Friday, February 25, 2022

ಕಾಡುವ ಹಾಡು: ಕಾಣದ ಕಡಲಿಗೆ

ಹಾಡು: ಕಾಣದ ಕಡಲಿಗೆ

ಕವಿ: ಜಿ. ಎಸ್. ಶಿವರುದ್ರಪ್ಪ, ಚೆಲುವು-ಒಲವು ಕವನ ಸಂಕಲನ (1951-52)

ಕವನದ ಶೀರ್ಷಿಕೆ: ತೊರೆಯ ಹಂಬಲ

ಗಾಯನ ಮತ್ತು ಸಂಗೀತ ಸಂಯೋಜನೆ: ಸಿ. ಅಶ್ವಥ್

ಈ ಹಾಡು ಕನ್ನಡಿಗರಿಗೆ ಬಹಳ ವಿಶೇಷವಾದ ಮೆಲೋಡಿಗಳಲ್ಲೊಂದು.  ಭಾವಗೀತೆಗಳ ಯಾದಿಯಲ್ಲಿ ಒಂದು ರೀತಿಯ ತನ್ಮಯತೆ ಮತ್ತು ತನ್ನದೇ ಆದ ಗಾಢತೆಯನ್ನು ಒಳಗೊಂಡಿರುವ ಈ ಕವನವನ್ನು ಸಿ. ಅಶ್ವಥ್ ಅವರು ಮನೋಜ್ಞವಾಗಿ ಹಾಡಿದ್ದಾರೆ.  ಹಾಡಿನುದ್ದಕ್ಕೂ ಬಳಸಿರುವ ಇನ್ಸ್ಟ್ರುಮೆಂಟ್‌ಗಳು ಒಂದಕ್ಕಿಂದ ಒಂದರಂತೆ ತಮ್ಮ ಕರ್ತವ್ಯವನ್ನು ನಿಭಾಯಿಸಿ ಕೇಳುಗರ ಮನಸ್ಸನ್ನ ಸೂರೆಗೊಂಡಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!

ಹಾಡಿನ ಉದ್ದಕ್ಕೂ "ಕಾಣದ ಕಡಲಿನ" ಮಹತ್ವವನ್ನು first person ಉದ್ದೇಶದಲ್ಲಿ ವಿವರಿಸಿರುವುದರಿಂದ ಈ ಹಾಡಿನ ಮೂಲ ವ್ಯಕ್ತಿಯನ್ನಾಗಿ ನಾವು "ತೊರೆ" ಯನ್ನು ಕಾಣಬಹುದು. ಕಡಲಿನ ಒಂದು ಭಾಗವಾಗಿ ಕಡಲನ್ನು ಸೇರುವ ತವಕದಲ್ಲಿರುವ ಈ ಮಹಾ ಹಂಬಲದ ಸೂಕ್ಷ್ಮ "ನೀರಿಗೆ" ಅಲ್ಲದೇ ಮತ್ತಿನ್ಯಾರಿಗೆ ಬರಬೇಕು.  ಈ ಲೇಖನದ ಉದ್ದಕ್ಕೂ "ತೊರೆ" ಅನ್ನು ಕುರಿತೇ ಮಾತನಾಡೋಣ.

***

ಒಂದು ರೀತಿ ಪಂಚಮಿ ಹಬ್ಬದ ಜೋಕಾಲಿಯಂತೆ ತೂಗುವ ಕೊಳಲಿನ ಗಾನದೊಂದಿಗೆ ಆರಂಭವಾಗುವ ಈ ಹಾಡಿಗೆ, ಕೇವಲ ಹತ್ತು ಸೆಂಕೆಂಡುಗಳಲ್ಲಿ ನೂರು ವಯಲಿನ್‌ಗಳು ತಮ್ಮ ಮೊರೆತವನ್ನು ಪ್ರಚುರ ಪಡಿಸುವುದರ ಮೂಲಕ ತಮ್ಮ ಇರುವಿಕೆಯನ್ನು ತೋರ್ಪಡಿಸುವುದರ ಜೊತೆಗೆ ಜರಡಿಯಲ್ಲಿ ಜೊಳ್ಳನ್ನು ಕೆಳಗೆ ತೂರಿ ಕೇವಲ ಗಟ್ಟಿಯಾದುದನ್ನು ಮಾತ್ರ ಮೇಲೆ ಇರಿಸಿಕೊಳ್ಳುವ ಹಾಗೆ ನಮ್ಮ ಮನಸ್ಸನ್ನು ಮುಂದಿನ ಸವಾಲಿಗೆ ತಯಾರು ಮಾಡಲು ಪ್ರಯತ್ನಿಸುತ್ತವೆ. ಈ ಹತ್ತು ಸೆಕೆಂಡುಗಳ ವಯಲಿನ್ ಸಹವಾಸದ ನಂತರ ಮತ್ತೆ ಸಮಾಧಾನದ ದನಿಯಲ್ಲಿ ಕೊಳಲು ಪ್ರತ್ಯಕ್ಷವಾಗುತ್ತಿದ್ದಂತೆ ಹಾಡು ಆರಂಭವಾಗುತ್ತದೆ.

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ 

ಕಾಣದ ಕಡಲಿಗೆ ಹಂಬಲಿಸಿದೆ ಮನ ||

ಅಶ್ವಥ್ ಅವರ ಧ್ವನಿ ಎಂದಿಗಿಂತಲೂ ಗಂಭೀರವಾಗಿ, ಕಾಣದ ಕಡಲನ್ನು ಒತ್ತರಿಸಿ ಹೇಳುವಾಗ, ಅವರ ಹಾಡಿನ ಭಾವದಲ್ಲಿ ಇದು ಯಾರು ಹಾಕಿರಬಹುದಾದ ಪ್ರಶ್ನೆ ಎನ್ನುವುದು ವ್ಯಕ್ತವಾಗುತ್ತದೆ.  ಕಡಲನ್ನು ಕೂಡಬಹುದಾದ "ನೀರು" ಅಥವಾ ನೀರಿನ ವಿಶೇಷ ರೂಪ ಈ ಪ್ರಶ್ನೆಗಳನ್ನು ಕೇಳುತ್ತಿದೆ ಎಂದು ಮೇಲ್ಮೈಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ.  ಆದರೆ, ಆಂತರ್ಯದಲ್ಲಿ ಒಂದು ರೀತಿಯ ಗಾಢವಾದ ಏಕತಾನತೆ, ಜೊತೆಗೆ ಆಂತರ್ಯವನ್ನು ಕಲಕುವ ದುಃಖದ ಅರಿವೂ ಎದುರುಗೊಳ್ಳುತ್ತದೆ.

ಪಲ್ಲವಿ ಮುಗಿಯುತ್ತಿದ್ದ ಹಾಗೆ ನಮ್ಮ ಕೆಲಸ ಈಗಷ್ಟೇ ಶುರುವಾಗಿದೆ, ಎಂದು ಮತ್ತೆ ವಯಲಿನ್‌ಗಳು ಮೊರೆಯಿಟ್ಟು ಶಾಂತವಾದ ವೇಣುವಾದನವನ್ನು ಬದಿಗೊತ್ತುತ್ತವೆ.  ಒಂದು ಶಾಂತವಾದ ವೇಣುವಾದನವನ್ನು ಸಂಬಾಳಿಸಲು ಅದೆಷ್ಟು ವಯಲಿನ್‍ಗಳು ಸಾಂಗತ್ಯದಲ್ಲಿ ದುಡಿಯಬೇಕು ನೋಡಿ!  ಹೀಗೆ ಕೊಳಲು ಸಮಾಧಾನ ಪಡಿಸುವ ವಯಲಿನ್‌ಗಳ ಮೊರೆತಕ್ಕೆ ಮುಂದೆ ವೀಣಾವಾದನವು ಸೇರಿಕೊಳ್ಳುವ ಹೊತ್ತಿನಲ್ಲಿ, ಅಂತರಂಗದ ಪ್ರಶ್ನೆಗಳನ್ನು ಬಾಹಿರ ಪಡಿಸಿದ "ತೊರೆ" ತನ್ನನ್ನು ತಾನೇ ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಕಾಣದ ಕಡಲಿನ ಮೊರೆತ ಒಂದು ಜೋಗುಳವಾಗಬಲ್ಲದೇ? ಇಲ್ಲಿ ಕಡಲಿಗೆ ಮೊರೆತವಿರುವುದನ್ನು ಎಷ್ಟು ದೃಷ್ಟೀಕರಣ ಮಾಡಲಾಗಿದೆಯೋ ಅಷ್ಟೇ ವಿಶೇಷವಾಗಿ "ನೀರಿನ" ಭಾವನೆಯನ್ನು ಒಂದು ಮಗುವಿನ ಮುಗ್ಧತೆಗೆ ಹೋಲಿಸಲಾಗಿದೆ.  ಈ ಜೋಗುಳ "ತೊರೆಯ" ಕಲ್ಪನೆಯಾದರೂ ಅದು ಅದರ ನೇರ ಕಿವಿಗೆ ಬಿದ್ದಿರದೆ ಒಳಗಿವಿಗೆ ಕೇಳುತ್ತಿರುವುದು ವಿಶೇಷ.  ಇಂತಹ ವಿಶೇಷ ಕಲ್ಪನೆಗಳನ್ನು ಹೆಣೆಯಬಲ್ಲ "ತೊರೆ" ತನ್ನ ಕಲ್ಪನೆಯು ಕಡಲನ್ನು ಚಿತ್ರಿಸಿ, ಚಿಂತಿಸಿ ಸುಯ್ಯುತಿರುವುದರ ಬಗ್ಗೆಯೂ ಆಲೋಚಿಸಿಸುವುದನ್ನು ನಾವು ಕಾಣಬಹುದು. (ಸುಯ್ಯುವುದು = ಉಸಿರಾಡುವ, ನಿಟ್ಟುಸಿರಿಡುವ, air of breath, sigh).

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ನನ್ನ ಕಲ್ಪನೆಯು ತನ್ನ ಕಡಲನೆ 

ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 

"ತೊರೆ"ಯ ಸ್ಯುಯ್ಯುತ್ತಿರುವ ಕಲ್ಪನೆಯ ಕಡಲು - ಹೀಗಿರಬಹುದು, ಹಾಗಿರಬಹುದು ಎಂದು ಊಹಿಸಿಕೊಳ್ಳುತ್ತಲೇ, ಅದು ಎಲ್ಲಿರುವುದೋ, ಎಂತಿರುವುದೋ ಎಂದು ಆಶ್ಚರ್ಯವನ್ನು ಹೊರಹಾಕುತ್ತಾ ಮತ್ತೆ ಮೊದಲಿನ ಪ್ರಶ್ನೆಗಳಾದ "ಕಾಣಬಲ್ಲೆನೆ, ಕೂಡಬಲ್ಲೆನೆ ಒಂದು ದಿನ?!" ಎಂದು ತನ್ನ ಹಂಬಲಿಕೆಯನ್ನು ಮುಂದುವರೆಸುತ್ತದೆ.

ಎಲ್ಲಿರುವುದೋ ಅದು ಎಂತಿರುವುದೋ ಅದು 

ನೋಡಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ ॥೧॥

ಕಾಣದ ಕಡಲಿಗೆ ಹಂಬಲಿಸಿದೆ ಮನ.

ಈ ಮೇಲಿನ ಪ್ಯಾರಾದ ಉದ್ದಕ್ಕೂ ಕೇವಲ ಹಿನ್ನೆಲೆಯಲ್ಲಿ ತೊಟ್ಟಿಲನ್ನು ತೂಗಿ ಮಗುವನ್ನು ನಿದ್ರೆ ಮಾಡಿಸುವ ತಾಯಿಯ ಸೂಕ್ಷ್ಮ ಕೋಮಲತೆಯ ಸಂಗೀತವಾಗಿದ್ದ ವಯಲಿನ್‌ಗಳು, ಮತ್ತೆ ಜೀವ ತಳೆದು ಮೇಲಿನ ಕಲ್ಪನೆಗಳಿಗೆ, ಊಹಾಪೋಹಗಳಿಗೆ ದನಿಯಾಗುವ ಹಾಗೆ ಒಂದು ಗಂಭೀರತೆಯನ್ನು ತಂದುಕೊಡುತ್ತವೆ. ಇನ್ನೇನು ಕೊಳಲು ತನ್ನನ್ನು ಈ ಗೊಂದಲದಲ್ಲಿ ತನ್ನನ್ನು ಎಲ್ಲೋ ಕಳೆದುಕೊಂಡು ಬಿಟ್ಟಿತಲ್ಲವೇ ಎಂದು ಯೋಚಿಸುತ್ತಿದ್ದ ಹಾಗೆ, ಸಮಾಧಾನದ ಕೊಳಲು ತುಸು ಉನ್ಮತ್ತತೆಯಿಂದ ತನ್ನ ಇರುವನ್ನು ಪ್ರಕಟಿಸುತ್ತದೆ.

ಇಲ್ಲಿಂದ ಮುಂದೆ, ಮೊದಲಿನ ತವಕ, ಉನ್ಮಾದವಾಗಿ ಪ್ರಕಟಗೊಳ್ಳುತ್ತಾ ಅನೇಕ ಕಡಲಿನ ರೂಪಕಗಳನ್ನು ಮನಸ್ಸಿಗೆ ತಂದುಕೊಳ್ಳುತ್ತದೆ. ಸಾವಿರ ಹೊಳೆಗಳು ತುಂಬಿ ಹರಿದರೂ ಅದು ಒಂದೇ ಸಮನಾಗಿರುವುದಾದರೂ ಹೇಗೆ? ಸುನೀಲವಾದ, ವಿಸ್ತಾರವಾದ, ತರಂಗಗಳಿಂದ ಶೂಭಿತಗೊಂಡ ಗಂಭೀರವಾಗಿರುವ ಅಂಬುಧಿ! ಮುನ್ನೀರಂತೆ, ಅಪಾರವಂತೆ.... ಹೀಗೆ ಅನೇಕ ರೂಪಕಗಳು ಮನದಲ್ಲಿ ಮೂಡುತ್ತಾ ಹೋಗುವುದರ ಜೊತೆಜೊತೆಗೆ ಮತ್ತೆ ಅವೇ ಪ್ರಶ್ನೆಗಳು ಎದುರಾಗುತ್ತವೆ. ಈ ವರೆಗೆ, ಕಾಣಬಲ್ಲೆನೆ ಒಂದು ದಿನ ಎಂದು ಯಾವ ಗರ್ವವಿಲ್ಲದೇ, ವಿನಮ್ರವಾಗಿ ಕೇಳುತ್ತಿದ್ದ ಪ್ರಶ್ನೆಗಳು ಸ್ವಲ್ಪ ಮುಂದೆ ಹೋಗಿ ಬಹಳ ವಿಸ್ತಾರವಾಗಿರುವ ಗಂಭೀರವಾಗಿರುವುದನ್ನು ಚಿತ್ರಿಸಿಕೊಂಡು ಒಂದು ರೂಪಕೊಟ್ಟುಕೊಳ್ಳುವುದರ ಜೊತೆಗೆ "ಅದರೊಳು ಕರಗಲಾರೆನೆ ಒಂದು ದಿನ!" ಎನ್ನುವ ಮಟ್ಟಿಗೆ, ನಾವು ಮೊದಲೇ ಊಹಿಸಿದಂತೆ ಇದು ನೀರಿನದೇ ಪ್ರಶ್ನೆ ಎಂದು ನಿಶ್ಚಿತವಾಗುತ್ತದೆ.

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸುನೀಲ ವಿಸ್ತರ ತರಂಗ ಶೋಭಿತ 

ಗಂಭೀರಾಂಬುಧಿ ತಾನಂತೆ 

ಮುನ್ನೀರಂತೆ, ಅಪಾರವಂತೆ,

ಕಾಣಬಲ್ಲೆನೆ ಒಂದು ದಿನ 

ಅದರೊಳು ಕರಗಲಾರೆನೆ ಒಂದು ದಿನ  ॥೨॥


ಕಾಣದ ಕಡಲಿಗೆ ಹಂಬಲಿಸಿದೆ ಮನ.

ಈ ಪ್ಯಾರಾ ಮುಗಿಯುವಷ್ಟರಲ್ಲಿ, ಮೊರೆಯುವ ವಯಲಿನ್‌ಗಳು ಒಂದು ರೀತಿಯ ಸಮಾಧಾನವನ್ನು ಮೈವೆತ್ತಿಕೊಂಡು, ಮುಂದಿನ ಮುಂದಿನ ಸಾಲುಗಳಲ್ಲಿ "ತೊರೆಯ" ರೋಧನೆ ಇನ್ನಷ್ಟು ಗಾಢವಾಗುವುದನ್ನು ದುಃಖದ ಜೊತೆಗೆ ಕರುಣಾರಸವನ್ನು ಸ್ಫುರಿಸುವುದರ ಮೂಲಕ ಸೂಕ್ಷ್ಮವಾಗಿ ತಿಳಿಸುತ್ತವೆ.  "ನಾನು ಈಗಾಗಲೇ ಹೇಳಿರಲಿಲ್ಲ, ಹೀಗಾಗುತ್ತದೆ ಎಂದು?!" ಎನ್ನುವ ಧ್ವನಿ ವಯಲಿನ್ ನಂತರ ಬರುವ ಕೊಳಲಿನದು.

ಇಲ್ಲಿ "ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು..." ಎಂದಾಗ ಟಟಟಟಟ ಎಂದು ಸಮಯೋಚಿತವಾಗಿ ಕಡ್ಡಿಯ ಬಡಿತ ಕೇಳುತ್ತದೆ.  ಎರಡನೇ ಬಾರಿ ಇದೇ ಸಾಲನ್ನು ಹಾಡಿದಾಗ "ನೀನು ಹೇಳುತ್ತಿರುವುದು ಸರಿ..." ಎಂದು ತಲೆದೂಗಿಸಿ ಮಧ್ಯದಲ್ಲಿ ವಯಲಿನ್‌ಗಳು ಗಾಯಕನ ಧ್ವನಿಯ ಜೊತೆಗೆ ಸಾತ್ ನೀಡುತ್ತವೆ.

ಇಲ್ಲಿ ಜಟಿಲ ಕಾನನದ ಕುಟಿಲ ಪಥಗಳಲ್ಲಿ ಹರಿಯುವ ದಕ್ಷಿಣ ಭಾರತದ ಯಾವುದೇ ತೊರೆಗಳನ್ನಾದರೂ ನಾವು ಊಹಿಸಿಕೊಳ್ಳಬಹುದು.  ಆದರೆ, ಉತ್ತರದ ಗಂಗಾ-ಯಮುನಾ ನದಿಗಳ ಹರಿವು, ಆಳ ಮತ್ತು ವಿಸ್ತಾರಗಳೇ ಬೇರೆ.  ನಮ್ಮ ದಕ್ಷಿಣ ಭಾರತದ ನದಿಗಳು ಕಾನನದ ಕುಟಿಲ ಪಥಗಳಲ್ಲಿ ಸಣ್ಣ ತೊರೆಯಾಗಿ ಹರಿಯುವುದನ್ನು ನಾವು ಊಹಿಸಿದ ಹಾಗೆ, ವರ್ಷವಿಡೀ ತುಂಬ ನೀರಿನಿಂದ ಗಂಭೀರವಾಗಿ ಹರಿಯುವ ಗಂಗಾನದಿಯನ್ನು ನೀವು ನೋಡಿರದಿದ್ದರೆ ನಿಮ್ಮ ಊಹೆಗೂ ನಿಲುಕದ ಕಲ್ಪನೆ ಅದು.  ಇಲ್ಲಿ "ತೊರೆ"ಯ ವಿನಮ್ರತೆಯ ಜೊತೆಜೊತೆಗೆ ಅದರ ಬಗೆಗಿನ ಸ್ವಾಭಾವಿಕವಾದ ಅರಿವು ಕೂಡ ಸ್ಪಷ್ಠವಾಗುತ್ತದೆ.  ಹೀಗಿರುವ ನಾನು, ಹಾಗಾಗಬಲ್ಲೆನೇ? ಎನ್ನುವ ಪ್ರಶ್ನೆ ಈ ಕೆಳಗಿನ ಸಾಲುಗಳಲ್ಲಿ ವಿಶೇಷವಾಗಿ ಮೂಡಿ ಬಂದಿದೆ.  ಎಂದಿಗಾದರೂ ನನ್ನ ಗುರಿಯನ್ನು ತಲುಪಬಲ್ಲೆನೇ? ಕಡಲ ನೀಲಿಯೊಳಗೆ ಒಂದಾಗ ಬಲ್ಲೆನೇ? ಅದರೊಳಗೆ ಕರಗಬಹುದೇ? ಎನ್ನುವ ಸೂಕ್ಷ್ಮ ಪ್ರಶ್ನೆಗಳನ್ನು "ನೀರು" ಅಭಿವ್ಯಕ್ತಗೊಳಿಸುತ್ತಾ ಹೋಗುತ್ತದೆ.  ಸೇರುವುದು ಮತ್ತು ಕರಗುವುದರಲ್ಲಿ ಬಹಳ ವ್ಯತ್ಯಾಸವಿದೆ.  ನೀರಿನಲ್ಲಿ ಉಪ್ಪು ಅಥವಾ ಸಕ್ಕರೆ ಕರಗುತ್ತದೆ, ಆದರೆ ಮರಳು ಸೇರುತ್ತದೆ.  ಕಡಲಿನ ಕಣಕಣಗಳಲ್ಲಿ ತನ್ನನ್ನು ತಾನು ಅಡಕಗೊಳಿಸುವಿಕೆಯನ್ನು "ಕರಗುವುದು" ಎಂದು ಕರೆಯುವುದಾದರೆ, ಕಡಲಿರುವಲ್ಲಿ ಹೋಗುವುದನ್ನು "ಸೇರುವುದು" ಎನ್ನಬಹುದು.

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು 

ಎಂದಿಗಾದರು, ಎಂದಿಗಾದರು, ಎಂದಿಗಾದರೂ 

ಕಾಣದ ಕಡಲನು ಸೇರಬಲ್ಲೆನೇನು

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು

ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು

ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೆ ನಾನು 

ಕರಗಬಹುದೆ ನಾನು, ಕರಗಬಹುದೆ ನಾನು  ॥೩॥

ಕೊನೆಗೆ ಮೂರು ಬಾರಿ "ಕರಗಬಹುದೆ ನಾನು" ಎನ್ನುವುದನ್ನು ಮೂರು ರೀತಿಯ ಭಾವನೆಗಳಲ್ಲಿ ಹಾಡಿರುವುದನ್ನು ನೀವು ಗಮನಿಸಬಹುದು.

ಈ "ತೊರೆ"ಯ ತುಮುಲವನ್ನು ಕೇಳಿದಾಗ, ತಾನು ಈಗಾಗಲೇ ಆ "ಮಹಾನೀರಿನ" ತಾನೂ ಒಂದು ಭಾಗವಾಗಿದ್ದೇನೆ ಎಂದು ಗೊತ್ತಿಲ್ಲವಲ್ಲ ಎಂದು ಸೋಜಿಗವಾಗುತ್ತದೆ.  ಆ ಮಹಾ ನೀರನ್ನು ತಲುಪುವುದೇ ಗುರಿ ಎಂದು ತೋರಿಸಿಕೊಟ್ಟವರು ಯಾರು? ಆ ಮಹಾನೀರಿನ ಕುರಿತ ಕಲ್ಪನೆಗಳು, ರೂಪಕಗಳು ಇದರ ಮನಸ್ಸಿನಲ್ಲಿ ಹೇಗೆ ಹುಟ್ಟಿದವು?

"ಕಾಣದ ಕಡಲಿಗೆ..." ಹಾಡನ್ನು ನಾವು ಯಾವ ಸಂದರ್ಭದಲ್ಲಿ ಕೇಳಲು ಬಯಸುತ್ತೇವೆ, ಅಥವಾ ಯಾವ ಸಂದರ್ಭದಲ್ಲಿ ಈ ಹಾಡಿನ ಹಿನ್ನೆಲೆ ಬಹಳ ಉಚಿತ ಅಥವಾ ತಕ್ಕುದಾದುದು (apt) ಎನ್ನಿಸುತ್ತದೆ?

1951ರಲ್ಲಿ ಶಿವರುದ್ರಪ್ಪನವರು ಒಂದು "ತೊರೆಯ ಹಂಬಲ"ವನ್ನು ಎಷ್ಟು ಸರಳವಾದ ಪದಗಳಲ್ಲಿ ಎಷ್ಟು ಆಳವಾಗಿ ಚಿತ್ರಿಸಿದ್ದಾರೆನಿಸಿ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತದೆ. 1926ರಲ್ಲಿ ಜನಿಸಿದ ಶಿವರುದ್ರಪ್ಪನವರಿಗೆ ಇಪ್ಪತ್ತೈದು ವರ್ಷವಾಗುವಷ್ಟರಲ್ಲಿ ಅದೆಂತಾ ಪ್ರಬುದ್ಧತೆ ಬೆಳೆದಿರಬಹುದು! ಒಬ್ಬ ಕವಿಯಾಗಿ ಸೂಕ್ಷ್ಮ ಸಂವೇದನೆಗಳನ್ನಷ್ಟೇ ಅಲ್ಲದೇ ಒಂದು ಮುಗ್ಧ ತೊರೆಯ ಹಂಬಲದ ಮುಖೇನ ಬಹಳ ದೊಡ್ಡ ಅರಿವನ್ನು ಈ ಕವನದಲ್ಲಿ ತೋರಿಸಿಕೊಟ್ಟಿದ್ದಾರೆ.  ಹುಟ್ಟಿದೆಲ್ಲ ತೊರೆಗಳೂ ಆ ಮಹಾಸಾಗರದ ಅಂಶವೇ.  ಎಲ್ಲ ತೊರೆಗಳೂ ಸಾಗರ ಮುಖಿಯಾಗಿ ಹರಿವ ಹಂಬಲವುಳ್ಳವುಗಳಾದರೂ, end is more important than the means ಎನ್ನುವಂತೆ ಕಾಣದ ಕಡಲಿನ ಕಡೆಗೆ ಹರಿಯುವವೇ.  ಒಮ್ಮೆ ಹರಿದು ಕಡಲನ್ನು ಸೇರಿದ ಮಾತ್ರಕ್ಕೆ ಅದು ಕೊನೆ ಎಂದು ಈ ಮುಗ್ಧ ತೊರೆಗಳು ಅಂದುಕೊಳ್ಳದಿದ್ದರೆ ಸಾಕು. ಅದು ಪ್ರತಿಯೊಂದರ ಕೊನೆಯೂ ಮತ್ತೊಂದರ ಹುಟ್ಟು ಎನ್ನುವಂತೆ, ಮತ್ತೆ ಕಡಲು ಆವಿಯಾಗಿ, ಮೋಡವಾಗಿ, ನೀರಾಗಿ ಹರಿದು ಮತ್ತೆ ಸೇರುತ್ತಲೇ ಇರಬೇಕು, ಎನ್ನುವ ಸಮಾಧಾನ ಈಗಷ್ಟೇ ಕಣ್ಣು ಬಿಟ್ಟು ಹುಟ್ಟಿ ಹರಿಯುತ್ತಿರುವ ತೊರೆಯ ಆಶಯವನ್ನು ಯಾವ ಕಾರಣಕ್ಕೂ ಬಗ್ಗು ಬಡಿಯಲಾರದು.  ಹರಿಯುವುದು ತೊರೆಯ ಸಹಜ ಧರ್ಮ, ಜೊತೆಯಲ್ಲಿ ಅಗಾಧವಾದ ಹಂಬಲವನ್ನು ಹೊತ್ತು ಸಾಗುತ್ತಿರುವುದು ಈ ತೊರೆಯ ವಿಶೇಷವಷ್ಟೇ!

ಈ ಹಾಡನ್ನು ಇಲ್ಲಿ ಕೇಳಬಹುದು.


No comments: