Wednesday, August 18, 2010

ಎಂಥಾ ಪ್ರಖರವಾದ ಸೂರ್ಯನೂ ಒಂದು ದಿನ ಸತ್ತು ಹೋಗುತ್ತಾನಂತೆ...

ಇದೇ ನಮ್ಮ ತಪ್ಪು ಎನಿಸಿದ್ದು - ಬಿರು ಬೇಸಿಗೆಯ ನಡುವೆ ಮುಂಬರುವ ಛಳಿಗಾಲದ ಬಗ್ಗೆ ಮನದಲ್ಲಿ ಚಿಂತೆಯ ಬುಗ್ಗೆಗಳು ಏಳುತ್ತಿದ್ದಾಗ. ಮನೆಯ ಹೊರಗಿರುವ ಟಪಾಲು ಡಬ್ಬದಲ್ಲಿ ಕೈಯಾಡಿಸಿ ಅದರ ಅಂತಃಸತ್ವವನ್ನು ಎತ್ತಿ ಹಿಡಿದುಕೊಂಡು ಬರುತ್ತಿದ್ದಾಗ ಗಾಳಿಯ ಪದರಗಳಲ್ಲಿ ನಿಧಾನವಾಗಿ ತೇಲುತ್ತಾ ನನ್ನ ಮುಂದೆ ಬಿದ್ದಿದ್ದು ಒಂದು ಹಳದಿ ಎಲೆ. ಓಹ್, ಇನ್ನೂ ಕೆಲವೇ ದಿನಗಳಲ್ಲಿ ಹಣ್ಣಾಗಿ (ಕೆಂಪಾಗಿ) ಮಾಗಿ ಉದುರ ಬೇಕಾಗಿದ್ದ ಎಲೆಗಳಿಗೇಕೆ ಬದುಕಿನ ನಡುವಿನ ಹಳದಿಯಲ್ಲೇನು ವಿಯೋಗ ಎಂದು ಯೋಚಿಸಲಾರಂಭಿಸಿ, ಮುಂದಿನ ಕೆಲವು ಕ್ಷಣಗಳಲ್ಲಿ ನನ್ನ ಮನಸ್ಸು - ಇಂಥಾ ಬಿರು ಬೇಸಿಗೆಯ ನಡುವೆಯೂ ಮುಂಬರುವ ಛಳಿಗಾಲದ ಬಗ್ಗೆ ಯೋಚಿಸೋದೇ? ಛೇ, ಎನಿಸದೆ ಇರಲಿಲ್ಲ.

ನಾನು ಮೂರು ತಿಂಗಳ ಕೆಟ್ಟ ಛಳಿಗಾಲದ ನಡುವೆ ಎಷ್ಟೋ ಸಾರಿ ಬೇಸಿಗೆಯ ನೆನಪು ಮಾಡಿಕೊಂಡಿದ್ದೇನೆ, ಆದರೆ ಕೊರೆಯುವ ಛಳಿಯಲ್ಲಿ ನಿಂತು ಹಂಬಲಿಸುವ ಬೇಸಿಗೆಯ ನಿರೀಕ್ಷೆಗೂ, ಬಿಸಿಲಿನಲ್ಲಿ ಬಾಡುತ್ತಲೇ ದೂರ ತಳ್ಳುವ ಛಳಿಯ ಅರಿವಿಗೂ ವ್ಯತ್ಯಾಸವಿದೆ ಎನ್ನುವುದು ಈ ಹೊತ್ತಿನ ತತ್ವ. ಹಿತವಾದ ಅನುಭವಗಳು ಅಥವಾ ಅಹಿತವಾದ ನೆನಪುಗಳು ಇವುಗಳ ಸಂಗ್ರಹಣೆಗಾರ ಮಿದುಳಿನಲ್ಲಿ ಏನಾದರೂ ಭಿನ್ನವಾದ ಸಂಸ್ಕರಣೆ ಇದೆಯೇನು? ನಾವು ಆಶಾವಾದ, ಸುಖ, ಸಂತೋಷ, ನಗು, ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಪೇರಿಸಿಕೊಳ್ಳುತ್ತೇವೋ ಅಥವಾ ನಿರಾಶೆ, ದುಃಖ, ಅಳು ಮೊದಲಾದವುಗಳನ್ನು ಒಂದು ಕಡೆ ಒಟ್ಟುಗೂಡಿ ಮುನ್ನಡೆಯುತ್ತೇವೋ ಯಾರು ಬಲ್ಲರು?

ಇದು ಇಂದು-ನಿನ್ನೆಯ ಸತ್ಯವಷ್ಟೇ ಅಲ್ಲ, ನನ್ನ ಯಾವತ್ತಿನ ಅನುಭವವೂ ಹೌದು; ಈ ಕ್ಷಣದಲ್ಲಿನ ನಮ್ಮ ಅಗತ್ಯಗಳು ಎಂದಿಗೂ ಮಲತಾಯಿ ದೋರಣೆಗಳಿಗೆ ಒಳಪಟ್ಟು ಮನಸ್ಸು ಯಾವಾಗಲೂ ಮುಂಬರುವ ಕಾಲಮಾನದ ಬಗ್ಗೆ ಹೆಚ್ಚು ಸ್ಪಂದಿಸುತ್ತದೆ. ನಾವು ಆಧುನಿಕ ಬದುಕಿನ ಏನೇನೋ ಗೊಂದಲಗಳಲ್ಲಿ ಮುಂಬರುವ ದಿನಗಳ ಬಗ್ಗೆ ವಿಸ್ತಾರವಾದ ಯೋಜನೆಗಳನ್ನು ರೂಪಿಸುವ ಸಂಕೀರ್ಣದಲ್ಲಿ ತೊಡಗಿಕೊಂಡು ಪ್ರಸ್ತುತ ಸ್ಥಿತಿಯನ್ನು ಭೂತ(ಕಾಲ)ರಾಯನಿಗೆ ಬಲಿಕೊಡುತ್ತಾ ಹೋಗುತ್ತೇವೆ. ’ಇಂದು’ ಎನ್ನುವ ಹಲವಾರು ಉಗಿಬಂಡಿಯ ಡಬ್ಬಿಗಳು ಅನತಿ ದೂರದವರೆಗೆ ಹಾಸಿದ ಕಂಬಿಗಳ ಮೇಲೆ ಓಡುತ್ತಾ ನಿನ್ನೆಗಳಾಗಿ ಹಿಂದೆ ಸರಿಯುತ್ತಾ ಹೋದಂತೆ ಮಾತ್ರ, ಮುಂದೆ ಅಥವಾ ’ನಾಳೆ’ ಎನ್ನುವ ಅವಕಾಶ ಬರುತ್ತದೆ. ಅಗಮ್ಯವಾದ ನಾಳೆಗಳಲ್ಲಿ ಸಣ್ಣ ಪ್ರಮಾಣದ ’ಇಂದು’ ನಗಣ್ಯವಾಗುತ್ತದೆ.

ಎಂಥಾ ಪ್ರಖರವಾದ ಸೂರ್ಯನೂ ಸಹ ಒಂದಲ್ಲ ಒಂದು ದಿನ ಸತ್ತು ಹೋಗುತ್ತಾನಂತೆ. ಸಂಜೆ ಇನ್ನೂ ಹೊಳಪು ಕಳೆದುಕೊಳ್ಳದ ಅಲ್ಲಲ್ಲಿ ನಕ್ಷತ್ರಗಳನ್ನು ಚದುರಿಕೊಂಡು ಮುಸ್ಸಂಜೆಯಲ್ಲಿ ಮನೆಯ ಮುಂದಿನ ಅಂಗಳದಲ್ಲಿ ನೀರೆರಚಿ ಚಿತ್ರ ಬರೆದಂತೆ ಹರವಿಕೊಂಡಿದ್ದ ಆಕಾಶವನ್ನು ನೋಡಿದಾಗ ದೂರದ ಸಂಬಂಧಿಯೊಬ್ಬರು ದಿಢೀರನೆ ಪ್ರತ್ಯಕ್ಷವಾದ ಅನುಭವ ಬಂತು. ನಮ್ಮ ವ್ಯಸ್ತ ಬದುಕಿನಲ್ಲಿ ನಾವು ನೋಡೋದೇನಿದ್ದರೂ ನಮ್ಮ ಸುತ್ತಮುತ್ತಲು ಹರವಿದ ಸಣ್ಣಪುಟ್ಟ ಪರದೆಗಳು - ಕಿರುತೆರೆಗಳು, ಅನತಿ ದೂರದಲ್ಲಿ ಅಮಿತವಾಗಿ ಹರಡಿದ ಆ ವಿಶಾಲ ಪರದೆಯನ್ನು ನೋಡಿ ಅದೆಷ್ಟು ದಿನವಾಗಿತ್ತೋ ಎನ್ನುವ ಸೋಜಿಗದ ಜೊತೆಗೆ ಈ ನಕ್ಷತ್ರಗಳೂ ಒಂದಲ್ಲ ಒಂದು ಆ ಹಳದಿ ಎಲೆಯಂತೆ ಉದುರುತ್ತಾವೇನೂ ಎನ್ನಿಸದೆಯೂ ಇರಲಿಲ್ಲ. ನಿಶ್ಶಬ್ದದ ನಡುವೆ ಎದ್ದು ಬರುವ ಸಂಗೀತದ ಅಲೆಯಂತೆ ಸೂರ್ಯ-ಮೋಡಗಳಿಲ್ಲದ ನೀಲಾಕಾಶದಲ್ಲಿ ಅಲ್ಲಲ್ಲಿ ಮಿಂಚುವ ನಕ್ಷತ್ರಗಳು ತಮ್ಮದೇ ರಾಗದಲ್ಲಿ ತೊಡಗಿಕೊಂಡಿದ್ದವು. ನಮ್ಮನ್ನು ಸುತ್ತಿಕೊಂಡಿರುವ ಗೋಲಾಕಾರದ ಎಲ್ಲ ಅವಕಾಶಗಳಲ್ಲಿ ಆ ನಕ್ಷತ್ರಗಳು ನನ್ನಿಂದ ಎಷ್ಟು ದೂರವಿರಬಹುದು ಎಂಬ ಸರಳರೇಖೆಯ ಪ್ರಶ್ನೆಯನ್ನು ಹಾಕುವಷ್ಟು ಮನಸ್ಸು ಕ್ಷುಲ್ಲಕವಾಗಲಿಲ್ಲ, ಬದಲಿಗೆ ಸುತ್ತಲಿನಲ್ಲಿ ಎಲ್ಲವೂ ಸುತ್ತಿಕೊಂಡಿರುವಾಗ ನೇರದ ನೆರವೇಕೆ ಎಂದು ಜಗಳಕಾಯದೇ ಸುಮ್ಮನಾದ ಹಠವಾದಿಯಂತಾಯಿತು.

ಮುಂಬರುವ ನಾಳೆಗಳ ಪ್ರಶಂಸೆಗೋಸ್ಕರ ನಾವು ಇಂದನ್ನು ಬಲಿಕೊಡುತ್ತಾ ಇದ್ದೇವೇನೋ ಎಂದು ಯೋಚಿಸಿಕೊಳ್ಳುವಷ್ಟರಲ್ಲಿ ಮನಸ್ಸು ಒಂದು ಕಡೆ ಅರ್ಧ ದಾರಿ ಸವೆಸಿ ಮುಂದೆ ಎಲ್ಲಿ ಹೋಗಬೇಕು ಅಥವಾ ಹೋಗಬಾರದು ಎಂದು ಗೊಂದಲಕ್ಕೆ ಬಿದ್ದ ಪ್ರವಾಸಿಯಾದಂತಾಯಿತು. ಚಿಕ್ಕ-ಚಿಕ್ಕ ತೆರೆಗಳ ಮರೆಯಲ್ಲಿ, ಸಣ್ಣ-ಪುಟ್ಟವುಗಳಿಗೆ ಸ್ಪಂದಿಸಿ ಸೊರಗುವ ನಾವು ದೊಡ್ಡದರುಗಳ ಬಗ್ಗೆ ಆಲೋಚಿಸುವುದಾದರೂ ಎಂದು? ಈ ಇವತ್ತಿನ ದಿನದಲ್ಲಿ ಬದುಕುತ್ತ, ಈ ಘಳಿಗೆಯ ಮಹತ್ವವನ್ನು ಮೆರೆಯುವ ಒಂದು ಸಂಸ್ಕೃತಿಯ ದಾರಿಯಲ್ಲಿ, ನಿನ್ನೆ-ಇಂದು-ನಾಳೆಗಳ ಚೀಲಗಳ ಹೆಗಲಿಗ್ಯಾವಾಗಲೂ ಏರಿಸಿಕೊಂಡು ಬದುಕು ನೂಕಿದಂತೆ ಓಡುತ್ತಿರುವಾಗ ಉಬ್ಬಸ ಬರದೇ, ಆಯಾಸವಾಗದೇ ಇನ್ನೇನಾದೀತು?

Tuesday, July 27, 2010

ಶಿಕಾರಿಪುರ ಹರಿಹರೇಶ್ವರ

ಶಿಕಾರಿಪುರ ಹರಿಹರೇಶ್ವರ...ಈ ಹೆಸರನ್ನು ನೆನದಾಗಲೆಲ್ಲ ಎಷ್ಟೊಂದು ಆತ್ಮೀಯ ನೆನಪುಗಳು ನಮ್ಮ ಸುತ್ತ ಸುಳಿದಾಡುತ್ತವೆ, ಧ್ವನಿ ಗದ್ಗದಿತವಾಗುತ್ತದೆ, ಭಾವನೆಗಳ ಕೋಡಿ ಕಿತ್ತೇಳುತ್ತದೆ. ಹಿಂದಿನ ಅನೇಕಾನೇಕ ಒಡನಾಟಗಳ ಸಾಂಗತ್ಯದಲ್ಲಿ ಬೆಳೆದುಬಂದ ಸಂಬಂಧವನ್ನಾಗಲೀ ಮಧುರ ನೆನಪುಗಳನ್ನಾಗಲೀ ಬುಡಸಹಿತ ಕಿತ್ತೊಗೆಯುವ ಶಕ್ತಿ ಸಾವು ಎನ್ನುವ ಎರಡಕ್ಷರದ ಪದಕ್ಕಂತೂ ಖಂಡಿತ ಇಲ್ಲ ಎನ್ನುವ ಧೋರಣೆ ನನ್ನ "ಅಂತರಂಗ"ದ್ದು ಇತ್ತೀಚಿನ ದಿನಗಳಲ್ಲಿ.

ಹಿಂದೆ ಡಿ.ಆರ್. ನಾಗರಾಜ್ ತೀರಿಕೊಂಡಾಗ ’ಬಣ್ಣದ ವೇಷ ಅಟ್ಟವನೇರಿ...’ ಎಂಬ ಕವನವನ್ನು ಕಂಬಾರರು ಬರೆದಿದ್ದರು, ಸದಾ ಅವಿರತ ದುಡಿದ ಹರಿಹರೇಶ್ವರ ಅವರಿಗೂ ಅನ್ವಯಿಸುವ 'ಈಗಲಾದರೂ ವಿಶ್ರಾಂತಿ ತಗೋ ಮಿತ್ರಾ...' ಎನ್ನುವ ಆ ಕವನದ ಸಾಲುಗಳು ಥಟ್ಟನೆ ನೆನಪಿಗೆ ಬಂದವು.

ನಮ್ಮ ಅನಿವಾಸಿ ಕನ್ನಡಿಗರ ಪಾಲಿಗೆ ಹರಿಹರೇಶ್ವರ ಅವರು ಯಾವತ್ತೂ ಸಂಪರ್ಕಿಸಬಹುದಾದ ಪರಾಮರ್ಶಕರಾಗಿದ್ದರು. ಕೆಲವು ವರ್ಷಗಳ ಹಿಂದೆ ’ಉಗಾದಿ-ಯುಗಾದಿ’ ಎನ್ನುವ ಪದಬಳಕೆಯ ವ್ಯಾಪ್ತಿ ವ್ಯುತ್ಪತ್ತಿಯಿಂದ ಹಿಡಿದು, ಇತ್ತೀಚಿನ ’ಸಿಂಚನ’ ಎಂದರೆ ಏನು ಎನ್ನುವ ನನ್ನ ಪ್ರಶ್ನೆಗೆ ತತ್‌ಕ್ಷಣ ಯಾವುದೇ ಪುಸ್ತಕದ ಸಹಾಯವಿಲ್ಲದೇ, ತಮ್ಮ ನೆನಪಿನ ಶಕ್ತಿಯಿಂದಲೇ ಈ ಕೆಳಗಿನ ವಾಕ್ಯಗಳನ್ನು ಇ-ಮೇಲ್ ಮೂಲಕ ಕಳುಹಿಸಿದ್ದರು.

"...ಸಿಂಚನ ಪದವನ್ನು ಪ್ರೋಕ್ಷಣ, ಚಿಮುಕಿಸುವುದು, ಸಿಂಪಿಸುವುದು-- ಮೆಲ್ಲಗೆ ಚೆಲ್ಲುವುದು -ಎಂಬ ಅರ್ಥದಲ್ಲಿ ಸಂಸ್ಕೃತ ಕವಿಗಳು (ಉದಾಹರಣೆಗೆ, ಮಾಘ ಕವಿ ಕಿರಾತಾರ್ಜುನೀಯ ೮:೩೪, ೮:೪೦ ರಲ್ಲಿ; ಕಾಳಿದಾಸ ಮೇಘದೂತ ೧:೨೬ ದಲ್ಲಿ ) ಬಹಳ ಹಿಂದೆಯೇ ಬಳಸಿದ್ದಾರೆ.

"ಸಿಂಪಡಿಸು" ಎಂದರೆ ಸಿಂಚನವೇ. ಅದರ ಇನ್ನೊಂದು ರೂಪ "ಸಿಂಬಡಿಸು" ಅದಕ್ಕೆ ಈ ಸ್ವಾರಸ್ಯಕರ ಉದಾಹರಣೆ ನೋಡಿ:
"ಗಂಡ ಹೆಂಡರ ಮಾತು ಒಂದೆ ಹಾಸಿಗೆ ಮ್ಯಾಲ; ಗಂಧ ಸಿಂಬಡಿಸಿ ನಗತಾಳ ನನ ತಮ್ಮ, ಗಂಗಿ ನಿನಗೆಲ್ಲಿ ದೊರೆತಾಳ!"" (ಗರತಿಯ ಹಾಡು ೫೧)
ಸಿಂಪಿಣಿ, ಸಿಂಪಣಿ, ಸಿಂಪಣಿಗೆ, ಸಿಂಪಣಿಯಾಡು, ಸಿಂಪಣಿಗೆಗೊಡು, ಸಿಂಪಿಸು- ಸಿಂಪಡಿಸು- ಇತ್ಯಾದಿ ವಿವಿಧ ರೂಪಗಳು ಕನ್ನಡ ಕಾವ್ಯಗ್ರಂಥಗಳಲ್ಲಿ ಹಲವೆಡೆ ಬರುತ್ತವೆ. ಇವೆಲ್ಲಕ್ಕೂ ಸಿಂಚನ- ವೇ ಮೂಲ ಧಾತು ಮತ್ತು ಅರ್ಥ. "

ನಾನು ಕುತೂಹಲಿತನಾಗಿ ಇಷ್ಟೊಂದು ವಿವರವಾಗಿ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದ್ದಕ್ಕೆ, ಕಿರಾತಾರ್ಜುನೀಯ, ಮೇಘದೂತಗಳನ್ನು ಬೇಕಾದಷ್ಟು ಸಾರಿ ಓದಿ, ಇವೆಲ್ಲವೂ ನೆನಪಿನಲ್ಲಿ ಚೆನ್ನಾಗಿವೆ ಎಂದಿದ್ದರು.

ಹೀಗೆ ಯಾವೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಅದರಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ತಮ್ಮ ಕೈಲಾದದ್ದಕ್ಕಿಂತಲೂ ಹೆಚ್ಚಿನದನ್ನು ಮಾಡುವುದು ಅವರ ಶೈಲಿ ಎನ್ನುವುದಕ್ಕಿಂತ, ಹಾಗಿರುವುದನ್ನೇ that's him - ಎನ್ನಬಹುದು.
ನಾವು ಅನಿವಾಸಿ ಕನ್ನಡಿಗರು, ನಮ್ಮ ಪದಭಂಡಾರ, ನಮ್ಮ ಹಳವಂಡಗಳು ದಿನೇದಿನೇ ಒಣಗಿ ಹೋಗೋ ನೀರು ತುಂಬಿದ ಹೊಂಡವಾಗಿರುವ ಹೊತ್ತಿನಲ್ಲಿ ನಮ್ಮ ಸಂಕಷ್ಟಗಳಿಗೆ ದೂರದಿಂದ ಹರಿಹರೇಶ್ವರ ತಮ್ಮ ಎಂದೂ ಬತ್ತದ ಸಪೋರ್ಟನ್ನು ಕೊಟ್ಟವರು. ಹರಿ ಅವರು ತಮ್ಮ ಸಮಯವನ್ನು ಹೇಗೆ ವ್ಯಯಿಸುತ್ತಾರೆ, ಎಷ್ಟೊಂದು ಪ್ರಾಜೆಕ್ಟುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಲ್ಲ ಎಂದು ನಾನು ಆಶ್ಚರ್ಯ ಪಡುವ ಹೊತ್ತಿಗೇ ಅವರು ತೊಡಗುವ ಇನ್ನೊಂದು ಪ್ರಾಜೆಕ್ಟಿಗೂ ಒಬ್ಬ ತಂದೆ ತನ್ನ ಮಕ್ಕಳ ನಡುವೆ ಸಮಪ್ರೀತಿಯನ್ನು ಹಂಚಿಕೊಂಡಂತೆ ಹಂಚಿಕೊಳ್ಳುವವರು....ಹೀಗೆ ಏನೇನೆಲ್ಲ ಬರೆದರೂ ಅದು ಇತಿಹಾಸವಾಗುತ್ತದೆ, ಹರಿ ಅವರ ಜೀವನಶೈಲಿಯ ಒಂದು ಸಣ್ಣ ತುಣುಕಿನ ಕಿರುಪರಿಚಯವಾಗುತ್ತದೆ.

ಹರಿ ಅವರ ಆದರ್ಶ, ಅವರ ಅಗಾಧ ಕನ್ನಡ ಪ್ರೇಮ ಅದಕ್ಕೆ ಹೊಂದುವ ಸೇವಾ ಮನೋಭಾವ, ಕರ್ಮಠತನ, ಕನ್ನಡಿಗನ ಅನುಭೂತಿಯಲ್ಲಿ ಪೂರ್ವ-ಪಶ್ಚಿಮಗಳ ಪರಿಕಲ್ಪನೆ ಹಾಗೂ ಅನುಭವ, ಅವರು ಹೊರತಂದ ಹಲವಾರು ಹೊತ್ತಿಗೆಗಳು, ಗ್ರಂಥ ಸಂಗ್ರಹ, ಎಲ್ಲಕ್ಕಿಂತ ಮಿಗಿಲಾಗಿ ಹಿರಿಯ-ಕಿರಿಯರೆಲ್ಲರಿಗೂ ದೊರಕುವ ’ಸ್ನೇಹ’ - ಇವೆಲ್ಲವನ್ನು ಕಳೆದುಕೊಂಡು ನಾವು ಕನ್ನಡಿಗರು ಬಡವರಾಗಿದ್ದೇವೆ. ನಮ್ಮ ಇ-ಮೇಲ್ ಇನ್‌ಬಾಕ್ಸ್‌ಗೆ ಇನ್ನು ಮುಂದೆ "ಸ್ನೇಹದಲ್ಲಿ ನಿಮ್ಮ,..." ಎಂದು ಸಹಿ ಇರುವ ಅವರ ಸಂದೇಶಗಳು ಬರದೇ ಸೊರಗುತ್ತದೆ.

೨೦೦೦ದಲ್ಲಿ ನಡೆದ "ಅಕ್ಕ" ಸಮ್ಮೇಳನಕ್ಕೆ ಸಾಕಷ್ಟು ದುಡಿದದ್ದರಿಂದ ಹಿಡಿದು, ಹತ್ತು ವರ್ಷಗಳ ನಂತರ ನಡೆಯುವ ಮುಂಬರುವ ಸಮ್ಮೇಳನದಲ್ಲೂ ಹರಿಯವರ ಸಹಾಯ ಹಸ್ತವಿದೆ. ತಮ್ಮ ಹೆಸರನ್ನು ಹಲವಾರು ತಂಡದ ಪರವಾಗಿ ನಮೂದಿಸಲಿ ಬಿಡಲಿ, ತಾವು ತೊಡಗಿಕೊಂಡ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿರಿಮೆ ಹಾಗೂ ಇತಿಹಾಸ ಅವರದು. ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ನಾವು ಎಂದಿಗಿಂತಲೂ ಹೆಚ್ಚು ನಮ್ಮನ್ನು ನಾವು ತೊಡಗಿಸಿಕೊಂಡು ಮುಂಬರುವ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟು ಸಮ್ಮೇಳನವನ್ನು ಎಲ್ಲಾ ರೀತಿಯಿಂದಲೂ ಯಶಸ್ಸುಗೊಳಿಸುವುದೇ ನಾವು ಅವರಿಗೆ ಕೊಡುವ ಗೌರವ. ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಮ್ಮನ್ನು ನಾವು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಂದ ನಾವು ಕಲಿಯಬಹುದಾದ ನಡವಳಿಕೆ.

(ಚಿತ್ರಕೃಪೆ: ದಟ್ಸ್‌ಕನ್ನಡ.ಕಾಮ್)

Thursday, June 17, 2010

ಗೋಲ್ಡ್ ಫಿಶ್ - 2010

 

ನಮ್ಮ ಮನೆಯಲ್ಲಿ ಒಂದು ಚಿಕ್ಕ ಅಕ್ವೇರಿಯಂ, ಅದರಲ್ಲಿ ೨೦೦೩ ರಿಂದ ನೆಲೆ ನಿಂತಿದ್ದ ಒರ್ಯಾಂಡಾ (oranda) ಜಾತಿಯ ಗೋಲ್ಡ್ ಫಿಶ್ ಮೊನ್ನೆ ಸತ್ತು ಹೋಯಿತು.  ಒಂದು ಸಾಕು ಪ್ರಾಣಿಯ ಕುರಿತು, ಅದರ ನೆಲೆಗೆ ಹೊಂದಿಕೊಂಡ ನಮ್ಮ ನಡವಳಿಕೆಗಳ ಕುರಿತು ಈ ಲೇಖನ.

 

Gold fish 2010

***

ಮಕ್ಕಳಿದ್ದವರ ಮನೆಯಲ್ಲಿ ಈ ಪ್ರಶ್ನೆ ಬಂದೇ ಬರುತ್ತೆ - ನಮ್ಮ ಮನೆಯಲ್ಲೂ ಬೇರೆ ಬೇರೆ ಸಾಕು ಪ್ರಾಣಿಗಳೇಕಿಲ್ಲ? ಎಂಬುದಾಗಿ.  ಈ ನಿಟ್ಟಿನಲ್ಲಿ ಹೆಚ್ಚಿನವರು ಒಂದು ಬೆಕ್ಕನ್ನೋ ಅಥವಾ ನಾಯಿಯನ್ನೋ ಸಾಕುವುದು ಸಾಮಾನ್ಯ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮೊಲವನ್ನೋ, ಗಿಣಿಯನ್ನೋ ಇಟ್ಟುಕೊಂಡಾರು.  ಕೆಲವರು ಎಲ್ಲರನ್ನು ಮೀರಿ exotic ಪ್ರಾಣಿಗಳಾದ ಚೇಳು, ಹಾವು ಮೊದಲಾದ ಸರೀಸೃಪಗಳನ್ನು ಪೋಷಿಸಿಯಾರು.  ಆದರೆ ಇವೆಲ್ಲಕ್ಕಿಂತ ಸುಲಭವಾದ ವಿಧಾನವೊಂದಿದೆ, ಅದು ಮನೆಯಲ್ಲೇ ಅವರವರ ಸಾಮರ್ಥ್ಯ ಅನುಕೂಲಗಳಿಗೆ ತಕ್ಕಂಥ ಫಿಶ್ ಟ್ಯಾಂಕ್ ಒಂದನ್ನು ಇಟ್ಟು ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು.

ನಮ್ಮ ಮನೆಯಲ್ಲಿ ಸುಮಾರು ೨೦೦೧ ರಿಂದ ಹೀಗೇ ನೋಡಿಕೊಂಡು ಬಂದ ಐದು ಗ್ಯಾಲನ್ ನೀರು ಹಿಡಿಯುವ ಮೀನಿನ ಒಂದು ಚಿಕ್ಕ ಟ್ಯಾಂಕ್ ಇದೆ, ಅದರಲ್ಲಿ ಗೋಲ್ಡ್ ಫಿಶ್‌ಗಳನ್ನು ಬಿಟ್ಟು ಮತ್ತೇನನ್ನೂ ನಾವು ಸಾಕಿ ನಮಗೆ ಗೊತ್ತಿಲ್ಲ.  ನಮ್ಮ ಪ್ರಯೋಗದ ಮೊದ ಮೊದಲು ಅನೇಕ ಮೀನುಗಳು ಸಾಯುತ್ತಿದ್ದವು: ಪಿ.ಎಚ್. ಅಮೋನಿಯಾ, ಕ್ಲೋರೀನ್, ನೈಟ್ರೇಟ್, ನೈಟ್ರೈಟ್ ಮೊದಲಾದ ಕೆಮಿಕಲ್ ವಸ್ತುಗಳಲ್ಲಿ ಯಾವುದೇ ಏರುಪೇರಾದರೂ ಮೀನುಗಳು ಗೊಟಕ್.  ಹೀಗೆ ಜೋಡಿಸಿಟ್ಟ ಫಿಶ್ ಟ್ಯಾಂಕ್‌ಗೆ ನಾವು ಹೊಂದಿಕೊಳ್ಳಲು ನಮಗೆ ಸುಮಾರು ಒಂದು ವರ್ಷವೇ ಬೇಕಾಯಿತು, ಜೊತೆಗೆ ಅನೇಕ ಮೀನುಗಳನ್ನು ನಮ್ಮ ಪ್ರಯೋಗಗಳಿಗೆ ಬಲಿಕೊಟ್ಟದ್ದೂ ಆಯಿತು.  ಹೀಗೆ ನಡೆದು ಬಂದ ಫಿಶ್ ಮ್ಯಾನೇಜ್‌ಮೆಂಟ್ ಅನುಭವದ ಕೊನೆಗೆ ಬಂದು ಮುಟ್ಟಿದಾಗ ಉಳಿದವು ಎರಡು ಗೋಲ್ಡ್ ಫಿಶ್‌ಗಳು - ಅದರಲ್ಲಿ ಒಂದು ಬಿಳಿ ಬಣ್ಣದ್ದು, ಮತ್ತೊಂದು ಕಿತ್ತಳೆ ಬಣ್ಣದ್ದು.  ಎರಡೂ ಕೂಡ ಚೆನ್ನಾಗಿ ರೆಕ್ಕೆಗಳನ್ನು ಉದ್ದುದ್ದವಾಗಿ ಬೆಳೆಸಿಕೊಂಡು ಟ್ಯಾಂಕ್‌ನ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಈಜಾಡುವುದನ್ನು ನೋಡುವುದೇ ಎಂಥವರಿಗೂ ಮುದಕೊಡುತ್ತಿತ್ತು.

ನಮ್ಮ ಚಲನವಲನಗಳು, ವೆಕೇಷನ್ನುಗಳು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಬದಲಾವಣೆ ಮಾಡುವುದು ಇವೆಲ್ಲ ನಮ್ಮ ಮನೆಯ ಫಿಶ್ ಟ್ಯಾಂಕ್‌ನ ನಿವಾಸಿಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿತ್ತು.  ನಾವು ಮೂರು ವಾರ ಭಾರತಕ್ಕೆ ವೆಕೇಷನ್ನ್ ಹೊರಟರೆ ನಮ್ಮ ಬದಲಿಗೆ ಬೇರೆ ಯಾರಾದರೂ ನಮ್ಮ ಮನೆಗೆ ಬಂದು ಈ ಮೀನುಗಳಿಗೆ ಊಟ ಹಾಕುವ ವ್ಯವಸ್ಥೆಯನ್ನು ಮಾಡಿ ಹೋಗುತ್ತಿದ್ದೆವು, ಅಥವಾ ಈ ಮೀನಿನ ಟ್ಯಾಂಕ್ ಅನ್ನೇ ಅವರ ಮನೆಯಲ್ಲಿಟ್ಟು ನಾವು ಬರುವ ತನಕ ಜೋಪಾನವಾಗಿ ಕಾಯ್ದುಕೊಂಡಿರುವಂತೆ ಮಾಡಿದ್ದೂ ಇದೆ.  ಒಟ್ಟಿನಲ್ಲಿ ಒಂದು ಕಡೆ ಸರಿಯಾಗಿ ನೆಲೆ ನಿಂತ ಇಕೋ ಸಿಸ್ಟಂ ಅನ್ನು ಮತ್ತೊಂದು ಕಡೆ ಪ್ರತಿಷ್ಠಾಪಿಸುವುದು ಅಷ್ಟು ಸುಲಭದ ಮಾತಂತೂ ಅಲ್ಲ.  ಈ ನಿಟ್ಟಿನಲ್ಲಿ ನನ್ನ ಸಹೋದ್ಯೋಗಿಗಳಿಗೆ ಹಾಗೂ ಸ್ನೇಹಿತರಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಿದೆ.

ನಮ್ಮ ಮನೆಯಲ್ಲಿ ಇದ್ದ ಎರಡು ಮೀನುಗಳನ್ನು ಅವುಗಳ ಟ್ಯಾಂಕ್ ಹಾಗೂ ಪರಿಕರಗಳ ಸಮೇತ ವರ್ಜೀನಿಯಾದಿಂದ ನ್ಯೂ ಜೆರ್ಸಿಗೆ ೨೫೦ ಮೈಲು ದೂರ ತಂದು ನಮ್ಮ ಮನೆಯ ಸಾಮಾನುಗಳ ಜೊತೆಗೆ ಅವುಗಳನ್ನು ಜೋಡಿಸುವಾಗ ಆದ ಕಷ್ಟ ಅಷ್ಟಿಷ್ಟಲ್ಲ.  ಹೀಗೆ ಮಾಡಿ ಅನೇಕ ತಿಂಗಳುಗಳ ತರುವಾಯ ಬಿಳಿಯ ಮೀನು ಯಾವುದೋ ಖಾಯಿಲೆಗೆ ಬಲಿಯಾಗಿ ಸತ್ತು ಹೋದ ಮೇಲೆ ಉಳಿದದ್ದು ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಒಂದೇ.  ಎರಡು ಮೂರು ಮನೆಗಳನ್ನು ತಿರುಗಿ ಬಂದ ಮೇಲೆ ಅದು ಟ್ಯಾಂಕ್‌ನಲ್ಲಿ ತಾನೊಂದೇ ಪ್ರಾಬಲ್ಯವನ್ನು ಮೆರೆಯುತ್ತಾ ತಂದಾಗ ಎರಡು ಅಂಗುಲ ಉದ್ದ ಇದ್ದದ್ದು ದಿನೇ ದಿನೇ ಬೆಳೆದು ಸುಮಾರು ಆರು ಅಂಗುಲ ಉದ್ದಕ್ಕೂ ಹೆಚ್ಚು ದೊಡ್ಡದಾಯಿತು.  ಕಳೆದ ವರ್ಷ ಡಿಸೆಂಬರ್ ಸಮಯದಲ್ಲಿ ಸ್ನೇಹಿತ ಗಾರ್‌ಫೀಲ್ಡ್ ಮನೆಯಲ್ಲಿ ನಾವು ವೇಕೇಷನ್ನಿಗೆ ಹೋದಾಗ ಮೊಕ್ಕಾಂ ಹೂಡಿ ಜನವರಿಯಿಂದ ಮೇ ವರೆಗೂ ಚೆನ್ನಾಗಿಯೇ ಇತ್ತು.

ಮೇ ತಿಂಗಳ ಮೊದಲ ವಾರದಲ್ಲಿ ಅದರ ಲವಲವಿಕೆ ಕುಂಠಿತಗೊಂಡಿತು, ಅದು ಆಹಾರ ಸೇವಿಸುವುದನ್ನು ಸಂಪೂರ್ಣ ಬಿಟ್ಟು ಟ್ಯಾಂಕಿನ ಬುಡದಲ್ಲಿ ಎಲ್ಲೆಂದರಲ್ಲಿ ಅಡ್ಡಾ-ದಿಡ್ಡಿ ಬಿದ್ದುಕೊಂಡಿರುತ್ತಿತ್ತು.  ಅದು ಇನ್ನೇನು ಸರಿ ಹೋದೀತು ಎಂದುಕೊಂಡವನಿಗೆ ಮುಪ್ಪಿನಿಂದ ಅದು ದಿನೇದಿನೇ ಕುಗ್ಗತೊಡಗಿದ್ದು ಗಮನಕ್ಕೆ ಬಂದು ಈ ಮೀನಿನ ಬದುಕಿಗೆ ಯಾವ ರೀತಿಯ ಅಂತ್ಯವನ್ನು ಹಾಡಬೇಕು ಎಂದು ಗೊತ್ತಾಗದೆ ಒಂದೆರೆಡು ಬಾರಿ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಎಲ್ಲವನ್ನು ಸ್ವಚ್ಛಗೊಳಿಸಿಟ್ಟು ಹಾಗಾದರೂ ಮೀನಿನ ಲವಲವಿಕೆ ಮರುಕಳಿಸಲಿ ಎಂದುಕೊಂಡರೆ ಹಾಗಾಗಲಿಲ್ಲ.

ನನ್ನ ಸ್ನೇಹಿತರು ಹಾಗೂ ಹಿರಿಯರು ಮಾರ್ಗದರ್ಶನ ಮಾಡಿದ ಹಿನ್ನೆಲೆಯಲ್ಲಿ ಅದನ್ನು ದೊಡ್ಡ ಟ್ಯಾಂಕಿನಿಂದ ಸಣ್ಣದೊಂದು ಗಾಜಿನ ಜಾಡಿಗೆ ಬದಲಾಯಿಸಿ ಅದರ ಬದಲಿಗೆ ಬೇರೆ ಹೊಸ ಮೀನುಗಳನ್ನು ತಂದು ಹಾಕುವುದೆಂದು ಯೋಚಿಸಿ ಹಾಗೆ ಮಾಡಲನುವಾದೆ.  ಅಂಗಡಿಗೆ ಹೋಗಿ ಉತ್ಸಾಹದಿಂದ ಪುಟಿಯುತ್ತಿದ್ದ ಅವೇ ಒರ್ಯಾಂಡಾ (oranda) ಜಾತಿಯ ಥರಾವರಿ ಬಣ್ಣಗಳ ನಾಲ್ಕು ಮೀನುಗಳನ್ನು ತಂದೆ.  ಒಂದು ಕಡೆ ಹೊಸ ಮೀನುಗಳನ್ನು ಅವುಗಳನ್ನು ತಂದ ಪ್ಲಾಸ್ಟಿಕ್ ಕವರ್ ಸಮೇತ ಟ್ಯಾಂಕಿನ ನೀರಿನ ತಾಪಮಾನಕ್ಕೆ ಹೊಂದುಕೊಳ್ಳಲು ಬಿಟ್ಟು, ಮತ್ತೊಂದು ಸಣ್ಣ ಗಾಜಿನ ಜಾಡಿಯನ್ನು ಅನುಗೊಳಿಸಿದೆ.  ಅದರಲ್ಲಿ ಹಳೆಯ ಮೀನನ್ನು ಹುಷಾರಾಗಿ ಇಟ್ಟೆ, ನಾನು ತೆಗೆದು ಹಾಕುವಾಗ ಒಂದಿಷ್ಟು ಕೊಸರಾಡಿದ ಮೀನು, ಹೊಸ ಜಾಡಿಯ ತಳದಲ್ಲಿ ನಿಧಾನವಾಗಿ ಉಸಿರಾಡುತ್ತಾ ಬಿದ್ದುಕೊಂಡಿದ್ದು ನೋಡಿ ಕರುಳು ಕಿವುಚಿದಂತಾಯಿತು.  ಅದನ್ನು ಅಲ್ಲಿಗೆ ಬಿಟ್ಟು ಹೊಸ ಮೀನುಗಳನ್ನು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಾಗ ಅವುಗಳಿಗೆ ಒಂದು ಕಡೆ ಸಂಭ್ರಮವೂ ಮತ್ತೊಂದು ಕಡೆ ಹೆದರಿಕೆಯೂ ಸೇರಿಕೊಂಡು ಟ್ಯಾಂಕಿನ ಮೂಲೆ ಮೂಲೆಗಳಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು.  ಸ್ವಲ್ಪ ಹೊತ್ತಿನ ತರುವಾಯ ಅವುಗಳು ತಮ್ಮ ಹೊಸ ವಾತಾವರಣಕ್ಕೆ ಹೊಂದಿಕೊಂಡ ಎಲ್ಲ ಸೂಚನೆಗಳೂ ಕಂಡು ಬಂದು, ಈ ಟ್ಯಾಂಕಿನಲ್ಲಿ ವರ್ಷಾನುಗಟ್ಟಲೆ ಮನೆ ಮಾಡಿದ್ದ ನೆಲೆ ನಿಂತಿದ್ದ ಆ ಮಹಾಶಯನ ಗುರುತು ಪರಿಚಯವೂ ವಾಸನೆಯೂ ಅವುಗಳಿಗೆ ಒಂದಿಷ್ಟು ಇರದಿದ್ದ ಮುಗ್ಧತೆಯಲ್ಲಿ ಜೀವಿಸತೊಡಗಿದವು.

ಇತ್ತ ಸಣ್ಣ ಗಾಜಿನ ಜಾಡಿಯಲ್ಲಿನ ಹಳೆಯ ಮೀನಿನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗದೇ ಅದೇ ದಿನ ರಾತ್ರಿ ಎಷ್ಟೋ ಹೊತ್ತಿಗೆ ಅದರ ಪ್ರಾಣಪಕ್ಷಿ ಹಾರಿ ಹೋಗಿದ್ದು ನಮಗೆಲ್ಲ ನಿಚ್ಛಳವಾಯಿತು.  ನಮಗೆಲ್ಲ ಇಷ್ಟೊಂದು ವರ್ಷ ಫ್ಯಾಮಿಲಿ ಮೆಂಬರಿನಂತಿದ್ದ ಮೀನಿನ ಅಂತ್ಯಕ್ರಿಯೆಗೋಸ್ಕರ ನಾನು ಶವೆಲ್ಲೊಂದನ್ನು ತೆಗೆದುಕೊಂಡು ರಾತ್ರಿ ನಮ್ಮ ಹಿತ್ತಲಿಗೆ ಹೋಗಿ ಸಣ್ಣ ತಗ್ಗನ್ನು ತೆಗೆದು ಅಲ್ಲಲ್ಲಿ ಮಿಡತೆಗಳು ಅಳುತ್ತವೆಯೇನೋ ಎನ್ನುವ ಕಿರುಗುಟ್ಟುವಿಕೆಯ ಹಿನ್ನೆಲೆಯ ನಡುವಿನ ಮೌನದ ಸಹಾಯದಿಂದ ಯಾವೊಂದು ಮಾತನಾಡದೆ ಎರಡು ಮುಷ್ಠಿ ಮಣ್ಣನ್ನು ಕೈಯಿಂದ ಹಾಕಿ ಉಳಿದದ್ದನ್ನು ಶವೆಲ್ಲಿನಿಂದಲೇ ಮುಚ್ಚಿ ಸಂಸ್ಕಾರ ಮಾಡಿದೆ.

ಮರುದಿನ ಇಂಚರ (ನಮ್ಮ ನಾಲ್ಕು ವರ್ಷದ ಮಗಳು) ಅನೇಕ ಬಾರಿ ಹಳೇ ಮೀನು ಎಲ್ಲಿ ಹೋಯಿತು? ಅದು ಏಕೆ ಸತ್ತಿತು? ಸತ್ತಾಗ ಏನಾಗುತ್ತದೆ? ಯಾಕೆ ಹಿತ್ತಲಿನಲ್ಲಿ ಮಣ್ಣು ಮಾಡಿದೆ? ನನ್ನನ್ನೇಕೆ ಕರೆಯಲಿಲ್ಲ? ಎಂದು ಕೇಳಿದ ಅನೇಕಾನೇಕ ಪ್ರಶ್ನೆಗಳಿಗೆ ನನ್ನ ಶಕ್ತಿ ಮೀರಿ ಸರಳವಾಗಿ ಉತ್ತರಿಸಿದ್ದಾಯಿತು.  ನಾವು ಹಳೇ ಮೀನಿಗೆ ಯಾವುದೇ ಹೆಸರನ್ನಿಟ್ಟಿರಲಿಲ್ಲ - Elmo’s world ನಲ್ಲಿ ಬರುವ Dorothyಯ ದೆಸೆಯಿಂದ ಇಂಚರ ಅದನ್ನು ನಮ್ಮ ಮನೆಯ ಡೊರೋತಿ ಅಂದುಕೊಂಡಿದ್ದನ್ನು ಬಿಟ್ಟರೆ, ಅದೇ ಛಾಳಿಯನ್ನು ಮುಂದುವರೆಸಿ ನಾವು ಈ ಹೊಸ ಮೀನುಗಳಿಗೂ ಹೆಸರನ್ನೂ ಇಟ್ಟಿಲ್ಲ.

ಪ್ರತಿ ದಿನ ಆಫೀಸಿನಿಂದ ಬಂದಾಗ ಶೂ ತೆಗೆದು ಅದರ ಸ್ಥಳದಲ್ಲಿಟ್ಟು ನಂತರ ಮಾಡುವ ಕೆಲಸವೇ ಈ ಮೀನಿನ ಟ್ಯಾಂಕಿನ ಲೈಟ್ ಹಾಕಿ ಅವುಗಳಿಗೆ ಪ್ಲ್ಹೇಕ್ ಫುಡ್ಡನ್ನು ಹಾಕುವುದು, ಈ ಹೊಸ ಮೀನುಗಳ ಸಹಾಯದಿಂದ ವರ್ಷಾನುಗಟ್ಟಲೆ ನಡೆದ ಬಂದ ಕಾಯಕ ಇಂದಿಗೂ ಹಾಗೇ ಮುಂದುವರೆದಿದೆ.

***

ಸಾವು-ನೋವಿನ ವಿಚಾರಕ್ಕೆ ಬಂದಾಗ ಅಮೇರಿಕದ ನಮ್ಮ ಅನುಭವ ವ್ಯಾಪ್ತಿ ಕಡಿಮೆಯೇ.  ಬೇರೆ ಯಾರೂ ರಕ್ತ ಸಂಬಂಧಿಗಳಿಲ್ಲದ ಈ ದೇಶದಲ್ಲಿ ಸಾವು ಎನ್ನುವ ಮಹತ್ವಪೂರ್ಣವಾದ ಬದುಕಿನ ಮಜಲಿನ ಅನುಭವ ನಮಗೆ ಭಾರತದಲ್ಲಿ ಇದ್ಧಾಗ ಆಗುವಂತೆ ಇಲ್ಲಿ ಆಗುವುದಿಲ್ಲ.  ನಮ್ಮ ನೆಂಟರು-ಇಷ್ಟರು-ಬಂಧು-ಬಳಗ ಇವರೆಲ್ಲರ ಮದುವೆ ಮುಂಜಿಗಳಿಗೆ, ಕಷ್ಟ-ನಷ್ಟಗಳಿಗೆ ನಾವು ಎಂದಿನ ಸಂವೇದನೆಯನ್ನು ತೋರೋದಿಲ್ಲ.  ಸಾವನ್ನು ಬೇಕು ಎಂದು ಆರಿಸಿಕೊಳ್ಳದಿದ್ದರೂ ಹುಟ್ಟು ತರುವಷ್ಟೇ ಮುಖ್ಯವಾದ ಬದಲಾವಣೆಯನ್ನು ಸಾವೂ ತರಬಲ್ಲದು.  ಈ ನಿಟ್ಟಿನಲ್ಲಿ ಸಾಕು ಪ್ರಾಣಿ ಮೀನಿನ ಸಾವು ಅದರ ಜೊತೆಗಿದ್ದ ನಮ್ಮ ವರ್ಷಾನುಗಟ್ಟಲೆಯ ಬಂಧನವನ್ನು ಕಳಚಿ ಹಾಕುವುದರ ಮೂಲಕ ದೂರದಲ್ಲಿರುವ ನಮಗೆ ಹತ್ತಿರದ ಬಂಧುವನ್ನು ಕಳೆದುಕೊಂಡ ನೆನಪನ್ನು ಎತ್ತಿ ಹಿಡಿಯಿತು.  ಸಾವಿರದ ಮನೆಯಿಂದ ಸಾಸಿವೆ ತರುವ ಪ್ರಯತ್ನವನ್ನು ಇನ್ನೂ ಯಾರಾದರೂ ಮಾಡುತ್ತಿದ್ದರೆ ಆ ದೃಷ್ಟಿಯಲ್ಲಿ ನಾವು ಹೊರಗುಳಿದಿರುವುದು ಸ್ಪಷ್ಟವಾಯಿತು.  ನಮ್ಮಂಥ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಸಣ್ಣ ಅಗಲಿಕೆ ಬದುಕು ಒಡ್ಡುವ ಅನೇಕ ಬದಲಾವಣೆಗಳ ನೆನಪು ಮಾಡುವಲ್ಲಿ ಯಶಸ್ವಿಯಾಯಿತು.  ಜೊತೆಯಲ್ಲಿ ನಮ್ಮ ಸಂಬಂಧಿಗಳ, ಬಂಧು-ಮಿತ್ರರ, ಒಡಹುಟ್ಟಿದವರ ನೋವು-ನಲಿವುಗಳಿಗೆ ಸಕಾಲಕ್ಕೆ ಆಗಿಬರದ ನಾವು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿ ಬಿಟ್ಟೆವೇನೋ ಎನ್ನಿಸಿಬಿಟ್ಟಿತು.

Monday, May 10, 2010

Claire ಎಂಬ ಕಳೆದು ಹೋದ ನಾಯಿ...

ಇವತ್ತಿಗೆ ಸರಿಯಾಗಿ ಒಂದು ವಾರ ಆಯ್ತು, ಕಳೆದ ಸೋಮವಾರ ನಾನು ಆಫೀಸಿಗೆ ಹೋಗೋ ದಾರಿಯಲ್ಲಿ ನಾಯಿ ಕಳೆದು ಹೋಗಿದ್ದರ ಬಗ್ಗೆ Mendham ಪಟ್ಟಣದ ಸರಹದ್ದಿನಲ್ಲಿ ಹಲವಾರು ಸೈನ್ ಪೋಸ್ಟ್‌ಗಳನ್ನು ಲೈಟ್ ಕಂಭಗಳ ಮೇಲೆ ಅಂಟಿಸಿದ್ದರು, ಕೆಲವು ಕಡೆ ಬಣ್ಣ ಬಣ್ಣದ ಕೋಲುಗಳನ್ನು ಹುಗಿದು ಅದರ ಮೇಲೆ ಕಳೆದು ಹೋದ ನಾಯಿಯ ಚಿತ್ರ ಹಾಗೂ ವಿವರಗಳನ್ನು ತೋರಿಸಿ, ಸಿಕ್ಕಿದ್ದರೆ ತಿಳಿಸಿ ಎಂಬ ಮನವಿಯನ್ನು ಎಲ್ಲಾ ಕಡೆಗೂ ಅಂಟಿಸಿದ್ದರು.  ಸುಮಾರು ಐದು ಮೈಲು ಸುತ್ತಳತೆಯ ಕಾಡಿನಂತಹ ಆ ವಾತಾವರಣದಲ್ಲಿ ಕಳೆದು ಹೋದ ನಾಯಿ ಎಲ್ಲಿ ಹೋಯಿತೋ ಯಾರಿಗೆ ಸಿಕ್ಕಿತೋ, ಆದರೆ ಆ ನಾಯಿಯ ವಾರಸುದಾರರು ಪಟ್ಟ ಶ್ರಮ ನಿಜವಾಗಲೂ ಬಣ್ಣಿಸಲಸದಳವಾಗಿತ್ತು.  ನಾಯಿಯನ್ನು ಕಳೆದುಕೊಂಡ ವಾರಸುದಾರರ ಶ್ರಮವನ್ನು ನೋಡಿ ನಾನಾದರೂ ಒಂದು ದಿನ ಆಫೀಸಿಗೆ ರಜೆ ಹಾಕಿ ಹುಡುಕಲು ಸಹಾಯ ಮಾಡಲೇ ಎನ್ನಿಸದಿರಲಿಲ್ಲ.

ಆ ನಾಯಿಯ ಹೆಸರು Claire - ಕಳೆದು ಹೋಗಿದ್ದಾಳೆ, ಹುಡುಕಲು ಸಹಾಯ ಮಾಡಿ ಎಂದು ತಮ್ಮ ಫೋನ್ ನಂಬರ್ ಅನ್ನು ನೀಡಿದ ಸರಳವಾದ ಸಂದೇಶ ಆ ಪೋಸ್ಟರ್‌ಗಳಲ್ಲಿತ್ತು.  ಪೋಸ್ಟರ್‌ಗಳನ್ನು ಥರಾವರಿ ಬಣ್ಣ-ಬಣ್ಣದ ಪೇಪರುಗಳಲ್ಲಿ ಮುದ್ರಿಸಿ ಅಲ್ಲಲ್ಲಿ ಮರಗಳಿಗೆ ಮೊಳೆ ಹೊಡೆದಿದ್ದರು, ಜೊತೆಗೆ ಕಡು ಹಳದಿ ಬಣ್ಣ ಹಾಗೂ ಗುಲಾಬಿ ಬಣ್ಣಗಳ ಗೂಟಗಳನ್ನು ಅಲ್ಲಲ್ಲಿ ಹುಗಿದು ಅವುಗಳಿಗೂ ರಟ್ಟಿನ ಸೈನ್ ಅನ್ನು ಎರಡೂ ಕಡೆಗಳಿಂದಲೂ ಓದುವಂತೆ ತಗುಲಿಸಿದ್ದರು.  ನಾಯಿಯ ಚಿತ್ರವನ್ನು ಸೇರಿಸಿದ್ದರು, Claire ಸಣ್ಣ ಸೈಜಿನ ನಾಯಿ, ಚಪ್ಪರ ಕಾಲುಳ್ಳ dachshund ಜಾತಿಯ ವೆರಾಂಡಾದ ಅಲಂಕೃತ ನಾಯಿಯ ಹಾಗಿತ್ತು, Curious George ವೀಡಿಯೋಗಳಲ್ಲಿ ಬರೋ Hundley ಅಷ್ಟು ದೊಡ್ಡದಿರಬಹುದು ಎಂಬುದು ನನ್ನ ಊಹೆ.

ಒಬ್ಬ ವ್ಯಕ್ತಿ ಅಥವಾ ಸಾಕು ಪ್ರಾಣಿಯ ಬಗ್ಗೆ ನಾವು ತೋರುವ ಕಾಳಜಿ ಹಾಗೂ ಮುತುವರ್ಜಿಗಳನ್ನು ಯೋಚಿಸಿಕೊಂಡಾಗ, ಒಬ್ಬ ವ್ಯಕ್ತಿ ಅಥವಾ ಸಾಕು ಪ್ರಾಣಿ ಇಲ್ಲವಾದಾಗ ನಾವು ಅನುಭವಿಸುವ ದುಃಖ ಇವೆಲ್ಲವನ್ನೂ ಹತ್ತಿರದಿಂದ ಗಮನಿಸಿದಾಗ ಆಯಾ ದೃಷ್ಟಿಕೋನ ಅಥವಾ ಪ್ರೀತಿಯ ಆಳದ ಬಗ್ಗೆ ಅರಿವಾಗುತ್ತದೆ.  ಈ ನಾಯಿಯನ್ನು ಕಳೆದುಕೊಂಡ ವ್ಯಕ್ತಿ ಸುಮಾರು ಐವತ್ತಕ್ಕೂ ಹೆಚ್ಚು ಪೋಸ್ಟರುಗಳನ್ನು ಪ್ರಿಂಟ್ ಮಾಡಿ ಆಯಕಟ್ಟಿನ ಸ್ಥಳಗಳಲ್ಲಿ ಗೂಟಗಳನ್ನು ಹುಗಿದು ಮರಗಳಿಗೆ ಎಲ್ಲರಿಗೂ ತೋರುವ ಹಾಗೆ ಪೋಸ್ಟರುಗಳನ್ನು ಸುಮಾರು ಐದು ಚದುರ ಮೈಲು ವಿಸ್ತೀರ್ಣದಲ್ಲಿ ಹಚ್ಚಿರುವಾಗ ಅವರು ಪಟ್ಟ ಶ್ರಮವನ್ನು ನೋಡಿ ಆಶ್ಚರ್ಯವಾಯಿತು, ಈ ಪೋಸ್ಟರುಗಳ ಜೊತೆಗೆ ಇಂಟರ್ನೆಟ್ ಹಾಗೂ ಲೋಕಲ್ ಪ್ರಿಂಟ್ ಮಾಧ್ಯಮಗಳಲ್ಲೂ ’ನಾಯಿ ಕಳೆದಿದೆ’ ಎಂದು ಮೆಸ್ಸೇಜನ್ನು ಹಾಕಿರಲಿಕ್ಕೂ ಸಾಕು.  ಕಳೆದು ಹೋದ ನಾಯಿಯ ಬಗ್ಗೆಯೇ ಕಳೆದುಕೊಂಡವರ ಕಳಕಳಿ ಹೀಗಿರುವಾಗ ಕಳೆದು ಹೋಗುವ ಮೊದಲು ಆ ನಾಯಿಯ ಆರೈಕೆಯನ್ನು ಎಷ್ಟರ ಮಟ್ಟಿಗೆ ಆ ವಾರಸುದಾರರು ಮಾಡಿರಬಹುದು ಎಂದು ಊಹಿಸತೊಡಗಿದೆ.  Claire ಅಂತಹ ಕುಳ್ಳನೆ ಚಪ್ಪರ ಕಾಲಿನ ಲಾಬ್ಬಿ ನಾಯಿಗಳು ಸಾಮಾನ್ಯವಾಗಿ ಶ್ರೀಮಂತರ ಮನೆಯ ನಾಯಿಗಳು, ಅವು ಸಹಜವಾಗಿ ಎತ್ತರದ (elevated) ವಾತಾವರಣದಲ್ಲಿ ಬೆಳೆದಿರುತ್ತವೆ, ಜೊತೆಗೆ ತಕ್ಕ ಆರೈಕೆಗೂ ಒಳಗಾಗಿರುತ್ತವೆ.  ಶ್ರೀಮಂತರ ಮನೆಯ ಸಕಲೈಶ್ವೈರ್ಯವನ್ನೂ ಹೊಂದಿದ ನಾಯಿಗಳು ಆ ಮನೆಯ ಎಲ್ಲಾ ಸದಸ್ಯರಂತೆಯೇ ಎಂಬುದು ಇವತ್ತು ನಿನ್ನೆಯ ವಿಷಯವೇನಲ್ಲ.

ಹಾಗಾದರೆ ಪ್ರತಿಯೊಬ್ಬರೂ ತಮ್ಮ ನೆರೆಹೊರೆಯನ್ನು, ಬಂಧು ಮಿತ್ರರನ್ನೂ, ಸಾಕು ಪ್ರಾಣಿಗಳನ್ನು ಪ್ರೀತಿಸುವ ಅಥವಾ ನೋಡುವ ದೃಷ್ಟಿಕೋನ ಅವರವರ ಅಂತಸ್ತಿನ ಮೇಲೆ ಅವಲಂಭಿತವಾಗಿದೆಯೇ? ಬಡವರ ಮನೆಯ ನಾಯಿ ಎಂದರೆ ಈ ರೀತಿಯ ಹುಡುಕುವಿಕೆ ದೊರೆಯುತ್ತಿರಲಿಲ್ಲವೆಂದೇ? ಅಥವಾ ಬಡವರ ಮನೆಯ ನಾಯಿಗಳು ಹುಡುಕಲು ಯೋಗ್ಯವಲ್ಲವೋ? ಅಥವಾ ಬಡವರು ಶ್ರೀಮಂತರು ಎನ್ನುವ ವ್ಯತ್ಯಾಸಗಳಲ್ಲಿ ಬದುಕುವಾಗ ಅವರವರ ಅಗತ್ಯ, ಆಲೋಚನೆಗಳು ಬದಲಾಗುವುದು ಸ್ಪಷ್ಟವೋ?

***

ಅಮೇರಿಕದಲ್ಲಿ ಸಾಕು ಪ್ರಾಣಿಗಳನ್ನು ಪುಲ್ಲಿಂಗ/ಸ್ತ್ರೀಲಿಂಗವನ್ನು ಬಳಸಿ ಕರೆಯುವ ರೀತಿಯನ್ನು ನೀವು ನೋಡಿರಬಹುದು.  ನಾವು ಭಾರತದಲ್ಲಿ ನಮ್ಮ ಸಾಕು ಪ್ರಾಣಿಗಳಿಂದ ಹಿಡಿದ ಯಾವುದೇ ಪ್ರಾಣಿ-ಪಕ್ಷಿಗಳನ್ನೂ ಕೂಡಾ ಅದು-ಇದು ಎಂದು ನಪುಂಸಕ ಲಿಂಗದಲ್ಲಿ ಹೇಗೆ ಸಂಬೋಧಿಸುತ್ತೇವೋ ಇಲ್ಲಿ ಪ್ರಾಣಿ-ಪಕ್ಷಿಗಳನ್ನು ಪುಲ್ಲಿಂಗ/ಸ್ತ್ರೀಲಿಂಗವನ್ನು ಉಪಯೋಗಿಸಿ ಮಾತನಾಡುವುದು ವಿಶೇಷ ಅನ್ನಿಸುತ್ತೆ.  ತಮ್ಮದೇ ಸಾಕು ಪ್ರಾಣಿಗಳಿಂದ ಹಿಡಿದು ಕಾಡಿನ ಪಕ್ಷಿಗಳು, ರಕ್ಕೂನುಗಳು, ಇಣಚಿಗಳು...ಯಾವುದೇ ಪ್ರಾಣಿ ಪಕ್ಷಿಗಳಿಗೂ, He ಅಥವಾ She ಯ 3rd person singular ಬಳಕೆಯಾಗುತ್ತದೆ.  ಈ ಕಳೆದು ಹೋದ ನಾಯಿಯ ವಿಚಾರಕ್ಕೆ ಬಂದರೆ "Claire - ಕಳೆದು ಹೋಗಿದ್ದಾಳೆ!" ಹುಡುಕಲು ಸಹಾಯ ಮಾಡಿ ಎಂಬುದಾಗುತ್ತದೆ.

ನಮ್ಮ, ಅದರಲ್ಲೂ ಕನ್ನಡದ ನಪುಂಸಕ ಲಿಂಗದ ಬಳಕೆ ಎರಡು ರೀತಿಯದ್ದು: ಒಂದು, ಕಲ್ಲು, ಬುಕ್ಕು, ಬಸ್ಸು ಮೊದಲಾದ ’ಜೀವವಿರದ’ ವಸ್ತುಗಳನ್ನು "ಇದು, ಅದು, ಹೋಯ್ತು, ಬಂತು" ಎಂದು ಸಂಬೋಧಿಸುವ ಪರಿ; ಎರಡು, ದನ, ಕರು, ನಾಯಿ, ನರಿ, ಗಿಡ, ಮರ ಮೊದಲಾದ ಜೀವವಿರುವ ವಸ್ತುಗಳನ್ನೂ "ಇದು, ಅದು, ಹೋಯ್ತು, ಬಂತು" ಎಂದು ಸಂಬೋಧಿಸುವ ಪರಿ.  ಇದಕ್ಕೆ ಸ್ವಲ್ಪ ಭಿನ್ನವಾಗಿ ಹಿಂದಿಯಲ್ಲಿ ’ರೇಲ್ ಆ ರಹಿ ಹೈ’ ಎನ್ನುವಂತೆ ಬಸ್ಸು, ಲಾರಿ, ಟ್ರೇನುಗಳಿಗೂ ಸ್ತ್ರೀಲಿಂಗದ ಬಳಕೆ.  ಕನ್ನಡದ 3rd person singular ಬಳಕೆಯಂತೆ ನಾವು ನಮ್ಮ ಸಾಕು ಪ್ರಾಣಿಗಳನ್ನು ’ಅದು, ಇದು’ ಎಂದು ಕರೆಯಬಲ್ಲೆವು, ಹಾಗೆ ಕರೆಯುವ ರೂಢಿ ಪ್ರಾಣಿಗಳನ್ನು ನೋಡುವ ಹೊಸ ದೃಷ್ಟಿಕೋನವನ್ನು ನಮಗೆ ತಂದುಕೊಟ್ಟಿದೆ ಎಂದು ನನ್ನ ವಾದ.  ’ನಾಯಿ ಬಂತಾ?’ ಎನ್ನುವುದು ಸಹಜವಾದ ವಾಕ್ಯವೇ ಹೊರತು, ’ನಾಯಿ ಬಂದಳೋ?’ ಎನ್ನುವುದು ಅಷ್ಟು ಸರಿಯಾಗಿ ಉಪಯೋಗಕ್ಕೆ ಬಾರದು.

***

ಒಂದು ವಾರದ ನಂತರವೂ Claire ಇನ್ನೂ ಕಳೆದೇ ಹೋಗಿದ್ದಾಳೆ!  ಅಕಸ್ಮಾತ್ ಈಗಾಗಲೇ ಅವಳು ಸಿಕ್ಕಿದ್ದರೆ, ಅವಳ ವಾರಸುದಾರರು ಆ ಪೋಸ್ಟರುಗಳನ್ನು ತೆಗೆದಿರುತ್ತಿದ್ದರು.  ಸುಮಾರು ಈ ಎರಡು ವಾರಗಳ ಅಂತರದಲ್ಲಿ ಆ ಚಪ್ಪರಕಾಲಿನ ಕುಳ್ಳ ನಾಯಿಯ ಅರಣ್ಯದ ರೋಧನ ಯಾರಿಗೂ ಕೇಳಿರಲಿಕ್ಕಿಲ್ಲ.  ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿದ Claireಗೆ ರಾತ್ರಿ ಹೊತ್ತಿನ ಫ್ರೀಜಿಂಗ್ ಉಷ್ಣತೆಯಲ್ಲಿ ಕಷ್ಟವಾಗಿರುತ್ತದೆ, ದಪ್ಪನೆ ಚರ್ಮ ಹಾಗೂ ಕಠಿಣ ಪರಿಸ್ಥಿತಿಗಳಿಗೆ ಈಗಾಗಲೇ ಒಗ್ಗದ ಮನಸ್ಸು ಕಷ್ಟದ ಸಮಯದಲ್ಲಿ ಬಗ್ಗದೇ ಹೋಗುತ್ತದೆ.

Monday, May 03, 2010

ಮನೆಯು ಚಿಕ್ಕದಾಗಿರಬೇಕು, ಬಾತ್ ರೂಮ್ ದೊಡ್ಡದಾಗಿರಬೇಕು...

ನಮ್ಮ ಐದು ಸಾವಿರ ವರ್ಷದ ಇತಿಹಾಸ ಮತ್ತು ಪರಂಪರೆಯಲ್ಲಿ ನಾವು ಅಡುಗೆ ಮನೆಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಬಚ್ಚಲು ಮನೆಗೆ ಕೊಡೋದಿಲ್ಲ ಅನ್ನೋದು ನನ್ನ ಅಭಿಪ್ರಾಯ ಅಷ್ಟೇ. ನಮ್ಮ ಹಿರಿಯರ ಹಳೆ ಕಾಲದ ಮನೆಗಳನ್ನೋ ಅಥವಾ ಇತ್ತೀಚೆಗೆ ೬೦X೪೦ ಸೈಟ್‌ಗಳಲ್ಲಿ ಕಟ್ಟಿದ ಸುಂದರವಾದ ಆರ್‌ಸಿಸಿ ಮನೆಗಳನ್ನೋ ಉದಾಹರಣೆಯಾಗಿ ತೆಗೆದುಕೊಂಡರೆ ನಿಮಗೇ ಗೊತ್ತಾಗುತ್ತದೆ. ಹಳೆಯ ಕಾಲದ ಮನೆಗಳಲ್ಲಿ ಗಂಡಸರು ಮುಖಕ್ಷೌರ ಮಾಡುವುದಕ್ಕೆ ಕಿಟಕಿ ಮೇಲೆ ಸಣ್ಣ ಕನ್ನಡಿಯನ್ನಿಟ್ಟುಕೊಂಡು ಅದರ ಪಕ್ಕದಲ್ಲಿ ಬಿಂದಿಗೆ ಬಿಸಿನೀರು ಇಟ್ಟುಕೊಳ್ಳುವುದು ರೂಢಿ, ದಿನಾ ನಡೆಸೋ ನಿತ್ಯ ಕರ್ಮವಾಗಿರುವ ಮುಖ ಕ್ಷೌರಕ್ಕೆ ಯಾಕಪ್ಪಾ ಇಷ್ಟೊಂದು ಕೀಳು ಪ್ರಾಶಸ್ತ್ಯ ಅನ್ನಿಸೋದಿಲ್ಲವೇ? ಹೊಸದಾಗಿ ಕಟ್ಟಿದ ಮನೆಗಳಲ್ಲೂ ಅಷ್ಟೇ ಸಿಂಕ್ ಇದ್ದರೆ, ಅದರ ಮೇಲೆ ಒಂದು ಲೈಟ್ ಇರುತ್ತದೆ (ಹೆಚ್ಚಿನ ಪಕ್ಷ ಝೀರೋ ಕ್ಯಾಂಡಲ್ ಬಲ್ಬ್ ಹೊತ್ತಿಸಿಕೊಂಡು), ಸಿಂಕ್‌ನ ಮೇಲೆ ಸೋಪ್ ಅಥವಾ ಮತ್ತಿತರ ಸಾಮಾನುಗಳನ್ನು ಇಟ್ಟುಕೊಳ್ಳೋದಕ್ಕೆ ಜಾಗ ಇರೋದೇ ಕಡಿಮೆ.

ಮನೆಯ ವಿಚಾರದಲ್ಲಿ ಬಚ್ಚಲು/ಕಕ್ಕಸ್ಸು ಮನೆಗಳಿಗೆ ಕೊಡೋ ಪ್ರಾಶಸ್ತ್ಯ ಹಾಗಿರಲಿ, ದಿನಾ ನೂರಾರು ಜನ ಬಂದು ಹೋಗೋ ಯಾವುದೇ ಹೊಟೇಲಿಗೆ ಹೋಗಿ ನೋಡಿ ತಿನ್ನೋ ವಿಚಾರಗಳಿಗೆ ಎಷ್ಟೊಂದು ಮಹತ್ವ ಕೊಟ್ಟಿರುತ್ತಾರೆ, ತಿಂದು ಕುಡಿದದ್ದನ್ನು ವಿಸರ್ಜಿಸಲು ಮಾತ್ರ ಯಾವ ಮಹತ್ವವನ್ನೂ ಕೊಟ್ಟಿರೋ ಹಾಗೆ ಕಾಣೆ. ಯಾಕೋ ನಮ್ಮ ಜನಗಳಿಗೆ ಶುಚಿ ಅಥವಾ ಸ್ವಚ್ಛತೆ ಅನ್ನೋದು ಬಂದೇ ಇಲ್ಲವೇನೋ ಅನ್ನಿಸುತ್ತೆ. ನಮ್ಮ ಇತಿಹಾಸದ ದೃಷ್ಟಿಯಲ್ಲಿ ಸಾವಿರಾರು ವರ್ಷಗಳ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ಏಕೆ ಸಿಗಲಿಲ್ಲ? ಬಡತನ, ಹೆಚ್ಚಿನ ಜನಸಂಖ್ಯೆ ಕಾರಣವೋ ಅಥವಾ ನಮ್ಮಲ್ಲಿ ಮೂಲಭೂತ ಸಮಸ್ಯೆಗಳು ಇಂದಿಗೂ ಮೂಲಭೂತವಾಗಿಯೇ ಉಳಿದಿರುವುದು ಏಕೆ ಎನ್ನುವುದಕ್ಕೆ ಒಂದು ಹೆಜ್ಜೆ ನಮ್ಮ ಅಂತರಾಳವನ್ನು ಹುಡುಕಬೇಕಾಗುತ್ತದೆ.

ಅಮೇರಿಕದವರು ಕಡಿಮೆ ಜನ ಹೆಚ್ಚು ಸಂಪನ್ಮೂಲಗಳನ್ನು ಬಳಸುತ್ತಾರೆ ಎನ್ನೋದನ್ನ ಹಲವು ರೀತಿಯಲ್ಲಿ ಬಳಸಬಹುದು, ಅದನ್ನ ಒಂದು ಕಂಪ್ಲೇಟ್ ಅನ್ನಾಗಿಯೂ ನೋಡಬಹುದು ಅಥವಾ ಅದನ್ನ ಒಂದು ಮುಂದುವರೆದ ಸಂಸ್ಕೃತಿಯನ್ನಾಗಿಯಾದರೂ ಅರಿತುಕೊಳ್ಳಬಹುದು. ನಮ್ಮ ಆಫೀಸಿನ ಉದಾಹರಣೆಯನ್ನು ತೆಗೆದುಕೊಳ್ಳಿ, ನಾನು ಪವರ್‌ಪಾಯಿಂಟ್ ಸ್ಲೈಡ್‌ಗಳನ್ನು ಮಾಡಿ ಕಳಿಸಿದ್ದನ್ನ ನನ್ನ ಬಾಸ್ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡದೇ ಅದನ್ನು ಕಲರ್ ಪ್ರಿಂಟರಿನಲ್ಲಿ ಮುದ್ರಿಸಿ ಅನಂತರ ಅದರಲ್ಲಿ ತಿದ್ದು ಪಡಿಗಳನ್ನು ಮಾಡುವುದು ರೂಢಿ. ಆದರೆ ನಾನು ತಿಣುಕಿ-ತಿಣುಕಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ಓದಿದ್ದೇ ಓದಿದ್ದು, ಆದರೆ ಮುದ್ರಿತವಾದ ಕಾಗದವನ್ನು ನಾವು ಓದುವ ದೃಷ್ಟಿಯೇ ಬೇರೆ ಹಾಗಾಗಿ ಅದರಲ್ಲಿರುವ ತಪ್ಪು-ಸರಿಗಳನ್ನು ನೋಡಿದಷ್ಟು ಸುಲಭವಾಗಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡಲಾಗದು ಎಂಬುದು ನನ್ನ ಅನುಭವ. ಸರಿ, ಒಂದು ಪೇಜ್ ಸ್ಲೈಡ್ ಹುಟ್ಟಬೇಕಾದರೆ ಒಂದು ನಾಲ್ಕು ಡ್ರಾಪ್ಟ್ ಪೇಜ್‌ಗಳನ್ನು ಮುದ್ರಣ ಮಾಡೋಣ, ಅದರಲ್ಲೇನಂತೆ? ರಿಸೋರ್ಸುಗಳು ಇವೆ, ಸಂಪನ್ಮೂಲಗಳ ಬಳಕೆ ಹಾಗೂ ಅದರ ವೆಚ್ಚಕ್ಕೆ ನಾವೇನೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಪೇಪರ್ರೂ ಚೀಪು, ಪ್ರಿಂಟರ್ರೂ ಚೀಪು...ಹೀಗಾದ ಮೇಲೆ ಒಂದು ಪಬ್ಲಿಕ್ ಕಂಪನಿಯ ಆಯ-ವ್ಯಯಗಳ ಕಥೆ ಹಾಗೂ ಅವುಗಳ ದೊಡ್ಡ ಲಿಸ್ಟ್ ಇದ್ದೇ ಇರುತ್ತೆ, ಹತ್ತರ ಜೊತೆ ಹನ್ನೊಂದು ಅಂತ ಇವೂ ಸೇರಿಕೊಂಡು ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಒಳ್ಳೆಯ ಕ್ವಾಲಿಟಿ ಸ್ಲೈಡುಗಳನ್ನು ತಯಾರು ಮಾಡಿದರೆ ಆಯಿತಪ್ಪಾ ಅಷ್ಟೇ, ಅನ್ನಿಸೋದಿಲ್ಲವೇ?

ನಮ್ಮ ದೇಶದಲ್ಲಿ ಮನೆಗೆ ಒಂದೋ ಎರಡೋ ಪ್ಲಗ್ ಪಾಯಿಂಟುಗಳಿರುತ್ತವೆ, ಇಂದಿಗೂ ಹಳೆಯ ಕಾಲದಲ್ಲಿನ ಮನೆಗಳಲ್ಲಿ ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಯನ್ನ ಲಿವಿಂಗ್ ರೂಮಿನಲ್ಲಿಟ್ಟು ಅಲ್ಲೇ ಬಟ್ಟೇ ಇಸ್ತ್ರಿ ಮಾಡಿಕೊಳ್ಳುವುದು ರೂಢಿ. ನನಗೆ ಗೊತ್ತಿರೋ ಹಾಗೆ ಮನೆಯಲ್ಲಿರುವ ಪ್ಲಗ್ ಪ್ಲಾಯಿಂಟುಗಳ ಲೆಕ್ಕದಲ್ಲಿ ಪ್ರತಿ ತಿಂಗಳಿಗೆ ಇಂತಿಷ್ಟು ರಿಕರ್ರಿಂಗ್ ಚಾರ್ಜಸ್ ಕೊಡಬೇಕಾಗುತ್ತದೆ. ಪ್ರತಿ ತಿಂಗಳ ಎಕ್ಸ್‌ಪೆನ್ಸ್ ಲೆಕ್ಕದಲ್ಲಿ ಯಾರಿಗೆ ತಾನೆ ಹತ್ತೋ ಇಪ್ಪತ್ತು ರೂಪಾಯಿ ಕೊಡಲು ಮನಸ್ಸಾದೀತೂ ಹೇಳಿ? ಆದರೆ ಅಮೇರಿಕದ ಮನೆಗಳಲ್ಲಿ ಪ್ರತಿ ಆರು ಅಡಿಗಳಿಗೊಂದರಂತೆ ಎಲ್ಲಾ ರೂಮುಗಳಲ್ಲೂ ಎಲೆಕ್ಟ್ರಿಕ್ ಪ್ಲಗ್ ಪಾಯಿಂಟ್‌ಗಳನ್ನು ಮನೆ ಕಟ್ಟುವಾಗಲೇ ಅಳವಡಿಸಿರುವುದು ನಮ್ಮಂಥ ಅನಿವಾಸಿಗಳ ಕಣ್ಣಿಗೆ ಮೊದಲ ದಿನವೇ ಗೊತ್ತಾಗಿರುತ್ತದೆ. ವ್ಯಾಕ್ಕ್ಯೂಮ್ ಹಾಕುವುದಿರಲಿ, ಇಸ್ತ್ರಿ ಹಾಕುವುದಿರಲಿ ಯಾವ ರೂಮಿನಲ್ಲಿ ಬೇಕಾದರೂ ಹಾಕುವ ಹಾಗಿರುತ್ತದೆ. ನಿಮಗೆ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಬೇಕೋ ಅದಕ್ಕೆ ತಕ್ಕಂತೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಪ್ರತಿಯೊಂದನ್ನೂ "ಕಡಿಮೆ ದರ" ಎನ್ನುವ ಮಾನದಂಡ ಒಂದರಲ್ಲಿ ಮಾತ್ರ ನೋಡಿದಾಗ ಅಲ್ಲಿ ಕ್ವಾಲಿಟಿಯೋ ಮತ್ತೊಂದೋ ಬಲಿಪಶುವಾಗುತ್ತದೆ. ಇದೇ ಸಮೀಕರಣವನ್ನು ಹತ್ತು ಡಾಲರ್ ಉಳಿಸುವ ವಿಚಾರಕ್ಕೆ ಬಂದಾಗ ನಾವೆಷ್ಟು ಸಮಯ (==ಹಣ) ವನ್ನು ವ್ಯಯಿಸಬಲ್ಲೆವು ಎಂಬುದಕ್ಕೂ ಅಳವಡಿಸಬಹುದು. ನಿಮ್ಮ ಮನೆಯ ಪಕ್ಕದ ಬೀದಿಯ ಅಂಗಡಿಯೊಂದರಲ್ಲಿ ಒಂದು ವಸ್ತು ಇಪ್ಪತ್ತೈದು ಡಾಲರಿಗೆ ಸಿಗುವ ಹಾಗಿರುವಾಗ ಅದೇ ವಸ್ತು ನಿಮ್ಮ ಮನೆಯಿಂದ ಅರ್ಧ ಘಂಟೆ ದೂರದ ಅಂಗಡಿಯೊಂದರಲ್ಲಿ ಹದಿನೈದು ಡಾಲರಿಗೆ ಸಿಗುವ ಹಾಗಿದ್ದರೆ ನೀವು ಅಲ್ಲಿಗೆ ಹೋಗಿ ಬಂದು ಮಾಡುವ ಸಲುವಾಗಿ ಒಂದು ಘಂಟೆಯನ್ನು ವ್ಯಯಿಸಿ ಹತ್ತು ಡಾಲರ್ರ್ ಉಳಿಸುವ ಶ್ರಮವನ್ನು ಪಡುತ್ತೀರೊ? ಅಥವಾ ನಿಮ್ಮ ಮನೆಯ ಪಕ್ಕದ ಬೀದಿಯಲ್ಲೇ ನಿಮಗೆ ಅಗತ್ಯವಿರುವ ಆ ವಸ್ತುವನ್ನು ನಿಮಗೆ ಬೇಕಾದಾಗ ಕೊಳ್ಳುತ್ತೀರೋ?

ಇನ್ನು ಬಾತ್ ರೂಮ್ ವಿಚಾರಕ್ಕೆ ಹಿಂತಿರುಗೋಣ. ನಮ್ಮ ಸಂಸ್ಕೃತಿಯಲ್ಲಿ ಅದನ್ನು "ಬಚ್ಚಲು ಮನೆ" ಎಂದು ಕರೆದು ಮನೆಯ ಪಟ್ಟವನ್ನು ಕೊಟ್ಟರೋ ವಿನಾ ಆ ಸ್ಥಳವನ್ನು ಯಾವಾಗಲೂ ಗಾಳಿ ಬೆಳಕು ಬಾರದ ರೀತಿ, ಕತ್ತಲ ಗವಿಯಾಗಿ, ತೆಗೆದ ಹಾಗೂ ಸ್ನಾನದ ನಂತರ ಉಡುವ ಬಟ್ಟೆಗಳನ್ನು ಇಡಲೂ ಸಹ ಅಗತ್ಯವಾದ ಸೌಕರ್ಯಗಳಿಲ್ಲದೆ ಕಟ್ಟಿಬಿಟ್ಟರು. ಬಾತ್ ರೂಮ್‌ಗೆ ಈ ಸ್ಥಿತಿಯಾದರೆ ಇನ್ನು ಕಕ್ಕಸು ಕೋಣೆ/ಮನೆಯ ಪರಿಸ್ಥಿತಿಯಂತೂ ಕೇಳಲೇ ಬೇಡಿ. ನಮಗೆ ತಿಂಡಿ-ಊಟದಷ್ಟೇ ಮುಖ್ಯವಾದ ಸ್ನಾನ-ಶೌಚಗಳಿಗೆ ಯಾಕಿಷ್ಟು ಕಡಿಮೆ ಬೆಂಬಲ? ನಮ್ಮ ಬೆಳೆದ ಪರಂಪರೆಗೆ ಯಾಕೆ ಈ ರೂಮುಗಳನ್ನು ತ್ಯಾಜ್ಯವಸ್ತುವನ್ನು ನೋಡುವ ರೀತಿಯ ಮನಸ್ಥಿತಿ ಬಂದೊದಗಿದೆ ಎಂದು ಕೊರಗುತ್ತೇನೆ. ನನ್ನ ಪ್ರಕಾರ ಬಡವರಿರಲಿ ಶ್ರೀಮಂತರಿರಲಿ ಅವರವರ ಶ್ಯಕ್ಯಾನುಸಾರ ಲಿವಿಂಗ್ ರೂಮ್, ಬೆಡ್ ರೂಮ್, ಅಡುಗೆ ಮನೆಗೆ ನೀಡಿದ ಪ್ರಾಶಸ್ತ್ಯವನ್ನೇ ಬಚ್ಚಲು-ಕಕ್ಕಸು ಮನೆಗಳಿಗೂ ಕೊಡಬಹುದುಲ್ಲ? ನನಗಂತೂ ಕನ್ನಡಿಯಿಲ್ಲದ ಬಾತ್‌ರೂಮ್‌ಗಳಲ್ಲಿ ಮುಖ ಕ್ಷೌರ ಮಾಡುವ ಸಾಹಸಅ ಅರಿವಿದೆ, ಸರಿಯಾದ ಬೆಳಕಿಲ್ಲದ ಗೂಡು ದೀಪದಡಿಯಲ್ಲಿನ ಬಚ್ಚಲು ದಿಂಡೆಯ ಮೇಲೆ ಒಣ ಟವಲನ್ನಿಟ್ಟು ನಾನು ಸ್ನಾನ ಮಾಡಿದ ನೀರು ಅದರ ಮೇಲೆ ಬಿದ್ದು ನನ್ನ ಜೊತೆ ಅದೂ ನೆನೆದ ಅನುಭವವಿದೆ, ಬಚ್ಚಲು ಮನೆಯ ಮೇಲೆ ನೋಡಿದರೆ ಜೇಡರ ಬಲೆಗಳು ಕಟ್ಟಿದ ಮೂಲೆಗಳು ಕಂಡಿವೆ, ಯಾವತ್ತೂ ಧೂಳು ಹೊಡೆಯ ಮಾಳಿಗೆಗಳ ಬೇಸತ್ತ ಮುಖಗಳು ಎಂದೂ ಮರೆಯದ ಹಾಗಿವೆ.

ಯಾಕೆ ಹೀಗೆ? ಇವೆಲ್ಲವನ್ನೂ ನಾವು ಬದಲಾಯಿಸ ಬಲ್ಲೆವು, ಬದಲಾಯಿಸಬೇಕು. ನಮ್ಮ ಅಡುಗೆ ಮನೆಯಷ್ಟೇ ಶುಚಿಯಾಗಿ ಬಚ್ಚಲು ಮನೆಯೂ ಇರಬೇಕು, ಅಂಗಳದಿಂದ ಹಿತ್ತಿಲವರೆಗೆ ಮನೆಯ ಪ್ರತಿಯೊಂದು ಅಂಗವೂ ಅದರದ್ದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವಾಗ ಅವುಗಳಿಗೆ ಸರಿಯಾದ ಮಹತ್ವವನ್ನು ಕೊಡಲೇ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ’ಬಾತ್ ರೂಮ್‌ಗೆ ಅಷ್ಟೊಂದು ಜಾಗ್ ಯಾಕೆ ವೇಸ್ಟ್ ಮಾಡ್ತೀರಾ...’ ಎಂದು ಹಿನ್ನೆಡೆ ತೋರುವ ಮನೆ ಕಟ್ಟುವ ಇಂಜಿನಿಯರುಗಳನ್ನು ಝಾಡಿಸಬೇಕು!

Thursday, April 01, 2010

Take (good) care of yourself...

ಸ್ಪ್ರಿಂಗ್ ತರೋ ಅಲರ್ಜಿ ಸೀಜನ್ನ್ ದೆಶೆಯಿಂದ ಈ ಮಾತನ್ನ ಹೇಳ್ತಾ ಇಲ್ಲ, ನನ್ನದೊಂದು ಫಂಡಮೆಂಟಲ್ ನಂಬಿಕೆ ಇಲ್ಲಿನ ಅನುಭವಗಳ ಮೂಲಕ ಬದಲಾದ ಬಗೆಯನ್ನು ಹೇಳ್ತಾ ಇದ್ದೇನೆ ಅಷ್ಟೇ. ನೀವು ಯಾರನ್ನಾದರೂ ’Take care...' ಎಂದು ಅಮೇರಿಕದಲ್ಲಿ ಬೀಳ್ಕೊಡಬಹುದು ಅದು ’how are you?' ಅನ್ನೋ ಔಪಚಾರಿಕ ಮಾತಿನ ಹಾಗೇ ಕಂಡು ಬಂದರೂ ನನ್ನ ಮಟ್ಟಿಗಂತೂ ಅದು ಯಾವುದೋ ಒಂದು ಫಾಸಿಟಿವ್ ಫೀಡ್‌ಬ್ಯಾಕ್ ಅನ್ನು ಆಗಾಗ್ಗೆ ರೀಇನ್‌ಫೋರ್ಸ್ ಮಾಡ್ತಾ ಇರುತ್ತೆ ಅನ್ಸುತ್ತೆ ಒಂದು ರೀತಿಯಲ್ಲಿ ಟಿವಿಯಲ್ಲಿ ಬರೋ ಕಮರ್ಷಿಯಲ್ಲ್ ನೋಡಿ ನಮಗೆ ಹೌಸ್‌ಹೋಲ್ಡ್ ಕೆಲಸಗಳು ನೆನಪಿಗೆ ಬರೋಲ್ವೇ ಹಾಗೆ.

ನಮ್ಮ ಹಿಂದಿನ ತಲೆಮಾರಿನಲ್ಲಿ ಜನರು ಒಂದೇ ಕಂಪನಿಗೆ ಅಥವಾ ಸರ್ಕಾರಕ್ಕೆ ತಮ್ಮ ಪೂರ್ಣ ಸೇವೆಯನ್ನು ಸಲ್ಲಿಸಿ ಅಲ್ಲೇ ನಿವೃತ್ತರಾಗೋ ವ್ಯವಸ್ಥೆ ಅಥವಾ ನಡವಳಿಕೆ ಇತ್ತು, ಆದರೆ ಈಗಿನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಇತಿ-ಮಿತಿಗಳು ನಮ್ಮನ್ನು ಸದಾ ’ಈ ಕೆಲಸ ಕೈ ಬಿಟ್ಟು ಹೋದರೆ ಮುಂದೇನು...’ ಅನ್ನೋ ಯೋಚನೆಯನ್ನು ಯಾವಾಗಲೂ ಜಾಗೃತವಾಗೇ ಇಟ್ಟಿರುತ್ತವೆ. ಹಿಂದಿನ ಪರಂಪರೆಯ ಹಾಗೆ ನಿಮ್ಮ ಬಾಸ್ ಆಗಲಿ ನಿಮ್ಮ ಸಹೋದ್ಯೋಗಿಗಳಾಗಲಿ ನಿಮ್ಮ ಯೋಗಕ್ಷೇಮವನ್ನು ನೋಡಿಕೊಂಡಾರು ಅನ್ನೋದು ಮರೀಚಿಕೆಯಾಗಿ ನಿಮ್ಮ ಕೆಲಸ ಹೇಗೇ ಇದ್ದರೂ ನಿಮ್ಮ ಫರ್‌ಫಾರ್ಮೆನ್ಸ್ ಯಾವ ರೀತಿ ಇದ್ದರೂ ಕಾರ್ಪೋರೇಟ್ ಲ್ಯಾಡರ್ರ್‌ನಲ್ಲಿ ಮೇಲೆ ಹೋಗಲೂ ಅನೇಕ ಕಸರತ್ತುಗಳನ್ನು ಮಾಡಬೇಕಾಗುತ್ತದೆ.

ಒಂದು ಕಡೆ ಹೊಸ ನೀರು ಅಂದರೆ ಹೊಸ ಕೆಲಸ ಮಾಡುವ ತಲೆಮಾರು ಕಂಪನಿಗಳಲ್ಲಿ ಬರುವ ಸಾಧ್ಯತೆ ಅಥವಾ ಸಂಖ್ಯೆ ಕಡಿಮೆಯಾಗಿದ್ದು, ಮತ್ತೊಂದು ಈಗಾಗಲೇ ಕಂಪನಿಯಲ್ಲಿ ಸೇರಿಕೊಂಡು ಬೆಳೆದ ತಿಮಿಂಗಲಗಳು ಅಲ್ಲೇ ಬೀಡುಬಿಟ್ಟಿರೋದರಿಂದ ಒಬ್ಬ ಮಧ್ಯ ವರ್ಗದ ಕೆಲಸಗಾರ ಮೇಲೆ ಹೋಗುವ ಸಾಧ್ಯತೆಗೆ ಕುತ್ತು ಬರುತ್ತದೆ. ತಾನು ಮಾಡುವ ಕೆಲಸವನ್ನು ಮತ್ತೊಬ್ಬರಿಗೆ ಕೊಡಲು ಅಲ್ಲಿ ತನ್ನ ಲೆವೆಲ್ಲ್‌ನಲ್ಲಿ ಬೇರೆ ಯಾರೂ ಇಲ್ಲ, ಜೊತೆಗೆ ತಾನು ಮೇಲೆ ಹೋಗಲೂ ಅವಕಾಶವಿಲ್ಲ ಎನ್ನೋ boxed up ಮನಸ್ಥಿತಿ ಎದುರಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಆದ ಆರ್ಥಿಕ ಏರುಪೇರುಗಳಲ್ಲಿ ಸುಧಾರಿಸಿಕೊಳ್ಳಲು ಕಂಪನಿಗಳು ಇನ್ನೂ ಹೆಣಗುತ್ತಿರುವಾಗ ಬೇರೆ ಕಡೆಗೆ ಅಥವಾ ಕಂಪನಿಗೆ ವಲಸೆ ಹೋಗಿ ಸೇರಿಕೊಳ್ಳುವ ಸಾಧ್ಯತೆಗಳು ಕಡಿಮೆ ಆಗುತ್ತವೆ ಅಥವಾ ರಿಸ್ಕೀ ಆಗಿರುತ್ತವೆ.

ಒಂದಂತೂ ನನಗೆ ಚೆನ್ನಾಗಿ ಮನದಟ್ಟಾಗಿದೆ: ಇಲ್ಲಿ ಯಾರೂ ನಮ್ಮ ಬಗ್ಗೆ ಕೇರ್ ಮಾಡೋದಿಲ್ಲ, ಯಾರೂ ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳೋದಿಲ್ಲ - ನಮ್ಮ ಊರಿನ ಬಸ್ಸುಗಳಲ್ಲಿ ಬರೆದಿರುವ ಹಾಗೆ ’ನಮ್ಮ ಲಗೇಜಿಗೆ ನಾವೇ ಜವಾಬ್ದಾರರು!’. ಸರ್ಕಾರಗಳು, ಅವು ಯಾವುದೇ ಪಕ್ಷದ್ದಿರಲಿ ಯಾರ ನಾಯಕತ್ವದಲ್ಲೇ ಇರಲಿ, ತಮ್ಮ ತಮ್ಮ ಬೇಳೇಕಾಳುಗಳನ್ನು ಬೇಯಿಸಿಕೊಳ್ಳುವುದರಲ್ಲಿ ಮಗ್ನರಾಗಿರುತ್ತವೆ, ತಮ್ಮ ಓಟುಬ್ಯಾಂಕುಗಳನ್ನು ಓಲೈಸುವತ್ತ ಪಾಲಿಸಿಗಳು ವಾಲಿರುತ್ತವೆ. ಎಂಪ್ಲಾಯರ್ಸ್, ಅವರಿಗೆ ನಾವೊಂದು ಕಮಾಡಿಟಿ, ಹ್ಯೂಮನ್ ರಿಸೋರ್ಸ್, ಸ್ಪ್ರೆಡ್‌ಶೀಟ್ ಹಾಗೂ ಎಕ್ಸ್‌ಪೆನ್ಸ್ ವಿಚಾರದಲ್ಲಿ ಬಂದಾಗ ಕತ್ತರಿಸಿ ತೆಗೆದು ಬಿಸಾಡಲು ಒಂದು ಬಾಡಿ ಅಷ್ಟೇ. ಫೈನಾನ್ಶಿಯಲ್ ಅಡ್ವೈಸರ್ಸ್, ಯಾವತ್ತೂ ನಮ್ಮ ಸ್ನೇಹಿತರಂತೂ ಅಲ್ಲ, ಇವರೆಲ್ಲ hyped ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಷ್ಟೇ, ನಿಮ್ಮ ದುಡ್ಡು ಕಾಸಿನ ವಿಚಾರಕ್ಕೆ ಬಂದಾಗ ಅವರ ತರ್ಕದಲ್ಲಿ ಯಾವುದೇ ಭಾವನೆಗಳಾಗಲೀ ನೋವಾಗಲಿ ಇರೋದಿಲ್ಲ. ಸಹೋದ್ಯೋಗಿಗಳು, ನಾನು ಈ ಹಿಂದೆ ಬರೆದ ಹಾಗೆ ಸ್ನೇಹಿತರೆಂದೂ ಆಗೋದಿಲ್ಲ, ಯಾವತ್ತಿದ್ದರೂ ರ್ಯಾಟ್‌ರೇಸ್ ಅನ್ನು ನೆನಪಿಸೋ ಹಾಗೆ ಅವರವರ ಏಳಿಗೆ ಅವರವರಿಗೆ ಮುಖ್ಯ. ಹೀಗೆ ನಾವು ಒಡನಾಡುವ external circle ಅನ್ನೋ ಪರೀಕ್ಷಿಸಿ ನೋಡಿದಾಗ ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರು ಅನ್ನಿಸೋದಿಲ್ಲವೇ? ಇದು ಭಾರತದಲ್ಲಿ ಕೆಲಸ ಮಾಡುವವರಿಗೂ ಅನ್ವಯವಾಗಬಹುದು, ನಮ್ಮಂಥ ಅನಿವಾಸಿಗಳಿಗೆ, ಯಾಕೆಂದರೆ ಅನಿವಾಸಿತನವನ್ನು ನೋವಿರದ ನಾಗರಿಕತೆ ಎಂದು ನಾನು ಕರೆಯೋದರಿಂದ, ಇಲ್ಲಿನ ಪಾಲಿಸಿಗಳಲ್ಲಿ ಎಲ್ಲೂ feel for pain ಇದೆ ಎಂದು ಅನ್ನಿಸೋದೇ ಇಲ್ಲ.

ಅದಕ್ಕೆ, ನಮ್ಮ ಕೇರ್ ಅನ್ನು ನಾವೇ ಮಾಡಿಕೊಳ್ಳಬೇಕು, ನೋಡಿಕೊಳ್ಳಬೇಕು ಎಂದಿದ್ದು; ಬೇರೆ ಯಾರಾದರೂ ನಿಮ್ಮ ಯೋಗಕ್ಷೇಮವನ್ನು ಮಾಡುತ್ತಾರೆ ಎಂದುಕೊಂಡಿದ್ದರೆ ತಟ್ಟನೆ ಆ ಮನಸ್ಥಿತಿಯಿಂದ ಹೊರಬನ್ನಿ.

Monday, March 15, 2010

ಕ್ವಾರ್ಟರ್ರ್ ಮುಗಿತಾ ಬಂತು...

ಮೊನ್ನೆ ಮೊನ್ನೆ ಇನ್ನೂ ಹೊಸ ವರ್ಷ ಸೆಲೆಬ್ರೇಟ್ ಮಾಡಿ ೨೦೧೦ ಫರ್‌ಫಾರ್ಮೆನ್ಸ್ ಅಬ್ಜೆಕ್ಟೀವ್ಸ್ ಬರೆದಿದ್ದೆವಲ್ಲ, ಈಗಾಗ್ಲೇ ಮೊದಲ ಕ್ವಾರ್ಟರ್ ಮುಗಿಯೋದಕ್ಕೆ ಇನ್ನು ಕೇವಲ ಹದಿನೈದೇ ದಿನ ಬಾಕಿ ಎಂದು ಗೊತ್ತಾದ ಕೂಡಲೇ ಏನಾಯ್ತು ಫರ್ಸ್ಟ್ ಕ್ವಾರ್ಟರ್‌ಗೆ ಎನ್ನೋ ಚಿಂತೆಯಲ್ಲಿ ಮನಸ್ಸು ಕಳೆದು ಹೋಯ್ತು. ಇನ್ನೊಂದು ವಾರ ಎರಡು ವಾರದಲ್ಲಿ ಈ ಮೂರು ತಿಂಗಳಲ್ಲಿ ಏನೇನು ಮಾಡಿದೆವು ಎಂದು ಲೆಕ್ಕ ಕೊಡಬೇಕು (ಒಂಥರ ಚಿತ್ರಗುಪ್ತರ ಲೆಕ್ಕದ ಹಾಗೆ), ಹಾಗೇ ವರ್ಷದ ಲೆಕ್ಕ, ನಮ್ಮ ಜೀವಮಾನದ ಲೆಕ್ಕ...ಎಲ್ಲರೂ ಲೆಕ್ಕ ಇಡೋರೇ ಇಲ್ಲಿ.

ಇನ್ನೊಂದು ಸ್ವಲ್ಪ ದಿನದಲ್ಲಿ ಚೈತ್ರ ಮಾಸ-ವಸಂತ ಋತು ಬರುತ್ವೆ, ಅವರಿಗೆಲ್ಲ ಯಾರು ಲೆಕ್ಕ ಕೇಳ್ತಾರೆ ಈ ವರ್ಷ ಏನೇನು ಮಾಡ್ತೀರಿ, ಬಿಡ್ತೀರಾ ಅಂತ? ಇನ್ನೂ ಸ್ವಲ್ಪ ದಿನ ವಿಂಟರ್ ಇರುತ್ತೆ, ಅದನ್ನು ಯಾರಾದರೂ ಗದರುತ್ತಾರೆ ಏಕೆ ಈ ವರ್ಷ ಇಷ್ಟೊಂದು ಹಿಮಪಾತವನ್ನು ಮಾಡಿದೆ ಅಂತ? ಈ ಬ್ರಹ್ಮಾಂಡದ ಸಕಲ ಚರಾಚರ ಜೀವರಾಶಿಗಳಿಗಿಲ್ಲದ performance assessment ನಮಗ್ಯಾಕೆ? ಹೀಗೊಂದು ಪ್ರಶ್ನೆಯನ್ನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯನ್ನು ಅರೆದು ಕುಡಿದಂತೆ ಆಡೋ ನಮ್ಮ ಬಾಸನ್ನ ಕೇಳ್‌ಬೇಕು ಅಂದುಕೋತೀನಿ ಎಷ್ಟೋ ಸಲ.

ಕೆಲವೊಮ್ಮೆ performance ಇಲ್ಲವೇ ಇಲ್ಲ, ಎಲ್ಲವೂ ಮಕ್ಕೀಕಾ ಮಕ್ಕಿ ಯಾರದ್ದೋ ರಾಜಕೀಯ, ಯಾವುದೋ ಕೆಲಸಗಳ ನಡುವೆ ದಿನ-ವಾರಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವ ಜನ, ಇನ್ನು assessment ಕೊಡೋದಾದ್ರೂ ಹೇಗೆ? ನಾವು ಏನು ಮಾಡಿದ್ರೂ ಹೇಗಿದ್ರೂ ನಮ್ಮ ಕಾರ್ಯ ವೈಖರಿ ಬದಲಾಗೋದಿಲ್ಲ, ಕೆಲಸ ಜಾಸ್ತಿ ಆದ ಹಾಗೆ ಕ್ವಾಲಿಟಿ ಕಡಿಮೆ ಅನ್ನೋದಾದ್ರೆ, ನೀವು ಹೇಗೇ ಕೆಲಸ ಮಾಡಿದ್ರೂ ನಿಮ್ಮನ್ನು expense reduction ಹೆಸರಿನಲ್ಲಿ ಕೆಲಸದಿಂದ ತೆಗೆಯೋದೇ ನಿಜವಾದಲ್ಲಿ - ಈ performance assessment ಎಲ್ಲ ಹಾಸ್ಯಾಸ್ಪದ ಅನ್ಸಲ್ಲಾ?

ಇತ್ತೀಚೆಗೆ ನಮ್ಮ ಬಾಸು ಮತ್ತೊಂದು ಹೊಸ ಡೆಫಿನಿಷನ್ನ್ ಅನ್ನು ಕಂಡುಕೊಂಡಿದ್ದಾರೆ, ವೆಕೇಷನ್ನ್ ಅಂದರೆ it is an opportunity to work from a different location ಅಂತ! ರಜಾ ಇರಲಿ ಇಲ್ಲದಿರಲಿ, ವಾರದ ದಿನಗಳೋ ವಾರಾಂತ್ಯವೋ, ಹಬ್ಬವೋ ಹರಿದಿನವೋ -- ಕೆಲಸ ಮಾತ್ರ ತಪ್ಪೋದಿಲ್ಲ. ನಾವೂ Action items, Project plans, Critical issues, Next steps ಅಂತ ಬರೀತ್ಲೇ ಇರ್ತೀವಿ, ಕೆಲಸ ಮಾತ್ರ ಅದರ ಗತಿಯಲ್ಲಿ ಅದು ಸಾಗ್ತಾ ಇರುತ್ತೆ ಒಂಥರ ಹೈವೇ ಮೇಲಿನ ಕಾರುಗಳ ಹಾಗೆ. ಈ ಕಾಲನಿಗಳನ್ನು ನಂಬಿಕೊಂಡ ಇರುವೆಗಳು ಏನಾದ್ರೂ ಅವುಗಳ ಭಾಷೆಯಲ್ಲಿ ನಮ್ಮ ರೀತಿ ಏನಾದ್ರೂ ಡಾಕ್ಯುಮೆಂಟೇಷನ್ನ್ ಮಾಡ್ತಾವಾ ಅಂತ ಎಷ್ಟೋ ಸರ್ತಿ ಸಂಶಯ ಬಂದಿದೆ. ಇರುವೆ, ಜೇನ್ನೊಣಗಳು ನಮ್ಮನ್ನು ಕಂಡು, ನೋಡಿ ನಾವೇನು ಲೆಕ್ಕ ಇಡದೆ ಹೇಗೆ ಅಚ್ಚುಕಟ್ಟಾಗಿ ಕೆಲಸವನ್ನು ಪಾಲಿಸುತ್ತೇವೆ ಅಂತ ಹಂಗಿಸುತ್ತಾವೇನ್ನೋ ಅಂತ ಹೆದರಿಕೆಯಾಗುತ್ತದೆ.

Saturday, February 20, 2010

ಎಲ್ಲೆಲ್ಲೂ ಸಂಗೀತವೇ...

...ಹಾಗಂತ ಅನ್ಸಿದ್ದು ಅದರಲ್ಲೂ ಈ ಸಂಗೀತದ ವಿಶೇಷಗಳು ಗಮನ ಸೆಳೆದಿದ್ದು ಇತ್ತೀಚಿನ ಭಾರತದ ಪ್ರವಾಸದ ಸಮಯದಲ್ಲಿ ಅಂತ ಸಾರ್‌ಕ್ಯಾಷ್ಟಿಕ್ ಆಗಿ ಹೇಳಿಕೋ ಬೇಕು ಅಷ್ಟೇ. ಎಲ್ಲಿ ನೋಡಿದರೂ ತುಂಬಿ ತುಳುಕೋ ಜನ ಸಾಗರ, ಅಂತಹ ದೊಡ್ಡ ಸಮುದಾಯಕ್ಕೆ ಕಮ್ಮ್ಯೂನಿಕೇಷನ್ನ್ ರೆವಲ್ಯೂಷನ್ನಿನ ಕೊಡುಗೆಯಾಗಿ ಕೈಗೊಂದು ಕಾಲಿಗೊಂದು ಮೊಬೈಲು ಫೋನುಗಳು, ಆ ಕ್ರಾಂತಿಯ ಬೆನ್ನುಲೆಬಾಗಿ ಸಂಗೀತ ಸರಸ್ವತಿ!

ಮ್ಯಾನುಫ್ಯಾಕ್ಚರರ್ ಕೊಟ್ಟಿರೋ ಫೋನುಗಳನ್ನು ಅವುಗಳು ಹೊರಡಿಸೋ ಸ್ವರಗಳನ್ನು ಮಿತಿಯಾಗಿ ಕಷ್ಟಮೈಜ್ ಮಾಡಿಕೊಂಡ ಪದ್ಧತಿಯವನು ನಾನು. ಇದ್ದೊಂದು ಪರ್ಸನಲ್ ಸೆಲ್‌ಫೋನ್ ಅನ್ನು ಆಫೀಸಿಗೆ ಮುಡಿಪಾಗಿಡಲಾಗಿ ಈಗ ಅದೂ ಬಿಸಿನೆಸ್ಸ್ ಫೋನಾಗಿ ಬಿಜಿಯಾಗಿದೆಯೇ ಹೊರತು ಅದು ಇಂದಿನ ಯುವ ಜನಾಂಗದ ನಡವಳಿಕೆಗಳನ್ನನುಸರಿಸಿ ಬೇರೆ ಯಾವುದ್ಯಾವುದೋ ಸ್ವರವನ್ನೇನು ಹೊರಡಿಸೋದಿಲ್ಲ. ನನ್ನ ಫೋನ್ ರಿಂಗ್ ಆಗುತ್ತಿದ್ದರೆ ೧೯೯೯ರ ಮ್ಯಾಟ್ರಿಕ್ಸ್ ಸಿನಿಮಾದಲ್ಲಿ ಕಿಯಾನೋ ರೀವ್ಸ್ (The Matrix, Keanu Reeves) ಈಗಲೋ ಆಗಲೋ ಬಂದೇ ಬಿಡುತ್ತಾನೆ ಎನ್ನುವಂತೆ ಅಕ್ಕ ಪಕ್ಕದವರು ನೋಡುವಂತೆ ಕಿರುಚಿಕೊಳ್ಳುತ್ತದೆ, ಆದರೆ ನನ್ನ ಫೋನ್ ಹುಟ್ಟಿದಾಗಿನಿಂದ ಇನ್ನು ಅದು ಸಾಯುವವರೆಗೆ ಮತ್ಯಾವ ಸ್ವರವನ್ನೂ (ರಿಂಗ್ ಟೋನ್) ಅನ್ನೂ ಅನುಸರಿಸೋದಿಲ್ಲ, ಅನುಕರಿಸೋದಿಲ್ಲ ಎಂದು ಪ್ರಮಾಣವನ್ನಂತೂ ಮಾಡಲಾರೆ...ಇನ್ನು ಮುಂದೆ ಹೇಗೋ ಏನೋ ಯಾರಿಗೆ ಗೊತ್ತು?

ನಮ್ಮಣ್ಣನ ಫೋನ್ ಕರೆ ಬಂದಾಗಲೆಲ್ಲ ಎಂ. ಡಿ. ಪಲ್ಲವಿಯವರ "ನೀನಿಲ್ಲದೇ ನನಗೇನಿದೇ..." ಹಾಡನ್ನು ಹೊರಡಿಸುತ್ತಿತ್ತು, ನಾನು ಮೊದಮೊದಲು ಈ ಹಾಡನ್ನು ಕೇಳಿದಾಗ ನನಗೆ ಮನಸ್ಸಿನ್ನಲ್ಲಿ ಉದ್ಭಸಿದ ಭಾವನೆಗಳು ಪದೇ ಪದೇ ರಿಂಗ್‌ಟೋನ್ ನೋಪಾದಿಯಲ್ಲಿ ಬಂದೂ ಬಂದೂ ಹೊಸ ಹೊಸ ಭಾವನೆಗಳು ಮೂಡಿಸತೊಡಗಿತು. ವಿಶೇಷವೆಂದರೆ ತಾವೆಷ್ಟೇ ಅಕ್ಕರೆಯಿಂದ ಕಾಸುಕೊಟ್ಟು ಕೊಂಡೋ ಅಥವಾ ಪುಕ್ಕಟೆಯಾಗಿ ರಿಂಗ್‌ಟೋನ್ ಅನ್ನು ಹಾಕಿಕೊಂಡಿದ್ದರೂ ಯಾರೂ ತಮ್ಮ ಫೋನ್ ಯಾರೋ ಕರೆ ಮಾಡಿದರೆಂದು ತಮಗೆ ಬೇಕಾದ ಹಾಡನ್ನು ನುಡಿಸಿದಾಗ ಒಂದೆರಡು ಸಾಲನ್ನಾದರೂ ಅದು ಹಾಡಲಿ ಎಂದು ಸುಮ್ಮನೆ ಬಿಡೋದಿಲ್ಲ. ಕರೆ ಬಂದು ಅದು ಹಾಡು ಶುರುಮಾಡುವಾಗಲೇ ಅದರ ಗಂಟಲನ್ನು ಹಿಚುಕಿ ತಮ್ಮ ಗಂಟಲನ್ನು ತೆರೆದುಕೊಳ್ಳುತ್ತಾರೆ. ಹೀಗಿದ್ದಾಗ್ಯೂ ನನ್ನಣ್ಣನ ಫೋನು ಒಂದೆರಡು ಬಾರಿ "ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ..."ಯಲ್ಲಿಯವರೆಗೆ ನುಡಿಸಿತ್ತು, ಒಮ್ಮೆ ಎಲ್ಲದಕ್ಕಿಂತ ಮುಂದೆ ಹೋಗಿ "ಎದೆಯಾಸೆ ಏನು ಎಂದು ನೀ ಕಾಣದಾದೆ...’ ವರೆಗೆ ಹೋಗಿದ್ದು ನಿಜ.

ಅದೇನು ಸಾವಿರಾರು ವರ್ಷದ ಪರಂಪರೆಯೋ ಅಥವಾ ನಮನಮಗೆ ಅಂಟಿದ ಸಂಗೀತದ ಮೋಡಿಯೋ...ಭಾರತದಲ್ಲಿ ಹುಡುಕಿದರೆ ಎಲ್ಲ ಕಡೆ ಸಂಗೀತವಿದೆ: ಬೇಡುವ ಬಿಕ್ಷುಕನಿಂದ ಹಿಡಿದು, ರಿವರ್ಸ್ ತೆಗೆಯೋ ವಾಹನಗಳವರೆಗೆ, ಹಾಲು-ತರಕಾರಿ ಮಾರುವವರ ಸ್ವರಗಳಿಂದ ಹಿಡಿದು ಮನೆಯ ಹಳೆ ಗಡಿಯಾರಗಳವರೆಗೆ, ಹೆಚ್ಚೂ ಕಡಿಮೆ ಎಲ್ಲ ಟಿವಿ-ರೆಡಿಯೋ ಅಡ್ವರ್‌ಟೈಸ್‌ಮೆಂಟ್‌ಗಳಿಂದ ಹಿಡಿದು ಮೇಲೆ ಹೇಳಿದ ಹಾಗೆ ಸೆಲ್‌ಫೋನ್ ಸಂಭಾಷಣೆಗಳವರೆಗೆ. ಕೆಲವೊಮ್ಮೆ ಈ ರಿವರ್ಸ್ ತೆಗೆಯೋ ವಾಹನಗಳ ವಾರ್ನಿಂಗ್ ಸಿಗ್ನಲ್ ಆಗಿ ಬಳಸೋ ಸಿಂಫನಿಯ ಧ್ವನಿಗೆ ಕಾಫಿರೈಟ್ ಅನ್ನು ಕೊಟ್ಟವರು ಯಾರು? ಅದರಲ್ಲೂ ಅಂತಹ ಮಹಾನ್ ಸಿಂಫನಿಗಳ ಬಳಕೆ ಈ ರೀತಿಯಲ್ಲಿ ಇಷ್ಟು ಕೆಟ್ಟದಾಗಿ ಏಕಾಗುತ್ತಿದೆ ಅನ್ನಿಸಿ ತಲೆ ಚಿಟ್ಟು ಹಿಡಿದದ್ದೂ ಹೌದು. ಅಷ್ಟೊಂದು ಜನರಿದ್ದಾರೆ, ಅವರೆಲ್ಲರಿಗೂ ಸಂಗೀತ ಬೇಕು, ಆ ಸಂಗೀತ ಹಲವಾರು ವಿಧ ರೀತಿಗಳಲ್ಲಿ ತಿರುಚಲ್ಪಟ್ಟದ್ದಾಗಿದೆ, ಕಾಪಿ ಹೊಡೆದದ್ದಾಗಿದೆ ಅನ್ನೋ ಪರಿಜ್ಞಾನವೇ ಇಲ್ಲದಷ್ಟರ ಮಟ್ಟಿಗೆ ಬೆಳೆದು ಹೋಗಿದೆ.

ನಾನು ಸ್ವರ-ಸಂಗೀತ-ಮಾಧುರ್ಯ ಅಂತ ಇಬ್ಬರು ಗುರುಗಳ ಹತ್ತಿರ ಎರಡು ಸಾರಿ ಉತ್ತರಾದಿ-ದಕ್ಷಿಣಾದಿ ಸಂಗೀತದ ವಾಸನೆಯನ್ನು ಎಳೆದುಕೊಂಡೇ ಅಂದಿನ ಕಳವಳಗಳಿಗೆ ಸಂಗೀತದ ಕಲಿಕೆಯನ್ನು ಬಲಿಕೊಟ್ಟವನು, ನಾನಾದರೂ ಸಂಗೀತದ ಬಗ್ಗೆ ಏನು ಬರೆಯಬಲ್ಲೆ ಎನ್ನುವ ಕೆಳ ಮನೋಭಾವನೆಯವನಾದರೂ ನಿಶ್ಶಬ್ದವನ್ನು ಸೀಳುವ ಕಂಪನಗಳನ್ನಾಗಿ ಸಂಗೀತವನ್ನು ನೋಡುವುದರ ಜೊತೆಗೆ ಕಂಪನದ ಜೊತೆ ಹದವಾಗಿ ಬೆರೆತ ಸದ್ದಿಲ್ಲದ ಪರಿಸರವೂ ಸಂಗೀತದ ನೆಲೆನಿಲ್ಲುವಿಕೆ ಅಷ್ಟೇ ಮುಖ್ಯ. ಆದರೆ ಭಾರತದಲ್ಲಿ ಒಂದರ ಸಂಗೀತದ ಅಲೆ ಮತ್ತೊಂದರ ಸಂಗೀತದ ಅಲೆಗಳನ್ನು ಸೀಳುತ್ತದೆ, ನಿಶ್ಶಬ್ದ ಅನ್ನೋದು ಕೇವಲ ಬ್ರಾಹ್ಮೀ ಮಹೂರ್ತದ ಒಂದೆರಡು ಘಳಿಗೆ ಮೊದಲು ಮಾತ್ರ ಅನ್ನುವಂತಾಗಿದೆ, ಎಲ್ಲೆಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ತುಂಬಿ ತುಳುಕುವ ಸಂಗೀತ ಕೊನೆಗೆ ಒಂದು ದೊಡ್ಡ ಗದ್ದಲದ ರೀತಿಯಲ್ಲಿ ಕೇಳಿ ಬರುತ್ತದೆ ಕಾಣಸಿಗುತ್ತದೆ.

ಸುಮ್ಮನೇ ಯಾರೋ ಹಾಕಿಕೊಂಡಿರೋ ರಿಂಗ್‌ಟೋನಿಗೆ ನಾನು ಬೇಡವಲ್ಲದ ಮಹತ್ವವನ್ನು ಕೊಡುತ್ತೇನೆ. ಸೆಲ್‌ಫೋನ್ ಉತ್ಪಾದಕರು ಕೊಟ್ಟ ಧ್ವನಿಗಳು ಸಾಲವು ಎಂದು ಮೂರು ಡಾಲರ್ ಕೊಟ್ಟು ಹೊಸ ಧ್ವನಿಯನ್ನು ಪಡೆದು ಹಾಕಿಕೊಳ್ಳುವವನ ಮನಸ್ಸಿನ ಹಿಂದೇನಿರಬಹುದು ಎನ್ನುವ ಪ್ರಶ್ನೆಗಳು ಕಾಡುತ್ತವೆ. ನನ್ನಣ್ಣ ’...ನೀನಿಲ್ಲದೇ ನನಗೇನಿದೆ...’ ಎನ್ನುವ ಹಾಡನ್ನೇ ಏಕೆ ಹಾಕಿದ? ರಿಂಗ್ ಆದಾಗ ಬರುವ ಹಾಡಿಗೂ ಮತ್ತೊಬ್ಬರು ನಾವು ಫೋನ್ ಎತ್ತಿ ಆನ್ಸರ್ ಮಾಡುವವರೆಗೆ ಕಾಯುವಾಗ ಬ್ಯಾಕ್‌ಗ್ರೌಂಡಿನಲ್ಲಿ ರಿಂಗ್ ಬದಲಿಗೆ ಕೇಳುವ ಹಾಡಿಗೆ ಏನನ್ನುತ್ತಾರೆ? ನನಗೆ ಕರೆ ಮಾಡಿದವರು ಮಾಡುವವರು ಯಾರೋ ಅವರು ಆ ಹಾಡನ್ನೇ ಕೇಳಲಿ ಎನ್ನುವ ಉಮೇದಿನ ಆದಿ-ಅಂತ್ಯಗಳೇನು? ನನ್ನ ಉಳಿದೆಲ್ಲ ಪರ್ಸನಾಲಿಟಿ ಪ್ರತಿಬಿಂಬಿಸುವ ಅಂಶಗಳ ಜೊತೆಗೆ ತಣ್ಣಗಿದ್ದಾಗ ಜೇಬಿನ ಒಳಗಿರುವ ಈ ಎಲೆಕ್ಟ್ರಾನಿಕ್ ಉಪಕರಣ ಚಾಲೂ ಇದ್ದಾಗ ನನ್ನ ವ್ಯಕ್ತಿತ್ವದ ಪ್ರತಿಬಿಂಬವಾಗುವುದು ನಿಜವೇ? ತನಲ್ಲಿ ಇದ್ದದ್ದು ಸಾಲದು, ಮಂದಿಯದು ಬೇಕು, ಅವರ ಕೈಯಲ್ಲಿರೋದು ಒಳ್ಳೆಯದು ಎನ್ನುವ ಮೆಟೀರಿಯಲಿಸ್ಟಿಕ್ ಬದುಕನ್ನು ಸೆಲ್‌ಫೋನುಗಳು ಹುಟ್ಟು ಹಾಕುತ್ತಿದ್ದಾವೆಯೇ? ಎಲ್ಲದಕ್ಕಿಂತ ಮುಖ್ಯವಾಗಿ ಸಂಗೀತ ಎಲ್ಲರಿಗೂ ಇಷ್ಟವಾಗಲೇ ಬೇಕು ಎಂದೇನಾದರೂ ನಿಯಮವಿದೇಯೇ?

ಗುಬ್ಬಚ್ಚಿಯ ಹಾಗೆ ಕೂಗುವ ಧ್ವನಿಗಳಿಂದ ಹಿಡಿದು, ವಯಸ್ಸಾದವರಿಗೆ ಕೇಳದ ಧ್ವನಿಯ ಫ್ರೀಕ್ವೆನ್ಸಿಯವರೆಗೆ, ಉತ್ತರಾದಿ ಸಂಗೀತದಿಂದ ಹಿಡಿದು ದಕ್ಷಿಣಾದಿಯವರೆಗೆ, ಪೂರ್ವದಿಂದ ಹಿಡಿದು ಪಶ್ಚಿಮದ ಸಂಗೀತದ ಅಲೆಗಳ ಬಗ್ಗೆ ಬೇಕಾದಷ್ಟು ರಿಂಗ್ ಟೋನ್‌ಗಳಿವೆ, ಆದರೆ ಇವು ಯಾವುವೂ ಜನರ ಹಸಿವನ್ನು ಹಿಂಗಿಸಿಲ್ಲ. ಆ ಸಾಲದು ಎನ್ನುವ ಮನೋಭಾವನೆ ಅನೇಕ ಬೇಕುಗಳ ತಾಯಿಯಾಗುತ್ತಿದೆ. ಹೀಗೆ ಹುಟ್ಟುವ ತಾಯಂದಿರ ದಯೆಯಿಂದ ಮತ್ತೆ ಅನೇಕಾನೇಕ ಮಕ್ಕಳು ಸಂಗೀತ ಪ್ರಾಪ್ತಿಯನ್ನು ಹೊಂದುತ್ತಾರೆ, ಒಟ್ಟಿನಲ್ಲಿ ಸಂಗೀತವನ್ನು ಜಗತ್ತು ಎತ್ತಿಕೊಳ್ಳುತ್ತದೆ - ಸಂಗೀತ ಜನರನ್ನು ಎಚ್ಚೆರಿಸುತ್ತದೆ. ಸದ್ಯ, ಈ ಸಂಗೀತದ ಟೋನುಗಳು ಮನೆಯ ಹೊರಗೇ ಉಳಿಯುತ್ತವೆ ಹೆಚ್ಚಿನ ಮಟ್ಟಿಗೆ, ಅದ್ಯಾವ ಪುಣ್ಯಾತ್ಮನೂ ಮನೆಯ ಫೋನಿನ ರಿಂಗ್‍ಟೋನ್ ಅನ್ನು ಈ ರೀತಿಯ ಜನರ ಮನೋಭಿರುಚಿಗೆ ತಕ್ಕಂತೆ ಬದಲಾಯಿಸಿಲ್ಲವಲ್ಲ, ಅಷ್ಟು ಸಾಕು.

Tuesday, February 09, 2010

ಬೀಳದೇ ಏಳೋದಾದರೂ ಹೇಗೆ?

ಹೀಗೇ ಒಂದು ಛಳಿಗಾಲದ ದಿನ, ಮಧ್ಯಾಹ್ನ ಆಗಿ ಸಂಜೆ ನಾಲ್ಕು ಘಂಟೆ ಹೊತ್ತಿಗೆಲ್ಲಾ ಅದನ್ನು ದಿನ ಎನ್ನಬೇಕೋ, ಕತ್ತಲು ಎನ್ನಬೇಕೋ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದಾದಂತಹ ಮಸುಕು ಮುಸುಕಿದ ಮುಸ್ಸಂಜೆ. ಈಗಲೋ ಆಗಲೋ ಉಸಿರು ಕಳೆದುಕೊಂಡು ಹೋಗೇ ಬಿಟ್ಟ ಎನ್ನುವ ಸೂರ್ಯನನ್ನು ಸಂತೈಸುವ ಹಾಗೆ ಅಲ್ಲಲ್ಲಿ ಬಿದ್ದುಕೊಂಡು ಛಳಿಗೆ ಗಟ್ಟಿಯಾಗಿ ಮುಖ ಸಿಂಡರಿಸಿಕೊಂಡ ಹಿಮದ ತುಕುಡಿಗಳು ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಬೆಳಕಿನ ಸೈನಿಕರ ಉತ್ಸಾಹ ಕತ್ತಲಿನ ಶತ್ರುಗಳ ಎದುರು ಸಂಪೂರ್ಣವಾಗಿ ಕಳೆದು ಹೋಗದ ಹಾಗೆ ಕಾಪಾಡಿಕೊಂಡಿದ್ದವು. ಯಾವತ್ತಿನಂತೆ ರಸ್ತೆಗಳು ಊರ್ಧ್ವಮುಖಿಗಳಾಗಿ ತಮ್ಮನ್ನು ತಾವು ಸೇವೆಗೆ ಒಪ್ಪಿಸಿಕೊಂಡಿದ್ದರೂ ಕಪ್ಪಗಿನ ರಸ್ತೆಗಳ ಮೇಲೆ ಬೂದಿ ಬಳಿದುಕೊಂಡ ಹಾಗಿನ ಛಾಯೆ ಯಾಕೋ ಮುಂಬರುವ ಕೆಟ್ಟದ್ದನ್ನು ತಾವು ಬಲ್ಲೆವು ಎಂಬಂತೆ ಅಜ್ಜ-ಮುತ್ತಾತರ ಭಂಗಿಯಲ್ಲಿ ಇದ್ದವು. ನಮ್ಮ ಮನೆಯ ಡ್ರೈವ್‌ ವೇ ತನ್ನ ಮೇಲಿನ ಅರ್ಧ ಇಂಚು ದಪ್ಪಗಿನ ಐಸ್ ಲೇಯರ್‌ನ್ ಅವಶೇಷಗಳಡಿಯಲ್ಲಿ ಸಮಾಧಿಯಾಗಿತ್ತು, ನಮ್ಮ ಮನೆಯ ಮೇಲ್ ಬಾಕ್ಸ್ Mohawk Indian ಹೇರ್ ಸ್ಟೈಲ್ ಮಾಡಿಕೊಂಡು ತನ್ನ ಮೇಲೆ ಒಂದು ರೀತಿಯ ಚೂಪನೆ ಐಸ್ ಪದರವನ್ನು ನಿರ್ಮಿಸಿಕೊಂಡಿತ್ತು, ಅದರ ಬುಡದಲ್ಲಿ ಲಾಲಿ ಪಾಪ್ ನೆಕ್ಕಿ ಬಣ್ಣದ ಜೊಲ್ಲು ಸುರಿಸುವ ಮುಗ್ಧ ಮಗುವಿನಂತೆ ಬಿಸಿಲಿಗೆ ಕರಗಿ ಐಸ್ ನೀರಾಗುತ್ತ ನೀರಾಗುತ್ತ ಹನಿಗಳು ಅಲ್ಲಲ್ಲಿ ಹೆಪ್ಪು ಕಟ್ಟಿಕೊಂಡು ಮೇಲ್ ಬಾಕ್ಸ್ ಸಂರಕ್ಷರ ಹಾಗಿನ ಚೂಪುಗಳನ್ನು ನಿರ್ಮಿಸಿಕೊಂಡಿದ್ದವು.

ಬ್ಲ್ಮೂಮ್‌ಬರ್ಗ್ ರೆಡಿಯೋದಲ್ಲಿ ಮಾರ್ಕೆಟ್ ಬಿದ್ದ ಬಗ್ಗೆ ಅರಚಿಕೊಳ್ಳುತ್ತಿದ್ದರು, ಈಗಾಗಲೇ ನೀರಲ್ಲಿ ಮುಳುಗಿದೋನಿಗೆ ಮಳೆಯೇನು ಛಳಿಯೇನು ಎನ್ನುವ ಧೋರಣೆಯನ್ನು ತಾಳಿಕೊಂಡ ಜನರಿಗೆ ಇವರೆಲ್ಲ ಮತ್ತಿನ್ನಷ್ಟು ಹೆದರಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರಲ್ಲ ಎನ್ನಿಸಿತು. ಈ ಅರಚುವ ರೆಡಿಯೋ ಧ್ವನಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ’ಬಿಸಿಲೇ ಇರಲಿ, ಮಳೆಯೇ ಇರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ…’ ಎನ್ನುವಂತೆ ಎದುರು ಮನೆ ಮಕ್ಕಳು ಕೊರೆಯುವ ಛಳಿಯನ್ನೂ ನಿರ್ಲಕ್ಷಿಸಿ ಸ್ಲೆಡ್ಡಿಂಗ್ ಆಡುತ್ತಿದ್ದರು, ಅವರ ನಗುವಿನಲ್ಲಿ ಯಾವುದೇ ಒತ್ತಡವಿದ್ದ ಹಾಗಿರಲಿಲ್ಲ. ನಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನ ಮರಗಳು ಅಲುಗಾಡಲೂ ಸಂಕೋಚಗೊಂಡವರಂತೆ ಸ್ಥಿರವಾಗಿ ನಿಂತಿದ್ದವು, ನಿತ್ಯಹರಿದ್ವರ್ಣಿಗಳಂತೂ ಈ ಟ್ಯಾಕ್ಸ್ ಸೀಜನ್ನ್‌ನಲ್ಲಿ ಎಲ್ಲಿ ನಕ್ಕರೆ ಅದಕ್ಕೆ ಟ್ಯಾಕ್ಸ್ ಹಾಕಿ ಬಿಡುತ್ತಾರೋ ಎಂದು ಬಾಯನ್ನು ಹೊಲಿದುಕೊಂಡವರಂತಿದ್ದವು.

ಮನೆಯ ಟ್ರ್ಯಾಷ್ ಕ್ಯಾನುಗಳನ್ನು ಎತ್ತಿಡುತ್ತಾ ನಾನು ’ನಿಧಾನವಾಗಿ ನಡೆಯಬೇಕು, ಬಿದ್ದರೆ ಅಷ್ಟೇ ಗತಿ…’ ಎಂದು ಏನೇನೆಲ್ಲ ಮನಸ್ಸಿನ್ನಲ್ಲಿ ಅಂದುಕೊಂಡರೂ, ಅಂದುಕೊಂಡವುಗಳು ಪ್ರಯೋಜನಕ್ಕೆ ಬಾರವು ಏನಿದ್ದರೂ ಕ್ರಿಯಾಶೀಲತೆ ಮುಖ್ಯ ಎನ್ನುವ ವಿಧಿ ಕಣ್ಣು ತೆಗೆದು ಕಣ್ಣು ಬಿಡುವಷ್ಟರಲ್ಲಿ ನನ್ನ ಕಾಲುಗಳು ತಲೆಗಿಂತ ಮೊದಲು ಹೋಗತೊಡಗಿ ದೊಪ್ಪನೆ ಜಾರಿ ಬಿದ್ದದ್ದಾಯಿತು. ಕೈ ಊರಿ ಎದ್ದು, ಮೈ ಕೈ ಕೊಡವಿಕೊಂಡು ಸುಧಾರಿಸಿಕೊಳ್ಳೂತ್ತಾ ಸದ್ಯ ಯಾವುದೇ ಎಲುಬು ಮುರಿಯಲಿಲ್ಲ ಎಂದು ಸಮಾಧಾನ ಪಡುವಂತಾಯಿತು. ಕತ್ತಲಿನ ದಯೆಗೆ ನಾನು ನೆಲಕ್ಕೆ ಅಪ್ಪಳಿಸಿದ ದೃಷ್ಯ ಜನಜನಿತವಾಗಲಿಲ್ಲ. ನೆಲದಲ್ಲಿನ ಐಸ್ ಪದರ ನಮಗೇನೂ ಆಗಿಲ್ಲ ಎಂದು ಬೀಗಿದಂತೆ ಕಾಣಿಸಿತು. ನಾನು ಚೆಲ್ಲಾ ಪಿಲ್ಲಿಯಾದ ಟ್ರ್ಯಾಷ್ ಕ್ಯಾನ್‌ಗಳನ್ನು ಮತ್ತೆ ಎತ್ತಿಟ್ಟು ಕೆಲಸ ಮುಂದುವರೆಸಿದೆ.

ಈ ಏಳು-ಬೀಳುಗಳು ಸಹಜ, ಆದರೆ ವಯಸ್ಸಾಗುತ್ತಾ ಬಂದ ಹಾಗೆ ಬೀಳುಗಳ ಬಗ್ಗೆ ಗಮನಕೊಡಬೇಕಾಗುತ್ತದೆ, ಎಲ್ಲ ಬೀಳುಗಳೂ ಏಳುಗಳಲ್ಲಿ ಕೊನೆಯಾಗಬೇಕು ಎಂದೇನೂ ಇಲ್ಲ. ಬಹಳ ಸರಳವಾದ ಸಿದ್ಧಾಂತ, ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವುದು ಸರಿ, ಆದರೆ ಹೆಚ್ಚಿನ ರಿಟರ್ನ್ ಬಯಸಿದಂತೆ ಅಲ್ಲಿ ರಿಸ್ಕ್ ಹೆಚ್ಚಾಗುತ್ತದೆ, ಎಲ್ಲರಿಗೂ ಎಲ್ಲ ರಿಸ್ಕ್ ಟೇಕಿಂಗ್ ಸ್ಟ್ರಾಟೆಜಿ ಅನ್ವಯಿಸುವುದಿಲ್ಲ, ಕೆಲವೊಮ್ಮೆ ಸೇಫ್ಟಿ ಫರ್ಸ್ಟ್ ಎಂದುಕೊಂಡು ಯಾವುದು ನಮ್ಮ ಹಿತರಕ್ಷಣೆಯನ್ನು ಮಾಡಬಹುದೋ ಅಂತಹ ಹೂಡಿಕೆಯನ್ನು ಮಾಡುವುದು ಒಳ್ಳೆಯದು. ಇವೆಲ್ಲ ಗುಡ್ ಎಕನಾಮಿಕ್ಸ್ ಇಂಡಿಕೇಟರುಗಳು, ಹೂಡಿಕೆಯ ಮೂಲಭೂತ ಅಂಶಗಳು – ಇವುಗಳ ಬಗ್ಗೆ ಅದೆಷ್ಟೇ ಪಬ್ಲಿಷ್ ಆಗಿದ್ದರೂ ಸಹ ಬೀಳುವವರು ಮಾತ್ರ ಕಡಿಮೆಯಾಗೋದಿಲ್ಲ. ಅದರಲ್ಲೂ ನನ್ನಂತಹವರು ಎಲ್ಲವನ್ನು ತಮ್ಮಷ್ಟಕ್ಕೇ ತಾವೇ ಅನುಭವಿಸಿ ನೋಡುತ್ತೇವೆ ಎಂದು ಕಂಕಣ ತೊಟ್ಟುಕೊಂಡಿರುವಾಗ…ಯಾವ ಉಪದೇಶ ಎಲ್ಲಿಯ ಲೆಕ್ಕ ಬಿಡಿ. ಬೀಳದೇ ಏಳೋದಾದರೂ ಹೇಗೆ? ಒಮ್ಮೆ ಬಿದ್ದ ಅನುಭವದ ಲೆಕ್ಕಕ್ಕೆ ಮತ್ತೆ-ಮತ್ತೆ ಮೇಲೆ ಹೋಗುವ ರಿಯಾಯತಿ ಸಿಗಬಹುದೇ? ಬಿದ್ದರೆ ಮಾತ್ರ ಏಳಲು ಬಿಡುತ್ತೇನೆ ಎನ್ನುವ ಆಟದ ನಿಯಮಗಳನ್ನು ಯಾರು ಬರೆದವರು? ಅದನ್ನೇಕೆ ನಾವು ಒಪ್ಪಿಕೊಳ್ಳಬೇಕು? ಈ ಒಪ್ಪಿಕೊಳ್ಳದ ನಿಯಮಕ್ಕೆ ಬೀಳುವ-ಏಳುವ ಅನುಪಾತಗಳನ್ನಾದರೂ ಸಮತೂಕ ಮಾಡಬೇಕು ಎನ್ನುವ ಹಂಬಲವೇಕಿಲ್ಲ? ಕೆಟ್ಟ ಮೇಲೆ ಬುದ್ದಿ ಬಂದದ್ದು ಎಲ್ಲಿ ಹೋಯಿತು, ಅದು ಮತ್ತೆ-ಮತ್ತೆ ನಮ್ಮನ್ನು ಬೀಳದಂತೆ ತಡೆಹಿಡಿಯೋದರಲ್ಲಿ ವಿಫಲವಾಗೋದೇಕೆ?

ಬಿದ್ದರೆ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವ ಮಧ್ಯಮ ವರ್ಗದ ಕೊರಗುಗಳು ಎದ್ದ ಮೇಲಾಗಬಹುದಾದ ಸಂಭ್ರಮದ ಸಂತೋಷವನ್ನು ಕಸಿದುಕೊಂಡು ಬಿಡುತ್ತವೆ. ನೆಲವನ್ನು ಬಿಟ್ಟು ಮೇಲೇರದ ಮಧ್ಯಮ ವರ್ಗದ ಬಂಧನಗಳು ಎದ್ದು ಹಾರಾಡಬಹುದಾದ ಮನದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ ಗೂಟಕ್ಕೆ ಕಟ್ಟಿದ ತುಡುಗು ದನದ ಮೂಗುದಾರದಂತೆ ಸುತ್ತಿಕೊಂಡುಬಿಡುತ್ತವೆ. ಇವತ್ತಿಲ್ಲದಿದ್ದರೆ ನಾಳೆ, ಇಂದಲ್ಲದಿದ್ದರೆ ಮುಂದೆ ಎನ್ನುವ ಆಶಾವಾದ ತಿಪ್ಪೆ ಸಾರುವ ಸಗಣಿಯಾಗುತ್ತದೆ. ಮುಂದಿನ ಜನ್ಮದಲ್ಲಿ ಮಾಡಿದರೆ ಆಯಿತು ಎನ್ನುವುದು ನನಗದು ಬೇಕೇ ಬೇಕು ಎಂದು ಹಠ ಹಿಡಿದ ಮಗುವಿಗೆ ನಾಳೆ ಕೊಡುತ್ತೇನೆ ಎಂದು ಸಾಂತ್ವನ ಹೇಳುವ ಒಣ ತತ್ವವಾಗುತ್ತದೆ. ಏನೆಲ್ಲವನ್ನು ಮಾಡಬೇಕು ಎನ್ನುವ ಉನ್ಮಾದ ಏನೂ ಮಾಡಿಲ್ಲವಲ್ಲ ಎನ್ನುವ ಉದ್ವೇಗದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹದ ನೀರಿನ ಒಂದು ಭಾಗವಾಗುತ್ತದೆ. ಅವರವರ ತೂಕಕ್ಕೆ ಅವರವರ ಸಾಮರ್ಥ್ಯಕ್ಕೆ ಬೀಳದೇ ಎದ್ದೋ ಅಥವಾ ಎದ್ದು ಬಿದ್ದೋ ನೆಲೆ ನಿಲ್ಲಿಸುವ ಗುರುತ್ವಾಕರ್ಷಣ ಶಕ್ತಿ ಈ ಹೊತ್ತಿನ ತತ್ವದ ಮಹಾ ಲೆವೆಲ್ಲರ್ ಆಗಿಬಿಡುತ್ತದೆ.

Sunday, January 31, 2010

ಶ್ರದ್ದಾಂಜಲಿ

ತಿಂಗಳಲ್ಲಿ ಕನ್ನಡ ಸಂಸ್ಕೃತಿ ಲೋಕ ಕಳೆದುಕೊಂಡ ಚೇತನಗಳ ನೆನಪಿಗೆ...

ಬಿ.ವಿ. ವೈಕುಂಠರಾಜು - ಜನವರಿ ೩೧


ಚಿತ್ರಕೃಪೆ: ಪ್ರಜಾವಾಣಿ
***
ಚಿಂದೋಡಿ ಲೀಲಾ - ಜನವರಿ ೨೧




ಚಿತ್ರಕೃಪೆ: ಪ್ರಜಾವಾಣಿ

***
ಕೆ.ಎಸ್. ಅಶ್ವಥ್ - ಜನವರಿ ೧೮



ಚಿತ್ರಕೃಪೆ: ಪ್ರಜಾವಾಣಿ
’ಅಂತರಂಗ’ದ ನಮನ ಹಾಗೂ ಚಿರವಿದಾಯ.

Saturday, January 30, 2010

ನಮ್ಮೊಳಗಿನ ಬದಲಾವಣೆ ದೊಡ್ಡದು...

’ಇಂಡಿಯಾ ಪ್ರವಾಸ ಹೇಗಿತ್ತು?’ ಅನ್ನೋ ಪ್ರಶ್ನೆಗೆ ’ಅದು ಪ್ರವಾಸವೇ ಅಲ್ಲ!’ ಎಂದು ಉತ್ತರ ಕೊಟ್ಟು ಪ್ರಶ್ನೆ ಕೇಳಿದವರ ಮುಖದ ಮೇಲೆ ಸಹಜವಾಗಿ ಏಳುವ ಆಶ್ಚರ್ಯದ ಅಲೆಗಳನ್ನು ನೋಡೋದಕ್ಕೆ ಒಂದು ರೀತಿ ಖುಷಿ ಅನ್ಸುತ್ತೆ. ನಮ್ಮ ಊರಿಗೆ ನಾವು ಟೈಮ್ ಸಿಕ್ಕಾಗ ಕೊಡೋ ಭೇಟಿಯನ್ನು ಯಾರಾದ್ರೂ ಪ್ರವಾಸ ಅಂತ ಕರೀತಾರೇನು? ಅದು ಯಾವತ್ತಿದ್ದರೂ ಋಣ ಕರ್ಮಗಳಿಗೆ ಅಂಟಿಕೊಂಡಂತ ಒಂದು ಬಂಧನ, ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಯಾವುದೋ ಒಂದು ಹೆಸರಿನಿಂದ ಕರೆಯಲೇ ಬೇಕು ಅಂತಾದರೆ ಅದನ್ನು "ಭೇಟಿ" ಎಂದು ಕರೆಯೋಣ, ಅದು ನನ್ನ ಮಟ್ಟಿಗೆ ಪ್ರವಾಸವಂತೂ ಖಂಡಿತ ಅಲ್ಲ. ಇಲ್ಲಿಂದ ಅಲ್ಲಿಗೆ ಹೋಗಿ ಮತ್ತಿನ್ಯಾವುದಾದರೂ ಯಾತ್ರಾ ಸ್ಥಳಗಳಿಗೋ ಪ್ರೇಕ್ಷಣೀಯ ಸ್ಥಾಣಗಳಿಗೋ ಹೋಗಿ ಬಂದರೆ ಅದಾದರೂ ಪ್ರವಾಸವಾದೀತು, ನಮ್ಮದೇನಿದ್ದರೂ ಏರ್‌ಪೋರ್ಟಿನಿಂದ ಮನೆ, ಮನೆಯಿಂದ ಏರ್‌ಪೋರ್ಟ್ ಅನ್ನಬಹುದು ಅಷ್ಟೇ.

’ಸಾಕಪ್ಪಾ ಸಾಕು ಆ ಗುಂಡಿ ರಸ್ತೆಗಳು...’, ’ಸಾಕಪ್ಪಾ ಆ ಟ್ರಾಫಿಕ್ ಜ್ಯಾಮು...’ ಎಂದು ಮೂಗೆಳೆಯುವವರಿಗಂತೂ ನನ್ನ ಹತ್ತಿರ ಸಿದ್ಧ ಉತ್ತರವಿದೆ. ’ಮತ್ತಿನೇನನ್ನು ತಾನೇ ನಿರೀಕ್ಷಿಸಬಲ್ಲಿರಿ? ಬದಲಾದವರು ನೀವು ಹಾಗೂ ನಿಮ್ಮ ನಿಲುವು, ನೀವು ಬದಲಾದ ಮಾತ್ರಕ್ಕೆ ಪ್ರಪಂಚವೇ ಬದಲಾಗಬೇಕೇನು? ನೀವು ಅಮೇರಿಕದವರು ಸ್ವಿಟ್ಜರ್‌ಲೆಂಡ್ ಹೋಗಿ ಬಂದಾಕ್ಷಣ ಅಲ್ಲಿಯವರ ಹಾಗೆ ಸಮಯ ಪಾಲಿಸುತ್ತೀರೇನು?’ ನಮ್ಮ ದೇಶ ಬಡ ದೇಶವಾಗಿತ್ತು, ಈಗ ನಿಧಾನವಾಗಿ ಅಭಿವೃದ್ಧಿಯ ಹಂತಕ್ಕೆ ಕಾಲಿಡುತ್ತಿದೆ. ನಾವು ಹಾಗೂ ನಮ್ಮ ತತ್ವಗಳು ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವವು, ರಾತ್ರೋ ರಾತ್ರಿ ಕಾನೂನನ್ನು ಸೃಷ್ಟಿಸಿ ಅದನ್ನು ಎಲ್ಲರು ನಾಳೆಯಿಂದ ಪಾಲಿಸಿ ಎನ್ನಲು ನಮ್ಮದು ಸರ್ವಾಧಿಕಾರಿ ಸರ್ಕಾರವಂತೂ ಅಲ್ಲ. ರಸ್ತೆಯ ಮೇಲೆ ಉದ್ದಾನುದ್ದಕೂ ಲೇನ್‌ಗಳನ್ನು ಎಳೆದುಕೊಂಡ ಮಾತ್ರಕ್ಕೆ ಅದನ್ನು ಎಲ್ಲರೂ ಪಾಲಿಸಬೇಕು ಎನ್ನುವ ನಿಯಮವನ್ನು ಎಲ್ಲರೂ ಅನುಕರಿಸಿದ್ದೇ ಆದರೆ ಟ್ರಾಫಿಕ್ ಲೈಟ್‌ನಿಂದ ಹಿಡಿದು ರಸ್ತೆಯ ಉದ್ದಾನುದ್ದಕ್ಕೂ, ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಲ್ಲಿ ಸಂದೇಹವೇ ಇಲ್ಲ. ಅವೇ ದೇಶ, ಅವೇ ರಸ್ತೆಗಳು ಆದರೆ ದಿನೇ-ದಿನೇ ಹಿಗ್ಗುತ್ತಿರುವ ಜನಸಂಖ್ಯೆ ಮತ್ತು ಅದರ ಡಿಮ್ಯಾಂಡುಗಳಿಗೆ ಸ್ಪಂದಿಸೋದಕ್ಕೆ ಆ ಹಳೆಯ ಇನ್‌ಪ್ರಾಸ್ಟ್ರಕ್ಚರ್ರಿನಿಂದ ಹೇಗಾದರೂ ಸಾಧ್ಯವಿದೆ ಹೇಳಿ?

***

ಅಮೇರಿಕದಿಂದ ಭಾರತಕ್ಕೆ ಬಂದು ಲ್ಯಾಂಡ್ ಆಗುವ ವಿಮಾನಗಳು ಹಾಗೂ ಭಾರತವನ್ನು ಬಿಟ್ಟು ಹೊರಡುವ ವಿಮಾನಗಳು ಮಧ್ಯರಾತ್ರಿಯ ನಂತರ ಹಾಗೂ ಬ್ರಾಹ್ಮೀ ಮಹೂರ್ತಕ್ಕೆ ಮುಂಚೆ ಏಕೆ ಬಂದು ಹೋಗುತ್ತವೆ ಎಂದು ಯೋಚಿಸಿದ್ದಕ್ಕೆ ಈ ಸಾರಿ ಉತ್ತರ ಸಿಕ್ಕಿತು. ನಮ್ಮಂತೆ ದೇಶವನ್ನು ಅದೆಷ್ಟೋ ವರ್ಷಗಳ ನಂತರ ಅರಸಿ ಬಂದವರಿಗೆ ಏಕ್‌ದಂ ಭ್ರಮನಿರಸನವಾಗಬಾರದಲ್ಲ ಅದಕ್ಕೆ. ಉದಾಹರಣೆಗೆ ಚಿಕಾಗೋದಿಂದ ಹೊರಟ ವಿಮಾನ ಸರಿ ಬೆಳಗ್ಗೆ ಒಂಭತ್ತು ಘಂಟೆಗೆ ಬೆಂಗಳೂರನ್ನು ತಲುಪಿತು ಎಂದುಕೊಳ್ಳಿ, ಅಲ್ಲಿನ ಪೀಕ್ ಅವರ್ ನಲ್ಲಿ ನೀವು ಆ ದಿನ ಮನೆ ಸೇರುವಾಗ ಅದೆಷ್ಟು ಹೊತ್ತಾಗುತ್ತೋ ಯಾರು ಬಲ್ಲರು? ನಿಮಗೆ ಎದಿರಾಗಿ ದಿಢೀರನೆ ಉದ್ಭವಿಸೋ ಮುಷ್ಕರ ಮೆರವಣಿಗೆಗಳಿರಬಹುದು, ಯಾರೋ ಸತ್ತರು ಎಂದು ತೂರಿ ಬರುವ ಕಲ್ಲುಗಳಿಗೆ ಆಹುತಿಯಾಗುವ ಗಾಜಿನ ತುಣುಕುಗಳಿರಬಹುದು ಅಥವಾ ಸಾಮಾನ್ಯ ಟ್ರಾಫಿಕ್ಕ್ ಜಾಮೇ ನಿಮ್ಮನ್ನು ಮೊದಲ ದಿನವೇ ಹೈರಾಣಾಗಿಸಿಬಿಡಬಹುದು. ಇಲ್ಲಿ ಬರುವಾಗ ಅದೇನೇನೋ ಕನಸುಗಳನ್ನು ಕಟ್ಟಿಕೊಂಡ ನಮಗೆ ಇಲ್ಲಿ ಬರುವ ಅವಕಾಶ ಅವಸ್ಥೆಗಳೆಲ್ಲ ಒಂದು ರೀತಿಯ ಓಪನ್ ಎಂಡೆಡ್ ಪ್ರಶ್ನೆಗಳ ಥರ, ಅದೇ ಇಲ್ಲಿಂದ ಅಲ್ಲಿಗೆ ಹೋದಾಗ ನಮ್ಮ ನಿರೀಕ್ಷೆ ಮತ್ತು ನಮಗಾಗೂ ನಿರಾಶೆಗಳ ಮೂಲವೇ ಬೇರೆ.

ಪಲಾಯನವಾದ ಅನ್ನೋದು ನಮ್ಮ ಹೆಸರುಗಳಿಗೆ ನಮ್ಮ ಪ್ರತಿಭೆಗೆ ಮಾತ್ರ ಅಂಟಿದ್ದಲ್ಲ, ನಾವು ನಮ್ಮ ಮ್ಯಾನೇಜ್‌ಮೆಂಟಿನ ಸ್ಥರಗಳಲ್ಲಿ ನಮ್ಮ ಅನುಭವಗಳನ್ನು ವಿಸ್ತರಿಸಿಕೊಂಡ ಹಾಗೆಲ್ಲ ದುತ್ತನೆ ಎದುರಾಗುವ ಸಮಸ್ಯೆಗಳಿಗೆ ಥಟ್ಟನೆ ಉತ್ತರ ಹೇಳುವಲ್ಲಿ ಸೋತು ಹೋಗುತ್ತೇವೇನೋ ಅನ್ನಿಸುತ್ತದೆ. ಎಂಥ ವಾಜ್ಞಿ ರಾಜಕಾರಣಿ ಅಧಿಕಾರಕ್ಕೆ ಬಂದರೂ ಮುಂದೆ ಪಬ್ಲಿಕ್ ಸ್ಟೇಟ್‌ಮೆಂಟ್ ಕೊಡೋವಾಗ ಪದಗಳ ನಂತರ ಪದಗಳನ್ನು ಹುಷಾರಾಗಿ ಪೋಣಿಸಿ ವಾಕ್ಯಗಳನ್ನು ರಚಿಸುವಂತೆ ಭಾರತದಲ್ಲಿ ಎದಿರಾಗೋ ಸಮಸ್ಯೆಗಳಿಗೆ ಅಮೇರಿಕದಿಂದ ಹೋದೋರು ಸ್ಪಂದಿಸೋದು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಓರಗೆಯವರ ಬ್ಯಾಂಕ್‌ ಬ್ಯಾಲೆನ್ಸಿಗಿಂತ ನಮ್ಮದು ತುಸು ಹೆಚ್ಚಿರಬಹುದು ಎನ್ನುವಲ್ಲಿ ನಾವೇ ಮುಂದೇ ಹೊರತು ಅಲ್ಲಿಯ ಆಗು ಹೋಗುಗಳಿಗೆ ನಿಜವಾಗಿ ಸ್ಪಂದಿಸೋದಕ್ಕೆ ನಮ್ಮಿಂದ ಸಾಧ್ಯವೇ? ನಿಮ್ಮ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ಎಂದು ಸ್ಥಳೀಯ ಸರ್ಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಅಥವಾ ಕೈಲಾದರೆ ಪ್ರೈವೇಟ್ ನರ್ಸಿಂಗ್ ಹೋಮ್‌ಗಳಲ್ಲಿ ಟ್ರೀಟ್‌ಮೆಂಟ್ ಕೊಡಿಸಿ ನೋಡಿ, ಅಲ್ಲಿಯ ಚಲನವಲನ (ಲಾಜಿಸ್ಟಿಕ್ಸ್)ಗಳಿಗೆ ನಮ್ಮಿಂದ ಹೊಂದಿಕೊಳ್ಳೋದಕ್ಕೆ ಇನ್ನೊಂದು ದಶಕವೇ ಬೇಕು ಎನ್ನಿಸುತ್ತೆ ಕೆಲವೊಮ್ಮೆ. ಇಲ್ಲಿಯ ವೇಷವನ್ನು ಕಳಚಿ ಕ್ರಮೇಣ ಅಲ್ಲಿಯವರಾದಂತೆ ನಟಿಸಿದರೂ ನಮ್ಮೊಳಗಿನ ಭಿನ್ನ ಮನ ಸದಾ ಬದಲಾವಣೆಯನ್ನು ನಿರೀಕ್ಷಿಸುತ್ತದೆ, ಆದರೆ ಅಲ್ಲಿಯ ವ್ಯವಸ್ಥೆ ಮನೋ ವೇಗಕ್ಕೆ (ಅಥವಾ ರೋಗಕ್ಕೆ) ಸ್ಪಂದಿಸೋದಾದರೂ ಹೇಗೆ ಸಾಧ್ಯ?

ನಮ್ಮ ಕೈಯಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ - ಒಂದು ಹೊತ್ತು ಉಂಡರೆ ಮತ್ತೊಂದು ಹೊತ್ತು ಊಟದ ಬಗ್ಗೆ ಕೊರಗುವ ನಾಗರಿಕತೆ ಇರುವಾಗ, ನಮ್ಮ ಸಂಪನ್ಮೂಲ ಸ್ತೀಮಿತವಾಗುತ್ತದೆ. ನಾವು ನಿರೀಕ್ಷಿಸುವ ಬದಲಾವಣೆಗಳು ಲಾರ್ಜ್‌ಸ್ಕೇಲ್‌ನಲ್ಲಿ ಇಂಪ್ಲಿಮೆಂಟ್ ಮಾಡಲಾಗದ ಪುಸ್ತಕದ ಬದನೆಕಾಯಿಯಾಗುತ್ತದೆ. ದಿನೇ-ದಿನೇ ಉಳ್ಳವರ-ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಾ ಹೋಗುತ್ತಿರುವಾಗ ನಮ್ಮ ಧನಾತ್ಮಕ ಆಲೋಚನೆಗಳು ಮುರಿದು ಹೋದ ಚಿಕ್ಕ ಮರದ ತುಂಡನ್ನು ಅಂಟಿಸೋ ಗೋಂದಾಗುತ್ತದೆಯೇ ಹೊರತು ಅದು ದೊಡ್ಡ ಪ್ರಮಾಣದ ಬಂಧನವಾಗೋದಿಲ್ಲ. ನಾವು ಎಲ್ಲವನ್ನು ಮಾಡಲಾಗದಿದ್ದರೂ ನಮ್ಮ ಮನಸ್ಸಿನಲ್ಲಿರುವ ಕ್ವಾಲಿಟಿಗೆ ತಕ್ಕಂತೆ ಎಲ್ಲರಿಂದ ಕೆಲಸವನ್ನು ನಿರೀಕ್ಷಿಸುವುದು ಇನ್ನೂ ಕಷ್ಟದ ಮಾತೇ. ಬೆಂಗಳೂರಿನಲ್ಲಿ ಮನೆ ಕೆಲಸದವರ ಜೊತೆ ಏಗಿ ಸರಿಯಾಗಿ ಪಾತ್ರೆ ತೊಳೆಸಿಕೊಂಡು ಬಟ್ಟೆ ಒಗೆಸಿಕೊಂಡು ನೆಲವನ್ನು ಸ್ವಚ್ಛವಾಗಿಸಿಕೊಳ್ಳುವುದಕ್ಕೆ ಪೀಪಲ್ ಮ್ಯಾನೇಜ್‌ಮೆಂಟಿನಲ್ಲಿ ಹೊಸ ಡಿಗ್ರಿ ಬೇಕಾಗುತ್ತದೆ. ಆಳು ಮಾಡಿದ್ದು ಹಾಳು...ಅಂತಹ ಹಾಳು ಕೆಲಸದ ನಡುವೆ ನಮ್ಮ ಬದುಕನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವಾಗ ಮೈಕ್ರೋ-ಮಿನಿ ಮ್ಯಾನೇಜುಮೆಂಟುಗಳಿಗೆ ಜೋತು ಬೀಳಬೇಕಾಗುತ್ತದೆ.

***

ಭಾರತಕ್ಕೆ ಹೋಗಿ ಬರೋ ಅನುಭವ ಪ್ರವಾಸವಲ್ಲ, ಅದು ಒಂದು ದರ್ಶನ, ಒಂದು ವಾತಾವರಣದಲ್ಲಿ ಪಕ್ವಗೊಂಡ ಮನಸ್ಸು ಮತ್ತೊಂದು ವಾತಾವರಣದಲ್ಲಿ ಬೆರೆಯುವ ಯೋಗ, ತಾಯ ಮಡಿಲನ್ನು ಸೇರಿ ಹಾಯಾಗಿ ಕಣ್ಮುಚ್ಚಿ ಮಲಗುವ ಮಗುವಿಗೆ ದೊರೆತ ಒಂದು ಅವಕಾಶ. ಸಮಸ್ಯೆಗಳು ಎಲ್ಲಿಲ್ಲ, ಹಾಗಿರುವಾಗ ನಾವು ಹೋದಲೆಲ್ಲ ಸುತ್ತಲಿನ ಕೊಳೆಯನ್ನು ಮಾತ್ರ ನೋಡಿಕೊಂಡು "ಶಿಟ್" ಎಂದು ಮೂಗು ಸಿಂಡರಿಸಿದಾಕ್ಷಣ ಅಲ್ಲಿಯದೇನೂ ಬದಲಾಗೋದಿಲ್ಲ. ಬದಲಾವಣೆ ಎಲ್ಲ ಕಡೆಗಿದೆ, ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಬದಲಾವಣೆಗೊಳಪಟ್ಟ ನಮ್ಮ ಮನಸ್ಸು ಎಲ್ಲ ಕಡೆ ಅದನ್ನೇ ನಿರೀಕ್ಷಿಸಿದರೆ ಅದರ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ನಮ್ಮ ಆಫೀಸಿನಿಂದ ಬಿಸಿನೆಸ್ ಗೋಸ್ಕರ ಹೋಗುವವರಿಗೆ ನಾನು ಹೇಳೋದು ಇಷ್ಟೇ: ’ಅಲ್ಲಿ ಬೇಕಾದಷ್ಟು ಸಂಸ್ಕೃತಿಗಳಿವೆ, ಒಂದು ಬಿಲಿಯನ್ನ್‌ಗಿಂತಲೂ ಹೆಚ್ಚು ಜನರಿದ್ದಾರೆ, ದೊಡ್ಡ ಸಾಗರವನ್ನು ನೋಡೋ ಹಾಗೆ ನೋಡಿ, ಅದನ್ನು ಬಿಟ್ಟು ಆಗಾಗ್ಗೆ ಬರುವ ಅಲೆಗಳಿಗೆ ತಲೆಕೆಡಿಸಿಕೊಳ್ಳಬೇಡಿ!"

Thursday, January 07, 2010

ಲಘುವಾಗೆಲೆ ಅನಿವಾಸಿ ಮನ...

ನವೆಂಬರ್ ೧೩ ರಂದು ಬರೆದ ’ಗೆಲುವಾಗೆಲೆ ಅನಿವಾಸಿ ಮನ...’ಬರಹಕ್ಕೆ ಪೂರಕವಾಗಿ ಈ ಲೇಖನ. ನವೆಂಬರ್ ೧೩ ನಾವು ಭಾರತಕ್ಕೆ ವೆಕೇಷನ್ನ್ ಹೋಗೋದರ ಹಿಂದಿನ ದಿನ, ಹಲವಾರು ಕೆಲಸಗಳ ನಡುವೆಯೂ ನಾನು ಮೂರು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿರೋ ಭಾರತ ಈಗ ಹೇಗಿರಬಹುದು, ಏನೇನೆಲ್ಲ ಬದಲಾವಣೆಗಳಾಗಿರಬಹುದು...ಎಂದು ಯೋಚಿಸಿಕೊಳ್ಳುತ್ತಲೇ ಇಲ್ಲಿ-ಅಲ್ಲಿಯ ತವಕಗಳ ಎರಡು ಚಿತ್ರಗಳನ್ನು ತರಾತುರಿಯಾಗಿ ಕಕ್ಕಿ ಕೊಂಡು ಆ ಲೇಖನವನ್ನು ಬರೆದು ಮುಗಿಸಿದ್ದಾಯಿತು. ಈಗ ಭಾರತದ ವೆಕೇಷನ್ನ್ ಮುಗಿಸಿ ಹಿಂತಿರುಗಿ ಬಂದ ಮೇಲೆ ಹಾಗೂ ಸುಧಾರಿಸಿಕೊಂಡ ಮೇಲೆ ನನ್ನ ಅನುಭವಗಳನ್ನು ಹೊರಹಾಕಿ ಮತ್ತೊಂದು ಲೇಖನವನ್ನು ಬರೆಯಬೇಕು ಎನ್ನುವ ಆಶಯದ ಫಲವೇ ಇದು.

ಈ ಬದುಕು-ಬವಣೆಗಳು ಅದೇನೇ ಕಷ್ಟವನ್ನು ತಂದು ಒಡ್ಡಲಿ, ಜಾಗತೀಕರಣದ ಪರಿಣಾಮಗಳು ಎಷ್ಟು ದೂರ ಬೇಕಾದರೂ ಪಸರಿಸಿಕೊಂಡಿರಲಿ ನಮ್ಮ ಊರು ನಮ್ಮ ದೇಶ ನಮ್ಮ ಮನೆ...ಇವೆಲ್ಲವೂ ಎಂದಿಗೂ ಅಪ್ಯಾಯಮಾನವೇ. ನನ್ನೊಳಗೆ ಹುದುಗಿರುವ ಫಾಸಿಟಿವ್ ಸ್ಪಿರಿಟ್ಸ್ ಈ ವಿಚಾರದಲ್ಲಿ ನೆಗೆಟಿವ್ ಎಂದೂ ಆಗಲು ಸಾಧ್ಯವಿಲ್ಲ!

***

ತೊಂಭತ್ತರ ಮಧ್ಯೆ ಹಾಗೂ ಕೊನೆಯಲ್ಲಿ ಪ್ರಪಂಚವನ್ನು ಅರಸುತ್ತಾ ಬಂದಂತಹ ನನ್ನಂಥ ಟೆಕ್ಕಿಗಳಿಗೆ (ಅಂದಿನ ಕಾಲದ ಹೆಸರು) ನಮ್ಮ ಅಗತ್ಯಗಳು ಬೇರೆಯಾಗಿದ್ದವು. ಜೇಬಿನಲ್ಲಿ ಮೂರು ಸಾವಿರ ಡಾಲರ್ ಇಟ್ಟುಕೊಂಡು ಬಂದು ನೆವರ್ಕ್ ಲಿಬರ್ಟಿ ಏರ್‌ಪೋರ್ಟಿನಲ್ಲಿ ಇಳಿದ ನನ್ನ ಹಾಗಿನವರಿಗೆ ಅವರ ದೃಷ್ಟಿಕೋನ ಬೇರೆಯಾಗಿತ್ತು. Y2K ಮುಗಿದು, ಮತ್ತೊಂದು ದಶಕವೂ ಕಳೆದು ಹೋಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಇಲ್ಲಿನ ಪೈಪೋಟಿಗೆ ಏಗಿ-ಬೇಗಿ ಹಾಗೂ ಇಲ್ಲಿನ ಸಂಪನ್ಮೂಲಗಳನ್ನುಂಡು ನಮ್ಮ ಬೆಳವಣಿಗೆ ಬೇರೆ ರೀತಿಯದ್ದೇ ಆಗಿದೆ. ನನ್ನ ಜೊತೆಯವರು, ವಾರಗೆಯವರು ಇಲ್ಲಿಗೆ ಬಂದು ಈಗಾಗಲೇ ಅಮೇರಿಕನ್ ಸಿಟಿಜನ್ನ್ ಪಟ್ಟಕಟ್ಟಿಕೊಂಡಿರಬಹುದಾದ ಸಮಯದಲ್ಲಿ ಸೇಫ್‌ನಲ್ಲಿರುವ ನನ್ನ ಭಾರತದ ಪಾಸ್‌ಪೋರ್ಟ್ ಯಾವತ್ತೋ ಒಮ್ಮೆ ಭಾರತಕ್ಕೆ ಹೋಗಿ ತಿಣುಕುವ ಆಸೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿದೆ ಎಂದೇ ಹೇಳಬೇಕು. ಸೋಜಿಗದ ವಿಷಯವೆಂದರೆ ನಾವು ಬದಲಾದಂತೆ ನಮ್ಮ ಹಳೆಯ ಪಾಸ್‌ಪೋರ್ಟಿನಲ್ಲಿರುವ ಚಿತ್ರವಾಗಲೀ ಮಾಹಿತಿಯಾಗಲೀ ಬದಲಾಗುವುದೇ ಇಲ್ಲ, ಅವು ಯಾವತ್ತಿದ್ದರೂ ’ನಾನೇ’ ಎನ್ನುವ ಚಿರಂತನ ಪ್ರತಿಮೆಯನ್ನು ಎತ್ತಿ ತೋರಿಸುವ ಮಾಧ್ಯಮ.

ಈ ಒಂದು ದಶಕದಲ್ಲಿ ಬೇಕಾದಷ್ಟಾಗಿದೆ: ನಮ್ಮ ಸ್ಪ್ರೆಡ್‌ಶೀಟು, ಗ್ರಾಫು, ನಂಬರುಗಳು ತಮ್ಮನ್ನು ತಾವು ನಮ್ಮ ಎದುರು ತೋರಿಸಿಕೊಂಡು ನಮ್ಮನ್ನು ಲೇವಡಿ ಮಾಡುವ ಪರಿಸ್ಥಿತಿಯೂ ಬಂದು ಹೋಗಿದೆ. ಈ ಒಂದು ದಶಕದಲ್ಲಿ ಮಾರ್ಕೆಟ್ಟಿನ ಮುಖ್ಯ ಮೂರು ಏಳು ಬೀಳುಗಳ ಕೃಪೆಯಿಂದಾಗಿ - ಡಾಟ್ ಕಾಮ್, ರಿಯಲ್ ಎಸ್ಟೇಟ್ ಹಾಗೂ ಕ್ರೆಡಿಟ್ ಕ್ರಂಚ್ - ನಮ್ಮ ದುಡಿಮೆಯ ಫಲ ಸ್ಟ್ರೆಸ್ಸಿಗೆ ಒಳಗಾಗಿದೆ, ನಮ್ಮ ಹೂಡಿಕೆಯ ಹಣ ಇನ್‌ಫ್ಲೇಷನ್ನಿನ ಎದುರು ತಲೆ ತಗ್ಗಿಸಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇವೆಲ್ಲದರ ಜೊತೆಗೆ ಸೆಪ್ಟೆಂಬರ್ ೧೧, ೨೦೦೧ ರ ಭಯೋತ್ಪಾದಕತನ ನನ್ನಂಥ ಅನಿವಾಸಿಗಳಿಗೆ ಸಾಕಷ್ಟು ಕಷ್ಟ ಸುಖದ ದರ್ಶನ ಮಾಡಿಸಿದೆ.

’ವಿಜಯ ಕರ್ನಾಟಕ’ದಂತಹ ಪತ್ರಿಕೆಗಳಲ್ಲಿ ಪ್ರಕಟವಾದ "Take it easy...ಟೆಕ್ಕಿ" ಲೇಖನಗಳು ನ್ಯೂಕ್ಲಿಯರ್ ಕುಟುಂಬಗಳ ಬವಣೆಯನ್ನು ಒಂದು ಹೆಜ್ಜೆ ಮುಂದುವರೆದು ರಸ್ತೆ ಮೇಲೆ ಬಿಸಾಡಿ ಮಾನ ಕಳೆದಿವೆ, ಆಧುನಿಕ ಕುಟುಂಬಗಳಲ್ಲಿನ ಇರಿಸು-ಮುರಿಸುಗಳು ಮನ-ಮನೆಯನ್ನು ಮುರಿಯುವ ಪ್ರಸಂಗಗಳನ್ನು ಲೇವಡಿ ಮಾಡಿವೆ. ಈ ನ್ಯೂಕ್ಲಿಯರ್ ಕುಟುಂಬಗಳ ಕ್ಲೀಷೆಗಳು ಮೈನ್‌ಸ್ಟ್ರೀಮ್ ಸಮಾಜಕ್ಕೆ ಗೊತ್ತೇ ಆಗದೇ ಒಂದು ದಶಕ ಉರುಳಿ ಹೋಗಿದ್ದು ವಿಪರ್ಯಾಸ. ’ನಮ್ಮ ಮಗ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಾನೆ...’ ಎನ್ನುವುದರ ಹಿಂದೆ ಬಳುವಳಿಯಾಗಿ ಬರುವ ಫಲಾಫಲಗಳನ್ನು ದೂರದ ತಂದೆ-ತಾಯಿಯರು ಯಾಕೆ ಗುರುತಿಸುವುದರಲ್ಲಿ ಸೊರಗಿ ಹೋದರೋ? ನನ್ನ ಹಾಗೆ ಹೆಚ್ಚಿನವರು ಇಲ್ಲಿ ಬಂದೇ ಕುಟುಂಬವನ್ನು ಆರಂಭಿಸಿದ್ದು ನಿಜವಾದರೆ ನಮಗೆಲ್ಲ ಸಹಬಾಳ್ವೆ ಎನ್ನೋದರ ಪರಿಕಲ್ಪನೆಯೇ ಇಲ್ಲ ಎನ್ನಬೇಕು. ನಾವು ಪರಿವಾರದವರೊಟ್ಟಿಗೆ ಮದುವೆ-ಮುಂಜಿಗಳಲ್ಲಿ ಭಾಗವಹಿಸೋದಿಲ್ಲ, ವಾರದ ದಿನಗಳನ್ನು ಒಂದು ರೀತಿ, ವಾರಾಂತ್ಯವನ್ನು ಮತ್ತೊಂದು ರೀತಿಯಲ್ಲಿ ಉರುಳಿಸಿ ವಾರ-ವರ್ಷಗಳನ್ನು ಕಳೆಯುವ ನಮಗೆ ಅವಿಭಾಜ್ಯ ಕುಟುಂಬಗಳ ಕಷ್ಟಗಳು ಹತ್ತಿರ ಸಹ ಸುಳಿಯೋದಿಲ್ಲ. ಸಹೋದರ-ಸಹೋದರಿ, ನಾದಿನಿ, ಮೈದುನ, ಅತ್ತೆ-ಮಾವ, ತಂದೆ-ತಾಯಿ, ದೊಡ್ಡಪ್ಪ-ಚಿಕ್ಕಪ್ಪ, ದೊಡ್ಡಮ್ಮ-ಚಿಕ್ಕಮ್ಮಗಳ "interference" ನಮ್ಮ ಕುಟುಂಬಗಳಿಗಿರೋದಿಲ್ಲ. ನಮ್ಮ ಮಕ್ಕಳ ಡೈಪರ್ರ್ ತೆಗೆದು ತೊಳೆಯೋದು, ಅವರ ಯೋಗ-ಕ್ಷೇಮ ನೋಡಿಕೊಳ್ಳೋದು ನಮ್ಮ ದಿನನಿತ್ಯದ ಸಾಧನೆಗಳಲ್ಲೊಂದು. ನಾವು ನಮ್ಮ ಖರ್ಚನ್ನು ಮೀರಿ ಕೂಡಿಸೋ ಹಣ ಕೆಲವರಿಗೆ ಒಂದು ರೀತಿಯಲ್ಲಿ ನಾಯಿ ಮೊಲೆಯ ಹಾಲು - ಅದು ಬಹಳಷ್ಟು ಸಾರಿ ನೆರೆಹೊರೆಯ ಕಷ್ಟಗಳಿಗೆ ಸ್ಪಂದಿಸಿರಲಾರದು, ಹಾಗೆ ಕೂಡಿಟ್ಟ ಹಣ ಭದ್ರತೆಯಿದ್ದರೂ ಅದರ ಜೊತೆ ಅಸಹಾಯಕತೆಯನ್ನೂ ಸೇರಿಸಿಕೊಂಡಿರುತ್ತದೆ. ಹಾಗೆ ಸೇರಿಕೊಂಡ ಡಾಲರ್ ಹಣ ಇಲ್ಲಿಯ ಮಿಡ್ಲ್‌ಕ್ಲಾಸ್ ಮಟ್ಟದ್ದಿದ್ದರೂ ಅದು ಭಾರತದ ರೂಪಾಯಿಗೆ ಬದಲಾದಾಗ ಒಂದು ಹೊಸ ಅರ್ಥ ಪಡೆದುಕೊಳ್ಳುತ್ತದೆಯೇ ಹೊರತು ಕ್ಲಾಸ್ ವಿಚಾರದಲ್ಲಿ ಹೆಚ್ಚು ಬದಲಾವಣೆ ಆಗೋದಿಲ್ಲ.

***

ಯಾಕೆ ಭಾರತಕ್ಕೆ ಹಿಂತಿರುಗಿ ಹೋಗಬೇಕು? ಎನ್ನುವ ಆಲೋಚನೆಗಳು ಒಂದು ದಶಕದ ನಂತರ ಆಗಾಗ್ಗೆ ನಾಯಿಕೊಡೆಗಳಂತೆ ತಲೆ ಎತ್ತುವುದು ಸಾಮಾನ್ಯವಾಗುತ್ತದೆ. ಮೊದಲೆಲ್ಲ ಯಾವತ್ತು ಹೋದೇವೋ ಎನ್ನುವ ಆಲೋಚನೆಯೇ ರೋಮಾಂಚನವನ್ನು ಮೂಡಿಸುವಂತಹ ವಿಚಾರಗಳು ಈಗ ಹತ್ತಿರ ಸುಳಿಯೋದಿಲ್ಲ. ಅದರ ಬದಲಿಗೆ ಪ್ರಾಯೋಗಿಕವಾಗಿ ಯೋಚಿಸುವ ಮನಸ್ಸು ಎಲ್ಲರಿಗಿಂತ ಮುಂದಾಗಿ ಭಾವನೆಗಳು ಹಾಗೂ ಸ್ಪಂದನಗಳೆಂಬ ಮೊದಲಾದ ಮನಸ್ಸಿನ ಲಘು ವಿಹಾರಗಳು ಕನಸಿಗೆ ಹತ್ತಿರವಾಗತೊಡಗುತ್ತವೆ. ಮೊದಲು ಎರಡು ಭುಜಗಳ ಜೊತೆಗೆ ಎರಡು ಸೂಟ್‌ಕೇಸ್ ಇಟ್ಟುಕೊಂಡು ಬಂದವರಿಗೆ ಸಂಸಾರದ ಹಲವಾರು ಇತರ ಭುಜಗಳ ಮತ್ತಿನ್ನೊಂದಿಷ್ಟು ಬ್ಯಾಗೇಜುಗಳು ಬೆನ್ನೇರುತ್ತವೆ. ಇಲ್ಲಿ ಇದ್ದೂ ಇಲ್ಲದವರ ಹಾಗೆ ಬದುಕಿ ಸುಸ್ತಾಗಿ ಹೋದ ಪರಿಣಾಮಕ್ಕೆ ನಮ್ಮ ಇಮ್ಮೂವಬೆಲ್ಲ್ ಅಸ್ಸೆಟ್ಟಿನ ಲಿಸ್ಟಿಗೆ ಇಲ್ಲಿಯ "ಮನೆ"ಯೂ ಸೇರಿಕೊಳ್ಳುತ್ತದೆ.

ಯಾಕೆ ಹೋಗಬೇಕು ಅನ್ನೋ ಪ್ರಶ್ನೆಗೆ ಒಂದೇ ಒಂದು ಬ್ರಹ್ಮಾಸ್ತ್ರದಂತಹ ಉತ್ತರವನ್ನು ನೀಡಬಹುದು - ಅದು ನಮ್ಮೂರಿನ ಹವಾಮಾನ. ಅಲ್ಲಿನವರಿಗೆ ಅದರ ಬೆಲೆ ಖಂಡಿತ ಗೊತ್ತಿಲ್ಲ ಬಿಡಿ. ನಾನಂತೂ ಡಿಸೆಂಬರಿನ ಅಲ್ಲಿನ ಛಳಿಗಾಲದ ರಾತ್ರಿ ಹಾಗೂ ಹಗಲು ಯಾವುದೇ ಹೀಟರ್ ಅಥವಾ ಏರ್‌ಕಂಡೀಷನರ್ ಇಲ್ಲದೇ ಕಳೆಯಬಹುದಾದಂಥ ಪರಿಸ್ಥಿತಿ ಯಾವತ್ತಿದ್ದರೂ ಮನಸ್ಸಿಗೆ ಮುದ ನೀಡುವ ಅನುಭವವೇ ಹೌದು. ಹವಾಮಾನದ ಜೊತೆಗೆ ನಮ್ಮವರು, ತಮ್ಮವರು, ನಮ್ಮಂತೇ ಇರುವವರು, ನಮ್ಮ ಜೊತೆ ಒಡನಾಡುವವರು, ನಮ್ಮ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುವವರು - ಮೊದಲಾಗಿ ಇಡೀ ನಾಡನ್ನೇ ’ಯಾಕೆ ಹಿಂತಿರುಗಿ ಹೋಗಬೇಕು?’ ಎನ್ನುವ ಪ್ರಶ್ನೆಗೆ ಪಣವಾಗಿ ಒಡ್ಡಬಹುದು. ಆದರೆ ’ನಮ್ಮೂರು-ನಮ್ಮ ಜನ’ ಎನ್ನುವುದು ಪ್ಲಸ್ ಪಾಯಿಂಟ್ ಹೇಗೋ ಹಾಗೇ ಮೈನಸ್ಸ್ ಕೂಡ ಆಗಬಹುದು ಎನ್ನುವುದು ವಿಪರ್ಯಾಸವಲ್ಲದೇ ಮತ್ತಿನ್ನೇನು!

ಒಂದು ದಶಕಕ್ಕಿಂತ ಹೆಚ್ಚು ನ್ಯೂಕ್ಲಿಯರ್ ಫ್ಯಾಮಿಲಿಯಾಗಿ ಬದುಕಿಕೊಂಡಿದ್ದವರಿಗೆ (ಅಥವಾ ಅದನ್ನೇ ಬದುಕು ಎಂದು ನಂಬಿಕೊಂಡಿದ್ದವರಿಗೆ) ಧಿಡೀರನೇ ಮನೆಯ ಬಾಗಿಲನ್ನು ಬಡಿದು ಬರುವ ಅಥವಾ ಹಾಗೇ ಒಳನುಗ್ಗುವ ಬಂಧು-ಬಳಗದವರು ಅನಾಗರಿಕರಂತೆ ಕಂಡು ಬರಬಹುದು. ಅಥವಾ ಮದುವೆ-ಮುಂಜಿಗಳಲ್ಲಿ ನಾವು ಡಾಲರ್ ಮಹಾತ್ಮೆಯನ್ನು ಬಲ್ಲವರಾದರೂ ನಮ್ಮ ಎದುರೇ ಗುಲಗಂಜಿ ಬಂಗಾರಕ್ಕೆ ಕಿತ್ತು ತಿನ್ನುವ ಜಗಳವಾಗಬಹುದು. ’ನಾನು ಸತ್ತರೂ ನಿಮ್ಮ ಮನೆಯಲ್ಲಿ ನೀರು ಕುಡಿಯಲ್ಲ...’ ಎನ್ನುವ ವರಸೆಯೂ; ’ನೀನು ಯಾರ ಮನೆಗೆ ಹೋದ್ರೂ ಅವರ ಮನೆಗೆ ಮಾತ್ರ ಹೋಗಬೇಡ...’ ಎನ್ನುವ ಹಕ್ಕೀಕತ್ತೂ...ಹೀಗೆ ಅನೇಕಾನೇಕ ಅಗೋಚರ ಅವ್ಯಕ್ತ ಹಾಗೂ ಅಮೂರ್ತ ಮಾನವೀಯ ಸಂಬಂಧಗಳ ದರ್ಶನದ ಓವರ್‌ಲೋಡ್ ಆಗಿಬಿಡಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರ-ಪ್ರೈವಸಿ ಎಂಬುದರ ಬುಡವನ್ನೇ ಅಲುಗಾಡಿಸುವ ಘಟನೆಗಳು ನಡೆಯಬಹುದು. ಅಥವಾ ’ಬೆಂಡೇಕಾಯ್, ಸೋರೇಕಾಯ್...’ ಎಂದು ಬೀದಿಯಲ್ಲಿ ತರಕಾರಿ ಮಾರುವವರ ತಾರಕ ಸ್ವರದಿಂದ ಹಿಡಿದು ವಾಹನಗಳ ಹಾರ್ನ್‌ನಿಂದ ಕಮ್ಮ್ಯೂನಿಕೇಟ್ ಮಾಡುವ ಅಲ್ಲಿನ ವಾತಾವರಣ ಶಬ್ದಮಾಲಿನ್ಯವಾಗಿ ಕಾಡಬಹುದು. ಇವೆಲ್ಲದರ ಜೊತೆಯಲ್ಲಿ ಓವರ್‌ಲೋಡ್ ಆಗಿ ಓಡುವ ವಾಹನಗಳಿಂದ ಹಿಡಿದು ಲಂಗು-ಲಗಾಮಿಲ್ಲದ ಫ್ಯಾಕ್ಟರಿಗಳ ಹೊಗೆ ನಮಗೆ ಉಸಿರುಕಟ್ಟಿಸಬಹುದು. ಭಾರತದಲ್ಲಿ ಜನಸಂಖ್ಯೆ ಹೆಚ್ಚು, ಈ ಹೆಚ್ಚಿನ ಜನಸಂಖ್ಯೆ ಯಾವುದೇ ಒಂದು ಸಮಸ್ಯೆಗೂ ಅದರದ್ದೇ ಆದ ಒಂದು ಹೊಸ ಆಯಾಮವನ್ನು ಸೃಷ್ಟಿಸಬಲ್ಲದು. ಹೀಗೇ...ಅನೇಕಾನೇಕ ನೆಗೆಟಿವ್ ಕಾಂಟೆಕ್ಸ್ಟ್‌ಗಳನ್ನು ತೋರಿಸಿದರೂ ಸಹ ’ವೆದರ್’ ಎನ್ನುವ ಒಂದೇ ಒಂದು ರಾಮಬಾಣಕ್ಕೆ ನಮ್ಮ ಊರನ್ನು ಕ್ಷಣಾರ್ಧದಲ್ಲಿ ಎಲ್ಲಕ್ಕಿಂತ ಹತ್ತಿರವಾಗಿಸಬಲ್ಲ ಶಕ್ತಿ ಇರುವುದಂತೂ ನಿಜ.

ಕೇವಲ ಹವಾಮಾನದ ಬಗ್ಗೆ ನ್ಯೂ ಜೆರ್ಸಿಯಲ್ಲಿ ಈ ಕಡುವಿಂಟರಿನ ನಡುವೆ ಬೆಚ್ಚಗೆ ಕುಳಿತು ಬರೆಯೋದು ದೊಡ್ಡ ವಿಷಯವಲ್ಲ. ಜೊತೆಗೆ ನಾರ್ಥ್ ಈಸ್ಟ್ ಬಿಟ್ಟು ಈ ದೇಶದ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೋಡಿದರೆ ಅಲ್ಲಿ ಇಷ್ಟು ಕೆಟ್ಟ ಹವಾಮಾನ ಇಲ್ಲ. ವಾರ್ಮರ್ ಕ್ಲೈಮೇಟ್ ಬೇಕು ಎಂದರೆ ಫ್ಲೋರಿಡಾಗೆ ಹೋದರೆ ಆಗದೇ? ಬಹಳ ಸುಲಭವಾದ ಪ್ರಶ್ನೆ ಆದರೆ ಅದಕ್ಕೆ ಉತ್ತರ ಅಷ್ಟೊಂದು ಸುಲಭವಲ್ಲ. ಪ್ರತೀವರ್ಷ ಹರಿಕೇನ್‌ಗಳು ಬಂದರೂ, ಸುಂಟರಗಾಳಿ ಸುಳಿದರೂ, ಏನೇ ಹಾನಿ ಆದರೂ ಎಷ್ಟೋ ಕುಟುಂಬಗಳು ಅದೇ ಪ್ರದೇಶದಲ್ಲಿ ನೆಲೆಸೋದಿಲ್ಲವೇನು? ವೆದರ್ ಒಂದೇ ಕಾರಣವೆಂದರೆ ಇವತ್ತು ವಿಂಡೀಸಿಟಿ ಶಿಕಾಗೋ ಈ ಛಳಿಗಾಲದಲ್ಲಿ ನಿರ್ಜನಪೀಡಿತವಾಗಬೇಕಿತ್ತು. ಪ್ರತೀವರ್ಷ ಆರು ಅಡಿಗಳಷ್ಟು ಸ್ನೋ ಬಂದ ಬಫೆಲೋ ನಗರದಿಂದ ಎಲ್ಲರೂ ಗುಳೇ ಹೊರಡಬೇಕಿತ್ತು...ಹಾಗಾಗೋದಿಲ್ಲ. ಕರ್ಮವನ್ನು ಅರಸಿಬಂದ ನಮಗೆ ಒಂದು ಒಳ್ಳೆಯ ಕೆಲಸ ಬೇಕು, ಅದರ ಜೊತೆಯಲ್ಲಿ ನಮಗೆ ಅನುಕೂಲಕರವಾದ ನೆರೆಹೊರೆ ಇರಬೇಕು, ಇತ್ಯಾದಿ ಇತ್ಯಾದಿ. ಇವೆಲ್ಲವನ್ನೂ ಮೀರಿ ಒಮ್ಮೆ ಯಾರಾದರೂ ಅಮೇರಿಕದ ನೆಲದಲ್ಲಿ ಬೇರು ಬಿಡಲು ಆರಂಭಿಸಿದರೆ ಅದನ್ನು ಕಿತ್ತು ಮತ್ತೆ ಇನ್ನೇಲ್ಲೋ ನೆಲೆಸುವುದು ಕಷ್ಟದ ಮಾತೆ ಸರಿ.

***

ನಾವು ಕೇವಲ ಕರ್ಮವನ್ನು ಅರಸಿಬಂದವರು, ಅದರ ಜೊತೆಯಲ್ಲಿ ಪ್ರಾಸ್ಪೆರಿಟಿ ಕೂಡ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮನ್ನು ನಾವು ರಿಡಿಫೈನ್ ಮಾಡಬೇಕಾದ ಅಗತ್ಯವಿದೆ. ನಿಧಾನವಾಗಿ ಮುವತ್ತರ ಮಡಿಲಿನಿಂದ ಜಾರಿ ನಲವತ್ತರ ಹರೆಯಕ್ಕೆ ನನ್ನಂಥವರು ಬೀಳತೊಡಗುತ್ತೇವೆ. ಒಂದು ಕಾಲದಲ್ಲಿ ’ರಿಟೈರ್‌ಮೆಂಟ್ ಎಂದರೆ ನಮಗಲ್ಲ...’ ಎನ್ನುವ ಆಟಿಟ್ಯೂಡ್ ಇಟ್ಟುಕೊಂಡವರಿಗೆ ಈಗ ಮಾರ್ಕೆಟ್ಟುಗಳ ಏಳುಬೀಳುಗಳಲ್ಲಿ ಬಳಲಿದ ಮೇಲೆ ರಿಟೈರ್‌ಮೆಂಟ್ ಎನ್ನುವುದು ಮರೀಚಿಕೆಯಾಗದಿರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ. ನಮ್ಮ ಮಕ್ಕಳು ಬೆಳೆದು ದೊಡ್ಡವರಾದಂತೆ ನಮ್ಮ ಮೂಲ ಸಂಸ್ಕಾರ-ಸಂಸ್ಕೃತಿಗಳು ದಿನನಿತ್ಯದ ಅಗತ್ಯಗಳಲ್ಲೊಂದಾಗುತ್ತವೆ. ಹಣವನ್ನು ಕೂಡಿಡುವುದರ ಜೊತೆಗೆ ’ಇನ್ನು ಮುಂದೆ ಹೇಗೋ?’ ಎನ್ನುವ ಹೆದರಿಕೆ ಸೇರಿಕೊಂಡು ಕನ್ಸರ್‌ವೆಟಿವ್ ಮೈಂಡ್ ಜಾಗೃತವಾಗುತ್ತದೆ.

ಇವೆಲ್ಲ ಚಿಂತೆಗಳು ಯಾವತ್ತಿದ್ದರೂ ಇರೋವೆ, ದಿನೇದಿನೇ ಮನದಾಳದಲ್ಲಿ ಖಾಲಿಯಾಗುವ ದೂರದ ಭಾರತದ ನೆನಪು ನಾಸ್ಟಾಲ್ಜಿಯಾ ಆಗಿ ಹೋಗುತ್ತಾ ಸ್ಥಳೀಯ ಅನಿವಾಸಿ ಕರ್ಮಗಳು ಬೆನ್ನಿಗೆ ಅಂಟಿಕೊಂಡು ಹೊರೆ ಯಾವತ್ತಿಗೂ ತೂಕವಾಗೋದು ಇದ್ದೇ ಇದೆ, ಇವೆಲ್ಲದರ ನಡುವೆಯೂ ನಗುವ ಅಗತ್ಯವಿದೆ, ಸಹಜವಾಗಿ ಬದುಕುವ ತುಡಿತವಿದೆ. ಹಗುರವಾಗಬೇಕು, ಲಘುವಾಗಬೇಕು ಎಂದುಕೊಳ್ಳುತ್ತಾ ಅನಿವಾಸಿ ಮನ ಅಲ್ಲಿಯ ಹಳೆಯ ಹಾಗೂ ಇಲ್ಲಿಯ ಹೊಸ ತಲೆಮಾರುಗಳಿಗೆ ಬೆಸೆಯುವ ಕೊಂಡಿಯಾಗುತ್ತದೆ. ತನ್ನೊಳಗಿನ ತುಮುಲ-ತುಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಮುಂದಿನ ಸಂತತಿ ತನ್ನಂತಾಗದು ಎಂದು ಮಮ್ಮಲ ಮರಗುತ್ತದೆ, ಇವೆಲ್ಲದರ ಜೊತೆಯಲ್ಲಿ ಅಲ್ಲಿಯವರಿಗೆ ನಾವು "ಆಗಿ" ಬರಲಿಲ್ಲ ಎನ್ನುವ ಚಿಂತೆ ಕೊರೆಯತೊಡಗುತ್ತದೆ.

Thursday, December 31, 2009

ಯಾರೂ ಇದರ ಬಗ್ಗೆ ಏಕೆ ಮಾತನಾಡಲ್ಲ?

ಸದ್ಯ, ಈ ದಿನ ಪ್ರಜಾವಾಣಿ ಮುಖಪುಟ ತೆರೆದು ನೋಡ್ತಾಗ ಮೃತ್ಯುದೇವತೆ ಕನ್ನಡದ ಅಭಿಮಾನಿಗಳ ಮೇಲೆ ಹ್ಯಾಟ್ರಿಕ್ ಹೊಡೆತವನ್ನೇನೂ ಕೊಟ್ಟಿರಲಿಲ್ಲ ಎಂದು ಸಮಾಧಾನ ಮೂಡಿತು.  ಕೊನೆಗೆ ಆದ ಘಟನೆಗಳ ಸಿಂಹಾವಲೋಕನ ಮಾಡಲಾಗಿ ಅಭಿಮಾನಿಗಳು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದುದನ್ನು ನೋಡಿ ಅವರ ತರ್ಕವೇನು ಎಂದು ಯೋಚಿಸಿ ಮನ ಹೆಣಗಿತು, ಇವೆಲ್ಲದರ ನಡುವೆ ವಿಷ್ಣುವರ್ಧನ್ ಕೇವಲ ೫೯ ವರ್ಷಕ್ಕೆ ಸಾಯಲು ಕಾರಣವೇನಿರಬಹುದು ಎಂದು ಆಶ್ಚರ್ಯವೂ ಆಯಿತು.

 

ನಮ್ಮ ನಂಬಿಕೆಯ ಪ್ರಕಾರ ಆಯಸ್ಸು ತೀರಿದವರು ಎಲ್ಲಿದ್ದರೂ ಮೃತ್ಯುದೇವತೆಯನ್ನು ವಂಚಿಸಲಾಗದು ಎನ್ನುವುದನ್ನು ತಲೆಯ ಒಂದು ಬದಿಯಲ್ಲಿಟ್ಟುಕೊಂಡೇ ಮತ್ತೊಂದು ಕಡೆ ವೈದ್ಯಕೀಯ ವಿಜ್ಞಾನ ಇಷ್ಟೊಂದು ಬೆಳೆದಿರುವಾಗ ವಿಕ್ರಂ ಆಸ್ತ್ಪತ್ರೆಯ ವೈದ್ಯರು ರಾತ್ರಿ ಕಾಡಿದ ಎದೆನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾದರೇನೋ ಎಂದು ಬಲವಾದ ಸಂಶಯ ಕೂಡ ಬಂತು.  ಒಬ್ಬ ೫೯ ವರ್ಷದ ಮನುಷ್ಯ, ಯಾರೇ ಇರಲಿ, ಎದೆ ನೋವು ಎಂದು ರಾತ್ರಿ ಹತ್ತು ಘಂಟೆಗೆ ಆಸ್ಪತ್ರೆಗೆ ಬಂದರೆ ಅಂಥವರನ್ನು ಅಡ್ಮಿಟ್ ಮಾಡಿಕೊಳ್ಳದೇ ಹೇಗೆ ಮನೆಗೆ ಕಳುಹಿಸುತ್ತೀರಿ?  ಮಾಡಬೇಕಾದ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿದ್ದೀರೋ? ಅಥವಾ ಪೇಷೆಂಟ್ ತಮ್ಮ ಸ್ವ-ಇಚ್ಚೆಯಿಂದ ಸೈನ್-ಔಟ್ ಮಾಡಿ ಮನೆಗೆ ಹೋದರೋ?

 

ಅಮೇರಿಕದಲ್ಲಿ ಕುಳಿತ ನಮಗೆ ಈ ರೀತಿಯ ಒಣತರ್ಕ ಮಾಡಲು ಸುಲಭ, ಇಲ್ಲಿನ ಲಿಟಿಗೇಶನ್ ವ್ಯವಸ್ಥೆ ಏನೇನೋ ಅನಾನುಕೂಲಗಳನ್ನು ಕಲ್ಪಿಸಿದ್ದರೂ ಈ ರೀತಿ ಯೋಚಿಸುವ ಮನಸ್ಥಿತಿಯನ್ನಾದರೂ ಹುಟ್ಟಿಸಿದೆ ಎನ್ನುವುದು ದೊಡ್ಡ ವಿಷಯ.  ಯಾರಾದರೂ ವಿಕ್ರಂ ಆಸ್ಪತ್ರೆಯ ಚಾರ್ಟ್ ತೆಗೆದು ನೋಡಿದ್ದಾರಾ? ಅಂದು ರಾತ್ರಿ ಕಾಲ್‌ನಲ್ಲಿ ಇದ್ದ ಆಸ್ಪತ್ರೆ ಸಿಬ್ಬಂದಿ ಯಾರು? ಅವರು ಏನೇನು ಪರೀಕ್ಷೆಗಳನ್ನು ಮಾಡಿದ್ದಾರೆ, ರೋಗಿಯನ್ನು ಹೊರಹೋಗಲು ಬಿಡುವ ಮುನ್ನ ಯಾವ ಯಾವ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ?  ಏನಾದರೂ ಔಷಧಿ-ಮದ್ದನ್ನು ಕೊಟ್ಟಿದ್ದಾರೋ ಅಥವಾ ಮರುದಿನ ಮತ್ತೆ ಬರಲು ತಿಳಿಸಿದ್ದಾರೋ? ವಿಕ್ರಂ ಆಸ್ಪತ್ರೆ ಚಿಕ್ಕದ್ದಿದ್ದು ಅಲ್ಲಿ ರೋಗಿಯನ್ನು ಇಟ್ಟುಕೊಳ್ಳಲಾಗದಿದ್ದರೆ ಹತ್ತಿರದ ದೊಡ್ಡ ಆಸ್ಪತ್ರೆಗೇನಾದರೂ ವಿಷಯ ತಿಳಿಸಿದ್ದರೋ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ, ಯಾರೂ ಇದರ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಲಿಲ್ಲ/ಕಾಣಲಿಲ್ಲ.

 

ಆದದ್ದು ಆಯ್ತು, ಎಂದು ಸುಮ್ಮನೆ ಬಿಟ್ಟು ಬಿಡಬಹುದಾದ ವಿಷಯ ಇದಲ್ಲ.  ರೋಗಿ/ವ್ಯಕ್ತಿ ಯಾರೇ ಆಗಿದ್ದರೂ ಆಸ್ಪತ್ರೆ/ವೈದ್ಯರು ತಮ್ಮ-ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕು, ಕೊನೇಪಕ್ಷ ಈ ಘಟನಾವಳಿಗಳಲ್ಲಿ ತಪ್ಪೇನಾದರೂ ನಡೆದಿದ್ದು ಸಾಬೀತಾದರೆ ಇನ್ನು ಮುಂದೆ ಹೀಗಾಗದಂತೆ ನೋಡಬೇಕು.

 

ಅದೇ ರೀತಿ ಅಶ್ವಥ್ ಸಾವೂ ಕೂಡಾ ಅನಿರೀಕ್ಷಿತ ಎಂದೇ ಹೇಳಬೇಕು.  ವೈದ್ಯರು ಇನ್ನೇನು ಗುಣಮುಖರಾಗುತ್ತಾರೆ ಎಂದು ಹೇಳಿದ್ದರಂತೆ, ಏನು ತೊಂದರೆ ಆಯಿತೋ? ಕಿಡ್ನಿ-ಲಿವರ್ ತಮ್ಮ ಸಾಮರ್ಥ್ಯಗಳಲ್ಲಿ ಕ್ಷೀಣಿಸುತ್ತಾ ಬಂದಂತೆ ಅದನ್ನು ಮೊದಲೇ ಪತ್ತೆ ಹಚ್ಚಿ ಯಾವುದಾದರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೋ ಇಲ್ಲವೋ.  ಕ್ಷಮಿಸಿ, ನಾನು ವೈದ್ಯನೇನಲ್ಲ, ಈ ರೀತಿ ಪ್ರಶ್ನೆಗಳನ್ನು ಹಾಕುತ್ತಿರುವುದು ಉದ್ಧಟತನದಿಂದಲ್ಲ, ಕೇವಲ ಕುತೂಹಲದಿಂದ ಮಾತ್ರ.  ಎಲ್ಲೋ ಕುಳಿತು ಇನ್ನೆಲ್ಲಿಯೋ ಸರ್ಜರಿ ಮಾಡುವು ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಇಬ್ಬರು ಮಹಾಚೇತನಗಳನ್ನು ಎರಡು ದಿನಗಳಲ್ಲಿ ಕಳೆದುಕೊಂಡು ರೋಧಿಸುವ ಅಭಿಮಾನಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವೆಂದುಕೊಂಡಿದ್ದೇನೆ.

 

ನಿಮಗೇನಾದರೂ ಹೆಚ್ಚು ತಿಳಿದಿದ್ದರೆ ನಮಗೂ ಸ್ಪಲ್ಪ ತಿಳಿಸಿ.

 

image

(ಕೃಪೆ: ಪ್ರಜಾವಾಣಿ)

Wednesday, December 30, 2009

ಶ್ರದ್ದಾಂಜಲಿ...ವಿಷ್ಣು, ಅಶ್ವಥ್ ಇನ್ನಿಲ್ಲ

೨೦೦೯ ಸುಮ್ನೇ ಹೋಗಲಿಲ್ಲ...ತನ್ನ ಕೊನೆಯ ದಿನಗಳಲ್ಲಿ ಎರಡು ಮಹಾನ್ ಚೇತನಗಳನ್ನ ತನ್ನ ಜೊತೆ ತೆಗೆದುಕೊಂಡು ಹೋಯ್ತು...ಇನ್ನೂ ಒಂದು ದಿನ ಬಾಕಿ ಇದೆ ವರ್ಷದ ಬಾಬ್ತು ಮುಗಿಯೋದಕ್ಕೆ ಅನ್ನೋದು ಹೆದರಿಕೆಯ ವಿಷಯವೇ, ಏನೇನು ಆಗಲಿಕ್ಕೆ ಇದೆಯೋ!

 

ಕೆಲವು ತಿಂಗಳುಗಳ ಹಿಂದೆ ಅಶ್ವಥ್ ಅಮೇರಿಕಕ್ಕೆ ತಮ್ಮ ತಂಡದವರೊಂದಿಗೆ ಬಂದು ನಮಗೆಲ್ಲ ಸುಗಮ ಸಂಗೀತದ ರಸದೌತಣವನ್ನು ನೀಡಿದ್ದರು, ಅವರು ಇನ್ನಿಲ್ಲ...ತಾನು ಹುಟ್ಟಿದ ದಿನವೇ ಸಾಯುವ ಕಾಕತಾಳೀಯವನ್ನು ಬಹಳ ಜನ ಕಾಣಲಾರರು, ಅಂಥವರಲ್ಲಿ ಅಶ್ವಥ್ ಅವರು ಒಬ್ಬರು, ಇಂದಿಗೆ ಅವರಿಗೆ ಬರೋಬ್ಬರಿ ಎಪ್ಪತ್ತು ವರ್ಷ.

 

ashwath241209_1

***

 

ವಿಷ್ಣುವರ್ಧನ್, ಕೇವಲ ೫೯ ವರ್ಷಕ್ಕೆ ಹೃದಯಾಘಾತಕ್ಕೆ ಈಡಾಗುತ್ತಾರೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.  ಇತ್ತೀಚೆಗಷ್ಟೇ ಯಾವುದೋ ಉದಯ ಟಿವಿ ಕಾರ್ಯಕ್ರಮವನ್ನು ತೋರಿಸಿ ’ಪರವಾಗಿಲ್ಲ, ವಿಷ್ಣು ತನ್ನ ಫಾರ್ಮ್ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ!’ ಎಂದು ಹೇಳಿದ್ದು ನನಗೆ ಚೆನ್ನಾಗಿ ನನಪಿದೆ.

 

vishnuvardhan-6677

***

ಈ ಇಬ್ಬರು ಕನ್ನಡದ ಚೇತನಗಳಿಗೆ "ಅಂತರಂಗ"ದ ನಮನ, ಅವರ ಆತ್ಮಗಳು ಶಾಂತಿಯಿಂದಿರಲಿ, ಹಾಗೂ ಮತ್ತೊಮ್ಮೆ ಕನ್ನಡ ನಾಡಲ್ಲೇ ಹುಟ್ಟಿ ಬರಲಿ.

 

picture source:

http://www.indiaglitz.com/channels/kannada/article/52939.html

http://entertainment.oneindia.in/tag/vishnuvardhan

Monday, December 28, 2009

’ಅಂತರಂಗ’ದಲ್ಲೇನು ನಡೀತಾ ಇದೆ?

’ಅಂತರಂಗ’ದಲ್ಲೇನು ನಡೀತಾ ಇದೆ? ಯಾಕೆ ಇದೀಗ ತಿಂಗಳ ಮೇಲೆ ಬರೆದೇ ಇಲ್ಲವಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಬರ್ತಾ ಇರೋದರಿಂದ ನನ್ನ ಮಾಮಾಲಿ ಸಸ್ಪೆಕ್ಟ್ ’ಸೋಮಾರಿತನ’ವನ್ನು ನೆಪಮಾಡಿಕೊಂಡು ಉತ್ತರವನ್ನೇನೋ ಕೊಡ್ತಾ ಇದ್ದೀನಿ, ಆದ್ರೆ ಇತ್ತೀಚಿನ ಭಾರತದ ಪ್ರಯಾಣ ಹಾಗೂ ವರ್ಷಾವಧಿ ಕೆಲಸಗಳ ಭರಾಟೆಯಿಂದಾಗಿ ಹೆಚ್ಚು ಬರೆಯೋದಕ್ಕಾಗಲಿಲ್ಲ, ಕ್ಷಮಿಸಿ.

ಮುಂದೆ ಪುರುಸೊತ್ತು ಮಾಡಿಕೊಂಡು, ಹಿಂದಿನ ’ಗೆಲುವಾಗೆಲೆ’ ಲೇಖನಕ್ಕೆ ’ಲಘುವಾಗೆಲೆ ಅನಿವಾಸಿ ಮನ...’ವೆಂದು ಮತ್ತೊಂದು ಆರ್ಟಿಕಲ್ ಬರ್ತಾ ಇದೆ...ಇನ್ನೇನು ’ಹೋಗಿ ಹರಿಯ’ನ್ನು ಮುಟ್ಟೋದೊಂದು ಬಾಕಿ ಅಷ್ಟೇ :-)

ಇದಲ್ಲದೇ ’ಅಂತರಂಗ’ದಲ್ಲಿ ಎಂದಿನ ತಳಮಳಗಳು ಇದ್ದೇ ಇವೆ, ನಿಮಗೆ ಗೊತ್ತಿದೆಯಲ್ಲಾ. ಎಂಥ ಮಾರ್ಕೆಟ್ಟಿನಲ್ಲೂ, ಎಂಥ ಸಂದರ್ಭದಲ್ಲೂ ನಮ್ಮ ನಮ್ಮೊಳಗೊಂದು ಕೊರಗುವ ಅಳುಮುಂಜಿ ಇದ್ದೇ ಇರುವಂತೆ.

ಇತ್ತೀಚೆಗೆ ’ಲೈವ್ ರೈಟರ್’ ಡೌನ್‌ಲೋಡ್ ಮಾಡಿಕೊಂಡಾಗಿನಿಂದಂತೂ ಬರೆಯೋದು ಮತ್ತಷ್ಟು ಸುಲಭವಾಗಿದೆ, ಬರೆಯೋದಕ್ಕೆ ಬೇಕಾದಷ್ಟು ವಿಚಾರಗಳಿವೆ, ಅಂದರೆ between the keyboard and the chair ಫ್ಯಾಕ್ಟರ್ ಅನ್ನು ಸರಿಪಡಿಸಿಕೊಳ್ಳೋದು ಮಾತ್ರ ಬಾಕಿ!