Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Saturday, November 07, 2009

ನಮ್ಮ ದೇಶ ನಮ್ಮದು!

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು.  ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ.  ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

 

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು.  ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ.  ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು.  ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು.  ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು.  ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

 

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ.  ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು.  ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು.  ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ.  ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ.  ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು.  ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

 

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು?  ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ?  ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ?  ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ?  ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು?  ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

 

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು.  ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ.  ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ.  ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.

Tuesday, November 03, 2009

...there goes Jon Corzine!

ನ್ಯೂ ಜೆರ್ಸಿ ಅಂದರೆ ಡೆ‌ಮಾಕ್ರಟಿಕ್ ರಾಜ್ಯ - ಹತ್ತು ವರ್ಷಗಳಿಗಿಂತಲೂ ಹೆಚ್ಚು ಡೆಮಾಕ್ರಟಿಕ್ ಪಕ್ಷದವರು ಆಡಳಿತ ನಡೆಸಿಕೊಂಡು ಬಂದ ಸಂಭ್ರಮ ಇಂದು ಗವರ್ನರ್ ಜಾನ್ ಕಾರ್‌ಝೈನ್ ಎಲೆಕ್ಷನ್ನಿನ್ನಲ್ಲಿ ಸೋಲುವುದರೊಂದಿಗೆ ಕೊನೆಯಾಯಿತು ಅನ್ನಬಹುದು.

ನಮ್ಮಂಥವರು, ಅದೇ ಹಸಿರು ಕಾರ್ಡು ಫಲಾನುಭವಿಗಳು, ಇಲ್ಲಿ ಮತ ಚಲಾವಣೆ ನಡೆಸದಿದ್ದರೂ ರಾಜ್ಯದಾದ್ಯಂತ ನಡೆಯೋ ಚುನಾವಣೆಯ ವಿಚಾರಗಳನ್ನು ಬೇಡವೆಂದು ದೂರವಿರಿಸಿದರೂ ಅವುಗಳ ವಿಚಾರ ಒಂದಲ್ಲ ಒಂದು ರೀತಿಯಿಂದ ನಮ್ಮ ಮನ-ಮನೆಗಳಲ್ಲಿ ನುಸುಳುವುದು ಸಹಜ. ರಾಜ್ಯದ ಬಜೆಟ್, ನಿರುದ್ಯೋಗ, ಆದಾಯ ತೆರಿಗೆ, ಹೈವೇ ಸುಂಕ ಮೊದಲಾದವುಗಳು ಎಲ್ಲರಿಗೂ ಅನ್ವಯವಾಗುತ್ತವೆ.

ವಾಲ್‌ಸ್ಟ್ರೀಟ್ ಗುರು, ಗೋಲ್ಡ್‌ಮನ್ ಸ್ಯಾಕ್ಸ್‌ನ ಎಕ್ಸಿಕ್ಯೂಟಿವ್ ಎಂದೇ ಪ್ರಖ್ಯಾತಿಯಾಗಿದ್ದ ಜಾನ್ ಕಾರ್‌ಝೈನ್ ಕೇವಲ ವರ್ಷಕ್ಕೆ ಒಂದೇ ಒಂದು ಡಾಲರ್ ಸಂಬಳ ತೆಗೆದುಕೊಂಡು ಹೆಸರು ಮಾಡಿದ ಮನುಷ್ಯ. ಜಾನ್ ಪಕ್ಕದ ನ್ಯೂ ಯಾರ್ಕ್ ನಗರ ಮೇಯರ್ (ಮತ್ತೊಮ್ಮೆ ಮೂರನೇ ಟರ್ಮ್‌ಗೆ ಇಂದು ಆಯ್ಕೆಗೊಂಡ) ಮೈಕಲ್ ಬ್ಲೂಮ್‌ಬರ್ಗ್ ಥರ ಬಿಲಿಯುನರ್ ಅಲ್ಲದಿದ್ದರೂ ಮಲ್ಟಿ ಮಿಲಿಯನರ್ ಖಂಡಿತ ಹೌದು. ಅಂಥವರಿಗೆ ಈ ಗವರ್ನರ್‌ಗೆ ಕೊಡುವ ಸಂಬಳ ಯಾವ ಲೆಕ್ಕವೂ ಅಲ್ಲ. ಜಾನ್ ಕಾರ್‌ಝೈನ್‌ನ ಮಾತುಗಳನ್ನು ಕೇಳಿದರೆ, ಅದು ಯಾವುದೇ ಸಮಾರಂಭದಲ್ಲಿರಬಹುದು ಅಥವಾ ಎಲೆಕ್ಷನ್ನ್ ಕ್ಯಾಂಪೇನ್‌ನಲ್ಲಿರಬಹುದು, ಅವರು ಹಿಂದೆ ವಾಲ್‌ಸ್ಟ್ರೀಟ್‌ನಲ್ಲಿ ಒಬ್ಬ ಎಕ್ಸಿಕ್ಯೂಟಿವ್ ವರ್ಚಸ್ಸನ್ನು ಬಳಸಿಕೊಳ್ಳೋದಿಲ್ಲ ಅಥವ ತೋರಿಸಿಕೊಳ್ಳೋದಿಲ್ಲ ಎನ್ನೋದು ನನ್ನ ಅನಿಸಿಕೆ. ಜೊತೆಗೆ, ಒಬ್ಬ ಸೀಜನ್ಡ್ ರಾಜಕಾರಣಿಯ ಚಾಕಚಕ್ಯತೆ, ತಂತ್ರಗಳೂ ಅವರಿಗೆ ಈ ನಾಲ್ಕು ವರ್ಷಗಳಲ್ಲಿ ಸಿದ್ಧಿಸಿದ ಹಾಗೆ ಕಂಡುಬರಲಿಲ್ಲ.

ಐತಿಹಾಸಿಕವಾಗಿ ಹಾಲಿ ಗವರ್ನರ್ ಮರು ಎಲೆಕ್ಷನ್ನಿನ್ನಲ್ಲಿ ಸೋಲುವುದು ನ್ಯೂ ಜೆರ್ಸಿಯಲ್ಲಿ ಗಮನಾರ್ಹವಾದುದು. ಕೇಂದ್ರದಲ್ಲಿ ಡೆಮಾಕ್ರಟಿಕ್ ಸರ್ಕಾರ ಇದ್ದು - ಕಾಂಗ್ರೆಸ್, ಸೆನೆಟ್, ವೈಟ್‌ಹೌಸ್ ಎಲ್ಲಕಡೆಗೆ ಡೆಮಾಕ್ರಟ್ ಪಕ್ಷದವರು ತುಂಬಿರುವ ಸನ್ನಿವೇಶದಲ್ಲಿ ಹಾಗೂ ಒಬಾಮ ಖುದ್ದಾಗಿ ಬಂದು ಕ್ಯಾಂಪೇನ್‌ನಲ್ಲಿ ಭಾಗವಹಿಸಿದ್ದರೂ ಇದ್ದ ಸೀಟ್ ಅನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಬಹಳ ದೊಡ್ಡ ವಿಷಯವಾಗುತ್ತದೆ. ಇಲ್ಲಿ ರಿಪಬ್ಲಿಕನ್ ಪಕ್ಷದ್ದ ಕ್ರಿಸ್ ಕ್ರಿಸ್ಟೀಯ ಜಯ, ಸಫಲತೆ ಮುಖ್ಯವಾಗಿ ಕಾಣಿಸುತ್ತದೆ. ಹೀಗೇ ವರ್ಜೀನಿಯ ರಾಜ್ಯದಲ್ಲೂ ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಗವರ್ನರ್ ಸೀಟು ಉಳಿಯದೆ ಅದೂ ರಿಪಬ್ಲಿಕನ್ ಪಕ್ಷದವರ ಪಾಲಾಗಿರುವುದು ಮತ್ತೊಂದು ಮುಖ್ಯ ಅಂಶ.

ಈ ಎರಡು ಅಂಶಗಳನ್ನು ಗಮನಿಸಿ ಇನ್ನು ಮೂರು ವರ್ಷಗಳ ನಂತರ ಬರುವ ಪ್ರೆಸಿಡೆಂಟ್ ಎಲೆಕ್ಷನ್ನ್ ಬಗ್ಗೆ ಈಗಲೇ ಏನನ್ನು ಹೇಳುವುದು ತಪ್ಪಾಗುತ್ತದೆ. ಆದರೆ, ಕಳೆದ ವರ್ಷ ಓಟಿನಲ್ಲಿ ಭಾಗವಹಿಸಿದಷ್ಟು ಜನ ಮುಖ್ಯವಾಗಿ ಮೊಟ್ಟ ಮೊದಲನೇ ಭಾರಿ ಮತ ಚಲಾಯಿಸಿದವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖುವಾಗಿರುವುದು ಗೊತ್ತಾಗುತ್ತದೆ.

ನಾವು, ನ್ಯೂ ಜೆರ್ಸಿಯ ಜನ, ಈ ಹೊಸ ರಿಪಬ್ಲಿಕನ್ ರಾಜ್ಯ ಸರ್ಕಾರದ ಕಡೆಗೆ ನೋಡುತ್ತೆವೆ, ಹಾಗಾದರೂ ಒಂದಿಷ್ಟು ಟ್ಯಾಕ್ಸ್ ಕಡಿಮೆಯಾಗಲಿ ಎಂದು!

***

ದೂರದಲ್ಲಿ - ನಾವು, ನಮ್ಮ ಕರ್ನಾಟಕದ ಮುಖ್ಯಮಂತ್ರಿ ಎಡೆಯೂರಪ್ಪನವರ ಸರ್ಕಾರ, ಅವರ ಖುರ್ಚಿಗೆ ಏನು ಆತಂಕ ಕಾದಿದೆಯೋ ಎಂದು ಬಿಟ್ಟುಗಣ್ಣು ಬಿಟ್ಟು ನೋಡುತ್ತಲೇ ಇದ್ದೇವೆ. ಅಲ್ಲಿ ಐದು ವರ್ಷಗಳ ಒಬ್ಬ ಮುಖ್ಯ ಮಂತ್ರಿಯ ಆಳ್ವಿಕೆ ಮುಂದುವರೆಯಲಿ, ರಾಜ್ಯದ ಜನರಿಗೆ ನೆಮ್ಮದಿ ಸಿಗಲಿ ಎನ್ನುವುದು ಆಶಯ ಅಷ್ಟೇ. ಎರಡೆರಡು ವರ್ಷಕ್ಕೊಮ್ಮೆ ಎಲೆಕ್ಷನ್ನುಗಳನ್ನು ನಡೆಸಿಕೊಂಡು ಹಣ ಚೆಲ್ಲುವುದರ ಬದಲು ಇದ್ದ ಸರ್ಕಾರವನ್ನೇ ಮುಂದುವರೆಸಿಕೊಂಡು ಒಳಜಗಳಗಳು ಮುಖ್ಯವಾಗದೇ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಮುಖ ತೋರುವುದು ಒಳಿತು.

Monday, November 02, 2009

ಬಿಸಿನೆಸ್ಸ್ ಮೈಂಡ್

’ವ್ಯವಹಾರ ಅನ್ನೋದು ನಮ್ಮ ರಕ್ತದಲ್ಲೇ ಬಂದಿಲ್ಲಾ ಕಣ್ರಿ!’ ಎಂದು ನನ್ನ ಸಹೋದ್ಯೋಗಿಯೊಬ್ಬರಿಗೆ ಹೇಳಿದ್ದಕ್ಕೆ ಅವರು ದೊಡ್ಡದಾಗಿ ನಕ್ಕು ’ಅದು ರಕ್ತದಲ್ಲಿ ಬರಬೇಕಾದ್ದಿಲ್ಲ, ಮನಸ್ಸಿನಲ್ಲಿದ್ದರಾಯಿತು, ರಿಸ್ಕ್ ತೆಗೆದುಕೊಂಡು ಮುಂದುಬರಬೇಕು ಎನ್ನುವುದು ವಂಶಪಾರಂಪರ್ಯವಾಗಿರಬೇಕು ಎಂದೇನು ಇಲ್ಲವಲ್ಲ’ ಎಂದರು.

ಇತ್ತೀಚೆಗೆ ನನ್ನ ಮತ್ತೊಬ್ಬ ಗುಜರಾತ್ ಮೂಲದ ಸಹೋದ್ಯೋಗಿಯೊಬ್ಬರು once for all, for good ಎಂದು ನಮ್ಮ ಕಂಪನಿಯಿಂದ ರಿಟೈರ್‌ಮೆಂಟ್ ಪ್ಯಾಕೇಜ್ ತೆಗೆದುಕೊಂಡು ತಮ್ಮ ತಂದೆಯ ಬಿಸಿನೆಸ್ಸ್ ನೋಡಿಕೊಳ್ಳುವುದಕ್ಕೋಸ್ಕರ ಭಾರತಕ್ಕೆ ಹೊರಡುವ ಸುದ್ದಿಯ ಹಿನ್ನೆಲೆಯಲ್ಲಿ ನಾವು ಮಾತನಾಡಿಕೊಳ್ಳುತ್ತಿದ್ದೆವು.

ನಾವು ಈ ಕಂಪನಿಯ ನೌಕರರಾಗಿ ಇಲ್ಲಿ ತೊಡಗಿಸುವ ಶ್ರಮವನ್ನೇ ನಮ್ಮ ನಮ್ಮ ಉದ್ಯಮದಲ್ಲಿ ತೊಡಗಿಸಿದ್ದೇ ಆದರೆ ಅದು ಖಂಡಿತವಾಗಿ ಮುಂದೆ ಬರುವುದುರಲ್ಲಿ ಸಂಶಯವಿಲ್ಲ, ಎಲ್ಲರೊಳಗೂ ಒಬ್ಬ ಆಂಟ್ರಪ್ರೀನರ್ (entrepreneur) ಇರುತ್ತಾನೆ, ಆ ಸುಪ್ತಾವಸ್ಥೆಯ ಮನಸ್ಥಿತಿಯನ್ನು ಜಾಗೃತಗೊಳಿಸಬೇಕಷ್ಟೇ ಎನ್ನುವುದು ನನ್ನ ಸಹೋದ್ಯೋಗಿಯ ವಾದ.

ಅದಕ್ಕೆ ಪ್ರತಿಯಾಗಿ, ಬಿಸಿನೆಸ್ಸ್ ಎಂದರೆ ಸುಮ್ಮನೇ ಆಗುತ್ತಾ, ಹತ್ತರಲ್ಲಿ ಒಂಭತ್ತು ಮುಳುಗುವ ಸಾಧ್ಯತೆಯೇ ಹೆಚ್ಚಿರುವಾಗ, ಎಲ್ಲೋ ಒಂದು nitch ಏರಿಯಾ ಹಿಡಿದುಕೊಂಡು ಅದನ್ನೇ ಹಗಲೂ-ರಾತ್ರಿ ಧ್ಯಾನಿಸಿ ಮೇಲೆ ತಂದು ಅದನ್ನು ಬೆಳೆಸುವುದು ಅಂದರೆ ಸುಮ್ಮನೆಯೇ? ಅದಕ್ಕೆ ಈಗ - ಈ ಪರಿಸ್ಥಿತಿ, ಕಾಲ, ಸಂದರ್ಭ - ಇವೆಲ್ಲ ತಕ್ಕುವೇನು? ಎನ್ನುವುದು ನನ್ನ ವಾದ.

ನಾವು ಮೊದಲಿನಿಂದಲೂ ಅಷ್ಟೇ, ದಕ್ಷಿಣ ಭಾರತೀಯರು. ಸರ್ಕಾರಿ ಕೆಲಸ ಸಿಗುವುದು ನಮ್ಮ ಮನೆತನಗಳಲ್ಲಿ ದೊಡ್ಡ ವಿಷಯ, ತಲ-ತಲಾಂತರದಿಂದ ಸರ್ಕಾರದ ಸೇವೆ ದೇವರ ಸೇವೆ ಎಂದು ಬೆಳೆದುಬಂದವರು ನಾವು. ಈ ಬಿಸಿನೆಸ್ಸ್ ಸ್ಯಾವಿ ಮನಸ್ಸು, ಅದರ ಒಳ-ಹೊರಗಿನ ಸೆನ್ಸಿಟಿವಿಟಿಗಳು ನಮಗೆ ತಿಳಿದವೇ? ನಮಗೆ ಒಂದು ಸಹಾಯ ಹಸ್ತವೂ ಇಲ್ಲದಿರುವಾಗ ಯಾವ ಪಾರ್ಟನರುಗಳನ್ನು ನೆಚ್ಚಿಕೊಂಡು ಏನನ್ನು ಸಾಧಿಸೋದು? ಬಿಸಿನೆಸ್ಸು ಎಂದರೆ ಯಾವ ರಂಗವನ್ನು ಆಯ್ದುಕೊಳ್ಳೋದು? ಅದರ ಮಾರ್ಕೆಟ್ ರಿಸರ್ಚ್ ಮಾಡುವವರು ಯಾರು? ಮಾಡುವುದು ಯಾವಾಗ? ಅದಕ್ಕೆ ತಕ್ಕ ಇನ್‌ವೆಸ್ಟ್‌ಮೆಂಟ್ ಎಲ್ಲಿಂದ ತರೋದು? ಕಷ್ಟಮರುಗಳು ಯಾರು? ಕಂಪನಿಯ ಧ್ಯೇಯ-ಧೋರಣೆಗಳೇನು? ಉತ್ಪಾದಿಸುವ ವಸ್ತು ಯಾವುದು? ಕೊಡುವ ಸೇವೆ ಏನು, ಇತ್ಯಾದಿ ಇತ್ಯಾದಿ...ಪುಂಖಾನುಪುಂಕ ಪ್ರಶ್ನೆಗಳು ಶುರುವಷ್ಟೇ ಇದು.

ಇದೇ ದಿನ ಮಧ್ಯಾಹ್ನ ಟೆಕ್ಸಾಸ್‌ ಮೂಲದ ಬಿಸಿನೆಸ್ಸ್ ಅನ್ನು ನಮ್ಮ ಕಂಪನಿಗೆ ಪರಿಚಯಿಸಲು ವಿಸಿಟರ್ರ್ ಒಬ್ಬರು ಬಂದಿದ್ದರು. ಅವರು ಭಾರತೀಯ ಮೂಲದವರು ಎಂದು ತಿಳಿದು ಆಶ್ಚರ್ಯದ ಜೊತೆ ಸಂತೋಷವೂ ಆಯಿತು. ಗಂಡ-ಹೆಂಡತಿ ಇಬ್ಬರು ಸೇರಿ ಅಮೇರಿಕದಲ್ಲಿ ಒಂದು ಕನ್ಸಲ್‌‍ಟಿಂಗ್ ಕಂಪನಿಯನ್ನು ತೆರೆದಿದ್ದಾರೆ, ಅದರ ಮಾರ್ಕೆಟಿಂಗ್‌ನಿಂದ ಹಿಡಿದು ಎಲ್ಲ ವಿಷಯವನ್ನೂ ಗಂಡ-ಹೆಂಡತಿಯೇ ನೋಡಿಕೊಳ್ಳುತ್ತಾರೆ ಎಂದು ತಿಳಿದು ಆಶ್ಚರ್ಯವಾಯಿತು. ೨೦೦೬ ರಲ್ಲಿ ಕೆಲಸ ಕಳೆದುಕೊಂಡ ಅವರು ಒಂದು ಹೊಸ ಕಂಪನಿಯನ್ನು ಹುಟ್ಟುಹಾಕಿ ಒಂದು ಮಟ್ಟಕ್ಕೆ ಬೆಳೆಸಿದ್ದು ಈ ಎಕಾನಮಿಯಲ್ಲಿ ಗಮನಾರ್ಹವೇ.

ಹೀಗೆ ಅಲ್ಲಲ್ಲಿ ಹಲವಾರು ಯಶಸ್ಸಿನ ಹಾಗೂ ಫೇಲಾದ ಉದ್ಯಮಗಳು ಕೇಳಿಬರುವುದು ಸಹಜ, ಆದರೆ ನನ್ನ ಮನಸ್ಸು ಮಾತ್ರ ಪೇ-ಚೆಕ್ ನಿಂದ ಪೇ-ಚೆಕ್‌ಗೆ ಅಂಟಿಕೊಂಡು ಬಿಟ್ಟಿದೆ. ರಿಸ್ಕ್ ತೆಗೆದುಕೊಳ್ಳುವುದಿರಲಿ, ಅದರ ಬಗ್ಗೆ ಯೋಚಿಸುವುದಕ್ಕೂ ಪುರುಸೊತ್ತು ಇಲ್ಲ ಎನ್ನುವಂತಾಗಿದೆ.

ನಿಮ್ಮ ನಿಮ್ಮ ಪರಿಸ್ಥಿತಿ ಏನು? ನೀವು ನಿಮ್ಮದೇ ಬಿಸಿನೆಸ್ಸ್ ಆರಂಭಿಸಿದ್ದೀರೋ ಅಥವಾ ಬೇರೆಯವರ ಬಿಸಿನೆಸ್ಸಿನಲ್ಲಿ ಒಂದಾಗಿ ಹೋಗಿದ್ದೀರೋ?

Sunday, November 01, 2009

ಅದುಮಿಕೊಂಡ ಆಸೆ-ಆತಂಕ

B&H ಪ್ರೊಫೆಷನಲ್ ಕ್ಯಾಟಲಾಗ್ ಇಟ್ಟುಕೊಂಡು ಒಂದೊಂದೇ ಕೆಟಗರಿಯನ್ನು ನೋಡುತ್ತಾ ಇದ್ದಂತೆಲ್ಲಾ ಏನೇನ್ನನ್ನೆಲ್ಲ ಮಾಡಬಹುದು ಮಾಡಬಹುದಿತ್ತು ಎನ್ನಿಸಿತು. ಪ್ರೊಫೆಷನ್ ಆಡಿಯೋ, ವಿಡಿಯೋ, ಆಪ್ಟಿಕಲ್, ಕಂಪ್ಯೂಟರ್, ಸ್ಟೋರೇಜ್, ಕ್ಯಾಮೆರಾ...ಹೀಗೆ ವಿಧ ವಿಧವಾದ ವಸ್ತುಗಳನ್ನೆಲ್ಲ ನೋಡುತ್ತಿದ್ದ ಹಾಗೆ, ಅಯ್ಯೋ ಅದನ್ನು ಮಾಡಬಹುದಿತ್ತು, ಇದನ್ನು ಮಾಡಬಹುದಿತ್ತು...ಎನ್ನಬಹುದಾದ ಆಸೆಗಳೆಲ್ಲವೂ ಅದೆಲ್ಲೋ ಅದುಮಿಟ್ಟು ಹೊರಗೆ ಬಿಟ್ಟ ಸ್ಪ್ರಿಂಗಿನಂತೆ ತಮ್ಮೊಳಗಿನ ಪ್ರಚನ್ನ ಶಕ್ತಿಯನ್ನು ತೋರ್ಪಡಿಸತೊಡಗಿದವು.

ಟರ್ಮಿನಲ್ ಕಾಯಿಲೆಗೊಳಗಾದ ಕ್ಯಾನ್ಸರ್ ರೋಗಿಯ ಮನದಾಳದ ಆಸೆಗಳಂತಲ್ಲದಿದ್ದರೂ ಪ್ರತಿಯೊಬ್ಬರಿಗೂ ಅವರವರೊಳಗೆ ಮೂಲೆಗುಂಪು ಮಾಡಿದ ಅದೆಷ್ಟೋ ಮನದಾಳದ ಆಮಿಷಗಳಿದ್ದಾವು: ಅದು ಫೋಟೋ ತೆಗೆಯುವ ಹವ್ಯಾಸವಾಗಿರಬಹುದು, ಚಿತ್ರಕಲೆಯಾಗಿರಬಹುದು, ಸಂಗೀತದ ಸಾಧನೆಯ ವಿಷಯವಾಗಿರಬಹುದು, ಪುಸ್ತಕ ಬರೆದು ಪ್ರಕಟಿಸುವ ಹುನ್ನಾರವಿರಬಹುದು, ನಾಟಕ-ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಇರಬಹುದು, ಮ್ಯಾರಥಾನ ಓಡುವ ಕನಸಿರಬಹುದು, ದೊಡ್ಡ ಉದ್ಯಮಿಯಾಗುವ ಬಯಕೆ ಇರಬಹುದು, ಅಥವಾ ಊರಿನ ಪಂಚಾಯತಿಯ ಮುಖಂಡನೋ ದೊಡ್ಡ ರಾಜಕೀಯ ವ್ಯಕ್ತಿಯೋ...ಇನ್ನೂ ಏನೇನೋ ಕನಸುಗಳಿರಬಹುದು.

ನಮಗೆಲ್ಲ ಹೀಗೆ ಒಂದೊಂದು ಸಾಫ್ಟ್ ಕಾರ್ನರ್ ಇದೆ, ನಮ್ಮ ದಿನನಿತ್ಯದ ಗೊಂದಲವನ್ನು ಬದಿಗಿಟ್ಟು ಯಾವುದಾದರೊಂದು ರಿಸಾರ್ಟ್‌ನ ಹಾಸುಗಲ್ಲಿನ ಮೇಲೆ (ಅಥವಾ ಬೆಂಚ್‌ನ ಮೇಲೆ) ಮಲಗಿ ಅಗಾಧವಾದ ಮುಗಿಲನ್ನು ನೋಡುತ್ತಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾ ಇದ್ದರೆ ಒಂದು ದಿನವೋ ಅಥವಾ ಒಂದು ವಾರದ ನಂತರವಾದರೂ ಹೀಗೆ ಮಾಡಬೇಕು ಅಥವಾ ಮಾಡಬಹುದಿತ್ತು ಎನ್ನುವ ಅನೇಕಾನೇಕ ಯೋಚನೆಗಳು ಖಂಡಿತ ಬಂದೇ ಬರುತ್ತವೆ. ಆಂತೊನಿ ಬೋರ್ಡೇನ್‌ನ ಟ್ರಾವೆಲ್ ಅನುಭವದ ಬಗ್ಗೆ ಬರೆಯುತ್ತಾ ಮರಳುಗಾಡು ನಮಗೆ ಹೇಗೆ ಅತಿ ಅಗತ್ಯವಾದ ಧ್ಯಾನಕ್ಕೆ ತಕ್ಕುನಾದ ನಿಶ್ಯಬ್ದವಾದ ಒಂದು ನೆಲೆಯನ್ನು ಒದಗಿಸುವ ಬಗ್ಗೆ ಬರೆದಿದ್ದೆ. ಒಂದಲ್ಲ ಒಂದು ದಿನ ನಮ್ಮ ನಮ್ಮ ಮನಸ್ಥಿತಿಯನ್ನು ಇಂತಹ ಒಂದು ಸೈಲೆನ್ಸ್‌ಗೆ ಗುರಿಮಾಡಿ ಅದರಿಂದ ಏನು ಹೊರಬಂದೀತು ಎಂದು ಕಾದು ನೋಡುವುದು ಒಳ್ಳೆಯ ಅನುಭವವಾದೀತು.

ನನ್ನ ಹತೋಟಿಯಲ್ಲಿದ್ದ ಒಂದು ಘಂಟೆಯ ಸಮಯದಲ್ಲಿ ಸುಮಾರು ಐನೂರು ಪುಟಗಳ ಕ್ಯಾಟಲಾಗ್ ಅನ್ನು ಸೆಕ್ಷನ್ನ್‌ ನಿಂದ ಸೆಕ್ಷನ್ನ್‌ಗೆ ತಿರುವಿ ಹಾಕಿದ್ದೇ ಬಂತು: ಅದರ ಪರಿಣಾಮವಾಗಿ ನನ್ನ ಕನಸಿನ ರೆಕಾರ್ಡಿಂಗ್ ಸ್ಟುಡಿಯೋಗೆ ಬೇಕಾದ ಪರಿಕರಗಳು ಕಂಡು ಬಂದವು, ಹೆಚ್ಚಿನ ಎಕ್ಸ್‌ಟರ್ನಲ್ ಕಂಪ್ಯೂಟರ್ ಸ್ಟೋರೇಜ್ ಕಾಣಿಸಿತು, ಹಗಲು-ರಾತ್ರಿ ನೋಡಬಹುದಾದ ಬೈನಾಕ್ಯುಲರ್ ಮನದಲ್ಲಿ ಒಂದು ಕ್ಷಣ ನಿಂತಿತು, ಎಲ್ಲಾ ಮ್ಯೂಸಿಕ್ ಚಾನೆಲ್ಲಿನ ಲವಲೇಶಗಳನ್ನೂ ಬಿಡಿಬಿಡಿಯಾಗಿ ಹೊರಗೆ ಹಾಕುವ ಸುಂದರ ಹೋಮ್ ಥಿಯೇಟರ್ ಸಿಸ್ಟಮ್ಮ್‌ಗಳು ಕಂಡು ಬಂದವು, ನೂರೈವತ್ತು-ಇನ್ನೂರು ವ್ಯಾಟ್ ಪವರ್ ಇರುವ ಸ್ಪೀಕರುಗಳು ಕಂಡುಬಂದವು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು.

ಇನ್ನು ಈ ಎಕ್ಸ್‌ಪ್ಲೋರೇಷನ್ನಿನ್ನ ಮುಂದುವರಿದ ಭಾಗವಾಗಿ ಒಂದೆರಡು ಅಂಶಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ರಿಸರ್ಚ್ ಮಾಡಿದ್ದೂ ಆಯಿತು...ಒಂದು ಘಂಟೆಯ ನಂತರ ಪ್ರಚನ್ನ ಶಕ್ತಿಯ ಬಲದಿಂದಾಗಿ ಚಿಮ್ಮಿದ ಆಸೆ-ಆಕಾಂಕ್ಷೆಗಳು ಮತ್ತೆ ಗೂಡು ಸೇರಿಕೊಂಡವು. ಅದು ಮಾಡಬಹುದು-ಇದು ಮಾಡಬಹುದು ಎನ್ನುವ ಹೇಳಿಕೆಯ ಮೊದಲೇ ಅದು ಮಾಡಬೇಕು-ಇದು ಮಾಡಬೇಕು (ಭಾನುವಾರ ಮುಗಿಯುವುದರೊಳಗೆ) ಎನ್ನುವುದು ಬಲವಾಗತೊಡಗಿತು.

***
ಇಲ್ಲಿನ ಕಿರಾಣಿ ಅಂಗಡಿಯಲ್ಲಿ ನೋಡಿ-ಕೇಳಿದ್ದು: ಮಧ್ಯಮ ವಯಸ್ಸಿನ ಕಕೇಷಿಯನ್ ದಂಪತಿಗಳಿಬ್ಬರು ಅಂಗಡಿಯಲ್ಲಿ ಮಾರಟಕ್ಕೆ ಇಟ್ಟ ರಕ್ಕಸಕಳ್ಳಿಯನ್ನು (Aloe-vera) ನೋಡಿ:
"ಇದನ್ನು ಏತಕ್ಕೆ ಮತ್ತು ಹೇಗೆ ಬಳಸುತ್ತಾರೆಂದು ನಿನಗೆ ಗೊತ್ತೇನು?"
"ಇಲ್ಲ..."
"May be we will give it a shot in our next life..."

***
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು!

Wednesday, October 28, 2009

ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ರೇಡಿಯೋ ನ್ಯೂಸ್ ಆಗ್ಲಿ ಅಥವಾ ಬಿಸಿನೆಸ್ ನ್ಯೂಸ್‌ಗಳನ್ನ ಕೇಳ್ತಾ ಹೋದ್ರೆ, ಅಲ್ಲಿ-ಇಲ್ಲಿ ಓದ್ತಾ ಇದ್ರೆ ತುಂಬಾ ತಲೆ ತಿಂತಾರೆ ಅನ್ಸಿದ್ದು ಇತ್ತೀಚೆಗೆ. ಬಹಳಷ್ಟು ಇನ್‌ಫರ್‌ಮೇಷನ್ ಓವರ್‌ಲೋಡ್, ಜೊತೆಗೆ ಸಾವಿರಾರು ಅನಾಲಿಸಿಸ್ಸುಗಳು ರಿಪೋರ್ಟುಗಳು ಇತ್ಯಾದಿ. ಅಬ್ಬಾ, ಸಾಕಪ್ಪಾ ಸಾಕು ಅನ್ಸೋ ಮಟ್ಟಿಗೆ ಒಮ್ಮೊಮ್ಮೆ.

ಯಾವ್ದೇ ಬಿಸಿನೆಸ್ ಚಾನೆಲ್ಲನ್ನ ಹಾಕಿ ನೋಡಿ ಅಲ್ಲಿನ ರಿಪೋರ್ಟರುಗಳು, ಮಾಡರೇಟರುಗಳು ಎಲ್ಲರೂ ತಾರಕ ಸ್ವರದಲ್ಲಿ ಕಿರುಚಿಕೊಳ್ತಾರೇನೋ ಅನ್ನೋ ಮಟ್ಟಿಗೆ ಉದ್ರಿಕ್ತರಾಗಿರ್ತಾರೆ. ಜೊತೆಗೆ ಉನ್ನತ ತಂತ್ರಜ್ಞಾನದ ಸಹಾಯದಿಂದ ಟಿವಿ ಸ್ಕ್ರೀನಿನ ತುಂಬಾ ಎಷ್ಟೊಂದು ಬಾರ್ಕರ್ ಮೆಸ್ಸೇಜುಗಳು, ವಿಡಿಯೋಗಳಲ್ಲೇ ವಿಡಿಯೋಗಳು, ಬ್ಯಾನರುಗಳು, ಗ್ರಾಫ್, ನಂಬರುಗಳು, ಹಲವಾರು ಕಮಾಡಿಟಿಗಳು ಅವುಗಳ ಬೆಲೆಯಲ್ಲಿನ ನಿರಂತರ ಬದಲಾವಣೆಯನ್ನು ನಿಖರವಾಗಿ ತೋರಿಸಿ ಅಳೆಯೋ ಸೂಚಕಗಳು, ಹೀಗೆ ಹಲವಾರು ರೀತಿಯ "ಕಣ್ಸೆಳೆಯುವ" ವಿಧಿವಿಧಾನಗಳು.

ಟಿವಿ ಸ್ಟೇಷನ್ನುಗಳಿಗೆ ಒಮ್ಮೆ ಅಲ್ಲಿಗೆ ಬಂದ ವೀಕ್ಷಕರನ್ನು ಕಟ್ಟಿ ಹಾಕುವ ಚಿಂತೆ. ರಿಪೋರ್ಟರುಗಳಿಗೆ ತಮ್ಮ ಅನಾಲಿಸಿಸ್ಸೇ ದೊಡ್ಡದು ಎಂದು ತೋರಿಸಿಕೊಳ್ಳುವ ಹಂಬಲ. ಜೊತೆಗೆ ಅವರು ತೋರಿಸೋ ಸಂದೇಶಗಳ ಹಿಂದೆ ಸ್ಮಾಲ್ ಪ್ರಿಂಟು. "ನಾವು ನಾಳೆಯನ್ನು ಕಂಡಿಲ್ಲ" ಎನ್ನುವ ಸೂಚನೆಯ ಜೊತೆಗೇ "ನಮ್ಮ ಚಿಂತನೆ ನಾಳೆಯ ಪ್ರತಿರೂಪ" ಎನ್ನುವ ಅಹವಾಲು! ಈ ಅಹವಾಲು, ಕೋರಿಕೆ, ಸಂದೇಶ, ಚಿಂತನೆ ಇವೆಲ್ಲ ನೋಡುಗರ ಮುಂದೆ ದೊಡ್ಡ ಜನರ ಸಂತೆಯಂತೆ ಕಂಡೂ ಅವುಗಳಲ್ಲಿ ಕೆಲವೇ ಕೆಲವು ಒಬ್ಬೊಬ್ಬರಿಗೆ ಲಾಂಗ್‌ಟರ್ಮ್ ಇಂಡಿಕೇಟರ್ ಆಗಬಲ್ಲ ಹುನ್ನಾರ ಅಷ್ಟೇ, ಅದೂ ಏಕೆ - ತೋರಿಸಿದ್ದನ್ನೇ ತೋರಿಸ್ತಾ ಇದ್ರೆ ಇವತ್ತಲ್ಲ ನಾಳೆ ಜನಗಳು ನಂಬಿಯಾರು ಎನ್ನುವ ದೂರಾಲೋಚನೆ.

ಇವುಗಳ ಮಧ್ಯೆ ಹೇಗೆ ಬದುಕೋದು. ಎಲ್ಲದರ ಹತ್ತಿರ ಇದ್ದೂ ದೂರ ಹೇಗೆ ಇರೋದು? ಯಾವೊಂದು ಮಾಧ್ಯಮಕ್ಕೆ ಅಂಟಿಕೊಳ್ಳದೇ ನಮ್ಮ ನಮ್ಮ ರಿಟೈರ್‌ಮೆಂಟ್ ಆಗಲಿ ಹಣಕಾಸಿನ ವಿಚಾರಗಳಲ್ಲಿ ಹುಷಾರಾಗಿರೋದು ಹೇಗೆ? ಯಾರನ್ನ ನಂಬೋದು ಯಾರನ್ನ ಬಿಡೋದು? ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ಈ ಅನುಭವಗಳ ಮಿತಿಯ ಬಗ್ಗೆ ಹಿಂದೆ ಬರೆದಿದ್ದೆ - ಊರು ಕೊಳ್ಳೆ ಹೊಡೆದ ಮೇಲೆ ದೊಡ್ಡಿ ಬಾಗಿಲು ಮುಚ್ಚಿದ್ರಂತೆ ಹಾಗಾಯ್ತು. ಕಳೆದ ಎರಡು ವರ್ಷಗಳಲ್ಲಿ ಮಾರ್ಕೆಟ್ಟಿನಲ್ಲಿ ಹಣ ಕಳೆದುಕೊಂಡವರ ಸಂಖ್ಯೆ ಹೆಚ್ಚು, ಈಗ ಹಿಂತಿರುಗಿ ನೋಡಿದ್ರೆ ’ಅಯ್ಯೋ, ನಮಗೇಕೆ ಈ ವಿಷಯ ಹೊಳೆದಿರಲಿಲ್ಲ!’ ಅನ್ಸತ್ತೆ. ಹಣ ಕಳೆದುಕೊಂಡು ಚೆನ್ನಾಗಿ ಪಾಠ ಕಲಿತ ಮೇಲೆ, ಅದನ್ನು ಇಂಪ್ಲಿಮೆಂಟ್ ಮಾಡೋವಾಗ ಇನ್ನೊಂದು ಹತ್ತು ವರ್ಷ ಹಿಡಿಯುತ್ತೆ, ಅಷ್ಟರೊಳಗೆ ಮತ್ತೊಂದು ಏರಿಳಿತದ ಸೈಕಲ್ಲ್ ಬಂದಿರುತ್ತೆ. ಹೀಗೆ ಕಲಿತ ಪಾಠ ಹಳೆಯದಾಗುತ್ತಲೇ ಇರುತ್ತೆ.

ನೀವೆಲ್ಲ ಯಾವ ಯಾವ ಮಾಧ್ಯಮಗಳಿಗೆ ಗಂಟು ಬಿದ್ದುಕೊಂಡಿದ್ದೀರಿ? ನಿಮಗೆ ಯಾವ ಮಾಹಿತಿ ಯಾವ ರೂಪದಲ್ಲಿ ಯಾವುದರಿಂದ ದೊರಕುತ್ತೆ? ಅಥವಾ ನೀವೆಲ್ಲರೂ ನನ್ನ ಹಾಗೆ ಓವರ್‌ಲೋಡ್‌ನಿಂದ ಒತ್ತಡದಲ್ಲಿ ಸಿಲುಕಿಕೊಂಡಿದ್ದೀರೋ?

Thursday, October 01, 2009

ಕ್ರಿಕೆಟ್ ಕ್ಯಾಪ್ಟನ್ ಕಲಿತ ಪಾಠ

ಒಮ್ಮೆ ನಮ್ಮ ಹೈ ಸ್ಕೂಲು ವಿದ್ಯಾರ್ಥಿಗಳಲ್ಲೇ ಎರಡು ತಂಡಗಳನ್ನು ಮಾಡಿ ಒಂದು ಕ್ರಿಕೆಟ್ ಮ್ಯಾಚ್ ನಡೆಸುವ ಇರಾದೆ ನಮ್ಮ ಪಿ.ಇ. ಮೇಷ್ಟ್ರಿಗೆ ಇದ್ದಿತ್ತು. ಕ್ರಿಕೆಟ್ ಟೀಮಿನ ಮುಖ್ಯಸ್ಥನಾಗಿ ಆ ಜವಾಬ್ದಾರಿ ನನಗೇ ಬಂತು. ಆಸಕ್ತಿ ಇದ್ದ ಸಹಪಾಠಿಗಳನ್ನು ಸೇರಿಸಿಕೊಂಡು, ಅವರೆಲ್ಲರಿಂದ ಒಂದೊಂದು ರುಪಾಯಿ ಶುಲ್ಕ ವಸೂಲು ಮಾಡಿಕೊಂಡು ಕೊನೆಗೆ ಎರಡು ತಂಡಗಳನ್ನಾಗಿ ಮಾಡುವಾಗ ಆ ವಯಸ್ಸಿಗೆ ಅದು ದೊಡ್ಡ ಕೆಲಸವಾಗಿರಬೇಕು. ಈ ಎರಡು ತಂಡಗಳಲ್ಲಿ ಒಂದಕ್ಕೆ ನಾನು ಕ್ಯಾಪ್ಟನ್, ಮತ್ತೊಂದಕ್ಕೆ ನನ್ನ ಸಹಪಾಠಿಯೊಬ್ಬ. ಕೊನೆಯಲ್ಲಿ ಮ್ಯಾಚ್ ದಿನ ಹತ್ತಿರ ಬಂದಾಗ ಅದೂ ನಮ್ಮ ತಂಡ ಫೀಲ್ಡಿಂಗ್ ಮಾಡುತ್ತಿದ್ದ ಸಮಯದಲ್ಲಿ ಅಂಪೈರ್ ಒಂದು ಫೌಲ್ ಕಾಲ್ ಕೊಟ್ಟರು. ಆ ಸಮಯದಲ್ಲಿ ಎಣಿಸಲಾಗಿ ಫೀಲ್ಡಿಂಗ್ ಮಾಡುತ್ತಿದ್ದವರಲ್ಲಿ ಬೌಲರ್ ಕೀಪರ್ ಎಲ್ಲರನ್ನೂ ಸೇರಿಸಿಕೊಂಡು ಹದಿನಾಲ್ಕು ಜನ ಫೀಲ್ಡಿಂಗ್ ಮಾಡುತ್ತಿದ್ದೆವು, ಆದರೆ ನಿಯಮದ ಪ್ರಕಾರ ಹನ್ನೊಂದು ಜನ ಮಾತ್ರ ಫೀಲ್ಡಿಂಗ್ ಮಾಡಬೇಕಿತ್ತು.

ಆಗ ಅದು ದೊಡ್ಡ ಪ್ರಮಾದ, ಮ್ಯಾಚ್ ಸಂಬಂಧ ಅದಕ್ಕೆ ತಕ್ಕ ಬೆಲೆಯನ್ನು ನಾನು ತೆರಬೇಕಾಯ್ತು, ಜೊತೆಗೆ ನನ್ನ ಸಹಪಾಠಿಗಳ ಎದುರಿಗೆ ಹಾಗೆ ಅವರ ಎದುರಲ್ಲಿ ತಂಡವನ್ನು ಸರಿಯಾಗಿ ಮ್ಯಾನೇಜ್ ಮಾಡದಿದ್ದುದಕ್ಕೆ ಅಪಹಾಸ್ಯಕ್ಕೂ ಗುರಿಯಾಗಬೇಕಾಗಿ ಬಂತು. ನಾವೆಲ್ಲ ಇಲ್ಲಿಗೆ ಬಂದು ಕನ್ನಡ ಟಿವಿ ಸೀರಿಯಲ್ಲ್ ನಲ್ಲಿ ನೋಡಿದ ಹಾಗೆ ಅಲ್ಲಿನವರಿಗೆ (ಅಂದರೆ ಭಾರತದಲ್ಲಿ) ಈತರಹದ ಸಣ್ಣ-ಪುಟ್ಟ ಘಟನೆಗಳು ಬಹಳ ದೊಡ್ಡವಾಗಿ ಹೋಗುತ್ತವೆ, ಸಹಪಾಠಿಗಳೊಡನೆ, ನೆರೆಹೊರೆಯವರೊಂದಿಗೆ ಮಾನ-ಮರ್ಯಾದೆಯ ಪ್ರಶ್ನೆಯಾಗಿ ಬಿಡುತ್ತದೆ. ನನಗೂ ಅಂದು ಹಾಗಿದ್ದರಿಂದಲೇ ಎರಡು ದಶಕಗಳ ನಂತರ ಇವತ್ತಿಗೂ ಅದು ನನ್ನ ಸ್ಮರಣಪಠಲದಲ್ಲಿರೋದು ಅಂದರೆ ತಪ್ಪೇನಿಲ್ಲ.

ಆದದ್ದಿಷ್ಟೇ: ಯಾರು ಯಾರು ಕ್ರಿಕೇಟ್ ತಂಡಕ್ಕೆ ಸೇರಿಕೊಳ್ಳಬೇಕು ಎಂದುಕೊಂಡಿದ್ದರೋ ಅವರೆಲ್ಲ ಒಂದೊಂದು ರುಪಾಯಿ ಸಲ್ಲಿಸಿ ತಮ್ಮ ಹೆಸರನ್ನು ನನ್ನ ಬಳಿ ಬರೆಸಿಕೊಂಡಿದ್ದರು. ಟೀಮಿಗೆ ಹನ್ನೊಂದು ಜನ, ಒಂದಿಬ್ಬರು ಬ್ಯಾಕ್‌ಅಪ್ ಜನರನ್ನು ಬಿಟ್ಟರೆ ಉಳಿದವರಿಗೆ ಆಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇರುವಾಗ ಉತ್ಸಾಹಿ ಸಹಪಾಠಿಗಳ ಪಟ್ಟಿಯನ್ನು ಕಂಟ್ರೋಲ್ ಮಾಡಿ ಅವರೆಲ್ಲರಿಗೂ ಇತಿ-ಮಿತಿ ಹಾಗೂ ಅವರು ಆಟದಲ್ಲಿ ಆಡುವ ಅವಕಾಶ ಹಾಗೂ ನಾವು ಗೆಲ್ಲುವ ಸಾಧ್ಯತೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿತ್ತು. ಜೊತೆಗೆ ಅಗತ್ಯಕ್ಕಿಂತ ಹೆಚ್ಚಿನ ಜನ ಆಸಕ್ತಿ ತೋರಿಸಿದಾಗ ಯಾರು ಯಾರು ತಂಡಲಿದ್ದಾರೆ, ಯಾರಿಲ್ಲ ಎನ್ನುವುದನ್ನು ಸರಿಯಾಗಿ ಬಿಡಿಸಿ ಹೇಳಬೇಕಾಗಿತ್ತು ಹಾಗೂ ಟೀಮುಗಳಲ್ಲಿ ಸೆಲೆಕ್ಟ್ ಆಗದವರ ಹಣವನ್ನು ಹಿಂತಿರುಗಿಸಿ ಕೊಡಬೇಕಾಗಿತ್ತು. ಇದೆಲ್ಲವನ್ನು ನಾನು ಮಾಡಬೇಕಿತ್ತೋ, ನಮ್ಮ ಮೇಷ್ಟ್ರು ಮಾಡಬೇಕಿತ್ತೋ ಅನ್ನುವುದು ಅಷ್ಟೊಂದು ಸರಿಯಾಗಿ ನೆನಪಿಲ್ಲ. ಆದರೆ ಇವೆಲ್ಲಕ್ಕೂ ನನ್ನ ಹೊಣೆಗಾರಿಕೆಯನ್ನು ಗುರುತಿಸಿಕೊಂಡು ಅಂದು ಕಲಿತದ್ದನ್ನು ನಾನು ಯಾವತ್ತೂ ಮರೆಯಲಾರದ ಪಾಠ ಎಂದೇ ನಾನು ಈ ಘಟನೆಯನ್ನು ಗುರುತಿಸಿಕೊಳ್ಳೋದು.

ಈಗ ನನಗಿರುವ ಕೆಲಸದ ಚೌಕಟ್ಟಿನಲ್ಲಿ ಪ್ರತಿದಿನವೂ ಮಾತನಾಡುತ್ತೇವೆ - ಅವೇ ರೆಸ್ಪಾನ್ಸಿಬಿಲಿಟಿ, ಅಕೌಂಟೆಬಿಲಿಟಿ, ಲೀಡರ್‌ಶಿಪ್, ಇನಿಷಿಯೇಟಿವ್ - ಮೊದಲಾದ ಪದಗಳು ಪುಂಖಾನುಪುಂಖವಾಗಿ ಬಳಕೆಯಾಗುತ್ತವೆ. ಒಂದು ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುವಾಗ ಒಂದು ಸಂಸ್ಕೃತಿಯ ಚೌಕಟ್ಟಿನಲ್ಲಿ ದುಡಿಯುವಾಗ ನಾವು ಅಂದುಕೊಂಡಂತೆ ಮಾಡುವುದಕ್ಕಿಂತ ಇತರರ ಗವರ್ನೆನ್ಸ್‌ಗೆ ನಮ್ಮನ್ನು ಒಳಪಡಿಸಿಕೊಳ್ಳುತ್ತೇವೆ. ಈ ವಿಚಾರಗಳನ್ನು ನಾವು ನಮ್ಮ ಮುಖ್ಯ ಕೆಲಸಕ್ಕೂ ಹಾಗೂ ವಾಲೆಂಟಿಯರ್ ಆಗಿ ಮಾಡುವ ಕೆಲಸಗಳಿಗೂ ಅನ್ವಯಿಸಬಹುದು. ಉದಾಹರಣೆಗೆ ಯಾವುದೋ ಒಂದು ಕಮಿಟಿಯನ್ನು ಹುಟ್ಟು ಹಾಕಬೇಕಾಗಿ ಬಂದಿದೆಯೆಂದುಕೊಳ್ಳಿ, ಯಾರನ್ನು ಆಯ್ದುಕೊಳ್ಳುತ್ತೀರಿ, ಮತ್ತು ಏಕೆ? ಹೀಗಿರುವ ಆಯ್ಕೆಯ ಹಿಂದಿರುವ ರೂಪುರೇಶೆಗಳೇನು? ಯಾವ ನಿಯಮಗಳ ಅಡಿಯಲ್ಲಿ ಇವು ನಡೆಯುತ್ತವೆ? ಯಾವುದಾದರೂ ಇನ್‌ಫ್ಲುಯೆನ್ಸ್‌ಗೆ ಒಳಗಾಗುತ್ತೀರೋ, ಅಥವಾ ಅವುಗಳಿಂದ ಹೇಗೆ ದೂರವಿರಲು ಪ್ರಯತ್ನಿಸುತ್ತೀರಿ? ನಿಮ್ಮಲ್ಲೇ ಮನೆ ಮಾಡಿಕೊಂಡಿರುವ ಸ್ಟೀರಿಯೋಟೈಪ್‌ಗಳು ನೀವು ಕೈಗೊಂಡ ನಿರ್ಧಾರಗಳ ಮೇಲೆ ಯಾವ ಪರಿಣಾಮ ಬೀರುತ್ತವೆ? ಇತ್ಯಾದಿ.

ನಾವು ಅಂದು ಬಡ ಹೈ ಸ್ಕೂಲುಗಳಲ್ಲಿ ಓದುತ್ತಿದ್ದೆವು, ಸಾರ್ವಜನಿಕ ಹೈ ಸ್ಕೂಲುಗಳ ಪರಿಸ್ಥಿತಿಯಲ್ಲಿ ಎಲ್ಲ ರೀತಿಯ ಸಂಪನ್ಮೂಲಗಳಿಗೂ ಕೊರತೆ ಇತ್ತು. ಅಂದು ಯಾರಾದರೊಬ್ಬರು ತಂಡವನ್ನು ನಿರ್ಮಿಸುವ ಸೂಕ್ಷತೆಗಳ ಬಗ್ಗೆ ತಿಳಿಸಿ ಹೇಳಿದ್ದರೆ ಅಥವಾ ನಾನು ಹೈ ಸ್ಕೂಲು ಕ್ರಿಕೆಟ್ ತಂಡ ಸದಸ್ಯರನ್ನು ಗುರುತಿಸಿ ಆಯ್ಕೆ ಮಾಡುವಾಗ ಮಾರ್ಗದರ್ಶನ ನೀಡಿದ್ದರೆ...ಹೀಗೆ ಅನೇಕ ’ರೆ’ಗಳನ್ನು ಇಂದು ಯೋಚಿಸಿಕೊಂಡು ನಗು ಬರುತ್ತದೆ. ಒಂದಂತೂ ನಿಜ, ಲೀಡರ್‌ಶಿಪ್, ಮ್ಯಾನೇಜ್‌ಮೆಂಟ್, ಆರ್ಗನೈಜೇಶನ್ ಮೊದಲಾದ ಸಮೂಹ ಸಂಬಂಧಿ ಪ್ರಕ್ರಿಯೆಗಳು ಅಮೇರಿಕಕ್ಕೆ ಮಾತ್ರ ಸೀಮಿತವಾಗಿಲ್ಲ ಅಲ್ಲದೇ ಅವು ಸಂಪನ್ಮೂಲಗಳು ಇದ್ದಲ್ಲಿ ಮಾತ್ರ ಹುಟ್ಟಿ ಬೆಳೆಯಬೇಕೆಂದೇನೂ ಇಲ್ಲ. ಎಲ್ಲರಿಗೂ ಅವರ ಜೀವನಕ್ರಮಕ್ಕನುಸಾರವಾಗಿ ಅವರ ಸವಾಲುಗಳನ್ನು ಸಿಕ್ಕೇ ಸಿಗುತ್ತವೆ, ಅವುಗಳನ್ನು ಹೇಗೆ ನಿಭಾಯಿಸಬಲ್ಲೆವು ಎಂಬುದರ ಹಾಸುಹೊಕ್ಕಾಗಿ ಇರುವುದೇ ಅವರವರ ಶಕ್ತಿ. ನಮಗೆ ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನೇ ನಾವು ಅವಲೋಕಿಸುತ್ತಾ ಬಂದರೆ ಒಂದು ನಿರ್ಣಯವನ್ನು ಅನೇಕ ಮಜಲುಗಳಲ್ಲಿ ಹೇಗೆ ನೋಡಬಹುದೋ ಹಾಗೇ ನಮಗೆ ವಹಿಸಿದ ಕೆಲಸಗಳ ಫಲಿತಾಂಶ ಕೂಡಾ.

ಪ್ರಾಕ್ಟಿಕಲ್ಲಾಗಿ ಆಲೋಚಿಸಬೇಕು ಮತ್ತು ಹಾಗೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಒಂದು ಕಡೆ, ಅದಕ್ಕೆ ವಿರುದ್ಧವಾಗಿ ಎಮೋಷನಲ್ಲಾಗಿ ಯೋಚಿಸಿ ಇನ್ಯಾವುದೋ ಮಾನದಂಡಗಳಿಗೆ ಒಳಪಟ್ಟೋ ಪಡೆದೆಯೋ ನಾವು ನಡೆಸಿಕೊಂಡು ಬರುವ ಕೆಲಸ ಕಾರ್ಯಗಳು ಹಾಗೂ ಅವುಗಳ ದೂರದ ಪರಿಣಾಮಗಳು ಮತ್ತೊಂದು ಕಡೆ.

Tuesday, September 29, 2009

(ಕುರುಚಲು ಗಡ್ಡ, ಓಡುವ ಮೋಡ ಹಾಗೂ) ಆಲೋಚನೆಗಳು

ಈ ಆಲೋಚನೆಗಳೇ ಹಾಗೆ ಕೆಲವೊಮ್ಮೆ ತಂಡೋಪತಂಡವಾಗಿ ಸರಣಿಗಳಲ್ಲಿ ಬಂದು ಮುತ್ತಿಗೆ ಹಾಕಿ ಬಿಡುತ್ತವೆ, ತಿಳಿಯಾದ ಕೊಳವನ್ನು ಕಲಕಿ ರಾಡಿಯನ್ನು ಮೆಲಕೆತ್ತಿದ ಹಾಗೆ ಹಳೆಯದೆಲ್ಲ ಮೇಲಕ್ಕೆದ್ದು ಕೇಂದ್ರೀಕೃತ ಅಲೆಗಳ ಹಿಂಡು ದಡವನ್ನು ಅಪ್ಪಳಿಸುವಂತೆ ಕಣ್ಣು ಮುಚ್ಚಿ ಬಿಡುವುದರೊಳಗೆ ಏನೇನೋ ಅಗಿ ಹೋಗುತ್ತದೆ. ಈ ಮನಸೆಂಬ ಮರ್ಕಟ ಹಾರಿ ಬಂದ ಮರಗಳ ರೆಂಬೆ-ಕೊಂಬೆಗಳಿಗೆ ಹೇಗೆ ಕೊನೆಯಿಲ್ಲವೋ ಹಾಗೆ ಆಲೋಚನೆಗಳ ದಂಡು.

ಈ ಆಲೋಚನೆಗಳಿಗೂ ಓಡುವ ಮೋಡಗಳಿಗೂ ಏನು ಸಂಬಂಧ? ಈ ಆಲೋಚನೆಗಳಿಗೂ ಕುರುಚಲು ಗಡ್ಡಕ್ಕೂ ಏನು ನಂಟು? ಎಂದು ಯೋಚಿಸಿಕೊಂಡಂತೆಲ್ಲ ಮೇಲ್ಮಟ್ಟದಲ್ಲಿ ಗೋಕುಲಾಶ್ಠಮಿ-ಇಮಾಮ್ ಸಾಬಿಗಳಂತೆ ಕಂಡುಬಂದರೂ ಒಳಗೊಳಗೆ ಅವುಗಳ ಅರ್ಥಬದ್ಧ ಬಾಂಧವ್ಯದ ಬಗ್ಗೆ ನನಗೆ ತಿಳಿದದ್ದು ಇತ್ತೀಚೆಗಷ್ಟೇ. ಈ ಆಳವಾಗಿ ಆಲೋಚಿಸುವ ಕೆಲವರು ಮುಗಿಲನ್ನು ಎವೆಯಿಕ್ಕದೆ ದಿಟ್ಟಿಸುವುದನ್ನು ನೀವು ಗಮನಿಸಿರಬಹುದು. ಹೌದು, ಈ ಆಳವಾದ ದೃಷ್ಟಿಯೇ ಮುಗಿಲಿನ ಹಂದರದಲ್ಲಿ ಹರವಿಕೊಂಡ ಆ ಮೋಡಗಳಲ್ಲಿ ಚಲನಶಕ್ತಿಯನ್ನು ಕುದುರಿಸೋದು. ಹಾಗೇ ಆಲೋಚನೆಯಲ್ಲಿ ಮುಳುಗಿದವರು ಗದ್ದಕ್ಕೆ ಕೈಯಿಟ್ಟು ಯೋಚನೆ ಮಾಡಿದಂತೆಲ್ಲ ನುಣುಪಾದ ಅಂಗೈ ಹಾಗೂ ಕೆನ್ನೆಯ ನಡುವೆ ಘರ್ಷಣೆ ಹುಟ್ಟುವ ಹೊತ್ತಿನಲ್ಲಿ ಕೈ ಜಾರದಂತೆ ಜೀವವಿಕಾಸ ಸೃಷ್ಟಿಸಿದ ವಿಸ್ಮಯಗಳಲ್ಲಿ ಕುರುಚಲು ಗಡ್ಡವೂ ಒಂದು!

ಆಲೋಚನೆಗಳನ್ನು ಮಾಡಿ ತಲೆ ಕೆಡಿಸಿಕೊಂಡವರೇ ಹೆಚ್ಚು, ಉದ್ದಾರವಾದವರು ಯಾರು ಎಂದು ಅಲ್ಲಗಳೆಯಬೇಡಿ, ಹೆಚ್ಚು ಆಲೋಚನೆ ಮಾಡಿದವರೇ ದೊಡ್ಡ ಮನುಷ್ಯರು, ಅವರವರ ಆಲೋಚನೆಗಳ ಆಳ ಅವರವರ ಚಿಂತನಶೀಲತೆಯ ಪ್ರತೀಕ ಎಂದರೆ ತಪ್ಪೇನು ಇಲ್ಲ. ಆದರೆ ಆಲೋಚನೆ, ಕೊರಗು, ಚಿಂತೆ ಹಾಗೂ ಚಿಂತನೆಗಳಲ್ಲಿ ಬೇಕಾದಷ್ಟು ವ್ಯತ್ಯಾಸಗಳಿವೆ. ನನ್ನ ಪ್ರಕಾರ ಆಲೋಚನೆ ತನ್ನ ಪ್ರಭೇದದ ಇತರ ಸೋದರರಾದ ಕೊರಗು-ಮರುಗು-ಚಿಂತೆ-ಚಿಂತನೆಗಳಿಗಿಂತ ಸ್ವಲ್ಪ ಭಿನ್ನ ಹಾಗೂ ತನ್ನಷ್ಟಕ್ಕೆ ತಾನು ಒಂದು ಅಮೋಘವಾದ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡ ಧೀರ ಬೇರೆ. ಆಲೋಚನೆಗೆ ಯಾವುದೇ ವಿಷಯ-ವಸ್ತುವೆಂಬುದಿಲ್ಲ, ಎಂದು ಇತರರ ಜೊತೆ ಬೆಳೆದು ಸಮಾಲೋಚನೆಯಾಗಬಹುದು, ಅಥವಾ ತನ್ನ ದೂರದ ಮಟ್ಟಕ್ಕೆ ದೂರಾಲೋಚನೆಯಾಗಬಹುದು, ಕೆಟ್ಟ ವಸ್ತುಗಳಿದ್ದರೆ (ಕೆಟ್ಟದು ಎಂಬುದು ಸಾಪೇಕ್ಷವಾದುದು) ದುರಾಲೋಚನೆಯೂ ಆಗಬಹುದು. ಆಲೋಚನೆ ಎನ್ನುವುದು ತನ್ನಷ್ಟಕ್ಕೆ ತಾನು ಇದ್ದರಿರಬಹುದು ಅಥವಾ ಅದು ಉಳಿದವರ ಜೊತೆ ಸೇರಿ ಒಂದು ಸಿದ್ಧಾಂತವಾಗಬಹುದು. ಒಟ್ಟಿನಲ್ಲಿ ಆಲೋಚನೆ ಎನ್ನುವುದು ನೀರಿದ್ದ ಹಾಗೆ, ಅದು ತನ್ನಷ್ಟಕ್ಕೆ ತಾನು ಯಾವುದೇ ಆಕಾರ, ಗಾತ್ರ, ಬಣ್ಣ, ವಾಸನೆ, ಗಡಿರೇಖೆಗಳಿಗೆ ಒಳಪಡದ ಒಂದು ರೀತಿಯ ಎಲ್ಲವನ್ನು ತ್ಯಜಿಸಿದ ಸಂತನ ಮನಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆ ಜೊತೆಗೆ ತಾನು ಇದ್ದ ಯಾವುದೇ ಒಂದು ವಸ್ತುವಿನ ರೂಪರೇಶೆಗಳನ್ನು ದಿಢೀರನೆ ಪಡೆದುಕೊಂಡುಬಿಡಬಲ್ಲದು.

ಒಟ್ಟಿನಲ್ಲಿ ಈ ಆಲೋಚನೆಯ ಪರಿ ಭಿನ್ನ. ನನ್ನ ಮನಸ್ಸಿನಲ್ಲಿ ಬರುವ ಆಲೋಚನೆಗಳ ಮಹಾಪೂರವನ್ನು ನೋಡಿ ಕೆಲವೊಮ್ಮೆ ಈ ಪರಿಯ ಸೊಬಗ ಇನ್ಯಾವ ಮನಸ್ಥಿತಿಯಲೂ ಕಾಣೆ ಎಂದು ಹಾಡಿಕೊಂಡಿದ್ದಿದೆ. ಈ ಆಲೋಚನೆಗಳೆಂಬುವುದಕ್ಕೆ ಮಿತಿಯಂತೂ ಇಲ್ಲವೇ ಇಲ್ಲ - ಅದರಲ್ಲಿ ಬಿಳಿ-ಕಪ್ಪಿದೆ, ಕೆಟ್ಟದ್ದು-ಒಳ್ಳೆಯದಿದೆ, ಸಂಭ್ರಮ-ಸಂಗಮಗಳಿವೆ, ನೋವು-ನಲಿವಿದೆ, ಹೀಗೆ ಅನೇಕಾನೇಕ ಪರ-ವಿರೋಧಗಳನ್ನು ತನ್ನೊಡಲಿನಲ್ಲಿ ಹರವಿಕೊಂಡ ಅಲೋಚನೆಗಳ ದಿಬ್ಬಣವನ್ನು ನಾನು ನಮ್ಮೂರ ಜಾತ್ರೆಯ ತೇರಿಗೆ ಹೋಲಿಸಿಕೊಳ್ಳೋದು. ತೇರಿನ ಗರ್ಭಗುಡಿಯಲ್ಲಿ ದೇವತೆಯ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಅಸಂಖ್ಯ ಭಕ್ತರು ಎಳೆದು ಜನತುಂಬಿ ತುಳುಕುತ್ತಿರುವ ರಸ್ತೆಯ ಮಧ್ಯದಲ್ಲಿ ನಿಧಾನವಾಗಿ ತೇಲಿ ಹೋಗುವ ತೇರಿನ ಹಾಗೆ - ನಾವು ಎಲ್ಲಿದ್ದರೂ ಹೇಗಿದ್ದರೂ ಏನನ್ನೇ ಮಾಡುತ್ತಿದ್ದರೂ ನಮ್ಮ ಮನದಲ್ಲಿ ಈ ಆಲೋಚನೆಗಳ ತೇರು ಎಳೆಯಲ್ಪಡುತ್ತಿರುತ್ತದೆ, ನಿರಂತರವಾಗಿ.

Monday, September 28, 2009

ಕಾಫಿ ಫಿಲ್ಟರ್, ಕಿವಿಗೆ ಹಾಕುವ ಹತ್ತಿ ಹಾಗೂ ಅನಿವಾಸಿತನ

ಭಾರತದಿಂದ ಬಂದ ಹೊಸತರಲ್ಲಿ ಅಮೇರಿಕದಲ್ಲಿ ದೊರೆಯುವ ಕಾಫಿ (ಲೋಟಾಗಳ) ಸೈಜು, ಅದನ್ನು ಬಳಸುವ ಬಳಕೆದಾರರೆಲ್ಲ ನನ್ನಲ್ಲಿ ಬಹಳ ಕಳವಳವನ್ನೂ ದಿಗ್ಬ್ರಾಂತಿಯುನ್ನು ಮೂಡಿಸುತ್ತಿದ್ದರು ಎನ್ನುವುದು ನನ್ನ ಅನುಭವ ಅಥವಾ ಅನಿಸಿಕೆ. ಇಲ್ಲಿ ಎಲ್ಲವೂ ಲಾರ್ಜ್ ಸೈಜು - ಕಾಫಿ, ಸೋಡಾ, ತಿನ್ನುವ ಸ್ಯಾಂಡ್‌ವಿಚ್, ಆಹಾರ ಪದಾರ್ಥ, ಆಚಾರ-ವಿಚಾರ ಎಲ್ಲವೂ. ನಮ್ಮ ಭಾರತೀಯ ಪದ್ದತಿಯ ಪ್ರಕಾರ ನಾನು ಬೆಳಗ್ಗೆ ಒಂದು ಲೋಟಾ ಮತ್ತು ಸಂಜೆ ಒಂದು ಲೋಟಾ ಕಾಫಿ ಅಥವಾ ಚಹಾಕ್ಕೆ ಹೊಂದಿಕೊಂಡವನು. ಇಲ್ಲಿ ಬಂದ ಹೊಸತರಲ್ಲಿ ಈ ಲಾರ್ಜ್ ಸೈಜುಗಳು ಖಂಡಿತ ನನ್ನಂತಹವರಿಗಲ್ಲ ಅಲ್ಲದೇ ಎಂದೂ ನನಗೆ ಇಷ್ಟು ದೊಡ್ಡ ಸರ್ವಿಂಗ್ ಸೈಜಿನ ಅಗತ್ಯವಿಲ್ಲ ಎಂಬುದು ಅಂದಿನ ನಿಲುವಾಗಿತ್ತು.

ಭಾರತದಲ್ಲಿ ನಾವು ಫಿಲ್ಟರ್ ಕಾಫಿ ಕುಡಿಯುತ್ತಿದ್ದೆವು, ಆದರೆ ಅಲ್ಲೆಲ್ಲೂ ಹತ್ತು-ಹನ್ನೆರಡು ಕಪ್ ಕಾಫಿ ಹಿಡಿಯುವಷ್ಟು ದೊಡ್ಡ ಪ್ರಮಾಣದ ಫಿಲ್ಟರ್ ನಾನು ನೋಡಿರಲಿಲ್ಲ. ಇಲ್ಲಿಗೆ ಬಂದ ಹೊಸತರಲ್ಲಿ ಒಮ್ಮೆ ನಾವು ಒಂದಿಷ್ಟು ಜನ ಬ್ಯಾಚುಲರ್ಸ್ ಸೇರಿಕೊಂಡು ಕಾಫಿ ಫಿಲ್ಟರ್ ಹೆಸರಿನಲ್ಲಿ ಒಂದಿಷ್ಟು ಕಾಫಿ ಫಿಲ್ಟರುಗಳನ್ನು ತಂದು, ಈ ಪೇಪರಿನ ಕೊಟ್ಟೆಯನ್ನು ಹೇಗೆ ಉಪಯೋಗಿಸಬೇಕು ಎಂಬುದು ತಿಳಿಯದೇ ಅದನ್ನು ಹಾಗೇ ಎಸೆದ ಹಾಗೆ ನೆನಪು.

ಅದಾದ ನಂತರದ ಕೆಲವು ವರ್ಷಗಳಲ್ಲಿ ಇಲ್ಲಿನ ಕಾಫಿ ಕುಡಿಯುವುದಕ್ಕೆ ಒಗ್ಗಿ ಹೋದ ನಾನು ಲಾರ್ಜ್ ಕಾಫಿಗಳನ್ನು ಗಣನೀಯ ಪ್ರಮಾಣದಲ್ಲಿ ಸೇವಿಸ ತೊಡಗಿದ ಮೇಲೆ ಮಿಸ್ಟರ್ ಕಾಫಿಯ ಬಳಕೆಗೆ ಹೊಂದಿಕೊಂಡಿದ್ದು. ಹಾಗೇ ದಿನದ ಆರಂಭದಲ್ಲಿ ನಮ್ಮೂರಿನ ನಾಲ್ಕು ಲೋಟಾಗಳು ಹಿಡಿಯುವಷ್ಟು ಕಾಫಿಯನ್ನು ಅರ್ಧ ಘಂಟೆಯ ಒಳಗೆ ಒಂದು ಕೈಯಿಂದ ಕಾರನ್ನು ಡ್ರೈವ್ ಮಾಡುತ್ತಲೇ ಮತ್ತೊಂದು ಕೈಯಿಂದ ಸೇವಿಸುವುದನ್ನು ಕರತಾಮಲಕ ಮಾಡಿಕೊಂಡಿದ್ದು. ಇಲ್ಲಿ ನಮ್ಮ ಮನೆಯಲ್ಲಿ ಇಂತಹ ದಿನನಿತ್ಯ ಉಪಯೋಗಿ ವಸ್ತುವಾಗಿ ಕಾಫಿಯ ಬಳಕೆಯಾದ ಮೇಲೆ ಅದರ ಸಂಗಾತಿ ಪೇಪರ್ ಫಿಲ್ಟರ್ರೂ ಇಲ್ಲವೆಂದರೆ ಹೇಗೆ? ಜೊತೆಗೆ ಒಂದೋ ಎರಡೋ ಕಾಫಿ ವೆರೈಟಿಗೆ ಹೊಂದಿಕೊಂಡ ದೇಹಕ್ಕೆ (ಹಾಗೂ ಮನಸ್ಸಿಗೆ) ಇಲ್ಲಿನ ಹತ್ತು ಹಲವಾರು ಪ್ಲೇವರುಗಳೂ ಅವುಗಳ ಜೊತೆಗೆ ಕಾಫಿ ಬೀಜದ ರೋಸ್ಟ್ (ಲೈಟ್, ಮೀಡಿಯಂ, ಡಾರ್ಕ್) ಸೇರಿಕೊಂಡು ಆಹ್ಲಾದಕರ ಕಾಫಿಯ ಅನುಭವಕ್ಕೆ ಇನ್ನೊಂದಿಷ್ಟು ರುಚಿಗಳನ್ನು ಸೇರಿಸಿಕೊಂಡಿದ್ದು.

ಇಲ್ಲಿ ನಾವು ಹೋಲ್ ಸೇಲ್ ಮಳಿಗೆಗಳಲ್ಲಿ ದಿನಸಿ ಸಾಮಾನುಗಳನ್ನು ಕೊಳ್ಳುವಲ್ಲಿ ಕೇವಲ ಎರಡೂವರೆ ಡಾಲರ್‌ಗೆ ಆರು ನೂರು (೬೦೦) ಫಿಲ್ಟರುಗಳನ್ನು ತಂದು ಬಳಸುವುದು ರೂಢಿ. ಆದರೆ ಒಮ್ಮೆ ಖರೀದಿಸಿದ ಈ ಫಿಲ್ಟರ್ ಖಾಲಿ ಆಗುವಾಗ ದಿನಕ್ಕೊಂದರಂತೆ ಬಳಸಿದರೂ ಮನಯಲ್ಲಿ ಕಾಫಿ ಕುದಿಸದ ವರ್ಷದ ಇತರ ದಿನಗಳನ್ನು ಲೆಕ್ಕ ಹಾಕಿದರೆ ಕೊನೇ ಪಕ್ಷ ಆರು ನೂರು ಫಿಲ್ಟರ್ ಪೇಪರುಗಳು ಎರಡು ವರ್ಷದ ಮಟ್ಟಿಗಾದರೂ ಬಂದಾವು. ಆದರೆ ನಾನು ಕಾಫಿ ಹೀರುವ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಇತ್ತೀಚೆಗೆ ಮಾತ್ರ ಹಾಗಾಗಿ ಐದು ವರ್ಷಗಳ ಹಿಂದೆ ತಂದ ಫಿಲ್ಟರ್ ಪೇಪರುಗಳು ಖಾಲಿಯಾಗಿ ಹೀಗೆ ಈ ಘಳಿಗೆಯಲ್ಲಿ ಅವುಗಳ ಬಗ್ಗೆ ಬರೆಯುವಂತಾಯಿತು.

ಕಾಫಿ ಫಿಲ್ಟರುಗಳಿಗೆ ಅನ್ವಯವಾಗುವ ಇತಿಹಾಸ ಹಾಗೂ ವಾಸ್ತವದ ಅನುಭವಗಳು ಕಿವಿಗೆ ಹಾಕುವ ಹತ್ತಿಯ ಕಡ್ಡಿಗೂ ಅನ್ವಯಿಸುತ್ತವೆ ಎಂದೇ ಹೇಳಬೇಕು. ಐದು ಡಾಲರುಗಳಿಗೆ ಸಾವಿರದ ಇನ್ನೂರು (೧೨೦೦) ಹತ್ತಿ ಕಡ್ಡಿಯನ್ನು ತಂದು ಅದೆಷ್ಟೋ ವರ್ಷಗಳ ಹಿಂದೆ ಮನೆಯಲ್ಲಿಟ್ಟು ಈಗ ಖಾಲಿ ಆಗಿ ಹೋಗಿದೆ. ಮತ್ತೆ ಫಿಲ್ಟರುಗಳ ಹಾಗೆ ಒಂದು ದೊಡ್ಡ ಪ್ರಮಾಣದ ಖರೀದಿಯನ್ನು ಸಣ್ಣ ಬೆಲೆಗೆ ಮಾಡಬೇಕಾಗಿ ಬಂದಿದೆ, ಅವಿನ್ನು ಖಾಲಿಯಾಗುವುದು ಇನ್ನೆಷ್ಟು ವರ್ಷಗಳ ನಂತರವೋ. ನಾವೇನು ಭಾರತದಲ್ಲಿ ಪ್ರತಿನಿತ್ಯ ಸ್ನಾನ ಮಾಡಿದ ನಂತರ ಕಿವಿಯೊಳಗೆ ಹತ್ತಿಯನ್ನು ತೂರಿಸಿ ಕ್ಲೀನ್ ಮಾಡಿಕೊಳ್ಳುತ್ತಿರಲಿಲ್ಲ, ಹಾಗೇ ಇಲ್ಲೂ ಕೂಡ. ಕಿವಿಗೆ ಹಾಕುವ ಹತ್ತಿ ಕಡ್ಡಿಯ ಉಪಯೋಗ ಅಪರೂಪಕ್ಕೊಮ್ಮೆ, ಅದೂ ಕೆಲವೊಮ್ಮೆ ಸೈನ್‌ಫೆಲ್ಡ್‌ನ ಕ್ರೇಮರ್ ಕಿವಿಯೊಳಗೆ ನೀರು ತುಂಬಿಸಿಕೊಂಡು ಕುಣಿದಾಡುವ ಪ್ರಸಂಗ ಬಂದ ಹಾಗೆ ನಮಗೂ ಈ ಹತ್ತಿ ಕಡ್ಡಿಯ ಬಳಕೆಗೂ ನಂಟು.

ಈ ಅನಿವಾಸಿತನಕ್ಕೂ ಈ ಕಾಫಿ ಫಿಲ್ಟರ್-ಹತ್ತಿ ಕಡ್ಡಿಯ ಅವಿನಾಭಾವ ಸಂಬಂಧದ ಬಗ್ಗೆ ಬರೆಯೋದಕ್ಕೂ ಒಂದು ಕಾರಣವಿದೆ. ಸಂಪನ್ಮೂಲಗಳು ಕಡಿಮೆ ಇದ್ದು ಅವು ಹೆಚ್ಚು-ಹೆಚ್ಚು ಮಟ್ಟದಲ್ಲಿ ಸಿಗದ ಅಥವಾ ಅಭಾವದ ಪರಿಸ್ಥಿತಿ ಒಂದು ಕಡೆ, ಆದರೆ ಇಲ್ಲಿ ಹಣವೊಂದಿದ್ದರೆ ಸಾಕು ಬೇಕಾದಷ್ಟು ಸಿಗುವುದು ಮತ್ತೊಂದು ಕಡೆ. ಚಿಕ್ಕ ಸೈಜಿನ ಕಾಫಿ ಲೋಟಾಗಳಿಂದ ಹಿಡಿದು ಕಿವಿಗೆ ಹಾಕುವ ಹತ್ತಿಯ ಬಳಕೆಯ ಪ್ರಮಾಣ ಕಡಿಮೆಯಿತ್ತು, ಆದರೆ ಇಲ್ಲಿ ಎಲ್ಲವೂ ಲಾರ್ಜ್ ಸೈಜು. ಒಂದೋ ಎರಡೋ ಎಕರೆ ಗದ್ದೆ-ಭೂಮಿ ಪ್ರಮಾಣ ನನ್ನಂಥವರ ಮಧ್ಯಮ ವರ್ಗದವರಿಗೆ ದೊಡ್ಡವಾಗಿದ್ದವು, ಆದರೆ ಇಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಎರಡು-ಮೂರು ಸಾವಿರ ಎಕರೆಗಳ ಒಡೆಯರು. ನನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ನನ್ನ ಸಹೋದ್ಯೋಗಿ ಇತ್ತೀಚೆಗೆ ಇಪ್ಪತ್ತು ಎಕರೆಗಳನ್ನು ತನ್ನ ಸ್ವಂತ ಊರಿನಲ್ಲಿ ಖರೀದಿಸಿದ್ದು ದೊಡ್ಡ ಸುದ್ದಿಯಲ್ಲ. ನಮ್ಮ ಕಾರುಗಳ ಇಂಜಿನ್ ದೊಡ್ಡವು. ನಿನ್ನೆ ಗಾರ್‌ಫೀಲ್ಡ್ ಪರಿಚಿಯಿಸಿದ ಸಾಧಾರಣ ಗಾತ್ರದ ಅವನ ಮೋಟಾರ್‍ ಸೈಕಲ್ ಇಂಜಿನ್ ೧೫೦೦ ಸಿ.ಸಿ. (1500 cc), ಭಾರತದಲ್ಲಿ ಎಷ್ಟೋ ಕಾರುಗಳ ಇಂಜಿನ್ ಇದಕ್ಕಿಂತ ಚಿಕ್ಕವು. ದೊಡ್ಡ ರಸ್ತೆಗಳು. ದೊಡ್ಡ ದೇಶ - ಎಲ್ಲವೂ ದೊಡ್ಡದೇ.

ಆದರೆ ಈ ಮಹಾನ್ ಗಾತ್ರ ಹಾಗೂ ಮಹಾನ್ ಸಂಸ್ಕೃತಿಗೆ ನಮ್ಮ ಚಿಕ್ಕ ಅಥವಾ ಮೀಡಿಯಮ್ ಸೈಜಿನ ಮನಸ್ಸುಗಳಾಗಲೀ, ಆಚಾರ-ವಿಚಾರಗಳಾಗಲಿ ದಿಢೀರನೆ ಹೇಗೆ ಹೊಂದಿಕೊಂಡಾವು. ಇವತ್ತೋ ನಿನ್ನೆಯೋ ಭಾರತದಿಂದ ಬಂದವರಿಗೆ ಒಂದು ಲಾರ್ಜ್ ಸ್ಟಾರ್‌ಬಕ್ಸ್ ಕಾಫಿ ಕೊಟ್ಟು ನೋಡಿ, ಅದನ್ನು ಅವರು ಪೂರ್ತಿ ಮುಗಿಸುತ್ತಾರೆಯೇ ಎಂದು. ಈ ಚಿಕ್ಕ-ದೊಡ್ಡ ವಿಚಾರಗಳು ಮೊದಲಿನಿಂದ ಕೊನೆಯವರೆಗೆ ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರುತ್ತವೆ ಎನ್ನೋದು ಈ ಹೊತ್ತಿನ ನನ್ನ ತತ್ವ.

ಇಂದು ಖರೀದಿಸಿ ಆದಷ್ಟು ಬೇಗನೇ ಬಳಸಿ ಮತ್ತೆ ಹೊಸತನ್ನು ಖರೀದಿಸುವುದು ಒಂದು ವಿಧ, ನಮ್ಮಲ್ಲಿ ಉಗ್ರಾಣಗಳಿವೆ ಎಂದು ಬೇಕಾದ್ದನ್ನೆಲ್ಲ ಹೋಲ್‌ಸೇಲ್ ದರದಲ್ಲಿ ಕೊಂಡು ಹಲವು ವರ್ಷಗಳ ವರೆಗೆ ಅನುಭವಿಸುವುದು ಮತ್ತೊಂದು ವಿಧ. ಪ್ರೆಸೆಂಟ್ ವ್ಯಾಲ್ಯೂ ಫ್ಯೂಚರ್ ವ್ಯಾಲ್ಯೂನಿಂದಾನಾದರೂ ಲೆಕ್ಕ ಹಾಕಿ, ಬೇಕಾಗಿದ್ದು ಸಾಕಾದಷ್ಟು ಇರಲಿ ಎಂದಾದರೂ ಸಮಜಾಯಿಸಿ ಕೊಟ್ಟುಕೊಳ್ಳಿ.

ಅವೇ ಲಾರ್ಜ್ ಕಾಫಿಗಳನ್ನು ಬಿಕರಿ ಮಾಡುವ ಪೇಪರ್ ಫಿಲ್ಟರುಗಳು, ಸಾವಿರಗಟ್ಟಲೆ ಸಿಗುವ ಕಿವಿಗೆ ಹಾಕುವ ಹತ್ತಿ ಕಡ್ಡಿಗಳು ಅಗಾಧ ಪ್ರಮಾಣದಲ್ಲಿ ಸಿಗುವ ಇವುಗಳನ್ನು ನಿಯಂತ್ರಣಕ್ಕೆ ತಂದುಕೊಂಡು ದಿನ-ವಾರ-ವರ್ಷಗಳನ್ನು ದೂಡುವ ಅನಿವಾಸಿ ಬದುಕು. ಇವುಗಳ ಮುಂದೆ ಹರಿದು ಹೋಗುವವರೆಗೆ ಉಪಯೋಗಕ್ಕೆ ಬರುವ ನಮ್ಮ ಅಲ್ಯುಮಿನಮ್ ಅಥವಾ ಪ್ಲಾಸ್ಟಿಕ್ ಜಾಲರಿ ಇರುವ ಫಿಲ್ಟರುಗಳು ಹಳೆಯವಾಗುತ್ತವೆ, ಅಮೇರಿಕದ ಮಿಸ್ಟರ್ ಕಾಫಿ ಇಳಿಸಲು ಭಾರತದ ಫಿಲ್ಟರ್ ಕೆಲಸ ಮಾಡದಾಗುತ್ತದೆ. ಇಲ್ಲಿನ ಹೆಚ್ಚು ಧೂಳಿಲ್ಲದ ಏರ್ ಕಂಡೀಷನ್ನ್ ವಾತಾವರಣದಲ್ಲಿ ಬೆಳೆಯುತ್ತಿದ್ದರೂ ಕಿವಿಯಲ್ಲಿ ಸೇರಿದ ಕೊಳೆ ತೆಗೆಯಲು ಸಾವಿರ ಸಂಖ್ಯೆಯಲ್ಲಿ ಸಿಗುವ ಕಡ್ಡಿ ಸರದಾರರು ನೆರವಿಗೆ ಬರುತ್ತಾರೆ, ಹಿಂದೆ ಹಗಲೂ-ರಾತ್ರಿ ಧೂಳಿನಲ್ಲೇ ಜೀವನ ಸಾಗಿಸಿ ಬಂದು ಯಾವತ್ತೋ ಕಿವಿಯ ಕೊಳೆಯನ್ನು ತೆಗೆದಿದ್ದು ಗೌಣವಾಗುತ್ತದೆ.

Sunday, September 27, 2009

ಅವನ ರೂಮು ಅವನ ಮನ

ಒಂಟಿ ಗೂಟಕ್ಕೆ ತಗುಲಿ ಹಾಕಿದಾ ಕೋಟು
ಒಣಗಿದ ಹೂಗಳ ತುರುಕಿಕೊಂಡ ಕಪಾಟು
ಅಲ್ಲಲ್ಲಿ ಚೆದುರಿ ಹೋದ ಪುಸ್ತಕಗಳ ಸಂತೆ
ಹುಲ್ಲು ಕುತ್ರೆ ತಲೆಯಲ್ಲಿ ಹಿಡಿಸಲಾರದ ಕಂತೆ.

ಯುದ್ಧವಿರದ ಸಿಪಾಯಿ ಕಾಡ ಮೇಲಿನ ದಂಗೆ
ಹಸಿವಿರದಿದ್ದರೂ ಕೂಳಿನ ಅಟ್ಟಹಾಸದ ನಗೆ
ಕಾಣದ ಕೈಗಳು ದೂರದಿಂದಲೇ ಆಡಿಸೊ ಆಟ
ಗೊತ್ತಿದ್ದೂ ಗೊತ್ತಿರದ ಚಕ್ರವ್ಯೂಹದ ಹೂಟ.

ಇವನ್ಯಾರು ಅವನ್ಯಾರು ಅದು ಬೇರೆ ಇದು ಬೇರೆ
ದೂರವಿರೆ ಮುಂದೆ ಬೇರೆ ಪ್ರಮೇಯವೇ ಬರದು
ಸಂತೆಯೊಳಗೆ ಹರವಿಟ್ಟ ಹತ್ತು ಹಲವು ತರಕಾರಿ
ಬರಿ ಬಿಸಿಲೊಳಗೇ ಬೇಯಿಸಿ ಹದ ಮಾಡುವ ಪರಿ.

ಪ್ರತಿ ಬಾಗಿಲಿಗೂ ಚಿಲಕವಿರೆ ಏನಂತೆ ಮನಕಿಲ್ಲವಲ್ಲ
ಕೋಣೆ ಕೋಣೆಗೆ ಅವುಗಳದೇ ಒಂದು ವಾಸ್ತವ್ಯವಲ್ಲ
ಹರವಿಬಿಟ್ಟ ಮನ ಎಲ್ಲೂ ಹೋಗದೆ ನಿಂತ ಹಾಗಿದೆ
ಮುಚ್ಚಿಟ್ಟ ಕೋಣೆ ನಿಂತು ನಿಂತಲ್ಲೇ ಎಲ್ಲೋ ಹೋಗಿದೆ.

ಚೌಕ ಆಯತಾಕಾರಗಳ ಪ್ರತಿಬಿಂಬ ಅವನ ಕೋಣೆ
ಆದರವನ ಮನದ ಮೂಲೆಗಳ ಇತಿಮಿತಿಗಳ ಕಾಣೆ
ಒಂದರದು ನಿಂತ ಹಾಗಿರುವಾಗಲೇ ಒಂದೊಂದು ಚಿತ್ರ
ಮತ್ತೊಂದರದು ಎಲ್ಲಾ ಕಡೆ ತಿರುಗಿಕೊಂಡಿಹ ವಿಚಿತ್ರ.

(ಲೈಬ್ರರಿಯ ರೀಡಿಂಗ್ ರೂಮಿನಲ್ಲಿ ತದೇಕ ಚಿತ್ತನಾಗಿ ಓದುತ್ತಿದ್ದ ವ್ಯಕ್ತಿಯೊಬ್ಬನನ್ನು ಕುರಿತು)

Friday, September 04, 2009

ಮತ್ತೆ ಅವನ ದರ್ಶನವಾಯ್ತು...

ನನ್ನ ಪಾಡಿಗೆ ನಾನು ಸುಮ್ಮನೇ ಒಂದು ಮುಂಜಾನೆ ಕೆಲಸಕ್ಕೆ ಹೊರಟಿರೋ ಹೊತ್ತಿಗೆ ಸುತ್ತಲಿನ ಮರಗಳು ಕುಲಕಿದಂತಾಗಿ ಅವುಗಳತ್ತ ನೋಡಿದೆ ಯಾವೊಂದು ವಿಶೇಷವೂ ಕಾಣಲಿಲ್ಲ, ಆದರೆ ಮರಗಳ ಎಲೆಗಳು ಅಲುಗಾಡುವಿಕೆಯಲ್ಲಿ ಏನೋ ಒಂದು ರೀತಿಯ ಹೊಸತನವಿದ್ದಂತೆ ತೋರಿತು. ಸುಮ್ಮನೇ ಹೀಗೇ ಇರಬಹುದು ಎಂದು ನನ್ನ ಪಾಡಿಗೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗಲೂ ಯಾರೋ ಆಹ್ವಾನಿಸದ ಅತಿಥಿಯೊಬ್ಬರು ನನ್ನ ಜೊತೆಗೆ ಕಾರಿನಲ್ಲಿ ಬರುತ್ತಿದ್ದಾರೆ ಎನ್ನಿಸಿದಾಗಲಂತೂ ಮೈ ನಡುಗತೊಡಗಿತು. ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ.

ಮುಂದೆ ಸ್ವಲ್ಪ ದೂರಗಳ ದಾರಿ ಸವೆಸಿದಂತೆ ಮರಗಿಡಗಳ ನಡುವೆ ಸೂರ್ಯ ಕಿರಣಗಳು ತೂರಿಬರಲು ಹರಸಾಹಸ ಮಾಡುತ್ತಿದ್ದವು. ಸೂರ್ಯನ ಬೆಳಕೂ ಕೂಡ ಮಂದಗತಿಯನ್ನು ತಲುಪಿತ್ತು. ಮುಂಜಾನೆ ಚುರುಕಾದ ಕಿರಣಗಳು ಮಲಗಿದವನ್ನೆಲ್ಲ ಬಡಿದೆಬ್ಬಿಸುವುದರ ಬದಲು ತಮ್ಮ ಮಂದ ಬೆಳಕಿನಲ್ಲೂ ಎದ್ದವರ ಕಣ್ಣನ್ನು ಕುಕ್ಕುತ್ತಿದ್ದವೇ ವಿನಾ ಮಲಗಿದವರ ಹತ್ತಿರ ಕೂಡಾ ಸುಳಿಯುತ್ತಿರಲಿಲ್ಲ. ಇದು ಸಾಲದು ಎಂಬಂತೆ ವಾತಾವರಣದ ಉಷ್ಣತೆಯೂ ಸ್ವಲ್ಪ ಸ್ವಲ್ಪ ಕಡಿಮೆಯಾದಂತಾಗಿ ಮಲಗಿದವರು ಕಂಬಳಿ-ಕೌದಿಯನ್ನು ಈಗಾಗಲೇ ಹುಡುಕಿಕೊಂಡು ಹೋಗುವುದು ಅನಿವಾರ್ಯವೆನ್ನಿಸಿರಬಹುದಾದದ್ದು ಜನರಲ್ಲಿ ಲವಲವಿಕೆಯನ್ನು ಮೂಡಿಸುವಲ್ಲಿ ಯಾವ ಉತ್ಸಾಹವನ್ನೂ ಕೂಡಿಹಾಕುತ್ತಿರಲಿಲ್ಲ. ಆದರೂ ನಾನು ದಾರಿ ಸವೆಸಿದಂತೆಲ್ಲಾ ಇಂದು ವಿಶೇಷವಾದ ಏನೋ ಒಂದು ಬದಲಾವಣೆ ಇದೆ ಎಂದು ಬಲವಾಗಿ ಅನ್ನಿಸುತ್ತಿದ್ದುದಂತೂ ನಿಜ.

ನನ್ನ ಹಿಂದೆ ಮುಂದೆ ಇದ್ದ ಕಾರುಗಳತ್ತ ಕಣ್ಣು ಹಾಯಿಸಿದೆ, ಅವರೆಲ್ಲರ ಅರ್ಧ ಮುಖಗಳು ಬೆಳಕಿನಲ್ಲಿ ಇನ್ನರ್ಧ ಮುಖಗಳು ನೆರಳಿನಲ್ಲಿ ಕಾಣಿಸುವಂತೆ ಎದುರಿನ ಸನ್ ಸ್ಕ್ರೀನ್ ನಿರ್ದೇಶಿಸುತ್ತಿತ್ತು. ಕಪ್ಪು ಕನ್ನಡಕ ಧರಿಸಿದ್ದ ಅವರೆಲ್ಲರೂ ಈ ಬೆಳಕು-ಕತ್ತಲಿನ ಬದಲಾವಣೆಗಳಿಗೆ ಹೆಣಗುವವರು ಯಾರು ಎಂದು ತಮ್ಮ ಸವಾಲನ್ನು ಯಾವತ್ತೋ ಬಿಟ್ಟಂತಿತ್ತು. ರಸ್ತೆಯ ಬದಿಯ ಮನೆಯ ಚಿಮಣಿಯ ಪಕ್ಕದಲ್ಲಿದ್ದ ಹೊಗೆ ಕೊಳವೆಯಲ್ಲಿ ಗ್ಯಾಸ್ ಹೀಟರ್ ಉರಿಯುತ್ತಿರುವುದರ ಪ್ರತೀಕವಾಗಿ ಕಪ್ಪು-ಕಂದು ಮಿಶ್ರಿತ ಹೊಗೆ ನಿಧಾನವಾಗಿ ವಾತಾವರಣದಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುತ್ತಿತ್ತು. ಹಾಗೆ ಸ್ಥಾಪಿಸಿದ ಅಸ್ಥಿತ್ವ ಮರುಕ್ಷಣವೇ ಮಾಯವಾಗುವ ಹಾಗೆ ಕಂಡು ಇವು ಎಲ್ಲ ಎಷ್ಟೊಂದು ಕ್ಷಣಿಕ ಎನ್ನಿಸುವಂತಾಯಿತು. ಇಷ್ಟೊತ್ತಿಗಾಗಲೇ ಹಬ್ಬಿ, ಹರಡಿ ಹಾಗೂ ಕದಡಿ ಹೋದ ಹೊಗೆ ಶುಭ್ರ ವಾತಾವರಣದಲ್ಲಿ ಮಂದವಾದ ಸೂರ್ಯನ ಕಿರಣಗಳ ದಯೆಯಿಂದ ಗೋಧೂಳಿಯ ತಿಳಿ ಪದರನ್ನು ಕಣ್ಣ ಮುಂದೆ ನಿರ್ಮಿಸುವಲ್ಲಿ ಹೆಣಗುತ್ತಿತ್ತು. ಹೀಗೇ ಏನೇನೇನೋ ಆಲೋಚನೆಗಳ ನಡುವೆಯೂ ಇಂದು ಅದೇನೋ ವಿಶೇಷವಿದೆ ಎನ್ನುವ ನನ್ನ ಭಾವನೆಗಳು ಬಲವಾಗುತ್ತಲೇ ಹೋದವು.

ನಡುವೆ ಬೇಕು ಎಂದರೂ ನಿಲ್ಲದ ಪಯಣ, ರಸ್ತೆಯಲ್ಲಿ ಇಳಿದ ಮೇಲೆ ಎಲ್ಲರಂತಿರಲೇ ಬೇಕಲ್ಲ, ನಾನೂ ಮುನ್ನಡೆದೆ. ನಮ್ಮ ಮನೆಯಿಂದ ಸರಿಯಾಗಿ ಆರು ಪಾಯಿಂಟ್ ಒಂದು ಮೈಲು ದೂರದಲ್ಲಿ ಕೊನೆಯಾಗುವ ಪ್ಲೆಸೆಂಟ್ ವ್ಯಾಲಿ ವೇ ಅಂತ್ಯದಲ್ಲಿ ಆರಂಭವಾಗುವ ಓಕ್‌ಡೇಲ್ ಅವೆನ್ಯೂನಲ್ಲಿ ಒಂದಿಷ್ಟು ಓಕ್ ಮರಗಳ ನಡುವೆ ದಾರಿಯಲ್ಲಿ ಬಂದಿದ್ದವನ್ನೆಲ್ಲ ಇರಿದು ಬಿಡುತ್ತೇವೆ ಎನ್ನುವ ಇರಾದೆಯಲ್ಲಿ ಬಲಿಯುತ್ತಿದ್ದ ಕಿರಣಗಳು ನನ್ನ ಕಣ್ಣುಗಳನ್ನು ಚುಚ್ಚಿದಾಗಲೇ ಈ ಅಪರೂಪದ ಅತಿಥಿ ಯಾರು ಎಂದು ನನಗೆ ಅರ್ಥವಾದದ್ದು! ಆ ಅತಿಥಿಯೇ ಫಾಲ್ (Fall) ದಿನ, ಮುಂಬರುವ ಛಳಿಗಾಲದ ಮುನ್ಸೂಚಕ, ಚಿಗುರಿ ಬಲಿತು ಮುಂದೆ ಬೆಳೆಯ ಬೇಕಾದ ಎಲೆಗಳಿಗೂ ಕರುಣೆ ತೋರದೆ ಎಲ್ಲವನ್ನೂ ಕೆಳಗೆ ಇಳಿಸುವವ, ಹಸಿರು-ಹಳದಿಯನ್ನು ಕೆಂಪಗಾಗಿಸುವವ, ಮರ-ಗಿಡಗಳ ಮೂಗು ಮುಸುಡಿಯನ್ನು ನೋಡದೆ ಬೆತ್ತಲಾಗಿಸುವವ, ರೀಸೈಕಲ್ ಪರಮಗುರು, ಎಂಥಾ ಮರವನ್ನು ನಡುಗಿಸುವವ, ಗಾಳಿಯಲ್ಲಿನ ತೇವವನ್ನು ತಿಂದು ತೇಗಿ ಬಿಡುವವ. ನಮ್ಮಂಥ ಹುಲು ಮಾನವರ ಕಥೆ ಹಾಗಿರಲಿ ಉರಿವ ಸೂರ್ಯನಿಗೂ ಸರಿಯಾಗಿ ಕೆಲಸ ಮಾಡಲು ಬಿಡದೆ ಅವನ ದಿನಗಳನ್ನೆಲ್ಲ ಮೊಟಕು ಹಾಕಿ ಬಿಡುವವ.

ಫಾಲ್ ದಿನ ಎಂದರೆ ಹೊಸತನವನ್ನು ಸ್ವಲ್ಪ ನಿಧಾನವಾಗಿಯೇ ತರುವ ಸಂಭ್ರಮದ ಆಶಾವಾದಿಯೇ ಎಂದು ನನ್ನನ್ನು ನಾನು ಸಂತೈಸಿಕೊಂಡಿದ್ದೇನೆ. ಅಥವಾ ಬಿಸಿಯಾಗಿದ್ದನ್ನು ತಂಪಾಗಿಸಿ ನಮ್ಮವರ ಮನ-ಮನೆಗಳಲ್ಲಿ ಡಿಪ್ರೆಷ್ಷನ್ನನ್ನು ಉಂಟು ಮಾಡುವ ನಿರಾಶಾವಾದಿಯೇ ಎಂದು ನಿಟ್ಟುಸಿರಿಟ್ಟಿದ್ದೇನೆ. ಬೇಸಿಗೆ ಮತ್ತು ಛಳಿಗಾಲಗಳ ನಡುವೆ ಬಂದು ಹೋಗುವ ಇವನ ಹೂಟವೇನು? ತರಗಲೆಗಳನ್ನೆಲ್ಲ ಸುತ್ತಿ ಎಲ್ಲಿಂದ ಎಲ್ಲಿಗೋ ಎಸೆಯುವ ಇವನ ಆಟವೇನು? ಬದುಕನ್ನು ಬಯಲಾಗಿಸಿ ನೋಡುವ ಇವನ ಮಾಟವೇನು?

ಇನ್ನೂ ಇಪ್ಪತ್ತು ದಿನಗಳಾದರೂ ಇವೆ ಅಧಿಕೃತವಾಗಿ ಸಮ್ಮರ್ ಮುಗಿಯಲು ಎಂದರೆ ಅಭ್ಯಾಗತ ಅತಿಥಿ ಈಗಾಗಲೇ ಬಂದು ಒಕ್ಕರಿಸಿದ್ದಾನೆ. ಬೆಳ್ಳಂಬೆಳಗ್ಗೆ ವಾತಾವರಣದ ಉಷ್ಣತೆಯನ್ನು ನಲವತ್ತೈದು ಡಿಗ್ರಿ ಫ್ಯಾರನ್‌ಹೈಟ್ ಮಟ್ಟಕ್ಕೆ ಇಳಿಸಿ ಸಂತಸ ಪಡುತ್ತಾನೆ. ಇದ್ದ ಒಂದೆರಡು ದಿನಗಳನ್ನಾದರೂ ಹಾಯಾಗಿ ಡೆಕ್ ಮೇಲೆ ಕಳೆಯೋಣವೆಂದರೆ ಈತ ವರುಣನೊಂದಿಗೆ ಬಿನ್ನಾಣದ ಸ್ನೇಹವನ್ನೂ ಬೆಳೆಸಿ ವರ್ಷಧಾರೆಯನ್ನು ಸುರಿಸುತ್ತಾನೆ. ಬೇಡಾ-ಬೇಡಾ ಎಂದರೂ ಬೇಡದ್ದನ್ನೇ ಮಾಡದ ಹಠ ಹಿಡಿದ ಪೋರನಂತೆ, ಇಂದು ಏನಾದರೂ ಸಿಕ್ಕಿದ್ದು ಸಿಕ್ಕಲಿ ಎನ್ನುವ ಚೋರನಂತೆ ಇವನ ಮನ. ಇವನ ಸ್ನೇಹವನ್ನು ಬೆಳೆಸದಿದ್ದರೆ ಬೇರೆ ದಾರಿಯೇನಿದೆ? ಇವನಿಗೆ ಸಲಾಮು ಹೊಡೆದು ಸಹಕರಿಸುತ್ತಿದ್ದ ಹಾಗೆ ಇವನ ಅಣ್ಣ ವಿಂಟರ್ ಬರುತ್ತಾನೆ - ಇವರೆಲ್ಲರ ಅಟ್ಟ ಹಾಸಕ್ಕೆ ಸಿಕ್ಕಿ ನೆರೆಹೊರೆ ಮರುಗುವುದರೊಳಗೆ ಮತ್ತೆ ನಂತರ ಸ್ಪ್ರಿಂಗ್ ಬಂದು ಸೂರ್ಯನ ಮಾಮೂಲಿ ಡ್ಯೂಟಿ ಆರಂಭವಾಗುವಾಗ ಇನ್ನು ಯಾವ ಕಾಲವಿದೆಯೋ ಅದೆಷ್ಟು ದೂರವೋ ಎಂದು ಎಣಿಸುತ್ತಿರುವ ಹೊತ್ತಿಗೆ ಯಾವಾಗಲೂ ಒಂದೇ ಮುಖವನ್ನು ಹೊತ್ತಿಕೊಂಡ ಆಫೀಸಿನ ಬಿರುಸು ಡ್ರೈವ್ ವೇ ಎದುರಿಗೆ ಸಿಕ್ಕು ಮತ್ತಿನ್ಯಾವುದೋ ಆಲೋಚನೆಯಲ್ಲಿ ಮನಸ್ಸು ತೊಡಗಿಕೊಳ್ಳುತ್ತದೆ. ಹೀಗೆ ಆಫೀಸ್ ಹೊಕ್ಕು ಮತ್ತೆ ಹೊರಬರುವವರೆಗೆ ಈ ಅತಿಥಿಗಳು ನನ್ನನ್ನು ಅಷ್ಟೊಂದು ಕಾಡೋದಿಲ್ಲವೆನ್ನುವುದು ನಿಜ.

Sunday, August 30, 2009

ನಾವೂ ನಮ್ಮ ವೆಕೇಷನ್ನೂ...

ನಮ್ಮ ಆಫೀಸಿನಲ್ಲಿ ಸಮ್ಮರ್ ಬಂತೆಂದರೆ ವೆಕೇಷನ್ನುಗಳ ಅಧಿಕೃತ ಆರಂಭವೆಂದೇ ಅರ್ಥ. ಮಾರ್ಚ್‌ಗೆ ಆರಂಭವಾಗುವ ಸ್ಪ್ರಿಂಗ್ ತನ್ನ ಆಗಮನದ ಜೊತೆಗೆ ಒಂದಿಷ್ಟು ಚಿಗುರುಗಳಲ್ಲಿ ಹುರುಪನ್ನು ಮೂಡಿಸುತ್ತದೆಯೇ ವಿನಾ ವಾತಾವರಣದ ಉಷ್ಣತೆ ಎಪ್ಪತ್ತು ಡಿಗ್ರಿ (ಫ್ಯಾರನ್‌ಹೈಟ್) ಮೇಲೆ ಏರಿ ಸುಯ್ ಎಂದು ತೀಡುವ ಮೃದುವಾದ ಗಾಳಿಯಿಂದ ರೋಮಾಂಚನವಾಗುವುದರಿಂದ ಹಿಡಿದು ಸಾಕಪ್ಪಾ ಸಾಕು ಈ ಬಿಸಿಲು ಎನ್ನುವಷ್ಟರಲ್ಲಿ ಸಮ್ಮರ್ ಹೋಗೇ ಬಿಟ್ಟಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಶಾಲೆಗಳಿಗೆ ರಜೆ, ಪೋಷಕರು ತಮ್ಮ ಮಕ್ಕಳನ್ನು ವರ್ಷಾವಧಿ ವೆಕೇಷನ್ನುಗಳಿಗೆ ಕೊಂಡೊಯ್ಯುವುದು ಕುಟುಂಬ ರೂಢಿ.

ನಾನು ನ್ಯೂ ಜೆರ್ಸಿಯಲ್ಲಿ ನೋಡಿರೋ ಹಾಗೆ ಅನಫಿಷಿಯಲ್ ಸಮ್ಮರ್ ಎಂದರೆ ಮೇ ತಿಂಗಳ ಕೊನೆಯಲ್ಲಿ ಬರುವ ಮೆಮೋರಿಯಲ್ ಡೇ ವೀಕ್ ಎಂಡ್ ನಿಂದ ಆರಂಭವಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ ಲೇಬರ್ ಡೇ ವರೆಗೆ. ಜೂನ್-ಜುಲೈ-ಆಗಷ್ಟ್ ಇವೇ ಮೂರು ತಿಂಗಳು, ಅದೇನು ಕಡಿದು ಹಾಕುತ್ತೀರೋ ಬಿಡುತ್ತೀರೋ, ಇವೇ ವರ್ಷದ ಉಳಿದ ಒಂಭತ್ತು ತಿಂಗಳನ್ನು ಸಹಿಸಿಕೊಳ್ಳುವಂತೆ, ಪ್ರತಿ ಸಮ್ಮರ್‌ನಲ್ಲಿ ಹೊಸದೇನನ್ನೋ ಸೃಷ್ಟಿಸುವಂತೆ ನಮ್ಮನ್ನೆಲ್ಲ ಕಟ್ಟಿ ಹಾಕಿರೋದು.

ಸಾಗರದ ಎಲ್.ಬಿ. ಕಾಲೇಜಿನಲ್ಲಿ ಓದಿಕೊಂಡಿರುವಾಗ ಇದ್ದಿಲು ಒಲೆಗೆ ಬೆಂಕಿ ತಗಲಿಸಿ ಹೊಟ್ಟೆ ತುಂಬಿಕೊಂಡ ಕರ್ಮ ಇನ್ನೂ ಮುಗಿದಿಲ್ಲವೇನೋ ಅನ್ನೋ ಹಾಗೆ ನಮ್ಮನೆ ಡೆಕ್ ನಲ್ಲಿ ಇರುವ ಕಲ್ಲಿದ್ದಲು ಗ್ರಿಲ್‌ ಏಪ್ರಿಲ್ ಅಂಚಿನಲ್ಲಿ ಬೇಸ್‌ಮೆಂಟ್ ನಿಂದ ಡೆಕ್‌ ಮೇಲೆ ಬಂದು ಇದ್ದಿಲಿಗೂ ನನಗೂ ಇರುವ ಋಣವನ್ನು ನೆನಪಿಸಿಕೊಡುತ್ತದೆ. ’ವೆಜಿಟೇರಿಯುನ್ನ್ ಜನ ನೀವೇನು ಗ್ರಿಲ್ ಮಾಡ್ತೀರಿ?’ ಎನ್ನೋರು ವಿಸ್ಮಿತರಾಗುವ ಹಾಗೆ ನನ್ನ ವೆಜಿಟೇರಿಯನ್ನ್ ಗ್ರಿಲ್ಲಿಂಗ್ ಪುರಾಣವನ್ನೆಲ್ಲ ಹೊರಗೆ ತೆಗೆದಿಡುತ್ತೇನೆ. ಈ ಕಲ್ಲಿದ್ದಲು ಶಾಖ ಎಷ್ಟು ಜೋರು ಅಂದ್ರೆ ಸರಿಯಾಗಿ ಮ್ಯಾನೇಜ್ ಮಾಡಿದ್ರೆ ಒಂದು ದಿನದ ಊಟ-ವ್ಯವಸ್ಥೆಯನ್ನು ಈ ಗ್ರಿಲ್ ಒಲೆಯಲ್ಲೇ ಮಾಡಿಬಿಡಬಹುದು. ಅಮೇರಿಕನ್ ಊಟದ ಪದ್ಧತಿಯ ಹಾಗೆ ನಾವು ಒಂದಿಷ್ಟು ವೆಜಿಟೇರಿಯನ್ ಪ್ಯಾಟ್ಟಿಗಳು, ಉಪ್ಪು-ಹುಳಿ-ಖಾರ ಸವರಿದ ಗೊಂಜೋಳ, ಸ್ಕಿವರ್‌ಗೆ ಪೋಣಿಸಿದ ಥರಥರ ತರಕಾರಿಗಳು, ಚಿಪ್ಸ್ ಮುಳುಗಿಸಿ ತಿನ್ನಲಿಕ್ಕೆ ಮಾವಿನ ಹಣ್ಣಿನ ಚಟ್ನಿ (ಸಾಲ್ಸಾ), ಸವತೆಕಾಯಿ ತುಂಡುಗಳು, ಮಾವಿನ ಹಣ್ಣು, ಮನೆಯಲ್ಲೇ ಮಾಡಿದ ಲಿಂಬೆ ಪಾನಕ (ಲೆಮನೇಡ್), ಹಲವು ಥರದ ಬ್ರೆಡ್ಡು, ಕೆಚಪ್, ಸುಟ್ಟ ಈರುಳ್ಳಿ, ರೆಡ್ ವೈನ್ ಮೊದಲಾದವುಗಳನ್ನು ನಮ್ಮ ಬ್ಯಾಕ್ ಯಾರ್ಡ್‌ನಲ್ಲಿ ಹರಡಿಕೊಂಡು ವರ್ಷದ ಒಂದಿಷ್ಟು ದಿನಗಳು ಮನೆಯಲ್ಲೇ "ಪಿಕ್‌ನಿಕ್" ಮಾಡೋದು ರೂಢಿ. ಇವುಗಳ ಜೊತೆಗೆ ಮೆಣಸಿನ ಕಾಯಿ ಬೋಂಡಾ, ಆಲೂಗಡ್ಡೆ ಬಜ್ಜಿ ಹಾಗೂ ಪನ್ಕೋಡಾ ಸೇರಿಕೊಂಡು ನಮ್ಮ ಸಮ್ಮರ್ ಪಾರ್ಟಿಗಳನ್ನು ಯಶಸ್ವಿಯಾಗಿ ಮಾಡಿಬಿಡುತ್ತವೆ. ಸ್ವಿಚ್ ಒತ್ತಿ ಗ್ಯಾಸ್ ಗ್ರಿಲ್ ಮೇಲೆ ಒಂದೇ ಕ್ಷಣದಲ್ಲಿ ಬರ್ಗರ್‌ಗಳನ್ನು ಮಾಡುವುದಕ್ಕಿಂತ ಕಲ್ಲಿದ್ದಲ ಗ್ರಿಲ್ ಹೊತ್ತಿಸಿ ಅದಕ್ಕೆ ಗಾಳಿ ಬೀಸಿ ನಿಧಾನವಾಗಿ ಹೊತ್ತಿ ಉರಿಯುವ ಬೆಂಕಿಯಲ್ಲಿ ದಿನದ ಒಂದೆರಡು ಘಂಟೆ ಹೊರಗಿರುವುದು ಸುಖ ತರುತ್ತದೆ. ನಮ್ಮ ಅತಿಥಿಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಹುಟ್ಟುತ್ತದೆ.

ಆದರೆ ಇವು ಯಾವುದೂ ನಮ್ಮ ವೇಕೇಷನ್ನ್ ಅಲ್ಲವೇ ಅಲ್ಲ. ಬಾರ್ ಬೇ ಕ್ಯೂ ಏನಿದ್ದರೂ ವಾರಾಂತ್ಯದಲ್ಲಿ ನಾವು ಮನೆಯಿಂದ ಹೊರಗಿರುವ ಪ್ರಯತ್ನವಷ್ಟೇ. ಇನ್ನು ಎಲ್ಲರಂತೆ ಪಡೆದುಕೊಳ್ಳುವ ನಮ್ಮ ವೆಕೇಶನ್ನ್ ದಿನಗಳು ಎಲ್ಲಿಗೆ ಹೋಗುತ್ತವೆ, ಹೋಗಿಬಿಟ್ಟವು. ವರ್ಷಕ್ಕೆ ಒಂದೋ ಎರಡೋ ಬಾರಿ ಸಮುದ್ರ ಇನ್ನೂ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವ ಹಾಗೆ ಬೀಚ್‌ಗೆ ಹೋಗುವುದು ವೇಕೇಷನ್ನ್ ಅಲ್ಲ. ಮುಂದಿನ ವರ್ಷ ನೋಡೋಣ ಎನ್ನುತ್ತಲೇ ಮುಂದೆ ತಳ್ಳುತ್ತ ಬಂದ ಡಿಸ್ನಿ ವರ್ಲ್ಡ್ ಮತ್ತು ಇತರ ಸ್ಥಳೀಯ ಆಕರ್ಷಣೆಗಳು ಇನ್ನೂ ಪುಸ್ತಕದ ಗಂಟಾಗೇ ಉಳಿದಿವೆ. ನಮ್ಮ ಮನೆಯಿಂದ ಕೇವಲ ಐವತ್ತೇ ಮೈಲು ದೂರದ ನ್ಯೂ ಯಾರ್ಕ್ ನಗರವನ್ನು ನೋಡೋದು ಯಾವಾಗಲೋ ಒಂದು ಬಾರಿ, ’ಯಾರು ಹೋಗುತ್ತಾರೆ ಅಲ್ಲಿಗೆ, ಹಳ್ಳ-ಕೊಳ್ಳವನ್ನು ದಾಟಿ’ ಎನ್ನುವ ಉದಾಸೀನ ಗೆದ್ದು ಬಿಡುತ್ತದೆ. ಅಮೇರಿಕದ ನಮ್ಮ ಬದುಕಿನಲ್ಲಿ ಆಫೀಸಿನ ಕೆಲಸ, ಕಾರ್ಯ ಹಾಗೂ ಅದರ ಸಂಬಂಧಿ ಯೋಚನೆಗಳನ್ನು ತೆಗೆದು ಹಾಕಿ ಬಿಟ್ಟರೆ ನಮ್ಮದು ಎಂದು ಉಳಿಯುವ ಭಾಗ ಬಹಳ ಕಡಿಮೆಯೇ ಎನ್ನಿಸಿ ಒಮ್ಮೆ ಭಯವಾಗುತ್ತದೆ.

ಹಿಂದೆ ಮದ್ರಾಸಿನಲ್ಲಿ ಕೆಲಸ ಮಾಡುವಾಗ ವಾರಕ್ಕೆರಡು ಮತ್ತು ತಿಂಗಳಿಗೆರಡು ಸಿಗುವ ರಜೆಗಳನ್ನು ಒಟ್ಟು ಪೋಣಿಸಿಕೊಂಡು ವಾರಗಟ್ಟಲೆ ಕರ್ನಾಟಕದಲ್ಲಿ ತಿರುಗಾಡಿದರೂ ಇನ್ನೂ ಮುಗಿಯದ ಕೆಲಸಗಳು ಹವ್ಯಾಸಗಳು ಅದೆಷ್ಟೋ ಇದ್ದವು. ಇನ್ನೂ ತಂತ್ರಜ್ಞಾನ ಇಷ್ಟು ಮುಂದುವರಿಯದೆ ನಮ್ಮ ನಮ್ಮ ನಡುವೆ ಅಗಾಧ ದೂರಗಳಿದ್ದರೂ ಭೇಟಿಯಾಗಿ, ಮಾತನಾಡಿ, ಮುಟ್ಟಿ, ಹರಟಿ, ಹಾಡಿ, ಜಗಳವಾಡಿ ಮತ್ತೆ ಒಂದು ಗೂಡಿ, ಕುಣಿದು ಕುಪ್ಪಳಿಸುವ ಅನೇಕ ಚಟುವಟಿಕೆಗಳ ತುಡಿತವಿತ್ತು. ಬೇಕಾದಷ್ಟು ನೆಪಗಳಿದ್ದವು, ನೆನಪುಗಳಿದ್ದವು. ಸಾಕಷ್ಟು ಸಂಖ್ಯೆಯ ಗುರುತು-ಪರಿಚಯದವರಿದ್ದರು, ಸಂಬಂಧಿಗಳಿದ್ದರು. ತಿರುಗಲು ದೇವಸ್ಥಾನಗಳಿದ್ದವು, ಮರುಗುವ ಮನಸ್ಸಿತ್ತು. ಎಷ್ಟಿದ್ದರೂ ಸಾಲದು ಇನ್ನೂ ಬೇಕು ಎನ್ನುವ ತುಡಿತವಿತ್ತು. ಸಾಹಿತ್ಯವಿತ್ತು, ಸಂಗೀತವಿತ್ತು, ಸಿನಿಮಾಗಳಿದ್ದವು, ಪುಸ್ತಕಗಳಿದ್ದವು, ನಿಯತಕಾಲಿಕಗಳಿದ್ದವು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಮಾರ್ಗದಲ್ಲಿ ಓದಿ ಮುಗಿಸಿದ ಅದೆಷ್ಟೋ ಲಂಕೇಶ್, ಸುಧಾ, ತರಂಗ, ಮಯೂರ, ಉತ್ಥಾನ, ಮಲ್ಲಿಗೆ, ಪ್ರಜಾಮತದ ವಾಹಿನಿಗಳಿದ್ದವು. ಊರಿಗೊಂದಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬೇಂದ್ರೆ, ಭೈರಪ್ಪ, ತರಾಸು, ಕಾರಂತ, ಮಾಸ್ತಿ, ಕುವೆಂಪು ಮೊದಲಾದ ಸ್ನೇಹಿತರ ಅನುಭವಗಳು ಅನಂತವಾಗಿ ಹಾಗೂ ಪುಕ್ಕಟೆಯಾಗಿ ಸಿಗುತ್ತಿದ್ದವು. ಇಂತಹ ಅಪರಿಮಿತ ಅನುಭವಗಳನ್ನು ಪಠಿಸಿ-ಪ್ರವಚಿಸಿದ ಘಟಾನುಗಟಿಗಳ ಸಾರ ಸುಲಭವಾಗಿ ಸಿಗುತ್ತಿತ್ತು. ಹಲವಾರು ತತ್ವಗಳು ಸಿಗುತ್ತಿದ್ದವು - ಒಂದು ರೀತಿ ಬಯಲಿನಲ್ಲಿ ಮೇಯುವ ದನಕ್ಕೆ ಸಿಗುವ ಅವಕಾಶದ ಹಾಗೆ, ಅಂತಹ ಅಗಾಧವಾದ ಅನೇಕಾನೇಕ ಬಯಲುಗಳು ಮೇಯಲಿದ್ದವು.

ಇವೆಲ್ಲದರ ಬಗ್ಗೆ ಈಗ ಬರೀತಾ ಹೋದರೆ ಅದು ಸವಿ ನೆನಪಾಗುತ್ತದೆ, ಅದರ ಮರುಘಳಿಗೆ ಅದು ನಾಸ್ಟಾಲ್ಜಿಯಾವಾಗಿ ಕಾಣುತ್ತದೆ. ಆದರೆ ಈವರೆಗೆ ಒಂದು ವಿಷಯವಂತೂ ಸತ್ಯ - ನಾವು, ನಮ್ಮ ವೇಕೇಷನ್ನುಗಳು, ನಮ್ಮ ದುಡಿಮೆ-ಇಡುಗಂಟು ಇವೆಲ್ಲದರ ಸಾಕ್ಷಾತ್ಕಾರ ಈ ಮೇಲಿನ ನಾಸ್ಟಾಲ್ಜಿಯಾದೊಂದಿಗೆ ಮಾತ್ರವೇ. ಅದನ್ನು ಹೊರತು ಪಡಿಸಿ, ಅಮೇರಿಕದಲ್ಲಿ ನಮ್ಮ ವೇಕೇಷನ್ನುಗಳಿಗೆ ಪೂರ್ಣ ಅರ್ಥ ಬಂದಿದ್ದಿಲ್ಲ, ನಮ್ಮ ಅರ್ಥ ಪರಿಸ್ಥಿತಿ ಪರಿಪೂರ್ಣವಾದದ್ದಿಲ್ಲ. ನಿಜವಾಗಿಯೂ ನಮ್ಮತನವನ್ನು ಕಲಕಿ ನೋಡುವ ವೆಕೇಷನ್ನುಗಳು ಕೆಲವು ಪುಣ್ಯಾತ್ಮರಿಗೆ ವರ್ಷಕ್ಕೊಮ್ಮೆ ಬರುತ್ತವೆ, ಇನ್ನು ಕೆಲವು ನಮ್ಮಂಥವರಿಗೆ ಮೂರು-ನಾಲ್ಕು ವರ್ಷಕ್ಕೊಮ್ಮೆ ಕೂಡಿ ಬರುತ್ತದೆ. ಬರೀ ವಿದೇಶ ಪ್ರಯಾಣದ ಯೋಗವೊಂದಿದ್ದರೆ ಸಾಲದು, ಮತ್ತೆ ಮರಳಿ ಸ್ವದೇಶವನ್ನು ಆಗಾಗ್ಗೆ ನೋಡುವ ಯೋಗವೂ ಇರಬೇಕು ಎನ್ನುವ ಆಲೋಚನೆ ಬಂದಿದ್ದು ಇತ್ತೀಚೆಗೆ ಮಾತ್ರ.

ಹಿಂದೆ ಎರಡು ಭುಜಗಳಿದ್ದ ಮನಕ್ಕೆ ಇಂದು ಎಂಟು ರೆಕ್ಕೆಗಳಿವೆ, ಎಲ್ಲಿಗಾದರೂ ಹೋಗಬೇಕು ಬರಬೇಕು ಎಂದರೆ ಅದರ ಮುಂದಿನ ತಯಾರಿ ಮತ್ತು ಅದರ ನಂತರದ ಚಿಂತೆಗಳು ಅನಿವಾರ್ಯವಾಗುತ್ತವೆ. ಹಣ ಹೆದರಿಕೆ ಎರಡೂ ಒಂದೇ ನಾಣ್ಯದ ಮುಖಗಳ ಹಾಗೆ ಒಂದನ್ನೊಂದು ಅನುಸರಿಸಿಕೊಂಡು ಬಂದಿವೆ - ಹಿಂದೆ ಹೆಗ್ಗೋಡಿನಿಂದ ಸಾಗರಕ್ಕೆ ನಿನಾಸಂ ನಾಟಕ ಮುಗಿಸಿ ನಡೆದುಕೊಂಡು ಬಂದಾಗ ಕತ್ತಲಿನ ದಾರಿಯಲ್ಲಿ ಹಾವಿದ್ದರೆ ಎನ್ನುವ ಹೆದರಿಕೆ ಇರಲಿಲ್ಲ, ಇಂದು ಕಾರಿನಲ್ಲಿ ಬೆಚ್ಚಗೆ ಕುಳಿತು ರಾತ್ರಿ ಡ್ರೈವ್ ಮಾಡುತ್ತಿದ್ದರೆ ರಸ್ತೆಯ ನಡುವೆ ಜಿಂಕೆಗಳು ಬಂದರೆ ಎಂದು ಕಂಪನ ಶುರುವಾಗುತ್ತದೆ.

ವರ್ಷವಿಡೀ ದುಡಿದು ಇರುವ ಮೂರು ನಾಲ್ಕು ವಾರಗಳನ್ನು ಒಟ್ಟುಗೂಡಿಸಿ ಕೆಲವು ವರ್ಷಗಳಿಗೊಮ್ಮೆ ಮಾಡುವ ಸ್ವದೇಶ ಪ್ರಯಾಣ ತರುವ ಸುಖಕ್ಕಿಂತ ಹೆಚ್ಚು ಕೆಲಸವಾಗುತ್ತದೆ, ವೆಕೇಷನ್ನಿನ್ನಲ್ಲಿ ಎಲ್ಲರೂ ಎಣಿಸಿ ಖರ್ಚು ಮಾಡುವುದಕ್ಕಿಂತ ಹೆಚ್ಚೇ ಕಾಸು ಕಳಚಿ ಹೋಗುತ್ತದೆ. ನಮ್ಮನ್ನು ಭೇಟಿಯಾಗುವವರ ಅನೇಕಾನೇಕ ಮುಖಗಳು ಅವುಗಳ ಹಿಂದಿನ ಕಥನವನ್ನು ಮನಸ್ಸಿನಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ನೆನಪಿನಲ್ಲಿರುವ ಹಾಗಿನ ಎಷ್ಟೋ ವ್ಯಕ್ತಿಗಳು ಇನ್ನೂ ಹರೆಯದವರಾಗಿರದೆ ಮುದುಕುರಾಗಿರುವುದನ್ನು ಅಪ್‌ಡೇಟ್ ಮಾಡಿಕೊಳ್ಳಲು ವಿದುಳು ಹೆಣಗುತ್ತದೆ. ಇತ್ತೀಚೆಗೆ ಕೇಳಿರದ ಅನೇಕ ಪದ-ವಾಕ್ಯಗಳ ಬಳಕೆ ಬೆಚ್ಚಿ ಬೀಳಿಸುತ್ತದೆ. ಅಲ್ಲಲ್ಲಿ ಕೇಳಿಬರುವ ಸಿನಿಮಾ ಹಾಡುಗಳು ಹೊಸದಾಗೇ ಉಳಿಯುತ್ತವೆ. ಹುಟ್ಟಿದ ಹೊಸಬರು, ಸತ್ತ ಹಳೆಯವರನ್ನು ಕುಟುಂಬಗಳ ಹಿನ್ನೆಲೆಯಲ್ಲಿ ತಾಳೆ ಹಾಕಿಕೊಳ್ಳುವುದು ಮುಗಿಯದ ಲೆಕ್ಕವಾಗುತ್ತದೆ.

’ನಾಲ್ಕು ವಾರ ವೆಕೆಷೆನ್ನಾ...’ ಎಂದು ಕೇಳಿ ಬರುವ ಉದ್ಗಾರಗಳಿಗೆ ಉತ್ತರವಾಗಿ ’ನಮ್ಮ ವೆಕೇಷನ್ನುಗಳ ಹಣೆಬರಹ ಇವರಿಗೇನು ಗೊತ್ತು!’ ಎನ್ನುವ ಹೇಳಿಕೆ ಮನದಲ್ಲೇ ಉಳಿದುಬಿಡುತದೆ. ವೆಕೇಷನ್ನಿಗೆ ಹೋಗುವುದಕ್ಕಿಂತ ಮೊದಲು ಹಾಗೂ ವೆಕೇಷನ್ನಿಂದ ಬಂದ ನಂತರ ಕೆಲಸಗಳು ಮಾತ್ರ ಅತಿಯಾಗಿ ಹೋಗುತ್ತವೆ. ಪ್ರತಿವರ್ಷ ಹೀಗೆ ಹೋಗಬೇಕು ಎನ್ನುವ ಆಸೆ, ಆಸೆಯಾಗಿಯೇ ಉಳಿದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಮೂರು-ನಾಲ್ಕು ವರ್ಷಗಳಿಗೊಮ್ಮೆಯಾಗಿ ಬಿಡುತ್ತದೆ.

Sunday, August 16, 2009

ಕೇವಲ 62 ವರ್ಷದ ಸ್ವಾತ್ಯಂತ್ರ್ಯ

ನಿನ್ನೆ ಸ್ವಾತಂತ್ರ್ಯೋತ್ಸವಗಳನ್ನು ಟಿವಿಯಲ್ಲಿ ನೋಡ್ತಾ ಇದ್ದಾಗ, ವರದಿಗಳನ್ನು ಓದ್ತಾ ಇದ್ದಾಗ ನಮ್ಮದು ಕೇವಲ 62 ವರ್ಷದ ಸ್ವಾತ್ಯಂತ್ರ್ಯ ಅಷ್ಟೇ ಅಂತ ಅನ್ಸಿದ್ದು ವಿಶೇಷ. ಈ ಹಿಂದೆ ನನಗೆ ನೆನಪಿರೋ ಹಾಗೆ ನಮ್ಮ ಹೈ ಸ್ಕೂಲು ದಿನಗಳಿಂದ ಹಿಡಿದು ನಲವತ್ತು, ಐವತ್ತು, ಅರವತ್ತು ವರ್ಷಗಳ ಆಚರಣೆಗಳನ್ನು ಮಾಡಿ-ನೋಡಿದ್ದರೂ ಈಗ ಅನ್ನಿಸ್ತಿರೋ ಹಾಗೆ ನಮ್ಮ ದೇಶ ಬ್ರಿಟೀಷರಿಂದ ಸ್ವಾತ್ರಂತ್ರ್ಯ ಪಡೆದದ್ದು ರಿಲೇಟಿ‌ವ್ ಆಗಿ ಇತ್ತೀಚೆಗೆ ಅನ್ನೋ ಭಾವನೆ ಬಲವಾಗ್ತಿದೆ.

ಈ ಆರು ದಶಕಗಳ ಸ್ವಾತಂತ್ರ್ಯದಲ್ಲಿ ನನಗೆ ಗೊತ್ತಿರೋ ಹಾಗೆ ಎರಡು-ಮೂರು ದಶಕಗಳನ್ನು ಚೆನ್ನಾಗಿ ಗಮನಿಸಿದರೆ, ಅದರಲ್ಲೂ ನಮ್ಮ ವಯಸ್ಸಿನವರಿಗೆ ಅನ್ವಯವಾಗುವ ಎಂಭತ್ತು ಹಾಗೂ ತೊಂಭತ್ತರ ದಶಕಗಳಲ್ಲಿ ಭಾರತ ಬಹಳಷ್ಟು ಬೆಳೆದಿದೆ. ತದನಂತರ ಎರಡು ಸಾವಿರದ ದಶಕದಲ್ಲಂತೂ ಎಲ್ಲಾ ಬೆಳವಣಿಗೆಗಳು ಮುಗಿಲು ಮುಟ್ಟಿದವು ಎಂದೇ ಹೇಳಬೇಕು. ನಾವು ಪಾಕಿಸ್ತಾನದವರ ಹಾಗೆ ಸ್ವಾತಂತ್ರ್ಯ ಸಿಕ್ಕ ಮೊದಲನೇ ದಿನದಿಂದ ವಿದೇಶಿಯರಿಗೆ ನಮ್ಮ ಮಾರ್ಕೆಟ್ಟುಗಳನ್ನು ತೆರೆದುಕೊಳ್ಳಲಿಲ್ಲ, ಎಂಭತ್ತು ಹಾಗು ತೊಂಭತ್ತರ ದಶಕದ ಅಂತ್ಯದವರೆಗೂ ಎಲ್ಲವೂ ಸರ್ಕಾರೀ ಸ್ವಾಧೀನದಲ್ಲೇ ಇತ್ತು. ಇಂದಿಗೂ ಸಹ ಬೇಕಾದಷ್ಟು ರಂಗಗಳಲ್ಲಿ ಸರ್ಕಾರಿ ಹಿಡಿತವಿದೆ. ನಮ್ಮ ದೇಶಕ್ಕೆ ವಿದೇಶಿ ಸರಕುಗಳು ನಿಧಾನವಾಗಿ ಬಂದವು. ರಕ್ಷಣಾ ತಂತ್ರಜ್ಞಾನವೇನೋ ಮೊದಲೇ ತೆರೆದುಕೊಂಡಿತು, ಆದರೆ ಮಿಕ್ಕವು ತಡವಾಗಿದ್ದಂತೂ ನಿಜ.

ಈ ಜಾಗತೀಕರಣ ಅನ್ನೋ ನಾಣ್ಯಕ್ಕೆ ಎರಡು ಮುಖಗಳಿದ್ದರೆ, ಅದರಲ್ಲಿ ಮೊದಲನೆಯದು ಒಂದು ದೇಶದ ಒಳಗಿನಿಂದ ಹೊರಹೋಗುವುದನ್ನು ಪ್ರತಿಬಿಂಬಿಸಿದರೆ ಮತ್ತೊಂದು ಹೊರದೇಶಗಳಿಂದ ಒಳಬರುವುದನ್ನು ಪ್ರತಿನಿಧಿಸುತ್ತದೆ. ಈ ಒಳ-ಹೊರ ಹೋಗುವುದನ್ನು ಯಾವುದೇ ವಿಚಾರಕ್ಕೂ ಅಳವಡಿಸಬಹುದು - ಆಮದು/ರಫ್ತು, ಸಂಸ್ಕೃತಿ, ಭಾಷೆ, ತಂತ್ರಜ್ಞಾನ, ವಿನ್ಯಾಸ, ವಿದ್ಯೆ, ಆಚಾರ-ವಿಚಾರ, ಇತ್ಯಾದಿ. ಸರಿ, ನಮಗೇನೋ ಇಂಗ್ಲೀಷರಿಂದ ಸ್ವಾತ್ರಂತ್ರ್ಯ ಸಿಕ್ಕಿತು, ಆದರೆ ಇವತ್ತಿನವರೆಗೂ ಉಳಿದ ದೇಶಗಳಲ್ಲಿ ಇಂಗ್ಲೀಷರ ಸಂತಂತಿ ಅಳಿದುಳಿದ ಹಾಗೆ ಭಾರತದಲ್ಲಿ ಏಕೆ ಮುಂದುವರೆಯಲಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಯಾವಾಗಲೂ ಛಳಿಯೆಂದು ಒದ್ದಾಡುವ ಯುರೋಪಿಯನ್ನರಿಗೆ ಭಾರತದಂತಹ ದೇಶದಲ್ಲಿ ಬೇಕಾದಷ್ಟು ಹವಾಮಾನದ ವೇರಿಯೇಷನ್ನುಗಳಿರುವಂಥ ಪ್ರದೇಶಗಳಿರುವಾಗ ನಮ್ಮಲ್ಲಿ ಎರಡನೇ ಮೂರನೇ ಜನರೇಷನ್ನ್ ಭಾರತೇತರ ಮೂಲದ ಜನರು ಏಕೆ ನೆಲಸದಿದ್ದಿರಬಹುದು? ಅದೇ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಹೆಚ್ಚು ಹೆಚ್ಚು ಯುರೋಪ್ ಪ್ರಭಾವವನ್ನು ಇವತ್ತಿನವರೆಗೂ ನಾವು ಕಾಣಬಹುದು. ಏಕೆ ಹೀಗೆ?

ಭಾರತದ ನೆಲವನ್ನು ಶತಮಾನಗಳ ಕಾಲ ಆಳಿದ ಯುರೋಪಿಯನ್ನರ ಪ್ರಭಾವ ನಮ್ಮಲ್ಲಿ ಇವತ್ತಿಗೂ ಬಹಳ ದೊಡ್ಡದು. ಒಳ್ಳೆಯದು ಕೆಟ್ಟದ್ದು ಎಂದು ಆಲೋಚಿಸುವುದನ್ನು ಆಬ್ಜೆಕ್ಟಿವ್ ಆಗಿ ಮಾಡಬೇಕಾಗುತ್ತದೆ. ನಮ್ಮಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು, ಸ್ಥಳೀಯ ರಾಜ ಪರಂಪರೆಗಳನ್ನು ಒಡೆದು-ಒಂದುಗೂಡಿಸಿ ಆಳಿ ಒಂದು ಭಾರತ ದೇಶವಾಯಿತು. ಜೊತೆಗೆ ರೇಲ್ ರೋಡ್, ಅಂಚೆ ವ್ಯವಸ್ಥೆ, ಆಂಗ್ಲ ವಿದ್ಯಾಭ್ಯಾಸ, ವಸ್ತ್ರ ವಿನ್ಯಾಸಗಳು, ಕೇಶ ಶೈಲಿ, ಮತ ಪಂಗಡಗಳು, ಆಹಾರ-ವಿಚಾರಗಳು, ಪಾನೀಯಗಳು, ಹೂವುಗಳು, ತರಕಾರಿಗಳು, ವಿಷಯ-ವಸ್ತುವನ್ನೊಂದನ್ನು ಬೇರೆ-ಬೇರೆ ರೀತಿಯಲ್ಲಿ ನೋಡುವ ದೃಷ್ಟಿಕೋನ... ಹೀಗೆ ಪಟ್ಟಿ ಮುಂದುವರೆಯುತ್ತದೆ. ಇವೆಲ್ಲ ನಮ್ಮನ್ನು ಆಳಿದವರು ನಮಗೆ ನೀಡಿದ ಬಳುವಳಿ. ಇಂತಹ ಬಳುವಳಿಗಳು ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ತಲೆಮಾರುಗಳು ಮುಂದುವರೆದ ಹಾಗೆ ಅವುಗಳು ಒಂದೊಂದೇ ವಿಶೇಷ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಯಾವುದು ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ಒಂದು ಭಾಷೆಯಾಗಿ ಯಾವುದು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ ನಮ್ಮನ್ನು ಒಂದುಗೂಡಿಸಿರಲಿಲ್ಲವೋ ಆ ಕೆಲಸವನ್ನು ಇಂಗ್ಲೀಷ್ ಮಾಡಿತು. ತಲೆ ತಲೆಮಾರುಗಳ ತರುವಾಯ ಯಾವ ವ್ಯವಹಾರ-ವಾಣಿಜ್ಯ ನಮ್ಮಲ್ಲಿ ಉಳಿದು-ಬೆಳೆದುಕೊಂಡು ಬಂದಿತ್ತೋ ಅದರ ಸ್ಥಳದಲ್ಲಿ ಇಂಗ್ಲೀಷ್ ಮೂಲದ ಬಿಸಿನೆಸ್ಸ್ ಪ್ರಾಸೆಸ್ಸುಗಳು ಬಂದವು. ಈ ಜಗತ್ತಿನಲ್ಲಿ ಯಾರು-ಏನು-ಎಲ್ಲೆಲ್ಲಿ-ಹೇಗೆ ಎನ್ನುವ ನಿರ್ಧಾರಗಳು ನಿಲುವುಗಳು ಬದಲುಗೊಂಡವು. ಜಗತ್ತು ಚಿಕ್ಕದಾಯಿತು, ಮನುಷ್ಯ ಪರಂಪರೆಗಳು ಮೊದಲಿಗಿಂತ ಹತ್ತಿರ ಬಂದವು.

ನಮ್ಮ ಸಾವಿರಾರು ವರ್ಷಗಳ ಪರಂಪರೆಯ ಮುಂದೆ ಈ ಸ್ವಾತಂತ್ರ್ಯೋತ್ತರ ಆರು ದಶಕಗಳು ಸಂಖ್ಯೆಯಲ್ಲಿ ಬಹಳ ದೊಡ್ಡವೇನು ಅಲ್ಲ, ಆದರೆ ಈ ಆರು ದಶಕಗಳಲ್ಲಿ ಆದ ದೇಶದ ಬೆಳವಣಿಗೆ ಹಾಗೂ ಪ್ರಗತಿ ಗಣನೀಯ. ನಮಗೆ ನಮ್ಮ ಮೂಲಭೂತ ಸಮಸ್ಯೆಗಳು ಎಂದಿಗೂ ಇರುವಂಥವೇ ಎನ್ನಿಸುವಂತಾಗಿದೆ, ನಮ್ಮ ದೇಶದಲ್ಲಿ ನೂರಕ್ಕೆ ಐವತ್ತು ಮಂದಿಗೆ ತಮ್ಮ ಹೆಸರನ್ನು ಬರೆಯಲು ಬಾರದು ಎನ್ನುವುದರಲ್ಲಿ ಬದಲಾವಣೆಯನ್ನು ಕಾಣಲು ಇನ್ನೂ ಬಹಳ ವರ್ಷಗಳೇ ಬೇಕಾಗುತ್ತವೆ, ನಮ್ಮವರಿಗೆಲ್ಲ ಸ್ವಚ್ಛ ಕುಡಿಯುವ ನೀರಿನ ಅಗತ್ಯ ಯಾವತ್ತಿನಿಂದ ಇದ್ದರೂ ಅದನ್ನು ಪೂರೈಸುವುದು ಇನ್ನೂ ಪ್ರಯತ್ನವಾಗಿಯೇ ಉಳಿಯುತ್ತದೆ, ಕೋಟ್ಯಾಂತರ ಜನರು ಕೆಲಸ ಮಾಡಬಲ್ಲವರಾದರೂ, ಕೆಲಸವಿಲ್ಲದವರಾಗುತ್ತಾರೆ. ಜನರಿಂದ ಜನರಿಗಾಗಿ ಬೇಕಾಗುವ ಕೆಲಸ ಹುಟ್ಟಿ ಇಂಡಸ್ಟ್ರಿಗಳು ಬೆಳೆಯದೇ ಹೋಗಿ, ಅಗತ್ಯದ ಕೆಲಸ ಕಾರ್ಯಗಳಲ್ಲಿ ಚಿಕ್ಕ ಮಕ್ಕಳ ಬಳಕೆಯಾಗುತ್ತದೆ. ವೃತ್ತಿ ಶಿಕ್ಷಣ ಸಂಬಂಧಿ ನಿಲುವು ಹೆಚ್ಚಾಗದೇ ಒಂದು ವಿದ್ಯೆ, ಬಿಸಿನೆಸ್ಸನ್ನು ತಮ್ಮದೆನ್ನಿಸಿಕೊಳ್ಳದೇ ಎಲ್ಲರಿಗೂ ಎಲ್ಲವೂ ಗೊತ್ತು ಆದರೆ ಯಾರೂ ಪರಿಣಿತರಿಲ್ಲವೆನ್ನುವಂತಾಗುತ್ತದೆ.

ನನ್ನಂಥವರಿಗೆ ಆರು ದಶಕಗಳ ಸ್ವಾತಂತ್ರ್ಯದ ಸವಿಯುಂಡ ಒಂದು ದೇಶದ ಹಿನ್ನೆಲೆಯಿದೆ, ಜೊತೆಗೆ ೨೩ ದಶಕಗಳ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಮತ್ತೊಂದು ದೇಶದ ಸದರಿ ಆಗು-ಹೋಗುಗಳ ಅರಿವಿದೆ. ತಂತ್ರಜ್ಞಾನ-ಸಂವಹನ ರಂಗದಲ್ಲಿ ಇತ್ತೀಚೆಗೆ ಕ್ರಾಂತಿಯಾದದ್ದನ್ನು ನಾವು ಕಣ್ಣಾರೆ ಕಂಡು ಅನುಭವಿಸಿದ್ದೇವೆ. ಇನ್ನೂ ಎರಡು ದಶಕಗಳ ಬಳಕೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಜನರ ಅಂತರ್ಜಾಲದ ಸೂಪರ್ ಹೈವೇ ಹಾಗೂ ನೂರಾರು ವರ್ಷಗಳ ಹಿಂದೆ ಯಾರೋ ತೆರೆದಿಟ್ಟ ದಾರಿಗಳಿರುವಾಗ ಮುಂದೆ ಇವೆಲ್ಲ ಮುಂದೆ ಹೇಗೆ ಎನ್ನುವ ಕುತೂಹಲ ಎಂದಿಗಿಂತಲೂ ಇನ್ನೂ ಬಲವಾಗಬಹುದು.

ನಮ್ಮಲ್ಲಿ ಸಮಸ್ಯೆಗಳು ಹೆಚ್ಚು ಎಂದು ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ಹೆಚ್ಚು ಜನಸಂಖ್ಯೆಯೇ ಎಲ್ಲದಕ್ಕೂ ಕಾರಣ ಎಂದು ದೂರಿ ಫಲವಿಲ್ಲ. ಇವೆಲ್ಲ ನಮ್ಮತನದಲ್ಲಿ ಅವಿಭಾಜ್ಯವಾಗಿ ಸೇರಿಹೋಗಿವೆ. ನಮ್ಮ ದೇಶವನ್ನು ಅಮೇರಿಕದಷ್ಟು ಉದ್ದ-ಅಗಲವಾಗಿ ಹಿಗ್ಗಿಸಲಾಗದು. ನಮ್ಮಲ್ಲಿ ಅಮೇರಿಕದ ಸವಲತ್ತು-ಸಂಪನ್ಮೂಲಗಳನ್ನು ಒಂದೇ ದಿನದಲ್ಲಿ ಸೃಷ್ಟಿಸಲಾಗದು. ನಮ್ಮ ಮೂಲಭೂತ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿರ್ಮೂಲನ ಮಾಡಲಾಗದು. ಇವುಗಳಿಗೆಲ್ಲ ಉತ್ತರ ಬಹಳ ದೂರದ ಪ್ರಯಾಣ ಹಾಗೂ ಅಂತಹ ಅಪರಿಮಿತ ಪ್ರಯಾಣದಲ್ಲಿ ದೊರಕುವ ಯಶಸ್ಸಿನ ಮೈಲುಗಳು ಈ ಸಮಸ್ಯೆಗಳಿಗೆ ಉತ್ತರಗಳು. ಇನ್ನೂ ನೂರು-ಇನ್ನೂರು ವರ್ಷಗಳಲ್ಲಾದರೂ ನಾವು ಪ್ರಭಲರಾಗುತ್ತೇವೆ. ನಮ್ಮ ಸಂಖ್ಯೆ ನಮ್ಮ ಶಕ್ತಿಯಾಗುತ್ತದೆ. ನಾವು ಎಲ್ಲರಿಗಿಂತ ಮುಂದಿರುತ್ತೇವೆ.

ಇವು ಬರೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡೋ ವಿಷ್ ಆಗಲೀ ವಿಷ್‌ಫುಲ್ ಆಲೋಚನೆಗಳಾಗಲೀ ಆಗದೇ ಆದಷ್ಟು ಬೇಗ ನಿಜವಾಗುವುದನ್ನು ನಮ್ಮ ತಲೆಮಾರು ನೋಡಿದ್ದರೆ ಎಷ್ಟೊಂದು ಚೆನ್ನಿತ್ತು ಅನ್ನಿಸೋದಿಲ್ಲವೇ?

Friday, August 14, 2009

ಕಷ್ಟಗಳು, ಉಳಿತಾಯ ಹಾಗೂ ಮೋಕ್ಷ

’ಬಹಳ ಕಷ್ಟಾ ಸ್ವಾಮಿ, ಇತ್ತೀಚೆಗೆ’. ಅನ್ನೋ ಮಾತು ಆಗಾಗ್ಗೆ ಕೇಳಿ ಬರ್ತಾನೇ ಇರುತ್ತೆ. ಕೆಲಸ ಕಳೆದುಕೊಂಡವರ ಬಗ್ಗೆ, ಮನೆಗಳ ಬೆಲೆ ಕುಸಿದು ಮಾರಲೂ ಆಗದೇ ಅವುಗಳ ಸಾಲವನ್ನು ಕಟ್ಟಲೂ ಆಗದೇ ಕೊರಗುವವರ ಬಗ್ಗೆ, ಒಂದೇ ಮನೆಯಲ್ಲಿ ಇತ್ತೀಚೆಗಷ್ಟೇ ಕಾಲೇಜು ಮುಗಿಸಿದ ಕೆಲಸ ಹುಡುಕುತ್ತಿರುವ ಮಕ್ಕಳ ಜೊತೆಗೆ ಪೋಷಕರೂ ಕೆಲಸ ಹುಡುಕುತ್ತಿರುವುದರ ಬಗ್ಗೆ, ಇನ್ನೇನು ನಿವೃತ್ತರಾಗಬೇಕು ಎನ್ನುಕೊಳ್ಳುವವರು ಮತ್ತಿನ್ನೊಂದಿಷ್ಟು ವರ್ಷಗಳ ಕಾಲ ಕೆಲಸ ಮಾಡಲೇ ಬೇಕು ಎನ್ನುವುದರ ಬಗ್ಗೆ ಹೀಗೆ ಹಲವಾರು ವರದಿಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಬಡತನದಲ್ಲಿ ಹುಟ್ಟಿ ಬೆಳೆದವರಿಗೆ ಮುಂದೆ ಅವರು ಯಾವುದೇ ಸ್ಟೇಟಸ್‌ನಲ್ಲಿದ್ದರೂ ಅವರ ಸರ್ವೈವಲ್ ತಂತ್ರಗಳು ಯಾವಾಗಲೂ ಜೀವಂತವಾಗಿಯೇ ಇರುತ್ತವೆ ಎಂದು ಹೇಳಬೇಕು. ಒಮ್ಮೆ ಬಡತನದಲ್ಲಿ ಸಿಕ್ಕಿಕೊಂಡರೆ ಅದರ ಪರಿಣಾಮಗಳು ಒಂಥರಾ ರಕ್ತದಲ್ಲಿರುವ ಯಾವುದೇ ಖಾಯಿಲೆಯ ವೈರಾಣುಗಳ ಹಾಗೆ ಯಾವತ್ತೂ ಜೀವಂತವಾಗೇ ಉಳಿದು ಕಷ್ಟದ ಪರಿಸ್ಥಿತಿಯಲ್ಲಿ ಹಳೆಯ ಇನ್‌ಸ್ಟಿಂಕ್ಸ್ ಎಲ್ಲ ಕೆಲಸ ಮಾಡಲು ಆರಂಭಿಸುತ್ತವೆ. ಅದೇ ಹುಟ್ಟಿದಂದಿನಿಂದ ಬಡತನವನ್ನು ಕಾಣದೇ ಇದ್ದವರ ಮೊದಲ ಬಡತನದ ಬವಣೆ ಬಲುಕಷ್ಟ.

ನಮ್ಮ ಪಕ್ಕದ ಮನೆಯವರು ಈ ಹತ್ತು ವರ್ಷಗಳಿಂದಲೂ ಪ್ರತಿನಿತ್ಯ ತಮ್ಮ ಮನೆಯ ಸುತ್ತಲೂ ಕನಿಷ್ಠ ಇಪ್ಪತ್ತು ವಿದ್ಯುತ್ ದೀಪಗಳನ್ನು ಉರಿಸುತ್ತಿದ್ದರು - ಗರಾಜ್ ಲೈಟ್‌ಗಳು, ಎದುರು ಲಾನ್‌ನಲ್ಲಿರುವ ಮರಗಳಿಗೆ ಫೋಕಸ್ ಲೈಟ್‌ಗಳು, ಮನೆಯ ಮುಂದಿನ ಬಾಗಿಲಿಗೆ, ಡ್ರೈವ್‍ ವೇ ಅಕ್ಕಪಕ್ಕದಲ್ಲಿ ಇತ್ಯಾದಿ. ಈ ಲೈಟುಗಳೆಲ್ಲ ಅಟೋಮ್ಯಾಟಿಕ್ ಆಗಿ ರಾತ್ರಿ ಪೂರ್ತಿ ಉರಿದು ಬೆಳಿಗ್ಗೆ ಆರಿಹೋಗುತ್ತಿದ್ದವು, ಅದೇ ನಮ್ಮ ಮನೆಯಲ್ಲಿ ದಿನಕ್ಕೆ ಕೆಲವು ಘಂಟೆಗಳು ಮಾತ್ರ ಮುಂದಿನ ಬಾಗಿಲಿನ ಎರಡು ಎನರ್ಜಿ ಎಫಿಷಿಯಂಟ್ ಬಲ್ಬ್‌ಗಳು ಉರಿಯುತ್ತಿದ್ದವು. ಹೋದ ವರ್ಷದ ಕೊನೆಯಲ್ಲಿ ಇದ್ದಕ್ಕಿದ್ದ ಹಾಗೆ ನಮ್ಮ ಇಲೆಕ್ಟ್ರಿಕ್ ಬಿಲ್ ಡಬಲ್ ಆಯಿತು, ನಾನೂ ಗಾಬರಿಗೊಂಡು ಒಂದಿಬ್ಬರನ್ನು ಕೇಳಿ ತಿಳಿದಾಗ ಅವರದ್ದೂ ಅದೇ ಪರಿಸ್ಥಿತಿ. ಹಾಗಾದ ಮರುದಿನವೇ ಪಕ್ಕದ ಮನೆಯ ಲೈಟುಗಳು ಎಲ್ಲವೂ ನಿಂತು ಹೋದವು, ಅವರು ಮನೆಯಲ್ಲಿದ್ದ ದಿನಗಳು ಮಾತ್ರ ಮುಂದಿನ ಬಾಗಿಲಿಗೆ ಒಂದು ಎನರ್ಜಿ ಎಫಿಷಿಯಂಟ್ ಲೈಟ್ ಬಲ್ಬ್ ಉರಿಯತೊಡಗಿತು. ಕೇವಲ ಎಲೆಕ್ಟ್ರಿಕ್ ಬಿಲ್ ವಿಚಾರವೊಂದೇ ಅಲ್ಲ, ಅವರ ಖರ್ಚು-ವೆಚ್ಚ ಜೀವನ ಶೈಲಿಯಲ್ಲೂ ಬದಲಾವಣೆಗಳು ಗೋಚರಿಸತೊಡಗಿದವು: ನ್ಯೂಸ್ ಪೇಪರ್ ಸಬ್‌ಸ್ಕ್ರಿಫ್ಷನ್ ನಿಂತು ಹೋಗುವುದು, ವರ್ಷದ ವೆಕೇಷನ್ನ್ ಕ್ಯಾನ್ಸಲ್ ಆಗುವುದು, ಮುಂತಾಗಿ.

ಒಂದು ವಸ್ತು ನಮ್ಮದೋ ಅಲ್ಲವೋ ಎಲ್ಲ ಕಡೆ ಕನ್ಸರ್‌ವೇಟಿವ್ ಆಗಿರುವುದು ಒಂದು ಬಗೆ - ಉದಾಹರಣೆಗೆ ನಮ್ಮ ಆಫೀಸಿನಲ್ಲಿ ನಾವು ಪ್ರಿಂಟ್ ಮಾಡುವ ಪ್ರತಿಯೊಂದು ಡಾಕ್ಯುಮೆಂಟ್ ಜೊತೆಗೆ ನಮ್ಮ ಹೆಸರಿನ ಕವರ್ ಪೇಜ್ ಅನ್ನು ನಾನು ಸಾಧ್ಯವಾದಷ್ಟು ಬಳಸುತ್ತೇನೆ, ಅದರ ಖಾಲಿ ಇರುವ ಮತ್ತೊಂದು ಪುಟದಲ್ಲಿ ಏನಾದರೂ ನೋಟ್ಸ್ ಮಾಡುವುದಕ್ಕೋ ಅಥವಾ ಚಿಕ್ಕದಾಗಿ ಕತ್ತರಿಸಿಕೊಂಡು ’ಪೋಸ್ಟ್ ಇಟ್’ ನೋಟ್ಸ್ ಥರವೋ, ಅಥವಾ ಇನ್ನೊಂದು ರೀತಿ. ಇನ್ನುಳಿದವರು ಆ ಕವರ್ ಪುಟವನ್ನು ಟ್ಯ್ರಾಷ್ ಮಾಡಬಹುದು, ಅಥವಾ ರಿಸೈಕಲ್ ಮಾಡಬಹುದು, ಹೀಗೆ ಅವರವರ ಬುದ್ಧಿಗೆ ತಕ್ಕಂತೆ ಆ ಕವರ್ ಪೇಜ್ ಬಳಕೆಗೊಳ್ಳುತ್ತೆ. ಇಲ್ಲಿ ಒಂದೇ ಸರಿಯುತ್ತರವೆಂಬುದೇನೂ ಇಲ್ಲ, ಆ ಪುಟವನ್ನು ಹೇಗೆ ಬಳಸಬೇಕು ಎನ್ನುವುದಕ್ಕೆ ಹಲವಾರು ಸರಿ ಉತ್ತರಗಳಿವೆ. ನನ್ನ ನಿಲುವಿನಲ್ಲಿ ಅಥವಾ ನಾನು ಹೇಗೆ ಆ ಕವರ್ ಪುಟವನ್ನು ಬಳಸುತ್ತೇನೆ ಎಂಬುದರಲ್ಲಿ ಯಾವುದೇ ಬದಲಾವಣೆಗಳೂ ಆಗಲಾರವು, ಅದು ಎಕಾನಮಿಯನ್ನೂ ಆದರಿಸಿಲ್ಲ, ಅದಕ್ಕೆ ನೇರವಾಗಿ ನಾನು ಹಣಕೊಡುವುದೂ ಇಲ್ಲ. ಇದು ಹೇಗೆ ನನ್ನ ನಿಲುವೋ ಉಳಿದವರದೂ ಹಾಗೆ, ಅಷ್ಟೇ.

ಇನ್ನು ಕಷ್ಟದ ಮಾತಿಗೆ ಬರೋಣ, ಅವರವರ ಕಷ್ಟ ಅವರಿಗೆ ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ. ಆದರೆ ಕಷ್ಟಗಳು, ಸಾಂಸಾರಿಕ ಜಂಜಾಟಗಳು, ನಮಗೊದಗುವ ಅನೇಕ ತೊಂದರೆಗಳನ್ನು ಹಲವಾರು ರೀತಿಯಲ್ಲಿ ನೋಡಬಹುದು. ಅವುಗಳ ತುಲನಾತ್ಮಕ ಅರಿವು ನಮ್ಮನ್ನು ಎಷ್ಟೋ ಸಾರಿ ’ಸದ್ಯ, ನಮಗೆ ಹಾಗಾಗದಿದ್ದರೆ ಸಾಕು!’ ಎನ್ನುವ ಮನೋಭಾವನೆಯಿಂದ ಆ ಮಟ್ಟಿಗೆ ಸಮಾಧಾನ ಹುಟ್ಟಬಹುದು. ದೈಹಿಕ ಕೆಲಸಗಳಿಂದ ಸ್ನಾಯುಗಳು ಬಲಗೊಳ್ಳುವ ಹಾಗೆ ಈ ಸಂಕಷ್ಟಗಳ ಪರಂಪರೆ ಮನಸ್ಸನ್ನು ಗಟ್ಟಿಗೊಳಿಸಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಜಂಜಾಟಗಳಲ್ಲಿ ಬಳಲಿ, ತೊಳಲಿ, ಬಗ್ಗಿ, ಬಾಗಿ, ನೊಂದು, ನಲಿದು ಮುಂದೆ ಇವೆಲ್ಲದರ ದೆಸೆಯಿಂದ ಲಕ್ಷಾಂತರ ಜನ್ಮಗಳಲ್ಲಿ ಮೋಕ್ಷ ಸಿಗಬಹುದು.

ನಮಗೆಲ್ಲ ಕಷ್ಟದ ಬಗ್ಗೆ ಏನು ಗೊತ್ತಿದೆ? ಮನೆಯಲ್ಲಿ ಮೂರೋ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎನ್ನುವ ಪೋಷಕರ ನಡುವೆ, ಹುಟ್ಟಿದಂದಿನಿಂದ ವಿಕಲಾಂಗರಾಗಿ ಬೆಳೆಯುವ ಮಕ್ಕಳನ್ನು ಪೋಷಿಸುವ ತಂದೆ-ತಾಯಿಗಳ ನಡುವೆ, ಇಂದಿದ್ದರೆ ನಾಳೆ ಬೆಳಿಗ್ಗೆ ತಿನ್ನುವುದಕ್ಕಿಲ್ಲ ಎನ್ನುವವರ ನಡುವೆ, ಯಾವಾಗಲೂ ಒಂದಲ್ಲ ಒಂದು ಖಾಯಿಲೆಯಿಂದ ನರಳುತ್ತಿರುವ ಕುಟುಂಬದ ಸದಸ್ಯರ ಜೊತೆ ತಮ್ಮ ದಿನಚರಿಯನ್ನು ಕಂಡುಕೊಳ್ಳುವವರ ನಡುವೆ, ಇದ್ದ ಮಕ್ಕಳಲ್ಲಿ ಕೆಲವರನ್ನು ದುರಂತಗಳಲ್ಲಿ ಕಳೆದುಕೊಂಡು ಜೀವನ ಪರ್ಯಂತ ನರಳುವವರ ನಡುವೆ, ಆಫೀಸಿನ ಕೆಲಸ ಮನೆಯಲ್ಲಿನ ಕೆಲಸಗಳ ಜೊತೆಗೆ ತಮ್ಮ ಕುಟುಂಬದ ಹಿರಿಯರನ್ನು ಪೋಷಿಸಿಕೊಂಡು ಹೋಗುವವರ ನಡುವೆ, ತಮ್ಮ ಪ್ರೈಮರಿ ರೆಸಿಡೆನ್ಸ್ ಅಥವಾ ತಮ್ಮ ಜೀವನದ ಇಡುಗಂಟನ್ನು ಕಳೆದುಕೊಂಡವರ ನಡುವೆ...ಹೀಗೆ ಈ ಪಟ್ಟಿ ಮುಂದುವರೆಯುತ್ತದೆ. ಪ್ರತಿಯೊಬ್ಬರ ಕಷ್ಟದ ಅರಿವು ಹಾಗೂ ಅವರ ಅನುಭವ ಸಾಪೇಕ್ಷವಾದುದು. ನಮ್ಮ ಕಷ್ಟ ದೊಡ್ಡದು ಎಂದೆನಿಸಿದ ಮರು ಕ್ಷಣವೇ ಮತ್ತೊಬ್ಬರ ಇನ್ನೂ ಹೆಚ್ಚಿನ ಕಷ್ಟದ ಸ್ಥಿತಿಯನ್ನು ಕೇಳಿದಾಗ ಸಮಾಧಾನವಾಗುತ್ತದೆ. ಹೀಗೆ ಆದಾಗಲೆಲ್ಲ ’ಸದ್ಯ ನಮಗೆ ಆ ಪರಿಸ್ಥಿತಿ ಬರಲಿಲ್ಲವಲ್ಲ’ ಎನ್ನುವ ದನಿಯೂ ಹುಟ್ಟುತ್ತದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕ್ಷಣದಲ್ಲಿ ’ದೇವರ ದಯೆ’ ಅಥವಾ ’ದೇವರು ದೊಡ್ಡವನು’ ಭಾವನೆಯೂ ಉದ್ಭವಿಸುತ್ತದೆ.