Thursday, April 02, 2020

ಕೊರೋನಾ ವೈರಸ್ ನಮ್ಮ ಶಕ್ತಿಯನ್ನು ಕ್ಷೀಣಿಸಿದೆಯೇ?

ನಾವು, ಜನಸಾಮಾನ್ಯರು ಅಥವಾ ನಮ್ಮ ಮಾನವ ಜನಾಂಗವನ್ನು ಒಟ್ಟಿಗೆ ಪ್ರತಿನಿಧಿಸುವ ನಾವೆಲ್ಲರೂ ಈ ಕಳೆದ ನೂರು ವರ್ಷಗಳಲ್ಲಿ ದುರ್ಬಲರಾಗಿದ್ದೇವೆಯೇ?

ಅಂಕಿ-ಅಂಶಗಳ ಪ್ರಕಾರ ನಾವೆಲ್ಲರು ಧೀರ್ಘಾಯುಗಳು, ನಮ್ಮ ಬದುಕಿನ ಗುಣಮಟ್ಟ ಹೆಚ್ಚಿದೆ, ನಮ್ಮ ಮೌಲ್ಯ (net worth) ವೃದ್ಧಿಯಾಗಿದೆ.  ನಮ್ಮ ಸಂಖ್ಯೆ ಹೆಚ್ಚಿದೆ - 1900 ರಲ್ಲಿ 1.6 ಬಿಲಿಯನ್ ಇದ್ದದ್ದು 2020ಕ್ಕೆ 7.8 ಬಿಲಿಯನ್ ಆಗಿದೆ.  ಅದರಂತೆ ನಮ್ಮ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ: ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್, ರಸ್ತೆ ಅಫಘಾತ, ಡಯಬೀಟಿಸ್ ಮೊದಲಾದಂತೆ ಮಿಲಿಯನ್ನುಗಟ್ಟಲೆ ಜನ ಸಾಯುತ್ತಲೇ ಇದ್ದಾರೆ.  ಫ್ಲೂ (ಇನ್‌ಫ್ಲೂಯೆಂಜ಼ಾ) ಒಂದರಿಂದಲೇ ವರ್ಷಕ್ಕೆ ಸಾವಿರಾರು ಜನ ಸಾಯುತ್ತಿದ್ದಾರ‍ೆ.  ನಿಮಗೆಲ್ಲ ನೆನಪಿರುವಂತೆ, 2004ರ ಡಿಸೆಂಬರ್ 26ರಂದು ಬಂದ ಸುನಾಮಿಯಿಂದ ಸುಮಾರು ಎರಡೂವರೆ ಲಕ್ಷ ಜನ ಸತ್ತು ಹೋಗಿದ್ದು, ಸಾವಿರಾರು ಜನ ತಮ್ಮ ಮನೆ-ಮಠವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ.


ಆದರೆ, ಈ ಕೋವಿಡ್-೧೯ ಎನ್ನುವ ಮಹಾಮಾರಿ ನಮ್ಮೆಲ್ಲರನ್ನು ಎಲ್ಲಿ ಆಪೋಷನ ತೆಗೆದುಕೊಳ್ಳುವುದೋ ಎನ್ನುವುದು ಎಲ್ಲರ ಭೀತಿ.  ಎಲ್ಲರನ್ನೂ ಒಮ್ಮೆಲೇ ಬಲಿ ತೆಗೆದುಕೊಂಡ ಸುನಾಮಿಯಂತಲ್ಲ ಇದರ ಕಥೆ, ಒಂದು ಸಾಮಾಜಿಕ ವ್ಯವಸ್ಥೆಯನ್ನೇ ಹಂತ-ಹಂತವಾಗಿ ಮಲಗಿಸಿ, ಯಾವ ಶಸ್ತ್ರಾಸ್ತವನ್ನೂ ಬಳಸದೇ ಎಲ್ಲರನ್ನೂ ಮುಗಿಸಿಬಿಡುವ ಶಕ್ತಿ ಈ ವೈರಸ್ಸಿಗಿದೆ.
ಆದರೆ, ಮತ್ತೆ ಅದೇ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ: ಈ ನೂರು ವರ್ಷಗಳಲ್ಲಿ ನಾವು ದುರ್ಬಲರಾಗಿದ್ದೇವೆಯೇ?

ನಮ್ಮ ಗ್ಲೋಬಲೈಜೇಷನ್ ಅನ್ನೋದೇ ನಮಗೆ ಶಾಪವಾಯಿತು.  ನೂರು ವರ್ಷಗಳ ಹಿಂದೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಇಷ್ಟೊಂದು ಕ್ಷಿಪ್ರವಾಗಿ ಹೋಗಿ-ಬರುವ ವ್ಯವಸ್ಥೆ ಇದ್ದಿರಲಿಲ್ಲ.  ಅಲ್ಲದೇ ನಮ್ಮೆಲ್ಲರ ಓಡಾಟಗಳು ಸ್ಥಳೀಯ ಜಿಲ್ಲೆ-ಪ್ರ್ಯಾಂತ್ಯಗಳಿಗೆ ಸೀಮಿತವಾಗಿರುತ್ತಿದ್ದುದು ವಿಶೇಷ.  ಒಂದು ದೇಶದಲ್ಲಿ ಹುಟ್ಟಿದ ಮಹಾಮಾರಿ ಮತ್ತೊಂದು ದೇಶವನ್ನು ಈಗ ಆಕ್ರಮಿಸುತ್ತಿರುವಂತೆ ಅತಿಯಾದ ವೇಗದಲ್ಲಂತೂ ಆಕ್ರಮಿಸುತ್ತಿರಲಿಲ್ಲ.  ಜೊತೆಗೆ, ಆಗಿನ ಕಾಲದಲ್ಲಿ ವಾಹನ ವ್ಯವಸ್ಥೆಗಳೇ ಇರಲಿಲ್ಲ - ಇದ್ದರೂ ಕೆಲವೇ ಜನರಿಗೆ ಸೀಮಿತವಾಗಿರುತ್ತಿತ್ತು.  ಆದರೆ, ಈಗ ಹಾಗಿಲ್ಲ.  ಪ್ರಪಂಚ ಒಂದು ಹಳ್ಳಿಯಾಗಿದೆ (global village), ಅದರಂತೆ ಒಂದು ಹಳ್ಳಿಯಲ್ಲಾಗುವ ಎಲ್ಲ ಘಟನೆಗಳಿಗೂ ಆ ಹಳ್ಳಿಯ ಎಲ್ಲರೂ ಸ್ಪಂದಿಸುತ್ತಾರೆ, ಅದನ್ನು ಪ್ರತಿಬಿಂಬಿಸುತ್ತಾರೆ.  ಈಗಿನ ಟ್ರೆಂಡುಗಳೂ ಕೂಡ ಹುಟ್ಟುವುದೂ-ಸಾಯುವುದೂ ಅಷ್ಟೇ ವೇಗವಾಗಿ.

ಆದರೆ, ನಮ್ಮ ಹೆಚ್ಚಿನ ವಿದ್ಯಾಭ್ಯಾಸ (or simply awareness), ನಮ್ಮಲ್ಲಿ ಹುಲುಸಾಗಿ ಬೆಳೆದು ಯಥೇಚ್ಛವಾಗಿ ಸಿಗುವ ತಂತ್ರಜ್ಞಾನ, ಇವು ನಮ್ಮಲ್ಲಿನ ಆರ್ಗನೈಜೇಷನ್ ಶಕ್ತಿಯನ್ನು ಕಡಿಮೆ ಮಾಡಿವೆಯೇ?

ಉದಾಹರಣೆಗೆ: ಭಾರತದ ಸ್ವಾತಂತ್ರ್ಯ ಸಂಗ್ರಾಮ (೧೮೫೭-೧೯೪೭) ವನ್ನು ವಿಶ್ಲೇಷಿಸಿದಾಗ, ಆಗಿನ ಕಾಲದಲ್ಲಿ ಅದು ಹೇಗೆ ಆರಂಭವಾಗಿ, ದೇಶದುದ್ದಕ್ಕೂ ಬೆಳೆಯಿತು? ಎಂದು ಸೋಜಿಗಗೊಳ್ಳಬೇಕಾಗುತ್ತದೆ.  ಈಗಿನ ಕಾಲದಲ್ಲಾದರೆ ಕ್ಷಣಾರ್ಧದಲ್ಲಿ ದೇಶವೇನು? ವಿಶ್ವದ ಯಾವ ಭಾಗವನ್ನು ಬೇಕಾದರೂ ನಮ್ಮ ಸುದ್ದಿಗಳಿಗಾಗಿ ತಡಕಾಡಬಹುದು.  ಆಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ, ಜನರು ಈಗಿನಂತೆ ಹೆಚ್ಚು-ಹೆಚ್ಚು ಪದವೀಧರರಾಗಿರಲಿಲ್ಲ, ಆದರೆ ಸಮರ್ಥ ನಾಯಕತ್ವವನ್ನು ನಂಬಿ ಅವರೆಲ್ಲರೂ ಮುಂದೆ ಬಂದಿದ್ದರು, ತಮ್ಮ ತಮ್ಮ ಮನೆ-ಮಠವನ್ನು ತೊರೆದು ರಾಷ್ಟ್ರದ ಬಲವಾಗಿ ನಿಂತಿದ್ದರು.  ಮಾಡು-ಇಲ್ಲವೇ-ಮಡಿ ಎನ್ನುವ ಚಳವಳಿಯಲ್ಲಿ ಆನೇಕರು ತಮ್ಮ ಕೊರಳನ್ನು ಸಮರ್ಪಿಸಿದ್ದರು.

ಅವರದ್ದೂ ಸಹ ಜೀವವಲ್ಲವೇ? ಅವರೆಲ್ಲರಿಗೂ ಜೀವವಿರಲಿಲ್ಲವೇ? ಅವರಿಗೂ ಕೂಡ ತಮ್ಮ-ತಮ್ಮ ಸಂಸಾರಗಳ ಹೊಣೆ ಇದ್ದಿರಲಿಲ್ಲವೇ? ಆದರೆ, ತಮ್ಮ ವೈಯಕ್ತಿಕ ಆಗುಹೋಗುಗಳ ಮುಂದೆ ರಾಷ್ಟ್ರ ದೊಡ್ಡದಾಗಿತ್ತು.  ಹೋರಾಟ ಉಸಿರಾಗಿತ್ತು.  ರಾಷ್ಟ್ರ ನಾಯಕರುಗಳಿಗೆ ಬೆಂಬಲ ಕೊಡಬೇಕಾಗಿತ್ತು.  ಹೀಗೆ, ಅವರುಗಳೆಲ್ಲ ದೊಡ್ಡದನ್ನು ಗುರಿಯಾಗಿಟ್ಟುಕೊಂಡು, ಉಳಿದೆಲ್ಲವನ್ನು ಗೌಣವಾಗಿ ಕಂಡಿದ್ದರು.

ಮುಂದೆ ಕಾಲ ಕ್ರಮೇಣ, ಕುಟುಂಬಗಳು ಅವಿಭಕ್ತ ಪರಿಧಿಯನ್ನು ದಾಟಿ, ನ್ಯೂಕ್ಲಿಯರ್ ಕುಟುಂಬಗಳಾದವು.  ಜನರ ವಲಸೆ ಸಹಜವಾಯಿತು.  ನಗರೀಕರಣ ಹೆಚ್ಚಿತು.  ವಿದ್ಯಾಭ್ಯಾಸದ ಮಟ್ಟ ಬೆಳೆಯಿತು.  ಆದರೆ - ರಾಷ್ಟ್ರ, ಸ್ವಾತಂತ್ರ್ಯ, ಬಿಡುಗಡೆ, ಸ್ವಇಚ್ಛೆ, ಪ್ರಜಾಪ್ರಭುತ್ವ ಇವುಗಳು ಜನರಿಗೆ ಆಯ್ಕೆಯ ಹಕ್ಕನ್ನು ನೀಡಿದವು.  ಜನರು ತಮಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವಂತಾದರು.
ಈ ಆಯ್ಕೆಯ ಪ್ರತಿಫಲವಾಗಿ ಕೆಲವೊಮ್ಮೆ ಅದರಲ್ಲಿ ನನಗೆ ಸ್ವಾರ್ಥ ಕಂಡುಬರುತ್ತದೆ.  ಒಂದುವೇಳೆ, ಈಗೇನಾದರೂ ಸ್ವತಂತ್ರ್ಯ ಭಾರತದ ಚಳುವಳಿಯಂಥವು ಆರಂಭವಾದರೆ, ಅದಕ್ಕೆ ಬೆಂಬಲ ಕೊಡುವವರಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.  ಈ ಬೆಂಬಲ ಎನ್ನುವುದು ತನು-ಮನ-ಧನದ ರೂಪದಲ್ಲಿರಬಹುದು, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಭಿಸಿರಬಹುದು (petition), ಅಥವಾ ಘೇರಾವ್/ಬಂದ್ (ಸತ್ಯಾಗ್ರಹ) ಮತ್ತಿತರ ಭೌತಿಕ ರೂಪದಲ್ಲಿರಬಹುದು.

ನಮ್ಮಲ್ಲಿ ಚಳವಳಿಗಳಾದಾಗ ವ್ಯವಸ್ಥೆಯ ವಿರುದ್ಧ ಜನ ತಮ್ಮ ’ಆತ್ಮಾರ್ಪಣೆ" ಮಾಡಿಕೊಳ್ಳುವುದನ್ನು ನೋಡಿದ್ದೇವೆ.  ಇದಕ್ಕೂ ಒಂದು ಹೆಜ್ಜೆ ಮುಂದುವರಿದು ಯೋಚಿಸಿದಾಗ ಒಂದು ವ್ಯವಸ್ಥೆಯ ವಿರುದ್ಧ ಅಥವಾ ಮತ್ತೊಂದು ವ್ಯವಸ್ಥೆಯ ಪರವಾಗಿ ಜನರು "ಆತ್ಮಾಹುತಿ"ಯನ್ನು ಮಾಡಿಕೂಳ್ಳುವುದನ್ನು ನೋಡಿದ್ದೇವೆ.  ಆದರೆ, ಒಂದು ಖಾಯಿಲೆಯನ್ನು ಹರಡುವ ವೈರಸ್ಸಿನ ವಿರುದ್ಧವಾಗಿ ಜನರನ್ನು ಮೂರು ವಾರಗಳ ಕಾಲ ಕೂಡಿ ಹಾಕಿರುವಂತೆ ಕೇಳಿಕೊಂಡಾಗ ಜನರಿಗೆ ಮನೆಯಲ್ಲಿರಲು ಕಷ್ಟವಾಗುತ್ತದೆ!  ಅದರಿಂದ, ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆಯಲ್ಲ!

***
ಜನರು ಸುಖದ ಸುಪ್ಪತ್ತಿಗೆಯಲ್ಲಿ (comfort zone) ಕುಳಿತು ತೇಲಾಡುತ್ತಿರುವಾಗ ಯಾವುದೇ ಸಂಶೋಧನೆಗಳು ಹೊರಗೆ ಬಾರವು.  ಆಭರಣವಾಗುವ ಮೊದಲು ಚಿನ್ನಕ್ಕೆ ಮೂಸೆಯಲ್ಲಿ ಪುಟವಿಟ್ಟ ಹಾಗೆ, ಶಿಲ್ಪ ಕಲಾಕೃತಿ ಆಗುವ ಮೊದಲು ಕಠಿಣವಾದ ಶಿಲೆಯನ್ನು ಬಾಚಿ-ಚಾಣಗಳ ಮೂಲಕ ಕುಟ್ಟಿದ ಹಾಗೆ, ಕಬ್ಬನ್ನು ಹಿಂಡಿ ಸವಿಯಾದ ಬೆಲ್ಲವನ್ನು ತೆಗೆದ ಹಾಗೆ - ಒಂದು ಸಮಾಜವೂ ತನ್ನ ಕಷ್ಟಗಳ ಕುಲುಮೆಯಲ್ಲಿ ಬೇಯಬೇಕಾಗುತ್ತದೆ, ಹಾಗಾಗುವುದರಿಂದಲೇ ಮುಂದಿನ ತಲೆಮಾರಿಗೆ ನಾವು ಹೊಸದೇನನ್ನೋ ತೆಗೆದುಕೊಂಡು ಹೋಗಲು ಸಾಧ್ಯ.  ಇಲ್ಲಿ ಸಾಧನೆ ಮುಖ್ಯವಾಗುತ್ತದೆ, ಇಲ್ಲಿ ದಿಢೀರ್ ಜನಪ್ರಿಯತೆ ಸಿಗುವುದಿರಲಿ ವರ್ಷಗಟ್ಟಲೇ ಮಾಡಿದ ಶ್ರಮಕ್ಕೆ ಕಿರುಗಾಸು ಬೆಲೆಯೂ ಸಿಗದಂತಾಗಬಹುದು, ಆದರೆ ಈ ರೀತಿಯು ಅನೇಕ ಪ್ರಯತ್ನಗಳು ನಮ್ಮನ್ನು ಸಂಪೂರ್ಣರನ್ನಾಗಿ ಮಾಡುವುದರ ಜೊತೆಗೆ ಸಬಲರನ್ನಾಗಿಯೂ ಮಾಡಬಲ್ಲವು - ಎಂಬುದು ಈ ಹೊತ್ತಿನ ನನ್ನ ನಂಬಿಕೆ!

Wednesday, April 01, 2020

ನೀರವತೆಯ ಮರಣ ಮೃದಂಗ

ಎಲ್ಲೆಲ್ಲೂ ಶೂನ್ಯತೆ, ಎಲ್ಲ ಕಡೆ ನಿಶ್ಶಬ್ಧ, ಒಂದು ರೀತಿಯಲ್ಲಿ ಇಡೀ ಪ್ರಪಂಚದ ಚಲನವಲನವೇ ನಿಂತು ಹೋದ ಹಾಗೆ, ಒಂದು ರೀತಿಯಲ್ಲಿ ಜಗತ್ತಿನ ನರನಾಡಿಗಳೇ ಸ್ತಬ್ಧವಾದ ಹಾಗೆ.  ಬೀಸುತ್ತಿರುವ ಗಾಳಿಯಿಂದ ಹಿಡಿದು, ಹರಿಯುವ ನೀರಿನವರೆಗೆ, ಪಕ್ಷಿ-ಪ್ರಾಣಿ ಸಂಕುಲಗಳು ಬೆರಗಾಗಿ, ಗಿಡ-ಮರಗಳೂ ತಮ್ಮನ್ನು ತಾವು ಚಿವುಟಿ ನೋಡಿಕೊಳ್ಳುವ ಹಾಗೆ... ಮನುಕುಲ ಸಂಪೂರ್ಣ ತಟಸ್ಥಗೊಂಡಿದೆ.  ಜೊತೆಗೆ ತನ್ನ ಜೀವಕ್ಕೇ ಕುತ್ತಾಗಿ ಹೆದರಿಕೊಂಡು ತಾನು ಕಟ್ಟಿಕೊಂಡ ಗೂಡಿನಲ್ಲೇ ಅವಿತು ಕುಳಿತಿದೆ.

ಇವೆಲ್ಲವೂ ಆಗಿರುವುದು ಯಾವುದೋ ದೈತ್ಯ ಪರಂಪರೆಯ ಬೂಟಾಟಿಕೆಯ ಆಕ್ರಮಣದಿಂದಲ್ಲ, ಯಾವುದೋ ಭೀಕರ ಶಕ್ತಿಯ ಅವ್ಯಾಹತ ಹೊಡೆತದಿಂದಲ್ಲ.  ಇವೆಲ್ಲವೂ ಆಗಿರುವುದು ಯಾವುದೋ ನೆರಳಿಗಿಂತಲೂ ಮಿಗಿಲಾದ, ಮನಸ್ಸಿಗಿಂತಲೂ ವೇಗವಾದ, ಬೆಂಕಿಗಿಂತಲೂ ತೀಕ್ಷ್ಣವಾದ, ಪ್ರಕಾಶಮಾನವಾದ ಆಯುಧದಿಂದಲ್ಲ... ಎಲ್ಲಕ್ಕೂ ಮಿಗಿಲಾಗಿ ಕಣ್ಣಿಗೆ ಕಾಣದ, ಇತ್ತ ಕಡೆ ಪೂರ್ಣ ಪ್ರಮಾಣದಲ್ಲಿ ಜೀವವೂ ಇರದ, ಎಲ್ಲೋ ಹುಟ್ಟಿ ಎಲ್ಲೋ ಪಸರಿಸಿ, ಎಲ್ಲೋ ರೂಪ ಪರಿವರ್ತನೆಯನ್ನು ಪಡೆದು ಪ್ರಪಂಚದಾದ್ಯಂತ ಇರುವ ಟ್ರಿಲಿಯನ್ನುಗಟ್ಟಲೆ ಜೀವ ಪ್ರಮಾಣದಲ್ಲಿ ಕೇವಲ ಮಾನವನನ್ನು ಆಧರಿಸಿ ಕಾಡುತ್ತಿರುವುದು ಮೈಕ್ರೋಸ್ಕೋಪಿನಲ್ಲೂ ಕಷ್ಟಪಟ್ಟು ಹುಡುಕಿದರೆ ಕಾಣುವ ಒಂದು ವೈರಾಣು, ಅಷ್ಟೇ!

ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ.  ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಬೇಧಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು!

***

ಏಳು ಬಿಲಿಯನ್‌ಗಿಂತಲೂ ಹೆಚ್ಚಿರುವ ನಾವೆಲ್ಲ ನಮ್ಮ ಪರಾಕ್ರಮದ ಉತ್ತುಂಗದಲ್ಲಿದ್ದೆವು.  ಪಕ್ಷಿಗಿಂತಲೂ ಮಿಗಿಲಾಗಿ ಹಾರಿದೆವು, ಮೀನಿಗಿಂತಲೂ ವೇಗವಾಗಿ ಈಜಿದೆವು.  ಇಡೀ ಭೂಮಂಡಲದ ಮೂಲೆ-ಮೂಲೆಗಳಲ್ಲಿ ನಮ್ಮ ಉಸಿರಿನ ಸೋಂಕನ್ನು ಪಸರಿಸಿದೆವು.  ನಾವು ಯಂತ್ರಗಳನ್ನು ಹುಟ್ಟುಹಾಕಿದೆವು, ತಂತ್ರಗಳನ್ನು ಹೆಣೆದೆವು.  ನಮ್ಮ ಇರುವಿಕೆಯನ್ನು ಪ್ರಶ್ನಿಸುವಷ್ಟರ ಮಟ್ಟಿಗೆ ಆಗಿಂದಾಗ್ಗೆ ಹೊಡೆತಗಳನ್ನೂ ತಿಂದೆವು.  ಸುಮಾರು ನೂರು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಗಾಳಿಯಲ್ಲಿ ಹರಡಿದ ಫ್ಲೂ (ಸ್ಪಾನಿಷ್ ಫ್ಲೂ) ಐವತ್ತು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡ ದಾಖಲೆಗಳಿವೆ.  ತದನಂತರ ಐವತ್ತರ ದಶಕದಲ್ಲಿ ಹಾಂಗ್‌ಕಾಂಗ್‌ನಿಂದ ಶುರುವಾಗಿ ಎಲ್ಲಕಡೆಗೆ ಹರಡಿದ ಏಷಿಯನ್ ಫ್ಲೂ, ಒಂದು ಮಿಲಿಯನ್‌ಗೂ ಹೆಚ್ಚು ಜನರನ್ನು ಕೊಂದು ಹಾಕಿತು.  ತದನಂತರ SARS, H1N1, AIDS ಮೊದಲಾದ ಖಾಯಿಲೆಗಳಿಂದ ಮನುಕುಲ ಸತತವಾಗಿ ಸಂಕಷ್ಟಕ್ಕೆ ಒಳಗಾಗಿದ್ದರೂ, ಕಳೆದ ನೂರು ವರ್ಷಗಳಲ್ಲಿ ಇಡೀ ಪ್ರಪಂಚವನ್ನೇ ಬಂದ್ ಮಾಡಿದ ಕೀರ್ತಿ ೨೦೧೯-೨೦ರ ಕೋವಿಡ್ ಕೊರ‍ೋನಾ ವೈರಸ್‌ಗೆ ಸಲ್ಲುತ್ತದೆ. ನಮ್ಮ ಇತಿಹಾಸದಲ್ಲಿ  ಬರೀ ಫ್ಲೂ ಖಾಯಿಲೆ ಒಂದೇ ಅಲ್ಲದೇ ಪ್ಲೇಗ್, ಮೀಸಲ್ಸ್, ಸ್ಮಾಲ್‌ಪಾಕ್ಸ್, ಮೊದಲಾದವೂ ಕೂಡ ತಮ್ಮ ಶಕ್ತ್ಯಾನುಸಾರ ಮಾನವನನ್ನು ಕಟ್ಟಿಹಾಕಿವೆ.  ಇವೆಲ್ಲ ಸರ್ವವ್ಯಾಪಿಯಾಗಿ ಗಾಳಿಯಲ್ಲೇ ಹರಡುವಂಥ ಮಹಾಮಾರಿಗಳ ವಿಶೇಷವೆಂದರೆ, ಈ ಎಲ್ಲ ಖಾಯಿಲೆಗಳು ಮೂಲತಃ  ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಜೀವ-ನಿರ್ಜೀವ ಹಂತದಲ್ಲಿರುವ ಕೀಟಾಣು-ಜೀವಾಣುಗಳಿಂದ ಶುರು ಆದಂತವುಗಳು.  ಹಾಗೆಯೇ, ಈ ಎಲ್ಲ ಖಾಯಿಲೆಗಳು ನಮಗೆ ಬಂದಿದ್ದರಿಂದಲೇ ನಮ್ಮ ವೈದ್ಯಕೀಯ ವಿಜ್ಞಾನ ಇಷ್ಟೊಂದು ಮುಂದುವರೆದಿರುವುದು ಎಂದರೂ ತಪ್ಪಾಗಲಾರದು.  ಒಂದು ರೀತಿಯಲ್ಲಿ ಕಣ್ಣಿಗೆ ಕಾಣದ ಈ ಸೂತ್ರಧಾರಿ ಜೀವ ವೈವಿಧ್ಯ ನಮ್ಮನ್ನು ಕಾಲಕ್ರಮೇಣ ಕುಣಿಸುತ್ತಿರುವುದು.

***

ಮನುಕುಲ ಇದನ್ನೂ ಗೆದ್ದು ನಿಲ್ಲುತ್ತದೆ.  ಆದರೆ, ಈ ಬಾರಿ ವಿಶೇಷವಾದ ಪಾಠವನ್ನು ಕಲಿಯುವುದರ ಮೂಲಕ ಇನ್ನು ಮುಂದಿನ ಐವತ್ತು-ಎಪ್ಪತ್ತೈದು ವರ್ಷಗಳಿಗಾಗುವಷ್ಟರ ಮಟ್ಟಿನ ಅನುಭವವನ್ನು ಪಡೆಯುತ್ತದೆ.  ಉತ್ತುಂಗಕ್ಕೆ ಏರುತ್ತಿರುವ ನಾವು ಎಷ್ಟು ಚಿಕ್ಕವರು ಎಂಬುದನ್ನು ನೆನಪಿಸುವುದಕ್ಕಾದರೂ ಇದು ಬೇಕಾಗುತ್ತದೆ.  ಹಿಂದಿನ ಮಹಾಮಾರಿ ರೋಗಗಳ ಮೂಲದಲ್ಲಿ ಬರೀ ನಿಸರ್ಗದ ಕೈ ಇತ್ತೋ, ಅಥವಾ ಜಾಗತಿಕ ಯುದ್ಧಗಳಲ್ಲಿ ತನ್ನನ್ನು ತಾನೇ ಹುಡುಕಿಕೊಳ್ಳುತ್ತಿರುವ ಮಾನವ ತನ್ನ ಸಂತತಿಯನ್ನೇ ಪರೀಕ್ಷೆಗೊಡ್ಡುವ ವಿಷಮ ಹಂತಕ್ಕೆ ಬಂದು ತಲುಪಿದ್ದನೋ ಯಾರು ಬಲ್ಲವರುಆದರೆ, ಇಂದಿನ ದಿನಗಳಲ್ಲಿ ಅಧಿಕವಾಗಿ ಹರಡುತ್ತಿರುವ ಕೋವಿಡ್ ಸಂತತಿಯ  ಹಿನ್ನೆಲೆಯಲ್ಲಿ ಮಾನವನ ಹುನ್ನಾರ ಖಂಡಿತ ಇದೆ - ಇದು, ಒಂದೇ ಮುಗ್ಧ ಜೀವಿಗಳ ಮಾರಣ ಹೋಮದ ಫಲ, ಅಥವಾ ಯಾವುದೋ ಒಂದು ದೇಶ, ಜಗತ್ತಿನಲ್ಲಿ ತಾನೇ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆದು ನಿಲ್ಲಬೇಕು ಎನ್ನುವುದರ ಹುನ್ನಾರ.  ಇಂದಿನ ವೈರಸ್ ವಿದ್ಯಮಾನಗಳನ್ನು ಮಾನವ ನಿರ್ಮಿತ ಎಂದುಕೊಂಡರೆ, ಕೆ.ಎಂ. ಗಣೇಶಯ್ಯನವರ ಶಿಲಾಕುಲ ವಲಸೆಯಲ್ಲಿ ಬರೆದ ಹಾಗೆ, ನಮ್ಮ ಇತಿಹಾಸವನ್ನು, "ಮಾನವ ಹುಟ್ಟಿದ, ಕಾದಾಡಿದ, ಮತ್ತೆ ಸತ್ತ" ಎಂದು ಸಂಕ್ಷಿಪ್ತವಾಗಿ ವರದಿ ಮಾಡಲೇನೂ ಅಡ್ಡಿಯಿಲ್ಲ. ಇನ್ನೂರು ವರ್ಷಗಳ ಹಿಂದೆ ಬ್ರಿಟೀಷ್ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ಎಲ್ಲ ಕಡೆ ಮೆರೆದಿತ್ತು - ಜನರ ಜಲ, ಕುಲ, ನೆಲೆ, ಭಾಷೆ, ಸಂಸ್ಕೃತಿ, ಧರ್ಮಗಳನ್ನು ಬದಿಗೊತ್ತಿ ತನ್ನ "ಧರ್ಮ"ವನ್ನು ಅದು ಹೇರಿತ್ತು.  ಆದರೆ, ಆಗ ಜಗತ್ತು ವಿಭಿನ್ನವಾಗಿತ್ತುವಿಶ್ವದೆಲ್ಲ ಕಡೆಯ ದೇಶ-ಜನರಲ್ಲಿ ಇಷ್ಟೊಂದು ಮಟ್ಟದ ಸಾಮರಸ್ಯ ಇರಲಿಲ್ಲ.  ಆದರೆ, ಇಂದು ಜಗತ್ತು ಒಂದು ಜಾಗತಿಕ ವಲಯವಾಗಿದೆ, ಪ್ರತಿಯೊಂದು ರೀತಿಯಲ್ಲಿಯೂ ನಾವು ಮತ್ತೊಬ್ಬರನ್ನುಅವಲಂಬಿಸಿದ್ದೇವೆ. ಈ ಸಂದರ್ಭದಲ್ಲಿ ಜಗತ್ತಿನ ಯಾವುದೋ ಒಂದು ಭಾಗ ತನ್ನ ಹೆಚ್ಚುಗಾರಿಕೆಯನ್ನು ಇತರರ ಸೋಲಿನಲ್ಲಿ ಪ್ರದರ್ಶಿಸುವುದು ಕಷ್ಟಸಾಧ್ಯ.

***

ಗಾಳಿ ಇರುವಲ್ಲಿ ಧೂಳು ಇರುವುದು ಸಹಜ.  ಆದರೆ, ಆ ಧೂಳೇ ನಮ್ಮನ್ನು ಸಂಕಷ್ಟಕ್ಕೆ ತಳ್ಳದಿರಲಿ.  ವಿಕಾರಿ ನಾಮ ಸಂವತ್ಸರದ ವಿಕಾರತೆ, ಅದರ ಕಾಲ ಅಂತ್ಯವಾದ ನಂತರ ಇನ್ನಾದರೂ ಕಡಿಮೆ ಆಗಲಿ.  ಕಳೆದೊಂದು ವರ್ಷದಿಂದ ಅತಿವೃಷ್ಟಿ, ಕಾಡಿನ ಬೆಂಕಿ, ಧರ್ಮ ಸಂಬಂಧಿ ಅತ್ಯಾಚಾರ-ಅನಾಚಾರಗಳಲ್ಲಿ ನೊಂದ ಎಲ್ಲರಿಗೂ ಸಾಂತ್ವನ ಸಿಗಲಿ.  ಈ ಕೊರೋನಾ ವೈರಸ್ಸು ನಮ್ಮ ನಿಜ ಸ್ಥಿತಿಯನ್ನು ಹೊರತರುತ್ತಿದೆ.  ಕುಲುಮೆಯಲ್ಲಿ ಕುದಿಸಿ ಪುಟಗಟ್ಟಿದ ಚಿನ್ನದಲ್ಲೇ ಒಂದು ಆಕರ್ಷಕ ಆಕಾರ ಮತ್ತು ಹೊಳಪು ಬರುವುದು, ಸುಪ್ಪತ್ತಿಗೆಯ ವಲಯ ಸೃಷ್ಟಿಸುವ ಆರಾಮಿನಲ್ಲಿ ಎಂದೂ ಸಂಶೋಧನೆಗಳಾಗಲೀ, ಆವಿಷ್ಕಾರಗಳಾಗಲೀ ನಡೆಯವು.  ಹಾಗೆಯೇ, ಈ ಪ್ರಸ್ತುತ (ದುಃ)ಸ್ಥಿತಿಯಲ್ಲಿ, ಮನುಕುಲ ಮತ್ತೆ ಸೆಡ್ಡು ಹೊಡೆದು ನಿಲ್ಲುವಂಥ ಸಂಶೋಧನೆಗಳು, ನವನಾವಿನ್ಯತೆಗಳು ಪ್ರಚುರಗೊಳ್ಳುತ್ತವೆ.  ಮನುಕುಲ ಹಿಂದಿಗಿಂತಲೂ ಮತ್ತಷ್ಟು ಬಲಶಾಲಿಯಾಗುತ್ತದೆ.  ಆದರೆ, ನಾವು ಬಲವಾದಷ್ಟೂ ನಿಸರ್ಗವನ್ನು ಗೌರವಿಸುವುದನ್ನು ಕಲಿಯಬೇಕು, ಇಲ್ಲವೆಂದಾದರೆ ಇದಕ್ಕಿಂತಲೂ ಹೆಚ್ಚು ಬೆಲೆ ಕೊಡಬೇಕಾದ ಕಾಲ ಬರುವುದು ದೂರವೇನಿಲ್ಲ.


Friday, September 27, 2019

ತಿಂಗಳಯಾನ ತಂಗಳಾಗದಿರಲಿ...

ಭಾರತದ ಬಾಹ್ಯಾಕಾಶದ ಬಹು ಮುಖ್ಯ ಮೈಲಿಗಲ್ಲಾಗಿ ಈ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶ್ವದಾದ್ಯಂತ ಸಂಭ್ರಮವನ್ನು ಹಂಚಿಕೊಳ್ಳಬೇಕಾಗಿದ್ದ ನಮಗೆ, ಸಿಕ್ಕಿದ್ದು ಕಡಿಮೆ ಯಶಸ್ಸೇನಲ್ಲ.  ಅತಿ ಚಿಕ್ಕ ಬಜೆಟ್ಟಿನಲ್ಲಿ ವಿಶ್ವವೇ ಬೆರಗಾಗುವಂತೆ ಈ ಸಾಹಸಕ್ಕೆ ಕೈ ಹಾಕಿ, ವಿಶ್ವದ ಹಿರಿಯಣ್ಣರನ್ನೂ ಬೆಚ್ಚಿ ಬೀಳಿಸುವ ಹಾಗೆ ಸೆಡ್ಡು ಹೊಡೆದು ಆಂತರಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ವಿಕ್ರಮ್ ಮತ್ತು ಪ್ರಜ್ಞಾನ್‌ರು ಚಂದ್ರನ ನೆಲದಿಂದ ಇನ್ನೇನು ಕೇವಲ ಎರಡು ಕಿಲೋಮೀಟರ್ ಇರುವಂತೆ ಅಪ್ಪಳಿಸಿ ಅಸು ನೀಗಿದ್ದು ನಮ್ಮ ವಿಜ್ಞಾನಿಗಳಲ್ಲಿ ಹೊಸ ಚಾಲೆಂಜ್ ಅನ್ನು ಹುಟ್ಟಿಸಲಿ.  ಏನಿಲ್ಲವೆಂದರೂ ಚಂದ್ರನ ಸುತ್ತಲೂ ಒಂದು ವರ್ಷ ಸುತ್ತುವ ಆರ್ಬಿಟರ್‌ನಿಂದಾಗಿಯೂ ನಾವು ಕಲಿಯುವುದು ಬಹಳಷ್ಟಿದೆ.  ಯಾರೂ ಕಾಲಿಡದ ಚಂದ್ರನ ದಕ್ಷಿಣ ಪ್ರದೇಶವನ್ನು ಹೊಕ್ಕೇ ತೀರುತ್ತೇವೆಂದು ಚಂದ್ರಯಾನ-೩ ರಲ್ಲಿ ನಮ್ಮ ವಿಜ್ಞಾನಿಗಳು ಗೆದ್ದು ಸಂಭ್ರಮಿಸುವ ದಿನಗಳು ಹತ್ತಿರ ಬರಲಿ.

***
ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಅಳತೆ ಮಾಡಿದಾಗ ಮೌಂಟ್ ಎವರೆಸ್ಟ್ ಪರ್ವತದ ಎತ್ತರ 27 ಸಾವಿರ ಅಡಿಗಳು (8800 ಮೀಟರುಗಳು, 8.8 ಕಿಲೋಮೀಟರುಗಳು).  ನನ್ನ ಊಹೆಯ ಪ್ರಕಾರ ಚಂದ್ರನ ದಕ್ಷಿಣ ಪ್ರದೇಶ ಅದು ಉದ್ಭವಿಸಿದಾಗಿನಿಂದ ಸೂರ್ಯನ ಬೆಳಕನ್ನೇ ಕಾಣದೆ ದಟ್ಟವಾದ ಮೋಡ, ಮಂಜಿನ ಪರದೆಯೊಳಗೆ ಏನಾದರೂ ಅವಿತಿದ್ದಿರಬಹುದು.  ನಮ್ಮ ವಿಕ್ರಮ್ ಲ್ಯಾಂಡ್ ಆಗಬೇಕಾದ ಜಾಗದಲ್ಲಿ ಒಂದು ವೇಳೆ ಯಾವುದಾದರೂ ಪರ್ವತದಂಥ ಪ್ರದೇಶ ಹಾದು ಬಂದಿದ್ದರೆ?  ಸೂರ್ಯನಿಗೆ ದಿನವೂ ಮುಖವೊಡ್ಡುವ ಭೂಮಂಡಲದಲ್ಲೇ 8 ಕಿಲೋಮೀಟರ್ ಎತ್ತರದ ಪರ್ವತಗಳಿರುವಾಗ ಚಂದ್ರನ ಯಾರೂ ಅಳೆಯದ ಈ ಭಾಗದಲ್ಲಿ ಪರ್ವತಮಯವಾಗಿದ್ದರೆ, ಅಥವಾ ಉಬ್ಬು ತಗ್ಗುಗಳು ದೊಡ್ಡದಾಗಿದ್ದು ನಾವು ಅವುಗಳನ್ನು ಅಳೆಯಲಾರದೆಯೋ ಅಥವಾ ತಪ್ಪಾಗಿ ಅಳೆದೋ ಏನೋ ಗೊಂದಲವಾಗಿರಬಹುದು.  ದುರದೃಷ್ಟವಶಾತ್, ಸೆಪ್ಟೆಂಬರ್ 6 ನೇ ತಾರೀಖಿನಂದು ತನ್ನ ಲ್ಯಾಂಡಿಂಗ್ ಸೈಟ್ ಹತ್ತಿರಕ್ಕೆ ಹೋದ ವಿಕ್ರಮ್ ಕೊನೆಯ ಕೆಲವು ನಿಮಿಷಗಳಲ್ಲಿ ಪತನಗೊಂಡಿದ್ದನ್ನು ಬಿಟ್ಟರೆ, ಆರ್ಬಿಟರ್‌ನಿಂದಾಗಲೀ, ಮತ್ತಿನ್ಯಾವ ಉಪಗ್ರಹಗಳಿಂದಾಗಲೀ ಬೇರೆ ಯಾವುದೇ ಮಾಹಿತಿಯನ್ನು ಕಂಡುಕೊಳ್ಳಲಾಗದೇ, ಏಕೆ ಹೀಗಾಯಿತು ಎನ್ನುವುದೂ ಗೊತ್ತಿಲ್ಲದಂತಾಗಿರುವುದು ಸೈಂಟಿಫಿಕ್ ಕಮ್ಯುನಿಟಿಗೆ ಅರಗಿಸಿಕೊಳ್ಳಲು ಬಹಳ ಕಷ್ಟದ ವಿಚಾರ.
ಕೇವಲ 87 ಮಿಲಿಯನ್ ಡಾಲರುಗಳಲ್ಲಿ (ರೂ.600 ಕೋಟಿ) ಈ ಮಹತ್ಸಾಧನೆಯನ್ನು ನಾವು ಮಾಡಿರುವುದು ಬಹಳ ಸಣ್ಣ ವಿಷಯವೇನಲ್ಲ.  ನಾವಿರುವ ಅಮೇರಿಕದಲ್ಲಿ ಕೆಲವು ಮ್ಯಾನ್ಷನ್ನುಗಳಿಗೆ 87 ಮಿಲಿಯನ್ನುಗಟ್ಟಲೇ ಹೆಚ್ಚು ಹಣ ಕೊಟ್ಟು ಕೊಳ್ಳುವವರಿರುವಾಗ, ಈ ಹಿಂದಿನ ಸಾಧನೆಯ ಸಹಾಯದಿಂದ ಇನ್ನು ಮುಂದೆ ಇನ್ನೂ ಕಡಿಮೆ ಖರ್ಚಿನಲ್ಲಿ ಮತ್ತೊಮ್ಮೆ ಚಂದ್ರಯಾನದ ಕನಸನ್ನು ನಾವು ಸಾಕಾರಗೊಳಿಸಿಕೊಳ್ಳಬಹುದಾಗಿದೆ.

***
ಅಂತರಿಕ್ಷವನ್ನು ಅಳೆಯುವಲ್ಲಿ ರಷ್ಯಾದವರು ಮೊದಲಿಗರು... ಅವರನ್ನು ಹಿಂದೆ ಹಾಕುವಂತೆ ತಮ್ಮ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಸಿ ಬೆಳೆದಿದ್ದು ಅಮೇರಿಕ.  ಈ ಎರಡು ದೇಶಗಳಿಗೆ ಪೈಪೋಟಿ ಒಡ್ಡುವಂತೆ ತಮ್ಮನ್ನು ತಾವು ಬೆಳೆಸಿಕೊಂಡವರು ಚೈನಾದವರು.  ಜಗತ್ತಿನ ನಾಲ್ಕನೇ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವುದು ಭಾರತ.  ಚೈನಾದವರು ಏನು ಮಾಡಿದರೋ ಬಿಟ್ಟರೋ ಎಂದು ವೆರಿಫೈ ಮಾಡುವುದು ಬಿಡುವುದು ನಿಮಗೆ ಬಿಟ್ಟಿದ್ದು.  ಯಾಕೆಂದರೆ ಐವತ್ತು ವರ್ಷದ ಹಿಂದೆ ಅಮೇರಿಕದವರು ನಿಜವಾಗಿಯೂ ಮಾನವನನ್ನು ಚಂದ್ರನ ಮೇಲೆ ಕಳಿಸಿದ್ದು ಹೌದೇ? ಹಾಗೆ ಅಂದು ಕಳಿಸಿದ್ದು ನಿಜವಾಗಿದ್ದರೆ, ಈ ದಿನ ಮತ್ತೆ ಬೇರೆ ಯಾರೂ ಏಕೆ ಹೋಗುತ್ತಿಲ್ಲ... ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಕೆರಳಿಸುವ ಅನೇಕ ಕಾಂಟ್ರೋವರ್ಷಿಯಲ್, ಕಾನ್ಸ್‌ಪಿರಸಿ ವಿಡಿಯೋಗಳು ಇಂಟರ್ನೆಟ್ಟಿನಲ್ಲಿ ದೊರೆಯುತ್ತವೆ, ಅಂತಹ ಒಂದು ತುಣುಕನ್ನು ಇಲ್ಲಿ ನೋಡಬಹುದು.

ಅಮೇರಿಕದವರ ಈ ಪ್ರಯತ್ನವನ್ನೇ ಸುಳ್ಳು ಎನ್ನುವ ವಾದಗಳಿರುವಾಗ ಇನ್ನು ಚೀನಾದವರು ತಮ್ಮದೇ ತಂತ್ರಜ್ಞಾನದಿಂದ ಅದು ಏನನ್ನು ಸಾಧಿಸಿದ್ದಾರೋ ಬಿಟ್ಟಿದ್ದಾರೋ ಎಂದು ನೀವೇ ಊಹಿಸಬಹುದು.  ಆದರೆ ನಮ್ಮ ಚಂದ್ರಯಾನದ ವಿಚಾರದಲ್ಲಿ ರಷ್ಯಾದವರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಕೈ ಜೋಡಿಸಿದ್ದು ನಿಜ. ಆದರೆ, ಕಳೆದ ಆರು ವರ್ಷಗಳಲ್ಲಿ ನಮ್ಮವರು ಬೇರೆ ಯಾರ ಹಂಗಿಲ್ಲದೆ ನಾವೇ ಮುಂದುವರೆಯುತ್ತೇವೆ ಎಂದು ಮುಂದೆ ಸಾಗಿದ್ದು ಬಹಳ ಹೆಮ್ಮೆಯ ವಿಷಯ.  ರಷ್ಯಾದವರು ಲ್ಯಾಂಡರ್ ಮಾಡಿ ಮುಗಿಸುವಲ್ಲಿ ವಿಳಂಬಿಸಿದರು ಅನ್ನೋ ಕಾರಣವೂ ಇದೆ.  ಆದರೆ, ಈ ಲ್ಯಾಂಡರ್ ಇಳಿಯುವಾಗಿನ ವೈಫಲ್ಯದಿಂದಲೇ ನಾವು ಕೊನೆಯ ಘಳಿಗೆಯಲ್ಲಿ ಅನಿರೀಕ್ಷಿತ ತಿರುವನ್ನು ಪಡೆಯಬೇಕಾಗಿ ಬಂತು ಎನ್ನುವುದು ಗಮನಿಸಬೇಕಾದ ವಿಚಾರ.

***
ಈಗ ನಮ್ಮ ಮುಂದಿರುವ ಮಹತ್ವದ ಸವಾಲೆಂದರೆ, ಲ್ಯಾಂಡರ್‌ಗೆ ಏನು ಆಗಿರಬಹುದು ಎಂಬುದು ಗೊತ್ತಾಗದೇ ಮುಂದಿನ ಚಂದ್ರಯಾನದ ಲ್ಯಾಂಡರ್ ಅನ್ನು ತಯಾರಿಸಿ ಪರೀಕ್ಷಿಸುವುದು ಕತ್ತಲೆಯಲ್ಲಿ ಕತ್ತಿಯಾಡಿಸಿದಂತಾಗುತ್ತದೆ.  ಆದರೆ, ತಮ್ಮ ಒಂದು ತಪ್ಪಿನಿಂದಾಗಿ ಈ ಬಹುಮುಖ್ಯವಾದ ಯೋಜನೆಯನ್ನು ಅನಿರೀಕ್ಷಿತವಾಗಿ ಮುಂದುಹಾಕಿಕೊಂಡು ಕಾಯುವ ಕಷ್ಟವೂ ನಮ್ಮ ವಿಜ್ಞಾನಿಗಳಿಗೆ ಬರದಿರಲಿ.  ಈ ಸಂದರ್ಭದಲ್ಲಿ, ದೇಶದ ಬಹುಪಾಲು ಜನರು ಈ ಯೋಜನೆಯನ್ನು ಬೆಂಬಲಿಸುತ್ತಾರಾದ್ದರಿಂದ, ಈಗಿನ ಸುಭದ್ರ ಸರ್ಕಾರ ಇರುವವರೆಗೆ ನಮ್ಮ ಇನ್ನೊಂದು ಪ್ರಯತ್ನಕ್ಕೆ ಖಂಡಿತ ಹಸಿರು ನಿಶಾನೆ ಸಿಗುವುದೆಂಬ ಭರವಸೆ ನಮ್ಮದು.  ತಿಂಗಳಯಾನದ ಕನಸು ತಂಗಳಾಗದಿರಲಿ!






Sunday, July 28, 2019

ರಾಜಕೀಯ ಪ್ರಹಸನ

ವರ್ಷದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಎರಡು ಮಹತ್ವದ ಅಂಶಗಳು ಗಮನ ಸೆಳೆದವು: ಒಂದು, ದೇಶದಾದ್ಯಂತ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಜನರು ನಂಬಿಕೆ ಇಟ್ಟು ಇನ್ನೈದು ವರ್ಷಗಳ ಸ್ಥಿರ ಆಡಳಿತಕ್ಕೆ ಬುನಾದಿ ಹಾಕಿರುವ ವಿಷಯ, ಅದರ ಜೊತೆಗೆ ಉಳಿದ ಪಕ್ಷಗಳ ಪ್ರಣಾಳಿಕೆಗಳ ಸಾರಾಸಗಟು ತಿರಸ್ಕಾರ.  ಮೇಲ್ನೋಟಕ್ಕೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡು ಬಂದರೂ, ಈ ಚುನಾವಣೆಯಲ್ಲಿ ಹಿರಿಯ ಮುತ್ಸದ್ದಿ ಇಲ್ಲದ ಉಳಿದ ರಾಷ್ಟ್ರೀಯ ಪಕ್ಷಗಳಿಗೆ ಬೆಲೆ ಸಿಕ್ಕಿಲ್ಲದಿರುವುದು ಎದ್ದು ಕಾಣುತ್ತದೆ.  ಹೀಗಾಗಿ ಒಂದು ಪಕ್ಷ ಅಥವಾ ಬಣಕ್ಕೆ ಅವುಗಳ ಧ್ಯೇಯೋದ್ದೇಶಗಳು ಎಷ್ಟು ಮುಖ್ಯವೋ ಅಷ್ಟೇ ಅವುಗಳನ್ನು ಪ್ರತಿಬಿಂಬಿಸಿ ಜನಮನಗಳಿಗೆ ತಲುಪಿಸುವ ಒಂದು ಹಿರಿಯ ಧ್ವನಿಯೂ ಕೂಡ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ.  ಇದು ಯಾವತ್ತಿಗೂ ಸತ್ಯ.  ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ವರ್ಚಸ್ವಿ ಜನನಾಯಕರುಗಳ ಕರೆಗೆ ಓಗೊಟ್ಟು ಲಕ್ಷಾಂತರ ಜನ ತಮ್ಮ ಮನೆಮಠಗಳನ್ನು ತೊರೆದು ಚಳವಳಿಯಲ್ಲಿ ಧುಮುಕಲಿಲ್ಲವೇ? ಹಾಗೇ, ಇಂದಿನ ಪ್ರಜಾಸತ್ತೆಯಲ್ಲಿಯೂ ಸಹ ಹಿರಿಯ ನಾಯಕರ ಕರೆಗೆ ಬೆಲೆ ಇದೆ, ಆದರೆ ಅಂತಹ ವರ್ಚಸ್ಸಿನ ಹಿರಿಯ ನಾಯಕರುಗಳ ಕೊರತೆ ಬಹಳ ಎದ್ದು ಕಾಣುತ್ತದೆ.  ದೇಶದ ಉದ್ದಗಲಕ್ಕೆ ಎಣಿಸಿದರೆ ನೂರಾರು ಪಕ್ಷಗಳು ತಲೆ ಎತ್ತಿರುವ ನಮ್ಮ ದೇಶದಲ್ಲಿ ಅಷ್ಟೇ ಪ್ರಭಾವಿಗಳಾಗಿ ಜನಾಕರ್ಷಣೆಯನ್ನು ಹೊಂದಿರುವ ಮೂರು ಜನ ಮುಖಂಡರುಗಳಿಲ್ಲ ಎಂದು ಹೇಳಲು ಖೇದವಾಗುತ್ತದೆ.  ಪ್ರಾದೇಶಿಕ ಮಟ್ಟದಲ್ಲಿ ಅನೇಕ ಜನಸ್ಪಂದನದ ವ್ಯಕ್ತಿತ್ವಗಳು ಗೋಚರಿಸಬಹುದು, ಆದರೆ ಅಂತಹ ಮುಂದಾಳುಗಳ ಧ್ವನಿಗಳು ತಮ್ಮ ತಮ್ಮ ಸ್ಥಳೀಯ ಜಂಜಾಟಗಳಲ್ಲಿ ಕಳೆದುಕೊಳ್ಳುತ್ತವೆಯೇ ವಿನಾ ದೇಶವನ್ನು ಬೆಳೆಸುವ ಮಟ್ಟಿಗೆ ಬೆಳೆಯುವುದು ಅಪರೂಪ.  ಈ ನಿಟ್ಟಿನಲ್ಲಿ, ಗುಜರಾತ್ ಮೂಲದಲ್ಲಿ ಉದ್ಭವಿಸಿ ರಾಷ್ಟ್ರವ್ಯಾಪಿ ಬೆಳೆದು ನಿಂತಿರುವ ಹೆಮ್ಮರ ಮೋದಿ ಎನ್ನಬಹುದು.

***
ನಮ್ಮ ಜನ ಸಾಮಾನ್ಯರಲ್ಲಿ ಒಂದು ಸಹಜವಾದ ಪ್ರಶ್ನೆ ಆಗಾಗ್ಗೆ ಏಳುತ್ತಿರುತ್ತದೆ: ಈ ರಾಜಕಾರಣಿಗಳಿಗೆ ಎಷ್ಟು ದುಡ್ಡು ಮಾಡಿದರೂ (ತಿಂದರೂ) ತೃಪ್ತಿಯಾಗುವುದಿಲ್ಲವಲ್ಲ, ಏಕೆ?  ಈ ಪ್ರಶ್ನೆಯ ಆಳಕ್ಕೆ ಹೋದಂತೆಲ್ಲ, ಹುಲಿ ಸವಾರಿ ಮಾಡಿಕೊಂಡು ಅಟ್ಟಹಾಸ ಮಾಡುತ್ತಿರುವ ಅನೇಕ ಜನನಾಯಕರ ಮುಖ ಗೋಚರಿಸಬಹುದು. ಇವರೆಲ್ಲ ದಾಹದ ಕೂಪವೆನ್ನುವ ಆಳವಾದ ಕೊರಕಲಿನಲ್ಲಿ ಭ್ರಷ್ಟಾಚಾರವೆನ್ನುವ ಹುಲಿ ಸವಾರಿಯನ್ನು ಮಾಡಿಕೊಂಡು ಗುಟುರು ಹಾಕಿಕೊಂಡಿರುತ್ತಾರೆ.  ಆದರೆ, ಪಾಪ, ಇವರ ಜೀವಮಾನದಲ್ಲೆಲ್ಲೂ ಇವರು ಹುಲಿಯ ಬೆನ್ನಿನಿಂದ ಕೆಳಗಿಳಿಯಲು ಸಾಧ್ಯವೇ ಇಲ್ಲದೇ, ಈ ಹುಲಿ ಸವಾರಿ ಮಾಡುತ್ತಲೇ ನಿವೃತ್ತಿ, ಮೋಕ್ಷ ಮತ್ತಿನ್ನೆಲ್ಲವನ್ನೂ ಕಂಡುಕೊಳ್ಳುತ್ತಾರೆ.  ನಮ್ಮ ರಾಜಕಾರಣಿಗಳು ಯಾವ ಸ್ಥರದಲ್ಲೇ ಇರಲಿ, ಮನೆಗೆ ಬಂದು ಮೂಟೆಗಟ್ಟಲೆ, ಸೂಟ್‌ಕೇಸುಗಟ್ಟಲೆ ಕೋಟ್ಯಾಂತರ ರೂಪಾಯಿ "ಅನುದಾನ"ವನ್ನು ತಂದು ಕೊಡುವವರಿರುವಾಗ ಹುಲಿ ಸವಾರರು ಒಲ್ಲೆ ಎಂದು ಹೇಳಲು ಸಾಧ್ಯವಿದೆಯೇ? ಉದಾಹರಣೆಗೆ, ಪ್ರತಿವರ್ಷ ಪ್ರತಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಐವತ್ತು ಕೋಟಿ ಅನುದಾನ ಬರುತ್ತದೆ ಎಂದುಕೊಂಡರೆ, ಅದರ ಹತ್ತು ಪರ್ಸೆಂಟ್, ಅಂದರೆ ಐದು ಕೋಟಿ ನಮ್ಮ ಎಂ.ಪಿ.ಗಳ ಮನೆಗೆ ಬಂದು ಸೇರಿತೆಂದುಕೊಳ್ಳಿ.  ಅದನ್ನು ಬೇಡವೆಂದರೆ, ಇವರ ಹುಲಿ ಸವಾರಿಯ ವ್ಯವಸ್ಥೆಯೇ ಅಸ್ತವ್ಯಸ್ತವಾಗಿ ಕೊನೆಗೆ ಆ ಹುಲಿಯೇ ಇವರನ್ನು ಬಲಿತೆಗೆದುಕೊಳ್ಳುತ್ತದೆ.  ಅದನ್ನು ಇಟ್ಟುಕೊಂಡರೆ, ಅದು ಕಪ್ಪು ಹಣದ ಲೆಕ್ಕಕ್ಕೆ ಸೇರಿಕೊಂಡು ಮುಂದಿನ ಚುನಾವಣೆಯವರೆಗೆ ಎಲ್ಲೋ ಮೂಲೆಯಲ್ಲಿ ಕೊಳೆಯುತ್ತದೆ!  ಈ ಹುಲಿ ಸವಾರಿ ಒಂದು ಉದಾಹರಣೆ ಅಷ್ಟೇ.  ತಮ್ಮ ತಮ್ಮ ತಾಕತ್ತಿಗೆ ತಕ್ಕಂತೆ, ತಮ್ಮ ತಮ್ಮ ಪರಿಸರಕ್ಕೆ ತಕ್ಕಂತೆ, ಬೇರೆಬೇರೆ ಪ್ರಾಣಿಗಳ ಸವಾರಿ ಮಾಡಿ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಳ್ಳುವವರು ಇದ್ದಾರೆ.

***
ಹುಲಿ ಸವಾರಿಯ ಬಯಕೆಯ ಮೂಲವೇನು? ಅದೆಲ್ಲಿಂದ ಉತ್ಪನ್ನವಾಯಿತು ಎಂದು ಶೋಧಿಸಿ ನೋಡಿದಾಗ ನಮ್ಮ ಚುನಾವಣಾ ಪ್ರಕ್ರಿಯೆ ಕಣ್ಣಿಗೆ ಬಿತ್ತು.  ನೀವು ಹಣಕಾಸು ವಿಲೇವಾರಿಯ ಯಾವುದೇ ಶಾಸನವನ್ನು ಬರೆಯಿಸಿ.  ಪ್ರಪಂಚದ ಪೋಲೀಸರನ್ನೆಲ್ಲ ತಂದು ನಮ್ಮ ನಮ್ಮ ಜಿಲ್ಲೆಯಲ್ಲಿ ಎಲೆಕ್ಷನ್ ಉಸ್ತುವಾರಿಕೆಗೆ ಬಿಡಿ, ತಪ್ಪಿತಸ್ತರಿಗೆ ಎಂತಹ ಕಠಿಣ ಶಿಕ್ಷೆಯನ್ನಾದರೂ ಕೊಡಿಸಿ... ನೀವು ಅದೇನೇ ತಿಪ್ಪರಲಾಗ ಹಾಕಿದರೂ, ಹಣ-ಹೆಂಡ ಮತ್ತಿತರ ವಸ್ತುಗಳನ್ನು ಹಂಚಿ ಚುನಾವಣೆ ಗೆಲ್ಲುವ ಶಕ್ತಿಗಳಿಗೆ ಕಡಿವಾಣ ಹಾಕಲಾರಿರಿ.  ಇತ್ತೀಚೆಗೆ ನಾನು ಕೇಳಿದ ಒಂದೆರಡು "ಕೊಟ್ಟು-ತೆಗೆದುಕೊಳ್ಳುವ" ಉದಾಹರಣೆಗಳಲ್ಲಿ, ಒಬ್ಬ ಮಲ್ಟಿ ಅಪಾರ್ಟ್‌ಮೆಂಟ್ ಮಾಲಿಕ ತನ್ನ ಒಂದು ವರ್ಷದ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕೊಡದೇ ಉಳಿಸಿಕೊಂಡಿರುತ್ತಾನೆ.  ತನ್ನ ಹತ್ತಿರ ಓಟು ಕೇಳಲು ಹೋದವರಿಗೆ, ’ಈ ಬಿಲ್ ಅನ್ನು ಕಟ್ಟಿ ಬಾ...’ ಎಂದು ಬಿಲ್ ಕೊಟ್ಟು ಕಳುಹಿಸುತ್ತಾನೆ.  ಒಂದು ಪಕ್ಷದವರಿಗೆ ಕರೆಂಟ್ ಬಿಲ್, ಮತ್ತೊಂದು ಪಕ್ಷದವರಿಗೆ ನೀರಿನ ಬಿಲ್ ಕೊಟ್ಟರೆ, ಈ ರೀತಿಯ ಲೇವಾದೇವಿಯನ್ನು ಯಾರು ಹೇಗೆ ಕಂಡು ಹಿಡಿಯಲು ಸಾಧ್ಯ?  ನಮ್ಮ ಜನಗಳ ದುಡ್ಡೇ ಈ ರೀತಿ ತಿರುತಿರುಗಿ ಬೇನಾಮಿ ಖರ್ಚಾದಂತೆ ಕಂಡು ಬರುತ್ತಿದೆ ಎಂದು ಯಾರಿಗೆ ಹೇಳೋದು, ಯಾರಿಗೆ ಕೇಳೋದು?  ಒಂದು ಲೋಕಸಭಾ ಚುನಾವಣೆಯಲ್ಲಿ ಎಷ್ಟು ದುಡ್ಡು ಹೇಗೆ ಖರ್ಚು ಆಗುತ್ತದೆ ಎಂದು ನಿಮಗೆ ನಿಜವಾಗಿಯೂ ಕುತೂಹಲವಿದ್ದರೆ, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಸೋತ ಮಧು ಬಂಗಾರಪ್ಪ ಅವರನ್ನು ಕೇಳಿ ನೋಡಿ!

ಒಂದು ಸಮೀಕ್ಷೆಯ ಪ್ರಕಾರ ಒಂದು ಜಿಲ್ಲೆಯ ಚುನಾವಣೆಯ ಖರ್ಚು ಕಡಿಮೆ ಎಂದರೆ ನೂರು ಕೋಟಿ ರುಪಾಯಿಗಳು!  ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ನೀರಿನಂತೆ ಹಣ ಹರಿದು ಇನ್ನೂ ಹೆಚ್ಚು ಖರ್ಚಾಗಿರುವ ಉದಾಹರಣೆಗಳು ಕೂಡಾ ಇವೆ.  ಈ ನೂರು ಕೋಟಿಯನ್ನು ಒಬ್ಬ ಅಭ್ಯರ್ಥಿ ಅನೇಕ ಮೂಲಗಳಲ್ಲಿ "ಸಂಪಾದಿಸ"ಬಹುದು.  ಪಾರ್ಟಿ ಫಂಡಿನಿಂದ ದುಡ್ಡು ಹರಿಯಬಹುದು, ಉಳ್ಳವರ ಕಿಸೆಯಿಂದ ಹರಿದು ಬಂದಿರಬಹುದು, ತಾವೇ (ವಾಮಮಾರ್ಗದಲ್ಲಿ) ಕೂಡಿ ಹಾಕಿದ ಫಂಡ್ ಇರಬಹುದು, ಅಥವಾ ಇತರರ "ದೇಣಿಗೆ" ಇರಬಹುದು... ಇಷ್ಟೆಲ್ಲಾ ಖರ್ಚು ಮಾಡಿ, ಗೆಲ್ಲುವ, ಗೆದ್ದು ಮುನ್ನುಗ್ಗುವ ಛಲದ ಮೂಲ - ಈ (ಬಂಡವಾಳ) ದುಡ್ಡಿನ ನೂರು ಪಟ್ಟು ದುಡ್ಡು ಮಾಡುವುದು.  ಹೀಗೆ ದುಡ್ಡು ಮಾಡುತ್ತಾ ಮಾಡುತ್ತಾ, ಇವರುಗಳು ಬಿದ್ದ ಕೂಪದ ಆಳ ಹೆಚ್ಚಾದಂತೆಲ್ಲ, ಇವರುಗಳು ಏರುವ ಹುಲಿಯ ಕೊಬ್ಬು ಏರುತ್ತಲೇ ಹೋಗುತ್ತದೆ.

ಇನ್ನೈದು ವರ್ಷ ಕೇಂದ್ರದಲ್ಲಿ ಸ್ಥಿರ ಸರ್ಕಾರ, ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಧೂಳೀಪಟ - ಇವೆರಡರ ಮೊತ್ತ, ಕರ್ನಾಟಕದ ಅಸ್ಥಿರ ರಾಜಕಾರಣ, ಅಥವಾ "ಪ್ರಬಲ"ವಾದ ಪಕ್ಷದ ಆಡಳಿತ.  ಒಮ್ಮೆ ಪ್ರಬಲ ಸರ್ಕಾರದ ಆಡಳಿತವೆಂದರೆ ಅದು ಮೂರು, ಐದು, ಹತ್ತುವರ್ಷಗಳ ವರೆಗೆ ನಿರಂತರವಾಗಿ ಮುಂದೆ ಹೋಗುತ್ತಲೇ ಇರಬಹುದು.  ಈ ಹಂತದಲ್ಲಿಯೇ ತಮ್ಮ ತಮ್ಮ ಪಕ್ಷದ ನಿಷ್ಠತೆಯನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಕೆಲವರು, ಅವಕಾಶ ಸಿಕ್ಕಿದ್ದೇ ತಡ ಜಿಗಿದರು.  ಇನ್ನು ಕೆಲವರು, ನೀತಿ, ನಿಯಮ, ಸತ್ಯಸಂಧತೆಯ ಹಿನ್ನೆಲೆಯಲ್ಲಿ ರಾಜೀನಾಮೆ ಬಿಸಾಡಿದರು.  ಇನ್ನು ಕೆಲವರು ಗೆದ್ದೆತ್ತಿನ ಬಾಲ ಹಿಡಿದರು.

***
ಗೆದ್ದು ಶಾಸಕ, ಸಂಸದನಾಗಿ ಆರಿಸಿ ಬಂದ ವ್ಯಕ್ತಿಗೆ ಮುಖ್ಯ ಎರಡು ಗುರಿಗಳಿವೆ: ತಮ್ಮ ಮೂಲ ಬಂಡವಾಳವನ್ನು ದ್ವಿಗುಣ-ತ್ರಿಗುಣ (ಉಲ್ಬಣ) ಗೊಳಿಸುವುದು, ತಮ್ಮ ಕಾರ್ಯಕರ್ತ-ಹಿತೈಷಿ-ಸಂತಾಪಕರ ನಡುವೆ ತಮ್ಮ ಪಾರಮ್ಯವನ್ನು ಮೆರೆಯುವುದು.  ಇವೆರಡೂ ಒಂದಕ್ಕೊಂದು ಪೂರಕವಾಗಲು ಸಾಧ್ಯವಾಗುವ ಸುಲಭ ವಿಧಾನವೇ - ಮಂತ್ರಿಯಾಗುವುದು!  ಈ ಸುಲಭ ಫಾರ್ಮುಲಾವನ್ನು ಮನದಟ್ಟು ಮಾಡಿಕೊಂಡ ರಾಜಕಾರಣಿಗಳೆಲ್ಲ ರಾತ್ರೋರಾತ್ರಿ ಮುತ್ಸದ್ದಿಗಳಾಗಿ, ಹಿರಿಯ ಹೋರಾಟಗಾರರಾಗಿ ವಿಜೃಂಭಿಸುವುದು.  ಮೊದಲೆಲ್ಲ ಐದು ಬಾರಿ ಗೆದ್ದು ಶಾಸಕರಾದರೂ ಮಂತ್ರಿ ಪದವಿಯನ್ನು ಕೇಳದೇ ತಮ್ಮ ಪಾಲಿಗೆ ಬಂದದ್ದನ್ನು ಪಾಲಿಸುವ ಪಕ್ಷನಿಷ್ಠರಿದ್ದರು. ಆದರೆ ಇಂದು, ಕೇವಲ ಎರಡು ಸಾರಿ ಶಾಸಕರಾಗಿ ಒಂದು ಕ್ಷೇತ್ರದಿಂದ ಆರಿಸಿ ಬಂದವರೆಲ್ಲ ಮಂತ್ರಿಗಳಾಗುವ ಕನಸು ಕಾಣುವವರಾಗಿದ್ದಾರೆ.  ಇರುವ ಇನ್ನೂರು ಚಿಲ್ಲರೆ ಶಾಸಕರೆಲ್ಲರಿಗೂ ಒಂದೊಂದು ಪದವಿ ಬೇಕು - ಅವರು ಪರ-ವಿರೋಧ ಯಾವುದೇ ಪಕ್ಷದಲ್ಲಿರಲಿ!

***
ಈ ಎಲ್ಲ ಗೊಂದಲಗಳ ನಡುವೆ ತಮ್ಮ ತಮ್ಮ ಕ್ಷೇತ್ರಗಳ ಬೆಳವಣಿಗೆಯನ್ನು ನೋಡುವವರು ಯಾರು? ತಮ್ಮ ತಮ್ಮ ಊರು, ಜಿಲ್ಲೆ, ರಾಜ್ಯಗಳನ್ನು ಬೆಳೆಸುವವರಾರು? ಎಲ್ಲರೂ ದುಡ್ಡು ಮಾಡಿಕೊಂಡಿದ್ದರೆ, ಅದಕ್ಕೆ ಮಿತಿಯೆಂಬುದೇ ಇಲ್ಲವೇ? ಇವರೆಲ್ಲ ಈ ರೀತಿ ದುಡ್ಡು ಮಾಡಿ ಕೊನೆಗೆ ಏನನ್ನು ಸಾಧಿಸುತ್ತಾರೆ? ಈ ರೀತಿ ಯಶಸ್ಸನ್ನು ಕಲ್ಪಿಸಿಕೊಳ್ಳುವ ನಮ್ಮ ನಡುವೆ, ದಶಕಗಳ ನಿರಂತರ ಶೋಧನೆ-ಸಂಶೋಧನೆ ಮಾಡಿ, ಮನುಕುಲದ ನಾಶಕ್ಕೆ ಟೊಂಕಕಟ್ಟಿ ನಿಂತ ಕಣ್ಣಿಗೆ ಕಾಣದ ವೈರಸ್ಸಿಗೆ ವಿರುದ್ಧವಾಗಿ ಹೋರಾಡಿ ಔಷಧಿ ಕಂಡು ಹಿಡಿಯಲು ತಮ್ಮ ಜೀವನವನ್ನೇ ಮುಡಿಪಾಗಿಡುವ ವಿಜ್ಞಾನಿಗಳು ಈ ಸಮಾಜದಲ್ಲಿ ಹುಟ್ಟುವುದು ಹೇಗೆ ಸಾಧ್ಯ?

ಇವರುಗಳು ಹೊಕ್ಕಿನಿಂತ ಆಳವಾದ ಬಾವಿಯ ದಾಹ ಇನ್ನೂ ಆಳಕ್ಕಿಳಿಸುತ್ತದೆ, ಅದು ಬತ್ತುವುದೂ ಇಲ್ಲ ಹಾಗೂ ತುಂಬುವುದೂ ಇಲ್ಲ ಎನ್ನುವ ಜಾಯಮಾನದ್ದು.  ಈ ವ್ಯವಸ್ಥೆಯೇ ನಮ್ಮ ನಡುವೆ ಭ್ರಷ್ಟಾಚಾರಕ್ಕೆ ಇಂಬುಕೊಡುವುದು.  ಒಬ್ಬ ಹಸಿದ ನಿರಕ್ಷರ ಬಡವನಿಗೆ ಸಾವಿರ ರೂಪಾಯಿ ತೋರಿಸಿ ಚುನಾವಣೆಯಲ್ಲಿ ಮತಹಾಕುವಂತೆ ಅಂಗಲಾಚಿ ಗೆಲ್ಲುವುದರಲ್ಲಿ ಏನು ದೊಡ್ಡತನವಡಗಿದೆ ಎಂದು ನಾವೆಲ್ಲ ಸಹಿಸಿಕೊಂಡು ಬಂದಿದ್ದೇವೋ ಎಂದು ಬೇಸರವಾಗುತ್ತದೆ.  ಇಂತವರೆಲ್ಲ ನಮ್ಮನ್ನು (ಏನೂ ಕೆಲಸ ಮಾಡದೆ) ಆಳುವವರು, ಇಂತವರನ್ನು ಸಹಿಸಿಕೊಳ್ಳುವ ನಾವು (ಕೈಲಾಗದ) ಪ್ರಜೆಗಳು!

ಇದು ಇಂದು ನಿನ್ನೆಯದಲ್ಲ - ಹಿಂದೆ ಆಗಿದೆ, ಇಂದು ಆಗುತ್ತಿದೆ, ಮುಂದೆ ಎಂದೆಂದೂ ಆಗುತ್ತದೆ, ಆಗುತ್ತಲೇ ಇರುತ್ತದೆ!

Thursday, April 26, 2018

ಚಿತ್ರಗಳ ನೆನಪು

ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡು ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!

Friday, January 27, 2017

ಕಂಪನಿ ಹೆಸರು ಅಂದ್ರೆ...

S&P 500 ಕಂಪನಿಗಳ ಹೆಸರನ್ನು ಕುರಿತು ಸ್ವಲ್ಪ ಯೋಚಿಸತೊಡಗಿದರೆ ತಲೆ ಚಿಟ್ಟು ಹಿಡಿಯುತ್ತದೆ, ಅವುಗಳ ಹೆಸರಿನ ಮೂಲವೇನು, ಅವುಗಳನ್ನು ಎಲ್ಲೆಲ್ಲಿಂದ ಆಯ್ದು ತಂದಿರಬಹುದು ಎನ್ನುವುದು ಎಂಥವರನ್ನಾದರೂ ಆಳವಾಗಿ ಯೋಚಿಸುವಂತೆ ಮಾಡಬಹುದು.  ಉದಾಹರಣೆಗೆ Proctor & Gamble (P&G) ಕುರಿತು ಯೋಚಿಸಿದರೆ, Proctor ಎಂದರೆ ಎಕ್ಸಾಮಿನೇಷನ್ ಸೂಪರ್‌ವೈಸರ್, Gamble ಅಂದ್ರೆ ಜೂಜಾಡುವುದು ಅಂತ ಅರ್ಥ!  Johnson & Johnson (J&J) ಕುರಿತು ಯೋಚಿಸಿದರೆ, ಒಂದೇ ಹೆಸರನ್ನು ಎರಡು ಸರ್ತಿ ಏಕಾದ್ರೂ ತೋರಿಸ್ತಾರಪ್ಪಾ? ಸುಮ್ನೇ ಜಾಗ ವೇಸ್ಟ್ ಅನ್ನಿಸೋಲ್ಲ?  ಹೀಗೇ ಅನೇಕಾನೇಕ ಉದಾಹರಣೆಗಳು ನಿಮಗೆ ಸಿಗುತ್ತವೆ.

ಇನ್ನುGeneral ಎಂಬ ಸೀರೀಸ್‌ನಲ್ಲಿ ಶುರುವಾಗುವ ಕಂಪನಿಗಳ ಹೆಸರುಗಳೋ ಸಾಕಷ್ಟು ಸಿಗುತ್ತವೆ.  ಈ ಎಲ್ಲ ಕಂಪನಿಗಳು ತಯಾರಿಸುವುದು ಕೇವಲ "ಜೆನೆರಲ್" ಪ್ರಾಡಕ್ಟ್‌ಗಳನ್ನೋ ಅಥವಾ ಯಾವುದಾದರೂ ಸ್ಪೆಸಿಫಿಕ್ ಇವೆಯೋ ಎಂದು ಬೇಕಾದಷ್ಟು ಜನ ಸೈಂಟಿಸ್ಟುಗಳು ಈಗಾಗಲೇ ಸ್ಟಡಿ ಮಾಡಿರಬಹುದು.  ನಾವು ಯಾವುದೇ ಮೀಸಲಾತಿಗೆ ಸೇರಿರದ ಜನ, ಬರೀ ಜನರಲ್ ಕಂಪನಿಗಳ ಪ್ರಾಡಕ್ಟುಗಳನ್ನು ಮಾತ್ರ ಬಳಸುತ್ತೇವೆ ಎಂದು ಮುಂದಿನ ಸಾರಿ ಭಾರತಕ್ಕೆ ಹೋದಾಗ ನೀವು ನಿಮ್ಮ ಸೆಕ್ಯುಲರಿಸಂ ಅನ್ನು ಮೆರೆದು ನಿಮ್ಮ "ಜನರಲ್" ತನವನ್ನು ಸಾಬೀತು ಪಡಿಸಬಹುದು.  ನಮ್ಮ ಮನೆಯ ಲೈಟು ಬಲ್ಬುಗಳನ್ನು ತಯಾರಿಸಿದ್ದು ಜೆನರಲ್ ಎಲೆಕ್ಟ್ರಿಕಲ್ ಕಂಪನಿ, ನಾವು ಮುಂಜಾನೆ ಜೆನರಲ್ ಮಿಲ್ಸ್ ಸೀರಿಯಲ್ ತಿಂತೀವಿ.  ಜನರಲ್ ಫುಡ್ಸ್ ಪ್ರಾಡಕ್ಟುಗಳನ್ನೇ ಊಟಕ್ಕೆ ಬಳಸುತ್ತೇವೆ. ಹಾಗೂ ನಮ್ಮ ರಕ್ಷಣೆಗೆ ಜನರಲ್ ಡೈನಮಿಕ್ಸ್ ಪ್ರಾಡಕ್ಟುಗಳನ್ನೇ ಬಳಸ್ತೀವಿ.  ಹೇಗಿದೆ ಎಲ್ಲ ಜನರಲ್ ಮಯ?

ಮಣ್ಣಿನ ಮಡಕೆಯನ್ನು ಮಾಡಿ ಮಾರುವವ ಕುಂಬಾರ, ಹೂವನ್ನು ಮಾರುವವ ಹೂಗಾರನಾದರೆ, ಆಪಲ್‌ನ್ನ ಮಾರುವವ ಏನಾಗಬಹುದು? ಸೇಬುಗಾರ?!  ಕ್ಷಮಿಸಿ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನ್‌ಗಳಿಗೂ ಸೇಬು ಹಣ್ಣಿಗೂ ಎತ್ತಣಿಂದೆತ್ತ ಸಂಬಂಧ ನಮಗೆ ತಿಳಿಯದು...ಒಂದು ರೀತಿಯಲ್ಲಿ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಇರುವ ಸಂಬಂಧದ ಹಾಗೆ ಏನಾದರೂ ನಿಗೂಢವಾದ ಸಂಬಂಧವಿದ್ದರೂ ಇರಬಹುದು... ನಮ್ಮ ಮನೆಯಲ್ಲೆಲ್ಲಾ ಆಪಲ್ ಮಯ... ದಿನಕ್ಕೊಂದು ಸೇಬು ಹಣ್ಣನ್ನು ತಿಂದು ದೂರವಿರುವ ಉಸಾಬರಿಯ ಸಹವಾಸವಲ್ಲವಿದು, ಜಾಗ್ರತೆ!  ಒಮ್ಮೆ ಮುಟ್ಟಿದರೆ ಮುಗಿಯಿತು, ಇನ್ನು ಸಾಯುವವರೆಗೂ ಮುಟ್ಟತ್ತಲೇ ಇರಬೇಕು... (ಅದು ಡಿವೈಸ್ ಆಗಿರಬಹುದು, ಅಥವಾ ವ್ಯಕ್ತಿಯಾಗಿರಬಹುದು, ಎರಡರಲ್ಲಿ ಒಂದು ಕೊನೆಯಾಗುವವರೆಗಿನ ಸಂಬಂಧವಿದು!)... ಎಂಥಾ ಗಾಢವಾದ ಸಂಬಂಧವಿರಬಹುದಿದು?  Only death can part this relationship!

ಇನ್ನು ಸೇಬುಹಣ್ಣಿನ (Apple) ಸಂಬಂಧ ಚಾಲ್ತಿಯಲ್ಲಿರುವಾಗಲೇ ನಮಗೆ ಹಳೆಯ Microsoftನ ಸಂಬಂಧ ನೆನಪಿಗೆ ಬರುತ್ತದೆ.  ನಮ್ಮ ಮನೆಯ ಕಿಟಕಿಗಳನ್ನು ಮಾಡಿದ್ದು ಈ ಮೈಕ್ರೋ ಸಾಫ್ಟ್ ಕಂಪನಿಯವರಲ್ಲದಿದ್ದರೂ ನಮ್ಮ ಕಂಪ್ಯೂಟರುಗಳಲ್ಲಿ ಹಲವಾರು ಕಿಟಕಿಗಳು ಸದಾ ತೆರೆದೇ ಇರುತ್ತವೆ.  ಇವು ಗಾಳಿ-ಬೆಳಕು ಬರುವ ಕಿಟಕಿಗಳಲ್ಲ...ಕಂಪ್ಯೂಟರ್ ಪ್ರಪಂಚಕ್ಕೆ ಸೂಕ್ಷ್ಮವಾಗಿ ಸಂಬಂಧ ಬೆರೆಸುವ ಕಿಂಡಿಗಳು.  ಆ ಕನಕದಾಸರ ಕಾಲದಲ್ಲಿ ’ಕನಕನ ಕಿಂಡಿ" ತೆರೆದ ಹಾಗೆ, ನಮ್ಮ ಕಾಲದಲ್ಲಿ ಮೈಕ್ರೋಸಾಫ್ಟ್ ಕಿಟಕಿಗಳು ಸದಾ ತೆರೆದೇ ಇರುತ್ತವೆ!

ಇನ್ನು ದಕ್ಷಿಣ ಅಮೇರಿಕಾದ ಮಹಾ ಕಾಡನ್ನು ನೆನಪಿಸುವ ಅಮೇಜಾನು. ತನ್ನ ಮಧ್ಯೆ ಅಸಂಖ್ಯಾತ ಸೊನ್ನೆಗಳನ್ನು ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಂಡು ಪ್ರತಿ ಶೋಧದ ಪುಟದ ಬುಡದಲ್ಲಿಯೂ ಉದ್ದಕ್ಕೆ ತನ್ನನ್ನು ತಾನು ಆವರಿಸಿಕೊಳ್ಳುವ ಗೂಗಲ್ಲು.  ಎಲ್ಲರ ಹಣೆಬರಹವನ್ನು ಅವರಿಂದಲೇ ಹೊರಸೂಸುವಂತೆ ಮಾಡಿ ಜನರು ಸೋಷಿಯಲ್ ಮೀಡಿಯಾ ಎಂಬ ನಾಮಪದದ ನೆಪದಲ್ಲಿ ಶುದ್ಧ ಸೋಂಬೇರಿಗಳಾಗುವಂತೆ ಮಾಡುವ ಫೇಸ್‌ಬುಕ್ಕು.  ತನ್ನ ಒಡಲಿನಲ್ಲಿ ಜಗತ್ತಿನ ದೊಡ್ಡ ಸೂಪರ್ ಕಂಫ್ಯೂಟರ್ರನ್ನು ಇರಿಸಿಕೊಂಡು ಸಂಭ್ರಮಿಸುವ ಐಬಿಎಮ್ಮು...  ಹೀಗೇ ಅನೇಕಾನೇಕ ಹೆಸರುಗಳು ನೆನಪಿಗೆ ಬರುತ್ತಲೇ ಹೋಗುತ್ತವೆ.  ನಿಮಗೆ ಬೇಕಾದ ಸೆಕ್ಟರುಗಳಲ್ಲಿ ಒಂದಲ್ಲ ಒಂದು ಕಂಪನಿಗಳು ಚಿರಪರಿಚಿತವೇ....ಬ್ಯಾಂಕು, ಇನ್ವೆಸ್ಟ್‌ಮೆಂಟು, ಟೆಲಿಕಾಮ್, ಹೆಲ್ತ್‌ಕೇರು, ಟ್ರಾನ್ಸ್‌ಪೋರ್ಟೇಷನ್ನು,    ಟೆಕ್ನಾಲಜಿ, ಎನರ್ಜಿ, ಇತ್ಯಾದಿ, ಇತ್ಯಾದಿ.  ಆದರೆ ಈ ಎಲ್ಲ ಹೆಸರುಗಳ ವಿಶೇಷವೇನು ಗೊತ್ತೇ?  ಒಂದರ ಹೆಸರಿನ ಹಾಗೆ ಮತ್ತೊಂದಿಲ್ಲ ಎಲ್ಲವೂ ಬೇರೆ ಬೇರೆಯವೇ... ಒಂದು ರೀತಿಯಲ್ಲಿ ನಮ್ಮ ಮಹಾಭಾರತ ಹಾಗೂ ರಾಮಾಯಣದ ಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ!  ನಿಮಗೆ ಎಂದಾದರೂ ಅನ್ನಿಸಿತ್ತೇ... ನಮ್ಮ ಪೂರ್ವಜರು ಅದ್ಯಾವ ಹೆಸರಿನ ಡೇಟಾಬೇಸನ್ನು ಉಪಯೋಗಿಸುತ್ತಿದ್ದರು ಅಂತ?  ಒಂದು ಮಹಾಕಾವ್ಯ, ಮಹಾಕಥೆಯಿಂದ ಮತ್ತೊಂದು ಮಹಾಕಥೆಗೆ ಯುಗಗಳ ಅಂತ್ಯವಿದ್ದರೂ ಎಲ್ಲ ಪಾತ್ರಗಳ ಹೆಸರೂ ಬೇರೆ ಬೇರೆಯವು, ಒಂದು ಕೂಡ ಕಾಮನ್ ಆಗಿಲ್ಲ!

ಇನ್ನು ಅಮೇರಿಕದಲ್ಲಿ ಚಾಲ್ತಿ ಇರೋ ಬ್ರ್ಯಾಂಡ್ ಹೆಸರುಗಳನ್ನು ಭಾರತದಲ್ಲಿ ಇಟ್ಟರೆ ಖಂಡಿತಾ ಕಷ್ಟವಾಗುತ್ತೆ ಅನ್ನೋದಕ್ಕೆ ಈ ಉದಾಹರಣೆ ನೋಡಿ.  ಅಮೇರಿಕದಲ್ಲಿ ಜನರಲ್ ಮೋಟಾರ್ಸ್‌ನವರು ಉತ್ಪಾದಿಸೋ ಸ್ಯಾಟರ್ನ್ (ಶನಿ) ಕಾರು ಬಹಳ ವರ್ಷಗಳಿಂದ ಪ್ರಚಲಿತವಾದುದು.  ಇದೇ ಕಾರನ್ನ ಭಾರತದ ಮಾರುಕಟ್ಟೆಯಲ್ಲಿ - ಶನಿ ಯಾಗಿ - ಉತ್ಪಾದಿಸಿದರೆ, ಯಾರು ತಾನೆ ಖರೀದಿಸುತ್ತಾರೆ ನೀವೇ ಹೇಳಿ?!  ಶನಿಗ್ರಹ ಎಲ್ಲರಿಗೂ ಬೇಕು ಹಾಗೂ ಯಾರಿಗೂ ಬೇಡವಾಗಿರುವ ಗ್ರಹ... ಬುಧ (Mercury) ಆದರೆ ಪರವಾಗಿಲ್ಲ, ಗುರು (Jupitor) ಆದರೆ ಓಕೆ, ಆದರೆ Olds Mobile ಮಾತ್ರ ಬೇಡಾ ಸ್ವಾಮಿ... ಈ ಹೆಸರನ್ನು ಇಟ್ಟವರಿಗೆ ನೊಬೆಲ್ ಪಾರಿತೋಷಕವೇನಾದರೂ ಸಿಕ್ಕಿದೆಯೇ? ಈ ಹೆಸರನ್ನು ಸೂಚಿಸಿದವರ ಕೈಗೆ ಕಡಗ ತೊಡಿಸಬೇಕು!  ಈ ಮಿಲೆನಿಯಲ್ಲ್ ಯುಗದಲ್ಲಿ ಓಲ್ಡ್ಸ್ ಮೊಬೈಲ್ ಅನ್ನುವ ಹೆಸರಿನ ಕಾರನ್ನು ಮೂವತ್ತು ವರ್ಷಗಳಿಗಿಂತ ಕೆಳವಯಸ್ಸಿನವರು ಹೇಗೆ ತಾನೇ ಖರೀದಿಸಬೇಕು?  ಪ್ರಪಂಚದಲ್ಲಿ ಜನರು ತಮ್ಮ ಕಳೆದು ಹೋದ ಯೌವನವನ್ನು ಮತ್ತೆ ಹುಟ್ಟು ಹಾಕಲು ಬಿಲಿಯನ್‌ಗಟ್ಟಲೆ ಹಣವನ್ನು ಸುರಿಯುತ್ತಿರುವಾಗ ನಮ್ಮ ಕಾರಿನ ಹೆಸರು ಓಲ್ಡ್ಸ್ ಮೊಬೈಲು ಹೇಗಾದೀತು?

ನಮ್ಮ ಭಾರತದಲ್ಲಾದರೂ ಗೋದ್ರೇಜ್, ಟಾಟಾ, ಬಿರ್ಲಾ, ವಿಪ್ರೋ, ಬಜಾಜ್, ಇನ್ಫೋಸಿಸ್ ಮುಂತಾದ ಕಂಪನಿಗಳು ತಲೆ ಎತ್ತಿದ್ದರೂ ಇದುವರೆಗೂ "ಪಟೇಲ್" ಎಂಬ ಬ್ರ್ಯಾಂಡ್ ಏಕೆ ತಲೆ ಎತ್ತಿಲ್ಲ ಎಂದು ಸೋಜಿಗವಾಗುತ್ತದೆ.  ಮಿಲಿಯನ್‌ಗಟ್ಟಲೆ ಪಟೇಲ್ ಜನರ ಪರಂಪರೆ ತಮ್ಮ ವಂಶಪಾರಂಪರ್ಯದವರವನ್ನು ವಿದೇಶಗಳಿಗೆ ರವಾನಿಸೋದರಲ್ಲೇ ಅವರ ಇನ್ನೋವೇಶನ್ ಸೀಮಿತವಾಗಿ ಹೋಯಿತೋ ಎಂದು ಸಂಶಯವಾಗುವುದಿಲ್ಲವೇ?

ಈ ಹೆಸರುಗಳೇ ಬ್ರ್ಯಾಂಡ್‌ಗಳಾಗುತ್ತವೆ... ಒಂದು ರೀತಿಯಲ್ಲಿ "ಹಮಾರಾ ಬಜಾಜ್" ಆದ ಹಾಗೆ!  ಅಫಘಾನಿಸ್ತಾನದಲ್ಲೂ ಪ್ರಚಲಿತವಾದ ಬ್ರ್ಯಾಂಡ್ ಎಂದರೆ ಕೋಕಾಕೋಲಾ ಹಾಗೂ ಮರ್ಸಿಡಿಸ್ ಬೆಂಜ್ ಮಾತ್ರ ಎಂಬುದು ಮತ್ತೊಂದು ಸಮೀಕ್ಷೆಯ ವರದಿ!  ಹೀಗೇ ನಿಮ್ಮ ಬ್ರ್ಯಾಂಡ್ ನಿಮ್ಮನ್ನು ನೀವೂ ಡಿಫೈನ್ ಮಾಡಿ, ಮಾರ್ಕೇಟ್ ಮಾಡಿ, ಅದನ್ನೂ ಎತ್ತರದಿಂದೆತ್ತರಕ್ಕೆ ಕೊಂಡೊಯ್ಯಬಹುದು...ಪ್ರಯತ್ನ ಮಾಡಿನೋಡಿ.


Saturday, April 30, 2016

ಶಾಂತವಕ್ಕನ ಸಡಗರ

ಇನ್ನೇನು ಶ್ರಾವಣ ಮಾಸ ಹತ್ರ ಬಂತು ಅಂತ ಊರಿನ ಹೆಂಗಳೆಯರೆಲ್ಲ ಮನೆ ಜಗಲಿ, ಅಂಗಳ ಸಾರ್ಸಿ ಶುಭ್ರವಾಗಿಟ್ಟುಕೊಂಡಿದ್ರು.  ಎವರೆಡಿ ಶೆಲ್ಲಿನ ಒಳಗಿನಾಗಿರೋ ಕರ್ರಗಿನ ಪೌಡರ್ರ್ ಹಾಕಿ ತಿಕ್ಕಿಂದ್ರಿಂದ್ಲೋ ಏನೋ ಕೆಲವರ ಮನಿ ಮುಂದಿನ ಅಂಗಳ ಟಾರ್ ರಸ್ತೆಗಿಂತ ಕಪ್ಪಗಿತ್ತು ನೋಡ್ರಿ.  ಇತ್ಲಾಗೆ ಶಾಲೇಗ್ ಹೋಗೋ ಮಕ್ಳು ಸಧ್ಯ ಛಳೀ ಹೊಂಟೋಯ್ತು ಅಂತ ತಮ್ಮ ತಮ್ಮ ಚಿಕ್ಕ ಚಿಕ್ಕ ಯೂನೀಫಾರ್ಮಿನೊಳಗೆ ತಮ್ಮನ್ನ ತುರುಕಿಕೊಂಡಿದ್ರು, ಮೇಲ್ನಿಂದ ಕೊರೆಯೋ ಮಳೆಗೋ ಬಿಸಿಲಿಗೋ ರಕ್ಷಣೆ ಇರ್ಲೀ ಅಂತ ಹೆಂಗಳೆಯರಲ್ಲಿ ಕೆಲವ್ರು ಆಶ್ಚರ್ಯ ಸೂಚಕ ಮಾರ್ಕಿನಂಗಿರೋ ಛತ್ರಿ ಹಿಡಕೊಂಡು ಓಡಾಡ್ತಿದ್ರು.  ಕೆಲವೊಮ್ಮೆ ಪುಷ್ಯಾ ಮಳಿಯಿಂದ ತಪ್ಪಿಸಿಕೊಂಡ್ರೂ ಆರ್ದ್ರೀ ಮಳಿ ಬಿಡ್ಲಿಲ್ಲಾ ಅನ್ನೋ ಹಂಗೆ ಜಿಟಿಪಿಟಿ ಮಳೆ ಎಷ್ಟೊತ್ತಿಗೆ ಬರುತ್ತೆ ಅಂತ ಹೇಳೋಕಾಗ್ದಿದ್ರೂ, ಅದರ ಪರಿಣಾಮ ಅನ್ನೋ ಹಂಗೆ ಕೆಂಪನೆ ಕಿಚಿಪಿಚಿ ಕೆಸರು ಕಾಲು-ಪ್ಯಾಂಟುಗಳಿಗೆ ಅಂಟೋದು ಗ್ಯಾರಂಟಿ ಆಗಿತ್ತು.

ಇದೇ ಹೊತ್ತಲ್ಲಿ ಊರ್‌ನಾಗಿರೋ ಬ್ರಾಂಬ್ರ ಓಣಿಯಲ್ಲಿ ಏನೋ ಒಂಥರ ಸಂಭ್ರಮ.  ಅದೇ ಮಗ್ಗಲ ಮನಿ ಶಾಂತವ್ವಕ್ಕ ಇದಾಳಲ್ಲ ಅಕಿ ನೂರಾ ನಾಕನೇ ವರ್ಷಕ್ಕೆ ಕಾಲಿಟ್ಟ ಸಂಬಂಧ ಊರ್‌ನಾಗಿನ ಮುಖಂಡ್ರು ಎಲ್ಲಾ ಸೇರಿ ಹುಟ್ಟಿದ ಹಬ್ಬಾನ ದೊಡ್ಡದಾಗಿ ಆಚರ್‌ಸಬೇಕು ಅಂತ ಒಂದು ಕಾರ್ಯಕ್ರಮ ಹಮ್ಮಿಕೊಂಡಾರಂತ.  ಭಾನುವಾರ ಮಟಮಟ ಮಧ್ಯಾಹ್ನ ಎರಡು ಘಂಟಿಗೆ ಶುರುವಾಗೋ ಕಾರ್ಯಕ್ರಮ ಇನ್ನೂ ಸ್ಥಳೀಯ ಎಮ್ಮೆಲ್ಲೆ ಬರ್ಲಿ ಅಂತ ಕಾಯ್ಕೊಂಡ್ ಕುಂತು ಘಂಟೆ ಮೂರ್ ಆದ್ರೂ ಶುರೂ ಆಗೋ ಭಾಗ್ಯ ಬಂದಂಗಿರ್ಲಿಲ್ಲ.  ಆದ್ರೂ ರಗಡು ಮಂದಿ ಸೇರಿದ್ರು.  ಎಲ್ಲೆಲ್ಲಿಂದಾನೋ ಬಂದಿದ್ರು.  ಅವರಾಗೆ ಬಾಳ ಮುಖ್ಯ ಅಂದ್ರ, ಶಾಂತವಕ್ಕನ್ನ ಗಿರಿಮಗಳು ಮೋಹಿನಿ - ದೂರ ದೇಶ ಅಮೇರಿಕಾದಾಗೆ ಅದೇನೋ ಕಾಯ್ಕ ಮಾಡ್ಕಂಡು ಅಲ್ಲೇ ಇದಾರಂತೆ, ಅದ್ರೂ ಅತ್ಯಂತ ಮುತುವರ್ಜಿ ವಹಿಸಿ ಶಾಂತವಕ್ಕನ್ನ ಬರ್ತ್‌ಡೇ ಆಚರಿಸಾಕ ಹದಿಮೂರು ಸಾವಿರ ಕಿಲೋಮೀಟರ್ ದೂರದಿಂದ ಬಂದಿರೋದು ನಮ್ಮೂರಿಗೆ ಹೆಚ್ಚೇ ಬಿಡ್ರಿ.  ಆದ್ರೂ ಅವನವ್ವನ, ಇದೇ ತಾಲೂಕಿನಾಗೆ ಬಿದ್ದು ಎದ್ದು ಸಾಯೋ ಈ ಎಮ್ಮೆಲ್ಲೆ ಮಂದಿಗೆ ಏನ್ ಅಂತಾದ್ ಬಂದೀತು? ಇನ್ನೂ ಸುದ್ದೀನೇ ಇಲ್ಲಲ!

ಹಂಗೂ ಮಾಡಿ ಶಾಂತವ್ವಕ್ಕನ ವಯಸ್ಸು ಇಷ್ಟೇ ಹಿಂಗೇ ಎಂದು ಯಾರೂ ಬರ್ದಿಟ್ಟಂಗಿದ್ದಿದ್ದು ಯಾರಿಗೂ ನೆನಪಿಲ್ಲ ನೋಡ್ರಿ.  ಅದರಾಗೂ ಒಂದ್ ಸರ್ತಿ ನೂರರ ಹತ್ರಾ ಹೋದ್ರಿ ಅಂದ್ರ ನಿಮ್ಮ ಜೀವಮಾನದಾಗೆ ಬಂದ್ ಹೋಗಿರೋ ಮುಕ್ಕಾಲ್ ಜನ ಆಗ್ಲೇ ಟಿಕೇಟ್ ತಗೊಂಡಂಗೇ ಲೆಕ್ಕ!  ಅದ್ರಾಗೂ ನೂರ್ ವರ್ಷದ ಹಿಂದೇ ಜಾತ್ಕಾ ಪಾತ್ಕಾ ಬರೀತಿದ್ರೋ ಏನೋ ಆದ್ರೂ, ಜನನಪತ್ರಿಕೆ ಮರಣ ಪತ್ರಿಕೆ ಅಂಥಾ ಯಾರೂ ಪ್ರಿಂಟ್ ಹಾಕಿದ್ದು ನಾನಂತೂ ಕಂಡಿಲ್ಲ.  ಅದೂ ಹೋಗೀ ಹೋಗಿ ಬ್ರಿಟೀಷ್ ಸರಕಾರದಾಗ ಹುಟ್ಟಿರೋ ಮುದುಕಿ ಒಂಥರಾ ಬ್ರಿಟೀಷರ ಹಂಗಾ ಗರ್ವದಾಕಿ ಬಿಡ್ರಿ.  ಶಾಂತವ್ವಕ್ಕ ಈಗ್ಲೇ ಇಷ್ಟು ಉರೀತಾಳೆ, ಆಗ ಹೆಂಗಿದ್ಲೋ ಅಂತ ಕೆಲವು ಹೆಣ್ ಮಕ್ಳು ಕೈ ಮುರ್ದು ಲಟಗಿ ತಗೊಂಡಿದ್ದಂತೂ ನಿಜ.  ಒಂದ್ ಹತ್ತ್ ವರ್ಷದ ಹಿಂದಿನ್ ವರೆಗೂ ಈ ಮುದುಕಿ ಕಡಿಮೀ ಏನ್ ಇರ್ಲಿಲ್ಲ.  ದಿನಾ ಅಗಸೀ ಬಾಗ್ಲು ಮಟಾ ನಡ್ದು ಬಾವೀ ನೀರ್ ಸೇದಿ ತರೋದೇನೋ, ಬಾಗ್ಲೂ ಬಳ್ದು, ರಂಗೋಲಿ ಹಾಕಿದ್ದಷ್ಟೇ ಅಲ್ದೇ, ಒಂದೇ ಒಂಚೂರು ಬಿಡದೇ ದೊಡ್ಡ ಹಿತ್ಲು ಗುಡುಸ್ತಿತ್ತ್ ನೋಡ್ರಿ ಈ ಮುದುಕಿ.  ದರ್ಲೆ ತೆಗೆದು ಒಲೀ ಮ್ಯಾಲೆ ದನಗಳಿಗೆ ಬಾಯಾರು ಬಿಸಿಮಾಡಿ ಕೊಟ್ಟು, ಕೊಟಗಿ ಶುದ್ದಾ ಮಾಡಿ ಹಾಲ್ ಕರಕಂಡ್ ಬಂದು ಸುರ್ ಅಂತಾ ಒಂದು ಲೋಟಾ ಕಾಪೀ ಹೀರೋದ್ರೊಳಗೆ ಹತ್ತ್ ಘಂಟ್ ಆಗಿತ್ತು.  ನಾವ್ ಇವತ್ತಿನ ದಿನಾ ವಾರಕ್ಕ ನಲವತ್ತು ಘಂಟಿ ಅಂತ ಏನ್ ಕೆಲ್ಸಾ ಮಾಡ್ತೀವಿ, ಈ ವಮ್ಮ, ಭಾನುವಾರದಿಂದ ಮಂಗಳವಾರದೊಳಗೇ ನಲವತ್ತೇನು ಐವತ್ತು ಘಂಟಿ ದುಡಿಯೋದ್ ನೋಡ್ರಿ.  ಜಿಮ್ಮು-ಗಿಮ್ಮು ಅಂತ ಒಂದ್ ದಿನ ಅದರ ಬಗ್ಗೆ ಕೇಳದಿದ್ರೂ ಮೈಯಾಗೆ ಒಂದು ಚೂರು ನೆಣಾ ಅಂತ ಇದ್ದಂಗಿಲ್ಲ ನೋಡ್ರಿ, ಯಾವತ್ತಿದ್ರೂ ಒಂದೇ ಒಂದ್ ಲಕ್ಷಣಾ.  ಇಂದಿನ ಕಾಲದ ಹೆಣ್ಣ್ ಮಕ್ಳು ಒಂದೊಂದು ಹಡದು ಹತ್ತು ವರ್ಷ ಹಳೇದಾದ ಎಸ್.ಟಿ. ಬಸ್ಸಿನ ಹಂಗೆ ನಡೆಯೋದಾದ್ರೆ ಈವಮ್ಮ ಎಂಟು ಮಕ್ಳನ್ನ ಹಡದು ಅದೆಷ್ಟೋ ಬಾಣಂತನಾನ ಮಾಡಿ ಇನ್ನೂ ಒಂಚೂರೂ ಬೆನ್ನ್ ಬಾಗಿಸದೇ ನಡೀತಾಳ ಅಂದ್ರ ಅದೊಂದು ದೊಡ್ಡ ಪವಾಡನೇ ಬಿಡ್ರಿ.  ಈ ವಮ್ಮನ ಗಂಡಾ ಅದ್ಯಾವಾಗೆ ಟಿಕೇಟ್ ತೆಗೆಂಡು ಹೋದನೋ ನನಗೆ ಗೊತಿಲ್ಲಾ, ಅದ್ರೂ ಈವಮ್ಮ ಮರೆ-ಮೈಲಿಗೆ-ಮಡಿ ಅಂತಾ ಇಡೀ ಊರಿಗೆ ಫೇಮ್ಮಸ್ಸು ನೋಡ್ರಿ.  ಶಾಂತವಕ್ಕನ ಉಪ್ಪಿನಕಾಯಿ, ಹಪ್ಪಳಾ, ಸಂಡಿಗೆ ಅವರ ಸಂಬಂಧಿಕರ ದೆಸೆಯಿಂದ ಎಲ್ಲೆಲ್ಲೋ ಹೊಗ್ತಿತ್ತು.  ಆಕಿ ಕೈ ರುಚೀನೇ ಬ್ಯಾರೆ.  ಆರು ತಿಂಗಳೇನು, ಅರು ವರ್ಷಾ ಅದ್ರೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಕಡದ್ರ ಇನ್ನೂ ಕಟುಂ ಅನ್ನೋದು ನೋಡ್ರಿ!

ಕೊನೀಗೂ ಎಮ್ಮೆಲ್ಲೆ ಸಾಹೇಬ್ರು ಬಂದ್ರೂ ಅಂತ ಕಾರ್ಯಕ್ರಮ ಶುರೂ ಆಗೂ ಹಂಗ ಕಾಣಸ್ತು.  ಶಾಂತವಕ್ಕನ ಮನಿ ಮುಂದೆ ನಾಲ್ಕು ಅಡಕೆ ಮರದ ಕಂಬಾ ನೆಟ್ಟು ಒಂದು ಸಣ್ಣ ಚಪ್ರ ಕಟ್ಟಿದ್ರು.  ಅದರ ಮ್ಯಾಲೆ ಸ್ವಲ್ಪಾನೂ ಬಿಸಿಲು ಬರದೇ ಇರ್ಲಿ ಅಂತ ತೆಂಗಿನ ಮಡ್ಲು ಹೆಣೆದು ಕಟ್ಟಿದ್ರು.  ಮದುವೀ ಮನೆ ಅಷ್ಟು ದೊಡ್ಡು ಚಪ್ರಾ ಅಲ್ದಿದ್ರೂ ಮೂರು ಜನ ಕೂರೋ ಹಂಗ ಅನುಕೂಲ ಮಾಡಿದ್ರು.  ಮಧ್ಯ ಶಾಂತವ್ವಕ್ಕ, ಅಕಿ ಬಗಲಿಗೆ ಊರಿನ ಮಹಿಳಾ ಕಲ್ಯಾಣ ಇಲಾಖೆ ಸೂಪರ್‌ವೈಸರ್ರು ಸುಶೀಲಮ್ಮೋರು, ಮತ್ತೊಂದು ಕಡೆ ಎಮ್ಮೆಲ್ಲೆ ಮಹಾಂತೇಶಪ್ಪೋರು ಕುಂತಿದ್ರು.  ನೂರಾ ನಾಲ್ಕು ಮುಟ್ಟಿರೋ ಶಾಂತವಕ್ಕ ತನ್ನ ಬಗಲಿಗೆ ಕುಂತೋರಿಗಿಂತಲೂ ನೆಟ್ಟಗೆ ಬೆನ್ನ ಮಾಡಿ ಕುಂತಿದ್ಲು.  ಅವಳು ಉಟ್ಟಿರೋ ಅದೆಷ್ಟೋ ವರ್ಷದಿಂದ ಹಳೇ ಟ್ರಂಕಿನಾಗಿರೋ ಕಂದು ಬಣ್ಣದ ಪಟ್ಟೇ ಸೀರೇ ಇವತ್ತು-ನಿನ್ನೇ ಅಂಗಡಿಯಿಂದ ತಂದ ಹಾಗೆ ಮಡಿಕೇನೂ ಮುರೀದೇ ತನ್ನ ಮೈ ಮೇಲೆ ಗೆರೆಗಳನ್ನ ಹಂಗೇ ಜೋಪಾನವಾಗಿ ಉಳಿಸಿಕೊಂಡಿತ್ತು.

ಊರಿನ ಕಾರ್ಯಕ್ರಮ, ಆದ್ರೆ ಬಂದೋರಿಗೆ ತಿಂಡೀ-ಗಿಂಡೀ ಮಾಡೋರು ಯಾರು? ಅದ್ಯಾವ್ದೋ ಸೊರಬದ ಬೇಕ್ರಿ ಇಂದ ಸುಮಾರು ದೊಡ್ಡ ಕೇಕ್ ತರಸ್ಯಾರಂತ, ಅದು ಬಿಸಲಿಗೆ ಕರಗೀತು ಅಂತ ಇನ್ನೂ ಒಳಗೇ ಇಟ್ಟಿದ್ರು.  ಮೈಕೂ ಪೈಕೂ ಏನೂ ಬ್ಯಾಡ, ಸುಮ್ನೇ ದುಡ್ಡು ಖರ್ಚು ಅಂತ ಹಂಗೇ ಸುತ್ಲೂ ಸೇರಿರೋ ಜನ್ರನ್ನ ಕುರುತು ಮೊದಲಿಗೆ ಸುಶೀಲಮ್ಮೋರು ಮಾತಾಡಿದ್ರು.  ಇವತ್ತಿನ ದಿನಾ ನೂರೇನು ಎಪ್ಪತ್ತು ವರ್ಷ ನೋಡೋ ಮಂದಿ ಭಾಳಾ ಇಲ್ಲ, ಅಂತಾದ್ರಾಗೆ ನಮ್ಮೂರಿನ ಶಾಂತವ್ವಕ್ಕ ನೂರಾ ನಾಕು ಮುಟ್ಟೈತಿ ಅಂದ್ರ ಅದೊಂದು ರಾಜ್ಯದ ವಿದ್ಯಮಾನ ಅಂತ ಭಾಳ ಚೊಲೋ ಭಾಷ್ಣ ಮಾಡಿದ್ರು.  ಅವರ ನಂತ್ರ ಮಹಾಂತೇಶಪ್ಪೋರು ನಾನು ವಿಧಾನ ಸಭೆ ಕಾರ್ಯಕಲಾಪದಾಗ ಈ ಸಂಬಂಧ ಚರ್ಚೇ ಮಾಡ್ಸಿ, ಶಾಂತವಕ್ಕಂಗ ಒಂದ್ ಅವಾರ್ಡ್ ಕೊಡಸ್ತೀನಿ ಅಂತ ಆಶೋತ್ತರ ಮೂಡಿಸಿ ಆಸೆ ತೋರ್ಸಿದ ಕೂಡ್ಲೇ ಅವರ ಚೇಲಾಗಳೆಲ್ಲ ದೊಡ್ಡದಾಗಿ ಚಪ್ಪಾಳೆ ಹೊಡ್ದಿದ್ದು ನೋಡಿ ನಾವೂ ಹೊಡದ್ವಿ.  ಅಮ್ಯಾಲೆ ಶಾಂತವಕ್ಕನ ಮನೆ ಮಂದೀ ಎಲ್ಲ ಬಂದೂ ಅರತೀ ಮಾಡಿದ್ರು.  ಅವರ ಮನೇ ಮಂದೀನೇ ಸುಮಾರು ನೂರು ಜನ ಇದ್ದಂಗಿದ್ರು ನೋಡ್ರಿ.  ಎಲ್ಲ ಮಕ್ಳೂ, ಮೊಮ್ಮಕ್ಳು, ಮರಿಮಕ್ಳು, ಗಿರಿಮಕ್ಳು ಇವರ್ದ್ರೆಲ್ಲಾ ಲೆಕ್ಕಾ ಹಾಕ್ಕೊಂಡಿರೋರು ಯಾರು? ಕುದ್ದು ಶಾಂತವಕ್ಕಂಗೇ ಇವರೆಲ್ಲ ನೆನಪಿದಾರೋ ಇಲ್ವೋ!  ಶಾಂತವ್ವಕ್ಕಾ ನೀನೂ ಒಂದಿಷ್ಟು ಮಾತಾಡು ಅಂದ್ರು.  "ನನ್ದೇನೂ ಬ್ಯಾಡಾ, ಎಲ್ಲಾ ಚೆನ್ನಾಗಿರ್ರಿ!" ಅಂತ ಅದ್ರಾಗೂ ಬಿನ್ನಾಣ ತೋರಿಸ್ತು ಮುದುಕಿ.

ಇನ್ನೇನು ಕೇಕ್ ಕಟ್ ಮಾಡೋಣ ಅಂತ ಎಲ್ರೂ ಅಂದ್ರೂ.  ಅಷ್ಟ್ರೊಳಗ ಶಾಂತವಕ್ಕನ ಅಮೇರಿಕದಿಂದ ಬಂದ ಗಿರಿಮಗಳು ಮೋಹಿನಿ, ಅದೇನೋ ಇಂಗ್ಲೀಷ್ನಾಗೆ ಅಂದ್ಲು, ಅದರ ಪ್ರಕಾರ ಶಾಂತವಕ್ಕನ್ನೂ ಒತ್ತಾಯ ಮಾಡಿ ಸ್ವಲ್ಪ ಮಾತಾಡಕ್ ಬಿಟ್ರು ನೋಡ್ರಿ.  ಶಾಂತವಕ್ಕ ಹೆಚ್ಗೆ ಏನೂ ಹೇಳ್ಲಿಲ್ಲ,  "ಎಲ್ರೂ ಸುಖವಾಗಿರ್ರಿ, ಜಗಳಾಪಗಳಾ ಮಾಡಬೇಡ್ರಿ.  ಮನಸು ಚೆನ್ನಾಗಿದ್ರೆ ದೇಹ ಚೆನ್ನಾಗಿರ್ತತಿ.  ವ್ಯಾಯಾಮಾ ಪಾಯಾಮಾ ಎನೂ ಬ್ಯಾಡ, ನೀವ್ ಏನ್ ತಿಂತೀರಿ, ಎಷ್ಟು ತಿಂತೀರಿ ಮತ್ತ ಯಾವಾಗ ತಿಂತೀರಿ ಅನ್ನೋದರ ಬಗ್ಗೆ ನಿಗಾ ಇರ್ಲಿ" ಅಂದ್ಲು.  ಎಲ್ರೂ ಮತ್ತೆ ದೊಡ್ಡ ಚಪ್ಪಾಳೆ ಹೊಡೆದ್ರು.  ಮೋಹಿನಿ ತನ್ನ ಅಮ್ಮನ ಹತ್ರ ಅದೇನೋ ಇಂಗ್ಲೀಷಿನಾಗೆ ಅಂದ್ಲು.  ಅದನ್ನ ಅವರಮ್ಮ ತರ್ಜುಮೆ ಮಾಡಿ -"ಶಾಂತವಕ್ಕ, ನಿನ್ನ್ ಜೀವನದಾಗೆ ಇದೂವರೆಗೆ ಕಂಡಿರೋ ಮಹಾ ಅವಿಷ್ಕಾರ ಅಂದ್ರೆ ಯಾವ್ದು?" ಅಂತ ದೊಡ್ಡದಾಗಿ ಕೇಳಿದ್ರು.  ಅವರು ಹೇಳೋದನ್ನ ಮೋಹಿನಿ ತನ್ನ ಬಂಗಾರ ಬಣ್ಣದ ಐಫೋನಿನ್ಯಾಗೆ ರೆಕಾರ್ಡ್ ಮಾಡಿಕೊಂತಿದ್ಲು.

ಶಾಂತವಕ್ಕ ಒಂದ್ ಸರ್ತಿ "ಹ್ಞೂ..." ಅಂತ ದೊಡ್ಡದಾಗಿ ಉಸಿರು ಎಳಕೊಂಡು ಒಂದು ಹತ್ತು ಸೆಕೆಂಡು ಯೋಚ್ನೇ ಮಾಡಿದ್ಲು.  ನಾವೆಲ್ಲ ಕಂಪ್ಯೂಟರ್ರೋ, ಫೋನೋ, ಸಿನಿಮಾನೋ, ಮೋಟಾರೋ-ರೈಲೋ ಅಂತಾಳೆ ಅಂದುಕೊಂಡು ಖಾತರದಿಂದ ನೋಡ್ತಾ ಇದ್ವಿ.  ಮೋಹಿನಿನೂ ತನಗೆ ಕನ್ನಡ ಬರುತ್ತೆ ಅಂತ ತೋರಿಸ್ ಬೇಕು ಅಂತ "ನನ್ ಕಡೇ ನೋಡು..., ಹೇಳಜ್ಜಿ ಹೇಳು..." ಅಂತಾ ಜೋಗಕ್ಕೆ ಬರೋ ಬಿಳಿ ಟೂರಿಸ್ಟ್‌ಗಳ ಧ್ವನಿಯಲ್ಲಿ ದೊಂಬಾಲು ಹಾಕಿದ್ಲು.  ಶಾಂತವಕ್ಕ ಒಂಥರಾ ಟಿವಿ ನೈನಿನ ರಿಪೋರ್ಟರುಗಳು ಕ್ಯಾಮೆರಾ ನೋಡಿಕೊಂಡೇ ಮಾತಾಡ್ತಾವಲ್ಲ ಹಂಗೆ ಕ್ಯಾಮೆರಾನ ದಿಟ್ಟಿಸಿ ನೋಡಿ, "ನಮ್ಮೂರಿಗೆ...     ಕರೆಂಟ್ ಬಂತು ನೋಡ್ರಿ, ಎಲ್ಲಕ್ಕಿಂತ ಅದೇ ದೊಡ್ದು!  ಅದ್ಯಾವ ಪುಣ್ಯಾತ್ಮ ಕರೆಂಟ್ ಕಂಡ್ ಹಿಡಿದ್ನೋ ಅದೇ ದೊಡ್ಡ ವಿಷ್ಯಾ, ಕರೆಂಟ್ ಇಲ್ಲಾ ಅಂತಂದ್ರೆ ನಿಮ್ಮ ಆಟ ಏನೂ ನಡೆಯಂಗಿಲ್ಲ!" ಅಂದು ಬಿಡ್ತು.

ತನ್ನ್ ಐಫೋನೇ ದೊಡ್ಡು ಅಂತ ಅಂದಕಂಡಿದ್ದ ಮೋಹಿನಿ ಮುಖಾ ಸಪ್ಪಗಾಯ್ತು.  ಎಮ್ಮೆಲ್ಲೆ ಸಾಹೇಬ್ರು ಮುಖದ ಮ್ಯಾಲೆ ಇದುವರೆಗೆ ತೇಲಾಡ್ತಿದ್ದ ತೆಳು ನಗೆ ಒಂದು ಕ್ಷಣಾ ನಿಲ್ತು.  ಸೇರಿದ್ದ ಜನ ಭೂತ ನೋಡಿದ್ರೇನೋ ಅನ್ನೋ ಹಂಗೆ ಒಂಥರಾ ಸ್ತಂಭೀಭೂತರಾದ್ರು.  ಇಷ್ಟರಾಗೆ ಸುಧಾರಿಸಿಕೊಂಡ ಸುಶೀಲಮ್ಮ ಚಪ್ಪಾಳೆ ಹೊಡ್ದು, "ಭಾಳಾ ಸತ್ಯವಾದ ಮಾತು..., ಸತ್ಯವಾದ ಮಾತು" ಅಂದು, ಮುಂದೆ "...ಕೇಕ್ ಕಟ್ ಮಾಡ್ರಿ?..." ಅಂತ ಆದೇಶ ಕೊಟ್ರು.  ಈ ಜನಗಳ ಈ ಪ್ರತಿಕ್ರಿಯೆಯನ್ನ ನಿರೀಕ್ಷೆ ಮಾಡಿರದ ಶಾಂತವಕ್ಕ ತನ್ನ ಮನಸ್ಸಿನೊಳಗೇ - "ಇವೆಲ್ಲ ನಿಮಗೆ ಈ ಜನಮದಾಗ ತಿಳಿಯಂಗಿಲ್ಲ ಬಿಡ್ರಿ" ಅಂದುಕೊಂಡ ಹಂಗಾಯ್ತು.

***
ಈ ಲೇಖನ ಏಪ್ರಿಲ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Sunday, April 03, 2016

...ಸಂಡಾಸ್ ರೂಮ್ ನೋಡೀರೇನು?

ನಾವು ದೋಡ್ಡೋರ್ ಆದ ಮ್ಯಾಲೆ ನಮ್ಮನಿ ಚಿಕ್ಕ್ ಮಕ್ಕಳಿಗೆ "ಹಂಗ್ ಮ್ಯಾಡಬ್ಯಾಡs", "ಹಿಂಗ್ ಮಾಡ್‌ಬ್ಯಾಡಾs" ಅಂತ ಭಾರೀ ಉಪದೇಶ ಏನೋ ಮಾಡ್ತೀವಿ.  ಆದ್ರ, ನಾವು ಚಿಕ್ಕೋರಾಗಿದ್ದಾಗ ಮಾಡಿದ ಚ್ಯಾಷ್ಟೇ-ಕುಚೇಷ್ಟೇಗಳಿಗೆ ಲೆಕ್ಕ ಇಟ್ಟೋರಾರು ಅಂತ ಒಂದ್ ಸರ್ತೀನಾರ್ದೂ ಯೋಚ್ನೇ ಮಾಡೇವೇನು?

"ಹಂಗ್ ಮಾಡಬ್ಯಾಡೋ ತಮ್ಮಾ..." ಅಂತ ನಮ್ಮನಿ ಮಕ್ಕಳಿಗೆ ಈಗ ಹೇಳೋದೇನೋ ಭಾಳ ಐತ್ರಿ, ಆದ್ರ ನಾವ್ ಆಗಿನ್ ಕಾಲದಾಗ ಮಾಡಿದ್ದು ಒಂದೊಂದ್ ಅಲ್ಲ, ಅವನ್ನೆಲ್ಲ ನೆನೆಸಿಕೊಂಡ್ರೆ ಈಗ್ಲೂ ನಗೂ ಬರ್ತತ್ ನೋಡ್ರಿ.
ನಮ್ ಪಾಳ್ಯಾದೊಳಗ ಗಿರಿ ನಮ್ ಲೀಡರ್ರು. ಅವನ ಹಿಂಬಾಲಕರಾಗಿ ನಾವು ನಾಲ್ಕು ಮಂದಿ: ಸುನೀಲ, ರಮೇಶ, ಸುರೇಶ ಮತ್ತ ಹಸುವಿನ ಪ್ರತಿರೂಪ ಅನ್ನೋ ಹಂಗs ನಾನೂ, ಒಂಥರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರಲ್ಲ ಹಂಗs.  ಗಿರಿ ಆಗಿನ ಕಾಲದ ಬ್ರೇಕ್ ಥ್ರೂ ಮನುಷ್ಯಾ ರೀ.  ಬ್ರೇಕ್ ಥ್ರೂ ಅಂದ್ರ ಬ್ರೇಕೂ ಹೌದು ಥ್ರೂ ನೂ ಹೌದು!  ಅವನ್ದೆಲ್ಲಾ ಕಪಿಚೇಷ್ಟೆಗಿಂತ ಅದರ ಅಪ್ಪನ್ನದ್ದು ಅಂತಾರಲ್ಲ ಹಂಗs.  ಅವನ ಚೇಷ್ಟಿ ಒಳಗ ಕೆಲವೊಂದಿಷ್ಟು ಫಸ್ಟ್ ಕ್ಲಾಸು, ಇನ್ನು ಕೆಲವೊಂದು ಥರ್ಡ್ ಕ್ಲಾಸು.  ಮಂಗ್ಯಾನಂಗ್ ಆಡಬ್ಯಾಡ ಅಂಥಾ ನೀವ್ ಏನ್ ಕರೀತಿರಿ ಅವೆಲ್ಲ ಫಸ್ಟ್ ಕ್ಲಾಸು, ಅವನ ಚೇಷ್ಟೀ ಇಂದ ಯಾವನಾರಾs ಅಳಂಗ್ ಆದ್ರೆ, ಅದು ಥರ್ಡ್ ಕ್ಲಾಸು.  ಇನ್ನು ನಾವಂತೂ ಎಂದೂ ಸೆಕೆಂಡ್ ಕ್ಲಾಸ್ ಚೇಷ್ಟೇ ಅಂದ್ರ ಏನು ಅಂತ ಯಾವತ್ತೂ ಯಾರ್‌ನೂ ಕೇಳಿದ್ದಿಲ್ಲ!

ಗಿರಿ ಮತ್ತು ಅವನ ಗ್ಯಾಂಗಿನ ಕುತಂತ್ರಗಳಿಗೆ ಬಲಿ ಬೀಳದ ನಮ್ಮೂರಿನಾಗ ಜನರೇ ಇಲ್ಲ ಅನ್ನಬಕು. ನೀವು ನಮ್ ಬಂಡ್ ಭಾಳ್ವಿಗಿ ಸಾಕ್ಷಿ ಆಗಿಲ್ಲ ಅಂದ್ರs ಒಂಥರಾ ನಮ್ಮೂರಿನ ಸಿಟಿಜನ್‌ಶಿಪ್ ಪರೀಕ್ಷಾದಾಗ ಫೇಲ್ ಆದಂಗ್ ನೋಡ್ರಿ!  ಒಂದ್ ಊರು ಅಂದ್ರ ಎಲ್ಲಾ ಥರದ ಮಂದಿ ಇರ್ತಾರ, ಆದ್ರ ನಮ್ ಗಿರಿ ಅಂಥಾ ಮನ್ಶ್ಯಾರು ಬಾಳ್ ಮಂದಿ ಇದ್ದಂಗಿಲ್ಲ ಅನ್ನೋದು ನಮ್ ಅಂಬೋಣ.

ನಿಮಗೂ ನಮ್ಮ ತಂಡಕ್ಕೂ ಯಾವತ್ತಾದ್ರೂ ಮುನಿಸಾತು ಅಂದ್ರ, ನಿಮ್ಮ ಮನ್ಯಾಗ ಸೈಕಲ್ಲೋ ಲೂನಾನೋ ಟಿವಿಎಸ್ಸೋ ಇದ್ರs, ಅದ್ರ ಚಕ್ರದಾಗಿನ ಹವಾ ಟುಸ್ಸ್ ಅಂದಂಗs ಅಂಥ ತಿಳಕೊಳ್ರಿ.  ಅದ್ಯಾವ ಮಾಯದಾಗ ಗಿರಿ ಬರ್ತಿದ್ನೋ... ನಿಮ್ಮನಿ ಮುಂದ ನಿಲ್ಸಿರೋ ಟೂ ವ್ಹೀಲರಿನ ಹವಾ ಇದ್ದಕ್ಕಿದ್ದಂಗ ನಾಪತ್ತೆ ನೋಡ್ರಿ!  ಈ ಟೂ ವ್ಹೀಲರ್ ಹವಾ ಕಳೆದುಕೊಂಡ ಮ್ಯಾಲೆ ಅದನ್ನ ತಳ್ಳೋದು ಎಷ್ಟು ಕಷ್ಟ ಅಂಥ ನಿಮಗ ಗೊತ್ತಿರಲಿಕ್ಕಿಲ್ಲ, ಯಾವತ್ತರ ಟ್ರೈ ಮಾಡಿ ನೋಡ್ರಿ.  ಹವಾ ಕಳಕೊಂಡ ಅದರ ಟ್ಯೂಬಿನೊಳಗೆ ವಾಷರ್ ಒಡೆದು ಹೋಗಿರೋ ಸೈಕಲ್ ಪಂಪ್ ಬಳಸಿ, ಪೆಚ್ಚ್ ಮೋರೇ ಹಾಕ್ಕೊಂಡು, ಹವಾ ತುಂಬೋದು ಅಂದ್ರs ಅದರ ಪಜೀತಿ ಯಾವ ವೈರಿಗೂ ಬ್ಯಾಡ.  ಹವಾ ಹೊಡ್ದೂ ಹೊಡ್ದೂ ಕೈ ಮೈ ನೋವ್ ಬಂದಂಗs.
ಯಾರ್ದಾರೂ ಮನಿ ಹಿತ್ಲಾಗ ಬಾಳೆ ಗೊನಿ ಇನ್ನೇನು ಕಟಾವಿಗೆ ಬಂತೂ ಅಂದ್ರ, ಅದು ಅದರ ಹಿಂದಿನ್ ದಿನಾ ಅದು ಮಂಗ್ ಮಾಯಾ ನೋಡ್ರಿ! ನಮ್ ಗಿರಿ ಹತ್ರ ಯಾರ್ ಹಿತ್ಲಾಗ್ ಯಾವ್ ಫಲ ಎಷ್ಟು ದಿನದಾಗ ಕಟಾವಿಗೆ ಬರ್ತತಿ ಅನ್ನೋದರ ಮಾಹಿತಿ ಭಾಳ್ ಛೊಲೋ ಇತ್ ನೋಡ್ರಿ. ಅವನ ತಲೀ ಒಡೋದೇ ಹಂಗs.  ಮಾವಿನ್ ತೋಪ್‌ನ್ಯಾಗೆ ಕಾಯೋರು ನಮ್ಮನ್ನ ನೋಡ್ರಿದ್ರೆ ದೇವ್ರು ಬಂದೋರಂಗ ಆಡೋರು!  ಎಲ್ಲಾರೂ ಗುರಿ ಇಟ್ಟ್ ಕಲ್ ಹೋಡ್ದು ಒಂದು ಫಲ ಉದುರಿಸಿದ್ರೆ, ನಮ್ಮ್ ತಂಡ ಇಡೀ ಮರಾನೇ ಖಾಲೀ ಮಾಡೋದು... ಮರಾ ಒಂದೇ ಅಲ್ಲ್ ಇರ್ತಿತ್ತು, ಯಾಕಂದ್ರ ಮತ್ತ್ ಮುಂದಿನ ವರ್ಷಕ್ಕ್ ಬೇಕ್ ಅಲ?
ಅಷ್ಟೂ ಮಾಡಿ ನಮಗೆಲ್ಲಾ ಅವಾಗ ಛಾಟೀ ಬಿಲ್ಲಿನ ಹುಚ್ಚು ರೀ.  ಅದರೊಳಗ ಪರಿಣಿತ ಅಂದ್ರ ನಮ್ ಗಿರಿ.  ಅವನ ಗುರಿ ಭಾಳಾ ನಿಖರ.  ನಮ್ ಶಾಲೀ ಕಟ್ಟೀ ಮುಂದ ಧ್ವಜಾ ಹಾರ್ಸೋ ಕಂಬಕ್ಕ ಸುಮಾರು ಐವತ್ತ್ ಏನು, ನೂರ್ ಅಡೀ ದೂರ್ದಿಂದ ಗುರಿ ಇಡೋನ್ ರೀ. ಅದು ಒಂದಿನಾನು ತಪ್ಪಿದ್ದು ನಾ ನೋಡಿಲ್ಲ.  ಅಷ್ಟೂ ಮಾಡಿ ನಿಮಗ ಏನಾರಾ ಗಿರಿ ಕಂಡ್ರ ಆಗಂಗಿಲ್ಲ ಅಂದ್ರ, ನಿಮಗೂ ಛಾಟೀ ಬಿಲ್ಲಿನ ಕಲ್ಲಿನ ಏಟು ಕುಂಡೀ ಮ್ಯಾಲ ಬಿತ್ತೂ ಅಂತಾನs ಲೆಕ್ಕ.

ಎಲ್ರೂ ಊಟಕ್ಕೆ ಕುತ್ವಿ ಅಂದ್ರ ಇವ ನಿಂತೇ ಇರ್ತೀನಿ ಅನ್ನೋವ.  ಅವನೇನಾರ ಲಿಂಬಿ ಹಣ್ಣು, ಟೊಮೇಟೋ, ಮುಸಂಬಿ ಹಣ್ಣು ತಿಂತಾನೇ ಅಂದ್ರ ಅವನ ಅಕ್ಕಾ-ಪಕ್ಕಾ ಯಾರೂ ಇರಂಗಿಲ್ಲ ನೋಡ್ರಿ.  ಅವರ ಪಾಡು ದೇವ್ರಿಗೆ ಪ್ರೀತಿ.  ಅವರ ಕಣ್ಣಿನಾಗೆ ಗ್ಯಾರಂಟಿ ಲಿಂಬೀ ಹಣ್ಣಿನ್ ರಸಾ ಬೀಳೋದೆ.  ಈ ಹಣ್ಣಿನ್ ರಸಾ ಎಲ್ಲಾ ಕಡೆ ಒಸರೋ ಹಂಗ, ಹಣ್ಣನ್ನ ಹಿಚುಕಿ-ಹಿಚುಕಿ ಎಲ್ಲಾ ರಸಾ ಮಾಡ್‌ಕ್ಯಂಡ್ ಒಂದ್ ಕಡೆ ತೂತ್ ಮಾಡಿ ಅದನ್ನ ತನ್ನ ಗುರಿಗೆ ಹಿಡಿದು ಮುಖ ಮಾಡಿ ತಿನ್ನೋದರಲ್ಲಿ ನಮ್ ಗಿರಿ ನಿಸ್ಸೀಮ ರೀ.

ಯಾರ್ದಾರ ಮದ್ವೀ ನಡದ್ರ ನಮಗ್ಯಾರೂ ಬರ್ರೀ ಅಂತ ಕರೀದಿದ್ರೂ ನಾವಾs ಹೋಗ್ತಿದ್ವಿ.  ನಮ್ಮೂರಿನಾಗೆ ಮದ್ವಿ ಮುಂಜೀ ಅಂದ್ರ ಒಂಥರ ನಮ್ಮೂರಿನ ಹಬ್ಬಗಳು ಇದ್ದಂಗ, ಅದಕ್ಯಾರು ಬರಬ್ಯಾಡಾ ಹೋಗಬ್ಯಾಡ ಅನ್ನೋರು?  ಅಲ್ಲಿ ವಾಲಗಾ ಊದೋರ ಮುಂದ ನಾವು ಎಳೇ ಹುಣಸೀ ಕಾಯಿ ತಿಂತಿದ್ವಿ, ಅವರು ನಮ್ಮುನ್ನ ಓಡಿಸಿಕ್ಯಂಡ್ ಬರೋರು.  ಹಿಂಗs, ನಮ್ ಮಜಾ ನಡೀತಿತ್ತ್ ನೋಡ್ರಿ.

ಮದ್ವಿ ಅಂದ ಮ್ಯಾಲ ನೆನಪಾತು. ನಮ್ಮೂರಿನ ನಡುಮನಿ ಈರಪ್ಪನ ಮಗಳ ಮದವ್ಯಾಗ ನಮ್ ಗಿರಿ ಮಾಡಿದ ಪರಾಕ್ರಮ ನೆನಸಿಕೊಂಡ್ ಇವತ್ತಿಗೂ ನಗು ಬರ್ತತಿ ನೋಡ್ರಿ.  ನಡುಮನಿ ಈರಪ್ಪ ಅಂಥ ಸಾವ್ಕಾರ ಏನಲ್ಲ, ಆದ್ರೂ ಇದ್ದೊಬ್ಬ ಮಗಳ ಲಗ್ನಾನ ಅಚ್ಚುಕಟ್ಟಾಗಿ ಮಾಡಬಕು ಅಂತ ಮನಿ ಮುಂದ ಬ್ಯಾಡ,
ಊರಿನ ಛತ್ರದಾಗ ಇಟ್ಟುಗೊಣೂನು ಅಂತ, ಅಲ್ಲೇ ಎಲ್ಲಾ ಫಿಕ್ಸ್ ಮಾಡಿದ್ದ ರೀ.  ಹಿರೇಕೇರೂರು ಸಂಬಂಧ, ಅಂಥಾ ದೂರೇನೂ ಇಲ್ಲ, ಆದ್ರ ಮುಂಜಾನೆ ಬೇಗ ಲಗ್ನ ಮಹೂರ್ತ ಐತಿ ಅಂತ ಎಲ್ರೂ ಹಿಂದಿನ್ ದಿನಾನೇ ಬಂದು ಚೌಳ್ಟ್ರಿ ಸೇರಿಕೊಂಡಿದ್ರು ರೀ.  ನಾವು ನಮ್ಮ ತಂಡದ ಸಮೇತ ಈ ಅತಿಥಿಗಳನ್ನ ಮುಗುಳ್ನಕ್ಕು ಬರಮಾಡಿಕೊಂಡಿದ್ವಿ.  ಯಾರು, ಹೆಂಗಾs ಅಂಥ ಗೊತ್ತಾಗಬೇಕಲ? ಅದಕ್ಕಾ.  ರಾತ್ರೀ ಎಲ್ಲಾರು ಸೇರಿ ಸಮಾ ಹರಟಿ ಹೊಡದ್ವಿ...ಅದು ಯಾವಾಗ ಮಲಗಿದ್ವೋ ಅದು ಯಾವನಿಗ್ ಗೊತ್ತು!

ಮರುದಿನ, ಮುಂಜಾನೆ ಒಂಭತ್ತ್ ಘಂಟಿ ಅಭಿಜಿನ್ ಮಹೂರ್ತ ಅಂಥಾ ಕಾಣ್ತತಿ.  ಮದ್ವೀ ಮನಿ ಅಂದ್ರ ಗಡಿಬಿಡಿ, ಗಿಜಿಬಿಜಿ ಇದ್ದದ್ದ.  ಎಲ್ರೂ ಹೊಸ ಬಟ್ಟಿ ಹಾಕ್ಕೊಂಡಾರ.  ಎಲ್ಲಾ ಕಡಿ ಹೂ ಹಣ್ಣು ಕಾಣ್ಸಕ್ ಹತ್ಯಾವ. ಆದ್ರ ಒಂದಾs ಒಂದ್ ಪ್ರಾಬ್ಲಮ್ಮ್ ರೀ.
ಸುಮಾರು ಎಂಟೂವರಿಯಿಂದ ಎಲ್ಲ್ ಹುಡುಕಿದ್ರೂ ಮದುವೀ ಗಂಡಾ ಕಾಣಸಂಗಿಲ್ಲ!  ಕೆಲವೊಂದಿಷ್ಟು ಮಂದಿ ಹುಡುಗಾ ಓಡಿ-ಗೀಡಿ ಹೋಗ್ಯಾನೇನೋ ಅಂತ ಸಂಶಯಾ ವ್ಯಕ್ತಪಡಿಸಿದ್ರು.  ಕೆಲವೊಂದಿಷ್ಟು ಮಂದಿ ಹುಡುಗನ್ ಅಪ್ಪ-ಅಮ್ಮನಿಗಿ ಜೋರ್ ಮಾಡಕ್ ಹಿಡುದ್ರು.  ಒಂದಿಷ್ಟು ಹೆಣ್ ಮಕ್ಳು ಒಂದ್ ಕಡಿ ಅಳಾಕ್ ಹತ್ಯಾವ!  ಒಂಥರಾ ಕಿಲಕಿಲಾ ಅಂಥ ನಕ್ಕೊಂಡಿದ್ ಛತ್ರ ಹೊಟ್ಟಿ ಬ್ಯಾನಿ ಬಂದ್ ರೋಧ್ನ ಮಾಡೋ ಮಗೂ ಹಂಗ ಅಳಾಕ್ ಹತ್ತೈತಿ! ಯಾರೂ ಪೋಲೀಸ್-ಗಿಲೀಸ್ ಅಂದಂಗಿದ್ದಿಲ್ಲ.  ನಡುಮನಿ ಈರಪ್ಪನ ಮರ್ಯಾದೆ ಪ್ರಶ್ನೆ ನೋಡ್ರಿ.  ಅವ ಏನ್ ಮಾಡ್ತಾನ? ಅತ್ಲಾಗಿಂದ್ ಇತ್ಲಾಗ, ಇತ್ಲಾಗಿಂದ್ ಅತ್ಲಾಗ್ ಒಂಥರಾ ಬೋನ್‌ನಾಗಿರೋ ಹುಲೀ ಮರೀ ಮಾಡ್ದಂಗ ಒಡಾಡ್‌ಕೊಂಡ್ ಬುಸುಗುಡಾಕ್ ಹತ್ತಿದ್ದ.  ವಾಲಗದೋರ್ ಅವರ ಕೆಲ್ಸಾ ನಡ್ಸ್ಯಾರ.  ಮೈಕ್ ಸೆಟ್ ರುದ್ರ, ಅದ್ಯಾವ್ದೋ ಬಭ್ರುವಾಹನ ಸಿನಿಮಾ ಹಾಡ್ ಜೋರಾಗ್ ಹಾಕ್ಯಾನ.  ಭೋಜನಶಾಲೆ ಅಡಿಗಿ ಮನೀ ಒಳಗಿಂದ ಶಾವ್ಗೀ ಪಾಯ್ಸದ ವಾಸ್ನಿ ಗಮ್ಮ್ ಅನ್ನಾಕ್ ಹತ್ತಿತ್ತು.  ಒಂದಿಷ್ಟು ಮಂದೀ ನಮಗೇನೂ ಗೊತ್ತೇ ಇಲ್ಲ ಅನ್ನೋ ಹಂಗ ಮದ್ವೀ ಮಂಟಪದ ಮುಂದ ಜಮಖಾನದ ಮ್ಯಾಲೆ ಕುಂತೂ ಹರಟೀ ಹೊಡ್ಯೋದ್ರಾಗ ತಲ್ಲೀನ ಆಗಿದ್ರು.  ಕೆಲವು ಕಡೆ ಒಂಥರ ಕುಮುಟು ಬೆವ್ರು ವಾಸ್ನಿ ಬೇರೆ!

ಇನ್ನೇನು ಲಗ್ನದ ಮಹೂರ್ತ ಬಂತು, ಹತ್ರಾ ಬಂದೇ ಬಿಡ್ತು, ಆದ್ರೂ ಎಲ್ಲಿ ನೋಡ್ರಿದ್ರೂ ಮದ್ವಿ ಗಂಡಿನ ಸುಳಿವೇ ಇಲ್ಲ!  ಹುಡುಗನ ಅಪ್ಪಾ ಅಮ್ಮಾ ಕಂಗಾಲು.  ಜೋಬ್ನಾಗೆ ಹತ್ತ್ ಪೈಸಾ ಇರದಿದ್ರು ನಮ್ಮ್ ಮಂದಿ ಮರ್ಯಾದೆಗೆ ಹೆದ್ರೋ ಜನಾ ನೋಡ್ರಿ.  ಅಷ್ಟೊತ್ತಿಗ್ ಆಗ್ಲೆ ಅವರ ಮುಖಾ ಕಪ್ಪ್ ಹಿಡದ ಕರಟಾ ಆಗಿತ್ತು.  ಹುಡುಗನ್ ಕಡಿ ಬಾಳ ಮಂದಿ ಇದ್ದಂಗಿರ್ಲಿಲ್ಲಾ ಆದ್ರೂ ಪಾಪ ಅವರಿಗೆ ಊರ್ ಹೊಸತು, ಏನ್ ಮಾಡ್ತಾರ, ಏನ್ ಬಿಡ್ತಾರ?

ನಮ್ ತಂಡ ಅಲ್ಲೇ ಇತ್ತು, ನಾವೂ ಹಂಗಾ ಚ್ಯಾಷ್ಟೀ ಮಾಡ್‌ಕೊಂಡು ಹಾಡ್ ಕೇಳ್ತಾ ನಿಂತಿದ್ವಿ.  ಅಷ್ಟ್ರಾಗ ಯಾರೋ ಒಬ್ರು "ಹೇ, ಗಿರಿ, ಸಾಯಾ ಮಾಡ್ರಪ್ಪಾ, ವರಾ ಎಲ್ಲೂ ಕಾಣಸ್ತಾನೇ ಇಲ್ಲ, ಮದ್ವೀ ನಿಂತ್ ಹೋಗೋ ಪರಿಸ್ಥಿತಿ ಬಂದೈತಿ!" ಅಂದ್ರು.  ನಮ್ ಗಿರಿ ಇದ್ದೋನು, "ಅಲ್ರೀ, ಎಲ್ಲಾ ಕಡೆ ನೋಡೀರೇನು? ಅತ್ಲಾಗ್ ಸಂಡಾಸ್ ರೂಮ್ ನೋಡೀರೇನು?" ಅಂದ.
"ಬಚ್ಚಲ್ ಮನಿ ನೋಡ್ರಿ, ಬಚ್ಚಲ್ ಮನಿ ನೋಡ್ರಿ" ಅಂತ ಯಾರ್ ಯಾರೋ ಕೂಗಿದ್ರು, ಕೊನೀಗ್ ನೋಡಿದ್ರ ಹೊಟ್ ಬ್ಯಾನೀನೋ, ಏನ್ ಕರ್ಮಾನೋ ಅಂದಂಗ ಮದ್ವಿ ಗಂಡ್ ಸಂಡಾಸ್ ರೂಮ್‌ನಾಗೆ ಬಾಗ್ಲ್ ಹಾಕ್ಕೊಂಡು ಕುಂತಾನಾ!  ಯಾರೂ ನೋಡೇ ಇಲ್ಲ!  ಕೊನೀಗೂ ಸಿಕ್ಕಿದಾ ಅಂತ ಎರ್ಲೂ ಸಮಾಧಾನ್ ಮಾಡ್‌ಕೊಂಡು ಅವನ್ನ ಎಷ್ಟು ಲಗೂನಾ ಅತೋ ಅಷ್ಟು ಲಗೂ ಕರ್ಕೊಂಡ್ ಬಂದ್, ಕೊನೀಗೆ ಮಹೂರ್ತ ಮೀರೋದ್ರೊಳಗ ತಾಳೀನೂ ಕಟ್ಸ್ ಬಿಟ್ರು ನೋಡ್ರಿ.  ಎಲ್ರೂ ಸಮಾಧಾನ ಪಟ್ರು, ನಡುಮನಿ ಕುಟುಂಬ ಒಂದ್ ದೀಡ್ ಕಡ್ದು ಹಾಕಿದ ಕೆಲ್ಸ ಮಾಡ್ದಂಗ್ ನಿಟ್ಟುಸಿರು ಬಿಡ್ತು.  ಈರಪ್ಪ ಅದ್ಯಾವ್ ದೇವ್ರಿಗೆ ಅದೇನೇನ್ ಹರಿಕಿ ಹೊತ್ತಾ ಅಂತಾ ಕೇಳಬಕು, ಆ ಸ್ಥಿತಿ!

ಅಷ್ಟೂ ಮಾಡಿ, ಮದ್ವಿ ಗಂಡು ಯಾಕ್ ಅಲ್ಲಿ ಹೊಕ್ಕೊಂಡು ಕುಂತಿದ್ದ ಅಂತ ಯಾರೋ ಕೇಳ್ಲಿಲ್ಲ, ಯಾರೂ ಹೇಳ್ಲಿಲ್ಲ! ನಮಗೊಂದಿಷ್ಟು ಮಂದಿಗೆ ಮಾತ್ರ ಗಿರಿ ಹೇಳಿದ ಮ್ಯಾಲೆ ಗೊತ್ತಾತು: ಮದ್ವಿ ಗಂಡು ಎಂಟ್ ಘಂಟಿ ಅಷ್ಟೊತ್ತಿಗೆ ಸಂಡಾಸ್ ರೂಮಿನ್ ಕಡೀಗೆ ಹೋಗೋದನ್ನ ನೋಡಿ, ಗಿರಿ ಅವನ ಫಾಲೋ ಮಾಡಿದ್ನಂತ.  ಆ ಹುಡುಗ, ತನ್ನ ಬಿಳೀ ಪಂಚಿ ಬಿಚ್ಚಿ, ಸಂಡಾಸ್ ರೂಮ್ ಬಾಗ್ಲ್ ಮ್ಯಾಲ ಇಟ್ಟು, ತನ್ನ ಕೆಲ್ಸ ಮುಂದುವರೆಸ್ಯಾನಂತ.  ಅಷ್ಟೊತ್ತಿಗೆ, ಗಿರಿ ಹೋಗಿ ಅವನ ವಸ್ತ್ರ ಅಪಹರಣ ಮಾಡಿ ಮತ್ತೊಂದು ರೂಮಿನಾಗೆ ಇಟ್ಟನಂತ.  ಯಾವ್ದೋ ಊರಿಂದ ಯಾವ್ದೋ ಊರಿಗೆ ಬಂದು, ಸಂಕೋಚದ ಅಪರಾವತರ ಅನ್ನೋ ಹಂಗ್ ಇದ್ದ ಹುಡುಗಾ ಕೂಗೋಕೂ ಆಗ್ದೇ ಹೊರಾಗ್ ಬರೋಕೂ ಅಗ್ದೇ ಅಲ್ಲೇ ಕುಂತಿದ್ನಂತೆ ನೋಡ್ರಿ!

ಇವೆಲ್ಲ ಆಗಿದ್ದು ನಮ್ ಗಿರಿ ಮತ್ತು ಅವರ ತಂಡದ ಕೃಪೆ ಅಂತ ಯಾರಿಗಾದ್ರೂ ಗೊತ್ತಾಗಿದ್ರ ನಮ್ ಪರಿಸ್ತಿತಿ ದಯನೀಯ ಆಗ್ ಹೋಗ್ತಿತ್ತು, ಆ ಸಂಕೋಚದ ಪ್ರವೃತ್ತಿ ಹುಡುಗನ ದೆಸೆಯಿಂದ ನಾವೆಲ್ಲ ಇವತ್ತು ಕೈಕಾಲು ನೆಟ್ಟಗೆ ಇಟಗೊಂಡಿರೋ ಹಂಗಾತು ಅಂತ ನೆನೆದು ಇವತ್ತೂ ನಾವ್ ನಗತೀವ್ ನೋಡ್ರಿ.  ನೀವೇನಾರಾ ನಮ್ಮೂರಿಗೆ ಹೋಗ್ತೀವಂದ್ರ ನಮ್ಮ್ ಗಿರಿ ಕಂಡು ಕುದ್ದ್ ಮಾತಾಕ್ಯಂಬರ್ರಿ, ಅವ ಹಿಂದ್ ಇದ್ದಂಗ್ ಈಗಿಲ್ಲ, ಆದ್ರೂ ಸ್ವಲ್ಪ ಹುಶಾರ್ ಇರ್ರಿ!


***
ಈ ಲೇಖನ ಮಾರ್ಚ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Sunday, February 28, 2016

ಆಜಾದಿಯಿಂದ ಬರಬಾದಿಯವರೆಗೆ...

ಈ ತಿಂಗಳ ೯ನೇ ತಾರೀಖಿನಿಂದ ಜೆಎನ್‌ಯು ನಲ್ಲಿ ಕೆಲವು ವಿದ್ಯಾರ್ಥಿಗಳು ಕವನಗಳನ್ನು ಓದುತ್ತೇವೆ ಎಂದು ಪರ್ಮಿಷನ್ ತೆಗೆದುಕೊಂಡು ಅಫಝಲ್ ಗುರುವನ್ನು ಗಲ್ಲಿಗೇರಿಸಿದ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಅನೇಕ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಕೂಗಲಾಯ್ತು (ಈ ಹೇಳಿಕೆಗಳನ್ನು ಯಾರು ಕೂಗಿದರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದ್ದು, ಈ ಸಂಬಂಧ ಇನ್ನೂ ಪೋಲೀಸ್ ಇನ್ವೆಸ್ಟಿಗೇಷನ್ ನಡೆಯುತ್ತಿದೆ).  ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಜೊತೆಗೆ ವಿದ್ಯಾರ್ಥಿ ನಾಯಕನನ್ನು ಬಂಧಿಸಲಾಯ್ತು.  ನಂತರ ಕೋರ್ಟಿನ ಆವರಣದಲ್ಲೇ ವಿದ್ಯಾರ್ಥಿ ನಾಯಕನನ್ನು ಥಳಿಸಲಾಯ್ತು.  ಈಗ ಐವರು ವಿದ್ಯಾರ್ಥಿಗಳು ತಿಹಾರ್ ಜೈಲಿನಲ್ಲಿ ದಿನಗಳನ್ನು ಎಣಿಸುತ್ತಿದ್ದರೆ, ದೇಶದಾದ್ಯಂತ ಅವರನ್ನು ಮುಕ್ತಗೊಳಿಸಲು ಅನೇಕ ಚಳುವಳಿ/ಆಂದೋಲನಗಳು ನಡೆದಿವೆ.  ಇದು ರಾಜಕೀಯವಾಗಿಯೂ ತೀವ್ರವಾಗಿ ಬೆಳೆದಿದ್ದು ಸಂಸತ್ತಿನಲ್ಲಿ ಪಕ್ಷ-ಪ್ರತಿಪಕ್ಷಗಳ ನಾಯಕರುಗಳು ಅನೇಕ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದು, ದೇಶದಾದ್ಯಂತ ಇದು ಅನೇಕ ವಿಚಾರಧಾರೆಗಳನ್ನು ಹರಿಸಿದೆ.  ಇದಕ್ಕೆಲ್ಲ ಒಂದು ರೀತಿಯ ಟ್ರಿಗ್ಗರ್ ಆಗಿ ಕಳೆದ ತಿಂಗಳು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲ ಹಾಗೂ ಅದನ್ನು ಸರ್ಕಾರ ನಿಭಾಯಿಸಿದ ವಿಧಾನ ಎಂಬ ಮಾತುಗಳೂ ಜಾರಿಯಲ್ಲಿವೆ.  ಇಷ್ಟಕ್ಕೂ ಅಫಝಲ್ ಗುರು, ರೋಹಿತ್ ವೇಮುಲ, ಕನ್ಹೈಯಾ ಕುಮಾರ್, ಉಮರ್ ಖಾಲೀದ್, ಅನಿರ್ಬಾನ್ ಭಟ್ಟಾಚಾರ್ಯ, ಯಾಕೂಬ್ ಮೆಮನ್ ಇವರಿಗೆಲ್ಲ ಏನು ಸಂಬಂಧ?  ಇವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇರಬೇಕೇ? ಅದರಲ್ಲೂ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಯಾರಾದರೂ ಕೂಗಬಹುದೇ?  ಅಕಸ್ಮಾತ್ ಇದು ಒಂದು ರಾಷ್ಟ್ರ ವಿರೋಧೀ ಕಾರ್ಯಾಚರಣೆಯೇ ಆಗಿದ್ದಲ್ಲಿ, ಇದರ ಮೂಲ ಎಲ್ಲಿದೆ? ಇದಕ್ಕೆಲ್ಲ ಹಣಕಾಸು ಒದಗಿಸುವವರು ಯಾರು? ಈ ಘರ್ಷಣೆ ಕೇವಲ ಕಳೆದೆರಡು-ಮೂರು ವರ್ಷಗಳಲ್ಲಿ ಹುಟ್ಟಿದ್ದೇ? ಅಥವಾ ಇದರ ಹಿಂದೆ ಹಲವಾರು ವರ್ಷಗಳಿಂದ ಅನೇಕ ಕಾರಣಗಳು ಇವೆಯೋ?

ಈ ನಿಟ್ಟಿನಲ್ಲಿ ಮೊದಲು ಮುಖ್ಯ ವಿದ್ಯಾರ್ಥಿಗಳ ಬಗ್ಗೆ ತಿಳಿಯೋಣ:
ಕನ್ಹೈಯಾ ಕುಮಾರ್ ಮೂಲತಃ ಬಿಹಾರ್‌ನವನು. ವಿದ್ಯಾರ್ಥಿ ದಿನಗಳಿಂದಲೂ ಕಮ್ಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತನಾಗಿ ದುಡಿದವನು.

ಕೆಲವು ವರ್ಷಗಳಿಂದ ಜೆಎನ್‌ಯು ನಲ್ಲಿ ಆಫ್ರಿಕನ್ ಸ್ಟಡೀಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ೨೦೧೫ ರಲ್ಲಿ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ಆಗಿ ಚುನಾಯಿತನಾದವನು.  ತನ್ನ ಪ್ರಚೋದನಾಕಾರಿ ಭಾಷಣಳಿಂದ ಮುಂದೆ ಬಂದವನು.
ಉಮರ್ ಖಾಲೀದ್ ಮೂಲತಃ ಮಹಾರಾಷ್ಟ್ರದವನು.  ವಿದ್ಯಾರ್ಥಿ ದಿನಗಳಿಂದಲೂ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ ಕಾರ್ಯಕರ್ತನಾಗಿ ದುಡಿದವನು.  ಜೆಎನ್‌ಯುನಲ್ಲಿ ಕೆಲವು ವರ್ಷಗಳಿಂದ ಎಮ್‌ಎ, ಎಮ್‌ಫಿಲ್ ಮಾಡಿ ಮುಗಿಸಿದ್ದು, ಈಗ ಸೋಶಿಯಲ್ ಸೈನ್ಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ಅಫ್‌ಝಲ್ ಗುರು ಕಾರ್ಯಕ್ರಮ ನಡೆಸುವ ಬಗ್ಗೆ ಮೊದಲು ಈತನೇ ಜೆಎನ್‌ಯು ಪರ್ಮಿಷನ್ ಕೇಳಿದ್ದು,  ವಿಶ್ವ ವಿದ್ಯಾನಿಲಯದ ಅಡ್ಮಿನಿಸ್ಟ್ರೇಷನ್ ನಿರಾಕರಿಸಿದ ಮೇಲೆ, ಈತ ಪಾಂಪ್ಲೆಟ್ಟುಗಳನ್ನು ಮುದ್ರಿಸಿ, ಸೋಶಿಯಲ್ ಮೀಡಿಯಾ ಮಾಧ್ಯಮಗಳ ಮೂಲಕ ಅನೇಕ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಎಂದು ಇವನ ಮೇಲೆ ಆರೋಪವಿದೆ.

***

ಭಾರತ ಒಂದು ಪ್ರಬಲವಾದ ರಾಷ್ಟ್ರ, ಪ್ರಜಾಪ್ರಭುತ್ವವನ್ನು ಎಲ್ಲ ಕೋನಗಳಿಂದಲೂ ಅಳೆದರೆ ನಿಜವಾದ ಸ್ವಾತ್ರಂತ್ರ್ಯ ಎಲ್ಲರಿಗೂ ಇದೆ. ಅದು ಅಭಿವ್ಯಕ್ತಿ ಸ್ವಾತ್ರಂತ್ರ್ಯವಾಗಿರಬಹುದು, ಅಥವಾ ಸಂಘಟನಾ ಸ್ವಾತಂತ್ರ್ಯವಾಗಿರಬಹುದು.  ಈ ಮೂಲಭೂತ ಸ್ವಾತಂತ್ರ್ಯವೇ ಒಂದು ಕಾಲದಲ್ಲಿ ನಮ್ಮ ಸ್ವತಂತ್ರ ಹೋರಾಟಗಾರರ ಹಕ್ಕು ಆಗಿತ್ತು.  ಅದರ ಮುಖಾಂತರವೇ ದೇಶವನ್ನು ಆಳುತ್ತಿದ್ದ ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದು, ಸತ್ಯಾಗ್ರಹಗಳನ್ನು ಸಂಘಟಿಸಿ, ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದರಿಂದಲೇ ನಾವು ಬ್ರಿಟೀಷ್ ರಾಜ್ಯದಿಂದ ಮುಕ್ತಿ ಪಡೆದದ್ದು.  ಈ ಸ್ವಾತಂತ್ರ್ಯ ಹೋರಾಟ ಒಂದೆರಡು ವರ್ಷದ್ದಲ್ಲ, ಬದಲಿಗೆ ಹಲವು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಹರಡಿ ಅನೇಕರ ತ್ಯಾಗ ಬಲಿದಾನಗಳಿಂದ ಈಗಿರುವ ಮುಕ್ತ ದೇಶ ಹುಟ್ಟಲು ಸಾಧ್ಯವಾಯ್ತು.  ಆದರೆ ಅಲ್ಲಿ, ಪರ-ವಿರೋಧಗಳ ಬಗ್ಗೆ ಒಮ್ಮತವಿತ್ತು, ಯಾರು ನಮ್ಮವರು ಯಾರು ಪರಕೀಯರು ಎನ್ನುವುದು ಗೊತ್ತಿತ್ತು.  ಜೊತೆಗೆ ನಮ್ಮ ನಾಯಕರೂ ಸಹ ಮಂದವಾದ ಮತ್ತು ತೀವ್ರವಾದದ ಭಿನ್ನತೆಯನ್ನು ಹೊರತು ಪಡಿಸಿದರೆ ದೇಶದ ಸಮಸ್ಯೆಗಳ ಆಳವನ್ನು ತಿಳಿದವರಾಗಿದ್ದರು.  ನಿಜವಾದ ದೇಶಭಕ್ತರಾಗಿದ್ದರು.  ನಮಗೆ ಸ್ವಾತ್ರಂತ್ರ್ಯ ಸಿಗುವುದಕ್ಕೆ ನೂರು ವರ್ಷಗಳ ಮೊದಲೇ ಈ ಮನೋಭಾವ ದೇಶದ ಉದ್ದಗಲಕ್ಕೂ ಹರಡಿತ್ತು.  ವೈಚಾರಿಕ ಪಂಥ, ಭಕ್ತಿ ಪಂಥ, ಉಗ್ರ ಪಂಥ, ಶಾಂತಿ ಪಂಥ - ಈ ಎಲ್ಲರ ಗುರಿ ಬ್ರಿಟೀಷರಿಂದ ನಮ್ಮನ್ನು ಮುಕ್ತಗೊಳಿಸುವುದೊಂದೇ ಆಗಿತ್ತು.  ಅದು ನಿಜವಾದ ದೇಶ ಪ್ರೇಮ, ನಿಜವಾದ ದೇಶಭಕ್ತಿ.  ಲಕ್ಷಾಂತರ ಕುಟುಂಬಗಳು ಸಾವಿಗೀಡಾದವು.  ಯಾವೊಂದು ನೇರ ಲಾಭ ಅಥವಾ ದುರ್ಬಳಕೆ ಇಲ್ಲದ ಶುದ್ಧ ಮನೋಭಾವದ ಅನೇಕ ಯೋಧರು ಹಿಂದೆ ಮುಂದೆ ನೋಡದೆ ಜೀವ ತೆತ್ತರು.

ನಾವು ಇಂದಿನ ರಾಷ್ಟೀಯವಾದಿ ಚಳುವಳಿಗಳನ್ನು ಈ ಒಂದು ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.  ಈ ಮೇಲೆ ಹೇಳಿದ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಬೇಕಾಗಿರುವುದು ಏನು?  ಭಾರತ ಸರ್ಕಾರ ಮತ್ತು ಭಾರತದ ಟ್ಯಾಕ್ಸ್ ಪೇಯರ್ಸ್ ಹಣ ಕೊಟ್ಟು ಓದಿಸುತ್ತಿರುವ ಇವರಿಗೆಲ್ಲ ಅಫಝಲ್ ಗುರು, ಯಾಕೂಬ್ ಮೆಮನ್ ಆಪ್ತರೇಕಾಗುತ್ತಾರೆ?  ಈ ತೀವ್ರತರ ಆಲೋಚನೆಗಳು ಕೇವಲ ಒಂದೆರಡು ವರ್ಷಗಳಲ್ಲಿ ಹುಟ್ಟದೇ ಅನೇಕ ಮೈತ್ರಿ ಪಕ್ಷಗಳು ಹಲವು ವರ್ಷಗಳಿಂದ ರಾಜಕೀಯ ವಾತಾವರಣವನ್ನು ದೇಶದಾದ್ಯಂತ ಹುಟ್ಟು ಹಾಕಿರುವುದು ನಿದರ್ಶನಕ್ಕೆ ಬರುತ್ತದೆ.  ವಿಶ್ವ ವಿದ್ಯಾನಿಲಯಗಳಲ್ಲಿ ರಾಜಕೀಯ ಪ್ರೇರಣೆ ಇರಬೇಕೆ ಬೇಡವೇ?  ವಿಶ್ವವಿದ್ಯಾನಿಲಯ ಮುಕ್ತ ಆಲೋಚನೆಗಳನ್ನು ಬೆಳೆಸಬೇಕೆ ಅಥವಾ ಕೇವಲ ಶೈಕ್ಷಣಿಕ ಸಂಬಂಧಿ ಆಲೋಚನೆಗಳನ್ನು ಮಾತ್ರ ಬೆಳೆಸಬೇಕೆ?  ಈ ಪ್ರಶ್ನೆಗಳು ನಮ್ಮ ನಂಬಿಕೆಯ ಬುಡವನ್ನು ಅಲುಗಾಡಿಸುತ್ತವೆ.
ಈ ಹೈದರಾಬಾದ್ ಮತ್ತು ಜೆಎನ್‌ಯು ವಿದ್ಯಮಾನಗಳನ್ನು ಕೂಲಂಕಶವಾಗಿ ನೋಡಿದಾಗ ಅನೇಕ ಮೂಲ ಕಾರಣಗಳು ಗೊತ್ತಾಗುತ್ತವೆ:

ಭಾರತ ಸರ್ಕಾರದ ಎಚ್.ಆರ್.ಡಿ. ಮಿನಿಸ್ಟ್ರಿ ಅನೇಕ ದಲಿತ ಸಂಘಟನೆಗಳನ್ನು ಮಟ್ಟ ಹಾಕಲು ಪ್ರಯತ್ನಿಸಿತು ಎನ್ನುವ ಆರೋಪವಿದೆ.  ತಮಗೆ ಬೇಕಾದವರನ್ನು ಮಾತ್ರ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ ಎಂಬ ಆರೋಪವಿದೆ.  ರೋಹಿತ್ ವೇಮುಲನ ಸಾವನ್ನು ರಾಜಕೀಯ ದಾಳವಾಗಿ ಬಳಸಲಾಯ್ತು ಎನ್ನುವ ಆಲೋಚನೆಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಮೂಲ ಸ್ಥಂಭಗಳಾದ ಮುಕ್ತ ಆಲೋಚನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂಬುದು.  ಇದಕ್ಕೂ ಒಂದು ಹೆಜ್ಜೆ ಹಿಂದೆ ಹೋಗಿ ನೋಡಿದರೆ ದೇಶದ ಉದ್ದಗಲಕ್ಕೂ ಮಕ್ಕಳಿಗೆ ಯಾವ ರೀತಿಯಲ್ಲಿ ಇತಿಹಾಸವನ್ನು ಬೋಧಿಸಲಾಗಿದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.  ಈ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಬಲಿ ಕೊಟ್ಟು ದೇಶದ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ         ಗಲ್ಲಿಗೊಳಗಾದ ಅಫಝಲ್ ಗುರು ಮತ್ತು ಯಾಕೂಬ್ ಮೆಮನ್ ಪರ ಏಕೆ ನಿಲ್ಲುತ್ತಾರೆ ಎಂಬುದನ್ನು ಯೋಚಿಸಬೇಕಾಗುತ್ತದೆ.  ನಾವೊಂದು ಸಮಸ್ಯೆಯ ವಿರುದ್ಧ ಹೋರಾಟ ಮಾಡಿದಾಗ, ನಾವು ಎಲ್ಲಿ ಗೆರೆಯನ್ನು ದಾಟುತ್ತಿದ್ದೇವೆ ಎನ್ನುವ ತಿಳುವಳಿಕೆ ಈ ವಿದ್ಯಾರ್ಥಿಗಳಿಗೆ ಇಲ್ಲದಿರುವುದು ಗೊತ್ತಾಗುತ್ತದೆ, ಜೊತೆಗೆ ರಾಜಕೀಯ ದಾಳಗಳಿಗೆ ಬಲಿಪಶುಗಳಾದ ಮೌಢ್ಯವೂ ಎದ್ದು ಕಾಣುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ವಿದ್ಯಾರ್ಥಿಗಳು ನಡೆಸುವ ಧರಣಿ ಕಾರ್ಯಕ್ರಮಗಳಿಗೆ ಹಣಕೊಡುವವರಾರು? ಅಫಝಲ್ ಗುರುವಿನ ಸಾವಿರಾರು ಫೋಟೋಗಳನ್ನು ಪ್ರಿಂಟ್ ಮಾಡಲು ಯಾರು ಹಣಕೊಟ್ಟರು?  ಅಫಝಲ್ ಗುರುವಿಗೆ ಅನ್ಯಾಯವಾಗಿದೆ ಎಂದುಕೊಂಡರೆ ಅದನ್ನು ಅವನು ಬದುಕಿದ್ದಾಗ ಸುಪ್ರೀಮ್ ಕೋರ್ಟ್‌ನಲ್ಲಿ ಕಂಟೆಸ್ಟ್ ಏಕೆ ಮಾಡಲಿಲ್ಲ?  ಇದರ ಹಿಂದೆ ನಮ್ಮ ದೇಶದ ವಿವಿಧ ರಾಜಕೀಯ ಶಕ್ತಿಗಳು ಮಾತ್ರ ಇವೆಯೇ? ಅಥವಾ ಹೊರ ದೇಶಗಳ ಹುನ್ನಾರವಿದೆಯೇ? ಇಷ್ಟು ದಿನ ಕೇವಲ ಮೂಲಭೂತವಾದದ ಬಗ್ಗೆ ಓದುತ್ತಿದ್ದ ನಮಗೆ ಈಗ ಹಿಂದೂ ವಿದ್ಯಾರ್ಥಿಗಳು ಒಂದು ದೇಶದ ಉಚ್ಛ ನ್ಯಾಯಾಲಯ ದೇಶದ್ರೋಹಿಯೆಂದು ಪರಿಗಣಿಸಿದ ಕೆಲವು ಮುಸ್ಲಿಂ ಪ್ರತಿವಾದಿಗಳನ್ನು ದೈವತಾ ಸ್ವರೂಪಿಗಳೆಂದು ಕರೆಯುವಷ್ಟರ ಮಟ್ಟಿಗೆ ದೇಶದ ವಿದ್ಯಾರ್ಥಿಗಳ ನೈತಿಕ ತಿಳುವಳಿಕೆಯ ಬಗ್ಗೆ ಚಿಂತೆ ಪಡುವಂತೆ ಮಾಡಿದೆ.

***
ಘೋಷಣೆಗಳನ್ನು ಯಾರೇ ಕೂಗಿರಲಿ, ಅವುಗಳನ್ನು ಕೂಗಿದ್ದಂತೂ ನಿಜ.  ಒಬ್ಬನ ವಾಕ್ ಸ್ವಾತಂತ್ರ್ಯದಲ್ಲಿ ಏನೇನೆಲ್ಲ ಮಾಡಲು ಸಾಧ್ಯವಿದೆ?  ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರಿಗೆ ಜಗತ್ತಿನಾದ್ಯಂತ ಉಳಿದ ದೇಶಗಳು ಯಾವ ರೀತಿಯ ಟ್ರೀಟ್‌ಮೆಂಟ್ ಅನ್ನು ಕೊಡುತ್ತವೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ.  ನಮ್ಮ ಸುತ್ತ ಮುತ್ತ ಕಮ್ಯೂನಿಷ್ಟ್ ದೇಶಗಳಿವೆ, ಅವುಗಳಲ್ಲಿ ನಡೆಯುವ ಸುದ್ದಿಯೂ ಹೊರಬರದಂತೆ ನರಮೇಧ ನಡೆದಾಗಲೆಲ್ಲ ಇದೇ ವಿದ್ಯಾರ್ಥಿಗಳು ಚಳುವಳಿ ನಡೆಸುತ್ತಾರೆಯೇ? ಅವರ ಪ್ರತೀಕಾರದ ಪರಿಮಿತಿ ಎಷ್ಟು?  ನಮ್ಮ ಪಕ್ಕದ ದೇಶಗಳಲ್ಲಿ ನೂರಾರು ಜನ ಅಮಾಯಕರು ಸತ್ತಾಗ ಇದೇ ವಿದ್ಯಾರ್ಥಿಗಳ ತಿಳುವಳಿಕೆಗೆ ಅದು ನಿಲುಕದ ವಿಷಯವಾಗಿರುವುದೇಕೆ?  ಕಮ್ಯೂನಿಸಮ್‌ನ ತತ್ವಗಳೇನು? ಹಾಗೂ ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರವೇನು ಎಂಬುದನ್ನು ಯೋಚಿಸಲಾರದಷ್ಟು ಈ ವಿದ್ಯಾರ್ಥಿಗಳು ಶೂನ್ಯರಾದರೇಕೆ?
ಈ ವಿದ್ಯಾರ್ಥಿಗಳು ಅನವಶ್ಯಕವಾಗಿ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವಾಗ ನನಗೆ ಬೇಸರವಾಗುವ ಒಂದು ಸಂಗತಿ ಎಂದರೆ ನಮ್ಮ ದೇಶದಲ್ಲೇ ಅನೇಕ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿರುವಾಗ ಅವುಗಳನ್ನು ನಿರ್ಮೂಲನ ಮಾಡಲು ಈ ವಿದ್ಯಾರ್ಥಿಗಳು ಯಾಕೆ ಯೋಚಿಸಬಾರದು?  ವಿಜ್ಞಾನ, ತಂತ್ರಜ್ಞಾನ ಮುಂದುವರೆದು ಜಗತ್ತಿನ ಉಳಿದ ಯುವಜನತೆ ಅನೇಕ ಉನ್ನತ ಚಿಂತನೆ, ಧೋರಣೆಗಳಲ್ಲಿ ತೊಡಗಿದ್ದರೆ ನಮ್ಮ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಫಝಲ್ ಗುರುವಿನ ಹಿಂದೆ ಏಕೆ ಬಿದ್ದಿದ್ದಾರೆ?  ಇವರೇ ನಮ್ಮ ಮುಂದಿನ ನಾಗರೀಕರೆ? ಇವರೇ ನಮ್ಮ ಮುಂದಿನ   ಲೀಡರುಗಳೇ?

ಒಂದು ದೇಶದ ಸತ್ಯಾನಾಶ ಎಂದರೆ ಏನು? ಭಾರತವನ್ನು ಸಂಪೂರ್ಣ ಬುಡಮೇಲು ಮಾಡುವುದೇ? ಅಥವಾ ಅದನ್ನು ತುಂಡು ತುಂಡು ಮಾಡಿ ವಿಭಜನೆ ಮಾಡುವುದೇ?  ನಾವೆಲ್ಲ ಇಂದೂ ಸಹ ಬೇರೆ ಬೇರೆ ಪ್ರಾಂತ್ಯದವರೇ? ಅನೇಕ ಭಾಷೆ ಸಂಸ್ಕೃತಿ ವೈವಿಧ್ಯತೆಗಳ ಪ್ರತೀಕ ಭಾರತ, ಇಂಥ ಭೂಮಿಯಲ್ಲಿ ಅನೇಕ ವೈರುಧ್ಯಗಳೂ ಇರುವುದು ಸಹಜ.  ಆ ವೈರುಧ್ಯಗಳನ್ನು ನಾವು ವಿಚಾರವಾದಿಗಳಾಗಿ ಬಗೆಹರಿಸಿಕೊಳ್ಳುತ್ತೇವೆಯೋ ಅಥವಾ ಕಾನೂನು ಅಧಿಕಾರಗಳಿಂದ ಸಂಭ್ರಮಿಸಿಕೊಳ್ಳುತ್ತೇವೆಯೋ ಅನ್ನುವುದು ಮುಖ್ಯವಾಗುತ್ತದೆ.  ಇಂದಿನ ಮಾಧ್ಯಮಗಳು ದೂರದ ದೇಶಗಳಿಗೆ ಹರಡುತ್ತಿರುವ ಬಿಸಿಬಿಸಿ ಸುದ್ದಿ ಈ ವರೆಗೆ ನಮ್ಮ ದೇಶದ ವಿದ್ಯಾರ್ಥಿಗಳ ಬಗ್ಗೆ ಒಳ್ಳೆಯ ಮನೋಭಾವನೆಯನ್ನು ಮೂಡಿಸಲು ಸೋತಿವೆ ಎಂದು ಹೇಳಲು ಖೇದವಾಗುತ್ತದೆ.

ಒಟ್ಟಿನಲ್ಲಿ ಕಳೆದ ಇನ್ನೂರು ವರ್ಷಗಳ ಸತತ ಹೋರಾಟದ ಬಳಿಕ ದೊರೆತ ನಮ್ಮ ಆಜಾದಿ, ಸ್ವಾತಂತ್ರ್ಯಾ ನಂತರ ಕೇವಲ ಆರು ದಶಕಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ದೇಶದ ಬರಬಾದಿಯ ಕಡೆಗೆ ಯೋಚಿಸುವಂತೆ ಮಾಡಿದ್ದು ನಿಜವಾಗಿಯೂ ನಮ್ಮ ದುರ್ದೆಶೆ.

***
ಈ ಲೇಖನ ಈ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.
 

Friday, October 30, 2015

ಕನ್ನಡಿಗನೊಬ್ಬನ ಪಿರಿಪಿರಿ...

ಅಮೇರಿಕಕ್ಕೆ ಬಂದ ಮೊದಲಲ್ಲಿ ಗೋಪಾಲಕೃಷ್ಣ ಅಡಿಗರ "ಅಳುವ ಕಡಲಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಹಾಡನ್ನು ಕೇಳಿದಾಗಲೆಲ್ಲ ನನ್ನ ಮನದಲ್ಲಿ ಈ ಕ್ಯಾಪಿಟಲಿಸಮ್ ಅನ್ನೋ ದೊಡ್ಡೋ ಸಮುದ್ರದಲ್ಲಿ ನಮ್ಮತನವೆಂಬ ಚಿಕ್ಕ ಸೋಷಿಯಲಿಸ್ಟ್ ದೋಣಿಯನ್ನು ನಾವು ಹುಟ್ಟು ಹಾಕಿ ಚಲಿಸುತ್ತಿದ್ದೇವೆಯೇನೋ ಎಂಬ ಆಲೋಚನೆಗಳು ಬರುತ್ತಿದ್ದವು.  ನಮ್ಮ ಕನ್ನಡಿಗರ ಪರಂಪರೆಯೇ ಹಾಗೆ, ದೊಡ್ಡವರನ್ನು ಗೌರವಿಸಬೇಕು, ಯಾವತ್ತೂ ನೀನು ಎಷ್ಟು ಚಿಕ್ಕವನೆಂಬುದನ್ನು ಅರಿತುಕೊಂಡಿರು...ಇತ್ಯಾದಿ ಇತ್ಯಾದಿ ಮಾತುಗಳು ನಮ್ಮ ಮನದಾಳದಲ್ಲಿ "ಗೌರವ"ವನ್ನು ಉಲ್ಬಣಿಸುವುದರ ಬದಲು ಕೀಳರಿಮೆಯನ್ನು ಸೃಷ್ಟಿಸುತ್ತಿತ್ತೇನೋ ಎಂದು ಒಮ್ಮೊಮ್ಮೆ ಗಾಭರಿಯಾಗತ್ತದೆ.  ಉದಾಹರಣೆಗೆ ನಾವು ನಂಬಿಕೊಂಡ ಪದ್ಯಗಳನ್ನು ಈ ಕ್ಯಾಪಿಟಲಿಸಮ್ಮಿನ ದರ್ಬಾರಿನಲ್ಲಿ ದಿನನಿತ್ಯವೂ ನಡೆಯುವ ಆಫೀಸಿನ ರಾಜಕೀಯದ ಮುಂದೆ ಅನ್ವಯಿಸುವುದಾದರೂ ಹೇಗೆ?

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ
ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ|


ಈ ಮೇಲಿನ ಪದ್ಯವನ್ನು ಫಾಲೋ ಮಾಡುತ್ತಾ ಯಾವ ರೀತಿಯ ರಿಸ್ಕ್ ತೆಗೆದುಕೊಳ್ಳೋದು, ಯಾರನ್ನು ಎದುರು ಹಾಕಿಕೊಳ್ಳೋದು? ಅಥವಾ ಈ ವಚನವನ್ನು ನೋಡಿ:

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ|


ಈ ವಾಕ್ಯಗಳನ್ನು ಫಾಲೋ ಮಾಡಿದ್ರೆ ನಮ್ಮ ಆಫೀಸಿನಲ್ಲಿ ನಿಮಗೆ ಪ್ರೊಮೋಷನ್ ಸಿಕ್ಕ ಹಾಗೇ ಅಂದುಕೊಳ್ಳಿ... ಸುಳ್ಳು ಮತ್ತು ಸತ್ಯದ ನಡುವೆ ತಿhiಣe ಟie ಅನ್ನೋದಿದೆಯಂತೆ ಅದಕ್ಕೆ ಕನ್ನಡದಲ್ಲಿ ಯಾವುದೇ ಪದಗಳು ಇದ್ದ ಹಾಗಿಲ್ಲ.  ಈ ಮೇಲಿನ ಮಾತುಗಳಿಗೆ ತದ್ವಿರುದ್ಧವಾಗೇ ನಮ್ಮ ಕಣ್ಣೆದೆರು ಎಷ್ಟೋ ಘಟನೆಗಳು ಆಫೀಸಿನಲ್ಲಿ ನಡೆಯುತ್ತವೆ.  ಕ್ಯಾಪಿಟಲಿಸಮ್ಮಿನ ಲೀಡರುಗಳು ಎತ್ತರದ ಆಳುಗಳು, ಗಟ್ಟಿಯಾಗಿ ಒದರುವ ಇವರುಗಳು "ನುಡಿದರೆ ಸ್ಪಟಿಕದ ಸಲಾಖೆಯಂತಿರಬೇಕು" ಎಂಬುದನ್ನು ಅಕ್ಷರಶಃ ಅರಿತು ಘಂಟೆ ಹೊಡೆದಂತೆ ಮಾತನಾಡುವವರು.  ಹಿರಿಯರು ಕಿರಿಯರು ಎನ್ನುವ ವಯೋ ಬೇಧಭಾವ ಇರೋದಿಲ್ಲ. ಹಿಡಿದ ಕೆಲಸದಲ್ಲಿ  ಕ್ವಾರ್ಟರ್ ಅಥವಾ ಅರ್ಧ ವರ್ಷ ಆದ ಮೇಲೆ ರಿಸಲ್ಟ್ ಅನ್ನು ತಂದು ತೋರಿಸಿಯೇ ಬಿಡುತ್ತಾರೆ.  ಯಾವುದೇ No ಅನ್ನುವ ಪದವನ್ನು ಸಹಿಸದವರು.  ಸದಾ ಕರ್ಮಠ ಸ್ವಭಾವದವರು.  ಅವರಿಂದ ಇವರಿಂದ ಕೆಲಸ ತೆಗೆಯುವವರು.  ರಾಜಕಾರಣಿಗಳು.  ಅಗತ್ಯ ಬಂದಾಗ ಗುಡುಗುವವರು ಮತ್ತು ನಿರ್ದಾಕ್ಷಿಣ್ಯವಾಗಿ ಹಿಂದೇಟನ್ನು ಹಾಕದೆ, "oh, it was a tough decision to make" ಎಂದು ನೂರಾರು ಕೆಲಸಗಾರರನ್ನು ಒಂದೇ ದಿನದಲ್ಲಿ ಮನೆಗಟ್ಟುವವರು, ಇತ್ಯಾದಿ, ಇತ್ಯಾದಿ.  "ನೀವು ಇಷ್ಟು ವರ್ಷ ಮಾಡಿದ್ದನ್ನ ಬಿಡಿ, ನಿಮ್ಮಿಂದ ಇನ್ನು ಮುಂದೆ ಏನೇನು ಮಾಡೋಕಾಗ್ತದೆ ಅನ್ನೋದನ್ನು ಒದರಿ ಹಾಗೂ ಸಾಬೀತು ಮಾಡಿ ತೋರಿಸಿ" ಅನ್ನೋ ಮಾತು ಯಾರು ಯಾವತ್ತು ಬೇಕಾದರೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹೇಳಬಹುದು ಹಾಗೂ ಕೇಳಬಹುದು.

ನಾವು ಡಾರ್ವಿನ್ನನ ಥಿಯರಿಯನ್ನು ಹಿಂದೆ ಓದುತ್ತಿದ್ದಾಗ struggle for existence ಅನ್ನೋದನ್ನ ಬೇರೆ ರೀತಿ ಅರ್ಥ ಮಾಡಿಕೊಳ್ತಿದ್ವಿ,  ಆದರೆ ಈಗ struggle ಮತ್ತು existence ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ.  ಒಂಥರಾ ಮೈಕ್ರೋ ಬಡ್ಡಿಯ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡ ಹಾಗೆ ಪ್ರತಿದಿನ ಪ್ರತಿಕ್ಷಣ ನಿಮ್ಮನ್ನ ನೀವು ಪ್ರೋವ್ ಮಾಡಿಕೊಳ್ತಲೇ ಇರಬೇಕು, ಅದೇ ನ್ಯಾಯ, ಅದೇ ನಿಯಮ.

ಇಂಥಾ ಕ್ಯಾಪಿಟಲಿಸಮ್ಮಿನ ಸಾಗರದಲ್ಲಿ, ನೀರಿನ ಗುಣವಿರುವ ನಾವು ಕನ್ನಡಿಗರು ನಮ್ಮ ಯಥೇಚ್ಛವಾದ ಸಾಹಿತ್ಯ, ಸಂಗೀತ ಹಾಗೂ ಸಂದೇಶಗಳ ಹಿನ್ನೆಲೆಯಿಂದ ಒಂದು ರೀತಿ ಬಡಪಾಯಿಗಳಾಗಿ ಬಿಟ್ಟೆವೆನೋ ಅನ್ನಿಸೋದಿಲ್ವಾ ನಿಮಗೆ? ಚಿಕ್ಕ ಚಿಕ್ಕ ರಾಜಕೀಯಗಳಲ್ಲಿ rat race ಹಾಗೂ ಮೈಕ್ರೋ ಮ್ಯಾನೇಜುಮೆಂಟುಗಳಲ್ಲಿ Ph. D., ಮಾಡಿರುವ ನಮಗೆ ನಮ್ಮ ಕಾರ್ಪೋರೇಟ್ ವಲಯದಲ್ಲಿ ಯಾರೂ ಯಾವತ್ತೂ ಕರೆದು ಲೀಡರ್‌ಶಿಪ್ ರೋಲ್ ಅನ್ನು ಕೊಟ್ಟಿದ್ದು ನೋಡಿಲ್ಲ ಬಿಡಿ.  ನಮ್ಮ ಕಣ್ಣೆದುರೇ ತೆಲುಗು, ತಮಿಳು ಹಾಗೂ ಉತ್ತರ ಭಾರತದವರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಮುಂದೆ ಹೋದರೆ ನಾವು ಕನ್ನಡಿಗರು ಅವರಿಗೆ ಅಡಿಯಾಳುಗಳಾಗಿ ಕೆಲಸ ಮಾಡಿಕೊಂಡು ಅದನ್ನು "ಕಾಯಕವೇ ಕೈಲಾಸ" ಎಂದು ಕರೆದು ಹನ್ನೆರಡನೇ ಶತಮಾನದ ವಚನಕಾರರ ಜೊತೆ ಸಮನ್ವಯ ಬೆಳೆಸಿಕೊಂಡು ಬಿಡುತ್ತೇವೆ.  ಕನ್ನಡಿಗರು risk ತಗೊಳೋದಿಲ್ಲ ಬಿಡ್ರಿ.  ನೀವೆಲ್ಲ ಬರೀ ಪುಳಿಚಾರಿನ ಜನ ನಿಮ್ಮಿಂದೇನಾಗುತ್ತೇ? ಅನ್ನುವವರಿಗೆ ನಾವು ಏನು ಎಂಬುದನ್ನು ತೋರಿಸೋ ಕಾಲ ಬರೋದಾದ್ರೂ ಯಾವಾಗ?

ಊಟ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಟೀ ಕುಡುದ್ ಮೇಲೆ ಮತ್ತೆ ನಮ್ಮನ್ನು ನಾವೇ ಈ ಪ್ರಶ್ನೆ ಕೇಳಿಕೊಂಡು ಸಮಾಧಾನ ಮಾಡ್ಕೋಬಹುದು ಅಥವಾ ಮಾಡ್ಕೋತೀವಿ: in the grand schema of things, so what?  ನಮಗೆಲ್ಲಾ ಈಗ ಕಷ್ಟಾ ಆಗೋಲ್ಲ.  ಯಾವಾಗ ನಮ್ಮ ಮಕ್ಳು ಹೈ ಸ್ಕೂಲು ಮುಗಿಸಿ ಕಾಲೇಜು ಸೇರಿ ಮೊದಲ ಸಲ ಥ್ಯಾಂಕ್ಸ್ ಗಿವಿಂಗ್‌ಗೆ ಮನೆಗೆ ಬರ್ತಾರಲ್ಲ, ಅವಾಗ ನಮ್ಮ್ ಮುಸುಡಿ ನೋಡಿ ಕೇಳ್ತಾರ್ ನೋಡಿ, "ಓ, ನೀನು ಇನ್ನು ಅದೇ ಕೆಲ್ಸದಲ್ಲಿ, ಅದೇ ಲೆವಲ್‌ನಲ್ಲಿ ಇದಿಯಾ?" ಆಗ ನಿಜವಾಗ್ಲೂ ಗೊತ್ತಾಗುತ್ತೆ ನಾವು ಯಾರು ಅಂತ.  ಅಷ್ಟೊತ್ತಿಗೆ ಸುಮಾರು ತಲೆ ಕೂದ್ಲು ಹಣ್ಣಾಗಿರುತ್ತೆ, ಇಲ್ಲಾ ಉದುರಿರುತ್ತೆ.  ಉಪೇಂದ್ರ ಹೇಳಿದ ಹಾಗೆ ಮೀಲ್ ಬೆಗ್ಗರ್ ಸ್ಟೇಟಸ್‌ಗೆ ಹತ್ರಾ ಹತ್ರಾ ಹೋಗ್ತೀವಿ.   ಇಲ್ಲೇ ಹುಟ್ಟಿ ಬೆಳೆದ ನಮ್ ಅಮೇರಿಕನ್ ಮಕ್ಳಿಗೆ ನಾವು ಬೇಡವಾಗಿ ಹೋಗ್ತೀವಿ.  ಆಗ ನಾವು, ಇನ್ನೇನು ನಾಳೆ ಇಂದನೇ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಅದು ಮಾಡೋಣ, ಇದು ಮಾಡೋಣ ಅಂದುಕೊಂಡು ಕನಸು ಕಾಣೋ ಅಷ್ಟರಲ್ಲಿ ತೂಕಡಿಗೆ ಜೋರಾಗಿ, ನಿದ್ರೆ ಬಂದು ಹೋಗಿರುತ್ತೆ, ನೋಡ್ತಾ ಇರಿ!

Saturday, April 12, 2014

... ಎನ್ನಾರೈ ಗಳು ಒಂಥರಾ ಸಪ್ಪೆ ನಾಯ್‌‍ಗಳು...

ಬಹಳ ದಿನಗಳ ನಂತರ ಫೋನ್‌ನಲ್ಲಿ ಮಾತಾಡಕ್ ಸಿಕ್ಕಿದ್ದು ನನ್ನ ಹಳೆಯ ಸ್ನೇಹಿತ ಸುಬ್ಬ.

"ಏನೋ, ಸಮಾಚಾರ? ಹ್ಯಾಗಿದೀಯಾ? ಏನ್ ಕಥೆ?" ಅಂತ ಲೋಕೋಭಿರಾಮವಾಗಿ ಕೇಳಿದೆ,

"ಏನಿಲ್ಲ, ಚೆನ್ನಾಗಿದ್ದೀನಿ, ಬೆಳೆ, ಕೊಯ್ಲು, ಎಲೆಕ್ಷನ್ನು ಅಂತೆಲ್ಲಾ ಸ್ವಲ್ಪ ಬ್ಯುಸಿ ಅಷ್ಟೇ...ನೀನ್ ಹೆಂಗಿದಿ? ಅದೆಷ್ಟು ದಿನಾ ಆಯ್ತ್ ಮಾರಾಯ ನಿನ್ ಹತ್ರ ಮಾತಾಡೀ, ಬಾಳಾ ಖುಷಿ ಆಯ್ತು ನೋಡ್"

"ನಮಿಗೇನ್ ಆಗತ್ತೆ, ನಾವೆಲ್ಲಾ ಚೆನ್ನಾಗೇ ಇದ್ದೀವಿ, ಆರಕ್ಕೇರಲ್ಲ ಮೂರಕ್ಕಿಳಿಯಲ್ಲ" ಅಂದೆ.

"ಹೌದು, ಅದೇನೋ ಮಾರ್ಕೆಟ್ಟುಗಳು ಬೀಳ್ತಾ ಇದಾವೇ ಅಂತ ಕೇಳ್ದೆ, ಏನ್ ನಡೀತಾ ಇದೆ?" ಎಂದು ಕಾಳಜಿ ತೋರಿಸಿದ.

"ಅದೇನಿಲ್ಲ, ಲಾಸ್ಟ್ ಈಯರ್ ಮಾರ್ಕೆಟ್ಟುಗಳೆಲ್ಲ ಮೇಲ್ ಹೋಯ್ತಲ್ಲಾ, ಈ ವರ್ಷ ಒಂದಲ್ಲಾ ಒಂದು ಕಾರ್ಣ ಹಿಡಕೊಂಡು ಅವಕಾಶ ಸಿಕ್ಕಾಗೆಲ್ಲ ಕೆಳಗಡೆ ಬೀಳ್ತಾನೇ ಇವೆ. ಒಂದ್ಸರ್ತಿ ಚೈನಾದಲ್ಲಿ ಪ್ರಾಬ್ಲಮ್ಮು ಅಂತ ಬಿತ್ತು, ಇನ್ನೊಂದ್ಸರ್ತಿ ಎಮರ್ಜಿಂಗ್ ಮಾರ್ಕೇಟ್ಟಲ್ಲಿ ಪ್ರಾಬ್ಲಂ ಅಂತ ಬಿತ್ತು, ಮತ್ತೊಂದ್ ಸರ್ತಿ ರಷ್ಯಾದ ಪೂಟಿನ್ನ್ ದೆಸೆಯಿಂದ ಬಿತ್ತು...ಇನ್ನೂ ವರ್ಷ ಶುರುವಾಗಿ ಮೂರು ತಿಂಗಳು ಮುಗ್ದು ನಾಕಕ್ಕೆ ಬಿತ್ತು - ಆಗ್ಲೆ ನಾಕ್ ಸರ್ತಿ ಮಗುಚಿಕೊಂತು ನೋಡು..." ಎಂದು ಸಿಎನ್‌ಬಿಸಿ ಡಾಮಿನಿಕ್ ಚು ಥರ ನನ್ನ ಸ್ಟಾಕ್ ಮಾರ್ಕೆಟ್ ತತ್ವವನ್ನು ಅರುಹಿದೆ.

ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, "ಅಲ್ಲಾ ಮಾರಾಯಾ, ಆ ಪುಟಿನ್ ನೋಡು, ಹೆಂಗ್ ಗೆದ್ಕೋಂಬಿಟ್ಟಾ, ಕ್ರಿಮಿಯಾ ಅಂತಾ ಅಲ್ಲಿಗೇ ನಿಲ್ಲುಸ್ತಾನೋ, ಅಥವಾ ಇನ್ನೂ ತನ್ನದೇ ದೊಡ್ಡು ಅಂತ ಮಂತ ಶುರು ಹಚ್ಗೊಂತಾನೋ?"
"ಅವ್ನು ಏನ್ ಮಾಡ್ತಾನೋ ಕಾಣೇ, ಆದ್ರೆ ನಮ್ ಕಡೆಯವ್ರು ಸ್ಯಾಂಕ್ಷನ್ನು, ಗೀಂಕ್ಷನ್ನು ಅಂತ ಫೋರ್ಸ್ ಹಾಕ್ತಾನೇ ಅವ್ರೆ" ಅನ್ನೋಷ್ಟರಲ್ಲಿ,

"ಏ ಸುಮ್ನಿರೋ, ನಿಮ್ ಸ್ಯಾಂಕ್ಷನ್ನುಗಳ ಮುಖಾ ನೋಡ್ಕೊಂಡು ಅದುಮಿಕ್ಯಂಡ್ ಇರೋಕೇ ಅವ್ನೇನು ಸದ್ದಾಮ್ ಹುಸೇನ್ ಕೆಟ್ಟೋದ್ನೇ? ಒಂದ್ಸರ್ತಿ ಕಮ್ಯುನಿಷ್ಟ್ ಆದ್ರೇ ಯಾವಾಗ್ಲೂ ಕಮ್ಮುನಿಷ್ಟೇ ತಿಳಕಾ" ಎಂದು ಅವನ ಪ್ರಪಂಚದ ಇತಿಹಾಸದ ಪ್ರಹಸನವನ್ನು ನಿವೇದಿಸಿದ.

ಇನ್ನು ಇವನ ಹತ್ರ ರಷ್ಯದ ವಿಚಾರ ಮಾತಾಡ್ಬಾರ್ದು ಅಂದುಕೊಂಡು, ನಿಧಾನವಾಗಿ ಟಾಪಿಕ್ ಬದಲಾಯಿಸಿದೆ, "ಹೌದು, ಅಡಿಕೆ ಬೆಳೆ ಬಂಪರ್ ಬಂದಿದೆ ಅಂತ ಕೇಳ್ದೆ, ಹೆಂಗಿದೆ ವ್ಯವಹಾರ?"

"ಕೆಂಪ್ ಅಡಿಕೆಗೆ ಸ್ವಲ್ಪ ಬೆಲೆ ಬಂದ್ ನಾವ್ ಬಚಾವಾದ್ವಿ, ಇಲ್ಲಾಂದ್ರೆ ಈ ವರ್ಷ ಬಾಳ ಕಷ್ಟ ಇತ್ತು. ಎಲ್ಲ ಕಡೆ ಬೆಲೆ ಜಾಸ್ತಿ, ದುಡ್ಡೀಗ್ ಬೆಲೇನೇ ಇಲ್ಲ, ಹೆಂಗ್ ನಮ್ ಜೀವ್ನ ನಡೀತಾ ಇದೆ ಅಂತ ಬಿಡಿಸಿ ಹೇಳೋದೇ ಕಷ್ಟಾ"

"ಬರೀ ಕೃಷಿ ಅಂತ ನಂಬ್ಕೊಳ್ಳೋದ್ ಬಿಟ್ಟು, ನೀನು ಒಂದಿಷ್ಟು ಎಲೆಕ್ಷನ್ನ್ ಟೈಮಲ್ಲಿ ಕಾಸ್ ಮಾಡ್ಕೊಳ್ಳೋದಪ್ಪಾ"

"ಏ ಸುಮ್ನಿರೋ ಮಾರಾಯಾ, ಇವರು ಕೊಡೋ ಎಂಜಲು ಕಾಸಿಗೆ ನಾವ್ ಕೈ ಚೆಲ್ಲಿಕೊಂಡು ಕೂತ್ರೆ ತೋಟದ ಕೆಲ್ಸಾ ಎಲ್ಲಾ ಮಠ ಹತ್ತ್ ಹೋಗುತ್ತೆ, ಅದರ ಸವಾಸ ಅಲ್ಲ..."


"ಏ ಯಾಕೋ ಹಂಗಂತಿ? ನಾನು ಎಲೆಕ್ಷನ್ನ್ ಕಮೀಷನ್ನ್ ವೆಬ್ ಸೈಟ್ ನೋಡಿದ್ನಪ್ಪಾ, ಒಂದೊಂದು ಕ್ಯಾಂಡಿಡೇಟ್‌ಗಳು ಫೈಲ್ ಮಾಡಿರೋ ಅಫಿಡೇವಿಟ್ಟ್ ನೋಡಿದ್ರೆ, ಎಲ್ಲೆಲ್ಲೂ ಕೋಟಿ ಕೋಟೀ, ಎಲ್ಲಿಂದ ಬಂತೋ ಇವುಗಳ್ ಹತ್ರ ಇಷ್ಟೊಂದು? ಒಬ್ಬೊಬ್ರ ಹತ್ರ ನೂರು, ಸಾವಿರ ಕೋಟಿ..." ಎಂದು ನಿಜವಾಗಿ ಆಶ್ಚರ್ಯ ವ್ಯಕ್ತಪಡಿಸಿದೆ.

"ಅದೇ ನಿಜವಾದ ಮರ್ಮ ನೋಡು. ಎಷ್ಟೋ ಜನ ನೆಟ್ಟಗೆ ಹೈಸ್ಕೂಲೂ ಪಾಸಾಗಿರಂಗಿಲ್ಲ, ಲೆಕ್ಕಕ್ಕೆ ತೋರಿಸಿರೋದೆ ಕೋಟಿಗಟ್ಟಲೆ ಅಂದ್ರೆ ಇನ್ನು ಒಳಗೆಷ್ಟು ಇಟ್ಟಿರಬಹುದು?"

"ಹಂಗಂದ್ರೆ ಇವುಗಳ ಮುಂದೆ ನಮ್ಮ ವಾರನ್ನ್ ಬಫೆಟ್ಟು, ಬಿಲ್ ಗೇಟ್ಸ್ ಇವ್ರೆಲ್ಲ ಲೆಕ್ಕಕ್ಕೇ ಇಲ್ಲ..." ಅಂತ ಲೇವಡಿ ಮಾಡಿದೆ, ಅವನು ಅದನ್ನು ನಿಜ ಅಂದುಕೊಂಡು,

"ಮತ್ತಿನ್ನೇನು, ಆ ಫೋರ್ಬ್ಸು, ಫಾರ್ಚೂನ್ ನವರಿಗೆಲ್ಲ ಇಂಡಿಯಾದ್ ಬಗ್ಗೆ ಒಂದು ವರದಿ ಮಾಡೋಕ್ ಹೇಳು, ನಮ್ಮಲ್ಲಿ ನಿಜವಾಗಿ ಎಷ್ಟು ದುಡ್ಡಿದೇ ಅಂತ ಗೊತ್ತಾಗುತ್ತೆ?"

"ಹಾಗಾದ್ರೆ, ನಮ್ ಅಮೇರಿಕದ ಬಿಲಿಯನ್ನುಗಳೆಲ್ಲ ಲೆಕ್ಕಕ್ಕೇ ಇಲ್ಲ ಅನ್ನು?" ಎಂದು ಮೂದಲಿಸಿದ್ದಕ್ಕೆ...

"ಗುರುವೇ, ನಿನಗೇನ್ ಗೊತ್ತಿದೆ ಹೇಳು, ಒಂಥರ ಇನ್ನೂ ಹೈಸ್ಕೂಲ್ ಹುಡುಗನಂಗೆ ಮಾತಾಡ್ತಿ ನೋಡು. ಕಳೆದ ವರ್ಷ ನಿನ್ನ ಅಮೇರಿಕದ ಇಂಡೆಕ್ಸ್‌ಗಳು ಅಬ್ಬಬ್ಬ ಅಂದ್ರೆ ಎಷ್ಟು ಪರ್ಸೆಂಟ್ ಮೇಲಕ್ಕ್ ಹೋದ್ವು ಹೇಳೂ, ಇಪ್ಪತ್ತೋ ಮೂವತ್ತೋ ಪರ್ಸೆಂಟ್ ತಾನೆ? ಕಳೆದ ಐದು ವರ್ಷದಲ್ಲಿ ಮಾರ್ಕೆಟ್ಟು ಕೆಳಗ್ ಬಿದ್ದದ್ದು ಡಬ್ಬಲ್ಲೋ ತ್ರಿಬ್ಬಲ್ಲೋ ಆಯ್ತಲ್ಲಾ? ಅದೇ ದೊಡ್ದು ತಾನೆ? ಹುಚ್ಚಪ್ಪಾ, ಕೇಳು...2009 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರ್‌ಗಳನ್ನ 2014 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರುಗಳಿಗೆ ಕಂಪೇರ್ ಮಾಡಿ ನೋಡು. ನಮ್ಮ ದೇಶದ ಒಬ್ಬೊಬ್ಬ ರಾಜಕೀಯ ನಾಯಕನ ಪರ್ಸನಲ್ಲ್ ಸ್ವತ್ತು ಅದೆಷ್ಟು ಸಾವಿರ ಪರ್ಸೆಂಟ್ ಬೆಳೆದಿದೆ ಅಂತ? ಒಂದ್ ಕೆಲ್ಸಿಲ್ಲ, ಉದ್ಯಮಾ ಇಲ್ಲಾ, ಹೇಳಿ-ಕೇಳಿ ಸಮಾಜ ಸೇವೆ ರಾಜಕೀಯದ ಕೆಲ್ಸ, ಎಲ್ಲಿ ನೋಡಿದ್ರೂ ಇನ್‌ಫ್ಲೇಷನ್ನ್ ಜಾಸ್ತಿ ಅಗಿರೋ ಹೊತ್ನಲ್ಲಿ ಅದ್‍ ಹೆಂಗೆ ಐದು ವರ್ಷದ ಹಿಂದೆ ಹತ್ತು ಕೋಟಿ ಡಿಕ್ಲೇರ್ ಮಾಡ್ದೋನು ಈ ಸರ್ತಿ ನೂರು ಕೋಟಿ ಡಿಕ್ಲೇರ್ ಮಾಡ್ತಾನೆ? ಅದನ್ನ್ ಯಾವ್ ಇಂಡೆಕ್ಸಿಗೆ ಹೋಲಿಸ್ತಿ?"

"ಹೌದೋ ಸುಬ್ಬಾ ಎಲ್ಲಿಂದ ಬರುತ್ತೆ ದುಡ್ಡು ಇವ್ರಿಗೆ? ಕೆಲವ್ರದ್ದಂತೂ 760, 800 ಕೋಟಿಗಳಷ್ಟು ಒಟ್ಟು ಮೊತ್ತ ಅಂತಲ್ಲಪ್ಪಾ?"

"ಏಳ್ನೂರು ಕೋಟಿ ಬಾಳಾ ಕಡಿಮೆ ಆಯ್ತು, ಇನ್ನೂ ಸಾವ್ರ ಸಾವ್ರ ಕೋಟಿಗಟ್ಟಲೇ ಇದ್ದೋರು ಇದಾರೆ, ತಿಳ್ಕಾ"

"ಮತ್ತೆ ಇವ್ರ ಹತ್ರ ಇಷ್ಟೊಂದು ದುಡ್ಡು ಇರೋರ್, ರಾಜಕೀಯಾನಾದ್ರೂ ಯಾಕ್ ಮಾಡ್ತಾರೆ, ಸುಮ್ನೆ ತಾವ್ ತಮ್ದು ಅಂತ ಇರಬಾರ್ದಾ?"

"ಅದೇ ವಿಶೇಷ ನೋಡು, ಅದು ನಿಮ್ಮಂತೋರಿಗೆ ಅರ್ಥ ಆಗಲ್ಲ, ಯಾರು ರಾಜಕೀಯಕ್ಕ್ ಬರ್ತಾರೆ ಅಂತ ತಿಳಕಂಡೀ? ದುಡ್ಡ್ ಇಲ್ದೋನ್ ದುಡ್ಡು ಮಾಡೋಕ್ ಬರ್ತಾನೆ, ದುಡ್ಡ್ ಮಾಡ್ದೋನ್ ಅದನ್ನ ಉಳಸ್ ಕೊಳೋಕ್ ಬರ್ತಾನೆ".

"ಅಲ್ಲಾ ಮಾರಾಯಾ, ನಾವ್ ಸುಮ್ನೇ ಊರೂ-ಕೇರೀ, ದೇಶ-ಮನೆ ಬಿಟ್ಟು ಅದನ್ನ ಇದನ್ನ ಓದಿ, ಇತ್ಲಾ ಕಡೇ ಬಂದಿದ್ದೆಲ್ಲಾ ವೇಷ್ಟ್ ಆಯ್ತು ಅನ್ನು, ಸುಮ್ನೇ ಯಾವ್ದಾರ ಪಾರ್ಟಿ ಪಕ್ಷದ ಹೆಸ್ರು ಹಿಡಕೊಂಡ್ ಒಂದಿಪ್ಪತ್ತ್ ವರ್ಷ ಓಡಾಡಿದ್ರೆ ನಾವೂ ಕೋಟಿ-ಕೋಟಿ ಎಣಿಸ್ಬೋದಿತ್ತು..." ಈ ಮಾತಿನಿಂದ ಸುಬ್ಬನಿಗೆ ಸ್ವಲ್ಪ ಸಿಟ್ಟು ಬಂತು ಅಂತ ಅನ್ಸುತ್ತೆ, ನನ್ನ ಮಾತಿನ್ನ ಮಧ್ಯೆ ಹೀಗನ್ನೋದೇ,

"ಅವಾಗ ಇದು ಎಲ್ಲಿಗೆ ಬರುತ್ತೆ ಗೊತ್ತೇನೋ? ನಿನ್ನಂಥಾ ಎನ್ನಾರೈಗಳು ಒಂಥರಾ ಸಪ್ಪೆ ನಾಯ್‌ಗಳು ಇದ್ದಂಗೆ, ಇತ್ಲಾಗ್ ಬೊಗೊಳೋದೂ ಇಲ್ಲ, ಅತ್ಲಾಗ್ ಕಚ್ಚೋದೂ ಇಲ್ಲ. ನಾಯಿ ಅಂದ್ರೆ ನಾಯಿ ಇದ್ದ ಹಾಗೆ ಇರ್‌ಬಕು, ಇವೆಲ್ಲ ನಮಿಗ್ ಬ್ಯಾಡಾ ಅಂತ ಬಿಟ್ಟ್ ವಿರಾಗಿಗಳಾಗ್ ಹೋದ್‌ಮೇಲೆ ಅವಾಗವಾಗ ಇಂಥಾ ಚಿಂತಿ ಯಾಕ್ ಹಚ್‌ಗಂತೀರ್ ಹೇಳು? ಅದರಿಂದ ಏನ್ ಉದ್ದಾರಾಗಿದೆ? ಒಂದ್ಸರ್ತಿ ಮೂಡ್ ಬಂದಾಗ ದುಡ್ಡೇನು ಸರ್ವಸ್ವ ಅಲ್ಲಾ ಅಂತಾ ಬಾಷ್ಣಾ ಬಿಗೀತಿ, ಈಗ ಇಲೆಕ್ಷನ್ನ್ ಅಂಕಿ-ಅಂಶ ನೋಡ್ಕೊಂಡು ದುಡ್ಡೇ ದುಡ್ಡೂ ಅಂತೀ, ನಿನಗೂ ಈ ರಾಜಕಾರ್ಣಿಗಳಿಗೂ ಏನರ ವ್ಯತ್ಯಾಸ ಐತಾ?" ಎಂದು ಎಲೆ-ಅಡಿಕೆ ಹಾಕ್ಕೊಂಡು ಚೆನ್ನಾಗ್ ಉಗದಾ... ಆದ್ರೆ ನಾನು ಬಿಟ್ಟು ಕೊಡ್ಲಿಲ್ಲಾ,

"ನಿಮ್ದು ದೊಡ್ಡ ವ್ಯಾಪಾರೀ ಮನೋಭಾವ್ನೆ ದೇಶ, ನಿನ್ನಂಥೋರ್ ಹತ್ರ ತಪ್ಪೂ-ಸರಿ ಅಂತ ಏನ್ ಮಾತಾಡೋದ್ ಹೇಳು? ಭ್ರಷ್ಟಾಚಾರ ವ್ಯವಸ್ಥೆನಲ್ಲಿ ಪ್ರತಿ ಓಟಿಗೆ ಎರಡೆರಡು ಸಾವ್ರ ಅಂತ ಮಾರ್ಕೋಳ್ಳೋರು ನೀವು" ಅಂತ ನಾನು ಧ್ವನಿ ಜೋರು ಮಾಡಿದೆ,

’ನೋಡು, ಸುಖಾ ಸುಮ್ನೇ ಅನ್ನಬ್ಯಾಡ. ಭ್ರಷ್ಟಾಚಾರ ವ್ಯವಸ್ಥೇ ಎಲ್ಲಾ ಕಡೆ ಇದೆ, ನಿಮ್ಮಲ್ಲಿ ನಾಜೂಕಾಗಿ ಸಗಣೀನ ಫೋರ್ಕ್ ತೊಗೊಂಡ್ ತಿಂತೀರಿ, ಆ ಚೈನಾದವ್ರು ಚಾಪ್ ಸ್ಟಿಕ್ಕ್‌ನಲ್ಲಿ ತಿಂತಾರೆ, ಮತ್ತೊಂದ್ ಕಡೆ ಚಮಚಾದಲ್ಲಿ ತಿಂತಾರೆ, ಆದ್ರೆ ನಮ್ ಕಡೆ ಅವಕಾಶ ಸಿಕ್ಕಾಗ ನೀಟಾಗಿ ಕೈ ಹಾಕಿ ಕಲಸಿಗೊಂಡು ತಿಂತಾರೆ. ಅಲ್ಟಿಮೇಟ್ಲಿ ಅಂತಾ ಏನ್ ವ್ಯತ್ಯಾಸ ಇಲ್ಲ, ಎಲ್ಲಾ ಒಂದೇ"

"ಏನ್ ಅಂತ ಮಾತಾಡ್ತಿಯೋ, ಏನೇ ಆದ್ರೂ ಅಮೇರಿಕದ ಜನ ನಿಮ್ ಥರ ದುಡ್ಡಿಗ್ ಓಟ್ ಹಾಕೋದಿಲ್ಲ, ತಿಳಕಾ..."

"ನೀ ಏನ್ ಮಾತಾಡ್ತಿದಿಯೋ, ಇಷ್ಟು ವರ್ಷ ಅಲ್ಲಿದೀ, ಇಷ್ಟೋ ಗೊತ್ತಾಗಂಗಿಲ್ಲ ಅಂದ್ರೆ ಹೆಂಗೆ? ಗುರುವೇ ಎಲೆಕ್ಷನ್ನ್ ಕ್ಯಾಂಫೇನ್ ಫಂಡು ಅಂಥ ಕಾರ್ಪೋರೇಷನ್ನುಗಳು ಪಕ್ಷಕ್ಕೆ ಕೊಡೋ ದುಡ್ಡೂ ಎಲ್ಲಿಂದ ಬರುತ್ತೆ ಎಲ್ಲೀಗ್ ಹೋಗುತ್ತೆ?"

"ಅದು ಲೀಗಲೈಜ್ಡ್ ವ್ಯವಸ್ಥೆ ಅಲ್ವಾ..."

"ನಿನ್ ತಲೆ, ಲೀಗಲ್ಲು... ನಾವು ನಿಮ್ಮನ್ನ ಸಪೋರ್ಟ್ ಮಾಡ್ತೀವಿ ಅಂತ ಪಾರ್ಟಿಗಳಿಗೆ ದೇಣಿಗೆ ಕೋಡೋದರಲ್ಲಿ ಕಂಪನಿಗಳ ಸ್ವ ಇಚ್ಚೆ ಸ್ವಾರ್ಥ ಒಂದಿಷ್ಟೂ ಇಲ್ಲಾ ಅಂದ್ರೆ ಅವರ್ಯಾಕೆ ಕೊಡ್ತಾರೆ?"

"ಅದು ಕಂಪನಿಗಳ ಲೆಕ್ಕ, ನಮ್ಮ ಜನಸಾಮಾನ್ಯರದ್ದೇನು ಅದ್ರಲ್ಲಿ ಪಾತ್ರ ಇಲ್ಲ"

"ಥೂ ನಿನ್ನ, ಅದೇ ತಪ್ಪು, ನೀನು ಕಂಪನೀನಲ್ಲಿ ಇನ್ವೆಷ್ಟ್ ಮಾಡ್ದಿ ಅಂದ್ರೆ, ಅದ್ರಲ್ಲಿ ನೀನೂ ಶಾಮೀಲೂ ಅಂತ ತಾನೇ ಅರ್ಥ. ನಿನಗೆ ಬೇಕೋ ಬೇಡ್ವೋ ನೀನಿರೋ ವ್ಯವಸ್ಥೆ ನಿನ್ ಸುತ್ಲೂ ಸುತ್ತ್ ಕೊಳ್ಳೋದೇ ಮಾಡರ್ನ್ ಸೋಷಿಯಲ್ಲಿಸ್ಸಮ್ಮು ನೋಡು, ಒಂಥರಾ ಡೊಕೋಮೋ ಅಂಥ ನೆಟ್‌ವರ್ಕ್ ಕರೀತಾನೇ ಇರುತ್ತೆ ಎಲ್ಲ್ ಹೋದ್ರೂ ಬಿಡಂಗಿಲ್ಲ" ಎಂದು "ಡೊಕೋಮೋ..." ಅಡ್ವರ್ಟೈಸ್‌ಮೆಂಟ್ ಇಮಿಟೇಟ್ ಮಾಡಿ ಜೋರಾಗಿ ನಕ್ಕ.

"ಹಂಗಂದ್ರೆ ಎಲೆಕ್ಷನ್ನು ಅಂದ್ರೆ ಬರೀ ರೊಕ್ಕ ಇರೋರ್ ಆಟ ಅನ್ನು, ಇನ್ನು ಸಾಮಾನ್ಯರ ಪಾಲು ನಾಯಿ ಪಾಲು ?"

"ಇದು ಹೆಂಗೆ ಗೊತ್ತಾ, ಇದು ಬೈ ಡೆಫನಿಷನ್ ಯಾರು ಬೇಕಾದ್ರೂ ಭಾಗವಹಿಸೋ ಪ್ರಜಾಪ್ರಭುತ್ವ ವ್ಯವಸ್ಥೇನೇ, ಆದ್ರೆ ದುಡ್ಡಿರೋರು ದೊಡ್ಡಪ್ಪ ಅಷ್ಟೇ. ಒಂಥರಾ ಈ-ಟಿವಿ ಡ್ಯಾನ್ಸ್ ಪ್ರೋಗ್ರಾಂ ತಕಧಿಮಿತ ಬರುತ್ತಲ್ಲ ಹಂಗೆ, ಅವರ ಸ್ಲೋಗನ್ನ್ ಏನ್ ಹೇಳು? ’ಯಾರು ಬೇಕಾದ್ರು ಕುಣೀಬೋದು’ - ಆದ್ರೆ ನಾವು ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕೊಡ್ತೀವಿ ಅಂತ ಹಂಗೆ.

"ಸರಿ ಬಿಡು, ಇನ್ನೇನು ಎಲೆಕ್ಷನ್ನು ಮುಗಿಯುತ್ತೇ, ಅಮೇಲೇ ಕುದುರೆ ವ್ಯಾಪಾರ ಶುರು, ಒಬ್ಬೊಬ್ಬ ಎಮ್ಮೆಲ್ಲೆಗಳನ್ನ ಎಂಪಿಗಳನ್ನ ಕೊಡೊ-ಕೊಳ್ಳೋ ಆಟ ನಡೆಯುತ್ತೇ" ಅಂದೆ,

"ಈ ಎಮ್ಮೆಲ್ಲೆಗಳನ್ನ ಹೆಂಗೆ ಕೊಳ್ತಾರೆ ಅನ್ನೋದಕ್ಕೆ ತೆಲುಗಿನಲ್ಲಿ ಲೀಡರ್ ಅಂತ ಒಂದು ಸಿನಿಮಾ ಇದೆ ನೋಡು, ಅದ್ರಲ್ಲಿ ಒಂದು ಫ್ಯಾಟ್ ಕೀ ಕೊಟ್ಟು ಅದ್ರಲ್ಲಿರೋ ಎಲ್ಲಾ ಬೀರು ಅಲ್ಮೇರಾಗಳಲ್ಲಿ ನೋಟುಗಳನ್ನ ತುಂಬಿ ಇಟ್ಟಿರ್ತಾರೆ, ಅಂತದನ್ನ ಬ್ಯಾಡ ಅನ್ನೋದಕ್ಕೆ ಬಾಳಾ ಗಟ್ಟಿ ಎದೆ ಬೇಕು, ಸೋ ಐ ಡೋಂಟ್ ಬ್ಲೇಮ್ ದೆಮ್"

"ಸರಿ, ಟೈಮ್ ಆಯ್ತು...ಈ ಎಲೆಕ್ಷನ್ನಲ್ಲಿ ನಿನ್ ಪ್ರಿಡಿಕ್ಷನ್ನ್ ಏನು, ಕರ್ನಾಟಕದಲ್ಲಿ ಯಾರ್ ಬರ್ತಾರೆ, ದೇಶದ ಚುಕ್ಕಾಣೀ ಯಾರ್ ಹಿಡೀತಾರೆ?"


"ನನ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಕಷ್ಟ, ಗಣಿ ದೊರೆಗಳ ಸವಾಸದಿಂದ ಬಾಳ ಗಬ್ಬಿಟ್ಟ್ ಹೋಗವ್ರೆ ನಮ್ ನಾಯಕ್ರು. ಅಲ್ದೇ ಆಳೋ ಪಕ್ಷದ ಪರವಾಗಿ ಕಾಂಗ್ರೆಸ್ ಮೆಜಾರಿಟಿ ಬರ್ಬೋದು. ಆದ್ರೆ ದೇಶದಲ್ಲಿ ಸ್ವಲ್ಪ ಮೋದಿ ಅಲೆ ನಡೀತಾ ಇದೆ. ಏನಾಗತ್ತೋ ಗೊತ್ತಿಲ್ಲ"

"ಮತ್ತೇ, ಆಪೂ... ಪಾಪೂ, ಇವೆಲ್ಲ?"

"ಏ, ತೆಗಿ ತೆಗಿ, ಆಪ್ ಬರ್ಬೇಕು ಅಂದ್ರೆ, ಇನ್ನೊಂದು ಇಪ್ಪತ್ತೈದು ವರ್ಷಾನಾದ್ರೂ ಬೇಕು, ಒಬ್ಬ ಕಪಾಳ ಮೋಕ್ಷದ ನಾಯಕನಿಂದ ಇಡೀ ದೇಶದ ರಾಜ್‌ಕಾರ್ಣ ಬದಲಾಗೋಕ್ಕೆ ಸಾಧ್ಯವೇ?"

"ಯಾಕ್ ಆಗ್‌ಬಾರ್ದು?"

"ಅದೇ ನಿಂಗೊತ್ತಾಗೋಲ್ಲ ಅನ್ನೋದು. ದುಡ್ಡಿಗೆ ಓಟ್ ಮಾರ್ಕೊಳ್ಳೋ ಜನರಲ್ಲಿ ಒಂಥರ ಎನ್‌ಟೈಟಲ್ಲ್‌ಮೆಂಟ್ ಬರುತ್ತೆ. ಅದ್ಕೇ ನಮ್ ಜನ ಗಾದೆ ಮಾಡಿರೋದು - ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡಾ - ಅಂತ" ಎಂದು ದೊಡ್ಡದಾಗಿ ನಕ್ಕ.

"ಮತ್ತೇನಪ್ಪಾ ಸಮಾಚಾರ..."

"ಮತ್ತೇನಿಲ್ಲ ಗುರುವೇ, ಅಯ್ಯೋ ಅಡಿಕೇ ಮಂಡಿಗ್ ಹೋಗ್ಬೇಕು, ನಿನ್ ಹತ್ರ ಮಾತಾಡಿ ಹೊತ್ ಹೋಗಿದ್ದೇ ಗೊತ್ತಾಗಿಲ್ಲ, ಅವಾಗವಾಗ ಫೋನ್ ಮಾಡ್ತಾ ಇರು" ಎಂದು ನನ್ನ ಉತ್ತರಕ್ಕೂ ಕಾಯ್ದೆ ಫೋನ್ ಇಟ್ಟೇಬಿಟ್ಟ...ನಾನು ಒಂಥರಾ ಟಿ.ವಿ. ನೈನ್ ಬ್ರೇಕಿಂಗ್ ನ್ಯೂಸ್ ನೋಡಿದ ಶಾಕ್‌ನಲ್ಲಿ ಆಫೀಸಿನ ಕೆಲಸಕ್ಕೆ ತಿರುಗಿದೆ.

Sunday, January 26, 2014

ದಿನಕ್ಕೊಂದು ಕಥೆ...

ನಮ್ಮನೇಲಿ ಮಕ್ಕಳು ಮಲಗೋ ಹೊತ್ತಿಗೆ ದಿನಕ್ಕೊಂದೆರಡು ಕಥೆಗಳು ಹುಟ್ಟೇ ಹುಟ್ಟುತ್ತವೆ. ಅವುಗಳಿಗೆ ಮೇಲ್ಮೈಯಲ್ಲಿ ಯಾವುದೇ ನಿರ್ದಿಷ್ಟವಾದ structure ಇಲ್ಲದಿದ್ದರೂ ಅವುಗಳಲ್ಲಿ ಸಸ್ಪೆನ್ಸ್ ಅಥವಾ ಹಾಸ್ಯದ ಸನ್ನಿವೇಶ ಇರೋದು ಗ್ಯಾರಂಟಿ. ಪ್ರತಿಯೊಂದು ಕಥೆಯಲ್ಲಿ ಒಂದೊಂದು ಸಮಸ್ಯೆಯನ್ನು (problem sovling) ಬಗೆಹರಿಸುತ್ತೇವೆ, I am sure some king, or prince or princess or some merchant has some problem somewhere! ಅದರಿಂದ leadership skills ಬೆಳೆಯಬಹುದು ಎಂಬುದು ನನ್ನ ನಂಬಿಕೆ. ನನ್ನ ಕಥೆಗಳು ಕುವೆಂಪು ಅವರ ಕಥಾ ಸರಿತ್ಸಾಗರ ಮಂಜಣ್ಣನ ಕಥೆಗಳಂತಲ್ಲ, ಆದರೆ ನನ್ನ ಕಥೆಗಳಲ್ಲಿ ಅಲ್ಲಿ-ಇಲ್ಲಿಯ ಟ್ವಿಸ್ಟುಗಳಿವೆ, ತಲ್ಲಣಗಳಿವೆ, ಪ್ರಯೋಗಗಳಿವೆ. ಯಕ್ಷಗಾನದ ಒಂದೇ ಅಂಕಣದಲ್ಲಿ ಕಲಾವಿದರು - ಅತಳ ಸುತಳ, ಪಾತಾಳ, ಭೂಲೋಕ, ಮತ್ಸ್ಯಲೋಕ, ಸರ್ಪಲೋಕ, ದೈವಲೋಕಗಳನ್ನೆಲ್ಲ - ಕ್ಷಣಾರ್ಧಲ್ಲಿ ಹೋಗಿ ಹಿಂತಿರುಗಿ ಬರುವಂತ ಧಕ್ಷತೆ (efficiency) ಇದೆ. ಎಲ್ಲದಕ್ಕೂ ಮುಖ್ಯವಾಗಿ ಪ್ರತಿದಿನ ಒಂದಿಷ್ಟು ಕನ್ನಡವನ್ನು ಕಲಿಸಿಯೇ ತೀರುತ್ತೇನೆಂಬ ಛಲವಿದೆ. ಜೊತೆಗೆ ವಯೋಮಾನಕ್ಕೆ ತಕ್ಕ ಫಿಲ್ಟರ್ ಇದೆ.

***

ನನ್ನ ಕೆಲವು ಕಥೆಗಳು ಮಕ್ಕಳ ಪ್ರಶ್ನೆಯನ್ನಾಧರಿಸಿ ಒಮ್ಮೊಮ್ಮೆ ದಿಢೀರ್ turnಗಳನ್ನು ತೆಗೆದುಕೊಳ್ಳುವುದುಂಟು, ನಿನ್ನೆಯ ಕಥೆಯಲ್ಲಿ ಹಾಗೇ ಆಯಿತು:

ಒಬ್ಬ ರಾಜನಿದ್ದನಂತೆ

ಅವನಿಗೆ ಮೂವರು ಗಂಡು ಮಕ್ಕಳು

ಅವರಲ್ಲಿ ಹಿರಿಯವನು ಕುರುಡ, ಮಧ್ಯದವನು ಕಿವುಡ (ಕೆಪ್ಪ), ಕಿರಿಯವನು ಮೂಕ

They were able to understand the concept of a blind boy (thanks to Dhritaraastra ?), but not deaf and mute, there were a lot of questions around why were they not able to talk or hear. it is interesting to note, these kids could not imagine why some kids are unable to speak or hear.

ರಾಜನಿಗೆ ವಯಸ್ಸಾಗುತ್ತಾ ಬಂದ ಹಾಗೆ ತನ್ನ ಉತ್ತರಾಧಿಕಾರಿ ಯಾರು ಆಗಬೇಕು, ಆಗುತ್ತಾರೆ ಎನ್ನುವುದರ ಕುರಿತು ಚಿಂತೆಯಾಗತೊಡಗಿತು.


So, we have a problem here, what do you think the Raaja should do, who should become the next king and why?

My kids took turns and tried every one of the three sons - there were a lot of pros and cons that came out of it...believe me there were quite a lot.

Finally, we didn't get a democratic conclusion between 2 kids and 3 potential alternatives (but I gave them more choices later)...the suspense started to build now -- more pressure on me, what option do I recommend, who do you think will be the next king in line and best yet, explain why?
ಕುರುಡ - ನೋ.

ಕಿವುಡ - ನೋ.

ಮೂಕ...ನೋ.


then who else? the king himself, he's old, no he can't.
ರಾಜ ಗುರೂಜಿಯನ್ನು ಕರೆದನಂತೆ..."ಗುರೂಜಿ, ಏನು ಮಾಡೋದು, ನಿಮ್ಮ ಆಜ್ಞೆ ಅನುಸಾರ ನಡೀತೀನಿ, ಯಾರನ್ನು ರಾಜನನ್ನಾಗಿ ಮಾಡಲಿ?"


Now, guruji (saint) is under stress...imagine the pressure, it is almost sleeping time...
ಗುರುಜೀ ಹೇಳಿದ್ರು, "ರಾಜ, ನಿನ್ನ ಮಕ್ಕಳಲ್ಲಿ ಯಾರೂ ಮುಂದಿನ ರಾಜನಾಗೋದಕ್ಕೆ ಸಾಧ್ಯವಿಲ್ಲ...ಯಾಕೇ ಅಂದ್ರೆ..." list the drawbacks of every one of his sons becoming the next king...

ರಾಜ, "ಹಾಗಿದ್ರೆ, ಮುಂದಿನ ರಾಜ ಯಾರು?"


Now there is pin drop silence
Guruji says, "Adopt an able kid from my Ashram, and he will be next king, however, your sons will get respective portfolios..." like ಸಬ್ ರಾಜಾಸ್


there were quite a lot of interruptions here...questions, concerns and what not.

Is the Queen okay with this?

Story takes a sub-routine, where Rama and Bharata and their mommies had issues with who can be the next king, also, Inchara pointed out that Rama himself studied in Guruji's Ashram, not in the palace, but Ninad is still not conviced with Guruji's answer.
ಗುರೂಜಿ, ಒಬ್ಬ ಒಳ್ಳೆಯ ಶಿಷ್ಯನನ್ನು ಅಪಾಯಿಂಟ್ ಮಾಡ್ತಾರೆ.

ಜೊತೆಗೆ ರಾಜನ ಮೂವರು ಮಕ್ಕಳನ್ನು ಜೂನಿಯರ್ ಕಿಂಗ್ ಆಗಿ ಕೂಡ ಮಾಡ್ತಾರೆ...

ಇಲ್ಲೇ ನಮ್ಮ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು...


So, for 3 potential sub-kings we debate which portfolio we can give them in the kingdom....for quite some time....

Finally
ಕುರುಡನಿಗೆ - News media and mail service incharge

ಕಿವುಡನಿಗೆ - Store room incharge

ಮೂಕನಿಗೆ - Palace decoration and cleanliness incharge

ಇವುಗಳಿಗೆಲ್ಲ - ಯಾಕೇ ಅಂದ್ರೆ ಅಂಥ ಸೇರಿಸಿ, ತುಂಬಾ ಕಾರಣಗಳನ್ನು ಕೊಡಬೇಕಾಗುತ್ತೆ...

ರಾಜ ಹ್ಯಾಪ್ಪೀ, ಗುರೂಜಿ ಹ್ಯಾಪ್ಪೀ, ಸಬ್ ಕಿಂಗ್ಸ್ ಹ್ಯಾಪ್ಪೀ...


The End!

ಒಂದ್ಸರ್ತಿ ಕಥೆ ಮುಗಿದ ಮೇಲೆ, ನಾವು 2 minutes silence mode ಗೆ ಹೋಗ್ತೀವಿ. ಅಷ್ಟರಲ್ಲಿ ಒಬ್ಬರಲ್ಲ ಒಬ್ರು ನಿದ್ರಾ ದೇವಿಗೆ ಶರಣು ಹೋಗಿರ್ತಾರೆ...this formula works for me - try it, rinse & repeat!
***
If it works or not, drop a line here...

Saturday, May 11, 2013

ಅನಿವಾಸಿಗಳಿಗೆ ಸಂದ ಜಯ

ನಾನು ಓದಿದ ಬ್ಲಾಗು / ನ್ಯೂಸ್ ಪೋರ್ಟಲುಗಳೆಲ್ಲ ದಳ, ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಥೆಗಳನ್ನು ಬರೆಯುತ್ತಿರುವಾಗ, ನಮಗೆ ಬೇಕಾದ ಒಂದಿಬ್ಬರು ಅನಿವಾಸಿ ಕನ್ನಡಿಗ ಸ್ಪರ್ಧಿಗಳನ್ನು ಕುರಿತು ಬರೆಯದೇ ಹೋದರೆ
ವಾರ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಅಸಂಪೂರ್ಣವಾಗುತ್ತವೆ.  ವಿಶ್ವದಾದ್ಯಂತ ಕನ್ನಡಿಗರು ನಿರೀಕ್ಷಿಸಿದ್ದ ಈ ಚುನಾವಣೆಯ ಫಲಿತಾಂಶದಲ್ಲಿ ವೈಯಕ್ತಿಕವಾಗಿ ನನಗೆ ಪರಿಚಯಯಸ್ತರಾದ ರವಿ ರೆಡ್ಡಿ ಮತ್ತು ಶಾಂತಲಾ ದಾಮ್ಲೆ ಇವರಿಬ್ಬರ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ವಿಸ್ಮಯವಾಯಿತು. ಮುಖ್ಯವಾಗಿ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಕೆಲಸವನ್ನೇ ಇವರಿಬ್ಬರೂ ಮಾಡಿದ್ದಾರೆ. ಸೋಲು ಗೆಲುವಿನ ಸೋಪಾನ, ನನ್ನ ದೃಷ್ಟಿಯಲ್ಲಿ ಇವರಿಬ್ಬರೂ ಸೋತು ಗೆದ್ದವರು.

***

ನಾವು ನಂಬಿಕೊಂಡ ಪ್ರಕಾರ ಬೆಂಕಿಯನ್ನು ನಂದಿಸೋದಕ್ಕೆ ನೀರನ್ನು ಸಹಜವಾಗಿ ಬಳಸುವುದಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸಲು ಬೆಂಕಿಯನ್ನೇ ಬಳಸಬೇಕಾಗುತ್ತದೆ. ಕಾಡ್ಗಿಚ್ಚಿನ ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸೋದಕ್ಕೆ ಹಾಗೂ ಬೆಂಕಿ ಹರಡದಿರದಂತೆ ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ನಿಸರ್ಗದತ್ತವಾದ ನೀರನ್ನು ಹೆಲಿಕಾಪ್ಟರುಗಳಲ್ಲಿ ಸಿಂಪಡಿಸುವುದನ್ನು ನಾವು ನೋಡಿದ್ದೇವೆ ಹಾಗೇ ಕೆಲವು ಕಡೆ ರಸಾಯನಿಕಗಳನ್ನು ಬಳಸುವುದನ್ನೂ ಸಹ. ಭಾರತದಾದ್ಯಂತ ಹಬ್ಬಿಕೊಂಡಿರುವ ಚುನಾವಣಾ ಸಂಬಂಧಿ ಕೊಡು-ಕೊಳ್ಳುವ ವ್ಯವಸ್ಥೆ ನಮಗೆಲ್ಲ ಪಾರಂಪರಿಕವಾದುದು. ಸ್ವಾತಂತ್ರ್ಯ ಸಿಕ್ಕ ಮೊದಲ ಕೆಲವು ಚುನಾವಣೆಗಳು ಹೇಗಿದ್ದವೋ ಆದರೆ ನಾನು ಗಮನಿಸಿದಂತೆ ಕಳೆದ ಮೂರು ನಾಲ್ಕು ದಶಕಗಳ ಚುನಾವಣೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕೋಟಿ ರೂಪಾಯಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿ ಹೋಗುವುದನ್ನು ನೋಡಿದ್ದೇವೆ. ಹಣ ಹಂಚುವುದರ ಜೊತೆಗೆ ಸರಾಯಿ, ಸೀರೆ, ಸಣ್ಣ ಪುಟ್ಟ ಆಭರಣಗಳು ಮೊದಲಾದವುಗಳ ಬಗ್ಗೆಯೂ ನಮಗೆ ಗೊತ್ತು.  ಚುನಾವಣಾ ಸಮಯದಲ್ಲಿ ಹೊರಬರುವ ಹಾಗೂ ಹಂಚಲ್ಪಡುವ ಹಣ ನನ್ನ ದೃಷ್ಟಿಯಲ್ಲಿ ಕಾಡ್ಗಿಚ್ಚಿನ ಬೆಂಕಿಯಿದ್ದಂತೆ, ಅದನ್ನು ಎದುರಿಸುವುದು ಹಾಗೂ ಸಂಬಾಳಿಸುವುದು ಬಹಳ ಕಷ್ಟದ ಕೆಲಸ.

ಮೇಲ್ನೋಟಕ್ಕೆ ಚುನಾವಣ ತಂತ್ರ ಬಹಳ ಸುಲಭವಾದಂತೆ ಕಾಣುತ್ತದೆ. ಆದರೆ, ಅದರ ಒಳ ಹೂಟಿ ಕೆಲವರಿಗೆ ಮಾತ್ರ ಗೊತ್ತು. ಇಲ್ಲಿನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ಗೆ ವಿಸಿಟ್ ಮಾಡಲು ಬಂದ ಡಾ. ಸುದರ್ಶನ್ ಒಮ್ಮೆ ಹೇಳಿದ್ದರು. ಸುದರ್ಶನ್ ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಲೋಕಾಯುಕ್ತರ ಬಲೆಗೆ ಸಿಕ್ಕ ಒಬ್ಬ ಎಮ್.ಎಲ್.ಎ. ಅನ್ನು ಅವರು ಸಂದರ್ಶನ ಮಾಡಿದ್ದರಂತೆ. ಆ ಶಾಸಕರ ಪ್ರಕಾರ, ಪ್ರತಿಯೊಬ್ಬ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿಗಳನ್ನು ಸುರಿದು ಗೆಲ್ಲುತ್ತಾನೆ, ಗೆದ್ದನಂತರ ಸಾರ್ವಜನಿಕ ಕೆಲಸದ ನೆಪದಲ್ಲಿ ಅದರ ಹತ್ತು ಅಥವಾ ನೂರರಷ್ಟು ಗಳಿಸುತ್ತಾನೆ. ಅದರಲ್ಲೇನು ತಪ್ಪು? ಎಂಬುದು ಆ ಶಾಸಕರ ಅಂಬೋಣ.

ನಮ್ಮ ರಾಜಕಾರಣಿಗಳು ಗೆದ್ದು-ಗಳಿಸಿ-ಬದುಕುವ ಬಗೆ ನಾನಿಲ್ಲಿ ಬರೆದಂತೇನೂ ಸುಲಭವಲ್ಲ. ಅವರಲ್ಲೂ ಪುಡಾರಿಯಿಂದ ಹಿಡಿದು ಮಂತ್ರಿಗಿರಿಯವರೆಗೆ ಬೆಳವಣಿಗೆಯಿದೆ, ಜಾತಿ ಆಧಾರಿತ ವ್ಯವಸ್ಥೆಯಲ್ಲಿ ಯಾವುದೇ ನಿರಂತರ ಗಳಿಕೆ, ಮೌಲ್ಯವಿಲ್ಲದೆ ದಶಕಗಳ ಕಾಲ ಕಾಯುವುದಿದೆ. ಪಕ್ಷಗಳ ಹೆಸರಿನಲ್ಲಿ ಅವರಿವರ ಬೂಟು ನೆಕ್ಕುವುದಿದೆ. ಪುಡಾರಿ-ಪುಂಡಾಟಿಕೆಯಿಂದ ಆಗಾಗ್ಗೆ ಪೋಲೀಸರ ಬೂಟಿನ ಒದೆ ತಿನ್ನುವುದಿದೆ. ಪ್ರಬಲ ರಾಜಕಾರಣ, ಪಕ್ಷದ ಪ್ರಣಾಳಿಕೆಗಳು, ಸ್ಥಳೀಯ ರಾಜಕಾರಣಿಗಳ ಒಡನಾಟ, ಜಾತಿ-ಬಾಂಧವರ ಬೆಂಬಲ, ತಮ್ಮ-ತಮ್ಮ ಬಡಾವಣೆ-ಕಾನ್ಸ್ಟಿಟ್ಯುಯೆನ್ಸಿಯ ನಿರಂತರ ಸಮಸ್ಯೆಗಳು - ಇವೆಲ್ಲ ಸುಮಾರು ದಶಕಗಳ ಕಾಲ ಸತಾಯಿಸುತ್ತಲೇ ಇರುತ್ತವೆ.

ರಾಜಕಾರಣಿಗಳು ಯಾವುದೇ ಉದ್ಯಮವನ್ನು ಬೆಳೆಸದೇ ಇರುವ ಉದ್ಯಮಿಗಳು, ಪೇ ಚೆಕ್ಕು ಬಾರದಿರುವ ಎಂಪ್ಲಾಯಿಗಳು, ಅವರವರ ಪಕ್ಷದ ನಾಗರೀಕರು. ರಾಜಕಾರಣಿ ಎನ್ನುವ ಪದಕ್ಕೆ ಮುಂದಾಳು, ದುರೀಣ, ನಾಯಕ, ಪುಡಾರಿ ಎಂಬ ಪರ್ಯಾಯ ಪದಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಕಮ್ಯೂನಿಕೇಷನ್ನ್, ಲೀಡರ್‌ಶಿಪ್ ಹಾಗೂ ನಿಲುವು ಇವರ ಬಂಡವಾಳ. ಇವರು ಮೌಲ್ಯಾಧಾರಿತ ರಾಜಕಾರಣಿಗಳು, ಹಾಗೂ ಇವರಿಗೆಲ್ಲ ಪ್ರಣಾಳಿಕೆಗಳಿವೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಆದರೆ ಕಾರ್ಯರೂಪಕ್ಕೆ ಬಂದು ಜನರ ಮನದಲ್ಲಿ ನಿಲ್ಲುವುದು ಕೆಲವು ಮಾತ್ರ.

***


ಶಾಂತಾಲಾ ಮತ್ತು ರವಿ ಇವರಿಬ್ಬರೂ ಸಹ, ಅನೇಕ ವರ್ಷಗಳಿಂದ ಭಾರತದ ರಾಜಕಾರಣವನ್ನು ಬಲ್ಲವರಾಗಿ ತಮ್ಮ ಪೋಸ್ಟ್-ಅಮೇರಿಕನ್ ಬದುಕಿನಲ್ಲಿ ಪ್ರಂಟ್‌ಲೈನ್‌ನಲ್ಲಿ ನಿಂತು ರಾಜಕೀಯವನ್ನು ಗಮನಿಸಿದವರು. ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ವಾರ ಮುಗಿದ ಚುನಾವಣೆಯಲ್ಲಿ ಇವರಿಬ್ಬರೂ ಸಹ ನಾಲ್ಕನೇ ಸ್ಥಾನದಲ್ಲಿ ಬಂದಿರುವುದು ಬಹಳ ದೊಡ್ಡ ವಿಷಯ. ಮುಖ್ಯವಾಗಿ ಒಟ್ಟು ಚಲಾವಣೆಯಾದ ಗುಣಮಟ್ಟದ ಮತಗಳಲ್ಲಿ ಶಾಂತಲ 8.75% ಹಾಗೂ ರವಿ 5.97% ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಇವರಿಬ್ಬರು ಭಾಗವಹಿಸಿದ ಬಸವನಗುಡಿ ಹಾಗೂ ಬಿಟಿಎಮ್ ಲೇ ಔಟುಗಳಲ್ಲಿ ಕ್ರಮವಾಗಿ ಲೋಕಸತ್ತಾ ಪಕ್ಷವನ್ನು ಬುಡದಿಂದ ಎತ್ತಿ ನಾಲ್ಕನೇ ಸ್ಥಾನಕ್ಕೆ ತಂದಿರುವುದು ಗಮನಾರ್ಹವಾದುದು.

ಕಾಂಗ್ರೆಸ್, ಜನತಾದಳ, ಬಿಜೆಪಿಯವರು ಮಾಡಿದ್ದು ಮಾಡುತ್ತಿರುವುದು ಕ್ಲಾಸ್ಸಿಕ್ ರಾಜಕಾರಣ. ನಮಗೆ ಗೊತ್ತಿರುವ ಹಾಗೆ ಶಾಂತಲಾ ಹಾಗೂ ರವಿ ಮಾಡಿದ್ದು ಮೌಲ್ಯಾಧಾರಿತ ರಾಜಕಾರಣ. ತಾವು ಓಟು ಕೇಳುವ ಪ್ರಕ್ರಿಯೆಗಳಲ್ಲಿ ಹಣ-ಹೆಂಡವನ್ನು ಹಂಚದೆ ಬದಲಿಗೆ ಜನರಿಂದಲೇ ಹಣವನ್ನು ಸಂಗ್ರಹಿಸಿ ಜನರ ಹಕ್ಕು ಬಾಧ್ಯತೆಗಳನ್ನು ಗೊತ್ತು ಪಡಿಸಿ ತಮ್ಮ ಸುತ್ತಲಿನ ದಿಗ್ಗಜ-ಧುರೀಣರ ನಡುವೆ ನೊಂದು ಬೆಂದು ಅವರಿಂದಲೇ ಏಳರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದಿದೆಯಲ್ಲಾ, ಅದು ನಿಜಕ್ಕೂ ದೊಡ್ಡ ಕೆಲಸವೇ.

ಶಾಂತಾಲಾ ಮತ್ತು ರವಿ ತಮ್ಮ ಸುತ್ತಲಿನ ಬೆಂಕಿಯನ್ನು ಆರಿಸಲು ಆಯ್ದುಕೊಂಡ ಮಾಧ್ಯಮ ನೀರು. ತಮ್ಮ ಸುತ್ತಲೂ ಕಾಡ್ಗಿಚ್ಚಿನೋಪಾದಿಯಲ್ಲಿ ಪ್ರಂಚಡ ಕಾಂಗ್ರೆಸ್, ದಳ ಹಾಗೂ ಬಿಜೆಪಿ, ಕೆಜಿಪಿಯವರು ತಮ್ಮ ಎಂದಿನ ತಂತ್ರವನ್ನು ಬಳಸಿ ಕಂಡ ಕಂಡಲ್ಲಿ "ಬೆಂಕಿ" ಇಟ್ಟು ಚಿಂದಿ ಮಾಡುತ್ತಿರುವಾಗ ಇವರಿಬ್ಬರು ತಾವು ಅಲ್ಲಿಯೇ ಗಳಿಸಿ ಉಳಿಸಿದ ನೀರಿನ ಟ್ಯಾಂಕುಗಳಲ್ಲಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದವರು.  ಕೆಲವೇ  ವರ್ಷಗಳ ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡ  ಇವರು, ಇಂದು ಮುಖ್ಯವಾಹಿನಿ ರಾಜಕೀಯದಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಯಾವುದೇ ಕುತಂತ್ರಗಳಿಲ್ಲದೆ, ಆಮಿಷಗಳನ್ನೊಡ್ಡದೇ, ಸ್ವಚ್ಛ ರಾಜಕಾರಣದ ಹೆಸರಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರು ಕಂಡ ಸೋಲಲ್ಲ, ಬದಲಿಗೆ ಇದು ಇವರಿಬ್ಬರ ಗೆಲುವೆಂಬುದೇ ನನ್ನ ಅಭಿಪ್ರಾಯ.

ಇವರಿಬ್ಬರಿಗೆ ಬೇಕಾಗಿರುವುದು ಸ್ವಲ್ಪ ಕಾಲ ಮಾತ್ರ. ಈ ಎರಡೂ ಕಾನ್ಸ್ಟಿಟ್ಯುಯೆನ್ಸಿಗಳಲ್ಲಿ ಇನ್ನು ಐದು ವರ್ಷಗಳ ಕಾಲ ಜನಾಂದೋಳನ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿದಲ್ಲಿ, ಸ್ಥಳೀಯ ಕರೆಗಳಿಗೆ ಓಗೊಟ್ಟು ಬೆಂಬಲ ನೀಡಿದಲ್ಲಿ, ತಮ್ಮ ಸುತ್ತಲಿನ ಜನರ ನಿರಂತರ ಸಂಪರ್ಕದಲ್ಲಿದ್ದು ಸದರಿ ಬೆಂಬಲವನ್ನು ಬೆಳೆಸಿಕೊಂಡಲ್ಲಿ - ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಜಯ ಖಂಡಿತ. ಅಲ್ಲದೇ, ಸ್ವದೇಶೀ ಹಾಗೂ ವಿದೇಶಿ ಅನುಭವ ಮತ್ತು ವಿದ್ಯಾಭ್ಯಾಸವನ್ನು ಗಳಿಸಿ ಜನ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿರುವ ಇವರಿಬ್ಬರ ಸೇವೆಯನ್ನು ಕಳೆದುಕೊಂಡ ಬಸವನಗುಡಿ, ಬಿಟಿಎಮ್ ಲೇ ಔಟ್ ಜನರು ಇನ್ನು ಮುಂದಾದರೂ ಎಚ್ಚರಗೊಳ್ಳಲಿ.

Sunday, April 21, 2013

ಇತ್ತೀಚಿನ ವಿದ್ಯಮಾನ: ಸಾವಿನ ಸುತ್ತ

ಈ ಕಳೆದ ಭಾನುವಾರ (ಏಪ್ರಿಲ್ ೧೪) ದಿಂದ ಇಂದಿನ ಭಾನುವಾರದ ವರೆಗೆ ಹಲವಾರು ಸಾವಿನ ಸುದ್ದಿಗಳು...ಒಂದರ ಹಿಂದೆ ಒಂದರಂತೆ ಬಂದು ಅಪ್ಪಳಿಸುತ್ತಲೇ ಇವೆ. ಪಿ.ಬಿ. ಶ್ರೀನಿವಾಸ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ, ಅವರು ಇತ್ತೀಚೆಗೆ ಹಿನ್ನೆಲೆ ಸಂಗೀತದಲ್ಲಿ ಚಟುವಟಿಕೆಯಲ್ಲಿರಲಿಲ್ಲವಾದರೇನಂತೆ ನಮ್ಮ ಮನೆ-ಮನಗಳಲ್ಲಿ ಅವರ ಧ್ವನಿ ಎಂದಿಗೂ ಅಮರವಾಗಿರುತ್ತದೆ. ಇಂದಿಗೂ ಕೂಡ ಅವರ ಅನೇಕ ಹಾಡುಗಳು ನನಗೆ ಅಪ್ಯಾಯಮಾನವಾದವು, ಅವುಗಳ ಪಟ್ಟಿಯನ್ನು ಬರೆಯುತ್ತಾ ಹೋದರೆ ಕೊನೆ ಮೊದಲಿಲ್ಲದಂತಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್, ಚಿ. ಉದಯಶಂಕರ್ ಮತ್ತು ಪಿ.ಬಿ. ಶ್ರೀನಿವಾಸ್ ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತಹ ತ್ರಿಮೂರ್ತಿಗಳು, ಇಂಥ ಪ್ರತಿಭಾನ್ವಿತರು ಇಲ್ಲದ ನಾವು ಬಡವರೇ.

 

"Remembering that I’ll be dead soon is the most important tool I’ve ever encountered to help me make the big choices in life. No one wants to die, even people who want to go to heaven don’t want to die to get there. And yet, death is the destination we all share. "

ಹೀಗೆ ಬರೆದವರು ಹೇಳಿದವರು ಬೇರೆ ಯಾರೂ ಅಲ್ಲ, ಸ್ಟೀವ್ ಜಾಬ್ಸ್, (೨೦೦೫ರ ಸ್ಟ್ಯಾಂಡ್‌ಫರ್ಡ್ ವಿಶ್ವವಿದ್ಯಾನಿಲಯದ ಕಮೆನ್ಸ್‌ಮೆಂಟ್ ಭಾಷಣದಲ್ಲಿ).

ಕಳೆದ ವರ್ಷ ತಾಯಿಯನ್ನು ಕಳೆದುಕೊಂಡ ನಂತರ ನನ್ನನ್ನು ಅರಸಿ ಬರುವ ಪ್ರತಿಯೊಂದು ಸಾವಿನ ಸುದ್ದಿಗೂ ನಾನು ಸ್ಪಂದಿಸುವ ಬಗೆ ಭಿನ್ನವಾಗಿದೆ. ಆಫೀಸಿನಲ್ಲಿ ಮೊದಲೆಲ್ಲ ’ಕಂಡೋಲೆನ್ಸ್’ ಇ-ಮೇಲ್ ಬರೆದು ಮರೆಯುತ್ತಿದ್ದವನಿಗೆ ಈಗ ಸಹೋದ್ಯೋಗಿಗಳ ಬಳಿ ಹೋಗಿ ಅಥವಾ ಕರೆ ಮಾಡಿ ಸಾಂತ್ವನ ಹೇಳುವಷ್ಟು ಬುದ್ಧಿಯನ್ನು ಸಾವಿನ ಸುದ್ದಿಗಳು ಕಲಿಸಿವೆ.

ಪಿ.ಬಿ. ಶ್ರೀನಿವಾಸ್ ನಿಧನದ ಶೋಕದಲ್ಲೇ ಸೋಮವಾರ ಆಫೀಸಿಗೆ ಹೋದರೆ ಅಲ್ಲಿ ನನ್ನ ಸಹೋದ್ಯೋಗಿ ೪೬ ವರ್ಷದ ಬಾಬ್ ಫೆಲಿಕೋನಿಯೋ ಇದ್ದಕ್ಕಿದ್ದ ಹಾಗೇ ಕುಸಿದು ಸತ್ತು ಹೋದ ತಿಳಿದು ಆಘಾತವಾಯಿತು. ಬುಧವಾರ, ನನ್ನ ಸ್ನೇಹಿತ ಮೋಹನ್ ತಾಯಿ ತೀರಿಕೊಂಡ ವಿಷಯ ತಿಳಿಯಿತು. ಶನಿವಾರ ನಮ್ಮೂರಿನ ೫೨ ವರ್ಷದ ಪುರೋಹಿತ ರವಿ ಭಟ್ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿ ದಂಗುಬಡಿದು ಹೋಯಿತು.

ನಮಗೆಲ್ಲ ವಯಸ್ಸಾಗುತ್ತಾ ಬಂದ ಹಾಗೆ ನಾವು ಕೇಳುವ ಹುಟ್ಟು-ಸಾವಿನ ಸುದ್ದಿಗಳಲ್ಲಿ ಸಾವಿನ ಪ್ರಮಾಣವೇ ಹೆಚ್ಚೋ ಅಥವಾ ನಮ್ಮ ಪ್ರಬುದ್ಧತೆಗೆ ಅನುಗುಣವಾಗಿ ನಾವು ಪ್ರತಿಕ್ರಿಯಿಸುವ ರೀತಿ ಬೇರೆಯೋ ಎನ್ನುವುದನ್ನು ಬಲ್ಲವರು ಹೇಳಲಿ!

Thursday, August 09, 2012

ಅಣ್ಣಾ, ಹೊಸ ಪಕ್ಷ ಬೇಡಣ್ಣ

ಇಷ್ಟು ದೊಡ್ಡ ದೇಶದಲ್ಲಿ, ಎಷ್ಟೊಂದು ಜನ ಮುತ್ಸದ್ದಿಗಳು, ವಾದಿ-ಪ್ರತಿವಾದಿಗಳು, ವಿಚಾರವಂತರು, ಚಿಂತನಶೀಲರು, ಮುಖಂಡರು, ಪ್ರತಿಭಾವಂತರು ತುಂಬಿ ತುಳುಕಾಡುತ್ತಿರುವಾಗ ಯಾರೊಬ್ಬರೂ ಕೆ.ಬಿ. ಹಜಾರೆ (aka ಅಣ್ಣಾ ಹಜಾರೆ) ಅವರನ್ನು ಬದಿಗೆ ಕರೆದು, 'ನಿಮ್ಮ ನಿಲುವುಗಳೇನೋ ಸತ್ವವುಳ್ಳವು, ಆದರೆ ಅವುಗಳನ್ನು ಪ್ರತಿಪಾದಿಸುವಲ್ಲಿ ನೀವು ಹಿಡಿದಿರುವ ಇಂಪ್ಲಿಮೆಂಟೇಷನ್ನ್ ಮೆಥಡ್ ಅಷ್ಟೊಂದು ಯೋಗ್ಯವಲ್ಲದ್ದು’ ಎಂದು ಯಾರೂ ಏಕೆ ಹೇಳುತ್ತಿಲ್ಲ?

***


(picture source: thecommonspeaks.com)

ನಮ್ಮ ಅಂತರಂಗವನ್ನು ನಾವು ಅವಲೋಕಿಸಿಕೊಂಡರೆ ನಾವೆಲ್ಲರೂ ಒಂದೇ ಒಕ್ಕೊರಲಿನಲ್ಲಿ 'ಭ್ರಷ್ಟಾಚಾರದ ಮೂಲ ರಾಜಕಾರಣಿಗಳು!’ ಎಂದು ಸುಲಭವಾಗಿ ಹೇಳಿಬಿಡಬಲ್ಲೆವು. ರಿಯಲಿ? ನನ್ನ ಜೊತೆ ನೀವೂ ಯೋಚಿಸಿ, ಈ ಲೇಖನವನ್ನು ಓದಿದ ಬಳಿಕವೂ ನೀವು ನಿಮ್ಮ ಅಭಿಪ್ರಾಯವೇ ನಿಜವೆಂದುಕೊಂಡರೆ ಅದರ ಬಗ್ಗೆ ವಿವರವಾಗಿ ಇಲ್ಲ ಸಂಕ್ಷಿಪ್ತವಾಗಿ ನನಗೊಂದು ಸಾಲು ಬರೆಯಿರಿ.

ಉದಾಹರಣೆ 1: ನಾನು ತಾಲೂಕು ಆಫೀಸಿಗೆ ಹೋಗುತ್ತೇನೆ. ಅಲ್ಲಿ ನನಗೊಂದು ಸಣ್ಣ ಕೆಲಸವಾಗಬೇಕಾಗಿದೆ, ಆದರೆ ಆ ಕೆಲಸವನ್ನು ಮಾಡಿಕೊಡಲು ಸುಮಾರು 4 ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಅಲ್ಲಿನ ಹೆಡ್‌ಕ್ಲರ್ಕ್ ಹೇಳುತ್ತಾರೆ.
ನಾನು ಪರವಾಗಿಲ್ಲ, ನಾಲ್ಕು ಘಂಟೆಗಳನ್ನು ಬಿಟ್ಟು ಬರುತ್ತೇನೆ ಎಂದು ಹೇಳುತ್ತೇನೆ, ಮತ್ತು ಸರಿಯಾಗಿ ನಾಲ್ಕು ಘಂಟೆಗಳ ನಂತರ ಹೋದರೆ, ಅದೇ ಹೆಡ್‌ಕ್ಲರ್ಕ್ ದೊಡ್ಡ ತಗಾದೆ ತೆಗೆಯುತ್ತಾರೆ.
’ನನಗೆ ಸುಮಾರು 24 ಫೈಲುಗಳನ್ನು ನೋಡಿ ಮುಗಿಸಬೇಕು, ಇನ್ನು ಒಂದು ವಾರ ಬಿಟ್ಟು ಬನ್ನಿ!’

ಆಗ ನನ್ನ ಆಪ್ಷನ್ನುಗಳೇನು?
- option 1 - ಸರಿಯಾಗಿ ಇನ್ನೊಂದು ವಾರ ಬಿಟ್ಟು ಬಂದು ಕೆಲಸವಾಗಿದೆಯೋ ಇಲ್ಲವೋ ಎಂದು ನೋಡುವುದು.
- option 2 - ಅಲ್ಲಿನ ಮತ್ತೊಬ್ಬ ಕ್ಲರ್ಕ್ ಸಲಹೆ ಮಾಡಿದ ಪ್ರಕಾರ 800 ರುಪಾಯಿಗಳನ್ನು ಕೊಟ್ಟರೆ ಅದೇ ದಿನ ಅವರು ಕೆಲಸ ಮಾಡಿಕೊಡುತ್ತಾರೆ, ಬೇಕಾದರೆ ಆ ಮತ್ತೊಬ್ಬ ಕ್ಲರ್ಕ್ ನನ್ನ ಪರವಾಗಿ ಶಿಫಾರಸ್ಸ್ ಮಾಡುತ್ತಾರಂತೆ.

ನಿಮಗೆ ಈ ಕೆಲಸ ಬಹಳ ಮುಖ್ಯವಾದುದು, ನಾಲ್ಕು ಘಂಟೆಗಳನ್ನು ಕಾಯಬಹುದು, ಆದರೆ ನಾಲ್ಕು ದಿನ ಕಾಯುವಂತಿಲ್ಲ, ನನ್ನ ಜಾಗೆಯಲ್ಲಿದ್ದರೆ ನೀವೇನು ಮಾಡುತ್ತೀರಿ?

ಉದಾಹರಣೆ 2: ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಪೋಸ್ಟೆಡ್ ಸ್ಪೀಡ್ ಲಿಮಿಟ್ಟಿಗಿಂತ ಘಂಟೆಗೆ 25 ಮೈಲಿ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಿ, ದೊಡ್ಡ ತಪ್ಪನ್ನು ಎಸಗಿದ್ದೀರಿ.
ಟ್ರಾಫಿಕ್ ಪೋಲಿಸ್ ರೇಡಾರ್ ಡಿಟೆಕ್ಟರ್ ಮೂಲಕ ನಿಮ್ಮ ತಪ್ಪನ್ನು ಸಾಬೀತುಗೊಳಿಸುವ ರಿಪೋರ್ಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ (ಡ್ರೈವರ್) ಪಕ್ಕದ ಕಿಟಕಿಯಲ್ಲಿ ನಿಂತಿದ್ದಾನೆ.
ಸ್ಥಳದಲ್ಲೇ ದಂಡ ಕಟ್ಟಿದರೆ 8 ಸಾವಿರ ರೂಪಾಯಿ ಆಗುತ್ತದೆ (ಕೊಡದಿದ್ದರೆ ಗಾಡಿ ಬಿಡೋದಿಲ್ಲ ಮುಂದೆ).
ಅದೇ ಸಮಯುಕ್ಕೆ ಮತ್ತೊಬ್ಬ ಪೋಲಿಸ್ ಕಾರಿನ ಇನ್ನೊಂದು ಕಿಟಕಿಯಲ್ಲಿ ಬಂದು, 8 ಸಾವಿರ ಇಲ್ಲದಿದ್ರೆ 4 ಸಾವಿರ ಕೊಡಿ ಪರವಾಗಿಲ್ಲ, ಆದ್ರೆ ನಿಮಗೆ ಕಂಪ್ಯೂಟರ್ ರಶೀದಿ ಸಿಗೋದಿಲ್ಲ ಅಂತಾನೆ.

ನೀವು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು. ಹೆಚ್ಚು ಹೊತ್ತು ತರ್ಕವಾಗಲಿ, ತಕರಾರನ್ನಾಗಲೀ ಮಾಡಲು ವ್ಯವಧಾನವಿಲ್ಲ.
ನೀವು ಪೋಲೀಸ್‌ಗೆ ೮ ಸಾವಿರ ಕೊಡ್ತೀರಾ? ೪ ಸಾವಿರ ಕೊಡ್ತೀರಾ?

***

ನನ್ನ ಹಾಗೆ ನೀವೂ ಸಹ ನಿಮ್ಮ ಬದುಕಿನಲ್ಲಿ ಈಗಾಗಲೇ ಬಹಳ ರಾಜಕೀಯ ಪಕ್ಷಗಳು ಹುಟ್ಟಿ-ಸತ್ತಿದ್ದನ್ನು ನೋಡಿರಬಹುದು. ಕ್ರಾಂತಿರಂಗ, ತೃಣಮೂಲ, ಹೊಟ್ಟೆ, ಸಮಾಜವಾದಿ, ದಳ, ಹಲವಾರು ಬಗೆಯ "ಕಾಂಗ್ರೆಸ್ಸು"ಗಳು, ಲಲ್ಲೂ ಪಕ್ಷ, ಅವನ ಹೆಂಡತಿ ಪಕ್ಷ, ಜಾತಿ-ಜಾತಿಗಳ ಪಕ್ಷ, ಜಾತಿ ಇಲ್ಲದವರ ಪಕ್ಷ - ಹೀಗೆ ಹಲವು...ಈ ಪಟ್ಟಿ ಬಹಳ ಮುಂದುವರೆಯುತ್ತದೆ. ಎಲ್ಲದರ ಪ್ರಣಾಳಿಕೆಗಳು ಒಂದೇ - ದೇಶೋದ್ದಾರ.  66 ವರ್ಷದ ಸ್ವತಂತ್ರ್ಯೋತ್ತರ ಬಾಳ್ವೆಯಲ್ಲಿ ದೇಶದ ಉದ್ದಗಲಕ್ಕೂ ಅಂದಿನ ಮೂಲ ಸಮಸ್ಯೆಗಳು, ಇಂದಿಗೂ ಇವೆ; ಅವುಗಳಲ್ಲಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರ ಮೇಲೆ ಹುಟ್ಟಿ ಕೆಳಗೆ ಹರಿದು ಬರುವಂತದಲ್ಲ, ಕೆಳಗೆ ಹುಟ್ಟಿ ಸರ್ವತೋಮುಖವಾಗಿ ಬೆಳೆಯುವಂತದು. ತಾಲೂಕು ಆಫೀಸಿನಲ್ಲಿ 'ಅಡ್ಜಸ್ಟ್’ ಮಾಡಿಕೊಳ್ಳುವ ನಮ್ಮ ಮೆಂಟಾಲಿಟಿ, ನಾವು ಕಾನೂನನ್ನು ಮುರಿದಾಗ ನಮ್ಮ ಸಹಾಯಕ್ಕೆ ಬರುವ ಅಡ್ಡದಾರಿತನ ಇವುಗಳು ಲಂಚಕೋರತನದ ಮೂಲ ಕಾರಣ (ರೂಟ್‌ಕಾಸ್) ಗಳಲ್ಲೊಂದು. ಲಂಚ ಕೊಡುವವರು ನಾವು, ತೆಗೆದುಕೊಳ್ಳುವವರು ನಾವು - ಇದನ್ನು ಅರಿವಿನಿಂದ, ಬೆಳೆದ ವ್ಯವಸ್ಥೆಯಿಂದ, ಆಧುನಿಕ ಪರಿಕರಗಳಿಂದ ಹೊಡೆಯಬೇಕೇ ವಿನಾ ಮತ್ತೊಂದು ಪಕ್ಷ ಕಟ್ಟುವುದರಿಂದಲ್ಲ.

ಹಜಾರೆ ನಂಬಿಕೊಂಡ ಗಾಂಧಿ ಮಹಾತ್ಮ ಯಾವುದೇ ರಾಜಕೀಯ ಪದವಿಯನ್ನು ಅಲಂಕರಿಸದಿದ್ದರೂ, ಸಮಾಜದಲ್ಲಿ ಬದಲಾವಣೆಗಳನ್ನು ತರಲಿಲ್ಲವೇನು? ಹೊಸ ಪಕ್ಷ ಕಟ್ಟುವುದರಿಂದ ಏನಾದೀತು? ಮತ್ತೆ ಈ ಪಕ್ಷದ ವಕ್ತಾರರು ಇಂದಿನ ಕ್ಷೋಭೆಗಳ ನಡುವೆ ಮುಕ್ತವಾಗಿ ಸ್ಪರ್ಧಿಸಿ, ಗೆದ್ದು ಮೇಲೆ ಬರುವುದು, ಹಾಗೆ ಬಂದ ನಂತರ ಸುಧಾರಣೆಗಳನ್ನು ಮಾಡುವುದು ಅಷ್ಟು ಸುಲಭದ ಕೆಲಸವೇನು?

ನಾವು, ಲಂಚಾವತರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸುವವರೆಲ್ಲರೂ, ಒಂದು ರೀತಿಯಲ್ಲಿ ಹುಲಿ ಸವಾರಿಯಲ್ಲಿ ತೊಡಗಿದ್ದೇವೆ. ಹುಲಿ ಸವಾರಿಯನ್ನು ನಿಲ್ಲಿಸಿ ಹುಲಿಯಿಂದ ಕೆಳಗಿಳಿದರೆ ಹುಲಿಯೇ ನಮ್ಮನ್ನು ಕಬಳಿಸಿ ಬಿಡುವ ಸಾಧ್ಯತೆ ಇದೆ. ಸಾವಿರಾರು ವರ್ಷಗಳ ಸಮಸ್ಯೆಗೆ ಮತ್ತೊಂದು ಪಕ್ಷ ಕಟ್ಟುವುದು ಉತ್ತರವಲ್ಲ, 'ಅಣ್ಣಾ’ ಎಂದು ಕರೆಯುವವರೆಲ್ಲ, ನಾವು ಇಂದಿನಿಂದ ಭ್ರಷ್ಟರಾಗೋದಿಲ್ಲ ಎಂದು ಪ್ರಮಾಣ ಮಾಡಿ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಬಹಳಷ್ಟು ಸುಧಾರಣೆಗಳಾಗುತ್ತವೆ. ಈಗಾಗಲೇ ಇಳಿ ವಯಸ್ಸಿನ ಹಜಾರೆ ಅವರು ತಮ್ಮ ಮೂಲ ಮಂತ್ರ ಬೀಜವನ್ನು ಬಿತ್ತಿ, ಅದರಿಂದ ಹುಲುಸಾಗಿ ಕೃಷಿ ಬೆಳೆಯುವಂತೆ ಮಾಡಿದರೆ ಅದು ಜನಜನಿತವಾಗುತ್ತದೆ, ಹಾಗೂ ಕಾಲನ ಜೊತೆಗೆ ಬೆಳೆಯುತ್ತದೆ. ಅದನ್ನು ಬಿಟ್ಟು ಪಕ್ಷ ಕಟ್ಟಿದರೆ ಅದು ಕಾಲನಿಗೆ ಆಹಾರವಾಗುತ್ತದೆ.

***

ಭ್ರಷ್ಟಾಚಾರ ಕೇವಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾತ್ರ ಸೀಮಿತವೇ?
ಬದಲಾಗಬೇಕಾದವರು ಯಾರು ಎಂದು ತಿಳಿಯಬೇಕಾದರೆ, ಹೋಗಿ ಕನ್ನಡಿ ಮುಂದೆ ನಿಲ್ಲಿ!