Friday, November 23, 2007

ನಮ್ಮಲ್ಲಿನ ಬದಲಾವಣೆಗಳು

ಹೇ, ಇನ್ನೂ ನಮ್ಮ ಕನ್ನಡದ ಬಗ್ಗೆ ಬರೆಯೋದಕ್ಕೇನೂ ತಡವಾಗಿಲ್ಲ, ಈ ತಿಂಗಳ ಒಳಗೆ ಯಾವಾಗ ಬರೆದರೂ ಅದು ಕನ್ನಡಮ್ಮನ ಸೇವೆಗೆ, ಪದತಲಕ್ಕೆ ಸೇರುವ ಮಾತೇ! ಈ ತಿಂಗಳು ಆರಂಭವಾಗುವ ಮುನ್ನ ರಾಜ್ಯೋತ್ಸವ ಆಚರಣೆಗಳೇನೇ ಇದ್ದರೂ ನವೆಂಬರ್ ಒಂದಕ್ಕೆ ಸೀಮಿತವಾಗಿರಲಿ ಎಂದು ಆಶಿಸಿದ್ದೇ ಬಂತು, ಕನ್ನಡಿಗರ ಗುಂಪು, ಸಂಘಗಳು, ಸಂಘಟನೆಗಳು ಮಂತ್ರಿ ಮಾಗಧರ ದಂಡನ್ನು ತಮ್ಮ ಸಭೆ ಸಮಾರಂಭಗಳಿಗೆ ಅಮಂತ್ರಿಸಿಕೊಂಡು ಕುತೂಹಲದಿಂದ ಕಾದಿದ್ದೇ ಬಂತು, ಈ ಅಕ್ಟೋಬರ್ ಕೊನೆಯಿಂದ ನವೆಂಬರ್ ಕೊನೆಯವರೆಗೆ ತೆರೆಯ ಮರೆಯಲ್ಲಿ, ರಾಜ್ಯ ದೇಶದ ರಾಜಕೀಯದ ಲೆಕ್ಕದಲ್ಲಿ ಬೇಕಾದಷ್ಟು ಘಟಿಸಿದೆ, ಹಾಗಿದ್ದರಿಂದಲೇ ಅನೇಕ ಶಿಲಾನ್ಯಾಸಗಳು ಸಮಾರಂಭಗಳು ಮುಖ್ಯ ಅತಿಥಿಗಳಿಲ್ಲದೇ ತೊಳಲಾಡುತ್ತಿವೆ ಎನ್ನಿಸಿದ್ದು ನನ್ನ ಅನಿಸಿಕೆ ಅಥವಾ ಭ್ರಮೆ ಇದ್ದಿರಬಹುದು.

ಸುಮಾರು ಎರಡೂವರೆ ವರ್ಷದಿಂದ ಮಾತನಾಡಿಸದ ಕನ್ನಡಿಗ ಸ್ನೇಹಿತನೊಬ್ಬ ನಿನ್ನೆ ಬೆಳಿಗ್ಗೆ ಫೋನ್ ಮಾಡಿದಾಗಲೇ ನನಗೆ ಬಹಳಷ್ಟು ಆಶ್ಚರ್ಯ ಕಾದಿತ್ತು. ಯಾವುದೋ ಕೆಲಸದ ನಡುವೆಯೇ ಗೋಣಿಗೆ ಫೋನಾಯಿಸಿಕೊಂಡು ಮತ್ತೆ ಹಳೆಯ ನೆನಪುಗಳನ್ನು ಕೆದಕಿಕೊಂಡ ನಮ್ಮಿಬ್ಬರ ಮನಸ್ಸಿನಲ್ಲಿ ಬಹಳ ಸಂತಸದಾಯಕ ವಾತಾವರಣ ಮೂಡಿತ್ತು. ನಮ್ಮಿಬ್ಬರ ನಡುವಿನ ಪರಿಚಯ ಅಥವಾ ಸ್ನೇಹ ಎನ್ನುವುದು ಸುಮಾರು ಹನ್ನೆರಡು ವರ್ಷಗಳ ಹಳೆಯದು, ಅಥವಾ ಅದಕ್ಕೂ ಹಿಂದಿನದ್ದಿರಬಹುದು. ಆದರೆ ಈ ಸ್ನೇಹಿತ ನನ್ನೊಡನೆ ಮಾತನಾಡಿದ ರೀತಿ ನನ್ನಲ್ಲಿ ಬಹಳಷ್ಟು ಆಶ್ಚರ್ಯವನ್ನು ಹುಟ್ಟಿಸಿತ್ತು. ಆ ಸ್ನೇಹದ ಸಲಿಗೆ ಅಥವಾ ಸದರದಿಂದಲೇ ನನಗೆ ಅನ್ನಿಸಿದ್ದನ್ನೂ ನಿಜವಾಗಿಯೂ ಹೇಳಿಬಿಟ್ಟೆ, ಅದೇ ನನ್ನನ್ನು ಈ ಲೇಖನ ಬರೆಯುವ ಕಷ್ಟಕ್ಕೆ ಸಿಕ್ಕು ಹಾಕಿಸಿದ್ದು.

ಅವನೊಡನೆ ನಡೆಸಿದ ಹದಿನೈದು ನಿಮಿಷದ ಮಾತುಕಥೆ ನನ್ನಲ್ಲಿ ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ: ನಮ್ಮಲ್ಲಿ ಬದಲಾವಣೆಗಳು ಸಹಜವೋ ಅಥವಾ ಬದಲಾವಣೆಗಳನ್ನು ನಾವೇ ನಮ್ಮ ಮೇಲೆ ಹೇರಿಕೊಳ್ಳುತ್ತೇವೋ, ನಾವು ಯಾವ ಯಾವ ರೀತಿ/ನಿಟ್ಟಿನಲ್ಲಿ ಬದಲಾಗಬೇಕು, ಬದಲಾದರೆ ಒಳ್ಳೆಯದು, ಇತ್ಯಾದಿ.

ನನ್ನ ಸ್ನೇಹಿತನ ಧ್ವನಿಯಲ್ಲಿ ಅಗಾಧವಾದ ಬದಲಾವಣೆಯಿದ್ದುದು ನನಗೆ ಮೊದಲ ಕ್ಷಣದಿಂದಲೇ ಗೊತ್ತಾಯಿತು. ಆತನ ಜೊತೆ ಎರಡು ವರ್ಷಗಳ ಹಿಂದೆ ಮಾತನಾಡುತ್ತಿರುವಾಗ ನಮ್ಮೂರಿನವನೇ ಅನ್ನಿಸಿದ ಮನುಷ್ಯ ಕೇವಲ ಎರಡೇ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗೊಂಡಿದ್ದ. ಅವನು ಉಚ್ಚರಿಸಿದ ಪ್ರತಿಯೊಂದು ಇಂಗ್ಲೀಷ್ ಪದಗಳಲ್ಲಿ ಸ್ಥಳೀಯ (ಅಮೇರಿಕನ್) ಪ್ರಭಾವವಿತ್ತು. ನಾನೂ ಪ್ರತಿದಿನವೂ ಸ್ಥಳೀಯರೊಡನೆ ಮಾತನಾಡುತ್ತೇನಾದರೂ ನನ್ನ ಭಾಷೆಯಲ್ಲಿಲ್ಲದ ಉಚ್ಚಾರ, ಸ್ವರಗಳೆಲ್ಲವೂ ನನ್ನ ಸ್ನೇಹಿತನಿಗೆ ಮೈಗೂಡಿತ್ತು. ನನ್ನ ಅನಿಸಿಕೆಯ ಪ್ರಕಾರ ಹೊರಗಿನಿಂದ ಭಾರತೀಯರು ಕಷ್ಟಪಟ್ಟು ಸ್ಥಳೀಯ ಅಮೇರಿಕನ್ ಆಕ್ಸೆಂಟಿನಲ್ಲಿ ಭಾಷೆಯನ್ನು ಬಳಸುತ್ತಾರೇನೋ ಎಂದು ಒಮ್ಮೆ ಅನಿಸಿದರೂ ಅವನು ತರ್ಕಬದ್ಧವಾದ ಮಾತುಗಳು ಕೃತಕವೆಂದು ಎಲ್ಲಿಯೂ ಅನ್ನಿಸಿಲಿಲ್ಲ.

’ನೀನು ಇಲ್ಲಿ ಯೂನಿವರ್ಸಿಟಿಯಲ್ಲಿ ಪಾಠ-ಪ್ರವಚನಗಳನ್ನೇನಾದರೂ ಮಾಡುತ್ತೀಯೇನು?’ ಎಂದಿದ್ದಕ್ಕೆ ’ಇಲ್ಲ, ಬರೀ ರಿಸರ್ಚ್ ಮಾತ್ರ’ ಎನ್ನುವ ಉತ್ತರ ಬಂತು. ಸ್ಥಳೀಯರ ಒಡನಾಟ ಅಷ್ಟೊಂದಿಲ್ಲದೇ ಒಂದು ಕಾಲದಲ್ಲಿ ನನ್ನೊಡನೆ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ ಮನುಷ್ಯ ಆತನೇ ಮಾಡಿದ ಟೆಲಿಫೋನ್ ಕರೆಯ ಮೂಲಕವಾದರೂ ಮಾಮೂಲಿಯಾಗಿ ಹಾಗೂ ಸಹಜವಾಗಿ ಕನ್ನಡದಲ್ಲೇ ಮಾತನಾಡುತ್ತಾನೆ ಎಂದುಕೊಂಡರೆ, ಬರೀ ಸ್ಥಳೀಯ ಅಕ್ಸೆಂಟಿನಲ್ಲೇ ಇಂಗ್ಲೀಷು ತುಂಬಿರುವ ಮಾತುಗಳನ್ನು ಆಡುತ್ತಾನಲ್ಲಾ ಅದನ್ನು ಹೇಗಾದರೂ ಸ್ವೀಕರಿಸುವುದು?

ನಾನು ತಡೆಯದೇ ಹೇಳಿಯೇ ಬಿಟ್ಟೆ, ’ಅಲ್ಲಯ್ಯಾ, ನೀನು ನೀಡಿದ ಎರಡು ಶಾಕ್‌ಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ, ಸ್ವಲ್ಪ ತಡಿ.’
'What shock?'
'ಅದೇ, ಒಂದು ನೀನು ಇಷ್ಟೊಂದು ವರ್ಷ ಬಿಟ್ಟು ಫೋನ್ ಮಾಡುತ್ತೀದ್ದೀಯಲ್ಲಾ, ಹೇಗಿದ್ದೀಯಾ ಏನು ಕಥೆ? ಮತ್ತೊಂದು ನಿನ್ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ, ನಿನ್ನೂರಿನವರ ಹತ್ತಿರ ಹೀಗೇ ಮಾತನಾಡಿದೆಯಾದರೆ ಅವರು ಶಾಕ್‌ನಿಂದ ಚೇತರಿಸಿಕೊಳ್ಳುತ್ತಾರೆ ಎಂಬ ಗ್ಯಾರಂಟಿಯೇನೂ ಇಲ್ಲ’.
’ಏನ್ ಬದಲಾವಣೆ, ಗೊತ್ತಾಗಲಿಲ್ಲ...’
’ನಿನ್ನ ಇಂಗ್ಲೀಷ್ ಸ್ವರದಲ್ಲಿ ಉಚ್ಚಾರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ, ಯಾವಾಗಿನಿಂದ ಹೀಗೆ?’
’ಬದಲಾವಣೆಯಾ, ನನಗೇನೂ ಬದಲಾದ ಹಾಗೆ ಅನ್ನಿಸೋದಿಲ್ಲ!’
’ಬರೀ ಶಾಕ್‌ಗಳನ್ನೇ ಕೊಡ್ತಾ ಇರ್ತೀಯೋ, ಅಥವಾ ನಿನ್ನ ಬಗ್ಗೆ ಮತ್ತಿನ್ನೊಂದಿಷ್ಟೇನಾದರೂ ಹೇಳ್ತೀಯೋ?’

ಹೀಗೆ ನಮ್ಮ ಸಂಭಾಷಣೆ ಬೆಳೆಯುತ್ತಾ ಹೋಯ್ತು, ಆದರೆ ನನ್ನ ಸ್ನೇಹಿತನಲ್ಲಾದ ಬದಲಾವಣೆಗಳು ನನಗೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನಮ್ಮ ಮಾತಿನ ಮಧ್ಯೆ ನನ್ನ ಸ್ನೇಹಿತ ಮತ್ತೆ ಮೊದಲಿನಂತಾಗಿ ಹೋಗಿದ್ದ ಎನ್ನುವ ಬದಲಾವಣೆಗಳು ನನಗೆ ಕಾಣಿಸತೊಡಗಿದವೋ ಅಥವಾ ನಾನು ಹಾಗೆ (ನನ್ನ ಸ್ವಾರ್ಥಕ್ಕೆ) ಊಹಿಸಿಕೊಳ್ಳತೊಡಗಿದೆನೋ ಗೊತ್ತಿಲ್ಲ. ಬರೀ ನಮ್ಮ ಮಾತನ್ನು ಬದಲಾಯಿಸಿಕೊಂಡರೆ ಸಾಕೆ, ಆ ರೀತಿಯ ಬದಲಾವಣೆಗಳು ಅನಿವಾರ್ಯವೇ ಎಂದು ನನ್ನನ್ನು ಹಲವಾರು ಬಾರಿ ಕೇಳಿಕೊಂಡೆ. ಕೇವಲ ಆರೇ ಆರು ವರ್ಷ ಅಮೇರಿಕದಲ್ಲಿ ಕಳೆದ ಸ್ನೇಹಿತನ ಹಾವಭಾವ ಮಾತುಕಥೆಗಳಲ್ಲಿ ಬದಲಾವಣೆ ಏಕಾಯಿತು? ಅದರ ಅಗತ್ಯವೇನು, ಹೇಗೆ? ಎಂದೆಲ್ಲಾ ಗೊಂದಲಗಳು ಗೋಜಲುಗಳು ಹುಟ್ಟಿಕೊಂಡು ತಳುಕು ಹಾಕಿಕೊಳ್ಳತೊಡಗಿದವು.

ನಾನೂ ಬದಲಾಗಿದ್ದೇನೆ, ದಶಕದ ಮೇಲಿನ ಅನಿವಾಸಿತನ ನನ್ನನ್ನು ಬದಲಾಯಿಸಿದೆ ಇಲ್ಲವೆಂದೇನಿಲ್ಲ - ನಾನು ಭಾರತದಲ್ಲಿ ಎಷ್ಟೋ ಇಂಗ್ಲೀಷ್ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದವನು ಇಲ್ಲಿಗೆ ಬಂದು ತಿದ್ದಿಕೊಂಡಿದ್ದೇನೆ. ಆದರೆ ನನ್ನ ಕನ್ನಡದ ಬಳಕೆಯಲ್ಲಿ, ಅಥವಾ ಅದರ ಮಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಇವತ್ತಿಗೂ ಒಬ್ಬ ಸಾಮಾನ್ಯ ಮನುಷ್ಯನೊದನೆ ನಾನು ಸಹಜವಾಗಿ ಸಂವಾದವನ್ನು ಬೆಳೆಸಬಲ್ಲೆ ಎಂಬ ಹೆಗ್ಗಳಿಕೆ ನನ್ನದು. ಮಾನಸಿಕವಾಗಿ ’ಇವರು ಅಮೇರಿಕದಲ್ಲಿರುವವರು...’ ಎಂದು ಪೂರ್ವಭಾವಿ ಯೋಚನೆಯಲ್ಲಿ ಮಾತನಾಡಿಸುವವರನ್ನು ಹೊರತುಪಡಿಸಿ ಉಳಿದವರಿಗೆ ನನ್ನ ಅನಿವಾಸಿತನದ ಸೂಕ್ಷ್ಮವೂ ಗೊತ್ತಾಗದಿರುವಂತೆ ಬದುಕುವುದೂ ಸಾಧ್ಯವಿದೆ ಎಂಬುದು ಗೊತ್ತಿದೆ. ಜೊತೆಗೆ ನನ್ನ ಹಾಗೆಯೇ ಎಲ್ಲರೂ ಇರಲೇ ಬೇಕು ಎಂದೇನೂ ಇಲ್ಲ ಎನ್ನು ಸಾಮಾನ್ಯ ತಿಳುವಳಿಕೆಯೂ ಇದೆ. ಹೀಗಿದ್ದ್ಯಾಗ್ಯೂ, ನನ್ನ ಸ್ನೇಹಿತನಲ್ಲಿನ ಬದಲಾವಣೆಗಳು ನನ್ನಲ್ಲಿ ನಿರಾಶೆಯನ್ನುಂಟು ಮಾಡಿದವು ಎಂದರೆ ತಪ್ಪೇನೂ ಇಲ್ಲ. ಆತನಿಗಾದ ಬದಲಾವಣೆಗಳು ಸರಿ ತಪ್ಪು ಎನ್ನುವುದಕ್ಕಿಂತಲೂ ನನಗೇ ಗೊತ್ತಾಗುವಷ್ಟರ ಮಟ್ಟಿಗಿನ ಆತನಲ್ಲಿನ ಬದಲಾವಣೆಗಳು ಅಗತ್ಯವೇ ಎಂದು ಯೋಚಿಸತೊಡಗಿದೆ. ಇದೇ ದೇಶದಲ್ಲಿ ನೂರಾರು ವರ್ಷಗಳಿಂದ ತಲತಲಾಂತರದಿಂದ ನೆಲೆಸಿ ಬೆಳೆಯುತ್ತಿರುವ ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟುಗಳಲ್ಲಾಗಲೀ ತಮ್ಮ ವಾಕ್ಯ ರಚನೆಯ ಶೈಲಿಯಲ್ಲಾಗಲೀ ಬದಲಾವಣೆ ಮಾಡಿಕೊಳ್ಳದಿದ್ದರೂ ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲ ಮಾನ್ಯತೆಗಳನ್ನೂ ಪಡೆದುಕೊಂಡಿರುವಾಗ ನಮಗೆ ಆಕ್ಸೆಂಟು ಬದಲಾವಣೆ ಅಗತ್ಯವಿದೆಯೇ? ಬರೀ ಅಕ್ಸೆಂಟುಗಳನ್ನು ಬದಲಾಯಿಸಿಕೊಂಡ ಮಾತ್ರಕ್ಕೆ ಏನು ಸಾಧಿಸಿಕೊಂಡಂತಾಯಿತು, ಹೀಗೆ ಆರಂಭಗೊಂಡ ಬದಲಾವಣೆಯ ಆದಿ ಮತ್ತು ಅಂತ್ಯ ಎಲ್ಲಿ ಎನ್ನುವುದು ಇನ್ನೂ ಪ್ರಶ್ನೆಗಳಾಗೇ ತಲೆ ತಿನ್ನುತ್ತಲೇ ಇವೆ.

ನೀವು ಬದಲಾಗಿದ್ದೀರೇನು? ಏಕೆ ಬದಲಾಗಿದ್ದೀರಿ, ಇಲ್ಲವಾದರೆ ಏಕೆ ಬದಲಾಗಿಲ್ಲ?

Tuesday, November 20, 2007

ರಸ್ತೇ ಮೇಲಿನ ಗುಂಡಿ

ನಮ್ಮನೆಯಿಂದ ಸ್ವಲ್ಪ ದೂರದಲ್ಲಿರೋ ಹೈವೇ ಮೇಲೆ ಹೋದಾಗ್ಲೆಲ್ಲಾ ಇತ್ತೀಚೆಗೆ ರಸ್ತೆ ನಡುವೆ ಬಿದ್ದಿರೋ ಒಂದು ಸಣ್ಣ ಗುಳಿ ಅಥವಾ ಹೊಂಡ ನನ್ನ ಪರಿಚಯ ಮಾಡ್ಕೊಂದಿದೆ, ಕಾರಿನ ಚಕ್ರಗಳು ಅದರ ಮೇಲೆ ಹೋದಂತೆಲ್ಲ ಅದರ ವೇಗದ ಆಧಾರದ ಮೇಲೆ ಒಂದೋ ಎರಡೋ ಪದವನ್ನು ಅದು ಅರಚುತ್ತೆ, ಕೆಲವೊಂದ್ ಸರ್ತಿ ಅದು ’ಹಾಯ್’, ’ಹಲೋ’ ಅಂಥಾ ಕೇಳ್ಸಿದ್ರೂ ಇನ್ನ್ ಕೆಲವು ಸಲ ಅದರದ್ದೇ ಏನೋ ಒಂದು ಗಾಥೆ ಇರಬಹುದೇನೋ ಅನ್ನೋ ಅನುಮಾನಾನೂ ಬಂದಿದೆ.

ನಿಮಗೆಲ್ಲಾ ಅನ್ನಿಸ್‌ಬೋದು, ಈ ರಸ್ತೆ ನಡುವಿನ ಹೊಂಡಗಳ ಜೊತೆ ನಮ್ಮದೇನ್ ಮಾತೂ ಅಂತ. ಅವುಗಳ ಮಾತಿನಲ್ಲೂ ಒಂದು ಲಾಲಿತ್ಯ ಇರುತ್ತೇ, ಪ್ರೀತಿ ಇರುತ್ತೆ ಎಲ್ಲದಕ್ಕಿಂತ ಮುಖ್ಯವಾಗಿ ನೆಟ್ಟಗೆ ಇದ್ದದ್ದನ್ನ ಸರಿಯಾಗಿ ಇಟ್ಟುಕೊಳ್ಳದೇ ಹೋದ್ರೆ ಒಂದಲ್ಲ ಒಂದು ಯಾವ ಸ್ಥಿತಿಯನ್ನು ತಲುಪಬಹುದು ಅನ್ನೋ ಸತ್ಯಾಂಶ ಇರುತ್ತೆ. ಇವುಗಳನ್ನೆಲ್ಲಾ ನೋಡಿ, ಕೇಳಿದಾಗಲೆಲ್ಲಾ ನಾನು ಅವುಗಳಿಂದ ಏನಾದ್ರೊಂದನ್ನ ಕಲಿಯೋದು ಇದ್ದೇ ಇರುತ್ತಾದ್ದರಿಂದ ಅವುಗಳ ಜೊತೆಗಿನ ಒಡನಾಟವನ್ನು ಪುರಸ್ಕರಿಸೋದು. ಉದಾಹರಣೆಗೆ, ದಿನವೂ ನಿಮಗೆ ಎದುರಾಗುವ ಸ್ನಾನದ ಕೋಣೆ ಅಥವಾ ಶವರ್‌ನ ಗೋಡೆಗಳಿಗೆ ಆತ್ಮೀಯತೆಯಿಂದ ಅಂಟಿಕೊಂಡಿರುವ ಕೂದಲುಗಳನ್ನು ಸ್ವಲ್ಪ ಸರಿಯಾಗಿ ನೋಡಿ. ಅವುಗಳಲ್ಲಿ ಅದೇನೋ ಒಂದು ಅದಮ್ಯ ಬಲವಿದೆ, ಚೈತನ್ಯವಿದೆ ಅಂತ ಅನ್ನಿಸಿದರೂ ಅನ್ನಿಸಬಹುದು. ಇಲ್ಲಾ ಅಂತಂದ್ರೆ ಎರಡು ನಿರ್ಜೀವ ವಸ್ತುಗಳ ನಡುವೆ ಒಂದು ಬಂಧ ಬೆಳೆಯೋದಾದ್ರೂ ಹೇಗೆ? ನಮಗೆ ಗೊತ್ತಿರೋ ಯಾವುದೋ ರಸಾಯನಿಕ ಅಥವಾ ಎಲೆಕ್ಟ್ರೋ ಸ್ಟ್ಯಾಟಿಕ್ ಸಂಬಂಧಗಳಿಂದ ಅಂಥಾ ಅನುಬಂಧಗಳನ್ನು ಅಳೆಯೋದಾದ್ರೂ ಹೇಗೆ? ಇಂಥಾ ಸಂಬಂಧಗಳ ಮೇಲೆ ಬೆಳಕು ಚೆಲ್ಲೋದಕ್ಕೋಸ್ಕರವೇನೋ ಎನ್ನೋ ಹಾಗೆ ನಮ್ಮಲ್ಲಿನ ಬಾತ್‌ರೂಮ್ ಟಬ್‌ಗಳನ್ನು ಬೆಳ್ಳಗೆ ಮಾಡಿರೋದು ಅನ್ನೋದು ನನ್ನ ಯಾವತ್ತಿನ ಅನುಮಾನ.

ಇನ್ನು ರಸ್ತೆ ಮೇಲಿನ ಗುಂಡಿ ವಿಚಾರಕ್ಕೆ ಬರೋಣ. ಅದರ ಆತ್ಮೀಯತೆಗೆ ನಾನು ಯಾವ ಹೆಸರನ್ನೂ ಇನ್ನೂ ಕೊಟ್ಟಿರಲಿಲ್ಲ. ಒಂದು ರೀತಿ ಅಕ್ವೇರಿಯಮ್‌ನಲ್ಲಿರೋ ಮೀನುಗಳಿಗೆ ನಾವು ಯಾವತ್ತೂ ಹೆಸರು ಕೊಟ್ಟಿಲ್ಲವೋ ಹಾಗೆ ಏಕೆಂದ್ರೆ ಅವು ಎಷ್ಟೊತ್ತಿಗೆ ಬೇಕಾದರೂ ಮರೆಯಾಗಿ ಹೋಗಬಹುದು ಅನ್ನೋ ಕಾರಣ. ಈ ಗುಂಡಿ ನನಗೆ ಹೇಳೋ ಒಂದೋ ಎರಡೋ ಪದಗಳಲ್ಲಿ ಬೇಕಾದಷ್ಟು ತತ್ವಗಳೇ ಅಡಗಿರುತ್ತೆ. ಎಲ್ಲವೂ ನೆಟ್ಟಗೆ ನುಣ್ಣಗೆ ಇದ್ದಂಥ ರಸ್ತೆಗಳಲ್ಲೂ ಹೊಂಡಗಳು ಬೀಳುತ್ತವೆ ಎನ್ನುವುದು ಅವುಗಳ ಧ್ಯೇಯವಾಕ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಪಂಚಭೂತಗಳಿಗೆ ತೆರೆದುಕೊಂಡಿರುವುದೂ ಅಲ್ಲದೇ ಪ್ರತಿ ನಿಮಿಷಗಳಿಗೊಮ್ಮೆ ತಮ್ಮ ಮೈಮೇಲೆ ಅದೆಷ್ಟೋ ಭಾರದ ವಾಹನದ ಗಾಲಿಗಳನ್ನು ಹರಿಯಬಿಡುವುದು ಸಾಮಾನ್ಯವೇನಲ್ಲ, ಅದಕ್ಕೆಂತಹ ಹತ್ತಾನೆಯ ಬಲದ ಗುಂಡಿಗೆ ಇರಬೇಡ. ಅದೇ ರಸ್ತೆಯಲ್ಲಿ ಹೋಗೋ ವಾಹನಗಳ ಜೊತೆಗೆ ಸಂವಾದಿಸುವ ಛಲವೊಂದಿದ್ದರೆ ಮಾತ್ರ ಸಾಲದು, ತನ್ನ ಮೈ ಮೇಲೆ ಒಂದು ಕ್ಷಣದ ಭಾಗದಷ್ಟು ಕಾಲ ಮಾತ್ರ ಸ್ಪರ್ಷಿಸಿ ಹೋಗೋ ಚಕ್ರಗಳನ್ನು ಮಾತಿಗೆ ತೊಡಗಿಸುವ ಚಾಕಚಕ್ಯತೆಯೂ ಇರಬೇಕು.

ಎಲ್ಲೂ ನನ್ನನ್ನು ಕೇಳ್ತಾರೆ, ’ಓಹ್, ಅಮೇರಿಕದ ರಸ್ತೆಗಳು ನುಣ್ಣಗಿರುತ್ತವಂತೆ!’, ಈ ರೀತಿಯ ಉದ್ಗಾರಗಳಿಗೆ ನಾನು ಸೊಪ್ಪು ಹಾಕೋದೇ ಇಲ್ಲ. ಅಮೇರಿಕನ್ ರಸ್ತೆಗಳ ಬಗ್ಗೆ ಹೀಗೆ ಹೇಳೋರಿಗೆ ಅವುಗಳ ಬಗ್ಗೆ ಏನು ಗೊತ್ತು? ಕಾರಿದ್ದೋರು ಹೈವೇ ಹತ್ತೋ ಹಾಗೆ ಹೈವೇಗಳು ಗುಂಡೀ ಬೀಳೋದು ಸಾಮಾನ್ಯ ಅದು ಯಾವತ್ತಿದ್ದರೂ ಎಲ್ಲಿದ್ದರೂ ಹೊಂದುವಂತಹ ಒಂದು ಸಣ್ಣ ತರ್ಕ ಹಾಗೂ ತತ್ವ. ಹಾಗಿದ್ದ ಮೇಲೆ ತಮ್ಮೂರಿನ ರಸ್ತೆಗಳಲ್ಲಿನ ಅಷ್ಟೊಂದು ಗುಂಡಿಗಳ ಜೊತೆಗೆ ಹಗಲೂ ಇರುಳೂ ಸಂವಾದವನ್ನು ನಡೆಸಿಕೊಂಡೂ ರಸ್ತೆಗಳ ಮೇಲಿನ ಗುಂಡಿಗಳಿಗೇ ಅವಮಾನವಾಗುವ ಹಾಗೇ ಅದ್ಯಾವುದೋ ಕಣ್ಣೂ ಕಾಣದ ದೂರದೂರಿನ ರಸ್ತೆಗಳು ನುಣುಪಾಗಿರುತ್ತವೆ ಎಂದುಕೊಳ್ಳುವುದು ಯಾವ ನ್ಯಾಯ. ನಮ್ಮೂರಿನಲ್ಲಿರುವ ರಸ್ತೆಗಳಲ್ಲಿ ಕಂಡುಬರುವ ಕೆಲವೊಮ್ಮೆ ರಸ್ತೆಗಳಿಗಿಂತ ಗುಂಡಿಗಳೇ ತುಂಬಿಕೊಂಡಿರುವ ಪ್ರದೇಶಗಳಲ್ಲಿ ದಿನವೂ ವಾರ್ತಾಲಾಪ ನಡೆಸಿಕೊಂಡು ಹೋಗುವುದಕ್ಕಿಂತ ಇಲ್ಲಿನ ರಸ್ತೆಗಳಲ್ಲಿನ ಒಂದೆರಡು ಗುಂಡಿಗಳ ಬದುಕಿನ ಬಗ್ಗೆ ಒಂದಿಷ್ಟು ಕುತೂಹಲವನ್ನು ತೋರಿದರೂ ಸಾಕು, ಅವುಗಳಲ್ಲಿ ಅದೆಷ್ಟೋ ದೊಡ್ಡ ದೊಡ್ಡ ಕಥೆಗಳೇ ಹುದುಗಿವೆ. ರಾತ್ರೋ ರಾತ್ರಿ ಹುಟ್ಟಿಬೆಳೆಯುವ ನಾಯಿಕೊಡೆಗಳ ಹಾಗೆ ಇವತ್ತಿರದ ಗುಂಡಿಗಳು ನಾಳೆ ಎಲ್ಲಿ ಬೇಕಂದರಲ್ಲಿ ಎದ್ದು ಬಿಟ್ಟಾವು, ಐದು-ಹತ್ತು ಟನ್ ಭಾರವನ್ನು ಹೊರುವ ಟ್ರಕ್‌ಗಳು ಮಾತ್ರ ಎಂದು ಫಲಕಗಳನ್ನು ಹಾಕಿದರೂ ಮುವತ್ತು-ನಲವತ್ತು ಟನ್ನ್ ತೂಕವನ್ನು ಬಡ ರಸ್ತೆಗಳ ಮೇಲೆ ಕೊಂಡೊಯ್ಯುವ ಮೂಢರಿರುವವರೆಗೆ. ರಾತ್ರೋ ರಾತ್ರಿ ಹುಟ್ಟುವ ಗುಂಡಿಗಳನ್ನು ರಾತ್ರೋ ರಾತ್ರಿ ಮುಚ್ಚಿ ಏನೇನೂ ಆಗಿಲ್ಲ ಎಂದು ತೋರಿಸುವಷ್ಟು ನಯ-ನಾಜೂಕಿನಿಂದ ಕೆಲಸ ಮಾಡುವವರನ್ನು ಕಲೆ ಹಾಕಿ ಈ ಗುಂಡಿಗಳಿಗೆ ಒಂದು ಕಾಯಕಲ್ಪ ಕೊಡದೇ ಹೋದರೆ ಗುಂಡಿಗಳು ಬೆಳೆದು ತಮ್ಮದೇ ಒಂದು ಸಂಘವನ್ನು ಕಟ್ಟಿಕೊಂಡು ಆಶ್ರಯ ನೀಡಿದ ರಸ್ತೆಗೇ ಕುತ್ತು ತಂದುಬಿಡಬಹುದಾದ ಆಪತ್ತಿದೆ. ಆದ್ದರಿಂದಲೇ ಅಮೇರಿಕದ ರಸ್ತೆಗಳು ಹಗಲೂ-ರಾತ್ರಿ ಎನ್ನದೇ ನಿರ್ಮಾಣಗೊಂಡವು ಜೊತೆಗೆ ಅವುಗಳ ದುರಸ್ತಿ ಕೂಡಾ ಹಾಗೇ ನಡೆದುಕೊಂಡು ಬಂದಿದೆ.

ಈ ಸಾರಿ ಈ ಹೆಸರಿಡದ ಗುಂಡಿ ಬಹಳ ಬೇಸರವಾಗಿದ್ದಂತೆ ಕಂಡುಬಂತು. ಹೆಚ್ಚು ಟ್ರಾಫಿಕ್ ಇರದಿದ್ದ ಕಾರಣ ನಾನು ನಿಧಾನಕ್ಕೆ ಅದರ ಮೇಲೆ ಕ್ರಮಿಸಿ ಒಂದು ಕ್ಷಣದ ಕಾಂಟ್ಯಾಕ್ಟ್‌ನಲ್ಲಿ ಅದರ ಮನದಾಳವನ್ನು ಕಣ್ಣಿನ ಡಾಕ್ಟರುಗಳು ರೆಟಿನಾವನ್ನು ನೋಡುವ ಹಾಗೆ ನೋಡಿದೆ. ಅದರಲ್ಲಿ ನಲಿವಿಗಿಂತಲೂ ಹೆಚ್ಚು ನೋವಿತ್ತು, ಹಿಂದಿನ ಚಕ್ರಗಳು ಅದೇ ಗುಂಡಿಯ ಮೇಲೆ ಹೋಗಿ ಕೆದಕಿ ನೋಡಲಾಗಿ ಇಂದು ರಾತ್ರಿ ಆ ಗುಂಡಿಯನ್ನು ಮುಚ್ಚಿ ಸರಿ ಮಾಡುತ್ತಾರೆ ಎನ್ನುವ ಮುನ್ಸೂಚನೆ ಸಿಕ್ಕಿತು. ನಾನಂದುಕೊಂಡಿದ್ದೆ, ಇಲ್ಲಿ ಈಗಾಗಲೇ ಸೊನ್ನೆಯ ತಾಪಮಾನ ಬಿದ್ದು ಕೊರೆಯುವ ಛಳಿ ಇದೆ, ಜೊತೆಗೆ ಒಂದೆರಡು ಬಾರಿ ಹಿಮಪಾತವೂ ಆಗಿದೆ. ಈ ಛಳಿ, ಮಳೆಯಲ್ಲಿ ರಸ್ತೆಯನ್ನು ಯಾರಾದರೂ ರಿಪೇರಿ ಮಾಡುವುದು ಸಾಧ್ಯವೇ ಎಂದು ಅನಿಸಿದ್ದರೂ ಕಡಿಮೆ ಜನರಿದ್ದೂ ಹೆಚ್ಚು ಮಷೀನುಗಳನ್ನು ಬಳಸುವಲ್ಲಿ, ಹಗಲೂ-ರಾತ್ರಿ, ಮಳೆ-ಛಳಿ-ಗಾಳಿಯಲ್ಲೂ ಕಷ್ಟಪಟ್ಟು ದುಡಿಯುವ ಇವರ ಡೆಡಿಕೇಷನ್ನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ’ಓಹ್, ನಮ್ಮ ಸಿಟಿ, ಕೌಂಟಿಯವರು ಟ್ಯಾಕ್ಸು ತೆಗೆದುಕೊಳ್ಳುತ್ತಾರೆ, ಅವರೇನು ರಸ್ತೆ ರಿಪೇರಿ ಮಾಡಿಸೋದು ಮಹಾ’ ಎಂದು ಯಾರು ಬೇಕಾದರೂ ಮೂಗು ಮುರಿಯಲಿ ಅವರ ಗುಂಡಿಗಳನ್ನು ನಿರ್ಮೂಲನ ಮಾಡುವ ದೃಢತೆಯನ್ನು ಮೆಚ್ಚಲೇ ಬೇಕು.

ಹಿಂದೆ ನಮ್ಮ ಅಜ್ಜೀ ಮನೆಯಲ್ಲಿನ ಸಿಮೆಂಟಿನ ಜಗುಲಿಯಲ್ಲಿ ಯಾರೋ ತೆಂಗಿನಕಾಯಿ ಸುಲಿಯಲು ಹೋಗಿ ಕತ್ತಿಯ ಕಚ್ಚು ತಾಗಿ ಒಂದು ಕಡೆ ಸಿಮೆಂಟ್ ಕಿತ್ತು ಹೋಗಿತ್ತು, ಅದನ್ನು ಎಷ್ಟು ಸರಿ ಮಾಡಿದರೂ ದಿನ ಬಿಟ್ಟು ದಿನ ಅದು ದೊಡ್ಡದಾಗಿ ಬೆಳೆಯುತ್ತಲೇ ಹೋಗಿ ಕೊನೆಗೆ ಇಡೀ ಜಗುಲಿಗೇ ಕುತ್ತು ತಂದಿತ್ತು. ಹಾಗೇ ಇಲ್ಲಿಯ ಪ್ರತಿಯೊಂದು ಗುಂಡಿಯೂ ಬೆಳೆದು ದೊಡ್ಡದಾಗೋದಿಲ್ಲವಲ್ಲ ಎಂಬ ಸಂಶಯ ನನ್ನ ಬೆನ್ನ ಹಿಂದೆ ಇತ್ತು. ಏನೇ ಆಗಲಿ ಇನ್ನೊಂದು ವಾರದಲ್ಲಿ ನೋಡೇ ಬಿಡೋಣ ಎಂದು ಸಂಕಲ್ಪ ಮಾಡಿಕೊಂಡವನಿಗೆ ಮರುದಿನವೇ ಮಹದಾಶ್ಚರ್ಯ. ನನ್ನ ಸ್ನೇಹಿತ ಗುಂಡಿಯಿರಲಿ ಅದು ಈ ಹಿಂದೆ ಅಲ್ಲಿ ಇದ್ದ ಬಗ್ಗೆಯೂ ಯಾವ ಪುರಾವೆ ಇರಲಿಲ್ಲ. ರಾತ್ರೋರಾತ್ರಿ ಯಾವುದೋ ಸೈನ್ಯವೊಂದು ರಸ್ತೆಯ ಮೇಲೆ ಬೀಡು ಬಿಟ್ಟ ಪರಿಣಾಮವೋ ಎಂಬುವಂತೆ ಪೂರ್ಣ ರಸ್ತೆ ತನ್ನ ಮಾಮೂಲಿ ಸ್ಥಿತಿಗೆ ಬಂದಂತಿತ್ತು, ಎಲ್ಲವೂ ಸ್ವಚ್ಛವಾಗಿತ್ತು. ನಮ್ಮೂರಿನಲ್ಲಿ ರಸ್ತೆ ಕಾಂಟ್ರಾಕ್ಟರುಗಳು ಆಕ್ರಮವಾಗಿ ಕಾಡನ್ನು ಕಡಿದು, ಕಟ್ಟಿಗೆಯನ್ನು ಉರಿಸಿ, ಅಳಿದುಳಿದ ಟಾರಿನ ಅಂಶವನ್ನು ರಸ್ತೆ ಬದಿಗೆ ಚೆಲ್ಲಿ ಹೋದಂತೆ ಯಾವ ಗುರುತಾಗಲೀ ಸಿಗ್ನೇಚರ್ ಆಗಲೀ ಕಾಣಸಿಗಲಿಲ್ಲ. ಕಡಿಮೆ ಜನರಿರುವ ಕಡೆ ಕೆಲಸ ಹೆಚ್ಚು ಇರಬೇಕು, ಕೆಲಸ ಹೆಚ್ಚಾದಂತೆ ಧಕ್ಷತೆ ಕಡಿಮೆ ಆಗಬೇಕು ಎಂದುಕೊಂಡಿದ್ದು ಸುಳ್ಳೇ ಆಗಿ ಹೋಯಿತು.

ಏನೇ ಇರಲಿ, ಯಾರೋ ರಾತ್ರೋ ರಾತ್ರಿ ಮಾಡಿದ ಕೆಲಸದ ಗತಿಯಿಂದಾಗಿ ರಸ್ತೆ ಮೇಲಿನ ನನ್ನ ಸ್ನೇಹಿತನೊಬ್ಬನ ತಳಮಳಗಳು ಇನ್ನು ಮುಂದೆ ನನಗೆ ತಿಳಿಯದೇ ಹೋಯಿತು. ತನ್ನ ಅಲ್ಪಾವಧಿಯಲ್ಲಿ ಅದೆಷ್ಟೋ ಜನರಿಗೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ನೆನಪಿಸಿದ ಗುಂಡಿಯನ್ನು ನಾವು ನೆನಪಿಡಬೇಕಾದ್ದು ನ್ಯಾಯವಲ್ಲವೇ?

Sunday, November 18, 2007

ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ...

ಮತ್ತದೇ ಮಬ್ಬು ಮುಸುಕಿಕೊಂಡು ಇರೋ ಒಂದು ಭಾನುವಾರವನ್ನೂ ಹೆಚ್ಚೂ ಕಡಿಮೆ ಕತ್ತಲೆಯಲ್ಲೇ ದೂಡಿ ಬಿಡುವ ಸಂಚನ್ನು ಯಾರು ಮಾಡಿದ್ದಾರೋ ಎನ್ನುವ ಅನುಮಾನ ಯಾರಿಗಾದರೂ ಬರುವಂತಿತ್ತು ಇವತ್ತಿನ ಹವಾಮಾನ. ಮೊನ್ನೆ ಒಂದಿಷ್ಟು ಸ್ನೋ ಫ್ಲೇಕ್ಸ್‌ಗಳನ್ನ ನೆಲಕ್ಕೆಲ್ಲಾ ಸಿಂಪಡಿಸಿ ಹಳೆಯ ನೆಂಟಸ್ತಿಕೆಯನ್ನು ಗುರುತಿಸಿಕೊಂಡು ಬರೋ ದೂರದ ಸಂಬಂಧಿಯ ಹಾಗೆ ಹೇಳದೇ ಕೇಳದೇ ಬಂದು ಹೆಚ್ಚು ಹೊತ್ತು ನಿಲ್ಲದ ಸ್ನೋ ಇವತ್ತು ಒಂದು ಮುಕ್ಕಾಲು ಇಂಚಿನಷ್ಟು ಬಂದು ಬಿದ್ದಾಗಲೇ ನಾನು ಮನಸ್ಸಿನಲ್ಲಿ ಮುಂಬರುವ ಕೆಟ್ಟ ಛಳಿಯನ್ನು ಯೋಚಿಸಿಕೊಂಡು ಒಮ್ಮೆ ನಡುಗಿ ಹೋಗಿದ್ದು. ಗ್ಲೋಬಲ್ ವಾರ್ಮಿಂಗ್ ಅಥವಾ ಎನ್ವೈರ್‌ಮೆಂಟನ್ನು ಚೆನ್ನಾಗಿಟ್ಟುಕೊಳ್ಳುವುದು ಹಾಗಿರಲಿ, ನಮ್ಮನೇ ಡೆಕ್ಕ್‌ನಲ್ಲಿರುವ ಥರ್ಮಾ ಮೀಟರ್ ಸೊನ್ನೆಯ ಆಜುಬಾಜುವಿನಲ್ಲಿ ತನ್ನೊಳಗೆ ಹುದುಗಿದ ಪಾದರಸವನ್ನು ಅದುಮಿಕೊಂಡಿರುವಾಗ ಫೈರ್‌ಪ್ಲೇಸ್‌ನಲ್ಲಿ ಬೆಂಕಿ ಉರಿಸದೇ ಬದುಕೋದಾದರೂ ಹೇಗೆ ಎಂದು ಇತ್ತೀಚೆಗಷ್ಟೇ ಅನ್ನಿಸಿದ್ದು.

ಮೊದಲೆಲ್ಲಾ ಶಾಲೆಗೆ ಹೋಗೋ ಹುಡುಗ್ರಾಗಿದ್ದಾಗ ಬೆಳ್ಳಂಬೆಳಗ್ಗೆ ಬಚ್ಚಲು ಮನೆ ಒಲೆಯ ಮುಂದೆ ಕುಳಿತೇ ಹಲ್ಲು ತಿಕ್ಕು ತಿದ್ದುದು. ಬಚ್ಚಲು ಮನೆಯ ಒಲೆಯೊಳಗೆ ಅದೆಷ್ಟು ಬಾರಿ ಗೋಡಂಬಿಯನ್ನೋ ಹಲಸಿನ ಬೀಜವನ್ನೋ ಸುಟ್ಟು ತಿಂದಿದ್ದಿಲ್ಲ. ಹಾಗೇ ಇಲ್ಲಿಯ ಫೈರ್‌ಪ್ಲೇಸ್‌ನೊಳಗೆ ಉರಿಯುವ ಜ್ವಾಲೆ ಹಳೆಯದನೆಲ್ಲ ನೆನಪಿಗೆ ತರುತ್ತದೆ. ಅಲ್ಲಿ ಬಚ್ಚಲ ಒಲೆಯ ಉರಿ ತನ್ನ ಮೇಲಿನ ತಣ್ಣೀರ ಹಂಡೆಯನ್ನು ಬಿಸಿ ಮಾಡಿಕೊಂಡಿರುತ್ತಿದ್ದರೆ ಇಲ್ಲಿಯ ಬೆಂಕಿ ತನ್ನೊಳಗಿನ ಉರಿ ಹಾಗೂ ಉಷ್ಟತೆಯನ್ನು ಚಿಮಣಿಯೊಳಗೆ ಏರಿಸಿಕೊಂಡು ಏದುಸಿರು ಬಿಡುವುದರಲ್ಲೇ ಸಂತೋಷ ಪಡುವಂತೆ ಕಾಣುತ್ತಿತ್ತು. ನಿಗಿ ನಿಗಿ ಉರಿದ ಬೆಂಕಿ, ತಾವೇ ಉರಿದು ತಮ್ಮನ್ನೇ ತಾವು ಅರ್ಪಿಸಿಕೊಳ್ಳುವ ಒಣಗಿದ ಕಟ್ಟಿಗೆ, ಕೆಂಪಾದ ಕೆಂಡ ಕಪ್ಪಾಗಿ ಮುಂದೆ ಬಿಳಿಯ ಬೂದಿಯಾಗೋದು, ಮಧ್ಯೆ ಯಾರಿಗೋ ಪಿಟಿಪಿಟಿ ಬಯ್ಯೋ ಮುದುಕಿಯ ಸ್ವರದ ಹಾಗೆ ಕಂಡು ಬರುವ ಚಟಪಟ ಸಿಡಿಯುವ ಸದ್ದು ಹೀಗೆ ನಮ್ಮನೆಯಲ್ಲಿನ ಫೈರ್‌ಪ್ಲೇಸ್‌ನ ಬೆಂಕಿಯದು ಒಂದೊಂದು ದಿನ ಒಂದೊಂದು ಕಥೆ. ಮೊದಲೆಲ್ಲಾ ಸ್ವಲ್ಪ ಬಿಸಿಯಾದ ನೀರನ್ನು ಸ್ನಾನ ಮಾಡಬಹುದಿತ್ತು, ಸ್ವಲ್ಪವೇ ಬೆಂಕಿ ಕಾಯಿಸಿಕೊಂಡಿದ್ದರೂ ಹಾಯ್ ಎನಿಸುತ್ತಿತ್ತು, ಇತ್ತೀಚೆಗಂತೂ ಎಷ್ಟು ಸುಡು ನೀರನ್ನು ಮೈ ಮೇಲೆ ಹೊಯ್ದುಕೊಂಡರೂ ಎಷ್ಟೇ ಬೆಂಕಿಯನ್ನು ಕಾಯಿಸಿಕೊಂಡರೂ ಮತ್ತಷ್ಟು ಬಿಸಿ ಬೇಕು ಎನ್ನಿಸುತಿದೆ. ಹೀಗೆ ವಯಸ್ಸು ಮಾಗುತ್ತಿರುವ ಹಾಗೆ ಚರ್ಮ ಸುಕ್ಕು ಸುಕ್ಕಾಗುತ್ತಿರುವಂತೆ ಮೈ ಮೇಲೆ ಬೀಳುವ ನೀರಿನ ಬಿಸಿಯೂ ಹೆಚ್ಚಾಗಬೇಕು, ಬೆಂಕಿಯ ಜ್ವಾಲೆಗೆ ಹತ್ತಿರ ಬರಬೇಕು, ಅಲ್ಲದೇ ಪ್ರತಿಯೊಂದು ವರ್ಷದ ಛಳಿಯ ಅನುಭವವೂ ಹಿಂದಿನ ವರ್ಷದ ಅನುಭವಕ್ಕಿಂತ ಕಟುವಾಗಬೇಕು.

ಕಿಟಕಿಯಿಂದ ಹೊರಗಡೆ ನೋಡಿದರೆ ಬಡವರ ಮೇಲೆ ದೌರ್ಜನ್ಯ ಮಾಡುವ ಬಿಳಿ ಬಟ್ಟೆ ತೊಟ್ಟ ರಾಜಕಾರಣಿಗಳ ಹಾಗೆ ಕೇವಲ ಹುಲ್ಲಿನ ಮೇಲೆ ಮಾತ್ರ ಅರ್ಧ ಅಂಗುಲದಷ್ಟು ಸ್ನೋ ಕಟ್ಟಿ ನಿಂತಿತ್ತು. ಹುಲ್ಲಿನ ಪಕ್ಕದಲ್ಲಿರುವ ಕರಿ ರಸ್ತೆಯಾಗಲೀ, ಗ್ರೇ ಬಣ್ಣದ ಸೈಡ್ ವಾಕ್ ಮೇಲಾಗಲೀ ಬೀಳುತ್ತಿದ್ದ ಸ್ನೋ ಕಟ್ಟಿ ನಿಲ್ಲುತ್ತಿರಲಿಲ್ಲ, ಅದೇ ಕಣ್ಣಿಗೆ ಕಾಣುವ ಕರಿದಾದ ಮನೆಯ ಛಾವಣಿಯ ಮೇಲೆ ಸ್ನೋ ತನ್ನ ಅಟ್ಟಹಾಸ ಸಾರುತ್ತಿತ್ತು. ನಿಸರ್ಗದತ್ತ ಕೊಡುಗೆಯಾದ ಹಿಮಕ್ಕೂ ಈ ಬಗೆಯ ಭಿನ್ನತೆ ಏಕೆ ಮನಸ್ಸಿನಲ್ಲಿ ಬಂತು ಎಂದು ನಾನೊಮ್ಮೆ ಯೋಚಿಸಿಕೊಂಡರೂ ಬೇರೇನೋ ಭೌತಿಕವಾದ ಬಲವಾದ ಕಾರಣವಿದೆ ಇದರ ಹಿಂದೆ ಎಂದು ತಲೆ ತೂಗಿಸಿ ಆ ವಸ್ತುವನ್ನು ಅಲ್ಲಿಗೇ ಬಿಟ್ಟೆ. ಬೆಳಗ್ಗಿನಿಂದ ಸಂಜೆವರೆಗೆ ಹೊರಗಡೇ ಪ್ರತಿಶತ ತೊಂಭತ್ತು ಭಾಗ ಆರ್ಧತೆ ಇರುವ ವ್ಯವಸ್ಥೆಯಲ್ಲಿನ ಮನೆಯೊಳಗೆ ಬೆಳಗ್ಗಿನಿಂದ ಸಂಜೆವರೆಗೆ ಉರಿಯುವ ಗ್ಯಾಸ್ ಹೀಟರ್‌ನ ಮಹಿಮೆಯೋ ಮತ್ತೊಂದು ಅತ್ಯಂತ ಡ್ರೈ ಹವೆಯಿರುವುದು ಮತ್ತೊಂದು ತಲೆತಿನ್ನುವ ಅಂಶ. ಬೇಕೋ ಬೇಡವಾಗಿಯೋ ತುರಿಸಿಕೊಳ್ಳಲೇ ಬೇಕು ಚರ್ಮವನ್ನು - ಕೆರೆದುಕೊಂಡಲ್ಲೆಲ್ಲಾ ಉರಿದುಕೊಳ್ಳೋದು ಸಾಮಾನ್ಯ, ಇನ್ನೇನಾದರೂ ಹೆಚ್ಚೂ ಕಡಿಮೆಯಾಗಿ ಘಾಯವಾಗಿ ಹೋದರೆ ಎನ್ನುವ ಹೆದರಿಕೆ ಬೇರೆ ಕೇಡಿಗೆ.

ಈಗಾಗಲೇ ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡಿರುವ ಪ್ರತಿಯೊಂದು ಮರಗಳೂ ದಿನವಿಡೀ ಬೀಳೋ ಬಿಳೀವಸ್ತುವಿನ ಎದಿರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಬೀಳುವಾಗ ಮಾತ್ರ ಶುದ್ಧ ಬಿಳಿಯಾಗಿ ಮರುದಿನದಲ್ಲೇ ಪ್ರಪಂಚದ ಕೊಳೆಯನ್ನು ತನ್ನ ಮುಖದಲ್ಲಿ ಬಿಂಬಿಸಿಕೊಳ್ಳುವ ರಸ್ತೆ ಬದಿಯ ಸ್ನೋ ಗೆ ಯಾಕೀ ಮರಗಳು ಅಷ್ಟೊಂದು ಮಹತ್ವಕೊಡುತ್ತವೆ ಎನ್ನುವುದನ್ನು ನಾನಂತೂ ಅರಿಯೆ. ತಮ್ಮ ಅಂಗುಲ ಅಂಗುಲಗಳಲ್ಲಿ ಈ ಬಿಳಿವಸ್ತುವನ್ನು ಏಕೆ ನಿಲ್ಲಿಸಿಕೊಳ್ಳಬೇಕು, ಗಾಳಿ ಬಂದ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಝಾಡಿಸಿ ಒದ್ದು ನೂಕಿದರೆ ಹೇಗೆ ಈ ಬಿಳಿವಸ್ತುವನ್ನ ಎಂದು ಮರದ ಪರವಾಗಿ ಯೋಚಿಸುತ್ತಿದ್ದ ನನ್ನ ಮನದಲ್ಲಿ ಬಂದ ಆಲೋಚನೆ. ಮನೆಯ ಹಿಂದೆ ಹಾಗೂ ಮುಂದೆ ಇರುವ ಬರ್ಚ್ ಮರಗಳಲ್ಲಿ ಯಾವುದೇ ಧಮ್ ಇದ್ದಂತಿರಲಿಲ್ಲ. ನಳಿ ನಳಿ ಬೇಸಿಗೆಯಲ್ಲೇ ತಮ್ಮ ಭಾರವನ್ನು ತಾವೇ ಹೊರಲಾರದ ಅಶಕ್ತ ಮರಗಳು ಆರು ತಿಂಗಳ ಛಳಿಯಲ್ಲಿ ಬದುಕಿ ಉಳಿದಾವೇ ಎನ್ನುವ ಸಂಶಯವೇ ಬಲವಾಗಿರುವಾಗ ಈ ಮರಗಳ ಹೊತ್ತುಕೊಂಡು ನನ್ನದಾದರೂ ಯಾವ ವಾದ? ಈ ಅಶಕ್ತ ಮರಗಳ ಬದಲಿಗೆ ಕುಬ್ಜ ನಿತ್ಯಹರಿದ್ವರ್ಣಗಲೇ ಎಷ್ಟೋ ವಾಸಿ, ತಮ್ಮ ಮೇಲೆ ಅದೆಷ್ಟೋ ಸ್ನೋ ಬಂದರೂ ಹೊತ್ತುಕೊಂಡು ಸುಮ್ಮನಿರುತ್ತವೆ, ಛಳಿಯಲ್ಲಿ ತಮ್ಮ ಎಲೆಗಳನ್ನು ಉಳಿಸಿಕೊಂಡು.

ಸಾಮಾನ್ಯ ದಿನಗಳಲ್ಲಿ ಮೂರೋ ಸಂಜೆಯ ಹೊತ್ತಿಗೆ ಗೂಡಿಗೆ ಹಿಂತಿರುಗುತ್ತಿದ್ದ ಪಕ್ಷಿಗಳ ಧ್ವನಿ, ಕಲರವ ಇಂದು ಕೇಳಿ ಬರಲಿಲ್ಲ. ಯಾವುದೇ ಸೀಜನ್ ಬಂದರೂ, ಯಾವುದೇ ಋತುಮಾನವಿದ್ದರೂ ತಮ್ಮ ಹುಟ್ಟುಡುಗೆಯಲ್ಲೇ ಕಾಳ ಕಳೆದು ಬದುಕನ್ನು ಸಾಗಿಸುವ ಈ ಪ್ರಾಣಿ-ಪಕ್ಷಿಗಳ ಬದುಕೇ ಒಂದು ಸೋಜಿಗೆ. ಇವುಗಳಿಗೆಲ್ಲಾ ಈ ಛಳಿಯಲ್ಲಿ ಕಾಳು-ಕಡಿಯನ್ನು ಯಾರು ಇಡುವವರು? ಆದ್ದರಿಂದಲೇ ಇರಬೇಕು ಶ್ರೀಮಂತ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಛಳಿ ಹೆಚ್ಚು ಇರುವುದು. ಅಳಿಲಿನಿಂದ ಹಿಡಿದು ದೊಡ್ಡ ಕರಡಿಯವರೆಗೆ ಬೇಸಿಗೆಯಲ್ಲಿ ಠೊಣಪರಂತೆ ತಿದ್ದು ಮೈ ಬೆಳೆಸಿಕೊಳ್ಳುವ ಈ ಪ್ರಾಣಿಗಳಿಗೆ ಮೊದಲು ಹಸಿವೆಂಬುದು ಏನು ಎಂದು ಕಲಿಸಿಕೊಡಬೇಕು. ಇಲ್ಲಿ ಇವುಗಳು ಹೈಬರ್‌ನೇಟ್ ಮಾಡುವುದಿರಲಿ, ಛಳಿಗಾಲಕ್ಕೆ ಆಹಾರ ಪದಾರ್ಥಗಳನ್ನು ಕೂಡಿ ಹಾಕಿಕೊಂಡರೂ ಬೇಕಾದಷ್ಟು ಜಾಗವಿದೆ, ಬಡದೇಶಗಳಲ್ಲಿನ ಸ್ಪರ್ಧೆ ಇರಬಹುದು ಇರದೆಯೂ ಇರಬಹುದು. ಆದರೆ ಇಂದು ಸಂಜೆ ಪಕ್ಷಿಗಳು ಹಿಂತಿರುಗಲೇ ಇಲ್ಲವಲ್ಲಾ, ದಿನವಿಡೀ ಓಡಾಡುವ ಅಳಿಲುಗಳು ಕಂಡುಬರಲಿಲ್ಲವಲ್ಲಾ? ಅವುಗಳೇನಾದರೂ ಬೇರೆ ಎಲ್ಲಿಯಾದರೂ ವಲಸೆ ಹೋದವೇನು? ಅಥವಾ ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಬರದೇ ಇರುವ ಶಪಥ ಮಾಡಿಕೊಂಡಿವೆಯೇನು?

ಇಲ್ಲಿನ ಮೋಡಗಳ ಅರ್ಭಟಕ್ಕೆ ಸೂರ್ಯನೂ ಇವತ್ತು ಹೆದರಿ ಸೋತು ಹೋಗಿದ್ದ. ಅವನ ಕಿರಣಗಳಿಂದಾದರೂ ನಮ್ಮ ನೆರೆಹೊರೆ ತುಸು ಗೆಲುವಾಗುತ್ತಿತ್ತು. ಇನ್ನು ಬಿದ್ದ ಬಿಳಿವಸ್ತು ನಾಳೆಗೆ ಕರಗಿ ನೀರಾಗುವುದಿರಲಿ, ಬೀಳುವಾಗ ಪುಡಿಪುಡಿಯಾಗಿದ್ದುದು ಈ ನೆಲದ ರುಚಿ ಕಂಡಕೂಡಲೇ ಗಡುಸಾಗಿ ಹೋಗುವುದು ಮತ್ತೊಂದು ವಿಶೇಷ, ತಾನು ನೆಲದ ಛಳಿಯನ್ನು ರಾತ್ರೋಹಗಲೂ ಅನುಭವಿಸಿದ ಮಾತ್ರಕ್ಕೆ ತಾನು ಎಂದು ಎಂದೆಂದಿಗೂ ಬದಲಾದ ಹಾಗೆ ಘಟ್ಟಿ ರೂಪವನ್ನು ತೋರಿಸುವುದನ್ನು ನೋಡಿದರೆ ನಮ್ಮ ನೆರೆಹೊರೆಯಲ್ಲಿ ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ ಎನ್ನಿಸಿದ್ದು ನಿಜ. ಪ್ರಪಂಚದಾದ್ಯಂತ ಬೇಕಾದಷ್ಟಿದೆ ನೀರು, ಆದರೂ ಜನ ಬರದಲ್ಲಿ ಸಾಯುತ್ತಾರೆ. ಇಂದು ಬಿದ್ದ ಹಿಮದಿಂದ ನಮ್ಮ ನೆರೆಹೊರೆಗೂ ಅಗಾಧವಾದ ನೀರು ಬಂದಿದೆ, ನೆಲವೆಲ್ಲ ಹಸಿಯಾಗಿದೆ , ಆದರೆ ಈ ತೇವ ಹುಲ್ಲನ್ನು ಹಸಿರು ಮಾಡದೇ ಒಣಗಿಸಿ ಹಾಕುತ್ತದೆ ಎನ್ನುವುದು ಇತ್ತೀಚಿಗೆ ನಾನು ಗಮನಿಸಿದ ಸತ್ಯಗಳಲ್ಲೊಂದು.

Saturday, November 17, 2007

ಒಳ್ಳೆಯ-ಕೆಟ್ಟ ಮುಂಜಾವು

ನಿನ್ನೆ, ಆಫೀಸಿಗೆ ಹೋಗೋಕೆ ಹೊತ್ತಾಯ್ತು ಎಂದು ಘಂಟೆ ಬಜಾಯಿಸುತ್ತಿದ್ದ ಎರಡೆರಡು ಅಲಾರ್ಮ್‌ಗಳ ನಡುವೆಯ ಸ್ನೂಜ್‌ ಸಮಯದಲ್ಲಿ ಪ್ರಪಂಚದ ಅದ್ಯಾವುದೋ ನಿಗೂಢ ರಹಸ್ಯವೊಂದನ್ನು ಬೇಧಿಸುವಂತಹ ಕನಸುಗಳುಳ್ಳ ನಿದ್ರೆ, ಇನ್ನೂ ಮುಗಿಯದ ಅನೇಕ ವ್ಯಾಪಾರ ವಹಿವಾಟಿನ ಕುರುಹಾಗಿ ಹೊತ್ತು ಕಳೆದಷ್ಟೂ ಅಷ್ಟೇ ಜೋರಾಗಿ ಅಮರಿಕೊಳ್ಳುತ್ತಿದ್ದ ನಿದ್ರೆಯ ಜೊಂಪು ಎಂದರೆ ಸರಿಯಾದೀತು. ಅಷ್ಟರಲ್ಲೇ ಕಿಟಕಿಯ ಕರ್ಟನ್ನುಗಳನ್ನು ತೂರಿಕೊಂಡು ಅದೆಲ್ಲಿಂದಲೋ ಬಂತು ಸೂರ್ಯನ ಕಿರಣವೊಂದು. ದಡಕ್ಕನೇ ಎದ್ದು ಇಷ್ಟು ಹೊತ್ತಾಗಿ ಹೋಗಿ ಕಳೆದ ಸಮಯವನ್ನೆಲ್ಲ ಹಲ್ಲು ತಿಕ್ಕುವುದರಲ್ಲೇ ಉಳಿಸಿಬಿಡುವ ಆತುರದಲ್ಲಿ ಬಚ್ಚಲು ಮನೆಯ ಕಡೆಗೆ ಹೊರಟ ನನಗೆ ’ಹೊರಗಡೆ ಇಷ್ಟೊಂದು ಬೆಳಕಿದೆಯೇ?!’ ಎಂದು ಪ್ರಶ್ನೆಯೂ ಅದರ ಬೆನ್ನ ಹಿಂದೆ ಆಶ್ಚರ್ಯವೂ ಹುಟ್ಟಿ ಬಂತು.

ಈ ಫಾಲ್ ಸೀಜನ್ ಹುಟ್ಟಿದಾಗಿನಿಂದ ಅಷ್ಟೊಂದು ಬೆಳಕನ್ನು ನೋಡಿದ್ದಿರಲಿಲ್ಲ. ಪ್ರತಿ ದಿನವೂ ಮಂಜನ್ನು ಮುಸುಕಿಕೊಂಡು ಅಥವಾ ಮೋಡಗಳನ್ನು ಕಟ್ಟಿಕೊಂಡು ಪ್ರಪಂಚದ ಆಶಾಭಾವನೆಗಳು ಎಂಬ ಸೂರ್ಯನ ಕಿರಣಗಳನ್ನು ಹತ್ತಿರವೂ ಸುಳಿಯಗೊಡದ ವಾತಾವರಣವೋ ಅಥವಾ ಯಾವಾಗ ಬೇಕೋ ಆಗ ಡೇ ಲೈಟ್ ಸೇವಿಂಗ್ ಸಮಯವನ್ನು ಬದಲಾಯಿಸಿ ಕೊನೆಗೂ ಕತ್ತಲ ಸಮಯವನ್ನು ಹೆಚ್ಚು ಮಾಡಿ ಬೆಳಕನ್ನು ಹೆಚ್ಚಿಸುತ್ತೇವೆ ಎಂಬ ಲಾ ಮೇಕರ್ರುಗಳ ತಂತ್ರವೋ - ಇವೆಲ್ಲವೂ ಸೇರಿ ಇದುವರೆವಿಗೂ ಇಷ್ಟು ಬೆಳ್ಳಗಿನ ಬೆಳಕನ್ನು ನೋಡಿರಲಿಲ್ಲ ನಾನು ಈ ಕೆಲವು ತಿಂಗಳುಗಳಲ್ಲಿ ಎಂಬ ಮಾತನ್ನು ನಿಜ ಮಾಡಿದ್ದವು. ಮನೆಯ ಹೊರಗಡೆ ಬಂದು ನೋಡುತ್ತೇನೆ, ಪದೇಪದೇ ಬೀಸುವ ಗಾಳಿಯ ಹೊಡೆತಕ್ಕೆ ಸಿಕ್ಕು ತತ್ತರಿಸಿಯೂ ಅದೆಷ್ಟೋ ಮರಗಿಡಗಳು ಬದಲಾದ ತಮ್ಮ ರಂಗನ್ನು ಇನ್ನೂ ಹೊತ್ತು ನಿಂತಿದ್ದವು. ಕೆಂಪು-ಕೇಸರಿ ಬಣ್ಣಕ್ಕೆ ತಿರುಗಿದ ಎಲೆಗಳ ನಡುವೆ ಹಾದು ಹೋಗುತ್ತಿದ್ದ ಸೂರ್ಯನ ಕಿರಣಗಳು ಮನಮೋಹಕವಾಗಿ ತಮ್ಮದೇ ಆದ ಕಿನ್ನರ ಲೋಕವೊಂದನ್ನು ಸೃಷ್ಟಿಸಿದ್ದವು. ಇನ್ನೂ ಹಸಿರನ್ನು ಹೆಚ್ಚಾಗಿ ಹೊದ್ದ ಮರಗಳಿಗೂ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಹೆಚ್ಚು ಕಡಿಮೆ ಬೋಳಾದ ಮರಗಳಿಗೂ ಮುಸುಡಿಯ ಮೇಲೆ ನಾಚಿಕೆಯ ಛಾಯೆ ಆವರಿಸಿದ್ದಂತಿತ್ತು. ’ಓಹ್, its a great day!' ಎನ್ನುವ ಉದ್ಗಾರ ನನಗರಿಯದಂತೆಯೇ ಹೊರಗೆ ಬಂತು.

ಮನೆಯಿಂದ ಆಫೀಸಿನ ಮಾರ್ಗಕ್ಕೆ ಹೋಗುವಲ್ಲಿ ಸಿಕ್ಕ ಸಿಕ್ಕ ಮರಗಿಡಗಳನ್ನೂ, ರಸ್ತೆ ಬದಿಯ ಪ್ರತಿಯೊಂದು ವಸ್ತುವನ್ನು ಅವುಗಳ ನೆರಳಿನ ಸಮೇತ ಇದುವರೆವಿಗೂ ಯಾವತ್ತೋ ನೋಡೇ ಇಲ್ಲ ಎನ್ನುವ ಹಾಗೆ ನೋಡಿಕೊಳ್ಳುತ್ತಲೇ ಹೋದೆ. ಇನ್ನೇನು ಮನೆಯಿಂದ ಒಂದೂವರೆ ಮೈಲು ಬಂದಿರಬಹುದು ಆಗ ನನ್ನ ಸೆಲ್ ಫೋನ್ ಹೊಡೆದುಕೊಳ್ಳಲಾರಂಭಿಸಿತು. ಒಡನೆಯೇ ನಿಸರ್ಗವನ್ನು ಆರಾಧಿಸುತ್ತಿದ್ದ ಮನಸ್ಸು ವಾಸ್ತವಕ್ಕೆ ಬಂದು ಕಾಲರ್ ಐಡಿ ನೋಡುವ ಮೊದಲೇ ಯಾರಿರಬಹುದು ಎನ್ನುವ ಊಹೆಯಂತಹ ಸರಳ ಹಾಗೂ ಕೃತ್ರಿಮ ಕೆಲಸಕ್ಕೆ ಮುಂದಾಯಿತು. ಯಾವುದೋ ಗುರುತಿಗೆ ಸಿಗದ ನಂಬರ್, ’ಹಲೋ’ ಅಂದರೂ ತಪ್ಪು, ಅನ್ನದೇ ಬಿಟ್ಟರೂ ತಪ್ಪು, ಏನಾದರಾಗಲೀ ಎಂದು ಉತ್ತರ ನೀಡಿದೆ.

’ನಿಮ್ಮ ಮನೆ ಸೆಕ್ಯುರಿಟಿಯ ಕಂಪನಿಯವರು ಕರೆ ಮಾಡುತ್ತಿದ್ದೇವೆ, ಒಂದೇ ನಿಮ್ಮ ಮನೆಯ ಮುಂದಿನ ಬಾಗಿಲೋ ಅಥವಾ ಗರಾಜಿನಿಂದ ಒಳ ಹೋಗುವ ಬಾಗಿಲೋ ತೆರೆದಿದ್ದು ಬರ್ಗ್ಲರ್ ಅಲಾರ್ಮ್ ಹೊಡೆದುಕೊಳ್ಳುತ್ತಿದೆ, ಏನು ಮಾಡಬೇಕು ಹೇಳಿ, ಪೋಲೀಸರನ್ನು ಕಳಿಸಿ ನೋಡಲು ಹೇಳೋಣವೇ?’ ಎಂಬ ಧ್ವನಿಯೊಂದು ಕೇಳಿಸಬೇಕೇ...ನನ್ನ ಎಲ್ಲ ಸೆನ್ಸುಗಳೂ ಫೋನ್ ಕರೆಯನ್ನು ಆಲಿಸುತ್ತಿದ್ದ ಕಿವಿಗೆ ಬಲವನ್ನು ನೀಡಿದವು. ನಾನು ಈಗಷ್ಟೇ ಮನೆಯಿಂದ ಹೊರಡುವಾಗ ಆಲಾರ್ಮ್ ಎನೇಬಲ್ ಮಾಡಿ ಹೊರಬಂದಿದ್ದೆ, ಎರಡರಲ್ಲೊಂದು ಬಾಗಿಲು ತೆರೆದುಕೊಂಡಿರುವುದು ಹೇಗೆ ಸಾಧ್ಯ? ’ನಾನೇ ವಾಪಾಸ್ ಹೋಗಿ ನೋಡುತ್ತೇನೆ, ನಾನು ನಿಮಗೆ ಕರೆ ಮಾಡದೇ ಇದ್ದರೆ ಎಲ್ಲವೂ ಸರಿಯಾಗಿದೇ ಎಂದುಕೊಳ್ಳಿ’ ಎಂದು ಆತನ ಧ್ವನಿಯನ್ನು ಕುಕ್ಕಿದೆ. ಯೂ ಟರ್ನ್ ತೆಗೆದುಕೊಂಡು ವಾಪಾಸು ಬಂದೆ.

ವಾಪಾಸು ಬಂದು ನೋಡಿದರೆ ಯಾವ ಕಳ್ಳ-ಕಾಕರೂ ಇರಲಿಲ್ಲ, ಗರಾಜು ಡೋರ್ ಮುಚ್ಚುವಾಗ, ಮನೆಯ ಒಳಗೆ ಹೋಗುವ ಸಣ್ಣ ಬಾಗಿಲು ಗಾಳಿಯ ಹೊಡೆತಕ್ಕೆ ತೆಗೆದುಕೊಂಡಿತ್ತು. ಅದನ್ನು ಮುಚ್ಚಿ ಮತ್ತೆ ಅಲಾರ್ಮ್ ಎನೇಬಲ್ ಮಾಡಿ ಹೊರಡುವಷ್ಟರಲ್ಲಿ ’ಓಹ್, ಆಫೀಸಿಗೆ ಲೇಟ್ ಆಗೇ ಹೋಯಿತು!’ ಎನ್ನುವ ತವಕದ ಮುಂದೆ ಇನ್ನೂ ಹೊರಗಡೆ ಭೂಲೋಕದಲ್ಲಿ ಸ್ವರ್ಗದ ಸನ್ನಿವೇಶವೊಂದರ ಶೂಟಿಂಗ್ ನಡೆಸುತ್ತಿದ್ದ ದೇವರ ಕಾರ್ಯಕ್ರಮಗಳು ಗಮನಕ್ಕೆ ಬಂದರೂ ಭೌತಿಕ ಲೋಕದ ಗಡಿಬಿಡಿ ಬೇರೆಲ್ಲವನ್ನೂ ತನ್ನಲ್ಲಿ ನುಂಗಿಕೊಂಡಿತ್ತು. ’ಛೇ, ಎಂಥಾ ಸುಂದರವಾದ ಮುಂಜಾವು...’ ಎಂದುಕೊಂಡು ಮತ್ತೆ ಗಾಡಿ ಓಡಿಸತೊಡಗಿದ್ದ ನನಗೆ ನಿರಾಶೆ ಕಾದಿತ್ತು. ಮನೆಯಿಂದ ಮತ್ತೆ ಎರಡು ಮೈಲು ಮುಂದೆ ಬರುವಷ್ಟರಲ್ಲಿ ವಿಂಡ್ ಶೀಲ್ಡಿನ ಮೇಲೆ ಹನಿಗಳು ಬೀಳ ತೊಡಗಿದ್ದವು. ಅದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ಸೂರ್ಯನ ಕಿರಣಗಳು ಕಣ್ಣಿಗೆ ಹೊಡೆಯದಿರಲಿ ಎಂದು ಏಕಾದರೂ ಕಪ್ಪು ಕನ್ನಡಕವನ್ನು ಧರಿಸಿದೆನೋ, ಅದನ್ನು ನೋಡೇ ಸೂರ್ಯನ ಕಿರಣಗಳು ಹಿಂದಕ್ಕೆ ಸರಿದವೋ ಎನ್ನುವ ಅನುಮಾನ ಮೂಡುವ ಹಾಗೆ ಒಂದೊಂದೇ ಕಿರಣಗಳು ಅದ್ಯಾವುದೋ ಮೋಡಗಳ ಹಿಂಡಿನ ಹಿಂದೆ ಮರೆಯಾಗಿ ಹೋದವು.

ಒಂದು ಒಳ್ಳೆಯ ಮುಂಜಾವು ಕೆಟ್ಟ ಮುಂಜಾವಾಗಿ ಬದಲಾಗಲು ಅಥವಾ ಅದೇ ಸಾಧಾರಣ ಮುಂಜಾವಾಗಿ ಪರಿವರ್ತನೆ ಹೊಂದಲು ಹೆಚ್ಚು ಸಮಯವಿದೆ ಎಂದು ಅನ್ನಿಸಲೇ ಇಲ್ಲ. ಜೊತೆಗೆ ಮೊಟ್ಟ ಮೊದಲನೇ ಬಾರಿಗೆ ಸೃಷ್ಟಿಯ ಪ್ರತಿಯೊಂದೂ ಸೌಂದರ್ಯ ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಸುಳ್ಳು ಎನಿಸಿದ್ದೂ ನಿಜವೂ ಹೌದು.

Tuesday, November 13, 2007

ಸಹೋದ್ಯೋಗಿಯೊಬ್ಬನಿಗೆ ತಗುಲಿಕೊಂಡ ಕ್ಯಾನ್ಸರ್

ಇವತ್ತು ನಮ್ಮ ಆಫೀಸಿನಲ್ಲಿ ನನ್ನ ಸಹೋದ್ಯೋಗಿಯೊಬ್ಬನಿಗೆ ಅವನ ಡಾಕ್ಟರ್ ಚರ್ಮದ ಕ್ಯಾನ್ಸರ್ ಇರುವುದಾಗಿ ಡಯಾಗ್ನೋಸ್ ಮಾಡಿದ್ದಾಗಿ ತಿಳಿಸಿದ, ನನಗೆ ಒಂದು ಕ್ಷಣ ಅವನ ಮಾತುಗಳನ್ನು ನಂಬಲು ಕಷ್ಟವಾಯಿತು. ಎಷ್ಟೊಂದು ಸಂತೋಷವಾಗಿ ಆಡಿಕೊಂಡು ಹಾಡಿಕೊಂಡು ಇದ್ದವನಿಗೆ ಚರ್ಮದ ಕ್ಯಾನ್ಸರ್ ಈಗಾಗಲೇ ಉಲ್ಬಣಗೊಂಡಿರುವುದರಿಂದ ಅರ್ಜೆಂಟಾಗಿ ಸರ್ಜರಿ ಮಾಡಿಸಬೇಕು ಹಾಗೂ ಅನೇಕ ಕ್ಯಾನ್ಸರ್ ಸಂಬಂಧಿ ಟ್ರೀಟ್‌ಮೆಂಟುಗಳನ್ನು ಕೊಡಿಸಿಕೊಳ್ಳಬೇಕು ಎಂದು ಅವನ ವೈದ್ಯರು ತಾಕೀತು ಮಾಡಿದ್ದಾರಂತೆ. ನಾವು ಕುಶಾಲಕ್ಕೆ ಮಾತನಾಡುತ್ತಿದ್ದಾಗಲೇ ಅವನು ತನ್ನ ಖಾಯಿಲೆಯ ಬಗ್ಗೆ ಸಹಜವಾಗಿ ಪ್ರಸ್ತಾಪ ಮಾಡಿದ್ದು ನನಗೆ ಆಶ್ಚರ್ಯ ತರಿಸಿದರೂ ಅವನ ಮನದಾಳದಲ್ಲಿನ ದುಗುಡ ಸ್ವಲ್ಪ ಇಣುಕಿ ನೋಡಿದವರಿಗೆ ತಿಳಿಯುವಂತಿತ್ತು.

ಮಾನವನ ವೈದ್ಯಕೀಯ ಜ್ಞಾನ ಬೆಳೆದಂತೆ ತಿಳುವಳಿಕೆ ಬೆಳೆದಂತೆ ಅವನಿಗೆ ತಗಲುವ ರೋಗಗಳೂ ಅವುಗಳ ಕಾಂಪ್ಲಿಕೇಷನ್ನುಗಳೂ ಹೆಚ್ಚೆನಿಸೋದಿಲ್ಲವೇ? ನನಗೆ ಮೊದಲೆಲ್ಲ ನೆಲಗಡಲೆಯನ್ನು ತಿಂದೂ ಅಲರ್ಜಿಯಾಗುತ್ತದೆ ಅಮೇರಿಕದಲ್ಲಿ ಕೆಲವರಿಗೆ ಎಂದು ಕೇಳಿ ಬಹಳಷ್ಟು ಆಶ್ಚರ್ಯವಾಗುತ್ತಿತ್ತು, ಆದರೆ ಇತ್ತೀಚೆಗೆ ಅಂತಹ ಅಲರ್ಜಿ ಪೀಡಿತ ವ್ಯಕ್ತಿಯೊಬ್ಬರನ್ನು ನೋಡಿದಾಗ ನನ್ನ ನಂಬಿಕೆಯನ್ನು ಬದಲಿಸಿಕೊಳ್ಳಬೇಕಾಗಿ ಬಂತು. ನಮ್ಮ ಸೀನಿಯರ್ ಮೆಂಬರ್ ಒಬ್ಬರಿಗೆ ಅವರ ರಿಟೈರ್‌ಮೆಂಟು ಎಂದು ನಾವೆಲ್ಲರೂ ಕೇಕ್ ತಂದಿರಿಸಿದರೆ ಅವರು ನನಗೆ ಗೋಧಿ ಅಲರ್ಜಿ ಇದೆ ಎಂದಾಗ ನಂಬಲು ಕಷ್ಟವಾಯಿತು. ವೈರಾಣುಗಳೂ, ಬ್ಯಾಕ್ಟೀರಿಯಾಗಳು ನಮ್ಮ ವಿರುದ್ಧ ಸಮರ ಸಾರಿರುವಂತಿದೆ. ನಾವು ಮುಂದುವರೆದಂತೆಲ್ಲ ಅವುಗಳ ತಳಿ ಅಷ್ಟೇ ಪ್ರಭಲವಾಗುತ್ತಿದೆ. ಈಗೆಲ್ಲ ಮೊದಲಿನ ಹಾಗೆ ಕ್ಷಯ, ಸಿಡುಬಿನ ಪ್ಯಾಂಡೆಮಿಕ್ ಸನ್ನಿವೇಶ ಇಲ್ಲದಿರಬಹುದು, ಪ್ರಪಂಚದಾದ್ಯಂತ ಮಿಲಿಯನ್ನ್ ಗಟ್ಟಲೆ ಜನರನ್ನು ಆಕ್ರಮಿಸಿಕೊಂಡಿರುವ ಏಯ್ಡ್ಸ್ ರೋಗವೊಂದೇ ಸಾಕು ಕೆಲವೊಮ್ಮೆ ಮಾನವ ಸಂತಾನವನ್ನು ನಿರ್ಮೂಲನ ಮಾಡಲು ಎಂದು ಒಮ್ಮೆ ಭಯವಾಗುತ್ತದೆ.

ಕ್ಯಾನ್ಸರ್ ಬರುವುದರ ಹಿಂದೆ ನೂರಾರು ಕಾರಣಗಳಿದ್ದಿರಬಹುದು. ಒಬ್ಬ ವ್ಯಕ್ತಿ ನಲವತ್ತು ವರ್ಷ ನಿರಂತರವಾಗಿ ಹೊಗೆಬತ್ತಿ ಸೇದಿ ಆತನಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದರೆ ಅದನ್ನು ಕೇಳಿ ಆಶ್ಚರ್ಯವಾಗುವುದಕ್ಕಿಂತ ಹೆಚ್ಚು ಯಾವುದೇ ದುಶ್ಚಟ ಉಳ್ಳವರೂ, ಮಾಂಸಾಹಾರವನ್ನೂ ಮಾಡದವರೂ ಕ್ಯಾನ್ಸರ್‌ಗೆ ತುತ್ತಾಗುವುದನ್ನು ಕೇಳಿ ಬಹಳಷ್ಟು ಬೇಸರವಾಗುತ್ತದೆ. ಅವರವರ ಕರ್ಮ ಫಲ ಎಂದು ಸುಲಭವಾಗಿ ತಳ್ಳಿ ಹಾಕುವುದಕ್ಕಿಂತ ಮೊದಲು ಯಾರಿಗೂ ಹೇಳಿ ಯಾರನ್ನೂ ಕೇಳಿ ಬರದ ಈ ರೋಗಗಳಿಂದ ಮುಕ್ತಿಯನ್ನು ಪಡೆಯುವುದಾದರೂ ಎಂದು? ಚರ್ಮದ ಕ್ಯಾನ್ಸರ್ ಬಂದೀತೆಂದು ಮುಖ, ಮೈ, ಬೆನ್ನುಗಳನ್ನು ಪ್ರತೀ ದಿನವೂ ಪರೀಕ್ಷಿಸಿಕೊಳ್ಳಲಾಗುತ್ತದೆಯೇ? ಅಲ್ಲಲ್ಲಿ ಹುಟ್ಟಿ ಸಾಯುವ ಮಚ್ಚೆಗಳಿಗೆಲ್ಲ ಚರ್ಮ ರೋಗ ತಜ್ಞರ ಬಳಿ ಹೋಗಲಾಗುತ್ತದೆಯೇ? ಬಿಸಿಲಿಗೆ ಹೋದಾಗಲೆಲ್ಲ ಮುಖಕ್ಕೆ, ಮೈ ಕೈಗೆ ಸನ್‌ಸ್ಕ್ರೀನ್ ಲೋಷನ್ ಮೆತ್ತಿಕೊಳ್ಳಲಾಗುತ್ತದೆಯೇ? ಹಾಗಿದ್ದ ಮೇಲೆ ಎಲ್ಲೋ ಒಂದು ದಿನ ಕೇರ್ ಫ್ರೀ ಆಗಿ ಬದುಕುವವರು ತಮ್ಮ ಜೀವವನ್ನೇ ಆ ಒಂದು ಕೇರ್ ಫ್ರೀ ಕ್ಷಣಕ್ಕೆ ಬಲಿಕೊಡಬೇಕಾಗಿ ಬಂದಾಗ ಬದುಕು ಬಹಳ ದುಬಾರಿ ಅನ್ನಿಸೊದಿಲ್ಲವೇ? ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಕುಟುಂದ ಹಿರಿಯರನ್ನು ಕಳೆದುಕೊಂಡ ಸದಸ್ಯರು, ಅನಾಥರಾಗುವ ಮಕ್ಕಳು ಇವುಗಳಿಗೆಲ್ಲ ಕ್ಯಾನ್ಸರ್ ಎನ್ನುವ ಮಾರಕ ರೋಗ ಯಾವ ರೀತಿಯ ಪರಿಣಾಮ ಬೀರಬಲ್ಲದು ಎನ್ನಿಸಿ ಒಮ್ಮೆ ಮರುಕ ಹುಟ್ಟಿತು.

ವೈದ್ಯಕೀಯ ಪರಿಭಾಷೆಯಲ್ಲಿ ಆಯಾ ಹಂತದ ಕ್ಯಾನ್ಸರ್‌ಗಳನ್ನು ನೋಡಿ - ’ನೀನು ಸಾಯುವುದು ಗ್ಯಾರಂಟಿ’ ಎಂದು ತೀರ್ಪು ಕೊಟ್ಟಾಗ ಆ ವ್ಯಕ್ತಿಯ ಮನಸ್ಥಿತಿ ಹೇಗಿರಬಹುದು? ಅವನನ್ನು ನಂಬಿಕೊಂಡ, ಆಧರಿಸಿಕೊಂಡ ಕುಟುಂಬದವರ ಮೇಲಿನ ಪರಿಣಾಮ ಹೇಗಿರಬಹುದು? ಯಾರದೋ ತಪ್ಪಿಗೆ ಯಾರಿಗೆ ಶಿಕ್ಷೆ ಎನ್ನುವಂತೆ ಆ ವ್ಯಕ್ತಿ ಈ ರೋಗ ತನಗೇಕೆ ತಗಲಿಕೊಂಡಿತೋ ಎಂದು ಮನಪೂರ್ತಿ ಪರಿಪರಿ ಆಲೋಚಿಸುವ ರೀತಿ ಹೇಗಿರಬಹುದು? ಇವುಗಳನ್ನೆಲ್ಲ ಯೋಚಿಸಿಕೊಂಡಷ್ಟೂ ನನ್ನ ಮೇಲಿನ ನಿರಾಶೆಯ ಮೋಡ ದಟ್ಟವಾಗತೊಡಗಿತೇ ವಿನಾ ಎಲ್ಲೂ ಬೆಳಕಿನ ಕಿರಣಗಳು ಕಾಣಿಸಲಿಲ್ಲ.

ನನ್ನ ಸಹೋದ್ಯೋಗಿ, ನಮ್ಮಿಂದ ಸಹಾನುಭೂತಿ ಬಯಸದೇ ಇರಬಹುದು, ನಮ್ಮಿಂದ ಯಾವ ಸಹಾಯವನ್ನೂ ಬಯಸದೇ ಇರಬಹುದು. ಆದರೆ ಇಷ್ಟು ವರ್ಷಗಳ ನಮ್ಮೊಡನಿದ್ದು, ಅಕಸ್ಮಾತ್ ಈ ರೋಗಕ್ಕೆ ತುತ್ತಾಗಿ ಒಂದು ಇಲ್ಲವೆಂದಾಗುತ್ತಾನೆ ಎಂದು ಯೋಚಿಸಿಕೊಂಡಾಗ ಒಂದು ಕಡೆ ಜೀವನ ಕ್ಷಣಿಕ ಎನ್ನುವ ವೈರಾಗ್ಯವೂ ಮತ್ತೊಂದು ಕಡೆ ಜೀವನ ಎಷ್ಟೊಂದು ಅಮೂಲ್ಯ ಎನ್ನುವ ಶೋಧನೆಯೂ ಹೊರಕ್ಕೆ ಬಂದವು. ನನ್ನ ಸಹೋದ್ಯೋಗಿಯೇನೋ ದಿನವಿಡೀ ನಾನಾ ರೀತಿಯಲ್ಲಿ ಕ್ಯಾನ್ಸರ್ ಅನ್ನು ನೆನೆಸಿಕೊಂಡು ನಗುತ್ತಲೇ ಇದ್ದ, ಮುಂದೊಂದು ದಿನ ಆತನಿಗೆ ಅಂಟಿದ ರೋಗದಿಂದ ಅವನಿಗೆ ಮುಕ್ತಿ ಸಿಕ್ಕೀತು ಎನ್ನೋದು ನನ್ನ ಆಶಾಭಾವನೆ ಅಷ್ಟೇ.

ಕ್ಯಾನ್ಸರ್‌ಗೆ ಸಿಕ್ಕಿ ಸಾಯುವವರಿಗಿಂತ ಮೋಟಾರು ವಾಹನಗಳ ಅಫಘಾತದಲ್ಲಿ ಸಿಕ್ಕಿ ಸಾಯುವವರು ಹೆಚ್ಚಿರಬಹುದು, ಆದರೆ ಅವೆರಡೂ ಭಿನ್ನ ನೆಲೆಗಳೇ. ಸಂಖ್ಯಾ ಆಧಾರದಲ್ಲಿ ಇಂತದೊಂದು ರೋಗ ಹೆಚ್ಚು ಅಥವಾ ಕಡಿಮೆ ಎಂದು ಹೇಳುವುದು ಸುಲಭವಾಗಿರಬಹುದು. ತಮ್ಮಷ್ಟಕ್ಕೆ ದ್ವಿಗುಣ, ತ್ರಿಗುಣಗೊಂಡು ಬೆಳೆಯುವ ಜೀವ ಕೋಶಗಳು ಒಂದು ದಿನ ಏಡಿಗಂಥಿಗಳಾಗಿ ಎಲ್ಲೆಡೆ ಹರಡಿ ಮನುಷ್ಯನ ಬದುಕನ್ನು ಧಾರುಣಗೊಳಿಸುವಂತಹ ಕೆಟ್ಟ ಖಾಯಿಲೆ ಇನ್ನೊಂದಿರಲಾರದು. ಅಂತಹ ರೋಗಗಳಿಗೆ ಏನೇನೋ ಔಷಧಿ ಮತ್ತೊಂದು ಮಾಡಿ ಸಾಯುವವರೆಗೆ ಅನುಭವಿಸುವ ಬದಲು ಇದ್ದಕ್ಕಿದ್ದ ಹಾಗೆ ಹಾರ್ಟ್ ಆಟ್ಯಾಕ್ ಆಗಿ ಸಾಯುವುದೇ ಮೇಲೆಂದು ಅನ್ನಿಸಿದ್ದಂತೂ ನಿಜ!

Friday, November 09, 2007

ನಮ್ಮ್ ದೀಪಾವಳಿ ಆಚರಣೇನೇ ಬೆಷ್ಟ್!

ನಿಮ್ಮೂರಲ್ಲೆಲ್ಲಾ ಹೇಗೋ ಗೊತ್ತಿಲ್ಲ, ನಮ್ಮೂರಲ್ಲಂತೂ ವಾತಾವರಣ ಬಹಳಷ್ಟು ತಣ್ಣಗಾಗಿ ಹೋಗಿದೆ, ನಿನ್ನೆ ಬೆಳಿಗ್ಗೆ ಬಿಲೋ ಫ್ರೀಜಿಂಗ್, ಇಪ್ಪತ್ತಾರು-ಇಪ್ಪತ್ತೇಳು ಡಿಗ್ರಿ ಫ್ಯಾರನ್‌ಹೈಟ್ ಇದ್ದಿದ್ದು ನೋಡಿ ನನಗಂತೂ ಇದ್ದ ಛಳಿ ಇನ್ನಷ್ಟು ಹೆಚ್ಚಾಗಿ ಹೋಯಿತು. ಈಗಾಗ್ಲೇ ಒಡೆದು ಹೋಗಿರೋ ಮೈ ಕೈಗೆ ನರಕ ಚತುರ್ದಶಿ ಪ್ರಯುಕ್ತವಾಗಿ ಎಣ್ಣೆ ಸವರಿ ಸ್ನಾನ ಮಾಡಿದ್ದು ಬಹಳ ಒಳ್ಳೇದೇ ಅನ್ನಿಸ್ತು. ಸದ್ಯ ನೀರ್ ತುಂಬೋ ಹಬ್ಬಾ ಎಲ್ಲಾ ವಾರದ ದಿನದಲ್ಲೇ ಬಂತು ಆದ್ರಿಂದ ಬೇಗನೇ ಸ್ನಾನಾ ಮಾಡಿ ಆಫೀಸಿಗೆ ಓಡಿದ್ದೇ ಬಂತು, ಅದರ ಬದಲಿಗೆ ವೀಕ್‌ಎಂಡ್ ಅಂಥಾ ಏನಾದ್ರೂ ಅಂದ್ಕೊಂಡಿದ್ರೆ ನಾವೆಲ್ಲಾ ಸೂರ್ಯಾ ಕಣ್ ಬಿಟ್ಟ್ ಮೇಲೆ ಏಳೋರು, ಕೊನೆಗೆ ಚತುರ್ದಶಿ ಮುಗಿದು ಹೋಗಿ ಅಮವಾಸೆ ದಿನಾ ಮಾತ್ರ ಸ್ನಾನಾ ಮಾಡಿ ನರಕ ಮಾತ್ರ ಗ್ಯಾರಂಟಿ ಸಿಗ್ತಾ ಇತ್ತು.

ನಮ್ ದೀಪಾವಳಿ ಆಚರಣೇನೇ ಬೆಸ್ಟ್ ಅಂತೀನಿ, ವಾಹನ ಪೂಜೆ, ಅಂಗಡಿ ಪೂಜೆ ಅನ್ನೋದೇನೂ ಇಲ್ಲ ಬರೀ ನಾವೆಲ್ಲ ಲಕ್ಷ್ಮೀ ಪೂಜೆಗೆ ಒತ್ತು ಕೊಡೋರು ಯಾವತ್ತಿದ್ರೂ. ಪುರುಸೊತ್ತಿದ್ರೆ ಏನಾದ್ರೂ ವಿಶೇಷವಾಗಿ ಅಡುಗೆ ಮಾಡ್ತೀವಿ, ಇಲ್ಲಾ ಅಂತಂದ್ರೆ ದೇವಸ್ಥಾನಕ್ಕ್ ಹೋಗಿ ಅಲ್ಲಿನ ಕ್ಯಾಫೆಟೇರಿಯಾದಲ್ಲೇ ಏನಾದ್ರೂ ಸಿಹಿ ತಿಂದು ಬರ್ತೀವಿ. ಪಟಾಕಿಗಳಾಗಲೀ, ಬಾಣಬಿರುಸಾಗಲೀ ಹೊಡೆಯೋದೇ ಇಲ್ಲ, ಇನ್ನು ಸುರುಸುರು ಬತ್ತಿಯೂ ಸದ್ದೂ ಇಲ್ಲ. ಎಲ್ಲವೂ ಫೈರ್ ಪ್ರೂಪ್ ಮನೆಗಳಲ್ಲಿ ಹೆದರಿಕೊಂಡು ಉರಿಯೋ ಹಾಗಿನ ಊದಿನಬತ್ತಿಯ ಥರ, ಅದರ ಹೊಗೆಯೂ ಧಾರಾಳವಾಗಿ ಎಲ್ಲಿ ಬೇಕಂದಲ್ಲಿ ಹರಡುವಂತಿಲ್ಲ, ಸೀದಾ ದೇವರ ಕೋಣೆಯ ಮಂಟಪದಿಂದ ಕಿಟಕಿಯ ಕಡೆಗೆ ನಡೆಯಬೇಕು. ಅಲ್ದೇ ಹೊರಗಡೆ ಕೊರೆಯೋ ಛಳಿಯಲ್ಲಿ ಹೆಚ್ಚು ಹೊತ್ತು ಕಿಟಕಿ ಬಾಗಿಲನ್ನು ತೆಗೆದಿಡೋಕೂ ಆಗೋದಿಲ್ಲವಾದ್ದರಿಂದ ಪೂರ್ಣ ಊದಿನಕಡ್ಡಿ ಉರಿಯೋ ಅಷ್ಟು ವ್ಯವಧಾನವೂ ನಮಗಿದ್ದಂತಿಲ್ಲ.

ಊರಿನಲ್ಲಿರೋ ಮನೇ ಮಂದಿಗಾಗಲೀ ಸ್ನೇಹಿತರಿಗಾಗ್ಲೀ ಫೋನ್ ಮಾಡಿ ಶುಭಾಶಯಗಳನ್ನು ಹೇಳಬಹುದಿತ್ತು, ಅಂತಹ ಮಹತ್ತರ ಘಳಿಗೆಗೆಲ್ಲಾ ವೀಕ್‌ಎಂಡೇ ಸಮ. ವಾರದ ದಿನಗಳಲ್ಲಿ ಫೋನ್ ತಿರುಗಿಸಿ ನಿಧಾನವಾಗಿ ಮಾತನಾಡೋದಕ್ಕೆ ಯಾರಿಗೂ ಪುರುಸೊತ್ತು ಇದ್ದ ಹಾಗೆ ಕಾಣಿಸಲಿಲ್ಲ. ಪಾಪ, ನಮಗಿಂತ ವ್ಯಸ್ತರಾಗಿರೋ ಅವರೇ ಭಾರತದಿಂದ ಕರೆ ಮಾಡಿ, ಎಸ್‌ಎಮ್ಮೆಸ್ ಕಳಿಸಿ ಶುಭಾಶಯಗಳನ್ನು ಹಂಚಿಕೊಂಡಿದ್ದು ಇತ್ತೀಚಿನ ದಿನಗಳ ವಿಶೇಷಗಳಲ್ಲೊಂದು. ಭಾರತದಲ್ಲಂತೂ ಮೊಬೈಲ್ ಫೋನ್ ಕ್ರಾಂತಿಯೇ ಕ್ರಾಂತಿ - ಮೆಸ್ಸೇಜುಗಳನ್ನು ಇಲ್ಲಿಗಿಂತಲೂ ಅಲ್ಲಿ ಹೆಚ್ಚಾಗಿಯೇ ಬಳಸುತ್ತಾರೇನೋ ಅನ್ನಿಸಿತು, ಒಂದು ಕಾಲದಲ್ಲಿ ಕಮ್ಯೂನಿಕೇಷನ್ನ್ ಅನ್ನೋದೇ ಇರಲಿಲ್ಲವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ. ಈ ಸಂವಹನಗಳಲ್ಲಿ ಎಲ್ಲ ಥರನಾದ ಮೆಸ್ಸೇಜುಗಳಿವೆ, ನವರಸ ನವಭಾವಗಳಿಗನುಗುಣವಾಗಿ.

ನಿಮ್ಮ ದೀಪಾವಳಿ ಆಚರಣೆ ಹೇಗಿತ್ತು ಅಂತ ಬರೀರಿ. ಮನೇ ಹೊರಗಡೆ ದೀಪಗಳನ್ನು ಇಟ್ಟಿದ್ರೋ ಇಲ್ವೋ? ನಿಮ್ಮ ಮನೆಯವರಿಗೆ ಮಕ್ಕಳಿಗೆ ಹೊಸ ಬಟ್ಟೆಬರೆ ತಂದಿದ್ರೋ ಹೇಗೆ? ದೇವಸ್ಥಾನಕ್ಕೆ ಹೋಗಿದ್ರಾ, ಲಕ್ಷ್ಮೀ ಪೂಜೆ ಮಾಡಿದ್ರಾ? ನಮ್ಮ್ ಹಬ್ಬಗಳ ಯಾದಿ ಇಲ್ಲಿಗೆ ಮುಗಿದ ಹಾಗೆ ಕಾಣ್ಸುತ್ತೆ, ಇನ್ನು ಬರೋದೇನಿದ್ರೂ ಅಮೇರಿಕನ್ ಹಬ್ಬಗಳು - ವೆಟಿರನ್ಸ್ ಡೇ, ಥ್ಯಾಂಕ್ಸ್‌ಗಿವಿಂಗ್, ಕ್ರಿಸ್‍ಮಸ್, ನ್ಯೂ ಇಯರ್!

ಹ್ಯಾಪ್ಫೀ ಹಾಲಿಡೇಯ್ಸ್!

Thursday, November 08, 2007

ನಾನೊಬ್ಬ ಬ್ಲಾಗಿಷ್ಟು!

ಫುಡ್ ನೆಟ್‌ವರ್ಕ್‌ನಲ್ಲಿ ರೇಚಲ್ ರೇ ನಡೆಸಿಕೊಡುವ ಮುವತ್ತು ನಿಮಿಷಗಳ ಕಾರ್ಯಕ್ರಮದ ಬಗ್ಗೆ ನಿಮಗೆ ಗೊತ್ತಿರಬಹುದು (30 Minute Meals with Rachael Ray). ಅಡುಗೆಗೆ ಬೇಕಾದ ಹೆಚ್ಚಿನ ತಯಾರಿಗಳನ್ನು ಮೊದಲೇ ಮಾಡಿಕೊಂಡು ಒಂದು ಕ್ಲೀನ್ ಕಿಚನ್ ನಿಂದ ಆರಂಭವಾಗುವ ಕಾರ್ಯಕ್ರಮ ಮುವತ್ತು ನಿಮಿಷಗಳ ತರುವಾಯ ಏನಿಲ್ಲವೆಂದರೂ ಥ್ರೀ ಕೋರ್ಸ್ ಮೀಲ್ ಒಂದನ್ನು ಫ್ಯಾಮಿಲಿಯ ಮಟ್ಟದಲ್ಲಿ ತಯಾರು ಮಾಡುತ್ತದೆ. ಅಡುಗೆ ಮಾಡುವುದು ಸುಲಭ ಹಾಗೂ ಅದು ಹೆಚ್ಚು ಸಮಯವನ್ನು ತೆಗೆದುಕೊಳ್ಳಬೇಕು ಎನ್ನುವುದೇನೂ ಇಲ್ಲ ಎನ್ನುವುದು ಕಾರ್ಯಕ್ರಮದ ಮೂಲ ಮಂತ್ರ.

ನಾನು ಬ್ಲಾಗ್ ಬರೆಯುವ ವಿಚಾರಗಳು ಬಂದಾಗಲೆಲ್ಲ ’ಅಂತರಂಗ’ದ ಅವತರಣಿಕೆಗಳನ್ನು ರೇಚಲ್ ರೇ ನಡೆಸುವ ಮುವತ್ತು ನಿಮಿಷದ ಕಾರ್ಯಕ್ರಮಕ್ಕೆ ಹೋಲಿಸಿಕೊಂಡಿದ್ದೇನೆ. ಆದರೆ ರೇಚಲ್ ಮುವತ್ತು ನಿಮಿಷಗಳ ತರುವಾಯ dazzling dishes ಅನ್ನು ಪ್ರಸ್ತುತ ಪಡಿಸಿದರೆ ಈ ಲೇಖನಗಳು ಹೊರ ಬರುವಾಗ, ಬಂದ ಮೇಲೆ ಬೋರ್ ಹೊಡೆಸುವುದೇ ಹೆಚ್ಚು. ಲೇಖನಗಳನ್ನು ಬರೆಯುವುದಕ್ಕೂ ನಾನು ಅಡುಗೆಯ ಪದಾರ್ಥಗಳನ್ನು ಮುಂಚಿತವಾಗಿ ತಯಾರು ಮಾಡಿಟ್ಟುಕೊಳ್ಳುವಂತೆ ವಿಚಾರಗಳನ್ನು ’ಪ್ರಿ-ಕುಕ್’ ಮಾಡಿಕೊಂಡಿರುತ್ತೇನೆ, ಅವಕಾಶ ಸಿಕ್ಕಾಗ ಮುವತ್ತು ನಿಮಿಷಗಳಲ್ಲಿ ಕುಟ್ಟಿ ಬಿಸಾಕುತ್ತೇನೆ.

***

ಯಾವುದೋ ಒಂದು ವಿಷಯದ ಬಗ್ಗೆ ಓದುಗರ ಗಮನವನ್ನಾಗಲೀ ಬರೆಯುವವರ ಚಿಂತನೆಯನ್ನಾಗಲೀ ಹೆಚ್ಚು ಹೊತ್ತು ಇಟ್ಟುಕೊಳ್ಳದಿರುವ ಬ್ಲಾಗಿನ ಸ್ವಭಾವದ ಮಿತಿಯಲ್ಲಿ ಗಹನವಾದ ವಿಷಯವನ್ನು ಕೇವಲ ಅರ್ಧ ಘಂಟೆಗೆ ಸೀಮಿತವಾಗಿಸಿ ಆ ವಿಷಯದ ನಾಜೂಕುತನವನ್ನು ನಾನು ಮೊಟಕುಗೊಳಿಸಲು ಸಿದ್ಧನಿಲ್ಲದಿದ್ದರೂ ಎಷ್ಟೋ ಸಾರಿ ಲೇಖನಗಳು ಇನ್ನೂ ಬೆಳೆಯಬಹುದಿತ್ತು ಎನ್ನಿಸುತ್ತದೆ. ಬರವಣಿಗೆಯ ಉಳಿದ ಪ್ರಾಕಾರಗಳಲ್ಲಿ ಸೃಷ್ಟಿಯಾಗುವ ಪಾತ್ರಗಳು ಇಲ್ಲಿಲ್ಲ, ಪಾತ್ರಗಳ ಹಿಂದಿನ ಮನಸ್ಥಿತಿಯ ತಲ್ಲಣಗಳ ಮೇಲೆ ಬೆಳಕು ಬೀರುವ ವ್ಯವಧಾನವಿಲ್ಲ. ನಾನು ಬ್ಲಾಗ್ ಪೋಷ್ಟ್ ಒಂದನ್ನು ಬರೆಯಬಲ್ಲೆ ಎನ್ನುವ ಹೆಮ್ಮೆಯ ಹಿಂದೆ ಅದು ಕೇವಲ ಅರ್ಧ ಘಂಟೆ ನನಗೊದಗಿಸುವ ಸವಾಲಿನ ಬಗ್ಗೆ ಒಮ್ಮೊಮ್ಮೆ ಹೆದರಿಕೆಯಾಗುತ್ತದೆ, ಮತ್ತೊಮ್ಮೆ ಹಿಂಸೆಯಾಗುತ್ತದೆ. ಅದೇ ರೀತಿ ದಿನೇದಿನೇ ಉಕ್ಕಿ ಬರುವ ಭಾವನೆಗಳನ್ನು ಒಂದು ಕಡೆ ಕೂಡಿಟ್ಟು ಮತ್ಯಾವುದೋ ಒಂದು ರೀತಿಯಲ್ಲಿ ತೊಡಗಿಕೊಳ್ಳುತ್ತೇನೆ ಮುಂದೊಂದು ದಿನ ಎನ್ನುವುದೂ ಕಷ್ಟದ ಮಾತಾಗುತ್ತದೆ. ಒಂದು ಕಾಲದಲ್ಲಿ ಬರವಣಿಗೆಯ ಶಿಸ್ತನ್ನು ರೂಪಿಸಿಕೊಳ್ಳುವುದಕ್ಕಾಗಿ ಹುಟ್ಟಿ ಬಂದ ಬ್ಲಾಗ್ ಬರಹಗಳು ಇಂದು ಅವೇ ಅನಿವಾರ್ಯವೇನೋ ಎನ್ನುವಂತಾಗಿದ್ದು ನಿಜವೂ ಹೌದು.

ಬ್ಲಾಗಿನ ಅನುಕೂಲವೆಂದರೆ - ಡೆಸ್ಕ್‌ಟಾಪ್ ಪಬ್ಲಿಷಿಂಗ್. ನಿಮ್ಮ ಲೇಖನಗಳು ಬೇರೆ ಯಾರ ಅವಗಾಹನೆಗೂ ಸಿಕ್ಕಬೇಕಾಗಿಲ್ಲ, ಅವು ಪ್ರಕಟವಾಗುವವರೆಗೂ ಕಾಯಬೇಕಾಗಿಲ್ಲ, ಯಾರಿಗೂ ’ದಯವಿಟ್ಟು ಪ್ರಕಟಿಸಿ’ ಎಂದು ಹಲ್ಲುಗಿಂಜಬೇಕಾದುದಿಲ್ಲ. ಆದರೆ ನಿಮ್ಮ ಲೇಖನಗಳಿಗೆ ನೀವು ಹಾಗೂ ನೀವು ತೊಡಗಿಸುವ ಸಮಯವೇ ಮಿತಿ. ನಾನಂತೂ ಒಮ್ಮೆ ಬರೆದುಕೊಂಡ ಹೋದ ಲೇಖನಗಳನ್ನು ಮತ್ತೆ ತಿದ್ದುವುದೂ ಇಲ್ಲ, ಅಲ್ಲಲ್ಲಿ ಕಾಗುಣಿತವನ್ನು ಸರಿಪಡಿಸುವುದು ಬಿಟ್ಟರೆ. ಅಲ್ಲದೇ, ಹೆಚ್ಚಿನ ಲೇಖನಗಳು ಲೇಟ್ ನೈಟ್ ಅಥವಾ ಅರ್ಲಿ ಮಾರ್ನಿಂಗ್ ಮನಸ್ಥಿತಿಯಲ್ಲೇ ಹುಟ್ಟಿ ಬಂದವುಗಳಾದ್ದರಿಂದ ಅವುಗಳಿಗೆ ಬೇಕಾದಷ್ಟು ಮಿತಿಗಳಿವೆ. ಮುನ್ನೂರಕ್ಕೂ ಮೇಲ್ಪಟ್ಟು ಲೇಖನಗಳನ್ನು ಬರೆದ ಮೇಲೆ ಬ್ಲಾಗ್ ಬರಹಗಳಷ್ಟು ಸುಲಭವಾದುದು ಇನ್ನೊಂದಿಲ್ಲವೆನ್ನಿಸಿದ್ದು ನಿಜ, ಆದರೆ ಎಲ್ಲರೂ ಬ್ಲಾಗ್ ಮಾಧ್ಯಮಕ್ಕೆ ಬಂದು ಬಿಟ್ಟಾರೇನೋ ಎಂಬ ಹೆದರಿಕೆಯೂ ಅದರ ಹಿಂದಿರುವುದು ಸ್ಪಷ್ಟ.

***

ನಾನು ಕೆಲವು ವರ್ಷಗಳ ಹಿಂದೆ ಮಯೂರ ಮಾಸಪತ್ರಿಕೆಯನ್ನು ಒಂದೆರಡು ವರ್ಷಗಳ ಕಾಲ ಅಮೇರಿಕಕ್ಕೆ ತರಿಸುತ್ತಿದ್ದೆ. ಅದರಲ್ಲಿ ಪ್ರಕಟವಾಗುತ್ತಿದ್ದ ಸಣ್ಣ ಕಥೆಗಳು ವಿಶೇಷವಾಗಿ ನನಗೆ ಇಷ್ಟವಾಗುತ್ತಿದ್ದವು. ಮೊನ್ನೆ ಬೇಸ್‌ಮೆಂಟಿನಲ್ಲಿ ಏನನ್ನೋ ಹುಡುಕುತ್ತಿದ್ದವನಿಗೆ ಹಳೆಯ ಮಯೂರವೊಂದು ಸಿಕ್ಕಿತು, ಹಾಗೇ ಅದರಲ್ಲಿನ ಕಥೆಯೊಂದನ್ನು ಓದಿಕೊಂಡು ಹೋದೆ. ಆ ಬರಹದ ಮೋಹಕತೆ ನನ್ನನ್ನು ವಿಶೇಷವಾಗಿ ಆಕರ್ಷಿಸಿತು, ಒಂದು ಸಣ್ಣಕಥೆಯ ಹಂದರದಲ್ಲಿ ಪಾತ್ರಗಳಿದ್ದವು, ಚೆನ್ನಾಗಿ ಆಲೋಚಿಸಿ ಬರೆದ ಬರವಣಿಗೆ ಇತ್ತು, ಕೊನೆಯವರೆಗೂ ಓದಿಸಿಕೊಂಡು ಹೋಗುವ ರೋಚಕತೆ ಆ ಬರಹದಲ್ಲಿತ್ತು. ಹಾಗೇ ಕಾದಂಬರಿ, ನಾಟಕ, ಕವನ, ಮುಂತಾದವುಗಳಿಗಾಗಲೀ ಅಥವಾ ಲಘು ಪ್ರಬಂಧಗಳಿಗಾಗಲೀ ಅವುಗಳದ್ದೇ ಆದ ವಿಷಯ ಸೂಕ್ಷ್ಮತೆ ಇದೆ, ಆಳವಿದೆ. ಆದರೆ ನಾನು ಓದಿದ ಬ್ಲಾಗಿನ ಬರಹಗಳಲ್ಲಿ ವಿಷಯ ಸೂಕ್ಷ್ಮತೆ, ಅವುಗಳ ಬೆಳವಣಿಗೆಗಳು ಸದಾ ಅರ್ಜೆಂಟಿನಲ್ಲಿಯೇ ಹುಟ್ಟಿ ಬಂದವುಗಳಾಗಿ ಕಂಡುಬರುತ್ತಿವೆ. ’ಕಾಯದಿದ್ದರೆ ಕೆನೆ ಕಟ್ಟದು’ ಎನ್ನುವ ಆಡು ಮಾತಿನ ಹಿನ್ನೆಲೆಯಲ್ಲಿ ಈ ಬ್ಲಾಗ್ ಪೋಸ್ಟುಗಳಿಗೆ ಯಾರಿಗೂ ಕಾಯುವ ವ್ಯವಧಾನವಾಗಲೀ, ಯಾರಿಂದ ಯಾವ ಪ್ರತಿಕ್ರಿಯೆಯನ್ನು ನೀರೀಕ್ಷಿಸುವ ತಾಳ್ಮೆಯಾಗಲೀ ಇಲ್ಲವೇ ಇಲ್ಲವೇನೋ ಎನ್ನುವುದು ನನ್ನ ಅನಿಸಿಕೆ ಅಷ್ಟೇ.

ಅನಿಸಿಕೆಯ ವಿಚಾರಕ್ಕೆ ಬಂದಾಗ - ಹೆಚ್ಚಿನ ಬ್ಲಾಗ್ ಪೋಸ್ಟ್‌ಗಳು ಅನಿಸಿಕೆಗಳು ಅಥವಾ ಅನುಭವಗಳು. ಅದರಲ್ಲಿ ಕಲಾತ್ಮಕತೆ ಇದೆಯೇ ಎನ್ನುವುದು ಸೋಜಿಗದ ಪ್ರಶ್ನೆ. ಬ್ಲಾಗ್ ಪೋಸ್ಟ್‌ನ ವಾಕ್ಯಗಳು ತುಂಡು-ತುಂಡು ವಾಕ್ಯಗಳು. ಎಲ್ಲಾದರೂ ಒಂದೆರಡು ಉದ್ದುದ್ದ ವಾಕ್ಯಗಳನ್ನು ಬಳಸಿದರೂ ಓದುಗರನ್ನು ಕಳೆದುಕೊಳ್ಳುವ ಹೆದರಿಕೆ ಈ ಬರಹಗಳಿಗೆ. ಪ್ರತಿಯೊಂದು ಬರಹವೂ ರೋಚಕವಾಗಬೇಕು, ಹೆಚ್ಚು ಜನಪ್ರಿಯವಾಗಬೇಕು, ಎಲ್ಲರ ಹಾಗೆ ನಾವೂ ಒಂದು ಪುಸ್ತಕವಾಗಬೇಕು ಎನ್ನುವ ತುಡಿತ ಬರಹದ ಹೆಡ್ಡಿಂಗ್‌ನಿಂದ ಹಿಡಿದು ಕೊನೆಯವರೆಗೂ ’ರಾಜ್ಯ ಪ್ರಶಸ್ತಿಯನ್ನು ನಮಗೇ ಕೊಡಿ’ ಎಂದು ಲಾಬಿ ಎಬ್ಬಿಸುವ ಬರಹಗಾರರ ಹಿಂಡಿನ ಹಾಗೆ ಕಾಣಿಸುತ್ತವೆ. ಈ ಬರಹಗಳಲ್ಲಿ ಕಾಂಟ್ರವರ್ಸಿಯಿಂದ ಹೊರಗುಳಿಯುವುದು ಅನಿವಾರ್ಯವಾಗುತ್ತದೆ, ಏಕೆಂದರೆ ಇಲ್ಲಿನ ಓದುಗರ ಮನಸ್ಥಿತಿ ಮೊದಲೇ ಗೊತ್ತಿರುವುದರಿಂದ ಅವರಿಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಎನ್ನುವುದರ ಬಗ್ಗೆ ಒತ್ತು ಕೊಡಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಯೋಚಿಸಿದಾಗ ಈ ಹಿಂದೆ ಒಂದಿಷ್ಟು ಬರಹಗಳನ್ನು ಬ್ಲಾಗ್ ಮೂಲಕ ಪ್ರಕಟಿಸಿ ಮರೆಗೆ ಸೇರಿದ ಎಷ್ಟೋ ಜನರ ಬಗ್ಗೆ ನನಗೆ ಗೌರವವಿದೆ, ಬ್ಲಾಗ್ ಬರಹಗಳು ಅವರಿಗೆ ಅಲ್ಟಿಮೇಟ್ ಸಂತೋಷವನ್ನು ತಂದುಕೊಡದೇ ಇರಬಹುದು, ಹಾಗೆ ಆಗದಿರಲಿ. ಅದರಿಂದಾಲಾದರೂ ಅವರು ತಮ್ಮ ಬರಹದ ಸೆಲೆಯನ್ನು ಮತ್ತಿನ್ನೆಲ್ಲಾದರೂ ಬೇರೆ ಮಾಧ್ಯಮದ ಮೂಲಕ ಉಕ್ಕಿಸಲಿ. ಎಲ್ಲೂ ಯಾವುದಕ್ಕೂ ತೊಡಗಿಕೊಳ್ಳದ ಎಷ್ಟೋ ಮಿತಿಗಳನ್ನು ಒಳಗೊಂಡ ಬ್ಲಾಗ್ ಬರಹಗಳು ನನ್ನಂತಹವರಿಗಿರಲಿ. ಒಂದಿಷ್ಟು ಲೇಖಕರಿಗೆ ನಾವೂ ಸೃಜನಶೀಲರಾಗ ಬೇಕು ಎನ್ನುವ ತುಡಿತವಿದೆ, ಮತ್ತಿನ್ನೊಂದಿಷ್ಟು ಲೇಖಕರಿಗೆ ದಿಢೀರ್ ಖ್ಯಾತಿಯನ್ನು ಪಡೆಯುವ ಅಭಿವ್ಯಕ್ತಿ ಇದೆ. ಅಮೇರಿಕದಲ್ಲಿ ದೊಡ್ಡ ಬರಹಗಾರರು ಎನ್ನುವ ಹಣೆಪಟ್ಟಿಯನ್ನು ಬಹಳ ಜನ ತಮ್ಮಷ್ಟಕ್ಕೆ ತಾವೇ ಅಂಟಿಸಿಕೊಂಡು ನಗೆಪಾಟಲಿಗೆ ಗುರಿಯಾಗಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಮತ್ತಿನ್ನೊಂದಿಷ್ಟು ಜನ ಹೇಳುವ ಹಾಗೆ ಅಮೇರಿಕದಲ್ಲೂ ಗಂಭೀರವಾದ ಕನ್ನಡ ಬರಹಗಾರರು ಇರುವುದು ಸಾಧ್ಯವೇ ಎನ್ನುವುದನ್ನು ಕುರಿತು ಆಲೋಚಿಸಿದ್ದೇನೆ.

***

ಯಾರು ಕಿವಿ ಮುಚ್ಚಿದರೂ ಎನಗಿಲ್ಲ ಚಿಂತೆ ಎನ್ನುವ ಬ್ಲಾಗ್ ಪರಿಧಿ ಇಷ್ಟೇ. ಹಾಗೆ ಹಾಡುವ ಸಂಗೀತಗಾರ ಸಭೆಯಲ್ಲಿ ಎಷ್ಟು ಹೊತ್ತು ಹಾಡಬಲ್ಲ? ನನಗೆ ಬೇಕಾದುದನ್ನು ನನಗೆ ಬೇಕಾದ ರೀತಿಯಲ್ಲಿ ಹಾಡುತ್ತೇನೆ, ಕೇಳೋರಿದ್ದರೆ ಕೇಳಿ ಇಲ್ಲದಿದ್ದರೆ ಇಲ್ಲ ಎನ್ನುವ ಕಾರ್ಯಕ್ರಮಕ್ಕೆ ಟಿಕೇಟ್ ಹಣ ಕೊಟ್ಟು ಯಾರು ಯಾಕಾದರೂ ಬರುತ್ತಾರೆ? ಬ್ಲಾಗ್ ಬರಹಗಳು ಗೊಂದಲಗಳನ್ನು ಹೊರಹಾಕಬಲ್ಲವೇ ವಿನಾ ಅವು ಇನ್ಯಾವ ಮಹಾನ್ ಸಾಧನೆಯನ್ನು ಮಾಡಿವೆ, ಕೆಲವರ ಲೇಖನಗಳು ಪ್ರವಾಸಾನುಭವ, ತಮ್ಮ ಹಳೆಯ ಲೇಖನಗಳನ್ನು ಹೊತ್ತುಕೊಳ್ಳುವ ಆಗರವಾಗಿ ಕಂಡುಬಂದರೂ ಮತ್ತಿನೊಂದಿಷ್ಟಕ್ಕೆ ಯಾವುದೇ ರೂಪುರೇಶೆಯೆಂದೇನೂ ಇಲ್ಲ. ಹಾಗೆ ಇರದಿರುವುದೇ ಬ್ಲಾಗಿನ ಲಕ್ಷಣ!

Monday, November 05, 2007

ನಿನ್ನೆ ಹೀಗಿತ್ತು - ಇಂದು ಹೀಗಿದೆ

ಬಹಳ ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಸೀಕೋ (Seiko) ರಿಸ್ಟ್ ವಾಚ್ ಒಂದನ್ನು ನನಗೆ ಉಡುಗೊರೆಯಾಗಿ ನೀಡಿದ್ದ. ಎಂಭತ್ತರ ದಶಕದಲ್ಲಿ ತಯಾರಿಸಲಾಗಿದ್ದ ಅದು ಬಹಳ ಸುಂದರವಾಗಿತ್ತು, ಅದರಲ್ಲಿ ಹೆಚ್ಚೇನು ಕಾಂಪ್ಲಿಕೇಷನ್ನುಗಳಿಲ್ಲದಿದ್ದರೂ (functions) ದಿನ ಹಾಗೂ ವಾರವನ್ನು ಸೂಚಿಸುತ್ತಿತ್ತು, ಜೊತೆಗೆ ಒಂದು ಸೆಕೆಂಡ್ ಮುಳ್ಳು ಕೂಡಾ ಇತ್ತು. ನನ್ನ ಲೇಮನ್ ಭಾಷೆಯಲ್ಲಿ ಹೇಳೋದಾದರೆ ಪ್ರಚನ್ನ ಶಕ್ತಿ (potential energy) ಯನ್ನು ಎದಿರು ಬದಿರು ಹಾಯಬಿಟ್ಟು ಕೆಲಸ ಮಾಡುವಂತಹ ಕೈ ಗಡಿಯಾರ ಅದು. ಅಂದರೆ ನಾನು ತಿಳಿದುಕೊಂಡ ಪ್ರಕಾರ ಅದರಲ್ಲಿ ಎರಡು ಸ್ಪ್ರಿಂಗ್‌ಗಳು, ಒಂದು ಅನ್ ವೈಂಡ್ ಆದ ಹಾಗೆ ಮತ್ತೊಂದು ಸುತ್ತಿಕೊಳ್ಳುತ್ತಿತ್ತು, ಹೀಗೆ ಬ್ಯಾಟರಿ ಇಲ್ಲದೆ ಎಷ್ಟೋ ವರ್ಷಗಳ ಕಾಲ ಅದು ನಡೆಯಬಲ್ಲದಾಗಿತ್ತು. ಅದು ಜಪಾನ್‌ನಲ್ಲಿ ಹುಟ್ಟಿ ಬಂದುದಾದರೂ ಸ್ಪಿಸ್‌ನಲ್ಲಿ ಹುಟ್ಟಿ ಬರುವ ಯಾವ ವಾಚುಗಳಿಗೂ ಕಡಿಮೆಯೇನೂ ಇದ್ದಿರಲಿಲ್ಲ, ಬಹಳ ನಿಖರವಾದ ಸಮಯವನ್ನು ತೋರಿಸುವ ನನ್ನ ಮೆಚ್ಚಿನ ಗಡಿಯಾರವೂ ಆಗಿತ್ತು.

ಆ ಗಡಿಯಾರದ ಬಗ್ಗೆ ಈಗ ಭೂತಕಾಲವನ್ನು ಬಳಸಿ ಬರೆಯುತ್ತಿರುವುದಕ್ಕೆ ಕಾರಣಗಳಿಲ್ಲದೇನಿಲ್ಲ. ಭಾರತದಲ್ಲಿ ಪ್ರತಿನಿತ್ಯವೂ ನನ್ನ ಒಡನಾಡಿಯಾಗಿದ್ದ ಸಮಯ ಪರಿಪಾಲಕ, ಒಂದು ದಿನವೂ ಮೈಂಟೇನನ್ಸ್ ಅನ್ನು ಬೇಡದ, ಬ್ಯಾಟರಿಯಾಗಲೀ ಮತ್ತೊಂದಾಗಲೀ ಕೇಳದ, ರಾತ್ರಿಯಲ್ಲೂ ಸಮಯ ತೋರಿಸುವ (ರೇಡಿಯಂ ಲೇಪಿಸಿದ) ಮುಳ್ಳುಗಳನ್ನು ಹೊಂದಿದ್ದ ಗಡಿಯಾರ ನಾನು ಅಮೇರಿಕಕ್ಕೆ ಬಂದ ಮೊದಮೊದಲಲ್ಲಿಯೇ ಇಲ್ಲಿನ ಸಮಯಗಳ ಬದಲಾವಣೆಯನ್ನು ತಾಳದೆ ಮಾನಸಿಕವಾಗಿ ನೊಂದು ನಿಂತು ಹೋಯಿತು. ಅದನ್ನು ಮತ್ತೆ ಭಾರತಕ್ಕೆ ಹೋದಾಗ ರಿಪೇರಿ ಮಾಡಿಸೋಣವೆಂದು ಎಲ್ಲೋ ತೆಗೆದಿರಿಸಿದ್ದರೆ ಇವತ್ತಿಗೂ ಇನ್ನೂ ಸಿಕ್ಕಿಲ್ಲ, ಅಲ್ಲಿಂದ-ಇಲ್ಲಿಂದ ಬಾಕ್ಸುಗಳಲ್ಲಿ ಬದುಕನ್ನು ಮೂವ್ ಮಾಡಿಕೊಂಡು ಅಲೆಯುವ ನಮ್ಮ ಅಮೇರಿಕದ ಬದುಕಿಗೆ, ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸುವ ಪರಿಪಾಟಲೆಗೆ ಹೆದರಿ ನನ್ನ ಪ್ರೀತಿಯ ಗಡಿಯಾರ ನನ್ನಿಂದ ದೂರವಾಯಿತು ಎಂದುಕೊಂಡು ಅದರ ನೆನಪಾದಾಗಲೆಲ್ಲ ನನ್ನ ಕಾಲಿನ ಕೆಳಗಿನ ನೆಲವನ್ನು ಗಟ್ಟಿಯಾಗಿ ತುಳಿದು ಅವಡುಗಚ್ಚುತ್ತೇನೆ. ವರ್ಷಗಳಿಂದ ಇನ್ನೂ ತೆರೆಯದ ಎಷ್ಟೋ ಬಾಕ್ಸುಗಳ ನಡುವೆ ನನ್ನ ಪ್ರೀತಿಯ ಸಮಯ ಪಾಲಕ ಎಲ್ಲೋ ಇದೆ, ಅದನ್ನು ಇವತ್ತಲ್ಲ ನಾಳೆ ಹುಡುಕಿಯೇ ತೀರುತ್ತೇನೆ ಎನ್ನುವುದು ನನ್ನ ಎಂದೂ ಬತ್ತದ ಛಲ ಅಥವಾ ಹುಂಬ ನಂಬಿಕೆ.

***

ಭಾರತದಲ್ಲಿ ನಾನು ಪಾಲಿಸುತ್ತಿದ್ದ ಸಮಯ ನಿಖರವಾಗಿತ್ತು. ಪಾಕಿಸ್ತಾನದವರು ಯಾವತ್ತೂ ನಮ್ಮಿಂದ ಅರ್ಧ ಘಂಟೆ ಹಿಂದಿದ್ದಾರೆ ಎಂದು ನಾವು ಯಾವತ್ತೂ ತಮಾಷೆ ಮಾಡಿಕೊಳ್ಳುತ್ತಿದ್ದೆವು. ಅದ್ಯಾವುದೋ ಒಂದು ವರ್ಷ ಪಾಕಿಸ್ತಾನದ ಸರ್ಕಾರ ಅಮೇರಿಕನ್ ಮಾದರಿಯಲ್ಲಿ ಸ್ಥಳೀಯ ಸಮಯವನ್ನು ಡೇ ಲೈಟ್ ಸೇವಿಂಗ್ಸ್ ನಿಯಮಕ್ಕನುಸಾರವಾಗಿ ಹಿಂದೆ-ಮುಂದೆ ಮಾಡುವ ಪ್ರಯೋಗವನ್ನು ನೆನೆನೆನೆದು ನಕ್ಕಿದ್ದಿದೆ. ನಾನು ಎನ್ನುವ ವ್ಯಕ್ತಿತ್ವ ನನ್ನ ಸಮಯ ಪಾಲನೆಗೆ ಅನುಗುಣವಾಗಿತ್ತು, ಅಥವಾ ನನ್ನ ಸಮಯಪಾಲನೆ ನನ್ನ ವ್ಯಕ್ತಿತ್ವವಾಗಿತ್ತು. ಹುಟ್ಟಿದಾಗಿನಿಂದ ನಮಗೊಂದೇ ವಾಚು, ನಾವು ಹೋದಲ್ಲಿ ಬಂದಲ್ಲಿ ಅದನ್ನು ಭಾರತದ ಉದ್ದಾನುದ್ದಕ್ಕೆ ಕೊಂಡೊಯ್ಯುತ್ತಿದ್ದೆವು, ನಮ್ಮ ಭಾಷೆ-ಸಂಸ್ಕೃತಿಗಳಲ್ಲೇನಾದರೂ ಬದಲಾವಣೆಗಳಿದ್ದರೂ, ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಉಷ್ಣತೆಯಲ್ಲಿ ಅಗಾಧವಾದ ಬದಲಾವಣೆ ಕಂಡು ಬಂದರೂ - ಭಾರತಕ್ಕೊಂದೇ ವಾಚು. ನಮ್ಮ ವಾಚಿನ ಸಮಯವನ್ನು ನಾವು ಬದಲಾಯಿಸುವ ಅಗತ್ಯವಿರಲಿಲ್ಲ. ಯಾವ ರೆಡಿಯೋ ಸ್ಟೇಷನ್ನುಗಳನ್ನು ಕೇಳಿಯಾದರೂ ನಾವು ಸಮಯವನ್ನು ತಿಳಿಯಬಹುದಿತ್ತು. ಯಾವ ಸೀಜನ್ನಿನಲ್ಲಿಯೂ ಒಂದೇ ಸಮಯ, ವರ್ಷದ ಹನ್ನೆರಡು ಮಾಸಗಳಲ್ಲಿ ಸೂರ್ಯನಿರುವ ಜಾಗೆಯನ್ನು ಇಂತಲ್ಲೇ ಎಂದು ನೆನಪಿಟ್ಟುಕೊಂಡು ಸಮಯವನ್ನು ಸೂಚಿಸುವ ಕಲೆ (instinct) ಈ ಅಕಶರೇಕ ಪ್ರಾಣಿಗಳಲ್ಲೋ ಅಥವಾ ಪಕ್ಷಿಗಳಲ್ಲೋ ವಂಶಪಾರಂಪರ್ಯವಾಗಿ ತಲೆಯಿಂದ ತಲೆಗೆ ಹರಿದು ಬಂದ ಮಹಾನ್ ಸೂತ್ರಗಳ ಹಾಗೆ ನಮಗೊಂದಾಗಿತ್ತು. ಒಮ್ಮೆ ಚೆನ್ನಾಗಿ ಸಮಯವನ್ನು ತೋರಿಸಿದ ಗಡಿಯಾರ ದೊಡ್ಡ ಹೊಡೆತ ಬಿದ್ದು ಒಡೆದು ಹೋಗಿ ಅಥವಾ ಕೆಟ್ಟು ಹೋಗದಿದ್ದರೆ ಯಾವತ್ತೂ ಸರಿಯಾದ ಸಮಯವನ್ನು ತೋರಿಸುವ ಸಂಭವನೀಯತೆಯೇ ಹೆಚ್ಚು. ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಪುನರ್‌ವಿಮರ್ಶಿಸಿಕೊಂಡು ನಮ್ಮ performance ಅನ್ನಾಗಲೀ objectives ಅನ್ನಾಗಲೀ ಜಗಜ್ಜಾಹೀರು ಮಾಡುವುದಾಗಲೀ, ನಮ್ಮತನವನ್ನು ನಾವು ಪುನರ್-ವಿಂಗಡಣೆ ಮಾಡುವ ಅಗತ್ಯವೇ ಇರಲಿಲ್ಲ. ವಾಚಿನ ಡಯಲ್ ಅನ್ನು ತಿರುಗಿಸಬೇಕಾಗಿದ್ದುದು ಫೆಬ್ರುವರಿ ತಿಂಗಳಲ್ಲಿ ಮಾತ್ರ, ಪ್ರತೀವರ್ಷ, ಹಾಗೆ ಮೂರುವರ್ಷ ಫೆಬ್ರುವರಿ ತಿಂಗಳಿನಲ್ಲಿ ಒಂದು ದಿನವನ್ನು ಮುಂದೋಡಿಸಿ ಮಾರ್ಚ್ ಒಂದನ್ನು ಸಾರುವುದೇ ಮೇಂಟೆನೆನ್ಸ್ ಆಗಿತ್ತು, ಅಷ್ಟೇ.

ಅಮೇರಿಕದ ಸಮಯವೂ ನಿಖರವಾಗೇ ಇದೆ - ಅದರ ಪಾಲನೆಯಲ್ಲಿ ಆಚರಣೆಯಲ್ಲಿ ನನ್ನಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ. ಪೀಕ್ ಅವರ್‌ನಲ್ಲಿ ಒಂದೇ ಘಂಟೆಗೆ ನಾಲ್ಕು ನಾಲ್ಕು ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡಿ ದೊಡ್ಡ ರೂಮಿನಿಂದ ಸಣ್ಣ ರೂಮು, ಸಣ್ಣ ರೂಮಿನಿಂದ ಕಿರು ರೂಮಿನಲ್ಲಿ ನಮ್ಮನ್ನು ಕೂರಿಸಿ ಕಾಯಿಸುವಂತೆ (ಧ್ಯಾನಿಸುವಂತೆ) ಮಾಡುವ ರಿಸೆಪ್ಷನಿಷ್ಟುಗಳು ನನ್ನ ಸಮಯ ಪಾಲನೆಯ ವರ್ತನೆಯನ್ನು ಬೇಕಾದಷ್ಟು ಬದಲಾಯಿಸಿದ್ದಾರೆ. ವರ್ಷಕ್ಕೆ ಆರು ತಿಂಗಳಿಗೊಂದರಂತೆ ಎರಡು ಬಾರಿ ಬದಲಾಯಿಸುವ ಸಮಯ ನಮ್ಮ ಮನೆಯಲ್ಲಿರುವ ಗಡಿಯಾರಗಳಲ್ಲಿ ಕೊನೇಪಕ್ಷ ಒಂದಾದರೂ ಒಂದು ಘಂಟೆ ಹಿಂದೆ ಅಥವಾ ಮುಂದಿರುವಂತೆ ಮಾಡುತ್ತದೆ. ಇಲ್ಲಿರುವ ವಾಷಿಂಗ್ ಮಷೀನ್, ಕಾಫಿ ಮೇಕರ್, ಮೈಕ್ರೋವೇವ್ ಅವನ್, ಅವನ್, ಕಾರಿನಲ್ಲಿರುವ ಗಡಿಯಾರಗಳು, ಕಂಪ್ಯೂಟರ್ರಿನಲ್ಲಿರುವ ಗಡಿಯಾರಗಳು, ಇವುಗಳನ್ನೆಲ್ಲವನ್ನೂ ಆರಾರು ತಿಂಗಳಿಗೊಮ್ಮೆ ತಿರುಗಿಸಿ-ಬದಲಾಯಿಸಿ ಈಗಾಗಲೇ ನನಗೆ ಚಿಟ್ಟು ಹಿಡಿಯುವಂತೆ ಮಾಡಿರುವುದೂ ಅಲ್ಲದೇ ಒಂದೊಂದು ಗಡಿಯಾರ ಒಂದೊಂದು ಸಮಯವನ್ನು ತೋರಿಸಿ ಎಷ್ಟೋ ಸಾರಿ ಹಿಂಸಿಸುತ್ತವೆ. ನಿಮ್ಮ ಮನೆಯಲ್ಲೇನಾದರೂ ಇರುವ ಗಡಿಯಾರಗಳೆಲ್ಲ ಒಂದೇ ಸಮಯವನ್ನು ತೋರಿಸುತ್ತಿದ್ದರೆ (ನಿಖರವಾಗಿ) ನನ್ನ ಹ್ಯಾಟ್ಸ್ ಅಫ್! ನಾನಂತೂ ಸಮಯಪಾಲನೆಯನ್ನೇ ಮರೆತುಬಿಟ್ಟಿದ್ದೇನೆ - ಆಫೀಸಿನ ಫ್ಲೆಕ್ಸ್ ಅವರ್ಸ್ ಕೂಡಾ ಇದಕ್ಕೆ ಕಾರಣ ಎಂದರೆ ತಪ್ಪೇನೂ ಅಲ್ಲ.

ನಾವಷ್ಟೇ ಸಮಯವನ್ನು ಬದಲಾಯಿಸಿದರೆ ಸಾಲದು, ನಮ್ಮ ತಲೆಯಲ್ಲಿನ ಭಾರತದ ಸಮಯದ ಪ್ಲೆಸ್ಸು-ಮೈನಸ್ಸುಗಳು ಬದಲಾಗಬೇಕು, ಇದೇ ದೇಶದಲ್ಲಿರುವ ನಾಲ್ಕೈದು (ಹವಾಯಿಯನ್ನು ಸೇರಿಸಿ) ಟೈಮ್ ಝೋನ್‌ಗಳ ಬಗ್ಗೆ ಚಿಂತಿಸಬೇಕು, ಅದರಲ್ಲಿ ಮೂರೋ-ನಾಲ್ಕೋ ರಾಜ್ಯಗಳನ್ನು ಸಮಯವನ್ನು ಬದಲಾಯಿಸದೇ ಇರುವುದರ ಬಗ್ಗೆ ತಿಳಿದಿರಬೇಕು. ಪ್ರತಿ ಆರು ತಿಂಗಳಿಗೊಮ್ಮೆ ’ಈವರೆಗೆ ನೀನೇನು ಮಾಡಿದ್ದೀಯೋ, ಇನ್ನಾರು ತಿಂಗಳಿನಲ್ಲಿ ಏನನ್ನು ಮಾಡುವವನಿದ್ದೀಯೋ ಆ ಬಗ್ಗೆ ಫರ್‌ಫಾರ್ಮೆನ್ಸ್ ಆಬ್ಜೆಕ್ಟೀವ್ ಅನ್ನು ಬರೆ!’ ಎಂದು ಆದೇಶಿಸುವ ಬಾಸು-ವ್ಯವಸ್ಥೆಯ ಬಗ್ಗೆ ಹೇಳಲೇ ಬೇಕಾಗುತ್ತದೆ. ನಾವೇನು ಮಾಡಿದ್ದರೂ, ನಮ್ಮ ಇತಿಹಾಸವೇನಾಗಿದ್ದರೂ ಪ್ರತಿ ಆರು ತಿಂಗಳಿನ ಮಾಪನದಲ್ಲಿ ನಮ್ಮನ್ನು ಅಳೆಯುವುದರ ಕಾರಣ ಇಲ್ಲಿ ನಾವು ಹಿಂದಿನ goodies ಮೇಲೆ ನಂಬಿ ಕೂರುವಂತೆಯೇ ಇಲ್ಲ. ’ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸು ಹಾಗೇ ನಮ್ಮ ಆದೇಶವನ್ನು ಪೂರೈಸು!’ ಎನ್ನುವ ಹುಕುಮ್ ಗಳೇ ಹೆಚ್ಚು. ನಾನು ಅಂಥವನು, ನಾನು ಇಂಥವನು ಎಂದರೆ ’who cares?!' ಎನ್ನುವವರೇ ಹೆಚ್ಚು.

***

ನನಗೆ ಇವತ್ತಿಗೂ ಅನ್ನಿಸಿದೆ, ಇಲ್ಲಿನ ಆರಾರು ತಿಂಗಳ ಸಮಯದ ಬದಲಾವಣೆಯ ಒತ್ತಡವನ್ನು ತಾಳದೆಯೇ ನನ್ನ ಮುದ್ದಿನ ಸೀಕೋ ವಾಚು ನನ್ನಿಂದ ದೂರ ಉಳಿಯುವ ತೀರ್ಮಾನ ಮಾಡಿದ್ದು ಎಂಬುದಾಗಿ. ಭಾರತದಲ್ಲಿ ಸೊಂಪಾಗಿ ಬರೀ ಒಂದೇ ಒಂದು ಸಮಯವನ್ನು ನಿಖರವಾಗಿ ಪಾಲಿಸಿಕೊಂಡು ಇದ್ದ ಒಳ್ಳೆಯ ಹೆಸರನ್ನು ಉಳಿಸಿ-ಬೆಳೆಸಿಕೊಂಡು ಹಾಯಾಗಿದ್ದ ವಾಚು, ಕೇವಲ ನನ್ನ ನಡೆವಳಿಕೆಗಳಿಂದ ಆಹಾರವನ್ನು ಪಡೆದು ತನ್ನ ಆಂತರ್ಯದ ಪ್ರಚನ್ನ ಶಕ್ತಿಗಳ ಬಲದಿಂದ ಸದಾ ಮುಂದೆ ನಡೆಯುತ್ತಿದ್ದ ವಾಚು, ಇಲ್ಲಿ ಆರಾರು ತಿಂಗಳಿಗೊಮ್ಮೆ ಘಂಟೆಗಟ್ಟಲೆ ಮುಂದೆ ಅಥವಾ ಹಿಂದೆ ಹೋಗುವುದನ್ನು ಹೇಗಾದರೂ ಮಾನಸಿಕವಾಗಿ ಸಹಿಸಿಕೊಂಡೀತು ಎಂದು ಎಷ್ಟೋ ಸಾರಿ ನನ್ನ ಮನಸ್ಸು ಮಮ್ಮಲ ಮರುಗಿದ್ದಿದೆ. ಅಂಥ ಸುಂದರವಾದ ವಾಚು ನಿಮ್ಮ ಬಳಿಯೇನಾದರೂ ಇದೆಯೇ, ಇವತ್ತಿಗೂ ಅದು ಇಲ್ಲಿನ ಬದಲಾವಣೆಯ ಬದುಕಿಗೆ ಹೊಂದಿಕೊಂಡಿದೆಯೇ? ಹಾಗೆ ಹೊಂದಿಕೊಂಡು ಇನ್ನೂ ಜೀವಂತವಾಗಿದೆಯೇ?

ಕತ್ತಲು-ಬೆಳಕು, ಉಷ್ಣತೆ, ಅಕ್ಷಾಂಶ (altitude), ಸಮಯ, ಸಂಸ್ಕೃತಿ ಮುಂತಾದವುಗಳಲ್ಲಿ ಅಗಾಧವಾಗಿ ಭಿನ್ನವಾಗಿರುವ ನೆಲೆಗಟ್ಟು ಬಹಳಷ್ಟನ್ನು ನಿರೀಕ್ಷಿಸುತ್ತದೆ, ವ್ಯವಸ್ಥೆ ಪ್ರತಿಯೊಬ್ಬರನ್ನೂ ಅವರವರ ನಿಲುವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷಿಸುತ್ತದೆ ಅಥವಾ ಪುನರ್‌ವಿಮರ್ಶಿಸುತ್ತದೆ (redefine), ಈ ಬದಲಾವಣೆಗಳನ್ನು ಜಯಿಸುತ್ತಲೇ ಇರುವುದು ಸವಾಲಾಗುವುದಕ್ಕಿಂತ ಮುಖ್ಯವಾಗಿ ಬದುಕಾಗುತ್ತದೆ. ನಿನ್ನೆ ಹೀಗಿತ್ತು ಎನ್ನುವ ಹಳೆಯದು ಹೆಚ್ಚು ಪ್ರಚಲಿತವಾಗದೇ ಇಂದು ಹೀಗಿದೆ ಎನ್ನುವ ವರ್ತಮಾನಕ್ಕೆ ಇಂಬುಕೊಟ್ಟಹಾಗನ್ನಿಸುತ್ತದೆ.

Saturday, November 03, 2007

ನಾವು ನಾನಾದದ್ದೂ, ವ್ಯಥೆಯ ಬೆನ್ನ ಹಿಂದಿನ ಸುಖವೂ...

’ಥತ್ ತೇರೀಕೇ, ನೀನೆಲ್ಲಿ ಅಮೇರಿಕ ಬಿಟ್ಟ್ ಹೋಗ್ತೀಯೋ, ಸುಮ್ನೇ ಬೆಳ್ಳಂ ಬೆಳಗ್ಗೆ ಕೊರೀತಾ ಕುತಗಂತೀ ನೋಡು!’ ಎಂದು ಯಾವುದೋ ಒಂದು ಧ್ವನಿ ನನ್ನ ಬೆನ್ನ ಹಿಂದೆ ಕೇಳಿಸಿದಂತಾಯ್ತು, ಬೆಚ್ಚಿ ಬಿದ್ದು ತಿರುಗಿ ನೋಡಿದೆ ಯಾರೂ ಕಾಣಿಸದಿದ್ದುದಕ್ಕೆ ಮತ್ತಷ್ಟು ಹೆದರಿಕೆಯಾದಂತನ್ನಿಸಿತು. ಈಗಾಗ್ಲೇ ಅಲ್ಲಲ್ಲಿ ಛಳಿ ಬಿದ್ದು ಮೈ ನಡುಕಾ ಬರೋ ಹಾಗಿದ್ರೂ ಮನೇಲಿರೋ ಯಾವ್ದೋ ಒಂದು ಶಾಲ್ ಅನ್ನು ಸುತ್ತಿಕೊಂಡು ಇನ್ನೂ ಹಬೆ ಆಡುತ್ತಿದ್ದ ಕಾಫಿ ಕಪ್ ಅನ್ನು ಹಿಡಕೊಂಡು ಡೆಕ್ ಮೇಲೆ ಹೋಗಿ ಅಲ್ಲಿರೋ ಖುರ್ಚಿಯಲ್ಲಿ ಕುಳಿತು ಸೂರ್ಯನಿಗೆ ಮುಖ ಮಾಡಿಕೊಂಡು ನನ್ನ ಯೋಚನೆ ಒಳಗೆ ನಾನೇ ಬಿದ್ದು ಹೋಗಿದ್ದೆ. ಈಗಾಗಲೇ ಸಾಕಷ್ಟು ಎಲೆಗಳನ್ನು ಕಳೆದುಕೊಂಡ ಅಕ್ಕ ಪಕ್ಕದ ಮರಗಳು ಸ್ವಲ್ಪವೇ ಗಾಳಿ ಬೀಸಿದರೂ ಇನ್ನಷ್ಟು ಎಲೆಗಳನ್ನು ಕಳೆದುಕೊಂಡು ಬೋಳಾಗುವ ದುಃಖದಲ್ಲಿದ್ದವರಂತೆ ಆಗೀಗ ಬೀಸಿ ಮಾಯವಾಗುತ್ತಿದ್ದ ಗಾಳಿಗೆ ತೊನೆಯುತಿದ್ದವು. ಇಷ್ಟು ದಿನ ಹಸಿರನ್ನು ಮೆರೆಯುತ್ತಿದ್ದ ಹುಲ್ಲು ಹಾಸಿನ ಮೇಲೆ ಅಲ್ಲಲ್ಲಿ ತೇಪೆ ಹಾಕಿದ ಕೌದಿಯನ್ನು ನೆನಪಿಸುವ ಹಾಗೆ ಹಳದಿ ಕೆಂಪು ಎಲೆಗಳು ಹರಡಿಕೊಂಡಿದ್ದವು. ಆಗಷ್ಟೇ ಚಿಗುರೊಡೆಯುತ್ತಿದ್ದ ಸೂರ್ಯನ ಕಿರಣಗಳು ಅವು ಬಿದ್ದ ವಸ್ತುಗಳ ನೆರಳನ್ನು ಯಶಸ್ವಿಯಾಗಿ ಸೃಷ್ಟಿಸುವಲ್ಲಿ ಯಶಸ್ಸು ಪಡೆದಿದ್ದವು.

ನಿನ್ನೆ ಫೋನ್‌ನಲ್ಲಿ ಯಾರಿಗೋ ಹೇಳ್ತಾ ಇದ್ದೆ - ’ಹೋಗ್ಬಿಡೋಣ, ಅಲ್ಲೇನು ಬೇಕಾದ ಹಾಗೆ ಕೆಲ್ಸಾ ಸಿಗುತ್ತೇ’ ಅಂತ. ಆದ್ರೆ ಕರೆ ಮುಗಿದ ಮೇಲೆ ಮತ್ತೆ ಅದೇ ವಾಕ್ಯಗಳನ್ನು ಮೆಲುಕು ಹಾಕಿಕೊಂಡವನಿಗೆ ವಾಸ್ತವ, ಸತ್ಯ ಇವೆರಡೂ ಹೆದರಿಸ ತೊಡಗಿದವು. ಒಂದು ಮನೆ ಕಟ್ಟಿಸೋಕೆ (ಅಪ್ಪಂತಾ ಸೈಟಿನಲ್ಲಿ) ಏನಿಲ್ಲಾ ಅಂದ್ರೂ ಒಂದು ಕೋಟಿ ರೂಪಾಯ್ ಬೇಕು ಅಂತಾರಂತೆ ಬೆಂಗ್ಳೂರಿನಲ್ಲಿ, ಅಪಾರ್ಟ್‌ಮೆಂಟುಗಳನ್ನು ತೆಗೆದುಕೊಂಡ್ರೂ ಸುಮಾರು ಐವತ್ತು ಲಕ್ಷದವರೆಗೂ ಆಗುತ್ತಂತೆ. ಅನಿವಾಸಿಗಳು ಅಂದಾಕ್ಷಣ ಅಷ್ಟೊಂದು ದುಡ್ಡು ಬಿದ್ದು ಸುರಿತಾ ಇರುತ್ತೆ ಅಂತ ಎಲ್ರೂ ಯಾಕ್ ಅಂದ್ಕೋತಾರೆ? ಕೆಲವ್ರು ಅಲ್ಲೂ ಸಾಲಾ ಮಾಡಿ ಮನೆ-ಮಠ ತಗೋತಾರಂತೆ, ಇಷ್ಟೊಂದು ವರ್ಷಾ ಕಷ್ಟಪಟ್ಟ ಮೇಲೂ ಅಲ್ಲೂ ಹೋಗೀ ಸಾಲದಲ್ಲೇ ಬದುಕೋದು ಹೇಗೆ ಸಾಧ್ಯ? ಇತ್ತೀಚಿಗಂತೂ ಅಲ್ಲಿನ ಕಂಪನಿಗಳು ಇಲ್ಲೀಗಿಂತ ಹೆಚ್ಚೇ ಕೆಲ್ಸಾ ತೆಗೀತಾರೆ, ಇನ್ನು ಅಲ್ಲಿ ಹೋಗಿ ಒದ್ದಾಡೋದ್‌ಕಿಂತ ಇಲ್ಲಿರೋ ಸ್ಟ್ಯಾಟಸ್ ಕೋ ನೇ ಸಾಕಾಗಲ್ವಾ?

ಈ ಮೇಲಿನ ಪ್ರಶ್ನೆಗಳೆಲ್ಲ ನನ್ನ ತಲೆಯನ್ನು ಬಿಸಿಮಾಡಿದ್ವು ಆದರೆ ದೇಹಕ್ಕೆ ಛಳಿ ಹೆಚ್ಚಾದಂತಾಗಿ ಇನ್ನು ಹೊರಗಡೆ ಕೂರೋದಕ್ಕೆ ಆಗೋದೇ ಇಲ್ಲ ಎಂದಾಗ ಮನೆ ಒಳಗೆ ಬಂದು ಪ್ಯಾಡಿಯೋ ಡೋರ್ ಅನ್ನು ಯಾವ್ದೋ ಶತ್ರುವನ್ನು ಮನೆಯಿಂದ ಆಚೆಗೆ ತಳ್ಳೋ ಫೋರ್ಸ್‌ನಲ್ಲಿ ಎಳೆದು ಮುಚ್ಚಿದ್ದಾಯಿತು. ಮೊಣಕೈಯಿಂದ ಮುಂಗೈವರೆಗೆ ಗೂಸ್ ಬಂಪ್ಸ್ ಬಂದು ಕೂದಲುಗಳೆಲ್ಲ ಯಾವ್ದೋ ಸಂಗೀತವನ್ನು ಆಲಿಸೋರ ಕಿವಿಗಳ ಹಾಗೆ ನಿಮಿರಿಕೊಂಡಿದ್ದವು. ಇನ್ನೂ ಮರಗಳಿಂದ ಬೀಳ್ತಾ ಇರೋ ಎಲೆಗಳು ನನ್ನ ಸೋಲನ್ನು ನೋಡಿ ಚಪ್ಪಾಳೆ ಹಾಕ್ತಾ ಇರೋರ ಹಾಗೆ ಕಂಡುಬಂದವು. ದೇಹದ ಒಳಗೆ ಕಾಫೀ ಹೋಗಿ ನರಮಂಡಲವೆಲ್ಲ ಮತ್ತಷ್ಟು ಚುರುಕಾಗಿ ಆಲೋಚನೆಗಳು ಮತ್ತಷ್ಟು ಗಾಢವಾದವು, ಆದರೆ ಹೆಚ್ಚು ಪ್ರಶ್ನೆಗಳೇ ಹೊರಬಂದವೇ ವಿನಾ ಉತ್ತರಗಳ ಸುಳಿವೂ ಕೂಡ ಅಲ್ಲಿರಲಿಲ್ಲ.

’ಅಲ್ಲಿನ್ ಶಾಲೆಗಳಿಗೆ ಮಕ್ಳುನ್ ಸೇರ್ಸೋದೂ ಅಂದ್ರೆ ಅದೇನ್ ಆಟಾ ಅಂತ ತಿಳಕೊಂಡಿದೀಯಾ?’ ಅನ್ನೋ ಮತ್ತೊಬ್ಬ ಸ್ನೇಹಿತನ ಪ್ರಶ್ನೆ. ಒಂದೊಂದು ಮಗುವಿಗೆ ವರ್ಷಕ್ಕೆ ಹೆಚ್ಚೂ ಕಡಿಮೆ ಒಂದೂವರೆ ಲಕ್ಷ ಖರ್ಚು ಮಾಡೋ ಅವನ ಹತ್ತಿರದ ಸಂಬಂಧಿಯೊಬ್ಬರ ವಿವರವನ್ನು ಹೇಳಿದ. ಆದೇನು ಅಲ್ಲಿನ ಸ್ಕೂಲೋ ನಿಯಮವೋ ನಾವು ಓದಿದ ಸರ್ಕಾರಿ ಶಾಲೆಗಳ ಜಮಾನ ಮುಗಿದಂತೇ ಎಂದು ನನಗೆ ಬಹಳ ಹಿಂದೆಯೇ ಅನ್ನಿಸಿದೆ. ಯಾವೊಬ್ಬ ಅನಿವಾಸಿ, ಅವರ ಸಂಬಂಧಿಗಳ ಮಕ್ಕಳಾಗಲೀ ಅವರ ಮಾತುಕಥೆಗಳಾಗಲೀ ಸರ್ಕಾರೀ ಶಾಲೆಯ ಹತ್ತಿರವೂ ಸುಳಿಯೋದಿಲ್ಲ. ಎಲ್ಲರೂ ಆ ಅಕಾಡೆಮಿ, ಈ ಅಕಾಡೆಮಿ ಅನ್ನೋ ಬೋರ್ಡುಗಳಿಗೆ ದುಡ್ಡು ಸುರಿಯೋರೇ. ಕಾಲ ಬದಲಾಗಿದೆ ನಿಜ, ಆದರೆ ಸರ್ಕಾರಿ ಶಾಲೆಯಲ್ಲಿ ಓದಿ ನಾವು ಮನುಷ್ಯರಾಗಲಿಲ್ಲವೇ? ನಾವು ಓದಿದ ಸರ್ಕಾರಿ ಶಾಲೆಗಳು ಸೆಕ್ಯುಲರಿಸಂ ಅನ್ನೋ ಆ ಪದದ ಅರಿವಿರದೆಯೂ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದವುಗಳು. ನಾವು ಹಾಡುವ ನಾಡಗೀತೆ, ರಾಷ್ಟ್ರಗೀತೆಗಳನ್ನು ಬಿಟ್ಟರೆ, ವರ್ಷಕ್ಕೊಮ್ಮೆ ಹಬ್ಬ ಹರಿದಿನಗಳಲ್ಲಿ ದೇವರುಗಳನ್ನು ನೆನೆಯುವುದನ್ನು ಬಿಟ್ಟರೆ ದಿನವೂ ನಮಗೆ ದೇವರ ಪ್ರಾರ್ಥನೆ ಇರಲಿಲ್ಲ. ಅಂಥ ನಿಯಮಗಳನ್ನು ಮನೆಯಲ್ಲಿಯೇ ಕಾಪಾಡಿಕೊಂಡ ನಾವುಗಳು ಇಂದು ಯಾವ ಬೋರ್ಡು, ಕಾನ್ವೆಂಟಿನಲ್ಲಿ ಓದಿದ ಮಕ್ಕಳಿಗೆ ಕಮ್ಮಿ? ನಮ್ಮ ನುಡಿಯಲ್ಲಿ ನಾವು ’ಅಗಸ-ಆಡು’ ಓದಿಕೊಂಡು ಬಂದರೂ ಇಲ್ಲಿ A for Apple ಎಂದುಕೊಂಡೇ ಬದುಕನ್ನು ನಡೆಸಿಕೊಂಡು ಹೋಗುತ್ತಿಲ್ಲವೇ? ಇನ್ನು ಕೆಲವರ ಮಕ್ಕಳು ಹೋಗುವ ಶಾಲೆಗಳಲ್ಲಿ ಇಂಗ್ಲೀಷ್ ಬಿಟ್ಟು ಬೇರೆ ಭಾಷೆಯನ್ನಾಡಿದರೆ ದಂಡ ವಿಧಿಸುತ್ತಾರಂತೆ! ಅಮೇರಿಕ, ಬ್ರಿಟನ್ನುಗಳಲ್ಲಿ ಇಲ್ಲದ ಕಾಯಿದೆ ಇಂಡಿಯಾದವರಿಗ್ಯಾಕ್ ಬೇಕಪ್ಪಾ? ಹಾಳಾದೋರು, ಇಂಗ್ಲೀಷ್ ಕಲಿಸೀ ಕಲಿಸೀ ದೇಶಾನ ಉದ್ದಾರ ಮಾಡಿರೋದನ್ನ ನೋಡೋಕ್ ಕಾಣ್ತಾ ಇಲ್ವಾ ಕಳೆದ ಅರವತ್ತು ವರ್ಷಗಳಲ್ಲಿ? ಒಂದೊಂದು ಮಗೂಗೆ ವರ್ಷಕ್ಕೆ ಒಂದೂವರೆ ಲಕ್ಷವನ್ನ ಎಲ್ಲಿಂದ ತರ್ತಾರಂತೆ, ಇವರೆಲ್ಲಾ ಹೊಟ್ಟೆಗೇನ್ ತಿಂತಾರೆ? ನಮ್ಮತನವನ್ನ ಕಲೀಲಿ ಅಂತ ಇಲ್ಲಿಂದ ಅಲ್ಲಿಗ್ ಕರ್ಕೊಂಡ್ ಹೋಗಿ ಶಾಲೇಲ್ ಇಂಗ್ಲೀಷ್ ಮಾತಾಡು, ಮನೇಲ್ ಕನ್ನಡ ಕಲಿ ಅಂದ್ರೆ ಆ ಮಗುವಿನ್ ಮೇಲೆ ಏನೇನ್ ಪರಿಣಾಮ ಆಗುತ್ತೋ?

’ಯಾಕೆ, ಇಲ್ಲಿಂದ ಹೋದೋರೆಲ್ಲಾ ಬೆಂಗ್ಳೂರ್ನಲ್ಲೇ ಸಾಯ್‌ಬೇಕೂ ಅಂತ ವಿಧಿ ನಿಯಮಾ ಏನಾದ್ರೂ ಇದೆಯೇನು?’ ಅನ್ನೋ ಪ್ರಶ್ನೆ ಮತ್ತೆಲ್ಲಿಂದಲೋ ಬಂತು. ಅದೂ ಹೊಲಸೆದ್ದು ಹೋಗಿರೋ ನಗರ, ಮೊನ್ನೇ ಹೋದಾಗ ಬೆಳಗ್ಗೆ ಆರು ಘಂಟೆಗೆ ಎಮ್.ಜಿ.ರಸ್ತೆ ನೋಡಿ ವಾಕರಿಕೆ ಬಂದಿತ್ತು. ಎಲ್ಲೆಲ್ಲಿ ನೋಡಿದ್ರೂ ಕಸ, ಮುಸುರೆ, ಒಂದಕ್ಕೂ ರೂಲ್ಸು, ನೀತಿ-ನಿಯಮಾ ಅನ್ನೋದೇನೂ ಇದ್ದಂಗೇ ಕಾಣಿಸ್ಲಿಲ್ಲ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಮನೆಗೆ ಹೊರಟ ನನಗೆ ಮೂರ್ನಾಲ್ಕು ಕಡೆ ಹಾರ್ಟ್ ಅಟ್ಯಾಕ್ ಆಗೋದೊಂದೇ ಬಾಕೀ ಇತ್ತು. ಎಲ್ಲೆಲ್ಲಿ ಕೆಂಪು ದೀಪಗಳು ಇದ್ದವೋ ಅಲ್ಲೆಲ್ಲಾ ಜನಗಳು ಸರಾಗವಾಗಿ ವಾಹನಗಳನ್ನು ನುಗ್ಗುಸ್ತಲೇ ಇದ್ದರು. ಇರೋ ಜನರನ್ನು ನೋಡಿಕೊಳ್ಳಲೇ ಯಾವುದೇ ವ್ಯವಸ್ಥೆ, ಪ್ಲಾನುಗಳು ಇಲ್ಲದ ಪ್ರದೇಶಕ್ಕೆ ಹೋಗಿ ಗೊತ್ತಿರೋರು, ಗೊತ್ತಿಲ್ಲದವರೆಲ್ಲ ತಗಲಾಕಿಕೊಂಡ್ರೆ ಹೇಗೆ? ಅನಿವಾಸಿಗಳು ತಮ್ಮ ತಮ್ಮ ಊರಿಗೋ ಅಥವಾ ಅವರವರ ಜಿಲ್ಲಾ ಕೇಂದ್ರಕ್ಕೋ ಹೋಗಿ ಅಲ್ಲೇ ಯಾಕೆ ವಾಸ್ತವ್ಯ ಹೂಡಬಾರ್ದು. ಅನಿವಾಸಿಗಳ ಶೋಕಿ ಜೋಕಿ ಆಚಾರ-ವಿಚಾರ ಏನೂ ಅಂತ ಎಲ್ಲರಿಗೂ ಸ್ವಲ್ಪ ತಿಳೀಲಿ. ಬೆಂಗ್ಳೂರಿನ ಅವ್ಯವಸ್ಥೆಯಲ್ಲಿ ಬದುಕೋದಕ್ಕಿಂತ ಮಂಗ್ಳೂರೋ-ಮೈಸೂರಿನ ಅವ್ಯವಸ್ಥೆಯಲ್ಲಿ ಇರೋದು ಸರಿ ಅನ್ಸಲ್ವಾ? ಅದೂ ಅಲ್ದೇ ಇಲ್ಲೆಲ್ಲಾ ಮಲ್ಟಿನ್ಯಾಷನಲ್ ಕಂಪನಿಗಳಿಗೆ ದುಡಿದವರು ಅಲ್ಲಿ ಹೋಗಿ ದೇಸೀ ಕಂಪನಿಗಳಿಗೋ ಅಥವಾ ತಮ್ಮದೇ ಆದ ಕಂಪನಿಗಳಿಗೆ ದುಡಿಯೋದು ಸರಿ ಅನ್ಸಲ್ವಾ? ನನಗ್ ಗೊತ್ತು, ನಾನು ಏನೇ ಅಂದ್ರೂ ಎಲ್ರೂ ಬೆಂಗ್ಳೂರಿಗೇ ವಾಪಸ್ ಹೋಗಿ ತಗಲ್ ಹಾಕ್ಕೋತಾರೇ ಅಂತ. ಅದ್ರಿಂದಾನೇ ಅಲ್ಲಿ ಮನೆ-ಮಠ-ಸೈಟುಗಳಿಗೆ ಅಷ್ಟೊಂದು ದುಡ್ಡಾಗಿರೋದು. ಇಲ್ಲಿ ಐದು ವರ್ಷ ಸಂಪಾದ್ಸಿ ಉಳ್ಸಿರೋ ದುಡ್ನಲ್ಲಿ ಊರ ಹೊರಗೆ ಒಂದು ಸಿಕ್ಸ್ಟೀ ಫಾರ್ಟೀ ಸೈಟ್ ತೆಗೊಂಡ್ರೇ, ಇನ್ನು ಅದ್ರಲ್ಲಿ ಮನೇ ಕಟ್ಟ್ಸೋದಕ್ಕೆ ಇನ್ನೂ ಹತ್ತು ವರ್ಷ ದುಡೀಬೇಕಾಗುತ್ತೆ. ಅಲ್ಲಿನ ಇನ್‌ಫ್ಲೇಷನ್ನುಗಳನ್ನು ಯಾರು ಕಾಯ್ಕೊಂಡಿರ್ತಾರೆ, ಇವತ್ತು ನೂರು ರುಪಾಯಿಗೆ ಸಿಗೋದು ನಾಳೆ ಸಾವ್ರ ರೂಪಾಯಿಗೂ ಸಿಗೋದಿಲ್ಲ, ಮುಂದೆ ಒಂದು ದಿನ ಒಂದು ಲೋಫ್ ಬ್ರೆಡ್ ತೆಗೊಳೋಕೂ ಒಂದು ಲಾರಿ ಲೋಡ್ ದುಡ್ಡು ತಗೊಂಡು ಹೋಗ್ಬೇಕಾಗುತ್ತೆ.

ಈಗಾಗ್ಲೇ ನಾನು ಮನೇ ಒಳಗೆ ಬಂದಿದ್ದರಿಂದ ಹೊರಗಿನ ಛಳಿ ಹೊರಗೇ ಇತ್ತು. ಪ್ಯಾಡಿಯೋ ಬಾಗಿಲ್ಲನ್ನ ಸ್ಲ್ಯಾಮ್ ಮಾಡಿದೆ ಎಂದು ಬಾಗಿಲಿಗೆ ಎದುರಾಗಿರುವ ಅಕ್ವೇರಿಯಮ್ ನಲ್ಲಿರೋ ಮೀನು ಒಂದು ಲುಕ್ ಕೊಟ್ಟಿತು, ಸದ್ಯ ಮನೆಯಲ್ಲಿ ಇದೊಂದು ಮಾತಾಡಲ್ಲ ಎಂದು ಉಸ್ ಎಂದೆ, ಆದರೂ ಏನೋ ವಟವಟಗುಟ್ಟುತ್ತಲೇ ಇತ್ತು. ನಾವು ವಾಪಾಸ್ ಹೋಗ್ಬೇಕು ಆದ್ರೆ ಫುಲ್‌ಟೈಮ್ ಕೆಲ್ಸಾ ಮಾಡ್ಬಾರ್ದು, ಮಕ್ಳು ಒಳ್ಳೇ ಶಾಲೇನಲ್ಲಿ ಓದ್ಬೇಕು ಆದ್ರೆ ಲಕ್ಷಗಟ್ಟಲೇ ಖರ್ಚಾಗಾಬಾರ್ದು, ಎಲ್ಲಿಗೆ ಹೋದ್ರೂ ಬೆಂಗ್ಳೂರಿಗೆ ಮಾತ್ರ ಹೋಗ್ಬಾರ್ದು-ಮತ್ತಿನ್ನ್ಯಾವ ಊರು ಒಳ್ಳೆಯದು, ಎಲ್ಲಾ ಇರೋಣ ನಮ್‌ತನಾನ ಉಳಿಸಿಕೊಳ್ಳೋಣ - ಎನ್ನೋ ಮಾತುಗಳೆಲ್ಲ ಚರ್ಚಾಸ್ಪರ್ಧೆಯ ವಾದ-ಪ್ರತಿವಾದಗಳಂತೆ ಕಣ್ಣ ಮುಂದೆ ಸುಳಿದುಹೋದವು. ’ನಾನು ಹೋಗೇ ಹೋಗ್ತೀನಿ’ ಅನ್ನೋ ಧ್ವನಿ ಇದ್ದಕ್ಕಿದ್ದ ಹಾಗೆ ಕ್ಷೀಣಿಸ ತೊಡಗಿದ್ದೂ ಅಲ್ದೇ ಇಷ್ಟೊತ್ತಿನವರೆಗೆ ಇದ್ದ ’ನಾವು’ ಎನ್ನುವ ಸ್ವರ ಏಕದಂ ’ನಾನು’ ಆದದ್ದಕ್ಕೆ ಒಮ್ಮೆ ವ್ಯಥೆಯಾಯಿತು, ಅದರ ಮಗ್ಗುಲಿನಲ್ಲಿ ಸುಖವೂ ಹಾಯಾಗಿ ನಿದ್ರಿಸುತಲಿತ್ತು.

Wednesday, October 31, 2007

ಒಂದು ವ್ಯವಸ್ಥೆಯ ಕುರಿ

ಅಮೇರಿಕದಲ್ಲಿ ಎಲ್ಲರೂ ಅದೆಷ್ಟು ಚೆನ್ನಾಗಿ ರೂಲ್ಸುಗಳನ್ನು ಫಾಲ್ಲೋ ಮಾಡ್ತಾರೆ, ಆದರೆ ಭಾರತದಲ್ಲಿ ಹಾಗೇಕೆ ಮಾಡೋಲ್ಲ ಎನ್ನೋ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಸಾರಿ ಬಂದೇ ಬಂದಿರುತ್ತೆ. ಹಾಗೆ ಆಗೋದಕ್ಕೆ ಏನು ಕಾರಣ, ಪ್ರಪಂಚದಲ್ಲಿರೋ ಜನರೆಲ್ಲ ಒಂದೇ ಅಥವಾ ಬೇರೆ-ಬೇರೆ ಎಂದು ವಾದ ಮಾಡಬಹುದೋ ಅಥವಾ ಇಲ್ಲಿನ ವ್ಯವಸ್ಥೆಯ ಬಗ್ಗೆ ಹೇಳಬಹುದೋ ಗೊತ್ತಿಲ್ಲ.

ಅಮೇರಿಕದ ವ್ಯವಸ್ಥೆ ಕಂಪ್ಯೂಟರ್ ನೆಟ್‌ವರ್ಕ್, ಡೇಟಾಬೇಸುಗಳಿಂದ ತುಂಬಿರುವಂಥ ಒಂದು ಜಾಲ. ಈ ಜಾಲದಲ್ಲಿ ನಮ್ಮನ್ನು ಸಿಕ್ಕಿ ಹಾಕಿಕೊಳ್ಳುವ ಹಾಗೆ ಮಾಡುವ ಬಂಧನಗಳು ಹಲವಾರು - ಅವುಗಳಲ್ಲಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್, ಡ್ರೈವರ್ಸ್ ಲೈಸನ್ಸ್, ಕ್ರೆಡಿಟ್ ಕಾರ್ಡ್, ಟ್ಯಾಕ್ಸ್ ಐಡಿ, ಬ್ಯಾಂಕ್ ಅಕೌಂಟುಗಳು ಇತ್ಯಾದಿ. ಇಲ್ಲಿಗೆ ಬಂದು ಜೀವಿಸುವವರಲ್ಲಿ ಎರಡು ಯಾವಾಗಲೂ ಇದ್ದೇ ಇರುತ್ತವೆ, ಒಂದು ಸಾಲ ಮತ್ತೊಂದು ಥರಾವರಿ ಕಾರ್ಡುಗಳು. ಹೀಗೆ ನಿಮಗೆ ಬೇಕೋ ಬೇಡವೋ ಜಾಲದಲ್ಲಿ ಮೊದಲ ದಿನದಿಂದಲೇ ಗೊತ್ತಿರದೇ ಸೇರಿಕೊಳ್ಳುತ್ತೀರಿ. ಭಾರತದಲ್ಲಿ ಎಷ್ಟೋ ಜನ ಸಂಸಾರ ಬಂಧನವನ್ನು ಬಿಟ್ಟು ಯೋಗಿಗಳಾಗಿ ಹೇಳಲೂ ಹೆಸರೂ ಇಲ್ಲದೇ ಯಾವುದೋ ನದಿ ತೀರದಲ್ಲಿ, ತಪ್ಪಲಿನಲ್ಲಿ ಇವತ್ತಿಗೂ ಬದುಕೋದಿಲ್ಲವೇ? ಹಾಗೋಗೋದು ಇಲ್ಲಿ ಹೋಮ್‌ಲೆಸ್ ಜನರಿಗೆ ಮಾತ್ರ (ಅವರಿಗೋ ಒಂದೆರಡು ಐಡಿ ಗಳಾದರೂ ಇರುತ್ತವೆ).

ಈ ವ್ಯವಸ್ಥೆ - ಕಾರ್ಡು, ಐಡಿ ಗಳಿಂದ ಕೂಡಿದ ಜಾಲ - ಇದೇ ನಿಮ್ಮನ್ನು ಕಟ್ಟಿ ಹಾಕುವುದು. ಅವುಗಳ ತೂಕ ಎಷ್ಟರ ಮಟ್ಟಿಗೆ ಇರುತ್ತದೆಯೆಂದರೆ ಭಾರತದಲ್ಲಿದ್ದರೆ ಹತ್ತು ಲಕ್ಷ ಜನ್ಮಗಳ ನಂತರವಾದರೂ ಮೋಕ್ಷ ದೊರಕೀತು, ಆದರೆ ಇಲ್ಲಿ ಅದಕ್ಕೂ ಆಸ್ಪದವಿಲ್ಲ. ನನ್ನ ಪ್ರಕಾರ ಅಮೇರಿಕದಲ್ಲಿರುವ ಆತ್ಮಗಳಿಗೆ ಮೋಕ್ಷವೆಂಬುದೇ ಇಲ್ಲ!

***
ನಿಮ್ಮ ಟೆಲಿಫೋನ್ ಸಂಪರ್ಕದಿಂದ ಹಿಡಿದು ಕ್ರೆಡಿಟ್ ಕಾರ್ಡುಗಳವರೆಗೆ, ಟ್ಯಾಕ್ಸ್ ಕಟ್ಟುವುದರಿಂದ ಹಿಡಿದು ನಿಮ್ಮ ಹೆಲ್ತ್ ಇನ್ಷೂರೆನ್ಸ್‌ವರೆಗೆ ಪ್ರತಿಯೊಂದಕ್ಕೂ ನೀವು ಒಂದು ವ್ಯವಸ್ಥೆಗೆ ತಲೆ ಬಾಗಲೇ ಬೇಕು. ನಿಮ್ಮ ಜೀವನದ ಅತ್ತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಈ ವ್ಯವಸ್ಥೆ ನಿಮ್ಮ ಬೆನ್ನ ಹಿಂದೆ ಬಿದ್ದಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಮದುವೆಯಾಗುವವರೆಲ್ಲರೂ, ಹುಟ್ಟಿದ ಮಕ್ಕಳೆಲ್ಲರನ್ನೂ ಕಡ್ಡಾಯವಾಗಿ ನೋಂದಾಯಿಸಲೇ ಬೇಕು ಎಂಬ ಕಾನೂನೂ ಇಲ್ಲ, ಹಾಗೆ ಮಾಡದೇ ಇರುವುದರಿಂದಾಗುವ ಪರಿಣಾಮಗಳೂ ಅಷ್ಟೇನು ದೊಡ್ಡದಲ್ಲ. ಆದರೆ ಇಲ್ಲಿ ಹುಟ್ಟುವ ಮಗುವಿಗೆ ಆಸ್ಪತ್ರೆಯವರೇ ಹೆಸರನ್ನು ನೋಂದಾಯಿಸಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್ ಅನ್ನು ತೆಗೆದುಕೊಡುತ್ತಾರೆ, ಜೊತೆಗೆ ಜನ್ಮ ಪ್ರಮಾಣ ಪತ್ರವೂ ದೊರಕಿಸಿಕೊಳ್ಳಬೇಕಾದುದು ಅನಿವಾರ್ಯ.

ಕ್ರೆಡಿಟ್ ಕಾರ್ಡ್ ಬಿಲ್ಲ್ ಅನ್ನು ಮೂವತ್ತು ದಿನಗಳ ಒಳಗೆ ಕೊಡದೇ ಹೋದರೆ ದಂಡ ವಿಧಿಸಲಾಗುತ್ತದೆ, ಅವರವರ ಜಾತಕಗಳನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಆಗಾಗ್ಗೆ ಅಪ್‌ಡೇಟ್ ಮಾಡುವ ಕ್ರೆಡಿಟ್ ರೇಟಿಂಗ್‌ಗಳನ್ನು ಕಾಯ್ದುಕೊಂಡು ವರದಿ ಒಪ್ಪಿಸುವ ಸಂಸ್ಥೆಗಳಿಗೆ ನಿಮ್ಮ ತಪ್ಪನ್ನು ತೋರಿಸಿ ನಿಮ್ಮ "ಒಳ್ಳೆಯ ದಾಖಲೆಗೆ" ಮಸಿ ಬಳಿಯಲಾಗುತ್ತದೆ. ಮುಂದೆ ಹುಟ್ಟುವ ಲೋನ್‌ಗಳಿಗೆ ಹೆಚ್ಚು ಬಡ್ಡಿ ದರವನ್ನು ಕೊಡಬೇಕಾಗಬಹುದು. ಹಾಗೆಯೇ ನಿಮ್ಮ ಮನೆಗೆ ಬಂದು ಬೀಳುವ ಟ್ರಾಫಿಕ್ ಅಥವಾ ಪಾರ್ಕಿಂಗ್ ವಯಲೇಷನ್ ಟಿಕೇಟುಗಳ ಹಿಂದೆ ಅಥವಾ ಕೆಳಗೆ ನೀವು ಸರಿಯಾದ ಸಮಯಕ್ಕೆ ದಂಡ ಕಟ್ಟದಿದ್ದಲ್ಲಿ ನಿಮ್ಮನ್ನು ಅರೆಷ್ಟು ಮಾಡಬಹುದು ಅಥವಾ ನಿಮ್ಮ ಡ್ರೈವಿಂಗ್ ಪ್ರಿವಿಲೇಜನ್ ತೆಗೆದು ಹಾಕಬಹುದು ಎಂದು ಬರೆದಿರುತ್ತದೆ. ಇವು ಕೇವಲ ಸ್ಯಾಂಪಲ್ಲ್ ಅಷ್ಟೇ - ಈ ಸಾಲಿಗೆ ಸೇರಬೇಕಾದವುಗಳು ಅನೇಕಾನೇಕ ಇವೆ. ಇಂಥ ಒಂದು ವ್ಯವಸ್ಥೆಯಲ್ಲಿ ಯಾರು ತಾನೇ ಸರಿಯಾಗಿ ನಡೆದುಕೊಳ್ಳದೇ ಇರುವುದು ಸಾಧ್ಯ? ಬರೀ ರೂಲ್ಸ್‌ಗಳು ಇದ್ದರಷ್ಟೇ ಸಾಲದು, ಅವುಗಳನ್ನು ಇಂಪ್ಲಿಮೆಂಟ್ ಮಾಡುವ ಶುದ್ಧ ವ್ಯವಸ್ಥೆಯೂ ಇರಬೇಕು ಎನ್ನುವುದನ್ನು ನಾನೂ ಒಂದು ಕಾಲದಲ್ಲಿ ಬೆನ್ನು ತಟ್ಟುತ್ತಿದ್ದೆ, ಆದರೆ ಈಗ ಅದು ಹರ್ಯಾಸ್‌ಮೆಂಟ್ ಆಗಿ ತೋರುತ್ತದೆ.

ಇಲ್ಲಿನ ಒಂದು ದೊಡ್ಡ ಬ್ಯಾಂಕ್ ಒಂದರಲ್ಲಿ ಅವರು ಮಾಡಿದ ತಪ್ಪಿನ ಸಲುವಾಗಿ ನನ್ನ ಯಾವತ್ತೂ ಉಪಯೋಗಿಸದ ಕ್ರೆಡಿಟ್ ಕಾರ್ಡ್ ಒಂದಕ್ಕೆ $1.50 ಚಾರ್ಜ್ ಮಾಡಿಕೊಂಡಿದ್ದರು. ನಾನು ಬ್ಯಾಂಕಿನ ಕಷ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಹತ್ತು-ಹದಿನೈದು ನಿಮಿಷಗಳ ಮಾತುಕಥೆಯ ನಂತರ ಆ ತುದಿಯಲ್ಲಿದ್ದ ಲಲನಾಮಣಿ ’ಆಗಲಿ ಸರ್, ಎಲ್ಲ ಸರಿ ಹೋಗುತ್ತದೆ’ ಎಂದ ಮಾತ್ರಕ್ಕೆ ಅದು ಸರಿ ಎಂದು ನಂಬಿಕೊಂಡು ಸುಮ್ಮನಿದ್ದೆ. ಆದರೆ ಇಪ್ಪತ್ತೈದು ದಿನಗಳ ಬಳಿಕ ನನಗೊಂದು ಬಿಲ್ ಬಂತು, ಅದರಲ್ಲಿ ಬ್ಯಾಲೆನ್ಸ್ $1.50 ಇನ್ನೂ ಹಾಗೇ ಇದೆ! ಇನ್ನೆರಡು ದಿನಗಳಲ್ಲಿ ಕಟ್ಟದಿದ್ದರೆ 148% (no kidding) ಬಡ್ಡಿ ಹಾಕುತ್ತೇವೆ ಎಂಬ ಹೇಳಿಕೆ ಬೇರೆ. ಒಡನೆಯೇ ನನಗೆ ಇನ್ನೇನನ್ನೂ ಮಾಡಲು ತೋಚದೆ, ಕೂಡಲೇ ಲಾಗಿನ್ ಆಗಿ ಒಂದೂವರೆ ಡಾಲರ್ ಅನ್ನು ಕಟ್ಟಿದೆ, ಎಲ್ಲವೂ ಸರಿ ಹೋಯಿತು. ನಾನು ಬ್ಯಾಂಕಿಗೆ ಹೋಗಿ (ಅರ್ಧ ದಿನದ ಕೆಲಸ), ಅಥವಾ ಕಷ್ಟಮರ್ ಸರ್ವೀಸ್ ಅನ್ನು ಮತ್ತೆ ಸಂಪರ್ಕಿಸಿ (ಅರ್ಧ ಘಂಟೆಯ ಕೆಲಸ) ’ಇದು ನಿಮ್ಮದೇ ತಪ್ಪು, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ’ ಎಂದು ಕೂಗಬಹುದಿತ್ತು. ಆ ಕಡೆಯಲ್ಲಿರುವ ಮತ್ತಿನ್ಯಾವುದೋ ಕಷ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್‌ಗೆ ನನ್ನ ಮೇಲೆ ಕರುಣೆ ಇದೆ ಎಂದುಕೊಳ್ಳಲೇ? ಆಕೆಗೆ ಬೈದರೆ ನಾವೇ ಮೂರ್ಖರು - she has nothing to lose - ನಾವು ಇಲ್ಲಿ ಒಂದು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆಯೇ ವಿನಾ ಆಕೆಯ ವಿರುದ್ಧವಲ್ಲ. ಆಕೆಗೆ ನೀವು ಒರಟಾಗಿ ನಡೆದುಕೊಂಡರೆ ಆಕೆ ಕೆಲಸ ಮಾಡುವುದೇ ಇಲ್ಲ, ಏನು ಮಾಡುತ್ತೀರಿ? (ಹಿಂದೆ ದೊಡ್ಡ ಬ್ಯಾಂಕ್ ಒಂದರಲ್ಲಿ ಹೀಗೆ ನನಗೆ ಅನುಭವವೂ ಆಗಿದೆ, ಅಲ್ಲಿನ ಮ್ಯಾನೇಜರುಗಳು ಅಪಾಲಜಿ ಪತ್ರವನ್ನು ಕಳಿಸುವ ಮಟ್ಟಿಗೆ). So, ಪುರುಸೊತ್ತಿಲ್ಲದ ನಾನು ಇತ್ತೀಚೆಗೆ - pick your battles ಅಂಥಾರಲ್ಲ ಹಾಗೆ ಮೆತ್ತಗಾಗಿ ಹೋಗಿದ್ದೇನೆ. ನನ್ನ ಬಳಿ ಅರ್ಧ ದಿನವಿರಲಿ, ಅರ್ಧ ಘಂಟೆಯೂ ಇಲ್ಲ ಇವರ ವಿರುದ್ಧ ಹೋರಾಡಲು ಅದಕ್ಕೋಸ್ಕರವೇ ಒಂದೂವರೆ ಡಾಲರನ್ನು ದಾನ ಮಾಡಿದ್ದು.

ಇಲ್ಲಿ ಚಿಪ್ಸ್ ಮಾಡಿ ಮಾರುವುದರಿಂದ ಹಿಡಿದು ಸಗಣಿ ಮಾರುವವರ ವರೆಗೆ ಎಲ್ಲರೂ ಒಂದು ಕಾರ್ಪೋರೇಷನ್ನುಗಳು, ಈ ಕಾರ್ಪೋರೇಷನ್ನುಗಳ ಬೆನ್ನೆಲುಬಾಗಿ "ವ್ಯವಸ್ಥೆ"ಗಳಿವೆ, ಪ್ರಾಸೆಸ್ಸುಗಳಿವೆ. ಕಾರ್ಪೋರೇಷನ್ನಿನಲ್ಲಿ ಇಬ್ಬರೇ ಎಂಪ್ಲಾಯಿಗಳು ಇದ್ದರೂ ಅವರು ದುಡ್ಡನ್ನು ಹೀಗೇ ಖರ್ಚು ಮಾಡಬೇಕು, ಬಿಡಬೇಕು ಎಂಬ ಕಟ್ಟಲೆಗಳಿವೆ. ಹೆಚ್ಚು ಬುದ್ಧಿವಂತ ಜನರಿರುವ ಪ್ರಪಂಚದಲ್ಲಿ ಹೆಚ್ಚು-ಹೆಚ್ಚು ಪ್ರಾಸೆಸ್ಸುಗಳು ಹುಟ್ಟಿಕೊಂಡಿವೆ. ವ್ಯವಸ್ಥೆ ದಿನದಿಂದ ದಿನಕ್ಕೆ ಬಹಳೇ ಬದಲಾಗುತ್ತಿದೆ. ಏರ್‍‌ಪೋರ್ಟಿನಲ್ಲಿ ಪ್ರತಿಯೊಬ್ಬರ ಶೂ-ಚಪ್ಪಲಿ ಕಳಚಬೇಕು ಎಂಬ ನಿಯಮ ಇನ್ನೂ ಎರಡು ವರ್ಷ ತುಂಬದ ನನ್ನ ಮಗಳಿಗೂ ಅನ್ವಯವಾಗುತ್ತದೆ. ಎಲ್ಲಿ ಹೋದರೂ ನಿಯಮ, ಕಾನೂನು, ಪ್ರಾಸೆಸ್ಸು, ವ್ಯವಸ್ಥೆ - ಇವೇ ನಮ್ಮನ್ನು ಹೆಚ್ಚು ಸ್ಟ್ರೆಸ್‌ಗೆ ಒಳಪಡಿಸುವುದು ಹಾಗೂ ಅವುಗಳಿಂದ ಬಿಡುಗಡೆ ಎಂಬುದೇ ಇಲ್ಲವೇನೋ ಎಂದು ಪದೇ ಪದೇ ಅನ್ನಿಸುವುದು.

ಹಾಗಂತ ನಾನು ಶಿಲಾಯುಗದ ಬದುಕನ್ನು ಸಮರ್ಪಿಸುವವನಲ್ಲ. ಒಂದು ಕಾಲದಲ್ಲಿ ಬಕಪಕ್ಷಿಯಂತೆ ಕ್ರೆಡಿಟ್ ಕಾರ್ಡುಗಳು ಸಿಗುವುದನ್ನು ಕಾತರದಿಂದ ನೋಡುತ್ತಿದ್ದವನಿಗೆ, ಹಾಗೆ ಸಿಕ್ಕ ಮೊಟ್ಟ ಮೊದಲ ಕಾರ್ಡ್‌ನಲ್ಲಿ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗು ಎಂದು ತಾಕೀತು ಮಾಡಿದ ನನ್ನ ರೂಮ್‌ಮೇಟ್ ಒತ್ತಾಯಕ್ಕೆ ಬಾಗಿ ಸಂಭ್ರಮಿಸಿದವನಿಗೆ ಇಂದು ಕ್ರೆಡಿಟ್ಟು ಕಾರ್ಡುಗಳನ್ನು ಉಪಯೋಗಿಸಲು ಮನಸೇ ಬಾರದಾಗಿದೆ. ಅವರು ಕೊಡುವ ಫ್ರೀ ಮೈಲುಗಳಾಗಲೀ, ಡಿವಿಡೆಂಡು ಡಾಲರುಗಳಾಗಲೀ, ಪಾಯಿಂಟುಗಳಾಗಲೀ ಬೇಡವೇ ಬೇಡ ಎನ್ನಿಸಿದೆ. ನನ್ನ ಡೆಬಿಟ್ಟ್ ಕಾರ್ಡ್ ಅನ್ನು ಉಪಯೋಗಿಸಿ ಕಾಲು ಇರುವಷ್ಟೇ ಹಾಸಿಗೆ ಚಾಚಿದರೆ ಸಾಕೆ? ಎಂದು ಕೇಳಿಕೊಂಡು ಹಾಗೇ ಅನುಸರಿಸಿಕೊಂಡು ಬಂದಿದ್ದೇನೆ. ಆದರೆ, ಏಳೆಂಟು ಕ್ರೆಡಿಟ್ ಕಾರ್ಡ್ ಇರುವ ನಾನು ಪ್ರತಿ ತಿಂಗಳಿಗೊಮ್ಮೆ ಇಂಟರ್‌ನೆಟ್ ನಲ್ಲಿ ಅವುಗಳ ಬಿಲ್ ಬ್ಯಾಲೆನ್ಸ್ ಅನ್ನು ಪರೀಕ್ಷಿಸದೇ ಇರುವ ಹಾಗಿಲ್ಲ. ಪೇಪರ್ ಸ್ಟೇಟ್‌ಮೆಂಟ್ ಕಳಿಸಲು ಏರ್ಪಾಟು ಮಾಡಿದರೆ ಪ್ರತಿ ದಿನಕ್ಕೆ ಕಂತೆಗಟ್ಟಲೆ ಬರುವ ಪೋಷ್ಟಲ್ ಮೇಲ್‌ಗಳನ್ನು ಓದುವ ವ್ಯವಧಾನವಿಲ್ಲ, ಹಾಗೆ ಮಾಡುವುದು ಬೇಡವೆಂದರೆ ಆನ್‌ಲೈನ್ ನಲ್ಲಿ ಬಿಲ್ ಬ್ಯಾಲೆನ್ಸ್ ನೋಡದೇ ವಿಧಿ ಇಲ್ಲ. ಒಂದು ತಿಂಗಳು ಅವರೇನಾದರೂ ತಪ್ಪು ಚಾರ್ಜು ಉಜ್ಜಿಕೊಂಡರೂ ಅದರ ಫಲಾನುಭವಿ ನಾನೇ!

ಹೀಗೆ ದಿನೇದಿನೇ ಮನಸ್ಸು ಈ ವ್ಯವಸ್ಥೆಯಿಂದ ದೂರವಾಗ ಬಯಸುತ್ತದೆ, ಯಾವ ವ್ಯವಸ್ಥೆಗೂ ಬಗ್ಗದ ನಮ್ಮೂರು ಮೊದಮೊದಲು ತಡೆಯಲಸಾಧ್ಯವೆಂದೆನಿಸಿದರೂ ಅಲ್ಲಿ ಮಾನಸಿಕವಾಗಿ ನೆಮ್ಮದಿ ಇರುತ್ತದೆ. ಇಲ್ಲಿನ ವ್ಯವಸ್ಥೆ ತರುವ ಭಾಗ್ಯಗಳಲ್ಲಿ ರಸ್ತೆಯಲ್ಲಿ ಅಪಘಾತ-ಅವಘಡ ಸಂಭವಿಸಿದರೆ ಸಿಗುವ ತುರ್ತು ಚಿಕಿತ್ಸೆಯೂ ಒಂದು, ಆದರೆ ಹಾಗೆ ಎಂದೋ ಆಗಬಹುದಾದಂತಹ ಅಪಘಾತದ ಫಲಾನುಭವಕ್ಕೆ ಇಡೀ ಜೀವನವನ್ನೇ ಸ್ಟ್ರೆಸ್‌ನಲ್ಲಿ ಕಳೆಯಲಾಗುತ್ತದೆಯೇ? ಅಥವಾ ’ಸಾಯೋ(ರಿ)ದಿದ್ದರೆ ಎಲ್ಲಿದ್ದರೇನು?’ ಎಂದು ಕೇಳಿಕೊಳ್ಳುವ ನಮ್ಮೂರಿನ ಜಾಣ್ಣುಡಿ ಅಪ್ಯಾಯಮಾನವಾಗುತ್ತದೆಯೇ?

Sunday, October 28, 2007

"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ

ಕಾರ್ಪೋರೇಷನ್ನುಗಳ ಜಗತ್ತಾದ ಅಮೇರಿಕದ ಬಗ್ಗೆ, ಇಲ್ಲಿನ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಪ್ರಪಂಚದ ಯಾವ ಮೂಲೆಗೆ ಹೋದರೂ ಅಮೇರಿಕದ ದೊಡ್ಡ ಕಂಪನಿಗಳನ್ನು, ಅವುಗಳ ಲಾಭಗಳನ್ನು ಕಂಡು ಅಸೂಯೆಯಿಂದ ಜನ ನೋಡುವುದನ್ನು ಬೇಕಾದಷ್ಟು ಕಡೆ ಗಮನಿಸಬಹುದು. ಅಮೇರಿಕದ ಅರ್ಥ ವ್ಯವಸ್ಥೆಯ ಜೀವಾಳವೇ ಈ ದೊಡ್ಡ ಕಂಪನಿಗಳು ಆಯಿಲ್ಲಿನಿಂದ ಹಿಡಿದು ಸಾಫ್ಟ್‌ವೇರುಗಳವರೆಗೆ, ಫ್ಯಾಷನ್ ಉದ್ಯಮದಿಂದ ಹಿಡಿದು ಹೋಟೇಲ್ ಉದ್ಯಮಗಳವರೆಗೆ ಪ್ರತಿಯೊಂದೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿದೆ. ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಇಲ್ಲಿನ ಅರ್ಥ ವ್ಯವಸ್ಥೆ ಎಷ್ಟೋ ದೇಶಗಳಿಗೆ ಮಾದರಿ ಹಾಗೂ ಇಲ್ಲಿ ತುಸು ತೊಡಕಾದರೂ ಉಳಿದ ದೇಶಗಳ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಹೆಚ್ಚು. ಇಂಥಾ ಒಂದು ವ್ಯವಸ್ಥೆಯಲ್ಲಿ ಚೇತರಿಸಿಕೊಳ್ಳುತ್ತಿರುವುದು ಫಾರ್ಮಾಸ್ಯೂಟಿಕಲ್ಸ್ ಇಂಡಸ್ಟ್ರಿ - ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡುವ ನನ್ನಂಥವರೂ ಬೇಡವೆಂದರೂ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಧಾರಿಗಳೇ ಆದ್ದರಿಂದ ನಾನು ಸಾಮಾನ್ಯವಾಗಿ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಬಗ್ಗೆ ಬರೆಯುವುದು ಕಡಿಮೆ, ಆದರೆ ಈ ದಿನ ಸುಮ್ಮನೇ ಹಾಗೆ ಒಂದು ವಿಚಾರವನ್ನು ಹರಿಯಬಿಟ್ಟರೆ ಹೇಗೆ ಎಂದೆನಿಸಿತು.

ಫ್ಯಾಕ್ಟ್:
- ಗೂಗಲ್‌ನಂತಹ ಕಂಪನಿಯವರ ಮಾರ್ಕೇಟ್ ಕ್ಯಾಪಿಟಲ್ ಸುಮಾರು 210 ಬಿಲಿಯನ್ ಡಾಲರುಗಳು (ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ)
- ಎಕ್ಸಾನ್ ಮೋಬಿಲ್ ಕಂಪನಿ ಕಳೆದ ವರ್ಷ (2006) ರಲ್ಲಿ ಸುಮಾರು 40 ಬಿಲಿಯನ್ ಡಾಲರುಗಳ ವಾರ್ಷಿಕ ಆದಾಯವನ್ನು ದಾಖಲಿಸಿದೆ
- ಮೈಕ್ರೋಸಾಫ್ಟ್ ಕಂಪನಿಗೆ ಇತ್ತೀಚೆಗೆ (ಸೆಪ್ಟೆಂಬರ್) ಯೂರೋಪಿಯನ್ ಯೂನಿಯನ್‌ವರು 690 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಮರ್ಕ್ ಕಂಪನಿಗೆ ಎರಡು ವರ್ಷಗಳ ಹಿಂದೆ (2005) ಟೆಕ್ಸಾಸ್ ಜ್ಯೂರಿ Vioxx ಮಾತ್ರೆಗಳನ್ನುಪಯೋಗಿಸಿ ಅಸುನೀಗಿದ ವ್ಯಕ್ತಿಯ ಕುಟುಂಬಕ್ಕೆ 253 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಎನ್ರಾನ್ ಹಾಗೂ ಎಮ್‌ಸಿಐ ಕಂಪನಿಗಳಲ್ಲಿ ಹಣ ತೊಡಗಿಸಿ ಸಹಸ್ರಾರು ಜನ ಹಣವನ್ನು ಕಳೆದುಕೊಂಡರು


ಹೀಗೆ ಬರೆದುಕೊಂಡು ಹೋದರೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಆಳ ಬಹು ದೊಡ್ಡದು. ಪ್ರಪಂಚದ ಎಲ್ಲರಿಗೂ ತಮ್ಮ ಅಂಕಿ-ಅಂಶಗಳನ್ನು ಮುಕ್ತವಾಗಿ ಹಂಚುತ್ತೇವೆ, ಕಂಪನಿಯಲ್ಲಿ ಹಣ ತೊಡಗಿಸಿದವರೇ ನಿಜವಾದ ಕಂಪನಿಯ ಓನರುಗಳು, ಎಲ್ಲರ ಒಳಿತಿಗಾಗೇ ನಾವು ದುಡಿಯುವುದು ಎಂದೇನೇನೆಲ್ಲ ಸಾರಿದರೂ ಪ್ರತಿಯೊಂದು ಕಂಪನಿಗೆ ಅವರವರದೇ ಆದ ರಹಸ್ಯಗಳಿವೆ. ಅದು ತಮ್ಮ ಕಂಪನಿ ಹುಟ್ಟು ಹಾಕಿದ ಪೇಟೆಂಟ್ ಇರಬಹುದು, ಕೆಮಿಕಲ್ ಫಾರ್ಮುಲಾ ಇರಬಹುದು ಅಥವಾ ಬಿಸಿನೆಸ್ ಸ್ಟ್ರಾಟೆಜಿ ಇರಬಹುದು. ಪ್ರತಿದಿನವೂ ತಮ್ಮ ಜೀವಂತಿಕೆಯನ್ನು ಜಗತ್ತಿಗೆ ಸಾರುವುದರ ಜೊತೆಗೆ ಪ್ರತಿಯೊಂದು ಕ್ವಾರ್ಟರ್‍ಗೂ ಅನಲಿಸ್ಟ್‌ಗಳ ಪ್ರಕಾರ ತಮ್ಮ ನಂಬರುಗಳನ್ನು ಹೊರಹಾಕಿ ಮಾರ್ಕೆಟ್ಟಿನ ಒತ್ತಡಕ್ಕೆ ಸಿಲುಕುವ ಸವಾಲೂ ಕೂಡ ಈ ಕಂಪನಿಗಳಿಗಿದೆ.

***

’ಓಹ್, ಇಂಡಿಯಾದಲ್ಲಾದರೆ ಈ ಮಾತ್ರೆಗಳನ್ನು ಮುಕ್ತವಾಗಿ ಎಲ್ಲರಿಗೂ ಫ್ರೀ ಆಗಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಘಟಕಗಳಲ್ಲೂ ಹಂಚುತ್ತಾರೆ, ಆದರೆ ಆಮೇರಿಕದಲ್ಲೇಕೆ ಇಷ್ಟೊಂದು ಬೆಲೆ?’ ಎನ್ನುವುದು ಇಲ್ಲಿಗೆ ಬಂದ ಹಲವರ ಸಹಜವಾದ ಪ್ರಶ್ನೆ. ಅವರು ಹೇಳುವ ಮಾತೂ ನಿಜ: ಮಾಲಾ-ಡಿ ಅಂತಹ ಸಂತಾನ ನಿರೋಧಕ ಮಾತ್ರೆಗಳಾಗಲೀ, ಸೆಪ್ಟ್ರಾನ್‌ನಂತಹ ಲಘು ಆಂಟಿಬಯಾಟಿಕ್‌ಗಳಾಗಲೀ ಬಹಳ ಕಡಿಮೆ ಬೆಲೆಗೆ ಅಲ್ಲಿ ಸಿಕ್ಕೀತು, ಆದರೆ ಅವುಗಳ ಬೆಲೆ ಇಲ್ಲಿ ಖಂಡಿತ ದುಬಾರಿ - ಏನಿಲ್ಲವೆಂದರೂ ಒಂದು ಡೋಸ್ ಮಾತ್ರೆಗೆ ಕನಿಷ್ಟ 25 ಡಾಲರ್ ಆಗಬಹುದು, ಅಂದರೆ ಭಾರತೀಯ ರುಪಾಯಿಯಲ್ಲಿ ಸಾವಿರವಾದೀತು. ಇಲ್ಲಿನ ವ್ಯವಸ್ಥೆ ಸರಿ ಇಲ್ಲ, ಎಲ್ಲ ಕಡೆ ಚೀಪ್ ಆಗಿ ಸಿಗುವ ಮಾತ್ರೆಗಳ ಬೆಲೆಯನ್ನು ಇಲ್ಲಿನವರು ಹೆಚ್ಚಿಸಿ ದುಡ್ಡು ಮಾಡುತ್ತಾರೆ ಆದ್ದರಿಂದಲೇ ಈ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಣ ಮಾಡಿ ಮುಂದುಬರುವುದು ಎಂದು ಏಕ್‌ದಂ ನಿರ್ಧಾರಕ್ಕೆ ಬಂದು ಬಿಟ್ಟೀರಿ, ಇಲ್ಲಿನ ವ್ಯವಸ್ಥೆಯನ್ನು ಪೂರ್ತಿ ಅರಿಯುವವರೆಗೆ ಆ ರೀತಿ ತೆಗೆದುಕೊಂಡ ನಿರ್ಣಯಗಳಲ್ಲಿ ಯಾವ ಹುರುಳೂ ಇಲ್ಲ. ಹತ್ತು ವರ್ಷದ ಹಿಂದೆ ಫಾರ್ಮಾ ಕಂಪನಿಗಳು ಹತ್ತಿರಹತ್ತಿರ ವರ್ಷಕ್ಕೆ 10-15 ಬಿಲಿಯನ್ ಡಾಲರುಗಳನ್ನು R&D Spending ಗಾಗಿ ಬಳಸುತ್ತಿದ್ದವು, ಆದರೆ ಇಂದು ಏನಿಲ್ಲವೆಂದರೂ ವರ್ಷಕ್ಕೆ 40 ಬಿಲಿಯನ್‌ಗಿಂತಲೂ ಹೆಚ್ಚು ಖರ್ಚು ಮಾಡುತ್ತಿವೆ (Source: Economist), ಹಾಗೆಯೇ ಒಂದು ನೋವು ನಿವಾರಕ ಮಾತ್ರೆಯಾಗಲೀ, ಕೊಲೆಷ್ಟರಾಲ್ ಕಡಿಮೆ ಆಗುವ ಮಾತ್ರೆಗಳಾಗಲೀ ಮಾರುಕಟ್ಟೆಗೆ ಬರಲು ಕಂಪನಿಯವರು ಸುಮಾರು 600-800 ಮಿಲಿಯನ್ ಡಾಲರುಗಳನ್ನು ಖರ್ಚು ಮಾಡುತ್ತಾರೆ. ಒಮ್ಮೆ ಹಾಗೆ ಮಾರುಕಟ್ಟೆಗೆ ಬಂದ ಮೇಲೂ ಈ ಔಷಧಿ-ಮಾತ್ರೆಗಳು ತುಂಬಾ ಕಂಟ್ರೋಲ್ಡ್ ಆಗಿ ಬಳಸಲ್ಪಡುತ್ತವೆ ಜೊತೆಗೆ ತುಂಬಾ ರೆಗ್ಯುಲೇಟೆಡ್ ವ್ಯವಸ್ಥೆಯಲ್ಲಿಯೇ ವ್ಯವಹಾರ ಮುಂದುವರೆಯುತ್ತದೆ.

ಪ್ರತಿಯೊಂದು ದೇಶ-ಖಂಡದಲ್ಲಿಯೂ ಅದರದ್ದೇ ಆದ ಒಂದು ಫಾರ್ಮಾಸ್ಯೂಟಿಕಲ್ ವ್ಯವಸ್ಥೆ ಇರುತ್ತದೆ. ಕೆಲವು ದೇಶಗಳಲ್ಲಿ ಮುಕ್ತ ಸಂಶೋಧನೆಗೆ ಅವಕಾಶ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಮುಕ್ತ ಮಾರುಕಟ್ಟೆ ಇದ್ದಿರಬಹುದು. ಅಫಘಾನಿಸ್ತಾನದಂತಹ ದೇಶಗಳಲ್ಲಿ ಮನೆಮನೆಯಲ್ಲಿ ಅಫೀಮು/ಗಾಂಜಾ ಬೆಳೆದರೆ ಇನ್ನು ಕೆಲವು ದೇಶಗಳಲ್ಲಿ ಹಾಗೆ ಇಟ್ಟುಕೊಳ್ಳುವುದು ಕಾನೂನು ಬಾಹಿರವಾಗಬಹುದು. ಹೀಗೆ ಹಲವು ಸೂತ್ರಗಳಿಗೆ ಕುಣಿಯುವ ಔಷಧಿ ಮಾರುಕಟ್ಟೆ ಹಾಗೂ ಮಾತ್ರೆಗಳನ್ನು ಕೇವಲ ಎರಡು ಕರೆನ್ಸಿಗಳಲ್ಲಿ ಅಳೆದು ನೋಡಿ ಅಲ್ಲಿ ತುಂಬಾ ಸಸ್ತಾ ಇಲ್ಲಿ ತುಂಬಾ ದುಭಾರಿ ಎನ್ನಲಾದೀತೆ? ಜೊತೆಗೆ ಇಲ್ಲಿ ಒಂದು ಮಾತ್ರೆಯನ್ನು ಸೇವಿಸಿ - ಸೇವಿಸಿದವನದೇ ತಪ್ಪು ಇದ್ದರೂ - ಆತ ಕಂಪನಿಯ ಮೇಲೆ ಮಿಲಿಯನ್ ಡಾಲರುಗಳ ಲಾ ಸೂಟ್ ಹಾಕುವ ಹೆದರಿಕೆ ಇದೆ, ಮತ್ತೊಂದು ಕಡೆ ಸತ್ತವರು ಹೇಗೆ ಸತ್ತರು ಎಂದು ಕೇಳುವ/ಹೇಳುವ ವ್ಯವಸ್ಥೆಯೂ ಇದ್ದಿರಲಾರದು. ಯಾವುದೇ ಒಂದು ಉತ್ಪನ್ನದಲ್ಲಿ ಏನಾದರೂ ಹೆಚ್ಚು-ಕಡಿಮೆ ಕಾಣಿಸಿಕೊಂಡರೆ ಇಲ್ಲಿ ಅಂತಹ ಉತ್ಪನ್ನವನ್ನು ರೀಕಾಲ್ ಮಾಡುವ ವ್ಯವಸ್ಥೆ ಇದೆ, ಉದಾಹರಣೆಗೆ ಎರಡು ವರ್ಷಗಳ ಹಿಂದೆ ನಾನೇ ಕೊಂಡು ಉಪಯೋಗಿಸಿದ ಮಕ್ಕಳಿಗೆ ಹಾಕುವ ಬಿಬ್ ಒಂದನ್ನು ಮೊನ್ನೆ ಟಿವಿಯ ವರದಿಯಲ್ಲಿ ತೋರಿಸಿದರೆಂದು - ಅದರಲ್ಲಿ ಲೆಡ್ ಪೇಂಟ್ ಇರಬಹುದಾದ ಬಗ್ಗೆ -ಇನ್ಯಾವುದೋ ಅಂಗಡಿಯೊಂದಕ್ಕೆ ತೆಗೆದುಕೊಂಡು ಹೋಗಿ ಕೊಟ್ಟರೆ ಅದರ ಪೂರ್ಣ ಬೆಲೆಯನ್ನು ಒಂದೂ ಪ್ರಶ್ನೆಯನ್ನು ಕೇಳದೇ ಹಿಂತಿರುಗಿಸಿದರು. ಹೀಗೆ ಒಂದು ಉತ್ಪನ್ನವನ್ನು ಅದೇ ಕೆಮಿಕಲ್ ಕಂಪೋಸಿಷನ್ ಇದ್ದ ಮಾತ್ರಕ್ಕೆ ಎರಡು ದೇಶಗಳ ಬೇರೆ ಬೇರೆ ವ್ಯವಸ್ಥೆಯಲ್ಲಿ ತೂಗಿ ನೋಡಲು ಬರೋದಿಲ್ಲ ಎನ್ನುವುದು ನನ್ನ ಅನಿಸಿಕೆ. ಇನ್ಯಾರಾದರೂ ನಿಮಗೆ ಭಾರತದಲ್ಲಿ ತಲೆ ನೋವಿನ ಮಾತ್ರೆ ರೂಪಾಯಿಗೆ ಒಂದು ಸಿಗುತ್ತದೆ ಎಂದು ಹೇಳಿದರೆ ನೀವು ಅವರಿಗೆ ಇಲ್ಲಿ ಗ್ಯಾಸೋಲಿನ್ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಮರು ಉತ್ತರ ಕೊಡಬಹುದು!

ಫಾರ್ಮಾಸ್ಯೂಟಿಕಲ್ ಕಂಪನಿಗಳವರು ಏನೇನನ್ನಾದರೂ ಮಾಡಿ ತಮ್ಮ ತಮ್ಮ ಮಾತ್ರೆ-ಔಷಧಿಗಳನ್ನು ಹೊರತರಬಹುದು - ಆದರೂ ಅಮೇರಿಕನ್ ವ್ಯವಸ್ಥೆಯಲ್ಲಿ ಅವರು ಬಹಳ ಕಷ್ಟನಷ್ಟವನ್ನು ಅನುಭವಿಸೋದಂತೂ ನಿಜ. ಇಷ್ಟು ಕಷ್ಟಪಟ್ಟು ಹೊರಡಿಸಿದ ಉತ್ಪನ್ನವನ್ನು ಉದಾಹರಣೆ ಏಡ್ಸ್ ಔಷಧಿ/ಮಾತ್ರೆಗಳನ್ನು ಆಫ್ರಿಕಾ ಖಂಡದಲ್ಲಿ ಕಾಲು ಭಾಗ ಜನರಿಗೆ ಏಡ್ಸ್ ಇದೆಯೆಂದ ಮಾತ್ರಕ್ಕೆ ಅಲ್ಲಿ ಪುಕ್ಕಟೆ ಮಾತ್ರೆಗಳನ್ನು ಹಂಚಲು ಹೇಗೆ ಸಾಧ್ಯ?

***
ಈ ರೀತಿ ಜನರ ಮನಸ್ಸಿನಲ್ಲಿ ಆಲೋಚನೆಗಳು ಬರಲು ಬೇಕಾದಷ್ಟು ಕಾರಣಗಳಿವೆ. ಪ್ರಿನ್ಸೆಸ್ ಡಯಾನಾ ಸತ್ತಳೆಂದು ಭಾರತದ ವೃತ್ತಪತ್ರಿಕೆಗಳು ವರದಿ ಮಾಡುವಾಗ ಆಕೆ ಕುಳಿತಿದ್ದ ಕಾರು ಅತಿವೇಗದಿಂದ ಚಲಿಸುತ್ತಿತ್ತು ಎಂದು ಬರೆಯುತ್ತಾ ಆಕೆ ಕುಳಿತ ಕಾರು ಘಂಟೆಗೆ ನೂರಾ ಇಪ್ಪತ್ತು (ಅಂದಾಜು) ಕಿಲೋ ಮೀಟರ್ ಓಡುತ್ತಿತ್ತು ಎಂದು ಭಾರತದಲ್ಲಿ ಘಂಟೆಗೆ ಅರವತ್ತು ಕಿಲೋಮೀಟರ್ ವೇಗದಲ್ಲಿ ಓಡಾಡುವ ಜನರಿಗೆ ದಂಗುಬಡಿಸುತ್ತಾರೆ, ಆವರಣದಲ್ಲಿ ಅಲ್ಲಿನ ಸ್ಪೀಡ್‌ ಲಿಮಿಟ್ ಅನ್ನು ಕೊಟ್ಟರೆ ಏನಿಲ್ಲವೆಂದರೂ ಮುಂದುವರೆದ ದೇಶದ ಹೈವೇಗಳಲ್ಲಿ ಘಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಜನರು ಕಾರು ಚಲಿಸುವುದು ಸರ್ವೇ ಸಾಮಾನ್ಯ ಎನ್ನುವ ಅಂಶ ಓದುಗರಿಗೆ ಮನವರಿಕೆಯಾದೀತು. ಇತ್ತೀಚೆಗೆ ಒಂದು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ ಒಬ್ಬ ಅಂಕಣಕಾರರು Al Gore ಗೆ ನೊಬೆಲ್ ಶಾಂತಿ ಪಾರಿತೋಷಕ ಬಂದಿದ್ದರ ಬಗ್ಗೆ ಬರೆಯುತ್ತಾ ಆಲ್ ಗೊರೆ ಎಂದು ಬರೆದಿದ್ದನ್ನು ನೋಡಿ ನಗು ಬಂತು. ನಾವೆಲ್ಲ ಶಾಲಾ ಕಾಲೇಜಿನಲ್ಲಿದ್ದ ದಿನಗಳಲ್ಲಿ ಬಿಬಿಸಿ ಅಥವಾ ಇತರ ಸುದ್ದಿಗಳನ್ನು ಕೇಳಿ ವಿದೇಶಿ ಹೆಸರುಗಳನ್ನು ಸರಿಯಾಗಿಯೇ ಉಚ್ಚರಿಸುತ್ತಿದ್ದೆವು. ಒಬ್ಬ ಅಂಕಣಕಾರ ’ಗೊರೆ’ ಎಂದು ಬರೆಯುತ್ತಾರೆಂದರೆ ಅವರು ರೆಫೆರೆನ್ಸ್ ಮಾಡಿರುವ ವಿಷಯ ಕೇವಲ ಇಂಟರ್‌ನೆಟ್‌ಗೆ ಮಾತ್ರ ಸೀಮಿತ ಎಂದು ಅನುಮಾನ ಬರುತ್ತದೆ. 1988 ರಲ್ಲಿ Seoul ನಲ್ಲಿ ಓಲಂಪಿಕ್ಸ್ ಆದಾಗ ಭಾರತದ ಮಾಧ್ಯಮಗಳು ಮೊದಮೊದಲು "ಸಿಯೋಲ್" ಎಂದು ವರದಿ ಮಾಡಿ ನಂತರ "ಸೋಲ್" ಎಂದು ತಿದ್ದಿಕೊಂಡಿದ್ದವು. ಹೆಸರಿನಲ್ಲೇನಿದೆ ಬಿಡಿ, ಅದು ನಾಮಪದ ಯಾರು ಹೇಗೆ ಬೇಕಾದರೂ ಉಚ್ಚರಿಸಬಹುದು ಬಳಸಬಹುದು, ಆದರೆ ನಮ್ಮ ವರದಿಗಾರರು ಅಲ್ಲಿಲ್ಲಿ ಕದ್ದು ವಿಷಯವನ್ನು ಪೂರ್ತಿ ಗ್ರಹಿಸದೇ ಮಾಡುವ ತಪ್ಪುಗಳಿಗೆ ಅಮಾಯಕ ಜನರು ಬಲಿಯಾಗಬೇಕಾಗುತ್ತದೆ ಎನ್ನುವುದು ನನ್ನ ಕಳಕಳಿ.

"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ - ಆದ್ದರಿಂದ "ಆ ದೇಶ" ಸರಿ ಇಲ್ಲ - ಎನ್ನುವ ಮಾತುಗಳು ಇನ್ನಾದರೂ ಕಡಿಮೆಯಾಗಲಿ.

Saturday, October 27, 2007

ರಾಜ್ಯೋತ್ಸವದ ಆಚರಣೇ ಕೇವಲ ಒಂದೇ ದಿನ ಇರಲಿ

ಇನ್ನೇನು ಕನ್ನಡ ರಾಜ್ಯೋತ್ಸವ ಬಂದೇ ಬಿಡ್ತು, ಆದರೆ ಹೇಳಿಕೊಳ್ಳಲಿಕ್ಕೊಂದು ಸರ್ಕಾರವಿಲ್ಲ, ರಾಜ್ಯವನ್ನು ಮುನ್ನಡೆಸುವ ನಾಯಕರಿಲ್ಲ. ಐದು ವರ್ಷಗಳ ಆಡಳಿತ ನಡೆಸುವಂತೆ ಜನತೆ ಅಭಿಮತವಿತ್ತು ಶಾಸಕರನ್ನು ಆರಿಸಿದರೆ, ಇವರುಗಳು ತಮಗೆ ಬೇಕಾದ ರೀತಿಯಲ್ಲಿ ಒಡಂಬಡಿಕೆಗಳನ್ನು ಸೃಷ್ಟಿಸಿಕೊಂಡು ತಿಂಗಳುಗಳ ಸರ್ಕಾರವನ್ನು ಮುಂದಿಡುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಎರಡೆರಡು ವರ್ಷಗಳಿಗೊಬ್ಬ ಮುಖ್ಯಮಂತ್ರಿ ಹಾಗೂ ಅವರ ಪರಿವಾರವನ್ನು ತೃಪ್ತಿ ಪಡೆಸುವುದಷ್ಟೇ ರಾಜ್ಯದ ಗುರಿಯಾಗಿ ಹೋಯಿತು. ನಮ್ಮ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದು ಬಿಟ್ಟವು.

ಗಡಿ ಸಮಸ್ಯೆಯ ಮಾತಂತೂ ಇತ್ತೀಚೆಗೆ ಬಹಳ ಕೇಳಿಬರುತ್ತಿದೆ. ಉತ್ತರದಲ್ಲಿ ಮಹಾರಾಷ್ಟ್ರ ಸರ್ಕಾರದ ಹುಕುಮತ್ತಿನಲ್ಲಿ ಬೆಳಗಾವಿ ಪ್ರಾಂತ್ಯವನ್ನು ಕಿತ್ತುಕೊಳ್ಳಲು ಹವಣಿಕೆ ನಡೆಯುತ್ತಿದ್ದರೆ ಪೂರ್ವ ಹಾಗೂ ದಕ್ಷಿಣದಲ್ಲಿ ಭಾಷಾ ಹೇರಿಕೆ ನಡೆಯುತ್ತಿದೆ. ಕನ್ನಡಿಗರ ಸೊಲ್ಲೇನಿದ್ದರೂ ಅಡಗಿ ಹೋಗಿ ಎಲ್ಲಿ ನೋಡಿದರೂ ಅನ್ಯ ಭಾಷೆಯವರಿಗೇ ಪ್ರಾತಿನಿಧ್ಯ ಕಾಣುತ್ತಿದೆ. ನಾವು ದಕ್ಷಿಣದಲ್ಲಿ ಉಳಿದವರಿಗೆ ಸರಿಸಮಾನವಾಗಿ ಬೆಳೆಯದೇ ಹೋಗಿ ಹಿಂದುಳಿಯುತ್ತಿದ್ದೇವೆಯೇ ಎನ್ನೋ ಸಂಶಯ ಕೂಡ ಹುಟ್ಟುತ್ತಿದೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಬೇಕು ಎಂಬುದು ಇವತ್ತಿಗೂ ವಿಶ್ ಆಗಿ ಉಳಿಯಿತೇ ವಿನಾ ಎಷ್ಟೋ ಕಡೆ ಇನ್ನೂ ಚಾಲ್ತಿಗೆ ಬಂದ ಹಾಗಿಲ್ಲ.

ಪ್ರತಿಯೊಂದಕ್ಕೂ ಅಸ್ಥಿರ ರಾಜಕೀಯ ಸ್ಥಿತಿಗತಿಯನ್ನು ಬೆರಳು ಮಾಡಿ ತೋರಿಸಲಾಗದಿದ್ದರೂ ನಮ್ಮಲ್ಲಿನ ರಾಜಕೀಯ ಮುತ್ಸದ್ದಿತನದ ಕೊರತೆಯಿಂದಾಗಿ, ಮುಂದಾಳುಗಳಾಗಲೀ, ದಾರ್ಶನಿಕರಿಲ್ಲದೇ ಕೇಂದ್ರ ಎಷ್ಟೋ ಯೋಜನೆಗಳ ಪಾಲು ಕರ್ನಾಟಕಕ್ಕೆ ಸಿಗುವಲ್ಲಿ ಮಲತಾಯಿ ಧೋರಣೆಯ ಮಾತು ಅಲ್ಲಲ್ಲಿ ಕೇಳಿಬರುತ್ತದೆ. ರಾಜ್ಯಕ್ಕೆ ಹೊಸ ರೈಲು ನಿಲ್ದಾಣಗಳಾಗಲೀ, ಮಾರ್ಗಗಳಾಗಲಿ ಕೊಡುವಲ್ಲಿ ಕೇಂದ್ರದ ತಾರತಮ್ಯ ಎದ್ದು ತೋರುತ್ತದೆ. ಅದೇ ರೀತಿ ಅನೇಕ ಯೋಜನೆಗಳಿಗೂ ಸಹ ತಕ್ಕ ಮಾನ್ಯತೆ ಸಿಕ್ಕಂತೆ ಕಂಡು ಬಂದಿಲ್ಲ. ಕೇಂದ್ರದಲ್ಲಿ ಪ್ರಭಲ ಕಾಂಗ್ರೇಸ್ ರಾಜ್ಯದಲ್ಲಿನ ಕಾಂಗ್ರೇಸೇತರ ಸರ್ಕಾರಕ್ಕೆ ಸಹಾಯ ಮಾಡೀತು ಎಂದು ನಂಬುಕೊಳ್ಳುವುದು ಕಷ್ಟದ ಮಾತು. ತಮ್ಮ ತಮ್ಮ ಒಳಜಗಳಗಳನ್ನು ಪೂರೈಸಿಕೊಳ್ಳುವುದರಲ್ಲೇ ಕಾಲಹರಣ ಮಾಡುವ ಶಾಸಕಾಂಗದ ಸದಸ್ಯರು ಯಾವ ರೀತಿಯಲ್ಲಿ ಅವರವರ ಕ್ಷೇತ್ರಗಳನ್ನು ಪ್ರತಿನಿಧಿಸಿಯಾರು ಮತ್ತೆ ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆದರೆ ತಮ್ಮ ಕ್ಷೇತ್ರದ ಜನರನ್ನು ಹೇಗೆ ಮುಖಕೊಟ್ಟು ಮಾತನಾಡಿಸಿಯಾರು ಎಂಬ ಅನುಮಾನ ಬರುತ್ತದೆ. ಚುನಾವಣೆಗೆ ಮೊದಲಿನ ಪ್ರಸ್ತಾವನೆಗಳಲ್ಲಿ, ಪ್ರಣಾಲಿಕೆಗಳಲ್ಲಿ ಕೇವಲ ಹತ್ತು ಪರ್ಸೆಂಟ್ ಕೆಲಸವನ್ನಾದರೂ ಪ್ರತಿಯೊಬ್ಬ ಶಾಸಕರು ಮಾಡಿದ್ದರೆ ಅದು ನಿಜವಾಗಿಯೂ ತೃಪ್ತಿಕರ ಕಾರ್ಯ ಎಂದು ಒಪ್ಪಿಕೊಳ್ಳುವ ಸಂದಿಗ್ಧ ಬಂದಿದೆಯಷ್ಟೇ.

ಪ್ರತಿವರ್ಷ ಇಷ್ಟೊತ್ತಿಗಾಗಲೇ ಕೇಳಿ ಬರುತ್ತಿದ್ದ ಕಾವೇರಿ ನೀರಿನ ಕೂಗು ಇನ್ನು ಸ್ವಲ್ಪ ದಿನಗಳಲ್ಲೇ ಶುರುವಾಗಬಹುದು. ದಿನೇ ದಿನೇ ಬೇಸಿಗೆ ಏರಿದಂತೆ ನಿಯೋಗದ ಮೇಲೆ ನಿಯೋಗವನ್ನು ಕಳಿಸಿ ತಮ್ಮತನವನ್ನು ಸಾಧಿಸಿಕೊಳ್ಳುವ ಪಕ್ಕದ ರಾಜ್ಯದ ಸರ್ಕಾರದ ಮುಂದೆ ನಮ್ಮವರ ಆಟ ಈ ಸಲ ಹೇಗೆ ಬೇರೆಯಾಗುವುದೋ ನೋಡಬೇಕು. ಕಾವೇರಿ ನೀರಿನ ವಿಷಯ ರಾಜಕೀಯ ಪ್ರೇರಿತವಾದದ್ದು, ಅಲ್ಲದೇ ಕೇವಲ ಕೆಲವೇ ಕೆಲವು ಜಿಲ್ಲೆಯವರು ಪ್ರತಿನಿಧಿಸುವ ಅಂಶವಾಗಿರುವುದು ಮತ್ತೊಂದು ಬೆಳವಣಿಗೆ. ನಮ್ಮಲ್ಲಿಲ್ಲದ ಒಗ್ಗಟ್ಟೇ ನಮಗೆ ಮುಳುವಾದೀತು ಎಂದರೂ ತಪ್ಪಾಗಲಾರದು.

ಕನ್ನಡಿಗರು ಹೋಮ್‌ವರ್ಕ್ ಮಾಡೋದೇ ಇಲ್ಲವೇನೋ ಎನ್ನಿಸಿಬಿಡುತ್ತದೆ ಕೆಲವೊಮ್ಮೆ. ನಮ್ಮಲ್ಲಿನ ಸುದ್ದಿಗಳು ಇತ್ತೀಚೆಗಂತೂ ಕೇವಲ ರಾಜಕೀಯವನ್ನು ಮಾತ್ರ ಕವರ್ ಮಾಡುತ್ತಿವೆಯೇನೋ ಎನ್ನುವ ಅನುಮಾನವೂ ಹುಟ್ಟುತ್ತದೆ. ಒಂದು ದಿನ ಒಬ್ಬರನ್ನೊಬ್ಬರು ಬೈದುಕೊಳ್ಳುವ ರಾಜಕಾರಣಿಗಳು ಮರುದಿನ ಹಸ್ತಲಾಘವವನ್ನು ಕೊಟ್ಟುಕೊಳ್ಳುವುದನ್ನು ನೋಡಿದರೆ, ಪ್ರತಿಯೊಬ್ಬರ ಮುಖದಲ್ಲಿನ ಅಧಿಕಾರ ಲಾಲಸೆಯನ್ನು ಕಂಡರೆ ಹೇಸಿಗೆಯಾಗುತ್ತದೆ. ಇಂಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೋಡಿ ಹೇಸಿಗೆಯೂ ಬರುತ್ತದೆ. ನಿಜವಾಗಿಯೂ ಚುನಾಯಿತ ಪ್ರತಿನಿಧಿಗಳಿಗೆ ಹೇಳುವವರು ಕೇಳುವವರು ಎನ್ನುವವರು ಇದ್ದಾರೆಯೇ ಎನ್ನುವ ಸಂಶಯ ಮೂಡುತ್ತದೆ. ಸರ್ಕಾರ ಬಡವಾಗುತ್ತಾ ಹೋಗುತ್ತದೆ ಚುನಾಯಿತ ಪ್ರತಿನಿಧಿಗಳು ಅಲ್ಟ್ರಾ ಶ್ರೀಮಂತರಾಗುತ್ತಾ ಹೋಗುತ್ತಾರೆ, ಯಾರದೋ ಮನೆಯ ಸೊಸೆ ಸುಮಾರು ನೂರು ಕೋಟಿ ರೂಪಾಯಿಯನ್ನು ತೊಡಗಿಸಿ (೨೫ ಮಿಲಿಯನ್ ಡಾಲರ್) ಹೊಸ ಕನ್ನಡ ಟಿವಿ ಚಾನೆಲ್ ಒಂದನ್ನು ಹೊರತರುತ್ತಾರೆ, ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು, ಅವರ ಕುಟುಂಬವೂ ಬಡತನದ ರೇಖೆಯಿಂದ ಬಹಳಷ್ಟು ದೂರವೆನೂ ಇರೋದಿಲ್ಲ. ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಬಲಾಬಲ ಅವರವರು ಭ್ರಷ್ಟಾಚಾರಕ್ಕೆ ಮೋಸಕ್ಕೆ ಬಳಸುವ ಹಣದ ಮೇಲೆ ತೀರ್ಮಾನವಾಗುತ್ತದೆ. ನಿಜವಾದ ಆದಾಯದಿಂದ ಬದುಕುವುದೇ ದುಸ್ತರವೆನ್ನಿಸಿ ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಗಿಂಬಳವನ್ನಾಧರಿಸಿ ಬದುಕುವುದೇ ಬದುಕಾಗುತ್ತದೆ. ದೇಶ್ದ ಹಣದುಬ್ಬರ, ಆರ್ಥಿಕ ಪರಿಸ್ಥಿತಿ ಮುಂತಾದವುಗಳನ್ನು ಸರಿಯಾಗಿ ನಿಭಾಯಿಸದೇ ಹೋಗಿ ಬಳಸುವ ಸಾಮಗ್ರಿಗಳ ಬೆಲೆ ಗಣನೀಯವಾಗಿ ಹೆಚ್ಚಾದಂತೆ ಪ್ರತಿಯೊಬ್ಬರ ತಲಾ ಆದಾಯ ಅಷ್ಟೇನು ಹೆಚ್ಚದೆ ಲಂಚ ಮೊದಲಾದವುಗಳಿಗೆ ಕುಮ್ಮಕ್ಕು ಸಿಗುತ್ತದೆ. ಭ್ರಷ್ಟರಾಗಿ ಬದುಕುವುದು, ಲಂಚದ ಕೂಪದಲ್ಲಿ ಸಿಲುಕುವುದು ಸಹಜವಾಗಿ ಹೋಗಿ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವವನು ಹಾಸ್ಯಾಸ್ಪದಕ್ಕೆ ಗುರಿಯಾಗಬೇಕಾಗುತ್ತದೆ. ಅಕಸ್ಮಾತ್ ಈಗಲ್ಲದಿದ್ದರೆ ಮುಂದೆಂದಾದರೂ ಚುನಾವಣೆ ನಡೆಯದಿದ್ದಲ್ಲಿ ಮತ್ತೆ ಯಾರಿಗೂ ನಿಚ್ಛಳ ಬಹುಮತ ಬಾರದೇ ಹೋಗಿ ದೋಸ್ತಿ ಸರಕಾರಗಳು ತಿರುಗಿ ಅಸ್ತಿತ್ವಕ್ಕೆ ಬಂದರೆ ಎಂದು ಹೆದರಿಕೆಯಾಗುತ್ತದೆ.

ಕನ್ನಡಿಗರು ಸುಮ್ಮನಿದ್ದರೆ ಇವತ್ತಲ್ಲ ನಾಳೆ ದೇಶದ ಅತ್ಯಂತ ಬಡ ಹಾಗೂ ಭ್ರಷ್ಟರಾಜ್ಯಗಳ ಯಾದಿಯಲ್ಲಿ ಕರ್ನಾಟಕವೂ ನಿಲ್ಲಬೇಕಾದೀತು ಎಂದು ಹೆದರಿಕೆಯಾಗುತ್ತದೆ. ರಾಜ್ಯೋತ್ಸವದ ಸಂಬಂಧಿಸಿದಂತೆ ಕನ್ನಡಿಗರು ಏನನ್ನಾದರೂ ಮಾಡಿಕೊಳ್ಳಲಿ, ನವೆಂಬರ್ ಒಂದರಿಂದ ಡಿಸೆಂಬರ್ ಕೊನೆಯವರೆಗೆ ರಾಜ್ಯೋತ್ಸವವನ್ನು ಆಚರಿಸದೇ ಏನೇ ಆಚರಣೆಗಳಿದ್ದರೂ ಅದನ್ನು ಕೇವಲ ಒಂದು ದಿನಕ್ಕೆ ಮೀಸಲಾಗಿಟ್ಟರೆ ಸಾಕು, ಅಷ್ಟೇ.

Friday, October 26, 2007

ಸಾರೆಕೊಪ್ಪ ಬಂಗಾರಪ್ಪನವರಿಗೆ ಎಪ್ಪತ್ತೈದರ ಸಂಭ್ರಮ

ಹ್ಞೂ, ಬಹಳ ಸ್ವಾರಸ್ಯಕರವಾಗಿದೆ, ಇವತ್ತು ಬಂಗಾರಪ್ಪನವರ ಬಗ್ಗೆ ’ಅಂತರಂಗ’ದಲ್ಲಿ ಏನೇನು ಬರೆದಿದ್ದೇನೆ ಅಂತ ಹುಡುಕಿದರೆ ಒಂದೇ ಒಂದು ಲೇಖನ ಸಿಗಲಿಲ್ಲ! ನಮ್ಮೂರು ಆನವಟ್ಟಿಯ ವಾತಾವರಣದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಬಂಗಾರಪ್ಪನವರ ಪ್ರಭಾವದ ಬಗ್ಗೆ ಬರೆಯದೇ ಹೋದರೆ ಹೇಗೆ ಎಂದು ಒಮ್ಮೆಯೇ ನನಗನ್ನಿಸಿದ್ದು ಇವತ್ತು ಪ್ರಜಾವಾಣಿಯಲ್ಲಿ ಅವರ ೭೫ ನೇ ಹುಟ್ಟು ಹಬ್ಬದ ಸಂದರ್ಶನವನ್ನು ಓದಿದ ಮೇಲೆ. ಆದರೂ ಈ ಮನುಷ್ಯ ಬಹಳ ಗಟ್ಟಿಗ, ಇವತ್ತಿಗೂ ಶಟಲ್ ಬ್ಯಾಡ್‌ಮಿಂಟನ್ ಆಡೋದಿರಲಿ, ಹಿಂದೂಸ್ತಾನಿಯನ್ನು ಹಾಡೋದಿರಲಿ ನಿಲ್ಲಿಸಿದಂತೆ ಕಾಣೋದಿಲ್ಲ.

ಎಂಭತ್ತರ ದಶಕದಲ್ಲಿ ಬಂಗಾರಪ್ಪ ರಾಜ್ಯ ಮಂತ್ರಿಗಳಾಗಿದ್ದಾಗ ಯಾವತ್ತಾದರೊಂದು ದಿನ ಆನವಟ್ಟಿಯ ಬಳಿಯ ಲಕ್ಕವಳ್ಳಿಗೆ ಬಂದರೆ ಅಲ್ಲಿ ಸ್ಥಳೀಯ ಯುವಕರೊಡನೆ ಶಟಲ್ ಬ್ಯಾಡ್‌ಮಿಂಟನ್ ಆಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ, ಆ ಆಟಗಳಿಗೆ ನಮ್ಮಣ್ಣನೂ ಹೋಗುತ್ತಿದ್ದ. ಯಾರೂ ಎಷ್ಟೇ ದಣಿದರೂ ಬಂಗಾರಪ್ಪನವರಿಗೆ ಸುಸ್ತೆಂಬುದೇ ಇಲ್ಲ. ಅದೇ ರೀತಿ ಬಂಗಾರಪ್ಪನವರನ್ನು ಕೇವಲ ರಾಜಕಾರಣಿಯಾಗಿ ಬಲ್ಲವರು ಅವರು ಸಂಗೀತವನ್ನೂ ಕಲಿತಿದ್ದಾರೆ ಎಂದು ಹೇಳಿದರೆ ನಂಬಲಾರರು. ಕೋಳೀಕೆರಂಗ ಹಾಡನ್ನು ಬಂಗಾರಪ್ಪ ತಮ್ಮ ಅಭಿಮಾನಿಗಳ ಎದಿರು ಹೇಳಿ ಬೇಕಾದಷ್ಟು ಚಪ್ಪಾಳೆಯನ್ನು ಗಿಟ್ಟಿಸಿರೋದು ಸೊರಬಾ ತಾಲ್ಲೂಕಿನ ಜನರು ಮರೆಯಲಾರರು. ಡೊಳ್ಳು ಕುಣಿಯುವವರೊಡಗೂಡಿ ತಾವೇ ಡೊಳ್ಳು ಕಟ್ಟಿಕೊಂಡು ಕುಣಿದರೆ ತಮ್ಮ ಸಹಾಯಕ್ಕೆಂದು ಬಂದವರ ಕಷ್ಟವನ್ನು ಕೇಳಿ ಮರುಕಪಟ್ಟಿದ್ದೂ ಇದೆ. ಬಂಗಾರಪ್ಪನವರ ಕ್ರಿಯಾತ್ಮಕ ವೈಯಕ್ತಿಕ ಜೀವನಕ್ಕೂ ರಾಜಕೀಯ ಜೀವನಕ್ಕೂ ಬಹಳಷ್ಟು ಸಾಮ್ಯತೆ ಇದೆ. ಜನತಾಪಕ್ಷ, ಕಾಂಗ್ರೆಸ್ ಮುಂತಾದವುಗಳನ್ನು ಧಿಕ್ಕರಿಸಿ ಹಿಂದೆ ಕ್ರಾಂತಿರಂಗವೆಂಬ ಪಕ್ಷವನ್ನು ಕಟ್ಟಿದ ನೇತಾರ ಇಂದು ಮುಲಾಯಮ್ ಒಡಗೂಡಿ ಉತ್ತರ ಭಾರತದ ಸಮಾಜವಾದದ ಅಲೆಯನ್ನು ದಕ್ಷಿಣಕ್ಕೆ ತರಲು ಪ್ರಯತ್ನಿಸಿದ್ದಾರೆ.

ಬಂಗಾರಪ್ಪನವರಿಗೆ ಎಪ್ಪತ್ತೈದು ವರ್ಷಗಳು ಎಂದರೆ ನಂಬಲು ಕಷ್ಟವಾದೀತು. ಶಾಸಕರಾಗಿ ಸಂಸದರಾಗಿ ಇಂದಿಗೂ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರನ್ನು ಶಿವಮೊಗ್ಗದ ಜನತೆ, ವಿಶೇಷವಾಗಿ ಸಾಗರ, ಸೊರಬದ ಜನತೆ ಖಂಡಿತವಾಗಿ ಸ್ಮರಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬಂಗಾರಪ್ಪನವರ ಪ್ರಾಬಲ್ಯ ಬಹಳಷ್ಟಿತ್ತು, ಇತ್ತೀಚೆಗಷ್ಟೇ ಅವರು ಅಲ್ಪಸಂಖ್ಯಾತ ಸಮಾಜವಾದವನ್ನು ಆಲಂಗಿಸಿಕೊಂಡ ಮೇಲೆ ಅವರ ಮಾತಿನ ಹರಿತ ಕಡಿಮೆಯಾದಂತೆ ಕಂಡುಬರುತ್ತದೆ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾದಾಗಈ ಸೊಟ್ಟಮೂತಿಯವನು ಏನು ಮಾಡಿಯಾನು ಎಂದು ಪ್ರಶ್ನೆ ಕೇಳುತ್ತಿದ್ದ ಜನ ಅವರ ಯೋಜನೆಗಳಲ್ಲಿ ಮುಖ್ಯವಾದ ಆಶ್ರಯ, ವಿಶ್ವ ಮುಂತಾದವುಗಳನ್ನು ಇಂದಿಗೂ ಕೊಂಡಾಡುತ್ತಾರೆ. ಬೇಕಾದಷ್ಟು ಆಸ್ತಿ-ಅಂತಸ್ತು ಮಾಡಿಟ್ಟಿದ್ದಾರೆ ರಾಜಕೀಯ ಸೇರಿಕೊಂಡು ಎಂದು ರಾಗ ಹೊರಡಿಸುವವರಿಗೆ ಸೆಡ್ಡು ಹೊಡೆಯುವಂತೆ ಬಂಗಾರಪ್ಪನವರ ಆಸ್ತಿ-ಅಂತಸ್ತು ಬೇಕಾದಷ್ಟಿದೆ. ಮಗ ಕುಮಾರ್ ಸಹ ರಾಜಕೀಯದಲ್ಲಿ ತೊಡಗಿಕೊಂಡು ಮುಂದಿನ ನಾಯಕನಾಗಿ ಕನಸನ್ನು ಕಾಣುವಂತೆ ವೇದಿಕೆಯನ್ನು ಸೃಷ್ಟಿಸಿದ್ದಾರೆ.

ಬಂಗಾರಪ್ಪನವರು ಒಂದು ಕಾಲದಲ್ಲಿ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡರ ಸಮಾಜವಾದವನ್ನು ಒಪ್ಪಿ ಅದೇ ಹಾದಿಯನ್ನು ತುಳಿದು ರಾಜಕೀಯದಲ್ಲಿ ನಲವತ್ತು ವರ್ಷಗಳನ್ನು ಕಳೆದ ಪ್ರಬುದ್ಧತೆಗೆ ಸಂದ ಗೌರವ, ಕೀರ್ತಿ ಹಾಗೂ ಉತ್ಪತ್ತಿ ಬೇಕಾದಷ್ಟಿದೆ. ಅರವತ್ತು ಎಪ್ಪತ್ತರ ದಶಕಗಳಲ್ಲಿ ಅದೇ ತಾನೇ ರಾಜಕೀಯ ಚಿಗುರೊಡೆಯುತ್ತಿದ್ದ ಕಾಲದಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವ, ಬೇಧ-ಭಾವವನ್ನು ಕಡಿಮೆ ಮಾಡುವ ಸಾಮಾಜಿಕ ನೆಲೆಗಟ್ಟನ್ನು ಕನಸಾಗಿ ಕಂಡವರು ಹೆಚ್ಚು ಜನ ಇನ್ನೂ ಉಳಿದಿರಲಾರರು. ಆದರೆ ಆಗ ರಾಜಕೀಯಕ್ಕೆ ಧುಮುಕಿದವರೆಲ್ಲರೂ ಇಂದು ಬೇಕಾದಷ್ಟು ಸಂಪನ್ಮೂಲಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ತಲೆ-ತಲೆಮಾರಿಗೆ ಸಾಕಾಗುವಷ್ಟನ್ನು ಮಾಡಿಕೊಂಡಿದ್ದಾರೆ. ಅದು ತಪ್ಪೋ ಸರಿಯೋ ಬಂಗಾರಪ್ಪನವರೂ ಎಲ್ಲರೊಳಗೊಂದಾಗಿ ಹೋದರು. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ನಲವತ್ತು ವರ್ಷಗಳ ಕಾಲ ಒಂದು ತಾಲ್ಲೂಕು, ಜಿಲ್ಲೆಯನ್ನು ಆಳಿಕೊಂಡಿದ್ದ ಯಾವೊಬ್ಬ ರಾಜಕಾರಣಿಯಾಗಲೀ, ಅವರ ತಲೆಮಾರಾಗಲೀ ಅಲ್ಲಿ ಸಾಕಷ್ಟನ್ನು ಮಾಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೊರಬಾ ತಾಲ್ಲೂಕಿಗೆ ಇವತ್ತಿಗೂ ಸಹ ಸರಿಯಾದ ರಸ್ತೆಗಳು ಎಂಬುವುದೇನಿಲ್ಲ. ಸೊರಬಾ ತಾಲ್ಲೂಕಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಗುಡವಿ ಪಕ್ಷಿಧಾಮಕ್ಕೆ ಹೋಗುವ ರಸ್ತೆಯನ್ನು ನೋಡಿದರೆ ತಾಲ್ಲೂಕಿನ ಹಣೆಬರಹವನ್ನೇ ಹೇಳಿಬಿಡಬಹುದು. ಅಲ್ಲಲ್ಲಿ ಹೂಳು ತುಂಬಿ ಬೇಸಿಗೆಯಲ್ಲಿ ನೀರು ನಿಲ್ಲದ ಕೆರೆಕಟ್ಟೆಗಳನ್ನು ನೋಡಿ ಮರುಗಬಹುದು. ಮುಖ್ಯ ರಸ್ತೆಗಳಲ್ಲಿ ಕಾಣಸಿಗುವ ಶಿತಿಲಗೊಂಡ ಸೇತುವೆಗಳು, ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸುವ ಸರ್ಕಾರಿ ಕಟ್ಟಡ, ವಸತಿಗೃಹ, ಕಛೇರಿಗಳನ್ನು ನೋಡಿದಾಗಲೆಲ್ಲ ನಲವತ್ತು ವರ್ಷದ ಕೌಟುಂಬಿಕ ರಾಜಕಾರಣವೇ ಸೊರಬಾ ತಾಲ್ಲೂಕಿನ ಶಾಪವೇ ಎಂದು ಅನ್ನಿಸದೇ ಇರದು. ಸೊರಬಾ ಆನವಟ್ಟಿಯ ಸುತ್ತಮುತ್ತಲು ಹಾಡುಹಗಲೂ ಕದ್ದು ಸಾಗಿಸುವ ಅರಣ್ಯ ಸಂಪತ್ತನ್ನು ತಡೆದಿದ್ದರೆ ಇಂದಿಗೂ ಸ್ವಾಭಾವಿಕವಾಗಿ ಬೆಳೆಯುವ ಗಂಧದ ಮರಗಳನ್ನು ನಾವೆಲ್ಲ ನೋಡಬಹುದಿತ್ತು. ಮಂಡಲ ಪಂಚಾಯತಿ ಮತ್ತೊಂದೇನೇ ವ್ಯವಸ್ಥೆ ಬಂದರೂ ವಾರಕ್ಕೊಮ್ಮೆ ಸಾವಿರಾರು ಜನ ಸೇರುವ ಆನವಟ್ಟಿಯ ಸಂತೇಪೇಟೆಗೆ ಒಂದು ಸದ್ಗತಿಯನ್ನು ಒದಗಿಸಿಕೊಡಬಹುದಿತ್ತು. ಮೊದಲು ಮಲೆನಾಡಿದ್ದುದು, ನಂತರ ಅರೆಮಲೆನಾಡಾಗಿ ಈಗ ಎಲ್ಲಿ ನೋಡಿದರೂ ಬಯಲು ಸೀಮೆಯ ಅವಶೇಷಗಳಾದಂತಹ ತಾಲ್ಲೂಕಿನ ನಾನಾ ಭಾಗಗಳನ್ನು ಊರ್ಜಿತಗೊಳಿಸುವುದಿರಲಿ, ಅಲ್ಲಿಂದ ಜನರು ಕಾಫೀ ಸೀಮೆಗೆ ಗುಳೆ ಹೋಗುವುದನ್ನು ತಪ್ಪಿಸಬಹುದಿತ್ತು. ಯಾವುದೂ ಬೇಡ, ಮಹಾನ್ ವಿಶ್ವೇಶ್ವರಯ್ಯನವರು ಮಾಡಿದಂತೆ ಶಿವಮೊಗ್ಗದ ಸುತ್ತಮುತ್ತಲು ಒಂದಿಷ್ಟು ಕಾರ್ಖಾನೆಗಳನ್ನು ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ಕಟ್ಟಿದ್ದರೆ ಜಿಲ್ಲೆಯ ಜನ ಇವತ್ತಿಗೂ ಅವರ ಹೆಸರನ್ನು ಹೇಳಿ ನೀರು ಕುಡಿಯಬಹುದಿತ್ತು.

ಬಂಗಾರಪ್ಪನವರು ’ನಾನು ಕೋಳೀಕೆರಂಗ’ ಹಾಡಿನ ಚರಣಗಳಂತೆ ತಮ್ಮ ಹುಟ್ಟೂರನ್ನು ನೆನೆಸಿಕೊಳ್ಳುತ್ತಾರೋ ಇಲ್ಲವೋ ಅಲ್ಲಿನ ಜನರಂತೂ ಅವರನ್ನು ಖಂಡಿತ ಹಚ್ಚಿಕೊಂಡಿದ್ದಾರೆ. ಆ ನೆಲ ಹೊರಹೊಮ್ಮಿಸಿದ ಗಟ್ಟಿ ನಾಯಕ ಬಂಗಾರಪ್ಪನವರಿಗೆ ಎಪ್ಪತ್ತೈದರ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.

Wednesday, October 24, 2007

ಅಕ್ಟೋಬರ್ ಮುಗೀತು, ದೀಪಾವಳಿ ಬಂತು!

ಏನಪ್ಪಾ ಇದು ನೋಡ್ ನೋಡ್ತಾನೇ ಅಕ್ಟೋಬರ್ ಬಂತು ಹಂಗೇ ಮಾಯವೂ ಆಗ್ತಾ ಇದೆಯಲ್ಲಾ ಅಂತ ಅನ್ಸಿದ್ದು ಇವತ್ತು ಬೆಳಿಗ್ಗೆ. ನಾನು ಅಕ್ಟೋಬರ್ ಅನ್ನು ಜೀರ್ಣಿಸಿಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಅದು ಮುಗಿತಾನೇ ಬಂದೋಯ್ತು. ಈ ಅಮೇರಿಕದ್ ಲೈಫ್ ಬಗ್ಗೆ ಒಂದೇ ಸಾಲ್ನಲ್ಲಿ ಹೇಳ್ಬೇಕು ಅಂದ್ರೆ ಇಲ್ಲಿ ಬದುಕು ವಾರದಿಂದ ವಾರಕ್ಕೆ ಉರುಳ್ತಾ ಉರುಳ್ತಾ ಕೊನೆಗೆ ತಿಂಗಳು, ವರ್ಷಗಳು ಮುಗಿದು ಹೋಗೋದೇ ಗೊತ್ತಾಗಲ್ಲ. ಇವತ್ತೂ ನಾಳೇ ಅಂತ ಕಾಲ ತಳ್ಳೀ ತಳ್ಳೀ ವರ್ಷದ ಮೇಲೆ ವರ್ಷಾ ಉರುಳಿ ಅದ್ಯಾವ್ದೋ ಹಳೇ ಫೋಟೋ ನೋಡ್ದಾಗ್ಲೇ ಅನ್ಸೋದು ’ಓಹ್, ನಾನು ಹಿಂಗಿದ್ನಾ’ ಅಂತ! ಮೊನ್ನೇ ಇನ್ನೂ ವಯಸ್ಸಾದವರ ಸಂಘದ ಬಗ್ಗೆ ಬರೆದು ಇನ್ನೊಂದು ಸರ್ತಿ ಅದೇ ಸಬ್ಜೆಕ್ಟ್ ಹಿಡಕೊಂಡ್ ಬೈರಿಗಿ ಬಿಡೋದಿಲ್ಲ ಹೆದರ್ಕೋ ಬೇಡಿ, ಇವತ್ತಿನ ಸಮಾಚಾರ ಬೇರೇನೇ...ಬಟ್ ಯಾವ್ದೇ ಸಮಾಚಾರ ಹಿಡ್ಕೊಂಡ್ ಹೊರಟ್ರೂ ಒಂದ್ ರೀತಿ ’ಅಳುಮುಂಜಿ’ ಫ್ಲೇವರ್ ಇರೋದಿಲ್ಲಾ ಅಂತಂದ್ರೆ ’ಅಂತರಂಗ’ದ ವಿಶೇಷವಾದ್ರೂ ಏನ್ ಉಳಿಯುತ್ತೆ ಹೇಳಿ.

ನನಗೆ ಈ ಪ್ರಶ್ನೆಯನ್ನ ಬೇಕಾದಷ್ಟು ಜನ ಕೇಳಿದ್ದಾರೆ, ’ನೀವು ಅಮೇರಿಕದಲ್ಲಿ ಸೆಟ್ಲ್ ಆಗಿದ್ದೀರಾ?’ ಅಂತ. ಈ ಪ್ರಶ್ನೆಗೆ ನನಗೆ ಹೇಗ್ ಉತ್ರಾ ಕೊಡಬೇಕು ಅನ್ನೋದೇ ಗೊತ್ತಾಗಲ್ಲ. ಒಂದು ಕಡೆ ’ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು’ ಅನ್ನೋ ಚೇತನಾ ನಮ್ದು. ಅದರ ಜೊತೆಯಲ್ಲಿ ಹೋದಕಡೆ ನಮ್ಮ ಬೇರುಗಳನ್ನ ಆದಷ್ಟು ಆಳವಾಗಿ ಬಿಟ್ಟು ನೆಲ-ನೀರಿನ ರುಚಿ ನೋಡೋ ಗುಣವೂ ನಮ್ಮದು. ಇದು ನಮ್ಮ ದೇಶವಲ್ಲ ಅನ್ನೋ ವಿದೇಶೀ ಭಾವನೆ ಒಂದು ಕಡೆ, ದಿನೇದಿನೇ ನಾವೂ ಇಲ್ಲಿಯವರೇ ಆಗಿ ಹೋಗಿದ್ದೇವೆ ಅನ್ನೋ ಅನಿವಾಸಿಗಳ ಪೆಚ್ಚುಮೋರೆ ಮತ್ತೊಂದು ಕಡೆ. ಈ ಕಾನ್‌ಫ್ಲಿಕ್ಟ್ ಮೆಂಟಾಲಿಟಿ ಇಟ್ಕೊಂಡ್ ಯಾರಾದ್ರೂ ಎಲ್ಲಾದ್ರೂ ಸೆಟ್ಲೂ ಅನ್ನೋದೇನಾದ್ರೂ ಇದೆಯಾ ಅನ್ನೋದು ನನ್ನ ಪ್ರಶ್ನೆ. ಎಷ್ಟು ದುಡುದ್ರೂ ಎಲ್ಲಿಗೂ ಸಾಲಲ್ಲ ಅಂತ ಹಿಂದೆ ಎಲ್ಲೋ ಒಂದು ಕಡೆ ಬರೆದಿದ್ದೆ, ಇವತ್ತು ನಮ್ ಸ್ನೇಹಿತ್ರೊಬ್ರ ಜೊತೆ ಮಾತಾಡ್ತಾ ಇರಬೇಕಾದ್ರೆ ಅವರೇ ಅಂದ್ರು ’ದುಡ್ಡೂ ಅಂದ್ರೆ ಏನು ಅಂತ ಕೇಳೋ ಹಂಗ್ ಆಗಿದೆ’ ಅಂತ.

ದುಡ್ಡೂ ಅಂದ ಮೇಲೆ ನೆನಪಿಗೆ ಬಂತು, ನಮ್ಮೂರಲ್ಲಿ ನಾವು ಚಿಕ್ಕವರಿರಬೇಕಾದ್ರೇ ಆಯುಧಪೂಜೆಗೆ ನಮ್ ನಮ್ ಪೆನ್ನೂ, ಪುಸ್ತಕಾ ಎಲ್ಲಾ ಇಟ್ಟು ಅರಿಶಿಣ ಕುಂಕುಮ ಹಚ್ಚಿ ’ಆಯುಧ’ ಅನ್ನೋ ಭಾವನೇನಲ್ಲಿ ಪೂಜೆ ಮಾಡ್‌ತಿದ್ವಿ, ಆದ್ರೆ ಇಲ್ಲಿ ಅದೇನನ್ನು ಇಟ್ಟು ಪೂಜೇ ಮಾಡೋಣ ಹೇಳಿ. ಡಾಕ್ಟ್ರಾದ್ರೇ ಸ್ಟೆತಾಸ್ಕೋಪ್ ಇಟ್ಟು ಪೂಜೆ ಮಾಡ್ತಾರೋ ಏನೋ, ನಾವು ಬೆಳಿಗ್ಗಿಂದ ಸಂಜೇವರೆಗೂ ಸಣ್ಣ ಪರದೇ ನೋಡ್ಕೊಂಡು ಕುಟ್ಟುತಾ ಕೂರೋರು ಯಾವ್ದಾದ್ರೂ ಹಳೇ ಕಂಪ್ಯೂಟರ್ ಕೀ ಬೋರ್ಡ್ ಇಟ್ಟು ಪೂಜೆ ಮಾಡಿದ್ರೆ ಹೇಗೆ ಅಂತ ಮೊನ್ನೆ ನೆನಪಿಗೆ ಬಂತು. ಇವತ್ತಿಗೂ ನಮ್ಮನೇನಲ್ಲಿ ದೀಪಾವಳಿಯ ಲಕ್ಷ್ಮೀಪೂಜೆಗೆ ಭಾರತದ ದುಡ್ಡೂ-ಕಾಸನ್ನೇ ಇಟ್ಟು ಪೂಜೇ ಮಾಡೋರ್ ನಾವು, ಜೊತೆಗೆ ಅಮೇರಿಕನ್ ಡಾಲರ್ರೂ, ಕಾಯಿನ್ನುಗಳನ್ನೂ ಸೇರ್ಸಿಡ್‌ತೀವಿ, ಪಾಪ ಆ ಲಕ್ಷ್ಮಿಗೆ ಎಷ್ಟೊಂದ್ ಕನ್‌ಫ್ಯೂಷನ್ ಆಗುತ್ತೋ ಯಾರಿಗ್ ಗೊತ್ತು?

ದಿನಗಳು ಬರ್ತಾವ್ ಸಾರ್, ಮತ್ತೆ ಹಂಗೇ ಹೋಗ್ತಾವೇ...ನಾವು ಎಲ್ಲೂ ಸೆಟ್ಲ್ ಆಗಲ್ಲ, ಇಲ್ಲೂ ಇರಲ್ಲ ಅಲ್ಲೂ ಹೋಗಲ್ಲ. ಅಪರೂಪಕ್ಕೊಮ್ಮೆ ಪ್ರೆಂಡ್ಸ್‌ಗಳು ಸೇರ್ಕೊಂಡಾಗ ಮೊದಲೆಲ್ಲಾ ಗ್ರೀನ್‌ಕಾರ್ಡ್ ಬಗ್ಗೆ ಮಾತಾಡ್ಕೊಂಡು ಹೊಟ್ಟೇ ತುಂಬುಕೊಳ್ತಾ ಇದ್ದ ನಮಗೆ ಇವತ್ತು ಬುಷ್-ಬ್ರೌನುಗಳ ಬಗ್ಗೆ ನೆನಸಿಕೊಂಡು ಮಾತನಾಡೋ ಸ್ಥಿತಿ ಬಂದಿರೋದನ್ನ ನೋಡಿ, ಇನ್ನೊಂದ್ ಸ್ವಲ್ಪ ದಿನದಲ್ಲೇ ’ನಾನೂ ಅಮೇರಿಕನ್ ಆಗಿ ಬಿಟ್ಟೇ!’ ಅನ್ನೋ ಮಾತುಗಳು ದೂರವೇ ಇಲ್ಲ ಅಂತ ಅನ್ಸುತ್ತೆ. ದೂರವಾದ ಅಲ್ಲಿಯದು ದಿನಗಳು ಕಳೆದಂತೆ ಇನ್ನಷ್ಟು ದೂರವಾಗ್ತಾ ಹೋಗುತ್ತೆ, ಹತ್ತಿರವಾದ ಇಲ್ಲಿಯದು ಯಾವತ್ತಿದ್ರೂ ಅಷ್ಟೊಂದ್ ಹತ್ರಾ ಬರೋದೇ ಇಲ್ಲ! ಕಮ್ಮ್ಯೂನಿಟಿ ಸರ್ವೀಸುಗಳಲ್ಲಿ ತೊಡಗಿಸಿಕೊಳ್ಳಬೇಕು, ರಾಜಕೀಯ ಪ್ರೇರಣೆಯನ್ನು ಪಡೆದುಕೊಂಡು ಒಂದು ರೀತಿಯ ’ಆಕ್ಟಿವಿಷ್ಟ್’ ಆಗಬೇಕು ಅಂತ ಎಷ್ಟೊಂದು ಸರ್ತಿ ಅನ್ಸುತ್ತೆ. ಸೋಮವಾರದಿಂದ ಶುಕ್ರವಾರದವರೆಗೆ ದುಡಿದು ಶನಿವಾರ, ಭಾನುವಾರ ಬದುಕೋ ನಮಗೆ ಇತ್ತೀಚೆಗೆ ನಮ್ಮೂರಿನ ಖೋತಾಸ್ ಕಾಫೀನೂ ರುಚಿಸದೇ ಇಲ್ಲಿಯ ಕಾಫಿಯ ಪರಿಮಳವೇ ಆಗಬೇಕು ಅನ್ನೋ ಮನಸ್ಥಿತಿಯಲ್ಲಿ ಏನೋ ಕಡಿಮೆ ಆಗಿದೆ ಅಂತ್ಲೇ ನನಗೆ ಅನುಮಾನ. ನಾಲಿಗೆ ರುಚಿ ಹೆಚ್ಚಾಗ್ಲೀ ಅಂತ ಇಡ್ಲೀ-ದೋಸೆ ಮಾಡ್ಕೊಂಡ್ ತಿಂದ್ರೂ ಅದರ ಹಿಂದೇನೂ ಯಾವ್ದೋ ಸಮಾಧಾನ ಅನ್ನೋದೇ ಇಲ್ಲ. ಭಾರತದಲ್ಲಿದ್ದಾಗ ಒಂದೇ ಒಂದು ದಿನ ಓಟ್‌ಮೀಲ್ ತಿನ್ನದ ನಾವು ಇಲ್ಲಿ ಅದನ್ನ ಫುಲ್ ಮೀಲ್ ಮಾಡ್ಕೊಂಡು ತಿನ್ನೋ ಕಾಯಕದಲ್ಲಿ ಯಾಕೋ ಒಂದು ವ್ಯತಿರಿಕ್ತ ಮನಸ್ಥಿತಿ ಕಾಣಿಸ್ತಾ ಇರೋದು ನನ್ನೊಬ್ಬನಿಗೆ ಮಾತ್ರಾ ಅಲ್ಲಾ ತಾನೆ?

ನೀವ್ ಕೇಳ್ತೀರಾ, ’ನೀವ್ ಅಮೇರಿಕದಲ್ಲಿ ಸೆಟ್ಲ್ ಆಗಿದ್ದೀರಾ?’ ಅಂತ, ಅದಕ್ಕೇನಂತ ಉತ್ರ ಹೇಳೋಣ? ’ಹೌದು’, ಎಂದರೆ ’ಹಾಗಾದ್ರೇ ಹಿಂತಿರುಗಿ ಬರಲ್ವಾ?’ ಅನ್ನೋ ಪ್ರಶ್ನೆ ರೆಡಿ ಇಟ್ಟುಕೊಂಡಿರ್ತೀರಿ. ’ಇಲ್ಲ’, ಎಂದರೆ ’ಹಾಗಾದ್ರೆ ಯಾವತ್ತು ಬರ್ತೀರಾ ವಾಪಾಸ್ಸು?’ ಅಂತ ಕೇಳ್ತೀರಿ. ಈ ಎಲ್ಲ ಪ್ರಶ್ನೆಗಳಿಗೆ ನಾನಂತೂ ನಿಖರವಾಗಿ ಉತ್ತರ ಕೊಡದ ಸ್ಥಿತಿಗೆ ಬಂದುಬಿಟ್ಟಿದ್ದೇನೆ ಅಂತ ಸಹಜವಾಗೇ ಹೇಳ್ತೀನಿ. ಅದನ್ನ ಕೇಳಿ ಉತ್ತರವನ್ನ ಯಾರು ಯಾರು ಹೇಗೆ ಹೇಗೆ ಜೀರ್ಣಿಸಿಕೊಳ್ತಾರೋ ಅದು ಅವರ ಸಮಸ್ಯೆ. ಆದ್ರೆ ಒಂದ್ ವಿಷಯವಂತೂ ನಿಜ, ಇಲ್ಲಿ ಸೆಟ್ಲ್ ಆದವರಿಗೆ, ಇಲ್ಲಿನಂತೆಯೇ ಬದುಕೋರಿಗೆ ಅಷ್ಟೇ ಕಷ್ಟನಷ್ಟಗಳು ಇರ್ತಾವೆ. ನಾವು ಯಾವತ್ತಿದ್ರೂ ಇಮಿಗ್ರೆಂಟ್ಸೇ ಅಂದ್ಕೊಂಡು ಚಿಕ್ಕದಾಗಿ ಚೊಕ್ಕದಾಗಿ ಜೀವ್ನಾ ನಡೆಸಿಕೊಂಡಿರೋರಿಗೆ ಹಿಂತಿರುಗಿ ಹೋಗೋದು ಸುಲಭಾ ಅಗುತ್ತೇ ಅನ್ನೋದು ನನ್ನ ಅನಿಸಿಕೆ. ಆದ್ರೆ, ನಮ್ಮೆಲ್ಲರ ಮನಸ್ನಲ್ಲೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಕಡೆ ಸೆಟ್ಲ್ ಆಗಬೇಕು ಅನ್ನೋ ಆಶಯ ಯಾವತ್ತಿದ್ರೂ ಜೀವಂತ ಇದ್ದೇ ಇರುತ್ತೇ ಅನ್ನೋದೇನೋ ನಿಜವೇ.

ಅಕ್ಟೋಬರ್ ಬಂದು ಹೋದ ಮೇಲೆ ಏನಿದ್ರೂ ರಜಾದಿನಗಳ ಸುಗ್ಗಿ, ಮುಂಬರುವ ಥ್ಯಾಂಕ್ಸ್ ಗಿವಿಂಗ್, ಕ್ರಿಸ್ಮಸ್, ಹೊಸವರ್ಷ ಇವೆಲ್ಲ ತಮ್ಮ ಒಡಲಲ್ಲಿ ಒಂದಿಷ್ಟು ಸಂತೋಷ ಸಡಗರಗಳನ್ನು ತರುತ್ವೆ. ಯಾವ ಧರ್ಮದವರೇ ಇರಲಿ ಮಕ್ಕಳಿದ್ದೋರ್ ಮನೇನಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು ಅಲಂಕಾರ ಮಾಡೋದನ್ನ ನಾನು ನೋಡಿದ್ದೀನಿ, ಅದೂ ಭಾರತೀಯರ ಮನೆಗಳಲ್ಲಿನ ಕ್ರಿಸ್ಮಸ್ ಪರಂಪರೆಯನ್ನು ಕಂಡು ಬೆರಗಾಗಿದ್ದೀನಿ. ನಮ್ಮನೇನಲ್ಲಿ ನಾವು ಕ್ರಿಸ್ಮಸ್ ಟ್ರೀ ಇಡೋಲ್ಲ, ಬದಲಿಗೆ ದೀಪಾವಳಿ ಹಾಗೂ ಯುಗಾದಿ ಹಬ್ಬಗಳಿಗೆ ಹೊರಗಡೆ ಸೀರಿಯಲ್ ಸೆಟ್ ಹಾಕಿ ಲೈಟ್‌ಗಳನ್ನು ಹಾಕ್ತೀನಿ, ಬಾಗಿಲಿಗೆ ಒಂದು ಸ್ವಲ್ಪ ಹೊತ್ತಾದ್ರೂ ಕುಡಿಕೆ ದೀಪವನ್ನು ಹಚ್ಚಿಡ್ತೀನಿ. ದೀಪಾವಳಿ ವರ್ಷದ ಯಾವ ದಿನ ಬಂದ್ರೂ ಯಾವ್ದೇ ಪ್ರೊಡಕ್ಷನ್ ಕೆಲ್ಸಾ ಇಲ್ಲಾ ಅಂತಂದ್ರೆ ಅವತ್ತಿನ ದಿನಾ ಒಂದು ರಜೆಯನ್ನು ಬಿಸಾಕಿ ನಮ್ಮ ನಮ್ಮ್ ಮಟ್ಟಿಗೆ ಹಬ್ಬದ ಆಚರಣೆಯನ್ನೂ ಮಾಡ್ತೀವಿ. ಅದೇ ಲಕ್ಷ್ಮೀ ಪೂಜೆ ಬಗ್ಗೆ ಹೇಳಿದ್ನಲ್ಲಾ, ಅದನ್ನ ಮಾತ್ರ ತಪ್ಪಿಸೋದಿಲ್ಲ ಏನಾದ್ರೂ! ದಸರೆ ಮುಗಿದ ಮೇಲೆ ಇಪ್ಪತ್ತು ದಿನಕ್ಕೆ ದೀಪಾವಳಿ, ಇನ್ನೊಂದೆರಡು ವಾರದಲ್ಲಿ ಬರೋ ದೀಪಾವಳಿ ಎಲ್ಲರಿಗೂ ಸಡಗರ ತರಲಿ.

Sunday, October 21, 2007

... ವಿಜಯದಶಮಿಯ ಬರುವಿಕೆಗೆ ಕಾಯುತ್ತಾ...

ಸದಾ ಮನಸ್ಸಿನಲ್ಲಿ ಮಡುಗಟ್ಟಿದ ಕೋಪ ಇರೋರ ಹಾಗಿನ ಮನೋಭಾವ - ಈ ವಿಜಯದಶಮೀ ಹೊತ್ತಿಗೆ ಯಾಕಪ್ಪಾ ಬಂತು ಎಂದು ಯೋಚಿಸಿಕೊಂಡರೆ ಬೇಕಾದಷ್ಟು ಕಾರಣಗಳು ಸ್ಪಷ್ಟವಾಗಿ ಕಂಡು ಬಂದವು. ನಾನು ದಿನಕ್ಕೊಂದು ಲಾಟರಿಯನ್ನು ಗೆದ್ದಿದ್ದೇನೆ ಎಂದು ಯಾವು ಯಾವುದೋ ದೇಶದಿಂದ "ಅಧಿಕೃತ" ಇ-ಮೇಲ್‌ಗಳು ಸ್ಪ್ಯಾಮ್‌ಗಳಾಗಿ ಬಂದು ಕಾಡುವುದೂ ಅಲ್ಲದೇ ಇರೋ ಒಂದೆರಡು ಇ-ಮೇಲ್ ಅಕೌಂಟುಗಳನ್ನು ಮಟ್ಟ ಹಾಕಿಕೊಂಡು ಅಟ್ಟಹಾಸ ಗೈಯುವುದು ಎಲ್ಲದಕ್ಕಿಂತ ಮೊದಲು ನಿಂತಿತು. ಪ್ರಪಂಚದಲ್ಲಿರೋ ದುಡ್ಡೆಲ್ಲಾ ಆಫ್ರಿಕಾದಲ್ಲಿ ತುಂಬಿಕೊಂಡು ಕಗ್ಗತ್ತಲಿನ ಖಂಡದಿಂದ ’ನಿಮ್ಮ ಸಹಾಯ ಬೇಕು’ ಎಂದು ಮೇಲ್ನೋಟಕ್ಕೆ ಸುಲಭವಾಗಿ ಮಿಲಿಯನ್ ಡಾಲರ್‌ಗಳನ್ನು ಕೊಡುವಂತೆ ಕಂಡುಬಂದರೂ ಅದರ ಹಿನ್ನೆಲೆಯಲ್ಲಿ ನೀವು ಚೂರೂ-ಪಾರೂ ಉಳಿಸಿರುವ ದುಡ್ಡನ್ನು ಕಬಳಿಸುವ ಒಂದು ಕುತಂತ್ರ ವ್ಯವಸ್ಥೆಯೇ ಇದೆ ಎಂದು ಯೋಚಿಸಿದರೆ ಕಂಪ್ಯೂಟರ್ ಪರದೆಯ ಮೇಲೆ ಪಿಚ್ಚ್ ಎಂದು ಉಗುಳಿ ಬಿಡೋಣವೆನ್ನಿಸುತ್ತದೆ. ಇಂಥ ಖದೀಮರ ಕಣ್ಣಿಗೆ ನಾವೆಲ್ಲರೂ ಪಾಪಿಷ್ಟರ ಹಾಗೆ ಕಂಡುಬರುವುದೂ ಅಲ್ಲದೇ ನಮ್ಮಂಥವರನ್ನು ಗೋಳು ಹೊಯ್ದುಕೊಳ್ಳುವುದೇ ಇವರ ಬಿಸಿನೆಸ್ ಎಂದು ಯೋಚಿಸಿಕೊಂಡಾಗಲೆಲ್ಲ ಪ್ರಪಂಚ ಎಂಥ ದುರ್ಗತಿಯತ್ತ ಸಾಗುತ್ತಿದೆ ಎನಿಸೋದಿಲ್ಲವೇ?

ನೀವೇ ಯೋಚಿಸಿ, ಒಂದು ವೆಬ್‌ಸೈಟ್ ಅನ್ನು ಹೋಸ್ಟ್ ಮಾಡುವುದಿರಲಿ, ISP ಸಹಾಯದ ಮೂಲಕ ಒಂದು ಇ-ಮೇಲ್ ಅನ್ನು ಕಳಿಸುವುದಿರಲಿ, ನಮ್ಮ ನಿಮ್ಮಂಥವರ ವೈಯುಕ್ತಿಕ ಇ-ಮೇಲ್ ಅಕೌಂಟನ್ನ ಸಣ್ಣ ಪ್ರೋಗ್ರಾಮುಗಳಿಗೆ ಅಳವಡಿಸಿ ದಿನಕ್ಕೆ ಮಿಲಿಯನ್‌ಗಟ್ಟಲೆ ಜನರಿಗೆ ಸ್ಪ್ಯಾಮ್ ಕಳಿಸುವುದಿರಲಿ ಇಂಥವೆಲ್ಲವೂ ಒಂದು IP-Network ವ್ಯವಸ್ಥೆಯಲ್ಲಿಯೇ ಆಗಬೇಕು ಎಂದು ನಂಬಿಕೊಂಡಿರುವವ ನಾನು. ಹೀಗಿರುವಾಗ ಪ್ರಪಂಚಕ್ಕೆಲ್ಲಾ ಸ್ಪ್ಯಾಮ್ ಕಳಿಸುವ unsolicited ಮೆಸ್ಸೇಜುಗಳನ್ನು ಕಳಿಸುವ ದಗಾಕೋರರನ್ನು ನಮ್ಮ ವ್ಯವಸ್ಥೆಗೆ ಬಗ್ಗು ಬಡಿಯಲೇಕೆ ಆಗದು? ಜೊತೆಗೆ ಎಷ್ಟೋ ಜನ ಅಮಾಯಕರ ಬ್ಯಾಂಕ್ ಅಕೌಂಟುಗಳನ್ನು ಅಕ್ರಮಿಸಿಕೊಂಡೋ ಅಥವಾ ಮುಟ್ಟಗೋಲು ಹಾಕಿಕೊಂಡೋ ಪ್ರಪಂಚದ ಯಾವುದೋ ಮೂಲೆಯಿಂದ ಇನ್ಯಾವುದೋ ಮೂಲೆಯಲ್ಲಿನ ಹಣವನ್ನು ಎಲೆಕ್ಟ್ರಾನಿಕಲಿ ದೋಚುವವರನ್ನೂ ತಡೆಯಲಾಗದೇ?

ಆರು ತಿಂಗಳ ಹಿಂದೆ ಒಂದು ಶುಕ್ರವಾರ ಅದ್ಯಾವುದೋ ಕೆಲಸದ ನಿಮಿತ್ತ ಆಫೀಸಿಗೆ ರಜೆ ಹಾಕಿ ಮಧ್ಯಾಹ್ನದ ಹೊತ್ತು ಕಂಪ್ಯೂಟರಿನಲ್ಲಿ ಏನನ್ನೋ ನೋಡುತ್ತಿದ್ದಾಗ ಎಲ್ಲಿಂದಲೋ ಹೀಗೇ ಒಂದು ಫೋನ್ ಕಾಲ್ ಬಂತು. ನನ್ನ ಕಾಲರ್ ಐಡಿ ಎಲ್ಲ ಸಂಖ್ಯೆಗಳನ್ನು 9999999999 ತೋರಿಸಿ ಖದೀಮರ ಕಾಲ್ ಇದು ಎಂದು ಮುಂಜಾಗರೂಕತೆಯನ್ನಾಗಲೇ ಕೊಟ್ಟಿತ್ತು. ಕೆಲವೊಮ್ಮೆ ಭಾರತದ ಕರೆಗಳು Unknown ಎಂದು ಬರುತ್ತವೆ ಅಥವಾ ಮತ್ತೆಲ್ಲಿಯದೋ ಸಂಖ್ಯೆಗಳನ್ನು ತೋರಿಸುತ್ತವೆಯಾದ್ದರಿಂದ ನಾನು ಕಾಲ್ ರಿಸೀವ್ ಮಾಡಿದೆ. ಆ ಕಡೆಯವನು ತಾನು IRS (Internal Revenue Service) ಕಡೆಯವನು ಎಂದು ಹೇಳಿ ತನ್ನ ಪರಿಚಯ ಮಾಡಿಕೊಂಡ. ಅವನ ಪ್ರಕಾರ ನನಗೆ IRS ನವರು ಆರು ಸಾವಿರ ಡಾಲರ್ ಕೊಡುತ್ತಾರಂತೆ, ಅದಕ್ಕೆ ಅವನು ನನ್ನ ಬಗ್ಗೆ ಕೆಲವೊಂದಿಷ್ಟು ವಿಷಯಗಳನ್ನು ಪಡೆದುಕೊಳ್ಳುವುದಾಗಿ ತಿಳಿಸಿದ. ನನಗಾಗಲೇ ಈ ರೀತಿಯ ಹೋಕ್ಸ್ ಕರೆಗಳ ಬಗ್ಗೆ ತಿಳಿದಿದ್ದರಿಂದ ಅವರ ಇಂಗಿತವನ್ನರಿಯಲು ನನಗೇನೂ ಕಷ್ಟವಾಗಲಿಲ್ಲ. ಆದರೂ ನೋಡೋಣವೆಂದುಕೊಂಡು ಸ್ವಲ್ಪ ಮಾತನಾಡತೊಡಗಿದೆ. ಅವನ್ ಇಂಗ್ಲೀಷ್ ಆಕ್ಸೆಂಟ್ ಆಫ್ರಿಕಾದವರ ಹಾಗಿತ್ತು. ಅಮೇರಿಕನ್ ಹೆಸರನ್ನು ಹೇಳುತ್ತಿದ್ದರೂ ಆ ಹೆಸರಿನ ಉಚ್ಚಾರ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. ಅವನ ಪ್ರವರವನ್ನು ವಿಚಾರಿಸಾಗಿ ಅವನು IRS ನಲ್ಲಿ ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ. ಅವನ ಆಫೀಸ್ ವಿಳಾಸವನ್ನು ಕೇಳಲು ವಾಷಿಂಗ್ಟನ್ ಡಿಸಿಯ ಯಾವುದೋ ಒಂದು ಫೋನೀ ವಿಳಾಸವನ್ನು ತಿಳಿಸಿದ - ನನಗೆ ಡಿಸಿಯ ಬಗ್ಗೆ ಗೊತ್ತಿದ್ದರೂ ಅವನ ಜೊತೆ ಮಾತನಾಡುತ್ತಲೇ IRS ಅಫೀಷಿಯಲ್ ವೆಬ್ ಸೈಟ್ ನೋಡಲಾಗಿ ಅವನು ಹೇಳುತ್ತಿರುವ ಅಡ್ರೆಸ್ ವ್ಯಾಲಿಡ್ ಅಲ್ಲವೆಂದು ತಿಳಿಯಿತು. ನಿನ್ನ ಸೂಪರ್‌ವೈಸರ್ ಜೊತೆ ಮಾತನಾಡಬೇಕು ಎಂದರೆ, ಮೊದಲ ಖದೀಮನಿಗಿಂತಲೂ ಮತ್ತೊಬ್ಬ ಖದೀಮ ಲೈನಿಗೆ ಬಂದ, ಅವನೂ ಸುಳ್ಳಿನ ಮೇಲೆ ಸುಳ್ಳು ಹೇಳುವವನೇ.

ಅವರ ವಿಳಾಸ ಸುಳ್ಳು, ಹೆಸರುಗಳು ಸುಳ್ಳು, ಎಷ್ಟು ಕೇಳಿದರೂ ಅವರ ಫೋನ್ ನಂಬರ್ ಕೊಡಲಾರದವರು. ಅವರ ಬಿಸಿನೆಸ್ಸಿನ ಮೂಲಮಂತ್ರ ಇನ್ನೊಬ್ಬರಿಗೆ ನಾಮ ಹಾಕುವುದು. ಇನ್ನೊಬ್ಬರು ಕಷ್ಟಪಟ್ಟು ದುಡಿದ ಹಣವನ್ನು ಹಾಡಹಗಲು ದೋಚುವ ಕುತಂತ್ರಿಗಳು. ಇಂಥವರೊಡನೆ ನನದೇನು, ನಾನು ಫೋನ್ ಇಟ್ಟು ಇನ್ನೊಮ್ಮೆ ಕರೆ ಮಾಡಬೇಡಿ ಎಂದು ವಾರ್ನ್ ಮಾಡಬಹುದಿತ್ತು, ಆದರೆ ನಾನು ಹಾಗೆ ಮಾಡದೆ ಈ ದುರುಳರನ್ನು ಜೊತೆ ಸುಮಾರು ತೊಂಭತ್ತು ನಿಮಿಷ ಸತಾಯಿಸಿ, ಆಟವಾಡಿಸಿ ಅವರಿಗೆ ಬಹಳ ಪ್ರಾಮುಖ್ಯವಾಗಿ ಬೇಕಾಗಿದ್ದ ನನ್ನ ಬ್ಯಾಂಕ್ ಅಕೌಂಟ್ ನಂಬರನ್ನು ಅದೆಲ್ಲಿಲ್ಲಿಂದಲೋ ಅಂಕೆಗಳನ್ನು ಬಳಸಿ, ಕೂಡಿ ಕಳೆದು ಎಂಟು ಡಿಜಿಟ್ ಅಂಕೆಯನ್ನು ಅವರ ಒತ್ತಾಸೆಯಂತೆ ಪೂರೈಸಿದೆ. ನಾನು ತೆಗೆದುಕೊಂಡ ತೊಂಭತ್ತು ನಿಮಿಷಗಳಲ್ಲಿ ಅವರು ಅದಿನ್ನೆಷ್ಟು ಜನರನ್ನು ಕಾಂಟ್ಯಾಕ್ಟ್ ಮಾಡುವುದಿತ್ತೋ ಅಷ್ಟಾದರೂ ತಪ್ಪಿತಲ್ಲ! ನಾನು ಅಕೌಂಟ್ ನಂಬರನ್ನು ಸುಳ್ಳು ಹೇಳುತ್ತಿರುವೆನೇನೋ ಎಂದು ಅನುಮಾನವಾಗಿ ಅವರು ಪದೇ ಪದೇ ಅದನ್ನು ಕೇಳುತ್ತಿದ್ದರು, ನಾನು ನನ್ನ ಸ್ಕ್ರೀನ್ ನಲ್ಲಿ ಬರೆದುಕೊಂಡಿದ್ದರಿಂದ ಅದನ್ನು ಯಥಾವತ್ತಾಗಿ ಹೇಳುತ್ತಲೇ ಇದ್ದೆ. ಮಧ್ಯೆ ಒಂದೆರಡು ಬಾರಿ ’ನನಗೆ ಮತ್ತೊಂದು ಕರೆ ಬರುತ್ತಿದೆ, ಐದು ನಿಮಿಷ ಬಿಟ್ಟು ಫೋನ್ ಮಾಡಿ’ ಎಂದು ಹೇಳಿದ್ದಕ್ಕೆ ಆ ಕಡೆಯವರು ಹಾಗೆಯೇ ಮಾಡುತ್ತಿದ್ದರು. ಈ ಮಧ್ಯೆ ನನ್ನ ಫೋನ್ ನಂಬರ್ ಒದಗಿಸಿದ ಸೆಂಟ್ರಲ್ ಆಫೀಸಿನ ಟೆಕ್ನಿಕಲ್ ಮ್ಯಾನೇಜರ್ ಒಬ್ಬನನ್ನು ಆಫೀಸಿನ ಇನ್ಸ್‌ಟಂಟ್ ಮೆಸ್ಸೇಜ್ ವ್ಯವಸ್ಥೆಯಿಂದ ಕಾಂಟ್ಯಾಕ್ಟ್ ಮಾಡಿ ನನ್ನ ಕರೆಯ ಕಾಲ್ ರೆಕಾರ್ಡುಗಳನ್ನು ರೆಕಾರ್ಡ್ ಮಾಡಲು ಹೇಳಿದೆ. ಪ್ರತಿಯೊಂದು ಫೋನಿಗೆ ಒಳಬರುವ ಕರೆಯನ್ನು ದಾಖಲಿಸಲಾಗದಿದ್ದರೂ ಸ್ವಿಚ್‌ನಲ್ಲಿ ನೋಡಿ ಎಲ್ಲಿಂದ ಕರೆ ಒಳಬರುತ್ತಿದೆ ಎಂದು ಹೇಳಬಹುದು. ಆದರೆ ಈ ಖದೀಮರು IP-IP ನೆಟ್‌‍ವರ್ಕ್‌ನಲ್ಲಿ ಅದ್ಯಾವುದೋ ಕಂಪ್ಯೂಟರ್ ಒಂದರಿಂದ ಕರೆ ಮಾಡುತ್ತಿದ್ದರು, ಅದರ ಮೂಲವನ್ನು ಜಾಲಾಡಿಸಿ ನೋಡಿದರೆ ನನಗೆ ಗೊತ್ತಾದದ್ದು ’ನೈಜೀರಿಯಾ’ ಎಂದು, ಅಷ್ಟೇ.

ಖದೀಮರಿಗೆ ನನ್ನ ಅಕೌಂಟ್ ನಂಬರ್ ಸಿಕ್ಕಿದೆಯೆಂದುಕೊಂಡು ಬಹಳಷ್ಟು ಖುಷಿಯಾಯಿತು. ಇನ್ನೇನು ಕರೆ ಮುಗಿಯಿತು ಎಂದುಕೊಂಡಾಗ ಆ ಕಡೆಯಿಂದ ಅವರು 'thank you!' ಎಂದರು, ನಾನು ಈ ಕಡೆಯಿಂದ ಕನ್ನಡದಲ್ಲಿ ನನಗೆ ಅರಿವಿದ್ದೋ ಅರಿವಿರದೆಯೋ ’ಸೂಳಾ ಮಕ್ಳಾ’ ಎಂದೆ. ಅವ ’ಏನು ಹಾಗಂದ್ರೇ?’ ಎಂದ, ನಾನು ’thats how we say thank you in our language' ಎಂದೆ.

***

ನಿಜವಾಗಿಯೂ ಒಮ್ಮೊಮ್ಮೆ ಹೀಗನ್ನಿಸುತ್ತೆ, ಈ ಖದೀಮರೇ ಆಧುನಿಕ ಪ್ರಪಂಚದ ರಾಕ್ಷಸರು, ಇಂತಹವರನ್ನು ನೀಗಿಸೋದೇ ನಿಜವಾದ ವಿಜಯೋತ್ಸವ ಎಂಬುದಾಗಿ. ಆ ಮಹಿಷಾಸುರ, ರಾವಣ ಇವರೆಲ್ಲರಿಗೂ ಒಂದು ರೀತಿ-ನೀತಿಗಳು ಎಂಬುವುದಾದರೂ ಇದ್ದವೇನೋ ಆದರೆ ಇಂದಿನ ಕಾಲದ ಈ ರಾಕ್ಷಸರಿಗೆ ಇತರರ ರಕ್ತವನ್ನು ಕುಡಿಯುವುದನ್ನು ಬಿಟ್ಟರೆ ಬೇರೆ ಯಾವುದೇ ಆಲೋಚನೆ ಎನ್ನುವುದೇ ಇಲ್ಲ.

ಅಲ್ಲದೇ, ಒಂದು ವ್ಯವಸ್ಥಿತವಾದ ಬಿಸಿನೆಸ್ಸನ್ನು ಆರಂಭಿಸಲು ಅದೆಷ್ಟೆಲ್ಲಾ ಕಷ್ಟಗಳು ಬರುತ್ತವೆ, ಆದರೆ ಈ ಖದೀಮರು ಇತರರನ್ನು ಸುಲಿಯುವುದೇ ವ್ಯವಹಾರವನ್ನಾಗಿಟ್ಟುಕೊಂಡಿರುವ ಬಿಸಿನೆಸ್ಸುಗಳು ಅದು ಹೇಗೆ ನೆಲೆ ನಿಲ್ಲುತ್ತವೆಯೋ ಯಾರಿಗೆ ಗೊತ್ತು? ನನ್ನ ಇ-ಮೇಲ್ ಅಕೌಂಟುಗಳಿಗೆ ಪ್ರತಿಯೊಂದು ಸಾರಿ ನಾನು ಲಾಟರಿ ಗೆದ್ದುದಕ್ಕಾಗಲೀ, ಆಫ್ರಿಕಾದಲ್ಲಿ ಯಾರೋ ಸತ್ತವರ ಹಣಕ್ಕೆ ಸಹಿ ಹಾಕುವ ಅವಕಾಶ ಸಿಕ್ಕಾಗಲೀ ಕೇವಲ ಒಂದೊಂದು ಪೈಸೆ ಸಿಕ್ಕಿದ್ದರೆ ನಾನು ಇಷ್ಟೊತ್ತಿಗೆ ಲಕ್ಷಾಧೀಶ್ವರನಾಗುತ್ತಿದ್ದೆ ಎನ್ನುವುದು ಇತ್ತೀಚೆಗೆ ನಾನು ಹೇಳುವ ಜೋಕ್‌ಗಳಲ್ಲಿ ಒಂದು.