Thursday, December 31, 2009

ಯಾರೂ ಇದರ ಬಗ್ಗೆ ಏಕೆ ಮಾತನಾಡಲ್ಲ?

ಸದ್ಯ, ಈ ದಿನ ಪ್ರಜಾವಾಣಿ ಮುಖಪುಟ ತೆರೆದು ನೋಡ್ತಾಗ ಮೃತ್ಯುದೇವತೆ ಕನ್ನಡದ ಅಭಿಮಾನಿಗಳ ಮೇಲೆ ಹ್ಯಾಟ್ರಿಕ್ ಹೊಡೆತವನ್ನೇನೂ ಕೊಟ್ಟಿರಲಿಲ್ಲ ಎಂದು ಸಮಾಧಾನ ಮೂಡಿತು.  ಕೊನೆಗೆ ಆದ ಘಟನೆಗಳ ಸಿಂಹಾವಲೋಕನ ಮಾಡಲಾಗಿ ಅಭಿಮಾನಿಗಳು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದುದನ್ನು ನೋಡಿ ಅವರ ತರ್ಕವೇನು ಎಂದು ಯೋಚಿಸಿ ಮನ ಹೆಣಗಿತು, ಇವೆಲ್ಲದರ ನಡುವೆ ವಿಷ್ಣುವರ್ಧನ್ ಕೇವಲ ೫೯ ವರ್ಷಕ್ಕೆ ಸಾಯಲು ಕಾರಣವೇನಿರಬಹುದು ಎಂದು ಆಶ್ಚರ್ಯವೂ ಆಯಿತು.

 

ನಮ್ಮ ನಂಬಿಕೆಯ ಪ್ರಕಾರ ಆಯಸ್ಸು ತೀರಿದವರು ಎಲ್ಲಿದ್ದರೂ ಮೃತ್ಯುದೇವತೆಯನ್ನು ವಂಚಿಸಲಾಗದು ಎನ್ನುವುದನ್ನು ತಲೆಯ ಒಂದು ಬದಿಯಲ್ಲಿಟ್ಟುಕೊಂಡೇ ಮತ್ತೊಂದು ಕಡೆ ವೈದ್ಯಕೀಯ ವಿಜ್ಞಾನ ಇಷ್ಟೊಂದು ಬೆಳೆದಿರುವಾಗ ವಿಕ್ರಂ ಆಸ್ತ್ಪತ್ರೆಯ ವೈದ್ಯರು ರಾತ್ರಿ ಕಾಡಿದ ಎದೆನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾದರೇನೋ ಎಂದು ಬಲವಾದ ಸಂಶಯ ಕೂಡ ಬಂತು.  ಒಬ್ಬ ೫೯ ವರ್ಷದ ಮನುಷ್ಯ, ಯಾರೇ ಇರಲಿ, ಎದೆ ನೋವು ಎಂದು ರಾತ್ರಿ ಹತ್ತು ಘಂಟೆಗೆ ಆಸ್ಪತ್ರೆಗೆ ಬಂದರೆ ಅಂಥವರನ್ನು ಅಡ್ಮಿಟ್ ಮಾಡಿಕೊಳ್ಳದೇ ಹೇಗೆ ಮನೆಗೆ ಕಳುಹಿಸುತ್ತೀರಿ?  ಮಾಡಬೇಕಾದ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿದ್ದೀರೋ? ಅಥವಾ ಪೇಷೆಂಟ್ ತಮ್ಮ ಸ್ವ-ಇಚ್ಚೆಯಿಂದ ಸೈನ್-ಔಟ್ ಮಾಡಿ ಮನೆಗೆ ಹೋದರೋ?

 

ಅಮೇರಿಕದಲ್ಲಿ ಕುಳಿತ ನಮಗೆ ಈ ರೀತಿಯ ಒಣತರ್ಕ ಮಾಡಲು ಸುಲಭ, ಇಲ್ಲಿನ ಲಿಟಿಗೇಶನ್ ವ್ಯವಸ್ಥೆ ಏನೇನೋ ಅನಾನುಕೂಲಗಳನ್ನು ಕಲ್ಪಿಸಿದ್ದರೂ ಈ ರೀತಿ ಯೋಚಿಸುವ ಮನಸ್ಥಿತಿಯನ್ನಾದರೂ ಹುಟ್ಟಿಸಿದೆ ಎನ್ನುವುದು ದೊಡ್ಡ ವಿಷಯ.  ಯಾರಾದರೂ ವಿಕ್ರಂ ಆಸ್ಪತ್ರೆಯ ಚಾರ್ಟ್ ತೆಗೆದು ನೋಡಿದ್ದಾರಾ? ಅಂದು ರಾತ್ರಿ ಕಾಲ್‌ನಲ್ಲಿ ಇದ್ದ ಆಸ್ಪತ್ರೆ ಸಿಬ್ಬಂದಿ ಯಾರು? ಅವರು ಏನೇನು ಪರೀಕ್ಷೆಗಳನ್ನು ಮಾಡಿದ್ದಾರೆ, ರೋಗಿಯನ್ನು ಹೊರಹೋಗಲು ಬಿಡುವ ಮುನ್ನ ಯಾವ ಯಾವ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ?  ಏನಾದರೂ ಔಷಧಿ-ಮದ್ದನ್ನು ಕೊಟ್ಟಿದ್ದಾರೋ ಅಥವಾ ಮರುದಿನ ಮತ್ತೆ ಬರಲು ತಿಳಿಸಿದ್ದಾರೋ? ವಿಕ್ರಂ ಆಸ್ಪತ್ರೆ ಚಿಕ್ಕದ್ದಿದ್ದು ಅಲ್ಲಿ ರೋಗಿಯನ್ನು ಇಟ್ಟುಕೊಳ್ಳಲಾಗದಿದ್ದರೆ ಹತ್ತಿರದ ದೊಡ್ಡ ಆಸ್ಪತ್ರೆಗೇನಾದರೂ ವಿಷಯ ತಿಳಿಸಿದ್ದರೋ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ, ಯಾರೂ ಇದರ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಲಿಲ್ಲ/ಕಾಣಲಿಲ್ಲ.

 

ಆದದ್ದು ಆಯ್ತು, ಎಂದು ಸುಮ್ಮನೆ ಬಿಟ್ಟು ಬಿಡಬಹುದಾದ ವಿಷಯ ಇದಲ್ಲ.  ರೋಗಿ/ವ್ಯಕ್ತಿ ಯಾರೇ ಆಗಿದ್ದರೂ ಆಸ್ಪತ್ರೆ/ವೈದ್ಯರು ತಮ್ಮ-ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕು, ಕೊನೇಪಕ್ಷ ಈ ಘಟನಾವಳಿಗಳಲ್ಲಿ ತಪ್ಪೇನಾದರೂ ನಡೆದಿದ್ದು ಸಾಬೀತಾದರೆ ಇನ್ನು ಮುಂದೆ ಹೀಗಾಗದಂತೆ ನೋಡಬೇಕು.

 

ಅದೇ ರೀತಿ ಅಶ್ವಥ್ ಸಾವೂ ಕೂಡಾ ಅನಿರೀಕ್ಷಿತ ಎಂದೇ ಹೇಳಬೇಕು.  ವೈದ್ಯರು ಇನ್ನೇನು ಗುಣಮುಖರಾಗುತ್ತಾರೆ ಎಂದು ಹೇಳಿದ್ದರಂತೆ, ಏನು ತೊಂದರೆ ಆಯಿತೋ? ಕಿಡ್ನಿ-ಲಿವರ್ ತಮ್ಮ ಸಾಮರ್ಥ್ಯಗಳಲ್ಲಿ ಕ್ಷೀಣಿಸುತ್ತಾ ಬಂದಂತೆ ಅದನ್ನು ಮೊದಲೇ ಪತ್ತೆ ಹಚ್ಚಿ ಯಾವುದಾದರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೋ ಇಲ್ಲವೋ.  ಕ್ಷಮಿಸಿ, ನಾನು ವೈದ್ಯನೇನಲ್ಲ, ಈ ರೀತಿ ಪ್ರಶ್ನೆಗಳನ್ನು ಹಾಕುತ್ತಿರುವುದು ಉದ್ಧಟತನದಿಂದಲ್ಲ, ಕೇವಲ ಕುತೂಹಲದಿಂದ ಮಾತ್ರ.  ಎಲ್ಲೋ ಕುಳಿತು ಇನ್ನೆಲ್ಲಿಯೋ ಸರ್ಜರಿ ಮಾಡುವು ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಇಬ್ಬರು ಮಹಾಚೇತನಗಳನ್ನು ಎರಡು ದಿನಗಳಲ್ಲಿ ಕಳೆದುಕೊಂಡು ರೋಧಿಸುವ ಅಭಿಮಾನಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವೆಂದುಕೊಂಡಿದ್ದೇನೆ.

 

ನಿಮಗೇನಾದರೂ ಹೆಚ್ಚು ತಿಳಿದಿದ್ದರೆ ನಮಗೂ ಸ್ಪಲ್ಪ ತಿಳಿಸಿ.

 

image

(ಕೃಪೆ: ಪ್ರಜಾವಾಣಿ)

Wednesday, December 30, 2009

ಶ್ರದ್ದಾಂಜಲಿ...ವಿಷ್ಣು, ಅಶ್ವಥ್ ಇನ್ನಿಲ್ಲ

೨೦೦೯ ಸುಮ್ನೇ ಹೋಗಲಿಲ್ಲ...ತನ್ನ ಕೊನೆಯ ದಿನಗಳಲ್ಲಿ ಎರಡು ಮಹಾನ್ ಚೇತನಗಳನ್ನ ತನ್ನ ಜೊತೆ ತೆಗೆದುಕೊಂಡು ಹೋಯ್ತು...ಇನ್ನೂ ಒಂದು ದಿನ ಬಾಕಿ ಇದೆ ವರ್ಷದ ಬಾಬ್ತು ಮುಗಿಯೋದಕ್ಕೆ ಅನ್ನೋದು ಹೆದರಿಕೆಯ ವಿಷಯವೇ, ಏನೇನು ಆಗಲಿಕ್ಕೆ ಇದೆಯೋ!

 

ಕೆಲವು ತಿಂಗಳುಗಳ ಹಿಂದೆ ಅಶ್ವಥ್ ಅಮೇರಿಕಕ್ಕೆ ತಮ್ಮ ತಂಡದವರೊಂದಿಗೆ ಬಂದು ನಮಗೆಲ್ಲ ಸುಗಮ ಸಂಗೀತದ ರಸದೌತಣವನ್ನು ನೀಡಿದ್ದರು, ಅವರು ಇನ್ನಿಲ್ಲ...ತಾನು ಹುಟ್ಟಿದ ದಿನವೇ ಸಾಯುವ ಕಾಕತಾಳೀಯವನ್ನು ಬಹಳ ಜನ ಕಾಣಲಾರರು, ಅಂಥವರಲ್ಲಿ ಅಶ್ವಥ್ ಅವರು ಒಬ್ಬರು, ಇಂದಿಗೆ ಅವರಿಗೆ ಬರೋಬ್ಬರಿ ಎಪ್ಪತ್ತು ವರ್ಷ.

 

ashwath241209_1

***

 

ವಿಷ್ಣುವರ್ಧನ್, ಕೇವಲ ೫೯ ವರ್ಷಕ್ಕೆ ಹೃದಯಾಘಾತಕ್ಕೆ ಈಡಾಗುತ್ತಾರೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.  ಇತ್ತೀಚೆಗಷ್ಟೇ ಯಾವುದೋ ಉದಯ ಟಿವಿ ಕಾರ್ಯಕ್ರಮವನ್ನು ತೋರಿಸಿ ’ಪರವಾಗಿಲ್ಲ, ವಿಷ್ಣು ತನ್ನ ಫಾರ್ಮ್ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ!’ ಎಂದು ಹೇಳಿದ್ದು ನನಗೆ ಚೆನ್ನಾಗಿ ನನಪಿದೆ.

 

vishnuvardhan-6677

***

ಈ ಇಬ್ಬರು ಕನ್ನಡದ ಚೇತನಗಳಿಗೆ "ಅಂತರಂಗ"ದ ನಮನ, ಅವರ ಆತ್ಮಗಳು ಶಾಂತಿಯಿಂದಿರಲಿ, ಹಾಗೂ ಮತ್ತೊಮ್ಮೆ ಕನ್ನಡ ನಾಡಲ್ಲೇ ಹುಟ್ಟಿ ಬರಲಿ.

 

picture source:

http://www.indiaglitz.com/channels/kannada/article/52939.html

http://entertainment.oneindia.in/tag/vishnuvardhan

Monday, December 28, 2009

’ಅಂತರಂಗ’ದಲ್ಲೇನು ನಡೀತಾ ಇದೆ?

’ಅಂತರಂಗ’ದಲ್ಲೇನು ನಡೀತಾ ಇದೆ? ಯಾಕೆ ಇದೀಗ ತಿಂಗಳ ಮೇಲೆ ಬರೆದೇ ಇಲ್ಲವಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಬರ್ತಾ ಇರೋದರಿಂದ ನನ್ನ ಮಾಮಾಲಿ ಸಸ್ಪೆಕ್ಟ್ ’ಸೋಮಾರಿತನ’ವನ್ನು ನೆಪಮಾಡಿಕೊಂಡು ಉತ್ತರವನ್ನೇನೋ ಕೊಡ್ತಾ ಇದ್ದೀನಿ, ಆದ್ರೆ ಇತ್ತೀಚಿನ ಭಾರತದ ಪ್ರಯಾಣ ಹಾಗೂ ವರ್ಷಾವಧಿ ಕೆಲಸಗಳ ಭರಾಟೆಯಿಂದಾಗಿ ಹೆಚ್ಚು ಬರೆಯೋದಕ್ಕಾಗಲಿಲ್ಲ, ಕ್ಷಮಿಸಿ.

ಮುಂದೆ ಪುರುಸೊತ್ತು ಮಾಡಿಕೊಂಡು, ಹಿಂದಿನ ’ಗೆಲುವಾಗೆಲೆ’ ಲೇಖನಕ್ಕೆ ’ಲಘುವಾಗೆಲೆ ಅನಿವಾಸಿ ಮನ...’ವೆಂದು ಮತ್ತೊಂದು ಆರ್ಟಿಕಲ್ ಬರ್ತಾ ಇದೆ...ಇನ್ನೇನು ’ಹೋಗಿ ಹರಿಯ’ನ್ನು ಮುಟ್ಟೋದೊಂದು ಬಾಕಿ ಅಷ್ಟೇ :-)

ಇದಲ್ಲದೇ ’ಅಂತರಂಗ’ದಲ್ಲಿ ಎಂದಿನ ತಳಮಳಗಳು ಇದ್ದೇ ಇವೆ, ನಿಮಗೆ ಗೊತ್ತಿದೆಯಲ್ಲಾ. ಎಂಥ ಮಾರ್ಕೆಟ್ಟಿನಲ್ಲೂ, ಎಂಥ ಸಂದರ್ಭದಲ್ಲೂ ನಮ್ಮ ನಮ್ಮೊಳಗೊಂದು ಕೊರಗುವ ಅಳುಮುಂಜಿ ಇದ್ದೇ ಇರುವಂತೆ.

ಇತ್ತೀಚೆಗೆ ’ಲೈವ್ ರೈಟರ್’ ಡೌನ್‌ಲೋಡ್ ಮಾಡಿಕೊಂಡಾಗಿನಿಂದಂತೂ ಬರೆಯೋದು ಮತ್ತಷ್ಟು ಸುಲಭವಾಗಿದೆ, ಬರೆಯೋದಕ್ಕೆ ಬೇಕಾದಷ್ಟು ವಿಚಾರಗಳಿವೆ, ಅಂದರೆ between the keyboard and the chair ಫ್ಯಾಕ್ಟರ್ ಅನ್ನು ಸರಿಪಡಿಸಿಕೊಳ್ಳೋದು ಮಾತ್ರ ಬಾಕಿ!

Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Saturday, November 07, 2009

ನಮ್ಮ ದೇಶ ನಮ್ಮದು!

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು.  ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ.  ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

 

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು.  ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ.  ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು.  ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು.  ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು.  ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

 

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ.  ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು.  ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು.  ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ.  ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ.  ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು.  ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

 

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು?  ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ?  ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ?  ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ?  ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು?  ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

 

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು.  ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ.  ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ.  ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.

Tuesday, November 03, 2009

...there goes Jon Corzine!

ನ್ಯೂ ಜೆರ್ಸಿ ಅಂದರೆ ಡೆ‌ಮಾಕ್ರಟಿಕ್ ರಾಜ್ಯ - ಹತ್ತು ವರ್ಷಗಳಿಗಿಂತಲೂ ಹೆಚ್ಚು ಡೆಮಾಕ್ರಟಿಕ್ ಪಕ್ಷದವರು ಆಡಳಿತ ನಡೆಸಿಕೊಂಡು ಬಂದ ಸಂಭ್ರಮ ಇಂದು ಗವರ್ನರ್ ಜಾನ್ ಕಾರ್‌ಝೈನ್ ಎಲೆಕ್ಷನ್ನಿನ್ನಲ್ಲಿ ಸೋಲುವುದರೊಂದಿಗೆ ಕೊನೆಯಾಯಿತು ಅನ್ನಬಹುದು.

ನಮ್ಮಂಥವರು, ಅದೇ ಹಸಿರು ಕಾರ್ಡು ಫಲಾನುಭವಿಗಳು, ಇಲ್ಲಿ ಮತ ಚಲಾವಣೆ ನಡೆಸದಿದ್ದರೂ ರಾಜ್ಯದಾದ್ಯಂತ ನಡೆಯೋ ಚುನಾವಣೆಯ ವಿಚಾರಗಳನ್ನು ಬೇಡವೆಂದು ದೂರವಿರಿಸಿದರೂ ಅವುಗಳ ವಿಚಾರ ಒಂದಲ್ಲ ಒಂದು ರೀತಿಯಿಂದ ನಮ್ಮ ಮನ-ಮನೆಗಳಲ್ಲಿ ನುಸುಳುವುದು ಸಹಜ. ರಾಜ್ಯದ ಬಜೆಟ್, ನಿರುದ್ಯೋಗ, ಆದಾಯ ತೆರಿಗೆ, ಹೈವೇ ಸುಂಕ ಮೊದಲಾದವುಗಳು ಎಲ್ಲರಿಗೂ ಅನ್ವಯವಾಗುತ್ತವೆ.

ವಾಲ್‌ಸ್ಟ್ರೀಟ್ ಗುರು, ಗೋಲ್ಡ್‌ಮನ್ ಸ್ಯಾಕ್ಸ್‌ನ ಎಕ್ಸಿಕ್ಯೂಟಿವ್ ಎಂದೇ ಪ್ರಖ್ಯಾತಿಯಾಗಿದ್ದ ಜಾನ್ ಕಾರ್‌ಝೈನ್ ಕೇವಲ ವರ್ಷಕ್ಕೆ ಒಂದೇ ಒಂದು ಡಾಲರ್ ಸಂಬಳ ತೆಗೆದುಕೊಂಡು ಹೆಸರು ಮಾಡಿದ ಮನುಷ್ಯ. ಜಾನ್ ಪಕ್ಕದ ನ್ಯೂ ಯಾರ್ಕ್ ನಗರ ಮೇಯರ್ (ಮತ್ತೊಮ್ಮೆ ಮೂರನೇ ಟರ್ಮ್‌ಗೆ ಇಂದು ಆಯ್ಕೆಗೊಂಡ) ಮೈಕಲ್ ಬ್ಲೂಮ್‌ಬರ್ಗ್ ಥರ ಬಿಲಿಯುನರ್ ಅಲ್ಲದಿದ್ದರೂ ಮಲ್ಟಿ ಮಿಲಿಯನರ್ ಖಂಡಿತ ಹೌದು. ಅಂಥವರಿಗೆ ಈ ಗವರ್ನರ್‌ಗೆ ಕೊಡುವ ಸಂಬಳ ಯಾವ ಲೆಕ್ಕವೂ ಅಲ್ಲ. ಜಾನ್ ಕಾರ್‌ಝೈನ್‌ನ ಮಾತುಗಳನ್ನು ಕೇಳಿದರೆ, ಅದು ಯಾವುದೇ ಸಮಾರಂಭದಲ್ಲಿರಬಹುದು ಅಥವಾ ಎಲೆಕ್ಷನ್ನ್ ಕ್ಯಾಂಪೇನ್‌ನಲ್ಲಿರಬಹುದು, ಅವರು ಹಿಂದೆ ವಾಲ್‌ಸ್ಟ್ರೀಟ್‌ನಲ್ಲಿ ಒಬ್ಬ ಎಕ್ಸಿಕ್ಯೂಟಿವ್ ವರ್ಚಸ್ಸನ್ನು ಬಳಸಿಕೊಳ್ಳೋದಿಲ್ಲ ಅಥವ ತೋರಿಸಿಕೊಳ್ಳೋದಿಲ್ಲ ಎನ್ನೋದು ನನ್ನ ಅನಿಸಿಕೆ. ಜೊತೆಗೆ, ಒಬ್ಬ ಸೀಜನ್ಡ್ ರಾಜಕಾರಣಿಯ ಚಾಕಚಕ್ಯತೆ, ತಂತ್ರಗಳೂ ಅವರಿಗೆ ಈ ನಾಲ್ಕು ವರ್ಷಗಳಲ್ಲಿ ಸಿದ್ಧಿಸಿದ ಹಾಗೆ ಕಂಡುಬರಲಿಲ್ಲ.

ಐತಿಹಾಸಿಕವಾಗಿ ಹಾಲಿ ಗವರ್ನರ್ ಮರು ಎಲೆಕ್ಷನ್ನಿನ್ನಲ್ಲಿ ಸೋಲುವುದು ನ್ಯೂ ಜೆರ್ಸಿಯಲ್ಲಿ ಗಮನಾರ್ಹವಾದುದು. ಕೇಂದ್ರದಲ್ಲಿ ಡೆಮಾಕ್ರಟಿಕ್ ಸರ್ಕಾರ ಇದ್ದು - ಕಾಂಗ್ರೆಸ್, ಸೆನೆಟ್, ವೈಟ್‌ಹೌಸ್ ಎಲ್ಲಕಡೆಗೆ ಡೆಮಾಕ್ರಟ್ ಪಕ್ಷದವರು ತುಂಬಿರುವ ಸನ್ನಿವೇಶದಲ್ಲಿ ಹಾಗೂ ಒಬಾಮ ಖುದ್ದಾಗಿ ಬಂದು ಕ್ಯಾಂಪೇನ್‌ನಲ್ಲಿ ಭಾಗವಹಿಸಿದ್ದರೂ ಇದ್ದ ಸೀಟ್ ಅನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಬಹಳ ದೊಡ್ಡ ವಿಷಯವಾಗುತ್ತದೆ. ಇಲ್ಲಿ ರಿಪಬ್ಲಿಕನ್ ಪಕ್ಷದ್ದ ಕ್ರಿಸ್ ಕ್ರಿಸ್ಟೀಯ ಜಯ, ಸಫಲತೆ ಮುಖ್ಯವಾಗಿ ಕಾಣಿಸುತ್ತದೆ. ಹೀಗೇ ವರ್ಜೀನಿಯ ರಾಜ್ಯದಲ್ಲೂ ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಗವರ್ನರ್ ಸೀಟು ಉಳಿಯದೆ ಅದೂ ರಿಪಬ್ಲಿಕನ್ ಪಕ್ಷದವರ ಪಾಲಾಗಿರುವುದು ಮತ್ತೊಂದು ಮುಖ್ಯ ಅಂಶ.

ಈ ಎರಡು ಅಂಶಗಳನ್ನು ಗಮನಿಸಿ ಇನ್ನು ಮೂರು ವರ್ಷಗಳ ನಂತರ ಬರುವ ಪ್ರೆಸಿಡೆಂಟ್ ಎಲೆಕ್ಷನ್ನ್ ಬಗ್ಗೆ ಈಗಲೇ ಏನನ್ನು ಹೇಳುವುದು ತಪ್ಪಾಗುತ್ತದೆ. ಆದರೆ, ಕಳೆದ ವರ್ಷ ಓಟಿನಲ್ಲಿ ಭಾಗವಹಿಸಿದಷ್ಟು ಜನ ಮುಖ್ಯವಾಗಿ ಮೊಟ್ಟ ಮೊದಲನೇ ಭಾರಿ ಮತ ಚಲಾಯಿಸಿದವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖುವಾಗಿರುವುದು ಗೊತ್ತಾಗುತ್ತದೆ.

ನಾವು, ನ್ಯೂ ಜೆರ್ಸಿಯ ಜನ, ಈ ಹೊಸ ರಿಪಬ್ಲಿಕನ್ ರಾಜ್ಯ ಸರ್ಕಾರದ ಕಡೆಗೆ ನೋಡುತ್ತೆವೆ, ಹಾಗಾದರೂ ಒಂದಿಷ್ಟು ಟ್ಯಾಕ್ಸ್ ಕಡಿಮೆಯಾಗಲಿ ಎಂದು!

***

ದೂರದಲ್ಲಿ - ನಾವು, ನಮ್ಮ ಕರ್ನಾಟಕದ ಮುಖ್ಯಮಂತ್ರಿ ಎಡೆಯೂರಪ್ಪನವರ ಸರ್ಕಾರ, ಅವರ ಖುರ್ಚಿಗೆ ಏನು ಆತಂಕ ಕಾದಿದೆಯೋ ಎಂದು ಬಿಟ್ಟುಗಣ್ಣು ಬಿಟ್ಟು ನೋಡುತ್ತಲೇ ಇದ್ದೇವೆ. ಅಲ್ಲಿ ಐದು ವರ್ಷಗಳ ಒಬ್ಬ ಮುಖ್ಯ ಮಂತ್ರಿಯ ಆಳ್ವಿಕೆ ಮುಂದುವರೆಯಲಿ, ರಾಜ್ಯದ ಜನರಿಗೆ ನೆಮ್ಮದಿ ಸಿಗಲಿ ಎನ್ನುವುದು ಆಶಯ ಅಷ್ಟೇ. ಎರಡೆರಡು ವರ್ಷಕ್ಕೊಮ್ಮೆ ಎಲೆಕ್ಷನ್ನುಗಳನ್ನು ನಡೆಸಿಕೊಂಡು ಹಣ ಚೆಲ್ಲುವುದರ ಬದಲು ಇದ್ದ ಸರ್ಕಾರವನ್ನೇ ಮುಂದುವರೆಸಿಕೊಂಡು ಒಳಜಗಳಗಳು ಮುಖ್ಯವಾಗದೇ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಮುಖ ತೋರುವುದು ಒಳಿತು.

Monday, November 02, 2009

ಬಿಸಿನೆಸ್ಸ್ ಮೈಂಡ್

’ವ್ಯವಹಾರ ಅನ್ನೋದು ನಮ್ಮ ರಕ್ತದಲ್ಲೇ ಬಂದಿಲ್ಲಾ ಕಣ್ರಿ!’ ಎಂದು ನನ್ನ ಸಹೋದ್ಯೋಗಿಯೊಬ್ಬರಿಗೆ ಹೇಳಿದ್ದಕ್ಕೆ ಅವರು ದೊಡ್ಡದಾಗಿ ನಕ್ಕು ’ಅದು ರಕ್ತದಲ್ಲಿ ಬರಬೇಕಾದ್ದಿಲ್ಲ, ಮನಸ್ಸಿನಲ್ಲಿದ್ದರಾಯಿತು, ರಿಸ್ಕ್ ತೆಗೆದುಕೊಂಡು ಮುಂದುಬರಬೇಕು ಎನ್ನುವುದು ವಂಶಪಾರಂಪರ್ಯವಾಗಿರಬೇಕು ಎಂದೇನು ಇಲ್ಲವಲ್ಲ’ ಎಂದರು.

ಇತ್ತೀಚೆಗೆ ನನ್ನ ಮತ್ತೊಬ್ಬ ಗುಜರಾತ್ ಮೂಲದ ಸಹೋದ್ಯೋಗಿಯೊಬ್ಬರು once for all, for good ಎಂದು ನಮ್ಮ ಕಂಪನಿಯಿಂದ ರಿಟೈರ್‌ಮೆಂಟ್ ಪ್ಯಾಕೇಜ್ ತೆಗೆದುಕೊಂಡು ತಮ್ಮ ತಂದೆಯ ಬಿಸಿನೆಸ್ಸ್ ನೋಡಿಕೊಳ್ಳುವುದಕ್ಕೋಸ್ಕರ ಭಾರತಕ್ಕೆ ಹೊರಡುವ ಸುದ್ದಿಯ ಹಿನ್ನೆಲೆಯಲ್ಲಿ ನಾವು ಮಾತನಾಡಿಕೊಳ್ಳುತ್ತಿದ್ದೆವು.

ನಾವು ಈ ಕಂಪನಿಯ ನೌಕರರಾಗಿ ಇಲ್ಲಿ ತೊಡಗಿಸುವ ಶ್ರಮವನ್ನೇ ನಮ್ಮ ನಮ್ಮ ಉದ್ಯಮದಲ್ಲಿ ತೊಡಗಿಸಿದ್ದೇ ಆದರೆ ಅದು ಖಂಡಿತವಾಗಿ ಮುಂದೆ ಬರುವುದುರಲ್ಲಿ ಸಂಶಯವಿಲ್ಲ, ಎಲ್ಲರೊಳಗೂ ಒಬ್ಬ ಆಂಟ್ರಪ್ರೀನರ್ (entrepreneur) ಇರುತ್ತಾನೆ, ಆ ಸುಪ್ತಾವಸ್ಥೆಯ ಮನಸ್ಥಿತಿಯನ್ನು ಜಾಗೃತಗೊಳಿಸಬೇಕಷ್ಟೇ ಎನ್ನುವುದು ನನ್ನ ಸಹೋದ್ಯೋಗಿಯ ವಾದ.

ಅದಕ್ಕೆ ಪ್ರತಿಯಾಗಿ, ಬಿಸಿನೆಸ್ಸ್ ಎಂದರೆ ಸುಮ್ಮನೇ ಆಗುತ್ತಾ, ಹತ್ತರಲ್ಲಿ ಒಂಭತ್ತು ಮುಳುಗುವ ಸಾಧ್ಯತೆಯೇ ಹೆಚ್ಚಿರುವಾಗ, ಎಲ್ಲೋ ಒಂದು nitch ಏರಿಯಾ ಹಿಡಿದುಕೊಂಡು ಅದನ್ನೇ ಹಗಲೂ-ರಾತ್ರಿ ಧ್ಯಾನಿಸಿ ಮೇಲೆ ತಂದು ಅದನ್ನು ಬೆಳೆಸುವುದು ಅಂದರೆ ಸುಮ್ಮನೆಯೇ? ಅದಕ್ಕೆ ಈಗ - ಈ ಪರಿಸ್ಥಿತಿ, ಕಾಲ, ಸಂದರ್ಭ - ಇವೆಲ್ಲ ತಕ್ಕುವೇನು? ಎನ್ನುವುದು ನನ್ನ ವಾದ.

ನಾವು ಮೊದಲಿನಿಂದಲೂ ಅಷ್ಟೇ, ದಕ್ಷಿಣ ಭಾರತೀಯರು. ಸರ್ಕಾರಿ ಕೆಲಸ ಸಿಗುವುದು ನಮ್ಮ ಮನೆತನಗಳಲ್ಲಿ ದೊಡ್ಡ ವಿಷಯ, ತಲ-ತಲಾಂತರದಿಂದ ಸರ್ಕಾರದ ಸೇವೆ ದೇವರ ಸೇವೆ ಎಂದು ಬೆಳೆದುಬಂದವರು ನಾವು. ಈ ಬಿಸಿನೆಸ್ಸ್ ಸ್ಯಾವಿ ಮನಸ್ಸು, ಅದರ ಒಳ-ಹೊರಗಿನ ಸೆನ್ಸಿಟಿವಿಟಿಗಳು ನಮಗೆ ತಿಳಿದವೇ? ನಮಗೆ ಒಂದು ಸಹಾಯ ಹಸ್ತವೂ ಇಲ್ಲದಿರುವಾಗ ಯಾವ ಪಾರ್ಟನರುಗಳನ್ನು ನೆಚ್ಚಿಕೊಂಡು ಏನನ್ನು ಸಾಧಿಸೋದು? ಬಿಸಿನೆಸ್ಸು ಎಂದರೆ ಯಾವ ರಂಗವನ್ನು ಆಯ್ದುಕೊಳ್ಳೋದು? ಅದರ ಮಾರ್ಕೆಟ್ ರಿಸರ್ಚ್ ಮಾಡುವವರು ಯಾರು? ಮಾಡುವುದು ಯಾವಾಗ? ಅದಕ್ಕೆ ತಕ್ಕ ಇನ್‌ವೆಸ್ಟ್‌ಮೆಂಟ್ ಎಲ್ಲಿಂದ ತರೋದು? ಕಷ್ಟಮರುಗಳು ಯಾರು? ಕಂಪನಿಯ ಧ್ಯೇಯ-ಧೋರಣೆಗಳೇನು? ಉತ್ಪಾದಿಸುವ ವಸ್ತು ಯಾವುದು? ಕೊಡುವ ಸೇವೆ ಏನು, ಇತ್ಯಾದಿ ಇತ್ಯಾದಿ...ಪುಂಖಾನುಪುಂಕ ಪ್ರಶ್ನೆಗಳು ಶುರುವಷ್ಟೇ ಇದು.

ಇದೇ ದಿನ ಮಧ್ಯಾಹ್ನ ಟೆಕ್ಸಾಸ್‌ ಮೂಲದ ಬಿಸಿನೆಸ್ಸ್ ಅನ್ನು ನಮ್ಮ ಕಂಪನಿಗೆ ಪರಿಚಯಿಸಲು ವಿಸಿಟರ್ರ್ ಒಬ್ಬರು ಬಂದಿದ್ದರು. ಅವರು ಭಾರತೀಯ ಮೂಲದವರು ಎಂದು ತಿಳಿದು ಆಶ್ಚರ್ಯದ ಜೊತೆ ಸಂತೋಷವೂ ಆಯಿತು. ಗಂಡ-ಹೆಂಡತಿ ಇಬ್ಬರು ಸೇರಿ ಅಮೇರಿಕದಲ್ಲಿ ಒಂದು ಕನ್ಸಲ್‌‍ಟಿಂಗ್ ಕಂಪನಿಯನ್ನು ತೆರೆದಿದ್ದಾರೆ, ಅದರ ಮಾರ್ಕೆಟಿಂಗ್‌ನಿಂದ ಹಿಡಿದು ಎಲ್ಲ ವಿಷಯವನ್ನೂ ಗಂಡ-ಹೆಂಡತಿಯೇ ನೋಡಿಕೊಳ್ಳುತ್ತಾರೆ ಎಂದು ತಿಳಿದು ಆಶ್ಚರ್ಯವಾಯಿತು. ೨೦೦೬ ರಲ್ಲಿ ಕೆಲಸ ಕಳೆದುಕೊಂಡ ಅವರು ಒಂದು ಹೊಸ ಕಂಪನಿಯನ್ನು ಹುಟ್ಟುಹಾಕಿ ಒಂದು ಮಟ್ಟಕ್ಕೆ ಬೆಳೆಸಿದ್ದು ಈ ಎಕಾನಮಿಯಲ್ಲಿ ಗಮನಾರ್ಹವೇ.

ಹೀಗೆ ಅಲ್ಲಲ್ಲಿ ಹಲವಾರು ಯಶಸ್ಸಿನ ಹಾಗೂ ಫೇಲಾದ ಉದ್ಯಮಗಳು ಕೇಳಿಬರುವುದು ಸಹಜ, ಆದರೆ ನನ್ನ ಮನಸ್ಸು ಮಾತ್ರ ಪೇ-ಚೆಕ್ ನಿಂದ ಪೇ-ಚೆಕ್‌ಗೆ ಅಂಟಿಕೊಂಡು ಬಿಟ್ಟಿದೆ. ರಿಸ್ಕ್ ತೆಗೆದುಕೊಳ್ಳುವುದಿರಲಿ, ಅದರ ಬಗ್ಗೆ ಯೋಚಿಸುವುದಕ್ಕೂ ಪುರುಸೊತ್ತು ಇಲ್ಲ ಎನ್ನುವಂತಾಗಿದೆ.

ನಿಮ್ಮ ನಿಮ್ಮ ಪರಿಸ್ಥಿತಿ ಏನು? ನೀವು ನಿಮ್ಮದೇ ಬಿಸಿನೆಸ್ಸ್ ಆರಂಭಿಸಿದ್ದೀರೋ ಅಥವಾ ಬೇರೆಯವರ ಬಿಸಿನೆಸ್ಸಿನಲ್ಲಿ ಒಂದಾಗಿ ಹೋಗಿದ್ದೀರೋ?

Sunday, November 01, 2009

ಅದುಮಿಕೊಂಡ ಆಸೆ-ಆತಂಕ

B&H ಪ್ರೊಫೆಷನಲ್ ಕ್ಯಾಟಲಾಗ್ ಇಟ್ಟುಕೊಂಡು ಒಂದೊಂದೇ ಕೆಟಗರಿಯನ್ನು ನೋಡುತ್ತಾ ಇದ್ದಂತೆಲ್ಲಾ ಏನೇನ್ನನ್ನೆಲ್ಲ ಮಾಡಬಹುದು ಮಾಡಬಹುದಿತ್ತು ಎನ್ನಿಸಿತು. ಪ್ರೊಫೆಷನ್ ಆಡಿಯೋ, ವಿಡಿಯೋ, ಆಪ್ಟಿಕಲ್, ಕಂಪ್ಯೂಟರ್, ಸ್ಟೋರೇಜ್, ಕ್ಯಾಮೆರಾ...ಹೀಗೆ ವಿಧ ವಿಧವಾದ ವಸ್ತುಗಳನ್ನೆಲ್ಲ ನೋಡುತ್ತಿದ್ದ ಹಾಗೆ, ಅಯ್ಯೋ ಅದನ್ನು ಮಾಡಬಹುದಿತ್ತು, ಇದನ್ನು ಮಾಡಬಹುದಿತ್ತು...ಎನ್ನಬಹುದಾದ ಆಸೆಗಳೆಲ್ಲವೂ ಅದೆಲ್ಲೋ ಅದುಮಿಟ್ಟು ಹೊರಗೆ ಬಿಟ್ಟ ಸ್ಪ್ರಿಂಗಿನಂತೆ ತಮ್ಮೊಳಗಿನ ಪ್ರಚನ್ನ ಶಕ್ತಿಯನ್ನು ತೋರ್ಪಡಿಸತೊಡಗಿದವು.

ಟರ್ಮಿನಲ್ ಕಾಯಿಲೆಗೊಳಗಾದ ಕ್ಯಾನ್ಸರ್ ರೋಗಿಯ ಮನದಾಳದ ಆಸೆಗಳಂತಲ್ಲದಿದ್ದರೂ ಪ್ರತಿಯೊಬ್ಬರಿಗೂ ಅವರವರೊಳಗೆ ಮೂಲೆಗುಂಪು ಮಾಡಿದ ಅದೆಷ್ಟೋ ಮನದಾಳದ ಆಮಿಷಗಳಿದ್ದಾವು: ಅದು ಫೋಟೋ ತೆಗೆಯುವ ಹವ್ಯಾಸವಾಗಿರಬಹುದು, ಚಿತ್ರಕಲೆಯಾಗಿರಬಹುದು, ಸಂಗೀತದ ಸಾಧನೆಯ ವಿಷಯವಾಗಿರಬಹುದು, ಪುಸ್ತಕ ಬರೆದು ಪ್ರಕಟಿಸುವ ಹುನ್ನಾರವಿರಬಹುದು, ನಾಟಕ-ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಇರಬಹುದು, ಮ್ಯಾರಥಾನ ಓಡುವ ಕನಸಿರಬಹುದು, ದೊಡ್ಡ ಉದ್ಯಮಿಯಾಗುವ ಬಯಕೆ ಇರಬಹುದು, ಅಥವಾ ಊರಿನ ಪಂಚಾಯತಿಯ ಮುಖಂಡನೋ ದೊಡ್ಡ ರಾಜಕೀಯ ವ್ಯಕ್ತಿಯೋ...ಇನ್ನೂ ಏನೇನೋ ಕನಸುಗಳಿರಬಹುದು.

ನಮಗೆಲ್ಲ ಹೀಗೆ ಒಂದೊಂದು ಸಾಫ್ಟ್ ಕಾರ್ನರ್ ಇದೆ, ನಮ್ಮ ದಿನನಿತ್ಯದ ಗೊಂದಲವನ್ನು ಬದಿಗಿಟ್ಟು ಯಾವುದಾದರೊಂದು ರಿಸಾರ್ಟ್‌ನ ಹಾಸುಗಲ್ಲಿನ ಮೇಲೆ (ಅಥವಾ ಬೆಂಚ್‌ನ ಮೇಲೆ) ಮಲಗಿ ಅಗಾಧವಾದ ಮುಗಿಲನ್ನು ನೋಡುತ್ತಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾ ಇದ್ದರೆ ಒಂದು ದಿನವೋ ಅಥವಾ ಒಂದು ವಾರದ ನಂತರವಾದರೂ ಹೀಗೆ ಮಾಡಬೇಕು ಅಥವಾ ಮಾಡಬಹುದಿತ್ತು ಎನ್ನುವ ಅನೇಕಾನೇಕ ಯೋಚನೆಗಳು ಖಂಡಿತ ಬಂದೇ ಬರುತ್ತವೆ. ಆಂತೊನಿ ಬೋರ್ಡೇನ್‌ನ ಟ್ರಾವೆಲ್ ಅನುಭವದ ಬಗ್ಗೆ ಬರೆಯುತ್ತಾ ಮರಳುಗಾಡು ನಮಗೆ ಹೇಗೆ ಅತಿ ಅಗತ್ಯವಾದ ಧ್ಯಾನಕ್ಕೆ ತಕ್ಕುನಾದ ನಿಶ್ಯಬ್ದವಾದ ಒಂದು ನೆಲೆಯನ್ನು ಒದಗಿಸುವ ಬಗ್ಗೆ ಬರೆದಿದ್ದೆ. ಒಂದಲ್ಲ ಒಂದು ದಿನ ನಮ್ಮ ನಮ್ಮ ಮನಸ್ಥಿತಿಯನ್ನು ಇಂತಹ ಒಂದು ಸೈಲೆನ್ಸ್‌ಗೆ ಗುರಿಮಾಡಿ ಅದರಿಂದ ಏನು ಹೊರಬಂದೀತು ಎಂದು ಕಾದು ನೋಡುವುದು ಒಳ್ಳೆಯ ಅನುಭವವಾದೀತು.

ನನ್ನ ಹತೋಟಿಯಲ್ಲಿದ್ದ ಒಂದು ಘಂಟೆಯ ಸಮಯದಲ್ಲಿ ಸುಮಾರು ಐನೂರು ಪುಟಗಳ ಕ್ಯಾಟಲಾಗ್ ಅನ್ನು ಸೆಕ್ಷನ್ನ್‌ ನಿಂದ ಸೆಕ್ಷನ್ನ್‌ಗೆ ತಿರುವಿ ಹಾಕಿದ್ದೇ ಬಂತು: ಅದರ ಪರಿಣಾಮವಾಗಿ ನನ್ನ ಕನಸಿನ ರೆಕಾರ್ಡಿಂಗ್ ಸ್ಟುಡಿಯೋಗೆ ಬೇಕಾದ ಪರಿಕರಗಳು ಕಂಡು ಬಂದವು, ಹೆಚ್ಚಿನ ಎಕ್ಸ್‌ಟರ್ನಲ್ ಕಂಪ್ಯೂಟರ್ ಸ್ಟೋರೇಜ್ ಕಾಣಿಸಿತು, ಹಗಲು-ರಾತ್ರಿ ನೋಡಬಹುದಾದ ಬೈನಾಕ್ಯುಲರ್ ಮನದಲ್ಲಿ ಒಂದು ಕ್ಷಣ ನಿಂತಿತು, ಎಲ್ಲಾ ಮ್ಯೂಸಿಕ್ ಚಾನೆಲ್ಲಿನ ಲವಲೇಶಗಳನ್ನೂ ಬಿಡಿಬಿಡಿಯಾಗಿ ಹೊರಗೆ ಹಾಕುವ ಸುಂದರ ಹೋಮ್ ಥಿಯೇಟರ್ ಸಿಸ್ಟಮ್ಮ್‌ಗಳು ಕಂಡು ಬಂದವು, ನೂರೈವತ್ತು-ಇನ್ನೂರು ವ್ಯಾಟ್ ಪವರ್ ಇರುವ ಸ್ಪೀಕರುಗಳು ಕಂಡುಬಂದವು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು.

ಇನ್ನು ಈ ಎಕ್ಸ್‌ಪ್ಲೋರೇಷನ್ನಿನ್ನ ಮುಂದುವರಿದ ಭಾಗವಾಗಿ ಒಂದೆರಡು ಅಂಶಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ರಿಸರ್ಚ್ ಮಾಡಿದ್ದೂ ಆಯಿತು...ಒಂದು ಘಂಟೆಯ ನಂತರ ಪ್ರಚನ್ನ ಶಕ್ತಿಯ ಬಲದಿಂದಾಗಿ ಚಿಮ್ಮಿದ ಆಸೆ-ಆಕಾಂಕ್ಷೆಗಳು ಮತ್ತೆ ಗೂಡು ಸೇರಿಕೊಂಡವು. ಅದು ಮಾಡಬಹುದು-ಇದು ಮಾಡಬಹುದು ಎನ್ನುವ ಹೇಳಿಕೆಯ ಮೊದಲೇ ಅದು ಮಾಡಬೇಕು-ಇದು ಮಾಡಬೇಕು (ಭಾನುವಾರ ಮುಗಿಯುವುದರೊಳಗೆ) ಎನ್ನುವುದು ಬಲವಾಗತೊಡಗಿತು.

***
ಇಲ್ಲಿನ ಕಿರಾಣಿ ಅಂಗಡಿಯಲ್ಲಿ ನೋಡಿ-ಕೇಳಿದ್ದು: ಮಧ್ಯಮ ವಯಸ್ಸಿನ ಕಕೇಷಿಯನ್ ದಂಪತಿಗಳಿಬ್ಬರು ಅಂಗಡಿಯಲ್ಲಿ ಮಾರಟಕ್ಕೆ ಇಟ್ಟ ರಕ್ಕಸಕಳ್ಳಿಯನ್ನು (Aloe-vera) ನೋಡಿ:
"ಇದನ್ನು ಏತಕ್ಕೆ ಮತ್ತು ಹೇಗೆ ಬಳಸುತ್ತಾರೆಂದು ನಿನಗೆ ಗೊತ್ತೇನು?"
"ಇಲ್ಲ..."
"May be we will give it a shot in our next life..."

***
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು!

Wednesday, October 28, 2009

ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ರೇಡಿಯೋ ನ್ಯೂಸ್ ಆಗ್ಲಿ ಅಥವಾ ಬಿಸಿನೆಸ್ ನ್ಯೂಸ್‌ಗಳನ್ನ ಕೇಳ್ತಾ ಹೋದ್ರೆ, ಅಲ್ಲಿ-ಇಲ್ಲಿ ಓದ್ತಾ ಇದ್ರೆ ತುಂಬಾ ತಲೆ ತಿಂತಾರೆ ಅನ್ಸಿದ್ದು ಇತ್ತೀಚೆಗೆ. ಬಹಳಷ್ಟು ಇನ್‌ಫರ್‌ಮೇಷನ್ ಓವರ್‌ಲೋಡ್, ಜೊತೆಗೆ ಸಾವಿರಾರು ಅನಾಲಿಸಿಸ್ಸುಗಳು ರಿಪೋರ್ಟುಗಳು ಇತ್ಯಾದಿ. ಅಬ್ಬಾ, ಸಾಕಪ್ಪಾ ಸಾಕು ಅನ್ಸೋ ಮಟ್ಟಿಗೆ ಒಮ್ಮೊಮ್ಮೆ.

ಯಾವ್ದೇ ಬಿಸಿನೆಸ್ ಚಾನೆಲ್ಲನ್ನ ಹಾಕಿ ನೋಡಿ ಅಲ್ಲಿನ ರಿಪೋರ್ಟರುಗಳು, ಮಾಡರೇಟರುಗಳು ಎಲ್ಲರೂ ತಾರಕ ಸ್ವರದಲ್ಲಿ ಕಿರುಚಿಕೊಳ್ತಾರೇನೋ ಅನ್ನೋ ಮಟ್ಟಿಗೆ ಉದ್ರಿಕ್ತರಾಗಿರ್ತಾರೆ. ಜೊತೆಗೆ ಉನ್ನತ ತಂತ್ರಜ್ಞಾನದ ಸಹಾಯದಿಂದ ಟಿವಿ ಸ್ಕ್ರೀನಿನ ತುಂಬಾ ಎಷ್ಟೊಂದು ಬಾರ್ಕರ್ ಮೆಸ್ಸೇಜುಗಳು, ವಿಡಿಯೋಗಳಲ್ಲೇ ವಿಡಿಯೋಗಳು, ಬ್ಯಾನರುಗಳು, ಗ್ರಾಫ್, ನಂಬರುಗಳು, ಹಲವಾರು ಕಮಾಡಿಟಿಗಳು ಅವುಗಳ ಬೆಲೆಯಲ್ಲಿನ ನಿರಂತರ ಬದಲಾವಣೆಯನ್ನು ನಿಖರವಾಗಿ ತೋರಿಸಿ ಅಳೆಯೋ ಸೂಚಕಗಳು, ಹೀಗೆ ಹಲವಾರು ರೀತಿಯ "ಕಣ್ಸೆಳೆಯುವ" ವಿಧಿವಿಧಾನಗಳು.

ಟಿವಿ ಸ್ಟೇಷನ್ನುಗಳಿಗೆ ಒಮ್ಮೆ ಅಲ್ಲಿಗೆ ಬಂದ ವೀಕ್ಷಕರನ್ನು ಕಟ್ಟಿ ಹಾಕುವ ಚಿಂತೆ. ರಿಪೋರ್ಟರುಗಳಿಗೆ ತಮ್ಮ ಅನಾಲಿಸಿಸ್ಸೇ ದೊಡ್ಡದು ಎಂದು ತೋರಿಸಿಕೊಳ್ಳುವ ಹಂಬಲ. ಜೊತೆಗೆ ಅವರು ತೋರಿಸೋ ಸಂದೇಶಗಳ ಹಿಂದೆ ಸ್ಮಾಲ್ ಪ್ರಿಂಟು. "ನಾವು ನಾಳೆಯನ್ನು ಕಂಡಿಲ್ಲ" ಎನ್ನುವ ಸೂಚನೆಯ ಜೊತೆಗೇ "ನಮ್ಮ ಚಿಂತನೆ ನಾಳೆಯ ಪ್ರತಿರೂಪ" ಎನ್ನುವ ಅಹವಾಲು! ಈ ಅಹವಾಲು, ಕೋರಿಕೆ, ಸಂದೇಶ, ಚಿಂತನೆ ಇವೆಲ್ಲ ನೋಡುಗರ ಮುಂದೆ ದೊಡ್ಡ ಜನರ ಸಂತೆಯಂತೆ ಕಂಡೂ ಅವುಗಳಲ್ಲಿ ಕೆಲವೇ ಕೆಲವು ಒಬ್ಬೊಬ್ಬರಿಗೆ ಲಾಂಗ್‌ಟರ್ಮ್ ಇಂಡಿಕೇಟರ್ ಆಗಬಲ್ಲ ಹುನ್ನಾರ ಅಷ್ಟೇ, ಅದೂ ಏಕೆ - ತೋರಿಸಿದ್ದನ್ನೇ ತೋರಿಸ್ತಾ ಇದ್ರೆ ಇವತ್ತಲ್ಲ ನಾಳೆ ಜನಗಳು ನಂಬಿಯಾರು ಎನ್ನುವ ದೂರಾಲೋಚನೆ.

ಇವುಗಳ ಮಧ್ಯೆ ಹೇಗೆ ಬದುಕೋದು. ಎಲ್ಲದರ ಹತ್ತಿರ ಇದ್ದೂ ದೂರ ಹೇಗೆ ಇರೋದು? ಯಾವೊಂದು ಮಾಧ್ಯಮಕ್ಕೆ ಅಂಟಿಕೊಳ್ಳದೇ ನಮ್ಮ ನಮ್ಮ ರಿಟೈರ್‌ಮೆಂಟ್ ಆಗಲಿ ಹಣಕಾಸಿನ ವಿಚಾರಗಳಲ್ಲಿ ಹುಷಾರಾಗಿರೋದು ಹೇಗೆ? ಯಾರನ್ನ ನಂಬೋದು ಯಾರನ್ನ ಬಿಡೋದು? ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ಈ ಅನುಭವಗಳ ಮಿತಿಯ ಬಗ್ಗೆ ಹಿಂದೆ ಬರೆದಿದ್ದೆ - ಊರು ಕೊಳ್ಳೆ ಹೊಡೆದ ಮೇಲೆ ದೊಡ್ಡಿ ಬಾಗಿಲು ಮುಚ್ಚಿದ್ರಂತೆ ಹಾಗಾಯ್ತು. ಕಳೆದ ಎರಡು ವರ್ಷಗಳಲ್ಲಿ ಮಾರ್ಕೆಟ್ಟಿನಲ್ಲಿ ಹಣ ಕಳೆದುಕೊಂಡವರ ಸಂಖ್ಯೆ ಹೆಚ್ಚು, ಈಗ ಹಿಂತಿರುಗಿ ನೋಡಿದ್ರೆ ’ಅಯ್ಯೋ, ನಮಗೇಕೆ ಈ ವಿಷಯ ಹೊಳೆದಿರಲಿಲ್ಲ!’ ಅನ್ಸತ್ತೆ. ಹಣ ಕಳೆದುಕೊಂಡು ಚೆನ್ನಾಗಿ ಪಾಠ ಕಲಿತ ಮೇಲೆ, ಅದನ್ನು ಇಂಪ್ಲಿಮೆಂಟ್ ಮಾಡೋವಾಗ ಇನ್ನೊಂದು ಹತ್ತು ವರ್ಷ ಹಿಡಿಯುತ್ತೆ, ಅಷ್ಟರೊಳಗೆ ಮತ್ತೊಂದು ಏರಿಳಿತದ ಸೈಕಲ್ಲ್ ಬಂದಿರುತ್ತೆ. ಹೀಗೆ ಕಲಿತ ಪಾಠ ಹಳೆಯದಾಗುತ್ತಲೇ ಇರುತ್ತೆ.

ನೀವೆಲ್ಲ ಯಾವ ಯಾವ ಮಾಧ್ಯಮಗಳಿಗೆ ಗಂಟು ಬಿದ್ದುಕೊಂಡಿದ್ದೀರಿ? ನಿಮಗೆ ಯಾವ ಮಾಹಿತಿ ಯಾವ ರೂಪದಲ್ಲಿ ಯಾವುದರಿಂದ ದೊರಕುತ್ತೆ? ಅಥವಾ ನೀವೆಲ್ಲರೂ ನನ್ನ ಹಾಗೆ ಓವರ್‌ಲೋಡ್‌ನಿಂದ ಒತ್ತಡದಲ್ಲಿ ಸಿಲುಕಿಕೊಂಡಿದ್ದೀರೋ?

Thursday, October 01, 2009

ಕ್ರಿಕೆಟ್ ಕ್ಯಾಪ್ಟನ್ ಕಲಿತ ಪಾಠ

ಒಮ್ಮೆ ನಮ್ಮ ಹೈ ಸ್ಕೂಲು ವಿದ್ಯಾರ್ಥಿಗಳಲ್ಲೇ ಎರಡು ತಂಡಗಳನ್ನು ಮಾಡಿ ಒಂದು ಕ್ರಿಕೆಟ್ ಮ್ಯಾಚ್ ನಡೆಸುವ ಇರಾದೆ ನಮ್ಮ ಪಿ.ಇ. ಮೇಷ್ಟ್ರಿಗೆ ಇದ್ದಿತ್ತು. ಕ್ರಿಕೆಟ್ ಟೀಮಿನ ಮುಖ್ಯಸ್ಥನಾಗಿ ಆ ಜವಾಬ್ದಾರಿ ನನಗೇ ಬಂತು. ಆಸಕ್ತಿ ಇದ್ದ ಸಹಪಾಠಿಗಳನ್ನು ಸೇರಿಸಿಕೊಂಡು, ಅವರೆಲ್ಲರಿಂದ ಒಂದೊಂದು ರುಪಾಯಿ ಶುಲ್ಕ ವಸೂಲು ಮಾಡಿಕೊಂಡು ಕೊನೆಗೆ ಎರಡು ತಂಡಗಳನ್ನಾಗಿ ಮಾಡುವಾಗ ಆ ವಯಸ್ಸಿಗೆ ಅದು ದೊಡ್ಡ ಕೆಲಸವಾಗಿರಬೇಕು. ಈ ಎರಡು ತಂಡಗಳಲ್ಲಿ ಒಂದಕ್ಕೆ ನಾನು ಕ್ಯಾಪ್ಟನ್, ಮತ್ತೊಂದಕ್ಕೆ ನನ್ನ ಸಹಪಾಠಿಯೊಬ್ಬ. ಕೊನೆಯಲ್ಲಿ ಮ್ಯಾಚ್ ದಿನ ಹತ್ತಿರ ಬಂದಾಗ ಅದೂ ನಮ್ಮ ತಂಡ ಫೀಲ್ಡಿಂಗ್ ಮಾಡುತ್ತಿದ್ದ ಸಮಯದಲ್ಲಿ ಅಂಪೈರ್ ಒಂದು ಫೌಲ್ ಕಾಲ್ ಕೊಟ್ಟರು. ಆ ಸಮಯದಲ್ಲಿ ಎಣಿಸಲಾಗಿ ಫೀಲ್ಡಿಂಗ್ ಮಾಡುತ್ತಿದ್ದವರಲ್ಲಿ ಬೌಲರ್ ಕೀಪರ್ ಎಲ್ಲರನ್ನೂ ಸೇರಿಸಿಕೊಂಡು ಹದಿನಾಲ್ಕು ಜನ ಫೀಲ್ಡಿಂಗ್ ಮಾಡುತ್ತಿದ್ದೆವು, ಆದರೆ ನಿಯಮದ ಪ್ರಕಾರ ಹನ್ನೊಂದು ಜನ ಮಾತ್ರ ಫೀಲ್ಡಿಂಗ್ ಮಾಡಬೇಕಿತ್ತು.

ಆಗ ಅದು ದೊಡ್ಡ ಪ್ರಮಾದ, ಮ್ಯಾಚ್ ಸಂಬಂಧ ಅದಕ್ಕೆ ತಕ್ಕ ಬೆಲೆಯನ್ನು ನಾನು ತೆರಬೇಕಾಯ್ತು, ಜೊತೆಗೆ ನನ್ನ ಸಹಪಾಠಿಗಳ ಎದುರಿಗೆ ಹಾಗೆ ಅವರ ಎದುರಲ್ಲಿ ತಂಡವನ್ನು ಸರಿಯಾಗಿ ಮ್ಯಾನೇಜ್ ಮಾಡದಿದ್ದುದಕ್ಕೆ ಅಪಹಾಸ್ಯಕ್ಕೂ ಗುರಿಯಾಗಬೇಕಾಗಿ ಬಂತು. ನಾವೆಲ್ಲ ಇಲ್ಲಿಗೆ ಬಂದು ಕನ್ನಡ ಟಿವಿ ಸೀರಿಯಲ್ಲ್ ನಲ್ಲಿ ನೋಡಿದ ಹಾಗೆ ಅಲ್ಲಿನವರಿಗೆ (ಅಂದರೆ ಭಾರತದಲ್ಲಿ) ಈತರಹದ ಸಣ್ಣ-ಪುಟ್ಟ ಘಟನೆಗಳು ಬಹಳ ದೊಡ್ಡವಾಗಿ ಹೋಗುತ್ತವೆ, ಸಹಪಾಠಿಗಳೊಡನೆ, ನೆರೆಹೊರೆಯವರೊಂದಿಗೆ ಮಾನ-ಮರ್ಯಾದೆಯ ಪ್ರಶ್ನೆಯಾಗಿ ಬಿಡುತ್ತದೆ. ನನಗೂ ಅಂದು ಹಾಗಿದ್ದರಿಂದಲೇ ಎರಡು ದಶಕಗಳ ನಂತರ ಇವತ್ತಿಗೂ ಅದು ನನ್ನ ಸ್ಮರಣಪಠಲದಲ್ಲಿರೋದು ಅಂದರೆ ತಪ್ಪೇನಿಲ್ಲ.

ಆದದ್ದಿಷ್ಟೇ: ಯಾರು ಯಾರು ಕ್ರಿಕೇಟ್ ತಂಡಕ್ಕೆ ಸೇರಿಕೊಳ್ಳಬೇಕು ಎಂದುಕೊಂಡಿದ್ದರೋ ಅವರೆಲ್ಲ ಒಂದೊಂದು ರುಪಾಯಿ ಸಲ್ಲಿಸಿ ತಮ್ಮ ಹೆಸರನ್ನು ನನ್ನ ಬಳಿ ಬರೆಸಿಕೊಂಡಿದ್ದರು. ಟೀಮಿಗೆ ಹನ್ನೊಂದು ಜನ, ಒಂದಿಬ್ಬರು ಬ್ಯಾಕ್‌ಅಪ್ ಜನರನ್ನು ಬಿಟ್ಟರೆ ಉಳಿದವರಿಗೆ ಆಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇರುವಾಗ ಉತ್ಸಾಹಿ ಸಹಪಾಠಿಗಳ ಪಟ್ಟಿಯನ್ನು ಕಂಟ್ರೋಲ್ ಮಾಡಿ ಅವರೆಲ್ಲರಿಗೂ ಇತಿ-ಮಿತಿ ಹಾಗೂ ಅವರು ಆಟದಲ್ಲಿ ಆಡುವ ಅವಕಾಶ ಹಾಗೂ ನಾವು ಗೆಲ್ಲುವ ಸಾಧ್ಯತೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿತ್ತು. ಜೊತೆಗೆ ಅಗತ್ಯಕ್ಕಿಂತ ಹೆಚ್ಚಿನ ಜನ ಆಸಕ್ತಿ ತೋರಿಸಿದಾಗ ಯಾರು ಯಾರು ತಂಡಲಿದ್ದಾರೆ, ಯಾರಿಲ್ಲ ಎನ್ನುವುದನ್ನು ಸರಿಯಾಗಿ ಬಿಡಿಸಿ ಹೇಳಬೇಕಾಗಿತ್ತು ಹಾಗೂ ಟೀಮುಗಳಲ್ಲಿ ಸೆಲೆಕ್ಟ್ ಆಗದವರ ಹಣವನ್ನು ಹಿಂತಿರುಗಿಸಿ ಕೊಡಬೇಕಾಗಿತ್ತು. ಇದೆಲ್ಲವನ್ನು ನಾನು ಮಾಡಬೇಕಿತ್ತೋ, ನಮ್ಮ ಮೇಷ್ಟ್ರು ಮಾಡಬೇಕಿತ್ತೋ ಅನ್ನುವುದು ಅಷ್ಟೊಂದು ಸರಿಯಾಗಿ ನೆನಪಿಲ್ಲ. ಆದರೆ ಇವೆಲ್ಲಕ್ಕೂ ನನ್ನ ಹೊಣೆಗಾರಿಕೆಯನ್ನು ಗುರುತಿಸಿಕೊಂಡು ಅಂದು ಕಲಿತದ್ದನ್ನು ನಾನು ಯಾವತ್ತೂ ಮರೆಯಲಾರದ ಪಾಠ ಎಂದೇ ನಾನು ಈ ಘಟನೆಯನ್ನು ಗುರುತಿಸಿಕೊಳ್ಳೋದು.

ಈಗ ನನಗಿರುವ ಕೆಲಸದ ಚೌಕಟ್ಟಿನಲ್ಲಿ ಪ್ರತಿದಿನವೂ ಮಾತನಾಡುತ್ತೇವೆ - ಅವೇ ರೆಸ್ಪಾನ್ಸಿಬಿಲಿಟಿ, ಅಕೌಂಟೆಬಿಲಿಟಿ, ಲೀಡರ್‌ಶಿಪ್, ಇನಿಷಿಯೇಟಿವ್ - ಮೊದಲಾದ ಪದಗಳು ಪುಂಖಾನುಪುಂಖವಾಗಿ ಬಳಕೆಯಾಗುತ್ತವೆ. ಒಂದು ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುವಾಗ ಒಂದು ಸಂಸ್ಕೃತಿಯ ಚೌಕಟ್ಟಿನಲ್ಲಿ ದುಡಿಯುವಾಗ ನಾವು ಅಂದುಕೊಂಡಂತೆ ಮಾಡುವುದಕ್ಕಿಂತ ಇತರರ ಗವರ್ನೆನ್ಸ್‌ಗೆ ನಮ್ಮನ್ನು ಒಳಪಡಿಸಿಕೊಳ್ಳುತ್ತೇವೆ. ಈ ವಿಚಾರಗಳನ್ನು ನಾವು ನಮ್ಮ ಮುಖ್ಯ ಕೆಲಸಕ್ಕೂ ಹಾಗೂ ವಾಲೆಂಟಿಯರ್ ಆಗಿ ಮಾಡುವ ಕೆಲಸಗಳಿಗೂ ಅನ್ವಯಿಸಬಹುದು. ಉದಾಹರಣೆಗೆ ಯಾವುದೋ ಒಂದು ಕಮಿಟಿಯನ್ನು ಹುಟ್ಟು ಹಾಕಬೇಕಾಗಿ ಬಂದಿದೆಯೆಂದುಕೊಳ್ಳಿ, ಯಾರನ್ನು ಆಯ್ದುಕೊಳ್ಳುತ್ತೀರಿ, ಮತ್ತು ಏಕೆ? ಹೀಗಿರುವ ಆಯ್ಕೆಯ ಹಿಂದಿರುವ ರೂಪುರೇಶೆಗಳೇನು? ಯಾವ ನಿಯಮಗಳ ಅಡಿಯಲ್ಲಿ ಇವು ನಡೆಯುತ್ತವೆ? ಯಾವುದಾದರೂ ಇನ್‌ಫ್ಲುಯೆನ್ಸ್‌ಗೆ ಒಳಗಾಗುತ್ತೀರೋ, ಅಥವಾ ಅವುಗಳಿಂದ ಹೇಗೆ ದೂರವಿರಲು ಪ್ರಯತ್ನಿಸುತ್ತೀರಿ? ನಿಮ್ಮಲ್ಲೇ ಮನೆ ಮಾಡಿಕೊಂಡಿರುವ ಸ್ಟೀರಿಯೋಟೈಪ್‌ಗಳು ನೀವು ಕೈಗೊಂಡ ನಿರ್ಧಾರಗಳ ಮೇಲೆ ಯಾವ ಪರಿಣಾಮ ಬೀರುತ್ತವೆ? ಇತ್ಯಾದಿ.

ನಾವು ಅಂದು ಬಡ ಹೈ ಸ್ಕೂಲುಗಳಲ್ಲಿ ಓದುತ್ತಿದ್ದೆವು, ಸಾರ್ವಜನಿಕ ಹೈ ಸ್ಕೂಲುಗಳ ಪರಿಸ್ಥಿತಿಯಲ್ಲಿ ಎಲ್ಲ ರೀತಿಯ ಸಂಪನ್ಮೂಲಗಳಿಗೂ ಕೊರತೆ ಇತ್ತು. ಅಂದು ಯಾರಾದರೊಬ್ಬರು ತಂಡವನ್ನು ನಿರ್ಮಿಸುವ ಸೂಕ್ಷತೆಗಳ ಬಗ್ಗೆ ತಿಳಿಸಿ ಹೇಳಿದ್ದರೆ ಅಥವಾ ನಾನು ಹೈ ಸ್ಕೂಲು ಕ್ರಿಕೆಟ್ ತಂಡ ಸದಸ್ಯರನ್ನು ಗುರುತಿಸಿ ಆಯ್ಕೆ ಮಾಡುವಾಗ ಮಾರ್ಗದರ್ಶನ ನೀಡಿದ್ದರೆ...ಹೀಗೆ ಅನೇಕ ’ರೆ’ಗಳನ್ನು ಇಂದು ಯೋಚಿಸಿಕೊಂಡು ನಗು ಬರುತ್ತದೆ. ಒಂದಂತೂ ನಿಜ, ಲೀಡರ್‌ಶಿಪ್, ಮ್ಯಾನೇಜ್‌ಮೆಂಟ್, ಆರ್ಗನೈಜೇಶನ್ ಮೊದಲಾದ ಸಮೂಹ ಸಂಬಂಧಿ ಪ್ರಕ್ರಿಯೆಗಳು ಅಮೇರಿಕಕ್ಕೆ ಮಾತ್ರ ಸೀಮಿತವಾಗಿಲ್ಲ ಅಲ್ಲದೇ ಅವು ಸಂಪನ್ಮೂಲಗಳು ಇದ್ದಲ್ಲಿ ಮಾತ್ರ ಹುಟ್ಟಿ ಬೆಳೆಯಬೇಕೆಂದೇನೂ ಇಲ್ಲ. ಎಲ್ಲರಿಗೂ ಅವರ ಜೀವನಕ್ರಮಕ್ಕನುಸಾರವಾಗಿ ಅವರ ಸವಾಲುಗಳನ್ನು ಸಿಕ್ಕೇ ಸಿಗುತ್ತವೆ, ಅವುಗಳನ್ನು ಹೇಗೆ ನಿಭಾಯಿಸಬಲ್ಲೆವು ಎಂಬುದರ ಹಾಸುಹೊಕ್ಕಾಗಿ ಇರುವುದೇ ಅವರವರ ಶಕ್ತಿ. ನಮಗೆ ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನೇ ನಾವು ಅವಲೋಕಿಸುತ್ತಾ ಬಂದರೆ ಒಂದು ನಿರ್ಣಯವನ್ನು ಅನೇಕ ಮಜಲುಗಳಲ್ಲಿ ಹೇಗೆ ನೋಡಬಹುದೋ ಹಾಗೇ ನಮಗೆ ವಹಿಸಿದ ಕೆಲಸಗಳ ಫಲಿತಾಂಶ ಕೂಡಾ.

ಪ್ರಾಕ್ಟಿಕಲ್ಲಾಗಿ ಆಲೋಚಿಸಬೇಕು ಮತ್ತು ಹಾಗೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಒಂದು ಕಡೆ, ಅದಕ್ಕೆ ವಿರುದ್ಧವಾಗಿ ಎಮೋಷನಲ್ಲಾಗಿ ಯೋಚಿಸಿ ಇನ್ಯಾವುದೋ ಮಾನದಂಡಗಳಿಗೆ ಒಳಪಟ್ಟೋ ಪಡೆದೆಯೋ ನಾವು ನಡೆಸಿಕೊಂಡು ಬರುವ ಕೆಲಸ ಕಾರ್ಯಗಳು ಹಾಗೂ ಅವುಗಳ ದೂರದ ಪರಿಣಾಮಗಳು ಮತ್ತೊಂದು ಕಡೆ.

Tuesday, September 29, 2009

(ಕುರುಚಲು ಗಡ್ಡ, ಓಡುವ ಮೋಡ ಹಾಗೂ) ಆಲೋಚನೆಗಳು

ಈ ಆಲೋಚನೆಗಳೇ ಹಾಗೆ ಕೆಲವೊಮ್ಮೆ ತಂಡೋಪತಂಡವಾಗಿ ಸರಣಿಗಳಲ್ಲಿ ಬಂದು ಮುತ್ತಿಗೆ ಹಾಕಿ ಬಿಡುತ್ತವೆ, ತಿಳಿಯಾದ ಕೊಳವನ್ನು ಕಲಕಿ ರಾಡಿಯನ್ನು ಮೆಲಕೆತ್ತಿದ ಹಾಗೆ ಹಳೆಯದೆಲ್ಲ ಮೇಲಕ್ಕೆದ್ದು ಕೇಂದ್ರೀಕೃತ ಅಲೆಗಳ ಹಿಂಡು ದಡವನ್ನು ಅಪ್ಪಳಿಸುವಂತೆ ಕಣ್ಣು ಮುಚ್ಚಿ ಬಿಡುವುದರೊಳಗೆ ಏನೇನೋ ಅಗಿ ಹೋಗುತ್ತದೆ. ಈ ಮನಸೆಂಬ ಮರ್ಕಟ ಹಾರಿ ಬಂದ ಮರಗಳ ರೆಂಬೆ-ಕೊಂಬೆಗಳಿಗೆ ಹೇಗೆ ಕೊನೆಯಿಲ್ಲವೋ ಹಾಗೆ ಆಲೋಚನೆಗಳ ದಂಡು.

ಈ ಆಲೋಚನೆಗಳಿಗೂ ಓಡುವ ಮೋಡಗಳಿಗೂ ಏನು ಸಂಬಂಧ? ಈ ಆಲೋಚನೆಗಳಿಗೂ ಕುರುಚಲು ಗಡ್ಡಕ್ಕೂ ಏನು ನಂಟು? ಎಂದು ಯೋಚಿಸಿಕೊಂಡಂತೆಲ್ಲ ಮೇಲ್ಮಟ್ಟದಲ್ಲಿ ಗೋಕುಲಾಶ್ಠಮಿ-ಇಮಾಮ್ ಸಾಬಿಗಳಂತೆ ಕಂಡುಬಂದರೂ ಒಳಗೊಳಗೆ ಅವುಗಳ ಅರ್ಥಬದ್ಧ ಬಾಂಧವ್ಯದ ಬಗ್ಗೆ ನನಗೆ ತಿಳಿದದ್ದು ಇತ್ತೀಚೆಗಷ್ಟೇ. ಈ ಆಳವಾಗಿ ಆಲೋಚಿಸುವ ಕೆಲವರು ಮುಗಿಲನ್ನು ಎವೆಯಿಕ್ಕದೆ ದಿಟ್ಟಿಸುವುದನ್ನು ನೀವು ಗಮನಿಸಿರಬಹುದು. ಹೌದು, ಈ ಆಳವಾದ ದೃಷ್ಟಿಯೇ ಮುಗಿಲಿನ ಹಂದರದಲ್ಲಿ ಹರವಿಕೊಂಡ ಆ ಮೋಡಗಳಲ್ಲಿ ಚಲನಶಕ್ತಿಯನ್ನು ಕುದುರಿಸೋದು. ಹಾಗೇ ಆಲೋಚನೆಯಲ್ಲಿ ಮುಳುಗಿದವರು ಗದ್ದಕ್ಕೆ ಕೈಯಿಟ್ಟು ಯೋಚನೆ ಮಾಡಿದಂತೆಲ್ಲ ನುಣುಪಾದ ಅಂಗೈ ಹಾಗೂ ಕೆನ್ನೆಯ ನಡುವೆ ಘರ್ಷಣೆ ಹುಟ್ಟುವ ಹೊತ್ತಿನಲ್ಲಿ ಕೈ ಜಾರದಂತೆ ಜೀವವಿಕಾಸ ಸೃಷ್ಟಿಸಿದ ವಿಸ್ಮಯಗಳಲ್ಲಿ ಕುರುಚಲು ಗಡ್ಡವೂ ಒಂದು!

ಆಲೋಚನೆಗಳನ್ನು ಮಾಡಿ ತಲೆ ಕೆಡಿಸಿಕೊಂಡವರೇ ಹೆಚ್ಚು, ಉದ್ದಾರವಾದವರು ಯಾರು ಎಂದು ಅಲ್ಲಗಳೆಯಬೇಡಿ, ಹೆಚ್ಚು ಆಲೋಚನೆ ಮಾಡಿದವರೇ ದೊಡ್ಡ ಮನುಷ್ಯರು, ಅವರವರ ಆಲೋಚನೆಗಳ ಆಳ ಅವರವರ ಚಿಂತನಶೀಲತೆಯ ಪ್ರತೀಕ ಎಂದರೆ ತಪ್ಪೇನು ಇಲ್ಲ. ಆದರೆ ಆಲೋಚನೆ, ಕೊರಗು, ಚಿಂತೆ ಹಾಗೂ ಚಿಂತನೆಗಳಲ್ಲಿ ಬೇಕಾದಷ್ಟು ವ್ಯತ್ಯಾಸಗಳಿವೆ. ನನ್ನ ಪ್ರಕಾರ ಆಲೋಚನೆ ತನ್ನ ಪ್ರಭೇದದ ಇತರ ಸೋದರರಾದ ಕೊರಗು-ಮರುಗು-ಚಿಂತೆ-ಚಿಂತನೆಗಳಿಗಿಂತ ಸ್ವಲ್ಪ ಭಿನ್ನ ಹಾಗೂ ತನ್ನಷ್ಟಕ್ಕೆ ತಾನು ಒಂದು ಅಮೋಘವಾದ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡ ಧೀರ ಬೇರೆ. ಆಲೋಚನೆಗೆ ಯಾವುದೇ ವಿಷಯ-ವಸ್ತುವೆಂಬುದಿಲ್ಲ, ಎಂದು ಇತರರ ಜೊತೆ ಬೆಳೆದು ಸಮಾಲೋಚನೆಯಾಗಬಹುದು, ಅಥವಾ ತನ್ನ ದೂರದ ಮಟ್ಟಕ್ಕೆ ದೂರಾಲೋಚನೆಯಾಗಬಹುದು, ಕೆಟ್ಟ ವಸ್ತುಗಳಿದ್ದರೆ (ಕೆಟ್ಟದು ಎಂಬುದು ಸಾಪೇಕ್ಷವಾದುದು) ದುರಾಲೋಚನೆಯೂ ಆಗಬಹುದು. ಆಲೋಚನೆ ಎನ್ನುವುದು ತನ್ನಷ್ಟಕ್ಕೆ ತಾನು ಇದ್ದರಿರಬಹುದು ಅಥವಾ ಅದು ಉಳಿದವರ ಜೊತೆ ಸೇರಿ ಒಂದು ಸಿದ್ಧಾಂತವಾಗಬಹುದು. ಒಟ್ಟಿನಲ್ಲಿ ಆಲೋಚನೆ ಎನ್ನುವುದು ನೀರಿದ್ದ ಹಾಗೆ, ಅದು ತನ್ನಷ್ಟಕ್ಕೆ ತಾನು ಯಾವುದೇ ಆಕಾರ, ಗಾತ್ರ, ಬಣ್ಣ, ವಾಸನೆ, ಗಡಿರೇಖೆಗಳಿಗೆ ಒಳಪಡದ ಒಂದು ರೀತಿಯ ಎಲ್ಲವನ್ನು ತ್ಯಜಿಸಿದ ಸಂತನ ಮನಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆ ಜೊತೆಗೆ ತಾನು ಇದ್ದ ಯಾವುದೇ ಒಂದು ವಸ್ತುವಿನ ರೂಪರೇಶೆಗಳನ್ನು ದಿಢೀರನೆ ಪಡೆದುಕೊಂಡುಬಿಡಬಲ್ಲದು.

ಒಟ್ಟಿನಲ್ಲಿ ಈ ಆಲೋಚನೆಯ ಪರಿ ಭಿನ್ನ. ನನ್ನ ಮನಸ್ಸಿನಲ್ಲಿ ಬರುವ ಆಲೋಚನೆಗಳ ಮಹಾಪೂರವನ್ನು ನೋಡಿ ಕೆಲವೊಮ್ಮೆ ಈ ಪರಿಯ ಸೊಬಗ ಇನ್ಯಾವ ಮನಸ್ಥಿತಿಯಲೂ ಕಾಣೆ ಎಂದು ಹಾಡಿಕೊಂಡಿದ್ದಿದೆ. ಈ ಆಲೋಚನೆಗಳೆಂಬುವುದಕ್ಕೆ ಮಿತಿಯಂತೂ ಇಲ್ಲವೇ ಇಲ್ಲ - ಅದರಲ್ಲಿ ಬಿಳಿ-ಕಪ್ಪಿದೆ, ಕೆಟ್ಟದ್ದು-ಒಳ್ಳೆಯದಿದೆ, ಸಂಭ್ರಮ-ಸಂಗಮಗಳಿವೆ, ನೋವು-ನಲಿವಿದೆ, ಹೀಗೆ ಅನೇಕಾನೇಕ ಪರ-ವಿರೋಧಗಳನ್ನು ತನ್ನೊಡಲಿನಲ್ಲಿ ಹರವಿಕೊಂಡ ಅಲೋಚನೆಗಳ ದಿಬ್ಬಣವನ್ನು ನಾನು ನಮ್ಮೂರ ಜಾತ್ರೆಯ ತೇರಿಗೆ ಹೋಲಿಸಿಕೊಳ್ಳೋದು. ತೇರಿನ ಗರ್ಭಗುಡಿಯಲ್ಲಿ ದೇವತೆಯ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಅಸಂಖ್ಯ ಭಕ್ತರು ಎಳೆದು ಜನತುಂಬಿ ತುಳುಕುತ್ತಿರುವ ರಸ್ತೆಯ ಮಧ್ಯದಲ್ಲಿ ನಿಧಾನವಾಗಿ ತೇಲಿ ಹೋಗುವ ತೇರಿನ ಹಾಗೆ - ನಾವು ಎಲ್ಲಿದ್ದರೂ ಹೇಗಿದ್ದರೂ ಏನನ್ನೇ ಮಾಡುತ್ತಿದ್ದರೂ ನಮ್ಮ ಮನದಲ್ಲಿ ಈ ಆಲೋಚನೆಗಳ ತೇರು ಎಳೆಯಲ್ಪಡುತ್ತಿರುತ್ತದೆ, ನಿರಂತರವಾಗಿ.

Monday, September 28, 2009

ಕಾಫಿ ಫಿಲ್ಟರ್, ಕಿವಿಗೆ ಹಾಕುವ ಹತ್ತಿ ಹಾಗೂ ಅನಿವಾಸಿತನ

ಭಾರತದಿಂದ ಬಂದ ಹೊಸತರಲ್ಲಿ ಅಮೇರಿಕದಲ್ಲಿ ದೊರೆಯುವ ಕಾಫಿ (ಲೋಟಾಗಳ) ಸೈಜು, ಅದನ್ನು ಬಳಸುವ ಬಳಕೆದಾರರೆಲ್ಲ ನನ್ನಲ್ಲಿ ಬಹಳ ಕಳವಳವನ್ನೂ ದಿಗ್ಬ್ರಾಂತಿಯುನ್ನು ಮೂಡಿಸುತ್ತಿದ್ದರು ಎನ್ನುವುದು ನನ್ನ ಅನುಭವ ಅಥವಾ ಅನಿಸಿಕೆ. ಇಲ್ಲಿ ಎಲ್ಲವೂ ಲಾರ್ಜ್ ಸೈಜು - ಕಾಫಿ, ಸೋಡಾ, ತಿನ್ನುವ ಸ್ಯಾಂಡ್‌ವಿಚ್, ಆಹಾರ ಪದಾರ್ಥ, ಆಚಾರ-ವಿಚಾರ ಎಲ್ಲವೂ. ನಮ್ಮ ಭಾರತೀಯ ಪದ್ದತಿಯ ಪ್ರಕಾರ ನಾನು ಬೆಳಗ್ಗೆ ಒಂದು ಲೋಟಾ ಮತ್ತು ಸಂಜೆ ಒಂದು ಲೋಟಾ ಕಾಫಿ ಅಥವಾ ಚಹಾಕ್ಕೆ ಹೊಂದಿಕೊಂಡವನು. ಇಲ್ಲಿ ಬಂದ ಹೊಸತರಲ್ಲಿ ಈ ಲಾರ್ಜ್ ಸೈಜುಗಳು ಖಂಡಿತ ನನ್ನಂತಹವರಿಗಲ್ಲ ಅಲ್ಲದೇ ಎಂದೂ ನನಗೆ ಇಷ್ಟು ದೊಡ್ಡ ಸರ್ವಿಂಗ್ ಸೈಜಿನ ಅಗತ್ಯವಿಲ್ಲ ಎಂಬುದು ಅಂದಿನ ನಿಲುವಾಗಿತ್ತು.

ಭಾರತದಲ್ಲಿ ನಾವು ಫಿಲ್ಟರ್ ಕಾಫಿ ಕುಡಿಯುತ್ತಿದ್ದೆವು, ಆದರೆ ಅಲ್ಲೆಲ್ಲೂ ಹತ್ತು-ಹನ್ನೆರಡು ಕಪ್ ಕಾಫಿ ಹಿಡಿಯುವಷ್ಟು ದೊಡ್ಡ ಪ್ರಮಾಣದ ಫಿಲ್ಟರ್ ನಾನು ನೋಡಿರಲಿಲ್ಲ. ಇಲ್ಲಿಗೆ ಬಂದ ಹೊಸತರಲ್ಲಿ ಒಮ್ಮೆ ನಾವು ಒಂದಿಷ್ಟು ಜನ ಬ್ಯಾಚುಲರ್ಸ್ ಸೇರಿಕೊಂಡು ಕಾಫಿ ಫಿಲ್ಟರ್ ಹೆಸರಿನಲ್ಲಿ ಒಂದಿಷ್ಟು ಕಾಫಿ ಫಿಲ್ಟರುಗಳನ್ನು ತಂದು, ಈ ಪೇಪರಿನ ಕೊಟ್ಟೆಯನ್ನು ಹೇಗೆ ಉಪಯೋಗಿಸಬೇಕು ಎಂಬುದು ತಿಳಿಯದೇ ಅದನ್ನು ಹಾಗೇ ಎಸೆದ ಹಾಗೆ ನೆನಪು.

ಅದಾದ ನಂತರದ ಕೆಲವು ವರ್ಷಗಳಲ್ಲಿ ಇಲ್ಲಿನ ಕಾಫಿ ಕುಡಿಯುವುದಕ್ಕೆ ಒಗ್ಗಿ ಹೋದ ನಾನು ಲಾರ್ಜ್ ಕಾಫಿಗಳನ್ನು ಗಣನೀಯ ಪ್ರಮಾಣದಲ್ಲಿ ಸೇವಿಸ ತೊಡಗಿದ ಮೇಲೆ ಮಿಸ್ಟರ್ ಕಾಫಿಯ ಬಳಕೆಗೆ ಹೊಂದಿಕೊಂಡಿದ್ದು. ಹಾಗೇ ದಿನದ ಆರಂಭದಲ್ಲಿ ನಮ್ಮೂರಿನ ನಾಲ್ಕು ಲೋಟಾಗಳು ಹಿಡಿಯುವಷ್ಟು ಕಾಫಿಯನ್ನು ಅರ್ಧ ಘಂಟೆಯ ಒಳಗೆ ಒಂದು ಕೈಯಿಂದ ಕಾರನ್ನು ಡ್ರೈವ್ ಮಾಡುತ್ತಲೇ ಮತ್ತೊಂದು ಕೈಯಿಂದ ಸೇವಿಸುವುದನ್ನು ಕರತಾಮಲಕ ಮಾಡಿಕೊಂಡಿದ್ದು. ಇಲ್ಲಿ ನಮ್ಮ ಮನೆಯಲ್ಲಿ ಇಂತಹ ದಿನನಿತ್ಯ ಉಪಯೋಗಿ ವಸ್ತುವಾಗಿ ಕಾಫಿಯ ಬಳಕೆಯಾದ ಮೇಲೆ ಅದರ ಸಂಗಾತಿ ಪೇಪರ್ ಫಿಲ್ಟರ್ರೂ ಇಲ್ಲವೆಂದರೆ ಹೇಗೆ? ಜೊತೆಗೆ ಒಂದೋ ಎರಡೋ ಕಾಫಿ ವೆರೈಟಿಗೆ ಹೊಂದಿಕೊಂಡ ದೇಹಕ್ಕೆ (ಹಾಗೂ ಮನಸ್ಸಿಗೆ) ಇಲ್ಲಿನ ಹತ್ತು ಹಲವಾರು ಪ್ಲೇವರುಗಳೂ ಅವುಗಳ ಜೊತೆಗೆ ಕಾಫಿ ಬೀಜದ ರೋಸ್ಟ್ (ಲೈಟ್, ಮೀಡಿಯಂ, ಡಾರ್ಕ್) ಸೇರಿಕೊಂಡು ಆಹ್ಲಾದಕರ ಕಾಫಿಯ ಅನುಭವಕ್ಕೆ ಇನ್ನೊಂದಿಷ್ಟು ರುಚಿಗಳನ್ನು ಸೇರಿಸಿಕೊಂಡಿದ್ದು.

ಇಲ್ಲಿ ನಾವು ಹೋಲ್ ಸೇಲ್ ಮಳಿಗೆಗಳಲ್ಲಿ ದಿನಸಿ ಸಾಮಾನುಗಳನ್ನು ಕೊಳ್ಳುವಲ್ಲಿ ಕೇವಲ ಎರಡೂವರೆ ಡಾಲರ್‌ಗೆ ಆರು ನೂರು (೬೦೦) ಫಿಲ್ಟರುಗಳನ್ನು ತಂದು ಬಳಸುವುದು ರೂಢಿ. ಆದರೆ ಒಮ್ಮೆ ಖರೀದಿಸಿದ ಈ ಫಿಲ್ಟರ್ ಖಾಲಿ ಆಗುವಾಗ ದಿನಕ್ಕೊಂದರಂತೆ ಬಳಸಿದರೂ ಮನಯಲ್ಲಿ ಕಾಫಿ ಕುದಿಸದ ವರ್ಷದ ಇತರ ದಿನಗಳನ್ನು ಲೆಕ್ಕ ಹಾಕಿದರೆ ಕೊನೇ ಪಕ್ಷ ಆರು ನೂರು ಫಿಲ್ಟರ್ ಪೇಪರುಗಳು ಎರಡು ವರ್ಷದ ಮಟ್ಟಿಗಾದರೂ ಬಂದಾವು. ಆದರೆ ನಾನು ಕಾಫಿ ಹೀರುವ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಇತ್ತೀಚೆಗೆ ಮಾತ್ರ ಹಾಗಾಗಿ ಐದು ವರ್ಷಗಳ ಹಿಂದೆ ತಂದ ಫಿಲ್ಟರ್ ಪೇಪರುಗಳು ಖಾಲಿಯಾಗಿ ಹೀಗೆ ಈ ಘಳಿಗೆಯಲ್ಲಿ ಅವುಗಳ ಬಗ್ಗೆ ಬರೆಯುವಂತಾಯಿತು.

ಕಾಫಿ ಫಿಲ್ಟರುಗಳಿಗೆ ಅನ್ವಯವಾಗುವ ಇತಿಹಾಸ ಹಾಗೂ ವಾಸ್ತವದ ಅನುಭವಗಳು ಕಿವಿಗೆ ಹಾಕುವ ಹತ್ತಿಯ ಕಡ್ಡಿಗೂ ಅನ್ವಯಿಸುತ್ತವೆ ಎಂದೇ ಹೇಳಬೇಕು. ಐದು ಡಾಲರುಗಳಿಗೆ ಸಾವಿರದ ಇನ್ನೂರು (೧೨೦೦) ಹತ್ತಿ ಕಡ್ಡಿಯನ್ನು ತಂದು ಅದೆಷ್ಟೋ ವರ್ಷಗಳ ಹಿಂದೆ ಮನೆಯಲ್ಲಿಟ್ಟು ಈಗ ಖಾಲಿ ಆಗಿ ಹೋಗಿದೆ. ಮತ್ತೆ ಫಿಲ್ಟರುಗಳ ಹಾಗೆ ಒಂದು ದೊಡ್ಡ ಪ್ರಮಾಣದ ಖರೀದಿಯನ್ನು ಸಣ್ಣ ಬೆಲೆಗೆ ಮಾಡಬೇಕಾಗಿ ಬಂದಿದೆ, ಅವಿನ್ನು ಖಾಲಿಯಾಗುವುದು ಇನ್ನೆಷ್ಟು ವರ್ಷಗಳ ನಂತರವೋ. ನಾವೇನು ಭಾರತದಲ್ಲಿ ಪ್ರತಿನಿತ್ಯ ಸ್ನಾನ ಮಾಡಿದ ನಂತರ ಕಿವಿಯೊಳಗೆ ಹತ್ತಿಯನ್ನು ತೂರಿಸಿ ಕ್ಲೀನ್ ಮಾಡಿಕೊಳ್ಳುತ್ತಿರಲಿಲ್ಲ, ಹಾಗೇ ಇಲ್ಲೂ ಕೂಡ. ಕಿವಿಗೆ ಹಾಕುವ ಹತ್ತಿ ಕಡ್ಡಿಯ ಉಪಯೋಗ ಅಪರೂಪಕ್ಕೊಮ್ಮೆ, ಅದೂ ಕೆಲವೊಮ್ಮೆ ಸೈನ್‌ಫೆಲ್ಡ್‌ನ ಕ್ರೇಮರ್ ಕಿವಿಯೊಳಗೆ ನೀರು ತುಂಬಿಸಿಕೊಂಡು ಕುಣಿದಾಡುವ ಪ್ರಸಂಗ ಬಂದ ಹಾಗೆ ನಮಗೂ ಈ ಹತ್ತಿ ಕಡ್ಡಿಯ ಬಳಕೆಗೂ ನಂಟು.

ಈ ಅನಿವಾಸಿತನಕ್ಕೂ ಈ ಕಾಫಿ ಫಿಲ್ಟರ್-ಹತ್ತಿ ಕಡ್ಡಿಯ ಅವಿನಾಭಾವ ಸಂಬಂಧದ ಬಗ್ಗೆ ಬರೆಯೋದಕ್ಕೂ ಒಂದು ಕಾರಣವಿದೆ. ಸಂಪನ್ಮೂಲಗಳು ಕಡಿಮೆ ಇದ್ದು ಅವು ಹೆಚ್ಚು-ಹೆಚ್ಚು ಮಟ್ಟದಲ್ಲಿ ಸಿಗದ ಅಥವಾ ಅಭಾವದ ಪರಿಸ್ಥಿತಿ ಒಂದು ಕಡೆ, ಆದರೆ ಇಲ್ಲಿ ಹಣವೊಂದಿದ್ದರೆ ಸಾಕು ಬೇಕಾದಷ್ಟು ಸಿಗುವುದು ಮತ್ತೊಂದು ಕಡೆ. ಚಿಕ್ಕ ಸೈಜಿನ ಕಾಫಿ ಲೋಟಾಗಳಿಂದ ಹಿಡಿದು ಕಿವಿಗೆ ಹಾಕುವ ಹತ್ತಿಯ ಬಳಕೆಯ ಪ್ರಮಾಣ ಕಡಿಮೆಯಿತ್ತು, ಆದರೆ ಇಲ್ಲಿ ಎಲ್ಲವೂ ಲಾರ್ಜ್ ಸೈಜು. ಒಂದೋ ಎರಡೋ ಎಕರೆ ಗದ್ದೆ-ಭೂಮಿ ಪ್ರಮಾಣ ನನ್ನಂಥವರ ಮಧ್ಯಮ ವರ್ಗದವರಿಗೆ ದೊಡ್ಡವಾಗಿದ್ದವು, ಆದರೆ ಇಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಎರಡು-ಮೂರು ಸಾವಿರ ಎಕರೆಗಳ ಒಡೆಯರು. ನನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ನನ್ನ ಸಹೋದ್ಯೋಗಿ ಇತ್ತೀಚೆಗೆ ಇಪ್ಪತ್ತು ಎಕರೆಗಳನ್ನು ತನ್ನ ಸ್ವಂತ ಊರಿನಲ್ಲಿ ಖರೀದಿಸಿದ್ದು ದೊಡ್ಡ ಸುದ್ದಿಯಲ್ಲ. ನಮ್ಮ ಕಾರುಗಳ ಇಂಜಿನ್ ದೊಡ್ಡವು. ನಿನ್ನೆ ಗಾರ್‌ಫೀಲ್ಡ್ ಪರಿಚಿಯಿಸಿದ ಸಾಧಾರಣ ಗಾತ್ರದ ಅವನ ಮೋಟಾರ್‍ ಸೈಕಲ್ ಇಂಜಿನ್ ೧೫೦೦ ಸಿ.ಸಿ. (1500 cc), ಭಾರತದಲ್ಲಿ ಎಷ್ಟೋ ಕಾರುಗಳ ಇಂಜಿನ್ ಇದಕ್ಕಿಂತ ಚಿಕ್ಕವು. ದೊಡ್ಡ ರಸ್ತೆಗಳು. ದೊಡ್ಡ ದೇಶ - ಎಲ್ಲವೂ ದೊಡ್ಡದೇ.

ಆದರೆ ಈ ಮಹಾನ್ ಗಾತ್ರ ಹಾಗೂ ಮಹಾನ್ ಸಂಸ್ಕೃತಿಗೆ ನಮ್ಮ ಚಿಕ್ಕ ಅಥವಾ ಮೀಡಿಯಮ್ ಸೈಜಿನ ಮನಸ್ಸುಗಳಾಗಲೀ, ಆಚಾರ-ವಿಚಾರಗಳಾಗಲಿ ದಿಢೀರನೆ ಹೇಗೆ ಹೊಂದಿಕೊಂಡಾವು. ಇವತ್ತೋ ನಿನ್ನೆಯೋ ಭಾರತದಿಂದ ಬಂದವರಿಗೆ ಒಂದು ಲಾರ್ಜ್ ಸ್ಟಾರ್‌ಬಕ್ಸ್ ಕಾಫಿ ಕೊಟ್ಟು ನೋಡಿ, ಅದನ್ನು ಅವರು ಪೂರ್ತಿ ಮುಗಿಸುತ್ತಾರೆಯೇ ಎಂದು. ಈ ಚಿಕ್ಕ-ದೊಡ್ಡ ವಿಚಾರಗಳು ಮೊದಲಿನಿಂದ ಕೊನೆಯವರೆಗೆ ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರುತ್ತವೆ ಎನ್ನೋದು ಈ ಹೊತ್ತಿನ ನನ್ನ ತತ್ವ.

ಇಂದು ಖರೀದಿಸಿ ಆದಷ್ಟು ಬೇಗನೇ ಬಳಸಿ ಮತ್ತೆ ಹೊಸತನ್ನು ಖರೀದಿಸುವುದು ಒಂದು ವಿಧ, ನಮ್ಮಲ್ಲಿ ಉಗ್ರಾಣಗಳಿವೆ ಎಂದು ಬೇಕಾದ್ದನ್ನೆಲ್ಲ ಹೋಲ್‌ಸೇಲ್ ದರದಲ್ಲಿ ಕೊಂಡು ಹಲವು ವರ್ಷಗಳ ವರೆಗೆ ಅನುಭವಿಸುವುದು ಮತ್ತೊಂದು ವಿಧ. ಪ್ರೆಸೆಂಟ್ ವ್ಯಾಲ್ಯೂ ಫ್ಯೂಚರ್ ವ್ಯಾಲ್ಯೂನಿಂದಾನಾದರೂ ಲೆಕ್ಕ ಹಾಕಿ, ಬೇಕಾಗಿದ್ದು ಸಾಕಾದಷ್ಟು ಇರಲಿ ಎಂದಾದರೂ ಸಮಜಾಯಿಸಿ ಕೊಟ್ಟುಕೊಳ್ಳಿ.

ಅವೇ ಲಾರ್ಜ್ ಕಾಫಿಗಳನ್ನು ಬಿಕರಿ ಮಾಡುವ ಪೇಪರ್ ಫಿಲ್ಟರುಗಳು, ಸಾವಿರಗಟ್ಟಲೆ ಸಿಗುವ ಕಿವಿಗೆ ಹಾಕುವ ಹತ್ತಿ ಕಡ್ಡಿಗಳು ಅಗಾಧ ಪ್ರಮಾಣದಲ್ಲಿ ಸಿಗುವ ಇವುಗಳನ್ನು ನಿಯಂತ್ರಣಕ್ಕೆ ತಂದುಕೊಂಡು ದಿನ-ವಾರ-ವರ್ಷಗಳನ್ನು ದೂಡುವ ಅನಿವಾಸಿ ಬದುಕು. ಇವುಗಳ ಮುಂದೆ ಹರಿದು ಹೋಗುವವರೆಗೆ ಉಪಯೋಗಕ್ಕೆ ಬರುವ ನಮ್ಮ ಅಲ್ಯುಮಿನಮ್ ಅಥವಾ ಪ್ಲಾಸ್ಟಿಕ್ ಜಾಲರಿ ಇರುವ ಫಿಲ್ಟರುಗಳು ಹಳೆಯವಾಗುತ್ತವೆ, ಅಮೇರಿಕದ ಮಿಸ್ಟರ್ ಕಾಫಿ ಇಳಿಸಲು ಭಾರತದ ಫಿಲ್ಟರ್ ಕೆಲಸ ಮಾಡದಾಗುತ್ತದೆ. ಇಲ್ಲಿನ ಹೆಚ್ಚು ಧೂಳಿಲ್ಲದ ಏರ್ ಕಂಡೀಷನ್ನ್ ವಾತಾವರಣದಲ್ಲಿ ಬೆಳೆಯುತ್ತಿದ್ದರೂ ಕಿವಿಯಲ್ಲಿ ಸೇರಿದ ಕೊಳೆ ತೆಗೆಯಲು ಸಾವಿರ ಸಂಖ್ಯೆಯಲ್ಲಿ ಸಿಗುವ ಕಡ್ಡಿ ಸರದಾರರು ನೆರವಿಗೆ ಬರುತ್ತಾರೆ, ಹಿಂದೆ ಹಗಲೂ-ರಾತ್ರಿ ಧೂಳಿನಲ್ಲೇ ಜೀವನ ಸಾಗಿಸಿ ಬಂದು ಯಾವತ್ತೋ ಕಿವಿಯ ಕೊಳೆಯನ್ನು ತೆಗೆದಿದ್ದು ಗೌಣವಾಗುತ್ತದೆ.

Sunday, September 27, 2009

ಅವನ ರೂಮು ಅವನ ಮನ

ಒಂಟಿ ಗೂಟಕ್ಕೆ ತಗುಲಿ ಹಾಕಿದಾ ಕೋಟು
ಒಣಗಿದ ಹೂಗಳ ತುರುಕಿಕೊಂಡ ಕಪಾಟು
ಅಲ್ಲಲ್ಲಿ ಚೆದುರಿ ಹೋದ ಪುಸ್ತಕಗಳ ಸಂತೆ
ಹುಲ್ಲು ಕುತ್ರೆ ತಲೆಯಲ್ಲಿ ಹಿಡಿಸಲಾರದ ಕಂತೆ.

ಯುದ್ಧವಿರದ ಸಿಪಾಯಿ ಕಾಡ ಮೇಲಿನ ದಂಗೆ
ಹಸಿವಿರದಿದ್ದರೂ ಕೂಳಿನ ಅಟ್ಟಹಾಸದ ನಗೆ
ಕಾಣದ ಕೈಗಳು ದೂರದಿಂದಲೇ ಆಡಿಸೊ ಆಟ
ಗೊತ್ತಿದ್ದೂ ಗೊತ್ತಿರದ ಚಕ್ರವ್ಯೂಹದ ಹೂಟ.

ಇವನ್ಯಾರು ಅವನ್ಯಾರು ಅದು ಬೇರೆ ಇದು ಬೇರೆ
ದೂರವಿರೆ ಮುಂದೆ ಬೇರೆ ಪ್ರಮೇಯವೇ ಬರದು
ಸಂತೆಯೊಳಗೆ ಹರವಿಟ್ಟ ಹತ್ತು ಹಲವು ತರಕಾರಿ
ಬರಿ ಬಿಸಿಲೊಳಗೇ ಬೇಯಿಸಿ ಹದ ಮಾಡುವ ಪರಿ.

ಪ್ರತಿ ಬಾಗಿಲಿಗೂ ಚಿಲಕವಿರೆ ಏನಂತೆ ಮನಕಿಲ್ಲವಲ್ಲ
ಕೋಣೆ ಕೋಣೆಗೆ ಅವುಗಳದೇ ಒಂದು ವಾಸ್ತವ್ಯವಲ್ಲ
ಹರವಿಬಿಟ್ಟ ಮನ ಎಲ್ಲೂ ಹೋಗದೆ ನಿಂತ ಹಾಗಿದೆ
ಮುಚ್ಚಿಟ್ಟ ಕೋಣೆ ನಿಂತು ನಿಂತಲ್ಲೇ ಎಲ್ಲೋ ಹೋಗಿದೆ.

ಚೌಕ ಆಯತಾಕಾರಗಳ ಪ್ರತಿಬಿಂಬ ಅವನ ಕೋಣೆ
ಆದರವನ ಮನದ ಮೂಲೆಗಳ ಇತಿಮಿತಿಗಳ ಕಾಣೆ
ಒಂದರದು ನಿಂತ ಹಾಗಿರುವಾಗಲೇ ಒಂದೊಂದು ಚಿತ್ರ
ಮತ್ತೊಂದರದು ಎಲ್ಲಾ ಕಡೆ ತಿರುಗಿಕೊಂಡಿಹ ವಿಚಿತ್ರ.

(ಲೈಬ್ರರಿಯ ರೀಡಿಂಗ್ ರೂಮಿನಲ್ಲಿ ತದೇಕ ಚಿತ್ತನಾಗಿ ಓದುತ್ತಿದ್ದ ವ್ಯಕ್ತಿಯೊಬ್ಬನನ್ನು ಕುರಿತು)

Friday, September 04, 2009

ಮತ್ತೆ ಅವನ ದರ್ಶನವಾಯ್ತು...

ನನ್ನ ಪಾಡಿಗೆ ನಾನು ಸುಮ್ಮನೇ ಒಂದು ಮುಂಜಾನೆ ಕೆಲಸಕ್ಕೆ ಹೊರಟಿರೋ ಹೊತ್ತಿಗೆ ಸುತ್ತಲಿನ ಮರಗಳು ಕುಲಕಿದಂತಾಗಿ ಅವುಗಳತ್ತ ನೋಡಿದೆ ಯಾವೊಂದು ವಿಶೇಷವೂ ಕಾಣಲಿಲ್ಲ, ಆದರೆ ಮರಗಳ ಎಲೆಗಳು ಅಲುಗಾಡುವಿಕೆಯಲ್ಲಿ ಏನೋ ಒಂದು ರೀತಿಯ ಹೊಸತನವಿದ್ದಂತೆ ತೋರಿತು. ಸುಮ್ಮನೇ ಹೀಗೇ ಇರಬಹುದು ಎಂದು ನನ್ನ ಪಾಡಿಗೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗಲೂ ಯಾರೋ ಆಹ್ವಾನಿಸದ ಅತಿಥಿಯೊಬ್ಬರು ನನ್ನ ಜೊತೆಗೆ ಕಾರಿನಲ್ಲಿ ಬರುತ್ತಿದ್ದಾರೆ ಎನ್ನಿಸಿದಾಗಲಂತೂ ಮೈ ನಡುಗತೊಡಗಿತು. ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ.

ಮುಂದೆ ಸ್ವಲ್ಪ ದೂರಗಳ ದಾರಿ ಸವೆಸಿದಂತೆ ಮರಗಿಡಗಳ ನಡುವೆ ಸೂರ್ಯ ಕಿರಣಗಳು ತೂರಿಬರಲು ಹರಸಾಹಸ ಮಾಡುತ್ತಿದ್ದವು. ಸೂರ್ಯನ ಬೆಳಕೂ ಕೂಡ ಮಂದಗತಿಯನ್ನು ತಲುಪಿತ್ತು. ಮುಂಜಾನೆ ಚುರುಕಾದ ಕಿರಣಗಳು ಮಲಗಿದವನ್ನೆಲ್ಲ ಬಡಿದೆಬ್ಬಿಸುವುದರ ಬದಲು ತಮ್ಮ ಮಂದ ಬೆಳಕಿನಲ್ಲೂ ಎದ್ದವರ ಕಣ್ಣನ್ನು ಕುಕ್ಕುತ್ತಿದ್ದವೇ ವಿನಾ ಮಲಗಿದವರ ಹತ್ತಿರ ಕೂಡಾ ಸುಳಿಯುತ್ತಿರಲಿಲ್ಲ. ಇದು ಸಾಲದು ಎಂಬಂತೆ ವಾತಾವರಣದ ಉಷ್ಣತೆಯೂ ಸ್ವಲ್ಪ ಸ್ವಲ್ಪ ಕಡಿಮೆಯಾದಂತಾಗಿ ಮಲಗಿದವರು ಕಂಬಳಿ-ಕೌದಿಯನ್ನು ಈಗಾಗಲೇ ಹುಡುಕಿಕೊಂಡು ಹೋಗುವುದು ಅನಿವಾರ್ಯವೆನ್ನಿಸಿರಬಹುದಾದದ್ದು ಜನರಲ್ಲಿ ಲವಲವಿಕೆಯನ್ನು ಮೂಡಿಸುವಲ್ಲಿ ಯಾವ ಉತ್ಸಾಹವನ್ನೂ ಕೂಡಿಹಾಕುತ್ತಿರಲಿಲ್ಲ. ಆದರೂ ನಾನು ದಾರಿ ಸವೆಸಿದಂತೆಲ್ಲಾ ಇಂದು ವಿಶೇಷವಾದ ಏನೋ ಒಂದು ಬದಲಾವಣೆ ಇದೆ ಎಂದು ಬಲವಾಗಿ ಅನ್ನಿಸುತ್ತಿದ್ದುದಂತೂ ನಿಜ.

ನನ್ನ ಹಿಂದೆ ಮುಂದೆ ಇದ್ದ ಕಾರುಗಳತ್ತ ಕಣ್ಣು ಹಾಯಿಸಿದೆ, ಅವರೆಲ್ಲರ ಅರ್ಧ ಮುಖಗಳು ಬೆಳಕಿನಲ್ಲಿ ಇನ್ನರ್ಧ ಮುಖಗಳು ನೆರಳಿನಲ್ಲಿ ಕಾಣಿಸುವಂತೆ ಎದುರಿನ ಸನ್ ಸ್ಕ್ರೀನ್ ನಿರ್ದೇಶಿಸುತ್ತಿತ್ತು. ಕಪ್ಪು ಕನ್ನಡಕ ಧರಿಸಿದ್ದ ಅವರೆಲ್ಲರೂ ಈ ಬೆಳಕು-ಕತ್ತಲಿನ ಬದಲಾವಣೆಗಳಿಗೆ ಹೆಣಗುವವರು ಯಾರು ಎಂದು ತಮ್ಮ ಸವಾಲನ್ನು ಯಾವತ್ತೋ ಬಿಟ್ಟಂತಿತ್ತು. ರಸ್ತೆಯ ಬದಿಯ ಮನೆಯ ಚಿಮಣಿಯ ಪಕ್ಕದಲ್ಲಿದ್ದ ಹೊಗೆ ಕೊಳವೆಯಲ್ಲಿ ಗ್ಯಾಸ್ ಹೀಟರ್ ಉರಿಯುತ್ತಿರುವುದರ ಪ್ರತೀಕವಾಗಿ ಕಪ್ಪು-ಕಂದು ಮಿಶ್ರಿತ ಹೊಗೆ ನಿಧಾನವಾಗಿ ವಾತಾವರಣದಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುತ್ತಿತ್ತು. ಹಾಗೆ ಸ್ಥಾಪಿಸಿದ ಅಸ್ಥಿತ್ವ ಮರುಕ್ಷಣವೇ ಮಾಯವಾಗುವ ಹಾಗೆ ಕಂಡು ಇವು ಎಲ್ಲ ಎಷ್ಟೊಂದು ಕ್ಷಣಿಕ ಎನ್ನಿಸುವಂತಾಯಿತು. ಇಷ್ಟೊತ್ತಿಗಾಗಲೇ ಹಬ್ಬಿ, ಹರಡಿ ಹಾಗೂ ಕದಡಿ ಹೋದ ಹೊಗೆ ಶುಭ್ರ ವಾತಾವರಣದಲ್ಲಿ ಮಂದವಾದ ಸೂರ್ಯನ ಕಿರಣಗಳ ದಯೆಯಿಂದ ಗೋಧೂಳಿಯ ತಿಳಿ ಪದರನ್ನು ಕಣ್ಣ ಮುಂದೆ ನಿರ್ಮಿಸುವಲ್ಲಿ ಹೆಣಗುತ್ತಿತ್ತು. ಹೀಗೇ ಏನೇನೇನೋ ಆಲೋಚನೆಗಳ ನಡುವೆಯೂ ಇಂದು ಅದೇನೋ ವಿಶೇಷವಿದೆ ಎನ್ನುವ ನನ್ನ ಭಾವನೆಗಳು ಬಲವಾಗುತ್ತಲೇ ಹೋದವು.

ನಡುವೆ ಬೇಕು ಎಂದರೂ ನಿಲ್ಲದ ಪಯಣ, ರಸ್ತೆಯಲ್ಲಿ ಇಳಿದ ಮೇಲೆ ಎಲ್ಲರಂತಿರಲೇ ಬೇಕಲ್ಲ, ನಾನೂ ಮುನ್ನಡೆದೆ. ನಮ್ಮ ಮನೆಯಿಂದ ಸರಿಯಾಗಿ ಆರು ಪಾಯಿಂಟ್ ಒಂದು ಮೈಲು ದೂರದಲ್ಲಿ ಕೊನೆಯಾಗುವ ಪ್ಲೆಸೆಂಟ್ ವ್ಯಾಲಿ ವೇ ಅಂತ್ಯದಲ್ಲಿ ಆರಂಭವಾಗುವ ಓಕ್‌ಡೇಲ್ ಅವೆನ್ಯೂನಲ್ಲಿ ಒಂದಿಷ್ಟು ಓಕ್ ಮರಗಳ ನಡುವೆ ದಾರಿಯಲ್ಲಿ ಬಂದಿದ್ದವನ್ನೆಲ್ಲ ಇರಿದು ಬಿಡುತ್ತೇವೆ ಎನ್ನುವ ಇರಾದೆಯಲ್ಲಿ ಬಲಿಯುತ್ತಿದ್ದ ಕಿರಣಗಳು ನನ್ನ ಕಣ್ಣುಗಳನ್ನು ಚುಚ್ಚಿದಾಗಲೇ ಈ ಅಪರೂಪದ ಅತಿಥಿ ಯಾರು ಎಂದು ನನಗೆ ಅರ್ಥವಾದದ್ದು! ಆ ಅತಿಥಿಯೇ ಫಾಲ್ (Fall) ದಿನ, ಮುಂಬರುವ ಛಳಿಗಾಲದ ಮುನ್ಸೂಚಕ, ಚಿಗುರಿ ಬಲಿತು ಮುಂದೆ ಬೆಳೆಯ ಬೇಕಾದ ಎಲೆಗಳಿಗೂ ಕರುಣೆ ತೋರದೆ ಎಲ್ಲವನ್ನೂ ಕೆಳಗೆ ಇಳಿಸುವವ, ಹಸಿರು-ಹಳದಿಯನ್ನು ಕೆಂಪಗಾಗಿಸುವವ, ಮರ-ಗಿಡಗಳ ಮೂಗು ಮುಸುಡಿಯನ್ನು ನೋಡದೆ ಬೆತ್ತಲಾಗಿಸುವವ, ರೀಸೈಕಲ್ ಪರಮಗುರು, ಎಂಥಾ ಮರವನ್ನು ನಡುಗಿಸುವವ, ಗಾಳಿಯಲ್ಲಿನ ತೇವವನ್ನು ತಿಂದು ತೇಗಿ ಬಿಡುವವ. ನಮ್ಮಂಥ ಹುಲು ಮಾನವರ ಕಥೆ ಹಾಗಿರಲಿ ಉರಿವ ಸೂರ್ಯನಿಗೂ ಸರಿಯಾಗಿ ಕೆಲಸ ಮಾಡಲು ಬಿಡದೆ ಅವನ ದಿನಗಳನ್ನೆಲ್ಲ ಮೊಟಕು ಹಾಕಿ ಬಿಡುವವ.

ಫಾಲ್ ದಿನ ಎಂದರೆ ಹೊಸತನವನ್ನು ಸ್ವಲ್ಪ ನಿಧಾನವಾಗಿಯೇ ತರುವ ಸಂಭ್ರಮದ ಆಶಾವಾದಿಯೇ ಎಂದು ನನ್ನನ್ನು ನಾನು ಸಂತೈಸಿಕೊಂಡಿದ್ದೇನೆ. ಅಥವಾ ಬಿಸಿಯಾಗಿದ್ದನ್ನು ತಂಪಾಗಿಸಿ ನಮ್ಮವರ ಮನ-ಮನೆಗಳಲ್ಲಿ ಡಿಪ್ರೆಷ್ಷನ್ನನ್ನು ಉಂಟು ಮಾಡುವ ನಿರಾಶಾವಾದಿಯೇ ಎಂದು ನಿಟ್ಟುಸಿರಿಟ್ಟಿದ್ದೇನೆ. ಬೇಸಿಗೆ ಮತ್ತು ಛಳಿಗಾಲಗಳ ನಡುವೆ ಬಂದು ಹೋಗುವ ಇವನ ಹೂಟವೇನು? ತರಗಲೆಗಳನ್ನೆಲ್ಲ ಸುತ್ತಿ ಎಲ್ಲಿಂದ ಎಲ್ಲಿಗೋ ಎಸೆಯುವ ಇವನ ಆಟವೇನು? ಬದುಕನ್ನು ಬಯಲಾಗಿಸಿ ನೋಡುವ ಇವನ ಮಾಟವೇನು?

ಇನ್ನೂ ಇಪ್ಪತ್ತು ದಿನಗಳಾದರೂ ಇವೆ ಅಧಿಕೃತವಾಗಿ ಸಮ್ಮರ್ ಮುಗಿಯಲು ಎಂದರೆ ಅಭ್ಯಾಗತ ಅತಿಥಿ ಈಗಾಗಲೇ ಬಂದು ಒಕ್ಕರಿಸಿದ್ದಾನೆ. ಬೆಳ್ಳಂಬೆಳಗ್ಗೆ ವಾತಾವರಣದ ಉಷ್ಣತೆಯನ್ನು ನಲವತ್ತೈದು ಡಿಗ್ರಿ ಫ್ಯಾರನ್‌ಹೈಟ್ ಮಟ್ಟಕ್ಕೆ ಇಳಿಸಿ ಸಂತಸ ಪಡುತ್ತಾನೆ. ಇದ್ದ ಒಂದೆರಡು ದಿನಗಳನ್ನಾದರೂ ಹಾಯಾಗಿ ಡೆಕ್ ಮೇಲೆ ಕಳೆಯೋಣವೆಂದರೆ ಈತ ವರುಣನೊಂದಿಗೆ ಬಿನ್ನಾಣದ ಸ್ನೇಹವನ್ನೂ ಬೆಳೆಸಿ ವರ್ಷಧಾರೆಯನ್ನು ಸುರಿಸುತ್ತಾನೆ. ಬೇಡಾ-ಬೇಡಾ ಎಂದರೂ ಬೇಡದ್ದನ್ನೇ ಮಾಡದ ಹಠ ಹಿಡಿದ ಪೋರನಂತೆ, ಇಂದು ಏನಾದರೂ ಸಿಕ್ಕಿದ್ದು ಸಿಕ್ಕಲಿ ಎನ್ನುವ ಚೋರನಂತೆ ಇವನ ಮನ. ಇವನ ಸ್ನೇಹವನ್ನು ಬೆಳೆಸದಿದ್ದರೆ ಬೇರೆ ದಾರಿಯೇನಿದೆ? ಇವನಿಗೆ ಸಲಾಮು ಹೊಡೆದು ಸಹಕರಿಸುತ್ತಿದ್ದ ಹಾಗೆ ಇವನ ಅಣ್ಣ ವಿಂಟರ್ ಬರುತ್ತಾನೆ - ಇವರೆಲ್ಲರ ಅಟ್ಟ ಹಾಸಕ್ಕೆ ಸಿಕ್ಕಿ ನೆರೆಹೊರೆ ಮರುಗುವುದರೊಳಗೆ ಮತ್ತೆ ನಂತರ ಸ್ಪ್ರಿಂಗ್ ಬಂದು ಸೂರ್ಯನ ಮಾಮೂಲಿ ಡ್ಯೂಟಿ ಆರಂಭವಾಗುವಾಗ ಇನ್ನು ಯಾವ ಕಾಲವಿದೆಯೋ ಅದೆಷ್ಟು ದೂರವೋ ಎಂದು ಎಣಿಸುತ್ತಿರುವ ಹೊತ್ತಿಗೆ ಯಾವಾಗಲೂ ಒಂದೇ ಮುಖವನ್ನು ಹೊತ್ತಿಕೊಂಡ ಆಫೀಸಿನ ಬಿರುಸು ಡ್ರೈವ್ ವೇ ಎದುರಿಗೆ ಸಿಕ್ಕು ಮತ್ತಿನ್ಯಾವುದೋ ಆಲೋಚನೆಯಲ್ಲಿ ಮನಸ್ಸು ತೊಡಗಿಕೊಳ್ಳುತ್ತದೆ. ಹೀಗೆ ಆಫೀಸ್ ಹೊಕ್ಕು ಮತ್ತೆ ಹೊರಬರುವವರೆಗೆ ಈ ಅತಿಥಿಗಳು ನನ್ನನ್ನು ಅಷ್ಟೊಂದು ಕಾಡೋದಿಲ್ಲವೆನ್ನುವುದು ನಿಜ.