Sunday, April 27, 2008

ನಮ್ಮ ನಡುವಿನ ಸಂಬಂಧ-ಸೂಕ್ಷ್ಮತೆ

ನನ್ನ ಸ್ನೇಹಿತ, ಸಹೋದ್ಯೋಗಿಯಾಗಿದ್ದವನು ಇಂದು ಕರೆ ಮಾಡಿ ಏನೋ ಹೊಸ ಸುದ್ದಿಯನ್ನು ಹೇಳುತ್ತಾನೆ ಅಂದುಕೊಂಡರೆ ನನಗೆ ಖಂಡಿತವಾಗಿ ಆಶ್ಚರ್ಯ ಕಾದಿತ್ತು. ಆತನ ಮಾತನ್ನು ಕೇಳಿದ ಮೇಲೆ ಮಾನವ ಸಂಬಂಧಗಳನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುವಂತೆ ಆಗಿದ್ದು ನಿಜ. ಒಮ್ಮೆ ಆ ಮಟ್ಟಿಗಿನ ವೈರಾಗ್ಯ ನನ್ನನ್ನು ಹಾಗೆ ಆಲೋಚಿಸುವಂತೆ ಸ್ಪೂರ್ತಿ ನೀಡಿದ್ದಿರಬಹುದು, ಅಥವಾ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸುವ ನನ್ನ ರೀತಿ ಹಾಗೆಯೇ ಇರಬಹುದು.

ಈಗ್ಗೆ ಕಳೆದ ಹದಿನಾರು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿ ಕಳೆದು ಹನ್ನೊಂದು ವರ್ಷಗಳ ವೈವಾಹಿಕ ಜೀವನದಲ್ಲಿ ಮುದ್ದಾದ ಎರಡು ಮಕ್ಕಳನ್ನು ಪಡೆದ ನನ್ನ ಸ್ನೇಹಿತನ ಬದುಕು ಗಂಭೀರವಾಗಿದೆಯಂತೆ. ಆತನ ಹೆಂಡತಿ ಇದ್ದಕ್ಕಿದ್ದಂತೆ ಕಳೆದೊಂದು ವಾರದಲ್ಲಿ ಮಾತಿಗೆ ಮಾತು ಬೆಳೆಸಿ ತನ್ನ ಮಕ್ಕಳನ್ನು ಕರೆದುಕೊಂಡು ಇನ್ನೊಮ್ಮೆ ಬರುವುದಿಲ್ಲ ಎಂದುಕೊಂಡು ಒನ್ ವೇ ಟಿಕೇಟ್ ತೆಗೆದುಕೊಂಡು ಹೋಗಿದ್ದಾಳಂತೆ. ಮೊದಲಿನಿಂದಲೂ ಎರಡೂ ಮನೆಯವರಿಗೂ ಸಂಬಂಧಗಳಲ್ಲಿ ಅಷ್ಟೊಂದು ವಿಶ್ವಾಸವಿರಲಿಲ್ಲವೆಂದೂ ಯಾವಾಗಲೂ ಗಂಡ-ಹೆಂಡತಿಯರ ನಡುವೆ ಜಗಳವಿತ್ತೆಂದೂ, ಎಷ್ಟೋ ಸಾರಿ ಜಗಳ ತಾರಕಕ್ಕೇರಿ ವಿಚ್ಛೇದನದ ಮಾತಿನವರೆಗೂ ಹೋಗಿದೆ ಎಂದು ತಿಳಿದು ನನಗಂತೂ ಏನೂ ಹೇಳಲು ತೋಚದಂತಾಯಿತು.

***

ಇಂದಿನ ಯುಗದಲ್ಲಿ ನಮ್ಮ ನಮ್ಮ ನಡುವಿನ ಕಮ್ಮ್ಯುನಿಕೇಷನ್‌ಗೆ ಆದ್ಯತೆ ಕೊಡುವ ಕಾಲ, ನಮ್ಮ ಅಂತರಾಳದ ಸಂವಹನಕ್ಕೆ ಬೇಕಾದ ಸೂತ್ರಗಳಿವೆ, ಉಪಕರಣಗಳಿವೆ. ಹೀಗೆಲ್ಲ ಇರುವಾಗಲೇ ನಾನು ಗಂಡ-ಹೆಂಡತಿ ನಡುವೆ ಆಗಿ ಹೋಗದ ಮಾತುಗಳನ್ನೋ ಅಥವಾ ಹೆಚ್ಚು ವಿಚ್ಛೇದನದ ವಿಷಯವನ್ನೋ ಅಲ್ಲಲ್ಲಿ ಸುದ್ಧಿ-ವಿಚಾರವಾಗಿ ಕೇಳೋದೇ ಹೆಚ್ಚು. ಅಂದರೆ ಹಿಂದಿನ ಕಾಲದವರು ಕಷ್ಟವೋ-ಸುಖವೋ ಹೊಂದಿಕೊಂಡಿರುತ್ತಿದ್ದರೋ ಅಥವಾ ಅವರ ರಾದ್ಧಾಂತಗಳು ಹೊರಗೆ ಬರುತ್ತಿರಲಿಲ್ಲವೋ, ಅಥವಾ ಇಂದಿನವರ ಸವಾಲಿಗೂ ಅಂದಿನವರ ಸವಾಲಿಗೂ ವ್ಯತ್ಯಾಸವಿದೆಯೋ, ಅಥವಾ ಇವೆಲ್ಲ ನಿಜವೋ ಎನ್ನುವ ಆಲೋಚನೆ ಸಹಜವಾಗೇ ಬರುತ್ತದೆ. ಅದೂ ಇತ್ತೀಚಿನ ಗಂಡ-ಹೆಂಡತಿ ಇಬ್ಬರೂ ದುಡಿದು ಬರುವ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಮಕ್ಕಳಿರಲಿ ಬಿಡಲಿ ಮನೆಯ ಹಿರಿಯ ಅಥವಾ ಯಜಮಾನರಾಗಿ ಅವರೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಸಂಸಾರ ರಥವನ್ನು ನಡೆಸುವ ಕಾಯಕವನ್ನು ಅನುಸರಿಸುತ್ತಿರುವಾಗ ಸಂಬಂಧಗಳ ಹೆಣಿಕೆಯಲ್ಲಿ ಒಂದು ಚೂರು ಊನವಾದರೂ ಸಂಸಾರ ರಥಕ್ಕೆ ಸಂಚಕಾರ ಬಂದಂತೆಯೇ ಎಂದು ಎಷ್ಟೋ ಸರತಿ ಅನ್ನಿಸಿದ್ದಿದೆ.

ನಾನೇನೂ ಹೇಳೋದಿಲ್ಲ, ಹೇಳೋದಕ್ಕೆ ಉಳಿದಿರೋಲ್ಲ ಬಿಡಿ. ಈ ಸಂಸಾರ ತಾಪತ್ರಯದ ಒಡಕಲಿನ ವಿಷಯ ನನ್ನ ಕಿವಿಗೆ ಬೀಳುವ ಹೊತ್ತಿಗೆ ಆಗಬೇಕಾದ್ದದೆಲ್ಲ ಆಗಿ ಹೋಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ನನಗೆ ಪರಿಚಿತರೇ ಆದ ಸಂದರ್ಭಗಳಲ್ಲಿ ನಾವು ಯಾರೊಬ್ಬರ ಪರವನ್ನು ವಹಿಸಿ ಮಾತನಾಡುವುದು ತಪ್ಪಾದೀತು - ಬೆಂಕಿ ಇಲ್ಲದೇ ಹೊಗೆ ಬಾರದು ಎನ್ನುವಂತೆ ಏನೋ ಕ್ಷುಲ್ಲಕ ಕಾರಣ ಇದ್ದು ಅದು ದೊಡ್ಡ ಹೆಮ್ಮರವಾಗಿ ಬೆಳೆಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

***

ಇಂದಿನ ಗಂಡ-ಹೆಂಡತಿ ಸಂಬಂಧವೆಂದರೆ ಸಾವಿರದ ಒಂಭೈನೂರ ಐವತ್ತರ ಸಮಯದ ಸಂಬಂಧಗಳ ಹಾಗೆ ಇರಬೇಕಾಗಿಲ್ಲ. ಗಂಡ ಉಂಡಾದ ನಂತರವೇ ಹೆಂಡತಿ ಊಟ ಮಾಡುವುದು ಎಂಬ ಕಾನೂನನ್ನು ತಲೆ ಸರಿ ಇರುವ ಯಾರೂ ಪಾಲಿಸಿಕೊಂಡು ಹೋಗಲಾರರು. ಆದರೆ ಗಂಡ-ಹೆಂಡತಿಯ ನಡುವೆ ವ್ಯತ್ಯಾಸವಿದ್ದಿರಲೇ ಬೇಕು, ಹಾಗಿದ್ದಾಗಲೇ ಚೆನ್ನು, ಆ ವ್ಯತ್ಯಾಸವನ್ನು ಆ ಕುಟುಂಬದ ಏಳಿಗೆಗೆ ಬಳಸದೇ ಅದನ್ನು ವಾದದ ಬೆಂಕಿಗೆ ಇಂಬುಕೊಡುವ ತುಪ್ಪವನ್ನಾಗಿ ಸುರಿದು ಮಾತಿಗೆ ಮಾತು ಬೆಳೆಸಿ ಕೋರ್ಟು ಕಛೇರಿ ಹತ್ತುವುದು ಆಯಾ ವ್ಯಕ್ತಿಯ ಹಿನ್ನೆಲೆಯಲ್ಲಿ ಸುಲಭವಾಗಿ ಕಾಣಿಸಿದರೂ ಇಡೀ ಕುಟುಂಬದ ಹಂದರಕ್ಕೆ ಅದರಿಂದ ಸಂಚಕಾರ ಬರುತ್ತದೆ. ಭಾರತದಲ್ಲೂ ಸಹ ಗಂಡ-ಹೆಂಡತಿ ಅಮೇರಿಕನ್ ಶೈಲಿಯಲ್ಲಿ ಮಕ್ಕಳನ್ನು ವಾರಾಂತ್ಯದಲ್ಲಿ ಕಷ್ಟಡಿಗೆ ತೆಗೆದುಕೊಂಡು ಸಾಕುತ್ತಾರೆ ಎನ್ನುವುದನ್ನು ಕೇಳಿದ ಮೇಲೆ ಎಲ್ಲೋ ನಮ್ಮ ಸಂಸ್ಕೃತಿಗೆ ವಿದೇಶಿ ಶಿಫಾರಸ್ಸು ಹೆಚ್ಚಾಗಿಯೇ ಸಿಕ್ಕಿದೆಯೆಂದು ಅರ್ಥವಾಯಿತು. ಮೊದಲೆಲ್ಲಾ ಹೇಗಿತ್ತೋ ಗೊತ್ತಿಲ್ಲ, ಆದರೆ ನಾನು ಭಾರತದಲ್ಲಿ ಮಕ್ಕಳನ್ನು ಕಷ್ಟಡಿಗೆ ತೆಗೆದುಕೊಂಡು ಸಾಕುವುದನ್ನು ಕೇಳಿದ್ದು ಇಂದೇ ಮೊದಲು.

ಯಾವುದು ಎಲ್ಲಿ ತಪ್ಪಿತೋ ಎಂದು ಸೋಜಿಗ ಪಡುವ ಸಮಯವೋ, ಆದದ್ದಾಗಲಿ ಮುಂದಿನದು ಮುಖ್ಯ ಎನ್ನುವ ಧೋರಣೆಯನ್ನು ಬಿಗಿದಪ್ಪುವ ನಿಲುವೋ, ಈ ಸಂಬಂಧಗಳ ಗೊಂದಲವೇ ಬೇಡ ಎನ್ನುವ ಹಣಾಹಣಿಯೋ ಮತ್ತೊಂದೋ ತಪ್ಪಿದ್ದಲ್ಲ. ಅದು ಬದುಕು, ಅದೇ ಅದರ ನಿಯಮ ಹಾಗೋ ಅದರಲ್ಲಿರುವ ಸೂಕ್ಷ್ಮತೆಯ ಒಂದಲ್ಲ ಒಂದು ರೀತಿಯಲ್ಲಿ ನಾವು ಯೋಚಿಸುವುದು ನಮಗೆ ಅಂಟಿದ ಕಾಯಕ ಎಂದರೆ ತಪ್ಪೇನಿಲ್ಲ.

Sunday, April 13, 2008

ಇಂದಿನದು ಇಂದಿರಲಿ

ಎಲ್ಲರೂ ಇಲ್ಲಿ ಬೇಸಿಗೆ ಯಾವಾಗ ಬರುತ್ತೋ ಎಂದು ಕುತೂಹಲಿತರಾಗಿ ಕಾದುಕೊಂಡು ಕುಳಿತಿರುವುದರ ಬಗ್ಗೆ ಯೋಚಿಸುತ್ತಿರುವಾಗ ನನಗನ್ನಿಸಿದ್ದು ಹೀಗೆ: ಡಿಸೆಂಬರ್ ನಿಂದ ಜೂನ್ ವರೆಗೆ ನಿಧಾನವಾಗಿ ದಿನದಲ್ಲಿ ಬೆಳಕು ಹೆಚ್ಚಾಗುತ್ತಾ ಹೋಗಿ, ಜೂನ್‌ನಿಂದ ಮತ್ತೆ ಕತ್ತಲಿನ ಆರ್ಭಟ ಹೆಚ್ಚಾಗುವುದು ಇಲ್ಲಿನ ಋತುಮಾನ. ಮಾರ್ಚ್ ಹಾಗೂ ಸೆಪ್ಟೆಂಬರ್ ನಡುವೆ ಇರುವ ಎಲ್ಲ ದಿನಗಳನ್ನು ಬೇಸಿಗೆಯೆಂದೇ ಏಕೆ ಸ್ವೀಕರಿಸಬಾರದು? ಬೇಸಿಗೆ ಬೆಳಕು ಜೂನ್ ವರೆಗೆ ಹೆಚ್ಚಾಗಿ ಮುಂದೆ ಸೆಪ್ಟೆಂಬರ್ ನಲ್ಲಿ ಎಲೆಗಳು ಉದುರಿ ನಿಧಾನವಾಗಿ ಛಳಿ ಹಿಡಿದುಕೊಳ್ಳುವಲ್ಲಿಯವರೆಗೆ ಎಲ್ಲಿಯವರೆಗೆ ಹೊರಗಿನ ಉಷ್ಣತೆ ಸಹಿಸಿಕೊಳ್ಳಬಹುದೋ ಅಲ್ಲಿಯವರೆಗೆ ಬೇಸಿಗೆಯನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

ಇಲ್ಲಿನ ಕಾರ್ಟೂನ್ ಶೋ‌ಗಳಿಂದ ಹಿಡಿದು ನಾನು ನೋಡಿದ ಬೇಕಾದಷ್ಟು ಜನರವರೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಸಂದರ್ಭಕ್ಕೆ ತಕ್ಕಂತೆ ಉಡುಪುಗಳನ್ನು ಬದಲಾಯಿಸುವವರೆ. ನಮ್ಮ ದಕ್ಷಿಣ ಭಾರತದಲ್ಲಿ ವರ್ಷದುದ್ದಕ್ಕೂ ಒಂದೇ ವೇಷ-ಭೂಷಣ ನಡೆದೀತು ಎನ್ನುವಂತಲ್ಲ. ಅಲ್ಲದೇ, ಗೋಲ್ಫ್ ಆಡುವುದಕ್ಕೆ ಹೋಗುವುದರಿಂದ ಹಿಡಿದು ಫಿಶಿಂಗ್ ಹೋಗುವಲ್ಲಿಯವರೆಗೆ, ಆಫೀಸಿಗೆ ಹೋಗುವುದರಿಂದ ಹಿಡಿದು, ಟೆನ್ನಿಸ್ ಆಡುವಲ್ಲಿಯವರೆಗೆ, ಛಳಿಗೆ-ಬಿಸಿಲಿಗೆ ಥರಾವರಿ ವೇಶಗಳು ಅವುಗಳದ್ದೇ ಆದ ಬಣ್ಣ-ವಿನ್ಯಾಸಗಳಲ್ಲಿ. ನಮ್ಮ ಉತ್ತರ ಭಾರತದ ಜನರಲ್ಲಿ ಸ್ವಲ್ಪ ಈ ರೀತಿಯ ಆದ್ಯತೆ ಇರಬಹುದು, ಛಳಿ ಇರಲಿ ಇಲ್ಲದಿರಲಿ ಆ ಒಂದು ಸೀಜನ್ ಬಂದಿತೆಂದರೆ ಕೊನೇ ಪಕ್ಷ ಒಂದು ಸ್ವೆಟರ್ ಇಲ್ಲದೆ ಜನರು ಹೊರಗೆ ಕಾಲಿಡೋದೇ ಇಲ್ಲವೇನೋ.

***

’ರಿಟೈರ್ಡ್ ಆದ ಮೇಲೆ ಬದುಕೇನಿದೆ, ಈಗ ಇದ್ದು ಬದುಕೋದೇ ಸೊಗಸು. ಮುಂದೇನಾಗುತ್ತೋ ಎಂದು ಯಾರಿಗೆ ಗೊತ್ತು?’ ಎಂದು ನನಗರಿವಿಲ್ಲದಂತೆ ನನ್ನ ಬಾಯಿಯಿಂದ ಈ ಅಣಿಮುತ್ತುಗಳು ಉದುರಿದವು. ನನ್ನ ಜೊತೆಯಲ್ಲಿ ಕಾಫಿ ಕುಡಿಯೋದಕ್ಕೆ ಬಂದ ಮತ್ತಿಬ್ಬರು ತಮ್ಮ ವೃದ್ಧ ತಂದೆ-ತಾಯಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಒಂದು ರೀತಿಯಲ್ಲಿ ಕಾರಣ ಎಂದು ಹೇಳಿದರೂ ಮಧ್ಯಾಹ್ನ ನಾಲ್ಕು ಘಂಟೆಯ ಮೇಲೆ ಹೊಟ್ಟೆಯೊಳಗೆ ಇಳಿಯುತ್ತಿದ್ದ ಗರಮ್ ಕಾಫಿಗೆ ನಾನು ಕೃತಜ್ಞತೆಯನ್ನು ಹೇಳಲೇಬೇಕು. ಪ್ರತೀ ಸಾರಿ ಮಧ್ಯಾಹ್ನದ ಕಾಫಿಯ ನಂತರ ಮನಸ್ಸು ಅದರದ್ದೇ ಒಂದು ತತ್ವವನ್ನು ಹೊಕ್ಕಿಕೊಂಡು ಅದರ ನೆಲೆಯಲ್ಲಿ ಹೊರಗಿನದನ್ನು ನೋಡೋದು ಸಹಜವೇ ನನಗೆ.

ನನ್ನ ಮಾತುಗಳು ಜೊತೆಗಿದ್ದವರಿಗೆ ಸ್ವಲ್ಪ ಆಶ್ಚರ್ಯವನ್ನು ಮೂಡಿಸಿದರೂ ಅವರು ನನ್ನ ತರ್ಕವನ್ನು ಒಪ್ಪಿಕೊಂಡ ಹಾಗಿತ್ತು, ಅದರ ವಿರುದ್ಧವಾಗಿ ಏನನ್ನೂ ಹೇಳದಿದ್ದುದನ್ನು ನೋಡಿ ನಾನು ಹಾಗಂದುಕೊಳ್ಳಬೇಕಾಯ್ತು. ಏನಿರಬಹುದು, ಈ ನಿವೃತ್ತ ಜೀವನದ ಮರ್ಮ? ಎಂದು ಮನಸ್ಸು ತನ್ನದೇ ಯಾವುದೋ ಒಂದು ಸಬ್ ರುಟೀನ್‌ನಲ್ಲಿ ಕಳೆದುಕೊಳ್ಳತೊಡಗಿತು.

ಭಾರತದಲ್ಲಿದ್ದೋರು ತಮ್ಮ ಮಕ್ಕಳ ಮದುವೆ ಯೋಗಕ್ಷೇಮಕ್ಕೆ ಒಂದಿಷ್ಟು ದುಡ್ಡು-ಕಾಸು ಉಳಿಸಿಕೊಂಡಿರುತ್ತಾರೆ. ಸರಿಯಾದ ಆಹಾರ, ದಿನಚರಿ ಇಲ್ಲದ ಶರೀರಗಳು ಕುಬ್ಜವಾಗುವುದರ ಜೊತೆಗೆ ಅಲ್ಲಲ್ಲಿ ಸಾಕಷ್ಟು ಬೊಜ್ಜು ಕಟ್ಟಿಕೊಳ್ಳತೊಡಗುತ್ತವೆ. ತಲೆಯ ಕೂದಲು ನೆರೆತೋ ಅಥವಾ ಉದುರಿಹೋಗಿ, ಹಲ್ಲುಗಳು ಸಂದುಗಳಲ್ಲಿ ಜಾಗ ಕಾಣಿಸಿಕೊಂಡು, ಮುಖದ ಮೇಲೆ ನೆರಿಗೆಗಳು ಹುಟ್ಟಿ, ಮೂಗಿನ ಮೇಲೆ ಕನ್ನಡಕ ಕುಳಿತು, ಆಗಾಗ್ಗೆ ’ಒಂದು ಕಾಲದಲ್ಲಿ ಹಾಗಿತ್ತು...’ ಎನ್ನುವ ವಾಕ್ಯಗಳು ಸಹಜವಾಗಿ ಹೋಗುವುದು ನಿವೃತ್ತ ಬದುಕಿನ ಲಕ್ಷಣವಾಗಿದ್ದಿರಬಹುದು. ಅದೇ ಭಾರತೀಯರು ವಿದೇಶಗಳಲ್ಲಿದ್ದರೂ ಈ ವಿವರಣೆಯನ್ನು ಬಿಟ್ಟು ಹೆಚ್ಚು ಬದಲಾದಂತೆ ಕಾಣಿಸಿಕೊಂಡಿಲ್ಲದಿರುವುದು ನನ್ನ ಕಲ್ಪನೆ ಅಲ್ಲವಷ್ಟೇ.

ನನಗೆ ಇಲ್ಲಿನ ಸಾಲ ಕೂಪದಲ್ಲಿ ಸೇರಿಕೊಳ್ಳುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ ಇಲ್ಲಿನ ಜನರ ಪ್ರಾಯೋಗಿಕತೆಗೆ ತಲೆಬಾಗಲೇ ಬೇಕಾಗುತ್ತದೆ. ನೀವು ಜೀವನ ಪರ್ಯಂತ ಕಷ್ಟಪಟ್ಟು ದುಡಿದು ಬಾಡಿಗೆ ಮನೆಯಲ್ಲಿದ್ದು ಎಲ್ಲ ಸಂಕಷ್ಟಗಳ ನಡುವೆ ಹಣವನ್ನು ಕೂಡಿಟ್ಟು, ಬೆಳೆಸಿ ಮುಂದೆ ನಿವೃತ್ತರಾಗುವ ಹೊತ್ತಿಗೆ ಮನೆ ಕಟ್ಟಿಸಿಕೊಂಡು ಹಾಯಾಗಿ ಇರುವ ಕನಸು ಅಥವಾ ಆಲೋಚನೆ ಹೇಗಿದೆ? ಅದರ ಜೊತೆಗೆ ಮೊದಲಿನಿಂದಲೇ ನೀವು ನಿಮಗೆ ಬೇಕಾದ ಮನೆಯನ್ನು ಸಾಲದ ಮುಖೇನ ತೆಗೆದುಕೊಂಡು ಅದನ್ನು ಕಂತುಗಳಲ್ಲಿ ಬಡ್ಡಿ-ಅಸಲನ್ನಾಗಿ ಹಲವಾರು ವರ್ಷಗಳು ತೀರಿಸುತ್ತಾ ಹೋಗುವುದು ಹೇಗೆ? ಸಾಲ ಎಲ್ಲರಿಗೂ ಇದೆ, ತಿರುಪತಿ ತಿಮ್ಮಪ್ಪನಿಂದ ಹಿಡಿದು ನಮ್ಮಂಥ ಹುಲುಮಾನವರವರೆಗೆ, ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಮುಂದುವರೆದೆ ದೇಶಗಳವರೆಗೆ. ನಮ್ಮ ಅಗತ್ಯಗಳಿಗೋಸ್ಕರ ಮುಂದಾಲೋಚನೆಯಿಂದ ಸಾಲ ಮಾಡುವುದು ತಪ್ಪಾದರೂ ಹೇಗೆ ಎಂದು ಪ್ರಶ್ನಿಸಿಕೊಳ್ಳುವಷ್ಟರ ಮಟ್ಟಿಗೆ ಈಗಾಗಲೇ ಆಲೋಚನೆಗಳು ಬೆಳೆದುಕೊಂಡಿವೆ, ಊಹೂ ಪ್ರಯೋಜನವಿಲ್ಲ - ನಿಮಗೆ ಬೇಕೋ ಬೇಡವೋ ಸಾಲದೊಳಗೆ ನೀವಿದ್ದೀರಿ, ನಿಮ್ಮೊಳಗೆ ಸಾಲವಿದೆ.

***

ನಾಳಿನದರಲ್ಲಿ ಏನಿದೆ ಏನಿಲ್ಲವೋ ಯಾರೂ ಗ್ಯಾರಂಟಿ ಕೊಡೋದಿಲ್ಲ. ಅದಕ್ಕೇ ನಮ್ಮ ಹಿರಿಯರು "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ" ಎಂದಿದ್ದು. ಇಂದಿನದು ಎಂದರೆ ವರ್ತಮಾನ, ನಾಳಿನ ಮೂರಕ್ಷರದ ಭವಿಷ್ಯವಾಗಲೀ, ನಿನ್ನೆಯ ಎರಡಕ್ಷರದ ಭೂತವಾಗಲೀ ನಾಲ್ಕಕ್ಷರದ ವರ್ತಮಾನವನ್ನು ಕ್ಷುಲ್ಲಕವಾಗೇಕೆ ಮಾಡಬೇಕು? ನಿನ್ನೆ ನಿನ್ನೆಯೇ ಆಗಿಕೊಂಡಿದ್ದರೂ ಇಂದು ನಾಳೆಯ ಸೇರುವುದರೊಳಗೆ ಆ ಇಂದನ್ನು ಇಂದೇ ಅನುಭವಿಸುವ ಮನಸ್ಥಿತಿ ನಮಗೇಕಿಲ್ಲ? ಅಷ್ಟೂ ಮಾಡಿ ನಾಳೆಯ ನಾಳೆಗಳು ಹೀಗೇ ಇರುತ್ತವೆ ಎಂದು ಯಾರೂ ಬರೆದಂತೂ ಕೊಟ್ಟಿಲ್ಲ, ಎಂತಹ ಅತಿರಥ ಮಹಾರಥರಿಗೂ ನಾಳೆಯ ಪಾಡು ಸಂಪೂರ್ಣವಾಗಿ ತಿಳಿದಿಲ್ಲ ಹಾಗಿರುವಾಗ ಎಲ್ಲವೂ ಭವಿಷ್ಯಮಯವಾಗೇ ಏಕಿರಬೇಕು? ಇಂದಿನ ದಿನವನ್ನು ’ಏನೋ ಒಂದು ಮಾಡಿ ತಿಂದರಾಯಿತು...’ ಎನ್ನುವ ಅಸಡ್ಡೆಯ ಮನೋಭಾವನೆಯಿಂದೇಕೆ ನೋಡಬೇಕು ನಾಳೆ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳೂತ್ತವೆ ಎನ್ನುವ ಗ್ಯಾರಂಟಿ ಎನೂ ಇಲ್ಲದಿರುವಾಗ?

Sunday, April 06, 2008

ಬೇವು-ಬೆಲ್ಲ ಇರದ ಹೊಸ ವರ್ಷಗಳು

ಓಹ್, ನಮಸ್ಕಾರ, ನಾವು ದಕ್ಷಿಣ ಭಾರತದ ಮಂದಿ ಹಾಗೂ ಇದು ನಮಗೆ ಹೊಸ ವರ್ಷ ಮತ್ತು ಅದರ ಆಚರಣೆ! ಅಯ್ಯೋ, ಇದೇನ್ odd ಈಗ ಏಪ್ರಿಲ್ ಮಧ್ಯೆ ಹೊಸವರ್ಷ ಶುರುವಾಯ್ತು ಅಂತೀರಾ? ಹಾಗೇ ಸಾರ್, ನಮ್ಮ ಕ್ಯಾಲೆಂಡರಿನಲ್ಲಿ ಮಹತ್ವದ ದಿನಗಳೆಲ್ಲ ಆರಂಭವಾಗೋದು ಇಂಗ್ಲೀಷಿನ ಕ್ಯಾಲೆಂಡರಿನ ಮಧ್ಯ ಭಾಗಕ್ಕೆ, ಅದನ್ನ odd ಅಂಥಾ ಬೇಕಾದ್ರೂ ಕರೆದುಕೊಳ್ಳಿ, even ಅಂಥಾನಾದ್ರೂ ಉದ್ಗರಿಸಿ ನಮಗೇನೂ ಇಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಆರಂಭವಾಗೋದಕ್ಕೆ ಮೊದಲೂ ನಮ್ಮ ದಿನಗಳು ಹೀಗೇ ಇದ್ವು ಅನ್ನೋದಕ್ಕೆ ಹಲವರು ಪುರಾವೆಗಳನ್ನೇನು ಒದಗಿಸೋ ಅಗತ್ಯ ಇಲ್ಲ, ಒಂದೇ ಮಾತ್ನಲ್ಲಿ ಹೇಳೋದಾದ್ರೆ ನಮ್ಮದು ಹಳೇ ಸಂಸ್ಕೃತಿ, ಹಳೇ ಪರಂಪರೆ, ನಾವು ಹಳಬರು ಅಷ್ಟೇ!

ನಿಮಗೆ ನಂಬಿಕೆ ಬರಲಿಲ್ಲಾಂತಂದ್ರೆ ನಿಮ್ಮ ಲಾನೋ ಗಾರ್ಡನ್ನಿನಲ್ಲಿರೋ ಗಿಡಮರಗಳನ್ನ ಹೋಗಿ ವಿಚಾರಿಸಿಕೊಂಡು ಬನ್ನಿ, ನಿಮ್ಮ Spring ಸೀಸನ್ ಮಾರ್ಚ್ ಇಪ್ಪತ್ತೊಂದಕ್ಕೇ ಶುರುವಾಗಿರಲೊಲ್ಲದ್ಯಾಕೆ, ಈ ಗಿಡಮರಗಳಿಗೆ ಏಪ್ರಿಲ್ ಆರನೇ ತಾರೀಖ್ ಚಿಗುರಿಕೊಳ್ಳೀ ಅಂಥಾ ನಾನೇನೂ ಆರ್ಡರ್ ಕಳಿಸಿಲ್ಲಪ್ಪಾ. ಈಗಾದ್ರೂ ಗೊತ್ತಾಯ್ತಾ ನಮ್ ಚೈತ್ರ ಮಾಸ, ವಸಂತ ಋತು ಅನ್ನೋ ಕಾನ್ಸೆಪ್ಟೂ, ಎನ್ ತಿಳಕೊಂಡಿದೀರಾ ನಮ್ಮ ಪರಂಪರೇನೇ ದೊಡ್ದು, ಅದರ ಮರ್ಮಾ ಇನ್ನೂ ಆಳ...ಆದ್ರೆ ನನಗೆ ಅಷ್ಟು ಡೀಟೇಲ್ ಗೊತ್ತಿಲ್ಲ ಏನ್ ಮಾಡ್ಲಿ ಹೇಳ್ರಿ?

***

ಬೇವು-ಬೆಲ್ಲ ತಿನ್ನದೇ ಯುಗಾದಿಯನ್ನೂ ಹೊಸವರ್ಷವನ್ನೂ ಆಚರಿಸಿಕೊಳ್ಳುತಿರೋ ಹಲವಾರು ವರ್ಷಗಳಲ್ಲಿ ಇದೂ ಒಂದು ನೋಡ್ರಿ. ಅವನೌವ್ವನ, ಏನ್ ಕಾನ್ಸೆಪ್ಟ್ ರೀ ಅದು, ಬದುಕಿನಲ್ಲಿ ಬೇವು-ಬೆಲ್ಲ ಎರಡೂ ಇರಬೇಕು ಅಂತ ಅದು ಯಾವನು ಯಾವತ್ತು ಕಾನೂನ್ ಮಾಡಿದ್ದಿರಬಹುದು? ಭಯಂಕರ ಕಾನ್ಸೆಪ್ಟ್ ಅಪಾ, ಎಂಥೆಂಥಾ ಫಿಲಾಸಫಿಗಳನ್ನೆಲ್ಲ ಬೇವು-ಬೆಲ್ಲದಲ್ಲೇ ಅರೆದು ಮುಚ್ಚಿ ಬಿಡುವಷ್ಟು ಗಹನವಾದದ್ದು. ನಾವೆಲ್ಲ ಹಿಂದೆ ಬೇವಿನ ಮರಾ ಹತ್ತಿ ಪ್ರೆಶ್ ಎಲೆಗಳನ್ನು ಕೊಯ್ದುಕೊಂಡು ಬಂದು ಪಂಚಕಜ್ಜಾಯದೊಳಗೆ ಅಮ್ಮ ಸೇರಿಸಿಕೊಡ್ತಾಳೆ ಅಂತಲೇ ಕಣ್ಣೂ-ಬಾಯಿ ಬಿಟಗೊಂಡು ಕಾಯ್‌ಕೊಂತ ಕುಂತಿರತಿದ್ವಿ. ನಾನಂತೂ ಬೇವಿನ ಮರದ ಮ್ಯಾಲೇ ಒಂದಿಷ್ಟು ಎಲೆಗಳನ್ನು ತಿಂದು ಒಂದ್ ಸರ್ತಿ ಕಹಿ ಕಷಾಯ ಕುಡಿದೋರ್ ಮಖಾ ಮಾಡಿದ್ರು, ಮತ್ತೊಂದು ಸರ್ತಿ ಇವನು ಬೇವಿನ ಎಲೇನೂ ಹಂಗೇ ತಿಂತಾನೇ ಭೇಷ್ ಎಂದು ಯಾರೋ ಬೆನ್ನು ಚಪ್ಪರಿಸಿದ ಹಾಗೆ ನನಗೆ ನಾನೇ ನೆನೆಸಿಕೊಂಡು ನಕ್ಕಿದ್ದಿದೆ. ನಮ್ಮೂರ್ನಾಗ್ ಆಗಿದ್ರೆ ಇಷ್ಟೊತ್ತಿಗೆ ಕಹಿ ಬೇವಿನ ಗಿಡಗಳು ಒಳ್ಳೇ ಹೂ ಬಿಟಗೊಂಡು ಮದುವೆಗೆ ಅಲಂಕಾರಗೊಂಡ ಹೆಣ್ಣಿನಂತೆ ಕಂಗೊಳಿಸುತ್ತಿದ್ದವು ಅಂತ ಆಲೋಚ್ನೆ ಬಂದಿದ್ದೆ ತಡ ಇಲ್ಲಿ ನಮ್ಮ ಗಾರ್ಡನ್ನಿನ್ಯಾಗೆ ಏನ್ ನಡದತಿ ಅಂತ ನೋಡೋ ಆಸೆ ಬಂತು. ತಕ್ಷಣ ಇನ್ನೂ ನಲವತ್ತರ ನಡುವೆ ಉಷ್ಣತೆ ಇರೋ ಈ ಊರಿನ ಛಳಿಗೆ ಹೆದರಿಕೆ ಆಗಲಿ ಎನ್ನುವಂತೆ ನನ್ನಲ್ಲಿದ ಬೆಚ್ಚನೆ ಜಾಕೆಟ್ ಒಂದನ್ನು ಹೊದ್ದು ಹೊರ ನಡೆದೆ.

ಮನೆಯ ಸುತ್ತಲಿನ ಹುಲ್ಲು ಹಾಸೋ, ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುತ್ತಿರೋ ನಿರುದ್ಯೋಗಿ ಯುವಕನ ಗಡ್ಡವನ್ನು ನೆನಪಿಗೆ ತಂದಿತು, ಈಗಲೋ ಆಗಲೋ ಚಿಗುರೊಡೆದು ಹುಲುಸಾಗಿ ಬೆಳೆಯುವ ಲಕ್ಷಣಗಳೆಲ್ಲ ಇದ್ದವು. ಹೊರಗಡೆಯ ಪೇಪರ್ ಬರ್ಚ್ ಮರಗಳು ಇಷ್ಟು ದಿನ ಗಾಳಿಗೆ ತೊನೆದೂ ತೊನೆದೂ ಕಷ್ಟಪಟ್ಟು ಕೆಲಸ ಮಾಡಿಯೂ ದಿನಗೂಲಿ ಸಂಬಳ ಪಡೆದು ಬದುಕನ್ನು ನಿಭಾಯಿಸೋ ಮನೆ ಯಜಮಾನನ ಮನಸ್ಥಿತಿಯನ್ನು ಹೊದ್ದು ನಿಂತಿದ್ದವು. ಅಕ್ಕ ಪಕ್ಕದ ಥರಾವರಿ ಹೂವಿನ ಗಿಡಗಳಲ್ಲಿ ಬದುಕಿನ ಸಂಚಾರ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟೇಷನ್ನಿನಲ್ಲಿ ಮುಂಜಾನೆ ಐದೂವರೆಗೆಲ್ಲಾ ಸಿಟಿಬಸ್ಸುಗಳು ಪ್ರಾರಂಭವಾಗಿ ಮೊದಲ ಟ್ರಿಪ್ ಹೊರಡುವಾಗ ಇರುವ ಗಲಾಟೆ ವಾತಾವರಣ ಇದ್ದಂತಿತ್ತು. ಇನ್ನು ನನಗೆ ತಿಳಿಯದ ಅನೇಕ ಹೂವಿನ ಮರಗಳು ಮುಂಬರುವ ಅದ್ಯಾವುದೋ ಜಾತ್ರೆಗೆ ಸಿದ್ಧವಾಗುವ ತೇರಿನಂತೆ ನಿಧಾನವಾಗಿ ಮೊಗ್ಗೊಡೆಯುತ್ತಿದ್ದವು. ಇಷ್ಟು ದಿನ ಬಲವಾಗಿ ಬೀಸಿದ ಗಾಳಿಯ ದೆಸೆಯಿಂದ ನಮ್ಮ ಮನೆಯ ಬದಿಯಲ್ಲಿನ ಬರ್ಚ್ ಮರವೊಂದರ ದೊಡ್ಡ ಗೆಲ್ಲು ಮುರಿದು ಸಂಪೂರ್ಣ ಕೆಳಗೆ ವಾಲಿಕೊಂಡಿದ್ದು ಸ್ವಲ್ಪ ಹಿಡಿದೆಳೆದರೂ ಕಿತ್ತು ಬರುವಂತಿತ್ತು, ಇನ್ನೇನು ಕಿತ್ತೇ ಬಿಡೋಣ ಎಂದು ಮನಸು ಮಾಡಿ ಗೆಲ್ಲನ್ನು ಮುಟ್ಟಿದವನಿಗೆ ಮುರಿದು ಬಿದ್ದರೂ ಚಿಗುರುವುದನ್ನು ಮರೆಯದ ಆ ಗೆಲ್ಲಿನ ಜೀವಂತಿಕೆಗೆ ನಾನೇಕೆ ಭಂಗ ತರಲಿ ಎಂದು ಕೀಳದೇ ಹಾಗೆ ಬಿಟ್ಟು ಬಂದದ್ದಾಯಿತು. ಒಟ್ಟಿಗೆ ವಸಂತನಾಗಮನ ನಮ್ಮ ಮನೆಗೂ ಬಂದಿದೆ, ಬೇವು-ಬೆಲ್ಲ ತಿನ್ನದಿದ್ದರೇನಂತೆ, ಆ ರೀತಿಯಲ್ಲಿ ನಾವೂ ಹೊಸವರ್ಷದ ಭಾಗಿಗಳೇ ಎಂದು ನನ್ನ ನೆರೆಹೊರೆಯೂ ಸಂತೋಷದ ಮುಖಭಾವ ಹೊದ್ದುಕೊಂಡದ್ದು ಸ್ವಲ್ಪ ಸಮಾಧಾನವನ್ನು ತಂದಿತು.

***

ನಮಗೆ ನಮ್ಮ ನೀತಿ ಚೆಂದ. ಆದರೆ ನಮ್ಮ ಹೊಸವರ್ಷ ನಮಗೆ ಗೊತ್ತಿರೋ ಒಂದಿಷ್ಟು ಜನರಿಗೆ ’ಹೊಸವರ್ಷದ ಶುಭಾಶಯಗಳು’ ಎಂದು ಹೇಳಿ ಮುಗಿಸುವಲ್ಲಿಗೆ ಸೀಮಿತವಾಗಿ ಹೋಯಿತಲ್ಲ ಎಂದು ಒಂದು ರೀತಿಯ ಕಸಿವಿಸಿ. ತೆಲುಗರೋ ಕನ್ನಡಿಗರೋ ಒಟ್ಟಿಗೆ ದಕ್ಷಿಣ ಭಾರತದ ಹೆಚ್ಚು ಜನ ಆಚರಿಸುವ ಹೊಸ ವರ್ಷದ ಆಚರಣೆ ಇದು. ಚಾಂದ್ರಮಾನ ಯುಗಾದಿ ಇರುವ ಹಾಗೆ ಸೂರ್ಯಮಾನದ ಯುಗಾದಿಯೂ ಇದೆ. ಬದುಕಿನಲ್ಲಿ ಸ್ವಾತಂತ್ರ್ಯ ಅಂದರೆ ಇದೇ ಇರಬೇಕು, ನಿಮಗೆ ಯಾವಾಗ ಬೇಕು ಆಗ ಆಚರಿಸಿಕೊಳ್ಳಿ ಎನ್ನುವ ಫ್ರೀಡಮ್! ನಿಮಗೆ ಯಾವ ದೇವರು ಬೇಕು ಅದನ್ನು ಪೂಜಿಸಿಕೊಳ್ಳಿ ಎನ್ನುವ ಧೋರಣೆ. ನಿಮ್ಮ ತರ್ಕ ನಿಮ್ಮ ನೀತಿ ನಿಮ್ಮ ಧರ್ಮ, ಅದ್ದರಿಂದಲೇ ಇರಬೇಕು ಸನಾತನ ಧರ್ಮಕ್ಕೆ ಯಾವುದೇ ಪ್ರವಾದಿಗಳಿರದಿದ್ದುದು. ಇದು ಮತವಲ್ಲ, ಧರ್ಮ, ಜೀವನ ಕ್ರಮ, ಸ್ವಭಾವ, ನಿಮ್ಮ-ನಮ್ಮ ರೀತಿ ನೀತಿ - ಅವೆಲ್ಲವೂ ಒಡಗೂಡಿಯೇ ನಾವು ಒಂದಾಗಿರೋದು - ವೈವಿಧ್ಯತೆಯಲ್ಲೂ ಏಕತೆ.

ನಿಮಗೆ ನಿಮ್ಮ ಹೊಸವರ್ಷ ಯಾವಾಗ ಬೇಕಾದರೂ ಆರಂಭವಾಗಲಿ, ನನಗಂತೂ ಹೊಸವರ್ಷ ಶುರುವಾಗಿದೆ...ಮುಂಬರುವ ದಿನಗಳು ನಮಗೆಲ್ಲ ಒಳ್ಳೆಯದನ್ನು ಮಾಡಲಿ!

ಹೊಸ ವರ್ಷದ ಶುಭಾಶಯಗಳು, ಸರ್ವಧಾರಿ ನಾಮ ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ!

Wednesday, April 02, 2008

ಚಿಲ್ರೆ ಜನಾ ಸಾರ್...

ಇವರು ಕಟ್ಟಿಕೊಂಡ ಪ್ರಾಸೆಸ್ಸುಗಳೇ ಇವರನ್ನ ಕೊನೆಗೆ ಕಟ್ಟಿಕೊಳ್ಳೋದು ಅಂತ ಅನ್ನಿಸಿದ್ದು, ಕೇವಲ ಎರಡು ಸೆಂಟುಗಳ ಸಲುವಾಗಿ ಇಪ್ಪತ್ತು ಡಾಲರ್ ಚಿಲ್ಲರೆ ಮಾಡಿಸಬೇಕಾದ ಪ್ರಸಂಗ ಒದಗಿ ಬಂದಾಗ. ನನ್ನ ಹತ್ತಿರ ಇದ್ದ ಡಾಲರ್ ಬಿಲ್ ಒಂದರಲ್ಲಿ ನಾನು ಏನನ್ನೋ ಕೊಂಡುಕೊಳ್ಳುತ್ತೇನೆ ಎಂದು ಅಂಗಡಿಯನ್ನು ಹೊಕ್ಕ ನನಗೆ ಬೇಕಾದ ವಸ್ತು ಒಂದು ಡಾಲರ್ ಒಳಗಡೆ ಇದ್ದರೂ ಅದಕ್ಕೆ ಏಳು ಪ್ರತಿಶತ ಟ್ಯಾಕ್ಸ್ ಸೇರಿಸಿ ಒಟ್ಟು ಬಿಲ್ ಡಾಲರಿನ ಮೇಲೆ ಎರಡು ಸೆಂಟ್‌ಗಳಾದಾಗ ನನ್ನ ಬಳಿ ಇದ್ದ ಹಣಕಾಸಿನ ಸಾಧನ ಸಾಮಗ್ರಿಗಳು ಒಮ್ಮೆ ಗರಬಡಿದು ಹೋಗಿದ್ದವು: ಈ ಕಡೆ ಡೆಬಿಟ್, ಕ್ರೆಡಿಟ್ ಕಾರ್ಡ್ ಉಪಯೋಗಿಸಲಾರದ ದೀನತೆ, ಆ ಕಡೆ ಇಪ್ಪತ್ತ್ ಡಾಲರುಗಳನ್ನು ಎರಡು ಸೆಂಟಿನ ಸಲುವಾಗಿ ಮುರಿಸಲು ಹಿಂಜರಿದ ಕೊಸರಾಟ ಜೊತೆಗೆ ಅಂಗಡಿಯ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲೇ ಹುಟ್ಟಿ ಬೆಳೆದವು ಎನ್ನುವಂತೆ ಆಡುವ ಒಂದು ಸೆಂಟನ್ನು ಬಿಟ್ಟೂ ಕೆಲಸ ಮಾಡಲಾರೆ ಎನ್ನುವ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಪ್ರಾಸೆಸ್ಸುಗಳು.

ಈ ಒಂದು ಅಥವಾ ಎರಡು ಸೆಂಟುಗಳ ಹಣೆಬರಹವೇ ಇಷ್ಟು - ದಾರಿಯಲ್ಲಿ ಬಿದ್ದರೂ ಯಾರೂ ಅವನ್ನು ಮೂಸಿ ನೋಡದಂಥವುಗಳು, ಅವುಗಳನ್ನು ಉತ್ಪಾದಿಸುವುದರ ಒಟ್ಟು ಮೊತ್ತ ಅವುಗಳ ಮುಖಬೆಲೆಗಿಂತ ಹೆಚ್ಚಿರುವಂತಹವು. ನಮ್ಮ ಕೆಫೆಟೇರಿಯಾ ಮೊದಲಾದ ಸ್ಥಳಗಳಲ್ಲಿ ಸೇಲ್ಸ್ ರಿಜಿಸ್ಟರ್ ಪಕ್ಕದಲ್ಲಿ ಕೆಲವರು ಚೇಂಜ್ ತೆಗೆದುಕೊಳ್ಳದೇ ಬಿಟ್ಟು ಹೋದ ಕಾಪರ್ ಕಾಯಿನ್ನುಗಳನ್ನು ಇಟ್ಟಿರುತ್ತಾರೆ, ನನ್ನಂತಹ ಕಂಜೂಸು ಮನುಷ್ಯರಿಗೆ ಉಪಯೋಗಕ್ಕೆ ಬರಲಿ ಎಂದು! ನನ್ನಂತಹವರು ಎಂದರೆ, ಅನೆಯ ಹಾಗಿನ ಡಾಲರನ್ನು ಹೇಗೆ ಬೇಕೆಂದರಲ್ಲಿ ಎಲ್ಲಿ ಬೇಕೆಂದರಲ್ಲಿ ಹೋಗಗೊಟ್ಟು, ಒಂದೆರಡು ಸೆಂಟುಗಳ ಬಾಲವನ್ನು ಹಿಡಿದು ಎಳೆಯುವಂತಹವರು - ಹೆಚ್ಚೂ ಕಡಿಮೆ ಇನ್ನೊಬ್ಬರ ಒಂದೆರಡು ಸೆಂಟುಗಳನ್ನು ಧಾರಾಳವಾಗಿ ಬಳಸಿದ್ದಿದೆಯೇ ಹೊರತು, ಊಹ್ಞೂ, ನಾವಂತೂ ಕೈ ಎತ್ತಿಯೂ ಇನ್ನೊಬ್ಬರಿಗೆ ಕೊಟ್ಟವರಲ್ಲ. ನಮ್ಮಂತಹವರಿಗೆ ಸಿಂಹಸ್ವಪ್ನವಾಗಿಯೆಂದೇ ಈ ಕಟ್ಟು ನಿಟ್ಟಿನ ಚಿಲ್ಲರೆ ಎಣಿಸಿ ಲೆಕ್ಕ ಇಟ್ಟುಕೊಳ್ಳುವ ಟರ್ಮಿನಲ್ಲುಗಳು, ಅವುಗಳನ್ನು ನಾನು ಶಪಿಸೋದೇ ಹೆಚ್ಚು.

ನೀವು ತರಕಾರಿ ತೆಗೆದುಕೊಳ್ಳೋದಕ್ಕೆ ಯಾವತ್ತಾದರೂ ಫಾರ್ಮರ್ಸ್ ಮಾರ್ಕೆಟ್ಟಿಗೆ ಹೋಗಿ ನೋಡಿ, ಅಲ್ಲಿನ ತೂಕಗಳಾಗಲೀ, ಅಳತೆಗಳಾಗಲೀ ಮೇಲಾಗಿ ಚಿಲ್ಲರೆ ಪ್ರಾಸೆಸ್ಸುಗಳಾಗಲೀ ಎಲ್ಲವೂ ಧಾರಾಳವಾಗಿರುತ್ತವೆ. ನಮ್ಮೂರಿನ ಸಂತೆಯಲ್ಲಿ ಯಾವನಾದರೂ ಬೀನ್ಸು-ಬದನೇಕಾಯಿಗಳನ್ನು ಕೆಜಿ ಕಲ್ಲಿಗೆ ನಿಖರವಾಗಿ ತೂಗಿದನೆಂದರೆ - ’ಏನೂ, ಬಂಗಾರ ತೂಗ್‌ದಂಗ್ ತೂಗ್ತೀಯಲಾ’ ಎಂದು ಯಾರಾದರೂ ಬೈದಿರೋದು ನಿಜ. ಆದರೆ, ಈ ಪಾಯಿಂಟ್ ಆಫ್ ಸೇಲ್ಸ್ ಟರ್ಮಿನಲ್ಲುಗಳಿಗೆ ಧಾರಾಳತೆಯೆನ್ನುವುದನ್ನು ಕಲಿಸಿದವರು ಯಾರು? ಒಂದು ಪೌಂಡಿಗೆ ಇಂತಿಷ್ಟು ಬೆಲೆ ಎಂದು ಮೊದಲೇ ಪ್ರೊಗ್ರಾಮ್ ಮಾಡಿಸಿಕೊಂಡಿರುವ ಇವುಗಳು, ನೀವು ಆಯ್ದುಕೊಂಡ ಪ್ರತಿಯೊಂದು ವಸ್ತುವಿನ ಅಣು-ಅಣುವಿಗೂ ಆ ರೇಟ್ ಅನ್ನು ಅನ್ವಯಿಸಿ, ಅದರ ಒಟ್ಟು ಮೊತ್ತವನ್ನು ನಿಮ್ಮ ರಶೀದಿಗೆ ಸೇರಿಸದಿದ್ದರೆ ಅವುಗಳ ಜನ್ಮವೇ ಪಾವನವಾಗದು. ಇಂತಹ ಸಂದರ್ಭಗಳಲ್ಲೇ ನನಗನ್ನಿಸೋದು, ಧಾರಾಳತೆಗೂ-ಬಡತನಕ್ಕೂ ಅನ್ಯೋನ್ಯತೆ ಇದೆ ಎಂದು. ಹೆಚ್ಚು ಹೆಚ್ಚು ಸಿರಿವಂತರ ಜೊತೆ ವ್ಯವಹಾರ ಮಾಡಿ ನೋಡಿ ಅನುಭವಿಸಿದವರಿಗೆ ಗೊತ್ತು, ಅಲ್ಲಿ ಪ್ರತಿಯೊಂದು ಪೈಸೆಗೂ ಅದರ "ವ್ಯಾಲ್ಯೂ" ಇದೆ, ಅದೇ ಬಡತನದಲ್ಲಿ ಇಂದಿನ ನೂರು ರುಪಾಯಿ ಇಂದಿದೆ, ಅದು ಒಂದಲ್ಲ ಒಂದು ರೀತಿಯಲ್ಲಿ ಕೆಲಸಕ್ಕೆ ಬಂದರಾಯಿತು, ಅದರ ಹಿಂದು-ಮುಂದಿನ ಕರ್ಮ-ಮರ್ಮವನ್ನು ನೆನೆಸಿಕೊರಗುವ ಮನಸ್ಥಿತಿಯೇ ಅಲ್ಲಿಲ್ಲ!

ಇಪ್ಪತ್ತು ಡಾಲರನ್ನು ಮುರಿಸಲಿ ಬಿಡಲಿ, ನಾನು ತೆರಬೇಕಾದರ್ ಎರಡು ಸೆಂಟ್ ಅನ್ನು ಅಂಗಡಿಯವರು ಬಿಡುವಂತಿದ್ದರೆ...ಎಂದು ಒಮ್ಮೆ ಅನ್ನಿಸಿದ್ದು ನಿಜ. ನಮ್ಮೂರಿನ ಶೆಟ್ಟರ ಕಿರಾಣಿ ಮಳಿಗೆಗಳಲ್ಲಿ ಹಾಗೆ ಹಿಂದೆ ಮಾಡಿದ ಅನುಭವ ನನ್ನ ಈ ಕಸಿವಿಸಿಗೆ ಇಂಬು ನೀಡಿರಬಹುದು, ಅಥವಾ ’ಏನು ಎರಡು ಸೆಂಟ್ ತಾನೇ...’ ಎನ್ನುವ ಧಾರಾಳ ಧೋರಣೆ (ನನ್ನ ಪರವಾಗಿ) ಕೆಲಸಮಾಡಿರಬಹುದು. ಈ ಆಲೋಚನೆಗಳ ಒಟ್ಟಿಗೇ, ಹೀಗೇ ನನ್ನಂತಹವರಿಗೆ ಎರಡೆರಡು ಸೆಂಟುಗಳನ್ನು ಬಿಡುತ್ತಾ ಬಂದರೆ ಅಂಗಡಿಯವನ ಕಥೆ ಏನಾದೀತೂ ಎನ್ನುವ ಕೊರಗೊಂದು ಹುಟ್ಟುತ್ತದೆ, ಅದರ ಜೊತೆಗೇ ಜನರೇಕೆ ಸ್ವಲ್ಪ ಉದಾರಿಗಳಾಗಬಾರದು ಎನ್ನುವ ಧಾರಾಳತೆಯೂ ಒದಗಿ ಬರುತ್ತದೆ. ಲೆಕ್ಕ ಅನ್ನೋದು ಮನುಷ್ಯನ ಸೃಷ್ಟಿ, ಧಾರಾಳತೆ ಉದಾರತೆ ಮುಂತಾದವುಗಳು ಭಾವನೆಗಳು ಅವು ಲೆಕ್ಕಕ್ಕೆ ಸಿಕ್ಕುವವಲ್ಲ ಹೀಗಿರುವಾಗ ನಮ್ಮೂರಿನ ಧಾರಾಳ ಆಲೋಚನೆ ಅನುಭವಗಳ ಸಂತೆಯಲ್ಲಿ ಈ ಶ್ರೀಮಂತರ ನಾಡಿನ ಯಂತ್ರಗಳು ತೋರುವ ನಿಖರತೆಯನ್ನು ನಾನು ಯಾವ ಮಟ್ಟದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಿ? ಬರೀ ನನ್ನೊಳಗಿನ ಉದಾರತೆಯನ್ನು ಎಲ್ಲರಿಗೂ ಸಮವೆಂದು ಹೊಸ ಸಾಮಾಜಿಕ ಚಳುವಳಿಯನ್ನು ಹುಟ್ಟು ಹಾಕಲೇ, ಅಥವಾ ಬಡವರೊಳಗಿನ ಲೆಕ್ಕಕ್ಕೆ ಸಿಗದ ಅನಂತವಾದ ಮೌಲ್ಯವನ್ನು ಎಲ್ಲರಲ್ಲೂ ಇರಲಿ ಎಂದು ಹಾರೈಸಲೇ.

ಏನೇ ಹೇಳಿ, ನನ್ನ ಅನಿಸಿಕೆಯ ಪ್ರಕಾರ ಭಿಕ್ಷುಕರಿಗೂ ಬಡವರ ಮನೆಯಲ್ಲೇ ಸುಭಿಕ್ಷವಾಗಿ ಸಿಕ್ಕೀತು, ಅದೇ ಶ್ರೀಮಂತರ ಮನೆಯ ಮುಂದೆ ’ನಾಯಿ ಇದೆ ಎಚ್ಚರಿಕೆ’ ಎನ್ನುವ ಫಲಕವನ್ನು ದಾಟಿ, ಒಂದು ವೇಳೆ ಮನೆಯವರು ಪುರುಸೊತ್ತು ಮಾಡಿಕೊಂಡು ತಮ್ಮ ದೊಡ್ಡ ಮನೆಯಲ್ಲಿನ ಮುಂಬಾಗಿಲನ್ನು ತೆರೆದು ಭಿಕ್ಷುಕರನ್ನು ಗಮನಿಸುವ ಪ್ರಸಂಗ ಬಂದರೂ ಅದು ’ನಿನಗೇನಾಗಿದೆ ಧಾಡಿ ದುಡಿದು ತಿನ್ನಲಿಕ್ಕೆ?’ ಎನ್ನುವ ತತ್ವ ಪ್ರದಾನವಾದ ಬೈಗಳ ಕೆಲವೊಮ್ಮೆ ಸ್ವಲ್ಪ ಭಿಕ್ಷೆಯನ್ನೂ ಹೊತ್ತು ತಂದೀತು. ಏನ್ ಹೇಳ್ಲಿ, ಚಿಲ್ರೇ ಜನಾ ಸಾರ್, ಪ್ರತಿಯೊಂದಕ್ಕೂ ಯೋಚಿಸೋರು - ಅವರೇ ಬಡವರು; ಹೋಗಿದ್ದು ಹೋಗ್ಲಿ ಏನ್ ಬೇಕಾದ್ರಾಗ್ಲಿ ಅನ್ನೋರೇ ಶ್ರೀಮಂತರು, ಬುದ್ಧಿವಂತರು - ಯಾಕೆಂದ್ರೆ ನಿನ್ನೆ-ನಾಳೆಗಳ ಬಗ್ಗೆ ಯೋಚಿಸಿರೋ ಧಣಿಗಳು ಕಡಿದು ಕಟ್ಟಿಹಾಕಿರೋದು ಅಷ್ಟರಲ್ಲೇ ಇದೆ, ಏನಂತೀರಿ?

Monday, March 24, 2008

ಮೀನಿನ ತೊಟ್ಟಿ...

ಮೀನಿನ ತೊಟ್ಟಿಯ ಚಿತ್ರ ಒಂದು ವಾರದ ಹಿಂದೆ ನನ್ನ ಆಫೀಸಿನ ಹತ್ತಿರವೇ ಕುಳಿತುಕೊಳ್ಳೋ ಆಡಮ್ ಆಫೀಸಿನ ಗಾಜಿನ ಗೋಡೆಯ ಮೇಲೆ ಹುಟ್ಟಿಕೊಂಡಿದ್ದು ನಮಗೆಲ್ಲರಿಗೂ ಆಶ್ಚರ್ಯ ತರಿಸಿತ್ತು. ಆಡಮ್ ತನ್ನ ಆಫೀಸಿನ ಒಳಗಡೆಯಿಂದ ಗಾಜಿನ ಮೇಲೆ ಚಿತ್ರ ಬರೆದಿದ್ದ, ಉಳಿದವರಿಗೆ ಹೊರಗಡೆಯಿಂದ ತಮಗೆ ಬೇಕಾದ ಅವತರಣಿಕೆಗಳನ್ನು ಸೇರಿಸುವ ಮುಕ್ತ ಅವಕಾಶ ಇತ್ತು. ಗಾಜಿನ ಗೋಡೆಯ ಮೇಲೆ ಎರಡೂ ಕಡೆಯಿಂದಲೂ ಚಿತ್ರಗಳನ್ನು ಬರೆಯಬಹುದು ಎಂದು ನನಗನ್ನಿಸಿದ್ದು ಆಗಲೆ.

ಎರಡು ಮಕ್ಕಳಿರೋ ಆಡಮ್ ತನ್ನ ಚಿತ್ರದಲ್ಲಿ ನಾಲ್ಕು ಗೋಲ್ಡ್ ಫಿಶ್‌ಗಳು, ಅವುಗಳು ಉಸಿರಾಡೋದಕ್ಕೆ ಅನುಕೂಲವಾಗುವ ಹಾಗೆ ಏರ್ ಬಬಲ್ ಬರುವಂತೆ ಜೊತೆಗೆ ಒಂದು ಗಿಡವನ್ನೂ ಅದರ ಪಕ್ಕದಲ್ಲಿ ಬರೆದಿದ್ದ. ನೀರಿನ ಮಟ್ಟವನ್ನು ಸಾಕಷ್ಟು ಎತ್ತರಕ್ಕೆ ಏರಿಸಿ ’ಸ್ವಲ್ಪ ದಿನಗಳಲ್ಲಿ ನೀರು ಬತ್ತಿ ಹೋದರೂ ಅಡ್ಡಿ ಇಲ್ಲ’ ಎಂದಿದ್ದ. ನಾನು ಕೇಳಿದೆ, ’ನಮ್ಮ ಮನೆಯಲ್ಲಂತೂ ಮೇಂಟೆನೆನ್ಸ್‌ಗೆ ಸುಲಭವೆಂದು ಗೋಲ್ಡ್ ಫಿಶ್‌ ಇಟ್ಟಿದ್ದೇವೆ, ಚಿತ್ರದಲ್ಲಾದರೂ ಬೇರೆ ಮೀನುಗಳನ್ನು ಬರೆಯಬಹುದಿತ್ತಲ್ಲ?’ ಎಂದು. ಆಡಮ್ ’That's a good observation...' ಎಂದು ಚಿಕ್ಕದಾಗಿ ಹೇಳಿ ನಕ್ಕು ಬಿಟ್ಟಿದ್ದ. ಆತ ಬರೆದ ಚಿತ್ರ ಕೇವಲ ಒಂದೇ ಒಂದು ಅದರ ಮೂಲ ಸ್ವರೂಪದಲ್ಲಿ ಉಳಿದಿತ್ತು ಎಂದು ಹೇಳಬಹುದು. ಮರುದಿನ ಆತನೇ ಒಂದು ಗಿಡದ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗಿಡವನ್ನು ಬರೆದ ಹಾಗೂ ಯಾರಿಗಾದರೂ ಸ್ಕೂಬಾ ಡೈವರ್‌ನ ಚಿತ್ರವನ್ನು ಬರೆಯಲು ಬರೆಯುತ್ತದೆಯೇ ಎಂದು ಕೇಳಿದ್ದೂ ಆಯಿತು. ಹೆಚ್ಚಿನ ನಮಗೆ ಬರೋದಿಲ್ಲ ಎಂದು ಹೆಗಲು ಕುಣಿಸಿದೆವು, ಪಕ್ಕದ ಆಫೀಸಿನ ಜೆಫ್ ಬಂದು ಕೇವಲ ಎರಡೇ ನಿಮಿಷಗಳಲ್ಲಿ ಸ್ಕೂಬಾ ಡೈವರ್ ಅನ್ನು ಸೇರಿಸಿಬಿಟ್ಟ. ಜೆಫ್ ಚಿತ್ರ ಬರೆಯೋದಕ್ಕೆ ಮೊದಲು ಸ್ಕೂಬಾ ಡೈವರ್ ಎಂದರೆ ಹೇಗೆ ಬರೆಯಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದ ನನಗೆ ಆತ ಚಿತ್ರ ಬರೆದ ಮೇಲೆ ’ಅಯ್ಯೋ ಇಷ್ಟು ಸುಲಭವೇ!’ ಎನ್ನಿಸಿದ್ದು ನಿಜ.

ಮರುದಿನ ಮುಂಜಾನೆ ನೋಡಿದಾಗ, ಅಕ್ವೇರಿಯಮ್ ತಳಕ್ಕೆ ಒಂದೆರಡು ಹಸಿರು ಸ್ಟಿಕ್ಕರುಗಳು ಅಂಟಿಕೊಂಡಿದ್ದವು. ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಮೀನಿನ ಮುಖವೂ ಬದಿಯಿಂದ ಎದ್ದು ಕಾಣತೊಡಗಿತ್ತು, ಇನ್ನೇನು ಸಣ್ಣ ಮೀನನ್ನು ನುಂಗಿ ಬಿಡುವ ಹಾಗೆ. ಇದಾದ ತರುವಾಯ ಆಡಮ್ ಹಸಿರು ಗಿಡಗಳ ಎಲೆಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಹೋದ. ಮುಂದಿನ ದಿನಗಳಲ್ಲಿ ಗಾಜಿನ ತೊಟ್ಟಿಯ ಮೇಲೆ ಮೀನು ಹಿಡಿಯಲು ಗಾಳ ಹಾಕಿ ಕುಳಿತ ಚಿತ್ರವೂ ಹಾಗೂ ಗಾಜಿನ ತೊಟ್ಟಿಗೆ ಅಡಿಯಿಂದ ಬಿಸಿ ಮಾಡುವಂತೆ ಯಾರೋ ಒಬ್ಬರು ಮೊಂಬತ್ತಿ (ಕ್ಯಾಂಡಲ್ಲ್) ಯನ್ನೂ ಹಚ್ಚಿ ಬಿಟ್ಟಿದ್ದರು! ಈ ಚಿತ್ರಕ್ಕೆ ಕೊನೆಯ ಬದಲಾವಣೆ ಎಂಬಂತೆ ಸಣ್ಣ ಮೀನನ್ನು ನುಂಗಲು ಹವಣಿಸುವ ದೊಡ್ಡ ಮೀನಿನ ಬಾಯಿಯಿಂದ ರಕ್ತ ಜಿನುಗಿದ ಹಾಗೆ ಮತ್ತು ದೊಡ್ಡ ಮೀನಿನ ಕಣ್ಣಿರುವ ಜಾಗೆಯಲ್ಲಿ ಒಂದು ಸ್ಮೈಲಿ ಸ್ಟಕ್ಕರ್ರೂ ಪ್ರತ್ಯಕ್ಷವಾದವು.

ಹೀಗೆ ಒಂದು ವಾರದಲ್ಲಿ ಒಳಗಡೆಯಿಂದ ಆಡಮ್ ಚಿತ್ರವನ್ನು ಬೆಳೆಸುತ್ತಾ ಹೋದ ಹಾಗೆ ಹೊರಗಡೆಯಿಂದ ಅದೇ ಗಾಜಿನ ಮೇಲೆ ಅಕ್ಕ ಪಕ್ಕದ ಜನರು ತಮಗೆ ಬೇಕಾದ ’ಎಲಿಮೆಂಟು’ಗಳನ್ನು ಸೇರಿಸುತ್ತಾ ಹೋದರು. ಆಕ್ವೇರಿಯಮ್ ಎನ್ನುವುದು ನಿಜ ಜೀವನದಲ್ಲಿ ಒಂದು ಜೈವಿಕ ವ್ಯವಸ್ಥೆಯೆಂಬಂತೆ ಈ ಗಾಜಿನ ಮೇಲೆ ಬರೆದ ಚಿತ್ರವೂ ಚಿತ್ರದಲ್ಲಿ ಜೀವಂತವಾಗಿಯೇ ಇತ್ತು.

***

ಚಿತ್ರ ಬರೆಯುವವರ ಮನಸ್ಸಿನಲ್ಲಿದೆ ಎಲ್ಲ ಥರದ ಕಲ್ಪನೆಗಳು, ಅವು ದಿನಕ್ಕೆ, ಘಳಿಗೆಗೊಮ್ಮೆ ಬದಲಾಗುವುದು ಸಹಜ. ಜೊತೆಗೆ ನಿಜ ಜೀವನವೂ ಸಹ ನಾನಾ ರೀತಿಯ ಸವಾಲುಗಳನ್ನು ಒಡ್ಡುವುದು ಇದ್ದೇ ಇದೆ. ಒಂದು ಚಿತ್ರದ ವ್ಯವಸ್ಥೆಯಲ್ಲಿ ಹಲವಾರು ಸರಿ ಉತ್ತರಗಳಿವೆ, ಹೀಗೆ ಬರೆದರೆ ತಪ್ಪು ಎಂಬುವುದು ದೂರದ ಮಾತು. ನೀವು ವಾಷಿಂಗ್ಟನ್ ಡಿಸಿಯ ಕಲಾ ಮ್ಯೂಸಿಯಮ್‌ಗಳನ್ನು ನೋಡಿದ್ದರೆ ನಿಮಗೆ ಗೊತ್ತು, ಪುರಾತನ ಚಿತ್ರಕಲೆಯಿಂದ ಹಿಡಿದು ಆಧುನಿಕ (abstract) ಕಲೆಯವರೆಗೆ ಬೇಕಾದಷ್ಟು ವೇರಿಯೇಷನ್ನುಗಳಿಗೆ ಒಳಪಟ್ಟ ಮಾಧ್ಯಮವದು. ಆಕ್ವೇರಿಯಮ್ ಒಂದು ಜೈವಿಕ ವ್ಯವಸ್ಥೆ, ಅದರ ಹಲವಾರು ವಸ್ತುಗಳು ಅದರದ್ದೇ ಆದ ಒಂದು ವಿಶೇಷ ವಾತಾವರಣವನ್ನು (eco system) ಸೃಷ್ಟಿಸುತ್ತದೆ.

ನೀವು ಬರ್ಲಿನ್ ಗೋಡೆಯ ಮೇಲೆ ಉದ್ದಾನುದ್ದಕ್ಕೂ ಜನರು ಥರಾವರಿ ಚಿತ್ರಗಳನ್ನು ಗೋಡೆಯ ಎರಡೂ ಬದಿಗೆ ಜನರು ಬರೆದ ಡಾಕ್ಯುಮೆಂಟರಿಯನ್ನು ನೋಡಿರಬಹುದು, ಆ ಬಗ್ಗೆ ಕೇಳಿರಬಹುದು. ಅದು ಒಂದು ರೀತಿಯ ಓಪನ್ ಕ್ಯಾನ್‌ವಾಸ್ ಇದ್ದ ಹಾಗೆ. ನಮ್ಮ ಆಫೀಸಿನಲ್ಲೂ ಬೇಕಾದಷ್ಟು ಜನರ ಆಫೀಸಿನಲ್ಲೂ ಈ ರೀತಿಯ ದೊಡ್ಡ ಗಾಜಿನ ಗೋಡೆಗಳಿದ್ದರೂ ಕೇವಲ್ ಆಡಮ್ ಮಾತ್ರ ನಾನು ಕಂಡಂತೆ ಮೊದಲ ಬಾರಿಗೆ ತನ್ನ ಬದಿಗಿದ್ದ ಗಾಜಿನ ಮೇಲ್ಮೈ ಮೇಲೆ ಚಿತ್ರ ಬರೆದು ಉಳಿದವರು ಅದಕ್ಕೇನೇನೋ ರೂಪಗಳನ್ನು ಕೊಡುತ್ತಿದ್ದರೂ ಅದನ್ನು ಪುರಸ್ಕರಿಸುತ್ತಿದ್ದ. ಹೀಗೆ ಒಂದು ವಾರ ಕಳೆದ ನಂತರ ನಿನ್ನೆ ನನ್ನ ಕಣ್ಣೆದೆರಿಗೇ ಈ ಚಿತ್ರವನ್ನು ಅಳಿಸಿ ಹಾಕಿದ, ಏಕೆ ಎಂದು ಕೇಳಿದ್ದಕ್ಕೆ ’ಚಿತ್ರ ಬರೆದದ್ದಾಯಿತು, ಅದು ಬೆಳೆದದ್ದೂ ಆಯಿತು, ಈಗ ಅದು ತನ್ನ ಚಾರ್ಮ್ ಕಳೆದುಕೊಂಡಿದೆ’ ಎಂದ. ಅದು ನಿಜವೂ ಹೌದು ಮೊದಮೊದಲು ಈ ಚಿತ್ರದ ಹತ್ತಿರ ಸುಳಿದಾಡುವವರು ಒಂದಲ್ಲ ಒಂದು ರೀತಿಯ ಕಾಮೆಂಟುಗಳನ್ನು ಹಾಕಿ ಹೋಗುತ್ತಿದ್ದರು, ಅನಂತರ ಈ ಚಿತ್ರ ಗೌಣವಾಯಿತು.

***

ನನಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಈ ಚಿತ್ರ ಆಫೀಸಿನ ಕ್ರಿಯೇಟಿವಿಟಿಗೆ ಒಂದು ಮಾದರಿಯಾಗಿತ್ತು. ಕೆಲವರು ಮಾರ್ಕರ್ ಪೆನ್ನುಗಳಿಂದ ಚಿತ್ರಕ್ಕೆ ತಮ್ಮದೊಂದು ಕೊಡುಗೆಯನ್ನು ನೀಡಿದ್ದರೆ, ಇನ್ನು ಕೆಲವರು ವರ್ಬಲ್ ಕಾಮೆಂಟುಗಳನ್ನು ಹಂಚಿಕೊಂಡರು. ಕೆಲವರು ಚಿತ್ರವನ್ನು ಬೆಳೆಸಿದರೆ (constructive), ಇನ್ನು ಕೆಲವರು ಅದನ್ನು ಧ್ವಂಸ ಮಾಡಲು ನೋಡಿದರು (destructive). ಜನರ ಸೃಜನಶೀಲತೆ, ಅವರ ಮನಸ್ಸಿಗೆ ಹಿಡಿದ ಕನ್ನಡಿ ಎನ್ನುವುದು ಇಲ್ಲಿ ನನಗಂತೂ ಸ್ಪಷ್ಟವಾಗಿತ್ತು.

Wednesday, March 19, 2008

ಮೀನಿನ ತೊಟ್ಟಿ, ಬದುಕು ಮತ್ತು ಸೃಜನಶೀಲತೆ


ಇದರ ಬಗ್ಗೆ ಲೇಖನ ಬರೀತೀನಿ, ಈ ಚಿತ್ರವನ್ನು ನೋಡಿ ನಿಮಗೇನನ್ನಿಸುತ್ತೋ ಅನ್ನೋದನ್ನ ತಿಳಿಸಿ.

Tuesday, March 11, 2008

ಈ ಮಹಾನುಭಾವರ ಬಗ್ಗೆ ಬರೆಯೋದೇ ತಪ್ಪೇ?

ನಾನು ದಿನನಿತ್ಯದ ವಿದ್ಯಮಾನಗಳ ಬಗ್ಗೆ ಓದಿ ಅವರಿವರು ಮಹಾನುಭಾವರ ಬಗ್ಗೆ ಚಿಂತಿಸಿ ಬರೆಯೋ ಪ್ರಕ್ರಿಯೆ ಹಾಗಿರಲಿ, ಪ್ರಪಂಚದಾದ್ಯಂತ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎನ್ನೋದನ್ನ ತಿಳಿದುಕೊಳ್ಳೋ ಸವಾಲೇ ಇತ್ತೀಚೆಗೆ ದೊಡ್ಡದಾಗಿ ಕಾಣಿಸ್ತಾ ಇದೆ. ಅಂತಾದ್ದರಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಯಾರ ಹೆಸರು ಹೆಚ್ಚು ಚರ್ಚೆಗೆ ಒಳಪಡುತ್ತೋ, ನಾವು ದಶಕಗಳಿಂದ ಯಾರನ್ನು ಓದಿ/ನೋಡಿ ಬಲ್ಲೆವೋ ಅವರ ಹೆಸರೇ ಮನಸ್ಸಿನಲ್ಲಿ ಉಳಿಯೋದು ಸಹಜ ಎನಿಸಿಬಿಟ್ಟಿದೆ.

ಹೀಗಿರುವಾಗ, ನನಗಾದ ಇತ್ತೀಚಿನ ಎರಡು ಮಹತ್ತರ ನಿರಾಶೆಗಳನ್ನು ಇಲ್ಲಿ ದಾಖಲು ಮಾಡಬೇಕಾಯಿತು: ಒಂದು ಅಜ್ಞಾತವಾಸದಿಂದ ಹಿಂತಿರುಗಿದ ಬೆನಝೀರ್ ಭುಟ್ಟೋರನ್ನು ವ್ಯವಸ್ಥೆ ಬಲಿ ತೆಗೆದುಕೊಂಡದ್ದು, ಮತ್ತೊಂದು ನಿನ್ನೆ ಹೊರಬಂದ ನ್ಯೂ ಯಾರ್ಕ್ ಗವರ್ನರ್ ಎಲಿಯಟ್ ಸ್ಪಿಟ್ಝರ್ (Eliot Spitzer) ಸುದ್ದಿಯ ಪ್ರಕಾರ ಆತ ವೇಷ್ಯಾವಾಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು. ಅಂದಿನ ನ್ಯೂ ಜೆರ್ಸಿಯ ಗವರ್ನರ್ ಜಿಮ್ ಮಕ್‌ಗ್ರೀವೀ (Jim McGreevey) ಆಗಷ್ಟ್ ೨೦೦೪ ರಲ್ಲಿ ತನ್ನ ಹೋಮೋ ಸೆಕ್ಸ್ಯವಲ್ ಜೀವನ ಶೈಲಿಯನ್ನು ಬಹಿರಂಗ ಪಡಿಸಿ ರಾಜೀನಾಮೆ ಕೊಟ್ಟಿದ್ದರೆ, ನಾಲ್ಕು ವರ್ಷಗಳ ಬಳಿಕ ಎಲಿಯಟ್ ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುಳಿಗೆ ಸಿಕ್ಕು ರಾಜೀನಾಮೆ ಕೊಡುವ ಸಂದರ್ಭ ಬರುತ್ತದೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ.

ಡಲ್ಲಾಸ್ ನ್ಯೂಸ್ ನಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳನ್ನು ನೋಡಿದರೆ ಇದೇನು ಅವರಿಬ್ಬರ ಜೋಡಿಯೂ ಮಾತನಾಡಿಕೊಂಡು ಈ ರೀತಿಯ ಪ್ರೆಸ್ ಕಾನ್‌ಫರೆನ್ಸ್ ಕೊಡುತ್ತಿದ್ದಾರೇನೋ ಅನ್ನಿಸುವುದು ನಿಜ.



***

ಭುಟ್ಟೋ ಬಗ್ಗೆ ಬರೆದೆ, ಆಕೆಯನ್ನು ಸಮಾಜ ಆಪೋಷನ ತೆಗೆದುಕೊಂಡಿತು, ಸ್ಪಿಟ್ಝರ್ ಬಗ್ಗೆ ಬರೆದು ಆತ ವಾಲ್ ಸ್ಟ್ರೀಟ್ ದೊರೆಗಳನ್ನು ಕಾಡಿಸಿದ್ದರ ಬಗ್ಗೆ ಬರೆದು ನಿಜವಾಗಿಯೂ ಉತ್ತಮ ಅಡ್ಮಿನಿಷ್ಟ್ರೇಟರ್ ಎಂದು ಹಾಡಿ ಹೊಗಳಿದರೆ ಆತನಿಗೆ ಈ ಸ್ಥಿತಿ ಬಂದಿತು.

ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುದ್ದಿಗಳ ಹಿಂದೆ ಅದೇನು ಅಡಗಿದೆಯೋ ಆದರೆ ಆತ ಸಾರ್ವಜನಿಕ ಕ್ಷಮೆ ಕೋರಿದ್ದಂತೂ ನಿಜ. ಅಲ್ಲಿಗೆ ಕಥೆ ಮುಗಿದಂತೆಯೇ, ಯಾವೊಬ್ಬ ಪ್ರಸಿದ್ಧ ಹಾಗೂ ಪವರ್‌ಫುಲ್ ರಾಜಕಾರಣಿ ಹಾಗೂ ವ್ಯಕ್ತಿ ದೇಶದ ರಾಜಕಾರಣದಲ್ಲಿ ಮಿಂಚುತ್ತಾನೆ ಎಂದು ಸಮಾಜ ಕನಸು ಕಂಡಿತ್ತೋ ಅದೆಲ್ಲವೂ ನೀರಿನಲ್ಲಿ ತೊಳೆದ ಹೋಮವಾಗಿ ಹೋಯಿತು. ಈ ಸ್ಕ್ಯಾಂಡಲ್ಲನ್ನು ಗೆದ್ದು ಸ್ಪಿಟ್ಝರ್ ಹೊರಬರದೇ ಇರುತ್ತಾನೆಯೇ, ಅಥವಾ ಹಾಗೆ ಹೊರಬಂದರೂ ಸಮಾಜಕ್ಕೆ ಯಾವ ಮುಖವನ್ನು ತೋರಿಸಬಲ್ಲ ಎನ್ನುವುದು ನಿಜವಾಗಿ ಇನ್ನು ಕಾಲ ನಿರ್ಣಯಿಸಬೇಕಾದ ವಿಚಾರ.

***

ಪ್ರೆಸಿಡೆಂಟ್ ಆಗಿದ್ದಾಗ ಬಿಲ್ ಕ್ಲಿಂಟನ್ ಅದೇನೇನನ್ನೋ ಮಾಡಲಿಲ್ಲವೇ ಎಂದು ಪ್ರಶ್ನೆಗಳು ಏಳುವುದು ಸಹಜ - "What I think is what I say, what I say is what I do!" ಎಂದು ಕೆಲವು ತಿಂಗಳುಗಳ ಹಿಂದೆ ಎದೆ ತಟ್ಟಿಕೊಂಡು ನ್ಯೂ ಯಾರ್ಕ್ ಗವರ್ನರ್ ಪಟ್ಟ ಏರಿ ಮುಂದೆ ಮೇಲೆ ಬರಬೇಕಾಗಿದ್ದ ಸ್ಪಿಟ್ಝರ್ ಗೂ ಅಂದಿನ ಪ್ರೆಸಿಡೆಂಟ್ ಕ್ಲಿಂಟನ್ನ್ ಗೂ ಇರೋ ಸವಾಲುಗಳು ಬೇರೆಯವೇ ಅನ್ನೋದು ನನ್ನ ಅಭಿಮತ.

ಒಟ್ಟಿನಲ್ಲಿ ನ್ಯೂ ಯಾರ್ಕ್ ರಾಜ್ಯ, ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತೊಬ್ಬ ಮುಖಂಡ/ಮುಂದಾಳುವನ್ನು ಕಳೆದುಕೊಂಡಿದೆ. ದಶಕಗಳ ಛಲ, ಮುಂಬರುವ ಪ್ರವೃತ್ತಿ, ಆಶಾವಾದ ಹಾಗೂ ಹಾವರ್ಡ್ ಶಿಕ್ಷಣ ಇವೆಲ್ಲವೂ ಒಂದೇ ಒಂದು ಸುದ್ದಿಯಲ್ಲಿ ತೊಳೆದು ಹೋದ ಹಾಗಿದೆ. ದೇಶದ ರಾಜಕಾರಣ ಒಬ್ಬ ಪ್ರಬುದ್ಧ ಲೀಡರ್‌ನನ್ನು ಇಲ್ಲದಂತಾಗಿಸಿಕೊಂಡಿದೆ.

ಅಮೇರಿಕದಲ್ಲಿ ಜನ ಇತ್ತೀಚೆಗೆ ಸ್ಟಾಕ್ ಮಾರ್ಕೆಟ್ ಸ್ಕ್ಯಾಂಡಲ್ಲುಗಳಲ್ಲಿ (ಎನ್ರಾನ್, ಎಮ್‌ಸಿಐ, ಇತ್ಯಾದಿ) ಬಳಲಿ ತಮ್ಮ ಮುಖಂಡರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ Integrity (Truthfulness, Honest and Trust worthiness) ಯನ್ನು ನಿರೀಕ್ಷಿಸುವುದು ಸಹಜವೇ. ಇರಾಕ್ ಯುದ್ಧದಲ್ಲಿ ಹಲವಾರು ಸುಳ್ಳನ್ನು ಹೇಳಿದ ಅಡ್ಮಿನಿಷ್ಟ್ರೇಷನ್ನ್ ಬಗ್ಗೆ ಹಲವಾರ ಅಸಮಧಾನವೂ ಇರಬಹುದು. ಇವೆಲ್ಲ ಹಿನ್ನೆಲೆಯಲ್ಲಿ ಸ್ಪಿಟ್ಝರ್ ಭವಿಷ್ಯವನ್ನು ಒರೆ ಹಾಕಿ ನೋಡಿದರೆ ನನಗಂತೂ ಮೂಸೆಯಲ್ಲಿ ಕರಗಿ ಹೊಳೆಯುವ ಬಂಗಾರದ ಬದಲು ಸುಟ್ಟು ಕರಕಲಾದ ಕಟ್ಟಿಗೆಯ ಅವಶೇಷವೇ ಕಾಣುತ್ತದೆ.

ಇನ್ನು ಸ್ಪಿಟ್ಝರ್ ಅನ್ನು ಆತನ ದೇವರೇ ಕಾಪಾಡಬೇಕು!

Friday, March 07, 2008

ವಿಭಕ್ತಿಯ ಬಗೆಗಿನ ಭಕ್ತಿ

ನಿಮಗೆ ಗೊತ್ತಿರಬೇಕಲ್ಲ?

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯ - ಇಂದ
ಚತುರ್ಥಿ - ಗೆ, ಇಗೆ, ಅಕ್ಕೆ
ಪಂಚಮಿ - ದೆಸೆಯಿಂದ
ಷಷ್ಠಿ - ಅ
ಸಂಬೋಧನೆ - ?


ಇತ್ಯಾದಿ...ಅವೇ ಸ್ವಾಮಿ, ವಿಭಕ್ತಿ-ಪ್ರತ್ಯಯಗಳು, ಥ್ಯಾಂಕ್ಸ್ ಟು ನಮ್ಮ ಕನ್ನಡಾ ಟೀಚರ್ಸ್...ಓಂ ಗುರುಭ್ಯೋ ನಮಃ...ಮೇಷ್ಟ್ರೇ ನಿಮಗೇ ಜೋಡಿಸ್ತೀನಿ...

ಯಾಕೆ ಇದರ ಬಗ್ಗೇ ಯೋಚಿಸ್ತಾ ಹೋದೆ ಅಂತಂದ್ರೆ, ಇತ್ತೀಚೆಗೆ ನಮ್ ಹತ್ತಿರದ ಸಂಬಂಧಿಕರ ಮಗಳೊಬ್ಬಳು, ಬೆಂಗ್ಳೂರು ಕನ್ನಡತಿ, ಅವಳ ಜೊತೆ ಮಾತನಾಡ್ತಾ ಇರಬೇಕಾದ್ರೆ ಥಟ್ಟನೆ ಅವಳು ನಮ್ಮ ಕನ್ನಡದ ವಿಭಕ್ತಿ ಪ್ರತ್ಯಯಗಳನ್ನೆಲ್ಲ ಹದಿಹರೆಯದ ಹುಡುಗ್ರು ಹೊಸ ಕಾರಿನಲ್ಲಿ ಸ್ಟಾಪ್ ಸೈನ್‌ಗಳನ್ನು ಎಗುರಿಸಿಕೊಂಡು ಹೋಗೋ ಹಾಗೆ ಹಾರಿಸುತ್ತಿದ್ದಳು. ಅವಳ ಬಳಕೆಯ ಪ್ರಕಾರ, ’ನಮ್ಮ ಅಪ್ಪ ಹತ್ರ ಅದು ಇದೆ, ಅಮ್ಮ ಕಾರು ಹಾಗಿತ್ತು, ತಮ್ಮ ಕೇಳಿ ಹೇಳ್ತೀನಿ’, ಇತ್ಯಾದಿ.

ನಾನು ಏನೂ ಹೇಳೋಕ್ ಹೋಗ್ಲಿಲ್ಲ, ಮತ್ತೇನಾದ್ರೂ ಅವಳು ಬೆಂಗ್ಳೂರು ಕನ್ನಡದಲ್ಲಿ ಬೈದ್ಲೂ ಅಂತಂದ್ರೆ? ಜೊತೆಗೆ ನಾನ್ ಕೇಳೋ ರ್ಯಾಪ್ ರೀತಿಯ ಇಂಗ್ಲೀಷೋ, ದೇವ್ರೇ ನನ್ನನ್ ಕಾಪಾಡ್‌ಬೇಕು. ನನ್ನ ಕಷ್ಟಾ ಏನೂ ಅಂತ ಹೇಳ್ಲೀ ಸ್ವಾಮೀ, ಇತ್ಲಾಗೆ ಈ ಕರಿಯರ (ಆಫ್ರಿಕನ್ ಅಮೇರಿಕನ್ನರ) ರ್ಯಾಪೂ ಅರ್ಥ ಆಗೋಲ್ಲ, ಆ ಕಡೆ ನಮ್ಮ್ ಕನ್ನಡಾ ಹಾಡ್‌ಗಳಲ್ಲಿ ಬರೋ ಇಂಗ್ಲೀಷ್ ಶಬ್ದ, ಸಾಲಿನ ಉಚ್ಛಾರಣೆಗಳೂ ಕೈಗೆ ಸಿಗೋಲ್ಲ!

ವಿಭಕ್ತಿ ವಿಷಯಕ್ಕೆ ಬರೋಣ - ನಮ್ಮ ಕನ್ನಡ ಬಹಳ ಸೊಗಸಾಗಿರೋದು ಇದ್ರಲ್ಲೇ ಅನ್ಸುತ್ತೆ. ನಾವು, ’ಅಪ್ಪನ, ಅಮ್ಮನ, ತಮ್ಮನ...’ ಅಂತೀವಿ, ಆದ್ರೆ ತಂಗಿ ವಿಷಯಕ್ಕೆ ಬಂದಾಗ ’ತಂಗಿಯ’ ಅಂತೀವಿ. (ಅಮ್ಮಂದಿರು, ಅಮ್ಮಗಳ ಬಗ್ಗೆ ಹಿಂದೊಮ್ಮೆ ಬರ್ದಿದ್ದೆ, ಅದು ಬೇರೆ ವಿಷಯ). ’ಅಪ್ಪನ ಹತ್ರ ಕೇಳಿ ನೋಡ್ತೀನಿ’ ಅನ್ನೋದು ಸರಿಯಾದ ಬಳಕೆ, ಅದನ್ನು ಬಿಟ್ಟು ಯಾರಾದ್ರೂ ’ಅಪ್ಪ ಹತ್ರ ಕೇಳ್ತೀನಿ’ ಅಂತಂದ್ರೆ ತಪರಾಕಿ ಹೊಡೀದೇ ಇರೋದಾದ್ರೂ ಹೇಗೆ? ’ತಂಗಿಯ’ ಅನ್ನೋ ಬದಲಿಗೆ ’ತಂಗೀ’ (ದೀರ್ಘ ಗಮನಿಸಿ) ಅನ್ನೋದು ಆಡು ಭಾಷೆಯಲ್ಲಿ ಬರುತ್ತೆ ಅನ್ನಬಹುದು. ಅದಕ್ಕೆ ತಕ್ಕಂತೆ, ’ಅಪ್ಪಾ’, ’ತಮ್ಮಾ’, ’ಅಮ್ಮಾ’ (ದೀರ್ಘ ಸ್ವರದ ಬಳಕೆಗಳು) ಅನ್ನೋದು ಎಷ್ಟರ ಮಟ್ಟಿಗೆ ಸರಿ?

ನಾವು ಇಂಗ್ಲೀಷೋ ಮತ್ತೊಂದು ಭಾಷೆಯನ್ನು ಕಲಿತಾದ ಮಾತ್ರಕ್ಕೆ ನಮ್ಮಲ್ಲಿರುವ ಕೆಲವೊಂದು ವಿಶೇಷವಾದ ಬಳಕೆಗಳನ್ನು ಬಿಡೋದಕ್ಕೆ ಹೇಗೆ ಸಾಧ್ಯ ನೀವೇ ಹೇಳಿ. ನಾವು ಆಫೀಸಿನಲ್ಲಿ ಸುಮ್ಮನೇ ಲೋಕಾಭಿರಾಮವಾಗಿ ಹರಟುತ್ತಿದ್ದಾಗ ನಾನು ’co-brother' ಅನ್ನೋ ಪದವನ್ನು ಬಳಸಿದೆ, ಎಲ್ಲರೂ ’what is that?' ಅನ್ನೋ ಹಾಗೆ ನನ್ನ ಮುಖವನ್ನು ನೋಡಿದ್ರು, ನಾನು ’ನನ್ನ ಹೆಂಡತಿಯ ತಂಗಿಯ ಗಂಡ’ ಎಂದು ಉತ್ತರ ಕೊಟ್ಟೆ (ಷಡ್ಡುಕ, ಷಡ್ಕ, ಸಡ್ಕ ಅನ್ನೋ ಅರ್ಥದಲ್ಲಿ). ಮತ್ತೆ ಹೋಗಿ ಆನ್‌ಲೈನ್ ಡಿಕ್ಷನರಿಗಳನ್ನು ನೋಡಲಾಗಿ ’ಅದು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಬಳಸೋ ಇಂಗ್ಲೀಷಿನ ಪದ’ವೆಂಬುದಾಗಿ ತಿಳಿಯಿತು. ಹೌದು, ಎಲ್ಲರಿಗೂ ’brother-in-law' ಎಂದು ಕರೆದೋ ’sister-in-law' ಎಂದು ಸಂಬೋಧಿಸಿಯೋ ನಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಬಹುದು, ಆದರೆ ಷಡ್ಡುಕನೇ ಬೇರೆ, ಬಾವನೆಂಟನೇ ಬೇರೆ, ಸೋದರ ಮಾವನೇ ಬೇರೆ, ದೊಡ್ಡಪ್ಪ-ಚಿಕ್ಕಪ್ಪನೇ ಬೇರೆ, ಇವರೆನ್ನೆಲ್ಲ ಒಂದೋ ಎರಡೋ ಪದಗಳನ್ನು ಬಳಸಿ ತೂಗಲಾದೀತೆ? ಅದಕ್ಕೆ ಬೆಂಗ್ಳೂರಿನ ಕನ್ನಡಿಗರು ’my ಚಿಕ್ಕಪ್ಪಾ is doing this...' ಎಂದು ಕನ್ನಡವನ್ನು ಬಳಸಿದ್ರೆ ನನಗೆ ಖುಷಿ ಆಗುತ್ತೆ ಅಂತ್ಲೇ ನಾನು ಹೇಳೋದು! (ಕೊನೇಪಕ್ಷ ಅವರ ’uncle' ಯಾರು ಅಂತ ಗೊತ್ತಾಯ್ತಲ್ಲ, ಅದಕ್ಕೆ).

***

’ಏನ್ ಸಾರ್ ನಿಮ್ ರಾಮಾಯಣ? ನೀವೇನು ಕನ್ನಡ ಕೊಂಡ್‌ಕೊಂಡೋರ್ ಹಾಗ್ ಆಡ್ತೀರಲ್ಲ? ನಿಮ್ದೊಳ್ಳೇ ರಾಮ ಜನ್ಮ ಭೂಮೀ ಜನ ಹಿಂದೂ ಧರ್ಮವನ್ನು ಕೊಂಡು ಕೊಂಡೋರ ಹಾಗಿನ ಕಥೆ ಆಯ್ತು, ತೆಗೀರಿ ಮತ್ತೆ!’ ಅಂತ ನೀವು ನನಗೆ ತಮಾಷೆ ಮಾಡ್ತೀರಿ ಅಂತ ಗೊತ್ತು. ನಾನು ಯಾವ ವೇದಿಕೆಯನ್ನು ಸೇರ್ತಾ ಇಲ್ಲ, ಕಟ್ತಾ ಇಲ್ಲ, ಏನೋ ನನ್ ಕಣ್ಣಿಗೆ ಕಂಡಿದ್ದನ್ನ ಕಂಡ ಹಾಗೆ ಹೇಳ್ದೆ ಅಷ್ಟೇ.

ನೀವ್ ಬೆಂಗ್ಳೂರ್ ಕನ್ನಡಿಗರಾದ್ರೆ ಓದಿ ನಕ್ಕ್ ಬಿಡಿ, ಇಲ್ಲಾ ನನ್ನ ಹಾಗೆ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದೋರಾದ್ರೆ ಬೇಸ್ರ ಮಾಡ್ಕೋಳ್ ಬೇಡಿ, ಅದೇ ಬದ್ಕು ಅಂದ್ಕೊಂಡು ಸುಮ್ನಾಗಿ ಅಷ್ಟೇ!

ಅಂದ ಹಾಗೆ ನಮ್ಮನೇಲೂ ಒಬ್ರು ಬೆಂಗ್ಳೂರ್ ಕನ್ನಡಿಗರಿದ್ದಾರೆ, ಅವ್ರ ಬಗ್ಗೆ ಇನ್ನೊಮ್ಮೆ ಬರೆದ್ರಾಯ್ತು!

Sunday, March 02, 2008

(ಇನ್ನೂ) ಜೀವಂತ (live) ಕ್ರಿಕೆಟ್

ಇಪ್ಪತ್ತು ವರ್ಷಗಳ ಬಳಿಕವೂ ಅದೇನೇನೆಲ್ಲ ತಂತ್ರಜ್ಞಾನದಲ್ಲಿ ನಾವು ಮುಂದೆ ಹೋಗಿದ್ದರೂ ನನ್ನ ಹಣೇ ಬರಹಕ್ಕೆ ’ಬಾಲ್ ಬೈ ಬಾಲ್’ ಕಾಮೆಂಟರಿಯೇ ಗತಿಯಾಯ್ತು! I can't believe I am (still) doing this - ಬೆಳಿಗ್ಗೆ ಮೂರು ಘಂಟೆಯಿಂದ cricinfo.com ಮುಂದೆ ಕೂತುಗೊಂಡು ಲೈವ್ ಸ್ಕೋರ್ ಕಾರ್ಡ್ ನೋಡ್ತಾ ಇದ್ದೇನೆ, ಮೊದಲ ಆಸ್ಟ್ರೇಲಿಯಾ-ಭಾರತ ಫೈನಲ್ ಮ್ಯಾಚು.

ಉತ್ತಪ್ಪ, ಗಂಭೀರ್ ಔಟಾಗಿ ಹೋದ್ರೂ ನಂತರ ಬಂದ ಯುವರಾಜ್ ತೋರಿಸಿದ ಚಾಕಚಕ್ಯತೆ ಜೊತೆಯಲ್ಲಿ ವೆಟಿರನ್ ತೆಂಡೂಲ್ಕರ್ 50 ರ ಗಡಿ ಮುಟ್ಟಿದ್ದು ಇವೆಲ್ಲ ಇನ್ನೂ ಮ್ಯಾಚ್ ಅನ್ನೂ ಕುತೂಹಲಕಾರಿಯಾಗಿಯೇ ಇಟ್ಟಿವೆ. ಯಾವಾಗಲೂ ಮ್ಯಾಚ್ ನೋಡೋವಾಗ ಅನ್ನಿಸೋ ಹಾಗೆ ಅವರು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಅನ್ಸೋದೇನೋ ನಿಜ, ಜೊತೆಗೆ ಆಸ್ಟ್ರೇಲಿಯಾದವರ ನೆಕ್ಸ್ಟ್‌ ಜನರೇಷನ್ ಕ್ರಿಕೆಟ್ ಎದಿರು ನಮ್ಮವರ ಆಟ ಏನು ನಡೆಯುತ್ತೋ ಅನ್ನೋ ಹೆದರಿಕೆ ಬೇರೆ.

***

ನೀವು ನಿಮ್ಮ ಜೀವನದಲ್ಲಿ ಇದುವರೆಗೆ ರೆಡಿಯೋ ಅನ್ನು ಕಿವಿಗೆ ಆನಿಸಿಕೊಂಡು ಕ್ರಿಕೆಟ್ ಕಾಮೆಂಟರಿ ಕೇಳಿರದಿದ್ದರೆ, ಹಾಗೆ ಮಾಡಿದವರನ್ನು ನೋಡಿರದಿದ್ದರೆ ಈ ಲೇಖನವನ್ನು ನೀವು ಅಪ್ರಿಶಿಯೇಟ್ ಮಾಡ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಅಂತರಾಳದ ಪ್ರಶ್ನೆಯೊಂದಕ್ಕಂತೂ ಇಂದು ಉತ್ತರ ಸಿಕ್ಕಂತಾಗಿದೆ.

ಭಾರತೀಯರು ಬಹಳ imaginative ಅನ್ನೋದು ನಿಜವಲ್ಲದೇ ಇನ್ನೇನು?! ತನ್ನಷ್ಟಕ್ಕೆ ತಾನೇ ಒಂದಿಷ್ಟು ಸೆಕೆಂಡುಗಳಿಗೊಮ್ಮೆ ರಿಫ್ರೆಶ್ ಆಗೋ ಕಂಪ್ಯೂಟರ್ ಪರದೇ ಮೇಲೆ ಅದ್ಯಾರೋ ವೇಗದಲ್ಲಿ ಟೈಪ್ ಮಾಡುತ್ತಿರುವ ಪುಣ್ಯವೆಂಬಂತೆ ನನ್ನ ಮತ್ತು ಕಂಪ್ಯೂಟರ್ ಪರದೆಯ ನಡುವಿನ ಜಾಗದಲ್ಲಿ ವಿಶ್ವ ಕ್ರಿಕೆಟ್ ಪಂದ್ಯವೊಂದು ಅವತರಿಸಿಕೊಳ್ಳುತ್ತಿದೆ. ಈ ಬಾಲ್ ಬೈ ಬಾಲ್ ಕಾಮೆಂಟರಿ, ಅದೂ ಟೆಕ್ಸ್ಟ್ ಮಾಧ್ಯಮದಲ್ಲಿ, ಇದನ್ನ ಅಮೇರಿಕನ್ ಮಾಧ್ಯಮದವರು ಊಹಿಸಿಕೊಳ್ಳುತ್ತಾರೋ ಇಲ್ಲವೋ, ನಾವಂತೂ ನಮ್ಮ ಮನಸ್ಸಿನಲ್ಲಿ ಅದೇನೇನೆಲ್ಲ ನಿರೀಕ್ಷೆಗಳನ್ನು ಕಲ್ಪಿಸಿಕೊಂಡು ಇಡೀ ಮ್ಯಾಚ್ ಅನ್ನೇ ನಮ್ಮ ಮುಂದೆ ತಂದುಕೊಳ್ಳುತ್ತೇವೆ. ಅಗತ್ಯಕ್ಕೆ ತಕ್ಕಂತೆ (ಇಂದಿಗೂ) ನಮ್ಮ ಎದೆ ಬಡಿತ ಹೆಚ್ಚುವುದು ಅಥವಾ ಕಡಿಮೆ ಆಗುವುದು ಇವೆಲ್ಲ ಇಂದು ನಿನ್ನೆಯ ವಿಶೇಷವೇನೂ ಅಲ್ಲ, ಅಲ್ಲವೇ?

***

Dish Network ನವರಿಗೆ 150 ಡಾಲರ್ ಕೊಟ್ಟು ವರ್ಷದ Z-Sports ಚಾನೆಲ್ ಹಾಕಿಸಿಕೊಂಡು ಮನೆಯ ಟಿವಿಯಲ್ಲಿ ಮ್ಯಾಚ್‌ಗಳನ್ನು ನೋಡೋದರಲ್ಲಿ ಮಜವಿದ್ದಿರಬಹುದು, ಅದು ಇನ್ನೂ ನನ್ನ ಮನಸ್ಸನ್ನ ಗೆದ್ದಿಲ್ಲ. ಟ್ವೆಂಟಿ-ಟ್ವೆಂಟಿ ಅಂಥಹ ಮ್ಯಾಚ್‌ಗಳನ್ನಾಗಲೀ, ವರ್ಲ್ಡ್ ಕಪ್ ಪಂದ್ಯಗಳನ್ನಾಗಲೀ ಇಲ್ಲಿನ ಸಿನಿಮಾ ಪರದೆಯ ಮೇಲೆ ನೋಡುವಷ್ಟು ದೂರವಂತೂ ಈ ವರೆಗೂ ಹೋಗಿದ್ದಿಲ್ಲ. ಆದರೆ ಅಪರೂಪಕ್ಕೊಮ್ಮೆ ಹೀಗೆ ಶನಿವಾರವೋ ಭಾನುವಾರವೋ ಬೇಗನೆ ಎದ್ದು ಸ್ಕೋರ್ ಕಾರ್ಡ್ ಅನ್ನು ನೋಡಿಕೊಂಡೋ ಅಥವಾ ಮ್ಯಾಚ್ ಬಗ್ಗೆ ಬರುವ ವರದಿ-ಚಿತ್ರಗಳನ್ನು ನೋಡಿಕೊಂಡೊ ತೃಪ್ತಿಪಟ್ಟುಕೊಂಡಿದ್ದಿದೆ.

ವಿಶೇಷವೆಂದರೆ ಅಮೇರಿಕದಲ್ಲಿ ಇಷ್ಟೊಂದು ವರ್ಷಗಳಿದ್ದಿರೂ ನಾನು ಇಲ್ಲಿನ ಬೇಸ್‌ಬಾಲ್, ಫುಟ್‌ಬಾಲ್ ಮ್ಯಾಚ್‌ಗಳನ್ನು ಟಿವಿ ಮೇಲಾಗಲಿ, ಲೈವ್ ಆಗಲಿ ನೋಡಿದ್ದೇ ಅಪರೂಪವೆನ್ನಬಹುದು. ನಾನು ಈವರೆಗೆ ನೋಡಿರೋದು ಒಂದೇ ಒಂದು ಸೂಪರ್ ಬೋಲ್, ಅದೂ ಎಷ್ಟೋ ವರ್ಷಗಳ ಹಿಂದೆ. ಯಾಕೆ ಹೀಗೆ ಎಂದು ಕೇಳಿಕೊಂಡಾಗಲೆಲ್ಲ ಉತ್ತರ ಸಿಕ್ಕಿರೋದರ ಪ್ರಕಾರ ಇಲ್ಲಿನ ನಮ್ಮ ಆಟ ರಹಿತ ಬದುಕೋ, ನಮಗೆ ಗೊತ್ತಿರದ ರುಚಿಸದ ಪಂದ್ಯಗಳೋ, ಇವಕ್ಕೆಲ್ಲ ಇನ್ನೂ ಹೆಚ್ಚು ಎನ್ನುವಂತೆ ವರ್ಷದ ಆರು ತಿಂಗಳ ಛಳಿಯೋ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ. ಬೇಸಿಗೆಯಲ್ಲಿ ನಮ್ಮಲ್ಲಿ ಕ್ರಿಕೆಟ್ ಆಡುವ ಟೀಮುಗಳಿವೆ, ಅಲ್ಲಿಗೆ ಹೋಗಿ ಬಂದು ಮಾಡೋಣವೆಂದುಕೊಂಡರೆ ಲಾಜಿಸ್ಟಿಕ್ ಸಮಸ್ಯೆ - ಆಟಕ್ಕೋಸ್ಕರ ಒಂದು ಇಡೀ ದಿನವೇ ಹಾಳಾಗಿ ಹೋದೀತೇನೋ ಎನ್ನುವ ಹೆದರಿಕೆ.

***

ನಾವೂ ಅಮೇರಿಕನ್ ಆಗಿ ಬಿಡಬಹುದು - ಹೇಳಿದಷ್ಟಂತೂ ಸುಲಭವಿಲ್ಲ. ಬುದ್ಧಿವಂತರ ಮಾತಿನ ನಡುವೆ ಕ್ರಿಕೆಟ್ ಆಟವೆನ್ನುವುದು ಸೋಮಾರಿಗಳ ಆಟವೆಂದು ನಾನು ವಾದಿಸಿದ್ದೇ ಬಂತು. ಸಮಯ ಸಿಕ್ಕಾಗಲೆಲ್ಲ ಆನ್‌ಲೈನ್ ಪೋರ್ಟಲುಗಳಲ್ಲಿ ಅಲ್ಲಲ್ಲಿ ಕಣ್ಣು ವಿಷಯಗಳಿಗಾಗಿ ಹುಡುಕುತ್ತಲೇ ಇರುತ್ತದೆ. ಇತ್ತೀಚಿನ ಆಟಗಾರರ ಜೊತೆ ನಾನು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಹೋಲಿಸಿಕೊಳ್ಳದಿರಬಹುದು, ಅವರ ಹೆಸರು, ಚಿತ್ರಗಳು ಗುರುತಿಗೆ ಬರದಿರಬಹುದು, ಆದರೆ ಆ ಆಟದಲ್ಲಿ ಅದೇನೋ ಜೀವಂತಿಕೆ ಇದೆ ಅನ್ನಿಸಿದ್ದು ಸುಳ್ಳಲ್ಲ. ಐದು ದಿನಗಳ ಟೆಸ್ಟ್ ಪಂದ್ಯಗಳನ್ನು ನೋಡುವಷ್ಟರ ಮಟ್ಟಿಗೆ ನನ್ನಲ್ಲಿ ವ್ಯವಧಾನವಿಲ್ಲದಿದ್ದರೂ ಅದರ ಸಾರಾಂಶವನ್ನು ಅದು ನಿಮಿಷ ಓದುವಷ್ಟು ಆಸಕ್ತಿಯಿದೆ. ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅದ್ಯಾರು ನೋಡುತ್ತಾರಪ್ಪಾ ಎನ್ನಿಸಿದ್ದರೂ ಈಗ ಅವುಗಳಲ್ಲಿ ಸಾಕಷ್ಟು ಒಲವಿದೆ, ಜೊತೆಗೆ ಇತ್ತೀಚಿನ ಟ್ವೆಂಟಿ-ಟ್ವೆಂಟಿ ಅಂತೂ ವೇಗವಾಗಿ ಆಡಬಹುದಾದ ಆಟ ಅನ್ನಿಸಿದೆ.

ನನ್ನ ಸಮ ವಯಸ್ಕ ತೆಂಡೂಲ್ಕರ್ ಇನ್ನೂ ಜೀವಂತವಾಗೇ ಇದ್ದಾನೆ, 65 ಬಾಲ್‌ಗಳಲ್ಲಿ 60 ರನ್‌ಗಳನ್ನು ಸಾಧಿಸಿಕೊಂಡು ಮಾಥ್ಯೂ ಹೇಡನ್‌ಗೆ ಸರಿ ಸಮಾನವಾಗಲಿದ್ದಾನೆ ಎನ್ನೋದು ಈಗ ನಡೀತಾ ಇರೋ ಪಂದ್ಯದಲ್ಲಿ ಒಂದಿಷ್ಟು ಕುತೂಹಲವನ್ನಂತೂ ಇಟ್ಟುಕೊಂಡಿದೆ. ಹೊಸಬರು ಯಾರು ಯಾರೋ ಬಂದು ಹೋದರೂ ನನಗೆ ನನ್ನ ಪರಿಚಯದ anchor ಸಿಕ್ಕೋದನ್ನು ನಾನು ಕಾಯ್ತಾ ಇರ್ತೀನಿ. ರಾಹುಲ್ ಡ್ರಾವಿಡ್, ಕುಂಬ್ಳೆ ಅವರನ್ನೆಲ್ಲ ಮತ್ತೊಮ್ಮೆ ನಾನು ಪರದೆಯಲ್ಲಿ ನೋಡ್ತೀನೋ ಬಿಡ್ತೀನೋ, ತೆಂಡೂಲ್ಕರ್ ’ಔಟ್’ ಆಗೋವರೆಗೆ ಇನ್ನೂ ಈ ಕ್ರಿಕೆಟ್ಟಿನಲ್ಲಿ ಜೀವವಿದೆ ಅನ್ನಿಸೋದು ಈ ಹೊತ್ತಿನ ತತ್ವಗಳಲ್ಲೊಂದು.

ಅದೇ ವಿಶೇಷ ನೋಡಿ - ಎಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೋ ಅಲ್ಲಿ ಆಸಕ್ತಿ ತಂತಾನೇ ಬಂದೀತು, ನಾವೂ ಅಲ್ಲಿಯವರಾದೇವು.

Sunday, February 24, 2008

ಬೆಂಕಿ-ಉರಿ-ಬೆಳಕು

ಅಗ್ಗಿಷ್ಟಿಕೆಯಲ್ಲಿ (fireplace) ಬೆಂಕಿ ನಿಗಿ ನಿಗಿ ಉರಿತಾ ಉರಿತಾ ಇರೋ ಹೊತ್ತಿಗೆ ನಾನು ಕುಳಿತುಕೊಂಡ ಜಾಗೆಯೆಲ್ಲ ಗರಂ ಆಗಿ ಹೋಗಿತ್ತು. ಬಹಳ ದಿನಗಳ ನಂತರ ಕಟ್ಟಿಗೆ ಸುಟ್ಟು ಬೂದಿ ಆಗಿ ಬೆಂಕಿ ಸಂಪೂರ್ಣ ಆರಿ ಹೋಗುವ ಕಾಯಕವನ್ನು (process) ಅನ್ನು ನೋಡೋದಕ್ಕೆ ಒಂದು ರೀತಿ ಚೆನ್ನಾಗಿತ್ತು. ನಿಧಾನವಾಗಿ ಯಾರೋ ಹೇಳಿಕೊಟ್ಟು ಹೋಗಿದ್ದಾರೆ ಅನ್ನೋ ಹಾಗೆ ಘನವಾದ ಕಟ್ಟಿಗೆ ಉರಿದು, ಬೆಂಕಿಯಾಗಿ ಕೆಂಪು ಕೆಂಡವಾಗಿ ಮುಂದೆ ಬಿಳಿ ಬೂದಿಯಾಗಿ ಹೋಗೋದು ಈ ಭಾನುವಾರದ ಸಂಜೆಯ ಮಟ್ಟಿಗೆ ಅದೊಂದು ವಿಸ್ಮಯವೇ ಅನ್ನಿಸಿದ್ದು ಹೌದು. ಮೊದಲೆಲ್ಲ ಬಚ್ಚಲ ಒಲೆಗೆ ದರಲೆ ತುಂಬುವಾಗ ನಮ್ಮ ಮುಗ್ಧ ಮನಸ್ಸಿನಲ್ಲಿ ಅದೇನೇನೋ ಅನ್ನಿಸದ ವಿಷಯ ವಸ್ತುವೆಲ್ಲ ಒಂದು ರೀತಿ ಬೆಂಕಿ ಹೊತ್ತಿ ಹೊಮ್ಮಿಸಿದ ಹೊಗೆಯ ಹಾಗೆ ಮನದಲ್ಲಿ ಎದ್ದುಕೊಂಡಿದ್ದವು. ಎಷ್ಟೇ ಪ್ರಭಲವಾಗಿ ಉರಿದರೂ ಬೆಂಕಿಯಿಂದ ಬೆಳಕಾಗದು ಎಂದು ಎನ್ನಿಸಿದ್ದು ಅಂತಹ ಶುಷ್ಕ ಮನಸ್ಸಿನ ವೇದಾಂತಗಳಲ್ಲೊಂದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಬೆಂಕಿಯ ಜೊತೆಗಿನ ಬೂದಿ ಬೆಳಕಿನ ಬಗ್ಗೆ ಮಾತನಾಡುವ ಬದಲು, ಈ ಬೆಂಕಿ ಉರಿಯುತ್ತಿರುವಾಗ ನಾನು ಮೊದಲಿನಿಂದಲೂ ಮಾಡಿಕೊಂಡಿದ್ದ ಅಂಶವೊಂದು ಗಮನಕ್ಕೆ ಬಂತು - ಬೆಂಕಿಯು ಹತ್ತಿ ಉರಿದಂತೆಲ್ಲಾ ಕಟ್ಟಿಗೆ ತುಂಡುಗಳನ್ನು ಒಂದಕ್ಕೊಂದು ತಾಕಿಸಿ ಕೂಡಿಟ್ಟು ಮತ್ತೆ ಅವುಗಳ ನಡುವೆ ಜ್ವಾಲೆ ಹೆಚ್ಚುವಂತೆ ಮಾಡುವುದು. ಎಷ್ಟೇ ಜೋರಾಗಿ ಬೆಂಕಿ ಉರಿಯುತ್ತಲಿದ್ದರೂ ಒಮ್ಮೆ ಒಂದು ಕಟ್ಟಿಗೆಯ ಅಡ್ಡವಾಗಿ ಮತ್ತೊಂದು ಕಟ್ಟಿಗೆ ಬಾರದೇ ಹೋದರೆ, ಅಥವಾ ಅಡ್ಡ ಕಟ್ಟಿಗೆ ಉರಿಯುವುದು ನಿಂತರೆ ಈ ಕೂಡಿಟ್ಟ ಕಟ್ಟಿಗೆಗಳ ಮಗ್ಗಲು ಬದಲಾಯಿಸುವುದು ಅನಿವಾರ್ಯ, ಇಲ್ಲವೆಂದರೆ ಬೆಂಕಿ ಆರಿ ಹೋದೀತು, ಇಲ್ಲವಾದರೆ ನಿಧಾನವಾಗಿ ಉರಿದು ಕಾವೇ ಬಾರದೇ ಹೊಗೆಯೇ ಹೆಚ್ಚಾದೀತು.


***

ಅನ್ನ, ಪ್ರಾಣ, ಜ್ಞಾನ, ವಿಜ್ಞಾನ, ಆನಂದಗಳೆಂಬ ಹಂತಗಳನ್ನು ನಮ್ಮ ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಯಾರೂ ಬೇಕಾದರೂ ವಿವರಿಸಬಲ್ಲರು. ಒಂದಿಷ್ಟು ಜನರು ದಿನನಿತ್ಯದ ವಿಷಯದಲ್ಲಿ ಅನ್ನ-ಪ್ರಾಣಗಳ ಸಲುವಾಗಿ ದುಡಿದು-ಬಡಿದಾಡಿ-ಕಾದಾಡಿಕೊಂಡರೆ, ಇನ್ನೊಂದಿಷ್ಟು ಜನರಿಗೆ ಅನ್ನ-ಪ್ರಾಣಗಳು ದೇವರು ಕೊಟ್ಟ ವರವಾಗಿ, ಅವರ ಕಷ್ಟ-ನಷ್ಟಗಳೇನಿದ್ದರೂ ಜ್ಞಾನ-ವಿಜ್ಞಾನಕ್ಕೆ ಮೀಸಲಾದವು. ಇನ್ನು ಕೆಲವೇ ಕೆಲವು ಜನರು ಮುಂದೆ ಹೋಗಿ ಬದುಕನ್ನು ಆಳವಾದ ಆನಂದವನ್ನು ಪಡೆಯುವುದಕ್ಕೆ ಮೀಸಲಾಗಿಟ್ಟಿರುವುದು ನಮಗೆಲ್ಲರಿಗೂ ಜನಜನಿತ. ಇದನ್ನೇ Maslow's hierarchy of needs ಎಂದಾದರೂ ಕರೆದುಕೊಳ್ಳಲಿ, ಅಥವಾ High Performance Business Program ಎಂದಾದರೂ ಕರೆದುಕೊಳ್ಳಲಿ. ವ್ಯಕ್ತಿ ಅಥವಾ ಸಂಸ್ಥೆಗಳು ಸಾವಿರಾರು ವರ್ಷದಿಂದ ಮಾಡಿದ್ದನ್ನೇ, ಅಥವಾ ಬಲ್ಲದ್ದನ್ನೇ ಬೇರೆ ಪದಗಳಲ್ಲಿ ಬಣ್ಣಿಸಿಯೋ ಅಥವಾ ಅವರದ್ದೇ ಆದ ಮಸೂರದಲ್ಲಿ ತೋರಿಸಿಯೋ ಯಾವುದೋ ಒಂದು ರೀತಿಯಲ್ಲಿ ಹೊಸ ಹೊಸ ವಿವರಣೆಗಳು, ಅನ್ವೇಷಣೆಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ ಕೆಲವೊಮ್ಮೆ ಅವುಗಳನ್ನು ಕುರಿತು ಓದಲು ತೊಡಗಿದರೆ.

ಓಹ್ ನಮ್ಮದೇನು ಸಾವಿರಾರು ವರ್ಷಗಳ ಇತಿಹಾಸ ಇರುವಂಥದ್ದು ಎಂದು ನಾವು ಸುಮ್ಮನೇ ಕೂರುವಂತೂ ಇಲ್ಲ. ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಅಥವಾ ದೇಶವಾಗಲೀ ಮುಂದಾಳತ್ವದ ದೃಷ್ಟಿಯಿಂದ ಇಂದು ಏನೇನು ಚೆನ್ನಾಗಿ ನಡೆಯುತ್ತಿದೆಯೋ ಅದನ್ನು ಬಿಟ್ಟು ಇನ್ನು ಏನು ಚೆನ್ನಾಗಿ ನಡೆಯಬೇಕು ಎಂದು ಯೋಚಿಸುವುದು, ಯೋಚಿಸಿ ಕಾರ್ಯತಂತ್ರವನ್ನು ರೂಪಿಸಿ ಹಾಗೆ ನಡೆಯುವುದೇ ಇಂದಿನ ದಿನಗಳ ಸವಾಲು. ಪ್ರಪಂಚದ ಯಾವುದೋ ಒಂದು ದೇಶದ ಜನರು ಉಳಿದೆಲ್ಲರನ್ನು ಆಳುವ ಕಾಲ ದೂರವಾಗಿ ಅಲ್ಲಲ್ಲಿ ಕ್ರಮೇಣ ಬಲಿಷ್ಠ ರಾಷ್ಟ್ರಗಳು ಹುಟ್ಟಿಕೊಳ್ಳುವ ಬೆಳವಣಿಗೆಯ ದೃಷ್ಟಿಯಿಂದಂತೂ ಇಂದು ಬೆಳೆಯುತ್ತಿರುವ ಪ್ರತಿಯೊಂದು ರಾಷ್ಟ್ರಗಳು ಮುಬರುವ ನಾಳೆಗಳ ಕುರಿತು ಯೋಚಿಸಿ ಯಾವುದೋ ಒಂದು ತಂತ್ರವನ್ನು ಅನುಸರಿಸುತ್ತ ಹಾಗಿರುವಂತೆ ತೋರುತ್ತದೆ ಇಂದಿನ ದಿನಗಳ ವಿದ್ಯಮಾನ.

ನಿನ್ನೆಯ ದಿನಗಳ ನೆರಳಲ್ಲಾಗಲೀ ಹಳೆಯ ಇತಿಹಾಸದಲ್ಲಾಗಲಿ ಕಲಿಯುವುದು ಬೇಕಾದಷ್ಟಿರಬಹುದು, ಆದರೆ ಅವುಗಳಿಂದ ಕಲಿಯುವವರು ಕಡಿಮೆಯೇ ಎನ್ನುವುದು ನನ್ನ ಅಂಬೋಣ. ಹಾಗಿಲ್ಲದೇ ಹೋದರೆ ಜಗತ್ತಿನಲ್ಲೇನು ದಿನವಿಡೀ ಹೊಸ ಮೂರ್ಖರು ಹುಟ್ಟುತ್ತಲೆಯೇ ಇರುತ್ತಾರೆಯೇನು? ಅವರಿವರು ಮಾಡಿದ್ದನ್ನು ನಾವೂ ನೋಡಬೇಕು, ಹಳೆಯದೆಲ್ಲವನ್ನು ನಾವೂ ತಿಳಿಯಬೇಕು ಎನ್ನುವುದರ ಹಿಂದೆ ಇರುವ ತತ್ವವೇ ಅದರಿಂದೇನಾದರೊಂದಿಷ್ಟು ಕಲಿಯಬೇಕು ಎಂಬುದು. ಆ ಕಲಿಕೆ ಇನ್ನಷ್ಟು ಹೆಚ್ಚಿ ವ್ಯವಸ್ಥಿತವಾದಷ್ಟು ಪ್ರತಿಯೊಬ್ಬರಿಗೂ ಒಳ್ಳೆಯದೇ. ನಿನ್ನೆ ನಡೆದ ಕಾರ್ಯತಂತ್ರಗಳು ಇಂದು ಹಳಸಲಾದಾವು, ಅವುಗಳು ಹಳೆಯದಾಗುವಷ್ಟರಲ್ಲೇ ಹೊಸದನ್ನು ಹುಡುಕಿಕೊಳ್ಳುವುದರಲ್ಲಿ ಸಮಯವನ್ನು ವ್ಯಯಿಸುವ ತಾರ್ಕಿಕತೆ ಎಷ್ಟೋ ಸಂಸ್ಥೆ, ದೇಶಗಳಲ್ಲಿರುವುದರಿಂದಲೇ ಅವು ತಾವು ಮಾಡುತ್ತಿರುವುದರಲ್ಲಿ ಮುಂದಿರುವುದು.

***

ಹೀಗೆ ಬರೆಯುತ್ತ ಹೋದ ಹಾಗೆ ಇಷ್ಟು ಹೊತ್ತು ಉರಿದು ಅಟ್ಟ ಹಾಸ ಬೀರುತ್ತಿದ್ದ ಜ್ವಾಲೆಯ ಆಟ ಸ್ವಲ್ಪ ಕಡಿಮೆಯಾಯಿತು. ನಾನು ಸುಮ್ಮನೇ ಇದ್ದರೆ ಇನ್ನು ಬೆಂಕಿ ಆರಿ ಹೋಗಿ ಕೊನೆಗೆ ಉಳಿಯುವುದು ಇತಿಹಾಸ ಸಾರುವ ಅರ್ಧ ಸುಟ್ಟ ಕಟ್ಟಿಗೆ ಬೊಡ್ಡೆಗಳ ಅವಶೇಷ ಮಾತ್ರ. ಕಾಲದ ಸ್ವರೂಪದಲ್ಲಿ ಇತಿಹಾಸವನ್ನು ಬಿಂಬಿಸುವ ಈ ಬೊಡ್ಡೆಗಳ ಅವಶೇಷ ಮುಂಬರುವವರಿಗೆ ಯಾವುದೋ ಒಂದು ಪಾಠವನ್ನು ಕಲಿಸೀತು ಎನ್ನುವ ಹುಮ್ಮಸ್ಸಿನಿಂದ ನಾನು ಅವುಗಳನ್ನು ಹಾಗೆಯೇ ಬಿಡಬಹುದು. ಅಥವಾ ಉರಿಯುವ ತಾಕತ್ತು ಅವುಗಳಲ್ಲಿ ಇರುವವರೆಗೆ ನಾನು ಅವುಗಳನ್ನು ಮುಂದೂಡುತ್ತಲೋ ಅಥವಾ ಬದಿಯಿಂದ ಬದಿಗೆ ತಿರುಗಿಸುತ್ತಲೋ ಅಥವಾ ಒಂದಕ್ಕೊಂದು ತಾಗಿಕೊಂಡೋ ಇರುವಂತೆ ಮಾಡಿ ಅವುಗಳಲ್ಲಿದ್ದ ಶಕ್ತಿಯನ್ನು ಉರಿಯ ರೂಪದಲ್ಲಿ ಹೊರತೆಗೆದು ಬಿಡಬಹುದು. ಈ ಬದಲಾವಣೆಯ ಸಮಯ ಹೆಚ್ಚು ಹೊತ್ತು ಇರಲೊಲ್ಲದು, ಆದಷ್ಟು ಬೇಗ ಅರ್ಧ ಉರಿದ, ಅಲ್ಲಲ್ಲಿ ಉರಿಯುತ್ತಲ್ಲಿದ್ದ ಬೊಡ್ಡೆಗಳನ್ನು ಇನ್ನಷ್ಟು ಮುಂದೆ ತಳ್ಳುತ್ತೇನೆ. ಅವು ತಾವೇ ಸುಟ್ಟುಕೊಂಡು ಹೋಗುತ್ತಿದ್ದರೂ ಅದ್ಯಾವುದೋ ಕಷ್ಟದಿಂದ ಅವುಗಳನ್ನು ದೂರ ಸರಿಸಿದೆನೆಂದೋ ಇಲ್ಲಾ ಈಗಿನ ಮಟ್ಟಿಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಬಳಸಿದೆನೆಂದೋ ಒಂದು ರೀತಿಯ ಕೃತಜ್ಞತೆಯನ್ನು ಸ್ಪುರಿಸತೊಡಗುತ್ತವೆ, ಅದೇ ಖುಷಿಯಲ್ಲಿ ತಮ್ಮಲ್ಲಡಗಿದ ಯಾವುದೋ ಅವ್ಯಕ್ತ ಶಕ್ತಿಯ ಹುರುಪಿನಲ್ಲಿ ಗುರ್ರ್ ಗುರ್ರು ಎಂದು ಎಲ್ಲಾ ಕಡೆ ಜ್ವಾಲೆಯನ್ನು ಹತ್ತಿಸಿ ಆ ಕಾಲಕ್ಕಾದರೂ ಬೆಳಕು ಹಾಗೂ ದಗೆಯನ್ನು ಹರಡುತ್ತವೆ. ಉರಿಯುವ ಕೊಳ್ಳಿಗಳು ತಮ್ಮ ತಮ್ಮಲ್ಲಿ ತಡಕಾಡಿಕೊಂಡಾಗಲೇ ಜ್ವಾಲೆ ಹೆಚ್ಚಾಗುವುದೆಂದಾದರೆ ಹಾಗೆಯೇ ಆಗಲಿ.

Sunday, February 17, 2008

ಇಲ್ಲಿಗೂ ಅಲ್ಲಿಗೂ ಏನೂ ವ್ಯತ್ಯಾಸವಿಲ್ಲಾ ಅಂತಂದ್ರೆ...

ಇನ್ನೇನು ಸೂರ್ಯ ಹುಟ್ಟಿ ಜಗತ್ತನ್ನ ಬೆಳಗಬೇಕು ಅನ್ನೋ ಸೂಚನೆಗಳು ಸಿಕ್ಕೊಡನೆ ನಮ್ಮನೇ ಮೂಲೆಯಲ್ಲಿರೋ ಮಲ್ಲಿಗೆ ಗಿಡಗಳ ಎಲೆಗಳ ಮುಖದಲ್ಲಿ ಒಂದು ಮಂದಹಾಸ ಮಿನುಗ ತೊಡಗಿತು. ಅನತಿ ದೂರದಲ್ಲಿ ಮೋಡ ಮತ್ತು ಖಾಲಿ ಆಕಾಶಗಳ ನಡುವೆ ಅದೇ ತಾನೇ ಜಗತ್ತಿಗೆ ತನ್ನನ್ನು ಸಾರಿಕೊಂಡು ಕೆಂಪನ್ನು ಸಾರುತ್ತಿರುವ ಕಿರಣಗಳು ಈ ಎಲೆಗಳ ಮೇಲೆ ಹನಿ ಹನಿ ಸೇರಿ ತೆಳುವಾಗಿ ಮಂಜು ಕಟ್ಟಿದ್ದ ಲೇಪನದಲ್ಲೂ ಪ್ರತಿಫಲನವಾಗತೊಡಗಿತು. ಇನ್ನೇನು ಸೂರ್ಯ ಜಗತ್ತಿಗೆ ಬಂದೇ ಬಿಟ್ಟ ಕತ್ತಲೆ ಅನ್ನೋದು ಹಾರಿ ಹೋಯ್ತು ಎಂದು ಈ ಮಲ್ಲಿಗೆಯಲ್ಲಿನ ಎಲೆಗಳು ಬೀಗಿದ್ದೇ ಬಂತು. ಅದೆಷ್ಟೋ ಹೊತ್ತಿನಿಂದ ಹನಿಹನಿ ನೀರಿನ ಪಸೆಯನ್ನು ತಮ್ಮ ಮೈಮೇಲೆ ಶೇಖರಿಸಿಕೊಂಡು ’ಸದ್ಯ, ಈಗಲಾದರೂ ಬಂದ ಸೂರ್ಯ!’ ಎಂದು ಉಸ್ಸ್ ಎಂದು ಉಸಿರು ಬಿಡುವಷ್ಟರಲ್ಲಿ, ಅದ್ಯಾವುದೋ ತಣ್ಣಗಿನ ಗಾಳಿಯೊಂದು ಬೀಸಿತೋ ಇಲ್ಲವೋ ಎನ್ನುವಂತೆ ಬಂದು ಹೋದಂತಾಗಿ ಎಲೆಗಳು ಸ್ವಲ್ಪ ನಲುಗಿದ್ದೇ ತಡ, ಅವುಗಳ ಮೇಲಿನ ನೀರಿನ ಪಸೆ ನಿಧಾನವಾಗಿ ಹನಿಯೊಂದಾಗಿ ಜಾರಿ ಮಣ್ಣಿಗೆ ಬಿದ್ದು ಹೋಗೋದೇ! ’ಛೇ’ ಎಂದು ಎಲೆಗಳೆಲ್ಲ ಒಮ್ಮೆ ಕಿರುಚಿಕೊಂಡು ಬೇಕೋ ಬೇಡವೋ ಎನ್ನುವಂತೆ ಗಾಳಿಗೆ ತಲೆ ಆಡಿಸತೊಡಗಿದವು. ’ಹೋಯ್ತಲ್ಲಪ್ಪಾ!’ ಎನ್ನುವ ರೋಧನ ಇನ್ನೂ ಕೇಳಿಬರುತ್ತಿತ್ತೋ ಏನೋ, ಅಷ್ಟರಲ್ಲಿ ದಿಗಂತದ ಗೆರೆಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಮೇಲೆದ್ದು ಬಂದ ಸೂರ್ಯನ ಕಿರಣಗಳು ಎಲೆಗಳ ಮುಖದ ಮೇಲೆ ಬಿದ್ದು, ಅವು ಹಸಿರು ಬಣ್ಣದವಿದ್ದರೂ ಅವನ್ನು ತನ್ನ ಕೆಂಪಿನಲ್ಲಿ ತೋಯಿಸಿಕೊಂಡವು. ಒಂದು ಕಡೆ ತಮ್ಮ ನೀರಿನ ಪಸೆಯನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ಅದ್ಯಾವುದೋ ಹೊಸದರ ಸಂಭ್ರಮ. ಎಲೆಗಳ ಕಸಿವಿಸಿ ಚೆನ್ನಾಗಿ ಅವುಗಳ ಮುಖದ ಮೇಲೆ ಹೊಸಬೆಳಕಿನಲ್ಲಿ ಗೋಚರಿಸತೊಡಗಿತ್ತು. ಇದು ಯಾವುದೂ ತನಗೆ ಗೊತ್ತಿಲ್ಲ, ತನ್ನ ಹೊನ್ನ ಕಿರಣಗಳು ಎಲ್ಲೆಲ್ಲೋ ಹರಡಿ ಅವು ಏನೇನನ್ನೋ ಕಂಡುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎನ್ನುವ ಧೋರಣೆ ತಳೆದ ಸೂರ್ಯ ಒಂದಿನಿತೂ ಎಲ್ಲೂ ನಿಲ್ಲುವಂತೇನೂ ತೋರಲಿಲ್ಲ.

***

’ಯಾಕೋ ಬೇಜಾರ್ ಮಾಡ್ಕೊಂಡಿದಿಯಾ?’ ಎಂದೆ.

’ಏನಿಲ್ಲ, ಇಲ್ಲಿದ್ರೆ ಅಲ್ಲೀ ಯೋಚ್ನೆ, ಅಲ್ಲಿದ್ರೆ ಇಲ್ಲೀ ಯೋಚ್ನೆ...’

’ಏಕೆ, ಇತ್ತೀಚೆಗಷ್ಟೇ ಅಲ್ವೇ ನೀನು ಅಮೇರಿಕ ಬಿಟ್ಟು ಇಂಡಿಯಾಕ್ ಹೋಗಿದ್ದು? ಎಲ್ಲ ಸುಖವಾಗಿರಬೇಕಲ್ಲ’.

’ಅದೇ, ಸುಖವಾಗೇನೋ ಇದೀನಿ. ಆದ್ರೆ...’

’ಆದ್ರೆ ಏನು?’

’ಏನಿಲ್ಲ, ಇಲ್ಲಿಗೆ ಹಿಂತಿರುಗಿದಂದಿನಿಂದ ನನಗೆ ಆರೋಗ್ಯನೇ ಅಷ್ಟೊಂದು ಸರಿಯಾಗಿಲ್ಲ ಕಣೋ. ಅದೇನ್ ಅಮೇರಿಕದಲ್ಲಿ ಸ್ವಚ್ಛತೆಯ ವಾತಾವರಣದಲ್ಲಿದ್ವೋ ಬಿಟ್ವೋ ಇಷ್ಟೊಂದು ವರ್ಷಾ, ಇಲ್ಲಿಗೆ ಬರ್ತಾ ಇದ್ದ ಹಾಗೆ ಪ್ರತಿದಿನವೂ ಬ್ಯಾಕ್ಟೀರಿಯಾ ವೈರಸ್ಸುಗಳ ವಿರುದ್ಧ ಸೆಣೆಸೋದೇ ಆಗಿದೆ ನೋಡು. ಒಂದಲ್ಲ ಒಂದು ರೀತಿಯ ಕಷ್ಟ, ನಾಲ್ಕು ದಿನ ನೆಟ್ಟಗಿದ್ರೆ ಇನ್ನು ನಾಲ್ಕು ದಿನ ಮಲಗಿರ್ತೀನಿ ಅನ್ನೋ ಹಾಗಿದೆ.’

’ಏ, ಇಂಡಿಯಾ ಅನ್ನೋ ವಾತಾವರಣದಲ್ಲೇ ಅಲ್ವೇ ನಾವು ಬೆಳೆದು ಬಂದಿರೋದು. ಮತ್ತೆ ಅಲ್ಲಿಗೆ ವಾಪಾಸ್ ಹೋಗಿ ಬದುಕೋದು ಯಾಕ್ ಕಷ್ಟಾ ಆಗುತ್ತೆ? ಈ ಪೊಲ್ಯೂಷನ್ನೂ ಮತ್ತಿನ್ನೊಂದು ಹಿಂದೆಯೂ ಇತ್ತು ಮುಂದೆಯೂ ಇರುತ್ತೆ ಅದರಲ್ಲೇನು ವಿಶೇಷ?’

’ಅಲ್ಲೇ ಇರೋದು ವಿಶೇಷ, ಈ ಪ್ರಪಂಚ ಬಹಳಷ್ಟು ಬೆಳೆದಿದೆ. ನಾವು ಹತ್ತು ವರ್ಷದ ಹಿಂದೆ ನೋಡಿದ ಪೊಲ್ಯೂಷನ್ನು ಇವತ್ತಿನ ಪೊಲ್ಯೂಷನ್ನಿಗೆ ಯಾವ ಹೋಲಿಕೆಯೂ ಅಲ್ಲ. ಜೊತೆಗೆ ಇಂದಿನ ಬೆಳೆದ ವಾತಾವರಣದಲ್ಲಿರೋ ಸ್ಟ್ರೆಸ್ಸೂ ಕಾರಣಾ ಅನ್ನು’.

’ಸ್ಟ್ರೆಸ್ಸೂ ಅಂದ್ರೆ...’

’ಅದೇ, ಬೆಳಿಗ್ಗೆ ಎಂಟು ಘಂಟೆಗೆ ಆಫೀಸಿಗೆ ಹೋದ್ರೆ ಸಂಜೆ ಎಂಟರ ಮೇಲಾಗುತ್ತೆ ಬರೋದು. ಈ ಟ್ರಾಫಿಕ್ ಜಾಮ್ ಅನ್ನೋ ನಕ್ಷತ್ರಿಕ ಯಾವನಿಗೂ ಬಿಡೋ ಹಾಗೇ ಕಾಣ್ಸಲ್ಲ. ದಿನಕ್ಕೆ ಒಟ್ಟಿಗೆ ಹದಿನಾಲ್ಕು ಘಂಟೆ ಒದ್ದಾಡೋದನ್ನ ವೃತ್ತಿ ಜೀವನ ಅಂತ ಕರೆಯೋದಕ್ಕೂ ಹೇಸಿಗೆ ಅನ್ಸುತ್ತೆ ನೋಡು. ಇಲ್ಲಿಗೆ ಬಂದು ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದುಕೊಂಡಿದ್ದ ಆಸೆಗಳೆಲ್ಲ ಬಲೂನಿಗೆ ಸೂಜಿ ಚುಚ್ಚಿದ ಹಾಗೆ ಠುಸ್ಸ್ ಎಂದು ಹೋದ್ವು. ಕೆಲವೊಂದು ಸರ್ತೀ ಅಂತೂ ಇಲ್ಲಿನ ಟ್ರಾಫಿಕ್ ಜಾಮಿಗೆ ಹೆದರಿ ಅಥವಾ ಅದನ್ನ ನೆನೆಸಿಕೊಂಡೇ ನಾನು ಎಷ್ಟೋ ಕಾರ್ಯಕ್ರಮಗಳಿಗೆ ಹೋಗೋದೇ ಇಲ್ಲ. ಅಲ್ಲಿಗೆ ಹೋದ್ರೂ ಪಾರ್ಕಿಂಗ್ ಮಾಡಿ ಗೆಲ್ತೀನೀ ಅಂತ ಇನ್ನೂವರೆಗೆ ನನಗೆ ಎಲ್ಲೂ ಖಾತ್ರಿ ಆಗಿದ್ದಿಲ್ಲ’.

’ಹೌದಾ, ಅಷ್ಟೊಂದು ಕಷ್ಟವೇ?’

’ಕಷ್ಟಾನಾ, ಇದಕ್ಕೆ ಕಷ್ಟಾ ಅಂತಂದ್ರೆ ಅದು ಒಂದು ಅಂಡರ್ ಸ್ಟೇಟ್‌ಮೆಂಟು’.

’ಅವೆಲ್ಲ ಇರ್ಲಿ, ಆಫೀಸ್ ವಾತಾವರಣ ಹೇಗಿದೆ?’

’ಇದರಲ್ಲಿ ಹೆಚ್ಚಿಗೆ ಬದಲಾದಂತೆ ಅನ್ಸಲ್ಲ, ಅವೇ ಮೈಂಡ್‌ಸೆಟ್ಟುಗಳು, ಜನರು ಎಲ್ಲೀವರೆಗೆ ಬದಲಾಗೋಲ್ವೋ ಅಲ್ಲೀವರೆಗೆ ಇದೇ ಪರಿಸ್ಥಿತಿ ಮುಂದುವರೆಯುತ್ತೆ. ರೆಡ್ ಟೇಪಿಸ್ಸಮ್ಮು, ಡರ್ಟೀ ಪಾಲಿಟಿಕ್ಸೂ ಅಂತ ಅಮೇರಿಕದಲ್ಲಿ ಕರಿಯರಿಗೆ-ಬಿಳಿಯರಿಗೆ ನಾನು ಬೈದುಕೊಂಡಿದ್ದೇ ಬಂತು, ಇಲ್ಲಿ ನಡೆಯೋ ರಾಜಕೀಯ ಅವಾಂತರಗಳನ್ನ ನೋಡಿದ್ರೆ ಅಲ್ಲೇ ಎಷ್ಟೋ ವಾಸಿ ಅಂತ ಅನ್ಸುತ್ತೆ’.

’ವಿದೇಶದಲ್ಲಿ ಇಷ್ಟೊಂದು ವರ್ಷ ಅನುಭವ ಇದೆ ಅಂತ್ಲೂ ನಮ್ಮಂತೋರಿಗೆ ಬೆಲೆ ಸಿಗೋದಿಲ್ವೇನು?’

’ಓಹ್ ಸಿಗುತ್ತೆ, ಯಾಕ್ ಸಿಗಲ್ಲ. ಆದ್ರೆ ನೀನು ಹತ್ತು ಅಂದ್ರೆ ಜನ ಇಪ್ಪತ್ತು ಅನ್ನೋರ್ ಸಿಕ್ಕೇ ಸಿಗ್ತಾರೆ ಎಲ್ಲ್ ಹೋದ್ರೂ. ಜೊತೆಗೆ ಕೇವಲ ಎಕ್ಸ್‌ಪೀರಿಯೆನ್ಸ್ ಅಳತೇ ಮೇಲೆ ನಿನಗೇನೂ ಸಿಗೋದಿಲ್ಲ, ಯಾವ ಅನುಭವ ಎಲ್ಲಿ ಹೇಗಿತ್ತು ಅನ್ನೋದರ ಮೇಲೆ ಬಹಳಷ್ಟು ನಿರ್ಧಾರವಾಗುತ್ತೆ’.

’ಅದೆಲ್ಲ ಇರ್ಲಿ, ಮನೆಯವ್ರು, ಮಕ್ಳಾದ್ರೂ ಆರಾಮಾಗಿದ್ದಾರಾ?’

’ಹ್ಞೂ, ಒಂದು ರೀತಿ ಅವರೇ ಅರಾಮಾಗಿರೋರು ನನಗಿಂತ. ಒಂದು ಕಾಲ್ದಲ್ಲಿ ಇಂಡಿಯಾ ಮುಖವನ್ನ ನೋಡದ ಮಕ್ಳು ಇಲ್ಲಿಗೆ ಹೊಂದಿಕೋತಾರಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಇವತ್ತು ಅವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದಾರೆ, ಕಷ್ಟಾ ಬಂದಿರೋದೇ ನನಗೆ ನೋಡು...

’ಅದೇನ್ ಅಂತಾ ಕಷ್ಟಾ?’

’ಅದೇ, ಅಮೇರಿಕದಲ್ಲೂ ಮೈ ತುಂಬಾ ಸಾಲಾ ಮಾಡ್ಕೊಂಡು ಮಾರ್ಟ್‌ಗೇಜ್ ಕೊಟಗಂಡು ಮನೆಯಲ್ಲಿದ್ವಿ, ಇಲ್ಲಿ ಬಂದು ನೋಡಿದ್ರೆ ಒಂದು ಸಾಧಾರಣ ಮನೆ ಕಟ್ಸೋಕೇ ಒಂದು ಕೋಟಿ ರೂಪಾಯ್ ಅಂತಾರೆ - ಕಾಲು ಮಿಲಿಯನ್ ಅಮೇರಿಕನ್ ಡಾಲರ್ ನನ್ಹತ್ರ ಇದ್ದಿದ್ರೆ ಇಷ್ಟೊತ್ತಿಗೆ ನಾನು ಇಲ್ಯಾಕ್ ಇರ್ತಿದ್ದೆ? ಜೊತೆಗೆ ಸೈಟ್ ಅಂತ ಒಂದು ಇದ್ರೆ ಪುಣ್ಯ, ಇಲ್ಲ ಅಂದ್ರೆ ಇನ್ನೊಂದು ಐವತ್ತು ಲಕ್ಷವಾದ್ರೂ ಹೋಗುತ್ತೆ. ಎಲ್ಲಿಂದ ತರೋದು ಇಷ್ಟೊಂದು ದುಡ್ಡು? ಅದಕ್ಕೇ ಇಲ್ಲಿನ ಬ್ಯಾಂಕುಗಳ ಮೊರೆ ಹೋಗಿ ಮೈ ತುಂಬಾ ಸಾಲಾ ಮಾಡ್ಕೊಂಡಿದ್ದೀನಿ. ಅದರ ಫಲವೇ ನನ್ನ ಅಹರ್ನಿಶಿ ದುಡಿಮೆ, ಹೀಗೇ ಸಾಲಾ-ದುಡಿಮೆಯ ಚಕ್ಕರದಲ್ಲಿ ಮುಳುಗಿ ಹೋಗಿದ್ದೇನೆ ನೋಡು’.

’ಅಷ್ಟೊಂದು ವರ್ಷ ಅಮೇರಿಕದಲ್ಲಿದ್ರೆ ಸ್ವಲ್ಪವೂ ದುಡ್ಡು ಹುಟ್ಟೋಲ್ವೇ, ಉಳಿಯೋಲ್ವೇ?’

’ಇರುತ್ತೆ ಯಾಕಿಲ್ಲ? ಅವುಗಳೆಲ್ಲ ಒಂದಲ್ಲ ಒಂದು ಕಡೆ ಈಗಾಗ್ಲೇ ತೊಡಗಿಕೊಂಡಿರುತ್ತೆ, ಇಲ್ಲಾ ಅಂತಂದ್ರೂ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲಿಡಬೇಕು ಅಂತಂದ್ರೆ ಅಮೇರಿಕದಲ್ಲಿ ಪೇ ಚೆಕ್ ನಿಂದ ಪೇ ಚೆಕ್ ಗೆ ದುಡಿಯೋರ್ ಹತ್ರ ಕಷ್ಟ ಸಾಧ್ಯವೇ ಸರಿ. ಏನೇ ಅಂದ್ರೂ ಮಿಲಿಯನ್ ಡಾಲರ್ ಯಾವನ ಹತ್ರ ಇದೆ ನೀನೇ ಹೇಳು’.

’ಮತ್ತೇ, ಅಮೇರಿಕದಲ್ಲಿರೋರು ಇಂಡಿಯಾಕ್ ಬರ್ತೀವಿ ಅಂತಂದ್ರೆ ನೀನ್ ಅವರಿಗೆ ಹೇಳೋದೇನಾದ್ರೂ ಇದೆಯೇನು?’

’ಶೂರ್, ದಿನಕ್ಕೆ ಹದಿನಾಲ್ಕು ಘಂಟೆ ದುಡಿದು ಸಾಲದ ಚಕ್ಕರದಲ್ಲಿ ಬೀಳೋ ಹಾಗಿದ್ರೆ ನೀವ್ ಎಲ್ಲಿರ್ತೀರೋ ಅಲ್ಲೇ ಇರ್ರಿ, ಅದರ ಬದ್ಲಿ ಒಂದು ಸಣ್ಣ ಊರಲ್ಲಿ ಒಂದು ಉದ್ಯಮವನ್ನ ಶುರು ಹಚ್ಚಿಕೊಂಡು ನಿಮಗೆ ನೀವೇ ಬಾಸ್ ಆಗೋ ಹಾಗಿದ್ರೆ ಇಲ್ಲಿಗೆ ಬನ್ನಿ! ಇಲ್ಲೂ-ಅಲ್ಲಿಗೂ ಏನೂ ವ್ಯತ್ಯಾಸವಿಲ್ಲ ಅನ್ನೋದು ಒಳ್ಳೆಯದೋ ಕೆಟ್ಟದ್ದೋ ಅನ್ನೋದೂ ಅವರವರಿಗೆ ಬಿಟ್ಟಿದ್ದು ಅಂತ್ಲೂ ಹೇಳ್ತೀನಿ.

’ಮತ್ತೇ, ಎಲ್ರೂ ಬೆಂಗಳೂರಿಗೇ ಬರ್ತಾರೇ ಅಂತ ಕೇಳ್ದೆ...’

’ಅದೂ ನಿಜವೇ, ಎಲ್ರೂ ಇಲ್ಲೇ ಬಂದು ಸಾಯೋದ್ರಿಂದ್ಲೇ ಬೆಂಗಳೂರಿನವರಾದ ನಮಗೆ ಈ ಕಷ್ಟ ಬಂದಿರೋದು...ನನ್ನ ಕೇಳಿದ್ರೆ ಇಂಡಿಯಾದಲ್ಲಿ ಬೇರೆ ಊರುಗಳೇ ಇಲ್ವೇ, ಅಲ್ಲಿಗೆ ಹೋಗ್ಲಿ’ .

***

ನಮ್ಮನೆಯ ಮಲ್ಲಿಗೆಯ ಗಿಡದ ಎಲೆಗಳು ಇಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಬಲಿತ ಸೂರ್ಯ ರಶ್ಮಿಯಲ್ಲಿ ತೋಯ್ದು ಹೋಗಿದ್ದವು. ಗಾಳಿ ಬೀಸುತ್ತೆ ಬೆಳಕು ಬೀಳುತ್ತೆ ಮೈ ಮೇಲೆ ಮಂಜು ಕೂರುತ್ತೆ, ಅದು ನಿಸರ್ಗ ನಿಯಮ ಅನ್ನೋ ಉಪದೇಶ ಸಾರುವ ಮುಖವನ್ನು ಮಾಡಿಕೊಂಡಿದ್ದವು. ಅವುಗಳ ವೈರಾಗ್ಯ ಮನಸ್ಸಿನ ನೆರಳಿನಲ್ಲಿ ಇವತ್ತಲ್ಲ ನಾಳೆ ಎಲ್ಲವೂ ಸರಿ ಹೋಗೇ ಹೋಗುತ್ತೆ ಎನ್ನುವ ಛಾಯೆ ಕಂಡು ಬರುತ್ತಿತ್ತು. ಅದನ್ನ ಆಶಾಭಾವನೆ ಅನ್ನೋಣವೇ ಅಥವಾ ಬದುಕಿನ ಯೋಜನೆ ಎಂದು ಕರೆದುಕೋಳ್ಳೋಣವೇ ಎಂದು ಎಲೆಗಳ ನಡುವೆ ಇನ್ನೇನು ವಾದ ಏಳುವ ಹುರುಪು ಕಂಡುಬರುತ್ತಿತ್ತು.

Sunday, February 10, 2008

ಮೌನದ ಮೊರೆ

ಇತ್ತೀಚಿನ ದಿನಗಳನ್ನ ವೇಗಮಯ ದಿನಗಳು ಎಂದು ಕರೆದುಕೊಂಡರೆ - ನಮ್ಮ ಮುಂದುವರೆದ ಟೆಕ್ನಾಲಜಿ, ಎಲ್ಲವೂ ಈ ಕೂಡಲೇ ಬೇಕು ಎನ್ನುವ ಮನಸ್ಥಿತಿಯ ಹಿನ್ನೆಲೆಯಲ್ಲಿ - ಯಾರೂ ಮೌನಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡೋದಿಲ್ಲವೇ ಎಂದು ಎಷ್ಟೋ ಸಾರಿ ಅನ್ನಿಸಿದ್ದಿದೆ. ನಮ್ಮ ಆಫೀಸಿನಲ್ಲಿ ನಡೆಯುವ ಮುಖಾಮುಖಿ ಮೀಟಿಂಗುಗಳಲ್ಲಾಗಲೀ ಅಥವಾ ಟೆಲಿಫೋನ್ ಮೂಲಕ ನಡೆಯೋ ಕಾನ್‌ಫರೆನ್ಸ್ ಕರೆಗಳಾಗಲೀ ಇವು ಯಾವುದರಲ್ಲೂ ಪ್ರಶ್ನೆಯೊಂದರ ಉತ್ತರ ಹೊರಹೊಮ್ಮುವುದಕ್ಕೂ ಕಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೇ ನನ್ನ ಅನುಭವ. ಯಾರೋ ಪ್ರಶ್ನೆ ಕೇಳಿದ್ದಕ್ಕೆ ಥಟ್ಟನೆ ಉತ್ತರ ಹೇಳಿಬಿಡಬೇಕು, ಇಲ್ಲವೆಂದಾದರೆ ನಮಗೆ ಉತ್ತರ ಗೊತ್ತಿಲ್ಲವೆಂದು ಅವರೇ ತಮ್ಮ ಪ್ರಶ್ನೆಯನ್ನು ಉತ್ತರಿಸಿಕೊಂಡಾರು.

ಮಾತು-ಮೌನದಲ್ಲಿ ’ಪಂಚವಟಿ’ಯ ಲಕ್ಷ್ಮಣನ ಬಗ್ಗೆ ಬರೆದಿದ್ದೆ, ಕೆಲವೊಮ್ಮೆ ನಮ್ಮ ಮಾತುಗಳನ್ನು ನಾವು ಮನಸಿನಲ್ಲಿಯೋ ಹೊರಗೋ ಹರವಿಕೊಂಡು ಅದರ ವಿಸ್ತಾರವನ್ನು ನೋಡಿಕೊಳ್ಳೋದು ಸಹಜ. ಯಾರೋ ಒಂದು ಪ್ರಶ್ನೆಯನ್ನು ಕೇಳಿದರೆಂದು ಅವರ ಪ್ರಶ್ನೆ ಕೇಳಿ ನಿಲ್ಲಿಸಿದ ನಂತರ ನಮ್ಮ ಉತ್ತರದ ಧ್ವನಿ ಹುಟ್ಟುವ ಮೊದಲು ಇರುವ ಮೌನವನ್ನು ಕಡಿಮೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ, ಅವರು ಕೇಳಿದ ಪ್ರಶ್ನೆಗೆ ನಾವು ಕೊಡಬೇಕಾದ ಉತ್ತರಕ್ಕೆ ಒಂದೆರಡು ಕ್ಷಣಗಳನ್ನು ಹೆಚ್ಚು ತೆಗೆದುಕೊಂಡರಾಗದೇ? ಲೀಡರ್‌ಶಿಪ್ ಕಾನ್ಟೆಕ್ಸ್ಟಿನಲ್ಲಿ ಆಕ್ಟಿವ್ ಲಿಸನಿಂಗ್ (active listening) ಬಗ್ಗೆ ಏನೇ ಹೇಳಿ ಕೊಟ್ಟಿರಲಿ, ನಾವು ಇನ್ನೊಬ್ಬರಿಗೆ ಕೊಡಬೇಕಾದ ಉತ್ತರ ಅವರ ಪ್ರಶ್ನೆಯೊಂದಿಗೆಯೇ ನಮ್ಮ ತಲೆಯಲ್ಲಿ ಆರಂಭವಾಗುತ್ತದೆ ಎಂಬುದು ಸುಳ್ಳಲ್ಲ. ಯಾರು ಏನು ಹೇಳಿದರು ಎಂಬುವುದಕ್ಕಿಂತ ಅವರು ಹೇಳಿದ್ದಕ್ಕೆ ನಾವೇನು ಹೇಳಬೇಕು ಎಂದು ನಮ್ಮ ಮನಸ್ಸಿನ ವ್ಯಾಪಾರದಲ್ಲಿ ಮುಳುಗಿ ಹೋಗುವುದಿದೆ ನೋಡಿ, ಅದು ನಿಜವಾಗಿಯೂ ಚಿಂತಿಸಬೇಕಾದ ವಿಚಾರ.

ಅಮೇರಿಕನ್ನರು ಏಕೆ ಉದ್ದುದ್ದವಾಗಿ ಮಾತನಾಡುತ್ತಾರೆ ಎಂದು ಕೇಳಿಕೊಂಡರೆ ನಿಜವಾದ ಕಾರಣದ ಬದಲು ನಮ್ಮ ಸುಬ್ಬನ ಶೈಲಿಯಲ್ಲಿ ಹಗುರವಾದ ಉತ್ತರವೊಂದು ಹೊಳೆಯಿತು. ಎದುರಿನವರು ಕೇಳಿದ ಪ್ರಶ್ನೆಯೇನೇ ಇರಲಿ ನಿಮ್ಮ ಉತ್ತರವನ್ನು ಈ ರೀತಿ ಆರಂಭಿಸಿದ್ದಾದರೆ ಈ ಮೊದಲಿನ ಕೆಲವು ವಾಕ್ಯಗಳನ್ನು ಹೇಳುವ ಹೊತ್ತಿಗಾದರೂ ನಿಮಗೆ ನಿಜವಾದ ಉತ್ತರ ಹೊಳೆದೀತು

"First of all, he brings up a very valid point, I mean, looking at it from the
context of this scenario, more or less, he kind of read my mind..."

ಸುಮ್ನೇ ತಮಾಷೆಗೆ ಹೇಳ್ದೆ ಅಷ್ಟೇ, ನೀವು ವೆದರ್ರೋ ಮತ್ತೊಂದನ್ನೋ ಸೇರಿಸಿಕೊಂಡೋ, ಅಥವಾ ಅವರೂ ಇವರಿಗೆ ಥ್ಯಾಂಕ್ಯೂಗಳನ್ನು ಸೇರಿಸಿಕೊಂಡು ನಿಮ್ಮ ಆರಂಭ ವಾಕ್ಯವನ್ನು ಬೇಕಾದಷ್ಟು ಉದ್ದ ಮಾಡಿಕೊಳ್ಳಬಹುದು ಸಂದರ್ಭಕ್ಕನುಸಾರವಾಗಿ, ನಿಮಗೆ ಸಿಕ್ಕೋದು ಹತ್ತು ಸೆಕೆಂಡ್ ಹೆಚ್ಚಿಗೆ ಅದರ ಮೂಲಕ ನೀವು ಕೊಡಬೇಕಾದ ಉತ್ತರವನ್ನು ಇನ್ನಷ್ಟು ಯೋಚಿಸಿಕೊಳ್ಳೋದಕ್ಕೆ ಸಮಯ ಸಿಕ್ಕಿದ ಹಾಗೆ ಆಯ್ತು ತಾನೆ?

***

ಏಕೋ ನಾವೆಲ್ಲ ಮೌನದ ಮೊರೆ ಹೋಗೋ ಬದಲು ಗದ್ದಲದ ಮೊರೆ ಹೋಗುತ್ತಿದ್ದೇವೆ. ಸುತ್ತಲಿನ ಪರಿಸರದ್ದು ಅದರದ್ದೇ ಆದ ಒಂದು ಶಬ್ದ ಗಾಂಭೀರ್ಯ ಇದ್ದರೆ ನಾವು ನಮ್ಮ ಐಪಾಡ್‌ಗಳನ್ನು ಕಿವಿಗೆ ಸಿಕ್ಕಿಸಿಕೊಂಡು ಸಂಗೀತ/ಸಾಹಿತ್ಯದ ಸೋಗಿನಲ್ಲಿ ನಮ್ಮದೇ ಆದ ಪ್ರಪಂಚವನ್ನು ಕಲ್ಪಿಸಿಕೊಳ್ಳುತ್ತೇವೆ. ಸದ್ದಿನಲ್ಲಿ ಎಲ್ಲವೂ ಇದೆ ಎಂದುಕೊಂಡವರು ಒಂದೆರಡು ಘಂಟೆ ಮೌನವನ್ನು ಅನುಭವಿಸಿ ನೋಡಲಿ ಅದರಲ್ಲಿಯೂ ಬೇಕಾದಷ್ಟಿದೆ - ಮೌನ ಒಂದು ರೀತಿ ಮಾತಿಲ್ಲದ ಸಿನಿಮಾದ ಹಾಗೆ, ಮನದ ಪರದೆಯ ಮೇಲೆ ಏನೇನೋ ಚಿತ್ರಗಳು ಮೂಡಿ ಮರೆಯಾಗಿ ನಮ್ಮದೇ ಆದ ಮತ್ತೊಂದು ಪ್ರಪಂಚ ತೆರೆದುಕೊಳ್ಳೋದು ನಿಜ. ನಾನು ಹಿಂದೆ ಎಲ್ಲೋ ಓದಿದ ಹಾಗೆ ನಮ್ಮ ಹೊರಗಿನ ಪ್ರಪಂಚದಷ್ಟೇ ಆಳ ಹಾಗೂ ವಿಸ್ತಾರವಾದ ಪ್ರಪಂಚ ನಮ್ಮ ಮನಸ್ಸಿನೊಳಗೂ ಇದೆ. ಇವುಗಳ ವ್ಯತ್ಯಾಸ ಒಂದು ರೀತಿ ಆಸ್ಟ್ರೋಫಿಸಿಕ್ಸ್ ಹಾಗೂ ಕ್ವಾಂಟಮ್ ಮೆಕ್ಯಾನಿಕ್ಸ್‌ಗಳ ನಡುವಿನ ವ್ಯತ್ಯಾಸದ ಹಾಗೆ - ಒಂದು, ಬಹು ದೂರದ ವಸ್ತುವಿನ ಚಲನವಲನವನ್ನು ಗ್ರಾವಿಟೇಷನ್ ಎನ್ನುವ ವೀಕ್ ಫೋರ್ಸ್‌ನ ಮಾಧ್ಯಮದಲ್ಲಿ ಕಲ್ಪಿಸಿಕೊಂಡರೆ ಮತ್ತೊಂದು ಅಣುಗಳನ್ನು ಮೀರಿರುವ ಪಾರ್ಟಿಕಲ್ಲುಗಳ ನಡುವಿನ ಸ್ಟ್ರಾಂಗ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೋರ್ಸ್‌ನ ಅಳತೆಯನ್ನು ಹಿಡಿದ ಹಾಗೆ.

ನಮಗೆ ವಿಶ್ರಾಂತಿಯನ್ನು ಕೊಡುವ ನಿದ್ರೆ, ನಮ್ಮ ಮನಸ್ಸಿನ ಸಂವೇದನೆಗಳನ್ನು ಹಿಡಿತದಲ್ಲಿಟ್ಟು ನಮ್ಮ ಸಂಸ್ಕಾರಗಳಿಂದ ನಮ್ಮನ್ನು ಹೊರನಿಲ್ಲಿಸಿ ನೋಡುವಂತೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಧ್ಯಾನ ಮುಂತಾದವುಗಳೆಲ್ಲ ಮೌನದ ಮಡಿಲಲ್ಲಿ ನೆಲೆಗೊಂಡರೆ ನಮ್ಮ ಭೌತಿಕ ಜಗತ್ತು ನಾವು ಏನು ಹೇಳುತ್ತೇವೆ ಅರ್ಥಾಥ್ ನಾವು ಯಾವ ಯಾವ ಶಬ್ದ/ಪದಗಳನ್ನು ಬಳಸುತ್ತೇವೆ ಎಂಬುದನ್ನು ಅವಲಂಭಿಸಿದೆ. ಮೌನ-ಶಬ್ದ ನಡುವಿನ ವ್ಯತ್ಯಾಸ, ಅವೆರಡೂ ವಿಭಿನ್ನ ಚೌಕಟ್ಟಿನ ಸಾಧ್ಯತೆ-ಬಾಧ್ಯತೆಗಳು ನಮಗೆ ಅನಿವಾರ್ಯವೂ ಹೌದು, ಆದರೆ ಇತ್ತೀಚಿನ ಪ್ರಪಂಚದ ಮೌನದ ಮೊರೆ ಹೋಗುವುದಕ್ಕಿಂತ ಹೆಚ್ಚಾಗಿ ಶಬ್ದದ ಮೊರೆ ಹೊಕ್ಕಿದೆ ಎಂದೇ ನನ್ನ ಅಭಿಪ್ರಾಯ.

***

ಈ ಯುಗದಲ್ಲಿಯೂ ಇಂದ್ರಿಯಗಳನ್ನು ಜಯಿಸುವುದು ಸಾದ್ಯವಿರಬೇಕಿತ್ತು, ಎಲ್ಲಿ ಬೇಕೆಂದರಲ್ಲಿ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದಕ್ಕೆ. ಏನಾದರೂ ಹೇಳಲೇ ಬೇಕು ಎಂದು ಹೇಳುವುದಕ್ಕಿಂತ ಸುಮ್ಮನಿರುವುದನ್ನು ಕಲಿಯಬೇಕು ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ಕೆಲವೊಮ್ಮೆ ನಾನು ಬೇಕೆಂದೇ ಎರಡು ಕ್ಷಣಗಳ ಕಾಲ ಮೌನದ ಮೊರೆಯನ್ನು ಹೊಕ್ಕರೆ ಫೋನಿನಲ್ಲಿ ಮಾತನಾಡುವ ಆ ಕಡೆಯವರು ಲೈನ್ ಎಲ್ಲಿ ಡಿಸ್ಕನೆಕ್ಟ್ ಆಗಿಹೋಯಿತೋ ಎಂದು ಅರಚಿಕೊಳ್ಳುವುದನ್ನು ನೋಡಿ ಸೋಜಿಗಪಟ್ಟಿದ್ದೇನೆ. ಅಕಸ್ಮಾತ್ ನಮ್ಮ ನಡುವಿನ ಸಂಪರ್ಕದ ಎಳೆ ಒಮ್ಮೆ ಕಡಿದು ಹೋಯಿತು ಎಂತಲೇ ಅಂದುಕೊಳ್ಳೋಣ ಅದರಿಂದೇನಾಯಿತು? ಮತ್ತೆ ಫೋನ್ ಮಾಡಿದರಾಗದೇ? ಇಷ್ಟೊಂದು ಸಂವಹನ/ಸಂಪರ್ಕ ಮಾಧ್ಯಮಗಳಿಗೆ ಆದ್ಯತೆಕೊಡುವ ಜನರಿಗೆ, ಈ ಸಂತತಿಯಲ್ಲಿ ಅದೇಕೆ ಅಷ್ಟೊಂದು ಮಿಸ್-ಕಮ್ಮ್ಯೂನಿಕೇಷನ್ನುಗಳು ನಡೆಯುತ್ತವೆ ಎಂದು ಚಿಂತಿಸಿದ್ದೇನೆ. ನನ್ನ ಊಹೆಯ ಪ್ರಕಾರ ನಮ್ಮ ಸಂಬಂಧಗಳು (ಗಂಡ-ಹೆಂಡತಿ, ತಂದೆ-ತಾಯಿ-ಮಕ್ಕಳು, ಸಹೋದರರು-ಸಹೋದರಿಯರು, ಸ್ನೇಹಿತರು) ಇತ್ತೀಚಿನ ಅತಿ ಕಮ್ಮ್ಯೂನಿಕೇಶನ್ನಿನ ಮಾಧ್ಯಮಗಳಿದ್ದರೂ ಅಷ್ಟೇ ದೂರಹೋಗಿವೆ. ಎಲ್ಲಿ ಏನು ಬೆಳವಣಿಗೆಯಾದರೇನು ಬಂತು, ಅದ್ಯಾವುದೋ ಒಂದು ಅವ್ಯಕ್ತ ಪ್ರೀತಿಯಿಂದ ಬದುಕಿನ ಸಂಬಂಧಗಳನ್ನು ನೋಡದ ಹೊರತು? ನಮಗೆ ಗೊತ್ತಿರುವುದೆಲ್ಲವನ್ನೂ ನಾವು ಅನುಭವಿಸಿ ಆಚರಿಸುವುದೆಲ್ಲವನ್ನೂ ಭಾಷೆಯಲ್ಲಿ ಕಟ್ಟಿಡುತ್ತೇವೆ ಎನ್ನುವುದು ಎಂದು ಯಶೋಗಾಥೆಯಾದೀತು?

ಏನೋ, ಬಾಯಿ ಇದ್ದವರು ಹೊರಗಿನದನ್ನು ಗೆಲ್ಲುತ್ತಾರಿರಬಹುದು, ಕೊನೆಗೆ ತಮ್ಮೊಳಗಿನದನ್ನು ಅರಿತುಕೊಳ್ಳುವುದಕ್ಕಾದರೂ ಮೌನವನ್ನು ನಾವು ಆಶ್ರಯಿಸಿದ್ದೇ ಆದರೆ ಅದು ಎಲ್ಲೋ ಒಂದು ಸಮತೋಲನವನ್ನು ತಂದುಕೊಟ್ಟೀತೇನೋ ಎನ್ನುವುದು ನನ್ನ ಆಶಯ.

Sunday, February 03, 2008

...ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

’ಓಹ್, ನಿಮಗೇನ್ರಿ? ನೀವು ಅಮೇರಿಕದಲ್ಲಿದ್ದೀರ ನಿಮಗೇನು ಕಡಿಮೆ!’ ಎಂದು ಇನ್ನು ಮುಂದೆ ಯಾರಾದ್ರೂ ನಿಮಗೆ ಹೇಳಿದರಾದರೆ ಅವರಿಗೆ ನೀವು,

’ಅಮೇರಿಕದಲ್ಲಿ ವ್ಯಕ್ತಿಯೊಬ್ಬ ಒಂದು ವ್ಯವಸ್ಥೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಹೋರಾಡುತ್ತಲೇ ಜೀವನ ಸವೆಸಬೇಕಾಗುತ್ತದೆ!’ ಎಂದು ಉತ್ತರ ನೀಡಿ ಆಗ ಆ ಉತ್ತರವನ್ನು ಕೇಳಿದವರ ಹುಬ್ಬುಗಳು ಗಂಟು ಕಟ್ಟುವುದನ್ನು ನೋಡಿ ಸಂತೋಷ ಪಡಿ.

ಹಿಂದೆ ’ಅಂತರಂಗ’ದಲ್ಲಿ ಇದೇ ವಿಷಯವಾಗಿ ಹಲವಾರು ಸಾರಿ ಬರೆದರೂ ಅದರ ಬಗ್ಗೆ ಮತ್ತೂ ಬರೆಯುವಷ್ಟು ಸ್ಪೂರ್ತಿ ನೀಡುವ ಹಲವಾರು ವಿಷಯಗಳು ಒಟ್ಟೊಟ್ಟಿಗೆ ಸಂಭವಿಸಿದವಾದ್ದರಿಂದ ಮತ್ತೆ ಬರೆಯಬೇಕಾಯಿತು.

***

ನಾನು ಸೆಪ್ಟೆಂಬರ್ ೨೬, ೨೦೦೭ ರ ಶುಭದಿನ ಲ್ಯಾಬ್‌ಕಾರ್ಪ್‌ಗೆ ಖುದ್ದಾಗಿ ಹೋಗಿ ರಕ್ತದಾನ ಮಾಡಿ ಅಲ್ಲಿ ಟೆಕ್ನಿಷಿಯನ್ನ್‌ಗೆ ರಿಪೋರ್ಟಿನ ಒಂದು ಕಾಪಿಯನ್ನು ಮನೆಗೂ ಕಳಿಸುವಂತೆ ಕಿವಿಕಿವಿ ಹೇಳಿ ಅಂಗಾಲಾಚಿದ ಪ್ರಯುಕ್ತ ಆಕೆ ತನ್ನ ಕೋಮಲ ಕೈಗಳಿಂದ ".cc customer" ಎಂದು ಮೊದಲ ಪುಟದಲ್ಲೇ ಬರೆದುಕೊಂಡಳಾದರೂ ನನಗೆ ಇವತ್ತಿಗೂ, ನಾಲ್ಕು ತಿಂಗಳ ಬಳಿಕವೂ ಆ ವರದಿಯ ಕಾಪಿ ಸಿಗದಿದ್ದುದನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದಾಗಿದೆ. ಆದರೆ ಆಶ್ಚರ್ಯವೆಂಬಂತೆ ನಾನು ಕೊಡಬೇಕಾದ ೧೫ ಡಾಲರ್ ಕೋ-ಪೇಮೆಂಟ್‌ಗೆಂದು ಅವರು ಮೇಲಿಂದ ಮೇಲೆ ಬಿಲ್ ಕಳಿಸಿಯೇ ಕಳಿಸಿದರು, ಕೊನೆಗೆ ನಾನು ರೋಸಿ ಡಿಸೆಂಬರ್ ೨೬ ರಂದು ಹದಿನೈದು ಡಾಲರ್ ಕೋ-ಪೇಮೆಂಟ್ ಅನ್ನು ಕೊಟ್ಟು ಅದೇ ದಿನ ಲ್ಯಾಬ್‌ಕಾರ್ಪ್ ಕಸ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಮತ್ತೆ ರಿಪೋರ್ಟ್ ಕಳಿಸಲು ಬೇಡಿಕೊಂಡರೆ ಫೋನಿನಲ್ಲಿ ಉತ್ತರಿಸಿದ ಲಲನಾಮಣಿ ’ಆಗಲಿ, ಇನ್ನೆರಡು ವಾರಗಳಲ್ಲಿ ಕಳಿಸುತ್ತೇವೆ’ ಎಂದು ಉತ್ತರ ಕೊಟ್ಟಳಾದರೂ ಈಗ ಒಂದೂವರೆ ತಿಂಗಳ ಬಳಿಕ ಇವತ್ತಿಗೆ ನನ್ನ ಬ್ಲಡ್ ರಿಪೋರ್ಟ್ ಪತ್ತೆಯೇ ಇಲ್ಲ!

ಒಬ್ಬ ಸಾಮಾನ್ಯ ಬಳಕೆದಾರನಾಗಿ ನಾನು ಏನು ಮಾಡೋದು, ಏನು ಬಿಡೋದು...ಮೇಲಿಂದ ಮೇಲೆ ಕಾಲ್ ಮಾಡಿ ತಲೆಕೆಡಿಸಿಕೊಳ್ಳೋಣವೆಂದರೆ ನನಗೆ ಬಿಡುವಿರದ ಆಫೀಸಿನ ಕೆಲಸ, ಜೊತೆಗೆ ಮತ್ತೆ ಜನವರಿಯ ಕೊನೆಯಲ್ಲಿ ಪ್ರಯತ್ನಿಸಿದಾಗ ’ಇನ್ನೆರಡು ವಾರಗಳಲ್ಲಿ ಬಂದೇ ಬಿಡುತ್ತೆ’ ಎಂದು ಇನ್ಯಾರೋ ಆಶ್ವಾಸನೆ ನೀಡಿರೋದರಿಂದ ಮತ್ತೊಂದು ವಾರ ಕಾಯ್ದು ನೋಡೋಣವೆಂದುಕೊಂಡು ನನ್ನ ಬ್ರಹ್ಮಾಸ್ತ್ರಗಳಿಗೆ ಒಂದಿಷ್ಟು ರೆಸ್ಟ್ ಕೊಟ್ಟಿದ್ದೇನೆ ನೋಡಿ.

ನಾವು ದುಡ್ಡು ಕೊಟ್ಟು ನಾವು ಕೊಟ್ಟ ನಮ್ಮ ರಕ್ತದ ವರದಿಯನ್ನು ಕೇಳಲು ಹೋದರೆ ಅದಕ್ಕೆ ನೂರಾ ಎಂಟು ಸೆಕ್ಯೂರಿಟಿ ಪ್ರಶ್ನೆಗಳು. HIPAA (Health Insurance Portability & Accountability Act) ಮಣ್ಣೂ ಮಸಿಯೆಂದು ನಮ್ಮ ತಲೆಯೆನ್ನೆಲ್ಲ ತಿಂಥಾರಲ್ಲ ಶಿವಾ, ಎಂಥಾ ಲೋಕವಯ್ಯಾ ಇದು?

***

ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆಯ ವಿರುದ್ಧ ಹೋರಾಡೋದಕ್ಕೆ ನೀವು ರಾವಣರಾಗಬೇಕು, ಅಂದರೆ ನಿಮಗೆ ಹತ್ತು ತಲೆಗಳಿದ್ದರೂ ಸಾಲದು. ಯಾವನೋ ಬರೆದ ಬಿಸಿನೆಸ್ ರೂಲ್ಸ್‌ಗಳು, ಯಾರೋ ಅದೆಲ್ಲಿಯೋ ಕುಳಿತು ಕುಟ್ಟಿದ ಕಂಪ್ಯೂಟರ್ ವ್ಯವಸ್ಥೆ ನಿಮಗೆ ಚೆನ್ನಾಗಿ ನೀರು ಕುಡಿಸಬಲ್ಲದು. ನನ್ನ ಮಾತಿನಲ್ಲಿ ವಿಶ್ವಾಸವಿಲ್ಲದೇ ಹೋದರೆ ಕೇವಲ ಒಂದೇ ಒಂದು ಸಾರಿ ನಿಮ್ಮ ಕ್ರೆಡಿಟ್ ಕಾರ್ಡಿನ ಬಿಲ್ಲನ್ನು ಡ್ಯೂ ಡೇಟ್ ಆಗಿ ಒಂದು ತಿಂಗಳ ನಂತರ ಕಟ್ಟಿ ನೋಡಿ, ಆಗ ನಿಮಗೇ ತಿಳಿಯುತ್ತದೆ. ನೀವು ಸಾವಿರ ವರ್ಷಗಳಿಂದ ನಿರಂತರವಾಗಿ ಬಿಲ್ ಅನ್ನು ಕಟ್ಟಿಕೊಂಡು ಬಂದಿರುತ್ತೀರಿ, ಯಾವುದೋ ಒಂದು ಫ್ಯಾಮಿಲಿ ಎಮರ್ಜನ್ಸಿಯ ಸಂಬಂಧವಾಗಿ ನೀವು ಒಂದು ತಿಂಗಳು ಬಿಲ್ ಅನ್ನು ಕಟ್ಟುವುದನ್ನು ನಿರ್ಲಕ್ಷಿಸುತ್ತೀರಿ ಎಂದುಕೊಳ್ಳಿ - ಅದು ಮಾನವೀಯ ವಿಷಯವೇ ಸರಿ - ಅದನ್ನು ಫೈಟ್ ಮಾಡಬೇಕಾದೀತು, ಹಾಗೆ ಮಾಡುತ್ತಾ ಮಾಡುತ್ತಾ ನಿಮ್ಮ ಕಪ್ಪಗಿನ ಕೂದಲ ಆಯುಷ್ಯವನ್ನು ಬಲಿಕೊಡಬೇಕಾದೀತು, ನಿಮ್ಮ ಮುಖದಲ್ಲಿ ನೆರಿಗೆಗಳನ್ನು ಹೆಚ್ಚಿಸಿಕೊಳ್ಳಬೇಕಾದೀತು.

ದೊಡ್ಡ ದೊಡ್ಡ ಶಾಪ್ಪಿಂಗ್ ಮಾಲ್‌ಗಳಲ್ಲಿ ರೀಟೈಲ್-ಹೋಲ್‌ಸೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ಸಿಯರ್ಸ್ (Sears) ಅಂತಹ ಕಂಪನಿಗಳು ತಮ್ಮ ಗಿರಾಕಿಗಳಿಗೆ ವಸ್ತುಗಳನ್ನು ಮಾರಿ ಅದರಿಂದ ಬರುವ ಲಾಭಕ್ಕಿಂತಲೂ ತಮ್ಮ ಗಿರಾಕಿಗಳು ಕೊಡುವ ಲೇಟ್-ಫೀ, ಬಡ್ಡಿಗಳಿಂದ ಹೆಚ್ಚು ಸಂಪಾದನೆ ಮಾಡುತ್ತವೆ ಎನ್ನುವುದಕ್ಕೆ ನಿದರ್ಶನಗಳು ಬೇಕೇ? ಅಂತಹ ಕಂಪನಿಗಳ ಕ್ರೆಡಿಟ್ ವಿಭಾಗವನ್ನು ಕೊಂಡುಕೊಳ್ಳಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಹಾತೊರೆದುದನ್ನು ನಾವು ಕಣ್ಣಾರೆಯೇ ನೋಡಿದ್ದೇವೆ.

ನೀನು ದುಡಿ, ದುಡಿದ ದುಡ್ದಿನಲ್ಲಿ ಮನೆ ಕಟ್ಟಿಸಿ ಅನುಭವಿಸು ಎನ್ನುವ ನಮ್ಮ ತತ್ವಗಳನ್ನು ಹೊಸಕಿ ಹಾಕಿ, ನಿಮಗೆ ಮೈ ತುಂಬಾ ಸಾಲವನ್ನು ಹೊರಿಸುತ್ತೇವೆ, ಆದರೆ ಈ ಮನೆ ಇವತ್ತಿನಿಂದಲೇ ನಿಮ್ಮದು ಎನ್ನುವ ಬಂಡೆಗಲ್ಲಿನಡಿ ನಮ್ಮನ್ನು ನೂಕಿ ನಮ್ಮ ಬಡ್ಡಿ ಹಣದಿಂದ ಬದುಕುವ ವ್ಯವಸ್ಥೆಯ ಕೂಸುಗಳಾಗಿ ಹೋಗಿದ್ದೇವಲ್ಲ ನಾವು ಏನು ಹೇಳೋಣ? ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಲ್ಲಿ ಐಶಾರಾಮವಿಲ್ಲದಿದ್ದರೂ ನೆಮ್ಮದಿ ಇದ್ದೀತು, ಮನಸು ಬೇಡಿದಷ್ಟು ಮನೆ ಕೊಂಡು ಇಂದೋ ನಾಳೆಯೋ ಕೆಲಸ ಹೋದರೆ ಎನ್ನುವ ಹೆದರಿಕೆಯ ಗೂಡಿನೊಳಗೆ ಮಲಗುವುದು ಆಧುನಿಕ ಬದುಕಿನ ಬವಣೆಗಳಲ್ಲೊಂದೇ ಎಂದು ನಾನು ಹೇಳೋದು.

***

ಹೇಳಿ - ಇಡೀ ಅಮೇರಿಕದ ವ್ಯವಸ್ಥೆ ಸಾಲದಲ್ಲಿ ನಿಂತಿದೆ! ಇಲ್ಲಿಯ ಕಾರ್ಪೋರೇಷನ್ನುಗಳು ಬಿಲಿಯನ್ನುಗಟ್ಟಲೆ ಸಾಲವನ್ನು ಹೊಂದಿವೆ, ಇಲ್ಲಿ ಜೀವಿಸುವ ಪ್ರಜೆಗೂ ನೇರವಾಗಿಯೋ, ಪರೋಕ್ಷವಾಗಿಯೋ ಸಾಲ ಇದ್ದೇ ಇದೆ. ಹಾಗಾದರೆ ಯಾವ ದೇಶದಲ್ಲಿ ಪರೋಕ್ಷ ಸಾಲವಿಲ್ಲ ಎಂದು ಪ್ರಶ್ನೆ ಕೇಳಿಯೇ ಕೇಳಿರುತ್ತೀರಿ, ಪರೋಕ್ಷ ಸಾಲ ನಮ್ಮನ್ನು ಮೀರಿದ್ದು, ನಾವು ಮೈ ಮೇಲೆ ಹೇರಿಕೊಳ್ಳುವ ಸಾಲ ನಮ್ಮನ್ನು ಮಟ್ಟ ಮಾಡೋದು.

ಏನ್ ಸಾರ್, ಇಷ್ಟೊಂದ್ ದಿನಾ ಅಮೇರಿಕದಲ್ಲಿದ್ದುಕೊಂದು ಒಂದು ಬಾಯ್ ತುಂಬಾ ಒಳ್ಳೇ ಮಾತನಾದ್ರೂ ಹೇಳಬಾರ್ದಾ? ಹೇಳ್ತೀವಿ, ಯಾಕಿಲ್ಲ - ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಸ್ವಾಮೀ, ನಿಮ್ಮ ಮನೆಯಲ್ಲಿ ಕಾಫಿ ಪುಡಿ ಇದೆಯೋ ಇಲ್ಲವೋ ಅನ್ನೋದನ್ನೂ ಒಂದು ದಿನ ನೀವು ನಿಮ್ಮ ಕಂಪ್ಯೂಟರ್ ಲಾಗಿನ್ ಆಗಿ ನಿಮ್ಮ ಇನ್ವೆಂಟ್ರೆ ಚೆಕ್ ಮಾಡಿಕೊಂಡೇ ಕಾಫಿ ಡಬ್ಬವನ್ನು ಬೇಸ್‌ಮೆಂಟ್‌ನಲ್ಲಿ ಹುಡುಕಿಕೊಂಡು ಹೋಗೋ ವ್ಯವಸ್ಥೆಗೆ ದಾಸರಾಗ್ತೀರಿ ನೋಡಿ ಆಗ ನಿಮ್ಮನ್ನು ನಾನು ಇದೇ ಪ್ರಶ್ನೆ ಕೇಳ್ತೀನಿ.

***

ಈ ವರ್ಷ ಎಲೆಕ್ಷನ್ನ್ ವರ್ಷ, ನಮ್ಮನೆ-ಕಾರಿನ ರೆಡಿಯೋಗಳಿಗೆ ರಜಾ ಘೋಷಿಸಿಬಿಟ್ಟಿರೋದರಿಂದ ನಾನು ಸ್ವಲ್ಪ ನ್ಯೂಸ್ ಮಾಧ್ಯಮಗಳಿಂದ ಬಿಡುವನ್ನು ಪಡೆದುಕೊಂಡು ಹಾಯಾಗಿ ಇರೋಣಾ ಅಂತ ತೀರ್ಮಾನ ಮಾಡಿಕೊಂಡಿದ್ದೀನಿ. ನಿಮ್ಮ ಅಮೇರಿಕನ್ ಪುರಾಣ ಏನ್ ಬೇಕಾದ್ರೂ ಹೇಳಿ ಆದ್ರೆ ಮಾತ್ರ ಈ ಡೆಮೋಕ್ರಾಟೂ-ರಿಪಬ್ಲಿಕ್ಕೂ ಅಂಥಾ ಮಾತ್ರ ಶುರು ಮಾಡ್‌ಬೇಡಿ. ಕಳೆದ ವರ್ಷ ಈ ಹಾಳೂ ಮೂಳೂ ಸುದ್ಧಿಗಳನ್ನು ಕೇಳೇ ನನ್ನ ಬ್ಲಡ್ ಪ್ರೆಷರ್ ಸ್ವಲ್ಪ ಹೆಚ್ಚಾಗಿದ್ದೂ ಅಂತ ಕಾಣ್ಸುತ್ತೆ, ಅದನ್ನ ಚೆಕ್ಕ್ ಮಾಡೋಣ ಅಂತ ಹೋದ್ರೆ ಡಾಕ್ಟರೇನೋ ದೊಡ್ಡ ರಕ್ತದ ಟೆಸ್ಟ್ ಅನ್ನು ಬರೆದು ಕೊಟ್ರು, ಅಲ್ಲಿ ಹೋಗಿ ರಕ್ತದಾನ ಮಾಡಿ ಬಂದು ಐದು ತಿಂಗಳಾದ್ರೂ ಇನ್ನೂ ನನಗಾಗ್ಲೀ ನನ್ನ ಡಾಕ್ಟರಿಗಾಗ್ಲಿ ರಕ್ತದ ವರದಿಯೇ ಬಂದಿಲ್ಲವಾದ್ರಿಂದ ನನಗೆ ಖಾಯಿಲೆ ಇದ್ಯೋ ಇಲ್ಲವೋ ಅನ್ನೋದನ್ನ ಈ ವ್ಯವಸ್ಥೆಯಿಂದ ತಿಳಿದುಕೊಳ್ಳೋಕೇ ನನಗೆ ಆರು ತಿಂಗಳು ಬೇಕಾಗುತ್ತೆ. ಖಾಯಿಲೆ ಇದ್ಯೋ ಇಲ್ಲವೋ ಅನ್ನೋ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿಲ್ಲದ್ದನ್ನು ನೋಡಿ ಅದನ್ನು ಹಿಂಬಾಲಿಸಿ, ಫಾಲೋ ಅಪ್ ಮಾಡಿಕೊಂಡು ಶ್ರಮ ವಹಿಸಿದ್ದಕ್ಕೆ ಮತ್ತೇನೇನೋ ಖಾಯಿಲೆಗಳು ಅಂಟಿಕೊಡು ಮತ್ತೆ ಡಾಕ್ಟರ್ ಆಫೀಸಿಗೆ ಹೋಗೋದಕ್ಕೆ ಹೆದರಿಕೆ ಆಗುತ್ತೆ.

ನಾನು ಈ ಒಂಥರಾ ಡಾಕ್ಟರು-ಬ್ಲಡ್ ರಿಪೋರ್ಟಿನ ಚಕ್ಕರದಲ್ಲಿ ಸಿಲುಕಿ ನಾನು ಒದ್ದಾಡ್ತಾ ಇರೋದನ್ನ ನೋಡಿಕೊಂಡು ನನಗೆ ಒಂದೊಂದ್ ಸರ್ತಿ ಅನ್ಸುತ್ತೆ - ಸೀದಾ ಭಾರತದ ಏರ್‌ಪೋರ್ಟಿನಲ್ಲಿ ಹೋಗಿ ಒಂದು ಭೂತ್ ಹಾಕಿ ಬಿಡ್ಲಾ ಅಂತಾ...ಅಲ್ಲಿ ಹಸಿದ ಕಣ್ಣುಗಳನ್ನು ಹೊತ್ತುಕೊಂಡು ಫಾರಿನ್ನಿಗೆ ಹೋಗೋರನ್ನ ತಡೆಯೋ ಒಂದು ಪಡೆಯನ್ನ ಹುಟ್ಟು ಹಾಕಿದ್ರೆ ಹೇಗೆ ಅಂತ ಅನ್ಸೋದು ನಿಜ, ನಮ್ ಭೂತ್‌ನಲ್ಲಿ ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

Tuesday, January 29, 2008

ಬಂಡವಾಳಶಾಹಿ ಜಗತ್ತಿನ ಎರಡು ಮಹಾಮಂತ್ರಗಳು

ಬದಲಾವಣೆಯೇ ಜಗದ ನಿಯಮ - ಅನ್ನೋದು ನಿಜವಾದರೆ ಬದಲಾವಣೆಯ ಆಗು ಹೋಗುಗಳನ್ನು ಮ್ಯಾನೇಜು ಮಾಡುವುದೂ ಅಷ್ಟೇ ನಿಜ ಅಥವಾ ಅಗತ್ಯ. ನಾವು ಎಷ್ಟರ ಮಟ್ಟಿಗೆ ಬದಲಾವಣೆಗಳನ್ನು ನಿರ್ವಹಿಸಿಕೊಂಡು ಹೋಗುತ್ತೇವೆ ಅನ್ನೋದು ನಮ್ಮಲ್ಲಿ ಜನರು ಹುಡುಕಿಕೊಂಡು ಬರುವ ಸ್ವಭಾವ ಅಥವಾ ಗುಣವಾಗಬಹುದು. ಈ ಬದಲಾವಣೆಯ ಅಗತ್ಯಗಳಿಗೆ ನಮ್ಮ ಸ್ಪಂದನ ಇಂದಿನ ದಿನಗಳಲ್ಲಂತೂ ಇನ್ನೂ ಮುಖ್ಯ, ಬದಲಾವಣೆ ಎನ್ನೋದು ಯಾವ ರೂಪದಲ್ಲಿ ಹೇಗೆ ಬೇಕಾದರೂ ಪ್ರತ್ಯಕ್ಷವಾಗಿ ನಮ್ಮ ನೆಲೆಗಟ್ಟನ್ನು ಅಲುಗಾಡಿಸುವ ನಿರೀಕ್ಷೆಯಂತೂ ಇರೋದು ನಿಜ.

ಈ ಬದಲಾವಣೆಗಳು ಯಾವುದೋ ಒಂದು ನಮಗೆ ಗೊತ್ತಿರುವ ರಸ್ತೆಯಲ್ಲಿ ಹೋಗುತ್ತಿರುವ ನಮ್ಮ ಕಂಫೋರ್ಟ್ ಝೋನ್ ಅನ್ನು ಪ್ರಶ್ನಿಸುವ ಡೀ-ಟೂರ್ ಇದ್ದ ಹಾಗೆ, ಅವುಗಳು ಒಡ್ಡುವ ಆ ಮಟ್ಟಿನ ಅನಿರೀಕ್ಷಿತ ತಿರುವುಗಳನ್ನು ಸಾವಧಾನ ಚಿತ್ತದಲ್ಲಿ ಸ್ವೀಕರಿಸಿ ಮುನ್ನಡೆಯದೇ ಇದ್ದರೆ ಅಪಾಯವಂತೂ ಖಂಡಿತ. ಅದೇ ಬದಲಾವಣೆಗಳಿಗೆ ಕಿವಿಗೊಡದೇ ಇದ್ದ ರಸ್ತೆಯಲ್ಲೇ ಮುನ್ನಡೆದರೆ ಯಾವುದಾದರೂ ಗುಂಡಿ ಸೇರುವ ಅಪಾಯ ಬೇರೆ. ಹೀಗಾಗಿ ಬದಲಾವಣೆಗಳು ನಮ್ಮನ್ನು ಹೇಳಿಕೇಳಿ ಬರದೇ ಇದ್ದರೂ ಅವುಗಳನ್ನು ನಿರೀಕ್ಷಿಸಿಕೊಂಡೇ ಸಾಧ್ಯವಾದಷ್ಟರ ಮಟ್ಟಿಗೆ ತಯಾರಾಗಿರುವುದು ಈಗಿನ ಕಾಲದ ಅಗತ್ಯಗಳಲ್ಲೊಂದು. ಇಂದಿದ್ದ ಬಾಸ್ ನಾಳೆ ಇರದಿರಬಹುದು, ನಮ್ಮ ನೆಚ್ಚಿನ ಕೆಲಸ ಕಾರ್ಯಗಳು ಬೇರೆಯವರ ಕೈಗೆ ದಿಢೀರ್ ಹೋಗಿ ನಮಗೆ ಹೊಸ ಕೆಲಸಗಳು ಬರಬಹುದು, ಇಂದು ಮುಂಜಾನೆ ಇದ್ದ ಕೆಲಸವೇ ಸಂಜೆಗೆ ಇರದಿರಬಹುದು. ೨೦೦೦ ದಿಂದ ೨೦೦೩ ರವರೆಗೆ ಅನೇಕ ಕಂಪನಿಗಳು (ವಿಶೇಷವಾಗಿ ಡಾಟ್‌ಕಾಮ್) ಮುಚ್ಚಿ ಹೋದ ಹಿನ್ನೆಲೆಯಲ್ಲಿ ಅಥವಾ ಅವರ ವರ್ಕ್ ಫೋರ್ಸ್ ಅನ್ನು ಕಡಿಮೆ ಮಾಡುವ ಹುನ್ನಾರದಲ್ಲಿ ಅನೇಕ ಜನ ಕೆಲಸವನ್ನು ಕಳೆದುಕೊಂಡದ್ದು ಬೇಕಾದಷ್ಟು ಉದಾಹರಣೆಗಳಿವೆ. ಈಗಲೂ ಸಹ ಅಲ್ಲಲ್ಲಿ ಸಾವಿರಾರು ಜನರನ್ನು ಕೆಲಸವಿಲ್ಲದೇ ಮನೆಗೆ ಕಳಿಸುವುದನ್ನು ನಾವು ಕಾರ್ಪೋರೇಟ್ ರಿಪೋರ್ಟುಗಳಲ್ಲಿ ಓದಬಹುದು. ಹೀಗೆ ಒಂದು ಕಂಪನಿಯಲ್ಲಿನ ನಮ್ಮ ಅಸ್ತಿತ್ವವನ್ನು ದಿಢೀರ್ ಕಳೆದುಕೊಂಡು ಮತ್ತೊಂದು ಕಂಪನಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಬದಲಾವಣೆ ಒಬ್ಬನ ವೃತ್ತಿ ಜೀವನದಲ್ಲಿ ಬೇಕೆ? ಕೆಲಸ ಬದಲಾವಣೆ ಅನ್ನೋದು ಹೆಚ್ಚು ಸ್ಟ್ರೆಸ್ ಹುಟ್ಟಿಸುವ ಲೈಫ್ ಇವೆಂಟುಗಳಲ್ಲಿ ಒಂದು. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ, ಎರಡು ವಾರಗಳ ಹಿಂದೆ ಇದ್ದಕ್ಕಿದ್ದ ಹಾಗೆ ಕಂಪನಿಯಲ್ಲಿ ಅನೇಕ ಬದಲಾವಣೆಗಳು ನಾನಿಲ್ಲದ ವೇಳೆಯಲ್ಲಿ ಸಂಭವಿಸಿ ರಾತ್ರೋ ರಾತ್ರಿ ನನಗೆ ಹೊಸ ಬಾಸೂ, ಹೊಸ ಕೆಲಸವೂ ಬಂದಿದ್ದು ಇಂದಿಗೂ ನಿಜವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ ಕ್ಷಿಪ್ರವಾಗಿ ನಡೆದು ಹೋಗಿದೆ. ಹಳೆಯದನ್ನು ನೆನೆಸಿಕೊಂಡು ಕೊರಗುವ ಮನಸ್ಸಿದ್ದರೂ ಹೊಸದಕ್ಕೆ ಹೊಂದಿಕೊಂಡು ಹೋಗದೇ ಬೇರೆ ನಿರ್ವಾಹವೇ ಇಲ್ಲ. ಬದಲಾವಣೆ ಎನ್ನೋದು ಯಾವತ್ತಿದ್ದರೂ ಗೆಲ್ಲುತ್ತೆ, ಅದಕ್ಕೆ ಸ್ಪಂದಿಸಿ ಹೊಂದಿಕೊಂಡು ಹೋಗುವುದು ಎನ್ನುವುದು ರೂಲ್ ಅದು ಯಾವತ್ತೂ ಎಕ್ಸೆಪ್ಷನ್ನ್ ಅಲ್ಲ.

***

ಇಂದಿನದು ಇಂದಿಗೆ ನಾಳೆಯದು ನಾಳೆಗೆ ಎನ್ನುವ ಬಂಡವಾಳಶಾಹಿ ವ್ಯವಸ್ಥೆಯ ಮಹಾಮಂತ್ರಕ್ಕೆ ಎಂಥವರೂ ಮನಸೋಲಲೇ ಬೇಕು. ಇಲ್ಲಿ ಕ್ವಾರ್ಟರಿನಿಂದ ಕ್ವಾರ್ಟರಿಗೆ ತಿಂಗಳಿನಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ನಮ್ಮನ್ನು ನಾವು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ. ನಿನ್ನೆ ಉತ್ತಮವಾದದ್ದು ಇಂದಿಗೆ ನಿಜವಾಗ ಬೇಕೆಂದೇನೂ ಇಲ್ಲ, ಇಂದು ನಡೆದದ್ದು ನಾಳೆಗೆ ನಡೆಯುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಎಲ್ಲವೂ ಆಯಾ ವರ್ಷಕ್ಕೆ ಅನುಗುಣವಾದವುಗಳು, ಪ್ರತಿ ಮೂರು/ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಆಯಾ ಕಂಪನಿಗಳ ಪರ್‌ಫಾರ್ಮೆನ್ಸ್ ಅನ್ನು ಲೆಕ್ಕ ಹಾಕುವ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ತಿಂಗಳಿನಿಂದ ತಿಂಗಳಿಗೆ ಚೇತರಿಸಿಕೊಳ್ಳುವ ವ್ಯವಸ್ಥೆ ಇರುವುದರ ಜೊತೆಗೆ ಹಳೆಯದನ್ನು ಆದಷ್ಟು ಬೇಗನೆ ಹಿಂದಕ್ಕೆ ತಳ್ಳಿ ಮುನ್ನುಗ್ಗುವ ಆತುರವೂ ಕಂಡುಬರುತ್ತದೆ. ಹಲವಾರು ವರ್ಷಗಳ ಕಾಲ ಒಂದೇ ಸಮನೆ ಒಂದು ’ಕ್ಯಾರೆಕ್ಟರ್’ ಅನ್ನು ಹುಟ್ಟಿಸಿ ಬೆಳೆಸುಕೊಳ್ಳುವುದಕ್ಕಿಂತಲೂ ಆಯಾ ಮಟ್ಟಿನ ಬೆಳವಣಿಗೆಗೆ ಹೆಚ್ಚು ಆಸ್ಪದ ನೀಡಿದಂತನಿಸುತ್ತದೆ. ಈ ಕೆಳಗಿನ ನ್ಯಾಸ್‍ಡಾಕ್ ಬೆಳವಣಿಗೆಯನ್ನು ನೋಡಿ.

ಜನವರಿ ೩, ೨೦೦೦ ರಂದು 4,186 ಕ್ಕೆ ತೆರೆದುಕೊಂಡ NASDAQ ಮಾರ್ಕೆಟ್ಟಿನ ಇಂಡೆಕ್ಸ್ ಅದೇ ವರ್ಷದ ಮಾರ್ಚ್ ೬ ರಂದು 5,048 ಹೋಗಿದ್ದನ್ನು ಬಿಟ್ಟರೆ ಅಲ್ಲಿಂದ ಕ್ರಮೇಣ ಹಂತ ಹಂತವಾಗಿ ಕೆಳಮುಖವಾಗಿ ಹರಿದ ಮಾರ್ಕೆಟ್ಟಿನ ಗ್ರಾಫು ಬುಡ ಬಂದು ಸೇರಿದ್ದು ಸೆಪ್ಟೆಂಬರ್ ೩೦, ೨೦೦೨ ರಂದೇ - ಅಂದು 1,139 ಕ್ಕೆ ಕ್ಲೋಸ್ ಆದ ಮಾರ್ಕೆಟ್ಟಿನ ಕೆಲ ದಾಖಲೆ ಎಂದೇ ಹೇಳಬೇಕು. ಸುಮಾರು ನಾಲ್ಕು ಸಾವಿರ ಪಾಯಿಂಟುಗಳಷ್ಟು ಕುಸಿತ ಕೇವಲ ಎರಡೂವರೆ ವರ್ಷಗಳಲ್ಲಿ. ಲಕ್ಷಾಂತರ ಜನ ತಮ್ಮ ಟೆಕ್ನಾಲಜಿ ಇನ್ವೆಷ್ಟುಮೆಂಟುಗಳಲ್ಲಿ ಹಣ ಕಳೆದುಕೊಂಡರು, ಬುದ್ಧಿವಂತರು ಆದಷ್ಟು ಬೇಗ ಟೆಕ್ನಾಲಜಿ ಸೆಕ್ಟರುಗಳಿಂದ ಜಾಗ ಖಾಲಿ ಮಾಡಿ ರಿಯಲ್ ಎಸ್ಟೇಟೋ ಮತ್ತಿನ್ನೆಲ್ಲೋ ತೊಡಗಿಸಿ ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಂಡರು, ಇನ್ನುಳಿದವರು Yahoo, Oracle, Microsoft, Cisco ಮೊದಲಾದ ಕಂಪನಿಗಳಲ್ಲಿ ತಮ್ಮ ಹಣ ದಿನೇ ದಿನೇ ಕುಸಿಯೋದನ್ನು ನೋಡಿಕೊಂಡೇ ಸುಮ್ಮನಿದ್ದರು. ಇವೆಲ್ಲವನ್ನೂ ಮಾರ್ಕೆಟ್ ಪಂಡಿತರು ಬೇಕಾದ ರೀತಿಯಲ್ಲಿ ಅವಲೋಕಿಸಿ ಬೇಕಾದಷ್ಟನ್ನು ಪಬ್ಲಿಷ್ ಮಾಡಿರಬಹುದು, ಆದರೆ ಜನವರಿ ೨೦೦೩ ರಿಂದ ನಂತರದ ಕಥೆಯೇ ಬೇರೆ.

ಜನವರಿ ೬, ೨೦೦೩ ರಂದು 1,390 ಗೆ ತೆರೆದುಕೊಂಡ NASDAQ ಅದೇ ವರ್ಷ ಡಿಸೆಂಬರ್ ಅಂತ್ಯದ ಹೊತ್ತಿಗೆ 2,000 ದ ಗಡಿ ದಾಟಿತ್ತು. ಫೈನಾನ್ಸ್ ಪಂಡಿತರು, ಟಿವಿಯಲ್ಲಿನ ಮಾತನಾಡುವ ತಲೆಗಳು, ಮತ್ತಿತರ ಮಹಾಮಹಿಮರೆಲ್ಲರೂ ಮಾರ್ಕೆಟ್ಟನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಆ ವರ್ಷದ ಮಟ್ಟಿಗೆ NASDAQ ನಲ್ಲಿ 30% ಗಿಂತಲೂ ಹೆಚ್ಚು ಉತ್ತಮ ರಿಟರ್ನ್ಸ್‌ಗಳನ್ನು ಕಂಡುಕೊಂಡಿದ್ದು ನಿಜವಾದರೂ ಅದರ ಹಿಂದಿನ ಎರಡೂವರೆ ವರ್ಷಗಳಲ್ಲಿ ಹಣ ಕಳೆದುಕೊಂಡ ಬಗ್ಗೆ ಏನೂ ಸೆನ್ಸಿಟಿವಿಟಿಯೇ ಇಲ್ಲವೇ ಎಂದು ಅನ್ನಿಸಿದ್ದೂ ನಿಜ.

***

ಹೀಗೆ ಬಂಡವಾಳಶಾಹಿ ಜಗತ್ತಿನ ಬದುಕಿನಲ್ಲಿ ಇನ್ನೂ ಅನೇಕ ಸೂತ್ರಗಳಿವೆ, ಅವುಗಳನ್ನೆಲ್ಲ ಹೆಕ್ಕಿ ಹೇಳುತ್ತಾ ಹೋದರೆ ದೊಡ್ಡ ಕಥೆಯಾದೀತು. ಈ ಮಹಾಮಂತ್ರಗಳ ಪಟ್ಟಿ ಇಲ್ಲಿಗೆ ನಿಲ್ಲೋದಿಲ್ಲ, ಇನ್ನೂ ಬೇಕಾದಷ್ಟಿವೆ, ಅವುಗಳನ್ನು ಪುರುಸೊತ್ತು ಮಾಡಿಕೊಂಡು ಬೆಳೆಸಿಕೊಂಡು ಹೋಗಬೇಕಷ್ಟೆ, ಅಥವಾ ಅದರ ಬದಲಿಗೆ ಒಂದು ಪುಸ್ತಕ ಬರೆದರೂ ಆದೀತು!

ಇನ್ನು ಮುಂದೆ ಎಂದಾದರೂ ಒಮ್ಮೆ ಬಂಡವಾಳಶಾಹಿ ಜಗತ್ತಿನ ತಪ್ಪು-ಒಪ್ಪುಗಳ ಬಗ್ಗೆಯೂ, ತಪ್ಪನ್ನು ಕಂಡು ಹಿಡಿದವರಿಗೆ ಕೊಡುವ ಇನಾಮಿನಿಂದ ಹಿಡಿದು, ಕಂಪನಿಗಳು ಸರ್ಕಾರಕ್ಕೆ, ಸರ್ಕಾರದ ವಿವಿಧ ಎಂಟಿಟಿಗಳಿಗೆ ಸೆಟಲ್‌ಮೆಂಟ್ ದೃಷ್ಟಿಯಲ್ಲಿ ಹಂಚುವ ಹಣದ ಬಗ್ಗೆ ಬರೆಯುತ್ತೇನೆ.

Saturday, January 26, 2008

ಸುಂಕ ವ್ಯವಸ್ಥೆಯ ಸುಖ ದುಃಖಗಳು

ರಸ್ತೆಗಳೆಂಬ ಮಟ್ಟಗಾರರ ಬಗ್ಗೆ ಬರೆಯೋ ಹೊತ್ತಿಗೆ ಉಳಿದ ಮಟ್ಟಗಾರರ ಬಗ್ಗೆ ಯೋಚಿಸಿದಂತೆಲ್ಲಾ ಟ್ಯಾಕ್ಸ್ ಸೀಜನ್ನಿನಲ್ಲಿ ಟ್ಯಾಕ್ಸ್ ಬಗ್ಗೆ ಯೋಚಿಸಿ ಬರೆಯದೇ ಹೋದರೆ ಹೇಗೆ ಎಂದು ಅನ್ನಿಸಿದ್ದಂತೂ ನಿಜ. ಈ ಟ್ಯಾಕ್ಸ್, ತೆರಿಗೆ, ಕರ, ಸುಂಕ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಕಾನ್ಸೆಪ್ಟ್ ಮಹಾ ಮಟ್ಟಗಾರರಲ್ಲೊಂದು, ಸರ್ಕಾರ ಟ್ಯಾಕ್ಸ್ ಅನ್ನು ಹೇಗೆ ವ್ಯಾಖ್ಯಾನಿಸಿಕೊಂಡರೂ, ಜನರು ಅದನ್ನು ತಮ್ಮ ತಮ್ಮ ಮಟ್ಟಿಗೆ ಅದನ್ನು ಹೇಗೇ ಅನ್ವಯಿಸಿಕೊಂಡರೂ ಟ್ಯಾಕ್ಸ್ ಅನ್ನುವುದು ಯಾರನ್ನೂ ಬಿಟ್ಟಂತಿಲ್ಲ.

ಮೊನ್ನೆ ಹೀಗೇ ಅಫಘಾನಿಸ್ತಾನದವರ ಬಗ್ಗೆ ನನ್ನ ಸಹೋದ್ಯೋಗಿಯೊಡನೆ ಮಾತು ಬಂತು. ಅಭಿವೃದ್ಧಿ ಹೊಂದಿದ ದೇಶದ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೋಶಿಯಲ್ ಸೆಕ್ಯೂರಿಟಿ ನಂಬರ್ ಎನ್ನುವ ಒಂಭತ್ತು ಸಂಖ್ಯೆಗಳಿಂದ ಅಳೆದು ಪ್ರತಿಯೊಬ್ಬರಿಂದ ಲೆಕ್ಕಕ್ಕೆ ತಕ್ಕಂತೆ ಟ್ಯಾಕ್ಸ್ ಕೀಳುವುದು ಇರಲಿ ಕೊನೆಗೆ ವರ್ಷಕ್ಕೊಮ್ಮೆ ಅಮೇರಿಕದ ನಾಗರಿಕರು ತಮ್ಮ ವಾರ್ಷಿಕ ಆದಾಯ ಇಂತಿಷ್ಟಕ್ಕಿಂತ ಹೆಚ್ಚಿದ್ದರೆ ಅವರ ಟ್ಯಾಕ್ಸ್ ಅನ್ನು ಫೈಲ್ ಮಾಡಬೇಕಾದ ಅಗತ್ಯವನ್ನು ಮನಗಾಣುವುದು ಸುಲಭವಾಗಿತ್ತು. ನನ್ನ ಪ್ರಕಾರ (ಯಾವುದೇ ದಾಖಲೆಯ ಬೆಂಬಲವಿಲ್ಲದೆ) ತೃತೀಯ ಜಗತ್ತಿನಲ್ಲಿ ಎಷ್ಟೋ ಜನರಿಂದ ಅಪರೋಕ್ಷವಾಗಿ ವಸೂಲಿ ಮಾಡುವ ಸೇಲ್ಸ್ ಟ್ಯಾಕ್ಸ್ ಅನ್ನು ಬಿಟ್ಟರೆ ವರ್ಷಕ್ಕೊಮ್ಮೆ ಎಲ್ಲರೂ ತಮ್ಮ ತಮ್ಮ ಆದಾಯಕ್ಕನುಗುಣವಾಗಿ ಟ್ಯಾಕ್ಸ್ ಅನ್ನು ಕಟ್ಟುವುದಾಗಲೀ ಅದನ್ನು ಫೈಲ್ ಮಾಡುವುದಾಗಲೀ ಸಾಧ್ಯತೆಗಳೇ ಇಲ್ಲ. ಸೇಲ್ಸ್ ಟ್ಯಾಕ್ಸ್ ಜೊತೆಗೆ ಯಾರು ಯಾರು ನಿಜವಾದ ಪೇ ಚೆಕ್ (ಸ್ಟಬ್) ಗಳನ್ನು ತೆಗೆದುಕೊಳ್ಳುತ್ತಾರೋ ಅವರಿಂದ ಸರ್ಕಾರದವರು, ಸಂಬಂಧಿತ ಇಲಾಖೆಯವರು ಟ್ಯಾಕ್ಸ್ ಅನ್ನು ವಜಾ ಮಾಡಿಕೊಳ್ಳುವ ಸಾಧ್ಯತೆಗಳಿರಬಹುದು, ಅದನ್ನು ಬಿಟ್ಟರೆ ರೈತರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಸಣ್ಣ (ಗೃಹ) ಕೈಗಾರಿಕೆಗಳನ್ನು ನಡೆಸಿಕೊಂಡಿರುವವರು ಇತ್ಯಾದಿಗಳಿಂದ ಇಂತಿಷ್ಟೇ ಆದಾಯ ಹಾಗೂ ಅದಕ್ಕೆ ತಕ್ಕ ಟ್ಯಾಕ್ಸ್ ಎಂದು ವಸೂಲಿ ಮಾಡಿದ್ದನ್ನು ನಾನು ನೋಡಿಲ್ಲ, ಇತ್ತೀಚೆಗೇನಾದರೂ ಭಾರತದಲ್ಲಿ ಟ್ಯಾಕ್ಸ್ ಬದಲಾವಣೆಗಳಾಗಿದ್ದರೆ ಅದು ನನ್ನ ಮೌಢ್ಯವಷ್ಟೆ. ಇತ್ತೀಚೆಗಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಕ್ಕಿರುವ ಅಫಘಾನಿಸ್ತಾನದಲ್ಲಿ ಯಾವ ಮಟ್ಟದ ಟ್ಯಾಕ್ಸ್ ವ್ಯವಸ್ಥೆ ಇದೆ, ಅಲ್ಲಿನ ಪ್ರತಿಯೊಬ್ಬ ನಾಗರಿಕರು ಹೇಗೆ ಟ್ಯಾಕ್ಸ್‌ಗೆ ಒಳಪಟ್ಟಿದ್ದಾರೆ ಎನ್ನುವುದು ನನಗೆ ನಿಖರವಾಗಿ ಗೊತ್ತಿಲ್ಲದಿದ್ದರೂ, ಬಡತನದಲ್ಲಿ ಬಾಂಗ್ಲಾ ದೇಶಕ್ಕೆ ಪೈಪೋಟಿ ಕೊಡುತ್ತಿರುವ ಅಲ್ಲಿನ ಜನರ ಉತ್ಪಾದನೆಯೇ ಕಡಿಮೆ ಇದ್ದು ಇನ್ನು ಪಾಪ ಅವರಾದರೂ ಯಾವ ಟ್ಯಾಕ್ಸ್ ಅನ್ನು ಕೊಟ್ಟಾರು. ಹಾಗೆಯೇ ಅಮೇರಿಕದಲ್ಲಿನ ಪ್ರತಿ ರಾಜ್ಯದ ಪ್ರತಿಯೊಬ್ಬರೂ ನಿಖರವಾಗಿ ಟ್ಯಾಕ್ಸ್ ಕೊಡುತ್ತಾರೆ ಎಂದೇನೂ ಅಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸೋಶಿಯಲ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಷನ್ನ್ ನವರು ಒಂಭತ್ತು ಸಂಖ್ಯೆಗಳನ್ನೇನೋ ಒದಗಿಸಿಕೊಟ್ಟಿರಬಹುದು, ಆದರೆ ಅಮೇರಿಕದ ಉದ್ದಗಲಕ್ಕೂ ಪ್ರತಿಯೊಬ್ಬರಿಗೂ ಕನಿಷ್ಠ ಟ್ಯಾಕ್ಸ್ ಕೊಡುವ ಆದಾಯವಿದ್ದು, ಅವರು ಲೆಕ್ಕಕ್ಕೆ ತಕ್ಕಂತೆ ಕೊಡುತ್ತಾರೆ ಎನ್ನುವ ಜನರಲೈಜೇಷನ್ನನ್ನು ಮಾಡಲಾಗದು.

ಈ ಹಿನ್ನೆಲೆಯಲ್ಲಿಯೇ ಯೋಚಿಸಿ ಮತ್ತೊಂದು ಹೆಜ್ಜೆ ಮುಂದೆ ಹೋದಾಗ ಅಮೇರಿಕದವರಿಗೆ ಪ್ರಪಂಚದ ಉಳಿದ ದೇಶಗಳಲ್ಲಿನ ಅನುಕೂಲ, ಅನಾನುಕೂಲಗಳನ್ನು ಯೋಚಿಸಿಕೊಳ್ಳಲು ಕಷ್ಟವಾಗಬಹುದು ಎಂಬುದು ನನ್ನ ಅನಿಸಿಕೆ. ಭಾರತದಲ್ಲಿನ ಭ್ರಷ್ಟಾಚಾರವನ್ನಾಗಲೀ, ರಷ್ಯಾದಲ್ಲಿನ ಮಾಫಿಯಾವನ್ನಾಗಲೀ, ಎಷ್ಟೋ ದೇಶಗಳಲ್ಲಿನ ಅರಾಜಕತೆ, ಡಿಕ್ಟೇಟರ್‌ಶಿಪ್ಪುಗಳನ್ನಾಗಲೀ, ಅಲ್ಲಲ್ಲಿ ನಡೆಯುವ ಜನರ ದುರ್ಮರಣದ ಸಂಖ್ಯೆಯನ್ನಾಗಲೀ, ಅಥವಾ ಉಳಿದ ಮತ-ಧರ್ಮ-ಸಂಪ್ರದಾಯಗಳ ಹಿನ್ನೆಲೆಯನ್ನಾಗಲೀ ಅರ್ಥ ಮಾಡಿಕೊಳ್ಳಲು ದೊಡ್ಡ ಮನಸ್ಸೇ ಬೇಕು. ಇರಾಕ್‌ನಲ್ಲಿ ಸದ್ದಾಮನ ಸರ್ಕಾರವನ್ನು ಬೀಳಿಸಿದ್ದೇವೆ, ಅಲ್ಲಿನ ಜನರು ಸುಖವಾಗಿ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇಕೆ ಇರಬಾರದು? ಎಂದು ಕೇಳುವ ಪ್ರಶ್ನೆಗಳು ಬಾಲಿಶವೇ ಹೌದು. ಪ್ರಪಂಚದ ಎಲ್ಲರೂ ತಮ್ಮ ತಮ್ಮ ಲೆಕ್ಕದ ಟ್ಯಾಕ್ಸ್ ಅನ್ನು ನಿಖರವಾಗಿ ಕೊಟ್ಟು ಅವರವರ ಸರ್ಕಾರದ ಹುಂಡಿಯನ್ನೇಕೆ ಬೆಳೆಸಬಾರದು ಎನ್ನುವಷ್ಟೇ ಹುಂಬ ಪ್ರಶ್ನೆಯಾದೀತು. ಒಂದು ವ್ಯವಸ್ಥೆ - ಅದು ಟ್ಯಾಕ್ಸ್ ಕೊಟ್ಟು ಅದನ್ನು ಪರಿಶೀಲಿಸಿಕೊಳ್ಳುವ ಕ್ರಮವಾಗಿರಬಹುದು, ಲಂಚ ತೆಗೆದುಕೊಂಡವರನ್ನು ಗುರುತಿಸಿ ಥಳಿಸುವ ನಿಯಮವಾಗಿರಬಹುದು, ಕ್ರಿಮಿನಲ್ಲ್‌ಗಳನ್ನು ಹುಡುಕಿ ಶಿಕ್ಷಿಸುವ ಪರಿಯಾಗಿರಬಹುದು - ಅದು ಬೆಳೆದು ನಿಲ್ಲಲು ಆಯಾ ಸಮಾಜದ ಬೆಂಬಲವಂತೂ ಖಂಡಿತ ಬೇಕೇ ಬೇಕು, ಜೊತೆಗೆ ಹೆಚ್ಚಿನವರು ನಿಯಮಗಳನ್ನು ಪಾಲಿಸುವವರಾಗಿದ್ದಾಗ ಮಾತ್ರ ಹಾಗೆ ಮಾಡದವರನ್ನು ಹುಡುಕಿ ತೆಗೆಯುವುದು ಸುಲಭವಾದೀತು. ಆದರೆ ಸಮಾಜದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭ್ರಷ್ಟಾಚಾರದ ಸುಳಿಗೆ ಸಿಲುಕುವವರು ಹೆಚ್ಚಿದ್ದಾಗ, ತಮ್ಮ ಹಕ್ಕು-ಕರ್ತವ್ಯಗಳ ಬಗ್ಗೆ ತಿಳುವಳಿಕೆಯೇ ಇಲ್ಲದವರಿದ್ದಾಗ ಹಾಗೂ ಅಂತಹವರನ್ನು ಶೋಷಿಸುವ ವ್ಯವಸ್ಥೆ ಇದ್ದಾಗ ಯಾವೊಂದು ಸಮಾಜ ತಾನೇ ಆರೋಗ್ಯಕರವಾಗಿರಬಲ್ಲದು?

ಭಾರತದಲ್ಲಿ ಮಾರಾಟ ಮಾಡುವ ಬೆಂಕಿ ಪೊಟ್ಟಣದಿಂದ ಹಿಡಿದು ಉಳಿದ ವಸ್ತುಗಳಿಗೂ ಮಾರಾಟ ತೆರಿಗೆಯನ್ನು ಸೇರಿಸಿಯೇ ಮಾರಾಟ ಮಾಡುವ ವ್ಯವಸ್ಥೆಯನ್ನು ನೀವು ನೋಡಿರಬಹುದು. ಅಂಗಡಿಯಲ್ಲಿ ಕೊಂಡ ದಿನಸಿಯ ಚೀಟಿಯ ಕೊನೆಗೆ ನಾನಂತೂ ಟ್ಯಾಕ್ಸ್ ಕೊಟ್ಟಿದ್ದಿಲ್ಲ, ಇತ್ತೀಚೆಗೆ ಬಂದ ವ್ಯಾಟ್ (VAT) ಪದ್ಧತಿಯ ಪ್ರಕಾರ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ/ಸುಂಕವನ್ನು ತೆಗೆದುಕೊಳ್ಳುತ್ತಿರಬಹುದಾದರೂ ಹೆಚ್ಚಿನ ವಸ್ತುಗಳು ನನಗೆ ಗೊತ್ತಿದ್ದ ಹಾಗೆ ’inclusive of all taxes' ಎಂದು ಹಣೆ ಪಟ್ಟಿಯನ್ನು ಹಚ್ಚಿಕೊಂಡದ್ದು ನನ್ನ ನೆನಪು. ಅಮೇರಿಕದ ರೆಸ್ಟೋರೆಂಟುಗಳಲ್ಲಿ ಕೆಲಸ ಮಾಡುವ ವೇಟರ್ (ಸರ್ವರ್)ಗಳಾಗಲೀ, ಇಲ್ಲಿನ ಟ್ಯಾಕ್ಸಿ ಚಾಲಕರಾಗಲೀ ತಾವು ಪಡೆಯುವ ಟಿಪ್ಸ್ ಅನ್ನೆಲ್ಲ ನಿಖರವಾಗಿ ಲೆಕ್ಕ ಹಿಡಿದು ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎಂದು ನಾನೇನೂ ನಂಬುವುದಿಲ್ಲ. ಹಾಗೇ ಭಾರದಲ್ಲಿನ ರಿಕ್ಷಾ ಡ್ರೈವರುಗಳೂ ಜನರಿಂದ ಪಡೆಯುವ ಮೀಟರ್ ಹಣದ ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎನ್ನುವುದು ನಂಬಲು ಕಷ್ಟವಾದ ವಿಷಯವೇ. ಹಾಗಿದ್ದ ಮೇಲೆ ಈ ರೀತಿಯ ಕೆಲಸಗಾರರಿಂದ ಹಿಡಿದು ಮಹಾ ಉದ್ಯಮಿಗಳಿಗೆಲ್ಲ ಅನ್ವಯವಾಗುವಂತೆ ವ್ಯಾಟ್ ಒಂದನ್ನು ಜಾರಿಗೆ ತಂದು ಬಿಡಿ ಎನ್ನುವುದು ನಿಜವಾಗಿ ಕಷ್ಟದ ಮಾತೇ. ಒಂದು ವಸ್ತು ಹಂತಹಂತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ ಕೈಯಿಂದ ಕೈಗೆ ಸಾಗುವ ವ್ಯವಸ್ಥೆಯೇ ಬೇರೆ ಅಲ್ಲಿ ಹೊಂದುವ ಟ್ಯಾಕ್ಸ್ ಪರಿಭಾಷೆಯನ್ನು ಸಾಮಾನ್ಯ ಜನರಿಗೂ ಬಳಸಿ ಅಲ್ಲಿ ಗೆಲ್ಲುವ ಮಾತಾದರೂ ಎಲ್ಲಿ ಬರುತ್ತದೆ.

ಅಮೇರಿಕದಲ್ಲಿ ತಲೆಯಿಂದ ತಲೆಗೆ ಬರುವ ಆಸ್ತಿಗಳಿಗೂ ಅನ್ವಯವಾಗುವಂತೆ ಟ್ಯಾಕ್ಸ್ ಬಳಸುವ ವ್ಯವಸ್ಥೆ ಇದೆ, ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮಂತಹವರಿಗೆ ಕಷ್ಟವಾಗಬಹುದು. ಒಂದು ತಲೆಯಿಂದ ಮತ್ತೊಂದು ತಲೆಗೆ ವ್ಯವಸ್ಥಿತವಾಗಿ ಹಂಚಿಹೋಗುವ ಆಸ್ತಿಗೆ ಮತ್ತೇಕೆ ಅವರು ಟ್ಯಾಕ್ಸ್ ಕೊಡಬೇಕು ಎನ್ನುವುದು ನನಗಂತೂ ಕಠಿಣವಾದ ಪ್ರಶ್ನೆಯೇ. ನಾವು ಬ್ಯಾಂಕಿನಲ್ಲಿಟ್ಟ ಹಣಕ್ಕೆ ವರ್ಷಕ್ಕೆ ಹತ್ತೇ ಹತ್ತು ಡಾಲರ್ ಬಡ್ಡಿ ಬಂದರೂ ಅದನ್ನು ನಮ್ಮ ಆದಾಯವೆಂದು ಪರಿಗಣಿಸಿ ಅದಕ್ಕೂ ತಕ್ಕದಾದ ಟ್ಯಾಕ್ಸ್ ವಸೂಲಿ ಮಾಡುವ ವ್ಯವಸ್ಥೆ ನನಗಂತೂ ಮೊದಲಿನಿಂದಲೂ ಇಷ್ಟವಾಗದ ವಿಚಾರವೇ. ಇಷ್ಟವೋ ಕಷ್ಟವೋ ಅದನ್ನು ನಿಖರವಾಗಿ ತೋರಿಸಿ ಅಷ್ಟರಮಟ್ಟಿಗೆ ಟ್ಯಾಕ್ ಕೊಟ್ಟು ಇರುವುದು ಕಷ್ಟವಾಗೇನೂ ಇಲ್ಲ. ಆದರೆ ನಮ್ಮಂತಹವರು ಈ ದೇಶದಿಂದ ಹೊರಕ್ಕೆ ಗಿಫ್ಟ್ ಆಗಿಯೋ ಮತ್ತೊಂದಕ್ಕೋ ಕಳಿಸುವ ಹಣವಿದೆಯೆಲ್ಲ ಅದನ್ನು ನಾವು ಯಾವುದೇ ರೀತಿಯಿಂದಲೂ ತೋರಿಸಲು ಸಾಧ್ಯವಾಗಿಲ್ಲ. ನೀವು ಇಷ್ಟೊಂದು ಹಣವನ್ನು ದುಡಿದಿದ್ದೀರಿ ಎನ್ನುವುದರ ಹಿಂದೆ ಎಷ್ಟೊಂದು ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಳೆದುಕೊಂಡಿದ್ದೀರಿ ಎನ್ನುವುದು ನಿಜ, ಅದರ ಜೊತೆಗೆ ನೀವು ನಿಮಗೆ ಬೇಕಾದವರಿಗೆ ಕೊಡಬಹುದಾದ ಗಿಫ್ಟ್ ಭಾರತದಿಂದ ಹೊರಗಿದ್ದರೆ ಇಲ್ಲಿನ ಸರ್ಕಾರದವರಿಗೆ ಅದು ಲೆಕ್ಕಕ್ಕೆ ಸಿಗದ ಕಾರಣ ಅದನ್ನು ವೆಚ್ಚವಾಗಿ ಬಳಕೆಯಾಗಿ ನೋಡುತಾರೆಯೇ ವಿನಾ ಅದಕ್ಕೆ ತೆರಿಗೆ ವಿನಾಯಿತಿಯನ್ನು ಕೊಡಲು ಕಷ್ಟವಾದೀತು. ಒಟ್ಟಿನಲ್ಲಿ ಪೇ ಚೆಕ್ಕ್‌ನಿಂದ ಪೇ ಚೆಕ್ಕ್‌ಗೆ ಹೋಗುವ ವ್ಯವಸ್ಥೆಯಲ್ಲಿ ಉಳಿಸುವುದೇನಿದ್ದರೂ ಟ್ಯಾಕ್ಸ್ ಅನ್ನು ಕೊಟ್ಟಬಳಿಕವೇ ಎನ್ನುವುದು ನಿಜ, ನಿಮಗೆ ಬೇಕೋ ಬೇಡವೋ ಅಗತ್ಯವಾದ ಟ್ಯಾಕ್ಸ್ ಅನ್ನು ಮೊದಲೇ ಹಿಡಿದುಕೊಂಡಿರುವುದರಿಂದ ವರ್ಷದ ಕೊನೆಗೆ ನಾವು ನಾವು ಫೈಲ್ ಮಾಡಿ ಸರ್ಕಾರದಿಂದ ಹಣವೇನಾದರೂ ಹಿಂತಿರುಗಿ ಬರುತ್ತದೆಯೇನೋ ಎಂದು ಬಕಪಕ್ಷಿಯ ಹಾಗೆ ಕಾದುಕೊಂಡಿರುವುದು ತಪ್ಪೋದಂತೂ ಇಲ್ಲ.