ಲಾ ಪ್ರಶ್ನೆಗಳನ್ನೂ ಒಂದೇ ದಿನ ಕೇಳದೇ ಸುಮಾರು ಒಂದು ವಾರದಲ್ಲಿ ಬಿಡುವು ಸಿಕ್ಕಾಗ ಅಲ್ಲಲ್ಲಿ ಅವರ ಜೊತೆ ಮಾತನಾಡಲು ತೊಡಗಿದೆ. ನಮ್ಮ ಮಾವನವರು ಛಳಿಗೆ ಹೆದರಿ ಬರದೇ ಇದ್ದುದರಿಂದ ಅವರೊಬ್ಬರೇ ಬಂದಿದ್ದರು, ಬರೀ ವಾರಾಂತ್ಯದಲ್ಲಿ ಮಾತ್ರ ಪುರುಸೊತ್ತು ಸಿಗುವ ನಾವು ಅವರಿಗೆ ಅಮೇರಿಕವನ್ನು ಹೊರಗಡೆ ತೋರಿಸಿದ್ದಕ್ಕಿಂತ ಹೆಚ್ಚಾಗಿ ಟಿವಿಯಲ್ಲೇ ಕಂಡುಕೊಂಡಿದ್ದರು. ಆದರೂ ಅವರ ಕಲ್ಪನೆಯಲ್ಲಿದ್ದ ನಮ್ಮ ಅಮೇರಿಕನ್ ಬದುಕು ವಾಸ್ತವಕ್ಕಿಂತ ಬಹಳ ಭಿನ್ನವಾಗಿತ್ತು!

ನನಗೆ ಕೆಲವು ತಿಂಗಳುಗಳ ಕಾಲ ಅಮೇರಿಕೆಗೆ ಪ್ರವಾಸಿಗಳಾಗಿ ಬಂದು ಪೂರ್ತಿ ಅಮೇರಿಕನ್ ಬದುಕನ್ನೇ ಕಂಡವರ ಥರಾ ಜೆನರಲೈಸ್ ಮಾಡಿಕೊಂಡು ಮಾತನಾಡುವವರೆಂದರೆ ಬಹಳ ಸಿಟ್ಟು. ಪ್ಯಾರಿಸ್ ಏರ್‌ಪೋರ್ಟಿನಲ್ಲಿ ಏನೇನನ್ನು ಮಾಡಬಹುದು, ಲಿಬರ್ಟಿ ಅಮ್ಮನ ಪ್ರತಿಮೆ ಎಷ್ಟು ಎತ್ತಿರವಿದೆ, ವೈಟ್‌ಹೌಸ್ ಯಾವ ವರ್ಷದಲ್ಲಿ ಕಟ್ಟಿದ್ದು... ಮುಂತಾದ ವಿಷಯಗಳುಳ್ಳ ಪ್ರವಾಸಕಥನಗಳನ್ನು ಬರೆದರೆ ನನಗೆ ಯಾವ ದುಃಖವೂ ಇಲ್ಲ, ಅದರ ಬದಲಿಗೆ 'ಈ ಅನಿವಾಸಿಗಳ ಬದುಕೇ ಇಷ್ಟು!', 'ಅಮೇರಿಕನ್ನರೆಂದರೆ ಹೀಗೆ...' ಎಂದು ಜನರಲೈಸ್ ಮಾಡಿ ಏನಾದರೊಂದು ಮಾತನ್ನಾಡಿದರೆ ಮಾತ್ರ ನಾನು ಅದನ್ನು ಖಂಡಿತವಾಗಿ ವಿರೋಧಿಸುತ್ತೇನೆ. ನನ್ನ ಅತ್ತೆಯವರಿಗೆ ಮೊದಲೇ ಈ ಬಗ್ಗೆ ಹೇಳಿದ್ದೆ, 'ಏನಾದರೂ ಗೊತ್ತಾಗದಿದ್ದರೆ ಕೇಳಿ' ಎಂದೂ ಸಹ ಹೇಳಿದ್ದೆ, ಅವರು ಈ ರೀತಿಯ ಯಾವುದೇ ಜನರಲೈಸೇಶನ್‌ಗೂ ಹೋಗಲಿಲ್ಲ, ಮೇಲಾಗಿ ಅವರು ನಾವು ಇಲ್ಲಿ ಬದುಕುವ ರೀತಿಯನ್ನು ಕಂಡು ಅವರಿಗೇನನ್ನಿಸಿತು ಎಂದು ಹೇಳಲು ಯಾವ ಸಂಕೋಚವನ್ನೂ ಪಡಲಿಲ್ಲ - ನನ್ನ ದೃಷ್ಟಿಯಲ್ಲಿ ಅದು ಸರಿಯಾದ ವಿಚಾರ, ಏಕೆಂದರೆ ಅನಿವಾಸಿಯಾಗಿ ಇಲ್ಲಿ ನನ್ನ ಬದುಕು ಭಿನ್ನವಾದದ್ದು, ಅವರು ನಮ್ಮನ್ನು ಹತ್ತಿರದಿಂದ ನೋಡಿದ್ದಾರೆಯೇ ವಿನಾ, ಅನಿವಾಸಿಗಳೆಲ್ಲರೂ ಹೀಗೇ ಎನ್ನುವುದಕ್ಕೆ ಬರುವುದಿಲ್ಲ. ಇಲ್ಲಿಗೆ ಬ್ಯುಸಿನೆಸ್ ವೀಸಾದ ಮೇಲೋ, ಪ್ರವಾಸೀ ವೀಸಾದ ಮೇಲೋ ಬಂದವರು 'ಈ ಬದುಕಿನ ಬಗ್ಗೆ ನಾನೊಂದು ಪುಸ್ತಕವನ್ನು ಬರೆದು ಬಿಡುತ್ತೇನೆ' ಅಥವಾ 'ಈಗಾಗಲೇ ಕೆಲವು ಪುಟಗಳನ್ನು ಬರೆದಾಗಿದೆ' ಎಂದೋ ಹೇಳುತ್ತಾರೆ, ನಾನು ಅವರನ್ನು ಕೆಣಕಲೆಂದೇ 'ಏನು ಪ್ರವಾಸೀ ಕಥನವೋ?' ಎನ್ನುತ್ತೇನೆ, ಅವರು 'ಇಲ್ಲಾ, ಇಲ್ಲಿಗೆ ಬಂದ ಮೇಲೆ ಬಹಳ ಬೇಸರವಾಯಿತು, ಅದು ಸರಿ ಇಲ್ಲ, ಇದು ಸರಿ ಇಲ್ಲ...' ಎಂದು ದೂರುಗಳ ಯಾದಿಯನ್ನೇ ಶುರು ಮಾಡುತ್ತಾರೆ, ಅಥವಾ 'ಎಲ್ಲವೂ ಭಯಂಕರ ಚೆನ್ನಾಗಿದೆ' ಎಂದು ಹೊಗಳಲು ಮುಂದಾಗುತ್ತಾರೆ. ಅವರೇ ಮಾಡಿದ ಪ್ರತಿಯೊಂದು ಕಾಮೆಂಟಿನ ಬಗ್ಗೆ ವಿವರವನ್ನು ಕೇಳಿದರೆ, ಅವರು ಹಾಗೆ ಅಂದುಕೊಂಡಿರುವುದರ ಹಿಂದಿನ ಕಾರಣವನ್ನು ಬಿಡಿಸಲು ನೋಡಿದರೆ ಹೆಚ್ಚೇನೂ ಇರುವುದಿಲ್ಲ - ಹೆಚ್ಚಿನವುಗಳು ಪೂರ್ವಾಗ್ರಹ ಪೀಡಿತ ಅನಿಸಿಕೆಗಳಾಗಿರುತ್ತವೆ, ಇನ್ನು ಕೆಲವು ಅವರವರ ದೃಷ್ಟಿಕೋನದ ಮಿತಿಯಲ್ಲಿರುತ್ತದೆ, ಮತ್ತೆ ಕೆಲವು ಯಾವುದೋ ಒಂದು ಅಜೆಂಡಾದ ಪ್ರತಿಯಂತೆ ಕಂಡುಬರುತ್ತವೆ.

ಸರಿ, ನಾನು ಪ್ರಶೆಗಳನ್ನು ಒಂದಾದ ಮೇಲೊಂದರಂತೆ ಕೇಳಲು ತೊಡಗಿದೆ - ನಮ್ಮ ಬದುಕನ್ನು ನೋಡಿ ನಿಮಗೇನನ್ನಿಸುತ್ತದೆ, ನಾವಿಲ್ಲಿ ಸಂತೋಷವಾಗಿದ್ದೇವೆಂದು ಅನ್ನಿಸುತ್ತದೆಯೇ? ನಮ್ಮ ಊಟ-ತಿಂಡಿ-ಉಪಚಾರಗಳನ್ನು ನೋಡಿ ಏನನ್ನಿಸಿತು? ಹೇಗೋ ಹತ್ತು ವರ್ಷದ ವೀಸಾ ಕೊಟ್ಟಿದ್ದಾರೆ ಮತ್ತೆ ಇಲ್ಲಿಗೆ ಯಾವಾಗ ಬರುತ್ತೀರಿ? ಇಲ್ಲಿನ ಅನುಕೂಲಗಳೇನು, ಅನಾನುಕೂಲಗಳೇನು? ಯಾವುದು ಇಷ್ಟವಾಯಿತು, ಏಕೆ? ಯಾವುದು ಇಷ್ಟವಾಗಲಿಲ್ಲ, ಏಕೆ? ಇತ್ಯಾದಿ.

ಕೆಳಗೆ ಅವರು ಕೊಟ್ಟ ಉತ್ತರವನ್ನೆಲ್ಲ ಹೀಗೆ ಕ್ರೋಡೀಕರಿಸಿದ್ದೇನೆ: ನಾವು ಇಲ್ಲಿ ತಿಂಡಿ ತಿನ್ನುವ ರೀತಿ, ವಿಧಾನ ಅವರಿಗೆ ಇಷ್ಟವಾಗಲಿಲ್ಲವಂತೆ, ಇಲ್ಲಿನ ಬ್ರೆಡ್ಡು ಅಲ್ಲಿಗಿಂತ ಒಳ್ಳೆಯದಾದರೂ ಈ ಓಟ್‌ಮೀಲ್ ಪುಡಿ, ಕಾರ್ನ್‌ಪ್ಲೇಕ್ಸ್, ಬ್ರೆಡ್ಡುಗಳು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ, ಸಾಧ್ಯವಾದಷ್ಟೂ ನಾವು ಭಾರತೀಯ ತಿಂಡಿಗಳನ್ನೇ ಮಾಡಿಕೊಳ್ಳಬೇಕಂತೆ. ಇಲ್ಲಿ ಎಲ್ಲದಕ್ಕೂ ಮೆಷೀನುಗಳು ಇರುವುದು ತುಂಬಾ ಇಷ್ಟವಾದ ವಿಚಾರವಂತೆ, ಪಾತ್ರೆ ತೊಳೆದು ಒಣಗಿಸುವುದೂ, ಮೈಕ್ರೋವೇವ್ ಅವನ್ನಿನಲ್ಲಿ ಕೂಡಲೇ ಚಹಾ-ಕಾಫಿ ಮಾಡುವುದೂ ಇವೆಲ್ಲವೂ ಬಹು ಇಷ್ಟವಾಯ್ತುಂತೆ. ನಮ್ಮ ಇಲ್ಲಿನ ದೊಡ್ಡ ಅನಾನುಕೂಲಗಳ ಪಟ್ಟಿಯಲ್ಲಿ 'ನಮಗೇನಾದರೂ ಹೆಚ್ಚೂ ಕಡಿಮೆ ಆದರೆ ನೋಡೋರು ಯಾರೂ ಇಲ್ಲ' ಅನ್ನೋದು ಮೊದಲು ಬಂದಿತು. ಅನುಕೂಲಗಳ ಪಟ್ಟಿಯಲ್ಲಿ 'ನಮ್ಮಲ್ಲಿನ ಹಾಗೆ ನೆಂಟರೂ-ಇಷ್ಟರೂ ದಿಢೀರಂತ ನುಗ್ಗಿ ತೊಂದರೆ ಕೊಡೋದಿಲ್ಲ' ಎನ್ನುವುದನ್ನೂ ಕೇಳಿ ಆಶ್ಚರ್ಯವಾಯಿತು. ಮತ್ತೆ ಬರುತ್ತೀರಾ ಎಂದದ್ದಕ್ಕೆ 'ಬರುವುದಿಲ್ಲ, ಅಥವಾ ಕಷ್ಟವಿದೆ ನೋಡೋಣ' ಎಂದಿದ್ದೂ ಹಾಗೂ ಎಲ್ಲಕ್ಕೂ ಮುಖ್ಯವಾಗಿ 'ನೀವು ಇಲ್ಲಿ ಬಹಳ ಹೆದರಿಕೆಯಿಂದ ಬದುಕುತ್ತೀರಿ' ಎಂದದ್ದೂ ನನ್ನನ್ನು ಬಹಳ ಯೋಚಿಸುವಂತೆ ಮಾಡಿದವು. ಕೊನೆಯಲ್ಲಿ 'ನೀವು ಇಲ್ಲಿ ಖುಷಿಯಾಗಿಯೇ ಇದ್ದೀರಿ, ಇಲ್ಲಿ ಎಲ್ಲವೂ ಸಿಗುತ್ತೆ, ಏನೂ ತೊಂದರೆಯಿಲ್ಲ' ಎನ್ನುವ ಮಾತುಗಳು ನನಗೆ ಬಹಳ ಇಷ್ಟವಾದವು.

ಭಾರತದಿಂದ ಒಬ್ಬೊಬ್ಬರೇನು ಇಬ್ಬಿಬ್ಬರು ಜೊತೆ-ಜೊತೆಯಲ್ಲಿ ಬಂದರೂ ಅವರಿಗೆ ಇಲ್ಲಿ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕಾಗುತ್ತದೆ, ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿ ತಂದೆ-ತಾಯಿ, ಅತ್ತೆ-ಮಾವಂದಿರನ್ನು ಮನೆಯಲ್ಲೇ ಕೂಡಿಹಾಕಿ 'ವೀಕೆಂಡ್ ಬಂದಾಗ ನೋಡೋಣ' ಅನ್ನೋದು ನಮಗೆ ಸುಲಭವಾದರೂ ಅವರಿಗೆ ಬಹಳ ಪ್ರಯಾಸದಾಯಕವಾಗುತ್ತದೆ. ಇಲ್ಲಿನ ಟಿವಿಯಲ್ಲಿ ಅಲ್ಲಿನ ಕಾರ್ಯಕ್ರಮಗಳು ಬರೋದಿಲ್ಲ, ಅಲ್ಲಿನ ಧಾರಾವಾಹಿಗಳು ಸಿಗೋದಿಲ್ಲ, ಅಲ್ಲಿನ ನೆರೆಹೊರೆಯವರ ಜೊತೆಗೆ ಎಂತಹ ನಗರ ಜೀವನಕ್ಕೆ ಹೊಂದಿಕೊಂಡವರಿಗೂ ಒಂದು ರೀತಿಯ ಸಂಬಂಧವೇರ್ಪಟ್ಟಿರುತ್ತೆ, ಅಂಥಾದ್ದರಲ್ಲಿ ಒಂದಲ್ಲ, ಎರಡಲ್ಲ ಆರು ತಿಂಗಳುಗಳ ಕಾಲ ಮನೆಯಲ್ಲೇ ವಾರ ಪೂರ್ತಿ ಇರಬೇಕು ಎಂದರೆ ಯಾರಿಗೆ ತಾನೇ ಬೇಸರವಾಗೋದಿಲ್ಲ. ಅಲ್ಲದೇ ಹೆಚ್ಚಿನ ಹಿಂದಿನ ತಲೆಮಾರಿನವರು ನಮ್ಮ ಹಾಗೆ ಘಂಟೆಗಟ್ಟಲೆ ಅಂತರ್ಜಾಲದ ಮುಂದೆ ಕುಳಿತೋ, ಯಾವುಯಾವುದೋ ಟಿವಿ ಕಾರ್ಯಕ್ರಮಗಳನ್ನು ನೋಡಿಯೋ ಕಾಲ ಕಳೆಯುವವರಲ್ಲ, ಅದೂ-ಇದೂ ಕೆಲಸ ಮಾಡಿಕೊಂಡು ಓಡಾಡಿಕೊಂಡಿದ್ದವರಿಗಂತೂ ಇನ್ನೂ ಕಷ್ಟವಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಬಂದರೆ ಸುಖ, ಇನ್ನು ಛಳಿಗಾಲದಲ್ಲಿ ಬಂದರೆ ಕಥೆಯೇ ಮುಗಿಯಿತು. ಬೇರೇನೂ ಬೇಡ, ನಾವು ಇಲ್ಲಿ ಅದ್ಯಾವುದೇ ಪುಡಿಯಿಂದ ಹೇಗೇ ಕಾಫಿ ಮಾಡಿಕೊಟ್ಟರೂ ಅವರಿಗೆ 'ಮನೆಯ ಕಾಫಿ'ಯ ಸಮಾಧಾನ ಬರುವ ಹೊತ್ತಿಗೆ ಸಾಕುಸಾಕಾಗಿ ಹೋಗಿರುತ್ತದೆ - ದಿನ ನಿತ್ಯದ ಸಣ್ಣ-ಸಣ್ಣ ಬದಲಾವಣೆಗಳನ್ನ ನಾವೇ ಎಷ್ಟೊಂದು ಎದುರಿಸಲು ಹೋರಾಡುತ್ತಿರುವಾಗ ಯಾವುದೋ ದೇಶದ ಯಾವುದೋ ಊರಿಗೆ ಹೋಗಿ ಆರು ತಿಂಗಳು 'ಕೊಳೆಯುವುದನ್ನು' ಊಹಿಸಿಕೊಳ್ಳುವುದು ನನ್ನಂಥವರಿಗೆ ಹಿಂದೆ ಕಷ್ಟವಾಗುತ್ತಿತ್ತು, ಆದರೆ ಇತ್ತೀಚೆಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಇನ್ನು 'ನೀವು ಇಲ್ಲಿ ಬಹಳ ಹೆದರಿಕೆಯಿಂದ ಬದುಕುತ್ತೀರಿ' ಎಂಬುದರ ಬಗ್ಗೆ ಹೀಗೆ ಅನ್ನಿಸಿತು. ಇಲ್ಲಿ ತಳ ಊರಬಯಸುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸಿನ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡಿರುತ್ತಾರೆಂತಲೇ ಹೇಳಬೇಕು - ಭಾರತದಲ್ಲಿ ಇತ್ತೀಚೆಗೆ ಮನೆ ಸಾಲ, ವಾಹನ ಸಾಲವೆಂಬ ಪ್ರತೀತಿ ಚಾಲ್ತಿಗೆ ಬಂದಿದ್ದರೂ, ಉದಾಹರಣೆಗೆಂದು ಇಲ್ಲಿನ ನಮ್ಮ ಮನೆಯನ್ನು ಖರೀದಿಸಿದ ಹಣವನ್ನು ರೂಪಾಯಿಗೆ ಬದಲಾಯಿಸಿ, ಅದರಲ್ಲಿ ನಮ್ಮ ತಲೆಯ ಮೇಲಿರುವ ಸಾಲವನ್ನು ಕೋಟಿಯಲ್ಲಿ ಹೇಳಿದಾಗ ಮಧ್ಯಮ ವರ್ಗದ ನನ್ನ ಅತ್ತೆಯಂತವರಿಗೆ ದಿಗಿಲಾಗುವುದು ಸಹಜವೇ. ಅಲ್ಲದೇ ಎಷ್ಟೇ ದುಡಿದರೂ ಪೇಚೆಕ್‌ನಿಂದ ಪೇಚೆಕ್‌ಗೆ ಬಹಳ ಜನರು ಬದುಕುತ್ತಾರಾದ್ದರಿಂದ 'ಅಕಸ್ಮಾತ್ ಕೆಲಸವೇನಾದರೂ ಹೋದರೆ...ಈ ಸಾಲವನ್ನೆಲ್ಲ ಹೇಗೆ ತೀರಿಸುತ್ತೀರಿ' ಎಂದೂ ಅವರು ಭಯ ಪಡುತ್ತಾರೆ. ಎಲ್ಲಕ್ಕೂ ಮೂಲದಲ್ಲಿ 'ನಮ್ಮ ಫ್ಯಾಮಿಲಿಯಲ್ಲಿ ಸಾಲ ಅನ್ನೋದೇ ಇರಲಿಲ್ಲ...' ಎನ್ನುವ ಮಾತಿಗೆ ನಾನಾದರೂ ಏನು ಹೇಳಲಿ? ಇಲ್ಲಿ ಮನೆಕೊಳ್ಳುವಾಗ ಇಪ್ಪತ್ತು ಪ್ರತಿಶತ ಡೌನ್ ಪೇಮೆಂಟನ್ನು ಕೊಟ್ಟು ಇನ್ನುಳಿದದ್ದನ್ನು ಮಾರ್ಟ್‌ಗೇಜ್‌ ಆಗಿ ಪ್ರತೀ ತಿಂಗಳು ಅಸಲೂ-ಬಡ್ಡಿ ಕೊಟ್ಟು ಕೊನೆಯಲ್ಲಿ ಟ್ಯಾಕ್ಸ್ ಕಟ್ಟುವಾಗ ಆದಾಯವಿದೆಯೆಂದು ಹೇಳಿದರೂ 'ಏನೇ ಹೇಳಿ, ಸಾಲ ಸಾಲವೇ' ಎನ್ನುತ್ತಾರೆ. ಸಾಲದ ಹಂಗು, ಕೆಲಸ ಹೋದರೆ ಎನ್ನುವ ಗುಂಗುಗಳನ್ನು ಹೊರತು ಪಡಿಸಿದರೆ ಮುಖ್ಯವಾಗಿ ಕಾಣುವುದು 'ವಾಹನ ಅಪಘಾತ', ಹೆಚ್ಚು ವೇಗದಲ್ಲಿ ಇಲ್ಲಿ ಚಲಿಸೋದರಿಂದ ಹೆಚ್ಚು ಅಪಘಾತಗಳಾಗುತ್ತವೆ ಎನ್ನುವ ಸ್ವಯಂ ನಿರ್ಣಯಕ್ಕೆ ಬಂದು ಬಿಡುತ್ತಾರೆ ಅದರಲ್ಲಿರುವ ಸತ್ಯಾಸತ್ಯತೆಯನ್ನು ವಿವೇಚಿಸುವುದಕ್ಕೆ ಹೋಗುವುದಿಲ್ಲ. ನನ್ನನ್ನು ಕೇಳಿದರೆ ನಾನು ಭಾರತದಲ್ಲೇ ಹೆಚ್ಚು ವಾಹನ ಅಫಘಾತದ ಹೆಚ್ಚಿನ ರಿಸ್ಕ್‌ನಲ್ಲಿದ್ದೆ, ಇಲ್ಲಿ ವೇಗವಾಗಿ ಹೋಗುತ್ತೇನಾದರೂ ನನಗೆ ಇವತ್ತಿಗೂ ಅಲ್ಲಿಯ ವಾಹನಗಳ ಭಯವೇ ಹೆಚ್ಚು, ವಾಹನ ಅಫಘಾತವಾದ ನಂತರ ತ್ವರಿತವಾಗಿ ಸಿಗದ ವೈದ್ಯಕೀಯ ಸೇವೆ, ನಾನು ಕಣ್ಣಾರೆ ಕಂಡ ಹಲವಾರು ವಾಹನ ಅಫಘಾತಗಳ ಸಾವು-ನೋವು ನನ್ನನ್ನು ಹೀಗೆ ಯೋಚಿಸುವಂತೆ ಮಾಡಿರಬಹುದು ಅಥವಾ ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಾಗಿರಬಹುದು.

ಪುಣ್ಯಕ್ಕೆ ನನ್ನ ಅತ್ತೆಯವರು ನನ್ನ ಹಾಗೆ ಅಲ್ಲಿ-ಇಲ್ಲಿನದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ, ಆದರೆ ಅವರ ಮಾತಿನ ಮಧ್ಯೆ 'ಆ ದರಿದ್ರ ದೇಶದಲ್ಲಿ ಜನ ಬಾರೀ ಮೋಸ ಮಾಡ್ತಾರೆ!' ಅನ್ನೋ ವಾಕ್ಯದಲ್ಲಿ 'ದರಿದ್ರ ದೇಶ' ಬಳಕೆಯನ್ನು ಕುರಿತು ನಮ್ಮ ದೇಶಕ್ಕೆ ದಯವಿಟ್ಟು 'ದರಿದ್ರ ದೇಶ' ಅನ್ನುವ ಪದವನ್ನು ಹಿಂದಕ್ಕೆ ತೆಗೆದುಕೊಳ್ಳಿ ಹಾಗೆ ಹೇಳಬೇಡಿ, ನಮ್ಮ ದೇಶ ದರಿದ್ರವೆಂದರೆ ಅದಕ್ಕೆ ನಾವೂ-ನೀವು ಎಲ್ಲರೂ ಕಾರಣರು ಎಂದೆ - ಅವರಿಗೆ ಏನನ್ನಿಸಿತೋ ಗೊತ್ತಿಲ್ಲ, ಸುಮ್ಮನಂತೂ ಆದರು!

Monday, May 29, 2006

ಜೋಗಾದ್ ಗುಂಡಿಯಲ್ಲಿ ರೆಸ್ಟೋರಂಟೇ, ಛೇ!

ಮೇ ೧೪ರಂದು ಪ್ರಜಾವಾಣಿಯಲ್ಲಿ ಜೋಗದ ಗುಂಡಿಯಲ್ಲಿ ರೆಸ್ಟೋರಂಟ್ ಕಟ್ಟುವ ಪ್ರಸ್ತಾಪ ಹಾಗೂ ಆ ಬಗ್ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದರ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ನಾನು ಸಾಧ್ಯವಾದಾಗಲೆಲ್ಲ ಜೋಗಕ್ಕೆ ಹೋಗಿ ಬರುತ್ತೇನೆ, ಅಲ್ಲಿಗೆ ಹೋದ ಮೇಲೆ ಸುಮ್ಮನೇ ಸುರಿಯುವ ನೀರು ಎನಿಸಿದರೂ ಅಲ್ಲಿಗೆ ಹೋಗುವವರೆಗಿನ ಉತ್ಸಾಹ, ಆ ದಾರಿಯಲ್ಲಿ ತೆರಳುವಾಗ ಹಿಂತಿರುಗುವ ಹಳೆಯ ನೆನಪುಗಳು, ಹೋದ ಕೂಡಲೇ ಅದೇ ಮುಖವನ್ನಿಟ್ಟುಕೊಂಡು ಸ್ವಾಗತಿಸುವ ಜಲಧಾರೆ ಇವೆಲ್ಲವೂ ಪ್ರತೀ ಭೇಟಿಯಲ್ಲಿ ಹೊಸತೇನನ್ನೋ ಕಂಡುಕೊಳ್ಳಲು ಸಹಾಯಮಾಡುತ್ತವೆ. ನನ್ನ ಕ್ಯೂಬಿಕಲ್‌ನಲ್ಲಿ ಗೋಡೆಗೆ ನಾನು ೧೯೯೮ರಲ್ಲಿ ಹೋದಾಗ ತೆಗೆದ ಜೋಗದ ಜಲಪಾತದ ಒಂದು ಚಿತ್ರ ಜೊತೆಯಲ್ಲಿ ಗೇರುಸೊಪ್ಪಾ ಜಲಪಾತದ ಮತ್ತೊಂದು ಚಿತ್ರವನ್ನೂ ಅಂಟಿಸಿಕೊಂಡಿದ್ದೇನೆ, ನನ್ನನ್ನು ಭೇಟಿ ಮಾಡಲು ಬಂದ ಹೊಸಬರೆಲ್ಲ 'ಇದು ಎಲ್ಲಿಯದು?' ಎಂದು ಕೇಳುತ್ತಾರೆ, ನಾನು ವಿವರವಾಗಿ ಜೋಗದ ಕಥೆಯನ್ನು ಹೇಳುತ್ತೇನೆ, ಜೊತೆಯಲ್ಲಿ 'ಇದು ನ್ಯಾಚುರಲ್ಲಾಗಿ ಹುಟ್ಟಿರೋದು' ಎನ್ನುವುದಕ್ಕೆ ಒತ್ತುಕೊಡುತ್ತೇನೆ. ನಾನು ತೆಗೆದ ೪ ಬೈ ೬ ಅಂಗುಲದ ಫೋಟೋದಲ್ಲಿ ಜೋಗದ ಹತ್ತಿರಹತ್ತಿರ ಸಾವಿರದ ಅಡಿ ಜಲಧಾರೆಯನ್ನು ಊಹಿಸಿಕೊಳ್ಳುವುದು ಹೊಸಬರಿಗೆ ಕಷ್ಟ, ಪಾಪ.



ಬೇಸಿಗೆಯಲ್ಲಿ ನಮ್ಮೂರಿನ ಬಡವರನ್ನು ನೆನಪಿಗೆ ತರುವಂತೆ ಮೈಮೇಲೆ ಎಲುಬುಗಳು ಕಾಣುವ ರೀತಿಯಲ್ಲಿ ರಾಜಾ-ರೋರರ್-ರಾಕೇಟ್-ಲೇಡಿಗಳು ಬಡವಾಗಿರುತ್ತವೆ, ಮಳೆಗಾಲ, ಮಳೆಗಾಲದ ತರುವಾಯದ ಕೆಲವು ತಿಂಗಳುಗಳು ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರನ್ನೇನಾದರೂ ವಿಶೇಷ ಸಂದರ್ಭಗಳಲ್ಲಿ ಬಿಟ್ಟರೆ ಆಗ ಮತ್ತೆ ಮೈತುಂಬಿಕೊಳ್ಳುತ್ತವೆ. ನೀರು ಕಡಿಮೆ ಇರುವ ಬೇಸಿಗೆಯಲ್ಲೇ ಜೋಗಕ್ಕೆ ಪ್ರವಾಸಿಗರು ಹೆಚ್ಚು ಬರೋದು. ಮಳೆಗಾಲದಲ್ಲಿ ಹೆಚ್ಚಿನ ಪಕ್ಷ ಮಂಜು ಕವಿದು ಏನನ್ನಾದರೂ ನೋಡಲು ಸಿಗುವುದೇ ದೊಡ್ಡ ವಿಷಯ. ಪರಿಸ್ಥಿತಿ ಹೀಗಿರುವಾಗ ಜಲಪಾತದ ಬುಡದಲ್ಲಿ ಸುಮಾರು ೬೦೦ ಜನರು ಕುಳಿತುಕೊಳ್ಳಬಹುದಾದ ಒಂದು ರೆಸ್ಟೋರಂಟನ್ನು ನಿರ್ಮಾಣಮಾಡಲು ಹಾಗೂ ಜಲಪಾತಕ್ಕೆ ಇಳಿಯುವ ಮೆಟ್ಟಿಲುಗಳನ್ನು ದುರಸ್ತಿ ಮಾಡಲು ಕೇಂದ್ರದಿಂದ ೪.೧೨ ಕೋಟಿ ರೂಪಾಯಿಗಳನ್ನು ಬಿಡುಗಡೆಮಾಡಿದ್ದಾರೆ ಎಂದು ವರದಿಯಾಗಿದೆ. ಬರೀ ಮೆಟ್ಟಿಲುಗಳನ್ನು ದುರಸ್ತಿಮಾಡುವುದಕ್ಕೆ ಮಾತ್ರ ನಾಲ್ಕು ಕೋಟಿ ರೂಪಾಯಿಗಳು ಸಾಕಾಗುತ್ತವೆ - ಏಕೆಂದರೆ ಅವರೂ-ಇವರೂ ತಿಂದು ಉಳಿದ ಹಣದಲ್ಲಿ ಮೆಟ್ಟಿಲುಗಳೂ ಸುಮಾರು ದುರಸ್ತಿಯನ್ನು ಪಡೆಯುತ್ತಿದ್ದವು, ಆದರೆ ನಾಲ್ಕು ಕೋಟಿ ರೂಪಾಯಿಯಲ್ಲಿ ಜಲಪಾತದ ಬುಡದಲ್ಲಿ ಆರು ನೂರು ಜನರು ಕೂರುವ ಒಂದು ರೆಸ್ಟೋರಂಟನ್ನು ಕಟ್ಟುವುದೂ, ಅಲ್ಲಿಗೆ ಹೋಗಿ ಬರಲು ಲಿಫ್ಟ್‌ಗಳನ್ನು ನಿರ್ಮಿಸುವುದೂ, ಹಾಗೂ ರೆಸ್ಟೋರಂಟಿನ ಮೇಂಟೆನೆನ್ಸ್ ಮಾಡುವುದು ಇವೆಲ್ಲ ಆಗಿಹೋಗದ ವಿಚಾರ ಎಂದು ಧೈರ್ಯವಾಗಿ ಹೇಳಬಲ್ಲೆ. ಒಂದು ವೇಳೆ ಹಣ ಮಂಜೂರಾದ ರೀತಿಯಲ್ಲೇ ಕಾರ್ಯ ನಡೆದಿದ್ದೇ ಆದರೂ ಸದಾ ಜಲಪಾತದ ಬುಡದಲ್ಲಿರುವ ಈ ರೆಸ್ಟೋರಂಟ್ ಒಂದು ದಿನ ಕಳಪೆ ಕಾಮಗಾರಿಯಿಂದ ಕುಸಿದು ಬೀಳಲಿಕ್ಕೂ ಸಾಕು. ನನ್ನನ್ನು ಕೇಳಿದರೆ ನಾಲ್ಕು ಕೋಟಿ ರೂಪಾಯಿಗಳನ್ನು ನಿಜವಾದ ಜೋಗದ ಅಭಿವೃದ್ಧಿಗೆ ಬಳಸಿಕೊಂಡು ಅಲ್ಲಿಗೆ ಹೋಗಿ ಬರುವವರಿಗೆ ಸಿಗುವ ಪ್ರವಾಸೀ ಮೌಲ್ಯವನ್ನು ಹೆಚ್ಚು ಮಾಡಲು ಬಳಸುವಂತಿದ್ದರೆ ಎಷ್ಟೋ ಚೆನ್ನಾಗಿತ್ತು.



ಸಾಗರದ ಸ್ಥಳೀಯ ರಾಜಕಾರಣಿಗಳು ಏನೇ ಹೇಳಿದರೂ ಜೋಗದ ಸುತ್ತಮುತ್ತಲೂ ಹಲವಾರು ವರ್ಷದಿಂದ ಕೆಲಸ ಮಾಡುತ್ತಿರುವ ನಾ. ಡಿಸೋಜಾರವರ ಮಾತಿಗೆ ನಾನು ಖಂಡಿತ ಬೆಲೆ ಕೊಡುತ್ತೇನೆ, 'ಜೋಗದ ಗುಂಡಿಯೊಳಗೆ ಯಾವುದೇ ಕಟ್ಟಡ ಕಟ್ಟುವುದು ಮೂರ್ಖತನ' ಎನ್ನುವಲ್ಲಿ ಅವರಲ್ಲಿರುವ ಸಾಹಿತಿಯ ಸಂವೇದನೆಗಳಷ್ಟೇ ಅಲ್ಲ ಒಬ್ಬ ನಾಗರಿಕನ ಸಾಮಾನ್ಯ ಜ್ಞಾನವೂ, ಒಬ್ಬ ಲೋಕೋಪಯೋಗಿ (ಇಲಾಖೆಯ) ನೌಕರನ ಕಳಕಳಿಯೂ ಇದೆ, ಅವರದೇ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತ ಕಾರ್ಗಲ್ಲಿನ ತಿಮ್ಮಪ್ಪನ ಮೂಲಕ ಅವರನ್ನು ನಾನು ಚೆನ್ನಾಗಿ ಬಲ್ಲೆ. ಜೋಗದ ಗುಂಡಿಯಲ್ಲಿ ಕಟ್ಟಡ ಕಟ್ಟುವ ವಿಚಾರಗಳು ಯಾರ ತಲೆಯಲ್ಲಿ ಹೇಗೆ ಬರುತ್ತವೋ, ಹೀಗೆ ದಿಢೀರನೆ ಹಣ ಸ್ಯಾಂಕ್ಷನ್ ಆಗಿದೆ ಎಂದರೆ ಅದರ ಹಿಂದಿರುವವರ ಕೆಲಸದ ಬಗ್ಗೆ ಊಹಿಸಿಕೊಳ್ಳಬಲ್ಲೆ, ಅವರೇನಾದರೂ ಒಂದು ಬಿಸಿನೆಸ್ ಪ್ಲಾನ್ ಮಾಡಿದ್ದು, ಅದರಲ್ಲಿ ಈ ಕಟ್ಟಡ ಕಟ್ಟುವುದರ ಬಗ್ಗೆ, ಕಟ್ಟಿ ವ್ಯವಹಾರ ಮಾಡುವ ಬಗ್ಗೆ, ಮಾಡಿ ಲಾಭ ಹೊಂದುವ ಬಗ್ಗೆ, ಹೆಚ್ಚು ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸುವ ಬಗ್ಗೆ ವಿವರಗಳಿದ್ದಿರಬಹುದೇ ಎಂದು ಸೋಜಿಗಗೊಳ್ಳುತ್ತೇನೆ, ಆದರೆ ನಾನು ಓದಿದ ಪತ್ರಿಕೆಗಳಲ್ಲಿ ಯಾವ ವಿವರವೂ ಸಿಕ್ಕೋದಿಲ್ಲ. ಅಲ್ಲದೇ ಸ್ಥಳೀಯರಿಗೆ ಬೇಡವಾದ ಈ ಯೋಜನೆಯ ಹಿಂದೆ ದೆಹಲಿಯಲ್ಲಿ ಯಾವ ರೀತಿಯ ಕುಮ್ಮಕ್ಕು ಸಿಕ್ಕಿರಬಹುದು ಎಂದೂ ಆಶ್ಚರ್ಯವಾಗುತ್ತದೆ.

ಒಂದಂತೂ ನಿಜ - ಜೋಗದ ಗುಂಡಿಗೆ ಹೋಗಲಿರುವ ಈಗಿನ ಮೆಟ್ಟಿಲುಗಳಲ್ಲಿ ಜಾರಿ ಬಿದ್ದು ಕೈ ಕಾಲು ಮುರಿದುಕೊಂಡವರು ‍ಯಾರೂ ಇಲ್ಲಿಯವರ ಥರ 'ಕಿತ್ತು ಹೋದ ಮೆಟ್ಟಿಲುಗಳು ನನ್ನ ಬದುಕನ್ನು ಹಾಳುಗೆಡವಿದವು' ಎಂದು ಲಾ ಸೂಟನ್ನು ಇನ್ನೂ ಹಾಕಿಲ್ಲ, ಮುಂದೆ ಇಂತಹ ಕೋರ್ಟು ಕೇಸುಗಳಿಂದಲೇ ಪರಿಸ್ಥಿತಿ ಸುಧಾರಿಸುತ್ತೇನೋ ಎನ್ನುವ ಆಶಾವಾದವೂ ಮನದಲ್ಲಿ ಮಿಂಚಿ ಮರೆಯಾಗುತ್ತೆ.

***

ಇಲ್ಲಿನ ನಯಾಗರ ಜಲಪಾತಕ್ಕೆ ಯಾರ ಯಾರ ಜೊತೆಯಲ್ಲೋ ಹಲವಾರು ಬಾರಿ ಹೋಗಿದ್ದೇನೆ - ನನ್ನ ಜೊತೆ ಬಂದವರಲ್ಲಿ ಈಗಾಗಲೇ ಜೋಗ ಜಲಪಾತವನ್ನು ನೋಡಿದವರಿಗೆ ನಯಾಗರ ವಿಶೇಷವಾಗೇನೂ ಕಾಣುವುದಿಲ್ಲ, ಅದರಲ್ಲೂ ಇಲ್ಲಿಯವರ ಕೈ ಚಳಕದಿಂದ ನಿರ್ಮಿತವಾಗಿದ್ದೂ ಅಥವಾ ಮಾರ್ಪಾಟುಹೊಂದಿದ್ದೂ ಎಂದು ಕೇಳಿದ ಮೇಲೆ 'ಹೌದಾ' ಎನ್ನುವ ಉದ್ಗಾರ ಬರುತ್ತದೆ. ಆದರೆ, ಎಲ್ಲವೂ ಮೈ ತುಂಬಿಕೊಂಡಿರುವ ಇಲ್ಲಿ ನಯಾಗರವು ಎಂದೂ ಬತ್ತಿದ್ದಾಗಲೀ ಅಥವಾ ಕೃಶವಾಗಿದ್ದಾಗಲೀ ಕೇಳಿಲ್ಲ - ಛಳಿಗಾಲದಲ್ಲಿ ಮೇಲೆ ದಪ್ಪನಾದ ಹಿಮ ಆವರಿಸಿದ್ದರೂ ಹರಿಯುವ ನೀರಿನ ಪ್ರಮಾಣ ಅಷ್ಟೆ ಇರುವುದು ಸೋಜಿಗವಲ್ಲದೇ ಮತ್ತೇನು?

Sunday, May 28, 2006

ಕವಳೀಕಾಯಿಯನ್ನು ಹುಡುಕಿಕೊಂಡು ಹೋದ ದಿನ

ಕವಳೀಕಾಯಿ, ಅದರ ಉಪ್ಪಿನಕಾಯಿ, ಕವಳೀ ಹಣ್ಣು, ಇವೆಲ್ಲವನ್ನೂ ನೆನೆಸಿಕೊಂಡಾಗ ನಾಲಿಗೆಯಲ್ಲಿ ತನ್ನಷ್ಟಕ್ಕೆ ತಾನೇ ನೀರೂರುತ್ತದೆ. ಅಂಗಡಿಯಲ್ಲಿ ಸಿಗುವ ಇಲ್ಲಿನ ಕೆಲವೇ ಕೆಲವು ಉಪ್ಪಿನಕಾಯಿ ಬಾಟಲಿಗಳಲ್ಲಿ ಕವಳೀಕಾಯಿಯೆಂದು ಸ್ವಲ್ಪ ಸೇರಿಸಿದಂತೆ ಮಾಡಿರುತ್ತಾದರೂ, ನಮ್ಮ ಊರಿನಲ್ಲಿ ಬೊಗಸೆಗಟ್ಟಲೆ ಹಣ್ಣು-ಕಾಯಿಗಳನ್ನು ತಿನ್ನುವುದಕ್ಕೂ, ಇಲ್ಲಿ ಉಪ್ಪಿನಕಾಯಿಯಂತೆ ಒಂದೆರಡು ತುಂಡನ್ನು ನಂಚಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಈ ಹಣ್ಣಿಗೆ ಇಂಗ್ಲೀಷಿನಲ್ಲಿ ಏನೆನ್ನುತ್ತಾರೋ, ಎಲ್ಲೆಲ್ಲಿ ಬೆಳೆಯುತ್ತೋ, ಅದರ ಮೂಲ ಮತ್ತು ಮಹತ್ವವೇನೋ ಯಾರಿಗೆ ಗೊತ್ತು, ಆದರೆ ಇವತ್ತಿಗೂ ಸಹ ನಮ್ಮೂರಲ್ಲಿ ಈ ಹಣ್ಣುಗಳು ಸ್ವಾಭಾವಿಕವಾಗಿ ಬೆಳೆದು ಯಾರದ್ದೋ ಬೇಲಿಯಲ್ಲೋ, ಇಲ್ಲಾ ಒಂದು ಕಾಲದಲ್ಲಿ ಕಾಡು ಇದ್ದ ಜಾಗದಲ್ಲೋ ಪೊದೆಗಳಲ್ಲಿ ಸಿಕ್ಕುವುದಂತೂ ಗ್ಯಾರಂಟಿ!

***

೨೦೦೩ ರಲ್ಲಿ ಆನವಟ್ಟಿಗೆ ಹೋದಾಗ ಬೇಸಿಗೆ ರಜೆಗೆಂದು ಬಂದ ಅಣ್ಣನ, ಅಕ್ಕ-ತಂಗಿಯ ಮಕ್ಕಳು ಬೇಕಾದಷ್ಟು ಹುಡುಗರು ಸಿಕ್ಕಿದ್ದರು. ನಾನೇ ಜೋರು ಎಂದರೆ ಈ ಹುಡುಗರು ಇನ್ನೂ ಜೋರು, ಹತ್ತು-ಹನ್ನೆರಡು ವರ್ಷಗಳಿಗಾಗಲೇ 'ಜಾಗಿಂಗ್ ಹೋಗೋಣ' ಎಂದರೆ ಬೆಳ್ಳಗಿನ ಸ್ನೀಕರ್ ಧರಿಸಿ ತಯಾರಿರುವಂತವರು, ನಾವೆಲ್ಲ ಬರೀ ಕಾಲಿನಲ್ಲಿ ಓಡಾಡಿದಂತೆ ಇವರೇನಾದರೂ ಮನೆಯಿಂದ ಹೊರಗಡೆ ಕಾಲಿಟ್ಟರೆ ಅಂದು ಸೂರ್ಯ ಪಶ್ಚಿಮದಲ್ಲಿ ಹುಟ್ಟಿದಂತೆಯೇ ಸರಿ. ಮನೆಯಲ್ಲಿ ಸೇರಿಕೊಂಡಿದ್ದ ಹಲವಾರು ಹುಡುಗ-ಹುಡುಗಿಯರಲ್ಲಿ ಕೊನೆಗೆ 'ಹೊರಗಡೆ ಹೋಗುವ' ಉತ್ಸಾಹವನ್ನು ಉಳಿಸಿಕೊಂಡವರು ನನ್ನ ಅಣ್ಣನ ಮಗ ನಿತಿನ್ ಹಾಗೂ ನನ್ನ ತಂಗಿಯ ಮಗ ಆಕಾಶ್ ಇಬ್ಬರೇ. 'ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲೇ ಮನೆ ಬಿಡಬೇಕು' ಎಂದು ಎಚ್ಚರಿಕೆ ನೀಡಿದ್ದರೆ 'ಹಾ...' ಎಂದವರು, ಬೆಳಿಗ್ಗೆ ಐದೂವರೆ ಆದರೂ ಇನ್ನೂ ಸಕ್ಕರೆ ನಿದ್ದೆಯಲ್ಲೇ ಬಿದ್ದಿರುವುದೇ? ಇಬ್ಬರನ್ನೂ ತಡವಿ ಎಬ್ಬಿಸಿದೆ 'ನೋಡ್ರೋ, ನಾನು ಹೊರಟಿದ್ದೇನೆ, ಕೊನೆಗೆ ಹೇಳ್ಲಿಲ್ಲಾ ಅನ್ನಬೇಡಿ!' ಎಂದು ಹೇಳುತ್ತಲೇ ಇಬ್ಬರೂ ಯಾವ ಮಾಯದಲ್ಲಿ ಎದ್ದರೋ, ಮುಖ ತೊಳೆದರೋ, ಹೊರಡಲು ತಯಾರೂ ಆದರು. ಬೆಳಿಗ್ಗೆ ಐದೂಮುಕ್ಕಾಲು ಸುಮಾರಿಗೆ ಇನ್ನೂ ಸೂರ್ಯ ಹುಟ್ಟುವ ಮೊದಲೇ ನಾವು ಮನೆ ಬಿಟ್ಟಾಗಿತ್ತು.

ಎಲ್ಲರಿಗೂ ಅವರವರ ಊರಿನ ಪರಿಚಯವಿರುವಂತೆ ನನಗೂ ನಮ್ಮ ಊರಿನ ಮೂಲೆ ಮೂಲೆಯ ಪರಿಚಯವಿದೆ, ಆದರೆ ಊರಿನ ಬೆಳವಣಿಗೆ ಹೆಚ್ಚಿದಂತೆಲ್ಲಾ ನಾನು ನಮ್ಮ ಊರನ್ನು ನೋಡುವುದು ಕಡಿಮೆ ಆದದ್ದರಿಂದ ಖಾಲಿ ಇದ್ದ ಜಾಗದಲ್ಲಿ ಮನೆಗಳು ಎದ್ದು, ಬೇಲಿಯೇ ಇರದ ಜಾಗದಲ್ಲಿ ಕಾಂಪೌಂಡುಗಳು ಬಂದು, ರಸ್ತೆಯಲ್ಲಿ 'ಯಾರೋ ಬಂದರು' ಎಂದು ಬೊಗಳುವ ನಿನ್ನೆ-ಮೊನ್ನೆ ಹುಟ್ಟಿದ ಕಂತ್ರೀ ನಾಯಿಗಳಿಗೂ ನನ್ನ ಪರಿಚಯವನ್ನೂ ಹೇಳಬೇಕಾದ್ದರಿಂದ ನನ್ನನ್ನು ನಮ್ಮ ಊರಿನಲ್ಲಿ ಪರಕೀಯ ಎಂದುಕೊಂಡರೇ ಸರಿ. ಮೊದಲೆಲ್ಲಾ ಸಹಜವಾಗಿ ಬೆಳೆದು ನಿಂತ ಗಂಧದ ಮರಗಳನ್ನು ಹತ್ತಿ ಸೊಪ್ಪನ್ನು ಕಿತ್ತು ತರುತ್ತಿದ್ದೆ, ಆದರೆ ಈ ದಿನಗಳಲ್ಲಿ ಆ ಗಂಧದ ಮರವಿರಲಿ ಅದರ ಬೇರಿನ ತುದಿಗೆ ಒಂದು ಕಾಲದಲ್ಲಿ ಅಂಟಿಕೊಂಡಿದ್ದ ಮಣ್ಣೂ ಸಿಗುವುದಿಲ್ಲ - ರಾತ್ರೋ ರಾತ್ರಿ ಹೀಗೆ ಎಷ್ಟೋ ಮರಗಳು ನಾನು ಅಲ್ಲಿದ್ದಾಗಲೇ ಕಾಣೆಯಾಗಿ ಯಾವನೋ ದಿಢೀರನೆ ಸ್ವಲ್ಪ ಕಾಸನ್ನು ಮಾಡುತ್ತಿದ್ದ, ನಾನು ಆಪ್ತ ಸ್ನೇಹಿತನೊಬ್ಬನನ್ನು ಕಳೆದುಕೊಂಡ ಹಾಗೆ 'ಅಲ್ಲಿರೋ ಮರಾನೂ ಹೋಯ್ತಾ' ಎಂದು ರೋಧಿಸುತ್ತಿದ್ದೆ. ನಾನು ನನ್ನ ಬಾಲಂಗೋಚಿಗಳು (ಜೊತೆಯಲ್ಲಿ ಬರುವ ಈ ಹುಡುಗರು) ಇಲ್ಲದೇ ಪೇಟೆಗೆ ಎಂದಾದರೂ ಹೋದರೆ, ನನ್ನ ವೇಷವನ್ನು ನೋಡಿ, ಮಾತನ್ನು ಕೇಳಿ 'ತಮ್ದು ಯಾವೂರಾಯ್ತೋ?' ಎನ್ನುವ ಜನಗಳಿಗೆ ನಾನು ಅದೇ ಊರಿನಲ್ಲಿ ಇದ್ದುಕೊಂಡೇ 'ಆನವಟ್ಟಿ!' ಎಂದು ನಗುತ್ತೇನೆ, ಅವರು 'ಇಲ್ಲಿ ಯಾರ ಮನೆ?' ಎಂದರೆ 'ನಮ್ಮ ಮನೆ!' ಎಂದು ಈ ಊರು ನಮ್ಮದು ಎನ್ನುವ ಹಠವನ್ನು ಪ್ರದರ್ಶಿಸುತ್ತೇನೆ, 'ಅಂದರೆ...' ಎಂದು ಇಲ್ಲೀವರೆಗೂ ಯಾರೂ ವಿವರಣೆಯನ್ನು ಕೇಳೋದಿಲ್ಲವಾದ್ದರಿಂದ, ಮುಂದೆ ಪ್ರಶ್ನೆಗಳೇನಾದರೂ ಬಂದರೆ ಆಗ ನೋಡೋಣವೆಂದು ಸುಮ್ಮನಿದ್ದೇನೆ.

ಆಕಾಶ ಮತ್ತು ನಿತಿನ್ ಕೊಯ್ಯೋ-ಮರ್ರೋ ಮಾಡುತ್ತಾ ನನ್ನ ಜೊತೆ ಬಂದು ಇನ್ನೂ ಸ್ವಲ್ಪ ದೂರವೂ ನಡೆದಿಲ್ಲ, 'ಯಾವ ಕಡೆ ಹೋಗೋದು ಮಾಮಾ' ಎಂದು ಆಕಾಶನೆಂದರೆ 'ಹೈ ಸ್ಕೂಲ್ ಫೀಲ್ಡಿಗೆ ಹೋಗೋಣ್ವಾ' ಎಂದು ನಿತಿನ್ ಸೂಚಿಸಿದ. ನಾನು 'ಹೈ ಸ್ಕೂಲ್ ಕಡೆ ಹೋಗಿ, ಅಲ್ಲಿ ಸಾಲ್ ಮರದಲ್ಲಿ ಒಂದಿಷ್ಟು ಮಾವಿನ್‌ಕಾಯಿ ಬಡಚಿಕೊಂಡು, ಆಮೇಲೆ ಒಂದಿಷ್ಟು ಕವಳೀಕಾಯಿ ಹುಡುಕಿಕೊಂಡು ಹೋಗೋಣ' ಎಂದೆ. ಆಕಾಶ ಇದ್ದವನು 'ಮತ್ತೆ, ಜಾಗಿಂಗೂ?' ಅಂದ, ನಾನು 'ಸರೀ ಓಡೋಣ ಹಾಗಾದರೆ' ಎಂದು ಓಟಕ್ಕೆ ಚಾಲನೆ ಕೊಟ್ಟೆ, ಆದರೆ ದಾರಿಯುದ್ದಕ್ಕೂ ಉಸಿರುಬಿಡುತ್ತಿದ್ದವನು ನಾನು, ಈ ಹುಡುಗರು ನೆಲದಲ್ಲಿ ಸುಮ್ಮನೇ ಪುಟಿಯುತ್ತಿದ್ದಂತೆ ಕಂಡು ಬಂತು. ಅದ್ಯಾವ ಪುಣ್ಯಾತ್ಮ ನಮ್ಮೂರಿನ ರಸ್ತೆಯನ್ನು ಹೇಗೆ ಡಿಸೈನ್ ಮಾಡಿದನೋ ಗೊತ್ತಿಲ್ಲ, ಆನವಟ್ಟಿಯಿಂದ ಶಿರಾಳಕೊಪ್ಪಕ್ಕೆ ಹೋಗೋ ರಸ್ತೆಯ ಎರಡೂ ಬದಿಗೆ ಥರಾವರಿ ಮಾವಿನಮರಗಳಿವೆ, ಸಾಲುಗಿಡಗಳೆಂದು ಚೆಂದವಾಗಿ ಅಂದು ನೆಟ್ಟಿದ್ದು ಇವತ್ತಿನವರೆಗೂ ಫಲ ಕೊಡುತ್ತಿದೆ, ನೆರಳು ನೀಡುತ್ತಿದೆ, ಆದರೆ ಎಲ್ಲವೂ ಪುಕ್ಕಟೆ, ಈ ಮಾವಿನ ಹಣ್ಣುಗಳಿಗೂ, ಇವುಗಳಿಂದ ಕೊಯ್ದು ಮನೆಗೆ ತೋರಣ ಕಟ್ಟಿದ ಎಲೆಗಳಿಗೂ, ಹೀಚು, ಕಾಯಿ, ದ್ವಾರೆ ಹಣ್ಣು, ಹಣ್ಣುಗಳೆಂದು ತಿಂದು ಚೆಲ್ಲಿದ ಎಣಿಸಲಾರದ ಅದೆಷ್ಟೋ ಹಣ್ಣುಗಳಿಗೆ ನಾನು ಈವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ, ಬೇರೆಯವರೂ ಕೊಟ್ಟಿರಲಾರರು. ಆಲಿಕಲ್ಲು ಮಳೆಬಿದ್ದ ಸಂಜೆಯ ಮಾರನೇ ಬೆಳಿಗ್ಗೆ ಹೋದರೆ ಹೊರಲಾರದಷ್ಟು ಹಣ್ಣುಗಳನ್ನು ಹುಡುಕಬಹುದು. ನಾವೆಣಿಸಿದಂತೆ ಕೆ.ಇ.ಬಿ. ಆಫೀಸಿನ ಮುಂದೆ, ಹಾಸ್ಟೆಲಿನ ಮುಂದೆ, ಜ್ಯೂನಿಯರ್ ಕಾಲೇಜಿನ ಮುಂದೆ, ಫಾರೆಸ್ಟ್ ಆಫೀಸಿನ ಮುಂದೆ ಎಷ್ಟೋ ಮಾವಿನ ಕಾಯಿಗಳನ್ನು ಕೈಗೆ ಸಿಕ್ಕ ಕಲ್ಲು ಕೋಲುಗಳಿಂದ ಬಡಚುತ್ತಾ ಹೋದರೆ ನನಗೆ ನನ್ನ ಹಳೆಯ ಗುರಿ ಸಿಕ್ಕುವಷ್ಟರಲ್ಲಿ ಕೈನೋವು ಬಂದಿತ್ತು, ಇನ್ನು ಈ ಹುಡುಗರಿಗೆ ಗುರಿಯಿಟ್ಟು ಹೊಡೀರೋ ಎಂದರೆ ಕಂಡ ಕಂಡಲ್ಲಿ ಕಲ್ಲುಗಳನ್ನು ಬೀಸುವಂತೆ ಕಂಡುಬಂದರು. ಮೊದಲೆಲ್ಲಾ ಆದರೆ ಮಾವಿನಕಾಯಿಗಳ ಗೊಂಚಲಿನ ಬುಡಕ್ಕೆ ಏಟುಬಿದ್ದು ಹಾಗೆ ಬೀಳುತ್ತಿರುವ ಹೊಂಚಲನ್ನು ನೆಲಕ್ಕೆ ಬೀಳುವ ಮುನ್ನ ಗಾಳಿಯಲ್ಲೇ ಹಿಡಿದು ತಂದಿದ್ದರೆ ಹೊಡೆತ ಬೀಳದ ಕಾಯಿಗಳೆಂದು ಅಮ್ಮ ಉಪ್ಪಿನಕಾಯಿ ಹಾಕುತ್ತಿದ್ದಳು, ಆದರೆ ಆ ಭಾಗ್ಯ ಈಗ ಲಭಿಸಲಿಲ್ಲ, ನಮ್ಮ ಏಟಿಗೆ ಬಿದ್ದ ಕೆಲವೇ ಕೆಲವು ಕಾಯಿಗಳು ನೇರವಾಗಿ ಏಟು ತಿಂದದ್ದೂ ಅಲ್ಲದೇ ಟಾರು ರಸ್ತೆಯ ಮೇಲೆ ಬಿದ್ದು ಎರಡೆರಡು ರೀತಿಯ ನೋವಿನಿಂದಾಗಿ ತಮ್ಮ ಹಸಿರು ಚರ್ಮವನ್ನು ಕೆತ್ತಿಕೊಂಡು ಒಳಗಿನ ಬಿಳಿ ಭಾಗವನ್ನು ಅಲ್ಲಲ್ಲಿ ತೋರಿಸುತ್ತಾ ಸೊನೆಯನ್ನು ಸೂಸುವುದು ಕಣ್ಣೀರಿಡುತ್ತಿದ್ದಂತೆ ಕಂಡು ಬಂದಿತು. ಆಕಾಶ 'ಮಾಮಾ, ಒಂದಿಷ್ಟು ಉಪ್ಪೂ-ಖಾರ ಇದ್ರೆ ಚೆನ್ನಾಗಿತ್ತು!' ಅಂದ. ನಾನು ಮನೆಗೆ ಹೋದ ಮೇಲೆ ನೋಡೋಣ, ಇನ್ನೂ ತುಂಬಾ ಕೆಲ್ಸಾ ಇದೆ' ಎಂದದ್ದು ಇಬ್ಬರ ಮುಖದ ಮೇಲೂ ಆಶ್ಚರ್ಯ ಹುಟ್ಟಿಸಿತು.

***

ನನಗೆ ಗೊತ್ತು ನಮ್ಮೂರಲ್ಲಿ ಈಗಿನ ಬೇಲಿಗಳು ಒಂದೇ ಸ್ಥಳಾಂತರಗೊಂಡಿವೆ ಅಥವಾ ಸಮಯಕ್ಕೆ ತಕ್ಕಂತೆ ಅವೂ ಬದಲಾಗಿವೆ - ಎರಡು ಗದ್ದೆ, ಬ್ಯಾಣಗಳ ಅಕ್ಕ ಪಕ್ಕದ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿ ಬೇಲಿಯಂತೂ ಇರಲೇಬೇಕು ಆದರೆ ಆಧುನಿಕ ಸಂಬಂಧಗಳಿಗೆ ತಕ್ಕಂತೆ ಅವೂ ಬದಲಾಗಲಿಲ್ಲವೆಂದರೆ? ಮೊದಲೆಲ್ಲಾ ಬೇಲಿಯಲ್ಲಿ ಇರುತ್ತಿದ್ದ ಮುಳ್ಳಿರುವ ಕವಳೀ ಗಿಡಗಳ ಪೊದೆಯ ಬದಲು ಈಗ ಗೊಬ್ಬರದ ಗಿಡಗಳು ಹುಲುಸಾಗಿ ಬೆಳೆದುಕೊಂಡಿದ್ದು ಕಣ್ಣಿಗೆ ಗೋಚರಿಸಿತು. ಈ ದಿನ ಕವಳೀಹಣ್ಣಿನ ಮಾತಿರಲಿ, ಕಾಯಿಯನ್ನು ಹುಡುಕುವುದಕ್ಕೆ ಬೇಕಾದಷ್ಟು ನಡೆಯುವುದಕ್ಕಿದೆ ಎಂದು ನನಗೆ ಅನ್ನಿಸಿದ್ದರಿಂದ ಜೊತೆಯಲ್ಲಿದ್ದ ಹುಡುಗರಿಗೆ 'ನಡೀರೀ ಹೋಗೋಣ - ಈ ಕಡೆ' ಎಂದು ಮನೆಗೆ ವಿರುದ್ಧವಾದ ದಿಕ್ಕಿಗೆ ಕೈ ತೋರಿಸಿದೆ. ಅವರು ಚಕಾರವೆತ್ತದೆ ನನ್ನನ್ನು ಹಿಂಬಾಲಿಸಿದ್ದರು. ಆ ಹುಡುಗರಿಗೆ ನನ್ನ ಜೊತೆ ಬರುವುದೇ ಗುರಿಯಾಗಿದ್ದರೆ, ನನಗೆ ಯಾವುದೇ ಗೊತ್ತು-ಗುರಿಗಳಿರಲಿಲ್ಲ, ಅದೆಲ್ಲಿಯೋ ಮುಂದೆ ಸಿಗಬಹುದಾದ ಸಹಜವಾಗಿ ಬೆಳೆದ ಕವಳಿ ಹಣ್ಣೊ, ಕಾಯಿಗಳನ್ನು ತಿನ್ನುವುದನ್ನು ಬಿಟ್ಟು!

ಏನಾಶ್ಚರ್ಯ, ನಾವು ಶಿರಾಳಕೊಪ್ಪದ ರಸ್ತೆಯಿಂದ ಸುಮಾರು ಒಂದು ಮೈಲಿನ ಮೇಲೆ ನಡೆದರೂ ಒಂದೇ ಒಂದು ಕಡೆ ಕವಳೀ ಗಿಡದ ಪೊದೆಯೂ ಕಾಣುತ್ತಿಲ್ಲ, ಜೊತೆಯಲ್ಲಿ ಆದಷ್ಟು ಬೇಗ ಸಿಗಲಿ ಅನ್ನೋ ಸಂಕಲ್ಪದಲ್ಲಿರೋ ಇವರ 'ಅದರ ಎಲೆಗಳು ಹೇಗಿರುತ್ತೆ?' ಅನ್ನೋ ಪ್ರಶ್ನೆಗೆ ಬೇರೆ ಉತ್ತರಕೊಡಬೇಕು. ಹೀಗೆ ಎಷ್ಟೋ ಹೊತ್ತು, ಎಷ್ಟೋ ದೂರ ನಡೆದ ಮೇಲೆ, ಹುಡುಗರು ಆಗಾಗ್ಗೆ ಕೊಡುತ್ತಿದ್ದ 'ಅಕಸ್ಮಾತ್ ನಮಗೆ ದಾರಿಯೇನಾದ್ರೂ ಕಳೆದು ಹೋದ್ರೆ!' ಎನ್ನುವ ಎಚ್ಚರಿಕೆಗಳ ನಡುವೆ, ಕೊನೆಗೂ ಅದ್ಯಾವುದೋ ಬೇಲಿಯೊಂದರಲ್ಲಿ ಕವಳಿಗಿಡ ಇರುವುದು ದೂರದಿಂದಲೇ ಕಂಡಿತು. ಕುರಿಗಳ ಬಾಯಿಗೆ ಸಿಗದಂತೆ ಬೇಲಿಯ ಪಕ್ಕದಲ್ಲಿ ಗುಂಡಿಯಿದ್ದುದರಿಂದ ಅದರಲ್ಲಿ ಕೆಲವುಕಾಯಿಗಳು ಇನ್ನೂ ಇದ್ದವು. ನನಗಾದ ಸಂತೋಷಕ್ಕಿಂತಲೂ ನನ್ನ ಜೊತೆಯಿದ್ದ ಹುಡುಗರಿಗೆ ತುಂಬಾ ಖುಷಿಯಾಗಿತ್ತು. ನಾನು ಗಿಡದ ಹತ್ತಿರ ಹುಷಾರಾಗಿ ಹೋಗಿ ಒಂದಿಷ್ಟು ಕಾಯಿಗಳನ್ನು ಕಿತ್ತುಕೊಂಡೆ, ಕಾಯಿಗಳನ್ನು ಕಿತ್ತುಕೊಂಡ ಕಡೆಯಿಂದ ಗಿಡದ ಹಾಲು ಒಸರತೊಡಗಿತು, ಹುಡುಗರಿಗೆ ತಲಾ ಒಂದಿಷ್ಟು ಕೊಟ್ಟು, 'ತಿನ್ರೋ' ಎಂದರೆ ಅವರು ಮೊದಲು ಮುಖ-ಮುಖ ನೋಡಿ ಆಮೇಲೆ ಬಾಯಿಗೆ ಹಾಕಿಕೊಂಡರು, ನಾನು ಈ ಕಾಯಿಗಳ ಮೇಲೆ ಲಘುವಾಗಿ ಪಸರಿಸಿದ ಧೂಳನ್ನು ನನ್ನ ಜೀನ್ಸ್ ಪ್ಯಾಂಟಿಗೆ ತಿಕ್ಕಿ ಒಂದೊಂದೇ ಕಾಯಿಗಳನ್ನು ತಿನ್ನ ತೊಡಗಿದೆ. ಹುಡುಗರು 'ಒಂಥರಾ ಒಗರು!' ಎಂದದ್ದಕ್ಕೆ 'ಅದರಲ್ಲೇ ಇರೋದು ಮಜಾ!' ಎಂದು ಸಮಜಾಯಿಷಿ ಕೊಟ್ಟೆ.

***

ಕವಳೀಕಾಯಿ ಕೀಳಲು ಹೋದದ್ದನ್ನು ಯಾರಿಗೂ ಹೇಳಬೇಡಿ ಎಂದಿದ್ದಕ್ಕೆ ಹುಡುಗರು ನನ್ನ ಮಾತನ್ನು ಕೇಳಿದರಾದರೂ ಮತ್ತೆ ಮರುದಿನ ಯಾರೂ 'ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತಾರೆಂದು' ನನ್ನ ಜೊತೆಯಲ್ಲಿ 'ಜಾಗ್ಗಿಂಗ್' ಗೆ ಬರಲಿಲ್ಲ, ನಮ್ಮೂರಿನ ಹೆಂಗಳೆಯರು ಮುಂಜಾನೆ ಅಂಗಳವನ್ನು ಗುಡಿಸಿ ಸಾರಿಸೋದೋರಳಗೆ ನಿರ್ಜನಗಲ್ಲಿಗಳನ್ನು ಹಳೆ ಸ್ನೇಹಿತರಂತೆ ಹುಡುಕಿಕೊಂಡು ಹೋಗುವ ಪರಿಪಾಟವನ್ನು ನಾನು ನಿಲ್ಲಿಸಲಿಲ್ಲ!

Saturday, May 27, 2006

ಬಂಕಸಾಣ-ಬೆಲ್‌ಮಾರ್‌ಗಳಲ್ಲಿ ಕಲಿತ ಪಾಠ

ಮೊನ್ನೆ ಸೂಪ್ ಲೇಖನ ಬರೆದ ಮೇಲೆ ಸಾವಿನ ಬಗ್ಗೆ ಮತ್ತೆ-ಮತ್ತೆ ಯೋಚಿಸತೊಡಗಿದಾಗ ನಾನು ಸಾವಿಗೆ ಅತ್ಯಂತ ಹತ್ತಿರ ಬಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದು ಎರಡು ಬಾರಿ ಅನ್ನುವ ವಿಷಯ ಹೊಳೆಯಿತು. ೧೯೮೫ ರಲ್ಲಿ ಒಮ್ಮೆ ಆನವಟ್ಟಿಯ ಸಮೀಪವಿರುವ ವರದಾನದಿಯಲ್ಲಿ ಒಮ್ಮೆ ಪಾರಾಗಿದ್ದರೆ, ೧೯೯೯ ರಲ್ಲಿ ನ್ಯೂ ಜೆರ್ಸಿಯ ಬೆಲ್‌ಮಾರ್‌ನಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಎರಡನೆಯ ಬಾರಿ ಪಾರಾಗಿದ್ದೆ. ಬಂಕಸಾಣದಲ್ಲಿ ನನಗೆ ಅಷ್ಟೊಂದು ಸೋಜಿಗವೂ ಹೆದರಿಕೆಯೂ ಆಗಿರಲಿಲ್ಲ, ಆದರೆ ಬೆಲ್‌ಮಾರ್‍‌ನಲ್ಲಿ ಆದ ಅಸಾಧ್ಯ ಹೆದರಿಕೆ, ಭಯ ಎರಡೂ ನನ್ನನ್ನು ಬಹಳ ದಿನಗಳವರೆಗೆ ಬಾಧಿಸಿದ್ದವು. ಅಂದಿನಿಂದ ನೀರಿನೊಡನೆ ಸರಸ ಸಲ್ಲಾಪ ಅಷ್ಟೊಂದು ಇಟ್ಟುಕೊಂಡಿಲ್ಲ, ಇಟ್ಟುಕೊಂಡರೂ ಎಷ್ಟು ಸಾಧ್ಯವೋ ಅಷ್ಟು ಜಾಗೃತನಾಗಿರುತ್ತೇನೆ.

***

ಆನವಟ್ಟಿಯಿಂದ ಕಾಲುದಾರಿಯಲ್ಲಿ ನಡೆದರೆ ವರದಾನದಿಯ ಪಾತ್ರದಲ್ಲಿ ಇರುವ ಒಂದು ಚಿಕ್ಕ ಹಳ್ಳಿ ಬಂಕಸಾಣದಲ್ಲಿ ನೀರಿನಲ್ಲಿ ಮುಳುಗಿಕೊಂಡಿರುವ ಹೊಳೆಲಿಂಗೇಶ್ವರನ ಸಾನಿಧ್ಯವಿದೆ. ಮಳೆಗಾಲದಲ್ಲಿ ಶಿವಲಿಂಗ ಹಾಗೂ ಗರ್ಭಗುಡಿ (ಲಿಂಗದ ಸುತ್ತಲೂ ಅಳಿದುಳಿದ ಕಲ್ಲುಗಳ ಒಂದು ಕಟ್ಟೆ ಎನ್ನಬಹುದು) ಸಂಪೂರ್ಣ ಮುಚ್ಚಿಹೋಗುತ್ತದೆ, ಆದರೆ ಬೇಸಿಗೆಯ ಸಮಯದಲ್ಲಿ ನದಿಯನ್ನು ನಡೆದೇ ದಾಟಬಹುದಾದ್ದರಿಂದ ಲಿಂಗದ ದರ್ಶನ ಹಲವಾರು ತಿಂಗಳುಗಳವರೆಗೆ ಆಗುತ್ತದೆ. ಇಲ್ಲಿ ಪ್ರತಿ ಜನವರಿ ೧೪ ರಂದು ಮಕರ ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಜಾತ್ರೆ ನಡೆಯುತ್ತದೆ, ಆನವಟ್ಟಿ, ಜಡೆ ಹೋಬಳಿ ಹಾಗೂ ದೂರದೂರದ ಹಳ್ಳಿ ಪಟ್ಟಣಗಳಿಂದ ಸಾಕಷ್ಟು ಜನರು ಬಂದು ಸೇರುತ್ತಾರೆ. ನಮ್ಮೂರಿನಲ್ಲಿ ಮನೆಗೊಬ್ಬರಾದರೂ ಜಾತ್ರೆಗೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬರುವ ಪದ್ಧತಿ ಇದೆ, ಅಲ್ಲದೇ ಶಾಲಾ-ಕಾಲೇಜುಗಳಿಂದಲೂ ಪಿಕ್‌ನಿಕ್ ಹೆಸರಿನಲ್ಲಿ ಬೇಕಾದಷ್ಟು ಜನರು ಹೋಗುತ್ತಾರೆ. ಮೊದಲೆಲ್ಲಾ ವರದಾನದಿಗೆ ಅಡ್ಡವಾಗಿ ಸೇತುವೆ ಇರಲಿಲ್ಲ, ಇತ್ತೀಚೆಗೆ (ಹತ್ತು ವರ್ಷವಾಗಿರಬಹುದು) ಸೇತುವೆಯನ್ನೂ ಕಟ್ಟಿದ್ದಾರೆ. ಇದೇ ಬಂಕಸಾಣಕ್ಕೆ ಬಸ್ ಹೋಗುವ ಹಾದಿಯಲ್ಲಿ ಹೋದರೆ ಸುಮಾರು ೧೦ ಕಿ.ಮೀ. ಆಗಬಹುದು. ಆದರೆ, ಕುಬಟೂರು ಕೆರೆ ಏರಿ, ಲಕ್ಕವಳ್ಳಿ ಜಮೀನುಗಳ ಮಧ್ಯೆ ಇರುವ ಕಾಲ್ದಾರಿಗಳೆಲ್ಲವೂ ನನಗೆ ಚಿರಪರಿಚಿತವಾಗಿರುವುದರಿಂದ ಐದು ಕಿ.ಮೀ. ಇರುವ ಹಾದಿಯಲ್ಲಿ ಒಂದು ಘಂಟೆಯ ಒಳಗೆ ನಡೆದೇ ತಲುಪಬಹುದಾಗಿತ್ತು, ಅಥವಾ ಎಲ್ಲಾದರೂ ಬಾಡಿಗೆಗೆ ಸೈಕಲ್ ತೆಗೆದುಕೊಂಡರೆ ಎಲ್ಲವೂ ಸುಲಭವಾಗುತ್ತಿತ್ತು.

ಈ ಬಂಕಸಾಣ ಜಾತ್ರೆಗೆ ನಾನು ನನ್ನ ಸ್ನೇಹಿತರ ಜೊತೆಗೆ ಹೋಗಿದ್ದಕ್ಕಿಂತಲೂ ನನ್ನ ದೊಡ್ಡ ಅಣ್ಣ ಹಾಗೂ ಅವನ ಸ್ನೇಹಿತರ ಜೊತೆಗೆ ಹೋದದ್ದೇ ಹೆಚ್ಚು. ನನ್ನ ಅಣ್ಣ ಅವನ ಸ್ನೇಹಿತರಾದ ಗೋಪಿ, ಕಿತ್ತ, ಉಮೇಶ, ಪ್ರಕಾಶ ಮುಂತಾದವರ ಜೊತೆ ಪ್ರತೀವರ್ಷವೂ ಎಂಬಂತೆ ಹೋಗುತ್ತಿದ್ದ, ಅಲ್ಲಿ ಹೋದ ಮೇಲೆ ನೀರಿನಲ್ಲಿ ತೂರ್‌ಚೆಂಡು ಆದುವುದೇನು, ಆ ದಡದಿಂದ ಈ ದಡಕ್ಕೆ ಹೆಚ್ಚು ಆಳ ಇರುವಲ್ಲಿಯೇ ಹೋಗುವುದು ಎಂದರೇನು? ಅವರೆಲ್ಲರ ಜೊತೆಯಲ್ಲಿ ಹತ್ತರ ಜೊತೆ ಹನ್ನೊಂದು ಅನ್ನೋ ಹಾಗೇ ನಾನೂ ಒಬ್ಬ ಹಾಲುಂಡಿ. ನನ್ನ ಅಣ್ಣ ಒಳ್ಳೇ ಈಜುಗಾರ, ಅವನು ಜೋಗಾದಲ್ಲಿರೋ ಸ್ವಿಮ್ಮಿಂಗ್ ಪೂಲಿನ ಅತ್ಯಂತ ಎತ್ತರದ ಮೆಟ್ಟಿಲಿನಿಂದ (ಸುಮಾರು ಐವತ್ತು ಅಡಿ ಎತ್ತರವಿರಬಹುದು) ಡೈವ್ ಮಾಡಿದ್ದನ್ನೂ, ಕಂಡ-ಕಂಡ ಹೊಳೆ-ಬಾವಿಗಳಲ್ಲಿ ಲೀಲಾಜಾಲವಾಗಿ ಈಜೋದನ್ನೂ ಹಲವಾರು ಬಾರಿ ನೋಡಿ ಕಣ್ಣನ್ನು ತುಂಬಿಕೊಂಡಿದ್ದೇನೆಯೇ ಹೊರತು ಮೈಸೂರಿಗೆ ಹೋಗುವವರೆಗೆ ನನಗೆ ಈಜಿನ ಗಂಧವೂ ಬಾರದು. ಅವನಿಗಾದರೆ ಯಾವುದೇ ಕೆರೆ-ಬಾವಿ-ಹೊಳೆಗಳಲ್ಲಿ ಈಜು ಹೊಡೆಯುವುದಕ್ಕೆ, ಅಥವಾ ಯಾವುದೋ ತುಡುಗು ಕುದುರೆಗೆ ಮನೆಯಲ್ಲಿನ ಲೋಹದ ಹ್ಯಾಂಗರು-ಹಗ್ಗ-ಟವಲ್ಲನ್ನು ಬಳಸಿ ಲಗಾಮು ಹಾಕಿ ಸವಾರಿ ಮಾಡುವುದಕ್ಕೆ ಅಪ್ಪ-ಅಮ್ಮನಿಂದ ಆರಾಮವಾಗಿ ಪರ್ಮಿಷನ್ನು ಸಿಗುತ್ತಿತ್ತು, ಆದರೆ ನನಗೆ ಮಾತ್ರ ದನದ ಕೊಟ್ಟಿಗೆಯ ಸಮೀಪವೂ ಹೋಗಲು ಬಿಡುತ್ತಿರಲಿಲ್ಲ, ಹಾಲು ಕರೆಯುವ ಮಾತು ಹಾಗಿರಲಿ. ಇಂಥಾ ರೋಲ್‌ಮಾಡೆಲ್ ಅಣ್ಣನನ್ನು ಮನಸ್ಸಿನಲ್ಲಿ ವೈಭವೀಕರಿಸಿಕೊಂಡು ನನಗೆ ಕಷ್ಟ ಬಂದಾಗಲೆಲ್ಲ ಅವನೇನಾದರೂ ಇಲ್ಲಿದ್ದರೆ ಎಂದು ಇವತ್ತಿಗೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಅವನು ಹದಿನೈದು ವರ್ಷದ ಹಿಂದೆ ಬಾವಿಯಿಂದ ಎರಡೂ ಕೈಯಲ್ಲಿ ಎರಡು ದೊಡ್ಡ ದೊಡ್ಡ ಬಕೇಟುಗಳಲ್ಲಿ ನೀರು ತಂದು ಹಾಕುತ್ತಿದ್ದವನು, ನನಗೆ ಇವತ್ತಿಗೂ ಎರಡೂ ಕೈ ಸೇರಿದರೆ ಒಂದೇ ಬಕೇಟು ಎತ್ತುವುದಕ್ಕೆ ಆಗುವುದು ಎಂದು ಹೇಳಿದರೆ ಅಣ್ಣನ ಚಿತ್ರಣಕ್ಕೆ ಸರಿಯಾದ ನ್ಯಾಯ ಸಿಕ್ಕೀತು.

ಬಂಕಸಾಣದ ಹೊಳೆಯಲ್ಲಿ ಅಣ್ಣ ಮತ್ತು ಅವನ ಸ್ನೇಹಿತರು ಹೋಗೋದು ಪೂಜೆ ಮಾಡಿಸೋದು ಎನ್ನುವ ನೆಪಕ್ಕೆ ಮಾತ್ರ, ಆದರೆ ಅವರು ಅಲ್ಲಿ ನೀರಿನಲ್ಲಿ ಮನದಣಿಯೆ ಆಡಿ ಮನೆಗೆ ಹೊರಡುವಾಗ ಒಂದಿಷ್ಟು ಮಂಡಕ್ಕಿ, ಕಾರಸೇವು, ಬೆಂಡು ಬತ್ತಾಸುಗಳನ್ನು ತೆಗೆದುಕೊಂಡು ಹೋಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಅವರೆಲ್ಲರೂ ನೀರಿನಲ್ಲಿ ಇಳಿದರೆಂದರೆ ನಾನೂ ನೀರಿನಲ್ಲಿ ಇಳಿಯುತ್ತಿದ್ದೆ, ಆದರೆ ಈಜುಬಾರದ ನನಗೆ ಅಣ್ಣ ದೊಡ್ಡ ಕಣ್ಣು ಮಾಡಿ 'ಈ ಜಾಗ ಬಿಟ್ಟು ಎಲ್ಲೂ ಹೋಗಬೇಡ' ಎಂದು ಹೆದರಿಸಿ ಹೋಗುತ್ತಿದ್ದುದರಿಂದ ಅವರಿಗೆಲ್ಲ ಇದ್ದ ನೀರಿನ ವ್ಯಾಪ್ತಿ ನನಗಿರದೇ ಹೋಗಿತ್ತು, ಅದರೂ ಮೊಣಕಾಲು, ಸೊಂಟ, ಕೊನೆಗೆ ಎದೆ ಮಟ್ಟಕ್ಕೆ ನೀರಿನಲ್ಲಿ ಬಂದು, ತಲೆಯನ್ನು ಕಷ್ಟ ಪಟ್ಟು ಮೂರು ನಾಲ್ಕು ಸಾರಿ ನೀರಿನಲ್ಲಿ ಮುಳುಗಿಸಿ ಮತ್ತೆ ಕಡಿಮೆ ನೀರಿರುವ ಕಡೆಗೆ ಹೋದರೆ ನನ್ನ ಆಟವೆಲ್ಲ ಮುಗಿದುಹೋಗುತ್ತಿತ್ತು. ಆದರೆ, ಆ ಬಾರಿ ನನಗೆ ಅದೇನು ಅನಿಸಿತೋ ಬಿಟ್ಟಿತೋ ಗೊತ್ತಿಲ್ಲ, ಎದೆ ಮಟ್ಟದ ನೀರಿನಿಂದ ಕುತ್ತಿಗೆಯ ಮಟ್ಟಕ್ಕೆ ಹೋಗೋಣವೆನಿಸಿತು, ನಾನು ಹಾಗೆ ಹೋದಾಗ ನನ್ನ ಅಣ್ಣ ಮತ್ತು ಅವನ ಸ್ನೇಹಿತರು ತೂರ್‌ಚೆಂಡು ಆಡುತ್ತಿದ್ದುದನ್ನು ನೋಡುತ್ತಾ ಹೋದವನಿಗೆ ಏಕ್‌ದಂ ನೀರಿನಲ್ಲಿ ಕುತ್ತಿಗೆ ಮೀರಿ ಬಾಯಿಯವರೆಗೂ ನೀರು ಬಂದಿದ್ದು ದಿಗಿಲಾಗಿ ಕೈ-ಕಾಲು ಬಡಿದುಕೊಳ್ಳಲಾರಂಭಿಸಿದೆ, ಮೊಟ್ಟ ಮೊದಲು ಎಲ್ಲಕ್ಕಿಂತ ಮುಖ್ಯವಾಗಿ ಜೀವದ ಬೆಲೆ ಗೊತ್ತಾಗಿಹೋಯಿತೆಂದು ಹೃದಯ ಜೋರಾಗಿ ಹೊಡೆದುಕೊಳ್ಳಲಾರಂಭಿಸಿತು. ಚಿಕ್ಕವರು ಮುಳುಗಲು ಹೆಚ್ಚು ನೀರು ಬೇಕಾಗೋದಿಲ್ಲ, ಅಲ್ಲದೇ ಮುಳುಗಿದವರು ಕಷ್ಟಪಟ್ಟು ಮೇಲೆ ಬರುವ ಪ್ರಯತ್ನ ಹಾಗೂ ಸಾಯುವ ಭಯ ಇವೆರಡೂ ಮುಳುಗುವವನಿಗೆ ಸಹಾಯ ಮಾಡುವ ಸಾಧ್ಯತೆ ಕಡಿಮೆ - ಅಂದು ನನಗೂ ಹೀಗೇ ಆಗಿತ್ತು. ಆದರೆ ಅವರ ಆಟದ ಮಧ್ಯದಲ್ಲೇ ಚೆಂಡು ನನ್ನ ಕಡೆಗೆ ಬಂದಿತೆಂದು ಗೋಪಿ ನನ್ನ ಕಡೆಗೆ ಬಂದವನೇ 'ಇಲ್ಲೇನ್ ಮಾಡ್ತಾ ಇದ್ದೀಯೋ?' ಎಂದು ನನ್ನನ್ನು ಸಲೀಸಾಗಿ ಕೈ ಹಿಡಿದು ಎಳೆದು ಕಡಿಮೆ ನೀರಿರುವಲ್ಲಿ ತಂದು ಬಿಟ್ಟ! ಅವನು ಬರುವುದು ಒಂದು ನಿಮಿಷ ತಡವಾಗಿ ಹೋಗಿದ್ದರೂ ನನ್ನ ಕಥೆ ಮುಗಿದೇ ಹೋಗುತ್ತಿತ್ತು - ನಾನು ಈ ವಿಷಯವನ್ನೂ ಈ ವರೆಗೂ ಯಾರಲ್ಲೂ ಹೇಳಿಲ್ಲ, ಗೋಪಿಗೂ ನನ್ನನ್ನು ಆ ದಿನ ಜೀವದಿಂದುಳಿಸಿದೆ ಎನ್ನಿಸಲು ಇಲ್ಲ, ಅವನು ನನ್ನ ಕೈ ಹಿಡಿದು ಎಳೆದು ತಂದದ್ದು, ನಾನು ಭಯದಿಂದ ಸುಧಾರಿಸಿಕೊಂಡದ್ದೂ, ಮನೆಗೆ ಬರುವವರೆಗೆ, ಬಂದ ಮೇಲೆ ಇಲ್ಲೀವರೆಗೂ ಯಾರಲ್ಲೂ ಹೇಳದೇ ಸುಮ್ಮನಿದ್ದದ್ದೂ ಎಲ್ಲವೂ ಒಂದು ನಾಟಕದ ಅಂಕದಂತೆ ಸರಿದು ಹೋಗಿದೆಯೇ ವಿನಾ, ಮತ್ತಿನ್ನೇನೂ ಆಗಲಿಲ್ಲ, ಪ್ರತಿಯೊಂದರಿಂದ ಪಾಠ ಕಲಿಯಬೇಕಂತೆ, ಹಾಗಾದಿದ್ದುದೇ ನಾನು ಬೆಲ್‌ಮಾರ್ ಬೀಚ್‌ನಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿಹೋಗಿ ಜೀವಂತ ವಾಪಾಸು ಬಂದಿದ್ದು!

***

೧೯೯೯ ರಲ್ಲಿ ನಾನು ಇನ್ನೂ ಕನ್ಸಲ್‌ಟಂಟ್ ಆಗಿ ಪ್ರುಡೆಂಟಿಯಲ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಆಗ ನನ್ನ ಜೊತೆಯಿದ್ದ ಕನ್ನಡಿಗ ರೂಮ್‌ಮೇಟ್‌ಗಳಾದ ರಾಮಮೂರ್ತಿ, ರವಿ ಯೂ ಹಾಗೂ ಆಫೀಸಿನಲ್ಲಿ ಸ್ನೇಹಿತರಾದ ಕೆನ್, ಜೆನ್ನಿಫರ್, ರಾಬರ್ಟ್ ಹಾಗೂ ಮ್ಯಾನೇಜರ್ ಜ್ಯಾಕ್ ಅವರನ್ನೆಲ್ಲ ಜೀವಮಾನ ಪರ್ಯಂತ ಮರೆಯುವುದಿಲ್ಲ, ಆಗಿನ ದಿನಗಳಲ್ಲ ಬಹಳ ಒಳ್ಳೆಯ ದಿನಗಳು - ಏಕೆ ಹಾಗೆ ಹೇಳುತ್ತಿದ್ದೇನೆಂದರೆ, ಬೇಕಾದಷ್ಟು ಸಂಬಳ ಬರುತ್ತಿತ್ತು, ರೂಮ್‌ಮೇಟ್‌ಗಳ ದಸೆಯಿಂದ ಕಡಿಮೆ ಮನೆ ಬಾಡಿಗೆಯೂ ಹಾಗೂ ನನ್ನ ಸರಳ ಜೀವನಕ್ರಮದಿಂದ ಬಹಳ ಕಡಿಮೆ ಹಣವೂ ಖರ್ಚಾಗಿ ಬೇಕಾದಷ್ಟು ಹಣ ಬೇಡವೆಂದರೂ ಕೂಡಿಕೊಳ್ಳುತ್ತಿತ್ತು. ಆಗ ನಾನು ಹಗಲಿನ ಕೆಲಸ ಮುಗಿಸಿ ಎಷ್ಟೋ ಕಡೆ ರಾತ್ರಿ ಪಾಳಿಯಲ್ಲಿ ಮತ್ತೊಂದು ಪ್ರಾಜೆಕ್ಟಿನಲ್ಲಿ ಕೆಲವು ಕಡೆ ಕೆಲಸ ಮಾಡುತ್ತಿದ್ದುರಿಂದಲೂ, ನನ್ನ ಕಂಪನಿಯವರು ನನ್ನನ್ನು ಇಂಟರ್‌ವ್ಯೂವ್ ಮಾಡಲು ಬಳಸಿ ಮಾಡಿದ ಪ್ರತಿ ಇಂಟರ್‌ವ್ಯೂವ್‌ಗೆ ಇಷ್ಟು ಎಂದು ಹಣವನ್ನು ಕೊಡುತ್ತಿದ್ದುದರಿಂದಲೂ, ಹಾಗೂ ನನ್ನ ಸ್ನೇಹಿತರ ನೆಟ್‌ವರ್ಕ್‌ನಲ್ಲಿ ಅವರನ್ನು-ಇವರನ್ನು ರೆಫರ್ ಮಾಡಿದ್ದಕ್ಕೆ ರೆಫರಲ್ ಹಣವೆಂತಲು ಬಂದು ಸಾಕಷ್ಟು ಹಣ ಸಂಗ್ರಹಣೆಯಾಗುತ್ತಿತ್ತು. ಜೊತೆಯಲ್ಲಿ ಹೇಳಿ-ಕೇಳಿ ಸಿಂಗಲ್ ಬದುಕು, ಯಾರಿಗುಂಟು ಯಾರಿಗಿಲ್ಲ, ಅವು ಬಹಳ ಸ್ವೇಚ್ಚೆಯಿಂದ ಇರಬಹುದಾದ ದಿನಗಳಾಗಿದ್ದವು.

ಹೀಗೇ ಒಂದು ದಿನ ಇನ್ನೇನು ಮಾರ್ಚ್ ಮುಗಿದು ವಸಂತ ಋತು ಬಂದು ಹೊರಗೆಲ್ಲ ವಾತಾವರಣ ಮೈ ಛಳಿಯನ್ನು ಕಳೆದುಕೊಳ್ಳುತ್ತಿರುವಾಗ, ನನಗೆ ವರ್ಷಕ್ಕೆ ಆರು ಸಿಕ್ ಲೀವ್ ತೆಗೆದುಕೊಳ್ಳಬಹುದಾದ ಪ್ರಾವಿಜನ್ ಇರೋದರಿಂದ ಒಂದು ಶುಕ್ರವಾರವನ್ನು ರಜೆ ತೆಗೆದುಕೊಂಡು ಒಬ್ಬನೇ ಬೀಚ್‌ಗೆ ಹೋದರೆ ಹೇಗೆ ಎಂದು ಅನ್ನಿಸಿದ ತಕ್ಷಣವೇ ಗುರುವಾರ ಮಧ್ಯಾಹ್ನ ಮ್ಯಾನೇಜರ್ ಜಾಕ್‌ಗೆ 'ನನಗೆ ನಾಳೆ ಹುಷಾರಿರೋದಿಲ್ಲ!' ಎಂದು ಇ-ಮೈಲ್‌ನ್ನು ಗೀಚಿದೆ, ಜಾಕ್ ಆ ವಿಷಯವನ್ನು ಟೀಮಿನ ಎಲ್ಲರಿಗೂ ಕಳಿಸಿ ಅವರು ನನ್ನನ್ನು ತಮಾಷೆ ಮಾಡುತ್ತಿದ್ದಾಗ 'ನನ್ನ ಕಂಪನಿಗೆ ಮಾತ್ರ ಹೇಳಬೇಡಿ, ಏನು ಬೇಕಾದರೂ ಮಾಡಿ' ಎಂದು ತೋಡಿಕೊಂಡೆ.

ನಾನು ಆ ಶುಕ್ರವಾರ ಮಧ್ಯಾಹ್ನ ಮೂರು-ಮೂರೂವರೆ ಅಷ್ಟೊತ್ತಿಗೆ ಬೆಲ್‌ಮಾರ್ ಬೀಚಿಗೆ ಹೋದದಕ್ಕೆ ಹಲವಾರು ಕಾರಣಗಳಿದ್ದರೂ, ಮುಖ್ಯವಾಗಿ ನಾನು ಎಸ್.ಎಲ್. ಭೈರಪ್ಪನವರನ್ನೇ ದೂರೋದು! ನನ್ನ ಮ್ಯಾನೇಜರ್ ಜ್ಯಾಕ್ ಅಸಮಾನ್ಯ ಈಜುಗಾರ ಹಾಗೂ ಸ್ಕೀ ಮಾಡುವ ಮನುಷ್ಯ, ಅವನು ಬೇಸಿಗೆಯಲ್ಲಿ ಬೆಲ್‌ಮಾರ್‌ಗೆ ಬೇಕಾದಷ್ಟು ಸಾರಿ ಹೋಗಿ ಮನಪೂರ್ತಿ ಈಜಿ ಬರುತ್ತಿದ್ದ, ಛಳಿಗಾಲದಲ್ಲಿ ಬೀಚ್ ಪಟ್ರ್‍ಓಲ್ ಆಗಿ ಪೋಕೋನೋ ಬೆಟ್ಟಗಳಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದವ. ಅವನು ತನ್ನ ಈಜಿನ ಹಾಗೂ ಸ್ಕೀ ಅನುಭವಗಳನ್ನು ಪದೇ-ಪದೇ ನಮ್ಮೊಡನೆ ಹಂಚಿಕೊಳ್ಳುತಿದ್ದುದರಿಂದ ಅವನ ದೆಸೆಯಿಂದಾಗಿ ನಾನು ಗಾರ್ಡನ್ ಸ್ಟೇಟ್ ಪಾರ್ಕ್ ವೇ ಯಲ್ಲಿ ಸಿಗುವ ಉಳಿದೆಲ್ಲ ಬೀಚುಗಳಲ್ಲಿ ಬೆಲ್‌ಮಾರ್ ಅನ್ನೇ ಆರಿಸಿಕೊಂಡೆ. ಭೈರಪ್ಪನವರೇ ಮುಖ್ಯ ಕಾರ್‍ಅಣ ಅಂದದ್ದು ಏಕೆಂದರೆ ನಾನು ಆಗಷ್ಟೇ ಬಿಡುಗಡೆ ಹೊಂದಿದ್ದ 'ಸಾರ್ಥ'ವನ್ನು ಅದಾಗಲೇ ಎರಡು ಸಾರಿ ಓದಿದ್ದರೂ ವಿಶ್ವಕರ್ಮ ಸ್ಥಪತಿಯ ಪಾತ್ರ ಚಿತ್ರಣ, ಮಂಡನ ಮಿಶ್ರರು ಯತಿಯೊಡನೆ ವಾದದಲ್ಲಿ ಸೋತ ಪ್ರಸಂಗ ಹಾಗೂ ನಾಗಭಟ್ಟನ ಥರಾವರಿ ಅವತಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಹಂಬಲ ಇವುಗಳೆಲ್ಲವನ್ನೂ ಅಜೆಂಡಾದಲ್ಲಿ ಇಟ್ಟುಕೊಂಡು ಒಂದು ನೋಟ್‌ಪ್ಯಾಡೂ, ಕೂಲರ್ ತುಂಬಾ ತರಾವರಿ ಜ್ಯೂಸು, ಚಿಪ್ಸು, ನೀರು, ಹಾಗು ಹಣ್ಣುಗಳನ್ನು ತುಂಬಿಕೊಂಡು, ಬೀಚ್ ಚೇರು, ಸನ್ ಸ್ಕ್ರೀನು ಲೋಷನ್, ಟವೆಲ್‌ಗಳು ಹಾಗೂ ನೀರಿಗಿಳಿಯಬಹುದಾದ ಈಜುಡುಗೆಗಳನ್ನು ತೆಗೆದುಕೊಂಡು ಮನೆಯಿಂದ ಒಬ್ಬನೇ ಹೊರಟೆ. ಮಧ್ಯಾಹ್ನವಾದ್ದರಿಂದ ಎಲ್ಲಿಯೂ ಯಾವ ತೊಂದರೆಯೂ ಆಗದೆ ನಾಲ್ಕು ಘಂಟೆಯ ಹತ್ತಿರ ಹತ್ತಿರವಾದರೂ ಸೂರ್ಯ ಸುಡುತ್ತಲಿದ್ದರೂ, ನಾನೊಬ್ಬನೆ ಒಂದು ಒಳ್ಳೆಯ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಬೀಚಿಗೆ ಬಂದೆ. ಅಲ್ಲಲ್ಲಿ ಆಗಾಗ್ಗೆ ಸ್ವಲ್ಪ ಗಾಳಿಯಿತ್ತು, ಆದರೂ ಉಷ್ಣತೆ ಸುಮಾರು ಎಪ್ಪತ್ತು ಡಿಗ್ರಿ ಹತ್ತಿರ ಹತ್ತಿರ ಇದ್ದರೂ, ಶುಕ್ರವಾರ ಮಧ್ಯಾಹ್ನದ ಸಮಯವಾದರೂ ನನ್ನ ಕಾಣುವಷ್ಟು ದೂರ ಬೀಚಿನ ಎರಡೂ ಕಡೆಗಳಲ್ಲಿ ಯಾರೂ ಇರಲಿಲ್ಲ. ಯಾರು ಇದ್ದರೆ ಇರಲಿ, ಬಿಡಲಿ ಎಂದುಕೊಂಡು ಒಂದು ಸ್ಥಳವನ್ನು ಆರಿಸಿಕೊಂಡು ಅಲ್ಲಿ ನನ್ನ್ ಬೀಚು ಚೇರನ್ನು ಪ್ರತಿಷ್ಠಾಪಿಸಿ, ಮೈ ತುಂಬಾ ಸನ್ ಸ್ಕ್ರೀನನ್ನು ಹಚ್ಚಿಕೊಂಡು ಈಜುಡುಗೆಯಲ್ಲಿ ಕುಳಿತು, ತಲೆಗೊಂದು ಬೇಸ್ ಬಾಲ್ ಟೋಪಿ ಹಾಗೂ ಕಾರಿನಲ್ಲಿ ಡ್ರೈವ್ ಮಾಡಲು ಇಟ್ಟುಕೊಂಡ ಕಪ್ಪು ಕನ್ನಡಕವನ್ನು ಹಾಕಿಕೊಂಡು ಏನನ್ನೋ ಬರೆಯುತ್ತಾ ಕುಳಿತೆ. ಸ್ವಲ್ಪ ಹೊತ್ತು ಬರೆದು, ಮತ್ತು ಸ್ವಲ್ಪ ಹೊತ್ತು ಸಾರ್ಥವನ್ನು ಓದಿ ಹೀಗೆ ಒಂದು ಮೂವತ್ತು ನಲವತ್ತು ನಿಮಿಷಗಳಾಗಿರುವಾಗ ಒಮ್ಮೆ ನೀರಿಗಿಳಿದರೆ ಹೇಗೆ ಎನ್ನಿಸಿತೆಂದು ನಿಧಾನವಾಗಿ ನೀರಿನ ಕಡೆಗೆ ನಡೆಯತೊಡಗಿದೆ. ಅಲೆಗಳು ಕಾಲನ್ನು ಸೋಕಿದ ಕೂಡಲೇ ಹೊರಗಿನ ಉಷ್ಣತೆಗಿಂತ ನೀರಿನ ಉಷ್ಣತೆ ಕಡಿಮೆ ಇರುವುದು ಅರಿವಿಗೆ ಬಂದಿತಾದರೂ ಪ್ರತೀ ಸಾರಿ ಬೀಚಿಗೆ ಹೋದಾಗಲೂ ಮೊದಲ ಬಾರಿ ನೀರು ಮುಟ್ಟಿದಾಗ ಛಳಿ ಅನುಭವವಾಗೋದು ಸಹಜವೆಂದುಕೊಂಡು, ಪಾದ ತೋಯಿಸಿಕೊಂಡವನು, ಮೊಳಕಾಲುದ್ದಕ್ಕೂ, ಮೊಳಕಾಲು ಮುಳುಗಿಸಿಕೊಂಡವನು ಸೊಂಟದ ಮಟ್ಟಕ್ಕೂ ನಿಧಾನವಾಗಿ ಮುಂದೆ-ಮುಂದೆ ಹೋಗತೊಡಗಿದೆ. ಬಾಬರೀ ಮಸೀದಿ ಉರುಳಿದ ವರ್ಷ ನಾನು ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಒಂದು ತಿಂಗಳು ಪ್ರತಿದಿನವೂ ತಪ್ಪದೇ ಕಲಿತದ್ದರಿಂದ ನೀರೆಂದರೆ ಮೊದಲಿದ್ದಷ್ಟು ಭಯವೆನೂ ಇರಲಿಲ್ಲ, ಆದರೆ ಈಜುಕೊಳಕ್ಕೂ, ಮಹಾಸಾಗರದ ಅಲೆಗಳ ಹೊಡೆತಕ್ಕೂ ಬಹಳ ವ್ಯತ್ಯಾಸವಿದೆಯೆನ್ನೋದನ್ನು ನಾನು ಕೆಟ್ಟ ಅನುಭವದ ಮೂಲಕ ಕಲಿತಿರೋದರಿಂದ ಹೇಗೆ ತಾನೆ ಮರೆಯಲಿಕ್ಕೆ ಸಾಧ್ಯ?

ಹೀಗೆ ನಿಧಾನವಾಗಿ ನೀರಿನಲ್ಲಿ ಮುಂದೆ-ಮುಂದೆ ಹೋಗುತ್ತಿದ್ದವನಿಗೆ ದಡದಲ್ಲಿ ಇಟ್ಟಿದ್ದ ಕುರ್ಚಿ, ಹರವಿದ್ದ ಟವಲ್‌ಗಳು ದೀಪಸ್ತಂಭದಂತೆ ಡೈರೆಕ್ಷನ್ ನೀಡುತ್ತಿದ್ದವು, ಆದರೂ ಲಘುವಾಗಿ ಗಾಳಿ ಬೀಸುತ್ತಿದ್ದುರಿಂದ ಮುಂದೆ ಹೋಗಿ ಹಿಂದೆ ಬರುವ ಅಲೆಗಳ ರಭಸಕ್ಕೆ ನಾನು ಕ್ರಮೇಣ ಡೈಯಾಗನಲಿ ಶಿಫ್ಟ್ ಆಗುತ್ತಿದ್ದದ್ದು ನನ್ನ ಗಮನಕ್ಕೆ ಬರುವಾಗ ತುಂಬ ತಡವಾಗಿ ಹೋಗಿತ್ತು. ಇದ್ದಕಿದ್ದ ಹಾಗೇ ಅಲೆಯೊಂದು ಬಂದು ಅಪ್ಪಳಿಸಿತು, ನಾನು ನೀರಿನಲ್ಲಿ ಮುಳುಗಿ ಮತ್ತೆ ಮೇಲೆ ಎದ್ದೆ, ಆದರೆ ಸುತ್ತಲೂ ಎಲ್ಲವೂ ಬ್ರೈಟ್ ಆಗಿ ಕಾಣತೊಡಗಿತು, ಅದಾದ ಸ್ವಲ್ಪ ಹೊತ್ತಿನ ನಂತರವೇ ನನ್ನ ಕಪ್ಪು ಕನ್ನಡಕ ನೀರಿನಲ್ಲಿ ತೊಳೆದು ಹೋದದ್ದು ನನ್ನ ಅರಿವಿಗೆ ಬಂದಿದ್ದು! ನಾನು ಬೇಕೆಂದು ಕೇಳಿರದ ಡೈಯಾಗನಲ್ ಶಿಪ್ಟ್ ನನ್ನನ್ನು ನಿಧಾನವಾಗಿ ಆಳಕ್ಕೆ ಕರೆದುಕೊಂಡು ಹೋಗಿತ್ತು, ಮತ್ತೆ ಮುಂದಿನ ಅಲೆಯೊಂದು ಬಂದ ಹೊಡೆತಕ್ಕೆ ನನಗೆ ನೀರಿನಲ್ಲಿ ನೆಲದ ಆಸರೆ ತಪ್ಪಿ ಹೋಗಿತ್ತು, ನೆಲದ ಆಸರೆ ತಪ್ಪಿದ ತಕ್ಷಣ ನನ್ನ ಅಸ್ತಿತ್ವ ಪದೇ-ಪದೇ ಬಂದು ಹೊಡೆದು ಮತ್ತು ಅಷ್ಟೇ ಬಲದಿಂದ ಹಿಂದೆ ತಳ್ಳಿಕೊಂಡು ಹೋಗುತ್ತಿದ್ದ ಅಲೆಗಳ ಕೃಪೆಗೆ ಒಳಗಾಯಿತು. ನನ್ನ ಪುಟ್ಟ ತಲೆಗೆ ಪರಿಸ್ಥಿತಿ ಅರಿವಿಗೆ ಬರುವಾಗ ಎಲ್ಲವೂ ಕೈ ಮೀರಿ ಹೋಗಿತ್ತು, ಜೀವ ಭಯ ಬಹಳವಾಗಿ ಕಾಡತೊಡಗಿತ್ತು, ಆ ದಿನ ಕುಡಿದಷ್ಟು ಉಪ್ಪು ನೀರನ್ನು ನಾನು ಜೀವಮಾನದಲ್ಲಿ ಎಲ್ಲೂ ಕುಡಿದಿಲ್ಲ! ನಾನು ಮುಂದೆ (ದಡದ ಕಡೆಗೆ) ಬರಬೇಕೆಂಬ ಮಹತ್ವಾಕಾಂಕ್ಷೆಯಿಂದ ಎಷ್ಟೇ ಕಷ್ಟ ಪಟ್ಟು ಈಜಿದರೂ, ಹತ್ತು ಆಡಿ ಮುಂದೆ ಬಂದರೆ ಹನ್ನೊಂದು ಅಡಿ ಹಿಂದೆ ಹೋಗುತ್ತಿದ್ದೆ, ಹೀಗೆ ಒಂದೈದು ನಿಮಿಷಗಳಾಗಿದ್ದೇ ತಡ ಕಣ್ಣುರಿ ಬಂದಿತು, ಹೊಟ್ಟೆ ತೊಳಸ ತೊಡಗಿತು, ಕೈ-ಕಾಲುಗಳು ಪ್ರಯತ್ನಕ್ಕಿಂತಲೂ ಜೀವ ಭಯದಿಂದ ಸೋತು ಹೋದವು, ಕೂಗೋಣವೆಂದರೆ ಅಲ್ಲಿ ಯಾರೂ ಇಲ್ಲ, ಕೂಗಬೇಕಂದರೂ ಧ್ವನಿಯೂ ಬರಲಿಲ್ಲ. ಕೊನೆಗೆ ಸಾಗರ ದೇವ(ವಿ)ಗೆ ಏನನ್ನಿಸಿತೋ ಏನೋ, ಬಡಪಾಯಿ ಬದುಕಿಕೊಳ್ಳಲಿ ಎಂದು ಗಾಳಿ ಸ್ವಲ್ಪ ಹಗುರವಾದೊಡನೆ ನಾನು ಮತ್ತೆ-ಮತ್ತೆ ಪ್ರಯತ್ನ ಮಾಡಿ ಕೊನೆಗೂ ದಡವನ್ನು ತೆವಳುತ್ತಲೇ ತಲುಪಿ ಬದುಕಿದೆಯಾ ಬಡಜೀವವೇ ಎಂದುಕೊಂಡೆ!

ಸ್ವಲ್ಪ ಹೊತ್ತು ತೆವಳಿದವನು, ಮತ್ತೆ ನಡೆದು ನಿಧಾನವಾಗಿ ನನ್ನ ಕುರ್ಚಿ ಇಟ್ಟ ಸ್ಥಳದಲ್ಲಿ ಬಂದು ನೋಡಿದರೆ ಗಾಳಿ ಬೀಸಿದ್ದಕ್ಕೆ ನನ್ನ ಕುರ್ಚಿ ಸುಮಾರಾಗಿ ಮರಳಿನಲ್ಲಿ ಮುಚ್ಚಿ ಹೋಗಿದ್ದು ಕಂಡು ಬಂತು, ನಿಧಾನವಾಗಿ ಎಲ್ಲ ಸಾಮಾನುಗಳನ್ನು ಅದು ಹೇಗೆ ತುಂಬಿದೆನೋ ಬಿಟ್ಟೆನೋ, ಅಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕೆಂದು ಲಗುಬಗೆಯಿಂದ ಮನೆಯ ದಾರಿ ಹಿಡಿದೆ, ನನಗಾಶ್ಚರ್ಯವಾಗುವಂತೆ ನಾನು ಎಷ್ಟೊಂದು ಉಪ್ಪು ನೀರನ್ನು ಆದಿನ ಕುಡಿದಿದ್ದರೂ ಒಂದು ಹನಿಯನ್ನೂ ಕಕ್ಕಿಕೊಳ್ಳಲಿಲ್ಲ!

***

ಅಂದಿನಿಂದ ಇಂದಿನವರೆಗೆ ಆಳ ಗೊತ್ತಿರದ ನೀರಿಗೆ ನಾನು ಇಳಿಯುವುದಿಲ್ಲ, ಎಲ್ಲಿ ಬೇಕಾದಲ್ಲಿ ಭೈರಪ್ಪನನ್ನು ಓದುವುದಿಲ್ಲ ಹಾಗೂ ನಾನು ಯಾವ ದೇಶದಲ್ಲಿ ಹುಟ್ಟಿಲ್ಲವೋ ಅಲ್ಲಿ ಸಾಯಬಯಸುವುದಿಲ್ಲ!