Thursday, March 29, 2007

ಕಾಲವಾದ kaaloo!




http://kaalachakra.blogspot.com/

ದುರದೃಷ್ಟವಷಾತ್ ಮೊನ್ನೆ ನಡೆದ ಅವಘಡದಲ್ಲಿ ನಮ್ಮೆಲ್ಲರ ಆತ್ಮೀಯ, ಕಾಳೂ, ಕಾಲೂದಾದ, ಕಾಳೂ ಮಾಮ ಎಂದೇ ಜನಪ್ರಿಯವಾಗಿದ್ದ kaaloo ಬೆಳ್ಳಿತೆರೆಯಿಂದ ನಿರ್ಗಮಿಸಿದ್ದನ್ನು ಬಹು ದುಃಖದಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ನಮ್ಮ ನಿಮ್ಮೆಲ್ಲರ ಬಯಲುಸೀಮೆಯ ತೆರೆದ ಧ್ವನಿಯ ಜೊತೆಗೆ ಹೃದಯದಲ್ಲಿ ಕರ್ನಾಟಕದ ರಾಜಕೀಯ ಚಲನವಲನಗಳನ್ನು ತನ್ನದೇ ಆದ ಧಾಟಿಯಲ್ಲಿ ತನ್ನ ಸ್ನೇಹಿತರಾದ ಕೋಡೀಹಳ್ಳಿ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರ ಜೊತೆ ಸೇರಿಕೊಂಡು ದೇವೇಗೌಡ, ಧರಮ್ ಸಿಂಗ್, ಯಡಿಯೂರಪ್ಪ ಮೊದಲಾದವರ ಚೇಲಾಗಳು ಎಷ್ಟೊತ್ತಿಗೆ ಬೇಕಾದರೂ ನನ್ನ ಮನೆ ಕಿಟಕಿ ಗಾಜುಗಳನ್ನು ಒಡೆಯಬಹುದು ಎಂದು ಒಳಗೊಳಗೆ ಹೆದರಿಕೊಂಡೇ ಪುರುಸೊತ್ತಾದಾಗಲೆಲ್ಲ ಭಾರತೀಯ ಕಾಲಮಾನದಲ್ಲಿ ಅಲ್ಲಿನ ವ್ಯತಿರಿಕ್ತ ಮನೋಸಂಕಲ್ಪಗಳ ಕಾದಾಟದಲ್ಲಿಯೂ ತನ್ನ ಮನಸ್ಸಿನ ಚಿತ್ರಗಳನ್ನು ತೆರೆದಿಡುತ್ತಿದ್ದ. ಅಂತಹ kaaloo ಇನ್ನಿಲ್ಲ!

ಆದದ್ದಿಷ್ಟೇ: ಸುಮ್ಮನಿರಲಾರದ ನಾನು ಮೊನ್ನೆ kaaloo ವನ್ನು ರಾತ್ರಿ ಊಟಕ್ಕೆ ನಮ್ಮ ಮನೆಗೆ ಆಮಂತ್ರಿಸಿ ಊಟವಾದ ಬಳಿಕ ಲೋಕಾಭಿರಾಮವಾಗಿ ಹರಟೆ ಹೊಡೆದು ರಾತ್ರಿ ಹನ್ನೊಂದೂವರೆ ಹೊತ್ತಿಗೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಇನ್‌ಫರ್ಮೇಷನ್ ಹೈವೇಯಲ್ಲಿ ಘಂಟೆಗೆ ಸುಮಾರು ೬೦ ಮೈಲಿಯ ವೇಗದಲ್ಲಿ ಡ್ರಾಪ್ ಮಾಡಲು ಹೊರಟಿದ್ದೆ. ಗೂಗಲ್‌ನವರು ಬ್ಲಾಗರ್ ಅಕೌಂಟನ್ನು ಅದೇ ಹೊತ್ತಿಗೆ ಮರ್ಜ್ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ, ಗೂಗಲ್ ವಾಹನ ಮರ್ಜ್ ಆಗುವ ಹೊತ್ತಿನಲ್ಲಿ ನನ್ನ ತಪ್ಪಿನಿಂದಾಗಿ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದ kaaloo ಬಲವಾದ ಹೊಡೆದ ಬಿದ್ದಿದ್ದರಿಂದ ಸ್ಥಳದಲ್ಲೇ ಅಸುನೀಗಿಬಿಟ್ಟರು. ರಕ್ತಸ್ರಾವವೇನೂ ಮೇಲ್ನೋಟಕ್ಕೆ ಕಂಡುಬರದಿದ್ದರೂ ಒಳಗೊಳಗೇ ಹೊಡೆತ ತಿಂದು 'ಬಡವಾ ನೀ ಮಡುಗ್ದಂಗಿರು!' ಎಂದು ಹೇಳಿದ್ದೇ ಅವರ ಕೊನೆ ಉಸಿರಾಗಿ ಹೋಯಿತು.

ಪಲ್ಸ್ ಚೆಕ್ ಮಾಡಿ ನೋಡಿದ ನಾನು ಏನೇ ತಿಪ್ಪರಲಾಗ ಹಾಕಿದರೂ, ಗೂಗಲ್ ವಾಹನದ ಅವಘಡವನ್ನು ವಿವರಿಸಿ ದೊಡ್ಡ ಕಂಪನಿಯವರಿಗೆ ಬರೆದರೂ ಯಾರೂ ನಮ್ಮ kaaloo ವನ್ನು ಉಳಿಸಿಕೊಳ್ಳಲು ಸಹಾಯ ಮಾಡದೇ ಹೋದರು.

kaaloo ವನ್ನು ತಿಂದ ನಮ್ಮ ರಸ್ತೆ, ವಾಹನ, ಗೂಗಲ್ ಅಂತಹ ದೊಡ್ಡ ಕಂಪನಿ, ನನ್ನ capitalistic ಮೈಂಡ್‌ಸೆಟ್ಟಿನವನನ್ನು kaaloo ವಿನ ಆತ್ಮೀಯರಾದ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರೆಲ್ಲರೂ ಹಳಿದಿದ್ದೇ ಹಳಿದಿದ್ದು. 'ನಿಮ್ ಅಮೇರಿಕನ್ ಆಕ್ರಮಿಕೆಯ ವಸಾಹತುಶಾಹಿ ಮನೋಭಾವದ ಮುಂಡಾ ಮೋಚಾ!' ಎಂದೂ, 'ಅಲ್ಲೀ ನೀರ್ ಕುಡ್ದು ಅಲ್ಲಿಗೇ ಜೀತಾ ಮಾಡೋ ನಿಮ್ ಕರ್ಮಕ್ಕೆ ಮೆಟ್ನಾಗ್ ಹೊಡಿಯಾ!' ಎಂತಲೂ, ಇನ್ನೂ ಮುಂತಾಗಿ kaaloo ವನ್ನು ತಿಂದು ಹಾಕಿದ ನನ್ನನ್ನು ದೂರಿ ಹಲವಾರು ಸಂದೇಶಗಳು ನಿರಂತರವಾಗಿ ಬರತೊಡಗಿವೆ.

ಕಳೆದ ವರ್ಷ "ಅಂತರಂಗಿ"ಯನ್ನು ಕೆಲಸದಿಂದ ಬಿಡಿಸಿ 'ಅಂತರಂಗ'ವನ್ನು ಬಸವನ ಹುಳುವಿನಂತೆ ಬಸವಳಿಯುವಂತೆ ಮಾಡಿದ್ದನ್ನು ಜನರು ಇನ್ನೂ ಮರೆಯುವ ಮೊದಲೇ ಮತ್ತೊಬ್ಬ ಹವ್ಯಾಸಿ ಬರಹಗಾರನನ್ನು ಇಲ್ಲವಾಗಿಸಿದ್ದಕ್ಕೆ ಅಥವಾ ಅವರ ಜವಾಬ್ದಾರಿಯನ್ನೂ ನನ್ನ ಮೇಲೆ ಹೇರಿಕೊಂಡು ಈಗಾಗಲೇ mediocre ಕೆಲಸಮಾಡಿಕೊಂಡಿರುವ ನನ್ನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸ ಜನರಿಗೆ ನಾನು ಹೇಳುವುದಾದರೂ ಏನಿದೆ.

kaaloo ವಿನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅಲ್ಲಲ್ಲಿ ಕಾಲೂವಿನ ಆತ್ಮ ಜಾಗರೂಕವಾಗಿ ಏನಾದ್ರೂ ನುಡಿದಿದ್ದೇ ಆದಲ್ಲಿ ಅದನ್ನೂ ಪುರಸ್ಕರಿಸಬೇಕಾಗಿ ನನ್ನ ಮನವಿ. ಪುರುಸೊತ್ತು ಸಿಕ್ಕರೆ kaaloo ವಿನ ಆತ್ಮಕ್ಕೆ ಇಲ್ಲಿ ಶಾಂತಿಕೋರಿ.

Thursday, March 15, 2007

ಸ್ಟಾಪ್ ಸೈನೂ ಸಿಗ್ನಲ್ ಲೈಟೂ






ವಯಸ್ಸಾಗಿರೋ ಕುರುಹು ಅನ್ನೋ ಹಾಗೆ ಪ್ರತಿಯೊಬ್ಬರಿಗೂ ಬೇಕಾದಷ್ಟು ಸೂಚನೆಗಳು ಸಿಗುತ್ತವೆ. ಅವರವರ ಮೂಗಿನ ಹೊಳ್ಳೆಗಳಲ್ಲಿ ಬೆಳೆದು ನಿಂತ ಕೂದಲುಗಳನ್ನು ಕತ್ತರಿಸುವ ಅಗತ್ಯದಷ್ಟು ಸರಳವಾದ ಅಥವಾ ಮದುವೆ-ಮುಂಜಿ ಮಾಡಿಕೊಂಡು ಸಂಸಾರ ಹೂಡುವಷ್ಟು ಸಂಕೀರ್ಣವಾದ ಹಂತಗಳನ್ನು ಎಲ್ಲರೂ ದಾಟಿಕೊಂಡು ಬಂದೇ ಬರುತ್ತಾರೆ. ನಾವು ಬೆಳೆದು ದೊಡ್ಡವರಾದ ಹಾಗೆ ನಮ್ಮ ಬೆಳವಣಿಗೆ, ನಮ್ಮ ಪ್ರಬುದ್ಧತೆ ಎಲ್ಲ ಕಡೆಗಳಲ್ಲೂ ಸಹಾಯ ಮಾಡುತ್ತದೆ ಎನ್ನೋದೇನೋ ನಿಜ, ಆದರೆ ಅದು ಎಷ್ಟೋ ಸಾರಿ ಅಸಹಾಯಕತೆಯನ್ನೂ ತಂದೊಡ್ಡುತ್ತದೆ. ಎಲ್ಲ ಮುಖ್ಯ ನಿಲುವು ನಿರ್ಧಾರಗಳಲ್ಲಿ ಅವರವರನ್ನು ಹೂಡಿಕೊಂಡು ಮುಂದೆ ಬರುವ ಅನಿರೀಕ್ಷಿತ ತಿರುವುಗಳಲ್ಲಿ ಇನ್ನು ಯಾವ ಯಾವ ನಿರ್ಧಾರವನ್ನು ಕೈಗೊಳ್ಳುವುದೋ ಏನೋ ಎನ್ನುವ ಹೆದರಿಕೆಯೂ ಮನೆಮಾಡಿಕೊಂಡಿರುತ್ತದೆ. ಸೇತುವೆ ಬಂದಾಗ ನೋಡಿದರಾಯಿತು ಈಗೇಕೆ ಎನ್ನುವ ಮಾತುಗಳು ಹೇಳಲಿಕ್ಕೆ ಮಾತ್ರ ಚೆಂದವೇನೋ ಅನ್ನಿಸೋದಿಲ್ಲವೇ, ಎಷ್ಟೋ ಸಾರಿ?

ನನ್ನ ಮಟ್ಟಿಗೆ ಹೇಳೋದಾದರೆ ಈ ಕೆಲವು ವರ್ಷಗಳ ಹಿಂದೆ ನಾನು ಟ್ರಾಫಿಕ್ ಸಿಗ್ನಲ್ ಲೈಟುಗಳನ್ನು ಅಪಾರವಾಗಿ ದ್ವೇಷಿಸುತ್ತಿದ್ದೆ, ಅವುಗಳು ನನ್ನ ವೇಗದ ಮಿತಿಯನ್ನು ಅನಗತ್ಯವಾಗಿ ಕಟ್ಟಿ ಹಾಕುವ ಶತ್ರುಗಳು ಎಂದುಕೊಂಡಿದ್ದೆ. ಈ ಅಪರೂಪಕ್ಕೆ ಸಿಗುವ ಲೈಟುಗಳು ನನ್ನಿಂದ ಯಾವುಗಲೂ ಶಾಪ ಹಾಕಿಕೊಳ್ಳುತ್ತಿದ್ದರೆ, ಎಲ್ಲಿ ಬೇಕಂದರಲ್ಲಿ ಸಿಗುವ ಸ್ಟಾಪ್ ಸೈನುಗಳು ನನಗೆ ಯಾವ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಈ ನಗರದ ಬದುಕಿನ ಅಂಗವಾಗಿ ಪ್ರತಿ ಸಿಗ್ನಲ್ ಲೈಟಿಗೆ ಒಂದಕ್ಕೆ ಐದರ ಅನುಪಾತದಲ್ಲಿ ದಾರಿಯಲ್ಲಿ ಎದುರಾಗುವ ಸ್ಟಾಪ್ ಸೈನುಗಳು ಹೇಳಲಿಕ್ಕೆ ಮಾತ್ರ 'STOP' ಎಂದು ಎಲ್ಲ ಕ್ಯಾಪಿಟಲ್ ಲೆಟರುಗಳಲ್ಲಿ ಬರೆದುಕೊಂಡು ಕೆಂಪು-ಬಿಳಿ ಬಣ್ಣದಲ್ಲಿದ್ದರೂ ಅವುಗಳಿಗೆ ನಾನಾಗಲಿ ಅಥವಾ ಮತ್ಯಾರಾಗಲಿ ಕೊಡುತ್ತಿದ್ದ ಗೌರವ ಅಷ್ಟೇ - rolling stop ಮಾಡಿಕೊಂಡು ನಿಂತೆವೋ ಬಿಟ್ಟೆವೋ ಎಂದು ಅತ್ತಿತ್ತ ಗೋಣು ತಿರುಗಿಸಿ ನೋಡಿದಂತೆ ಮಾಡಿ, ದಾರಿ ಹೋಕರಿಗೆ ನಡೆಯಲು ಅವಕಾಶವನ್ನು ಕೊಟ್ಟು ಒಳಗೊಳಗೆ ಬೈದುಕೊಂಡರೂ ಮೇಲ್ನೋಟಕ್ಕೆ ಹಲ್ಲು ಗಿಂಜಿದಂತೆ ಮಾಡಿ ಅವರವರ ಪಾಡಿಗೆ ದಾರಿ ಹಿಡಿಯುವುದು ಎಲ್ಲ ಕಡೆ ಸಾಮಾನ್ಯ ನೋಟ. ಆದರೆ ಅದೇ ಟ್ರಾಫಿಕ್ ಸಿಗ್ನಲ್ ಬಂದಿತೆಂದರೆ ಅದರ ಕಥೆಯೇ ಬೇರೆ, ಕಾರು ಡೆಡ್ ಸ್ಟಾಪಿಗೆ ಬರುವುದೂ ಅಲ್ಲದೆ, ಅನಗತ್ಯವಾಗಿ ವಿಳಂಬವನ್ನು ತಂದೊಡ್ಡುವ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸುವ ಮಹಾಕಾರ್ಯವೂ ನಡೆದು ಹೋಗುವುದು ಸರ್ವೇಸಾಮಾನ್ಯ. ನಮ್ಮ ಮುಂದಿನವರಿಗೆ ಅವರ ಮುಂದಿನವರ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು, ನಮ್ಮ ಹಿಂದಿನವರಿಗೆ ನಮ್ಮ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು ಒಂದು ರೀತಿಯಲ್ಲಿ ವೇಗವನ್ನು ಕಡಿಮೆ ಮಾಡುವುದರ ಜೊತೆಗೆ ದೃಷ್ಟಿಯನ್ನೂ ಸೀಮಿತಗೊಳಿಸುವ ಶತ್ರುಗಳು ಎಂದುಕೊಂಡು ಗಾಡಿ ಓಡಿಸುವುದೇ ಮಾಮೂಲಿಯಾಗಿ ಹೋಗಿತ್ತು.

ಆದರೆ ಇತ್ತೀಚೆಗೆ ನನ್ನ ನಿಲುವುಗಳಲ್ಲಿ ಸಂಪೂರ್ಣ ಬದಲಾವಣೆಯಾಗಿದೆ: ಸ್ಟಾಪ್ ಸೈನುಗಳು ಶತ್ರುವಿನ ಸ್ಥಾನ ಪಡೆದುಕೊಂಡಿದ್ದರೆ, ಸಿಗ್ನಲ್ ಲೈಟುಗಳು ಮಿತ್ರರಾಗಿ ಹೋಗಿವೆ!

ಸ್ಟಾಪ್ ಸೈನುಗಳು ನಮಗೆ ಗೊತ್ತಿದ್ದೋ ಗೊತ್ತಿರದೆಯೋ decision ಬೇಡುವ critical point ಗಳಾಗಿ ಕಂಡುಬರುತ್ತಿವೆ. ಟೂ-ವೇ, ಥ್ರೀ-ವೇ, ಅಥವಾ ಫೋರ್-ವೇ ಸ್ಟಾಪ್ ಸೈನುಗಳಲ್ಲಿ ಯಾವಾಗ ನಿಲ್ಲಿಸಬೇಕು, ಯಾವಾಗ ಹೊರಡಬೇಕು, ಎತ್ತ ನೋಡಬೇಕು ಎಲ್ಲವೂ ನಿಮ್ಮದೇ ಆದ ನಿರ್ಧಾರದ ಮೇಲೆ ಅವಲಂಭಿತವಾಗಿವೆ. ನೀವು ಕಾರಿನಲ್ಲಿ ಕುಳಿತು ಏನೇ ಮಾಡುತ್ತಿರಲಿ, ಯಾವುದೇ ಲೋಕದಲ್ಲಿರಲಿ - ಅದರಿಂದ ಕ್ಷಣಕಾಲವಾದರೂ ಹೊರಗೆ ಬಂದು ಅತ್ತಿತ್ತ ನೋಡಿ, ಶಾಸ್ತ್ರೋಕ್ತವಾಗಿ ಪ್ರತಿಯೊಂದು ಸ್ಟಾಪ್ ಸೈನಿಗೂ ವಿದಾಯ ಹೇಳಿ ಹೊರಡುವ ಪರಿ ಇದೆ ನೋಡಿ ಅದು ನಿಜವಾಗಿಯೂ ನಿಮ್ಮ ಸಂಕಲ್ಪವನ್ನು ಬೇಡುವಂತದ್ದು, ಇದೇ ರೀತಿ ನಗರದ ವಲಯದಲ್ಲಿ ಒಂದರ್ಧ ಘಂಟೆ ಕಾರು ಓಡಿಸಿಕೊಂಡು ಹೋದರೆ ನಿಮಗೆ ಸುಸ್ತಾಗುವುದೂ ಅಲ್ಲದೇ ಕೊನೆಗೆ ಇಡೀ ಊರು, ಕೇರಿ, ವಾತಾವರಣದಲ್ಲಿ ನೆನಪಿರುವುದು ಒಂದೇ - STOP ಎನ್ನುವ ಅಷ್ಟಭುಜಾಕೃತಿಯ ಷಡ್‌ಯಂತ್ರ! ನಾನು ಎಷ್ಟೋ ಸಾರಿ ಯೋಚಿಸಿದ್ದೇನೆ, ಈ ಸ್ಟಾಪ್ ಸೈನ್ ಅನ್ನು ಅಷ್ಟಭುಜಾಕೃತಿಯನ್ನಾಗಿಯೇ ಏಕೆ ಮಾಡಿದರು, ತ್ರಿಕೋನ, ಪಂಚಭುಜ, ಷಡ್ಭುಜಗಳೇಕೆ ಅಲ್ಲ ಎಂದು... ಅಷ್ಟುಭುಜಗಳಲ್ಲಿ ನಾಲ್ಕು ಭುಜಗಳು ನಾಲ್ಕು ದಿಕ್ಕುಗಳನ್ನೂ ಪ್ರತಿನಿಧಿಸಿ, ಇನ್ನೆರೆಡು ಮೇಲೆ ಮತ್ತು ಕೆಳಗಿನ ಲೋಕದಿಂದ ನಿಮ್ಮನ್ನು ಹೊರಗೆ ತಂದು ಆ ಕ್ಷಣದಲ್ಲಿ ಬೇಡುವ ಸ್ಥಳೀಯ ಲೌಕಿಕತೆಯನ್ನು ಸೃಷ್ಟಿಸುವ ಅಥವಾ ಹೇರುವ ಪ್ರತಿನಿಧಿಗಳಾಗಿ ಕಂಡುಬಂದು, ಮತ್ತೆರಡು ನಿಮ್ಮನ್ನು ಹತೋಟಿಯಲ್ಲಿಡುವ ಸರದಾರರಂತೆ ತೋರುತ್ತವೆ. Rolling stop ಮಾಡಿಕೊಂಡು ನಿಂತಹಾಗೆ ಮಾಡಿ ಹೊರಟರೂ ಹೊರಡದಿದ್ದರೂ ನೀವು ಎಷ್ಟೇ ಜಾಗರೂಕರಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ಐದಲ್ಲ, ಕೊನೆಗೆ ಎರಡು ಸ್ಟಾಪ್ ಸೈನುಗಳನ್ನು ನೀವು ದಾಟಿಕೊಂಡು ಮುಂದೆ ಹೋದರೂ (ಹಾಗೆ ಹಿಂದೆ ಬಂದರೂ), ವರ್ಷಗಳು ಕಳೆದ ಮೇಲೆ (ಅಂದರೆ ಐದು, ಹತ್ತು, ಇಪ್ಪತ್ತೈದು...) ನಿಮ್ಮ ಧಕ್ಷತೆ ದಿನೇದಿನೇ ಕಡಿಮೆಯಾಗಿಹೋಗುತ್ತದೆ. ದಿನವೂ ಸ್ಟಾಪ್ ಸೈನಿಗೆ ದರ್ಶನ ಕೊಟ್ಟು ಕಲಿತು ಬೆಳೆದು ನಿಪುಣತೆಯನ್ನು ಪಡೆಯುವುದಿರಲಿ, ವಯಸ್ಸಾಗುತ್ತಿದ್ದ ಹಾಗೆ ಹಿಂದಿನವರು ಹಾರ್ನ್ ಬಜಾಯಿಸುವ ವರೆಗೆ ನೀವು ಸ್ಟಾಪ್ ಸೈನಿನಲ್ಲಿ ಅತ್ತಿತ್ತ ನೋಡುತ್ತಾ ವಿಜ್ಞಾನಿಯ ಮುಖ ಮಾಡಿಕೊಂಡು ಅದೇನೋ ಮಹಾ ಸೂತ್ರವನ್ನು ಬಿಡಿಸುವವರ ಹಾಗೆ ಕಂಡುಬರುತ್ತೀರೇ ವಿನಾ ಸ್ಟಾಪ್ ಸೈನನ್ನು ಬಿಟ್ಟು ಒಂದಿಂಚೂ ಕದಲಿರುವುದಿಲ್ಲ. ದಿನವೂ ಉಪಯೋಗಿಸುವ ಕಂಪ್ಯೂಟರುಗಳು ನಮ್ಮ ವರ್ತನೆಯಿಂದ ಏನನ್ನು ಕಲಿಯದಿದ್ದರೂ ಒಂದು ರೀತಿ ನ್ಯೂಟ್ರಲ್ ಆಗಿಯಾದರೂ ಇರುತ್ತವೆ, ಆದರೆ ಈ ಸ್ಟಾಪ್ ಸೈನುಗಳಿಂದ ನಾವು ಕಲಿಯುವುದೇನೂ ಖಂಡಿತವಾಗಿ ಇಲ್ಲ, ಬದಲಿಗೆ ಎಫಿಷಿಯನ್ಸಿಯನ್ನು ಕಳೆದುಕೊಂಡ ಛಳಿಯಲ್ಲಿ ಸೊರಗಿದ ಹೀಲಿಯಂ ತುಂಬಿದ ಬೆಲೂನಿನಂತಾಗಿ ಮನಸ್ಸು-ಮಿದುಳು ಆಗಿ ಹೋಗುವುದೇ ಹೆಚ್ಚೇನೋ ಎನ್ನಿಸಿದ್ದೂ ಇದೆ.

ಹೀಗಾಗಿಯೇ ಇತೀಚೆಗೆ ನಾನು ಟ್ರಾಫಿಕ್ ಲೈಟುಗಳ ಫ್ಯಾನ್ ಆಗಿರುವುದು. ನೀವೇನೂ ನಿರ್ಧಾರ ಮಾಡಬೇಕಾಗಿಲ್ಲ, ಸ್ವಲ್ಪ ಆಚೀಚೆ ನೋಡುವ ಅಗತ್ಯ ನೆರೆಹೊರೆಯಿಂದ ನೆರೆಹೊರೆಗೆ ಬದಲಾಗಬಹುದಾದರೂ ನಿಮ್ಮ ಪಾಡಿಗೆ ನೀವಿರಬಹುದು, ನಿಮಗೋಸ್ಕರ ಯಾರೋ ಡಿಸಿಶನ್ ಮಾಡುತ್ತಾರೆ, ನಿಮ್ಮ ಮುಂದಿನವರನ್ನು ಅನುಸರಿಸಿಕೊಂಡು ನಿಮ್ಮಷ್ಟಕ್ಕೆ ನೀವು ಹೋದರೆ/ಇದ್ದರೆ ಆಯಿತಪ್ಪಾ, ಸ್ವರ್ಗದಲ್ಲಿ ಇದಕ್ಕಿಂತ ಹೆಚ್ಚು ಸುಖವೆನ್ನುವುದೇನೂ ಇಲ್ಲ! ಸಿಗ್ನಲ್ ಲೈಟಿನಲ್ಲಿ ಕುಳಿತು ತಪಸ್ಸನ್ನು ಮಾಡಿದರೂ, ಧ್ಯಾನವನ್ನು ನಡೆಸಿಕೊಂಡು ಬಂದರೂ, ಅಥವಾ 'ಅತ್ತಿತ್ತ ನೋಡದಂತೆ ಅಂಧಕನ ಮಾಡಯ್ಯಾ ತಂದೆ' ಎಂದು ಹಾಡಿದರೂ ದಿನ, ತಿಂಗಳು, ವರ್ಷಗಳುರುಳಿದ ಬಳಿದ ನಿಮ್ಮ ಬೇಡಿಕೆ ಈಡೇರಿದರೂ ಈಡೇರಬಹುದು. Minding my own business, ದಾರಿಯಲ್ಲಿ ಯಾರು ದಾಟಿದರೇನು ಬಿಟ್ಟರೇನು; ಎದುರುಗಡೆಯಿಂದ ವೆಹಿಕಲ್ ಬರುತ್ತದೆಯೋ ಬಿಡುತ್ತದೆಯೋ, ಕುತ್ತಿಗೆ ನರಗಳು ಅತ್ತಿತ್ತ ತಿರುಗಿ ನೋಡುವ ದುಃಖದಿಂದ ತಪ್ಪಿಸಿದ್ದಕ್ಕಾಗಿ ಥ್ಯಾಂಕ್ಯು ಎಂದು ಹೇಳುವುದೂ ಅಲ್ಲದೇ ನೀವು ಹೀರುತ್ತಿರುವ ಕಾಫಿಯನ್ನು ಹೆಚ್ಚು ರುಚಿಯಾಗಿ ಕಾಣಿಸುವಂತೆ ನಾಲಿಗೆಯ ಟೇಸ್ಟ್ ಬಡ್‌ಗಳಿಗೆ ಅದೇಶವನ್ನೂ ಕೊಡುತ್ತವೆ, ಅಥವಾ ಟೇಸ್ಟ್ ಬಡ್‌ಗಳು ಕಳಿಸಿದ ರುಚಿಯ ಸಂದೇಶವನ್ನು ಇಮ್ಮಡಿಯಾಗಿ ಮಿದುಳು ಮಾಸ್ಟರಿಗೆ ತಲುಪಿಸುತ್ತವೆ ಆಗ ಆ ಕೆಫೀನಿನ ಕಿಕ್ಕೂ ಇಮ್ಮಡಿಯಾಗಿ ಇನ್ನೂ ಎಷ್ಟೋ ಭಯಂಕರ ಐಡಿಯಾಗಳು ನಮಗೆ ಗೊತ್ತಿಲ್ಲದ ಹಾಗೆ ಸೆರೆಬೆಲ್ಲಮ್ಮ್‌ನಲ್ಲಿ ದಾಖಲಾಗುತ್ತವೆ! ಪ್ರಪಂಚದಲ್ಲಿನ ಜನರು ಕಾರು ಓಡಿಸುವಾಗ ಹುಟ್ಟಿ ಎಲ್ಲೋ ಅಡಗಿಕೊಳ್ಳುವ ಐಡಿಯಾಗಳನ್ನು, ಆಲೋಚನೆಗಳನ್ನೆಲ್ಲ ಹಿಡಿದು ಸಂಗ್ರಹಿಸಿ, ಪ್ರಾಸೆಸ್ಸು ಮಾಡಿದ್ದೇ ಆದರೆ ಪ್ರಪಂಚದ ಎಲ್ಲ ನೋವಿಗೂ ಅದರಲ್ಲಿ ಸಮಾಧಾನವಿದೆ ಹಾಗೂ ಎಂತಹ ಸಂದರ್ಭವನ್ನೂ ಗೆಲ್ಲುವ ಆಶ್ವಾಸನೆ ಸಿಗುತ್ತವೆ ಎನ್ನುವುದು ಹೀಗೇ ಕಾರಿನಲ್ಲಿ ಕುಳಿತಾಗ ಹುಟ್ಟಿ ಬೆಳೆದು ಈಗ ಪ್ರಬುದ್ಧವಾಗಿರುವ ನನ್ನ ಅಂಬೋಣ!

STOP ಸೈನುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸಿದ ಸಂದರ್ಭಗಳು ಅನುಪಾತದ ಲೆಕ್ಕದಲ್ಲಿ ನಿಂತು ಹೊರಡುವ ಹಾಗೆ ಮಾಡಿದ ಸಂದರ್ಭಗಳಿಗೆ ಹೋಲಿಸಿದರೆ ಬಹಳ ಕಡಿಮೆ. ಆದರೆ ಟ್ರಾಫಿಕ್ ಲೈಟುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಮಾಣವೇ ಹೆಚ್ಚು. ಅಂದರೆ "STOP" ಎನ್ನುವ ತಲೆ ಬರಹವನ್ನು ಹಗಲು-ರಾತ್ರಿ ಹೊತ್ತು ನಿಂತರೂ ಯಾರೂ ಗೌರವ ಕೊಡದಿರುವ ಇಂತಹವುಗಳನ್ನು ನಾನು ಮಿತ್ರರನ್ನಾಗಿ ಸ್ವೀಕರಿಸಬೇಕೇಕೆ? ಇವುಗಳಿಂದಾಗಿ ನನ್ನ ಕಾಫಿ ರುಚಿ ಅರ್ಧಕ್ಕರ್ಧ ಕಡಿಮೆಯಾಗಿರುವುದೂ ಅಲ್ಲದೇ ರೇಡಿಯೋ ಸ್ಟೇಷನ್ನುಗಳಲ್ಲಿ ಬರುವ ವರದಿ ಫಸ್ಟ್ ಪಿಯುಸಿಯ ಟ್ರಿಗನೋಮೆಟ್ರಿ ಲೆಕ್ಚರ್‌ನಂತೆ ಕಂಡುಬರುತ್ತಿದೆ. ಈ ಕೆಂಪು ಸೈನ್ (ಬೋರ್ಡು) ನನ್ನಲ್ಲಿ ಕೆಂಪು ಬಣ್ಣವನ್ನೂ ಅಸಡ್ಡೆ ಮಾಡುವ ಮನೋಭಾವವನ್ನು ಮೂಡಿಸಿವೆ. ಈ ಪ್ರಪಂಚದಲ್ಲಿರುವ ಸ್ಟಾಪ್ ಸೈನುಗಳನ್ನೆಲ್ಲ ತೆಗೆದು ಬಿಸಾಡಿಬಿಟ್ಟರೆ ಹೇಗೆ? ಇವು "STOP" ಎಂದು ಯಾರಿಗೆ ಆದೇಶವನ್ನು ಕೊಡುತ್ತಿವೆ, ನನ್ನಂತಹವರನ್ನು ನಿಲ್ಲಿಸಲು ಇವು ಯಾರು, ಇವುಗಳ ಹಕ್ಕೇನು? ಇವುಗಳ ಅಷ್ಟಕೋನಗಳಲ್ಲಿ ಯಾವ ಯಾವ ಷಡ್‌ಯಂತ್ರ ಅಡಗಿದೆಯೋ ಯಾರು ಬಲ್ಲರು? ಎಂಟೂ ಕಡೆಯಿಂದ ಒತ್ತಡವನ್ನು ಹೇರುವ ಇವುಗಳ ಆಟ ಅತಿಯಾಯಿತಪ್ಪಾ ಎಂದು ಅನ್ನಿಸೋದಿಲ್ಲವೇ?

ನಾನೊಬ್ಬ ಮುಕ್ತ ಜೀವಿ, ಡ್ರೈವಿಂಗ್ ಮಾಡುವುದು ನನ್ನ ಹಕ್ಕಲ್ಲ, ಅದು ನನ್ನ ಪ್ರಿವಿಲೇಜ್ ಎಂದು ಗೊತ್ತಿದೆ, ಆದರೆ ಸುಖಾಸುಮ್ಮನೆ ಸ್ಟಾಪ್ ಎಂದು ಕಾಪಿಟಲ್ ಲೆಟರುಗಳಲ್ಲಿ ಕೆಂಪು-ಬಿಳಿ ಬಣ್ಣದ ಈ ಸೈನುಗಳನ್ನು ಯಾರಾದರೂ ಕಿತ್ತು ಹಾಕಿ, ಕೊನೇಪಕ್ಷ ಏನಿಲ್ಲವೆಂದರೂ ಬಣ್ಣವನ್ನು ಬದಲಿಸಿ, "Stop" ಎಂದು ತಿದ್ದಿ, ಪ್ಲೀಜ್!

Thursday, March 08, 2007

ದೊಡ್ಡ ಮನುಷ್ಯರಾದ ಹಾಗೆ...

ದೊಡ್ಡ ಮನುಷ್ಯರಾದ ಹಾಗೆ ಆಫೀಸಿಗೆ ಬೆಳಿಗ್ಗೆ ಬೇಗ ಬರಬೇಕು ಹಾಗೂ ಸಂಜೆ ಆಫೀಸಿನಲ್ಲಿ ಲೇಟ್ ಆಗಿ ಇರಬೇಕು ಅಂತ ರೂಲ್ಸ್ ಏನಾದರೂ ಇದೆಯಾ ಅಂತ ಎಷ್ಟೋ ಸರ್ತಿ ಯೋಚ್ನೆ ಬಂದಿದ್ದಿದೆ. ಕೆಲವೊಂದ್ ಸರ್ತಿ ಆಫೀಸಿಗೆ ನಾನೇನಾದ್ರೂ ತಡವಾಗಿ ಬಂದಿದ್ದೇ ಆದ್ರೆ ಪಾರ್ಕಿಂಗ್ ಲಾಟ್‌ನಲ್ಲಿ ಎಲ್ಲೋ ಒಂದೂ ಸ್ಪಾಟ್ ಸಿಗದೇ ಆ ಕಡೆ ಈ ಕಡೆ ಓಡಾಡೋದು ಒಂದು ರೀತಿ ಹೈ ಸ್ಕೂಲಿನಲ್ಲಿ ತಡವಾಗಿ ಬಂದೋರಿಗೆ ಮೇಷ್ಟ್ರು ಶಿಕ್ಷೆ ಕೊಡುತಿದ್ರಲ್ಲ ಹಾಗೆ ಅನ್ಸುತ್ತೆ.

ನಾನು ಗಮನಿಸಿದ ಹಾಗೆ ನಮ್ಮ ಆಫೀಸಿನಲ್ಲಿರೋ ದೊಡ್ಡ ಮನುಷ್ಯರಿಗೆಲ್ಲ ಹಲವಾರು ಕಾಮನಾಲಿಟಿಗಳಿವೆ: ಒಳ್ಳೊಳ್ಳೆಯ ಕಾರು, ಎಸ್.ಯು.ವಿ.ಗಳನ್ನು ಆಫೀಸಿಗೆ ಹೋಗೋ ಬಾಗಿಲ ಬಳಿಯೇ ಪಾರ್ಕ್ ಮಾಡಿರೋದು, ಬೇಗ ಬಂದು ತಡವಾಗಿ ಹೋಗೋದು, ಯಾವಾಗ ನೋಡಿದ್ರೂ ಸೂಟ್ ಹಾಕ್ಕೋಂಡೇ ಇರೋದು, ದೊಡ್ಡ ದೊಡ್ಡ ಪ್ರಶ್ನೆಗಳನ್ನ ಕೇಳೋದು, ಮಾತೆತ್ತಿದ್ರೆ ಮಿಲಿಯನ್ ಡಾಲರ್ ಅನ್ನೋದು, ಇತ್ಯಾದಿ. ನಾನು ಈ ದೇಶದಲ್ಲಿರೋವರೆಗೆ ಈ ರೀತಿ 'ದೊಡ್ಡ'ವನಾಗೋದಿಲ್ಲ ಅಂತ ಮೊನ್ನೆ ತಾನೆ ನನ್ನ ನೈಜೀರಿಯನ್ ಸಹೋದ್ಯೋಗಿ ನೆನಪಿಸಿದ, ಅವನ ಹೇಳಿಕೆ ಪ್ರಕಾರ ನಾನು ಭಾರತದಲ್ಲೇನಾದ್ರೂ ಕೆಲಸ ಮಾಡಿ ಅಲ್ಲೇ ಇದ್ರೆ ಅಲ್ಲಿ ಪ್ರಸಿಡೆಂಟೋ ಮತ್ತೂಂದೋ ಆಗ್‌ಬಹುದಂತೆ, ಇಲ್ಲಿ ನನ್ನಂತಹವರು ಮೇಲೆ ಹೋಗೋಕೆ ಹೇಗೆ ಸಾಧ್ಯ?

ನಿಜವಾಗಿ ಮೇಲೆ ಹೋಗ್ಲೇ ಬೇಕೇ? ಮೇಲೆ ಹೋದ ಮೇಲೆ ಇನ್ನೇನ್ ಆಗುತ್ತೋ ಬಿಡುತ್ತೋ, ನನ್ನ ಹತ್ರ ಇರೋ ಸಾಲ ಇನ್ನಷ್ಟು ಬೆಳೀದೇ ಇದ್ರೆ ಸಾಕಪ್ಪಾ! ಈ ಅಮೇರಿಕದಲ್ಲಿ ಏನಿಲ್ಲಾ ಅಂದ್ರು ಜೋಬಿನ ತುಂಬಾ ಕಾರ್ಡುಗಳು, ತಲೆ ತುಂಬಾ ಸಾಲದ ಹೊರೆ ಇವೆಲ್ಲಾ ಮಾಮೂಲಿ. ನಮ್ಮ ತಾತ ಬದುಕಿದ ಹಾಗೆ ಸಾಲ ಮುಕ್ತನಾಗಿ ಬದುಕೋದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸತ್ತೆ ಕೆಲವೊಮ್ಮೆ.

ದೊಡ್ಡ ಮನುಷ್ಯರಾದ ಮೇಲೆ ಇನ್ನೇನ್ ಆಗುತ್ತೋ ಬಿಡುತ್ತೋ ಅಂತ ಕಲ್ಪನೆ ಮಾಡ್ಕೊಳ್ತಾ, ಮಾಡ್ಕೊಳ್ತಾ...ಇನ್ನೆಲ್ಲಿ ಯಾವ್ದಾದ್ರೂ ದೊಡ್ಡ ಮನುಷ್ಯರು ಬಂದು ದೊಡ್ಡ ಪ್ರಶ್ನೆ ಕೇಳ್ತಾರೋ ಅಂತ, ನಿಧಾನವಾಗಿ ಆಫೀಸಿನಿಂದ ಜಾಗ ಖಾಲಿ ಮಾಡ್ತೀನಿ!

(ಯಾವ್ದೋ ದೊಡ್ಡ ಮನುಷ್ಯರ ಬೋರಿಂಗ್ ಕಾಲ್ ಮಧ್ಯೆ, ಕೇವಲ ಹತ್ತೇ ನಿಮಿಷದಲ್ಲಿ ಬರೆದಿದ್ದು!)

Friday, March 02, 2007

ಕಡಿಮೆ ಸಮಯವಿದ್ದರೇನಂತೆ, ಹೆಚ್ಚು ಆಸ್ವಾದಿಸುವ ಮನಸ್ಸಿದ್ದರೆ ಆಯಿತಪ್ಪಾ!

ಸೋಮವಾರದಿಂದ ಶುಕ್ರವಾರ ಹೋಗೋದು ಅಂದ್ರೆ ಒಂದ್ ರೀತಿ ಸರತಿ ಸಾಲಿನಲ್ಲಿ ನಿಂತ ವಿಮಾನಗಳ ಹಾಗೆ ಒಂದು ವಾರ ಮುಗಿದ ಮೇಲೆ ಮತ್ತೊಂದು ವಾರ, ಅದರ ಹಿಂದೆ ಇನ್ನೊಂದು, ಮಗದೊಂದು - ಮುಗಿದೇ ಹೋಯಿತು ತಿಂಗಳು, ಹಾಗೆಯೇ ಹೋಯಿತು ವರ್ಷ! ಏನ್ ಮಾಡಿದೀಯಾ ಇಲ್ಲೀವರೆಗೆ ಅಂತ ಯಾರಾದ್ರೂ ಕೇಳಿದ್ರೆ 'ಟೈಮ್ ಇಲ್ಲಾರೀ' ಅಂತ ಹೇಳೋದೊಂದನ್ನು ಬಿಟ್ಟು ಮತ್ತೇನನ್ನೂ ಮಾಡ್ಲೇ ಸಾರ್.

'ಥೂ, ಅವನೌವ್ನ...ಈ ಟೈಮಿಗೇನ್ ಮಾಡ್ಬೇಕು?' ಅಂತ ನಮ್ಮೂರಿನವರು ಯಾರೋ ಕಿವಿ ಹಿಂದುಗಡೆ ಬಂದು ಕೇಳಿದಂಗಾಯ್ತು, ಹಿಂದೆ ತಿರುಗಿ ನೋಡಿದ್ರೆ ಯಾರೂ ಇರ್ಲಿಲ್ಲ. ಅಮೇಲ್ ಅನ್ನಿಸ್ತು, ಅದು ನಂದೇ ಧ್ವನಿ - ಒಂದೊಂದು ಸರ್ತಿ ನಾವ್ ನಾವ್ ಮಾಡೋ ಕರ್ಮಕ್ಕೆ ಒರಟು ಮಾತು ಬ್ಯಾಡಾ ಅಂದ್ರು ಬಂದ್ ಬಿಡುತ್ತೆ. ಆದ್ರೆ ಈ ಬೈಗಳ ಒಳಗಿನ ಸುಖವೇ ಬೇರೆ, ಅದೇನೆ ಇದ್ರೂ ಮನದೊಳಗಿನ ಮಾತನ್ನ ಹೇಳೋ ಒಂದು ವಿಧಾನ ಅಥವಾ ಭಾಷೆ ಕಂಡುಕೊಂಡ ಒಂದು ಹೊಸ ಆಯಾಮ ಅಂತ ದೊಡ್ಡ ಮಾತ್ನಲ್ಲ್ ಹೇಳ್ಳೋ? ಅಥವಾ ನಾವಿರೋದೇ ಹಾಗೆ, ಒರಟು ಮಾತು ಬಿಟ್ರೆ ಬೇರೇನೂ ಬರೋದೇ ಇಲ್ಲ, ಅಂತ ಇರೋ ವಿಷ್ಯಾನ ಇದ್ದ್ ಹಾಗೆ ಹೇಳ್ಳೋ?

ನನ್ನ ಕಾರಿನಲ್ಲ್ ಕುಳಿತೋ, ಆಫೀಸ್ ಕ್ಯೂಬಿನಲ್ಲಿ ಕುಳಿತೋ, ಮನೆಯ ಕುರ್ಚಿಯ ಮೇಲೆ ಕುಕ್ಕರಿಸಿಯೋ, ನಾನು ಮಾಡ್ತೀನಲ್ಲಾ ಹಾಗೆ - ಪ್ರಪಂಚದ ಆಗುಹೋಗುಗಳಿಗೆಲ್ಲಾ ಸ್ವಂದಿಸೋ ಹಾಗೇನಾದ್ರೂ ನೀವೂ ಆಡೋರಾದ್ರೆ - ನಿಮಗೆ ಪ್ರಪಂಚದ ಎಲ್ಲ ಜನರ ಟೈಮನ್ನ ಗುಡ್ಡೇ ಹಾಕ್ ಕೊಟ್ರೂ ಸಾಕಾಗೋದಿಲ್ಲ ನೋಡಿ! ಅದರ ಬದಲಿಗೆ ಒಂದಿಷ್ಟು ನಮ್ಮದೇ ಆದ nitch ಕಂಡ್‌ಕೋಬೇಕು, ಅದರಲ್ಲೇನಾದ್ರೂ ಸಾಧಿಸಿಕೋಬೇಕಪ್ಪಾ, ಆಗ ಎಲ್ಲ ಟೈಮೂ ನಿಮ್ಮ ಬಳಿ ಇದ್ದೇ ಇರತ್ತೆ. ನಿಮಗೆ ಬೆಳಿಗೆ ಒಂಭತ್ತು ಘಂಟೆಯಿಂದ ಸಂಜೆ ಐದು ಘಂಟೆವೆರೆಗಿನ ಎಂಟು ಘಂಟೆಗಳು ಎಷ್ಟು ದೊಡ್ಡ ಸಮಯ ಅಂತ ಅನುಭವಕ್ಕೇನಾದ್ರೂ ಬರಬೇಕು ಅಂದ್ರೆ ನಾನು ಹೇಳ್ದೇ ಅಂತ ಒಂದು ಸಣ್ಣ ಪ್ರಯೋಗಾ ಮಾಡಿ - ಒಂದು ದಿನ ಆಫೀಸಿಗೆ ರಜೆ ಹಾಕಿ, ಮನೆಯಲ್ಲಿ ಸುಮ್ನೇ ಕುಳಿತುಕೊಳ್ಳಿ, ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಓದಿ, ಇಲ್ಲಾ CNBC ಚಾನೆಲ್ ನೋಡಿ, ಇಲ್ಲಾ ಎರಡನ್ನೂ ಮಾಡಿ. ನಡುವೆ ನಿಸರ್ಗ ನಿಯಮದ ಬ್ರೇಕ್‌ಗಳನ್ನು ತೆಗೆದುಕೊಳ್ಳಿ...ಆಗ ಗೊತ್ತಾಗುತ್ತೆ ಎಂಟೊಂಭತ್ತು ಘಂಟೆಗಳು ಅದೆಷ್ಟು ಬೇಗ ಓಡ್ತಾವೆ ಅಂತ! ದಿನಗಳು ನಿಮಗೆ ಬೇಗ ಬೇಗ ಓಡಿ ಹೋಗ್ತಾವೆ ಅಂತ ಅನ್ನಿಸಿದ್ರೆ ಅಂದು ಒಳ್ಳೆಯ ವಿಷಯವೇ ಇರಬಹುದು, ನೀವು ವ್ಯಸ್ತರಾಗಿದ್ರೆ (busy), ನಿಮ್ಮ ಅಸ್ತವ್ಯಸ್ತತೆಯಲ್ಲಿ ಸಮಯ ಓಡಿಹೋಗಿದ್ದೇ ಗೊತ್ತಾಗಲ್ಲ, ಅಥವಾ ಸುತ್ತಲನ್ನು ನೀವು ಗಮನಿಸೋದೇ ಇಲ್ಲ.

ಸೂರ್ಯ ಹುಟ್ತಾನೆ, ಮುಳುಗ್ತಾನೆ - ಅದರಲ್ಲೇನು ವಿಶೇಷ ಅಂತ ಯಾಕ್ ಅಂದುಕೋಬೇಕು? ಬೀಳೋ ಮಳೆ ಹನಿಗಳನ್ನಾಗಲೀ, ಸ್ನೋ ಪ್ಲೇಕ್ಸ್‌ಗಳನ್ನಾಗಲೀ ಯಾಕ್ ನೋಡ್‌ಬೇಕು ಅಂತ ನನ್ನನ್ನೇನಾದ್ರೂ ನೀವು ಕೇಳಿದ್ರೆ ನಿಮಗೆ ನಿಜವಾಗ್ಲೂ ತೊಂದ್ರೆ ಇದೆ ಅಂತ್ಲೇ ನಾನು ಹೇಳೋದು. ಒಂದು ದಿನ ಮಳೆಯಲ್ಲಿ ನೆನೆದುಕೊಂಡೇ ಪಾರ್‌ಕಿಂಗ್ ಮಾಡಿ ಮನೆಗೆ ಬನ್ನಿ, ಮುಖದ ಮೇಲೆ ಬೀಳೋ ಮಳೆ ಹನಿಗಳು ನಿಮಗೇನಾದ್ರೂ ಗುಟ್ಟನ್ನು ಹೇಳ್ತಾವೋ ಕಾದು ನೋಡಿ. ಅದೂ ಬ್ಯಾಡಪ್ಪಾ, ಇನ್ನೇನು ಚೈತ್ರ ಮಾಸ ಬಂತು ತಾನೆ, ನಿಮ್ಮನೇ ಸುತ್ತಲಿರೋ ಮರದ ಎಲೆಗಳು ನಿಧಾನವಾಗಿ ಚಿಗುರೋ ಪ್ರಕ್ರಿಯೆಯನ್ನ ದಿನಕ್ಕೊಮ್ಮೆಯಾದ್ರೂ ಗಮನಿಸಿ, ಒಂದೇ ಒಂದ್ ವಾರ ನೀವು ಹೀಗೆ ಮಾಡಿದ್ದೇ ಅದ್ರೆ, ನಿಮ್ಮ ಮನದ ದುಗುಡ-ದುಮ್ಮಾನಗಳೆಲ್ಲಾ ೧೦ ಪರ್ಸೆಂಟ್ ಕಡಿಮೆಯಾಗ್ತಾವೆ ಅಂದುಕೊಳ್ಳಿ, ನಾನ್ ಗ್ಯಾರಂಟಿ ಕೊಡ್ತೀನಿ!

ಟೈಮಿಗ್ಯಾಕ್ ಬೈಯಬೇಕ್ ಹೇಳಿ? ಎಲ್ಲರಿಗೂ ಇರೋ ಸಮಯ ಇಷ್ಟೇ ಅಂತ ನಿಸರ್ಗ ಸಮತಾವಾದ ಸಾರಿರೋವಾಗ ಅದನ್ನ ಹೇಳಿಯಾಗಲೀ, ಹಳಿದುಕೊಂಡಾಗಲೀ ಏನು ಬಂದೀತು? ಕಡಿಮೆ ಸಮಯವಿದ್ದರೇನಂತೆ, ಸುತ್ತಲನ್ನು ಆಸ್ವಾದಿಸುವ ಮನಸ್ಸಿದ್ದರಾಯಿತ್ತಪ್ಪಾ. ನೀವು ನಾಳೆ ಡ್ರೈವ್ ಮಾಡ್ತೀರಲ್ಲ, ಆಗ ಬರೀ ರಸ್ತೆಯನ್ನ ನೋಡ್ದೇ ಸುತ್ತಮುತ್ತಲೂ ಸ್ವಲ್ಪ ನೋಡಿ, ಏನಾದ್ರೂ ವಿಶೇಷವಾಗಿದ್ದು ಕಂಡು ಬಂದ್ರೆ ನಮಗೂ ಸ್ವಲ್ಪ ತಿಳಿಸಿ, ಆಯ್ತಾ?

Thursday, March 01, 2007

ಮಾರ್ಚ್ ತರುವ ಸುಖಾನುಭವ

ಒಂದು ವಾರದ ಹಿಂದೆ ನಮ್ ಆಫೀಸ್‌ನಲ್ಲಿ 'ನಾನೂ ಜಿಮ್‌ಗೆ ಹೋಗ್ತೀನಿ ಇನ್ನ್‌ಮೇಲೆ' ಎಂದು ಕಣ್ಣುಗಳನ್ನು ಅಗಲಿಸಿ ಸಾರ್ವಜನಿಕವಾಗಿ ಸಾರಿಕೊಂಡು ನೆಲದಿಂದ ಮೂರಡಿ ಮೇಲೆ ಹಾರಿಹೋಗುತ್ತಿದ್ದ ನನ್ನನ್ನು 'when do you have time for that?' ಸಹೋದ್ಯೋಗಿಯೊಬ್ಬಳ ಹಿನ್ನೆಲೆಯಲ್ಲಿ ಬಂದ ಪ್ರಶ್ನೆ ದಿಢೀರನೆ ನನ್ನನ್ನು ಭೂಮಿಗೆ ಕರೆದುಕೊಂಡು ಬಂದಿದ್ದೂ ಅಲ್ಲದೇ ಪಾತಾಳ ಮಾರ್ಗವನ್ನೂ ನಿಚ್ಚಳವಾಗಿ ತೋರತೊಡಗಿತು. 'ಅದು ಮಾಡ್ತೀನಿ, ಇದು ಮಾಡ್ತೀನಿ, ಅದು ಮಾಡಬಲ್ಲೆ, ಇದನ್ನು ಮಾಡಬಲ್ಲೆ...' ಎನ್ನುವ ಎಲ್ಲ ಸ್ವರಗಳಿಗೂ ಉತ್ತರವಾಗಿ 'ಮಾಡಿದ್ದಿಷ್ಟೇ' ಎನ್ನುವ ವಾಸ್ತವ ಇತ್ತೀಚೆಗೆ ಕನ್ನಡಿಯನ್ನು ನೋಡಲೂ ಹೆದರಿಕೆಯನ್ನು ಹುಟ್ಟಿಸಿಬಿಟ್ಟಿದೆಯೇನೋ ಅನ್ನಿಸಿದ್ದೂ ಇದೆ. ಏಕೆಂದರೆ ಇಂತಹ ಸನ್ನಿವೇಶಗಳೇ ನನ್ನ ಹಾಗೂ ಕನ್ನಡಿಯಲ್ಲಿನ ಪ್ರತಿಬಿಂಬದ ನಡುವಿನ (ದ್ವಿಗುಣಗೊಂಡ ದೂರದಲ್ಲಿ) real ಮತ್ತು imaginary ಅವಕಾಶದಲ್ಲಿ ಹೊಸ ತಾಲೀಮು ನಡೆಸುವ ಅಮೆಚೂರ್ ಕಲಾವಿದರನ್ನು ಹುಟ್ಟಿಸೋದು.

But, ಎಲ್ಲ ಬಾಹ್ಯ ಕ್ರಿಯೆಗಳಿಗೂ, 'ಅಂತರಂಗ'ದ ಸಂವೇದನೆಗಳಿಗೂ ನಿಸರ್ಗದ ಯಾವುದಾದರೊಂದು ಬದಲಾವಣೆಯನ್ನು ಅನುವು ಮಾಡಿಕೊಂಡು 'ನಾಳೆಯಿಂದ ಹೀಗಾಗುತ್ತದೆ, ಹಾಗಾಗುತ್ತದೆ...' ಎಂದು ಮಂಡಿಗೆ ಮೇಯದಿದ್ದರೆ ಅದು ಬದುಕಾಗುವುದಾದರೆ ಹೇಗೆ? ಈ ಮಾತು ಹೇಳೋದಕ್ಕೆ ಕಾರಣಗಳು ಬೇಕಾದಷ್ಟಿವೆ: ಪ್ರತಿಯೊಂದು ಹೊಸ ಚೈತ್ರ ಮಾಸ ಯಾರು ಯಾರಿಗೆ ಏನೇನನ್ನು ಮಾಡಿದೆಯೋ ನನ್ನ ಬದುಕಿನಲ್ಲಂತೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ, ತರಬಲ್ಲದು...ಪ್ರಕೃತಿಯಲ್ಲಿನ ವ್ಯವಸ್ಥಿತ ಬದಲಾವಣೆಗಳಿಂದ ಹಿಡಿದು, ಆರ್ದ್ರತೆಯನ್ನು ಕಳೆದುಕೊಂಡ ಗಾಳಿ ಚೇತನವನ್ನು ಪಡೆದುಕೊಂಡು ಬೇಸಿಗೆಯಲ್ಲಿ ಬಿರುಸಾಗುವುದರವರೆಗೆ, ದಿನನಿತ್ಯ ಒಂದಲ್ಲ ಒಂದು ಚಿತ್ತಾರವನ್ನು ಬಿಡಿಸಿ ಮುಂಜಾನೆ-ಸಂಜೆಗಳ ರಂಗನ್ನು ಬಟ್ಟೆ ಅಂಗಡಿಯಲ್ಲಿ ಹೊಸ ಸೀರೆ ತೋರಿಸುವ ಹುಡುಗಿ ಹೊಸ ಸೀರೆಯ ಸೆರಗನ್ನು ಕಷ್ಟಮರುಗಳಿಗೆ ಬಿಡಿಸಿ ತೋರಿಸುವ ಹಾಗೆ ಆಕಾಶದ ಮೂಲೆಯಲ್ಲಿ ಬಿಡಿಸುವ ಥರಾವರಿ ಚಿತ್ರಗಳಿಂದ ಹಿಡಿದು, ದಪ್ಪನೆ ಕೋಟು ಜಾಕೇಟುಗಳನ್ನು ಕಳೆದುಕೊಂಡು ಟಿ-ಶರ್ಟಿನಲ್ಲಿ ಬಯಲಿನಲ್ಲಿ ಆಡುವ ಮಕ್ಕಳಿಂದ ಹಿಡಿದು - ಇನ್ನೂ ಹಲವಾರು ರೀತಿಯಲ್ಲಿ ಹೊಸತನವನ್ನು ಸಾರುವ ಮಾರ್ಚ್ ಮಾಹೆಯನ್ನು ನಾನೂ ಯಾವತ್ತೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಿದ್ದೇನೆ.

ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿಗಳಲ್ಲಿ ನನ್ನೊಳಗೇ ಇರಿಸಿ ಬೇಯಿಸಿಕೊಂಡ ಹಲವಾರು ಆಲೋಚನೆಗಳು ಹೊರಬರಲಿವೆ. ಜೊತೆಯಲ್ಲಿ ಇದೇ ಮಾರ್ಚ್ ತಿಂಗಳು ನನ್ನ ಅಮೇರಿಕೆಯ ಬದುಕಿಗೂ ಅಫಿಷಿಯಲಿ ಹತ್ತು ವರ್ಷಗಳನ್ನು ಸಾರುವ ಸಂಭ್ರಮವಿದೆ. ನವೆಂಬರ್ ೨೨, ೨೦೦೫ ರಂದು 'ಅಂತರಂಗ'ವನ್ನು ತೆರೆದಿದ್ದರೂ ನಿಜವಾಗಿ ನಾನು ಇಲ್ಲಿ ಬರೆಯಲು ಆರಂಭಿಸಿದ್ದು ಮಾರ್ಚ್ ೧೬, ೨೦೦೬ ರಂದೇ - ಅದು ಕಾಕತಾಳೀಯವಾಗಿ ನಾನು ಅಮೇರಿಕೆಯಲ್ಲಿ ಕಾಲಿಟ್ಟ ಮೊದಲ ದಿನವೂ ಹೌದು! ಜೊತೆಯಲ್ಲಿ ಇದೇ ತಿಂಗಳಿನಲ್ಲಿ 'ಅಂತರಂಗ' ೨೦೦ ಲೇಖನಗಳನ್ನು ಪೂರೈಸುವ ಮೈಲಿಗಲ್ಲಿದೆ, ಜೊತೆಯಲ್ಲಿ ಹತ್ತು ಸಾವಿರ ವಿಸಿಟರ್‌ಗಳು 'ಅಂತರಂಗ'ಕ್ಕೆ ಬಂದು ಹೋದ ಅವತರಣಿಕೆಯೂ ಸಂಭವಿಸಬಹುದು. ಹಿಂದಿನ ಲೇಖನಗಳಲ್ಲಿನ ಹಾಗೆ ಕಂಡಕಂಡದ್ದನ್ನೆಲ್ಲ ಹಳಿದು 'ಹಾಗಿದ್ದರೆ ಚೆನ್ನ, ಹೀಗಿದ್ದರೆ ಚೆನ್ನ' ಎಂದು ಒಂದೇ ಸಮ ಕುಕ್ಕರಿನ ಹಾಗೆ ಕೂಗುವುದಕ್ಕಿಂದ ಬದುಕು ಪ್ರಸ್ತುತ ಪಡಿಸುವ ಹಲವಾರು ಸವಾಲು-ಸಂವೇದನೆಗಳನ್ನು ಹೊಸ ರೀತಿಯಲ್ಲಿ ತೋರಿಸಿಕೊಳ್ಳುವ ಹುನ್ನಾರವಿದೆ; ಹೀಗೆ ಬರೆಯಬೇಕು, ಹಾಗೆ ಬರೆಯಬೇಕು ಎಂದು ಕನಸು ಕಟ್ಟಿಕೊಳ್ಳುವುದಕ್ಕಿಂತ, ಮೊದಲು ಬರೆ ಆಮೇಲೆ ಕನಸಿನ ಮಾತು ಎನ್ನುವ ವಾಸ್ತವವಿದೆ...ನೋಡೋಣ.

***

Stick around and stay tuned!

Tuesday, February 20, 2007

What have you gained from all this?

ಜನವರಿ ೧೭ ರಂದು ಭಾರತದ ಪ್ರವಾಸದ ಬಗ್ಗೆ ಕಿರಿದಾಗಿ ಬರೆದಾಗ 'ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ' ಎಂದು ಬರೆದಿದ್ದೆ. ಈ ದಿನ ಅದರ ಮೇಲೆ ಸ್ವಲ್ಪ ಬೆಳಕು ಚೆಲ್ಲಿದರೆ ಹೇಗೆ ಎನ್ನಿಸಿತು.

ಎಷ್ಟೋ ವರ್ಷಗಳ ಹಿಂದೆ ಶಿವಮೊಗ್ಗ ಮಾರ್ಕೆಟ್‌ನಲ್ಲಿ ಸೇಬು ಹಣ್ಣುಗಳನ್ನು ಕೊಂಡಾಗ ನಮ್ಮನ್ನು ಬೇಸ್ತು ಬೀಳಿಸಿ ಒಳ್ಳೆಯ ಹಣ್ಣುಗಳ ಜೊತೆಗೆ ಸಾಧಾರಣ ಹಣ್ಣುಗಳನ್ನು ದಾಟಿಸಿ ತನ್ನ 'ಕೈಚಳಕ' ತೋರಿದ ವ್ಯಾಪಾರಿಯೊಬ್ಬನನ್ನು ಇಂದಿಗೂ ನೆನೆಸಿಕೊಳ್ಳುತ್ತೇನೆ. ನೀವು ಭಾರತದಲ್ಲಿ ವ್ಯವಹಾರ ಮಾಡುವಾಗ ಸೂಕ್ಷ್ಮವಾಗಿರದಿದ್ದರೆ ನಿಮ್ಮನ್ನು ಏಮಾರಿಸಿ ನೀವು ತೆರೆಳಿದ ಬಳಿಕ ಮೀಸೆ ಮೇಲೆ ಕೈ ಆಡಿಸುವವರೇ ಹೆಚ್ಚು. ಇನ್ನು ನೀವು ಎನ್.ಆರ್.ಐ. ಎಂದು ಗೊತ್ತಾದರಂತೂ ಮುಗಿದೇ ಹೋಯಿತು, ಒಂದಕ್ಕೆರಡು ಬೆಲೆ ಹಾಕುವುದು ಇರಲಿ, 'ಬೆಪ್ಪು ಮುಂಡೇವು, ಏನೂ ಗೊತ್ತಾಗೋದಿಲ್ಲ!' ಎಂಬ ಅಸಡ್ಡೆಯ ಪ್ರದರ್ಶನವೂ ರಾಜಾರೋಷವಾಗಿ ನಡೆಯುತ್ತದೆ, ಇಷ್ಟೆಲ್ಲಾ ಆದಮೇಲೂ ನನ್ನಂತಹವರು ಮುಗುಳು ನಗುತ್ತಾ 'ಥ್ಯಾಂಕ್ಯೂ' ಎಂದು ಬೇರೆ ಹೇಳುತ್ತೇವಲ್ಲ, ನಮ್ಮ ಪ್ರಾರಬ್ಧಕ್ಕೆ ಬೈದುಕೊಳ್ಳಬೇಕೇ ವಿನಾ ಮತ್ತೇನೂ ಮಾಡೋಕಾಗೋದಿಲ್ಲ.

ಒಂದು ಲೆಕ್ಕದಲ್ಲಿ ಈ ದಿನನಿತ್ಯದ ವ್ಯವಹಾರದಲ್ಲಿ ಸತ್ಯ-ಪ್ರಾಮಾಣಿಕತೆ ಅನ್ನೋದು ಸತ್ತೇ ಹೋಗಿದೆ ಎಂದೇ ಹೇಳಬೇಕು, ಸ್ಪರ್ಧಾತ್ಮಕವಾಗಿ ಬದುಕೋದು ಎಂದರೆ ಅದನ್ನು ಮೋಸ ಮಾಡಿ ಬದುಕುವುದು ಎಂದು ಬದಲಾಯಿಸಿಕೊಂಡ ಹಾಗೆ ತೋರೋದು ಕೇವಲ ನನ್ನ ಭ್ರಮೆ ಆದರೆ ಎಷ್ಟೋ ಚೆನ್ನಾಗಿತ್ತು. ಮೊದಲೇ ಹೆಚ್ಚು ಜನರಿರುವ, ಎಲ್ಲಿ ಹೋದರೂ 'ನೆಕ್ ಟು ನೆಕ್' ಸ್ಪರ್ಧೆಯನ್ನು ಜೊತೆಯಲ್ಲಿ ತರುವ ವಾತಾವರಣ, ಅದರ ಜೊತೆಯಲ್ಲಿ ಮೋಸ ಮಾಡುವವರಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡು ಬದುಕಿ ಬರಬೇಕು ಎಂದರೆ ಅದು ದಿನನಿತ್ಯದ ಚಕ್ರವ್ಯೂಹವೇ ಸರಿ. ಈ ಕೆಳಗಿನ ಉದಾಹರಣೆಗಳನ್ನು ನೋಡಿ:

- ಬೆಂಗಳೂರಿನಲ್ಲಿ ಸಂತೋಷ್ ಚಿತ್ರಮಂದಿರಕ್ಕೆ ಹೋಗಿ 'ಕಲ್ಲರಳಿ ಹೂವಾಗಿ' ಚಿತ್ರಕ್ಕೆ ಟಿಕೇಟು ತೆಗೆದುಕೊಂಡರೆ, ಕೌಂಟರಿನ ಹಿಂದಿರುವ ವ್ಯಕ್ತಿ ಕೇಳಿದ ಹೊರತೂ ಚಿಲ್ಲರೆಯನ್ನು ಕೊಡಲಿಲ್ಲ - ಟಿಕೇಟು ಕೊಟ್ಟವನಿಗೆ ಟಿಪ್ ಕೊಡಬೇಕು ಎಂದು ನಿಯಮೇನಾದರೂ ಇದೆಯೇ?
- ಆಟೋ ರಿಕ್ಷಾ ಡ್ರೈವರ್‌ಗೆ ಐವತ್ತು ರೂಪಾಯಿಯ ನೋಟೊಂದನ್ನು ಕೊಟ್ಟು, ಉಳಿದ ಚಿಲ್ಲರೆಯನ್ನು ಕೊಡಲು ದುಡ್ಡು ಎಣಿಸುತ್ತಿರುವಾಗ ಮೊದಲು ಕೊಟ್ಟ ಐವತ್ತು ರೂಪಾಯಿಯ ನೋಟನ್ನು 'ನೀವು ಕೊಟ್ಟೇ ಇಲ್ಲಾ ಸಾರ್' ಎಂದು ಸಾಧಿಸಿ ವಾದ ಮಾಡಿದರೆ ಹಾಡ ಹಗಲೇ ಸುಳ್ಳು ಹೇಳುವ ಅವನನ್ನು ನನ್ನಂತಹವರು ಏನು ಮಾಡೋದು?
- ಒಂದು ಮಸಾಲೆ ದೋಸೆ ೨೫ ರೂಪಾಯಿ ಚಾರ್ಚ್ ಮಾಡಿಯೂ ಅದರ ಜೊತೆಯಲ್ಲಿ ಕೊಟ್ಟಿರುವ ಚಟ್ನಿ ಹಳಸಿದೆ ಎಂದು ದೂರು ಕೊಟ್ಟರೆ ನಾನು all of a sudden ಶಿಲಾಯುಗದ ಮನುಷ್ಯನಂತೆ ಆಗಿ ಹೋದೆ ಎಂದು ಸಪ್ಲೈಯರ್‌ನಿಂದ ಹಿಡಿದು ನನ್ನ ಜೊತೆಯಲ್ಲಿದ್ದವರ ಅಂಬೋಣ - ಹಳಸಿದ ಚಟ್ನಿಯನ್ನು ತಿನ್ನೋದು ನನ್ನ ಕರ್ಮವಲ್ಲ, ಆ ಭಾಗ್ಯಕ್ಕೆ ಇಪ್ಪತ್ತೈದು ರೂಪಾಯಿಗಳನ್ನು ಬೇರೆ ಕೊಡಬೇಕೇಕೆ?
- ಮನೆ ಕಟ್ಟಿಸಿಕೊಳ್ಳಬೇಕು ಎಂದು ಒಂದು ಸೈಟು ತೆಗೆದುಕೊಂಡರೆ ಅದನ್ನು 'ರಕ್ಷಣೆ' ಮಾಡಿಕೊಳ್ಳಬೇಕಂತೆ: ರಾತ್ರೋರಾತ್ರಿ ಮಂದಿರ-ಮಸೀದಿಯನ್ನು ಕಟ್ಟುವುದರಿಂದ ಹಿಡಿದು, ನಿಮ್ಮ ಸೈಟುಗಳನ್ನು ಎರಡು ಮೂರು ಜನರಿಗೆ ಮಾರಿ ನೀವು ಯಾವ ಕೋರ್ಟಿಗೆ ಎಷ್ಟು ವರ್ಷ ಅಲೆದರೂ ನಿಮ್ಮ ಸೈಟು ನಿಮಗಿಲ್ಲವಾಗಿಸುವ ವ್ಯವಸ್ಥೆ, ಉದಾಹರಣೆಗಳು ಬೇಕಾದಷ್ಟಿವೆ.

ಪ್ರಾಮಾಣಿಕತೆ ಇಲ್ಲ, ಅಥವಾ ಮೊದಲಿಗಿಂತಲೂ ಪರಿಸ್ಥಿತಿ ಬದಲಾಗಿದೆ ಎಂದೋ ನಾನು ಜೆನರಲೈಸ್ ಮಾಡಿದರೆ ತಪ್ಪಾದೀತು. ಈ ವ್ಯವಸ್ಥೆಯಲ್ಲೇ ನಾನೂ ಹುಟ್ಟಿ ಬೆಳೆದವನೇ. ನನ್ನ ರಕ್ತ ಹೀರುವ ಸೊಳ್ಳೆಗಳನ್ನು - ನನಗೆ ಏಟು ಬಿದ್ದರೂ ಪರವಾಗಿಲ್ಲ ಆದರೂ ನನ್ನ ರಕ್ತ ಹೀರಿದ ಇದನ್ನು ಸುಮ್ಮನೇ ಬಿಡಬಾರದು - ಎಂದು ಬಲವಾಗಿಯೇ ಬಾರಿಸಿ ನಿಷ್ಕರುಣೆಯಿಂದ ಹೊಸಕಿ ಹಾಕುವ ಕ್ರೂರತೆ ನನ್ನಲ್ಲಿ ಎಂದೂ ಮಾಸಲಾರದು. ಆದರೆ ಇಂತಹ ಕ್ರೌರ್ಯವನ್ನೇ ಬದುಕಾಗಿ ಮಾಡಿಕೊಂಡಿರುವುದಾದರೆ ಹೇಗೆ ಎಂದೆನಿಸದಿರಲಿಲ್ಲ. ಭಾರತದಲ್ಲಿನ ವ್ಯವಸ್ಥೆಯಲ್ಲಿ ಸೊಳ್ಳೆಗಳು ಸಮಾಜದ ಒಂದು ಭಾಗ - ನಾವು, ನಮ್ಮ ಮನೆ, ನಮ್ಮ ನೆರೆಹೊರೆ ಇರುವ ಬಗೆ, ಮುಂದೆಯೂ ಹಾಗೆ ಇರುವ ಸೂಚನೆಗಳು ಇಂದು ನಿನ್ನೆಯವಲ್ಲ. ಹಲವು ದಿನಗಳ ಕಾಲ ಅಲ್ಲಿಗೆ ರಜೆಯಲ್ಲಿ ಹೋದ ನನಗೆ ರಕ್ತ ಹೀರುವ ಸೊಳ್ಳೆಗಳಿಂದ ಮುಕ್ತಿ ಸಿಗಲಿ ಎಂದುಕೊಂಡರೆ ಅದು ಅಪಹಾಸ್ಯವಾದೀತು. ಆದರೆ ಇಂದಿನ ಸೊಳ್ಳೆಗಳು ಕಾಲನ ಸವಾಲಿನಲ್ಲಿ ಬದಲಾಗಿವೆ, ನನಗೆ ಗೊತ್ತಿರುವ ಡಿಡಿಟಿ ಅಂತಹ ಔಷಧಗಳು, ಕೀಟನಾಶಕಗಳು ಇಂದು ಯಾವ ಕೆಲಸವನ್ನೂ ಮಾಡಲಾರವು - ಬದಲಿಗೆ ಟಾನಿಕ್ ಆಗಿ ಪರಿವರ್ತಿತಗೊಳ್ಳದಿದ್ದರೆ ಸಾಕು. ಇಂದಿನ ಸೊಳ್ಳೆಗಳು ಪ್ರದರ್ಶಿಸುವ ಹೊಸಹೊಸ ಚಾಲಾಕುಗಳಿಗೆ ನನ್ನ ಉತ್ತರಗಳು ಅಷ್ಟೇ ಮಾರ್ಪಾಡು ಹೊಂದಿಲ್ಲವಾದ್ದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ನನ್ನನ್ನು ಒಬ್ಬನೇ ಬಿಟ್ಟು ಬಂದಿದ್ದಾದರೆ ಒಮ್ಮೆ ತಡವರಿಸುವುದಂತೂ ಗ್ಯಾರಂಟಿ.

ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯಬಹುದಾದರೂ ಇಲ್ಲಿ ಒಂದೆರಡು ಸಾಲುಗಳನ್ನು ಹಾಕುವುದು ಪ್ರಸ್ತುತವೆನಿಸಿತು - ಅಮೇರಿಕದ ಬದುಕು ನನ್ನಲ್ಲಿ ಚಾಲಾಕಿತನವನ್ನು ಹೆಚ್ಚಿಸಿಲ್ಲ, ಇಲ್ಲಿ ಬಂದಮೇಲೆ ರಕ್ತ ಹೀರುವ ಸೊಳ್ಳೆಗಳಿಂದ ಇನ್ನೂ ಕಚ್ಚಿಸಿಕೊಂಡಿಲ್ಲ - ಸೊಳ್ಳೆಗಳಿವೆ, ಅವುಗಳು ಇರುವಲ್ಲಿ ನಾನು ಹೋಗಿ ಮಾಡಬೇಕಾದೇನೂ ಇಲ್ಲ. ಇಲ್ಲಿ ದುಡಿದ ಹಣ, ಅದರ ಮಹತ್ವವನ್ನು ತಿಳಿಸಿಕೊಟ್ಟಿದ್ದೂ ಅಲ್ಲದೇ ನಾನು ಖರ್ಚು ಮಾಡಬಹುದಾದ ಹಣಕ್ಕೆ ಅದಕ್ಕೆ ತಕ್ಕನಾಗಿ ಸೇವೆಯನ್ನು ಅಪೇಕ್ಷಿಸುವ ಮನಸ್ಥಿತಿಯನ್ನೂ ನಿರ್ಮಿಸಿಕೊಟ್ಟಿವೆ. ಮನೆ ಕೆಲಸದಿಂದ ಹಿಡಿದು ಉಳಿದೆಲ್ಲವನ್ನೂ ನಾವು-ನಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬಹುದಾದ ತಾಕತ್ತನ್ನೂ ಅದಕ್ಕೆ ಊರುಗೋಲಾಗಬಹುದಾದ ಮೈಂಡ್‌ಸೆಟ್ ಅನ್ನೂ ಹುಟ್ಟುಹಾಕಿವೆ. ಎಲ್ಲಿಯಾದರೂ ಸಾದುತನ ಕಂಡರೆ ನಾನು ಎಂದೂ ಮೋಸ ಮಾಡಲು ತಕ್ಕದಾದ ಪ್ರಾಣಿಯೊಂದು ಸಿಕ್ಕಿತು ಎಂದು ಯೋಚಿಸಿಕೊಳ್ಳದೇ ಅದರ ಬದಲಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಲು ಮನಸ್ಸು ಮಾಡುತ್ತೇನೆ. ಹನಿಹನಿಗೂಡಿ ಹಳ್ಳವಾದರೂ ಅಂತಹ ಹಳ್ಳ ಹುಟ್ಟಿ ಹೆಚ್ಚುಕಾಲ ನಿಲ್ಲುವಂತೆ ಶ್ರಮವಹಿಸುತ್ತೇನೆ. ಒಂದು ಡಾಲರಿಗೆ ಎರಡು ಸಿಗುವ ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಸಾವಿರಾರು ಡಾಲರಿಗೆ ಯಾವುದೇ ವಸ್ತುಕೊಂಡರೂ 'ಎದುರಿನ ವ್ಯಕ್ತಿ ಮಾಸ ಮಾಡುತ್ತಿರಬಹುದೇ' ಎಂದು ಒಮ್ಮೆಯೂ ಯೋಚಿಸುವುದಿಲ್ಲ...

ಹೀಗಿನ ನನ್ನ ವರ್ತನೆ ಭೋಳೇತನವಾಗಿ ಕಂಡುಬರಬಹುದು, 'ಬಿತ್ತು ಗಿರಾಕಿ'ಯಾಗಬಹುದು, ರಕ್ತ ಹೀರುವ ಸೊಳ್ಳೆಗಳಿಗೆ ಆಶ್ರಯವಾಗಬಹುದು... ನನಗೆ ಮೋಸವಾಗುತ್ತಿರುವುದು ಗೊತ್ತಾಗಿಯೂ ಅದನ್ನು ಸಹಿಸಿಕೊಂಡು ಏನೂ ಆಗೇ ಇಲ್ಲವೆನ್ನುವ ಮನಸ್ಥಿತಿಯಂತೂ ಇನ್ನೂ ಬಂದಿಲ್ಲ...ಹೀಗೆ ಮೋಸ ಮಾಡಿದವರನ್ನು ದುರುಗುಟ್ಟಿ ನೋಡಿಯೂ ಬಾಯಿಬಿಟ್ಟು ಕೇಳಿದರೆ ಅಂತಹವರ ಅಂತಃಕರಣವನ್ನೋದೇನಾದರೂ ಇದ್ದರೂ ಅವರು ಬದಲಾಗೋದಿಲ್ಲ. ಮೋಸ ಮಾಡುವುದು ಅವರವರ ಬದುಕಿನ ಒಂದು ಅಂಗವಾಗಿಹೋಗಿದೆ ಎನ್ನಿಸದಿರಲಿಲ್ಲ.

ಹೀಗೆ ಶತಮಾನಗಳಿಂದ ಮೋಸ ಮಾಡಿ, ಮಾಡಿಸಿಕೊಂಡು, ಇಂತಹ ಹಲವಾರು ಬದುಕುಗಳನ್ನು ಬದುಕಿ, ಎಲ್ಲವನ್ನೂ ಮಾಡಿ, ನೋಡಿ, ಕಂಡಂತಹವರಿಗೆ ನನ್ನ ಒಂದೇ ಒಂದು ಪ್ರಶ್ನೆ - what have you gained from all this?

Monday, February 12, 2007

ರಾಜ್ ಸಮಾಧಿ

ಪ್ರತೀ ಸಾರಿ ರಾಜ್‌ಕುಮಾರ್ ಸಮಾಧಿ ಹತ್ತಿರ ಹೋಗಿ ಬರಬೇಕು, ಅವರು ಜೀವಂತವಾಗಿದ್ದಾಗಲಂತೂ ನನಗೆ ನೋಡುವ ಭಾಗ್ಯ ಸಿಗಲಿಲ್ಲ ಎಂದು ಅಂದುಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮ ಬದಲಾಗಿ ಹೋಗೋದು. ಅದೂ ಅಲ್ಲದೆ ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗಾದರೂ ಹೋಗಿ ಬಂದರೆ ಕೊನೇ ಪಕ್ಷ ಅದಕ್ಕೋಸ್ಕರ ಒಂದರ್ಧ ದಿನವಾದರೂ ಹೋಗದೇ ಇರೋದಿಲ್ಲ. ನನ್ನ ಅದೃಷ್ಟಕ್ಕೆ ಜನವರಿ ಹನ್ನೆರಡರಂದು ಬೆಂಗಳೂರಿನಿಂದ ಕೆಜಿಎಫ್‌ಗೆ ಹೋಗೋದಕ್ಕೆ ಟಾಟಾ ಸುಮೋ ಬುಕ್ ಮಾಡಿದಾಗ ನಮಗೆ ಸಿಕ್ಕ ಡ್ರೈವರ್ ರಾಜ್‌ಕುಮಾರ್ ಮನೆಯಲ್ಲಿ ಬಟ್ಟೆ ಇಸ್ತ್ರಿ ಹಾಕಿಕೊಂಡಿದ್ದವನೆಂದು ಅವನಿಂದಲೇ ತಿಳಿಯಿತು. ಹಾಗೇ ಕೆಜಿಎಫ್‌ನಿಂದ ಹಿಂತಿರುಗುವಾಗ ಮಧ್ಯಾಹ್ನ ಪೀಣ್ಯಾದ ಹತ್ತಿರವಿರುವ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಸಿಕ್ಕ ಚಿತ್ರಗಳಿವು.

ಪ್ರತಿ ತಿಂಗಳು ಹನ್ನೆರಡರಂದು ರಾಜ್‌ಕುಮಾರ್ ಸಮಾಧಿ ಬಳಿ ವಿಶೇಷ ಪೂಜೆ ಇರುತ್ತಂತೆ, ಆದ್ದರಿಂದ ರಾಜ್ ಅವರ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ರಿಂಗ್ ರೋಡಿಗೆ ಅಂಟಿಕೊಂಡೇ ಇರುವ ಆವರಣದಲ್ಲಿ ರಾಜ್ ಸಮಾಧಿ ಎದ್ದು ಕಾಣುತ್ತಿತ್ತು, ಸುತ್ತಲೂ ನಾನಾ ರೀತಿಯ ಬ್ಯಾನರ್‌ಗಳು ಮುಖ ಚಾಚಿಕೊಂಡಿದ್ದವು.

ಕಳೆದ ಏಪ್ರಿಲ್‌ನಲ್ಲಿ ನಡೆದ ಹಿಂಸಾಚಾರವನ್ನು ನೆನೆಸಿಕೊಂಡ ನನಗೆ ಈ ವರ್ಷ ಏಪ್ರಿಲ್ ಹನ್ನೆರಡರಂದು ಬೆಂಗಳೂರಿನಲ್ಲಿ ಗಲಾಟೆಗಳಾಗದಿದ್ದರೆ ಸಾಕು ಎಂದೆನಿಸಿತು.






Tuesday, February 06, 2007

ಒಂಟಿ ಮರದ ಹಾಡು




ಬಿದ್ದು ಹೋಗುವ ಸೂರ್ಯನನು ಆರಾಧಿಸುವುದಾದರೂ ಏಕೆ
ದಿನನಿತ್ಯ ದುಡಿಯುವ ಅವನಿಗಾದರೂ ಬೇಡವೆ ನಾಳೆ ಎಂಬ ಚಿಂತೆ
ಅಥವಾ ಕತ್ತಲು ತುಂಬಿದ ಮತ್ತರ್ಧ ಗೋಳವನು ಬೆಳಗ ಬೇಡವೆ ಬೇಕೆ
ಅಲ್ಲಿಗೆ ಹೋದರೆಷ್ಟು ಬಿಟ್ಟರೆಷ್ಟು ಎಂಬ ಯೋಚನೆಗಳ ಕಂತೆ.

ಇಂದು ನಾಳೆ ಬಿದ್ದು ಹೋಗುವ ಒಂಟಿ ಮರ ನಾನು
ನನ್ನ ಅಧಿಕಾರ, ದರ್ಪವೆಷ್ಟು ಎಂದು ಕೇಳಬಹುದು ನೀನು
ನನ್ನನ್ನು ಈ ಸ್ಥಿತಿಗೆ ತಂದವರನ್ನು ಬಿಡು
ಇಂದು ಬಾಳಿ ಬದುಕ ಬೇಕಾದವರ ಸೊಕ್ಕನ್ನು ನೋಡು.

ಬಿದ್ದು ಹೋಗುವ ಸೂರ್ಯ ಎದ್ದು ಬರುತ್ತಿರುವ ಹಾಗೆ
ಹಲವರಿಗೆ ಕಂಡೀತು ಅದು ಕನಸೇನೂ ಅಲ್ಲ
ಬಿದ್ದು-ಎದ್ದು ಬರುವ ಸೂರ್ಯರ ಬಣ್ಣಗಳಲ್ಲೂ ಹಲವು ಬಗೆ
ಪಕ್ಕನೆ ವ್ಯತ್ಯಾಸ ಗುರುತು ಸಿಗುವುದಿಲ್ಲ.

ಸೂರ್ಯನನು ನಾನು ಮುಚ್ಚಿ ಮರೆಮಾಡುತಿಹೆ ಎಂದರೆ
ಕಿರಣಗಳ ಪ್ರಕೋಪಕ್ಕೆ ನೀನೇ ಹೋಗುತಿಹೆ ನನ್ನ ಮೊರೆ
ಇರುವಷ್ಟು ದಿನ ಇಲ್ಲಿ ನಾನು ಏನು ಬೇಕಾದರೂ ಮಾಡು
ಕೊನೆಗೆ ಬಾನು ಬರಿದಾಗುವುದರೊಳಗೊಮ್ಮೆ ಎದ್ದು ನೋಡು.

Friday, February 02, 2007

ಕೋಟಿಪುರ




ನಮ್ಮೂರು ಆನವಟ್ಟಿಯಿಂದ ಉತ್ತರಕ್ಕೆ ಹಾನಗಲ್ ಮಾರ್ಗದಲ್ಲಿ ಎರಡು ಕಿಲೋ ಮೀಟರ್ ದೂರದಲ್ಲಿ ಕೋಟಿಪುರವೆಂಬ ಹಳ್ಳಿಯಿದೆ, ಅಲ್ಲಿ ಸುಂದರವಾದ ಶಿವದೇವಾಲಯವೊಂದಿದೆ. ಇದು ಚಾಲುಕ್ಯರ ಕಾಲದ್ದು (೧೦ ನೇ ಶತಮಾನ). ಕೈಟಭೇಶ್ವರ ಎನ್ನುವುದು ಇಲ್ಲಿ ಶಿವನ ಹೆಸರು. ಹಿಂದೆ ಮಧು-ಕೈಟಭರೆಂಬ ಇಬ್ಬರು ರಾಕ್ಷಸ ಸಹೋದರರನ್ನು ಸಂಹಾರ ಮಾಡಿದ್ದರಿಂದ ಈ ಹೆಸರು ಬಂದಿತಂತೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವಿದೆ, ನೀವು ಬನವಾಸಿಗೆ ಹೋದರೆ ಅಲ್ಲಿಯ ಗೈಡ್‌ಗಳು ಇದರ ಬಗ್ಗೆ ಇನ್ನೂ ಚೆನ್ನಾಗಿ ವಿವರಿಸುತ್ತಾರೆ.

ದೂರದಿಂದ ಬಂದ ನನ್ನ ಸ್ನೇಹಿತರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗಲೆಲ್ಲ ಅಲ್ಲಿಯ ಕೆತ್ತನೆಗಳನ್ನು, ಕಂಭಗಳ ನುಣುಪನ್ನು ನೋಡಿ ಬೆರಗಾಗಿ ಹೋಗುತ್ತಿದ್ದರು. ಈ ದೇವಸ್ಥಾನವನ್ನು ಕಾಪಾಡಿಕೊಂಡು ಹೋಗುವಲ್ಲಿ ಸರ್ಕಾರದ ಹಾಗೂ ಸ್ಥಳೀಯರ ಪ್ರಯತ್ನಗಳು ಶ್ಲಾಘನೀಯ. ದೇವಸ್ಥಾನದ ಒಳಗೆ ಹಾಗೂ ಹೊರಗೆ ತುಂಬಾ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ. ಹಿಂದೆಲ್ಲಾ ಅಲ್ಲಲ್ಲಿ ಜೇಡರಬಲೆ ಕಾಣೀಸೋದು, ಈಗ ಹಾಗೇನೂ ಇರಲಿಲ್ಲ, ಸುತ್ತಲೂ ಹೂ ತೋಟವನ್ನು ಬೆಳೆಸಿ ನೋಡಲು ಬಹಳ ಚೆನ್ನಾಗಿ ಮಾಡಿದ್ದಾರೆ.

ನೀವು ಬನವಾಸಿಗೆ ಹೋದರೆ ಅಲ್ಲಿಂದ ಕೇವಲ ೨೦ ಕಿಮೀ ದೂರದಲ್ಲಿರುವ ಕೋಟಿಪುರಕ್ಕೂ ಹೋಗಿ ಬನ್ನಿ!

Thursday, February 01, 2007

ಸಲಿಂಗ ಕಾಮ ಬದುಕಾಗಬೇಕು ಎಂದರೆ...

ವಿಷಯದ ಬಗ್ಗೆ ಈವರೆಗೆ ಬರೆದೇ ಇಲ್ಲ ಅನ್ಸುತ್ತೆ...

ಈ ಸಾರಿ ಭಾರತಕ್ಕೆ ಹೋದಾಗ ಸುಮ್ನೆ 'ಲೂಸ್ ಟಾಕ್' ಅಂತಾರಲ್ಲ ಹಾಗೆ ಒಮ್ಮೆ ಆಗಿ ಹೋಯಿತು, ನಾವೆಲ್ಲ ನಮ್ಮ ಮನೆಯಲ್ಲಿ ಊಟಕ್ಕೆ ಕುಳಿತಿದ್ದೆವು, ನನ್ನ ಅಕ್ಕನ ಮಗ ಅರುಣ ನನ್ನ ಎದುರುಗಡೆ ಕುಳಿತಿದ್ದ, ದಿನವೂ ವ್ಯಾಯಾಮ ಮಾಡಿ ಚೆನ್ನಾಗಿ ಮೈಕಟ್ಟು ಬೆಳೆಸಿಕೊಂಡಿದ್ದಾನೆ ಎಂದು ಎಲ್ಲರ ನಡುವೆ ಒಂದು ಮಾತು ಬಂದಿತು. ನಾನು ಗಮನಿಸಿದಂತೆ ಅವನು ಹಾಕುತ್ತಿದ್ದ ಟೀ ಶರ್ಟ್ ಹಾಗೂ ಪ್ಯಾಂಟುಗಳು ಅವನಿಗೆ ಸ್ವಲ್ಪ ಬಿಗಿಯಾಗೇ ಇರುತ್ತಿದ್ದವು, ತೀರಾ ಮೈಗೆ ಹತ್ತಿಕೊಂಡು ಮೈಕಟ್ಟುಗಳನ್ನು ತೋರಿಸುವ ಹಾಗೆ. ನನಗೆ ಅದೆಲ್ಲಿಂದ ಹೊಳೆಯಿತೋ ಗೊತ್ತಿಲ್ಲ - 'ನಿನ್ನ ವೇಷ ಭೂಷಣ ನೋಡಿದ್ರೆ ಯಾವ್ ಥರ ಕಾಣ್ತೀಯಾ ಗೊತ್ತಾ?' ಎಂದು ಎಲ್ಲರ ಎದುರೇ ಕೇಳಿಬಿಟ್ಟೆ, ಎಲ್ಲರೂ ಗೊತ್ತಿಲ್ಲ ಅಥವಾ ನೀನೇ ಹೇಳು ಅನ್ನೋ ಹಾಗೆ ನನ್ನ ಮುಖ ನೋಡಿದ್ರು. ನಾನು ನನ್ನ ಹೆಂಡತಿಯ ಕಡೆಗೆ ನೋಡಿದೆ, ಆಕೆಯಾದರೂ ನನ್ನನ್ನು ಸುಮ್ಮನಿರಿಸಬಾರದಿತ್ತೇ ಎಂದು ಈಗ ಅನ್ನಿಸುತ್ತಿದೆ, ಒಂದು ಕ್ಷಣ ತಡೆದು 'ಒಳ್ಳೇ ನ್ಯೂ ಯಾರ್ಕ್ ಸಿಟಿಯಲ್ಲಿರೋ ಹೋಮೋಗಳ ಥರಾ ಕಾಣ್ತೀಯ ನೋಡು...' ಎಂದು ನಾನು ಏನೋ ಹೇಳಬಾರದ್ದನ್ನು ಹೇಳಿದವನ ಹಾಗೆ ತುಟಿಕಚ್ಚಿಕೊಂಡೆ, ಎಲ್ಲರೂ ಒಂದು ಸಲ ಗೊಳ್ಳನೆ ನಕ್ಕರೂ, ಅರುಣನನ್ನೂ ಸೇರಿಸಿಕೊಂಡು ಯಾರಿಗೂ ನಾನು ಹೇಳಿದ್ದು ಗೊತ್ತಾದಂತೆ ಕಂಡುಬರಲಿಲ್ಲ. ನಾನು ಏನೂ ಆಗಲಿಲ್ಲವೆನ್ನುವಂತೆ ಬೇರೆ ಟಾಪಿಕ್ ಅನ್ನು ಎತ್ತಿಕೊಂಡು ಮಾತು ಬದಲಿಸಿದೆ.

ಒಂದೆರಡು ವರ್ಷಗಳ ಹಿಂದೆ ನಮ್ಮ ಮನೆ ಜರ್ಸಿ ಸಿಟಿಯ ಡೌನ್ ಟೌನ್‌ಗೆ ಹತ್ತಿರದಲ್ಲಿತ್ತು. ಮ್ಯಾಸಚೂಸೆಟ್ಸ್‌ ರಾಜ್ಯದಲ್ಲಿ ಗೇ/ಲೆಸ್ಬಿಯನ್ ದಂಪತಿಗಳ ಮದುವೆಗೆ ಅನುಮತಿ ಕೊಟ್ಟಂದಿನಿಂದಲೋ, ಕ್ಯಾಲಿಫೋರ್ನಿಯಾದ ಕೆಲವು ನಗರಗಳಲ್ಲಿ ಮೇಯರುಗಳು ಗೇ/ಲೆಸ್ಬಿಯನ್‌ಗಳ ಮದುವೆಯನ್ನು ಕಾನೂನಿನ ವ್ಯಾಪ್ತಿಯಲ್ಲಿ ತಂದ ಸುದ್ದಿ ಹೊರಗೆ ಬಂದಂದಿನಿಂದಲೋ ಜರ್ಸಿ ಸಿಟಿಯ ಹಲವೆಡೆ ಹುಡುಗ-ಹುಡುಗರು ಸಾರ್ವಜನಿಕ ಸ್ಥಳಗಳಲ್ಲಿ ಮುದ್ದಿಸಿಕೊಳ್ಳುವುದು ನನ್ನ ಗಮನಕ್ಕೆ ಬರತೊಡಗಿತು. ಮೊದಲೆಲ್ಲ ಹೀಗೆ ಇರಲಿಲ್ಲ, ಆದರೆ ಒಂದೇ ಸಮನೆ ನಾಯಿಕೊಡೆಗಳು ರಾತ್ರೋ ರಾತ್ರಿ ಹುಟ್ಟಿಬಂದವೇನೋ ಎನ್ನುವಷ್ಟೇ ಸಹಜವಾಗಿತ್ತು ಈ ಬೆಳವಣಿಗೆ. ಮೊದಮೊದಲು ನನ್ನಂಥವರಿಗೆ ಇಂಥದ್ದನ್ನು ನೋಡಲು ಮುಜುಗರವಾಗುತ್ತಿತ್ತು, ನಂತರ ಅದು 'ಮಾಮೂಲಿ'ಯಾಗಿ ಹೋಯಿತು. ಏಕೆ ಈ ಬೆಳವಣಿಗೆ ಅಷ್ಟೊಂದು ದಿಢೀರ್ ಆಗಿತ್ತು ಎನ್ನುವುದು ನನಗೆ ಈಗಲೂ ತಿಳಿದಿಲ್ಲ. ಇಂಥ 'ಕಪಲ್'ಗಳೇ ನೋಡುವುದಕ್ಕೆ ಕಟ್ಟುಮಸ್ತಿನ ಯುವಕರು, ಒಂದೇ ಸ್ಯಾಲ್ಮನ್ ಬಣ್ಣದ ಅಂಗಿಯನ್ನು ಧರಿಸಿಯೋ, ಅಥವಾ ಬಾಳೆ ಎಲೆ ಬಣ್ಣದ ಪ್ಯಾಂಟನ್ನು ಧರಿಸಿಯೋ ಎಷ್ಟೋ ದೂರದಿಂದಲೂ ಗುರುತಿಸಲು ಸಿಗುವಂತ ಪ್ರತಿಮೆಯನ್ನು ನನ್ನ ಮನಸ್ಸಿನಲ್ಲಿ ಹುಟ್ಟುಹಾಕಿದ್ದರು. ನೋಡುವುದಕ್ಕೆ ಆಕರ್ಷಕವಾದ ಈ ಯುವಕರು ಏಕೆ ಹೀಗಾದರು? ಮೊದಲಿನಿಂದ ಹೀಗೆಯೇ ಇದ್ದರೋ ಅಥವಾ ಇಂದಿನ 'ಮುಂದುವರಿದ' ಸಾಮಾಜಿಕ ಸ್ಥಿತಿಯಲ್ಲಿ ತಮ್ಮ ನಿಲುವನ್ನು ಹರವಿಕೊಂಡಿದ್ದರೋ ಯಾರಿಗೆ ಗೊತ್ತು?

ಅಮೇರಿಕದಲ್ಲಿ ರಾಜಾರೋಷವಾಗಿ ಇರುವ ಇಂತಹ ಸಾಮಾಜಿಕ ಸ್ಥಿತಿ ಭಾರತದಲ್ಲಿ ಇಲ್ಲವೇ ಎಂದು ಕೇಳಿದವರಿಗೆ ನಾನು 'ಅಲ್ಲೂ ಇದೆ, ಆದರೆ ಸಮಾಜದ ಬಾಜೂಕಟ್ಟೆಯಲ್ಲಿ ಒಂದು ಹಂಬಲವಾಗಿ ಹಬ್ಬಿಕೊಂಡಿದೆಯೇ ವಿನಾ ಇನ್ನೂ ವೈಯಕ್ತಿಕ ನಿಲುವಾಗಿ ಅದೇ ಬದುಕಾಗಿ ರೂಪುಗೊಂಡಿಲ್ಲ' ಎಂದು ಉತ್ತರಿಸುತ್ತೇನೆ. ನಾನು ಸಾಗರದಲ್ಲಿ ಓದುತ್ತಿರುವಾಗ ನನ್ನ ರೂಮಿನ ಪಕ್ಕದಲ್ಲಿ ಗುಡವಿಯ ರಾಮು ಎನ್ನುವ ಹುಡುಗನೂ ಒಬ್ಬ ಇದ್ದ. ಎದುರಿನ ರೂಮಿನಲ್ಲಿ ಪಿ.ಡಬ್ಲು.ಡಿ.ಯಲ್ಲಿ ಗ್ಯಾಂಗ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಗಲ್‌ನ ತಿಮ್ಮಪ್ಪನೂ ಇದ್ದ. ಈ ತಿಮ್ಮಪ್ಪನ ರೂಮಿಗೆ ಪಿ.ಡಬ್ಲ್ಯು.ಡಿ. ಲಾರಿ ಡ್ರೈವರ್ ಕೃಷ್ಣಪ್ಪ ಆಗಾಗ್ಗೆ ಭೇಟಿಕೊಡುತ್ತಿದ್ದರು. ನಮ್ಮೆಲ್ಲರಿಗಿಂತಲೂ ವಯಸ್ಸಿನಲ್ಲಿ ಹಿರಿಯರಾದ ಕೃಷ್ಣಪ್ಪ ಆಗಾಗ್ಗೆ ಅದೂ ಇದೂ ಜೋಕ್ ಹೇಳಿಕೊಂಡು ನಕ್ಕು ನಗಿಸಿಕೊಂಡಿರುತ್ತಿದ್ದರು. ತಿಮ್ಮಪ್ಪ ಕೃಷ್ಣಪ್ಪನ ಜೊತೆಯಲ್ಲಿ ಆಗಾಗ್ಗೆ ಡ್ಯೂಟಿಗೆ ಹೋಗುವುದು ಇರುತ್ತಿತ್ತು, ಕೆಲವೊಮ್ಮೆ ರಾತ್ರಿ ಪಾಳಿಯೂ ಇರುತ್ತಿತ್ತು. ಹೀಗೇ ಒಂದು ದಿನ ಯಾವುದೋ ರಜಾ ದಿನದಲ್ಲಿ ರಾಮು ಕೃಷ್ಣಪ್ಪನ ಜೊತೆಯಲ್ಲಿ ಹೋಗಿದ್ದನಂತೆ, ರಾತ್ರಿ ಪ್ರವಾಸಿ ಮಂದಿರದಲ್ಲಿ ತಂಗಬೇಕಾಗಿ ಬಂತಂತೆ, ರಾತ್ರಿ ರಾಮು ಮಲಗಿದ ಹೊತ್ತಿನಲ್ಲಿ...ಅವನೇ ಹೇಳಿದ ಹಾಗೆ 'ಈ ಕೃಷ್ಣಪ್ಪ ಏನೇನೋ ಮಾಡ್ತಾನೆ, ಎಲ್ಲೆಲ್ಲೋ ಕೈ ಹಾಕ್ತಾನೆ!' ಎಂದಿದ್ದನ್ನು ನಾವು ಬೇಕಾದಷ್ಟು ಸಾರಿ ನೆನೆಸಿಕೊಂಡು ತಮಾಷೆ ಮಾಡಿದ್ದಿದೆ. ಕೃಷ್ಣಪ್ಪನಿಗೆ ಮದುವೆಯಾಗಿ ಎರಡು ಮೂರು ಮಕ್ಕಳಿದ್ದರೂ ತಿಮ್ಮಪ್ಪ, ರಾಮುವಿನಂತಹ ಯುವಕರ ಒಡನಾಟ ಆತನ ಮನದಾಳದಲ್ಲಿನ ಹಂಬಲವನ್ನು ಜಾಗೃತಗೊಳಿಸುತ್ತಿದ್ದಿರಬಹುದು, ಮೈನ್ ಸ್ಟ್ರೀಮ್ ಹೋಮೋ ಸೆಕ್ಸ್ಯುಯಲ್ ಅಲ್ಲದಿದ್ದರೂ ಆಗಾಗ್ಗೆ ಆ ಅವತಾರವನ್ನು ಎತ್ತುತ್ತಿದ್ದಿರಬಹುದು.

ನಮ್ಮಲ್ಲಿ ಬಾಂಬೆ, ಡೆಲ್ಲಿ ಮುಂತಾದ ನಗರಗಳಲ್ಲಿನ ಘಟನೆಗಳನ್ನು ಬಿಟ್ಟರೆ ಓಪನ್ ಆಗಿ ಹುಡುಗನೊಬ್ಬ ಮತ್ತೊಬ್ಬ ಹುಡುಗನನ್ನು ಮದುವೆಯಾಗಿ ರಾಜಾರೋಷವಾಗಿ ಬದುಕುವ ಕಾಲ ಇನ್ನೂ ಬಂದಿಲ್ಲವೆಂದೇ ಹೇಳಬೇಕು. ಭಾರತದಲ್ಲಿ ನಮ್ಮ ಹಾಗೂ ನಮ್ಮ ಸಮಾಜದ ನಡುವಿನ ಸಂಬಂಧ ಬಹಳ ಹತ್ತಿರವಾದದ್ದು, 'ಯಾರು ಏನು ಅಂದುಕೊಂಡಾರೋ' ಎನ್ನುವಲ್ಲಿಂದ ಹಿಡಿದು ನಮ್ಮ ಬದುಕನ್ನೇ ಎಲ್ಲರಿಗೋಸ್ಕರ ಬದುಕಬೇಕಾದ ಪರಿಸ್ಥಿತಿ ಇನ್ನೂ ಇದೆ, ಒಬ್ಬ ವ್ಯಕ್ತಿ ಸಮಾಜದ ಮೇಲೆ ಹೆಚ್ಚು ಅವಲಂಭಿತನಾಗಿದ್ದಾನೆ ಎನ್ನುವ ಪರಿಸ್ಥಿತಿಯಲ್ಲಿ 'ನನಗೆ ಹೇಗೆ ಬೇಕೋ ಹಾಗೆ ಬದುಕುತ್ತೇನೆ' ಎನ್ನುವುದು ಸ್ವಲ್ಪ ದೂರವೇ ಉಳಿದ ಮಾತು. ಹೊಮೋಸೆಕ್ಸ್ಯುಯಲ್ ಎನ್ನುವುದು 'ಹಂಬಲ'ಕ್ಕಿಂತ ಮುಂದುವರಿದು 'ಜೀವನಶೈಲಿ' ಅಥವಾ 'ಮನಸ್ಥಿತಿ'ಯಾಗಿಲ್ಲ ಎನ್ನುವುದು ನನ್ನ ಅಭಿಮತ ಅಥವ ತಿಳುವಳಿಕೆ, ಆದರೂ ಹತ್ತು ವರ್ಷ ಅಲ್ಲಿನ ಆಗುಹೋಗುಗಳಿಂದ ದೂರ ಉಳಿದ ನನಗೆ ನನ್ನ ತಿಳುವಳಿಕೆ ಕೆಲವೊಮ್ಮೆ ಓಲ್ಡ್ ಸ್ಕೂಲ್ ಆಗಿ ಕಂಡುಬಂದಿದ್ದೂ ಇದೆ.

ಹೋಮೋಸೆಕ್ಸ್ಯುಯಲ್ ಅಂದರೆ ಸಲಿಂಗಕಾಮ ಎನ್ನುವುದಷ್ಟೇ ಎಲ್ಲರಿಗೆ ಕಂಡುಬರುತ್ತದೆ, ಆದರೆ ಸಮಾಜದ ಮಾರ್ಜಿನ್‌ನಲ್ಲಿ ಬೆಳೆದು ಮುಖ್ಯವಾಹಿನಿಗೆ ಎದುರಾಗಿ ಈಜಬಹುದಾದ ಶಕ್ತಿಯಾಗಿ, ಅದೊಂದು ಬದುಕಾಗಿ ಕಂಡುಬರಬೇಕಾದರೆ ಭಾರತದಲ್ಲಿ ಬಹಳ ಕಷ್ಟವಿದೆ. ಜಾತಿ-ಧರ್ಮಗಳ ಸಂಕೀರ್ಣತೆಯಲ್ಲೇ ಒದ್ದಾಡುತ್ತಿರುವ ಭಾರತದ ಜೀವನ ಶೈಲಿಗೆ ಹೊಸ ಯುಗದ ಕೊಡುಗೆಯಾಗಿ ಸಲಿಂಗ ಕಾಮ, ಮಿಗಿಲಾಗಿ ಅದನ್ನು ಆವರಿಸಿಕೊಂಡ ಬದುಕು ಯಾವ ಆಯಾಮವನ್ನು ಕೊಡಬಲ್ಲುದು ಎನ್ನುವ ಜಿಜ್ಞಾಸೆ ನನ್ನನ್ನು ಬಲವಾಗಿ ಕಾಡಿಸಿದೆ.

ನನ್ನ ಸೋದರಳಿಯ ಅರುಣನಿಗೆ ತಮಾಷೆಗೇನೋ ಅಂದೆ, ಆದರೆ ಭಾರತದಲ್ಲಿ ಇಂತಹದ್ದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ನನ್ನ ಊಹೆಗೆ ನಿಲುಕದು, ಫೈರ್ ಅಂತಹ ಚಲನಚಿತ್ರಗಳ ಹಿಂದೆ ಯಾವ ಸ್ಪೂರ್ತಿ ಇದೆಯೋ ಗೊತ್ತಿಲ್ಲ, ಆದರೆ ಅದು ಮುಖ್ಯವಾಹಿನಿಯ ಒಂದು ಭಾಗವಾಗುವಾಗ ಭಾರತದಲ್ಲಿ ಇನ್ನು ಏನೇನೆಲ್ಲ ಬದಲಾವಣೆಗಳಾಗಿರಬಹುದು, ಹಾಗಾಗಲು ಇನ್ನೆಷ್ಟು ವರ್ಷ ತೆಗೆದುಕೊಳ್ಳಬಹುದು ಎನ್ನುವುದು ಒಂದು ಚಿಂತೆ ಅಥವಾ ಚಿಂತನೆ ಅಷ್ಟೇ.

Thursday, January 25, 2007

ಈ ಸೂರ್ಯಾಸ್ತಾ ಎಲ್ಲೀದೂ ಅಂತ ಹೇಳೀ ನೋಡೋಣ?




ಬೆಂಗ್ಳೂರಿನಲ್ಲಿ ಸೂರ್ಯೋದಯ ಸೂರ್ಯಾಸ್ತಾ ಕಾಣಿಸೋದೇ ಇಲ್ಲವೇನೋ ಅಂದುಕೊಂಡ ನನಗೆ ರಾಜರಾಜೇಶ್ವರಿ ನಗರದ ನನ್ನ ಸ್ನೇಹಿತರ ಮನೆಯ ಉಪ್ಪರಿಗೆಯಿಂದ ಸಿಕ್ಕ ಚಿತ್ರಗಳು ಇವು.

Wednesday, January 24, 2007

೩೫ ರಿಂದ ೩೫ ಕ್ಕೆ

ಉತ್ತರ ಅಮೇರಿಕದ ಜನ ಏನ್ ಪಾಪ ಮಾಡಿದ್ರೋ ಅಂಥ ಎಷ್ಟೋ ಸರ್ತಿ ಅನ್ಸದೇ ಇರೋದಿಲ್ಲ, ಇನ್ನೇನ್ ಮತ್ತೆ ಇಲ್ಲಿಯ ಥರ್ಮಾಮೀಟರ್ರಿನಲ್ಲಿನ ಪಾದರಸ ವರ್ಷದ ಆರು ತಿಂಗಳು ಬುಷ್ಷನ ಆಡಳಿತಕ್ಕೆ ಹೆದರಿಕೊಂಡ ರಿಪಬ್ಲಿಕನ್ನರ ಹಾಗೆ ಸೊನ್ನೆಯನ್ನು ಬಿಟ್ಟು ಮೇಲಕ್ಕೆ ಏಳೋದೇ ಇಲ್ಲ ಅಂತ ಕುಳಿತುಬಿಟ್ಟಿರುತ್ತೆ! ಮನೆಯಲ್ಲೇನೋ ಬೇಜಾನ್ ಹೀಟ್ ಇದೆ ಹಾಕ್ಕೋತೀವೀ ಅಂತೀರೋ ಡ್ರೈನೆಸ್‌ನಿಂದ ಚರ್ಮದಲ್ಲಿ ಯಮತುರಿಕೆ ಶುರುವಾಗುತ್ತೇ ನೋಡಿ ಅದನ್ನ ತಡೆಯೋದಕ್ಕೆ ಯಾವ ಯಮನಿಂದಲೂ ಸಾಧ್ಯವಿಲ್ಲ, ಹಾಗಿರುತ್ತೆ.

ಇದೇನ್ ೩೫ ರಿಂದ ೩೫ ಕ್ಕೆ ಅಂಥ ಯೋಚನೇ ಮಾಡ್ತಾ ಇದೀರೋ, ಹೆಚ್ಗೆ ಕಷ್ಟಾ ಕೊಡೋದಿಲ್ಲ ನಿಮಗೆ, ಏಕೆಂದ್ರೆ ಈಗಾಗ್ಲೇ ಇಂಟರ್‌ನೆಟ್‌ನಲ್ಲಿ ಅದನ್ನ ಇದನ್ನ ಓದಿ ಮಿದುಳು ಬಹಳ ದುಡಿದು ದಣಿದಿರಬೋದು ಆದ್ರಿಂದ let us make it very simple (and not stupid, of course!). ನಮ್ ದಕ್ಷಿಣ ಭಾರತದ ಹವೆ ಅಂದ್ರೆ ಹವೆ ಒಂದ್ ರೀತಿ ಕೃಷ್ಣ ಭಟ್ರು ಹೋಟ್ಲೂ ಇಡ್ಲೀ ಥರಾ, ಅದರ ಮುಂದೆ ಬೇರೆ ಯಾವ್ದೂ ಇಲ್ವೇ ಇಲ್ಲ -- ನಾನೇನು ಮಹಾಬಲಿಪುರಂ ಬಗ್ಗೇನೋ, ಇಲ್ಲಾ ಕೊಟ್ಟಾಯಂ ಬಗ್ಗೇನೋ ಕೊರೀತಾ ಇಲ್ಲ, ಅದೇ ನಮ್ ಶಿವಮೊಗ್ಗದ ಹವಾಮಾನದ ಬಗ್ಗೆ - ಟೆಂಪ್ರೇಚರ್ರು ಏನಂದ್ರೂ ಎಪ್ಪತ್ತರ (ಫ್ಯಾರನ್‌ಹೈಟ್) ಸುತ್ತಮುತ್ತಲೂನೇ ಇರೋದು, ಅಂದ್ರೆ ಹೆಚ್ಚು ಅಂದ್ರೆ ೩೨-೩೫ ಕ್ಕೆ ಹೋಗಬಹುದು ನೋಡಿ ಡಿಸೆಂಬರ್‌ನಲ್ಲಿ (ಬಿರು ಬೇಸಿಗೆಯಲ್ಲಿ ಉಳಿದವರು ಬೇಕಾದ್ರೆ ಬೆಂದ್ ಹೋಗ್ಲಿ, ನಾನಲ್ಲಿರಲ್ವಲ್ಲಾ ಅಲ್ಲಿ!). ಅದೇ ಈ ಸರ್ತಿ ಅಲ್ಲಿ ರಜಕ್ಕೆ ಹೋದಾಗ ಇಲ್ಲಿ ಅರ್ಧ ಡಿಸೆಂಬರ್‌ವರೆಗೆ ಒಂದ್ ರೀತಿ ಥಂಡಿ ಹವೆಯಲ್ಲಿ ನಡುಗಿ ಹೋದ ನನಗೆ ಬೇರೇನು ಇಲ್ದೇ ಹೋದ್ರೂ ನಮ್ಮೂರಿನ ವಾತಾವರಣದಲ್ಲಿನ ತಂಪು, ಆರ್ದ್ರತೆ, ಸ್ವಚ್ಛಂದವಾಗಿರೋ ಗಾಳಿ ಇವೆಲ್ಲ ಮರುಳು ಮಾಡಿದ್ವು ಅಂದ್ರೆ ಅದರಲ್ಲೇನೂ ಅಚ್ಚರಿ ಇಲ್ಲ, ಅಂಥಾ ಹವೇಲಿ ಇರೋದು, ಬದುಕು ನಡೆಸೋದು ಅಂದ್ರೆ ಒಂದು ರೀತಿ ಪುಣ್ಯ ಇದ್ದ ಹಾಗೆ - ಇಲ್ಲಿ ಯಾವನಿಗ್ ಬೇಕು ಆರ್ ತಿಂಗ್ಳು ಮುದುರಿಕೊಂಡಿರೋ ಕರ್ಮಾ! (ಅಲ್ಲಿರೋರಿಗೆ ಅದರ ಬೆಲೆ ಗೊತ್ತಿಲ್ಲ ಅದರ ವಿಷ್ಯಾ ಬೇರೆ).

ನಮ್ಮೂರಲ್ಲಿ ೩೫ ಡಿಗ್ರಿ ಸೆಂಟಿಗ್ರೇಡ್ ಇತ್ತೂ ಅಂತಂದ್ರೆ ಏನೇನೆಲ್ಲ ಮಾಡಬಹುದು, ಅದೇ ಇಲ್ಲಿಗೆ ಬಂದ್ವಪ್ಪಾ, ಅದೆಲ್ಲಿಂದ ಬಂದ್ ಹಿಡಕಂಡ್ಯೋ ಅನ್ನೋ ಹಾಗೆ ೩೫ ಡಿಗ್ರಿ ಫ್ಯಾರನ್‌ಹೈಟ್‌ಗೆ ಟೆಂಪ್ರೇಚರ್ ಇಳಿದುಬಿಡೋದೆ? ನಾನೂ ಬೇಕಾದಷ್ಟ್ ಸಾರಿ ತಲೆ ಕೆಡಿಸಿಕೊಂಡಿದ್ದೀನಿ, ಇಲ್ಲಿನವರ ಹಾಗೆ ನಮ್ಮೂರಲ್ಲೂ ಫ್ಯಾರನ್‌ಹೈಟ್ ಸ್ಕೇಲ್ ಅಳವಡಿಸಿಕೊಂಡಿದ್ರೆ ಹೇಗಿತ್ತು ಅಂತ, ಅದೇನ್ ಇದ್ರೂ ಡಾಕ್ಟ್ರು ಜೇಬಲ್ಲಿರೋ ಥರ್ಮಾಮೀಟರ್ ಬಿಟ್ಟು ಹಾಗೂ ಜ್ವರ ಬಂದಿರೋ ಜನಗಳನ್ನ ಬಿಟ್ಟು ಅತ್ತಿತ್ತ ಇನ್ನೂ ಕದಲ್ಲಿಲ್ಲ ನೋಡಿ. ಒಂದ್ ಲೆಕ್ಕಾ, ಒಂದರಿಂದ ನೂರರವರೆಗಿನ ಫ್ಯಾರನ್‌ಹೈಟ್ ಅಳತೆ ಇದ್ರೇನೇ ಚೆನ್ನಾಗಿತ್ತು, ಅದರ ಬದಲಿಗೆ ೧೨ ರಿಂದ ನಲವತ್ತರವರೆಗಿನ ಸೆಂಟಿಗ್ರೇಡನ್ನ ಇನ್ನೂ ಯಾಕ್ ಇಟ್‌ಗೊಂಡಿದ್ದಾರೋ ಯಾರಿಗ್ ಗೊತ್ತು?

ಹಂಗಂಥ ಇಲ್ಲಿನ ಪೌಂಡು, ಔನ್ಸು, ಪೈಂಟ್, ಕ್ವಾರ್ಟುಗಳ ಅಳತೆ ಇರಲಿ ಅನ್ಸಲ್ಲ...ನಮ್ಮದೇನಿದ್ರೂ ಲೀಟರುಗಳ ಲೆಕ್ಕ, ಮಿಲಿ ಲೀಟರು ಅಂದ್ರೇನೇ ತೃಪ್ತಿ, ಒಂದು ರೀತಿ ಉಂಡು ನೀರು ಕುಡಿದಷ್ಟು ನಿರಾಳ, ಈ ಗ್ಯಾಲನ್ನು ಲೆಕ್ಕಾ ತೆಗೊಂಡ್ರೆ ಮುದ್ದೆ ಉಂಡು ನೀರ್ ಕುಡೀಬ್ಯಾಡಾ ಅಂದ್ ಹಾಗಿರುತ್ತೆ, ಯಾವನಿಗ್ ಗೊತ್ತಿರುತ್ತೆ, ಒಂದ್ ಗ್ಯಾಲನ್ ಅಂದ್ರೆ ಇಂತಿಷ್ಟೇ ಲೀಟರ್ರೂ ಅಂಥಾ? ಇವರು ಇಂಚು-ಪಿಂಚುಗಳಲ್ಲಿ ಏನೇನನ್ನೆಲ್ಲ ಅಳೆದ್‌ಕೊಂಡ್ರೂ ಕೊನೇ ಪಕ್ಷಾ ಕ್ಯಾಮೆರಾ ಲೆನ್ಸಿನ ವಿಚಾರಕ್ಕೆ ಬಂದಾಗ ಮಿಲಿ ಮೀಟ್ರು ಬಳಸ್ತಾರಲ್ಲ, ಅದೇ ಪುಣ್ಯಾ, ಅದನ್ನೇನಾದ್ರೂ ಇಂಚಿಗೆ ಕನ್ವರ್ಟ್ ಮಾಡಿದ್ರೂ ಅನ್ನಿ ನಾನು ಅದನ್ನ ಲೆಕ್ಕ ಹಾಕ್ತಾ ಹಾಕ್ತಾ ಇನ್ನಿಪ್ಪತ್ತು ವರ್ಷ ಹೆಚ್ಚು ಆಯಸ್ಸು ಆದವರ ಹಾಗೆ ಆಡ್ತಿದ್ನೋ ಏನೋ?

ಈ ದೇಶ್‌ದಲ್ಲಿ ಯಾಕ್ ಇಷ್ಟು ಕೋಲ್ಡೂ ಅಂತಾನೂ ಬೇಕಾದಷ್ಟ್ ಸರ್ತಿ ಯೋಚ್ನೆ ಮಾಡೀ-ಮಾಡೀ ನನಗೆ ಸಾಕಷ್ಟು ತಲೆ ಬಿಸಿ ಆಗಿದೆ, ಮೋಸ್ಟ್‌ಲೀ ಇಲ್ಲಿನ ಜನಗಳಿಗೆ ತಲೆಬಿಸಿ ಹೆಚ್ಚು ಅಂತ ಭಗವಂತ ಇಲ್ಲಿ ಆರು ತಿಂಗಳು ಕೊರೆಯೋ ಛಳಿಯನ್ನ ಕೊಟ್ನೋ ಏನೋ? ನಾವೇನ್ ಇಲ್ಲಿಯವರ ಥರಾ ಸ್ಕೀಯಿಂಗೂ ಮಣ್ಣೂ-ಮಸಿ ಅಂಥ ಎಲ್ಲೂ ಹೋಗಲ್ಲ, ಶಕ್ತಿ ಇದ್ದು ದುಡಿಯೋ ಹೊತ್ನಲ್ಲಿ ದುಡಿಯೋದು ಕಡಿಯೋದನ್ನೆಲ್ಲ ಮಾಡಿ ಸಂಜೆ ಮನೇಗೆ ಹೋಗಿ ಉಂಡು, ಟಿವಿ ನೋಡಿ ಮಲಕ್ಕಂತೀವಿ, ಅಮೇಲೆ ಸ್ವಲ್ಪ ಕೃಶವಾದೆವೋ ಇಲ್ಲಿನ ಛಳಿಯ ಜೊತೆಯಲ್ಲಿ ಬರೋ ಕತ್ತಲ ಜೊತೆ ಮಸಲತ್ತು ಮಾಡ್ತಾ ಹಳೇದನ್ನೆಲ್ಲ ನೆನೆಸಿಕೊಂಡು ಡಿಪ್ರೆಸ್ಸ್ ಆಗ್ತೀವಿ. ಕಾಸು ಕಾಸು ಅಂಥ ಇಷ್ಟು ದೂರ ಬಂದ್ ಮೇಲೆ ಒಂದಿಷ್ಟ್ ತಲೆಬಿಸಿ ಆಗೋದ್ ಬ್ಯಾಡಾ ಅಂದ್ರೆ ಹೆಂಗೆ? ತಲೆಬಿಸಿ ಆದ್ರೆ ಅದನ್ನ ಕಾಂಪೆನ್‌ಸೇಟ್ ಮಾಡೋದಕ್ಕೆ ಇನ್ನೇನೋ ಆಗಿಹೋಗುತ್ತೆ, ಕೆಲವು ನಮ್ ಕೈಯಲ್ಲಿ, ಇನ್ ಕೆಲವು ಮಂದಿ ಕೈಯಲ್ಲಿ!

ಬ್ಯಾಡಾ ಬಿಡಿ, ಟೆಂಪ್ರೇಚರ್ರ್ ವಿಷ್ಯಾ ಮಾತಾಡ್ತಾ ಮಾತಾಡ್ತಾ ಎಲ್ಲಿಂದ ಎಲ್ಲಿಗೋ ಹೋಯ್ತು ಒಂದ್ ರೀತಿ ನಮ್ಮಲ್ಲಿನ ಈಶಾನ್ಯ ಮಾರುತದ ಹಾಗೆ. ಇದನ್ನೆಲ್ಲ ಬರೆದು ಅಲ್ಲಲ್ಲ ಬಡಕಂಡು ನಿಮ್ ಮಂಡೆ ಬಿಸಿ ಮಾಡೋದು ನನ್ ಗುರೀ ಏನಲ್ಲ, ಹಂಗೇನಾದ್ರೂ ಆಯ್ತೂ ಅಂದ್ರೂ ಅದಕ್ಕೆ ನಾನ್ ಜವಾಬ್ದಾರ್ನಲ್ಲ ಸ್ವಾಮಿ...ಈಗ್ ನಮಿಗಿರೋ ತಲ್‌ನೋವೇ ಸಾಕು, ಇನ್ನ್ ನಿಮದೆಲ್ಲಿಂದ ಕಟ್‌ಗೊಂಡ್ ತಿರುಗ್ಲಿ ಮತ್ತೆ!

ಇನ್ನೂ ಏರ್‌ಪೋರ್ಟ್‌ನಿಂದ ಹೊರಕ್ಕೆ ಬಂದ್ ತಲೆ ಹಾಕಿಲ್ಲ, ಅಷ್ಟೋತ್ತಿಗಾಗ್ಲೇ ಯಾವ್ದೋ ದೂರದ ಹಳೇ ಸಂಬಂಧಿ ಬೆನ್ನು ಹತ್ತಿದ ಹಾಗೆ ಈ ಛಳಿ ಮೈ ಹತ್ತ್‌ಕೊಂಡ್‌ಬಿಟ್ಟಿದೆ, ಇದು ಇನ್ನು ಬಿಟ್ಟ್ ಹೋಗ್‌ಬೇಕು ಅಂದ್ರೆ ಸ್ಪ್ರಿಂಗ್ ಬರಬೇಕು (ಸ್ಪ್ರಿಂಗ್ ತ್ರಾಸ್ ಅಲ್ಲ, ಅದೇ ನಮ್ಮ ವಸಂತ ಋತು, ಚೈತ್ರಮಾಸ), ಅಲ್ಲೀಗಂಟ ಕಾಯೋದ್ ನಮ್ ಹಣೇಬರಾ, ನಮ್ಮಂತೋರ್ನ ನೋಡಿ ನಗೋದು ಒಂದ್ ರೀತಿ ನಿಮಗಾದ್ರೂ ಒಂದಿಷ್ಟು ಖುಷಿ ಅಂತ ಕೊಟ್ಟಿದ್ರೆ ಎಷ್ಟೋ ಸುಖಾ ಇರ್ತಿತ್ತು.

ನಿಮ್ಮೂರಲ್ಲಿ ಹೆಂಗಿದೆ ಟೆಂಪ್ರೇಚರ್ರೂ, ನಿಮ್ ಸುಖಾ ದುಕ್ಕಾ ವಿವರಿಸಿ ಮರೀದೇ ಪತ್ರ ಬರೀತೀರಾ ತಾನೇ?!

Sunday, January 21, 2007

ಮುಂದಾಳುಗಳ ಕೊರತೆನೇ, ಛೇ!

ಸರಿಯಾದ "ನಾಯಕರ" ಕೊರತೆ ಎಂದೇನೋ ನನ್ನ ಅನುಭವವನ್ನು ಹಂಚಿಕೊಂಡಿದ್ದಾಯಿತು, ಆದರೆ ಬೆಂಗಳೂರಿನಲ್ಲಿ ನಮ್ಮ ಕಾರು ಟ್ರಾಫಿಕ್ ಲೈಟ್‌ಗಳಲ್ಲಿ ನಿಂತಲ್ಲೆಲ್ಲ ಮುಂದಾಳುಗಳ ಕೊರತೆ ಇದೆ ಎಂದು ಅನ್ನಿಸಲೇ ಇಲ್ಲ! ಒಬ್ಬರಿಗಿಂತ ಮತ್ತೊಬ್ಬರು ಎಲ್ಲರಿಗಿಂತ ಮುಂದೆ ಬಂದು ಯಾವುದೋ ಕಾಲದಲ್ಲಿ ಹಳದಿ ಬಣ್ಣದಲ್ಲಿದ್ದು ಇಂದು ಮಾಸಿದ ಬಿಳಿ ಬಣ್ಣದ ಪಟ್ಟೆಯ ಆಜುಬಾಜಿನಲ್ಲಿ ನಿಂತು ಮುಂದೆ ಕಡಿಮೆಯಾಗುತ್ತಿರುವ ಡಿಜಿಟಲ್ ಸಂಖ್ಯೆಗಳನ್ನ ಮನದಲ್ಲೇ ಎಣಿಸುತ್ತಾ ಇನ್ನೆನು ಹತ್ತು, ಒಂಭತ್ತು, ಎಂಟು...ಬರುತ್ತಿದ್ದಂತೆಯೇ ತಮ್ಮ ತಮ್ಮ ವಾಹನಗಳನ್ನ ಆರಂಭಿಸಿ, ಗೇರ್ ಬದಲಾಯಿಸಿ, ಚೂರು-ಚೂರೇ ತಮ್ಮ ವಾಹನವನ್ನು ಮುಂದೆ ಓಡಿಸಿ, ಇನ್ನೇನು ಐದು, ನಾಲ್ಕು, ಮೂರು ಬರುತ್ತಿದ್ದಂತೆಯೇ ಕಣ್ಣಿನಿಂದ ದೂರ ಹೋಗುವ ಬೇಕಾದಷ್ಟು ಮುಂದಾಳುಗಳಿಗೇನೂ ಕಡಿಮೆಯಿರಲಿಲ್ಲ.

ನಮ್ಮ ಡ್ರೈವರ್‌ ಅನ್ನು ಕೇಳಿದೆ 'ಇವರೆಲ್ಲ ಇಷ್ಟೊಂದು ಆತುರವಾಗಿ ಎಲ್ಲಿಗ್ ಹೋಗ್ತಾರೆ?', ಅವನ ಉತ್ತರ, 'ಅದೇನ್ ಮಾಡ್ತಾರೋ ಗೊತ್ತಿಲ್ಲ, ಯಾವಾಗ್ ನೋಡಿದ್ರೂ ಹೀಗೇನೇ, ಇನ್ನು ರಾತ್ರಿ ಆಗ್‌ತಿದ್ದ ಹಾಗೆ ಇವರ ಆಟ ಇನ್ನೂ ಜೋರು' ಎಂದು ಸುಮ್ಮನಾದ.

ಏರ್‌ಪೋರ್ಟ್‌ನಿಂದ ಮನೆಗೆ ಮೊಟ್ಟ ಮೊದಲನೇ ಬಾರಿಗೆ ಹೋಗುತ್ತಿದ್ದಾಗಲಂತೂ ಒಂದೆರಡು ಬಾರಿ ಹೃದಯವೇ ಬಾಯಿಗೆ ಬರೋ ಘಟನೆಗಳು ನಡೆದು ಹೋದವು, ತಮ್ಮ-ತಮ್ಮ ಎದುರಿನ ಟ್ರಾಫಿಕ್ ಲೈಟ್ ಕೆಂಪಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರೂ ಮುನ್ನುಗ್ಗುವವರೇ, ಇನ್ನೇನು ಸ್ವಲ್ಪದರಲ್ಲೇ ಆಗುವ ಅಪಘಾತಗಳನ್ನು ತಪ್ಪಿಸಿಕೊಂಡಿದ್ದಾಯಿತು ಎಂದು ನಮ್ಮ ಡ್ರೈವರ್ ಶಾಪ ಹಾಕುತ್ತಿದ್ದಂತೆ, ಕೆಂಪು ದೀಪವಿರುವಾಗ ಹೋದರೆ ಪಕ್ಕದಿಂದ ವೇಗವಾಗಿ ಬರುವ ಗಾಡಿಗಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು, ಹಾಗೆ ಮಾಡದೇ ಹೋದರೆ ಹಿಂದುಗಡೆಯಿಂದ ಬಂದು ಗುದ್ದುವವರೋ ಅಥವಾ ಹಾರ್ನ್ ಹಾಕುವವರಿಂದಲೋ ತಪ್ಪಿಸಿಕೊಳ್ಳಬೇಕು ಎಂದು ಕಸಿವಿಸಿಗೊಂಡಿದ್ದವನನ್ನು 'ಇನ್ನು ಒಂದು ವಾರ ಇಲ್ಲೇ ಇದ್ದು ಬೆಂಗಳೂರಿನಲ್ಲಿ ಡ್ರೈವ್ ಮಾಡೋದನ್ನ ಕಲಿತುಕೋ' ಎಂದುದ್ದಕ್ಕೆ 'ನಮ್ಮೂರಿನಲ್ಲಿ ರಸ್ತೆಗಳು ಹೇಗಿದ್ದರೂ ಅದೇ ನಮಗೆ ಸ್ವರ್ಗ' ಎನ್ನುವುದೇ?

ಕಾರಿನ ಕಿಟಕಿ ತೆರೆದಿದ್ದರಿಂದ ಹೊರಗಿನಿಂದ 'ನಮ್ಮ ದೇಶದಲ್ಲಿ ಬೇಕಾದಷ್ಟು ನಾಯಕರಿದ್ದಾರ್ರೀ, ಆದರೆ ಅವರೆಲ್ಲ ಒಂದೇ ಸಾಲಿನಲ್ಲಿ ನಡೀತಾರೆಯೇ ವಿನಾ ಒಬ್ಬೊರನೊಬ್ಬರು ಜಪ್ಪಯ್ಯಾ ಅಂದ್ರೂ ಫಾಲೋ ಮಾಡೋದಿಲ್ಲ...' ಎಂದು ಹೊರಗಿನಿಂದ ಧ್ವನಿಯೊಂದು ಒಳಗೆ ಬಂತು, 'ಅದೇಕೆ ಹಾಗೆ?' ಎಂದು ನನ್ನ ಮನದಲ್ಲೇ ಪ್ರಶ್ನೆ ಹಾಕಿಕೊಂಡಿದ್ದನ್ನು ಅರ್ಥ ಮಾಡಿಕೊಂಡೋರ ಹಾಗೆ ಅದರ ಹಿಂದೆ ಉತ್ತರವೊಂದನ್ನು ಎಸೆಯೋದೇ! 'ಯಾರೂ ಯಾರನ್ನೂ ಫಾಲೋ ಮಾಡಬಾರದು ಅನ್ನೋ ಆಜ್ಞೆ ಏನೂ ಆಗಿಲ್ಲ, ಆದರೆ ಅಂಥ ಮುಂದಾಳುಗಳ ಕೊರತೇ ಇರೋದ್ರಿಂದ ಒಬ್ಬೊರಿಗೊಬ್ಬರು ಅಡ್ಜಷ್ಟ್ ಮಾಡಿಕೊಂಡು ಎಲ್ರೂ ಒಂದೇ ನೇರದಲ್ಲಿ ನಡೀತಾರೆ ಸಾರ್' ಎಂದು ಹೇಳಿದ ಧ್ವನಿ ಅದೃಶ್ಯವಾಯಿತು...ಯಾರದು, ಯಾರದು ಎಂದು ಎಷ್ಟೇ ಬಗ್ಗಿ ನೋಡಿದರೂ ಕಪ್ಪು ಮುಚ್ಚಿದ ಕಿಟಕಿ ಗಾಜುಗಳು ತಮ್ಮಿಂದ ಹೊರಗೆ ನೋಡಬಿಡಲಿಲ್ಲ, ಈ ಕಪ್ಪು ಮುಚ್ಚಿದ ಕಿಟಕಿಗಳು ಒಂದು ರೀತಿ ಕಾರಿಗೆ ಬುರುಕಾ ತೊಡಿಸಿ ಹೊರಗಿನಿಂದ ಒಳಗೆ ಹಾಗೂ ಒಳಗಿನಿಂದ ಹೊರಬರುವ ಹೋಗುವ ಅಲೋಚನೆಗಳಿಗೂ ಕಡಿವಾಣ ಹಾಕಿದ್ದಂತೆ ತೋರಿತು.

'ಏನ್ ಸಾರ್ ಅಮೇರಿಕದ ಬಗ್ಗೆ ಯೋಚಿಸ್ತಾ ಇದ್ದೀರಾ' ಎಂದು ನಮ್ಮ ಡ್ರೈವರ್ ಕೇಳಿದ್ದಕ್ಕೆ, 'ಇಲ್ಲಾ ಮಾರಾಯಾ, ಅಮೇರಿಕದ ಬಗ್ಗೆ ಯೋಚಿಸೋದಕ್ಕೆ ನನ್ನ ಬಳಿ ಸದ್ಯಕ್ಕೆ ಏನೂ ಇಲ್ಲ' ಎಂದಿದ್ದನ್ನು ಅವನು ಜೀರ್ಣಿಸಿಕೊಳ್ಳಲು ಸ್ವಲ್ಪ ಹೊತ್ತು ಬೇಕಾಯಿತು.

ನಾನು ಹಳೆಯ ಪ್ರಶ್ನೆಯ ಜಾಡೊಂದನ್ನು ಹಿಡಿದು ನಮ್ಮ ಡ್ರೈವರ್ ತಲೆ ತಿನ್ನ ತೊಡಗಿದೆ, 'ಹೌದು, ಇಷ್ಟೊಂದು ಅರ್ಜೆಂಟಾಗಿ ಹೋಗ್ತಾ ಇದ್ದಾರಲ್ಲ, ಅದೂ ಎಲ್ಲ ರೂಲ್ಸು ರೆಗ್ಯುಲೇಷನ್ನುಗಳನ್ನೂ ಗಾಳಿಗೆ ತೂರಿ, ಅವರೆಲ್ಲ ಎಲ್ಲಿಗೆ ಹೋಗ್ತಾರೆ, ಏನೇನ್ ಮಾಡ್ತಾರೆ?', ಕಾರಿನ ಒಳಗಾಗಲಿ ಹೊರಗಾಗಲೀ ಈ ಬಾರಿ ಯಾವುದೇ ಧ್ವನಿ ಬಾರದಿದ್ದುದರಿಂದ ನಾನೇ ಮುಂದುವರೆಸಿದೆ, 'ಇವರೆಲ್ಲ ಟೈಮನ್ನ ಉಳಿಸೋರೋ, ಬೆಳೆಸೋರೋ?' ಈ ಮಾತನ್ನ ಕೇಳಿ ನಮ್ಮ ಡ್ರೈವರ್ರಿಗೆ ಸ್ವಲ್ಪ ಸಿಟ್ಟು ಬಂದಿತೆಂದು ಕಾಣುತ್ತದೆ, ಟೈಮು ಉಳಿಸೋದಲ್ಲ, ಬೆಳೆಸೋದೂ ಅಲ್ಲ, ಅವರ ಕೈಯಲ್ಲಿ ಇರೋ ವಾಹನವನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿಸೋದು, ವೇಗದಲ್ಲಿದೆ ಮಜಾ, ದಿನಾ ನಿಧಾನವಾಗಿ ಹೋಗಿ ಬಂದ್ರೆ ಅದರಲ್ಲೇನಿದೆ ಗಮ್ಮತ್ತು?'

ಪ್ರಶ್ನೆಗೆ ಮತ್ತೊಂದು ಪ್ರಶ್ನೆ ಉತ್ತರವಾಗಿ ಬಂದಿದ್ದು ಅಷ್ಟೊಂದು ಸಮಂಜಸವೆಂದು ಅನಿಸದಿದ್ದರೂ 'ನಾಯಕರೇನೋ ಮುಂದೆ ವೇಗವಾಗಿ ಹೋಗ್ತಾರೆ, ಅವರ ಹಿಂಬಾಲಕರಿಗೂ ಅದೇ ವೇಗ ಇರಬೇಕಲ್ಲ? ನಾಯಕರೇನೋ ಹೋಗಿ ಮರೆಯಾಗಿಬಿಟ್ಟರೆ ಹಿಂಬಾಲಿಸುವವರಿಗೆ ಅವರ ಜಾಡು ಸುಳಿಯೋದೆಂತು!'

'ಅವರು ಎಷ್ಟೇ ವೇಗವಾಗಿ ಹೋದ್ರೂ ಎಲ್ಲಿಗೂ ಹೋಗೋದಿಲ್ಲ, ನಾವು ಮುಂದಿನ ಟ್ರಾಫಿಕ್ ಲೈಟ್ ಹತ್ರ ಹೋದ್ರೆ ಅಲ್ಲೇ ಎಣಿಸ್ಕೊಂಡು ಬಿದ್ದಿರ್ತಾರೆ ನೋಡಿ ಬೇಕಾದ್ರೆ' ಎಂದು ಓಪನ್ ಆಹ್ವಾನ ಕೊಟ್ಟ...ಅಷ್ಟರಲ್ಲಿ ಹೊರಗಿನಿಂದ ಇನ್ನೊಮ್ಮೆ ಅದೇ ಧ್ವನಿ ಮತ್ತೆ ಬಂತು '...ನಾನು ಆಗ್ಲೇ ಹೇಳ್ಲಿಲ್ವಾ, ನಮ್ಮ ನಾಯಕರೆಲ್ಲ ಒಂದೇ ಸಾಲಿನಲ್ಲಿ ನಡೆಯೋರು, ಗುಂಡಿಗೆ ಬಿದ್ರೂನೂ ಒಂದೇ ಸರ್ತಿ ಬಿದ್ದು ಹೋಗ್ತಾರೆ, ವೇಗಾ-ಗೀಗ ಏನೂ ಇಲ್ಲ, ಎಲ್ಲಾ ಆಮೇ ವೇಗವೆ!'

'ಎಲಾ ಇವನ, ನಮ್ ದೇಶ್ದಲ್ಲೂ ಸರಳ ರೇಖೆಯಲ್ಲಿ ಸಾಗೋ ನಾಯಕರಿದ್ದಾರೆಯೇ? ವೇಗದ ಕಥೆ ಹಾಗಿರಲಿ, ನಾಯಕರಿದ್ದಾರಲ್ಲ ಅಷ್ಟೇ ಸಾಕು...' ಎನ್ನುಕೊಳ್ಳುತ್ತಿರುವಾಗ...

'ಯಾವ ನಾಯಕರು?...ನಿಮಗಿನ್ನೂ ನಿದ್ದೇ ಸರಿಯಾಗಿ ಆದ ಹಾಗಿಲ್ಲ, ಸುಮ್ನೇ ಬಡಬಡಿಸ್ತಾ ಇದ್ದೀರಾ' ಎಂದೆನ್ನಬೇಕೆ ನಮ್ಮ ಡ್ರೈವರ್, ನಾನು 'ಸರಿ, ಮುಂದೆ ನಡಿ' ಎನ್ನುವಲ್ಲಿಯವರೆಗೆ ಹಸಿರು ಸಿಗ್ನಲ್ಲಿನಲ್ಲಿಯೂ ಗಾಡಿಯನ್ನು ನಿಲ್ಲಿಸಿ ಬಿಟ್ಟಿದ್ದ, ಸದ್ಯ ಹಿಂದಿನಿಂದ ಬಂದು ಯಾರೂ ಗುದ್ದಲಿಲ್ಲ ಅಷ್ಟೇ!

Wednesday, January 17, 2007

It is good to be back...

'ಅಂತರಂಗ'ದಲ್ಲಿ ಏನನ್ನೂ ಬರೆದಿಲ್ಲ ಸುಮಾರು ನಾಲ್ಕು ವಾರಗಳಿಂದ ಎಂದುಕೊಂಡಾಗಲೆಲ್ಲ ಏನೋ ಒಂದು ರೀತಿಯ ಕಳವಳವಾಗುತ್ತಿದ್ದುದಂತೂ ನಿಜ, ಆದರೆ ಹಾಗೆ ಮಾಡಿದ್ದರಿಂದ ಬಹಳಷ್ಟು ಉಪಕಾರವಂತೂ ಆಗಿದೆ, ನನ್ನ ಆಲೋಚನಾ ಸರಣಿಗಳಲ್ಲಿ ಹಲವಾರು ಒರತೆಗಳು ಜೀವ ಪಡೆದುಕೊಂಡಿವೆ ಹೀಗೆ ಎಷ್ಟೋ ಧನಾತ್ಮಕ ಬದಲಾವಣೆಗಳಿಗೆ ಕಾರಣವಾದ ನನ್ನ ಭಾರತದ ಪ್ರವಾಸವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ!

ಹಲವಾರು ನೆಲೆಗಳಲ್ಲಿ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವಂತೆ ಹಾಗೂ ಹಲವಾರು ಮುಖಗಳನ್ನು ಎದುರುಗೊಂಡಂತೆಲ್ಲ ಹೊಸ ಹೊಸ ದೃಷ್ಟಿ ಕೋನಗಳನ್ನು ನನ್ನಲ್ಲಿ ಹುಟ್ಟುವಂತೆ ಮಾಡುವಷ್ಟು ಪರಿಣಾಮಕಾರಿಯಾಗುವಂತದ್ದು ಭಾರತದ ಪ್ರವಾಸ. ವರ್ಷಗಳು ಉರುಳಿದಂತೆ ಬದಲಾಗುವ ನನ್ನ ವಿಚಾರ ಸರಣಿಗಳು, ಜೊತೆಯಲ್ಲಿ ಸಾಕಷ್ಟು ಕ್ರಾಂತಿಯಲ್ಲಿ ಮಿಂದು ಪುಳಕಿತಗೊಳ್ಳುತ್ತಿರುವಂತೆ ಕಂಡುಬಂದ ಜನರು ಇವನ್ನೆಲ್ಲ ಕುರಿತು ಯೋಚಿಸುತ್ತಾ ಹೋದರೆ ಎಷ್ಟು ಬರೆದರೂ ಕಡಿಮೆಯೆ. ಹೀಗೇ ಮುಂಬರುವ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಬರೆಯಲು ಪ್ರಯತ್ನಿಸುತ್ತೇನೆ.

ಒಟ್ಟಿನಲ್ಲಿ, ನನ್ನ ಪ್ರಕಾರ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆರೋಗ್ಯಕರವಾದವು, ಅಲ್ಲಿನ ಪ್ರಚಂಡ ಬೆಳವಣಿಗೆ ಒಂದಲ್ಲ ಒಂದು ದಿನ ಭಾರತವನ್ನು ವಿಶ್ವದ ಅಗ್ರಮಾನ್ಯ ದೇಶವನ್ನಾಗಿ ಮಾಡುವುದರಲ್ಲಿ ಸಂಶಯವೇನಿಲ್ಲ, ಆದರೂ ಈ ಕೆಳಗಿನ ಅಂಶಗಳು ನನ್ನನ್ನು ಬಹಳವಾಗಿ ಯೋಚಿಸುವಂತೆ ಮಾಡಿವೆ:
- ಜನರಲ್ಲಿ ಅತಿಯಾದ ಮೊಬೈಲ್/ಸೆಲ್ ಫೋನ್ ಬಳಕೆ
- ಎಲ್ಲ ಕ್ರಾಂತಿಗೂ ಮುಖ್ಯವಾದ ಜನರ ಮನಸ್ಥಿತಿಯಲ್ಲಿನ ನಿಧಾನವಾದ ಬದಲಾವಣೆಗಳು
- ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ
- ಸರಿಯಾದ ನಾಯಕರ, ಮುತ್ಸದ್ದಿಗಳ, ದಾರ್ಶನಿಕರ ಹಾಗೂ ವಿಚಾರವಂತರ ಕೊರತೆ
- ಸರ್ವವ್ಯಾಪಿಯಾಗಿ ಕಂಡುಬರುವ ಅನಗತ್ಯ ಪೈಪೋಟಿ
- ಪ್ರಾದೇಶಿಕ ಭಾಷೆಗಳ ಅಭಾವ ಹಾಗೂ ಅಳಿವು-ಉಳಿವು
- ಉಳ್ಳವರ ನಡುವಿನ ಅಂತರ

ಬೆಂಗಳೂರಿನಲ್ಲಿನ ಐದಾರು ಕನ್ನಡ ಎಫ್, ಎಮ್. ರೇಡಿಯೋ ಸ್ಟೇಷನ್‌ಗಳಿಂದ ಹಿಡಿದು ನಾನು ಬಂದಿಳಿದ ಏರ್‌ಪೋರ್ಟುಗಳವರೆಗೆ ಬರೆಯಲು ಬಹಳಷ್ಟಿವೆ...ಕಾದು ನೋಡಿ.

Friday, December 15, 2006

'ಅಂತರಂಗ'ಕ್ಕೆ ಒಂದಿಷ್ಟು ದಿನ ರಜೆ...

ಪ್ರತಿದಿನವೂ ಒಂದಲ್ಲ ಒಂದು ಲೇಖನವನ್ನು ಬರೆದು ಹಾಕಬೇಕು ಎನ್ನುವ ಉತ್ಸಾಹಕ್ಕೆ ಅಡ್ಡಿಬರುವ ಹಲವಾರು ಅಂಶಗಳಲ್ಲಿ ಮೈಗಳ್ಳತನವೂ ಒಂದು ಎಂದು ನೇರವಾಗಿ ಹೇಳಿಕೊಂಡುಬಿಟ್ಟಿದ್ದೇನೆ. ಆದರೆ ಈಗ ಸ್ವಲ್ಪ ದಿನಗಳ ಕಾಲ ರಜೆ ತೆಗೆದುಕೊಳ್ಳುತ್ತಿರುವುದು ಒಂದು ಮಹಾ ಕಾರಣಕ್ಕಾಗಿ, ಅದೇನೆಂದರೆ ಸುಮಾರು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಹೋಗುವ ಭಾಗ್ಯ ಬಂದಿದ್ದಕ್ಕೆ.

ನನಗೆ ಗೊತ್ತಿರುವ ಹಾಗೆ ಭಾರತದಲ್ಲಿ ಎಷ್ಟೋ ಜನ ತಮ್ಮ ಜಾತಕ, ಅಥವಾ ಹಸ್ತವನ್ನು ತೋರಿಸಿ ತಮ್ಮ ಹಣೆಯಲ್ಲಿ ವಿದೇಶ ಪ್ರಯಾಣದ ಬಗ್ಗೆ ಬರೆದಿದೆಯೇ ಎಂದು ಜ್ಯೋತಿಷಿಗಳಲ್ಲಿ ಕೇಳಿಕೊಳ್ಳುವುದು ಗೊತ್ತು. ಒಂದುವೇಳೆ 'ವಿದೇಶ ಪ್ರಯಾಣ ಯೋಗ'ವೆನ್ನುವುದು ನಿಜವೆಂದುಕೊಂಡರೆ ಸಧ್ಯಕ್ಕೆ ಅಮೇರಿಕವನ್ನು ಮನೆಯಾಗಿ ಮಾಡಿಕೊಂಡ ನನ್ನಂಥವರಿಗೆ ಭಾರತಕ್ಕೆ ಹೋಗುವುದೂ ಒಂದು ವಿದೇಶ ಪ್ರಯಾಣವೇ ಅಲ್ಲವೇ? ಅಂತಹ ಯೋಗಗಳು ಎಷ್ಟು ಸಾಧ್ಯವೋ ಅಷ್ಟು ಬರಲಿ ಎನ್ನುವುದು ಒಂದು ಯೋಚನೆಯಾದರೆ, ಆಗ ಬಹುದಾದ ಖರ್ಚಿನ ದೃಷ್ಟಿಯಿಂದಲೂ ಹಾಗೂ ಇಲ್ಲಿ ಮಾಡಿ ಮುಗಿಸಬೇಕಾದ ಕೆಲಸ ಕಾರ್ಯಗಳ ದೃಷ್ಟಿಯಿಂದಲೂ ಕೆಲವೊಮ್ಮೆ ಅತಿ ಪ್ರಯಾಣವೂ ಒಳ್ಳೆಯದಲ್ಲ ಎನ್ನುವ ವಾದವನ್ನೂ ಕೇಳಿದ್ದೇನೆ. ಅಪರೂಪಕ್ಕೆ ಬಂದವನನ್ನು 'ಅಮೇರಿಕದವನು...' ಎಂದು ಆದರಿಸಿಯಾರು ಇಲ್ಲವಾದರೆ ಆಗಾಗ್ಗೆ ಬರುವವನನ್ನು 'ಹಾಕ್‌ಮಣೆ, ನೂಕ್‌ಮಣೆ, ತೋರ್‌ಮಣೆ'ವಾದಗಳು ಹೆದರಿಸಿಬಿಟ್ಟಾವು!

ಏನೇ ಇರಲಿ, ನನ್ನ ಹೆಚ್ಚೂಕಡಿಮೆ ಬರಿದಾದ ಆಲೊಚನೆಗಳ ಚೀಲವನ್ನು ತುಂಬಿಕೊಳ್ಳುವುದಕ್ಕೆ ಮುಂಬರುವ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ. ಪುರುಸೊತ್ತು ಸಿಕ್ಕಾಗಲೆಲ್ಲ ಬರೆದುಕೊಳ್ಳುತ್ತೇನಾದರೂ ಅವುಗಳನ್ನೆಲ್ಲ ಕಂಪ್ಯೂಟರಿಗಿಳಿಸಿ 'ಅಂತರಂಗ'ದಲ್ಲಿ ಹಾಕಲು ಸಮಯ ಸಿಗಲಾರದು, ಅದ್ದರಿಂದ ಒಂದಿಷ್ಟು ದಿನಗಳ ರಜೆತೆಗೆದುಕೊಳ್ಳುವುದು ಎಂದು ತೀರ್ಮಾನಿಸಿಕೊಂಡಿದ್ದೇನೆ.

'ಅಂತರಂಗ'ದ ಓದುಗರಿಗೆ ನಿರಾಶೆಯಾಗದಿರಲಿ... ಮತ್ತೆ ಜನವರಿಯಲ್ಲಿ ಇದೇ ಬರವಣಿಗೆ, ಅಥವಾ ಕೊರೆತ ಇದ್ದೇ ಇರುತ್ತೆ. ಹಾಗೇ ಅಮೇರಿಕದಲ್ಲಿ ಕಳೆದ ಹತ್ತು ವರ್ಷಗಳನ್ನು ಸೆಲೆಬ್ರೇಟ್ ಮಾಡುವುದರ ಜೊತೆಗೆ, ಸೆಲ್‌ಫೋನ್ ಕ್ರಾಂತಿಯನ್ನು ಕಂಡ ಭಾರತವನ್ನು ಮೊಟ್ಟ ಮೊದಲ ಭಾರಿಗೆ ನೋಡಿ ಬಂದ ಸಂಭ್ರಮವನ್ನೂ, ಜೊತೆಗೆ 'ಅಂತರಂಗ'ದಲ್ಲಿ ಇನ್ನು ಸ್ವಲ್ಪ ದಿನಗಳಲ್ಲಿ ಪ್ರಕಟವಾಗುವ ಇನ್ನೂರನೇ ಲೇಖನವನ್ನೂ ಗುಂಪಿಗೆ ಸೇರಿಸಿಕೊಂಡರೆ ಒಟ್ಟಿಗೆ ಬೇಕಾದಷ್ಟು ಕಾರಣಗಳಿರುವುದರಿಂದ ನನ್ನ ಲೇಖನಿಯ ಮೊನಚು, ಅಥವಾ ಟೈಪ್ ಮಾಡುವ ಗತಿಗೆ ಯಾವುದೆ ದೋಷ ಬಾರದೇ ಇದ್ದರೇನೆ ಒಳ್ಳೆಯದು ಎಂದೆನಿಸಿದೆ!

ಭಾರತದಲ್ಲಿ ಏನು ಪ್ಲಾನ್ ಇದೆ ಅಂದ್ರಾ? ಏನೂ ಇಲ್ಲ ಅನ್ನೋದೇ ಈ ಭಾರಿಯ ವಿಶೇಷ, ಸುಮ್ಮನೆ ಹೀಗೆ ಹೋಗಿ ಹಾಗೆ ಬಂದರೆ ಆಯಿತಪ್ಪ, ಅದಕ್ಕೆ ಪ್ಲಾನಾದರೂ ಏಕೆ ಬೇಕು? :-)

***
'ದಾರಿ-ದೀಪ'ದ ಓದುಗರು ದಯವಿಟ್ಟು ಕ್ಷಮಿಸಿ, ಹಲವು ತಿಂಗಳುಗಳಿಂದ ಅಲ್ಲಿ ಯಾವುದೇ ಬರಹವನ್ನು ಬರೆಯಲಾಗುತ್ತಿಲ್ಲ.
***
ನಮ್ಮ-ನಿಮ್ಮ ಭೇಟಿ ಮತ್ತೆ ಜನವರಿಯಲ್ಲಿ...ಹ್ಯಾಪ್ಪಿ ನ್ಯೂ ಇಯರ್!