Sunday, February 24, 2008

ಬೆಂಕಿ-ಉರಿ-ಬೆಳಕು

ಅಗ್ಗಿಷ್ಟಿಕೆಯಲ್ಲಿ (fireplace) ಬೆಂಕಿ ನಿಗಿ ನಿಗಿ ಉರಿತಾ ಉರಿತಾ ಇರೋ ಹೊತ್ತಿಗೆ ನಾನು ಕುಳಿತುಕೊಂಡ ಜಾಗೆಯೆಲ್ಲ ಗರಂ ಆಗಿ ಹೋಗಿತ್ತು. ಬಹಳ ದಿನಗಳ ನಂತರ ಕಟ್ಟಿಗೆ ಸುಟ್ಟು ಬೂದಿ ಆಗಿ ಬೆಂಕಿ ಸಂಪೂರ್ಣ ಆರಿ ಹೋಗುವ ಕಾಯಕವನ್ನು (process) ಅನ್ನು ನೋಡೋದಕ್ಕೆ ಒಂದು ರೀತಿ ಚೆನ್ನಾಗಿತ್ತು. ನಿಧಾನವಾಗಿ ಯಾರೋ ಹೇಳಿಕೊಟ್ಟು ಹೋಗಿದ್ದಾರೆ ಅನ್ನೋ ಹಾಗೆ ಘನವಾದ ಕಟ್ಟಿಗೆ ಉರಿದು, ಬೆಂಕಿಯಾಗಿ ಕೆಂಪು ಕೆಂಡವಾಗಿ ಮುಂದೆ ಬಿಳಿ ಬೂದಿಯಾಗಿ ಹೋಗೋದು ಈ ಭಾನುವಾರದ ಸಂಜೆಯ ಮಟ್ಟಿಗೆ ಅದೊಂದು ವಿಸ್ಮಯವೇ ಅನ್ನಿಸಿದ್ದು ಹೌದು. ಮೊದಲೆಲ್ಲ ಬಚ್ಚಲ ಒಲೆಗೆ ದರಲೆ ತುಂಬುವಾಗ ನಮ್ಮ ಮುಗ್ಧ ಮನಸ್ಸಿನಲ್ಲಿ ಅದೇನೇನೋ ಅನ್ನಿಸದ ವಿಷಯ ವಸ್ತುವೆಲ್ಲ ಒಂದು ರೀತಿ ಬೆಂಕಿ ಹೊತ್ತಿ ಹೊಮ್ಮಿಸಿದ ಹೊಗೆಯ ಹಾಗೆ ಮನದಲ್ಲಿ ಎದ್ದುಕೊಂಡಿದ್ದವು. ಎಷ್ಟೇ ಪ್ರಭಲವಾಗಿ ಉರಿದರೂ ಬೆಂಕಿಯಿಂದ ಬೆಳಕಾಗದು ಎಂದು ಎನ್ನಿಸಿದ್ದು ಅಂತಹ ಶುಷ್ಕ ಮನಸ್ಸಿನ ವೇದಾಂತಗಳಲ್ಲೊಂದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಬೆಂಕಿಯ ಜೊತೆಗಿನ ಬೂದಿ ಬೆಳಕಿನ ಬಗ್ಗೆ ಮಾತನಾಡುವ ಬದಲು, ಈ ಬೆಂಕಿ ಉರಿಯುತ್ತಿರುವಾಗ ನಾನು ಮೊದಲಿನಿಂದಲೂ ಮಾಡಿಕೊಂಡಿದ್ದ ಅಂಶವೊಂದು ಗಮನಕ್ಕೆ ಬಂತು - ಬೆಂಕಿಯು ಹತ್ತಿ ಉರಿದಂತೆಲ್ಲಾ ಕಟ್ಟಿಗೆ ತುಂಡುಗಳನ್ನು ಒಂದಕ್ಕೊಂದು ತಾಕಿಸಿ ಕೂಡಿಟ್ಟು ಮತ್ತೆ ಅವುಗಳ ನಡುವೆ ಜ್ವಾಲೆ ಹೆಚ್ಚುವಂತೆ ಮಾಡುವುದು. ಎಷ್ಟೇ ಜೋರಾಗಿ ಬೆಂಕಿ ಉರಿಯುತ್ತಲಿದ್ದರೂ ಒಮ್ಮೆ ಒಂದು ಕಟ್ಟಿಗೆಯ ಅಡ್ಡವಾಗಿ ಮತ್ತೊಂದು ಕಟ್ಟಿಗೆ ಬಾರದೇ ಹೋದರೆ, ಅಥವಾ ಅಡ್ಡ ಕಟ್ಟಿಗೆ ಉರಿಯುವುದು ನಿಂತರೆ ಈ ಕೂಡಿಟ್ಟ ಕಟ್ಟಿಗೆಗಳ ಮಗ್ಗಲು ಬದಲಾಯಿಸುವುದು ಅನಿವಾರ್ಯ, ಇಲ್ಲವೆಂದರೆ ಬೆಂಕಿ ಆರಿ ಹೋದೀತು, ಇಲ್ಲವಾದರೆ ನಿಧಾನವಾಗಿ ಉರಿದು ಕಾವೇ ಬಾರದೇ ಹೊಗೆಯೇ ಹೆಚ್ಚಾದೀತು.


***

ಅನ್ನ, ಪ್ರಾಣ, ಜ್ಞಾನ, ವಿಜ್ಞಾನ, ಆನಂದಗಳೆಂಬ ಹಂತಗಳನ್ನು ನಮ್ಮ ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಯಾರೂ ಬೇಕಾದರೂ ವಿವರಿಸಬಲ್ಲರು. ಒಂದಿಷ್ಟು ಜನರು ದಿನನಿತ್ಯದ ವಿಷಯದಲ್ಲಿ ಅನ್ನ-ಪ್ರಾಣಗಳ ಸಲುವಾಗಿ ದುಡಿದು-ಬಡಿದಾಡಿ-ಕಾದಾಡಿಕೊಂಡರೆ, ಇನ್ನೊಂದಿಷ್ಟು ಜನರಿಗೆ ಅನ್ನ-ಪ್ರಾಣಗಳು ದೇವರು ಕೊಟ್ಟ ವರವಾಗಿ, ಅವರ ಕಷ್ಟ-ನಷ್ಟಗಳೇನಿದ್ದರೂ ಜ್ಞಾನ-ವಿಜ್ಞಾನಕ್ಕೆ ಮೀಸಲಾದವು. ಇನ್ನು ಕೆಲವೇ ಕೆಲವು ಜನರು ಮುಂದೆ ಹೋಗಿ ಬದುಕನ್ನು ಆಳವಾದ ಆನಂದವನ್ನು ಪಡೆಯುವುದಕ್ಕೆ ಮೀಸಲಾಗಿಟ್ಟಿರುವುದು ನಮಗೆಲ್ಲರಿಗೂ ಜನಜನಿತ. ಇದನ್ನೇ Maslow's hierarchy of needs ಎಂದಾದರೂ ಕರೆದುಕೊಳ್ಳಲಿ, ಅಥವಾ High Performance Business Program ಎಂದಾದರೂ ಕರೆದುಕೊಳ್ಳಲಿ. ವ್ಯಕ್ತಿ ಅಥವಾ ಸಂಸ್ಥೆಗಳು ಸಾವಿರಾರು ವರ್ಷದಿಂದ ಮಾಡಿದ್ದನ್ನೇ, ಅಥವಾ ಬಲ್ಲದ್ದನ್ನೇ ಬೇರೆ ಪದಗಳಲ್ಲಿ ಬಣ್ಣಿಸಿಯೋ ಅಥವಾ ಅವರದ್ದೇ ಆದ ಮಸೂರದಲ್ಲಿ ತೋರಿಸಿಯೋ ಯಾವುದೋ ಒಂದು ರೀತಿಯಲ್ಲಿ ಹೊಸ ಹೊಸ ವಿವರಣೆಗಳು, ಅನ್ವೇಷಣೆಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ ಕೆಲವೊಮ್ಮೆ ಅವುಗಳನ್ನು ಕುರಿತು ಓದಲು ತೊಡಗಿದರೆ.

ಓಹ್ ನಮ್ಮದೇನು ಸಾವಿರಾರು ವರ್ಷಗಳ ಇತಿಹಾಸ ಇರುವಂಥದ್ದು ಎಂದು ನಾವು ಸುಮ್ಮನೇ ಕೂರುವಂತೂ ಇಲ್ಲ. ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಅಥವಾ ದೇಶವಾಗಲೀ ಮುಂದಾಳತ್ವದ ದೃಷ್ಟಿಯಿಂದ ಇಂದು ಏನೇನು ಚೆನ್ನಾಗಿ ನಡೆಯುತ್ತಿದೆಯೋ ಅದನ್ನು ಬಿಟ್ಟು ಇನ್ನು ಏನು ಚೆನ್ನಾಗಿ ನಡೆಯಬೇಕು ಎಂದು ಯೋಚಿಸುವುದು, ಯೋಚಿಸಿ ಕಾರ್ಯತಂತ್ರವನ್ನು ರೂಪಿಸಿ ಹಾಗೆ ನಡೆಯುವುದೇ ಇಂದಿನ ದಿನಗಳ ಸವಾಲು. ಪ್ರಪಂಚದ ಯಾವುದೋ ಒಂದು ದೇಶದ ಜನರು ಉಳಿದೆಲ್ಲರನ್ನು ಆಳುವ ಕಾಲ ದೂರವಾಗಿ ಅಲ್ಲಲ್ಲಿ ಕ್ರಮೇಣ ಬಲಿಷ್ಠ ರಾಷ್ಟ್ರಗಳು ಹುಟ್ಟಿಕೊಳ್ಳುವ ಬೆಳವಣಿಗೆಯ ದೃಷ್ಟಿಯಿಂದಂತೂ ಇಂದು ಬೆಳೆಯುತ್ತಿರುವ ಪ್ರತಿಯೊಂದು ರಾಷ್ಟ್ರಗಳು ಮುಬರುವ ನಾಳೆಗಳ ಕುರಿತು ಯೋಚಿಸಿ ಯಾವುದೋ ಒಂದು ತಂತ್ರವನ್ನು ಅನುಸರಿಸುತ್ತ ಹಾಗಿರುವಂತೆ ತೋರುತ್ತದೆ ಇಂದಿನ ದಿನಗಳ ವಿದ್ಯಮಾನ.

ನಿನ್ನೆಯ ದಿನಗಳ ನೆರಳಲ್ಲಾಗಲೀ ಹಳೆಯ ಇತಿಹಾಸದಲ್ಲಾಗಲಿ ಕಲಿಯುವುದು ಬೇಕಾದಷ್ಟಿರಬಹುದು, ಆದರೆ ಅವುಗಳಿಂದ ಕಲಿಯುವವರು ಕಡಿಮೆಯೇ ಎನ್ನುವುದು ನನ್ನ ಅಂಬೋಣ. ಹಾಗಿಲ್ಲದೇ ಹೋದರೆ ಜಗತ್ತಿನಲ್ಲೇನು ದಿನವಿಡೀ ಹೊಸ ಮೂರ್ಖರು ಹುಟ್ಟುತ್ತಲೆಯೇ ಇರುತ್ತಾರೆಯೇನು? ಅವರಿವರು ಮಾಡಿದ್ದನ್ನು ನಾವೂ ನೋಡಬೇಕು, ಹಳೆಯದೆಲ್ಲವನ್ನು ನಾವೂ ತಿಳಿಯಬೇಕು ಎನ್ನುವುದರ ಹಿಂದೆ ಇರುವ ತತ್ವವೇ ಅದರಿಂದೇನಾದರೊಂದಿಷ್ಟು ಕಲಿಯಬೇಕು ಎಂಬುದು. ಆ ಕಲಿಕೆ ಇನ್ನಷ್ಟು ಹೆಚ್ಚಿ ವ್ಯವಸ್ಥಿತವಾದಷ್ಟು ಪ್ರತಿಯೊಬ್ಬರಿಗೂ ಒಳ್ಳೆಯದೇ. ನಿನ್ನೆ ನಡೆದ ಕಾರ್ಯತಂತ್ರಗಳು ಇಂದು ಹಳಸಲಾದಾವು, ಅವುಗಳು ಹಳೆಯದಾಗುವಷ್ಟರಲ್ಲೇ ಹೊಸದನ್ನು ಹುಡುಕಿಕೊಳ್ಳುವುದರಲ್ಲಿ ಸಮಯವನ್ನು ವ್ಯಯಿಸುವ ತಾರ್ಕಿಕತೆ ಎಷ್ಟೋ ಸಂಸ್ಥೆ, ದೇಶಗಳಲ್ಲಿರುವುದರಿಂದಲೇ ಅವು ತಾವು ಮಾಡುತ್ತಿರುವುದರಲ್ಲಿ ಮುಂದಿರುವುದು.

***

ಹೀಗೆ ಬರೆಯುತ್ತ ಹೋದ ಹಾಗೆ ಇಷ್ಟು ಹೊತ್ತು ಉರಿದು ಅಟ್ಟ ಹಾಸ ಬೀರುತ್ತಿದ್ದ ಜ್ವಾಲೆಯ ಆಟ ಸ್ವಲ್ಪ ಕಡಿಮೆಯಾಯಿತು. ನಾನು ಸುಮ್ಮನೇ ಇದ್ದರೆ ಇನ್ನು ಬೆಂಕಿ ಆರಿ ಹೋಗಿ ಕೊನೆಗೆ ಉಳಿಯುವುದು ಇತಿಹಾಸ ಸಾರುವ ಅರ್ಧ ಸುಟ್ಟ ಕಟ್ಟಿಗೆ ಬೊಡ್ಡೆಗಳ ಅವಶೇಷ ಮಾತ್ರ. ಕಾಲದ ಸ್ವರೂಪದಲ್ಲಿ ಇತಿಹಾಸವನ್ನು ಬಿಂಬಿಸುವ ಈ ಬೊಡ್ಡೆಗಳ ಅವಶೇಷ ಮುಂಬರುವವರಿಗೆ ಯಾವುದೋ ಒಂದು ಪಾಠವನ್ನು ಕಲಿಸೀತು ಎನ್ನುವ ಹುಮ್ಮಸ್ಸಿನಿಂದ ನಾನು ಅವುಗಳನ್ನು ಹಾಗೆಯೇ ಬಿಡಬಹುದು. ಅಥವಾ ಉರಿಯುವ ತಾಕತ್ತು ಅವುಗಳಲ್ಲಿ ಇರುವವರೆಗೆ ನಾನು ಅವುಗಳನ್ನು ಮುಂದೂಡುತ್ತಲೋ ಅಥವಾ ಬದಿಯಿಂದ ಬದಿಗೆ ತಿರುಗಿಸುತ್ತಲೋ ಅಥವಾ ಒಂದಕ್ಕೊಂದು ತಾಗಿಕೊಂಡೋ ಇರುವಂತೆ ಮಾಡಿ ಅವುಗಳಲ್ಲಿದ್ದ ಶಕ್ತಿಯನ್ನು ಉರಿಯ ರೂಪದಲ್ಲಿ ಹೊರತೆಗೆದು ಬಿಡಬಹುದು. ಈ ಬದಲಾವಣೆಯ ಸಮಯ ಹೆಚ್ಚು ಹೊತ್ತು ಇರಲೊಲ್ಲದು, ಆದಷ್ಟು ಬೇಗ ಅರ್ಧ ಉರಿದ, ಅಲ್ಲಲ್ಲಿ ಉರಿಯುತ್ತಲ್ಲಿದ್ದ ಬೊಡ್ಡೆಗಳನ್ನು ಇನ್ನಷ್ಟು ಮುಂದೆ ತಳ್ಳುತ್ತೇನೆ. ಅವು ತಾವೇ ಸುಟ್ಟುಕೊಂಡು ಹೋಗುತ್ತಿದ್ದರೂ ಅದ್ಯಾವುದೋ ಕಷ್ಟದಿಂದ ಅವುಗಳನ್ನು ದೂರ ಸರಿಸಿದೆನೆಂದೋ ಇಲ್ಲಾ ಈಗಿನ ಮಟ್ಟಿಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಬಳಸಿದೆನೆಂದೋ ಒಂದು ರೀತಿಯ ಕೃತಜ್ಞತೆಯನ್ನು ಸ್ಪುರಿಸತೊಡಗುತ್ತವೆ, ಅದೇ ಖುಷಿಯಲ್ಲಿ ತಮ್ಮಲ್ಲಡಗಿದ ಯಾವುದೋ ಅವ್ಯಕ್ತ ಶಕ್ತಿಯ ಹುರುಪಿನಲ್ಲಿ ಗುರ್ರ್ ಗುರ್ರು ಎಂದು ಎಲ್ಲಾ ಕಡೆ ಜ್ವಾಲೆಯನ್ನು ಹತ್ತಿಸಿ ಆ ಕಾಲಕ್ಕಾದರೂ ಬೆಳಕು ಹಾಗೂ ದಗೆಯನ್ನು ಹರಡುತ್ತವೆ. ಉರಿಯುವ ಕೊಳ್ಳಿಗಳು ತಮ್ಮ ತಮ್ಮಲ್ಲಿ ತಡಕಾಡಿಕೊಂಡಾಗಲೇ ಜ್ವಾಲೆ ಹೆಚ್ಚಾಗುವುದೆಂದಾದರೆ ಹಾಗೆಯೇ ಆಗಲಿ.

Sunday, February 17, 2008

ಇಲ್ಲಿಗೂ ಅಲ್ಲಿಗೂ ಏನೂ ವ್ಯತ್ಯಾಸವಿಲ್ಲಾ ಅಂತಂದ್ರೆ...

ಇನ್ನೇನು ಸೂರ್ಯ ಹುಟ್ಟಿ ಜಗತ್ತನ್ನ ಬೆಳಗಬೇಕು ಅನ್ನೋ ಸೂಚನೆಗಳು ಸಿಕ್ಕೊಡನೆ ನಮ್ಮನೇ ಮೂಲೆಯಲ್ಲಿರೋ ಮಲ್ಲಿಗೆ ಗಿಡಗಳ ಎಲೆಗಳ ಮುಖದಲ್ಲಿ ಒಂದು ಮಂದಹಾಸ ಮಿನುಗ ತೊಡಗಿತು. ಅನತಿ ದೂರದಲ್ಲಿ ಮೋಡ ಮತ್ತು ಖಾಲಿ ಆಕಾಶಗಳ ನಡುವೆ ಅದೇ ತಾನೇ ಜಗತ್ತಿಗೆ ತನ್ನನ್ನು ಸಾರಿಕೊಂಡು ಕೆಂಪನ್ನು ಸಾರುತ್ತಿರುವ ಕಿರಣಗಳು ಈ ಎಲೆಗಳ ಮೇಲೆ ಹನಿ ಹನಿ ಸೇರಿ ತೆಳುವಾಗಿ ಮಂಜು ಕಟ್ಟಿದ್ದ ಲೇಪನದಲ್ಲೂ ಪ್ರತಿಫಲನವಾಗತೊಡಗಿತು. ಇನ್ನೇನು ಸೂರ್ಯ ಜಗತ್ತಿಗೆ ಬಂದೇ ಬಿಟ್ಟ ಕತ್ತಲೆ ಅನ್ನೋದು ಹಾರಿ ಹೋಯ್ತು ಎಂದು ಈ ಮಲ್ಲಿಗೆಯಲ್ಲಿನ ಎಲೆಗಳು ಬೀಗಿದ್ದೇ ಬಂತು. ಅದೆಷ್ಟೋ ಹೊತ್ತಿನಿಂದ ಹನಿಹನಿ ನೀರಿನ ಪಸೆಯನ್ನು ತಮ್ಮ ಮೈಮೇಲೆ ಶೇಖರಿಸಿಕೊಂಡು ’ಸದ್ಯ, ಈಗಲಾದರೂ ಬಂದ ಸೂರ್ಯ!’ ಎಂದು ಉಸ್ಸ್ ಎಂದು ಉಸಿರು ಬಿಡುವಷ್ಟರಲ್ಲಿ, ಅದ್ಯಾವುದೋ ತಣ್ಣಗಿನ ಗಾಳಿಯೊಂದು ಬೀಸಿತೋ ಇಲ್ಲವೋ ಎನ್ನುವಂತೆ ಬಂದು ಹೋದಂತಾಗಿ ಎಲೆಗಳು ಸ್ವಲ್ಪ ನಲುಗಿದ್ದೇ ತಡ, ಅವುಗಳ ಮೇಲಿನ ನೀರಿನ ಪಸೆ ನಿಧಾನವಾಗಿ ಹನಿಯೊಂದಾಗಿ ಜಾರಿ ಮಣ್ಣಿಗೆ ಬಿದ್ದು ಹೋಗೋದೇ! ’ಛೇ’ ಎಂದು ಎಲೆಗಳೆಲ್ಲ ಒಮ್ಮೆ ಕಿರುಚಿಕೊಂಡು ಬೇಕೋ ಬೇಡವೋ ಎನ್ನುವಂತೆ ಗಾಳಿಗೆ ತಲೆ ಆಡಿಸತೊಡಗಿದವು. ’ಹೋಯ್ತಲ್ಲಪ್ಪಾ!’ ಎನ್ನುವ ರೋಧನ ಇನ್ನೂ ಕೇಳಿಬರುತ್ತಿತ್ತೋ ಏನೋ, ಅಷ್ಟರಲ್ಲಿ ದಿಗಂತದ ಗೆರೆಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಮೇಲೆದ್ದು ಬಂದ ಸೂರ್ಯನ ಕಿರಣಗಳು ಎಲೆಗಳ ಮುಖದ ಮೇಲೆ ಬಿದ್ದು, ಅವು ಹಸಿರು ಬಣ್ಣದವಿದ್ದರೂ ಅವನ್ನು ತನ್ನ ಕೆಂಪಿನಲ್ಲಿ ತೋಯಿಸಿಕೊಂಡವು. ಒಂದು ಕಡೆ ತಮ್ಮ ನೀರಿನ ಪಸೆಯನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ಅದ್ಯಾವುದೋ ಹೊಸದರ ಸಂಭ್ರಮ. ಎಲೆಗಳ ಕಸಿವಿಸಿ ಚೆನ್ನಾಗಿ ಅವುಗಳ ಮುಖದ ಮೇಲೆ ಹೊಸಬೆಳಕಿನಲ್ಲಿ ಗೋಚರಿಸತೊಡಗಿತ್ತು. ಇದು ಯಾವುದೂ ತನಗೆ ಗೊತ್ತಿಲ್ಲ, ತನ್ನ ಹೊನ್ನ ಕಿರಣಗಳು ಎಲ್ಲೆಲ್ಲೋ ಹರಡಿ ಅವು ಏನೇನನ್ನೋ ಕಂಡುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎನ್ನುವ ಧೋರಣೆ ತಳೆದ ಸೂರ್ಯ ಒಂದಿನಿತೂ ಎಲ್ಲೂ ನಿಲ್ಲುವಂತೇನೂ ತೋರಲಿಲ್ಲ.

***

’ಯಾಕೋ ಬೇಜಾರ್ ಮಾಡ್ಕೊಂಡಿದಿಯಾ?’ ಎಂದೆ.

’ಏನಿಲ್ಲ, ಇಲ್ಲಿದ್ರೆ ಅಲ್ಲೀ ಯೋಚ್ನೆ, ಅಲ್ಲಿದ್ರೆ ಇಲ್ಲೀ ಯೋಚ್ನೆ...’

’ಏಕೆ, ಇತ್ತೀಚೆಗಷ್ಟೇ ಅಲ್ವೇ ನೀನು ಅಮೇರಿಕ ಬಿಟ್ಟು ಇಂಡಿಯಾಕ್ ಹೋಗಿದ್ದು? ಎಲ್ಲ ಸುಖವಾಗಿರಬೇಕಲ್ಲ’.

’ಅದೇ, ಸುಖವಾಗೇನೋ ಇದೀನಿ. ಆದ್ರೆ...’

’ಆದ್ರೆ ಏನು?’

’ಏನಿಲ್ಲ, ಇಲ್ಲಿಗೆ ಹಿಂತಿರುಗಿದಂದಿನಿಂದ ನನಗೆ ಆರೋಗ್ಯನೇ ಅಷ್ಟೊಂದು ಸರಿಯಾಗಿಲ್ಲ ಕಣೋ. ಅದೇನ್ ಅಮೇರಿಕದಲ್ಲಿ ಸ್ವಚ್ಛತೆಯ ವಾತಾವರಣದಲ್ಲಿದ್ವೋ ಬಿಟ್ವೋ ಇಷ್ಟೊಂದು ವರ್ಷಾ, ಇಲ್ಲಿಗೆ ಬರ್ತಾ ಇದ್ದ ಹಾಗೆ ಪ್ರತಿದಿನವೂ ಬ್ಯಾಕ್ಟೀರಿಯಾ ವೈರಸ್ಸುಗಳ ವಿರುದ್ಧ ಸೆಣೆಸೋದೇ ಆಗಿದೆ ನೋಡು. ಒಂದಲ್ಲ ಒಂದು ರೀತಿಯ ಕಷ್ಟ, ನಾಲ್ಕು ದಿನ ನೆಟ್ಟಗಿದ್ರೆ ಇನ್ನು ನಾಲ್ಕು ದಿನ ಮಲಗಿರ್ತೀನಿ ಅನ್ನೋ ಹಾಗಿದೆ.’

’ಏ, ಇಂಡಿಯಾ ಅನ್ನೋ ವಾತಾವರಣದಲ್ಲೇ ಅಲ್ವೇ ನಾವು ಬೆಳೆದು ಬಂದಿರೋದು. ಮತ್ತೆ ಅಲ್ಲಿಗೆ ವಾಪಾಸ್ ಹೋಗಿ ಬದುಕೋದು ಯಾಕ್ ಕಷ್ಟಾ ಆಗುತ್ತೆ? ಈ ಪೊಲ್ಯೂಷನ್ನೂ ಮತ್ತಿನ್ನೊಂದು ಹಿಂದೆಯೂ ಇತ್ತು ಮುಂದೆಯೂ ಇರುತ್ತೆ ಅದರಲ್ಲೇನು ವಿಶೇಷ?’

’ಅಲ್ಲೇ ಇರೋದು ವಿಶೇಷ, ಈ ಪ್ರಪಂಚ ಬಹಳಷ್ಟು ಬೆಳೆದಿದೆ. ನಾವು ಹತ್ತು ವರ್ಷದ ಹಿಂದೆ ನೋಡಿದ ಪೊಲ್ಯೂಷನ್ನು ಇವತ್ತಿನ ಪೊಲ್ಯೂಷನ್ನಿಗೆ ಯಾವ ಹೋಲಿಕೆಯೂ ಅಲ್ಲ. ಜೊತೆಗೆ ಇಂದಿನ ಬೆಳೆದ ವಾತಾವರಣದಲ್ಲಿರೋ ಸ್ಟ್ರೆಸ್ಸೂ ಕಾರಣಾ ಅನ್ನು’.

’ಸ್ಟ್ರೆಸ್ಸೂ ಅಂದ್ರೆ...’

’ಅದೇ, ಬೆಳಿಗ್ಗೆ ಎಂಟು ಘಂಟೆಗೆ ಆಫೀಸಿಗೆ ಹೋದ್ರೆ ಸಂಜೆ ಎಂಟರ ಮೇಲಾಗುತ್ತೆ ಬರೋದು. ಈ ಟ್ರಾಫಿಕ್ ಜಾಮ್ ಅನ್ನೋ ನಕ್ಷತ್ರಿಕ ಯಾವನಿಗೂ ಬಿಡೋ ಹಾಗೇ ಕಾಣ್ಸಲ್ಲ. ದಿನಕ್ಕೆ ಒಟ್ಟಿಗೆ ಹದಿನಾಲ್ಕು ಘಂಟೆ ಒದ್ದಾಡೋದನ್ನ ವೃತ್ತಿ ಜೀವನ ಅಂತ ಕರೆಯೋದಕ್ಕೂ ಹೇಸಿಗೆ ಅನ್ಸುತ್ತೆ ನೋಡು. ಇಲ್ಲಿಗೆ ಬಂದು ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದುಕೊಂಡಿದ್ದ ಆಸೆಗಳೆಲ್ಲ ಬಲೂನಿಗೆ ಸೂಜಿ ಚುಚ್ಚಿದ ಹಾಗೆ ಠುಸ್ಸ್ ಎಂದು ಹೋದ್ವು. ಕೆಲವೊಂದು ಸರ್ತೀ ಅಂತೂ ಇಲ್ಲಿನ ಟ್ರಾಫಿಕ್ ಜಾಮಿಗೆ ಹೆದರಿ ಅಥವಾ ಅದನ್ನ ನೆನೆಸಿಕೊಂಡೇ ನಾನು ಎಷ್ಟೋ ಕಾರ್ಯಕ್ರಮಗಳಿಗೆ ಹೋಗೋದೇ ಇಲ್ಲ. ಅಲ್ಲಿಗೆ ಹೋದ್ರೂ ಪಾರ್ಕಿಂಗ್ ಮಾಡಿ ಗೆಲ್ತೀನೀ ಅಂತ ಇನ್ನೂವರೆಗೆ ನನಗೆ ಎಲ್ಲೂ ಖಾತ್ರಿ ಆಗಿದ್ದಿಲ್ಲ’.

’ಹೌದಾ, ಅಷ್ಟೊಂದು ಕಷ್ಟವೇ?’

’ಕಷ್ಟಾನಾ, ಇದಕ್ಕೆ ಕಷ್ಟಾ ಅಂತಂದ್ರೆ ಅದು ಒಂದು ಅಂಡರ್ ಸ್ಟೇಟ್‌ಮೆಂಟು’.

’ಅವೆಲ್ಲ ಇರ್ಲಿ, ಆಫೀಸ್ ವಾತಾವರಣ ಹೇಗಿದೆ?’

’ಇದರಲ್ಲಿ ಹೆಚ್ಚಿಗೆ ಬದಲಾದಂತೆ ಅನ್ಸಲ್ಲ, ಅವೇ ಮೈಂಡ್‌ಸೆಟ್ಟುಗಳು, ಜನರು ಎಲ್ಲೀವರೆಗೆ ಬದಲಾಗೋಲ್ವೋ ಅಲ್ಲೀವರೆಗೆ ಇದೇ ಪರಿಸ್ಥಿತಿ ಮುಂದುವರೆಯುತ್ತೆ. ರೆಡ್ ಟೇಪಿಸ್ಸಮ್ಮು, ಡರ್ಟೀ ಪಾಲಿಟಿಕ್ಸೂ ಅಂತ ಅಮೇರಿಕದಲ್ಲಿ ಕರಿಯರಿಗೆ-ಬಿಳಿಯರಿಗೆ ನಾನು ಬೈದುಕೊಂಡಿದ್ದೇ ಬಂತು, ಇಲ್ಲಿ ನಡೆಯೋ ರಾಜಕೀಯ ಅವಾಂತರಗಳನ್ನ ನೋಡಿದ್ರೆ ಅಲ್ಲೇ ಎಷ್ಟೋ ವಾಸಿ ಅಂತ ಅನ್ಸುತ್ತೆ’.

’ವಿದೇಶದಲ್ಲಿ ಇಷ್ಟೊಂದು ವರ್ಷ ಅನುಭವ ಇದೆ ಅಂತ್ಲೂ ನಮ್ಮಂತೋರಿಗೆ ಬೆಲೆ ಸಿಗೋದಿಲ್ವೇನು?’

’ಓಹ್ ಸಿಗುತ್ತೆ, ಯಾಕ್ ಸಿಗಲ್ಲ. ಆದ್ರೆ ನೀನು ಹತ್ತು ಅಂದ್ರೆ ಜನ ಇಪ್ಪತ್ತು ಅನ್ನೋರ್ ಸಿಕ್ಕೇ ಸಿಗ್ತಾರೆ ಎಲ್ಲ್ ಹೋದ್ರೂ. ಜೊತೆಗೆ ಕೇವಲ ಎಕ್ಸ್‌ಪೀರಿಯೆನ್ಸ್ ಅಳತೇ ಮೇಲೆ ನಿನಗೇನೂ ಸಿಗೋದಿಲ್ಲ, ಯಾವ ಅನುಭವ ಎಲ್ಲಿ ಹೇಗಿತ್ತು ಅನ್ನೋದರ ಮೇಲೆ ಬಹಳಷ್ಟು ನಿರ್ಧಾರವಾಗುತ್ತೆ’.

’ಅದೆಲ್ಲ ಇರ್ಲಿ, ಮನೆಯವ್ರು, ಮಕ್ಳಾದ್ರೂ ಆರಾಮಾಗಿದ್ದಾರಾ?’

’ಹ್ಞೂ, ಒಂದು ರೀತಿ ಅವರೇ ಅರಾಮಾಗಿರೋರು ನನಗಿಂತ. ಒಂದು ಕಾಲ್ದಲ್ಲಿ ಇಂಡಿಯಾ ಮುಖವನ್ನ ನೋಡದ ಮಕ್ಳು ಇಲ್ಲಿಗೆ ಹೊಂದಿಕೋತಾರಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಇವತ್ತು ಅವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದಾರೆ, ಕಷ್ಟಾ ಬಂದಿರೋದೇ ನನಗೆ ನೋಡು...

’ಅದೇನ್ ಅಂತಾ ಕಷ್ಟಾ?’

’ಅದೇ, ಅಮೇರಿಕದಲ್ಲೂ ಮೈ ತುಂಬಾ ಸಾಲಾ ಮಾಡ್ಕೊಂಡು ಮಾರ್ಟ್‌ಗೇಜ್ ಕೊಟಗಂಡು ಮನೆಯಲ್ಲಿದ್ವಿ, ಇಲ್ಲಿ ಬಂದು ನೋಡಿದ್ರೆ ಒಂದು ಸಾಧಾರಣ ಮನೆ ಕಟ್ಸೋಕೇ ಒಂದು ಕೋಟಿ ರೂಪಾಯ್ ಅಂತಾರೆ - ಕಾಲು ಮಿಲಿಯನ್ ಅಮೇರಿಕನ್ ಡಾಲರ್ ನನ್ಹತ್ರ ಇದ್ದಿದ್ರೆ ಇಷ್ಟೊತ್ತಿಗೆ ನಾನು ಇಲ್ಯಾಕ್ ಇರ್ತಿದ್ದೆ? ಜೊತೆಗೆ ಸೈಟ್ ಅಂತ ಒಂದು ಇದ್ರೆ ಪುಣ್ಯ, ಇಲ್ಲ ಅಂದ್ರೆ ಇನ್ನೊಂದು ಐವತ್ತು ಲಕ್ಷವಾದ್ರೂ ಹೋಗುತ್ತೆ. ಎಲ್ಲಿಂದ ತರೋದು ಇಷ್ಟೊಂದು ದುಡ್ಡು? ಅದಕ್ಕೇ ಇಲ್ಲಿನ ಬ್ಯಾಂಕುಗಳ ಮೊರೆ ಹೋಗಿ ಮೈ ತುಂಬಾ ಸಾಲಾ ಮಾಡ್ಕೊಂಡಿದ್ದೀನಿ. ಅದರ ಫಲವೇ ನನ್ನ ಅಹರ್ನಿಶಿ ದುಡಿಮೆ, ಹೀಗೇ ಸಾಲಾ-ದುಡಿಮೆಯ ಚಕ್ಕರದಲ್ಲಿ ಮುಳುಗಿ ಹೋಗಿದ್ದೇನೆ ನೋಡು’.

’ಅಷ್ಟೊಂದು ವರ್ಷ ಅಮೇರಿಕದಲ್ಲಿದ್ರೆ ಸ್ವಲ್ಪವೂ ದುಡ್ಡು ಹುಟ್ಟೋಲ್ವೇ, ಉಳಿಯೋಲ್ವೇ?’

’ಇರುತ್ತೆ ಯಾಕಿಲ್ಲ? ಅವುಗಳೆಲ್ಲ ಒಂದಲ್ಲ ಒಂದು ಕಡೆ ಈಗಾಗ್ಲೇ ತೊಡಗಿಕೊಂಡಿರುತ್ತೆ, ಇಲ್ಲಾ ಅಂತಂದ್ರೂ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲಿಡಬೇಕು ಅಂತಂದ್ರೆ ಅಮೇರಿಕದಲ್ಲಿ ಪೇ ಚೆಕ್ ನಿಂದ ಪೇ ಚೆಕ್ ಗೆ ದುಡಿಯೋರ್ ಹತ್ರ ಕಷ್ಟ ಸಾಧ್ಯವೇ ಸರಿ. ಏನೇ ಅಂದ್ರೂ ಮಿಲಿಯನ್ ಡಾಲರ್ ಯಾವನ ಹತ್ರ ಇದೆ ನೀನೇ ಹೇಳು’.

’ಮತ್ತೇ, ಅಮೇರಿಕದಲ್ಲಿರೋರು ಇಂಡಿಯಾಕ್ ಬರ್ತೀವಿ ಅಂತಂದ್ರೆ ನೀನ್ ಅವರಿಗೆ ಹೇಳೋದೇನಾದ್ರೂ ಇದೆಯೇನು?’

’ಶೂರ್, ದಿನಕ್ಕೆ ಹದಿನಾಲ್ಕು ಘಂಟೆ ದುಡಿದು ಸಾಲದ ಚಕ್ಕರದಲ್ಲಿ ಬೀಳೋ ಹಾಗಿದ್ರೆ ನೀವ್ ಎಲ್ಲಿರ್ತೀರೋ ಅಲ್ಲೇ ಇರ್ರಿ, ಅದರ ಬದ್ಲಿ ಒಂದು ಸಣ್ಣ ಊರಲ್ಲಿ ಒಂದು ಉದ್ಯಮವನ್ನ ಶುರು ಹಚ್ಚಿಕೊಂಡು ನಿಮಗೆ ನೀವೇ ಬಾಸ್ ಆಗೋ ಹಾಗಿದ್ರೆ ಇಲ್ಲಿಗೆ ಬನ್ನಿ! ಇಲ್ಲೂ-ಅಲ್ಲಿಗೂ ಏನೂ ವ್ಯತ್ಯಾಸವಿಲ್ಲ ಅನ್ನೋದು ಒಳ್ಳೆಯದೋ ಕೆಟ್ಟದ್ದೋ ಅನ್ನೋದೂ ಅವರವರಿಗೆ ಬಿಟ್ಟಿದ್ದು ಅಂತ್ಲೂ ಹೇಳ್ತೀನಿ.

’ಮತ್ತೇ, ಎಲ್ರೂ ಬೆಂಗಳೂರಿಗೇ ಬರ್ತಾರೇ ಅಂತ ಕೇಳ್ದೆ...’

’ಅದೂ ನಿಜವೇ, ಎಲ್ರೂ ಇಲ್ಲೇ ಬಂದು ಸಾಯೋದ್ರಿಂದ್ಲೇ ಬೆಂಗಳೂರಿನವರಾದ ನಮಗೆ ಈ ಕಷ್ಟ ಬಂದಿರೋದು...ನನ್ನ ಕೇಳಿದ್ರೆ ಇಂಡಿಯಾದಲ್ಲಿ ಬೇರೆ ಊರುಗಳೇ ಇಲ್ವೇ, ಅಲ್ಲಿಗೆ ಹೋಗ್ಲಿ’ .

***

ನಮ್ಮನೆಯ ಮಲ್ಲಿಗೆಯ ಗಿಡದ ಎಲೆಗಳು ಇಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಬಲಿತ ಸೂರ್ಯ ರಶ್ಮಿಯಲ್ಲಿ ತೋಯ್ದು ಹೋಗಿದ್ದವು. ಗಾಳಿ ಬೀಸುತ್ತೆ ಬೆಳಕು ಬೀಳುತ್ತೆ ಮೈ ಮೇಲೆ ಮಂಜು ಕೂರುತ್ತೆ, ಅದು ನಿಸರ್ಗ ನಿಯಮ ಅನ್ನೋ ಉಪದೇಶ ಸಾರುವ ಮುಖವನ್ನು ಮಾಡಿಕೊಂಡಿದ್ದವು. ಅವುಗಳ ವೈರಾಗ್ಯ ಮನಸ್ಸಿನ ನೆರಳಿನಲ್ಲಿ ಇವತ್ತಲ್ಲ ನಾಳೆ ಎಲ್ಲವೂ ಸರಿ ಹೋಗೇ ಹೋಗುತ್ತೆ ಎನ್ನುವ ಛಾಯೆ ಕಂಡು ಬರುತ್ತಿತ್ತು. ಅದನ್ನ ಆಶಾಭಾವನೆ ಅನ್ನೋಣವೇ ಅಥವಾ ಬದುಕಿನ ಯೋಜನೆ ಎಂದು ಕರೆದುಕೋಳ್ಳೋಣವೇ ಎಂದು ಎಲೆಗಳ ನಡುವೆ ಇನ್ನೇನು ವಾದ ಏಳುವ ಹುರುಪು ಕಂಡುಬರುತ್ತಿತ್ತು.

Sunday, February 10, 2008

ಮೌನದ ಮೊರೆ

ಇತ್ತೀಚಿನ ದಿನಗಳನ್ನ ವೇಗಮಯ ದಿನಗಳು ಎಂದು ಕರೆದುಕೊಂಡರೆ - ನಮ್ಮ ಮುಂದುವರೆದ ಟೆಕ್ನಾಲಜಿ, ಎಲ್ಲವೂ ಈ ಕೂಡಲೇ ಬೇಕು ಎನ್ನುವ ಮನಸ್ಥಿತಿಯ ಹಿನ್ನೆಲೆಯಲ್ಲಿ - ಯಾರೂ ಮೌನಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡೋದಿಲ್ಲವೇ ಎಂದು ಎಷ್ಟೋ ಸಾರಿ ಅನ್ನಿಸಿದ್ದಿದೆ. ನಮ್ಮ ಆಫೀಸಿನಲ್ಲಿ ನಡೆಯುವ ಮುಖಾಮುಖಿ ಮೀಟಿಂಗುಗಳಲ್ಲಾಗಲೀ ಅಥವಾ ಟೆಲಿಫೋನ್ ಮೂಲಕ ನಡೆಯೋ ಕಾನ್‌ಫರೆನ್ಸ್ ಕರೆಗಳಾಗಲೀ ಇವು ಯಾವುದರಲ್ಲೂ ಪ್ರಶ್ನೆಯೊಂದರ ಉತ್ತರ ಹೊರಹೊಮ್ಮುವುದಕ್ಕೂ ಕಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೇ ನನ್ನ ಅನುಭವ. ಯಾರೋ ಪ್ರಶ್ನೆ ಕೇಳಿದ್ದಕ್ಕೆ ಥಟ್ಟನೆ ಉತ್ತರ ಹೇಳಿಬಿಡಬೇಕು, ಇಲ್ಲವೆಂದಾದರೆ ನಮಗೆ ಉತ್ತರ ಗೊತ್ತಿಲ್ಲವೆಂದು ಅವರೇ ತಮ್ಮ ಪ್ರಶ್ನೆಯನ್ನು ಉತ್ತರಿಸಿಕೊಂಡಾರು.

ಮಾತು-ಮೌನದಲ್ಲಿ ’ಪಂಚವಟಿ’ಯ ಲಕ್ಷ್ಮಣನ ಬಗ್ಗೆ ಬರೆದಿದ್ದೆ, ಕೆಲವೊಮ್ಮೆ ನಮ್ಮ ಮಾತುಗಳನ್ನು ನಾವು ಮನಸಿನಲ್ಲಿಯೋ ಹೊರಗೋ ಹರವಿಕೊಂಡು ಅದರ ವಿಸ್ತಾರವನ್ನು ನೋಡಿಕೊಳ್ಳೋದು ಸಹಜ. ಯಾರೋ ಒಂದು ಪ್ರಶ್ನೆಯನ್ನು ಕೇಳಿದರೆಂದು ಅವರ ಪ್ರಶ್ನೆ ಕೇಳಿ ನಿಲ್ಲಿಸಿದ ನಂತರ ನಮ್ಮ ಉತ್ತರದ ಧ್ವನಿ ಹುಟ್ಟುವ ಮೊದಲು ಇರುವ ಮೌನವನ್ನು ಕಡಿಮೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ, ಅವರು ಕೇಳಿದ ಪ್ರಶ್ನೆಗೆ ನಾವು ಕೊಡಬೇಕಾದ ಉತ್ತರಕ್ಕೆ ಒಂದೆರಡು ಕ್ಷಣಗಳನ್ನು ಹೆಚ್ಚು ತೆಗೆದುಕೊಂಡರಾಗದೇ? ಲೀಡರ್‌ಶಿಪ್ ಕಾನ್ಟೆಕ್ಸ್ಟಿನಲ್ಲಿ ಆಕ್ಟಿವ್ ಲಿಸನಿಂಗ್ (active listening) ಬಗ್ಗೆ ಏನೇ ಹೇಳಿ ಕೊಟ್ಟಿರಲಿ, ನಾವು ಇನ್ನೊಬ್ಬರಿಗೆ ಕೊಡಬೇಕಾದ ಉತ್ತರ ಅವರ ಪ್ರಶ್ನೆಯೊಂದಿಗೆಯೇ ನಮ್ಮ ತಲೆಯಲ್ಲಿ ಆರಂಭವಾಗುತ್ತದೆ ಎಂಬುದು ಸುಳ್ಳಲ್ಲ. ಯಾರು ಏನು ಹೇಳಿದರು ಎಂಬುವುದಕ್ಕಿಂತ ಅವರು ಹೇಳಿದ್ದಕ್ಕೆ ನಾವೇನು ಹೇಳಬೇಕು ಎಂದು ನಮ್ಮ ಮನಸ್ಸಿನ ವ್ಯಾಪಾರದಲ್ಲಿ ಮುಳುಗಿ ಹೋಗುವುದಿದೆ ನೋಡಿ, ಅದು ನಿಜವಾಗಿಯೂ ಚಿಂತಿಸಬೇಕಾದ ವಿಚಾರ.

ಅಮೇರಿಕನ್ನರು ಏಕೆ ಉದ್ದುದ್ದವಾಗಿ ಮಾತನಾಡುತ್ತಾರೆ ಎಂದು ಕೇಳಿಕೊಂಡರೆ ನಿಜವಾದ ಕಾರಣದ ಬದಲು ನಮ್ಮ ಸುಬ್ಬನ ಶೈಲಿಯಲ್ಲಿ ಹಗುರವಾದ ಉತ್ತರವೊಂದು ಹೊಳೆಯಿತು. ಎದುರಿನವರು ಕೇಳಿದ ಪ್ರಶ್ನೆಯೇನೇ ಇರಲಿ ನಿಮ್ಮ ಉತ್ತರವನ್ನು ಈ ರೀತಿ ಆರಂಭಿಸಿದ್ದಾದರೆ ಈ ಮೊದಲಿನ ಕೆಲವು ವಾಕ್ಯಗಳನ್ನು ಹೇಳುವ ಹೊತ್ತಿಗಾದರೂ ನಿಮಗೆ ನಿಜವಾದ ಉತ್ತರ ಹೊಳೆದೀತು

"First of all, he brings up a very valid point, I mean, looking at it from the
context of this scenario, more or less, he kind of read my mind..."

ಸುಮ್ನೇ ತಮಾಷೆಗೆ ಹೇಳ್ದೆ ಅಷ್ಟೇ, ನೀವು ವೆದರ್ರೋ ಮತ್ತೊಂದನ್ನೋ ಸೇರಿಸಿಕೊಂಡೋ, ಅಥವಾ ಅವರೂ ಇವರಿಗೆ ಥ್ಯಾಂಕ್ಯೂಗಳನ್ನು ಸೇರಿಸಿಕೊಂಡು ನಿಮ್ಮ ಆರಂಭ ವಾಕ್ಯವನ್ನು ಬೇಕಾದಷ್ಟು ಉದ್ದ ಮಾಡಿಕೊಳ್ಳಬಹುದು ಸಂದರ್ಭಕ್ಕನುಸಾರವಾಗಿ, ನಿಮಗೆ ಸಿಕ್ಕೋದು ಹತ್ತು ಸೆಕೆಂಡ್ ಹೆಚ್ಚಿಗೆ ಅದರ ಮೂಲಕ ನೀವು ಕೊಡಬೇಕಾದ ಉತ್ತರವನ್ನು ಇನ್ನಷ್ಟು ಯೋಚಿಸಿಕೊಳ್ಳೋದಕ್ಕೆ ಸಮಯ ಸಿಕ್ಕಿದ ಹಾಗೆ ಆಯ್ತು ತಾನೆ?

***

ಏಕೋ ನಾವೆಲ್ಲ ಮೌನದ ಮೊರೆ ಹೋಗೋ ಬದಲು ಗದ್ದಲದ ಮೊರೆ ಹೋಗುತ್ತಿದ್ದೇವೆ. ಸುತ್ತಲಿನ ಪರಿಸರದ್ದು ಅದರದ್ದೇ ಆದ ಒಂದು ಶಬ್ದ ಗಾಂಭೀರ್ಯ ಇದ್ದರೆ ನಾವು ನಮ್ಮ ಐಪಾಡ್‌ಗಳನ್ನು ಕಿವಿಗೆ ಸಿಕ್ಕಿಸಿಕೊಂಡು ಸಂಗೀತ/ಸಾಹಿತ್ಯದ ಸೋಗಿನಲ್ಲಿ ನಮ್ಮದೇ ಆದ ಪ್ರಪಂಚವನ್ನು ಕಲ್ಪಿಸಿಕೊಳ್ಳುತ್ತೇವೆ. ಸದ್ದಿನಲ್ಲಿ ಎಲ್ಲವೂ ಇದೆ ಎಂದುಕೊಂಡವರು ಒಂದೆರಡು ಘಂಟೆ ಮೌನವನ್ನು ಅನುಭವಿಸಿ ನೋಡಲಿ ಅದರಲ್ಲಿಯೂ ಬೇಕಾದಷ್ಟಿದೆ - ಮೌನ ಒಂದು ರೀತಿ ಮಾತಿಲ್ಲದ ಸಿನಿಮಾದ ಹಾಗೆ, ಮನದ ಪರದೆಯ ಮೇಲೆ ಏನೇನೋ ಚಿತ್ರಗಳು ಮೂಡಿ ಮರೆಯಾಗಿ ನಮ್ಮದೇ ಆದ ಮತ್ತೊಂದು ಪ್ರಪಂಚ ತೆರೆದುಕೊಳ್ಳೋದು ನಿಜ. ನಾನು ಹಿಂದೆ ಎಲ್ಲೋ ಓದಿದ ಹಾಗೆ ನಮ್ಮ ಹೊರಗಿನ ಪ್ರಪಂಚದಷ್ಟೇ ಆಳ ಹಾಗೂ ವಿಸ್ತಾರವಾದ ಪ್ರಪಂಚ ನಮ್ಮ ಮನಸ್ಸಿನೊಳಗೂ ಇದೆ. ಇವುಗಳ ವ್ಯತ್ಯಾಸ ಒಂದು ರೀತಿ ಆಸ್ಟ್ರೋಫಿಸಿಕ್ಸ್ ಹಾಗೂ ಕ್ವಾಂಟಮ್ ಮೆಕ್ಯಾನಿಕ್ಸ್‌ಗಳ ನಡುವಿನ ವ್ಯತ್ಯಾಸದ ಹಾಗೆ - ಒಂದು, ಬಹು ದೂರದ ವಸ್ತುವಿನ ಚಲನವಲನವನ್ನು ಗ್ರಾವಿಟೇಷನ್ ಎನ್ನುವ ವೀಕ್ ಫೋರ್ಸ್‌ನ ಮಾಧ್ಯಮದಲ್ಲಿ ಕಲ್ಪಿಸಿಕೊಂಡರೆ ಮತ್ತೊಂದು ಅಣುಗಳನ್ನು ಮೀರಿರುವ ಪಾರ್ಟಿಕಲ್ಲುಗಳ ನಡುವಿನ ಸ್ಟ್ರಾಂಗ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೋರ್ಸ್‌ನ ಅಳತೆಯನ್ನು ಹಿಡಿದ ಹಾಗೆ.

ನಮಗೆ ವಿಶ್ರಾಂತಿಯನ್ನು ಕೊಡುವ ನಿದ್ರೆ, ನಮ್ಮ ಮನಸ್ಸಿನ ಸಂವೇದನೆಗಳನ್ನು ಹಿಡಿತದಲ್ಲಿಟ್ಟು ನಮ್ಮ ಸಂಸ್ಕಾರಗಳಿಂದ ನಮ್ಮನ್ನು ಹೊರನಿಲ್ಲಿಸಿ ನೋಡುವಂತೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಧ್ಯಾನ ಮುಂತಾದವುಗಳೆಲ್ಲ ಮೌನದ ಮಡಿಲಲ್ಲಿ ನೆಲೆಗೊಂಡರೆ ನಮ್ಮ ಭೌತಿಕ ಜಗತ್ತು ನಾವು ಏನು ಹೇಳುತ್ತೇವೆ ಅರ್ಥಾಥ್ ನಾವು ಯಾವ ಯಾವ ಶಬ್ದ/ಪದಗಳನ್ನು ಬಳಸುತ್ತೇವೆ ಎಂಬುದನ್ನು ಅವಲಂಭಿಸಿದೆ. ಮೌನ-ಶಬ್ದ ನಡುವಿನ ವ್ಯತ್ಯಾಸ, ಅವೆರಡೂ ವಿಭಿನ್ನ ಚೌಕಟ್ಟಿನ ಸಾಧ್ಯತೆ-ಬಾಧ್ಯತೆಗಳು ನಮಗೆ ಅನಿವಾರ್ಯವೂ ಹೌದು, ಆದರೆ ಇತ್ತೀಚಿನ ಪ್ರಪಂಚದ ಮೌನದ ಮೊರೆ ಹೋಗುವುದಕ್ಕಿಂತ ಹೆಚ್ಚಾಗಿ ಶಬ್ದದ ಮೊರೆ ಹೊಕ್ಕಿದೆ ಎಂದೇ ನನ್ನ ಅಭಿಪ್ರಾಯ.

***

ಈ ಯುಗದಲ್ಲಿಯೂ ಇಂದ್ರಿಯಗಳನ್ನು ಜಯಿಸುವುದು ಸಾದ್ಯವಿರಬೇಕಿತ್ತು, ಎಲ್ಲಿ ಬೇಕೆಂದರಲ್ಲಿ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದಕ್ಕೆ. ಏನಾದರೂ ಹೇಳಲೇ ಬೇಕು ಎಂದು ಹೇಳುವುದಕ್ಕಿಂತ ಸುಮ್ಮನಿರುವುದನ್ನು ಕಲಿಯಬೇಕು ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ಕೆಲವೊಮ್ಮೆ ನಾನು ಬೇಕೆಂದೇ ಎರಡು ಕ್ಷಣಗಳ ಕಾಲ ಮೌನದ ಮೊರೆಯನ್ನು ಹೊಕ್ಕರೆ ಫೋನಿನಲ್ಲಿ ಮಾತನಾಡುವ ಆ ಕಡೆಯವರು ಲೈನ್ ಎಲ್ಲಿ ಡಿಸ್ಕನೆಕ್ಟ್ ಆಗಿಹೋಯಿತೋ ಎಂದು ಅರಚಿಕೊಳ್ಳುವುದನ್ನು ನೋಡಿ ಸೋಜಿಗಪಟ್ಟಿದ್ದೇನೆ. ಅಕಸ್ಮಾತ್ ನಮ್ಮ ನಡುವಿನ ಸಂಪರ್ಕದ ಎಳೆ ಒಮ್ಮೆ ಕಡಿದು ಹೋಯಿತು ಎಂತಲೇ ಅಂದುಕೊಳ್ಳೋಣ ಅದರಿಂದೇನಾಯಿತು? ಮತ್ತೆ ಫೋನ್ ಮಾಡಿದರಾಗದೇ? ಇಷ್ಟೊಂದು ಸಂವಹನ/ಸಂಪರ್ಕ ಮಾಧ್ಯಮಗಳಿಗೆ ಆದ್ಯತೆಕೊಡುವ ಜನರಿಗೆ, ಈ ಸಂತತಿಯಲ್ಲಿ ಅದೇಕೆ ಅಷ್ಟೊಂದು ಮಿಸ್-ಕಮ್ಮ್ಯೂನಿಕೇಷನ್ನುಗಳು ನಡೆಯುತ್ತವೆ ಎಂದು ಚಿಂತಿಸಿದ್ದೇನೆ. ನನ್ನ ಊಹೆಯ ಪ್ರಕಾರ ನಮ್ಮ ಸಂಬಂಧಗಳು (ಗಂಡ-ಹೆಂಡತಿ, ತಂದೆ-ತಾಯಿ-ಮಕ್ಕಳು, ಸಹೋದರರು-ಸಹೋದರಿಯರು, ಸ್ನೇಹಿತರು) ಇತ್ತೀಚಿನ ಅತಿ ಕಮ್ಮ್ಯೂನಿಕೇಶನ್ನಿನ ಮಾಧ್ಯಮಗಳಿದ್ದರೂ ಅಷ್ಟೇ ದೂರಹೋಗಿವೆ. ಎಲ್ಲಿ ಏನು ಬೆಳವಣಿಗೆಯಾದರೇನು ಬಂತು, ಅದ್ಯಾವುದೋ ಒಂದು ಅವ್ಯಕ್ತ ಪ್ರೀತಿಯಿಂದ ಬದುಕಿನ ಸಂಬಂಧಗಳನ್ನು ನೋಡದ ಹೊರತು? ನಮಗೆ ಗೊತ್ತಿರುವುದೆಲ್ಲವನ್ನೂ ನಾವು ಅನುಭವಿಸಿ ಆಚರಿಸುವುದೆಲ್ಲವನ್ನೂ ಭಾಷೆಯಲ್ಲಿ ಕಟ್ಟಿಡುತ್ತೇವೆ ಎನ್ನುವುದು ಎಂದು ಯಶೋಗಾಥೆಯಾದೀತು?

ಏನೋ, ಬಾಯಿ ಇದ್ದವರು ಹೊರಗಿನದನ್ನು ಗೆಲ್ಲುತ್ತಾರಿರಬಹುದು, ಕೊನೆಗೆ ತಮ್ಮೊಳಗಿನದನ್ನು ಅರಿತುಕೊಳ್ಳುವುದಕ್ಕಾದರೂ ಮೌನವನ್ನು ನಾವು ಆಶ್ರಯಿಸಿದ್ದೇ ಆದರೆ ಅದು ಎಲ್ಲೋ ಒಂದು ಸಮತೋಲನವನ್ನು ತಂದುಕೊಟ್ಟೀತೇನೋ ಎನ್ನುವುದು ನನ್ನ ಆಶಯ.

Sunday, February 03, 2008

...ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

’ಓಹ್, ನಿಮಗೇನ್ರಿ? ನೀವು ಅಮೇರಿಕದಲ್ಲಿದ್ದೀರ ನಿಮಗೇನು ಕಡಿಮೆ!’ ಎಂದು ಇನ್ನು ಮುಂದೆ ಯಾರಾದ್ರೂ ನಿಮಗೆ ಹೇಳಿದರಾದರೆ ಅವರಿಗೆ ನೀವು,

’ಅಮೇರಿಕದಲ್ಲಿ ವ್ಯಕ್ತಿಯೊಬ್ಬ ಒಂದು ವ್ಯವಸ್ಥೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಹೋರಾಡುತ್ತಲೇ ಜೀವನ ಸವೆಸಬೇಕಾಗುತ್ತದೆ!’ ಎಂದು ಉತ್ತರ ನೀಡಿ ಆಗ ಆ ಉತ್ತರವನ್ನು ಕೇಳಿದವರ ಹುಬ್ಬುಗಳು ಗಂಟು ಕಟ್ಟುವುದನ್ನು ನೋಡಿ ಸಂತೋಷ ಪಡಿ.

ಹಿಂದೆ ’ಅಂತರಂಗ’ದಲ್ಲಿ ಇದೇ ವಿಷಯವಾಗಿ ಹಲವಾರು ಸಾರಿ ಬರೆದರೂ ಅದರ ಬಗ್ಗೆ ಮತ್ತೂ ಬರೆಯುವಷ್ಟು ಸ್ಪೂರ್ತಿ ನೀಡುವ ಹಲವಾರು ವಿಷಯಗಳು ಒಟ್ಟೊಟ್ಟಿಗೆ ಸಂಭವಿಸಿದವಾದ್ದರಿಂದ ಮತ್ತೆ ಬರೆಯಬೇಕಾಯಿತು.

***

ನಾನು ಸೆಪ್ಟೆಂಬರ್ ೨೬, ೨೦೦೭ ರ ಶುಭದಿನ ಲ್ಯಾಬ್‌ಕಾರ್ಪ್‌ಗೆ ಖುದ್ದಾಗಿ ಹೋಗಿ ರಕ್ತದಾನ ಮಾಡಿ ಅಲ್ಲಿ ಟೆಕ್ನಿಷಿಯನ್ನ್‌ಗೆ ರಿಪೋರ್ಟಿನ ಒಂದು ಕಾಪಿಯನ್ನು ಮನೆಗೂ ಕಳಿಸುವಂತೆ ಕಿವಿಕಿವಿ ಹೇಳಿ ಅಂಗಾಲಾಚಿದ ಪ್ರಯುಕ್ತ ಆಕೆ ತನ್ನ ಕೋಮಲ ಕೈಗಳಿಂದ ".cc customer" ಎಂದು ಮೊದಲ ಪುಟದಲ್ಲೇ ಬರೆದುಕೊಂಡಳಾದರೂ ನನಗೆ ಇವತ್ತಿಗೂ, ನಾಲ್ಕು ತಿಂಗಳ ಬಳಿಕವೂ ಆ ವರದಿಯ ಕಾಪಿ ಸಿಗದಿದ್ದುದನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದಾಗಿದೆ. ಆದರೆ ಆಶ್ಚರ್ಯವೆಂಬಂತೆ ನಾನು ಕೊಡಬೇಕಾದ ೧೫ ಡಾಲರ್ ಕೋ-ಪೇಮೆಂಟ್‌ಗೆಂದು ಅವರು ಮೇಲಿಂದ ಮೇಲೆ ಬಿಲ್ ಕಳಿಸಿಯೇ ಕಳಿಸಿದರು, ಕೊನೆಗೆ ನಾನು ರೋಸಿ ಡಿಸೆಂಬರ್ ೨೬ ರಂದು ಹದಿನೈದು ಡಾಲರ್ ಕೋ-ಪೇಮೆಂಟ್ ಅನ್ನು ಕೊಟ್ಟು ಅದೇ ದಿನ ಲ್ಯಾಬ್‌ಕಾರ್ಪ್ ಕಸ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಮತ್ತೆ ರಿಪೋರ್ಟ್ ಕಳಿಸಲು ಬೇಡಿಕೊಂಡರೆ ಫೋನಿನಲ್ಲಿ ಉತ್ತರಿಸಿದ ಲಲನಾಮಣಿ ’ಆಗಲಿ, ಇನ್ನೆರಡು ವಾರಗಳಲ್ಲಿ ಕಳಿಸುತ್ತೇವೆ’ ಎಂದು ಉತ್ತರ ಕೊಟ್ಟಳಾದರೂ ಈಗ ಒಂದೂವರೆ ತಿಂಗಳ ಬಳಿಕ ಇವತ್ತಿಗೆ ನನ್ನ ಬ್ಲಡ್ ರಿಪೋರ್ಟ್ ಪತ್ತೆಯೇ ಇಲ್ಲ!

ಒಬ್ಬ ಸಾಮಾನ್ಯ ಬಳಕೆದಾರನಾಗಿ ನಾನು ಏನು ಮಾಡೋದು, ಏನು ಬಿಡೋದು...ಮೇಲಿಂದ ಮೇಲೆ ಕಾಲ್ ಮಾಡಿ ತಲೆಕೆಡಿಸಿಕೊಳ್ಳೋಣವೆಂದರೆ ನನಗೆ ಬಿಡುವಿರದ ಆಫೀಸಿನ ಕೆಲಸ, ಜೊತೆಗೆ ಮತ್ತೆ ಜನವರಿಯ ಕೊನೆಯಲ್ಲಿ ಪ್ರಯತ್ನಿಸಿದಾಗ ’ಇನ್ನೆರಡು ವಾರಗಳಲ್ಲಿ ಬಂದೇ ಬಿಡುತ್ತೆ’ ಎಂದು ಇನ್ಯಾರೋ ಆಶ್ವಾಸನೆ ನೀಡಿರೋದರಿಂದ ಮತ್ತೊಂದು ವಾರ ಕಾಯ್ದು ನೋಡೋಣವೆಂದುಕೊಂಡು ನನ್ನ ಬ್ರಹ್ಮಾಸ್ತ್ರಗಳಿಗೆ ಒಂದಿಷ್ಟು ರೆಸ್ಟ್ ಕೊಟ್ಟಿದ್ದೇನೆ ನೋಡಿ.

ನಾವು ದುಡ್ಡು ಕೊಟ್ಟು ನಾವು ಕೊಟ್ಟ ನಮ್ಮ ರಕ್ತದ ವರದಿಯನ್ನು ಕೇಳಲು ಹೋದರೆ ಅದಕ್ಕೆ ನೂರಾ ಎಂಟು ಸೆಕ್ಯೂರಿಟಿ ಪ್ರಶ್ನೆಗಳು. HIPAA (Health Insurance Portability & Accountability Act) ಮಣ್ಣೂ ಮಸಿಯೆಂದು ನಮ್ಮ ತಲೆಯೆನ್ನೆಲ್ಲ ತಿಂಥಾರಲ್ಲ ಶಿವಾ, ಎಂಥಾ ಲೋಕವಯ್ಯಾ ಇದು?

***

ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆಯ ವಿರುದ್ಧ ಹೋರಾಡೋದಕ್ಕೆ ನೀವು ರಾವಣರಾಗಬೇಕು, ಅಂದರೆ ನಿಮಗೆ ಹತ್ತು ತಲೆಗಳಿದ್ದರೂ ಸಾಲದು. ಯಾವನೋ ಬರೆದ ಬಿಸಿನೆಸ್ ರೂಲ್ಸ್‌ಗಳು, ಯಾರೋ ಅದೆಲ್ಲಿಯೋ ಕುಳಿತು ಕುಟ್ಟಿದ ಕಂಪ್ಯೂಟರ್ ವ್ಯವಸ್ಥೆ ನಿಮಗೆ ಚೆನ್ನಾಗಿ ನೀರು ಕುಡಿಸಬಲ್ಲದು. ನನ್ನ ಮಾತಿನಲ್ಲಿ ವಿಶ್ವಾಸವಿಲ್ಲದೇ ಹೋದರೆ ಕೇವಲ ಒಂದೇ ಒಂದು ಸಾರಿ ನಿಮ್ಮ ಕ್ರೆಡಿಟ್ ಕಾರ್ಡಿನ ಬಿಲ್ಲನ್ನು ಡ್ಯೂ ಡೇಟ್ ಆಗಿ ಒಂದು ತಿಂಗಳ ನಂತರ ಕಟ್ಟಿ ನೋಡಿ, ಆಗ ನಿಮಗೇ ತಿಳಿಯುತ್ತದೆ. ನೀವು ಸಾವಿರ ವರ್ಷಗಳಿಂದ ನಿರಂತರವಾಗಿ ಬಿಲ್ ಅನ್ನು ಕಟ್ಟಿಕೊಂಡು ಬಂದಿರುತ್ತೀರಿ, ಯಾವುದೋ ಒಂದು ಫ್ಯಾಮಿಲಿ ಎಮರ್ಜನ್ಸಿಯ ಸಂಬಂಧವಾಗಿ ನೀವು ಒಂದು ತಿಂಗಳು ಬಿಲ್ ಅನ್ನು ಕಟ್ಟುವುದನ್ನು ನಿರ್ಲಕ್ಷಿಸುತ್ತೀರಿ ಎಂದುಕೊಳ್ಳಿ - ಅದು ಮಾನವೀಯ ವಿಷಯವೇ ಸರಿ - ಅದನ್ನು ಫೈಟ್ ಮಾಡಬೇಕಾದೀತು, ಹಾಗೆ ಮಾಡುತ್ತಾ ಮಾಡುತ್ತಾ ನಿಮ್ಮ ಕಪ್ಪಗಿನ ಕೂದಲ ಆಯುಷ್ಯವನ್ನು ಬಲಿಕೊಡಬೇಕಾದೀತು, ನಿಮ್ಮ ಮುಖದಲ್ಲಿ ನೆರಿಗೆಗಳನ್ನು ಹೆಚ್ಚಿಸಿಕೊಳ್ಳಬೇಕಾದೀತು.

ದೊಡ್ಡ ದೊಡ್ಡ ಶಾಪ್ಪಿಂಗ್ ಮಾಲ್‌ಗಳಲ್ಲಿ ರೀಟೈಲ್-ಹೋಲ್‌ಸೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ಸಿಯರ್ಸ್ (Sears) ಅಂತಹ ಕಂಪನಿಗಳು ತಮ್ಮ ಗಿರಾಕಿಗಳಿಗೆ ವಸ್ತುಗಳನ್ನು ಮಾರಿ ಅದರಿಂದ ಬರುವ ಲಾಭಕ್ಕಿಂತಲೂ ತಮ್ಮ ಗಿರಾಕಿಗಳು ಕೊಡುವ ಲೇಟ್-ಫೀ, ಬಡ್ಡಿಗಳಿಂದ ಹೆಚ್ಚು ಸಂಪಾದನೆ ಮಾಡುತ್ತವೆ ಎನ್ನುವುದಕ್ಕೆ ನಿದರ್ಶನಗಳು ಬೇಕೇ? ಅಂತಹ ಕಂಪನಿಗಳ ಕ್ರೆಡಿಟ್ ವಿಭಾಗವನ್ನು ಕೊಂಡುಕೊಳ್ಳಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಹಾತೊರೆದುದನ್ನು ನಾವು ಕಣ್ಣಾರೆಯೇ ನೋಡಿದ್ದೇವೆ.

ನೀನು ದುಡಿ, ದುಡಿದ ದುಡ್ದಿನಲ್ಲಿ ಮನೆ ಕಟ್ಟಿಸಿ ಅನುಭವಿಸು ಎನ್ನುವ ನಮ್ಮ ತತ್ವಗಳನ್ನು ಹೊಸಕಿ ಹಾಕಿ, ನಿಮಗೆ ಮೈ ತುಂಬಾ ಸಾಲವನ್ನು ಹೊರಿಸುತ್ತೇವೆ, ಆದರೆ ಈ ಮನೆ ಇವತ್ತಿನಿಂದಲೇ ನಿಮ್ಮದು ಎನ್ನುವ ಬಂಡೆಗಲ್ಲಿನಡಿ ನಮ್ಮನ್ನು ನೂಕಿ ನಮ್ಮ ಬಡ್ಡಿ ಹಣದಿಂದ ಬದುಕುವ ವ್ಯವಸ್ಥೆಯ ಕೂಸುಗಳಾಗಿ ಹೋಗಿದ್ದೇವಲ್ಲ ನಾವು ಏನು ಹೇಳೋಣ? ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಲ್ಲಿ ಐಶಾರಾಮವಿಲ್ಲದಿದ್ದರೂ ನೆಮ್ಮದಿ ಇದ್ದೀತು, ಮನಸು ಬೇಡಿದಷ್ಟು ಮನೆ ಕೊಂಡು ಇಂದೋ ನಾಳೆಯೋ ಕೆಲಸ ಹೋದರೆ ಎನ್ನುವ ಹೆದರಿಕೆಯ ಗೂಡಿನೊಳಗೆ ಮಲಗುವುದು ಆಧುನಿಕ ಬದುಕಿನ ಬವಣೆಗಳಲ್ಲೊಂದೇ ಎಂದು ನಾನು ಹೇಳೋದು.

***

ಹೇಳಿ - ಇಡೀ ಅಮೇರಿಕದ ವ್ಯವಸ್ಥೆ ಸಾಲದಲ್ಲಿ ನಿಂತಿದೆ! ಇಲ್ಲಿಯ ಕಾರ್ಪೋರೇಷನ್ನುಗಳು ಬಿಲಿಯನ್ನುಗಟ್ಟಲೆ ಸಾಲವನ್ನು ಹೊಂದಿವೆ, ಇಲ್ಲಿ ಜೀವಿಸುವ ಪ್ರಜೆಗೂ ನೇರವಾಗಿಯೋ, ಪರೋಕ್ಷವಾಗಿಯೋ ಸಾಲ ಇದ್ದೇ ಇದೆ. ಹಾಗಾದರೆ ಯಾವ ದೇಶದಲ್ಲಿ ಪರೋಕ್ಷ ಸಾಲವಿಲ್ಲ ಎಂದು ಪ್ರಶ್ನೆ ಕೇಳಿಯೇ ಕೇಳಿರುತ್ತೀರಿ, ಪರೋಕ್ಷ ಸಾಲ ನಮ್ಮನ್ನು ಮೀರಿದ್ದು, ನಾವು ಮೈ ಮೇಲೆ ಹೇರಿಕೊಳ್ಳುವ ಸಾಲ ನಮ್ಮನ್ನು ಮಟ್ಟ ಮಾಡೋದು.

ಏನ್ ಸಾರ್, ಇಷ್ಟೊಂದ್ ದಿನಾ ಅಮೇರಿಕದಲ್ಲಿದ್ದುಕೊಂದು ಒಂದು ಬಾಯ್ ತುಂಬಾ ಒಳ್ಳೇ ಮಾತನಾದ್ರೂ ಹೇಳಬಾರ್ದಾ? ಹೇಳ್ತೀವಿ, ಯಾಕಿಲ್ಲ - ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಸ್ವಾಮೀ, ನಿಮ್ಮ ಮನೆಯಲ್ಲಿ ಕಾಫಿ ಪುಡಿ ಇದೆಯೋ ಇಲ್ಲವೋ ಅನ್ನೋದನ್ನೂ ಒಂದು ದಿನ ನೀವು ನಿಮ್ಮ ಕಂಪ್ಯೂಟರ್ ಲಾಗಿನ್ ಆಗಿ ನಿಮ್ಮ ಇನ್ವೆಂಟ್ರೆ ಚೆಕ್ ಮಾಡಿಕೊಂಡೇ ಕಾಫಿ ಡಬ್ಬವನ್ನು ಬೇಸ್‌ಮೆಂಟ್‌ನಲ್ಲಿ ಹುಡುಕಿಕೊಂಡು ಹೋಗೋ ವ್ಯವಸ್ಥೆಗೆ ದಾಸರಾಗ್ತೀರಿ ನೋಡಿ ಆಗ ನಿಮ್ಮನ್ನು ನಾನು ಇದೇ ಪ್ರಶ್ನೆ ಕೇಳ್ತೀನಿ.

***

ಈ ವರ್ಷ ಎಲೆಕ್ಷನ್ನ್ ವರ್ಷ, ನಮ್ಮನೆ-ಕಾರಿನ ರೆಡಿಯೋಗಳಿಗೆ ರಜಾ ಘೋಷಿಸಿಬಿಟ್ಟಿರೋದರಿಂದ ನಾನು ಸ್ವಲ್ಪ ನ್ಯೂಸ್ ಮಾಧ್ಯಮಗಳಿಂದ ಬಿಡುವನ್ನು ಪಡೆದುಕೊಂಡು ಹಾಯಾಗಿ ಇರೋಣಾ ಅಂತ ತೀರ್ಮಾನ ಮಾಡಿಕೊಂಡಿದ್ದೀನಿ. ನಿಮ್ಮ ಅಮೇರಿಕನ್ ಪುರಾಣ ಏನ್ ಬೇಕಾದ್ರೂ ಹೇಳಿ ಆದ್ರೆ ಮಾತ್ರ ಈ ಡೆಮೋಕ್ರಾಟೂ-ರಿಪಬ್ಲಿಕ್ಕೂ ಅಂಥಾ ಮಾತ್ರ ಶುರು ಮಾಡ್‌ಬೇಡಿ. ಕಳೆದ ವರ್ಷ ಈ ಹಾಳೂ ಮೂಳೂ ಸುದ್ಧಿಗಳನ್ನು ಕೇಳೇ ನನ್ನ ಬ್ಲಡ್ ಪ್ರೆಷರ್ ಸ್ವಲ್ಪ ಹೆಚ್ಚಾಗಿದ್ದೂ ಅಂತ ಕಾಣ್ಸುತ್ತೆ, ಅದನ್ನ ಚೆಕ್ಕ್ ಮಾಡೋಣ ಅಂತ ಹೋದ್ರೆ ಡಾಕ್ಟರೇನೋ ದೊಡ್ಡ ರಕ್ತದ ಟೆಸ್ಟ್ ಅನ್ನು ಬರೆದು ಕೊಟ್ರು, ಅಲ್ಲಿ ಹೋಗಿ ರಕ್ತದಾನ ಮಾಡಿ ಬಂದು ಐದು ತಿಂಗಳಾದ್ರೂ ಇನ್ನೂ ನನಗಾಗ್ಲೀ ನನ್ನ ಡಾಕ್ಟರಿಗಾಗ್ಲಿ ರಕ್ತದ ವರದಿಯೇ ಬಂದಿಲ್ಲವಾದ್ರಿಂದ ನನಗೆ ಖಾಯಿಲೆ ಇದ್ಯೋ ಇಲ್ಲವೋ ಅನ್ನೋದನ್ನ ಈ ವ್ಯವಸ್ಥೆಯಿಂದ ತಿಳಿದುಕೊಳ್ಳೋಕೇ ನನಗೆ ಆರು ತಿಂಗಳು ಬೇಕಾಗುತ್ತೆ. ಖಾಯಿಲೆ ಇದ್ಯೋ ಇಲ್ಲವೋ ಅನ್ನೋ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿಲ್ಲದ್ದನ್ನು ನೋಡಿ ಅದನ್ನು ಹಿಂಬಾಲಿಸಿ, ಫಾಲೋ ಅಪ್ ಮಾಡಿಕೊಂಡು ಶ್ರಮ ವಹಿಸಿದ್ದಕ್ಕೆ ಮತ್ತೇನೇನೋ ಖಾಯಿಲೆಗಳು ಅಂಟಿಕೊಡು ಮತ್ತೆ ಡಾಕ್ಟರ್ ಆಫೀಸಿಗೆ ಹೋಗೋದಕ್ಕೆ ಹೆದರಿಕೆ ಆಗುತ್ತೆ.

ನಾನು ಈ ಒಂಥರಾ ಡಾಕ್ಟರು-ಬ್ಲಡ್ ರಿಪೋರ್ಟಿನ ಚಕ್ಕರದಲ್ಲಿ ಸಿಲುಕಿ ನಾನು ಒದ್ದಾಡ್ತಾ ಇರೋದನ್ನ ನೋಡಿಕೊಂಡು ನನಗೆ ಒಂದೊಂದ್ ಸರ್ತಿ ಅನ್ಸುತ್ತೆ - ಸೀದಾ ಭಾರತದ ಏರ್‌ಪೋರ್ಟಿನಲ್ಲಿ ಹೋಗಿ ಒಂದು ಭೂತ್ ಹಾಕಿ ಬಿಡ್ಲಾ ಅಂತಾ...ಅಲ್ಲಿ ಹಸಿದ ಕಣ್ಣುಗಳನ್ನು ಹೊತ್ತುಕೊಂಡು ಫಾರಿನ್ನಿಗೆ ಹೋಗೋರನ್ನ ತಡೆಯೋ ಒಂದು ಪಡೆಯನ್ನ ಹುಟ್ಟು ಹಾಕಿದ್ರೆ ಹೇಗೆ ಅಂತ ಅನ್ಸೋದು ನಿಜ, ನಮ್ ಭೂತ್‌ನಲ್ಲಿ ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

Tuesday, January 29, 2008

ಬಂಡವಾಳಶಾಹಿ ಜಗತ್ತಿನ ಎರಡು ಮಹಾಮಂತ್ರಗಳು

ಬದಲಾವಣೆಯೇ ಜಗದ ನಿಯಮ - ಅನ್ನೋದು ನಿಜವಾದರೆ ಬದಲಾವಣೆಯ ಆಗು ಹೋಗುಗಳನ್ನು ಮ್ಯಾನೇಜು ಮಾಡುವುದೂ ಅಷ್ಟೇ ನಿಜ ಅಥವಾ ಅಗತ್ಯ. ನಾವು ಎಷ್ಟರ ಮಟ್ಟಿಗೆ ಬದಲಾವಣೆಗಳನ್ನು ನಿರ್ವಹಿಸಿಕೊಂಡು ಹೋಗುತ್ತೇವೆ ಅನ್ನೋದು ನಮ್ಮಲ್ಲಿ ಜನರು ಹುಡುಕಿಕೊಂಡು ಬರುವ ಸ್ವಭಾವ ಅಥವಾ ಗುಣವಾಗಬಹುದು. ಈ ಬದಲಾವಣೆಯ ಅಗತ್ಯಗಳಿಗೆ ನಮ್ಮ ಸ್ಪಂದನ ಇಂದಿನ ದಿನಗಳಲ್ಲಂತೂ ಇನ್ನೂ ಮುಖ್ಯ, ಬದಲಾವಣೆ ಎನ್ನೋದು ಯಾವ ರೂಪದಲ್ಲಿ ಹೇಗೆ ಬೇಕಾದರೂ ಪ್ರತ್ಯಕ್ಷವಾಗಿ ನಮ್ಮ ನೆಲೆಗಟ್ಟನ್ನು ಅಲುಗಾಡಿಸುವ ನಿರೀಕ್ಷೆಯಂತೂ ಇರೋದು ನಿಜ.

ಈ ಬದಲಾವಣೆಗಳು ಯಾವುದೋ ಒಂದು ನಮಗೆ ಗೊತ್ತಿರುವ ರಸ್ತೆಯಲ್ಲಿ ಹೋಗುತ್ತಿರುವ ನಮ್ಮ ಕಂಫೋರ್ಟ್ ಝೋನ್ ಅನ್ನು ಪ್ರಶ್ನಿಸುವ ಡೀ-ಟೂರ್ ಇದ್ದ ಹಾಗೆ, ಅವುಗಳು ಒಡ್ಡುವ ಆ ಮಟ್ಟಿನ ಅನಿರೀಕ್ಷಿತ ತಿರುವುಗಳನ್ನು ಸಾವಧಾನ ಚಿತ್ತದಲ್ಲಿ ಸ್ವೀಕರಿಸಿ ಮುನ್ನಡೆಯದೇ ಇದ್ದರೆ ಅಪಾಯವಂತೂ ಖಂಡಿತ. ಅದೇ ಬದಲಾವಣೆಗಳಿಗೆ ಕಿವಿಗೊಡದೇ ಇದ್ದ ರಸ್ತೆಯಲ್ಲೇ ಮುನ್ನಡೆದರೆ ಯಾವುದಾದರೂ ಗುಂಡಿ ಸೇರುವ ಅಪಾಯ ಬೇರೆ. ಹೀಗಾಗಿ ಬದಲಾವಣೆಗಳು ನಮ್ಮನ್ನು ಹೇಳಿಕೇಳಿ ಬರದೇ ಇದ್ದರೂ ಅವುಗಳನ್ನು ನಿರೀಕ್ಷಿಸಿಕೊಂಡೇ ಸಾಧ್ಯವಾದಷ್ಟರ ಮಟ್ಟಿಗೆ ತಯಾರಾಗಿರುವುದು ಈಗಿನ ಕಾಲದ ಅಗತ್ಯಗಳಲ್ಲೊಂದು. ಇಂದಿದ್ದ ಬಾಸ್ ನಾಳೆ ಇರದಿರಬಹುದು, ನಮ್ಮ ನೆಚ್ಚಿನ ಕೆಲಸ ಕಾರ್ಯಗಳು ಬೇರೆಯವರ ಕೈಗೆ ದಿಢೀರ್ ಹೋಗಿ ನಮಗೆ ಹೊಸ ಕೆಲಸಗಳು ಬರಬಹುದು, ಇಂದು ಮುಂಜಾನೆ ಇದ್ದ ಕೆಲಸವೇ ಸಂಜೆಗೆ ಇರದಿರಬಹುದು. ೨೦೦೦ ದಿಂದ ೨೦೦೩ ರವರೆಗೆ ಅನೇಕ ಕಂಪನಿಗಳು (ವಿಶೇಷವಾಗಿ ಡಾಟ್‌ಕಾಮ್) ಮುಚ್ಚಿ ಹೋದ ಹಿನ್ನೆಲೆಯಲ್ಲಿ ಅಥವಾ ಅವರ ವರ್ಕ್ ಫೋರ್ಸ್ ಅನ್ನು ಕಡಿಮೆ ಮಾಡುವ ಹುನ್ನಾರದಲ್ಲಿ ಅನೇಕ ಜನ ಕೆಲಸವನ್ನು ಕಳೆದುಕೊಂಡದ್ದು ಬೇಕಾದಷ್ಟು ಉದಾಹರಣೆಗಳಿವೆ. ಈಗಲೂ ಸಹ ಅಲ್ಲಲ್ಲಿ ಸಾವಿರಾರು ಜನರನ್ನು ಕೆಲಸವಿಲ್ಲದೇ ಮನೆಗೆ ಕಳಿಸುವುದನ್ನು ನಾವು ಕಾರ್ಪೋರೇಟ್ ರಿಪೋರ್ಟುಗಳಲ್ಲಿ ಓದಬಹುದು. ಹೀಗೆ ಒಂದು ಕಂಪನಿಯಲ್ಲಿನ ನಮ್ಮ ಅಸ್ತಿತ್ವವನ್ನು ದಿಢೀರ್ ಕಳೆದುಕೊಂಡು ಮತ್ತೊಂದು ಕಂಪನಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಬದಲಾವಣೆ ಒಬ್ಬನ ವೃತ್ತಿ ಜೀವನದಲ್ಲಿ ಬೇಕೆ? ಕೆಲಸ ಬದಲಾವಣೆ ಅನ್ನೋದು ಹೆಚ್ಚು ಸ್ಟ್ರೆಸ್ ಹುಟ್ಟಿಸುವ ಲೈಫ್ ಇವೆಂಟುಗಳಲ್ಲಿ ಒಂದು. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ, ಎರಡು ವಾರಗಳ ಹಿಂದೆ ಇದ್ದಕ್ಕಿದ್ದ ಹಾಗೆ ಕಂಪನಿಯಲ್ಲಿ ಅನೇಕ ಬದಲಾವಣೆಗಳು ನಾನಿಲ್ಲದ ವೇಳೆಯಲ್ಲಿ ಸಂಭವಿಸಿ ರಾತ್ರೋ ರಾತ್ರಿ ನನಗೆ ಹೊಸ ಬಾಸೂ, ಹೊಸ ಕೆಲಸವೂ ಬಂದಿದ್ದು ಇಂದಿಗೂ ನಿಜವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ ಕ್ಷಿಪ್ರವಾಗಿ ನಡೆದು ಹೋಗಿದೆ. ಹಳೆಯದನ್ನು ನೆನೆಸಿಕೊಂಡು ಕೊರಗುವ ಮನಸ್ಸಿದ್ದರೂ ಹೊಸದಕ್ಕೆ ಹೊಂದಿಕೊಂಡು ಹೋಗದೇ ಬೇರೆ ನಿರ್ವಾಹವೇ ಇಲ್ಲ. ಬದಲಾವಣೆ ಎನ್ನೋದು ಯಾವತ್ತಿದ್ದರೂ ಗೆಲ್ಲುತ್ತೆ, ಅದಕ್ಕೆ ಸ್ಪಂದಿಸಿ ಹೊಂದಿಕೊಂಡು ಹೋಗುವುದು ಎನ್ನುವುದು ರೂಲ್ ಅದು ಯಾವತ್ತೂ ಎಕ್ಸೆಪ್ಷನ್ನ್ ಅಲ್ಲ.

***

ಇಂದಿನದು ಇಂದಿಗೆ ನಾಳೆಯದು ನಾಳೆಗೆ ಎನ್ನುವ ಬಂಡವಾಳಶಾಹಿ ವ್ಯವಸ್ಥೆಯ ಮಹಾಮಂತ್ರಕ್ಕೆ ಎಂಥವರೂ ಮನಸೋಲಲೇ ಬೇಕು. ಇಲ್ಲಿ ಕ್ವಾರ್ಟರಿನಿಂದ ಕ್ವಾರ್ಟರಿಗೆ ತಿಂಗಳಿನಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ನಮ್ಮನ್ನು ನಾವು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ. ನಿನ್ನೆ ಉತ್ತಮವಾದದ್ದು ಇಂದಿಗೆ ನಿಜವಾಗ ಬೇಕೆಂದೇನೂ ಇಲ್ಲ, ಇಂದು ನಡೆದದ್ದು ನಾಳೆಗೆ ನಡೆಯುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಎಲ್ಲವೂ ಆಯಾ ವರ್ಷಕ್ಕೆ ಅನುಗುಣವಾದವುಗಳು, ಪ್ರತಿ ಮೂರು/ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಆಯಾ ಕಂಪನಿಗಳ ಪರ್‌ಫಾರ್ಮೆನ್ಸ್ ಅನ್ನು ಲೆಕ್ಕ ಹಾಕುವ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ತಿಂಗಳಿನಿಂದ ತಿಂಗಳಿಗೆ ಚೇತರಿಸಿಕೊಳ್ಳುವ ವ್ಯವಸ್ಥೆ ಇರುವುದರ ಜೊತೆಗೆ ಹಳೆಯದನ್ನು ಆದಷ್ಟು ಬೇಗನೆ ಹಿಂದಕ್ಕೆ ತಳ್ಳಿ ಮುನ್ನುಗ್ಗುವ ಆತುರವೂ ಕಂಡುಬರುತ್ತದೆ. ಹಲವಾರು ವರ್ಷಗಳ ಕಾಲ ಒಂದೇ ಸಮನೆ ಒಂದು ’ಕ್ಯಾರೆಕ್ಟರ್’ ಅನ್ನು ಹುಟ್ಟಿಸಿ ಬೆಳೆಸುಕೊಳ್ಳುವುದಕ್ಕಿಂತಲೂ ಆಯಾ ಮಟ್ಟಿನ ಬೆಳವಣಿಗೆಗೆ ಹೆಚ್ಚು ಆಸ್ಪದ ನೀಡಿದಂತನಿಸುತ್ತದೆ. ಈ ಕೆಳಗಿನ ನ್ಯಾಸ್‍ಡಾಕ್ ಬೆಳವಣಿಗೆಯನ್ನು ನೋಡಿ.

ಜನವರಿ ೩, ೨೦೦೦ ರಂದು 4,186 ಕ್ಕೆ ತೆರೆದುಕೊಂಡ NASDAQ ಮಾರ್ಕೆಟ್ಟಿನ ಇಂಡೆಕ್ಸ್ ಅದೇ ವರ್ಷದ ಮಾರ್ಚ್ ೬ ರಂದು 5,048 ಹೋಗಿದ್ದನ್ನು ಬಿಟ್ಟರೆ ಅಲ್ಲಿಂದ ಕ್ರಮೇಣ ಹಂತ ಹಂತವಾಗಿ ಕೆಳಮುಖವಾಗಿ ಹರಿದ ಮಾರ್ಕೆಟ್ಟಿನ ಗ್ರಾಫು ಬುಡ ಬಂದು ಸೇರಿದ್ದು ಸೆಪ್ಟೆಂಬರ್ ೩೦, ೨೦೦೨ ರಂದೇ - ಅಂದು 1,139 ಕ್ಕೆ ಕ್ಲೋಸ್ ಆದ ಮಾರ್ಕೆಟ್ಟಿನ ಕೆಲ ದಾಖಲೆ ಎಂದೇ ಹೇಳಬೇಕು. ಸುಮಾರು ನಾಲ್ಕು ಸಾವಿರ ಪಾಯಿಂಟುಗಳಷ್ಟು ಕುಸಿತ ಕೇವಲ ಎರಡೂವರೆ ವರ್ಷಗಳಲ್ಲಿ. ಲಕ್ಷಾಂತರ ಜನ ತಮ್ಮ ಟೆಕ್ನಾಲಜಿ ಇನ್ವೆಷ್ಟುಮೆಂಟುಗಳಲ್ಲಿ ಹಣ ಕಳೆದುಕೊಂಡರು, ಬುದ್ಧಿವಂತರು ಆದಷ್ಟು ಬೇಗ ಟೆಕ್ನಾಲಜಿ ಸೆಕ್ಟರುಗಳಿಂದ ಜಾಗ ಖಾಲಿ ಮಾಡಿ ರಿಯಲ್ ಎಸ್ಟೇಟೋ ಮತ್ತಿನ್ನೆಲ್ಲೋ ತೊಡಗಿಸಿ ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಂಡರು, ಇನ್ನುಳಿದವರು Yahoo, Oracle, Microsoft, Cisco ಮೊದಲಾದ ಕಂಪನಿಗಳಲ್ಲಿ ತಮ್ಮ ಹಣ ದಿನೇ ದಿನೇ ಕುಸಿಯೋದನ್ನು ನೋಡಿಕೊಂಡೇ ಸುಮ್ಮನಿದ್ದರು. ಇವೆಲ್ಲವನ್ನೂ ಮಾರ್ಕೆಟ್ ಪಂಡಿತರು ಬೇಕಾದ ರೀತಿಯಲ್ಲಿ ಅವಲೋಕಿಸಿ ಬೇಕಾದಷ್ಟನ್ನು ಪಬ್ಲಿಷ್ ಮಾಡಿರಬಹುದು, ಆದರೆ ಜನವರಿ ೨೦೦೩ ರಿಂದ ನಂತರದ ಕಥೆಯೇ ಬೇರೆ.

ಜನವರಿ ೬, ೨೦೦೩ ರಂದು 1,390 ಗೆ ತೆರೆದುಕೊಂಡ NASDAQ ಅದೇ ವರ್ಷ ಡಿಸೆಂಬರ್ ಅಂತ್ಯದ ಹೊತ್ತಿಗೆ 2,000 ದ ಗಡಿ ದಾಟಿತ್ತು. ಫೈನಾನ್ಸ್ ಪಂಡಿತರು, ಟಿವಿಯಲ್ಲಿನ ಮಾತನಾಡುವ ತಲೆಗಳು, ಮತ್ತಿತರ ಮಹಾಮಹಿಮರೆಲ್ಲರೂ ಮಾರ್ಕೆಟ್ಟನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಆ ವರ್ಷದ ಮಟ್ಟಿಗೆ NASDAQ ನಲ್ಲಿ 30% ಗಿಂತಲೂ ಹೆಚ್ಚು ಉತ್ತಮ ರಿಟರ್ನ್ಸ್‌ಗಳನ್ನು ಕಂಡುಕೊಂಡಿದ್ದು ನಿಜವಾದರೂ ಅದರ ಹಿಂದಿನ ಎರಡೂವರೆ ವರ್ಷಗಳಲ್ಲಿ ಹಣ ಕಳೆದುಕೊಂಡ ಬಗ್ಗೆ ಏನೂ ಸೆನ್ಸಿಟಿವಿಟಿಯೇ ಇಲ್ಲವೇ ಎಂದು ಅನ್ನಿಸಿದ್ದೂ ನಿಜ.

***

ಹೀಗೆ ಬಂಡವಾಳಶಾಹಿ ಜಗತ್ತಿನ ಬದುಕಿನಲ್ಲಿ ಇನ್ನೂ ಅನೇಕ ಸೂತ್ರಗಳಿವೆ, ಅವುಗಳನ್ನೆಲ್ಲ ಹೆಕ್ಕಿ ಹೇಳುತ್ತಾ ಹೋದರೆ ದೊಡ್ಡ ಕಥೆಯಾದೀತು. ಈ ಮಹಾಮಂತ್ರಗಳ ಪಟ್ಟಿ ಇಲ್ಲಿಗೆ ನಿಲ್ಲೋದಿಲ್ಲ, ಇನ್ನೂ ಬೇಕಾದಷ್ಟಿವೆ, ಅವುಗಳನ್ನು ಪುರುಸೊತ್ತು ಮಾಡಿಕೊಂಡು ಬೆಳೆಸಿಕೊಂಡು ಹೋಗಬೇಕಷ್ಟೆ, ಅಥವಾ ಅದರ ಬದಲಿಗೆ ಒಂದು ಪುಸ್ತಕ ಬರೆದರೂ ಆದೀತು!

ಇನ್ನು ಮುಂದೆ ಎಂದಾದರೂ ಒಮ್ಮೆ ಬಂಡವಾಳಶಾಹಿ ಜಗತ್ತಿನ ತಪ್ಪು-ಒಪ್ಪುಗಳ ಬಗ್ಗೆಯೂ, ತಪ್ಪನ್ನು ಕಂಡು ಹಿಡಿದವರಿಗೆ ಕೊಡುವ ಇನಾಮಿನಿಂದ ಹಿಡಿದು, ಕಂಪನಿಗಳು ಸರ್ಕಾರಕ್ಕೆ, ಸರ್ಕಾರದ ವಿವಿಧ ಎಂಟಿಟಿಗಳಿಗೆ ಸೆಟಲ್‌ಮೆಂಟ್ ದೃಷ್ಟಿಯಲ್ಲಿ ಹಂಚುವ ಹಣದ ಬಗ್ಗೆ ಬರೆಯುತ್ತೇನೆ.

Saturday, January 26, 2008

ಸುಂಕ ವ್ಯವಸ್ಥೆಯ ಸುಖ ದುಃಖಗಳು

ರಸ್ತೆಗಳೆಂಬ ಮಟ್ಟಗಾರರ ಬಗ್ಗೆ ಬರೆಯೋ ಹೊತ್ತಿಗೆ ಉಳಿದ ಮಟ್ಟಗಾರರ ಬಗ್ಗೆ ಯೋಚಿಸಿದಂತೆಲ್ಲಾ ಟ್ಯಾಕ್ಸ್ ಸೀಜನ್ನಿನಲ್ಲಿ ಟ್ಯಾಕ್ಸ್ ಬಗ್ಗೆ ಯೋಚಿಸಿ ಬರೆಯದೇ ಹೋದರೆ ಹೇಗೆ ಎಂದು ಅನ್ನಿಸಿದ್ದಂತೂ ನಿಜ. ಈ ಟ್ಯಾಕ್ಸ್, ತೆರಿಗೆ, ಕರ, ಸುಂಕ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಕಾನ್ಸೆಪ್ಟ್ ಮಹಾ ಮಟ್ಟಗಾರರಲ್ಲೊಂದು, ಸರ್ಕಾರ ಟ್ಯಾಕ್ಸ್ ಅನ್ನು ಹೇಗೆ ವ್ಯಾಖ್ಯಾನಿಸಿಕೊಂಡರೂ, ಜನರು ಅದನ್ನು ತಮ್ಮ ತಮ್ಮ ಮಟ್ಟಿಗೆ ಅದನ್ನು ಹೇಗೇ ಅನ್ವಯಿಸಿಕೊಂಡರೂ ಟ್ಯಾಕ್ಸ್ ಅನ್ನುವುದು ಯಾರನ್ನೂ ಬಿಟ್ಟಂತಿಲ್ಲ.

ಮೊನ್ನೆ ಹೀಗೇ ಅಫಘಾನಿಸ್ತಾನದವರ ಬಗ್ಗೆ ನನ್ನ ಸಹೋದ್ಯೋಗಿಯೊಡನೆ ಮಾತು ಬಂತು. ಅಭಿವೃದ್ಧಿ ಹೊಂದಿದ ದೇಶದ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೋಶಿಯಲ್ ಸೆಕ್ಯೂರಿಟಿ ನಂಬರ್ ಎನ್ನುವ ಒಂಭತ್ತು ಸಂಖ್ಯೆಗಳಿಂದ ಅಳೆದು ಪ್ರತಿಯೊಬ್ಬರಿಂದ ಲೆಕ್ಕಕ್ಕೆ ತಕ್ಕಂತೆ ಟ್ಯಾಕ್ಸ್ ಕೀಳುವುದು ಇರಲಿ ಕೊನೆಗೆ ವರ್ಷಕ್ಕೊಮ್ಮೆ ಅಮೇರಿಕದ ನಾಗರಿಕರು ತಮ್ಮ ವಾರ್ಷಿಕ ಆದಾಯ ಇಂತಿಷ್ಟಕ್ಕಿಂತ ಹೆಚ್ಚಿದ್ದರೆ ಅವರ ಟ್ಯಾಕ್ಸ್ ಅನ್ನು ಫೈಲ್ ಮಾಡಬೇಕಾದ ಅಗತ್ಯವನ್ನು ಮನಗಾಣುವುದು ಸುಲಭವಾಗಿತ್ತು. ನನ್ನ ಪ್ರಕಾರ (ಯಾವುದೇ ದಾಖಲೆಯ ಬೆಂಬಲವಿಲ್ಲದೆ) ತೃತೀಯ ಜಗತ್ತಿನಲ್ಲಿ ಎಷ್ಟೋ ಜನರಿಂದ ಅಪರೋಕ್ಷವಾಗಿ ವಸೂಲಿ ಮಾಡುವ ಸೇಲ್ಸ್ ಟ್ಯಾಕ್ಸ್ ಅನ್ನು ಬಿಟ್ಟರೆ ವರ್ಷಕ್ಕೊಮ್ಮೆ ಎಲ್ಲರೂ ತಮ್ಮ ತಮ್ಮ ಆದಾಯಕ್ಕನುಗುಣವಾಗಿ ಟ್ಯಾಕ್ಸ್ ಅನ್ನು ಕಟ್ಟುವುದಾಗಲೀ ಅದನ್ನು ಫೈಲ್ ಮಾಡುವುದಾಗಲೀ ಸಾಧ್ಯತೆಗಳೇ ಇಲ್ಲ. ಸೇಲ್ಸ್ ಟ್ಯಾಕ್ಸ್ ಜೊತೆಗೆ ಯಾರು ಯಾರು ನಿಜವಾದ ಪೇ ಚೆಕ್ (ಸ್ಟಬ್) ಗಳನ್ನು ತೆಗೆದುಕೊಳ್ಳುತ್ತಾರೋ ಅವರಿಂದ ಸರ್ಕಾರದವರು, ಸಂಬಂಧಿತ ಇಲಾಖೆಯವರು ಟ್ಯಾಕ್ಸ್ ಅನ್ನು ವಜಾ ಮಾಡಿಕೊಳ್ಳುವ ಸಾಧ್ಯತೆಗಳಿರಬಹುದು, ಅದನ್ನು ಬಿಟ್ಟರೆ ರೈತರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಸಣ್ಣ (ಗೃಹ) ಕೈಗಾರಿಕೆಗಳನ್ನು ನಡೆಸಿಕೊಂಡಿರುವವರು ಇತ್ಯಾದಿಗಳಿಂದ ಇಂತಿಷ್ಟೇ ಆದಾಯ ಹಾಗೂ ಅದಕ್ಕೆ ತಕ್ಕ ಟ್ಯಾಕ್ಸ್ ಎಂದು ವಸೂಲಿ ಮಾಡಿದ್ದನ್ನು ನಾನು ನೋಡಿಲ್ಲ, ಇತ್ತೀಚೆಗೇನಾದರೂ ಭಾರತದಲ್ಲಿ ಟ್ಯಾಕ್ಸ್ ಬದಲಾವಣೆಗಳಾಗಿದ್ದರೆ ಅದು ನನ್ನ ಮೌಢ್ಯವಷ್ಟೆ. ಇತ್ತೀಚೆಗಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಕ್ಕಿರುವ ಅಫಘಾನಿಸ್ತಾನದಲ್ಲಿ ಯಾವ ಮಟ್ಟದ ಟ್ಯಾಕ್ಸ್ ವ್ಯವಸ್ಥೆ ಇದೆ, ಅಲ್ಲಿನ ಪ್ರತಿಯೊಬ್ಬ ನಾಗರಿಕರು ಹೇಗೆ ಟ್ಯಾಕ್ಸ್‌ಗೆ ಒಳಪಟ್ಟಿದ್ದಾರೆ ಎನ್ನುವುದು ನನಗೆ ನಿಖರವಾಗಿ ಗೊತ್ತಿಲ್ಲದಿದ್ದರೂ, ಬಡತನದಲ್ಲಿ ಬಾಂಗ್ಲಾ ದೇಶಕ್ಕೆ ಪೈಪೋಟಿ ಕೊಡುತ್ತಿರುವ ಅಲ್ಲಿನ ಜನರ ಉತ್ಪಾದನೆಯೇ ಕಡಿಮೆ ಇದ್ದು ಇನ್ನು ಪಾಪ ಅವರಾದರೂ ಯಾವ ಟ್ಯಾಕ್ಸ್ ಅನ್ನು ಕೊಟ್ಟಾರು. ಹಾಗೆಯೇ ಅಮೇರಿಕದಲ್ಲಿನ ಪ್ರತಿ ರಾಜ್ಯದ ಪ್ರತಿಯೊಬ್ಬರೂ ನಿಖರವಾಗಿ ಟ್ಯಾಕ್ಸ್ ಕೊಡುತ್ತಾರೆ ಎಂದೇನೂ ಅಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸೋಶಿಯಲ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಷನ್ನ್ ನವರು ಒಂಭತ್ತು ಸಂಖ್ಯೆಗಳನ್ನೇನೋ ಒದಗಿಸಿಕೊಟ್ಟಿರಬಹುದು, ಆದರೆ ಅಮೇರಿಕದ ಉದ್ದಗಲಕ್ಕೂ ಪ್ರತಿಯೊಬ್ಬರಿಗೂ ಕನಿಷ್ಠ ಟ್ಯಾಕ್ಸ್ ಕೊಡುವ ಆದಾಯವಿದ್ದು, ಅವರು ಲೆಕ್ಕಕ್ಕೆ ತಕ್ಕಂತೆ ಕೊಡುತ್ತಾರೆ ಎನ್ನುವ ಜನರಲೈಜೇಷನ್ನನ್ನು ಮಾಡಲಾಗದು.

ಈ ಹಿನ್ನೆಲೆಯಲ್ಲಿಯೇ ಯೋಚಿಸಿ ಮತ್ತೊಂದು ಹೆಜ್ಜೆ ಮುಂದೆ ಹೋದಾಗ ಅಮೇರಿಕದವರಿಗೆ ಪ್ರಪಂಚದ ಉಳಿದ ದೇಶಗಳಲ್ಲಿನ ಅನುಕೂಲ, ಅನಾನುಕೂಲಗಳನ್ನು ಯೋಚಿಸಿಕೊಳ್ಳಲು ಕಷ್ಟವಾಗಬಹುದು ಎಂಬುದು ನನ್ನ ಅನಿಸಿಕೆ. ಭಾರತದಲ್ಲಿನ ಭ್ರಷ್ಟಾಚಾರವನ್ನಾಗಲೀ, ರಷ್ಯಾದಲ್ಲಿನ ಮಾಫಿಯಾವನ್ನಾಗಲೀ, ಎಷ್ಟೋ ದೇಶಗಳಲ್ಲಿನ ಅರಾಜಕತೆ, ಡಿಕ್ಟೇಟರ್‌ಶಿಪ್ಪುಗಳನ್ನಾಗಲೀ, ಅಲ್ಲಲ್ಲಿ ನಡೆಯುವ ಜನರ ದುರ್ಮರಣದ ಸಂಖ್ಯೆಯನ್ನಾಗಲೀ, ಅಥವಾ ಉಳಿದ ಮತ-ಧರ್ಮ-ಸಂಪ್ರದಾಯಗಳ ಹಿನ್ನೆಲೆಯನ್ನಾಗಲೀ ಅರ್ಥ ಮಾಡಿಕೊಳ್ಳಲು ದೊಡ್ಡ ಮನಸ್ಸೇ ಬೇಕು. ಇರಾಕ್‌ನಲ್ಲಿ ಸದ್ದಾಮನ ಸರ್ಕಾರವನ್ನು ಬೀಳಿಸಿದ್ದೇವೆ, ಅಲ್ಲಿನ ಜನರು ಸುಖವಾಗಿ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇಕೆ ಇರಬಾರದು? ಎಂದು ಕೇಳುವ ಪ್ರಶ್ನೆಗಳು ಬಾಲಿಶವೇ ಹೌದು. ಪ್ರಪಂಚದ ಎಲ್ಲರೂ ತಮ್ಮ ತಮ್ಮ ಲೆಕ್ಕದ ಟ್ಯಾಕ್ಸ್ ಅನ್ನು ನಿಖರವಾಗಿ ಕೊಟ್ಟು ಅವರವರ ಸರ್ಕಾರದ ಹುಂಡಿಯನ್ನೇಕೆ ಬೆಳೆಸಬಾರದು ಎನ್ನುವಷ್ಟೇ ಹುಂಬ ಪ್ರಶ್ನೆಯಾದೀತು. ಒಂದು ವ್ಯವಸ್ಥೆ - ಅದು ಟ್ಯಾಕ್ಸ್ ಕೊಟ್ಟು ಅದನ್ನು ಪರಿಶೀಲಿಸಿಕೊಳ್ಳುವ ಕ್ರಮವಾಗಿರಬಹುದು, ಲಂಚ ತೆಗೆದುಕೊಂಡವರನ್ನು ಗುರುತಿಸಿ ಥಳಿಸುವ ನಿಯಮವಾಗಿರಬಹುದು, ಕ್ರಿಮಿನಲ್ಲ್‌ಗಳನ್ನು ಹುಡುಕಿ ಶಿಕ್ಷಿಸುವ ಪರಿಯಾಗಿರಬಹುದು - ಅದು ಬೆಳೆದು ನಿಲ್ಲಲು ಆಯಾ ಸಮಾಜದ ಬೆಂಬಲವಂತೂ ಖಂಡಿತ ಬೇಕೇ ಬೇಕು, ಜೊತೆಗೆ ಹೆಚ್ಚಿನವರು ನಿಯಮಗಳನ್ನು ಪಾಲಿಸುವವರಾಗಿದ್ದಾಗ ಮಾತ್ರ ಹಾಗೆ ಮಾಡದವರನ್ನು ಹುಡುಕಿ ತೆಗೆಯುವುದು ಸುಲಭವಾದೀತು. ಆದರೆ ಸಮಾಜದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭ್ರಷ್ಟಾಚಾರದ ಸುಳಿಗೆ ಸಿಲುಕುವವರು ಹೆಚ್ಚಿದ್ದಾಗ, ತಮ್ಮ ಹಕ್ಕು-ಕರ್ತವ್ಯಗಳ ಬಗ್ಗೆ ತಿಳುವಳಿಕೆಯೇ ಇಲ್ಲದವರಿದ್ದಾಗ ಹಾಗೂ ಅಂತಹವರನ್ನು ಶೋಷಿಸುವ ವ್ಯವಸ್ಥೆ ಇದ್ದಾಗ ಯಾವೊಂದು ಸಮಾಜ ತಾನೇ ಆರೋಗ್ಯಕರವಾಗಿರಬಲ್ಲದು?

ಭಾರತದಲ್ಲಿ ಮಾರಾಟ ಮಾಡುವ ಬೆಂಕಿ ಪೊಟ್ಟಣದಿಂದ ಹಿಡಿದು ಉಳಿದ ವಸ್ತುಗಳಿಗೂ ಮಾರಾಟ ತೆರಿಗೆಯನ್ನು ಸೇರಿಸಿಯೇ ಮಾರಾಟ ಮಾಡುವ ವ್ಯವಸ್ಥೆಯನ್ನು ನೀವು ನೋಡಿರಬಹುದು. ಅಂಗಡಿಯಲ್ಲಿ ಕೊಂಡ ದಿನಸಿಯ ಚೀಟಿಯ ಕೊನೆಗೆ ನಾನಂತೂ ಟ್ಯಾಕ್ಸ್ ಕೊಟ್ಟಿದ್ದಿಲ್ಲ, ಇತ್ತೀಚೆಗೆ ಬಂದ ವ್ಯಾಟ್ (VAT) ಪದ್ಧತಿಯ ಪ್ರಕಾರ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ/ಸುಂಕವನ್ನು ತೆಗೆದುಕೊಳ್ಳುತ್ತಿರಬಹುದಾದರೂ ಹೆಚ್ಚಿನ ವಸ್ತುಗಳು ನನಗೆ ಗೊತ್ತಿದ್ದ ಹಾಗೆ ’inclusive of all taxes' ಎಂದು ಹಣೆ ಪಟ್ಟಿಯನ್ನು ಹಚ್ಚಿಕೊಂಡದ್ದು ನನ್ನ ನೆನಪು. ಅಮೇರಿಕದ ರೆಸ್ಟೋರೆಂಟುಗಳಲ್ಲಿ ಕೆಲಸ ಮಾಡುವ ವೇಟರ್ (ಸರ್ವರ್)ಗಳಾಗಲೀ, ಇಲ್ಲಿನ ಟ್ಯಾಕ್ಸಿ ಚಾಲಕರಾಗಲೀ ತಾವು ಪಡೆಯುವ ಟಿಪ್ಸ್ ಅನ್ನೆಲ್ಲ ನಿಖರವಾಗಿ ಲೆಕ್ಕ ಹಿಡಿದು ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎಂದು ನಾನೇನೂ ನಂಬುವುದಿಲ್ಲ. ಹಾಗೇ ಭಾರದಲ್ಲಿನ ರಿಕ್ಷಾ ಡ್ರೈವರುಗಳೂ ಜನರಿಂದ ಪಡೆಯುವ ಮೀಟರ್ ಹಣದ ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎನ್ನುವುದು ನಂಬಲು ಕಷ್ಟವಾದ ವಿಷಯವೇ. ಹಾಗಿದ್ದ ಮೇಲೆ ಈ ರೀತಿಯ ಕೆಲಸಗಾರರಿಂದ ಹಿಡಿದು ಮಹಾ ಉದ್ಯಮಿಗಳಿಗೆಲ್ಲ ಅನ್ವಯವಾಗುವಂತೆ ವ್ಯಾಟ್ ಒಂದನ್ನು ಜಾರಿಗೆ ತಂದು ಬಿಡಿ ಎನ್ನುವುದು ನಿಜವಾಗಿ ಕಷ್ಟದ ಮಾತೇ. ಒಂದು ವಸ್ತು ಹಂತಹಂತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ ಕೈಯಿಂದ ಕೈಗೆ ಸಾಗುವ ವ್ಯವಸ್ಥೆಯೇ ಬೇರೆ ಅಲ್ಲಿ ಹೊಂದುವ ಟ್ಯಾಕ್ಸ್ ಪರಿಭಾಷೆಯನ್ನು ಸಾಮಾನ್ಯ ಜನರಿಗೂ ಬಳಸಿ ಅಲ್ಲಿ ಗೆಲ್ಲುವ ಮಾತಾದರೂ ಎಲ್ಲಿ ಬರುತ್ತದೆ.

ಅಮೇರಿಕದಲ್ಲಿ ತಲೆಯಿಂದ ತಲೆಗೆ ಬರುವ ಆಸ್ತಿಗಳಿಗೂ ಅನ್ವಯವಾಗುವಂತೆ ಟ್ಯಾಕ್ಸ್ ಬಳಸುವ ವ್ಯವಸ್ಥೆ ಇದೆ, ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮಂತಹವರಿಗೆ ಕಷ್ಟವಾಗಬಹುದು. ಒಂದು ತಲೆಯಿಂದ ಮತ್ತೊಂದು ತಲೆಗೆ ವ್ಯವಸ್ಥಿತವಾಗಿ ಹಂಚಿಹೋಗುವ ಆಸ್ತಿಗೆ ಮತ್ತೇಕೆ ಅವರು ಟ್ಯಾಕ್ಸ್ ಕೊಡಬೇಕು ಎನ್ನುವುದು ನನಗಂತೂ ಕಠಿಣವಾದ ಪ್ರಶ್ನೆಯೇ. ನಾವು ಬ್ಯಾಂಕಿನಲ್ಲಿಟ್ಟ ಹಣಕ್ಕೆ ವರ್ಷಕ್ಕೆ ಹತ್ತೇ ಹತ್ತು ಡಾಲರ್ ಬಡ್ಡಿ ಬಂದರೂ ಅದನ್ನು ನಮ್ಮ ಆದಾಯವೆಂದು ಪರಿಗಣಿಸಿ ಅದಕ್ಕೂ ತಕ್ಕದಾದ ಟ್ಯಾಕ್ಸ್ ವಸೂಲಿ ಮಾಡುವ ವ್ಯವಸ್ಥೆ ನನಗಂತೂ ಮೊದಲಿನಿಂದಲೂ ಇಷ್ಟವಾಗದ ವಿಚಾರವೇ. ಇಷ್ಟವೋ ಕಷ್ಟವೋ ಅದನ್ನು ನಿಖರವಾಗಿ ತೋರಿಸಿ ಅಷ್ಟರಮಟ್ಟಿಗೆ ಟ್ಯಾಕ್ ಕೊಟ್ಟು ಇರುವುದು ಕಷ್ಟವಾಗೇನೂ ಇಲ್ಲ. ಆದರೆ ನಮ್ಮಂತಹವರು ಈ ದೇಶದಿಂದ ಹೊರಕ್ಕೆ ಗಿಫ್ಟ್ ಆಗಿಯೋ ಮತ್ತೊಂದಕ್ಕೋ ಕಳಿಸುವ ಹಣವಿದೆಯೆಲ್ಲ ಅದನ್ನು ನಾವು ಯಾವುದೇ ರೀತಿಯಿಂದಲೂ ತೋರಿಸಲು ಸಾಧ್ಯವಾಗಿಲ್ಲ. ನೀವು ಇಷ್ಟೊಂದು ಹಣವನ್ನು ದುಡಿದಿದ್ದೀರಿ ಎನ್ನುವುದರ ಹಿಂದೆ ಎಷ್ಟೊಂದು ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಳೆದುಕೊಂಡಿದ್ದೀರಿ ಎನ್ನುವುದು ನಿಜ, ಅದರ ಜೊತೆಗೆ ನೀವು ನಿಮಗೆ ಬೇಕಾದವರಿಗೆ ಕೊಡಬಹುದಾದ ಗಿಫ್ಟ್ ಭಾರತದಿಂದ ಹೊರಗಿದ್ದರೆ ಇಲ್ಲಿನ ಸರ್ಕಾರದವರಿಗೆ ಅದು ಲೆಕ್ಕಕ್ಕೆ ಸಿಗದ ಕಾರಣ ಅದನ್ನು ವೆಚ್ಚವಾಗಿ ಬಳಕೆಯಾಗಿ ನೋಡುತಾರೆಯೇ ವಿನಾ ಅದಕ್ಕೆ ತೆರಿಗೆ ವಿನಾಯಿತಿಯನ್ನು ಕೊಡಲು ಕಷ್ಟವಾದೀತು. ಒಟ್ಟಿನಲ್ಲಿ ಪೇ ಚೆಕ್ಕ್‌ನಿಂದ ಪೇ ಚೆಕ್ಕ್‌ಗೆ ಹೋಗುವ ವ್ಯವಸ್ಥೆಯಲ್ಲಿ ಉಳಿಸುವುದೇನಿದ್ದರೂ ಟ್ಯಾಕ್ಸ್ ಅನ್ನು ಕೊಟ್ಟಬಳಿಕವೇ ಎನ್ನುವುದು ನಿಜ, ನಿಮಗೆ ಬೇಕೋ ಬೇಡವೋ ಅಗತ್ಯವಾದ ಟ್ಯಾಕ್ಸ್ ಅನ್ನು ಮೊದಲೇ ಹಿಡಿದುಕೊಂಡಿರುವುದರಿಂದ ವರ್ಷದ ಕೊನೆಗೆ ನಾವು ನಾವು ಫೈಲ್ ಮಾಡಿ ಸರ್ಕಾರದಿಂದ ಹಣವೇನಾದರೂ ಹಿಂತಿರುಗಿ ಬರುತ್ತದೆಯೇನೋ ಎಂದು ಬಕಪಕ್ಷಿಯ ಹಾಗೆ ಕಾದುಕೊಂಡಿರುವುದು ತಪ್ಪೋದಂತೂ ಇಲ್ಲ.

Sunday, January 20, 2008

ಅಂತರಂಗ - ಮುನ್ನೂರು



’ಅಂತರಂಗ’ ಒಂದರಲ್ಲೇ ಮುನ್ನೂರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾಯಿತು, ಇನ್ನಾದರೂ ನನ್ನ ಹುಚ್ಚು ಆಲೋಚನೆಗಳಿಗೆ ಒಂದಿಷ್ಟು ಕಡಿವಾಣ ಬೀಳುತ್ತದೆಯೇನೋ ಎಂಬ ಆಶಯದಲ್ಲಿ ಈ ಹಿಂದೆಯೇ ಯೋಚಿಸಿಟ್ಟಂತೆ ಹೊಸವರ್ಷ ಆರಂಭವಾದಂದಿನಿಂದ ಕಾರಿನಲ್ಲಿ ರೆಡಿಯೋವನ್ನು ನಿಲ್ಲಿಸಿದ್ದಾಯಿತು. ಆದರೂ ಬರೆಯೋಕೇನು ಬೇಕಾದಷ್ಟು ವಿಷಯಗಳು ಇದ್ದೇ ಇವೆ, ಅದರ ಜೊತೆಗೆ ಕಾಕತಾಳೀಯ ಎಂಬಂತೆ ಜನವರಿ ೧೩ ರಂದು ಭೂಮಿಕಾದ ವೇದಿಕೆಯಲ್ಲಿ ಕನ್ನಡ ಬ್ಲಾಗ್‌ಗಳ ಬಗ್ಗೆ ಮಾತನಾಡಿದಂದಿನಿಂದ ದಟ್ಸ್‌ಕನ್ನಡ ಕೃಪೆಯಿಂದ ಬ್ಲಾಗಿಗೆ ಎಲ್ಲೆಲ್ಲಿಂದಲೋ ಓದುಗರು ಬಂದು ಹೋಗುತ್ತಿರುವುದನ್ನು ನೋಡೀ ನೋಡೀ ಏನಾದರೂ ಬರೆಯುವ ಹಂಬಲದ ಹಿಂದೆ ಬರೆಯುವ ವಿಷಯಗಳ ಬಗ್ಗೆ ಒಮ್ಮೆ ಯೋಚಿಸಿಕೊಳ್ಳುವಂತಾಗಿರೋದೂ ನಿಜವೇ ಹೌದು.

ನನ್ನ ಸ್ನೇಹಿತ ಹರೀಶ್ ಹೇಳೋ ಹಾಗೆ ಕ್ರಿಯಾಶೀಲತೆ ಬಹಳ ಮುಖ್ಯ, ಪ್ರತಿಯೊಬ್ಬರೂ ಅವರ ಜೀವನದ ಉತ್ತುಂಗದಲ್ಲಿ ಏನೇನೆಲ್ಲವನ್ನು ಮಾಡಬೇಕು ಎಂದು ಆಲೋಚಿಸಿಕೊಂಡರೂ ಅಂದುಕೊಂಡಿದ್ದನ್ನು ಮಾಡಿ ತೋರಿಸುವುದು ಇದೆ ನೋಡಿ ಅದು ಕಷ್ಟದ ಕೆಲಸ. ಜೀವನದ ಒಂದು ಘಟ್ಟದಲ್ಲಿ ಎಲ್ಲರೂ ಪುಸ್ತಕವೊಂದನ್ನು ಬರೆಯಬೇಕು ಎಂದುಕೊಳ್ಳೋದು ಸಹಜವಿರಬಹುದು, ಆದರೆ ಒಂದು ಪುಸ್ತಕವನ್ನು ಬರೆಯುವುದಕ್ಕೆ ಹಂದರವನ್ನು ಆಲೋಚಿಸಿಕೊಂಡು ಅದನ್ನು ಒಂದು ರೂಪಕ್ಕೆ ತಂದು ತಿದ್ದಿ ತೀಡಿ ಪ್ರಕಟಿಸಿ ಜನರಿಗೆ ತಲುಪಿಸುವುದು ಒಂದು ದೊಡ್ಡ ಕಾಯಕವೇ ಸರಿ. ಅಂತಹ ತಪಸ್ಸಿಗೆ ಬಹಳಷ್ಟು ವ್ಯವಧಾನ ಬೇಕು, ಸಾಕಷ್ಟು ಬೇಸರವನ್ನು ಸಹಿಸಿಕೊಂಡು ಮೈ ಬಗ್ಗಿಸಿ ದುಡ್ಡಿಯುವ ಕೆಚ್ಚಿರಬೇಕು. ಆ ನಿಟ್ಟಿನಲ್ಲಿ ಹೇಳೋದಾದರೆ ಒಂದು ಕಾಲದಲ್ಲಿ ಯಾವುದಾದರೊಂದು ಸಣ್ಣ ಲೇಖನವನ್ನು ಬರೆಯಲು ಭೌತಿಕವಾಗಿ ಕೊಸರಾಡುತ್ತಿದ್ದ ನನಗೆ ಇಂದು ಇಷ್ಟೊಂದು ಬ್ಲಾಗ್‌ ಪರಿಧಿಯಲ್ಲಿ ಬರೆದು ಪ್ರಕಟಿಸಿದ ಮೇಲೆ ಕುಳಿತು ಬರೆಯುವುದು ಇನ್ನೂ ಸವಾಲಾಗೇನೂ ಉಳಿದಿಲ್ಲ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಆದರೆ, ಆ ಹೆಮ್ಮೆಯ ಹಿಂದೆ ಬೇಕಾದಷ್ಟು ಕ್ಷೋಭೆಗಳಿವೆ: ಮೊದಲೆಲ್ಲ ಗಹನವಾದದ್ದನ್ನೇನೋ ಬರೆಯುವಾಗ ಮೊದಲು ಪೇಪರಿನಲ್ಲಿ ಬರೆದುಕೊಂಡು ನಂತರ ಕಂಪ್ಯೂಟರಿನಲ್ಲಿ ಅಕ್ಷರ ಜೋಡಿಸಿಕೊಳ್ಳುತ್ತಿದ್ದವನಿಗೆ ಇಂದು ಏಕ್‌ದಂ ಕಂಪ್ಯೂಟರ್ ಮೇಲೇ ಬರೆಯುವುದಕ್ಕೆ ರೂಢಿಸಿಕೊಂಡಿರುವುದರ ಹಿಂದೆ ಕೀ ಬೋರ್ಡಿನ ವೇಗಕ್ಕೆ ಮನಸ್ಸು ಹೊಂದಿಕೊಂಡಿರುವುದನ್ನು ಗಮನಿಸಿ ಸಂಕಟವಾಗುತ್ತದೆ. ಬ್ಲಾಗ್ ಕೊಡುವ ಸ್ವಾತಂತ್ರ್ಯ ಡೆಸ್‌ಟಾಕ್ ಪಬಿಷಿಂಗ್ - ಅದೇ ಅದರ ಮಿತಿ ಕೂಡ, ಬರಹವನ್ನು ಯಾರಾದರೂ ತಿದ್ದಿ ಹೀಗಲ್ಲ ಹಾಗೆ ಎಂದು ಹೇಳುವುದನ್ನು ಮೀರಿ ಬೆಳೆದ ನನ್ನಂಥ ಬ್ಲಾಗ್ ಬರಹಗಾರರಿಗೆ ನಮ್ಮ ಮಿತಿಯನ್ನು ಕಂಡುಕೊಳ್ಳುವುದೂ ಅದನ್ನು ತಿದ್ದಿಕೊಂಡು ಬೆಳೆಯುವುದೂ ದೊಡ್ಡ ಸವಾಲು. ಜೊತೆಗೆ ಬ್ಲಾಗ್ ಒದಗಿಸುವ ಬ್ಲಾಗ್ ಪರಿಧಿಯಲ್ಲಿ ವಸ್ತು-ವಿಷಯಕ್ಕೆ ಆಧ್ಯತೆ ಕೊಡುವುದಕ್ಕಿಂತಲೂ ಅವರವರ ಅಭಿಪ್ರಾಯ ದೊಡ್ಡದಾಗುತ್ತದೆ, ನಮ್ಮ ಅನಿಸಿಕೆಗಳು ನಮ್ಮ ಇಂದಿನ ಪ್ರಬುದ್ಧತೆಯೇ ನಮ್ಮ ಮಿತಿಯಾಗದೆ ನಮ್ಮನ್ನು ಇದ್ದಲ್ಲೇ ನಿಲ್ಲಿಸದಿದ್ದರೆ ಸಾಕು.

ಪ್ರತಿಯೊಬ್ಬ ಬ್ಲಾಗಿಗನೂ ತಮ್ಮ ಬೆಳವಣಿಗೆಗೆ ತಾವು ಓದುವ ಇತರ ಬ್ಲಾಗುಗಳ ಜೊತೆಗೆ ಇತರ ಮಾಧ್ಯಮಗಳನ್ನು ಅನುಸರಿಸಿಕೊಂಡಿದ್ದರೆ ಪುಣ್ಯ. ಬ್ಲಾಗ್ ಒಂದು ಅಭಿವ್ಯಕ್ತಿ ಮಾಧ್ಯಮ, ಆದರೆ ಅದೇ ಕೊರತೆಯಾಗಬಾರದು. ಮುಂದಿನ ಬರಹಗಳಲ್ಲಾದರೂ ತಕ್ಕ ಮಟ್ಟಿನ ರೆಫೆರೆನ್ಸ್‌ಗಳನ್ನು ಒದಗಿಸಿಯೋ, ಅಂಕಿ-ಅಂಶಗಳನ್ನು ಬಳಸಿಯೋ, ಶಬ್ದ-ಚಿತ್ರ ಮುಂತಾದವುಗಳ ಮೂಲಕವೋ ಬೇರೆ ಬೇರೆ ನಿಲುವುಗಳನ್ನು ತೋರಿಸುವ ಪ್ರಯತ್ನವನ್ನು ಮಾಡಬಾರದೇಕೆ ಎಂದು ಅನ್ನಿಸಿದ್ದಿರ ಹಿನ್ನೆಲೆಯಲ್ಲಿ ಮನಸ್ಸಿನಲ್ಲಿ ಬರುವ ಚಿಂತನೆ/ಆಲೋಚನೆಯೊಂದಕ್ಕೆ ಭಿನ್ನವಾಗಿ ನೋಡುವ ದೃಷ್ಟಿಕೋನ ಬಂದರೆ ಒಳ್ಳೆಯದೇ. ಸರಿ-ತಪ್ಪು ಎನ್ನುವುದಕ್ಕಿಂತ ಒಂದು ವಿಷಯಕ್ಕಿರುವ ಹಲವಾರು ಮಜಲುಗಳನ್ನು ಶೋಧಿಸುವ ವ್ಯವಧಾನ ಸಿಕ್ಕರೆ ಅದು ನನ್ನ ದೊಡ್ಡಸ್ತಿಕೆಯಾಗಲಿ. ರಾಬರ್ಟ್ ಕಿಯೋಸಾಕಿ (Robert Kiyosaki) ರಿಚ್‌ಡ್ಯಾಡ್ ಪೂವರ್ ಡ್ಯಾಡ್‌ನಲ್ಲಿ ಹೇಳೋ ಹಾಗೆ ಬ್ಲಾಗ್ ಆಗಲಿ ಪುಸ್ತಕವಾಗಲೀ ಯಾವುದೇ ಮಾಧ್ಯಮಕ್ಕಾದರೂ ಬೆಸ್ಟ್ "ಸೆಲ್ಲರ್" ನಿಲುವು ಮುಖ್ಯವಾದುದು, ಬ್ಲಾಗ್ ಬರೆಯುವವನು ತಾನು ಎಷ್ಟು ಬೇಡವೆಂದರೂ ಬ್ಲಾಗ್ ಓದುವವರ ಬಗ್ಗೆ ಯೋಚಿಸಿಯೇ ಯೋಚಿಸುತ್ತಾನೆ, ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರೂ ಬ್ಲಾಗ್ ಓದುಗರ ಆಶಯಕ್ಕೆ ಒತ್ತಾಸೆಯಾಗಬೇಕು. ಹೀಗೆ ಹೇಳೋದಕ್ಕೆ ಎರಡು ಕಾರಣಗಳಿವೆ: ಮೊದಲನೆಯದಾಗಿ ಇಂದು ಎಷ್ಟೋ ಜನ ಬ್ಲಾಗ್ ಓದುವುದಕ್ಕೆ ಮಾತ್ರ ಸೀಮಿತವಾದರೆ ಎನ್ನುವ ಹೆದರಿಕೆ, ಎರಡನೆಯದಾಗಿ ಮುಂದಿನ ವರ್ಷಗಳಲ್ಲಿ ಬ್ಲಾಗ್ ಒಂದು ಸಾಹಿತ್ಯ ಪ್ರಕಾರವಾಗಿ ನಿಲ್ಲುವ ಭಯ. ಆದ್ದರಿಂದಲೇ ’ಬಾಯಿಗೆ ಬಂದಂತೆ ಬರೆಯುವ’ ಬ್ಲಾಗಿಗರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇಂಗ್ಲೀಷ್ ಬ್ಲಾಗುಗಳೋ ಹಲವಾರು ರೀತಿಯಲ್ಲಿ ಇವಾಲ್ವ್ ಆದವುಗಳು, ಆದರೆ ಮಿತಿಯಲ್ಲಿರುವ ಕನ್ನಡದ ಬ್ಲಾಗ್‌ಗಳಿಗೆ ಸೂಕ್ಷ್ಮವಾದ ಜವಾಬ್ದಾರಿ ಇದೆ ಎನ್ನುವುದು ನನ್ನ ಆಶಯ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು

***

ಕ್ಯಾಪಿಟಲಿಷ್ಟಿಕ್ ವ್ಯವಸ್ಥೆಯಲ್ಲಿ ದಿನವೂ ನೀರು ಕುಡಿಯುವ ನಮಗೆ ಬರುವ ಚಿಂತನಶೀಲ ವಿಷಯಗಳ ಹರಿವು ಒಂದೇ ಮಟ್ಟದ್ದೇ ಎಂದು ಹೇಳಬಹುದು. ನಾವು ಇಲ್ಲಿನ ಕಾರ್ಪೋರೇಟ್ ಏಣಿಯ ಮೆಟ್ಟಿಲುಗಳಲ್ಲಿ ನಿಂತು ಅಮೇರಿಕದ ಬದುಕನ್ನು ಹತ್ತಿರದಿಂದ ನೋಡುತ್ತಿದ್ದೇವೆ ಎಂದುಕೊಂಡರೆ ಅದು ನಮ್ಮ ಭ್ರಮೆ. ನಮ್ಮ ಮ್ಯಾನೇಜುಮೆಂಟ್ ಕೆಲಸಗಳಲ್ಲಿ ಜನಸಾಮಾನ್ಯರ ಪರಿಚಯ ಪ್ರಭಾವ ಕಡಿಮೆಯೇ, ನಮ್ಮ ಪ್ರಭಾವಳಿಯ ತ್ರಿಜ್ಯ ಯಾವತ್ತೂ ಒಂದೇ ಮಟ್ಟದ್ದೇ, ಅಪರೂಪಕ್ಕೊಮ್ಮೆ ದೊಡ್ಡ ಮನುಷ್ಯರ ಮಾತಿನಿಂದ ಪ್ರಭಾವಿತಗೊಂಡ ನಮ್ಮ ನಿಲುವಿನ ಚೇತನಶೀಲತೆಯನ್ನು ಒರೆಹಚ್ಚಲು ಸಿಗುವ ಸಾಣೇಕಲ್ಲುಗಳೂ ನುಣುಪಾದವುಗಳೇ. ತಾಯ್ನಾಡನ್ನು ಬಿಟ್ಟು ಬಂದ ನಮ್ಮ ನಂಬಿಕೆ, ವಿಶ್ವಾಸ, ನೆನಪುಗಳು ನಿಧಾನವಾಗಿ ನಾಷ್ಟಾಲ್ಜಿಯಾದ ವ್ಯಾಖ್ಯಾನವನ್ನು ಹೋಲುತ್ತವೆಯೇನೋ ಎನ್ನುವ ಭಯದ ಜೊತೆಗೆ ವೇಗದಲ್ಲಿ ಬೆಳೆಯುತ್ತಿರುವ ನಮ್ಮೂರು-ದೇಶದಿಂದ ಭಿನ್ನವಾಗಿ ಬೆಳೆಯುತ್ತಿರುವ ನಮ್ಮ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಬೇಕಾದಷ್ಟು ಸಾರಿ ಪ್ರಶ್ನಿಸಿಕೊಳ್ಳುವ ಅಖಾಡದಲ್ಲಿ ಸೆಣೆಸುವುದು ದಿನನಿತ್ಯದ ಮಾತುಕಥೆಗಳಲ್ಲೊಂದು. ಎಲ್ಲಕ್ಕಿಂತ ಮುಖ್ಯವಾಗಿ ’ಇಲ್ಲಿಯೇ ಇದ್ದು ಇಲ್ಲಿಯವರಾಗುವ ಪ್ರಯತ್ನವನ್ನು ಇನ್ನು ಮುಂದೂ ಮಾಡುತ್ತಲೇ ಇರುತ್ತೀರೋ?’ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದಿರಲಿ, ಇನ್ನೂ ಪ್ರಶ್ನೆಯ ವಿಸ್ತಾರವನ್ನೇ ಅರ್ಥ ಮಾಡಿಕೊಳ್ಳದಿರುವ ಅಸಹಾಯಕತೆ ನಮ್ಮದು.

ಓಹ್, ಬರೆಯೋಕೇನು ಬೇಕಾದಷ್ಟಿದೆ - ನಿಲ್ಲಿಸೋ ಮಾತೇ ಇಲ್ಲ!

***

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದುತ್ತಿರುವವರೆಲ್ಲರಿಗೂ ನನ್ನ ನಮನಗಳು. ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!

Thursday, January 17, 2008

ಕನ್ನಡ ಬ್ಲಾಗ್ ಮಂಡಲ - ಭಾಷಣದ ಅವತರಣಿಕೆ

ಬಹಳ ಜನರ ಬೇಡಿಕೆ ಮೇರೆಗೆ ದಟ್ಸ್‌ಕನ್ನಡ ವರದಿಯಲ್ಲಿ ಪ್ರಕಟವಾದಂತೆ ಭಾಷಣದ ಆಡಿಯೋ ಹಾಗೂ ಬ್ಲಾಗ್ ಲಿಸ್ಟ್ ಅನ್ನು ಇಲ್ಲಿ ಕೊಡಲಾಗಿದೆ:

ಸತೀಶ್ ಕುಮಾರ್ ಕಂಡಂತೆ ಕನ್ನಡ ಬ್ಲಾಗ್‌ಮಂಡಲ


ಜನವರಿ ೧೩ ರಂದು ಭೂಮಿಕಾದಲ್ಲಿ ನಡೆದ ಭಾಷಣದ ಅವತರಣಿಕೆಗೆ ಇಲ್ಲಿ ಕ್ಲಿಕ್ ಮಾಡಿ (~40 MB, WAV file)

ಜೊತೆಗೆ ಈ ಕೆಳಗಿನ ಫೈಲ್‌ನಲ್ಲಿ 50 ಬ್ಲಾಗ್‌ಗಳ ಪಟ್ಟಿಯನ್ನೂ ಇಲ್ಲಿ ಕೊಡಲಾಗಿದೆ.

***
ಮೊದಲು ಪ್ರಕಟಿಸಿದ್ದ ೩೯ ಬ್ಲಾಗ್‌ಗಳ ಪಟ್ಟಿಯನ್ನು ಬದಲಾಯಿಸಿ ೫೦ ಬ್ಲಾಗ್‌ಗಳಿರುವ ಈ ಹೊಸಪಟ್ಟಿಯನ್ನು ಫೆಬ್ರುವರಿ ೩ ರಂದು ಸೇರಿಸಿದ್ದೇನೆ.

Wednesday, January 16, 2008

ರಸ್ತೆಗಳೆಂಬ ಮಟ್ಟಗಾರರು

ಬಡವರೂ-ಬಲ್ಲಿದರೂ ಎಲ್ಲರೂ ಪ್ರಯಾಣ ಮಾಡೋ ದಾರಿ, ಮೆಟ್ಟಿ ಮುನ್ನಡೆಯುವ ನೆಲದ ಮೇಲಿನ ಡಾಂಬರಿನ ಹೊದಿಕೆ, ಅಥವಾ ನಾವುಗಳು ನಮ್ಮ ನಮ್ಮ ವಾಹನದ ಮೇಲೆ ಸವರಿಕೊಂಡು ಹೋಗುವ ಅಂಕುಡೊಂಕಾಗಿದ್ದೂ ಹಿಡಿದ ಗುರಿಯನ್ನು ತಲುಪಿಸುತ್ತೇವೆ ಎಂಬ ವಾಗ್ದಾನವನ್ನು ಎಂದೂ ನೀಡಿಕೊಂಡಿರುವ ಸಂಗಾತಿಗಳ ಮೇಲೆ ಇಂದು ಹೊಸದಾಗಿ ಯೋಚಿಸುವಂತಾಯ್ತು. ಪಂಚಭೂತಗಳಾಗಲೀ, ಸಾವಾಗಲೀ ಪ್ರತಿಯೊಂದು ಸಮುದಾಯಕ್ಕೆ ಒಂದು ಸಮಮಟ್ಟವನ್ನು ಕಾಯ್ದುಕೊಂಡು ಬಂದಿದ್ದರೆ ನಾವು ದಿನವೂ ಬಳಸುವ ರಸ್ತೆಗಳು ಮಹಾ ದೊಡ್ಡ ಮಟ್ಟಗಾರರು (ಲೆವೆಲರ್ಸ್) ಎಂದು ಈ ದಿನ ವಿಶೇಷವಾಗಿ ಅನ್ನಿಸಿದ್ದಂತೂ ನಿಜ.

ಸಂಜೆ ಸುಮಾರು ಆರು ಘಂಟೆಯ ಹೊತ್ತಿಗೆಲ್ಲಾ ಮಹಾ ಕತ್ತಲೆ ಆವರಿಸಿಕೊಂಡು ಎಲ್ಲಾ ಕಡೆ ಸೂರ್ಯನನ್ನು ಅಡಗಿಸಿ ಅಟ್ಟಹಾಸವನ್ನು ತೋರಿಸುತ್ತಿತ್ತು. ಅದರ ಜೊತೆಗೆ ಛಳಿ-ಗಾಳಿಯೂ ಸೇರಿಕೊಂಡು ನಾಳೆ ಸೂರ್ಯ ಹುಟ್ಟುತ್ತಾನೋ ಇಲ್ಲವೋ ಎಂದು ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಸೊನ್ನೆಗಿಂತ ಕೆಳಗಿನ ಛಳಿಯಿಂದ ಒಂದು ಒಣ ವಾತಾವರಣ ಸೃಷ್ಟಿಯಾಗಿತ್ತು. ನಾನು ಅದೆಷ್ಟೋ ಕಾರುಗಳ ಹಿಂದೆ, ಒಂದೇ ಒಂದು ಲೇನ್ ಇರುವ ಯಾವುದೋ ಗ್ರಾಮೀಣ ರಸ್ತೆಯೊಂದರಲ್ಲಿ ತೆವಳುತ್ತಿದ್ದವನು ಯಾವುದೋ ತಿರುವೊಂದರಲ್ಲಿ ದೂರದವರೆಗೆ ದೃಷ್ಟಿ ಹಾಯಿಸಿದ್ದಕ್ಕೆ ಸುಮಾರು ದೂರದವರೆಗೆ ಮುಂದಿರುವ ಕಾರಿನ ಟೇಲ್‌ಲೈಟುಗಳು ಕಂಡುಬಂದವು. ಇಷ್ಟು ಹೊತ್ತಿಗೆ ಅಲ್ಲಲ್ಲಿ ಪೋಲೀಸರು ಇದ್ದು ಅತಿವೇಗದಲ್ಲಿ ಹೋಗುವವರನ್ನು ಗುರುತಿಸಿ ದಂಡವಿಧಿಸುವುದು ಈ ರಸ್ತೆಗಳಲ್ಲಿ ಮಾಮಾಲಿಯಂತೂ ಅಲ್ಲ, ಆದರೂ ಮುಂದಿನ ಕಾರುಗಳೆಲ್ಲ ರಸ್ತೆಯ ಸ್ಪೀಡ್‌ಲಿಮಿಟ್‌ಗಿಂತಲೂ ಕಡಿಮೆ ವೇಗದಲ್ಲೇ ಚಲಿಸುತ್ತಿದ್ದವು ಅಥವಾ ತೆವಳುತ್ತಿದ್ದವು ಎಂದೇ ಹೇಳಬೇಕು. ಕಾರಿನ ಸ್ಟೇರಿಂಗ್ ವ್ಹೀಲ್‌ನ ಹಿಂದಿರ ಬಹುದಾದ ಹಲವಾರು ಮನಸ್ಥಿತಿಗಳು ಕಣ್ಣ ಮುಂದೆ ಸುಳಿದು ಹೋದವು: ದೂರದ ಡೇ ಕೇರ್ ಸೆಂಟರುಗಳಲ್ಲಿ ಕಾದುಕೊಂಡಿರುವ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬಹುದಾದ ತಂದೆ-ತಾಯಿಯರಿದ್ದರಬಹುದು, ವಾರದ ಮತ್ತೊಂದು ದಿನದ ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿರುವವರಿರಬಹುದು, ದೂರದ ಬಾರು-ರೆಸ್ಟೋರೆಂಟಿನಲ್ಲಿ ಕಾದುಕೊಂಡಿರುವ ಪ್ರೇಮಿಯನ್ನು ಭೇಟಿ ಮಾಡುವ ತವಕದವರಿದ್ದಿರಬಹುದು, ಇಂದಿನ ಹಾಗೇ ನಾಳೆ ಎಂದು ಲೆಕ್ಕ ಹಾಕಿಕೊಂಡು ಅಗತ್ಯ ವಸ್ತುಗಳ ಶಾಪ್ಪಿಂಗ್‌ಗೆ ಹೋಗುತ್ತಿರುವ ವೃದ್ಧರಿರಬಹುದು, ಹೀಗೆ ಅನೇಕಾನೇಕ ಮುಖಗಳು ಮನಸ್ಥಿತಿಗಳು ಕಣ್ಣ ಮುಂದೆ ಹಾದು ಹೋದವು. ಇವೆಲ್ಲಕ್ಕೂ ಇಂಬುಕೊಡುವ ಹಾಗೆ ಘಂಟೆಗೆ ನಲವತ್ತೈದು ಮೈಲು ವೇಗದ ಮಿತಿಯಲ್ಲಿನ ರಸ್ತೆಯಲ್ಲಿ ಇಪ್ಪತ್ತೈದಕ್ಕಿಂತಲೂ ಕಡಿಮೆ ವೇಗದಲ್ಲಿ ತೆವಳುತ್ತಿರುವ ನನ್ನ ಹಿಂದುಮುಂದಿನ ವಾಹನಗಳ ಸಾಲು ಅದ್ಯಾವುದೋ ಯುದ್ಧಭೂಮಿಯಲ್ಲಿ ಸಾವರಿಸಿಕೊಂಡು ಹೋಗುತ್ತಿರುವ ಕಾನ್‌ವಾಯ್‌ಯಂತೆ ಕಂಡುಬಂತು. ಈ ಆಮೆ ವೇಗಕ್ಕೆಲ್ಲಾ ಕಾರಣ ಒಬ್ಬನೇ, ಅದೇ ಮುಂದಿನ ವ್ಯಕ್ತಿ, ಎಲ್ಲರಿಗಿಂತ ಮೊದಲು ಈ ಸಾಲಿನಲ್ಲಿ ತೆವಳಿಕೊಂಡು ಹೋಗುತ್ತಿರುವವನು/ಳು. ಛೇ, ಇಂಥ ಒಬ್ಬ ನಿಧಾನವಾದ ಡ್ರೈವರಿನಿಂದ ಎಷ್ಟೊಂದು ಜನರು ಹೀಗೆ ತೆವಳಬೇಕಾಯಿತಲ್ಲ ಎಂದು ಒಮ್ಮೆಲೇ ಕೋಪ ಬಂತು, ಆ ಕೋಪದ ಬೆನ್ನ ಹಿಂದೆ, ಆ ಮುಂದಿನ ವ್ಯಕ್ತಿಯೇ ನಮ್ಮ ನಾಯಕ (ಲೀಡರ್), ಅವನ/ಳ ವೇಗವೇ ನಮಗೆಲ್ಲರಿಗೂ ಮಾದರಿ, ನಾವು ಹಿಡಿದ ದಾರಿ ಒಂದೇ ಒಂದು ಲೇನ್ ಇರುವ ವ್ಯವಸ್ಥೆ ಆದ್ದರಿಂದ ಇನ್ನು ಮುಂದೆ ಅದೆಷ್ಟೋ ದೂರದವರೆಗೆ ಈ ನಿಧಾನವಾದ ವ್ಯಕ್ತಿಯನ್ನು ಅನುಸರಿಸಿಕೊಂಡಿರಬೇಕಲ್ಲ, ಆ ವ್ಯಕ್ತಿ ಯಾರೂ ಏನೂ ಎನ್ನುವುದು ಗೊತ್ತಿರದಿದ್ದರೂ ಆ ಲೀಡರ್‌ಶಿಪ್‌ನಿಂದ ಎಷ್ಟೊಂದು ಜನರಿಗೆ ಅದೇನೇನೋ ಪರಿಣಾಮ ಬೀರುತ್ತಲ್ಲಾ ಎನ್ನಿಸಿ ಸದಾ ವೇಗಕ್ಕೆ ಹೊಂದಿಕೊಂಡ ನನ್ನ ವಸಡುಗಳು ಯೋಚನೆಯ ಭಾರಕ್ಕೆ ಕುಸಿದು ಹೋದವು.

ಒಬ್ಬ ನಾಯಕನಿಗೆ ವೇಗವೆನ್ನುವುದು ಇರಲೇ ಬೇಕೆಂದೇನೂ ಇಲ್ಲ. ಪ್ರಪಂಚದ ಅದೆಷ್ಟೋ ದೇಶದ ನಾಯಕರುಗಳು ಸ್ಲೋ, ಅನೇಕ ಕಂಪನಿಯ ಲೀಡರುಗಳು ಟೈಪ್-ಬಿ ವ್ಯಕ್ತಿತ್ವದವರೇ ಸರಿ. ವೇಗವಾಗಿ ಹೋಗುವ ರಸ್ತೆಗಳಿದ್ದೂ ಅನುಕೂಲಗಳಿದ್ದೂ ಎಲ್ಲರಿಗಿಂತ ಮುಂದಿನ ವ್ಯಕ್ತಿ ನಿಧಾನವಾಗಿ ಹೋಗುತ್ತಿರುವ ಕಾರಣಕ್ಕೆ ಎಷ್ಟೊಂದು ಜನರ ಮೇಲೆ ಅದೇನೇನು ಪರಿಣಾಮಗಳು ಬೀರುತ್ತವೆ ಎಂದು ಒಮ್ಮೆ ಯೋಚಿಸಿಕೊಂಡೆ. ಯಾವುದು ಸಾಮಾನ್ಯ ಸಂಜೆಯಾಗಿ ಪರಿವರ್ತನೆಗೊಂಡು ಎಲ್ಲವೂ ಸುಗಮವಾಗಿ ನಡೆಯಬೇಕಿತ್ತೋ ಅಲ್ಲಿ ನಿಮಿಷ-ನಿಮಿಷಗಳನ್ನು ಆಧರಿಸಿಕೊಂಡಿರುವ ಎಷ್ಟೋ ಜನರಿಗೆ ವಿಳಂಬವಾಗಿ ಹೋಗಬಹುದು. ಒಮ್ಮೆ ವಿಳಂಬಗೊಂಡವರು ಗಲಿಬಿಲಿಯಿಂದ ಹೆಚ್ಚಿನ ವೇಗದಲ್ಲಿ ಓಡಿಸಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಅಪಾರವಾದ ಸಮಯವಿದೆ ಎನ್ನುವ ಮಹಾಕಾಲದ ಮುಂದೆಯೂ ನಾವು ದಿನ, ಘಂಟೆ, ನಿಮಿಷ, ಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ನಾವೇ ಸೃಷ್ಟಿಸಿಕೊಂಡಿರುವ ಗಡಿಯಾರವನ್ನಾಧರಿಸಿದ ವ್ಯವಸ್ಥೆಯಲ್ಲಿ ಅದೇನೇನು ಅವಾಂತರಗಳಾಗಬೇಡ. ಈಗಿನ ನಾಯಕ ಅಥವಾ ಮುಂದಾಳು ಬದಲಾಗುವವರೆಗೆ ಹಿಂದಿನವರು ಸಂಯಮದಿಂದ ಕಾಯಬೇಕೇ ಅಥವಾ ಈ ಮುಂದಾಳು ಬದಲಾಗಿ ಮತ್ತೊಬ್ಬ ಬಂದು ನಮ್ಮೆಲ್ಲರ ವೇಗದ ಗತಿಯ ನಿಧಾನವಾದ ಬದಲಾವಣೆಯ ಬಗ್ಗೆ ಚಿಂತಿಸಬೇಕೇ ಅಥವಾ ನಾವೇ ಮತ್ಯಾವುದೋ ಹೊಸ ರಸ್ತೆಯೊಂದನ್ನು ಹಿಡಿದು ನಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಳ್ಳಬೇಕೆ? ಒಂದು ವೇಳೆ ಹಾಗೆ ಮಾಡಿದರೂ ಈ ರಸ್ತೆಗಳೆಂಬ ಮಟ್ಟಗಾರರೂ ಎಲ್ಲಿಯೂ ಎಲ್ಲಕಡೆಯೂ ಇರಬಹುದಲ್ಲವೇ? ಈ ಮುಂದಾಳುವನ್ನು ತೊರೆದು ಹೋದ ಮಟ್ಟಿಗೆ ಮತ್ತೊಬ್ಬ ಮುಂದಾಳು ಸಿಗುವವ ಹೇಗಿರುತ್ತಾನೋ ಏನೋ? ರಾಬರ್ಟ್ ಪ್ರಾಸ್ಟ್‌ನ ಕಾಲದ ಕಡಿಮೆ ಜನರು ಸಂಚರಿಸಿದ ಮಾರ್ಗಗಳು ಇನ್ನೂ ಇವೆಯೇ ಎಂದು ಬೇಕಾದಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.

ರಸ್ತೆ ಎನ್ನುವುದು ಕೇವಲ ನಡೆದಾಡುವ ಹಾದಿ, ಹೆಚ್ಚು ಜನರು ಬಳಸುವ ವ್ಯವಸ್ಥೆ ಎಂದು ದೊಡ್ಡ ವ್ಯಾಖ್ಯಾನವನ್ನೇನೋ ಮಾಡಬಹುದು ಆದರೆ ಪ್ರತಿಯೊಬ್ಬರನ್ನೂ ಒಂದೇ ಮಟ್ಟಕ್ಕೆ ಎಳೆದು ತರುವ ಈ ಅವತರಣಿಕೆಯನ್ನು ಒಂದು ತತ್ವವನ್ನಾಗಿ ಅಥವಾ ಸಾಧನವನ್ನಾಗಿ ನೋಡಿದ್ದು ನಾನು ಇದೇ ಮೊದಲು. ಭೂಮಿಯ ಮೇಲಿನ ರಸ್ತೆಗಳು ಹಾಗೆಯೇ ಹೆಚ್ಚು ಜನರು ಬಳಸುವಲ್ಲಿ ಸಹಾಯವಾಗುವಂತೆ ಕಡಿಮೆ ಜನರು, ಮುತ್ಸದ್ದಿಗಳು, ಚಿಂತಕರು ಮೊದಲೇ ಯೋಚಿಸಿ ರೂಪಿಸಿರುವ ವ್ಯವಸ್ಥೆ. ನನ್ನ ಭೌತಿಕ ಅಸ್ತಿತ್ವದ ಮೊದಲೂ ನಂತರವೂ ನಾವು ಇರುತ್ತೇವೆ ಎಂಬ ಹಣೆಪಟ್ಟಿಯನ್ನು ಬರೆಸಿಕೊಂಡೇ ಹುಟ್ಟಿವೆ ಈ ಮಟ್ಟಗಾರರು. ಭೂಮಿಯ ಮೇಲಿನ ರಸ್ತೆಗಳನ್ನು ಒಮ್ಮೆ ತೋಡಿಕೊಂಡರೆ ಮತ್ತೆ ಮತ್ತೆ ಅದೇ ವ್ಯವಸ್ಥೆಗೆ ಬರುವಂತೆ ಮಾಡುವ ಕಟ್ಟಿ ಹಾಕುವ ನೆರೆಹೊರೆಗಳಿವೆ, ಅದೇ ನೀರಿನ ಮೇಲಾಗಲೀ ಗಾಳಿಯಲ್ಲಾಗಲೀ ತೇಲುವವರಿಗೆ ಈ ಜಿಜ್ಞಾಸೆಗಳಿರಲಿಕ್ಕಿಲ್ಲ. ಈ ಮಟ್ಟಗಾರ ರಸ್ತೆಗಳು ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ ಎಂದು ಬೀಗುವುದನ್ನು ನೀವು ಗಮನಿಸಿರಬಹುದು, ಭೋಗೋಳದಲ್ಲಿ ಅಪರಿಮಿತವಾಗಿ ಗಾಳಿ-ನೀರಿದ್ದರೂ ನಾವು ಹೆಚ್ಚು ಹೆಚ್ಚು ಆಧರಿಸಿಕೊಂಡಿರುವುದು ನೆಲವನ್ನೇ. ಅದ್ಯಾವುದೋ ಸೈನ್ಸ್‌ಫಿಕ್ಷನ್ನ್ ಸಿನಿಮಾಗಳಲ್ಲಿ ತೋರಿಸೋ ಹಾಗೆ ನಾವೂ ಏಕೆ ಸ್ವತಂತ್ರರಾಗಿ ಕಡಿಮೆ ಖರ್ಚಿನಲ್ಲಿ ಅಂತರಿಕ್ಷದಲ್ಲಿ ತೇಲಬಾರದು? ನಮ್ಮ ಗುರಿಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ನಮ್ಮ ನಮ್ಮ ದೂರಕ್ಕೆ ತಂತ್ರಕ್ಕೆ ಆಲೋಚನೆಗಳಿಗೆ ನಾವು ನಾವೇ ಏಕೆ ನಾಯಕರಾಗಬಾರದು? ಯಾರೊಬ್ಬರ ಹಿಂದೂ ಇಲ್ಲದೇ, ಯಾರ ಮುಂದೆ ತೆವಳಿಕೊಂಡು ಹೋಗಬಹುದಾದ ಹಂಗೂ ಇಲ್ಲದೇ ಪ್ರತಿಯೊಂದು ಸಾರಿ ತೇಲುವಾಗಲೂ ನಮ್ಮ ದಾರಿಯನ್ನು ನಾವೇ ಏಕೆ ಕೊರೆದುಕೊಳ್ಳುವ ಮುಂದಾಳುಗಳಾಗಬಾರದು? ಕಡಿಮೆ ಭೂಮಿಯಲ್ಲಿ ಹೆಚ್ಚು ಹೆಚ್ಚು ಜನರು ಕೊರೆದು ಅದೆಲ್ಲಿಂದ ಅದೆಲ್ಲಿಗೋ ಹೋಗುವ ನಿರ್ಣಾಯಕ ರಸ್ತೆಗಳನ್ನು ನಿರ್ಮಿಸಿದಂತೆಲ್ಲಾ ಇವುಗಳು ಹಠ ಮಾಡುವ ಮಕ್ಕಳಿಗೆ ಒಂದೇ ಒಂದು ಆಪ್ಷನ್ನನ್ನು ಕೊಡುವ ಪೋಷಕರ ಹಾಗೆ ಯಾವತ್ತೋ ಅದೇ ಹಾಡನ್ನು ಹಾಡಿಕೊಂಡಿರುವ ಮಟ್ಟಗಾರರಾಗುವುದೇಕೆ? ಯಾವನೋ ಒಬ್ಬ ತನ್ನ ಗೌಜು-ಗದ್ದಲಗಳ ನಡುವೆ ನಿಧಾನವಾಗಿ ತೆವಳಿಕೊಂಡು ಹೋಗುತ್ತಿರುವುದನ್ನು ನಾವು ಉಳಿದವರು ಅವನ ಮುಂದಾಳುತನವನ್ನಾಗಲೀ, ನಾಯಕತ್ವವನ್ನಾಗಲೀ ಅದೇಕೆ ಒಪ್ಪಿಕೊಳ್ಳಬೇಕು? ಒಮ್ಮೆ ಸರತಿ ಸಾಲಿನಲ್ಲಿ ಸಿಕ್ಕಿಕೊಂಡಾಕ್ಷಣ ಅದರಿಂದ ಮುಕ್ತಿಯೆಂಬುದೇ ಇಲ್ಲವೇನು?

Sunday, January 13, 2008

ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ

ಸದಾ ಗಿಜಿಗುಡುತ್ತಿರೋ ರಸ್ತೇ ಮೇಲೆ ಒಂದಲ್ಲ ಒಂದು ವಾಹನ ಹೋಗ್ತಲೇ ಇರುತ್ತೆ, ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುವಾಗ ಕಾರಿನ ವಿಂಡ್‌ಶೀಲ್ಡ್ ಮೂಲಕ ಮುಂದೆ ಹೋಗೋ ವಾಹನವನ್ನ ಹಿಂಬಾಲಿಸಿಕೊಂಡು ಹೋಗೋದು ಸುಲಭ ಅನ್ಸುತ್ತೆ. ರಸ್ತೆಯ ಪಕ್ಕದಲ್ಲಿ ಎಷ್ಟೊಂದು ವಾಹನಗಳು ನಮ್ಮ ಜೊತೆ ಸಹ ಪ್ರಯಾಣದಲ್ಲಿ ತೊಡಗಿ ಒಂದು ಕಮ್ಮ್ಯೂನಿಟಿ ಅಥವಾ ಒಂದು ಸಮೂಹ ಇದು ಅನ್ನೋ ಭಾವನೆಗಳ ಹಿಂದೇನೇ ನಾವೆಲ್ಲಿ ಹೋಗ್ತೀವೋ ಅವರೆಲ್ಲೋ ಅನ್ನೋ ಭಿನ್ನತೆ ಕೂಡಾ ಮನದಲ್ಲಿ ಹುಟ್ಟಿ ಬರುತ್ತೆ. ಘಂಟೆಗಟ್ಟಲೆ ಪ್ರಯಾಣ ಮಾಡ್ತಿರುವಾಗ ಒಂದಲ್ಲ ಒಂದು ರೀತಿಯ ಆಲೋಚನೆಗಳು ಮನದಲ್ಲಿ ಹುಟ್ತಾನೇ ಇರುತ್ವೆ, ಆ ಆಲೋಚನೆಗಳು ನಮ್ಮನ್ನು ಅವುಗಳ ಲೋಕಕ್ಕೆ ಸಂಪೂರ್ಣವಾಗಿ ಕರೆದೊಯ್ಯದಂತೆ ವಾಸ್ತವ ಆಗಾಗ್ಗೆ ಹಿಡಿದು ಎಳೆಯುತ್ತಲೇ ಇರುತ್ತೆ.

ಹೀಗೆ ಪ್ರಯಾಣದ ಹಳೆಯ ಹೊಸ ಮುಖಗಳು ಮನಸ್ಸಿಗೆ ಬಂದದ್ದು ಈ ಒಂದು ವಾರದಲ್ಲಿ ಅದೆಷ್ಟೋ ದೂರವನ್ನು ಕ್ರಮಿಸಿ ರಸ್ತೆಯ ಮೇಲೆ ನಮ್ಮದೇ ಆದ ಒಂದು ಪ್ರಪಂಚವನ್ನು ತೆರೆದಿಟ್ಟುಕೊಂಡಾಗಲೇ. ನನ್ನ ಪ್ರಕಾರ ಪ್ರಯಾಣ ಅನ್ನೋದು ಒಂದು ರೀತಿ ಧ್ಯಾನ ಇದ್ದ ಹಾಗೆ, ರಸ್ತೆಯ ಮೇಲೆ ಡ್ರೈವ್ ಮಾಡ್ತಿರೋ ವ್ಯಕ್ತಿ ಭೌತಿಕವಾಗಿ ಅದೆಷ್ಟು ಕೆಲಸಗಳಲ್ಲಿ ತೊಡಗಿದ್ರೂ ಮನಸ್ಸು ಒಂದು ರೀತಿ ಹರಳು ಕಟ್ಟುತಾ ಇರುತ್ತೆ ಅನ್ನೋದು ನನ್ನ ಭಾವನೆ. ಆದ್ರಿಂದ್ಲೇ ಪ್ರಯಾಣ ಅನ್ನೋದು ನಮ್ಮೊಳಗಿರೋ ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸೋದಕ್ಕೆ ನಾವು ಕಲ್ಪಿಸಿಕೊಡೋ ಒಂದು ಅವಕಾಶ ಅನ್ನೋದು ನನ್ನ ವಾದ. ನಾವು ಕ್ರಮಿಸೋ ದೂರ, ನಾವೇ ವಾಹನವನ್ನು ಚಲಾಯಿಸುತ್ತಿದ್ದೇವೋ ಇಲ್ಲವೋ ಎನ್ನೋದು, ನಮ್ಮ ಜೊತೆ ಯಾರು ಯಾರು ಇದ್ದಾರೆ ಇರೋಲ್ಲ ಮುಂತಾದವುಗಳು ನಮ್ಮನ್ನು ಒಂದು ಹೊಸ ವ್ಯಕ್ತಿಯನ್ನಾಗಿ ಮಾಡಿಬಿಡಬಲ್ಲವು ಅನ್ನೋದು ನನ್ನ ನಂಬಿಕೆ. ಬೇರೆ ಯಾರೋ ಗಾಡಿ ಚಲಾಯಿಸಿ ಅದರಲ್ಲಿ ಕೂತಿರೋ ನೀವು ಕಣ್ಣು ಮುಚ್ಚಿಕೊಂಡು ಹಾಗೇ ನಿದ್ರೆಯ ಮೋಡಿಗೆ ಜಾರಿ ಹೋಗಿ ಲೋಕವನ್ನು ಆ ಮಟ್ಟಿಗೆ ಸೊಗಸಿಲ್ಲಾ ಅಂತ ನಾನು ಹೇಳ್ತಾ ಇಲ್ಲ, ನಾವೇ ನಮ್ಮ ಗತಿಯನ್ನು ಬೇಕಾದ ಹಾಗೆ ಬದಲಾಯಿಸಿಕೊಂಡು ಎಲ್ಲೆಲ್ಲಿಗೆ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಧರಿಸಿಕೊಂಡು ಹೋಗೋದ್ರಲ್ಲಿ ಬೇಕಾದಷ್ಟು ಸವಾಲುಗಳಿವೆ ಆ ಸವಾಲುಗಳ ನಡುವೆಯೂ ನಮ್ಮತನವನ್ನು ಕುರಿತು ಯೋಚಿಸೋದಕ್ಕೆ ಬೇಕಾದಷ್ಟು ಆಸ್ಪದ ಸಿಕ್ಕು ಪ್ರತಿಯೊಂದು ಪ್ರಯಾಣದ ನಂತರ ನಾನಂತೂ ಒಂದು ಹೊಸದೊಂದು ಲೋಕದಲ್ಲಿ ಮುಳುಗೆದ್ದ ಹಾಗಿರ್ತೀನಿ ಅನ್ನೋದು ನಿಜ.

ಧ್ಯಾನದ ಹಲವಾರು ವಿಧಾನಗಳಲ್ಲಿ ನಿಮ್ಮ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳೋದಕ್ಕೆ ಸಹಾಯ ಮಾಡುವ ಪ್ರಯಾಣವೂ ಒಂದು. ಸೆಲ್ಫ್ ಆಕ್ಚುವಲೈಜೇಷನ್ನಿಗೆ ಬೇಕಾದಷ್ಟು ಒತ್ತುಕೊಟ್ಟು ಎಷ್ಟೋ ಪುಸ್ತಕಗಳನ್ನು ಹೊರತಂದಿದ್ದಾರೆ. ಆದರೆ ಒಂದು ಪ್ರಯಾಣದ ನಡುವೆಯೂ ನಮಗೆ ನಮ್ಮ ಬಗ್ಗೆ ತಿಳಿದುಕೊಳ್ಳೋದಕ್ಕೆ ಸಹಾಯವಾಗುತ್ತಾ ಅನ್ನೋದು ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ. ಉದಾಹರಣೆಗೆ, ನಿಮ್ಮ ಎದಿರು ಮುಕ್ತವಾಗಿ ತೆರೆದ ರಸ್ತೆಯ ಲೇನ್‌ಗಳು ಅದೇನೇ ಇದ್ದರೂ ನೀವು ಯಾವುದೋ ಒಂದು ಗತಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತಿರುವ ವಾಹನದಿಂದ ಇಂತಿಷ್ಟೇ ದೂರದಲ್ಲಿದ್ದುಕೊಂಡು ಸುರಕ್ಷಿತವಾಗಿ ಗಾಡಿಯನ್ನು ಚಲಾಯಿಸಿಕೊಂಡಿರುತ್ತೀರಿ ನೋಡಿ ಆ ಸಂದರ್ಭದಲ್ಲಿ ಬೇಕಾದಷ್ಟು ನಿರ್ಣಯಗಳನ್ನು ಪುನರ್‌ವಿಮರ್ಶಿಸಿಕೊಳ್ಳುವ ನಿಮ್ಮ ಮನಸ್ಸು ಸುಲಭವಾದ ಮಾರ್ಗವನ್ನೇ ಹುಡುಕಿಕೊಂಡಿರುತ್ತದೆ. ನಿಮ್ಮ ಜೊತೆ ಸ್ಪರ್ಧೆಯಲ್ಲಿ ತೊಡಗುವ ಅಕ್ಕ ಪಕ್ಕದ ಡ್ರೈವರುಗಳು ನಿಮ್ಮ ತಾಳ್ಮೆಯನ್ನು ಕೆದಕಬಹುದು, ನಿಮ್ಮನ್ನೇ ಹಿಂಬಾಲಿಸಿಕೊಂಡೇ ಸಾಕಷ್ಟು ದೂರವನ್ನು ಕ್ರಮಿಸುವ ಇತರ ಡ್ರೈವರುಗಳು ನಿಮ್ಮಲ್ಲಿ ಸಂಶಯವನ್ನು ಹುಟ್ಟಿಸಬಹುದು. ನೀವು ಪದೇಪದೇ ಲೇನ್ ಬದಲಾಯಿಸಿಕೊಂಡು ವ್ಯಸ್ತರಾಗಿ ಹೋಗುತ್ತೀರೋ ಅಥವಾ ದೂರಕ್ಕೆ ಹೋಗೋದು ಇದ್ದೇ ಇದೆ ಎಂದು ಸಮಾಧಾನ ಚಿತ್ತರಾಗಿರುತ್ತೀರೋ ಎನ್ನುವುದೂ ನಿಮಗೇ ಬಿಟ್ಟಿದ್ದು. ಹೀಗೆ ಹಲವಾರು ತೆರೆದ ಆಪ್ಷನ್ನುಗಳ ನಡುವೆ ಅವರವರು ತಮ್ಮದೇ ಆದ ದಾರಿ ಗತಿ ರೀತಿಯನ್ನು ಆಧರಿಸಿ ಅದನ್ನು ಪಾಲಿಸುತ್ತಾರೆ ಅನ್ನೋದರಲ್ಲೇ ಬದುಕಿನ ಒಂದು ಮುಖವಿದೆ. ಆ ಮುಖದ ದರ್ಶನವನ್ನೇ ನಾನು ಸೆಲ್ಫ್ ಆಕ್ಚವಲೈಜೇಷನ್ನಿಗೆ ಹೋಲಿಸಿ ಹೇಳಿದ್ದು.

ಪ್ರಯಾಣ ಒಳ್ಳೆಯದು, ನಿಂತಲ್ಲೇ ನಿಂತ ಹಾಗಿರುವುದಕ್ಕಿಂತ ಯಾವಾಗಲೂ ಓಡುತ್ತಿರುವುದು ಆ ಮಟ್ಟಿಗೆ ಮನಸ್ಸಿಗೆ ಮುದ ನೀಡುತ್ತದೆ, ಬೇಕಾದಷ್ಟು ಹೊಸತನ್ನು ತೋರಿಸುತ್ತದೆ. ಅನೇಕ ಸವಾಲುಗಳನ್ನು ಎದುರಿಸಿಕೊಂಡು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತದೆ. ಪ್ರಯಾಣ ಗೋಳದ ಮೇಲಿನ ಸುತ್ತಿನಿಂದ ಹಿಡಿದು ನಾವು ದಿನ ನಿತ್ಯ ಅಲ್ಲಿಂದಿಲ್ಲಿಗೆ ಹೋಗಿ ಬರುವ ಸಣ್ಣ ಕಾಯಕವಿರಬಹುದು, ಆದರೆ ಅದರ ಆಳ ದೊಡ್ಡದು. ಅಲ್ಲಿಂದಿಲ್ಲಿಗೆ ಹೋಗಬೇಕು ಎನ್ನೋ ಉದ್ದೇಶಪೂರ್ವಕ ಪ್ರಯಾಣವಿದ್ದಿರಬಹುದು, ಸಮಯವಿದೆ ಹೀಗೇ ಸುತ್ತಿ ಬರೋಣ ಎನ್ನುವ ಅಭಿಯಾನವಿರಬಹುದು - ನಾವು ಬೆಳೆಸುವ ಹಾದಿ ಚಿಕ್ಕದೋ ದೊಡ್ಡದೋ ನಮ್ಮ ಪ್ರಯಾಣದಲ್ಲಿ ಯಾರು ಯಾರು ಸಿಗುತ್ತಾರೋ ಬಿಡುತ್ತಾರೋ, ಪ್ರತಿಯೊಬ್ಬರೂ ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ, ಎಲ್ಲರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಲೇ ಇರಲಿ!

***

ಕಳೆದೆರಡು ವಾರಗಳಲ್ಲಿ ನಾರ್ಥ್ ಕ್ಯಾರೋಲೈನಾದಿಂದ ನ್ಯೂ ಜೆರ್ಸಿಗೆ ಡ್ರೈವ್ ಮಾಡಿಕೊಂಡು ಹೋಗಿ ಬಂದಾಗ ಪ್ರಯಾಣದ ಬಗ್ಗೆ ಆಲೋಚಿಸಿಕೊಂಡು ಬರೆದ ಲೇಖನ.

Sunday, January 06, 2008

ಪರಿಸ್ಥಿತಿಯ ಕೈ ಗೊಂಬೆ

ಅಸಹಾಯಕತೆ ಅನ್ನೋದು ದೊಡ್ಡದು, ಆದರೆ ನಮ್ ನಮ್ ಕೈಯಲ್ಲಿ ಆಗೋಲ್ಲ ಅಂತ ಕೈ ಚೆಲ್ಲಿ ಕುಳಿತುಕೊಳ್ಳೋದು ದೊಡ್ಡದಲ್ಲ, ಆಯಾ ಪರಿಸ್ಥಿತಿಗೆ ತಕ್ಕಂತೆ ನಾವು ಏನು ಮಾಡಬಲ್ಲೆವು ಸುಮ್ಮನಿರೋದನ್ನು ಬಿಟ್ಟು ಅನ್ನೋದು ಮುಖ್ಯ. ಕೆಲವೊಮ್ಮೆ ವಿಷಯವನ್ನ ನಮ್ಮ ಕೈಗೆತ್ತಿಕೊಳ್ಳಬೇಕಾಗುತ್ತೆ, ಇನ್ನು ಕೆಲವು ಸಲ ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಸುಮ್ಮನಿರುವುದೇ ಒಳಿತು ಅನ್ನಿಸಬಹುದು ಅನುಭವಗಳ ಹಿನ್ನೆಲೆ ಇದ್ದೋರಿಗೆ. ಹೀಗೆ ಹಳೆಯ ಕನ್ನಡ ಚಿತ್ರಗಳ ಡಿವಿಡಿಯೊಂದನ್ನು ನೋಡ್ತಾ ಇರುವಾಗ ಬಹಳ ದಿನಗಳಿಂದ ಯೋಚನೆಗೆ ಸಿಕ್ಕದ ನಮ್ಮೂರುಗಳಲ್ಲಿ ಜನ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಾರೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು.

***

ಹೊಡೆದಾಟ ಬಡಿದಾಟದಲ್ಲಿ ಬೇರೆ ಯಾರೂ ಬೇಡಪ್ಪ, ನನ್ನ ದೊಡ್ಡ ಅಣ್ಣನೇ ಸಾಕು. ನಾಲ್ಕು ಹೊಡೆತ ಕೊಟ್ಟೂ ಬರಬಲ್ಲ, ಹಾಗೇ ತಿಂದುಕೊಂಡು ಬಂದಿದ್ದೂ ಇದೆ. ಒಂದು ದಿನ ಯಾವುದೋ ಕೆಲಸ ಕಾರ್ಯ ಮಾಡಿಸಿಕೊಳ್ಳಲೆಂದು ನಮ್ಮೂರಿನ ಮಂಡಲ ಪಂಚಾಯಿತಿ ಪ್ರಧಾನರನ್ನು ಹುಡುಕಿಕೊಂಡು ನಮ್ಮಣ್ಣ ಬಸ್‌ಸ್ಟ್ಯಾಂಡ್ ಹಿಂಬಾಗವಿರೋ ಜರಮಲೆಯವರ ಸಾ ಮಿಲ್‌ ಆಫೀಸಿಗೆ ಹೋಗಿದ್ದನಂತೆ. ಅಲ್ಲಿ ಶ್ರೀಮಂತರುಗಳ ದಂಡು ದೊಡ್ಡದಾಗಿ ಜಮಾಯಿಸಿತ್ತಂತೆ. ನಮ್ಮಣ್ಣ ಏನೋ ಕಾರಣಕ್ಕೆಂದು ಹೋದವನು ಮಾತಿಗೆ ಮಾತು ಬೆಳೆದು ಅಲ್ಲಿ ದೊಡ್ಡ ಮನುಷ್ಯರುಗಳ ನಡುವೆ ಉಪಸ್ಥಿತರಿದ್ದ ಮಂಡಲ ಪ್ರಧಾನರ ಬಾಯಿಂದ ಸೂಳೇಮಗನೇ ಎಂದು ಬೈಯಿಸಿಕೊಂಡನಂತೆ. ಹಾಗೆ ಅವರು ಬೈದದ್ದೇ ತಡ ಇವನಿಗೆ ಇಲ್ಲಸಲ್ಲದ ಸಿಟ್ಟು ಬಂದು ಅಷ್ಟು ಜನರಿರುವಂತೆಯೇ ಪ್ರಧಾನರನ್ನು ಹಿಡಿದೆಳೆದು ಹಿಗ್ಗಾಮುಗ್ಗಾ ಹೊಡೆದು ಹೊಟ್ಟೆಯೊಳಗಿನ ಕರುಳೂ ಕಿತ್ತುಬರುವಂತೆ ಪಂಚ್ ಮಾಡಿ ಬಂದಿದ್ದ. ಮುಂದಾಗುವ ಕಷ್ಟನಷ್ಟಗಳನ್ನರಿತವನು ಅಲ್ಲೇ ಹತ್ತಿರವಿದ್ದ ಪೋಲೀಸ್ ಸ್ಟೇಷನ್ನಿಗೆ ಓಡಿಬಂದು ಸಬ್‌ಇನ್ಸ್ಪೆಕ್ಟರ್ ಹತ್ತಿರ ಇರುವ ವಿಷಯವೆಲ್ಲವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದ.

ಅಷ್ಟೊಂದು ಜನರ ಮುಂದೆ ಮಂಡಲ ಪ್ರಧಾನರನ್ನು ಆಸ್ಪತ್ರೆಗೆ ಸೇರಿಸುವಷ್ಟರ ಮಟ್ಟಿಗೆ ಹೊಡೆದರು ಅವರು ಬಿಟ್ಟಾರೇನು? ನಮ್ಮಣ್ಣನ ಮೇಲೆ 302, 302A ಮುಂತಾದ ಸೆಕ್ಷನ್ನುಗಳನ್ನು ಹೇರಿ, ಜೀವ ತೆಗೆಯಲು ಬಂದಿದ್ದನೆಂದು ಪುರಾವೆಗಳನ್ನೊದಗಿಸಿ ಸಾಬೀತು ಮಾಡಿದ್ದೂ ಆಯಿತು. ನಮ್ಮಣ್ಣ ಜೈಲಿನಿಂದ ಹೊರಬರುವಾಗ ಮತ್ತಿನ್ಯಾರದ್ದೋ ಕೈ ಕಾಲು ಹಿಡಿದು ಜಾಮೀನು ಪಡೆಯುವಂತಾಯ್ತು. ಇವೆಲ್ಲ ಆಗಿನ ಮಟ್ಟಿಗೆ ನಡೆದ ಕಷ್ಟಗಳಾದರೆ ಒಂದೆರಡು ದಿನಗಳಲ್ಲಿಯೇ ನಮ್ಮನೆಯ ಮುಂಬಾಗಿಲ ಬೀಗ-ಚಿಲಕವನ್ನು ಕಿತ್ತು ಎಸೆಯುವುದರಿಂದ ಹಿಡಿದು ಅನೇಕಾನೇಕ ಕಿರುಕುಳಗಳನ್ನು ಕೊಟ್ಟಿದ್ದೂ ಅಲ್ಲದೆ, ಇಂದಿಗೂ ಆ ಶ್ರೀಮಂತರ ತಂಡ ನಮ್ಮ ಮನೆಯವರನ್ನು ಕಂಡರೆ ಒಂದು ರೀತಿಯ ಅಸಡ್ಡೆಯನ್ನು ಪ್ರದರ್ಶಿಸುತ್ತದೆ ಎಂದರೂ ತಪ್ಪಲ್ಲ. ಇಷ್ಟೂ ಸಾಲದು ಎಂಬಂತೆ ವಾರ-ತಿಂಗಳುಗಟ್ಟಲೆ ಸೊರಬದ ಕೋರ್ಟಿಗೆ ಅಲೆದದ್ದೂ ಆಯಿತು, ಒಂದು ಬಗೆಯ ಒಪ್ಪಂದವನ್ನೂ ಮಾಡಿಕೊಂಡಿದ್ದಾಯಿತು.

ನಾನು ಈ ಸಂಬಂಧವಾಗಿ ಈ ಘಟನೆ ನಮ್ಮ ನಡುವೆ ಮಾತಿಗೆ ಬಂದಾಗಲೆಲ್ಲ ನಮ್ಮಣ್ಣನನ್ನು ಮನಸೋ ಇಚ್ಛೆ ಬೈದಿದ್ದೇನೆ. ರಿಟೈರ್ ಆಗಿರುವ ಅಮ್ಮನಿಗೆ ಕಿರುಕುಳ ಕೊಡೋದಕ್ಕೆ ನೀನು ನಿನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತೇನು? ಇಂದು ಅವರು ನಲ್ಲಿಯ ಪೈಪ್ ಅನ್ನು ಒಡೆದು ಹೋಗುತ್ತಾರೆ, ನಾಳೆ ಮತ್ತೊಂದನ್ನು ಮಾಡುತ್ತಾರೆ ಅವುಗಳಿಂದ ನೀನು ನಮ್ಮೆಲ್ಲರನ್ನು ರಕ್ಷಿಸುವ ತಾಕತ್ತಿದೆಯೇನು? ಅವರು ದುಡ್ಡಿದ್ದೋರು, ಅವರು ಹೇಳಿದಂತೆ ನಡೆಯೋ ಪೋಲೀಸು-ಕೋರ್ಟುಗಳ ಮುಂದೆ ಕೆಲಸವಿಲ್ಲದೇ ತಿರುಗೋ ನಿನ್ನ ದರ್ಪ ನಡೆಯೋದು ಅಷ್ಟರಲ್ಲೇ ಇದೆ! ಮುಂತಾಗಿ ಬೇಕಾದಷ್ಟು ಬೈದಿದ್ದೇನೆ, ಕೊರೆದಿದ್ದೇನೆ. ಇವೆಲ್ಲಕ್ಕೂ ನಮ್ಮಣ್ಣ ಹಿಂದೆ ’ಅವರು ಏನಂದರೂ ಅನ್ನಿಸಿಕೊಂಡು ಬರೋಕಾಗುತ್ತೇನು?’ ಎಂದು ಅದೇನೇನೋ ಹೇಳುತ್ತಿದ್ದವನು ಇಂದು ಮೌನ ಅವನ ಉತ್ತರವಾಗುತ್ತದೆ. ನಾನು ಬೇಕಾದರೆ ನಾಲ್ಕು ಹೊಡೆತ ತಿಂದುಕೊಂಡೋ ಬೈಯಿಸಿಕೊಂಡೋ ಮನೆಗೆ ಅತ್ತುಕೊಂಡು ಬರುತ್ತೇನೆಯೇ ವಿನಾ ಇವತ್ತಿಗೂ ಯಾವನಿಗೋ ಹೊಡೆದು ಆಸ್ಪತ್ರೆ ಸೇರಿಸಿ ಅವರು ನನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜಾಮೀನು ಪಡೆಯೋ ಸ್ಥಿತಿ ಬರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

***

೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.

ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್‌ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.

***

ಇಂತಹ ಸಂದರ್ಭಗಳು ನಮ್ಮೂರಲ್ಲಿ ಹೊಸದೇನೂ ಅಲ್ಲ. ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು ಎಂದ ಹಾಗೆ ಕೆಲವರಿಗೆ ಏಟು ಬೀಳದೇ ಬಗ್ಗಲಾರರು. ರಾಜ್‌ ಪಾತ್ರದಲ್ಲಿ ಯಾರೇ ಇದ್ದರೂ ಏನು ಮಾಡಬಹುದಿತ್ತು? ತನ್ನ ತಂಗಿಯ ಮದುವೆ ನಿಂತು ಹೋಗುತ್ತಿರುವಾಗ ತಾನು ಕಾನೂನನ್ನು ಕೈಗೆ ತೆಗೆದುಕೊಂಡದ್ದು ಸರಿಯೇ, ತಪ್ಪೇ? ತೂಗುದೀಪ ಶ್ರೀನಿವಾಸರನ್ನು ಹೊಡೆಯದೇ ರಾಜ್ ಆತನ ಬಗ್ಗೆ ಕಂಪ್ಲೇಂಟನ್ನು ಬರೆದುಕೊಡಬಹುದಿತ್ತು, ಬೇರೆ ಯಾರಾದರೊಬ್ಬರ ಬಳಿ ಮದುವೆಯ ಮಹೂರ್ತ ಮೀರಿ ಹೋಗುವುದರೊಳಗೆ ಸಾಲ ಮಾಡಿ ಮುಂದೆ ಯೋಚಿಸಬಹುದಿತ್ತು, ಇತ್ಯಾದಿ ದಾರಿಗಳಿದ್ದರೂ ರಾಜ್ ಮಾಡಿದ್ದೇ ಸರಿ ಎನಿಸೋದಿಲ್ಲವೆ? ತನಗೆ ನ್ಯಾಯವಾಗಿ ಬರಬೇಕಾದ ಹಣವನ್ನು ಇನ್ನೊಬ್ಬರು ’ನೀನು ಕೊಟ್ಟೇ ಇಲ್ಲ’ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೇ ನಕ್ಕು ಬರುವುದಕ್ಕೆ ಉಪ್ಪು ಹುಳಿ ಖಾರ ತಿಂದ ಯಾರಿಗಾದರೂ ಸಾಧ್ಯವಿದೆಯೇನು?

Wednesday, January 02, 2008

ಹಾಡಿನ ಸವಾಲ್

ನಿನ್ನೆ ಏನನ್ನೋ ಹುಡುಕಿಕೊಂಡು ಕೂತಿರಬೇಕಾದ್ರೆ ಒಂದಿಷ್ಟು ಹಳೇ ಕನ್ನಡ ಚಲನಚಿತ್ರಗಳ ಉಗ್ರಾಣ ನನ್ನ ಕಂಪ್ಯೂಟರಿನಲ್ಲಿದ್ದದ್ದು ಕಣ್ಣಿಗೆ ಬಿತ್ತು. ಹಳೇ ಹಾಡುಗಳೂ ಅಂತಂದ್ರೆ ೯೦ ರ ದಶಕದಿಂದ ಈಚೆಯವು, ಅದಕ್ಕಿಂತ ಹಿಂದೆ ಹೋದ್ರೆ ಅದು ಪುರಾತನ ಆಗ್ಬಿಡುತ್ತೆ ಅಂತ್ಲೇ ಹೇಳ್ಬೇಕು.

’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು...’ ಅಂತ ನಾನೇನಾದ್ರೂ ಕಾರ್‌ನಲ್ಲಿ ಕೂತಾಗ ಗೊಣಗಿಕೊಂಡೇ ಅಂತಂದ್ರೆ ಪಕ್ಕದವರಿಗೆ ನನ್ನ ವಯಸ್ಸೆಲ್ಲಿ ಗೊತ್ತಾಗಿಬಿಡುತ್ತೋ ಅನ್ನೋ ಹೆದರಿಕೇ ಬೇರೆ ಕೇಡಿಗೆ.

ನನ್ನ ಉಗ್ರಾಣದಲ್ಲಿದ್ದ ಒಂದಿಷ್ಟು ಹಾಡುಗಳನ್ನ ಕೇಳ್ತಾ ಕೇಳ್ತಾ ಸಂತೋಷದ ಛಾಯೆ ಇರ್ಲಿ ಅದರ ನೆರಳೂ ಹತ್ತಿರ ಸುಳಿಯದಂತೆ ನಿರಾಶೆಯ ಮೋಡಗಳು ಆವರಸಿಕೊಳ್ಳತೊಡಗಿದವು. ನಾನು ಹುಟ್ಟಿದಾಗಿನಿಂದ ಕನ್ನಡಿಗನೇ ಹೌದು, ಆದರೆ ಇತ್ತೀಚಿನ ಸಾಹಿತ್ಯವೋ ಅಥವಾ ಅದನ್ನ ಹೇಳೋ ಅರೆಬರೆ ಕನ್ನಡಿಗರೋ ಅಸ್ಪುಟ ಕನ್ನಡವೋ ಅಥವಾ ಹಾಡಿನ ಪದಗಳನ್ನು ಮುಚ್ಚಿ ಮರೆಮಾಡುವಂತೆ ಕಿವಿಗಡಿಚಿಕ್ಕುವ ಮ್ಯೂಸಿಕ್ಕೂ - ಪದಗಳೇ ಸರಿಯಾಗಿ ಅರ್ಥವಾಗುತ್ತಿಲ್ಲ. ರಾಗ-ತಾಳವಂತೂ ನನಗೆ ಸಿಕ್ಕೋದೇ ಇಲ್ಲ ಬಿಡಿ, ಆದರೆ ಹಾಡಿನ ಸಾಹಿತ್ಯವೂ ನನಂಥ ಕೇಳುಗನಿಗೆ ಹೊಳೆಯದೇ ಹೋದರೆ ಹೇಗೆ?

ಎ.ಕೆ. ೪೭ ಸಿನಿಮಾದ ಈ ಹಾಡನ್ನು ನೀವೇ ಕೇಳಿ ನೋಡಿ ಅಥವಾ ಓದಿ ನೋಡಿ, ’ಪ್ರೇಮಪತ್ರ ರವಾನಿಸಬೇಡ’ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಪ್ರಾಸಗಳನ್ನು ಜೋಡಿಸೋದಕ್ಕೆ ಹೋಗಿ ನಮ್ಮ ಕವಿಗಳು ಈ ರೀತಿ ಹಾಡನ್ನು ಕಟ್ಟೋದಲ್ದೇ ಅದನ್ನ ಯಾರು ಯಾರೋ ಗಂಟಲಲ್ಲಿ ಹೇಳಿಸಿ ಅದಕ್ಕಿನ್ನೊಂದು ಅರ್ಥ ಬರೋ ಹಾಗ್ ಮಾಡ್ತಾರಲ್ಲಪ್ಪಾ ಅನ್ನಿಸ್ತು.

’ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು’


ಆ ನಗುವನ್ನು ಬಿಸಾಕೋದು ಅಂದ್ರೆ ಏನು, ಅದೇನು ಕಾಫಿ ಕುಡಿದು ಬಿಸಾಡೋ ಕಪ್ಪೇ? ಅಥವಾ ನಾಯಿಗಳಿಗೊಂದು ಬಿಸ್ಕಿಟ್ ಎಸೀತಾರಲ್ಲ ಹಾಗಾ? ಇಸ್ಪೀಟ್ ಎಲೇನ ಬಿಸಾಕೋದ್ ಕೇಳಿದ್ದೀನಿ...ಟ್ರಾಷ್ ಎತ್ತಿ ಬಿಸಾಕೋದು ಅಂದ್ರೆ ಗೊತ್ತು, ಆದರೆ ನಗುವನ್ನ ಚೆಲ್ಲಿ ಗೊತ್ತು, ಬಿಸಾಕಿ ಗೊತ್ತೇ ಇಲ್ಲ.

ಈ ಬಿಸಾಕೋದರ ಬಗ್ಗೆ ಇನ್ನೂ ಕೇಳಿದ್ದೀವಿ - ’ಭಯಾನ್ ಬಿಸಾಕೋದು...’, ’ದಿಗಿಲ್ ದಬ್ಬಾಕೋದು’, ಇನ್ನೂ ಏನೇನನ್ನೋ ನಾವು ಕ್ರಿಯಾ ಪದಗಳಿಗೆ ಅಳವಡಿಸೋದೇ ಸಾಹಿತ್ಯ ಕೃಷಿ! ಎಷ್ಟೋ ದಶಕದಿಂದ ಹಾಡಿಕೊಂಡ್ ಬಂದಿರೋ ಎಸ್.ಪಿ. ಅಂಥೋರೇನೋ ಸ್ವಲ್ಪ ತಮ್ಮ್ ತಮ್ಮ್ ಉಚ್ಛಾರಣೆಯಲ್ಲಿ ಸುಧಾರಿಸಿಕೊಂಡ್ರೋ ಏನೋ (ಇಷ್ಟೊಂದ್ ದಿನ ಕನ್ನಡ ನೀರ್ ಕುಡ್ದು ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಹೆಂಗೆ?), ಉಳಿದೋರ್ ಕಥೆ ಏನ್ ಹೇಳೋಣ?

ಅಪ್ತಮಿತ್ರದ ’ಇದು ಹಕ್ಕೀ ಅಲ್ಲ’ ಹಾಡಿನಲ್ಲಿ ’ಬಾಲಾ ಇದ್ರೂನೂ ಕೋತೀ ಅಲ್ಲಾ’ ಅನ್ನೋ ಸಾಲು ಇವತ್ತಿಗೂ ನನಗೆ ನೈಜವಾಗಿ ಕೇಳೋದೇ ಇಲ್ಲ - ಎಲ್ಲಾ ಉತ್ತರ ಭಾರತದವರ ದಯೆ.

ನಮ್ಮೂರಿನ ಸಿಲ್ವರ್ರು, ಗೋಲ್ಡೂ, ಪ್ಲಾಟಿನಮ್ಮ್ ಸ್ಟಾರ್‌ಗಳಿಗೆ ನಮ್ಮೋರ್ ಧ್ವನಿ, ಉಚ್ಛಾರಣೆ ಹಿನ್ನೆಲೇನಲ್ಲಿ ಇದ್ರೆ ಹೆಂಗೆ ಸ್ವಾಮೀ? ಸ್ವಲ್ಪ ಫ್ಯಾಷನ್ನೂ, ಗಿಮಿಕ್ಕೂ ಇದ್ರೇನೇ ಮಜಾ - ಅವ್ರುಗಳ ಮುಖಾಮುಸುಡಿ ಹೆಂಗಾದ್ರೂ ಇರ್ಲಿ ಹಿನ್ನೆಲೆ ಗಾಯನಕ್ಕೆ ಮಾತ್ರ ಒಂದು ದೊಡ್ಡ ಧ್ವನಿ ಬೇಕು. ಬೇರೇ ಏನೂ ಇಲ್ಲಾ ಅಂತದ್ರೂ ಧ್ವನಿ ಸುರುಳೀ ಅನ್ನೋ ಹೆಸರ್ನಲ್ಲಿ ಸೀ.ಡಿ.ಗಳನ್ನ ಮಾರೋಕಾಗುತ್ತಲ್ಲಾ ಅಷ್ಟೇ ಸಾಕು.

ಪರವಾಗಿಲ್ಲ, ಬೆಂಗ್ಳೂರ್‌ನಲ್ಲಿ ಕೂತುಗೊಂಡು ಬ್ರೂಕ್ಲಿನ್ನಲ್ಲಿ ಹುಟ್ಟಿ ಬೆಳೆದೋರ್ ಥರ ರ್ಯಾಪ್ ಮ್ಯೂಸಿಕ್ಕನ್ನ ಹಾಡ್ತಾರ್ ಸಾರ್ ನಮ್ಮೋರು. ಹಾಡ್ರೋದ್ರು ಜೊತೆಗೆ ಅದನ್ನ ಕನ್ನಡದ ಹಾಡ್ನಲ್ಲೂ ಸೇರ್ಸಿ ಒಂದ್ ಥರಾ ಹೊಸ ರಿಧಮ್ಮನ್ನೇ ಜನ್ರ ಮನಸ್ನಲ್ಲಿ ತುಂಬ್ತಾರೆ. ರ್ಯಾಪ್‌ಗೇನಾಬೇಕು ಸುಮ್ನೇ ಉದ್ದಕ್ಕೆ ಬರೆದಿದ್ದನ್ನ ಫಾಸ್ಟ್ ಆಗಿ ಓದ್ಕೊಂಡ್ ಹೋದ್ರೇ ಸಾಲ್ದೇನು? ಎಲ್ಲೋ ಒಂದು ಧ್ವನಿ ಯಾವ್ದೋ ರಾಗ್ದಲ್ಲಿ ಹುಟ್ಟಿ ಬರ್ತಾ ಇರುತ್ತೆ, ಅದರ ಮಧ್ಯೆ ಕೀರ್ಲು ಧ್ವನೀನೂ ಸೇರುಸ್ತಾರೆ, ಸುಮ್ನೇ ತಮಟೇ-ಡ್ರಮ್ಮು-ನಗಾರಿಗಳನ್ನ ಬಡೀತಾರೆ - ಇಷ್ಟೆಲ್ಲಾ ಯಾಕ್ ಮಾಡ್ತಾರೇ ಅಂತಂದ್ರೆ ಚಿತ್ರಕಥೆ ಬರೆಯೋರು ’ನಾಯಕನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು, ಸುತ್ತಲಿನಲ್ಲಿ ಕೋಲಾಹಲ ಮುತ್ತಿಕೊಂಡಿತ್ತು’ ಅಂತ ಬರೆದಿರ್ತಾರೋ ಏನೋ ಅನ್ನೋ ಅನುಮಾನ ನನ್ದು. ಹ್ಞೂ, ಅದೆಲ್ಲ ನನ್ ಲಿಮಿಟೇಷನ್ನ್ ಆಗಿದ್ರೆ ಎಷ್ಟೋ ಸೊಗಸಾಗಿರ್ತಿತ್ತು, ಆದರೆ ಚಿತ್ರವನ್ನ ನಿರ್ದೇಶನ ಮಾಡೋರ್ ಲಿಮಿಟ್ಟಾಗುತ್ತೇ ನೋಡಿ ಅದೇ ದೊಡ್ಡ ಕೊರಗು.

***

Really, this works - ಸುಮ್ನೇ ಪ್ರಾಸದ ಮೇಲೆ ಪ್ರಾಸ ಕಟ್ಟಿಕೊಂಡು ಹೋಗಿ, ಕನ್ನಡಿಗರಲ್ದೇ ಬೇರೆ ಯಾರುನ್ನೋ ಕರ್ದೋ ಇಲ್ಲಾ ಅವರ ಮನೇ ಬಾಗಿಲಿಗೆ ನೀವೇ ಹೋಗಿಯೋ ಹಾಡ್ಸಿ, ಅವರು ಹಾಡಿದ್ದನ್ನ ರೆಕಾರ್ಡ್ ಮಾಡಿಕೊಂಡು ಬಂದು ನಮ್ಮೋರಿಗೆ ಕೇಳ್ಸಿ, ಎಲ್ಲೆಲ್ಲಿ ಪದಗಳನ್ನ ಕಾಂಪ್ರೋಮೈಸ್ ಮಾಡ್ಕೊಂಡಿರ್ತೀರೋ ಅಲ್ಲೆಲ್ಲ ನಿಮ್ಮವರಿಗೆ ದೊಡ್ಡದಾಗಿ ಮ್ಯೂಸಿಕ್ ಬಾರ್ಸೋದಕ್ಕೆ ಹೇಳಿ, ಆ ಧ್ವನಿ ಸುರುಳಿ ಸೇಲ್ಸ್ ರೆಕಾರ್ಡ್ ಮುಟ್ಟುತ್ತೆ. ಬೀದರಿನಿಂದ ತಲಕಾಡಿನವರೆಗೆ ನಮ್ಮ ಕನ್ನಡದಲ್ಲಿ ಬೇಕಾದಷ್ಟು ಆಡುಭಾಷೆಗಳಿವೆ, ಅದರ ಜೊತೆಗೆ ಪದಗಳ ಸಂಪತ್ತೂ ಸಿಗುತ್ತೆ. ನಾವು ಸಾಗರ-ಶಿವಮೊಗ್ಗದಿಂದ ಮೈಸೂರಿಗೆ ಹೋದವರಿಗೆ ಅಲ್ಲಿಯವರು, ’ನಮ್ಮಪ್ಪ ಹಾರ್ಮ್‌ಕಾರ’ ಅಂತ ಹೇಳ್ದಾಗ ನಾವು ಡಿಕ್ಷನರಿ ತೆಕ್ಕೊಂಡು ನೋಡೋ, ಅವರಿವರನ್ನು ಕೇಳಿ ತಿಳಿದುಕೊಳ್ಳೋ ಹೊತ್ತಿಗೆ ಅದು ’ಆರಂಭಕಾರ’ ಎಂದು ಗೊತ್ತಾಗಿದ್ದು. ಹೀಗೇ, ’ಎಕ್ಕೂಟ್ಟೋಹೋಗೋದು’, ’ಅದೇನ್...ಕೆಟ್ಟೋಯ್ತೇ’, ಮುಂತಾದ ಪ್ರಯೋಗಗಳನ್ನೂ ಆಡುಭಾಷೆಯ ಒಂದು ವಿಧಾನ ಎಂತ್ಲೇ ನಾವು ಅರ್ಥ ಮಾಡ್ಕೊಂಡಿದ್ವಿ. ಹಾಗೇ, ನಾವು ಮಾತ್ ಮಾತಿಗೆ ’ಎಂಥಾ’ ಅನ್ನೋದನ್ನ ಅವ್ರೂ ಆಡ್ಕೋತಿದ್ರೂ ಅನ್ನಿ. ನಮ್ಮಲ್ಲಿನ್ನ ಡಯಲೆಕ್ಟುಗಳಿಗೆ ಅವುಗಳದ್ದೇ ಒಂದು ರೀತಿ ನೀತಿ ವಿಧಿ ವಿಧಾನ ಅಂತಿವೆ, ಅದು ಖಂಡಿತ ತಪ್ಪಲ್ಲ. ಹೀಗಿನ ಡಯಲೆಕ್ಟುಗಳಲ್ಲಿನ ಪದಗಳನ್ನ ನಾನು ಹಾಡಿಗೆ ತರ್ತೀನಿ ಅನ್ನೋದು ದೊಡ್ಡ ಸಾಹಸವೇ ಸರಿ.

ಏನೂ ಬೇಡಾ ಸಾರ್, ನಮ್ಮಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇದೆ, ಅದರ ಸಹಾಯದಿಂದ ಒಂದಿಷ್ಟು ಲಘು-ಗುರುಗಳನ್ನೆಲ್ಲ ಲೆಕ್ಕಾ ಹಾಕಿ ನಾವೂ ನಾಳೆಯಿಂದ ಬರೆದದ್ದೆನ್ನೆಲ್ಲ ಭಾಮಿನೀ, ವಾರ್ಧಕ ಷಟ್ಪದಿಗೆ ಬದಲಾಯಿಸಿಕೊಂಡ್ರೆ ಹೇಗಿರುತ್ತೆ? ಆ ಕುಮಾರವ್ಯಾಸ ಬರೆದದ್ದಲ್ಲ ಷಟ್ಪದಿಲೇ ಇರ್ತಿತ್ತಂತೆ, ನಾವು ಬರೆದದ್ದನ್ನು ಷಟ್ಪದಿಗೆ ಕನ್ವರ್ಟ್ ಮಾಡ್ಕೊಳ್ಳೋದಪ್ಪ - ಎಲ್ಲೆಲ್ಲಿ ಬ್ರೇಕ್ ಬೇಕೋ ಅಲ್ಲಲ್ಲಿ ಕೊಯ್‌ಕೊಂಡ್ರೆ ಆಯ್ತು! ಅದೂ ಬ್ಯಾಡ, ಪದಗಳ ಕಥೆ ಹಾಗಿರ್ಲಿ, ನಮಿಗೆ ಮಾಧುರ್ಯ-ಇಂಪು-ಕಂಪೂ ಅಂತಂದ್ರೆ ಭಾಳಾ ಆಸೆ ಅಲ್ವ? ಅದಕ್ಕೆ ಕಂಬಾರರ ’ಮರೆತೇನಂದರ ಮರೆಯಲಿ ಹೆಂಗಾs’ ಅನ್ನೋದನ್ನ ತಗೊಂಡು ಕುಮಾರ್ ಸಾನು ಹತ್ರ ಹಾಡ್ಸದಪಾ, ಭಾಳಾ ಚೆನ್ನಾಗಿರುತ್ತೆ. ಇನ್ನೂ ಚೆಂದಾ ಅಂತಂದ್ರೆ ಬೇಂದ್ರೆ ಅವರ ’ನಾಕು-ತಂತಿ’ ತಗೊಂಡ್ ಹೋಗಿ ಸೋನೂ ನಿಗಮ್‌ಗೆ ಕೊಟ್ರೆ ಆಯ್ತು.

***

ನಿಮಗ್ಯಾಕೆ? ನೀವ್ ಸಿನಿಮಾ ನೋಡಲ್ಲ, ಹಾಡಿನ ಸಿ.ಡಿ. ಕೊಳ್ಳೋಲ್ಲ, ಹಿಂಗೆ ಚೀಪ್ ಆಗಿ ಕ್ರಿಟಿಸಿಸಮ್ ಬರೆಯೋಕ್ ನಿಮಗ್ಯಾರ್ ಅಧಿಕಾರ ಕೊಟ್ರೂ? ನಮಗೂ ಭಾಷಾ ಸ್ವಾತಂತ್ರ್ಯಾ ಅನ್ನೋದ್ ಇದೆ, ನಮಿಗೆ ಹೆಂಗ್ ಬೇಕೋ ಹಂಗ್ ಬರಕಂತೀವ್, ಯಾವನ್ ಹತ್ರಾ ಬೇಕಾದ್ರೂ ಹೇಳಿಸಿಕ್ಯಂತೀವ್. ಅದನ್ನ ಕೇಳೋಕ್ ನೀವ್ ಯಾರು? ಯಾವ್ದೋ ದೇಶ್ದಲ್ಲ್ ಕುತಗಂಡು ಕನ್ನಡದ ಬಗ್ಗೇ ನೀವೇನ್ರಿ ಹೇಳೋದು? ಹಂಗಂತ ನಿಮ್ ಕನ್ನಡಾ ಚೆನ್ನಾಗಿದೆಯೇನು? ನೀವು ಬರೆದಿದ್ದೆಲ್ಲಾ ಭಯಂಕರವಾಗಿದೆಯೇನು? ಅಷ್ಟು ತಾಕತ್ತ್ ಇದ್ರೆ ನೀವೇ ಒಂದು ಸಿನಿಮಾ ಮಾಡಿ ತೋರ್ಸಿ. ಅದೂ ಬ್ಯಾಡಪ್ಪಾ - ಈ ಹಾಡಿನ್ ಚಿತ್ರೀಕರಣಕ್ಕೆ ನಲವತ್ತು ಲಕ್ಷಾ ಸುರಿದಿದ್ದೀವಿ, ಅದನ್ನ ನಿಮ್ ಕೈಗೆ ಕೊಡ್ತೀವಿ, ನಲವತ್ತ್ ಲಕ್ಷಾ ತೊಡಗಿಸಿ ನಲವತ್ತು ಹುಟ್ಟಿಸಿಕೊಡೀ ಧಂ ಇದ್ರೆ.

ಥೂ, ಎಲ್ಲೋ ಕುತಗಂಡು ಉದಯಾ ಟಿವಿ ನೋಡ್ಕಂಡು ಅದನ್ನೇ ಬದುಕು ಅಂತ ಕೊರಗೋ ನಿಮ್ಮನ್ನ್ ಕಂಡು ಏನ್ ಹೇಳಣ?!

Monday, December 31, 2007

Byteಗಳು bite ಮಾಡುವ ಮೊದಲು...

ವರ್ಷದ ಕೊನೆಯಲ್ಲಿ ಇ-ಮೇಲ್‌ ಮೆಸ್ಸೇಜು, ಫೈಲು, ಫೋಲ್ಡರುಗಳನ್ನ ಆರ್ಗನೈಜ್ ಮಾಡಿಬಿಡೋಣವೆಂದುಕೊಂಡು ಉತ್ಸಾಹದಿಂದ ಬೇಕಾದಷ್ಟು ವಿಂಡೋಸ್‌ಗಳನ್ನು ತೆರೆದಿಟ್ಟುಕೊಂಡೋನಿಗೆ ಕಳೆದ ಆರು ತಿಂಗಳಲ್ಲಿ ಆಕೈವ್ ಫೈಲು 1.7 GB ಅಷ್ಟು ಬೆಳೆದಿರೋದು ನೋಡಿ ಆಶ್ಚರ್ಯವಾಯಿತು. ಮೊದಲೆಲ್ಲ ಕೆಲವೇ ಕೆಲವು ಕಿಲೋ ಬೈಟುಗಳಷ್ಟು ದೊಡ್ಡದಿರುತ್ತಿದ್ದ ಮೆಸ್ಸೇಜುಗಳು ಆಪರೇಟಿಂಗ್ ಸಿಸ್ಟಮ್ ಬದಲಾದ ಹಾಗೆ ಟೂಲ್ಸ್‌ಗಳು ಅಭಿವೃದ್ಧಿಗೊಂಡ ಹಾಗೆ ತಾವೂ ಬೇಕಾದಷ್ಟು ಬೆಳೆದಿರೋದು ನಿಜ. ಕೇವಲ ಹತ್ತು ವರ್ಷಗಳಲ್ಲಿ ಇಷ್ಟೊಂದು ದೊಡ್ಡದಾಗಿ ಬೆಳೆಯೋ ಮೆಸ್ಸೇಜುಗಳಾಗಲೀ, ಅಪ್ಲಿಕೇಷನ್ನುಗಳಾಗಲೀ ಇನ್ನೊಂದು ಇಪ್ಪತೈದು ವರ್ಷಗಳಲ್ಲಿ ಏನೇನು ಬೆಳೆಯುತ್ತವೋ ಎಂದು ಯೋಚಿಸಿಕೊಂಡಂತೆಲ್ಲ ಸೈನ್ಸ್ ಫಿಕ್ಷನ್ ಮೂವಿಯೊಂದು ತಲೆಯಲ್ಲಿ ಅನ್‌ವೈಂಡ್ ಆಗತೊಡಗಿತು, ಮೊಬೈಲು ಡಿವೈಸುಗಳಲ್ಲಿ ಟೆರ್ರಾಬೈಟುಗಳ ಸಾಗಣೆಯ ವ್ಯವಸ್ಥೆ ಬರುವ ಕಾಲ ದೂರವೇನೂ ಇಲ್ಲ!

ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಇ-ಮೇಲ್ ಅನ್ನು ದಿನನಿತ್ಯವೂ ಬಳಸೀ ಬಳಸೀ ನನಗೆ ಬೇಕಾದ ಮೆಸ್ಸೇಜುಗಳನ್ನೆಲ್ಲ (ಅಂದರೆ ಎಲ್ಲ ಇ-ಮೇಲುಗಳನ್ನೂ) ಒಂದಲ್ಲ ಒಂದು ಫಾರ್ಮ್/ಡಿವೈಸಿನಲ್ಲಿಡಲು ಪ್ರಯತ್ನಿಸಿ ನಾನಂತೂ ಸೋತು ಹೋಗುತ್ತಿದ್ದೇನೆ ಎನ್ನಿಸಿತು. ಪ್ರತಿ ಆರು ತಿಂಗಳಿಗೊಮ್ಮೆ ಫೈಲು, ಮೆಸ್ಸೇಜುಗಳನ್ನೆಲ್ಲ ಆರ್ಕೈವ್ ಮಾಡಿಡುವುದು ಜಾಣ ಪದ್ದತಿಯಾಗಿತ್ತು, ಈಗ ಅದು ಉಲ್ಬಣವಾಗದ ರೋಗವಾಗಿದೆ. ಅಷ್ಟೂ ಮಾಡಿ ೧೯೯೭ ರಿಂದ ಉಳಿಸಿಕೊಂಡ ಮೆಸ್ಸೇಜುಗಳನ್ನು ಒಮ್ಮೆಯೂ ನೋಡಿರದಿದ್ದರೂ ಇಟ್ಟುಕೊಂಡಿರಬೇಕೇಕೆ ಎನ್ನುವುದು ಒಂದು ಬಣದ ವಾದ, ಇವತ್ತಲ್ಲ ನಾಳೆ ಬೇಕಾದೀತು ಇರಲಿ ಎನ್ನುವುದು ಮತ್ತೊಂದು ಬಣದ ಆಚರಣೆ.

ನನಗೆ ಕಂಡದ್ದೆಲ್ಲವನ್ನು ಉಳಿಸುವ ಖಾಯಿಲೆ ಆರಂಭವಾದದ್ದು ೨೦೦೦ ದ ಇಸ್ವಿಯ ಹೊತ್ತಿಗೆ Y2K ಜ್ವರ ಬಂದು ಅಮೇರಿಕನ್ ಕಂಪನಿಗಳು ನಲುಗುವ ಸಮಯದಲ್ಲೇ ಎಂದರೆ ತಪ್ಪಾಗಲಾರದು. ಅದು ಹೀಗೇ ಒಂದು ಮಾಮೂಲಿ ಡಿಸೆಂಬರ್ ೩೧ ರ ದಿನವಾಗಿರಲಿ, ಆಗಬಹುದು ಎನ್ನುವುದು ಆಗ ಒಂದು ಉತ್ಸಾಹಬರಿತ ನಿರೀಕ್ಷೆ ಆಗಿತ್ತು ಎಂದರೆ ತಪ್ಪಲ್ಲ. ನ್ಯೂ ಝೀಲ್ಯಾಂಡಿನಿಂದ ಹಿಡಿದು ಯೂರೋಪಿನವರೆಗೆ ಎಲ್ಲ ದೇಶದವರೂ ಹೊಸ ವರ್ಷವನ್ನು ಆಚರಿಸಿಕೊಂಡು ಬಂದರೂ ಅಮೇರಿಕದ ಈಸ್ಟ್ ಕೋಸ್ಟ್‌ನಲ್ಲಿ ರಾತ್ರಿ ಹನ್ನೆರಡು ಬಜಾಯಿಸುವವರೆಗೆ ತದನಂತರದ ಕೆಲವು ಘಂಟೆಗಳವರೆಗೆ ಇಲ್ಲಿನ ಕಾರ್ಪೋರೇಟ್ ವ್ಯವಸ್ಥೆ ನಿದ್ರೆ ಮಾಡಿದ್ದೇ ಇಲ್ಲ. ಕಂಪನಿಯ ಮೇಲ್ ರೂಮಿನಿಂದ ಹಿಡಿದು ಸಿಇಓ ವರೆಗೆ ಎಲ್ಲರೂ ಹೊಸ ವರ್ಷದ ನಿರೀಕ್ಷೆಯಲ್ಲಿದ್ದವರೇ, ಆದರೆ ಆ ನಿರೀಕ್ಷೆಯ ಕಣ್ಣುಗಳಲ್ಲಿ ಕುತೂಹಲದ ಜೊತೆಗೆ ಚಿಂತೆಯೂ ಮನೆಮಾಡಿತ್ತು ಎಂದರೆ ತಪ್ಪಲ್ಲ. ಪಾಪ, ಹಗಲೂ-ರಾತ್ರಿ ದುಡಿದ ಪ್ರಾಜೆಕ್ಟ್ ಟೀಮುಗಳು ಹೆಚ್ಚಿನ ವ್ಯವಸ್ಥೆಯನ್ನು ಸುಗಮವಾಗಿಸುವಲ್ಲಿ ಪಟ್ಟ ಕಷ್ಟ ಬಹಳಷ್ಟು ಕೆಲಸ ಮಾಡಿತ್ತು. ಮನುಕುಲ ಕಂಪ್ಯೂಟರ್ ಸಿಸ್ಟಮ್ ಮೇಲೆ ಅವಲಂಭಿತವಾದ ಒಂದು ದೊಡ್ಡ ಸಂಬಂಧಕ್ಕೆ ಹಾಗೂ ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಸವಾಲಾಗಿದ್ದ ಆ ರಾತ್ರಿಯೂ ಬಂದಿತು, ಮತ್ತೆ ಅದು ಹೋಗಿ ಈಗ ಏಳು ವರ್ಷಗಳು ಮುಗಿಯುತ್ತಾ ಬಂತು.

ಒಂದು ಕಾಲದಲ್ಲಿ ಸರಳವಾಗಿದ್ದ ಡಾಸ್ ವ್ಯವಸ್ಥೆ ಈಗಿಲ್ಲ, ಈಗೇನಿದ್ದರೂ ಪ್ರಭಲವಾದ ವಿಸ್ತಾದಂತಹ ಕಾರ್ಯಾಚರಣ ವ್ಯವಸ್ಥೆ. ದೊಡ್ಡ ಮನುಷ್ಯರ ಸಹವಾಸದಲ್ಲೆಲ್ಲ ದೊಡ್ಡವು ಎನ್ನುವ ಹಾಗೆ ಒಂದೇ ರೀತಿಯ ಫೈಲ್‌ (ಸ್ಪ್ರೆಡ್‌ಶೀಟ್) ಅನ್ನು ಮೈಕ್ರೋಸಾಫ್ಟಿನ ಎರಡು ಎಕ್ಸೆಲ್ ವರ್ಷನ್‌ಗಳಲ್ಲಿ ಸೇವ್ (ಉಳಿಸಿ) ಮಾಡಿದರೆ ಅದರ ಸೈಜ್‌ನಲ್ಲಿ ಹೆಚ್ಚಿನ ವ್ಯತ್ಯಾಸ. ನನ್ನ ಬಳಿ ಇರೋ ಆಫೀಸ್ ೨೦೦೩ ರ ಫೈಲುಗಳಿಗೂ ಅವೇ ಆಫೀಸ್ ೨೦೦೭ ರಲ್ಲಿ ಉಳಿಸಿದ ಫೈಲುಗಳಿಗೂ ಕನ್ಸಿಡರೆಬಲ್ ವ್ಯತ್ಯಾಸವಿದೆ ಫೈಲ್ ಸೈಜ್‌ನಲ್ಲಿ ಎಂದರೆ ನಂಬಲಾಗದು. ದಿನೇ ದಿನೇ ಟೆಕ್ನಾಲಜಿ ಹೆಚ್ಚಿದಂತೆ ನನ್ನ ಕೆಲಸದ ಅಗತ್ಯಗಳಲ್ಲಿ ಬರೀ ಇ-ಮೇಲ್ ಓದುವುದು, ಬರೆಯುವುದನ್ನು ಬಿಟ್ಟರೆ ಉಳಿದ ಅಪ್ಲಿಕೇಶನ್ನು ಗಳನ್ನು ಹೆಚ್ಚು ಕಲಿಯುವುದಾಗಲೀ ಬಳಸುವುದಾಗಲೀ ನಿಂತೇ ಹೋಗಿರುವಾಗ ಫೈಲ್ ಹಾಗೂ ಇ-ಮೇಲ್ ಮ್ಯಾನೇಜ್‌ಮೆಂಟೇ ಬದುಕಾಗಿ ಹೋಗಿದೆ. ಆಶ್ಚರ್ಯವೆನ್ನುವಂತೆ ಒಂದು ಕಾಲದಲ್ಲಿ ಚೆನ್ನಾಗೇ ಓಡುತ್ತಿದ್ದ ಹಳೆಯ ಕಂಪ್ಯೂಟರ್ ಈಗ ಯಾವುದೋ ತಗಡು ಡಬ್ಬವಾಗಿ ಕಂಡುಬರುತ್ತಿರೋದು.

ಹಾರ್ಡ್ ಡಿಸ್ಕೇ ಇಲ್ಲದ ಕಂಪ್ಯೂಟರುಗಳಿಂದ ಹಿಡಿದು ಐವತ್ತು MB ಹಾರ್ಡ್‌ಡಿಸ್ಕ್ ಇರುವ ಪರ್ಸನಲ್ ಕಂಪ್ಯೂಟರ್ ಅನ್ನು ಬಳಸಿದವರಿಗೆ ಇಂದಿನ ಟೆರ್ರಾಬೈಟುಗಳನ್ನು ನೋಡಿ ಏನನಿಸುತ್ತೋ ಏನೋ. ಹಾಗಾದರೆ ನಮ್ಮ ಬದುಕಿನಲ್ಲಿ ಅಷ್ಟೊಂದು ಬದಲಾವಣೆಗಳಾಗಿವೆಯೇ? ಉದಾಹರಣೆಗೆ ಒಂದು ಕಾಲದಲ್ಲಿ ಒಂದು ಮೆಗಾಪಿಕ್ಸೆಲ್ ಕ್ಯಾಮರಾಗಳನ್ನು ಬಳಸಿ ಚಿತ್ರ ತೆಗೆಯುತ್ತಿದ್ದ ಫೋಟೋಗ್ರಾಫರುಗಳು ಇಂದಿನ ಹತ್ತು ಮೆಗಾಪಿಕ್ಸೆಲ್ ಕ್ಯಾಮಾರಾದಲ್ಲಿ ಅಂತಹದನ್ನೇನು ಅಚೀವ್ ಮಾಡುತ್ತಿದ್ದಾರೆ ಎನ್ನುವುದು ನನ್ನಲ್ಲಿನ ಗೊಂದಲ. ನಾನು ಚಿತ್ರವನ್ನು ಪ್ರಿಂಟ್ ಮಾಡಿದರೂ 8X10 ಸೈಜ್ ಬಿಟ್ಟು ಬೇರೆ ಸೈಜ್ ನಲ್ಲಿ ಪ್ರಿಂಟ್ ಹಾಕಿಸಿಲ್ಲ, ಅಂದ ಹಾಗೆ ಮೊದಲೆಲ್ಲ ಫಿಲ್ಮ್ ರೀಲುಗಳನ್ನು ಸಂಸ್ಕರಿಸುತ್ತಿದ್ದ ನಮಗೆ ಎಷ್ಟು ಮೆಗಾಪಿಕ್ಸೆಲ್ಲುಗಳು ಸಿಗುತ್ತಿದ್ದವು, ಇಂದಿನ ಡಿಜಿಟಲ್ ಯುಗದ ಚಿತ್ರಗಳು ಯಾವ ರೀತಿ ಭಿನ್ನ? ನನ್ನ ಸಹೋದ್ಯೋಗಿ ತನ್ನ ಆಫೀಸಿನಲ್ಲಿ ತನಗೆ ಬೇಕಾದ ಹಲವಾರು ಚಿತ್ರಗಳನ್ನು ಪ್ರಿಂಟ್‌ಹಾಕಿಸಿ ಇಟ್ಟುಕೊಂಡಿದ್ದಾನೆ, ಆತನ ಪ್ರಕಾರ ಸಾವಿರಾರು ಚಿತ್ರಗಳನ್ನು ತೆಗೆದರೆ ಒಂದಿಷ್ಟು ಚಿತ್ರಗಳು ಚೆನ್ನಾಗಿ ಬರುತ್ತವೆ, ಹಾಗಿದ್ದ ಮೇಲೆ ಇಂದಿನ ಡಿಜಿಟಲ್ ಯುಗದ ಕ್ಯಾಮೆರಾಗಳು ಟ್ರೈಯಲ್-ಎಂಡ್-ಎರರ್ ಮೆಥೆಡ್ಡುಗಳನ್ನು ಪುರಸ್ಕರಿಸುತ್ತವೆಯೆಂದು ಅರ್ಥವೇ? ಒಂದು ಕಾಲದಲ್ಲಿ ಬ್ಲಾಕ್ ಅಂಡ್ ವೈಟ್ ಚಿತ್ರಗಳಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತಿದ್ದವರು, ಇಂದು ಅನೇಕ ಮೆಗಾಬೈಟುಗಳಲ್ಲಿ ನಮ್ಮನ್ನು ಅವಿಷ್ಕರಿಸಿಕೊಳ್ಳುತ್ತಿದ್ದೇವಷ್ಟೇ. ಆದರೆ, ಇತ್ತೀಚೆಗೆ ಬಳಕೆಗೆ ಬಂದಿರುವ HD ವಿಡಿಯೋ ಕಾರ್ಯಕ್ರಮಗಳನ್ನು ನೋಡಿದವರಿಗೆ ಗೊತ್ತು, ಸೆಕೆಂಡಿಗೆ 13.5 ರಿಂದ 19.8 (ಕಡಿಮೆ ಎಂದರೆ 13.5) ಮೆಗಾಬೈಟುಗಳನ್ನು ಹೊತ್ತು ತರುವ ಕಮ್ಮೂನಿಕೇಷನ್ ಮಾಧ್ಯಮ, ಅಲ್ಲಿನ ಚಿತ್ರ, ಸೌಂಡಿನ ಕ್ಲಾರಿಟಿಗೆ ಎಂಥವರ ಮನಸೋತು ಹೋಗೋದು ಖಂಡಿತ. ಸ್ಟ್ಯಾಂಡರ್ಡ್ ಡೆಫಿನಿಷನ್ನ್‌ನಲ್ಲಿ (ಸೆಕೆಂಡಿಗೆ 1.2 ಇಂದ 3.8 ಮೆಗಾಬೈಟುಗಳನ್ನು ಭಿತ್ತರಿಸುವ ಕಾರ್ಯಕ್ರಮಗಳು) ನೋಡುವ ಕಾರ್ಯಕ್ರಮಗಳು ಸೆಪ್ಪೆ ಎನಿಸೋದು ನಿಜ. ಎಲ್ಲ ಕಾರ್ಯಕ್ರಮಗಳೂ ಹೈ ಡಿಫನಿಷನ್ನಲ್ಲಿರೋದೇನೂ ಬೇಕಾಗಿಲ್ಲ, ಆದರೆ ಕೆಲವೊಂದು ಡಿಸ್ಕವರಿ ಕಾರ್ಯಕ್ರಮಗಳು, ಆಟೋಟಗಳನ್ನು ಹೈ ಡೆಫನಿಷನ್ನಿನ್ನಲ್ಲಿ ನೋಡಿದಾಗ ಅದರ ಅನುಭವವೇ ಬೇರೆ.

ತಂತ್ರಜ್ಞಾನ ಬದಲಾಗುತ್ತದೆ, ಆದರೆ ನಾವು? ನಾವು ಬದಲಾಗದಿದ್ದರೆ ಉಳಿಗಾಲವಿಲ್ಲ ಎನ್ನುವಂತಾಗಿದೆ, ವೈಯಕ್ತಿಕವಾಗಲ್ಲದಿದ್ದರೂ ಆಫೀಸಿನ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ, ಇಲ್ಲವೆಂದರೆ ಬದಲಾವಣೆಗಳನ್ನು ಎದುರಿಸಿ ಸೋತ ಹಣೆಪಟ್ಟಿ ನಮ್ಮನ್ನು ಅಂಟಿಕೊಂಡು ಬಿಡುತ್ತದೆ.

ಈಗಾಗಲೇ ನ್ಯೂ ಝೀಲ್ಯಾಂಡಿನವರು ಹೊಸವರ್ಷವನ್ನು ಆಚರಿಸಿ ನಾಳೆ ಇರುವುದನ್ನು ಸಾಭೀತುಪಡಿಸಿದ್ದಾರಾದ್ದರಿಂದ ನನಗೆ ನಾಳೆಯ ಬಗ್ಗೆ ಚಿಂತೆ ಇಲ್ಲವೇ ಇಲ್ಲ. ಬೇಡವೆಂದರೂ ಬರುವ ನಾಳೆಗಳು ಎಂದು ಭವಿಷ್ಯವನ್ನು ಸೂಚಿಸುವ ವಿಚಾರ ನಿಜ - ಈ ಕೆಳಗಿನ ನೈಜ ಘಟನೆಯನ್ನು ನೋಡಿ:
ನನ್ನ ಸಹೋದ್ಯೋಗಿ ಮೈಕಲ್ ತನ್ನ ಐದು ವರ್ಷದ ಮಗಳನ್ನು ನಿದ್ರೆ ಮಾಡಿಸುವಾಗ, ’ಹನಿ, ನೀನು ಕಣ್ಣು ಮುಚ್ಚಿ ಮಲಗಿಕೋ, ಕಣ್ಣು ಬಿಟ್ಟು ನೋಡುವಾಗ ನಾಳೆಯಾಗುತ್ತದೆ’ ಎಂದನಂತೆ. ಮಗಳು ಮರುದಿನ ಎದ್ದು ತಂದೆಯನ್ನು ಕೇಳಿದಳಂತೆ, ’ಡ್ಯಾಡೀ, is it tomorrow now?'
ಮೈಕಲ್, ’No, it is not tomorrow, it is Today!'
ಮಗಳು, ’then you lied to me! you said when I wake up it will be tomorrow, where is it?!'

***

Happy New Year everyone!
(I think I have given up...)

December 07, 2006 ರ ಬರಹ, ಸೂರ್ಯ-ಚಂದ್ರರ ನೆರಳಿನಲಿ ಇಂದ ಆಯ್ದುಕೊಂಡಿದ್ದು...

'ನಾನು ಜನವರಿ ಒಂದನ್ನು ಹೊಸ ವರ್ಷವನ್ನಾಗಿ ಆಚರಿಸೋದಿಲ್ಲ, ನನಗೇನಿದ್ದರೂ ಯುಗಾದಿಯೇ ಹೊಸವರ್ಷ' ಎಂದು ಮೂರು ವರ್ಷಗಳ ಹಿಂದೆ ಯಾವುದೋ ಪ್ರಶ್ನೆಗೆ ಉತ್ತರವಾಗಿ ಹೇಳಿದ ನನ್ನನ್ನು ಭೂಮಿಗೆ ತಂದವನು ಕೃಪೇಶ - 'ನಿನ್ನ ಬರ್ತ್ ಡೇ, ಆಫೀಸ್‌ನಲ್ಲಿನ ಆಗುಹೋಗುಗಳು ಮತ್ತೆಲ್ಲವೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿರುವಾಗ ಈ ಹೊಸವರ್ಷವೊಂದನ್ನು ಮಾತ್ರ ಉಪೇಕ್ಷಿಸುತ್ತೀಯೇಕೆ?'. ಅಂದಿನಿಂದ ಜನವರಿ ಒಂದರಂದು ನಾನು ಕುಡಿದು-ಕುಣಿದು ಕುಪ್ಪಳಿಸುವುದಿಲ್ಲವಾದರೂ 'ಹೊಸ' ವರ್ಷವನ್ನು ಕಣ್ಣು ಬಿಟ್ಟು ನೋಡುವುದನ್ನು ಕಲಿತಿದ್ದೇನೆ, ಬ್ರಹ್ಮಾಂಡದಲ್ಲಿ ಅನೇಕ ಬದಲಾವಣೆಗಳನ್ನು ತರುವ ನಮ್ಮ ಸಂಭ್ರಮದ ಯುಗಾದಿಯನ್ನು ಅದ್ಯಾವ ಕಾರಣಗಳಿಂದಲು ಡಿಸೆಂಬರ್ ೩೧ ಹಾಗೂ ಜನವರಿ ೧ ರ ನಡುವಿನ ವ್ಯತ್ಯಾಸಕ್ಕೆ ನಾನು ತುಲನೆ ಮಾಡಲಾಗದಿದ್ದರೂ 'ಗುಂಪಿನಲ್ಲಿ ಗೋವಿಂದ' ಎನ್ನುವಂತೆ ಹೆಚ್ಚು ಜನರು ಆಚರಿಸುವ ನಡವಳಿಕೆಯನ್ನು ಅನುಮೋದಿಸುವ ಬೃಹತ್ ಮನಸ್ಸನ್ನು ಹೊಂದಿಸಿಕೊಂಡಿದ್ದೇನೆ. ನಮ್ಮದೇ ಸರಿ ಎನ್ನುವುದು ಒಂದು ಹಂತ, ಸರಿಯನ್ನು ಹೆಚ್ಚು ಜನರು ಒಪ್ಪಿಕೊಳ್ಳುವ ಬದಲಾವಣೆಯನ್ನು ಹುಟ್ಟು ಹಾಕುವ ಪ್ರವಾದಿಯಾಗುವುದು ಮತ್ತೊಂದು ಹಂತ. ಪಾಡ್ಯಬಿದಿಗೆಗಳಿಗೆ ಜನರನ್ನು ಹೊಂದಿಸುವುದಾಗಲೀ, ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ತಿಂಗಳ ಮಧ್ಯೆ (೨೦ ನೇ ತಾರೀಖಿನ ಆಜುಬಾಜು) ಹೊಸ ಮಾಸವನ್ನು ಸೃಷ್ಟಿಸುವುದಾಗಲೀ, ಚೈತ್ರವನ್ನು-ವಸಂತವನ್ನು ಬದಲಾವಣೆಯ ಏಜೆಂಟರನ್ನಾಗಿ ಜಗತ್ತಿಗೆ ಸಾರುವುದು ನನ್ನ ಕರ್ಮವಂತೂ ಅಲ್ಲ, ಈ ಜನ್ಮದಲ್ಲಿ ಆ ಶಕ್ತಿಯೂ ನನಗಿಲ್ಲ ಎಂದು ಜಾರಿಕೊಂಡು ಹಾಡುಹಗಲೇ ಗುಂಪನ್ನು ಅನುಮೋದಿಸುವ ಪ್ರವೃತ್ತಿ ಸ್ವಭಾವವಾಗಿ ಪರಿವರ್ತನೆಯಾಗಿ ಹೋಗಿದೆ.

Saturday, December 29, 2007

ಕ್ರಿಸ್‌ಮಸ್ ಲೈಟೂ ಕ್ಲೀನ್ ಶೇವನ್ ಡ್ಯಾಡೂ...

೨೦೦೧ ನೇ ಸೆಪ್ಟೆಂಬರ್ ಹೊತ್ತಿಗೆ ನಾವಿನ್ನೂ ವಾಷಿಂಗ್ಟನ್ ಡಿಸಿ ಪ್ರಾಂತ್ಯದ ಹತ್ತಿರವೇ ಇದ್ದೆವು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಿಂದ ಡಿಸಿಯ ಜಾರ್ಜ್‌ಟೌನ್ ಯೂನಿವರ್ಸಿಟಿಗೆ ರೆಫೆರೆನ್ಸ್ ಪುಸ್ತಕಗಳಿಗೆಂದು ಹೋಗುತ್ತಿದ್ದ ನಮಗೆ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮುಸ್ಲಿಮ್ ಯುವಕ ಯಾವಾಗಲೂ ಕಣ್ಣಿಗೆ ಬೀಳುತ್ತಿದ್ದ. ಈತ ನಮಗೆ ಬೇಕಾದಷ್ಟು ಸಲ ನಾವು ಡಿಸಿ ಗೆ ಹೋಗುವ ಟ್ರೈನ್‌ನಲ್ಲಿ ಸಿಕ್ಕಿದ್ದೂ ಇದೆ. ಅಮೇರಿಕಾದ ಮೇಲೆ ಸೆಪ್ಟೆಂಬರ್ ೧೧ರ ಭಯೋತ್ಪಾದಕರ ಧಾಳಿ ನಡೆದ ಕೆಲವು ದಿನಗಳಲ್ಲಿ ಅಲ್ಲಲ್ಲಿ ಹೇಟ್‌ಕ್ರೈಮ್‌ಗಳ ಬಗ್ಗೆ ವರದಿಗಳು ಬರುತ್ತಿದ್ದು, ಸ್ಥಳೀಯರ ಹಾಗೆ ಎಷ್ಟೋ ಜನ ಭಾರತ ಅಥವಾ ಇತರೆ ದೇಶದ ಮೂಲದಿಂದ ಬಂದವರು ತಮ್ಮ ತಮ್ಮ ಕಾರು ಮನೆಯ ಮುಂದೆ ಅಮೇರಿಕನ್ ಧ್ವಜವನ್ನು ಹಾಕಿಕೊಳ್ಳುತ್ತಿದ್ದುದೂ ಕಂಡು ಬರುತ್ತಿದ್ದವು. ಸ್ಥಳೀಯರು ಸಾಲಿಡ್ಯಾರಿಟಿಗೆಂದು ಅಮೇರಿಕ ಧ್ವಜಗಳನ್ನು ತಮ್ಮ ಕಾರಿಗೆ ತಗುಲಿಸಿಕೊಂಡಿದ್ದರೆ ವಲಸೆ ಬಂದವರು ಹಲವಾರು ಕಾರಣಗಳಿಗೆ ಆ ರೀತಿ ತೋರಿಸಿಕೊಳ್ಳುತ್ತಿದ್ದುದು ಎದ್ದು ಕಾಣುತ್ತಿತ್ತು. ಯಾರೇ ತಮ್ಮ ತಮ್ಮ ಸ್ವರೂಪಗಳಲ್ಲಿ ಅದೇನೇ ಬದಲಾವಣೆಗಳನ್ನು ಮಾಡಿಕೊಂಡರೂ ಈ ಲೈಬ್ರರಿಯಲ್ಲಿ ಕೆಲಸ ಮಾಡುವ ಯುವಕ - ಆರು ಅಡಿಗಿಂತಲೂ ಎತ್ತರದ ನಿಲುವು, ಉದ್ದನೆಯ ಗಡ್ದದಾರಿ, ಯಾವಾಗಲೂ ಬಿಳಿ ನಿಲುವಂಗಿ (ಕುರ್ತಾ) ಧರಿಸಿರುವ, ಅವನದ್ದೇ ಆದ ಆಳವಾದ ಶುಭ್ರ ಕಣ್ಣುಗಳಲ್ಲಿ ಅದಮ್ಯ ಶಾಂತಿಯನ್ನು ಅಡಗಿಸಿಕೊಂಡು - ತಾನಾಯಿತು ತನ್ನ ಕೆಲಸವಾಯಿತು ಎಂದು ಬಾಹ್ಯ ನೋಟಕ್ಕೆ ನಿರ್ಲಿಪ್ತವಾಗಿದ್ದುದು ನನಗಂತೂ ಬಹಳ ಆಶ್ಚರ್ಯವನ್ನುಂಟುಮಾಡಿತ್ತು. ಆಗಷ್ಟೇ ಮಾಧ್ಯಮಗಳಲ್ಲಿ ತೋರಿಸುತ್ತಿದ್ದ ಬಿನ್ ಲಾಡೆನ್ ಚಿತ್ರಗಳಿಗೂ ಈ ಯುವಕನ ಗುರುತಿಗೂ ಬಹಳಷ್ಟು ಸಾಮ್ಯತೆಗಳಿದ್ದವು. ಅಪರೂಪಕ್ಕೆ ಟ್ರೈನ್‌ನಲ್ಲಿ ಸಿಕ್ಕುವ ಈತನನ್ನು ಸುತ್ತಲಿನ ಜನರು ಕಣ್ಣಿಟ್ಟು ನೋಡುವುದನ್ನು ನೋಡಿ ನನಗೇ ಮುಜುಗರವಾಗುತ್ತಿತ್ತು. ತನ್ನ ಸುತ್ತ ಮುತ್ತಲು ಅದೆಷ್ಟೇ ಕೋಲಾಹಲ ನಡೆದುಕೊಂಡಿದ್ದರೂ ಈತ ತನ್ನತನವನ್ನು ಬಿಡದೇ ಸಹಜವಾಗಿದ್ದುದು ನನಗೆ ಇಂದಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ ಜೊತೆಗೆ ಆತನ ಮೇಲಿನ ಅಭಿಮಾನವೂ ಹೆಚ್ಚುತ್ತದೆ.

***

ನಾವು ಜರ್ಸಿ ಸಿಟಿಯಿಂದ ಪ್ಲಾಂಡರ್ಸ್‌ಗೆ ಬಂದ ವರ್ಷ ಇದು. ನಾವಿರುವ ಮನೆಯ ಮೂಲ ಓನರ್ ಕ್ರಿಸ್‌ಮಸ್ ಸಮಯದಲ್ಲಿ ಬಹಳ ಚೆನ್ನಾಗಿ ಮನೆಯ ಹೊರಗೆ ಮತ್ತು ಒಳಗೆ ಲೈಟ್ ಹಾಕಿ ಅಲಂಕಾರ ಮಾಡಿರುತ್ತಿದ್ದರಂತೆ. ನಮಗೆ ಗೊತ್ತಿರುವ ಎಷ್ಟೋ ಜನ ಸ್ಥಳೀಯರು - ’ನೀವು ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡುವುದಿಲ್ಲವೇ?’, ’ಹಿಂದಿನವರು ಚೆನ್ನಾಗಿ ಲೈಟ್ ಅಲಂಕಾರ ಮಾಡಿರುತ್ತಿದ್ದರು!’ ಎನ್ನುವ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಜೊತೆಗೆ ಥ್ಯಾಂಕ್ಸ್‌ಗಿವಿಂಗ್ ಗಿಂತಲೂ ಮುಂಚೆಯೇ ಬರುವ ದೀಪಾವಳಿ ಸಂದರ್ಭದಲ್ಲಿ ನಾವು ಹೊರಗಡೆ ಹೊತ್ತಿಸಿದ ಲೈಟ್, ದೀಪಗಳನ್ನು ಪ್ರಶ್ನಿಸಿಯೂ ಇದ್ದಾರೆ. ನಮ್ಮ ನಂಬಿಕೆ ಸಂಪ್ರದಾಯಗಳ ಪ್ರಕಾರ ನಾವು ನಮ್ಮ ನಮ್ಮ ಹಬ್ಬ ಹರಿದಿನಗಳಿಗೆ ಬೇಕಾದ ಅಲಂಕಾರ ಮಾಡುವುದು ನಮಗೆ ಸೇರಿದ್ದು, ಜೊತೆಗೆ ನಮ್ಮ ನೆರೆಹೊರೆಯ ಆಚಾರ-ವಿಚಾರಗಳಿಗೆ ತಕ್ಕಂತೆ ಸ್ಪಂದಿಸಬೇಕಾದದ್ದೂ ನಮ್ಮ ಕರ್ತವ್ಯಗಳಲ್ಲೊಂದು ಎಂದು ನಂಬಿ ಥ್ಯಾಂಕ್ಸ್‌ಗಿವಿಂಗ್‌ನಿಂದ ಇಂದಿನವರೆಗೂ ಹೊರಗಡೆ ದೀಪಾಲಂಕಾರವನ್ನು ಮಾಡಿ ಅದನ್ನು ಉರಿಸಿಕೊಂಡೇ ಬಂದಿದ್ದೇವೆ. ಹಿಂದಿನ ಮನೆಯ ಮಾಲಿಕನಿಗೆ ಹೋಲಿಸಿದರೆ ನಮ್ಮ ಅಲಂಕಾರವೇನೂ ಇರಲಾರದು, ನಾವು ಕ್ರಿಸ್‌ಮಸ್ ಟ್ರೀ ಅನ್ನೂ ಇಟ್ಟಿಲ್ಲ ಆದರೆ ನಮ್ಮ ಕೈಲಾದಂತೆ ಸುತ್ತಲಿನವರಲ್ಲಿ ಒಂದಾಗಿ ಇರುವ ಪ್ರಯತ್ನವಷ್ಟೇ.

***

ನಮ್ಮ ಆಫೀಸಿನಲ್ಲಾಗಲೀ ಅಥವಾ ಹೊರಗಡೆ ಮತ್ತಿನ್ನೆಲ್ಲಾದರೂ ಸರದಾರ್‌ಜೀ ಗಳನ್ನು ನೋಡಿದಾಗ ಅವರ ಮೇಲೆ ಪ್ರಶಂಸೆಯೂ ಹಾಗೂ ಹಲವಾರು ಪ್ರಶ್ನೆಗಳು ಮನದಲ್ಲೇಳುತ್ತವೆ. ನಿಜವಾಗಿಯೂ ಪಗಡಿ ಧಾರಣೆ ಮಾಡಿರುವ ಮೀಸೆ-ಗಡ್ಡ-ತಲೆ ಕೂದಲನ್ನು ಹುಟ್ಟಿದಂದಿನಿಂದ ಬೋಳಿಸದಿರುವ ಇವರನ್ನು ತಮ್ಮ ಸಂಪ್ರದಾಯ ಹಾಗೂ ತಮ್ಮ ನೆರೆಹೊರೆ ಇವುಗಳ ನಡುವೆ ತೂಗಿ ನೋಡಿದಾಗ ದೈಹಿಕವಾಗಿ ಕೂದಲನ್ನು ಬೆಳೆಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಧರಿಸಿಕೊಂಡಿರುವುದು ಹುಟ್ಟಿದಂದಿನಿಂದ ಬಂದ ಅಭ್ಯಾಸವಾದರೂ ನಾವಿರುವ ನೆರೆಹೊರೆಯಲ್ಲಿ ’ಕ್ಲೀನ್‌ಶೇವನ್‍’ ಜನರಿಗೆ ಸಿಗುವ ಪ್ರಾಶಸ್ತ್ಯಗಳನ್ನು ನೋಡಿದಾಗ ಹಲವಾರು ರೀತಿಯಲ್ಲಿ ತರ್ಕಿಸಬಹುದು. ವಾಷಿಂಗ್ಟನ್ ಡಿಸಿಯ ಲೈಬ್ರರಿ ನೌಕರನಾಗಲೀ, ಅನ್‌ಶೇವನ್ ಸರ್ದಾರ್‌ಜೀಗಳಾಗಲೀ ನಿಜವಾಗಿಯೂ ತಮ್ಮ ಪರಂಪರೆಯನ್ನು ಪ್ರತಿಕ್ಷಣವೂ ಹೊತ್ತುಕೊಂಡೇ ತಿರುಗುತ್ತಾರೆ ಅನ್ನಿಸೋದಿಲ್ಲವೇ?

ನಾವು ಕಂಡ ನಮ್ಮ ದಕ್ಷಿಣ ಭಾರತದ ಆಚರಣೆ/ವಿಧಿಗಳ ಪ್ರಕಾರ ನಮ್ಮಲ್ಲಿನ ಗಂಡಸರು ಮುಖದ ಮೇಲೆ ಮೀಸೆಯೊಂದನ್ನು ಇಟ್ಟುಕೊಳ್ಳುವುದು ಸಹಜ. ಮೀಸೆಯ ಹೊರತಾಗಿ ಗಡ್ಡವೇನಾದರೂ ಇದ್ದರೆ ಅದು ರೋಗಿಗಳ, ವೈರಾಗಿಗಳ, ಸೋಮಾರಿಗಳ ಹಾಗೂ ಬುದ್ಧಿಜೀವಿಗಳ ಸೂಚಕವಾಗಿತ್ತಷ್ಟೇ. ನಮ್ಮಲ್ಲಿನ ಯುವಕರನ್ನು ಅವರು ಎಂದಾದರೂ ಮೀಸೆಯನ್ನು ಬೋಳಿಸಿಕೊಂಡರೆ ಉತ್ತರ ಭಾರತದ ಅಥವಾ ಹಿಂದಿ ಸಿನಿಮಾಗಳ ಹೀರೋಗಳಿಗೆ ಹೋಲಿಸಿ ಜನರು ಛೇಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈಗಲೂ ಸಹ ಅಮೇರಿಕದಲ್ಲಿಯೂ ದಕ್ಷಿಣ ಭಾರತ ಮೂಲದ ಯುವಕರು ಮೀಸೆಯನ್ನು ಇಟ್ಟುಕೊಂಡಿರುವುದು ನಮ್ಮ ಕಣ್ಣಿಗೆ ಬೀಳುತ್ತದೆ, ಅದರ ಮತ್ಯಾವುದೇ ವೇರಿಯೇಷನ್ನುಗಳೂ ಸಹ ಉಳಿದ ಕಡೆಗಳಿಂದ ಅವರವರು ಪಡೆದ ಇನ್‌ಫ್ಲುಯೆನ್ಸ್‌ಗಳ ಮೇಲೆ ಅವಲಂಭಿತವಾರುತ್ತದೆ. ಭಿನ್ನ ಪ್ರಪಂಚ ಹಾಗೂ ಸಂಸ್ಕೃತಿಯ ಸಂಗಮದಲ್ಲಿ ಬೆಳೆಯುವ ನಮ್ಮ ಮುಂದಿನ ತಲೆಮಾರಿಗೆ ಅನ್ನಿಸಬಹುದು - ನಮ್ಮ ತಂದೆಯೂ ಇಲ್ಲಿಯವರ ಹಾಗೆ ಕ್ಲೀನ್ ಶೇವನ್ ಯಾಕಿರಬಾರದೆಂದು. ಬಾಹ್ಯವಾಗೇಳುವ ಅಂತಹ ಪ್ರಶ್ನೆಗಳಿಗೆ ನಮ್ಮ ಮುಖದ ಮೀಸೆ ಏಕಿದೆ ಎಂದು ಹಲವಾರು ರೀತಿಯ ವಿವರವನ್ನು ಕೊಡಬಹುದಾದರೂ ಮನದೊಳಗಿನ ವ್ಯಾಪಾರವನ್ನು ನಾವು ಯಾವತ್ತಿಗೂ ನಿಯಂತ್ರಿಸಲಾಗೋದೇ ಇಲ್ಲ.

***

ನಾನೂ ಒಂದು ಕ್ರಿಸ್‌ಮಸ್ ಟ್ರೀ ಅನ್ನು ಇಡಬಲ್ಲೆ, ಅದನ್ನು ವಿಧವಿಧವಾಗಿ ಅಲಂಕಾರ ಮಾಡಬಲ್ಲೆ, ಅದನ್ನು ದುಡ್ಡಿನಿಂದಲೇ ಮುಚ್ಚಬಲ್ಲೆ, ಅದರ ಕೆಳಗೆ ಗಿಫ್ಟ್‌ಗಳನ್ನು ಥರಥರವಾಗಿ ಪೇಪರ್‌ಗಳಿಂದ ರ್ಯಾಪ್ ಮಾಡಿ ಅದನ್ನು ಸ್ಯಾಂಟಾಕ್ಲಾಸ್ ಹೆಸರಿನಲ್ಲಿ ಮಕ್ಕಳಿಗೆ ಹಂಚಬಲ್ಲೆ. ಆದರಿಂದ ನಮ್ಮ ಮನೆಯ ಕ್ರಿಸ್‌ಮಸ್ ಟ್ರೀಗೂ ಡಿಪಾರ್ಟ್‌ಮೆಂಟ್ ಸ್ಟೋರ್ ಕ್ರಿಸ್‌ಮಸ್ ಟ್ರೀಗೂ ಏನು ವ್ಯತ್ಯಾಸ ಉಳಿಯಿತು? ನಮ್ಮ ಮನೆಯಲ್ಲಿ ಅಲಂಕೃತಗೊಂಡ ಟ್ರೀ ನೋಡಲು ಚೆನ್ನಾಗಿರಬಹುದು, ಆದರೆ ಅದರಲ್ಲಿ ಯಾವುದೇ ಪರಂಪರೆಯಿಲ್ಲ, ಸಂಪ್ರದಾಯವಿಲ್ಲ, ಹಿನ್ನೆಲೆಯಿಲ್ಲ. ಶಾಲೆಯಲ್ಲಿ ನಮ್ಮ ಮಕ್ಕಳನ್ನು ಅವರ ಸಹಪಾಠಿಗಳು ಕೇಳಿಯಾರು ಎಂಬ ಒಂದೇ ಕಾರಣಕ್ಕೆ, ನಾವು ನಮ್ಮ ನೆರೆಹೊರೆಯವರಲ್ಲಿ ಮಿಳಿತವಾಗಿ ಬದುಕಬೇಕು ಎಂಬುದಕ್ಕೆ ನಾವು ಇನ್ನೂ ಏನೇನನ್ನು ತ್ಯಾಗ ಮಾಡಬೇಕು, ಎಷ್ಟರ ಮಟ್ಟಿಗೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಅಮೇರಿಕದಲ್ಲೇ ಬೇಕಾದಷ್ಟು ಕಡೆ ಇರುವ ಭಾರತೀಯ ಮೂಲದ ಜನರು ಬೇಕಾದಷ್ಟು ಉತ್ತರಗಳನ್ನು ಕಂಡುಕೊಳ್ಳಬಹುದು. ನ್ಯೂ ಜೆರ್ಸಿ, ನ್ಯೂ ಯಾರ್ಕ್ ಅಂತ ಪ್ರದೇಶಗಳಲ್ಲಿ ಹೆಚ್ಚು ಜನರಿರುವ ದೇಸೀ ಸ್ಥಳಗಳಲ್ಲಿ ನಮ್ಮ ಆಚರಣೆಗಳಿಗೆ ಸಂವೇದನೆಗಳಿಗೆ ಆದ್ಯತೆ ಪ್ರಾಧಾನ್ಯತೆ ಸಿಕ್ಕರೆ ಅದೇ ಅಮೇರಿಕದ ಉಳಿದೆಡೆ ಹೆಚ್ಚು ಭಾರತೀಯರಿಲ್ಲದ ಕಡೆ ಅಂತಹ ಪ್ಲೆಕ್ಸಿಬಿಲಿಟಿ ಇರದೇ ಇರಬಹುದು. ನಾವೆಲ್ಲಿ ಹೋದರೂ ಅಲ್ಲಿಯವರಾಗಿರುವುದು ಒಂದು ರೀತಿಯ ಸೂಕ್ಷ್ಮ, ನಾವು ಭಿನ್ನರಾಗಿದ್ದುಕೊಂಡೇ ನಮ್ಮ ತನವನ್ನು ಬೆಳೆಸಿ ಪೋಷಿಸಿಕೊಂಡು ಹೋಗುವುದು ಮತ್ತೊಂದು ರೀತಿಯ ಅಗತ್ಯ.

ನಮ್ಮತನವೆನ್ನುವುದನ್ನು ನಾವು ಬಿಡುವುದೋ ಹಿಡಿದುಕೊಳ್ಳುವುದೋ ಎನ್ನುವುದು ಕೆಲವರಿಗೆ ಅನಿವಾರ್ಯತೆಯ ಪ್ರಶ್ನೆ, ಇನ್ನು ಕೆಲವರಿಗೆ ಅದು ಬದಲಾವಣೆಗಳ ಅಗತ್ಯ - ಬೇರೆಲ್ಲಿ ಹೇಗಾದರೂ ಇರಲಿ ನಮ್ಮ ಮನೆಯಲ್ಲಿನ ಅನ್-ಕ್ಲೀನ್‌ಶೇವನ್ ಡ್ಯಾಡ್ ಬದಲಾಗದಿದ್ದರೆ ಸಾಕು!

Thursday, December 27, 2007

ಮರೆಯಾದಳು ಭುಟ್ಟೋ

(photo source unknown)

ನಾಡಿನ ಕತ್ತಲೆ ಎಳೆಗಳು ಕಳೆದೇ ಹೋದವು
ಇನ್ನೇನು ಸುಂದರ ದಿನಗಳು ಬಂದೆ ಬಂದವು
ಸೂರ್ಯನು ಮುಳುಗಿ ಮರುದಿನ ಹುಟ್ಟೋ
ಮೊದಲೇ ಮರೆಯಾದಳು ಭುಟ್ಟೋ.

ಕಂಬಳಿ ಹುಳುವಿನ ಹಾಗೆ ಎಂಟು ವರ್ಷ
ಕೊರೆದು ತಿಂದ ಮನದಾಳದ ಬುತ್ತಿಯ ಹರ್ಷ
ಅರವತ್ತೊಂಭತ್ತು ದಿನದ ಬಣ್ಣದ ಹಾಯಿ
ಚಿಟ್ಟೆಯನ್ನ ಕೊಂದೇ ಬಿಟ್ಟರಲ್ಲ ತಾಯಿ.

ಅಪ್ಪ ತಮ್ಮಂದಿರ ಒಡಗೂಡಿ ಕಟ್ಟಿದ ಸೇನೆಗೆ
ಶೋಷಿತ ಜನರ ಸರ್ಕಾರವನು ಎತ್ತಿ ಬಾನಿಗೆ
ಸೇನಾಡಳಿತದ ವಿರೋಧವನೇ ಎದುರಿಸಿ
ಕೊನೆಗೆ ಎಲ್ಲರನ್ನೂ ಬಲಿಗೊಟ್ಟ ಕಸಿವಿಸಿ.

ಎರಡೆರಡು ಬಾರಿ ಅಧಿಕಾರ ಕಿತ್ತುಕೊಂಡೂ
ಕಾರಾಗೃಹ ವಾಸದ ನೋವ ನುಂಗಿಕೊಂಡೂ
ಸಗಣಿಯೊಳಗಿನ ಹುಳುಗಳ ಮೇಲುತ್ತುವ ತಾಯೆ
ಮತ್ತಾರಿಗೂ ಬರದು ನೀನೆಸೆಯುವ ಮಾಯೆ.

ನಿನ್ನ ಕನಸುಗಳ ನುಂಗಿ ನೀರು ಕುಡಿದ ನಾಡನ್ನು ಬಿಟ್ಟು
ಮುಂದಿನ ಜನುಮದಲ್ಲಾದರೂ ನಮ್ಮ ನಾಡಲ್ಲಿ ಹುಟ್ಟು.
***
October 18, 2007 ರಂದು ಪ್ರಕಟಿಸಿದ ಈ ಲೇಖನವನ್ನೂ ಓದಿ: ಭುಟ್ಟೋ ಬಂದಳು ಶಾಂತಿ ತಂದಳು!
...ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.