Thursday, April 30, 2020

ಬರಹದತ್ತ ಮುಖ ಮಾಡಿಸಿದ ಕೋವಿಡ್

ಇವತ್ತಿಗೆ ಬರೋಬ್ಬರಿ ಏಳು ವಾರವಾಯಿತು... ನನ್ನಂಥವರು ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿ.  ಈ ಕೋವಿಡ್‌ನಿಂದ ಯಾರು ಯಾರಿಗೆ ಏನೇನು ಅನುಕೂಲ-ಅನಾನುಕೂಲವಾಗಿದೆಯೋ, ನನಗಂತೂ ಇದು ಬರಹ-ಓದು-ಸಂಭಾಷಣೆಗಳಲ್ಲಿ ತೊಡಗಿಸಿದೆ.

ಏನೇನು ಹೊಸತುಗಳು ಈ ಏಳು ವಾರದಲ್ಲಿ ಶುರುವಾದವು ಎಂದು ಪಟ್ಟಿ ಮಾಡುತ್ತಾ ಹೋದಾಗ ಈ ಕೆಳಗಿನವು ಕಂಡು ಬಂದವು:
- ಮೂರು ಹೊತ್ತೂ ಮನೆ ಊಟ ನಮಗೆ ಬೇಕಾದಂತೆ ಮಾಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ಕುಕಿಂಗ್ ಶೋಗಳನ್ನು ನೋಡಲು ಶುರು ಮಾಡಿದ್ದು, ಜೊತೆಗೆ ರೆಸಿಪಿಗಳನ್ನು ಹುಡುಕಿದ್ದು
- ಮನೆಯಲ್ಲೇ ಇದ್ದುದರಿಂದ ನಾಲ್ಕೈದು ಜೊತೆ ಬಟ್ಟೆಗಳನ್ನೇ ಪುನರಾವರ್ತನೆಯಾಗಿ ಬಳಸಿದ್ದು
- ಈ ವರೆಗೆ ಮರೆತು ಹೋಗಿದ್ದ ಅನೇಕ ಬ್ಲಾಗುಗಳನ್ನು ತೆರೆದು ಓದಿದ್ದು
- ಈ ವರೆಗೆ ಮರೆತಂತಿದ್ದ "ಅಂತರಂಗ"ದ ಬಾಗಿಲು ತೆಗೆದು ಮತ್ತೆ ಬರೆಯಲು ಶುರು ಮಾಡಿದ್ದು (ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೊಂದು ಲೇಖನವನ್ನು ಹಾಕಿದ್ದು)
- ಸ್ನೇಹಿತರ ಬಳಿ ಒಳ್ಳೆಯ ಸಿನಿಮಾಗಳ ರೆಕಮೆಂಡೇಷನ್ ಅನ್ನು ಕೇಳಿ ಸಿನಿಮಾ ನೋಡಿದ್ದು
- ಬಂಧುಗಳ ಜೊತೆ, ಸ್ನೇಹಿತರ ಜೊತೆ ದೀರ್ಘಕಾಲ ಮಾತನಾಡಿದ್ದು
- ವಾರದಲ್ಲಿ ಒಂದು ನಿಮಿಷವೂ ಕೂಡ ಕಾರಿನಲ್ಲಿ  ಪ್ರಯಾಣಿಸದೇ ಇದ್ದದ್ದು
- ಬಂದಂತ ವಾಟ್ಸಾಪ್ ಮೆಸ್ಸೇಜುಗಳನ್ನೆಲ್ಲ ನೋಡಿದ್ದು
- ವೀಕೆಂಡ್ ದಿನಗಳನ್ನು ಹೇಗೆ ಕಳೆಯುವುದಪ್ಪಾ ಎಂದು ಚಿಂತಿಸಿದ್ದು
- ನಮ್ಮ ಪಕ್ಕದ ಮನೆಯವರ ಜೊತೆ ವೆಬೆಕ್ಸ್ ಕಾನ್‌ಫರೆನ್ಸಿನಲ್ಲಿ ಮಾತನಾಡಿದ್ದು
- ಮನೆಯ ಮೂಲೆ ಮೂಲೆಯನ್ನೂ (ಸ್ಟೆಪ್ಸ್ ಕೌಂಟ್ ಆಗಲೆಂದು) ತಿರುಗಿದ್ದು
- (ಅನೇಕ ವರ್ಷಗಳ ನಂತರ) ಮನೆಯನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ್ದು

ಇವೆಲ್ಲ ಏನೋ ದೊಡ್ಡ ವಿಷಯ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರಬಹುದು.  ಆದರೆ, ಎರಡು ತಿಂಗಳ ಹಿಂದಿನ (ವ್ಯವಸ್ಥಿತ) ವ್ಯಸ್ತ ಜೀವನ ಇಂದು ಅವ್ಯಸ್ತವಾಗಿದೆ ಎಂದು ಹೇಳಲು ಬಾರದು.  ಆದರೆ, ನಮ್ಮೆಲ್ಲರಿಗೂ ಸಿಗುವುದು ಇಂತಿಷ್ಟೇ ಸಮಯವಾದರೂ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.  ನಾವು ನಮ್ಮ ಬದುಕಿನಲ್ಲಿ ಸಾಧಿಸಿರುವುದು ಒಂದು ಸಾಸಿವೆ ಕಾಳು ಗಾತ್ರದಷ್ಟು ಮಾತ್ರ ಎನ್ನುವ ಭಾವನೆ ಮೂಡಲು ಗುರು ಶಂಕರಾಚಾರ್ಯರು ಕೇವಲ 32 ವರ್ಷದ ಅವರ ಜೀವಿತದಲ್ಲಿ ಎಷ್ಟೊಂದನ್ನು ಸಾಧಿಸಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತದೆ.  ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, ಭರತ ಖಂಡದ ಉದ್ದಕ್ಕೂ ಅಲೆದಾಡಿ ಅದೆಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.


***
ಈ ಕೋವಿಡ್‌ ದಯೆಯಿಂದ ನಿಮ್ಮ ನಿಮ್ಮ ಹೊಸ ಅನುಭವಗಳೇನೇನಿವೆ? ಹಂಚಿಕೊಳ್ಳಬಹುದೇ?

Wednesday, April 29, 2020

ಅಕ್ಕಿ ಆರಿಸುವಾಗ...

ಅಕ್ಕಿ ಆರಿಸುವಾಗ...
ಕವಿ: ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್


 ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಮನಸ್ಸಿಗೆ ಹಿಡಿಸುವ ಕವನಗಳಲ್ಲಿ ಇದೂ ಒಂದು.  ಈ ಹಾಡನ್ನು ಸುಗಮ ಸಂಗೀತಕ್ಕೆ ಒಳಪಡಿಸಿದ ಸಿ. ಅಶ್ವಥ್ ಅವರು ಒಂದು ಬಡತನದ ವಾತಾವರಣದಲ್ಲಿ ಬೆಳೆದು ನಿಂತ ಹೆಣ್ಣುಮಗಳ ಮನದಾಳವನ್ನು ವಿಷದ ಪಡಿಸುವಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಖಂಡಿತವಾಗಿ ಹೇಳಬಹುದು.  ಹೆಣ್ಣಿನ ಅಂತರಾಳದ ಒಳತೋಟಿಯನ್ನು ಹೊರಹೊಮ್ಮಿಸುವ ಗಾಯನಕ್ಕೆ ಗಂಡು ಧ್ವನಿ ಎಷ್ಟು ಹೊಂದೀತು ಎಂಬ ಪ್ರಶ್ನೆ ಪಲ್ಲವಿಯಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭಸಿದರೂ, ಹಾಡು ಮುಂದುವರಿದತೆಲ್ಲ ಅಶ್ವಥ್ ಅವರ ಗಾಯನ ಹೆಣ್ಣಿನ ನಿರ್ಲಿಪ್ತತೆಯನ್ನು ವರ್ಣಿಸುವುದರ ಮೂಲಕ ನಿರಾಯಾಸವಾಗಿ ಕೇಳುಗರನ್ನು ಕಟ್ಟಿ ಹಾಕುತ್ತದೆ.  ಇದು ಈ ಹಾಡಿನ ಮಹತ್ವದ ಅಂಶ ಎಂದರೆ ತಪ್ಪಾಗಲಾರದು.

ಹಾಡಿನ ಮೊದಲಿಗೆ ಕೆಲವು ಕ್ಷಣಗಳ ಕಾಲ ಕೇಳಿಸುವ ದನಕರುಗಳ ಕೂಗು, ಒಂದು ಕೊಟ್ಟಿಗೆಯ ಪರಿಸರವನ್ನು ಕೇಳುಗರಿಗೆ ಕಟ್ಟಿಕೊಡುತ್ತದೆ.  ನಿಧಾನವಾಗಿ ಒಂದು ಸರಳ ಸಂಭ್ರಮವನ್ನು ಸೂಚಿಸುವಂತೆ ಆರಂಭವಾಗುವ ಕೊಳಲಿನ ಧ್ವನಿ, ನಂತರ ಮುಂಬರುವ ವಯಲಿನ್‌ಗಳ ಮೊರೆತಕ್ಕೆ ಸೋತು ಹೋಗುವುದಕ್ಕೆ ಮೊದಲು ಭಾರವಾದಂತೆನಿಸಿ, ಈ ಹಾಡಿಗೆ ಒಂದು ಗಟ್ಟಿಯಾದ ತಳಹದಿಯನ್ನು ಒದಗಿಸುತ್ತದೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು


ಇತ್ತೀಚಿನ ಕಾಲದಲ್ಲಿ ಅಕ್ಕಿಯನ್ನು ಜನರು ಜರಡಿಯಾಡಿ, ಮೊರದಲ್ಲಿ ಆರಿಸುತ್ತಾರೋ ಇಲ್ಲವೋ, ಆದರೆ ಆಗಿನ ಕಾಲದ ಒಂದು ಹಳ್ಳಿಯ ಪರಿಸರದಲ್ಲಿ ಮೊರದಲ್ಲಿ ಅಕ್ಕಿಯನ್ನು ಗೇರಿ ಅಥವಾ ಜರಡಿ ಹಿಡಿದು, ನುಚ್ಚು ಮತ್ತು ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಪ್ರತಿನಿತ್ಯವೂ ನಮ್ಮ ಹೆಣ್ಣು ಮಕ್ಕಳು ಮಾಡುವಂಥದಾಗಿತ್ತು.  ಕವಿ ಈ ಹಾಡಿನಲ್ಲಿ ಬರೆದಂತೆ "ಅಕ್ಕಿ ಆರಿಸುವುದು" ಒಂದು ವಿಶೇಷ ಸೂಚಕ.     ಏಕೆಂದರೆ ಅಕ್ಕಿಯ ನಡುವೆ ಸಿಕ್ಕುವ ಕಲ್ಲು, ನುಚ್ಚನ್ನು ಆರಿಸುವ ಕೆಲಸಕ್ಕೂ ನಾವು "ಅಕ್ಕಿ ಆರಿಸುವುದು" ಎಂದೇ ಹೇಳುವುದು ಸಾಮಾನ್ಯ.  ಒಂದು ರೀತಿಯಲ್ಲಿ ಅಮೇರಿಕದಲ್ಲಿ ನಾವೆಲ್ಲ "hot water heater" ಎಂದು ಹೇಳುತ್ತೇವಲ್ಲ ಹಾಗೆ, ನಾವು ನಿಜವಾಗಿಯೂ cold water ಅನ್ನು heat ಮಾಡುತ್ತಿದ್ದರೂ, ಅದನ್ನು "hot water heater" ಎಂದೇ ಕರೆಯುತ್ತೇವೆ!  ಭತ್ತವನ್ನು ತೆಗೆದುಕೊಂಡು ಹೋಗಿ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ, ಅಕ್ಕಿಗೆ ಪಾಲೀಷ್ ಕೊಟ್ಟ ಮೇಲೆ ನುಚ್ಚು ಉತ್ಪಾದನೆ ಆಗುವುದು ಸಹಜ.  ಆದರೆ ಮಾಡಿದ ಅನ್ನ ಬಿಡಿ ಬಿಡಿಯಾಗಿ, ಉದುರಾಗಿ ಇರಬೇಕು ಎನ್ನುವುದಾದರೆ ಅದರಲ್ಲಿ ನುಚ್ಚು ಇರಬಾರದು.  ಅದು ಎಂಥಾ ನುಚ್ಚು? "ಚಿಕ್ಕ ನುಚ್ಚು", ಅದನ್ನು ಆರಿಸಿ, ಜೊತೆಗೆ ಕಲ್ಲನ್ನೆಲ್ಲ ಹೆಕ್ಕಿದ ಮೇಲೆ ಉಳಿದ ಬರೀ ಅಕ್ಕಿಯನ್ನು ಮಾತ್ರ ಅನ್ನ ಮತ್ತಿನ್ನ್ಯಾವುದೋ ಅಡುಗೆಗೆ ಬಳಸೋದು ವಾಡಿಕೆ.  ಇಂಥಾ ಚಿಕ್ಕ ನುಚ್ಚಿನ ನಡುವೆ ಹೋರಾಟಕ್ಕೆ ಇರುವುವು "ಬಂಗಾರವಿಲ್ಲದ ಬೆರಳು"ಗಳು.  ಕವಿ ಬಂಗಾರವಿಲ್ಲದ ಬೆರಳು ಎನ್ನುವಾಗ ಅದೇ ಹಳ್ಳಿಯ ಪರಿಸರದ ಲೇಪಕ್ಕೆ ಮತ್ತೆ ಬಡತನದ ವಾತಾವರಣದ ಕಳೆಯನ್ನು ಕಟ್ಟುತ್ತಾರೆ.  ಎಷ್ಟೇ ಶ್ರೀಮಂತರಿದ್ದರೂ, ಅಕ್ಕಿ ಆರಿಸುವಾಗ ಅಂದರೆ ಮನೆ ಕೆಲಸ ಮಾಡುವಾಗ ಬಂಗಾರ ಧರಿಸುವುದು ಸಹಜವಲ್ಲ.  ಒಂದು ವೇಳೆ ಮನೆಯಲ್ಲಿದ್ದಾಗಲೂ ಬಂಗಾರವನ್ನು ಧರಿಸಿಯೇ ಇರುತ್ತಾರೆಂದರೆ ಅವರು ಬಡತನದ ವಾತಾವರಣವನ್ನು ಮೀರಿದವರಾಗಿರುತ್ತಾರೆ ಎನ್ನುವುದು ವಾಡಿಕೆ.  ಇಲ್ಲಿ ಕವಿ ಬಂಗಾರವಿಲ್ಲದ ಬೆರಳನ್ನು (ಬೆರಳುಗಳನ್ನು), ಒಂದು ರೀತಿಯ ದೈನಂದಿನ ಹೋರಾಟದ ಸಿಪಾಯಿಗಳನ್ನಾಗಿ ಬಿಂಬಿಸಿದ್ದಾರೆ. ಹಾಗೂ ಅದೇ ಸಾಲನ್ನು ಸುಗಮ ಸಂಗೀತದ ಗಾಯಕರು ಪ್ರತಿ ಪ್ಯಾರಾದ ನಂತರ ಹಾಡಿ ಅದನ್ನೇ ಒಂದು ಚುಟುಕು ಪಲ್ಲವಿಯನ್ನಾಗಿಸುವುದುರ ಮೂಲಕ ಈ ಸಿಪಾಯಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ಹೊರೆಸಿದಂತೆ ಕಾಣುತ್ತದೆ.

ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ
ಸಿಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳೂ|

ಯಾವುದೇ ಭಂಗಿಯಲ್ಲಿ ಕುಳಿತರೂ ಮೊರದಲ್ಲಿ ಅಕ್ಕಿಯನ್ನು ಆರಿಸುವಾಗ ಕೊರಳು ತಗ್ಗಿರುತ್ತದೆ.  ಅಂತಹ ಕೊರಳಿನ ಸುತ್ತ ಕರಿಮಣಿ ಒಂದೇ ಇರುವುದು ಮತ್ತ್ಯಾವ ಬಂಗಾರದ ಆಭರಣಗಳೂ ಇಲ್ಲದಿರುವುದನ್ನು ಸೂಚಿಸಿ ಮತ್ತೆ ಬಡತನದ ವಾತಾವರಣದ ಪ್ರತಿಮೆಯನ್ನು ಕೇಳುಗರ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಕರಿಮಣಿ ಒಂದೆ ಎನ್ನುವುದು ಕರಿಮಣಿ ಸರದ ರೂಪಕ, ಅದರಲ್ಲಿ ಅನೇಕ ಕಪ್ಪು ಮಣಿಗಳಿದ್ದರೂ ಅದನ್ನು ಕರಿಮಣಿ ಎಂದೇ ಕರೆಯುವುದು ರೂಢಿ. ಈ ಬಡತನದ ಚಿತ್ರಣದ ಜೊತೆ ಜೊತೆಗೆ ಸಿಂಗಾರ ಕಾಣದ ಹೆರಳು ಹೊಸತಾಗಿ ಈ ಹೆಣ್ಣಿನ ಅಂತರಂಗದ ಅಭಿವ್ಯಕ್ತಿಯನ್ನು ಸಾಬೀತು ಮಾಡಲು ಪ್ರಯತ್ನಿಸುತ್ತದೆ.  ಮನೆಯಲ್ಲೇ ಕೆಲಸದ ನಡುವೆ ಇರುವವರು ಸಾಮಾನ್ಯವಾಗಿ ಹೆರಳನ್ನು ಸಿಂಗರಿಸಿಕೊಳ್ಳದಿದ್ದರೂ ಒಂದಿಷ್ಟು ಮೇಲು ಬಾಚಣಿಕೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ವಾಡಿಕೆ, ಆದರೆ ಇಲ್ಲಿ ಈ ಹೆಣ್ಣಿನ ಅಂಗ-ಭಂಗಿಗಳ ಮೂಲಕ ಮನದಾಳದಲ್ಲಿ ಹುದುಗಿದ ಅವ್ಯಕ್ತ ಯಾತನೆ ಅಥವಾ ತವಕವನ್ನು ಹೊರಕಾಕುವ ಕವಿಯ ಚಾಕಚಕ್ಯತೆ ಎದ್ದು ಕಾಣುತ್ತದೆ.  ಮತ್ತೆ ಹೊರ ಹೊಮ್ಮುವ "ಬಂಗಾರವಿಲ್ಲದ ಬೆರಳು" ಮೇಲಿನ ಅಂಶಗಳಿಗೆ ಪುಷ್ಠಿಕೊಡುತ್ತದೆ.


ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳೂ|

ಸಿಂಗಾರ ಕಾಣದ ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆ ಕಥಾನಾಯಕಿಯ ಯೌವನವನ್ನು ಪ್ರಚುರಪಡಿಸುತ್ತದೆ, ಸುಮಾರು ಹದಿನಾರು ವರ್ಷದ ಆಸುಪಾಸು ಇರಬಹುದಾದ ವಯಸ್ಸು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಬೇಗನೆ ಲಗ್ನ ಮಾಡುತ್ತಿದ್ದರಾದ್ದರಿಂದ ಹದಿನಾರು ವರ್ಷಕ್ಕೆಲ್ಲ ಸಾಕಷ್ಟು ಪ್ರಬುದ್ಧತೆ ಈ ಹೆಣ್ಣು ಮಕ್ಕಳಿಗೆ ಇರುತ್ತಿದ್ದುದು ಸಹಜ.  ಎರಡು ಬಾರಿ ಹಾಡಿದ ದೀಪದಂತೆ ಅರಳಿದ ಸಿರಿಗಣ್ಣ ಸನ್ನೆ ಏನನ್ನೋ ನೆನಪಿಸಿಕೊಳ್ಳುತ್ತವೆಯೇನೋ ಎಂದು ಕೊಂಡರೆ ನಿಲ್ಲದ ಮುಂಗಾರಿನಲ್ಲಿ ತುಂಬಿ ಹರಿಯುವ ಹೊಳೆಯ ರೀತಿಯಲ್ಲಿರುವ ಮುಂಗುರಳನ್ನು ನೆನಪಿಗೆ ತರುತ್ತವೆ.  ತಲೆ ಹಾಗೂ ಕಣ್ಣು ಅತ್ತಿತ್ತ ಚಲಿಸಿದಂತೆಲ್ಲ ಮುಖದೊಂದಿಗೆ ಆಟವಾಡುವ ಈ ಮುಂಗುರುಳು ಒಮ್ಮೊಮ್ಮೆ ಕಾಡುವ ಮಳೆಯಂತಾಗಿರುವುದನ್ನು ಇಲ್ಲಿ ಗಮನಿಸಬಹುದು. ಮತ್ತೆ ಬಂಗಾರವಿಲ್ಲದ ಬೆರಳನ್ನು ಪುನರಾವರ್ತಿಸಿ ಗಾಯಕ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿರುವ ಮನಸ್ಸನ್ನು ಅಭಿವ್ಯಕ್ತಗೊಳಿಸಿದ್ದಾರೆ.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು

ನಿಮಗೆ ಗೊತ್ತಿರುವಂತೆ ನಮಗೆ ಭಾರತದಲ್ಲಿ ಟ್ರ್ಯಾಷ್ ಎಸೆಯೋದಕ್ಕೆ ಮನೆಯ ಒಳಗೆ ಒಂದು ನಿಖರವಾದ ಜಾಗ ಅಂತೇನು  ಇರುತ್ತಿರಲಿಲ್ಲ.  ಅದರಲ್ಲೂ ಅಕ್ಕಿಯಲ್ಲಿ ಸಿಗುವ ಕಲ್ಲನ್ನು ಇಂತಲ್ಲೇ ಎಸೆಯಬೇಕು ಎಂಬ ನಿಯಮವೇನೂ ಇರಲಿಲ್ಲ.  ಆದರೆ ಮನೆಯನ್ನು ದಿನಕ್ಕೆರಡು ಬಾರಿಯಾದರೂ ಗುಡಿಸಿ-ಒರೆಸಿ ಇಟ್ಟುಕೊಂಡಿರುವಾಗ ಅಕ್ಕಿಯಲ್ಲಿ ಆರಿಸಿದ ಕಲ್ಲು ಗೌಣವಾಗುತ್ತಿತ್ತು.  ಅದು ಎಲ್ಲ ಕಸದ ಜೊತೆಗೆ ತಿಪ್ಪೆ ಸೇರುತ್ತಿತ್ತು.  ಆದರೆ ಇಲ್ಲಿ, ಕಲ್ಲ ಹರಳನು ಹುಡುಕಿ ತೆಗೆದ ಕೈಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ, ಅದನ್ನು ಇಂತಲ್ಲಿಗೆ ಎಸೆಯಬೇಕು ಎಂಬ ನಿಯಮವೇನೂ ಇಲ್ಲ, ಜೊತೆಗೆ ಕಲ್ಲು ಅಕ್ಕಿಯಿಂದ ಬೇರ್ಪಡುವ ಪ್ರಕ್ರಿಯೆಗೆ ಮಾತ್ರ ಪ್ರಾಮುಖ್ಯತೆ ಇದೆ, ಕಲ್ಲು ಹೊರ ಹೋಗುವಾಗ ಎಲ್ಲಿಗೆ ಬೇಕಾದರೂ ಹೋಗಬಹುದು.  ಇಂಥ ಸಂದರ್ಭದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿರುತ್ತದೆ, ಆದರೆ ಆ ಕಲ್ಲನ್ನು ಎಸೆದ ಕೈಗಳಲ್ಲಿದ್ದ ಬಳೆಗಳು ಝಲ್ಲೆಂದು ಸದ್ದು ಮಾಡುವುದು ಸ್ವಾಭಾವಿಕ... ಆದರೆ ಇಲ್ಲಿ ಝಲ್ಲೆಂದು ಸದ್ದು ಮಾಡುವ ಬಳೆಗಳು ಗಾಜಿನ ಬಳೆಗಳು, ಮತ್ತೆ ಬಡತನದ ವಾತವರಣವನ್ನು ಶ್ರೋತೃಗಳ ಗಮನಕ್ಕೆ ತರುತ್ತವೆ.


ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿತ್ತು
ಬಂಗಾರವಿಲ್ಲದ ಬೆರಳೂ|

ಸಾಮಾನ್ಯವಾಗಿ ಮನೆಯ ಜಗುಲಿ ಅಥವಾ ಮುಂಗಟ್ಟುಗಳಲ್ಲಿ ಕುಳಿತು ಅಕ್ಕಿ ಆರಿಸುವುದು ಸಹಜ.  ಒಳಮನೆ ಹಾಗೂ ಆಡುಗೆ  ಮನೆಗಳಲ್ಲಿ ಅಷ್ಟೊಂದು ಬೆಳಕಿಲ್ಲದಿರಬಹುದು, ಅಲ್ಲದೇ ಹಿತ್ತಲ ಬಾಗಿಲನ್ನು ಈ ರೀತಿಯ ಕೆಲಸಗಳಿಗೆ ಹೆಚ್ಚಿನ ಜನರು ಆಯ್ಕೆ ಮಾಡಿಕೊಂಡಿರಲಾರರು.  ಈ ನಿರ್ಲಿಪ್ತತೆಯಲ್ಲಿ ಕಾರ್ಯತತ್ಪರವಾಗಿರುವ ಹೆಣ್ಣಿಗೆ ಊರಿನ ಬೀದಿಯಲ್ಲಿ ಆ ಕಡೆ ಈ ಕಡೆ ಜನರು ಓಡಾಡಿದ ದೃಶ್ಯ ಅರಿವಿಗೆ ಬರುತ್ತದೆ.  ಅವರು ಹೋದಕಡೆ, ಬಂದಕಡೆಗೆಲ್ಲ ಕಣ್ಣು ಬೀಳುವುದು ಮತ್ತೆ ಯಾವುದೋ ದುಗುಡವನ್ನು ಹೊತ್ತು ಕೊಂಡ ಭಾರದ ಮನಸ್ಸಿನ ಹೆಣ್ಣಿನ ಚಿತ್ರಣವನ್ನು ಸಾಬೀತು ಮಾಡುತ್ತವೆ.  ಕೊನೆಯಲ್ಲಿ ಬರುವ "ಬಂಗಾರವಿಲ್ಲದ ಬೆರಳು" ಈ ಬಾರಿ ಚಂಚಲ ಮನಸ್ಸು ಮತ್ತೆ ಕಾರ್ಯಮಗ್ನವಾಗುವುದನ್ನು ಬಿಂಬಿಸುತ್ತದೆ.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು

ಇಲ್ಲಿ ಮನಸ್ಸಿನ ಭಾರದ ಭಾವಕ್ಕೆ ಕಾರಣವೇನೋ ಎನ್ನುವಂತೆ ಬೆಟ್ಟದಷ್ಟಿರುವ ಮನೆಕೆಲಸವನ್ನು ಕವಿ ಸೂಕ್ಷ್ಮವಾಗಿ ಹೊರಹೊಮ್ಮಿಸುತ್ತಾರೆ. ಹಾಗಿದ್ದರೂ ಕೂಡ ಶೀಘ್ರವಾಗಿ ಹಿಡಿದ ಕೆಲಸವನ್ನು ಮುಂದುವರೆಸಬೇಕು ಎನ್ನುವ ಯೋಚನೆಯಿಲ್ಲದೆ, ನಿಶ್ಚಲವಾಗಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ಚಿತ್ರದಲ್ಲಿರುವ ಬೊಂಬೆಯಂತೆ ಇರುವ ಹೆಣ್ಣಿನ ವರ್ಣನೆಯಲ್ಲಿ ಉದಾಸೀನತೆ ಹೊರಹೊಮ್ಮುತ್ತದೆ.  ಮನೆಕೆಲಸ ಬೆಟ್ಟದಷ್ಟಿವೆ, ಎನ್ನುವ ಮಾತು ಸಾಮಾನ್ಯವಾಗಿ ಬಳಕೆಯಲ್ಲಿರುವುದೇ ಆದರೂ, ಸುಮ್ಮನೆ ಇರುವ ಇವಳು, ಅದನ್ನು ಗೌಣವಾಗಿಸುತ್ತಾಳೆ.

ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳೂ|

ಈ ಕಥಾನಾಯಕಿಯ ಬೇಸರಿಕೆಯನ್ನು ಮುಚ್ಚಿಡುವಂತೆ ಈ ಬಾರಿ ಎಲ್ಲಾ ಹತ್ತು ಬೆರಳುಗಳೂ ಶ್ರಮಿಸುತ್ತವೆ ಎನ್ನುವ ಮಾತು ಒಂದು ರೀತಿಯಲ್ಲಿ ನಿರಂತರವಾಗಿ ತನ್ನ ಕೆಲಸದಲ್ಲಿ ತೊಡಗಿದ ಹೆಣ್ಣಿನ ಚಿತ್ರಣವನ್ನು ಮುಂದುವರೆಸುತ್ತದೆ, ಮತ್ತೊಂದು ರೀತಿಯಲ್ಲಿ   ಅಕ್ಕಿಯಲ್ಲಿರುವ ಕಲ್ಲನ್ನು ಹುಡುಕುವುದು, ಅದೇ ಅಕ್ಕಿಯ ನುಚ್ಚಿನಲ್ಲಿ ಅದೇನನ್ನೋ ಮುಚ್ಚಿಡುವಂತೆ ಕಾಣಿಸುವುದು ವಿಶೇಷ.  ಮತ್ತೆ ಕೊನೆಯಲ್ಲಿ ಬರುವ ಬಂಗಾರವಿಲ್ಲದ ಬೆರಳು ಈ ಬಾರಿ ಬಡತನವನ್ನು ಮೀರಿ ಸಹಜತೆಗೆ ಒತ್ತು ಕೊಡುತ್ತದೆ.  ಕೊನೆಗೂ ಈ ಕಥಾ ನಾಯಕಿಯ ಬೇಸರಕ್ಕೆ ಇಂಥದೇ ಕಾರಣವೆಂಬುದು ವ್ಯಕ್ತವಾಗದಿದ್ದರೂ ಆಕೆಯ ಮನಸ್ಥಿತಿಯನ್ನು ಅವಳ ಭಾವ-ಭಂಗಿಗಳಿಂದ ವ್ಯಕ್ತಪಡಿಸಲು ಪ್ರಯತ್ನಿಸಲಾಗಿದೆ.  ಅಕ್ಕಿ ಆರಿಸುವ ಈಕೆ ಚಿಕ್ಕ ನುಚ್ಚಿನ ಜೊತೆಗೆ ತನ್ನ ಮನಸ್ಸಿನ ತಳಮಳವನ್ನು ಅವ್ಯಕ್ತವಾಗಿ ಹಂಚಿಕೊಳ್ಳುತ್ತಿದ್ದಾಳೇನೋ ಎನ್ನಿಸಿ, ನಡು ನಡುವೆ ಅಕ್ಕಿಯಲ್ಲಿ ಸಿಗುವ ಚಿಕ್ಕ ಕಲ್ಲುಗಳು ಅವಳ ಕಷ್ಟ ಅಥವಾ ಬೇಸರಿಕೆಯ ಕುರುಹಾಗಿ ಎತ್ತಲೋ ಎಸೆಯುವುದರ ಮೂಲಕ ಹೊರಹಾಕಲ್ಪಡುತ್ತವೆ.  ಹಾಡಿನ ಕೊನೆಯಲ್ಲಿ ಕೊಳಲು ಮತ್ತೆ ಹಾಡಿನಲ್ಲಿ ವ್ಯಕ್ತವಾದ ಭಾವನೆಗಳನ್ನೇ ಮುಂದುವರೆಸುವುದು ವಿಶೇಷ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Tuesday, April 28, 2020

How to clean old email accounts?

ಕೋವಿಡ್ ಸಂಬಂಧಿ ಲಾಕ್‌ಡೌನ್/ಕ್ವಾರಂಟೈನ್ ಇರೋದ್ರಿಂದ ಗಂಗೆ-ಜಮುನೆಯರೂ ಕ್ಲೀನ್ ಆಗ್ತಾ ಇದ್ದಾರೆ ಅಂತ ತಿಳಿದು... ನಾನೂ ಒಂದು ಸಣ್ಣ ಕ್ಲೀನಿಂಗ್ ಪ್ರಾಜೆಕ್ಟ್ ಕೈಗೆತ್ತಿಕೊಂಡೆ - ಅದೇನೆಂದರೆ ನನ್ನ ಹಳೆಯ ಇ-ಮೇಲ್ ಅಕೌಂಟುಗಳನ್ನು ಕ್ಲೀನ್ ಮಾಡುವುದು!

ಸುಮಾರು 20 ವರ್ಷಗಳಿಗಿಂತ ಹೆಚ್ಚು ಹಳೆಯದಾದ ನನ್ನ ಯಾಹೂ ಅಕೌಂಟು ಬಹಳ ದಿನಗಳಿಂದ ಸ್ಪ್ಯಾಮ್ ಇ-ಮೇಲ್‌ಗಳ ಕಾಟದಿಂದ ನಲುಗಿ ಹೋಗಿತ್ತು.  ಕೇವಲ ಅರ್ಧ ಘಂಟೆಯ ಪರಿಶ್ರಮದಲ್ಲಿ ಹಳೆಯ ಅಕೌಂಟು ಚೊಕ್ಕವಾಯಿತು ಮತ್ತು ಬೇಕಾದ ವಿಷಯ-ವಸ್ತುಗಳು ಆರ್ಗನೈಜ್ ಆದವು.  ಇದೇ ಸುಸಂದರ್ಭ ಎಂದುಕೊಂಡು, ನನ್ನ ಜೀ-ಮೇಲ್ ಮತ್ತು ಔಟ್‌ಲುಕ್ ಅಕೌಂಟುಗಳನ್ನೂ ಸಹ ಕ್ಲೀನ್ ಮಾಡಿದೆ... ಈಗ ಎಲ್ಲವೂ ಸ್ವಚ್ಛವಾಗಿದೆ ನೋಡಿ!

ನನಗೆ ಉಪಯುಕ್ತವಾದ ಈ ಮೆತಡ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ... ಪ್ರಯತ್ನಿಸಿ ನೋಡಿ, ವರ್ಕ್ ಆಯಿತೋ ಇಲ್ಲವೋ ತಿಳಿಸಿ.

***
Just because you bought a thing from someone, several years ago... they have been sending you emails non-stop!  And, your never ever read them!

The usual grouping, labeling, archiving, moving to folders, etc methods are only superficial, I mean, they don't address the root cause.  While everyone wants keep their inbox clean and crisp, their remaining labels, folders, and more importantly, storage gets messed up and becomes full.

These unwanted, unsolicited emails are spams - no one ever wants them, but the spammers keep sending them anyway!

Here's what you need to do:
1. Go to All Mails or your Inbox or your largest folder
2. Look for repeating offenders: like merchants, online stores, etc that you have used once or twice in the past
3. Open one of the emails and look for "Unsubscribe" link in the bottom (sometimes it is hidden, sometimes they use very small font)
4. Click unsubscribe, it mostly opens a new window; either they confirm you're unsubscribed or you need to make another choice/click to "unsubscribe" fully (watch out for daily/weekly/monthly traps)
5. Go back to your Inbox (or largest folder), Search for that merchant (or sender) that you just unsubscribed
6. Select all the mails and click Delete/Trash

You need to repeat steps 2-6 as many times as possible, you will see the clutter reduce like a magic.

The best is yet to come - there won't be any more new emails from the ones that you just unsubscribed!

So, in the end, it is all a happy ending... I bet, your time was well spent and your inbox (including your storage) is fully recovered!

Monday, April 27, 2020

ಮೊದಲ ದಿನ ಮೌನ

ಮೊದಲ ದಿನ ಮೌನ
ಕವಿ: ಕೆ. ಎಸ್. ನರಸಿಂಹ ಸ್ವಾಮಿ



ಮೊದಲ ದಿನ ಮೌನ... ಮೈಸೂರ ಮಲ್ಲಿಗೆಯ ಈ ಹಾಡನ್ನು ಕೇಳಿದಾಗೆಲ್ಲ ಹೊಸದಾಗಿ ಮದುವೆಯಾಗಿ ಗಂಡನ ಮನೆಯನ್ನು ಪ್ರವೇಶಿಸಿದ ಹೆಣ್ಣುಮಗಳ ತಳಮಳ ಅರಿವಾಗುತ್ತದೆ.  ಆಗಿನ ಕಾಲದಲ್ಲಿ ತವರು ಮನೆ ತೊರೆದು ಮತ್ತು ಗಂಡನ ಮನೆಯನ್ನು ಸೇರಿ  ಅಲ್ಲಿ ಅವಿಭಕ್ತ ಕುಟುಂಬದಲ್ಲಿ ಹೊಸ ಜೀವನವನ್ನು ಸಾಗಿಸುವುದು ಪ್ರತಿ ಹೆಣ್ಣುಮಗಳ ಬದುಕಿನಲ್ಲಿ ಮಹತ್ವದ ಬದಲಾವಣೆಯೇ ಸರಿ.  ಈ ಹಾಡಿನ ಉದ್ದಕ್ಕೂ ಬರುವ ಅಲಂಕಾರಗಳು ಒಂದೊಂದು ಹಂತದಲ್ಲಿಯೂ ಹೊಸತನ್ನೇನೋ ಸಾರುತ್ತಿವೆ ಎನ್ನಿಸುತ್ತದೆ.  ಕನ್ನಡ ಸಾಹಿತ್ಯದಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳ ಮನದ ತಲ್ಲಣವನ್ನು ಮೈಸೂರ ಮಲ್ಲಿಗೆಯ ಈ ಕವನ ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ಈ ಮೂರು ದಿನಗಳ ಪರಿವರ್ತನೆಯ ಸಮಯದಲ್ಲಿ ಸಾಂದರ್ಭಿಕವಾಗಿ ಆಕೆಯ ಒಳತೋಟಿಯನ್ನು ಇಣುಕಿ ನೋಡುತ್ತದೆ.  ಹಲವು ದಶಕಗಳ ಹಿಂದೆ ಎಲ್ಲರೂ ಸಹಜವಾಗಿ ಗಮನಿಸಬಹುದಾದ ಭಾವನೆಯೇನೋ ಎನ್ನುವಂತಿದ್ದ ಕಾಲದಲ್ಲಿ ಈ ಹಾಡು ಜನಮಾನಸದಲ್ಲಿ ಅದರ ಸ್ಥಾನವನ್ನು ಪಡೆದುಕೊಂಡಿದ್ದಿರಬಹುದು, ಆದರೆ ಈ ಹಾಡಿನ ಭಾವನೆಗಳ ಸಾಂದ್ರತೆಯ ವಸ್ತುನಿಷ್ಠತೆ ಇಂದಿನ ಆಧುನಿಕ ಯುಗದಲ್ಲೂ ಕೇಳುಗರನ್ನು ತನ್ನೊಳಗೆ ತಲ್ಲೀನಗೊಳಿಸಿಕೊಂಡು ಒಂದು ಕ್ಷಣ ಈ  ಹಾಡಿನಲ್ಲಿ ಅಡಗಿದ ಭಾವನೆಗಳ ಕೋಟಲೆಗಳೊಳಗೆ ಒಂದು ಮಾಡಿ ಬಿಡುತ್ತದೆ.

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 

ಗಂಡನ ಮನೆ ಸೇರಿದ ಮೊದಲ ದಿನ ಹೆಚ್ಚೂ ಕಡಿಮೆ ಮೌನದಲ್ಲೇ ಕಳೆದು ಹೋಗುತ್ತದೆ.  ಗುರುತು ಪರಿಚಯವಿಲ್ಲದ ಊರು,  ಮನೆಯಲ್ಲಿ ಮದುಮಗಳು ಅಲಂಕಾರಕ್ಕಿಟ್ಟ ಬೊಂಬೆಯೇನೋ ಎನ್ನುವಂತೆ ಎಲ್ಲರೂ ನೋಡುವವರೇ.  ಕುಳಿತರೂ ಕಷ್ಟ, ನಿಂತರೂ ಕಷ್ಟ.  ನಡುನಡುವೆ ತವರಿನ ಜ್ಞಾಪಕದಿಂದ ಕಣ್ಣು ಹನಿಗೂಡುತ್ತವೆ.  ಅಳು ತುಟಿಗೆ ಬರುತ್ತದೆ, ಆದರೆ ಗಟ್ಟಿಯಾಗಿ ಅಳಲಾಗದು.  ಚಿಂತೆ ಬಿಡಿ ಹೂವು ಮುಡಿದಂತೆ ಸಣ್ಣಗೆ ಇದ್ದರೂ ಇಲ್ಲದಂತೆ ತಲೆ ಏರಿ ಕುಳಿತಿರುತ್ತದೆ.

ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ|

ನೆರೆ ಹೊರೆಯವರು ಹಾಗೂ ಮನೆ ಮಂದಿ ಎಲ್ಲರೂ ಬಂದು ನೋಡುವವರೇ.  ನವ ವಧು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಎನ್ನುವ ಕುತೂಹಲ ಚಿಕ್ಕವರಿಂದ ದೊಡ್ಡವರ ವರೆಗೆ.  ಎಲ್ಲ ಕಡೆಯಿಂದ ಇಣುಕಿ ನೋಡುವ ಕಣ್ಣುಗಳು ಸಣ್ಣಗೆ ದೀಪ ಉರಿದಂತೆ ಕಂಡರೆ, ತಳಮಳದ ಜೀವದಲ್ಲಿ ಜಾತ್ರೆ ಮುಗಿದಂತೆನಿಸುತ್ತದೆ.  ಜಾತ್ರೆ ಮುಗಿದಾಗ ಏನೇನಾಗಬಹುದು... ಜಾತ್ರೆಗೆಂದು ತಲೆ ಎತ್ತಿದ್ದ ಅಂಗಡಿ ಮುಗ್ಗಟ್ಟುಗಳು ತಮ್ಮ ಟೆಂಟನ್ನು ಕಿತ್ತು ಗಂಟು ಮೂಟೆ ಕಟ್ಟುವುದು, ಅಲ್ಲಲ್ಲಿ ನಿಲ್ಲಿಸಿದ ಎತ್ತಿನ ಬಂಡಿ ಜಾನುವಾರುಗಳು ಪುನಃ ಮನೆ ಕಡೆಗೆ ದಾರಿ ಹಿಡಿವುದು, ಇಷ್ಟೊಂದು ಹೊತ್ತು ಗಿಜುಗಿಟ್ಟುತ್ತಿದ್ದ ಬೀದಿ-ವಠಾರಗಳು ನಿಧಾನವಾಗಿ ಖಾಲಿ ಆಗುವುದು.  ಊರಿನ ತೇರು ಆಗಲೇ ಗುಡಿ ಸೇರಿ ಜನರು ದೇವಸ್ಥಾನದಿಂದ ಪುನಃ ಮನೆಗೆ ಮರಳುವುದು.  ಜನಜಂಗುಳಿಯಿಂದ ಮೇಲೆದ್ದಿದ್ದ ಧೂಳು ನಿಧಾನವಾಗಿ ತಿಳಿಯಾಗುವುದು...ಹೀಗೆ ಒಂದು ಸಂಭ್ರಮದ ಕ್ಷಣ ಸಹಜವಾಗಿ ಮುಂದಿನ ಗತಿಯಲ್ಲಿ ಲೀನವಾಗುವುದರ ಚಿತ್ರಣದ ಮೂಲಕ ಈ ಸಾಲುಗಳು ಅನೇಕ ನೆನಪುಗಳನ್ನು ಹಲವು ರೂಪಕಗಳ ಮುಖೇನ ಕಣ್ಣಿಗೆ ಕಟ್ಟಿಕೊಡುತ್ತದೆ.

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ|

ಅಂತೂ ಕಷ್ಟದ ಮೊದಲ ದಿನ ಮುಗಿದು ಎರಡನೆಯ ದಿನ ಸ್ವಲ್ಪ ಚೇತರಿಕೆ ಶುರುವಾಗುತ್ತದೆ.  ಎರಡನೆಯ ಹಗಲು ಎಂದು ಶುರುವಾಗುವ ಸಾಲುಗಳು ಬಹಳ ನಿಧಾನವಾಗಿ ಸಾಗುವ ಉದ್ದದ ದಿನಗಳನ್ನು ತೋರಿಸುತ್ತವೆ.  ಸುತ್ತಲಿನ ಪರಿಸರ ನಿನ್ನೆಯಷ್ಟು ಹೊಸತೆನಿಸುವುದಿಲ್ಲ, ಆದ್ದರಿಂದ ಇಳಿ ಮುಖವಿರದೆ ಸ್ವಲ್ಪ ಕೊರಗು ಕಡಿಮೆಯಾದಂತೆನಿಸುತ್ತದೆ.  ಮನೆಯ ಒಳ ಹೊರಗೆ ಓಡಾಡಿದಂತೆಲ್ಲ ಹೊಸ ಮೂಗುತಿಯ ಮಿಂಚು ಅಲ್ಲಲ್ಲಿ ಕಾಣಸಿಗುತ್ತದೆ.  ಆದರೂ ಅವರಿವರ ಮಾತುಗಳಲ್ಲಿ ಅಷ್ಟೊಂದು ಸ್ಪಷ್ಟತೆ ಇಲ್ಲ, ಈ ಕಡೆ ಮಾತನಾಡಿದಂತೆಯೂ ಇರಬೇಕು, ಆಡದಂತೆಯೂ ಇರಬೇಕು.  ತೆಳುವಾದ ದುಃಖದ ಗುಂಗಿನಲ್ಲಿ ತೇಲುವ ಮನಸಿಗೆ ಆಡಿದ ಮಾತುಗಳು ಬರೀ ತುಟಿಯ ಚಲನೆಯಂತೆ ಕಂಡು ಬರಬಹುದು.  ಈ ಸಂದರ್ಭಗಳಲ್ಲಿ ಸಮಯ ಬಹಳ ನಿಧಾನವಾಗಿ ಚಲಿಸುತ್ತದೆ.  ಬೇಲಿಯಲ್ಲಿ ಹಾವು ಸರಿದಂತೆ ಎನ್ನುವ ರೂಪಕ ತವರು ಮತ್ತು ಗಂಡನ ಮನೆಯ ಎರಡು ಕಡೆಗಳಲ್ಲಿ ಹರಿದಾಡುವ ಮನಸ್ಸಿನ ಪ್ರತೀಕವಿರಬಹುದು.  ಜೊತೆಗೆ ಬೇಲಿಯಲ್ಲಿ ಹರಿದಾಡುವ ಹಾವು ಜೊತೆಗೆ ಅಲ್ಲಿ ಹರಡಿದ ಹೂವು-ಮುಳ್ಳುಗಳ ಜೊತೆಗೆ ಸಹ ಪರಿಸರದಲ್ಲಿ ಹೊಂದಿಕೊಂಡಿರುವುದನ್ನು ಕಣ್ಣಿಗೆ ಕಟ್ಟುತ್ತದೆ.

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂದಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ 
ಹುಣ್ಣಿಮೆಯ ಹಾಲು ಹರಿದಂತೆ|

ಇನ್ನು ಮೂರನೆ ದಿನ ನಿಜವಾಗಿಯೂ ಚೇತರಿಕೆಯ ದಿನ.  ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈಗೂಡಿಸಿ ಮನೆಯವರೊಂದಿಗೆ ಸೇರಿಕೊಳ್ಳುವ ಪರಿ.  ಅತ್ತೆ, ಮಾವ, ಗಂಡ, ನಾದಿನಿ, ಮೈದುನರನ್ನೆಲ್ಲ ಸಂಬಾಳಿಸಿಕೊಂಡು ಹೋಗುವ ಪರಿ.  ಹೆರಳಿನ ತುಂಬಾ ಹೂ ಮುಡಿದಂತೆ ಆ ಹೂವಿಗೂ ಜೀವ ಬಂದಂತೆ ಎನ್ನುವ ಸಾಲುಗಳು ತಾಜಾ ಹೂಗಳು ಗುಂಪಾಗಿ ದಂಡೆಯ ರೂಪದಲ್ಲಿ ಸಂಭ್ರಮಿಸುವುದನ್ನು ನೋಡಬಹುದು, ಕೇವಲ ಮೂರೇ ದಿನಗಳಲ್ಲಿ ಇದು ಬಿಡಿ ಹೂವಿನ ಚಿಂತೆಯಿಂದ ಬಹಳ ದೂರ ಬಂದ ಮನಸ್ಸಿನ ಪರಿವರ್ತನೆಯನ್ನು ತೋರಿಸುತ್ತದೆ.  ಮೂರನೆಯ ಸಂಜೆ ಎಂದು ಆರಂಭವಾಗುವ ಪದಗಳು ಎರಡನೆಯ ಭಾರವಾದ ಹಗಲಿನಿಂದ ಬಹಳಷ್ಟು ಮುಂದೆ ಬಂದ ಸೂಚನೆಯನ್ನು ಕೊಡುತ್ತದೆ.  ಜೊತೆಗೆ ರಾತ್ರಿ ಇಳಿದಂತೆ ಕತ್ತಲಾದರೂ ಇಡೀ ಬಾನನ್ನು ಆವರಿಸುವ ಹುಣ್ಣಿಮೆಯ ಹಾಲು   ಬೆಳದಿಂಗಳ ಕೊರಗುವ ಕತ್ತಲಿನಿಂದ ಮನಸ್ಸು ದೂರಸರಿದಿರುವುದನ್ನು ಪ್ರತಿಬಿಂಬಿಸುತ್ತದೆ.

ಈ ಹಾಡನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು/ಕೇಳಬಹುದು.

Sunday, April 26, 2020

ಜೀವದ ಬೆಲೆ ಜೀವದ ಸೆಲೆ


ಆರೇ ಆರು ವಾರಗಳಲ್ಲಿ ಗಂಗೆ-ಜಮುನೆ ಶುದ್ಧರಾದರು
ಜೀವಕೆ ಹೆದರಿದ ಕುಲ ಬಾಂಧವರು ಮುಗ್ಧರಾದರು
ಎಲ್ಲಾ ಜೀವಕು ಬೆಲೆ ಇದೆಯೆಂಬ ಪಾಠ ಕಲಿತರು
ತಾನೇ ಎಲ್ಲ ಎನ್ನುವ ಹಟವ ಮರೆತರು|

ಗೂಡಲಿ ಗುಹೆಯಲಿ ಅವಿತಿಹ ಮನುಜ
ಹೊರಬರಲಾರದೆ ಹೆದರಿಹ ನಿಜ
ಸಹ ಬಾಳುವೆ ಸಹ ಜೀವನ ಆಗಿದೆ ಸಜ
ತೂಗಿಸಿಕೊಳ್ಳುವ ಪ್ರಕೃತಿ ಎಂದಿಗೂ ರಾಜ|

ಕಣ್ಣಿಗೆ ಕಾಣದ ಜೀವದ ಬೆಲೆಯನು
ಕಣ್ಣಿಗೆ ಕಾಣದ ಜೀವಿಯು ಕಲಿಸಿತು
ನೋಟಕೆ ಮೀರಿದ ಪಾಠವು ನೂರಿದೆ
ಅದು ಆಟವಾಗದೆ ಅಳಲು ತೋಡಿದೆ|

ಜೀವದ ಬೆಲೆ ಜೀವದ ಸೆಲೆ ಸಂಭ್ರಮವೋ ಅಣ್ಣಾ
ತಿಂದು ತೇಗುವ ಮೊದಲು ತೆರೆಯಿರೋ ಕಣ್ಣಾ|

Saturday, April 25, 2020

ಎಲ್ಲಾ ಕಸಮಯವೋ!

ಕೊರೋನಾ ವೈರಸ್‌ಗೆ ಸಂಬಂಧಿಸಿದ ಬಿಕ್ಕಟ್ಟನ್ನು ನಾವೆಲ್ಲ ಎದುರಿಸುತ್ತಿರುವಾಗ ಒಂದು ವಿಷಯವನ್ನು ನಮ್ಮ ಅನುಕೂಲಕ್ಕೋಸ್ಕರ ಮರೆತುಬಿಡುತ್ತಿದ್ದೇವೆಂದರೆ ಅದು ನಮ್ಮ ಕಸ ಸಂಸ್ಕರಣೆಯ ವೈಫಲ್ಯ.  ನಮ್ಮ ತಂತ್ರಜ್ಞಾನಗಳು ಅದೆಷ್ಟೇ ಮುಂದುವರೆದರೂ, ಬಾಲ್ಟಿಮೋರ್‌ನಿಂದ ಬೆಂಗಳೂರಿನವರೆಗೆ ನಾವು ಕಸವನ್ನು ಪರಿಷ್ಕರಿಸುವ ರೀತಿಯನ್ನು ನೋಡಿದರೆ ತಿರಸ್ಕಾರ ಮೂಡುತ್ತದೆ.  ಇತ್ತೀಚೆಗೆ I-95ನಲ್ಲಿ ಡ್ರೈವ್ ಮಾಡುತ್ತಾ ಇನ್ನೇನು ಬಾಲ್ಟಿಮೋರ್ ನಗರವನ್ನು ಹೊಕ್ಕುತ್ತಿರುವಂತೆ (ಕಸವನ್ನು ಸುಟ್ಟು) ಗಗನಕ್ಕೆ  ಹೊಗೆಯನ್ನು ಉಗುಳುವ ಹೊಗೆ ಕೊಳವೆಗಳು ನಾವು ಇನ್ನೂ ಜೀವಂತವಿದ್ದೇವೆ ಎಂದು ನೆನಪಿಸಿದವು.  ಅದೇ ರೀತಿ ನೀವು ಭಾರತದ ಯಾವುದೇ ಮಹಾನಗರಕ್ಕೆ ಹೋದರೂ ಕಸದ ಪ್ರಮಾಣ ಮತ್ತು ಸಂಸ್ಕರಣಾ ವಿಧಾನ ಎರಡೂ ನಿಮ್ಮನ್ನು ಹೈರಾಣಾಗಿಸುತ್ತವೆ ಎಂದರೆ ತಪ್ಪೇನಿಲ್ಲ.



ದಿನೇ-ದಿನೇ ಬೃಹದಾಕಾರವಾಗಿ ಬೆಳೆಯುವ ಕಸದ ಪ್ರಮಾಣ ಒಂದು ದಿನ ಇಡೀ ಪ್ರಪಂಚದ ಪ್ರಗತಿಗೇ ಮಾರಕವಾಗಬಹುದೇ ಎಂಬ ಕೊರಗು ಇತ್ತೀಚೆಗೆ ಬಲವಾಗಿ ಕಾಡುತ್ತಿದೆ.

***
ನಮ್ಮ ಆಧುನಿಕ ಬದುಕಿನಲ್ಲಿ ನಾವೇ ಉತ್ಪಾದಿಸಿದ ಸಮಸ್ಯೆಗಳಲ್ಲಿ ಈ ಕಸವೂ ಒಂದು.  ಇದನ್ನ ಕಸ ಅನ್ನಿ, ಟ್ರ್ಯಾಶ್ ಅನ್ನಿ, ಅಥವಾ ರಬ್ಬಿಶ್ ಅನ್ನಿ, ತ್ಯಾಜ್ಯ ಅನ್ನಿ, ಕಲ್ಮಷ ಅನ್ನಿ - ಎಲ್ಲವೂ ಒಂದೇ.   ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದ್ದೇ ಇದೆ, ಆದರೆ ಭಾರತದಲ್ಲಿ ಇದು ಅತಿ ಹೆಚ್ಚು ಎನ್ನಬಹುದು.  ಈಗಿನ ಎಲ್ಲೆಲ್ಲೂ ಕಸವೇ ಕಸ ಎನ್ನುವ ಅಂತಿಮ ಹಂತವನ್ನು ತಲುಪುವಲ್ಲಿ ಸಹಾಯ ಹಸ್ತ ನೀಡಿದ ಪೆಡಂಭೂತಗಳಲ್ಲಿ ಮುಖ್ಯವಾದುವು: ಯದ್ವಾತದ್ವಾ ಬೆಳೆದ ಜನಸಂಖ್ಯೆ, ಎಂಥ ಸಮಸ್ಯೆಗಳನ್ನೂ ಉಲ್ಬಣಗೊಳಿಸಬಲ್ಲ ಜನಸಾಂದ್ರಂತೆ, ಇವೆಲ್ಲಕ್ಕೂ ಮೂಲಭೂತ ಕಾರಣವಾದ ಪ್ಲಾನಿಂಗ್ (ಅಥವಾ ಪ್ಲಾನಿಂಗ್ ಇರದೇ ಇರುವ ಸ್ಥಿತಿ), ಎಂಥ ಸಂದರ್ಭವನ್ನೂ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುವ ರಾಜಕೀಯ ಮುತ್ಸದ್ದಿತನ ಹಾಗೂ ಲಂಚ ಲಂಪಟತನ.

ಭಾರತದವೆಂದರೆ ಬೆಂಗಳೂರೊಂದೇ ಅಲ್ಲ, ಆದರೆ ನಮ್ಮ ಬೆಂಗಳೂರಿಗೆ ಈ ಗತಿ ಬಂದಿರುವಾಗ ಇನ್ನುಳಿದ ನಗರಗಳ ಪಾಲು ಹೇಗಿರಬೇಡ.  ಏಳು (೨೦೧೧) ವರ್ಷಗಳ ಹಿಂದೆ ೮೫ ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಇಂದು ೧೨೫ ಲಕ್ಷ (೨೦೧೭) ತಲುಪಿದೆ. ಇಲ್ಲಿ ನೂರಕ್ಕೆ ತೊಂಭತ್ತು ಜನ ಅಕ್ಷರಕುಕ್ಷಿಗಳಿದ್ದರೂ ಸಹ, ಇಡೀ ನಗರ ಅನಾಗರೀಕರ ಬೀಡಾಗಿದೆ.  ತಮ್ಮ ಮನೆಯ ಒಳಗನ್ನು ಬೆಳಗಿಕೊಳ್ಳುವ ಜನ, ಹೊರಗನ್ನು ಅದೆಷ್ಟು ಕೊಳಕಾಗಿಟ್ಟುಕೊಂಡಿದ್ದಾರೆಂದರೆ ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ, ಆದ್ದರಿಂದ ಎಲ್ಲರಿಗೂ ಅದು ’ಒಪ್ಪಿಕೊಂಡ’ ಅಥವಾ ’ಒಗ್ಗಿಕೊಂಡ" ವಿಷಯವಾಗಿದೆ.

ಒಂದು ನಗರ ನಿರ್ಮಲೀಕರಣಗೊಳ್ಳ ಬೇಕಾದರೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಚೆನ್ನಾಗಿರಬೇಕು.  ಅಲ್ಲಿ ಬಳಕೆಯಾಗುವ ನೀರನ್ನು ಪರಿಷ್ಕರಿಸಿ ತ್ಯಾಜ್ಯ ಪದಾರ್ಥಗಳನ್ನು ಬೇರ್ಪಡಿಸಿಬೇಕು.  ಇದೇ ರೀತಿ ಕಸವನ್ನು ಸಹ ಪರಿಷ್ಕರಿಸಿ, ರಿಸೈಕಲ್ ಮಾಡಬಹುದಾದವುಗಳನ್ನು ಬೇರ್ಪಡಿಸಿ ರಿಸೈಕಲ್ ಮಾಡಬೇಕು.  ಇವೆಲ್ಲಕ್ಕೂ ವ್ಯವಸ್ಥಿತವಾದ ಸಾಮಾಜಿಕ ಕಾಳಜಿ ಇರಬೇಕು.  ನಗರೀಕರಣ, ಅತಿ ಜನಸಾಂದ್ರತೆಯಿಂದ ನಮ್ಮ ಸಮಸ್ಯೆಗಳು ಹೆಚ್ಚಿ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ತಳ್ಳಿ ಹಾಕುವಂತಿಲ್ಲ.  ಉದಾಹರಣೆಗೆ, ೯೦ ಲಕ್ಷ ಜನಸಂಖ್ಯೆ ಇರುವ ನ್ಯೂ ಯಾರ್ಕ್ ನಗರ, ಇದಕ್ಕಿಂತಲೂ ನಾಲ್ಕು ಪಟ್ಟು ಜನಸಾಂದ್ರತೆ ಇರುವ ಟೋಕ್ಯೋದಲ್ಲಿ ಜನರು ಬದುಕುತ್ತಿಲ್ಲವೇ? ಅಲ್ಲಿಯೂ ಕಸದ ಸಮಸ್ಯೆ ಇದೆಯೇ ಎಂದು ಯೋಚಿಸಬೇಕಾಗುತ್ತದೆ.

ನಮ್ಮ ಕಸದ ಸಮಸ್ಯೆಗೆ ನಾವು ಏನು ಮಾಡಬೇಕು? ಈ ಹಿಂದೆ ವ್ಯವಸ್ಥಿತವಾದ ಪ್ಲಾನ್ ಇಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆದ ನಗರಗಳ ಕನಿಷ್ಠ ಇನ್‌ಫ್ರಾಸ್ಟ್ರಕ್ಚರ್ ಅನ್ನು ಬೆಳೆಸುವುದರ ಜೊತೆಗೆ, ಅಲ್ಲಿ ಎಲ್ಲೆಲ್ಲಿಂದಲೋ ವಲಸೆ ಬಂದು ಸೇರಿಕೊಂಡ ಜನರ ತಿಳುವಳಿಕೆಯನ್ನು ಹೆಚ್ಚಿಸಬೇಕು.  ಜೊತೆಗೆ ತಿರಸ್ಕೃತ ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಸರಿಯಾಗಿ "ವಿನಿಯೋಗಿಸುವ" ಉದ್ಯಮಗಳು ಹಾಗೂ ಅದಕ್ಕೆ ಸೂಕ್ತವಾದ ಟೆಕ್ನಾಲಜಿ ಮತ್ತು ಮಷೀನುಗಳ ಸಹಾಯದಿಂದ ಕಸದ ಪೆಡಂಭೂತವನ್ನು ನಿಯಂತ್ರಿಸಬಹುದು.   ನಾನು ನೋಡಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಈಗ      ಚಾಲ್ತಿಯಲ್ಲಿರುವ ವ್ಯವಸ್ಥೆ ಕಲೆಕ್ಟ್ ಎಂಡ್ ಡಂಪ್.  ಇದು ಹೀಗೇ ಮುಂದುವರೆದರೆ ಇಡೀ ನಗರವೇ ತಿಪ್ಪೇಗುಂಡಿಯಾಗುವುದು ಗ್ಯಾರಂಟಿ.

ಕಸವನ್ನು ಕಲೆಕ್ಟ್ ಮಾಡಿ, ಅದನ್ನು ಸರಿಯಾಗಿ ಬೇರ್ಪಡಿಸಿ, ರಿಸೈಕಲ್ ಮಾಡುವವನ್ನು ಸರಿಯಾದ ಜಾಗಕ್ಕೆ ತಲುಪಿಸಿ, ಕೊಳೆಯುವುದನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ ಮತ್ತೆ ಅವೇ ರಿಸೋರ್ಸುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಆಗುವಂತೆ ನೋಡಿಕೊಳ್ಳುವುದು ತ್ಯಾಜ್ಯವನ್ನು ಪರಿಷ್ಕರಿಸಲು ಇರುವ ಒಂದು ಸಾಲಿನ ಸೂತ್ರ.  ಮೊದಲೆಲ್ಲ ನಮ್ಮಲ್ಲಿ ಪ್ಲಾಸ್ಟಿಕ್ಕುಗಳು ಬಳಕೆಯಾಗುತ್ತಿರಲಿಲ್ಲ.  ಮನೆಗೊಂದು ತಿಪ್ಪೇಗುಂಡಿ ಇರುತ್ತಿತ್ತು, ಅಲ್ಲಿ ದಿನಬಳಕೆಯ ತ್ಯಾಜ್ಯ ಕೊಳೆತು ಗೊಬ್ಬರವಾಗುತ್ತಿತ್ತು. ಹಳೆಯ ಟೂತ್‌ಪೇಸ್ಟ್ ಟ್ಯೂಬುಗಳಿಂದ ಹಿಡಿದು, ಒಡೆದ ಪ್ಲಾಸ್ಟಿಕ್ ಕೊಡಪಾನಗಳ ತುಂಡುಗಳನ್ನು, ಖಾಲಿ ಬಾಟಲುಗಳನ್ನು, ರದ್ದಿ ಪೇಪರುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದಿಷ್ಟೇ ಅಲ್ಲ, ಹಳೆಯ ಪಾತ್ರೆಗಳನ್ನೂ, ರೇಷ್ಮೆ ಬಟ್ಟೆ ಮೊದಲಾದವುಗಳನ್ನೂ ಸಹ ನಮಗೆ ಗೊತ್ತಾದ ರೀತಿಯಲ್ಲಿ ’ರಿಸೈಕಲ್’ ಮಾಡುತ್ತಿದ್ದೆವು.
ಇಂದಿನ ಆಧುನಿಕ ಜನತೆಗೆ ತಮ್ಮ ತ್ಯಾಜ್ಯವನ್ನು ವಿನಿಯೋಗಿಸಲು ತಾವು ಹಣವನ್ನೇಕೆ ಖರ್ಚು ಮಾಡಬೇಕು ಎಂಬ ಸರಳ ಸತ್ಯ ತಿಳಿಯುತ್ತಿಲ್ಲ?  ನಿಮ್ಮ ಮನೆಯ ಮುಸುರೆಯನ್ನು ತೊಳೆಯುವವರಿಗೆ ದುಡ್ಡು ಕೊಡುವುದಿಲ್ಲವೇ? ಹಾಗೇ ತ್ಯಾಜ್ಯ ತೆಗೆದು ಪರಿಷ್ಕರಿಸಲು ಕೂಡ ಹಣ ತೆರಬೇಕಾಗುತ್ತದೆ.  ಅಲ್ಲದೇ ತ್ಯಾಜ್ಯವನ್ನು ಪರಿಷ್ಕರಿಸುವ ಉದ್ಯಮ/ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ಒಂದು ವ್ಯವಸ್ಥೆಯ ಮುಖ್ಯ ಅಂಗವನ್ನಾಗಿ ಪರಿಗಣಿಸಬೇಕಾಗುತ್ತದೆ.  ನನ್ನ ಅನಿಸಿಕೆಯ ಪ್ರಕಾರ, ನಾವು ಸೇವಿಸುವ ಆಹಾರಕ್ಕೆಷ್ಟು ಪ್ರಾಮುಖ್ಯತೆ ನೀಡುತ್ತೇವೆ ಅದರ ಕಾಲು ಪಟ್ಟಾದರೂ ತ್ಯಾಜ್ಯ ಸಂಸ್ಕರಣೆಗೆ ಮನ್ನಣೆ ನೀಡಬೇಕಾಗುತ್ತದೆ.  ಇಲ್ಲವೆಂದಾದಲ್ಲಿ ಇಂದು ನಾವು ಬೆಲೆ ತೆರದೆಯೇ ಕಸವನ್ನು ಎಲ್ಲಿ ಬೇಕಂದಲ್ಲಿ ಎಸೆದು ಮುಂದೆ ಅದು ಎಲ್ಲವನ್ನು ಮೀರಿ ಬೆಳೆತು ಅನೇಕ ಅನಾಹುತಗಳು, ಹಾನಿಗಳೂ ಸಂಭವಿಸುವಾಗ ತುಂಬಾ ನಿಧಾನವಾಗಿರುತ್ತದೆ.

***

ನಮ್ಮಲ್ಲಿ ತಂತ್ರಜ್ಞಾನ, ಅವಿಷ್ಕಾರ ಬೇರೆ ಎಲ್ಲ ದೇಶಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿದೆ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಂತೋಷವಾಗುತ್ತದೆ.  ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಆರನೇ ಸಾಲಿನಲ್ಲಿದೆ ಎಂದು ಓದಿದಾಗ ಖುಷಿಯಾಗುತ್ತದೆ.  ನಮ್ಮಲ್ಲಿ ಅನೇಕ ಉದ್ಯಮಗಳು ಬೆಳೆಯುತ್ತಿವೆ, ನಾವು ಅತಿ ಹೆಚ್ಚು ಇಂಜಿನಿಯರುಗಳನ್ನು ಹೊರತರುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಆದರೆ, ಈವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿರುವುದನ್ನು ನೋಡಿಯೂ ನೋಡದೇ ಇರುವಂತಿರುವುದು ಏಕೆ? ಎಂದು ಯೋಚಿಸಿದರೆ ಉತ್ತರ ದೊರೆಯುವುದಿಲ್ಲ.

ಅಮೇರಿಕದಲ್ಲಿ ವೇಷ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಂಥವುಗಳು ಪಬ್ಲಿಕ್ ಟ್ರೇಡಿಂಗ್ ಕಂಪನಿಗಳಾಗಿ ಬೆಳೆದು ತಮ್ಮ ಗ್ರಾಹಕರಿಗೆ, ಬಳಕೆದಾರರಿಗೆ ಸೇವೆಯನ್ನು ಸಲ್ಲಿಸುತ್ತಿಲ್ಲವೇ? ಹಾಗೆಯೇ ನಮ್ಮಲ್ಲೂ ಸಹ ಈ ಸಮಸ್ಯೆಗೆ ಇದುವರೆಗೆ ಯಾರೂ ಉತ್ತರವನ್ನೇ ಕಂಡು ಹಿಡಿಯದಂಥ ಅಸಹಾಯಕ ಪರಿಸ್ಥಿತಿ ಬಂದಿದೆಯೇ?

ಮುಂದೆ ಇದೇ ಬೆಂಗಳೂರಿನ ಜನಸಂಖ್ಯೆ ದ್ವಿಗುಣವಾದಾಗ, ಈ ಕಸದ ಮಹಾತ್ಮೆ ಏನಾಗಿರಬೇಡ? ಮನೆಯ ದಿನನಿತ್ಯದ ಕಸದ ಜೊತೆಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಉತ್ಪನ್ನಗಳೂ, ಲಿಥಿಯಂ ಬ್ಯಾಟರಿಗಳೂ ಸೇರಿಕೊಂಡು, ನೀರು-ಮಣ್ಣು ಎರಡೂ ಪಾದರಸ, ಆರ್ಸೆನಿಕ್, ಮೊದಲಾದ ವಿಷ ಪದಾರ್ಥಗಳಿಂದ ಕೂಡಿಕೊಂಡರೆ ಯಾರಿಗೆ ಹಾನಿ ಎಂದು ಎಲ್ಲರೂ ಯೋಚಿಸಬೇಕಾದ ವಿಚಾರ.  ಎಲ್ಲಾ ಕಡೆ ಕಸಮಯವಾಗಿದೆ.  ಇನ್ನೂ ನಾವು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗದಿದ್ದರೆ, ನಿಸರ್ಗ ಎಂದಿನಂತೆ ತನ್ನನ್ನು ತಾನು ನೋಡಿಕೊಳ್ಳುತ್ತದೆ, ಅದಕ್ಕೆಲ್ಲ ಬೆಲೆ ತೆರಬೇಕಾದವರು ನಾವೇ!

Friday, April 24, 2020

ಗಂಡಾಂತರ

ಕನ್ನಡಿಗರು ಬಹಳ ಬುದ್ಧಿವಂತರು! ಹೀಗೆಂದು ಅನ್ನಿಸಿದ್ದು, ಮೊನ್ನೆ ನಾನು ರಿಸ್ಕ್ ಎನ್ನುವ ಪದಕ್ಕೆ ಕನ್ನಡದಲ್ಲಿ ಸಮನಾರ್ಥಕ ಪದವನ್ನು ಹುಡುಕುತ್ತಿದ್ದಾಗ.  ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಎಂತೆಂತ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ, ಆದರೆ ನಾವು ಇಲ್ಲಿನ ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ದಿನೇದಿನೇ ಅನೇಕ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದೂ ಅಲ್ಲದೇ ಅವುಗಳನ್ನು ಮಿಟಿಗೇಟ್ ಹಾಗೂ ಮ್ಯಾನೇಜ್ ಮಾಡಬೇಕಾಗಿ ಬರುತ್ತದೆ.  ರಿಸ್ಕ್ ಮ್ಯಾನೇಜ್‌ಮೆಂಟ್ ಎನ್ನುವುದು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಿನ್ನ ದೊಡ್ಡದೊಂದು ಭಾಗ.  ನಾವು ಬರೆಯುವ ಡಾಕ್ಯುಮೆಂಟ್‌ಗಳಲ್ಲಿ ರಿಸ್ಕ್ ಎನ್ನುವ ಪದ ಬಂದಾಗಲೆಲ್ಲ ನಾವು ಅದನ್ನು ತೊಂದರೆಅಥವಾ ಅವಗಢ ಎಂದುಕೊಳ್ಳದೇ ನಮ್ಮ ಕಾರ್ಯದಲ್ಲಿ ಸಹಜವಾಗಿ ಬರುವ ಸಂಕಷ್ಟಗಳು ಎಂದುಕೊಂಡು ಅದನ್ನು ಎದುರಿಸುತ್ತೇವೆ ಹಾಗೂ ಉಪಶಮನ (mitigate) ಗೊಳಿಸುತ್ತೇವೆ.



"ರಿಸ್ಕ್" ಎನ್ನುವ ಪದಗಳಿಗೆ ಇಂಗ್ಲೀಷಿನಲ್ಲಿ a situation involving exposure to danger, ಎನ್ನುವ ನಾಮ ಪದವಾಗಿ ಅಥವಾ exposing oneself to danger or harm ಎನ್ನುವ ಕ್ರಿಯಾಪದವಾಗಿಯೂ ಬಳಸುವುದನ್ನು ನೋಡುತ್ತೇವೆ.  ಮಾಮೂಲಿ ವ್ಯಾಖ್ಯೆಯಲ್ಲಿ ರಿಸ್ಕ್ ಎನ್ನುವ ಪದ ಕೆಟ್ಟದ್ದನ್ನು ಸೂಚಿಸುತ್ತದೆಯಾದರೂ, ನಾವು ನಮ್ಮ ದಿನನಿತ್ಯದ ಪ್ರಾಜೆಕ್ಟಿನಲ್ಲಿ ಬರುವ ಆಡಚಣೆಗಳನ್ನು ಹಾಗೂ ವ್ಯವಹಾರದಲ್ಲಿ ಆಗಬಹುದಾದ ಲಾಭ ಮತ್ತು ನಷ್ಟವನ್ನೂ ಸಹ ರಿಸ್ಕ್ ಅಥವಾ ರಿಸ್ಕ್ ತೆಗೆದುಕೊಂಡಿದ್ದರ ಫಲಿತಾಂಶ ಎಂದೇ ಕರೆಯುತ್ತೇವೆ.  ಇನ್ನು ರಿಸ್ಕ್ ಸೀಕಿಂಗ್ (risk seeking) ಹಾಗೂ ರಿಸ್ಕ್ ಅವರ್ಸ್ (risk averse) ಜನರೂ ಸಹ ನಮ್ಮ ಮಧ್ಯೆ ಕಾಣಸಿಗುತ್ತಾರೆ.  ರಿಸ್ಕ್ ಸೀಕಿಂಗ್ ಎಂದರೆ ತಮ್ಮನ್ನು ತಾವು ಪದೇಪದೇ ಗಂಡಾಂತರಕ್ಕೆ ಒಡ್ಡಿಕೊಳ್ಳುವವರು ಎಂದು ಭಾಷಾಂತರ ಮಾಡಲಾಗದು.

ಕನ್ನಡ ನಿಘಂಟಿನಲ್ಲಿ ರಿಸ್ಕ್ ಎನ್ನುವ ಪದಕ್ಕೆ ಅಪಾಯ, ಗಂಡಾಂತರ, ಕೇಡು, ನಷ್ಟ, ಹಾನಿ, ತೊಂದರೆ, ಮುಂದೆ ಸಂಭವಿಸಬಹುದಾದ ತೊಂದರೆ, ಕಷ್ಟ, ಕುತ್ತು ಎನ್ನುವ ಪದಗಳು ಸಿಗುತ್ತವೆ.  ಆದರೆ, ನಮ್ಮ ಇಂಗ್ಲೀಷಿನ ಪರಿಭಾಷೆಯಲ್ಲಿ ಹೇಳುವಂತೆ take risk ಎಂದು ನಾವು ಯಾರಿಗೂ ಕನ್ನಡದಲ್ಲಿ ಹೇಳೋದಿಲ್ಲ.  "ಮುಂದೆ ಗಂಡಾಂತರ ಬಂದೀತು, ಎಚ್ಚರ!" ಎಂದು ಹೇಳಿದರೂ "ಸುಮ್ಮನೇ ಅಪಶಕುನ ನುಡಿಯಬೇಡ!" ಎಂದು ಯಾರಾದರೂ ಗದರಿಸಿಬಿಟ್ಟಾರು!  ರಿಸ್ಕ್ ತೆಗೆದುಕೊಳ್ಳುವುದನ್ನು ನಾವು ಕನ್ನಡಿಗರು ತುಂಬಾ ನೆಗೆಟಿವ್ ಆಗಿ ನೋಡುವುದರಿಂದಲೇ ಏನೋ, ನಾವು ಎಂದೂ ಎಲ್ಲೂ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗುವುದೇ ಇಲ್ಲ, ಅದೇ ನೋಡಿ ನಮ್ಮ ಜಾಯಮಾನ...ಅದಕ್ಕೇ ನಾವು ಕನ್ನಡಿಗರು ಬಹಳ ಬುದ್ಧಿವಂತರು ಎಂದು ಆರಂಭದಲ್ಲಿ ಬರೆದಿದ್ದು.
ನಮ್ಮ ಕನ್ನಡಿಗರಿಗೆ ಒಂದು ಕೆಲಸವನ್ನು ಬಿಟ್ಟು ಮತ್ತೊಂದು ಹುಡುಕುವುದಕ್ಕಾಗಲೀ, ಒಂದು ಮನೆಯನ್ನು ಬದಲಾಯಿಸಿ ಮತ್ತೊಂದಕ್ಕೆ ಹೋಗುವುದಕ್ಕಾಗಲೀ, ಈಗಿನ ಸ್ಥಿತಿಯಿಂದ ಮತ್ತೊಂದು ಸ್ಥಿತಿಯ ಬಗ್ಗೆ ಆಲೋಚಿಸುವುದರಲ್ಲಾಗಲೀ ಎಲ್ಲೂ ಮನಸ್ಸೇ ನಿಲ್ಲೋದಿಲ್ಲ.  "ದಿನ ದಿನ ಗಂಡಾಂತರವನ್ನು ತೆಗೆದುಕೊಳ್ಳುವವರಿಗೆ ನೂರು ವರ್ಷ ಆಯಸ್ಸು" ಇದೆಯೆಂದು ಸಾರುವ ತೆಲುಗಿನ ನಾಣ್ಣುಡಿಯನ್ನು ನಮ್ಮ ಆಫೀಸಿನಲ್ಲಿ ಕೆಲಸ ಮಾಡುವ ತೆಲುಗು ಪರಂಪರೆಯವರು ಹಾಗೆಂದು ಉದ್ಧರಿಸುವುದಷ್ಟೇ ಅಲ, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ ಕೂಡ.  ಆದರೆ, ಅದೇ ನಮ್ಮ ಕನ್ನಡಿಗರ ವಿಷಯಕ್ಕೆ ಬಂದರೆ ಬದಲಾವಣೆಗಳ ರಿಸ್ಕ್ ನಮಗೆ ಬಹಳ ದೊಡ್ಡದಾಗಿ ಕಾಣುತ್ತದೆ.  ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ ಏನನ್ನಾದರೂ ಏಕೆ ಬದಲಿಸಬೇಕು, ನೀವೇ ಹೇಳಿ!?

ನಾವು ಕನ್ನಡಿಗರು ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಮೊದಲಿಗರಲ್ಲ.  ಎಲ್ಲಿ ನಾವು ಮೊದಲಿಗರಾಗಲು ಹಿಂಜರಿಯುತ್ತೇವೆಯೋ ಅಲ್ಲಿ ನಾವು ಲೀಡರುಗಳಾಗೋದಿಲ್ಲ.  ಎಲ್ಲಿ ನಮ್ಮ ಹಿರಿತನವಿರುವುದಿಲ್ಲವೋ ಅಲ್ಲಿನ ಕಾರ್ಯವೈಖರಿಗಳು ನಮ್ಮ ಆಲೋಚನೆಯಂತೆ ನಡೆಯುವುದಿಲ್ಲ.  ಎಲ್ಲಿ ನಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲವೋ ಅಲ್ಲಿ ನಾವು ಯಾವಾಗಲೂ ಹೊರಗಿನವರಾಗಿರುತ್ತೇವೆ, ಅಲ್ಲದೇ ಅಲ್ಲಿ ಬೇರೊಬ್ಬರ, ಬೇರೆಯವರ ಆಲೋಚನೆಗಳಿಗೆ ಆಸ್ಪದ ಸಿಗುತ್ತದೆ.  ಇವುಗಳೆಲ್ಲದರಿಂದಾಗಿ ನಮ್ಮತನ ದೂರವಾಗಿ ನಮ್ಮನ್ನು ಮತ್ಯಾನ್ಯಾರೋ ದುಡಿಸಿಕೊಳ್ಳಲು ತೊಡಗುತ್ತಾರೆ, ಹೀಗೆ ದುಡಿದುಕೊಂಡು ಬೆಳೆಯುವ ಜೀವಕ್ಕೆ ಕರ್ಮಠತನ ಲಭಿಸುತ್ತದೆ.  ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿ ವ್ಯಸ್ತವಾಗಿರುವ ಕರ್ಮಠತನದ ಮನಸ್ಸಿಗೆ ಬದಲಾವಣೆ ಬೇಕೆಂದು ಅನ್ನಿಸದೇ ಅದು ಯಥಾಸ್ಥಿತಿಗೆ (status quo) ಶರಣಾಗಿ ವಿಷವರ್ತುಲಕ್ಕೆ (vicious circle) ಸಿಕ್ಕು ವಿಲವಿಲ ಒದ್ದಾಡುವಂತಾಗುತ್ತದೆ.

ಇವುಗಳೆಲ್ಲದರಿಂದ ಮುಕ್ತಿ ಬೇಕೆಂದಾದಲ್ಲಿ, ರಿಸ್ಕ್ ತೆಗೆದುಕೊಳ್ಳಲೇ ಬೇಕಾಗುತ್ತದೆ.  ರಿಸ್ಕ್ ಅನ್ನುವ ಪದವನ್ನು ನಾವು ಕನ್ನಡಿಗರು ಅಪಾಯ ಅಥವಾ ಗಂಡಾಂತರ ಎನ್ನುವ ಅರ್ಥದಲ್ಲಿ ಬಳಸುವ ಬದಲು, ರಿಸ್ಕ್ ಅನ್ನು ಬದಲಾವಣೆಯ ಕೈಪಿಡಿಯನ್ನಾಗಿ ಸ್ವೀಕರಿಸಿ ಅದಕ್ಕೊಂದು ಸಾಹಸೀ ಪರಿಭಾಷೆಯನ್ನು ಕೊಡಬೇಕಾಗುವುದು, ಇಂದಿನ ದಿನಗಳ ಮಹಾ ಅಗತ್ಯಗಳಲ್ಲೊಂದು.
ಎದ್ದೇಳಿ, ಇನ್ನಾದರೂ ಸ್ವಲ್ಪ ರಿಸ್ಕ್ ತಗೊಳ್ಳಿ, ತೊಂದರೆ ಏನೋ ಆಗೋದಿಲ್ಲ, ಕನ್ನಡಿಗರು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದರೇನೇ, ತೊಂದರೆ!

***

Risk ಅನ್ನುವುದಕ್ಕೆ ಮತ್ತಿನ್ನೇನು ಪದಗಳನ್ನು ಕನ್ನಡದಲ್ಲಿ ಬಳಸಬಹುದು?

Thursday, April 23, 2020

ಬಂಡವಾಳಶಾಹಿ ವಚನಗಳು!

ನಾವು ಕರ್ನಾಟಕದ ಹಳ್ಳಿಯ ಶಾಲೆಗಳಿಂದ ಬಂದವರು.  ನಾವೆಲ್ಲ ವಚನಕಾರರ ಹೆಸರುಗಳು ಗೊತ್ತಿಲ್ಲದೇ ಅದೆಷ್ಟೋ ವಚನಗಳನ್ನು ಜಾನಪದ ಗೀತೆಗಳಂತೆ ಕಲಿಯುತ್ತಿದ್ದೆವು, ಅವುಗಳನ್ನು ಪ್ರಾರ್ಥನೆಯಾಗಿ ಹಾಡುತ್ತಿದ್ದೆವು...ಕರ್ನಾಟಕದ ಇತಿಹಾಸದಲ್ಲಿ ಹನ್ನೊಂದು-ಹನ್ನೆರಡನೇ ಶತಮಾನದಲ್ಲಿ ಜನಿಸಿದ ವಚನಕಾರರು, ಅವರ ಸಾಹಿತ್ಯ, ಅವರ ಜೀವನ ಶೈಲಿ, ಅವರ ಪರಂಪರೆ ಇವೆಲ್ಲವೂ ನಮ್ಮನ್ನು ಭಾರತದ ಸಾಮಾಜಿಕ ಪ್ರಗತಿಯ ಪಥದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುತ್ತವೆ.  ಈ ಹಿನ್ನೆಲೆಯಲ್ಲಿ ಬೆಳೆದು ಬಂದ ನಾವು ನಮ್ಮ "ವಚನ" ಶೈಲಿಯನ್ನು ಇಂದಿನ ಕ್ಯಾಪಿಟಲಿಸ್ಟಿಕ್ (ಬಂಡವಾಳಶಾಹಿ) ವ್ಯವಸ್ಥೆಯಲ್ಲಿ ಹೇಗೆ ಬದಲಾಯಿಸಿಕೊಳ್ಳುತ್ತೇವೆ ಎಂಬುದನ್ನು ಕುರಿತು ಒಂದು ವಿಡಂಬನಾತ್ಮಕ ಬರಹ - ವಚನಕಾರರ ಕ್ಷಮೆಯನ್ನು ಕೋರಿ!

***

Twice a year, during performance review time...
ಕಳಬೇಕು
ಕೊಲಬೇಕು
ಹುಸಿಯ ನುಡಿಯಲು ಬೇಕು
ಮುನಿಯಬೇಕು
ತನ್ನ ಬಣ್ಣಿಸ ಬೇಕು
ಇದಿರ ಹಳಿಯಲು ಬೇಕು
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ (ಬಾಸ್ ಎಂಬ) ಕ್ಯಾಪಿಟಲಿಸ್ಟಿಕ್
ದೇವನ ಒಲಿಸುವ ಪರಿ.

End of year, around Ratings & Rankings
ಸ್ಕಿಲ್ ಇದ್ದವರು ಕೋಡ್ ಅನ್ನು ಬರೆಯುವರು
ನಾನೇನು ಮಾಡಲಯ್ಯ ಬಡವನಯ್ಯಾ
ನಾನು ಆಫೀಸಿಗೆ ಬರುವುದೇ ಹೆಚ್ಚು,
ಬಂದು ಕಾಲ ಕಳೆಯುವುದೇ ದೊಡ್ಡದು,
ನನ್ನ ಇರುವಿಕೆಯೇ ಹೊನ್ನ ಕಳಸವಯ್ಯಾ,
ಎಲಾ ಬಾಸ್ ಕೇಳಾ,
ನಿಂತೋರಿಗೆ ಸುಖವಿಲ್ಲ, ಹಾರಾಡಿದವರಿಗೆ ಹಸಿವಿಲ್ಲ.

When promotions are few and far between
ಕೆಲ್ಸವಿದ್ದು ಫಲವೇನು? ಗ್ರೋತ್ ಇಲ್ಲದನ್ನಕ?
ಗ್ರೋತ್ ಇದ್ದು ಫಲವೇನು? ದುಡ್ಡಿಲ್ಲದನ್ನಕ?
ದುಡ್ಡಿದ್ದು ಫಲವೇನು? ಟೈಟಲ್ ಇಲ್ಲದನ್ನಕ?

When all else fail...
ಮೋಕ್ಷಕ್ಕೆ ಹೋರಾಡುವಣ್ಣಗಳಿರಾ, ಒಂದು ಹೆಜ್ಜೆ ಮುಂದೆ ಹೋದರೆ
ಮೋಕ್ಷಕ್ಕೆ ನೀವೇ ನಿಚ್ಚಣಿಗೆ
ಮೋಕ್ಷಕ್ಕೋಸ್ಕರ ಹೋರಾಡಿ ಮುಂದೆ ಹೋಗದಿರ್ದೆಡೆ
ಆ ಹರನಿಲ್ಲನೆಂದನಂಬಿಗ ಚೌಡಯ್ಯ.

During training time
ಮೂರ್ಖಂಗೆ ಯಾರು ಬುದ್ದಿ ಹೇಳಿದರೂ
ಗೋರ್ಕಲ್ಲ ಮೇಲೆ ನೂರ್ಕಾಲ ಮಳೆಕರೆದಂತೆ ಸರ್ವಜ್ಞ.


When deliverables are not delivered on time...
ರಿಸೋರ್ಸುಗಳನು ಕೊಂಬಾಗ ಹಾಲೋಗರ ಉಂಡಂತೆ
ಕ್ಲೈಂಟುಗಳು ಬಂದು ಎಳೆವಾಗ, ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.

When deliverables fail to function as per requirements...
ಹೊಸ ಹೊಸ ಟೆಕ್ನಾಲಜಿಯನು ಬಳಸಿಕೊಂಡು
ವೆಬ್ ಸೈಟು ವರ್ಕ್ ಆಗದಿರೆ ಎಂತಯ್ಯ?
ಹೊಸ ಹೊಸ ಕೆಲಸದವರನ್ನು ಸೇರ್ಸಿಕೊಂಡು
ಕೆಲಸ ಪೂರ್ತಿ ಮಾಡದೇ ಇದ್ದರೆ ಎಂತಯ್ಯ?
ಓಪನ್ ವರ್ಕ್ ಸ್ಪೇಸ್ ಎಂದು ಕೊಂಡು
ಗದ್ದಲಕೆ ನಾಚಿದೊಡೆ ಎಂತಯ್ಯ?
ಟೆಕ್ನಾಲಜಿ ಕೆಲಸಗಾರನಾದ ಮೇಲೆ
ಸ್ತುತಿ-ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು.

Wednesday, April 22, 2020

ನನ್ನ ದೇಶ ನನ್ನ ಜನ

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
ತೀರಿಸುವೆನೆ ಅದರ ಋಣ
ಈ ಒಂದೇ ಜನ್ಮದಿ|
ನೂರು ಭಾವ ಭಾಷೆ ನೆಲೆ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು|

ನಮ್ಮ ದೇಶದಲ್ಲಿ ಒಂದು ಕೋಮಿನವರು ವೈರಸ್ ಸೋಂಕನ್ನು ಉದ್ದೇಶ ಪೂರ್ವಕವಾಗಿ ಹರಡುತ್ತಿದ್ದಾರೆ... ಇಡೀ ಪ್ರಪಂಚವೇ ವೈರಸ್‌ ದೆಸೆಯಿಂದ ನಲುಗುತ್ತಿದ್ದರೆ ಅದನ್ನು ಕೆಲವರು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ... ನಮ್ಮ ಯುವಕ-ಯುವತಿಯರು ಪಾಕಿಸ್ತಾನಕ್ಕೆ ಜೈಕಾರ ಹಾಕುವುದನ್ನು ತಮ್ಮ ಹಕ್ಕು ಎಂದುಕೊಂಡಿದ್ದಾರೆ... ಎಂದೆಲ್ಲ ಮಾಧ್ಯಮಗಳಲ್ಲಿ ಓದಿದಾಗ ಚೆನ್ನವೀರ ಕಣವಿಯವರ ಈ ಹಾಡು ನೆನಪಿಗೆ ಬಂತು.  ಇನ್ನೂ ಕೇವಲ ಎಪ್ಪತ್ತಮೂರು ವರ್ಷಗಳನ್ನು ಕಳೆದ ನಮ್ಮ "ಸ್ವಾತಂತ್ರ್ಯ" ನಮ್ಮನ್ನು ಈ ಸ್ಥಿತಿಗೆ ತಂದಿದೆ.  ಇನ್ನೊಂದಿನ್ನೂರು ವರ್ಷಗಳಲ್ಲಿ ನಮ್ಮ ಯುವ ಜನರ "ದೇಶಭಕ್ತಿ" ಇದೇ ರೀತಿಯಲ್ಲಿ ಮುಂದುವರೆದು, ನಮ್ಮೆಲ್ಲರ ದೇಶ ಪ್ರೇಮ, ವಿಶ್ವಾಸ, ಒಗ್ಗಟ್ಟು, ಭಾವೈಕ್ಯತೆ, ಘನತೆ ಇವೆಲ್ಲವೂ ಏನಾಗಬಹುದು ಎಂದು ಯೋಚಿಸಿದಾಗ ನಿಜವಾಗಿಯೂ ಬೆನ್ನ ಹುರಿಯಲ್ಲಿ ಕಂಪನವಾಯಿತು.  ಇಂದಿನ ಯುವಕರೇ ಮುಂದಿನ ಪ್ರಜೆಗಳು, ನಾಳಿನ ಭಾರತದ ಭವಿತವ್ಯರು - ಎಂದೆಲ್ಲ ಯೋಚಿಸಿಕೊಂಡಾಗ ಹೆದರಿಕೆಯ ಜೊತೆಗೆ, ಖೇದವೂ ಒಡಮೂಡಿತು.

***
1947ರ ಸ್ವಾತ್ರಂತ್ರ್ಯ ನಿಜವಾಗಿಯೂ ನಮ್ಮನ್ನು ಒಂದುಗೂಡಿಸಿತೇ? ಬ್ರಿಟೀಷ್ ಮತ್ತು ಇತರ ವಸಾಹತುಶಾಹಿಗಳ ಅಧಿಕಾರ ಅವಧಿ ಇರದೇ ಇರುತ್ತಿದ್ದರೆ ಇಂದಿನ ನಮ್ಮ ಅಖಂಡ ಭಾರತ ಹೇಗಿರುತ್ತಿತ್ತು? ಬ್ರಿಟೀಷರ ಭಾಷೆ ನಮ್ಮನ್ನು ಒಂದುಗೂಡಿಸಿತೇ? ಅವರ ಆಚಾರ-ವಿಚಾರ ಹಾಗೂ ನಡೆವಳಿಕೆಗಳು ನಮ್ಮನ್ನು ಮುಂದುವರೆದವರನ್ನಾಗಿ ಮಾಡಿದವೇ? ಎಪ್ಪತ್ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಸಂಗ್ರಾ?ಮದ ಸಮಯದಲ್ಲಿ ಮಾಹಿತಿ ಇರದಿದ್ದರೂ ಕೋಟ್ಯಾಂತರ ಮಂದಿ ಬ್ರಿಟೀಷರ ವಿರುದ್ಧ ಹೋರಾಡಿ ತಂದು ಕೊಟ್ಟ ಈ ಸ್ವಾಂತಂತ್ರ್ಯಕ್ಕೆ ಇಂದು ಅಂಗೈಯಲ್ಲಿ ಮಾಹಿತಿ ಸಿಗುವ ಅನುಕೂಲದ ಸಮಯದಲ್ಲಿ ಯುವ ಜನತೆಯಿಂದ ಅದಕ್ಕೇಕೆ ಕಡಿವಾಣ ಬೀಳುತ್ತಿದೆ? ದೇಶದ ಸಹನೆಯನ್ನೇಕೆ ಕೆಲವರು ಪರೀಕ್ಷಿಸುವಂತಾಗಿದೆ?  ನಿಜವಾಗಿಯೂ ನಮ್ಮ ದೇಶದಲ್ಲಿ ಸ್ವಾತಂತ್ರ್ಯವಿದೆಯೇ? ಹಾಗಿದ್ದರೆ ಅದರ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೇ?

***

ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ, ಇಸ್ಲಾಂ ಮೂಲದ ಜೊತೆಗೆ ಮಧ್ಯ ಪ್ರಾಚ್ಯ ನೆರೆಹೊರೆಯ ಸಂಪ್ರದಾಯವನ್ನು ಮೈವೆತ್ತ ನೆರೆಯ ಪಾಕಿಸ್ತಾನ 1947ರಿಂದಲೂ ಬಡರಾಷ್ಟ್ರವಾಗೇ ಮುಂದುವರೆದಿದೆ.  ಒಂದು ಕಾಲದಲ್ಲಿ ತನ್ನಲ್ಲಿ ಬೆಳೆಯುವ ಹತ್ತಿಯನ್ನು ಸಂಸ್ಕರಿಸುವ ಕೈಗಾರಿಕೆಯೂ ಇಲ್ಲದೆ ಒಂದು ಸಣ್ಣ ಸೂಜಿಯಿಂದ ಹಿಡಿದು ಕಾರಿನವರೆಗೂ ಹೊರ ರಾಷ್ಟ್ರಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡು ತನ್ನ ಆಂತರಿಕ ಸಂಘರ್ಷಗಳನ್ನು ಒಂದು ಕಡೆ ಹತ್ತಿಕ್ಕಲೂ ಆಗದೆ ಬಚ್ಚಿಡಲೂ ಆಗದೆ ಬಳಲುತ್ತಿರುವ ರಾಷ್ಟ್ರ ಪಾಕಿಸ್ತಾನ.  ಅನೇಕ ಮುತ್ಸದ್ದಿಗಳು ಹುಟ್ಟಿಬಂದ ನೆಲದಲ್ಲೇ ಇಸ್ಲಾಂ ಪ್ರವಾದಿಗಳು ಜನರ ಮನದಲ್ಲಿ ಸೇಡು, ಕಿಚ್ಚಿನ ಕ್ರಾಂತಿಯನ್ನು ಬಿತ್ತುತ್ತಾ ಬಂದರು.  ಭಾರತವನ್ನು ದ್ವೇಷಿಸುವುದೇ ಪ್ರಣಾಳಿಕೆಯೆಂಬಂತೆ ನಾಯಿಕೊಡೆಗಳಂತೆ ಅಲ್ಲಲ್ಲಿ ಪಕ್ಷಗಳು ಹುಟ್ಟಿದವು.  ಅವೇ ಮುಂದೆ ಭಯೋತ್ಪಾದಕ ಸಂಘಟನೆಗಳಾದವು.  ಅನೇಕ ಮಿಲಿಟರಿ ಕ್ಯೂ (ರಕ್ತಪಾತ) ಹಾಗೂ ಅನೇಕ ಭ್ರಷ್ಟಾಚಾರದ ಅಧೋಗತಿಯಲ್ಲಿ ದೇಶ ಹಾಳಾಗಿ ಹೋಯಿತು.  ಒಂದು ಕಾಲದಲ್ಲಿ ವಿದೇಶೀ ಸಹಾಯವಿಲ್ಲದಿದ್ದರೆ ಯಾವತ್ತೋ ಭೂಪಟದಲ್ಲಿ ನಾಪತ್ತೆಯಾಗಿ ಹೋಗುವಂತಿದ್ದ ಪಾಕಿಸ್ತಾನಕ್ಕೆ ಬಲವಾಗಿ ಸಿಕ್ಕಿದ್ದು ನ್ಯೂಕ್ಲಿಯರ್ ಶಕ್ತಿ.  ನವದೆಹಲಿಯಿಂದ ಕೇವಲ ಐನೂರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಅಸ್ಥಿರತೆಯನ್ನು ನಾವು ಬಹಳ ಸೂಕ್ಷವಾಗಿ ನೋಡಿಕೊಂಡು ಬರುವಂತ ಸ್ಥಿತಿ ಇಂದಿಗೂ ಇದೆ.  ಯಾವುದೋ ಧಾರ್ಮಿಕ ಮೂಲಭೂತವಾದಿಗೆ ಈ ಅಣ್ವಸ್ತ್ರವೇನಾದರೂ ದೊರೆತರೆ ಅದು ಪ್ರಪಂಚದ ವಿನಾಶಕ್ಕೆ ಕಾರಣವಾಗಬಹುದು!

ಇಂತಹ ಪಾಕಿಸ್ತಾನವನ್ನು ನಮ್ಮಲ್ಲಿನ ಕೆಲವು ಯುವಕ-ಯುವತಿಯರು ಬೆಂಬಲಿಸುತ್ತಾರೆ.  ಇಂತಹ ಪಾಕಿಸ್ತಾನಕ್ಕೆ ಜಯಕಾರ ಹಾಕುತ್ತಾರೆ ಎಂದು ಕೇಳುತ್ತಲೇ ಹೊಟ್ಟೆ ತೊಳಸಿದಂತಾಗುತ್ತದೆ.  ಈ ಯುವಕ-ಯುವತಿಯರಿಗೆ ನಿಜವಾದ ಪಾಕಿಸ್ತಾನದ ಅರಿವೇ ಇಲ್ಲ.  ಯಾವ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆಯೋ, ಯಾವ ದೇಶದಲ್ಲಿ ಮೈನಾರಿಟಿ ಜನರ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲವೋ, ಯಾವ ದೇಶದಲ್ಲಿ ಧರ್ಮದ ಹೊರೆಯನ್ನು ಬಲವಂತವಾಗಿ ಹೇರಲಾಗುತ್ತದೆಯೋ - ಅಂತಹ ದೇಶದ ಮೇಲೆ ನಮ್ಮ ದೇಶದಲ್ಲಿ ನಿಜವಾದ ಸ್ವಾತಂತ್ರ್ಯದ ಉಸಿರಿನ ಬೆಲೆ ಗೊತ್ತಿರದ ಯುವಕ-ಯುವತಿಯರ ಮಮಕಾರ ಹೆಚ್ಚಾಗಲು ಏನು ಕಾರಣ, ಅದರ ಮೂಲ ನೆಲೆಯೇನು ಎಂದು ಗಂಭೀರವಾಗಿ ಯೋಚನೆ ಮಾಡಬೇಕಾಗುತ್ತದೆ.

ಪಾಕಿಸ್ತಾನದ ಪರವಾಗಿ ಕೂಗಿದ ಜೆ.ಎನ್.ಯು. ವಿದ್ಯಾರ್ಥಿಗಳು ಎಲ್ಲರೂ ಮುಸಲ್ಮಾನರಲ್ಲ.  ಕಾಶ್ಮೀರದಿಂದ ಕೇರಳದವರೆಗೆ ಒಂದು ರೀತಿಯಲ್ಲಿ ಯುವಜನತೆಯ ಬ್ರೈನ್‌ವಾಶ್ ಮಾಡಲಾಗುತ್ತಿದೆ.   ಚೀನಾದಲ್ಲಿ ಹುಟ್ಟಿ ಅಲ್ಲಿ ಪ್ರಬಲವಾಗಿ ಬೆಳೆದ ಮಾವೋಯಿಸಂ ನಮ್ಮ ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತದೆ.  ಸರ್ಕಾರದ ವಿರುದ್ಧ, ಪ್ರಜಾಸತ್ತತೆಯ ವಿರುದ್ಧ ಧ್ವನಿ ಎತ್ತುವುದು ಎಂದರೆ ಪಕ್ಕದ ಪಾಕಿಸ್ತಾನವನ್ನು ಹೊಗಳುವುದು ಎಂದಾಗಿ ಹೋಗಿಬಿಟ್ಟಿದೆ. ನಮಗೆ  ಸ್ವಾತಂತ್ರ್ಯ ಸಿಕ್ಕ ಮೊದಲ ಐವತ್ತು ವರ್ಷಗಳಲ್ಲಿ ಈ ಸ್ಥಿತಿ ಇರಲಿಲ್ಲ... ನಾವೆಲ್ಲ ಕಂಡ ಎಂಭತ್ತರ, ತೊಂಭತ್ತರ ದಶಕದ ಭಾರತದಲ್ಲಿ, ನಮ್ಮ ಶಾಲಾದಿನಗಳಲ್ಲಿ ಒಂದು ದಿನವೂ ಯಾರೂ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಿಲ್ಲ... ನಾವೆಲ್ಲ  ಅನೇಕ ಜನವಿರೋಧಿ ನೀತಿಗಳ ವಿರುದ್ಧವೋ, ಕಾನೂನಿನ ಪರವಾಗಿಯೋ, ಅಥವಾ ರಾಜ್ಯ-ದೇಶ-ಭಾಷೆಗಳ ಪರವಾಗಿಯೋ ಸತ್ಯಾಗ್ರಹ, ಸಂಗ್ರಾಮಗಳನ್ನು ಮಾಡಿದ್ದೇವೆ.  ಆದರೆ, ಇಂದಿನ ಯುವಜನತೆಯ ದೇಶದ್ರೋಹದ ಹಾದಿಯನ್ನು ಎಂದೂ ಹಿಡಿದಿದ್ದಿಲ್ಲ.  ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರತಿದಿನವೂ ರಾಷ್ಟ್ರಗೀತೆಯನ್ನು ಹೇಳುತ್ತಿದ್ದೆವು, ಧ್ವಜವಂದನೆಯನ್ನು ಮಾಡುತ್ತಿದ್ದೆವು.  ನಮ್ಮೆಲ್ಲರಿಗಿಂತ ದೇಶ ಯಾವತ್ತೂ ದೊಡ್ಡದಾಗಿತ್ತು.  ಆದರೆ ಇಂದಿನ ಯುವಜನತೆಯ ಮನಃಸ್ಥಿತಿಯನ್ನು ನೋಡಿದಾಗ ಅದೇ ಭಾವನೆ ಖಂಡಿತ ಒಡಮೂಡುವುದಿಲ್ಲ.
ನನ್ನ ದೇಶ ಉನ್ನತವಾದುದು.  ಜನರಿಗೆ ನಿಜವಾಗಿಯೂ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬದುಕನ್ನು ಕಲ್ಪಿಸಿಕೊಟ್ಟಿದೆ.  ಹಾಡು ಹಗಲೇ ದರೋಡೆ, ಅತ್ಯಾಚಾರ, ಕೊಲೆ-ಸುಲಿಗೆ ಮಾಡಿದವರೂ ಸಂವಿಧಾನದ ವಿಧಿಯ ಪ್ರಕಾರ ಶಿಕ್ಷೆಗೆ ಗುರಿಪಡುತ್ತಾರೆ.  ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕುಗಳಿವೆ.  ಆದರೆ ಜನರು ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಅವೇ ಹಕ್ಕುಗಳ ಮಗ್ಗುಲಲ್ಲಿರುವ ಕರ್ತವ್ಯಗಳನ್ನು ಮರೆಯುತ್ತಾರೆ.  ತಮ್ಮ ಮೈಕ್ರೋ ಫ್ಯಾಮಿಲಿಗಳ ಸಂತೋಷಕ್ಕಾಗಿ ದೊಡ್ಡ ದೇಶದ ಘನತೆ ಗೌರವವನ್ನು ಮರೆಯುತ್ತಾರೆ.  ರಾಷ್ಟ್ರ ಯಾವತ್ತೂ ಸೆಕೆಂಡರಿಯಾಗುತ್ತದೆ, ತಮ್ಮ ಸ್ವಾರ್ಥ ದೊಡ್ಡದಾಗುತ್ತಾ ಹೋಗುತ್ತದೆ.

ಎಪ್ಪತ್ತು ವರ್ಷಗಳ ನಂತರ ನಮ್ಮ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೇ ಇರುವಾಗ, ಈ ಎದೆಕರಗದ ದೇಶಭಕ್ತಿಯ ಜನ ಯಾವ ರೀತಿಯಲ್ಲಿ ದೇಶವನ್ನು ಮುಂದೆ ತಂದಾರು? ಇನ್ನು ನೂರಿನ್ನೂರು ವರ್ಷಗಳಲ್ಲಿ ನಮ್ಮ ದೇಶ ನಮ್ಮ ದೇಶವಾಗೇ ಇರುವುದೋ ಅಥವಾ ಮೊದಲಿನ ಹಾಗೆ ಹಂಚಿಕೊಂಡು ತುಂಡು ತುಂಡಾಗುವುದೋ ಎಂದು ಸಂಕಟವಾಗುತ್ತದೆ.


 




















ಭಾರತ ದೇಶವನ್ನು ಹಳಿಯುವವರು ತಮ್ಮ ದೇಶದ ಬಗ್ಗೆ ಒಂದಿಷ್ಟು ಕನಿಷ್ಠ ಮಾಹಿತಿಯನ್ನಾದರೂ ತಿಳಿದುಕೊಂಡು ತಮ್ಮ ವಾದವನ್ನು ಮಂಡಿಸಿದ್ದರೆ ಚೆನ್ನಾಗಿತ್ತು.  ಒಂದು ದೇಶದ ನಿಜವಾದ ಸ್ವಾತಂತ್ರ್ಯದ ಅರಿವಾಗುವುದು ಆ ಸ್ವಾತ್ಯಂತ್ರ್ಯ ಇಲ್ಲವಾದಾಗಲೇ!
(ಮಾಹಿತಿ ಕೃಪೆ: ವಿಕಿಪೀಡಿಯ)

Tuesday, April 21, 2020

ನೀನಾ ಭಗವಂತ?!

ನೀನಾ ಭಗವಂತ
ಚಿತ್ರ: ತ್ರಿವೇಣಿ (1972)
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಎಚ್. ಜಿ. ಗಂಗರಾಜು (ಹಂಸಲೇಖ)
ಗಾಯಕ: ಜಿ. ಬಾಲಕೃಷ್ಣ 



ಕೊರೋನಾ ಸಂಕಷ್ಟದಲ್ಲಿರುವ ನಾವೆಲ್ಲರೂ ದೇವರನ್ನು "ನೀನಾ ಭಗವಂತ?" ಎಂದು ಕೇಳುವ ಹಾಗಿದೆ, ಈ ಹಾಡು. 48 ವರ್ಷಗಳ ಹಿಂದೆ ಬರೆದ ಹಂಸಲೇಖರ ಇದು ಮೊದಲನೆಯ ಹಾಡಗಿಯೂ ಇದ್ದಿರಬಹುದು.

***
ದೇವಸ್ಥಾನದ ಘಂಟೆಯ ಧ್ವನಿ, ಕೊಳಲಿನ ನಾದದ ಹಿನ್ನೆಲೆಯಲ್ಲಿ ಮಧುರ ಸಂಗೀತ ಮೂಡಿ ಬರುತ್ತಿದ್ದಂತೆ, ದೇವಸ್ಥಾನದ ಮುಂದೆ ಸರತಿ ಸಾಲಿನಲ್ಲಿ ಕುಳಿತ ಬಿಕ್ಷುಕರ ಸಾಲು ಕಾಣಸಿಗುತ್ತದೆ.  ಅವರಿಗೆಲ್ಲ ಯಾರೋ ಒಬ್ಬರು ಪುಣ್ಯಾತ್ಮರು ಪ್ರಸಾದವನ್ನೋ ಅಥವಾ ಕಾಸನ್ನೋ ಹಂಚುತ್ತಿರುವ ಸನ್ನಿವೇಶ.  ಮುಂದಿನ ಚಿತ್ರದಲ್ಲಿ ಊರುಗೋಲು ಹಿಡಿದು ಕುಂಟುತ್ತಿರುವವನಿಗೆ ಆಸರೆಯಾಗಿ ಒಬ್ಬರು ಸಹಾಯ ಮಾಡುವ ದೃಶ್ಯ.

"ಅಮ್ಮಾ ಸ್ವಾಮಿ, ತಾಯಿ, ಸ್ವಾಮಿ, ಭಗವಂತ ಧರ್ಮಾ ಮಾಡಿ, ಭಗವಂತ ಧರ್ಮಾ ಮಾಡಿ" ಎನ್ನುವ ಮೊರೆತ.

ಆತ "ಭಗವಂತಾ, ಭಗವಂತಾ" ಎಂದು ಅಟ್ಟಹಾಸದಿ ನಕ್ಕು, "ಜಗತ್ತಿನಲ್ಲಿ ನಡೀತಾ ಇರೋ ಅನ್ಯಾಯಗಳನ್ನೆಲ್ಲ ನೋಡ್ತಾ ಇರೋ ಕಲ್ಲು ಮೂರ್ತಿಗಳೆಲ್ಲ ಭಗವಂತಾನಾ?"

"ಏ ಭಗವಂತಾ, ನೀನಾ ಭಗವಂತಾ?" ಎನ್ನುವಲ್ಲಿ ಹಾಡು ಆರಂಭವಾಗುತ್ತದೆ.  ಮತ್ತೆ ಕೊಳಲು ಹಾಗೂ ಘಂಟಾ ನಿನಾದ, ಜಾತ್ರೆ-ತೇರಿಗೆ ಸೇರಿದ ಭಾರೀ ಜನಜಂಗುಳಿಯ ದೃಶ್ಯ.

ದೂರದಲ್ಲಿ ದೇವಸ್ಥಾನದ ಗೋಪುರ ಹಾಗೂ ಅದಕ್ಕೆ ಹೊಂದಿಕೊಂಡ ಕಲ್ಲಿನ ಕಟ್ಟೆಯ ಕೆಳಗೆ ಬಿದ್ದಿರುವ ಸಣ್ಣ ಕಲ್ಲಿನ ಮೇಲೆ ಒಂದು ಕಾಲನ್ನು ಇಟ್ಟುಕೊಂಡು ನಿಂತು, ಒಂದು ಕೈಯಲ್ಲಿ ಊರುಗೋಲನ್ನು ಹಿಡಿದು ಆಧಾರ ಮಾಡಿಕೊಂಡು, ಮತ್ತೊಂದು ಕೈಯಿಂದ ಗೋಪುರಕ್ಕೆ ತೋರಿ, ದಿಟ್ಟತನದಿಂದ ಕೇಳುವ ಮಾತು:

ನೀನಾ ಭಗವಂತ?
ನೀನಾ ಭಗವಂತ?




ಈ ಚಿತ್ರದಲ್ಲಿ ಈ ಹಾಡು ಮೂಡಿ ಬರುವವರೆಗೆ ಕನ್ನಡ ಸಾಹಿತ್ಯದಲ್ಲಿ ಈ ರೀತಿ ದೇವರನ್ನು ಸಿನಿಮಾ ಹಾಡು-ದೃಶ್ಯಗಳ ಮೂಲಕ ಪ್ರಶ್ನಿಸಿದವರು ಇರಲಾರರು.  ಕಷ್ಟದ ಸಂದರ್ಭಗಳಲ್ಲಿ ದೇವರಿಗೇ ತಿರುಗಿ ಬೀಳುವ ಕೆಲವು ಸನ್ನಿವೇಶಗಳು ದಾಖಲಾಗಿದ್ದರೂ, ಹಿನ್ನೆಲೆಯಲ್ಲಿ ಹಾಡನ್ನು ಹಾಡಿದ ಬಾಲಕೃಷ್ಣ ಅವರ ಧ್ವನಿ ಅಧಿಕಾರವಾಣಿಯಾಗಿ ಮೂಡಿ ಬಂದಿದ್ದು, ಈ ಚಿತ್ರದ ಪಾತ್ರಧಾರಿ ಉದಯ್‌ಕುಮಾರ್ ಅವರಿಗೆ ಬಹಳ ಚೆನ್ನಾಗಿ ಹಿಡಿಸಿದೆ.  ಅದಕ್ಕೆ ತಕ್ಕಂತೆ ಉದಯ್‌ಕುಮಾರ್ ಅವರ ವೇಶಭೂಷಣ ಹಾಗೂ ನಟನೆ ಕೂಡ ಅಷ್ಟೇ ಸಹಜವಾಗಿ ಮೂಡಿಬಂದಿದೆ.

ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ?


ತನಗೆ ಅಪಕಾರ, ಅನ್ಯಾಯವಾಗಿರುವುದರ ಬಗ್ಗೆ ಒಂದೇ ಸಾಲಿನಲ್ಲಿ ತನ್ನ ಬೇಗುದಿಯನ್ನು ತೋಡಿಕೊಳ್ಳುವ ಕವಿ, ಈ ಸಾಲಿನಲ್ಲಿ ದೇವರ ಉದ್ದೇಶವನ್ನು ಪ್ರಶ್ನಿಸುತ್ತಾ, ನೀನಾ ಭಗವಂತ ಎನ್ನುವಲ್ಲಿ ಎರಡು ವೇರಿಯೇಶನ್ನುಗಳನ್ನು ತೋರಿಸಿದ್ದಾರೆ.  "ಜಗದೋದ್ಧಾರಕ ನೀನೇನಾ" ಎಂದಾಗ ಪಾತ್ರಧಾರಿ ಒಂದು ಕ್ಷಣ ನಿಂತು, ಹಿಂದಕ್ಕೆ ತಿರುಗದೆಯೇ ಗೋಪುರದ ಕಡೆಗೆ ಕೈ ಮಾಡಿ ಪ್ರಶ್ನಿಸುವುದು ಮಾರ್ಮಿಕವಾಗಿ ಮೂಡಿಬಂದಿದೆ.

ನೀನೇನಾ?
ನೀನಾ ಭಗವಂತ?


ಈ ಪ್ರಶ್ನೆಗಳ ಯಾದಿಯ ಉದ್ದಕ್ಕೂ ದೇವರ ಮೂರ್ತಿಗಳಿಗೆ ಅಭಿಷೇಕ, ಅರ್ಚನೆ ಮುಂದುವರೆಯುತ್ತಲೇ ಇರುವುದನ್ನೂ ತೋರಿಸಲಾಗಿದೆ.  ಯಾರು ಪ್ರಶ್ನಿಸಲಿ ಬಿಡಲಿ, ಅದರ ಕೆಲಸಗಳು ಹಾಗೆ ಮುಂದುವರೆಯುತ್ತವೆ ಎಂದು ಸೂಚ್ಯವಾಗಿ ಹೇಳುವಂತೆ.

ಗೋರ್ಕಲ್ಲಿಗೆ ಗುಡಿ ಮಂದಿರ ನೂರು ಮಾಡಿದ ನರನಿಗೆ ನೆಲೆಯಿಲ್ಲ
ಹೂ ಸೌಗಂಧವ ಲೇಪಿಸಿ ಹಾಡಿ, ಕರೆದರು ಕರುಣಿಸೆ ಕೃಪೆಯಿಲ್ಲ
ನೀನಾ ಭಗವಂತ?


ಮೊರೆಯುವ ವಯಲ್ಲಿನ್ನುಗಳ ಹಿನ್ನೆಲೆ ಸಂಗೀತದಲ್ಲಿ, ಒಂದು ಕಾಲನ್ನು ಎಳೆದುಕೊಂಡು ಕುಂಟುತ್ತಲೇ ವೇಗವಾಗಿ ಸಾಗಿ ಒಂದು ಕಲ್ಲಿನ ಮಂಟಪ ಅಥವಾ ಬಸದಿಯನ್ನು ಸೇರಿ ಪಾತ್ರಧಾರಿ ಮತ್ತೆ ಮುಂದುವರೆಸುತ್ತಾನೆ.  ದೇವರ ಮೂರ್ತಿಯನ್ನು ಹಿನ್ನೆಲೆಯಲ್ಲಿ ತೋರಿಸುತ್ತಿದ್ದಂತೆ, ಅವುಗಳನ್ನು ಗೋರ್ಕಲ್ಲಿಗೆ ಹೋಲಿಸಿ, ಅಂತಹ ವಿಗ್ರಹಗಳಿಗೆ ನೂರಾರು ಮಂದಿರಗಳನ್ನು ಕಟ್ಟಿದ ಜನರಿಗೆ ತಲೆಯ ಮೇಲೆ ಸೂರಿಲ್ಲದೇ ಮರದ ನೆರಳಿನಲ್ಲಿ ಬದುಕುವ ವಿಪರ್ಯಾಸವನ್ನು ಕವಿ ತೋರಿಸುತ್ತಾರೆ.  ಹೀಗಿದ್ದೂ, ದೇವರನ್ನು ಒಲಿಸಲೆಂದು ಹೂವು, ಸೌಗಂಧವನ್ನು ಲೇಪಿಸಿ ಹಾಡಿ, ಕರೆದರೂ ಕೂಡ ಕರುಣಿಸುವ ನೀನು ಭಗವಂತನೇ?  ಇದೇ ಸಂದರ್ಭದಲ್ಲಿ ಹಿನ್ನೆಲೆ ಸಂಗೀತ ವಯಲಿನ್ನುಗಳು ಮೊರೆಯುತ್ತಿದ್ದಂತೆ ಮತ್ತೆ ಜನಜಂಗುಳಿಯನ್ನು ತೋರಿಸಲಾಗುತ್ತದೆ.

ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸಿದರೂ ನೀ ಕಂಡಿಲ್ಲ
ನೀನಾ? ಭಗವಂತ?


ಮುಂದಿನ ದೃಶ್ಯ ಬರುವಲ್ಲಿ, ನಾಯಕ ಒಂದು ಒಣಗಿದ ಮರದ ಕೆಳಗೆ ಆಸರೆಯಲ್ಲಿ ನಿಂತು ಹಾಡು ಮುಂದುವರೆಯುತ್ತದೆ.  ಇದು ನಾಯಕನ ಉತ್ತಮವಾದ ಬದುಕು ಕಾರಣಾಂತರಗಳಿಂದ ನರಕಸದೃಶ ರೀತಿಯನ್ನು ಪಡೆದಿದ್ದಕ್ಕೆ ದೇವರನ್ನು ದೂಷಿಸುತ್ತಲೇ, ನನಗೇಕೆ ಈ ಬೇಗೆಗಳಿಂದ ಮುಕ್ತಿ ನೀಡುತ್ತಿಲ್ಲ ಎಂದು ದೈರ್ಯದಿಂದ ಪ್ರಶ್ನಿಸುತ್ತಾನೆ.  ದೇವರು ನೀಡುತ್ತಿರುವ ಈ ಕಷ್ಟಕಾರ್ಪಣ್ಯಗಳನ್ನು ಹಾಲಾಹಲದ ವಾನಲಕ್ಕೆ ಹೋಲಿಸಿ, ಅದರಿಂದ ನಾಶವಾದರೂ ಭಗವಂತನ ಕಣ್ಣಿಗೇಕೆ ಕಾಣುತ್ತಿಲ್ಲ ಎಂದು ಪ್ರತಿಪಾದಿಸುತ್ತ, ಅವೆಲ್ಲ ಬರೀ ಕಲ್ಲಿನ ಮೂರ್ತಿಗಳು ಎಂಬುದಕ್ಕೆ ಒತ್ತುಕೊಡುತ್ತಾನೆ.

ನಶ್ವರ ಭೋಗದ ಆಸೆ ಕಡಲಲಿ ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ ದೈವೋತ್ತಮ ಬಿರುದೇಕಯ್ಯ
ದೈವೋತ್ತಮ ಬಿರುದೇಕಯ್ಯ
ನೀನಾ ಭಗವಂತ?


ಈ ಮುಂದಿನ ಸಾಲುಗಳಲ್ಲಿ ಮನುಷ್ಯನಿಗೆ ಕಷ್ಟಕಾರ್ಪಣ್ಯಗಳು ಬರುವುದೇ ನಿಜವಾದಲ್ಲಿ, ನಶ್ವರವಾದ ಭೋಗದ ಆಸೆ ಲೋಲುಪ್ತತೆಗಳನ್ನು ಯಾಕಾದರೂ ಕೊಡಬೇಕು? ಅಲ್ಲದೇ ಈ ಅಂತರ ತಿಳಿಯದೆ ಇರುವವನಿಗೆ ದೈವೋತ್ತಮ ಎನ್ನುವ ಬಿರುದಾದರೂ ಏಕೆ? ಎಂದು ದೇವರ ಅಸ್ತಿತ್ವವನ್ನೇ ಕೆಣಕುತ್ತಾನೆ.  ಈ ಹಾಡಿನ ದೃಷ್ಯೀಕರಣದ ಉದ್ದಕ್ಕೂ ಮಾರುತಿ ಹಾಗೂ ವೆಂಕಟೇಶ್ವರನ ಮೂರ್ತಿಗಳನ್ನು ವಿಶೇಷವಾಗಿ ತೋರಿಸಲಾಗಿದೆ.

ನೀನಾ ಭಗವಂತ?
ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ? ನೀನೇನಾ?



ಮತ್ತೆ ಜಗಕುಪಕರಿಸಿ ನನಗಪಕರಿಸುವ ಜಗದೋದ್ದಾರಕ ನೀನೇನಾ ಎಂದು ಒಂದು ಮರದ ನೆರಳಿನಲ್ಲಿ ಒರಗುತ್ತಿದ್ದಂತೆಯೇ, ಹಾಡಿನ ಮುಂದಿನ ಭಾಗ "ಸಿರಿನಂದನ ಏನಕೇಳಲೆ ನಾ" ಎನ್ನುವ ಬೇರೊಂದು ಗೀತೆ ಎಚ್.ಪಿ. ಗೀತ ಅವರ ದ್ವನಿಯಲ್ಲಿ ಆರಂಭವಾಗುತ್ತದೆ.

1972ರ ಹೊತ್ತಿಗೆ ಈ ಹಾಡನ್ನು ಬರೆದು ತಮ್ಮದೇ ವೈಯಕ್ತಿಕ ಜೀವನದ ತುಮುಲಗಳನ್ನೇ ಈ ಹಾಡಿನ ಮೂಲಕ ಹಂಸಲೇಖ ಅವರು ಹೇಳಿಸಿರಬಹುದು ಎನ್ನುವ ಮಾತು ಕೂಡ ಓದಲು ಸಿಗುತ್ತದೆ. ನಂತರ ಸುಮಾರು ಒಂಭತ್ತು ವರ್ಷಗಳ ತರುವಾಯ ಹಂಸಲೇಖ ಅವರು ಅದ್ಯಾವ ತಪಸ್ಸಿನಲ್ಲಿ ತೊಡಗಿದ್ದರೋ ಗೊತ್ತಿಲ್ಲ.  1981ರಲ್ಲಿ ರವಿಚಂದ್ರನ್ ಅವರು ಹುಡುಕಿ ಆರಿಸಿದ ಮಾಣಿಕ್ಯದಂತೆ ತಮ್ಮ "ಪ್ರೇಮಲೋಕ"ದ ಚಿತ್ರದಲ್ಲಿ ಹಾಡು ಹಾಗೂ ಸಂಭಾಷಣೆಯಲ್ಲಿ ಹಂಸಲೇಖರನ್ನು ತೊಡಗಿಸಿಕೊಂಡ ನಂತರ ಅವರು ಇನ್ನೆಂದೂ "ನೀನಾ ಭಗವಂತಾ?" ಎಂದು ಕೇಳಿರಲಾರರು!

ನೀವು ಈ ಹಾಡನ್ನು ಇಲ್ಲಿ ಕೇಳಬಹುದು/ನೋಡಬಹುದು.

Monday, April 20, 2020

ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್! (ಭಾಗ-೨)


ಸುಮಾರು 14 ವರ್ಷಗಳ "ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!" ಎಂಬ ಲೇಖನ ಬರೆದಿದ್ದೆ.  ಅದರಲ್ಲಿ ನನ್ನೊಬ್ಬ ಸ್ನೇಹಿತನಿಗೆ ಕೊಟ್ಟ ನಾಲ್ಕು ಲಕ್ಷ ರೂಪಾಯಿಗಳು ದೊಡ್ಡವಾಗಿ ಕಂಡಿದ್ದವು.  ಆದರೆ, ಹದಿನಾಲ್ಕು ವರ್ಷಗಳ ನಂತರ ಅವರವರ ಪ್ರಬುದ್ಧತೆಯ ಬೆಳವಣಿಗೆಯಂತೆ, ಅನೇಕ ಲಕ್ಷಗಳು ಬಂದಿರಬಹುದು, ಹೋಗಿರಬಹುದು.  ಮಾನವೀಯತೆಯೊಂದೇ ಕೊನೆಗೆ ಉಳಿಯುವುದು ಗ್ಯಾರಂಟಿ.  ಆದರೆ, ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಇದ್ದ ಹಾಗೆ ಅವರವರ ಪ್ರತಿಕ್ರಿಯೆ ಇರುತ್ತದೆ.  ಒಮ್ಮೆ ನಾಲ್ಕು ಲಕ್ಷ ರೂಪಾಯಿಗಳೇ ದೊಡ್ಡವಾಗಿ ಕಂಡರೆ, ಮತ್ತೊಮ್ಮೆ ಅದು ನಗಣ್ಯವಾದೀತು.

ಈ ಲೇಖನ ಬರೆಯುವ ಹೊತ್ತಿಗೆ ಆಗಾಗ್ಗೆ ಜಗದೀಶನಂತವರು ಏಕೆ ಹೀಗೆ ಮಾಡಿದರು, ಏಕೆ ಹೀಗಾದರೂ ಎಂದೆಲ್ಲ ಯೋಚಿಸಬೇಕಾಗುತ್ತದೆ.  ಕೊನೆಗೆ ವಿಧಿಯ ಲೀಲೆ ಹೇಗಿರುತ್ತದೆ ಎಂಬುದನ್ನು ಊಹಿಸಿದರೆ, ನಿಜಕ್ಕೂ ಜೀವನದ ಬಗ್ಗೆ ಬೇಸರ ಬಂದೀತು.

***

ಸೋಶಿಯಲಿಸ್ಟ್ ದೇಶಗಳಲ್ಲಿ ಆಗದ ಒಂದು ಮಹಾನ್ ಸಾಧನೆಯನ್ನು ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ಮಾಡಬಹುದು - ಅದು ಏನೆಂದರೆ, ನಿಮ್ಮ ಹೂಡಿಕೆ ಯನ್ನು ದ್ವಿಗುಣವೇಕೆ, ಅನೇಕ ಗುಣಗಳ ಮಟ್ಟಿಗೆ ರಾತ್ರೋ ರಾತ್ರಿ ಹೆಚ್ಚಿಸಿಕೊಳ್ಳಬಹುದು, ಹಾಗೆಯೇ ಕಡಿಮೆ ಮಾಡಿಕೊಳ್ಳಬಹುದು!  ಸೂಕ್ಷ್ಮವಾಗಿ ಹೇಳುವುದಾದರೆ, ಇದು ಒಂದು ಹಣವನ್ನು ಪ್ರಿಂಟ್ ಮಾಡುವ ವ್ಯವಸ್ಥೆಯೇ ಸರಿ.  ನಿಮ್ಮ ಹೂಡಿಕೆಗಳು, ನಿಮ್ಮ ಕಂಪನಿಗಳು, ನಿಮ್ಮ ನೆಟ್ ವರ್ತ್ ಮೊದಲಾದವು - ನಿಮ್ಮ ಹಣೇಬರಹ ನೆಟ್ಟಗಿದ್ದರೆ, ರಾತ್ರೋರಾತ್ರಿ ಬೆಳೆಯಬಲ್ಲವು ಹಾಗೂ ಕುಗ್ಗ ಬಲ್ಲವು.

ಇಂದು, ಅಮೇಜ಼ಾನ್ ಕಂಪನಿಯ ಒಂದು ಸ್ಟಾಕ್ ಇವತ್ತಿಗೆ ಎರಡು ಸಾವಿರ ಡಾಲರ್‌ಗೂ ಅಧಿಕವಾಗಿದ್ದು, ಅದು ಒಂದು ಕಾಲದಲ್ಲಿ ಒಂದು ಡಾಲರ್‌ನ ಆಸುಪಾಸು ಇತ್ತು. ಇದು ಅನೇಕ ವರ್ಷಗಳಲ್ಲಿ ಆದ ಬೆಳವಣಿಗೆ.  ಅದೇ ರೀತಿ,   ನನ್ನ ಕಣ್ಣ ಮುಂದೆಯೇ ಅನೇಕ ಕಂಪನಿಗಳು, ಒಂದೇ ದಿನದಲ್ಲಿ ನೂರು ಅಥವಾ ಸಾವಿರ ಪರ್ಸೆಂಟ್ ಮೇಲೆ ಹೋಗಿದ್ದನ್ನು ಮತ್ತೆ ಕೆಳಗೆ  ಬಿದ್ದಿದ್ದನ್ನ ನಾನು ನೋಡಿದ್ದೇನೆ.  2008-2009ರ ಮಾರ್ಕೆಟ್ ಕ್ರಾಷ್ ಆದಾಗ ಬಿಲಿಯನ್ ಡಾಲರ್‌ಗಟ್ಟಲೆ ಹಣವನ್ನು ಅನೇಕ ಹೆಡ್ಜ್‌ಫಂಡ್ ಮ್ಯಾನೇಜರುಗಳು ಕಳೆದುಕೊಂಡಿದ್ದಾರೆ, ಅಂತೆಯೇ ಮಾರ್ಕೆಟ್ ಮೇಲೆ ಹೋದಾಗ ದುಡಿದಿದ್ದಾರೆ ಕೂಡ.

ಈ ಚಿಕ್ಕ ಮಾರ್ಕೆಟ್ ಕಾಮೆಂಟರಿಯ ಉದ್ದೇಶವೆಂದರೆ - ಯಾರು ಬೇಕಾದರೂ ಹಣವನ್ನು ಗಳಿಸಬಹುದು, ಅಥವಾ ಕಳೆದುಕೊಳ್ಳಬಹುದು... ಅಂತಹುದರಲ್ಲಿ, ಒಂದು ಕಾಲದಲ್ಲಿ ಒಂದು ಡಾಲರ್ ಅನ್ನೋದು 36 ರೂಪಾಯಿಗಳು ಇದ್ದುದು, ಇವತ್ತಿಗೆ ಒಂದು ಡಾಲರ್ ಎನ್ನುವುದು 75 ರೂಪಾಯಿಗಳಾದಾಗ, ನಮ್ಮ ಹಳೆಯ ಒಂದು ಲಕ್ಷದ ಮೊತ್ತ ಇವತ್ತಿಗೆ ಬಹಳ ಕಡಿಮೆಯಾಗಿ ಕಾಣುತ್ತದೆ.  ಅದನ್ನ ಇನ್‌ಫ್ಲೇಶನ್‌ಗೆ ಅಡ್ಜಸ್ಟ್ ಮಾಡಿ ನೋಡಿದರೂ ಸಹ, ಈ ಕರೆನ್ಸಿ ಕನ್ವರ್ಷನ್‌ನಲ್ಲಿ ಅಂದಿನ ಒಂದು ಲಕ್ಷ ರುಪಾಯಿ, ಇಂದಿಗೆ ಏನೇನೂ ಸಾಕಾಗುವುದಿಲ್ಲ.

(ಅದು ಹೇಗೆ ಭಾರತದಲ್ಲಿ ಜನ ಜೀವನವನ್ನು ಸಾಗಿಸುತ್ತಾರೋ ಇಷ್ಟೊಂದು ಇನ್‌ಪ್ಲೇಶನ್ ಇಟ್ಟುಕೊಂಡು!  ಅದು ಇನ್ನೊಂದು ದಿನದ ಬರಹವಾದೀತು!)

***

ಅಂದು ದುಡ್ಡು ತೆಗೆದುಕೊಂಡ ಗೆಳೆಯರ ಸುಳಿವಿಲ್ಲ.  ಆದರೆ, ಇಂದಿಗೆ ಒಂದಂತೂ ಜ್ಞಾನೋದಯವಾಗಿದೆ... ಯಾರಿಗಾದರೂ ಹಣಕೊಟ್ಟರೆ ಅದು ಹಿಂದೆ ಬರುತ್ತದೆ ಎಂಬ ನಂಬಿಕೆಯನ್ನೇ ಬಿಟ್ಟು ಬಿಡುವಂತಾಗಿದೆ.  ಅದರ ಅರ್ಥ, ನಮ್ಮ ಕೈಯಲ್ಲಿ ಎಷ್ಟನ್ನು ಕಳೆದುಕೊಂಡರೆ ಅದು ದೊಡ್ಡದೆನಿಸುವುದಿಲ್ಲವೋ ಅಷ್ಟನ್ನು ಮಾತ್ರ ಕೊಡಲು ಸಮರ್ಥರಾಗಿದ್ದರೆ ಸಾಕು ಎನಿಸುತ್ತದೆ.  ಈ ಒಂದು ಮನೋಧರ್ಮದಿಂದ, ನಮಗೆ ಯಾವ ನಷ್ಟವೂ ಇಲ್ಲ (ಕೊಟ್ಟ ದುಡ್ಡೊಂದನ್ನು ಹೊರತು ಪಡಿಸಿ), ಯಾವ ಮನೋವ್ಯಾಧಿಯೂ ಅಂಟೋದಿಲ್ಲ.  ನಮ್ಮ ಬಂಧು-ಮಿತ್ರರ ಜೊತೆಗೆ ನಿಷ್ಟೂರವಂತೂ ಆಗೋ ಮಾತೇ ಇಲ್ಲ... ಎಲ್ಲವನ್ನೂ ದಾನವಾಗಿ ಕಂಡು ಕೊಂಡರೆ.

ಈ ಹೊತ್ತಿನಲ್ಲಿ, ಇನ್ನೂ ಒಂದು ತತ್ವ ಹೊಮ್ಮುತ್ತದೆ - ಎಲ್ಲವನ್ನು ಕರ್ಮದ ಫಲವನ್ನಾಗಿ ನೋಡುವುದು... ನಾವು ಯಾವ ಜನ್ಮದಲ್ಲಿ ಅವರಿಂದ ಉದಾರಕ್ಕೆ ಪಡೆದಿದ್ದೆವೋ ಇಂದು ಅದನ್ನು ಹಿಂತಿರುಗಿಸಿದೆವು ಎಂದು ನಿರುಮ್ಮಳವಾಗಿರುವುದು!

ಹಣವನ್ನು ಕೊಡುವ-ತೆಗೆದುಕೊಳ್ಳುವ ವಿಚಾರದಲ್ಲಿ ನನ್ನ ಹಾಗೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆ ಎನ್ನುವ ಮಹಾಸಾಗರದಲ್ಲಿದ್ದುಕೊಂಡು, ಅದರಲ್ಲಿ ಸೋಶಿಯಲಿಸ್ಟ್ ಮೌಲ್ಯದ ಹಾಯಿ ದೋಣಿಯನ್ನು ಚಲಾಯಿಸುವ ಈ ಸಾಧನೆ ನನ್ನಂಥವರನ್ನು ಬಹುದೂರ ಕೊಂಡೊಯ್ಯಲಾರದು, ಎನ್ನುವುದು ಈ ಹೊತ್ತಿನ ನಂಬಿಕೆ!

Sunday, April 19, 2020

ನಗುನಗುತಾ ನಲಿ

ಹಾಡು: ನಗುನಗುತಾ ನಲಿ 

ಚಿತ್ರ: ಬಂಗಾರದ ಮನುಷ್ಯ, 1972
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ.ಕೆ ವೆಂಕಟೇಶ್
ಗಾಯನ: ಪಿ.ಬಿ.ಶ್ರೀನಿವಾಸ್



ಎಪ್ಪತ್ತರ ದಶಕದ ಸೂಪರ್ ಹಿಟ್ ಮೂವಿಯೆಂದು ನಾವೆಲ್ಲ ಅದೆಷ್ಟು ಬಾರಿ ನೋಡಿ ನಲಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡು ಎಂದೂ ಯಾರನ್ನೂ ಮೋಡಿ ಮಾಡುವ ಹಾಡು.  ಹುಣಸೂರು ಕೃಷ್ಣಮೂರ್ತಿಯವರು ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ರಚಿಸಿ, ಒಬ್ಬ ಮನುಷ್ಯನ ಜೀವಿತಾವಧಿಯ ಮಹತ್ವದ ಹಂತಗಳನ್ನು ಅದೆಷ್ಟು ಸರಳವಾಗಿ ಈ ಹಾಡಿನಲ್ಲಿ ವರ್ಣಿಸಿದ್ದಾರೆ ಎಂದು ಖಂಡಿತ ಅನ್ನಿಸುತ್ತದೆ. ಅದಕ್ಕೆ ತಕ್ಕನಾಗಿ ಜಿ.ಕೆ.ವೆಂಕಟೇಶರ ಹಿನ್ನೆಲೆ ಸಂಗೀತ ಹಾಗೂ ಪಿ.ಬಿ. ಶ್ರೀನಿವಾಸ್ ಅವರ ಕಂಠ ಮಾಧುರ್ಯ, ನಿಮ್ಮನ್ನು ಎಂದೆಂದೂ ಈ ಹಾಡನ್ನು ಕೇಳುವಂತೆ ಮಾಡುತ್ತದೆ.


ಹಾಡಿನ ಮೊದಲಿನಲ್ಲಿ ರಾಜ್‌ಕುಮಾರ್ ಕೆಂಪು ಅಂಗಿ ಮತ್ತು ಬಿಳಿ ಪ್ಯಾಂಟು ತೊಟ್ಟು ರೈಲಿನ ಬೋಗಿಯಿಂದ ಹೊರಕ್ಕೆ ಇಣುಕುತ್ತಿದ್ದಂತೆ ಆಗಿನ ಚಿತ್ರ ಪ್ರೇಮಿಗಳು ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದಿರಬಹುದು.  ಏಳು ನಿಮಿಷದ ಈ ಹಾಡಿನಲ್ಲಿ ಮೊದಲ ಒಂದು ನಿಮಿಷದ ಇಂಟ್ರೋ ಮ್ಯೂಸಿಕ್‌ನಲ್ಲಿ ಹೀರೋ ತನ್ನ ಸುತ್ತಲಿನ ರಮಣೀಯ ಸೌಂದರ್ಯವನ್ನು  ಹೊಸ ಸ್ಥಳವನ್ನು ನೋಡಿದ ಸಹಜವಾದ ಉತ್ಸಾಹದಲ್ಲಿ ಕುಣಿದು ಕುಪ್ಪಳಿಸುವುದನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ.  ’ಆಹಾಹಾ’ ಎನ್ನುವ ಮೊದಲ ಸಾಲಿನ ಆಲಾಪನೆಯನ್ನು ಎಲ್ಲ ಕೋನಗಳಿಂದ ಚಿತ್ರಿಸಿ, ಆ ಧ್ವನಿ ಪ್ರತಿಧ್ವನಿಸುವುದನ್ನು ತೋರಿಸಲಾಗಿದೆ.

ಆಹಾಹಾ.... ಆಹಾಹಾ....ಆಹಾಆಹಾಆಹಾ....
ಬೆಟ್ಟದ ಮಗ್ಗುಲಿನಲ್ಲಿ ನಾಯಕ ಓಡಿ ಬಂದು ದಿಢೀರನೆ ನಿಂತು ಹೊರಳುವ ದೃಶ್ಯ ಹಾಗೂ ಹಾಡಿನ ವೇಗ ಕೇಳುಗರ ಹೃದಯ ಬಡಿತವನ್ನು ಹೆಚ್ಚುವಂತೆ ಮಾಡುತ್ತದೆ.  ಇಲ್ಲಿಯವರೆಗೆ ಇಷ್ಟೊಂದು ವೇಗವಾಗಿ ಹಾಡಿನ ಪಲ್ಲವಿ ಮೂಡಿ ಮರೆಯಾಯಿತೇ ಎಂದು ನೀವು ಎಣಿಸುವುದರೊಳಗೆ, ಜೀವನದ ಮಹತ್ವವಾದ ಸಂದೇಶವನ್ನು ಕವಿ ಸಾರುತ್ತಾರೆ, ಅದಕ್ಕೆ ತಕ್ಕನಾಗಿ ನೂರಕ್ಕೆ ನೂರು ಪಟ್ಟು ಹಿನ್ನೆಲೆ ಸಂಗೀತ, ಗಾಯನ ಹಾಗೂ ನಟನೆ ಸಾಥ್ ನೀಡುವುದರ ಸಂಗಮವನ್ನು ನೀವು ಬರಿ ಪಲ್ಲವಿಯಲ್ಲೇ ಕಾಣಬಹುದು.

ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆಯೆಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ
ಏನೇ ಆಗಲಿ.


ಈ ಹಾಡಿನ ಉದ್ದಕ್ಕೂ ರಾಜ್‌ಕುಮಾರ್ ಅವರ ನಟನಾ ಕೌಶಲ್ಯದ ಜೊತೆಗೆ ಅವರ ವೇಗವಾಗಿ ಓಡುವ, ಕುಣಿಯುವ, ಹಾರುವ ದೃಶ್ಯಗಳನ್ನು ಜೋಡಿಸಲಾಗಿದೆ.  ಒಂದು ತೆರೆದ ಬಯಲಿನಲ್ಲಿ ಈ ಹಾಡನ್ನು ಚಿತ್ರೀಕರಿಸಲು, ಹಾಗೂ ಹಾಡಿನ ಉದ್ದಕ್ಕೂ ತನ್ನ ಉತ್ಸಾಹ, ವೇಗವನ್ನು ಕಾಯ್ದುಕೊಂಡಿರಲು ಚಿತ್ರದ ತಂಡ ಅದೆಷ್ಟು ಕಷ್ಟಪಟ್ಟಿರಬೇಡ?  ರಾಜ್‌ಕುಮಾರ್ ಅವರ ಉತ್ಸಾಹದ ಸೆಲೆಯೇ ಈ ಹಾಡಿನ ಚಿತ್ರೀಕರಣದ ಜೀವಾಳ.  ಈ ಹಾಡಿನ ನಂತರ, ಈ ರೀತಿ ಅದೆಷ್ಟೇ ಹಾಡುಗಳು ಬಂದಿದ್ದರೂ ಕೂಡ, ಇದು ಎಂದೂ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲೂ ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ
ಹೂಗಳು ಬಿರಿದಾಗ.


ಮುಂದಿನ ಪಂಕ್ತಿಗಳಲ್ಲಿ ಜೀವನದ ಮಹತ್ವದ ಘಟ್ಟಗಳನ್ನು ವರ್ಣಿಸುವುದಕ್ಕೆ ಮೊದಲು, ಸುತ್ತಲಿನ ಹಸಿರು ಹಾಗೂ ತರು-ಲತೆಗಳ ಹಿನ್ನೆಲೆಯಲ್ಲಿ ಜಗವನ್ನು ಚೆಲುವಿನ ತಾಣವೆಂದು ವರ್ಣಿಸಿ, ಮುಂದಿನ ಚಿತ್ರಗಳನ್ನು ಹಾಡಿಗೆ ತಕ್ಕಂತೆ ಬದಲಾಗಿಸಲಾಗಿರುವುದನ್ನು ಗಮನಿಸಬಹುದು.  ಹಸಿರು ಪರಿಸರ ಕಾಂಕ್ರೀಟು, ಕಲ್ಲು ಕ್ವಾರಿಯ ಹಿನ್ನೆಲೆಗೆ ನಾಟಕೀಯವಾಗಿ ಬದಲಾಗುವುದನ್ನೂ, ಜೊತೆಯಲ್ಲಿ ಒಂದು ಚಿಕ್ಕ ಬೆತ್ತಲೆ ಮಗು ಅಳುತ್ತಾ ಹಸಿದು ಅಮ್ಮನ್ನನ್ನು ಹುಡುಕಿಕೊಂಡು ಬರುವುದನ್ನೂ, ಆ ಮಗುವಿಗೆ ತಾಯಿ ಹಾಲುಕುಡಿಸುವ ದೃಶ್ಯವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ.

ನಗುನಗುತಾ ನಲಿ ನಲಿ ಏನೇ ಆಗಲಿ.
ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ.

ನಗುನಗುತಾ ನಲಿ ನಲಿ ಏನೇ ಆಗಲಿ.

ಈ ಕೆಳಗಿನ ಪ್ರತಿಯೊಂದು ದೃಶ್ಯಾವಳಿಗಳಿಗೂ ಕಥಾ ನಾಯಕ ಮೊಟ್ಟ ಮೊದಲನೇ ಬಾರಿ ಇವನ್ನೆಲ್ಲ ನೋಡಿ ಅನುಭವಿಸಿರುವುದರ ಜೊತೆಗೆ, ದೃಶ್ಯಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಂತೆ ಚಿತ್ರಿಸಲಾಗಿದೆ.  ಒಂದೊಂದು ಚಿತ್ರದಲ್ಲಿ ಜೀವನದ ಬೆಳವಣಿಗೆಯ ಹಂತಗಳನ್ನು, ನೋವು-ನಲಿವುಗಳನ್ನು ಸಮನಾಗಿ ತೋರಿಸುವ ಜಾಣ್ಮೆ ಮರೆದಿದ್ದಾರೆ.

ಕಳಸಾಪುರದ ಶಾಲೆಯಿಂದ ಮಕ್ಕಳು ಹೊರಗಡೆ ಓಡಿಬರುವ ದೃಶ್ಯ:

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು


ಮದುವೆ ಮಂಟಪ, ಎತ್ತಿನ ಬಂಡಿಯಲ್ಲಿ ದಿಬ್ಬಣ ಹೋಗುವ ದೃಶ್ಯ:

ಮುಂದೆ ಯೌವನ ಮದುವೆ ಬಂಧನ...
ಎಲ್ಲೆಲ್ಲೂ ಹೊಸ ಜೀವನ
ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಮೈಮನ ಮರೆತಾಗ.

ನಗುನಗುತಾ ನಲಿ ನಲಿ ಏನೇ ಆಗಲಿ.

ವೃದ್ದಾಪ್ಯದ ಎರಡು ದೃಶ್ಯಗಳು:

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ
ತಂದಿತಯ್ಯ ಮುದಿತನ
ಅದರೊಳು ಹೊಸದಾದ
ರುಚಿಯಿದೆ ಸವಿಮೋದ.


ನಗುನಗುತಾ ನಲಿ ನಲಿ ಏನೇ ಆಗಲಿ.

ನೀವು ಈ ಹಾಡನ್ನು ಇಲ್ಲಿ ಕೇಳಬಹುದು/ನೋಡಬಹುದು.

Saturday, April 18, 2020

ದೊಡ್ಡ ನೋವಿನ ಮುಂದೆ...

ದೊಡ್ಡ ನೋವಿನ ಮುಂದೆ ಚಿಕ್ಕ-ಚಿಕ್ಕ ನೋವುಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ ಎನ್ನುವ ಹಾಗೆ... ಇತ್ತೀಚೆಗೆ ನಮ್ಮ ಮೆಡಿಕಲ್ ಫೆಸಿಲಿಟೀಸ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳದ್ದೇ ಹೆಚ್ಚಿನ ಪಾಲು.  ಅಂದಂತೆ ಎಲ್ಲ ಕಡೆ ಹೆಚ್ಚು ಹೆಚ್ಚು ಹಾಸಿಗೆಗಳು ಇರುವ ಆಸ್ಪತ್ರೆಗಳನ್ನು ಸಮರೋಪಾದಿಯಲ್ಲಿ ತೆರೆಯಲಾಗಿದೆ.  ದೊಡ್ಡ ಕನ್ವೆನ್ಷನ್ ಸೆಂಟರುಗಳಲ್ಲಿ ಈಗಾಗಲೇ ಅನೇಕ ರೋಗಿಗಳನ್ನು ಒಟ್ಟೊಟ್ಟಿಗೆ ಏಕಕಾಲಕ್ಕೆ ನೋಡುವಂತೆ ಮುಂಜಾಗರೂಕತೆಯನ್ನು ಕೈಗೊಳ್ಳಲಾಗಿದೆ.  ನಮ್ಮ ಹತ್ತಿರದಲ್ಲಿರುವ ನ್ಯೂ ಯಾರ್ಕ್‌ ನಗರದಲ್ಲಿ ಜಾವಿಟ್ಸ್ ಸೆಂಟರ್‌ ಅನ್ನು ಈಗಾಗಲೇ ಆಸ್ಪತ್ರೆಯಾಗಿ ಬದಲಾಯಿಸಲಾಗಿದ್ದು ಸುಮಾರು 2500 ಜನರನ್ನು ಏಕಕಾಲಕ್ಕೆ ನೋಡುವಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದರೂ ಅದರ ಕಾಲು ಭಾಗವೂ ಇನ್ನೂ ತುಂಬಿಲ್ಲ.  ಯು.ಎಸ್. ನೇವಿ  ಹಾಸ್ಪಿಟಲ್ ಶಿಪ್ "ಕಂಫರ್ಟ್" ಇನ್ನೂ ಖಾಲಿ ಇದೆ.  ಈ ನಿಟ್ಟಿನಲ್ಲಿ, ನ್ಯೂ ಯಾರ್ಕ್ ಮೇಯರ್ ಮತ್ತು ಗವರ್ನರುಗಳು ಸುಕಾ ಸುಮ್ಮನೇ ಆರ್ತನಾದ ಹೊರಡಿಸಿದರೇ? ಎನ್ನುವುದು ಇನ್ನೊಂದು ದಿನದ ಪ್ರಶ್ನೆ!

ಈ ಕೊರೋನಾ ವೈರಸ್ ಹಾವಳಿಯಿಂದ ಒಂದಂತೂ ಗ್ಯಾರಂಟಿ - ಯಾರು ಯಾರಿಗೆ ತಡೆದುಕೊಳ್ಳಬಲ್ಲ ಖಾಯಿಲೆ ಇದೆಯೋ ಅವರು ಯಾರೂ ಆಸ್ಪತ್ರೆಯ ಬಳಿ ಸುಳಿಯುತ್ತಿಲ್ಲ.  ಎಲ್ಲ ಎಲೆಕ್ಟಿವ್ ಸರ್ಜರಿಗಳು ಮುಂದೂಡಲ್ಪಟ್ಟಿವೆ.  ಒಂದು ಮಾಹಿತಿಯ ಪ್ರಕಾರ, ಕೇವಲ ಕ್ರಿಟಿಕಲ್ ಪೇಷಂಟ್‌ಗಳನ್ನು ಮಾತ್ರ ಆಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ, ಉಳಿದವರನ್ನು ಹೊರಗೇ ಟ್ರೀಟ್ ಮಾಡಿ ಮನೆಗೆ ಕಳಿಸುತ್ತಿದ್ದಾರೆ.  ಕ್ರಿಟಿಕಲ್ ಪೇಷಂಟ್ ಎಂದರೆ ಹಾರ್ಟ್‌ಅಟ್ಯಾಕ್, ಸ್ಟ್ರೋಕ್, ಮೊದಲಾದ ಜೀವಕ್ಕೆ ಅಪಾಯ ತಂದೊಡ್ಡುವ ಖಾಯಿಲೆ ಇರುವ ರೋಗಿಗಳು ಎಂದರ್ಥ.

***
ನಮ್ಮ ಆಸ್ಪತ್ರೆಗಳಿಗೆ ಮೊದಲೆಲ್ಲ ಅಂದರೆ ದಿನದಲ್ಲಿ ಒಂದಿಷ್ಟು ಮೋಟಾರು ವೆಹಿಕಲ್ ಅಫಘಾತದ ಕೇಸುಗಳು ಬರುತ್ತಿದ್ದವು.  ಎಲೆಕ್ಟಿವ್ ಸರ್ಜರಿ ಕೇಸುಗಳು ಬರುತ್ತಿದ್ದವು.  ಏನಿಲ್ಲವೆಂದರೂ "ರುಟೀನ್ ಟೆಸ್ಟ್" ಎಂದುಕೊಂಡು, ಬಂದ ಪೇಷೆಂಟುಗಳಿಗೆ ತಲೆನೋವಿಂದ ಕಾಲು ನೋವಿನವರೆಗೆ ಅನೇಕ ಟೆಸ್ಟ್‌ಗಳನ್ನು ಮಾಡುವ ವ್ಯವಸ್ಥೆ ಇತ್ತು.  ಅದನ್ನು ಅವಲಂಬಿಸಿ ದೊಡ್ಡದೊಂದು ಬಿಸಿನೆಸ್ ವಾತಾವರಣ ನಿರ್ಮಾಣಗೊಂಡಿತ್ತು.

ಈ ಕೊರೋನಾ ವೈರಸ್‌ನ ದೆಸೆಯಿಂದಾಗಿ ಅವೆಲ್ಲ ಈಗ ಕಡಿಮೆಯಾಗಿದೆ.  ಲಾಭ ಮಾಡುವುದೇ ತಮ್ಮ ಧ್ಯೋತಕ ಎಂಬಂತೆ (ಭಾರತದಲ್ಲಿ) ನಾಯಿಕೊಡೆಗಳಂತೆ ಎದ್ದು ನಿಂತ ಅನೇಕ ನರ್ಸಿಂಗ್ ಹೋಮ್‌ಗಳು ಇವತ್ತು ಖಾಲಿಯಾಗಿವೆ.  ಅದೇ ರೀತಿ ಅಮೇರಿಕದಲ್ಲೂ ಸಹ, ಎಲ್ಲ ಕಡೆ ಕೋವಿಡ್ ಮಯವಾದ್ದರಿಂದ ಆಸ್ಪತ್ರೆಗಳು ಹಾಗೂ ಅದಕ್ಕೆ ಹೊಂದಿಕೊಂಡ ಹಲವಾರು ಸರ್ವಿಸ್ ಪ್ರೊವೈಡರುಗಳಿಗೆ ಅವರ ಆದಾಯಕ್ಕೇ ಸಂಚಕಾರ ಬಂದಿದೆ.

ಇನ್ನು ಕೋವಿಡ್ ಗಲಾಟೆ ಭರಾಟೆ ಎಲ್ಲ ಮುಗಿದ ಮೇಲೆ, ನಮ್ಮ ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಧೀರ್ಘಕಾಲೀನವಾಗಿ ಏನೇನು ಪರಿಣಾಮಗಳು ಬೀರುತ್ತವೆಯೋ? ಅವನ್ನೆಲ್ಲ ನಾವು ಕಾದು ನೋಡಬೇಕು.

ಒಟ್ಟಿನಲ್ಲಿ, ಕೋವಿಡ್ ನಮ್ಮನ್ನು ಕೊಳ್ಳುಬಾಕತನದಿಂದ ದೂರವಿರಿಸಿ, ಉತ್ತಮ ಹಾಗೂ ಸಮತೋಲಿತ ಆಹಾರ ಸೇವನೆಯತ್ತ ಗಮನ ಕೊಡುವಂತೆ ಮಾಡಿ, ನಮ್ಮ ನಮ್ಮ ಸಂಬಂಧಗಳ ಸುಧಾರಣೆಗೆ ಆದ್ಯತೆಯನ್ನು ಹೆಚ್ಚಿಸಿ, ಇನ್ನೆಂದಿಗೂ ನಮ್ಮ ಸರ್ವತೋಮುಖ ಆರೋಗ್ಯವನ್ನು ನಾವೆಲ್ಲ ಜೋಪಾನ ಮಾಡಿಕೊಳ್ಳುವಂತೆ ಪಾಠ ಕಲಿಸಿದೆಯೆಲ್ಲ... ಅದರಿಂದಲಾದರೂ ನಮ್ಮ ಹೆಲ್ತ್‌ಕೇರ್ ವ್ಯವಸ್ಥೆ ಎಲ್ಲರ ಒಳಿತನ್ನು ಗಮನದಲ್ಲಿಟ್ಟುಕೊಂಡು ಸುಧಾರಿಸಲಿ!

Friday, April 17, 2020

ಚಿತ್ರಗಳ ನೆನಪು

ಈ ಕೋವಿಡ್ ವೈರಸ್ಸಿನ ದೆಸೆಯಿಂದ ನಾವೆಲ್ಲರೂ "ಗೃಹಬಂಧನ"ದಲ್ಲಿ ಇದ್ದ ಪರಿಣಾಮದಿಂದಾಗಿ ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡೆ.  ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

***
ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ      ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!



Thursday, April 16, 2020

God is great!

ದಿನವಿಡೀ ಕಂಪ್ಯೂಟರ್ ಬಳಸುವ ನಮ್ಮಂತಹವರಿಗೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಆಗುವ ಬೆಳವಣಿಗೆಗಳು ಕೆಲವೊಮ್ಮೆ ತಲೆನೋವಾಗಿ ಪರಿಣಮಿಸುತ್ತವೆ.  ಸೆಕ್ಯೂರಿಟಿಯ ಹೆಸರಿನಲ್ಲಿ ಅಥವಾ ಹೊಸದಾಗಿ ಹುಟ್ಟಿರುವ ತಂತ್ರಜ್ಞಾನದ ಹೆಸರಿನಲ್ಲಿ ಆಗುವ ಒಂದಲ್ಲಾ ಒಂದು ಆವಿಷ್ಕಾರಗಳು ನಮ್ಮ ಲರ್ನಿಂಗ್ ಕರ್ವ್ ಅನ್ನು ಟೆಸ್ಟ್ ಮಾಡುತ್ತವೆ; ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ.  ಇಂತಹದರ ಉದಾಹರಣೆಗಳಲ್ಲಿ ನಮ್ಮ ಕಂಪನಿಯ ಕಂಪ್ಯೂಟರ್ ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಲವಂತವಾಗಿ ಬದಲಾಯಿಸುವ ಪಾಸ್ವರ್ಡ್ ನಿಯಮಗಳನ್ನು ಹೆಸರಿಸಲೇ ಬೇಕು.  ಮೊದಮೊದಲು ಸಹಜ ಎನ್ನುವಂತಿದ್ದ ಪಾಸ್ವರ್ಡ್ ಪಾಲಿಸಿಗಳು ಈಗ ತಲೆನೋವುಗಳಾಗುತ್ತಿವೆ (ಅಥವಾ ಈ ಒಂದು ಭಾವನೆ ನಮಲ್ಲರಿಗೂ ವಯಸ್ಸಾಗುತ್ತಿದೆ ಎಂಬುದರ ಸೂಚಕವೂ ಇರಬಹುದು!).

ಅಯ್ಯೋ ಪಾಸ್ವರ್ಡ್ ಅಂದರೆ ಅದೇನು ದೊಡ್ಡ ವಿಷಯ ಎಂದು ಮೂಗೆಳೆದುಬಿಟ್ಟೀರಾ - ಪ್ರತಿ ಐದು-ಹತ್ತು ನಿಮಿಷಗಳಿಗೊಮ್ಮೆ ಆಕ್ಟಿವಿಟಿ ಇಲ್ಲದಿದ್ದರೆ ತಮ್ಮಷ್ಟಕ್ಕೆ ತಾವೇ ಲಾಕ್ ಆಗುವ ಕಂಪ್ಯೂಟರುಗಳಿಗೆ ಪಾಸ್ವರ್ಡ್ ಪದೇಪದೇ ಹಾಕುತ್ತಲೇ ಇರಬೇಕು.  ಅಷ್ಟೇ ಅಲ್ಲ, ಒಮ್ಮೆ ಲಾಗಿನ್ ಆದ ಮೇಲೆ, ಮತ್ತೆ ನಾವು ಬಳಸುವ ಪ್ರತಿಯೊಂದು ಸಿಸ್ಟಮ್ಗೂ ಕೂಡ ಈ ಪಾಸ್ವರ್ಡ್ ಅನ್ನು ಹಾಕುತ್ತಲೇ ಇರಬೇಕು.  ಒಟ್ಟಿನಲ್ಲಿ, ದಿನಕ್ಕೆ ಏನಿಲ್ಲವೆಂದರೂ ಒಂದು ಇಪ್ಪತ್ತೈದು ಬಾರಿಯಾದರೂ ಬಳಸುವ ಈ ಪಾಸ್ವರ್ಡ್ ಬಹಳ ದುಬಾರಿಯಾದ ಕಮಾಡಿಟಿ ಎಂದರೆ ತಪ್ಪಿಲ್ಲ.  ಅಕಸ್ಮಾತ್, ಎಲ್ಲಾದರೂ ಮರೆತು ಬಿಟ್ಟರೆ, ಅಂತಹ ದೊಡ್ಡ ಉಪಟಳ ಇನ್ನೊಂದಿಲ್ಲ!  ಒಟ್ಟಿನಲ್ಲಿ, ನಾವು-ನಮ್ಮ ಕೆಲಸದ ನಡುವೆ ಅವಿನಾಭಾವ ಸಂಬಂಧವನ್ನು ಬೆರೆಸುವ ಈ ಪಾಸ್ವರ್ಡ್ ಗಳಿಗೆ ದೊಡ್ಡ ಸ್ಥಾನವನ್ನು ಕೊಡಲೇಬೇಕಾಗುತ್ತದೆ!

ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್ವರ್ಡ್ ಅನ್ನು ಕಡ್ಡಾಯವಾಗಿ ಬದಲಾಯಿಸುವುದು ಬಹಳ ವರ್ಷಗಳಿಂದ ನಡೆದುಬಂದಿದೆ, ಅದರಲ್ಲೇನೂ ವಿಶೇಷವಿಲ್ಲ.  ಆದರೆ ಮೊದಲೆಲ್ಲಾ, ಪಾಸ್ವರ್ಡ್ ಪಾಲಿಸಿಗಳು ನಮ್ಮ ಉಗ್ರಾಣದೊಳಗಿರುವ ನಾಲ್ಕೈದು ಪಾಸ್ವರ್ಡ್ಗಳನ್ನು ಒಂದಾದನಂತರ ಒಂದನ್ನಾಗಿ ಬಳಸಲು ಬಿಡುತ್ತಿದ್ದವು.  ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಪಾಸ್ವರ್ಡ್ನಂತೆ ವರ್ಷಕ್ಕೆ ನಾಲ್ಕು ಪಾಸ್ವರ್ಡ್ಗಳಿದ್ದರೆ ಆಯಿತು.  ಮತ್ತೆ ಅದನ್ನೇ ರೀಸೈಕಲ್ ಮಾಡಿದ್ದರೆ ರಗಳೆ ಇರುತ್ತಿರಲಿಲ್ಲ.  ಆದರೆ, ಇತ್ತೀಚೆಗೆ ಮತ್ತೊಂದು ಪಾಲಿಸಿಯನ್ನು ಸೇರಿಸಿಬಿಟ್ಟರು - ಒಮ್ಮೆ ಬಳಸಿದ ಪಾಸ್ವರ್ಡ್ ಅನ್ನು ಮತ್ತೆ ಹನ್ನೆರಡು ಸಲ ಪಾಸ್ವರ್ಡ್ ಬದಲಾಯಿಸುವವರೆಗೂ ಬಳಸುವಂತಿಲ್ಲ!  ಅಂದರೆ, ಇಂದು ಬಳಸುವ ಪಾಸ್ವರ್ಡ್ ಇನ್ನು ಮೂವತ್ತಾರು ತಿಂಗಳ ನಂತರವೇ ಬಳಸಲು ಸಾಧ್ಯ!  ಅಂದರೆ ಮೂರು ವರ್ಷಗಳ ನಂತರ... ಇದನ್ನು ನೋಡಿ God is great! ಎನ್ನುವ ಉದ್ಗಾರ ತನ್ನಷ್ಟಕ್ಕೆ ತಾನೇ ಹೊರಗೆ ಬಂತು.  ನಾನೇ ಹನ್ನೆರಡು ಬಾರಿ ಪಾಸ್ವರ್ಡ್ ಅನ್ನು ಒಂದೇ ದಿನದಲ್ಲಿ ಬದಲಾಯಿಸಿ ಮತ್ತೆ ಅದೇ ಪಾಸ್ವರ್ಡ್ ಅನ್ನು ಉಪಯೋಗಿಸಿದರೆ ಹೇಗೆ ಎನ್ನುವ ಯೋಚನೆ ತಕ್ಷಣಕ್ಕೆ ಬಂತಾದರೂ, ಅದು ಸೆಕ್ಯೂರಿಟಿಯ ಉದ್ದೇಶವನ್ನು ಡಿಫೀಟ್ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಲಿಲ್ಲ, ಅದರ   ಬದಲಿಗೆ ’God is great! ಎನ್ನುವ ಪಾಸ್ವರ್ಡ್ ಅನ್ನೇ ಬಳಸಿದರೆ ಹೇಗೆ ಎನ್ನುವ ನಿರ್ಧಾರಕ್ಕೆ ಬಂದೆ.  ಆದರೆ, ನಮ್ಮ ಪಾಸ್ವರ್ಡ್ನಲ್ಲಿ  upper case ಅಕ್ಷರಗಳಿರಬೇಕು, ಅಂಕಿಗಳಿರಬೇಕು ಎಂದೆಲ್ಲ ನಿಯಮಗಳಿವೆ.  ಅದನ್ನೆಲ್ಲ ಸೇರಿಸಿ, God is great! ಅನ್ನು ಬಳಸಿ ಒಂದು ಹೊಸ ಪಾಸ್ವರ್ಡ್ ಸೃಷ್ಟಿಸಿದೆ.  ಆದರೆ, ಈ ಪಾಪ್ಯುಲರ್ ಹೇಳಿಕೆಯಂಥ ಪಾಸ್ವರ್ಡ್ ಅನ್ನು ಪದೇಪದೇ ಟೈಪ್ ಮಾಡುವಾಗಲೂ ಒಂದಲ್ಲ ಒಂದು ಸಂವೇದನೆಗಳು ನನ್ನ ಮನಪಟಲದಲ್ಲಿ ಹಾದು ಹೋಗುತ್ತಿದ್ದವು.  God is great! ಅನ್ನುವುದನ್ನು ಅನೇಕ ಭಾವನೆಗಳಲ್ಲಿ ಈ ಮೂರು ತಿಂಗಳಲ್ಲಿ ಹೇಳಿಕೊಂಡಿದ್ದೇನೆ!

***
ಕನ್ನಡ ವ್ಯಾಕರಣ ತರಗತಿಯಲ್ಲಿ ನನಗೆ ಇಷ್ಟವಾಗುವ ವಿಷಯ ವಸ್ತುಗಳಲ್ಲಿ ವಿಭಕ್ತಿ-ಪ್ರತ್ಯಯಗಳೂ ಒಂದು.  ಪ್ರಥಮ-ಉ, ದ್ವಿತೀಯ-ಅನ್ನು, ತೃತೀಯ-ಇಂದ, ಚತುರ್ಥಿ-ಗೆ, ಇಗೆ, ಅಕ್ಕೆ, ಪಂಚಮಿ-ದೆಸೆಯಿಂದ, ಷಷ್ಟಿ-ನನ್ನ, ನಮ್ಮ, ಸಪ್ತಮಿ-ಲ್ಲಿ, ಒಳಗೆ, ಇತ್ಯಾದಿ...

ಇಂಗ್ಲೀಷ್ ನಲ್ಲಿ ಅನೇಕ ಪದಗಳಿವೆ ನಿಜ.  ಆದರೆ, ಈ ವಿಭಕ್ತಿ-ಪ್ರತ್ಯಯಗಳ ದೆಸೆಯಿಂದ ಭಾರತೀಯ ಭಾಷೆಗಳ ಪದಗಳು ಅನೇಕ ರೀತಿಯಲ್ಲಿ ಉಲ್ಭಣಗೊಳ್ಳುತ್ತವೆ, ಬದಲಾವಣೆಗೊಳಗಾಗುತ್ತವೆ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುತ್ತವೆ.

ಉದಾಹರಣೆಗೆ: "ಬಾಳೇ ಪ್ರೇಮಗೀತೆ", "ಬಾಳೂ ಬೆಳಕಾಯಿತು", "ಬಾಳಿನ ದಾರಿಯಲಿ", "ಬಾಳಿನಿಂದ ಬಾಳಿಗೆ", "ಬಾಳಿನ ದೆಸೆಯಿಂದ", "ಬಾಳನ್ನು ಬದುಕಿ", "ಬಾಳೇ ಹಾಳಾಯಿತು"... ಹೀಗೆ ’ಬಾಳು’ ಎನ್ನುವ ಪದ ಅನೇಕ ಬೆಳವಣಿಗೆಗಳನ್ನು ಪಡೆಯುತ್ತದೆ. ಇವೆಲ್ಲವನ್ನೂ ಇಂಗ್ಲೀಷಿಗೆ ಅಷ್ಟು ಸುಲಭವಾಗಿ ತರ್ಜುಮೆ ಮಾಡಲಾಗದು.

ಹೀಗೆ ಯೋಚಿಸುತ್ತಿರುವಾಗ, ನನ್ನ ಪಾಸ್ವರ್ಡ್ "God is great!" ಅನ್ನು ತೆಗೆದುಕೊಂಡು ಈ ಮೂರು ಪದಗಳಲ್ಲಿ ಎಷ್ಟೊಂದು ಕಾಂಬಿನೇಷನ್ ಮಾಡಬಹುದು ಎಂದು ಯೋಚಿಸಿದಾಗ ನನಗೆ ಈ ಕೆಳಗಿನ ವಾಕ್ಯಗಳು ಹೊಳೆದವು ಆಷ್ಟೇ!

God is great
Is God great
Great is God

God is great! ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದಾಗ "ದೇವರು ದೊಡ್ಡವನು" ಎಂದು ಯೋಚಿಸಿದೆ... ಈ ಎರಡೇ ಪದಗಳನ್ನು ಎಷ್ಟು ರೀತಿಯಲ್ಲಿ ಬದಲಾವಣೆ ಮಾಡಿ ಹೊಸ ಹೊಸ ಅರ್ಥಗಳನ್ನು ಹುಡುಕಬಹುದು ಎಂದು ಯೋಚಿಸಿದಾಗ ಈ ಕೆಳಗಿನ ಸಾಲುಗಳು ಹೊಳೆದವು:

ದೇವರು ದೊಡ್ಡವನು
ದೊಡ್ಡವನು ದೇವರು
ದೇವರೇ ದೊಡ್ಡವನು
ದೊಡ್ಡವನೇ ದೇವರು
ದೇವರು ದೊಡ್ಡವನೇ
ದೊಡ್ಡವನು ದೇವರೇ
ದೇವರೇ ದೊಡ್ಡವನೇ
ದೊಡ್ಡವನೇ ದೇವರೇ
ದೇವರೂ ದೊಡ್ಡವನು
ದೊಡ್ಡವನೂ ದೇವರು

ಈ ಮೇಲಿನವನ್ನು ಹೇಳುವಾಗಿನ ಇಂಟೋನೇಷನ್, ಅದಕ್ಕೆ ಸಂಬಂಧಿಸಿದ ಸಂದರ್ಭ ಹಾಗೂ ಅವುಗಳಿಗೆ ಜೋಡಿಸುವ ಭಾವನೆಗಳನ್ನು ಬಳಸಿ ಅನೇಕ ಕಾಂಬಿನೇಷನ್ನುಗಳನ್ನು ಮಾಡಬಹುದು.  ಇವುಗಳನ್ನು ಅಷ್ಟು ಸುಲಭವಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಲಾಗುವುದಿಲ್ಲ.  ಕೇವಲ ಎರಡೇ ಪದಗಳಲ್ಲಿ ಈ ಲಾಲಿತ್ಯವಿರುವ ನಮ್ಮ ಭಾಷೆಯನ್ನು ಒಂದು ದೇಶೀಯ (native) ಪರಿಸರದಲ್ಲಿ ಇದ್ದು ಕಲಿಯದಿದ್ದರೆ, ಅಷ್ಟು ಸಹಜವಾಗಿ ಮನಮುಟ್ಟುವುದಿಲ್ಲ.  ಉತ್ತರ ಅಮೇರಿಕದಲ್ಲಿ ನಾವು ಮಕ್ಕಳಿಗೆ ಕನ್ನಡ ಹೇಳಿಕೊಡುವಾಗ ಈ ಸೂಕ್ಷ್ಮಗಳನ್ನು ಹೇಳಿಕೊಡಲಾಗದು.  ಎಲ್ಲರೂ ವ್ಯಾಕರಣವನ್ನು ಕಲಿಯದಿದ್ದರೂ ದಿನನಿತ್ಯದ ನಮ್ಮ ಮಾತುಕತೆ, ಬರವಣಿಗೆಗಳಲ್ಲಿ ನಾವು ಅದೆಷ್ಟು ರೀತಿಯಲ್ಲಿ ಈ ವಿಭಕ್ತಿ-ಪ್ರತ್ಯಯಗಳನ್ನು ಬಳಸುತ್ತೇವೆ ಎಂದು ಯೋಚಿಸಿದಾಗ ಆಶ್ಚರ್ಯವೆನಿಸುತ್ತದೆ.
ನೋಡಿ, ಹೀಗೆ ಈ ಪಾಸ್ವರ್ಡ್ ಬದಲಾಯಿಸುವ ದೆಸೆಯಿಂದ ನಮ್ಮ ಕನ್ನಡ ಭಾಷೆಯ ಹಿರಿಮೆಯನ್ನು ಕೊಂಡಾಡುವಂತಾಯ್ತು!