Sunday, January 26, 2014

ದಿನಕ್ಕೊಂದು ಕಥೆ...

ನಮ್ಮನೇಲಿ ಮಕ್ಕಳು ಮಲಗೋ ಹೊತ್ತಿಗೆ ದಿನಕ್ಕೊಂದೆರಡು ಕಥೆಗಳು ಹುಟ್ಟೇ ಹುಟ್ಟುತ್ತವೆ. ಅವುಗಳಿಗೆ ಮೇಲ್ಮೈಯಲ್ಲಿ ಯಾವುದೇ ನಿರ್ದಿಷ್ಟವಾದ structure ಇಲ್ಲದಿದ್ದರೂ ಅವುಗಳಲ್ಲಿ ಸಸ್ಪೆನ್ಸ್ ಅಥವಾ ಹಾಸ್ಯದ ಸನ್ನಿವೇಶ ಇರೋದು ಗ್ಯಾರಂಟಿ. ಪ್ರತಿಯೊಂದು ಕಥೆಯಲ್ಲಿ ಒಂದೊಂದು ಸಮಸ್ಯೆಯನ್ನು (problem sovling) ಬಗೆಹರಿಸುತ್ತೇವೆ, I am sure some king, or prince or princess or some merchant has some problem somewhere! ಅದರಿಂದ leadership skills ಬೆಳೆಯಬಹುದು ಎಂಬುದು ನನ್ನ ನಂಬಿಕೆ. ನನ್ನ ಕಥೆಗಳು ಕುವೆಂಪು ಅವರ ಕಥಾ ಸರಿತ್ಸಾಗರ ಮಂಜಣ್ಣನ ಕಥೆಗಳಂತಲ್ಲ, ಆದರೆ ನನ್ನ ಕಥೆಗಳಲ್ಲಿ ಅಲ್ಲಿ-ಇಲ್ಲಿಯ ಟ್ವಿಸ್ಟುಗಳಿವೆ, ತಲ್ಲಣಗಳಿವೆ, ಪ್ರಯೋಗಗಳಿವೆ. ಯಕ್ಷಗಾನದ ಒಂದೇ ಅಂಕಣದಲ್ಲಿ ಕಲಾವಿದರು - ಅತಳ ಸುತಳ, ಪಾತಾಳ, ಭೂಲೋಕ, ಮತ್ಸ್ಯಲೋಕ, ಸರ್ಪಲೋಕ, ದೈವಲೋಕಗಳನ್ನೆಲ್ಲ - ಕ್ಷಣಾರ್ಧಲ್ಲಿ ಹೋಗಿ ಹಿಂತಿರುಗಿ ಬರುವಂತ ಧಕ್ಷತೆ (efficiency) ಇದೆ. ಎಲ್ಲದಕ್ಕೂ ಮುಖ್ಯವಾಗಿ ಪ್ರತಿದಿನ ಒಂದಿಷ್ಟು ಕನ್ನಡವನ್ನು ಕಲಿಸಿಯೇ ತೀರುತ್ತೇನೆಂಬ ಛಲವಿದೆ. ಜೊತೆಗೆ ವಯೋಮಾನಕ್ಕೆ ತಕ್ಕ ಫಿಲ್ಟರ್ ಇದೆ.

***

ನನ್ನ ಕೆಲವು ಕಥೆಗಳು ಮಕ್ಕಳ ಪ್ರಶ್ನೆಯನ್ನಾಧರಿಸಿ ಒಮ್ಮೊಮ್ಮೆ ದಿಢೀರ್ turnಗಳನ್ನು ತೆಗೆದುಕೊಳ್ಳುವುದುಂಟು, ನಿನ್ನೆಯ ಕಥೆಯಲ್ಲಿ ಹಾಗೇ ಆಯಿತು:

ಒಬ್ಬ ರಾಜನಿದ್ದನಂತೆ

ಅವನಿಗೆ ಮೂವರು ಗಂಡು ಮಕ್ಕಳು

ಅವರಲ್ಲಿ ಹಿರಿಯವನು ಕುರುಡ, ಮಧ್ಯದವನು ಕಿವುಡ (ಕೆಪ್ಪ), ಕಿರಿಯವನು ಮೂಕ

They were able to understand the concept of a blind boy (thanks to Dhritaraastra ?), but not deaf and mute, there were a lot of questions around why were they not able to talk or hear. it is interesting to note, these kids could not imagine why some kids are unable to speak or hear.

ರಾಜನಿಗೆ ವಯಸ್ಸಾಗುತ್ತಾ ಬಂದ ಹಾಗೆ ತನ್ನ ಉತ್ತರಾಧಿಕಾರಿ ಯಾರು ಆಗಬೇಕು, ಆಗುತ್ತಾರೆ ಎನ್ನುವುದರ ಕುರಿತು ಚಿಂತೆಯಾಗತೊಡಗಿತು.


So, we have a problem here, what do you think the Raaja should do, who should become the next king and why?

My kids took turns and tried every one of the three sons - there were a lot of pros and cons that came out of it...believe me there were quite a lot.

Finally, we didn't get a democratic conclusion between 2 kids and 3 potential alternatives (but I gave them more choices later)...the suspense started to build now -- more pressure on me, what option do I recommend, who do you think will be the next king in line and best yet, explain why?
ಕುರುಡ - ನೋ.

ಕಿವುಡ - ನೋ.

ಮೂಕ...ನೋ.


then who else? the king himself, he's old, no he can't.
ರಾಜ ಗುರೂಜಿಯನ್ನು ಕರೆದನಂತೆ..."ಗುರೂಜಿ, ಏನು ಮಾಡೋದು, ನಿಮ್ಮ ಆಜ್ಞೆ ಅನುಸಾರ ನಡೀತೀನಿ, ಯಾರನ್ನು ರಾಜನನ್ನಾಗಿ ಮಾಡಲಿ?"


Now, guruji (saint) is under stress...imagine the pressure, it is almost sleeping time...
ಗುರುಜೀ ಹೇಳಿದ್ರು, "ರಾಜ, ನಿನ್ನ ಮಕ್ಕಳಲ್ಲಿ ಯಾರೂ ಮುಂದಿನ ರಾಜನಾಗೋದಕ್ಕೆ ಸಾಧ್ಯವಿಲ್ಲ...ಯಾಕೇ ಅಂದ್ರೆ..." list the drawbacks of every one of his sons becoming the next king...

ರಾಜ, "ಹಾಗಿದ್ರೆ, ಮುಂದಿನ ರಾಜ ಯಾರು?"


Now there is pin drop silence
Guruji says, "Adopt an able kid from my Ashram, and he will be next king, however, your sons will get respective portfolios..." like ಸಬ್ ರಾಜಾಸ್


there were quite a lot of interruptions here...questions, concerns and what not.

Is the Queen okay with this?

Story takes a sub-routine, where Rama and Bharata and their mommies had issues with who can be the next king, also, Inchara pointed out that Rama himself studied in Guruji's Ashram, not in the palace, but Ninad is still not conviced with Guruji's answer.
ಗುರೂಜಿ, ಒಬ್ಬ ಒಳ್ಳೆಯ ಶಿಷ್ಯನನ್ನು ಅಪಾಯಿಂಟ್ ಮಾಡ್ತಾರೆ.

ಜೊತೆಗೆ ರಾಜನ ಮೂವರು ಮಕ್ಕಳನ್ನು ಜೂನಿಯರ್ ಕಿಂಗ್ ಆಗಿ ಕೂಡ ಮಾಡ್ತಾರೆ...

ಇಲ್ಲೇ ನಮ್ಮ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು...


So, for 3 potential sub-kings we debate which portfolio we can give them in the kingdom....for quite some time....

Finally
ಕುರುಡನಿಗೆ - News media and mail service incharge

ಕಿವುಡನಿಗೆ - Store room incharge

ಮೂಕನಿಗೆ - Palace decoration and cleanliness incharge

ಇವುಗಳಿಗೆಲ್ಲ - ಯಾಕೇ ಅಂದ್ರೆ ಅಂಥ ಸೇರಿಸಿ, ತುಂಬಾ ಕಾರಣಗಳನ್ನು ಕೊಡಬೇಕಾಗುತ್ತೆ...

ರಾಜ ಹ್ಯಾಪ್ಪೀ, ಗುರೂಜಿ ಹ್ಯಾಪ್ಪೀ, ಸಬ್ ಕಿಂಗ್ಸ್ ಹ್ಯಾಪ್ಪೀ...


The End!

ಒಂದ್ಸರ್ತಿ ಕಥೆ ಮುಗಿದ ಮೇಲೆ, ನಾವು 2 minutes silence mode ಗೆ ಹೋಗ್ತೀವಿ. ಅಷ್ಟರಲ್ಲಿ ಒಬ್ಬರಲ್ಲ ಒಬ್ರು ನಿದ್ರಾ ದೇವಿಗೆ ಶರಣು ಹೋಗಿರ್ತಾರೆ...this formula works for me - try it, rinse & repeat!
***
If it works or not, drop a line here...

Saturday, May 11, 2013

ಅನಿವಾಸಿಗಳಿಗೆ ಸಂದ ಜಯ

ನಾನು ಓದಿದ ಬ್ಲಾಗು / ನ್ಯೂಸ್ ಪೋರ್ಟಲುಗಳೆಲ್ಲ ದಳ, ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಥೆಗಳನ್ನು ಬರೆಯುತ್ತಿರುವಾಗ, ನಮಗೆ ಬೇಕಾದ ಒಂದಿಬ್ಬರು ಅನಿವಾಸಿ ಕನ್ನಡಿಗ ಸ್ಪರ್ಧಿಗಳನ್ನು ಕುರಿತು ಬರೆಯದೇ ಹೋದರೆ
ವಾರ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಅಸಂಪೂರ್ಣವಾಗುತ್ತವೆ.  ವಿಶ್ವದಾದ್ಯಂತ ಕನ್ನಡಿಗರು ನಿರೀಕ್ಷಿಸಿದ್ದ ಈ ಚುನಾವಣೆಯ ಫಲಿತಾಂಶದಲ್ಲಿ ವೈಯಕ್ತಿಕವಾಗಿ ನನಗೆ ಪರಿಚಯಯಸ್ತರಾದ ರವಿ ರೆಡ್ಡಿ ಮತ್ತು ಶಾಂತಲಾ ದಾಮ್ಲೆ ಇವರಿಬ್ಬರ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ವಿಸ್ಮಯವಾಯಿತು. ಮುಖ್ಯವಾಗಿ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಕೆಲಸವನ್ನೇ ಇವರಿಬ್ಬರೂ ಮಾಡಿದ್ದಾರೆ. ಸೋಲು ಗೆಲುವಿನ ಸೋಪಾನ, ನನ್ನ ದೃಷ್ಟಿಯಲ್ಲಿ ಇವರಿಬ್ಬರೂ ಸೋತು ಗೆದ್ದವರು.

***

ನಾವು ನಂಬಿಕೊಂಡ ಪ್ರಕಾರ ಬೆಂಕಿಯನ್ನು ನಂದಿಸೋದಕ್ಕೆ ನೀರನ್ನು ಸಹಜವಾಗಿ ಬಳಸುವುದಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸಲು ಬೆಂಕಿಯನ್ನೇ ಬಳಸಬೇಕಾಗುತ್ತದೆ. ಕಾಡ್ಗಿಚ್ಚಿನ ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸೋದಕ್ಕೆ ಹಾಗೂ ಬೆಂಕಿ ಹರಡದಿರದಂತೆ ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ನಿಸರ್ಗದತ್ತವಾದ ನೀರನ್ನು ಹೆಲಿಕಾಪ್ಟರುಗಳಲ್ಲಿ ಸಿಂಪಡಿಸುವುದನ್ನು ನಾವು ನೋಡಿದ್ದೇವೆ ಹಾಗೇ ಕೆಲವು ಕಡೆ ರಸಾಯನಿಕಗಳನ್ನು ಬಳಸುವುದನ್ನೂ ಸಹ. ಭಾರತದಾದ್ಯಂತ ಹಬ್ಬಿಕೊಂಡಿರುವ ಚುನಾವಣಾ ಸಂಬಂಧಿ ಕೊಡು-ಕೊಳ್ಳುವ ವ್ಯವಸ್ಥೆ ನಮಗೆಲ್ಲ ಪಾರಂಪರಿಕವಾದುದು. ಸ್ವಾತಂತ್ರ್ಯ ಸಿಕ್ಕ ಮೊದಲ ಕೆಲವು ಚುನಾವಣೆಗಳು ಹೇಗಿದ್ದವೋ ಆದರೆ ನಾನು ಗಮನಿಸಿದಂತೆ ಕಳೆದ ಮೂರು ನಾಲ್ಕು ದಶಕಗಳ ಚುನಾವಣೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕೋಟಿ ರೂಪಾಯಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿ ಹೋಗುವುದನ್ನು ನೋಡಿದ್ದೇವೆ. ಹಣ ಹಂಚುವುದರ ಜೊತೆಗೆ ಸರಾಯಿ, ಸೀರೆ, ಸಣ್ಣ ಪುಟ್ಟ ಆಭರಣಗಳು ಮೊದಲಾದವುಗಳ ಬಗ್ಗೆಯೂ ನಮಗೆ ಗೊತ್ತು.  ಚುನಾವಣಾ ಸಮಯದಲ್ಲಿ ಹೊರಬರುವ ಹಾಗೂ ಹಂಚಲ್ಪಡುವ ಹಣ ನನ್ನ ದೃಷ್ಟಿಯಲ್ಲಿ ಕಾಡ್ಗಿಚ್ಚಿನ ಬೆಂಕಿಯಿದ್ದಂತೆ, ಅದನ್ನು ಎದುರಿಸುವುದು ಹಾಗೂ ಸಂಬಾಳಿಸುವುದು ಬಹಳ ಕಷ್ಟದ ಕೆಲಸ.

ಮೇಲ್ನೋಟಕ್ಕೆ ಚುನಾವಣ ತಂತ್ರ ಬಹಳ ಸುಲಭವಾದಂತೆ ಕಾಣುತ್ತದೆ. ಆದರೆ, ಅದರ ಒಳ ಹೂಟಿ ಕೆಲವರಿಗೆ ಮಾತ್ರ ಗೊತ್ತು. ಇಲ್ಲಿನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ಗೆ ವಿಸಿಟ್ ಮಾಡಲು ಬಂದ ಡಾ. ಸುದರ್ಶನ್ ಒಮ್ಮೆ ಹೇಳಿದ್ದರು. ಸುದರ್ಶನ್ ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಲೋಕಾಯುಕ್ತರ ಬಲೆಗೆ ಸಿಕ್ಕ ಒಬ್ಬ ಎಮ್.ಎಲ್.ಎ. ಅನ್ನು ಅವರು ಸಂದರ್ಶನ ಮಾಡಿದ್ದರಂತೆ. ಆ ಶಾಸಕರ ಪ್ರಕಾರ, ಪ್ರತಿಯೊಬ್ಬ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿಗಳನ್ನು ಸುರಿದು ಗೆಲ್ಲುತ್ತಾನೆ, ಗೆದ್ದನಂತರ ಸಾರ್ವಜನಿಕ ಕೆಲಸದ ನೆಪದಲ್ಲಿ ಅದರ ಹತ್ತು ಅಥವಾ ನೂರರಷ್ಟು ಗಳಿಸುತ್ತಾನೆ. ಅದರಲ್ಲೇನು ತಪ್ಪು? ಎಂಬುದು ಆ ಶಾಸಕರ ಅಂಬೋಣ.

ನಮ್ಮ ರಾಜಕಾರಣಿಗಳು ಗೆದ್ದು-ಗಳಿಸಿ-ಬದುಕುವ ಬಗೆ ನಾನಿಲ್ಲಿ ಬರೆದಂತೇನೂ ಸುಲಭವಲ್ಲ. ಅವರಲ್ಲೂ ಪುಡಾರಿಯಿಂದ ಹಿಡಿದು ಮಂತ್ರಿಗಿರಿಯವರೆಗೆ ಬೆಳವಣಿಗೆಯಿದೆ, ಜಾತಿ ಆಧಾರಿತ ವ್ಯವಸ್ಥೆಯಲ್ಲಿ ಯಾವುದೇ ನಿರಂತರ ಗಳಿಕೆ, ಮೌಲ್ಯವಿಲ್ಲದೆ ದಶಕಗಳ ಕಾಲ ಕಾಯುವುದಿದೆ. ಪಕ್ಷಗಳ ಹೆಸರಿನಲ್ಲಿ ಅವರಿವರ ಬೂಟು ನೆಕ್ಕುವುದಿದೆ. ಪುಡಾರಿ-ಪುಂಡಾಟಿಕೆಯಿಂದ ಆಗಾಗ್ಗೆ ಪೋಲೀಸರ ಬೂಟಿನ ಒದೆ ತಿನ್ನುವುದಿದೆ. ಪ್ರಬಲ ರಾಜಕಾರಣ, ಪಕ್ಷದ ಪ್ರಣಾಳಿಕೆಗಳು, ಸ್ಥಳೀಯ ರಾಜಕಾರಣಿಗಳ ಒಡನಾಟ, ಜಾತಿ-ಬಾಂಧವರ ಬೆಂಬಲ, ತಮ್ಮ-ತಮ್ಮ ಬಡಾವಣೆ-ಕಾನ್ಸ್ಟಿಟ್ಯುಯೆನ್ಸಿಯ ನಿರಂತರ ಸಮಸ್ಯೆಗಳು - ಇವೆಲ್ಲ ಸುಮಾರು ದಶಕಗಳ ಕಾಲ ಸತಾಯಿಸುತ್ತಲೇ ಇರುತ್ತವೆ.

ರಾಜಕಾರಣಿಗಳು ಯಾವುದೇ ಉದ್ಯಮವನ್ನು ಬೆಳೆಸದೇ ಇರುವ ಉದ್ಯಮಿಗಳು, ಪೇ ಚೆಕ್ಕು ಬಾರದಿರುವ ಎಂಪ್ಲಾಯಿಗಳು, ಅವರವರ ಪಕ್ಷದ ನಾಗರೀಕರು. ರಾಜಕಾರಣಿ ಎನ್ನುವ ಪದಕ್ಕೆ ಮುಂದಾಳು, ದುರೀಣ, ನಾಯಕ, ಪುಡಾರಿ ಎಂಬ ಪರ್ಯಾಯ ಪದಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಕಮ್ಯೂನಿಕೇಷನ್ನ್, ಲೀಡರ್‌ಶಿಪ್ ಹಾಗೂ ನಿಲುವು ಇವರ ಬಂಡವಾಳ. ಇವರು ಮೌಲ್ಯಾಧಾರಿತ ರಾಜಕಾರಣಿಗಳು, ಹಾಗೂ ಇವರಿಗೆಲ್ಲ ಪ್ರಣಾಳಿಕೆಗಳಿವೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಆದರೆ ಕಾರ್ಯರೂಪಕ್ಕೆ ಬಂದು ಜನರ ಮನದಲ್ಲಿ ನಿಲ್ಲುವುದು ಕೆಲವು ಮಾತ್ರ.

***


ಶಾಂತಾಲಾ ಮತ್ತು ರವಿ ಇವರಿಬ್ಬರೂ ಸಹ, ಅನೇಕ ವರ್ಷಗಳಿಂದ ಭಾರತದ ರಾಜಕಾರಣವನ್ನು ಬಲ್ಲವರಾಗಿ ತಮ್ಮ ಪೋಸ್ಟ್-ಅಮೇರಿಕನ್ ಬದುಕಿನಲ್ಲಿ ಪ್ರಂಟ್‌ಲೈನ್‌ನಲ್ಲಿ ನಿಂತು ರಾಜಕೀಯವನ್ನು ಗಮನಿಸಿದವರು. ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ವಾರ ಮುಗಿದ ಚುನಾವಣೆಯಲ್ಲಿ ಇವರಿಬ್ಬರೂ ಸಹ ನಾಲ್ಕನೇ ಸ್ಥಾನದಲ್ಲಿ ಬಂದಿರುವುದು ಬಹಳ ದೊಡ್ಡ ವಿಷಯ. ಮುಖ್ಯವಾಗಿ ಒಟ್ಟು ಚಲಾವಣೆಯಾದ ಗುಣಮಟ್ಟದ ಮತಗಳಲ್ಲಿ ಶಾಂತಲ 8.75% ಹಾಗೂ ರವಿ 5.97% ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಇವರಿಬ್ಬರು ಭಾಗವಹಿಸಿದ ಬಸವನಗುಡಿ ಹಾಗೂ ಬಿಟಿಎಮ್ ಲೇ ಔಟುಗಳಲ್ಲಿ ಕ್ರಮವಾಗಿ ಲೋಕಸತ್ತಾ ಪಕ್ಷವನ್ನು ಬುಡದಿಂದ ಎತ್ತಿ ನಾಲ್ಕನೇ ಸ್ಥಾನಕ್ಕೆ ತಂದಿರುವುದು ಗಮನಾರ್ಹವಾದುದು.

ಕಾಂಗ್ರೆಸ್, ಜನತಾದಳ, ಬಿಜೆಪಿಯವರು ಮಾಡಿದ್ದು ಮಾಡುತ್ತಿರುವುದು ಕ್ಲಾಸ್ಸಿಕ್ ರಾಜಕಾರಣ. ನಮಗೆ ಗೊತ್ತಿರುವ ಹಾಗೆ ಶಾಂತಲಾ ಹಾಗೂ ರವಿ ಮಾಡಿದ್ದು ಮೌಲ್ಯಾಧಾರಿತ ರಾಜಕಾರಣ. ತಾವು ಓಟು ಕೇಳುವ ಪ್ರಕ್ರಿಯೆಗಳಲ್ಲಿ ಹಣ-ಹೆಂಡವನ್ನು ಹಂಚದೆ ಬದಲಿಗೆ ಜನರಿಂದಲೇ ಹಣವನ್ನು ಸಂಗ್ರಹಿಸಿ ಜನರ ಹಕ್ಕು ಬಾಧ್ಯತೆಗಳನ್ನು ಗೊತ್ತು ಪಡಿಸಿ ತಮ್ಮ ಸುತ್ತಲಿನ ದಿಗ್ಗಜ-ಧುರೀಣರ ನಡುವೆ ನೊಂದು ಬೆಂದು ಅವರಿಂದಲೇ ಏಳರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದಿದೆಯಲ್ಲಾ, ಅದು ನಿಜಕ್ಕೂ ದೊಡ್ಡ ಕೆಲಸವೇ.

ಶಾಂತಾಲಾ ಮತ್ತು ರವಿ ತಮ್ಮ ಸುತ್ತಲಿನ ಬೆಂಕಿಯನ್ನು ಆರಿಸಲು ಆಯ್ದುಕೊಂಡ ಮಾಧ್ಯಮ ನೀರು. ತಮ್ಮ ಸುತ್ತಲೂ ಕಾಡ್ಗಿಚ್ಚಿನೋಪಾದಿಯಲ್ಲಿ ಪ್ರಂಚಡ ಕಾಂಗ್ರೆಸ್, ದಳ ಹಾಗೂ ಬಿಜೆಪಿ, ಕೆಜಿಪಿಯವರು ತಮ್ಮ ಎಂದಿನ ತಂತ್ರವನ್ನು ಬಳಸಿ ಕಂಡ ಕಂಡಲ್ಲಿ "ಬೆಂಕಿ" ಇಟ್ಟು ಚಿಂದಿ ಮಾಡುತ್ತಿರುವಾಗ ಇವರಿಬ್ಬರು ತಾವು ಅಲ್ಲಿಯೇ ಗಳಿಸಿ ಉಳಿಸಿದ ನೀರಿನ ಟ್ಯಾಂಕುಗಳಲ್ಲಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದವರು.  ಕೆಲವೇ  ವರ್ಷಗಳ ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡ  ಇವರು, ಇಂದು ಮುಖ್ಯವಾಹಿನಿ ರಾಜಕೀಯದಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಯಾವುದೇ ಕುತಂತ್ರಗಳಿಲ್ಲದೆ, ಆಮಿಷಗಳನ್ನೊಡ್ಡದೇ, ಸ್ವಚ್ಛ ರಾಜಕಾರಣದ ಹೆಸರಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರು ಕಂಡ ಸೋಲಲ್ಲ, ಬದಲಿಗೆ ಇದು ಇವರಿಬ್ಬರ ಗೆಲುವೆಂಬುದೇ ನನ್ನ ಅಭಿಪ್ರಾಯ.

ಇವರಿಬ್ಬರಿಗೆ ಬೇಕಾಗಿರುವುದು ಸ್ವಲ್ಪ ಕಾಲ ಮಾತ್ರ. ಈ ಎರಡೂ ಕಾನ್ಸ್ಟಿಟ್ಯುಯೆನ್ಸಿಗಳಲ್ಲಿ ಇನ್ನು ಐದು ವರ್ಷಗಳ ಕಾಲ ಜನಾಂದೋಳನ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿದಲ್ಲಿ, ಸ್ಥಳೀಯ ಕರೆಗಳಿಗೆ ಓಗೊಟ್ಟು ಬೆಂಬಲ ನೀಡಿದಲ್ಲಿ, ತಮ್ಮ ಸುತ್ತಲಿನ ಜನರ ನಿರಂತರ ಸಂಪರ್ಕದಲ್ಲಿದ್ದು ಸದರಿ ಬೆಂಬಲವನ್ನು ಬೆಳೆಸಿಕೊಂಡಲ್ಲಿ - ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಜಯ ಖಂಡಿತ. ಅಲ್ಲದೇ, ಸ್ವದೇಶೀ ಹಾಗೂ ವಿದೇಶಿ ಅನುಭವ ಮತ್ತು ವಿದ್ಯಾಭ್ಯಾಸವನ್ನು ಗಳಿಸಿ ಜನ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿರುವ ಇವರಿಬ್ಬರ ಸೇವೆಯನ್ನು ಕಳೆದುಕೊಂಡ ಬಸವನಗುಡಿ, ಬಿಟಿಎಮ್ ಲೇ ಔಟ್ ಜನರು ಇನ್ನು ಮುಂದಾದರೂ ಎಚ್ಚರಗೊಳ್ಳಲಿ.

Sunday, April 21, 2013

ಇತ್ತೀಚಿನ ವಿದ್ಯಮಾನ: ಸಾವಿನ ಸುತ್ತ

ಈ ಕಳೆದ ಭಾನುವಾರ (ಏಪ್ರಿಲ್ ೧೪) ದಿಂದ ಇಂದಿನ ಭಾನುವಾರದ ವರೆಗೆ ಹಲವಾರು ಸಾವಿನ ಸುದ್ದಿಗಳು...ಒಂದರ ಹಿಂದೆ ಒಂದರಂತೆ ಬಂದು ಅಪ್ಪಳಿಸುತ್ತಲೇ ಇವೆ. ಪಿ.ಬಿ. ಶ್ರೀನಿವಾಸ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ, ಅವರು ಇತ್ತೀಚೆಗೆ ಹಿನ್ನೆಲೆ ಸಂಗೀತದಲ್ಲಿ ಚಟುವಟಿಕೆಯಲ್ಲಿರಲಿಲ್ಲವಾದರೇನಂತೆ ನಮ್ಮ ಮನೆ-ಮನಗಳಲ್ಲಿ ಅವರ ಧ್ವನಿ ಎಂದಿಗೂ ಅಮರವಾಗಿರುತ್ತದೆ. ಇಂದಿಗೂ ಕೂಡ ಅವರ ಅನೇಕ ಹಾಡುಗಳು ನನಗೆ ಅಪ್ಯಾಯಮಾನವಾದವು, ಅವುಗಳ ಪಟ್ಟಿಯನ್ನು ಬರೆಯುತ್ತಾ ಹೋದರೆ ಕೊನೆ ಮೊದಲಿಲ್ಲದಂತಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್, ಚಿ. ಉದಯಶಂಕರ್ ಮತ್ತು ಪಿ.ಬಿ. ಶ್ರೀನಿವಾಸ್ ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತಹ ತ್ರಿಮೂರ್ತಿಗಳು, ಇಂಥ ಪ್ರತಿಭಾನ್ವಿತರು ಇಲ್ಲದ ನಾವು ಬಡವರೇ.

 

"Remembering that I’ll be dead soon is the most important tool I’ve ever encountered to help me make the big choices in life. No one wants to die, even people who want to go to heaven don’t want to die to get there. And yet, death is the destination we all share. "

ಹೀಗೆ ಬರೆದವರು ಹೇಳಿದವರು ಬೇರೆ ಯಾರೂ ಅಲ್ಲ, ಸ್ಟೀವ್ ಜಾಬ್ಸ್, (೨೦೦೫ರ ಸ್ಟ್ಯಾಂಡ್‌ಫರ್ಡ್ ವಿಶ್ವವಿದ್ಯಾನಿಲಯದ ಕಮೆನ್ಸ್‌ಮೆಂಟ್ ಭಾಷಣದಲ್ಲಿ).

ಕಳೆದ ವರ್ಷ ತಾಯಿಯನ್ನು ಕಳೆದುಕೊಂಡ ನಂತರ ನನ್ನನ್ನು ಅರಸಿ ಬರುವ ಪ್ರತಿಯೊಂದು ಸಾವಿನ ಸುದ್ದಿಗೂ ನಾನು ಸ್ಪಂದಿಸುವ ಬಗೆ ಭಿನ್ನವಾಗಿದೆ. ಆಫೀಸಿನಲ್ಲಿ ಮೊದಲೆಲ್ಲ ’ಕಂಡೋಲೆನ್ಸ್’ ಇ-ಮೇಲ್ ಬರೆದು ಮರೆಯುತ್ತಿದ್ದವನಿಗೆ ಈಗ ಸಹೋದ್ಯೋಗಿಗಳ ಬಳಿ ಹೋಗಿ ಅಥವಾ ಕರೆ ಮಾಡಿ ಸಾಂತ್ವನ ಹೇಳುವಷ್ಟು ಬುದ್ಧಿಯನ್ನು ಸಾವಿನ ಸುದ್ದಿಗಳು ಕಲಿಸಿವೆ.

ಪಿ.ಬಿ. ಶ್ರೀನಿವಾಸ್ ನಿಧನದ ಶೋಕದಲ್ಲೇ ಸೋಮವಾರ ಆಫೀಸಿಗೆ ಹೋದರೆ ಅಲ್ಲಿ ನನ್ನ ಸಹೋದ್ಯೋಗಿ ೪೬ ವರ್ಷದ ಬಾಬ್ ಫೆಲಿಕೋನಿಯೋ ಇದ್ದಕ್ಕಿದ್ದ ಹಾಗೇ ಕುಸಿದು ಸತ್ತು ಹೋದ ತಿಳಿದು ಆಘಾತವಾಯಿತು. ಬುಧವಾರ, ನನ್ನ ಸ್ನೇಹಿತ ಮೋಹನ್ ತಾಯಿ ತೀರಿಕೊಂಡ ವಿಷಯ ತಿಳಿಯಿತು. ಶನಿವಾರ ನಮ್ಮೂರಿನ ೫೨ ವರ್ಷದ ಪುರೋಹಿತ ರವಿ ಭಟ್ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿ ದಂಗುಬಡಿದು ಹೋಯಿತು.

ನಮಗೆಲ್ಲ ವಯಸ್ಸಾಗುತ್ತಾ ಬಂದ ಹಾಗೆ ನಾವು ಕೇಳುವ ಹುಟ್ಟು-ಸಾವಿನ ಸುದ್ದಿಗಳಲ್ಲಿ ಸಾವಿನ ಪ್ರಮಾಣವೇ ಹೆಚ್ಚೋ ಅಥವಾ ನಮ್ಮ ಪ್ರಬುದ್ಧತೆಗೆ ಅನುಗುಣವಾಗಿ ನಾವು ಪ್ರತಿಕ್ರಿಯಿಸುವ ರೀತಿ ಬೇರೆಯೋ ಎನ್ನುವುದನ್ನು ಬಲ್ಲವರು ಹೇಳಲಿ!

Thursday, August 09, 2012

ಅಣ್ಣಾ, ಹೊಸ ಪಕ್ಷ ಬೇಡಣ್ಣ

ಇಷ್ಟು ದೊಡ್ಡ ದೇಶದಲ್ಲಿ, ಎಷ್ಟೊಂದು ಜನ ಮುತ್ಸದ್ದಿಗಳು, ವಾದಿ-ಪ್ರತಿವಾದಿಗಳು, ವಿಚಾರವಂತರು, ಚಿಂತನಶೀಲರು, ಮುಖಂಡರು, ಪ್ರತಿಭಾವಂತರು ತುಂಬಿ ತುಳುಕಾಡುತ್ತಿರುವಾಗ ಯಾರೊಬ್ಬರೂ ಕೆ.ಬಿ. ಹಜಾರೆ (aka ಅಣ್ಣಾ ಹಜಾರೆ) ಅವರನ್ನು ಬದಿಗೆ ಕರೆದು, 'ನಿಮ್ಮ ನಿಲುವುಗಳೇನೋ ಸತ್ವವುಳ್ಳವು, ಆದರೆ ಅವುಗಳನ್ನು ಪ್ರತಿಪಾದಿಸುವಲ್ಲಿ ನೀವು ಹಿಡಿದಿರುವ ಇಂಪ್ಲಿಮೆಂಟೇಷನ್ನ್ ಮೆಥಡ್ ಅಷ್ಟೊಂದು ಯೋಗ್ಯವಲ್ಲದ್ದು’ ಎಂದು ಯಾರೂ ಏಕೆ ಹೇಳುತ್ತಿಲ್ಲ?

***


(picture source: thecommonspeaks.com)

ನಮ್ಮ ಅಂತರಂಗವನ್ನು ನಾವು ಅವಲೋಕಿಸಿಕೊಂಡರೆ ನಾವೆಲ್ಲರೂ ಒಂದೇ ಒಕ್ಕೊರಲಿನಲ್ಲಿ 'ಭ್ರಷ್ಟಾಚಾರದ ಮೂಲ ರಾಜಕಾರಣಿಗಳು!’ ಎಂದು ಸುಲಭವಾಗಿ ಹೇಳಿಬಿಡಬಲ್ಲೆವು. ರಿಯಲಿ? ನನ್ನ ಜೊತೆ ನೀವೂ ಯೋಚಿಸಿ, ಈ ಲೇಖನವನ್ನು ಓದಿದ ಬಳಿಕವೂ ನೀವು ನಿಮ್ಮ ಅಭಿಪ್ರಾಯವೇ ನಿಜವೆಂದುಕೊಂಡರೆ ಅದರ ಬಗ್ಗೆ ವಿವರವಾಗಿ ಇಲ್ಲ ಸಂಕ್ಷಿಪ್ತವಾಗಿ ನನಗೊಂದು ಸಾಲು ಬರೆಯಿರಿ.

ಉದಾಹರಣೆ 1: ನಾನು ತಾಲೂಕು ಆಫೀಸಿಗೆ ಹೋಗುತ್ತೇನೆ. ಅಲ್ಲಿ ನನಗೊಂದು ಸಣ್ಣ ಕೆಲಸವಾಗಬೇಕಾಗಿದೆ, ಆದರೆ ಆ ಕೆಲಸವನ್ನು ಮಾಡಿಕೊಡಲು ಸುಮಾರು 4 ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಅಲ್ಲಿನ ಹೆಡ್‌ಕ್ಲರ್ಕ್ ಹೇಳುತ್ತಾರೆ.
ನಾನು ಪರವಾಗಿಲ್ಲ, ನಾಲ್ಕು ಘಂಟೆಗಳನ್ನು ಬಿಟ್ಟು ಬರುತ್ತೇನೆ ಎಂದು ಹೇಳುತ್ತೇನೆ, ಮತ್ತು ಸರಿಯಾಗಿ ನಾಲ್ಕು ಘಂಟೆಗಳ ನಂತರ ಹೋದರೆ, ಅದೇ ಹೆಡ್‌ಕ್ಲರ್ಕ್ ದೊಡ್ಡ ತಗಾದೆ ತೆಗೆಯುತ್ತಾರೆ.
’ನನಗೆ ಸುಮಾರು 24 ಫೈಲುಗಳನ್ನು ನೋಡಿ ಮುಗಿಸಬೇಕು, ಇನ್ನು ಒಂದು ವಾರ ಬಿಟ್ಟು ಬನ್ನಿ!’

ಆಗ ನನ್ನ ಆಪ್ಷನ್ನುಗಳೇನು?
- option 1 - ಸರಿಯಾಗಿ ಇನ್ನೊಂದು ವಾರ ಬಿಟ್ಟು ಬಂದು ಕೆಲಸವಾಗಿದೆಯೋ ಇಲ್ಲವೋ ಎಂದು ನೋಡುವುದು.
- option 2 - ಅಲ್ಲಿನ ಮತ್ತೊಬ್ಬ ಕ್ಲರ್ಕ್ ಸಲಹೆ ಮಾಡಿದ ಪ್ರಕಾರ 800 ರುಪಾಯಿಗಳನ್ನು ಕೊಟ್ಟರೆ ಅದೇ ದಿನ ಅವರು ಕೆಲಸ ಮಾಡಿಕೊಡುತ್ತಾರೆ, ಬೇಕಾದರೆ ಆ ಮತ್ತೊಬ್ಬ ಕ್ಲರ್ಕ್ ನನ್ನ ಪರವಾಗಿ ಶಿಫಾರಸ್ಸ್ ಮಾಡುತ್ತಾರಂತೆ.

ನಿಮಗೆ ಈ ಕೆಲಸ ಬಹಳ ಮುಖ್ಯವಾದುದು, ನಾಲ್ಕು ಘಂಟೆಗಳನ್ನು ಕಾಯಬಹುದು, ಆದರೆ ನಾಲ್ಕು ದಿನ ಕಾಯುವಂತಿಲ್ಲ, ನನ್ನ ಜಾಗೆಯಲ್ಲಿದ್ದರೆ ನೀವೇನು ಮಾಡುತ್ತೀರಿ?

ಉದಾಹರಣೆ 2: ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಪೋಸ್ಟೆಡ್ ಸ್ಪೀಡ್ ಲಿಮಿಟ್ಟಿಗಿಂತ ಘಂಟೆಗೆ 25 ಮೈಲಿ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಿ, ದೊಡ್ಡ ತಪ್ಪನ್ನು ಎಸಗಿದ್ದೀರಿ.
ಟ್ರಾಫಿಕ್ ಪೋಲಿಸ್ ರೇಡಾರ್ ಡಿಟೆಕ್ಟರ್ ಮೂಲಕ ನಿಮ್ಮ ತಪ್ಪನ್ನು ಸಾಬೀತುಗೊಳಿಸುವ ರಿಪೋರ್ಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ (ಡ್ರೈವರ್) ಪಕ್ಕದ ಕಿಟಕಿಯಲ್ಲಿ ನಿಂತಿದ್ದಾನೆ.
ಸ್ಥಳದಲ್ಲೇ ದಂಡ ಕಟ್ಟಿದರೆ 8 ಸಾವಿರ ರೂಪಾಯಿ ಆಗುತ್ತದೆ (ಕೊಡದಿದ್ದರೆ ಗಾಡಿ ಬಿಡೋದಿಲ್ಲ ಮುಂದೆ).
ಅದೇ ಸಮಯುಕ್ಕೆ ಮತ್ತೊಬ್ಬ ಪೋಲಿಸ್ ಕಾರಿನ ಇನ್ನೊಂದು ಕಿಟಕಿಯಲ್ಲಿ ಬಂದು, 8 ಸಾವಿರ ಇಲ್ಲದಿದ್ರೆ 4 ಸಾವಿರ ಕೊಡಿ ಪರವಾಗಿಲ್ಲ, ಆದ್ರೆ ನಿಮಗೆ ಕಂಪ್ಯೂಟರ್ ರಶೀದಿ ಸಿಗೋದಿಲ್ಲ ಅಂತಾನೆ.

ನೀವು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು. ಹೆಚ್ಚು ಹೊತ್ತು ತರ್ಕವಾಗಲಿ, ತಕರಾರನ್ನಾಗಲೀ ಮಾಡಲು ವ್ಯವಧಾನವಿಲ್ಲ.
ನೀವು ಪೋಲೀಸ್‌ಗೆ ೮ ಸಾವಿರ ಕೊಡ್ತೀರಾ? ೪ ಸಾವಿರ ಕೊಡ್ತೀರಾ?

***

ನನ್ನ ಹಾಗೆ ನೀವೂ ಸಹ ನಿಮ್ಮ ಬದುಕಿನಲ್ಲಿ ಈಗಾಗಲೇ ಬಹಳ ರಾಜಕೀಯ ಪಕ್ಷಗಳು ಹುಟ್ಟಿ-ಸತ್ತಿದ್ದನ್ನು ನೋಡಿರಬಹುದು. ಕ್ರಾಂತಿರಂಗ, ತೃಣಮೂಲ, ಹೊಟ್ಟೆ, ಸಮಾಜವಾದಿ, ದಳ, ಹಲವಾರು ಬಗೆಯ "ಕಾಂಗ್ರೆಸ್ಸು"ಗಳು, ಲಲ್ಲೂ ಪಕ್ಷ, ಅವನ ಹೆಂಡತಿ ಪಕ್ಷ, ಜಾತಿ-ಜಾತಿಗಳ ಪಕ್ಷ, ಜಾತಿ ಇಲ್ಲದವರ ಪಕ್ಷ - ಹೀಗೆ ಹಲವು...ಈ ಪಟ್ಟಿ ಬಹಳ ಮುಂದುವರೆಯುತ್ತದೆ. ಎಲ್ಲದರ ಪ್ರಣಾಳಿಕೆಗಳು ಒಂದೇ - ದೇಶೋದ್ದಾರ.  66 ವರ್ಷದ ಸ್ವತಂತ್ರ್ಯೋತ್ತರ ಬಾಳ್ವೆಯಲ್ಲಿ ದೇಶದ ಉದ್ದಗಲಕ್ಕೂ ಅಂದಿನ ಮೂಲ ಸಮಸ್ಯೆಗಳು, ಇಂದಿಗೂ ಇವೆ; ಅವುಗಳಲ್ಲಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರ ಮೇಲೆ ಹುಟ್ಟಿ ಕೆಳಗೆ ಹರಿದು ಬರುವಂತದಲ್ಲ, ಕೆಳಗೆ ಹುಟ್ಟಿ ಸರ್ವತೋಮುಖವಾಗಿ ಬೆಳೆಯುವಂತದು. ತಾಲೂಕು ಆಫೀಸಿನಲ್ಲಿ 'ಅಡ್ಜಸ್ಟ್’ ಮಾಡಿಕೊಳ್ಳುವ ನಮ್ಮ ಮೆಂಟಾಲಿಟಿ, ನಾವು ಕಾನೂನನ್ನು ಮುರಿದಾಗ ನಮ್ಮ ಸಹಾಯಕ್ಕೆ ಬರುವ ಅಡ್ಡದಾರಿತನ ಇವುಗಳು ಲಂಚಕೋರತನದ ಮೂಲ ಕಾರಣ (ರೂಟ್‌ಕಾಸ್) ಗಳಲ್ಲೊಂದು. ಲಂಚ ಕೊಡುವವರು ನಾವು, ತೆಗೆದುಕೊಳ್ಳುವವರು ನಾವು - ಇದನ್ನು ಅರಿವಿನಿಂದ, ಬೆಳೆದ ವ್ಯವಸ್ಥೆಯಿಂದ, ಆಧುನಿಕ ಪರಿಕರಗಳಿಂದ ಹೊಡೆಯಬೇಕೇ ವಿನಾ ಮತ್ತೊಂದು ಪಕ್ಷ ಕಟ್ಟುವುದರಿಂದಲ್ಲ.

ಹಜಾರೆ ನಂಬಿಕೊಂಡ ಗಾಂಧಿ ಮಹಾತ್ಮ ಯಾವುದೇ ರಾಜಕೀಯ ಪದವಿಯನ್ನು ಅಲಂಕರಿಸದಿದ್ದರೂ, ಸಮಾಜದಲ್ಲಿ ಬದಲಾವಣೆಗಳನ್ನು ತರಲಿಲ್ಲವೇನು? ಹೊಸ ಪಕ್ಷ ಕಟ್ಟುವುದರಿಂದ ಏನಾದೀತು? ಮತ್ತೆ ಈ ಪಕ್ಷದ ವಕ್ತಾರರು ಇಂದಿನ ಕ್ಷೋಭೆಗಳ ನಡುವೆ ಮುಕ್ತವಾಗಿ ಸ್ಪರ್ಧಿಸಿ, ಗೆದ್ದು ಮೇಲೆ ಬರುವುದು, ಹಾಗೆ ಬಂದ ನಂತರ ಸುಧಾರಣೆಗಳನ್ನು ಮಾಡುವುದು ಅಷ್ಟು ಸುಲಭದ ಕೆಲಸವೇನು?

ನಾವು, ಲಂಚಾವತರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸುವವರೆಲ್ಲರೂ, ಒಂದು ರೀತಿಯಲ್ಲಿ ಹುಲಿ ಸವಾರಿಯಲ್ಲಿ ತೊಡಗಿದ್ದೇವೆ. ಹುಲಿ ಸವಾರಿಯನ್ನು ನಿಲ್ಲಿಸಿ ಹುಲಿಯಿಂದ ಕೆಳಗಿಳಿದರೆ ಹುಲಿಯೇ ನಮ್ಮನ್ನು ಕಬಳಿಸಿ ಬಿಡುವ ಸಾಧ್ಯತೆ ಇದೆ. ಸಾವಿರಾರು ವರ್ಷಗಳ ಸಮಸ್ಯೆಗೆ ಮತ್ತೊಂದು ಪಕ್ಷ ಕಟ್ಟುವುದು ಉತ್ತರವಲ್ಲ, 'ಅಣ್ಣಾ’ ಎಂದು ಕರೆಯುವವರೆಲ್ಲ, ನಾವು ಇಂದಿನಿಂದ ಭ್ರಷ್ಟರಾಗೋದಿಲ್ಲ ಎಂದು ಪ್ರಮಾಣ ಮಾಡಿ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಬಹಳಷ್ಟು ಸುಧಾರಣೆಗಳಾಗುತ್ತವೆ. ಈಗಾಗಲೇ ಇಳಿ ವಯಸ್ಸಿನ ಹಜಾರೆ ಅವರು ತಮ್ಮ ಮೂಲ ಮಂತ್ರ ಬೀಜವನ್ನು ಬಿತ್ತಿ, ಅದರಿಂದ ಹುಲುಸಾಗಿ ಕೃಷಿ ಬೆಳೆಯುವಂತೆ ಮಾಡಿದರೆ ಅದು ಜನಜನಿತವಾಗುತ್ತದೆ, ಹಾಗೂ ಕಾಲನ ಜೊತೆಗೆ ಬೆಳೆಯುತ್ತದೆ. ಅದನ್ನು ಬಿಟ್ಟು ಪಕ್ಷ ಕಟ್ಟಿದರೆ ಅದು ಕಾಲನಿಗೆ ಆಹಾರವಾಗುತ್ತದೆ.

***

ಭ್ರಷ್ಟಾಚಾರ ಕೇವಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾತ್ರ ಸೀಮಿತವೇ?
ಬದಲಾಗಬೇಕಾದವರು ಯಾರು ಎಂದು ತಿಳಿಯಬೇಕಾದರೆ, ಹೋಗಿ ಕನ್ನಡಿ ಮುಂದೆ ನಿಲ್ಲಿ!

Tuesday, September 20, 2011

ನಿಜವಾದ "ಅಂತರಂಗ"ದ ನಂಬಿಕೆ

ಕನ್ನಡ ಹಿರಿಮೆಗೆ ಮತ್ತೊಂದು ಪ್ರಶಸ್ತಿ, ಕನ್ನಡ ತಾಯಿಯ ಮಕುಟಕ್ಕೆ ಮತ್ತೊಂದು ಗರಿ. ಈ ದಿನ ವಿಶ್ವದಾದ್ಯಂತ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ದಿನ. ನಮ್ಮ ಗುರುಗಳಾಗಿ, ಅಧ್ಯಾಪಕರಾಗಿ, ನಾಟಕಕಾರರಾಗಿ, ನಿರ್ದೇಶಕ ಮೊದಲಾಗಿ ಕನ್ನಡ ಸಾಹಿತ್ಯ ಅನೇಕ ಮಜಲುಗಳಲ್ಲಿ ಪಳಗಿದ ಸುಮಾರು ನಾಲ್ಕು ದಶಕದ ಸಾಧನೆಯ ಪರಿಪೂರ್ಣತೆಯನ್ನು ಪಡೆದ ಚಂದ್ರಶೇಖರ ಕಂಬಾರರಿಗೆ ೮ ನೇ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಬಹಳ ಸಂತೋಷದ ವಿಷಯ.

***
ನಾನು ಜ್ಞಾನಪೀಠ ಎಂದರೆ ಸುಮ್ಮನೆಯೇ? ಎಂದು ೨೦೦೬ (ಮೇ ೧೭, ೨೦೦೬) ರಲ್ಲಿ ಬರೆದದ್ದು ನಿಜವಾಯಿತು. "...ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು.". ಈ ಪ್ರಶಸ್ತಿಯನ್ನು ಪಡೆದ ಕನ್ನಡದ ದಿಗ್ಗಜರಲ್ಲಿ ನಾನು ಬಹಳ ಹತ್ತಿರದಿಂದ ನೋಡಿದವರೆಂದರೆ ಕಂಬಾರರು. ಈ ದಿನ ಅವರಿಗೆ ಈ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಬಹಳ ಸಂತಸದ ವಿಚಾರ.

ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.
***

ಕಂಬಾರರ ಭಾಷೆ ಬಹಳ ಚೆಲುವಾದುದು - ಬೆಳಗಾವಿಯ ಗ್ರಾಮೀಣ ಕನ್ನಡದ ಸೊಗಡನ್ನು ಸವಿಯ ಬೇಕಾದರೆ ಅವರ ಮಾತುಗಳನ್ನು ಆ ಭಾಷೆ ಬಲ್ಲವರಿಂದ ಗಟ್ಟಿಯಾಗಿ ಓದಿಸಿ ಕೇಳಬೇಕು, ಅಥವಾ ಅವರ ನಾಟಕಗಳನ್ನು ನುರಿತ ಕಲಾವಿದರು ಮಾಡಿದ್ದನ್ನು ನೋಡಿ ಸವಿಯ ಬೇಕು. ಇದೇ ಬೆಳಗಾವಿಯ ಕನ್ನಡದಲ್ಲಿಯೇ ಅವರು "ಮರತೇನಂದರ ಮರೆಯಲಿ ಹೆಂಗ..." ಬರೆದದ್ದು.
ಇದು ನಿಜವಾಗಿಯೂ ನಮಗೆಲ್ಲ ಸಂತೋಷದ ದಿನ.
ಜೈ ಕನ್ನಡ ಮಾತೆ!

Monday, April 04, 2011

ಆನವಟ್ಟಿ ಸಾಲುಮರಗಳು ಈಗ ಇತಿಹಾಸ...

ಸ್ನೇಹಿತನೊಡನೆ ಜೊತೆ ನಿನ್ನೆಯ ಮಾತುಕಥೆ: - ಜಾಗತೀಕರಣ, ವಾಲ್‌ಮಾರ್ಟ್ ಹೇಗೆ ೩೦ ವರ್ಷದ ಹಿಂದೆ ಚೈನಾದಿಂದ ಕಡಿಮೆ ಬೆಲೆಗೆ ಸಾಮಾನುಗಳನ್ನು ಆಮದು ಮಾಡಿಕೊಂಡು ಹೊಸ ಕ್ರಾಂತಿ ಸೃಷ್ಟಿಸಿತ್ತು. - ಅಮೇರಿಕದ ಕೆಲಸಗಾರರು ಪ್ರತಿ ಘಂಟೆಗೆ ೨೫ ಡಾಲರ್ ಪಡೆಯುತ್ತಿದ್ದಾಗ, ಚೈನಾದಂತಹ ದೇಶಗಳಲ್ಲಿ ಪ್ರತಿದಿನಕ್ಕೆ ಒಬ್ಬೊಬ್ಬ ಒಂದೊಂದು ಡಾಲರ್‌ಗೆ ಕೆಲಸ ಮಾಡುತ್ತಿರುವಂತೆ ಗಳಿಕೆಯಲ್ಲಿನ ವ್ಯತ್ಯಾಸ ಹೇಗೆ ರೀಟೈಲರುಗಳನ್ನು ಸ್ವಲ್ಪ ಕಡಿಮೆ ಕ್ವಾಲಿಟಿ ಆದರೂ ಕಡಿಮೆ ಬೆಲೆಗೆ ಪದಾರ್ಥಗಳನ್ನು ಕೊಳ್ಳುವಂತೆ ಮಾಡಿದ್ದು. (೨೦೦೮, ೨೦೦೯ ವಿಶ್ವ ಬ್ಯಾಂಕ್ ಮೂಲಗಳ ಪ್ರಕಾರ) -ಚೈನಾದ ಜನಸಂಖ್ಯೆ ೧.೩೩ ಬಿಲಿಯನ್, GDP $6,890 - ಭಾರತದ ಜನಸಂಖ್ಯೆ ೧.೧೭ ಬಿಲಿಯನ್, GDP $3,250 -ಚೈನಾದ ಕಮ್ಮ್ಯೂನಿಸಮ್ಮ್, ಅಲ್ಲಿನ ಮೆಗಾ ಪ್ರಾಜೆಕ್ಟುಗಳು ಮಿಲಿಯನ್ನ್‌ಗಟ್ಟಲೆ ಜನರನ್ನು ಎತ್ತಂಗಡಿ ಮಾಡಿದರೂ ವಿಶ್ವದ ಉಳಿದ ಜನರಿಗೆ ಕಿಂಚಿತ್ತೂ ಗೊತ್ತಾಗದಿರುವುದು, ಪರಿಸರ ಕಾಳಜಿ, ಸಾಮಾಜಿಕ ಮೌಲ್ಯ ಮೊದಲಾದವುಗಳ ಬಗ್ಗೆ ಇರುವ ಅವರದ್ದೇ ಆದ ವ್ಯಾಖ್ಯೆ ಪರಿಕಲ್ಪನೆ. - ಭಾರತದ ಜನತಂತ್ರ ವ್ಯವಸ್ಥೆ, ಮೆಗಾ ಮಿನಿ ಪ್ರಾಜೆಕ್ಟುಗಳು, ರಸ್ತೆ ಅಗಲೀಕರಣದ ವಾಸ್ತವ ಚಿತ್ರ - ರಾತ್ರೋ ರಾತ್ರಿ ಎದ್ದೇಳುವ ಮಂದಿರ, ಮಸೀದಿ, ಚರ್ಚುಗಳು - ಪರಿಸರ ವಾದಿಗಳು, ದಿವ್ಯ ನದಿಗಳು, ತೆರೆದ ರಾಜಕೀಯ, ಜಾತಿ-ಮತ, ಭ್ರಷ್ಟಾಚಾರಗಳಂತ ತಿಮಿಂಗಲಗಳು, ಮೊದಲಾದವುಗಳು. ಅಮ್ಮನೊಡನೆ ಇಂದಿನ ಚರ್ಚೆ: - ಈ ವರ್ಷವೆ ಕೊನೇ ಇನ್ನು ಮುಂದೆ ನಮಗೆ ಸಾಲು ಮರಗಳಿಂದ ಮಾವಿನ ಮಿಡಿ ಸಿಗೋದಿಲ್ಲ. - ಆನವಟ್ಟಿ ಇಂದ ಶಿರಾಳಕೊಪ್ಪದ ವರೆಗೆ (ಸುಮಾರು ೨೫ ಕಿ.ಮಿ.) ರಸ್ತೆಯ ಎರಡೂ ಬದಿಯ ಸಾಲು ಮರಗಳನ್ನು ಕಡಿದು ಹಾಕುತ್ತಿದ್ದಾರೆ, ರಸ್ತೆ ಅಗಲ ಮಾಡುತ್ತಿದ್ದಾರೆ. - ಯಡಿಯೂರಪ್ಪನವರ ದೊಡ್ಡ ಪ್ರಾಜೆಕ್ಟುಗಳಲ್ಲಿ ಇದೂ ಒಂದಂತೆ. - ಸುಮಾರು ನೂರು ವರ್ಷಕ್ಕೂ ಹಿಂದಿನಿಂದಲೂ ಇದ್ದ ಮರಗಳು ಅವು, ಅವನ್ನೆಲ್ಲ ಕಡಿದು ದೊಡ್ಡ ದೊಡ್ಡ ಮಿಷೀನುಗಳನ್ನು ಬಳಸಿ ಬುಡ ಸಮೇತ ಎತ್ತುತ್ತಿದ್ದಾರೆ. - ಬೋಳು-ಬೋಳು ರಸ್ತೆಗಳನ್ನು ನೋಡೋದಕ್ಕೆ ಬೇಜಾರಾಗುತ್ತೆ. - ಈ ಮರಗಳ ಬದಲಿಗೆ ಬೇರೆ ಎಲ್ಲಿಯಾದರೂ ಅಕೇಷಿಯಾ ಪಕೇಷಿಯಾ ನೆಡ್ತಾರೆ ಅಷ್ಟೇ, ನಮ್ಮ ಹಿಂದಿನವರ ಥರ ಮಾವು-ಬೇವುಗಳನ್ನು ಯಾರು ನೆಡ್ತಾರೆ ಈಗಿನ ಕಾಲದಲ್ಲಿ? - ಆ ಮರಗಳಲ್ಲಿದ್ದ ಅಷ್ಟೊಂದು ಪಕ್ಷಿಗಳು ಇನ್ನೆಲ್ಲಿ ಹೋಗ್ತಾವೋ ಏನೋ? *** ಹೂರಣ: ಭಾರತದ ಮೂಲೆ-ಮೂಲೆಗಳಿಂದ ಅಮೇರಿಕಕ್ಕೆ ಬಂದಂಥ ನಾವು, Caterpillar (CAT) ನಂತಹ ಕಂಪನಿಗಳಲ್ಲಿ ಕೆಲಸ ಮಾಡೋದು ಯೋಗ್ಯ, ಏಕೆಂದರೆ ಇವರ ಬುಲ್‌ಡೋಝರ್ ಮೊದಲಾದ ಕನ್‌ಷ್ಟ್ರಕ್ಷನ್ನ್ ಉಪಕರಣ ಹಾಗೂ ಮಿಷೀನುಗಳಿಗೆ ಜಗತ್ತಿನಾದ್ಯಂತ ಬಹಳ ಬೇಡಿಕೆ. ಅಲ್ಲದೆ, ಪರೋಕ್ಷವಾಗಿ ನೀವು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಮತ್ತೊಂದು ಮೂಲೆಯನ್ನು ಅಗೆಯಬಹುದು! ನಿಮ್ಮ ಜಾಗತಿಕರಣದ ಊಹೆ ಅಥವಾ ಕನಸನ್ನ ಎಲ್ಲರಿಗೂ ತಲುಪಿಸಬಹುದು! ಹೂರಣದ crust: CAT ನಲ್ಲಿ ಪ್ರತಿಯೊಬ್ಬರೂ ದುಡಿಯಲು ಸಾಧ್ಯವೇ? ಆ ಕಂಪನಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೇನಂತೆ? ಆ ಕಂಪನಿಯಲ್ಲಿ ಹಣ ತೊಡಗಿಸಬಹುದು, ಎಲ್ಲಾ ಒಂದೇ! *** ’ಅಂತರಂಗ’ದ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಖರನಾಮ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ!

Tuesday, March 29, 2011

ದದ್ದಾ, who made god?

ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ!

ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ
ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...

ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...

***

ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ.

ನಮ್ಮ ಮನೆಯಲ್ಲಿರೋ ಈ 5&2 client ಗಳ ಪ್ರಶ್ನೆಗಳಿಗೆ ಉತ್ತರ ಈ ಗಣನಾಥನೇ ಕೊಡಬೇಕು - 5&2 ಅಂದ್ರೆ ನನ್ನ ಐದು ಮತ್ತು ಎರಡು ವರ್ಷದ ಮಕ್ಕಳು ಅಂತ ಅರ್ಥ. ಅವರು ಕೇಳಿದಂತಾ ಪ್ರಶ್ನೆಗಳನ್ನು ನಾನು ಚಿಕ್ಕವನಾಗಿದ್ದಾಗಲೇನಾದರೂ ಕೇಳಿದ್ರೆ, ಆ ರಾವಣ ಗಣಪತಿ ತಲೆ ಮೇಲೆ ಗೋಕರ್ಣದಲ್ಲಿ ಕೊಟ್ಟನಲ್ಲ ಹಂಗೆ ನನಗೆ ಪ್ರತೀ ದಿನಾನೂ ಬೀಳೋದು ಅಂತ ಕಾಣ್ಸುತ್ತೆ... ನಾನು ಪ್ರಶ್ನೆಗಳನ್ನಂತೂ ಕೇಳೋವಾಗ ಕೇಳ್ಲಿಲ್ಲ, ಇನ್ನು ಅವುಗಳಿಗೆ ಉತ್ತರ ಎಲ್ಲಿಂದ ತರಲಿ ಹೇಳಿ.

ಈ ಮೆಲೆ ತೋರಿಸಿದ ಗಣನಾಥನ ಹಾಡಿನ ಕೆಲವು ಸಾಲುಗಳನ್ನೇ ನೋಡಿ, ಎಷ್ಟೊಂದು ಪ್ರಶ್ನೆಗಳನ್ನ ಹುಟ್ಟಿ ಹಾಕ್ಸುತ್ವೆ ಅಂತ, ನೀವು ಕೊಡೋ ಪ್ರತಿ ಒಂದು ಉತ್ತರಕ್ಕೂ ಒಂದೊಂದು sub-ಕಥೆ ಇರುತ್ತೆ, ಹಾಗೆ ನೀವು ಉತ್ತರ ಕೊಟ್ಟಂತೆಲ್ಲ, ಒಂದೊಂದು ಉತ್ತರಕ್ಕೆ ಐದೈದು WHY ಗಳು ಬಂದು ಸೇರಿಕೊಳ್ಳುತ್ವೆ, ಉದಾಹರಣೆ ಬೇಕಾ, ತೊಗೊಳ್ಳಿ:

ಪಲ್ಲವಿಯಲ್ಲಿ
- who is 'ga na nA tha'?
- why we have to worship him first ? (so you may use sub-story of kartikeya-ganesha race story, beware of more questions)
- why ganesha has so many names?
- what his friends call him?

You think these are easy questions? Be careful... and remember that classic joke about Johny?

Kid asks mom, "Mom, where am I from?"
Mom blinks her eyes and begin to answer the question starting from creation, birth, etc
Kid interrupts her, '...but Johny says he is from New Jersey..., where am I from?'

ನಮ್ಮ ಹಾಡುಗಳು ಒಂಥರಾ ಯಕ್ಷಗಾನ ಕಾರ್ಯಕ್ರಮ ಇದ್ದ ಹಾಗೆ, ಒಂದು ಪ್ಯಾರಾದಲ್ಲಿ ವರ್ತಮಾನ ಕಾಲದಲ್ಲಿರೋದು, ಮತ್ತೊಂದು ಪ್ಯಾರಾದಲ್ಲಿ ತ್ರೇತಾಯುಗಕ್ಕೆ ಹೋದ ಹಾಗೆ, ತ್ರೇತಾ ಯುಗದಿಂದ ದ್ವಾಪರ ಯುಗಕ್ಕೆ ಒಂದೆ ಕ್ಷಣದಲ್ಲಿ ಹಾರಿದ ಹಾಗೆ. ಅಥವಾ ಅತಳ, ಭೂತಳ, ಪಾತಾಳ, ಅಂತರಿಕ್ಷ, ಸ್ವರ್ಗ, ನರಕ, ಮತ್ಸ್ಯಲೋಕ, ಮೊದಲಾದವುಗಳನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿದ ಹಾಗೆ... do you think I am joking? ನಿಮ್ಮ ಮಕ್ಕಳಿಗೆ ಬಭ್ರುವಾಹನ ಚಿತ್ರದ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು..." ಹಾಡನ್ನು youtube ನಲ್ಲಿ ತೋರಿಸಿ ನೋಡಿ, ನಿಮಗೆ ಗೊತ್ತಾಗುತ್ತೆ ನನ್ನ ಕಷ್ಟ ಏನು ಅಂತ. (why did I watch or why they saw this song with me - that is a different and long story.... a topic in itself for some other day).

ಇನ್ನೂ ಪಲ್ಲವಿಯಲ್ಲೇ ಇದ್ದೇನೆ...
ಫಸ್ಟ್ ಪ್ಯಾರಾ:
-who is 'da r ma roya'?
- why that guy worship ganesha?
- what was he doing?
- how old was he?
- what is jaya? isn't that amma's friend's name? also your chikkamma has the same name?
- how does ganesh know who does pooja?
- why he helps?
- and then what happened? 'ಆ ಮೆಲೆ ಏನು?' (screaming because i don't answer the questions immediately).

ಸೆಕೆಂಡ್ ಪ್ಯಾರಾ:
-who is ravnaa?
-why he didn't do pooja? (his dad scold him?)
-why he died?
-who killed him? why?
-'rana' means what?

ಇನ್ನು ಪುರಂದರ-ಗಿರಂದರ ಅಂದ್ರೆ ಕಥೇನೇ ಮುಗೀತು, ಅದಕ್ಕೆ ಎರಡೇ ಪ್ಯಾರಾಕ್ಕೆ ಹಾಡು ಮೊಟಕು ಮಾಡಿದ್ದು.

***

ಹೀಗೆ ಪ್ರಶ್ನೆಗಳ ಯಾದಿ, ಅವುಗಳಿಗೆ ಉತ್ತರ, ಅವರದ್ದೇ ಆದ ತರ್ಕ, ಕಲ್ಪನೆ, ಕಲ್ಪನೆಯಿಂದ ಬೆಳೆಯೋ ಉತ್ತರ - ಇವೆಲ್ಲ ನಮ್ಮ ಮನೆಯಲ್ಲಿ ಬೆಳೀತಾನೇ ಇವೆ. ನಮ್ಮಮ್ಮನ್ನ "ನೀನು ಅಷ್ಟೊಂದು ಮಕ್ಳನ್ನ ಹೆಂಗ್ ಸಾಕ್ದೇ?" ಅಂತ ಕೇಳಿದ್ರೆ, ನಕ್ಕೊಂಡು "...ಈಗ ನಿಮ್ಮ ಸರದಿ, ಅನುಭವಿಸಿ!" ಅನ್ನೋ ಉತ್ರ ಕೊಡೋದೇ?

ನನಗೆ ಮೊಟ್ಟ ಮೊದಲನೇ ಬಾರಿಗೆ ಗಣೇಶನ ಕಥೆ Rated R ಅನ್ನಿಸಿದ್ದು... Youtube ನಲ್ಲಿರೋ ಗಣೇಶನ ಕಥೆ ಈಗ ಯಾಕಾದ್ರೂ ತೋರಿಸಿದ್ನೋ ಅನ್ನೋ ಹಾಗಿದೆ ನನ್ನ ಪರಿಸ್ಥಿತಿ.

Again the same series of "Why's"...

ಅದೂ ನಮ್ಮ ಗಣೇಶನ ಕಥೆಯಲ್ಲೇ ಎಷ್ಟೊಂದು ವರೈಟಿಗಳು. ಯಾಕೆ ಆನೆಯ ತಲೆಯನ್ನು ಇಟ್ರು ಅನ್ನೋದಕ್ಕೆ ಎಷ್ಟೊಂದು ಥರನ ಉತ್ತರಗಳು? ಗಜಾಸುರನೆಂಬ ರಾಕ್ಷಸನ ತಲೆಯೋ ಅಥವಾ ಉತ್ತರಕ್ಕೆ ತಲೆ ಹಾಕಿ ಮಲಗಿದ ಪ್ರಾಣಿಯ ಕತೆಯೋ? why that rAkShasa had elephant's head in the first place? (ಇವೆಲ್ಲ ನನ್ನ ಪ್ರಶ್ನೆಗಳು: isn't that head big for a small boy? who did the transplantation? ಅಷ್ಟೆಲ್ಲಾ ಮಂತ್ರಶಕ್ತಿ ಇರೋ ಶಿವನಿಗೆ ಹುಡುಗನ ಕಡಿದಿರೋ ತಲೆ ಹುಡುಕೋದಕ್ಕೆ ಆಗಲಿಲ್ಲವೇ? ಯಾಕೆ ಅಷ್ಟೊಂದು ಸಿಟ್ಟು? ತ್ರಿಶೂಲ ಹಿಡಿದಿರೋ ಶಿವನಿಗೆ ಆ ಬಾಲಕನ ಹತ್ತಿರ ನೆಗೋಶಿಯೇಟ್ ಮಾಡೋಕಾಗಲಿಲ್ವ?)

ನಿನ್ನೆ ರುದ್ರಾಭಿಷೇಕದ ಹೊತ್ತಿಗೆ ಬ್ರಿಜ್‌ವಾಟರ್ ದೇವಸ್ಥಾನದ ಅರ್ಚಕರು ತ್ರಿಶೂಲವನ್ನು ತೊಳೆದು ಶಿವನ ಬದಿಯಲ್ಲಿಟ್ಟಾಗ ನನ್ನ ಮಗಳು ಕೇಳಿಯೇ ಬಿಟ್ಟಳು: is this the same that shiva cut the boy's head?

ನಮ್ಮದೆಲ್ಲಾ ಸಂಕೀರ್ಣದೊಳಗಿನ ಸಂಕೀರ್ಣ ಅಂತ ಅನ್ನಿಸೋಲ್ವಾ? ಐದು ವರ್ಷದ ಮಕ್ಕಳಿಗೆ "ಏ, ನಿನಗೊತ್ತಾಗಲ್ಲ ಸುಮ್ಮನಿರು!" ಎಂದು ಗದ್ದರಿಸೋದನ್ನು ಬಿಟ್ಟು ನಿಧಾನವಾಗಿ ಇವನ್ನೆಲ್ಲ ತಿಳಿ ಹೇಳೋ ಉಪಾಯಗಳ ಜೊತೆಗೆ ಗಣೇಶನ ಬಗ್ಗೆ ಒಂದು comprehensive ಕಥೆ, ಅಥವಾ ಪುರಾಣವಾದರೂ ನಮ್ಮಲ್ಲಿದೆಯಾ? ಅದಕ್ಕೆ ಅದನ್ನ ಕಥೆ-ಪುರಾಣ ಅಂತ ಕರೆಯೋದಿರಬೇಕು. ಒಂಥರಾ ಇಂಡಿಯನ್ ಮಿಥಾಲಜಿ ಅಂದ್ರೆ ಇವತ್ತಿನ ವಿಕ್ಕಿಪೀಡಿಯಾ ಇದ್ದ ಹಾಗೆ, ಯಾರು ಹೇಗೆ ಬೇಕೋ ಹಾಗೆ ಎಡಿಟ್ ಮಾಡ್ಕೊಂಡು ಹೋದ್ರೆ ಆಯ್ತು, ಆದ್ರೆ, edit history ಅಥವಾ chronology ಮಾತ್ರಾ ಕೇಳ್ಬೇಡಿ.

her question - 'why ganesha's mommy want him to wait at the door? she could have locked the door herself'.

ಈ ಮಕ್ಕಳಿಗೆ ಕೃಷ್ಣ ಹೇಗೆ ಬೆಣ್ಣೆ ಕದೀತಿದ್ದ ಅಂತ ಕಥೆ ಹೇಳಿದ್ರೆ, "ಅಯ್ಯೋ ಯಾಕೆ? ಫ್ರಿಜ್ಜ್ ತೆಗೆದಿದ್ರೆ ಸಿಕ್ಕಿರೋದು" ಅಂತ ನಮಗೇ ಪ್ರಶ್ನೆ ಕೇಳ್ತಾರಲ್ಲ, ಅಲ್ಲಿಗೇ ನಿಲ್ಲದೇ, "Why they didn't have a ladder?" ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳೋ audience ಇರೋವಾಗ, ನಮ್ಮ ಕಥೆಗಳು ಇನ್ನಷ್ಟು ಸರಳವಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಲ್ವಾ? ("why he eats just ಬೆನ್ನೆ? no bread! ವೂ, that is gross!") and more questions (why that ಬೆನ್ನೆ white, ours yellow)? and more questions... why ಬಲ್ ರಾಮಾ not blue, only krishna? (you want to try that?)


***

ಇವೆಲ್ಲ ಇರಲಿ, ಹೊಂಕಣ ಸುತ್ತಿ ಮೈಲಾರಕ್ಕೆ ಬಂದಾ ಅನ್ನೋ ಹಾಗೆ, ನನ್ನ ಹೆಡ್ಡಿಂಗ್‍ಗೆ ಬರ್ತೀನಿ:

ಮೊನ್ನೆ ಬೆಳಿಗೆ ಆಫೀಸಿಗೆ ಬರೋ ತರಾತುರಿಯಲ್ಲೇ ದೇವರಿಗೆ ದೀಪ ಹಚ್ಚಿ, ತಲೆಯಲ್ಲಿ ಬರೋ ನೂರಾ ಒಂದು ಆಲೋಚನೆಗಳ ಮಧ್ಯೆಯೇ ಪೂಜೆ ಮಾಡಿದ ಹಾಗೆ ಮಾಡಿ ಬರುತ್ತಿರುವಾಗ, ಆಗಷ್ಟೇ ಎದ್ದು ಕಣ್ಣು ಒರೆಸುತ್ತಿದ್ದ ನನ್ನ ಐದು ವರ್ಷದ ಮಗಳು ಕೇಳಿದಳು, "ದದ್ದಾ, who made god?" (and that is the first question, no idea, what was in her mind).

ಆಗ ಸಧ್ಯಕ್ಕೆ ನನಗೆ ಏನೂ ತಿಳಿಯದೇ ಒಂದು ಕ್ಷಣ ಕಣ್ಣು ಪಿಳಿಪಿಳಿ ಬಿಟ್ಟೆನಾದರೂ "god made god" ಎಂದು ಉತ್ತರ ಹೇಳಿದೆ, ಉಳಿದದ್ದನ್ನ ಸಾಯಂಕಾಲ ಹೇಳ್ತೀನಿ ಎಂದು ಬೀಸೋ ದೊಣ್ಣೆಯಿಂದ ಬಚಾವ್ ಆದೆ... ಆದರೂ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಇನ್ನೂ ಯೋಚಿಸ್ತಾನೇ ಇದ್ದೀನಿ. ಪ್ರಶ್ನೆಗೆ ಉತ್ತರ ಹೇಳಲೋ, ಅಥವಾ ಇನ್ನೊಂದಿಷ್ಟು ಪ್ರಶ್ನೆಯನ್ನೇ ಕೇಳಿ ಸಮಾಧಾನ ಮಾಡಿ ಉತ್ತರವನ್ನು ಅವರ ಕಲ್ಪನೆಗೆ ಬಿಡಲೋ? who do you think made god? why do you want to know? who asked you that question?

ನಮಗೆ ಇಲ್ಲಿ ಯಾರು ಬೇಕು ಅಂದ್ರೆ, "ಅತಿಥಿ ತುಮ್ ಕಬ್ ಜಾವೋಗೇ?" ಸಿನಿಮಾದ ಪರೇಶ್ ರಾವಲ್ ಅಂತ ಸಂಬಂಧಿಕರು! ಅಥವಾ ಮಕ್ಕಳ ಎಲ್ಲಾ ಚಿಕ್ಕ-ಪುಟ್ಟ ಪ್ರಶ್ನೆಗಳಿಗೂ ಸಮಾಧಾನ ಚಿತ್ತದಿಂದ ಸಾವಧಾನವಾಗಿ ಉತ್ತರಿಸುವ ತಿಳುವಳಿಕೆ ಹಾಗೂ ಮನಸ್ಥಿತಿ ಇರುವವರು. ಅವರ ಪ್ರಶ್ನೆಗಳಿಗೆ ಉತ್ತರಕೊಡುವುದರ ಬದಲಿಗೆ ಕೆಲವೊಮ್ಮೆ ನಾವು ನಮ್ಮ ಆಫೀಸಿನ ಸಂಕಷ್ಟಗಳನ್ನೆಲ್ಲ ಮಕ್ಕಳ ಎದುರಿಗೆ ಅವರನ್ನು ಬೈಯ್ಯೋದರ ಮೂಲಕ ಪ್ರದರ್ಶಿಸುತ್ತೇವೇನೋ ಎಂದು ಹೆದರಿಕೆ ಆಗೋದೂ ಇದೆ.

ಅದಕ್ಕೆ, ದದ್ದಾ, who made god? ಅನ್ನೋ ಶೀರ್ಷಿಕೆಯನ್ನು "...ಅರ್ಥಾಥ್ ಪ್ರಶ್ನೆಗಳಿಗೆ ಉತ್ತರ ಹೇಳೋ ಅಜ್ಜ-ಅಜ್ಜಿ ಬೇಕಾಗಿದ್ದಾರೆ", ಎಂದು ಬದಲಾಯಿಸಿದರೆ ಹೇಗೆ ಎಂಬ ಯೋಚನೆ ಕೂಡಾ ಬಂತು...

***
"ದೇವ್ರುನ್ನ ಯಾರಾದ್ರೂ ಮಾಡ್ಲಿ, ಬಿಡ್ಲಿ - ಸುಮ್ನೇ ಕೆಲ್ಸ ನೋಡ್ರೋ - ಹೋಗ್ರೋ" ಅಂತ ಗದರಿಸೋದು ನಮ್ಮ ಕಾಲಕ್ಕೆ ಆಯ್ತು, ಅಲ್ಲೇ ಇರ್ಲಿ ಅದು.

ನನಗ್ಗೊತ್ತು, ದೊಡ್ಡ ದೊಡ್ಡ ಮಕ್ಕಳಿದ್ದವರೆಲ್ಲ ಈ ಬರಹವನ್ನು ನೋಡಿ ನಗತಾರೆ ಅಂತ, ದೊಡ್ಡವರಿಗೆ ದೊಡ್ಡ ಕಷ್ಟಾ, ಆನೆ ಭಾರ ಆನೆಗೆ, ಇರುವ ಭಾರ ಇರುವೆಗೆ ಅಂಥಾರಲ್ಲ ಹಾಗೆ!

ದೇವ್ರೆ, ಇವತ್ತಿನ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ದಯವಿಟ್ಟು ಬಹಿರಂಗ ಮಾಡಪ್ಪಾ ಅನ್ನೋದು "ಅಂತರಂಗ" ಈ ಹೊತ್ತಿನ ಆರ್ತ ಮೊರೆ ಅಷ್ಟೇ!

Wednesday, March 16, 2011

Facebook ಅನ್ನು ಎದುರಿಸಿ...

ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್ ಅಂತ ಓಪನ್ನ್ ಮಾಡಿಕೊಂಡು ಅದರಲ್ಲಿ ಸುಮಾರು ನಾಲ್ಕು ವರ್ಷದಿಂದ ಒಂದಿಷ್ಟು ಗೀಚಿದ್ದು ಈಗ ಇತಿಹಾಸ... ಇ-ಮೇಲ್, ಬ್ಲಾಗು, ಕಮ್ಮ್ಯೂನಿಟಿ ಕೆಲಸ ಮೊದಲಾದ ಎಲ್ಲವಕ್ಕೂ ಆಶ್ರಯಕೊಟ್ಟು ಅವುಗಳನ್ನು ನೀರೆರೆದು ಪೋಷಿಸುವ ಅನೇಕ ಗೊಂದಲಗಳ ನಡುವೆ ಈ ಫೇಸ್‌ಬುಕ್ಕ್ ಮತ್ತು ಟ್ವಿಟ್ಟರ್ ಅಕೌಂಟುಗಳು ಸೊರಗುತ್ತಲೇ ಬಂದವು.

ಅದರಲ್ಲೂ ಇತ್ತೀಚೆಗೆ ತೆಗೆದು ನೋಡಿದಾಗ ಸುಮಾರು ೪೯ ಜನ ಫ್ರೆಂಡ್ ಲಿಸ್ಟಿನಲ್ಲಿ ಕಾಯ್ದು ಕುಳಿತಿದ್ದೂ ಕಂಡುಬಂತು, ಇವರ ಜೊತೆಯಲ್ಲಿ ಇದ್ದವರಲ್ಲಿ ನನ್ನ ಹೊಸ ಬಾಸ್ ಕೂಡ ಒಬ್ಬರು! ಈ ವರ್ಚುವಲ್ಲ್ ಪ್ರಪಂಚದ ಸಂಬಂಧಗಳೂ ಸಹ ನಮ್ಮ ಉಳಿವಿಗೆ ಅಗತ್ಯವಾಗಿರೋವಾಗ, ಅದರಲ್ಲಿನ ಪ್ರತಿಯೊಂದು ಎಳೆಗಳೂ ಕೂಡ ಪೋಷಣೆಯನ್ನು ಬೇಡುತ್ತಿರುವಾಗ ನಾನೊಬ್ಬನೇ ಕಣ್ಣು ಮುಚ್ಚಿ ಕುಳಿತುಕೊಂಡರೆ ಅದು ನನ್ನ ನಷ್ಟವಲ್ಲದೇ ಇನ್ನೇನು? ಹೀಗೆ, ಯೋಚಿಸಿಕೊಂಡಾಗೆಲ್ಲ ಫೇಸ್‌ಬುಕ್ ನಂತಹ ದೈತ್ಯ ಸಾಮಾಜಿಕ ಯೋಧನೊಬ್ಬನನ್ನು ಎಷ್ಟು ದಿನವಾದರೂ ಅಲಕ್ಷಿಸಲಾದೀತು?

Facebook - ಅನ್ನೋ ಪದದಲ್ಲಿ Face ಅಂದ್ರೆ ಮುಖವೋ ಅಥವಾ Face it! ಅನ್ನೋ ಹಾಗೆ ಎದುರಿಸೋದೋ? book ಅಂದ್ರೆ ನಮಗೆ ಗೊತ್ತಿರೋ ಪುಸ್ತಕ, ಹೊತ್ತಿಗೆಗಳೋ ಅಥವಾ book it! ಅನ್ನೋ ಹಾಗೆ ಕಾದಿರಿಸೋದೋ? Face ಮತ್ತು book ಎರಡೂ ಸೇರಿ ಆಗಿರೋ ಹೊಸ ಪದವೋ ಅಥವಾ ಕ್ರಾಂತಿಯೋ? ಇದಕ್ಕೆ ಪ್ರಪಂಚಾದಾದ್ಯಂತ 500 ಕ್ಕೂ ಹೆಚ್ಚು ಮಿಲಿಯನ್ನ್ ಬಳಕೆದಾರರಿದ್ದಾರಂತೆ, ಪ್ರತಿಯೊಬ್ಬ ಬಳಕೆದಾರನ ಹೆಸರಿನಲ್ಲಿ ಸುಮಾರು $2 ರಂತೆ ವರ್ಷಕ್ಕೆ ಒಂದು ಬಿಲಿಯನ್ನ್‌ಗಿಂತ ಹೆಚ್ಚು ರೆವಿನ್ಯೂ ಇದೆಯಂತೆ, ಕೆಲವರ $38 ರಿಂದ ಹಿಡಿದು ಮೈಕ್ರೋಸಾಫ್ಟಿನ $200 ಪ್ರತಿ ಬಳಕೆದಾರರಿಂದ ಹುಟ್ಟೋ ರೆವಿನ್ಯೂವರೆಗಿನ ಲೆಕ್ಕಗಳಲ್ಲಿ ಸುಮಾರು 50 ಬಿಲಿಯನ್ನ್ ವ್ಯಾಲ್ಯೂವೇಷನ್ನಿನ ಅಂದಾಜು ಮಾಡಿದ್ದಾರಂತೆ! ಗೂಗಲ್ಲ್ ಅಂಥಾ ಕಂಪನಿಗಳಲ್ಲಿ ಒಬ್ಬೊಬ್ಬ ಬಳಕೆದಾರನ ಮೇಲೆ ಸುಮಾರು $14 ರಂತೆ ಆದಾಯ ಹುಟ್ಟಿಸುತ್ತಾರಾದರೂ, Facebook ಅಂಥ ಕಂಪನಿಗಳು ತಮ್ಮ ಇರುವನ್ನು ಬಲಪಡಿಸಿಕೊಳ್ಳಲು ಅನೇಕಾನೇಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರಂತೆ, ಇರುವ ಬಳಕೆದಾರರ ಬೇಸ್ ಅನ್ನು ಕ್ಯಾಪಿಟಲೈಸ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರಂತೆ...ಹೀಗೆ ಅನೇಕಾನೇಕ ವಿಶೇಷಗಳು Facebook ಅನ್ನು ಸುತ್ತಿಕೊಳ್ಳತೊಡಗಿದ್ದು ಗೊತ್ತಾಯಿತು.

ಅಂತರಂಗದಲ್ಲಿ ಉದ್ದುದ್ದವಾಗಿ ಬರೆದ ಹಾಗೆ ಅಲ್ಲಿ ನನಗೆ ಬರೆಯೋಕಾಗೋದಿಲ್ಲ, ಬರೆದರೂ ಚಿಕ್ಕ ಫೋನುಗಳಲ್ಲಿ ಫಾಲ್ಲೋ ಮಾಡುವವರಿಗೆ ಕಷ್ಟವಾಗುತ್ತೆ. ಆದರೂ ಸಹ, ಅಂತರಂಗ ಮತ್ತು ನನ್ನ Facebook ಅಕೌಂಟುಗಳನ್ನು ಎರಡೂ ಒಟ್ಟು ಸೇರಿಸಿ, ಇಷ್ಟು ದಿನ ಹಿಡಿದುಕೊಂಡಿದ್ದ ಸುಮಾರು ನಲವತ್ತು ಜನ ಕನ್ನಡಿಗರನ್ನು ಬರಮಾಡಿಕೊಂಡರಾಯಿತು, ಕನ್ನಡಿಗರಷ್ಟೇ ಏಕೆ ಉಳಿದವರೂ ನೋಡಲಿ - ಎಲ್ಲರೂ ಬರಲಿ, ನನ್ನ ಈಗಿನ ಬಾಸ್ ಒಬ್ಬರನ್ನು ಬಿಟ್ಟು! (ಇಲ್ಲಿ ಕನ್ನಡದಲ್ಲಿ ಬರೆಯೋಕೆ ಈತನಿಗೆ ಸಮಯವಿದೆ ಅಂಥ ಮತ್ತೊಂದಿಷ್ಟು ಕೆಲಸ ಹುಟ್ಟಿಕೊಂಡರೆ ಕಷ್ಟ, ಹಾಗಾಗಿ).

ಈ ಅಂತರ್ಜಾಲ ಯುಗದ ಸಂಬಂಧಗಳು ಬಹಳ ಸಡಿಲವಾದದ್ದು - ಉದಾಹರಣೆಗೆ ಈ ಫೇಸ್‌ಬುಕ್ಕಿನ ಮಿಲಿಯನ್ನುಗಟ್ಟಲೆ ಬಳಕೆದಾರರಿಗೆ ಮತ್ತೊಂದೇನಾದರೂ ಆಕರ್ಷಕವಾಗಿ ಕಂಡುಬಂದರೆ ಅವರೆಲ್ಲರೂ ಅಲ್ಲಿಗೆ ಒಂದೇ ನೆಗೆತದಲ್ಲಿ ಹೋಗದಂತೆ ತಡೆಯುವುದು ಕಷ್ಟ. ಹಗಲೂ ರಾತ್ರಿ ಈ ಸರ್ವರುಗಳಿಗೆ ಜನ ಮುಗಿ ಬಿದ್ದ ಹಾಗೆ, ಪ್ರಸಿದ್ಧಿ ಅಥವಾ ಪ್ರಾಬಲ್ಯದ ಉತ್ತುಂಗದಲ್ಲಿರುವುದು ಬಹಳ ಕಷ್ಟದ ಕೆಲಸ - ಸುತ್ತಲಿನ ಆಗುಹೋಗುಗಳಿಗೆ ತತ್ಕಾಲದಲ್ಲಿ ಸ್ಪಂದಿಸಿ ನಿರಂತರವಾಗಿ ಬದಲಾಗುವುದರ ಜೊತೆಗೆ ಸದಾಕಾಲ ತಮ್ಮನ್ನು ತಾವು ರಿಫೈನ್ ಮಾಡಿಕೊಳ್ಳುವ ಕರ್ಮಠತನ ಬೇಕಾಗುತ್ತದೆ. ಬರೀ ಬಳಕೆದಾರರ ಸಂಬಂಧಗಳನ್ನಷ್ಟೇ ಅಲ್ಲ, ಹಣತೊಡಗಿಸಿದವರನ್ನು ಎದುರಿಸಬೇಕಾಗುತ್ತದೆ, ಪೈಪೋಟಿ ಒಡ್ಡುವವರನ್ನು ಹಿಂದಿಕ್ಕಬೇಕಾಗುತ್ತದೆ...ಹೀಗೆ ಅನೇಕಾನೇಕ ಸವಾಲುಗಳು ಯಾವಾಗಲೂ ಇದ್ದೇ ಇರುತ್ತವೆ. ಈ ಸವಾಲುಗಳು ಹೊಸತೇನಲ್ಲ - ಆನೆಗೆ ಆನೆಯ ಭಾರ, ಇರುವೆಗೆ ಇರುವೆಯ ಭಾರ ಅಷ್ಟೇ.

ಈ ಮೂಲಕ ಅಂತರಂಗದ ಓದುಗರಿಗೂ ಫೇಸ್‌ಬುಕ್ಕ್‌ನಲ್ಲಿ ಲಿಂಕ್ ಒದಗಿಸುತ್ತಿದ್ದೇನೆ. ನಮ್ಮ ಸಂವಹನ, ಸಂಘಟನೆ ಹಾಗೂ ಸಂಘರ್ಷಗಳು ನಿರಂತರವಾಗಿರಲಿ. ನಮ್ಮ ಜಗಳಗಳಲ್ಲೂ ಸೊಗಸಿರಲಿ, ಭಾಷೆಯಲ್ಲಿ ಶುದ್ಧಿ ಇರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಸದಾ ಊರ್ಧ್ವಮುಖಿಯಾಗಿರಲಿ!

Monday, March 14, 2011

ಬಹಳ ದಿನಗಳ ಗೆಳೆಯ...







ಚುಕ್ಕು, ಚುಕ್ಕು, ಚುಕ್ಕು... ಸದ್ದು ಮಾಡುತ್ತಾ ಡೋವರ್‌ನಿಂದ ಹೊಬೋಕನ್ನ್ ಕಡೆಗೆ ಗಾಳಿಯನ್ನು ಎರಡು ಬಣವಾಗಿ ಇಬ್ಬಾಗಿಸಿಕೊಂಡು ಹಳಿಗಳ ಮೇಲೆ ಹುಳುವಾಗಿ ಹರಿದುಕೊಂಡು ಹೋಗುತ್ತಿದ್ದ ನಮ್ಮೂರಿನ ಲೋಕಲ್ ಟ್ರೇನು, ಬಹಳ ದಿನಗಳ ನಂತರ ಗೆಳೆಯನ ಮನೆಗೆ ಹೋಗುವ ಸಂಭ್ರಮವನ್ನು ನನ್ನ ಪಾಲಿಗೆ ತಂದುಕೊಟ್ಟಿತ್ತು. ಶುಕ್ರವಾರ (ಮಾರ್ಚ್ ೧೧) ಬೆಳ್ಳಂಬೆಳಿಗ್ಗೆಯೇ ಇಲ್ಲಿನ ರೇಡಿಯೋ ಸ್ಟೇಷನ್ನುಗಳು ಅರಚಿಕೊಂಡ ಪ್ರಕಾರ ಜಪಾನ್‌ನಲ್ಲಿ ದೊಡ್ಡದೊಂದು ಭೂಕಂಪ ಸಂಭವಿಸಿ ಅನೇಕ ಹಾನಿಗಳ ಬಗ್ಗೆ, ಸಾವು ನೋವುಗಳ ಬಗ್ಗೆ ಮನದಲ್ಲಿ ಒಂದು ಥ್ರೆಡ್ ಕೊರೆಯ ತೊಡಗಿದರೆ, ಕೈಯಲ್ಲಿ ಅಪರೂಪಕ್ಕೆ ಹಿಡಿದುಕೊಂಡ ಡಿ.ಆರ್. ನಾಗರಾಜ್‌ ಅವರ "ಸಂಸ್ಕೃತಿ ಕಥನ" ಭಾರವಾಗ ತೊಡಗಿತ್ತು, ತೊಡೆಯ ಮೇಲೆ ಮಲಗಿ ಸುಮ್ಮನಿದ್ದ ಲ್ಯಾಪ್‌ಟಾಪ್‌ ತನ್ನ ಮಡಿಲಲ್ಲಿನ ಬಿಸಿ ಬ್ಯಾಟರಿಯಿಂದ ಸುಟ್ಟು ತನ್ನ ಇರುವನ್ನು ಬ್ಯಾಗಿನೊಳಗಿಂದಲೇ ಸ್ಪಷ್ಟ ಪಡಿಸಿತ್ತು.

ಬಹಳ ದಿನಗಳ ಗೆಳೆಯನೆಂದರೆ, ನಮ್ಮೂರಿನಿಂದ ಕೇವಲ ಐವತ್ತು ಮೈಲು ದೂರದಲ್ಲಿರುವ ನ್ಯೂ ಯಾರ್ಕ್ ನಗರ! ನಮ್ಮ ಟ್ರೇನು ನೆವರ್ಕ್, ಜರ್ಸಿ ಸಿಟಿ, ಹೊಬೋಕನ್ನ್ ಮೊದಲಾದ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶಗಳನ್ನು ತಲುಪಿದಂತೆಲ್ಲ ಹಳಿಗಳು, ಗಾಲಿಗಳು ಆಗಾಗ್ಗೆ ತಿಕ್ಕಿಕೊಳ್ಳುತ್ತಿದ್ದ ಶಬ್ದ ಹಾಗೂ ಕಿಟಕಿಯಿಂದ ಹೊರಗೆ ಕಾಣುವ ಚಿತ್ರಣಗಳು ಇಪ್ಪತ್ತು ವರ್ಷದ ಹಿಂದಿನ ಯಶವಂತಪುರ ಮತ್ತು ಮೆಜೆಸ್ಟಿಕ್ ನಡುವಿನ ರೈಲು ಪ್ರಯಾಣದ ಅನುಭವವನ್ನು ಮನದಲ್ಲಿ ತಾಳೆ ಹಾಕಿ ಕೊಳ್ಳುತ್ತಿದ್ದವು.

ನಾಗರಾಜ್ ೧೯೯೬ ರ ನಿನಾಸಂನಲ್ಲಿ ಮಾಡಿದ ಭಾಷಣದ ಆವೃತ್ತಿಯ ನವ್ಯ ಸಾಹಿತ್ಯ ಸಂಸ್ಕೃತಿಯ ನಾಲ್ಕು ದೌರ್ಬಲ್ಯಗಳ ವಾಕ್ಯಗಳು ನನ್ನನ್ನು ಪದೇ-ಪದೇ ಓದುವಂತೆ ಮಾಡಿ ಚಿಂತನೆಗೆ ತೊಡಗಿಸಿದವು. ನಾನು ಬಹಳವಾಗಿ ಹಚ್ಚಿಕೊಂಡ ಅಡಿಗ, ಅನಂತಮೂರ್ತಿ, ಲಂಕೇಶ, ಕಂಬಾರ, ತೇಜಸ್ವಿ, ಮೊದಲಾದವರು ಶಂಬಾ ಜೋಷಿ, ಬೇಂದ್ರೆ, ಪುತಿನ, ತೀನಂಶ್ರೀ ಮೊದಲಾದವರಿಂದ ಹೇಗೆ ಭಿನ್ನರು - ಇವರ ವಿದ್ವತ್ತಿನಿಂದ ಕನ್ನಡ ಸಂಸ್ಕೃತಿಯನ್ನು ಅಖಂಡವಾಗಿ ಪುನರ್ ನಿರ್ಮಾಣ ಮಾಡಬಲ್ಲ ಒಬ್ಬ ಚಿಂತಕನೂ ನಮ್ಮಲ್ಲಿ ಮೂಡಿಬರಲಿಲ್ಲ - ಎಂಬ ವಾಕ್ಯಗಳು ಕಾಫಿ ಹೀರದ ಶುಕ್ರವಾರದ ಮುಂಜಾನೆಯ ಬಹಳ ದಿನಗಳ ನಂತರ ಕನ್ನಡವನ್ನು ಓದುತ್ತಿದ್ದ ಮನಸ್ಸಿಗೆ ಭಾರವಾಗಿ ಕಂಡುಬಂದವು. ಡಿ.ಆರ್.ಎನ್., ಎನ್ನುವ ಕನ್ನಡದ ಪ್ರವಾದಿ ಯಾರು? ನಮ್ಮಿಂದ ಅವರು ಚಿಕ್ಕ ವಯಸ್ಸಿನಲೇ ದೂರವಾದದ್ದು ಹೇಗೆ? ಯಾವಾಗಲಾದರೂ ಸಮಯ ಸಿಕ್ಕಾಗ ಅವರ ಸ್ನೇಹಿತ ಮತ್ತು ಪುಸ್ತಕದ ಸಂಪಾದಕರಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಬೇಕು, ೧೯೯೭ ರಲ್ಲಿ ನಾಗರಾಜ್ ಅವರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದ್ದ ಆಡಿಯೋ-ವೀಡಿಯೋ ಗಳಿದ್ದರೆ ಹುಡುಕಬೇಕು...ಹೀಗೆ ಅನೇಕ ಅನೇಕ ಗೊಂದಲಗಳು ತಲೆಯಲ್ಲಿ ಸುತ್ತಿಕೊಳ್ಳತೊಡಗಿದವು. ಜೊತೆಗೆ ನಾಗರಾಜ್ ಅವರ ಪುಸ್ತಕಗಳಲ್ಲಿ ಹೆಸರಿಸುವ, ಉದಾಹರಿಸುವ ಅನೇಕಾನೇಕ ಪುಸ್ತಕಗಳನ್ನೂ-ಪರಾಮರ್ಶೆಗಳನ್ನೂ ಖುದ್ದಾಗಿ ಪರಿಶೀಲಿಸಬೇಕು ಎಂಬೆಲ್ಲ ಮಲ್ಟಿ-ಜನ್ಮಗಳ ಟ್ಯಾಸ್ಕ್ ಲಿಸ್ಟುಗಳು ಹುಟ್ಟತೊಡಗಿದವು. ಜೊತೆಯಲ್ಲಿ ಒಂದು ಜನಾಂಗ, ಸಂಸ್ಕೃತಿ, ಭಾಷೆಯನ್ನು ಸ್ಥೂಲವಾಗಿ ಅರಿಯದೇ ಹುಟ್ಟಿನಿಂದ ಅದರ ಒಡನಾಟದಲ್ಲಿ ತೊಡಗದೇ ಹೊರಗಿನವರಾಗಿ ಸಂಸ್ಕೃತಿಯೊಂದನ್ನು ಅವಲೋಕಿಸುವುದರಲ್ಲಿನ ಮಿತಿಗಳು ಪರಕೀಯತೆಯನ್ನು ಹೆಚ್ಚು ದೊಡ್ಡದನ್ನಾಗಿ ಮಾಡಿ ತೋರಿಸತೊಡಗಿದ್ದು, ಒಂದು ರೀತಿ ಮ್ಯಾಪ್‌ಕ್ವೆಸ್ಟಿನಲ್ಲಿ ಚಿಕ್ಕದಾಗಿ ಕಾಣಸಿಗುವ ನ್ಯೂ ಯಾರ್ಕ್ ನಗರದ ಬಿಲ್ಡಿಂಗುಗಳು ನಮ್ಮ ಕಣ್ಣೆದುರೇ ಅವುಗಳ ಬೃಹತ್ ನೆಲೆಯನ್ನು ತೆರೆದುಕೊಂಡ ಹಾಗೆ ಬೆನ್ನ ಹುರಿಯಲ್ಲಿ ಮಿಂಚಿನ ಸಂಚಕಾರವಾಯಿತು. ನಾಗರಾಜ್ ಅವರ ಕಥನಗಳನ್ನು ಓದುತ್ತಿದ್ದ ಹಾಗೆ "ಪತ್ರಿಕೆ" ಹಾಗೂ ಅದರ ವಿಶೇಷಣಗಳ ನೆನಪುಗಳಾಗಿ - ಪುಂಡಲೀಕ ಶೇಟ್, ರವೀಂದ್ರ ರೇಶ್ಮೆ, ಕಟ್ಟೆ ಪುರಾಣ, ಬಂ, ಗುಂ, ಟೀಕೆ-ಟಿಪ್ಪಣಿ - ಮೊದಲಾದವುಗಳೆಲ್ಲ ಜಾತ್ರೆಯ ತೇರನ್ನು ಎಳೆಯಲು ತಯಾರಾಗಿ ನಿಂತ ಯುವಕರಂತೆ ಹಗ್ಗವನ್ನು ಹಿಡಿದುಕೊಂದು ಮನದಲ್ಲಿ ಪುಟಿದು ನಿಂತವು. ೧೯೯೭ರಲ್ಲಿ ಮೊದಲು ಇಂಟರ್ನೆಟ್ಟಿನಲ್ಲಿ "ಸಂಜೆವಾಣಿ"ಯನ್ನು ಓದಿದ ಪುಳಕಗಳಾಗಿ, ಅಂದೇ ಕನ್ನಡದ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿ ಅನಿವಾಸಿ ಕನ್ನಡಿಗರಿಗೆಲ್ಲ ಹೊಸ ಹುರುಪನ್ನು ನೀಡಿದ್ದ ಮಣಿಯವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವಲ್ಲಿ, ನಾಗರಾಜ್‌ರ ಅನುಭವಗಳು ಸಹಾಯಕಾರಿಯಾದವು.

ಕನ್ನಡದ ಹಿಂದಿನ ವಿದ್ವಾಂಸರ ಸಾಹಿತ್ಯ, ದಾರ್ಶನಿಕತೆ, ನವ್ಯರ ಕಲಸು ಮೇಲೋಗರ, ನವ್ಯೋತ್ತರ ಪ್ರಯೋಗಳು, ಬಂಡಾಯ-ದಲಿತರ ಧ್ವನಿಗಳು, ಜಾತಿ-ರಾಜಕೀಯದಲ್ಲಿ ಹೊರಬಂದ ಕೂಗುಗಳು, ದೊಡ್ಡ ದೊಡ್ಡ ಸಂಭ್ರಮಗಳನ್ನು ಸಣ್ಣ ಕಥೆಗಳಲ್ಲೇ ನೇಯ್ದ ಅಥವಾ ಕಟ್ಟು ಹಾಕಿದ ಬಂಧನಗಳ ರೂಪಗಳು, ಇನ್ನೂ ಹಳೆಯ ನಾಟಕಗಳಿಗೆ ಜೋತು ಬಿದ್ದು ಹೊಳಪನ್ನು ಕಾಣದ ರಂಗದ ಪರದೆಗಳು, ಸಿನಿಮಾ ಎಂಬ ಭ್ರಮಾಲೋಕಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಇತರ ಕಲಾ ಪ್ರಕಾರಗಳು - ಹೀಗೆ ಅನೇಕಾನೇಕ ಯೋಚನೆಗಳ ಅಲೆಗಳನ್ನು ನಾಗರಾಜ್‌ ಅವರ ಪುಸ್ತಕ ಕೇವಲ ಇಪ್ಪತ್ತು-ಮೂವತ್ತು ನಿಮಿಷಗಳಲ್ಲಿ ಏಳಿಸಿ ಚಲಿಸುತ್ತಿರುವ ಟ್ರೈನಿನಲ್ಲಿ ಚಲನೆಯಿಲ್ಲದ ದೇಹದೊಳಗೆ ಅನೇಕ ರೋಚಕತೆಗಳನ್ನು ಹುಟ್ಟುವಲ್ಲಿ ಯಶಸ್ವಿಯಾಗಿತ್ತು. ಪಂಡಿತರಲ್ಲದವರಿಂದ ಎಂತಹ ಸಾಹಿತ್ಯ ಬರುತ್ತದೆ, ಮಾರಿ ಜಾತ್ರೆಯನ್ನು ಕಾಣದ, ಕೋಣನ ಬಲಿಯನ್ನೆ ನೋಡದ, ಗಡಿ-ಮಾರಿಗಳನ್ನು ಅರ್ಥ ಮಾಡಿಕೊಳ್ಳದ ಸಂತತಿ ಈ ಸಮುದಾಯಕ್ಕೆ ಎಂತಹ ರೂಪವನ್ನು ಕೊಟ್ಟೀತು? ಚಂದ್ರಗುತ್ತಿಯಲ್ಲಿನ ಬೆತ್ತಲೆ ಪೂಜೆಯ ಸುತ್ತಣ ನಡೆದ ಸಾಮಾಜಿಕ ಚಳುವಳಿ, ಅದೆಷ್ಟೋ ದೂರದಲ್ಲಿಂದ "ಉಧೋ ಉಧೋ" ಹಾಡಿಕೊಂಡು ಹೊರಟು ಹೋಗುತ್ತಿದ್ದ ಎತ್ತಿನ ಗಾಡಿಗಳು, ಬೆತ್ತಲನ್ನು ಮುಚ್ಚಲು ಬಳಕೆಗೆ ಯಥೇಚ್ಛವಾಗಿ ಸಿಗುತ್ತಿದ್ದ ಬೇವಿನ ಸೊಪ್ಪು, ನಾಗರಿಕರಷ್ಟೇ ಗುರುತಿಸುವ ಅನಾಗರಿಕ ವರ್ತನೆ - ಇತ್ಯಾದಿಗಳೆಲ್ಲ ನರ್ತಿಸತೊಡಗಿದವು. ಯಾರೋ ಮನದೊಳಗೆ ಮಲಗಿದ್ದ ಬುಗುರಿಗೆ ಹುರಿಯನ್ನು ಸುತ್ತಿ ಎಂತಿ ಅಂತರ ಪಿಚ್ಚನ್ನು ಹಾಕಿದಂತೆ ಗಾಳಿಯಲ್ಲಿ ಸುತ್ತಿ ಬಂದು ಅಂಗೈನ ಮಧ್ಯೆಯಲ್ಲಿನ ನನ್ನ ಆಟಿಕೆ ಸುತ್ತಿ-ಸುತ್ತಿ ಗಿರುಕಿ ಹೊಡೆಯಲಾರಂಭಿಸುವ ಹೊತ್ತಿಗೆ ನ್ಯೂ ಯಾರ್ಕ್ ನಗರ ದುತ್ತನೆ ಎದುರಾಗಿತ್ತು.

***

ಅದೇ ನ್ಯೂ ಯಾರ್ಕ್ ನಗರ?! ಅಲ್ಲ, ಬದಲಾಗಿರುವ ಚಿತ್ರ, ಇಲ್ಲ, ಅವೇ ಬಿಲ್ಡಿಂಗುಗಳು, ಅಲ್ಲ, ಹೊಸ ವಿನ್ಯಾಸಗಳು, ಅಲ್ಲ, ಅದೇ ನಿರಂತರತೆ.... ಹೀಗೆ ಅನೇಕ ಅಲ್ಲ-ಇಲ್ಲಗಳ ನಂತರ ನಾನಿದ್ದೇನೆ ಇಲ್ಲಿಯೇ - ಶತಶತಮಾನಗಳಿಂದ ಎನ್ನುವ ಅಖಂಡತೆ ಅನುಭವಕ್ಕೆ ಬಂತು. ಅದರ ಸೌಂದರ್ಯ, ವಿಸ್ತಾರ, ಅಬ್ಬರದ ಮುಂದೆ ನಮ್ಮ ಅನುಭವಗಳು ಎಷ್ಟು ಕನಿಷ್ಠವಾದವುಗಳು ಎಂದೂ ಅನಿಸಿತು, ಒಂದು ರೀತಿ ನೊಣ ದೊಡ್ಡದೊಂದು ಆನೆಯ ದೇಹದ ಮೇಲೆ ಕಾಣುವ ಧೂಳಿನ ಹಾಗೆ. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಅದೇ ಗಾಂಭೀರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್! ಉಳಿದ ಕಟ್ಟಡಗಳು ಹಾಗೂ ಕಲರವಗಳ ನಡುವೆ ನೋಡಿದರೆ ಅದು ಅಷ್ಟೊಂದು ದೊಡ್ಡದೇ ಎಂದು ಒಮ್ಮೆ ಅನುಮಾನವಾದರೂ ಕೆಲವೊಮ್ಮೆ ದೊಡ್ಡದನ್ನು ದೂರದಿಂದ ನೋಡಿಯೇ ತಿಳಿಯಬೇಕು ಎನ್ನಿಸಿದ್ದು ನಿಜ.

ಬಿಸಿನೆಸ್ಸು ಮೀಟಿಂಗ್‌ಗೆ ಹೊಗಿ ಅಲ್ಲಿ ಕಾಫಿ ಹೀರುತ್ತಿದ್ದ ಹಾಗೆ ಸರ್ವಾಂತರ್ಯಾಮಿ ಸಿಎನ್‌ಬಿಸಿ ವರದಿಗಳೆಲ್ಲ ನನ್ನ ಸಹೋದ್ಯೋಗಿಗಳಲ್ಲೂ ಪಸರಿಸಿ ನೈಸರ್ಗಿಕ ಪ್ರಕೋಪದ ಪರಿಣಾಮದ ಚರ್ಚೆಗಳು ಜಪಾನ್‌ನಿಂದ ದೂರದ ಹವಾಯಿಯಲ್ಲಿ ಸುನಾಮಿ ಅಲೆಗಳೆದ್ದು ತೊಂದರೆಯಾದ ಬಗ್ಗೆ ವಿಸ್ತಾರಗೊಂಡಿದ್ದವು. ಎಲ್ಲೇ ಏನಾದರೂ ತಮ್ಮ ಬಾಟಮ್‌ಲೈನಿನ ಬಗ್ಗೆ ಆಲೋಚಿಸುವ ಅಮೇರಿಕನ್ನ್ ಮನಸ್ಸಿನ ಮಿತಿ ಎಂದುಕೊಂಡರೆ ತಪ್ಪಾದೀತು. ಇಂದಿನ ಗ್ಲೋಬಲ್ ವ್ಯವಸ್ಥೆಯಲ್ಲಿ ದೊಡ್ಡ-ದೊಡ್ಡ ಆಟಗಾರರಿಗೆ ನೆಗಡಿ-ಜ್ವರ ಬಂದರೇ ಕಷ್ಟವಾಗುವಾಗ ಇನ್ನು ಭೂಕಂಪ, ಸುನಾಮಿಗಳು ಬರೀ ನೀರಿನ ಅಲೆಗಳಾಗಿ ಮಾತ್ರ ತಟ್ಟದೇ ಗಾಳಿ ಹಾಗೂ ಉಳಿದ ಮಾಧ್ಯಮಗಳಲ್ಲೂ ಸಂವಹಿಸಬಲ್ಲ ಶಕ್ತಿ ಅಥವಾ ದೌರ್ಬಲ್ಯವನ್ನು ಕುರಿತು ಚಿಂತಿಸುವಂತಾಯಿತು.

ಒಟ್ಟಿನಲ್ಲಿ, ಈ ವಿಶ್ವದ ದೊಡ್ಡಣ್ಣ ನ್ಯೂ ಯಾರ್ಕ್ ನಗರದ ಒಂದು ದಿನದ ಸಹವಾಸದಿಂದಾಗಿ, ನಾಗರಾಜ್ ಅಂಥವರ ಮಹಾನ್ ಚೇತನಗಳ ಬರಹದ ದೆಸೆಯಿಂದ "ಅಂತರಂಗ"ದ ಅನಿವಾಸಿ ಮನಸ್ಸು ಒಂದು ಕ್ಷಣದ ಮಟ್ಟಿಗಾದರೂ ದಿನನಿತ್ಯದ ಜಂಜಾಟಗಳಿಂದ ದೂರಗೊಂಡು ಕನ್ನಡ-ನಮ್ಮತನ-ನಾಡಿನ ಬಗ್ಗೆ ಯೋಚಿಸುವಂತೆ ಮಾಡಿದ್ದು ದೊಡ್ಡದೆ. ಈ ಅಗಾಧತೆಗಳ ನಡುವೆ ನಮ್ಮ ನಮ್ಮ ದೊಡ್ಡದನ್ನು ಚಿಕ್ಕದಾಗಿ ಪರಿವರ್ತಿಸಬಲ್ಲ ಇಂತಹ ಮಹಾನ್ ಅವಕಾಶಗಳು ಆಗಾಗ್ಗೆ ಬರುತ್ತಿರಲಿ.

Thursday, February 10, 2011

ಎಂ.ಪಿ. ಪ್ರಕಾಶ್... ಶ್ರದ್ಧಾಂಜಲಿ




ನಿನ್ನೆ (ಬುಧವಾರ, ಪೆಬ್ರುವರಿ ೯) ನಿಧನರಾದ ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಾವು ಶಾಲಾ ಮಕ್ಕಳಾಗಿದ್ದಾಗ ಸಾಮಾಜಿಕ ಚಳುವಳಿಗಳ ಹೆಸರಿನೊಂದಿಗೆ ಪ್ರಕಾಶ್ ಹೆಸರನ್ನು ಕೇಳುತ್ತಿದ್ದ ನಮಗೆ ಅವರು ಒಬ್ಬ ಹೋರಾಟಗಾರ, ರಾಜಕಾರಣಿ ಹಾಗೂ ಒಬ್ಬ ಬರಹಗಾರರಾಗಿಯೂ ಗೊತ್ತು. ಮಾರ್ಕ್ಸ್, ಲೋಹಿಯಾ, ಜೆಪಿ ಮೊದಲಾದ ಸಾಮಾಜಿಕ ಧ್ವನಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಆರ್.ವಿ. ದೇಶಪಾಂಡೆ, ಪಿ.ಜಿ.ಆರ್. ಸಿಂಧಿಯಾ, ಎಸ್. ಬಂಗಾರಪ್ಪ ಮೊದಲಾದವರೊಂದಿಗೆ ಕರ್ನಾಟಕದ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಂತವರಾಗಿದ್ದರು.

ಶಾಲಾ ದಿನಗಳಲ್ಲಿ ಅವರ ನಾಟಕಗಳನ್ನು ಓದಿ ನನಗೆ ಒಬ್ಬ ಬರಹಗಾರರಾಗಿಯೂ ಪರಿಚಯವಿದ್ದ ಪ್ರಕಾಶ್ ಅವರು, ೨೦೦೬ ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ನಾಲ್ಕನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ ಅತಿಥಿಗಳಲ್ಲೊಬ್ಬರಾಗಿದ್ದಾಗ ಮಾತನಾಡಲು ಸಿಕ್ಕಿದ್ದರು. ಸಮ್ಮೇಳನದ ಸಮಯದಲ್ಲಿ ಬಹಳ ಚಿಂತನಶೀಲ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಕಾಶ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನನ್ನ "ಕೋಮಲ ಗಾಂಧಾರ"ವನ್ನು ಅವರ ಅಮೃತಹಸ್ತದಿಂದ ಬಿಡುಗಡೆಗೊಳಿಸಿದ್ದು ನನ್ನ ಪುಣ್ಯ. ಒಬ್ಬ ನಾಟಕಕಾರರಾಗಿ ದೂರದ ಅಮೇರಿಕದಲ್ಲಿ ಈ ಕನ್ನಡ ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವಂತಾಗಿದ್ದು ಕಾಕತಾಳೀಯವಾಗಿದ್ದರೂ ಅದು ನನ್ನ ಅದೃಷ್ಟಗಳಲ್ಲೊಂದು.

ಆಗಿನ ಕಾಲದಲ್ಲೇ ಬಾಂಬೆಯಿಂದ ಲಾ ಡಿಗ್ರಿ ಪಡೆದು ಮೈನ್‌ಸ್ಟ್ರೀಮ್ ರಾಜಕಾರಣಕ್ಕೆ ತಮ್ಮನ್ನು ತೊಡಗಿಸಿಕೊಂಡ ಎಂ.ಪಿ. ಪ್ರಕಾಶ್ ಒಬ್ಬ ಉತ್ತಮ ವಾಗ್ಮಿ, ಚಿಂತನಶೀಲ ಬರಹಗಾರ ಹಾಗೂ ಸಂವೇದನಾಶೀಲ ವ್ಯಕ್ತಿ. ಮೊದಲಿನಿಂದಲೂ ತಮ್ಮನ್ನು ತಾವು ಜನತಾಪಕ್ಷ (ಅಥವಾ ಕಾಂಗ್ರೆಸ್ಸಿಗೆ ವಿರುದ್ಧವಾದ ಬಣಗಳಲ್ಲಿ) ಅಥವಾ ಇತರ ಜನತಾ ಚಳುವಳಿಗಳಲ್ಲಿ ತೊಡಗಿಸಿಕೊಂಡ ಕಾರಣವೋ ಏನೋ ಕರ್ನಾಟಕದ ಜನತೆ ಅವರ ಸೇವೆಯನ್ನು ಇನ್ನಷ್ಟು ಪಡೆಯಲಾಗದಿದ್ದುದು. ಪ್ರಕಾಶ್ ಅಂತಹ ರಾಜಕಾರಣಿಗಳು ವಿರಳ, ಅವರ ಕಾಲಾನಂತರವೂ ಸದಾ ಜೀವಂತವಿರುವ ಅವರ ಸಾಮಾಜಿಕ ಅಭ್ಯುದಯದ ಕಳಕಳಿಗಳು ನಾಡನ್ನು ಎಂದಿಗೂ ಪ್ರಗತಿಪಥದತ್ತಲೇ ಕೊಂಡೊಯ್ಯುತ್ತವೆ ಎಂಬುದು ನಿಜ.

Saturday, February 05, 2011

ಸೋಶಿಯಲ್ಲ್ ಮೀಡಿಯಾ - ಸಾಮಾಜಿಕ ಕ್ರಾಂತಿ

ಓದೋಕೆ ಬರೆಯೋಕೆ ಬೇಕಾದಷ್ಟು ಅವಕಾಶಗಳು ಇದ್ದಂತೆ ಹಾಗೆ ಮಾಡದೇ ಇರೋದಕ್ಕೂ ಸಾಕಷ್ಟು ನೆಪಗಳೂ ಉದ್ಭವವಾಗುತ್ತಾ ಇತ್ತೀಚೆಗೆ ಓದಿ-ಬರೆಯೋ ರೂಢಿಯೇ ತಪ್ಪಿ ಹೋದಂತಾಗಿರೋದು ವಿಶೇಷ. ಮೊದಲೆಲ್ಲ ದೊಡ್ಡ ಸ್ಕ್ರೀನುಗಳಲ್ಲಿ ದೊಡ್ಡದಾಗಿ ಉದ್ದುದ್ದವಾಗಿ ಓದುತ್ತಿದ್ದವರಿಗೆ ಈಗ ಚಿಕ್ಕ ಸ್ಕ್ರೀನುಗಳಲ್ಲಿನ ಸಣ್ಣ-ಪುಟ್ಟ ಓದುಗಳಲ್ಲೋ ಅಥವಾ ಯಾವುದೋ ಲಿಂಕ್‌ನ ಬೆನ್ನು ಬಿದ್ದು ಅದರ ಹಿಂದಿನ ತಲಾಷೆಯಲ್ಲೋ ದಿನ ಕಳೆದು ಹೋಗಿಬಿಡುತ್ತದೆ. ಸೀರಿಯಸ್ಸಾಗಿ ಒಂದು ಪುಸ್ತಕವನ್ನು ಬಿಟ್ಟು ಬಿಡದಂತೆ ಕವರಿನಿಂದ ಕವರಿನವರೆಗೆ ಓದದೇ ಎಷ್ಟೋ ವರ್ಷಗಳೇ ಆಗಿ ಹೋಗಿವೆ. ಓದುವ ಚಾಳಿ ಹಾಗಿರಲಿ ಇನ್ನು ಬರೆಯೋದರ ಹವ್ಯಾಸವಂತೂ ಬಿಟ್ಟೇ ಹೋಗಿದೆ, ನೋಟ್ ಪುಸ್ತಕದಲ್ಲಿ ಒಂದಿಷ್ಟು ಬರೆದುಕೊಳ್ಳುವುದು ರೂಢಿ, ಅದೂ ಕೂಡಾ ಇಂದಿನ ಐಪ್ಯಾಡ್ (ipad) ದಿನಗಳಲ್ಲಿ ಸ್ಕ್ರಿಬಲ್ಲ್ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ.

ಇಂದಿನ ಫೇಸ್‌ಬುಕ್ ಸಂವೇದನೆಯ ದಿನಗಳಲ್ಲಿ ಎಲ್ಲವೂ ಹಗುರ ಮಯವಾಗಿ ಬಿಡುತ್ತಿದೆಯೇನೋ ಎಂದು ಬೆನ್ನ ಹುರಿಯಲ್ಲಿ ಹೆದರಿಕೆ ಮೂಡುವ ಹೊತ್ತಿಗೇ ಈಜಿಪ್ಟ್‌ನಲ್ಲಿ ಹೊತ್ತಿ ಉರಿಯುತ್ತಿರುವ ರಾಷ್ಟ್ರೀಯ ಕಲಹದ ಸಂವಹನದ ಬೆನ್ನುಲೆಬಾಗಿ ಸೋಶಿಯಲ್ಲ್ ಮೀಡಿಯಾ ಎದ್ದು ಕಾಣಿಸಿ ಹೊಸ ಯುಗದಲ್ಲಿ ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿದೆ. ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿ ಸಣ್ಣಪುಟ್ಟದಾಗೇ ಶುರುವಾಗುವ ಅಲೆಗಳು ಕೊನೆಗೆ ಪ್ರಬಲ ಸುನಾಮಿಯಾದ ಉದಾಹರಣೆಗಳು ಬೇಕಾದಷ್ಟಿವೆ. ನಾನೂ ಇವೆಲ್ಲವುಗಳಲ್ಲಿ ಒಂದೊಂದು ಅಕೌಂಟ್ ಎಂದು ತೆರೆದುಕೊಂಡಿದ್ದು ಮಾತ್ರ, ಅಂದು ನೆಟ್ಟ ಗಿಡ ಇಂದಿಗೂ ಒಣಗುತ್ತಲೇ ಇದೆಯೇ ಹೊರತೂ ಎಂದು ಅದಕ್ಕೆ ನೀರುಣಿಸಿ ಬೆಳೆಸುವಷ್ಟು ವ್ಯವಧಾನವಂತೂ ನನಗೆ ಮೈಗೂಡಿದ್ದಿಲ್ಲ. ಆದರೆ ಈ ಸೋಷಿಯಲ್ಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಹೋದರೆ ಔಟ್‌ಡೇಟೆಡ್ ಆಗಿ ಹೋಗುವ ಹೆದರಿಕೆಯೂ ದೂರವಿಲ್ಲ.

ನಮ್ಮ ದೇಶದ ಸ್ವಾತಂತ್ರ್ಯದ ಚಳುವಳಿಯ ದಿನಗಳಲ್ಲಿ ವೈಯಕ್ತಿಕವಾಗಿ ಅನೇಕ ಮುಖಂಡರು ಲಕ್ಷಾಂತರ ಜನರನ್ನು ದೇಶದ ಉದ್ದಗಲಕ್ಕೂ ಒಟ್ಟುಗೂಡಿಸುತ್ತಿದ್ದರು, ಹಾಗೆ ಒಟ್ಟು ಗೂಡಿದ ಜನರೆಲ್ಲರೂ ತಮ್ಮದೇ ಆದ "ಸೋಶಿಯಲ್ಲ್ ಮೀಡಿಯ"ದ ಒಂದು ನೆಟ್‌ವರ್ಕ್ ಒಂದನ್ನು ಸೃಷ್ಟಿಸಿಕೊಂಡಿರಬೇಕು, ಇಲ್ಲವೆಂದಾದರೆ ಇಂತಲ್ಲಿ ಈ ದಿನ ಈ ಚಳುವಳಿ ನಡೆಯುತ್ತದೆ, ಅದಕ್ಕೆ ಸಿದ್ಧರಾಗುವಂತೆ ಸಂದೇಶಗಳು ಹೇಗೆ ಪಸರಿಸುತ್ತಿದ್ದವೋ? ಆಗ ಲಭ್ಯವಿದ್ದ ವೃತ್ತಪತ್ರಿಕೆಗಳು ಹಾಗೂ ಪ್ರಿಂಟ್ ಮಾಧ್ಯಮಗಳು ಸರ್ಕಾರ ವಿರುದ್ಧ ಪ್ರಕಟಿಸಲು ಹೆದರುತ್ತಿದ್ದ ಕಾಲದಲ್ಲಿ ಜನರು ತಮಗೆ ಅನುಕೂಲವಾಗುವ ರೀತಿಯಲ್ಲಿ ಕೈ ಬರಹದಿಂದಲೋ ಅಥವಾ ಸಣ್ಣ-ಪುಟ್ಟ ಗುಪ್ತ ಮೀಟಿಂಗ್‌ಗಳ ಸಹಾಯದಿಂದ ಸಂದೇಶಗಳನ್ನು ಬಿತ್ತರಿಸುತ್ತಿದ್ದರೆಂದು ಕಾಣುತ್ತದೆ. ಈಗಿನ ೨೦೧೧ ರಲ್ಲಿ ಈಜಿಪ್ಟ್‌ನಲ್ಲಾಗುವ ಜನಾಂದೋಲನವನ್ನು ಒಂದು ಸಣ್ಣ ಕ್ರಾಂತಿಯೆಂದು ಕರೆದರೆ ಈಗಿನ ಇಂಟರ್‌ನೆಟ್‌ನ ಸಹಾಯದಿಂದ ಸುಲಭವಾಗಿ ಹರಡುವ ಸಂದೇಶಗಳನ್ನು ಅರವತ್ತು ವರ್ಷದ ಹಿಂದೆ ಭಾರತದಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ಹೋಲಿಸಿದರೆ ಬಹಳ ಸರಳವೆಂದೆನಿಸುವುದಿಲ್ಲವೇನು?

ಈಗಿನ ಜನಾಂದೋಲನ ತಾಜಾ ಸುದ್ದಿ ಹಾಗೂ ಮಾಹಿತಿಗೆ ಇಂಬು ಕೊಡುತ್ತದೆ, ಇಂದು ಆಗುವ ಸುದ್ದಿಗಳನ್ನು ನಾಳೆ ಪ್ರಕಟಿಸುವ ಸುದ್ದಿ ಪತ್ರಿಕೆಗಳು ಕಾಲವಾಗುವ ಪರಿಸ್ಥಿತಿ ಬೆಳೆದಿದೆ. ದೈನಿಕ ಸುದ್ದಿ ಪತ್ರಿಕೆಗಳು ದೈನಿಕ ಮ್ಯಾಗಜೀನುಗಳಾಗಿ ಪರಿವರ್ತನೆಗೊಳ್ಳುತ್ತಿರುವ ಹೊತ್ತಿಗೆ ಅವುಗಳ ಜರ್ನಲಿಸ್ಟುಗಳು ಪೂರ್ವದಿಂದ ಪಶ್ಚಿಮದೆಡೆಗೆ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಸಹ ಸುದ್ದಿಗೆ ಕಾತರರಾಗಿರುವ ಪ್ರಪಂಚದಾದ್ಯಂತ ಹರಡಿಕೊಂಡ ಇನ್‌ಫರ್ಮೇಷನ್ನ್ ಸ್ಯಾವೀ ಜನರಿಗೆ ತಾಜಾ ಸುದ್ದಿಯನ್ನು ಉಣಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲಲ್ಲಿ ಇನ್‌ವೆಷ್ಟಿಗೇಟಿವ್ ಜರ್ನಲಿಸಮ್ ಎಂಬ ಹೆಸರಿನಲ್ಲಿ ಹಲವಾರು ಸ್ಕ್ಯಾಂಡಲ್ಲುಗಳು ಹೊರಬಂದು ಕ್ಲಾಸ್ಸಿಕ್ ಪತ್ರಿಕೋದ್ಯಮವನ್ನು ಇನ್ನೂ ಜೀವಂತವಿರಿಸಿವೆ. ಇಂಟರ್ನೆಟ್ ಕಳೆದ ಎರಡು ದಶಕಗಳಲ್ಲಿ ಸುದ್ದಿ ಮಾಧ್ಯಮದ ಬೆನ್ನೆಲುಬಾಗಿ ಬೆಳೆದು ಎಲ್ಲವೂ ಅದರ ಸುತ್ತಲೂ ಸುತ್ತ ತೊಡಗಿವೆ ಎಂದರೆ ಅತಿಶಯೋಕ್ತಿಯೇನಲ್ಲ.

ಸೋಷಿಯಲ್ಲ್ ನೆಟ್‌ವರ್ಕಿಂಗ್‌ ವ್ಯವಸ್ಥೆಗಳು ಬೆಳೆಯುವುದರ ಹಿಂದೆ ಯುವ ಜನಾಂಗದ ಸಂಘ ಜೀವನದ ಅಗತ್ಯ ಬಹಳ ಮುಖ್ಯವಾಗಿದೆ, ದಿನದ ಉದ್ದಕ್ಕೂ ಒಂದೆರೆಡು ಸಣ್ಣಪುಟ್ಟ ವಾಕ್ಯಗಳಲ್ಲಿ ಆಗು-ಹೋಗುಗಳನ್ನು ಬಿತ್ತರಿಸುವುದರ ಜೊತೆಗೆ ತಮ್ಮಲ್ಲಿನ ಯಾವುದೇ ಬದಲಾವಣೆಗಳನ್ನೂ ಒಂದೇ ಮಾಧ್ಯಮದಡಿಯಲ್ಲಿ ಎಲ್ಲರೊಡನೆ ಹಂಚಿಕೊಳ್ಳುವ ಅಗತ್ಯಕ್ಕೆ ಒಂದು ಹೊಸಮುಖವನ್ನು ಕಂಡುಕೊಳ್ಳಲಾಗಿದೆ. ಈ ಸೋಷಿಯಲ್ಲ್ ನೆಟ್‌ವರ್ಕ್‌ಗಳಲ್ಲಿ ಮುಖ್ಯವಾಗಿ ಒಬ್ಬ ವ್ಯಕ್ತಿಯ ಬದುಕಿನ ಆಗು-ಹೋಗುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡಲು ಬೆಳಕಿನ ವೇಗದ ಹೊಸ ಮುಖವನ್ನು ಸೃಷ್ಟಿಸಲಾಗಿದೆ.

ಪರಿವರ್ತನೆ ಬಹಳ ಅಗತ್ಯ - ಒಂದು ಶತಮಾನದ ಹಿಂದೆ ಎನ್ನುವುದಕ್ಕಿಂತ ಕಳೆದ ವರ್ಷ ಇದ್ದುದು ಇಂದು ಚಾಲ್ತಿಯಲ್ಲಿ ಇರಲಾರದು. ಇಂದಿನ ವ್ಯವಸ್ಥೆ ಎಷ್ಟು ಬೇಗ ಬೆಳೆದುಕೊಳ್ಳುವುದೋ ಅಷ್ಟೇ ಬೇಗ ಅವಸಾನವನ್ನೂ ಹೊಂದಬಹುದು. ಪ್ರಪಂಚದಾದ್ಯಂತ ಮಿಲಿಯನ್ನುಗಟ್ಟಲೆ ಜನರು ಒಂದಲ್ಲ ಒಂದು ಅಗತ್ಯದ ಅಂಗಳದಲ್ಲಿ ಸ್ಪಂದಿಸುತ್ತಾರೆ ಎನ್ನುವುದು ಬಹಳ ಮುಖ್ಯ, ಆ ಸಂವೇದನೆ ಆಯಾ ಕಾಲದಲ್ಲಿ ಲಭ್ಯವಾಗುವ ತಂತ್ರಜ್ಞಾನವನ್ನು ಅವಲಂಭಿಸಿ ಅದರ ರೂಪವನ್ನು ತಾಳುವುದು ಸಹಜವಾಗುತ್ತದೆ, ಒಂದು ರೀತಿ ನೀರು ತಾನು ಇರುವ ಜಾಡಿಯ ಆಕಾರವನ್ನು ಪಡೆಯುವ ಹಾಗೆ. ಆದರೆ ಈ ಪರಿವರ್ತನೆ, ವಿಷಯಾವಲಂಭನೆ ಮತ್ತು ವೇಗ - ಸಾಧನೆಗಳಿಗೆ ಪರ್ಯಾಯವಾಗಬಾರದಿತ್ತು, ಇಂದು ನೆಟ್ಟ ಗಿಡ ನಾಳೆ ಫಲಕೊಡುವ ನಿರೀಕ್ಷೆ ಯುವ ಜನರಲ್ಲಿ ಬರಬಾರದಾಗಿತ್ತು. ಒಂದು ವಿಷಯವನ್ನು ಕುರಿತು ಗಹನವಾಗಿ ಆಲೋಚಿಸುವಲ್ಲಿ ಅಥವಾ ಒಂದು ಸಾಧನೆಯ ಹಿಂದೆ ಇಂದಿನ ತಂತ್ರಜ್ಞಾನಗಳು ಪೂರಕವಾಗಿ ಕೆಲಸಮಾಡಬೇಕೇ ವಿನಾ ಅವುಗಳು ಒಬ್ಬ ವ್ಯಕ್ತಿಯನ್ನು ವೇಗ ಹಾಗೂ ಬೇಗ ಎಂಬ ಒತ್ತಡಕ್ಕೆ ಮಣಿಸಬಾರದು. "ಕಾಯದೇ ಕೆನೆ ಕಟ್ಟದು" ಎಂಬ ಗಾದೆ ಮಾತಿನಂತೆ ಕೆಲವೊಂದಕ್ಕೆ ಸಮಯಕೊಡಬೇಕಾಗುತ್ತದೆ, ಅದರ ಬದಲಿಗೆ ಮೈಕ್ರೋವೇವ್ ಅಥವಾ ಅದಕ್ಕಿಂತಲೂ ಪ್ರಬಲವಾದ ಹೈ ಸ್ಪೀಡ್ ಅವನ್‌ಗಳಲ್ಲಿ (high speed oven) ಅರ್ಧ ನಿಮಿಷದಲ್ಲಿ ಹಾಲನ್ನು ಕೆನೆ ಕಟ್ಟಿಸಬಹುದಾದ ವಿಧಾನವನ್ನು ಇಂದಿನ ಜನತೆ ಹುಡುಕಿಕೊಂಡರೆ ಅದನ್ನು ತಪ್ಪು ಎನ್ನಲಾಗದು, ಆದರೆ ಹಾಲಿಗೆ ಒದಗಿ ಬಂದ ಹೈ ಸ್ಪೀಡ್ ಅವಕಾಶಗಳು ಎಲ್ಲ ಸಂದರ್ಭಗಳಲ್ಲೂ ನಿಜವಲ್ಲ ಎಂಬುದು ಈ ಲೇಖನದ ಕಳಕಳಿ ಅಷ್ಟೇ.

ಇಂದಿನ ಮಲ್ಟಿ ಟ್ಯಾಸ್ಕಿಂಗ್ ಜನಾಂಗಕ್ಕೆ ಅವರು ಒಂದೇ ಸಮಯದಲ್ಲಿ ಹಲವಾರು ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡು ಕಾರ್ಯ ಪ್ರವೃತ್ತರಾಗುವುದೋ ಅಥವಾ ಅವರ ಕರ್ಮಠತನವೋ ಅವರಿಗೆ ವರವಾಗಿರಲಿ, ಅದರ ಬದಲಿಗೆ ಅಲ್ಲೂ ಇಲ್ಲ, ಇಲ್ಲಿಯೂ ಸಲ್ಲ ಎನ್ನುವಂತೆ ಹಲವು ದೋಣಿಗಳಲ್ಲಿ ಒಟ್ಟೊಟ್ಟಿಗೇ ಪಯಣಿಸುವ ಪ್ರವಾಸಿಯಾಗದಿದ್ದರೆ ಸಾಕು.

Thursday, December 30, 2010

...ಎರಡು ಕಾಲಿಗೂ ಪೆಟ್ಟು ಬಿದ್ದ ಯೋಧ ಮತ್ತೆ ಯುದ್ಧಕ್ಕೆ ತಯಾರಿ ನಡೆಸಿದನಂತೆ

ಭೀಕರ ತಂಡಿ ಹವಾ...ಎಲ್ಲೆಡೆ ಮೋಡ ಮುಸುಕಿದ ವಾತಾವರಣ, ಮುಂಬರುವ ದೊಡ್ಡ ಬಿರುಗಾಳಿಗೆ ಮೊದಲು ಎಲ್ಲ ಕಡೆಗೆ ನಿಶ್ಶಬ್ಧ. ಆಗೊಮ್ಮೆ ಈಗೊಮ್ಮೆ ಸುಳಿದಾಡೋ ವಾಹನಗಳು, ರಸ್ತೆಗಳ ಮೇಲೆಲ್ಲಾ ಬೂದಿ ಹರಡಿದ ಹಾಗೆ ತೆಳುವಾಗಿ ಧೂಳಿನ ಹಾಗೆ ಹರಡಿದ ಮಂಜಿನ ತುಂತುರು ಹಾಗೂ ಪುರಸಭೆಯ ವಾಹನಗಳು ಹರಡಿದ ಪುಡಿ ಉಪ್ಪು. ಮರಗಿಡಗಳೆಲ್ಲ ತಮ್ಮ ಎಲೆಗಳನ್ನೆಲ್ಲ ಉದುರಿಸಿ ಗಾಳಿ ಬೀಸುತ್ತದೆಯೋ ಇಲ್ಲವೋ ಎನ್ನುವುದಕ್ಕೆ ಸಾಕ್ಷಿ ಹೇಳಲೂ ಮನಸ್ಸಿಲ್ಲದವರ ಹಾಗೆ ನಿಂತುಕೊಂಡಿದ್ದವು. ವರ್ಷದ ಮೇಲೆ ವರ್ಷ ಕಳೆದಿದೆ, ಎರಡು ವರ್ಷಗಳ ಹಿಂದೆ ಎಲ್ಲ ಒಳ್ಳೆಯದಾದೀತು ಎಂಬು ಆಶಾವಾದವನ್ನು ಹೊತ್ತುಕೊಂಡ ನೆಲ-ಮುಗಿಲು ಹಾಗೂ ಇವೆರೆಡರ ನಡುವಿನವೆಲ್ಲವೂ, ಚಪ್ಪೆ ಮುಖ ಹಾಕಿಕೊಂಡಿದ್ದಂತಿತ್ತು. ಈ ಛಳಿ, ಗಾಳಿಯ ಸಹವಾಸವೇ ಬೇಡ ಎಂದು ಸೂರ್ಯನೂ ಆಕಾಶದಲ್ಲಿ ಬೇಗ ಬೇಗ ಕರಗಿಹೋಗುವಂತೆ ದೌಡಾಯಿಸುತ್ತಿದ್ದ. ಸೂರ್ಯನ ಲಗುಬಗೆಯ ಪಯಣವನ್ನು ಗ್ರಹಿಸಿದ ಮೋಡಗಳು ಅವನನ್ನು ತಮ್ಮ ಮಡಿಲಿನಲ್ಲಿ ಹುದುಗಿಸಿಕೊಂಡು ಸಂತೈಸುತ್ತಿದ್ದವು.

ಎಲ್ಲ ಕಡೆಗೆ ಯುದ್ಧದ ವಾತಾವರಣವೇನಿರಲಿಲ್ಲ, ಶತ್ರುಗಳು ಸುತ್ತುವರೆದಿರಲಿಲ್ಲ, ಯುದ್ಧಕ್ಕೆ ಅಣಿಗೊಂಡು ಶಿಬಿರ ಹೂಡಿದವರಲ್ಲಿ ಯಾವುದೇ ಹೊಸ ಲವಲವಿಕೆಯೇನೂ ಮೇಲ್ನೋಟಕ್ಕೆ ಇದ್ದಂತೆ ಕಾಣಿಸಲಿಲ್ಲ. ಹೊರಗೆ ತೋರುವ ಯುದ್ಧದ ಬದಲಿಗೆ ಎಲ್ಲರ ಮನದೊಳಗೆ ಮಹಾಯುದ್ಧ ಘಟಿಸುತ್ತಿರುವಂತೆ ಮೌನ ನೆಲೆದಿತ್ತು. ತೋಪು-ಗುಂಡುಗಳೆಲ್ಲ ಎಂದಿನಿಂದಲೋ ತಯಾರಾಗಿ ಕುಳಿತು ಈಗ ತೂಕಡಿಸತೊಡಗಿದವರಂತೆ ಕಂಡು ಬಂದವು. ಕಹಳೆ-ಕೊಂಬುಗಳು ಧೂಳು ತಿನ್ನುತ್ತಿದ್ದವು.

ಇವೆಲ್ಲದರ ನಡುವೆ ಒಬ್ಬನೇ ಒಬ್ಬ ಯೋಧ ಯುದ್ಧಕ್ಕೆ ಸನ್ನದ್ಧನಾಗಿ ಕುಳಿತಿದ್ದಾನೆ, ಆದರೆ ಅವನ ಎರಡು ಕಾಲುಗಳಲ್ಲೂ ಈ ಹಿಂದೆ ನಡೆದ ಹೋರಾಟದ ದೆಸೆಯಿಂದ ಗಾಯಗಳಾಗಿ ಅಪಾರ ನೋವಿದೆ, ಅಲ್ಲಲ್ಲಿ ಈ ಹಿಂದೆ ಜಿನುಗಿ ಒಣಗಿದ ರಕ್ತದ ಕಲೆಯಿದೆ. ಈ ಮೇಲ್ಮೈಯಲ್ಲಿ ಸಣ್ಣವೆಂದು ಕಂಡು ಬಂದ ಗಾಯಗಳ ಆಳ ದೊಡ್ಡದಿದೆ, ಆಳ ಹೆಚ್ಚಿದ್ದಷ್ಟೂ ಅದರ ನೋವೂ ಹೆಚ್ಚು ಎಂಬುದು ಯೋಧನ ಮನದ ಸೂಕ್ತಿಯಾಗಿ ಹೋಗಿದೆ. ಅವನ ಭುಜವೇರಿದ ಬಾಣ-ಬಿರುಸುಗಳು ಕೆಳಗಿಳಿದಿವೆ, ದೂರದ ಮದ್ದು-ಗುಂಡುಗಳ ಗೋಜಿಗೆ ಹೋಗುವ ಯಾವ ಹುಮ್ಮಸ್ಸೂ ಕಾಣದು. ಈ ಛಳಿಗಾಲವೊಂದನ್ನು ಕಳೆದರೆ ಸಾಕು ಎನ್ನುವಷ್ಟರ ಮಟ್ಟಿಗೆ ನೈಜತೆ ಈ ಯೋಧನ ಮನದಲ್ಲಿ ಮನೆ ಮಾಡಿ ಅದು ಆಗಾಗ್ಗೆ ಸಣ್ಣ ಆಶಾವಾದದ ಕಿರಣವನ್ನು ಸೂಸಿ ಮತ್ತೆ ಕಮರಿಕೊಳ್ಳುತ್ತದೆ.

ಈ ಯುದ್ಧಗಳಲ್ಲಿ ಯಾರು ಶತ್ರು, ಯಾರು ಮಿತ್ರರು ಎಂಬುದು ಹಿಂದಿಗಿಂತ ಹೆಚ್ಚು ಗೊಂದಲವಾಗಿದ್ದರೂ, ಯೋಧನ ಮನದಲ್ಲಿ ಎಂದಿನಂತೆ ಯುದ್ಧಕ್ಕೆ ತಯಾರಿ ನಡೆಸಬೇಕು, ಯುದ್ಧವನ್ನು ಗೆಲ್ಲಬೇಕು ಎಂಬುದೇ ಬೀಜಮಂತ್ರವಾಗಿದೆ. ಅದಕ್ಕೆ ತಕ್ಕಂತೆ ಯೋಧ ಕುಂಟು-ಕುಂಟುತ್ತಲೇ ತನ್ನ ಕೈಯಾಡಿಸುತ್ತ ಕೈಗೆ ಸಿಕ್ಕ ಆಯುಧಗಳನ್ನೆಲ್ಲ ಒಮ್ಮೊಮ್ಮೆ ಪರೀಕ್ಷಿಸಿ ನೋಡುತ್ತಾನೆ. ಮುಂದೆ ನಡೆಯುವ ಘಟನಾವಳಿಗಳ ಅಸ್ಥಿರತೆ ಆತನನ್ನು ಅಶಕ್ತನನ್ನಾಗಿಸೋದಿಲ್ಲ, ನೋಯುವ ಕಾಲುಗಳೆರಡು ಅಲ್ಲಲ್ಲಿ ಅವನನ್ನು ನಿಂತು-ನಿಂತು ನಡೆಯುವಂತೆ ಮಾಡಿದ್ದರೂ ಪಯಣ ಸಾಗಿದೆ, ಸಾಗುತ್ತಿದೆ.

***

೨೦೦೮ ರ ಸೆಪ್ಟೆಂಬರ್ ಇಂದ ೨೦೧೦ ರ ಕೊನೆಯವರೆಗೆ ಬಹಳಷ್ಟು ನಡೆದು ಹೋಗಿದೆ. ಕೆಲವರು ಡಿಪ್ರೆಷ್ಷನ್ನ್ ಎಂದು ಕರೆಯುವಷ್ಟು ದೊಡ್ಡ ಮಟ್ಟಿನ ರಿಸೆಷ್ಷನ್ನ್ ಹುಟ್ಟಿ ಮರೆಯಾಗಿದೆ. ಮಾರ್ಕೆಟ್ಟಿನ ಮುಖ್ಯ ಇಂಡೆಕ್ಸ್‌ಗಳು ತಮ್ಮ ಹಳೆಯ ಲೆವೆಲ್‌ಗೆ ರಿಕವರ್ ಆಗಿವೆ. ಬ್ಲೂಮ್‌ಬರ್ಗ್, ಸಿಎನ್‌ಬಿಸಿ ಮೊದಲಾದ ಸ್ಟೇಷನ್ನುಗಳಲ್ಲಿ ಅರಚುವ ಧ್ವನಿಗಳಿಗೆಲ್ಲ ಶಕ್ತಿ ಬಂದಿದ್ದು, ಈ ವರ್ಷ ಎಲ್ಲ ಕಡೆಗೆ ಡಬಲ್ ಡಿಜಿಟ್ ಉನ್ನತಿ ಕಂಡಿದೆ ಎಂದು ಇನ್ನೂ ಜೋರಾಗಿ ಕಿರುಚಿಕೊಳ್ಳತೊಡಗಿವೆ. ಹಳೆಯದನೆಲ್ಲ ಎಲ್ಲರು ಮರೆತು, ಕ್ಯಾಲೆಂಡರ್ ಪುಟವನ್ನು ಬದಲಾಯಿಸಿ ಜನವರಿಯನ್ನು ನೋಡುತ್ತಿದ್ದಂತೆ ಎಲ್ಲರೂ ಮಹಾ ಬದಲಾವಣೆ ಆದೀತು ಎಂದು ಮುಗಿಲನ್ನು ನೋಡತೊಡಗಿದಂತೆ ಕಾಣಿಸುತ್ತಿದೆ.

ಈ ಕರಡೀ ತತ್ವದ (bear market) ಆಳ ಇಷ್ಟೇ - ಸಮಾಜದ ಎರಡು ಮುಖ್ಯ ಅಂಶಗಳಾದ ಉದ್ಯೋಗ (job) ಮತ್ತು ವಸತಿ (housing) ಇವೆರಡೂ ಈ ಎರಡು ವರ್ಷಗಳಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಉತ್ತರ ಅಮೇರಿಕದಲ್ಲಿ ನಿರುದ್ಯೋಗ 10% ಅಷ್ಟು ಇದ್ದರೆ, ೨೦೦೭ ರಿಂದ ಇಲ್ಲಿಯವರೆಗೆ ವಸತಿ ಮಾರುಕಟ್ಟೆ ಕುಸಿದು ಟ್ರಿಲಿಯನ್ನುಗಟ್ಟಲೆ ಡಾಲರ್ ಮಾಯವಾಗಿದೆ. ಹೀಗೆ ಎರಡು ಮುಖ್ಯ ಇಂಡಿಕೇಟರುಗಳು ಸಂಕಷ್ಟದಲ್ಲಿ ಸಿಕ್ಕಿಕೊಂಡಿರುವಾಗ ಒಂದಿಷ್ಟು ಆರ್ಥಿಕ ತಜ್ಞರು ಮತ್ತೊಂದು ರಿಸೆಷ್ಷನ್ ಅಥವಾ ದೊಡ್ಡ ಡಿಪ್ರೆಷ್ಷನ್ನೇ ಬರಬಹುದು ಎಚ್ಚರಿಕೆ ನೀಡಿದ್ದಾರೆ. ಆದರೆ ಮೈನ್ ಸ್ಟ್ರೀಮ್ ಸ್ಟಾಕ್ ಮಾರ್ಕೆಟ್‌ನಲ್ಲಿ ಮಾತ್ರ ಎಲ್ಲರು ಊರ್ಧ್ವಮುಖಿಗಳಾಗಿ ಘೂಳೀ ತತ್ವವನ್ನು (bull market) ನಂಬಿಕೊಂಡು ೨೦೧೧ರಲ್ಲಿ ಮಾರ್ಕೆಟ್ಟ್ ಇನ್ನೂ ಮೇಲೆ ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.


ಉದ್ಯೋಗ ರಹಿತ ಗುಣಮುಖಿಯಾಗಿ ಆರ್ಥಿಕ ವ್ಯವಸ್ಥೆ ಬಲಗೊಂಡರೂ ಕುಸಿದ ಮನೆಯ ಬೆಲೆ ಹಾಗೂ ಕೆಲಸವಿಲ್ಲದ ಜನ ಇವೆರಡೂ ಮುಖ್ಯ ಚರ್ಚೆಯ ವಿಷಯವಾಗಿ ೨೦೧೧ ರಲ್ಲಿ ಉಳಿಯುವುದು ಖಂಡಿತ. ಈಗಾಗಲೇ ಉಳಿತಾಯ ಹಾಗೂ ಕಡಿಮೆ ಖರ್ಚಿಗೆ ತೊಡಗಿಕೊಂಡ ಅಮೇರಿಕದ ಬಿಸಿನೆಸ್ಸು ಮತ್ತು ಕುಟುಂಬಗಳು ಮುಂಬರುವ ವರ್ಷದಲ್ಲಿ ಹೇಗೆ ಬದಲಾಯಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ. ಫೋರ್‌ಕ್ಲೋಜರ್ ಅಂಕಿ ಅಂಶ ಗಣನೀಯವಾಗಿ ಏರುತ್ತಲೇ ಇರುವಾಗ ಮನೆ ಖರೀದಿ ಮಾಡಲು ಬಡ್ಡಿ ದರ ಇಳಿದಿದ್ದರೂ ಸಹ ಮಾರ್ಕೆಟ್ಟಿನಲ್ಲಿ ಮಾರಾಟಕ್ಕೆ ಇರುವ ಮನೆಗಳ ಪಟ್ಟಿ ದೊಡ್ಡದೇ ಇದೆ. ಮುಂದಿನ ವರ್ಷ ನಿರುದ್ಯೋಗ ಪ್ರಮಾಣ ಇಳಿಯದೇ ಹೋಗಿ, ಮನೆಗಳ ಬೆಲೆ ಇನ್ನೂ ಕುಸಿಯುತ್ತ ಹೋದಂತೆಲ್ಲ ಸ್ಟಾಕ್ ಮಾರ್ಕೆಟ್ಟ್ ಮೇಲೆ ಹೋದರೂ ಸಹ ಇವೆರಡೇ ಅಂಶಗಳು ಮತ್ತೊಂದು ರಿಸೆಷ್ಷನ್ನ್ ಅನ್ನು ತರುವಷ್ಟು ಪ್ರಬಲವಾಗಿವೆ.

***
’ಅಂತರಂಗ’ದ ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಹೊಸ ವರ್ಷ ಎಲ್ಲರಿಗೂ ಶುಭವನ್ನು ತರಲಿ...

Friday, November 26, 2010

ಅಪರೂಪದ ಅತಿಥಿಯ ಆಗಮನ...

ನಿನ್ನೆ ಈ ವರ್ಷದ ಮೊಟ್ಟ ಮೊದಲ ಮಂಜಿನ ದರ್ಶನ, ವಾತಾವರಣ ತಂಪಾಗುತ್ತಾ ಸುಮಾರು ಮುವತ್ತು ಡಿಗ್ರಿ ತಲುಪುತ್ತಿದ್ದಂತೆಲ್ಲಾ ಯಾರೂ ಆಹ್ವಾನಿಸದ ಅತಿಥಿಯ ಹಾಗೆ ಈ ಮಂಜಿನ ಕಣಗಳು ಗುರುತ್ವಾಕರ್ಷಣ ಶಕ್ತಿಯ ಮಾಂತ್ರಿಕತೆಗೆ ಒಳಗಾದವರಂತೆ ನಿಧಾನವಾಗಿ ಬೀಳಲಾರಂಭಿಸುತ್ತವೆ. ಥರಥರನ ಸೈಜು ಶೇಪುಗಳಲ್ಲಿ ಅವತರಿಸಿಕೊಳ್ಳುವ ಇವು ನೆಲವನ್ನು ಮುತ್ತಿಕ್ಕುತ್ತ ಹಾಗೇ ನೀರಾಗಿ ಕರಗಿ ಹೋಗುತ್ತವೆ. ಇವುಗಳ ಸಹವಾಸದಿಂದ ಕೊಂಚ ಬಿಸಿಯಾದ ನೆಲವೂ ತೇವವಾಗಿ ಕೊನೆಗೆ ಶೀತಲ ಶಕ್ತಿಗೆ ಮಾರು ಹೋಗಿ ಈ ಮಂಜಿನ ಕಣಗಳನ್ನು ಶೇಖರಿಸಿಕೊಳ್ಳುವ ಹೊತ್ತಿಗೆಲ್ಲ ಎಲ್ಲ ಕಡೆಗೆ ಬಿಳಿಯ ಬಣ್ಣದ ಓಕುಳಿಯಾಗಿರುತ್ತದೆ. ನವೆಂಬರ್ ಕೊನೆಯ ಸೂರ್ಯನ ಕಿರಣಗಳೂ ಕೂಡ ಇಮ್ಮಡಿಯಾಗಿ ಪ್ರಜ್ವಲಿಸತೊಡಗುತ್ತವೆ.

ಭೂಗೋಳವನ್ನು ಕಲ್ಪಿಸಿಕೊಂಡು ಸಮಭಾಜಕವೃತ್ತದಿಂದ ಉತ್ತರಕ್ಕೆ ಎಷ್ಟೋ ದೂರವಿರುವ ಅಕ್ಷಾಂಶ-ರೇಖಾಂಶಗಳಲ್ಲಿ ನೆಲೆಸುವ ಉತ್ತರ ಅಮೇರಿಕ ಖಂಡದ ಉತ್ತರ ಭಾಗಕ್ಕೆ ಶೀತಲ ಮಾರುತ ಹೊಸತೇನಲ್ಲ, ಹಾಗೇ ಇಲ್ಲಿ ತಲತಲಾಂತರದಿಂದ ನೆಲೆಸಿರುವ ಜನರೂ ಸಹ ಬೆಟ್ಟದ ಮೇಲೆ ಮನೆಯ ಮಾಡಿ ಮೃಗಗಳಿಗೆ ಅಂಜದವರಂತೆ ಅವರ ವರ್ಷದ ಆರು ತಿಂಗಳುಗಳಲ್ಲಿ ಛಳಿ-ಹಿಮ-ಮಂಜಿಗೆ ಒಗ್ಗಿಹೋಗಿರುವಂತೆ ಪ್ರಕೃತಿ ಅವರನ್ನು ಹದಮಾಡಿದೆ. ಇಂತಹ ಪ್ರದೇಶಗಳಲ್ಲೇ ಯಾರೂ ಸಹ ತಲತಲಾಂತರದಿಂದ ವಾಸ ಮಾಡಿದ್ದೇ ನಿಜವಾದರೆ ಮುಂಬರುವ ಪೀಳಿಗೆಗಳಿಗೆ ಇಲ್ಲಿನ ವಾತಾವಾರಣ ಹಾಗೂ ಋತು ಚಕ್ರದ ಬದಲಾವಣೆ ಇವೆಲ್ಲ ಸಹಜವಾಗುತ್ತವೆ, ಹೊಂದಾಣಿಕೆ ತಾನೇ ತಾನಾಗಿ ಹುಟ್ಟಿಬರುತ್ತದೆ. ಆದರೆ ನಮ್ಮಂಥ ಮೊದಲ ಒಂದೆರಡು ತಲೆಮಾರುಗಳಿಗೆ ಮಾತ್ರ ಈ ಬದಲಾವಣೆಯನ್ನು ಅನುಭವಿಸಲೇ ಬೇಕಾದ ಅನಿವಾರ್ಯತೆ.

ನಮ್ಮ ದಕ್ಷಿಣ ಭಾರತದಲ್ಲಿ ನಾವು ಹುಟ್ಟಿದಾಗಿನಿಂದ ಕೇಳಿಬರದಿದ್ದ ವಿಟಮಿನ್ ಡಿ ಕೊರತೆ ಮೊದಲಾದವುಗಳು ಇಲ್ಲಿ ಸಾಮಾನ್ಯವಾಗುತ್ತವೆ. ಜೀವನ ಶೈಲಿಯಿಂದಲೋ, ಕೆಲಸದ ನೆಪದಿಂದಲೋ ಬೇಸಿಗೆಯ ಸೂರ್ಯನನ್ನು ಆಗಾಗ ದರ್ಶನ ಮಾಡದಿದ್ದರೆ, ಛಳಿಗಾಲದಲ್ಲಿ ನಿಧಾನವಾಗಿ ಒಂದೊಂದೇ ಎಲುಬು-ಕೀಲುಗಳು ಕಿರುಗುಟ್ಟತೊಡಗಬಹುದು, ಅಥವಾ ಮಂಡಿ-ಮೊಳಕೈ ಮೊದಲಾದವುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು, ಹೀಗೇ ದಿಢೀರನೇ ’ನಮಗೆಲ್ಲ ವಯಸ್ಸಾಯಿತು!’ ಎನ್ನುವಂತೆ ಕೈ-ಕಾಲುಗಳು ಅಲುಗಾಡಿಸಲೂ ಕಷ್ಟವೆನಿಸೀತು. ಇವೆಲ್ಲ ಇಲ್ಲಿ ಸಹಜ, ಅದಕ್ಕೆ ತಕ್ಕ ಪರಿಹಾರವನ್ನೂ ನಾವು ಹಲವಾರು ರೀತಿಯಲ್ಲಿ ಕಂಡುಕೊಳ್ಳುತ್ತೇವೆ - ಹಾಲಿನಲ್ಲಿ, ಸೀರಿಯಲ್ಲುಗಳಲ್ಲಿ, ಮೊದಲಾದ ದಿನನಿತ್ಯದ ತಿಂಡಿ-ತಿನಿಸುಗಳಲ್ಲಿ ವಿಟಮಿನ್ ಡಿ ಸ್ವಲ್ಪ ಪ್ರಮಾಣದಲ್ಲಾದರೂ ಇದ್ದು ಅದನ್ನು ಜೀರ್ಣಿಸಿ ರಕ್ತಗತ ಮಾಡಿಕೊಳ್ಳಬಲ್ಲಂತಹವರಿಗೆ ಕೊರತೆ ನೀಗುವಂತೆ ವ್ಯವಸ್ಥೆ ಇದೆ, ಆದರೆ ಇನ್ನು ಕೆಲವರಿಗೆ ಇದು ಕಡಿಮೆಯಾಗಿ ಹೊರಗಿನಿಂದ ಮಾತ್ರೆ ಮೊದಲಾದ ರೂಪದಲ್ಲಿ ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ, ಕೆಲವೊಮ್ಮೆ ಜೀವನ ಪರ್ಯಂತ ಇದು ಅಗತ್ಯವಾಗುತ್ತದೆ.

***

ನಾವು ಅಲ್ಲಿನ ’ಅನಿವಾಸಿ’ಗಳು, ಇಲ್ಲಿ ’ನಿವಾಸಿ’ಗಳಾಗುತ್ತೇವೆ, ಕ್ರಮೇಣ ಇದೇ ನಮ್ಮ ಮನೆಯಾಗುತ್ತದೆ. ಅಲ್ಲಿನ ನೆನಪು ಮಾಸುತ್ತಾ ಬಂದ ಹಾಗೆಲ್ಲಾ ಒಂದು ಕಡೆ ಅದು ನಾಸ್ಟಾಲ್ಜಿಯಾದ ವರ್ಗಕ್ಕೆ ಸೇರಿಕೊಂಡು, ಮತ್ತೊಂದು ಕಡೆ ದಿನೇ-ದಿನೇ ಬದಲಾಗುವ ಅಲ್ಲಿನ ಪರಿಸರ ಇಲ್ಲಿ ಸಿಗುವ ಪ್ರತಿಯೊಂದು ಅನುಕೂಲ-ಸೌಲಭ್ಯವನ್ನೂ ಒಳಗೊಂಡು ಅಲ್ಲಿ-ಇಲ್ಲಿನ ವ್ಯತ್ಯಾಸಗಳು ಕಡಿಮೆ ಆಗುತ್ತಾ ಹೋಗುತ್ತವೆ. ಹಳೆಯ ಹುರುಪು ಕಡಿಮೆ ಆಗುತ್ತದೆ, ಸ್ನೇಹಿತರು ದೂರವಾಗಿ ಅದೆಷ್ಟೋ ಕಾಲವಾಗಿದೆ, ಸಂಬಂಧಿಗಳೂ ಸ್ನೇಹಿತರ ಹಾದಿ ಹಿಡಿದು ಹೋಗಿದ್ದಾರೆ - ನಾವು ಒಂದು ರೀತಿ ಈ ಮಂಜಿನ ಹನಿಗಳ ಹಾಗೆ ನಿಧಾನವಾಗಿ ಇಲ್ಲಿನ ನೆಲವನ್ನು ಸೇರಿ ಇಲ್ಲಿಯವರಾಗೇ ಹೋಗಿದ್ದೇವೆ.

ಮೊದಲೆಲ್ಲಾ ಕಾಲಿಂಗ್ ಕಾರ್ಡುಗಳನ್ನು ತೆಗೆದುಕೊಂಡು ಘಂಟೆಗಟ್ಟಲೆ ಭಾರತದವರೊಂದಿಗೆ ಘಂಟೆಗಟ್ಟಲೆ ಮಾತನಾಡುವ ವ್ಯವಧಾನವಿತ್ತು. ಒಂದು ತಿಂಗಳಿಗೆ ಸುಮಾರು ಐನೂರು-ಆರು ನೂರು ಡಾಲರುಗಳ ಇಂಟರ್‌ನ್ಯಾಷನಲ್ಲ್ ಕರೆಗೋಸ್ಕರ ಫೋನ್ ಬಿಲ್ಲ್ ಕಟ್ಟಿದ ದಿನಗಳಿದ್ದವು. ಇಂದು ದಿನದ ಇಪ್ಪತ್ತನ್ನಾಲ್ಕು ಘಂಟೆಯೂ ಮುಕ್ತವಾಗಿ ಸಿಗುವ ಇಂಟರ್‌ನ್ಯಾಷನಲ್ಲ್ ಫೋನ್ ಲೈನಿನಲ್ಲಿ ವಾರಕ್ಕೆ ಒಂದು ಘಂಟೆಯೂ ಮಾತನಾಡದೇ ಇರುವ ದಿನಗಳೂ ಇವೆ. ಮಾತನಾಡಲು ಬೇಕಾದ ಸಮಯ ಅನ್ನೋದಲ್ಲ, ಮಾತನಾಡಲು ಬೇಕಾದ ಉಳಿದ ಕಂಪೋನೆಂಟುಗಳು ದಿನೇ-ದಿನೇ ಕಡಿಮೆಯಾಗುತ್ತಿರುವುದು ನನ್ನ ಅನುಭವ. ಮೊದಲು ಫೋನ್ ಅನ್ನೋದು ಬಹಳ ಮುಖ್ಯವಾದ ಕಮ್ಮ್ಯುನಿಕೇಷನ್ನ್ ಸಾಮಗ್ರಿಯಾಗಿತ್ತು, ಈಗ ಅದರ ಬದಲಿಗೆ ಇ-ಮೇಲ್, ಟೆಕ್ಸ್ಟ್ ಮೆಸ್ಸೇಜುಗಳು ಬಂದಿವೆ, ಅವುಗಳಲ್ಲೇ ಹೆಚ್ಚು ಕೆಲಸ-ಕಾರ್ಯಗಳು ನಡೆದು ಹೋಗುತ್ತವೆ. ಎಲ್ಲರೊಡನೆ ಮಾತನಾಡಬೇಕಾದ ನಮ್ಮ ಧ್ವನಿ ನಾಟಕದ ಪಾತ್ರಧಾರಿಗಳು ಸ್ವಗತದಲ್ಲಿ ಹೇಳಿಕೊಳ್ಳುವಂತೆ ವಾಕ್ಯಗಳನ್ನು ಕಲ್ಪಿಸಿಕೊಳ್ಳುತ್ತವೆ - ಬಳಕೆ ಕುಗ್ಗಿದಂತೆ ಪದಗಳು ಕಡಿಮೆಯಾಗಿ, ಕೊನೆಕೊನೆಗೆ ಒಂದು ಕಾಲದಲ್ಲಿ ನಾವು ದಿನನಿತ್ಯ ಬಳಸಿದ ವಿಷಯ-ವಸ್ತುಗಳು ಇಂದು ಅನಾಥವಾಗಿ ಹೋಗುವಂತೆ ಅನಿಸುತ್ತದೆ.

***

ಹೀಗೆ ಇಂದು ನಿಧಾನವಾಗಿ ಬೀಳುವ ಮಂಜಿನ ಕಣಗಳು ಮುಂದೆ ದೊಡ್ಡವಾಗುತ್ತವೆ. ಮೊದಲೆಲ್ಲಾ ಸೌಮ್ಯವಾದ ನೆಲ ಇವುಗಳನ್ನು ಆಲಂಗಿಸಿ ಕರಗಿಸಿಕೊಂಡಂತೆ ಇನ್ನು ಮೇಲಾಗೋದಿಲ್ಲ, ಇನ್ನು ಮೇಲೇನಿದ್ದರೂ ಛಳಿಯಲ್ಲಿ ಕಠಿಣಗೊಂಡ ನೆಲದ ಮೇಲೆ ಇವುಗಳು ನಿಧಾನವಾಗಿ ಹರಡಿ ನೀರಿನ ಹಲವಾರು ರೂಪಗಳನ್ನು ತಾಳಿ ತಮ್ಮ ಬದುಕನ್ನು ನಡೆಸಿಕೊಂಡು ಹೋಗಬೇಕಷ್ಟೇ. ಪ್ರತೀವರ್ಷವೂ ಇವುಗಳ ದೆಸೆಯಿಂದ ಕ್ಷುಬ್ರವಾದ ಮರಗಿಡಗಳ ಮನಸ್ಸೂ ಸಹ ಈ ಮಂಜಿನ ಹನಿಗಳಿಗೆ ಯಾವುದೇ ವಿಶೇಷ ಆತಿಥ್ಯವನ್ನೇನೂ ತೋರೋದಿಲ್ಲ, ಬದಲಿಗೆ ಬೋಳಾದ ಅವುಗಳೂ ಸಹ ನಿಮ್ಮ ಸಹವಾಸವೇನಿದ್ದರೂ ನೆಲದೊಂದಿಗೆ ಎಂದು ಸುಮ್ಮನಾಗಿವೆ. ಆಗಾಗ್ಗೆ ಬೀಸುವ ಗಾಳಿ ಇವುಗಳನ್ನು ಒಂದಿಷ್ಟು ಮಟ್ಟಿಗೆ ಕದಲಿಸಿದಂತೆ ಕಂಡರೂ ಇವುಗಳ ಕೋಲ್ಡ್ ಮನಸ್ಥಿತಿಗೆ ವಾಯುವೂ ರೋಸಿ ಹೋಗಿದ್ದಾನೆ. ಹೀಗೆ ಈ ಮಂಜಿನ ಹನಿಗಳು ಮೇಲ್ಮೈಯಲ್ಲಿ ಎಲ್ಲವನ್ನೂ ಆವರಿಸಿದಂತೆ ಕಂಡು ಬಂದರೂ ಇವುಗಳ ಕೆಳಗೆ ಎಲ್ಲವೂ ಹಾಗೇ ಇವೆ, ಜೊತೆಗೆ ಒಂದು ಮೂರ್ನಾಲ್ಕು ತಿಂಗಳುಗಳ ನಂತರದ ಬಿಡುಗಡೆಗೆ ಕಾಯುತ್ತಲೂ ಇವೆ.

Saturday, November 13, 2010

…Insane Passion Everyday!

£ÀªÀÄÆäj£À gɸïÖ gÀƪÀiï MAzÀgÀ°è PÀ£Àßr ¥ÀPÀÌzÀ°è ºÁQzÀÝ ¥ÀvÀAd° ¸ÀÆQÛ...

Insane Passion Everyday

Sunday, September 05, 2010

ಅಕ್ಕ ಸಮ್ಮೇಳನ ಮತ್ತು ಊಟ-ತಿಂಡಿಯ ವ್ಯವಸ್ಥೆ

ದೂರದಿಂದ ಬಂದ ನನ್ನ ಸ್ನೇಹಿತರು ಶುಕ್ರವಾರದಿಂದ ಶನಿವಾರದವರೆಗೆ ಹಲವಾರು ಸೂಚನೆಗಳನ್ನು ನನಗೆ ವೈಯಕ್ತಿಕವಾಗಿ ನೀಡುತ್ತಲೇ ಬಂದಿದ್ದಾರೆ, ಕೆಳಗಿನವುಗಳು ಮುಖ್ಯ ಅಂಶಗಳು ಮಾತ್ರ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ಫುಡ್ ಕಮಿಟಿಯವರು ತಮ್ಮ ವ್ಯವಸ್ಥೆಯನ್ನು ನಿರಂತರವಾಗಿ ಸುಧಾರಿಸುತ್ತಲೇ ಬಂದು ಶನಿವಾರ ಮಧ್ಯಾಹ್ನದ ಊಟದ ಕ್ವಾಲಿಟಿ ಚೆನ್ನಾಗಿತ್ತು. ಜೊತೆಗೆ ಶನಿವಾರದ ಸಂಜೆಯ ಹೊತ್ತಿಗೆಲ್ಲಾ ಊಟದ ಲೈನು ಹೆಚ್ಚು ಉದ್ದವಾದಂತೆ ಎನ್ನಿಸಲೇ ಇಲ್ಲ; ಊಟವನ್ನು ಸಾವಿರಾರು ಜನರಿಗೆ ಹಂಚುವ ವ್ಯವಸ್ಥೆ, ಅದರಲ್ಲಿನ ಬಾಟಲ್‌ನೆಕ್ಕ್‌ಗಳನ್ನು ತೆಗೆದು ಎಲ್ಲವೂ ಸಸೂತ್ರವಾಗಿ ನಡೆದುಕೊಂಡು ಹೋಗುವಂತೆ ಮಾಡಿದ ಆಹಾರ ಸಮಿತಿಯವರಿಗೆ "ಅಂತರಂಗ"ದ ಅಭಿನಂದನೆಗಳು.

* ಎರಡು ವರ್ಷಕ್ಕೊಮ್ಮೆ ’ಅಕ್ಕ’ ಸಮ್ಮೇಳನ ನಡೆಯುವುದು ನಿಜವಾದರೆ ಸ್ಥಳ ಬದಲಾದರೂ ಈ ಹಿಂದಿನ ಅನುಭವಗಳಿಂದ ನಾವುಗಳು ಪಾಠವನ್ನೇಕೆ ಕಲಿಯೋದಿಲ್ಲ? ಕಾರ್ಯಕ್ರಮ ಹಾಗೂ ಸಮ್ಮೇಳನ ಸಮಿತಿಗಳು ಬದಲಾದರೂ ’ಅಕ್ಕ’ದ ಪದಾಧಿಕಾರಿಗಳು ಈ ಬಗ್ಗೆ ಒಂದು ’ಅನುಭವ ಬ್ಯಾಂಕ್’ ಏಕೆ ಸ್ಥಾಪಿಸಿ ಅವೇ ತಪ್ಪುಗಳು ಮತ್ತೆ ಮರುಕಳಿಸದಂತೆ ಏಕೆ ಮಾಡಬಾರದು?
* ಗುಜರಾತಿ ಸಂಸ್ಥೆಗಳಲ್ಲಿ ಹತ್ತು ಸಾವಿರದಷ್ಟು ಜನರಿಗೆ ಊಟ-ಉಪಹಾರವನ್ನು ಯಾವುದೇ ಲೋಪವಾಗದಂತೆ ಆಯೋಜಿಸುವುದು ನಿಜವಾದರೆ, ನಾಲ್ಕು ಸಾವಿರ ಕನ್ನಡಿಗರಿಗೆ ಉಣಬಡಿಸುವುದೇಕೆ ಕಷ್ಟ.
* ದಕ್ಷಿಣ ಭಾರತದ ತಿಂಡಿ-ತಿನಿಸುಗಳನ್ನು ದಯವಿಟ್ಟು ನಮ್ಮವರಿಂದಲೇ ಮಾಡಿಸಿ - "ಚಟ್ಣಿ ಸ್ವಲ್ಪವೂ ಚೆನ್ನಾಗಿರಲಿಲ್ಲ!"
* ಯಾರಾದರೂ ಒಂದು ವಡೆ ಅಥವಾ ಇತರ ತಿನಿಸನ್ನು ಹೆಚ್ಚು ಕೇಳಿದರೆ ದಯವಿಟ್ಟು ನಿರಾಕರಿಸದೇ ಕೊಡಿ.
* ಸಮ್ಮೇಳನಕ್ಕೆ ಬರುವವರಿಗೆ ಕಾರ್ಯಕ್ರಮಗಳು ಎಷ್ಟು ಮುಖ್ಯವೋ ಅದೇ ರೀತಿ ಊಟ-ಉಪಚಾರ ಹಾಗೂ ತಮ್ಮ ಬಂಧು-ಬಳಗ-ಸ್ನೇಹಿತರನ್ನು ಭೇಟಿ ಮಾಡುವುದು ಅಷ್ಟೇ ಮುಖ್ಯ, ಆದರೆ ಊಟ ಮಾಡಿದವರು ಅಲ್ಲೇ ಮೀಟಿಂಗ್ ಮಾಡಿ ಉಳಿದವರಿಗೆ ಟೇಬಲ್ ಸಿಗದ ಹಾಗೆ ಮಾಡದಂತೆ ಉಪಾಯವಾಗಿ ತಡೆ ಹಿಡಿಯಿರಿ.
* ನಮ್ಮವರು ಕಾಫಿ, ಊಟ-ತಿಂಡಿಗೆ ಸಮಯಕ್ಕಿಂತ ಮೊದಲು ಸರತಿ ಸಾಲಿನಲ್ಲಿ ನಿಲ್ಲದಂತೆ ತಡೆ ಹಿಡಿಯಿರಿ, ಒಮ್ಮೆ ಸಾಲಿನಲ್ಲಿ ನಿಂತವರನ್ನು ಐದು ನಿಮಿಷಗಳಿಗಿಂತ ಹೆಚ್ಚು ಕಾಯಿಸಬೇಡಿ.

*** ಇನ್ನೂ ಉಳಿದ ಅಬ್ಸರ್‌ವೇಷನ್ನುಗಳನ್ನು ಇಲ್ಲಿ ಮುಂದೆ ಸೇರಿಸಲಾಗುವುದು.