Saturday, May 20, 2006

ಹಲವು ಸಂದಿಗ್ಧಗಳು

'ಅಂತರಂಗ'ದಲ್ಲಿ ಹಾಗೂ-ಹೀಗೂ, ಅದೂ-ಇದನ್ನು ಬರೆದು ತುಂಬಿಸಿದ್ದಾಯಿತು, ಇವತ್ತಿಗೆ ಇದು ಐವತ್ತನೇ ಬರಹ, ಈ ಮೈಲಿಗಲ್ಲನ್ನು ತಲುಪಿದ್ದೇನೆಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವ ಮುನ್ನ ಈ ಬರಹಗಳನ್ನು ಬರೆಯುವ ಪ್ರಕ್ರಿಯೆಯಲ್ಲಿ ನನ್ನಲ್ಲಿ ಮೂಡಿದ ಹಲವು ಸಂದಿಗ್ಧಗಳಲ್ಲಿಯೂ ಓದುಗರನ್ನು ಸಹಭಾಗಿಗಳನ್ನಾಗಿ ಮಾಡಿದರೆ ಹೇಗೆ ಎಂಬ ಕುಹಕ ಮನದಲ್ಲಿ ಮೂಡಿದ್ದೇ ತಡ ಹೀಗೆ ಕುಟ್ಟಲು ಮೊದಲು ಮಾಡಿಕೊಂಡೆ.

***

'ಅಂತರಂಗ'ದ ಬರಹಗಳಿಗೆ ಕೆಲವು ಖಾಯಂ ಓದುಗರೂ, ಇನ್ನು ಕೆಲವು ವೀಕ್ಷಕರು, ಹಾಗೂ ಕೆಲವರು ಹಿತೈಷಿಗಳು ಸಮಯದಿಂದ ಸಮಯಕ್ಕೆ ಭೇಟಿಕೊಡುತ್ತಲೆ ಇದ್ದಾರೆ. ಇವರಲ್ಲಿ ಕೆಲವರು ತಮ್ಮ ನಿಜನಾಮದಲ್ಲಿ ಅನಿಸಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ, ಇನ್ನು ಕೆಲವರು ಅನಾಮಿಕರಾಗಿ ಉಳಿದರು, ಮತ್ತೂ ಕೆಲವರು ತಮ್ಮ ನಿಜನಾಮದಲ್ಲಿ ಬರೀ ಇ-ಮೇಲ್‌ಗಳ ಮೂಲಕ ಮಾತ್ರ ನನಗೆ ಬರೆಯುತ್ತಾರಾದ್ದರಿಂದ ಪ್ರತಿಯೊಂದಕ್ಕೂ ಒಂದು ಸರ್ಕಲ್ ಹುಟ್ಟುವ ಹಾಗೆ ಈ ಬರಹಗಳಿಗೂ ಅದರದ್ದೆ ಆದ ಒಂದು ಬೇಸ್ ಹುಟ್ಟಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ಹೆಚ್ಚುಗಾರಿಕೆಯೂ ಇಲ್ಲ.

ಆದರೆ, ನಾನು ಈ ಬರಹಗಳಿಗೆ ಎಷ್ಟು ಸಮಯವನ್ನು ವ್ಯಯಿಸುತ್ತೇನೆ, ಅವುಗಳನ್ನು ಯಾವಾಗ ಕುಟ್ಟುತ್ತೇನೆ, ಈ ಬರಹಗಳಲ್ಲಿ ಏನೇನನ್ನು ಬರೆಯಬಹುದು, ಬರೆದಿದ್ದೇನೆ, ಬರೆಯಬಲ್ಲೆ ಎಂದು ಆಲೋಚಿಸಿಕೊಂಡಂತೆಲ್ಲಾ ದೊಡ್ಡ ಕಂಪದ ಭೂಮಿಯಲ್ಲಿ ಸ್ವಲ್ಪಸ್ವಲ್ಪವೇ ಹುದುಗಿದ ಅನುಭವವಾಗತೊಡಗುತ್ತದೆ. ಸದ್ಯಕ್ಕೆ ನನ್ನ ಮುಂದಿರುವ ಸಂಕಷ್ಟಗಳು ಇವು:

೧) ನಾನು ಈವರೆಗಿನ ಬರಹಗಳಲ್ಲಿ ನನ್ನ ವೈಯುಕ್ತಿಕ ವಿಷಯಗಳನ್ನು ಪ್ರಥಮ ವ್ಯಕ್ತಿಯ ಮೂಲಕ ಸಾರ್ವಜನಿಕಗೊಳಿಸುತ್ತಿರುವುದು ಓದುಗರಲ್ಲಿ ಕೆಲವರಿಗೆ ಮೆಚ್ಚುಗೆಯಾದರೂ ನನ್ನ ಮನೆಯವರಿಗೆ (ನನ್ನ ಹೆಂಡತಿ ಹಾಗೂ ಇನ್ನು ನಾಲ್ಕು ದಿನಗಳಲ್ಲಿ ಭಾರತಕ್ಕೆ ಹಿಂತಿರುಗುತ್ತಿರುವ ನನ್ನ ಅತ್ತೆಯವರಿಗೆ) ಅದು ಖಂಡಿತವಾಗಿ ಇಷ್ಟವಿಲ್ಲದ ಮಾತು. ನಾನೇನಾದರೂ ಹಾಗೆ ಬರೆಯುತ್ತಾ ಹೋದರೆ 'ಎಲ್ಲರೂ ನನ್ನ ಹಲ್ಲುಗಳನ್ನು ಎಣಿಸಿಕೊಂಡುಬಿಡುತ್ತಾರೆ' ಎಂಬುದು ಅವರ ವಾದ ಹಾಗೂ ನಮ್ಮ-ನಮ್ಮ ವಿಷಯಗಳು ನಮ್ಮಲ್ಲೇ ಇರಲಿ ಎಂಬುದು ಅವರ ತತ್ವ. ಹಾಗೇನಾದರೂ ನನಗೆ ನನ್ನ ಬಗ್ಗೆ ಬರೆಯಲೇ ಬೇಕಾಯಿತೆನ್ನಿಸಿದರೆ 'ಮೊದಲು ದೊಡ್ಡ ಮನುಷ್ಯನಾಗಿ ಐವತ್ತು ವರ್ಷ ಆದ ಮೇಲೆ ಆತ್ಮ ಚರಿತ್ರೆ ಬರೆ' ಎನ್ನುವುದು ಅವರ ಕಿವಿಮಾತು.

'ಅಂತರಂಗಿ'ಯನ್ನು ಎಷ್ಟು ಸಾಧ್ಯವೋ ಅಷ್ಟು ಗೋಪ್ಯವಾಗಿ ಇಡೋಣವೆಂದುಕೊಂಡರೆ ನನ್ನ ಬರವಣಿಗೆಯ ಶೈಲಿ, ಅದರಲ್ಲಿ ಬರುವ ವಿಷಯಗಳು ಹಾಗೂ 'ಅಂತರಂಗ' ನಿನ್ನದಾ ಎಂದು ಕೇಳಿದವರಿಗೆ ನಾನು ಸುಳ್ಳು ಹೇಳದೇ ಇದ್ದುದು ಎಲ್ಲವೂ ಸೇರಿಕೊಂಡು ಒಬ್ಬರಿಂದ ಇಬ್ಬರಿಗೆ, ಇಬ್ಬರಿಂದ ನಾಲ್ವರಿಗೆ ಗೊತ್ತಾಗಿ ಈಗ ಕೊನೇ ಪಕ್ಷ ಏನಿಲ್ಲವೆಂದರೂ ಒಂದು ಹತ್ತು-ಹದಿನೈದು ಜನರಿಗೆ ನಾನ್ಯಾರೆಂದು ಗೊತ್ತಾಗಿ ಬಿಟ್ಟಿದೆ!

೨) ಎರಡನೆಯದಾಗಿ ಆಫೀಸಿನ ಸಮಯದಲ್ಲಿ ವೈಯುಕ್ತಿಕ ಕೆಲಸಗಳನ್ನು ಮಾಡಬಾರದೆಂಬ ನನ್ನ ನಿಯಮ, ಕಂಪನಿಯ ಪಾಲಿಸಿ ಹಾಗೂ ನನಗೆ ಕೊಡುವ ಸಂಬಳಕ್ಕೆ ತಕ್ಕನಾಗಿ ದುಡಿಯಬೇಕೆಂದು ಸದಾ ಗೊಣಗುವ ಅಂತರಾತ್ಮ. ಈಗ ಉದಾಹರಣೆಗೆ (ಸುಮ್ಮನೇ ಲೆಕ್ಕಕ್ಕೆಂದು ಹೇಳುತ್ತಿದ್ದೇನೆ, ಎನ್.ಆರ್.ಐ. ಒಬ್ಬ ಇಷ್ಟು ದುಡಿಯುತ್ತಿದ್ದಾನೆಂದು ದಿಢೀರನೆ ನಿರ್ಣಯಕ್ಕೆ ಬರಬೇಡಿ) ನನ್ನ ಕೆಲಸಕ್ಕೆ ನಮ್ಮ ಕಂಪನಿಯವರು ಘಂಟೆಗೆ ಅರವತ್ತು ಡಾಲರ್‌ನ್ನು ಕೊಡುತ್ತಾರೆ ಎಂದುಕೊಳ್ಳೋಣ, ಹಾಗಿದ್ದ ಪಕ್ಷದಲ್ಲಿ ನಿಮಿಷಕ್ಕೆ ಒಂದು ಡಾಲರ್ ಆಯಿತಲ್ಲವೇ? ನಿನ್ನೆ (ಶುಕ್ರವಾರ) ನಾನು ಆಫೀಸಿನಲ್ಲಿ 'ಅಂತರಂಗ'ದ ಸಲುವಾಗಿ, ಅದರಲ್ಲಿ ಬರೆದಿರುವ ಕಾಮೆಂಟನ್ನು ಓದುವುದಕ್ಕೆ, ಅದಕ್ಕೆ ಉತ್ತರಕೊಡುವುದಕ್ಕೆ, ಅಲ್ಲಿ ಬಳಸಿದ ವಿಷಯ ವಸ್ತುಗಳ ಕುರಿತು ಚಾಟ್ ಮಾಡುವುದಕ್ಕೆ ಏನಿಲ್ಲವೆಂದರೂ ಒಂದು ಘಂಟೆಯನ್ನಾದರೂ ವ್ಯಯಿಸಿದ್ದೇನೆ. ದಿನದಲ್ಲಿ ಎಂಟು ಘಂಟೆ ಕೆಲಸ ಮಾಡಬೇಕಾದ ಅಗತ್ಯವಿರುವ ನನಗೆ ನಾನು ಕೊನೇಪಕ್ಷ ಏನಿಲ್ಲವೆಂದರೂ (ಮಧ್ಯಾಹ್ನ ಊಟ, ಇತರ ಬ್ರೇಕ್‌ಗಳನ್ನೂ ಸೇರಿ) ಕೊನೇ ಪಕ್ಷ ಹತ್ತು ಘಂಟೆಗಳಾದರೂ ಕೆಲಸ ಮಾಡುತ್ತೇನೆ. ಆದರೂ ಸಹ, ಕಂಪನಿಯ ಸಂಪನ್ಮೂಲಗಳನ್ನು ವ್ಯವಹಾರಕ್ಕೆ ಸಂಬಂಧಿಸದ ಕಾರ್ಯಗಳಲ್ಲಿ ಬಳಸುವುದು ತಪ್ಪು ಹಾಗು ಅದು ನೀತಿ, ನಿಯಮಗಳಿಗೆ ವಿರುದ್ಧವಾದುದು ಎಂದು ನನಗೆ ಚೆನ್ನಾಗಿ ಗೊತ್ತಿರುವುದರಿಂದ ಇಲ್ಲಿ ಸಂದಿಗ್ಧ ಹುಟ್ಟುತ್ತದೆ.

ಅಲ್ಲದೇ ಪ್ರತೀ ಪೋಸ್ಟ್ ಹಾಗೂ ಅದರ ಫಾಲ್ಲೋ ಅಪ್ ಎಲ್ಲವೂ ಸೇರಿ ದಿನಕ್ಕೆ ಒಂದೆರಡು ಘಂಟೆ ವ್ಯಯಿಸುವ ನಾನು, (ಬೇರೆ ಯಾರೂ ಹಾಗೆ ಮಾಡುತ್ತಿಲ್ಲವಾದ್ದರಿಂದ, ಅಥವಾ ಹಾಗೆ ಮಾಡುವವರು ಕಡಿಮೆ ಇರುವುದರಿಂದ), ಮನೆ, ಮಕ್ಕಳು, ಸಂಸಾರ, ಕೆಲಸ, ಕಮ್ಮ್ಯೂಟು ಇವುಗಳು ಬೇಡುವ ಅಟೆನ್ಷನ್ ಕೊಟ್ಟು ನ್ಯಾಯ ಒದಗಿಸಬಲ್ಲೆನೇ? ಹಾಗೆ ಮಾಡಿದರೂ ಮುಂದಿನ ವಾರ ನಮ್ಮ ಅತ್ತೆಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಉಪವಾಸವಂತೂ ಕೂರಲು ಸಾಧ್ಯವಿಲ್ಲ, ಅಡುಗೆ ಯಾವಾಗ ಮಾಡುವುದು, ಊಟ ಯಾವಾಗ ಮಾಡುವುದು, ನಿದ್ರೆ ಯಾವಾಗ ಮಾಡುವುದು, ಒಂದೋ ಎರಡೋ...

ಅನಿವಾಸಿಗಳ ಸಂಕಷ್ಟ ಭಾರತದಲ್ಲಿ ಕುಳಿತವರಿಗೋ, ಭಾರತದಿಂದ ಆರು ತಿಂಗಳ ಪ್ರವಾಸೀ ವೀಸಾದಲ್ಲಿ ಬರುವಂತಹವರಿಗೋ ಗೊತ್ತಾಗೋಲ್ಲ, ಸುಮ್ಮನೇ ಅವರಿಗನ್ನಿಸಿದ್ದನ್ನು ಗೊಣಗುತ್ತಾರಷ್ಟೇ - ನನ್ನ ಅತ್ತೆಯವರು ನಮ್ಮ ಬಗ್ಗೆ ಮರುಕಪಡುತ್ತಾರೆ, ಇಲ್ಲಿ ಬಂದು ನಮ್ಮನ್ನು 'ನೋಡಿದ' ಮೇಲೆ ನೀವು 'ಹೀಗೆ' ಬದುಕುತ್ತಿದ್ದೀರಿ ಎಂದು ಗೊತ್ತಿರಲಿಲ್ಲ ಎನ್ನುತ್ತಾರೆ. ಅವರು ನನ್ನ ತರಹ ಪುಸ್ತಕ ಬರೆಯೋದಿಲ್ಲವಾದರೂ ಇದ್ದದ್ದನ್ನ ಇದ್ದ ಹಾಗೇ ಹೇಳುವ ಕರುಣಾಮಯಿ!

೩) ಹೀಗೇ ನನ್ನ ಹಳವಂಡವನ್ನೆಲ್ಲ ಕೆದಕಿ ಆನವಟ್ಟಿಯಿಂದ ಇಲ್ಲಿಯವರೆಗೆ ಬರೆಯುತ್ತಾ ಹೋದರೆ ಸುಮಾರು ಐನೂರು ಪೋಸ್ಟ್‌ಗಳನ್ನು ಬರೆಯುವಷ್ಟು ಸರಕು ನನ್ನಲ್ಲಿದೆ - ಕೆಲವು ಕೆಟ್ಟವು, ಕೆಲವು ಒಳ್ಳೆಯವು, ಎಲ್ಲಾ ಥರದ ಅನುಭವಗಳನ್ನೂ ಹೀಗೆ ಬರೆಯಬಹುದು. ಆದರೆ ಹೀಗೆ ಬರೆಯುವುದರ ಗುರಿ ಏನು, ಯಾವ 'ಗುಡ್ಡಾ ಕಡಿಯೋದಕ್ಕೆ' ಹೀಗೆ ಬರೆಯಬೇಕು? ಒಂದು ಕಥೆಯನ್ನೋ ಕಾದಂಬರಿಯನ್ನೂ ವಿಮರ್ಶಿಸಿ ಬರೆದರೆ ಅದು ಒಂದು ಥರಾ, ಒಂದು ನನ್ನದೇ ಆದ ಕಥೆಯನ್ನೋ ಕಾವ್ಯವನ್ನೋ ಪ್ರಕಟಿಸಿದರೆ ಇನ್ನೊಂದು ಥರಾ, ಇಲ್ಲಾ ಹಾಸ್ಯದ ಶೈಲಿಯಲ್ಲಿ ಬರೆದು ಕೊನೆಗೆ ಏನೋ ಒಂದು ಸಂದೇಶವನ್ನು ಸಾರಿದರೆ ಮತ್ತೊಂದು ಥರಾ - ಚೂರುಪಾರು ಬರೆದಿದ್ದನ್ನೂ 'ಸಗಣೀ ತಿನ್ನೋರಿಗೆ ಮೀಸೆ ತಿಕ್ಕೋರ್ ಹದಿನಾರ್ ಜನ' ಅನ್ನೋ ಹಾಗೆ - ಬರೆದಿದ್ದನ್ನೆಲ್ಲ ಈ ಅಳಲು, ವಿಸ್ಮಯ, ನೋಟ, ವೈಯುಕ್ತಿಕ ಇತ್ಯಾದಿ ಮಣ್ಣೂ-ಮಸಿಗಳೆಂದು ವರ್ಗೀಕರಣ ಮಾಡಿ ತೆರೆದಿಟ್ಟದ್ದನ್ನ ಕೇಳುವವರು ‍ಯಾರು, ಹೇಳುವವರು ‍ಯಾರು? ಅಲ್ಲದೆ ನನ್ನಲ್ಲಿ ಹಳವಂಡ ಅಡಗಿದೆಯೆಂದಾಕ್ಷಣ ಪೂರ್ಣವಾಗಿ ಎಲ್ಲವನ್ನೂ ಬರೆಯಲು ಸಾಧ್ಯವಿದೆ ಎಂಬ ಮಾತು ಅಷ್ಟೊಂದು ನಿಜವಾದುದಲ್ಲ - ನನಗೆ ಬರೆಯಲು ಮುಖ್ಯವಾಗಿ ಮೂರು ರೀತಿಯಲ್ಲಿ ಪ್ರೇರಣೆ ಸಿಗುತ್ತದೆ - ನನಗೆ ಬೇಕಾದ ಆತ್ಮೀಯರಲ್ಲಿ ಒಂದೇ ದೂರವಾಣಿಯ ಮೂಲಕವೋ ಇಲ್ಲಾ ಮುಖತಃ ಭೇಟಿಯಲ್ಲೋ ಮಾತನಾಡಿ ವಿಚಾರ ವಿನಿಮಯ ಮಾಡಿಕೊಳ್ಳುವುದು, ನಾನು ಎಲ್ಲಾದರೂ ಪ್ರಯಾಣ ಮಾಡುವುದು, ಹಾಗೂ ಪುಸ್ತಕಗಳಲ್ಲೋ, ಅಂತರ್ಜಾಲದಲ್ಲೋ ಯಾವುದಾದರೊಂದು ವಿಷಯ, ವಸ್ತುವನ್ನು ಓದುವುದು. ನನ್ನೊಳಗಿನ ಹಳವಂಡಗಳಿಗೆ ರೂಪಕೊಡುವಂತೆ ಬರೆಯುವ ಒಂದೊಂದು ಸಾಲಿಗೂ ಕನಿಷ್ಟ ಹತ್ತು ಸಾಲುಗಳನ್ನಾದರೂ ಓದಬೇಕು, ಹತ್ತು ಪಟ್ಟು ಮಾತನಾಡಬೇಕು ಇಲ್ಲಾ ಹತ್ತು ಪಟ್ಟು ತಿರುಗಾಡಬೇಕು, ಇವೆಲ್ಲವೂ ಎಲ್ಲಿ ಸಾಧ್ಯ?

***

ಸಾಧ್ಯವಾದಾಗ ಬರೆಯಬೇಕು ಎನ್ನುವುದಾಗಲೀ, ಎಷ್ಟು ಸಾಧ್ಯವೋ ಅಷ್ಟನ್ನು ಬರೆದು ಬದುಕುತ್ತಿರುವವರೆಲ್ಲರೂ ಬುದ್ಧಿವಂತರು. ಆದರೆ ನನಗೆ ಬರೆಯುವ ಚಟ ಬೆಳೆಯದೇ ಹೋದರೆ ನಾನು ಮತ್ತೆಂದೂ ಬರೆಯುವವನಲ್ಲ. ನಮ್ಮ ನಡುವೆ ಒಳ್ಳೆಯ ಪ್ರಕ್ರಿಯೆಗಳಿಗೆ ಕುಮ್ಮಕ್ಕು ಸಿಗುವುದಕ್ಕಿಂತಲೂ 'ಸೊಫಾಕ್ಕೆ ಅಂಟಿಕೊಂಡೇ ಇಡೀ ಸಂಜೆಯನ್ನು ಕಳೆಯುವ' ಪರಿಣಾಮ, ಅವಕಾಶಗಳೇ ಹೆಚ್ಚು. ಈ ನಿಟ್ಟಿನಲ್ಲಿ ಕೊನೇ ಪಕ್ಷ ದಿನಕ್ಕೊಂದಿಷ್ಟಾದರೂ ನಿಗದಿತ ಸಮಯದಲ್ಲಿ ಕೆಲವು ಸಾಲುಗಳನ್ನು ಗೀಚದಿದ್ದರೆ ಅದು ಒಂದು ಹವ್ಯಾಸವಾಗುವುದಾದರೂ ಹೇಗೆ? ಇನ್ನು ವಾರಕ್ಕೊಮ್ಮೆ ಬರೆಯಬಹುದಲ್ಲವೇ ಎಂಬ ಮಾತಿಗೆ ಅಮೇರಿಕದಲ್ಲಿ ಈಗಾಗಲೇ ಎಲ್ಲವೂ 'ವಾರಮಯ'ವಾಗಿರುವಾಗ ನನ್ನ ಬದುಕು-ಬರವಣಿಗೆಯಾದರೂ ವರ್ತಮಾನವೆಂಬ ಹೀಗೆ ಬಂದು ಹಾಗೆ ಹೋಗುವ ಜೀವವುಳ್ಳ ಸರಕಾಗಲೀ ಎಂದುಕೊಂಡೆ, ಬರೆಯಲು-ಓದಲು ಬೇಕಾದಷ್ಟಿರುವಾಗ ವಾರಕ್ಕೊಮ್ಮೆಯ ಸ್ಪಂದನ ಎಲ್ಲಿಯ ಲೆಕ್ಕ? ಆದರೆ... ಪ್ರಸಕ್ತ ವಿದ್ಯಮಾನಗಳ ಮೇಲಾಗಲೀ, ರಾಜಕೀಯ ಸ್ಥಿತಿಗತಿಗಳ ಕುರಿತಾಗಲೀ, ವ್ಯಾಪಾರ-ವಾಣಿಜ್ಯ-ವಿದ್ಯಮಾನಗಳ ಕುರಿತೋ ಬರೆದರೆ ಅದರಿಂದ ಲೋಕಕಲ್ಯಾಣವಾಗದಿದ್ದರೂ ಲೋಕದಲ್ಲಿರುವವರನ್ನು ನೇರವಾಗಿ ತಟ್ಟಬಹುದಾಗಿತ್ತು, ಇನ್ನು ಆಗುವಾಗ ಅನುಭವಿಸುವಾಗ ತಾಜಾ ಕಬ್ಬಿನಹಾಲಿನಂತಿದ್ದು ಮುಂದೆ ಕೊಳೆತು ಹುಳಿಹೆಂಡವಾದ ನನ್ನ ಸರಕುಗಳನ್ನು ಎಷ್ಟು ಜನರಿಗೆ ಹೇಗೆ ಉಣಬಡಿಸುವುದು ಅದರಿಂದ ಏನಾದೀತು ಎನ್ನುವ ಪ್ರಶ್ನೆಯೂ ಅಲ್ಲಲ್ಲಿ ಬಂದಿದೆ. ಸರೀ, ಈ ಬ್ಲಾಗುಗಳಲ್ಲಿ (ಬ್ಲಾಗಿಗೆ 'ತಾರಿ' ಎಂದು ನಾನೊಂದು ಹೊಸಪದವನ್ನು ಪರಿಚಯಿಸಿದರೆ ಹೇಗೆ? ತಾಣದಲ್ಲಿ ಬರೆದ ದಿನಚರಿ - ಎಂಬುದರ ಮೊದಲ ಹಾಗು ಕೊನೆಯ ಅಕ್ಷರ - ತಾರಿ), ಅಲ್ಲ ತಾರಿಗಳಲ್ಲಿ ಯಾರು ಯಾರು ಏನೇನು ಬರೆದಿದ್ದಾರೆ ಎಂದು ನೋಡಿಕೊಂಡು ಬಂದೆ, ಕನ್ನಡ-ಇಂಗ್ಲೀಷು ಭಾಷೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಓದಿದವನಿಗೆ ಕೆಲವರು ಇದ್ದದ್ದನ್ನು ತಮ್ಮ ನಿಲುವಿನಲ್ಲಿ ಬರೆದಂತೆಯೂ, ಇನ್ನು ಕೆಲವರು ಇದ್ದದ್ದನ್ನು ತಿರುಚಿ ಬರೆದಂತೆಯೂ, ಮತ್ತೆ ಕೆಲವರು ಶುದ್ಧ ಮನೋರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಸೂಕ್ಷ್ಮವಾಗಿ ನೋಡಿದಾಗ 'ಸುತ್ತಿ ಹೊಡೆದವರಂತೆ' ಕಂಡು ಬಂದರು. ಇದ್ದದ್ದನ್ನ ಇದ್ದಹಾಗೇ ಬರೆಯುವ (ಕೊನೇಪಕ್ಷ ಆ ಉದ್ದೇಶವನ್ನು ಹೊಂದಿರುವ) ಹಲವಾರು ಮಾಧ್ಯಮಗಳಿರುವಾಗ, ತಮ್ಮ-ತಮ್ಮ ನಿಲುವುಗಳನ್ನು ತಮಗೆ ತೋಚಿದ ರೀತಿಯಲ್ಲಿ ಹೇಳುವ ಘಟಾನುಘಟಿಗಳಿರುವಾಗ, ಹಾಸ್ಯ-ಮನೋರಂಜನೆಗೆ ಪ್ರತಿಭಾವಂತ ದಿಗ್ಗಜರಿರುವಾಗ ಇವರೆಲ್ಲರ ನಡುವೆ ನನ್ನ ಹಳವಂಡದ ಬರಹಗಳು ಎಷ್ಟರ ಮಟ್ಟಿಗೆ ಎಲ್ಲಿ ಸಲ್ಲುತ್ತವೆ ಎಂದು ಒಮ್ಮೆ ಅವಲೋಕಿಸಬೇಕಾಗಿ ಬಂದಿತು - ಅದರ ಫಲಿತಾಂಶ ದಿಗಿಲನ್ನೂ ಹುಟ್ಟಿಸಿತು!

***

ಹೀಗೆ ಸಂದಿಗ್ಧಗಳ ಬಗೆಗೆ ಬರೆದರೆ ಅದೇ ಒಂದು ಬರಹವಾಯಿತು, ನೋಡು ನೋಡುತ್ತಿದ್ದಂತೇ ಪುಟ ತುಂಬಿತು. ನನ್ನ ಹಿಂದಿನ ಪೋಸ್ಟ್‌ಗಳಲ್ಲಿ ಹೇಳುವುದನ್ನೂ ಇನ್ನೂ ಮುಗಿಸದೇ 'ಭಾಗ-೧' ಎಂದು ಶೀರ್ಷಿಕೆಯಲ್ಲೇ ತೋರಿಸುವ ನೀಚ ಹಾಗೂ ಭಂಡತನಕ್ಕೆ ಇಳಿದುಬಿಟ್ಟಿದ್ದೇನೆ ಎನ್ನಿಸುತ್ತದೆ. 'ಅಂತರಂಗ'ವನ್ನು ಓದಿದವರು after all, 'ಅಂತರಂಗಿ' ಯಾವೊಬ್ಬ ದೊಡ್ಡ ಮಹಾತ್ಮನೂ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯನೇ ಹೀಗೆ ಬರೆಯುತ್ತಾನಲ್ಲ, ತಾನೊಬ್ಬನೇ ಬದುಕನ್ನು ಅನುಭವಿಸಿದ ಹಾಗೆ ಆಡುತ್ತಾನಲ್ಲ, ಅಬ್ಬಾ ಇವನ ಸೊಕ್ಕೇ!' ಎಂದು ನನಗೆ ಹಿಡಿಶಾಪವನ್ನು ಹಾಕುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ.

'ವಾರಕ್ಕೆ ಮೂರು ಬಾರಿಯಾದರೂ ಜಿಮ್‌ಗೆ ಹೋಗಿ' ಎನ್ನುವ ನನ್ನ ಡಾಕ್ಟರರ ಧ್ವನಿಯೂ, 'ಇವೆಲ್ಲಾ ಬರೆಯೋದರಿಂದ ಏನೂ ಪ್ರಯೋಜನ ಇಲ್ಲಾರೀ...' ಎನ್ನುವ ನಮ್ಮ ಅತ್ತೆಯವರ ಮಾತೂ, ಆಫೀಸಿನ ಸಂಪನ್ಮೂಲಗಳನ್ನು ವೈಯುಕ್ತಿಕ ಪ್ರಯೋಜನಕ್ಕೆ ಬಳಸಬಾರದೆಂಬ ನನ್ನ ನೀತಿಯೂ, ನನ್ನ ಬರಹಗಳಿಗೆ ಉತ್ತರಕೊಟ್ಟ, ಪ್ರೈವೇಟ್ ಆಗಿ ಇ-ಮೇಲ್ ಮಾಡಿದ ವರ್ಚುವಲ್ ಪ್ರಪಂಚದ ಮುಖಗಳೂ ನನ್ನನ್ನು ಸುತ್ತುವರಿಯತೊಡಗುತ್ತವೆ. ಸ್ವಾಗತ ದಲ್ಲಿ ಬರೆದಂತೆ ಡಜನ್‌ಗಟ್ಟಲೆ ವಿಷಯಗಳು ಮುತ್ತಿ ನನ್ನ ಸುತ್ತಲೂ ನರ್ತನವಾಡತೊಡಗುತ್ತವೆ, ಇಷ್ಟು ದಿನ ಹತ್ತಿರದಿಂದ ಕೇಳಿ ಬರುತ್ತಿದ್ದ 'ನೋಡೋಣ ಇದು ಎಲ್ಲೀವರೆಗೆ ಬರುತ್ತೋ ಅಂತ' ಎನ್ನುವ ಧ್ವನಿ ಈಗ ಅದೆಲ್ಲೋ ದೂರದಿಂದ ಕೇಳಿಬರುತ್ತಿರುವಂತೆ ಕ್ಷೀಣವಾಗುತ್ತದೆ - ನನ್ನೊಳಗಿನ ನಾನನ್ನು ಇನ್ನೂ ಸಂಪೂರ್ಣವಾಗಿ ಬಿಚ್ಚಿಕೊಂಡೇ ಇಲ್ಲ, ಆಗಲೇ ಬಾಗಿಲುಗಳು ಮುಚ್ಚಿಕೊಂಡಂತೆ ಅನ್ನಿಸಿ, ನನಗೇನಾದರೂ 'ಖಾಯಿಲೆ' ಬಂದು ಬಿಟ್ಟಿದೆಯೇ ಎಂದು ಒಮ್ಮೆಲೇ ಭಯವಾಗತೊಡಗುತ್ತದೆ.

Friday, May 19, 2006

ಅವಕಾಶವಾದಿ ಹಾಡುಹಗಲೇ ಸಿಕ್ಕಿಬಿದ್ದ ಘಳಿಗೆ

ನಿಮಗೆ ಗೊತ್ತಿಲ್ಲದಿರಬಹುದು, ೧೯೯೫ ರಲ್ಲಿ ಟೆಕ್ನಾಲಜಿ ಬ್ಯಾಂಡ್ ವ್ಯಾಗನ್‌ನ್ನು ಹತ್ತಲು ನಮ್ಮಲ್ಲಿ ಇದ್ದ ಪೈಪೋಟಿ ಹಾಗೂ ಹುರುಪು. ಆಗ ಸಿಕ್ಕ ಅವಕಾಶಗಳು ವಿಪುಲವಾಗಿದ್ದರೂ ಸರಿಯಾದ ನಿರ್ಣಯವನ್ನು ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳದವರು ಕೊನೆಗೆ ಒಂದಲ್ಲ ಒಂದು ರೀತಿಯಲ್ಲಿ ಬೆಲೆತೆತ್ತರು. ಆಗ ಬೆಳಿಗ್ಗೆಗೊಂದು, ಸಂಜೆಗೊಂದು ಎಂದು ವಿಶ್ವ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಕೆಲಸಗಳೂ, ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎಂದು ಯೋಚಿಸಲು ವ್ಯವಧಾನವೂ ಇಲ್ಲದ ನಮ್ಮ ಪರಿಸ್ಥಿತಿ ಒಂದು ಸೀಜನ್‌ನಲ್ಲಿ ನೀರಿನಿಂದ ಮೇಲೆ ಹಾರುವ ಸ್ಯಾಲ್ಮನ್‌ನ್ನು ಹಿಡಿಯುವ ಕರಡಿಗಳಂತಾಗಿತ್ತು.

***

ಮದ್ರಾಸಿನ ಪೆಂಟಾಫೋರ್‌ ಮೊಟ್ಟ ಮೊದಲ ಬಾರಿಗೆ ತರಬೇತಿಯನ್ನೂ, ಕೆಲಸವನ್ನೂ ಕೊಟ್ಟು ನನ್ನ ಜೀವವನ್ನು ಉಳಿಸಿದ ಕಂಪನಿಯದು. ನಾನು ಕೈಯಲ್ಲಿದ್ದ ಕಾಸನ್ನೂ ಖರ್ಚು ಮಾಡಿಕೊಂಡು ಇನ್ನೆಲ್ಲೂ ಕೆಲಸವು ಸಿಗದೇ ಹೋದರೆ ಎಲ್ಲಾದರೂ ಹಗ್ಗ ಹುಡುಕುವ ಸ್ಥಿತಿಯಲ್ಲಿದ್ದಾಗ ಕೊನೆಗೂ ಬಹಳ ನಿರೀಕ್ಷೆಯಂತೆ ಸಿಕ್ಕಿದ ಕೆಲಸ ಬದುಕುವ ಉತ್ಸಾಹವನ್ನು ಮರಳಿಸಿತ್ತು. ಆದರೆ ನನ್ನ ಜೊತೆಯವರಿಗೆಲ್ಲ ಕೆಲಸದ ಆರ್ಡರು ಇಂದು ಸಿಕ್ಕಿದರೆ ನನಗೆ ಸಿಕ್ಕಿದ್ದು ಒಂದು ವಾರದ ನಂತರವೇ...ಎಲ್ಲಿ ಹೋದರೂ ಪ್ರತಿಯೊಂದನ್ನೂ ಹೋರಾಡಿಯೇ ಪಡೆಯಬೇಕೆಂಬ ವಿಧಿ ನನ್ನನ್ನು ಇಲ್ಲಿಯೂ ಬಿಡಲಿಲ್ಲ. ನಾನು ಮದ್ರಾಸಿನಲ್ಲಿ ಕೋರ್ಸುಗಳನ್ನು ಮುಗಿಸಿಕೊಂಡು ಒಂದು ವಾರದ ರಜೆಯ ಮಟ್ಟಿಗೆ ಊರಿಗೆ ಹೋಗಿ ಬರೋಣವೆಂದುಕೊಂಡರೆ ಆಗಿದ್ದೇ ಬೇರೆ - ನನ್ನ ಸಂದರ್ಶನವು ತುಂಬಾ ಚೆನ್ನಾಗಿ ಆಗಿತ್ತು, ಇನ್ನೇನು ಕೆಲಸವೂ ಸಿಗುತ್ತದೆ ಎಂಬ ಸಂತೋಷದಲ್ಲಿ ನಾನು ನನ್ನ ಸರಕು ಸಾಮಾನುಗಳನ್ನೆಲ್ಲ ಯಾರದೋ ಕೋಣೆಯಲ್ಲಿಟ್ಟು ಊರಿಗೆ ಹೋಗಿಬರೋಣವೆಂದುಕೊಂಡೆ, ಆದರೆ ಕೆಲಸದ ಆರ್ಡರುಗಳನ್ನು ಇವರು ಕೊರಿಯರ್‌ನಲ್ಲಿ ಕಳಿಸುತ್ತಾರೆಂದು ಯಾರಿಗೆ ಗೊತ್ತಿತ್ತು, ನಾನು ಎಷ್ಟು ಕಾದರೂ ಬರಲೇ ಇಲ್ಲ. ಒಂದು ದಿನ ಬಹಳ ನಿರಾಶೆಯಿಂದ ಇನ್ನೇನು ಕೆಲಸ ಸಿಗಲೇ ಇಲ್ಲವೆಂದುಕೊಂಡು ಸತ್ತಮುಖವನ್ನು ಹೊತ್ತುಕೊಂಡು ಕೇಳಂಬಾಕ್ಕಂನ ಸಾಫ್ಟ್‌ವೇರ್ ಪಾರ್ಕಿಗೆ ಬಂದೆ, ನನ್ನ ಬ್ಯಾಚಿನವರೆಲ್ಲ ಆಗಲೇ ಕೆಲಸಕ್ಕೆ ಸೇರಿಕೊಂಡು ಒಂದು ವಾರವಾಗಿತ್ತು, ಅವರೆಲ್ಲ ಕಂಠ ಕೌಪೀನವನ್ನು (ಟೈ) ಕಟ್ಟಿಕೊಂಡು ಉತ್ಸಾಹದ ಬುಗ್ಗೆಗಳಾಗಿ ಪುಟಿಯುತ್ತಿದ್ದರು, ನಾನು ಯಾವುದೋ ಟಿ ಶರ್ಟೊಂದನ್ನು ಸಿಗಿಸಿಕೊಂಡು ಹೋದವನಿಗೆ ಬೆಳಗ್ಗೆ ಹನ್ನೊಂದು ಘಂಟೆಗೆ ಕಾಫೀ ಬ್ರೇಕ್‌ನಲ್ಲಿದ್ದ ನನ್ನ ಜೊತೆಯವರೆಲ್ಲ ಸಿಕ್ಕು ಕರುಳು ಕಿವುಚಿಕೊಂಡ ಹಾಗಾಯಿತು. 'ಏನೋ, ನಿನಗಿನ್ನೂ ಕೆಲ್ಸಾ ಸಿಗ್ಲಿಲ್ವಾ?' ಎಂದು ಕಿರಣನೋ ಸತ್ಯಬಾಬೂನೋ ಕೇಳಿದ ನೆನಪು, ಅವರೆಲ್ಲ ಕಾಫೀಗೆ ಕರೆದ್ರೂ ನಾನು ಹೋಗಲಿಲ್ಲ. ನಾನು ಮ್ಯಾನೇಜರ್ ಅರುಳಕುಮಾರನ್ ಕಂಡು ಮಾತಾಡಿಹೋಗಬೇಕೆಂದು ಬಂದವನು, ಅಷ್ಟು ಮಾಡಿದ್ದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದೆ.

ಕೊನೆಗೂ ಅರುಳಕುಮಾರನ ದರ್ಶನವಾಯಿತು, 'ನೋಡಿ, ನಿಮ್ಮಲ್ಲಿ ನನ್ನದೊಂದೇ ಪ್ರಶ್ನೆ ಇದೆ, ನೇರವಾಗಿ ಹೇಳಿಬಿಡಿ, ನನಗೆ ಇಲ್ಲಿ ಕೆಲಸ ಸಿಗುತ್ತದೆಯೋ ಇಲ್ಲವೋ' ಎಂದು ಪ್ರಶ್ನೆ ಕೇಳಿದೆನೋ ಅಥವಾ ಮೈಯನ್ನು ಹಿಡಿಯಷ್ಟು ಮಾಡಿಕೊಂಡೆನೋ ಯಾರಿಗೆ ಗೊತ್ತು, ನನ್ನ ಪ್ರಶ್ನೆಗೆ ಉತ್ತರವಾಗಿ ಅರುಳಕುಮಾರನ್ ನಕ್ಕು ಬಿಟ್ಟರು, 'ಆಗಲೇ ಆರ್ಡರ್ ಕಳಿಸಿದ್ದೇವಲ್ಲ, ಇನ್ನೂ ಸಿಕ್ಕಿಲ್ಲವೇ!' ಎಂದರು, ನನಗೆ ಹೋದ ಜೀವ ಬಂದಂತಾಯಿತು, 'ಹೋಗಿ, ಕೋಡಂ‌ಬಾಕ್ಕಂ ಆಫೀಸಿನಲ್ಲಿ ಕೇಳಿ ನೋಡಿ, ಯಾವ ಅಡ್ರಸ್ಸಿಗೆ ಕಳಿಸಿದ್ದಾರೋ...' ಎಂದುದೇ ತಡ, ನನಗೆ ಮನೋವೇಗದಲ್ಲಿ ಕೇಳಂಬಾಕ್ಕಂನಿಂದ ಕೋಡಂಬಾಕ್ಕಂಗೆ ಹೋಗಬೇಕೆನ್ನಿಸಿದರೂ, ಸುಮಾರು ಇಪ್ಪತ್ತು ಮೈಲಿ ಇದ್ದ ಆ ದೂರವನ್ನು ಕ್ರಮಿಸಲು ಎರಡು ಘಂಟೆಗಳೇ ಬೇಕಾದವು.

ಮಧ್ಯಾಹ್ನ ಒಂದೂವರೆಯ ಹೊತ್ತಿಗೆ ಕೋಡಂಬಾಕ್ಕಂ ಆಫೀಸಿಗೆ ಬಂದು ಏರ್‌ಕಂಡೀಷನ್ಡ್ ರಿಸೆಪ್ಶನಿಷ್ಟ್ ಕೊಠಡಿಯಲ್ಲಿ ಒಂದು ನಿಮಿಷ ತಲೆಯನ್ನು ತಣ್ಣಗಾಗಿಸಿಕೊಂಡು ಹೇಮಾ ಗಣೇಶನ್ ಎನ್ನುವವರ ಹತ್ತಿರ ಹೋಗಿ ನನಗಿನ್ನೂ ಕೆಲಸದ ಆರ್ಡರ್ ಸಿಕ್ಕಿಲ್ಲ ಎಂದು ತೋಡಿಕೊಂಡೆ, ಆಕೆ ಅಲ್ಲಿಯೇ ಹತ್ತಿರದಲ್ಲಿದ್ದ ಕೊರಿಯರ್ ಅಂಗಡಿಯಲ್ಲಿ ವಿಚಾರಿಸಿ ಎಂದು ವಿಳಾಸಕೊಟ್ಟರು. ಅಲ್ಲಿಯೇ ಹತ್ತಿರವಿದ್ದ ಅಂಗಡಿಗೆ ಲಗುಬಗೆಯಿಂದ ನಡೆದರೆ ಅಲ್ಲಿನ ಕ್ಲರ್ಕುಗಳಿಗೆ ನಾನು ಯಾವ ಭಾಷೆಯಲ್ಲಿ ಹೇಳಲಿ, ನನಗೆ ತಮಿಳು ಬಾರದು, ಅವರಿಗೆ ಬೇರೆಯೇನೂ ತಿಳಿಯದು...ಕೊನೆಗೆ ಇದ್ದವರಲ್ಲೇ ನನ್ನ ಮಾತನ್ನು ಲಕ್ಷ್ಯ ಕೊಟ್ಟು ಕೇಳುತ್ತಿದ್ದ ಮತಿವಣ್ಣನ್‌ಗೆ ಸ್ವಲ್ಪ ಸ್ವಲ್ಪ ಇಂಗ್ಲೀಷಿನಲ್ಲೇ ನಿಧಾನವಾಗಿ ಬರೆದು ವಿವರಿಸಿದಾಗ 'ಓ, ಅದಾ...ಗಾಜಿಯಾಬಾದಿಗೆ ಹೋಗಿ ಬಿಟ್ಟಿದೆ!' ಎಂದು ಬಿಟ್ಟ. ಎತ್ತಣ ಆನವಟ್ಟಿ, ಎತ್ತಣ ಗಾಜಿಯಾಬಾದ್? ನಾನು ಉತ್ತರಪ್ರದೇಶದ ಬನಾರಸ್‌ನಲ್ಲೇನೋ ಇದ್ದವನು, ಆದರೆ ಗಾಜಿಯಾಬಾದಿಗೂ ನನಗೂ ಸಂಬಂಧವಿಲ್ಲವೆಂದುಕೊಂಡು ಮುಖ ಸಣ್ಣಗೆ ಮಾಡಿಕೊಂಡಾಗ, ಮತಿವಣ್ಣನು 'ಫೋನ್ ಮಾಡಿ ಕೇಳುತ್ತೇನೆ...' ಎಂದು ಹೇಳಿಬಿಟ್ಟ. ನಾನು ಏನಾದರೂ ಇನ್‌ಫರ್‌ಮೇಷನ್ ಸಿಕ್ಕಿದರೆ ಹೇಮಾಗಣೇಶನ್‌ಗೆ ಹೇಳು ಎಂದು ಆಕೆಯ ನಂಬರ್ ಕೊಟ್ಟು ಪುನಃ ಹೆಡ್ ಆಫೀಸಿಗೆ ಬಂದೆ. ಒಳಗಿನ ಎ.ಸಿ. ಗಾಳಿಗೂ ನನ್ನ ಮನಸ್ಸನ್ನು ತಣ್ಣಗೆ ಮಾಡಲಾಗಲಿಲ್ಲ, ಭಾಷೆ ಬರದ, ಇತರರ ಬವಣೆಯನ್ನು ಕೇಳಲು ಪುರುಸೊತ್ತಿರದ ಯಾರಿಗೂ ನನ್ನ ಕಷ್ಟವನ್ನೂ ಹೇಳಿಕೊಳ್ಳಲಿಲ್ಲ, ಕೋಡಂಬಾಕ್ಕಂ ಆಫೀಸಿನ ಪಕ್ಕದಲ್ಲಿದ್ದ ಥಿಯೇಟರ್‌ನಲ್ಲಿ ಪ್ರದರ್ಶನಕ್ಕಿದ್ದ 'ಟಾಟ್ಟಾ ಬಿರ್ಲಾ' ಚಿತ್ರದ ಮಾರ್ನಿಂಗ್ ಶೋ ಮುಗಿದು ಚಿತ್ರ ಮಂದಿರದ ಮುಂದಿದ್ದ ರಸ್ತೆ ಸ್ವಲ್ಪ ಹೊತ್ತು ಜಾತ್ರೆಯ ಸಂಭ್ರಮವನ್ನುಭವಿಸಿ ಮತ್ತೆ ಖಾಲಿಯಾಯಿತು, ನಾನು ಹೊರಗಡೆಯೇ ಸುಮ್ಮನೇ ನಿಂತು, ಕೂತು, ಸ್ವಲ್ಪ ಹೊತ್ತು ಟೈಂ ಪಾಸು ಮಾಡಲು ನೋಡಿದೆ, ವಾಚಿನಲ್ಲಿದ್ದ ಸೆಕೆಂಡ್ ಮುಳ್ಳು ಎಂದಿಗಿಂತಲೂ ನಿಧಾನವಾಗಿ ಚಲಿಸುವಂತೆ ಕಂಡು ಬಂದಿತು.

ಮಧ್ಯಾಹ್ನ ಎರಡೂವರೆ ಆಗುತ್ತಲೇ ರಿಯಾಲಿಟಿ ಕಿಕ್ ಕೊಡತೊಡಗಿತು, ಬೆಳಿಗ್ಗೆ ಶಾಸ್ತ್ರಕ್ಕೆ ತಿಂಡಿ ತಿಂದಂತೆ ಮಾಡಿ ಕೇಳಂಬಾಕ್ಕಂಗೆ ಓಡಿದವನು ಎರಡೂವರೆವರೆಗೆ ಒಂದು ತೊಟ್ಟು ನೀರನ್ನೂ ಬಾಯಲ್ಲಿಟ್ಟಿರಲಿಲ್ಲ, ಇನ್ನು ರಾತ್ರಿ ಇಲ್ಲೆ ಉಳಿಯಬೇಕೆಂದರೇ ಒಂದೇ ಕೇಳಂಬಾಕ್ಕಂಗೆ ಹೋಗಿ ಅಲ್ಲಿ ಈಗಾಗಲೇ ಕೆಲಸಕ್ಕೆ ಸೇರಿರುವ ಯಾರದ್ದಾದರೂ ಜೊತೆಯಲ್ಲಿ ಅತಿಥಿಯಾಗಿ ನೆಲದ ಮೇಲೆ ಮುದುರಿಕೊಳ್ಳಬೇಕು ಇಲ್ಲಾ ಮದ್ರಾಸು ನಗರದ ಹೊರ ಪ್ರಾಂತ್ಯದಲ್ಲಿರುವ ಪುಳಿಚೆಲ್ಲೂರಿನಲ್ಲಿರುವ ನನ್ನ ಸ್ನೇಹಿತ ಪ್ರಕಾಶನ ಮನೆಗೆ ಹೋಗಬೇಕು, ಹೊರಗಡೆ ರೂಮು ಮಾಡೋಣವೆಂದರೆ ಕೈಯಲ್ಲಿ ಹೇಳಿಕೊಳ್ಳುವಷ್ಟೇನೂ ಕಾಸಿಲ್ಲ. ಕೇಳಂಬಾಕ್ಕಂಗೆ ಅಥವಾ ಪ್ರಕಾಶನ ಮನೆಗೆ ಹೋದರೆ ಅಲ್ಲಿರುವವರಿಗೆಲ್ಲ ನನ್ನ ಕೆಲಸವಿಲ್ಲದ ಪೆಚ್ಚುಮೋರೆಯನ್ನು ತೋರಿಸಿ ಕಥೆಯನ್ನು ಹೇಳಬೇಕಾಗುತ್ತದೆ, ಹೊರಗೆ ಹೋಟೇಲಿನಲ್ಲಿದ್ದರೆ ಕೈಲಿದ್ದ ದುಡ್ಡು ಎಷ್ಟು ದಿನ ಬಂದೀತು, ಇನ್ನೇನು ಮಾಡುವುದು ಎಂದು ಕಳವಳವಾಗತೊಡಗಿತು. ಸುಮಾರು ಮೂರು ಘಂಟೆಯಾಗುತ್ತಿದ್ದಂತೆಯೇ, ಮತಿವಣ್ಣನ್ ನನ್ನನ್ನು ಹುಡುಕಿಕೊಂಡು ಓಡೋಡಿ ಬಂದ 'ಶಾರ್ (ಅವನ ಸರ್ ಉಚ್ಚಾರ), ಸಿಕ್ಕಿತು!' ಎಂದ. ಅವನ ಕೈಯಲ್ಲಿ ನನ್ನ ಕಳೆದುಹೋದ ಆರ್ಡರ್ 'ಹೇಗೆ ಸತಾಯಿಸಿದೆ!' ಎಂದು ನನ್ನನ್ನು ಅಣಕಿಸಿ ನಗುತ್ತಿತ್ತು. ಅವನ ಪ್ರಕಾರ ಆನವಟ್ಟಿಗೆ ಕಳಿಸಿದ ಕೊರಿಯರ್ ಶಿವಮೊಗ್ಗದ ವರೆಗೆ ಹೋಗಿ ಅಲ್ಲಿಂದ ಮುಂದೆ ಕೊರಿಯಲ್ ಸರ್ವೀಸ್ ಇಲ್ಲ ಎಂದು ಹಣೆಯ ಮೇಲೆ ಬರೆಸಿಕೊಂಡು ವಾಪಾಸು ಮದ್ರಾಸಿಗೆ ಬಂದು ಯಾವುದೋ ಅದೃಶ್ಯ ಶಕ್ತಿಯ ಬಲಕ್ಕೊಳಗಾಗಿ ಉತ್ತರ ಪ್ರದೇಶದ ಗಾಜಿಯಾಬಾದಿಗೆ ಹೋಗಿ ಅಲ್ಲಿ ಪುನಃ ಡೆಲಿವರಿಯಾಗದೇ ಮತ್ತೆ ಮದ್ರಾಸಿಗೆ ಬಂದು ಮತಿವಣ್ಣನ ಕೈಗೆ ಸಿಕ್ಕಿತ್ತು, ನಾನು ವಿಳಾಸವನ್ನು ನೋಡಿದೆ ಎಲ್ಲವೂ ಸರಿಯಾಗೇ ಇತ್ತು! ನಾನಂತೂ ಅವನ ಕೈಯನ್ನು ಹಿಡಿದುಕೊಂಡು ನನಗೆ ಬಂದ ಭಾಷೆಗಳಲ್ಲಿ ಥ್ಯಾಂಕ್ಯೂ ಎಂದಿದ್ದೇ ಎಂದಿದ್ದು, ಅವನಿಗೂ ಖುಷಿಯಾಗಿತ್ತು - ನನ್ನಿಂದ ಹಣವನ್ನು ನಿರೀಕ್ಷಿಸಲೂ ಇಲ್ಲ, ನಾನು ಅವೆಲ್ಲ ಫಾರ್ಮಾಲಿಟಿಗಳನ್ನು ಮೀರಿ ಜೊಳ್ಳು ಮುಖದಲ್ಲಿ ನಗೆಯನ್ನು ಸೂಸಲು ಪ್ರಯತ್ನ ಪಡುತ್ತಿದ್ದೆ. ನನ್ನ ಕೈಗೆ ಕೆಲಸದ ಆರ್ಡರ್ ಸಿಗುತ್ತಲೂ ನಾನು ಒಬ್ಬ ಅಫೀಷಿಯಲ್ ಆಗಿ ಹೋಗಿದ್ದೆ, ಕಂಪನಿಯ ಷಟಲ್, ಫೋನು ಮತ್ತಿತರ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಯಾವ ಮುಜುಗರವೂ ಇರಲಿಲ್ಲ!

***

ಹೀಗೆ ಕೆಲಸಕ್ಕೆ ಸೇರಿ ಮೂರು ನಾಲ್ಕು ತಿಂಗಳುಗಳಲ್ಲಿ ಅಟ್ಟ ಹತ್ತಿದ ಮೇಲೆ ಏಣಿಯನ್ನು ನಿರ್ಲಕ್ಷಿಸುವ ಪ್ರಕ್ರಿಯೆ ನಮ್ಮಲ್ಲಿ ಶುರುವಾಗಿತ್ತು. ಪೆಂಟಾಫೋರ್‌ನಲ್ಲಿ ಅಮೇರಿಕಕ್ಕೆ ಕಳಿಸುವುದಿಲ್ಲವೆಂತಲೂ, ಕಳಿಸಿದರೂ ಮೂರು ವರ್ಷಗಳ ಮಹಾ ಬಾಂಡೊಂದನ್ನು ಸೈನ್ ಮಾಡಬೇಕೆಂತಲೂ, ಜಪಾನು, ಥೈಲಾಂಡಿಗೆ ಹೋಗಬಹುದೆಂತಲೂ ಒಂದಿಷ್ಟು ಸುದ್ದಿಗಳು, ಒಂದಿಷ್ಟು ಗಾಳಿ ಮಾತುಗಳು ಅಲ್ಲಲ್ಲಿ ಅನುರಣಿಸತೊಡಗಿದವು. ನಾನು ನನ್ನ ಆಫೀಸಿನ ಚೀಲದಲ್ಲಿ ನನ್ನ ರೆಸ್ಯೂಮೆಯ ಹತ್ತಾರು ಪ್ರತಿಗಳನ್ನೂ, ಒಂದೈವತ್ತು ಬಿಳಿ ಲಕೋಟೆಗಳನ್ನೂ, ಹಲವಾರು ಗಾಂಧೀಮುಖವಿರುವ ಎರಡು ರೂಪಾಯಿ ಸ್ಟ್ಯಾಂಪುಗಳನ್ನು ಇಟ್ಟುಕೊಂಡು ಓಡಾಡತೊಡಗಿದೆ - ಪ್ರತೀ ದಿನ ರಾತ್ರಿ ರೆಸ್ಯೂಮೆ ತಿದ್ದುವುದು, ಪ್ರಿಂಟ್ ಹಾಕುವುದು, 'ಎಕ್ಸ್‌ಪ್ರೆಸ್ ಕಂಪ್ಯೂಟರ್' ಹಾಗೂ 'ಡೇಟಾಕ್ವೆಸ್ಟ್' ಮ್ಯಾಗಜೀನುಗಳಲ್ಲಿ ಬಂದ ಪ್ರತಿಯೊಂದು ಕೆಲಸಕ್ಕೂ ಅಪ್ಲೈ ಮಾಡತೊಡಗಿದೆ, ಅದಕ್ಕುತ್ತರವಾಗಿ ಎನ್ನುವಂತೆ ದಿನಕ್ಕೆರಡು ಪ್ರಿ ಇಂಟರ್‌ವ್ಯೂವ್ ಕರೆಗಳು ಬರತೊಡಗಿದವು - ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದ ರೋಸಲಿನ್‌ಳೂ, ಫ್ರಂಟ್ ಡೆಸ್ಕ್‌ನಲ್ಲಿ ಕೆಲಸಮಾಡುತ್ತಿದ್ದ - ಮುಖ ನೆನಪಿಗೆ ಬಂದು ಹೆಸರು ನೆನಪಿಗೆ ಬರದ - ಮತ್ತೊಂದು ಹುಡುಗಿಯೂ ನನ್ನ ಅಗದೀ ಗೆಳೆಯರಾದರು!

ಇವಕ್ಕೆಲ್ಲ ಉತ್ತರವೆನ್ನುವಂತೆ ಒಂದು ದಿನ ಆಫೀಸಿನ ಸಮಯದಲ್ಲೇ ಹನ್ನೊಂದು ಘಂಟೆಯ ಕಾಫೀ ಬ್ರೇಕ್‌‌ನಲ್ಲಿ ಅಟ್ಲಾಂಟಾದ ಒಂದು ಕಂಪನಿ ನನ್ನನ್ನು ಇಂಟರ್‌ವ್ಯೂವ್ ಮಾಡಿತು. ರೋಸಲಿನ್‌ಳ ಕೃಪೆಯಿಂದ ನಾನು ಈ ಕಾಲೊಂದನ್ನು ಯಾರೂ ಹೆಚ್ಚು ಓಡಾಡದ ಮೂಲೆಯ ಕೊಠಡಿಯೊಂದರಲ್ಲಿ ತೆಗೆದುಕೊಳ್ಳುವಂತಾಯಿತು, ಇಂಟರ್‌ವ್ಯೂವ್ ಮಾಡಿ ನನಗೆ ಆ ಕ್ಷಣದಲ್ಲೇ ಕೆಲಸವನ್ನೂ ಆಫರ್ ಮಾಡಿ ಆರ್ಡರ್ ಕಳಿಸುತ್ತೇವೆ ಎಂದು ಬಿಟ್ಟರು, ನನಗಂತೂ ಅಮೇರಿಕೆಗೆ ಹಾರಿದಷ್ಟೇ ಸಂತೋಷವಾಯಿತು, ಆದರೆ ಆ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ.

ಆಟ್ಲಾಂಟಾ ಕಂಪನಿಯವರು ಅಪಾಯಿಂಟ್‌ಮೆಂಟ್ ಆರ್ಡರನ್ನು ಫ್ಯಾಕ್ಸ್ ಕಳಿಸುತ್ತೇವೆ ಎಂದು ಹೇಳಿದ್ದರಿಂದ (ಸದ್ಯ ಕೊರಿಯರ್ ಅಲ್ಲ), ನಾನು ಪೆಂಟಾಪೋರಿನ ಫ್ಯಾಕ್ಸ್ ನಂಬರ್‌ನ್ನು ಕೊಟ್ಟು ಭಾರತದ ಸಮಯ ಸಂಜೆ ಏಳೂವರೆಯ ಮೇಲೆ ಫ್ಯಾಕ್ಸ್ ಮಾಡಿ ಎಂದು ಹೇಳಿದ್ದರೆ, ನಾನು ಎಷ್ಟು ಕಾದರೂ ಆ ಸಂಜೆ ಫ್ಯಾಕ್ಸ್ ಬರದೇ ಹೋಯಿತು! ಹೀಗೆ ಏನಾದರೊಂದು ತೊಂದರೆಯಿಲ್ಲದಿದ್ದರೆ ಹೇಗೆ - ರಾತ್ರಿ ಬರುವ ಫ್ಯಾಕ್ಸ್ ಮುಂಜಾನೆ ಎಂಟೂವರೆಗೆ ಬಂದು ನಮ್ಮ ಎಚ್.ಆರ್. ಅಧಿಕಾರಿಗೇ ಸಿಗಬೇಕೆ? ಅಲ್ಲಿಂದ ಶುರುವಾಯಿತು ನೋಡಿ ನನ್ನ ಕಷ್ಟ - ನನಗೆ ಅಟ್ಲಾಂಟಾದಿಂದ ಕೆಲಸ ಆರ್ಡರು ಹಾಡು ಹಗಲೇ ಅಫೀಸಿಗೆ ಬರುವುದು ಎಂದರೇನು, ಅದು ಹ್ಯೂಮನ್ ರಿಸೋರ್ಸ್ ಮುಖ್ಯಸ್ಥನಿಗೆ ಸಿಗುವುದು ಎಂದರೇನು, ನನ್ನ ಬಣ್ಣವೆಲ್ಲ ಬಟಾ ಬಯಲಾಯಿತು, ಇನ್ನೇನು ನನ್ನ ಕಥೆ ಮುಗಿಯಿತು ಎಂದುಕೊಂಡೆ - ಮೊದಲೇ ನನ್ನ ಪೇಪರುಗಳನ್ನೆಲ್ಲ ಪೆಂಟಾಫೋರ್‌ನವರು ತೆಗೆದುಕೊಂಡಿದ್ದರು, ಎಲ್ಲಾದರೂ ಕಳಿಸುತ್ತೇವೆ, ಬಾಂಡಿಗೂ ಸಹಿ ಮಾಡಿರೆಂದು ಅದಕ್ಕೂ ಸಹಿ ಹಾಕಿಸಿಕೊಂಡಿದ್ದರು, ನನ್ನನ್ನು ಮೆಚ್ಚಿಕೊಂಡಿದ್ದವರೆಲ್ಲ, ತಮ್ಮ ನೋಟದಲ್ಲೇ ಚುಚ್ಚುವಂತಾದರು - ಇಷ್ಟೆಲ್ಲಾ ಆದರೂ ನನ್ನ ಹೆಸರಿಗೆ ಬಂದ ಅಪಾಯಿಂಟ್‌ಮೆಂಟ್ ಆರ್ಡರನ್ನು ನನಗೇ ಕೊಟ್ಟಿದ್ದರು, ಅದನ್ನು ತೆಗೆದುಕೊಂಡು ಏನು ಮಾಡುವುದು ಬಿಡುವುದೂ ಗೊತ್ತಾಗಲಿಲ್ಲ. ಅದರಲ್ಲಿ ಮುದ್ರಿಸಿಕೊಂಡ H1b ಹಾಗೂ $41,000 ವರ್ಷದ ಸಂಬಳ ಇನ್ನೂ ಕಣ್ಣ ಮುಂದೆಯೇ ಇದ್ದಂತಿದೆ.

***

ಪೆಂಟಾಫೋರಿನ ಮ್ಯಾನೇಜಿಂಗ್ ಡೈರೆಕ್ಟರ್ ಚಂದ್ರಶೇಖರ್ ಮಹಾ ಒಳ್ಳೆಯ ಮನುಷ್ಯ, ಆದರೆ ಕೇಳಂಬಾಕ್ಕಂನಲ್ಲಿ ಅವರ ಸೆಕ್ರೆಟರಿ ಇದ್ದಾನಲ್ಲ ಅವನು ಒಂಥರಾ ಮುಸುರಿ ಕೃಷ್ಣಮೂರ್ತಿಯ ಸ್ವಭಾವದವನು. ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಚಂದ್ರಶೇಖರ್ ನಮ್ಮನ್ನು ನೋಡಿ ನಕ್ಕರೂ ಈ ಮನುಷ್ಯ ನಗುವುದಿಲ್ಲ - ಎಲ್ಲಿ ಬಾಯಿ ತುಂಬಿಕೊಂಡ ಹಲ್ಲುಗಳು ಉದುರಿಬಿಡುತ್ತವೋ ಎಂಬಂತೆ ಯಾವಾಗಲೂ ಮುಖವನ್ನು ಗಂಟು ಹಾಕೇ ಇರುತ್ತಿದ್ದ. ನಾನು ಬಹಳ ಸಮಾಲೋಚನೆ ಮಾಡಿ ಈ ಸಂಕಷ್ಟದಿಂದ ಹೊರಬರಲು ಉಪಾಯವೊಂದನ್ನು ರೂಪಿಸಿದೆ, ಅದರ ಪ್ರಕಾರ ನನ್ನ ಫ್ಯಾಕ್ಸ್‌ನಲ್ಲಿ ಬಂದಿದ್ದ ಆರ್ಡರ್‌ನ್ನು ಹಿಡಿದುಕೊಂಡು ಮಾರನೇ ದಿನವೆ ಕಂಪನಿಯ ಷಟಲ್‌ನ್ನು ಹತ್ತಿ ಕೋಡಂಬಾಕ್ಕಂ ಆಫೀಸಿಗೆ ಬಂದೆ. ಹೆಡ್ ಅಫೀಸಿನಲ್ಲಿ ಚಂದ್ರಶೇಖರ್ ಅವರ ಸೆಕ್ರೆಟರಿ ನನ್ನನ್ನು ಏನು ಮಾಡಿದರೂ ಅಪಾಯಿಂಟ್‌ಮೆಂಟ್ ಕೊಡಲೊಲ್ಲಳು - ಅವಳಿಗೆ ಕಾಲಿಗೆ ಬೀಳುವಂತೆ ಬೇಡಿಕೊಂಡರೂ ಜುಪ್ಪಯ್ಯಾ ಎನ್ನಲಿಲ್ಲ, 'ಎರಡೇ ನಿಮಿಷ ಅವರ ಹತ್ತಿರ ಮಾತನಾಡಿ ಹೊರಬರುತ್ತೇನೆ' ಎಂದು ದೈನ್ಯದಿಂದ ಕೇಳಿದರೂ ಆಕೆ ಒಪ್ಪಲೇ ಇಲ್ಲ, ಅದೇ ಸಮಯಕ್ಕೆ ಎಲ್ಲಿಗೋ ಹೊರಟುನಿಂತಂತೆ ಕಂಡು ಬಂದ ಚಂದ್ರಶೇಖರ್ ಅವರೇ ತಮ್ಮ ಆಫೀಸಿನಿಂದ ಹೊರಗೆ ಬಂದರು, ನಾನು ಸ್ಯಾಲ್ಮನ್‌ಗೆ ಕಾಯುತ್ತಿದ್ದ ಕರಡಿಯಂತೆ ಬಂದ ಅವಕಾಶವನ್ನು ಗಪ್ಪನೆ ಹಿಡಿದುಕೊಂಡು, 'ನಿಮ್ಮಲ್ಲಿ ಒಂದು ಮುಖ್ಯ ವಿಷಯವನ್ನು ಮಾತನಾಡಬೇಕು, ಒಂದು ನಿಮಿಷ ಸಮಯವಿದೇಯೇ?' ಎಂದು ಬಿಟ್ಟೆ, ಇದ್ದುದರಲ್ಲಿಯೇ ಬೆಳ್ಳಗಿದ್ದ ನನ್ನ ಬಿಳಿ ಅಂಗಿಯೋ, ಮುಖದ ಮೇಲೆ ಮನೆ ಮಾಡಿದ್ದ ಕಾತರತೆಯೋ ಮತ್ತೇನೋ ಕ್ಲಿಕ್ ಆಗಿ 'ಸರಿ' ಎಂದು ಬಿಟ್ಟರು, ನಾನು ಅವರ ಜೊತೆಯಲ್ಲಿ ಒಳಗೆ ಹೋದವನು,

'ನಿಮ್ಮಲ್ಲಿ ಮೂರು ವಿಷಯಗಳನ್ನು ಹೇಳುವುದಕ್ಕಿದೆ:
- ನನ್ನ ತಂದೆಯವರು ತೀರಿಕೊಂಡಿದ್ದಾರೆ, ನನಗೆ ಮನೆಯಲ್ಲಿ ತುಂಬಾ ಜವಾಬ್ದಾರಿಯಿದೆ
- ನನ್ನ ಕೈಯಲ್ಲಿ ಅಟ್ಲಾಂಟಾದಿಂದ ಕೆಲಸಕ್ಕೆ ಬಂದು ಸೇರಿಕೊಳ್ಳುವಂತೆ ಅಪಾಯಿಂಟ್‌ಮೆಂಟ್ ಆರ್ಡರು ಕಳಿಸಿರುವುದಿದೆ ನೀವೇ ನೋಡಿ (ಎಂದು ಮುದುರಿರುವ ಪತ್ರವನ್ನು ಅವರಿಗೆ ಕೊಟ್ಟು)
- ಕೇಳಂಬಾಕ್ಕಂನಲ್ಲಿ ನನ್ನ ಪೇಪರುಗಳನ್ನು ಕೊಡುತ್ತಿಲ್ಲ' ಎಂದೆ.

ಚಂದ್ರಶೇಖರ್ ಅವರು ಒಂದೆರಡು ಚಿಕ್ಕ ಪ್ರಶ್ನೆಗಳನ್ನು ಕೇಳಿದರೇ ಹೊರತು ಮತ್ತೆನನ್ನೂ ಮಾತನಾಡಲಿಲ್ಲ, ಆ ಅಪಾಯಿಂಟ್‌ಮೆಂಟ್ ಪತ್ರವನ್ನು ಒಮ್ಮೆ ಓದಿ, ಅದರ ಮಗ್ಗುಲನ್ನು ತಿರುಗಿಸಿ 'ಇವರ ಪೇಪರುಗಳನ್ನು ರಿಲೀಸ್ ಮಾಡಿ' ಎಂದು ಕೇಳಂಬಾಕ್ಕಂ ಕ್ಲರ್ಕಿನ ಹೆಸರಿಗೆ ಷರಾ ಬರೆದುಬಿಟ್ಟರು! ನಾನು ಮತ್ತೆ-ಮತ್ತೆ ಥ್ಯಾಂಕ್ಯೂಗಳನ್ನು ಹೇಳಿ ಅಲ್ಲಿಂದ ಹೊರಬಂದೆ. ಸೆಕ್ರೆಟರಿ 'ಏನೋ ನಡೆಯಬಾರದು ನಡೆದುಹೋಯಿತೋ' ಎನ್ನುವಂತೆ ನನ್ನ ಸಂಭ್ರಮವನ್ನು ನೋಡಿ ಕಣ್ಣನ್ನು ಕಿರಿದುಮಾಡಿಕೊಂಡಳು.

***

ಕೇಳಂಬಾಕ್ಕಂ ಷಟಲ್ ಬಸ್ಸು ಹತ್ತಿದ ನನ್ನ ಸಂತೋಷ ಹೇಳತೀರದು - ಯಾರೊಡನೆಯೂ ಈ ವಿಷಯವನ್ನು ಹೇಳದೇ ದಾರಿಯುದ್ದಕ್ಕೂ ಇಲ್ಲಿನ ಕ್ಲರ್ಕ್‌ಗೆ ಹೇಗೆ ಮಾತನಾಡಿಸಬೇಕು ಎಂದುಕೊಳ್ಳುತ್ತಲೇ ಬಂದೆ, ಚಂದ್ರಶೇಖರ್ ಅವರು ಷರಾ ಬರೆದುಕೊಟ್ಟ ಪತ್ರದ ಫೋಟೋಕಾಪಿಯೊಂದನ್ನು ತೆಗೆದು ನನ್ನ ಬಳಿ ಇಟ್ಟುಕೊಂಡು, ಬಂದು ಸ್ವಲ್ಪ ಹೊತ್ತಿನಲ್ಲಿ ಅವನ ಕಛೇರಿಗೆ ನುಗ್ಗಿ, ಒರಿಜಿನಲ್ ಅನ್ನು ಆ ಕ್ಲರ್ಕಿನ ಮುಂದೆ ತೋರಿಸಿದೆ, ಅವನು ಅದನ್ನು ಎರಡು ಮೂರು ಬಾರಿ ತಿರುತಿರುಗಿಸಿ ನೋಡಿದವನು ಮುಖದ ಬಣ್ಣವನ್ನೇ ಬದಲಾಯಿಸಿಕೊಂಡು ತೀರಾ ಸಪ್ಪಗಾಗಿ ಬಿಟ್ಟ, ಇನ್ನೂ ಹುಡುಗನಾಗಿದ್ದುದರಿಂದ ಹಾರ್ಟ್ ಅಟ್ಯಾಕ್ ಆಗಲಿಲ್ಲ (ನನ್ನ ಪುಣ್ಯ), ಸುಮಾರು ಹೊತ್ತು ಮೌನವಾಗಿ ಯೋಚಿಸಿದವನೇ ಏನೂ ಮಾತನ್ನಾಡದೇ ನನ್ನ ಪೇಪರುಗಳನ್ನೂ, ಮೊದಲೇ ಸಹಿ ಹಾಕಿಸಿಕೊಂಡ ಬಾಂಡಿನ ನಕಲನ್ನು ತಾನಿಟ್ಟುಕೊಂಡು ಒರಿಜಿನಲ್ ಅನ್ನು ನನಗೆ ಕೊಟ್ಟ. 'ಯಾರಿಗೂ ಹೇಳಬೇಡ' ಎಂದು ಹೆದರಿಕೆಯ ಎಚ್ಚರಿಕೆಯನ್ನು ನೀಡುವುದು ಮರೆಯಲಿಲ್ಲ.

ಹೀಗೆ ಮದ್ರಾಸಿನಿಂದ ಬಿಡುಗಡೆ ನೀಡಿದ ಅಟ್ಲಾಂಟ ಕಂಪನಿಯನ್ನು ನಾನು ಸೇರಿಕೊಳ್ಳಲಿಲ್ಲ, ಇನ್ನೂ ಒಂದೆರಡು ದಿನಗಳನ್ನು ಕಳೆದರೆ ಮತ್ತೇನಾದರೂ ಆಫರ್ ಬರುತ್ತವೇನೋ ಎಂದು ನಿರೀಕ್ಷಿಸುತ್ತಿದ್ದವನಿಗೆ ಬಾಂಬೆಯ ಡೇಟಾ ಮ್ಯಾಟಿಕ್ಸ್ ಕಂಪನಿಯನ್ನು ಸೇರಿ ಬಾಂಬೆಯ ಬದುಕನ್ನು ನೋಡುವಂತಾಯಿತು - ಅದರ ಬಗ್ಗೆ ಮುಂದೆಲ್ಲಾದರೂ ಬರೆಯುತ್ತೇನೆ.

***

ನನ್ನಲ್ಲಿಯ ಈ ಅವಕಾಶವಾದಿತನ, ಸುತ್ತಲನ್ನು ಸ್ವಂತದ ಉಪಯೋಗಕ್ಕೆ ಬಗ್ಗಿಸಿಬಿಡುವ ಬುದ್ಧಿ ಎಲ್ಲಿಂದ ಬಂದಿತೋ ಎಂದು ಎಷ್ಟು ತಲೆ ತುರಿಸಿಕೊಂಡರೂ ಇಂದಿಗೂ ತಿಳಿದಿಲ್ಲ - ಆದರೆ, ಇವುಗಳೆಲ್ಲದರ ಹಿಂದೆ ತಂದೆಯನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡಿದ್ದೂ, ಬಡತನದ ಬೇಗೆಯಲ್ಲಿ ಬೆಂದಿದ್ದೂ ಇವೆಲ್ಲವೂ ಸಾಕಷ್ಟು ಪರಿಣಾಮವನ್ನಂತೂ ಬೀರಿವೆ.

Thursday, May 18, 2006

ಬನಾರಸ್ಸಿನ ಬದುಕು - ಭಾಗ ೧

ನಮ್ಮೂರು ಆನವಟ್ಟಿಯನ್ನು ಬಿಟ್ಟರೆ, ನನಗೆ ಬದುಕಿನಲ್ಲಿ ಹಲವು ದರ್ಶನಗಳನ್ನು ಮಾಡಿಸಿದ ಊರು ಬನಾರಸ್, ಅಲ್ಲಿದ್ದದ್ದು ಕೇವಲ ಹನ್ನೆರಡೇ ತಿಂಗಳಾದರೂ ಅದು ನನ್ನ ಮಟ್ಟಿಗೆ ಬಹಳ ದೊಡ್ಡದು. ಶಿವಮೊಗ್ಗದಿಂದ ಕಣ್ಣಿನಲ್ಲಿ ಹಲವು ಆದರ್ಶಗಳನ್ನು ತುಂಬಿಕೊಂಡು ಬೆನ್ನಿನ ಮೂಟೆಯ ತುಂಬಾ ಸಂಶೋಧನೆ ನಡೆಸಬೇಕು ಎನ್ನುವ ಉತ್ಸಾಹ ಹೇರಿಕೊಂಡು ಮುಗಿಲಿಗೆ ಮುಖ ಮಾಡಿಕೊಂಡಿದ್ದ ನನ್ನನ್ನು ಭೂಮಿಗೆ ತಂದಿದ್ದೇ ಬನಾರಸ್ಸಿನ ಬದುಕು. ಅಲ್ಲಿ ಸಿಕ್ಕ ಹೊಸ ಚೇತನ, ಹುರುಪು ಹಾಗೂ ನಾನು ಬೇರೆಯವರನ್ನು ನೋಡುವ ರೀತಿ ಹಾಗೂ ನನ್ನನ್ನು ಬೇರೆಯವರು ನೋಡುವ ಬಗೆ ಎಲ್ಲವೂ ಬದಲಾದವು.

***

ನಾನು ಅಲ್ಲಿ ಮೊದಲು ಎದುರಿಸಿದ ಸಂಕಷ್ಟವೆಂದರೆ ಇರುವುದಕ್ಕೊಂದು ಹಾಸ್ಟೆಲ್ ಸೀಟನ್ನು ಪಡೆದುಕೊಳ್ಳುವುದು. ಅಲ್ಲಿ ಹಾಸ್ಟೆಲ್ ಸೀಟುಗಳನ್ನು ಎಂ. ಎಸ್ಸಿ.ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತೀರ್ಮಾನಿಸುತ್ತಿದ್ದರು. ಆದಿನ ನಾನು ನಮ್ಮ ಡಿಪಾರ್ಟ್‌ಮೆಂಟಿನಲ್ಲಿ ಪ್ರಕಟವಾದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲವಾದ್ದರಿಂದ - ಏನೋ ಕಣ್ದೋಷದಿಂದಾಗಿ ತಪ್ಪಾಗಿರಬಹುದೇನೋ ಎಂದು ಹೆಡ್‌ಕ್ಲರ್ಕ್ ತಿವಾರಿಯವರನ್ನು ಕೇಳಿದ್ದಕ್ಕೆ ಅವರನ್ನು ಕೇಳಿ ಎಂದು ಮೂಲೆಯಲ್ಲಿ ಮೂಗಿನ ಮೇಲೆ ಕನ್ನಡಕವನ್ನಿರಿಸಿ ಯಾವುದೋ ಫೈಲಿನಲ್ಲಿ ತಲ್ಲೀನರಾದ ಶ್ರೀವಾತ್ಸವನನ್ನು ತೋರಿಸಿದ್ದರು. ಶ್ರೀವಾತ್ಸವ 'ಕಾಹೋ' ಎಂದು ನನ್ನನ್ನು ನೋಡಿ, ಹಾಸ್ಟೆಲ್ ನಲ್ಲಿ ಸೀಟು ಸಿಗದ ನನ್ನ ಹೆಸರನ್ನು ಹುಡುಕತೊಡಗಿದರು, ಸ್ವಲ್ಪ ಹೊತ್ತು ಹುಡುಕಿದ ಮೇಲೆ ಅವರು ನನ್ನ ಅಂಕಗಳು ಕಡಿಮೆ ಇರುವುದರಿಂದ ನನಗೆ ಹಾಸ್ಟೆಲ್ ಸೀಟು ಸಿಕ್ಕಿಲ್ಲವೆಂದು ಹೇಳಿದರು. ನಾನು ಕುತೂಹಲಕ್ಕೆ ಯಾರು ಯಾರಿಗೆ ಸೀಟು ಎಷ್ಟು ಅಂಕಗಳಿಗೆ ಸಿಕ್ಕಿದೆ ಎಂದು ನೋಡಲು ಹೋದರೆ ಏನಾಶ್ಚರ್ಯ - ಆ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದವನೂ ಎಂಭತ್ತು ಪರ್ಸೆಂಟುಗಳಿಗಿಂತ ಹೆಚ್ಚಿಗೆ ತೆಗೆದಿದ್ದ - ಉತ್ತರ-ದಕ್ಷಿಣಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನನಗೆ ಆದ ಮೊದಲ ಪಾಠ. ನಮ್ಮ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನನ್ನ ಬ್ಯಾಚಿನಲ್ಲಿ ಮೊದಲ ರ್‍ಯಾಂಕು ೬೫ ಪರ್ಸೆಂಟಿಗೆ ಬಂದಿತ್ತು, ನನ್ನದು ಅದರಿಂದ ಕೆಲವು ಅಂಕಗಳು ಕಡಿಮೆ ಅಷ್ಟೇ. ಅಂದರೆ ಬನಾರಸ್ಸಿನ ನಿಯಮದ ಪ್ರಕಾರ ನನ್ನ ಮೈಸೂರಿನಲ್ಲಿ ಮೊದಲ ರ್‍ಯಾಂಕ್ ತೆಗೆದವರಿಗೂ ಸೀಟು ಸಿಗುವುದಿಲ್ಲ, ಇದು ಯಾವ ನ್ಯಾಯ? ಅಲ್ಲದೇ ಅಲ್ಲಿಯ ಜೋನ್‌ಪುರ, ಬಾಗಲ್‌ಪುರ ಮುಂತಾದ ಕಡೆಗಳಿಗಿಂತ ಬಂದ ವಿದ್ಯಾರ್ಥಿಗಳಿಗಿಂತಲೂ ಶಿವಮೊಗ್ಗದಿಂದ ಒಬ್ಬನೇ ಹೋದ ನನಗೆ ಹಾಸ್ಟೆಲ್ ರೂಮಿನ ಅಗತ್ಯ ಹೆಚ್ಚಿತ್ತು. ಆದರೆ ಪರಿಸ್ಥಿತಿ ಹೀಗಿರುವಾಗ ತಿವಾರಿಯಾಗಲಿ, ಶ್ರೀವಾಸ್ತವರಾಗಲೀ ಏನೂ ಮಾಡಲು ಸಾಧ್ಯವಿರಲಿಲ್ಲ.

ಸರಿ, ಕನ್ನಡ ಚಲನಚಿತ್ರಗಳಲ್ಲಿ ಹೀರೋ-ಹೀರೋಯಿನ್ ಉತ್ತರ ಭಾರತಕ್ಕೆ ಪ್ರವಾಸಕ್ಕೆ ಹೋದಾಗಲೆಲ್ಲ ಕನ್ನಡ ಮಾತನಾಡುವವರು ಸಿಗುವಂತೆ ನನಗೂ ಬನಾರಸ್ಸಿನ ಕನ್ನಡ ಪೀಠದಲ್ಲಿ ಸಂಶೋಧನೆ ಮಾಡುತ್ತಿದ್ದ ಆಯನೂರಿನ ಹತ್ತಿರದ ಮುದ್ದೇನಹಳ್ಳಿಯ ಕುಮಾರ್‌ರ ಪರಿಚಯವಾಯಿತು. ಅವರು ಕ್ಯಾಂಪಸ್ಸಿನಿಂದ ಹೊರಗೆ ಸ್ವಲ್ಪ ದೂರದಲ್ಲೇ ಒಂದು ಸಣ್ಣ ಕೊಠಡಿಯನ್ನು ಬಾಡಿಗೆಗೆ ಹಿಡಿದಿದ್ದರು, ಹಾಸ್ಟೆಲ್ ಸೀಟು ಸಿಗುವವರೆಗೆ ಅವರ ಜೊತೆಯಲ್ಲಿ ನಾನಿರಲು ಅವರು ಒಪ್ಪಿಗೆ ಕೊಟ್ಟಿದ್ದು ಎಂದೂ ಮರೆಯಲಾರದಂತಹ ಸಂಗತಿ. ಕುಮಾರ್ ಅವರ ಒಡನಾಟದಲ್ಲಿ ಇನ್ನುಳಿದ ಕನ್ನಡಿಗರ ಪರಿಚಯವೂ ಆಯಿತು, ಹಾಗೇ ಬನಾರಸ್ಸಿನ ಒಳ್ಳೆಯ-ಕೆಟ್ಟ ವಿಷಯ-ವಸ್ತುಗಳಿಗೆಲ್ಲ ಒಂದು ಕ್ರಾಷ್ ಕೋರ್ಸ್ ಸಿಕ್ಕಹಾಗಾಯಿತು.

***

ಬನಾರಸ್ಸಿನ ವಿಷಯ ಹೇಳಿ ಬಿಹಾರಿಗಳ ಬಗ್ಗೆ ಬರೆಯದಿದ್ದರೆ ರಾಮಾಯಣದಲ್ಲಿ ರಾಮನನ್ನೇ ಬಿಟ್ಟಂತೆ, ನನ್ನ ಪ್ರಕಾರ ಬಿಹಾರಿಗಳಲ್ಲಿ ಕೇವಲ ಎರಡೇ ಎರಡು ತರಹದ ಜನಗಳು - ಅವರು ಒಂದೇ ಶುದ್ಧ ಶೂನ್ಯರು ಅಥವಾ ನೂರಕ್ಕೆ ನೂರು! ನನ್ನ ಜೊತೆಯಲ್ಲಿ ಸಂಶೋಧನೆಗಳಲ್ಲಿ ತೊಡಗಿದವರೆಲ್ಲ ಮಹಾ ಬುದ್ಧಿವಂತರೆಂದೇ ಹೇಳಬೇಕು - ಬಿಹಾರಿಗಳನ್ನು ಬಡವರು ಎಂದು ತಿಳಿದುಕೊಂಡಿದ್ದರೆ ನೀವು ಅದರ ಬಗ್ಗೆ ಮತ್ತೊಮ್ಮೆ ಯೋಚಿಸಿ ಏಕೆಂದರೆ ನಾನು ನೋಡಿದ ಬಿಹಾರಿಗಳಲ್ಲಿ ಕೆಲವರು ಹೆಚ್ಚೂ ಕಡಿಮೆ ಶಿವಮೊಗ್ಗವನ್ನೇ ಖರೀದಿಮಾಡಬಲ್ಲಂತಹವರಿದ್ದರು.

ಬನಾರಸ್ಸಿನ ಮೊದಲ ಕೆಲಸದ ದಿನವೇ ಸತ್ಯದ ದರ್ಶನವಾಯಿತು - ನಮ್ಮ ಪ್ರೊಫೆಸರ್, ಯಶವಂತ ಸಿಂಗ್, ಪಾಲಿಮರ್ ಥಿಯರಿಯಲ್ಲಿ ಜಗತ್ತಿನಾದ್ಯಂತ ಹೆಸರು ಗಳಿಸಿದ ಮನುಷ್ಯ, ಕೋಟಿ ರೂಪಾಯಿಕೊಟ್ಟರೂ ಬಗ್ಗದಂತವರು - ಅವರು ನನ್ನನ್ನು ಕೋಣೆಗೆ ಕರೆದು ಹೇಳಿದರು - 'ನೋಡು, ಸಂಶೋಧನೆ ಮಾಡುವುದೂ-ಬಿಡುವುದೂ ನಿನ್ನ ಕೈಯಲ್ಲೇ ಇರೋದು, ನಿನಗೇನಾದರೂ ಐಡಿಯಾಗಳಿದ್ದರೆ ಅದಕ್ಕೆ ನಾನು ಮಾರ್ಗದರ್ಶನ ಮಾಡುತ್ತೆನೇ ವಿನಾ ನೀನು ನನ್ನ ಬಳಿ ಇದ್ದ ಮಾತ್ರಕ್ಕೆ ನಿನ್ನ ಪಿ.ಎಚ್.ಡಿ. ಆಗುತ್ತದೆ ಎಂಬ ಭ್ರಮೆಯನ್ನು ಮಾತ್ರ ಇಟ್ಟುಕೊಳ್ಳಬೇಡ!' ಆದರಲ್ಲಿ ಅವರ ತಪ್ಪೆನೂ ಇಲ್ಲ, ಅವರನ್ನು ತಪ್ಪಾಗಿ ಅರ್ಥೈಸಿಕೊಂಡ ರಾಮ್‌ಸಿಂಗ್‌ನಂಥವರಿಗೆ ಪಿ.ಎಚ್.ಡಿ. ಮುಗಿಸಲು ಸುಮಾರು ಎಂಟು ವರ್ಷದ ಮೇಲೇ ಬೇಕಾಯಿತು. ನಾನು ಕೆಲಸಕ್ಕೆ ವರದಿ ಮಾಡಿಕೊಂಡ ಮೊದಲನೇ ದಿನವೇ ಹೀಗೆ ಕೇಳಬೇಕಾಯಿತಾದ್ದರಿಂದ, ನಾನು ಆ ಕೂಡಲೇ 'ಇಲ್ಲಾ ನಾನು ವಾಪಾಸ್ಸು ಹೊರಡುತ್ತೇನೆ' ಎಂದು ಹೊರಡಲು ಸಾಧ್ಯವಿರದಿದ್ದುದರಿಂದ ಅಲ್ಲೇ ಉಳಿದು ಸಂಶೋಧನೆಯನ್ನು ಮುಂದುವರಿಸದೇ ಬೇರೆ ವಿಧಿ ಇರಲಿಲ್ಲ.

ಆದರೆ ಇದ್ಯಾವ ನ್ಯಾಯ, ನನ್ನ ಜೊತೆಯಲ್ಲಿ ಇರೋ ಸಂಶೋಧಕ ರಾಮನ್, ಪ್ರೊ. ಶ್ರೀವಾಸ್ತವ ಅವರ ಜೊತೆ ಸಂಶೋಧನೆ ಮಾಡಿದರೆ ವರ್ಷಕ್ಕೊಂದು ಪೇಪರ್ ಪಬ್ಲಿಷ್ ಮಾಡಿ ನಾಲ್ಕು ವರ್ಷಕ್ಕೆಲ್ಲ ಸಂಶೋಧನೆ ಮುಗಿಸಿ ಥೀಸೀಸ್ ಸಬ್‌ಮಿಟ್ ಮಾಡುಬಹುದಾಗಿತ್ತು, ಆದರೆ ರಾಮ್‌ಸಿಂಗ್ ಲೆಕ್ಕಕ್ಕೆ ಹೋಲಿಸಿದರೆ ನಾನು ಎಂಟು ವರ್ಷವಾದರೂ ಥೀಸೀಸ್ ಇರಲಿ ಮೂರು ಪೇಪರ್ ಅನ್ನೂ ಪಬ್ಲಿಷ್ ಮಾಡಲಾಗುವುದಿಲ್ಲವಲ್ಲಾ? ಹೀಗೆ ನಾನು ಶಿವಮೊಗ್ಗದಿಂದ ಹೊತ್ತುಕೊಂಡು ಹೋದ ಕನಸುಗಳು ನುಚ್ಚುನೂರಾದವು, ಬನಾರಸ್ಸಿನಲ್ಲಿ ಒಮ್ಮೆ ಒಬ್ಬ ಪ್ರೊಫೆಸರರ ಅಡಿ (ಅದೂ ಯಶವಂತ್ ಸಿಂಗರ ಜೊತೆ) ಸೇರಿದರೆ ಮತ್ಯಾರೂ ತೆಗೆದುಕೊಳ್ಳುತ್ತಿರದಿದ್ದುದರಿಂದಲೂ, ನನಗೆ ಕಂಪ್ಯೂಟರ್ ಸಿಮಿಲೇಷನ್‌ನಲ್ಲಿ ಸಂಶೋಧನಾ ಮಟ್ಟದ ಐಡಿಯಾಗಳು ಇರದಿದ್ದುದರಿಂದಲೂ, 'ಛೇ, ಬನಾರಸ್ಸಿಗೆ ಬಂದು ತಪ್ಪು ಮಾಡಿದೆನೇ..., ಈಗ ಏನು ಮಾಡುವುದು' ಎಂದು ಎಷ್ಟೋ ರಾತ್ರಿಗಳನ್ನು ಯೋಚಿಸುತ್ತಾ ಕಳೆದಿದ್ದೇನೆ. ಮೊಟ್ಟ ಮೊದಲನೇ ಬಾರಿಗೆ ನಾನು ಶಿವಮೊಗ್ಗದಲ್ಲಿ ಬಿಟ್ಟು ಬಂದ ಅರೆಕಾಲಿಕ ಉಪನ್ಯಾಸಕನ ಕೆಲಸಗಳು ಬಹಳ ಅಪ್ಯಾಯಮಾನವಾಗಿ ಕಂಡುಬಂದವು. ಭಾರತ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿಯಲ್ಲಿ ಸಂಶೋಧನೆಗೆ ಸೇರಿಕೊಂಡಿದ್ದೇನೆಂದು ಅದ್ದೂರಿಯಾಗಿ ಬಿಟ್ಟುಬಂದವನಿಗೆ ಶಿವಮೊಗ್ಗಕ್ಕಾಗಲೀ, ಬೆಂಗಳೂರು-ಮೈಸೂರಿಗಾಗಲೀ ಹಿಂತಿರುಗಿ ಹೋಗುವ ಯಾವ ಆಲೋಚನೆಗಳು ಬಂದರೂ ಅವು ಬಂದಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದವು.

***

ಭಾರತದಲ್ಲಿ ಪ್ರತಿವರ್ಷ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದುವವರಲ್ಲಿ ಹೆಚ್ಚಿನ ಪಾಲು ಉತ್ತರ ಪ್ರದೇಶ ಹಾಗು ಬಿಹಾರಿನವರದ್ದು. ಅಲ್ಲದೇ ನಮ್ಮ ದೇಶಕ್ಕೆ ಉತ್ತರಪ್ರದೇಶ ಹಾಗೂ ಬಿಹಾರಿಗಳು ನೀಡಿರುವಷ್ಟು ದೇವ-ದೇವತೆಗಳನ್ನೂ, ರಾಜಕಾರಣಿಗಳನ್ನೂ ಮತ್ಯಾವ ರಾಜ್ಯವೂ ನೀಡಿಲ್ಲ. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಬಿಹಾರಿಗಳು ಏಕೆ ಹೆಚ್ಚು ಜನ ಪಾಸಾಗುತ್ತಾರೆ ಎಂದು ಪ್ರಶ್ನಿಸಿಕೊಂಡರೆ ಅದಕ್ಕುತ್ತರವಾಗಿ 'ಅವರು ಕ್ರಮಬದ್ಧವಾಗಿ ಅಭ್ಯಾಸ ಮಾಡುತ್ತಾರೆ ಹಾಗೂ ಕಷ್ಟ ಪಡುತ್ತಾರೆ' ಎಂದು ಹೇಳಬಹುದು.

ನನ್ನ ಜೊತೆ ಇದ್ದ ಬಿಹಾರಿಗಳು ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ ಪದವೀದರರೇ, ಪದವಿಯಾದ ತರುವಾಯ ಸ್ನಾತಕ್ಕೋತ್ತರ ಪದವಿಗಳಿಗೆ (ಎಮ್.ಎ., ಎಂ.ಎಸ್ಸಿ. ಇತ್ಯಾದಿ) ಬನಾರಸ್ಸಿನ ವಿಶ್ವವಿದ್ಯಾನಿಲಯದಲ್ಲಿ ಅರ್ಜಿ ಗುಜರಾಯಿಸುತ್ತಿದ್ದರು - ನಾನು ತಿಳಿದ ಮಟ್ಟಿಗೆ ಬಿಹಾರ ಅಥವಾ ಒರಿಸ್ಸಾದಲ್ಲಿ ತರಗತಿಯ ಅತಿ ಹೆಚ್ಚಿನ ಅಂಕ ತೆಗೆದವರು ೯೯ ರ ಆಸುಪಾಸಿನಲ್ಲಿದ್ದರೆ, ಅತಿಕಡಿಮೆ ಅಂಕ ತೆಗೆದವರು ೯೦ ರ ಹತ್ತಿರಹತ್ತಿರವಿರುತ್ತಿದ್ದರು (ಇಂಥವರ ನಡುವೆ ಮೈಸೂರಿನ ಪದವೀದರರು ಸುಳಿದು ಬಿಡಲೂ ಯೋಗ್ಯರಲ್ಲ - ಇನ್ನು ಹಾಸ್ಟೆಲ್ ಸೀಟು ಹೇಗೆ ಸಿಕ್ಕೀತು). ನನಗೆ ಆಶ್ಚರ್ಯವಾಗುವಂತೆ ಪ್ರತಿಯೊಬ್ಬ ಬಿಹಾರಿಯೂ (ಉತ್ತರಪ್ರದೇಶದವರೂ ಸಹಾ) ಸ್ನಾತಕ್ಕೋತ್ತರ ವಿಭಾಗಕ್ಕೆ ಸೇರಲು ಆಯ್ದುಕೊಳ್ಳುತ್ತಿದ್ದುದು ಸುಲಭವಾದ ವಿಷಯಗಳಾದ ಗಾಂಧೀಯನ್ ಸ್ಟಡೀಸ್, ಕ್ರಿಶ್ಚಿಯಾನಿಟಿ, ಸಮಾಜಶಾಸ್ತ್ರ, ಇತ್ಯಾದಿ...ಅವರು ಹಾಗೆ ಮಾಡುತ್ತಿದ್ದುದು ಕೇವಲ ಹಾಸ್ಟೆಲಿನ ಸೀಟನ್ನು ಗಳಿಸುವುದಕ್ಕಾಗಿ ಮಾತ್ರ. ಒಮ್ಮೆ ಹಾಸ್ಟೆಲ್ ಸೀಟು ಸಿಕ್ಕ ನಂತರ ಈ ವಿದ್ಯಾರ್ಥಿಗಳಲ್ಲಿ ಎರಡು ಭಾಗಗಳಾಗುತ್ತಿದ್ದವು - ಒಂದು ಗುಂಪು ಬ್ಯಾಂಕು, ಮತ್ತಿತರ ಸುಲಭ ಪರೀಕ್ಷಗಳನ್ನು ಪಾಸು ಮಾಡುವುದಕ್ಕೆ ಗಮನ ಹರಿಸಿದರೆ, ಇನ್ನು ಎರಡನೆಯ ಗುಂಪು ಸಿವಿಲ್ ಸರ್ವೀಸ್ (ಮುಖ್ಯವಾಗಿ ಐ.ಎ.ಎಸ್.) ಪರೀಕ್ಷೆಗಳತ್ತ ಗಮನ ಹರಿಸುತ್ತಿತ್ತು. ಇನ್ನು ಇವರ ಪದವಿ ಬ್ಯಾಕ್‌ಗ್ರೌಂಡ್ ಯಾವುದೇ ಇದ್ದರೂ ಇವರು ಐ.ಎ.ಎಸ್. ಪರೀಕ್ಷೆಯಲ್ಲಿ ಆಯ್ದುಕೊಳ್ಳುತ್ತಿದ್ದ ವಿಷಯ ಭೂಗೋಳ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತ್ಯಾದಿ...ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳು ಕಡಿಮೆ. ಹೀಗೆ ಐ.ಎ.ಎಸ್. ಪಾಸು ಮಾಡುವ ಹಠ ತೊಟ್ಟ ಗುಂಪು ಮಾಡುತ್ತಿದ್ದ ಮುಖ್ಯ ಕೆಲಸಗಳು ಇಷ್ಟು:

- ತಮ್ಮ ಹಳ್ಳಿಗಳಿಂದ ಒಬ್ಬ ಅಡುಗೆ ಮಾಡುವನನ್ನೂ, ಅವನ ಸಹಾಯಕನನ್ನೂ ತಂದು ಹಾಸ್ಟೆಲ್‌ನಲ್ಲಿ ಇಟ್ಟುಕೊಳ್ಳುವುದು
- ಪರೀಕ್ಷೆ ಕಟ್ಟಿದ ಹುಡುಗರೆಲ್ಲರೂ ತಮ್ಮ-ತಮ್ಮ ತಲೆಗಳನ್ನು ನುಣ್ಣಗೆ ಬೋಳಿಸಿಕೊಳ್ಳುವುದು
- ಒಂದು ದಿನ ದೆಹಲಿಗೆ ಹೋಗಿ ತಮಗೆ ಬೇಕಾದ ಪುಸ್ತಕಗಳ ಕಂತೆಯನ್ನು ಹೊತ್ತು ತರುವುದು

ತಾವು ತಲೆ ಬೋಳಿಸಿಕೊಂಡರೆ (ಒಂದು ರೀತಿಯಲ್ಲಿ ಮಿಲಿಟರಿಯಲ್ಲಿ ಮಾಡಿದ ಹಾಗೆ) ಸ್ವಯಂ ದಂಡನೆಗೆ ಸುಲಭವಾಗುತ್ತೆಂತಲೋ ಏನೋ (ಬನಾರಸ್ಸಿನಲ್ಲಿ ನೀವು ಒಂದು ಸೀಜನ್‌ನಲ್ಲಿ ಎಲ್ಲಿ ಹೋದರೂ ತಲೆಬೋಳಿಸಿಕೊಂಡವರು ಕಾಣಸಿಗುತ್ತಾರೆ) ಐ.ಎ.ಎಸ್. ಪರೀಕ್ಷಾರ್ಥಿಗಳು ಮಾಡುವ ಮೊಟ್ಟ ಮೊದಲ ಕೆಲಸ ಅದಾಗಿತ್ತು. ದೆಹಲಿಗೆ ಹೋಗುವ ಉದ್ದೇಶ ಇಷ್ಟು, ಅಲ್ಲಿ ನೀವು ಐ.ಎ.ಎಸ್. ಪರೀಕ್ಷೆಗೆ ಆಯ್ದುಕೊಂಡ ವಿಷಯಗಳನ್ನು ತಿಳಿಸಿದರೆ ಸಾಕು ಸ್ಪೆಷಲೈಸ್ಡ್ ಪುಸ್ತಕದ ಅಂಗಡಿಗಳು ಸಿಗುತ್ತವೆ. ಇಂತಿಂಥ ಪುಸ್ತಕಗಳನ್ನೆ ತೆಗೆದುಕೊಂಡು ಓದಿ ಎನ್ನುವುದರೆ ಜೊತೆಗೆ ೯೮ ರಲ್ಲಿ ಈ ಪ್ರಶ್ನೆ ಬಂದಿತ್ತು, ೯೬ ರಲ್ಲಿ ಈ ಪ್ರಶ್ನೆಯನ್ನು ಕೇಳಿದ್ದರು, ೯೯ ರಲ್ಲಿ ಗ್ಯಾರಂಟಿ ಈ ಪ್ರಶ್ನೆಯನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ಅನಾಲಿಸೀಸೂ ಸಿಗುತ್ತಿತ್ತು. ಹೀಗೆ ಹೋದ ಹುಡುಗರ ಗುಂಪು ಅವರು ಕಷ್ಟ ಪಟ್ಟು ಹೊತ್ತರೂ ಹೊರಲಾರದಷ್ಟು ಪುಸ್ತಕಗಳನ್ನು ತಂದು ರೂಮಿನಲ್ಲಿ ಸೇರಿಕೊಂಡರೆ ತಿಂಗಳಿಗೊಮ್ಮೆಯೂ ಸೂರ್ಯನಿಗೆ ಮುಖ ತೋರಿಸುತ್ತಿರಲಿಲ್ಲ. ರಾತ್ರೀ-ಹಗಲೂ ಓದಿ-ಓದೀ, ಐ.ಎ.ಎಸ್. ಪರೀಕ್ಷೆಯೇನು ಯಾವ ಪರೀಕ್ಷೆಯನ್ನಾದರೂ ಸುಲಭವಾಗಿ ಪಾಸು ಮಾಡಬಲ್ಲವರಾಗುತ್ತಿದ್ದರು. ಊಟ ತಿಂಡಿಗೆ ಮಹರಾಜ್ (ಅಡುಗೆಯವ) ಹಾಗೂ ಅವನ ಸೇವಕ ಸಹಾಯ ಮಾಡುತ್ತಿದ್ದರು, ದೇಹ ತೀಟೆಗೆ ಗಾಂಜಾ, ಅಫೀಮೂ ದೊರೆಯುತ್ತಿತ್ತು, ಹೆಣ್ಣುಗಳೂ ಬಂದು ಹೋಗುತ್ತಿದ್ದವು, ರೂಮಿನೊಳಗಡೆ ಏನೇನು ಆಗುತ್ತಿತ್ತೋ ಬಿಡುತ್ತಿತ್ತೋ, ಕೊನೆಗೆ ಹೀಗೆ ತಲೆ ಬೋಳಿಸಿ ದೀಕ್ಷೆ ತೆಗೆದುಕೊಂಡವರಲ್ಲಿ ಹೆಚ್ಚಿನ ಜನರಿಗೆ ಇಂಟರ್‌ವ್ಯೂವ್ ಬಂದೇ ಬರುತ್ತಿತ್ತು. ಈ ಸಂದರ್ಶನದ ಹಂತವೇ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಾಗುತ್ತಿತ್ತು, ರಾತ್ರೀ-ಹಗಲು ಯಾವ ರ್‍ಯಾಪಿಡೆಕ್ಸ್ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ತೆಗೆದುಕೊಂಡರೂ, ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸಲು ಇವರಿಗೆಲ್ಲ ಬಹಳ ಸಮಯ ಹಿಡಿಯುತ್ತಿತ್ತು - ಇಂಥಾ ಸಮಯದಲ್ಲಿ ನನ್ನಂತ ದಕ್ಷಿಣದವರ ಸಹವಾಸಕ್ಕೆ ಹೆಚ್ಚು ಜನರು ಮುಗಿಬೀಳುತ್ತಿದ್ದರು ಏಕೆಂದರೆ ನಾವು ಹೇಗೇ ಇದ್ದರೂ ಇಂಗ್ಲೀಷನ್ನಂತೂ ಸುಮಾರಾಗಿ ಮಾತನಾಡುತ್ತಿದ್ದೆವು!

***

ಈ ಬಿಹಾರಿಗಳೆಲ್ಲ ಹೀಗೆ ಐ.ಎ.ಎಸ್. ಎಂದು ಕಷ್ಟ ಪಡುತ್ತಿದ್ದುದಕ್ಕೂ ಒಂದು ಕಾರಣ ಇದೆ - ಐ.ಎ.ಎಸ್. ಪಾಸು ಮಾಡಿದಾಕ್ಷಣ ರಾತ್ರೋ ರಾತ್ರಿ ಹೆಚ್ಚಾಗುತ್ತಿದ್ದ ಅವರ ಬೆಲೆ. ನೀವು ಉತ್ತರ ಭಾರತದ ಮದುವೆಗಳನ್ನು ನೋಡಿದರೆ ಗೊತ್ತಾಗುತ್ತದೆ, ಅವರಲ್ಲಿ ವರದಕ್ಷಿಣೆ ಬಹಳ - ಒಬ್ಬ ಐ.ಎ.ಎಸ್. ಪರೀಕ್ಷೆಯನ್ನು ಕಟ್ಟಿದ ವಿದ್ಯಾರ್ಥಿಯ ಬೆಲೆ ಮೂರು ಕಾಸು, ಅದೇ ಐ.ಎ.ಎಸ್. ಪಾಸಾದರೆ ಮೂರು ಕೋಟಿ! ಹೀಗೆ ಐ.ಎ.ಎಸ್. ಪಾಸಾದವರೆಲ್ಲರೂ ನಗರಗಳಲ್ಲಿರಲು ಇಷ್ಟ ಪಡುತ್ತಿದ್ದುದು ಕಡಿಮೆ, ಏಕೆಂದರೆ ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿಯಾಗಿ ಹೋದರೆ ರಾಜರ ತರಹ ಇರಬಹುದು ಎಂದು.

ಹೀಗೆ ನನ್ನಲ್ಲಿ ಮನೆ ಮಾಡಿದ ಶಿವಮೊಗ್ಗದ ನಯವನ್ನು ಒರಿಸಿ ಅದರಲ್ಲಿ ಬಿಹಾರಿಗಳ ನಾಜೂಕನ್ನು ತುಂಬಲು ಭೂಮಿಕೆಯಾಗಿದ್ದೇ ಬನಾರಸ್ಸು, ಹುಟ್ಟೂರಿನಲ್ಲಿ ಕಲಿಯದ ಬುದ್ಧಿಯನ್ನು ಬದುಕು ಇಲ್ಲಿ ಕಲಿಸಿದೆ, ಹಾಗೂ ಅಲ್ಲಿ ದೊರೆತ ದರ್ಶನದ ಬೆಳಕು ಇನ್ನೂ ನನ್ನ ಕಣ್ಣಲ್ಲಿದೆ. ಇಂಥ ಬಿಹಾರಿಗಳ ನಡುವೆ ಇದ್ದವನಾಗಿ ನಾನೇಕೆ ಐ.ಎ.ಎಸ್. ಓದಲಿಲ್ಲ ಎಂದು ನನಗೇ ಅನ್ನಿಸಿದೆ - ಅದಕ್ಕುತ್ತರ ಸಿಕ್ಕಿದೆ, ಅದನ್ನು ಮುಂದೆ ಎಲ್ಲಾದರೂ ಬರೆಯುತ್ತೇನೆ.

***

ನಾವು ದಕ್ಷಿಣ ಭಾರತದವರು ಸುಖಾ ಇಲ್ಲ, ಬಿಹಾರಿಗಳ ಅರ್ಧದಷ್ಟು ನಾವೇನಾದರೂ 'ಕಷ್ಟ' ಪಟ್ಟಿದ್ದರೆ ಅದರ ಕಥೆಯೇ ಬೇರೆ!

Wednesday, May 17, 2006

ಜ್ಞಾನಪೀಠ ಎಂದರೆ ಸುಮ್ಮನೆಯೇ?

೧೯೯೮ ರಲ್ಲಿ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ನನ್ನ ಇ-ಮೇಲ್ ಅಡ್ರೆಸ್ ಪುಸ್ತಕದಲ್ಲಿರುವ ಕನ್ನಡಿಗ ಹಾಗೂ ಕನ್ನಡಿಗರಲ್ಲದ ಸ್ನೇಹಿತರಲ್ಲಿ ನಾನು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದೆ. ಕೆಲವರು ಶಬಾಷ್ ಎಂದರೆ ಇನ್ನು ಕೆಲವರು 'ಜ್ಞಾನಪೀಠದ ಮೌಲ್ಯವೇ ದೊಡ್ಡದೇ ಹಾಗಾದರೆ...' ಎಂದು ಪ್ರಶ್ನಿಸಿದ್ದರು. ನಮ್ಮ ಕನ್ನಡದ ಪರಂಪರೆಯಲ್ಲಿ ಕೆಲವರಿಗೆ ಈ ಪ್ರಶಸ್ತಿ ಸಿಗಬೇಕೆಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಲಾಬ್ಬಿಯಿಂಗ್ ನಡೆದಿದೆ ಎಂದೂ, ಜ್ಞಾನಪೀಠ ಪ್ರಶಸ್ತಿಗೆ ಹಿಂದಿದ್ದ ಮೌಲ್ಯಗಳಿಲ್ಲ ಎಂತಲೂ ಬೇಕಾದಷ್ಟು ಕಡೆ ಓದಿದ್ದೇನೆ ಆದರೂ ನಮ್ಮಲ್ಲಿಯ ಕವಿ-ಸಾಹಿತಿಗಳನ್ನು ಬಲವಾಗಿ ಮೆಚ್ಚಿಕೊಳ್ಳುವ ನಾನು, ನಮ್ಮ ಸಾಹಿತ್ಯದ ಮಟ್ಟ ಕಡಿಮೆ ಎಂದು ಯಾರೂ ದೂರಿದ್ದನ್ನು ಈವರೆಗೂ ಕೇಳಿಲ್ಲ.

***

ಬೇಂದ್ರೆ, ಕುವೆಂಪುರವರನ್ನು ವ್ಯಕ್ತಿಗತ ಭೇಟಿಯಾಗಿ ಮಾತನಾಡಿಸುವಷ್ಟು ನಾನು ಬೆಳೆದಿರಲಿಲ್ಲ, ಬೇಂದ್ರೆಯವರು ತೀರಿಕೊಂಡಾಗ ಆಗಿನ್ನೂ 'ನಾದಲೀಲೆ'ಯ ಗುಂಗಿಗೆ ಬೀಳುತ್ತಿದ್ದವನು ನಾನು. ನನ್ನ ಅಣ್ಣ ಎಲ್.ಬಿ.ಕಾಲೇಜಿನಲ್ಲಿ ಕನ್ನಡ ಮೇಜರ್ ಓದಿದವನು, ಹಾಗೂ ನನ್ನ ಅಕ್ಕಂದಿರೂ ತಕ್ಕ ಮಟ್ಟಿಗೆ ಕನ್ನಡ ಸಾಹಿತ್ಯವನ್ನು ಓದುತ್ತಿದ್ದವರಾದ್ದರಿಂದ ಪುಸ್ತಕಗಳ ಒಡನಾಟ ನನಗೆ ಸಹಜವಾಗೇ ಇತ್ತು. ನನ್ನ ಅಣ್ಣ ಎಲ್.ಬಿ.ಕಾಲೇಜಿನ ಇಬ್ಬರು ಕನ್ನಡ ಉಪನ್ಯಾಸಕರನ್ನೂ ಬಹಳ ಹಚ್ಚಿಕೊಂಡಿದ್ದ - 'ರ್‍ಏಣುಕಪ್ಪ ಗೌಡರ ಕೈಯಲ್ಲಿ ನಾದಲೀಲೆ ಕೇಳಬೇಕು ಅದರ ಮಜಾನೇ ಬೇರೆ', ಅಥವಾ 'ಪ್ರಭುಸ್ವಾಮಿ ಮಠ್ ಅವರು ಸಖಿಗೀತ ಬಾಳ ಚೆನ್ನಾಗಿ ಮಾಡ್ತಾರೆ' ಅಂತ ಆವಾಗಾವಾಗ್ಗೆ ಹೇಳುತ್ತಲೇ ಇರ್ತಿದ್ದನಾದ್ದರಿಂದ ನನಗೆ ಈ ಪುಸ್ತಗಳಲ್ಲಿ 'ಅಂಥಾದ್ದೇನೈತಿ' ಎಂದು ಕುತೂಹಲ ಮೂಡಿ ಅದನ್ನು ಓದುತ್ತಿದ್ದುದು, ನನ್ನ ಅಣ್ಣನ ನೋಟ್ಸುಗಳನ್ನು ನೋಡುತ್ತಿದ್ದುದು ಇನ್ನೂ ಚೆನ್ನಾಗಿ ನೆನಪಿದೆ.

'ಎಲ್.ಬಿ.ಕಾಲೇಜಿನಲ್ಲಿ ನಾನು ಓದಬೇಕು' ಅನ್ನೋದು ನನ್ನ ಅಣ್ಣ ನನ್ನ ಮೇಲೆ ಇಟ್ಟಿದ್ದ ಆಸೆಗಳಲ್ಲಿ ಒಂದು - ಮುಂದೆ ಗವಾಸ್ಕರ್ ಥರಾ ಆಡಬೇಕು ಎಂದು ಕ್ರಿಕೇಟಿನ ಬಗ್ಗೆ ಎಡಬಿಡದೇ ಕೋಚಿಂಗ್ ನೀಡಿದ್ದೂ ಅಲ್ಲದೇ ಶಾಲೆಯ ಟೂರ್ನಮೆಂಟ್ ಕ್ರಿಕೇಟ್ ಮ್ಯಾಚ್ ಒಂದರಲ್ಲಿ ನಾನು ಬೌಂಡರಿ ಹೊಡೆದರೂ 'ಆ ಬಾಲನ್ನ ಹಂಗ್ ಆಡ್ತಾರಾ?' ಅಂಥ ನನಗೇ ಕಪಾಳಕ್ಕೆ ಬಾರಿಸಿದ ಮನುಷ್ಯಾ ಅವನು! ಫಸ್ಟ್ ಪಿ.ಯು.ಸಿ.ಗೆ ಸೇರಿಸುವಾಗ ನನಗೆ ಮೊದಲ ಭಾಷೆ ಕನ್ನಡ, ಎರಡನೇ ಭಾಷೆ ಇಂಗ್ಲೀಷು ಎಂದೇ ಸೇರಿಸಿದ್ದವನನ್ನು ನಾನು ನನ್ನ ಮೈಸೂರು ಹಿಂದೀ ಪ್ರಚಾರ ಪರಿಷತ್ತಿನ ಪರೀಕ್ಷೆಗಳಿಗೆ ಓದಿ ಹಿಂದಿ ಕಲಿತದ್ದೆಲ್ಲಾ ವೇಷ್ಟ್ ಆಗುತ್ತದೆ ಎಂದು ಹತ್ತಾರು ಬಾರಿ ಬೇಡಿಕೊಂಡ ಮೇಲೆ ಕನ್ನಡದ ಬದಲಿಗೆ ಹಿಂದಿಯನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವ ಪರ್ಮಿಷನ್ ಕೊಟ್ಟಿದ್ದ. ಆದರೆ ರ್‍ಏಣುಕಪ್ಪ ಗೌಡರ ಕನ್ನಡ ಪಾಠದ ಮೇಲೆ ಕುತೂಹಲವಿದ್ದ ನಾನು ಎಷ್ಟೋ ಸಾರಿ ಅವರ ಕನ್ನಡ ತರಗತಿಗಳಲ್ಲಿ 'ಹೊರಗಿನವ'ನಾಗಿ ಕುಳಿತು ಕೇಳಿದ್ದಿದೆ - ಮುಂದೆ ಪ್ರಭುಸ್ವಾಮಿ ಮಠರೂ ಹಾಗೂ ರೇಣುಕಪ್ಪ ಗೌಡರೂ ನನಗೆ ಅಲ್ಲಲ್ಲಿ ಸಹಾಯ ಮಾಡುತ್ತಿದ್ದರು - ನಾನು ನನ್ನ ಕವನಗಳ ಕಟ್ಟೊಂದನ್ನು ಪ್ರಭುಸ್ವಾಮಿ ಮಠರ ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ, ಅದನ್ನು ಅವರು ಓದಿ ಕವನಗಳಲ್ಲಿ ಮೆಚ್ಚಿದ ಹಾಗೂ ಮೆಚ್ಚದ ಅಂಶಗಳನ್ನು ವಿವರವಾಗಿ ಹೇಳಿದ್ದರು. ಅಲ್ಲದೇ, ರೇಣುಕಪ್ಪ ಗೌಡರು 'ದೇವರ ಭಯವೇ ಜ್ಞಾನದ ಆರಂಭ' ಎಂದು ಯಾವುದೋ ತರಗತಿಯಲ್ಲಿ ಹೇಳಿದ್ದನ್ನು ನಾನು ಅವರ ಸ್ಟಾಫ್ ರೂಮಿನಲ್ಲಿ ಪ್ರಶ್ನಿಸಿ ಅವರಿಂದ ಧೀರ್ಘವಾದ ಉತ್ತರಗಳನ್ನು, ವಿವರಣೆಗಳನ್ನು ಪಡೆದಿದ್ದೆ. ಮೊದಲನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ಮುಂದುವರೆಸಿದ್ದು ಎಲ್ಲೂ ನನಗೆ ತೊಂದರೆಕೊಡಲಿಲ್ಲ - ಶಾರ್ಟ್ ಟರ್ಮ್‌ನಲ್ಲಿ ಯೂನಿವರ್ಸಿಟಿಗೆ ಹೆಚ್ಚು ಅಂಕ ಪಡೆದವನೆಂದು ಸಾವಿರಾರು ರೂಪಾಯಿ ವಿದ್ಯಾರ್ಥಿವೇತನ ಬಂದು ಆಗಿನ ಕಾಲದಲ್ಲಿ ಬಹಳ ಅನುಕೂಲವಾಗಿದ್ದೂ ಅಲ್ಲದೇ ಲಾಂಗ್ ಟರ್ಮ್‌ನಲ್ಲಿ ಹಿಂದೀ ಪಾಠ ಮಾಡುತ್ತಿದ್ದ ಸಂಸ್ಕೃತ ಪಂಡಿತರಾದ ವಿ.ಎಮ್. ಶರ್ಮರು ಲೈಫ್ ಲಾಂಗ್ ಮಿತ್ರರಾದರು.

ನಾನು ಸೈನ್ಸ್ ಓದುವುದರ ಬದಲಿಗೆ ಭಾಷೆಯನ್ನೇ ಇನ್ನಷ್ಟು ಓದಿದ್ದರೆ ಎಂದು ಎಷ್ಟೋ ಸಾರಿ ಅನ್ನಿಸಿದೆ, ಏಕೆಂದರೆ ನಾನು ಎಲ್.ಬಿ.ಕಾಲೇಜಿನಲ್ಲಿ ಕಳೆದ ಐದು ವರ್ಷಗಳನ್ನು ನೆನಪಿಗೆ ತಂದುಕೊಂಡಂತೆಲ್ಲ, ರೇಣುಕಪ್ಪ ಗೌಡರು, ಪ್ರಭುಸ್ವಾಮಿ ಮಠರು, ಶರ್ಮರಷ್ಟೆ ನೆನಪಿಗೆ ಬರೋದಲ್ದೇ ಇಂಗ್ಲೀಷ್ ಡಿಪಾರ್ಟ್‌ಮೆಂಟಿನ ಟಿ.ಪಿ.ಅಶೋಕ, ಜಶವಂತ ಜಾದವ್ ಹಾಗೂ ಗುರುರಾವ್ ಬಾಪಟ್ ಇವರೂ ಕೂಡ ಬಹಳ ಹತ್ತಿರದವರಾಗಿ ಕಂಡುಬರುತ್ತಾರೆ. ಟಿ.ಪಿ.ಅಶೋಕ್ ಅವರು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದಿ 'ಎಷ್ಟು ಕೆಟ್ಟದಾಗಿ ಬರೆದಿದ್ದೀಯೆ' ಎಂದು ತೋರಿಸಿದ್ದೂ ಅಲ್ಲದೇ ನಾನು ಯಾವುದೋ ಪ್ರಬಂಧದಲ್ಲಿ 'ಸತ್ಯಕ್ಕೆ ಸನ್ನಿಹಿತವಾದ' ಎಂದು ಬರೆಯುವುದರ ಬದಲಿಗೆ 'ಸತ್ಯಕ್ಕೆ ಹತ್ತಿರವಾದ' ಎಂದು ಬರೆದರೆ ಏನಾಗುತ್ತದೆ ಎಂದು ತಮ್ಮ ಕನ್ನಡಕದೊಳಗಿಂದ ಪಿಳಿಪಿಳಿ ಕಣ್ಣನ್ನು ಬಿಟ್ಟು ಪ್ರಶ್ನೆಯನ್ನು ಕೇಳಿದ್ದರು, ಆಗ ಅದಕ್ಕೆ ನನ್ನ ಬಳಿ ಯಾವುದೇ ಉತ್ತರವಿರಲಿಲ್ಲವಾದರೂ ಅಂದು ಸಾಧಿಸಿಕೊಂಡಿದ್ದು ನನಗೆ ಚೆನ್ನಾಗಿ ನೆನಪಿದೆ.

ಇಂಗ್ಲೀಷಿನ ಜಾದವ್ ಅವರ ಸಹವಾಸದಿಂದ ಫಿಲಂ ಕ್ಲಬ್ ಮೆಂಬರ್ ಆಗಿ ಪ್ರಪಂಚದ ನಾನಾ ಭಾಷೆಗಳ ಚಿತ್ರಗಳನ್ನು ನೋಡಿ ಚರ್ಚಿಸಿದ್ದೂ ಅಲ್ಲದೇ ಆಗಾಗ್ಗೆ ಹೆಗ್ಗೋಡಿನ ನೀನಾಸಂ ಗೂ ಹೋಗಿ ಬರುತ್ತಿದ್ದೆವು. ನನ್ನ ಸಹಪಾಟಿ ವಾಸುದೇವನ ತಂದೆ ಹುಚ್ಚಪ್ಪ ಮಾಸ್ತರರು ಜಾನಪದ ಅಕಾಡೆಮಿಯ ಸದಸ್ಯರಾದ್ದರಿಂದ ವಾಸು ಹಾಗೂ ವಾಸುವಿನ ಕುಟುಂಬದವರೆಲ್ಲರಿಗೂ ನಾಟಕಗಳನ್ನು ಆಡುವ ಹಾಗೂ ನೋಡುವ ಹುಚ್ಚು ಇತ್ತು. ನಾನು ಕಾಲೇಜಿನ ಎಷ್ಟೋ ರಜಾದಿನಗಳನ್ನು ವಾಸುವಿನ ಮನೆಯಲ್ಲಿ ಕಳೆದದ್ದಿದೆ - ಕನ್ನಡದ ಹಲವು ನಿಯತಕಾಲಿಕಗಳಾದ ಕಸ್ತೂರಿ, ಶೂದ್ರ, ಇತ್ಯಾದಿಗಳ ಪ್ರತಿಯೊಂದು ಪ್ರತಿಯೂ ಲಭ್ಯವಿರುತ್ತಿದ್ದುದಷ್ಟೇ ಅಲ್ಲದೇ ಅವರ ಮನೆಯಲ್ಲಿ ಒಂದು ಚಿಕ್ಕ ಲೈಬ್ರರಿಯೇ ಇತ್ತು. ರೇಣುಕಪ್ಪ ಗೌಡರು ಯಾವಾಗಲೂ ಹೇಳುತ್ತಿದ್ದರು - ಪುಸ್ತಕಗಳನ್ನು ಹೇಗೆ ಓದಬೇಕು ಎಂದರೆ ಜಾನುವಾರು ಬ್ಯಾಣದಲ್ಲಿ ಹುಲ್ಲನ್ನು ಮೆಂದಹಾಗಿರಬೇಕು ಎಂದು. ಹೀಗೆ ಆಗಾಗ್ಗೆ ನೀನಾಸಂ ಗೆ ಹೋಗಿ ಬರುತ್ತಿದ್ದಾಗ, ವಾಸುವಿನ ಜೊತೆ ಒಡನಾಡಿಕೊಂಡಿದ್ದಾಗಲೆ ನನಗೆ ಚಂದ್ರಶೇಖರ ಕಂಬಾರರ ದರ್ಶನವಾದದ್ದು. ಮುಂದೆ ಅವರ ಸಮಗ್ರ ಬರಹಗಳನ್ನು ಓದಿದೆನಾದರೂ ಮೊದಮೊದಲಿಗೆ ಅವರ ಪರಿಚಯವಿರಲಿಲ್ಲ, ವಾಸುವಿನ ತಂದೆ ಮತ್ತು ಸಂಗಡಿಗರು ಜೈಸಿದನಾಯ್ಕ, ಜೋಕುಮಾರ ಸ್ವಾಮಿ, ಸಂಗ್ಯಾ-ಬಾಳ್ಯಾ ಮುಂತಾದ ನಾಟಕಗಳನ್ನು ದೇಶಾದ್ಯಂತ ಆಡುತ್ತಾ, ಕಂಬಾರರ ಪದಗಳನ್ನು ಹಾಡುತ್ತ ಕಂಠಪಾಠ ಮಾಡಿಕೊಂಡಿದ್ದರು - ವಾಸು ಮತ್ತು ವಾಸುವಿನ ಅಣ್ಣ ಜಯರಾಮ ನನಗೆ ಕಂಬಾರರ 'ಅಂಜೂರಿ ಬನದಾಗಾs ನಾ ಹ್ಯಾಂಗಾs ಇರಲೇ' ಹಾಡನ್ನು ಹೇಳಿಕೊಟ್ಟು ಮುಂದೆ ಅದಕ್ಕೆ ನಮ್ಮ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಬಹುಮಾನಗಳಿಸುವಂತೆಯೂ ಮಾಡಿದ್ದರು.

ನನ್ನ ಎರಡನೇ ಅಣ್ಣನಿಗೂ ಸಹ ಯಾವುದೋ ಒಂದು ತರಗತಿಯಲ್ಲಿ ಜೈಸಿದನಾಯ್ಕ ನಾಟಕವಿತ್ತು - ಅದರಲ್ಲಿನ ಬೆಳಗಾವಿ ಕನ್ನಡ, ಪಾತ್ರಗಳ ಮೂಲಕ ಹುಟ್ಟುವ ಪರಿಸರ ಹಾಗೂ ಆಡು ಮಾತುಗಳಲ್ಲಿನ ನೈಜತೆ ಇವೆಲ್ಲವೂ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು, ಮುಂದೆ ಈ ಮೆಚ್ಚುಗೆಯೇ ಕುತೂಹಲವಾಗಿ 'ಇನ್ನೇನಿದೆ ನೋಡೋಣ' ಎನ್ನುವಂತೆ ಕಂಬಾರರ ಲಭ್ಯವಿದ್ದ ಎಲ್ಲ ಪುಸ್ತಕಗಳನ್ನೂ ಓದಿಸಿ, ಅವುಗಳ ಬಗ್ಗೆ ಅಲ್ಲಲ್ಲಿ ಚರ್ಚಿಸುವಂತಾಗಿತ್ತು. ವಾಸು ನನಗಿಂತಲೂ ಚೆನ್ನಾಗಿ ಹಾಡುತ್ತಿದ್ದ, ಆದರೆ ಅವನು ತನ್ನ ಕಂಠವನ್ನು ಎಲ್ಲೂ ಬಹುಮಾನ ಗೆಲ್ಲುವ ಸ್ವರ್ಧೆಗಳಲ್ಲಿ ಬಳಸಿಕೊಂಡಿದ್ದನ್ನು ನಾನು ನೋಡಲಿಲ್ಲ - ಅವನ ಬಾಯಿಂದ 'ಅಪ್ಪಾ ಸೂತ್ರಧಾರ ಕೇಳ...', 'ಮರೆತೇನೆಂದರೆ ಮರೇಲಿ ಹೇಂಗs', 'ಅಗಲೀ ಇರಲಾರೆನೋ ನಿನ್ನನ್ನಾ...' ಮುಂತಾದ ಹಾಡುಗಳನ್ನು ಕೇಳಬೇಕು, ಕಂಬಾರರ ಆ ಹಾಡುಗಳಿಗೆ ಒಂದು ಹೊಸ ಅರ್ಥವೇ ಹುಟ್ಟಿಕೊಳ್ಳುತ್ತಿತ್ತು.

***

ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರ್‍ಅಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.

***

ನಾನು ಇತರ ಭಾರತೀಯ ಭಾಷೆಗಳಲ್ಲಿನ ಸಾಹಿತ್ಯದ ಬಗ್ಗೆ ಅಲ್ಲಲ್ಲಿ ಕೇಳಿದ್ದೇನೆ, ಅನುವಾದವಾದವುಗಳನ್ನು ಶಕ್ತ್ಯಾನುಸಾರ ಓದಿದ್ದೇನೆ, ಹಾಗೂ ಮಲಯಾಳಂ, ಬೆಂಗಾಲೀ ಮತ್ತು ಹಿಂದೀ ಭಾಷೆಯಲ್ಲಿ ಹುಟ್ಟಿರಬಹುದಾದ ಸಾಹಿತ್ಯವನ್ನು ಕನ್ನಡದ ಬೆಳವಣಿಗೆಗೆ ಹೋಲಿಸಿಕೊಂಡು ಕೆಲವು ಸಾರಿ ತಲೆಕೆಡಿಸಿಕೊಂಡಿದ್ದೇನೆ. ಇವೆಲ್ಲ ಮಿತಿ ಅಥವಾ ಅನುಭವಗಳಿಂದ ಹೇಳುವುದಾದರೆ ನಮ್ಮ ಕನ್ನಡದ ಸಾಹಿತ್ಯ ಬಹಳ ಅಗಾಧವಾದುದು ಹಾಗು ವಿಸ್ತೃತವಾದದ್ದು, ಈ ನಿಟ್ಟಿನಲ್ಲಿಯೇ ಕನ್ನಡಕ್ಕೆ ಏಳೇನು ಎಪ್ಪತ್ತು ಜ್ಞಾನಪೀಠ ಬಂದರೂ ಕಡಿಮೆಯೇ ಎನ್ನುವವ ನಾನು. ಹೀಗೆ ಹೇಳುವ ಸಮಯದಲ್ಲಿಯೇ ಬಾಪು ಅಂಥವರಿಗೆ ಯಾವ ನೊಬೆಲ್ ಶಾಂತಿ ಪಾರಿತೋಷಕವೂ ಬರಲಿಲ್ಲ ಎನ್ನುವ ವಾಸ್ತವವನ್ನು ಕಂಡು ನನ್ನ ಮೂರ್ಖ ನಿಲುವಿಗೆ ನಿಲುಕಲಾರದ ಸಾಹಿತ್ಯ ಉಳಿದ ಭಾಷೆಗಳಲ್ಲಿ ಇರಲೂಬಹುದು ಎಂಬುದನ್ನೂ ಒಪ್ಪಿಕೊಳ್ಳುತ್ತೇನೆ. ಬೇಂದ್ರೆ-ಕಂಬಾರರಂತಹವರನ್ನು 'ಅನುವಾದಕರಿಗೆ ಸೆಡ್ಡು ಹೊಡೆಯುವವರು' ಎಂದು ಕರೆಯುತ್ತೇನೆ, ಎಂಥ ಇಂಗ್ಲೀಷ್ ಬಲ್ಲ ನಿಪುಣನಿಗೂ ಕಂಬಾರರ ಬರಹಗಳನ್ನು ಇಂಗ್ಲೀಷಿಗೆ ತರುವ ಮಾತು ಸಾಧ್ಯವಿಲ್ಲದ್ದು - ಕನ್ನಡಿಗರಿಗೆ ಅದು ಬಹಳ ಹೆಚ್ಚುಗಾರಿಕೆಯಾದದ್ದಾದರೆ, ಕನ್ನಡೇತರರು ಏನನ್ನು ಕಳೆದುಕೊಂಡಿದ್ದಾರೆಂತಲೇ ಅವರಿಗೆ ಗೊತ್ತಿಲ್ಲ! (they don't know what they don't know ಎನ್ನುವ ಅರ್ಥದಲ್ಲಿ).

Tuesday, May 16, 2006

ನಾನು ಮತ್ತು 'ಅವರು'

ಅವರು: ನೋಡಿ, ನೀವು ಈಗಷ್ಟೇ ಪೋಸ್ಟ್ ಆಫೀಸಿನಲ್ಲಿ ಮನಿ ಆರ್ಡರ್ ಫಾರಂ ಭರ್ತಿ ಮಾಡೋದಕ್ಕೆ ನಿರಾಕರಿಸಿದಿರಲ್ಲಾ ಆ ಮನುಷ್ಯ ಯಾರು ಗೊತ್ತೇ?

ನಾನು: ಇಲ್ಲ, ಯಾರವರು?

ಅವರು: ಅವರೇ, ನಿಮ್ಮನ್ನು ಇಲ್ಲೀವರೆಗೆ ಓದಿಸಿದ ಪುಣ್ಯಾತ್ಮರಲ್ಲಿ ಒಬ್ಬರು!...

ನಾನು: (ಅವರ ಮಾತುಗಳನ್ನು ಮಧ್ಯದಲ್ಲೇ ತಡೆದು) ಏನ್ಸಾರ್, ತಮಾಷೆ ಮಾಡ್ತಾ ಇಲ್ಲಾ ತಾನೇ? ಅವರಿಗೂ ನಾನು ಓದಿದ್ದಕ್ಕೂ ಯಾವುದೇ ಸಂಬಂಧವಿಲ್ಲವಲ್ಲಾ?

ಅವರು: ಏಕಿಲ್ಲ, ಚೆನ್ನಾಗಿ ಯೋಚ್ನೇ ಮಾಡಿ, ನಿಮಗೇ ತಿಳಿಯುತ್ತೆ.

ನಾನು: ಆ...

ಅವರು: ನಾನೇ ಸ್ವಲ್ಪ ಬಿಡಿಸಿ ಹೇಳ್ತೀನಿ ಬಿಡಿ (ಸ್ವಗತ: ಈಗಿನ ಕಾಲದ ಹುಡುಗರಿಗೆ ಇಷ್ಟೂ ಗೊತ್ತಾಗೋಲ್ಲ ಅಂದ್ರೇನು?) ಈಗ ನೀವು ಏನು ಓದಿದಿರಾ, ಅಂದ್ರೆ ಯಾವ ಡಿಗ್ರಿ ಎಲ್ಲಿ ಮಾಡಿದ್ದು ಹೇಳಿ...

ನಾನು: ಅದೇ, (ಹೆಮ್ಮೆಯಿಂದ) ಸ್ನಾತಕ್ಕೋತ್ತರ ಪದವಿ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಮಾಡಿದ್ದು.

ಅವರು: ಈ ಡಿಗ್ರಿಗಳ ಬಗ್ಗೆ ನನಗೆ ಗೊತ್ತಿಲ್ಲಪ್ಪಾ, ಅದು ಎಷ್ಟು ವರ್ಷಗಳ ಕೋರ್ಸೂ?

ನಾನು: ಕೇವಲ ಎರಡೇ ವರ್ಷ...

ಅವರು: ಓಹ್, ಹೌದಾ...ನೋಡಿ...ಈಗ ಆ ಕೋರ್ಸಿಗೆ ನೀವು ಫೀಜು, ವಗೈರೆ ಅಂತ ಎಷ್ಟು ದುಡ್ಡು ಖರ್ಚು ಮಾಡಿರಬಹುದು, ಎರಡು ವರ್ಷಕ್ಕೆ?

ನಾನು: ಸುಮಾರು...ಎರಡೂ, ಎರಡು ನಾಲ್ಕು, ಏಳು, ಒಂಭತ್ತು..., ಹನ್ನೊಂದು ಸಾವಿರ ರೂಪಾಯ್.

ಅವರು: ಬರೀ ಹನ್ನೊಂದೇ ಸಾವಿರಾನೇ...ಅಂಥಾ ಯೂನಿವರ್ಸಿಟಿಯಲ್ಲಿ ಇಂಥಾ ಡಿಗ್ರಿ ಮಾಡೋಕೆ?!

ನಾನು: ಹೌದು ಸಾರ್, ಸ್ವಲ್ಪ ಹೆಚ್ಚು ಕಡಿಮೆ ಇದ್ರೂ ಇರಬಹುದು, ಆದರೆ ಹದಿನೈದು ಸಾವ್ರಕ್ಕಿಂತ ಜುಪ್ಪಯ್ಯಾ ಅಂದ್ರೂ ಮೇಲಕ್ ಹೋಗೋಲ್ಲ.

ಅವರು: ನಿಮ್ಮ ಟ್ಯೂಷನ್ ಫೀ ಎಷ್ಟಿತ್ತು, ಯೂನಿವರ್ಸಿಟಿಗೆ ಬರೀ ಈ ಕೋರ್ಸಿಗೆ ಸಂಬಂಧಿಸಿದಂತೆ ಎಷ್ಟು ಹಣ ಕೊಟ್ಟಿರಬಹುದು, ಅಂದಾಜೇ ಹೇಳಿ ಪರವಾಗಿಲ್ಲ.

ನಾನು: ಲ್ಯಾಬ್ ಫೀ, ಟ್ಯೂಷನ್ ಫೀ ಅಂತ ಎರಡು ವರ್ಷಕ್ಕೆ ಸುಮಾರು ಒಂದ್ ಸಾವಿರ ಕೊಟ್ಟಿರಬಹುದು ನೋಡಿ.

ಅವರು: ಏನೂ, ಒಂದೇ ಸಾವ್ರಾನೇ? ಅಲ್ಲೇ ಇರೋದು ನೋಡಿ ವಿಷ್ಯಾ...ಏನು ಅಂದ್ರೆ, ಯೂನಿವರ್ಸಿಟಿವತಿಯಿಂದ ಲೆಕ್ಕ ಹಾಕಿದ್ರೆ, ನೀವು ಟ್ಯೂಷನ್ ಫೀ, ಲ್ಯಾಬ್ ಫೀ, ಅಂತ ಯೂನಿವರ್ಸಿಟಿಗೆ ಕೊಟ್ಟಿರೋದು ಕೇವಲ ಒಂದು ಸಾವಿರ ರೂಪಾಯ್, ಇನ್ನುಳಿದ ದುಡ್ಡೆಲ್ಲಾ ನಿಮ್ಮ ಹಾಸ್ಟೆಲ್ಲು, ಪುಸ್ತಕ, ಬಟ್ಟೇ-ಬರೀ ಅಂತ ಖರ್ಚು ಮಾಡಿದ್ದೀರಿ ತಾನೆ?

ನಾನು: ಹೌದು, ಹೌದು, ಯೂನಿವರ್ಸಿಟಿಗೆ ಫೀಜು ಅಂತ ಕೊಟ್ಟ ದುಡ್ಡು ತುಂಬಾ ನಾಮಿನಲ್ಲು, ಈಗಿನ ಕಾಲದಲ್ಲೂ ಅಷ್ಟು ಕಡಿಮೆ ಬೆಲೆಗೆ ಟ್ಯೂಷನ್ ಹೇಳ್ತಾರಲ್ಲ ಅಂತ ನನಗೆ ಎಷ್ಟೋ ಸಾರಿ ಆಶ್ಚರ್ಯ ಆಗಿದೆ.

ಅವರು: ಆದ್ರೆ, ನಿಮ್ಮ ವಿದ್ಯಾಭ್ಯಾಸಕ್ಕೆ ಟ್ಯೂಷನ್, ಲ್ಯಾಬು, ಆ ಮೇಷ್ಟ್ರುಗಳಿಗೆ ಕೊಡೋ ಸಂಬಳ ಅಂತ ಯೂನಿವರ್ಸಿಟಿಗೆ ಅದಕ್ಕಿಂತ ಹೆಚ್ಚು ದುಡ್ಡು ಖರ್ಚಾಗುತ್ತೋ ಇಲ್ವೋ? ಅದೆಲ್ಲ ಸೇರಿದ್ರೆ, ನಿಮ್ಮ ವಿದ್ಯಾಭ್ಯಾಸಕ್ಕೆ ಎಷ್ಟು ಆಗಬಹುದು ಅಂತ ಊಹಿಸಿಕೊಳ್ಳಿ.

ನಾನು: ಸುಮಾರೇ ಆಗುತ್ತೆ, ಆ ಮೇಷ್ಟ್ರುಗಳಿಗೆ ಸಂಬಳವೂ ವಿಪರೀತ, ಇನ್ನು ಲ್ಯಾಬ್ ಖರ್ಚು, ಲೈಬ್ರರಿ, ಡಿಪಾರ್‍ಟ್‌ಮೆಂಟಿನ ಉಳಿದ ಸಿಬ್ಬಂದಿಯೋರಿಗೂ ಹಣ ಕೊಡಬೇಡವೆ?

ಅವರು: ಹಾಗಿದ್ದ ಮೇಲೆ ನೀವು ಕೊಟ್ಟಿರೋ ಟ್ಯೂಷನ್ ಫೀ ಯಾವ ಲೆಕ್ಕಕ್ಕೂ ಇಲ್ಲ ಅಲ್ವೇ, ಒಂಥರಾ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇಟ್ಟ ಹಾಗೆ!

ನನು: ಹೌದು, ಹೌದು...

ಅವರು: (ನನ್ನ ಮಾತನ್ನು ಮಧ್ಯದಲ್ಲಿಯೇ ತಡೆದು) ಮಿಕ್ಕಿದ್ದೆಲ್ಲ ದುಡ್ಡು ಮೈಸೂರು ಯೂನಿವರ್ಸಿಟಿಗೆ ಎಲ್ಲಿಂದ ಬಂತು ಎಂದುಕೊಂಡಿರಿ?

ನಾನು: ಅದೇ ಯೂನಿವರ್ಸಿಟಿ ಅನುದಾನ ಅಂತ ಬಂದಿರಬಹುದು...

ಅವರು: ಅದೇ ಎಲ್ಲಿಂದ?

ನಾನು: ಕೇಂದ್ರ ಸರ್ಕಾರ ಇಷ್ಟು, ರಾಜ್ಯ ಸರ್ಕಾರ ಇಷ್ಟು ಅಂತ ಕೊಟ್ಟಿರಬಹುದು.

ಅವರು: ಈ ಸರ್ಕಾರಕ್ಕೆ ದುಡ್ಡು ಎಲ್ಲಿಂದ ಬಂತು?

ನಾನು: ಒಳ್ಳೇ ಕಥೆಯಾಯ್ತಲ್ಲಪ್ಪಾ, ನಿಮ್ದೂ...ಅದೇ ನಾವು ಟ್ಯಾಕ್ಸೂ, ಕಂದಾಯ ಅಂತ ಕಟ್ಟೋಲ್ವೇ ಅದರಿಂದ.

ಅವರು: ಟ್ಯಾಕ್ಸು ಕಟ್ಟೋ ಜನಗಳು ಯಾರು ಅಂತ?

ನಾನು: ಯಾರು ಅಂದ್ರೆ?

ಅವರು: ಅದೇ, ನಮ್ಮ ದೇಶದಲ್ಲಿ ಟ್ಯಾಕ್ಸ್ ಕಟ್ಟೋರು ಯಾರೂ ಅಂತ?

ನಾನು: ಎಲ್ಲರೂ ಕಟ್‌ತಾರೆ, ಅದರಲ್ಲೇನಂತೆ?

ಅವರು: ಅದರಲ್ಲೇ ಇರೋದು ವಿಶೇಷ...ಪ್ರತಿಯೊಬ್ರೂ ಟ್ಯಾಕ್ಸ್ ಕಟ್ತಾರೆ, ದೊಡ್ಡ ವ್ಯವಹಾರಸ್ತರೂ ಕಟ್ತಾರೆ, ಈ ಕಟ್ಟಿಗೆ ಒಡೆಯೋರು ಕಟ್ತಾರೆ - ಈಗ ಒಂದು ಸೋಪ್ ಕೊಂಡರೂ ಅದರಲ್ಲಿ All taxes included ಅಂಥ ಬರೆದಿರೋಲ್ವೇ? ನೀವೊಂದು ಬೆಂಕಿ ಪೊಟ್ನ ತಗೋಂಡ್ರೂ ಅದರಲ್ಲಿ Excise ಎಂದು ಬರೆದಿರೋ ಚೀಟಿ ಹರಿಯದಿದ್ರೆ ಅದರಿಂದ ಕಡ್ಡೀನೇ ಹೊರಗೆ ಬರೋದಿಲ್ಲ!

ನಾನು: ಅಂದ್ರೆ...

ಅವರು: ಅಂದ್ರೆ...ಈ ಸರ್ಕಾರಕ್ಕೆ ಎಲ್ಲರೂ ತೆರಿಗೆ ಕೋಡೋದರಿಂದ ಹಣ ಬರುತ್ತೆ, ಆದ್ರೆ, ನಮ್ ದೇಶದಲ್ಲಿ ಇಂಥಾ ತೆರಿಗೆ ಕೋಡೋ ಜನರಲ್ಲಿ ನೂರಕ್ಕೆ ಐವತ್ತು ಜನಕ್ಕೆ ತಮ್ಮ ಹೆಸರನ್ನೂ ಬರೆಯೋಕೆ ಬರೋದಿಲ್ವೇ...ಏನ್ ಮಾಡೋದು? ತಿಳುವಳಿಕೆ ಇರ್‍ಲೀ, ಇಲ್ಲದಿರ್‍ಲೀ, ಗೊತ್ತಿರ್‍ಲೀ, ಗೊತ್ತಿಲ್ಲದಿರ್‍ಲೀ ಟ್ಯಾಕ್ಸಂತೂ ಕಟ್ಟಲೇ ಬೇಕಾ? ಅಂದ್ರೆ ನೀವು ಓದಿರೋ ಯೂನಿವರ್ಸಿಟಿಗೆ ಸರ್ಕಾರದಿಂದ ಬಂದಿರೋ ಹಣದಲ್ಲಿ ಈ ಅನಕ್ಷರಸ್ಥರ ಪಾಲೂ ಇದೆ ಅಂತ ಆಯ್ತು, ಅಲ್ವಾ?

ನಾನು: ಸರಿಯಾಗೇ ಹೇಳಿದ್ರಿ...ಅದರೆ ಅದರ ರೆಲೆವೆನ್ಸ್ ಏನೂ ಅಂತ ಗೊತ್ತಾಗಲಿಲ್ಲ...

ಅವರು: ಆ ಹಾ! ಏನ್ರೀ ಇದೂ ಇಷ್ಟೊಂದು ಓದೀದೀನಿ ಅಂತೀರಾ, ನಾವು ಸ್ವಲ್ಪ ಹೊತ್ತು ಮುಂಚೆ ಮಾತನಾಡಿದ್ದನ್ನೇ ಮರೆತು ಬಿಟ್ರಲ್ಲಾ! ಅದೇ ಆ ಮನುಷ್ಯಾ, ಅಲ್ಲಿ ಮನಿ ಆರ್ಡರ್ ಫಾರಂ ತುಂಬಲಾರದೇ ಅಸಹಾಯಕತೆಯಿಂದ ನಿಂತಿದ್ದಾನೆ ನೋಡಿ...ಅವನೂ ನಿಮ್ಮನ್ನು ಇಲ್ಲೀವರೆಗೆ ಓದಿಸಿದ ಪುಣ್ಯಾತ್ಮರಲ್ಲಿ ಒಬ್ಬ...ಹೋಗಿ, ಸಿಕ್ಕಿದ್ದೇ ಅವಕಾಶ ಅಂಥ ಸೇವೆ ಮಾಡಿ ಋಣಾ ತೀರ್‍ಸಿ! ಹೋಗ್ ಹೋಗಿ.

***

ಏನ್ರೀ ಘಂಟೆ ಏಳಾದ್ರೂ ಇನ್ನೂ ಎದ್ದೇ ಇಲ್ಲವಲ್ಲಾ ನೀವು? ಯಾವ್ದಾದ್ರೂ ಕನ್ಸೇನಾದ್ರೂ ಬಿದ್ದಿತ್ತಾ 'ನಾನು ಮನಿ ಆರ್ಡರ್ ಫಾರಂ ತುಂಬಿಕೊಡ್ತೀನಿ, ನಾನೇ ತುಂಬ್ತೀನಿ...' ಅಂತ ಒಂದೇ ಸಮ ಕೂಗ್ ಕೊಳ್ತಾ ಇದ್ರಲ್ಲ, ಯಾರಿಗಾದ್ರೂ ದುಡ್ಡು ಕಳಿಸೋದೇನಾದ್ರೂ ಇದೆಯಾ?!

Monday, May 15, 2006

ಒಂದು sticking up ಸನ್ನಿವೇಶ

ಇವತ್ತು ಬೆಳಿಗ್ಗೆಯಿಂದ ಬರೀ ಗಡಿಬಿಡಿ, ಈ ಕಡೆ ಬಂದೂ ಸರಿಯಾಗಿ ಬಾರದೇ ಅಲ್ಲಲ್ಲಿ ತೊಂದರೆಕೊಡುವ ಮಳೆ, ಈ ಮಳೆ ಬಿದ್ದ ಕೂಡಲೇ ಪ್ರಪಂಚದಲ್ಲಿರೋ ಸಮಯವೆಲ್ಲ ತಮ್ಮದು ಎನ್ನುವಂತೆ ನಿಧಾನವಾಗಿ ರಸ್ತೆಯಲ್ಲಿ ಸಾಗೋ ಫೆಲೋ ಡ್ರೈವರುಗಳು, ಹೋದಲ್ಲಿ ಬಂದಲ್ಲೆಲ್ಲಾ ನಿರೀಕ್ಷೆಗಿಂತ ಮೀರಿ ಹಿಡಿಯೋ ಸಮಯ ಈ ಎಲ್ಲವೂ ಸೇರಿ ನನ್ನ ವ್ಯಸ್ತ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದವು. ಹೇಳೀ-ಕೇಳಿ ಸೋಮವಾರ ಬೇರೆ, 'ಮೊದಲೇ ಗೊಲ್ಲಿ, ಈಗಂತೂ ಹಡದಾಳೇ' ಅನ್ನೋ ಹಾಗೆ ಮನಸ್ಸಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿರುವಾಗ ಈ ದಿನ ಯಾರೊಡನೆಯಾದರೂ ಜಗಳವಾಡುತ್ತೇನೆ ಅಥವಾ ಯಾರಿಂದಲಾದರೂ ಸಮಾ ಉಗಿಸಿಕೊಳ್ಳುತ್ತೇನೆ ಎಂದು ಕೊಂಡಿದ್ದೆ, ಆದರೆ ಆಫೀಸಿನ ಕೆಲಸ ಮುಗಿದರೂ ಹಾಗೇನೂ ಆಗಲಿಲ್ಲ. ಒಳಗಿದ್ದ ಬಿಸಿಯನ್ನು ಹೊರಕ್ಕೆ ಕಳಿಸಲಾರದೇ ಒಳಗೇ ಇಟ್ಟುಕೊಂಡಿರುವ ಪರಿಣಾಮವೋ ಎಂಬಂತೆ ಸುಮಾರು ನಾಲ್ಕೂವರೆ ಹೊತ್ತಿಗೆ ಸರಿಯಾಗಿ ತಲೆನೋವು ಬೇರೆ ಶುರುವಾಯಿತು, ಅದರ ಹಿಂದೆ ಹೇಳಿ ಮಾಡಿಸಿದಂತೆ ಒಂದೆರಡು ಸೀನುಗಳೂ, ಹಾಗೂ ಅಲ್ಲಲ್ಲಿ ಮೂಗು ಸುರಿಯುವುದೂ ಶುರುವಾಯಿತು. ಅಯ್ಯೋ ಇನ್ನೇನು ನನಗೂ ಫ್ಲೂ ತಾಗಿಕೊಂಡಿತು ಎಂದು ಆಫೀಸಿನಲ್ಲಿ ಕೈ ಸರಿಯಾಗಿ ತೊಳೆಯದೇ ಅಲ್ಲಲ್ಲಿ ಮುಟ್ಟಿದ್ದಕ್ಕೆ ನನ್ನನ್ನೇ ಹುಡುಕಿಕೊಂಡು ಬಂದ ಫ್ಲೂ ವೈರಸ್ಸುಗಳು ಎಲ್ಲೆಲ್ಲೂ ಕಾಣತೊಡಗಿದಂತೆ ಒಮ್ಮೆ ಅನ್ನಿಸಿತು. ಆದರೆ, ನನ್ನ ಪುಣ್ಯಕ್ಕೆ ತಲೆನೋವು ಒಂದು ಬಿಟ್ಟು ಮಿಕ್ಕೆಲ್ಲ ಹೋಗಿ ದೊಡ್ಡ ಸಮಾಧಾನವಾದರೂ ಈ ಹಾಳು ತಲೆನೋವೊಂದು ಮಾತ್ರ ಇವತ್ತು ನಿನ್ನನ್ನು ಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತುಬಿಟ್ಟಿತ್ತು.

***

ಆರು ಘಂಟೆಯ ಹೊತ್ತಿಗೆ ಮನೆಗೆ ಬಂದವನೇ ಈ ಹಾಳು ನೋವಿಗೆ ಕಾಫೀನಾದರೂ ಸಹಾಯವಾಗಲಿ ಎಂದುಕೊಂಡು ಒಂದು ಬಿಸಿಬಿಸಿ ಟೇಸ್ಟರ್‍ಸ್ ಚಾಯ್ಸ್ ಮಾಡಿಕುಡಿದೆ, ಡಾರ್ಕ್ ರೋಸ್ಟ್ ನಿಧಾನವಾಗಿ ಸುಡುತ್ತಲೇ ಗಂಟಲಲ್ಲಿ ಇಳಿಯಿತೇ ವಿನಾ ತಲೆನೋವಿನ ಜೊತೆ ಸಂಧಿಯನ್ನು ಮಾಡಿಕೊಂಡಂತೆ ಕಂಡುಬಂದು ಅದರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಸಂಜೆ ಶಾಪ್ಪಿಂಗ್‌ಗೆ ಹೋಗೋಣವೆಂದು ಮೊದಲೇ ನನ್ನ ಹೆಂಡತಿಯೊಂದಿಗೆ ಮಾತನಾಡಿಕೊಂಡಿದ್ದರಿಂದ ಬಟ್ಟೆಯನ್ನೂ ಬದಲಿಸದೇ ಆಕೆಯ ಬರವನ್ನು ಕಾಯುತ್ತಾ ಕಂಪ್ಯೂಟರಿನಲ್ಲಿ ಏನೇನನ್ನೋ ಓದುತ್ತಾ ಕುಳಿತೆ - ಥೂ ಅವೇ ಹಳಸಲು ಸುದ್ಧಿಗಳು ಎಂದು ನಾನೋದುವ ಕನ್ನಡಪ್ರಭ, ಪ್ರಜಾವಾಣಿಗಳಿಗೆಲ್ಲ ಒಂದು ಹಿಡಿ ಶಾಪ ಹಾಕಿದೆ, ಮಧ್ಯೆ ಅಲ್ಲಲ್ಲಿ ಜೋರಾಗಿ ಬಂದು, ಆಗಾಗ ನಿಂತು ಹೋಗುವ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಕ್ಕಳಂತೆ ಕಂಡುಬಂತು, ಅದರಿಂದ ಡಿಸ್ಟರ್ಬ್ ಆದ್ದರಿಂದ ಅದಕ್ಕೂ ಒಂದು ಹಿಡಿ ಶಾಪ ಹಾಕಿದೆ.

ನನಗೇನಾದರೂ ಸಣ್ಣ ಖಾಯಿಲೆ ಬಂದರೆ ನಾನು 'ಊರೆಲ್ಲ ಒಂದು ಮಾಡುತ್ತೇನೆ' ಎನ್ನುವುದು ನನ್ನನ್ನು ಹತ್ತಿರದಿಂದ ಬಲ್ಲವರ ಅಂಬೋಣ - ಹೌದು, ಅದನ್ನು ನಾನು ಸಾಧಿಸಿಕೊಳ್ಳುತ್ತೇನೆ, ಏಕೆಂದರೆ ಐದು ವರ್ಷಗಳಿಗೆ ಒಮ್ಮೆಯೂ ನನಗೆ ಜ್ವರ ಬರುವುದಿಲ್ಲ, ಹಾಗಿದ್ದ ಮೇಲೆ ಒಮ್ಮೆಗೇ ಧಿಡೀರ್ ಎಂದು ಬಂದರೆ ನನಗೆ ಹಿಂದಿನ ಅನುಭವ ಯಾವುದೂ ನೆನಪಿನಲ್ಲಿ ಅಷ್ಟು ಸರಿಯಾಗಿ ಇಲ್ಲದಿರುವುದರಿಂದ ಅದೇ ಒಂದು ದೊಡ್ಡ ಎಪಿಸೋಡ್ ಆಗಿ ಕಾಣಿಸುತ್ತದೆ. ಮೊದಲೇ ಸೂಕ್ಷ್ಮ ಮನಸ್ಸಿನ ನನಗೆ ಪ್ರಪಂಚವೆಲ್ಲಾ ನನ್ನ ಸುತ್ತಲೇ ತಿರುಗೋದು ಎಂಬ ಬಲವಾದ ಹುಂಬ ನಂಬಿಕೆ ಇರೋದರಿಂದ 'ನನ್ನನ್ನು ನೋಡಿಕೊಳ್ಳೋರು ಯಾರೂ ಇಲ್ಲ' ಎಂದು ಸುತ್ತಲಿದ್ದವರನ್ನು ರೇಗಿದರೆ ನನ್ನದೇನೂ ತಪ್ಪಿಲ್ಲ, ಅಲ್ಲವೇ?

ಸರಿ ಆ ತಲೆನೋವಿನಲ್ಲೇ, ಮಾತು ಕೊಟ್ಟಂತೆ ಶಾಪ್ಪಿಂಗ್‌ಗೆ ಹೊರಟೆ - ಕಲ್ವರ್ ರಸ್ತೆಯ ಬಳಿ ಸಿಗ್ನಲ್‌ಗೆ ಕಾಯುತ್ತಿದ್ದಾಗ ಎಡಬದಿ ಹೊರಳಿ ನೋಡಿದೆ, ನಮ್ಮೂರಿನ ಮುನಿಸಿಪಾಲಿಟಿ ಆಫೀಸಿನ ಹಿಂದೆ ಸೂರ್ಯ ಮುಕ್ಕಾಲು ಮುಳುಗಿ, ಮಕ್ಕಳ ಬಾಯಲ್ಲಿ ಕರಗೋ ದುಂಡನೆ ಕಿತ್ತಳೆ ಚಾಕಲೇಟಿನಂತೆ ಕಂಡು ಬರುತ್ತಿದ್ದ, ಸೂರ್ಯ ಹೋದ ದಿಕ್ಕಿನಲ್ಲಿ ಚಾಕಲೇಟಿನಿಂದ ಕೆಂಪಾದ ಬಾಯಿ ಹಾಗೂ ನಾಲಿಗೆಯ ತರಹ ಮೋಡಗಳು ಚೆಲ್ಲಿಕೊಂಡಿದ್ದವು. ಕಾರಿನಲ್ಲಿ ಗಡಿಯಾರವನ್ನು ನೋಡಿದರೆ ಸರಿ ಎಂಟು ಘಂಟೆಯನ್ನು ತೋರಿಸುತ್ತಿತ್ತು - ಯಾವುದಾದರೂ ಒಳ್ಳೆಯ ಸಂಗೀತ ಬರುತ್ತೇನೋ ಎಂದು ೯೬.೩ ಸ್ಟೇಷನ್ ಹಾಕಿ ನೋಡಿದೆ, ದಿನವೂ ಇಂಪಾಗಿ ಕೇಳಿಸೋ ಪಿಟೀಲು, ಹಾರ್ಮೋನಿಯಮ್ ಧ್ವನಿ ಈ ದಿನ 'ಕುಯ್ಯೋ-ಕುಯ್ಯೋ' ರಾಗವಾಗಿ ಕೇಳಿ ಬಂತು.

***

ಇಲ್ಲಿನ ಹೋಲ್‌ಸೇಲ್ ಅಂಗಡಿಯೊಂದರಲ್ಲಿ ನಮಗೆ ಬೇಕಾದ ಸಾಮಾನುಗಳನ್ನು ತುಂಬಿಸಿಕೊಂಡು ನಾನೂ ನನ್ನ ಹೆಂಡತಿ ಸಾಲಿನಲ್ಲಿ ಚೆಕ್‌ಔಟ್ ಮಾಡಲೆಂದು ಮುಂದಿದ್ದ ಓರಿಯಂಟಲ್ ಕಪಲ್ ಹಿಂದೆ ನಿಂತೆವು, ನಾನೇ ಕೈಯಲ್ಲಿ ಶಾಪ್ಪಿಂಗ್ ಕಾರ್ಟ್ ಅನ್ನು ಹಿಡಿದುಕೊಂಡು ನಿಂತಿದ್ದೆ. ಅದೇ ಸಮಯಕ್ಕೆ ಒಬ್ಬಳು ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಆಫ್ರಿಕನ್ ಅಮೇರಿಕನ್ ಹುಡುಗಿಯೊಬ್ಬಳು ನಾನು ಹಾಗೂ ನನ್ನ ಮುಂದಿರುವವರ ನಡುವೆ ತನ್ನ ಗಾಡಿಯನ್ನು ತೂರಿಸಿದಳು. ಒಂದು ಕಡೆ ತಲೆ ಬೇರೆ ಸಿಡಿಯುತ್ತಲೇ ಇತ್ತು, ಅಂಥದ್ದರಲ್ಲಿಯೂ ಸಮಾಧಾನವಾಗಿ 'ನೋಡು, ನಾನು ನಿನಗಿಂತ ಮುಂಚೆ ಲೈನಿನಲ್ಲಿ ಇದ್ದವನು' ಎಂದೆ. ಆದರೆ ಆಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ - ಅದಕ್ಕೆ ಬದಲಾಗಿ ತನ್ನ ಕಾರ್ಟನ್ನು ಇನ್ನೂ ಮುಂದೆ-ಮುಂದೆ ತಳ್ಳುವ ಹಾಗೆ ಕಂಡು ಬಂದಳು. ನಿಜ ಹೇಳಬೇಕೆಂದರೆ, ಸಾಮಾನ್ಯವಾಗಿ, ಇಂಥ ಸಂದರ್ಭಗಳಲ್ಲಿ ನನ್ನ ಹೆಂಡತಿಗೆ ನನಗಿಂತಲೂ ಹೆಚ್ಚು ಸಿಟ್ಟು ಬರುತ್ತದೆ, ನಾನು ಅವಳನ್ನು ಸಮಾಧಾನಪಡಿಸುತ್ತಿರುತ್ತೇನೆ, ಆದರೆ ಇಂದು ನನ್ನ ಕಣ್ಣಮುಂದೇ ಹೀಗಾಗಿದ್ದಕ್ಕೆ ಅವಳಿಗಿಂತಲೂ ನನಗೇ ಹೆಚ್ಚು ಸಿಟ್ಟು ಬಂದಿತ್ತು, ನನ್ನ ಮಾತಿಗೆ ಉತ್ತರ ಕೊಡದೇ ತನ್ನನ್ನು ಹೀಗೆ ನೂಕಿಕೊಂಡು ಕಾಲುಕೆರೆದು ಜಗಳವಾಡುವವಳನ್ನು ಏನೆಂದು ಹೇಳಲಿ, ನನ್ನ ಹೆಂಡತಿಗೆ ನಮ್ಮ ಸಾಮಾನುಗಳನ್ನು ತೆಗೆದು ಕೌಂಟರಿನ ಮೇಲೆ ಇಡಲು ಹೇಳಿದೆ, ಅವಳು ಒಂದೊಂದಾಗೆ ಸಾಮಾನನ್ನು ಇಡುತ್ತಾ ಬಂದಳು. ಈ ಮಧ್ಯೆ ಆ ಕಪ್ಪು ಹುಡುಗಿಯ ಕಡೆಯವರು ಮೂರು ಜನರಾದರು, ನಾನು ಬಹಳ ದಿನಗಳ ನಂತರ ಜಗಳವಾಡಲು ಅವಕಾಶವೊಂದು ಸಿಕ್ಕಿತೆಂದು ಯೋಚಿಸಿ ಹೇಗೆ ಶುರುಮಾಡಲಿ ಎಂದು ಮೇಲೆ ನೋಡತೊಡಗಿದೆ.

ಇನ್ನೇನು ನಾವು ಸಾಮಾನುಗಳನ್ನು ಕೌಂಟರಿನ ಹಿಂದಿರುವವಳಿಗೆ ತೋರಿಸಿ ತೆಗೆದುಕೊಳ್ಳಬೇಕು ಅಷ್ಟರಲ್ಲಿ, ನನ್ನ ಮುಂದೆಯೇ ಸಾಲಿನಲ್ಲಿ ನುಗ್ಗಿದ ರೀತಿಯಲ್ಲೇ ಆ ಹುಡುಗಿ ತನ್ನ ಸಾಮಾನುಗಳನ್ನು ತನ್ನ ಕಾರ್ಟಿನಿಂದ ತೆಗೆದು ನನ್ನ ಸಾಮಾನುಗಳ ಮುಂದೆ ಇಟ್ಟಿದ್ದೂ ಅಲ್ಲದೇ 'ನಾನು ನಿನಗಿಂತ ಸಾಲಿನಲ್ಲಿ ಮೊದಲಿದ್ದೆ' ಎನ್ನುವಂತೆ ಗಟ್ಟಿಯಾಗಿ ಕೂಗಿಕೊಳ್ಳತೊಡಗಿದಳು, ಅವಳ ಜೊತೆಯಲ್ಲಿದ್ದ ಒಬ್ಬಳು ಹಿರಿಯ ಹೆಂಗಸು ನನ್ನನ್ನುದ್ದೇಶಿಸಿ 'she says, she was before you in the line.' ಎಂದಳು. ನಾನು 'That is not true' ಎಂದು ಆಕೆಯ ಉತ್ತರಕ್ಕೂ ಕಾಯದೇ ಕೌಂಟರಿನಲ್ಲಿ ಕೆಲಸ ಮಾಡುತ್ತಿದ್ದಾಕೆಗೆ ನಾನು ಸಾಲಿನಲ್ಲಿ ಮೊದಲಿದ್ದೇನಂತಲೂ, ನನ್ನ ಸಾಮಾನುಗಳನ್ನು ಮೊದಲು ತೆಗೆದುಕೊಳ್ಳುವಂತೆಯೂ ಹೇಳಿದೆ, ಆಕೆ ತನ್ನ ಅಸಹಾಯಕತೆಯನ್ನು ಹೇಳಿಕೊಂಡಳು - ನಾವಿಬ್ಬರೂ ಸ್ಟೋರ್ ಮ್ಯಾನೇಜರನ್ನು ಕರೆಯುವಂತೆ ತಾಕೀತು ಮಾಡಿದೆವು. ನಾವು ಒಬ್ಬರನ್ನು ಕರೆದರೆ ಇಬ್ಬರು ಮ್ಯಾನೇಜರರು ಬಂದರು - ಅವರಲ್ಲಿ ಒಬ್ಬ ಬಿಳಿಯ ಮತ್ತೊಬ್ಬ ಭಾರತೀಯ. ಈ ಕಪ್ಪು ಜನರು ಯಾರ ಮಾತನ್ನೂ ಕೇಳುವವರ ಹಾಗಿರಲಿಲ್ಲವೆಂದು ಅವರಿಗೂ ಚೆನ್ನಾಗಿ ಗೊತ್ತಿತ್ತೆಂದು ಕಾಣುತ್ತದೆ ಅವರು ನಮಗೇ ತಿಳಿಸಿ ಹೇಳಲು ನೋಡಿದರು - 'ನೋಡಿ ನೀವು ಹೀಗೆ ಮಾಡಿದರೆ ನಿಮಗೂ, ಮತ್ತೆಲ್ಲರಿಗೂ ತಡವಾಗುತ್ತದೆ' ಎಂದು ಕೌಂಟರಿನ ಕ್ಲರ್ಕ್‌ನ್ನು 'ನೀನು, ಯಾರು ಮೊದಲು ಸಾಲಿನಲ್ಲಿದ್ದದ್ದೆಂದು ನೋಡಿದ್ದೀಯೇನು?' ಎಂದು ಕೇಳಿದರು, ಅವಳು 'ನನಗೆ ಗೊತ್ತಿಲ್ಲ' ಎಂದು ಕೈ ಚೆಲ್ಲಿದಳು. ನಾನು ನನ್ನ ಮುಂದಿದ್ದ ಓರಿಯೆಂಟಲ್ ದಂಪತಿಗಳ ಕಡೆಗೆ ನೋಡಿದೆ, ಅವರು ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಮುಖ ತಿರುಗಿಸಿಕೊಂಡರು. ಉದ್ದವಾಗಿ ಬೆಳೆಯುತ್ತಿದ್ದ ಸಾಲಿನಲ್ಲಿ ಜನಗಳಿಗೆ ಪುಕ್ಕಟೆ ಮನರಂಜನೆಯೂ ಹಾಗೂ ಅವರಲ್ಲಿ ತರಾತುರಿಯಿಂದಿದ್ದವರ ಅಸಹನೆಯೂ ಗೋಚರವಾಗತೊಡಗಿತು. ನನ್ನ ಹೆಂಡತಿ ಇದು ಬಗೆ ಹರಿಯುವವರೆಗೂ ನಾವಿಲ್ಲಿಂದ ಕದಲುವುದು ಬೇಡವೆಂದು ನನಗೆ ಕನ್ನಡದಲ್ಲಿ ಹೇಳಿದಳು, ಇದಕ್ಕೆಲ್ಲ ತಾನೇ ಉತ್ತರ ಕಂಡುಹಿಡಿದುಕೊಂಡವಳಂತೆ ಕೌಂಟರಿನ ಕ್ಲರ್ಕ್ ನಮ್ಮ ಮುಂದೆ ಅಸಭ್ಯವಾಗಿ ನಡೆದುಕೊಂಡು, ಅವರ ಸಾಮಾನುಗಳನ್ನು ನಮ್ಮ ಮುಂದೆ ಬಲವಂತವಾಗಿ ತಳ್ಳಿದವರ ಕಡೆಗೆ ಅವರ ಸಾಮಾನುಗಳನ್ನು ಸ್ಕ್ಯಾನು ಮಾಡುವುದರ ಮೂಲಕ ನ್ಯಾಯ ಘೋಷಿಸಿಬಿಟ್ಟಳು. ನನಗೆ ಅದೆಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ ಆ ಕರಿಯರ ಕಡೆಗೆ ತಿರುಗಿ ಸಾಧ್ಯವಾದಷ್ಟು ದೊಡ್ಡ ಧ್ವನಿಯಲ್ಲಿ'You will never learn' ಎಂದೆ, ಹಾಗೂ ಬಂದಿದ್ದ ಆ ಮ್ಯಾನೇಜರುಗಳ ಕಡೆಗೆ ತಿರುಗಿ 'Look, I don't mind the delay, it is a matter of principle, someday someone will have to bring it home to them' ಎಂದು ದೊಡ್ಡದಾಗಿ ಶ್ವಾಸವನ್ನು ಬಿಟ್ಟೆ. ಗಾಯದ ಮೇಲೆ ಉಪ್ಪು ಸುರಿಯೋರ ಹಾಗೆ ನಮ್ಮ ನಡುವೆ ನುಗ್ಗಿ ನಮಗಿಂತ ಮೊದಲು ಸಾಮಾನುಗಳನ್ನು ತೆಗೆದುಕೊಂಡ ಹುಡುಗಿ 'ನಿನ್ನನ್ನು ಸೋಲಿಸಿಬಿಟ್ಟೆ ನೋಡು!' ಎಂಬ ಭಾವದಲ್ಲಿ ಪಕಪಕನೆ ನಕ್ಕು ಬಿಟ್ಟಳು - ನಾನು ಭಾರತದಲ್ಲಿ ಬಿಡೋ ಹಾಗೆ ನನ್ನ ಕೆಂಪು ಕಣ್ಣುಗಳನ್ನು ಸಾಧ್ಯವಾದಷ್ಟು ದೊಡ್ಡದು ಮಾಡಿ ಅವಳೆಡೆಗೆ ದುರುಗುಟ್ಟಿದೆ, ಅವಳು ಸುಮ್ಮನಾದದ್ದು ಮತ್ತೇನೂ ಅನಾಹುತವಾಗದ ಹಾಗೆ ನನ್ನನ್ನು ಕಾಪಾಡಿತು.

***

ಒಂಭತ್ತು ಘಂಟೆಯಾಯಿತೆಂದು ನಾವಿಬ್ಬರೂ ಲಗುಬಗೆಯಿಂದ ಮನೆಯ ಕಡೆಗೆ ಹೊರಟೆವು - ಆ ಕಪ್ಪು ಜನರ ಹಿಂಡು ಅದೇ ಅಂಗಡಿಯಲ್ಲಿರುವ ಫಾಸ್ಟ್‌ಫುಡ್ ವಿಭಾಗಕ್ಕೆ ತೆರಳಿ ಅಲ್ಲೇ ಕುಳಿತುಕೊಳ್ಳುವ ಹುನ್ನಾರ ನಡೆಸುವುದು ಕಂಡುಬಂದಿತು. ಹಠಮಾರಿತನದಲ್ಲಿ ಸಾಮಾನುಗಳನ್ನು ಅಲ್ಲೇ ಬಿಟ್ಟುಬರಬಹುದಿತ್ತು, ಅಥವಾ ಕ್ಯಾಮೆರಾ ರೀವೈಂಡ್ ಮಾಡಿ ನೋಡಿ ಎಂದು ಮ್ಯಾನೇಜರುಗಳಿಗೆ ಹೇಳಬಹುದಿತ್ತು, ತನ್ನ ವಂಶಸ್ಥರಿಗೆ ನ್ಯಾಯ ನೀಡಿದ ಆ ಕೌಂಟರ್ ಕ್ಲರ್ಕ್‌ನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ನಾವಿಬ್ಬರೂ ಗಟ್ಟಿ ಧ್ವನಿಯಲ್ಲಿ ಮಾತನಾಡಿ ನಮ್ಮ ನಿಲುವನ್ನು stick up ಮಾಡಿದ್ದೇ ಒಳ್ಳೆಯದಾಯಿತು, ಅದರಿಂದ ಇನ್ನೇನಾಗದಿದ್ದರೂ ಮುಂದೆ ಆ ಹುಡುಗಿ ಭಾರತೀಯರು ನರಸತ್ತವರು ಎಂದುಕೊಳ್ಳುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸುವುದಂತೂ ಗ್ಯಾರಂಟಿ.

ಆದರೆ, ಈ ಕಪ್ಪು ಜನರ ಬಾಯಿಂದ ಕೈಯಿಂದ ಯಾವಾಗ ಏನೇನು ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ, ಅವರು ನಮ್ಮನ್ನು ಹಿಂಬಾಲಿಸಿಕೊಂಡು ಪಾರ್ಕಿಂಗ್ ಲಾಟಿನವರೆಗೂ ಬಂದಿದ್ದರೆ ಎನ್ನುವ ಹೆದರಿಕೆ ನನ್ನಲ್ಲಿತ್ತು.

***

ಒಂದು ನೋವು ಅಥವಾ ಸಂಕಟ ಸಡನ್ ಆಗಿ ಮಾಯವಾಗಬೇಕೆಂದರೆ ಅದಕ್ಕಿಂತ ಬಲವಾದ ಮತ್ತೊಂದು ನೋವು ಅಥವಾ ಸಂಕಟವಾಗಬೇಕಂತೆ - ಈ ಗೊಂದಲದಲ್ಲಿ ನನ್ನ ತಲೆನೋವು ಯಾವಾಗಲೋ ಹಾರಿಹೋಗಿತ್ತು!

Sunday, May 14, 2006

ದೇಶದ್ರೋಹ ಮತ್ತು ದೇಶಪ್ರೇಮಗಳ ನಡುವಿನ ಸಣ್ಣ ಗೆರೆ

ಇಂದಿನ ಮಾಹಿತಿ ಯುಗದಲ್ಲಿ ನಾವು ಹಲವಾರು ಮೂಲಗಳಿಂದ ವಿಷಯಗಳನ್ನು ಗ್ರಹಿಸುತ್ತೇವೆ, ಸಂಗ್ರಹಿಸುತ್ತೇವೆ. ಆದರೆ ಪತ್ರಿಕೆಗಳು, ಅಂತರ್ಜಾಲ ತಾಣಗಳು, ರೇಡಿಯೋ, ಟಿವಿ. ಇತ್ಯಾದಿಗಳು ಸುದ್ದಿ, ವಿಚಾರಗಳ ಮಹಾಪೂರವನ್ನೇ ಹರಿಸುತ್ತಿರುವಾಗ ಕೆಲವೊಂದಿಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ, ಈ ಕಳೆದುಕೊಳ್ಳುವುದರ ಹಿಂದೆ ಹಲವಾರು (ಕ್ವಾಲಿಟಿ, ಕಂಟೆಂಟ್, ವರದಿಗಳ ಸ್ವಾರಸ್ಯ, ಮೌಲ್ಯ, ಪಕ್ಷಪಾತ, ಏಕಪಕ್ಷೀಯ ನಿಲುವು, ಇತ್ಯಾದಿ) ಕಾರಣಗಳಿರಬಹುದಾದರೂ ಕೆಲವೊಮ್ಮೆ ಭಾವನೆಗಳೂ, ನಮ್ಮ ನಂಬಿಕೆಗಳೂ ಕಾರಣವಾಗುತ್ತವೆ. ಈ ದಿನ NPR ನ Weekend editionನಲ್ಲಿ ಇರಾಕಿನ ಮಾಜೀ ಯೋಧನೊಬ್ಬನನ್ನು ದೊಡ್ಡ ಹೀರೋನನ್ನಾಗಿ ಚಿತ್ರಿಸಿದ ಅವತರಣಿಕೆಯೊಂದು ಬಿತ್ತರವಾಯಿತು - ತನ್ನ ದೇಶವನ್ನು ಅಂದು ಜೋಪಾನ ಮಾಡಿಕೊಳ್ಳುವ ಮನಸ್ಸಿರದವನು ಅಮೇರಿಕದ ನೀರು ಕುಡಿದ ಕೆಲವೇ ದಿನಗಳಲ್ಲಿ "...I have a very big, huge faith in the future..." ಎಂದದ್ದು ನನಗಂತೂ ಬಾಲಿಶವಾಗಿ ಕಾಣಿಸಿತು.

***

NPR ನ Weekend Editionನಲ್ಲಿ ಇರಾಕೀ ಮಿಲಿಟರಿಯನ್ನು ಅಮೇರಿಕದವರು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮೈಲಿಗಲ್ಲೊಂದನ್ನು ಮುಟ್ಟಲಾಗಿದೆ ಎಂಬ ವರದಿ ಇಂದು ಮುಂಜಾನೆ ಪ್ರಕಟವಾಯಿತು. ಈ ವರದಿಯಲ್ಲಿ ೨೮ ವರ್ಷ ವಯಸ್ಸಿನ ಆರ್ಕನ್ ಎನ್ನೋ ಇರಾಕೀ ಆರ್ಮೀ ಕ್ಯಾಪ್ಟನ್ ಒಬ್ಬನು ಅಮೇರಿಕದ ಎಲೈಟ್ ಸೈನಿಕರು ಮಾತ್ರ ಮುಗಿಸಬಹುದಾದ ರೇಂಜರ್ ಟ್ರೈನಿಂಗ್‌ನ್ನು ಫೋರ್ಟ್ ಬೆನ್ನಿಂಗ್, ಜಾರ್ಜಿಯಾ ದಲ್ಲಿ ಮುಗಿಸಿದನೆಂದೂ, ಯಶಸ್ವಿಯಾಗಿ ತರಬೇತಿ ಮುಗಿಸಿದ ಉಳಿದ ೧೮೬ ಜನರಲ್ಲಿ ಆರ್ಕನ್ ಕೂಡಾ ಒಬ್ಬನೆಂದೂ ಹಾಗೂ ತನ್ನ ದಿನ ನಿತ್ಯದ ಚಟುವಟಿಕೆಳಲ್ಲಿ ಆದಷ್ಟು 'ಅಮೇರಿಕನ್' ಶೈಲಿಯನ್ನು ಬಳಸುತ್ತಾನೆಂದೂ ಆರ್ಕನ್‌ನ್ನು ಪರಿಚಯಿಸಿದರು. ಇರಾಕಿನಲ್ಲಿ ಅಮೇರಿಕನ್ ಮಾದರಿಯ ಆರ್ಮಿಯನ್ನು ಸ್ಥಾಪಿಸುವುದು ಇವೆಲ್ಲದರ ಉದ್ದೇಶ, ಆದರೆ ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತೋ ಅನ್ನೋದು ಸ್ಟೋರಿಯ ಹಿನ್ನೆಲೆಯಾದರೂ ವರದಿಗಾತ್ರಿ ಡೆಬ್ರಾ ಏಮೋಸ್ (Deborah Amos) ಉತ್ತರವನ್ನಾಗಲೇ ಕಂಡುಕೊಂಡ ಹಾಗಿತ್ತು.

ಇರಾಕ್‌ನಲ್ಲಿ ಅಳಿದುಳಿದ ಯುವಕರನ್ನು ಮಿಲಿಟರಿಗೆ ಸೇರಿಸಿಕೊಂಡು ಅವರಲ್ಲಿ ಆಯ್ದ ಕೆಲವರನ್ನು ಅಮೇರಿಕಕ್ಕೂ ಕರೆದುಕೊಂಡು ಬಂದು, ಅಮೇರಿಕದ ಫ್ಲೋರಿಡಾ ಹಾಗೂ ಜಾರ್ಜಿಯಾದ ಮಿಲಿಟರಿ ಕ್ಯಾಂಪ್‌ಗಳಲ್ಲಿ ಬೂಟ್‌ಕ್ಯಾಂಪ್‌ಗಿಂತಲೂ ಹೆಚ್ಚು ಇಂಟೆನ್ಸ್ ಆಗಿ ತರಬೇತಿಯನ್ನು ಕೊಟ್ಟು ಅವರನ್ನು ತಮ್ಮ ತಾಯ್ನಾಡಿಗೆ ಕಳಿಸಿ ಮಿಲಿಟರಿಯಲ್ಲಿ ಹೆಚ್ಚಿನ ಸ್ಥಾನವನ್ನು ಕೊಟ್ಟರೆ... ಎಂಬುದು ಅಮೇರಿಕನ್‌ರ ತರ್ಕ. ಈ ತರಬೇತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ ಸುಮಾರು ಅರ್ಧಕರ್ಧ ಜನ ಮಧ್ಯದಲ್ಲಿಯೇ ಬಿಡುತ್ತಾರೆಂತಲೂ, ತರಬೇತಿಯನ್ನು ಯಶಸ್ವಿಯಾಗಿ ಪೂರೈಸುವರು ದಿನವಿಡೀ ತಮ್ಮ ದೇಹ ಹಾಗೂ ಮನಸ್ಸನ್ನು ಕಾಂಬ್ಯಾಟ್ ಸಿಚುವೇಷನ್‌ಗೆ ಒಡ್ಡಿಕೊಂಡು ತಮ್ಮನ್ನು 'ಗಟ್ಟಿ'ಮಾಡಿಕೊಳ್ಳುತ್ತಾರೆಂತಲೂ ಕೇಳಿದೆ.

ಈ ವರದಿಯಲ್ಲಿ ಆರ್ಕನ್ ಎಂಬ ಹಳೆಯ ಸದ್ದಾಮ್ ಸರ್ಕಾರದ ಸಮಯದಲ್ಲಿ ಎಲೈಟ್ ಫೋರ್ಸ್ ನಲ್ಲಿದ್ದ ಆರ್ಮಿಯವನ ಕಥೆಯನ್ನು ಬಣ್ಣಿಸಿದರು - ಕಥೆಯ ಮೊದಲಿಗೆ ಆತ ಸದ್ದಾಮನ ಆಡಳಿತದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವನೆಂದೂ, ೨೦೦೩ ರಲ್ಲಿ ಅಮೇರಿಕನ್ ಮಿಲಿಟರಿ ಬಾಗ್ದಾದ್ ಅನ್ನು ಪ್ರವೇಶಿಸಿದ ತಕ್ಷಣ ಈತ ತನ್ನ ಹುದ್ದೆಯನ್ನು ತ್ಯಜಿಸಿ ಈಗ ಅಮೇರಿಕನ್ನರ ಆಡಳಿತದಡಿಯಲ್ಲಿ ಮತ್ತೆ ಮಿಲಿಟರಿಗೆ ಸೇರಿಕೊಂಡು 'ಮೇಲೆ'ಬರುವ ಕನಸುಗಳನ್ನು ಇಟ್ಟುಕೊಂಡಿದ್ದಾನೆಂತಲೂ ಕೇಳಿದೆ.

ಈ ಮೇಲಿನ ಒಂದು ಸಾಲನ್ನು ಬರೆದು ಓದಿದ ಡೆಬ್ರಾ ಯಾವ ಭಾವನೆಯೂ ಇಲ್ಲದೇ ಓದಿ ಬಿಟ್ಟಳು ಆದರೆ ನಾವು ಅದನ್ನು ಕುರಿತು ಒಂದು ಕ್ಷಣ ಯೋಚಿಸೋಣ - ಈತ ತನ್ನ ದೇಶದ ಮಿಲಿಟರಿಯಲ್ಲಿ ಕೆಲಸಮಾಡುತ್ತಿದ್ದವ, 'ವೈರಿ'ಪಡೆ ಬಂದ ತಕ್ಷಣವೇ ಕಂಬಿ ಕಿತ್ತವನು, ಇಂಥವನು ದೇಶದ್ರೋಹಿಯಾಗೋದಿಲ್ಲವೇ? ಯುದ್ಧದಲ್ಲಿ ತೊಡಗಿದ ಆರ್ಕನ್‌ಗೆ ಅಮೇರಿಕದ ಸೈನ್ಯ ಬಾಗ್ದಾದ್ ತಲುಪಿದ ತಕ್ಷಣ ಕೈ ಚೆಲ್ಲುವಂತೆ ಹಿಂದೆ ತರಬೇತಿ ನೀಡಲಾಗಿತ್ತೇ? ಅಥವಾ ತನ್ನ ದೇಶದ ಅಧ್ಯಕ್ಷನ ಆಡಳಿತದ ಮೇಲೆ ಮೊದಲಿಂದಲೂ ಅಸಮಧಾನ ಇದ್ದು ಅದನ್ನು ತನ್ನ ಸದುಪಯೋಗಕ್ಕೆ ಬಳಸಿಕೊಂಡು 'ವೈರಿ'ಪಡೆಯನ್ನು ಸೇರುವ ಯೋಜನೆ ಆತನ ಮನಸ್ಸಿನಲ್ಲಿತ್ತೇ? ಆದರೆ ಇದೇ ವರದಿಯಲ್ಲಿ ಆರ್ಕನ್ ತನ್ನ ದೇಶದವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದನ್ನೂ ಕೇಳಿದೆ - ಆಕ್ರಮಣಕಾರರನ್ನು ಹೊರಗಿನವರು ಎಂದು ಕರೆದವನು, ಅವರನ್ನು ಹುಟ್ಟು ಹಾಕಿದ್ದು ಯಾರು ಎಂದು ಯೋಚಿಸಿದ್ದರೆ ಒಳ್ಳೆಯದಿತ್ತು. ಯುದ್ಧ ಸರಿಯೋ ತಪ್ಪೋ, ಅದು ಯಾವ ಕಾರಣಕ್ಕೆ ಆಗುತ್ತದೆ, ಬಿಡುತ್ತದೆ ಎನ್ನುವುದು ಒಂದು ಸೈನ್ಯದಲ್ಲಿ ಕೆಲಸಮಾಡುತ್ತಿರುವವರಿಗಿಂತ ಮಿಗಿಲಾದುದು (ಮುಖ್ಯವಾಗಿ ಪ್ರತಿ ಯುದ್ಧದ ಹಿಂದೆ ಅಂತಹ ವಿವೇಚನೆ ಇದ್ದರೆ ಯುದ್ಧವಾದರೂ ಏಕೆ ಆಗುತ್ತಿತ್ತು). ಸರಿ, ಇಂಥವನನ್ನು ತಂದು ಅಮೇರಿಕನ್ನರು ತರಬೇತಿ ಕೊಟ್ಟ ಮಾತ್ರಕ್ಕೆ ನಾಳೆ ತನ್ನ ದೇಶವನ್ನು ಈತ ರಕ್ಷಿಸುತ್ತಾನೆ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ? ಸದ್ದಾಮನ ಸರ್ಕಾರದ ವಿರುದ್ಧ ಸಾವಿರ ಅಲಿಗೇಷನ್‌ಗಳಿರಬಹುದು (ಅವನು ತಪ್ಪನ್ನು ಮಾಡಿಲ್ಲ ಎನ್ನುವುದು ನನ್ನ ನಿಲುವಲ್ಲ) ಆದರೆ ಅಮೇರಿಕದವರು ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿ, ನೆಟ್ಟಗಿದ್ದ ದೇಶವನ್ನು ಕಲಕಿ, ಈಗ ಅದರಿಂದ ಹೊರಬರಲು ಪ್ರಯತ್ನಿಸುತ್ತಾ 'ಇಂಥ' ಸಮಯಸಾಧಕರನ್ನು ಮೇಲೆ ತರುವ ಪ್ರಕ್ರಿಯೆ ಇದೆ ನೋಡಿ ಅದು ಬಹಳ ದೂರ ಬರಲಾರದು. ಆರ್ಮಿ ರಿಸರ್ವ್ ಅಥವಾ ಮಿಲಿಟರಿ ಸೇವೆಗಳಲ್ಲಿ ತಮ್ಮನ್ನು ನೋಂದಾವಣೆ ಮಾಡಿಕೊಂಡ ಎಷ್ಟೋ ಜನ ಯುವಕ-ಯುವತಿಯರನ್ನು ಅಮೇರಿಕ ದುಡಿಸಿಕೊಳ್ಳುತ್ತಿದೆ, ಇಲ್ಲಿ ತಮ್ಮನ್ನು ತಾವು ಭರ್ತಿಮಾಡಿಕೊಂಡವರಿಗೆ, ತಾವು ಕೊಟ್ಟ ಮಾತಿನಂತೆ ಇಷ್ಟವಿರಲೀ ಇಲ್ಲದಿರಲೀ, ಕೆಲಸಕ್ಕೆ ನಿಯೋಜಿಸಿದಾಗ ಹೋಗಲೇ ಬೇಕು, ಇಲ್ಲಾ ಎಂದರೆ ದಂಡನೆಗೆ ಗುರಿಯಾಗಬೇಕಾಗುತ್ತದೆ, ಅದೇ ಬೇರೊಂದು ದೇಶದಲ್ಲಿ ತನ್ನ ಅದೇ ಜವಾಬ್ದಾರಿಯನ್ನು ಕೈತೊಳೆದುಕೊಂಡ ವ್ಯಕ್ತಿಯೊಬ್ಬನನ್ನು ಇಲ್ಲಿ ಮನ್ನಿಸಲಾಗುತ್ತದೆ, ಯಾವ ನ್ಯಾಯ?

ನಮ್ಮ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಗೆ ತಂದುಕೊಳ್ಳಿ...ಅದರಲ್ಲಿ ವಿಶ್ವದ ಐಶಾರಾಮಗಳನ್ನು ಮನಸ್ಸು ಮಾಡಿದ್ದರೆ ಪಡೆದುಕೊಳ್ಳಬಹುದಾಗಿದ್ದರೂ ಅವುಗಳನ್ನೆಲ್ಲ ಧಿಕ್ಕರಿಸಿ ಸರಳ ಬದುಕನ್ನು ತಾವೂ ರೂಢಿಸಿಕೊಳ್ಳುವುದೂ ಅಲ್ಲದೇ ವಿಶ್ವಕ್ಕೇ ಆದರ್ಶಮಯವಾಗಿದ್ದ ಬಾಪು ಅಂಥವರೂ ಇದ್ದರು, ಅವರ ಸತ್ಯಾಗ್ರಹಗಳಲ್ಲಿ ದೇಶಕ್ಕಾಗಿ 'ಮಾಡು ಇಲ್ಲವೇ ಮಡಿ' ಎಂಬ ಅಂದೋಳನಗಳಲ್ಲಿ ಜೀವವನ್ನು ತೊರೆಯುವ ಮುಗ್ಧ ದೇಶಭಕ್ತರೂ ಇದ್ದರು. ನಿಮಗೆ ನೆನಪಿರಬಹುದು ೧೯೯೯ರಲ್ಲಿ ಕಾರ್ಗಿಲ್ ಯುದ್ಧವಾದಾಗ ಜೈಲಿನಲ್ಲಿ ಮರಣ ದಂಡನೆಗೊಳಪಟ್ಟ ಕೆಲವು ಖೈದಿಗಳೂ ತಮ್ಮನ್ನು 'ಮಾನವ ಬಾಂಬ'ನ್ನಾಗಿ ಬಳಸಿಕೊಳ್ಳಿ ಎಂದು ಕೇಳಿಕೊಂಡಿದ್ದರಂತೆ - ಇಂದು ನಮ್ಮ ದೇಶವನ್ನು ಯಾರಾದರೂ ಆಕ್ರಮಿಸಿಕೊಳ್ಳುತ್ತಾರೆಂದರೆ ಮಣ್ಣಿನ ಮಹತ್ವ ಹಾಗೂ ಋಣವನ್ನು ಬಲ್ಲ ಯಾವೊಬ್ಬ ಸೈನಿಕನೂ ಪಲಾಯನಗೊಳ್ಳುವುದಿಲ್ಲ - ಇಂದಿನ ಸರ್ಕಾರದ ರೀತಿ ರಿವಾಜುಗಳು ಏನೇ ಇರಬಹುದು, ದೇಶಭಕ್ತಿ ಬಹಳ ದೊಡ್ಡದು, ಅದು ಹಣದ ಹಂಬಲ, ವಿದೇಶೀ ವ್ಯಾಮೋಹ, ಅಧಿಕಾರದ ಆಮಿಷ ಮುಂತಾದ ರಾಗಗಳನ್ನು ಸುಲಭವಾಗಿ ಜಯಿಸಬಲ್ಲದು, ಇಲ್ಲವೆಂದಾದರೆ ಅದರಲ್ಲಿ ಏನೋ ಕುಂದಿದೆಯೆಂದೇ ಅರ್ಥ.

ಅಷ್ಟೇ ಅಲ್ಲದೇ ನಾವು ಯಾವ ದೇಶವನ್ನು ಅನ್ಯಾಯವಾಗಿ ಆಕ್ರಮಿಸಿಕೊಳ್ಳಲಿಲ್ಲ ಎನ್ನುವ ಆತ್ಮಸ್ಥೈರ್ಯವೇ ಸಾಕು ನಮ್ಮನ್ನು ಬಹಳ ಎತ್ತರದಲ್ಲಿಡುತ್ತದೆ. ಅಮೇರಿಕದಲ್ಲಿ ಸೈನ್ಯಕ್ಕೆ ಸೇರಿ ಯಾವುದೋ ಕಣ್ಣು ಕಾಣದ ದೇಶದಲ್ಲಿ ಯಾರೋ ಮಾಡಿದ ತಪ್ಪಿಗೆ ಜೀವ ತೆರುವುದು ಇದೆ ನೋಡಿ ಅದು ಬಹಳ ದುರ್ಭರವಾದುದು. ಹಿಂದೆ ನಡೆದ ಎಲ್ಲ ಯುದ್ಧಗಳಲ್ಲೂ, ಒಂದು ರೀತಿ-ನೀತಿ ಎನ್ನುವುದೊಂದಿತ್ತು, ಆದರೆ ಇಂದಿನ ಇರಾಕ್ ಪರಿಸ್ಥಿತಿಯಲ್ಲಿ ಅಮೇರಿಕದವರು ಇನ್ನೇನು ಯುದ್ಧ ಮುಗಿಯಿತು ಎಂದು ಶ್ವಾಸವನ್ನು ಹೊರಗೆ ಬಿಡುವ ಪ್ರಯತ್ನಮಾಡಿದಂತೆಲ್ಲಾ ರಸ್ತೆ ಬದಿಯಲ್ಲಿ ಮತ್ತೊಂದು ಬಾಂಬು ಸಿಡಿಯುತ್ತದೆ, ಮತ್ತಿನ್ನಷ್ಟು ಕ್ಯಾಷುವಾಲಿಟಿಯಾಗುತ್ತದೆ. ನಾನು ಆಗಾಗ್ಗೆ ಕ್ಯಾಷುವಾಲಿಟಿಯ ಈ ಸೈಟುಗಳಿಗೆ ಭೇಟಿ ಕೊಡುತ್ತಿರುತ್ತೇನೆ, ನೀವು ಅದನ್ನು ಇಲ್ಲಿ, ಇಲ್ಲಿ ನೋಡಬಹುದು. ಸತ್ತವರು, ಸತ್ತು ಬದುಕಿದವರು ಯಾರ ಕಡೆಯವರೇ ಆಗಲಿ ನನ್ನ ಮೇಲೆ ಒಂದೇ ರೀತಿಯ ಪರಿಣಾಮ ಉಂಟಾಗುತ್ತದೆ.

ಇರಾಕ್‌ನಲ್ಲಿ ಹಿಂದೆ ನಿಜವಾಗಿ ಸೈನಿಕರಾಗಿದ್ದವರೆಲ್ಲ ಈಗಿಲ್ಲ. ಈಗ ಇರುವವರಲ್ಲಿ ಒಂದೇ ಹಿಂದಿನ ಸೈನ್ಯದಿಂದ ಕಂಬಿಕಿತ್ತ ಅವಕಾಶವಾದಿಗಳು ಅಥವಾ ಇನ್ನೂ ಏನನ್ನೂ ಅರಿಯದ ಹಾಗೂ ಹಲವು ಕನ್‌ಫ್ಯೂಷನ್ ಗೆ ಸಿಕ್ಕಿಕೊಂಡ ಮುಗ್ಧ ಯುವಕರು, ಒಳಗಿದ್ದುಕೊಂಡೇ ಶಕುನಿ ತಂತ್ರವನ್ನನುಸರಿಸೋ ಕುತಂತ್ರಿಗಳು ಹಾಗೂ ದಂಗೆಕೋರರು ಬೇಡವೆಂದು ಬಿಟ್ಟುಹೋದ ಹಲವು ತಬ್ಬಲಿಗಳು. ತಮ್ಮನ್ನೇ ತಾವು 'ರಕ್ಷಿಸಿ'ಕೊಳ್ಳದ ಇಂಥ ಸೈನಿಕರನ್ನು ಯಾವ ದೇಶದವರೇ ತರಬೇತಿಕೊಡಲಿ ಅವರಲ್ಲಿ ತಮ್ಮ ದೇಶಕ್ಕಾಗಿ ಹೋರಾಡುವ ಕೆಚ್ಚನ್ನು ಮೂಡಿಸಲು ಸಾಧ್ಯವಿಲ್ಲ. ದಿನವೂ ಬದಲಾಗುವ ಸಿವಿಲ್ ವಾರ್‌ನ್ನು ಎದುರಿಸುವ ಕಾನೂನು ಕಟ್ಟಳೆಗಳಲ್ಲಿ ತಮ್ಮನ್ನು ತಮ್ಮ ಕುಟುಂಬವನ್ನು ರಕ್ಷಿಸಿಕೊಂಡರೆ ಹೆಚ್ಚು, ಆದರೆ ವ್ಯಕ್ತಿಯ ಮಟ್ಟದಲ್ಲಿ ದೊರೆತು, ಬೆಳೆಯುವ ಅವರ ತರಬೇತಿ, ಸಮೂಹ ಮಟ್ಟದಲ್ಲಿ ಯಾವ ಪರಿಣಾಮವನ್ನೂ ಬೀರಲಾರದು. ದಿನವೂ ರಸ್ತೆ ಬದಿಯಲ್ಲಿ ಸಿಡಿಯುವ ಬಾಂಬುಗಳಿಗೆ ತರಕಾರಿ ಮಾರುವವ ಹಾಗೂ ಅಮೇರಿಕದಿಂದ ತರಬೇತಿ ಪಡೆದ ಎಲೈಟ್ ಸೈನಿಕನೆಂಬ ಪಕ್ಷಪಾತವಿರುವುದಿಲ್ಲ ನೋಡಿ ಅದಕ್ಕೆ. ನನ್ನ ದೃಷ್ಟಿಯಲ್ಲಿ ಟೆಕ್ನಾಲಜಿ ಹೆವಿ ಅಮೇರಿಕನ್ ಮಿಲಿಟರಿ ವ್ಯವಸ್ಥೆಗಳಿಗೆ ಇಂಥ ಸ್ಪಂದನಗಳು ಕಾಣುವುದಿಲ್ಲ, ಕಂಡರೂ ಕುರುಡಾಗಿರುತ್ತವೆ, ಇಲ್ಲವೆಂದಾಗಿದ್ದರೆ ಆಕ್ರಮಣಕ್ಕೆ ಮೂರು ದಿನ, ಅಲ್ಲಿಂದ ಹೊರಬರುವುದಕ್ಕೆ ಮೂರು ವರ್ಷಗಳಿಗಿಂತ ಹೆಚ್ಚು ಹಿಡಿಯುತ್ತಿರಲಿಲ್ಲ.

***

ಸ್ಟ್ರಾಟೀಜಿಕ್ ನೆಲೆಗಟ್ಟು ಎಂದು ವಿಶ್ವದ ತುಂಬೆಲ್ಲಾ ಕಂಡ ಕಂಡಲ್ಲಿ ಮಿಲಿಟರಿ ಬೇಸುಗಳನ್ನು ಸ್ಥಾಪಿಸಿರುವ, ವೈಯುಕ್ತಿಕ ಅನುಕೂಲಗಳಿಗೋಸ್ಕರ ಹಾಡು ಹಗಲೇ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಾಕುವ ಹಾಗೂ ತನ್ನ ಅಗತ್ಯಕ್ಕೆ ತಕ್ಕಂತೆ ರಾಜಾರೋಷವಾಗಿ ಸುಳ್ಳನ್ನು ಹೇಳಿ ಮುಂದೆ ಅದನ್ನು ಸಾಧಿಸಿಕೊಳ್ಳುವ ಅಮೇರಿಕದ ಅರ್ಹತೆ ಮತ್ತು ಅಧಿಕಾರವನ್ನು ಪ್ರಶ್ನಿಸುವ ಮನಸ್ಥಿತಿಗಳನ್ನು ದೇಶದ್ರೋಹಿಗಳೆಂದು ಇಲ್ಲಿನ ಬುದ್ಧಿವಂತರೆಲ್ಲ ತೆಗಳುವುದು ಏಕೋ? ವಿಶ್ವವನ್ನೇ 'ಅಮೇರಿಕನ್' ಮಯ ಮಾಡುವ ಹುನ್ನಾರ ಎಂದು ನಿಲ್ಲುತ್ತದೆಯೋ?

Saturday, May 13, 2006

ಮೂವರು 'ರಘು'ಗಳು

ಹೆಚ್ಚಿನ ನನ್ನ ಶಕ್ತಿಯೆಲ್ಲಾ ಎಲ್ಲಿ ವ್ಯಯವಾಗುತ್ತದೆಯೆಂದು ನನಗೆ ಚೆನ್ನಾಗಿ ಗೊತ್ತು: ಉಳಿದವರಿಗೆ ಬೇಡದ ಆಗದ ಹೋಗದ ವಿವರಗಳನ್ನು ನೆನಪಿಡುವಲ್ಲಿ. ಈ ಪ್ರಪಂಚದಲ್ಲಿ ಮನುಷ್ಯರ ಮನಸ್ಥಿತಿಯನ್ನು ಇಷ್ಟಪಡುವಷ್ಟು ಬೇರೇನನ್ನು ಇಷ್ಟಪಟ್ಟಿರಲಾರೆ - ಮನುಷ್ಯ ಸಂಘಜೀವಿಯಾಗಿ ಬೆಳೆದು ಬಂದದ್ದೂ ಅಲ್ಲದೇ, ಉಳಿದ ಪ್ರಾಣಿಸಂಕುಲದಲ್ಲಿ ಭಿನ್ನವಾಗಿರಲು ಈ ಮನಸ್ಸೇ ಮೂಲಕಾರಣ - ಬೇರೆ ಜೀವಿಗಳಿಗೂ ಮನಸ್ಸೆಂಬುದು ಇದೆ, ಆದರೆ ನಮ್ಮಷ್ಟು ವಿಸ್ತಾರ ರೂಪವನ್ನು ತಾಳಿಲ್ಲ ಎನ್ನುವುದು ನನ್ನ ನಂಬಿಕೆ, ಈ ವಿಶ್ವದಲ್ಲಿ ತೃಣ ಮಾತ್ರವಾದದ್ದು ಮಾನವ ಪ್ರಪಂಚ, ಅದರಲ್ಲಿ ಕೂದಲೆಳೆಯ ಸಾವಿರದೊಂದು ಭಾಗದ ಸಾವಿರದನೇ ಒಂದು ತುಂಡಿನ ಸಾವಿರದ ಒಂದನೇ ಭಾಗ ನಾನು, ನನ್ನ 'ನಂಬಿಕೆ'ಯಲ್ಲಿ ತಪ್ಪಿರಬಹುದು ಎನ್ನುವ ಕಲ್ಪನೆ ನನಗಿದ್ದರೂ, ಬಲವಾದ ನಂಬಿಕೆ ಹಾಗೂ ವಿಶ್ವಾಸಗಳು ನನ್ನ ವಾದವನ್ನು ಗೆಲ್ಲಿಸುತ್ತೇವೆಂದು ಮಾತುಕೊಟ್ಟಿರುವುದರಿಂದ ನಾನು ನನ್ನಲ್ಲಿ ವಿಶ್ವಾಸವನ್ನಿಟ್ಟುಕೊಳ್ಳುತ್ತೇನೆ!

***

ನಾನು ಈವರೆಗೆ ಹಲವಾರು 'ರಘು' ಎನ್ನುವ ಹೆಸರಿನ ವ್ಯಕ್ತಿಗಳನ್ನು ಮಾತನಾಡಿಸಿರಬಹುದು, ಅವರ ಜೊತೆಯಲ್ಲಿ ಕೆಲಸಮಾಡಿರಬಹುದು ಆದರೆ ಅಮೇರಿಕದಲ್ಲಿ ನನ್ನ ಸಹೋದ್ಯೋಗಿಗಳಾಗಿ ನಾನು ಹತ್ತಿರದಿಂದ ಬಲ್ಲ ಈ ಮೂವರು ರಘುಗಳ ಬಗ್ಗೆ ಬರೆಯಲೇ ಬೇಕಾಗುತ್ತದೆ. ಇತ್ತೀಚೆಗೆ ನನಗೆ ಆಫೀಸ್ ಸ್ಥಳಾಂತರವಾಗಿ ಹೊಸ ಆಫೀಸಿಗೆ ಹೋಗುವ ಸನ್ನಿವೇಶ ಬಂತು, ಮೊದಲನೇ ದಿನ ನನ್ನ ಹೊಸ ಕ್ಯೂಬಿಕಲ್ ಸುತ್ತಲೂ ಯಾರು ಯಾರು ಇದ್ದಾರೆ ಎಂದು ನೋಡುತ್ತಿದ್ದಾಗ ನನ್ನ ಹತ್ತಿರದಲ್ಲೇ ಕೂರುವ 'ರಘು' ಎನ್ನುವ ತೆಲುಗಿನವನು ಬಹಳ ಹತ್ತಿರದ ಸ್ನೇಹಿತನಂತೆ ಕಂಡು ಬಂದದ್ದೂ ಅಲ್ಲದೇ ಮುಂದೆ ಬಹಳ ದಿನಗಳವರೆಗೆ ಉತ್ತಮ ಗೆಳೆಯನಾಗುವ ಮುನ್ಸೂಚನೆಗಳನ್ನು ನೀಡಿದ - ಆತನ ನಡತೆ, ಮಾತುಕತೆ, ಇಲ್ಲಿನವರಲ್ಲಿ ಹೊಂದುಕೊಂಡ ರೀತಿ ಇವುಗಳು ನಾನು ಇದುವರೆಗೆ ನೋಡಿರುವ ತೆಲುಗು ಜನರೆಲ್ಲರ ಇಮೇಜನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವಂತಿದ್ದವು, ಹಾಗೂ ಆತ ತೋರಿದ ಆದರ, ಸಹೃದಯತೆಗಳು ಅವನ ಮೇಲಿನ ಗೌರವವನ್ನು ಹೆಚ್ಚು ಮಾಡಿದವು. ಅದೇ ವಾರ Diversity training ನಲ್ಲಿ ಹೇಳಿಕೊಟ್ಟ "We individualize the good behavior and generalize the bad behavior" ನೆನಪಿಗೆ ಬಂತು. ಅದರ ಸಾರ ಇಷ್ಟೇ: ನಾನೇನಾದರೂ ಒಳ್ಳೆಯ ನಡತೆಯನ್ನು ತೋರಿಸಿದರೆ ಅದು ನನ್ನ ಮಟ್ಟಿಗೇ ಸೀಮಿತವಾಗುತ್ತದೆ, ಆದೇ ನಾನೇನಾದರೂ ಕೆಟ್ಟದಾಗಿ ನಡೆದುಕೊಂಡರೆ 'ಈ ಭಾರತೀಯರೆಲ್ಲಾ ಹೀಗೇ' ಎನ್ನುವ ಜೆನರಲೈಸೇಷನ್ ಆಗುವುದು ಸ್ವಾಭಾವಿಕವಾದ್ದರಿಂದ ಈ ದೇಶದಲ್ಲಿ ನಮ್ಮ ಹೆಗಲುಗಳ ಮೇಲೆ ಯಾವಾಗಲೂ ಒಳ್ಳೆಯದಾಗೇ ನಡೆದುಕೊಳ್ಳುವ ಅದೃಶ್ಯವಾದ ಒತ್ತಡವೊಂದು ಇದ್ದೇ ಇರುತ್ತೆ.

ಇನ್ನು ಎರಡನೇ ರಘು, ನಾಲ್ಕು ವರ್ಷಗಳ ಹಿಂದೆ ನಮ್ಮ ಆಫೀಸಿನಲ್ಲೇ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದವನು. ಈತನ ಒಂದು ವಿಶೇಷವೆಂದರೆ, ಅವನು ಈ ದೇಶದಲ್ಲಿ ಎಷ್ಟು ವರ್ಷದಿಂದ ಇದ್ದವನೋ ಬಿಟ್ಟವನೋ, ಆದರೆ ಅವನ ನಡೆ-ನುಡಿ ಎಲ್ಲವೂ ಸಂಪೂರ್ಣ ಅಮೇರಿಕನ್ ಮಯವಾಗಿತ್ತು. ಆದರೆ ಒಂದು ಮುಖ್ಯವಾದ ವಿಷಯವೆಂದರೆ ಈತ ಟೆಕ್ನಿಕಲ್ ವಿಷಯದಲ್ಲಿ ಎಷ್ಟು ಪಾರಾಂಗತನೋ, ಬಿಸಿನೆಸ್ ವಿಷಯದಲ್ಲೂ ಅಷ್ಟೇ ನಿಪುಣನಾಗಿದ್ದ, ಎಷ್ಟೋ ಸಾರಿ ನನಗೆ ಅವನು ಬೇರೆ ಯಾರಿಗೂ ಗೊತ್ತಿರದ ಕಷ್ಟವಾದ ಪ್ರಾಡಕ್ಟಿನ ವಿವರಗಳನ್ನು ಹೇಳಿಕೊಟ್ಟಿದ್ದಿದೆ. ಒಂದು ದಿನ ಹೀಗೇ ಹರಟೆ ಹೊಡೆಯುತ್ತಿದ್ದಾಗ ಅವನೂ ಸಹ ಕರ್ನಾಟಕದವನೆಂದು ತಿಳಿಯಿತು. ನನ್ನ ಮೇಜಿನ ಮೇಲೆ ಸಿ.ಅಶ್ವಥ್‌ರ 'ನೂಪುರ' ಸಿ.ಡಿ. ಬಿದ್ದುಕೊಂಡಿತ್ತು (ಅಶ್ವಥ್ ಇಲ್ಲಿಗೆ ಬಂದಾಗ ಎಲ್ಲ ಹಾಡುಗಳನ್ನು ಅವರೇ ಹಾಡಿದ 'ನೂಪುರ' ಎನ್ನುವ ಸಿ.ಡಿ.ಯನ್ನು ಮಾರಿದ್ದರು, ಮುಂದೆ ಅದನ್ನೇ 'ಹುಣ್ಣಿಮೆ' ಎಂದು ಪ್ರಕಟಿಸಿ ಹಾಡುಗಳನ್ನು ಹೇಮಂತ್, ಸಂಗೀತಾ ಕುಲಕರ್ಣಿ, ಹಾಗೂ ಅಶ್ವಥ್ ಹಾಡಿದ್ದರು), ಆತನಿಗೆ ಹಾಡುಗಳನ್ನು ಕೇಳುವುದೂ ಇಷ್ಟವೆಂದು ತಿಳಿದು ಆ ಸಿ.ಡಿ.ಯನ್ನು ನಾನೇ ಅವನಿಗೆ ಕೇಳಿ ಕೊಡುವಂತೆ ಕೊಟ್ಟಿದ್ದೆ. ಅವನು ಕೆಲವು ದಿನಗಳ ನಂತರ ಸಿ.ಡಿ.ಯನ್ನು ಹಿಂತಿರುಗಿಸಿದ, ನಾನು 'ಯಾವ ಹಾಡು ಇಷ್ಟವಾಯಿತು, ಇವುಗಳಲ್ಲಿ' ಎಂದೆ, ಅವನು - '"ಬಾಳೀನ ದಾರಿಯಲಿ..." ಹಾಡು ಪರವಾಗಿಲ್ಲ, ಉಳಿದವುಗಳು ಅಷ್ಟಕಷ್ಟೇ' ಎಂದ.

ಈ ರಘು ನನ್ನ ಮನಸ್ಸಿನ್ನಲ್ಲಿ ಬಹಳ ಕಾಲ ನಿಲ್ಲುತ್ತಾನೆ. ಆತನ ಬಿಸಿನೆಸ್ಸಿನ ತಿಳುವಳಿಕೆಯೂ, ಸಂಪೂರ್ಣವಾಗಿ ಅಮೇರಿಕನ್‍ಮಯವಾದ ಇಂಗ್ಲೀಷೂ, ಹಾಗೂ ಉತ್ತಮ ಕೆಲಸವನ್ನು ಮಾಡಿ ಎಲ್ಲರಿಂದಲೂ ಮೆಚ್ಚುಗೆಗಳಿಸುತ್ತಿದ್ದುದೂ ನನಗಿನ್ನೂ ನೆನಪಿದೆ - ಒಬ್ಬ ರೋಲ್ ಮಾಡೆಲ್ ಆಗಿ ಇರಬಹುದಾದಂತ ವ್ಯಕ್ತಿತ್ವ ಆತನಲ್ಲಿತ್ತು.

***

ಇನ್ನು ಮೂರನೆಯವನಾಗಿ ಈ ರಘು - ೧೯೯೭ರಲ್ಲಿ ನಾನು ಐ.ಬಿ.ಎಮ್.ನಲ್ಲಿ ಕೆಲಸ ಮಾಡುತ್ತಿರುವಾಗ ಈತ ನನ್ನ ಜೊತೆ ನಮ್ಮ ಟೀಮಿನಲ್ಲೇ ಇದ್ದ. ಕನ್ಸಲ್‌ಟಿಂಗ್ ಕೆಲಸ ಮಾಡಿಕೊಂಡೂ, ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಎಮ್.ಬಿ.ಎ. ಮಾಡಿಕೊಂಡು ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಈತ ನನ್ನ ನೆನಪಿನಲ್ಲಿ ಉಳಿಯೋದು ಎರಡೇ ಎರಡು ಕಾರಣಗಳಿಗಾಗಿ - ಒಂದು ಆತನ ಸೀರಿಯಸ್ಸಾದ ಮುಖದಲ್ಲಿ ಹುಟ್ಟುತ್ತಿದ್ದ ಹಾಸ್ಯ ಹಾಗೂ ಇನ್ನೂ ಜೀವನವನ್ನು ಕಣ್ಬಿಟ್ಟು ನೋಡುವುದರ ಮೊದಲೇ ಆತ ಅನುಭವಿಸಬೇಕಾದ ದುರಂತ.

ನಾವೆಲ್ಲರೂ, ಅಂದರೆ ದೇಸಿ ಜನರು ಮಧ್ಯಾಹ್ನ ಊಟದ ಸಮಯದಲ್ಲಿ ಒಟ್ಟಿಗೇ ಕುಳಿತು ಹರಟೆ ಹೊಡೆಯುತ್ತಿದ್ದೆವು - ಅರುಣ್, ರಾಜೀವ್, ವಿದ್ಯಾ, ಕಲ್ಪೇಶ್, ಶ್ರೀಧರ್, ಅಬ್ದುಲ್, ರಘು, ಮಲ್ಲಿ, ಸುರೇಶ್, ಇನ್ನೂ ಮೂರ್ನಾಲ್ಕು (ಮುಖ ನೆನಪಿಗೆ ಬಂದು ಹೆಸರು ನೆನಪಿಗೆ ಬರದ) ಜನರೆಲ್ಲ ಸೇರಿ, ಪ್ರತಿ ದಿನ ಮಧ್ಯಾಹ್ನ ಊಟಕ್ಕೆ ಏನಿಲ್ಲ ಎಂದರೂ ಒಂದು ಎಂಟು ಜನರಾದರೂ ಸೇರಿಕೊಂಡು ಊಟದ ಟೇಬಲ್ಲನ್ನು 'ಮಿನಿ ಇಂಡಿಯಾ'ವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದೆವು - ಆಗೆಲ್ಲ ಬಿ.ಪಿ.ಓ. ಗಳ ಗೊಂದಲವಿರಲಿಲ್ಲ, ರಘುವನ್ನು ಬಿಟ್ಟು ನಮಗ್ಯಾರಿಗೂ ಇನ್ನೂ ಮದುವೆಯೂ ಆಗಿರದಿದ್ದುದರಿಂದ ಆಫೀಸಿನ ಬಾಸನ್ನು ಬಿಟ್ಟರೆ ಉಳಿದ ಸಮಯದಲ್ಲೆಲ್ಲಾ ನಾವೇ ನಮ್ಮ ಬಾಸುಗಳು ಎನ್ನುವಂತಿದ್ದೆವು. ಇವರಿಷ್ಟು ಜನರಲ್ಲಿ ರಘುವಿನ ಪಕ್ಕದ ಕ್ಯೂಬಿನಲ್ಲಿ ಕುಳಿತುಕೊಳ್ಳುವ ನನಗೆ ರಘುವಿನ ಆಕ್ಸೆಸ್ ಹೆಚ್ಚಿಗೆ ಇತ್ತು. ನನ್ನ ಮತ್ತು ರಘುವಿನ ಮಾತುಗಳು ಅಮೇರಿಕದಲ್ಲಿ ಡೇಟ್ ಮಾಡುವ ವಿಷಯದತ್ತ ಹೊರಳಿದಾಗೆಲ್ಲ ಆತ ನನಗೆ 'ಆ ಹೆಲ್ಪ್ ಡೆಸ್ಕಿನ ಡೊರೋತಿಯನ್ನು 'ಬರ್ತೀಯಾ' ಎಂದು ಕೇಳಿನೋಡು' ಎಂದು ಚುಚ್ಚುತ್ತಿದ್ದ, ಅದಕ್ಕೆ ನಾನು ಗಟ್ಟಿಯಾಗಿ ನಕ್ಕು ಬಿಡುತ್ತಿದ್ದೆ - ಡರೋತಿ ಎನ್ನುವವಳು ಒಬ್ಬಳು ಧಡೂತಿ ಕಪ್ಪು ಹೆಂಗಸು, ಉಳಿದವರೆಲ್ಲರಿಗಿಂತಲೂ ನನ್ನ ಮೇಲೆ ಅವಳಿಗೆ ವಿಶೇಷ ಪ್ರೀತಿ ಇತ್ತು/ಇದೆ ಎನ್ನುವುದು ರಘುವಿನ ಇಂಗಿತ. ರಘುವಿನ ಹಲವಾರು ಮಾತುಗಳನ್ನು ನಂಬಿದವನಿಗೆ ಡೊರೋತಿಯ ವಿಷಯದಲ್ಲಿ ಅವನು ಹೇಳಿದ್ದು ಯಾವಾಗಲೂ ಹಾಸ್ಯವಾಗೇ ಕಾಣುತ್ತಿತ್ತು, ನಾನು ಅದನ್ನು ಅಲ್ಲಿಗೇ ಬಿಡುತ್ತಿದ್ದೆ.

ಹೀಗಿರುವಲ್ಲಿ, ರಘುಗೆ ಹಸಿರು ಕಾರ್ಡು ದೊರೆತು ಸುಮಾರು ವರ್ಷವೇ ಆಗುತ್ತ ಬಂದಿದ್ದರಿಂದ ಆತ ನಮ್ಮ ಕಂಪನಿಯನ್ನು ಬಿಟ್ಟು ಮತ್ಯಾವುದೋ ಕಂಪನಿಯನ್ನು ಸೇರಿಕೊಂಡ, ಹ್ಯಾಪ್ಪಿ ಅವರು, 'ಹಾಯ್-ಬಾಯ್' ಎಲ್ಲಾ ಆಗಿ, ಮೂರ್ನಾಲ್ಕು ತಿಂಗಳುಗಳೂ ಆದವು. ಒಂದು ದಿನ ಇದ್ದಕ್ಕಿದ್ದಂತೇ ರಘುವಿನ ಹಳೆಯ ಕಂಪನಿಯ ಮ್ಯಾನೇಜರ್ ಅಂದರೆ ನನ್ನ ಆಗಿನ ಕಂಪನಿಯ ಮ್ಯಾನೇಜರ್ ನನ್ನನ್ನು ಹುಡುಕಿಕೊಂಡು ಬಂದ - 'ನಿನ್ನಲ್ಲಿ ರಘುವಿನ ಅಡ್ರಸ್ಸು ಇದೆಯೇ, ತುಂಬಾ ಅರ್ಜೆಂಟು, ಫ್ಯಾಮಿಲಿ ಎಮರ್ಜೆನ್ಸಿ...' ಎಂದು ಹೇಳಿ ನಡುಗುತ್ತಿದ್ದ ಧ್ವನಿ ನನಗೆ ಈಗಲೂ ನೆನಪಿದೆ. ಆದದ್ದು ಇಷ್ಟು - ಅದೇ ದಿನ ಮುಂಜಾನೆ, ಕನೆಕ್ಟಿಕಟ್ ಹತ್ತಿರವಿರುವ ಯಾವುದೋ ಊರಿಗೆ ಪರೀಕ್ಷೆ ಬರೆಯಲು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ರಘುವಿನ ಹೆಂಡತಿ, ಅಪರ್ಣಾಳ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲೇ ಇಹಲೋಕವನ್ನು ತ್ಯಜಿಸಿದ್ದಳು. ಅಪರ್ಣಾ ಒಬ್ಬ ಮೆಡಿಕಲ್ ರೆಸಿಡೆಂಟ್ ಆಗಿ ರೆಸಿಡೆನ್ಸಿ ಮಾಡುತ್ತಿದ್ದವಳು, 'ಅಲ್ಲೇ ಹೋಗಿ ರೂಮು ಮಾಡೋಣ' ಎಂದು ಹೇಳಿದ ರಘುವನ್ನೂ ಕೇಳದೇ ಬೆಳಗ್ಗೆ ಐದು ಘಂಟೆಗೆಲ್ಲಾ ಮನೆಬಿಟ್ಟು ಹೊರಟು, ಟ್ಯಾಪೆನ್ ಝೀ ಬ್ರಿಜ್ಜಿಗೆ ಟೋಲ್ ಕೊಟ್ಟು ಎಂಟು ಮೈಲು ಹೋಗುವುದರೊಳಗೆ ನಿದ್ರೆ ಬಂದು - ರಸ್ತೆ ಬದಿಯ ಮರವೊಂದಕ್ಕೆ ಆಕೆಯ ನಿಸ್ಸಾನ್ ಕ್ವೆಸ್ಟ್ ಮಿನಿವ್ಯಾನ್ ಗುದ್ದಿದ ಹೊಡೆತಕ್ಕೆ, ಸ್ಥಳದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು, ಆಕೆಯ ಯಾವ ಅವಶೇಷವೂ ಇರದಂತೆ ಸುಟ್ಟು ಕರಕಲಾಗಿ ಹೋಗಿದ್ದಳು. ಅದೇ ದಿನ ರಘುವಿನ ಮನೆಯಲ್ಲಿ ನಾವೆಲ್ಲರೂ ಅವನನ್ನು ನೋಡಲು ಹೋಗಿದ್ದೆವು - ಆತ ಶಾಕ್‌ಗೆ ಒಳಗಾಗಿದ್ದರೂ ಮುಖದ ಮೇಲೆ ಯಾವುದೇ ಭಾವನೆಯನ್ನು ತೋರಿಸಿಕೊಳ್ಳುತ್ತಿರಲಿಲ್ಲ - ನಾವೆಲ್ಲ ಲಿವಿಂಗ್ ರೂಮಿನಲ್ಲಿ ಕುಳಿತಿದ್ದಂತೆಯೇ, ಟೇಬಲ್ಲಿನ ಮೇಲೆ 'This is all that they recovered from her' ಎಂದು ಸುಟ್ಟುಹೋದ ತಾಳಿಯ ಸರವನ್ನೂ ಹಾಗೂ ಆಕೆಯ ವಾಚನ್ನೂ ಹರವಿದ. ನಮ್ಮೆಲ್ಲರಿಗೂ ಎದೆ ಒಮ್ಮೆ ಧಸಕ್ ಎಂದಿತು, ಎದೆಗುಂದಿದ ಇವನನ್ನು ಹೀಗೆ ಒಬ್ಬನೇ ಬಿಡಬಾರದೆಂದು ನಾವೆಲ್ಲ ಥರಾವರಿ ಸಮಾಧಾನ ಹೇಳಿದೆವು, ನಮ್ಮಲ್ಲಿ ಕೆಲವರು ಅವನ ಜೊತೆಯಲ್ಲಿ ಒಂದೆರಡು ದಿನಗಳ ಮಟ್ಟಿಗೂ ಇದ್ದೆವು.

ಈ ಸಂದರ್ಭದಲ್ಲಿ ರಘು ಹೇಳಿದ ಇನ್ನೊಂದೆರಡು ಮಾತುಗಳನ್ನು ಹೇಳಿದರೆ ಒಳ್ಳೆಯದು:
ಅಫಘಾತವಾದ ದಿನ ಮುಂಜಾನೆ ಅಪರ್ಣಾ 'ಹೋಗಿ ಬರುತ್ತೇನೆ' ಎಂದು ಹೇಳಿದಾಗ ರಘು ನಿದ್ದೆ ಕಣ್ಣಿನಲ್ಲೇ ಕಳಿಸಿಕೊಟ್ಟಿದ್ದನಂತೆ. ಸ್ವಲ್ಪ ಹೊತ್ತಿನಲ್ಲಿ ಅವನು ಎದ್ದು ತಯಾರಾಗಿ ಆಫೀಸಿಗೆ ಹೊರಟು ಬರುತ್ತಿರುವಾಗ ಮೆಟ್ಟಿಲು ಜಾರಿ ಬಿದ್ದನಂತೆ, ಅದೇ ಸಮಯಕ್ಕೇ ಅಪಫಾತವಾಗಿದ್ದು ಎಂದು ಅವನು ಬಹಳ ನೊಂದುಕೊಂಡಿದ್ದ.

ರಘು ಹೇಳಿದಂತೆ - 'ಅಪರ್ಣಾಳನ್ನು ಕಳೆದುಕೊಂಡ ಮೇಲೆ, ನನಗೆ ಅತ್ಯಂತ ಕಷ್ಟಕರವಾದ ಸಂದರ್ಭ ಎಂದರೆ ಆಕೆಯ ತಂದೆಗೆ ಫೋನಿನಲ್ಲಿ ಈ ವಿಷಯ ಹೇಳಬೇಕಾಗಿ ಬಂದಿದ್ದು'. ಅದು ನಿಜವೂ ಹೌದು ಸಪೋರ್ಟು ನೆಟ್‌ವರ್ಕ್ ಇರದ ಇಲ್ಲಿ ಎಲ್ಲವನ್ನೂ ಅವರವರೇ ಮಾಡಬೇಕೆನ್ನುವುದು ಕಹಿಯಾದ ಸತ್ಯಗಳಲ್ಲೊಂದು.

ಮುಂದೆ ರಘು ತನ್ನ ಮನೆಯನ್ನು ಮಾರಿ ಎಲ್ಲೋ 'ದೇಶಾಂತರ' ಹೋಗುವುದಾಗಿ ತೀರ್ಮಾನ ಮಾಡಿದ - ಮಾರುವ ಹಿಂದಿನ ದಿನ ನಮ್ಮೆಲ್ಲರನ್ನು ಕರೆದು ಸೀರಿಯಸ್ಸಾಗಿ ನಿಮಗೇನು ಬೇಕೋ ಅದನ್ನೆಲ್ಲ ತೆಗೆದುಕೊಂಡು ಹೋಗಿ ಎಂದು ಬಹಳ ಒತ್ತಾಯ ಮಾಡಿದ, ನಾನು ಗೋಡೆ ಗಡಿಯಾರವೊಂದನ್ನು ತೆಗೆದುಕೊಂಡು ಬಂದೆ.

ಇದಾದ ಒಂದೆರಡು ವರ್ಷಗಳ ನಂತರ ಅಬ್ದುಲ್ ರಘುವಿನ ಜೊತೆ ಮಾತನಾಡಿದ್ದಾಗಿ ಹೇಳಿದ, ರಘು ಈಗ ಬ್ಯುಸಿನೆಸ್ ಕನ್ಸಲ್‌ಟಿಂಗ್ ಮಾಡಿಕೊಂಡು ಅದೆಲ್ಲೋ ಕ್ಯಾಲಿಫೋರ್ನಿಯಾದಲ್ಲಿದ್ದಾನೆ, ಈಗ ಪೂರ್ತಿ ರಿಕವರ್ ಆಗಿದ್ದಾನೆ ಎಂದು - ಮುಂದೆ ಅವನು ಮತ್ತೊಂದು ಮದುವೆಯನ್ನೂ ಆದ ಎಂದು ಕೇಳಿದ್ದೆ.

***

ನಮ್ಮ ಮನೆಯಲ್ಲಿ ರಘು ಕೊಟ್ಟ ಗೋಡೆ ಗಡಿಯಾರ ಇನ್ನೂ ನಡೆಯುತ್ತಿದೆ, ನಿನ್ನೆ ಬ್ಯಾಟರಿಯನ್ನು ಬದಲಾಯಿಸಿ ಅದರ ಸಮಯವನ್ನು ಸರಿ ಮಾಡಿ ಇಟ್ಟಿದ್ದೇನೆ - ಇನ್ನು ಹಲವು ತಿಂಗಳುಗಳವರೆಗೆ ಆ ಗಡಿಯಾರ ಓಡುತ್ತಲೇ ಇರುತ್ತದೆ, ಓಡಲೇ ಬೇಕು ಇಲ್ಲದಿದ್ದರೆ ನಿಷ್ಪ್ರಯೋಜಕ ಎಂದು ತಿಪ್ಪೆಗೆ ಬಿಸಾಡಬೇಕಾದೀತು, ಇಲ್ಲಿ ಯಾರೂ ರಿಪೇರಿಯನ್ನು ಮಾಡುವುದಿಲ್ಲ, ಮಾಡಿದರೂ ರಿಪೇರಿಗೆ ಹೆಚ್ಚಿನ ಮೌಲ್ಯ ತೆರಬೇಕಾಗಿ ಬಂದು ವಸ್ತುವಿನ ಹಿಂದಿನ ಭಾವನೆಗಳನ್ನು ಒಮ್ಮೆ ತೂಗಿ ನೋಡುವ ಸಂಭವ ಹೆಚ್ಚು!

Friday, May 12, 2006

"ನಿಮ್ಮವ"ನ ಪುರಾಣ - "ಅಂತರಂಗಿ"ಯ ಉದಯ

ಅದ್ಯಾವ ಕಾರಣಕ್ಕೆ ನಾನು "ನಿಮ್ಮವ" ಎನ್ನುವ ಅಕೌಂಟನ್ನು ೧೯೯೯ರಲ್ಲಿ ತೆರೆದೆನೋ ಗೊತ್ತಿಲ್ಲ, ಇಂಗ್ಲೀಷ್‌ನಲ್ಲಿ Yours ಎಂದು ಬರೆಯೋ ಹಾಗೆ ನಾನು 'ನಿಮ್ಮವ' ಎಂದು ಬರೆದು ನಿಮ್ಮಿಂದ ಮರೆಯಲ್ಲಿರೋಣ ಎಂದು ಆಲೋಚಿಸಿದ್ದೆ. ಆದರೆ, ನನ್ನ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವವರು 'ನಿಮ್ಮವ' ನನ್ನು "ನಿಮ್ಮವ, ನಿಮ್ಮವನೇ, ನಿಮ್ಮವರೇ, ನಮ್ಮವ, ನಮ್ಮವರೇ, ನಮ್ಮವನೇ..." ಇತ್ಯಾದಿ ಸಂಬೋಧನೆಗಳನ್ನು ಉಪಯೋಗಿಸಿ ಕೊಸರಾಡುತ್ತಿದ್ದುದನ್ನು ನೋಡಿ, ಹಾಗೂ "ನಿಮ್ಮವ" ಯಾರವನೂ ಆಗಬೇಕಾದುದಿಲ್ಲ ಎಂಬ ಇಂಗಿತವನ್ನು ಹಲವರು ವ್ಯಕ್ತಪಡಿಸಿದ್ದರಿಂದ "ನಿಮ್ಮವ"ನನ್ನು "ಅಂತರಂಗಿ"ಯಾಗಿ ಬದಲಾಯಿಸಿಕೊಳ್ಳಬೇಕಾಯಿತು.

ಎಲ್ಲರೂ ಬ್ಲಾಗುಗಳನ್ನು ತೆರೆದುಕೊಂಡು ಕನ್ನಡ ಜಾಲ ಪ್ರಪಂಚವೆಂಬ ಸಣ್ಣ ಹಳ್ಳಿಯಲ್ಲಿ ತಮ್ಮ-ತಮ್ಮ ಮನೆಗಳನ್ನು ಸ್ಥಾಪಿಸಿಕೊಳ್ಳುತ್ತಿರುವುದನ್ನು (ಒಂದು ರೀತಿ ಬೆಂಗಳೂರಿನಲ್ಲಿ ನಿವೇಶನವನ್ನು ಖರೀದಿಸಿ ಮನೆ ಕಟ್ಟಿದ ಹಾಗೆ) ಆವಾಗಾವಾಗ ಮೇಲಿಂದ ಮೇಲೆ ನೋಡುತ್ತಿದ್ದೆನಾದರೂ, ಬ್ಲಾಗು ನನಗಲ್ಲ ಎಂದು ನಿರ್ಲಿಪ್ತತೆಯಿಂದ ಇದ್ದವನಿಗೆ, ನವೆಂಬರ್ ೨೨ರಂದು ಅದು ಏನಾಯಿತೋ ಗೊತ್ತಿಲ್ಲ - ಬ್ಲಾಗ್‌ಪೋಸ್ಟ್‌ನಲ್ಲಿ "ನಿಮ್ಮಾಂತರಂಗ" ಎಂದು ನಾನೂ ಒಂದು ಅಕೌಂಟನ್ನು ಸೃಷ್ಟಿಸಿ, ಒಂದು ಸಾಲನ್ನೂ ಬರೆದು ಬಿಸಾಡಿದೆ - ಆಗ ತುಂಗಾಳ ನೀರನ್ನು ಇನ್ನೂ ಕುಡಿದಿರಲಿಲ್ಲ, ಮಲ್ಲಿಗೆ, ಕೇದಗೆ, ಸಂಪಿಗೆಗಳ ಪರಿಮಳದ ಆಸ್ವಾದನೆಯೂ ಇರಲಿಲ್ಲ. ಚಿಕ್ಕದಾಗಿ, ಚೊಕ್ಕದಾಗಿ 'ನಿಮ್ಮಾಂತರಂಗಕ್ಕೆ ಸ್ವಾಗತ - ನಿಮ್ಮ ಬಹಿರಂಗವನ್ನೂ ತನ್ನಿ!' ಎಂದು ಕಂಗ್ಲೀಷಿನಲ್ಲೇ ಬರೆದು ಪ್ರಕಟಿಸಿದ್ದೆ. ಅನಂತರ ಧೀರ್ಘ ನಿದ್ರೆಗೆ ಶರಣುಹೋದ ನಾನು ಎಚ್ಚೆತ್ತಿದ್ದು ನನ್ನ ಸಹೋದ್ಯೋಗಿ, ಮಿತ್ರ ಹಾಗೂ ನಾನು ಓದಿದ ಕಾಲೇಜಿನವನೇ ಆದ ..ಶ ಚುಚ್ಚಿದ ಮೇಲೆಯೇ! ಅವನು ಯಾವುದೋ ಒಂದು ಬ್ಲಾಗನ್ನು ಇನ್ಸ್ಟಂಟ್ ಮೆಸ್ಸೇಜಿನ ಮೂಲಕ ಕಳಿಸಿ, ಇದನ್ನು ನೋಡು ಎಂದ, ನಾನು ಅದಕ್ಕುತ್ತರವಾಗಿ ನನ್ನದೂ ಒಂದು ಬ್ಲಾಗು ಅಕೌಂಟಿದೆ ನೋಡು ಎಂದು ಕೊಂಡಿ ಕಳಿಸಿದೆ - ಅದರಲ್ಲಿ ಒಂದು ಸಾಲನ್ನು ಬಿಟ್ಟು ಬೇರೇನೂ ಇರಲಿಲ್ಲವೆಂದು ಮೊದಲೇ ಹೇಳಿದ್ದೇನೆ - ಅದನ್ನು ನೋಡಿದ ಈ ಮಿತ್ರ, ತಕ್ಷಣ ಬರೆದ - 'ಏನಯ್ಯಾ, ಒಂದು ಟೆಂಪ್ಲೇಟ್ ಓಪನ್ ಮಾಡಿಟ್ಟುಕೊಂಡು, ದೊಡ್ಡದಾಗಿ ಬ್ಲಾಗು ಅಂತ ಕಳಿಸಿದ್ದೀಯಾ!', ಇಂತಹ ಮಾತುಗಳು ನಿಜವಾಗಲೂ ನನ್ನನ್ನು ಚುಚ್ಚುತ್ತವೆ ಎಂದು ಅವನಿಗೂ ಗೊತ್ತಿರಬೇಕು - ಅದಕ್ಕುತ್ತರವಾಗಿ ನಾನು ಬರೆದೆ 'ಆಗಾಗ್ಗೆ ನೋಡ್ತಾ ಇರು, ಮುಂದೆ ಬರೀತೀನಿ!'. ನನ್ನ ಮೇಲಿನ ಮಾತಿನಲ್ಲಿ ನಂಬಿಕೆ ಇರದಿದ್ದುದರಿಂದಲೋ ಏನೋ ಅವನು ಮುಂದೆ ಮತ್ತೊಮ್ಮೆ ನಾನು ಹೇಳುವವರೆಗೆ ನನ್ನ so called ಬ್ಲಾಗನ್ನು ನೋಡುವ ಗೋಜಿಗೇ ಹೋಗಲಿಲ್ಲ!

ಮಾರ್ಚ್ ೧೬ ರಿಂದ ಯಾವಾಗ ಎಷ್ಟು ಸಾಧ್ಯವೋ ಅಷ್ಟನ್ನು ಬರೆದು, ಹೀಗೇ ಏಪ್ರಿಲ್‌ನ ಮಧ್ಯದಲ್ಲಿ ಮತ್ತೆ ಅವನಿಗೆ ಮೆಸ್ಸೇಜ್ ಕಳಿಸಿದೆ - ನನ್ನ ಬ್ಲಾಗನ್ನು ಪುರುಸೊತ್ತು ಇದ್ದಾಗ ನೋಡು ಎಂದು. ಅವನಿಗೆ ಆಶ್ಚರ್ಯವಾಗುವಂತೆ ಎಂಟೊಂಭತ್ತು ಪೋಸ್ಟ್‌ಗಳು ಆಗಲೇ ಪೋಣಿಸಲ್ಪಟ್ಟಿದ್ದವು, ಹಾಗೂ ಪ್ರೊಫ಼ೈಲೂ ಕೂಡ ಅಪ್‌ಡೇಟ್ ಆಗಿತ್ತು. ಅವನು 'ಹೇ, ನಾನು ತಮಾಷೆಗೆ ಹೇಳಿದ್ದನ್ನ ಸೀರಿಯಸ್ಸಾಗೇ ತೆಗೆದುಕೊಂಡು ಚೆನ್ನಾಗೇ ಬರೆದಿದ್ದೀಯಲ್ಲಯ್ಯಾ!' ಎಂದ...ನಾನು 'ಸುಮ್ನೇ ಚೆನ್ನಾಗಿದೆ ಅಂತ ಹೇಳಬೇಡವೋ...' ಎಂದೆ, ಅವನು 'ಇಲ್ಲಾ, ಸೀರಿಯಸ್ಸಾಗಿ, ಚೆನ್ನಾಗಿದೆ, ನಾನು ಸುಮ್ ಸುಮ್ನೇ ಚೆನ್ನಾಗಿದೆ ಅಂತ ಹೇಳೋಲ್ಲ' ಎಂದು ಸರ್ಟಿಫಿಕೇಟ್ ಕೊಟ್ಟ. ಆಗಲೇ ನನಗೆ ಸ್ವಲ್ಪ ಧೈರ್ಯ ಬಂದಿದ್ದು. ಈ ಬ್ಲಾಗನ್ನು ಬರೆಯುವಂತೆ ಚುಚ್ಚಿದವನೇ 'ನಿಮ್ಮಾಂತರಂಗ' ಅನ್ನೋ ಹೆಸರು ಸರಿ ಇಲ್ಲ, ಅದರ ಬದಲಿಗೆ ಬೇರೆ ಏನಾದ್ರೂ ಸಿಕ್ರೆ ನೋಡು' ಎಂದ, ನಾನು 'ಅಂತರಂಗ' ಎಂದು ಇಟ್ಟೆ - thank goodness, it was available!

ಹೀಗೆ 'ನಿಮ್ಮಾಂತರಂಗ' ಇದ್ದದ್ದು 'ಅಂತರಂಗ'ವಾಯ್ತು, ಅದರ ಬೆನ್ನಿಗೇ 'ನಿಮ್ಮವ'ನನ್ನೂ 'ಅಂತರಂಗಿ' ಎಂದು ಬದಲಾಯಿಸುವಂತಾಯ್ತು. "ಅಂತರಂಗಿ"ಯ ಜೊತೆಗೆ ಸ್ಪರ್ಧೆಗೆ ನಿಂತ ಇತರ ಹೆಸರುಗಳಲ್ಲಿ "ಅಪರಂಜಿ, ಜೀವನಪ್ರೇಮಿ, ಅಭ್ಯಾಗತ, ಕಲರವಿ, ಮಲೆನಾಡಿಗ, ಪಯಣಿಗ, ವಿಕಟಕವಿ", ಎನ್ನುವ ಒಳ್ಳೆಯ ಹೆಸರುಗಳೂ, "ಅಳುಮುಂಜಿ, ಕೊರಕ, ಕೋಡಂಗಿ, ಅಲ್ಪಜ್ಞ, ಅಂತರ್ಮುಖಿ" ಮುಂತಾದ not so ಒಳ್ಳೆಯ ಹೆಸರುಗಳನ್ನೂ ಪರಿಗಣನೆಗೆ ತಂದುಕೊಂಡರೂ ಕೊನೆಯಲ್ಲಿ "ಅಂತರಂಗಿ"ಗೆ ವಿಜಯವಾಯಿತು.

ನೀವೂ ಬ್ಲಾಗಿನಾಟದಲ್ಲಿ ಭಾಗಿಗಳೇ? ಅಂದ್ರೆ ನಿಮಗೂ ಒಂದು ಬ್ಲಾಗೂ ಅಂಥ ಇದೆಯೇ? ಇಲ್ಲವಾದರೆ ಮತ್ತೇಕೆ ತಡ, ನೀವು ಒಂದನ್ನು ಏಕೆ ಶುರುಮಾಡಬಾರದು? ನೀವು ಶುರು ಮಾಡಿ ಇನ್ನೂ ಹೆಚ್ಚು ಬರೆಯದಿದ್ದರೆ ನನಗೆ ತಿಳಿಸಿ, ನನಗೆ ಚುಚ್ಚಿದವನನ್ನು ನಿಮ್ಮ ಹಿಂದೆ ಬಿಡುತ್ತೇನೆ, ಆಗ ನೋಡಿ ಏನಾಗುತ್ತೇ ಅಂತ!

ಕೊನೆಯಲ್ಲಿ, ಏಕೆ ಹೀಗೆ "ಅಂತರಂಗಿ"ಯಾಗಿ ಅಡಗಿಕೊಳ್ಳಬೇಕು ಎಂದು ಹಲವಾರು ಬಾರಿ ಅನ್ನಿಸಿದೆ, ಆದರೂ ಇಲ್ಲಿ ನಾನೇನೋ ಬರೆದು ಕೊನೆಗೆ ಜನಗಳು ಎದಿರು ಸಿಕ್ಕರೆ ಕಲ್ಲು ಹೊಡೆಯಬಾರದು ನೋಡಿ, ಅದರಿಂದ ತಪ್ಪಿಸಿಕೊಳ್ಳೋಣವೆಂದು ಈ ಮರೆ ಅಷ್ಟೇ! ಅಲ್ಲದೇ ಹೀಗೆ ಮರೆಯಲ್ಲಿರೋದರಿಂದ 'ಕ್ಯಾಂಡಿಡ್' ಆಗಿ ಇರೋ ವಿಷಯವನ್ನು ಇದ್ದಹಾಗೇ ಬರೆಯಬೇಕು ಎನ್ನಿಸಿದರೂ, ಈ ವರೆಗಿನ ಅನಿಸಿಕೆಗಳ ವಿನಿಮಯದ ಮೂಲಕ ಈ ವರ್ಚುವಲ್ ಪ್ರಪ್ರಂಚದಲ್ಲೇ ಒಂದು ರೀತಿ ಅವಿನಾಭಾವ ಸಂಬಂಧಗಳು ಹುಟ್ಟಿಕೊಳ್ಳೋದರಿಂದ ಒಂದು ಕಡೇ ಸ್ವಾರಸ್ಯಕರವಾಗಿ ಬರೆಯುವುದಕ್ಕೆ ಉತ್ತೇಜನ ಸಿಕ್ಕುವುದೂ, ನನ್ನ ವಿಷಯಗಳಿಗೆ ಹೊರಗಿನವರ ಅಭಿಪ್ರಾಯ ದೊರೆಯುವುದೂ ಅಲ್ಲದೇ, ಮತ್ತೊಂದು ಕಡೇ ಅವೇ ಸಂಬಂಧಗಳು ಬರೆಯುವ ಮುನ್ನ, ಬರೆಯುವಾಗ ವಿಷಯಗಳ ಮೌಲ್ಯಮಾಪಕರಂತೆ ಮನದಲ್ಲಿ ಮೂಡಿ ಬರುವುದು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಆದರೆ ಹೀಗೆ ಬರೆಯುತ್ತಿರುವುದೂ, ಅವುಗಳಿಗೆ ಸ್ವೀಕರಿಸಿದ ಓದುಗರ ಸಂವೇದನೆಗಳೂ ನನಗಂತೂ ಬಹಳ ಒಳ್ಳೆಯದನ್ನೇ ಮಾಡಿವೆ - ಬರೆಯುವ ಪ್ರಕ್ರಿಯೆ ಮನಸ್ಸನ್ನು ಹಗರ ಮಾಡಿದರೆ, ನಂತರದ ಅನಿಸಿಕೆ-ಪ್ರತಿಕ್ರಿಯೆಗಳು ಒಂದು ರೀತಿಯ ಮುದವನ್ನು ನೀಡುತ್ತವೆ - ಆದರೆ, ನನಗೆ ಬರಿ ಎನ್ನುವವರೂ ಯಾರೂ ಇಲ್ಲ, ಅವರಿಗೆ ಓದಿ, ಓದಿ ಪ್ರತಿಕ್ರಿಯಿಸಿ ಎನ್ನುವವರೂ ಯಾರಿಲ್ಲ - ಎಲ್ಲವೂ ಯಾವುದೋ ಒಂದು 'ಇದ್ದರೂ ಇರದ' ಸಂಬಂಧದ ಪ್ರತೀಕವಾಗಿ ನಡೆದುಹೋಗುತ್ತಿದೆ.

ಮೊನ್ನೆ 'ಸಂಜಯ'ರನ್ನು ಭೇಟಿಯಾದಾಗ ಅವರು ಹೇಳಿದ್ದರು - 'ಮಜಾವಾಣಿಗೆ ಪ್ರತಿದಿನವೂ (ಪ್ರಪಂಚದ ಯಾವ್ಯಾವುದೋ ಮೂಲೆಗಳಿಂದ) ಕೊನೇಪಕ್ಷ ಒಂದು ನೂರು ಜನರಾದರೂ ಭೇಟಿಕೊಡುತ್ತಾರೆ' ಎಂದು, ಹಾಗಿದ್ದ ಮೇಲೆ ಓದುಗರನ್ನು ನಿರಾಸೆಗೊಳಿಸಲು ಯಾರಿಗೆ ತಾನೇ ಮನಸ್ಸು ಬರುತ್ತದೆ ನೀವೇ ಹೇಳಿ.

***

ಆದರೆ ಒಂದಂತೂ ಸತ್ಯ, ಇಲ್ಲಿ ಒಂದು ಸಾಲು ಬರೆಯಬೇಕಾದರೆ ಕೊನೇಪಕ್ಷ ಹತ್ತು ಸಾಲನ್ನಾದರೂ ಓದಬೇಕು (ಕಟ್ಟಿಕೊಂಡ ಬುತ್ತಿ ಎಷ್ಟು ಹೊತ್ತು ಬಂದೀತು?), ಅದರಿಂದ ನನಗೂ ಸುಖ, ಎಲ್ಲರಿಗೂ ಸುಖ!

Thursday, May 11, 2006

ಎರಡು ದೊಡ್ಡ ಸೋಲುಗಳು

ಇಷ್ಟೊಂದು ಹಾರಾಡುವ ನಾನು ಎರಡು ಬಾರಿ ನೆಲಕಚ್ಚಿ ಸೋತದ್ದಿದೆ - ಬರೀ ಮೂಗಷ್ಟೇ ನೆಲಕ್ಕೆ ತಾಗುವ ಹಾಗಲ್ಲ, ಮೂಗು ನೆಲದ ಒಳಗೆ ಹುದುಗಿ-ಜಜ್ಜಿ ಹೋಗುವ ಹಾಗೆ, ಅಂದು ಹೊಡೆತ ತಿಂದು ಮೂಗಿನಿಂದ ಸೋರುತ್ತಿರುವ ರಕ್ತ ಎಂದೂ ನಿಲ್ಲದ ಹಾಗೆ. ಹಲವಾರು ಬಾರಿ ಸೋತು-ಗೆಲ್ಲುವ ಬದುಕನ್ನು ಎಲ್ಲರಂತೆ ನಾನೂ ಈ ವರೆಗೆ ಬದುಕಿದ್ದೇನಾದರೂ ಈ ಎರಡು ಸೋಲುಗಳ ಬಗ್ಗೆ ಯೋಚನೆ ಮಾಡಿದಷ್ಟೂ ಅಷ್ಟೇ ಗಾಢವಾಗತೊಡಗುತ್ತವೆ.

***

ಸೋಲು ೧: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನಕ್ಕೆ ಹೋದಾಗ ಅವಮಾನಿತನಾಗಿದ್ದು.

ಆಗ (೧೯೯೩-೯೪) ನಾನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕನಾಗಿದ್ದೆ (guest lecturer). ಬರೀ ಅದರ ಹಿಂದಿನ ವರ್ಷವೇ ಮೈಸೂರಿನಲ್ಲಿ ಎಂ.ಎಸ್ಸಿ., ಮುಗಿಸಿಕೊಂಡು ಬಂದು, ಸಹ್ಯಾದ್ರಿ ಹಾಗೂ ಡಿ.ವಿ.ಎಸ್. ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಪಾಠಮಾಡಿಕೊಂಡು ನನ್ನಷ್ಟಕ್ಕೆ ನಾನೇ ಇದ್ದವನಿಗೆ ಕುವೆಂಪು ವಿಶ್ವವಿದ್ಯಾನಿಲಯದ ಎಮ್.ಎಸ್ಸಿ., ವಿದ್ಯಾರ್ಥಿಗಳಿಗೂ ಪಾಠ ಮಾಡುವಂತೆ ಬುಲಾವು ಬಂತು: ಆಗಿನ್ನೂ ವಿಶ್ವವಿದ್ಯಾನಿಲಯದ ಕಟ್ಟಡಗಳು ಇನ್ನೂ ತಯಾರಿರದಿದ್ದ ಕಾರಣ ಹೆಚ್ಚಿನ ಪಾಠ ಪ್ರವಚನಗಳೆಲ್ಲ ಸಹ್ಯಾದ್ರಿ ಕಾಲೇಜಿನ ಆವರಣದಲ್ಲೇ ನಡೆಯುತ್ತಿದ್ದವು. ಅಲ್ಲದೆ ಸಹ್ಯಾದ್ರಿ ಕಾಲೇಜಿನ ಉಳಿದ ಉಪನ್ಯಾಸಕರೂ ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡುತ್ತಿದ್ದರು, ಆದರೆ ಅಲ್ಲಿ ಹೊಸದಾಗಿ ಸೇರಿದ್ದ ಅರೆಕಾಲಿಕ ಉಪನ್ಯಾಸಕರಲ್ಲಿ ಎಲ್ಲರನ್ನೂ ಬಿಟ್ಟು ಈ ಕೆಲಸ ನನ್ನನ್ನೇ ಬಂದು ಸುತ್ತಿಕೊಳ್ಳುವುದೇ? ಮೊದಮೊದಲು ವಿಪರೀತ ಕಷ್ಟವಾಗುತ್ತಿತ್ತು, ಬರೀ ಪ್ರಾಕ್ಟಿಕಲ್ ತರಗತಿಗಳಿಗೆ ಹೇಳಿಕೊಡಿ ಎಂದು ಕೆಲಸಕ್ಕೆ ತೆಗೆದುಕೊಂಡವರು ಮುಂದೆ ಥಿಯರಿ ಕ್ಲಾಸಿಗೂ ಪಾಠ ಮಾಡಿ ಎಂದು ಗಂಟು ಬಿದ್ದರು.

ಹೀಗೆ ಎಲ್ಲವೂ ಬಂಗಾರವಿದ್ದಂತಹ ಒಂದು ಅಮೃತಘಳಿಗೆಯಲ್ಲಿ ಸುಮ್ಮನಿರಲಾರದ ನಾನು, Solid State Electronics ನಲ್ಲಿ ಯಾವುದೋ ಭಯಂಕರ ರಿಸರ್ಚ್ ಪ್ರಾಜೆಕ್ಟ್ ಒಂದರಿಂದ ಮೋಹಿತನಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಲು ಅರ್ಜಿ ಗುಜರಾಯಿಸಿದೆ. ನನ್ನ ಅನುಭವವನ್ನು ನೋಡಿ ನನಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂದರ್ಶನಕ್ಕೆ ಬುಲಾವು ಬಂದಿತು.

ನಾನು ಈ ಸಂದರ್ಶನಕ್ಕೆ ಹಿಂದಿನ ದಿನವೇ ಮಂಗಳೂರಿಗೆ ಹೋಗಿ ಯಾವುದಾದರೂ ಲಾಜಿಂಗ್‌ನಲ್ಲಿ ಉಳಿದುಕೊಂಡು ಮರುದಿನ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರೆ ಬುದ್ದಿವಂತನಾಗುತ್ತಿದ್ದೆ, ಆದರೆ ಆಗ ನನ್ನ ಬುದ್ಧಿ ಇನ್ನೂ ಸ್ಥಿಮಿತದಲ್ಲಿರದಿದ್ದುದರಿಂದ 'ಬೇಕಾದ್ದು ಆಗಲಿ, ಒಂದು ಕೈ ನೋಡೋಣ'ವೆಂದುಕೊಂಡು ಮುಂಜಾನೆ ಎರಡೂವರೆಗೋ-ಮೂರು ಘಂಟೆಗೋ ಶಿವಮೂಗ್ಗ ಬಿಟ್ಟು ಮಂಗಳೂರನ್ನು ಸೇರುವ ಬಸ್ಸನ್ನು ಹತ್ತಿ ಬೆಳಗ್ಗೆ ಎಂಟು ಘಂಟೆಗೆಲ್ಲ ಮಂಗಳಗಂಗೋತ್ರಿಯನ್ನು ತಲುಪುವ ಹೊತ್ತಿಗೆ ಹಣ್ಣುಗಾಯಿ-ನೀರುಗಾಯಿ ಆಗಿ ಹೋಗಿತ್ತು. ಅಲ್ಲಿ ಸ್ಥಳೀಯ ಅಭ್ಯರ್ಥಿಗಳು ಮೂರು ಜನರಿದ್ದರು, ನಾನೊಬ್ಬನೇ ಹೊರಗಿನಿಂದ ಬಂದವನು - ಮೈಸೂರಿನಲ್ಲಿ ಓದಿ, ಕುವೆಂಪುನಲ್ಲಿ ಪಾಠ ಮಾಡಿ ಸಂದರ್ಶನಕ್ಕೆ ಬಂದಿದ್ದೇನೆ ಎಂದು ನನಗೆ ಪ್ರಾಶಸ್ತ್ಯವನ್ನು ನೀಡಲಾಗಿತ್ತು.

ಸರಿ, ಎಲ್ಲರಿಗಿಂತ ಮೊದಲೇ ನನಗೆ ಒಳಗೆ ಬರುವಂತೆ ಕರೆ ಬಂದಿತು, ನಾನು ಹೋದೆ, ಒಂದು ಲೆಕ್ಚರ್ ಹಾಲ್ ನ ಕಟ್ಟೆಯ ಮೇಲೆ, ಮೇಜಿನ ಹಿಂದೆ ನಾಲ್ಕು ಜನ ಪ್ರೊಫ಼ೆಸರ್‌ಗಳು ಕುಳಿತಿದ್ದರು, ಅನಂತರ ಸಂದರ್ಶನದ ಮಧ್ಯೆ ಮತ್ತಿಬ್ಬರು ಬಂದು ಸೇರಿಕೊಂಡರು:

ಶುರುವಾಯಿತು ನೋಡಿ ಪ್ರಶ್ನೆಗಳ ಮೋಡಿ - ಸುಮಾರು ಒಂದು ಘಂಟೆ ನಡೆದಿದ್ದ ಸಂದರ್ಶನದಲ್ಲಿ ನನ್ನ ಜನ್ಮವನ್ನೇ ಜಾಲಾಡಿ ಬಿಟ್ಟರು! ಅಣು, ಪರಮಾಣು, ವಿಕಿರಣ, ಗುರುತ್ವಾಕರ್ಷಣೆ, ವಸ್ತುವಿನ ಹಲವು ಸ್ಥಿತಿಗಳ ಬಗ್ಗೆ, ಅದ್ಯಾವ್ಯಾವೋ ಫಾರ್ಮುಲಾಗಳು, ಸೂತ್ರಗಳು, ಲಾಗಳು, ಥೇರಮ್‌ಗಳು, ಒಂದೇ ಎರಡೇ - ನಾನು ಓದಿದ ಮೈಸೂರಿನ ಪಠ್ಯಕ್ರಮವನ್ನೇ ದೂರುವಂತಹ, ಎಲ್ಲ ಅಬ್ಸ್ಟ್ರಾಕ್ಟ್ ಪ್ರಶ್ನೆಗೂ ರಿಯಲ್ ಉತ್ತರವನ್ನು ಬುಡದಿಂದ ಕೇಳುತ್ತಾ ತಮ್ಮಳೊಗಿದ್ದ ಯಾವುದೋ ಜನ್ಮದ ವೈರವನ್ನೆಲ್ಲ ನನ್ನ ಮೇಲೆ ಕಾರತೊಡಗಿದರು. ಅವರು ಪ್ರಶ್ನೆಗಳನ್ನು ಕೇಳೋದು, ನಾನು ನನಗೆ ಬಂದ ಉತ್ತರವನ್ನು ಕೊಡೋದು, ಆ ಉತ್ತರಗಳ ಮೇಲೆ ಮತ್ತೆ ಪ್ರಶ್ನೆಗಳನ್ನ ಕೇಳೋರು, ನಾನು ಮತ್ತೆ ಉತ್ತರವನ್ನು ಕೊಡೋದು, ಹೀಗೆ ಮಾಡಿ-ಮಾಡಿ ಅವರೆಲ್ಲರೂ ಸುಸ್ತಾಗಿ ಹೋದರು, ನನ್ನ ಕಥೆಯಂತೂ 'ಇನ್ನು ಮಂಗಳೂರಿನ ಕಡಲಿಗೆ ಬಿದ್ದು ಬಿಡೋಣ, ಶಿವಮೊಗ್ಗಕ್ಕೆ ಹಿಂತಿರುಗಿ ಹೋಗುವುದೇ ಬೇಡ' ಎನ್ನಿಸುವಂತಾಗಿ ಹೋಗಿತ್ತು.

ಎಣಿಸಿದಂತೆ ನಾನು ಸಂದರ್ಶನದಲ್ಲಿ ನಪಾಸಾಗಿದ್ದೆ, ಅದಕ್ಕೆ ಮಂಗಳೂರಿನ ಸೆಕೆ ವಾತಾವರಣವಿದ್ದಿರಬಹುದು, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಮಜಾ ತೆಗೆದುಕೊಂಡು ನಕ್ಕ ಆ ಪ್ರೊಫೆಸರ್‌ಗಳ ಕುಹಕವಿದ್ದಿರಬಹುದು, ಅಥವಾ ಎಮ್.ಎಸ್ಸಿ., ಮುಗಿಸಿಯೂ, ಅಲ್ಲಲ್ಲಿ ಪಾಠ ಮಾಡಿಯೂ ತಲೆಯಲ್ಲಿ ಏನನ್ನೂ ತುಂಬಿಕೊಳ್ಳದ ನನ್ನ ಬುದ್ಧಿವಂತಿಕೆಯೂ ಇರಬಹುದು, ಅಥವಾ ಯಾರೂ ಹೋಗಲಾರದ ಮಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶನಕ್ಕೆ ಹೋಗಿದ್ದೇ ತಪ್ಪಾಗಿರಬಹುದು.

ಆ ದೇವರಿಗೆ ದೊಡ್ಡ ನಮಸ್ಕಾರ, ಅಂದು ನನ್ನನ್ನು ಸಂದರ್ಶನದಲ್ಲಿ ಫೇಲ್ ಆಗುವಂತೆ ಮಾಡಿದ್ದಕ್ಕೆ!

ಅಂದು ಅವರೆಲ್ಲರೂ ಮಾಡಿದ ವಿಚಿತ್ರ ಸಂದರ್ಶನ, ಅದರ ಅಸಫಲತೆ ತಂದ ನೋವು ನನ್ನನ್ನು ಬಲವಾಗಿ ಕಾಡಿತ್ತು, ಅದು ನನ್ನನ್ನು ಎಷ್ಟು ಮಾನಸಿಕವಾಗಿ ಹಿಂಸಿಸಿತ್ತೆಂದರೆ ಬಹಳ ದಿನಗಳ ಕಾಲ ಒಂದು ರೀತಿ ರೋಗಬಂದವನಂತೆ ನಡೆದುಕೊಳ್ಳಲಾರಂಭಿಸಿದ್ದೆ. ಇವತ್ತಿನ ತಿಳುವಳಿಕೆಯೇನಾದರೂ ಇದ್ದಿದ್ದರೆ ಎಲ್ಲಾದರೂ ಮನೋವೈದ್ಯರ ಬಳಿ ತೋರಿಸಿ counseling ಪಡೆದುಕೊಳ್ಳುತ್ತಿದ್ದೆನೋ ಏನೋ.

ಅಂದು ನನ್ನನ್ನು ಹಿಂಸಿಸಿ ಮಜಾ ತೆಗೆದುಕೊಂಡ ಪ್ರೊಫೆಸರುಗಳಿಗೆ ನನ್ನ ಧಿಕ್ಕಾರವಿರಲಿ, ಅವರುಗಳು ಇವತ್ತೇನಾದರೂ ನನ್ನ ಕೈಗೆ ಸಿಕ್ಕಿದರೆ ಒಂದು ಕೈ ನೋಡಿಕೊಳ್ಳುತ್ತೇನೆ, ಸದಾ ಯೂನಿವರ್ಸಿಟಿಯಲ್ಲಿ ಪಾಠ ಹೇಳಿಕೊಂಡು ಯೂನಿವರ್ಸನ್ನೇ ಕೊಂಡುಕೊಂಡಂತೆ ಆಡುವ ಅವರ ಕೊಬ್ಬನ್ನು ಇಳಿಸುವುದು ಹೇಗೆ ಎಂದು ನನಗೆ ಚೆನ್ನಾಗಿ ಗೊತ್ತು!


ಸೋಲು ೨: ನಾನು ಅಮೇರಿಕೆಗೆ ಬಂದು ಇಷ್ಟೊಂದು ವರ್ಷವಾದರೂ ನನ್ನ ಕಡೆಯಿಂದ ಯಾರೂ ಅಮೇರಿಕೆಗೆ ಬಾರದಿದ್ದುದು.

೨೦೦೧ ರಲ್ಲಿ ಅಮೇರಿಕದ ಮೇಲೆ ಭಯೋತ್ಪಾದಕರ ಧಾಳಿಯಾಗುತ್ತೆ, ಮುಂದೆ ಇರಾಕ್ ಯುದ್ಧವಾಗುತ್ತೆ, ಇಮಿಗ್ರೇಷನ್ ಲಾ ಗಳು ರಾತ್ರೋ ರಾತ್ರಿ ಬದಲಾಗುತ್ತವೆ ಎಂದು ಯಾರಿಗೆ ತಾನೇ ಗೊತ್ತಿತ್ತು? ೯೮ ರಲ್ಲಿ ನಾನು ಭಾರತಕ್ಕೆ ಹೋದಾಗ ಆದಷ್ಟು ಬೇಗ ವೀಸಾ ಪೇಪರುಗಳನ್ನು ರೆಡಿ ಮಾಡಿಕೊಂಡು ಅಮೇರಿಕದಿಂದಲೇ ನನ್ನ ಅಮ್ಮನಿಗೆ ವಿಸಿಟರ್ ವೀಸಾಕ್ಕೆ ಅರ್ಜಿ ಗುಜರಾಯಿಸುತ್ತೇನೆ ಎಂದು ಮಾತು ಕೊಟ್ಟು ಬಂದವನು - ಯಾವ್ಯಾವ ಕಾರಣಕ್ಕೋ ಏನೋ ೨೦೦೧ ರವರೆಗೂ ಅರ್ಜಿಯನ್ನೇ ಹಾಕಲಿಲ್ಲ. ಆಗೆಲ್ಲ ಬೆಂಗಳೂರಿನಲ್ಲೇ ಡ್ರಾಪ್ ಬಾಕ್ಸ್ ವ್ಯವಸ್ಥೆ ಇತ್ತು, ಕೊನೆಗೆ ಆ ಡ್ರಾಪ್ ಬಾಕ್ಸ್ ವ್ಯವಸ್ಥೆಯನ್ನು ಇನ್ನೇನು ಮುಚ್ಚಿ ಬಿಡುತ್ತಾರೆ ಎಂದು ಗೊತ್ತಾದ ತಕ್ಷಣ ನಾನು ಪರೀಕ್ಷೆಗೆ ಲಗುಬಗೆಯಿಂದ ತಯಾರಿಯಾಗುವ ವಿದ್ಯಾರ್ಥಿಯಂತೆ ಕೊನೆಯ ಕ್ಷಣದಲ್ಲಿ ನನ್ನ ಅಮ್ಮ ಹಾಗೂ ಅಣ್ಣನಿಗೆ ವಿಸಿಟರ್ ವೀಸಾಕ್ಕೆ ಅರ್ಜಿ ಹಾಕಿದೆ. ಆದರೆ ನನ್ನ ದುರಾದೃಷ್ಟಕ್ಕೋ ಏನೋ ವೀಸಾ ನಿರಾಕರಣೆಯಾಗಿ, ಅಮ್ಮ ಹಾಗೂ ಅಣ್ಣನಿಗೆ ಮದ್ರಾಸಿಗೆ ಬರುವಂತೆ ಬುಲಾವು ಬಂದಿತು. ನನಗಿಲ್ಲಿ ಹಸಿರು ಕಾರ್ಡು ಇದ್ದುದಕ್ಕೋ, ಅಥವಾ ನನ್ನ ಅಣ್ಣನ ಕಲ್ಲೀ ಮೀಸೆಗೆ ಹೆದರಿಯೋ, ಅಥವಾ ನನ್ನ ಅಮ್ಮನಿಗೆ ಮಂಡಿ ನೋವಿನಿಂದ ಹೆಚ್ಚು-ಹೆಚ್ಚು ಓಡಾಡಲು ಬರದ ಅಸಹಾಯಕತೆಯಿಂದಲೋ, ನನ್ನ ಪೆಚ್ಚು ಮೋರೆಯನ್ನು ಇನ್ನಷ್ಟು ಪೆಚ್ಚು ಮಾಡುವುದಕ್ಕೋ - ಮೊದಲ ಬಾರಿ ವೀಸಾವನ್ನು ನಿರಾಕರಿಸಿದರು.

ಸರಿ, ೨೦೦೧ ರಲ್ಲಿ ಸಿಗದೇ ಹೋದರೂ ಪರವಾಗಿಲ್ಲ, ಮತ್ತೊಮ್ಮೆ ಪ್ರಯತ್ನಿಸೋಣ ಎಂದು ೨೦೦೩ ರಲ್ಲಿ ಮತ್ತೆ ಅರ್ಜಿಯನ್ನು ಗುಜರಾಯಿಸಿದೆ - ಈ ಬಾರಿ ನನ್ನ ಅಮ್ಮನಿಗೆ ಮಾತ್ರ ಹಾಕಿದ್ದೆ, ಹಾಗಾದರೂ ಕೊಡಲಿ ಎಂಬ ಉದ್ದೇಶದಿಂದ. ಬ್ಯಾಂಕಿನ ದಾಖಲೆ ಪತ್ರಗಳನ್ನು ಎರಡೆರಡು ಬಾರಿ ಪರೀಕ್ಷಿಸಿದ್ದಾಯ್ತು, ಅವರು ಕೇಳಿದ್ದಕ್ಕಿಂತ ಹೆಚ್ಚು ದಾಖಲೆಗಳನ್ನು ತೆಗೆದುಕೊಂಡು ಹೊದರೂ, ಮತ್ತೆ ಯಾವುದೋ ಕ್ಷುಲ್ಲಕ ಕಾರಣಗಳಿಗೆ ವೀಸಾವನ್ನು ನಿರಾಕರಿಸಿದರು. ನನ್ನ ಅಣ್ಣನಿಗೆ ವೀಸಾಕ್ಕೆ ಅರ್ಜಿ ಹಾಕಿರದಿದ್ದರೂ ಅವನೇ ಅಮ್ಮನನ್ನು ಮದ್ರಾಸಿನವರೆಗೆ ಕರೆದುಕೊಂಡು ಹೋಗಿದ್ದ. ಆನವಟ್ಟಿಯಿಂದ ಬೆಂಗಳೂರಿಗೆ ಸುಮಾರು ೧೦ ಘಂಟೆ ಪ್ರಯಾಣ, ಅಲ್ಲಿಂದ ಮದ್ರಾಸಿಗೆ ಮತ್ತೆ ಹತ್ತು ಘಂಟೆ. ಮಂಡಿ ನೋವಿನಿಂದ ಹೆಚ್ಚು ಓಡಾಡಲಾಗದ ಅಮ್ಮ ಪ್ರತೀ ಸಾರಿ ಮದ್ರಾಸಿಗೆ ಹೋಗಿ ಬಂದಾಗಲು 'ಇನ್ನೊಮ್ಮೆ ಜೀವ ಹೋದ್ರೂ ಹೋಗೋದಿಲ್ಲಪ್ಪಾ' ಎಂದು ಹೇಳುತ್ತಿದ್ದಳು - ನನ್ನ ಅಣ್ಣನೂ ಎರಡು-ಮೂರು ದಿನಗಳ ಮಟ್ಟಿಗೆ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಮದ್ರಾಸಿಗೆ ಹೋಗಿ 'ವೀಸಾ ಸಿಗಲಿಲ್ಲ'ವೆಂದು ಹಿಂತಿರುಗಿ ಬರುವುದರ ಜೊತೆಗೆ ತನ್ನ ಕೈಯಲ್ಲಿನ ಕಾಸನ್ನೂ ಖಾಲಿ ಮಾಡಿಕೊಳ್ಳುತ್ತಿದ್ದ.

ಸರಿ, ಎರಡು ಸರಿಯಾಯಿತು, ಏನಾದರೂ ಮಾಡಿ ಮೂರನೇ ಸಾರಿಯಾದರೂ ಅರ್ಜಿ ಹಾಕೋಣ ಕೊಡುತ್ತಾರೆ ಎಂದರೆ ನನ್ನ ಅಮ್ಮ ಕೇಳುತ್ತಲೇ ಇರಲಿಲ್ಲ, ಸರಿ ಅವಳನ್ನು ಅವಳಷ್ಟಕ್ಕೇ ಬಿಟ್ಟು, ಮುಂದೆ ಪ್ರಯತ್ನಿಸೋಣವೆಂದು ೨೦೦೫ರಲ್ಲಿ ಮತ್ತೆ ಅರ್ಜಿ ಗುಜರಾಯಿಸಿದೆ. ಈ ಸಾರಿ ಬೆಂಗಳೂರಿನಿಂದ ಮದ್ರಾಸಿಗೆ ವಿಮಾನ ಟಿಕೇಟನ್ನು ತೆಗೆದುಕೊಟ್ಟು (ಆ ಪ್ರಯಾಣದ ದೆಸೆಯಿಂದಲಾದರೂ ಅಮ್ಮ ಮದ್ರಾಸಿಗೆ ಹೋಗಲಿ ಎಂಬ ಆಸೆಯಿಂದ), ಅಂತರ್ಜಾಲದಲ್ಲಿ ಇದ್ದ ವಿವರಗಳನ್ನೆಲ್ಲ ತಡಕಾಡಿ, ಬೆಂಗಳೂರಿನ ಚಾರ್‍ಟೆಡ್ ಅಕೌಂಟೆಂಟ್‌ರೊಬ್ಬರಿಂದ ಆಸ್ತಿ ಪಾಸ್ತಿ ಎಲ್ಲವನ್ನೂ ಸರ್ಟಿಫಿಕೇಟ್ ಮಾಡಿಸಿಕೊಂಡು, ನನ್ನ ಕೈಯಲ್ಲಿ ಆಗಬಹುದಾದ ಎಲ್ಲ ತಯಾರಿಯನ್ನೂ ಮಾಡಿಸಿ, ಹೇಳಬೇಕಾದ ಬುದ್ಧಿಮಾತನ್ನೂ ಹೇಳಿ ಅಮ್ಮನನ್ನು ವೀಸಾಕ್ಕೆ ಕಳುಹಿಸಿದರೆ, ಮೂರನೇ ಸಾರಿಯೂ ರಿಜೆಕ್ಟ್ ಮಾಡಿಬಿಟ್ಟರು. ನನ್ನ ಅಮ್ಮ ಇನ್ನು ಬದುಕಿದ್ದರೆ ಮದ್ರಾಸಿಗೆ ಹೋಗುವುದಿಲ್ಲವೆಂದು ಅಲ್ಲೆ ಶಪಥಮಾಡಿದಳೆಂದು ಕಾಣುತ್ತೆ, ವೀಸಾದ ವಿಷಯ ಬಂದಾಗಲೆಲ್ಲ ಫೋನಿನಲ್ಲಿ ಆಕೆ ಮಾತನಾಡುವುದನ್ನೇ ನಿಲ್ಲಿಸುತ್ತಾಳೆ. ನನಗಂತೂ ಅಸಹಾಯಕತೆಯಿಂದ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತೆ, ಏನು ಮಾಡುವುದಕ್ಕೂ ತೋರುವುದಿಲ್ಲ.

ಇತ್ತೀಚೆಗೆ ನನ್ನ ಅಮ್ಮನಿಗೆ ಮಂಡಿಯ ನೋವು ಉಲ್ಬಣಗೊಂಡು ಆಸ್ಪತ್ರೆಗೆ ಸೇರಿಸಿದ್ದರು, ಅವಳು ನಡೆಯುವ ದೂರ ಈಗಂತೂ ಬಹಳಷ್ಟು ಕಡಿಮೆಯಾಗಿದೆ. ಸುಮಾರು ಎಪ್ಪತ್ತರ ವಯಸ್ಸಿನ ನನ್ನ ಅಮ್ಮನಂತಹವರಿಗೆ ಕೇವಲ ಒಂದೇ ಒಂದು ತಿಂಗಳ ಮಟ್ಟಿಗೆ ವೀಸಾ ಕೊಡಿ ಎಂದು ನಾನು ಬರೆದಿದ್ದ ಪತ್ರವನ್ನೂ ಓದಿಯೂ ವೀಸಾ ಕೊಡಲು ನಿರಾಕರಿಸಿದ ಮದ್ರಾಸಿನ ಕನ್ಸಲೇಟಿನ ಆಫೀಸರರಿಗೆ ಧಿಕ್ಕಾರವಿರಲಿ. ನನ್ನ ಅಮ್ಮ ಯಾವತ್ತೂ ಅಮೇರಿಕೆಗೆ ಬರುವುದೇ ಇಲ್ಲ, ವಿದೇಶ ನೋಡುವ ಅವಳಾಸೆ ಪೂರೈಸುವುದೇ ಇಲ್ಲವೆಂದು ಗೊತ್ತಾದಾಗಲೆಲ್ಲ ಬಹಳಷ್ಟು ಬೇಸರವಾಗುತ್ತದೆ.

ನಾನು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಹೋದಾಗ ನಾಲ್ಕನೇ ಹಾಗೂ ಕಡೇ ಬಾರಿ ಪ್ರಯತ್ನಿಸಲೋ ಎಂದು ಯೋಚಿಸುತ್ತೇನೆ. ಆದರೆ ನಾನೇ ಕರೆದುಕೊಂಡು ಹೋಗಲಿ, ಇನ್ಯಾರೇ ಕರೆದುಕೊಂಡು ಹೋಗಲಿ ಒಳಗೆ ಬಿಡುವುದು ನನ್ನ ಅಮ್ಮನನ್ನು ಮಾತ್ರ - ಅದರಿಂದ ಬಹಳಷ್ಟೇನೂ ವ್ಯತ್ಯಾಸವಾಗದಿದ್ದರೂ ನನ್ನ ಅಣ್ಣನಿಗೆ ತೊಂದರೆಯಾಗುವುದು ತಪ್ಪುತ್ತದೆ. ಅಥವಾ ಯಾವುದಾದರೂ ಲಾಯರ್ ಹಿಡಿದು ಕೇಳಿ ನೋಡಿದರೆ ಹೇಗೆ, ಅಥವಾ ಕೌನ್ಸಲರ್ ಆಫೀಸರರಿಗೆ ಈಗಿನಿಂದಲೇ, ಇಲ್ಲಿಂದಲೇ ತಿವಿಯುತ್ತ ಬಂದರೆ ಹೇಗೆ...ಇನ್ನೂ ನಾನಾ ರೀತಿಯ ಆಲೊಚನೆಗಳಲ್ಲಿ ಮುಳುಗಿ ಹೋಗುತ್ತೇನೆ.

***

ಏನೂ ಮಾಡಲಾಗದ ಅಸಹಾಯಕತೆ ಬಲು ದೊಡ್ಡದು - ಅದು ಎಂಥವನನ್ನೂ ನೆಲಕ್ಕೆ ಹಚ್ಚಿ ಬಿಡಬಲ್ಲದು. ಈ ಸೋಲುಗಳಿಂದ ಆಗುವ ಪರಿಣಾಮ ಬಹಳ ಗಂಭೀರವಾದದ್ದಾದರೂ, ಪ್ರತೀ ಸಾರಿ ಇಂತಹ ಸೋಲಿಗೆ ಸಿಕ್ಕಾಗಲೆಲ್ಲ, ಪುಟಿಯುವ ಚೆಂಡಿನಂತೆ ಸೋಲಿಗೆ ಕಾರಣವಾದ ವ್ಯವಸ್ಥೆಯನ್ನು ಧಿಕ್ಕರಿಸಿ ಬದುಕುವ ಧ್ವನಿಯೂ ಮೂಡಿ ಬರುತ್ತದೆ - ನಾನು ಇದನ್ನು ಆಶಾವೇದನೆ ಎಂದು ಕರೆಯುತ್ತೇನೆ.

Wednesday, May 10, 2006

Mind what you hate!

ನಾನು ಕನ್ನಡವನ್ನ ಪ್ರೀತಿಸತೊಡಗಿದ್ದು ಕರ್ನಾಟಕವನ್ನು ಬಿಟ್ಟ ಮೇಲೆಯೇ ಎಂದೇ ಹೇಳಬಹುದು, ಏಕೆಂದರೆ ನಾನು ಕರ್ನಾಟಕದಲ್ಲಿದ್ದಾಗ ನಮ್ಮವರ ನಡುವೆ ಇರುವ ಬೆಲೆ ಏನೆಂದು ನನಗೆ ಗೊತ್ತಾಗಿದ್ದೇ ನಮ್ಮವರನ್ನು ಬಿಟ್ಟು ದೂರಕ್ಕೆ ಹೋದಮೇಲೆ. ಇದು ಒಂದು ರೀತಿಯ ವಿಪರ್ಯಾಸವೇ ಅಲ್ಲವೇ - ಯಾವುದಾದರೂ ಒಂದು ವಸ್ತು ಅಥವಾ ವಿಷಯದ ನಿಜವಾದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅದರಿಂದ ದೂರವಿರಬೇಕಾದದ್ದು!

***

೧) ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು - ಒಂದು ದಿನ ಹೀಗೇ ತರಗತಿಗಳನ್ನು ಮುಗಿಸಿ ಎಲ್.ಬಿ.ಕಾಲೇಜಿನ ಮುಂದೆ ಬಸ್ಸಿಗೆ ಕಾಯುತ್ತಿದ್ದೆವು, ಅದ್ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಧರನಾಯ್ಕ ಮತ್ತು ಜಗದೀಶಗೌಡ ಇಬ್ಬರು ಬಂದು ನನ್ನನ್ನು ಅದೇನನ್ನೋ ಕೇಳಿದರು - ನಾನು ನನಗೇ ಅರಿವಿಲ್ಲದಂತೆ 'ತೆರಿಯಾದು' ಎಂದು ಬಿಟ್ಟೆ, ನಾನು ಹೇಳಿದ್ದು ಅವರಿಗೆ ಅರ್ಥವಾಯಿತೋ ಬಿಟ್ಟಿತೋ, ಆದರೆ ನಾನು ಹೀಗೇಕೆ ಅಂದೆನೆಂದು ಬಹಳಷ್ಟು ಯೋಚಿಸಿದರೂ ನನ್ನ ಮನಸ್ಸಿನೊಳಗಿನ ಈ ಪದದ ಮೂಲ ನನಗೆ ಇವತ್ತಿಗೂ ತಿಳಿದಿಲ್ಲ. ನಾನು ತಿಳಿದಂತೆ ನನಗೆ ಯಾವ ರೀತಿಯ ತಮಿಳಿನ ಇನ್‌ಫ್ಲೂಯೆನ್ಸ್ ಇಲ್ಲದಿದ್ದರೂ ಆ ಪದವನ್ನು ಆ ಸಮಯದಲ್ಲಿ ನಾನು ಹೇಗೆ ಉಪಯೋಗಿಸಿದೆನೆಂಬುದು ಸೋಜಿಗದ ವಿಷಯವೇ. ಮುಂದೆ ಮೈಸೂರು ಶಿವಮೊಗ್ಗಗಳಲ್ಲಿ ನನ್ನ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದಂತೆ ತಮಿಳನ್ನು, ತಮಿಳು ಮಾತನಾಡುವವರನ್ನು ಬಹಳಷ್ಟು ದ್ವೇಷಿಸಲಾರಂಭಿಸಿದೆ - ಆ ದ್ವೇಷಕ್ಕೆ ಪ್ರತೀಕಾರವೆಂಬಂತೆ ನನಗೆ ಮೊದಲು ಕೆಲಸ ಸಿಕ್ಕಿದ್ದು ಮದ್ರಾಸಿನಲ್ಲಿಯೇ, ಅಲ್ಲಿ ಸುಮಾರು ಹನ್ನೆರಡು ತಿಂಗಳು ಇದ್ದು ಅನ್ನ-ನೀರಿನ ಋಣವನ್ನು ತೀರಿಸಿದ್ದೂ ಅಲ್ಲದೇ ನನಗೆ ಬಹಳವಾಗಿ ಬೇಕಾಗುವ ಸ್ನೇಹಿತರಲ್ಲಿ ಹಾಗೂ ಇವತ್ತಿಗೆ ನಾನೂ ಒಬ್ಬ ಮನುಷ್ಯನೆಂದು ಆಗಿರುವುದರ ಹಿಂದೆ ಇರುವವರಲ್ಲಿ ಹೆಚ್ಚಿವರು ತಮಿಳರೇ. ಆದರೆ ತಮಿಳಿನ ಮೇಲೆ ಇದ್ದಷ್ಟೆ ದ್ವೇಷಕ್ಕೆ ಪ್ರತಿಯಾಗಿ ಕನ್ನಡದ ಮೇಲೆ ಇಮ್ಮಡಿ ಪ್ರೀತಿ ಇಟ್ಟುಕೊಂಡರೂ ಇವತ್ತಿಗೂ ಒಂದು ದಿನವೂ ಸಹ ನಾನು ಬೆಂಗಳೂರಿನಲ್ಲಾಗಲೀ-ಕರ್ನಾಟಕದಲ್ಲಾಗಲೀ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಕೆಲಸವನ್ನೂ ಮಾಡಿಲ್ಲ!

೨) ನನಗೆ ಹಿಡಿಸದ ಮತ್ತೊಂದು ಭಾಷೆಯೆಂದರೆ ಇಂಗ್ಲೀಷು - ನಾನು ಐದನೆ ತರಗತಿಯಿಂದ ಇಂಗ್ಲೀಷನ್ನು ಕಲಿತವನು, ಹಾಗೂ ಹತ್ತನೇ ತರಗತಿಯವವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದವನು - ಆದರೆ ಕಾಲೇಜು ಮುಗಿಸಿ, ಮುಂದೆ ಕೆಲಸಕ್ಕೆ ಸೇರುವವರೆಗೂ ಇಂಗ್ಲೀಷು ನನ್ನನ್ನು ಅತಿಯಾಗಿ ಹೆದರಿಸಿದೆ. ಹೈಸ್ಕೂಲು, ಮಿಡ್ಲುಸ್ಕೂಲುಗಳಲ್ಲಿ ನಾಮಕಾವಸ್ತೆಗೆ ಪಾಠವೆನ್ನುವಂತೆ ಇಂಗ್ಲೀಷಿನ ಪಾಠಗಳನ್ನು ಮಾಡುತ್ತಿದ್ದರು, ಆಗೆಲ್ಲ ಇಂಗ್ಲೀಷ್ Detail, Non-Detail ಎಂಬ ಎರಡು ಪಠ್ಯಪುಸ್ತಕಗಳಿರುತ್ತಿದ್ದವು. ಯಾವುದೇ ಇಂಗ್ಲೀಷ್ ಪದ್ಯವೇ ಇರಲಿ, ಗದ್ಯವೇ ಇರಲಿ - ಡಿಕ್ಷನರಿ ನೋಡಿ, ಕ್ಲಿಷ್ಟಕರವಾದ ಪದಗಳ ಮೇಲೆ ಕನ್ನಡದಲ್ಲಿ ಅವುಗಳ ಅರ್ಥಗಳನ್ನು ಬರೆದು - ಆ ಸಾಲುಗಳಲ್ಲಿ ತೋರಿಸಿರುವ ಯಾವುದೋ ಅರ್ಥವನ್ನು ತಿಳಿದುಕೊಳ್ಳುವ ಹವಣಿಕೆ ನಡೆಯುತ್ತಿತ್ತು. ನಮ್ಮಲ್ಲಿನ ಇಂಗ್ಲೀಷ್ ಮೇಷ್ಟ್ರುಗಳಿಗೆ ಮೋಕ್ಷ ತೋರಿಸಿದ ಶೆಲ್ಲಿ, ಕೀಟ್ಸ್, ವರ್ಡ್ಸ್‌ವರ್ಥ್ ಗಳಿರಲಿ, ಕೊನೆಗೆ ರಾಮಾನುಜನ್‌ರ "The rich will make temple for siva, what shall I a poor man do..." ("ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯಾ, ಬಡವನಯ್ಯಾ..." ವಚನದ ಅನುವಾದ) ಪದ್ಯವೂ ಕಷ್ಟವನ್ನು ಕೊಡುತ್ತಿತ್ತು! ಹೀಗೆ ಇಂಗ್ಲೀಷ್ ಮೇಲೆ ಅತಿಯಾದ ಹೆದರಿಕೆ, ಅದರಿಂದ ಹುಟ್ಟಿದ ದ್ವೇಷ ಹಾಗೂ ತಿರಸ್ಕಾರಗಳ ನಡುವೆ ಬೆಳೆದು ಬಂದವನಿಗೆ, ನೋಡಿ, ಎಲ್ಲಿ ಬಂದು ಯಾರ ಮಧ್ಯೆ ಬದುಕಬೇಕಾದ ಸಂಕಷ್ಟ ಒದಗಿ ಬಂದಿದೆ!

೩) ಸುಮಾರು ಆರೇಳು-ವರ್ಷಗಳ ಹಿಂದೆ, ಅಮೇರಿಕದಲ್ಲಿ ನನ್ನ ರೂಮ್ಮೇಟ್‌ಗಳಾದ ರಾಮಮೂರ್ತಿ, ರವಿ ಗೆ ಸಿಟ್ಟುಬಂದಾಗಲೆಲ್ಲ - 'ನಿನಗೆ ಬೆಂಗಳೂರಿನ ಹೆಣ್ಣು ಸಿಗಲಿ' - ಎಂದು ಶಾಪ ಹಾಕುತ್ತಿದ್ದೆ. ಆಗೆಲ್ಲ ನಗೆಚಾಟಲಿಗೆ ಹೇಳುತ್ತಿದ್ದ ಮಾತದು, ಆದರೂ ನನಗೆ, ಬೆಂಗಳೂರಿನಲ್ಲಿ ಹುಟ್ಟಿ-ಬೆಳೆದೂ 'I don't know Kannada' ಎಂದು ವಯ್ಯಾರದಿಂದ ಮಾತನಾಡುವವರನ್ನು ಕಂಡರೆ ಒಳಗೊಳಗೇ ಮೈಯುರಿಯುತ್ತದೆ. ಒಂದು ಸಭೆಯಲ್ಲಿ ಶಿವರುದ್ರಪ್ಪನವರು ಹೇಳಿದಂತೆ ಅವರಿಗೆಲ್ಲ ಮೊದಮೊದಲು ಬೇಂದ್ರೆಯವರ 'ನೀ ಹೀಂಗs ನೋಡಬ್ಯಾಡಾ ನನ್ನ' ಎಂದರೆ ಏನು ಎಂಬುದೇ ಅರ್ಥವಾಗುತ್ತಿರಲಿಲ್ಲವಂತೆ! (ಈ ಮಾತನ್ನು ಕೇಳಿಸಿಕೊಂಡು ಬಹಳ ದಿನಗಳವರೆಗೆ ಶಿವರುದ್ರಪ್ಪನವರನ್ನೂ ನಾನು 'ಬೆಂಗಳೂರಿನ ಕನ್ನಡಿಗ'ರನ್ನಾಗಿ ಮಾಡಿಬಿಟ್ಟಿದ್ದೆ). ಇನ್ನು ಸಾಮಾನ್ಯವಾಗಿ ಪೇಟೆಯವರು, ಅದರಲ್ಲಿ ಬೆಂಗಳೂರಿನವರು ಹೇಳುವಂತಾ 'ನಮ್ಮ ಬದರ್ರು, ನಮ್ಮ ಸಿಸ್ಟರ್ರು, ಮಮ್ಮೀ, ಡ್ಯಾಡೀ...' ಮುಂತಾದ ಪದಗಳು ಇಂದಿಗೂ ಬಹಳ ಮುಜುಗರವನ್ನುಂಟುಮಾಡುತ್ತವೆ. ಒಟ್ಟಿನಲ್ಲಿ, ಇಂದಿಗೂ ಸಹ ಎಲ್ಲಾದರೂ ನನಗೆ ಬೆಂಗಳೂರಿನವರೆಂದು ಯಾರಾದರೂ ಪರಿಚಯಿಸಿಕೊಂಡರೆ ಪಕ್ಕನೆ ಕನ್ನಡದಲ್ಲಿ ಮಾತನಾಡಲೂ ಹಿಂದೆ-ಮುಂದೆ ನೋಡುತ್ತೇನೆ - ಅವರು ಕನ್ನಡೇತರು ಎಂದಲ್ಲ, ಕನ್ನಡಿಗರೇ ಕನ್ನಡವನ್ನು ಮಾತನಾಡದವರು ಎಂಬ ಭಾವನೆಯಿಂದ. ಹೀಗೆ ರಾಮಮೂರ್ತಿ-ರವಿಗೆ ಶಾಪ ಹಾಕಿದ್ದು ಹೆಚ್ಚಾಯಿತೋ ಎನ್ನುವಂತೆ ಕೊನೆಗೆ ನಾನು ಮದುವೆಯಾಗಿದ್ದೂ ಒಬ್ಬ ಬೆಂಗಳೂರಿನ ಹುಡುಗಿಯನ್ನೇ! (ಪಾಪ, ನನ್ನ ಹೆಂಡತಿಗೆ ಚೆನ್ನಾಗೆ ಕನ್ನಡ ಬರುತ್ತೆ, ಅದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ, ಆದರೆ ಆಕೆ ಬೆಂಗಳೂರಿನವಳೆಂಬುದು ಮಾತ್ರ ಸತ್ಯ).

***

ಹೀಗೆ ಒಂದಲ್ಲ, ಎರಡಲ್ಲಾ, ಮೂರು ಮಹಾ ಉದಾಹರಣೆಗಳ ನಂತರ ನಾನು ಇವತ್ತಿಗೂ ಯಾವುದಾದರೊಂದನ್ನು ಅತಿಯಾಗಿ ದ್ವೇಷಿಸುವ ಮೊದಲು ಒಮ್ಮೆ ಯೋಚಿಸುತ್ತೇನೆ, ಒಂದುವೇಳೆ ಈ ಅತೀ ದ್ವೇಷವೇ ಅತೀ ಪ್ರೀತಿಯಾಗಿ ಮಾರ್ಪಾಟು ಹೊಂದಿಬಿಟ್ಟರೆ ಎಂದು ಕಸಿವಿಸಿಗೊಳ್ಳುತ್ತೇನೆ. ಇಂತಹ ದೊಂಬರಾಟದಲ್ಲಿ ಸಿಲುಕಿಕೊಂಡ ಮನಸ್ಸಿಗೆ ಯಾವುದನ್ನಾದರೂ 'ನನ್ನದೆಂದು' ಅತಿಯಾಗಿ ಪ್ರೀತಿಸುವುದಿರಲಿ, 'ನನ್ನದಲ್ಲದೆಂದು' ಸ್ವಲ್ಪವೂ ದ್ವೇಷಿಸುವ ಸ್ವಾತಂತ್ರ್ಯವೂ ಇಲ್ಲದಾಯಿತೇ, ಅಕಟಕಟಾ!

Pick your battle, but be ready to work for the enemy!

Tuesday, May 09, 2006

ಉಪ್ಪಿಟ್ಟಿನಲ್ಲಿ ಬಲವಿದೆ!

ಎಸ್.ಎಸ್.ಎಲ್.ಸಿ ಪಾಸಾದ ನಂತರ ಸಾಗರದ ಚಳಿಗೆ (ತಣ್ಣೀರು ಸ್ನಾನ ಮಾಡಬೇಕಲ್ಲ ಎಂದು) ಹೆದರಿಕೊಂಡು, ನಾನೇ ಅಡುಗೆ ಮಾಡಿಕೊಂಡು ತಿನ್ನಬೇಕಲ್ಲಪ್ಪಾ ಎಂಬ ಚಿಂತೆಯಿಂದ ಮನೆಬಿಟ್ಟು ಬಂದವನಿಗೆ ಇದ್ದಲಿ ಒಲೆ, ಸೀಮೆ ಎಣ್ಣೆ ಒಲೆ ಹಾಗೂ ನಾನು ತಂದ ಒಂದಿಷ್ಟು ಪಾತ್ರೆ, ತಟ್ಟೆ, ಲೋಟಾಗಳು ಬಹಳ ವರ್ಷಗಳವರೆಗೆ ಬಂದವು. ಸಾಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ರಮೇಣ ಅಡುಗೆ ಮಾಡುವುದನ್ನು ಕಲಿತೆನಾದರೂ, ಇವತ್ತಿಗೂ ಹಲವಾರು ಫುಡ್ ನೆಟ್‌ವರ್ಕ್ಸ ಕಾರ್ಯಕ್ರಮಗಳನ್ನು ಲಾಗಾಯ್ತಿನಿಂದ ಬಾಯಿಬಿಟ್ಟುಕೊಂಡು ನೋಡುತ್ತಾ ಬಂದಿದ್ದರೂ, ನನಗೆ ಅಡುಗೆ ಮಾಡುವುದು ಹಾಗೂ ತಿನ್ನುವುದು ಎಂದರೆ ಅಷ್ಟಕಷ್ಟೇ. ಕೆಲವರಿಗೆ ಆಗುವಂತೆ ನನ್ನ ಕನಸಿನಲ್ಲಿಯೂ ಯಾವತ್ತೂ ಅಂತದ್ದನ್ನು ತಿನ್ನಬೇಕು, ಇಂತದ್ದನ್ನು ತಿನ್ನಬೇಕು ಎಂದೆನಿಸಿದ್ದಿಲ್ಲ. ಎಣಗಾಯಿ-ರೊಟ್ಟಿ ನನ್ ಮೆಚ್ಚಿನ ತಿಂಡಿಯಾದ್ರೂ ಅದು ನನಗೆ ವರ್ಷಕ್ಕೊಮ್ಮೆಯೂ ಸಿಗೋದಿಲ್ಲ. ಹಾಗಂತ ನಾನು ಉಪವಾಸ ಮಲಗೋದಿಲ್ಲ, ಎಲ್ಲೇ ಹೋಗಲಿ ಬರಲಿ, ಊಟವಂತೂ ನನಗೆ ಕಟ್ಟಿಟ್ಟ ಬುತ್ತಿ, ಹೇಗಾದರೂ ಮಾಡಿ ಅವತ್ತಿನ ಊಟ-ತಿಂಡಿ ದೊರೆತೇ ತೀರುತ್ತಾದ್ದರಿಂದ ನಾನು ಊಟ-ತಿಂಡಿಗಳನ್ನು ಉಪಚರಿಸುವುದಕ್ಕಿಂತಲೂ ಅವೇ ನನ್ನನ್ನು ಚೆನ್ನಾಗಿ ನೋಡಿಕೊಂಡಿವೆ. ಬೇಕಾದರೆ ಇವತ್ತಿನ ಉದಾಹರಣೆಯನ್ನೇ ತೆಗೆದುಕೊಳ್ಳಿ - ನಾನು ಆಫೀಸಿನಲ್ಲಿ ತಿಂಡಿ ತಿಂದರಾಯಿತು ಎಂದು ಹೊರಟೆ, ನನ್ನ ಸಹೋದ್ಯೋಗಿಯೊಬ್ಬ ತಾನು ತಿನ್ನಬೇಕೆಂದುಕೊಂಡು ಕ್ಯಾಫೆಟೇರಿಯಾದಿಂದ ಮಫಿನ್ ಒಂದನ್ನು ತಂದವನು ಅದನ್ನು ತಾನು ತಿನ್ನದೆ ನನಗೇ ಕೊಟ್ಟ! ಹೀಗೆ ಹಲವಾರು ವರ್ಷಗಳಿಂದ ಎಲ್ಲೆಲ್ಲಿ ಎಷ್ಟು ಸಿಗಬೇಕೋ ಅಷ್ಟಷ್ಟು ತಿನ್ನಲು ಸಿಗುತ್ತಿರುವುದರಿಂದ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ನನ್ನ ತೂಕದಲ್ಲಿ ಬಹಳಷ್ಟು ವ್ಯತ್ಯಾಸವೇನೂ ಆಗಿಲ್ಲ.

ಊಟ ತಿಂಡಿಯ ವಿಷಯ ಹೇಳಿ ಉಪ್ಪಿಟ್ಟಿನ ಬಗೆಗೆ ಹೇಳದಿದ್ದರೆ ಈ ಬರಹವೇ ಅಪೂರ್ಣ: ಏಕೆಂದರೆ ನಾನು ಕೆಲವರು ಅನ್ನವನ್ನು ತಿನ್ನುವುದಕ್ಕಿಂತಲೂ ಹೆಚ್ಚಾಗಿ ಉಪ್ಪಿಟ್ಟನ್ನು ತಿಂದಿದ್ದೇನೆ - ಈ ಉಪ್ಪಿಟ್ಟನ್ನು ಹಲವಾರು ರೀತಿಯಲ್ಲಿ ಅವಲೋಕನ ಮಾಡಿಕೊಂಡಿದ್ದೇನೆ - ಆದ್ದರಿಂದಲೇ ಉಪ್ಪಿಟ್ಟು ನಾನು ದ್ವೇಷಿಸುವ ತಿಂಡಿಗಳಲ್ಲೊಂದು. ಸಾಗರದಲ್ಲಿ ಅಪರೂಪಕ್ಕೊಮ್ಮೆ ಹೊಟೇಲಿನಲ್ಲಿ ತಿಂಡಿ ತಿನ್ನುತ್ತಿದ್ದವನಿಗೆ ನನ್ನ ರೂಮಿನಲ್ಲಿ ಮಾಡುತ್ತಿದ್ದ ತಿಂಡಿಗಳೆಂದರೆ ಮೂರ್‍ಏ ಮೂರು - ಅವಲಕ್ಕಿ, ಉಪ್ಪಿಟ್ಟು ಅಥವಾ ಚಿತ್ರಾನ್ನ. ನನ್ನ ರೂಮಿನ ಮೆನ್ಯು ತುಂಬಾ ಸಿಂಪಲ್ಲು, ಸೋಮವಾರ ಬೆಳಗ್ಗೆ ಉಪ್ಪಿಟ್ಟಾದರೆ, ಮಂಗಳವಾರವೂ ಉಪ್ಪಿಟ್ಟೇ, ಬುಧವಾರ-ಗುರುವಾರಗಳೆರಡರೊಂದರಲ್ಲಿ ಅವಲಕ್ಕಿ ಸೇರಿಕೊಂಡರೆ, ಶುಕ್ರವಾರ-ಶನಿವಾರ-ಭಾನುವಾರಗಳಲ್ಲೂ ಉಪ್ಪಿಟ್ಟಿನ ಮಹಿಮೆಯೇ ಹೆಚ್ಚು. ಈ ಅವಲಕ್ಕಿಯನ್ನು ಹಲವು ತರಗಳಲ್ಲಿ ಮಾಡಿದಂತೆ ಉಪ್ಪಿಟ್ಟನ್ನಾಗಲೀ-ಚಿತ್ರನ್ನವನ್ನಾಗಲಿ ಹೆಚ್ಚು ವಿಧದಿಂದ ಮಾಡಲಾಗದು - ಹೆಚ್ಚೆಂದರೆ ಒಂದಿಷ್ಟು ಮಾವಿನಕಾಯಿಯ ತುರಿಯನ್ನು ಹಾಕಬಹುದು, ಅಥವಾ ಪೇಟೆಗಳಲ್ಲಿ ಮಾಡುವಂತೆ ಅನಾನಸ್ಸಿನ ತುಂಡುಗಳನ್ನು ಸೇರಿಸಬಹುದು, ಅದಿಲ್ಲವಾದರೆ ವಿಧಾನ ಬಹಳ ಸುಲಭ: ಮೀಡಿಯಂ ರವೆಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿದು, ಒಗ್ಗರಣೆಯನ್ನು ಶಾಸ್ತ್ರೋಕ್ತವಾಗಿ ಹಾಕಿ, ರವೆಗೆ ತಕ್ಕಷ್ಟು ನೀರನ್ನು ಒಗ್ಗರಣೆಯೊಂದಿಗೆ ಕುದಿಸಿ, ಅದಕ್ಕೆ ರವೆಯನ್ನು ಸುರಿಯುತ್ತಾ ಹಾಗೇ ಚಮಚೆಯಿಂದ ಎಲ್ಲೂ ಗಟ್ಟಿಯಾಗದಂತೆ ತಿರುವುತ್ತಾ ಬಂದರೆ ಹೊರಬರುವ ಎಂಡ್ ಪ್ರಾಡಕ್ಟ್ ಏನಿದೆಯೋ ಅದನ್ನೇ ಉಪ್ಪಿಟ್ಟು ಎಂದು ನಾನು ಕರೆಯುವುದು (ನಾನೇನು ಆಲ್ಟನ್ ಬ್ರೌನ್ ಕೆಟ್ಟೋದ್ನೇ ವೈಜ್ಞಾನಿಕವಾಗಿ ವಿವರಿಸೋಕೆ!). ನೀವು ನನಗೆ ರವೆಯನ್ನು ತೋರಿಸಿ, ನಾನು ಅದರಿಂದ ಇಂತದ್ದೇ ಉಪ್ಪಿಟ್ಟು ಆಗುತ್ತದೆ ಎಂದು ಹೇಳುತ್ತೇನೆ. ಇದೇ ಉಪ್ಪಿಟ್ಟನ್ನು ವಿಧವಿಧವಾದ ಆಡುಗೆ ಪದಾರ್ಥಗಳಿಂದ ಮಾಡಿಯೂ ಗೊತ್ತು, ಏನೂ ಇಲ್ಲದೇ ಬರೀ ಎಣ್ಣೆ, ಉಪ್ಪು, ಈರುಳ್ಳಿ, ರವೆಯಿಂದ ಮಾಡಿಯೂ ಗೊತ್ತು. ಹೀಗೆ ನಾನು ಮಾಡುತ್ತಿದ್ದ ಉಪ್ಪಿಟ್ಟನ್ನು ನನ್ನ ಬದಿಯ ರೂಮಿನವರಿಗೂ ಕೊಡುತ್ತಿದ್ದೆ, ಒಮ್ಮೆ ತಿಂಡಿಯ ಸಮಯಕ್ಕೆ ನನ್ನ ರೂಮಿಗೆ ಬಂದವರು ಮತ್ತೊಮ್ಮೆ ಆ ಕಡೆ ತಲೆಹಾಕಿ ಮಲಗುತ್ತಲೂ ಇರದುದ್ದರಿಂದ 'ಮಾಡಿದ್ದುಣ್ಣೋ ಮಹರಾಯ' ಎಂಬಂತೆ ನಾನು ಮಾಡಿದ್ದನ್ನು ನಾನೇ ತಿಂದುಕೊಂಡು ಮಾಡಿನೆಡೆಗೆ ನೋಡುತ್ತಾ ಕನಸು ಕಾಣಲು ಬಹಳಷ್ಟು ಸಮಯ ಸಿಗುತ್ತಿತ್ತು. ಎಷ್ಟೋ ಸಾರಿ, ನನ್ನ ಬಾಯಿಗೆ ಹೆದರಿ, ನನ್ನ ಕೈ ರುಚಿಯನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಬಂದಿದ್ದಿಲ್ಲ - ನನ್ನ ಎರಡನೇ ಅಕ್ಕ ನನ್ನನ್ನು 'ವೇದಾಂತಿ' ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದುದೂ ಇದೇ ಕಾರಣಕ್ಕೆ - ಯಾವುದೇ ಒಂದು ವಿಷಯವನ್ನಾದರೂ ಕೊಡಿ, ಅದನ್ನು ಸಿದ್ಧಾಂತವನ್ನಾಗಿ ಮಾಡಿಬಿಡುತ್ತೇನೆ (ಅರ್ಥಾಥ್ ಕೊರೆಯುತ್ತೇನೆ), ಇನ್ನು ನಾನು ಮಾಡಿದ ಉಪ್ಪಿಟ್ಟನ್ನು ಹೀಯಾಳಿಸಿದರೆ ಸುಮ್ಮನೇ ಬಿಟ್ಟು ಬಿಡುತ್ತೇನೆಯೇ?

ಈ ರೀತಿ ತಿಂದ ಉಪ್ಪಿಟ್ಟೇ ನನಗೆ ಕಷ್ಟವನ್ನು ಸಹಿಸಿಕೊಳ್ಳೋ ಗುಣವನ್ನು ತಂದುಕೊಟ್ಟಿದೆ - ಬಾಯಿಗೆ ಇಟ್ಟಕೂಡಲೇ ಆಹಾರದ ನಿಜ ಬುದ್ದಿ ತಿಳಿಯುತ್ತದಾದರೂ ನಾನು ಈವರೆಗೆ ಯಾರಿಗೂ 'ಕೆಟ್ಟದಾಗಿ ಅಡುಗೆ ಮಾಡಿದ್ದೀರಿ' ಎಂದು ದೂರಿಲ್ಲ - ರೆಸ್ಟೋರಂಟ್‌ಗಳಲ್ಲಿ ಧಾರಾಳವಾಗಿ ಕ್ವಾಲಿಟಿ ನಿರೀಕ್ಷಿಸಿದಷ್ಟಿಲ್ಲವೆಂದು ಕಂಪ್ಲೇಂಟ್ ಮಾಡಿದ್ದೇನೆ!

ಮುಂದೆ ಸಾಗರ ಬಿಟ್ಟು ಮೈಸೂರು ಸೇರಿದರೆ ಅಲ್ಲೂ ಉಪ್ಪಿಟ್ಟೇ ಗಂಟು ಬೀಳುವುದೇ? ಕೆಲವು ತಿಂಗಳು ಹಾಸ್ಟೆಲಿನಲ್ಲಿ ಇದ್ದುದನ್ನು ಬಿಟ್ಟರೆ, ಇನ್ನು ಮಿಕ್ಕುಳಿದ ಸಮಯದಲ್ಲಿ ಗಂಗೋತ್ರಿಯ ಕ್ಯಾಂಟೀನಿನಲ್ಲಿ ನನ್ನ ಗೆಳೆಯ ರಾಜೇಶ 'ಕಾಂಕ್ರೀಟು' ಎಂದು ಕರೆಯುತ್ತಿದ್ದ ಉಪ್ಪಿಟ್ಟು-ಕೇಸರಿಬಾತ್ ಎರಡರ ಸಹವಾಸ ಆರಂಭವಾಯಿತು. ಆಗಲೇ ನನಗೆ ಮದುವೆ ಮನೆಗಳಲ್ಲಿ ಉಪ್ಪಿಟ್ಟು-ಕೇಸರಿಬಾತನ್ನು ಜೊತೆಯಾಗಿ ಏಕೆ ಕೊಡುತ್ತಾರೆ ಎಂದು ತಿಳಿದದ್ದು - ಒಮ್ಮೆ ತಿಂದರೆ ಕಾಂಕ್ರೀಟಿನೋಪಾದಿಯಲ್ಲಿ ಹೊಟ್ಟೆಯನ್ನು ಆವರಿಸಿಕೊಳ್ಳುವುದರಿಂದ ಕೊನೆಗೆ ಮಧ್ಯಾಹ್ನ ಜನ ಊಟ ಕಡಿಮೆ ಮಾಡಲಿ ಎಂದಿದ್ದಿರಬಹುದು!

***

ಹೀಗೆ ಉಪ್ಪಿಟ್ಟಿಗೆ ಸಂದ ಕೀರ್ತಿಯ ಬಹುಪಾಲು ನನ್ನ ಭುಜಗಳ ಮೇಲೆ ದಶಕಗಳಿಂದ ಮನೆಮಾಡಿರೋ ಸೋಮಾರಿತನ ಹಾಗೂ ಮೈಗಳ್ಳತನಗಳಿಗೆ ಸೇರಬೇಕು, ಇಂತಹ ಸೋಂಬೇರಿತನದ ದೆಸೆಯಿಂದ ಕೈಗೆ ಸಿಕ್ಕಿದ್ದನ್ನು ತಿಂದು 'ಬದುಕುವುದಕ್ಕಾಗಿ ತಿನ್ನಬೇಕು' ಎಂದು ವಾದ ಬದಲಾಯಿಸಿ ಬಡಪಾಯಿಕೊಚ್ಚುವ ನನ್ನ 'ವೇದಾಂತಿ'ತನಕ್ಕೂ ಅದರ ಕ್ರೆಡಿಟ್ಟು ದೊರೆಯಬೇಕು. ಹೈಸ್ಕೂಲು-ಕಾಲೇಜುಗಳಲ್ಲಿ ಬರೀ ಪ್ರೈಜ್‌ಗಳಿಸುವುದಕ್ಕೆಂದೇ ಚರ್ಚಾಸ್ಪರ್ಧೆಯಲ್ಲಿಟ್ಟಿದ್ದ ವಿಷಯಗಳ ಪರ ಅಥವಾ ವಿರೋಧವಾಗಿ ವಾದ ಮಾಡಿ ಮಾತನಾಡುವ ಅಭ್ಯಾಸ ಬದುಕಿನುದ್ದಕ್ಕೂ ಹೀಗೆ ಬರಬಾರದಿತ್ತು - ಮನುಷ್ಯನಾದವನು ಸರಿಯೋ-ತಪ್ಪೋ, ಒಳ್ಳೆಯದೋ-ಕೆಟ್ಟದ್ದೋ, ಪರವೋ-ವಿರೋಧವೋ ಎಂಬ ತರ್ಕಕ್ಕೆ ತನ್ನನ್ನು ಮೊದಲು ತೊಡಗಿಸಿಕೊಂಡು ಯಾವುದಾದರೊಂದನ್ನು ಹಚ್ಚಿಕೊಳ್ಳುತ್ತಾನೋ, ಅಥವಾ ಮೊದಲೇ ವಿಷಯವನ್ನು ಮನಸ್ಸಿಗೆ ತಂದುಕೊಂಡು ಕೊನೆಗೆ ಅದನ್ನು ಇಷ್ಟಪಟ್ಟಿದ್ದಕ್ಕೆ ಕಾರಣಗಳನ್ನು ಹುಡುಕುತ್ತಾನೋ ಎನ್ನುವ ಪ್ರಶ್ನೆಯ ಉತ್ತರವನ್ನು ನನಗಿಂತ ದೊಡ್ಡ 'ವೇದಾಂತಿ'ಗಳಿಗೆ ಬಿಡುತ್ತೇನೆ. ಎಲ್ಲಿಯವರೆಗೆ ಚರ್ಚಾಸ್ಪರ್ಧೆಯಲ್ಲಿ ಬಹುಮಾನಗಳಿಸುವುದು ಗುರಿಯಾಗುತ್ತದೆಯೋ, ಎಲ್ಲಿಯವರೆಗೆ ಮಾಡಿದ್ದನ್ನು ಸಾಧಿಸಿಕೊಳ್ಳುವ ಅಥವಾ ಅದಕ್ಕೊಂದು ವಿವರಣೆಯನ್ನು ಹೊಂಚಿಹಾಕುವ ಕುಹಕತನವಿರುತ್ತದೆಯೋ ಅಲ್ಲಿಯವರೆಗೆ ದಿನವೂ ಉಪ್ಪಿಟ್ಟು ತಿನ್ನುವ ಕಾಯಕ ಶಿಕ್ಷೆಯಾಗಲಿ!

***

ಬೋಲೋ ಬ್ಯಾಚೆಲರ್ ಲೈಫ್ ಕೀ...ಜೈ...ಉಪ್ಪಿಟ್ಟಿನಲ್ಲಿ ಬಲವಿದೆ! (ನಾವು ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಗಳಂದು ಪ್ರಭಾತ್‌ಪೇರಿ ಹೋಗುತ್ತಿದ್ದಾಗ ಕೂಗುತ್ತಿದ್ದ 'ಬೋಲೋ ಭಾರತ್ ಮಾತಾ ಕೀ...ಜೈ...ಒಗ್ಗಟ್ಟಿನಲ್ಲಿ ಬಲವಿದೆ!' ಎಂಬುದನ್ನು ಅನುಕರಣೆ ಮಾಡುತ್ತಾ...)

Monday, May 08, 2006

ವಾಸನೆಯ ಸಂಸ್ಕಾರ ಹಾಗೂ ಮಣ್ಣಿನ ಗುಣ

ನೀವು ಭಾರತಕ್ಕೆ ಹೋದಾಗ ಏರ್‌ಪೋರ್ಟಿನಲ್ಲಿ ಕಾಲಿಡುತ್ತಿದ್ದಂತೆಯೇ ಮೂಗಿಗೆ ಫಿನೈಲ್ ವಾಸನೆ ಅಡರಿಕೊಳ್ಳೋದನ್ನ ಗಮನಿಸಿರಬಹುದು. ಈ ಒಂದು ವಾಸನೆಯೇ ಸಾಕು, ನಮ್ಮಲ್ಲಿನ ಒಳ್ಳೆಯ ಹಾಗೂ ಕೆಟ್ಟವುಗಳ ದರ್ಶನವನ್ನು ನೆನಪಿಸುವುದಕ್ಕೆ! ಈ ವಾಸನೆಯ ಸಂಸ್ಕಾರ ದೂರ ದೇಶಗಳಿಗೆ ಹೋದರೂ ಮಾಸುವುದಿಲ್ಲ, ಹೊಸ ವಾಸನೆಗಳ ಸಂಸ್ಕಾರ ಸಿಕ್ಕಿದೊಡನೆ ಹಳೆಯದು ಕಳೆದು ಹೋಗುವುದಿಲ್ಲ. ಅಮ್ಮನ ಬೆಚ್ಚನೆ ಸೀರೆ ನಿರಿಗೆಳಲ್ಲಿ ತಮ್ಮ ಮುಖ ಮುಚ್ಚಿಕೊಂಡು ಬೆಳೆದು ದೊಡ್ಡವರಾದ ಎಲ್ಲರಿಗೂ ನಾನು ಹೇಳುವುದೇನೆಂದು ಗೊತ್ತು. ಇದೇ ರೀತಿಯ ಸಂಸ್ಕಾರದ ಜಾತಿಗೆ ಸೇರಿರೋದು ಮಣ್ಣಿನ ಒಡನಾಟ: ನೀವು ಹೊಲಗದ್ದೆಗಳಲ್ಲಿ ಕೆಲಸ ಮಾಡಿದ್ದರೆ, ನಿಮ್ಮ ಮನೆಯ ಅಂಗಳವನ್ನು ಗುಡಿಸಿ ಸಾರಿಸಿ ಬಳಿದಿದ್ದರೆ, ಅಲ್ಲಲ್ಲಿ ಬಿದ್ದ ಸೆಗಣಿಯನ್ನು ಹೆಕ್ಕಿ ತಂದು ತಿಪ್ಪೆ ತುಂಬಿಸಿದ್ದರೆ, ಮನೆಯ ಹಿತ್ತಲಿನಲ್ಲಿ ಹೂ-ತರಕಾರಿ ಗಿಡಗಳನ್ನು ನೆಟ್ಟಿದ್ದರೆ ಇವೆಲ್ಲವೂ ಕಣ್ಣ ಮುಂದೆ ಯಾವಾಗ ಬೇಕಂದರೂ ಬಂದು ನಿಲ್ಲುತ್ತವೆ.

***

ಭಾರತೀಯರು ಅಮೇರಿಕೆಯಲ್ಲಿ ಕಮ್ಮ್ಯೂನಿಟಿಯ ಕೆಲಸ ಕಾರ್ಯಗಳಲ್ಲಿ ಅಷ್ಟೊಂದು ಭಾಗವಹಿಸುವುದಿಲ್ಲ ಎಂಬ ಅಬ್ಸರ್‌ವೇಷನ್ ಅಲ್ಲಲ್ಲಿ ಕಾಣಸಿಗುತ್ತದೆ - ಇವುಗಳಿಗೆಲ್ಲ ನನ್ನ ಒಂದೇ ಉತ್ತರವೆಂದರೆ - ಮಣ್ಣಿನೊಡನಾಟ. ಎಲ್ಲಿಯವರೆಗೆ ಈ ಮಣ್ಣಿನಲ್ಲಿ ಆಡುವುದಿಲ್ಲವೋ, ಓಡುವುದಿಲ್ಲವೋ; ಎಲ್ಲಿಯವರೆಗೆ ಈ ಮಣ್ಣಿನಿಂದ ದೂರವೇ ಇರುತ್ತೇವೋ ಅಲ್ಲಿಯವರೆಗೆ ನಾವು ಇಲ್ಲಿಯವರೊಳಗೆ ಒಂದಾಗುವುದಿಲ್ಲ. ಈ ಕ್ಷಣದಲ್ಲಿ ಅನಿವಾಸಿ ಭಾರತೀಯ ಮನಸ್ಸುಗಳ ಸಮೀಕ್ಷೆಯನ್ನೇನಾದರೂ ನಡೆಸಿದರೆ ಸತ್ತ ಮೇಲೆ 'ಈ' ಮಣ್ಣನ್ನು ಸೇರಬಯಸುವವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಬೇಕು ಬೇಕಾದ ಐಶಾರಾಮಗಳಿಗೆ "ಈ" ಮಣ್ಣು, ಸತ್ತಾಗ, ಸತ್ತ ಮೇಲೆ ಬೇಕಾದ ಸಂಸ್ಕಾರಗಳಿಗೆ "ಆ" ಮಣ್ಣು - ಇಲ್ಲಿನ ಪೋಟೋಮ್ಯಾಕ್ ಅಥವಾ ಹಡ್ಸನ್ ನದಿಯಲ್ಲಿ ಬೂದಿಯನ್ನು ಸೇರಿಸಿಬಿಡಿ ಎನ್ನುವುದಕ್ಕೂ ಗಂಗೆಯಲ್ಲಿ ಕಲಸಿ ಹಾಕಿ ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ.

ಆದರೆ "ಈ" ಮಣ್ಣಿನ ಋಣಾನುಬಂಧ ಬಹಳ ಅಪರೂಪವಾದದ್ದು - ಇವತ್ತು ಚಾಟ್ ಮಾಡುವಾಗ ಭಾರತದ ನನ್ನ ಸ್ನೇಹಿತರೊಬ್ಬರು ನೆನಪಿಸಿಕೊಟ್ಟಂತೆ ಈ ಮಣ್ಣು ನನಗೆ ಏನೇನೆಲ್ಲ ಅನುಕೂಲ ಮಾಡಿಕೊಟ್ಟಿದೆ ಎಂದು ದಾರಿಯ ಉದ್ದಕ್ಕೂ ಪಟ್ಟಿ ಮಾಡುತ್ತಾ ಬಂದೆ - ಈ ಮಣ್ಣಿನ ಮೊಟ್ಟ ಮೊದಲ ಇಷ್ಟವಾದ ಗುಣವೆಂದರೆ ನಾನು ದೈನಂದಿನ ಬದುಕಿನಲ್ಲಿ, ವ್ಯವಹಾರದಲ್ಲಿ ಸುಳ್ಳನ್ನು ಹೇಳದೇ ಇರೋದು - ಒಂದು ನಿಮಿಷ ಈ ವಾಕ್ಯವನ್ನು ಕುರಿತು ಯೋಚಿಸುತ್ತೇನೆ - ಹೌದು, ಸುಳ್ಳು ಹೇಳುವ, ಒಂದರ ಮೇಲೆ ಮತ್ತೊಂದನ್ನು ಸೇರಿಸಿ ಅದನ್ನು ಸಾಧಿಸುವ ಅಭ್ಯಾಸ ಇದೆಯಲ್ಲಾ ಅದೇ ನಮ್ಮ ಅಧಃಪತನಕ್ಕೆ ಕಾರಣವಾಗಲಿಕ್ಕೂ ಸಾಕು. ಏರ್‌ಪೋರ್ಟಿನಲ್ಲಿ ಮೂಗಿಗೆ ಅಡರಿಕೊಳ್ಳುವ ಫಿನೈಲ್ ವಾಸನೆ 'ಪ್ಯಾವ್ಲೋವ್ ನಾಯಿ'ಗೆ ಬಂದ ಹಾಗೆ ನನಗೆ ಸುಂಕದ ಅಧಿಕಾರಿಗಳ ಲಂಚಕೋರತನವನ್ನೂ, ತಮ್ಮ-ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದ ಏರ್‌ಪೋರ್ಟ್ ಅಧಿಕಾರಿಗಳನ್ನೂ, ಜೇಬಿನಿಂದ ಇಪ್ಪತ್ತು ಡಾಲರುಗಳ ನೋಟನ್ನು ಈಗ ತೆಗೆಯಬಹುದು, ಆಗ ತೆಗೆಯಬಹುದು ಎಂದು ಹಸಿದ ಕಣ್ಣುಗಳಲ್ಲಿ ನೋಡುವ ಕೆಲಸಗಾರರನ್ನು ನೆನಪಿಗೆ ತರುತ್ತದೆ. "ಈ" ಮಣ್ಣಿನಲ್ಲಿ ಬದುಕಿದ ಲಂಚ-ಸುಳ್ಳು ರಹಿತ ಬದುಕನ್ನೆಲ್ಲ ಒಂದೇ ಹೊಡೆತದಲ್ಲಿ ಹೆದರಿಸಿಬಿಡುವಂತಹ ಪರಿಸ್ಥಿತಿಗಳು ಆರಂಭವಾಗೋದೂ ಏರ್‌ಪೋರ್ಟಿನಲ್ಲೇ. ಹೇಗೆ ಹೇಳಬೇಕೋ, ಹಂಚಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ - ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಯೂ, ರಿಜಿಸ್ಟ್ರ್‍ಆರ್‌ಗೆ ಕೊಡಬೇಕಾದ ಎಲ್ಲ ದಾಖಲೆಗಳನ್ನು ಕೊಟ್ಟೂ, ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಅದರ ಮೇಲೆ ಐನೂರು ರೂಪಾಯಿ ಲಂಚ ಕೊಟ್ಟವ ನಾನು, ನನ್ನ ಕಷ್ಟ ನನಗೇ ಗೊತ್ತು, ಇದು ಆದದ್ದು ಬೇರೆಲ್ಲೂ ಅಲ್ಲ, ನಮ್ಮ ಶಿವಮೊಗ್ಗದಲ್ಲಿಯೇ. ಈ ಲಂಚದ ಹಿಂದೆ ಬಹಳ ಉದ್ದವಾದ ಕಥೆಗಳನ್ನು ಬರೆಯಬಹುದು, ಆದರೆ ಇಂಥ ಒಂದೊಂದು ಅನುಭವವೂ ನನ್ನಂಥವರ ಮನಸ್ಸನ್ನು ಮುದುಡಿಬಿಡುತ್ತದೆ, ಶಿವಮೊಗ್ಗದ ಮೇಲಿನ ನನ್ನ ಪ್ರೀತಿಯೆಲ್ಲ ಈ ಅನುಭವದ ನೆನಪಾದಾಗಲೆಲ್ಲ ಹೊಳೆ ನೀರಿನಲ್ಲಿ ಕೊಚ್ಚಿ ಹೋಗುವ ಮಣ್ಣಿನಂತಾಗುತ್ತದೆ. ಕೇವಲ ಮೂರು-ನಾಲ್ಕು ವಾರಗಳಲ್ಲಿ ಮದುವೆಯಾಗಿ ಕೆಲಸಕ್ಕೆ ಹಿಂತಿರುಗಿ ಹೋಗುವುದು ನನ್ನ ಆಯ್ಕೆ ಆದರೆ "ಆ" ಮಣ್ಣಿನ ಕೆಟ್ಟ ಗುಣಲಕ್ಷಣಗಳನ್ನು ಹೆಜ್ಜೆ-ಹೆಜ್ಜೆಗೂ ವಿರೋಧಿಸದೆ ಸಹಿಸಿಕೊಂಡು, ಅನುಸರಿಸಿಕೊಂಡು ಹೋಗುವುದು ನನ್ನ ಪರಂಪರೆ. ಆ ದಿನ ಪುಣ್ಯಕ್ಕೆ ನನ್ನ ಅಣ್ಣ ನನ್ನ ಜೊತೆಯಲ್ಲಿದ್ದ, ಇಲ್ಲವಾದರೆ ನನಗೆ ಬಂದ ಸಿಟ್ಟಿನಲ್ಲಿ ಮದುವೆ ಅನ್ನೋ ಮಹಾ ಅನುಭವ, ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟು ರಿಜಿಸ್ಟ್ರ್‍ಆರ್‌ರಿಂದ ಸರ್ಟಿಫಿಕೇಟ್ ಪಡೆಯದೇ, ನನ್ನ ಹೆಂಡತಿಯ ವೀಸಾಕ್ಕೆ ಅರ್ಜಿ ಹಾಕುವುದಕ್ಕೆ ಅನಿರ್ಧಿಷ್ಟಕಾಲ ತಡವಾಗುವುದರ ಮೂಲಕ ಇನ್ನೂ ಕೆಟ್ಟ ಅಂತ್ಯವನ್ನು ಪಡೆದುಕೊಳ್ಳುತ್ತಿತ್ತು. ಹನ್ನೆರಡು-ಹದಿಮೂರು ಡಾಲರಿನ ಪ್ರಶ್ನೆ ಅಲ್ಲ, ತಲತಲಾಂತರದಿಂದ ಮನೆಯೋ-ಸೈಟೋ-ವಾಹನವನ್ನೋ ನೋಂದಾವಣಿ ಮಾಡುವಲ್ಲಿ ನನಗೆ ಗೊತ್ತಿರೋ ಹಾಗೆ ಇದ್ದ ಲಂಚವನ್ನು ನಾನು "ಈ" ಮಣ್ಣಿನ ದೃಷ್ಟಿಕೋನದಲ್ಲಿ ನೋಡಿದಾಗ ಉಂಟಾದ ಸಣ್ಣ ಪ್ರತಿಕ್ರಿಯೆ ಅದು.

ನಾನು ಈ ಹಿಂದೆಂದೂ ಲಂಚದ ವಾತಾವರಣದ ಅರಿವೇ ಇರದವನೆಂದು ಆಡಿಕೊಳ್ಳುತ್ತಿಲ್ಲ, ನನಗೆ "ಈ" ಮಣ್ಣು ಇನ್ನು ಮುಂದೆ ನಾನು ಬೀಳಬಹುದಾದ ಲಂಚದ ಬಲೆಯನ್ನು ನೇಯ್ದ ದಾರಗಳನ್ನು ನೋಡುವ ಒಂದು ಹೊಸ ದೃಷ್ಟಿಕೋನವನ್ನು ರೂಢಿಸಿಕೊಟ್ಟಿದೆ, ಈ ರೂಢಿ ಮುಂದೆ ನಾನೆಲ್ಲಿದ್ದರೂ ನನ್ನ ಜೊತೆಯಲ್ಲೇ ಇರುತ್ತೆ. ಕ್ಯಾಪಿಟಲಿಷ್ಟ್ ಪ್ರಪಂಚದಲ್ಲಿದ್ದುಕೊಂಡು, ಕಾರ್ಪೋರ್‍ಏಟ್ ಏಣಿಯ ಮೆಟ್ಟಿಲುಗಳಲ್ಲಿ ಒಬ್ಬನಾಗಿದ್ದುಕೊಂಡು ಜಗತ್ತನ್ನು ಒಳ್ಳೆಯ ಸ್ಥಳವಾಗಿ ಪರಿವರ್ತಿಸಬಹುದಾದ ಕನಸನ್ನು ಕಾಣುವ ಹುಂಬ ಎಂದು ನನ್ನ ಸ್ನೇಹಿತರು ನನ್ನ ಎದುರೇ ಆಡಿಕೊಳ್ಳುತ್ತಾರೆ, ಆದರೆ ಸಮಾಜವಾದದ ಹಿನ್ನೆಲೆಯಲ್ಲಿ ಗೋಪಾಲಗೌಡ, ಜೆಪಿಯಂತಹವರ ಹೆಸರಿನಲ್ಲಿ ಇಡೀ ಊರಿಗೆ ಬೇಲಿ ಹಾಕಿಕೊಂಡು ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಮಾಡಿರುವ ಧುರೀಣರನ್ನು ನಾನು ಬಲ್ಲೆ, ಅದಕ್ಕೇನೆನ್ನುತ್ತೀರಿ ಎಂದರೆ ಅವರ ಬಳಿ ಯಾವುದೇ ಉತ್ತರವಿರೋದಿಲ್ಲ. ಕೈಕೇಯಿ-ಮಂಥರೆ, ಗಾಂಧಾರಿ-ಶಕುನಿ ಮುಂತಾದ ಪಾತ್ರಗಳನ್ನು ಪುರಾಣದಲ್ಲಿ ಸೃಷ್ಟಿಸಿ, ಅಲ್ಲಲ್ಲಿ ಕಥೆಯನ್ನು ಹಿಂಜುವ ಅನನುಭವಿ ನಿರ್ದೇಶಕರಂತೆ ವೈಭವೀಕರಿಸಿ ಪರಂಪರಾನುಗತವಾಗಿ ನಮ್ಮನ್ನು "ಆ" ದೃಷ್ಟಿಕೋನದಲ್ಲಿ ನೋಡುವುದನ್ನು ಹೇಳಿಕೊಟ್ಟಿದ್ದಾರೇನೋ ಎಂದು ಅನುಮಾನವಾಗುತ್ತದೆ. "ಆ"ಮಣ್ಣಿನ ಮೇಲೆ ನಿಂತಾಗ "ಈ" ಮಣ್ಣಿನಲ್ಲಿ ಕೇಳಬಹುದಾದ 'ಇದೇಕೆ ಹೀಗೆ?' ಎಂದು ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ - ಹಾಗೆ ಯಾವುದಾದರೊಂದು ತಲೆಮಾರಿನಲ್ಲಿ ನಾವು ಮಾಡಿದ್ದೇ ಆದರೆ ನಮಗಂಟಿದ (ಅಡ್ಜಸ್ಟು ಮಾಡಿಕೊಂಡು ಹೋಗುವ) ಶಾಪ ಅರ್ಧ ಕಡಿಮೆಯಾಗುತ್ತದೆ.

***

ಇಲ್ಲಿ ಬದುಕಲು ಕಲಿಸಿದ "ಆ" ಮಣ್ಣನ್ನು ತೆಗಳಿ ಬರೆಯುತ್ತಿಲ್ಲ, ಅಲ್ಲಿ ಹೀಗೂ ಬದುಕಬಹುದು ಎಂಬ ಹೊಸ ದೃಷ್ಟಿಕೋನವನ್ನು ನೀಡಿದ "ಈ" ಮಣ್ಣನ್ನು ಗೌರವಿಸುತ್ತಿದ್ದೇನೆ ಅಷ್ಟೇ.

Sunday, May 07, 2006

ನೆನಪಿರಲಿ...

ನಿನ್ನೆ ನೆನಪಿರಲಿ ಸಿನಿಮಾವನ್ನು ನೋಡಿದೆ - ೨೦೦೫ ರಲ್ಲಿ ಬಿಡುಗಡೆಯಾದರೂ ನನ್ನ ಅದೃಷ್ಟಕ್ಕೆ ಹಲವು ತಿಂಗಳು ಅಥವಾ ವರ್ಷದ ನಂತರ ನೋಡುವ ಅವಕಾಶ ಸಿಕ್ಕಿದ್ದೇ ಹೆಚ್ಚು. ಶುಕ್ರವಾರ ರಾತ್ರಿ ತಡವಾಗಿ ಮಲಗಿದ್ದಕ್ಕೋ ಏನೋ ಶನಿವಾರ ಬೆಳಗ್ಗೆ ಎದ್ದು ಸೂರ್ಯನ ಮುಖ ನೋಡೋ ಹೊತ್ತಿಗೆ ಅವನು ಹೈಸ್ಕೂಲು ಮುಗಿಸಿ ಕಾಲೇಜು ಮೆಟ್ಟಿಲು ಹತ್ತೋ ಹುಡುಗರ ಥರಾ ಆಗಿ ಹೋಗಿದ್ದ. ವಾರದ ದಿನಗಳಲ್ಲಿ ಮನೆಯಲ್ಲಿ ಬೆಳಕು ಬಿದ್ದು ಪ್ರತಿಫಲಿಸುವುದನ್ನು ನೋಡದ ನನಗೆ ಶನಿವಾರ ಮುಂಜಾನೆ ಕಣ್ಣು ಬಿಟ್ಟೊಡನೆ ಮನೆಯ ಗೋಡೆಗಳೆಲ್ಲ ಬೆಳಕಿನಲ್ಲಿ ಹೊಳೆದು ವಾರಾಂತ್ಯ ಬಂತು ಎಂದು ಸಂತಸ ಸೂಚಿಸುತ್ತಿದ್ದವು. ಈ ಸಿನಿಮಾವನ್ನು ನೋಡಬೇಕು ಎಂದು ಯಾಹೂ ಕ್ಯಾಲೆಂಡರಿನಲ್ಲಿ ರಿಮೈಂಡರ್ ಹಾಕಿಕೊಂಡಿದ್ದರೂ ಇರುವ ಹಲವಾರು ಇ-ಮೇಲ್, ಮೆಸ್ಸೇಜಿಂಗ್ ಅಕೌಂಟುಗಳು, ಕ್ಯಾಲೆಂಡರುಗಳು, ಆಫೀಸಿನ ಲೋಟಸ್ ನೋಟ್ಸೂ, ಕೈಯಲ್ಲಿನ ಪಾಮ್ ಪೈಲೆಟ್ಟೂ, ಸೆಲ್ ಫೋನಿನಲ್ಲಿರೋ ಹಲವಾರು ರಿಮೈಂಡರುಗಳು, ಪುಸ್ತಕದಲ್ಲಿ ಅಲ್ಲಲ್ಲಿ ಬರೆದ ನೋಟ್ಸೂ ಅಲ್ಲದೆ ಏನಾದರೊಂದನ್ನು ನೆನಪಿಸಿ ಆವಾಗಾವಾಗ ತಿವಿಯೋ ಮನೆಯವರ ಮಧ್ಯೆ ಎಲ್ಲವೂ ಕಲಸು ಮೇಲೋಗರವಾದಂತಾಗಿ 'ಅಂತರಂಗ'ವನ್ನು ಪ್ರತಿಬಿಂಬಿಸುತ್ತಿದ್ದವು.

ಸಿನಿಮಾ ಆಯೋಜಕರು ಥಿಯೇಟರ್ ಬದಲಾವಣೆ ಕುರಿತು ತಮ್ಮ ಇ-ಮೇಲ್‌ನಲ್ಲಿ ಬರೆದಿದ್ದರೂ ಚಿತ್ರದ ಹೆಸರು, ದಿನಾಂಕ ಮತ್ತು ಸಮಯವನ್ನು ಬಿಟ್ಟು ಬೇರೇನನ್ನೂ ನೋಡದೆ ಎಂದಿನಂತೆ ಸಮಯಕ್ಕೆ ಸರಿಯಾಗಿ ಹಳೆಯ ಥಿಯೇಟರ್‌ಗೆ ಹೋದವನಿಗೆ ಆಶ್ಚರ್ಯ ಕಾದಿತ್ತು, ಥಿಯೇಟರ್ ಸ್ಥಳಾಂತರವಾದ ಬಗ್ಗೆ ಮನಸ್ಸಿನ್ನಲ್ಲೇ ಹಿಡಿಶಾಪ ಹಾಕುತ್ತಾ ಸ್ಟಿಯರಿಂಗ್ ವ್ಹೀಲ್ ಮೇಲೆ ಕುಟ್ಟಿ, ಶನಿವಾರ ಶಾಪ್ಪಿಂಗ್ ತರಾತುರಿಯ ನಡುವೆ ಸಂಭ್ರಮದಲ್ಲಿರುವವರನ್ನೆಲ್ಲ ಹಳಿಯುತ್ತಾ ಅಂತೂ-ಇಂತೂ ಹೊಸ ಥಿಯೇಟರ್ ಇರುವಲ್ಲಿ ಬರುವ ಹೊತ್ತಿಗೆ ಹದಿನೈದು ನಿಮಿಷ ತಡವಾಗಿತ್ತು. 'ಥೂ, ಒಂದ್ ಸಿನಿಮಾನ್ನು ನೆಟ್ಟಗೆ ನೋಡೋಕಾಗಲ್ಲಪ್ಪಾ' ಎಂದು ಸ್ವಯಂ ಶಾಪ ಹಾಕಿಕೊಳ್ಳುತ್ತಿದ್ದವನನ್ನು ನನ್ನ ಹೆಂಡತಿ ಸಮಾಧಾನ ಪಡಿಸುವ ಗೋಜಿಗೂ ಹೋಗದೇ 'ದಿನಾ ಸಾಯೋರಿಗೆ ಆಳೋರ್‍ಯಾರು' ಎಂಬಂತೆ ನಿರ್ಲಿಪ್ತ ಮುಖವನ್ನು ತೋರಿಸಿಕೊಂಡಿದ್ದಳು.

ಬೆಳ್ಳಂ ಬೆಳಕಿನ, ಬಿಸಿಲಿನ ವಾತಾವರಣದಿಂದ ಕತ್ತಲಿನಲ್ಲಿ ಕಥೆಯೊಂದನ್ನು ಹೇಳುತ್ತೇವೆಂದು ಸೆಡ್ಡು ಹೊಡೆದು ನಿಂತ ಥಿಯೇಟರ್ ಅನ್ನು ಹೊಕ್ಕಾಗ ಕಥೆಯನ್ನು ಕೇಳುವ ಕುತೂಹಲವನ್ನು ಅಭಿವ್ಯಕ್ತ ಪಡಿಸುವಂತೆ ಕಣ್ಣುಗಳು ಕಿರಿದಾದವು. ನನ್ನ ಅದೃಷ್ಟಕ್ಕೆ ಸಿನಿಮಾ ಅದೇ ತಾನೆ ಶುರುವಾಗಿ ಹೆಸರುಗಳನ್ನು ತೋರಿಸುತ್ತಿದ್ದರು. ಹೆಸರುಗಳನ್ನು ನೋಡುವಾಗ ಕಣ್ಣಿಗೆ ಕಂಡ ಅಂಶಗಳು ಇಷ್ಟು:

೧) 'ಸಂಗೀತ ಸಾಗರ - ಸಾಹಿತ್ಯ ಸರೋವರ' (ಯಾರಿಟ್ಟರೀ ಬಿರುದು?) ಹಂಸಲೇಖಾರ ಸಾಹಿತ್ಯ ಹಾಗೂ ಸಂಗೀತ 'ನೆನಪಿರಲಿ'ಯನ್ನು ಹಾಡುಗಳ ಗುಚ್ಛವನ್ನಾಗಿ ಪರಿಚಯಿಸಿತು.
೨) ಕೈಯ ಬೆರಳುಗಳಲ್ಲಿ ಎಣಿಸುವುದಕ್ಕೂ ಹೆಚ್ಚಾಗಿದ್ದ ಹಿನ್ನೆಲೆ ಗಾಯಕರ ಪಟ್ಟಿಯೂ ಮೇಲಿನ ಅಂಶಕ್ಕೆ ಪೂರಕವಾಗಿತ್ತು.

ಹೆಸರು ತೋರಿಸುವ ಹೊತ್ತಿಗೆಲ್ಲಾ ಚಿತ್ರದಲ್ಲಿ ಸಂಭಾಷಣೆ ಆರಂಭವಾಗಿರುತ್ತದೆ. ಮೊದಲ ಅರ್ಧದ ನಾಯಕಿ ತನ್ನ ಪ್ರಿಯತಮನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಾ ಆತನ ಹುಟ್ಟುಹಬ್ಬವನ್ನು ನೆನಪಿಸುವುದು ಬೆಂಗಳೂರಿನಲ್ಲಿ ವ್ಯವಹಾರದಲ್ಲಿ ವ್ಯಸ್ತನಾದ ಎಕ್ಸಿಕ್ಯೂಟೀವ್ ಒಬ್ಬನ ಬಗ್ಗೆ ಹಿಂಟ್ ನೀಡುತ್ತದೆ.

ನೀವು ಇಲ್ಲಿಯವರೆಗೆ 'ನೆನಪಿರಲಿ'ಯನ್ನು ನೋಡಿಲ್ಲವಾದರೆ - ಇದೊಂದು ಮಾಮೂಲಿ ಲವ್ ಸ್ಟೋರಿ, ಅಥವಾ ತ್ರಿಕೋನ ಪ್ರೇಮ ಕಥೆ ಎಂದು ರೀಲಿಗಿಂತಲೂ ವೇಗವಾಗಿ ಓಡುವ ಮನಸ್ಸಿನವರನ್ನು ಅಲ್ಲಲ್ಲಿ ನಿಲ್ಲಿಸುವಂತೆ ಚಿತ್ರದ ಉದ್ದಕ್ಕೂ ಶಾಕ್ ಕೊಡಲಾಗಿದೆಯಾದ್ದರಿಂದ ಚಿತ್ರವನ್ನು ಅವರು ತೋರಿಸಿದ ಹಾಗೆ ನೋಡಿಕೊಂಡು ನಿಮ್ಮ ಆಲೋಚನೆಗಳನ್ನೆಲ್ಲಾ ಕೊನೆಯಲ್ಲಿ ಇಟ್ಟುಕೊಳ್ಳುವಂತೆ ಕೇಳಿಕೊಳ್ಳುತ್ತೇನೆ.

ಈ ಚಿತ್ರದಲ್ಲಿ ಹಾಡುಗಳು ಚೆನ್ನಾಗಿ ಮಿಳಿತಗೊಂಡಿವೆ. ಹಾಡುಗಳು ದಿಢೀರನೆ ಆರಂಭವಾಗಿ, ಎಲ್ಲೋ ಮುಕ್ತಾಯವಾಗಿ ತೊಂದರೆ ನೀಡುವುದರ ಬದಲಿಗೆ, ಚಿತ್ರದ ಕಥೆಗೆ ಪೂರಕವಾಗಿವೆ. ಹಾಡುಗಳು ಅಲ್ಲಲ್ಲಿ ನಿಂತು, ಮಧ್ಯೆ ಸಂಭಾಷಣೆಗಳು ಬಂದು, ಮತ್ತೆ ಹಾಡಿನಲ್ಲಿ ಕೊನೆಯಾಗುವ ಸನ್ನಿವೇಶಗಳು ಅನಗತ್ಯವೆನಿಸುವುದಿಲ್ಲ.

'ಕೂರಕ್ ಕುಕ್ರಳ್ಳಿಕೆರೆ' ಬಹಳ ಚೆನ್ನಾಗಿದೆ, ಚಿತ್ರದುದ್ದಕ್ಕೂ ಮೈಸೂರನ್ನು ನಾನಾ ಕೋನಗಳಲ್ಲಿ ಸೆರೆಹಿಡಿಯುತ್ತೇವೆಂದು ಹಠ ತೊಟ್ಟ ನಿರ್ದೇಶಕರ ಪ್ರಯತ್ನ ಸಫಲವಾಗಿದೆ:
...ಬನ್ರೀ, ನೋಡ್ರೀ, ನಾನು ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ...
ಎಂದು ಆರಂಭವಾಗೋ ಹಾಡು, ಕೋರಸ್ ಇವುಗಳು ಮುಂಬರುವ ಅದ್ದೂರಿ ಗ್ರೂಪ್ ಸಾಂಗ್ ಹಿಂಟ್ ಕೊಡುತ್ತವೆ.
ಕಾಳಿದಾಸನೇ ಇಲ್ಲಿ ರಸ್ತೆ ಆಗವ್ನೇ, ಪ್ರೀತಿ ಮಾಡೋರ್‍ಗೆ ಸರಿ ದಾರಿ ತೋರ್‌ತವ್ನೇ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿಕೊಪ್ಪಲ್ ಈ ಲವ್ವಿಗೇ... ಎಂಬ ಪಂಕ್ತಿಗಳು ಜನರಿಂದ ಮೆಚ್ಚುಗೆ ಗಳಿಸುತ್ತವೆ. 'ಈ ಭಯಾ ಬಿಸಾಕಿ ಲವ್ ಮಾಡಿ, ಈ ದಿಗಿಲ್ ದಬಾಕಿ ಲವ್ ಮಾಡಿ' ಅನ್ನೋ ಪಂಕ್ತಿಗಳು ಈ ಹಿಂದೆ ಎಲ್ಲೋ ಕೇಳಿದ್ದೇನೆ ಎನಿಸಿದರೂ ಮೇಕ್ ಅಪ್ ಚಿತ್ರದ ರಾಜೇಶ ಹಾಡಿದ 'ಬೋಲ್ ರಾಜಾ' ಹಾಡನಲ್ಲಿರುವ ಸಂಭ್ರಮವನ್ನು ನೆನಪಿಸಿತು. ಪದಗಳು, ವಾಕ್ಯಗಳ ವಿಶೇಷಗಳನ್ನು ಹೊರತುಪಡಿಸಿ, ನಟನಿಗೆ ತಕ್ಕಂತೆ ಬದಲಾಗುವ ಎಸ್.ಪಿ.ಬಿ ಧ್ವನಿ ಮುದನೀಡಿತು. 'ನರಸಿಂಹ ಸ್ವಾಮಿ ಪದ್ಯ ಇದೆ, ಅನಂತ್ ಸ್ವಾಮಿ ವಾದ್ಯ ಇದೆ ಲವ್ವಿಗೇ, ಈ ಲವ್ವಿಗೇ' ಅನ್ನೋದು sure laugh.

'ನೆನಪಿರಲಿ' ಟೈಟಲ್ ಸಾಂಗ್ 'ಒಲವು ಒಂಟಿಲ್ಲ' ಎಂದು ಆರಂಭವಾಗಿ ಹಲವಾರು ಸಂದೇಶಗಳನ್ನು ಪದೇ-ಪದೇ 'ನೆನಪಿರಲಿ' ಎಂದು ಶೋತೃಗಳನ್ನು ಮರೆಯದಿರುವಂತೆ ಚುಚ್ಚುವ ಪ್ರಯತ್ನವನ್ನು ಮಾಡುತ್ತದೆ. ಆದರೆ ಸಿನಿಮಾಗಳಿಂದ ಏನನ್ನು ಕಲಿಯುವುದಿಲ್ಲ ಎಂದು ಸಿನಿಮಾ ಮುಗಿದ ಮೇಲೆ ಝಾಡಿಸಿಕೊಂಡು ಎದ್ದೇಳುವ ಪರಿಪಾಠವನ್ನು ಪ್ರೇಕ್ಷಕರು ಇ(ಲ್ಲೂ)ನ್ನೂ ಬಿಟ್ಟಿಲ್ಲ!
'ದ್ರೌಪದಿ, ಷಟ್ಪದಿ, ಚೌಪದಿ' ಹಾಡಿನಲ್ಲಿ ಬರುವ ಹಲವು ರೂಪಾಂತರಗಳು ಇಷ್ಟವಾದವು.

ಹೇ ಬೆಳದಿಂಗಳೇ ಹಾಡಿನ ಚಿತ್ರೀಕರಣ ಚೆನ್ನಾಗಿದೆ, ಹಾಡುಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದು, ಮಧ್ಯೆ-ಮಧ್ಯೆ ಇಂಗ್ಲೀಷಿನ ನೋ, ಫೂಲ್ ಅನ್ನೋ ಪದಗಳು ಆಧುನಿಕ ನೆರೆಹೊರೆಯನ್ನು ಪ್ರತಿನಿಧಿಸುತ್ತವೆ. ಈ ಹಾಡಿನಲ್ಲಿ ಬೇರೆ ಯಾರೂ ಈ ಪಾತ್ರಗಳ ಸಮಸ್ಯೆಗೆ ಚಿತ್ರದುದ್ದಕ್ಕೂ ಸ್ಪಂದಿಸಿದರೂ ಫಲಕೊಡದ ಪ್ರಯತ್ನಗಳನ್ನು ಈ ಕೆಳಗಿನ ವಾಕ್ಯಗಳಲ್ಲಿ ಮನೋಜ್ಞವಾಗಿ ಸೆರೆ ಹಿಡಿಯಲಾಗಿದೆ:

ನಾವಾಗಲಿ
ನೀವಾಗಲಿ
ಗೆಳೆಯರಾಗಲಿ
ಬಳಗವಾಗಲಿ
ಗುರುಗಳಾಗಲಿ
ಋಷಿಗಳಾಗಲಿ
ದೇವರಾಗಲಿ
ದಿಂಡರಾಗಲಿ
ತಲೆ ತೂರಿಸೋ ಹಾಗಿಲ್ಲಾ!

because

ಇದು ಹೃದಯಗಳಾ ವಿಷಯಾ,
ಈ ವಿಷಯಾ ವಿಷ ವಿಷಯಾ.


ಈ ಚಿತ್ರದಲ್ಲಿ ನೀವು ಗಮನಿಸಬೇಕಾದ ಹಲವು ಅಂಶಗಳಲ್ಲಿ ಯುವ ನಿರ್ದೇಶಕ-ನಿರ್ಮಾಪಕರ ಜೋಡಿಯೂ ಒಂದು. ಮೈಸೂರಿನಲ್ಲಿ ಇಂಜಿನಿಯರಿಂಗ್ ಮಾಡಿಯೂ ಕೆ.ಎ.ಎಸ್. ಪರೀಕ್ಷೆಯಲ್ಲಿ ಸಫಲರಾಗಿಯೂ ಚಿತ್ರರಂಗಕ್ಕೆ ಬಂದು ಹಲವಾರು ಚಿತ್ರಗಳ ಸಹನಿರ್ದೇಶನವನ್ನು ಮಾಡಿ ತಮ್ಮ ಚೊಚಲ ನಿರ್ದೇಶನದಲ್ಲಿ ಈ ಚಿತ್ರವನ್ನು ನೀಡಿದ್ದು "ರತ್ನಜ" (ಪ್ರಕಾಶ್) ಅವರನ್ನು ಬಹಳ ಎತ್ತರದಲ್ಲಿ ನಿಲ್ಲಿಸುತ್ತದೆ. ತಮ್ಮ ಬಾಲ್ಯದ ಗೆಳೆಯನ ಮೇಲೆ ವಿಶ್ವಾಸವಿರಿಸಿ ಹಣ ಸುರಿದ ನಿರ್ಮಾಪಕ ಅಜಯ್ ಗೌಡ ಅವರ ಹೆಚ್ಚುಗಾರಿಕೆಯನ್ನು ಮೆಚ್ಚಲೇಬೇಕು.

ಇನ್ನು ಪಾತ್ರವರ್ಗದಲ್ಲಿ ಎಲ್ಲರೂ ಚೆನ್ನಾಗಿ ತಮ್ಮ-ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಂತ್ ನಾಗ್, ಜೈಜಗದೀಶ್, ವಿಜಯಲಕ್ಷೀ ಅವರು ಎಂದಿನ ಲವಲವಿಕೆಯಲ್ಲಿದ್ದರೆ, ಪ್ರೇಮ್, ವರ್ಷಾ, ವಿದ್ಯಾ ಅವರು ಹೊಸಬರಾದರೂ ಬಹಳ ಕಾಲದಿಂದ ನೋಡಿರದ ಸ್ನೇಹಿತರ ಹಾಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಯುವ ಕಲಾವಿದರಲ್ಲಿನ ಲವಲವಿಕೆ, ಗತ್ತು, ಗಾಂಭೀರ್ಯ ಅವರನ್ನೆಲ್ಲ ಬಹಳ ಮುಂದೆ ಕೊಂಡುಯುತ್ತದೆ.

ಅಲ್ಲಲ್ಲಿ ಅಮೇರಿಕನ್ ಮಕ್ಕಳ ಗಲಾಟೆಯ ನಡುವೆ (ಆಗಾಗ್ಗೆ ಬೈದುಕೊಂಡು) ಈ ಚಿತ್ರವನ್ನು ನೋಡಿರುವೆನಾದರೂ ನನ್ನ 'ಅಂತರಂಗ'ದಲ್ಲಿ 'ನೆನಪಿರಲಿ' ಚಿತ್ರಕ್ಕೆ ಉತ್ತಮ ಚಿತ್ರವೆಂದು ಮೂರೂವರೆ ಸ್ಟಾರ್ ರೇಟಿಂಗ್ ಕೊಡುತ್ತೇನಾದರೂ ಈ ಕೆಳಗಿನ ಅಂಶಗಳನ್ನು ಕುರಿತು ಇನ್ನೂ ಯೋಚಿಸುವುದಕ್ಕಿದೆ:
೧) ಚಿತ್ರದುದ್ದಕ್ಕೂ ಗಹನವಾದ ಸಂಭಾಷಣೆಗಳು ಒಂದೇ ಹಿಲ್‌ಟಾಪ್, ಅಥವಾ ಬೆಟ್ಟ-ಗುಡ್ಡಗಳಲ್ಲಿನ ಅತಿ ಎತ್ತರವಾದ ಸ್ಥಳದಲ್ಲಿ ನಡೆಯೋದು ನಿರ್ದೇಶಕರ ಎತ್ತರವಾದ ನಿರೀಕ್ಷೆಯ ಧ್ಯೋತಕವಿರಬಹುದಾದರೂ, 'ತಾನು ಕುಂಚ ಕಲಾವಿದೆ' ಎಂದು ಚಾಮುಂಡಿ ಬೆಟ್ಟಕ್ಕೆ ಹೋಗೋ ಇಂದುವಿನ ನೆಪ ಬಿಂದುವಿಗೆ ಅನ್ವಯವಾಗದು.
೨) ಚಿತ್ರದುದ್ದಕ್ಕೂ ಅನವಶ್ಯಕವಾಗಿ 'ನೆನಪಿರಲಿ'ಯನ್ನು ತುರುಕಿಲ್ಲ, ಆದರೆ ಚಿತ್ರದ ಟೈಟಲ್‌ಗೂ, ಕಥೆಗೂ, ಬರುವ ಹಾಡುಗಳಿಗೂ ಹೋಲಿಸಿದಾಗ ಪ್ರೇಕ್ಷನಿಗೆ ಹಾಗನ್ನಿಸುವುದರಲ್ಲಿ ತಪ್ಪೇನೂ ಇಲ್ಲ.
೩) ಕನ್ನಡ ಸಿನಿಮಾಗಳಿಂದ ರಿಸರ್ಚ್ ಮಾಡಿ 'ಪ್ರೇಮಿಸೋದು' ಹೇಗೆ ಎಂದು ಕಲಿಯುವ ಸನ್ನಿವೇಶ ಇಷ್ಟವಾಯಿತು, ಆದರೆ ರಿಸರ್ಚ್‌ನಲ್ಲಿ ಬಂದದ್ದು ಜೋಡಿ ಹಾಡುಗಳು, ಆದರೆ ನಾಯಕ ಅನುಸರಿಸೋದು ಗ್ರೂಪ್ ಸಾಂಗ್. ಅದೂ ಅಲ್ಲದೇ ಅದೇ ತಾನೇ ಪ್ರೀತಿಸೋದನ್ನ ಕಲಿತ ಹುಡುಗ 'ಬನ್ರೀ, ನೋಡ್ರೀ, ನಾನು ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ' ಎಂದು ಹಾಡೋದು ಎಷ್ಟು ಸೂಕ್ತ?
೪) ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನ ಬದುಕನ್ನು ನಾನು ಕಂಡ ನ್ಯೂ ಯಾರ್ಕ್ ನಗರದ ಬದುಕಿಗಿಂತಲು ಗಂಭೀರ ಹಾಗೂ ಗಹನವಾಗಿ ತೋರಿಸಿರುವುದು. ಆದರೆ ಚಿತ್ರದುದ್ದಕ್ಕೂ ಸಂಭಾಷಣೆ ಪ್ರಾಮುಖ್ಯ ಪಾತ್ರ ಪಡೆದು ಎಷ್ಟು ಬೇಕೋ ಅಷ್ಟಿರುವುದು.
೫) ತನ್ನ ಆತ್ಮೀಯ ಗೆಳೆಯನ ಸಾವಿನ ವಿಷಯ ಕೇಳಿದ ಕಿಶೋರನ ಮುಖವನ್ನು ಇನ್ನೂ ಚೆನ್ನಾಗಿ ತೋರಿಸಬೇಕಿತ್ತು. ಇಂಥ ದೃಶ್ಯಗಳನ್ನು ಸೆರೆಹಿಡಿಯುವುದಕ್ಕೆ ಮುಂಚೆ, ಅಭಿನಯಿಸುವುದಕ್ಕೆ ಮೊದಲು ಹಳೆಯ ರಾಜ್‌ಕುಮಾರ್ ಚಿತ್ರಗಳನ್ನು ಇನ್ನಷ್ಟು ನೋಡುವುದು ಒಳ್ಳೆಯದು.
೬) ತಂದೆಯಿಲ್ಲದೇ, ಕೆಲಸಕ್ಕೆ ಇನ್ನೂ ಸೇರಿರದ ಕಿಶೋರ್ ಮೊದಮೊದಲು ತೋರಿಸುವ ಐಶಾರಾಮಕ್ಕೆ ದುಡ್ಡೆಲ್ಲಿಂದ ಬಂತು ಎಂದು ಅನ್ನಿಸುವುದು.
೭) ಚಿತ್ರದ ಮಧ್ಯಂತರ ಮುಗಿಯುವವರೆಗೂ ದ್ವಿತೀಯಾರ್ಧದ ನಾಯಕಿಯ ಪರಿಚಯ ಮಾಡಿರದ ಹೊಸ ಪ್ರಯೋಗ.
೮) ಹಾಡುಗಳೆಲ್ಲ ಚೆನ್ನಾಗಿವೆ; ನಡು-ನಡುವೆ ಪ್ರಾಸಕ್ಕಾಗಿ ತಿಣುಕಿದಂತಿದೆ.
೯) ರಾಮಚಂದ್ರ ಅವರ ಛಾಯಾಗ್ರಹಣ ಬಹಳ ಚೆನ್ನಾಗಿದೆ, ಆದರೆ ಹಾಡಿನ ಚಿತ್ರೀಕರಣದ ನಡುವೆ ಅಲ್ಲಲ್ಲಿ ಬರುವ ಕ್ಯಾಮರಾ ಬದಲಾವಣೆಯಲ್ಲಿನ ಅವರ ಪ್ರಯೋಗ ಲೆನ್ಸ್ ಬದಲಾಯಿಸಲು ಮರೆತಿರುವಂತೆ ಕಂಡು ಬಂತು (ಅಥವಾ ಅದು ಈ ಥಿಯೇಟರ್‌ನ ಲಿಮಿಟೇಷನ್ ಇದ್ದರೂ ಇರಬಹುದು)
೧೦) ಚಿತ್ರದ ಅಂತ್ಯದಲ್ಲಿ ಬಳಸಿರುವ ತಂತ್ರದ ಬಗ್ಗೆ ಯೋಚಿಸಿದಾಗ ಬಹಳ ಸಮಯೋಚಿತವಾದ ನಿರ್ಧಾರವೆನಿಸಿತು.

ಈ ಚಿತ್ರವನ್ನು ನೋಡಿದರೆ ಬೆಂಗಳೂರು-ಮಂಗಳೂರಿಗಲ್ಲದಿದ್ದರೂ ಮೈಸೂರಿಗಂತೂ ಖಂಡಿತವಾಗಿ ಹೋಗಿಬಂದಂತಾಗುತ್ತದೆ. ಚಾಮುಂಡೀ ಬೆಟ್ಟವನ್ನು ಬಹಳ ಹತ್ತಿರದಿಂದ ತೋರಿಸಿಯೂ ಪಾತ್ರಗಳ ಮುಖಭಾವಕ್ಕೆ ಒತ್ತುಕೊಟ್ಟ ನಿರ್ದೇಶಕರ ಬಗ್ಗೆ ಮೆಚ್ಚುಗೆ ಬರುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ 'ನೆನಪಿರಲಿ' ಸಿನಿಮಾವನ್ನು ಸಹೃದಯ ಕನ್ನಡಿಗರು ನೋಡಬೇಕು, ನಾನು "ರತ್ನಜ" ಅವರ ಇನ್ನಷ್ಟು ಇಂತಹ ಚಿತ್ರಗಳನ್ನು ನಿರೀಕ್ಷಿಸುತ್ತೇನೆ.

Saturday, May 06, 2006

ಆ ಧ್ವನಿ - ಈ ಧ್ವನಿ: ಭಾಗ ೧

ಆ ಧ್ವನಿ: ನೀನ್ ಸುಮ್ಕೇ ತಲೆ ಕೆಡಿಸಿಕ್ಯಂತಾ ಕುಂತಿ ನೋಡ್ ತಮ್ಮಾ, ಇಷ್ಟು ಕಡ್ದ್ ಅಷ್ಟ್ ಕಡ್ದ್ ಅದ್ರಿಂದ್ ಈಗ ಏನಾತೂ ಅಂತs?

ಈ ಧ್ವನಿ: ಏನಾದ್ರೂ ಆಗ್ಲೀ ಅಂತಾನೇ ಎಲ್ಲಾನೂ ಮಾಡೋಕಾಗುತ್ತಾ, ನಮ್-ನಮ್‌ಗೆ ಏನ್ ಬೇಕೋ ಅದನ್ನ ಮಾಡ್‌ಬೇಕಪ್ಪಾ. ಪ್ರತಿಯೊಂದರಲ್ಲೂ ಒಂದಲ್ಲ ಒಂದು ಪ್ರತಿಫಲ ಇರ್‍ಲೇ ಬೇಕು ಅಂತ್ಲೇ ಈ ಪ್ರಪಂಚದಲ್ಲಿರೋದೆಲ್ಲ ನಡೆಯುತ್ತೇನು?

ಆ ಧ್ವನಿ: ಹಂಗಲ್ಲ, ನೀ ಹೇಳಿರೋ ಈ ಮಾತು ನಿಂಗ್ ನೆನ್‌ಪಿರ್‍ಲೀ, ವ್ಯವಹಾರ್‌ದಾಗ್ ಏನಿದ್ರೂ ನಿನ್ನ ಮಾತಾs ಮುಂದಪಾ, ಮಾಡೊ ಕೆಲಸ ಏನಿದ್ರೂ ತಲೆ ತೆಗಿಸಿ ಮಾಡೋನ್ ನಾನು ಅಂಥಾದ್ದರಾಗ ನನೀಗೆ ಹೇಳಾಕ್ ಬರ್ತೀಯಲಾ!

ಈ ಧ್ವನಿ: ನಿನ್ನಂಥಾ ಹಳ್ಳೀ ಜನಕ್ಕೆ ಆಧುನಿಕ ಬದುಕಿನ ಬಗ್ಗೆ ಗೊತ್ತಾಗಲ್ವೋ. ನಮ್ ಬದುಕಿನ ತುಮುಲಾನೇ ಬೇರೆ, ನಿನಗೆ ಅದರ ಆಯಾಮಗಳ ಅರಿವು ಸ್ವಲ್ಪಾನೂ ಆಗೋಲ್ಲ ಅಂತ್ಲೇ ಹೇಳ್ತೀನಿ - ನಿನಗ್ಗೊತ್ತಾಗಲ್ಲ, ಸುಮ್ನೇ ಬಿಟ್ ಬಿಡು.

ಆ ಧ್ವನಿ: ಏನ್ ನಿನ್ ಮಾತಿನ್ ಆರ್ಥಾ - ಹಳ್ಳೀ ಜನಾ ಅಂದ್ ಕೂಡ್ಲೇ ಜೀವಂತಾನೂ ಇರಲ್ಲಾ ಅಂತ ತಿಳಕಂಡೀಯೇನೂ? ನಿನ್ ಪಟ್ನದ್ ಉಸಾಬರೀನೆಲ್ಲಾ ತಗೊಂಡೋಗಿ ಕಾರಾ ಹಚ್ಚಿ ನೆಕ್ಕೋ - ಎನೋ ಪಾಪ ತಲೆಕೆಡಿಸಿಕ್ಯಂಡ್ ಕುಂತ್ಯಾನೇ ಅಂತ ತಿಳಿಹೇಳಾಕ್ ಬಂದ್ರೆ ನನೀಗೇ ಗೊತ್ತಿಲ್ಲಾ ಅಂತೀಯಲ! ನಮ್ಮೂರ್ ಹಳ್ಳೀನೇ ಇರಬೋದ್ ಬಿಡು, ನಮ್ ಹೃದಯಾ ನೀನ್ ನೋಡಿರೋ ಎಲ್ಲಾ ಪಟ್ನಕ್ಕಿಂತಾ ದೊಡ್ಡದೈತಿ.

ಈ ಧ್ವನಿ: ಹಾಗಿದ್ದ ಮೇಲೆ ಅವರವ್ರ ಕೆಲ್ಸ ನೋಡಿಕೊಂಡು ಸುಮ್ನಿರಬೇಕಪ್ಪ, ಇನ್ನೊಬ್ರ ವಿಷಯದಲ್ಲಿ ಮೂಗು ಯಾಕೆ ತೂರಿಸ್ತೀರಿ?

ಆ ಧ್ವನಿ: ಏ, ಯಾವ್ದೋ ದೆವ್ವ ಮೆಟಗಂಡಂಗ್ ಆಡ್‌ಬ್ಯಾಡಾ - ಆವಾಗೇ ಹೇಳ್ಳಿಲ್ಲೇನು, ನಮ್ ರೀತಿ ನೀತಿ ಅಂದ್ರೆ ನಮಿಗೆ ಬೇಕಾದೋರ್ ನಲಿವಷ್ಟೇ ಅಲ್ಲ, ನೋವೂ-ಸಂಕ್ಟಾನೂ ನಮೀಗ್ ಬೇಕು, ಒಂದೇ ಮಾತಲ್ಲಿ ಹೇಳೋದಾದ್ರೆ ನೀನು ಕಂಡಿರೋ ಎಲ್ಲಾ ಸುಖಾನೂ ಒಂಥರಾ ನೋವಲ್ಲೇ ಹುಟ್ತಾವಂತೆ, ತಿಳಕೋ!

ಈ ಧ್ವನಿ: ನೋಡೋ, ನಿನಗೆ ತಿಳೀ ಹೇಳೋಕೆ ನನ್ನಲ್ಲಿ ಸ್ವಲ್ಪಾನೂ ತಾಳ್ಮೆ ಉಳಿದಿಲ್ಲ, ನಿನಗೆ ಹೇಗೆ ಬೇಕೋ ಹಾಗೆ ಮಾಡು.

ಆ ಧ್ವನಿ: ತಡಿ, ತಡಿ. ಸಿಟ್ ಮಾಡಿಕ್ಯಾ ಬ್ಯಾಡಾ, ಬರೀ ನನ್ನ ಎರಡ್ ಮಾತ್ ಕೇಳಿ ಅದಕ್ಕುತ್ರ ಕೊಡೋಕೇ, ಮುಖಕ್-ಮುಖಾ ಕೊಟ್ಟು ಮಾತಾಡೋಕೂ ಆಗ್ದೇ ಇರೋ ಪ್ಯಾಟೇ ಮಂದಿ ಥರ್‍ಆ ಆಡಬ್ಯಾಡಾ - ಅದು ಏನ್ ಸಮಸ್ಯೇ ಐತೀ ಅಂತ ನನಿಗ್ ಹೇಳು, ಇರೋದ್ರಲ್ಲೇ ಒಳ್ಳೇ ಹಾದಿ ಹಿಡಿಯೋ ಹಾಂಗs ಒಂದು ಹೂಟಿ ಹೇಳಿಕೊಡ್ತೀನಿ!

ಈ ಧ್ವನಿ: ಹಾಗೇನಿಲ್ಲ, ಎಲ್ಲ ಸರಿಯಾಗೆ ಇದೆ, ಈ ನಮ್ ಪೇಟೇ ಜೀವನದಲ್ಲಿ ಎಲ್ಲಾ ಇದ್ರೂ ಏನೋ ಬೇಕು ಅಂತ ಅನ್ನಿಸ್ತಾನೇ ಇರತ್ತೆ. ಕಳಕೊಂಡಿದ್ದೇನು ಅಂತ ಗೊತ್ತಾದ್ರೇ ತಾನೇ ಹುಡುಕೋ ದಾರಿ ತಿಳಿಯೋದು?

ಆ ಧ್ವನಿ: ಆಷ್ಟೇನೋ, ಇನ್ನೇನಾದ್ರೂ ಐತೋ?

ಈ ಧ್ವನಿ: ಇನ್ನೇನು ಇಲ್ಲಾ, ಮೇಲೆ-ಮೇಲೆ ಬಂದಂತೆಲ್ಲಾ ಕೈಯಲ್ಲಿ ದುಡ್ಡೇ ನಿಲ್ಲಲ್ಲ, ದುಡ್ ನಿಲ್ಲಲಿ ಅಂತ ದುಡದಂಗೆಲ್ಲ ಕೆಲ್ಸಾ ನಿಲ್ಲಲ್ಲ - ಕೆಲ್ಸಾ ಮಾಡಿ, ದುಡ್ಡೂ ದುಡ್ದೂ ಅಷ್ಟೂ-ಇಷ್ಟೂ ಅಂತ ಕೂಡಿಹಾಕೋದ್ರೊಳಗೆ ಇನ್ನೇನೂ ಉಳಿಯೋದೇ ಇಲ್ಲಾ ಅನ್ನಿಸಿಬಿಟ್ಟಿದೆ.

ಆ ಧ್ವನಿ: ಹಂಗಾದ್ರೆ, ಗುಡಚಾಪೇ ಕಟ್ಟಿ ನಮ್ಮೂರಿಗ್ ಬಂದ್ ಬಿಡು, ಮತ್ಯಾಕ್ ತಡಾ?

ಈ ಧ್ವನಿ: ಅದಂತೂ ಇನ್ನೂ ಆಗದ ಮಾತು ಬಿಡು. ಒಂದು, ಇಲ್ಲಿಗೆ ಬಂದು ನಾನು ಮಾಡೋದಾದ್ರೂ ಏನು? ಎರಡನೇದಾಗಿ, ಅಲ್ಲಿ ನಾನು ಮೂಗಿನ ತನಕಾ ಹುಗಿದುಕೊಂಡು ಬಿಟ್ಟಿದ್ದೇನೆ, ಇತ್ಲಾಗೆ ಏಳೋಕೂ ಆಗಲ್ಲ, ಅತ್ಲಾಗೆ ಮುಳುಗೋಕೂ ಆಗಲ್ಲ ಅನ್ನೋ ರೀತಿ.

ಆ ಧ್ವನಿ: ಛೇ, ಛೇ, ಹಂಗೆಲ್ಲಾದ್ರೂ ಆಗ್‌ತೈತಾ - ನಮ್ಮದೇ ಒಂದ್ ಹತ್ತೆಕ್ರೆ ಜಮೀನ್ನ ಬಿಟ್ಟುಕೊಡ್ತೀನಂತೆ, ಒಂದ್ ರೀತಿ ಮೊದಲೇ ವಾನಪ್ರಸ್ಥಾ ಸೇರಿಕ್ಯಂಬಿಡು, ನಿನಗ್ಯಾವನೂ ಕ್ಯಾರೇ ಅನ್ನಂಗಿಲ್ಲ.

ಈ ಧ್ವನಿ: ಇಲ್ವೋ, ಆ ವಾನಪ್ರಸ್ಥದಲ್ಲಿ ಸಿಗಬೇಕಾದ ಸುಖಗಳನ್ನೆಲ್ಲ ಅಲ್ಲೇ ಅನುಭವಿಸೋಣಾ ಅಂಥ ಪ್ರತೀದಿನ ಯೋಗ, ಧ್ಯಾನಾ ಮಾಡ್ತೀನಿ - ಆದರೆ ಧ್ಯಾನದ ಮಧ್ಯೆ ಹಂಗೆ ಮಾಡಿದ್ರೆ ಹೆಂಗೆ, ಹಿಂಗೆ ಮಾಡಿದ್ರೆ ಹೆಂಗೆ ಅನ್ನೋ ಹಗಲ್‌ಗನಸ್ಗಳು ಶುರುವಾಗ್ತಾವೆ ನೋಡು.

ಆ ಧ್ವನಿ: ನೋಡಪಾ, ನನ್ ಕೈಲಿ ಏನಾಗ್ತೇತೋ ಅದನ್ನ ಹೇಳ್ದೆ. ನಾನೇನು ನಿನ್ನಂಗಾs ಹೆಚ್ಚಿಗಿ ಓದ್ದೋನೂ ಅಲ್ಲಾ, ಆದ್ರೂ ಒಂದೊಂದ್ ಸಲಿ ನಿನ್ನಂಥಾ ಓದ್ದೋರ್ ಆಡೋದ್ ನೋಡಿದ್ರೆ ಹಿಡ್ದು ಮೆಟ್ನ್ಯಾಗ್ ಹೊಡಿಬಕು ಅನ್ಸತಿ ನೋಡ್! ನನ್ನ್ ಜೋಡೀ ಸಾಲೀ ಬಿಟ್ಟು ಊರಿನ್ಯಾಗಾ ಇದ್ದಿದ್ರ ಹಿಂಗಾಗತಿತ್ತಾ ಮತ್ತಾs. ಈಗ ನೋಡು ಅದೈತಿ, ಇದೈತಿ ಎಲ್ಲಾನೂ ಐತಿ ಅಂತೀ ಸಮಾಧಾನ ಒಂದ್ ಬಿಟ್ಟು - ಮೈ ತುಂಬ ಸಾಲ ಮಾಡಿಕ್ಯಂಡ್ ಹಗಲೂ ರಾತ್ರೀ ಚಿಂತೀ ಮಾಡ್ಸೋ ಆ ಐಷಾರಾಮಾ ನಂಗ್ ಬ್ಯಾಡಾಪ್ಪೋ! ನನಿಗೋ ಹಂಗ್ ಉಂಡು ಹಿಂಗs ಬಿದ್ರ ಸಾಕ್ ನೋಡು, ನಿದ್ರೀ ಅನ್ನೋದು ಅವನೌನ್ ಎಲ್ಲಿರತತೋ ಏನೋ ಹುಡಿಕ್ಯಂಬಂದ್ ವಕ್ಕರ್‍ಸಕ್ಯಂತತಿ.

ಈ ಧ್ವನಿ: ನೀನೇ ಪುಣ್ಯವಂತ, ನನಗೂ ನಿದ್ರೆ ಬರುತ್ತೆ, ಇಲ್ಲಾ ಅಂತ ಏನಿಲ್ಲ. ನನ್ ಮುಖಾ ಸರಿಯಾಗಿ ನೋಡು, ನನಗೂ-ನಿನಗೂ ಒಂದೇ ವಯಸ್ಸಾದ್ರೂ ನನ್ನ ಹಣೇ ಮೇಲೆ ಆಗ್ಲೇ ಅದೆಷ್ಟೋ ನೆರಿಗೆಗಳು ಕಾಣೋಕೆ ಶುರು ಆಗಿದೆ, ತಲೆ ಕೂದ್ಲೆಲ್ಲಾ ಹಣ್ಣಾಗೋಕ್ ಶುರುವಾಗಿದೆ ನೋಡು - ನೀನಂತೂ ಕಲ್‌ಗುಂಡಿನಂಗೆ ಹೆಂಗಿದಿಯೋ ಹಂಗೇ ಇದೀಯ.

ಆ ಧ್ವನಿ: ಈಗ ನನ್ ಮ್ಯಾಲ ಕಣ್ ಹಾಕಬ್ಯಾಡಾ. ನಾನ್ ಅಂದೇ ಅಂತ ಮನೀ ಹಾದಿ ಹಿಡಿ, ಛೋಲೋತ್ನಾಗ್ ರೊಟ್ಟೀ, ಎಣ್ಣಗಾಯ್ ಮಾಡಿರ್ತಾರೆ, ಬಾ ಇಲ್ಲೇ ಸ್ವಲ್ಪ ಉಂಡ್‌ಕೋಂಡ್ ಹೋಗೋವಂತಿ. ಅದೆಷ್ಟೋ ದೂರದಿಂದ ಇಲ್ಲೀ ತಂಕಾ ಬಂದು, ಮಗನಾs ಒಂದು ತುತ್ತು ತಿನ್ನದೇ ಇದ್ರೆ ಹೆಂಗs?

ಈ ಧ್ವನಿ: ಇಲ್ಲ, ಯಾಕೋ ಹಸಿವೇನೇ ಇಲ್ಲ. ಅಲ್ಲೀ-ಇಲ್ಲೀ ತಿಂದೂ-ತಿಂದೂ ಊಟದ ಹೊತ್ತಾದ್ರೂ ಏನೂ ಸೇರೋದೇ ಇಲ್ಲ ನೋಡು, ಸೇರಿದ್ರೂ ಅರಗೋ ಮಾತೇ ಇಲ್ಲ.

ಆ ಧ್ವನಿ: ಸರಿ ಬಿಡಪ್ಪ, ನಮ್ಮಂತಾ ಬಡಬಗ್ಗರ ಮನ್ಯಾಗ ನಿನ್ನಂಥೋರು ಕೂತು ತಿಂದ್ರಾ ಇನ್ಯಾವ ರೋಗ ಬರ್‍ತೈತೋ ಅಂಥ ಯೋಚಿಸೋ ಮಂದಿ ನೀವು. ಇಲ್ಲಾಂದ್ರಾ ನೀರನ್ನೂ ಕೊಂಡ್‌ಕಂಡ್ ಯಾವನ್ನಾರಾ ಕುಡೀತಾನೇನು? ಮನುಷ್ಯರೊಳಗೆ ಮೋಸಾ ಇರಬೋದು, ಆ ಗಂಗವ್ವ್ ಏನ್ ಮಾಡ್ಯಾಳೋ? ಇದೇ ನೀರ್‍ನಾಗೆ ಹಿಂದೆ ಕುಪ್ಪಳಿಸಿ ಹಾರ್‍ತಾ ಇದ್ದೆ, ಈಗ ನಿನಗೆ ಅದೇ ದೂರ ಆಗೈತೇನು?

ಈ ಧ್ವನಿ: ಹೌದೋ, ಇಪ್ಪಂತ್ತೆಂಟು ಕಡೆ ನೀರು ಕುಡಿದ್ರೆ ಅದೂ-ಇದೂ ಖಾಯಿಲೆ ಬರುತ್ತೆ, ಮತ್ತೆ ಇನ್ನೊಂದೆರಡು ಮೂರು ದಿನದಲ್ಲಿ ಹಿಂತಿರುಗಿ ಹೋಗೋದೂ, ಕೆಲ್ಸಾ ಮಾಡೋದೂ ಇದ್ದೇ ಇರತ್ತಲ್ಲಾ...

ಆ ಧ್ವನಿ: ಇದೊಳ್ಳೇ ಛೋಲೋ ಆತ್ ನೋಡು, ಹಂಗಿದ್ದ ಮ್ಯಾಲ ಇಲ್ಲೀ ತಂಕಾ ಯಾತಕ್ ಬರ್‍ತೀರಿ? ಇಲ್ಲೀ ನೀರು-ನಿಡಿ ಕುಡಿಯೋಂಗಿಲ್ಲ, ಇಲ್ಲಿ ದಾರಿ ತುಳಿಯೋಂಗಿಲ್ಲ, ನಮ್ಮಂಥೋರ್ ಮನ್ಯಾಗ ಒಂದು ತುತ್ತು ರೊಟ್ಟಿ ತಿನ್ನಂಗಿಲ್ಲಾ, ಧೂಳ್ ಬಂದ್ರ ಹಾರಾಡ್ತೀರಿ, ಬಿಸ್ಲ ಬಂದ್ರೆ ಏಗಾಡ್ತೀರಿ - ನೀವಾತೂ ನಿಮ್ಮ ಪ್ರಪಂಚಾತೂ ನೋಡು. ಇಷ್ಟೊಂದು ರೊಕ್ಕಾ ಖರ್ಚ್ ಮಾಡಿ ಬರೋ ಬದ್ಲಿ ಅಲ್ಲೇ ಎಲ್ಲರಾ ಇದ್ದು ಬಿಡಬೇಕಪಾ.

ಈ ಧ್ವನಿ: ಹಾಗಲ್ಲ, ಊರು ಮಂದಿ ನೋಡೋದು ಬೇಡವೇನು, ಮನೇ ಮಂದೀನೆಲ್ಲ ಮಾತಾಡ್ಸೋದು ಬೇಡೇನೂ...

ಆ ಧ್ವನಿ: ತಥ್ ನಿನ್ನ, ಸ್ವಲ್ಪ ತಡಿ. ಹಾಂಗಂದ್ರ ಇಲ್ಲೀ ಮಂದಿ ಯಾವ್ದೋ ಕಾರ್‍ಣಕ್ಕೆ ನೆಗದು ಬಿದ್ರು ಅಂತ ತಿಳಕಾ ಹಂಗಂದ್ರ ನೀನು ಇಲ್ಲಿಗ್ ಬರಂಗಿಲ್ಲ ಮತ್ತಾ? ನೀನು ಅಂತೋನು ಇಂತೋನು ಅನಕೊಂಡಿದ್ದೆ, ಇವತ್ತ್ ಗೊತ್ತಾಯ್ತು ನೋಡ್ ನಿನ್ನ ಅಸಲೀ ಬಣ್ಣ.

ಈ ಧ್ವನಿ: ಏ, ಸುಮ್ನೇ ಏನೇನೋ ಹೇಳಿ ತಲೇ ತಿನ್ನ ಬೇಡವೋ... ಮತ್ತೇ ಮನೇ ಕಡೇ ಎಲ್ಲ ಹೆಂಗಿದಾರೆ, ಗದ್ದೇಲಿ ಈ ಸಾರಿ ಏನೇನು ಹಾಕೀರಿ ಹೇಳು.

ಆ ಧ್ವನಿ: ನೀನು ಸುಮ್-ಸುಮ್ನೇ ಮಾತ್ ಬದಲಾಯ್ಸ್ ಬ್ಯಾಡಾ...ನಾವ್ ಹಳ್ಳೀ ಮಂದೀಗೆ ನಿಮ್ ಥರಾ ನಯಾ ನಾಜೂಕ್ ಒಂದೂ ಗೊತ್ತಾಗಂಗಿಲ್ಲ, ಬಾಯಿಗ್ ಬಂದಿದ್ದು ಹೇಳಿಬಿಡ್ತೀವಪ್ಪಾ, ನೀನ್ ಬೇಜಾರ್ ಮಾಡಿಕೊಳ್ಳದಿದ್ರೆ ಅಷ್ಟೇ ಸಾಕು.

ಅದಿರ್ಲಿ ನೀನು ಅದೆಷ್ಟೋ ದಿನದ ಮ್ಯಾಲ ಈ ಕಡಿ ಬಂದೀದಿ, ನಮ್ ತ್ವಾಟದ್ ಕಡಿ ಹೋಗೋಣ್ ನಡಿ, ಆ ಕೆಂದಾಳ್ ಮರದ್ದು ಒಂದೆರಡು ಎಳ್‌ನಿರಾದ್ರೂ ಕುಡ್ದು ಒಂದಿಷ್ಟು ತಗೊಂಡ್ ಹೋಗುವಂತಿ, ಏನು?


ಈ ಧ್ವನಿ: ಸರಿ, ಹಾಗೇ ಮಾಡೋಣ, ನಡಿ.