Thursday, August 16, 2007

ಖುರ್ಚೀ ಕೆಲ್ಸಕ್ಕೇ ಜೈ!

ಬರೀ ಖುರ್ಚೀ ಮೇಲೆ ಕುಳಿತು ಕಾಲ ಕಳೆಯೋ ಈ ಕೆಲಸ ಯಾರಿಗಪ್ಪಾ ಬೇಕು ಅಂತ ಎಷ್ಟೋ ಸರ್ತಿ ಅನ್ಸೋದಿಲ್ವಾ? ಈ ರೀತಿ ಕೆಲ್ಸಾನ ಒಂದು ಐದು ಹತ್ತು ವರ್ಷ ಮಾಡಿ ಸುಸ್ತಾಗಿ ಹೋಗಿರುವವರಿಗೆ ಈ ಹೊಸದಾಗಿ ಕೆಲಸಕ್ಕೆ ಸೇರಿಕೊಳ್ಳೋರನ್ನು ನೋಡಿ ಮರುಕ ಹುಟ್ಟಿದರೂ ಅದೇನು ಅತಿಶಯೋಕ್ತಿ ಅಲ್ಲ. ಒಂದು ಕಾಲದಲ್ಲಿ ಸಿವಿಲ್ಲು, ಮೆಕ್ಯಾನಿಕಲ್ಲು, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಮುಂತಾದ ವಿಭಾಗಗಳಿಗೆ ಸೇರಿಕೊಂಡು ಇ೦ಜಿನಿಯರಿಂಗ್ ಮುಂದುವರೆಸೋರಿಗಿಂತ ಇನ್‍ಫರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಸೇರಿ ಓದುವವರೇ ಹೆಚ್ಚಾಗಿದ್ದರು, ಆದರೆ ಈಗ ಕಾಲ ಬದಲಾಗಿರಬಹುದು. ನನಗೇನಾದರೂ ಇನ್ನೊಂದು ಅವಕಾಶ ಸಿಕ್ಕಿದ್ರೆ ಬೇರೆ ವಿಷ್ಯಾನೇ ಆಯ್ದುಕೊಳ್ತೀನಿ ಅನ್ನೋದು ನಿಜ.

ನಮ್ ನಮ್ ವೆಕೇಷನ್ನ್ ಎಲ್ಲವೂ ಅಪರೂಪಕ್ಕೊಮ್ಮೆ ಹೋಗಿ ಬರೋ ಭಾರತ ಪ್ರವಾಸಕ್ಕೇ ಮುಡಿಪಾಗಿಟ್ಟುಕೊಂಡಿದ್ದಾಯ್ತು. ಈಗಂತೂ ವಿಪರೀತ ಕೆಲಸ, ಇದೇ ದೇಶದವರು ಬೇಸಿಗೆ ಉದ್ದಕ್ಕೂ ಅಲ್ಲೊಂದ್ ವಾರ ಇಲ್ಲೊಂದ್ ವಾರ ವೆಕೇಷನ್ನ್ ತಗೊಂಡು ಹಾಯಾಗಿ ಇದ್ರೆ, ನಾವು ನಾಳೆಗಳಿಗೋಸ್ಕರ ಬದುಕೋ ನಮ್ಮ ತತ್ವದ ಪ್ರಕಾರವಾಗಿ ನಮ್ಮ ರಜೆಗಳನ್ನೂ ಮುಂದಿನ ಭಾರತದ ಪ್ರವಾಸಕ್ಕಿಟ್ಟುಕೊಂಡು ಕಾಯೋದಾಯ್ತು. ಸೋಮವಾರದಿಂದ ಶುಕ್ರವಾರ ಅದು ಹೇಗೆ ಬರುತ್ತೋ ಹೇಗೆ ಹೋಗುತ್ತೋ ಗೊತ್ತಾಗಲ್ಲ, ಮೊನ್ನೆ ಮೊನ್ನೆ ಆರಂಭವಾದ ಸೋಮವಾರ ಇದ್ದಕ್ಕಿಂದ್ದಂತೆ ಶುಕ್ರವಾರವಾಗಿ ಮಿಂಚಿ ಮರೆಯಾಗಿ ಹೋಗುತ್ತೆ. ವಾರಾಂತ್ಯ ಬಂದ್ರೆ ಏನೋ ಕಡಿಯೋರ ಹಾಗೆ ಅದು ಮಾಡೋಣ, ಇದು ಮಾಡೋಣ ಅನ್ನೋ ಸರಣಿ ಮನಸ್ಸಲ್ಲಿ ಹುಟ್ಟುತ್ತೇ ಅನ್ನೋದೇನೋ ನಿಜ, ಅದು ಕಾರ್ಯರೂಪಕ್ಕೆ ಬರೋದೇ ಇಲ್ಲ. ವಾರದ ದಿನಗಳಲ್ಲಿ ಆಫೀಸಿನ ಕೆಲಸವನ್ನು ಬಿಟ್ಟು ಏನಾದರೊಂದು ಒಂದು ಪರ್ಸನಲ್ ಕೆಲಸ - ಲೈಬ್ರರಿಗೆ ಹೋಗೋದೋ, ಕಿರಾಣಿ ತರೋದೋ, ಮತ್ತೊಂದೋ ಮಾಡುವಷ್ಟರಲ್ಲಿ ಆ ದಿನ ಮುಗಿದೇ ಹೋಗಿರುತ್ತೆ. ಇನ್ನು ವಾರಾಂತ್ಯದಲ್ಲಿ ದಿನಕ್ಕೆ ಎರಡು ಕೆಲಸ ಆದರೆ ಹೆಚ್ಚು - ಅದರಲ್ಲಿ ಮನೆ ಸ್ವಚ್ಛ ಮಾಡೋದೂ, ಬಟ್ಟೆ ಒಗೆದು ಒಪ್ಪಮಾಡಿಕೊಳ್ಳೋದು ಒಂದು.

ನಿಮ್ಮ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದ್ರೆ ನನಗೆ ಯಾಕೆ ಅಂತ ತಿಳಿಸ್ತೀರಾ ತಾನೆ?

***

ಛೇ! ಇನ್ನೊಲ್ಪ ಚೆನ್ನಾಗಿ ಓದಿದ್ರೆ ಡಾಕ್ಟರ್ ಆಗಿಬಿಡಬಹುದಿತ್ತು - ಏನಿಲ್ಲ ಅಂದ್ರೂ ಆಸ್ಪತ್ರೆ ತುಂಬಾ ಓಡಾಡಿಕೊಂಡಿರಬಹುದಿತ್ತು, ಈ ಕಂಪ್ಯೂಟರ್ ಪರದೇ ನೋಡೋ ಕಷ್ಟಾ ಯಾವನಿಗ್ ಬೇಕು? ಏ, ಬ್ಯಾಡಪ್ಪಾ - ಡಾಕ್ಟರ್ ಆಗೋದಕ್ಕೆ ಎಷ್ಟ್ ಓದಿದ್ರೂ ಸಾಲ್ದೂ, ಜೊತೆಗೆ ಏನೇ ಸರ್ವೀಸ್ ಮೆಂಟಾಲಿಟ್ ಇಟ್ಕೊಂಡ್ ಯಾರಿಗ್ ಸಹಾಯ ಮಾಡಿದ್ರೂ ಎಲ್ಲಾದ್ರೂ ಲಾ ಸೂಟ್ ಹಾಕ್ಕೋದೇ ಹೆಚ್ಚು, ಅದ್ಯಾವನಿಗ್ ಬೇಕು ಆ ಕರ್ಮ.

ಅದು ಬ್ಯಾಡಪ್ಪಾ, ಸಿವಿಲ್ ಇಂಜಿನಿಯರ್ ಆಗಿದ್ರೆ ಎಷ್ಟ್ ಮಜಾ ಇರ್ತಿತ್ತು - ಪ್ರತೀ ದಿನ ಫೀಲ್ಡ್ ಸರ್ವೇ ಅದೂ ಇದೂ ಅಂತ ಹೊರಗಡೆ ಓಡಾಡಿಕೊಂಡಿರಬಹುದಿತ್ತು. ಅಯ್ಯೋ, ಬೇಸಿಗೆ ಬಿಸಿಲನ್ನಾದರೂ ತಡಕೋಬಹುದು, ಈ ವಿಂಟರ್‌ನಲ್ಲಿ ರಸ್ತೆ ಅಳೆಯೋ ಕೆಲ್ಸಾ ಯಾವನಿಗ್ ಬೇಕು, ನೀವೊಂದು.

ಸುಮ್ನೇ, ಲೈಬ್ರರಿ ಸೈನ್ಸ್ ಓದಿಕೊಂಡು ಯಾವ್ದಾದ್ರೂ ದೊಡ್ಡದೊಂದು ಲೈಬ್ರರಿ ಸೇರಿಕೊಂಡ್ ಬಿಡಬೇಕಿತ್ತು, ಅರಾಮಾಗಿ ದಿನವೂ ಒಂದಿಷ್ಟು ಓದಿಕೊಂಡು ಕಾಲ ಕಳೀಬಹುದಿತ್ತು. ಛೇ, ಅದೂ ಕೂತಕೊಂಡ್ ಮಾಡೋ ಕೆಲ್ಸಾನೇ ಅಲ್ವೇ, ಬ್ಯಾಡಪ್ಪಾ...ಅದೂ ಅಲ್ದೇ, ಅಪರೂಪಕ್ಕೊಂದ್ ಪುಸ್ತಕಾ ಓದ್ಕೊಂಡೇ ಲೈಫ್ ಇಷ್ಟೊಂದು ಕಾಂಪ್ಲಿಕೇಟೆಡ್ ಆಗಿರೋವಾಗ ಇನ್ನು ದಿನವೂ ಪುಸ್ತಕಾ ಓದ್ತಾನೇ ಇರೋದು ಅಂದ್ರೆ? ಅಲ್ಲದೇ, ಯಾವ ಲೈಬ್ರರಿಯನ್ ಅದೇನ್ ಅಂಥಾ ಮಹಾನ್ ಓದಿ ಏನು ಕಡಿದು ಹಾಕಿರೋದು ಇಲ್ಲೀವರೆಗೆ?

ಯಾವ್ದೂ ಬ್ಯಾಡಪ್ಪಾ, ಈ ನ್ಯೂ ಯಾರ್ಕ್ ನಗರದಲ್ಲಿ ಹಾಯಾಗಿ ಟ್ಯಾಕ್ಸಿ ಓಡಿಸ್ಕೊಂಡಿರಬೇಕಿತ್ತು, ನಾವೇ ನಮ್ಮ ಬಾಸು, ಎಷ್ಟೊತ್ತಿಗೆ ಬೇಕಾದ್ರೂ ಹೋದಾ, ಎಷ್ಟೊತ್ತಿಗೆ ಬೇಕಾದ್ರೂ ಬಂದ. ಕೆಲ್ಸಿಲ್ಲ ನಿಮಗೆ, ಅಲ್ಲೇನಾರಾ ಒಂದ್ ತಿಂಗಳು ಕಾರ್ ಓಡ್ಸಿ ಕರಿಯರಿಂದ ಆಕ್ರಮಣಕ್ಕೊಳಗಾಗದೇ ಬದುಕಿ ಬಂದ್ರೇನೇ ಹೆಚ್ಚು, ಅದೂ ಅಲ್ದೇ ದಿನಾನೂ ರಸ್ತೇ ಮೇಲೆ ಬಿದ್ದಿರೋ ಕೆಲ್ಸಾ ಯಾವನಿಗ್ರೀ ಬೇಕು? ಹೋಗೀಬಂದೂ ಡ್ರೈವ್ ಮಾಡ್ಕೊಂಡೇ ಬಿದ್ದಿರೂ ಅಂದ್ರೆ? ಬ್ಯಾಡಾ ಶಿವಾ.

ದೊಡ್ಡ ಕಂಪನಿ ಅಧಿಕಾರಿ ಆದ್ರೆ ಹೆಂಗೆ? ಎಷ್ಟು ಚಂದ ಇರೋ ಆಫೀಸು, ಕಾರು, ಬಂಗ್ಲೇ ಎಲ್ಲಾ ಕೊಡ್ತಾರಂತೆ, ನಿಜವಾ. ದಿನವೂ ಬಿಳೀ ಕಾಲರ್ ಅಂಗೀ ತೊಟ್ಕೊಂಡೇ ಇರಬಹುದಂತೆ, ಮಜಾ ಅಂದ್ರೆ ಅದಪ್ಪಾ. ರೀ, ನಿಮಗ್ಗೊತ್ತಿಲ್ಲ, ದೊಡ್ಡೋರಿಗಿರೋ ತಲೇನೋವುಗಳು, ಅಲ್ಲಿರೋ ಸ್ಟ್ರೆಸ್ ಮತ್ತೆಲ್ಲೂ ಇರೋಲ್ಲ, ಆ ಸ್ಟ್ರೆಸ್ಸಿಗೆ ಯಾವಾಗ ಹಾರ್ಟ್ ಅಟ್ಯಾಕ್ ಆಗುತ್ತೇ ಅಂತಾನೇ ಹೇಳೋಕ್ ಬರೋಲ್ಲವಂತೆ!

***

ಈ ಅನೇಕ ಕೆಲಸಗಳ ಸಾಧಕ-ಬಾಧಕಗಳು ಮಿಂಚಿ ಮರೆಯಾದವು. ನನ್ನ ಕೆಲ್ಸಾನೂ ಸೇರಿ ಯಾವ್ ಕೆಲ್ಸಾನೂ ರುಚಿಸ್ತಾನೇ ಇಲ್ಲಾ... ನಮ್ ಅಣ್ಣಾ ಯಾವಾಗ್ ನೋಡಿದ್ರೂ ಹೆಳ್ತಿರ್ತಾನೆ, ನಮ್ ದೇಶದಲ್ಲಿ ನಾವು ನೀರು ಕುಡಕಂಡ್ ಬದುಕ್ತೀವಿ ಅಂತ. ನಮಿಗೆ ಇಲ್ಲಿ ಹಾಗಂತೂ ಇರೋಕ್ ಸಾಧ್ಯವೇ ಇಲ್ಲ. ಇವತ್ತು ದುಡೀಬೇಕು, ನಾಳೆ ತಿನ್ನಬೇಕು, ತಿನ್ನದಿದ್ರೂ ಪರವಾಗಿಲ್ಲ ಇರೋ ಸಾಲಗಳನ್ನ ತೀರುಸ್‌ಬೇಕು...ಅದಪ್ಪಾ ಬದುಕು. ಕೆಲವೊಂದ್ ಸರ್ತಿ ಅನ್ಸುತ್ತೆ, ಇದನ್ನ ಬದುಕು ಅಂತ ಕರದೋರು ಯಾರು ಅಂತ? ಸುಮ್ನೇ ದೊಂಬರಾಟ ಅಂತ ಕರೆದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತಲ್ವಾ?

ನಾನು ನನ್ನ ಕೆಲ್ಸಕ್ಕೆ ಬಯ್ದೆ ಅಂತ ನಮ್ ಮನೆಯವರಿಗಾಗ್ಲೀ ನಮ್ ಬಾಸಿಗಾಗ್ಲೀ ಹೇಳಿಬಿಟ್ಟೀರಾ, ಅವುರಿಗೆಲ್ಲ ನನ್ನ ಮೇಲೆ ಪ್ರೀತಿ-ವಿಶ್ವಾಸ ಇರೋದು ಇದ್ದೇ ಇರುತ್ತೇ, ಆದ್ರೆ ನಾಳೆ ಮಾಡೋ ಕೆಲ್ಸಗಳನ್ನು ಎಲ್ಲಾದ್ರೂ ತಪ್ಪಿಸಿಕೊಂಡ್ ಬಿಟ್ಟಾನು ಅಂತ ಸುಳಿವೇನಾದ್ರೂ ಸಿಕ್ಕಿದ್ರೆ ಕಷ್ಟಾ, ಹೇಳಿಬಿಡಬೇಡಿ ಮತ್ತೆ! ಖುರ್ಚೀ ಕೆಲ್ಸಕ್ಕೇ ಜೈ!

Tuesday, August 14, 2007

ಯಶಸ್ಸಿನ ಹಿಂದಿರುವ ಗುಟ್ಟು

ಓರಿಯಂಟಲ್ ಮೂಲದ ವೈದ್ಯ ದಂಪತಿಗಳಿಬ್ಬರು ನನಗೆ ಪರಿಚಯ, ಕೊರಿಯಾದಿಂದ ಅವರು ನಾಲ್ಕೈದು ವರ್ಷಗಳ ಹಿಂದೆ ಬಂದವರು, ಅಮೇರಿಕಕ್ಕೆ ಬಂದ ಮೊದಲಲ್ಲಿ ಒಂದು ಸ್ವಲ್ಪವೂ ಇಂಗ್ಲೀಷ್ ಬರುತ್ತಿರಲಿಲ್ಲವಂತೆ. ಆದರೆ ಇಲ್ಲಿಗೆ ಬಂದ ಮೊದಲೆರಡು ವರ್ಷಗಳಲ್ಲಿ ಅವರು ಪಟ್ಟ ಪರಿಶ್ರಮದಿಂದ ಎಮ್.ಡಿ. ಆಗಲು ಬೇಕಾದ ಪೂರ್ವಭಾವೀ ಪರೀಕ್ಷೆಗಳಲ್ಲಿ ನೂರಕ್ಕೆ ೯೯ ಅಂಕಗಳನ್ನು ಗಳಿಸಿ, ಯಶಸ್ವಿಯಾಗಿ ತಮ್ಮ ಪದವಿಯನ್ನು ಮುಗಿಸಿ ಈಗ ಒಂದು ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಮೆಡಿಕಲ್ ಪರೀಕ್ಷೆಗಳ ಬಗ್ಗೆ (ಯು.ಎಸ್.ಎಮ್.ಎಲ್.ಇ.) ಹೆಚ್ಚು ಜನರಿಗೆ ಅದರ ಆಳ-ವಿಸ್ತಾರ ಗೊತ್ತಿರದಿರಬಹುದು. ಪ್ರತಿಯೊಂದು ಹಂತದ ಪರೀಕ್ಷೆಗಳು ಸುಮಾರು ಎಂಟು ಘಂಟೆಗಳ ವ್ಯಾಪ್ತಿಯವು, ಸುಮಾರು ೩೫೦ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಉತ್ತರಿಸಿಕೊಂಡು ಹೋಗಬೇಕಾಗುತ್ತದೆ. ಪ್ರತಿಯೊಂದು ಪ್ರಶ್ನೆಯೂ, ಅದರ ನಿರೀಕ್ಷಿತ ಉತ್ತರವೂ ಸರಿಯಾದ ತಯಾರಿಯನ್ನು ಬೇಡುತ್ತದೆ. ಎಲ್ಲಕ್ಕೂ ಮಿಗಿಲಾಗಿ ಪ್ರಶ್ನೆಗಳನ್ನು ನಿಗದಿತ ಸಮಯದಲ್ಲಿ ಓದಿ ಮುಗಿಸಿ ಸರಿಯಾಗಿ ಉತ್ತರ ಕೊಡಬೇಕಾದ ಜಾಣತನ ಬರುವುದಕ್ಕೆ ಸಾಕಷ್ಟು ತಯಾರಿಯನ್ನು ನಡೆಸಬೇಕಾಗುತ್ತದೆ.

ಬೇಕಾದಷ್ಟು ಜನರು ನೂರಕ್ಕೆ ೯೯ ಅಂಕಗಳನ್ನು ಇಂತಹ ಪರೀಕ್ಷೆಗಳಲ್ಲಿಗಳಿಸುತ್ತಾರಾದ್ದರಿಂದ ಅದೇನು ವಿಶೇಷವಲ್ಲ, ಆದರೆ ಕೇವಲ ನಾಲ್ಕು ವರ್ಷಗಳ ಹಿಂದೆ ಇಂಗ್ಲೀಷ್ ಸ್ವಲ್ಪವೂ ಬರದೆ, ಅವರ ಮೆಡಿಕಲ್ ವಿದ್ಯಾಭ್ಯಾಸವನ್ನು ಅವರ ನೇಟಿವ್ ಭಾಷೆಯಲ್ಲಿಯೇ ನಡೆಸಿ, ಒಂದೇ ವರ್ಷದಲ್ಲಿ - ಅಮೇರಿಕಕ್ಕೆ ಬಂದು ಇಂಗ್ಲೀಷನ್ನು ಕಲಿತು, ಟೊಫೆಲ್ ಪರೀಕ್ಷೆಯನ್ನು ಕೊಟ್ಟು, ಮುಂದೆ ಮೆಡಿಕಲ್ ಪರೀಕ್ಷೆಗಳಿಗೆ ತಯಾರಾಗಿ ಅದರಲ್ಲೂ ಹೆಚ್ಚಿನ ಅಂಕಗಳನ್ನು ಗಳಿಸುವುದು ನನಗಂತೂ ಸಾಕಷ್ಟು ಬೆರಗನ್ನು ಮೂಡಿಸಿದೆ. ಅವರ ಮೂಲ ವಿದ್ಯಾಭ್ಯಾಸ, ಬುದ್ಧಿವಂತಿಕೆ ಇಲ್ಲಿ ಹೆಚ್ಚಿನ ಮಟ್ಟದ ಪಾತ್ರವನ್ನು ತೋರಿದ್ದರೂ, ಅವರು ಅತ್ಯಂತ ಕಠಿಣ ಪರಿಶ್ರಮದಿಂದ ಇಂಗ್ಲೀಷನ್ನು ಕಲಿತು ತಮ್ಮ ಹೆಚ್ಚುತನವನ್ನು ಅಲ್ಲಿಯೂ ಮೆರೆಯುವುದನ್ನು ನೋಡಿದರೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ.

ಈ ಕೊರಿಯನ್ ವೈದ್ಯ ದಂಪತಿಗಳ ಮಾತು (spoken English) ಅಂತಹ ಹೆಚ್ಚಿನ ಮಟ್ಟದ್ದೇನೂ ಅಲ್ಲ, ಅದರೆ ಅವರ ಇಂಗ್ಲೀಷಿನ ಕೊರತೆ ಅವರನ್ನೆಂದೂ ನಿಲ್ಲಿಸಿದ್ದಿಲ್ಲ.

***

ನಮ್ಮ ಕಂಪನಿಯ ಭಾರತದ ಎರಡು ಬ್ರ್ಯಾಂಚುಗಳಲ್ಲಿನ ಕೆಲಸಗಾರರೊಂದಿಗೆ ಆಗಾಗ್ಗೆ ಒಡನಾಡುವುದು ಇಲ್ಲಿನ ನನ್ನಂತಹ ಕೆಲಸಗಾರರಿಗೆ ದಿನನಿತ್ಯದ ಕೆಲಸದ ಒಂದು ಭಾಗವಾಗಿ ಹೋಗಿದೆ. ದಿನೇದಿನೇ ಹೆಚ್ಚಿನ ಕೆಲಸ ಕಾರ್ಯಗಳು ಭಾರತದಿಂದಲೇ ಆಗುತ್ತಿರುವುದು ಒಂದು ರೀತಿಯ ಡಿಪೆಂಡೆನ್ಸಿ ಆಗಿ ಹೋಗಿದೆ. ಹೀಗೆ ಭಾರತದ ಕೆಲಸಗಾರರೊಂದಿಗೆ ಒಡನಾಡುವಾಗ ಗಮನಿಸಿದ ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳುವುದು ನನ್ನ ಆಶಯ.

ಬಿಸಿನೆಸ್ ಮ್ಯಾನೇಜ್‌ಮೆಂಟ್, ಅಥವಾ ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ ಕೆಲಸಕ್ಕೆ ಸಂಬಂಧಿಸಿದಂತೆ ಕಮ್ಮ್ಯೂನಿಕೇಷನ್ನಿಗೆ ಬಹಳ ಮಹತ್ವದ ಸ್ಥಾನವಿದೆ. ಹೊಸ ಪ್ರಾಜೆಕ್ಟಾಗಲೀ, ಇದ್ದ ಪ್ರೋಗ್ರಾಮಿನ ಮಾಡಿಫಿಕೇಷನ್ನಾಗಲೀ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಒಬ್ಬರಿಂದ ಇನ್ನೊಬ್ಬರಿಗೆ ಮಾತುಕಥೆ ನಡೆದು, ಅದರಲ್ಲಿ ಎಷ್ಟು ಪರಿಣಾಮಕಾರಿಯಾಗಿ ವಿಷಯಗಳು ವಿನಿಮಯಪಡಲ್ಪಡುತ್ತವೆ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧರಿತವಾಗುತ್ತದೆ. ಯಾವುದಾದರೊಂದು ಸಣ್ಣ ಕೆಲಸದ ಔಟ್‌ಪುಟ್ ಆಗಿರಬಹುದು, ಅಥವಾ ಹೀಗೆ ಮಾಡಿದರೆ ಹಾಗೆ ಬರುತ್ತದೆ ಎನ್ನುವ ನಿರೀಕ್ಷೆ ಇರಬಹುದು - ಇವೆಲ್ಲವೂ ಸರಿಯಾಗಿ ಕಮ್ಮ್ಯೂನಿಕೇಟ್ ಆಗದೇ ಹೋದರೆ - ನಾನು ಹೇಳಿದ್ದು ಒಂದು, ಅವರು ಮಾಡಿದ್ದು ಇನ್ನೊಂದು ಎನ್ನುವಂತಾಗುತ್ತದೆ.

ನಾನು ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಗಮನಿಸಿದ ಹಾಗೆ ಭಾರತಲ್ಲಿನ ಬೆಳವಣಿಗೆಯ ವೇಗಕ್ಕೆ ಅಲ್ಲಿ ಹೆಚ್ಚು ಜನರು ಹೆಚ್ಚು ಸಮಯ ಒಂದು ಬಿಸಿನೆಸ್‌ಗಾಗಲೀ, ಒಂದೇ ಪ್ರಾಜೆಕ್ಟ್‌ಗಾಗಲೀ ಕಟ್ಟಿ ಬೀಳುವ ಸಾಧ್ಯತೆ ಕಡಿಮೆ. ಅವರ ಹೆಚ್ಚಿನ ಅನುಭವ ಇಲ್ಲದಿರುವ ವಿಷಯ ಅವರ ಸಂವಹನಕ್ಕೆ ಹೇಗೆ ಮಾರಕವಾಗುತ್ತದೆಯೋ ಹಾಗೇ ಒಮ್ಮೆ ಕೈಗೆತ್ತಿಕೊಂಡ ಕೆಲಸದ ಪೂರ್ಣ ವಿವರಗಳನ್ನು ಅರಿಯದೇ ಹೊರಡಿಸಿದ ಔಟ್‌ಪುಟ್ ಸಹಾ ಅಷ್ಟೇ ಹಗುರವಾಗಿರುತ್ತದೆ. ಅಲ್ಲಿಯ ವೇಗ, ಕಡಿಮೆ ಜೀರ್ಣಿಸಿಕೊಂಡು ಹೆಚ್ಚು ಉತ್ಪಾದಿಸುವ ಒತ್ತಡ, ಅವರವರೇ ಹುಟ್ಟಿಸಿಕೊಂಡ ಲೇಯರ್ರುಗಳು ಇವನ್ನೆಲ್ಲಾ ಮೀರಿ ಬೆಳೆಯುವುದಾಗಲೀ, ಅದಕ್ಕೆ ಪೂರಕವಾದ ಬೆಳವಣಿಗೆಗಳಾಗಲೀ ಅಷ್ಟೊಂದು ಕಾಣಸಿಗುವುದೇ ಇಲ್ಲ.

ಹುಟ್ಟಿದಾಗಿನಿಂದ ಇಂಗ್ಲೀಷ್ ಮೀಡಿಯಮ್ಮಲ್ಲೇ ಓದಿ ಇಂಜಿನಿಯರಿಂಗ್ ಮುಗಿಸಿರುವ ನಮ್ಮ ಭಾರತದ ಕೆಲಸಗಾರರ ಬುದ್ಧಿಮತ್ತೆಯಲ್ಲಿ ಯಾರಿಗೇನೂ ಕಡಿಮೆ ಇಲ್ಲ, ಆದರೆ ಎಫೆಕ್ಟಿವ್ ಕಮ್ಮ್ಯೂನಿಕೇಷನ್ನ್ ಎನ್ನುವುದರಲ್ಲಿ ಹತ್ತಕ್ಕೆ ನಾಲ್ಕು ಅಂಕಳನ್ನೂ ಗಳಿಸುವುದಿಲ್ಲ. ಆತ ಒಂದು ಘಂಟೆ ನಮ್ಮೊಡನೆ ಕಾನ್‌ಫರೆನ್ಸ್ ಕಾಲ್‌ನಲ್ಲಿದ್ದರೆ ಆತ ಆರಂಭಿಸುವ ಪ್ರತಿಯೊಂದು ವಾಕ್ಯಗಳೂ 'Actually...' ಯಿಂದ ಆರಂಭವಾಗುವುದೇತಕ್ಕೆ ಎಂದು ನನಗಿನ್ನೂ ಗೊತ್ತಿಲ್ಲ, ಅವನು Actually ಎಂದು ಶುರು ಮಾಡಿದರೆ, ಇನ್ನು ಕೆಲವರು Basically ಎನ್ನುತ್ತಾರೆ, ಮತ್ತೆ ಕೆಲವರು 'I think...' ಎಂದೇ ತಮ್ಮ ಪ್ರತಿಯೊಂದು ವಾಕ್ಯವನ್ನೂ ಅರಂಭಿಸುವ ರೂಢಿಯಲ್ಲಿರುತ್ತಾರೆ. ಈ ಬಗೆಯ ವಾಕ್ಯ, ವಾಕ್ಯರಚನೆ ಭಾರತದಲ್ಲಿ ಹೇಗೆ ಚಾಲ್ತಿಗೆ ಬಂದು ಅಲ್ಲಿ ಹೇಗೆ ಅರ್ಥ ಮಾಡಿಕೊಳ್ಳಲ್ಪಡುವುದೋ ನನಗೆ ತಿಳಿಯದು, ಆದರೆ ಒಂದು ನೇಟಿವ್ ಇಂಗ್ಲೀಷ್ ಪರಿಸರದ ಹಿನ್ನೆಲೆಯಲ್ಲಿ ನೋಡಿದರೆ ಹಾಸ್ಯಾಸ್ಪದವೆನ್ನಿಸುವುದಿಲ್ಲವೇ? ಹೋಗಲಿ, ಇಂಗ್ಲೀಷ್ ಇವರ ಜಾಯಮಾನದ ಭಾಷೆಯಲ್ಲಾ ಹೇಗಾದರೂ ಆರಂಭಿಸಲಿ ಎಂದುಕೊಂಡರೆ, ಹೆಚ್ಚೂ ಕಡಿಮೆ ಪ್ರತಿಯೊಂದು ವಾಕ್ಯವೂ ಸರಿಯಾಗಿ ಕೊನೆಗೊಳ್ಳದೆ ವಾಕ್ಯಗಳು ಮಧ್ಯದಲ್ಲಿಯೇ ನಿಂತುಹೋಗುವುದು ಮತ್ತೊಂದು ರೀತಿಯ ಅನುಭವವನ್ನು ಮೂಡಿಸುತ್ತವೆ. ಅಂತಹ ಧ್ವನಿಯ ಹಿಂದೆ ಯಾವ ಭಾವನೆಯಾಗಲೀ ಆತ್ಮವಿಶ್ವಾಸವಾಗಲೀ ನನಗೆಂದೂ ಕಂಡುಬಂದಿಲ್ಲ. ಇಲ್ಲಿ ನಮ್ಮೊಡನೆ ಕೆಲಸ ಮಾಡುವ ಆರ್ಕಿಟೆಕ್ಟ್ ನಾಲ್ಕು-ಐದು ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿ ಏನೋ ಒಂದು ಸಿದ್ಧಾಂತವನ್ನು ಮಂಡಿಸುತ್ತಾನೆ, ಅದಕ್ಕೆ ಉತ್ತರ ಅಥವಾ ಸಾಧಕ/ಬಾಧಕವಾಗಿ ಆ ಕಡೆಯಿಂದ ಹರಿದು ಹೋದ ಗಂಟಲಿನಿಂದ ಬರುವ ಧ್ವನಿಯ ಹಾಗೆ 'yes / no' ಉತ್ತರಬರುತ್ತದೆ, ನನಗೆ ಪೀಕಲಾಟಕ್ಕಿಟ್ಟುಕೊಂಡು ಎರಡೂ ಪಕ್ಷಗಳ ವಿವರಗಳನ್ನು ಮತ್ತೆ ಪುನರಾವರ್ತಿಸುತ್ತೇನೆ, ಅದಕ್ಕೂ ಆ ಕಡೆಯಿಂದ ಸರಿಯಾದ ಮಾತೇ ಹೊರಡಲಿಲ್ಲವೆಂದರೆ ನಾವು ಒಂದೇನು ಹತ್ತು ಘಂಟೆಗಳ ಕಾಲ ಕಾನ್‌ಫರೆನ್ಸ್ ನಲ್ಲಿದ್ದರೂ ಅದಕ್ಯಾವ ಅರ್ಥವೂ ಹುಟ್ಟೋದಿಲ್ಲ.

***

ಏನಾಗಿದೆ ನಮ್ಮ ಬುದ್ಧಿವಂತ ಇಂಜಿನಿಯರುಗಳಿಗೆ? ನನಗೆ ಇಂತಹ ವಿಷಯ ಗೊತ್ತಿಲ್ಲ ಎಂದು ನಿರಾತಂಕವಾಗಿ ಹೇಳುವ ಜನರಿಗೆ ಅದರ ಹಿಂದಿನ implied ಜವಾಬ್ದಾರಿಯೊಂದು ಕಣ್ಣಿಗೇಕೆ ಕಾಣಿಸದು? ಆರು ತಿಂಗಳುಗಳ ಕಾಲ ಕೆಲಸ ಮಾಡಿದ ಹುಡುಗನಿಗೆ ಆ ವ್ಯವಸ್ಥೆಯ ಮೂಲಭೂತ ವಿಷಯಗಳ ಬಗ್ಗೆಯೂ ಒಂದು ಐದು ನಿಮಿಷ ಮಾತನಾಡದಿರುವ ಕೊರತೆ ಏನಿದೆ? ತಾವು ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಳ್ಳುವವರು ತಮ್ಮ ಕೆಲಸದ ಬಗ್ಗೆ ತಿಳಿದುಕೊಳ್ಳಲಾರದ ಅಭಾವವನ್ನು ಏಕೆ ಸೃಷ್ಟಿಸಿಕೊಳ್ಳುತ್ತಾರೆ? ಹೀಗೆ ಪ್ರತಿದಿನವೂ ಬೇಕಾದಷ್ಟು ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ.

ಇತ್ತೀಚಿನ ಪದವಿ ತರಗತಿಗಳು ಕಮ್ಮ್ಯೂನಿಕೇಷನ್ನ್, ಪ್ರೆಸೆಂಟೇಷನ್ನಿಗೆ ಮಹತ್ವವನ್ನು ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಪ್ರಕಾರ ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಬ್ಬರೂ ತಮ್ಮ ತಮ್ಮ ವಿಷಯ, ಅಸೈನ್‌ಮೆಂಟ್ ವಿವರಗಳನ್ನೊಳಗೊಂಡು ಕೊನೇಪಕ್ಷ ತಿಂಗಳಿಗೊಂದಾದರೂ ಕ್ಲಾಸ್ ಪ್ರೆಸೆಂಟೇಷನ್ ಕೊಡಲೇಬೇಕು. ಹಾಗೆ ಮಾಡುವುದರಿಂದಲಾದರೂ ವಿಷಯದಲ್ಲಿ ಸಾಕಷ್ಟು ಹಿಡಿತ ಬಂದು ಅದನ್ನು ಇನ್ನೊಬ್ಬರ ಮುಂದೆ (ಸಭಿಕರಿಗೆ ತಕ್ಕಂತೆ) ವಿಷದಪಡಿಸುವ ಕಲೆ ಸಿದ್ಧಿಸಬಹುದು. ಪ್ರತಿಯೊಬ್ಬರೂ ಎಕ್ಸ್‌ಪರ್ಟ್ ಕಮ್ಯೂನಿಕೇಷನ್ ಮಾಡದೇ ಇರಬಹುದು, ಅದರಿಂದಾಗಿ ಕೊನೇಪಕ್ಷ ತಾವು ಏನು ಹೇಳಬೇಕೋ ಅದಕ್ಕೆ ತಕ್ಕ ತಯಾರಿಯನ್ನಾದರೂ ಮಾಡಿಕೊಂಡರೆ ಎಷ್ಟೋ ಸಹಾಯವಾದಂತಾಗುತ್ತದೆಯಲ್ಲವೇ?

ಬಿಳಿ ಕಾಲರಿನ ಕೆಲಸದಲ್ಲಿ ಒಂದಿಷ್ಟು ನಿರೀಕ್ಷೆಗಳು ಇದ್ದೇ ಇರುತ್ತವೆ - ಟೀಮ್ ಪ್ಲೇಯರ್, ಎಕ್ಸಲೆಂಟ್ ಕಮ್ಮ್ಯೂಕೇಷನ್ನ್, ಹಲವಾರು ವಿಷಯಗಳು ಗೊತ್ತಿರಬಹುದಾದ ಅಡಿಪಾಯ, ಕ್ಲಿಷ್ಟಕರ ಪರಿಸ್ಥಿತಿಗೆ ಒಡನೆಯೇ ಹೊಂದಿಕೊಂಡು ಫಲಿತಾಂಶ ಹೊರತರಬಹುದಾದ ಪ್ರಯತ್ನ, ಇತ್ಯಾದಿ.

ನನ್ನ ಪ್ರಕಾರ ಅಂದು ಒಂದಕ್ಷರ ಇಂಗ್ಲೀಷ್ ಬರದಿದ್ದ ಕೊರಿಯನ್ ವೈದ್ಯ ದಂಪತಿಗಳ ಇಂದಿನ ಯಶಸ್ಸಿನ ಹಿಂದಿರುವ ಗುಟ್ಟಿನಲ್ಲಿ ನಾವೆಲ್ಲರೂ ಕಲಿಯಬೇಕಾದ ಪಾಠವೊಂದಿದೆ!

Sunday, August 12, 2007

ತಮೀಗೆ ಯುನಿಕ್ಸೂ, ಮಂದೀಗೆ ವಿಂಡೋಸೂ...

'ಲೋ ಶಿಷ್ಯಾ ಇಲ್ಲಿ ಬಾ, ಬಂದಾ ನಿನ್ ಫ್ರೆಂಡೂ ಹಲ್ಲ್ ಕಿರಕಂಡೂ...' ಎಂದು ಸೋಫಾದಲ್ಲಿ ಕೂತು ಟಿವಿ ನೋಡುತ್ತಿದ್ದ ಸುಬ್ಬ ಒಂದೇ ಸಮನೇ ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ನಾನು ವಸ್ತ್ರಕ್ಕೆ ಕೈ ಒರೆಸಿಕೊಳ್ಳುತ್ತಲೇ ಓಡೋಡಿ ಬಂದೆ,

'ಏನಾಗ್ತಾ ಇದೆ?...' ಎಂದು ನಾನು ಬರುವಷ್ಟರಲ್ಲಿ ಪ್ರೆಸಿಡೆಂಟ್ ಬುಷ್ ಪತ್ರಿಕಾಕರ್ತರನ್ನುದ್ದೇಶಿಸಿ ಭಾಷಣ ಮಾಡಲು ಪೋಡಿಯಂ ಹತ್ತಿ ನಿಂತಾಗಿತ್ತು, 'ಏ, ಬುಷ್ಷ್ ಮಾತಾಡ್ತಾ ಇದಾನಾ..., ನಾನು ಏನೋ ಆಗ್ತಾ ಇದೆ ಅಂದುಕೊಂಡೆ. ಆದಿರ್ಲಿ ಅವನ್ಯಾವಾಗ ನನ್ನ ಫ್ರೆಂಡ್ ಆಗಿದ್ದು?' ಎಂದು ಪ್ರಶ್ನೆ ಎಸೆದೆ.

'ಮತ್ತೇ? ಅವನನ್ನ, ಈ ದೇಶವನ್ನ ನಂಬಿಕೊಂಡು ಬಂದಿದ್ದೀರಲ್ಲಾ, ಅವನು ನಿಮ್ಮ ಸ್ನೇಹಿತನಾಗ್ದೇ ಇನ್ನೇನ್ ವೈರಿ ಆಗ್ತಾನಾ?' ಎಂದು ನನ್ನನ್ನೇ ಕೆಣಕಿದ.

'ಏ, ಬುಷ್ಷನ್ನ ನಂಬಿಕೊಂಡು ನಾವ್ ಬರಲಿಲ್ಲ, ಅದ್ರಲ್ಲೂ ನಾನು ಈ ದೇಶಕ್ಕೆ ಬರೋವಾಗ ಕ್ಲಿಂಟನ್ನು ಇದ್ದ ಕಾಲ, ಎಲ್ಲವೂ ಸುಭಿಕ್ಷವಾಗಿತ್ತು, ಒಂದು ರೀತಿ ರಾಮರಾಜ್ಯ ಅಂತಾರಲ್ಲಾ ಹಾಗಿತ್ತು, ಇವನು ಅದೆಲ್ಲಿಂದ ಬಂದ್ನೋ ಬಂದ ಘಳಿಗೇನೇ ಸರೀ ಇಲ್ಲ ನೋಡು, ಒಂದಲ್ಲ ಒಂದು ಅಲ್ಲೋಲಕಲ್ಲೋಲ ನಡೆದೇ ಇದೆ ಮೊದಲಿನಿಂದ್ಲೂ...' ಎಂದು ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

'ಸ್ವಲ್ಪ ಸುಮ್ನಿರು, ವೆಕೇಷನ್ನಿಗೆ ಹೊಂಟು ನಿಂತಿದಾನಂತೆ, ಅದೇನ್ ಬೊಗೊಳ್ತಾನೇ ಅಂತ ಕೇಳೋಣ...' ಎಂದು ಟಿವಿಯ ಧ್ವನಿಗೆ ಕಿವಿ ಹಚ್ಚಿದ. ಸೆನೆಟ್ಟೂ ಕಾಂಗ್ರೇಸ್ಸೂ ಈಗಾಗಲೇ ಸಮರ್ ರಿಸೆಸ್‌ಗೆಂದ್ ಬಂದ್ ಆದ ಹಾಗೆ ಕಾಣ್ಸುತ್ತೆ, ಈಗ ಪ್ರೆಸಿಡೆಂಟೂ ವೆಕೇಷನ್ನಿಗೆ ಹೊರಟು ನಿಂತಿರೋದನ್ನ ಕೊನೇ ಆಪರ್ಚುನಿಟಿ ಎಂದು ಬೇಕಾದಷ್ಟು ಜನ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಕುಕ್ಕರುಗಾಲಿನಲ್ಲಿ ಕುಳಿತಿದ್ದರು. ಇನ್ನೊಂದ್ ವರ್ಷ ಚಿಲ್ಲರೆ ಅವಧಿಯಲ್ಲಿ ತನ್ನ ರಾಜ್ಯಭಾರ ಹೊರಟು ಹೋಗುತ್ತೇ ಅನ್ನೋ ನೋವಿಗೋ ಏನೋ ಬುಷ್ಷ್ ಇತ್ತೀಚೆಗೆ ಬಹಳ ಫಿಲಾಸಫಿಕಲ್ ಆದ ಹಾಗೆ ಕಾಣುತ್ತಿದ್ದ ಹಾಗನ್ನಿಸಿತು. ನಾನು ಪ್ರೆಸಿಡೆಂಟ್ ಹೇಳೋ ಮಾತುಗಳಿಗೆ ಅಷ್ಟೊಂದು ಗಮನ ಕೊಡದೇ ಬೇರೇನೋ ಯೋಚಿಸ್ತಾ ಇರೋದನ್ನ ಗಮನಿಸಿದ ಸುಬ್ಬ,

'ಅದ್ಸರಿ, ನನಗೆ ಮೊನ್ನೇ ಇಂದಾ ಈ ಪ್ರಶ್ನೆ ತಲೇ ಒಳಗೆ ಕೊರೀತಾ ಇದೆ, ನಿನಗೇನಾದ್ರೂ ಉತ್ತರಗೊತ್ತಿರಬಹುದು...' ಎಂದ.

ನಾನು ಬರೀ, 'ಹ್ಞಾ...' ಎಂದು ಸುಬ್ಬನ ಕಡೆಯೇ ಪ್ರಶ್ನಾರ್ಥಕವಾಗಿ ನೋಡಿದೆ.

ಸುಬ್ಬ ಮುಂದುವರೆಸಿದ, 'ಈ ಅಮೇರಿಕದೋರು ಇರಾಕ್ ಆಕ್ರಮಣ ಮಾಡೋದಕ್ಕೆ ಮೊದಲು ಅಲ್ಲಿ ಸದ್ದಾಮನ ಪ್ರೆಸಿಡೆಂಟ್ ರೂಲ್ ಇತ್ತೋ ಇಲ್ವೋ?'

'ಹೌದು, ಇತ್ತು'.

'ಆಂದ್ರೆ ಅಧ್ಯಕ್ಷೀಯ ಪದ್ದತಿ ಸರ್ಕಾರ ಅನ್ನು...'

'ಅದನ್ನ ಅಧ್ಯಕ್ಷೀಯ ಪದ್ದತಿ ಅನ್ನಬಹುದು, ಆದ್ರೆ ಪ್ರಜಾಪ್ರಭುತ್ವವೋ ಹೌದೋ ಅಲ್ವೋ ಗೊತ್ತಿಲ್ಲ, ಚುನಾವಣೆಗಳು ಆಗ್ತಿದ್ವು, ಆದ್ರೆ ಸದ್ದಾಮನೇ ಗೆಲ್ತಿದ್ದ!'

'ಇರ್ಲಿ, ಅಲ್ಲಿ ಅಧ್ಯಕ್ಷೀಯ ಪದ್ಧತಿ ಇತ್ತು ಅಂತ ಇಟಗೋ, ಇಲ್ಲೂ ಅಧ್ಯಕ್ಷೀಯ ಮಾದರಿ ಸರ್ಕಾರಾನೇ ಇರೋದು ಯಾವಾಗ್ಲೂ...'

ಇವನು ತನ್ನ ಈ ಲಾಜಿಕ್ಕಿನಿಂದ ಎಲ್ಲಿಗೆ ಹೊರಟವನೆ ಎಂದು ಹೇಳಲು ಬರದೇ ನಾನು ಈ ಬಾರಿ ಸುಮ್ಮನಿದ್ದವನನ್ನು ತಿವಿದು,

'ಹೌದೋ ಅಲ್ವೋ ಹೇಳು?' ಎಂದು ಒತ್ತಾಯಿಸಿದ.

'ಹೌದು' ಎನ್ನದೇ ಬೇರೆ ವಿಧಿ ಇರಲಿಲ್ಲ.

'ಸರಿ ಹಂಗಾದ್ರೆ, ಇರಾಕ್‍ನ ಆಕ್ರಮಣ ಮಾಡಿ, ಅಲ್ಲಿ ಹಳೇ ಸರಕಾರ ತೆಗೆದು ಹೊಸ ಸರ್ಕಾರ ಇಟ್ಟಾಗ ಅಲ್ಲಿ ಪ್ರಧಾನ ಮಂತ್ರಿ ವ್ಯವಸ್ಥೇನಾ ಯಾತಕ್ಕ್ ತಂದ್ರೂ ಅಂತಾ?'

'...'

'ಅಲ್ಲಪಾ, ಈ ನೂರಿ ಅಲ್ ಮಲ್ಲಿಕೀ, ಅಲ್ಲಿ ಪ್ರಧಾನ್ ಮಂತ್ರೀ ತಾನೆ? ಪ್ರಪಂಚಕ್ಕೆ ಡೆಮಾಕ್ರಸಿನಾ ಹಂಚೋಕ್ ಹೋಗೋರು ತಮ್ಮ ವ್ಯವಸ್ಥೇನೇ ಇನ್ನೊಬ್ರಿಗೂ ಯಾಕ್ ಕೊಡೋದಿಲ್ಲಾ? ಅದರ ಬದಲಿಗೆ ಇವರಿಗೇ ಗೊತ್ತಿರದ, ಇನ್ನು ಅವರಿಗೂ ಗೊತ್ತಿರದ ಪ್ರಧಾನಮಂತ್ರಿ ವ್ಯವಸ್ಥೇನಾ ಯಾತಕ್ ತಂದ್ರೂ ಅಂತ ನಿನಗೆನಾದ್ರೂ ಗೊತ್ತಾ? ಇದೇ ಪ್ರಶ್ನೇ ಸುಮಾರ್ ದಿನದಿಂದ ತಲೇ ಕೊರಿತಾನೇ ಇದೇ ನೋಡು' ಎಂದು ಸುಮ್ಮನಾದ ನನ್ನನ್ನು ಉತ್ತರಕ್ಕೆ ಪೀಡಿಸುವ ಒಂದು ನೋಟ ಬೀರಿ.

'ನಂಗೊತ್ತಿಲ್ಲ, ನನ್ನ ಊಹೆ ಪ್ರಕಾರ, ಎಲ್ಲಿ ಸಮ್ಮಿಶ್ರ ಸರಕಾರ ಇರುತ್ತೋ ಅಲ್ಲೆಲ್ಲಾ ಪ್ರಧಾನಮಂತ್ರಿ ಸಿಷ್ಟಮ್ಮೇ ವರ್ಕ್ ಆಗೋ ಹಂಗ್ ಕಾಣುತ್ತೇ...' ಎಂದು ನನಗೆ ತೋಚಿದ್ದನ್ನು ಹೇಳಿದೆ. ಅದಕ್ಕವನು, 'ಅದೆಲ್ಲಾ ಬ್ಯಾಡಾ, ಈ ನನ್ ಮಕ್ಳು ತಮಿಗೆ ಯುನಿಕ್ಸ್ ಆಪರೇಟಿಂಗ್ ಸಿಷ್ಟಂ ಇಟಗೊಂಡು, ಇನ್ನೊಬ್ರಿಗೆ ವಿಂಡೋಸ್ ಹಂಚ್‌ತಾರಲ್ಲಾ ಅದಕ್ಕೇನ್ ಅನ್ನಣ?' ಎಲ್ಲಿಂದ ಎಲ್ಲಿಗೋ ಒಂದು ಕನೆಕ್ಷನ್ ಮಾಡಿ ಮಾತನಾಡಿದ.

'ಎಲಾ ಇವನಾ, ನಿನಗೇನು ಗೊತ್ತೋ ಆಪರೇಟಿಂಗ್ ಸಿಷ್ಟಂ ಬಗ್ಗೆ?' ಎಂದು ವಿಶ್ವಾಸದ ನಗೆ ಬೀರಿದರೂ, ಅವನ ತುಲನೆಯನ್ನು ಪೋಷಿಸದೇ, 'ಒಂದ್ ದೇಶವನ್ನು ಅತಂತ್ರ ಮಾಡಿದೋರಿಗೆ ಅಲ್ಲಿ ಏನು ನಡೆಯುತ್ತೇ ಅನ್ನೋದು ಗೊತ್ತಿರದೇ ಇದ್ದೀತೇನು...ಅದಿರ್ಲಿ, ವಿಂಡೋಸ್‌ನಲ್ಲಿ ಏನ್ ಸಮಸ್ಯೆ ಇದೇ?' ಎಂದೆ.

'ಏನೋ ಅಲ್ಪಾ ಸೊಲ್ಪಾ ತಿಳಕಂಡೀದೀನಿ, ಅಲ್ಲೀ ಇಲ್ಲೀ ಓದಿ...ವಿಂಡೋಸ್ ನಲ್ಲಿ ಬರೀ ಬಗ್ಸ್ ಅಂತೇ...ದೊಡ್ಡ ದೊಡ್ಡ ಕಾರ್ಪೋರೇಷನ್ನಿನ ಸರ್ವರುಗಳೆಲ್ಲಾ ಯುನಿಕ್ಸ್ ಬೇಸ್ಡ್ ಸಿಷ್ಟಂ‍ಗಳಂತೆ...ಅಂತ ಎಲ್ಲೋ ಓದಿದ ನೆನಪು, ಅದಕ್ಕೇ ಅಂದೆ' ಎಂದು ಸಮಜಾಯಿಷಿ ನೀಡಿದ.

'ಪ್ರಧಾನಮಂತ್ರಿ ವ್ಯವಸ್ಥೆಯಲ್ಲಿ ತೊಂದ್ರೆ ಇದೇ ಅಂತ ಜನರಲೈಜ್ ಮಾಡಕ್ ಆಗಲ್ಲಾ, ಯುಕೆ ನಲ್ಲಿ ಹತ್ತು ವರ್ಷಾ ನಡೀಲಿಲ್ವೇ ಬ್ಲೇರ್‌ನ ಆಡಳಿತ? ಇನ್ನು ಇಂಡಿಯಾದವ್ರ ಕಥೆ ಬಿಡೂ ಅಲ್ಲಿ ಬರೋ ಮಂತ್ರಿ ಮಹೋದಯ್ರನ್ನ ಲೆಕ್ಕ ಇಟ್‌ಗಳಕೆ ಕೈ ಬೆರಳುಗಳು ಸಾಲಲ್ಲ!

ಸುಬ್ಬ, 'ಏನೋ...ಈ ವಯ್ಯಾ ವೆಕೇಷನ್ನ್ ಇಂದ ಬರೋ ಹೊತ್ತಿಗೆ ಇನ್ನೊಂದ್ ರಾಮಾಯ್ಣ ಆಗ್ದೇ ಇದ್ರೆ ಸಾಕು...' ಎಂದು ರಾಗ ಎಳೆದು ಮತ್ತೆ ಬುಷ್ಷನ ಕಾನ್‌ಫರೆನ್ಸ್ ಕಡೆಗೆ ಕಿವಿಕೊಟ್ಟ, ನಾನು ಅಡುಗೆಮನೆ ಕಡೆಗೆ ನಡೆದೆ.

Friday, August 10, 2007

ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

’ಎಲ್ಲಾ ವರ್ಚುವಲ್ ಬದುಕು - ಛೇ!’ ಎಂದು ನನಗೇ ಕೇಳುವ ಹಾಗೆ ನಾನೇ ಹೇಳಿಕೊಂಡೆ...ನಾವು ಮಾತನಾಡೋದು ಯಾವಾಗಲೂ ಇನ್ನೊಬ್ಬರ ಜೊತೆಗೇ ಎಂದು ಏನಾದರೂ ಕಾನೂನು ಇದೆಯೇ, ಮೈಥಿಲಿ ಶರಣ್ ಗುಪ್ತರ ಪಂಚವಟಿಯ ಲಕ್ಷಣ ತನ್ನಷ್ಟಕ್ಕೇ ತಾನು ಮಾತನಾಡಿಕೊಳ್ಳುತ್ತಿದ್ದನಂತೆ - ಹಾಗೂ ಈ ಜಗತ್ತಿನ ಹುಚ್ಚರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಾರೆ ಎನ್ನೋದನ್ನ ನಿಮ್ಹಾನ್ಸ್‌ನ ಹುಚ್ಚರ ವಿಭಾಗದಲ್ಲಿ ಯಾವತ್ತೋ ನೋಡಿ ನಕ್ಕು ಸುಮ್ಮನಾಗಿದ್ದೇನೆ, ಅಲ್ಲಿ ನಾನೇಕೆ ಹೋಗಿದ್ದೆ ಅನ್ನೋದು ದೊಡ್ಡ ಕಥೆ, ಇನ್ನೊಂದು ದಿನಕ್ಕಿರಲಿ.

ಬ್ಯಾಂಕಿನವರು ಮನಸ್ಸಿಗೆ ಬಂದಂತೆ ಏನೇನೋ ಚಾರ್ಜ್ ಮಾಡಿಕೊಂಡು ನೂರಾ ಎಂಭತ್ತು ಡಾಲರ್ರುಗಳನ್ನು ನನ್ನ ಕ್ರೆಡಿಟ್ ಕಾರ್ಡಿನ ಅಕೌಂಟಿನಲ್ಲಿ ಉಜ್ಜಿಕೊಂಡಿದ್ದನ್ನು ನೋಡಿ ಮೈ ಉರಿದು ಹೋಯಿತು. ಕೂಡಲೇ ಕಷ್ಟಮರ್ ಸರ್ವೀಸ್ ವಿಭಾಗಕ್ಕೆ ಫೋನಾಯಿಸಿ ಕೇಳಿದರೆ ಆ ಕಡೆಯಿಂದ ಕೇಳಿಸಿದ ಸ್ವರದಲ್ಲಿ ಯಾವ ಕಳಕಳಿಯಾಗಲಿ, ಕಕ್ಕುಲತೆಯಾಗಲೀ ಇರಲಿಲ್ಲ - ಏಕಿರಬೇಕು? ಎಲ್ಲವೂ ಕಂಪ್ಯೂಟರ್ ನಡೆಸಿದಂತೆ ನಡೆಯುವ ಬಿಸಿನೆಸ್ ರೂಲ್ಸ್‌ಗಳು, ಅವರೋ ನಮ್ಮಂಥವರ ಸಿಟ್ಟಿಗೆ ಆಹಾರವಾಗಬೇಕಾಗಿ ಬಂದ ಬಲಿಪಶುಗಳು, ಅದೂ ಕೇವಲ ನಮ್ಮ ಮಾತಿಗೆ ಮಾತ್ರ ಸಿಕ್ಕುವ ಹಾಗೆ ಅದ್ಯಾವುದೋ ಪ್ರಪಂಚದ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ...ಇಂದಿನ ವರ್ಚುವಲ್ ಪ್ರಪಂಚದಲ್ಲಿ ನಾನು ಭಾರತದ ನಮ್ಮೂರಿನ ಪಕ್ಕದ ಊರಿನ ಹುಡುಗ/ಹುಡುಗಿಯೊಂದಿಗೆ ಮಾತನಾಡುತ್ತಿದ್ದರೂ ಅವರೂ ಬೇರೆ, ನಾವೂ ಬೇರೆ. ಸಿಟ್ಟಿನಲ್ಲಿ ಯಾರು ಏನು ಸಾಧಿಸಿದ್ದಾರೆ ಹೇಳಿ? ಎಲ್ಲವನ್ನೂ ನಯವಾಗಿ ವಿವರಿಸಿದೆ, ನೂರಾ ಎಂಭತ್ತು ಡಾಲರುಗಳನ್ನು ತಪ್ಪಾಗಿ ಚಾರ್ಜ್ ಮಾಡಿದ್ದೀರಿ, ಹಿಂತಿರುಗಿಸಿ ಎಂದು ಕೇಳಿಕೊಂಡೆ. ಹತ್ತು ನಿಮಿಷ ಕಥೆ ಕೇಳಿದ ಚೆಲುವೆ ಮರುಕಪಟ್ಟವಳಂತೆ ಕಂಡುಬಂದರೂ, ’ಕ್ಷಮಿಸಿ, ಚಾರ್ಜ್ ಅನ್ನು ಹಿಂತಿರುಗಿಸುವ ಅಧಿಕಾರ ನನಗಿಲ್ಲ, ಮತ್ತೊಬ್ಬರಿಗೆ ಟ್ರಾನ್ಸ್‌ಫರ್ ಮಾಡುತ್ತೇನೆ...’ ಎಂದು ಕರೆಯನ್ನು ಇನ್ನೊಬ್ಬರಿಗೆ ಟ್ರಾನ್ಸ್‌ಫರ್ ಮಾಡಿದಳು. ಆಗ ಹೊಳೆಯಿತು, ನನ್ನ ತಾಳ್ಮೆ ಅಮೇರಿಕಕ್ಕೆ ಬಂದ ಮೇಲೆ ಏಕೆ ಹೆಚ್ಚಾಗಿದೆ ಎಂಬುದಾಗಿ! ಇಷ್ಟು ಹೊತ್ತು ಎಲ್ಲವನ್ನು ಹತ್ತು ನಿಮಿಷಗಳ ಕಾಲ ವಿಷದ ಪಡಿಸಿದ ಮೇಲೆ ಮತ್ತೆ ಅದೇ ರಾಗವನ್ನು ಇನ್ನೊಬ್ಬರ ಮುಂದೆ ಹಾಡಬೇಕಾಗಿ ಬಂದುದು. ಮತ್ತೆ ಆಲಾಪನೆಯೊಂದಿಗೆ ಶುರುಮಾಡಿದೆ, ಈ ಚೆಲುವೆ, ನಡುನಡುವೆ ’ಹ್ಞೂ...’ ಎನ್ನುತ್ತಿದ್ದಳಾದರೂ ಆಕೆ ನನ್ನ ಕಥೆಯನ್ನು ಕೇಳುತ್ತಿದ್ದ ಬಗ್ಗೆ, ನನ್ನ ವಿಚಾರದಲ್ಲಿ ಕಳಕಳಿಯ ವಿಶ್ವಾಸ ತೋರುತ್ತಿರುವುದರ ಬಗ್ಗೆ ಯಾವುದೇ ನಂಬಿಕೆಯೂ ನನಗಿರಲಿಲ್ಲವಾದ್ದರಿಂದ ನನ್ನ ಧ್ವನಿಯಲ್ಲಿ ಯಾವುದೇ ಭಾವೋದ್ವೇಗವೂ ಕಾಣಿಸಿಕೊಳ್ಳಲಿಲ್ಲ. ಅದರ ಬದಲಿಗೆ ಇದೇ ರೀತಿ ಹತ್ತು ಹದಿನೈದು ಜನರ ಮುಂದೆ ನನ್ನ ಕಥೆಯನ್ನು ತೋಡಿಕೊಂಡು, ಹತ್ತು ಇ-ಮೇಲ್‌ಗಳನ್ನು ಬರೆದು ನನ್ನ ತತ್ವವನ್ನು ಸಾಧಿಸಿಕೊಳ್ಳುವುದರ ಬಗ್ಗೆ ಮನಸ್ಸು ಆಲೋಚಿಸಿಕೊಂಡು ಮುಂದೆ ಬರಬಹುದಾದ ಕಷ್ಟಗಳನ್ನು ನೆನೆದು ಸಂಯಮದಿಂದಿತ್ತು. ತತ್ವದ ವಿಚಾರಕ್ಕೆ ಬಂತೆಂದರೆ, ಅದೂ ನನ್ನಂಥ ಮೂರ್ಖರ ವಿಚಾರದಲ್ಲಿ ಹಣದ ಸಂಖ್ಯೆಗೆ ಯಾವುದೇ ಮಹತ್ವವಿರದು, ಏನಾದರೂ ಮಾಡಿ ನನ್ನದನ್ನು ಸಾಧಿಸಿಕೊಂಡು ಅವರು ನನ್ನ ಹಣವನ್ನು, ಅದೂ ತಪ್ಪಾಗಿ ಚಾರ್ಜ್ ಮಾಡಿದ ಹಣವನ್ನು ಹಿಂತಿರುಗಿಸಬೇಕು. ಅಷ್ಟೇ! (ಈ ತತ್ವದ ಕುದುರೆ ಸವಾರಿ, ನನ್ನ ಬಲವಾದ ಅಂಶವೆನ್ನುವುದಕ್ಕಿಂತಲೂ, ನನ್ನ ವೀಕ್‌ನೆಸ್ ಎಂದರೇ ಸರಿ.)

ಸದ್ಯ, ಎರಡನೇ ಬಾರಿ ಕಥೆಯನ್ನು ಹೇಳುವಲ್ಲಿನ ಆರ್ತನಾದಕ್ಕೇ ಈ ಚೆಲುವೆ ಕರಗಿದಳು ಎಂದು ಕಾಣುತ್ತೆ...ನನ್ನ ಹಣವನ್ನು ಹಿಂತಿರುಗಿಸುತ್ತೇನೆ, ಎಂದು ಭರವಸೆಯನ್ನು ನೀಡಿಯೇ ಬಿಟ್ಟಳು...ಅಬ್ಬಾ, ದೊಡ್ಡದೊಂದು ಮೋಡ ಕರಗಿ ಮಳೆ ಸುರಿದು ಮತ್ತೆ ಬೆಳಗು ಬಂದಂತಾಯಿತು.

ಆದರೆ, ಈ ವರ್ಚುವಲ್ ಪ್ರಪಂಚದ ಯಾರಿಗೂ ಕಾಣದೇ ನಡೆದ, ನಡೆಯುವ ಟ್ರಾನ್ಸಾಕ್ಷನ್ನುಗಳಿಗಾಗಲೀ, ಸಂಭಾಷಣೆಗಳಿಗಾಗಲಿ ಅವುಗಳ ಪರಿಣಾಮವೇನೂ ತಟ್ಟದು. ಬರೀ ಸೋಮವಾರದಿಂದ-ಶುಕ್ರವಾರದವರೆಗೆ ಮುಂಜಾನೆ ಒಂಭತ್ತರಿಂದ ಸಂಜೆ ಐದರವರೆಗೆ ಗ್ರಾಹಕರ ಕಷ್ಟಗಳನ್ನು ಅರಿಯುವಂತೆ ನಟಿಸುವ ಲಲನಾಮಣಿಗಳನ್ನು ನಾನು ನನ್ನ ಆಫೀಸಿನ ಸಮಯದಲ್ಲೇ ಮಾತನಾಡಿಸಬೇಕು. ಅದರಿಂದ ಅವರ ಕೆಲಸ ನಡೆಯಿತು, ನನ್ನ ವೈಯುಕ್ತಿಕ ಕೆಲಸ ಪೂರೈಸಿತು. ಆದರೆ ಹನ್ನೆರೆಡು ಘಂಟೆಗೆ ತಯಾರಾಗಬೇಕಾಗಿದ್ದ ವರದಿ ’ತಯಾರಾಯ್ತಾ?’ ಎಂದು ಒಂದು ಘಂಟೆ ಮೊದಲೇ ಕೇಳುವ ಬಾಸಿಗೆ ಏನು ಹೇಳಲಿ? ಯಾರೋ ನೆಟ್ಟು ಬೆಳೆಸಿದ ಬಿಸಿನೆಸ್ ರೂಲ್ಸ್‌ಗಳಿಗೆ ಆಹಾರವಾಗಬೇಕಾಗಿ ಬಂದ ಕ್ಯಾಪಿಟಲ್ ಪ್ರಪಂಚದ ಸರಕುಗಳಿಗೆ ನೊಂದ ನನ್ನ ಅರ್ಧ ಘಂಟೆ ಸಮಯವನ್ನು ಹಿಂತಿರುಗಿಸುವವರಾರು? ಕ್ಯಾಪಿಟಲ್ ಪ್ರಪಂಚದ ಆರೋಪಗಳಿಗೆ ನೀವು ತಕ್ಕನಾಗಿ ಅಥವಾ ಪ್ರತಿಯಾಗಿ ಧ್ವನಿಯನ್ನು ಹೊರಡಿಸದೇ ಹೋದಲ್ಲಿ ನಿಮ್ಮ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಯೂನಿವರ್ಸಲ್ ಒಪ್ಪಂದವನ್ನು ಜಗತ್ತಿಗೆ ಹೇಳಿಕೊಟ್ಟವರು ಯಾರು? ನನ್ನ ಅರ್ಧ ಘಂಟೆ ಹಾಳಾಗಿ ಹೋಯಿತು, ಮನಸ್ಸು ನೊಂದಿತು, ಯಾರಿಗೂ ಬೇಡದ, ಕಂಪನಿಗಳಿಗೆ ಬೇಕಾದ ನೂರಾ ಎಂಭತ್ತು ಡಾಲರ್ ಅನ್ನು ’ಉಳಿಸಿದೆ’ ಎಂದು ಹೇಳುವಂತೆಯೂ ಇಲ್ಲದಂತಾಗಿ ಹೋಯಿತು...ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

***

ಕ್ಯಾಪಿಟಲ್ ಪ್ರಪಂಚದ ದೊಡ್ಡ ಕಂಪನಿಯ ಏಣಿಯ ಕಣ್ಣುಗಳಲ್ಲಿ ಗೋಡೆಗೆ ಬಲವಾಗಿ ಒರಗಿಕೊಂಡಿರುವ ನನ್ನಂತಹವರ ಸಹೋದ್ಯೋಗಿಗಳನ್ನು ಬಿಟ್ಟು ಬೇರೆ ಬದುಕೇನಿದೆ? ಎಂದು ಬಲವಾದ ಯೋಚನೆ ಬಿಸಿಲು ಮಳೆಯಲ್ಲಿ ಹುಟ್ಟುವ ಕಾಮನಬಿಲ್ಲಿನಂತೆ ಅದ್ಯಾವುದೋ ಮನದ ಮೂಲೆಯಲ್ಲಿ ಎದ್ದು ನಿಂತಿತು. ಆಫೀಸಿನ ಬದುಕಿನ ಹೊರತಾಗಿ ನನ್ನ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟೇ ಸಂಬಂಧಗಳು, ಕೆಲವು ಇನ್ನೂ ಪೂರ್ಣ ಹೆಸರು ಗೊತ್ತಿರದವು, ಇನ್ನು ಕೆಲವು ಹೆಸರು ಗೊತ್ತಿದ್ದರೂ ಮುಖ ಪರಿಚಯವಿಲ್ಲದವು. ಆಗಾಗ್ಗೆ ವರ್ಚುವಲ್ ಪ್ರಪಂಚದ ಹರಿಕಾರರಂತೆ ಸಂದೇಶಗಳ ರೂಪದಲ್ಲಿ ಇನ್ಸ್ಟಂಟ್ ಮೆಸ್ಸೇಜುಗಳಾಗಿ ಬಂದು ಕಾಡುವವು. ನನ್ನ ಸ್ಪಂದನ, ಸಹಪಯಣವೇನಿದ್ದರೂ ಇಂಥವುಗಳ ಕೋರಿಕೆಗಳನ್ನು ಪೂರೈಸುವಲ್ಲಿ ಮಾತ್ರ ಸೀಮಿತವಾಗಿ ಹೋಗಿರುವುದೇ ಹೆಚ್ಚು. ನಿಮಗೆಲ್ಲರಿಗೂ ಆಗುವಂತೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಮದುವೆಯಾಗಲೀ, ಆತ್ಮೀಯ ಸ್ನೇಹಿತನ ಕಷ್ಟನಷ್ಟಗಳಿಗೆ ಸ್ಪಂದಿಸುವ ಧಾರ್ಮಿಕತೆಯಾಗಲೀ ಅದರಲ್ಲಿ ಇಲ್ಲ. ಇವತ್ತಿದ್ದವರು ನಾಳೆ ಇಲ್ಲವೆಂದರೂ ಏನೂ ಬದಲಾವಣೆಯಾದ ಹಾಗೆ ಕಾಣೋದಿಲ್ಲ.

ಯಾರನ್ನು ಸ್ನೇಹಿತರೆಂದು ಕರೆಯೋದು, ಸ್ನೇಹಿತರಿಗೆ ಇರಬೇಕಾದ ಕ್ವಾಲಿಫಿಕೇಷನ್ ಏನು? ಎಲ್ಲರೂ ಒಂದೇ ನೆಲೆಗಟ್ಟು, ಮನಸ್ಥಿತಿಯವರಾದರೆ ಅಲ್ಲಿ ಭಿನ್ನತೆ ಹೇಗೆ ಹುಟ್ಟಿ ಬೆಳೆಯುತ್ತದೆ? ಭಿನ್ನತೆ ಹುಟ್ಟಿ ಬೆಳೆಯದಿದ್ದಲ್ಲಿ, ವ್ಯತಿರಿಕ್ತ ಮನಸ್ಥಿತಿ ನಿರ್ಮಾಣವಾಗದಿದ್ದಲ್ಲಿ ಭಾಂದವ್ಯ ಬಂಜರುಭೂಮಿಯಾಗದಂತಿರುವುದಕ್ಕೆ ಏನು ಮಾಡುವುದು?

ಮಾಹಿತಿ ಜಾಲ, ಇಂಟರ್‌ನೆಟ್ ಸೂಪರ್‌ಹೈವೇ, ಮುಂತಾದ ಅಲ್ಟ್ರಾ ಮಾಡರ್ನ್ ಟೆಕ್ನಾಲಜೀ ಏನೇ ಬಂದರೂ ನಮ್ಮ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಸಣ್ಣ ಗೂಡಿನ ಚಿಕ್ಕ ಪಕ್ಷಿಯ ಧ್ವನಿಯಾಗಿ ಹೋಗಿರುವುದೇ ಹೆಚ್ಚು. ಈ ಹಕ್ಕಿಯ ರೆಕ್ಕೆಗಳು ಚಿಕ್ಕವು ಬಾನು ಮಿಗಿಲಾಗಿದ್ದರೇನಂತೆ ಹಾರಲು ಶಕ್ತಿ ಇಲ್ಲವಲ್ಲಾ...ಶಕ್ತಿ ಇದ್ದರೇನಂತೆ ಹಾರಲು ದಿಕ್ಕುಗಳು ಬೇಕಲ್ಲಾ. ಈ ಹಕ್ಕಿಯ ಕಿರಿದಾದ ಧ್ವನಿಯಲ್ಲಿನ ಸಂದೇಶಗಳೂ ಹೆಚ್ಚುಹೆಚ್ಚು ದೂರದವರೆಗೆ ಪಸರಿಸಲಾರದು. ಸಾವಿರದ ಒಂಭೈನೂರರ ಮೊದಲಲ್ಲಿ ಯಾವ ತಂತ್ರಜ್ಞಾನವಿಲ್ಲದಿದ್ದರೂ ಭಾರತದ ಉದ್ದಗಲಕ್ಕೆ ಸ್ವಾತಂತ್ರದ ಫೂರಕ ಸಂದೇಶಗಳು ಅದು ಹೇಗೆ ಹಬ್ಬುತ್ತಿದ್ದವು? ಇಂದಿನ ಮಾಹಿತಿ ಜಾಲದಲ್ಲಿ ನಮ್ಮ ಸಂದೇಶಗಳೇಕೆ ನರಸತ್ತವುಗಳಾಗಿ ಹೋಗುತ್ತವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಯಾವುದಾದರೂ ಋಷಿಗಳಿಗೆ ಮಾತ್ರ ಸಾಧ್ಯ. ಒಪ್ಪಿಕೊಳ್ಳೋಣ, ನಾವು ಬದಲಾಗಿದ್ದೇವೆ ಎನ್ನುವ ಸತ್ಯವನ್ನ. ನಮಗೆ ಅಂದು ಮುಖ್ಯವಾದದ್ದು ಇಂದು ನಿಷ್ಪ್ರಯೋಜಕ ಎಂಬ ಬೆಳವಣಿಗೆಯಾಗಿರುವುದನ್ನು ಸಹಜ ಎಂದು ಹೇಳಿ ಸುಮ್ಮನಾಗುವುದೇ ಒಳ್ಳೆಯದು.

Wednesday, August 08, 2007

ಒಮ್ಮೆ ಸುರಿಯೋಕ್ ಹಿಡೀತೂ ಅಂತಂದ್ರೆ....

'...ಇವತ್ತಾದ್ರೂ ಬೇಗ್ನೇ ಮನೇಗ್ ಹೋಗ್ಬೇಕು...' ಎಂದು ವಿಂಡ್‌ಶೀಲ್ಡ್‌ನ ಮೂಲಕ ಕಣ್ಣಿಗೆ ಕಾಣುವ ರಸ್ತೆಗಿಂತಲೂ ಯಾವಾಗಲೂ ಮುಂದೆಯೇ ಇರುವ ಮನಸ್ಸನ್ನು 'ಬುಶ್ಶ್...' ಎಂದು ಒಡೆದು ಹೋದ ಟಯರ್ ಸದ್ದು ಬ್ರೇಕ್ ಹಾಕಿ ಹಿಡಿದು ನಿಲ್ಲಿಸಿದಂತಾಗಿ ಯಾವಾಗಲೂ ಓಡುತ್ತಿರುವ ಮನಸ್ಸಿನ ಹಿಡಿತಕ್ಕೆ ಒಂದು ಕ್ಷಣ ಸಿಕ್ಕು ಬೆನ್ನು-ಕುತ್ತಿಗೆ ಮುಂದೆ ಬಗ್ಗಿದಂತಾಯಿತು. ರಸ್ತೆಯ ಬದಿಯಲ್ಲಿ ಯಾರದ್ದೋ ಪ್ರೈವೇಟ್ ಡ್ರೈವ್‌ವೇ ಇದ್ದುದರಿಂದ ಕಾರನ್ನು ಬದಿಗೆ ನಿಲ್ಲಿಸಿ ಹಿಂದಿನಿಂದ ಅಷ್ಟೇ ವೇಗದಲ್ಲಿ ಬರುತ್ತಿದ್ದ ಉಳಿದ ಕಾರುಗಳಿಂದ ಆ ಮಟ್ಟಿಗೆ ತಪ್ಪಿಸಿಕೊಂಡಂತಾಯಿತು. ಆದರೂ ಈ ಒಡೆದ ಟಯರನ್ನು ಹೇಗೆ ಸರಿಪಡಿಸುವುದು? ಯಾರನ್ನು ಕರೆಯುವುದು, ಹೇಗೆ ಕರೆಯುವುದು...ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಟ್ಟುವುದರ ಬದಲು ಅವುಗಳ ಬೆನ್ನ ಹಿಂದೆಯೇ ಏಳುತ್ತಿದ್ದ ಮತ್ತಷ್ಟು ಪ್ರಶ್ನೆಗಳು ನನ್ನನ್ನು ಇನ್ನಷ್ಟು ಕಂಗಾಲಾಗಿಸಿದವು.

ಸಮಯ: ಶುಕ್ರವಾರ ಸಂಜೆ ಐದು ಘಂಟೆ, ಮೂರು ನಿಮಿಷ...ನಾನು ಆರು ಘಂಟೆಯೊಳಗೆ ಡೇ ಕೇರ್ ತಲುಪಬೇಕು.

ಪರಿಸ್ಥಿತಿ: ಪ್ಯಾಸೆಂಜರ್ ಬದಿಯ ಮುಂದಿನ ಟಯರ್ ಒಡೆದು ಅದರಲ್ಲಿ ನನ್ನ ಕೈ ತೂರುವಷ್ಟು ದೊಡ್ಡ ತೂತಾಗಿದೆ. ಹಿಂದಿನ ಟಯರ್ ಏನಾಗಿದೆಯೋ ಎಂದು ಈ ವರೆಗೂ ನೋಡಿರದ ಉದಾಸೀನತೆ. ಇನ್ನು ಸ್ವಲ್ಪ ಹೊತ್ತಿನಲ್ಲೇ ಪ್ರಪಂಚದ ಕೊಳೆಯನ್ನೆಲ್ಲಾ ತೊಳೆಯುತ್ತೇನೆ ಎಂದು ಶಪಥ ತೊಟ್ಟಿರುವ ಮಳೆ. ಇದೇ ದಿನ ರಾತ್ರಿ ವಾರಂತ್ಯವನ್ನು ಕಳೆಯಲಿಕ್ಕೋಸ್ಕರ ಮನೆಗೆ ಕುಟುಂಬ ಸಮೇತರಾಗಿ ಇನ್ನು ಕೆಲವೇ ಘಂಟೆಗಳಲ್ಲಿ ಬರುತ್ತಿರುವ ಇಬ್ಬರು ಸ್ನೇಹಿತರು. ಮನೆಯನ್ನು ಒಪ್ಪ ಓರಣವಾಗಿ - 'ಹೀಗಿಡಬೇಕು, ಹಾಗಿಡಬೇಕು' ಎಂದು ಎಲ್ಲಿಂದಲೋ ಆರ್ಡರ್ ಕೊಟ್ಟು ಹೋಗುವ ಧ್ವನಿಗಳು.

ಉಡಾಫೆಯ ಪರಮಾವಧಿ: ಸೆಲ್ ಫೋನ್ ಬ್ಯಾಟರಿ ಖಾಲಿ, ಅಕಸ್ಮಾತ್ ಬ್ಯಾಟರಿ ಇದ್ದರೂ, ಇರುವ ಪೂರ್ಣ ದಾರಿಯಲ್ಲಿ ಮಧ್ಯೆ ಕಾಡಿನ ಒಂದು ಮಡಿಕೆಯಲ್ಲಿ ಸೆಲ್ ಕವರೇಜ್ ಎಲ್ಲಿ ಇಲ್ಲವೋ ಅಲ್ಲೇ ರಸ್ತೆ ಬದಿಯ ಕಲ್ಲಿಗೆ ಟಯರ್ ಬಡಿದು ಒಡೆದು ಹೋದ ಸ್ಥಿತಿ. ಟ್ರಿಪಲ್ ಎ ಮೆಂಬರ್‍ಶಿಪ್ ಎಕ್ಸ್‌ಪೈಯರ್ ಆದದ್ದು ಮೇ ತಿಂಗಳಿನಲ್ಲಿ, ಇನ್ನೂ ರಿನ್ಯೂ ಮಾಡಿಲ್ಲ. ಕಾರಿನಲ್ಲಿ ಇರುವ ಸ್ಪೇರ್ ಟಯರ್ ಅನ್ನು ಬಿಚ್ಚಿ ಜೀವಮಾನದಲ್ಲಿ ಇದುವರೆಗೆ ನಾನೇ ಸ್ವತಃ ಹಾಕಿಲ್ಲ. ಸ್ಪೇರ್ ಟಯರಿನ ಕೀ ಅನ್ನು ಮೊನ್ನೆ ಅಷ್ಟೇ ಕಾರ್ ಕ್ಲೀನ್ ಮಾಡುವಾಗ ಗರಾಜಿನಲ್ಲಿ ತೆಗೆದಿಟ್ಟ ನೆನಪು. ಹಾಳಾದ ಸಮಯ ಬೇರೆಓಡುತ್ತಿದೆ, ಅದಕ್ಕೆ ತಕ್ಕನಾಗಿ ತಲೆ ಓಡುತ್ತಿಲ್ಲ ಏನು ಮಾಡೋದು, ಬಿಡೋದು?

ಪ್ರಯತ್ನ: ಕಾರಿನಲ್ಲಿನ ಸ್ಪೇರ್ ಟಯರನ್ನು ಬಿಚ್ಚುವ ಹವಣಿಕೆ, ಬಿಚ್ಚಿ ಮತ್ತೆ ಪುನಃ ಟಯರ್ ಹಾಕೋಣವೆಂದರೆ, ಲಗ್ ನಟ್‌ನ ಕೀ ಮನೆಯಲ್ಲೇ ಬಿಟ್ಟುಬಂದಿದ್ದೇನೆ. ಅಕ್ಕ-ಪಕ್ಕದಲ್ಲಿರುವ ಮೂರು ಮನೆಗಳ ಬಾಗಿಲನ್ನು ಬಡಿದು, ಕಾಲಿಂಗ್ ಬೆಲ್ಲನ್ನು ಕೈ ಬೆರಳು ನೋವು ಬರುವವರೆಗೆ ಅದುಮಿದರೂ ಯಾರೂ ಉತ್ತರಿಸದ ಪರಿಸ್ಥಿತಿ...ಪಾಪ ನನ್ನ ಈ ಕಷ್ಟವನ್ನು ನೋಡಲಿಕ್ಕೋಸ್ಕರ ಅವರೇಕೆ ಐದು ಘಂಟೆಗೆಲ್ಲಾ ಆಫೀಸಿನಿಂದ ಮನೆಗೆ ಬಂದಿರಬೇಕು?

ಕಾರಿಗೆ ಹಿಂತಿರುಗಿ ಬಂದು ಹತಾಶೆಯ ನೋಟವೊಂದನ್ನು ಬೀರಿ, ನಿಟ್ಟುಸಿರೊಂದನ್ನು ಬಿಟ್ಟು ಇನ್ನು ಬೇರೆ ದಾರಿಯೇ ಇಲ್ಲದೇ ಅದೇ ದಾರಿಯಲ್ಲಿ ಬರುತ್ತಿದ್ದ ಒಂದು ಕಾರನ್ನು ತಡೆದು ನಿಲ್ಲಿಸಿದೆ, ನನ್ನ ಕಣ್ಣಿಗೆ ಬಿದ್ದ ಮೊದಲನೇ ಕಾರದು. ನಿಲ್ಲಲೋ ಬೇಡವೋ ಎಂಬ ಅನುಮಾನದಿಂದ ಕಾರು ನಿಂತಿತು, ವಿಂಡ್‌ಶೀಲ್ಡ್ ಕೆಳಗೆ ಇಳಿಯಿತು - Do you need any help? ಎಂದು ಹೆಣ್ಣು ಸ್ವರವೊಂದು ಉಲಿಯಿತು. ನಾನು ಎಲ್ಲಿಂದ ಶುರುಮಾಡಿಕೊಳ್ಳಲಿ ನನ್ನ ಕಷ್ಟವನ್ನು ತೋಡಿಕೊಳ್ಳಲು ಎಂದು ಮೇಷ್ಟ್ರ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟ ಹುಡುಗ ಬೆಂಚಿನ ಮೇಲೆ ನಿಲ್ಲುವಾಗ ಹೇಳುವ ಸಮಜಾಯಿಷಿಯಂತೆ ತಡವರಿಸತೊಡಗಿದೆ.

I need to make a phone call...
I have a flat...
My battery is dead, I don't have a spare tire key, my stupidity is at its peak...

ಮುಂತಾದ ಸಾಲುಗಳು ಕಣ್ಣಮುಂದೆ ಸುಳಿದು ಹೋದವು - ಸಿನಿಮಾ ರೀಲುಗಳಲ್ಲಿ ಪ್ರಯಾಣವನ್ನು ಸೂಚಿಸೋ ಹಾಗೆ. ನನ್ನ ಪ್ರಶ್ನೆ-ಉತ್ತರ-ಸಮಜಾಯಿಷಿ-ಅಹವಾಲುಗಳು ಆರಂಭವಾಗುವ ಮುನ್ನವೇ ಆಕೆಯೇ ಹೇಳಿದಳು - 'ಇಲ್ಲಿ ಸೆಲ್ ಕವರೇಜ್ ಇಲ್ಲ, ಬೇಕು ಅಂದ್ರೆ ಅರ್ಧ ಮೈಲು ದೂರದಲ್ಲಿ ಸೆಲ್ ಕವರೇಜ್ ಇದೆ, ಅಲ್ಲಿಯವರೆಗೆ ಡ್ರಾಪ್ ಕೊಟ್ಟು, ಮತ್ತೆ ಪುನಃ ಹಿಂದೆ ತಂದು ಬಿಡುತ್ತೇನೆ...' ನೀರಿನಲ್ಲಿ ಮುಳುಗಿದವನಿಗೆ ಸಿಕ್ಕ ಹುಲ್ಲುಕಡ್ಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡು 'ಆಯಿತು' ಎಂದು ಜೋರಾಗಿ ಹೇಳಿ ಹಣೇ ಮೇಲೆ ಸುರಿಯುತ್ತಿರುವ ಬೆವರನ್ನು ಒರಿಸಿಕೊಂಡು ಮೊಟ್ಟ ಮೊದಲನೇ ಬಾರಿಗೆ ಆಗಂತುಕ-ಅಪರಿಚಿತರೊಬ್ಬರ ಕಾರಿನಲ್ಲಿ ಕುಳಿತು ಹೊರಟೆ, ಬ್ರೇಕ್ ಡೌನ್ ಆಗಿ ಬಿದ್ದ ಕಾರನ್ನು ಲಾಕ್ ಮಾಡಿ ಕೀ ಯನ್ನು ಸರಿಯಾಗಿ ಜೇಬಿನಲ್ಲಿಡಲು ಮರೆಯಲಿಲ್ಲ.

ಸೆಲ್ ಕವರೇಜ್ ಸಿಗುವ ಸ್ಥಳಕ್ಕೆ ಬಂದಾಕ್ಷಣ ಎರಡು ಕರೆಗಳನ್ನು ಮಾಡಿದೆ - ಡೇ ಕೇರ್ ಸೆಂಟರ್‌ಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ, ಅವರಿಗೆ ನಾನು ಬರುವವರೆಗೂ ಕಾಯುವಂತೆ ಕೇಳಿಕೊಂಡೆ. ಹೆಂಡತಿಗೆ ಕರೆ ಮಾಡಿ ಹೇಳಿದರೆ ಆಕೆಗೆ ಈಗ ಬಿಡುವಿಲ್ಲ ಎಂದು ಗೊತ್ತಾಯಿತಷ್ಟೇ. ಈಗ ಮತ್ತೇನು ಮಾಡುವುದು? ಕಾರಿನ ಬಳಿಗೆ ವಾಪಾಸು ಬಂದರೂ ನನ್ನ ಬಳಿ ಲಗ್ ನಟ್‌ನ ಕೀ ಇರದಿದ್ದುದರಿಂದ ಯಾರು ಬಂದರೂ ಸ್ಪೇರ್ ಬಿಚ್ಚಿ ಹಾಕಲು ಸಾಧ್ಯವಿಲ್ಲವಾದ್ದರಿಂದ ನಾನು ಮನೆಗೆ ಆದಷ್ಟು ಬೇಗ ತಲುಪಬೇಕಾಗಿದ್ದುದು ಅನಿವಾರ್ಯ. ಈ ಆಗಂತುಕ ವ್ಯಕ್ತಿ, ಅಥವಾ ಸಹಾಯಕ್ಕೆಂದು ದೇವರ ರೂಪದಲ್ಲಿ ಬಂದ ವ್ಯಕ್ತಿಯನ್ನು ಹೇಗೆ ಕೇಳುವುದು? ಏನು ಹೇಳುವುದು ಎಂದು ಯೋಚಿಸಲು ತೊಡಗಿರುವಂತೆಯೇ ಆಕೆಯೇ ನನ್ನ ಕಷ್ಟಕ್ಕೆ ಉತ್ತರ ಕೊಟ್ಟರು...

'Where do you live? if it helps, I will drop you off at your place, you can go to day care and come to this spot with your wife's car...'

ಹಿಂದೇ ಮುಂದೇ ಯೋಚಿಸದೇ ಆ ಅವಕಾಶವನ್ನು ಅದೆಷ್ಟೋ ವರ್ಷಗಳಿಂದ ಕಾದು ಕುಳಿತಿದ್ದ ಋಷಿಯ ಹಾಗೆ ಗಬಕ್ಕನೆ ಹಿಡಿದುಕೊಂಡೆ. ಆಕೆ ನನ್ನ ಮನೆಯ ಹತ್ತಿರದವರೆಗೆ ಬಿಟ್ಟು ಹೋದರು - ಥ್ಯಾಂಕ್ಸ್ ಹೇಳಲು ಪದಗಳು ಅಥವಾ ಭಾಷೆ ಸೋಲುತ್ತದೆ ಎಂದು ನನಗೆ ಅಂದಿನವರೆಗೂ ಅನುಭವವಾದದ್ದಿಲ್ಲ. ನಂತರದ್ದೆಲ್ಲ ಸಲೀಸು...ನಾವು ಮಾಡಬೇಕಾದ್ದನ್ನು ಮಾಡಿ ಕಾರನ್ನು ತೆಗೆದುಕೊಂಡು ಮನೆಗೆ ಬರುವಾಗ ರಾತ್ರಿ ಹತ್ತು ಘಂಟೆ. ಒಬ್ಬ ಸ್ನೇಹಿತ ಕೆಟ್ಟ ಹವಾಮಾನ, ಬಹಳ ಮಳೆ ಇರುವುದರಿಂದ ಶನಿವಾರ ಬರುವುದಾಗಿಯೂ ಮತ್ತೊಬ್ಬ ಸ್ನೇಹಿತ ರಸ್ತೆಯಲ್ಲಿ ಮಳೆ ಹಾಗೂ ಟ್ರಾಫಿಕ್ ಇರುವುದರಿಂದ ತಡವಾಗಿ ಬರುತ್ತೇವೆ ಎಂದು ಮೆಸ್ಸೇಜ್ ಬಿಟ್ಟಿದ್ದರು. ಅದೇನೋ ಈ ದಿನ ದುತ್ತನೇ ಸಮಸ್ಯೆಗಳೆಲ್ಲ ಎಲ್ಲೆಲ್ಲಿಂದಲೋ ಬಂದು ತಮ್ಮಷ್ಟಕ್ಕೆ ತಾವೇ ಹೊರಟು ಹೋದವಂತೆ ಕಂಡುಬಂದವು. ಸಮಸ್ಯೆಗಳು ಕಂಡೊಡನೆ ನಾನು ಯಾವಾಗಲೂ ಬೊಬ್ಬೆ ಹೊಡೆಯಲು ಆರಂಭಿಸುವುದೇ ಹೆಚ್ಚು ಆದರೆ ಇಂದಿನ ಸಮಸ್ಯೆಗಳೆಲ್ಲಾ ನಾನು ಬಾಯಿ ಬಿಡುವ ಮೊದಲೇ ತಮ್ಮಷ್ಟಕ್ಕೇ ತಾವು ಪರಿಹಾರ ಕಂಡುಕೊಂಡಂತೆ ಕಂಡು ಬಂದವು.

ಅದೇನೋ ಹೇಳ್ತಾರಲ್ಲ, ಸಮಸ್ಯೆಗಳು ಬರೋದಾದರೆ ಒಂದರ ಹಿಂದೆ ಒಂದು ಬಂದೇ ಬರುತ್ತವೆ ಎಂದು, ಅದು ನಿಜ - ಯಾರೋ ನಮ್ಮ ವಿರುದ್ಧ ಯುದ್ಧ ಹೂಡಿದ್ದಾರೇನೋ ಎಂದು ಅಪರೂಪಕ್ಕೊಮ್ಮೆ ಅನ್ನಿಸುವುದು ನಿಜ, ಇಲ್ಲವೆಂದಾರೆ ಅದೆಷ್ಟು ಹುಡುಕಿದರೂ ಬಟ್ಟೆಯ ರಾಶಿಯಲ್ಲಿ ಮ್ಯಾಚಿಂಗ್ ಕಾಲುಚೀಲ (ಸಾಕ್ಸ್) ಸಿಗದಿರುವುದರಿಂದ ಹಿಡಿದು, ದಿನವೂ ಓಡಾಡುವ ರಸ್ತೆಯಲ್ಲಿ ಅರ್ಧ ಮೈಲು ದೂರದಲ್ಲಿ ಸೆಲ್ ಕವರೇಜ್ ಎಲ್ಲಿಲ್ಲವೋ ಅಲ್ಲಿ - ನನ್ನ ಸೆಲ್ ಫೋನ್ ಬ್ಯಾಟರಿ ಖಾಲಿ ಆಗಿರುವ ಘಳಿಗೆಯಲ್ಲಿ, ಸ್ಪೇರ್ ಟಯರಿನ ಕೀ ಇಲ್ಲದಿರುವ ಸಮಯದಲ್ಲಿ, ಇನ್ನೇನು ಜೋರಾಗಿ ಮಳೆ ಬಂದೇ ಬಿಡುತ್ತೇನೋ ಎನ್ನುವ ಹೊತ್ತಿನಲ್ಲಿ - ಎಷ್ಟೆಲ್ಲಾ ಕೆಲಸಗಳು ಬಾಕೀ ಇವೆ ಎಂದು ಕೇವಲ ಒಂದು ಘಂಟೆ ಆಫೀಸನ್ನು ಮುಂಚೆ ಬಿಟ್ಟು ಶುಕ್ರವಾರ ಸಂಜೆ ನನ್ನಷ್ಟಕ್ಕೆ ನಾನಿರುವಾಗ ಹೀಗೆಲ್ಲಾ ಆಗಬೇಕೆಂದರೆ...

Sunday, August 05, 2007

... ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!

ಶನಿವಾರ ಬೆಳಗ್ಗೆ ತಡವಾಗಿ ಎದ್ರೂ ನಡೆಯುತ್ತೇ ಎಂದು ಮಹದಾಸೆ ಇಟ್ಟುಕೊಂಡು ಮಲಗಿದ್ದ ನನ್ನನ್ನು ಅದ್ಯಾವುದೋ ಬ್ರಹ್ಮಲೋಕದಲ್ಲಿ ಸುಬ್ಬ ಜೋರು ಜೋರಾಗಿ ಮಾತನಾಡಿಕೊಳ್ಳುತ್ತಿರುವುದು ಕೇಳಿಬಂದು ನಿದ್ದೆಯಿಂದ ಎಚ್ಚರವಾದದ್ದೂ ಅಲ್ಲದೇ ಅವನು ಯಾರ ಹತ್ತಿರ ಅದೇನು ಮಾತನಾಡುತ್ತಿದ್ದಾನೆ ಎಂದು ಕಲ್ಪಿಸಿಕೊಳ್ಳುವಷ್ಟರ ಮಟ್ಟಿಗೆ ನನ್ನ ನಿದ್ರೆ ದೂರವಾಗಿ ಹೋಗಿದ್ದರಿಂದ ನನಗರಿವಿಲ್ಲದಂತೆ, 'ಥೂ ಇವನೊಬ್ಬ, ಸದ್ಯ ಇಂಡಿಯಾದವರ ಹತ್ತಿರ ಮಾತನಾಡಿದ್ರೆ ಹೀಗೆ ಅರಚಿಕೊಳ್ತಾನೆ, ಇನ್ನು ಮಂಗಳಗ್ರಹದವರ ಹತ್ತಿರ ಮಾತನಾಡಿದ್ರೆ ಹೆಂಗೋ!' ಬೈಗಳ ಹೊರಗೆ ಬಿತ್ತು. ಅದರಲ್ಲೂ ಸುಬ್ಬ ಫೋನ್ ಬಳಸುವ ಪರಿಯನ್ನು ನೋಡಿದರೆ ಅವನ ಧ್ವನಿಯ ಆವೇಶದಲ್ಲಿಯೇ ಆ ಕಡೆ ಇರುವವರ ದೂರವನ್ನು ಗುರುತುಹಿಡಿಯಬಹುದು, ದೂರ ಹೆಚ್ಚಾದಷ್ಟೂ ಅಬ್ಬರ ಹೆಚ್ಚು ಎನ್ನುವಂತೆ.

ಇಂಥವನೊಬ್ಬ ನಮ್ ಆಫೀಸಿನಲ್ಲಿ ಇರಬೇಕಿತ್ತು, ದಿನವೂ ಕ್ಯಾಲಿಫೋರ್ನಿಯಾದವರಿಗೆ ಕರೆ ಮಾಡಿದಾಗಲೆಲ್ಲ ಕಿರುಚಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳಬಹುದಿತ್ತು ಎನ್ನುವ ಕುಹಕ ಮನದಲ್ಲಿಯೇ ಸುಳಿದು ಅಲ್ಲೇ ನಿಂತಿತು.

ಕೆಳಗಿನಿಂದ ಬೇಡವೆಂದರೂ ಸುಬ್ಬನ ಮಾತುಗಳು ಕಿವಿಗೆ ಬಂದು ರಾಚುತ್ತಿದ್ದವು, ಒನ್ ವೇ ಮಾತುಗಳನ್ನು ಕೇಳಲಿಕ್ಕೆ ಕೆಲವೊಮ್ಮೆ ಎಷ್ಟೋ ಸರ್ತಿ ಚೆನ್ನಾಗಿರುತ್ತೇ ಅಂತ ಅನ್ಸಿದ್ದೇ ನಾನು ಸುಬ್ಬನ ಮಾತುಗಳಿಗೆ ಕಿವಿಕೊಟ್ಟಮೇಲೆ,

'ನಾನ್ ಬಡಕಂಡೆ ಕೇಳ್ತೀರಾ ನನ್ ಮಾತು, ಈಗ ಅನುಭವಿಸಿ'.

'...'

'ಅಲ್ಲಮ್ಮಾ, ಅವಳಿಗೆ ಸ್ವಲ್ಪಾ ಬುದ್ಧೀ ಅನ್ನದ್ ಬ್ಯಾಡಾ, ನಾನು ವಿದೇಶಿ ಕಂಪ್ನಿಗಳಿಗೆ ದುಡಿತೀನೀ ಅಂತ ಒಂದೇ ಸಮಾ ಉರೀತಾ ಇದ್ಲು, ಈಗ ನೋಡ್ರಿ ಹೆಂಗಾತು.'

'...'

'ಸಮಾಧಾನ ಮಾಡ್ಕಳ್ರಿ, ಎಲ್ಲ್ ಹೋಗ್ತಾಳೇ ಬಂದೆ ಬರ್ತಾಳೆ...ಇನ್ನೊಂದ್ ಅರ್ಧಾ ಘಂಟೇ ಬಿಟ್ಟು ನಾನೇ ಫೋನ್ ಮಾಡ್ತೀನಿ, ಇಡ್ಲಾ ಹಂಗಾರೆ'...ಎಂದು ಫೋನ್ ಇಟ್ಟ ಹಾಗೆ ಸದ್ದು ಕೇಳಿಸಿತು.

ಏನ್ ಅವಾಂತರ ಆಗಿದೆ ನೋಡೇ ಬಿಡೋಣ, ಈ ವೀರಾವೇಶಕ್ಕೇನಾದ್ರೂ ಕಾರ್ಣ ಇರ್ಲೇ ಬೇಕು ಎಂದುಕೊಂಡು ಮುಖಕ್ಕೊಂದಿಷ್ಟು ನೀರು ತೋರಿಸಿದಂತೆ ಮಾಡಿ, ಕೆಳಗೆ ಬಂದೆ. ಸುಬ್ಬನ ಮುಖ ಸಿಟ್ಟಿನಿಂದ ದುಮುಗುಡುತ್ತಿತ್ತು, ನಾನು ಇವನ ಸಿಟ್ಟಿಗೆ ಆಹಾರವಾಗದಿದ್ದರೆ ಸಾಕು ಎನ್ನುವ ದೂರಾಲೋಚನೆಯಲ್ಲಿ 'ಸುಮ್ಮನಿರು' ಎಂದು ಮನಸ್ಸು ಹೇಳುತ್ತಿದ್ದರೂ, ಅದಕ್ಕೆ ವಿರುದ್ಧವಾಗಿ ನಾಲಿಗೆ, 'ಏನಯ್ಯಾ, ಏನ್ ಸಮಾಚಾರ?' ಎಂದು ಕೇಳೇಬಿಟ್ಟಿತು.

'ನಮ್ಮ್ ಅಕ್ಕನ ಮಗಳು ಸುಶೀಲು ಇಷ್ಟೊತ್ತಾದ್ರೂ ಇನ್ನೂ ಮನೆಗೆ ಬಂದಿಲ್ಲವಂತೆ, ರಾತ್ರಿ ಕೆಲಸಕ್ಕ್ ಹೋದೋಳು ಬೆಳಿಗ್ಗೆಯೆಲ್ಲಾ ಬಂದಿರೋಳು, ಆದ್ರೆ ಈಗ ನೋಡು ಘಂಟೇ ಎಂಟಾದ್ರೂ ಇನ್ನೂ ಬಂದಿಲ್ಲ ಅಂತ ಎಲ್ಲರೂ ತಲೆಕೆಡಿಸಿಕೊಂಡು ಕುಂತವರಂತೆ'.

'ಎಲ್ಲಿ ಕೆಲ್ಸಾ ಮಾಡ್ತಾ ಇದಾಳವಳೂ?'

'ನನಗೆ ವಿವರ ಎಲ್ಲ್ಲಾ ಗೊತ್ತಿಲ್ಲ, ಅದ್ಯಾವುದೋ ಕಾಲ್‌ಸೆಂಟರ್‌ನಲ್ಲಿ ಆರೇಳ್ ತಿಂಗಳಿಂದ ಇದಾಳೆ ಅಂತ ಸುದ್ದಿ'.

'ನಿಮ್ಮನೆಯವರಿಗೆ ಕಾಲ್‌ಸೆಂಟರ್ ಫೋನ್ ನಂಬರ್ ತಗೊಂಡು ಫೋನ್ ಮಾಡಿ ಕೇಳೋಕ್ ಹೇಳು, ಸಾಮಾನ್ಯವಾಗಿ ಅವರದ್ದೇ ಕಂಪನಿ ಗಾಡಿ ಇರುತ್ತೇ, ಅದರಲ್ಲೇ ಓಡಾಡೋದ್ ತಾನೆ' ಎಂದೆ.

'ಅವರಪ್ಪಾ ಅಮ್ಮನ್ ಹತ್ರ ನಂಬರ್ ಇಲ್ಲವಂತೆ, ನಮ್ ಮಾವನ್ ಮಗ ನೋಡ್ಕಂಬರೋಕ್ ಹೋಗಿದ್ದಾನೆ' ಎಂದ ಕಷ್ಟಪಟ್ಟು.

'ಲೋ, ಇದೊಳ್ಳೇ ಕಥೆಯಾಯ್ತಲ್ಲೋ' ಎಂದು ಬುದ್ಧಿವಾದ ಹೇಳುವ ಟೋನ್‌ನಲ್ಲಿ ನಾನು ಮುಂದುವರೆಸಿದೆ, 'ಮಗಳು ಎಲ್ಲಿ ಕೆಲ್ಸಾ ಮಾಡ್ತಾಳೇ ಏನೂ ಅಂತ ಹ್ಯಾಗೆ ತಿಳಿದುಕೊಳ್ಳದೇ ಇರ್ತಾರೋ ಜನ?'

'ಸುಮ್ನಿರೋ ನಿಂದೊಳ್ಳೋ ಆಯ್ತು. ಹಂಗಾರೆ ಈಗ ನೀನು ಅದ್ಯಾವುದೋ ಕಂಪನಿಗೆ ದುಡೀತಿ ಅಂತ ನಿಮ್ಮನೆಯವರ ಹತ್ರ ಆ ಕಂಪನಿ ವಿವರಾ ಎಲ್ಲಾ ಇದೆಯಾ? ಕೆಲವೊಂದು ಮಾತು ಆಡೋಕಷ್ಟೇ ಚೆನ್ನಾ, ಸ್ವಲ್ಪ ಯೋಚ್ನೆ ಮಾಡ್ಭೇಕು ಮಾತು ಅನ್ನಬೇಕಾದ್ರೆ' ಎಂದು ನನ್ನನ್ನೇ ತಿವಿಯಲು ನೋಡಿದ.

'ಅದು ಹಾಗಲ್ಲಾ, ನಾನಿಲ್ಲಿ ಕೆಲ್ಸಾ ಮಾಡೋದು...' ಎಂದು ಸಮಜಾಯಿಷಿ ನೀಡಲು ಹೊರಟಿದ್ದ ನನ್ನನ್ನು ತಡೆದು, 'ಅಲ್ಲಿಗೊಂದು, ಇಲ್ಲಿಗೊಂದು ನ್ಯಾಯಾ ಅಂತಲ್ಲ, ನಿಮ್ ಮನೆಯವರಿಗೆ ನೀನು ಎಲ್ಲಿದ್ದೀ, ಹೇಗಿದ್ದೀ ಅಂತ ಗೊತ್ತಿರಬೇಕು, ಎಲ್ಲಾ ನೆಟ್ಟಗಿದ್ದಾಗ ಅದರ ಬೆಲೆ ಗೊತ್ತಾಗಂಗಿಲ್ಲ, ಇಂಥಾ ಸಮಯದಾಗ ಉಪಯೋಗಕ್ಕೆ ಬರತತಿ ನೋಡು.'

ನಾನು ಇನ್ನೇನು ಹೇಳುವುದೆಂದು ಸುಮ್ಮನಿದ್ದೆ, ಸುಬ್ಬ ತನ್ನ ಮಾತನ್ನು ಮುಂದುವರೆಸಿದ.

'ಇದೆಲ್ಲಾ ಹಾಳಾದೋರ್ ಸಂಸ್ಕೃತಿ! ಇಂಥಾ ಮನೇಹಾಳ್ ಜನರಿಂದ್ಲೇ ನಮ್ಮನೇ ನಮ್ಮ್ ಊರ್ ಹುಡುಗಾ-ಹುಡುಗೀರೆಲ್ಲ ರಾತ್ರೀ ಎಲ್ಲಾ ದುಡಿಯಂಗಾಗಿದ್ದು!' ಎಂದು ಒಂದು ಮಹಾನ್ ಬಾಂಬ್ ಎಸೆದು ಸುಮ್ಮನಾದ. ಅವನಷ್ಟಕ್ಕೇನಾದ್ರೂ ಹೇಳ್‌ಕೊಳ್ಲೀ ನಾನು ಸುಮ್ನೇ ಇದ್ರೇ ಹೆಂಗೆ ಅಂತ ಒಮ್ಮೆ ಯೋಚ್ನೇ ಬಂದ್ರೂ, ಇವನ ಮಾತನ್ನು ಕೇಳಿ ಸುಮ್ಮನಿದ್ರೆ ಇವನ ರೀತಿ-ನೀತಿಗಳಿಗೆ ಎಲ್ಲಿ ಒಪ್ಪಿದ ಹಾಗಾಗುತ್ತೋ ಎನ್ನುವ ಹಂಬನೀತಿಯ ಹಿನ್ನೆಲೆಯಲ್ಲಿ ಅವನನ್ನೇ ದಬಾಯಿಸಿದೆ.

'ಮೂವತ್ತು ವರ್ಷಾ ಮೇಷ್ಟ್ರಾಗಿ ದುಡಿದು ರಿಟೈರ್ ಆದೋರು ಮನೆಗೆ ತರೋ ದುಡ್ಡನ್ನ ಈ ಹುಡುಗಾ-ಹುಡುಗೀರು ಒಂದೇ ವರ್ಷದಲ್ಲಿ ದುಡಿಯೋ ದುಡ್ಡನ್ನ ಎಣಿಸೋವಾಗ ಈ ಸಂಸ್ಕೃತಿ ವಿಷ್ಯಾ ತಲೇಗ್ ಬರೋದಿಲ್ಲಂತೇನು?' ಎಂದೆ ಸ್ವಲ್ಪ ಖಾರವಾಗಿ.

ಅವನೂ ಅಷ್ಟೇ ಜೋರಾಗಿ, 'ಓಹೋಹೋ, ಯಾವನಿಗ್ ಬೇಕಿತ್ತು ಈ ಚಾಕರಿ... ನಾವೇನು ನಿಮ್ಮಲ್ಲಿದ್ದ ಬಿಸಿನೆಸ್ ಪ್ರಾಸೆಸ್ಸುಗಳನ್ನೆಲ್ಲ ಹಾಳುಬಡಿಸಿ ತಂದ್ ಹಾಕಿ ಎಂದು ಮಡಿಲು ಒಡ್ಡಿ ಹೋಗಿದ್ವೇನು ಇವರ ಹತ್ರ? ತಮ್ ದೇಶದಲ್ಲಿ ಕೂಲಿ ಕೊಟ್ಟು ಸುಧಾರಸ್ಕಾಗಲ್ಲ ಅಂತ ಇಡೀ ಪ್ರಪಂಚವನ್ನೇ ಹಾಳ್ ಮಾಡ್ತಾ ಇದಾರೆ ನನ್ ಮಕ್ಳು. ಇಂಥಾ ಬಂಡ್ ಗೆಟ್ಟೋರ್ ಎಣಿಸೋ ಯೂರೋ, ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!' ಎಂದು ಅವಾಜ್ ಹಾಕಿದ.

ನಾನೆಂದೆ, 'ಹೌದು, ಎಲ್ಲೋ ಬೀಡುಬೀಸಾಗಿದ್ದ ಕಂಪನಿಗಳು ಬಿಲಿಯನ್ನ್ ಎಣಿಸೋಕ್ ಶುರುಮಾಡಿದ್ದೇ ಇಂಥಾ ಉದ್ಯಮದಿಂದ...ನೀವ್ ಅಲ್ದಿದ್ರೆ ಇನ್ಯಾವಾನಾದ್ರೂ ಮಾಡ್ತಾನೆ, ಅಷ್ಟು ದಮ್ಮಿದ್ರೆ ಈ ಕಾಲ್ ಸೆಂಟರುಗಳನ್ನೆಲ್ಲ ಇವತ್ತೇ ಮುಚ್ಚಿಕಳ್ರಿ ನೋಡಾಣಾ'.

'ಅದೇನೋ ಅಂತಾರಲ್ಲ, ಊರ ಕೊಳ್ಳೇ ಹೊಡೆದ ಮೇಲೇ ದಿಡ್ಡೀ ಬಾಗಿಲು ಹಾಕಿದ್ರಂತೆ ಅಂತ ಹಂಗಾಯ್ತು...ನಮ್ ಯುವ ಜನತೆ ಸಾಯ್ತಾ ಐತೆ ಕಣಯ್ಯಾ. ಅವರು ತರೋ ದುಡ್ಡಲ್ಲ ಮುಖ್ಯ, ನಮ್ಮಲ್ಲಿನ ಪದವೀಧರರನ್ನ ಅವರಿಗೆ ಬೇಕೋ ಬ್ಯಾಡ್ವೋ ಯಾವುದೋ ದೇಶದ ಯಾವ್ದೋ ಹೆಸರನ್ನ ಕಟ್ಟಿ ಯಾರ್ದೋ ರಾಗದಲ್ಲಿ ಹಾಡು, ಯಾವ್ದೋ ತಾಳಕ್ಕೆ ಕುಣೀ ಅಂತಾ ಅಂದ್ರೆ, ಹಗಲ್ ಮಲಗಿ ರಾತ್ರೀ ಒದ್ದಾಡೋ ಇಂಥಾ ನಿಶಾಚರರಿಂದ ಯಾವ್ ಲೋಕ ಉದ್ಧಾರಾಗುತ್ತೇ ನೀನೇ ಹೇಳು?'

'ಅಂದ್ರೇ ನೀನ್ ಹೇಳೋದರ ಅರ್ಥ, ಈ ಕಾಲ್‌ಸೆಂಟರುಗಳು ಬರೋಕ್ ಮುಂಚೆ ರಾತ್ರೋ ರಾತ್ರಿ ಏನೂ ಕೆಲ್ಸಗಳೇ ಆಗ್ತಿರಲಿಲ್ಲಾ ಅಂತಲೇ?'

'ಹಂಗಲ್ಲ, ವಾಚ್‌ಮನ್, ಫ್ಯಾಕ್ಟರಿ ಶಿಫ್ಟ್ ಕೆಲಗಳೆಲ್ಲ ಯಾವತ್ತಿನಿಂದ್ಲೋ ಇರೋವೇಯಾ, ಆದರೆ ಈ ಕಾಲ್‌ಸೆಂಟರುಗಳಿಂದ ಸಮಾಜಕ್ಕೆ ಬಹಳಷ್ಟು ದೊಡ್ಡ ಹೊಡೆತಾ ಇದೇ ನೋಡು, ಇವತ್ತಲ್ಲ ನಾಳೆ ಅದು ನಿಜವಾಗುತ್ತೆ - ನಮ್ಮ್ ಸಿಟಿಗಳು ಈಗಾಗ್ಲೇ ರಾತ್ರೀ-ಬೆಳಗೂ ದುಡದೂ ದುಡದೂ ಸಪ್ಪಗಾಗ್‌ಹೋಗಿರೋದು. ವೇಗಾ ಅನ್ನೋದು ಸಹಜವಾಗಿರ್ಬೇಕು, ಅದನ್ನ ಬಿಟ್ಟು ಸೈಕಲ್ ಟಯರ್ ಹಾಕ್ಕೊಂಡು ಐವತ್ತ್ ಮೈಲಿ ಸ್ಪೀಡ್ ಹೋಗಾಗ್ ಬರೋದಿಲ್ಲ ತಿಳಕೋ'.

'ನೋಡೋ, ಆರ್ಥಿಕವಾಗಿ ದೇಶ ಬೆಳೀತಾ ಇದೆ, ಅದು ಮುಖ್ಯ. ಮೊದಲೆಲ್ಲ ಕೆಲಸ ಇಲ್ಲದೇ ಅಲೀತಿದ್ದ ಪುಡುಪೋಕರಿಗಳಿಗೆ ಈಗ ಕೆಲ್ಸಾ ಅನೋದೊಂದಿದೆ, ಅದು ಮುಖ್ಯ. ಬದಲಾವಣೆಗೆ ನಾವು ಈಗ ಕಣ್ಣು ಮುಚ್ಚಿ ಕುಳಿತುಕೊಂಡಿದ್ರೆ, ಕೊನೇಗಷ್ಟೇ - ಚಿಂಕುಗಳು ನಮ್ಮನ್ನು ಹಿಂದಕ್ ಹಾಕಿ ಒಂದಲ್ಲ ಒಂದು ದಿನ ಮುಂದ್ ಹೋಗೇ ಹೋಗ್ತಾರೆ...ಆಗ ಬಾಯಿಮೇಲೆ ಬೆರಳಿಟ್ಟುಕೊಂಡು ನಮ್ಮ ಐದಾರು ಸಾವಿರವರ್ಷದ ಸಂಸ್ಕೃತಿಯನ್ನ ಉಪ್ಪಿನಕಾಯಿ ಹಾಕ್ಕೂಂಡು ನೆಕ್ಕೋಣಂತೆ'.

'ನೀನು ಏನಂದ್ರೂ ನಾನ್ ಒಪ್ಪಲ್ಲಪ್ಪಾ...' ತನ್ನ ಅಲ್ಟಿಮೇಟಮ್ಮ್ ಅನ್ನು ಮುಂದಿಟ್ಟ, '...ನಮ್ಮ್ ಸಂಸ್ಕೃತಿ ನಮಗೆ ದೊಡ್ದು, ರಾತ್ರೀ-ಹಗಲೂ ದುಡಿದು ಸುಖವನ್ನು ಕಂಡೆವು ಎನ್ನೋ ಮರೀಚಿಕೆಯನ್ನು ಸವಾರಿ ಮಾಡೋ ಸರದಾರರು ನಮಗೆ ಬ್ಯಾಡಾ'.

ನಾನು, 'ಸರಿ ನಿನ್ನಿಷ್ಟ...' ಎನ್ನುವಷ್ಟರಲ್ಲಿ ಫೋನ್ ರಿಂಗ್ ಆದದ್ದರಿಂದ ಇಂಡಿಯಾದಿಂದ ಬಂದಿರಬಹ್ದು ಎಂದು ಸುಬ್ಬ ಓಡಲುತೊಡಗಿದ್ದನ್ನು ನೋಡಿದರೆ ಅವನು ನಿಜವಾಗಿಯೂ ಚಿಂತಿತನಾದಂತೆ ಕಂಡುಬಂತು.

Wednesday, August 01, 2007

ಕಥಾನಕ ಚಕ್ರ

So, ಪ್ರತೀದಿನ ಯಾವುದಾದರೊಂದು ವಸ್ತುವಿನ್ನು ಗುರುತಿಸಿಕೊಂಡು, ಅದರ ಮೇಲೆ ಮಣಗಟ್ಟಲೆ ಯೋಚನೆ ಮಾಡಿಟ್ಟು, ಎರಡು-ಮೂರು ದಿನಗಳಿಗೊಮ್ಮೆ ಬರೆಯಲು ತೊಡಗಿದರೆ ಏನಾಗುತ್ತೆ? ಅದೇ ಒಂದು ಹವ್ಯಾಸ ಆಗುತ್ತೆ, ಆ ಹವ್ಯಾಸ ಮುಂದೆ ಬೆಳೆದೂ-ಬೆಳೆದೂ ಸ್ವಭಾವ ಆಗುತ್ತೆ, ಮುಂದೆ ಅದು ಹಾಗೇ ಖಾಯಿಲೆ ಆಗಿ ಹೋಗುತ್ತೆ! ಹಿಂದೆಲ್ಲಾ ದಪ್ಪದಪ್ಪ ಪುಸ್ತಕಗಳನ್ನು ನೋಡಿದಾಗ, ಅಬ್ಬಾ ಇವರೆಲ್ಲಾ ಹೇಗಪ್ಪಾ ಅದನ್ನ ಬರೀತಾರೆ ಅನ್ನಿಸ್ತಿತ್ತು, ಈಗ ಅದು ಅಂಥಾ ಮಹಾ ಏನು ಅನ್ಸೋಲ್ಲ.

ಹಂಗಂಥ, ನಾನೇನಾದ್ರೂ ಪುಸ್ತಕ ಬರೆಯೋಕ್ ತೊಡಗೀದೀನಿ ಅಂತ ತೀರ್ಮಾನಕ್ಕೆ ಬರೋದೇನೂ ಬೇಡಾ. ಗೆಳೆಯ ಹರೀಶ್ ಕೃಪೆಯಿಂದ ಸಿಕ್ಕಿರೋ 'ಆವರಣ' ಪುಸ್ತಕವನ್ನು ಓದ್ತಾ ಇರಬೇಕಾದ್ರೆ ಹಾಗೆ ಅನ್ನಿಸಿದ್ದು ನಿಜ. ಕನ್ನಡ ಕಾದಂಬರಿ ಲೋಕದಲ್ಲಿ ಭೈರಪ್ಪನವರ ಸಾಧನೆ ಅಮೋಘವಾದುದು, ಅವರ ಇಮೇಜ್ ನನ್ನ ಮನಸ್ಸಿನಲ್ಲಿ ಹೇಗೇ ಇರಲಿ ಅವರ ಕಾದಂಬರಿ ಕ್ಷೇತ್ರದ ಸಾಧನೆಗೆ ಒಪ್ಪಲೇಬೇಕು, ಪುನರ್‌ಮುದ್ರಣ ಕಂಡ ಅದೆಷ್ಟು ಕೃತಿಗಳು, ಹೆಚ್ಚು ಭಾಷೆಗಳಲ್ಲಿ ಅನುವಾದಿತವಾದವುಗಳು, ಇವುಗಳ ಪಟ್ಟಿಯನ್ನು 'ಆವರಣ' ಪುಸ್ತಕದ ಕವರ್ ಪುಟದಲ್ಲಿ ನೋಡಿ ಒಮ್ಮೆ ಬೆರಗಾಗಿ ಹೋದೆ, ಉಳಿದ ಕಾದಂಬರಿಗಳ ಕವರ್ ಪುಟಗಳಲ್ಲಿ ಇದೇ ರೀತಿಯ ವಿವರಗಳನ್ನು ನೋಡಿದ್ದರೂ ಈ ಸಾರಿ ಅವೆಲ್ಲ ವಿಶೇಷವಾಗಿ ಕಂಡವು. ನನ್ನ ಕುತೂಹಲಕ್ಕೆ ಈ ವರ್ಷದ (೨೦೦೭) ಫೆಬ್ರುವರಿ ೫ ರಂದು ಪ್ರಥಮ ಮುದ್ರಣ ಕಂಡ 'ಆವರಣ' ಅದೇ ತಿಂಗಳಿನಲ್ಲೇ ಎರಡೂ, ಮೂರೂ ಹಾಗೂ ನಾಲನೇ ಮುದ್ರಣವನ್ನು ಕಂಡಿದ್ದೂ ಅಲ್ಲದೇ ಮಾರ್ಚ್ ತಿಂಗಳಿನಲ್ಲಿ ಐದನೇ ಮುದ್ರಣವನ್ನು ಕಂಡ ಕೃತಿ ಈಗ ಜುಲೈ ಮುಗಿದು ಆಗಷ್ಟ್ ಬಂದಿರೋದರಿಂದ ಹತ್ತನೇ ಮುದ್ರಣವನ್ನು ತಲುಪಿರಬಹುದೇ ಎಂಬ ಪ್ರಶ್ನೆ ಎದ್ದು ಕಾಡತೊಡಗಿತು. ಏನೇ ಇರಲಿ, ದಿನಕ್ಕೆ ಎಂಟು ಘಂಟೆಗಳಂತೆ ಕುಳಿತು ಶಿಸ್ತಿನಲ್ಲಿ ಬರೆಯುವ, ತಮ್ಮ ಕಾದಂಬರಿಯಲ್ಲಿನ ವಸ್ತುಗಳಿಗೆ ತಕ್ಕ ಪೂರ್ವ ತಯಾರಿಯನ್ನು ಮಾಡಿಕೊಳ್ಳುವ ಹಾಗೂ ಹಿಡಿದ ಕಾರ್ಯವನ್ನು ಸಾಧಿಸಿ ತೋರಿಸುವ ವ್ಯವಧಾನ ಸಾಮಾನ್ಯದವರಿಗೆ ಬರಲಾರದು.

ನಾನು 'ಆವರಣ'ವನ್ನು ಸರಿಯಾಗಿ ಓದಿದ ಮೇಲೆ ಆ ಬಗ್ಗೆ 'ಅಂತರಂಗ'ದಲ್ಲಿ ಬರೆಯಬೇಕು ಎಂದುಕೊಂಡಿದ್ದೇನೆ, ನೋಡಬೇಕು ಒಂದಲ್ಲಾ ಒಂದು ದಿನ ಅದರ ಕೈಯನ್ನೂ!

***

ನನ್ನ ಸಹೋದ್ಯೋಗಿ ಒಬ್ಬನು ಇತ್ತೀಚೆಗೆ 'ನೀನೂ ಯಾಕೆ ಬರೆಯಬಾರದು?' ಎಂದು ಕೇಳಿದ - ಅವನಿಗೆ ನಾನು ಬ್ಲಾಗ್ ಬರೆಯುವ ವಿಷಯವಾಗಲೀ, ನಾನು ಕಾದಂಬರಿ ಓದುವ/ಓದುತ್ತಿರುವ ವಿಷಯಗಳಾಗಲೀ ಗೊತ್ತಿಲ್ಲ - ಅವನ ಗಮನ ನಾನು ಮಾತಿನಲ್ಲಿ ಬಳಸುವ ಅಲಂಕಾರಗಳನ್ನು ಗಮನಿಸಿ ಹೇಳಿದ ಮಾತಾಗಿತ್ತು. ನಾನು ಅಪರೂಪಕ್ಕೊಮ್ಮೆ ತಮಾಷೆಯಾಗಿರಲಿ ಎಂದು ಹೇಳುವ ಮಾತುಗಳು, ಪಡೆನುಡಿಗಳು, ಅಲಂಕಾರಗಳು, ಅಥವಾ ಜೋಕ್‌ಗಳು (ನಾನು ತಮಾಷೆಯಾಗಿದೆ ಎಂದು ನಂಬಿಕೊಂಡಿರುವವಗಳು) ಇತ್ತೀಚೆಗೆ ಹೆಚ್ಚಾಗಿವೆ ಎಂದೇ ಹೇಳಬೇಕು...ಉದಾಹರಣೆಗೆ, '...it is as good as taking a white elephant through New York city on a rainy day...' ಎಂದು ಹೇಳಿದ್ದಿದೆ...ಅಥವಾ ಕಾನ್‌ಫರನ್ಸ್ ಕಾಲ್ ಮಧ್ಯೆ '...whatever happened to milk of human kindness, all that I hear is sour cream...' ಎಂದೋ, ಅಥವಾ ಯಾರಾದರೂ ಧ್ವನಿ ಒಡಕರಿಗೆ '...you sound like as if you donated your vocal cards to medical research...' ಎಂದೋ ಹೀಗೇನಾದರೂ ಕಾಮೆಂಟ್ ಹೇಳುತಿರುತ್ತೇನೆ. ಇವುಗಳಲ್ಲಿ ಅರ್ಧಕ್ಕರ್ಧ ಅಲ್ಲಿಂದಿಲ್ಲಿಂದ ಕೇಳಿ/ಓದಿ ಕಲಿತವುಗಳು, ಇನ್ನುಳಿದವು ನನ್ನ ಸ್ವಂತದವುಗಳು. ಇವುಗಳನ್ನೆಲ್ಲ ಅಭ್ಯಾಸ ಮಾಡಿ ಹೇಳಬೇಕೆಂದೇನೋ ಹೇಳಿದ್ದಿಲ್ಲ, ಅವು ಸಮಯಕ್ಕೆ ಸರಿಯಾಗಿ ಪಕ್ಕನೆ ಬಂದು ಬಿಡುತ್ತವೆ. ಮೀಟಿಂಗ್‌ನಲ್ಲಿ ಯಾರು ಎಷ್ಟೇ ಕೇಳಿದರೂ ಪ್ರಶ್ನೆಗಳಿಗೆ ಉತ್ತರ ಸಿಗದಾದಾಗ, '...it feels like I am a dentist pulling teeth...' ಎನ್ನಿಸೋದು ಸಹಜವಲ್ಲವೇ? ಈ '...its like...', '...as if...', '...similar to...', '...it feels like...' ಎನ್ನೋ ಬಳಕೆಯೇ ಸುಂದರವಾದದ್ದು ಎಂದು ನನ್ನ ಅಂಬೋಣ.

ಇಂಗ್ಲೀಷ್ ನನ್ನ ಸ್ವಂತ ಭಾಷೆಯೇನೂ ಅಲ್ಲ. ಎಷ್ಟೋ ಸಾರಿ ಅನ್ನಿಸಿದ್ದಿದೆ - ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಇಲ್ಲಿ ನಾವು ಇಂಗ್ಲೀಷನ್ನು ಬಳಸುವ ಹಾಗೆ ಕನ್ನಡವನ್ನು ಬಳಸಿದ್ದರೆ ಹೇಗಿತ್ತು ಎಂದು. ನಾನು ಅಮೇರಿಕದ ಐವತ್ತು ರಾಜ್ಯ, ಅಷ್ಟ ದಿಕ್ಕುಗಳನ್ನು ನೋಡದಿದ್ದರೂ ಯಾರನ್ನಾದರೂ ಮಾತನಾಡಿಸಿದಾಗ, ಯಾರದ್ದಾದರೂ ಮಾತು ಕೇಳಿದಾಗ ಅವರು ಯಾವ ರಾಜ್ಯದವರಿರಬಹುದು ಎಂದು ಹೇಳಬಹುದಾದಷ್ಟರ ಮಟ್ಟಿಗೆ ಇಲ್ಲಿನವರು ಬಳಸುವ ಇಂಗ್ಲ್ಶೀಷ್ ಆಕ್ಸೆಂಟಿನ ಪರಿಚಯವಿದೆ. ನಮ್ಮ ಭಾರತೀಯ ಭಾಷೆಗಳಲ್ಲಿ ಡಯಲೆಕ್ಟ್ (ಆಡುನುಡಿ, ಗ್ರಾಮ್ಯ) ಇರುವ ಹಾಗೆ ಇಂಗ್ಲೀಷ್‍ಗೂ ಇದೆಯೇ ಎಂದು ಎಷ್ಟೋ ಸಾರಿ ಅನ್ನಿಸಿದೆ. ಅಕಸ್ಮಾತ್ ನಮ್ಮ ಕನ್ನಡದಲ್ಲೇ ನಾವು ವ್ಯವಹಾರ ಮಾಡುವಂತಿದ್ದರೆ ನಾವು ಯಾವ ಕನ್ನಡವನ್ನು ಬಳಸುತ್ತಿದ್ದೆವು? ಧಾರವಾಡದವರೆಲ್ಲರೂ ಬೆಂಗಳೂರಿನ ಕನ್ನಡವನ್ನು ಮಾತನಾಡುತ್ತಿದ್ದರೇ? ಮಂಗಳೂರಿನವರು ಬಳ್ಳಾರಿಯವರೊಡನೆ ಹೇಗೆ ಸಂವಾದ ನಡೆಸುತ್ತಿದ್ದರು ಎಂದೆಲ್ಲಾ ಯೋಚಿಸಿಕೊಂಡಾಗ ಹಾಸ್ಯ ಪ್ರಸಂಗಗಳ ಹೊನಲು ಮನದಲ್ಲಿ ಹರಿದು ನಗೆ ಉಕ್ಕುತ್ತದೆಯೇ ಹೊರತು ಗಂಭೀರ ಪ್ರಸಂಗಗಳು ಯಾವುವೂ ಕಲ್ಪನೆಗೂ ಸಿಗೋದಿಲ್ಲ. ಆನವಟ್ಟಿಯಿಂದ ರಜೆಯ ದಿನಗಳಲ್ಲಿ ನಾನು ಹೊಸನಗರಕ್ಕೆ ಹೋದಾಗ (ಅವೆರಡೂ ಶಿವಮೊಗ್ಗ ಜಿಲ್ಲೆಯ ಎರಡು ದಿಕ್ಕಿನಲ್ಲಿರುವ ನೂರು ಕಿಲೋಮೀಟರ್ ದೂರದ ಊರುಗಳು) 'ಸೈಕಲ್ ಟಯರಿಗೆ ಹವಾ ಹೊಡಸು...' ಎಂದು ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡಿದರೆ, ಹೊಸನಗರದವರು ನಗುತ್ತಿದ್ದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. 'ಇವನೊಬ್ಬ ಹವಾಮಾನದ ಮುನ್ಸೂಚನೆ ಕೊಡೋನ್ ಬಂದಾ ನೋಡ್ರೋ, ಹವಾs ಹೊಡಸು...' ಎಂದು ಪದೇಪದೇ ಹೇಳಿ ತಮಾಷೆ ಮಾಡುತ್ತಿದ್ದರವರು, ಅವರ ಭಾಷೆಯಲ್ಲಿ 'ಗಾಳಿ ಹಾಕಿಸು...' ಎಂದು ಹೇಳಬೇಕಿತ್ತಂತೆ! ಕೊನೇ ಪಕ್ಷ ಕನ್ನಡಕ್ಕಾದರೂ ಒಂದು ಹತ್ತು ಡಯಲೆಕ್ಟ್‌ಗಳಿದ್ದಿರಬಹುದು, ಆದರೆ ಹಿಂದಿಯಂತಹ ಭಾಷೆಗೆ ಪ್ರತಿ ಐದು ಕಿಲೋಮೀಟರ್ ಪರಿಧಿಯಲ್ಲಿ ಆರಂಭವಾಗಿ ಅಂತ್ಯವಾಗುವ ಡಯಲೆಕ್ಟ್‌ಗಳನ್ನು ಹಿಡಿದು ಹೇಗೆ ಸಂಭಾಷಣೆ ನಡೆಸುತ್ತಾರೋ ಎಂದೆನಿಸುವುದಿಲ್ಲವೇ?

***

ನಾವು ನಮಗೆ ನೆಚ್ಚಿನದನ್ನು ಏನು ಮಾಡುತ್ತೇವೋ ನಾವೂ ಹಾಗೇ ಆಗಿ ಹೋಗುತ್ತೇವೆ. ನಮ್ಮ ಅಭ್ಯಾಸ ನಮ್ಮ ಒಲವಾಗುತ್ತದೆ, ನಮ್ಮ ಬಲವಾಗುತ್ತದೆ, ಅದೇ ನಮ್ಮ ಸೋಲು-ಗೆಲುವುಗಳನ್ನೂ ನಿರ್ಧರಿಸುತ್ತದೆ. ಹೀಗೆ ಕಡಿಮೆ ಓದಿ ಹೆಚ್ಚು ಬರೆಯುವುದರ ಮರ್ಮ (ಅರ್ಥಾಥ್ ಬ್ಲಾಗಿಸುವುದರ ಕರ್ಮ) ದಿಂದ ಏನಾದರೊಂದು ಆಗೇ ಆಗಿರುತ್ತದೆ. ಕೆಲವೊಮ್ಮೆ ಬರೆಯಲು ಯಾವುದೇ ವಿಷಯಗಳಿರದಿದ್ದರೂ ಏನನ್ನಾದರೂ ಬರೆದು/ಕೊರೆದು ಬಿಸಾಡುವ ಅನಿವಾರ್ಯತೆ ಹುಟ್ಟುತ್ತದೆ, ಒಂಥರಾ withdrawl symptoms ಇದ್ದಹಾಗೆ, ಅಥವಾ cessasion ಹ್ಯಾಬಿಟ್ ಆದ ಹಾಗೆ. ಬಲವಿದ್ದುದು ವೀಕ್‌ನೆಸ್ ಆಗುತ್ತದೆ, ಅಂಥಾ ವೀಕ್‌ನೆಸ್‌ನಲ್ಲಿ ಬರೆದುದು ಯಾರೂ ನೋಡದ, ನೋಡಿಯೂ ಅರಿಯದ, ಅರಿತೂ ಬೆರೆಯದ ಕಥಾನಕವಾಗುತ್ತದೆ.

ಕೊನೆಗೊಮ್ಮೆ ಬಲಕುಂದಿದ, ಅರಿಯದ, ಬೆರೆಯದ, ನೋಡದ, ನುಡಿಯದ ಕಥಾನಕ ಪದೇ-ಪದೇ ಎದ್ದು ಬಂದು ಹೆದರಿಸಲು ತೊಡಗುತ್ತದೆ!

Sunday, July 29, 2007

ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ...

ಸಾಯಂಕಾಲ ನಮ್ಮ ಟೌನ್‌ಶಿಪ್ಪ್‌ನಲ್ಲ್ ನಡೆಯೋ ವರ್ಷಾವಧಿ ಕಾರ್ನಿವಲ್ಲ್‌ಗೆ ಕರಕೊಂಡ್ ಹೋಗ್ತೀನಿ ಅಂತ ಬೆಳಿಗ್ಗೆ ಹೊರಡ್ ಬೇಕಾದ್ರೆ ನೆನಪಿಸಿದ್ದೂ ಅಲ್ದೇ ಮಧ್ಯಾಹ್ನ ಫೋನ್ ಮಾಡಿ ಹೇಳಿದ್ದರಿಂದ ಸುಬ್ಬ ರೆಡಿ ಆಗಿ ಕೂತಿರ್ತಾನೆ, ಒಂದು ಕಾಫೀನೋ ತಿಂಡೀನೋ ಮಾಡಿಕೊಂಡು ಎಂದು ಆಲೋಚಿಸಿಕೊಂಡು ಬಂದ ನನಗೆ ಸೋಫಾದ ಮೇಲೆ ಕುಳಿತ ಸುಬ್ಬನನ್ನು ನೋಡಿ ಸಂಪತ್ತಿಗೆ ಸವಾಲಿನ ವಜ್ರಮುನಿಯ ನೆನಪಾಯಿತು.

'ಲೋ, ರೆಡೀನಾ, ಅಲ್ಲಿ ಪಾರ್ಕಿಂಗ್ ಸಿಗೋದಿಲ್ಲ ಜಲ್ದೀ ಹೋಗ್ಬೇಕು - ನಾನು ಎದ್ನೋ ಬಿದ್ನೋ ಅಂತ ಬಂದ್ರೆ ಇನ್ನೂ ಹಾಳ್ ಮುಖಕ್ಕೆ ನೀರೂ ತೋರಿಸ್ದೇ ಕುತಗಂಡ್ ಇದ್ದೀಯಲ್ಲೋ?' ಎಂದು ಕಿಚಾಯಿಸಿದೆ, ನನ್ ಮಾತಿಗೆ ಉತ್ರ ಕೊಡೋ ಹಾಗೆ ಬಾಯಿ ತೆರದವನು 'ಅದ್ಯಾವ್ ಸೀಮೇ ಡಬ್ಬಾ ಇಸ್ತ್ರೀ ಪೆಟ್ಟಿಗೆ ಇಟ್ಟ್ಕೊಂಡಿದ್ದೀಯೋ...' ಒಮ್ಮೆ ಉಗುಳು ನುಂಗಿ, 'ನನ್ ಜೀನ್ಸ್ ಪ್ಯಾಂಟ್ ಮೇಲೆ ಇಡತಿದ್ದ ಹಾಗೇನೇ ಸುಟ್ಟು ಹೋಯ್ತು' ಎಂದು ಸಮಜಾಯಿಷಿ ಕೊಡಲು ನೋಡಿದನೋ ಆಗಲೇ ನನಗೆ ತಿಳಿದದ್ದು ಏನೋ ಎಡವಟ್ಟು ಆಗಿರಲೇ ಬೇಕು ಎಂದು.

'ನಿಜವಾಗೀ? ಸುಟ್ಟೇ ಹೋಯ್ತಾ...ಎಷ್ಟೋ ವರ್ಷದಿಂದ ಇಟ್ಟ್‌ಕೊಂಡಿದ್ದನಲ್ಲೋ...' ಎಂದು ನಾನು ಸುಟ್ಟು ಹೋದ ಐರನ್ ಬಾಕ್ಸ್ ಗತಿ ಕಂಡು ಮರುಕ ಪಡುತ್ತಿದ್ದರೆ, ಹಲ್ಲಿ ಮೇಲೆ ಆಕ್ರಮಣ ಮಾಡಿ ಬಾಲದ ತುಂಡಿನ ಜೊತೆ ಆಟವಾಡ್ತಾ ಇರೋ ಬೆಕ್ಕಿನ ಮರಿಯಂತೆ ಇವನ ಮುಖದ ಮೇಲೆ ಮಂದ ಹಾಸ ಸುಳಿಯತೊಡಗಿತು.

'ಅದ್ಕೇ ಅನ್ನೋದು ಅಮೇರಿಕದ ಪ್ರಾಡಕ್ಟ್‌ಗಳೆಲ್ಲಾ ಸರಿ ಇಲ್ಲಾ ಅನ್ನೋದು...'

'ಆಞ್, ನಿನಗೇನು ತಲೆಗಿಲೆ ಕೆಟ್ಟಿದಿಯೇನು?'

'ಮತ್ತೇನು, ಒಂದು ಇಪ್ಪತ್ ಡಾಲರ್ ಬಿಸಾಕಿ ನಿನ್ನಂಥಾ ಜುಜುಬಿ ನನ್ ಮಕ್ಳು ಇಸ್ತ್ರೀ ಪೆಟ್ಗೇ ತಗಂಡು ಅದನ್ನ ವರ್ಷಗಳ ಮಟ್ಟಿಗೆ ಬಳಸಿ ಬಾಳುಸ್ತಾ ಕುತಗಂಬಿಟ್ರೆ?' ಎಂದು ಅವನದ್ದೇ ಒಂದು ಭಾಷೆ, ತಾರ್ಕಿಕತೆಯಲ್ಲಿ ಸವಾಲನ್ನೊಡ್ಡಿದ, ನನ್ನ ಪರಿಸ್ಥಿತಿ ಮುಕ್ಕಾಲು ಘಂಟೇಯಿಂದ ಸಿಟಿಬಸ್ಸು ಕಾದು ಕುಳಿತ ಮಾರವಾಡಿ ಹುಡುಗ ಕೊನೆಗೂ ಬಂದ ಬಸ್ಸಿನ ಕನ್ನಡ ಅಂಕೆಗಳನ್ನು ಓದೋಕೆ ತಡವರಿಸೋರ ಥರ ಆಗಿತ್ತು.

'ಒಂದ್ ಸಾಮಾನ್ ತಗೊಂಡ್ರೆ ಅದು ಬಾಳಾ ದಿನಗಳವರೆಗೆ ಬಾಳಕೆ ಬರಲೀ ಅನ್ನೋದು ಲೋಕರೂಢಿ, ನಿನ್ನ ತಲೆ ಒಳಗೆ ಇನ್ನೇನಾದ್ರೂ ಇದ್ರೆ ಅದನ್ನು ದಯವಿಟ್ಟು ಬಿಡಿಸಿ ಹೇಳುವಂತವನಾಗು' ಎಂದೆ ನಾಟಕೀಯವಾಗಿ, ಅಲ್ಲಿ ನೋಡಿದ್ರೆ ಆಫೀಸ್ನಲ್ಲಿ ತಲೆ ತಿಂತಾರೆ, ಇಲ್ಲಿ ನೋಡಿದ್ರೆ ಇವನ್ದು ಬೇರೆ ಕೇಡಿಗೆ...ಎಂದು ಸ್ವಗತದಲ್ಲಿ ಹೇಳಿಕೊಳ್ಳುವವನಂತೆ.

'ನಿನಗೆ ಇಂಥವನ್ನೆಲ್ಲ ನನ್ನಂಥೋರ್ ಹೇಳ್ಕೊಡಬೇಕಾ? ನೋಡು, ನಮ್ ದೇಶದಲ್ಲಿ ಒಂದ್ ಸಾಮಾನ್ ತಗೊಂಡ್ರೆ, ಉದಾಹರಣೆಗೆ ಇಸ್ತ್ರೀ ಪೆಟ್ಗೇ ಅಂತಾನೇ ಇಟ್ಕೋ, ಅದು ವರ್ಷಕ್ಕೊಂದ್ ಸಾರೀನಾದ್ರೂ ಸುಟ್ಟ್ ಹೋಗುತ್ತೆ, ಅದರಿಂದ ದೇಶಕ್ಕೆ ಒಳ್ಳೇದೇ ಅಲ್ವೇ? ಯಾಕೇ ಅಂದ್ರೆ, ಹೀಗೆ ತಗೊಂಡ್ ಸಾಮಾನುಗಳು ಸುಟ್ಟು ಹೋಗೋದ್ರಿಂದ ಉತ್ಪತ್ತಿ ಹೆಚ್ಚುತ್ತೆ, ಅದರ ಪಾರ್ಟ್ಸು, ಸ್ಪೇರೂ ಅಂತ ಇನ್ನೊಂದಿಷ್ಟು ಬಿಸಿನೆಸ್ಸ್ ಬೆಳೆಯುತ್ತೆ, ಸರ್ವೀಸ್ ಸೆಂಟರುಗಳು ಹೆಚ್ಚುತ್ತೆ, ನಾಲ್ಕು ಜನಕ್ಕೆ ಕೆಲ್ಸಾ ಸಿಗುತ್ತೆ...ಅದನ್ನು ಬಿಟ್ಟು ಇಲ್ಲೀ ಥರ ಒಂದ್ಸರ್ತಿ ತಗೊಂಡ್ ಸಾಮಾನು ಹತ್ತು ವರ್ಷಾ ಬಂತು ಅಂತಂದ್ರೆ ಆ ಕಂಪನಿ ಬೆಳೆಯೋದ್ ಹೇಗೆ?' ಎಂದು ದೊಡ್ಡ ಸಾಮ್ರಾಜ್ಯವನ್ನು ಜಯಿಸಿದ ಸಾಮ್ರಾಟನ ನಗೆ ನಕ್ಕ.

'ಓಹೋ, ಹೀಗೋ...ವರ್ಷಾ ವರ್ಷಾ ತಗೊಂಡಿದ್ನೇ ತಗೊಳಕ್ಕೆ ದುಡ್ಡ್ ಯಾವಾನ್ ಕೊಡ್ತಾನೆ?' ನನ್ನ ಕುಹಕದ ಪ್ರಶ್ನೆ.

'ಅದೋ, ಬಾಳಾ ಸುಲ್ಬಾ, ಅಗತ್ಯ ವಸ್ತುವಿನ್ ಮೇಲೆ ಜನ ಖರ್ಚ್ ಮಾಡೋದ್ರಿಂದ ಅವರಲ್ಲಿರೋ ದುಡ್ಡ್ ಕಡಿಮೆಯಾಗಿ, ಕೆಟ್ಟ್ ಚಟಾ ಯಾವ್ದೂ ಬೆಳಸ್ಕೊಳ್ಳಿಕ್ಕೆ ಆಸ್ಪದಾನೇ ಇಲ್ಲಾ ನೋಡು!'

'ನೀನೋ ನಿನ್ ಲಾಜಿಕ್ಕೋ...ಒಂದ್ ಕೆಲ್ಸಾ ಮಾಡು, ಇಲ್ಲಿರೋ ಸಾಮಾನ್‌ಗಳನ್ನೆಲ್ಲಾ ಒಂದು ಸುತ್ಗೆ ತಗೊಂಡು ಕುಟಕೋಂತ ಬಾ...ಇಷ್ಟು ದಿನಾ ಚೆನ್ನಾಗ್ ಕೆಲ್ಸಾ ಮಾಡಿರೋ ಐರನ್ ಬಾಕ್ಸು ನೀನ್ ಕೈ ಹಾಕಿದ್ ಕೂಡ್ಲೇ ಕೈ ಕೊಡ್ತು ನೋಡು...ಏನು ಕೆಟ್ಟ ಕೈ ನೋಡು ನಿನ್ದು...ಅಲ್ಲಾದ್ರೆ ವೋಲ್ಟೇಜ್ ಏರುಪೇರು ಅಂತಾನಾದ್ರೂ ಅಂದು ಇನ್ನೊಬ್ರ ಕಡೇ ಬೆಟ್ಟ್ ಮಾಡಿ ತೋರಿಸ್‌ಬೋದಿತ್ತು, ಇಲ್ಲಿ ಬೇರೆ ಯಾರ್ದೂ ತಪ್ಪಿಲ್ಲ, ನಿನ್ದೇ, ಯೂಸರ್ ಎರರ್' ಎಂದಕೂಡ್ಲೇ ಶತಕವಂಚಿತ ತೆಂಡೂಲ್ಕರ್ ಪೆವಿಲಿಯನ್ ಕಡೆಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಿರುವಾಗ ಮಾಡಿಕೊಂಡ ಮುಖದ ಹಾಗೆ ಸುಬ್ಬನ ಮುಖದಲ್ಲಿನ ನಗು ಮಾಯವಾಗಿ ಅದರ ಬದಲಿಗೆ ಒಂದು ಗಡಿಗೆಯ ಮುಖಕ್ಕೆ ಕಣ್ಣು, ಮೂಗು, ಕಿವಿ ಬರೆದು ಬೋರಲಾಗಿ ಹಾಕಿದ ಹಾಗೆ ಕಾಣತೊಡಗಿತು.

'ಈಗ ಯಾವನ್ದಾರ್ರೂ ತಪ್ಪಿರ್ಲಿ, ನನ್ನ್ ಪ್ಯಾಂಟು ಅರ್ಧ ಇಸ್ತ್ರೀ ಆಗಿರೋದ್ರಿಂದ ನಾನು ಜೀನ್ಸ್‌ನ ಹಂಗೇ ಹಾಕ್ಕೊಂಡು ಬರ್ತೀನಿ, ದಾರಿಯಲ್ಲಿ ಯಾವನಾದ್ರೂ ಪರಿಚಯ ಮಾಡ್ಸಿ, ಬರೀ ಪ್ಯಾಂಟಿನ ಒಂದೇ ಕಾಲನ್ನು ಇಸ್ತ್ರೀ ಮಾಡಿ ಹಾಕ್ಕೊಳೋದೇ ಇವನ ಅಭ್ಯಾಸ ಅಂತ ಮತ್ತೆಲ್ಲಾದ್ರೂ ಅಪಹಾಸ್ಯ ಮಾಡಿದ್ರೆ ನೋಡ್ಕೋ ಮತ್ತೆ' ಎಂದು ಅಡ್ವಾನ್ಸ್ ವಾರ್ನಿಂಗ್ ಕೊಟ್ಟ. ಬಚ್ಚಲುಮನೆಯ ಕಡೆಗೆ ಮುಖ ತೊಳೆಯಲು ಹೋಗುತ್ತೇನೆ ಎಂದು ಸನ್ನೆ ಮಾಡಿ ಹೋಗುತ್ತಿರುವಾಗ - 'ಹೊಸ ಇಸ್ತ್ರೀ ಪೆಟ್ಗೇ ತರಬೇಕಾದ್ರೆ ಎರಡನ್ನ್ ತರೋದ್ ಮರೀಬೇಡಾ, ನಾನೂ ಒಂದ್ ತಗೊಂಡ್ ಹೋಗ್ತೀನಿ, ವೋಲ್ಟೇಜ್ ನೋಡ್ಕೊಂಡ್ ತರಬೇಕಷ್ಟೇ...' ಎಂದು ಹೊಸ ಬೇಡಿಕೆಯೊಂದನ್ನು ಮಂಡಿಸಿದ.

ಕಾರ್ನಿವಲ್‌ಗೆ ಹೋದಾಗ ಅದಾಗಲೇ ಬಹಳಷ್ಟು ಜನರು ಬಂದಿದ್ದರಿಂದ ಎಲ್ಲಿ ಬೇಕೋ ಅಲ್ಲಿ ಪಾರ್ಕಿಂಗ್ ಸಿಗದಿದ್ದುದರಿಂದ ದೂರದಲ್ಲಿ ಪಾರ್ಕ್ ಮಾಡಿ ಸ್ವಲ್ಪ ನಿಧಾನವಾಗಿ ಜಾತ್ರೆಗೆ ಬರುವಂತಾಯಿತು. ಅಲ್ಲಲ್ಲಿ ಇನ್ನೂ ಚುಮುಚುಮು ಬೆಳಕಿನಿಂದಲೂ ಹುಣ್ಣಿಮೆಯ ನಂತರದ ದಿನವಾದ್ದರಿಂದ ತಿಳಿಮುಗಿಲಲ್ಲಿ ಅದೀಗ ತಾನೇ ಊಟಮಾಡಿ ತೊಳೆದಿಟ್ಟ ಸ್ಟೀಲ್ ತಟ್ಟೆಯಂತೆ ಹೊಳೆಯುತ್ತಿದ್ದ ಚಂದ್ರನಿಂದಲೂ ಜಾತ್ರೆಗೆ ಮತ್ತಷ್ಟು ಮೆರುಗುಬಂದಿತ್ತು. ಅದು ಆಡ್ತೀಯಾ, ಇದು ಆಡ್ತೀಯಾ ಎಂದು ಏನೇನೆಲ್ಲವನ್ನು ತೋರಿಸಿದರೂ ಸುಬ್ಬ ಯಾವುದರಲ್ಲೂ ಆಸಕ್ತಿಯನ್ನು ತೋರಿಸುವವನಂತೆ ಕಂಡುಬರಲಿಲ್ಲ. ಕಾಟನ್ ಕ್ಯಾಂಡಿ ತರತೀನಿ ತಡಿ ಎಂದು ಹೋದವನು ಭಾಳಾ ಜನ ಇದಾರೆ ಲೈನ್‌ನಲ್ಲಿ ಎಂದು ಬರಿ ಕೈಲಿ ಹಿಂತಿರುಗಿ ಬಂದಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಇನ್ನು ಐದು ನಿಮಿಷಗಳಲ್ಲಿ ಫೈರ್‌ವರ್ಕ್ಸ್ ಆರಂಭವಾಗುತ್ತದೆ ಎಂದು ಧ್ವನಿವರ್ಧಕದಲ್ಲಿ ಬಂದ ಶಬ್ದ ಪುರಾಣ ಕಾಲದ ಅಶರೀರವಾಣಿಯನ್ನು ನೆನಪಿಗೆ ತಂದಿತ್ತು.

ಪಾರ್ಕ್‌ನ ಯಾವುದೋ ಒಂದು ಮೂಲೆಯಲ್ಲಿ ಫೈರ್‌ವರ್ಕ್ಸ್ ಕಾಣುವುದೋ ಇಲ್ಲವೋ ಎಂಬ ಅನುಮಾನದಲ್ಲೇ ಕುಳಿತ ನಮಗೆ ಇನ್ನೂರು ಅಡಿಗಳಷ್ಟು ದೂರದಲ್ಲಿ ಸ್ವಚ್ಚಂದ ನಭದಲ್ಲಿ ಶಬ್ದಮಾಡಿಕೊಂಡು ಹಾರಿ ಥರಥರನ ರಂಗು ಮೂಡಿಸಿ ಮರೆಯಾಗುತ್ತಿದ್ದ ಪಟಾಕಿ, ಬಾಣಬಿರುಸುಗಳು ಸಾಕಷ್ಟು ಮುದನೀಡತೊಡಗಿದವು.

'there goes your tax dollar...' ಎಂದು ಸುಬ್ಬನ ಧ್ವನಿ ಗುಹೆಯೊಳಗಿನಿಂದ ಬಂದಂತೆ ಕೇಳಿಸಿತು, ಮೊದಲ ಎರಡು ನಿಮಿಷ ಸುಂದರವಾದ ಬಣ್ಣ ಬಣ್ಣದ ಪಟಾಕಿಯ ವೈವಿಧ್ಯಗಳನ್ನು ನೋಡಿ ಹೇಳಿದ ಕಾಮೆಂಟ್ ಅದಾಗಿತ್ತು.

ನಾನು, 'ಬರೀ ಬಣ್ಣಗಳನ್ನು ಮಾತ್ರ ನೋಡ್ಬೇಡಾ, ಆ ಪಟಾಕಿ ಹತ್ತಿ ಹಾರಿ ಸಿಡಿಯುವಾಗ ಬಣ್ಣದ ಹಿಂದಿನ ಹೊಗೆಯ ವಿನ್ಯಾಸವನ್ನೂ ನೋಡು' ಎಂದೆ.

'ಹೌದಲ್ವಾ, ಬರೀ ನಿನ್ನ್ ಟ್ಯಾಕ್ಸ್ ಡಾಲರ್ ಅಷ್ಟೇ ಅಲ್ಲ, ಒಂದ್ ರೀತಿ ಗ್ಲೋಬಲ್ ಪೊಲ್ಲ್ಯೂಷನ್ ಇದ್ದ ಹಾಗೆ ಇದು, ಇಂಥವನ್ನೆಲ್ಲ ಬ್ಯಾನ್ ಮಾಡ್ಬೇಕು' ಎಂದು ಸುಬ್ಬ ಹತ್ತು ವರ್ಷದಿಂದ ವಿಚಾರಣೆಗೆ ಒಳಪಟ್ಟ ಖೈದಿಗೆ ಮರಣದಂಡನೆ ವಿಧಿಸುವ ನ್ಯಾಯಾಧೀಶನಂತೆ ಹೇಳಿದ.

ಸ್ವಲ್ಪ ಚುಚ್ಚೋಣವೆಂದುಕೊಂಡು ನಾನು, 'ಹೌದು, ಅದೆಲ್ಲಾ ಹೊಟ್ಟೆಗೆ ಹಿಟ್ಟ್ ಇಲ್ದಿರೋ ಬಡ ದೇಶದೋರು ಹೇಳೋ ಮಾತು' ಎಂದೆ.

ಸುಬ್ಬ ತನಗೆ ನೋವಾದರೂ ತೋರಿಸಿಕೊಳ್ಳದೇ, 'ಒಂದ್ ಹೊಸ ಐಡಿಯಾ ಬಂತು! ಎಂದ.

ಟಾಪಿಕ್ ಏನಾದ್ರೂ ಬದಲಾಯಿಸ್ತಾನೋ ಎಂದು ಕುಹಕ ಯೋಚನೆ ನನ್ನ ತಲೆಯಲ್ಲಿ ಒಂದು ಕ್ಷಣದ ಮಟ್ಟಿಗೆ ಬಂದರೂ, ಇರಲಿ ನೋಡೋಣವೆಂದುಕೊಂಡು, 'ಏನಪ್ಪಾ ಅಂತಾ ಮಹಾ ಐಡಿಯಾ?' ಎಂದೆ.

'ಏನಿಲ್ಲ, ನಿನ್ನಂಥ ಘನಂದಾರೀ ತಲೇ ಇರೋ ಬೃಹಸ್ಪತಿಗಳನ್ನ ಒಂದೇ ಈ ಉಪಗ್ರಹ ಉಡಾವಣೇ ಮಾಡ್ತಾರಲ್ಲ, ಆಗ ಅವುಗಳಿಗೆ ಕಟ್ಟಿ ಹಾರಿಸ್‌ಬೇಕು, ಇಲ್ಲಾ ಈ ಪಟಾಕಿಗಳಿಗಾದ್ರೂ ಕಟ್ಟಿ ಬಿಟ್ಟು ಸುಮ್ನೇ ಹಾರಿಸಿ ಯಾವ್ದಾದ್ರೂ ಲೋಕಾ ಸೇರಿಸ್‌ಬೇಕು ನೋಡು' ಎಂದ. ಇವನೇನಪ್ಪಾ ಬಯ್ಯೋಕ್ ಶುರು ಹಚ್ಕೊಂಡ್ನಲ್ಲಾ ಎಂದು ಯೋಚಿಸ್ತಿದ್ದ ನನ್ನನ್ನು ತಡೆದು, 'ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ ತಿಳಕೋ!' ಎಂದು ಹೇಳಿ ಬಾಯಿ ಹೊಲಿಸಿಕೊಂಡವನಂತೆ ಸುಮ್ಮನಾಗಿ ಅದ್ಯಾವುದೋ ಪಥವನ್ನು ಹುಡುಕಿ ಮೇಲೆ ಹಾರುತ್ತಿದ್ದ ಪಟಾಕಿ ರಾಕೇಟುಗಳನ್ನು ನೋಡೋದರಲ್ಲಿ ತಲ್ಲೀನನಾಗಿ ಹೋದ, ನಾನು ನನ್ನ ಪ್ರಪಂಚದಲ್ಲಿ ಮುಳುಗಿಕೊಂಡೆ.

Thursday, July 26, 2007

...ಬೆಂಗಳೂರಿನಲ್ಲೇ ಹಾಯಾಗಿ ಇದ್ದಿರಬೇಕಿತ್ತು...

'Life sucks!...' ಎನ್ನುವ ಪದಗಳು ಅಬ್ದಲ್ಲ್‌ನ ಬಾಯಿಯಿಂದ ತಮ್ಮಷ್ಟಕ್ಕೆ ತಾವೇ ಹೊರಬಿದ್ದವು, ತದನಂತರ ಒಂದು ಕ್ಷಣ ಧೀರ್ಘ ಮೌನ ನೆಲೆಸಿತ್ತು, ನಾನೇ ಕೇಳಿದೆ, 'ಹಾಗಾದ್ರೆ ಎಲ್ಲ್ ಹೋದ್ರೂ ನಮಗೆ ಸುಖಾ ಇಲ್ಲಾ ಅನ್ನು'. ಅದಕ್ಕವನ ಉತ್ತರ, 'ಹಾಗೇ ಅಂತ ಕಾಣ್ಸುತ್ತೆ...'

***

ಇದು ನನ್ನ ಮತ್ತು ನನ್ನ ಹತ್ತು ವರ್ಷದ ಸಹೋದ್ಯೋಗಿ-ಗೆಳೆಯ ಅಬ್ದುಲ್ಲ್‌ನ ನಡುವೆ ನಡೆದ ಕಳೆದ ಭಾನುವಾರದ ಮಾತುಕತೆಯ ಕೊನೆಯ ಒಂದೆರಡು ಸಾಲುಗಳು. ಅಬ್ದುಲ್ ಈ ದೇಶಕ್ಕೆ ಬಂದು ಹತ್ತಿರಹತ್ತಿರ ಹದಿನಾಲ್ಕು ವರ್ಷಗಳಾಗುತ್ತ ಬಂದಿರಬಹುದು, ಅವನು ಈಗ ಭಾರತಕ್ಕೆ ಹೋಗಿ ಅಲ್ಲೇ ನೆಲೆ ಊರುವ ಪ್ರಯತ್ನ ನಡೆಸಿದ್ದಾನೆ, ಅಂತಹ ಒಂದು ಬದಲಾವಣೆಗೆ ತಕ್ಕಂತೆ ನಿಧಾನವಾಗಿ ಒಂದೊಂದೇ ಅನುಕೂಲಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದಾನೆ. ಅವನ ಜೊತೆ ಮಾತನಾಡಿದಾಗಲೆಲ್ಲ, ಮಾತಿನ ಮೊದಲು ನಾನೂ ಅವನ ಹಾಗೆ ಹಿಂತಿರುಗಿ ಒಂದಲ್ಲ ಒಂದು ದಿನ ಹೊರಡುತ್ತೇನೆ ಎನ್ನುವ ಸಂತಸ ಉಕ್ಕಿ ಬರುತ್ತದೆ, ಸಂಭಾಷಣೆಯ ಕೊನೆಕೊನೆಗೆ ಅದು ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತದೆ, ಹೀಗೆ ಹಲವಾರು ಬಾರಿ ಆಗಿದೆ.

***

ಮಾತಿನ ಮಧ್ಯೆ, ನಾವು ಭಾರತಕ್ಕೆ ಹಿಂತಿರುಗಿದಾಗ low-profile ನಲ್ಲಿ ಬದುಕಲು ಶುರು ಮಾಡಬೇಕು ಇಲ್ಲವೆಂದಾದರೆ ಹಲವಾರು ತೊಂದರೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಿದ್ದ. ಅವನ ಸ್ನೇಹಿತರೊಬ್ಬರು ಮದ್ರಾಸಿನ ಒಂದು ಒಳ್ಳೆಯ ಲೊಕೇಷನ್ನಲ್ಲಿ ಮನೆ ಕಟ್ಟಿಸಿಕೊಂಡಿದ್ದರಂತೆ, ಗೂಂಡಾಗಳು ದಿನವೂ ಅವರಿಗೆ ಮನೆಯನ್ನು ಮಾರುವಂತೆ ಹಿಂಸೆ ಕೊಡುತ್ತಿದ್ದರಂತೆ - ಅದೂ ಬಹಳ ಕಡಿಮೆ ಬೆಲೆಗೆ. ಈ ಗೂಂಡಾಗಳು, ಅವರ ಚೇಲಾಗಳ ಕಷ್ಟವನ್ನು ಸಹಿಸಲಾರದೆ ಅಲ್ಲಿ ಇರುವವರು ಹಲವಾರು ಮಂದಿ ಮನೆ-ನಿವೇಶನವನ್ನು ಅರ್ಧಕರ್ಧ ಬೆಲೆಗೆ ಮಾರಿದ್ದನ್ನು, ಈ ಗೂಂಡಾಗಳು ತಿರುಗಿ ಮಾರುಕಟ್ಟೆಯ ಬೆಲೆಗೆ ಬೇರೆಯವರಿಗೆ ಮಾರಿ ಬೇಕಾದಷ್ಟು ಹಣ ಸಂಪಾದಿಸುವ ಮಾರ್ಗವನ್ನು ಹಿಡಿದಿದ್ದಾರಂತೆ. ವಿದೇಶದಿಂದ ಬಂದವರು ಎಂದರೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಕೊಡುವವರೇ, ಮೇಲ್ನೋಟಕ್ಕೆ ಸಂತಾಪ ಸೂಚಿಸುವಂತೆ ಕಾಣಿಸುತ್ತಾರೆ, ಒಳಗೊಳಗೆ ವಿದೇಶದಿಂದ ಹಿಂತಿರುಗಿದವರೆಲ್ಲ ಮಹಾ ಶ್ರೀಮಂತರು ಎನ್ನುವ ಭ್ರಮೆಗೊಳಗಾಗಿ ಕಂಡಕಂಡಲ್ಲಿ ಸಾಕಷ್ಟು ಸುಲಿಗೆ ಮಾಡಲಾಗುತ್ತದೆ, ಬಹಳ ಜಾಗರೂಕತೆಯಿಂದಿರಬೇಕು... ಮುಂತಾಗಿ ಅವನ ಅನುಭವ, ಅವನು ಕೇಳಿ ತಿಳಿದ ಹಾಗಿನವುಗಳನ್ನೆಲ್ಲ ಕಳೆದ ಭಾನುವಾರ ನನ್ನ ಜೊತೆ ಹಂಚಿಕೊಂಡ. ಆಗಲೇ ಅನ್ನಿಸಿದ್ದು ನಮ್ಮದಲ್ಲದ ದೇಶದಲ್ಲಿ ಇರಲಾರದೆ ನಾವು ನಮ್ಮ ದೇಶಕ್ಕೆ ಹಿಂತಿರುಗಿದ್ದೇ ಹೌದಾದರೆ ಅಲ್ಲಿನ ಬದಲಾವಣೆಗಳಿಗೆ ದಿಢೀರನೆ ಸ್ಪಂದಿಸುವ ಮನಸ್ಥಿತಿಯನ್ನೂ ಜೊತೆಯಲ್ಲೇ ಕೊಂಡೊಯ್ಯಬೇಕು ಎಂಬುದಾಗಿ. ನಾವು ಇಲ್ಲಿ ಸುಖವಾಗಿ ಉಂಡು ಮಲಗಿದಾಗ ಕನಸಿನಲ್ಲಿ ಬರುವ 'ಊರಿಗೂ' ಅಲ್ಲಿನ ನಿಜಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿರೋದಂತೂ ನಿಜ. ಭಾರತದಲ್ಲಿ ಬದುಕಿ ಜಯಿಸಬೇಕು ಎಂದರೆ ಎಲ್ಲದರಲ್ಲೂ ಸಿದ್ಧಹಸ್ತರಾಗಿರಬೇಕು, ಯಾರು ಎಷ್ಟು ಹೊತ್ತಿನಲ್ಲಿ ಹೇಗೆ ಮೋಸ ಮಾಡುತ್ತಾರೆ ಅಂತಹವರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ಆಲೋಚಿಸಿಕೊಳ್ಳುವುದರಲ್ಲೇ ದಿನನಿತ್ಯದ ಬದುಕು ನಡೆಯುತ್ತದೆ, ನಮ್ಮ ಸೂಕ್ಷತೆ ಸೃಜನಶೀಲತೆಯೆಲ್ಲಾ ಈ ಸಣ್ಣ ವಿವರಗಳನ್ನು ನೋಡುವಲ್ಲೇ ಕರಗಿಹೋಗುತ್ತವೆ.

ಜನನಿಭಿಡ ಸ್ಥಳಗಳಲ್ಲಿನ ಜೇಬುಕಳ್ಳರಿಂದ ಹಿಡಿದು, ಎರ್ರಾಬಿರ್ರಿ ಎಲ್ಲಿ ಬೇಕಂದರಲ್ಲಿ ವಾಹನಗಳನ್ನೋಡಿಸೋ ಸರದಾರರಿಂದ ಹಿಡಿದು, ಹಾಡು ಹಗಲೇ ಸೋಗು ಹಾಕಿಕೊಂಡು ಬಂದು ಕುತ್ತಿಗೆ ಕೊಯ್ಯುವವರಿಂದ ಹಿಡಿದು, ಅಮಾಯಕರನ್ನು ಹಿಂಸಿಸಲೆಂದೇ ಅಲ್ಲಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಗೂಂಡಾ-ಪುಡಾರಿಗಳಿಂದ ಹಿಡಿದು, ಬೇಕೆಂದೇ ತಪ್ಪಾಗಿ ಗಲ್ಲಾ ಪೆಟ್ಟಿಗೆಯ ಹಿಂದೆ ಹಣವನ್ನು ಎಣಿಸಿಕೊಡುವ ಬ್ಯಾಂಕ್ ಕ್ಯಾಷಿಯರ್ರ್‌ನಿಂದ ಹಿಡಿದು, ಹತ್ತು ರೂಪಾಯ್ ಕೊಟ್ಟು ಒಂದು ಎಳೆನೀರು ಖರೀದಿ ಮಾಡಿದರೆ ಎಳನೀರನ್ನು ಆಸ್ವಾದಿಸುವ ಮುನ್ನ ಚಿಲ್ಲರೆಯನ್ನು ಸರಿಯಾಗಿ ಕೊಟ್ಟಿದ್ದಾನೆಯೇ ಎಂದು ಎಣಿಸಿ ಹುಷಾರಾಗಿ ಜೇಬಿನಲ್ಲಿಡುವುದರಿಂದ ಹಿಡಿದು, ಬಸ್‌ನಿಲ್ದಾಣ-ರೈಲ್ವೇ ನಿಲ್ದಾಣಗಳಲ್ಲಿ ಸದಾ ಲಗ್ಗೇಜನ್ನು ಕುತ್ತಿಗೆಗೆ ಸುತ್ತಿ ಹಾಕಿಕೊಂಡೇ ಕಾಲ ಕಳೆಯುವಂತಹ ಅತಿ ಬುದ್ಧಿವಂತಿಕೆಯ ಮನಸ್ಥಿತಿಯನ್ನು ಹುಟ್ಟುಹಾಕಿ ಅದನ್ನು ಕಾಯ್ದುಕೊಂಡು ಹೋಗುವಷ್ಟರಲ್ಲಿ ಭಾರತದಲ್ಲಿ ಹೋಗಿ ಅಲ್ಲೇ ಖಾಯಂ ಆಗಿ ನೆಲೆಸುವ ಕನಸುಗಳಲ್ಲೆಲ್ಲಾ ಕರಗಿ ಹೋಗುತ್ತವೆ.

***

ಭಾರತದ ಆಲೋಚನೆ, ಅದರ ಕಲ್ಪನೆಯನ್ನೆಲ್ಲಾ ನೆನೆಸಿಕೊಂಡರೆ ನನ್ನಂಥ ಅನಿವಾಸಿಗೆ ಎಂದೂ ರೋಮಾಂಚನವಾಗುತ್ತದೆ. ನಮ್ಮ ನಮ್ಮ ದೃಷ್ಟಿ ಬದಲಾಗಿದೆಯೇ ವಿನಾ ನಮ್ಮ ದೇಶ ಬದಲಾಗಿಲ್ಲ - ಈ ಹಿಂದೆಯೂ ಜೇಬುಕಳ್ಳರಿದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ನನ್ನ ಮಟ್ಟದ ಲಂಚರಹಿತ, ಭ್ರಷ್ಟಾಚಾರ ರಹಿತ ಬದುಕನ್ನು ಅನುಭವಿಸಿದ ಅನಿವಾಸಿಗಳಿಗೆ (ಭಾರತದಲ್ಲಿನ) ಅಲ್ಲಿನ ಪರಂಪರಾನುಗತವಾದ ಒಡಂಬಡಿಕೆಗಳು ನಮ್ಮ ಬದಲಾದ ಪ್ರಬುದ್ಧತೆಯ ನೆಲೆಗಟ್ಟಿನಲ್ಲಿ ನಮ್ಮನ್ನೇ ನಾವು ಪ್ರಶ್ನಿಸುವಂತೆ ಮಾಡುತ್ತವೆ. ಉದಾಹರಣೆಗೆ, ನೀವು ಸಾವಿರ ರೂಪಾಯಿಯ ವಸ್ತುವೊಂದನ್ನು ಕೊಂಡಿರೆಂದುಕೊಳ್ಳೋಣ. ಅಂಗಡಿಯವನು ಹೇಳುತ್ತಾನೆ, ನೋಡಿ ನೀವು ಸಾವಿರ ರೂಪಾಯಿ ಕ್ಯಾಷ್ ಕೊಡಿ, ನಾನು ಟ್ಯಾಕ್ಸ್ ಸೇರಿಸೋದಿಲ್ಲ, ಇಲ್ಲವೆಂದಾದರೆ ನೀವು ಇಪ್ಪತ್ತು ಪರ್ಸೆಂಟ್ ಟ್ಯಾಕ್ಸ್ ಕೊಡಬೇಕು ಎಂಬುದಾಗಿ. ಆಗ ನೀವೇನು ಮಾಡುತ್ತೀರಿ? ಅಂಗಡಿಯವನಿಗೆ ಸಾವಿರದ ಇನ್ನೂರು ರೂಪಾಯಿ ಕೊಟ್ಟು ನ್ಯಾಯವಾಗಿ ರಶೀದಿಯನ್ನು ಪಡೆಯುತ್ತೀರೋ ಅಥವಾ ಕೇವಲ ಸಾವಿರ ರೂಪಾಯಿಯನ್ನು ಕೊಟ್ಟು ಇನ್ನೂರು ರೂಪಾಯಿಯ ತೆರಿಗೆಯನ್ನು ಉಳಿಸಿದ್ದಕ್ಕಾಗಿ ಖುಷಿ ಪಡುತ್ತೀರೋ? ಇದಕ್ಕೆ ಇನ್ನೂ ಒಂದು ಟ್ವಿಷ್ಟ್ ಕೊಡುತ್ತೇನೆ - ನೀವು ಕೊಟ್ಟ ಇನ್ನೂರು ರೂಪಾಯಿ ತೆರಿಗೆ ನ್ಯಾಯವಾಗಿ ಸರ್ಕಾರಕ್ಕೆ ಸೇರುತ್ತದೆ ಎನ್ನುವ ಗ್ಯಾರಂಟಿ ಇಲ್ಲ - ಏಕೆಂದರೆ ಅಂಗಡಿಯವನು ರಾಮನ ಲೆಕ್ಕ, ಕೃಷ್ಟನ ಲೆಕ್ಕ ಎಂಬುದಾಗಿ ಎರಡೆರಡು ಪುಸ್ತಕಗಳನ್ನಿಟ್ಟುಕೊಂಡಿರಬಹುದು, ಅಥವಾ ಅವನು ಟ್ಯಾಕ್ಸ್ ಸೇರಿಸಿಕೊಟ್ಟಿದ್ದೇನೆ ಎಂಬುದು ನಿಜವಾದ ರಶೀದಿ ಅಲ್ಲದಿರಬಹುದು - ಅಥವಾ ಅವನ ಅಂಗಡಿಯೇ ಟ್ಯ್ಹಾಕ್ಸ್ ದಾಖಲೆಗಳಲ್ಲಿ ಲೆಕ್ಕಕ್ಕಿರದಿರಬಹುದು.

ಈ ಮೇಲಿನ ಪ್ರಶ್ನೆಗಳ ಉತ್ತರದಲ್ಲೇ ಅಡಗಿದೆ ನಮ್ಮ ನ್ಯಾಯಾನ್ಯಾಯ. ನೀವು ಈ ಪ್ರಶ್ನೆಗಳಿಗೆ ಕೊಡಬಹುದಾದ ಉತ್ತರ ಎಲ್ಲಾ ದೇಶದಲ್ಲೂ ಒಂದೇ ಇರುತ್ತದೆ ಎಂದು ಹೇಳಲಾಗದು. ನಮ್ಮೂರುಗಳಲ್ಲಿ ಕಾನೂನನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವ ಮಂದಿ ಹೊರದೇಶದ ನೀರು ಕುಡಿದಾಕ್ಷಣ ತಮ್ಮ ಬಾಲವನ್ನು ಕಾಲುಗಳ ನಡುವೆ ಮುದುರಿಕೊಳ್ಳುವ ನಿರೂಪಣೆಗಳು ಹೊಸದೇನಲ್ಲ. ನಾವು, ಅನಿವಾಸಿಗಳು ಸಾವಿರ ರೂಪಾಯಿಗೆ ಇನ್ನೂರು ರೂಪಾಯಿಯ ತೆರಿಗೆಯನ್ನು ಕೊಡಲು ಸಿದ್ಧರಿದ್ದೇವು, ಆದರೆ ಅಲ್ಲೇ ದುಡಿದು ಸಂಪಾದನೆ ಮಾಡುವ ಜನರಿಗೆ ತೆರಿಗೆ ಕಟ್ಟಬೇಕು ಎನ್ನುವ ಮೌಲ್ಯದ ಮುಂದೆ ಬೇಕಾದಷ್ಟು ಅಡ್ಡಿ ಆತಂಕಗಳು ಇರಬಹುದು, ಇನ್ನು ಕೆಲವರಿಗೆ ತಾವು ಏನು ಮಾಡುತ್ತಿದ್ದೇವೆ ಎಂದು ಗೊತ್ತೇ ಇರದಿರಬಹುದು. ನನ್ನನ್ನು ಕೇಳಿದರೆ, ಈವರೆಗೆ ತಮ್ಮ ತಮ್ಮ ನಿವೇಶನಗಳನ್ನು ಯಾರು ಯಾರು ಇರುವ ಬೆಲೆಗಿಂತ ಕಡಿಮೆ ಬೆಲೆಗೆ ನೋಂದಣಿ ಮಾಡಿಕೊಂಡಿದ್ದಾರೋ, ಹಾಗೆ ಮಾಡಿಸುವಲ್ಲಿ ಲಂಚವನ್ನು ಕೊಟ್ಟಿದ್ದಾರೋ ಅಂತಹವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆಯಾ ವಿಷವರ್ತುಲದಲ್ಲಿ ಭಾಗಿಗಳೇ.

ಈ ಲಂಚ, ಭ್ರಷ್ಟಾಚಾರ ಎನ್ನುವ ಆಟದಲ್ಲಿ ಒಮ್ಮೆ ಭಾಗವಹಿಸಿದರೆ ನಮಗೆ ಯಾವಾಗ ಹಿಂದೆ ಬರಬೇಕೆನ್ನಿಸುವುದೋ ಆಗ ಹಿಂದೆ ಬರುವುದು ಕಷ್ಟ ಸಾಧ್ಯ - ರೌಡಿಗಳ ಗುಂಪಿನಲ್ಲಿರುವವನು ದಿಢೀರನೆ ಸಾಚಾ ಆಗಲು ನೋಡಿದರೆ ಅದರ ಪರಿಣಾಮವೇನಾದೀತೆಂದು ಹೆಚ್ಚಿನವರಿಗೆ ಗೊತ್ತು.

***

ಹಾಗಾದ್ರೆ, ಇಲ್ಲಿರಲಾಗದವನು ನಾನೆಲ್ಲಿಗೆ ಹೋಗಲಿ? ಹಿಂದಕ್ಕೆ ಹೋಗೋದಾದರೆ ಎಲ್ಲಿಗೆ ಹೋಗುತ್ತೇವೆ, ಏಕೆ ಹೋಗುತ್ತಿದ್ದೇವೆ, ಯಾರಿಗೋಸ್ಕರ ಹೋಗುತ್ತಿದ್ದೇವೆ. ಇಲ್ಲಿ ಸಾಧಿಸದ್ದನ್ನು ಅಲ್ಲಿ ಏನು ಸಾಧಿಸುವುದಿದೆ?

ಈ ಮೇಲಿನ ಪ್ರಶ್ನೆಗಳಿಗೆಲ್ಲ ಉತ್ತರ ದೊರಕಿಸಿಕೊಳ್ಳಲು ದಿನೇದಿನೇ ಕಡಿಮೆ ಆಗುವ ಡಾಲರ್ ಬೆಲೆಯಾಗಲೀ, ನೆನಪಿನ ಸುರುಳಿಗಳಿಂದ ಮರೆಯಾಗುವ ಮಿತ್ರರಾಗಲೀ, ಅಥವಾ ಕಾಲನ ವಶಕ್ಕೆ ಸಿಕ್ಕು ದೂರವಾಗುವ ಬಂಧು ಬಳಗವಾಗಲೀ ಸಹಾಯವೇನನ್ನೂ ಮಾಡರು. ಜೊತೆಗೆ ವಿದೇಶದ 'ಸಾಚಾ' ಹವೆಯಲ್ಲಿ ಇಷ್ಟೊಂದು ವಸಂತಗಳನ್ನು ಹಾಯಾಗಿ ಕಳೆದು ದಡ್ಡು ಬಿದ್ದ ಮೈ ಮನಗಳೂ - ಒಡನೆಯೇ ಮತ್ತೆ ಕಷ್ಟ ಪಡಬೇಕಾಗುತ್ತದೆಯೆಲ್ಲಾ ಎನ್ನೋ ಹೆದರಿಕೆಗೆ ಸಿಕ್ಕು - ಸಹಕರಿಸಲಾರವು.

ಬಾಬೂ ಥರ ಬೆಂಗಳೂರಿನಲ್ಲೇ ಹಾಯಾಗಿ ಇದ್ದಿರಬೇಕಿತ್ತು - ನಮ್ಮ ದೇಶ ಬೇಕಾದಷ್ಟು ಬೆಳೆದಿದೆ ಈ ದಶಕದಲ್ಲಿ ಅದನ್ನು ಆರಾಮವಾಗಿ ಹಾಗೂ ಸಹಜವಾಗಿ ಆಸ್ವಾದಿಸಿಕೊಂಡು ಅದರಲ್ಲೊಂದಾಗಬೇಕಿತ್ತು, ...we are at the wrong place at the wrong time...ಎಂದು ಬೇಕಾದಷ್ಟು ಸಾರಿ ಅನ್ನಿಸೋದಂತೂ ನಿಜ.

Tuesday, July 24, 2007

ಖಾಲೀ ಹಾಳೆ

ಓಹ್, ಬೇಡವೆಂದರೂ ತೆರೆದುಕೊಂಡು ಕುಳಿತಿದೆ ಖಾಲೀ ಹಾಳೆ! ಪಕ್ಕದಲ್ಲಿರುವ ದೀಪ ತನ್ನ ಸುತ್ತಲು ಚೆಲ್ಲುತ್ತಿರುವ ಬೆಳಕೆಷ್ಟೋ, ಅಪರಿಮಿತದಲ್ಲಿ ಪರಿಮಿತವಾಗಿರುವ ಈ ಬೆಳಕಿಗೆ ಬಿದ್ದ ನಾನಾ ವಸ್ತುಗಳು ಹೊಳೆಯ ತೊಡಗಿವೆ, ಅಂದರೆ ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿಕೊಂಡು. ಹಾಗೆ ಪ್ರತಿಫಲಿಸಿದ ಬೆಳಕು ಮತ್ತಿನ್ನೆಲ್ಲೋ ಬಿದ್ದು, ಮತ್ತೆ ಪ್ರತಿಫಲನ - ಹೀಗೆ ಕೋಣೆಯುದ್ದಕ್ಕೂ ತುಂಬಿದ ಹಲವು ರೇಖೆಗಳು. ಊಹ್ಞೂ, ರೇಖೆಗಳು ಅಂದರೆ ಅದು ನಮ್ಮ ಮಿತಿಯಾದೀತು, ಕಂಡಕಂಡಲ್ಲಿ ಹರಡಿಕೊಂಡಿರುವ ಒಂದು ವಸ್ತು ಎಂದು ಬಿಟ್ಟರೆ ಬೆಳಕಿಗೆ ಜೀವವಿಲ್ಲವೇ ಎಂದು ಯಾರಾದರೂ ಕೇಳಿಬಿಟ್ಟಾರು ಎಂಬ ಹೆದರಿಕೆ. ಇವೆಲ್ಲದರ ನಡುವೆ ಇದೊಂದು ಖಾಲೀ ಹಾಳೆ, ನನ್ನನ್ನು ತುಂಬಿಸು, ತುಂಬಿಸಿಕೋ ಎಂದು ಗೋಗರೆದರೆಂತೆ ಮೇಲ್ನೋಟಕ್ಕೆ ಕಂಡುಬಂದರೂ ಅದರ ಮನಸ್ಸು, ಅದರ ಹಿಂದಿನ ಸತ್ವವೆಲ್ಲ ಒಬ್ಬ ಋಷಿಯ ಹಾಗೆ - ಎಲ್ಲವನ್ನೂ ಬಲ್ಲೆ, ಎಲ್ಲವನ್ನೂ ಒಳಗೊಂಡಿಹೆ, ಆದರೆ ಏನನ್ನೂ ಅರಿಯದವನು ಎಂಬ ಸದಾ ಮುಗ್ಧ ಮುಖವನ್ನು ತೋರಿಸಿಕೊಂಡಿರುವಂತಹದು.

ಎಷ್ಟೇ ನಿಧಾನವಾಗಿ ಉಸಿರಾಡಿದರೂ ಕೇಳಿಸಬಹುದಾದಂತಹ ಮೌನ. ಬೆಳಕಿಗೆ ಹೊಳೆಯುತ್ತಿರುವ ಸುತ್ತಲಿನ ವಸ್ತುಗಳೆಲ್ಲ ನನ್ನ ಬಗ್ಗೆ ಬರಿ ನನ್ನ ಬಗ್ಗೆ...ಎಂದು ಕೂಗುತ್ತಿರುವವೇನೋ ಎಂಬ ಕೊರಗನ್ನು ಹೊತ್ತುಕೊಂಡಿರುವ ಭಾರವಾದ ಮೌನ. ನಮ್ಮ ಸುತ್ತಲಿನ ವಸ್ತು ವಿಷಯಗಳಿಗೆಲ್ಲ ಭಾಷೆ ಇದೆಯೇ ಎಂದು ಸೋಜಿಗಪಡುವಷ್ಟರ ಮಟ್ಟಿಗಿನ ಸಂಕೀರ್ಣವಾದ ಸಂವಾದ, ಅವುಗಳನ್ನು ಅರ್ಥ ಮಾಡಿಕೊಂಡಿದ್ದೇವೆಂಬ ಭ್ರಮೆಯಲ್ಲಿರಬಹುದಾದ ನಾವುಗಳು. ಜೊತೆಯಲ್ಲಿ ವಸ್ತುವಿನ ರೂಪ ನೋಡುಗರ ಕಣ್ಣಲ್ಲಿ ಎಂಬ ತಿಪ್ಪೆ ಸಾರಿಸುವ ಪ್ರಕ್ರಿಯೆ ಬೇರೆ!

ಈ ಖಾಲೀ ಹಾಳೆ ಯಾರಿಗೋಸ್ಕರ ತೆರೆದುಕೊಂಡಿದೆ? ಈ ಹಾಳೆಯ ಮೂಲೆ ಮೂಲೆಗಳಿಗೆ ಅಕ್ಷರವನ್ನು ಸ್ಥಾಪಿಸುತ್ತೇವೆಂದು ಯಾರೂ ಈ ವರೆಗೆ ಭಾಷೆ ನೀಡಿರದಿದ್ದರೂ ಬೆಳಕಿಗೆ ಹೊಳೆದು ಅದು ಬೀಗಿದಂತೆ ತೋರುವುದೇಕೆ? ಬಿಳಿ ಬಣ್ಣವೇ, ಅಂದರೆ ಖಾಲೀ ಹಾಳೆಗೂ ಒಂದು ಸ್ವರೂಪವಿದೆಯೆಂದಾಯಿತೇ? ಬಿಳಿಯಲ್ಲಿ ಬೇರೆಲ್ಲ ಬಣ್ಣಗಳಡಗಿವೆಯೆಂದಾದರೆ ಖಾಲೀ ಹಾಳೆಯಲ್ಲಿ ಎಲ್ಲವೂ ಇವೆಯೆಂದೇ? ಎಲ್ಲವೂ ಇದ್ದ ಮೇಲೆ ಅದು ಖಾಲೀ ಹೇಗಾಯಿತು? ಓಹ್, ಅಕ್ಷರಗಳು - ಇಂತಹ ಖಾಲೀ ಹಾಳೆಯನ್ನು ತುಂಬಿಸಿ ಮೋಕ್ಷ ನೀಡಬಲ್ಲ ಏಕೈಕ ಮಾರ್ಗ.

ಈ ಖಾಲೀ ಹಾಳೆಯ ಹೊರ ಮೈ ಹೀಗಿದ್ದರೆ ಒಳ ಮೈ ಹೇಗಿದ್ದಿರಬಹುದು ಎಂದು ಅನೇಕ ಸಾರಿ ಯೋಚನೆ ಬಂದಿದ್ದಿರಬಹುದು. ಹಾಳೆಗೆ ಎಷ್ಟು ಮುಖವೆಂದು ಕೇಳಿದರೆ ಎರಡು ಎಂದು ಮಕ್ಕಳು ಬೇಕಾದರೂ ಉತ್ತರಿಸಿಯಾರು, ಇದ್ದರೂ ಇಲ್ಲದಂತೆ ತೋರುವ ಇನ್ನು ನಾಲ್ಕು ಮುಖಗಳನ್ನು ಯಾರೋ ಹಾಗಾದರೇ ನೋಡೋದೇ ಇಲ್ಲವೇನು? ದೊಡ್ಡದಾಗಿ ಕಂಡ ಎರಡೇ ಎರಡು ಮುಖಗಳು ಇನ್ನುಳಿದ ನಾಲ್ಕು ಮುಖಗಳಿಗೆ ಧ್ವನಿಯಾಗಬೇಕು ಎಂದರೆ? ಯಾವುದೋ ಕಾಡಲ್ಲಿ ನೀರುಂಡು ಬೆಳಿದಿದ್ದ ಮರದ ಕಾಂಡ, ಅಥವಾ ತೊಗಟೆಯ ಪರಿಶ್ರಮವಿದಾಗಿರಬಹುದು, ಅಥವಾ ಮಾನವನ ಊಹೆಯ ಮಿತಿಯಲ್ಲಿ ಸಿಕ್ಕ ಅನೇಕ ವಸ್ತುಗಳ ಸಂಗಮದ ಸ್ವರೂಪವಾಗಿರಬಹುದು, ಬಿಳಿ ಅಲ್ಲದ್ದನ್ನು ಮೂಳೇ-ಇದ್ದಿಲನ್ನು ಹಾಕಿ ತೆಗೆದ ಹೊಸ ಮೇಲ್ಮೈ ಇದ್ದಿರಬಹುದು.

ಈ ಖಾಲೀ ಹಾಳೆ ತೆಳ್ಳಗಿದೆ, ಬೆಳ್ಳಗಿದೆ. ಬಳುಕುತ್ತದೆ, ಜೊತೆಗೆ ಗಾಳಿ ಬಂದೆಡೆಯೆಲ್ಲಾ ಹಾರಿ ಹೋಗುತ್ತದೆ. ಅದೊಂದು ಮಿತಿಯೇ ಸರಿ, ನಿರ್ವಾತದಲ್ಲಿ ಈ ಹಾಳೆಯ ಆಟವೇನೂ ನಡೆಯದು. ತನ್ನ ತೂಕಕ್ಕೆ ತಾನೇ ತೊನೆಯದ ಇದೂ ಒಂದು ವಸ್ತು, ಅದರದ್ದೂ ಒಂದು ಅಸ್ತಿತ್ವ. ಬರೀ ಅಕ್ಷರಗಳನ್ನು ಮೂಡಿಸಿ ಇದರ ಬದುಕನ್ನು ಪರಮಪಾವನ ಮಾಡಬೇಕೆಂದೇನೂ ಎಲ್ಲಾ ಸಮಯದಲ್ಲಿ ವಿಧಿ ಬರೆಯೋದಿಲ್ಲ, ಎಷ್ಟೋ ಸಾರಿ ಮೂಗು ಒರೆಸಿಯೋ, ಇಲ್ಲಾ ಕೈ ತೊಳೆದು ಹಸಿಯನ್ನು ವರ್ಗಾಯಿಸಿಯೋ ತಿಪ್ಪೆಗೆ ಬಿಸಾಡಿದ ಸನ್ನಿವೇಶಗಳು ಬೇಕಾದಷ್ಟಿವೆ. ತನ್ನ ಅಗಲವಾದ ಮುಖದ ಮೇಲೆ ಅಕ್ಷರಗಳನ್ನು ತುಂಬಿಸಿ ಹಾಗೆ ಮೋಕ್ಷ ಸಿಗುತ್ತದೆ ಎಂದು ಕಾದದ್ದು ಹುಸಿಯಾಗಿದೆ. ಬಾಯಿಂದಾಡಿದ್ದಷ್ಟೇ ಬಾಷೆಯಾಗುಳಿಯದೇ ಚಲನವಲನಗಳು ಸೃಷ್ಟಿಸೋ ಸ್ಪಂದನಗಳನ್ನು ಖಾಲೀ ಹಾಳೆ ತೆರೆದಿಡುವಲ್ಲಿ ಸೋತಿದೆ, ಮಸಿ ಬಿದ್ದರೇನೂ ಮೂಡುವುದು ಅಕ್ಷರವಾದರೆ ಇನ್ನು ಮಸಿಗೆ ಮೀರಿದ ಮಾತುಗಳಿಗೆ ಈ ಹಾಳೆ ಯಾವ ನೆಲೆಗಟ್ಟನ್ನು ಒದಗಿಸಿಕೊಡಬಲ್ಲದು? ಹೋಗಲಿ, ಅಂತಹವುಗಳನ್ನು ಈವರೆಗೆ ಯಾರಾದರೂ ಎಲ್ಲಾದರೂ ಹೇಗಾದರೂ ಬರೆಯಲು ಯತ್ನಿಸಿದ್ದಾರೇನು?

ಇಂತಹ ಖಾಲೀ ಹಾಳೆ ಯಾರಾದರೂ ನನ್ನ ಮುಖದ ಮೇಲೆ ಬರೆದಾರೇನೋ ಎಂದು ನಿರುಕಿಸುತ್ತದೆ - ಹೊರಗಿನ ಹವಾಮಾನವನ್ನು ಒಂದೇ ನೋಟದಲ್ಲಿ ಅಳೆಯೋ ಹುಡುಗನ ಹಾಗೆ, ಮುಂದೆ ಮಳೆಬರಬಹುದಾದ ಸೂಚನೆಯನ್ನು ಕಂಡು ಆಡಲು ಹೋಗಲಾಗುವುದಿಲ್ಲವಲ್ಲಾ ಎಂದು ಹಪಹಪಿಸೋ ದಾರುಣ ನೋಟವನ್ನು ನೀಡುತ್ತದೆ. ಎಷ್ಟೋ ಸಾರಿ ಅನ್ನಿಸಿದೆ, ಈ ಖಾಲೀ ಹಾಳೆಯದು ದೇವಸ್ಥಾನದ ಆವರಣದಲ್ಲಿ ಭಿಕ್ಷೆ ಬೇಡುವ ಭಿಕ್ಷುಕರ ಹಾಗಿನ ಪರಿಸ್ಥಿತಿ ಎಂದು. ಖಾಲೀ ಹಾಳೆಯ ಈ ಖಾಲೀ ತನ ಮುಖ್ಯ ಮುಂದೆ ಹೊಸದನ್ನೇನಾದರೂ ತುಂಬಿಕೊಳ್ಳಲು, ಒಮ್ಮೆ ತುಂಬಿಸಿಕೊಂಡ ಮೇಲೆ ಮತ್ತೆ ಖಾಲೀಯಾಗುವುದು ಎಂಬುದೇನೂ ಇಲ್ಲ, ಆದ್ದರಿಂದಲೇ ಬೇಡುವವನಿಗೆ ತನಗೇನು ಸಿಗಬಹುದು ಎಂಬ ಸೂಕ್ಷ್ಮವಿರಬೇಕು ಎನ್ನುವುದು. ಒಂದು ವೇಳೆ ಬಯಸಿದ್ದು ಸಿಕ್ಕೇ ಬಿಟ್ಟಿತು ಎನ್ನೋಣ ಆಗ ಖಾಲಿ ಇದ್ದದೂ ತುಂಬಿಕೊಳ್ಳುತ್ತದೆ, ಒಮ್ಮೆ ತುಂಬಿಕೊಂಡದ್ದು ಮತ್ತೆ ಖಾಲಿಯಾಗದು ಎಂಬ ಅಳುಕನ್ನು ಈವರೆಗೆ ಎಲ್ಲಿಯೂ ಯಾರಲ್ಲಿಯೂ ನೋಡಿದ್ದಿಲ್ಲ!

Sunday, July 22, 2007

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.

Friday, July 20, 2007

...ನೆರೆಹೊರೆಗೆ ನಮಿಸುತ್ತಾ....

ಸಾಕು, ಎಷ್ಟೂ ಅಂತ ಬರೆಯೋದು ಈ ಬ್ಲಾಗ್‌ನಲ್ಲಿ, ನಿಲ್ಲಿಸಿಬಿಡೋಣ ಒಂದು ದಿನ - ಎನ್ನೋ ಆಲೋಚನೆ ಬಂದಿದ್ದೇ ತಡ ನಾನು ಬರೆದದ್ದನ್ನೆಲ್ಲಾ ಒಮ್ಮೆ ನೋಡಿಕೊಂಡು ಬಂದೆ. ೨೦೦೬ ರ ಮೇ ತಿಂಗಳಿನಲ್ಲಿ ನನಗೆ ಅದ್ಯಾವ ಭೂತ ಆವರಿಸಿಕೊಂಡಿತ್ತೋ ಗೊತ್ತಿಲ್ಲ, ಮೂವತ್ತೊಂದು ದಿನಗಳಲ್ಲಿ ಮೂವತ್ತೊಂದು ಬರಹಗಳನ್ನು ಪ್ರಕಟಿಸಿದ ದಾಖಲೆ ಅದು!

ಏನಾಗಿತ್ತು ಮೇ ೨೦೦೬ ರಲ್ಲಿ ಎಂದು ಅಲ್ಲಿನ ಬರಹಗಳನ್ನು ತಿರುವಿ ಹಾಕಿಕೊಂಡು ಬಂದರೆ (ಇತರರು ಹೇಳುವಂತೆ) ಈ ಬ್ಲಾಗ್‌ನ ಎಷ್ಟೋ ಮುಖ್ಯ ಲೇಖನಗಳು ಅಲ್ಲಿ ಕಂಡು ಬಂದವು. ಕೆಲವು ದಿನಚರಿಗೆ ಸಂಬಂಧಿಸಿದ್ದು, ಇನ್ನು ಕೆಲವು ಹಾಸ್ಯ, ಇನ್ನು ಕೆಲವು ದೈನಂದಿನ ಅನುಭವ, ಕೆಲವು ಸಂವಾದ, ಒಂದಿಷ್ಟು ನ್ಯೂ ಯಾರ್ಕ್ ನಗರವನ್ನು ಕುರಿತು, ಇತ್ಯಾದಿ. ಹಳೆಯ ಆಫೀಸಿನಲ್ಲಿ ಹಳೆಯ ಕೆಲಸದಲ್ಲಿ ಕುಳಿತಿದ್ದಾಗ ಆಗ ಹೆಚ್ಚು ಸಮಯವಿರುತ್ತಿತ್ತೆಂದೋ, ಆಗಷ್ಟೇ ಹೊರ ಬರುತ್ತಿದ್ದ, ಹೊರಬಂದ ಬ್ಲಾಗ್ ಪ್ರಪಂಚದ ಅರಿವು ಇನ್ನೂ ಬಿಸಿಯಾಗೇ ಇತ್ತೆಂದೋ, ಬರೆಯುವ ಹುರುಪಿನಲ್ಲಿ ಏನೇನೆಲ್ಲವನ್ನು ಕುಟ್ಟಿಕೊಂಡು ಹೋಗುವ ಧೈರ್ಯವಿತ್ತೆಂದೋ ಯೋಚಿಸಿಕೊಂಡು ಬಂದೆ. ಊಹ್ಞೂ, ಅದೆಲ್ಲ ಸರಿಯಾದ ಕಾರಣವೇ ಅಲ್ಲ...ವ್ಯಸ್ತರಾದಷ್ಟೂ ಸೃಜನಶೀಲತೆ ಹೆಚ್ಚುತ್ತಂತೆ! ಎಂದು ಹೊಸ ಹೇಳಿಕೆಯನ್ನು ಕೊಡುವ ಯತ್ನವಷ್ಟೇ.

"...ಆದರೆ ಒಂದಂತೂ ಸತ್ಯ, ಇಲ್ಲಿ ಒಂದು ಸಾಲು ಬರೆಯಬೇಕಾದರೆ ಕೊನೇಪಕ್ಷ ಹತ್ತು ಸಾಲನ್ನಾದರೂ ಓದಬೇಕು (ಕಟ್ಟಿಕೊಂಡ ಬುತ್ತಿ ಎಷ್ಟು ಹೊತ್ತು ಬಂದೀತು?) " ಎಂದು ಹಿಂದೆ ಬರೆದ ಮಾತು ನಿಜ - ಹೆಚ್ಚು ಬರೆಯಬೇಕು ಎಂದರೆ ಹೆಚ್ಚು ಹೆಚ್ಚು ಓದಬೇಕು, ಅದಕ್ಕೇ ಬಂದಿರೋದು ದೊಡ್ಡ ಕೊರತೆ. ಸರಿ ಒಂದಿಷ್ಟು ಏನನ್ನಾದರೂ ಓದೋಣವೆಂದುಕೊಂಡು ಹಠಮಾರಿತನದಿಂದ ಲೈಬ್ರರಿಯಿಂದ ಆರೇಳು ಪುಸ್ತಕವನ್ನು ತಂದುಕೊಂಡು ಓದಲು ತೊಡಗಿದರೆ ಯಾವುದೂ ರುಚಿಸಲಿಲ್ಲ - ಈ ಬೆಸ್ಟ್ ಸೆಲ್ಲರ್ ಎನ್ನುವ ಹಣೆಪಟ್ಟಿ ಹೊತ್ತುಕೊಂಡ ಪುಸ್ತಕಗಳನ್ನು ಇನ್ನು ಮುಂದೆ ಓದಲೇ ಬಾರದು ಎನ್ನುವ ಇನ್‌ಫರೆನ್ಸ್ ಬರುವಷ್ಟು ನಿರಾಶೆ, ಅವುಗಳಲ್ಲೇ ಕಷ್ಟಪಟ್ಟು ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿದರೆ ಅದರ ಹೆಸರನ್ನು ನೆನಪಿನಲ್ಲಿಡಲಾರದಷ್ಟು ಯೋಗ್ಯ ಪುಸ್ತಕಗಳವು. ಅವುಗಳನ್ನು ತಂದ ತಪ್ಪಿಗೆ ಹೋಗಿ ಲೈಬ್ರರಿಗೆ ಹೋಗಿ ಬಿಸಾಕಿ ಬಂದದ್ದಾಯಿತು.

ಯಾವ್ದಾದ್ರೂ ಕನ್ನಡ ಪುಸ್ತಕ ಓದೋಣ ಎಂದರೆ ಹೊಸದೇನೂ ಕಾಣಿಸ್ತಿಲ್ಲ - ಕಂಡ ಕಂಡವರಿಗೆ ಫೋನ್ ಮಾಡಿ 'ಆವರಣ' ಇದ್ರೆ ಕೊಡಿ ಅಂತ ಕೇಳ್ಕೊಂಡೆ, ಇನ್ನೊಂದ್ ವಾರದಲ್ಲಿ ಯಾರಾದ್ರೂ ಪುಣ್ಯಾತ್ಮರು ಕಳಿಸ್ತಾರೆ ಅಂತ ಗೊತ್ತು - ಅದನ್ನಾದರೂ ಸ್ವಲ್ಪ ಅಸ್ಥೆಯಿಂದ ಓದಬೇಕು. ಆವರಣ ಓದಿದ ಮೇಲೆ ಓದೋಣ ಎಂದು ಬದಿಗೆ ಸರಿಸಿಟ್ಟ ಲೇಖನ, ವಿಮರ್ಶೆ, ಚರ್ಚೆಗಳ ಪಟ್ಟಿ ಬಹಳ ದೊಡ್ಡದಿದೆ - ನನ್ನ ಮೂಲ ಓದಿಗೆ ಧಕ್ಕೆಯಾಗಬಾರದು, ಅದರಲ್ಲಿ ಯಾರ ಇನ್‌ಫ್ಲುಯೆನ್ಸೂ ಇರಬಾರದು ಎಂಬ ಹಠಕ್ಕೆ ಬಿದ್ದು ನಾನು ಉಳಿದವನ್ನೆಲ್ಲಾ ಬದಿಗಿಟ್ಟಿದ್ದೇನೆ. ಕನ್ನಡ ಪುಸ್ತಕಗಳು ಹ್ಯಾರಿ ಪಾಟ್ಟರ್ ರೀತಿಯ ಪಬ್ಲಿಸಿಟಿಯನ್ನು ಕಾಣುವುದು ಯಾವ ಕಾಲಕ್ಕಿದೆಯೋ, ಆದರೆ ನನ್ನಂತಹವರಿಗೆ ದೇಹದಲ್ಲಿ ರಕ್ತ ಸ್ವಲ್ಪ ವೇಗವಾಗೇನಾದರೂ ಓಡಾಡುವುದಿದ್ದರೆ ಅದು ಹೊಸ ಕನ್ನಡ ಪುಸ್ತಕದ ಬಿಡುಗಡೆಯ ಸುದ್ದಿಯಿಂದಲೇ!

***

ತಿಂಗಳಿಗೆ ಹತ್ತು, ಇಪ್ಪತ್ತು, ಮೂವತ್ತು ಲೇಖನಗಳನ್ನು ಬರೆಯೋದು ದೊಡ್ಡ ವಿಷಯವಲ್ಲ, ಆ ಲೇಖನಗಳಲ್ಲಿ ಕ್ವಾಲಿಟಿ, ಕನ್‌ಸಿಸ್ಟೆನ್ಸಿ, ಹೊಸತೇನಾದರೊಂದನ್ನು ಪ್ರಸ್ತುತ ಪಡಿಸೋದು ಮುಖ್ಯ. ಎನ್‌.ಪಿ.ಆರ್‌ನ ಮಾರ್ನಿಂಗ್ ಎಡಿಷನ್‌ನಲ್ಲಿ ಬ್ರಿಟೀಷ್ ಸಿನಿಮಾ ನಿರ್ದೇಶಕ ಡ್ಯಾನ್ನಿ ಬಾಯ್ಲ್ (Danny Boyle) ಬಗ್ಗೆ Sunshine ಸಿನಿಮಾದ ರಿವ್ಯೂವ್‌‍ನಲ್ಲಿ ..., whose eclectic résumé, including Millions, Trainspotting, and 28 Days Later, reveals a refusal to make the same film twice...ಎಂದು ಕೆನೆತ್ ಟುರಾನ್ ಧ್ವನಿಯಲ್ಲಿ ಕೇಳಿದೊಡನೆ ಆ ಸಿನಿಮಾವನ್ನು ನೋಡಬೇಕು, ಈ ನಿರ್ದೇಶಕನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎನ್ನಿಸಿದ್ದಂತೂ ನಿಜ.

ಹೌದು, ನನ್ನ ಬರಹಗಳು ಸ್ಪೈಡರ್‌ಮ್ಯಾನ್ ಥ್ರೀ ತೋರಿಸೋ ಪಕ್ಕದ ಥಿಯೇಟರ್ರ್‌ನಲ್ಲಿನ ಕಪ್ಪೂ-ಬಿಳಿ ಚಿತ್ರದಂತಾಗಬಾರದು. ಹಾಗಂತ, ಅವುಗಳು ನಾನೇ ಓದಿ ಮುಗಿಸಲಾರದ ಬೆಸ್ಟ್ ಸೆಲ್ಲರ್ ಪುಸ್ತಕವಾಗಲೂ ಕೂಡದು. ಹೊಸತನ್ನಾಗಲೀ, ವಿಶೇಷವಾಗಿರೋದೇನನ್ನಾಗಲೀ ಬರೆಯೋದಾಗದಿದ್ದರೆ ಹಾಗೆ ಬರೆದವುಗಳನ್ನು ಓದಿ ಅವುಗಳನ್ನು ಪುರಸ್ಕರಿಸುವುದೇ ಮೇಲಲ್ಲವೇ?

***

ಈ 'ಅಂತರಂಗ'ದಲ್ಲಿ ಬೇಕಾದಷ್ಟು ದ್ವಂದ್ವಗಳು ಹೊರಬಂದಿವೆಯೇ ವಿನಾ ಯಾರ ಯಾವ ಪ್ರಶ್ನೆಗಳಿಗೂ ನಿಖರವಾದ ಉತ್ತರವೇನೂ ಈವರೆಗೆ ಸಿಕ್ಕಂತೆ ಕಂಡುಬಂದಿಲ್ಲ. ಕೆಲವು ಲೇಖನಗಳಂತೂ ಒಣಗಿದ ಗರಟೇ ಚಿಪ್ಪನ್ನು ತುಕ್ಕು ಹಿಡಿದ ಕೆರೆಮಣೆ ಮೇಲೆ ಹಾಕಿ ತಿಕ್ಕಿದ ಹಾಗೆ ಮೊದಲಿನಿಂದ ಕೊನೇವರೆಗೆ ಒಂದೇ ರಾಗವನ್ನು ಹೊರಡಿಸಿಕೊಂಡು ಬಂದಿವೆ. ಆದರೆ ಈ ಲೇಖನಗಳನ್ನು ಬರೆಯುವುದರ ಮೂಲ ಉದ್ದೇಶ ಈವರೆಗೆ ಜೊತೆ ಸೇರಿದ ಕೆಲವರಿಗೆ ಗೊತ್ತು - ಸೋಮಾರಿತನವನ್ನು ಹೋಗಲಾಡಿಸುವುದು, ಬರೆಯುವ ಶಿಸ್ತನ್ನು ಬೆಳೆಸಿಕೊಳ್ಳುವುದು ಹಾಗೂ ನನ್ನದೇ ಆದ ಒಂದು ಅಸ್ತಿತ್ವವನ್ನು ಗುರುತಿಸಿಕೊಳ್ಳುವುದು. ನನ್ನಲ್ಲಿನ ಸೋಮಾರಿತನವೆನ್ನುವುದನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಳ್ಳಲಾಗದಿದ್ದರೂ ವಿಶ್ವ ಸೋಮಾರಿಗಳ ಸಂಘದ ಅಧ್ಯಕ್ಷನಿಗಿರಬೇಕಾದ ಯೋಗ್ಯತೆಗಳು ನನ್ನಲ್ಲಿಲ್ಲದಿರುವುದರಿಂದ ಆ ಹುದ್ದೆಗೆ ರಾಜೀನಾಮೆಯನ್ನು ಈಗಾಗಲೇ ಸಲ್ಲಿಸಿಯಾಗಿದೆ. ಮೂವತ್ತು ನಿಮಿಷಗಳಲ್ಲಿ ಇದ್ದಬದ್ದದ್ದನ್ನೆಲ್ಲ ಕಕ್ಕಿಕೊಳ್ಳುವುದನ್ನು ಬರೆಯುವ ಶಿಸ್ತು ಎಂದು ಸಾಧಿಸಿಕೊಂಡರೆ ಅದೂ ಹೆಚ್ಚೂ ಕಡಿಮೆ ಸಿದ್ಧಿಸಿದಂತೆಯೇ. ಇನ್ನು ನನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದೆನೆಯೇ ಎಂದು ಯೋಚಿಸಿಕೊಂಡರೆ... 'ಈ ಹಾಳು ಬರಹಗಳೇನು ನನ್ನ ಅಸ್ತಿತ್ವವನ್ನು ಗುರುತಿಸುವುದು?' ಎಂದು ನನ್ನ ಹಾಗೂ ಈ ಕಂಪ್ಯೂಟರ್ ಸ್ಕ್ರೀನಿನ ನಡುವಿನ ಅವಕಾಶದಲ್ಲಿ ಈವರೆಗೆ ಬರೀ ಧ್ವನಿಯಿಂದಷ್ಟೇ ಹೆದರಿಸುತ್ತಿದ್ದ ಚೀತ್ಕಾರಗಳಿಗೆ ಸ್ವಲ್ಪ ಸ್ವಲ್ಪ ಮುಖವೂ ಮೂಡತೊಡಗಿರುವುದು ಸ್ವಷ್ಟವಾಗಿದೆ.

ನಿಖರವಾಗಿ ವ್ಯವಹರಿಸೋ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ದೂರ ಬಂದು ಬಿಸಿನೆಸ್ ಮ್ಯಾನೇಜ್‌ಮೆಂಟ್ ಕೈ ಹಿಡಿದುಕೊಂಡಮೇಲೆ ಬರೀ ಅಡ್ಡ ಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನಾಡುವುದನ್ನು ಪೋಷಿಸಿಕೊಂಡು ಬರುವಂತೆ ಮಾಡುತ್ತಿರುವ ನನ್ನ ನೆರೆಹೊರೆಗೆ ನಮಿಸುತ್ತಾ, ಅಂತರಂಗದಲ್ಲಿ ಬೇಕಾದಷ್ಟು ಸಾರಿ ಈ ಹಿಂದೆ ಹೇಳಿದಂತೆ ಈಗಲೂ ಹೇಳುತ್ತೇನೆ - ನೋಡೋಣ, ಇದು ಎಲ್ಲಿಯವರೆಗೂ ಬರುತ್ತೋ ಎಂದು!

Thursday, July 19, 2007

ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...

ಎಷ್ಟೋ ಬಾರಿ ಅನ್ಸಲ್ವಾ ನಾವೆಲ್ಲಾ ಬೆಳೀತಾ ಬೆಳೀತಾ ನಮ್ ನಮ್ ಮುಗ್ಧತೆನಾ ಕಳ್ಕೊತೀವಿ ಅಂತ? ಮಕ್ಕಳ ಹಾಗೆ ಇರಬೇಕಿತ್ತಪಾ ಮನಸ್ಥಿತಿ, ಈ ಪ್ರಬುದ್ಧತೆ, ವಿಚಾರವಂತಿಕೆ ಅನ್ನೋದೆಲ್ಲಾ ಅವರವರಲ್ಲಿರೋ ಮುಗ್ಧತೆಯನ್ನು ಹೊಡೆದೋಡಿಸಿ ಅದರ ಜಾಗದಲ್ಲಿ ಇನ್ನೇನೋ ಒಂದನ್ನ ತಂದು ಕೂರಿಸೋ ಪ್ರಭೃತಿಗಳು ಅನ್ಸಲ್ವಾ?

ಇವತ್ತು ನಾವೆಲ್ಲಾ ಆಫೀಸ್ನಲ್ಲಿ ಒಟ್ಟಿಗೇ ಮುಂಜಾನೆ ಕೆಫೆಟೇರಿಯಾಕ್ ಹೋಗ್ತಾ ಇದ್ವಿ, ಎಲ್ರೂ ಸಾವಕಾಶವಾಗಿ ನಡೀತಾ ಇದ್ರೆ, ನಾನೊಬ್ನು ಯಾವ್ದೋ ಘನಕಾರ್ಯ ಕಡಿದು ಹಾಕೋದಕ್ಕಿದೆ ಎನ್ನೋ ಹಾಗೆ ಅವಸರದಲ್ಲಿ ಮಹಡಿ ಮೆಟ್ಟಿಲುಗಳನ್ನ ಇಳೀತಾ ಇದ್ದೆ, ನನ್ನ ಸಹೋದ್ಯೋಗಿ ಒಬ್ಬನು ಕೇಳೇ ಬಿಟ್ಟ,

'ಏನಯ್ಯಾ ನೀನು ಅರ್ಜೆಂಟಿನಲ್ಲಿರೋ ಹಾಗಿದೆ?!'

ಅದಕ್ಕುತ್ತರವಾಗಿ ನಾನೆಂದೆ, 'ನೋಡು, ನೀನಗೂ ಮೂವತ್ತು ವರ್ಷ ದಾಟಿದ ಮೇಲೆ, ದಿನದ ಇಪ್ಪತ್ತ್ ನಾಲ್ಕು ಘಂಟೆಗಳು ಸಾಕೋದಿಲ್ಲ ಅಂತ ಯಾವಾಗ ಅನ್ಸುತ್ತೆ, ಆಗ ಎಕ್ಸರ್‍ಸೈಜ್ ಮಾಡೋಕೆ ಪುರುಸೊತ್ತು ಸಿಗೋದಿಲ್ಲ, ಅದರ ಬದಲಿಗೆ ಎಲ್ಲಿ ಹೋದ್ರೂ ಬಂದ್ರೂ ಈ ರೀತಿ ಅವಸರದಲ್ಲಿ ಓಡಾಡಿಕೊಂಡಿದ್ರೆ ಒಂದಿಷ್ಟು ಹಾರ್ಟ್ ರೇಟಾದ್ರೂ ಜಾಸ್ತಿ ಆಗಿ ಇನ್ನೂ ಸ್ವಲ್ಪ ದಿನ ಜಾಸ್ತಿ ಬದುಕ್‌ಬೋದು...'

ಎಲ್ಲರೂ ನಕ್ಕರೂ, ನಾನೂ ನಕ್ಕು ಮತ್ತೆ ಮುಂದುವರೆಸಿದೆ,

'ಈ ದೊಡ್ಡ ಮನುಷ್ಯರೆಲ್ಲಾ ಸೂಟ್ ಯಾಕ್ ಹಾಕ್ಕೊಂಡಿರ್ತಾರೆ ಗೊತ್ತಾ, ಅವರು ಯಾವಾಗ್ ನೋಡಿದ್ರೂ ಮುಕುಳಿಗೆ ಬೆಂಕಿ ಬಿದ್ದ ಹಾಗೆ ತಿರುಗಾಡ್‌ತಿರ್ತಾರೆ ಅನ್ನೋದ್ ಗೊತ್ತೇ ಇದೆ...'

ಆ ಕಡೆಯಿಂದ ಏನೂ ಉತ್ರ ಬರಲಿಲ್ಲ,

'ಈ ಬೇಸಿಗೆಯಲ್ಲಿ ಸೂಟ್ ಹಾಕ್ಕೊಂಡ್ ವೇಗವಾಗಿ ಓಡಾಡೋದೂ ಒಂದೇ, ಕೈಯಲ್ಲಿ ಐದು ಪೌಂಡ್ ಡಂಬೆಲ್ಲ್ ಹಿಡಿದುಕೊಂಡ್ ಜಾಗ್ ಮಾಡೋದೂ ಒಂದೆ...'

ಹೀಗೇ ಟೈಮ್ ಸಿಕ್ಕಾಗ ಅಲ್ಲಲ್ಲಿ ಸಣ್ಣ ಪುಟ್ಟ ನಗೆ ಚಾಟಿಕೆ ಹಾರಿಸಿಕೊಂಡು ಕಾಲ ಕಳೀತಿರ್ತೀನಿ - ಮತ್ತಿನ್ನೇನ್ ಮಾಡೋದು, ನಮ್ಮಂತಹವರಿಗೆ ಆಫೀಸೇ ಬದುಕು, ಬದುಕೇ ಆಫೀಸ್ ಆಗಿರೋವಾಗ, ಯಾವಾಗ್ ನೋಡಿದ್ರೂ ಎಲ್ಲರೂ ಒಂದಲ್ಲಾ ಒಂದು ಸಂದಿಗ್ಧದಲ್ಲಿ ಸಿಕ್ಕೊಂಡೇ ಇರೋವಾಗ, ಸ್ಟ್ರೆಸ್ ಅನ್ನೋದು ದಿನದ ಅವಿಭಾಜ್ಯ ಅಂಗವಾದಾಗ...

ಶುಕ್ರವಾರ ಬಂತೂ ಅಂತಂದ್ರೆ 'ಓಹ್, ಇನ್ನೇನು ವೀಕ್ ಎಂಡ್ ಬಂತೂ...' ಅಂತ ಎಲ್ಲರ ಕಣ್ಣರಳುತ್ತೆ, ವಾರಾಂತ್ಯದಲ್ಲಿ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಮಾಡೋಣ ಅಂತ ಏನೇನೆಲ್ಲ ತಲೆಯೊಳಗೆ ಬಂದು ಕೊರೆಯೋಕ್ ಶುರು ಹೊಡೀತಿರ್ತಾವೆ. ಶನಿವಾರ ಎದ್ದು ಮುಖತೊಳೆದು ತಿಂಡಿ ತಿಂದಂಗ್ ಮಾಡಿ, ಕಾಫಿ ಕುಡದಂಗ್ ಮಾಡಿ ಇನ್ನೇನು ಮೈ ಮುರೀ ಬೇಕು ಅನ್ನೋಷ್ಟರಲ್ಲಿ ಮಧ್ಯಾಹ್ನವಾಗಿ ಹೋಗುತ್ತೆ. ಒಂದಿಷ್ಟು ಟಿವಿ ರಿಮೋಟಿನ ಮೇಲೆ ಕೈ ಆಡ್ಸಿ ಟಿವಿ ನೋಡ್ದಂಗ್ ಮಾಡಿ, ಮನೆ ಕ್ಲೀನ್ ಮಾಡ್ಕೊಂಡ್ ಸಂಜೆ ಶಾಪ್ಪಿಂಗ್ ಮುಗಿಸಿ ಕಾಫಿ ಕುಡಿದು, ರಾತ್ರೆ ಊಟಾ ಮುಗಿದು ಇನ್ನೂ ಮಲಗಿರಲ್ಲ ಆಗ್ಲೇ ಭಾನುವಾರ ಬಂದ್ ಹೋಗ್‌ಬಿಡುತ್ತೆ. ಒಡಹುಟ್ಟಿದವರು, ಪೋಷಕರಿಗೆ ಒಂದಿಷ್ಟ್ ಫೋನ್ ಮಾಡಿ 'ಚೆನ್ನಾಗಿದೀರಾ' ಅಂತ ಕೇಳೋ ಹೊತ್ತಿಗೆ, ಡ್ರೈಯರ್ರ್‌ನಲ್ಲಿರೋ ಬಟ್ಟೇ ತೆಗೆದು ಮಡಚಿ ಇಡೋ ಹೊತ್ತಿಗೆಲ್ಲಾ ಭಾನುವಾರ ಕಥೆ ಗೊಳಂ - ಮತ್ತೆ ಸೋಮವಾರದ ಹಾಡು. ಐದು ದಿನದ ವಾರದ ದಿನಗಳು ವೇಗವಾಗಿ ಹೋಗ್ತಾವೋ, ಎರಡು ದಿನಗಳ ವಾರಾಂತ್ಯ ವೇಗವಾಗಿ ಹೋಗುತ್ತೋ ಅನ್ನೋದಕ್ಕೆ ಯಾವ ಸೂತ್ರವನ್ನೂ ಯಾರೂ ಇನ್ನೂ ಕಂಡು ಹಿಡಿದ ಹಾಗಿಲ್ಲ.

ಹಿಡಿದ ಕೆಲಸವನ್ನು ಟೈಮಿಗೆ ಸರಿಯಾಗಿ ಮುಗಿಸಬೇಕೋ, ಅಥವಾ ಟೈಮ್ ಎಷ್ಟು ತೊಗೊಂಡ್ರೂ ಪರವಾಗಿಲ್ಲ ಹಿಡಿದ ಕೆಲಸವನ್ನು ಸರಿಯಾಗಿ ಮಾಡಬೇಕೋ ಅನ್ನೋ ಆಲೋಚನೆಗಳಲ್ಲಿ ತೊಡಗಿಕೊಂಡರೆ ಟೈಮ್ ಹೋಗಿದ್ದೇ ಗೊತ್ತಾಗಲ್ಲ. ಒಂದ್ ಕಡೆ ಘಂಟೆಯ ಬೆನ್ನು ಹತ್ತಿ ಎಲ್ಲರೂ ಒಂದಲ್ಲಾ ಒಂದು ಸ್ಕೆಡ್ಯೂಲ್‌ನಲ್ಲಿ ತೊಡಗಿಕೊಂಡಿರ್ತಾರೆ, ಅವರಿಗೆ ಅವರ ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಇನ್ನೊಂದ್ ಕಡೆ ಯಾವ್ದಾದ್ರೂ ಒಂದ್ ಪ್ರಶ್ನೆಗೆ ಯೋಚಿಸಿ ಉತ್ರ ಹೇಳೋದಕ್ಕೆ ಪುರುಸೊತ್ತು ಕೊಡದ ಹಾಗಿನ ಇವತ್ತಿನ ಮೀಟಿಂಗ್‌ನ ವಾತಾವರಣ, ನೀವು ಸರಿಯಾಗಿ ಆಲಿಸಬೇಕು (listening skills) ಅನ್ನೋದು ಒಂದು ಕಡೆ, ಹಾಗೆ ಇನ್ನೊಬ್ಬರ ಪ್ರಶ್ನೆ ಅಥವಾ ಮಾತನ್ನು ಕೇಳುವಾಗ ನಮ್ಮ ಉತ್ತರವನ್ನು ಫಾರ್ಮುಲೇಟ್ ಮಾಡದೇ ಹೋದ್ರೆ ಈ ವ್ಯವಸ್ಥೆಗೆ ತಕ್ಕಂತೆ ಸ್ಪಂದಿಸೋದೇ ಕಷ್ಟವಾಗಿ ಹೋಗುತ್ತೆ. ಎಲ್ಲವೂ ಪಟ್ಟನೆ ಆಗಿ ಬಿಡಬೇಕು ಎಂದು ಯಾರೋ ಹೊರಡಿಸಿದ ಕಾಯಿದೆ ಬೇರೆ ಕೇಡಿಗೆ.

'My door is always open for you...' ಎನ್ನುವ ಬಾಸ್‌ನ ಬಾಸಿನ ಡೋರು ಯಾವತ್ತೂ ಗುಪ್ತ ಮೀಟಿಂಗ್‌ಗಳನ್ನು ಪುರಸ್ಕರಿಸಿಕೊಂಡು ಮುಚ್ಚೇ ಇರುತ್ತೆ...'I have an open door policy...' ಎನ್ನುವ ವಾಕ್ಯ ಫಿಗರೇಟಿವ್ ಆಗಿ ಮಾತ್ರ ಬಳಕೆಗೆ ಬರುತ್ತೆ...ನೀವು ಹೇಳಿದ್ದನ್ನೆಲ್ಲ ಕೇಳ್ತೀವಿ ಅನ್ನೋ ಜನರೇ ತಮ್ಮ ಕಿವಿಗೆ ಬಿದ್ದಿದ್ದೆಲ್ಲವನ್ನೂ ಕೇಳಿಸಿಕೊಳ್ಳದೇ ಇರೋರು, ನಾಯಕತ್ವ ಅನ್ನೋ ಹೆಸರಿನಲ್ಲಿ ತಮ್ಮ ಮನಸಲ್ಲಿದ್ದದ್ದೆನ್ನೆಲ್ಲ ಮುಕ್ತವಾಗಿ ಹಂಚೋರು.

ಹಾಸ್ಯದ ಮೊರೆ ಹೋಗೋರು ಜೀವ್ನಾನ ಗಂಭೀರವಾಗಿ ನೋಡೋದಿಲ್ಲ ಅಂತ ಯಾರ್ ಅಂದೋರು, ಈ ಬ್ಯೂರೋಕ್ರಸಿಯಿಂದ ತುಂಬಿರೋ ಅಫೀಸ್ ಜೀವ್ನಾನ ತುಸು ಹಾಸ್ಯದಿಂದ ನೋಡ್ದೇ ಹೋದ್ರೆ ಎಂತೋನ್ ಹೃದಯಾನಾದ್ರೂ ನಿಂತೇ ಹೋಗುತ್ತೆ! ಇನ್ನ್ ಮೇಲಾದ್ರೂ ತಮ್ಮನ್ನು ತಾವು ಅದೆಲ್ಲೋ ಕಳೆದುಕೊಂಡು ಅವಸರದಲ್ಲಿ ಓಡಾದೋರ್ ಕಂಡ್ರೆ ಸ್ವಲ್ಪ ದಾರಿ ಬಿಡ್ತೀರಾ ತಾನೆ? ಜೊತೆಗೆ ಅಂತಹವರೇನಾದ್ರೂ ಜೋಕ್ ಹೇಳಿದ್ರೆ ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...

Monday, July 16, 2007

ನಮ್ಮೊಳಗಿನ ಧ್ವನಿ

ಇವತ್ತು 92.3 ಯನ್ನು ಕೇಳ್ಕೊಂಡ್ ಆಫೀಸ್ನಿಂದಾ ಬರ್ತಾ ಇರ್ಬೇಕಾದ್ರೆ ಯಾವ್ದೋ ಒಂದು ಟ್ಯೂನ್ ಕೇಳಿ ದೀವಾನಾ ಹಿಂದೀ ಸಿನಿಮಾದ 'ಫಾಯಾಲಿಯಾ ಹೋ ಹೋ ಹೋ ಹೋ' ಹಾಡು ನೆನಪಿಗೆ ಬಂತು. ರೆಡಿಯೋದಲ್ಲಿ ಬರ್ತಾ ಇದ್ದ ಹಾಡಿನ ಧ್ವನಿಯನ್ನು ಕಡಿಮೆ ಮಾಡಿ, ನಾನು ಫಾಯಲಿಯಾ...ಟ್ಯೂನ್ ಗೆ ಗಂಟು ಬಿದ್ದೆ, ನನಗೇನೂ ಆ ಹಾಡಿನ ಸಾಹಿತ್ಯ ಬರದಿದ್ದರೂ ಗಟ್ಟಿಯಾಗಿ ಗುನುಗುವಷ್ಟು ಅದರ ರಾಗ ಮಾತ್ರ ಬರುತ್ತಿದ್ದುದರಿಂದ ದಾರಿಯಲ್ಲಿ ಸ್ವಲ್ಪ ಹೊತ್ತು ಟೈಮ್ ಪಾಸಾಗಿತ್ತು.

ನನಗೆ ಮೊದಲಿಂದಲೂ ಯಾವುದೇ ಹಾಡನ್ನಾದರೂ ಅದರ ಮೂಲ ಗಾಯಕರ ಧ್ವನಿಯಲ್ಲಿ ಕೇಳಿ ಅದನ್ನನುಕರಿಸಿ ಪ್ರಯತ್ನಿಸೋ ಒಂದು ಕೆಟ್ಟ ಅಭ್ಯಾಸ, ಆ ಅಭ್ಯಾಸ ಬಲಕ್ಕೆ ತಕ್ಕಂತೆ ಕುಮಾರ್ ಸಾನು ಧ್ವನಿಯನ್ನು ಅನುಕರಿಸಲು ಹೋದ ನನಗೆ ಏನು ಮಾಡಿದರೂ, ಎಷ್ಟು ಪ್ರಯತ್ನ ಪಟ್ಟರೂ ಮೊದ ಮೊದಲು ಕುಮಾರ್ ಸಾನು ಥರವೇ ಧ್ವನಿಯಾಗಿ ಮೇಲೆದ್ದರೂ ಮುಂದಿನ ಸ್ವರಗಳು ಪಕ್ಕಾ ಸೌತ್ ಇಂಡಿಯನ್ನ್ ಕ್ಲಾರಿಟಿಯಲ್ಲಿ ಹೊರಬರುತ್ತಿವೆ! ಮೊದಲೇ ಲಿರಿಕ್ಸ್ ಬರೋದಿಲ್ಲ, ಇನ್ನೂ ಧ್ವನಿಯೂ ಬಾಯಿಗೆ ಬಂದಂತಾಗಿ ಹೋಗಿ ಯಾವೊಂದು ವಿಷಯ-ವಸ್ತು-ಪದವನ್ನು ಪದೇಪದೇ ಹೇಳಿಕೊಂಡು ಬಂದರೆ ಅದು ತನ್ನ ಅರ್ಥವನ್ನು ಹೇಗೆ ಕಳೆದುಕೊಳ್ಳುವುದೋ ಅಂತೆಯೇ ಈ ದಿನಕ್ಕೆ ಫಾಯಲಿಯಾ ಹಾಡಿನಲ್ಲಿ ಸತ್ವವೆಲ್ಲವೂ ಇಂಗಿ ಹೋಗಿತ್ತು.

ಮೊದಮೊದಲೆಲ್ಲಾ ಕಿಶೋರ್ ಕುಮಾರ್ ಅನುಕರಿಸುತ್ತಾರೆ ಎಂದುಕೊಂಡು ಸುದ್ದಿ ಹುಟ್ಟಿಸಿದ ಕುಮಾರ್ ಸಾನೂದೂ ಈಗೊಂದು ಭಿನ್ನ ಧ್ವನಿ, ಅಂತಹ ಭಿನ್ನ ಧ್ವನಿಯನ್ನು ಅನುಕರಿಸೋಕ್ ಹೋಗೋ ನನ್ನಂಥವರದ್ದು ಹಲವಾರು ಧ್ವನಿಗಳು.

***

ಉದಯಾದಲ್ಲಿ ಆಪ್ತಮಿತ್ರದ 'ಇದು ಹಕ್ಕೀ ಅಲ್ಲಾ...ಬಾಲಾ ಇದ್ರೂನೂ ಕೋತೀ ಅಲ್ಲಾ...' ಎಂದು ಹಾಡೊಂದು ತೂರಿಕೊಂಡು ಬರುತ್ತಿತ್ತು. ವಿಷ್ಣುವರ್ಧನ್, ಪ್ರೇಮಾ, ರಮೇಶ್ ಹಾಗೂ ಇನ್ನಿತರ ಪರಿಚಿತರ ಮುಖಗಳ ಸುಂದರವಾದ ದೃಶ್ಯಗಳು, ಯಾವೊಂದು ಕನಸೊಂದರ ಸೀಕ್ವೆನ್ಸಿನಂತೆ ಬಣ್ಣಬಣ್ಣದ ಗಾಳಿಪಟಗಳು, ಎಲ್ಲವೂ ಸರಿ...ಏನೋ ಎಡವಟ್ಟಿದೆ ಇದರಲ್ಲಿ ಎಂದು ಯೋಚಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಿಂದೊಮ್ಮೆ ವಿಶೇಷವಾದ ಧ್ವನಿಗಳ ಬಗ್ಗೆ ಬರೆದದ್ದು ನೆನಪಿಗೆ ಬಂತು, ಈ ಹಾಡನ್ನೂ ಉದಿತ್ ನಾರಾಯಣ್ ಹಾಡಿರೋದು ಎಂದು ತಿಳಿದುಕೊಳ್ಳಲು ಹೆಚ್ಚು ಹೊತ್ತು ಬೇಕಾಗಲೇ ಇಲ್ಲ!

ನಮ್ಮದೇ ಒಂದು ವಿಶೇಷವಾದ ಧ್ವನಿ, ಅದಕ್ಕಿಂತಲೂ ಹೆಚ್ಚು ಒಂದು ವಿಶೇಷವಾದ ಪರಂಪರೆ - ಒಂದು ಸಾಧಾರಣವಾದ ಗಾಳಿಪಟದಂತಹ ವಿಷಯವಿದ್ದಿರಬಹುದು, ಅಥವಾ ಅದರ ಹಿನ್ನೆಲೆಯಲ್ಲಿ ಮರ್ಕಟವನ್ನು ಪ್ರತಿಬಿಂಬಿಸೋ ಮನಸ್ಸಿರಬಹುದು, ಅಥವಾ ನೋಡುಗ/ಕೇಳುಗರಿಗೆ ಇನ್ನೂ ಎನನ್ನೋ ಆಲೋಚಿಸುವಂತೆ ಮಾಡುವ ಪ್ರಯತ್ನವಿರಬಹುದು. ಇವೆಲ್ಲ ಪ್ರಯತ್ನಗಳಿಗೊಂದು ನಮ್ಮೊಳಗಿನ ಧ್ವನಿಯೇ ಇಲ್ಲದಂತಾಗಿ ಹೋದರೆ ಏನೋ ಸರಿ ಇಲ್ಲ ಎಂದು ಅನ್ನಿಸೋದು ನನ್ನಂತಹವರಿಗೆ ಸಹಜ, ಅದೂ ಇಂತಹ ಧ್ವನಿಯ ಹಿಂದೆಯೇ ಗಿರಕಿ ಹೊಡೆಯುತ್ತಾ ನಿಲ್ಲಬಹುದಾದ ನನ್ನ ತರ್ಕ ಅಲ್ಲಿಂದ ಮುಂದೆ ಸರಿಯದಿರಬಹುದು.

ಎಸ್.ಪಿ.ಬಿ. ಅದೆಷ್ಟೋ ಸಾವಿರ ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದರೂ ಸಹ ಅವರು ಕನ್ನಡ ಮಾತಾಡೋದನ್ನ ಕೇಳಿದಾಗ ಅವರು ನಮ್ಮವರು ಎಂದೆನಿಸೋದಿಲ್ಲ, ಮುದ್ದಿನ ಮಾವ ಸಿನಿಮಾದಲ್ಲೂ ಸಹ ಅವರ ಮೃದುವಾದ ಮಾವನ ಪಾತ್ರದ ಪ್ರಯತ್ನ ಚೆನ್ನಾಗೇನೋ ಇದೆ, ಆದರೆ ಭಾಷೆಯ ವಿಚಾರದಲ್ಲಿ ಅವರು ಹೊರಗಿನವರಾಗೇ ಉಳಿದುಬಿಟ್ಟರು. ಎಸ್.ಪಿ.ಬಿ. ಧ್ವನಿ ಉತ್ತರ ಭಾರತದವರಂತೆ (ಸೋನು ನಿಗಮ್, ಉದಿತ್ ನಾರಾಯಣ್, ಕುಮಾರ್ ಸಾನೂ) ವಿಶೇಷವಾಗೇನೂ ಇರದಿದ್ದರೂ, ಅವರ ಕನ್ನಡ ಹಾಡುಗಳು ನಮ್ಮೊಳಗಿನ ಧ್ವನಿಯಂತೆಯೇ ಇವೆ, ಅವರ ಕನ್ನಡ ಮಾತುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲದರಲ್ಲಿ ಅವರ ಪ್ರಯತ್ನ ಶ್ಲಾಘನೀಯ - ಬೆಂಕಿಯಬಲೆಯ ಚಿತ್ರದ ಹಾಡುಗಳನ್ನು ಅನಂತ್‌ನಾಗ್ ಅವರೇ ಹೇಳಿದ್ದಾರೇನೋ ಎನ್ನುವಂತೆ ಧ್ವನಿಯಲ್ಲಿ ವೇರಿಯೇಷನ್ನುಗಳನ್ನು ಹುಟ್ಟಿಸಿ, ಅದೇ ಟೆಕ್ನಿಕ್‌ ಮೂಲಕ ಶಿವರಾಜ್‌ಕುಮಾರ್ ಅವರಿಂದ ಹಿಡಿದು, ರಾಜ್‌ಕುಮಾರ್ ಒಬ್ಬರನ್ನು ಬಿಟ್ಟು ಮಿಕ್ಕೆಲ್ಲ ನಾಯಕರಿಗೆ ಅವರು ಧ್ವನಿಯಾಗಿದ್ದಾರೆ - ಈ ಒಂದು ಕಾರಣವೇ ಇದ್ದಿರಬೇಕು ಸಂಗೀತ ನಿರ್ದೇಶಕರು 'ಬಾಲೂ...ಬಾಲೂ' ಎಂದು ಅವರನ್ನು ಅಂಗಾಲಾಚಿಕೊಳ್ಳುವುದು, ಹಾಡುಗಳ ಧ್ವನಿ ಸುರುಳಿಯನ್ನು ತೆಗೆದುಕೊಂಡು ಅವರ ಮನೆ ಮುಂದೆ ಸಾಲು ನಿಲ್ಲುವುದು.

***

ಬಾಂಬೆ, ಮದ್ರಾಸು, ಹೈದರಾಬಾದು ದೊರೆಗಳನ್ನು ಪೋಷಿಸಿ ಕೈ ಹಿಡಿದು ಕನ್ನಡ ಸಿನಿಮಾಕ್ಕೆ ನಡೆಸಿಕೊಂಡು ಬರುವುದರ ಬದಲು ನಮ್ಮೊಳಗಿನ ಪ್ರತಿಭೆಗಳಿಗೆ ಜೀವ ತುಂಬಿ ಪೋಷಣೆ ನೀಡಿದ್ದರೆ...ರವಿಚಂದ್ರನ್ ಹಂಸಲೇಖರನ್ನು ಪರಿಚಯಿಸಿದ ಹಾಗೆ...ನಮ್ಮಲ್ಲಿಯೂ ಪ್ರತಿಭೆಗಳಿಗೇನೂ ಕೊರತೆ ಇಲ್ಲ ಎನ್ನುವುದನ್ನು ನಾವು ಯಾವತ್ತೋ ಸಾಧಿಸಿ ತೋರಿಸಬಹುದಿತ್ತು.