Tuesday, December 11, 2007

ನಮ್ಮ ತಂತ್ರ ’ದೂರದೃಷ್ಟಿ’ಗಳೇ ಬೇರೆಯವೋ?

There is something wrong in the equation ಅಂತ ಅನ್ನಿಸಿದ್ದು ಇತ್ತೀಚೆಗೆ ಮಾತ್ರ - ನಮ್ಮ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಹಬ್ಬಿಕೊಂಡ ಬೀಚುಗಳಿಗೇಕೆ ಬಾಂಬೆ, ಗೋವಾ ಹಾಗೂ ಕೇರಳದ ಬೀಚುಗಳಿಗೆ ಮುತ್ತಿಕೊಂಡಂತೆ ಜನರೇಕೆ ಬರುವುದಿಲ್ಲ? (ಏನೂ ಇಲ್ಲದ) ಮರುಭೂಮಿಯ ರಾಜಸ್ತಾನದವರು, ಚಿಕ್ಕ ರಾಜ್ಯದವರಾದ ಕೇರಳದವರು ಬೆಳೆಸಿದಂತೆ ನಾವೇಕೆ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳಲಿಲ್ಲ? ಔದಾರ್ಯತೆಗೆ ಇನ್ನೊಂದು ಹೆಸರಾದ ಕನ್ನಡಿಗರಿಗೆ ಜಗತ್ತಿನ ಮಾರುಕಟ್ಟೆಯಲ್ಲಿ ಹೆಗ್ಗಳಿಕೆ ಪಡೆದ ಬೆಂಗಳೂರಿಗೆ ಬಂದ ಜನರನ್ನು ರಾಜ್ಯದ ಇತರೆಡೆ ಪ್ರವಾಸಿಗಳಾಗಿ ಬಿಟ್ಟುಕೊಳ್ಳುವಲ್ಲಿ ಯಾವ ಅಡೆತಡೆಗಳಿರಬಹುದು? ನ್ಯೂ ಯಾರ್ಕ್‌ನಿಂದ ವಾಷಿಂಗ್ಟನ್‌ಗೆ ಹೋದಷ್ಟೇ ಬೆಂಗಳೂರಿನಿಂದ 240 ಮೈಲು ದೂರದಲ್ಲಿರುವ ದೂರದಲ್ಲಿರುವ ಜೋಗ ಜಲಪಾತಕ್ಕಾಗಲೀ ಹತ್ತಿರದ ಹಳೇಬೀಡಿಗಾಗಲೀ ಹಂಪೆಗಾಗಲೀ ನಾವೂ ಏಕೆ ಜನರನ್ನು (ಹೆಚ್ಚೆಚ್ಚು) ಬರಮಾಡಿಕೊಳ್ಳಬಾರದು? ನಮ್ಮ ಪ್ರವಾಸೋದ್ಯಮಕ್ಕೆ ಯಾವ ದಾಡಿ ಹಿಡಿದಿದೆ, ನಮ್ಮ ಮಂದಮತಿಗೆ ಏನು ಮಂಕು ಕವಿದಿದೆ?

ಕೇರಳದ ಜನ ಉಳಿದೆಲ್ಲ ಪ್ರಯೋಗಗಳನ್ನು ಮಾಡಿ ಈ ವರ್ಷದಿಂದ ಮಾನ್ಸೂನ್ ಸೀಜನ್ನಲ್ಲಿ ವಿದೇಶೀ ಪ್ರವಾಸಿಗರನ್ನು ಆಕರ್ಷಿಸುವ ಬಗ್ಗೆ ಇತ್ತೀಚೆಗಷ್ಟೇ NPR ನಲ್ಲಿ ವರದಿಯೊಂದು ಕೇಳಿದ್ದು ನನ್ನ ಮನಸ್ಸಿನಲ್ಲಿ ವಾರಗಟ್ಟಲೇ ಹುಳುವಾಗಿ ಕೊರೆಯುತ್ತಲೇ ಇತ್ತು, ಈವರೆಗೂ ಅದೆಷ್ಟೇ ತಲೆತುರಿಸಿಕೊಂಡರೂ ಮೇಲಿನ ಏಕೆ/ಹೇಗೆ ಪ್ರಶ್ನೆಗಳಿಗೆ ಉತ್ತರಗಳಂತೂ ಸಿಕ್ಕಿಲ್ಲ. ನಮ್ಮಲ್ಲಿನ ಜನರ ನೀತಿ, ನಿಯತ್ತು ನಿಯಮಗಳು ಕಾರಣಗಳೇ? ಅಥವಾ ನಮ್ಮಲ್ಲಿನ ಅತಂತ್ರ ರಾಜಕೀಯ ಪರಿಸ್ಥಿತಿ ಬಂದು ಹೋಗುವ ಪ್ರವಾಸಿಗರನ್ನು ದೂರ ನಿಲ್ಲಿಸುತ್ತಿದೆಯೇ? ಎಲ್ಲಕ್ಕಿಂತ ಮುಖ್ಯವಾಗಿ ಇನ್‌ಫ್ರಾಸ್ಟ್ರಕ್ಷರ್ ಇರದಿರುವುದು ದೊಡ್ಡ ಕೊರತೆಯೇ? ಒಂದೂ ಗೊತ್ತಾಗುತ್ತಿಲ್ಲ.

ಕೆಲವು ವರ್ಷಗಳ ಹಿಂದೆ ಜೋಗವನ್ನು ನೋಡಲು ಹೋದಾಗ ಅಲ್ಲಿ ಮೊದಲಿನ ಹಾಗೆ ಎಲ್ಲಿ ಬೇಕೆಂದರಲ್ಲಿ ಕಸ ನೋಡಲು ಧಾರಾಳವಾಗಿ ಸಿಗುತ್ತಿತ್ತು, ನಮ್ಮ ಮಾಮೂಲಿನ ಕಸದ ಜೊತೆಗೆ ಈಚೆಗೆ ಅತಿಯಾಗಿ ಬಳಸಲ್ಪಡುವ ಪ್ಲಾಸ್ಟಿಕ್ ಲೋಟಾಗಳ ಹಾವಳಿ ಒಂದು ಕಡೆಯಾದರೆ ಯುವಕರು ಕುಡಿದು ಬಿಸಾಡುವ ಮದ್ಯ-ಬಿಯರ್ ಬಾಟಲಿಗಳದ್ದು ಮತ್ತೊಂದು. ಅಲ್ಲಿ ಹೋಗಿ ಬಂದವರಿಗೆ ತಂಗುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲವೆಂದು ಕೇಳಿದ್ದೆ. ಸರ್ಕಾರದವತಿಯಿಂದಾಗಲೀ ಸ್ಥಳೀಯ ಸಂಘ ಸಂಸ್ಥೆಗಳಿಂದಾಗಲೀ ಹೋಗಿ ಬರುವವರಿಗೆ ಯಾವುದೇ ಸಹಾಯವೆಂಬುದೇನೂ ದೊರಕಿದಂತೆ ನನಗೆ ಕೇಳಿ ಕಂಡು ಗೊತ್ತಿಲ್ಲ. ಸಾಗರದ ಬಸ್‌ಸ್ಟ್ಯಾಂಡ್‌‍ನಲ್ಲಿ ’ಜೋಗಾ ಜೋಗಾ ಜೋಗಾ...’ ಎಂದು ಅರಚಿಕೊಳ್ಳುವ ಟಿಕೇಟ್ ಕೊಡುವ ಏಜೆಂಟರುಗಳು ಬಂದು ಹತ್ತುವ ಪ್ರಯಾಣಿಕರೆಲ್ಲರೂ ಸ್ಥಳೀಯರು ಎಂಬಂತೆ ಧಾರಾಳತೆಯಿಂದ ಬಸ್ಸು ತುಂಬುವ ದಂಧೆಗಳಲ್ಲಿ ಸಹಜವಾಗಿ ತೊಡಗಿಕೊಂಡಿದ್ದರೆ, ಒಂದು ತಾಲ್ಲೂಕು-ಜಿಲ್ಲಾ ಕೇಂದ್ರದ ಬಸ್‌ನಿಲ್ದಾಣದ ಮೂತ್ರಾಲಯಕ್ಕೆ ಒಮ್ಮೆ ದರ್ಶನ ನೀಡಿದವರು ಇನ್ನು ಜೋಗಾದ ವಿಷಯವಿರಲಿ ಸಾಗರ-ಶಿವಮೊಗ್ಗದ ಕಡೆಗೆ ತಲೆ ಹಾಕಿಯೂ ಮಲಗಲಾರರು.

ಬಹಳ ವರ್ಷಗಳಿಂದ ನನ್ನನ್ನು ಈ ಪ್ರಶ್ನೆ ಬಾಧಿಸುತ್ತಿದೆ - ನಮ್ಮ ಪರಂಪರೆಯಲ್ಲಿ ತಿಂದುಕುಡಿಯುವುದಕ್ಕೆ ಆದ್ಯತೆ ಕೊಡುವ ನಾವು ಶೌಚಾಲಯದ ವಿಚಾರಕ್ಕೆ ಬಂದಾಗ ಅದನ್ನು ಕಡೆಗಣಿಸುವುದಾದರೂ ಏಕೆ? ಎಂಥಾ ಶ್ರೀಮಂತರ ಮನೆಯನ್ನೇ ನೋಡಿ ಅಲ್ಲಿನ ಶೌಚಾಲಯ ಕಿರಿದಾಗಿ ಯಾವುದೋ ಮೂಲೆಯಲ್ಲಿರುವುದು ಸಾಮಾನ್ಯ ನೋಟವಾಗಬಹುದು, ಎಂಥಾ ಅದ್ದೂರಿ ಹೊಟೇಲನ್ನೇ ನೋಡಿ ಅಲ್ಲಿನ ಸಾರ್ವಜನಿಕ ಮೂತ್ರಾಲಯಗಳು ಶಿಥಿಲಗೊಂಡು ಹದಗೆಟ್ಟು ಹೋದರೂ ಅದನ್ನು ದುರಸ್ತಿ ಮಾಡಿಸುವುದಕ್ಕೆ ಸಂಬಂಧಪಟ್ಟವರು ನೆಗ್ಲೆಕ್ಟ್ ಮಾಡುವುದು ನಾನು ನೋಡಿದ ಭಾರತದಲ್ಲಂತೂ ಇತ್ತು.

ಪ್ರವಾಸೋದ್ಯಮವೆನ್ನುವುದು ಕೇವಲ ಪ್ರವಾಸಿಗರನ್ನು ಒಂದು ಟೂರಿಸ್ಟ್ ಡೆಸ್ಟಿನೇಷನ್ನ್ ಕಡೆಗೆ ದೂರದಿಂದ ಆಕರ್ಷಿಸುವುದಷ್ಟೇ ಅಲ್ಲ, ಹಾಗೆ ಬಂದವರನ್ನು ನಮ್ಮ ಮನೆಯ ಅತಿಥಿಗಳ ಹಾಗೆ ನೋಡಿಕೊಳ್ಳುವುದು, ಅವರು ತರುವ ವ್ಯಾಪಾರ-ವಹಿವಾಟು-ಸಂಸ್ಕೃತಿಯಲ್ಲಿ ಒಂದಾಗುವುದೂ ಸೇರಿಕೊಂಡಿದೆ. ದೂರದಿಂದ ಭಾಷೆ ಬರದ ವಿದೇಶೀ ಪ್ರಯಾಣಿಕರ ಪರ್ಸ್ ಒಂದನ್ನು ನಮ್ಮೂರಿನ ನಿಪುಣ ಪಿಕ್‌ಪಾಕೇಟ್ ತಜ್ಞರು ಏಮಾರಿಸಿಕೊಂಡು ಹೋದರೆ ಆ ಪ್ರಯಾಣಿಕರನ್ನು ರಕ್ಷಿಸುವುದು, ಪ್ರವಾಸಿಗರ ಆಸಕ್ತಿಗಳನ್ನು ಬೆಳೆಸುವುದೂ ನಮ್ಮ ಕರ್ತವ್ಯವೆಂಬುದನ್ನು ಜನಸಾಮಾನ್ಯರಿಗೆ ಮನನ ಮಾಡಿಕೊಡುವುದು ಹೇಗೆ?

ಭಾರತವನ್ನು ಸಿಂಗಪುರಕ್ಕೋ ಮತ್ಯಾವುದೋ ದೇಶಕ್ಕೆ ಹೋಲಿಸಿಕೊಳ್ಳುವುದಕ್ಕಿಂತ ಭಾರತದ ಇತರ ರಾಜ್ಯಗಳಲ್ಲಿ ಬಳಕೆಗೆ ಬಂದ ಹಾಗೂ ಯಶಸ್ವಿಯಾದ ತಂತ್ರಗಳನ್ನು ಬಳಸಿ ನಮ್ಮಲ್ಲಿಯೂ ವ್ಯವಸ್ಥಿತವಾದ ಪ್ರವಾಸೋದ್ಯಮವನ್ನು ಹುಟ್ಟು ಹಾಕಲು ಬೆಳೆಸಲು ಮುತ್ಸದ್ದಿಗಳು ಬೇಕು, ಸ್ಥಳೀಯ ನಾಗರಿಕರ ಕಷ್ಟ ಕಾರ್ಪಣ್ಯಗಳು ಎಂದಿಗೂ ಇರುವವೇ, ಈ ಪ್ರವಾಸಿಗರು ತರಬಹುದಾದ ಬಿಸಿನೆಸ್ ಅನ್ನು ಪ್ರತಿಯೊಬ್ಬರಿಗೂ ತಿಳಿಸಿ ಲೋಕಲ್ ಮಟ್ಟದಲ್ಲಿ ಪ್ರವಾಸಿಗರ ಹೆಚ್ಚಳದಿಂದಾಗುವ ಅನುಕೂಲಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವುದು ಮೊಟ್ಟ ಮೊದಲ ಹೆಜ್ಜೆಯಾಗಬೇಕು. ಯಾವುದೇ ಸರ್ಕಾರ ಬಂದರೂ ಜನಪರ ಯೋಜನೆಗಳ ಯಾದಿಯಲ್ಲಿ ಪ್ರವಾಸೋದ್ಯಮವನ್ನೂ ನಿಲ್ಲಿಸಬೇಕು, ಜೊತೆಗೆ ಪ್ರವಾಸೀ ಕೇಂದ್ರಗಳು ಮುಖ್ಯವಾಗಿ ಉಳಿದೆಲ್ಲೆಡೆ ಹಬ್ಬಿರುವ ರಸ್ತೆಜಾಲವನ್ನು ಅಭಿವೃದ್ಧಿಗೊಳಿಸುವ ಧೀಮಂತ ಯೋಜನೆಗಳು ಬರಬೇಕು. ಪ್ರವಾಸಿಗರಿಗೆ ಸಹಾಯ ಮಾಡುವ ವಾಲಂಟರಿ ಸಂಸ್ಥೆಗಳಿಂದ ಹಿಡಿದು, ಪ್ರವಾಸಿಗರ ಮಟ್ಟವನ್ನು ’ಅಳೆ’ದು ಅನುಕೂಲ/ಅನಾನುಕೂಲವನ್ನು ಕೂಲಂಕಷವಾಗಿ ಯೋಚಿಸುವ ಬುದ್ಧಿಜೀವಿಗಳೂ, ಜೊತೆಗೆ ಪ್ರವಾಸಿಗರಿಗೆ ಕಂಟಕಗಳನ್ನೊಡ್ಡುವ ಪ್ರತಿಯೊಬ್ಬರನ್ನೂ ಕಾನೂನಿಗೆ ಸಿಲುಕಿಸುವ ವ್ಯವಸ್ಥೆಯೂ ಬೆಳೆಯಬೇಕು.

ಸ್ವಾತಂತ್ರ್ಯ ಬಂದು ಐದು ದಶಕಗಳು ಸಂದರೂ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿದ್ದರೂ, ಜನ ಸಾಮಾನ್ಯರಲ್ಲಿ ನಗರೀಕರಣ ಮನೋಭಾವನೆ ಬೆಳೆದಂತೆ ವಿಶ್ವದ ಪ್ರತಿಯೊಂದು ಹಳ್ಳಿಯೂ ಟೆಕ್ನಾಲಜಿಯಿಂದ ಆವೃತ್ತವಾದಂತೆ ಪ್ರವಾಸೋದ್ಯಮದ ಬೆಳವಣಿಗೆ ಕರ್ನಾಟಕದಂತಹ ರಾಜ್ಯಗಳಿಗೆ ಸಹಜವಾಗಬೇಕು. ’ಅಯ್ಯೋ, ನಮ್ಮ ಸಮಸ್ಯೆಗಳಿಗೆಲ್ಲ ಮೊದಲು ಉತ್ತರ ಸಿಗಲಿ!’ ಎನ್ನುವ ಮನೋಭಾವವನ್ನು ಬಿಟ್ಟು ಮೂಲ ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ಆಧುನಿಕತೆಯನ್ನು ಸ್ವಾಗತಿಸುವ ಔದಾರ್ಯ ಹುಟ್ಟಲಿ. ಕೇರಳಿಗರು ಮಾಡಿದ್ದಾರೆ, ರಾಜಸ್ತಾನದವರು ಮಾಡಿದ್ದಾರೆ ಎನ್ನುವುದಕ್ಕಿಂತಲೂ ನಮ್ಮಲ್ಲೂ ಪ್ರವಾಸೋದ್ಯಮಕ್ಕೆ ಲಾಯಕ್ಕಾದ ಸೌಂದರ್ಯವಿದೆ ಸೊಬಗಿದೆ ಎನ್ನುವ ಮನೋಭಾವ ಬೆಳೆದು ಅದರಿಂದ ನಾಡಿನ ಆದಾಯ ಹೆಚ್ಚಲಿ. ದೂರದ ಜೋಗ ಹಂಪೆಗಳು ಹಾಗಿರಲಿ ಬೆಂಗಳೂರಿಗೆ ವರ್ಷಕ್ಕೆ ಬಂದು ಹೋಗುವ ಸಾವಿರಾರು ಜನರನ್ನು ಹತ್ತಿರದ ಮೈಸೂರಿಗೆ ಮೈಸೂರಿನ ಅರಮನೆಗೆ ಪ್ರವಾಸಿಗಳಾಗಿ ಕರೆತರಲು ಏನೇನೆಲ್ಲವನ್ನು ಮಾಡಬಹುದು? ಹಾಗೆ ಮೈಸೂರಿಗೆ ಬಂದವರನ್ನು ಒಳನಾಡಿಗೆ ಕರೆದುಕೊಂಡು ಹೋಗಲು ಹಾಸನ-ಶ್ರವಣಬೆಳಗೊಳ-ಹಳೇಬೀಡು-ಚಿಕ್ಕಮಗಳೂರು-ಶಿವಮೊಗ್ಗ ಮೂದಲಾದವನ್ನು ತೋರಿಸಲು ಯಾವ ತಂತ್ರವನ್ನು ಅನುಸರಿಸಬಹುದು? ಇದಕ್ಕೂ ಮಿಗಿಲಾಗಿ ಉತ್ತರ ಕರ್ನಾಟಕದ ಹಲವು ರಮಣೀಯ ಸ್ಥಾನಗಳಿಗೆ ಪ್ರವಾಸಿಗರನ್ನು ಕೊಂಡೊಯ್ಯುವುದು ಹೇಗೆ? ಕೇರಳಿಗರು ಮಾನ್ಸೂನನ್ನೇ ದೊಡ್ಡ ಸೇಲ್ಸ್ ಪಾಯಿಂಟ್ ಮಾಡಿಟ್ಟುಕೊಂಡು ತಮ್ಮ ಪ್ರವಾಸಿ ಸಂಬಂಧಿಸಿದ ವೆಬ್‌ಸೈಟುಗಳಲ್ಲಿ ವೀದೇಶಿಯರನ್ನು ಕೈ ಬೀಸಿ ಕರೆಯುತ್ತಿದ್ದಾರೆ - ಪಕ್ಕದ ರಾಜ್ಯಕ್ಕೆ ಬಂದವರನ್ನು ನಾವೂ ಆಮಂತ್ರಿಸೋಣವೇ? ಅಥವಾ ನಮ್ಮ ತಂತ್ರ ’ದೂರದೃಷ್ಟಿ’ಗಳೇ ಬೇರೆಯವೋ?

4 comments:

  1. ಸುಧನ್ವಾ,

    ಥ್ಯಾಂಕ್ಯೂ! ಹೀಗೇ ಆಗಾಗ ಭೇಟಿ ಕೊಡ್ತಾ ಇರಿ.

    ReplyDelete
  2. Anonymous4:34 AM

    Hello, there. This is a quick summary of the goodness of buying wow gold from wow gold reviews, wow power level reviews, the World of Warcraft network of trust wow power leveling reviews, warcraft power leveling reviews and understanding for WoW PL'ers warcraft gold reviews. Come to here for wow leveling reviews. If you are in the mood for Final Fantasy XI gil, then please go to FFXI Gil reviews, Buy FFXI Gil reviews, FFXI Gil Sale reviews, Cheapest FFXI Gil reviews, Buy Cheap FFXI Gil reviews, final Fantasy XI Gil reviews, Cheap FFXI Gil reviews.

    ReplyDelete