Showing posts with label ಹರಟೆ. Show all posts
Showing posts with label ಹರಟೆ. Show all posts

Thursday, April 01, 2010

Take (good) care of yourself...

ಸ್ಪ್ರಿಂಗ್ ತರೋ ಅಲರ್ಜಿ ಸೀಜನ್ನ್ ದೆಶೆಯಿಂದ ಈ ಮಾತನ್ನ ಹೇಳ್ತಾ ಇಲ್ಲ, ನನ್ನದೊಂದು ಫಂಡಮೆಂಟಲ್ ನಂಬಿಕೆ ಇಲ್ಲಿನ ಅನುಭವಗಳ ಮೂಲಕ ಬದಲಾದ ಬಗೆಯನ್ನು ಹೇಳ್ತಾ ಇದ್ದೇನೆ ಅಷ್ಟೇ. ನೀವು ಯಾರನ್ನಾದರೂ ’Take care...' ಎಂದು ಅಮೇರಿಕದಲ್ಲಿ ಬೀಳ್ಕೊಡಬಹುದು ಅದು ’how are you?' ಅನ್ನೋ ಔಪಚಾರಿಕ ಮಾತಿನ ಹಾಗೇ ಕಂಡು ಬಂದರೂ ನನ್ನ ಮಟ್ಟಿಗಂತೂ ಅದು ಯಾವುದೋ ಒಂದು ಫಾಸಿಟಿವ್ ಫೀಡ್‌ಬ್ಯಾಕ್ ಅನ್ನು ಆಗಾಗ್ಗೆ ರೀಇನ್‌ಫೋರ್ಸ್ ಮಾಡ್ತಾ ಇರುತ್ತೆ ಅನ್ಸುತ್ತೆ ಒಂದು ರೀತಿಯಲ್ಲಿ ಟಿವಿಯಲ್ಲಿ ಬರೋ ಕಮರ್ಷಿಯಲ್ಲ್ ನೋಡಿ ನಮಗೆ ಹೌಸ್‌ಹೋಲ್ಡ್ ಕೆಲಸಗಳು ನೆನಪಿಗೆ ಬರೋಲ್ವೇ ಹಾಗೆ.

ನಮ್ಮ ಹಿಂದಿನ ತಲೆಮಾರಿನಲ್ಲಿ ಜನರು ಒಂದೇ ಕಂಪನಿಗೆ ಅಥವಾ ಸರ್ಕಾರಕ್ಕೆ ತಮ್ಮ ಪೂರ್ಣ ಸೇವೆಯನ್ನು ಸಲ್ಲಿಸಿ ಅಲ್ಲೇ ನಿವೃತ್ತರಾಗೋ ವ್ಯವಸ್ಥೆ ಅಥವಾ ನಡವಳಿಕೆ ಇತ್ತು, ಆದರೆ ಈಗಿನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಇತಿ-ಮಿತಿಗಳು ನಮ್ಮನ್ನು ಸದಾ ’ಈ ಕೆಲಸ ಕೈ ಬಿಟ್ಟು ಹೋದರೆ ಮುಂದೇನು...’ ಅನ್ನೋ ಯೋಚನೆಯನ್ನು ಯಾವಾಗಲೂ ಜಾಗೃತವಾಗೇ ಇಟ್ಟಿರುತ್ತವೆ. ಹಿಂದಿನ ಪರಂಪರೆಯ ಹಾಗೆ ನಿಮ್ಮ ಬಾಸ್ ಆಗಲಿ ನಿಮ್ಮ ಸಹೋದ್ಯೋಗಿಗಳಾಗಲಿ ನಿಮ್ಮ ಯೋಗಕ್ಷೇಮವನ್ನು ನೋಡಿಕೊಂಡಾರು ಅನ್ನೋದು ಮರೀಚಿಕೆಯಾಗಿ ನಿಮ್ಮ ಕೆಲಸ ಹೇಗೇ ಇದ್ದರೂ ನಿಮ್ಮ ಫರ್‌ಫಾರ್ಮೆನ್ಸ್ ಯಾವ ರೀತಿ ಇದ್ದರೂ ಕಾರ್ಪೋರೇಟ್ ಲ್ಯಾಡರ್ರ್‌ನಲ್ಲಿ ಮೇಲೆ ಹೋಗಲೂ ಅನೇಕ ಕಸರತ್ತುಗಳನ್ನು ಮಾಡಬೇಕಾಗುತ್ತದೆ.

ಒಂದು ಕಡೆ ಹೊಸ ನೀರು ಅಂದರೆ ಹೊಸ ಕೆಲಸ ಮಾಡುವ ತಲೆಮಾರು ಕಂಪನಿಗಳಲ್ಲಿ ಬರುವ ಸಾಧ್ಯತೆ ಅಥವಾ ಸಂಖ್ಯೆ ಕಡಿಮೆಯಾಗಿದ್ದು, ಮತ್ತೊಂದು ಈಗಾಗಲೇ ಕಂಪನಿಯಲ್ಲಿ ಸೇರಿಕೊಂಡು ಬೆಳೆದ ತಿಮಿಂಗಲಗಳು ಅಲ್ಲೇ ಬೀಡುಬಿಟ್ಟಿರೋದರಿಂದ ಒಬ್ಬ ಮಧ್ಯ ವರ್ಗದ ಕೆಲಸಗಾರ ಮೇಲೆ ಹೋಗುವ ಸಾಧ್ಯತೆಗೆ ಕುತ್ತು ಬರುತ್ತದೆ. ತಾನು ಮಾಡುವ ಕೆಲಸವನ್ನು ಮತ್ತೊಬ್ಬರಿಗೆ ಕೊಡಲು ಅಲ್ಲಿ ತನ್ನ ಲೆವೆಲ್ಲ್‌ನಲ್ಲಿ ಬೇರೆ ಯಾರೂ ಇಲ್ಲ, ಜೊತೆಗೆ ತಾನು ಮೇಲೆ ಹೋಗಲೂ ಅವಕಾಶವಿಲ್ಲ ಎನ್ನೋ boxed up ಮನಸ್ಥಿತಿ ಎದುರಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಆದ ಆರ್ಥಿಕ ಏರುಪೇರುಗಳಲ್ಲಿ ಸುಧಾರಿಸಿಕೊಳ್ಳಲು ಕಂಪನಿಗಳು ಇನ್ನೂ ಹೆಣಗುತ್ತಿರುವಾಗ ಬೇರೆ ಕಡೆಗೆ ಅಥವಾ ಕಂಪನಿಗೆ ವಲಸೆ ಹೋಗಿ ಸೇರಿಕೊಳ್ಳುವ ಸಾಧ್ಯತೆಗಳು ಕಡಿಮೆ ಆಗುತ್ತವೆ ಅಥವಾ ರಿಸ್ಕೀ ಆಗಿರುತ್ತವೆ.

ಒಂದಂತೂ ನನಗೆ ಚೆನ್ನಾಗಿ ಮನದಟ್ಟಾಗಿದೆ: ಇಲ್ಲಿ ಯಾರೂ ನಮ್ಮ ಬಗ್ಗೆ ಕೇರ್ ಮಾಡೋದಿಲ್ಲ, ಯಾರೂ ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳೋದಿಲ್ಲ - ನಮ್ಮ ಊರಿನ ಬಸ್ಸುಗಳಲ್ಲಿ ಬರೆದಿರುವ ಹಾಗೆ ’ನಮ್ಮ ಲಗೇಜಿಗೆ ನಾವೇ ಜವಾಬ್ದಾರರು!’. ಸರ್ಕಾರಗಳು, ಅವು ಯಾವುದೇ ಪಕ್ಷದ್ದಿರಲಿ ಯಾರ ನಾಯಕತ್ವದಲ್ಲೇ ಇರಲಿ, ತಮ್ಮ ತಮ್ಮ ಬೇಳೇಕಾಳುಗಳನ್ನು ಬೇಯಿಸಿಕೊಳ್ಳುವುದರಲ್ಲಿ ಮಗ್ನರಾಗಿರುತ್ತವೆ, ತಮ್ಮ ಓಟುಬ್ಯಾಂಕುಗಳನ್ನು ಓಲೈಸುವತ್ತ ಪಾಲಿಸಿಗಳು ವಾಲಿರುತ್ತವೆ. ಎಂಪ್ಲಾಯರ್ಸ್, ಅವರಿಗೆ ನಾವೊಂದು ಕಮಾಡಿಟಿ, ಹ್ಯೂಮನ್ ರಿಸೋರ್ಸ್, ಸ್ಪ್ರೆಡ್‌ಶೀಟ್ ಹಾಗೂ ಎಕ್ಸ್‌ಪೆನ್ಸ್ ವಿಚಾರದಲ್ಲಿ ಬಂದಾಗ ಕತ್ತರಿಸಿ ತೆಗೆದು ಬಿಸಾಡಲು ಒಂದು ಬಾಡಿ ಅಷ್ಟೇ. ಫೈನಾನ್ಶಿಯಲ್ ಅಡ್ವೈಸರ್ಸ್, ಯಾವತ್ತೂ ನಮ್ಮ ಸ್ನೇಹಿತರಂತೂ ಅಲ್ಲ, ಇವರೆಲ್ಲ hyped ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಷ್ಟೇ, ನಿಮ್ಮ ದುಡ್ಡು ಕಾಸಿನ ವಿಚಾರಕ್ಕೆ ಬಂದಾಗ ಅವರ ತರ್ಕದಲ್ಲಿ ಯಾವುದೇ ಭಾವನೆಗಳಾಗಲೀ ನೋವಾಗಲಿ ಇರೋದಿಲ್ಲ. ಸಹೋದ್ಯೋಗಿಗಳು, ನಾನು ಈ ಹಿಂದೆ ಬರೆದ ಹಾಗೆ ಸ್ನೇಹಿತರೆಂದೂ ಆಗೋದಿಲ್ಲ, ಯಾವತ್ತಿದ್ದರೂ ರ್ಯಾಟ್‌ರೇಸ್ ಅನ್ನು ನೆನಪಿಸೋ ಹಾಗೆ ಅವರವರ ಏಳಿಗೆ ಅವರವರಿಗೆ ಮುಖ್ಯ. ಹೀಗೆ ನಾವು ಒಡನಾಡುವ external circle ಅನ್ನೋ ಪರೀಕ್ಷಿಸಿ ನೋಡಿದಾಗ ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರು ಅನ್ನಿಸೋದಿಲ್ಲವೇ? ಇದು ಭಾರತದಲ್ಲಿ ಕೆಲಸ ಮಾಡುವವರಿಗೂ ಅನ್ವಯವಾಗಬಹುದು, ನಮ್ಮಂಥ ಅನಿವಾಸಿಗಳಿಗೆ, ಯಾಕೆಂದರೆ ಅನಿವಾಸಿತನವನ್ನು ನೋವಿರದ ನಾಗರಿಕತೆ ಎಂದು ನಾನು ಕರೆಯೋದರಿಂದ, ಇಲ್ಲಿನ ಪಾಲಿಸಿಗಳಲ್ಲಿ ಎಲ್ಲೂ feel for pain ಇದೆ ಎಂದು ಅನ್ನಿಸೋದೇ ಇಲ್ಲ.

ಅದಕ್ಕೆ, ನಮ್ಮ ಕೇರ್ ಅನ್ನು ನಾವೇ ಮಾಡಿಕೊಳ್ಳಬೇಕು, ನೋಡಿಕೊಳ್ಳಬೇಕು ಎಂದಿದ್ದು; ಬೇರೆ ಯಾರಾದರೂ ನಿಮ್ಮ ಯೋಗಕ್ಷೇಮವನ್ನು ಮಾಡುತ್ತಾರೆ ಎಂದುಕೊಂಡಿದ್ದರೆ ತಟ್ಟನೆ ಆ ಮನಸ್ಥಿತಿಯಿಂದ ಹೊರಬನ್ನಿ.

Monday, March 15, 2010

ಕ್ವಾರ್ಟರ್ರ್ ಮುಗಿತಾ ಬಂತು...

ಮೊನ್ನೆ ಮೊನ್ನೆ ಇನ್ನೂ ಹೊಸ ವರ್ಷ ಸೆಲೆಬ್ರೇಟ್ ಮಾಡಿ ೨೦೧೦ ಫರ್‌ಫಾರ್ಮೆನ್ಸ್ ಅಬ್ಜೆಕ್ಟೀವ್ಸ್ ಬರೆದಿದ್ದೆವಲ್ಲ, ಈಗಾಗ್ಲೇ ಮೊದಲ ಕ್ವಾರ್ಟರ್ ಮುಗಿಯೋದಕ್ಕೆ ಇನ್ನು ಕೇವಲ ಹದಿನೈದೇ ದಿನ ಬಾಕಿ ಎಂದು ಗೊತ್ತಾದ ಕೂಡಲೇ ಏನಾಯ್ತು ಫರ್ಸ್ಟ್ ಕ್ವಾರ್ಟರ್‌ಗೆ ಎನ್ನೋ ಚಿಂತೆಯಲ್ಲಿ ಮನಸ್ಸು ಕಳೆದು ಹೋಯ್ತು. ಇನ್ನೊಂದು ವಾರ ಎರಡು ವಾರದಲ್ಲಿ ಈ ಮೂರು ತಿಂಗಳಲ್ಲಿ ಏನೇನು ಮಾಡಿದೆವು ಎಂದು ಲೆಕ್ಕ ಕೊಡಬೇಕು (ಒಂಥರ ಚಿತ್ರಗುಪ್ತರ ಲೆಕ್ಕದ ಹಾಗೆ), ಹಾಗೇ ವರ್ಷದ ಲೆಕ್ಕ, ನಮ್ಮ ಜೀವಮಾನದ ಲೆಕ್ಕ...ಎಲ್ಲರೂ ಲೆಕ್ಕ ಇಡೋರೇ ಇಲ್ಲಿ.

ಇನ್ನೊಂದು ಸ್ವಲ್ಪ ದಿನದಲ್ಲಿ ಚೈತ್ರ ಮಾಸ-ವಸಂತ ಋತು ಬರುತ್ವೆ, ಅವರಿಗೆಲ್ಲ ಯಾರು ಲೆಕ್ಕ ಕೇಳ್ತಾರೆ ಈ ವರ್ಷ ಏನೇನು ಮಾಡ್ತೀರಿ, ಬಿಡ್ತೀರಾ ಅಂತ? ಇನ್ನೂ ಸ್ವಲ್ಪ ದಿನ ವಿಂಟರ್ ಇರುತ್ತೆ, ಅದನ್ನು ಯಾರಾದರೂ ಗದರುತ್ತಾರೆ ಏಕೆ ಈ ವರ್ಷ ಇಷ್ಟೊಂದು ಹಿಮಪಾತವನ್ನು ಮಾಡಿದೆ ಅಂತ? ಈ ಬ್ರಹ್ಮಾಂಡದ ಸಕಲ ಚರಾಚರ ಜೀವರಾಶಿಗಳಿಗಿಲ್ಲದ performance assessment ನಮಗ್ಯಾಕೆ? ಹೀಗೊಂದು ಪ್ರಶ್ನೆಯನ್ನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯನ್ನು ಅರೆದು ಕುಡಿದಂತೆ ಆಡೋ ನಮ್ಮ ಬಾಸನ್ನ ಕೇಳ್‌ಬೇಕು ಅಂದುಕೋತೀನಿ ಎಷ್ಟೋ ಸಲ.

ಕೆಲವೊಮ್ಮೆ performance ಇಲ್ಲವೇ ಇಲ್ಲ, ಎಲ್ಲವೂ ಮಕ್ಕೀಕಾ ಮಕ್ಕಿ ಯಾರದ್ದೋ ರಾಜಕೀಯ, ಯಾವುದೋ ಕೆಲಸಗಳ ನಡುವೆ ದಿನ-ವಾರಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವ ಜನ, ಇನ್ನು assessment ಕೊಡೋದಾದ್ರೂ ಹೇಗೆ? ನಾವು ಏನು ಮಾಡಿದ್ರೂ ಹೇಗಿದ್ರೂ ನಮ್ಮ ಕಾರ್ಯ ವೈಖರಿ ಬದಲಾಗೋದಿಲ್ಲ, ಕೆಲಸ ಜಾಸ್ತಿ ಆದ ಹಾಗೆ ಕ್ವಾಲಿಟಿ ಕಡಿಮೆ ಅನ್ನೋದಾದ್ರೆ, ನೀವು ಹೇಗೇ ಕೆಲಸ ಮಾಡಿದ್ರೂ ನಿಮ್ಮನ್ನು expense reduction ಹೆಸರಿನಲ್ಲಿ ಕೆಲಸದಿಂದ ತೆಗೆಯೋದೇ ನಿಜವಾದಲ್ಲಿ - ಈ performance assessment ಎಲ್ಲ ಹಾಸ್ಯಾಸ್ಪದ ಅನ್ಸಲ್ಲಾ?

ಇತ್ತೀಚೆಗೆ ನಮ್ಮ ಬಾಸು ಮತ್ತೊಂದು ಹೊಸ ಡೆಫಿನಿಷನ್ನ್ ಅನ್ನು ಕಂಡುಕೊಂಡಿದ್ದಾರೆ, ವೆಕೇಷನ್ನ್ ಅಂದರೆ it is an opportunity to work from a different location ಅಂತ! ರಜಾ ಇರಲಿ ಇಲ್ಲದಿರಲಿ, ವಾರದ ದಿನಗಳೋ ವಾರಾಂತ್ಯವೋ, ಹಬ್ಬವೋ ಹರಿದಿನವೋ -- ಕೆಲಸ ಮಾತ್ರ ತಪ್ಪೋದಿಲ್ಲ. ನಾವೂ Action items, Project plans, Critical issues, Next steps ಅಂತ ಬರೀತ್ಲೇ ಇರ್ತೀವಿ, ಕೆಲಸ ಮಾತ್ರ ಅದರ ಗತಿಯಲ್ಲಿ ಅದು ಸಾಗ್ತಾ ಇರುತ್ತೆ ಒಂಥರ ಹೈವೇ ಮೇಲಿನ ಕಾರುಗಳ ಹಾಗೆ. ಈ ಕಾಲನಿಗಳನ್ನು ನಂಬಿಕೊಂಡ ಇರುವೆಗಳು ಏನಾದ್ರೂ ಅವುಗಳ ಭಾಷೆಯಲ್ಲಿ ನಮ್ಮ ರೀತಿ ಏನಾದ್ರೂ ಡಾಕ್ಯುಮೆಂಟೇಷನ್ನ್ ಮಾಡ್ತಾವಾ ಅಂತ ಎಷ್ಟೋ ಸರ್ತಿ ಸಂಶಯ ಬಂದಿದೆ. ಇರುವೆ, ಜೇನ್ನೊಣಗಳು ನಮ್ಮನ್ನು ಕಂಡು, ನೋಡಿ ನಾವೇನು ಲೆಕ್ಕ ಇಡದೆ ಹೇಗೆ ಅಚ್ಚುಕಟ್ಟಾಗಿ ಕೆಲಸವನ್ನು ಪಾಲಿಸುತ್ತೇವೆ ಅಂತ ಹಂಗಿಸುತ್ತಾವೇನ್ನೋ ಅಂತ ಹೆದರಿಕೆಯಾಗುತ್ತದೆ.

Monday, December 28, 2009

’ಅಂತರಂಗ’ದಲ್ಲೇನು ನಡೀತಾ ಇದೆ?

’ಅಂತರಂಗ’ದಲ್ಲೇನು ನಡೀತಾ ಇದೆ? ಯಾಕೆ ಇದೀಗ ತಿಂಗಳ ಮೇಲೆ ಬರೆದೇ ಇಲ್ಲವಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಬರ್ತಾ ಇರೋದರಿಂದ ನನ್ನ ಮಾಮಾಲಿ ಸಸ್ಪೆಕ್ಟ್ ’ಸೋಮಾರಿತನ’ವನ್ನು ನೆಪಮಾಡಿಕೊಂಡು ಉತ್ತರವನ್ನೇನೋ ಕೊಡ್ತಾ ಇದ್ದೀನಿ, ಆದ್ರೆ ಇತ್ತೀಚಿನ ಭಾರತದ ಪ್ರಯಾಣ ಹಾಗೂ ವರ್ಷಾವಧಿ ಕೆಲಸಗಳ ಭರಾಟೆಯಿಂದಾಗಿ ಹೆಚ್ಚು ಬರೆಯೋದಕ್ಕಾಗಲಿಲ್ಲ, ಕ್ಷಮಿಸಿ.

ಮುಂದೆ ಪುರುಸೊತ್ತು ಮಾಡಿಕೊಂಡು, ಹಿಂದಿನ ’ಗೆಲುವಾಗೆಲೆ’ ಲೇಖನಕ್ಕೆ ’ಲಘುವಾಗೆಲೆ ಅನಿವಾಸಿ ಮನ...’ವೆಂದು ಮತ್ತೊಂದು ಆರ್ಟಿಕಲ್ ಬರ್ತಾ ಇದೆ...ಇನ್ನೇನು ’ಹೋಗಿ ಹರಿಯ’ನ್ನು ಮುಟ್ಟೋದೊಂದು ಬಾಕಿ ಅಷ್ಟೇ :-)

ಇದಲ್ಲದೇ ’ಅಂತರಂಗ’ದಲ್ಲಿ ಎಂದಿನ ತಳಮಳಗಳು ಇದ್ದೇ ಇವೆ, ನಿಮಗೆ ಗೊತ್ತಿದೆಯಲ್ಲಾ. ಎಂಥ ಮಾರ್ಕೆಟ್ಟಿನಲ್ಲೂ, ಎಂಥ ಸಂದರ್ಭದಲ್ಲೂ ನಮ್ಮ ನಮ್ಮೊಳಗೊಂದು ಕೊರಗುವ ಅಳುಮುಂಜಿ ಇದ್ದೇ ಇರುವಂತೆ.

ಇತ್ತೀಚೆಗೆ ’ಲೈವ್ ರೈಟರ್’ ಡೌನ್‌ಲೋಡ್ ಮಾಡಿಕೊಂಡಾಗಿನಿಂದಂತೂ ಬರೆಯೋದು ಮತ್ತಷ್ಟು ಸುಲಭವಾಗಿದೆ, ಬರೆಯೋದಕ್ಕೆ ಬೇಕಾದಷ್ಟು ವಿಚಾರಗಳಿವೆ, ಅಂದರೆ between the keyboard and the chair ಫ್ಯಾಕ್ಟರ್ ಅನ್ನು ಸರಿಪಡಿಸಿಕೊಳ್ಳೋದು ಮಾತ್ರ ಬಾಕಿ!

Friday, September 04, 2009

ಮತ್ತೆ ಅವನ ದರ್ಶನವಾಯ್ತು...

ನನ್ನ ಪಾಡಿಗೆ ನಾನು ಸುಮ್ಮನೇ ಒಂದು ಮುಂಜಾನೆ ಕೆಲಸಕ್ಕೆ ಹೊರಟಿರೋ ಹೊತ್ತಿಗೆ ಸುತ್ತಲಿನ ಮರಗಳು ಕುಲಕಿದಂತಾಗಿ ಅವುಗಳತ್ತ ನೋಡಿದೆ ಯಾವೊಂದು ವಿಶೇಷವೂ ಕಾಣಲಿಲ್ಲ, ಆದರೆ ಮರಗಳ ಎಲೆಗಳು ಅಲುಗಾಡುವಿಕೆಯಲ್ಲಿ ಏನೋ ಒಂದು ರೀತಿಯ ಹೊಸತನವಿದ್ದಂತೆ ತೋರಿತು. ಸುಮ್ಮನೇ ಹೀಗೇ ಇರಬಹುದು ಎಂದು ನನ್ನ ಪಾಡಿಗೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗಲೂ ಯಾರೋ ಆಹ್ವಾನಿಸದ ಅತಿಥಿಯೊಬ್ಬರು ನನ್ನ ಜೊತೆಗೆ ಕಾರಿನಲ್ಲಿ ಬರುತ್ತಿದ್ದಾರೆ ಎನ್ನಿಸಿದಾಗಲಂತೂ ಮೈ ನಡುಗತೊಡಗಿತು. ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ.

ಮುಂದೆ ಸ್ವಲ್ಪ ದೂರಗಳ ದಾರಿ ಸವೆಸಿದಂತೆ ಮರಗಿಡಗಳ ನಡುವೆ ಸೂರ್ಯ ಕಿರಣಗಳು ತೂರಿಬರಲು ಹರಸಾಹಸ ಮಾಡುತ್ತಿದ್ದವು. ಸೂರ್ಯನ ಬೆಳಕೂ ಕೂಡ ಮಂದಗತಿಯನ್ನು ತಲುಪಿತ್ತು. ಮುಂಜಾನೆ ಚುರುಕಾದ ಕಿರಣಗಳು ಮಲಗಿದವನ್ನೆಲ್ಲ ಬಡಿದೆಬ್ಬಿಸುವುದರ ಬದಲು ತಮ್ಮ ಮಂದ ಬೆಳಕಿನಲ್ಲೂ ಎದ್ದವರ ಕಣ್ಣನ್ನು ಕುಕ್ಕುತ್ತಿದ್ದವೇ ವಿನಾ ಮಲಗಿದವರ ಹತ್ತಿರ ಕೂಡಾ ಸುಳಿಯುತ್ತಿರಲಿಲ್ಲ. ಇದು ಸಾಲದು ಎಂಬಂತೆ ವಾತಾವರಣದ ಉಷ್ಣತೆಯೂ ಸ್ವಲ್ಪ ಸ್ವಲ್ಪ ಕಡಿಮೆಯಾದಂತಾಗಿ ಮಲಗಿದವರು ಕಂಬಳಿ-ಕೌದಿಯನ್ನು ಈಗಾಗಲೇ ಹುಡುಕಿಕೊಂಡು ಹೋಗುವುದು ಅನಿವಾರ್ಯವೆನ್ನಿಸಿರಬಹುದಾದದ್ದು ಜನರಲ್ಲಿ ಲವಲವಿಕೆಯನ್ನು ಮೂಡಿಸುವಲ್ಲಿ ಯಾವ ಉತ್ಸಾಹವನ್ನೂ ಕೂಡಿಹಾಕುತ್ತಿರಲಿಲ್ಲ. ಆದರೂ ನಾನು ದಾರಿ ಸವೆಸಿದಂತೆಲ್ಲಾ ಇಂದು ವಿಶೇಷವಾದ ಏನೋ ಒಂದು ಬದಲಾವಣೆ ಇದೆ ಎಂದು ಬಲವಾಗಿ ಅನ್ನಿಸುತ್ತಿದ್ದುದಂತೂ ನಿಜ.

ನನ್ನ ಹಿಂದೆ ಮುಂದೆ ಇದ್ದ ಕಾರುಗಳತ್ತ ಕಣ್ಣು ಹಾಯಿಸಿದೆ, ಅವರೆಲ್ಲರ ಅರ್ಧ ಮುಖಗಳು ಬೆಳಕಿನಲ್ಲಿ ಇನ್ನರ್ಧ ಮುಖಗಳು ನೆರಳಿನಲ್ಲಿ ಕಾಣಿಸುವಂತೆ ಎದುರಿನ ಸನ್ ಸ್ಕ್ರೀನ್ ನಿರ್ದೇಶಿಸುತ್ತಿತ್ತು. ಕಪ್ಪು ಕನ್ನಡಕ ಧರಿಸಿದ್ದ ಅವರೆಲ್ಲರೂ ಈ ಬೆಳಕು-ಕತ್ತಲಿನ ಬದಲಾವಣೆಗಳಿಗೆ ಹೆಣಗುವವರು ಯಾರು ಎಂದು ತಮ್ಮ ಸವಾಲನ್ನು ಯಾವತ್ತೋ ಬಿಟ್ಟಂತಿತ್ತು. ರಸ್ತೆಯ ಬದಿಯ ಮನೆಯ ಚಿಮಣಿಯ ಪಕ್ಕದಲ್ಲಿದ್ದ ಹೊಗೆ ಕೊಳವೆಯಲ್ಲಿ ಗ್ಯಾಸ್ ಹೀಟರ್ ಉರಿಯುತ್ತಿರುವುದರ ಪ್ರತೀಕವಾಗಿ ಕಪ್ಪು-ಕಂದು ಮಿಶ್ರಿತ ಹೊಗೆ ನಿಧಾನವಾಗಿ ವಾತಾವರಣದಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುತ್ತಿತ್ತು. ಹಾಗೆ ಸ್ಥಾಪಿಸಿದ ಅಸ್ಥಿತ್ವ ಮರುಕ್ಷಣವೇ ಮಾಯವಾಗುವ ಹಾಗೆ ಕಂಡು ಇವು ಎಲ್ಲ ಎಷ್ಟೊಂದು ಕ್ಷಣಿಕ ಎನ್ನಿಸುವಂತಾಯಿತು. ಇಷ್ಟೊತ್ತಿಗಾಗಲೇ ಹಬ್ಬಿ, ಹರಡಿ ಹಾಗೂ ಕದಡಿ ಹೋದ ಹೊಗೆ ಶುಭ್ರ ವಾತಾವರಣದಲ್ಲಿ ಮಂದವಾದ ಸೂರ್ಯನ ಕಿರಣಗಳ ದಯೆಯಿಂದ ಗೋಧೂಳಿಯ ತಿಳಿ ಪದರನ್ನು ಕಣ್ಣ ಮುಂದೆ ನಿರ್ಮಿಸುವಲ್ಲಿ ಹೆಣಗುತ್ತಿತ್ತು. ಹೀಗೇ ಏನೇನೇನೋ ಆಲೋಚನೆಗಳ ನಡುವೆಯೂ ಇಂದು ಅದೇನೋ ವಿಶೇಷವಿದೆ ಎನ್ನುವ ನನ್ನ ಭಾವನೆಗಳು ಬಲವಾಗುತ್ತಲೇ ಹೋದವು.

ನಡುವೆ ಬೇಕು ಎಂದರೂ ನಿಲ್ಲದ ಪಯಣ, ರಸ್ತೆಯಲ್ಲಿ ಇಳಿದ ಮೇಲೆ ಎಲ್ಲರಂತಿರಲೇ ಬೇಕಲ್ಲ, ನಾನೂ ಮುನ್ನಡೆದೆ. ನಮ್ಮ ಮನೆಯಿಂದ ಸರಿಯಾಗಿ ಆರು ಪಾಯಿಂಟ್ ಒಂದು ಮೈಲು ದೂರದಲ್ಲಿ ಕೊನೆಯಾಗುವ ಪ್ಲೆಸೆಂಟ್ ವ್ಯಾಲಿ ವೇ ಅಂತ್ಯದಲ್ಲಿ ಆರಂಭವಾಗುವ ಓಕ್‌ಡೇಲ್ ಅವೆನ್ಯೂನಲ್ಲಿ ಒಂದಿಷ್ಟು ಓಕ್ ಮರಗಳ ನಡುವೆ ದಾರಿಯಲ್ಲಿ ಬಂದಿದ್ದವನ್ನೆಲ್ಲ ಇರಿದು ಬಿಡುತ್ತೇವೆ ಎನ್ನುವ ಇರಾದೆಯಲ್ಲಿ ಬಲಿಯುತ್ತಿದ್ದ ಕಿರಣಗಳು ನನ್ನ ಕಣ್ಣುಗಳನ್ನು ಚುಚ್ಚಿದಾಗಲೇ ಈ ಅಪರೂಪದ ಅತಿಥಿ ಯಾರು ಎಂದು ನನಗೆ ಅರ್ಥವಾದದ್ದು! ಆ ಅತಿಥಿಯೇ ಫಾಲ್ (Fall) ದಿನ, ಮುಂಬರುವ ಛಳಿಗಾಲದ ಮುನ್ಸೂಚಕ, ಚಿಗುರಿ ಬಲಿತು ಮುಂದೆ ಬೆಳೆಯ ಬೇಕಾದ ಎಲೆಗಳಿಗೂ ಕರುಣೆ ತೋರದೆ ಎಲ್ಲವನ್ನೂ ಕೆಳಗೆ ಇಳಿಸುವವ, ಹಸಿರು-ಹಳದಿಯನ್ನು ಕೆಂಪಗಾಗಿಸುವವ, ಮರ-ಗಿಡಗಳ ಮೂಗು ಮುಸುಡಿಯನ್ನು ನೋಡದೆ ಬೆತ್ತಲಾಗಿಸುವವ, ರೀಸೈಕಲ್ ಪರಮಗುರು, ಎಂಥಾ ಮರವನ್ನು ನಡುಗಿಸುವವ, ಗಾಳಿಯಲ್ಲಿನ ತೇವವನ್ನು ತಿಂದು ತೇಗಿ ಬಿಡುವವ. ನಮ್ಮಂಥ ಹುಲು ಮಾನವರ ಕಥೆ ಹಾಗಿರಲಿ ಉರಿವ ಸೂರ್ಯನಿಗೂ ಸರಿಯಾಗಿ ಕೆಲಸ ಮಾಡಲು ಬಿಡದೆ ಅವನ ದಿನಗಳನ್ನೆಲ್ಲ ಮೊಟಕು ಹಾಕಿ ಬಿಡುವವ.

ಫಾಲ್ ದಿನ ಎಂದರೆ ಹೊಸತನವನ್ನು ಸ್ವಲ್ಪ ನಿಧಾನವಾಗಿಯೇ ತರುವ ಸಂಭ್ರಮದ ಆಶಾವಾದಿಯೇ ಎಂದು ನನ್ನನ್ನು ನಾನು ಸಂತೈಸಿಕೊಂಡಿದ್ದೇನೆ. ಅಥವಾ ಬಿಸಿಯಾಗಿದ್ದನ್ನು ತಂಪಾಗಿಸಿ ನಮ್ಮವರ ಮನ-ಮನೆಗಳಲ್ಲಿ ಡಿಪ್ರೆಷ್ಷನ್ನನ್ನು ಉಂಟು ಮಾಡುವ ನಿರಾಶಾವಾದಿಯೇ ಎಂದು ನಿಟ್ಟುಸಿರಿಟ್ಟಿದ್ದೇನೆ. ಬೇಸಿಗೆ ಮತ್ತು ಛಳಿಗಾಲಗಳ ನಡುವೆ ಬಂದು ಹೋಗುವ ಇವನ ಹೂಟವೇನು? ತರಗಲೆಗಳನ್ನೆಲ್ಲ ಸುತ್ತಿ ಎಲ್ಲಿಂದ ಎಲ್ಲಿಗೋ ಎಸೆಯುವ ಇವನ ಆಟವೇನು? ಬದುಕನ್ನು ಬಯಲಾಗಿಸಿ ನೋಡುವ ಇವನ ಮಾಟವೇನು?

ಇನ್ನೂ ಇಪ್ಪತ್ತು ದಿನಗಳಾದರೂ ಇವೆ ಅಧಿಕೃತವಾಗಿ ಸಮ್ಮರ್ ಮುಗಿಯಲು ಎಂದರೆ ಅಭ್ಯಾಗತ ಅತಿಥಿ ಈಗಾಗಲೇ ಬಂದು ಒಕ್ಕರಿಸಿದ್ದಾನೆ. ಬೆಳ್ಳಂಬೆಳಗ್ಗೆ ವಾತಾವರಣದ ಉಷ್ಣತೆಯನ್ನು ನಲವತ್ತೈದು ಡಿಗ್ರಿ ಫ್ಯಾರನ್‌ಹೈಟ್ ಮಟ್ಟಕ್ಕೆ ಇಳಿಸಿ ಸಂತಸ ಪಡುತ್ತಾನೆ. ಇದ್ದ ಒಂದೆರಡು ದಿನಗಳನ್ನಾದರೂ ಹಾಯಾಗಿ ಡೆಕ್ ಮೇಲೆ ಕಳೆಯೋಣವೆಂದರೆ ಈತ ವರುಣನೊಂದಿಗೆ ಬಿನ್ನಾಣದ ಸ್ನೇಹವನ್ನೂ ಬೆಳೆಸಿ ವರ್ಷಧಾರೆಯನ್ನು ಸುರಿಸುತ್ತಾನೆ. ಬೇಡಾ-ಬೇಡಾ ಎಂದರೂ ಬೇಡದ್ದನ್ನೇ ಮಾಡದ ಹಠ ಹಿಡಿದ ಪೋರನಂತೆ, ಇಂದು ಏನಾದರೂ ಸಿಕ್ಕಿದ್ದು ಸಿಕ್ಕಲಿ ಎನ್ನುವ ಚೋರನಂತೆ ಇವನ ಮನ. ಇವನ ಸ್ನೇಹವನ್ನು ಬೆಳೆಸದಿದ್ದರೆ ಬೇರೆ ದಾರಿಯೇನಿದೆ? ಇವನಿಗೆ ಸಲಾಮು ಹೊಡೆದು ಸಹಕರಿಸುತ್ತಿದ್ದ ಹಾಗೆ ಇವನ ಅಣ್ಣ ವಿಂಟರ್ ಬರುತ್ತಾನೆ - ಇವರೆಲ್ಲರ ಅಟ್ಟ ಹಾಸಕ್ಕೆ ಸಿಕ್ಕಿ ನೆರೆಹೊರೆ ಮರುಗುವುದರೊಳಗೆ ಮತ್ತೆ ನಂತರ ಸ್ಪ್ರಿಂಗ್ ಬಂದು ಸೂರ್ಯನ ಮಾಮೂಲಿ ಡ್ಯೂಟಿ ಆರಂಭವಾಗುವಾಗ ಇನ್ನು ಯಾವ ಕಾಲವಿದೆಯೋ ಅದೆಷ್ಟು ದೂರವೋ ಎಂದು ಎಣಿಸುತ್ತಿರುವ ಹೊತ್ತಿಗೆ ಯಾವಾಗಲೂ ಒಂದೇ ಮುಖವನ್ನು ಹೊತ್ತಿಕೊಂಡ ಆಫೀಸಿನ ಬಿರುಸು ಡ್ರೈವ್ ವೇ ಎದುರಿಗೆ ಸಿಕ್ಕು ಮತ್ತಿನ್ಯಾವುದೋ ಆಲೋಚನೆಯಲ್ಲಿ ಮನಸ್ಸು ತೊಡಗಿಕೊಳ್ಳುತ್ತದೆ. ಹೀಗೆ ಆಫೀಸ್ ಹೊಕ್ಕು ಮತ್ತೆ ಹೊರಬರುವವರೆಗೆ ಈ ಅತಿಥಿಗಳು ನನ್ನನ್ನು ಅಷ್ಟೊಂದು ಕಾಡೋದಿಲ್ಲವೆನ್ನುವುದು ನಿಜ.

Saturday, June 06, 2009

ಒಂದು ನೆಗಡಿಯ ಕಥೆ

You have to experience bad health to appreciate the good health - ಅಂತ ಅನ್ಸಿದ್ದು ಇತ್ತೀಚೆಗೆ. ಏನಿಲ್ಲ, ವರ್ಷದ ಏಳೆಂಟು ತಿಂಗಳು ಕೆಟ್ಟ ಛಳಿಯಲ್ಲಿ ನೊಂದು ಸ್ಪ್ರಿಂಗ್ ಬರಲಿ ಎಂದು ಪ್ರಾರ್ಥಿಸಿದ್ದೇ ಬಂತು, ಹಾಗೆ ಬಂದ ಸ್ಪ್ರಿಂಗ್ ತನ್ನ ಜೊತೆಗೆ ಅಲರ್ಜಿಗಳ ಹಿಂಡನ್ನೂ ತಂತು.

ನನಗೆ ಬರೋ ದೊಡ್ಡ ರೋಗವೆಂದರೆ ನೆಗಡಿ ಒಂದೇ. ನೆಗಡಿಯಂಥಾ ರೋಗವಿಲ್ಲ, ಬುಗುಡಿಯಂಥಾ ಒಡವೆ ಇಲ್ಲ ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ. ನನಗಾಗೋ ನೆಗಡಿಯ ಅನುಭವದ ಹತ್ತಿರದ ಉಪಮೆ ಎಂದರೆ ಹನಿ ನೀರಾವರಿ - ಎರಡೂ ಮೂಗಿನ ಹೊರಳೆಗಳಿಂದಲೂ ಸದಾ ಕಾಲ ಹನಿಗಳು ತೊಟ್ಟಿಕ್ಕೋದೇ ಬಂತು. ಆ ಶೀತದ ಭರಾಟೆ ಎಷ್ಟು ಎಂದರೆ ಯಾವ ಕ್ಲೀನೆಕ್ಸು ಟಿಶ್ಶ್ಯುಗಳೂ ಕಟ್ಟಿ ಹಾಕದ ಹಾಗೆ ನೀರಿನ ಅಬ್ಬರ ಮುಂದುವರೆಯುತ್ತಲೇ ಇರುತ್ತದೆ, ಈ ಲಿಂಗಮಕ್ಕಿಯ ಫ್ಲಡ್‌ಗೇಟ್‌ಗಳನ್ನು ತೆರೆದಾಗ ನೀರು ಒಂದೇ ಸಮನೆ ಹೊರಹೋಗುತ್ತಲ್ಲ ಹಾಗೆ (ಸದ್ಯ ಅಷ್ಟೊಂದು ಪ್ರಮಾಣ ನೀರು ಬರೋಲ್ಲವಲ್ಲ, ಅಷ್ಟೇ ಸಾಕು). ನಾನೋ ಹಳೆ ಕಾಲದವನು, ಈ ಟಿಶ್ಶು ಪೇಪರುಗಳಿಂದಾಗೋ ಕರ್ಮವಲ್ಲವೆಂದುಕೊಂಡು ಆಫೀಸಿಗೆ ಒಂದೆರಡು ಹ್ಯಾಂಡ್ ಟವಲ್ಲುಗಳನ್ನೇ ಹಿಡಿದುಕೊಂಡು ಬಂದವನು (ಹ್ಯಾಂಡ್ ಕರ್ಚೀಪ್‌ಗಳು ನಮ್ಮ ಮನೆಯಲ್ಲಿ ಹುಡುಕಿದರೂ ಸಿಗದ ಹಾಗಿನ ವಸ್ತುಗಳಾಗಿವೆ, ಅದು ಬೇರೆ ವಿಷಯ). ನಾನು ಕೆಮ್ಮಿ, ಸೀನಿ, ಕ್ಯಾಕರಿಸುವ ಕಷ್ಟವನ್ನು ನೋಡಿ ಆಫೀಸಿನಲ್ಲಿ ಅಕ್ಕಪಕ್ಕದವರಿಗೆ ಮನವರಿಕೆಯಾದ ಮೇಲೆ ಅವರಾದರೂ ನನ್ನ ಟವೆಲ್ ಪ್ರಯೋಗವನ್ನು ನೋಡಿ ಏನು ತಾನೇ ಅಂದುಕೊಂಡಾರು? ಹಾಗಂದುಕೊಂಡರೂ ಅದು ಅವರ ಕಷ್ಟ ನನಗೇನಾಗಬೇಕು ಅದರಿಂದ?

So, I have two options: ಆಪ್ಷನ್ ಒಂದು, ಡೀಲ್ ವಿಥ್ ದ ನೆಗಡಿ - ಒಂದು ವಾರ, ಏಳು ದಿನ, ಅದರ ಟೈಮ್ ತೆಗೊಳ್ಳುತ್ತೆ ಆಮೇಲೆ ಸರಿ ಆಗುತ್ತೆ. ಆಪ್ಷನ್ ಎರಡು ಅಲೋಪಥಿಕ್ ಮೆಡಿಕೇಶನ್ನ್‌ಗಳಿಗೆ ಶರಣು ಹೋಗೋದು - ಬೇಕಾದಷ್ಟಿವೆ, ನಿಮ್ಮ ಮೂಗನ್ನು ಮುಂಗಾರು ಮಳೆಯ ಅಂಗಳದಿಂದ ಅಗ್ಗಿಷ್ಟಿಕೆಯ ಸುಡುಬೆಂಕಿಯಷ್ಟು ಪ್ರಭಲವಾಗಿ ಉರಿಯುವ ಹಾಗೆ ರಾತ್ರೋ ರಾತ್ರಿ ಬದಲಾಯಿಸಬಲ್ಲ ಘಟಾನುಘಟಿ ಮೆಡಿಕೇಶನ್ನುಗಳಿವೆ, ಒಂದಿಷ್ಟು ಭಾರತೀಯ ಮೇಡ್, ಮತ್ತೊಂದಿಷ್ಟು ಅಮೇರಿಕನ್. ಆದರೆ ಆಪ್ಷನ್ನ್ ಎರಡರಲ್ಲಿ ಬೇಕಾದಷ್ಟು ಸೈಡ್ ಎಫೆಕ್ಟ್‌ಗಳಿವೆ. ಈ ಒಂದು ಹಾಗೂ ಎರಡು ಆಪ್ಷನ್ನುಗಳಲ್ಲಿ ಅವುಗಳದ್ದೇ ವೇರಿಯೇಷನ್ನುಗಳನ್ನೂ ಮಾಡಬಹುದು - ಒಂಥರಾ ಮಿಕ್ಸ್ಡ್ ರಿಯಾಕ್ಷನ್ನ್ ಥರ ಅದರ ಎಫೆಕ್ಟೂ ಇರುತ್ತೆ!

ನೆಗಡಿ ಬಂದರೆ ಜೊತೆಗೆ ಅದರ ಸಂಸಾರವೇ ಬರುತ್ತದೆ: ಮೊದಲು ಹನಿ ನೀರಾವರಿಯಿಂದ ಶುರುವಾದ ನೀರು ಮುಂದು ಮೂಗಿನಲ್ಲಿ ಗೊಣ್ಣೆ ಬದಲಾಗಿ, ಅದು ಮುಂದ ಬಿಳಿ-ಹಳದಿ ಬಣ್ಣದ ಹಿಕ್ಕೆಯಾಗಿ ಒಂದು ವಾರದಲ್ಲಿ ಪರಿವರ್ತಿತಗೊಳ್ಳುವ ಹಂತ. ಈ ಮಧ್ಯೆ ಒಂದಿಷ್ಟು ದಿನ ಗಂಟಲಿನಲ್ಲಿ ಸಿಕ್ಕು ಬಾಯಿಯಿಂದ ಬಂದರೆ ಕಫ, ಮೂಗಿನಲ್ಲೇ ಶೀಟಿ ಬಿಸಾಡಿದರೆ ಗೊಣ್ಣೆ ಎನ್ನುವ ಬಹು ರೂಪದ ಸಂಭ್ರಮ. ಮುಂದೆ ಸರಳ ಕೆಮ್ಮು, ಒಣ ಕೆಮ್ಮು ಮೊದಲಾದ ಗಂಟಲಲ್ಲಿ ’ಕಿಚ್-ಕಿಚ್’ ಹಂತ. ಈ ಕೆಮ್ಮು ದಿನದ ಬೇರೆ ಬೇರೆ ಹೊತ್ತಿನಲ್ಲಿ ಬೇರೆ ಬೇರೆ ಲೆವೆಲ್ ಮುಟ್ಟುವುದು. ಇವೆಲ್ಲವೂ ಇರುವಂತೆಯೇ ನೀವು ಮಾತನಾಡಿದ್ದು ಒಂದು, ಇನ್ನೊಬ್ಬರಿಗೆ ಕೇಳುವುದು ಇನ್ನೊಂದು ಎನ್ನುವ ಹಾಸ್ಯ - ನೀವು ’ನಾನು’ ಎಂದರೆ, ಅದು ಕೇಳಿದವರಿಗೆ ’ಮಾನು’ ಆಗುವುದು. ಈ ಮೂಗಿನ ಮ್ಯಾನೇಜ್‌ಮೆಂಟ್ ಬಹಳ ದೊಡ್ಡದೇ, ನಿಮಗೆ ಗೊತ್ತಿಲ್ಲ ಅದರ ಸಹವಾಸ. ಎಂಥೆಂಥ ಅತಿರಥ ಮಹಾರಥರೂ ತಮ್ಮ ತಮ್ಮ ಮೂಗಿಗೆ ಕೈ ಹಾಕಿಕೊಳ್ಳುವುದನ್ನು ನೀವು ನೋಡಿಲ್ಲ? ಈ nose pick ಎನ್ನುವುದು ಆಪಲ್ ಪಿಕ್, ಸ್ಟ್ರಾ ಬೆರಿ ಪಿಕ್ ಎನ್ನುವ ಹಾಗೆ ಸೀಜನಲ್ ಅಂತೂ ಅಲ್ಲ ಜೊತೆಗೆ ಮೂಗು ಪಿಕ್ ಮಾಡಿದಾಗಿನ ಔಟ್‌ಪುಟ್ ಆಯಾ ಮೂಗಿನ ಓನರುಗಳಿಂದ ಹಿಡಿದು ಬೇರೆ ಯಾರಿಗೂ ಬೇಡವಾದ ಪ್ರಾಡಕ್ಟು. ಅದನ್ನು ಒಂದು ಕಡೆ ಟ್ರ್ಯಾಷ್ ಅನ್ನುವಷ್ಟು ದೊಡ್ಡದೂ ಅಲ್ಲದೇ ಮತ್ತೊಂದು ಕಡೆ ಲಿಟ್ಟರ್ ಎಂದು ದೂಷಿಸಲೂ ಬಾರದ್ದನ್ನು ಎಲ್ಲಿ ಬೇಕಾದಲ್ಲಿ ಬಿಸಾಡಲೂ ಬಹುದು. ನಮ್ಮ ಮನೆಯ ಮಕ್ಕಳೂ ಸೇರಿ ಇನ್ನು ಕೆಲವರು ಅದನ್ನು ತಿಂದು ರೀ ಸೈಕಲ್ ಮಾಡುವುದೂ ಕಣ್ಣಿಗೆ ಬಿದ್ದಿದೆ.

ಅವರವರ ಕರ್ಮಕ್ಕನ್ನುಸಾರವಾಗಿ ಯಾರ್ಯಾರೋ ಏನೇನೋ ರೋಗರುಜಿನಗಳಿಗೆ ತುತ್ತಾಗುವುದಿದೆ. ಎಲ್ಲರಿಗೂ ಅವರವರ ರೋಗವೇ ದೊಡ್ಡದು ಹಾಗೇ ಅದರದ್ದೇ ಸಂಭ್ರಮ ಅನ್ನೋ ಹಾಗೆ ನನಗೆ ಈ ಹೊತ್ತಿನಲ್ಲಿ ಈ ನೆಗಡಿಯ ವಿಚಾರ. ಅದನ್ನು ಫ್ಲೂ ಮತ್ತೊಂದು ಇನ್ನೊಂದು ಎಂದು ಯಾರು ಏನು ಬೇಕಾದರೂ ಕರೆದುಕೊಂಡರೂ ನನಗಂತೂ ಅದು ಪ್ರತಿವರ್ಷದ ಸ್ಪ್ರಿಂಗ್ ತರುವ ಬಳುವಳಿ. ಛಳಿಯಲ್ಲಂತೂ ಒಳಗೆ ಸೇರಿಕೊಂಡಿದ್ದೇ ಬಂತು ಇನ್ನು ಬೇಸಿಗೆಯಲ್ಲಾದರೂ ಹೊರಗೆ ತಿರುಗಾಡಬೇಕು, ಬದಲಿಗೆ ಮನೆಯಲ್ಲೇ ಏರ್ ಪ್ಯೂರಿಪೈಯರ್ರ್ ಇಟ್ಟುಕೊಂಡು ಒಳ್ಳೆಯ ಗಾಳಿಯನ್ನು ಮಾತ್ರ ಉಸಿರಾಡಿ ಬಿಟ್ಟರೇನು ಬಂತು ಎನ್ನುವುದು ಈ ಹೊತ್ತಿನ ತತ್ವ.

Monday, February 16, 2009

ಈಗಿನ ಹುಡ್ರು ಕಥೆ

ಪಾಪ, ಈಗಿನ ಹುಡ್ರು ತಮ್ ತಮ್ ಒಳಗೆ ಹಿಂಗೂ ಮಾತಾಡ್‌ಕೊಂತರೆ ನೋಡಿ, ಕರ್ರಗಿದ್ದೋರನ್ನ ಕರಿಯಾ ಅನ್ನೋದರಲ್ಲಿ ಅಫೆನ್ಸ್ ಏನಿದೆ? ದಿನಕ್ಕೆ ಐವತ್ತು ಸೆಂಟ್ಸ್ ಕೊಟ್ಟು ವಾರಕ್ಕೊಂದು ಸರ್ತಿ ಉದಯಾ ಟಿವಿ ನೋಡೋ ಭಾಗ್ಯದ ದೆಸೆಯಿಂದ ಈ ಹಾಡು ಕಿವಿಗೆ ಬಿದ್ದು ಹೀಗೆ ಬರೀಬೇಕಾಯ್ತು ನೋಡಿ.

ಕರಿಯಾ ಐ ಲವ್ ಯೂ
ಕರುನಾಡ ಮೇಲ್ ಆಣೆ
ಬೆಳ್ಳಿ ಐ ಲವ್ ಯೂ
ಬಿಳಿ ಮೋಡದಾ ಮೇಲ್ ಆಣೆ

ಭಾಳಾ ಹಿಂದಕೆ ಏನಿಲ್ಲ ಪ್ರೇಮಿಗಳೆಲ್ಲ ಇನ್ನೂ ಏನೇನನ್ನೋ ಇಟ್ಟು ಆಣೆ ಮಾಡಿಕೊಂತಿದ್ರು ಇಂದಿನ್ ಕಾಲ್ದಲ್ಲಿ ಅವೆಲ್ಲಾ ಶಾನೆ ಬದ್ಲಾಗಿರಂಗಿದೆ ಬಿಡಿ, ಏನ್ ಮಾಡಣ. ಇವತ್ತಿನ್ ಹುಡ್ರೆಲ್ಲಾ ಟೈಪ್‌ರೈಟರ್ ಕುಟ್ಟಿ ನೋಡಿಲ್ಲ, ರೆಕಾರ್ಡ್ ಪ್ಲೇಯುರ್ ತಟ್ಟೇನೆಲ್ಲ ಕಂಡೇ ಇಲ್ಲ. ನಮ್ ಕಾಲ್ದ ರೆಕಾರ್ಡ್ ತಟ್ಟೆಗಳ ಮೇಲ್ ಧೂಳೂ ಪಾಳೂ ಕುಂತಿದ್ದೇ ಆದ್ರೆ ಬರೀ ಹೇಳಿದ್ದೇ ಹೇಳ್ತಿತ್ತು, ಅದೇ ಈಗಿನ ಕಾಲ್ದ ತಟ್ಟೆಗಳೋ ಕೆಲ್ಸಾ ಮಾಡೋದೇ ನಿಲ್ಲಿಸ್ತವೆ. ಹೇಳಿದ್ದೇ ಹೇಳೋದ್ ಬೆಷ್ಟೋ ಅಥ್ವಾ ಕೆಲ್ಸಾ ನಿಲ್ಸೋದ್ ಬೆಷ್ಟೋ ನಿಮ್ ನಿಮ್ಗೇ ಬಿಟ್ಟಿದ್ದು. ಕೆಲವಂದ್ ಸರ್ತಿ ಹೇಳಿದ್ದೇ ಹೇಳೋ ಕಿಸ್‌ಬಾಯ್ ದಾಸ್ರೇ ಸರಿ, ಸುಮ್ಕಿರ್ ಮಂಗ್ಯಾನ್ ಮಕ್ಳೀಗ್ ಹೋಲ್ಸಿ ನೋಡಿದ್ರೆ ಅನ್ಸಲ್ಲಾ?

ನಿನಗೊಂದು ಪ್ರೇಮದ ಪತ್ರಾ
ಬರೆಯೋದು ನನಗಾಸೆ
ನಾನೆ ಇರುವೇ ಹತ್ರ
ಬಿಡು ಆಸೆ ಓ ಕೂಸೇ


ಆಯ್ತಲ್ಲಾ ಕಥೇ, ಪ್ರೇಮದ ಪತ್ರಾ ಇರ್ಲಿ, ಪತ್ರದ ಗೋಜಿಗೇ ಹೋಗಂಗಿಲ್ಲ ಈಗಿನ ಹುಡ್ರೂ ಅಂತೀನಿ. ಎಲ್ಲೋ ಇ-ಮೇಲೂ ಪಾಮೇಲೂ ಅಂತ ಕುಟ್ಟಿಗಂಡು ಬದುಕ್ಯಂಡಿದ್ದ್ ಬಡ್ಡಿ ಹೈಕ್ಳು ಈಗೀಗ ಎಸ್‌ಎಮ್ಮೆಸ್ ದಾರಿ ಹಿಡಕಂಡು ಒಂಥರಾ ಕಾಡುಕುದ್ರೆ ದಾರಿ ಹಿಡಿದವೆ ಇವರ ಕಮ್ಮ್ಯೂನಿಕೇಷನ್ನು. ಜೊತೆಗೆ ಸೆಂಟ್ರಲೈಜ್ಡ್ ಪೋಸ್ಟ್ ಆಫೀಸ್ ಕಥೆ ಏನ್ ಹೇಳಾಣ, ಅವರ ಪತ್ರಗಳ ಎಣಿಕೆ ಕಡಿಮೆ ಆದಂತೆ ಅವರ ಕಮ್ಮೀ ಆದ ಆದಾಯ ನೋಡಿ ಇಂದಿನ ಪೋಸ್ಟ್ ಮಾಸ್ಟರ್ ಜನರಲ್ಲುಗಳಿಗೆ ರಾತ್ರಿ ನಿದ್ದೇನೇ ಬರಂಗಿಲ್ಲಂತೆ ನಿಜವೇ? ಇವತ್ತಿನ ಮೊಬೈಲ್ ಫೋನ್ ಜಮಾನಾದಾಗೆ ಜನಗಳು ಲೆಟ್ರು ಬರೆಯೋದಿರ್ಲಿ ಮಾತೇ ಆಡೇ ಬರೀ ಫಿಂಗರ್ರುಗಳ ಮಸಲ್ಲುಗಳನ್ನು ಬೆಳೆಸ್ತಾ ಇದಾರಂತೆ ಹಿಂಗೇ ನಡೆದ್ರೆ ಇನ್ನು ಮುಂದಿನ ಪೀಳಿಗೆಗಳಿಗೆ ಒಂದೊಂದು ಬೆರಳು ಹೆಚ್ಚು ಹುಟ್ಟುತ್ತೋ ಏನೋ - ವಿಕಾಸವಾದದ ದೊರೆಗಳ್ನೇ ಕೇಳ್ಬೇಕು. ಬ್ಲ್ಯಾಕ್‌ಬೆರಿ ಅಂತಂದು ಜೀವನದುದ್ದಕ್ಕೂ ಯಾವ್ದೇ ಬೆರ್ರಿನ್ನೂ ಚೆರ್ರಿನ್ನೂ ನೋಡ್ದೇ ಇರೋರಿಗೆ ಕಮ್ಮ್ಯೂನಿಕೇಷನ್ನ್ ಫಿವರ್ರ್ ಹುಟ್ಟಿಸಿರೋರನ್ನ ಜೈಲಿಗೆ ಹಾಕ್ಬೇಕು, ಮತ್ತೇನು. ಇಷ್ಟೆಲ್ಲಾ ಮಾಧ್ಯಮಾ, ಕಮ್ಮ್ಯೂನಿಕೇಷನ್ನೂ ಅಂತಾ ಇದ್ರೂ ಜನಗಳ ನಡ್ವೆ ಸಂಬಂಧಗಳ ಅಪಸ್ವರ ಹೆಚ್ತಾನೇ ಇರೋದು ಇನ್ಯಾವ ವಾದದ ಮಾತೂ ಅಂತೀನಿ.

ಇವತ್ತಿನ ಕಾಯಂಗಿಲ್ಲ, ಕೆನೆ ಕಟ್ಟಂಗಿಲ್ಲ. ನೋಡಿಕ್ಯಂತಿರಿ ಇವತ್ತಲ್ಲ ನಾಳೆ ಒಂದು ನಿಮಿಷದೊಳಗೆ ಹಾಲು ಕೆನೆಕಟ್ಟೋ ಯಂತ್ರ ಕಂಡ್ ಹಿಡಿತಾರೋ ಇಲ್ಲಾ ಅಂತ. ಮೊಸರಿಗೆ ಇಡೋವಾಗ ಹಾಲನ್ನು ಬಿಸಿ ಮಾಡಿ ಆಮೇಲೆ ತಣ್ಣಗೆ ಮಾಡಿ ಅದರ ಮೇಲೆ ಹೆಪ್ಪು ಯಾಕ್ ಹಾಕಬೇಕು, ಯಾರ್ ಮಾಡಿದ್ರಪ್ಪಾ ಆ ನೀತೀನ.

Friday, November 21, 2008

ದೇವ್ರು ಇಲ್ಲಾ ಅಂತ ಅಂದೋರು ಯಾರು

ನಾವೆಲ್ಲಾ ಚಿಕ್ಕವರಿದ್ದಾಗ ದೇವ್ರು-ದೆವ್ವಗಳು ಇದ್ದಾವೋ ಇಲ್ಲವೋ ಅಂತ ಚಿಂತೆ-ಚಿಂತನೆ ನಡ್ಸಿ ನಡ್ಸಿ ಬಹಳ ಟೈಮು ಕಳೀತಿದ್ವಿ, ನಮ್ಮ ನಮ್ಮ ಮಟ್ಟಿನ ತತ್ವಗಳು ತರ್ಕಗಳು ನಮ್ಮನ್ನು ವಾದ-ವಿವಾದಗಳಲ್ಲಿ ತೊಡಗಿಸಿ ಕೆಲವೊಂದು ಕಥೆಗಳನ್ನು ಬಹಳ ರೋಚಕಗೊಳಿಸಿ (ಅಂದ್ರೆ ಮಸಾಲೆ ಸೇರಿಸಿ) ಹೇಳಿ ಹಂಚಿಕೊಳ್ಳುತ್ತಿದ್ದೆವು. ಪ್ರಪಂಚದಲ್ಲಿ ಇದ್ದ ಇಲ್ಲದ ದೆವ್ವ ಭೂತಗಳು, ಕೊಳ್ಳಿ ದೆವ್ವಗಳು ಇವೆಲ್ಲಾ ನಮ್ಮ ತಂಡದ ಅನುಪಸ್ಥಿತ ಸದಸ್ಯರಾಗಿದ್ದವು. ನಮ್ಮ ನಮ್ಮ ದೇವರುಗಳ ಜೊತೆಗೆ ನಮ್ಮೂರಿನ ಶ್ಮಶಾನದಲ್ಲಿದ್ದ ದೆವ್ವಗಳು ಹಾಗೂ ಅವುಗಳ ಕಥೆಗಳು ನಮ್ಮ ಜೊತೆಗೆ ಅಮೇರಿಕಕ್ಕೆ ಹೇಗೆ ಬಂದ್ವು, ಅವುಗಳಿಗೆ ವೀಸಾ ಕೊಟ್ಟೋರು ಯಾರು ಅನ್ನೋ ಪ್ರಶ್ನೆಗಳು ಇನ್ನು ಪ್ರಶ್ನೆಗಳಾಗೇ ಉಳಿದಿವೆ ಬಿಡಿ.

ಈ ತಣ್ಣನೆ ಹೊತ್ತಿನಲ್ಲಿ ದೇವ್ರ ಬಗ್ಗೆ ನೆನೆಸಿಕೊಳ್ಳೋದಕ್ಕೆ ಏನು ಕಾರಣ ಅಂತ ನನಗೇ ಅನ್ಸಿ ಒಂದು ನಗು ಹೊರಗೆ ಬಂತು, ಅದರ ಹಿಂದೇನೇ ದೇವ್ರ ಹೆಸರನ್ನ ಹಿಡಿದು ಒಂದಿಷ್ಟು ಕೀಟಲೆ ಮಾಡೋಣ ಅಂತ್ಲೂ ಅಂದುಕೊಂಡೆ, after all ಯಾವ ದೇವ್ರ ತಂಡವೂ ನಮ್ಮನ್ನೇನು sue ಮಾಡೋಲ್ಲ ಅಲ್ವೇ?

***

Thanks to my three year old - ಪ್ರತಿಯೊಂದು ಆಲ್ಟರ್‌ನೇಟ್ ಪದ ಇಂಚರಳ ಬಾಯಿಯಿಂದ ಹೊರಡೋದು "Why?" (but why, ಮತ್ತೆ ಅದಕ್ಕೆ ಅಮೇರಿಕನ್ ಆಕ್ಸೆಂಟಿನ ಟಚ್ ಜೊತೆ ಹಲವಾರು ವೇರಿಯೇಷನ್ನುಗಳೂ ಇವೆ!). ಅವಳ ಪ್ರಶ್ನೆಗಳಿಗೆ ಉತ್ತರ ಕೊಡೋ ಹಿನ್ನೆಲೆ ಅಥವಾ ನೆಪದಲ್ಲಿ ಈ ಕೆಳಗಿನ ಪ್ರಶ್ನೆಗಳು ಅಷ್ಟೇ...(ತಮಾಷೆಗೆಂದು)

- ದೇವ್ರು ಬ್ಲಾಕೋ ವೈಟೋ ಅಥವಾ ಮಿಕ್ಸೋ? ಅಥ್ವಾ ಕಲರ್ಡ್ ಸ್ಕಿನ್ನೋ? ಹೌದೌದು, ರಾಮ-ಕೃಷ್ಣರ ಚಿತ್ರಗಳನ್ನು ನೋಡಿ ಸ್ವಲ್ಪ ನೀಲಿಯಾಗಿರುತ್ವೆ, ಶಿವನ ಕಂಠವೂ ಕೂಡಾ ನೀಲಿ.
- ಈ ಬ್ರಹ್ಮನ ತಲೆ ಕೂದಲನ್ನು ಕತ್ತರಿಸೋ ಪ್ರವೀಣ ಕಲಾವಿದ ಯಾರು? ಆ ನಾಲ್ಕು ತಲೆಗಳ ನಡುವೆ ಅವನ ಕತ್ತರಿ ಹೇಗೆ ಸಲೀಸಾಗಿ ಹರಿದಾಡುತ್ತೆ? ಯಾವ ಬಾಯಿಯಿಂದ ಹರಿಯೋ ಸಂವಾದಕ್ಕೆ ಆ ನಾಪಿತ ಯಾವ ಉತ್ತರ ಕೊಡ್ತಾನೆ?
- ಈ ನಾಲ್ಕು ಕೈ ಇರೋ ದೇವತೆಗಳಿಗೆ ಬಟ್ಟೆ ಹೊಲಿದು ಕೊಡೋರು (ಅಂದ್ರೆ ಡಿಸೈನರ್ಸ್) ಯಾರು?
- ಹತ್ತು ತಲೆ ಇರೋ ರಾವಣ ಯಾವ ಬಾಯಲ್ಲಿ ಅನ್ನಾ ಹಾಕ್ತಿದ್ದ?
- ಶಂಕರ ಕೋಪದಲ್ಲಿ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸಿದ (why?), ಭಂಟರು ಹೋಗಿ ಉತ್ತರಕ್ಕೆ ತಲೆ ಹಾಕಿ ಮಲಗಿದ ಆನೆ ತಲೆಯನ್ನು ಕತ್ತರಿಸಿ ತಂದರು (why?), ಹಾರ್ಟು, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡೋದನ್ನ ಕೇಳಿದ್ದೇವೆ, ಪ್ರಾಣಿಯಿಂದ ಮನುಷ್ಯನಿಗೆ ತಲೆ ಟ್ರಾನ್ಸ್‌ಪ್ಲಾಂಟ್ ಮಾಡಿದ್ದು ಯಾವ ಸರ್ಜನ್ನು? ಅನಸ್ತೇಷಿಯಾ ಕೊಟ್ಟೋರು ಯಾರು? ಆ ಬಾಲಕನ ಕಡಿದು ಹೋದ ತಲೆಯನ್ನೇ ಹುಡುಕಿ ಮತ್ತೇಕೆ ಜೋಡಿಸಲಿಲ್ಲ, ಆ ಆನೆಯ ಮುಂಡ ಏನಾಯ್ತು? ಇಡೀ ಬ್ರಹ್ಮಾಂಡದಲ್ಲಿ ಬರೀ ಅದೊಂದು ಬಡಪಾಯಿ ಆನೆ ಮಾತ್ರ ಉತ್ತರಕ್ಕೆ ತಲೆ ಹಾಕಿ ಮಲಗಿತ್ತೇ?
- ಈ ಕ್ಲೀನ್ ಶೇವನ್ನ್ ವಿಷ್ಣು ಬಳಸೋ ಬ್ಲೇಡ್ ಯಾವ್ದು? ಕೇವಲ ಶಿವ, ರಾಘವೇಂದ್ರ ಸ್ವಾಮಿ, ಹನುಮಂತ ಗಡ್ಡ ಬೆಳೆಸಿಕೊಂಡಿರೋ ಚಿತ್ರ ಮಾತ್ರ ನೋಡೋಕೆ ಯಾಕೆ ಸಿಗುತ್ತೆ?

ಈ ಮೇಲಿನ ಏನೆಲ್ಲ ಪ್ರಶ್ನೆಗಳು (ಹಾಗೂ ಅವುಗಳ ಉತ್ತರಗಳು) ಇದ್ರೂ ನಾವು ದೇವರನ್ನ ಘಟ್ಟಿಯಾಗಿ ನಂಬಿದವರೇ, ಪ್ರತಿನಿತ್ಯ ಶ್ರೀ ಗಣೇಶಾಯ ನಮಃ ಅಂದೇ ನಮ್ಮ ಜೀವನಗತಿಯನ್ನು ಆರಂಭಿಸುವವರೇ. ಈ ಪ್ರಶ್ನೆಗಳನ್ನ ನಾನು ಯಾವತ್ತೂ ಯಾರಿಗೂ ಕೇಳಿದ್ದಿಲ್ಲ (ಇಲ್ಲಿಯವರೆಗೆ), ಇವುಗಳೆಲ್ಲ ಹೀಗೆ ಬಾಲಿಶ ಅನ್ನಿಸಿದ್ರೂ ಪ್ರಶ್ನೆ ಕೇಳಬೇಕಾದ ವಯಸ್ಸಿನಲ್ಲಿ ಕೇಳಿದ್ರೆ ಉತ್ತರ ಕೊಡೋ ಬದಲು ’ಹೋಗೋ ತಲೆಹರಟೆ, ಅಧಿಕಪ್ರಸಂಗಿ...’ ಅಂತ ಯಾರಾದ್ರೂ ಬೈತಾರೆ ಅನ್ನೋ ಅವ್ಯಕ್ತ ಭಯವನ್ನು ಯಾರು ಹುಟ್ಟಿಹಾಕಿದ್ರೋ ಯಾರಿಗೆ ಗೊತ್ತು?

***

ಹೀಗೇ ಒಂದು ದಿನ ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಮನೆಯಲ್ಲಿ ನಮ್ಮ ಮನೆಯ ಗೋಡೆಗಳಿಗೆ ಬಣ್ಣ ಹಚ್ಚೋಣ ಅನ್ನೋ ಆಲೋಚನೆ ಬಂದಿದ್ದೇ ತಡ ಬಣ್ಣ ಹಚ್ಚಲು ಬೇಕಾದ ಪರಿಕರಗಳನ್ನೆಲ್ಲ ಜೋಡಿಸಿಕೊಂಡು ಸುಸಜ್ಜಿತನಾದೆ, ಮೊದಮೊದಲು ಇದ್ದ ಉತ್ಸಾಹ ಕೆಲ್ಸಾ ಮಾಡ್ತಾ ಮಾಡ್ತಾ ಬತ್ತಿ ಹೋಗೋದರ ಜೊತೆಗೆ ದೊಡ್ಡ ತಲೆನೋವು ಇದು ಅನ್ನೋ ಭಾವನೆ ಬಲವಾಗಿ ಮುತ್ತಿಕೊಳ್ಳತೊಡಗಿತು. ದಿನಗಳೆದ ಮೇಲೆ ಇನ್ನೇನು ಸುಮಾರಾಗಿ ಎಲ್ಲ ಕೆಲ್ಸ ಮುಗಿದು ಫಯರ್ ಪ್ಲೇಸಿನ ಮೇಲೆ ಇದ್ದ ಗೋಡೆಯನ್ನು ಅರ್ಧ ಪೈಂಟ್ ಮಾಡುವ ಹೊತ್ತಿಗೆ ಅಚಾನಕ್ಕಾಗಿ ಏರ್‌ಪೋರ್ಟಿನಿಂದ ನನ್ನ ಸ್ನೇಹಿತನ ಕರೆ ಬಂತು.

’I am hungry, tired, jet lagged, cold - come and get me out of here!' ಅನ್ನೋ ಆಜ್ಞೆ. ನಮ್ಮ ಮನೆಯಿಂದ ಡಲ್ಲಸ್ ಏರ್‌ಪೋರ್ಟಿಗೆ ಕನಿಷ್ಠ ಒಂದು ಘಂಟೆ ದೂರ, ಮೊದಲೇ ಕೆಲಸ ಕಳ್ಳ ನಾನು (ಬಣ್ಣ ಹಚ್ಚೋ ಕೆಲಸ) ಒಂದು ನೆವ ಸಿಕ್ಕಿತೆಂದು ಕೆಲಸವನ್ನು ಅಲ್ಲೇ ಬಿಟ್ಟು ಏರ್‌ಪೋರ್ಟಿನ ಕಡೆ ಹೊರಟೆ. ನಾನು ಬರುವ ಹೊತ್ತಿಗೆ ಸುಮಾರು ಮೂರ್ನಾಲ್ಕು ಘಂಟೆ ಕಳೆದು ಹೋಗಿತ್ತು, ಟ್ರೇನಲ್ಲಿ ಇದ್ದ ಪೈಂಟೂ ಹಾಗೂ ನನ್ನ ರೋಲರ್ರುಗಳು, ಬ್ರಷ್ಷೂ ಇವೆಲ್ಲ ಒಣಗಿ ಹೋಗಿ ಉಪಯೋಗಕ್ಕೆ ಬಾರದವಾಗಿತ್ತು. ನೀರಿನಲ್ಲಿ ತೊಳೆದು ಅದೇನೇನು ಮಾಡಿದರೂ ಮೊದಲಿನ ಹಾಗೆ ಬಣ್ಣ ಹಚ್ಚಲು ಬಾರದವಾಗಿ ಹೋಗಿದ್ದವು. ಅದೇ ತಾನೆ ಮನೆಗೆ ಬಂದ ನನ್ನ ಸ್ನೇಹಿತನಿಗೆ ಸಹಸ್ರ ನಾಮ ಹಾಕುತ್ತಲೇ ಮತ್ತೆ ಇದ್ದ ಬದ್ದ ಒಣಗಿ ಕೃಶವಾದ ರೋಲರುಗಳಿಂದಲೇ ಬಣ್ಣ ಹಚ್ಚುವ ಬುದ್ಧಿವಂತ ಸಾಹಸಕ್ಕೆ ತೊಡಗಿದ್ದ ನನಗೆ ಬುದ್ಧಿ ಕಲಿಸುವ ಸಲುವಾಗಿ ಫೈಯರ್ ಪ್ಲೇಸಿನ ಮೇಲಿನ ಗೋಡೆಯ ಬಣ್ಣ ಬರೆಬರೆಯಾಗಿ ಹೋಯಿತು, ಮೊದಲು ಇದ್ದದ್ದಕ್ಕಿಂತಲೂ ಹಾಳಾಗಿ ಹೋಯಿತು. ಅದೂ ಸೆಮಿ ಗ್ಲಾಸ್ ಪೈಂಟು, ಅದರ ಸ್ಥಿತಿ ಇನ್ನೂ ಕಷ್ಟವಾಗಿ ಹೋಗಿದ್ದ ಹಿನ್ನೆಲೆಯಲ್ಲಿ ನನ್ನ ಎಲ್ಲ ಕರ್ಮಾಕರ್ಮಗಳನ್ನು ಹಳಿಯುತ್ತ ಇದನ್ನೆಲ್ಲ ಹೇಗೆ ಸರಿಪಡಿಸಲಿ ಎಂದು ಯೋಚಿಸುತ್ತಿದ್ದ ನನಗೆ ಮರುದಿನ ಬಹಳ ಆಶ್ಚರ್ಯವೊಂದು ಕಾದಿತ್ತು.

ನಮ್ಮ ಮಹಡಿಯ ಮನೆಯ ಮೇಲೆ ಆಟಿಕ್‌ನಲ್ಲಿ ಆ ವರ್ಷ ಇದ್ದ ಮಹಾನ್ ಛಳಿಯಲ್ಲಿ ನೀರಿನ ಪೈಪುಗಳು ಒಡೆದು ಹೋಗಿ ಒಂದೆರಡು ಮಹಡಿಗಳ ಮನೆಗಳಲ್ಲೆಲ್ಲಾ ನೀರು-ನೀರು ಹರಿದುಹೋಗಿತ್ತು. ಎರಡು ಮಹಡಿ ಕೆಳಗಿರುವ ನಮ್ಮ ಮನೆಯಲ್ಲೂ ನೀರಿನ ಪ್ರಭಾವ ಕಾಣುತ್ತಿತ್ತು. ವಿಶೇಷವೆಂದರೆ ನಮ್ಮ ಮನೆಯ ಎಲ್ಲಾ ಗೋಡೆಯನ್ನು ಹೊರತುಪಡಿಸಿ ಕೇವಲ ಆ ಫೈಯರ್ ಪ್ಲೇಸಿನ ಮೇಲೆ ನಾನು ಕೆಟ್ಟದಾಗಿ ಪೈಂಟ್ ಮಾಡಿದ್ದೆನಲ್ಲ, ಅಲ್ಲಿ ಮಾತ್ರ ನೀರಿನ ಕಲೆ ಬಿದ್ದಿತ್ತು! It is true, ನನ್ನ ಕಣ್ಣನ್ನೇ ನಾನು ನಂಬದ ನಿಜ!

Thanks to america, it is not my problem any more! ನಮ್ಮ ಕಾಂಡೋ ಅಸೋಸಿಯೇಷನ್ನಿನ್ನ ಇನ್ಷೂರೆನ್ಸ್ ಪಾಲಿಸಿಯ ದಯೆಯಿಂದ ಎಲ್ಲೆಲ್ಲಿ ನೀರಿನ ಡ್ಯಾಮೇಜ್ ಇತ್ತೋ ಅದನ್ನೆಲ್ಲ ಅಸೋಸಿಯೇಷನ್ನ್ ನವರು ಸರಿಮಾಡಿಸಿಕೊಟ್ಟರು, ನಮ್ಮ ಫಯರ್ ಪ್ಲೇಸಿನ ಗೋಡೆಯನ್ನೂ ಸೇರಿ! ಅವತ್ತೇ ಅಂದುಕೊಂಡಿದ್ದು ನಾನು, ನನ್ನ ಆಕ್ರಂದನ ಆದ್ಯಾವ ಮುಗಿಲು (celing) ಮುಟ್ಟಿತೋ ಆ ದೇವರು ಕಣ್ಣು ಬಿಟ್ಟು ನಮ್ಮ ಗೋಡೆಯ ಬಣ್ಣವನ್ನು ಸರಿ ಮಾಡಿಕೊಟ್ಟನಲ್ಲ ಎಂದು. ಅವತ್ತಿಂದ ಇವತ್ತಿನವರೆಗೆ ದೇವರು ಇದ್ದಾನೆ ಅಂತ್ಲೇ ಅಂದುಕೊಂಡಿರೋದು ನಾನು, ಆದ್ರೆ ಅವತ್ತಿನಿಂದ ಮುಗಿಲು ನೋಡಿ ಆರ್ತನಾಗಿ ಮೊರೆ ಇಡುವಾಗ ಮನೆಯಿಂದ ಹೊರಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ, the last thing you want is another broken water pipe in the middle of a winter - that is below freezing weather.

Sunday, November 25, 2007

ಅನುಭವ ಅಮೃತವಾದದ್ದು ಯಾವಾಗ?

ಅನುಭವಗಳು ಅನ್ನೋದರ ದೊಡ್ಡಸ್ತಿಕೆ ಏನು ಅಂದ್ರೆ ಎಲ್ರೂ ಅಂದ್ಕೊಳ್ಳೋ ಹಾಗೆ ನಮಗೆ ಆಯಾ ವಿಷಯದ ಬಗ್ಗೆ ಆಳವಾಗಿ ಗೊತ್ತಿರೋದು ಅಥವಾ ನಮ್ಮದೇ ಆದ ಒಂದು ಪ್ರಯತ್ನ ಜೊತೆಗೆ ಸೇರಿ ಉಳಿದವರಿಗೆ ಆಯಾ ಕೆಲಸದ ಬಗ್ಗೆ ಏನೇನು ತಿಳಿದಿಲ್ಲವೋ ಅದರ ಬಗ್ಗೆ ತಕ್ಕಮಟ್ಟಿಗೆ ನಮಗೆ ತಿಳಿದಿರೋದು. ಅದೇ ಈ ಅನುಭವದ ಅಡಿಯಲ್ಲಿನ ವಿಷಾದವನ್ನು ಹೆಚ್ಚು ಜನ ಗುರುತಿಸಿದ ಹಾಗೇ ಕಾಣಿಸೋದಿಲ್ಲ, ನನ್ನ ಅನಿಸಿಕೆ ಪ್ರಕಾರ ಒಬ್ಬ ವ್ಯಕ್ತಿಗೆ ಅನುಭವಗಳು ಆಗಿ ಆಗೀ ಮತ್ತೆ ಅದೆ ವಿಷಯದ ಫಲಾನುಭವ ಪಡೆಯೋದಿರಲಿ ಉಳಿದವರಿಗೆ ಹೇಳೋದಕ್ಕೂ ತ್ರಾಣವಿಲ್ಲದ ಹಾಗೆ ವಯಸ್ಸಾಗಿ ಬಿಡೋದು. ಅಂದ್ರೆ, ನಿಮಗೆ ಅನುಭವವಾಗಿದೆ ನಿಜ ಆದರೆ ಅನುಭವವಾಗುವುದಕ್ಕಿಂತ ಮೊದಲು ನಿಮ್ಮಲ್ಲಿರೋ ಉತ್ಸಾಹ ಇಲ್ಲದೇ ಹೋಗಿದೆಯೇ ಅನ್ನೋ ಹೆದರಿಕೆ, ಒಂದ್ ರೀತಿ ಮ್ಯಾಜಿಕ್ ಶೋ ಮುಗಿದ ಮೇಲೆ ಮಾಂತ್ರಿಕ ತನ್ನೆಲ್ಲಾ ಗುಟ್ಟನ್ನು ಶ್ರೋತೃಗಳ ಜೊತೆ ಹಂಚಿಕೊಂಡ್ರೆ ಹೇಗಿರುತ್ತೋ ಹಾಗೆ.

ಮೊನ್ನೆ ಥ್ಯಾಂಕ್ಸ್‌ಗಿವಿಂಗ್‌ ಸಂದರ್ಭದಲ್ಲಿ ಹೀಗೇ ಹರಟೆ ಹೊಡೀತಿದ್ದಾಗ ಒಂದು ಉಪಮೆ ಹೊಳೆಯಿತು. ಭಾರತದಲ್ಲಿ ಜನರು ಸ್ಟಿಕ್‌ ಶಿಫ್ಟ್ ಇರೋ ಕಾರು/ವಾಹನಗಳನ್ನು ಓಡಿಸೋದು ಹೆಚ್ಚು. ಇಂಧನವನ್ನು ಉಳಿಸುವ ಪ್ರಯತ್ನವೋ, ವಾಹನದ ಎಫಿಷಿಯನ್ಸಿಯನ್ನು ಹೆಚ್ಚಿಸುವ ಯತ್ನವೋ, ಅಲ್ಲಿಯ ರಸ್ತೆಯಲ್ಲಿ ನಿಂತು ನಿಂತು ಹೋಗುವುದಕ್ಕೆ ಅನುಕೂಲವಾಗಲಿ ಎಂಬುದಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ತಮ್ಮ ವಾಹನಗಳ ಗಿಯರ್ ಅನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ, ಹಾಗೆ ಮಾಡದೇ ವಿಧಿಯಿಲ್ಲ. ಅಂದರೆ ಭಾರತದಲ್ಲಿ ವಾಹನದಲ್ಲಿ ಇಂಚಿಂಚು ಕದಲಿದ ಹಾಗೆ ನಮ್ಮ ಮೂವ್‌ಮೆಂಟುಗಳನ್ನು ನಾವೇ ಮೈಕ್ರೋಮ್ಯಾನೇಜ್ ಮಾಡಿಕೊಂಡಿರಬೇಕು. ಅಲ್ಲಲ್ಲಿ ನಿಂತು, ದಾರಿಯಲ್ಲಿ ಸಿಗುವ ಅಡೆತಡೆಗಳನ್ನೆಲ್ಲ ಎದುರಿಸಿ ತಲುಪಬೇಕಾದ ಸ್ಥಳ ತಲುಪುವಲ್ಲಿ ಒಂದು ಕೈ ಗಿಯರ್ ಲಿವರ್ ಮೇಲೆ ಒಂದು ಕಾಲು ಕ್ಲಚ್ ಮೇಲೆ ಇಟ್ಟು ಅದಕ್ಕೇ ಬದುಕನ್ನು ಮುಡಿಪಾಗಿಟ್ಟುಕೊಳ್ಳಬೇಕು ಎಂಬುದು ನನ್ನ ಜೋಕ್‌ಗಳಲ್ಲೊಂದು. ಅದೇ ಉತ್ತರ ಅಮೇರಿಕದಲ್ಲಿ ನೋಡಿ, ನಾವುಗಳು ಬಳಸೋ ಕಾರು/ವಾಹನಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರುವಂತಹವೇ ಹೆಚ್ಚು. ಮನೆಯಿಂದ ಆಫೀಸಿಗೆ ಹೊರಟರೆ ಮಧ್ಯೆ ಬೇಕಾದಷ್ಟು ಅಡೆತಡೆಗಳು ಬಂದೇ ಬರುತ್ತವೆ, ಆದರೆ ನಮ್ಮ ಬಲಗಾಲು ಬ್ರೇಕ್ ಆಕ್ಸಲೇಟರ್ ಮೇಲೆ ಆಗಾಗ್ಗೆ ತನ್ನಷ್ಟಕ್ಕೆ ತಾನು ಬದಲಾಗುತ್ತಿರುತ್ತದೆ, ಜೊತೆಗೆ ಹೆಚ್ಚಿನ ಮಟ್ಟಿಗೆ ಎಲ್ಲರೂ ಒಂದೇ ಕೈಯಲ್ಲೇ ಡ್ರೈವ್ ಮಾಡೋದು, ಮತ್ತೊಂದು ಕೈಯಲ್ಲಿ ಇನ್ನೇನು ಮಾಡದಿದ್ದರೂ ಆರಾಮವಾಗಿ ಕಾಫಿಯನ್ನಾದರೂ ಕುಡಿದುಕೊಂಡು ಹೋಗಬಹುದು. ಅಂದರೆ ನಮ್ಮ ದಿನನಿತ್ಯದ ಪ್ರಯಾಣವೆನ್ನುವ ರುಟೀನ್ ಕೆಲಸವನ್ನು ನಾವು ಮೈಕ್ರೋ ಮ್ಯಾನೇಜ್ ಮಾಡೋದೇ ಬೇಡ. ಕಾರು ಒಳ್ಳೆಯ ಕಂಡೀಷನ್ನಲ್ಲಿ ಇದ್ದರೆ ಪ್ರಯಾಣ ಯಶಸ್ವಿಯಾದಂತೆಯೇ ಲೆಕ್ಕ. ಭಾರತದಲ್ಲಿ ಪದೇಪದೇ ಗಿಯರ್ ಬದಲಾಯಿಸುವುದರ ಮೂಲಕ ಅದೆಷ್ಟು ಇಂಧನವನ್ನು ಉಳಿಸುತ್ತಾರೋ ಗೊತ್ತಿಲ್ಲ, ತಮ್ಮ ಕಾರು/ವಾಹನಗಳನ್ನು ಸುಸ್ಥಿತಿಯಲ್ಲಿಡದ ವಾಹನಗಳಿಗೆ ಅದ್ಯಾವ ಅನುಕೂಲವೋ ಯಾರಿಗೆ ಗೊತ್ತು, ಮತ್ತಿನ್ನೇನಿಲವೆಂದರೂ ಈ ಗಿಯರ್ ಬದಲಾವಣೆಯಿಂದ ಕೈ ನೋವಾದರೂ ಬಂದೀತು.

’ಮನೆ ಕಟ್ಟಿ(ಸಿ) ನೋಡು’ ಎನ್ನೋದು ನಮ್ಮೂರಿನ ನಾಣ್ಣುಡಿಗಳಲ್ಲೊಂದು. ಇಲ್ಲಿ ಈಗಿರೋ ನಮ್ಮನೆ ವಾರಂಟಿಯಲ್ಲಿ ಏನೋ ಹುಡುಕಿ ಮನೆ ಕಟ್ಟಿದ ಕಂಪನಿಯವರಿಗೆ ಕೇಳಿದ್ದಕ್ಕೆ ’ಮನೆಯ ಸ್ಟ್ರಕ್ಚರ್‌ಗೆ ಏನೇ ತೊಂದರೆ ಆದರೂ ಹತ್ತು ವರ್ಷಗಳವರೆಗೆ ಅದನ್ನು ಸರಿ ಮಾಡಿಸುವುದು ನಮ್ಮ ಜವಾಬ್ದಾರಿ’ ಎಂದರು. ನಮ್ಮೂರಿನ ಬೇಸಿಗೆಯಲ್ಲಿ ಧಾಂ ಧೂಮ್ ಓಪನಿಂಗ್ ಸೆರೆಮನಿ ಮಾಡಿಸಿಕೊಂಡು ಮಳೆಗಾಲ ಪೂರ್ತಿ ಸೋರಲು ತೊಡಗಿದ್ದ ಕೆನರಾ ಬ್ಯಾಂಕ್ ಕಟ್ಟಡ ನೆನಪಿಗೆ ಬಂತು, ಅದರಲ್ಲಿ ಇಂದಿಗೂ ಸೋರಿದ ಮಳೆ ನೀರನ್ನು ಹಿಡಿಯಲೆಂದು ರೂಫ್‌ಗೆಲ್ಲಾ ಟಾರ್ಪಾಲು ಕಟ್ಟಿರಬಹುದು, ’ಎಲ್ಲಿದೆಯೋ ವಾರಂಟೀ ಅಣ್ಣಾ, ಎಲ್ಲಿದೆಯೋ ವಾರಂಟೀ...’ ಎಂದು ಯಾವುದೋ ಬದಲಾದ ಹಾಡಿನ ತುಣುಕೊಂದು ತಟ್ಟನೆ ಮನದಲ್ಲಿ ಮಿನುಗಿತು. ಈ ಮನೆ ಕಟ್ಟಿಸಿದ ಅನುಭವವೇ ಅಂತದ್ದು, ಅದು ಸೋರಿದ ಮೇಲೆ ಹೀಗೆ ಕಟ್ಟಿದರೆ ಸೋರುತ್ತದೆ ಎಂದು ತಿಳಿಸುತ್ತದೆಯೇ ವಿನಾ ಒಮ್ಮೆ ಕಟ್ಟಿಸಿ ಸೋರಿದ ಮೇಲೆ ಮುಂದೆ ಏನೇ ಮಾಡಿದರೂ ತೇಪೆ ಹಚ್ಚುವುದೇನೂ ತಪ್ಪೋದಿಲ್ಲ. ನಮ್ಮ ಸ್ನೇಹಿತರು ಹೇಳುತ್ತಾರೆ, ’ಛೇ, ನೀವು ಕಂಡ ಇಂಡಿಯಾ ಭಾಳಾ ಬದಲಾಗಿದೇ, ನೀವ್ ಯಾವ ಜಮಾನದಲ್ಲಿದ್ದೀರಿ?’ ಇದ್ದಿರಬಹುದು, ಇಂದು ಕಟ್ಟಿಸಿದ ಕಟ್ಟಡಗಳು ಸೋರದಿರಬಹುದು, ಹಾಗೆ ಸೋರಿದರೂ ಕಟ್ಟಡದ ಕಾಂಟ್ರಾಕ್ಟರುಗಳು, ಇಂಜಿನಿಯರುಗಳು, ಇಟ್ಟಿಗೆ ಹೊರುವವರನ್ನೂ ಸೇರಿಸಿ ಎಲ್ಲರೂ ಭಾವನಾತ್ಮಕವಾಗಲ್ಲದಿದ್ದರೂ ಕಾನೂನಿನ ಕಟ್ಟಳೆಯಡಿಯಲ್ಲಿ ಜವಾಬ್ದಾರರಿದ್ದಿರಬಹುದು. ಒಮ್ಮೆ ಸೋರಿದ ಮಾಡನ್ನು ಮತ್ತೊಮ್ಮೆ ಸೋರದ ಹಾಗೆ ತಂತ್ರಜ್ಞಾನ ಬಂದಿರಬಹುದು, ಅಥವಾ ’ಹೇಗಿದ್ದರೂ ಮಾಡು ಸೋರೋದೇ ಒಂದಲ್ಲ ಒಂದು ದಿನ...’ ಎನ್ನುವ ಹೊಸ ಅನುಭವಾಮೃತ ಹುಟ್ಟಿ ಹೊಮ್ಮಿರಬಹುದು.

ಅದು ನಿಜವೇ, ನಾವು ಕಂಡ ಇಂಡಿಯಾದಲ್ಲಿ ದಾರಿಯ ಬದಿ ಎಳೆನೀರು ಮಾರುವವರಿಂದ ಹಿಡಿದು ಎಕ್ಸಿಕ್ಯೂಟಿವ್‌ಗಳವರೆಗೆ ಎಲ್ಲರೂ ಸೆಲ್‌ಫೋನ್‌ಗಳನ್ನು ಹಿಡಿದುಕೊಂಡು ಓಡಾಡಿದ್ದಿಲ್ಲ. ಇತ್ತೀಚಿಗೆ ಕಮ್ಮ್ಯೂನಿಕೇಷನ್ನ್ ಬದಲಾಗಿರಬಹುದು, ಜನರಲ್ಲಿ ಕನ್ಸ್ಯೂಮೆರಿಸ್ಸಮ್ಮ್, ಅಥವಾ ಇನ್ಯಾವ್ಯಾವುದೋ "ಇಸಮ್ಮು"ಗಳು ತುಂಬಿ ತುಳುಕಾಡುತ್ತಿರಬಹುದು. ಬಡವ-ಬಲ್ಲಿದರ ನಡುವಿನ ಅಂತರ ಕಿರಿದಾಗಿರಬಹುದು. ಸಾಮಾಜಿಕವಾಗಿ, ರಾಜಕೀಯವಾಗಿ ಭಾರತ ಬೆಳೆದಿರಬಹುದು. ಮತ್ತೆ, ನಮ್ಮ ಹಳೇ ಅನುಭವಗಳೇ ನಮ್ಮ ಬದುಕನ್ನು ರೌರವ ನರಕವನ್ನಾಗಿಸುತ್ತವೆಯೆಲ್ಲಾ ಎಂದು ಮನಸ್ಸು ಮಮ್ಮಲ ಮರುಗತೊಡಗಿತು. ಆ ಪ್ರಕಾರವಾಗಿ - ನಾವು ಆಟೋ ಡ್ರೈವರುಗಳನ್ನು ಮನಬಿಚ್ಚಿ ಮಾತನಾಡಿಸುವುದಿರಲಿ ನಂಬುವುದಾದರೂ ಹೇಗೆ? ನಾವು ಹೊರಟ ಬಸ್ಸು ಸರಿಯಾದ ಸಮಯಕ್ಕೆ ಡೆಸ್ಟಿನೇಷನ್ನನ್ನು ಮುಟ್ಟೀತು ಎಂದು ಸಂಕಲ್ಪಿಸುವುದು ಹೇಗೆ? ನಾವು ಕಟ್ಟಿಸೋ ಮನೆ ಸ್ಟ್ರಕ್ಚರಲಿ ಸೌಂಡ್ ಆಗಿರುತ್ತದೆ ಎಂದು ಊಹಿಸಿಕೊಂಡು ಹೋಮ್‌ವರ್ಕ್ ಮಾಡದಿರುವುದು ಹೇಗೆ? ವಾರಂಟಿ, ಗ್ಯಾರಂಟಿ ಎಂಬ ಪದಗಳಿಗೆ ಬೆಲೆ/ನೆಲೆ ಕಟ್ಟುವುದು ಹೇಗೆ? ಈಗಾಗಲೇ ಸುಟ್ಟುಕೊಂಡ ಬೆರಳ ತುದಿಯ ಚರ್ಮ ಚಿಗುರೋದಕ್ಕಿಂತ ಮುನ್ನವೇ ಅದೇ ಕೈಗಳಲ್ಲಿ ಮತ್ತೊಂದು ನಾಜೂಕಾದ ಕೆಲಸವನ್ನು ಮಾಡುವುದು ಹೇಗೆ? ನಮ್ಮ ವಾಹನದ ಹೊಗೆ ಪೈಪಿನಿಂದ ಯಾವುದೇ ರೆಗ್ಯುಲೇಷನ್ನ್ ಇಲ್ಲದೇ ಯಾವ್ಯಾವುದೋ ವಿಷಾನಿಲಗಳು ನಿರಂತರವಾಗಿ ವಾತಾವರಣಕ್ಕೆ ಹೊಮ್ಮಿ ನಮ್ಮ ವಾಹನದ ಇಂಜಿನ್ ಏನೇ ಸದ್ದು ಮಾಡಿಕೊಂಡಿದ್ದರೂ ಪದೇ ಪದೇ ಗಿಯರ್ ಬದಲಾಯಿಸುವ ನಮ್ಮ ಕೈಗಳು ಎಲ್ಲವನ್ನೂ ಮೀರುತ್ತದೆ ಎಂಬ ತತ್ವವನ್ನು ಮೈ ತುಂಬಿಕೊಳ್ಳುವುದು ಹೇಗೆ?

’ಎಲವೂ ಮೂರ್ಖ, ಅನುಭಾಮೃತದ ಬಗ್ಗೆ ಬಗ್ಗೆ ಬರೀತೀಯಾ ಅಂದುಕೊಂಡ್ರೆ ನಾವು ನಂಬಿದ ಭಾರತ ಹಂಗೇ ಹಿಂಗೇ ಅಂತ ಕೊರೀತೀಯೇನಯ್ಯಾ?’ ಎಂದು ಬಲ ಭುಜ ಹಾಗೂ ಕತ್ತಿನ ನಡುವಿನಿಂದ ಧ್ವನಿಯೊಂದು ಹೊರಬಂತು. ’Wait, ಅನುಭವ ಅಮೃತವಾಗಿದ್ದು ಯಾವಾಗ, ಅಂದ್ರೆ ಅದು ಸಾಯೋದೇ ಇಲ್ಲವೇನು?’ ಎಂದು ನಾನು ಧೃತಿಗೆಡದೆ ಮರುಪ್ರಶ್ನೆಯೊಂದನ್ನು ಹಾಕಿದೆ (thanks to present life! ಪ್ರಶ್ನೆ ಕೇಳೋಕೇನು ಅವನವ್ವನ). ’ಅನುಭವ ಯಾವತ್ತಿದ್ರೂ ಮನುಷ್ಯನ ಕಷ್ಟ ಕಾಲಕ್ಕೆ ಬರುತ್ತೆ ಗೊತ್ತಾ...’ ಎಂಬ ತೇಲಿಕೆಯ ಉತ್ತರ ಬರತೊಡಗಿದ್ದನ್ನು ನನ್ನ ಮನಸ್ಸು ಗ್ರಹಿಸಿತು. ಅಂತಹ ಹಾರಿಕೆಯ ಉತ್ತರಗಳು ಬಂದೊಡನೆ (I have really learnt to cut them loose) ಅವುಗಳನ್ನು ಹಾಗೆಯೇ ಹಾರಿಬಿಟ್ಟೆ. ನಾವು ಕಟ್ಟೋದು ಒಂದೇ ಒಂದು ಮನೆ, ಅದರ ಮಾಡಾದರೂ ನೆಟ್ಟಗಿರಲಿ ಎಂದು ಮನದಾಳದಿಂದ ಪ್ರಾರ್ಥನೆಯ ಮೊರೆಯೊಂದು ಹುಟ್ಟಿ ಬಂತು. ಈ ಪ್ರಪಂಚದಲ್ಲಿರೋ ಯಾವುದಾದರೂ ದೇವರು ಅದನ್ನು ಪುರಸ್ಕರಿಸಿಯಾನು ಎನ್ನುವ ನಂಬಿಕೆ ನನ್ನದು, ಕ್ಷಮಿಸಿ ಅದು ಯಾವುದೇ ಅನುಭವದಿಂದ ಬಂದುದಂತೂ ಅಲ್ಲ.