Saturday, June 06, 2020

ಗೋಲ್ಫ್ ಆಡುತ್ತಾರೆ ಬಿಡಿ...ಗೋಲ್ಫ್ ಆಡುತ್ತಾರೆ ಬಿಡಿ

ಉಳ್ಳವರಿಗೇನು ಬಿಡಿ ಸ್ವಾಮಿ ಬಿಸಿಲೇ ನೆರಳೇ 
ಇನ್ಯಾರೋ ಸೃಷ್ಟಿಸಿದ ಕಷ್ಟ ಕಾರ್ಪಣ್ಯಗಳ ಗೋಳೇ
ತಮ್ಮ ತನವನು ಇನ್ಯಾರೋ ಕಲಿತು ಬಿಟ್ಟಾರೇನೋ ಎಂದು
ಛಲ ಬಿಡದ ತ್ರಿವಿಕ್ರಮರು ಎಲ್ಲ ಕಡೆ ಗೋಲ್ಫ್ ಆಡುತ್ತಾರೆ ಬಿಡಿ|

ಸುತ್ತ ಮುತ್ತಲು ಮನಸುಗಳು ಚದುರಿ
ಕನಸುಗಳು ಫಾಲ್ ಎಲೆಗಳ ತರಹ ಉದುರಿ
ನಾವೇ ಹುಟ್ಟಿಸಿದ ರಣರಂಗ ನಮ್ಮನ್ನೇ 
ಅಣಕಿಸುತ್ತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

ಇವರ ತಲೆಯ ಮೇಲಿನ ಟೋಪಿ ಬಿಸಿಲನ್ನು ನಾಚಿಸಿ
ಇವರ ಮುಖಗಳ ಮೇಲಿನ ಮಂದಹಾಸವ ಉಳಿಸಿ
ಕಡಕ್ಕಾಗಿ ಇಸ್ತ್ರಿ ಕಾಣಿಸಿದ ಇವರ ಪೋಷಾಕುಗಳು
ಸೆಟೆದು ನಿಂತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

ನೆಲೆದ ಮೇಲೆ ನಿಂತ ನೀರಿರಲಿ ಇಲ್ಲದಿರಲಿ
ಪ್ರಪಂಚದ ಆಗುಹೋಗುಗಳು ಆಗದೇ ಇರಲಿ
ಇವರ ಶಾಂತಿಗೆಂದೂ ಭಂಗ ಬಾರದು ನಿಂತ ನೆಲವೂ
ಕದಲದೇ ಶಾಂತವಾಗಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

ಆಡುತ್ತಲೇ ಕಾಸು ಮಾಡುವ, ಕಾಸು ಮಾಡಲೆಂದೇ ಆಡುವ
ತಂಪು ಕನ್ನಡಕದೊಳಗಿಂದ ದೂರದ ನೋಟ ನೋಡುವ
ಜಡ ಹಿಡಿದ ಬಿಳಿ ಚೆಂಡು ಎನಿಸಿಕೊಳ್ಳುವ ಗಟ್ಟಿ ಉರುಳನು
ದೂರದ ಗುಂಡಿಯಲಿ ತೂರುವ ಗಂಡಸರು ಗೋಲ್ಫ್ ಆಡುತ್ತಾರೆ ಬಿಡಿ|

ಬಡವರೆಲ್ಲೂ ಸುತ್ತ ಸುಳಿಯದ ಶ್ರೀಮಂತರ ಆಟವಿದು
ದುಡ್ಡು ಹೆಚ್ಚಾದಂತೆ ಚೆಂಡಿನ ಗಾತ್ರ ಚಿಕ್ಕದಾಗುವ ಸೂತ್ರವಿದು
ಯಾರೂ ಹೇಗಾದರೂ ಇರಲಿ ಅವರವರ ನಿರ್ಲಿಪ್ತತೆಯ ಮುಸುಕಿನಲಿ
ಸುಮ್ಮಿನಿರುವ ಪಾಠ ಉರು ಹೊಡೆದ ಸೋಗಿನಲಿ ಗೋಲ್ಫ್ ಆಡುತ್ತಾರೆ ಬಿಡಿ|

ಇವರು ನಡೆದ ದಾರಿಯಲ್ಲಿ ಹುಲ್ಲು ಬೆಳೆಸಿ ನೀರು ಕುಡಿಸಲು ಒಬ್ಬ
ಆಡುವುದು ಇವರೇ ಕಂಡುಕೊಂಡ ಪರಿ ಕರಗಿಸಲು ಕೊಬ್ಬ
ತಗ್ಗಿದ್ದಲ್ಲಿ ಬಂದು ಸೇರುವ ಚೆಂಡಿನ ಹಾಗೆ ಹಣಬಂದು ಕೂಡುತಿರುವಾಗ
ಇನ್ನೇನು ತಾನೇ ಮಾಡಬಲ್ಲರು? ಗೋಲ್ಫ್ ಆಡುತ್ತಾರೆ ಬಿಡಿ|

Monday, June 01, 2020

ಕೆಲಸಕ್ಕೆ ಜನರಿಲ್ಲ!



ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತುಲನೆ ಮಾಡಿ ನೋಡಿದಾಗ, ಹಿಂದಿನ ತಲೆಮಾರಿನವರು ಕಷ್ಟ ಜೀವಿಗಳು ಅನ್ನಿಸೋದು ಸಹಜ.  ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದ ಹಾಗೆ ನಾಗರೀಕತೆ, ನಗರೀಕರಣ, ಜನರ ವಲಸೆ ಮೊದಲಾದವು ಬದಲಾಗುತ್ತಿರುತ್ತವೆ.  ನಮ್ಮ ಪೂರ್ವಜರು ತಮ್ಮ ಇಡೀ ಜೀವಮಾನದಲ್ಲಿ ಪ್ರಯಾಣಿಸಿದ ದೂರವನ್ನು ನಾವು ಒಂದು ತಿಂಗಳಲ್ಲೇ ಪ್ರಯಾಣಿಸಿ ಅವರನ್ನು ಮೀರಿಸಬಲ್ಲೆವು.  ಆದರೆ,  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೆಚ್ಚಾಗುತ್ತಿರುವ ಅಂತರವನ್ನು ಗ್ರಹಿಸಲು ಈ ಕೆಳಗಿನ ಎರಡು ಸೂಕ್ಷ್ಮಗಳನ್ನು ಗಮನಿಸಿ:


1. ಹಿಂದೆಲ್ಲ ಕೆಲಸಗಾರರು ಸಿಗುತ್ತಿದ್ದರು, ಇಂದು ಕೆಲಸಗಾರರು ಸಿಗುವುದಿಲ್ಲ.  ಸಿಕ್ಕರೂ ಸಹ "ನಿಯತ್ತಿ"ನಿಂದ ಮೈ ಬಗ್ಗಿಸಿ ದುಡಿಯುವುದಿಲ್ಲ.  ಕಡಿಮೆ ಕೆಲಸಕ್ಕೆ ಹೆಚ್ಚು ಬೆಲೆ ಕೇಳುತ್ತಾರೆ.

2.  ಎಲ್ಲರೂ ಓದಿದವರಾಗಿ ಮೇಲ್ಮಟ್ಟದ ಕೆಲಸಗಳನ್ನೇ ಯಾಚಿಸುವುದಾದರೆ, ಉಳಿದೆಲ್ಲ ಕೆಲಸಗಳನ್ನು ಯಾರು ಮಾಡುವವರು? ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ರಸ್ತೆ ಗುಡಿಸಲು, ನೆಲ ಒರೆಸಲು, ಬಟ್ಟೆ ಒಗೆಯಲು, ಮನೆ ಕಟ್ಟಲು, ಮರಳು ಹೊರಲು, ಕಟ್ಟಿಗೆ ಒಡೆಯಲು, ಸುಣ್ಣ-ಬಣ್ಣ ಹಚ್ಚಲು, ತೆಂಗಿನಕಾಯಿ ಕೊಯ್ಯಲು, ಮನೆ ಕೆಲಸ ಮಾಡಲು... ಕೆಲಸಕ್ಕೆ ಯಾರು ಸಿಗುತ್ತಾರೆ?

***



ಕಳೆದ ಇಪ್ಪತ್ತು ವರ್ಷಗಳಲ್ಲಿ ಯು.ಎಸ್.ಎ. ಒಂದು ದೇಶದಲ್ಲಿಯೇ (ಒಂದು ಅಧ್ಯಯನದ ಪ್ರಕಾರ) ಸುಮಾರು 50 ಲಕ್ಷ ಮ್ಯಾನ್ಯುಫ್ಯಾಕ್ಚರಿಂಗ್ ಕೆಲಸಗಳು ಕಾಣೆಯಾದವು.  60 ರ ದಶಕದಲ್ಲಿ ಸುಮಾರು ನೂರಕ್ಕೆ 25% ಜನರು ಮ್ಯಾನ್ಯುಫ್ಯಾಕ್ಚರಿಂಗ್‌ನಲ್ಲಿ ತೊಡಗಿಕೊಂಡಿದ್ದರೆ, ಇಂದು ಅದರ ಪ್ರಮಾಣ ಸುಮಾರು 5% ಮಟ್ಟಿಗೆ ಇಳಿದಿದೆ.  ಒಂದು ಕಾಲದಲ್ಲಿ Ford ಅಂಥ ಕಂಪನಿಗಳು ತಮ್ಮ supply chainನಲ್ಲಿ ಬರುವ ಎಲ್ಲ ವಿಧವಾದ ಪರಿಕರ/ವಸ್ತುಗಳನ್ನು ತಮ್ಮಷ್ಟಕ್ಕೆ ತಾವೇ ತಯಾರಿಸುತ್ತಿದ್ದರು.  ಆದರೆ, ಈಗ ಅವರ ಮುಖ್ಯವಾದ components (such as engine parts) ಸಹ ಬೇರೆ ಕಡೆಯಿಂದ ಆಮದಾಗುವ ಪರಿಸ್ಥಿತಿ ಇದೆ.

ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿರುವ ಕೆಲಸಗಾರರು ಅಮೇರಿಕದಲ್ಲಿ ಒಂದು ಘಂಟೆಗೆ 20 ಡಾಲರ್‌ ಅಷ್ಟುಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.  ಇದು, ಇಲ್ಲಿನ ಕನಿಷ್ಠ ವೇತನದ ಮೂರು ಪಟ್ಟು ಹೆಚ್ಚು ಎಂದುಕೊಳ್ಳಬಹುದು.  ಅದೇ ಗುಣಮಟ್ಟದ ವಸ್ತುಗಳು, ಹೊರದೇಶದಿಂದ ಕಡಿಮೆ ಬೆಲೆಗೆ ಸಿಗುವಂತೆ (ವಿಶೇಷವಾಗಿ ಚೀನಾದಿಂದ) ಆಮದಾಗುವ ಪರಿಸ್ಥಿತಿ ಇರುವುದಾದರೆ ಇಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಹೇಗೆ ಉಳಿಯುತ್ತದೆ? ಹೇಗೆ ಬೆಳೆಯುತ್ತದೆ?

***

ಸಾಮಾನ್ಯ ಜನರ ಅನುಕೂಲ: ತೊಂಭತ್ತರ ದಶಕದ ಕೊನೆಯಲ್ಲಿ ಭಾರತದ ಬ್ಯಾಂಕುಗಳಿಗೆ ನಿಧಾನವಾಗಿ ಕಂಪ್ಯೂಟರುಗಳು ನುಸುಳತೊಡಗಿದಾಗ ನಮ್ಮನಮ್ಮಲ್ಲಿ ವಾದ-ವಿವರಣೆಗಳು ನಡೆಯುತ್ತಿದ್ದವು.  ಒಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ಕೆಲಸವನ್ನು ನುಂಗಿ ಹಾಕುತ್ತವೆ ಎಂದೂ, ಇನ್ನೊಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ದಕ್ಷತೆಯನ್ನೂ (efficiency), ಜನರ ಕೆಲಸದ ನಿಖರತೆಯನ್ನೂ (accuracy) ಹೆಚ್ಚಿಸುತ್ತವೆ ಎಂದೂ ವಾದವನ್ನು ಮಂಡಿಸುತ್ತಿದ್ದೆವು.  ಆಗಿನ ಕಾಲವೆಲ್ಲ ದಪ್ಪನಾದ ಲೆಡ್ಜರುಗಳ ಕಾಲ, ಎಲ್ಲಿ ನೋಡಿದರೂ ಅಲ್ಲಿ ಪೇಪರುಗಳದ್ದೇ ದರಬಾರು, ಅವುಗಳದ್ದೇ ಕಾರುಬಾರು.

ನಂತರ ಕಂಪ್ಯೂಟರುಗಳು ನಿಧಾನವಾಗಿ ಎಲ್ಲ ಕಡೆಗೆ ಹರಡಿಕೊಂಡ ಮೇಲೆ ನಾವೆಲ್ಲರೂ ಅದರ ಅನುಕೂಲವನ್ನು ಪಡೆದಿದ್ದೇವೆ.  ಆದರೆ, ಕಂಪ್ಯೂಟರುಗಳು ಬಂದ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡಿಮೆ ಏನೂ ಆಗಿಲ್ಲ.  ಬ್ಯಾಂಕುಗಳು ಬೆಳೆದಂತೆ, ಬ್ರ್ಯಾಂಚುಗಳು ಹೆಚ್ಚಾದವು, ಎಟಿಎಮ್ ಮಿಷೀನುಗಳು ಎಲ್ಲ ಕಡೆ ತಲೆ ಎತ್ತಿದವು.  ಮುಂದೆ ಕ್ರೆಡಿಟ್ ಕಾರ್ಡ್, ನಂತರದಲ್ಲಿ ಆನ್‌ಲೈನ್ ಪೇಮೆಂಟ್, ಪೇಟಿಎಮ್ ನಂತಹ ಸೇವೆಗಳು ಬಂದು ಹಣ ವಿಲೇವಾರಿ ತ್ವರಿತವಾಯಿತು.  ಹಣದುಬ್ಬರ (inflation) ಹೆಚ್ಚಾದಂತೆ ಪ್ಯಾಂಟ್ ಜೇಬಿನಲ್ಲಿ ತೆಗೆದುಕೊಂಡು ಹೋಗುವ ಹಣ ಯಾವ ಕೆಲಸಕ್ಕೂ ಸಾಕಾಗದೇ ರಾಶಿ ರಾಶಿ ಹಣವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದಿಲ್ಲಿಗೆ ವಹಿವಾಟು ನಡೆಸುವಂತಾಯಿತು.  ಈ ಅನುಕೂಲಗಳೆಲ್ಲ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಅವಿಷ್ಕಾರಗಳಿಂದಲೇ ಸಾಧ್ಯವಾದದ್ದು.

ಸಿರಿವಂತರ ನೋವು: ಯಾವುದಾದರೂ ಹಳೆಯ ಕನ್ನಡ ಸಿನಿಮಾಗಳನ್ನೋ ಅಥವಾ ಫೋಟೋಗಳನ್ನೋ ನೀವು ನೋಡಿದರೆ ಒಂದಂತೂ ನಿಮಗೆ ಗ್ಯಾರಂಟಿಯಾಗುತ್ತದೆ.  ನಾವು ನೋಡಿದ ಎಂಭತ್ತರ ದಶಕದಲ್ಲಿ ಟ್ರಾಫಿಕ್ ಜಾಮ್ ಅನ್ನೋ ಪರಿಸ್ಥಿತಿ ಇರುತ್ತಲೇ ಇರಲಿಲ್ಲ.  ಊರಿನಲ್ಲಿ ಕೆಲವೇ ಕೆಲವು ಮನೆಗಳಿಗೆ ಫೋನ್ ಕನೆಕ್ಷನ್ ಇರುತ್ತಿತ್ತು.  ದೂರದ ಊರುಗಳಿಂದ ಟ್ರಂಕ್ ಕಾಲ್ ಮಾಡಿ ಕರೆ ಮಾಡಬೇಕಿತ್ತು.  ಅದರ ಜೊತೆಗೆ ಊರಿನಲ್ಲಿ ನಿಗದಿತ ಸಮಯಕ್ಕೆ ಹೋಗಿ ಬರುತ್ತಿದ್ದ ಬಸ್ಸುಗಳು, ಆಗಾಗ್ಗೆ ಬಂದು ಹೋಗುತ್ತಿದ್ದ ಲಾರಿಗಳನ್ನು ಬಿಟ್ಟರೆ ಕೇವಲ ಶ್ರೀಮಂತರ ಮನೆಯ ಕಾರುಗಳಿಗೆ ರಸ್ತೆಗಳು ಮೀಸಲಾಗಿದ್ದವು. ಕೇವಲ ಹಳ್ಳಿಗಳಷ್ಟೇ ಏಕೆ, ಜಿಲ್ಲಾ ಕೇಂದ್ರಗಳೂ, ಬೆಂಗಳೂರಿನಲ್ಲೂ ಸಹ ಅಷ್ಟೊಂದು ಕಾರುಗಳು ಓಡಾಡುತ್ತಿರಲಿಲ್ಲ.  ಕಾರು ಇಟ್ಟುಕೊಂಡವರಿಗೆ ಯಾವತ್ತೂ ಪಾರ್ಕಿಂಗ್ ಸಮಸ್ಯೆ ಬಂದುದನ್ನು ನಾನು ನೋಡಿಲ್ಲ, ಕೇಳಿಲ್ಲ.

ಈಗ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾರು ಇದೆ.  ಕೆಲವೊಂದು ಮನೆಗಳಲ್ಲಿ ಕಾರುಗಳನ್ನು ನಿಲ್ಲಿಸಲು ಜಾಗವಿರದಿದ್ದರೂ ಅವರ ಹತ್ತಿರ ಕನಿಷ್ಠ ಒಂದಾದರೂ ಕಾರು ಇರುವುದು ಸಾಮಾನ್ಯವಾಗಿದೆ.  ದೇಶದ ಉದ್ದಗಲಕ್ಕೂ ಇಂದು ಕಾರುಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.  ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ನಲವತ್ತು ವರ್ಷಗಳಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ವಾಹನಗಳ ಪ್ರಮಾಣ 6000% ದಷ್ಟು ಏರಿರುವುದನ್ನು ಕಾಣಬಹುದು.

ಊರು-ಕೇರಿಯ ರಸ್ತೆಗಳು ಕೇವಲ ಸಿರಿವಂತರಿಗೆ ಮಾತ್ರ ಎನ್ನುವಂತಿದ್ದ ಒಂದು ಕಾಲಕ್ಕೂ ಈಗಿನ ಎಲ್ಲರೂ ರಸ್ತೆ ಮೇಲೆ ತಮ್ಮ ಸವಾರಿಯನ್ನು ಚಲಾಯಿಸುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಇದರಿಂದ ಸಾಮಾನ್ಯ ಜನರಿಗಂತೂ ಅನುಕೂಲವೇ ಸರಿ, ಆದರೆ ಆಗಿನ ಸಿರಿವಂತರು ತಮ್ಮ ವಿಶೇಷವಾದ ಸೌಲಭ್ಯವನ್ನು ಕಳೆದುಕೊಂಡರು ಎನ್ನುವುದು ನನ್ನ ಅಭಿಪ್ರಾಯ.

***
ಇಂದಿನ ಚಿಕ್ಕದಾದ ಕುಟುಂಬಗಳಲ್ಲಿ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಲ್ಲಿ ಮೆಷೀನುಗಳ ಪಾತ್ರ ಇರುವುದು ಹಿರಿದಾಗಿದೆ.  ನಗರದ  ಹೆಚ್ಚಿನ ಮನೆಗಳಲ್ಲಿ ಇಂದು ವಾಷಿಂಗ್ ಮೆಷೀನ್ ನುಸುಳಿದೆ.  ಸೋಲಾರ್ ಪವರ್‌ನಿಂದ ನೀರು ಕಾಯಿಸಿಕೊಳ್ಳುವ ಅನೇಕರು ಸ್ವಿಚ್ ಹಾಕಿದರೆ ಬಿಸಿ ನೀರು ಪಡೆಯುವ ಸ್ಥಿತಿಯನ್ನು ಕಾಣಬಹುದು.  ನೆಲವನ್ನು ಗುಡಿಸಲು, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಪ್ರತಿದಿನ ಕೆಲಸಕ್ಕೆ ಬಂದು ಹೋಗುವವರು ಸಿಗುತ್ತಾರೆ.  ತಿಂಗಳಿಗೆ ಇಷ್ಟು ಎನ್ನುವ ನಿಗದಿತ ಸಂಬಳಕ್ಕೆ ಕೆಲಸ ಮಾಡುವ ಇವರುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ವಟಾರದ ಒಂದಿಷ್ಟು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ.  ಹೆಚ್ಚಿನವರಿಗೆ ಒಳ್ಳೆಯ ಉತ್ಪನ್ನವೂ ಇರುವುದು ಕೇಳಿ ಬರುತ್ತದೆ.  ಇನ್ನು ಮನೆಯ ಚಿಕ್ಕ-ಪುಟ್ಟ ಕೆಲಸಗಳ ಜೊತೆಗೆ ಮನೆ ಮಂದಿಗೆ ಅಡುಗೆ ಮಾಡಿಕೊಂಡು ಹೋಗುವುದು ಮನೆಯವರ ಕೆಲಸ.  ಅದರಲ್ಲೂ ಸಹ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ತೊಂದರೆ ಹೆಚ್ಚು, ಎಲ್ಲದಕ್ಕೂ ಗಂಡ ಹೆಂಡತಿ ಹೊಂದಿಕೊಂಡು ಹೋಗಬೇಕಾಗುತ್ತದೆ.  ಇನ್ನು ಮನೆಯಲ್ಲಿ ಹಿಂದಿನ ತಲೆಮಾರಿನ ಹಿರಿಯರು ಯಾರಾದರೂ ಇದ್ದರೆ, ಅಡುಗೆಯ ಕೆಲಸದಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.  ನೂರು ಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ಎಲ್ಲರ ಮನೆಯೂ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲಾಗದು.  ಆದರೆ, ಸೀನಿಯರ್ ಸಿಟಿಜನ್ಸ್ ಜನಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ವ್ಯವಸ್ಥೆ ಅಷ್ಟೊಂದು ಮುಂದುವರೆದ ಹಾಗಿಲ್ಲ.  ಇವತ್ತಿಗೂ ಹೆಚ್ಚಿನ ವೃದ್ಧ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಂಬಿಕೊಂಡಿರುವುದು ಕಂಡು ಬರುತ್ತದೆ.  ಇಂಥವರ ಪೋಷಣೆಗೆ ಅದರಲ್ಲೂ ಖಾಯಿಲೆ ಬಿದ್ದಿರುವ ಹಿರಿಯರಿಗೆ ದಿನನಿತ್ಯದ ನೆರವಿಗೆ ಕೆಲಸಗಾರರು ಸಿಗುತ್ತಿಲ್ಲ.

ಸೀನಿಯರ್ ಸಿಟಿಜನ್ಸ್‌ಗಳನ್ನು ನೋಡಿಕೊಳ್ಳುವುದು ಬಹಳ ಸೂಕ್ಷ್ಮ ಹಾಗೂ ಕಷ್ಟದ ಕೆಲಸ.  ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಖಾಯಿಲೆ ಬಾಧಿಸುತ್ತಿರುತ್ತದೆ.  ಅವರ ಪ್ರಿನ್ಸಿಪಲ್ಸ್, ಅವರಿಗೆ ಬೇಕಾದ ಊಟ-ತಿಂಡಿ ಅಗತ್ಯಗಳು, ಅವರ ಮನರಂಜನೆ, ಇತ್ಯಾದಿ ಇವೆಲ್ಲವೂ ಬೇರೆಯ ಒಂದು ಆಯಾಮವನ್ನೇ ಪಡೆದುಕೊಂಡಿರುತ್ತವೆ.  ಹೀಗಿರುವಾಗ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಗಂಭೀರ ಸ್ವರೂಪದ ಖಾಯಿಲೆ ಏನಾದರೂ ಬಂದರೆ, ಅವರನ್ನು ಸಂತೈಸುವುದು ಬಹಳ ಕಷ್ಟದ ವಿಷಯವಾಗುತ್ತದೆ... ಈ ನಿಟ್ಟಿನಲ್ಲಿ ಭಾರತದುದ್ದಕ್ಕೂ ವೃದ್ಧಾಶ್ರಮಗಳು ಅಷ್ಟೊಂದು ಬೆಳೆಯದಿದ್ದರೂ ಇನ್ನು ಮುಂದೆ ಬೆಳೆಯುವುದನ್ನು ಊಹಿಸಬಹುದು. 

ಆದರೆ, ಇತ್ತೀಚೆಗೆ ಮನೆಗಳಲ್ಲಿ ಕೆಲಸ ಮಾಡಲು ಸಿಗುವವರು "ನಿಯತ್ತಿ"ನಿಂದ ಕೆಲಸ ಮಾಡೋದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬರುತ್ತವೆ.  ಯುವ ಜನತೆ ಯಾವಾಗಲೂ ತಮ್ಮ ತಮ್ಮ ಮೊಬೈಲು ಫೋನುಗಳಿಗೆ ಶರಣಾಗಿರುತ್ತಾರೆ.  ಹಿಂದಿನ ಕಾಲದವರ ಹಾಗೆ ನಿಯತ್ತಿನಿಂದ ನಡೆದುಕೊಳ್ಳೋದಿಲ್ಲ, ಕೆಲಸಗಳ್ಳರು, ಯಾವಾಗಲೂ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆಯೇ ಹೊರತು ವಹಿಸಿಕೊಂಡ ಕೆಲಸವನ್ನು ಮೈಬಗ್ಗಿಸಿ ಮಾಡೋದಿಲ್ಲ.  ಹೀಗೆ ಅನೇಕ ಹೇಳಿಕೆಗಳನ್ನು ಕೇಳುವುದು ಸಾಮಾನ್ಯವಾಗಿದೆ.  ಎಲ್ಲರೂ ಐಶಾರಾಮಿ ಬದುಕಿನ ಕನಸನ್ನು ಕಂಡು ಅದರಲ್ಲೇ ಬದುಕುವ ಹಾಗಿದ್ದರೆ, ಈ ಐಶಾರಾಮಿತನಕ್ಕೆ ಅರ್ಥವೂ ಬರೋದಿಲ್ಲ. ಜೊತೆಗೆ ಅದು ಸೃಷ್ಟಿಸುವ "ಟ್ರಾಫಿಕ್ ಜಾಮ್" ಕೂಡಾ ಭೀಕರವಾಗಿರುತ್ತದೆ.  ಊರಿನಲ್ಲಿ ಕೆಲವೇ ಕೆಲವು ಕಾರುಗಳಿದ್ದಾಗ ಹೇಗೆ ಒಂದು ವ್ಯವಸ್ಥೆ ಚಾಲನೆಯಲ್ಲಿತ್ತೋ, ಅದೇ ವ್ಯವಸ್ಥೆ ಊರಿನ ಪ್ರತಿಯೊಬ್ಬರೂ ಸಮತೋಲಿತದವರಾದಾಗ ಸಂತುಲನ (equilibrium) ವನ್ನು ಕಳೆದುಕೊಳ್ಳುತ್ತದೆ.  ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡಲು ಯಾರೂ ಸಿಗದೇ ಹೋಗುವ ಪರಿಸ್ಥಿತಿ ಬರುತ್ತದೆ.  ಕಿತ್ತ ಚಪ್ಪಲಿಗಳನ್ನು ದುರಸ್ತಿ ಮಾಡಿಸುವುದಾಗಲೀ, ಬಟ್ಟೆಯನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುವುದಾಗಲೀ ಕಡಿಮೆಯಾಗಿ ಎಲ್ಲರೂ ದಿನದಿನಕ್ಕೂ "ಹೊಸ"ತನ್ನು ನಂಬಿಕೊಳ್ಳುವ ಗ್ರಾಹಕ ಪ್ರವೃತ್ತಿ (consumerism) ಬೆಳೆಯುತ್ತದೆ.  ಅದರಿಂದ ಎಕಾನಮಿ ದೊಡ್ಡದಾಗುತ್ತದೆ ಎಂದು ಎಷ್ಟೋ ಜನ ತಮ್ಮ ತತ್ವಗಳನ್ನು ಮಂಡಿಸಬಹುದು.  ಆದರೆ, ಅದರಿಂದ ನಾವು ಅನೇಕ ವ್ಯತಿರಿಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.

ಹೀಗೆ ತಲೆಮಾರಿನಿಂದ ತಲೆಮಾರಿಗೆ ಪ್ರತಿಯೊಬ್ಬರೂ "ಸಿರಿವಂತ"ರಾಗುತ್ತಲೇ ಇದ್ದಾರೆ... ಆದರೆ, ಸಿರಿವಂತರೆನ್ನುವುದು ಒಂದು ತುಲನಾತ್ಮಕ ಹಣೆಪಟ್ಟಿ ಅಷ್ಟೇ.

Tuesday, May 26, 2020

ಮತ್ತೆ ಬಾ ಕರೋನಾ...


ಇಂದಲ್ಲ ನಾಳೆ ನಮ್ಮವರಿಗೆಲ್ಲ ತಿಳಿ ಹೇಳುವುದಕ್ಕಾಗಿ
ಇಂದು ತಿಳಿಯದ ಮಂದಿಗೆ ತಿದಿಯ ತಿವಿದು
ಬಗ್ಗಿದರೂ ಬಾಗದ ಜನರ ನಡುವಿಗೆ ಒದೆದು
ಸರಳ ಸೂತ್ರವನು ಎಲ್ಲರಲ್ಲೂ ಅಳವಡಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ವಿಶ್ವ ಜೀವ ಸಂಕುಲಗಳನ್ನೆಲ್ಲ ಕಡೆಗಣಿಸಿ ದುಡಿಸಿದ್ದಕ್ಕಾಗಿ
ಹಡೆದವ್ವನ ಕೆಡವಿ ಸಲಹದವರಿಗೆ ನೀರು ಕುಡಿಸಿ
ಅವರವರ ಹೊಟ್ಟೆಯಲ್ಲಿರುವ ವಿಷವ ಕಕ್ಕಿಸಿ
ಎಲ್ಲರೆದೆಯೆಲ್ಲೂ ಸಾವಿನ ಭಯವ ಹುಟ್ಟಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ಜೀವ ಜಂತುಗಳ ಸಂಹರಿಸಿ ತಮ್ಮ ಸಂತತಿ ಬೆಳೆಸಿದ್ದಕ್ಕಾಗಿ
ಮುಗಿಲಿನಲ್ಲೂ ತಮ್ಮ ಕಚಡವನ್ನು ಹರಡುವ
ನೆಲದಾಳವನ್ನು ಬಗೆದು ತಮ್ಮ ದಾಹ ತೀರಿಸಿಕೊಳ್ಳುವ
ನಮಗೆ ಕ್ಷುದ್ರ ಜೀವಿಗಳಿಂದ ಬದುಕಿನ ಪಾಠ ಕಲಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ವಸುಧೈವ ಕುಟುಂಬದ ನಿಜ ಮೌಲ್ಯ ಬಿತ್ತರಿಸುವುದಕ್ಕಾಗಿ
ಕಣ್ಣೀರಲ್ಲಿ ಕೈ ತೊಳೆಯುವರಿಗೆ ಸಮತೆಯ ಸಾರುತ
ಹೊಟ್ಟೆಯ ಬೆಂಕಿಯನು ನೀಗಿಸಲು ಹಾರಾಡುತ
ಅಸಮಾನತೆಯಲ್ಲಿ ತೂಗುವವರ ಸಮಾಧಾನದ ಹಾಡಾಗಿ...

ಮತ್ತೆ ಬಾ ಕರೋನಾ...
ಎಲ್ಲವನೂ ಸ್ತಬ್ಧ ಸ್ತಂಬೀಭೂತಗೊಳಿಸುವುದಕ್ಕಾಗಿ
ಓಡುವುದನ್ನೇ ಬದುಕಾಗಿಸಿಕೊಂಡವರ ತುಸು ನಿಲ್ಲಿಸಿ
ಜೀವ ಜಲ ವಾಯು ಸುತ್ತಲಿನ ಪ್ರಕೃತಿಯನ್ನು ಲಾಲಿಸಿ
ಎಲ್ಲರಿಗೂ ಮತ್ತೆ ಮತ್ತೆ ಬುದ್ಧಿ ಹೇಳುವುದಕ್ಕಾಗಿ|

ಮತ್ತೆ ಬಾ ಕರೋನಾ...  ಮತ್ತೆ ಬಾ ಕರೋನಾ...

Thursday, May 21, 2020

ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ

ನಾವು ತೊಂಭತ್ತರ ದಶಕದ ಕೊನೆಯ ದಿನಗಳಲ್ಲಿ ನಮ್ಮ ಗ್ರಹಚಾರ ನೆಟ್ಟಗಿದ್ದುದರಿಂದ ಒಂದು ರೀತಿಯಲ್ಲಿ ಕೆಂಪು ಬಸ್ಸಿಗೆ ಕೈ ಮಾಡಿ ಹತ್ತಿ ಸಾರಾಸಗಟು Technology ಎನ್ನುವ ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಂಥವರು.  ನಮಗೆಲ್ಲ ಆಗ ಬಹಳ ಡಿಮ್ಯಾಂಡು!  ನಮಗೆಲ್ಲ ನಮ್ಮ ಜೇಬುಗಳಲ್ಲಿ ಕನಿಷ್ಠವೆಂದರೆ ಮೂರು ಸಾವಿರ ಡಾಲರ್‌ಗಳಷ್ಟು ಮೊತ್ತದ ಟ್ರಾವೆಲರ್ಸ್ ಚೆಕ್ ಅನ್ನು ಕೊಟ್ಟು ಕಳಿಸುವುದರ ಜೊತೆಗೆ ಏರ್‌ಪೊರ್ಟ್‌ನಲ್ಲಿ ಪಿಕ್‌ಅಪ್ ಮಾಡೋದರಿಂದ ಹಿಡಿದು ನಮಗೆಲ್ಲ ತಲೆಗೊಂದರಂತೆ Homestead village ನಲ್ಲಿ ರೂಮ್ ಸಹ ಬುಕ್ ಮಾಡಿದ್ದರು.  ಆ ಸಮಯದಲ್ಲಿ ಯಾವುದೇ ಬ್ರಾಂಚ್‌ನ ಇಂಜಿನಿಯರುಗಳಾದರೂ ಇಲ್ಲಿ ಬರಬಹುದಿತ್ತು... ನಮ್ಮ ಜೊತೆಯಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್ ಇಂಜಿನಿಯರ್ಸ್ ಸಹ ಇದ್ದರು.

ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!

ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು.  ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು.  ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.

"ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು.  ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ.  ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು.  ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು.  ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು.  ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು.  ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.

ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು.  ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು.  ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ.  ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು.  ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ?  ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು?  ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.

ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.

ಹೀಗಿರುವಾಗ... ಕುಮರೇಸನ್‌ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!"  ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!

ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್‌ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ.  ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.

ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್‌ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು.  ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.

ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು!  ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?

ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ.  ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

Tuesday, May 19, 2020

ಯಾರನ್ನ ನಂಬುವುದು? ಬಿಡುವುದು?

ಈಗಿನ ಕಾಲದ ನ್ಯೂಸ್ ಚಾನೆಲ್‌ಗಳನ್ನ ನೋಡ್ತಾ ಇದ್ರೆ ಒಂದು ರೀತಿ ವಾಕರಿಕೆ ಬಂದಂಗೆ ಆಗೋಲ್ಲ?  ಒಂದು ಕಾಲದಲ್ಲಿ ಎಷ್ಟೊಂದು ಚೆನ್ನಾಗಿ ನಾವು ವಿಶ್ವದ ಆಗುಹೋಗುಗಳನ್ನು ಫಾಲೋ ಮಾಡುತ್ತಿದ್ದೆವು.  ರೇಡಿಯೋ ಇಟ್ಟುಕೊಂಡು BBC, VoA, SLBC, AIR ಮೊದಲಾದ ಸ್ಟೇಷನ್ನುಗಳನ್ನು ತಿರುಗಿಸಿ ನೋಡುತ್ತಿದ್ದೆವು.  ಆಗಿನ ಕಾಲದಲ್ಲಿ ಮ್ಯಾಗಜೀನುಗಳು, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದುತ್ತಿದ್ದೆವು.  ಆಗಿನ ಕಾಲದ ಜರ್ನಲಿಸಮ್ ಅಂದ್ರೆ ಅದರಲ್ಲಿ ತಿರುಳಿತ್ತು, ಹುರುಳಿತ್ತು, ಎಲ್ಲಕ್ಕಿಂತ ಮುಖ್ಯವಾಗಿ ನ್ಯೂಸ್ ಇತ್ತು.  ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡುವ ಪ್ರಕ್ರಿಯೆ ಇತ್ತು.  ಓದುಗರನ್ನು, ಕೇಳುಗರನ್ನು ಪತ್ರಿಕಾ ಸಿಬ್ಬಂದಿ ಸೀರಿಯಸ್ ಆಗಿ ಪರಿಗಣಿಸುತ್ತಿದ್ದರು, ಗಮನಿಸುತ್ತಿದ್ದರು.

ಇದನ್ನು ಬೇಕಾದ್ರೆ, ನಾಸ್ಟಾಲ್ಜಿಯಾ ಎಂದು ಕರೆದು ಬದಿಗೆ ತಳ್ಳಬಹುದು, ಆದರೆ ಇಂದಿನ ನ್ಯೂಸ್‌ ನೆಟ್‌ವರ್ಕ್‌ಗಳಲ್ಲಿ  ಯಾವುದೇ ಹುರುಳಿದ್ದಂತೆ ನನಗನ್ನಿಸೋದಿಲ್ಲ.  ನ್ಯೂಸ್‌ಗಿಂತ ಹೆಚ್ಚಾಗಿ ಒಪಿನಿಯನ್ (Op Ed) ನಿಂದ ಎಲ್ಲ ಅಂಕಣಗಳು ತುಂಬಿರುತ್ತವೆ.  ಕೆಲವೊಂದು ನ್ಯೂಸ್ ಪೇಪರುಗಳು, ಚಾನೆಲ್ಲುಗಳಂತೂ ಆಯಾ ಪೊಲಿಟಿಕಲ್ ಮ್ಯಾನಿಫೆಸ್ಟೋ ಅನ್ನು ಸಪೋರ್ಟ್ ಮಾಡುತ್ತಾ, ತಮ್ಮ ರಾಜಕೀಯ/ದುರೀಣರ ಮೌತ್‌ಪೀಸ್ ಆಗಿ ಬಿಟ್ಟಿವೆ.

***
ನಾನು ಈ ಕೊರೋನ ಬೆಳವಣಿಗೆಯನ್ನು ಪ್ರತಿದಿನ ರಾತ್ರಿ ಒಂಭತ್ತು ಘಂಟೆಗೆ ಪ್ರಸಾರವಾಗುವ ABD News Live ನೋಡುತ್ತೇನೆ.  Linsey Davis ಇದ್ದವರಲ್ಲಿ ಒಳ್ಳೆಯ anchor ಎಂದೇ ಹೇಳಬೇಕು.  ಸ್ಫುಟವಾಗಿ ಯಾವ ತಪ್ಪೂ ಇಲ್ಲದೇ ಉತ್ತಮ ಧ್ವನಿಯಿಂದ ಈಕೆ ABC ನ್ಯೂಸ್ ನೋಡುಗರಿಗೆ ಇಷ್ಟವಾಗುತ್ತಾರೆ.  ಜೊತೆಗೆ, ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವಷ್ಟರ ಮಟ್ಟಿನ objectivity ಯನ್ನು ನಾನು ಈವರೆಗೆ ಕಂಡಿದ್ದೇನೆ, ಅದರಲ್ಲೂ ಯಾವುದೇ "ಸ್ವಾಮಿನಿಷ್ಠೆ" ಈವರೆಗೆ ನನ್ನ ಅರಿವಿಗೆ ಬಂದಿಲ್ಲ.


ಒಂದು ಮೂವತ್ತು ನಿಮಿಷದ ನ್ಯೂಸ್ ದಿನಕ್ಕೊಮ್ಮೆ ಸಿಕ್ಕರೆ ಸಾಕು ಪ್ರಪಂಚದಲ್ಲಿ ಏನಾಗುತ್ತದೆ ಎಂದು ಗೊತ್ತಾಗಲು.  ಅದಲ್ಲದೇ ನಮ್ಮನ್ನೆಲ್ಲ ಯಾವಾಗಲೂ ತಮ್ಮ ಕಡೆಗೆ ತಿರುಗಿಕೊಂಡಿರುವಂತೆ ಮಾಡುವ ಸೋಶಿಯಲ್ ಮೀಡಿಯಾ "ಚಾನಲ್ಲು"ಗಳಂತೂ ಇದ್ದೇ ಇರುತ್ತಾವಲ್ಲ, ನೀವು ಬೇಡವೆಂದರೂ ನಿಮ್ಮನ್ನು ಸುತ್ತಿಕೊಳ್ಳಲು?!

ಅಪ್ಪಿ-ತಪ್ಪಿಯೇನಾದರೂ ಒಳ್ಳೆಯ ಇಂಗ್ಲೀಷ್ ಬರವಣಿಗೆ ಸಿಗುತ್ತದೆಯೆಂದು NY Times ಏನಾದರೂ ನೋಡಿದರೆ ಸಾಕು, Trump ಮಹಾಶಯ ತಪ್ಪು ಮಾಡುವುದನ್ನೇ ಕಾಯುತ್ತಿರುವವರ ಹಾಗೆ ಇಲ್ಲಿನ ರಿಪೋರ್ಟರುಗಳು, ಅಲ್ಲ ಬರಹಗಾರರು ವರದಿ ಒಪ್ಪಿಸಿಯಾರು.  ಅವರಿಗೆ ಮತಿ ಇಲ್ಲ, ಇವರಿಗೆ ಗತಿ ಇಲ್ಲ ಎನ್ನುವುದು ಖಚಿತವಾಯಿತು.

ಅಲ್ಲದೇ ಈ ಸೊಫೆಸ್ಟಿಕೇಟೆಡ್ ಚಾನೆಲ್‌ನ anchor ಗಳೆಲ್ಲ ಯಾವಾಗಲೂ breaking news ಗಳಲ್ಲೇ ತಮ್ಮನ್ನೇ ಕಳೆದುಕೊಂಡು ಅದು ಯಾಕಾದರೂ ಅರಚುತ್ತಿರುತ್ತಾರೋ, ಯಾರು ಬಲ್ಲರು?

Monday, May 18, 2020

ಹುಲು ಮಾನವರು ಹೊರಗಡೆ ಬರುತ್ತಿದ್ದಾರೆ, ಹುಷಾರ್!


... ಹೀಗನಿಸಿದ್ದು, ನಮ್ಮ ಹಿತ್ತಲಿನ ಹಿಂಬಾಗದಲ್ಲಿ ಮೇಯುತ್ತಿದ್ದ ಎರಡು ಜಿಂಕೆಗಳು ಹಟಾತ್ತನೆ ಹೊರಗೆ ಬಂದ ನನ್ನನ್ನು ನೋಡಿ ಓಡಿ ಹೋಗಿದ್ದನ್ನು ಕಂಡು.  ಸುಮಾರು ಎಂಟು ವಾರಗಳ ಕಾಲ ನಾವೆಲ್ಲ ನಮ್ಮ ಚಲನವಲನಗಳನ್ನು ಮನೆಯ ಒಳಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೆವು.  ಈ ಎರಡು ತಿಂಗಳುಗಳಲ್ಲಿ ಹೆಚ್ಚೆಂದರೆ ಇಪ್ಪತ್ತು ಮೈಲುಗಳ ದೂರವನ್ನು ಕಾರಿನಲ್ಲಿ ಕ್ರಮಿಸಿರಬಹುದು, ಅದೂ ಸಹ ಮನೆಯ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಬರುವುದಕ್ಕೆ ಮಾತ್ರ.  ಎರಡು ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದ ಪ್ರಾಣಿ-ಪಕ್ಷಿಗಳು ಮತ್ತೆ ಈ ಮಾನವ ಪ್ರಾಣಿಯ ಸಹವಾಸಕ್ಕೆ ಮರು-ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆಯೋ, ಏನೋ?

ಕೊರೋನಾ ವೈರಸ್ ಹಲವಾರು ತೊಂದರೆಗಳನ್ನು ಮನುಕುಲಕ್ಕೆ ಬಳುವಳಿಯಾಗಿ ಕೊಟ್ಟರೂ ಸಹ, ಅದು ನಿಸರ್ಗಕ್ಕೆ ಒಳ್ಳೆಯದನ್ನೇ ಮಾಡಿದೆ. ಗಾಳಿಯಲ್ಲಿ  ಪೊಲ್ಯೂಷನ್ ಲೆವೆಲ್‌ಗಳು ಕಡಿಮೆಯಾಗಿರುವುದು, ಸಮುದ್ರದಲ್ಲಿ ಮತ್ಸ್ಯ ಸಂತತಿ ಹೆಚ್ಚಾಗಿರುವುದು, ಅಲ್ಲಲ್ಲಿ ಎಸೆಯುವ ಕಸ-ಪ್ಲಾಸ್ಟಿಕ್‌ಗಳ ಕಡಿಮೆಯಾಗಿರುವುದು, ವಾಹನಗಳ ಸಂಚಾರವಿಲ್ಲದೆ ಇಂಧನ ಉಳಿತಾಯವಾಗಿರುವುದು... ಹೀಗೆ ಅನೇಕಾನೇಕ ಅನುಕೂಲಗಳಾಗಿವೆ.

ಆದರೆ, ಈ ಪ್ರಶ್ನೆ ಆಗಾಗ್ಗೆ ಎದ್ದು ನಿಲ್ಲುತ್ತದೆ - ನಮ್ಮ ನಡವಳಿಕೆಯಲ್ಲಿ ಇನ್ನು ಮುಂದಾದರೂ ಬದಲಾವಣೆಗಳನ್ನು ಕಾಣುತ್ತೇವೆಯೋ ಅಥವಾ ಎರಡು ತಿಂಗಳ ನಂತರ ಏನೂ ಆಗಿರದವರಂತೆ ಮೈ ಕೊಡವಿಕೊಂಡು ಮತ್ತೆ ನಮ್ಮ ನಮ್ಮ ಜೀವನಕ್ರಮದಲ್ಲಿ ತೊಡಗಿಕೊಳ್ಳುತ್ತೇವೆಯೋ? ಈ ಕೊರೋನಾ ವೈರಸ್ ಸುದ್ದಿ ಹೆಚ್ಚು ಮಾಡಿತೇ ವಿನಾ, ಹಿಂದಿನ ಮಹಾಮಾರಿಗಳಿಗೆ ಹೋಲಿಸಿದರೆ ಇದರ ಪರಿಣಾಮ ಕಡಿಮೆ ಎಂದೇ ಹೇಳಬೇಕು.  ಹದಿನಾರು ವರ್ಷಗಳ ಹಿಂದೆ ಸುನಾಮಿ ಬಂದಾಗ ಇಷ್ಟೇ ಜನ ಸತ್ತು ಹೋಗಿದ್ದ ನೆನಪು... ಆದರೆ, ಆ ನೆನಪು ನಮ್ಮ ಅವಶೇಷಗಳ ಅಡಿಯಲ್ಲಿ ಅದೆಂದೋ ಸಿಕ್ಕಿ ನಲುಗಿ ಹೋಗಿದೆ. ಅಂತೆಯೇ, ಈ ಕೊರೋನಾ ವೈರಸ್ಸಿನ ಸಾಹಸವೂ ಕೂಡ.   ಕೇವಲ ಮೂರು ಲಕ್ಷ ಜನರು ವಿಶ್ವದಾದ್ಯಂತ ಸತ್ತು ಹೋದರಲ್ಲ ಎಂದು ಸಾಡಿಸ್ಟ್ ಆಗಿ ಈ ಮಾತನ್ನು ಹೇಳುತ್ತಿಲ್ಲ... ಸಾವು ಯಾವತ್ತಿದ್ದರೂ ನೋವಿನ ವಿಚಾರವೇ, ಆದರೆ ನಾವು ಈ ಮಹಾಮಾರಿಯಿಂದೇನೂ ಒಳ್ಳೆಯದನ್ನು ಕಲಿಯದೇ ಇರುವಂತಾದರೆ, ಅದು ನಮ್ಮ ದುರ್ದೈವ ಅಷ್ಟೇ.



ಈ ಕೋವಿಡ್‌ನಿಂದಾಗಿ ವಾಹನ ಅಪಘಾತಗಳು ಕಡಿಮೆಯಾಗಿವೆ.  ತುರ್ತಾಗಿ ಬೇಕಾಗಿಲ್ಲದ ಶಸ್ತ್ರ ಚಿಕಿತ್ಸೆಗಳು ಮುಂದೂಡಲ್ಪಟ್ಟಿವೆ.  ಅನಗತ್ಯವಾಗಿ ಆಸ್ಪತ್ರೆಗಳನ್ನು ಸುತ್ತುವವರ ಸಂಖ್ಯೆ ಕಡಿಮೆ ಆಗಿದೆ.  ಅಂಥವರನ್ನು ಸುಲಿಯುವ ಬಿಸಿನೆಸ್ ಮೈಂಡೆಡ್ ನರ್ಸಿಂಗ್ ಹೋಮ್‌ಗಳು ಬಾಗಿಲು ಹಾಕಿ ಸುಮ್ಮನಿದ್ದವು.  ಎಲ್ಲದಕ್ಕಿಂತ ಮುಖ್ಯ ಅನಗತ್ಯ ಖರ್ಚುಗಳು ಕಡಿಮೆ ಆಗಿದ್ದವು.  ಹೊರಗಡೆಯ ಚಟುವಟಿಕೆಳೆಲ್ಲ ಕಡಿಮೆಯಾದ್ದರಿಂದ ಜೇಬಿಗೂ ಒಂದಿಷ್ಟು ಹೊರೆ ಕಡಿಮೆ ಎನಿಸಿತ್ತು.

ಇದೀಗ ತಾನೆ ಹೊರಬರುತ್ತಿರುವ ನಮ್ಮನ್ನೆಲ್ಲ ನೋಡಿ - ಹುಲುಮಾನವರು ಹೊರಗೆ ಬರುತ್ತಿದ್ದಾರೆ, ಹುಷಾರ್! ಎಂದು ನಮ್ಮ ಸುತ್ತಲಿನ ಎಲ್ಲ ಜೀವಿಗಳೂ ಸಹ ಒಂದು ಕ್ಷಣ ದಂಗಾಗಿರಬಹುದಲ್ಲವೇ?

Sunday, May 17, 2020

ಕೆಲಸಕ್ಕೆ ಜನರಿಲ್ಲ ಕೆಲಸಕ್ಕೆ ಮನಸಿಲ್ಲ

ಕೆಲಸಕ್ಕೆ ಜನರಿಲ್ಲ ಕೆಲಸಕ್ಕೆ ಮನಸಿಲ್ಲ
ಆಲಸ್ಯವೇ ನಮಗಂಟಿದ ದೊಡ್ಡ ಶಾಪ|

ಕೆಲಸವಿರೆ ಹೆಚ್ಚೆಂಬರು, ಇಲ್ಲದಿರೆ ಕೊರಗುವರು
ಕಾಯಕವೇ ಕೈಲಾಸ ಎನುವ ಧರ್ಮ
ಹಣವಂತರು ಬೆಳೆಯುವರು ಸುಖ ಕಾಣದೆ ಸೊರಗುವರು
ಎಲ್ಲಿದೆ ಕೆಲಸ-ಹಣ-ಸುಖ ಸಮಾಧಾನದ ಮರ್ಮ|

ದಿನ ನಿತ್ಯ ತಮ್ಮ ಕೆಲಸವ ಮಾಡೆ ಮಂದಿ ಬೇಕು
ನಮ್ಮ ಕೆಲಸ ಕಾರ್ಯಗಳನು ನಾವು ಮಾಡುವುದು ತರವೇ
ದಿನ ದಿನ ಸುತ್ತಿ ತಿರುಗಿ ಮತ್ತೆ ಬರುವ ಬಂಧ ಸಾಕು
ಮೈಬಗ್ಗಿಸಿ ದುಡಿಯುವುದೂ ಒಂದು ವರವೇ|

ನಿನ್ನ ಕರ್ಮಗಳನು ನೀ ಮಾಡು ಫಲ ನಾನು ಕಾಯ್ವೆನೆನಿಸಿ
ಪರಮಾತ್ಮ ಕೆಲಸ-ಕಾರ್ಯ-ಕರ್ಮಗಳಿಗೆ ಜೋತು ಬಿದ್ದ
ವಿಪುಲ ಸಂಸಾರದ ಜೋಳಿಗೆಯ ಕೊರಳಿಗೆ ಸಿಂಗರಿಸಿ
ಕರ್ಮ ಭೂಮಿಯ ಪಳೆಯುಳಿಕೆಯೊಳಂದಾಗಿ ಎಡವಿ ಬಿದ್ದ|

Saturday, May 16, 2020

ಹಾಲು-ನೀರಿನ ಅನ್ಯೋನ್ಯತೆ!

"ಕಾಯದಿದ್ರೆ ಕೆನೆ ಕಟ್ಟೋದಿಲ್ಲ!" ಎಂದು ಎನಿಸಿದ್ದು ಇವತ್ತು ಚಹಾ ಮಾಡೋದಕ್ಕೋಸ್ಕರ ಹಾಲು ಕಾಯಿಸುತ್ತಿರುವಾಗ.  ನಾವು ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟು ಸಲ ನೀರು ಅಥವಾ ಹಾಲನ್ನು ಬಿಸಿ ಮಾಡಿರೋದಿಲ್ಲ?  ಕೆಲವೊಮ್ಮೆ ಈ ಗೊತ್ತಿರುವ ವಿಷಯಗಳನ್ನೂ ಗಹನವಾಗಿ ನೋಡಿದಾಗ, ಅವುಗಳಲ್ಲಿನ ಜೀವನ ಸೂಕ್ಷ್ಮ ನಮಗೆ ಗೊತ್ತಾಗುತ್ತದೆ.  ಈ ವಿಚಾರದಲ್ಲಿ ನಿಸರ್ಗ ನಮಗೆಲ್ಲರಿಗೂ ಕಲಿಸೋ ಪಾಠಗಳು ಜೀವನ ಪರ್ಯಂತ ಅನೇಕಾನೇಕ ಇದ್ದೇ ಇರುತ್ತವೆ, ನಾವು ನೋಡಬೇಕು, ಗಮನಿಸಬೇಕು ಅಷ್ಟೇ.

ನಮ್ಮ ಕಡೆ ನೀರು ಕುದ್ದು (ಕುದಿದು) ಮರಳುತ್ತದೆ ಎನ್ನುತ್ತಾರೆ... ಅದನ್ನು ಇಂಗ್ಲೀಷಿನಲ್ಲಿ rolling boil ಅಂತಲೂ ಹೇಳ್ತಾರೆ.  ಕಾಯುವ, ಕುದಿಯುವ ಪ್ರಕ್ರಿಯೆ ಬಹಳ ಸುಲಭವಾದದ್ದು.  ನಾವು ಒಲೆ/ಸ್ಟೋವ್ ಮೇಲೆ ನೀರನ್ನು ಕಾಯಲು ಇಟ್ಟಾಗ ಅದರ ತಳ ಬೆಂಕಿಯಿಂದ ಬಿಸಿಯಾಗಿ ತಳಕ್ಕೆ ಹತ್ತಿರವಿರುವ ನೀರಿನ ಅಣುಗಳು ಬಿಸಿಯನ್ನು ತಗುಲಿಕೊಂಡು ಮೇಲೆ ಬರುತ್ತವೆ.  ಅವುಗಳು ಮೇಲೆ ಬಂದಂತೆಲ್ಲ, ಮೇಲಿನ ತಂಪಾಗಿರುವ (relatively) ಅಣುಗಳು ಕೆಳಗೆ ಹೋಗುತ್ತವೆ.  ಹೀಗೆ ನೀರು ಕುದಿಯುವ ಮಟ್ಟವನ್ನು ತಲುಪಿದ ಹಾಗೆ, ಈ ನೀರಿನ ಅಣುಗಳು, ಕೆಳಗೆ ಹೋದವು, ಮತ್ತೆ "ಮರಳು"ವ ಹೊತ್ತಿಗೆ ಅವುಗಳ ವೇಗ ಹೆಚ್ಚಾಗುತ್ತದೆ... ನಂತರ ನೀರು ಕೊತ ಕೊತ ಕುದಿಯತೊಡಗುತ್ತದೆ.

ಆದರೆ, ಹಾಲನ್ನು ಬಿಸಿ ಮಾಡಿದಾಗ ಅದೇ ರೀತಿ ಹಾಲಿನ ಕಣಗಳು ಮೇಲೆ ಕೆಳಗೆ ಹೋಗುತ್ತಿದ್ದರೂ ಸಹ, ಹಾಲು ಬಿಸಿ ಆದಂತೆಲ್ಲ, ಅದರ ಮೇಲ್ಮೈ ಮೇಲೆ ಒಂದು ತೆಳುವಾದ ಕೆನೆಯ ಪರದೆ ಹುಟ್ಟಲು ಆರಂಭವಾಗುತ್ತದೆ.  ಹಾಲು ನೀರಿಗಿಂತ ಸ್ವಲ್ಪ "ದಪ್ಪ"ನಾದ ದ್ರವ ಪದಾರ್ಥವಾದರೂ ಕೂಡ, ಹಾಲಿನ boiling point ನೀರಿಗಿಂತ ಹೆಚ್ಚೇನೂ ಭಿನ್ನವಾಗಿರೋದಿಲ್ಲ, ಆದರೆ ಈ ಎರಡೂ ದ್ರವ ಪದಾರ್ಥಗಳು ಕುದಿಯುವ ಹೊರಮುಖ ಬೇರೆ ಬೇರೆ ಅಷ್ಟೇ.

ಹಾಲು ಕುದಿಯುತ್ತಾ ಹೋದಂತೆಲ್ಲ ಅದರ ಮೇಲ್ಮೈಯಲ್ಲಿರುವ ಕೆನೆಯ ದಪ್ಪ ಹೆಚ್ಚಾಗುತ್ತಾ ಹೋಗುತ್ತದೆ.  ಪಾತ್ರೆಯ ಬುಡದಲ್ಲಿ ಬಿಸಿ ಎಲ್ಲ ರೀತಿಯಲ್ಲೂ ಒಂದೇ ಸಮನಾಗಿ ಇದೆಯೆಂದು ಭಾವಿಸಿದರೆ, ಹಾಲು ಕುದಿಯುವ ಮಟ್ಟವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಕಟ್ಟಿರುವ ಕೆನೆಯ ಪರದೆ ಒಡೆದು ಒಂದೇ ಸಮನೆ ಮೇಲೆ ಉಕ್ಕಲು ಆರಂಭಿಸುತ್ತದೆ.  ಆದರೆ ನೀರು ಹೀಗು ಕುದ್ದು ಉಕ್ಕೋದಿಲ್ಲ.


ಇದನ್ನು ಇಬ್ಬರು ಗೆಳೆಯರ ಅನಾಲಜಿಯನ್ನು ಉಪಯೋಗಿಸಿಯೂ ವಿವರಿಸಬಹುದು!  ಹಾಲು ಮತ್ತು ನೀರು ಇಬ್ಬರೂ ಜೀವದ ಗೆಳೆಯರು. ಹಾಲಿನಲ್ಲಿ ಸಾಮಾನ್ಯವಾಗಿ ನೀರನ್ನು ಮಿಶ್ರ ಮಾಡಿರುತ್ತಾರೆ, ಅಥವಾ ನೀರಿನ ಪ್ರಮಾಣ ಇದ್ದೇ ಇರುತ್ತದೆ. ಹಾಲು ಕುದಿಯುತ್ತಾ ಬಂದ ಹಾಗೆ ನಿಧಾನವಾಗಿ ಹಬೆಯಾಡತೊಡಗುತ್ತದೆ... ಅಂದರೆ, ಅದರಲ್ಲಿನ ನೀರು ಆವಿಯಾಗಲು ತೊಡಗುತ್ತದೆ... ಅಂದರೆ, ಹಾಲಿನ ಸ್ನೇಹಿತ ನಿಧಾನವಾಗಿ ಹೊರಗಡೆ ಹೋಗುತ್ತಾನೆ.  ಆದರೆ, ತನ್ನ ಸ್ನೇಹಿತ ನೀರು ಇನ್ನೇನು ಪೂರ್ಣ ಪ್ರಮಾಣದಲ್ಲಿ ಆವಿಯಾಗಿ ಹೋಗೇ ಬಿಟ್ಟಿತು ಎಂದು ಹೆದರಿಕೆಯಿಂದ ಹಾಲೂ ಸಹ "ನೀನು ಹೋದಲ್ಲಿಗೆ ನಾನೂ ಬರುತ್ತೇನೆ!" ಎಂದು ಹಠ ಹಿಡಿದು ಉಕ್ಕುತ್ತಾನಂತೆ.  ಅದೇ ಸಮಯಕ್ಕೆ ನೀವು ಸ್ವಲ್ಪ ನೀರನ್ನು ಪಾತ್ರೆಯ ಮೇಲೆ ಚಿಮುಕಿಸಿದರೆ ಉಕ್ಕುವ ಹಾಲು ಸುಮ್ಮನಾಗುತ್ತಾನಂತೆ!

ಹೀಗೆ, ಈ ದಿನ ಚಹಾ ಮಾಡಲು ಹೋಗಿ, ಹಾಲು-ನೀರಿನ ಜೋಡಿಗಳನ್ನು ಬೆಂಕಿಯ ಸಹವಾಸದಲ್ಲಿ ಕುದಿಯುವಂತೆ ಮಾಡಿದ್ದು, ಅವುಗಳ ಅನ್ಯೋನ್ಯ ಗೆಳೆತನವನ್ನು ಪರೀಕ್ಷೆಗೆ ಒಡ್ಡಿ ಹತ್ತಿರದಿಂದ ನೋಡಿದ್ದು ಕೋವಿಡ್ ಕವಿದು ಮನೆಯಲ್ಲೇ ಮುದುರಿಕೊಂಡಿರುವ ನಮ್ಮಂತಹವರು ಮಾಡಿದ ದೊಡ್ಡ ಕಾರ್ಯ!

Wednesday, May 13, 2020

Time ಇದ್ರೆ Photo organize ಮಾಡಿ!

ಹೆಚ್ಚು ಜನರಿಗೆ ಈಗ ನೆನಪಿನಲ್ಲಿರಲಿಕ್ಕಿಲ್ಲ... ಒಂದು ಕಾಲದಲ್ಲಿ ನಾವೂ ಸಹ ಕ್ಯಾಮೆರಾದಲ್ಲಿ ರೀಲುಗಳನ್ನು ಹಾಕಿ ಮತ್ತೆ ಅವುಗಳನ್ನ ಡೆವಲಪ್ ಮಾಡಿ, ಬೇಕಾದ ಚಿತ್ರಗಳನ್ನು ಪ್ರಿಂಟ್ ಹಾಕಿಸಿಕೊಂಡು ನೋಡುತ್ತಿದ್ದೆವು.  ಆದರೆ, ಒಮ್ಮೆ ಡಿಜಿಟಲ್ ಕ್ಯಾಮೆರಾ ಪ್ರಪಂಚ ತೆರೆದುಕೊಂಡ ಮೇಲೆ,  ರೀಲುಗಳು ಮತ್ತು ರೀಲು ಹಾಕುವ ಕ್ಯಾಮೆರಾಗಳು ಔಟ್‌ಡೇಟೆಡ್ ಆದವು.  ಜೊತೆಗೆ ಡಿಜಿಟಲ್ ಕ್ಯಾಮೆರಾದ ಮತ್ತೊಂದು ಕೊಡುಗೆಯೆಂದರೆ ಎಲ್ಲರ ಮನೆಯಲ್ಲೂ ಅಗಾಧವಾಗ ಚಿತ್ರ ಸಂಗ್ರಹಗಳು.  ರೀಲು ಹಾಕುತ್ತಿದ್ದಾಗ ನಾವುಗಳು ಎಷ್ಟು ಕ್ಲಿಕ್ ಮಾಡಬೇಕು, ಬಿಡಬೇಕು ಎಂದೆಲ್ಲಾ ಯೋಚಿಸುತ್ತಿದ್ದೆವು... ಆದರೆ, ಡಿಜಿಟಲ್ ಕ್ಯಾಮೆರಾದ ಶಕ್ತಿಯೆಂದರೆ ಎಷ್ಟು ಸಾಧ್ಯವೋ ಅಷ್ಟು ಪಿಕ್ಚರುಗಳನ್ನು ತೆಗೆಯೋದು... ನಂತರ ಅವುಗಳನ್ನು ಸರಿಯಾಗಿ ಆರ್ಗನೈಜ್ ಮಾಡಿ ಇಡದೇ ಇದ್ದರೆ, ಬೇಕಾದ ಚಿತ್ರ ಯಾವಾಗ ಬೇಕೋ ಆಗ ಸಿಗದೇ ತೊಂದರೆಯಾಗೋದು.  ಜೊತೆಗೆ, ಕೆಲವೊಮ್ಮೆ ಕಂಪ್ಯೂಟರ್ ಹಾರ್ಡ್‌ಡ್ರೈವ್ ಅಥವಾ ಸ್ಟೋರೇಜ್ ಏನಾದ್ರೂ ಫೇಲ್ ಆದ್ರೆ, ಹಳೆಯದೆಲ್ಲ ಚಿತ್ರಗಳನ್ನು ಕಳೆದುಕೊಳ್ಳುವುದೂ ಆಗಿ ಹೋಗಿ ಹೋಗಿದೆ.

ಹೀಗೆ, ಕೋವಿಡ್‌ಮಯವಾದ ಈಗಿನ ದಿನಗಳಲ್ಲಿ ಮಾಡುವುದಕ್ಕೆ ಏನಾದರೂ ಕೆಲಸವೊಂದಿರಬೇಕಲ್ಲ? ಅದಕ್ಕೋಸ್ಕರ ಕಳೆದ ಎರಡು ದಿನಗಳಿಂದ ಹಳೆಯ ಫೋಟೋಗಳನ್ನೆಲ್ಲ ಹರಡಿಕೊಂಡು ಕುಳಿತುಕೊಂಡಿದ್ದೇನೆ.  ಅದನ್ನು ಆರ್ಗನೈಜ್ ಮಾಡುವುದು ಹೇಗೆ ಎಂದು ಗಮನಿಸಿದಾಗ ಫೋಟೋ ಅರ್ಗನೈಜ್ ಮಾಡುವುದರ ಬಗ್ಗೆ ಓದುತ್ತಾ ಹೋದೆ.  ಅದರಲ್ಲೂ ಆರ್ಗನೈಜ್ ಮಾಡುವುದಕ್ಕೆ ಯಾವ ಯಾವ ಸಾಫ್ಟ್‌ವೇರ್‌ಗಳಿವೆ ಎಂದು ಹುಡುಕಿದಾಗ ಈ ಸೈಟು ದೊರೆಯಿತು, 25 photo organizing software & apps ಅದರಲ್ಲೂ ಮತ್ತೆ ಕೆದಕುತ್ತಾ ಹೋದ ಹಾಗೆ ಈ ಕೆಳಗಿನ ಫ್ರೀ ಸಾಫ್ಟ್‌ವೇರ್/ಅಪ್ಲಿಕೇಶನ್‌ಗಳು ಕಣ್ಣಿಗೆ ಬಿದ್ದವು:

Adobe bridge
StudioLine
DigiKam
Nomacs
Apple Photos (Mac)
Mylio
ಮತ್ತು
Google Photos

ಗೂಗಲ್ ಫೋಟೋಸ್ ಫ್ರೀ ಇರಬಹುದು, ಆದರೆ ಈ ದೊಡ್ಡ ಮನುಷ್ಯರ ಸಹವಾಸ ಬೇಡ, ಎಂದು ಸಣ್ಣ ಕಂಪನಿಗಳ ಪ್ರಾಡಕ್ಟ್‍ಗಳನ್ನು ನೋಡುತ್ತಾ ಅವುಗಳ ರಿವ್ಯೂ ಓದುತ್ತಾ ಸಮಯ ಕಳೆದೆ.  ಅಡೋಬಿ ಬ್ರಿಜ್ ಕೂಡಾ ಅಷ್ಟೊಂದು ಇಷ್ಟವಾಗಲಿಲ್ಲ.  ಅಲ್ಲದೇ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಕೆಲಸ ಮಾಡುವ ಅಪ್ಲಿಕೇಶನ್ ಬೇಕಾಗಿದ್ದರಿಂದ, ಇದ್ದವುಗಳಲ್ಲಿ Mylio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದೆ.

ಅದಕ್ಕೆ ನನ್ನಲ್ಲಿದ್ದ ಸುಮಾರು 8 TB ಸ್ಟೋರೇಜ್ ಇರುವ NAS ಅನ್ನು import ಮಾಡಿ, ಅದರ ಜೊತೆಗೆ ಒಂದೆರಡು ಹಳೆಯ 4 TB USB storageಗಳನ್ನೂ ಸಹ ಕನೆಕ್ಟ್ ಮಾಡಿಟ್ಟೆ.  ನನ್ನ ಘನಂದಾರಿ ಕಂಪ್ಯೂಟರ್ ನಿನ್ನೆಯಿಂದ ತಿರುಗುತ್ತಲೇ ಇದೆ.  ಈಗಾಗಲೇ ಸುಮಾರು 25,000ಕ್ಕೂ ಹೆಚ್ಚು photo/videoಗಳನ್ನು ಅದು ಹುಡುಕಿದ್ದು, ಕಳೆದ 15 ವರ್ಷದ ಹಳವಂಡಗಳೆಲ್ಲ ಹೊರಗೆ ಬರುತ್ತಲಿದೆ!

ಇನ್ನು ಕೆಲವೇ ದಿನಗಳಲ್ಲಿ ನನ್ನ ಎಲ್ಲ ಫೋಟೋಗಳೂ ಸಹ ಆರ್ಗನೈಜ್ ಆಗಿ, ಎಲ್ಲರ ಮುಖಗಳನ್ನೂ ಗುರುತಿಸಿ, ಎಲ್ಲ ಲೊಕೇಶನ್ನುಗಳನ್ನೂ ಸಹ ಪಟ್ಟಿ ಮಾಡಿಕೊಂಡು, ಅದರಲ್ಲಿದ್ದ ಡ್ಯೂಪ್ಲಿಕೇಟುಗಳನ್ನೆಲ್ಲ ತೆಗೆದುಹಾಕಿದ ಮೇಲೆ, ಪ್ರತಿಯೊಂದು ಇವೆಂಟುಗಳ ಟ್ಯಾಗ್ ಪ್ರಕಾರ ಆರ್ಗನೈಜ್ ಮಾಡಿ ಬಿಟ್ಟರೆ... ನನ್ನ ಕೆಲಸ ಮುಗಿದಂತೆ.  ಆದರೆ, ಈ ಸಂಪೂರ್ಣ "ಎಡಿಟಿಂಗ್" ಕೆಲಸ ಮುಗಿಯಬೇಕಾದರೆ - ನನ್ನ ಕೆಲಸ ಕಾರ್ಯಗಳ ಮಧ್ಯೆ, ಕೇವಲ ಪಾರ್ಟ್‌ಟೈಮ್ ಮಾತ್ರ ಈ ಕೆಲಸಕ್ಕೆ ವ್ಯಯಿಸುತ್ತಿರುವುದರಿಂದ - ಏನಿಲ್ಲವೆಂದರೂ ಒಂದು ತಿಂಗಳಾದರೂ ಬೇಕು!

***
ಹದಿನೈದು ಇಪ್ಪತ್ತು ವರ್ಷಗಳ ಫೋಟೋಗಳನ್ನು ಹರವಿಕೊಂಡು ಒಮ್ಮೆ ನೋಡಿ - ನಿಮ್ಮ ಪ್ರಬುದ್ಧತೆ, ಒಳ-ಹೊರಗುಗಳೆಲ್ಲ ಸ್ವಲ್ಪ ಸ್ವಲ್ಪವೇ ಬದಲಾಯಿಸುವುದನ್ನು ಕಣ್ಣಾರೆ ನೋಡಬಹುದು!

Tuesday, May 12, 2020

ಕೊರೋನಾ ಹೇರ್ ಕಟಿಂಗ್ ಪ್ರಹಸನ...

ಹತ್ತು ವರ್ಷಗಳ ಹಿಂದೆ ಪೋಸ್ಟ್ ಡಾಕ್ ಕೆಲಸಕ್ಕೋಸ್ಕರ ಜರ್ಮನಿಯಲ್ಲಿ ಕೆಲವು ತಿಂಗಳು ಶ್ರಮಿಸಬೇಕಾಗಿದ್ದ ಡಾ. ಪೆರುಮಾಳ್‌ಗೆ ಅಲ್ಲಿನ ಭಾಷಾ ಸಮಸ್ಯೆಗಿಂತ ಹೆಚ್ಚಾಗಿ, ತಲೆ ಕೂದಲು ಕತ್ತರಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿತ್ತಂತೆ!  ಮೊದಲೇ ತಲೆಯಲ್ಲಿ ಕೂದಲು ವಿರಳವಾಗಿದ್ದ ಮನುಷ್ಯ, ಮತ್ತು ತಾನು ಹೇಳಿದ್ದೊಂದು, ಕತ್ತರಿಸುವಾತ/ಕತ್ತರಿಸುವಾಕೆ ಮತ್ತೊಂದನ್ನು ಮಾಡಿ ಬಿಟ್ಟರೆ? ಅದಕ್ಕೆ ತನ್ನಷ್ಟಕ್ಕೆ ತಾನೇ ತನ್ನ ಕೂದಲನ್ನು ಕತ್ತರಿಸುವುದನ್ನು ಕಲಿತುಕೊಂಡಿದ್ದರಂತೆ.  ಮೊದ ಮೊದಲು ಕಷ್ಟವಾಗುತ್ತಿತ್ತಾದರೂ ಕೊನೆಗೆ ಅದೇ ಅಭ್ಯಾಸವಾಗಿ, ಈ ಜರ್ಮನಿಯವರ ದೆಸೆಯಿಂದ ಜೀವನ ಪರ್ಯಂತ ತನ್ನ ಕೂದಲನ್ನು ತಾನೇ ಕತ್ತರಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಸ್ಕಿಲ್ಸ್ ಸಿಕ್ಕಂತಾಗಿತ್ತಂತೆ!

ಈ ಕೊರೋನಾ ವೈರಸ್ ಹೇರಿದ ವರ್ಕಿಂಗ್ ಫ್ರಮ್ ಹೋಮ್ ಕಟ್ಟಳೆಯನ್ನು ಆಚರಿಸುತ್ತಾ ನಾನೂ ಋಷಿ ಮುನಿಗಳ ಹಾಗೆ ಉದ್ದ ಕೂದಲನ್ನೂ ಹಾಗೇ ಗಡ್ಡವನ್ನೂ ಬಿಟ್ಟು ಎಂಟು ವಾರಗಳಾಗಿತ್ತು.  ಮತ್ತೆ ನಮ್ಮ ಆಫೀಸಿನಲ್ಲಿ ವಿಡಿಯೋ ಕಾನ್‌ಫರೆನ್ಸ್‌ಗಳು ಹೆಚ್ಚಾಗ ತೊಡಗಿ, ನಾನೂ ಕೂದಲು ಕತ್ತರಿಸಿಕೊಳ್ಳೋದು ಅನಿವಾರ್ಯವಾಯಿತು.

ತಲೆಯ ಮೇಲೆ ಕೂದಲು ಕಡಿಮೆ ಇದ್ದವರದ್ದು ಒಂದು ರೀತಿಯ ಸಂಕಟವಾದರೆ, ನನ್ನಂತಹವರಿಗೆ ಹುಲುಸಾಗಿ ಕೂದಲು ಬೆಳೆಯುವುದು ಇನ್ನೊಂದು ರೀತಿಯ ಸಂಕಟ.  ಸರಿಯಾಗಿ ಮೂರು ಹೆಚ್ಚೆಂದರೆ ನಾಲ್ಕು ವಾರಗಳಲ್ಲಿ ಕೂದಲು ಕತ್ತರಿಸದಿದ್ದರೆ ತಲೆಯ ಮೇಲೆ ಒಂದು ಕಿರೀಟ ಬಂದ ಹಾಗಿರುತ್ತದೆ.  ಹಾಗಿರುವಾಗ, ನಾನೂ ಏಕೆ ಪ್ರಯತ್ನ ಮಾಡಬಾರದು ಎಂದು ಕಳೆದ ಶನಿವಾರ ಮನೆಯಲ್ಲಿದ್ದ ಹತ್ಯಾರಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಬಚ್ಚಲು ಮನೆಯಲ್ಲಿ ಉಪಸ್ಥಿತನಾದೆ.

ಇಲ್ಲೇ ಯಡವಟ್ಟಾಗಿದ್ದು, ನೋಡಿ!  ನಮ್ಮ ಕೂದಲನ್ನು ನಾವೇ ಕತ್ತರಿಸುವುದು ನಾನು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ.  ಮೊದಲು ಕಿವಿಯ ಅಕ್ಕ-ಪಕ್ಕ ಒಂದು ಕಡೆಯಿಂದ ಟ್ರಿಮ್ಮರ್ ಹಿಡಿದುಕೊಂಡು ಕತ್ತರಿಸಲು ಶುರುಮಾಡಿದ ನನಗೆ ಸ್ವಲ್ಪ ಸಮಯದ ನಂತರ ಮೆಟ್ಟಿಲು-ಮೆಟ್ಟಿಲಿನ ಹಾಗೆ ಕೂದಲು ಕತ್ತರಿಸಿಕೊಂಡು ಅಲ್ಲಲ್ಲಿ ಸ್ಟೆಪ್ಪುಗಳಾದವು.  ಒಮ್ಮೊಮ್ಮೆ ಸ್ವಲ್ಪ ಒತ್ತಿ ತೆಗೆದಿದ್ದಕ್ಕೋ ಏನೋ ಕೆಲವು ಕಡೆ ಬುರುಡೆ ಕಾಣುವಷ್ಟು ಸಣ್ಣಕೂ ಅದರ ಪಕ್ಕದಲ್ಲಿ ಸ್ವಲ್ಪ ಉದ್ದಕೂ ಬಿಟ್ಟುಕೊಂಡು ಹೋಯಿತು.  ಸೈಡು ಮತ್ತೆ ಮುಂದೇನೋ ಸರಿ, ಆದರೆ ಹಿಂದಿನ ಭಾಗವನ್ನು ಹೇಗೆ ಕತ್ತರಿಸೋದು?  ಅದರಲ್ಲೂ ಮಿರರ್ ಇಮೇಜ್ ನೋಡಿಕೊಂಡು?  ಸ್ವಲ್ಪ ಹೊತ್ತಿನ ನಂತರ ಕೈ ಮತ್ತು ಬೆರಳುಗಳೂ ಕೂಡ ನೋವು ಕೊಡತೊಡಗಿದವು.  ಕೊನೆಗೆ ಅರ್ಧ ಘಂಟೆಯ ಹೊತ್ತಿಗೆಲ್ಲ ಸುಮಾರು ಒಂದು ಪೌಂಡ್ ಅಷ್ಟು ಕೂದಲು ನೆಲದ ಮೇಲೆ ಕರಿಮುಗಿಲು ಕವುಚಿಕೊಂಡ ಹಾಗೆ ಬಿದ್ದುಕೊಂಡಿತ್ತು!

ಇಷ್ಟು ಹೊತ್ತಿಗಾಗಲೇ ನಮ್ಮ ಮನೆಯವರಿಗೆಲ್ಲ ನಾನು ಹಾಸ್ಯದ ವಸ್ತುವಾಗಿದ್ದೆ.  ತಲೆಯ ಹಿಂದಿನ ಭಾಗವಷ್ಟೇ ಏನೂ ಪೂರ್ಣ ತಲೆಯನ್ನೇ ನನ್ನ ಹನ್ನೊಂದು ವರ್ಷದ ಮಗನಿಗೂ ಮತ್ತು ಹೆಂಡತಿಗೂ ವಹಿಸಿ (ಏನು ಬೇಕಾದರೂ ಮಾಡಿ, ಆದರೆ ಇದಕ್ಕಿಂತ ಕೆಟ್ಟದಾಗಿ ಮಾಡಬೇಡಿ), ಆರ್ತನಾಗಿ ಒಪ್ಪಿಸಿಕೊಂಡ ಮೇಲೆ ನನಗೆ ಸಮಾಧಾನವಾಗುವ ಮಟ್ಟವನ್ನು ತಲುಪಿದೆ.  ಒಟ್ಟು ನಲವತ್ತೈದು ನಿಮಿಷಗಳ ನಂತರ ತಲೆ ಹಗುರವಾಗಿ ಸ್ನಾನ ಮಾಡಿ ಹೊರಬಂದೆ.  ಅದಕ್ಕಿಂತ ಮುಂಚೆ, ಹತ್ತು ನಿಮಿಷ ಇಡೀ ಬಚ್ಚಲುಮನೆಯನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛ ಮಾಡಿದ್ದೂ ಸಹ ತುಸು ಹೆಚ್ಚೇ ಕೆಲಸವೆನಿಸಿತು.

ಸ್ನಾನ ಮಾಡಿ ಎಂದಿನಂತೆ ತಲೆ ಬಾಚಿ ನೋಡಿದರೆ, ಕೆಲವು ಕಡೆ ಕಡಿಮೆ, ಕೆಲವು ಕಡೆ ಹೆಚ್ಚು ಕೂದಲು ಇದ್ದ ನಾನು ಎಲ್ಲೋ ಇಲಿಗಳು ಭತ್ತದ ಚೀಲವನ್ನು ತಿಂದು ಹಾಕಿ ಧ್ವಂಸಮಾಡಿದ ವಿಷಯವನ್ನು ನೆನಪಿಗೆ ತಂದವು.  ಮೊದಲೆಲ್ಲ ಸ್ಟೆಪ್ಪುಗಳಾಗಿ ಕೆಟ್ಟದಾಗಿ ಕಾಣುತ್ತಿದ್ದ ಬದಿಯ ಕೂದಲು, ಈಗ ಯಾವುದೋ ಪುರಾತನ ದೇವಸ್ಥಾನದ ಅವಶೇಷದಂತೆ ಕಂಡುಬಂದು, ನಗುಬಂದಿತು.  ಅಲ್ಲದೇ, ಒಂದು ಬದಿಯ ಕೋನದಲ್ಲಿ ನೋಡಿದಾಗ ನನ್ನ ತಲೆ, ಮಾಗಿದ ಉತ್ತುತ್ತಿಯಂತೆ ಕಂಡುಬಂತು!

ಆದರೆ ಕೊರೋನಾ ಮಹಿಮೆ ಇಲ್ಲಿಗೇ ಮುಗಿಯಲಿಲ್ಲ... ಹೇರ್ ಕಟ್ ಕೆಟ್ಟದಾಗಿರಲಿ, ಬಿಡಲಿ... ಇನ್ನೆರಡು ವಾರಗಳಲ್ಲಿ ಮತ್ತೆ ಪ್ರಯತ್ನಿಸುವ ಛಲವಂತೂ ಹುಟ್ಟಿದೆ!  ದಿನೇದಿನೇ ನೋಡುವ ಮನೆಮಂದಿಗೆ ಇದೀಗ ಕೆಟ್ಟ ಹೇರ್ ಕಟ್ಟೂ ಸಹ ಒಗ್ಗಿ ಹೋಗಿ ಅದೇ ಒಂದು ಸ್ಟೈಲ್ ಆಗಿದೆ!  ಇನ್ನೆರಡು ವಾರಗಳಲ್ಲಿ ಒಂದಿಷ್ಟು ಒಳ್ಳೆಯ ಟ್ರಿಮ್ಮರ್ ಮೇಲೆ ಹಣ ಹೂಡಿದರೆ, ಜೀವಮಾನ ಪರ್ಯಂತ ಹೊರಗೆ ಕೂದಲು ಕತ್ತರಿಸುವ ಪ್ರಸಂಗ ಬರದೆಯೂ ಇರಬಹುದು! ಯಾರು ಬಲ್ಲರು?

Monday, May 11, 2020

ಕೊರೋನಾ ಕೃಪೆ: ಸಾಲುಗಟ್ಟಿದ To-do list

ನಿಮಗೂ ಹೀಗೆ ಅನಿಸಿರಬಹುದು... ಈ ಕೊರೋನಾ ವೈರಸ್ಸಿನ ಉಪಟಳ ಬಹಳ ಹೆಚ್ಚಾಗಿದೆ, ಅದರ ಉಪದ್ರವಕ್ಕಿಂತ ಉಪಟಳವೇ ಹೆಚ್ಚು!

ಕಳೆದ ಎಂಟು ವಾರಗಳಿಂದ ಮನೆಯಲ್ಲೇ ಕುಳಿತ ನಮಗೆ ನಿಧಾನವಾಗಿ ನಮ್ಮೆಲ್ಲ ಚಟುವಟಿಕೆಗಳು online ಮಾಧ್ಯಮದಲ್ಲಿ ಹೊರಹೊಮ್ಮತೊಡಗಿದವು.  ಆಫೀಸಿನ ಕಾನ್‌ಫರೆನ್ಸ್‌ಗೆಂದು ಅಣಿವಾಗಿದ್ದ ಟೂಲ್‍ಗಳೆಲ್ಲ ಏಕ್‌ದಂ ಮನರಂಜನಾ ಮಾಧ್ಯಮಗಳಾಗಿ ಬದಲಾದವು.  ಮಾಹಿತಿ, ಮನರಂಜನೆ, ಕಮ್ಯೂನಿಟಿ ಚಟುವಟಿಕೆ, ಆಟ-ಪಾಠ, ದೇಣಿಗೆ, ಚಾರಿಟಿ... ಮೊದಲಾದ ವಿಷಯಗಳೆಲ್ಲ ಈ ಆನ್‌ಲೈನ್ ಮಾಧ್ಯಮಗಳಲ್ಲೇ ಆಗತೊಡಗಿ ಒಂದು ತಲೆ ಚಿಟ್ಟು ಹಿಡಿದಂತಾಗಿದೆ.

ವಾರದ ಉದ್ದಕ್ಕೂ ಆಫೀಸಿನ ಕಾಲ್‌ಗಳು.  ವಾರಾಂತ್ಯ ಹತ್ತಿರ ಬರುತ್ತಿದ್ದಂತೆ ಕಮ್ಯುನಿಟಿಗೆ ಸಂಬಂಧಿಸಿದ Zoom, WebEx, Group ಮೀಟಿಂಗ್‍ಗಳು.  ಇವೆಲ್ಲದರ ಮಧ್ಯೆ ನೋಡ(ಲೇ) ಬೇಕಾದ ಅದೆಷ್ಟೋ ಸಿನಿಮಾಗಳು, ಓದಬೇಕಾದ ಅದೆಷ್ಟೋ ಪುಸ್ತಕಗಳು, ತೆಗೆದುಕೊಳ್ಳಬಹುದಾದ ಅದೆಷ್ಟೋ ಟ್ರೈನಿಂಗ್‌ಗಳು, ಮಾತನಾಡಿಸಬೇಕಾದ ಅದೆಷ್ಟೋ ನೆಂಟರು-ಇಷ್ಟರುಗಳು, ಕೇಳಬೇಕಾದ ಹಾಡುಗಳು, ಪಾಡ್‌ಕ್ಯಾಸ್ಟ್‌ಗಳು, ಸಂಶೋಧಿಸ ಬೇಕಾದ ವಿಷಯಗಳು, ಕ್ಲೀನ್ ಮಾಡಬಹುದಾದ ಕ್ಲಾಸೆಟ್ಟುಗಳು, ಹೇಳಬಹುದಾದ ಅದೆಷ್ಟೋ ಹಾಡುಗಳು, ಕೇಳಬೇಕಾದ ಪ್ರವಚನಗಳು... ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ.  ಈ ಪಟ್ಟಿಗೆ ತಿಲಕ ಪ್ರಾಯವಾಗಿ ಮಾಡಬಹುದಾದ ಮೆಡಿಟೇಷನ್‍ ಅನ್ನು ಸೇರಿಸಿ ಬಿಟ್ಟರೆ, ದಿನದ 24 ಘಂಟೆಗಳು ನಿಜವಾಗಿಯೂ ಸಾಲವು ಎಂದೆನಿಸೋದಿಲ್ಲವೇ?

ಹೀಗೆ ದೊಡ್ಡದಾಗುವ ಹಳವಂಡಗಳ ಪಟ್ಟಿ ನನಗೊಬ್ಬನಿಗೆ ಮಾತ್ರ ಸೀಮಿತವಲ್ಲ ಎಂದು ಖಂಡಿತವಾಗಿ ಹೇಳಬಹುದು.  ಮೊದಲೇ "ಓಡುವುದೇ ಗುರಿ"ಯಾಗಿದ್ದ ನಮಗೆ, ಇದು ಮನೆಯಲ್ಲೇ ಕುಳಿತು ಸದಾ ಓಡುತ್ತಲೇ ಇರಿ ಎಂದು ಒಂದು ರೀತಿಯಲ್ಲಿ ಟ್ರೆಡ್‌ಮಿಲ್ ಹತ್ತಿಸಿ ಕುಳಿತಂತಿದೆ.

ಏನೇ ಹೇಳಲಿ, ಈಗಿನ ತಂತ್ರಜ್ಞಾನದ ಪ್ರಕಾರ ಜನರು 4K videoಗೆ ಹೆಚ್ಚು ಆದ್ಯತೆ ಕೊಟ್ಟರೇ ವಿನಾ, ಈ ಗ್ರೂಪ್‌ ಮೀಟಿಂಗುಗಳ ಆಡಿಯೋ ಕ್ವಾಲಿಟಿ ಸ್ವಲ್ಪವೂ ಚೆನ್ನಾಗಿರೋದಿಲ್ಲ... ಅದರಲ್ಲೂ ನಮ್ಮನೆಯ ಸೊರಗಿದ ಇಂಟರ್‌ನೆಟ್ ವೇಗದ ಮುಂದೆ ಗಂಟಲು ಕೊಸರಿಕೊಂಡು ಮಾನೋ ಟ್ಯೂನ್‌ನಲ್ಲಿ ಹಾಡುಗಳು ಕೇಳಿಸುವಂತೆ ಅನುಭವವಾಗುತ್ತವೆ.

ನಿಮ್ಮ (catch up ಮಾಡುತ್ತಿರುವ) ಹಳವಂಡಗಳ ಪಟ್ಟಿ ಉದ್ದವಿದೆಯೇ? ಅದನ್ನು ಇಲ್ಲಿ ಹಂಚಿಕೊಳ್ಳಬಹುದಲ್ಲ?

Friday, May 08, 2020

ಕೊರೋನಾಗೂ ಮತ್ತು ಊಟ-ತಿಂಡಿಗೂ ಎತ್ತಣ ಸಂಬಂಧ?

ಊಟ-ತಿಂಡಿಯ ವಿಷಯವನ್ನು ಎಂದೂ ಲಘುವಾಗಿ ತೆಗೆದುಕೊಳ್ಳಲೇ ಬಾರದು ಎನ್ನುವುದು ಈ ಹೊತ್ತಿನ ತತ್ವ.  ಈ ಕೋವಿಡ್ ದೆಸೆಯಿಂದ ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಹೊತ್ತು ಮನೆಯ ಪಾಕವೇ ಗತಿಯಾದ್ದರಿಂದ ಎಲ್ಲರಂತೆ ನಾನೂ ಸಹ ಕುಕಿಂಗ್ ಶೋ, ರೆಸಿಪಿಗಳನ್ನು ಹುಡುಕಿಕೊಂಡು ಹೋಗಿರುವುದು ಇತ್ತೀಚಿನ ಬೆಳವಣೆಗೆಗಳಲ್ಲೊಂದು!  ಮೊದಲೆಲ್ಲವಾದರೆ, ಮಧ್ಯಾಹ್ನದ ಊಟಕ್ಕೆ ಸಾಕಾಗುವಷ್ಟು ಬೆಳಿಗ್ಗೆಯೇ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಿ, ಆಫೀಸಿನ ಕೆಲಸದ ಮಧ್ಯೆ ಮೈಕ್ರೋವೇವ್ ಅವನ್‌ನಲ್ಲಿ ಬಿಸಿಮಾಡಿಕೊಂಡು ತಿಂದ ಹಾಗೆ ಶಾಸ್ತ್ರ ಮಾಡುವುದನ್ನು ಊಟವೆಂದು ಕರೆಯುತ್ತಿದ್ದೆವು.  ಕೊರೋನಾ ವೈರಸ್ಸಿನ ಸಹಾಯದಿಂದಾಗಿ ನಾವು ಈಗ ಮನೆಯಲ್ಲೇ ಬಿಸಿಬಿಸಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೀತಿಯಲ್ಲಿ "ಸಾತ್ವಿಕ"ವಾಗಿ ಆಹಾರವನ್ನು ಸವಿದು ಸೇವಿಸುತ್ತಿದ್ದೇವೆಂದರೆ ಅತಿಶಯೋಕ್ತಿಯೇನಲ್ಲ!

***
ಅಮೇರಿಕಕ್ಕೆ ಬಂದು ಎರಡು ದಶಕದ ಮೇಲಾದರೂ ಇವತ್ತಿಗೂ ನಾನು ಭಾರತದ ಅನುಕೂಲಗಳ ಪೈಕಿ ಅತ್ಯಂತ ಮಿಸ್ ಮಾಡಿಕೊಳ್ಳುವುದೆಂದರೆ ಹೊಟೆಲ್/ಖಾನಾವಳಿಯಲ್ಲಿ ದೊರೆಯುವ ಸಾಂಬಾರು, ಪಲ್ಯಗಳು, ಸರಿ ರಾತ್ರಿ ಎರಡು-ಮೂರು ಘಂಟೆಯವರೆಗೂ ಬಸ್‌ಸ್ಟ್ಯಾಂಡಿನ ಬದಿಯಲ್ಲಿ ಇಟ್ಟುಕೊಂಡ ಚಾ ಅಂಗಡಿಗಳು, ಯಾವತ್ತಿಗೂ ಎಲ್ಲೆಲ್ಲಿಯೂ ಸಿಗುವ ಇಡ್ಲಿ-ಚಟ್ಣಿಗಳು!  ನಾನು ವಿದ್ಯಾರ್ಥಿ ದೆಸೆಯಿಂದಲೇ (ಸುಮಾರು ಹದಿನೈದು ವರ್ಷ ವಯಸ್ಸಿನವಾಗಿದ್ದಾಗಿನಿಂದ) ಮನೆಯಿಂದ ಹೊರಗೆ ಉಳಿದವನಾಗಿದ್ದರಿಂದ ಈ ಹೊಟೇಲು-ಖಾನಾವಳಿಗಳಲ್ಲಿ ಎರಡು ರೂಪಾಯಿಗೆ ಕೊಡುತ್ತಿದ್ದ ಸಾಂಬಾರು-ಪಲ್ಯಗಳು ಎಷ್ಟೋ ಸಾರಿ ದಿನದ ಹಸಿವನ್ನ ತಣಿಸಿವೆ ಎನ್ನಬಹುದು.  ಅದೂ ಪರೀಕ್ಷೆ ಹತ್ತಿರ ಬರುತ್ತಿದ್ದ ಸಂದರ್ಭಗಳಲ್ಲಿ ನನ್ನ ರೂಮಿನಲ್ಲಿ ಒಂದಿಷ್ಟು ಅನ್ನ ಮಾಡಿಕೊಂಡು ಹತ್ತಿರದ ಹೊಟೇಲಿನಿಂದ ಸಾರು ತಂದು ಊಟ ಮಾಡಿದ ದಿನಗಳು ಎಷ್ಟೋ ಇವೆ. ಅಲ್ಲದೇ ರಾತ್ರಿಯ ಹೊತ್ತು ಓದಿ ಬೋರಾದರೆ ಸ್ನೇಹಿತರ ಜೊತೆಗೆ ಎಷ್ಟು ಹೊತ್ತಿಗೆ ಬೇಕಾದರೂ ಟೀ ಕುಡಿಯಲು ಕೈಗಾಡಿಗಳ ಬಳಿಗೆ ಹೋಗಬಹುದಿತ್ತು.

ಅಮೇರಿಕದಲ್ಲಿ ಊಬರ್ ಈಟ್ಸ್ ಇರಲಿ ಮತ್ತೊಂದು ಇರಲಿ, ಆಗ ಅಲ್ಲಿ ಸಿಗುತ್ತಿದ್ದ ಅನುಕೂಲಗಳನ್ನು ಮಾತ್ರ ಸೃಷ್ಟಿಸಲಾರವು.  ಒಂದು ರೀತಿಯಲ್ಲಿ ಇವತ್ತಿಗೂ ಭಾರತದಲ್ಲಿ ಈ ರೀತಿಯ ಸರ್ವಿಸುಗಳು ಇರಬಹುದೇನೋ.  ಆಗ ಜೇಬಿನಲ್ಲೆಲ್ಲಾ ಹತ್ತು ರೂಪಾಯಿ ಇದ್ದರೆ ಅದು ಬಹಳ "ದೂರ" ಬರುತ್ತಿತ್ತು... ಈಗಂತೂ ಹಣದುಬ್ಬರ ಹಣದ ಬೆಲೆಯನ್ನೇ ತಿಂದು ಹಾಕಿತಂತಾಗಿ, ನೂರು ರೂಪಾಯಿ ನೋಟಿನಲ್ಲಿ ಗಾಂಧೀ ಮುಖವೂ ಬಾಡಿದಂತಿದೆ.

***
ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಎಷ್ಟು ಕೊಂಡಾಡಿದರೂ ಸಾಲದು.  ಈ ಸಾಲನ್ನು ಬರೆಯಲು ನನಗೆ ಯಾವ ಅಥಾರಿಟಿಯೂ ಇಲ್ಲ, ಹಾಗೆ ಇರಬೇಕೆಂದೇನೂ ಇಲ್ಲ... ಶತಮಾನಗಳಿಂದ ನಮ್ಮ ಆಹಾರ ಪದ್ದತಿ ಬಹಳಷ್ಟು ಬೆಳೆದು ಬಂದಿದೆ.  ಈ ಕೊರೋನಾ ವೈರಸ್ ಸೃಷ್ಟಿಸಿದ ಒಂದು ತಾತ್ಕಾಲಿಕ ನಿರ್ವಾತವನ್ನು ಮುಚ್ಚಿಕೊಳ್ಳಲು ನಾವೆಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಂತೆ, ಇತ್ತೀಚೆಗೆ ನಾನು ನಡೆಸಿದ "ಸಾತ್ವಿಕ" ಆಹಾರದ ಬಗ್ಗೆ "ಸಂಶೋಧನೆ"ಯೂ ಒಂದು... ಅದರ ಬಗ್ಗೆ ಇನ್ನೊಮ್ಮೆ ಬರೆದರೆ ಆಗದೇ?!

ನಿಮಗೆ ಹೊತ್ತು ಹೊತ್ತಿಗೆ ಊಟ-ತಿಂಡಿಯ ಅಗತ್ಯವೇನು ಅದರ ಮಹತ್ವವೇನು ಎಂದು ತಿಳಿಯಲು ಹೆಚ್ಚಿನ ಅಧ್ಯಯನವನ್ನೇನೂ ಮಾಡಬೇಕಾಗಿಲ್ಲ... ಇಬ್ಬರು ಮಿಡ್ಲ್‌ಸ್ಕೂಲ್ ಮಕ್ಕಳನ್ನು ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಊಟಕೊಟ್ಟು ಅವರನ್ನು ಸಾಕಿ ನೋಡಿ... ನಿಮಗೆ ಗೊತ್ತಿರದಂತೆ ನೀವೊಬ್ಬ ದೊಡ್ಡ ಎಕ್ಸ್‌ಪರ್ಟ್ ಆಗಿರುತ್ತೀರಿ!

Thursday, May 07, 2020

ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

***
ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

***

ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!

Wednesday, May 06, 2020

ಗೌಡರು ಚಹಾ ಪುಡಿ ಕದ್ದ ಪ್ರಸಂಗವು...

ಇದು ಮೂರು ದಶಕಗಳ ಹಳೆಯ ಕಥೆಯಾದರೂ ಇವತ್ತಿಗೂ ನಮ್ಮನೆಯಲ್ಲಿ ನಗೆ ಉಕ್ಕಿಸುತ್ತದೆ.  ಮೊನ್ನೆ ಕೊರೋನಾ ವೈರಸ್ ಸ್ಪೆಷಲ್ ಎಂದು ನಮ್ಮ ಹಳವಂಡಗಳನ್ನೆಲ್ಲ ಹರಡಿಕೊಂಡು ಅಕ್ಕ-ತಮ್ಮ ಮಾತನಾಡುತ್ತಿದ್ದಾಗ, ಅಲ್ಲಿಯೂ ನುಸುಳಿತು, ಈ ಚಹಾ ಪುಡಿಯ ಕಥೆ... ಇದನ್ನು ನೆನಪಿಸಿಕೊಂಡಾಗಲೆಲ್ಲ ಇವತ್ತಿಗೂ ನಮ್ಮಲ್ಲಿ ನಗೆ ಉಕ್ಕಿಸುವುದು ಖಂಡಿತ.

***

ನನ್ನ ಅಕ್ಕ ಆನವಟ್ಟಿಯಿಂದ ಹನ್ನೆರೆಡು ಕಿಲೋ ಮೀಟರ್ ದೂರದ ಜಡೆ ಗ್ರಾಮದಲ್ಲಿ ಟೀಚರ್ ಆಗಿ ನೇಮಕಗೊಂಡಾಗ, ಪ್ರತಿನಿತ್ಯವೂ ಬಸ್ಸಿನಲ್ಲಿ ಹೋಗಿ ಬರುವ ಕಷ್ಟವೇಕೆ ಎಂದು ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಇದ್ದಳು.  ಆಗೆಲ್ಲಾ ಬಸ್ಸುಗಳ ಅನುಕೂಲ ಅಷ್ಟು ಇರಲಿಲ್ಲ.  ಬಸ್ಸುಗಳ ಅನುಕೂಲವಿದ್ದರೂ ಹನ್ನೆರಡು ಕಿಲೋಮೀಟರ್ ಅನ್ನು ಕಾಲುನಡಿಗೆಯಲ್ಲಿ ಎರಡೂ ಕಾಲು ಘಂಟೆಯೊಳಗೆ ಕ್ರಮಿಸಬಹುದಿತ್ತು, ಅದೇ ದೂರಕ್ಕೆ ಬಸ್ಸಿನಲ್ಲಿ ಮೂರು ಘಂಟೆಗಳ ಕಾಲ ತೆಗೆದುಕೊಳ್ಳುತ್ತಿತ್ತು.  ಅಲ್ಲದೇ ಎರಡು ಬಸ್ಸುಗಳನ್ನು ಬದಲಾಯಿಸಬೇಕಾಗಿತ್ತು: ಆನವಟ್ಟಿಯಿಂದ ತವನಂದಿಗೆ ಒಂದು, ತವನಂದಿಯಿಂದ ಜಡೆಗೆ ಹೋಗುವ ಬಸ್ಸು ಮತ್ತೊಂದು.

ಮನೆ ಅಂದ ಮೇಲೆ ಒಂದಿಷ್ಟು ಪಾತ್ರೆ-ಪಡಗ ಇವೆಲ್ಲ ಇರಬೇಕಾದ್ದೆ.  ಅಡುಗೆ ಮಾಡಿಕೊಳ್ಳುತ್ತೇವೆ ಎಂದ ಮೇಲೆ, ಎಲ್ಲ ಸೌಲಭ್ಯಗಳ ಜೊತೆಗೆ ಕಾಫಿ-ಟೀ ಮಾಡಿಕೊಳ್ಳುವುದಕ್ಕೂ ಅನುಕೂಲವಿಲ್ಲದಿದ್ದರೆ ಹೇಗೆ? ಈ ರೀತಿ, ನನ್ನ ಅಕ್ಕ ಒಂದು ಸಣ್ಣ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟು ಸಾಮಾನುಗಳ ಜೊತೆಗೆ ಒಂದು ಸಣ್ಣ ವ್ಯವಸ್ಥಿತ ಕುಟುಂಬಕ್ಕೆ ಏನೇನು ಬೇಕೋ ಅಷ್ಟನ್ನೂ ಹೊಂದಿಸಿಕೊಂಡು ನೆಮ್ಮದಿಯಿಂದ ಇದ್ದಳು.

ಹೀಗಿರುವಾಗ ಒಂದು ಸಣ್ಣ ತೊಂದರೆ ಕಾಣಿಸಿಕೊಳ್ಳತೊಡಗಿತು.  ಆಗಿನ ಕಾಲದಲ್ಲಿ ಕಾಫಿ ಪುಡಿ, ಟೀ-ಪುಡಿಯನ್ನು ಬಹಳಷ್ಟು ದಾಸ್ತಾನು ಮಾಡಿ ಯಾರೂ ಇಟ್ಟುಕೊಳ್ಳುತ್ತಿರಲಿಲ್ಲವೆನಿಸುತ್ತದೆ.  ಅಕ್ಕ ತಂದಿಟ್ಟುಕೊಂಡ ಚಾಪುಡಿ ಡಬ್ಬದಲ್ಲಿ ದಿನೇದಿನೇ ಪುಡಿಯ ಪ್ರಮಾಣ ಕಡಿಮೆ ಆಗುವುದನ್ನು ಇವಳು ಗಮನಿಸಿದಳು.  ಇವಳು ಬಿಟ್ಟರೆ ಮತ್ತೆ ಬೇರೆ ಯಾರೂ ಇರದ ಮನೆಯಲ್ಲಿ ಅದು ಖಾಲಿ ಆಗಲು ಹೇಗೆ ತಾನೆ ಸಾಧ್ಯ? ಅದರೂ ಇರಲಿ ಎಂದು ಡಬ್ಬದಲ್ಲಿ ಒಂದು ಗುರುತು ಮಾಡಿ ಮರುದಿನ ಶಾಲೆಗೆ ಹೋಗಿ ಬಂದು ನೋಡುತ್ತಾಳೆ ಮತ್ತೆ ಕಡಿಮೆ ಆಗಿದೆ.  ಇದು ಏನೇ ಕಿತಾಪತಿ ಇದ್ದರೂ ಪಕ್ಕದ ಮನೆ ಗೌಡರ ಕಿತಾಪತಿಯೇ ಸೈ ಎಂದು, ಇವರಿಗೆ ಬುದ್ಧಿ ಕಲಿಸಬೇಕೆಂದು ಯೋಚನೆ ಮಾಡಿದಳು.

ಒಂದು ಪೋರ್ಶನ್ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸೋದು ಸಹಜ.  ಬಾಡಿಗೆ ಕೊಡುವ ಮುಖೇನ ಅರ್ಧ ಮನೆಯನ್ನು ಇನ್ನೊಬ್ಬರಿಗೆ ವಾಸಿಸಲಿಕ್ಕೆ ಕೊಟ್ಟು ಅದರಿಂದ ಒಂದು ನಿರ್ದಿಷ್ಟ ಆದಾಯ ಪಡೆಯುವುದು ಎಲ್ಲರೂ ಬಲ್ಲ ವಾಡಿಕೆ.  ಆದರೆ, ಈ ರೀತಿ ಬಾಡಿಗೆ ಮನೆ ಕೊಟ್ಟವರು, ಟೀ ಪುಡಿಯನ್ನು ಕದಿಯುತ್ತಾರೆ ಎಂದು ಯಾರು ತಾನೇ ಯೋಚಿಸಲಿಕ್ಕೆ ಸಾಧ್ಯ?

ನನ್ನ ಅಕ್ಕ ಅಂದಿನಿಂದ ಟೀ ಮಾಡಿ ಉಪಯೋಗಿಸಿದ್ದ ಪುಡಿಯನ್ನು ಸಂಗ್ರಹಿಸಿ ಇಡಲಾರಂಭಿಸಿದಳು.  ಅದು ಸುಮಾರು ಒಂದು ಡಬ್ಬ ತುಂಬುವ ಪ್ರಮಾಣ ಬರುತ್ತಲೇ, ಅದನ್ನು ಒಟ್ಟು ಗೂಡಿಸಿ, ಎರಡು ಮೂರು ಸಾರಿ ಚೆನ್ನಾಗಿ ಕುದಿಸಿ ಅದರಲ್ಲಿದ್ದ ಚಹಾದ ಗುಣವನ್ನೆಲ್ಲಾ ತೆಗೆದುಬಿಟ್ಟು, ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿ ಹಾಕಿದಳು.  ಅದು ಚೆನ್ನಾಗಿ ಒಣಗಿದ ನಂತರ, ಮೇಲ್ನೋಟಕ್ಕೆ ಕಪ್ಪು ಚಹಾಪುಡಿಯಂತೆ ಕಂಡು ಬಂದರೂ ಅದರಲ್ಲಿ ಚಹಾದ ಒಂದು ಲವಲೇಶ ಅಂಶವೂ ಇದ್ದಿರಲಿಲ್ಲ.  ನಂತರ ಆ ಪುಡಿಯನ್ನೆಲ್ಲ ತನ್ನ ಚಹಾಪುಡಿ ಡಬ್ಬದಲ್ಲಿ ಹಾಕಿಟ್ಟು ಕಳ್ಳ ಬಂದು ಕದಿಯುವುದನ್ನು ನಿರೀಕ್ಷಿಸಿದಳು.

ಒಂದೆರಡು ದಿನದಲ್ಲಿ ಕಳ್ಳ ಬಂದು ಟೀಪುಡಿಯನ್ನು ಕದ್ದಿದ್ದಾಯಿತು.  ಆದರೆ, ಪಕ್ಕದ ಮನೆಯಲ್ಲಿ ಟೀ ಕುದಿಸುತ್ತಿದ್ದವರು ಬೈಯುವುದು ಕೇಳಿ ಬಂದು ಇವಳಿಗೆ ನಗುತಡೆಯದಾಯಿತು.  ಇವಳ ಮನೆಯಿಂದ ಕದ್ದ ಟೀ ಪುಡಿಯಲ್ಲಿ ಟೀ ಅಂಶ ಇದ್ದರೆ ತಾನೆ ಅದು ತನ್ನ ಗುಣವನ್ನು ತೋರಿಸುವುದು.  ಅಂದಿನಿಂದ ಇವಳ ಮನೆಯಲ್ಲಿ ಟೀ ಪುಡಿ ಕಳ್ಳತನವಾಗುವುದು ನಿಂತು ಹೋಯಿತಂತೆ!

Tuesday, May 05, 2020

ಪಕ್ಕದ ಮನಿ ಚೈನಾದ್ ಮಂದಿ ಸುಳ್ಳ ಹೇಳ್ಯಾರ್ ರೀ

ಪಕ್ಕದ ಮನಿ ಚೈನಾದ್ ಮಂದಿ ಸುಳ್ಳ ಹೇಳ್ಯಾರ್ ರೀ
ವೈರಸ್ ಇಲ್ಲ ವೈರಸ್ ಇಲ್ಲಾಂತ ಸಾರಿ ಹೇಳ್ಯಾರ್ ರೀ|

ಇಂಗ್ಲೀಸ್ ಬರದ ಮಾತಾಡೋ ಮಂದೀನ
ಇಂಗ್ಲೀಸ್ ಪಿರಂಗಿಗಳು ನಂಬಂಗಿಲ್ಲಾರೀ
ಬ್ಯಾರೇ ದೇಶ್‌ದಾಗ್ ಏನಾರಾ ಆಗ್ಲೀ
ನಮಗ್ಯಾಕ್ ಉಸಾಬರೀ ಅಂತಾರ್ ರೀ|

ಹಿಂದಿನ ಸಾಲ ಕಟ್ಟಂಗಿಲ್ಲ ಇಂದಿನ ವ್ಯಾಪಾರ ಬಿಡಂಗಿಲ್ಲ
ಎಲ್ಲಾ ಕೆಲ್ಸಕೂ ಚೈನಾ ಮಂದೀನೆ ಬೇಕು ಅಂತಾರ್ ರೀ
ಎಡವಟ್ಟಾಗಿ ಕಾರ್ಖಾನೆ ಮುಚ್ಚಿದ ಎಡಬಿಡಂಗಿ ಮಕ್ಳೆಲ್ಲ
ಎಲ್ಲಾ ವಸ್ತೂನೂ ಚೈನಾದಿಂದಾನೆ ತರಸ್ತಾರ್ ರೀ| 

ಸರಕು ಸಾಗಣೆ ಎಲ್ಲಾ ಕಡೆಗೂ ಚೈನಾದಿಂದ್ಲೇ ಹೋಗುತಲಿತ್ತು
ಭಾರೀ ಭಾರೀ ವ್ಯಾಪಾರ್‌ದ ಹಡಗೂ ಬಂದು ನಿಲ್ತಿದ್ವು ರೀ
ಸ್ವಲ್ಪ ರೊಕ್ಕಕ ಬಾಳಾ ಸಾಮಾನು ತಂದ್ರು ಮುಂದ ಹಾಕ್ಕೊಂಡ್ರು
ಮೈ ಚರಬಿ ಬೆಳಸಿಕೊಂಡು ಕೆಲ್ಸಾ ಇಲ್ಲದೆ ಅಡ್ಡ್ಯಾಡಾರ್ ರೀ|

ಕೊರೋನಾ ವೈರಸ್ ಹಾವಳಿ ನೋಡ್ರಿ ಎಲ್ಲಾ ಆಟ ಬಂದ್ ಆತು
ಇತ್ಲಾಗ್ ಉಗಿಯಂಗಿಲ್ಲ ನುಂಗಂಗಿಲ್ಲ ಅನ್ನೋ ಹಂಗಾತ್ ರೀ
ಚೈನಾ ದೇಶದ್ ಸಾವಾಸಾ ಬ್ಯಾಡಾಂತ ಎಲ್ಲರೂ ಅಂದ್ಕೊಂಡ್ರೂ
ಅಷ್ಟು ಸುಲಭ್‌ದಾಗ ಕಳಚಕಣಂಗಿಲ್ಲ ಚೈನಾ ಮಂದಿ ಅಂತೋರ್ ರೀ|

ಏನಾರ ಆಗ್ಲಿ, ಏನಾರ ಹೋಗ್ಲಿ ನಿಯತ್ತು ಇರಬೇಕ್ರಿ
ದೊಡ್ಡ ಮಂದಿಗೆ ಇಷ್ಟು ಸಣ್ಣ ವಿಷ್ಯ ತಿಳಿದಂಗ್ ಆಗೇತ್ರಿ
ಇಂಥವ್ರನ್ನೆಲ್ಲ ನೋಡಿ ನೋಡಿ ಕಣ್ಣ್ ಕಣ್ಣ್ ಬಿಡಬೇಕ್ರಿ
ಮಾಡಿದ್ದುಣ್ಣೋ ಮಾರಾಯಾ ಅಂದು ಸುಮ್ಮನಿರಬೇಕ್ರಿ|