Tuesday, February 20, 2007

What have you gained from all this?

ಜನವರಿ ೧೭ ರಂದು ಭಾರತದ ಪ್ರವಾಸದ ಬಗ್ಗೆ ಕಿರಿದಾಗಿ ಬರೆದಾಗ 'ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ' ಎಂದು ಬರೆದಿದ್ದೆ. ಈ ದಿನ ಅದರ ಮೇಲೆ ಸ್ವಲ್ಪ ಬೆಳಕು ಚೆಲ್ಲಿದರೆ ಹೇಗೆ ಎನ್ನಿಸಿತು.

ಎಷ್ಟೋ ವರ್ಷಗಳ ಹಿಂದೆ ಶಿವಮೊಗ್ಗ ಮಾರ್ಕೆಟ್‌ನಲ್ಲಿ ಸೇಬು ಹಣ್ಣುಗಳನ್ನು ಕೊಂಡಾಗ ನಮ್ಮನ್ನು ಬೇಸ್ತು ಬೀಳಿಸಿ ಒಳ್ಳೆಯ ಹಣ್ಣುಗಳ ಜೊತೆಗೆ ಸಾಧಾರಣ ಹಣ್ಣುಗಳನ್ನು ದಾಟಿಸಿ ತನ್ನ 'ಕೈಚಳಕ' ತೋರಿದ ವ್ಯಾಪಾರಿಯೊಬ್ಬನನ್ನು ಇಂದಿಗೂ ನೆನೆಸಿಕೊಳ್ಳುತ್ತೇನೆ. ನೀವು ಭಾರತದಲ್ಲಿ ವ್ಯವಹಾರ ಮಾಡುವಾಗ ಸೂಕ್ಷ್ಮವಾಗಿರದಿದ್ದರೆ ನಿಮ್ಮನ್ನು ಏಮಾರಿಸಿ ನೀವು ತೆರೆಳಿದ ಬಳಿಕ ಮೀಸೆ ಮೇಲೆ ಕೈ ಆಡಿಸುವವರೇ ಹೆಚ್ಚು. ಇನ್ನು ನೀವು ಎನ್.ಆರ್.ಐ. ಎಂದು ಗೊತ್ತಾದರಂತೂ ಮುಗಿದೇ ಹೋಯಿತು, ಒಂದಕ್ಕೆರಡು ಬೆಲೆ ಹಾಕುವುದು ಇರಲಿ, 'ಬೆಪ್ಪು ಮುಂಡೇವು, ಏನೂ ಗೊತ್ತಾಗೋದಿಲ್ಲ!' ಎಂಬ ಅಸಡ್ಡೆಯ ಪ್ರದರ್ಶನವೂ ರಾಜಾರೋಷವಾಗಿ ನಡೆಯುತ್ತದೆ, ಇಷ್ಟೆಲ್ಲಾ ಆದಮೇಲೂ ನನ್ನಂತಹವರು ಮುಗುಳು ನಗುತ್ತಾ 'ಥ್ಯಾಂಕ್ಯೂ' ಎಂದು ಬೇರೆ ಹೇಳುತ್ತೇವಲ್ಲ, ನಮ್ಮ ಪ್ರಾರಬ್ಧಕ್ಕೆ ಬೈದುಕೊಳ್ಳಬೇಕೇ ವಿನಾ ಮತ್ತೇನೂ ಮಾಡೋಕಾಗೋದಿಲ್ಲ.

ಒಂದು ಲೆಕ್ಕದಲ್ಲಿ ಈ ದಿನನಿತ್ಯದ ವ್ಯವಹಾರದಲ್ಲಿ ಸತ್ಯ-ಪ್ರಾಮಾಣಿಕತೆ ಅನ್ನೋದು ಸತ್ತೇ ಹೋಗಿದೆ ಎಂದೇ ಹೇಳಬೇಕು, ಸ್ಪರ್ಧಾತ್ಮಕವಾಗಿ ಬದುಕೋದು ಎಂದರೆ ಅದನ್ನು ಮೋಸ ಮಾಡಿ ಬದುಕುವುದು ಎಂದು ಬದಲಾಯಿಸಿಕೊಂಡ ಹಾಗೆ ತೋರೋದು ಕೇವಲ ನನ್ನ ಭ್ರಮೆ ಆದರೆ ಎಷ್ಟೋ ಚೆನ್ನಾಗಿತ್ತು. ಮೊದಲೇ ಹೆಚ್ಚು ಜನರಿರುವ, ಎಲ್ಲಿ ಹೋದರೂ 'ನೆಕ್ ಟು ನೆಕ್' ಸ್ಪರ್ಧೆಯನ್ನು ಜೊತೆಯಲ್ಲಿ ತರುವ ವಾತಾವರಣ, ಅದರ ಜೊತೆಯಲ್ಲಿ ಮೋಸ ಮಾಡುವವರಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡು ಬದುಕಿ ಬರಬೇಕು ಎಂದರೆ ಅದು ದಿನನಿತ್ಯದ ಚಕ್ರವ್ಯೂಹವೇ ಸರಿ. ಈ ಕೆಳಗಿನ ಉದಾಹರಣೆಗಳನ್ನು ನೋಡಿ:

- ಬೆಂಗಳೂರಿನಲ್ಲಿ ಸಂತೋಷ್ ಚಿತ್ರಮಂದಿರಕ್ಕೆ ಹೋಗಿ 'ಕಲ್ಲರಳಿ ಹೂವಾಗಿ' ಚಿತ್ರಕ್ಕೆ ಟಿಕೇಟು ತೆಗೆದುಕೊಂಡರೆ, ಕೌಂಟರಿನ ಹಿಂದಿರುವ ವ್ಯಕ್ತಿ ಕೇಳಿದ ಹೊರತೂ ಚಿಲ್ಲರೆಯನ್ನು ಕೊಡಲಿಲ್ಲ - ಟಿಕೇಟು ಕೊಟ್ಟವನಿಗೆ ಟಿಪ್ ಕೊಡಬೇಕು ಎಂದು ನಿಯಮೇನಾದರೂ ಇದೆಯೇ?
- ಆಟೋ ರಿಕ್ಷಾ ಡ್ರೈವರ್‌ಗೆ ಐವತ್ತು ರೂಪಾಯಿಯ ನೋಟೊಂದನ್ನು ಕೊಟ್ಟು, ಉಳಿದ ಚಿಲ್ಲರೆಯನ್ನು ಕೊಡಲು ದುಡ್ಡು ಎಣಿಸುತ್ತಿರುವಾಗ ಮೊದಲು ಕೊಟ್ಟ ಐವತ್ತು ರೂಪಾಯಿಯ ನೋಟನ್ನು 'ನೀವು ಕೊಟ್ಟೇ ಇಲ್ಲಾ ಸಾರ್' ಎಂದು ಸಾಧಿಸಿ ವಾದ ಮಾಡಿದರೆ ಹಾಡ ಹಗಲೇ ಸುಳ್ಳು ಹೇಳುವ ಅವನನ್ನು ನನ್ನಂತಹವರು ಏನು ಮಾಡೋದು?
- ಒಂದು ಮಸಾಲೆ ದೋಸೆ ೨೫ ರೂಪಾಯಿ ಚಾರ್ಚ್ ಮಾಡಿಯೂ ಅದರ ಜೊತೆಯಲ್ಲಿ ಕೊಟ್ಟಿರುವ ಚಟ್ನಿ ಹಳಸಿದೆ ಎಂದು ದೂರು ಕೊಟ್ಟರೆ ನಾನು all of a sudden ಶಿಲಾಯುಗದ ಮನುಷ್ಯನಂತೆ ಆಗಿ ಹೋದೆ ಎಂದು ಸಪ್ಲೈಯರ್‌ನಿಂದ ಹಿಡಿದು ನನ್ನ ಜೊತೆಯಲ್ಲಿದ್ದವರ ಅಂಬೋಣ - ಹಳಸಿದ ಚಟ್ನಿಯನ್ನು ತಿನ್ನೋದು ನನ್ನ ಕರ್ಮವಲ್ಲ, ಆ ಭಾಗ್ಯಕ್ಕೆ ಇಪ್ಪತ್ತೈದು ರೂಪಾಯಿಗಳನ್ನು ಬೇರೆ ಕೊಡಬೇಕೇಕೆ?
- ಮನೆ ಕಟ್ಟಿಸಿಕೊಳ್ಳಬೇಕು ಎಂದು ಒಂದು ಸೈಟು ತೆಗೆದುಕೊಂಡರೆ ಅದನ್ನು 'ರಕ್ಷಣೆ' ಮಾಡಿಕೊಳ್ಳಬೇಕಂತೆ: ರಾತ್ರೋರಾತ್ರಿ ಮಂದಿರ-ಮಸೀದಿಯನ್ನು ಕಟ್ಟುವುದರಿಂದ ಹಿಡಿದು, ನಿಮ್ಮ ಸೈಟುಗಳನ್ನು ಎರಡು ಮೂರು ಜನರಿಗೆ ಮಾರಿ ನೀವು ಯಾವ ಕೋರ್ಟಿಗೆ ಎಷ್ಟು ವರ್ಷ ಅಲೆದರೂ ನಿಮ್ಮ ಸೈಟು ನಿಮಗಿಲ್ಲವಾಗಿಸುವ ವ್ಯವಸ್ಥೆ, ಉದಾಹರಣೆಗಳು ಬೇಕಾದಷ್ಟಿವೆ.

ಪ್ರಾಮಾಣಿಕತೆ ಇಲ್ಲ, ಅಥವಾ ಮೊದಲಿಗಿಂತಲೂ ಪರಿಸ್ಥಿತಿ ಬದಲಾಗಿದೆ ಎಂದೋ ನಾನು ಜೆನರಲೈಸ್ ಮಾಡಿದರೆ ತಪ್ಪಾದೀತು. ಈ ವ್ಯವಸ್ಥೆಯಲ್ಲೇ ನಾನೂ ಹುಟ್ಟಿ ಬೆಳೆದವನೇ. ನನ್ನ ರಕ್ತ ಹೀರುವ ಸೊಳ್ಳೆಗಳನ್ನು - ನನಗೆ ಏಟು ಬಿದ್ದರೂ ಪರವಾಗಿಲ್ಲ ಆದರೂ ನನ್ನ ರಕ್ತ ಹೀರಿದ ಇದನ್ನು ಸುಮ್ಮನೇ ಬಿಡಬಾರದು - ಎಂದು ಬಲವಾಗಿಯೇ ಬಾರಿಸಿ ನಿಷ್ಕರುಣೆಯಿಂದ ಹೊಸಕಿ ಹಾಕುವ ಕ್ರೂರತೆ ನನ್ನಲ್ಲಿ ಎಂದೂ ಮಾಸಲಾರದು. ಆದರೆ ಇಂತಹ ಕ್ರೌರ್ಯವನ್ನೇ ಬದುಕಾಗಿ ಮಾಡಿಕೊಂಡಿರುವುದಾದರೆ ಹೇಗೆ ಎಂದೆನಿಸದಿರಲಿಲ್ಲ. ಭಾರತದಲ್ಲಿನ ವ್ಯವಸ್ಥೆಯಲ್ಲಿ ಸೊಳ್ಳೆಗಳು ಸಮಾಜದ ಒಂದು ಭಾಗ - ನಾವು, ನಮ್ಮ ಮನೆ, ನಮ್ಮ ನೆರೆಹೊರೆ ಇರುವ ಬಗೆ, ಮುಂದೆಯೂ ಹಾಗೆ ಇರುವ ಸೂಚನೆಗಳು ಇಂದು ನಿನ್ನೆಯವಲ್ಲ. ಹಲವು ದಿನಗಳ ಕಾಲ ಅಲ್ಲಿಗೆ ರಜೆಯಲ್ಲಿ ಹೋದ ನನಗೆ ರಕ್ತ ಹೀರುವ ಸೊಳ್ಳೆಗಳಿಂದ ಮುಕ್ತಿ ಸಿಗಲಿ ಎಂದುಕೊಂಡರೆ ಅದು ಅಪಹಾಸ್ಯವಾದೀತು. ಆದರೆ ಇಂದಿನ ಸೊಳ್ಳೆಗಳು ಕಾಲನ ಸವಾಲಿನಲ್ಲಿ ಬದಲಾಗಿವೆ, ನನಗೆ ಗೊತ್ತಿರುವ ಡಿಡಿಟಿ ಅಂತಹ ಔಷಧಗಳು, ಕೀಟನಾಶಕಗಳು ಇಂದು ಯಾವ ಕೆಲಸವನ್ನೂ ಮಾಡಲಾರವು - ಬದಲಿಗೆ ಟಾನಿಕ್ ಆಗಿ ಪರಿವರ್ತಿತಗೊಳ್ಳದಿದ್ದರೆ ಸಾಕು. ಇಂದಿನ ಸೊಳ್ಳೆಗಳು ಪ್ರದರ್ಶಿಸುವ ಹೊಸಹೊಸ ಚಾಲಾಕುಗಳಿಗೆ ನನ್ನ ಉತ್ತರಗಳು ಅಷ್ಟೇ ಮಾರ್ಪಾಡು ಹೊಂದಿಲ್ಲವಾದ್ದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ನನ್ನನ್ನು ಒಬ್ಬನೇ ಬಿಟ್ಟು ಬಂದಿದ್ದಾದರೆ ಒಮ್ಮೆ ತಡವರಿಸುವುದಂತೂ ಗ್ಯಾರಂಟಿ.

ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯಬಹುದಾದರೂ ಇಲ್ಲಿ ಒಂದೆರಡು ಸಾಲುಗಳನ್ನು ಹಾಕುವುದು ಪ್ರಸ್ತುತವೆನಿಸಿತು - ಅಮೇರಿಕದ ಬದುಕು ನನ್ನಲ್ಲಿ ಚಾಲಾಕಿತನವನ್ನು ಹೆಚ್ಚಿಸಿಲ್ಲ, ಇಲ್ಲಿ ಬಂದಮೇಲೆ ರಕ್ತ ಹೀರುವ ಸೊಳ್ಳೆಗಳಿಂದ ಇನ್ನೂ ಕಚ್ಚಿಸಿಕೊಂಡಿಲ್ಲ - ಸೊಳ್ಳೆಗಳಿವೆ, ಅವುಗಳು ಇರುವಲ್ಲಿ ನಾನು ಹೋಗಿ ಮಾಡಬೇಕಾದೇನೂ ಇಲ್ಲ. ಇಲ್ಲಿ ದುಡಿದ ಹಣ, ಅದರ ಮಹತ್ವವನ್ನು ತಿಳಿಸಿಕೊಟ್ಟಿದ್ದೂ ಅಲ್ಲದೇ ನಾನು ಖರ್ಚು ಮಾಡಬಹುದಾದ ಹಣಕ್ಕೆ ಅದಕ್ಕೆ ತಕ್ಕನಾಗಿ ಸೇವೆಯನ್ನು ಅಪೇಕ್ಷಿಸುವ ಮನಸ್ಥಿತಿಯನ್ನೂ ನಿರ್ಮಿಸಿಕೊಟ್ಟಿವೆ. ಮನೆ ಕೆಲಸದಿಂದ ಹಿಡಿದು ಉಳಿದೆಲ್ಲವನ್ನೂ ನಾವು-ನಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬಹುದಾದ ತಾಕತ್ತನ್ನೂ ಅದಕ್ಕೆ ಊರುಗೋಲಾಗಬಹುದಾದ ಮೈಂಡ್‌ಸೆಟ್ ಅನ್ನೂ ಹುಟ್ಟುಹಾಕಿವೆ. ಎಲ್ಲಿಯಾದರೂ ಸಾದುತನ ಕಂಡರೆ ನಾನು ಎಂದೂ ಮೋಸ ಮಾಡಲು ತಕ್ಕದಾದ ಪ್ರಾಣಿಯೊಂದು ಸಿಕ್ಕಿತು ಎಂದು ಯೋಚಿಸಿಕೊಳ್ಳದೇ ಅದರ ಬದಲಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಲು ಮನಸ್ಸು ಮಾಡುತ್ತೇನೆ. ಹನಿಹನಿಗೂಡಿ ಹಳ್ಳವಾದರೂ ಅಂತಹ ಹಳ್ಳ ಹುಟ್ಟಿ ಹೆಚ್ಚುಕಾಲ ನಿಲ್ಲುವಂತೆ ಶ್ರಮವಹಿಸುತ್ತೇನೆ. ಒಂದು ಡಾಲರಿಗೆ ಎರಡು ಸಿಗುವ ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಸಾವಿರಾರು ಡಾಲರಿಗೆ ಯಾವುದೇ ವಸ್ತುಕೊಂಡರೂ 'ಎದುರಿನ ವ್ಯಕ್ತಿ ಮಾಸ ಮಾಡುತ್ತಿರಬಹುದೇ' ಎಂದು ಒಮ್ಮೆಯೂ ಯೋಚಿಸುವುದಿಲ್ಲ...

ಹೀಗಿನ ನನ್ನ ವರ್ತನೆ ಭೋಳೇತನವಾಗಿ ಕಂಡುಬರಬಹುದು, 'ಬಿತ್ತು ಗಿರಾಕಿ'ಯಾಗಬಹುದು, ರಕ್ತ ಹೀರುವ ಸೊಳ್ಳೆಗಳಿಗೆ ಆಶ್ರಯವಾಗಬಹುದು... ನನಗೆ ಮೋಸವಾಗುತ್ತಿರುವುದು ಗೊತ್ತಾಗಿಯೂ ಅದನ್ನು ಸಹಿಸಿಕೊಂಡು ಏನೂ ಆಗೇ ಇಲ್ಲವೆನ್ನುವ ಮನಸ್ಥಿತಿಯಂತೂ ಇನ್ನೂ ಬಂದಿಲ್ಲ...ಹೀಗೆ ಮೋಸ ಮಾಡಿದವರನ್ನು ದುರುಗುಟ್ಟಿ ನೋಡಿಯೂ ಬಾಯಿಬಿಟ್ಟು ಕೇಳಿದರೆ ಅಂತಹವರ ಅಂತಃಕರಣವನ್ನೋದೇನಾದರೂ ಇದ್ದರೂ ಅವರು ಬದಲಾಗೋದಿಲ್ಲ. ಮೋಸ ಮಾಡುವುದು ಅವರವರ ಬದುಕಿನ ಒಂದು ಅಂಗವಾಗಿಹೋಗಿದೆ ಎನ್ನಿಸದಿರಲಿಲ್ಲ.

ಹೀಗೆ ಶತಮಾನಗಳಿಂದ ಮೋಸ ಮಾಡಿ, ಮಾಡಿಸಿಕೊಂಡು, ಇಂತಹ ಹಲವಾರು ಬದುಕುಗಳನ್ನು ಬದುಕಿ, ಎಲ್ಲವನ್ನೂ ಮಾಡಿ, ನೋಡಿ, ಕಂಡಂತಹವರಿಗೆ ನನ್ನ ಒಂದೇ ಒಂದು ಪ್ರಶ್ನೆ - what have you gained from all this?

Monday, February 12, 2007

ರಾಜ್ ಸಮಾಧಿ

ಪ್ರತೀ ಸಾರಿ ರಾಜ್‌ಕುಮಾರ್ ಸಮಾಧಿ ಹತ್ತಿರ ಹೋಗಿ ಬರಬೇಕು, ಅವರು ಜೀವಂತವಾಗಿದ್ದಾಗಲಂತೂ ನನಗೆ ನೋಡುವ ಭಾಗ್ಯ ಸಿಗಲಿಲ್ಲ ಎಂದು ಅಂದುಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮ ಬದಲಾಗಿ ಹೋಗೋದು. ಅದೂ ಅಲ್ಲದೆ ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗಾದರೂ ಹೋಗಿ ಬಂದರೆ ಕೊನೇ ಪಕ್ಷ ಅದಕ್ಕೋಸ್ಕರ ಒಂದರ್ಧ ದಿನವಾದರೂ ಹೋಗದೇ ಇರೋದಿಲ್ಲ. ನನ್ನ ಅದೃಷ್ಟಕ್ಕೆ ಜನವರಿ ಹನ್ನೆರಡರಂದು ಬೆಂಗಳೂರಿನಿಂದ ಕೆಜಿಎಫ್‌ಗೆ ಹೋಗೋದಕ್ಕೆ ಟಾಟಾ ಸುಮೋ ಬುಕ್ ಮಾಡಿದಾಗ ನಮಗೆ ಸಿಕ್ಕ ಡ್ರೈವರ್ ರಾಜ್‌ಕುಮಾರ್ ಮನೆಯಲ್ಲಿ ಬಟ್ಟೆ ಇಸ್ತ್ರಿ ಹಾಕಿಕೊಂಡಿದ್ದವನೆಂದು ಅವನಿಂದಲೇ ತಿಳಿಯಿತು. ಹಾಗೇ ಕೆಜಿಎಫ್‌ನಿಂದ ಹಿಂತಿರುಗುವಾಗ ಮಧ್ಯಾಹ್ನ ಪೀಣ್ಯಾದ ಹತ್ತಿರವಿರುವ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಸಿಕ್ಕ ಚಿತ್ರಗಳಿವು.

ಪ್ರತಿ ತಿಂಗಳು ಹನ್ನೆರಡರಂದು ರಾಜ್‌ಕುಮಾರ್ ಸಮಾಧಿ ಬಳಿ ವಿಶೇಷ ಪೂಜೆ ಇರುತ್ತಂತೆ, ಆದ್ದರಿಂದ ರಾಜ್ ಅವರ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ರಿಂಗ್ ರೋಡಿಗೆ ಅಂಟಿಕೊಂಡೇ ಇರುವ ಆವರಣದಲ್ಲಿ ರಾಜ್ ಸಮಾಧಿ ಎದ್ದು ಕಾಣುತ್ತಿತ್ತು, ಸುತ್ತಲೂ ನಾನಾ ರೀತಿಯ ಬ್ಯಾನರ್‌ಗಳು ಮುಖ ಚಾಚಿಕೊಂಡಿದ್ದವು.

ಕಳೆದ ಏಪ್ರಿಲ್‌ನಲ್ಲಿ ನಡೆದ ಹಿಂಸಾಚಾರವನ್ನು ನೆನೆಸಿಕೊಂಡ ನನಗೆ ಈ ವರ್ಷ ಏಪ್ರಿಲ್ ಹನ್ನೆರಡರಂದು ಬೆಂಗಳೂರಿನಲ್ಲಿ ಗಲಾಟೆಗಳಾಗದಿದ್ದರೆ ಸಾಕು ಎಂದೆನಿಸಿತು.






Tuesday, February 06, 2007

ಒಂಟಿ ಮರದ ಹಾಡು




ಬಿದ್ದು ಹೋಗುವ ಸೂರ್ಯನನು ಆರಾಧಿಸುವುದಾದರೂ ಏಕೆ
ದಿನನಿತ್ಯ ದುಡಿಯುವ ಅವನಿಗಾದರೂ ಬೇಡವೆ ನಾಳೆ ಎಂಬ ಚಿಂತೆ
ಅಥವಾ ಕತ್ತಲು ತುಂಬಿದ ಮತ್ತರ್ಧ ಗೋಳವನು ಬೆಳಗ ಬೇಡವೆ ಬೇಕೆ
ಅಲ್ಲಿಗೆ ಹೋದರೆಷ್ಟು ಬಿಟ್ಟರೆಷ್ಟು ಎಂಬ ಯೋಚನೆಗಳ ಕಂತೆ.

ಇಂದು ನಾಳೆ ಬಿದ್ದು ಹೋಗುವ ಒಂಟಿ ಮರ ನಾನು
ನನ್ನ ಅಧಿಕಾರ, ದರ್ಪವೆಷ್ಟು ಎಂದು ಕೇಳಬಹುದು ನೀನು
ನನ್ನನ್ನು ಈ ಸ್ಥಿತಿಗೆ ತಂದವರನ್ನು ಬಿಡು
ಇಂದು ಬಾಳಿ ಬದುಕ ಬೇಕಾದವರ ಸೊಕ್ಕನ್ನು ನೋಡು.

ಬಿದ್ದು ಹೋಗುವ ಸೂರ್ಯ ಎದ್ದು ಬರುತ್ತಿರುವ ಹಾಗೆ
ಹಲವರಿಗೆ ಕಂಡೀತು ಅದು ಕನಸೇನೂ ಅಲ್ಲ
ಬಿದ್ದು-ಎದ್ದು ಬರುವ ಸೂರ್ಯರ ಬಣ್ಣಗಳಲ್ಲೂ ಹಲವು ಬಗೆ
ಪಕ್ಕನೆ ವ್ಯತ್ಯಾಸ ಗುರುತು ಸಿಗುವುದಿಲ್ಲ.

ಸೂರ್ಯನನು ನಾನು ಮುಚ್ಚಿ ಮರೆಮಾಡುತಿಹೆ ಎಂದರೆ
ಕಿರಣಗಳ ಪ್ರಕೋಪಕ್ಕೆ ನೀನೇ ಹೋಗುತಿಹೆ ನನ್ನ ಮೊರೆ
ಇರುವಷ್ಟು ದಿನ ಇಲ್ಲಿ ನಾನು ಏನು ಬೇಕಾದರೂ ಮಾಡು
ಕೊನೆಗೆ ಬಾನು ಬರಿದಾಗುವುದರೊಳಗೊಮ್ಮೆ ಎದ್ದು ನೋಡು.

Friday, February 02, 2007

ಕೋಟಿಪುರ




ನಮ್ಮೂರು ಆನವಟ್ಟಿಯಿಂದ ಉತ್ತರಕ್ಕೆ ಹಾನಗಲ್ ಮಾರ್ಗದಲ್ಲಿ ಎರಡು ಕಿಲೋ ಮೀಟರ್ ದೂರದಲ್ಲಿ ಕೋಟಿಪುರವೆಂಬ ಹಳ್ಳಿಯಿದೆ, ಅಲ್ಲಿ ಸುಂದರವಾದ ಶಿವದೇವಾಲಯವೊಂದಿದೆ. ಇದು ಚಾಲುಕ್ಯರ ಕಾಲದ್ದು (೧೦ ನೇ ಶತಮಾನ). ಕೈಟಭೇಶ್ವರ ಎನ್ನುವುದು ಇಲ್ಲಿ ಶಿವನ ಹೆಸರು. ಹಿಂದೆ ಮಧು-ಕೈಟಭರೆಂಬ ಇಬ್ಬರು ರಾಕ್ಷಸ ಸಹೋದರರನ್ನು ಸಂಹಾರ ಮಾಡಿದ್ದರಿಂದ ಈ ಹೆಸರು ಬಂದಿತಂತೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವಿದೆ, ನೀವು ಬನವಾಸಿಗೆ ಹೋದರೆ ಅಲ್ಲಿಯ ಗೈಡ್‌ಗಳು ಇದರ ಬಗ್ಗೆ ಇನ್ನೂ ಚೆನ್ನಾಗಿ ವಿವರಿಸುತ್ತಾರೆ.

ದೂರದಿಂದ ಬಂದ ನನ್ನ ಸ್ನೇಹಿತರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗಲೆಲ್ಲ ಅಲ್ಲಿಯ ಕೆತ್ತನೆಗಳನ್ನು, ಕಂಭಗಳ ನುಣುಪನ್ನು ನೋಡಿ ಬೆರಗಾಗಿ ಹೋಗುತ್ತಿದ್ದರು. ಈ ದೇವಸ್ಥಾನವನ್ನು ಕಾಪಾಡಿಕೊಂಡು ಹೋಗುವಲ್ಲಿ ಸರ್ಕಾರದ ಹಾಗೂ ಸ್ಥಳೀಯರ ಪ್ರಯತ್ನಗಳು ಶ್ಲಾಘನೀಯ. ದೇವಸ್ಥಾನದ ಒಳಗೆ ಹಾಗೂ ಹೊರಗೆ ತುಂಬಾ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ. ಹಿಂದೆಲ್ಲಾ ಅಲ್ಲಲ್ಲಿ ಜೇಡರಬಲೆ ಕಾಣೀಸೋದು, ಈಗ ಹಾಗೇನೂ ಇರಲಿಲ್ಲ, ಸುತ್ತಲೂ ಹೂ ತೋಟವನ್ನು ಬೆಳೆಸಿ ನೋಡಲು ಬಹಳ ಚೆನ್ನಾಗಿ ಮಾಡಿದ್ದಾರೆ.

ನೀವು ಬನವಾಸಿಗೆ ಹೋದರೆ ಅಲ್ಲಿಂದ ಕೇವಲ ೨೦ ಕಿಮೀ ದೂರದಲ್ಲಿರುವ ಕೋಟಿಪುರಕ್ಕೂ ಹೋಗಿ ಬನ್ನಿ!

Thursday, February 01, 2007

ಸಲಿಂಗ ಕಾಮ ಬದುಕಾಗಬೇಕು ಎಂದರೆ...

ವಿಷಯದ ಬಗ್ಗೆ ಈವರೆಗೆ ಬರೆದೇ ಇಲ್ಲ ಅನ್ಸುತ್ತೆ...

ಈ ಸಾರಿ ಭಾರತಕ್ಕೆ ಹೋದಾಗ ಸುಮ್ನೆ 'ಲೂಸ್ ಟಾಕ್' ಅಂತಾರಲ್ಲ ಹಾಗೆ ಒಮ್ಮೆ ಆಗಿ ಹೋಯಿತು, ನಾವೆಲ್ಲ ನಮ್ಮ ಮನೆಯಲ್ಲಿ ಊಟಕ್ಕೆ ಕುಳಿತಿದ್ದೆವು, ನನ್ನ ಅಕ್ಕನ ಮಗ ಅರುಣ ನನ್ನ ಎದುರುಗಡೆ ಕುಳಿತಿದ್ದ, ದಿನವೂ ವ್ಯಾಯಾಮ ಮಾಡಿ ಚೆನ್ನಾಗಿ ಮೈಕಟ್ಟು ಬೆಳೆಸಿಕೊಂಡಿದ್ದಾನೆ ಎಂದು ಎಲ್ಲರ ನಡುವೆ ಒಂದು ಮಾತು ಬಂದಿತು. ನಾನು ಗಮನಿಸಿದಂತೆ ಅವನು ಹಾಕುತ್ತಿದ್ದ ಟೀ ಶರ್ಟ್ ಹಾಗೂ ಪ್ಯಾಂಟುಗಳು ಅವನಿಗೆ ಸ್ವಲ್ಪ ಬಿಗಿಯಾಗೇ ಇರುತ್ತಿದ್ದವು, ತೀರಾ ಮೈಗೆ ಹತ್ತಿಕೊಂಡು ಮೈಕಟ್ಟುಗಳನ್ನು ತೋರಿಸುವ ಹಾಗೆ. ನನಗೆ ಅದೆಲ್ಲಿಂದ ಹೊಳೆಯಿತೋ ಗೊತ್ತಿಲ್ಲ - 'ನಿನ್ನ ವೇಷ ಭೂಷಣ ನೋಡಿದ್ರೆ ಯಾವ್ ಥರ ಕಾಣ್ತೀಯಾ ಗೊತ್ತಾ?' ಎಂದು ಎಲ್ಲರ ಎದುರೇ ಕೇಳಿಬಿಟ್ಟೆ, ಎಲ್ಲರೂ ಗೊತ್ತಿಲ್ಲ ಅಥವಾ ನೀನೇ ಹೇಳು ಅನ್ನೋ ಹಾಗೆ ನನ್ನ ಮುಖ ನೋಡಿದ್ರು. ನಾನು ನನ್ನ ಹೆಂಡತಿಯ ಕಡೆಗೆ ನೋಡಿದೆ, ಆಕೆಯಾದರೂ ನನ್ನನ್ನು ಸುಮ್ಮನಿರಿಸಬಾರದಿತ್ತೇ ಎಂದು ಈಗ ಅನ್ನಿಸುತ್ತಿದೆ, ಒಂದು ಕ್ಷಣ ತಡೆದು 'ಒಳ್ಳೇ ನ್ಯೂ ಯಾರ್ಕ್ ಸಿಟಿಯಲ್ಲಿರೋ ಹೋಮೋಗಳ ಥರಾ ಕಾಣ್ತೀಯ ನೋಡು...' ಎಂದು ನಾನು ಏನೋ ಹೇಳಬಾರದ್ದನ್ನು ಹೇಳಿದವನ ಹಾಗೆ ತುಟಿಕಚ್ಚಿಕೊಂಡೆ, ಎಲ್ಲರೂ ಒಂದು ಸಲ ಗೊಳ್ಳನೆ ನಕ್ಕರೂ, ಅರುಣನನ್ನೂ ಸೇರಿಸಿಕೊಂಡು ಯಾರಿಗೂ ನಾನು ಹೇಳಿದ್ದು ಗೊತ್ತಾದಂತೆ ಕಂಡುಬರಲಿಲ್ಲ. ನಾನು ಏನೂ ಆಗಲಿಲ್ಲವೆನ್ನುವಂತೆ ಬೇರೆ ಟಾಪಿಕ್ ಅನ್ನು ಎತ್ತಿಕೊಂಡು ಮಾತು ಬದಲಿಸಿದೆ.

ಒಂದೆರಡು ವರ್ಷಗಳ ಹಿಂದೆ ನಮ್ಮ ಮನೆ ಜರ್ಸಿ ಸಿಟಿಯ ಡೌನ್ ಟೌನ್‌ಗೆ ಹತ್ತಿರದಲ್ಲಿತ್ತು. ಮ್ಯಾಸಚೂಸೆಟ್ಸ್‌ ರಾಜ್ಯದಲ್ಲಿ ಗೇ/ಲೆಸ್ಬಿಯನ್ ದಂಪತಿಗಳ ಮದುವೆಗೆ ಅನುಮತಿ ಕೊಟ್ಟಂದಿನಿಂದಲೋ, ಕ್ಯಾಲಿಫೋರ್ನಿಯಾದ ಕೆಲವು ನಗರಗಳಲ್ಲಿ ಮೇಯರುಗಳು ಗೇ/ಲೆಸ್ಬಿಯನ್‌ಗಳ ಮದುವೆಯನ್ನು ಕಾನೂನಿನ ವ್ಯಾಪ್ತಿಯಲ್ಲಿ ತಂದ ಸುದ್ದಿ ಹೊರಗೆ ಬಂದಂದಿನಿಂದಲೋ ಜರ್ಸಿ ಸಿಟಿಯ ಹಲವೆಡೆ ಹುಡುಗ-ಹುಡುಗರು ಸಾರ್ವಜನಿಕ ಸ್ಥಳಗಳಲ್ಲಿ ಮುದ್ದಿಸಿಕೊಳ್ಳುವುದು ನನ್ನ ಗಮನಕ್ಕೆ ಬರತೊಡಗಿತು. ಮೊದಲೆಲ್ಲ ಹೀಗೆ ಇರಲಿಲ್ಲ, ಆದರೆ ಒಂದೇ ಸಮನೆ ನಾಯಿಕೊಡೆಗಳು ರಾತ್ರೋ ರಾತ್ರಿ ಹುಟ್ಟಿಬಂದವೇನೋ ಎನ್ನುವಷ್ಟೇ ಸಹಜವಾಗಿತ್ತು ಈ ಬೆಳವಣಿಗೆ. ಮೊದಮೊದಲು ನನ್ನಂಥವರಿಗೆ ಇಂಥದ್ದನ್ನು ನೋಡಲು ಮುಜುಗರವಾಗುತ್ತಿತ್ತು, ನಂತರ ಅದು 'ಮಾಮೂಲಿ'ಯಾಗಿ ಹೋಯಿತು. ಏಕೆ ಈ ಬೆಳವಣಿಗೆ ಅಷ್ಟೊಂದು ದಿಢೀರ್ ಆಗಿತ್ತು ಎನ್ನುವುದು ನನಗೆ ಈಗಲೂ ತಿಳಿದಿಲ್ಲ. ಇಂಥ 'ಕಪಲ್'ಗಳೇ ನೋಡುವುದಕ್ಕೆ ಕಟ್ಟುಮಸ್ತಿನ ಯುವಕರು, ಒಂದೇ ಸ್ಯಾಲ್ಮನ್ ಬಣ್ಣದ ಅಂಗಿಯನ್ನು ಧರಿಸಿಯೋ, ಅಥವಾ ಬಾಳೆ ಎಲೆ ಬಣ್ಣದ ಪ್ಯಾಂಟನ್ನು ಧರಿಸಿಯೋ ಎಷ್ಟೋ ದೂರದಿಂದಲೂ ಗುರುತಿಸಲು ಸಿಗುವಂತ ಪ್ರತಿಮೆಯನ್ನು ನನ್ನ ಮನಸ್ಸಿನಲ್ಲಿ ಹುಟ್ಟುಹಾಕಿದ್ದರು. ನೋಡುವುದಕ್ಕೆ ಆಕರ್ಷಕವಾದ ಈ ಯುವಕರು ಏಕೆ ಹೀಗಾದರು? ಮೊದಲಿನಿಂದ ಹೀಗೆಯೇ ಇದ್ದರೋ ಅಥವಾ ಇಂದಿನ 'ಮುಂದುವರಿದ' ಸಾಮಾಜಿಕ ಸ್ಥಿತಿಯಲ್ಲಿ ತಮ್ಮ ನಿಲುವನ್ನು ಹರವಿಕೊಂಡಿದ್ದರೋ ಯಾರಿಗೆ ಗೊತ್ತು?

ಅಮೇರಿಕದಲ್ಲಿ ರಾಜಾರೋಷವಾಗಿ ಇರುವ ಇಂತಹ ಸಾಮಾಜಿಕ ಸ್ಥಿತಿ ಭಾರತದಲ್ಲಿ ಇಲ್ಲವೇ ಎಂದು ಕೇಳಿದವರಿಗೆ ನಾನು 'ಅಲ್ಲೂ ಇದೆ, ಆದರೆ ಸಮಾಜದ ಬಾಜೂಕಟ್ಟೆಯಲ್ಲಿ ಒಂದು ಹಂಬಲವಾಗಿ ಹಬ್ಬಿಕೊಂಡಿದೆಯೇ ವಿನಾ ಇನ್ನೂ ವೈಯಕ್ತಿಕ ನಿಲುವಾಗಿ ಅದೇ ಬದುಕಾಗಿ ರೂಪುಗೊಂಡಿಲ್ಲ' ಎಂದು ಉತ್ತರಿಸುತ್ತೇನೆ. ನಾನು ಸಾಗರದಲ್ಲಿ ಓದುತ್ತಿರುವಾಗ ನನ್ನ ರೂಮಿನ ಪಕ್ಕದಲ್ಲಿ ಗುಡವಿಯ ರಾಮು ಎನ್ನುವ ಹುಡುಗನೂ ಒಬ್ಬ ಇದ್ದ. ಎದುರಿನ ರೂಮಿನಲ್ಲಿ ಪಿ.ಡಬ್ಲು.ಡಿ.ಯಲ್ಲಿ ಗ್ಯಾಂಗ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಗಲ್‌ನ ತಿಮ್ಮಪ್ಪನೂ ಇದ್ದ. ಈ ತಿಮ್ಮಪ್ಪನ ರೂಮಿಗೆ ಪಿ.ಡಬ್ಲ್ಯು.ಡಿ. ಲಾರಿ ಡ್ರೈವರ್ ಕೃಷ್ಣಪ್ಪ ಆಗಾಗ್ಗೆ ಭೇಟಿಕೊಡುತ್ತಿದ್ದರು. ನಮ್ಮೆಲ್ಲರಿಗಿಂತಲೂ ವಯಸ್ಸಿನಲ್ಲಿ ಹಿರಿಯರಾದ ಕೃಷ್ಣಪ್ಪ ಆಗಾಗ್ಗೆ ಅದೂ ಇದೂ ಜೋಕ್ ಹೇಳಿಕೊಂಡು ನಕ್ಕು ನಗಿಸಿಕೊಂಡಿರುತ್ತಿದ್ದರು. ತಿಮ್ಮಪ್ಪ ಕೃಷ್ಣಪ್ಪನ ಜೊತೆಯಲ್ಲಿ ಆಗಾಗ್ಗೆ ಡ್ಯೂಟಿಗೆ ಹೋಗುವುದು ಇರುತ್ತಿತ್ತು, ಕೆಲವೊಮ್ಮೆ ರಾತ್ರಿ ಪಾಳಿಯೂ ಇರುತ್ತಿತ್ತು. ಹೀಗೇ ಒಂದು ದಿನ ಯಾವುದೋ ರಜಾ ದಿನದಲ್ಲಿ ರಾಮು ಕೃಷ್ಣಪ್ಪನ ಜೊತೆಯಲ್ಲಿ ಹೋಗಿದ್ದನಂತೆ, ರಾತ್ರಿ ಪ್ರವಾಸಿ ಮಂದಿರದಲ್ಲಿ ತಂಗಬೇಕಾಗಿ ಬಂತಂತೆ, ರಾತ್ರಿ ರಾಮು ಮಲಗಿದ ಹೊತ್ತಿನಲ್ಲಿ...ಅವನೇ ಹೇಳಿದ ಹಾಗೆ 'ಈ ಕೃಷ್ಣಪ್ಪ ಏನೇನೋ ಮಾಡ್ತಾನೆ, ಎಲ್ಲೆಲ್ಲೋ ಕೈ ಹಾಕ್ತಾನೆ!' ಎಂದಿದ್ದನ್ನು ನಾವು ಬೇಕಾದಷ್ಟು ಸಾರಿ ನೆನೆಸಿಕೊಂಡು ತಮಾಷೆ ಮಾಡಿದ್ದಿದೆ. ಕೃಷ್ಣಪ್ಪನಿಗೆ ಮದುವೆಯಾಗಿ ಎರಡು ಮೂರು ಮಕ್ಕಳಿದ್ದರೂ ತಿಮ್ಮಪ್ಪ, ರಾಮುವಿನಂತಹ ಯುವಕರ ಒಡನಾಟ ಆತನ ಮನದಾಳದಲ್ಲಿನ ಹಂಬಲವನ್ನು ಜಾಗೃತಗೊಳಿಸುತ್ತಿದ್ದಿರಬಹುದು, ಮೈನ್ ಸ್ಟ್ರೀಮ್ ಹೋಮೋ ಸೆಕ್ಸ್ಯುಯಲ್ ಅಲ್ಲದಿದ್ದರೂ ಆಗಾಗ್ಗೆ ಆ ಅವತಾರವನ್ನು ಎತ್ತುತ್ತಿದ್ದಿರಬಹುದು.

ನಮ್ಮಲ್ಲಿ ಬಾಂಬೆ, ಡೆಲ್ಲಿ ಮುಂತಾದ ನಗರಗಳಲ್ಲಿನ ಘಟನೆಗಳನ್ನು ಬಿಟ್ಟರೆ ಓಪನ್ ಆಗಿ ಹುಡುಗನೊಬ್ಬ ಮತ್ತೊಬ್ಬ ಹುಡುಗನನ್ನು ಮದುವೆಯಾಗಿ ರಾಜಾರೋಷವಾಗಿ ಬದುಕುವ ಕಾಲ ಇನ್ನೂ ಬಂದಿಲ್ಲವೆಂದೇ ಹೇಳಬೇಕು. ಭಾರತದಲ್ಲಿ ನಮ್ಮ ಹಾಗೂ ನಮ್ಮ ಸಮಾಜದ ನಡುವಿನ ಸಂಬಂಧ ಬಹಳ ಹತ್ತಿರವಾದದ್ದು, 'ಯಾರು ಏನು ಅಂದುಕೊಂಡಾರೋ' ಎನ್ನುವಲ್ಲಿಂದ ಹಿಡಿದು ನಮ್ಮ ಬದುಕನ್ನೇ ಎಲ್ಲರಿಗೋಸ್ಕರ ಬದುಕಬೇಕಾದ ಪರಿಸ್ಥಿತಿ ಇನ್ನೂ ಇದೆ, ಒಬ್ಬ ವ್ಯಕ್ತಿ ಸಮಾಜದ ಮೇಲೆ ಹೆಚ್ಚು ಅವಲಂಭಿತನಾಗಿದ್ದಾನೆ ಎನ್ನುವ ಪರಿಸ್ಥಿತಿಯಲ್ಲಿ 'ನನಗೆ ಹೇಗೆ ಬೇಕೋ ಹಾಗೆ ಬದುಕುತ್ತೇನೆ' ಎನ್ನುವುದು ಸ್ವಲ್ಪ ದೂರವೇ ಉಳಿದ ಮಾತು. ಹೊಮೋಸೆಕ್ಸ್ಯುಯಲ್ ಎನ್ನುವುದು 'ಹಂಬಲ'ಕ್ಕಿಂತ ಮುಂದುವರಿದು 'ಜೀವನಶೈಲಿ' ಅಥವಾ 'ಮನಸ್ಥಿತಿ'ಯಾಗಿಲ್ಲ ಎನ್ನುವುದು ನನ್ನ ಅಭಿಮತ ಅಥವ ತಿಳುವಳಿಕೆ, ಆದರೂ ಹತ್ತು ವರ್ಷ ಅಲ್ಲಿನ ಆಗುಹೋಗುಗಳಿಂದ ದೂರ ಉಳಿದ ನನಗೆ ನನ್ನ ತಿಳುವಳಿಕೆ ಕೆಲವೊಮ್ಮೆ ಓಲ್ಡ್ ಸ್ಕೂಲ್ ಆಗಿ ಕಂಡುಬಂದಿದ್ದೂ ಇದೆ.

ಹೋಮೋಸೆಕ್ಸ್ಯುಯಲ್ ಅಂದರೆ ಸಲಿಂಗಕಾಮ ಎನ್ನುವುದಷ್ಟೇ ಎಲ್ಲರಿಗೆ ಕಂಡುಬರುತ್ತದೆ, ಆದರೆ ಸಮಾಜದ ಮಾರ್ಜಿನ್‌ನಲ್ಲಿ ಬೆಳೆದು ಮುಖ್ಯವಾಹಿನಿಗೆ ಎದುರಾಗಿ ಈಜಬಹುದಾದ ಶಕ್ತಿಯಾಗಿ, ಅದೊಂದು ಬದುಕಾಗಿ ಕಂಡುಬರಬೇಕಾದರೆ ಭಾರತದಲ್ಲಿ ಬಹಳ ಕಷ್ಟವಿದೆ. ಜಾತಿ-ಧರ್ಮಗಳ ಸಂಕೀರ್ಣತೆಯಲ್ಲೇ ಒದ್ದಾಡುತ್ತಿರುವ ಭಾರತದ ಜೀವನ ಶೈಲಿಗೆ ಹೊಸ ಯುಗದ ಕೊಡುಗೆಯಾಗಿ ಸಲಿಂಗ ಕಾಮ, ಮಿಗಿಲಾಗಿ ಅದನ್ನು ಆವರಿಸಿಕೊಂಡ ಬದುಕು ಯಾವ ಆಯಾಮವನ್ನು ಕೊಡಬಲ್ಲುದು ಎನ್ನುವ ಜಿಜ್ಞಾಸೆ ನನ್ನನ್ನು ಬಲವಾಗಿ ಕಾಡಿಸಿದೆ.

ನನ್ನ ಸೋದರಳಿಯ ಅರುಣನಿಗೆ ತಮಾಷೆಗೇನೋ ಅಂದೆ, ಆದರೆ ಭಾರತದಲ್ಲಿ ಇಂತಹದ್ದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ನನ್ನ ಊಹೆಗೆ ನಿಲುಕದು, ಫೈರ್ ಅಂತಹ ಚಲನಚಿತ್ರಗಳ ಹಿಂದೆ ಯಾವ ಸ್ಪೂರ್ತಿ ಇದೆಯೋ ಗೊತ್ತಿಲ್ಲ, ಆದರೆ ಅದು ಮುಖ್ಯವಾಹಿನಿಯ ಒಂದು ಭಾಗವಾಗುವಾಗ ಭಾರತದಲ್ಲಿ ಇನ್ನು ಏನೇನೆಲ್ಲ ಬದಲಾವಣೆಗಳಾಗಿರಬಹುದು, ಹಾಗಾಗಲು ಇನ್ನೆಷ್ಟು ವರ್ಷ ತೆಗೆದುಕೊಳ್ಳಬಹುದು ಎನ್ನುವುದು ಒಂದು ಚಿಂತೆ ಅಥವಾ ಚಿಂತನೆ ಅಷ್ಟೇ.

Thursday, January 25, 2007

ಈ ಸೂರ್ಯಾಸ್ತಾ ಎಲ್ಲೀದೂ ಅಂತ ಹೇಳೀ ನೋಡೋಣ?




ಬೆಂಗ್ಳೂರಿನಲ್ಲಿ ಸೂರ್ಯೋದಯ ಸೂರ್ಯಾಸ್ತಾ ಕಾಣಿಸೋದೇ ಇಲ್ಲವೇನೋ ಅಂದುಕೊಂಡ ನನಗೆ ರಾಜರಾಜೇಶ್ವರಿ ನಗರದ ನನ್ನ ಸ್ನೇಹಿತರ ಮನೆಯ ಉಪ್ಪರಿಗೆಯಿಂದ ಸಿಕ್ಕ ಚಿತ್ರಗಳು ಇವು.

Wednesday, January 24, 2007

೩೫ ರಿಂದ ೩೫ ಕ್ಕೆ

ಉತ್ತರ ಅಮೇರಿಕದ ಜನ ಏನ್ ಪಾಪ ಮಾಡಿದ್ರೋ ಅಂಥ ಎಷ್ಟೋ ಸರ್ತಿ ಅನ್ಸದೇ ಇರೋದಿಲ್ಲ, ಇನ್ನೇನ್ ಮತ್ತೆ ಇಲ್ಲಿಯ ಥರ್ಮಾಮೀಟರ್ರಿನಲ್ಲಿನ ಪಾದರಸ ವರ್ಷದ ಆರು ತಿಂಗಳು ಬುಷ್ಷನ ಆಡಳಿತಕ್ಕೆ ಹೆದರಿಕೊಂಡ ರಿಪಬ್ಲಿಕನ್ನರ ಹಾಗೆ ಸೊನ್ನೆಯನ್ನು ಬಿಟ್ಟು ಮೇಲಕ್ಕೆ ಏಳೋದೇ ಇಲ್ಲ ಅಂತ ಕುಳಿತುಬಿಟ್ಟಿರುತ್ತೆ! ಮನೆಯಲ್ಲೇನೋ ಬೇಜಾನ್ ಹೀಟ್ ಇದೆ ಹಾಕ್ಕೋತೀವೀ ಅಂತೀರೋ ಡ್ರೈನೆಸ್‌ನಿಂದ ಚರ್ಮದಲ್ಲಿ ಯಮತುರಿಕೆ ಶುರುವಾಗುತ್ತೇ ನೋಡಿ ಅದನ್ನ ತಡೆಯೋದಕ್ಕೆ ಯಾವ ಯಮನಿಂದಲೂ ಸಾಧ್ಯವಿಲ್ಲ, ಹಾಗಿರುತ್ತೆ.

ಇದೇನ್ ೩೫ ರಿಂದ ೩೫ ಕ್ಕೆ ಅಂಥ ಯೋಚನೇ ಮಾಡ್ತಾ ಇದೀರೋ, ಹೆಚ್ಗೆ ಕಷ್ಟಾ ಕೊಡೋದಿಲ್ಲ ನಿಮಗೆ, ಏಕೆಂದ್ರೆ ಈಗಾಗ್ಲೇ ಇಂಟರ್‌ನೆಟ್‌ನಲ್ಲಿ ಅದನ್ನ ಇದನ್ನ ಓದಿ ಮಿದುಳು ಬಹಳ ದುಡಿದು ದಣಿದಿರಬೋದು ಆದ್ರಿಂದ let us make it very simple (and not stupid, of course!). ನಮ್ ದಕ್ಷಿಣ ಭಾರತದ ಹವೆ ಅಂದ್ರೆ ಹವೆ ಒಂದ್ ರೀತಿ ಕೃಷ್ಣ ಭಟ್ರು ಹೋಟ್ಲೂ ಇಡ್ಲೀ ಥರಾ, ಅದರ ಮುಂದೆ ಬೇರೆ ಯಾವ್ದೂ ಇಲ್ವೇ ಇಲ್ಲ -- ನಾನೇನು ಮಹಾಬಲಿಪುರಂ ಬಗ್ಗೇನೋ, ಇಲ್ಲಾ ಕೊಟ್ಟಾಯಂ ಬಗ್ಗೇನೋ ಕೊರೀತಾ ಇಲ್ಲ, ಅದೇ ನಮ್ ಶಿವಮೊಗ್ಗದ ಹವಾಮಾನದ ಬಗ್ಗೆ - ಟೆಂಪ್ರೇಚರ್ರು ಏನಂದ್ರೂ ಎಪ್ಪತ್ತರ (ಫ್ಯಾರನ್‌ಹೈಟ್) ಸುತ್ತಮುತ್ತಲೂನೇ ಇರೋದು, ಅಂದ್ರೆ ಹೆಚ್ಚು ಅಂದ್ರೆ ೩೨-೩೫ ಕ್ಕೆ ಹೋಗಬಹುದು ನೋಡಿ ಡಿಸೆಂಬರ್‌ನಲ್ಲಿ (ಬಿರು ಬೇಸಿಗೆಯಲ್ಲಿ ಉಳಿದವರು ಬೇಕಾದ್ರೆ ಬೆಂದ್ ಹೋಗ್ಲಿ, ನಾನಲ್ಲಿರಲ್ವಲ್ಲಾ ಅಲ್ಲಿ!). ಅದೇ ಈ ಸರ್ತಿ ಅಲ್ಲಿ ರಜಕ್ಕೆ ಹೋದಾಗ ಇಲ್ಲಿ ಅರ್ಧ ಡಿಸೆಂಬರ್‌ವರೆಗೆ ಒಂದ್ ರೀತಿ ಥಂಡಿ ಹವೆಯಲ್ಲಿ ನಡುಗಿ ಹೋದ ನನಗೆ ಬೇರೇನು ಇಲ್ದೇ ಹೋದ್ರೂ ನಮ್ಮೂರಿನ ವಾತಾವರಣದಲ್ಲಿನ ತಂಪು, ಆರ್ದ್ರತೆ, ಸ್ವಚ್ಛಂದವಾಗಿರೋ ಗಾಳಿ ಇವೆಲ್ಲ ಮರುಳು ಮಾಡಿದ್ವು ಅಂದ್ರೆ ಅದರಲ್ಲೇನೂ ಅಚ್ಚರಿ ಇಲ್ಲ, ಅಂಥಾ ಹವೇಲಿ ಇರೋದು, ಬದುಕು ನಡೆಸೋದು ಅಂದ್ರೆ ಒಂದು ರೀತಿ ಪುಣ್ಯ ಇದ್ದ ಹಾಗೆ - ಇಲ್ಲಿ ಯಾವನಿಗ್ ಬೇಕು ಆರ್ ತಿಂಗ್ಳು ಮುದುರಿಕೊಂಡಿರೋ ಕರ್ಮಾ! (ಅಲ್ಲಿರೋರಿಗೆ ಅದರ ಬೆಲೆ ಗೊತ್ತಿಲ್ಲ ಅದರ ವಿಷ್ಯಾ ಬೇರೆ).

ನಮ್ಮೂರಲ್ಲಿ ೩೫ ಡಿಗ್ರಿ ಸೆಂಟಿಗ್ರೇಡ್ ಇತ್ತೂ ಅಂತಂದ್ರೆ ಏನೇನೆಲ್ಲ ಮಾಡಬಹುದು, ಅದೇ ಇಲ್ಲಿಗೆ ಬಂದ್ವಪ್ಪಾ, ಅದೆಲ್ಲಿಂದ ಬಂದ್ ಹಿಡಕಂಡ್ಯೋ ಅನ್ನೋ ಹಾಗೆ ೩೫ ಡಿಗ್ರಿ ಫ್ಯಾರನ್‌ಹೈಟ್‌ಗೆ ಟೆಂಪ್ರೇಚರ್ ಇಳಿದುಬಿಡೋದೆ? ನಾನೂ ಬೇಕಾದಷ್ಟ್ ಸಾರಿ ತಲೆ ಕೆಡಿಸಿಕೊಂಡಿದ್ದೀನಿ, ಇಲ್ಲಿನವರ ಹಾಗೆ ನಮ್ಮೂರಲ್ಲೂ ಫ್ಯಾರನ್‌ಹೈಟ್ ಸ್ಕೇಲ್ ಅಳವಡಿಸಿಕೊಂಡಿದ್ರೆ ಹೇಗಿತ್ತು ಅಂತ, ಅದೇನ್ ಇದ್ರೂ ಡಾಕ್ಟ್ರು ಜೇಬಲ್ಲಿರೋ ಥರ್ಮಾಮೀಟರ್ ಬಿಟ್ಟು ಹಾಗೂ ಜ್ವರ ಬಂದಿರೋ ಜನಗಳನ್ನ ಬಿಟ್ಟು ಅತ್ತಿತ್ತ ಇನ್ನೂ ಕದಲ್ಲಿಲ್ಲ ನೋಡಿ. ಒಂದ್ ಲೆಕ್ಕಾ, ಒಂದರಿಂದ ನೂರರವರೆಗಿನ ಫ್ಯಾರನ್‌ಹೈಟ್ ಅಳತೆ ಇದ್ರೇನೇ ಚೆನ್ನಾಗಿತ್ತು, ಅದರ ಬದಲಿಗೆ ೧೨ ರಿಂದ ನಲವತ್ತರವರೆಗಿನ ಸೆಂಟಿಗ್ರೇಡನ್ನ ಇನ್ನೂ ಯಾಕ್ ಇಟ್‌ಗೊಂಡಿದ್ದಾರೋ ಯಾರಿಗ್ ಗೊತ್ತು?

ಹಂಗಂಥ ಇಲ್ಲಿನ ಪೌಂಡು, ಔನ್ಸು, ಪೈಂಟ್, ಕ್ವಾರ್ಟುಗಳ ಅಳತೆ ಇರಲಿ ಅನ್ಸಲ್ಲ...ನಮ್ಮದೇನಿದ್ರೂ ಲೀಟರುಗಳ ಲೆಕ್ಕ, ಮಿಲಿ ಲೀಟರು ಅಂದ್ರೇನೇ ತೃಪ್ತಿ, ಒಂದು ರೀತಿ ಉಂಡು ನೀರು ಕುಡಿದಷ್ಟು ನಿರಾಳ, ಈ ಗ್ಯಾಲನ್ನು ಲೆಕ್ಕಾ ತೆಗೊಂಡ್ರೆ ಮುದ್ದೆ ಉಂಡು ನೀರ್ ಕುಡೀಬ್ಯಾಡಾ ಅಂದ್ ಹಾಗಿರುತ್ತೆ, ಯಾವನಿಗ್ ಗೊತ್ತಿರುತ್ತೆ, ಒಂದ್ ಗ್ಯಾಲನ್ ಅಂದ್ರೆ ಇಂತಿಷ್ಟೇ ಲೀಟರ್ರೂ ಅಂಥಾ? ಇವರು ಇಂಚು-ಪಿಂಚುಗಳಲ್ಲಿ ಏನೇನನ್ನೆಲ್ಲ ಅಳೆದ್‌ಕೊಂಡ್ರೂ ಕೊನೇ ಪಕ್ಷಾ ಕ್ಯಾಮೆರಾ ಲೆನ್ಸಿನ ವಿಚಾರಕ್ಕೆ ಬಂದಾಗ ಮಿಲಿ ಮೀಟ್ರು ಬಳಸ್ತಾರಲ್ಲ, ಅದೇ ಪುಣ್ಯಾ, ಅದನ್ನೇನಾದ್ರೂ ಇಂಚಿಗೆ ಕನ್ವರ್ಟ್ ಮಾಡಿದ್ರೂ ಅನ್ನಿ ನಾನು ಅದನ್ನ ಲೆಕ್ಕ ಹಾಕ್ತಾ ಹಾಕ್ತಾ ಇನ್ನಿಪ್ಪತ್ತು ವರ್ಷ ಹೆಚ್ಚು ಆಯಸ್ಸು ಆದವರ ಹಾಗೆ ಆಡ್ತಿದ್ನೋ ಏನೋ?

ಈ ದೇಶ್‌ದಲ್ಲಿ ಯಾಕ್ ಇಷ್ಟು ಕೋಲ್ಡೂ ಅಂತಾನೂ ಬೇಕಾದಷ್ಟ್ ಸರ್ತಿ ಯೋಚ್ನೆ ಮಾಡೀ-ಮಾಡೀ ನನಗೆ ಸಾಕಷ್ಟು ತಲೆ ಬಿಸಿ ಆಗಿದೆ, ಮೋಸ್ಟ್‌ಲೀ ಇಲ್ಲಿನ ಜನಗಳಿಗೆ ತಲೆಬಿಸಿ ಹೆಚ್ಚು ಅಂತ ಭಗವಂತ ಇಲ್ಲಿ ಆರು ತಿಂಗಳು ಕೊರೆಯೋ ಛಳಿಯನ್ನ ಕೊಟ್ನೋ ಏನೋ? ನಾವೇನ್ ಇಲ್ಲಿಯವರ ಥರಾ ಸ್ಕೀಯಿಂಗೂ ಮಣ್ಣೂ-ಮಸಿ ಅಂಥ ಎಲ್ಲೂ ಹೋಗಲ್ಲ, ಶಕ್ತಿ ಇದ್ದು ದುಡಿಯೋ ಹೊತ್ನಲ್ಲಿ ದುಡಿಯೋದು ಕಡಿಯೋದನ್ನೆಲ್ಲ ಮಾಡಿ ಸಂಜೆ ಮನೇಗೆ ಹೋಗಿ ಉಂಡು, ಟಿವಿ ನೋಡಿ ಮಲಕ್ಕಂತೀವಿ, ಅಮೇಲೆ ಸ್ವಲ್ಪ ಕೃಶವಾದೆವೋ ಇಲ್ಲಿನ ಛಳಿಯ ಜೊತೆಯಲ್ಲಿ ಬರೋ ಕತ್ತಲ ಜೊತೆ ಮಸಲತ್ತು ಮಾಡ್ತಾ ಹಳೇದನ್ನೆಲ್ಲ ನೆನೆಸಿಕೊಂಡು ಡಿಪ್ರೆಸ್ಸ್ ಆಗ್ತೀವಿ. ಕಾಸು ಕಾಸು ಅಂಥ ಇಷ್ಟು ದೂರ ಬಂದ್ ಮೇಲೆ ಒಂದಿಷ್ಟ್ ತಲೆಬಿಸಿ ಆಗೋದ್ ಬ್ಯಾಡಾ ಅಂದ್ರೆ ಹೆಂಗೆ? ತಲೆಬಿಸಿ ಆದ್ರೆ ಅದನ್ನ ಕಾಂಪೆನ್‌ಸೇಟ್ ಮಾಡೋದಕ್ಕೆ ಇನ್ನೇನೋ ಆಗಿಹೋಗುತ್ತೆ, ಕೆಲವು ನಮ್ ಕೈಯಲ್ಲಿ, ಇನ್ ಕೆಲವು ಮಂದಿ ಕೈಯಲ್ಲಿ!

ಬ್ಯಾಡಾ ಬಿಡಿ, ಟೆಂಪ್ರೇಚರ್ರ್ ವಿಷ್ಯಾ ಮಾತಾಡ್ತಾ ಮಾತಾಡ್ತಾ ಎಲ್ಲಿಂದ ಎಲ್ಲಿಗೋ ಹೋಯ್ತು ಒಂದ್ ರೀತಿ ನಮ್ಮಲ್ಲಿನ ಈಶಾನ್ಯ ಮಾರುತದ ಹಾಗೆ. ಇದನ್ನೆಲ್ಲ ಬರೆದು ಅಲ್ಲಲ್ಲ ಬಡಕಂಡು ನಿಮ್ ಮಂಡೆ ಬಿಸಿ ಮಾಡೋದು ನನ್ ಗುರೀ ಏನಲ್ಲ, ಹಂಗೇನಾದ್ರೂ ಆಯ್ತೂ ಅಂದ್ರೂ ಅದಕ್ಕೆ ನಾನ್ ಜವಾಬ್ದಾರ್ನಲ್ಲ ಸ್ವಾಮಿ...ಈಗ್ ನಮಿಗಿರೋ ತಲ್‌ನೋವೇ ಸಾಕು, ಇನ್ನ್ ನಿಮದೆಲ್ಲಿಂದ ಕಟ್‌ಗೊಂಡ್ ತಿರುಗ್ಲಿ ಮತ್ತೆ!

ಇನ್ನೂ ಏರ್‌ಪೋರ್ಟ್‌ನಿಂದ ಹೊರಕ್ಕೆ ಬಂದ್ ತಲೆ ಹಾಕಿಲ್ಲ, ಅಷ್ಟೋತ್ತಿಗಾಗ್ಲೇ ಯಾವ್ದೋ ದೂರದ ಹಳೇ ಸಂಬಂಧಿ ಬೆನ್ನು ಹತ್ತಿದ ಹಾಗೆ ಈ ಛಳಿ ಮೈ ಹತ್ತ್‌ಕೊಂಡ್‌ಬಿಟ್ಟಿದೆ, ಇದು ಇನ್ನು ಬಿಟ್ಟ್ ಹೋಗ್‌ಬೇಕು ಅಂದ್ರೆ ಸ್ಪ್ರಿಂಗ್ ಬರಬೇಕು (ಸ್ಪ್ರಿಂಗ್ ತ್ರಾಸ್ ಅಲ್ಲ, ಅದೇ ನಮ್ಮ ವಸಂತ ಋತು, ಚೈತ್ರಮಾಸ), ಅಲ್ಲೀಗಂಟ ಕಾಯೋದ್ ನಮ್ ಹಣೇಬರಾ, ನಮ್ಮಂತೋರ್ನ ನೋಡಿ ನಗೋದು ಒಂದ್ ರೀತಿ ನಿಮಗಾದ್ರೂ ಒಂದಿಷ್ಟು ಖುಷಿ ಅಂತ ಕೊಟ್ಟಿದ್ರೆ ಎಷ್ಟೋ ಸುಖಾ ಇರ್ತಿತ್ತು.

ನಿಮ್ಮೂರಲ್ಲಿ ಹೆಂಗಿದೆ ಟೆಂಪ್ರೇಚರ್ರೂ, ನಿಮ್ ಸುಖಾ ದುಕ್ಕಾ ವಿವರಿಸಿ ಮರೀದೇ ಪತ್ರ ಬರೀತೀರಾ ತಾನೇ?!

Sunday, January 21, 2007

ಮುಂದಾಳುಗಳ ಕೊರತೆನೇ, ಛೇ!

ಸರಿಯಾದ "ನಾಯಕರ" ಕೊರತೆ ಎಂದೇನೋ ನನ್ನ ಅನುಭವವನ್ನು ಹಂಚಿಕೊಂಡಿದ್ದಾಯಿತು, ಆದರೆ ಬೆಂಗಳೂರಿನಲ್ಲಿ ನಮ್ಮ ಕಾರು ಟ್ರಾಫಿಕ್ ಲೈಟ್‌ಗಳಲ್ಲಿ ನಿಂತಲ್ಲೆಲ್ಲ ಮುಂದಾಳುಗಳ ಕೊರತೆ ಇದೆ ಎಂದು ಅನ್ನಿಸಲೇ ಇಲ್ಲ! ಒಬ್ಬರಿಗಿಂತ ಮತ್ತೊಬ್ಬರು ಎಲ್ಲರಿಗಿಂತ ಮುಂದೆ ಬಂದು ಯಾವುದೋ ಕಾಲದಲ್ಲಿ ಹಳದಿ ಬಣ್ಣದಲ್ಲಿದ್ದು ಇಂದು ಮಾಸಿದ ಬಿಳಿ ಬಣ್ಣದ ಪಟ್ಟೆಯ ಆಜುಬಾಜಿನಲ್ಲಿ ನಿಂತು ಮುಂದೆ ಕಡಿಮೆಯಾಗುತ್ತಿರುವ ಡಿಜಿಟಲ್ ಸಂಖ್ಯೆಗಳನ್ನ ಮನದಲ್ಲೇ ಎಣಿಸುತ್ತಾ ಇನ್ನೆನು ಹತ್ತು, ಒಂಭತ್ತು, ಎಂಟು...ಬರುತ್ತಿದ್ದಂತೆಯೇ ತಮ್ಮ ತಮ್ಮ ವಾಹನಗಳನ್ನ ಆರಂಭಿಸಿ, ಗೇರ್ ಬದಲಾಯಿಸಿ, ಚೂರು-ಚೂರೇ ತಮ್ಮ ವಾಹನವನ್ನು ಮುಂದೆ ಓಡಿಸಿ, ಇನ್ನೇನು ಐದು, ನಾಲ್ಕು, ಮೂರು ಬರುತ್ತಿದ್ದಂತೆಯೇ ಕಣ್ಣಿನಿಂದ ದೂರ ಹೋಗುವ ಬೇಕಾದಷ್ಟು ಮುಂದಾಳುಗಳಿಗೇನೂ ಕಡಿಮೆಯಿರಲಿಲ್ಲ.

ನಮ್ಮ ಡ್ರೈವರ್‌ ಅನ್ನು ಕೇಳಿದೆ 'ಇವರೆಲ್ಲ ಇಷ್ಟೊಂದು ಆತುರವಾಗಿ ಎಲ್ಲಿಗ್ ಹೋಗ್ತಾರೆ?', ಅವನ ಉತ್ತರ, 'ಅದೇನ್ ಮಾಡ್ತಾರೋ ಗೊತ್ತಿಲ್ಲ, ಯಾವಾಗ್ ನೋಡಿದ್ರೂ ಹೀಗೇನೇ, ಇನ್ನು ರಾತ್ರಿ ಆಗ್‌ತಿದ್ದ ಹಾಗೆ ಇವರ ಆಟ ಇನ್ನೂ ಜೋರು' ಎಂದು ಸುಮ್ಮನಾದ.

ಏರ್‌ಪೋರ್ಟ್‌ನಿಂದ ಮನೆಗೆ ಮೊಟ್ಟ ಮೊದಲನೇ ಬಾರಿಗೆ ಹೋಗುತ್ತಿದ್ದಾಗಲಂತೂ ಒಂದೆರಡು ಬಾರಿ ಹೃದಯವೇ ಬಾಯಿಗೆ ಬರೋ ಘಟನೆಗಳು ನಡೆದು ಹೋದವು, ತಮ್ಮ-ತಮ್ಮ ಎದುರಿನ ಟ್ರಾಫಿಕ್ ಲೈಟ್ ಕೆಂಪಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರೂ ಮುನ್ನುಗ್ಗುವವರೇ, ಇನ್ನೇನು ಸ್ವಲ್ಪದರಲ್ಲೇ ಆಗುವ ಅಪಘಾತಗಳನ್ನು ತಪ್ಪಿಸಿಕೊಂಡಿದ್ದಾಯಿತು ಎಂದು ನಮ್ಮ ಡ್ರೈವರ್ ಶಾಪ ಹಾಕುತ್ತಿದ್ದಂತೆ, ಕೆಂಪು ದೀಪವಿರುವಾಗ ಹೋದರೆ ಪಕ್ಕದಿಂದ ವೇಗವಾಗಿ ಬರುವ ಗಾಡಿಗಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು, ಹಾಗೆ ಮಾಡದೇ ಹೋದರೆ ಹಿಂದುಗಡೆಯಿಂದ ಬಂದು ಗುದ್ದುವವರೋ ಅಥವಾ ಹಾರ್ನ್ ಹಾಕುವವರಿಂದಲೋ ತಪ್ಪಿಸಿಕೊಳ್ಳಬೇಕು ಎಂದು ಕಸಿವಿಸಿಗೊಂಡಿದ್ದವನನ್ನು 'ಇನ್ನು ಒಂದು ವಾರ ಇಲ್ಲೇ ಇದ್ದು ಬೆಂಗಳೂರಿನಲ್ಲಿ ಡ್ರೈವ್ ಮಾಡೋದನ್ನ ಕಲಿತುಕೋ' ಎಂದುದ್ದಕ್ಕೆ 'ನಮ್ಮೂರಿನಲ್ಲಿ ರಸ್ತೆಗಳು ಹೇಗಿದ್ದರೂ ಅದೇ ನಮಗೆ ಸ್ವರ್ಗ' ಎನ್ನುವುದೇ?

ಕಾರಿನ ಕಿಟಕಿ ತೆರೆದಿದ್ದರಿಂದ ಹೊರಗಿನಿಂದ 'ನಮ್ಮ ದೇಶದಲ್ಲಿ ಬೇಕಾದಷ್ಟು ನಾಯಕರಿದ್ದಾರ್ರೀ, ಆದರೆ ಅವರೆಲ್ಲ ಒಂದೇ ಸಾಲಿನಲ್ಲಿ ನಡೀತಾರೆಯೇ ವಿನಾ ಒಬ್ಬೊರನೊಬ್ಬರು ಜಪ್ಪಯ್ಯಾ ಅಂದ್ರೂ ಫಾಲೋ ಮಾಡೋದಿಲ್ಲ...' ಎಂದು ಹೊರಗಿನಿಂದ ಧ್ವನಿಯೊಂದು ಒಳಗೆ ಬಂತು, 'ಅದೇಕೆ ಹಾಗೆ?' ಎಂದು ನನ್ನ ಮನದಲ್ಲೇ ಪ್ರಶ್ನೆ ಹಾಕಿಕೊಂಡಿದ್ದನ್ನು ಅರ್ಥ ಮಾಡಿಕೊಂಡೋರ ಹಾಗೆ ಅದರ ಹಿಂದೆ ಉತ್ತರವೊಂದನ್ನು ಎಸೆಯೋದೇ! 'ಯಾರೂ ಯಾರನ್ನೂ ಫಾಲೋ ಮಾಡಬಾರದು ಅನ್ನೋ ಆಜ್ಞೆ ಏನೂ ಆಗಿಲ್ಲ, ಆದರೆ ಅಂಥ ಮುಂದಾಳುಗಳ ಕೊರತೇ ಇರೋದ್ರಿಂದ ಒಬ್ಬೊರಿಗೊಬ್ಬರು ಅಡ್ಜಷ್ಟ್ ಮಾಡಿಕೊಂಡು ಎಲ್ರೂ ಒಂದೇ ನೇರದಲ್ಲಿ ನಡೀತಾರೆ ಸಾರ್' ಎಂದು ಹೇಳಿದ ಧ್ವನಿ ಅದೃಶ್ಯವಾಯಿತು...ಯಾರದು, ಯಾರದು ಎಂದು ಎಷ್ಟೇ ಬಗ್ಗಿ ನೋಡಿದರೂ ಕಪ್ಪು ಮುಚ್ಚಿದ ಕಿಟಕಿ ಗಾಜುಗಳು ತಮ್ಮಿಂದ ಹೊರಗೆ ನೋಡಬಿಡಲಿಲ್ಲ, ಈ ಕಪ್ಪು ಮುಚ್ಚಿದ ಕಿಟಕಿಗಳು ಒಂದು ರೀತಿ ಕಾರಿಗೆ ಬುರುಕಾ ತೊಡಿಸಿ ಹೊರಗಿನಿಂದ ಒಳಗೆ ಹಾಗೂ ಒಳಗಿನಿಂದ ಹೊರಬರುವ ಹೋಗುವ ಅಲೋಚನೆಗಳಿಗೂ ಕಡಿವಾಣ ಹಾಕಿದ್ದಂತೆ ತೋರಿತು.

'ಏನ್ ಸಾರ್ ಅಮೇರಿಕದ ಬಗ್ಗೆ ಯೋಚಿಸ್ತಾ ಇದ್ದೀರಾ' ಎಂದು ನಮ್ಮ ಡ್ರೈವರ್ ಕೇಳಿದ್ದಕ್ಕೆ, 'ಇಲ್ಲಾ ಮಾರಾಯಾ, ಅಮೇರಿಕದ ಬಗ್ಗೆ ಯೋಚಿಸೋದಕ್ಕೆ ನನ್ನ ಬಳಿ ಸದ್ಯಕ್ಕೆ ಏನೂ ಇಲ್ಲ' ಎಂದಿದ್ದನ್ನು ಅವನು ಜೀರ್ಣಿಸಿಕೊಳ್ಳಲು ಸ್ವಲ್ಪ ಹೊತ್ತು ಬೇಕಾಯಿತು.

ನಾನು ಹಳೆಯ ಪ್ರಶ್ನೆಯ ಜಾಡೊಂದನ್ನು ಹಿಡಿದು ನಮ್ಮ ಡ್ರೈವರ್ ತಲೆ ತಿನ್ನ ತೊಡಗಿದೆ, 'ಹೌದು, ಇಷ್ಟೊಂದು ಅರ್ಜೆಂಟಾಗಿ ಹೋಗ್ತಾ ಇದ್ದಾರಲ್ಲ, ಅದೂ ಎಲ್ಲ ರೂಲ್ಸು ರೆಗ್ಯುಲೇಷನ್ನುಗಳನ್ನೂ ಗಾಳಿಗೆ ತೂರಿ, ಅವರೆಲ್ಲ ಎಲ್ಲಿಗೆ ಹೋಗ್ತಾರೆ, ಏನೇನ್ ಮಾಡ್ತಾರೆ?', ಕಾರಿನ ಒಳಗಾಗಲಿ ಹೊರಗಾಗಲೀ ಈ ಬಾರಿ ಯಾವುದೇ ಧ್ವನಿ ಬಾರದಿದ್ದುದರಿಂದ ನಾನೇ ಮುಂದುವರೆಸಿದೆ, 'ಇವರೆಲ್ಲ ಟೈಮನ್ನ ಉಳಿಸೋರೋ, ಬೆಳೆಸೋರೋ?' ಈ ಮಾತನ್ನ ಕೇಳಿ ನಮ್ಮ ಡ್ರೈವರ್ರಿಗೆ ಸ್ವಲ್ಪ ಸಿಟ್ಟು ಬಂದಿತೆಂದು ಕಾಣುತ್ತದೆ, ಟೈಮು ಉಳಿಸೋದಲ್ಲ, ಬೆಳೆಸೋದೂ ಅಲ್ಲ, ಅವರ ಕೈಯಲ್ಲಿ ಇರೋ ವಾಹನವನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿಸೋದು, ವೇಗದಲ್ಲಿದೆ ಮಜಾ, ದಿನಾ ನಿಧಾನವಾಗಿ ಹೋಗಿ ಬಂದ್ರೆ ಅದರಲ್ಲೇನಿದೆ ಗಮ್ಮತ್ತು?'

ಪ್ರಶ್ನೆಗೆ ಮತ್ತೊಂದು ಪ್ರಶ್ನೆ ಉತ್ತರವಾಗಿ ಬಂದಿದ್ದು ಅಷ್ಟೊಂದು ಸಮಂಜಸವೆಂದು ಅನಿಸದಿದ್ದರೂ 'ನಾಯಕರೇನೋ ಮುಂದೆ ವೇಗವಾಗಿ ಹೋಗ್ತಾರೆ, ಅವರ ಹಿಂಬಾಲಕರಿಗೂ ಅದೇ ವೇಗ ಇರಬೇಕಲ್ಲ? ನಾಯಕರೇನೋ ಹೋಗಿ ಮರೆಯಾಗಿಬಿಟ್ಟರೆ ಹಿಂಬಾಲಿಸುವವರಿಗೆ ಅವರ ಜಾಡು ಸುಳಿಯೋದೆಂತು!'

'ಅವರು ಎಷ್ಟೇ ವೇಗವಾಗಿ ಹೋದ್ರೂ ಎಲ್ಲಿಗೂ ಹೋಗೋದಿಲ್ಲ, ನಾವು ಮುಂದಿನ ಟ್ರಾಫಿಕ್ ಲೈಟ್ ಹತ್ರ ಹೋದ್ರೆ ಅಲ್ಲೇ ಎಣಿಸ್ಕೊಂಡು ಬಿದ್ದಿರ್ತಾರೆ ನೋಡಿ ಬೇಕಾದ್ರೆ' ಎಂದು ಓಪನ್ ಆಹ್ವಾನ ಕೊಟ್ಟ...ಅಷ್ಟರಲ್ಲಿ ಹೊರಗಿನಿಂದ ಇನ್ನೊಮ್ಮೆ ಅದೇ ಧ್ವನಿ ಮತ್ತೆ ಬಂತು '...ನಾನು ಆಗ್ಲೇ ಹೇಳ್ಲಿಲ್ವಾ, ನಮ್ಮ ನಾಯಕರೆಲ್ಲ ಒಂದೇ ಸಾಲಿನಲ್ಲಿ ನಡೆಯೋರು, ಗುಂಡಿಗೆ ಬಿದ್ರೂನೂ ಒಂದೇ ಸರ್ತಿ ಬಿದ್ದು ಹೋಗ್ತಾರೆ, ವೇಗಾ-ಗೀಗ ಏನೂ ಇಲ್ಲ, ಎಲ್ಲಾ ಆಮೇ ವೇಗವೆ!'

'ಎಲಾ ಇವನ, ನಮ್ ದೇಶ್ದಲ್ಲೂ ಸರಳ ರೇಖೆಯಲ್ಲಿ ಸಾಗೋ ನಾಯಕರಿದ್ದಾರೆಯೇ? ವೇಗದ ಕಥೆ ಹಾಗಿರಲಿ, ನಾಯಕರಿದ್ದಾರಲ್ಲ ಅಷ್ಟೇ ಸಾಕು...' ಎನ್ನುಕೊಳ್ಳುತ್ತಿರುವಾಗ...

'ಯಾವ ನಾಯಕರು?...ನಿಮಗಿನ್ನೂ ನಿದ್ದೇ ಸರಿಯಾಗಿ ಆದ ಹಾಗಿಲ್ಲ, ಸುಮ್ನೇ ಬಡಬಡಿಸ್ತಾ ಇದ್ದೀರಾ' ಎಂದೆನ್ನಬೇಕೆ ನಮ್ಮ ಡ್ರೈವರ್, ನಾನು 'ಸರಿ, ಮುಂದೆ ನಡಿ' ಎನ್ನುವಲ್ಲಿಯವರೆಗೆ ಹಸಿರು ಸಿಗ್ನಲ್ಲಿನಲ್ಲಿಯೂ ಗಾಡಿಯನ್ನು ನಿಲ್ಲಿಸಿ ಬಿಟ್ಟಿದ್ದ, ಸದ್ಯ ಹಿಂದಿನಿಂದ ಬಂದು ಯಾರೂ ಗುದ್ದಲಿಲ್ಲ ಅಷ್ಟೇ!

Wednesday, January 17, 2007

It is good to be back...

'ಅಂತರಂಗ'ದಲ್ಲಿ ಏನನ್ನೂ ಬರೆದಿಲ್ಲ ಸುಮಾರು ನಾಲ್ಕು ವಾರಗಳಿಂದ ಎಂದುಕೊಂಡಾಗಲೆಲ್ಲ ಏನೋ ಒಂದು ರೀತಿಯ ಕಳವಳವಾಗುತ್ತಿದ್ದುದಂತೂ ನಿಜ, ಆದರೆ ಹಾಗೆ ಮಾಡಿದ್ದರಿಂದ ಬಹಳಷ್ಟು ಉಪಕಾರವಂತೂ ಆಗಿದೆ, ನನ್ನ ಆಲೋಚನಾ ಸರಣಿಗಳಲ್ಲಿ ಹಲವಾರು ಒರತೆಗಳು ಜೀವ ಪಡೆದುಕೊಂಡಿವೆ ಹೀಗೆ ಎಷ್ಟೋ ಧನಾತ್ಮಕ ಬದಲಾವಣೆಗಳಿಗೆ ಕಾರಣವಾದ ನನ್ನ ಭಾರತದ ಪ್ರವಾಸವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ!

ಹಲವಾರು ನೆಲೆಗಳಲ್ಲಿ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವಂತೆ ಹಾಗೂ ಹಲವಾರು ಮುಖಗಳನ್ನು ಎದುರುಗೊಂಡಂತೆಲ್ಲ ಹೊಸ ಹೊಸ ದೃಷ್ಟಿ ಕೋನಗಳನ್ನು ನನ್ನಲ್ಲಿ ಹುಟ್ಟುವಂತೆ ಮಾಡುವಷ್ಟು ಪರಿಣಾಮಕಾರಿಯಾಗುವಂತದ್ದು ಭಾರತದ ಪ್ರವಾಸ. ವರ್ಷಗಳು ಉರುಳಿದಂತೆ ಬದಲಾಗುವ ನನ್ನ ವಿಚಾರ ಸರಣಿಗಳು, ಜೊತೆಯಲ್ಲಿ ಸಾಕಷ್ಟು ಕ್ರಾಂತಿಯಲ್ಲಿ ಮಿಂದು ಪುಳಕಿತಗೊಳ್ಳುತ್ತಿರುವಂತೆ ಕಂಡುಬಂದ ಜನರು ಇವನ್ನೆಲ್ಲ ಕುರಿತು ಯೋಚಿಸುತ್ತಾ ಹೋದರೆ ಎಷ್ಟು ಬರೆದರೂ ಕಡಿಮೆಯೆ. ಹೀಗೇ ಮುಂಬರುವ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಬರೆಯಲು ಪ್ರಯತ್ನಿಸುತ್ತೇನೆ.

ಒಟ್ಟಿನಲ್ಲಿ, ನನ್ನ ಪ್ರಕಾರ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆರೋಗ್ಯಕರವಾದವು, ಅಲ್ಲಿನ ಪ್ರಚಂಡ ಬೆಳವಣಿಗೆ ಒಂದಲ್ಲ ಒಂದು ದಿನ ಭಾರತವನ್ನು ವಿಶ್ವದ ಅಗ್ರಮಾನ್ಯ ದೇಶವನ್ನಾಗಿ ಮಾಡುವುದರಲ್ಲಿ ಸಂಶಯವೇನಿಲ್ಲ, ಆದರೂ ಈ ಕೆಳಗಿನ ಅಂಶಗಳು ನನ್ನನ್ನು ಬಹಳವಾಗಿ ಯೋಚಿಸುವಂತೆ ಮಾಡಿವೆ:
- ಜನರಲ್ಲಿ ಅತಿಯಾದ ಮೊಬೈಲ್/ಸೆಲ್ ಫೋನ್ ಬಳಕೆ
- ಎಲ್ಲ ಕ್ರಾಂತಿಗೂ ಮುಖ್ಯವಾದ ಜನರ ಮನಸ್ಥಿತಿಯಲ್ಲಿನ ನಿಧಾನವಾದ ಬದಲಾವಣೆಗಳು
- ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ
- ಸರಿಯಾದ ನಾಯಕರ, ಮುತ್ಸದ್ದಿಗಳ, ದಾರ್ಶನಿಕರ ಹಾಗೂ ವಿಚಾರವಂತರ ಕೊರತೆ
- ಸರ್ವವ್ಯಾಪಿಯಾಗಿ ಕಂಡುಬರುವ ಅನಗತ್ಯ ಪೈಪೋಟಿ
- ಪ್ರಾದೇಶಿಕ ಭಾಷೆಗಳ ಅಭಾವ ಹಾಗೂ ಅಳಿವು-ಉಳಿವು
- ಉಳ್ಳವರ ನಡುವಿನ ಅಂತರ

ಬೆಂಗಳೂರಿನಲ್ಲಿನ ಐದಾರು ಕನ್ನಡ ಎಫ್, ಎಮ್. ರೇಡಿಯೋ ಸ್ಟೇಷನ್‌ಗಳಿಂದ ಹಿಡಿದು ನಾನು ಬಂದಿಳಿದ ಏರ್‌ಪೋರ್ಟುಗಳವರೆಗೆ ಬರೆಯಲು ಬಹಳಷ್ಟಿವೆ...ಕಾದು ನೋಡಿ.

Friday, December 15, 2006

'ಅಂತರಂಗ'ಕ್ಕೆ ಒಂದಿಷ್ಟು ದಿನ ರಜೆ...

ಪ್ರತಿದಿನವೂ ಒಂದಲ್ಲ ಒಂದು ಲೇಖನವನ್ನು ಬರೆದು ಹಾಕಬೇಕು ಎನ್ನುವ ಉತ್ಸಾಹಕ್ಕೆ ಅಡ್ಡಿಬರುವ ಹಲವಾರು ಅಂಶಗಳಲ್ಲಿ ಮೈಗಳ್ಳತನವೂ ಒಂದು ಎಂದು ನೇರವಾಗಿ ಹೇಳಿಕೊಂಡುಬಿಟ್ಟಿದ್ದೇನೆ. ಆದರೆ ಈಗ ಸ್ವಲ್ಪ ದಿನಗಳ ಕಾಲ ರಜೆ ತೆಗೆದುಕೊಳ್ಳುತ್ತಿರುವುದು ಒಂದು ಮಹಾ ಕಾರಣಕ್ಕಾಗಿ, ಅದೇನೆಂದರೆ ಸುಮಾರು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಹೋಗುವ ಭಾಗ್ಯ ಬಂದಿದ್ದಕ್ಕೆ.

ನನಗೆ ಗೊತ್ತಿರುವ ಹಾಗೆ ಭಾರತದಲ್ಲಿ ಎಷ್ಟೋ ಜನ ತಮ್ಮ ಜಾತಕ, ಅಥವಾ ಹಸ್ತವನ್ನು ತೋರಿಸಿ ತಮ್ಮ ಹಣೆಯಲ್ಲಿ ವಿದೇಶ ಪ್ರಯಾಣದ ಬಗ್ಗೆ ಬರೆದಿದೆಯೇ ಎಂದು ಜ್ಯೋತಿಷಿಗಳಲ್ಲಿ ಕೇಳಿಕೊಳ್ಳುವುದು ಗೊತ್ತು. ಒಂದುವೇಳೆ 'ವಿದೇಶ ಪ್ರಯಾಣ ಯೋಗ'ವೆನ್ನುವುದು ನಿಜವೆಂದುಕೊಂಡರೆ ಸಧ್ಯಕ್ಕೆ ಅಮೇರಿಕವನ್ನು ಮನೆಯಾಗಿ ಮಾಡಿಕೊಂಡ ನನ್ನಂಥವರಿಗೆ ಭಾರತಕ್ಕೆ ಹೋಗುವುದೂ ಒಂದು ವಿದೇಶ ಪ್ರಯಾಣವೇ ಅಲ್ಲವೇ? ಅಂತಹ ಯೋಗಗಳು ಎಷ್ಟು ಸಾಧ್ಯವೋ ಅಷ್ಟು ಬರಲಿ ಎನ್ನುವುದು ಒಂದು ಯೋಚನೆಯಾದರೆ, ಆಗ ಬಹುದಾದ ಖರ್ಚಿನ ದೃಷ್ಟಿಯಿಂದಲೂ ಹಾಗೂ ಇಲ್ಲಿ ಮಾಡಿ ಮುಗಿಸಬೇಕಾದ ಕೆಲಸ ಕಾರ್ಯಗಳ ದೃಷ್ಟಿಯಿಂದಲೂ ಕೆಲವೊಮ್ಮೆ ಅತಿ ಪ್ರಯಾಣವೂ ಒಳ್ಳೆಯದಲ್ಲ ಎನ್ನುವ ವಾದವನ್ನೂ ಕೇಳಿದ್ದೇನೆ. ಅಪರೂಪಕ್ಕೆ ಬಂದವನನ್ನು 'ಅಮೇರಿಕದವನು...' ಎಂದು ಆದರಿಸಿಯಾರು ಇಲ್ಲವಾದರೆ ಆಗಾಗ್ಗೆ ಬರುವವನನ್ನು 'ಹಾಕ್‌ಮಣೆ, ನೂಕ್‌ಮಣೆ, ತೋರ್‌ಮಣೆ'ವಾದಗಳು ಹೆದರಿಸಿಬಿಟ್ಟಾವು!

ಏನೇ ಇರಲಿ, ನನ್ನ ಹೆಚ್ಚೂಕಡಿಮೆ ಬರಿದಾದ ಆಲೊಚನೆಗಳ ಚೀಲವನ್ನು ತುಂಬಿಕೊಳ್ಳುವುದಕ್ಕೆ ಮುಂಬರುವ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ. ಪುರುಸೊತ್ತು ಸಿಕ್ಕಾಗಲೆಲ್ಲ ಬರೆದುಕೊಳ್ಳುತ್ತೇನಾದರೂ ಅವುಗಳನ್ನೆಲ್ಲ ಕಂಪ್ಯೂಟರಿಗಿಳಿಸಿ 'ಅಂತರಂಗ'ದಲ್ಲಿ ಹಾಕಲು ಸಮಯ ಸಿಗಲಾರದು, ಅದ್ದರಿಂದ ಒಂದಿಷ್ಟು ದಿನಗಳ ರಜೆತೆಗೆದುಕೊಳ್ಳುವುದು ಎಂದು ತೀರ್ಮಾನಿಸಿಕೊಂಡಿದ್ದೇನೆ.

'ಅಂತರಂಗ'ದ ಓದುಗರಿಗೆ ನಿರಾಶೆಯಾಗದಿರಲಿ... ಮತ್ತೆ ಜನವರಿಯಲ್ಲಿ ಇದೇ ಬರವಣಿಗೆ, ಅಥವಾ ಕೊರೆತ ಇದ್ದೇ ಇರುತ್ತೆ. ಹಾಗೇ ಅಮೇರಿಕದಲ್ಲಿ ಕಳೆದ ಹತ್ತು ವರ್ಷಗಳನ್ನು ಸೆಲೆಬ್ರೇಟ್ ಮಾಡುವುದರ ಜೊತೆಗೆ, ಸೆಲ್‌ಫೋನ್ ಕ್ರಾಂತಿಯನ್ನು ಕಂಡ ಭಾರತವನ್ನು ಮೊಟ್ಟ ಮೊದಲ ಭಾರಿಗೆ ನೋಡಿ ಬಂದ ಸಂಭ್ರಮವನ್ನೂ, ಜೊತೆಗೆ 'ಅಂತರಂಗ'ದಲ್ಲಿ ಇನ್ನು ಸ್ವಲ್ಪ ದಿನಗಳಲ್ಲಿ ಪ್ರಕಟವಾಗುವ ಇನ್ನೂರನೇ ಲೇಖನವನ್ನೂ ಗುಂಪಿಗೆ ಸೇರಿಸಿಕೊಂಡರೆ ಒಟ್ಟಿಗೆ ಬೇಕಾದಷ್ಟು ಕಾರಣಗಳಿರುವುದರಿಂದ ನನ್ನ ಲೇಖನಿಯ ಮೊನಚು, ಅಥವಾ ಟೈಪ್ ಮಾಡುವ ಗತಿಗೆ ಯಾವುದೆ ದೋಷ ಬಾರದೇ ಇದ್ದರೇನೆ ಒಳ್ಳೆಯದು ಎಂದೆನಿಸಿದೆ!

ಭಾರತದಲ್ಲಿ ಏನು ಪ್ಲಾನ್ ಇದೆ ಅಂದ್ರಾ? ಏನೂ ಇಲ್ಲ ಅನ್ನೋದೇ ಈ ಭಾರಿಯ ವಿಶೇಷ, ಸುಮ್ಮನೆ ಹೀಗೆ ಹೋಗಿ ಹಾಗೆ ಬಂದರೆ ಆಯಿತಪ್ಪ, ಅದಕ್ಕೆ ಪ್ಲಾನಾದರೂ ಏಕೆ ಬೇಕು? :-)

***
'ದಾರಿ-ದೀಪ'ದ ಓದುಗರು ದಯವಿಟ್ಟು ಕ್ಷಮಿಸಿ, ಹಲವು ತಿಂಗಳುಗಳಿಂದ ಅಲ್ಲಿ ಯಾವುದೇ ಬರಹವನ್ನು ಬರೆಯಲಾಗುತ್ತಿಲ್ಲ.
***
ನಮ್ಮ-ನಿಮ್ಮ ಭೇಟಿ ಮತ್ತೆ ಜನವರಿಯಲ್ಲಿ...ಹ್ಯಾಪ್ಪಿ ನ್ಯೂ ಇಯರ್!

Thursday, December 14, 2006

ಬೆಸ (odd) ಸಂಖ್ಯೆಯ ಪಯಣ

ಒಂದು ರೀತಿ ಇದನ್ನು odd ಪ್ರಯಾಣ ಎಂದು ಬರೆದರೇನೇ ಚೆನ್ನ. ಹೆಚ್ಚಿನವರು ಭಾರತದಿಂದ ಅಮೇರಿಕಕ್ಕೋ ಅಥವಾ ಮತ್ತಿನ್ನೆಲ್ಲಿಗೋ ಅನಿವಾಸಿಗಳಾಗಿ ಬಂದವರು, ಸ್ಥಳೀಯ one-way ವಿಮಾನ ಪ್ರಯಾಣಗಳನ್ನು ಮಾಡಿರದಿದ್ದರೆ ಅಂಥವರು ಮಾಡುವ ವಿಮಾನಯಾನ ಯಾವಾಗಲೂ ಬೆಸ ಸಂಖ್ಯೆಯಲ್ಲಿಯೇ ಕೊನೆಯಾಗುತ್ತದೆ. ಮಧ್ಯೆ ಮಧ್ಯೆ ವೆಕೇಷನ್ ಅಥವಾ ಸ್ಥಳೀಯ ಪ್ರಯಾಣಗಳನ್ನು ಮಾಡಿದ್ದರೂ ಕೊನೆಯಲ್ಲಿ ಅದು ಬೆಸ ಸಂಖ್ಯೆಯಲ್ಲಿಯೇ ಅಂತ್ಯವಾಗುವುದು ಮೊದಮೊದಲು ನನಗೆ ಹಾಸ್ಯದ ವಿಷಯವಾಗಿತ್ತು - ಅನಿವಾಸಿಗಳ odd ಯಾತ್ರೆ - ಎಂದು ಅಲ್ಲಲ್ಲಿ ಮಾತನಾಡಿದ್ದಿದೆ, ಆದರೆ ಅನಿವಾಸಿಯಲ್ಲಿ 'ಅ' ಹೊರಟು ಹೋಗಿ 'ನಿವಾಸಿ'ಯ ಪಟ್ಟವನ್ನು ಸ್ವೀಕರಿಸುವ ಹೊತ್ತಿಗೆಲ್ಲ ಈ ಬೆಸ ಸಂಖ್ಯೆಯ ಪಯಣ ಎಲ್ಲಾದರೂ ಒಂದು ಮೂಲೆಯಲ್ಲಿ ಚುಚ್ಚುವುದಂತೂ ಇದ್ದೇ ಇರುತ್ತೆ, ಎಂಥ ಗಟ್ಟಿಗ ಮಲೆಯಾಳಿ ಕುಟ್ಟಿಗೂ ತಮ್ಮ ಊರು-ಕೇರಿಗಳು ಒಂದಲ್ಲ ಒಂದು ರೀತಿಯಲ್ಲಿ 'ಚೆನ್ನ' ಎನ್ನಿಸಿರಲೇ ಬೇಕು. ಮಲೆಯಾಳಿಗಳ ಉದಾಹರಣೆ ಏಕೆ ತೆಗೆದುಕೊಂಡೆನೆಂದರೆ ನನಗೆ ಗೊತ್ತಿರುವಂತೆ ಹೆಚ್ಚಿನ ಮಲಯಾಳಿಗಳು ತಮ್ಮ ಊರು-ದೇಶವನ್ನು ಬಿಡುವುದು ಒಂದೇ ಬಾರಿ, ಮತ್ತೆ ಜೀವಮಾನ ಪರ್ಯಂತ ಹಿಂತಿರುಗಿ ಹೋಗಿದ್ದನ್ನು ನಾನು ಕಾಣೆ.

ಬಾಂಬೆಯಲ್ಲಿ ನಾನು ಮೊಟ್ಟಮೊದಲ ಬಾರಿಗೆ ವಿಮಾನವನ್ನು ನೋಡಿದ್ದು, ಹತ್ತಿದ್ದು ಎಲ್ಲಾ. ಅದಕ್ಕೆ ಮೊದಲೆಲ್ಲ ಹಗಲು ಹೊತ್ತಿನಲ್ಲಿ ಕರ್ಕಷ ಶಬ್ದ ಮಾಡುವ ಆಕಾಶದ ಒಂದು ಭಾಗವಾಗಿಯೋ, ರಾತ್ರಿಯ ಹೊತ್ತು ಸದ್ದಿಲ್ಲದೆ ದೂರದಲ್ಲಿ ಬೆಳಕನ್ನು ಚಿಮುಕಿಸಿ ಎಲ್ಲಿಂದ-ಎಲ್ಲಿಗೋ ಹೋಗುವವರನ್ನು ಹೊತ್ತು ಹಲವೊಮ್ಮೆ ಉಲ್ಕೆಗಳೇನೋ ಎನ್ನುವ ಭ್ರಮೆಯನ್ನು ಹುಟ್ಟು ಮಾಡುವವಾಗಿಯೋ ಅಥವಾ ಯಾವುದಾದರೊಂದು ವಸ್ತು ಸಂಗ್ರಹಾಲಯದಲ್ಲಿ ಮಾದರಿಯಾಗಿಟ್ಟ ವಸ್ತುವಾಗಿಯೋ ಕಂಡಿದ್ದವು. ರಾತ್ರಿ ಒಂಭತ್ತು ಘಂಟೆಗೆಲ್ಲಾ ಹೊರಡಬೇಕಾಗಿದ್ದ ನನ್ನ ಮೊಟ್ಟ ಮೊದಲ ವಿಮಾನಯಾತ್ರೆ, ಅದೂ ದೂರದ ಅಮೇರಿಕಕ್ಕೆ ಫ್ರಾಂಕ್‌ಫರ್ಟ್ ಮುಖಾಂತರ ಸುಮಾರು ಐದಾರು ಘಂಟೆಗಳ ಕಾಲ ತಡವಾಗಿದ್ದು, ಜೊತೆಯಲ್ಲಿ ಹಸಿವು ಹಾಗೂ ನಿದ್ದೆಗಳಿಗೆ ಶರಣಾದ ದೇಹ ನನ್ನ ಸಂಭ್ರಮದ ಬೆಲೂನಿಗೆ ಸೂಜಿ ಚುಚ್ಚಲು ಹೆಚ್ಚು ಕಾಲ ತೆಗೆದುಕೊಂಡಿರಲಿಲ್ಲ. ಅದ್ಯಾರೋ ಏಳಿಸಿ ಊಟ ತಂದುಕೊಟ್ಟಾಗ ಬೆಳಗ್ಗಿನ ಜಾವ ನಾಲ್ಕು ಘಂಟೆಯಾಗಿ ಹೋಗಿತ್ತು, ನಿದ್ರೆಯಿಂದೆಂದ್ದು ಹಲ್ಲುಜ್ಜದೇ ತಿಂದು-ಕುಡಿಯುವ ಜಾಯಮಾನಕ್ಕೆ ಹುಟ್ಟು ಇನ್ನೆಲ್ಲಿಂದ ಬಂದಿತೆಂದುಕೊಂಡು ನಾನು ಅಂದುಕೊಂಡಾಗಲೆಲ್ಲ ನಾನು ಆಕಾಶದಲ್ಲಿ ಸಮುದ್ರದ ಮೇಲೆ ಹಾರುವಾಗ ಕಲಿತ ಗುಣ ಎಂದುಕೊಂಡು ನನ್ನಷ್ಟಕ್ಕೆ ನಾನೇ ಸಮಾಧಾನವನ್ನು ಮಾಡಿಕೊಳ್ಳುತ್ತೇನೆ. ಆ ಒಂದು ಪಯಣದಿಂದಲೇ ಎಷ್ಟೋ ಕಾಯಕಗಳು ತಮ್ಮಷ್ಟಕ್ಕೆ ತಾವೇ ಆರಂಭಗೊಂಡಿದ್ದವು, ಕೆಲವು ಗೊತ್ತಿದ್ದು, ಇನ್ನು ಕೆಲವು ಗೊತ್ತಿಲ್ಲದೆ. ಅಲ್ಲಿಯವರೆಗೆ ಬಸ್ಸು, ರೈಲುಗಳಲ್ಲಿ ಕಷ್ಟಪಟ್ಟು ಪ್ರಯಾಣಮಾಡಿದ್ದ ನನಗೆ ವಿಮಾನಯಾನವಾದರೂ ಸುಖಕರವಾಗಿತ್ತೆಂದುಕೊಂಡರೆ ಅದೂ ಇಲ್ಲ, ವಿಮಾನದಲ್ಲಿ ನಾನು ಪ್ರಯಾಣ ಮಾಡುವ ಸೀಟುಗಳೆಲ್ಲವೂ ನಮ್ಮ ಬಸ್ಸು ರೈಲಿನ ಸೀಟುಗಳಿಗಿಂತಲೂ ಕಿರಿದಾದವು. ಎಲ್ಲ ಪ್ರಯಾಣಿಕರು ಕುಳಿತುಕೊಂಡಿರುತ್ತಾರೆ, ನಿಲ್ಲುವವರು ಯಾರೂ ಇಲ್ಲವೆಂದುಕೊಂಡರೆ ಆಗಾಗ್ಗೆ ಅಲ್ಲಲ್ಲಿ ಓಡಾಡುವ ಫ್ಲೈಟ್ ಅಟೆಂಡೆಂಟ್‌ಗಳು ನಿಂತು ಪ್ರಯಾಣ ಮಾಡುವ ಪ್ರಯಾಣಿಕರ ಸಮನಾಗುತ್ತಾರೆ. ಈ ಬೆಸ ಸಂಖ್ಯೆಯ ಪ್ರಯಾಣದಲ್ಲಿ ಸೀಟುಗಳಾಗಲೀ, ವಾತಾವರಣವಾಗಲಿ, ಊಟವಾಗಲೀ ಏಕೆ ಅಷ್ಟೊಂದು ಅನುಕೂಲಕರವಾಗಿರೋದಿಲ್ಲವೋ?

ಏರ್‌ಪೋರ್ಟ್‌ಗಳಲ್ಲಿ ಸಮಾನತೆ ಇದೆ ಎಂದುಕೊಂಡರೆ ಅದೂ ಸುಳ್ಳು ಎಂದು ಅರ್ಥವಾಗಿದ್ದು, ಲಂಡನ್, ಪ್ಯಾರಿಸ್, ಜರ್ಮನಿಗಳ ಏರ್‌ಪೋರ್ಟ್‌ಗಳಲ್ಲಿ ಅಮೇರಿಕಕ್ಕೆ ಹೋಗುವ ಪ್ರಯಾಣಿಕರ ಲೌಂಝ್‌ಗೂ ಹಾಗೂ ಇತರ ದೇಶಗಳ ಕಡೆಗೆ ಪ್ರಯಾಣ ಬೆಳೆಸುವವರ ಲೌಂಝ್‌ಗೂ ವ್ಯತ್ಯಾಸವನ್ನು ನಾನು ಕಂಡುಹಿಡಿದಾಗ. ನಾನು ಅಮೇರಿಕದಿಂದ ಭಾರತಕ್ಕೆ ಹೊರಡುವಾಗ ಬಳಸುವ ರೆಸ್ಟ್‌ರೂಮ್‌ಗಳ ಕ್ವಾಲಿಟಿಗೂ ಅದೇ ಭಾರತದಿಂದ ಅಮೇರಿಕಕ್ಕೆ ಬರುವಾಗ ಬಳಸುವ ರೆಸ್ಟ್‌ರೂಮುಗಳ ಕ್ವಾಲಿಟಿಗೂ ಸಾಕಷ್ಟು ವ್ಯತ್ಯಾಸವನ್ನು ಗಮನಿಸಿದ್ದೇನೆ. ಸಮಾನತೆಯನ್ನು ಸಾರುವ ನಾಗರಿಕತೆಯಲ್ಲಿ ಈ ವ್ಯತ್ಯಾಸ ಹೇಗೆ ಸುಳಿಯಿತು, ಹೇಗೆ ಇನ್ನೂ ನಡೆದುಕೊಂಡು ಬಂದಿದೆ ಎಂದು ಬೇಕಾದಷ್ಟು ಬಾರಿ ಯೋಚಿಸಿದ್ದೇನೆ. ಕಷ್ಟಮರ್ ಸರ್ವಿಸ್ ಎಂದುಕೊಂಡು ಹೋದರೂ ಅಮೇರಿಕದವರಿಗೊಂದು ಬಗೆ, ಪ್ರಪಂಚದ ಉಳಿದ ದೇಶದವರಿಗೊಂದು ಬಗೆ ಎನ್ನುವ ಹಲವಾರು ಅಂಶಗಳನ್ನು ಗಮನಿಸಿದ್ದೇನೆ. ಈ ದೃಷ್ಟಿಯಿಂದಲೇ ನನ್ನಂತಹವರು ಅಮೇರಿಕನ್ ಆದರೂ ಅದೂ ಕೇವಲ ಪುಸ್ತಕ ದಾಖಲಾತಿಗಳಲ್ಲಿ ನಿಲ್ಲುತ್ತದೆಯೇ ವಿನಾ ಜನಮನದಲ್ಲಲ್ಲ - ಏಕೆಂದರೆ ಉಳಿದವರ ಕಣ್ಣಿಗೆ ನಾವು ಅಮೇರಿಕನ್ ಆಗಿ ಕಾಣುವಂತಹ ಬದಲಾವಣೆಗಳು ನಮ್ಮಲ್ಲಿಲ್ಲ.

ಈ ಬೆಸ ಸಂಖ್ಯೆಯ ಪ್ರಯಾಣಗಳು - ಅಂದರೆ ಪ್ರತಿಯೊಂದು ಬಾರಿ ಭಾರತಕ್ಕೆ ಹೋಗಿ ಮತ್ತೆ ಹಿಂತಿರಿಗುವ ಪ್ರಯಾಣ - ಮನಸ್ಸನ್ನು ನಾವು ಭಾರತದಿಂದ ತರುವ ಭಾರವಾದ ಸೂಟ್‌‍ಕೇಸ್‌ಗಳಂತೆಯೇ ಭಾರವಾಗಿಸಿ ಬಿಡುತ್ತವೆ. 'ಅಮೇರಿಕದಲ್ಲಿ ಅಪ್ಪ-ಅಮ್ಮ ಒಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲವೂ ಸಿಗುತ್ತದೆ' ಎನ್ನುವ ತತ್ವವನ್ನು ನಿಧಾನವಾಗಿ ಅಳವಡಿಸಿಕೊಂಡಂತೆ ಅಥವಾ ಇಲ್ಲಿ 'ಬೆಳೆದುಕೊಂಡ' ನಮ್ಮ ಕ್ವಾಲಿಟಿ ಕಾನ್ಸೆಪ್ಟಿನ ಕೃಪೆಯಿಂದ ಅಲ್ಲಿಯ ವಸ್ತುಗಳು ಕೀಳಾಗಿ ಕಂಡುಬರುವ ಮಾನಸಿಕ ದುಸ್ಥಿತಿ ಬರುವ ಹೊತ್ತಿಗೆ ಮನಸ್ಸು ಕಾರ್ಯ-ಕಾರಣಗಳ ಹಿಂದೆ ಹೋಗಿ ಯೋಚಿಸದೇ ಕೇವಲ ತೊಗಲಿಗಂಟಿದ ಬಣ್ಣವನ್ನು ಆರಾಧಿಸತೊಡಗುತ್ತದೆ. ಎಷ್ಟೋ ಜನರಿಗೆ ಕೇಳಿ ನೋಡಿದೆ 'ಭಾರತದಿಂದ ನಿಮಗೇನಾದರೂ ತರಬೇಕೇ?' ಎಂದು ಬಂದ ಉತ್ತರಗಳೆಲ್ಲ 'ಏನೂ ಬೇಡ' ಎನ್ನುವ ಅರ್ಥವನ್ನು ಕೊಡಲು ಶುರುಮಾಡಿದವು. ಅದು ಸರಿ, ನಾನೇನು ನನಗೋಸ್ಕರ ಅಲ್ಲಿಂದ ತರುತ್ತೇನೆ ಎಂದು ಯೋಚಿಸುವ ಹೊತ್ತಿಗೆ ಮನದೊಳಗೆ ಮುಂಬರುವ ಬೆಸ ಸಂಖ್ಯೆಯ ಪ್ರಯಾಣದ ಬಗ್ಗೆ ಇರುವ ಉತ್ಸಾಹಗಳು ನಿಧಾನವಾಗಿ (ಆ ಸಮಯಕ್ಕೆ) ಕಡಿಮೆಯಾಗತೊಡಗಿದಂತೆ ಕಂಡುಬಂದವು.

ಇಲ್ಲಿಗೆ ಬರುವ ಮೊಟ್ಟ ಮೊದಲ ಪ್ರಯಾಣ ನನ್ನ ಆಯ್ಕೆಯೋ ವಿಧಿಯೋ, ಆದರೆ ಇಲ್ಲಿಂದ ಈ ಬೆಸವನ್ನು 'ಸರಿ' (even) ಮಾಡಿ ಹಿಂತಿರುಗುವ ಆಯ್ಕೆ ನನ್ನದಾಗಿರಲಿ. ಅಲ್ಲಿ-ಇಲ್ಲಿನ ಮೌಲ್ಯಗಳ ಕೋಲಿನಲ್ಲಿ ಕಂಡದ್ದೆಲ್ಲವನ್ನು ಅಳತೆ ಮಾಡದೇ ಇದ್ದದ್ದನ್ನು ಇದ್ದಹಾಗೇ ನೋಡುವ ದೃಷ್ಟಿಕೋನ ಹುಟ್ಟಲಿ.

Thursday, December 07, 2006

ಸೂರ್ಯ-ಚಂದ್ರರ ನೆರಳಿನಲಿ...

ಅಯ್ಯೋ 'ಅಂತರಂಗ'ದಲ್ಲಿ ಏನೂ ಬರೆದೇ ಇಲ್ಲ ಇತ್ತೀಚೆಗೆ ಕಡೆಗಣೆಸಿ ಬಿಟ್ಟೆನೇ ಎಂದು ಕೊರಗುತ್ತಾ ಆಫೀಸ್ ಹಾದಿ ಹಿಡಿದ ನನಗೆ ಒಂದು ಕಡೆ ಗೌರೀ ಹುಣ್ಣಿಮೆಯ ಚಂದ್ರನ ಅಳಿದುಳಿದ ಕಳೇಬರ ಮತ್ತೊಂದು ಕಡೆಗೆ ಈಗ ತಾನೇ ಪ್ರಾಬಲ್ಯಕ್ಕೆ ಬರುತ್ತಿರುವ ಸೂರ್ಯನ ಕಿರಣಗಳು ಗೋಚರಿಸತೊಡಗಿದವು. ದೂರದ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಶ್ರೇಣಿಗಳಂತೆ ಹಬ್ಬಿರುವ ಮೋಡಗಳು ತಮ್ಮ ತುದಿಯಲ್ಲಿ ಸಾಲಾಗಿ ಸೂರ್ಯ ಕಿರಣಗಳನ್ನು ಪ್ರತಿಬಿಂಬಿಸುತ್ತಾ ಜರಿಯ ಅಂಚಿನಂತೆ ಕೋರೈಸುತ್ತಿದ್ದವು. ಸೂರ್ಯನ ದರ್ಶನವಾದದ್ದೇ ತಡ 'ಓಂ ಮಿತ್ರಾಯ ನಮಃ' ಎಂದು ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ. ನನ್ನ ವಾಹನವೂ ಸೇರಿ ನನ್ನ ಹಿಂದೆ ಸಾಲು ಸಾಲಾಗಿ ಬರುತ್ತಿದ್ದ ವಾಹನಗಳೆಲ್ಲ ವಿಶೇಷವಾದ ತೇರೊಂದನ್ನು ಎಳೆದುಕೊಂಡು ಹೋಗುವ ಸಂಭ್ರಮವನ್ನು ಹೊತ್ತು ಜೋರಾಗಿ ಸಾಗುತ್ತಿದ್ದವು. ಸೂರ್ಯನ ಪ್ರಖರತೆ ಹೆಚ್ಚಾದಂತೆ ನಿಧಾನವಾಗಿ ಚಂದ್ರ ಗೆಳೆಯರೆಲ್ಲರೂ ಆಟದ ಮಧ್ಯೆಯೇ ಕೈಕೊಟ್ಟು ಹೋದಂತೆ ಹ್ಯಾಪು ಮೋರೆಯನ್ನು ಹಾಕಿಕೊಂಡು ನಿಧಾನವಾಗಿ ಕೆಳಗಿಳಿಯುತ್ತಿದ್ದನೋ ಅಥವಾ ಮೇಲೇರುತ್ತಿದ್ದನೋ ಆದರೆ ಅವನನ್ನು ಕೇಳುವವರೇ ಯಾರೂ ಇಲ್ಲದಾಗಿ ಹೋದಂತಾದರು ಒಂದು ರೀತಿ ಡೆಮಾಕ್ರಟಿಕ್ ಪಕ್ಷ ಮೆಜಾರಿಟಿಗೆ ಬರುತ್ತಿದ್ದಂತೆ ಬುಷ್ ಅನ್ನು ಎಲ್ಲರು ಬದಿಗೆ ತಳ್ಳಿದ ಹಾಗೆ.

'ನಾನು ಹಾಡುವುದು ನನಗೆಂದು...ಎದೆ ಭಾರ ಇಳಿಯಳಲೆಂದು...' ಎಂದುಕೊಂಡು ಅದೂ-ಇದೂ ಬರೆಯಲು ಆರಂಭಿಸುವ ನನಗೆ ಇಂತಹುದೇ ವಿಷಯ/ವಿಚಾರವೆಂಬುದೇನೂ ಇಲ್ಲಿಯವರೆಗೆ ಯಾವುದೇ ಅಡ್ಡಿ-ಆತಂಕಗಳನ್ನು ತಂದಿಲ್ಲವಾದರೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಕಾಂಟ್ರೋವರ್ಸಿಯಿಂದ ದೂರವಿರುವುದು ಸಾಧುವೆನಿಸಿತ್ತು, ಜೊತೆಯಲ್ಲಿ ಅದು ಸೇಫ್ ಸಹ ಎನಿಸಿ ಒಂದು ರೀತಿ ನನ್ನದೇ ಆದ ಕಾಂಪ್ಲಸೆಂಟ್ ವಾತಾವರಣವನ್ನು ಹುಟ್ಟಿಹಾಕಿಕೊಂಡಿದ್ದು ನನ್ನ ಅನುಭವಕ್ಕೇ ಇತ್ತೀಚೆಗೆ ಗಾಢವಾಗತೊಡಗಿತು. ಹಾದಿಯಲ್ಲಿ-ಬೀದಿಯಲ್ಲಿ ಹೋಗಿಬರುವವರ ಬಗ್ಗೆ ಬರೆಯುವುದು ಒಂದು ರೀತಿಯದಾದರೆ, ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಬರೆಯುವುದು ಮತ್ತೊಂದು ಬಗೆ. ಒಂದು ರೀತಿ ಕತ್ತಲಿನಲ್ಲಿ ಕತ್ತಿ ಆಡಿಸಿದಂತೆ ಅದರಿಂದೆಂದೂ ಯಾವ ಪ್ರಯೋಜನವಂತೂ ನನಗಾಗಿಲ್ಲ. ಹೀಗೆ ನ್ಯೂಟ್ರಲ್ ಆಗಿ ಬರೆಯುವ ಪ್ರಯತ್ನದಲ್ಲಿ ನನ್ನ ಗೊಂದಲ, ಅಸಮಧಾನಗಳು ನನ್ನೊಳಗಿನ ಮೂಸೆಯಲ್ಲಿ ಬಿಸಿ ಮುಟ್ಟಿದಂತೆಲ್ಲ ಕುದಿದು ಮತ್ತೆ ತಣ್ಣಗಾಗಿ ಬಿರುಕುಬಿಟ್ಟ ಲೋಹದ ತುಣುಕುಗಳಂತೆ ಬಿರುಸಾಗಿ ಹರಳುಗಟ್ಟತೊಡಗಿದವು. ಇನ್ನು ಕೆಲವು ಆಲೋಚನೆಗಳು ಹೀಗೆ ಬಂದು ಹಾಗೆ ಹೋದವು. ಸರಿ, ತಪ್ಪು ಎನ್ನುವುದರಿಂದ ದೂರ ಉಳಿದು, ನನ್ನ ಅನಿಸಿಕೆಗಳು ಅನುಭವಗಳನ್ನು ಬರೆಯುವುದು ಒಂದು ಬಗೆ, ಪೊಲಿಟಿಕಲ್ ಆಗಿ ಬರೆಯುವುದು ಮತ್ತೊಂದು ಬಗೆ; ಕೆಲವರ ಪರ ವಾದಿಸುವುದು ಒಂದು ಬಗೆ, ಪ್ರತಿಯೊಬ್ಬರ ಧೋರಣೆಗಳನ್ನು ಬೆಂಬಲಿಸುವುದು ಮತ್ತೊಂದು ಬಗೆ. ಹೀಗೆ ಹಲವಾರು ಗೊಂದಲಗಳನ್ನು ಹೊರಹಾಕುವಲ್ಲಿ ನನ್ನ ಈವರೆಗಿನ ಲೇಖನಗಳು ಒಂದು ರೀತಿ ಕನ್ನಡಿಯ ಹಾಗೆ ನನ್ನ ಇತರ ಮುಖಗಳನ್ನು ನನಗೆ ದರ್ಶನ ಮಾಡಿಸಿವೆ.

Who cares for New Year resolutions...ಎಂದುಕೊಂಡು ನಾನು ಜನವರಿ ಒಂದನ್ನು ಉಪೇಕ್ಷಿಸುತ್ತಿದ್ದುದೇ ಈವರೆಗೆ ಸಾಮಾನ್ಯವಾಗಿತ್ತು. ಕಳೆದ ವರ್ಷ ಜಯಶ್ರೀ ಒತ್ತಾಯ ಮಾಡಿದ ಮೇಲೆ ಒಂದಿಷ್ಟು ಹೊಸ ವರ್ಷದ ರೆಸೊಲ್ಯೂಷನ್‌ಗಳನ್ನು ಬರೆದದ್ದೂ ಆಯಿತು, ಅವುಗಳನ್ನು ನಡೆಸಿಕೊಂಡು ಬಂದದ್ದೂ ಆಯಿತು. 'ನಾನು ಜನವರಿ ಒಂದನ್ನು ಹೊಸ ವರ್ಷವನ್ನಾಗಿ ಆಚರಿಸೋದಿಲ್ಲ, ನನಗೇನಿದ್ದರೂ ಯುಗಾದಿಯೇ ಹೊಸವರ್ಷ' ಎಂದು ಮೂರು ವರ್ಷಗಳ ಹಿಂದೆ ಯಾವುದೋ ಪ್ರಶ್ನೆಗೆ ಉತ್ತರವಾಗಿ ಹೇಳಿದ ನನ್ನನ್ನು ಭೂಮಿಗೆ ತಂದವನು ಕೃಪೇಶ - 'ನಿನ್ನ ಬರ್ತ್ ಡೇ, ಆಫೀಸ್‌ನಲ್ಲಿನ ಆಗುಹೋಗುಗಳು ಮತ್ತೆಲ್ಲವೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿರುವಾಗ ಈ ಹೊಸವರ್ಷವೊಂದನ್ನು ಮಾತ್ರ ಉಪೇಕ್ಷಿಸುತ್ತೀಯೇಕೆ?'. ಅಂದಿನಿಂದ ಜನವರಿ ಒಂದರಂದು ನಾನು ಕುಡಿದು-ಕುಣಿದು ಕುಪ್ಪಳಿಸುವುದಿಲ್ಲವಾದರೂ 'ಹೊಸ' ವರ್ಷವನ್ನು ಕಣ್ಣು ಬಿಟ್ಟು ನೋಡುವುದನ್ನು ಕಲಿತಿದ್ದೇನೆ, ಬ್ರಹ್ಮಾಂಡದಲ್ಲಿ ಅನೇಕ ಬದಲಾವಣೆಗಳನ್ನು ತರುವ ನಮ್ಮ ಸಂಭ್ರಮದ ಯುಗಾದಿಯನ್ನು ಅದ್ಯಾವ ಕಾರಣಗಳಿಂದಲು ಡಿಸೆಂಬರ್ ೩೧ ಹಾಗೂ ಜನವರಿ ೧ ರ ನಡುವಿನ ವ್ಯತ್ಯಾಸಕ್ಕೆ ನಾನು ತುಲನೆ ಮಾಡಲಾಗದಿದ್ದರೂ 'ಗುಂಪಿನಲ್ಲಿ ಗೋವಿಂದ' ಎನ್ನುವಂತೆ ಹೆಚ್ಚು ಜನರು ಆಚರಿಸುವ ನಡವಳಿಕೆಯನ್ನು ಅನುಮೋದಿಸುವ ಬೃಹತ್ ಮನಸ್ಸನ್ನು ಹೊಂದಿಸಿಕೊಂಡಿದ್ದೇನೆ. ನಮ್ಮದೇ ಸರಿ ಎನ್ನುವುದು ಒಂದು ಹಂತ, ಸರಿಯನ್ನು ಹೆಚ್ಚು ಜನರು ಒಪ್ಪಿಕೊಳ್ಳುವ ಬದಲಾವಣೆಯನ್ನು ಹುಟ್ಟು ಹಾಕುವ ಪ್ರವಾದಿಯಾಗುವುದು ಮತ್ತೊಂದು ಹಂತ. ಪಾಡ್ಯಬಿದಿಗೆಗಳಿಗೆ ಜನರನ್ನು ಹೊಂದಿಸುವುದಾಗಲೀ, ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ತಿಂಗಳ ಮಧ್ಯೆ (೨೦ ನೇ ತಾರೀಖಿನ ಆಜುಬಾಜು) ಹೊಸ ಮಾಸವನ್ನು ಸೃಷ್ಟಿಸುವುದಾಗಲೀ, ಚೈತ್ರವನ್ನು-ವಸಂತವನ್ನು ಬದಲಾವಣೆಯ ಏಜೆಂಟರನ್ನಾಗಿ ಜಗತ್ತಿಗೆ ಸಾರುವುದು ನನ್ನ ಕರ್ಮವಂತೂ ಅಲ್ಲ, ಈ ಜನ್ಮದಲ್ಲಿ ಆ ಶಕ್ತಿಯೂ ನನಗಿಲ್ಲ ಎಂದು ಜಾರಿಕೊಂಡು ಹಾಡುಹಗಲೇ ಗುಂಪನ್ನು ಅನುಮೋದಿಸುವ ಪ್ರವೃತ್ತಿ ಸ್ವಭಾವವಾಗಿ ಪರಿವರ್ತನೆಯಾಗಿ ಹೋಗಿದೆ.

ನಾನು ಹೆಚ್ಚೇನು ಮಹತ್ವಕಾಂಕ್ಷೆಗಳನ್ನು ಇಟ್ಟುಕೊಂಡಿರದ ಮುಂಬರುವ ನನ್ನ ಭಾರತದ ಪ್ರವಾಸದ ಸಮಯದಲ್ಲಿ ಈ ರೀತಿಯ ಆಲೋಚನೆಗಳು ಹೆಚ್ಚೆಚ್ಚು ಬರಲಿ, ಆದಷ್ಟು ನನ್ನ ಬರಹಗಳು ನನ್ನೊಳಗಿನ ನಿಜವನ್ನು ಹೊರತರುವ ಕ್ರಾಂತಿಕಾರರಾಗಲಿ. ಗುಂಪನ್ನು ಅನುಮೋದಿಸುವುದೋ, ಬದಲಾವಣೆಯ ಹರಿಕಾರ (change agent) ನಾಗಿ ಉಳಿಯುವುದೋ ಎಂಬ ಪ್ರಶ್ನೆಗಳಿಗೆ ಹೆಚ್ಚಿನ ಆಳ ದೊರಕಲಿ ಹಾಗೂ ಇವೇ ಸೂರ್ಯ-ಚಂದ್ರರ ನೆರಳಿನಲ್ಲಿ ನನ್ನ ಸಂಸ್ಕಾರಗಳ ದರ್ಶನವಾಗಲಿ...

Sunday, December 03, 2006

ನೆಗಡೀ ಅಂತಾ ರೋಗಾ ಇಲ್ಲಾ...

ಏನೇ ಹೇಳಿ ಈ ಟೆಕ್ನಾಲಜಿ ಅನ್ನೋದು ಏನೇನ್ ಬಂದ್ರೂ ನೆಗಡಿ ಆದೋರ್ಗೇನೂ ಸಹಾಯ ಮಾಡೋ ಹಾಗ್ ಕಾಣ್ಸೋದಿಲ್ಲ. ಯಾಕೆ ಈ ಮಾತ್ ಹೇಳ್ತಾ ಇದ್ದೀನಿ ಅಂದ್ರೆ ನೀವೆಲ್ಲ ಈ ಮಾತನ್ನ ಕೇಳೇ ಇರ್ತೀರಿ - ನೆಗಡಿಗೆ ಔಷಧಿ ತೆಗೊಂಡ್ರೆ ಗುಣಾ ಆಗೋಕೆ ಒಂದ್ ವಾರ ಬೇಕು, ಇಲ್ಲಾ ಅಂತಂದ್ರೆ ಅದೇ ತನ್ನಷ್ಟಕ್ಕೆ ತಾನೆ ಏಳ್ ದಿನಗಳಲ್ಲಿ ಹೊರಟುಹೋಗುತ್ತೇ ಅಂತಾ. ನಮ್ ಕಡೇ ಒಂದ್ ಗಾದೇನೂ ಸೇರ್ಸಿ ಬಿಟ್ಟಿದ್ದಾರೆ - ನೆಗಡೀ ಅಂತಾ ರೋಗಾ ಇಲ್ಲಾ ಬುಗುಡೀ ಅಂತಾ ಒಡವೇ ಇಲ್ಲಾ! ಈಗಿನ್ ಕಾಲದಲ್ಲಿ ಸೊಂಟಕ್ಕೆ ಬುಗಡಿ-ಪಗಡೀ ಹಾಕ್ಕೋತಾರೋ ಬಿಡ್ತಾರೋ, ಯಾವ್ ಕಾಲ ಬಂದ್ರೂ ನೆಗಡೀ ಆಗೋದೇನೂ ನಿಂತ್ ಹಾಗ್ ಕಾಣ್ಸೋಲ್ಲ.

ಈ ಜಪಾನೂ ಜರ್ಮನೀಯವರು ಏನೇನೋ ಕಂಡ್ ಹಿಡೀತಾರೆ, ಈ ಟಾಯ್ಲೆಟ್ ಪೇಪರ್ ರೋಲಿನ ಹಾಗೇ ಟಿಶ್ಯೂ ಪೇಪರ್ರನ್ನು ಒಂದಿಷ್ಟು ತಲೇ ಮೇಲೇ ಸುತ್ತಿಕೊಳ್ಳೋ ಹಾಗೆ ಒಂದ್ ರೋಲನ್ನ ಯಾಕೆ ಯಾರೂ ಸೃಷ್ಟೀಸೋದಿಲ್ವೋ? ಹಾಗೇನಾದ್ರೂ ಮಾಡಿದ್ರೂ ಅಂದ್ರೆ ಅಂಥೋರಿಗೆ ಪೇಟೆಂಟ್ ಮಾಡಿಸ್‌ಕೊಳ್ಳಿಕ್ಕೆ ನಾನ್ ಸಹಾಯ ಮಾಡ್ತೀನಿ. ಇಲ್ಲಂತೂ ನಮ್ಮೂರುಗಳಲ್ಲಿ ಜೇಬಿನಲ್ಲಿ ಕರ್ಚೀಪು ತುರುಕಿಕೊಂಡ ಹಾಗೇ ಯಾರೂ ಕರ್ಚೀಪು ತುಂಬಿಕೊಳ್ಳೋದಿಲ್ಲ, ಬರೀ ಟಿಶ್ಯೂ ಪೇಪರುಗಳನ್ನ ಮಡಿಕೆ ಮಾಡಿ ಇಟ್ಟುಕೊಂಡು ಎಲ್ಲಿ ನೋಡಿದ್ರೆ ಅಲ್ಲಿ ಸೂ...ಸೂ... ಅಂತಾ ಮೂಗಿನ ಒರೆಸಿಕೊಳ್ತಾನೇ ಇರ್ತಾರೆ. ಆದ್ರೆ ಒಂದ್ ಮೂಗ್ನಲ್ಲಿ ಗಂಗಾ, ಮತ್ತೊಂದ್ ಮೂಗ್ನಲ್ಲಿ ಯಮುನಾ ಹರಿಯೋ ನನ್ನಂಥೋರಿಗೆ ಈ ಸಣ್ಣ ಸಣ್ಣ ಪೇಪರ್ ತುಂಡುಗಳು ಯಾವ್ ಲೆಕ್ಕಾ - ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಹಾಗೆ - ಸೋತ್ ಹೋಗ್ ಬಿಡ್ತಾವೆ.

ಯಾರ್ ಹತ್ರಾನೂ ಹೇಳೋಕ್ ಹೋಗ್ಬೇಡಿ, ಸುಮ್ನೇ ಹೀಗೊಂದು ಐಡಿಯಾ ಬಂತು - ಆಕಾಶ್‌‍ದಲ್ಲಿ ಬೆಳ್ಳಿ ಮೋಡಗಳು ತೇಲಿಕೊಂಡು ಹೋಗ್ತಾ ಇರ್ತಾವಲ್ಲ, ಅವುಗಳನ್ನು ಈ ನೆಗಡೀ ಪರಮಾತ್ಮನ ಸೇವೆಗೆ ಯಾಕ್ ಬಳಸ್‌ಬಾರ್ದು? 'ಬೆಳ್ಳಿ ಮೋಡವೇ, ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ...' ಎಂದು ಪ್ರೀತಿಯಿಂದ ಕರೆದು, ಹತ್ತಿ ಉಂಡೆಗಳಂತಿರೋ ಅವುಗಳನ್ನ ಸ್ವಲ್ಪ ಹಿಂಜಿ ಮೂಗನ್ನ ಒರೆಸಿ ಕಸದ ಡಬ್ಬಿಗೆ ಬಿಸಾಡೋ ಹಾಗಿದ್ರೆ ಹೇಗಿರ್ತಿತ್ತು? ಒಂಥರಾ ಗಗನಸಖಿಯರು ಕೊಡೋ ವೆಟ್ ಟವೆಲ್ಲುಗಳ ಹಾಗೆ... ನಮ್ ಕೈಯಲ್ಲೆಲ್ಲ ಮೋಡಗಳನ್ನ ಆಟ್ರ್ಯಾಕ್ಟ್ ಮಾಡೋ ಹಾಗೆ ಒಂದ್ ಅಯಸ್ಕಾಂತ ಇರಬೇಕಿತ್ತು, ಆಗ ಎಂಥಾ ನೆಗಡಿಗೂ ಔಷಧಿ ಅನ್ನೋದೇ ಬೇಡವಾಗ್ತಿತ್ತು, ಕಹಿ ಕಷಾಯ ಕುಡಿಯೋದಿರ್ಲಿ, ಪೇಪರ್ರನ್ನ ಉಪಯೋಗಿಸಿ ಮೂಗ್ ಒರೆಸೋದಿರಲಿ, ಶೇಕಡಾ ನೂರಕ್ಕೆ ನೂರು ನ್ಯಾಚುರ್ರಲ್ಲಾಗಿರೋ ಮೋಡಗಳಿಂದ ಮೂಗನ್ನ ಒರೆಸೋ ತಂತ್ರಜ್ಞಾನ ಯಾವತ್ತು ಬರುತ್ತೋ ಯಾರಿಗೆ ಗೊತ್ತು! ಆಗ 'ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ...' ಅನ್ನೋ ಹಾಡಿಗೆ ಬಹಳ ದೊಡ್ಡ ಅರ್ಥ ಬರ್ತಿತ್ತು.

'ರಾವಣನಿಗೆ ಎಷ್ಟು ತಲೆ ಅಂದ್ರೆ, ಶುಂಬಳಕ್ಕೂ ಕಫಕ್ಕೂ ಎನ್ ವ್ಯತ್ಯಾಸ' ಕೇಳಿದನಂತೆ... ಅನ್ನೋದು ನಾನು ಕಟ್ಟಿರೋ ಜಾಣ್ಣುಡಿ. ರಾವಣಗೆ ನೆಗಡಿ ಅನ್ನೋದೇನಾದ್ರೂ ಆದ್ರೆ ಹೆಂಗಿರತ್ತೆ ಅಂತ can you imagine? ಯಾವ ಮೂಗಲ್ಲಿ ಶುಂಬಳ ಬರುತ್ತೆ, ಯಾವ ಗಂಟಲಲ್ಲಿ ಕಫ ಇರುತ್ತೆ? ಅವನ ಕೈಗಳು ಒಳ್ಳೇ ಯಂತ್ರಗಳ ಹಾಗೆ ಒಂದೊಂದೇ ಮೂಗನ್ನ ಒರೆಸೀ ಒರೆಸೀ ಹಾಕ್ತಾ ಇರಬೇಕಾದ್ರೆ ಅದನ್ನ ನೋಡೋಕೇ ಎರಡು ಕಣ್ಣುಗಳು ಸಾಲವು. ಎಲ್ಲಿ ನೋಡಿದ್ರೂ ದಶಕಂಠ ಲಂಕೇಶ ಅನ್ನೋ ವಿವರಣೆ ಬರುತ್ತೇ ವಿನಾ ಇಪ್ಪತ್ತು ಕೈಗಳ್ಳುವನು ಅನ್ನೋ ಅರ್ಥ ಬರೋ ವಾಕ್ಯಗಳನ್ನಾಗಲಿ ಚಿತ್ರವನ್ನಾಗಲೀ ನೋಡ್ಲೇ ಇಲ್ಲಾ ನಾನು. ಅದೇ ನೋಡಿ, ದೇವತೆಗಳಿಗೆ ಒಂದು ತಲೆ ಅಥವಾ ಮಲ್ಟಿಪಲ್ ತಲೆ ಇದ್ದಲ್ಲೆಲ್ಲ ಮಲ್ಟಿಪಲ್ ಕೈಗಳನ್ನೂ ನಾನು ನೋಡಿದ್ದೀನಿ. ಅಂದ್ರೆ ಈ ದೇವಾನುದೇವತೆಗಳನ್ನು ಚಿತ್ರ ಬರೆದು ನಮ್ಮ ಮನಸ್ಸು ತುಂಬೋ ಈ ಕಲಾವಿದರು ಎಷ್ಟು ಪಾರ್ಷಿಯಾಲಿಟಿ ಮಾಡ್ತಾರೆ ಅನ್ಸಲ್ಲ್ವಾ? ಪಾಪ, ರಾವಣನಿಗೊಂದು ಥರಾ, ಬ್ರಹ್ಮನಿಗೊಂದು ಥರಾ. ಬ್ರಹ್ಮನಿಗಾದ್ರೆ ನಾಲ್ಕು ದಿಕ್ಕಿಗೆ ನಾಲ್ಕು ತಲೆಗಳು, ಅದೇ ರಾವಣನಿಗೆ ಎಲ್ಲಾ ತಲೆಗಳೂ ಒಂದೇ ದಿಕ್ಕಿಗೆ ಮುಖ ಮಾಡಿರೋವು, ಅಂದ್ರೆ ಒಂದು ಮುಸುಡಿಗೆ ನೆಗಡಿ ಆಯ್ತು ಅಂದ್ರೆ, ಇನ್ನೊಂದಕ್ಕೆ ತಗಲೋದು ಬಹಳ ಸುಲಭ ಅನ್ನೋ ಅರ್ಥದಲ್ಲಿ...ಪಾಪ ಅನ್ಸುತ್ತೆ ನೆಗಡಿ ಬಂದ ರಾವಣನನ್ನ ನೆನಸಿಕೊಂಡು.

ನಿಮಗೆಲ್ಲಾ ಹೀಗೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನನಗೆ ಅಪರೂಪಕ್ಕೊಮ್ಮೆ ಎರಡು ಮೂಗಿನ ಹೊಳ್ಳೆಗಳಲ್ಲಿ, ಒಂದೇ ಹೊಳ್ಳೆಗೆ ನೆಗಡಿ ಆಗಿ ಅದು ಕಟ್ಟಿಕೊಂಡು ಕೇವಲ ಒಂದೇ ಕಡೆಯಿಂದ ಉಸಿರಾಡೋ ಹಾಗಾಗುತ್ತೆ, ಒಂದು ರೀತಿ ಕಟ್ಟು ಬಿದ್ದು ಪ್ರಾಣಾಯಾಮಾ ಮಾಡೋರ್ ಥರಾ. ಹಾಗಿದ್ದಾಗ ನಾನು ನೆಗಡಿಗೆ ಔಷಧಿ ಏನಾದ್ರೂ ತೆಗೊಂಡ್ರೆ ಏನ್ ಆಗುತ್ತೋ ಅಂತ ಬಹಳ ಕುತೂಹಲ ಬೇರೆ. ಈ ಅಲೋಪಥಿಕ್ ಔಷಧದ ಅಣುಅಣುವಿಗೆ ಇಂಥಾ ಮೂಗಿನ ಹೊಳ್ಳೆಗೇ ನೆಗಡಿ ಆಗಿದೆ ಅನ್ನೋದ್ ಹೇಗೆ ತಿಳಿಯತ್ತೋ? ಎಲ್ಲಾ ವಿಚಿತ್ರಾನೇ - ಕಾಲಿಗೆ ನೋವಾದ್ರೂ ಔಷಧ ತಗೋಳೋದು ಮಾತ್ರ ಬಾಯಿನೇ.

ನಿಮಗೆ ನೆಗಡಿ ಆಗುತ್ತೋ ಬಿಡುತ್ತೋ, ನನಗೂ ಆಗುತ್ತೆ, once a year... ಆವಾಗ ನನ್ ಪಜೀತಿ ಬಿಡಿ, ಪ್ರತೀ ಸಾರಿ ನಾನು ಸೀನಿದಾಗೆಲ್ಲ ನನ್ ಪಕ್ಕದ ಕ್ಯೂಬಿನಲ್ಲಿ ಕೂತಿರೋ ಅಮೇರಿಕನ್ ಚೆಲುವೆ bless you! ಅನ್ನೋ ಕಷ್ಟಾ ಕೇಳಿ ನನಗೆ ಕೆಲವೊಮ್ಮೆ ಬೇಸರ, ಕೆಲವೊಮ್ಮೆ ಖುಷಿಯಾಗುತ್ತೆ...ಆದ್ರೆ ನಾನು ದಿನಕ್ಕೊಂದೇ ಸರ್ತಿ thank you! ಅನ್ನೋದು, ಅವಳು ಬ್ಲೆಸ್ ಯೂ ಅಂದಾಗೆಲ್ಲಾ ನಾನ್ ಥ್ಯಾಂಕ್ಯೂ ಅಂದ್ರೆ ಅವುಗಳ ಲೆಕ್ಕ ಇಟ್ಟ್ಕೊಳ್ಳೋದ್ ಯಾರು? ನನ್ನ ಸೀನಿನ ಧ್ವನಿಗೂ ಬಹಳ ವೇರಿಯೇಷನ್ನುಗಳಿವೆ, ನಾನು ಮನೆಯಲ್ಲಿ ಸೀನಿದ್ರೆ, ಕೆದಲಾಯ್ ಮೇಷ್ಟ್ರು ಥರಾ ಕೊನೇ ಪಕ್ಷ ಅಕ್ಕಪಕ್ಕದ ಎರಡು ಬೀದಿಗಳಿಗಾದ್ರೂ ಕೇಳುತ್ತೆ, ಆಫೀಸಿನಲ್ಲಿ ಅದರದ್ದೇ ಆದ ಒಂದು ಸ್ಮಾಲ್ ವರ್ಷನ್ ಇದೆ...ಏನೇ ಹೇಳಿ ಮನಸ್ಸು ಬಿಚ್ಚಿ ಗಟ್ಟಿಯಾಗಿ ಸೀನಿದ ತೃಪ್ತಿ ಬರೋದಿಲ್ಲ, ಅದಕ್ಕೇ ನಾನು ಹಾಡೊಂದನ್ನು ಕಟ್ಟಿದ್ದೀನಿ...'ಸೀನೋದರಲ್ಲೂ ಸುಖಾ ಇದೆ ಅಂತ ಗೊತ್ತೇ ಇರಲಿಲ್ಲಾ...'.

ನೆಗಡಿ ಬಂತು...ನೆಗಡಿ ಹೋಯ್ತು ಎನ್ನುವಾಗ ಒಂದು ವಾರವಾಯ್ತು... ಎಂಥಾ ರಾಜರುಗಳಿಂದ ಹಿಡಿದು ನನ್ನಂತ ಸಾಧಾರಣ ಜನರನ್ನೂ ಬಿಡದೇ ಒಂದೇ ಸಮನೆ ತಗಲಿಕೊಳ್ಳೋ ಈ ನೆಗಡಿಯ ವೈರಾಣುಗಳ ಸಮಾಜವಾದವನ್ನು ಕಂಡು ಅವುಗಳ ಮೇಲೆ ಬಹಳ ಅಭಿಮಾನ ಮೂಡಿ, ನಾನಂತೂ equality ಯನ್ನು ಪ್ರೂವ್ ಮಾಡೋ ಅವುಗಳ ಅಭಿಮಾನಿಯಾಗಿ ಹೋಗಿದ್ದೀನಿ, ನೀವು?

Thursday, November 30, 2006

ಕೇಕ್‌ನ ಎರಡೂ ತುದಿಯೂ ಇರಲೀ ಅಂದ್ರೆ ಹೇಗೆ?

ಮಾರ್ಚ್ ೮, ೨೦೦೫ ರ ಮಂಗಳವಾರದಂದು ಯಾವುದೋ ಕೆಲಸದ ನಿಮಿತ್ತ ನ್ಯೂ ಯಾರ್ಕ್‌ನಿಂದ ಆರ್ಲಿಂಗ್ಟನ್‌ಗೆ ನಮ್ಮ ಕಂಪನಿಯ ಕೆಲಸದ ಸಲುವಾಗಿ ನಾವೊಂದು ತಂಡ ಹೋಗಿದ್ದೆವು. ದುರಾದೃಷ್ಟವಷಾತ್ ಆ ದಿನ ಹೆಚ್ಚು ಹಿಮ ಬಿದ್ದ ಕಾರಣ ಎಲ್ಲ ವಿಮಾನಗಳನ್ನೂ ರದ್ದು ಪಡಿಸಿದ್ದರಿಂದ ಅನಿವಾರ್ಯವಾಗಿ ನಾವು ಅಲ್ಲಿಯೇ ಹೊಟೇಲುಗಳನ್ನು ಹುಡುಕಿಕೊಂಡು ಹೋಗಬೇಕಾಗಿ ಬಂದಿತ್ತು. ಇನ್ನೇನು ಈಗಲೋ ಆಗಲೋ ವಿಮಾನಗಳನ್ನು ಹೊರಡಿಸುತ್ತಾರೆ ಎಂದು ರೇಗನ್ ವಿಮಾನ ನಿಲ್ದಾಣದಲ್ಲಿ ಕಾದೂ-ಕಾದೂ ರಾತ್ರಿ ಒಂಭತ್ತು ಘಂಟೆಯ ಯಾವ ಸ್ನೇಹಿತರನ್ನು ಕರೆಯೋದು ಎಂದು ವಿಧಿ ಇಲ್ಲದೇ ಇದ್ದ ಬಟ್ಟೆಯಲ್ಲಿಯೇ ಹೊಟೇಲಿನಲ್ಲಿ ತಂಗಬೇಕಾದ ಪರಿಸ್ಥಿತಿಯನ್ನು ಹಳಿದುಕೊಂಡು ಇದ್ದೆವು. ಹಾಗೆ ನಮ್ಮ ಜೊತೆ ಬಂದವರಲ್ಲಿ ಮಾರ್ಕ್ ಕೂಡಾ ಒಬ್ಬ, ಆತ ಆಫ್ರಿಕನ್ ಅಮೇರಿಕನ್.

ಮರುದಿನ ಲಗುಬಗೆಯಿಂದ ಎಷ್ಟು ಬೇಗ ಆಯಿತೋ ಅಷ್ಟು ಬೇಗ ವಿಮಾನ ನಿಲ್ದಾಣವನ್ನು ತಲುಪಿದೆವು, ಹವಾಮಾನ ಮುನ್ಸೂಚನೆಯ ಪ್ರಕಾರ ಆ ದಿನ ಯಾವುದೇ ಸಮಸ್ಯೆಗಳಿರಲಿಲ್ಲ, ಆದರೆ ವಿಮಾನ ನಿಲ್ದಾಣದಲ್ಲಿ ಎರಡು ದಿನಗಳ ಪ್ರಯಾಣಿಕರು ತುಂಬಿಕೊಂಡು ಪ್ರತಿಯೊಂದು ವಿಮಾನವೂ ತಡವಾಗಿ ಹೊರಡುವುದೂ ಅಲ್ಲದೇ ಅಂತಹ ವಿಮಾನಗಳನ್ನೇರಲು ಜನರು ಕಾದು ನಿಂತಿದ್ದ ಸಾಲು ಹನುಮಂತನ ಬಾಲದ ಹಾಗೆ ಉದ್ದವಾಗಿ ಬೆಳೆದುಕೊಂಡಿತ್ತು. ನಮ್ಮ ಕಂಪನಿಯವರು ಮುಖ್ಯವಾಗಿ ಬಳಸುವ ಯು.ಎಸ್. ಏರ್‌ವೇಸ್ ವಿಮಾನಗಳಲ್ಲಿ ನಮಗೆ ಕಾರ್ಪೋರೇಟ್ ರೇಟ್ ಸಿಗುವುದೂ ಅಲ್ಲದೇ ನಮ್ಮ ಕಂಪನಿಯವರಿಗೆಂದೇ ಪ್ರತ್ಯೇಕ ಕ್ಯೂ ಕೂಡಾ ಇರುತ್ತದೆ. ಪ್ರತಿದಿನ ಸಾವಿರಾರು ಜನ ನಮ್ಮ ಕಂಪನಿಯವರೇ ಇಂತಹ ವಿಮಾನಗಳನ್ನು ಬಳಸುತ್ತಾರಾದ್ದರಿಂದ ಈ ವ್ಯವಸ್ಥೆ. ಹಾಗಾಗಿ ನಾವು ಕಂಪನಿಯ ವತಿಯಿಂದ ಪ್ರಯಾಣಮಾಡಿದಲ್ಲೆಲ್ಲ ನಮಗೆ ಕಾರ್ಪೋರೇಟ್ ಲೈನ್ ನಲ್ಲಿ ನಿಂತೇ ಅಭ್ಯಾಸ. ಬೇರೆ ಯಾವ ಲೈನುಗಳಲ್ಲಿ ಎಷ್ಟೇ ಜನರಿದ್ದರೂ, ಈ ವಿಐಪಿ ಲೈನುಗಳಲ್ಲಿ ಜನರಿರುವುದೇ ಅಪರೂಪ.

ನಾನು ಹಾಗು ಮಾರ್ಕ್ ಲಗುಬಗೆಯಿಂದ ಯಾವ ವಿಮಾನ ಸಿಕ್ಕುವುದೋ ಅದರಲ್ಲೇ ಹೊರಟುಬಿಡೋಣವೆಂದುಕೊಂಡು ಅವನು ಮೊದಲು, ಅವನ ಹಿಂದೆ ನಾನು ಇಬ್ಬರೂ ಬಂದು ಕಾರ್ಪೋರೇಟ್ ಲೈನ್ ನಲ್ಲಿ ನಿಂತುಕೊಂಡೆವು. ನಾನು ಮೊದಲೇ ಹೇಳಿದಂತೆ ಪಕ್ಕದ ಸಾಮಾನ್ಯ ಸಾಲಿನಲ್ಲಿ ಬಹಳಷ್ಟು ಜನರು ಕಾಯ್ದುಕೊಂಡಿದ್ದರು. ನಾನು ಹಾಗೆ ಬಂದು ನಿಂತಿದ್ದೇ ತಡ ಪಕ್ಕದ ಲೈನಿನಲ್ಲಿ ನಿಂತಿದ್ದ ಸುಮಾರು ಜನರು ನನ್ನನ್ನು ಸಿಟ್ಟಿನಿಂದ ದುರುಗುಟ್ಟಿಕೊಂಡು ನೋಡಿದ್ದೂ ಅಲ್ಲದೇ, '...lines starts here!' ಎಂದು ಅವರ ಸಾಲು ಶುರುವಾಗುವ ಸ್ಥಳವನ್ನು ನನಗೆ ತೋರಿಸಲು ಶುರುಮಾಡಿದರು. ನಾನು ತಪ್ಪೇನಾದರೂ ಮಾಡಿದೆನೇನೋ ಎಂದುಕೊಂಡು ಕಾರ್ಪೋರೇಟ್ ಲೈನ್ ಇರುವ ಸೈನ್ ಇರುವುದನ್ನು ಬಗ್ಗಿ ನೋಡಿ ಖಾತ್ರಿ ಮಾಡಿಕೊಂಡು ಅವರು ಹೇಳಿ ಕೂಗಾಡಿಕೊಂಡಿದ್ದನ್ನೆಲ್ಲ ಕೇಳಿಯೂ ಕೇಳಿಸಿಕೊಳ್ಳದವನಾದೆ. ಇಷ್ಟಾಗುವಾಗ ನನ್ನ ಪಕ್ಕದಲ್ಲಿ ನಿಂತಿದ್ದ ಮಾರ್ಕ್‌ನನ್ನು ಕೌಂಟರಿನ ಹಿಂದಿದ್ದ ಚೆಲುವೆ ಕರೆದಳು. ಆತ ಹೋಗಿ ತನ್ನ ಟಿಕೇಟನ್ನು ತೆಗೆದುಕೊಂಡು ಬಂದ, ನಂತರ ಒಂದೆರಡು ನಿಮಿಷಗಳು ಕಳೆದ ಮೇಲೆ ನನ್ನ ಸರದಿ ಬಂತು.

ನಾವು ಸೆಕ್ಯೂರಿಟಿಯ ಗೇಟ್ ಕಡೆಗೆ ನಡೆಯುತ್ತಿದ್ದಂತೆ ಮಾರ್ಕ್ ನಗಲು ಶುರುಮಾಡಿದ. 'All those people in the line...they never said a word to me!' ಎಂದ. ನಾನು ಹೌದಲ್ಲ ಎಂಬಂತೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿರುವಾಗ ಅವನೇ ಮುಂದುವರೆಸಿ, 'Do you know why?...they don't know what comes out of my mouth or pockets and when...' ಎಂದವನೇ ಮತ್ತೆ ನಗಲು ಶುರುಮಾಡಿದ. ಮಾರ್ಕ್ ಮಾಮೂಲಿ ಬಿಸಿನೆಸ್ ಕ್ಯಾಷುವಲ್ ಡ್ರೆಸ್ಸಿನಲ್ಲಿದ್ದವನು, ಆದರೆ ನಾನು ಸೂಟ್ ಧರಿಸಿದ್ದೆ. ಆದರೆ ಅಲ್ಲಿದ್ದ ಜನ ನನ್ನನ್ನು ಮಾತ್ರ ಅವರ ಸಿಟ್ಟನ್ನು ತೀರಿಸಲು ಬಳಸಿಕೊಂಡರೇ ವಿನಾ ಮಾರ್ಕ್‌ಗೆ ಒಂದು ಶಬ್ಧವನ್ನು ಹೇಳಲಿಲ್ಲವಲ್ಲಾ ಎಂದು ಒಂದು ಕ್ವಿಂಟಾಲ್ ಅಕ್ಕಿ ಚೀಲವನ್ನು ಹೊತ್ತವರ ಹಾಗೆ ಮುಖ ಮಾಡಿಕೊಂಡು ನಡೆಯತೊಡಗಿದೆ.

***

ಕಳೆದ ಶನಿವಾರ ನ್ಯೂ ಯಾರ್ಕ್ ನಲ್ಲಿ ಐದು ಪೋಲೀಸ್ ಆಫೀಸರುಗಳು ಒಬ್ಬ ಯಾವುದೇ ಆಯುಧಗಳನ್ನು ಹೊಂದಿರದ ಆಫ್ರಿಕನ್ ಅಮೇರಿಕನ್ ಹುಡುಗನನ್ನು ಗುಂಡಿಟ್ಟಿ ಸಾಯಿಸಿದರು. ನಾಳೆ ಮದುವೆ ಆಗ ಬೇಕಾದ ಹುಡುಗನನ್ನು ಅಗತ್ಯಕ್ಕಿಂತಲೂ ಹೆಚ್ಚು ಫೋರ್ಸ್ ಉಪಯೋಗಿಸಿ, ಸುಮಾರು ಐವತ್ತಿಕ್ಕಿಂತಲೂ ಹೆಚ್ಚು ಬುಲೆಟ್‌ಗಳನ್ನು ಹೊಡೆದು ಕೊಂದು ಹಾಕಿದರೆಂದು ಬಹಳಷ್ಟು ಕಡೆ ಸುದ್ದಿ ಬಿತ್ತರವಾಯಿತು. ಇಲ್ಲಿನ ವೃತ್ತಪತ್ರಿಕೆಗಳಲ್ಲಿ ಕಪ್ಪು ಜನರನ್ನು ಡಿಸ್ಕ್ರಿಮಿನೇಟ್ ಮಾಡಿ ನೋಡುತ್ತಾರೆ, ರೇಷಿಯಲ್ ಮಾನದಂಡಗಳಿಂದ ಜನರನ್ನು ಕೆಟ್ಟದಾಗಿ ನೋಡುತ್ತಾರೆ ಎಂದು ಆಗಾಗ್ಗೆ ವಿಷಯಗಳು ಹೊರಬರುತ್ತಲೇ ಇರುತ್ತವೆ. ಇಲ್ಲಿನ ಜನರಲ್ಲಿ ಎಲ್ಲ ಬಣ್ಣದ ಚರ್ಮದವರೂ ಇದ್ದರೂ ಕಾಮನ್ ಅಭಿಪ್ರಾಯದ ಪ್ರಕಾರ ಆಫ್ರಿಕನ್ ಅಮೇರಿಕನ್ ಜನರೆಂದರೆ 'ಸ್ವಲ್ಪ ದೂರವಿರುವುದು ಒಳ್ಳೆಯದು...' ಎನ್ನುವ ಇಂಗಿತವನ್ನು ಅನಫಿಷಿಯಲ್ಲಾಗಿ ಆಗಾಗ್ಗೆ ಕಂಡು/ಕೇಳಿಸಿಕೊಳ್ಳುತ್ತಿರುತ್ತೇವೆ. ಒಂದು ಕಡೆ ನಮ್ಮವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರು ನೀಡುವುದರಿಂದ ಹಿಡಿದು, ಮತ್ತೊಂದು ಕಡೆ ಕಪ್ಪು ಜನರ 'ಮಾಚೋ ಮ್ಯಾನ್' ಇಮೇಜ್‌ನಿಂದ ಎಷ್ಟೋ ಜನ ತಮ್ಮ ಕೆಲಸವನ್ನು ಸಾಧಿಸಿಕೊಳ್ಳುವುದನ್ನೂ ನೋಡಿದ್ದೇನೆ. ಸೌಮ್ಯ ಸ್ವಭಾವದ ಆಫ್ರಿಕನ್ ಅಮೇರಿಕನ್ ಸ್ನೇಹಿತ ಗಾರ್‌ಫೀಲ್ಡ್ ತಾನು ತನ್ನ ಕಾರನ್ನು ಎಲ್ಲಿ ಬೇಕೆಂದರಲ್ಲಿ ತಿರುಗಿಸಬಲ್ಲ, ಅವನು ತನ್ನ ಡ್ರೈವರ್ ಕಡೆಯ ಕಿಟಕಿಯ ಗಾಜನ್ನು ಇಳಿಸಿ ಕೈಯನ್ನು ಹೊರಗೆ ಹಾಕಿದನೆಂದರೆ ಅವನ ಹಿಂದಿದ್ದವರು ಯಾರೂ ಹಾರ್ನ್ ಹಾಕುವುದಿಲ್ಲ. ಅದೇ ಅವನ ಜಾಗದಲ್ಲಿ ನಾನೇನಾದರೂ ಹಾಗೆ ಮಾಡಿದರೆ ಅಕ್ಕಪಕ್ಕದ ಡ್ರೈವರುಗಳು ನನ್ನನ್ನು ಸೀಳಿ ಬಿಡುವಂತೆ ನೋಡುವುದೂ ಅಲ್ಲದೇ, ಅವರಿಂದ ಸಹಸ್ರನಾಮಾರ್ಚನೆಯನ್ನೂ ಮಾಡಿಸಿಕೊಳ್ಳಬೇಕು.

ತಾನು ಟಫ್ ಮನುಷ್ಯನ ಹಾಗೆ ಮುಖವಾಡ ಹಾಕಿಕೊಳ್ಳುವ ಗಾರ್‌ಫೀಲ್ಡ್ ಸಿಕ್ಕಿದಾಗ ಕೇಳಬೇಕು ಎಂದುಕೊಂಡಿದ್ದೇನೆ - he can not have both sides of the cake...ನ್ಯೂ ಯಾರ್ಕ್ ನಗರದಲ್ಲಿ ಈವರೆಗೆ ಎಷ್ಟೋ ಸಮೀಕ್ಷೆಗಳು ಕ್ಯಾಬ್ ಡ್ರೈವರುಗಳ ಬಿಹೇವಿಯರ್ ಅನ್ನು ಅಭ್ಯಾಸ ಮಾಡಿವೆ - ಕ್ಯಾಬ್ ಡ್ರೈವರುಗಳು ಕಪ್ಪು ಜನರನ್ನು ಕಂಡರೆ ನಿಲ್ಲಿಸುವುದು ಕಡಿಮೆ, ಅದೇ ಬಿಳಿ ಜನರನ್ನು ಕಂಡರೆ ನಿಲ್ಲಿಸುವುದು ಹೆಚ್ಚು. ದಿನೇ ದಿನೇ ಒಂದಲ್ಲ ಒಂದು ಕ್ರೈಮ್ ನಲ್ಲಿ ಹೆಸರು ರಾರಾಜಿಸುವ ಆಫ್ರಿಕನ್ ಅಮೇರಿಕನ್ ಮೂಲದ ಜನರು ಒಳಗೆ ಹೇಗಿದ್ದರೂ ಹೊರಗಿನವರಿಗೆ ಒಂದೇ ರೀತಿ ಕಾಣುವಂತೆ ಇಮೇಜ್ ಬೆಳೆದು ಬಂದಿದೆ, ಅದು ನನ್ನೊಬ್ಬನ ತಪ್ಪಲ್ಲ ಎಲ್ಲರೂ ಒಟ್ಟಿಗೆ ಸೃಷ್ಟಿಸಿಕೊಂಡ ಅಥವಾ ಹಾಗೆ ನಮ್ಮಲ್ಲರಿಗೂ ಕಂಡುಬಂದ ನಡತೆಯ ಒಟ್ಟು ಮೊತ್ತ. ಹೀಗಿರುವಾಗ ಒಳ್ಳೆಯ ನಡತೆ ಎಕ್ಸೆಪ್ಷನ್ ಆಗುತ್ತದೆಯೇ ವಿನಾ ರೂಲ್ ಆಗುವುದಿಲ್ಲ.

ಜನಗಳ ನಡತೆಯನ್ನು ಅನುಮೋದಿಸುವಂತೆ ಇಲ್ಲಿಯ ಮಾಧ್ಯಮಗಳೋ ಅಥವಾ ಇಲ್ಲಿಯ ಮಾಧ್ಯಮಗಳನ್ನು ಅನುಮೋದಿಸುವಂತಿರುವ ಜನಗಳ ನಡತೆಯೋ, ಒಟ್ಟಿನಲ್ಲಿ ಕಪ್ಪು ಜನರ ಇಮೇಜ್ ಎಲ್ಲರ ಮನದಲ್ಲಿ ಬದಲಾಗಬೇಕಾದರೆ ಅದೊಂದು ಐತಿಹಾಸಿಕ ವಿಷಯವೇ ಆಗಿಹೋಗುತ್ತದೆ.

Monday, November 27, 2006

ಒಂದು ತಪ್ಪಿನ ಹಿಂದೆ ಮತ್ತೊಂದಾಗದಿರಲಿ...

ಅಮೇರಿಕನ್ ಮಾಧ್ಯಮಗಳು ಒಂದೊಂದಾಗಿ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿವೆಯೇನೋ ಎನ್ನುವ ರೀತಿಯಲ್ಲಿ ಪ್ರಸ್ತುತ ಇರಾಕ್ ಪರಿಸ್ಥಿತಿಯನ್ನು 'ಸಿವಿಲ್ ವಾರ್' ಎಂದು ಕರೆಯಲು ಆರಂಭಿಸಿದ್ದು ಬಹಳ ಒಳ್ಳೆಯ ಸೂಚನೆ. ರಿಪಬ್ಲಿಕನ್ ಪಕ್ಷ ಹಾಗೂ ಬುಷ್ ಆಡಳಿತ ಇರಾಕ್ ಸ್ಥಿತಿಯನ್ನು ಸಿವಿಲ್ ವಾರ್ ಎಂದು ಕರೆಯಲು ಯಾವತ್ತೂ ಒಪ್ಪೋದಿಲ್ಲ ಹಾಗೇನಾದರೂ ಮಾಡಿದರೆ ಅದು ಅವರ ಪಾಲಿಸಿಗಳು ಸೋತದ್ದಕ್ಕೆ ನಿದರ್ಶನವಾಗಿ ಎಲ್ಲಿ ಜನಮತವನ್ನು ಕಳೆದುಕೊಳ್ಳಬಹುದೋ ಎಂಬ ಹೆದರಿಕೆ ಇದ್ದಿರಬಹುದು. ಈಗ ಮಧ್ಯಂತರ ಚುನಾವಣೆಗಳು ನಡೆದು ಆಡಳಿತದಲ್ಲಿ ಪಕ್ಷಗಳು ಸ್ಥಾನಪಲ್ಲಟ ಮಾಡಿದನಂತರ ನಿಧಾನವಾಗಿ ಕಣ್ಣುಬಿಟ್ಟು ನೋಡುತ್ತಿರುವ ಅಮೇರಿಕನ್ ಮಾಧ್ಯಮಗಳ ಸ್ಥಿತಿಗತಿ ಕೊನೆಗೂ ಅವರು ಇದ್ದದ್ದನ್ನು ಇದ್ದಹಾಗೆ ಹೇಳುವ ಧೈರ್ಯ ತೋರಿದರಲ್ಲ ಎಂದು ನಿರಾಳವಾಯಿತು. ಆದರೆ ಇಂದಿಗೂ ಇಲ್ಲಿನ ಮಾಧ್ಯಮಗಳಲ್ಲಿ ಒಂದು ಅಂದಾಜಿನ ಪ್ರಕಾರ ದಿನಕ್ಕೆ ಮೂರು ಜನ ಸಾಯುವ ಅಮೇರಿಕನ್ ಸೈನಿಕರ ಸಂಖ್ಯೆಗಳಿಗೇ ಹೆಚ್ಚು ಮಹತ್ವ ಸಿಗುತ್ತದೆಯೇ ಹೊರತು, ಪ್ರತಿದಿನ ಸಾಯುವ ನೂರಾರು ಇರಾಕೀ ನಾಗರಿಕರ ಜೀವಗಳಿಗೆ ಅಷ್ಟೊಂದು ಮಹತ್ವ ಸಿಗುತ್ತಿಲ್ಲ.

ನನ್ನ ಮೂಗಿನ ನೇರದಲ್ಲಿ ಈ ಇರಾಕ್ ಹತ್ಯಾಕಾಂಡಕ್ಕೆ ಕೊನೆ ಇಲ್ಲವೇ ಎಂದು ಯೋಚಿಸಿದಾಗ ಹಲವಾರು ಉತ್ತರಗಳು ಕಣ್ಣಮುಂದೆ ಬಂದು ಹೋಗುತ್ತವೆ, ಒಂದಿಷ್ಟು ಉತ್ತರಗಳು ಹುಟ್ಟುಹುಟ್ಟುತ್ತಲೇ ಸಾಯುತ್ತವೆ, ಮತ್ತೊಂದಿಷ್ಟು ಬಹಳ ಸುಲಭ ಉತ್ತರಗಳಾಗಿ ಕಂಡುಬಂದು ದೇಶವನ್ನು ಆಳುವ ಅತಿರಥ-ಮಹಾರಥರಿಗೆ ಗೊತ್ತಿಲ್ಲವೇನು ಎಂದು ಅನುಮಾನ ಹುಟ್ಟುತ್ತದೆ. ಜೊತೆಯಲ್ಲಿ ಇಲ್ಲಿನ ಯಾವುದೇ ಪಕ್ಷ ಅಥವಾ ವ್ಯಕ್ತಿಗಳನ್ನು ಅನುಮೋದಿಸದ ನಾನು ಕೊಡುವ ಉತ್ತರ ಬಹಳಷ್ಟು ಜನರಿಗೆ ಪ್ರಿಯವಾಗಲಾರದು.

ಅಮೇರಿಕದವರು ಇರಾಕ್ ದೇಶವನ್ನು ಆಕ್ರಮಣ ಮಾಡಿದ್ದು ಯಾವುದೇ ಕಾರಣಕ್ಕಾಗಿಯಾದರೂ ಇರಲಿ ಅದನ್ನು ಕೆದಕಿ ನೋಡುವುದನ್ನು ಇತಿಹಾಸಕಾರರಿಗೆ ಬಿಟ್ಟರೆ, ನಾನು ಮುಂದೆ ಆಗಿ ಹೋಗಬಹುದಾದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ಸಮೀಕರಣವನ್ನು ಪ್ರಸ್ತುತಪಡಿಸಿದರೆ ಹೇಗೆ ಎಂದುಕೊಳ್ಳುತ್ತೇನೆ:
- ಅಮೇರಿಕನ್ ಹಾಗೂ ಅಂತಾರಾಷ್ಟ್ರೀಯ ಪಡೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚು ಮಾಡುವುದು. ಈಗ ಸುಮಾರು ೧೨೦,೦೦೦ ರಷ್ಟು ಇರುವ ಅಮೇರಿಕನ್ ಸೈನಿಕರನ್ನು ಕೊನೇ ಪಕ್ಷ ಏನಿಲ್ಲವೆಂದರೂ ೨೦೦,೦೦೦ ರಷ್ಟು ಏರಿಸುವುದು ಜೊತೆಯಲ್ಲಿ ಶಾಂತಿ ಸಾರುವ ಪ್ರಪಂಚದ ಎಲ್ಲ ದೇಶಗಳಿಂದಲೂ ಸೈನಿಕರ ತುಕಡಿಯನ್ನು ಕಳಿಸುವಂತೆ ಮನವಿ ಮಾಡಿಕೊಳ್ಳುವುದು.
- ಇರಾಕ್‌ನಲ್ಲಿ ಈಗಾಗಲೇ ಅಧಿಕಾರಕ್ಕಿರುವ ಸರ್ಕಾರವನ್ನು ಗೌರವಿಸಿ, ಸ್ಥಳೀಯ ಪೋಲೀಸ್ ಹಾಗೂ ಸೈನಿಕ ಪಡೆಗಳನ್ನು ಕೇವಲ್ ಆಂತರಿಕ ಭದ್ರತೆಗಳನ್ನು ನೋಡಿಕೊಳ್ಳುವಂತೆ ಅನುಕೂಲಮಾಡಿಕೊಡುವುದು. ಇರಾಕೀ ಪೋಲೀಸ್ ಹಾಗೂ ಸೈನಿಕರಲ್ಲಿ ನಡೆಯುವ ಭ್ರಷ್ಟಾಚಾರ ಅಲ್ಲಿಯ ಭಯೋತ್ಪಾದಕರನ್ನು ಪೋಷಿಸುತ್ತಿರುವುದು ನಿಜ, ಆದ್ದರಿಂದ ಮುಖ್ಯವಾದ ಎಲ್ಲ ರಕ್ಷಣಾ ವ್ಯವಸ್ಥೆಗಳನ್ನು ಅಂತಾರಾಷ್ಟ್ರೀಯ ಮಿಲಿಟರಿ ವ್ಯವಸ್ಥೆಗೆ ಹಸ್ತಾಂತರ ಮಾಡುವುದು.
- ಹಾಡುಹಗಲೇ, ಊರು ಅಥವಾ ರಸ್ತೆಗಳ ಮಧ್ಯ ಸುಳ್ಳು ಚೆಕ್‌ಪಾಯಿಂಟುಗಳನ್ನು ಸೃಷ್ಟಿಸಿ ಜನರನ್ನು ಹೀನಾಯಮಾನವಾಗಿ ಹಿಂಸಿಸಿ ಕೊಲೆಗಯ್ಯುತ್ತಿರುವ ಕಟುಕರನ್ನು ಅವರಷ್ಟೇ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕುವುದು. ಎಕ್ಸಿಕ್ಯೂಷನ್ ಶೈಲಿಯಲ್ಲಿ ಅಮಾಯಕರನ್ನು ಕೇವಲ ಶಿಯಾ-ಸುನ್ನಿ ಎಂಬ ಬೇಧಭಾವದಿಂದ ಕೊಲೆಗಯ್ಯುತ್ತಿರುವವರನ್ನು ಹೊಸಕಿ ಹಾಕುವುದಲಾದರೂ ಮುಂದೆ ಜನರು ಹಣಕ್ಕೋಸ್ಕರ ಅಥವಾ ಮತ್ಯಾವುದೇ ಕಾರಣಗಳಿಗೋಸ್ಕರ ಈ ಕೆಟ್ಟ ಹಾದಿಯನ್ನು ಹತ್ತುವುದು ಕಡಿಮೆಯಾಗಬಹುದು.
- ಹೆಚ್ಚಿದ ಅಂತಾರಾಷ್ಟ್ರೀಯ ಪಡೆಗಳು ಕೇವಲ ನಾಡನ್ನು ಕಾಯ್ದುಕೊಂಡರೆ ಸಮಸ್ಯೆ ಬಗೆ ಹರಿಯೋದಿಲ್ಲ, ಇರಾಕ್ ದೇಶದ ಗಡಿಯನ್ನು ಕೂಡ ಅಷ್ಟೇ ಜಾಗರೂಕರಾಗಿ ಕಾಯ್ದುಕೊಳ್ಳಬೇಕು. ಇರಾಕಿನವರಿಗೆ ಎಲ್ಲಿಂದ ಆಯುಧಗಳ ಸಪ್ಲೈ ಬರುತ್ತದೆಯೋ ಅಂತಹ ಮೂಲಗಳನ್ನು ಹುಡುಕಿ ಹೊಸಕಿ ಹಾಕಬೇಕು. ಹೆಚ್ಚಿನ ಮೂಲಗಳು ಇರಾನ್ ಅಥವಾ ಜೋರ್ಡಾನ್ ದೇಶಗಳನ್ನು ಸೂಚಿಸಿದ್ದೇ ಆದಾಗ ಅಂತಾರಾಷ್ಟ್ರೀಯ ಒತ್ತಡವನ್ನು ಈ ದೇಶಗಳ ಮೇಲೆ ಹೇರಿದಾಗ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾದೀತು.
- ಈಗಾಗಲೇ ಅದೋಗತಿಯನ್ನು ತಲುಪಿದ ಇರಾಕ್ ದೇಶದ ನಗರ ಪಟ್ಟಣಗಳಲ್ಲಿ ನಿರಂತರವಾಗಿ ರಾತ್ರಿ ಹಾಗೂ ಹೆಚ್ಚಿನ ಭಾಗ ಹಗಲು ಕರ್ಪ್ಯೂವನ್ನು ಮುಂದುವರಿಸುವುದು. ಎಲ್ಲಿಯವರೆಗೆ ಜನರ ಸಾವುನೋವುಗಳು ಕಡಿಮೆಯಾಗೋದಿಲ್ಲವೋ ಅಲ್ಲಿಯವರೆಗೆ ದಿನದಲ್ಲಿ ಕೇವಲ ಕೆಲವೇ ಘಂಟೆಗಳ ಮಟ್ಟಿಗೆ ಜನರ ಓಡಾಟವನ್ನು ನಡೆಯಲು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಅಂತಾರಾಷ್ಟ್ರೀಯ ಪಡೆಗಳು ನಗರ ಪಟ್ಟಣಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಳ್ಳುವಂತೆ ಮಾಡುವುದು. ಇದರಿಂದಾಗಿ ಅಳಿದುಳಿದ ಜನರಿಗೆ ಸಾಕಷ್ಟು ತೊಂದರೆಯಾಗೋದಂತೂ ನಿಜ, ಆದರೆ ಅವ್ಯಾಹತವಾಗಿ ಬೆಳೆಯುತ್ತಿರುವ ಹಿಂಸೆಯನ್ನು ತಡೆಯಲು ಬೇರೆ ಯಾವ ದಾರಿಯೇ ಇಲ್ಲ ಎನ್ನುವಂತಾಗಿದೆ.
- ಇರಾಕ್ ನಾಗರಿಕರಿಗೆ ಈಗಾಗಲೇ ಸಾಕಷ್ಟು ತೊಂದರೆಗಳು ಒಂದರ ಹಿಂದೆ ಒಂದಾಗಿ ಬಂದಿರೋದರ ಹಿನ್ನೆಲೆಯಲ್ಲಿ ಅವರು ಇಟ್ಟುಕೊಂಡಿರುವ ವಾಹನಗಳ ಉಪಯೋಗವನ್ನು ಮಿತಿಗೊಳಿಸಬೇಕಾಗಿ ಬರಬಹುದು. ಭಯೋತ್ಪಾದಕರನ್ನು ಹತ್ತಿಕ್ಕಲು ಅವರನ್ನು ನಿಯಂತ್ರಿಸಲು ನಗರ ಹಾಗೂ ಪಟ್ಟಣಗಳಲ್ಲಿ ಹಾದು ಹೋಗುವ ಪ್ರತಿಯೊಂದು ವಾಹನವನ್ನೂ ತಪಾಸಣೆಗೊಳಿಸುವುದು. ಈ ಹೆದರಿಕೆಯಿಂದಲಾದರೂ ಜನರು ಆಯುಧಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದು ತಪ್ಪುತ್ತದೆ. ತಮ್ಮ ಆತ್ಮರಕ್ಷಣೆಗೆಂದು ಒಂದು ರಿವಾಲ್ವರ್ ಅನ್ನು ಇಟ್ಟುಕೊಳ್ಳುವುದು ಬೇರೆ, ನೂರಾರು ಅಮಾಯಕರನ್ನು ಒಂದೇ ನಿಮಿಷದಲ್ಲಿ ಸಾಯಿಸುವ ಎಕೆ ೪೬ ಅನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಬೇರೆ.
- ಅಮೇರಿಕದವರು ತಮ್ಮ ಮಿತಿಯನ್ನು ಒಪ್ಪಿಕೊಂಡು ಹೆಚ್ಚಿದ ಅಂತಾರಾಷ್ಟ್ರೀಯ ಪಡೆಗಳೊಂದಿಗೆ ಸಹಕರಿಸುವುದು ಹಾಗೂ ಬಾಗ್ದಾದ್‌ನಲ್ಲಿ ಇರುವ ಗ್ರೀನ್ ಝೋನ್ ಅನ್ನು ನಿಧಾನವಾಗಿ ವಿಸ್ತರಿಸುವುದು.

ಈ ಮೇಲಿನ ಅಂಶಗಳಲ್ಲಿ ಕೆಲವು ಬಾಲಿಶವಾಗಿ ಕಂಡುಬರಬಹುದು ಅಥವಾ ಪ್ರಾಯೋಗಿಕವಲ್ಲದವುಗಳಾಗಿ ಗೋಚರಿಸಬಹುದು, ಆದರೆ ಇರಾಕ್ ದೇಶದಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನಗಳಿವೆ, ಅವುಗಳ ನಡುವೆ ದೇಶದ ಒಳಿತಿಗೋಸ್ಕರ, ಅಳಿದುಳಿದ ನಾಗರಿಕರ ರಕ್ಷಣೆಗೋಸ್ಕರ ಕೆಲವು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುವುದು ಅನಿವಾರ್ಯ ಎನ್ನುವಂತಾಗಿರುವುದರಿಂದ ಹೀಗೆ ಬರೆಯಬೇಕಾಯಿತು. ಇರಾಕ್ ದೇಶ ಮೊದಲಿನ ಹಾಗಿಲ್ಲ, ಈಗಾಗಲೇ ಚೂರು-ಚೂರಾಗಿ ಹೋಗಿದೆ. ಜನರು ತಮ್ಮ ತಮ್ಮ ವ್ಯವಸ್ಥೆಯನ್ನು ತಾವೇ ನೋಡಿಕೊಂಡು ಲೋಕಲ್ ಮಿಲಿಷಿಯಾಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿಕೊಂಡು ತಮ್ಮ ರಕ್ಷಣೆಯನ್ನು ಕಾಯ್ದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಉತ್ತರದಿಂದ ದಕ್ಷಿಣದವರೆಗೆ ಬೇಕಾದಷ್ಟು ರೀತಿಯಲ್ಲಿ ದೇಶ ಹಾಗೂ ಜನರು ಇಬ್ಬಾಗವಾಗಿ ಹೋಗಿದ್ದಾರೆ. ಇರಾಕೀ ಸರ್ಕಾರದ ಬಗ್ಗೆ, ಇಂತಹ ಸರ್ಕಾರ ತಮ್ಮನ್ನು ಕಾಯುವ ಬಗ್ಗೆ ಯಾರಿಗೂ ನಂಬಿಕೆ ಎನ್ನುವುದೇನೂ ಉಳಿದಿಲ್ಲ. ಹೀಗಿರುವಲ್ಲಿ ಅಮೇರಿಕದ ಪಡೆಗಳು ಹಿಂತಿರುಗೇನಾದರೂ ಹೋದರೆ ಇರಾಕ್‌ನಂತಹ ದೇಶ ನಾಗರಿಕತೆಯಲ್ಲಿ ಎಷ್ಟೋ ಶತಮಾನಗಳ ಕಾಲ ಹಿಂದುಳಿದು ಬಿಡುತ್ತದೆ, ನಾಗರಿಕತೆಯನ್ನು ನಾಶಮಾಡುವ ಎಲ್ಲ ಅಮಾನವೀಯ ಶಕ್ತಿಗಳು ತಾಂಡವವಾಡಲು ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲೇ ಪ್ರಪಂಚದ ಎಲ್ಲ ದೇಶಗಳು ಇರಾಕ್ ಪರವಾಗಿ ನಿಂತು ದುಡಿಯುವ ಅಗತ್ಯವಿದೆ. ಅಕಸ್ಮಾತ್ ಹಾಗೇನಾದರೂ ಆಗದೇ ಹೋದಲ್ಲಿ ಇತಿಹಾಸ ಒಂದು ನಾಗರಿಕತೆಯನ್ನು ಸಂಪೂರ್ಣವಾಗಿ ನಾಶಮಾಡಿದ ಹೊಣೆ ನಮ್ಮೆಲ್ಲರ ಮೇಲೆ ನಿರ್ಧಾಕ್ಷಿಣ್ಯವಾಗಿ ಹೇರುವ ಕಾಲ ದೂರವೇನೂ ಇಲ್ಲ.

ತಪ್ಪುಗಳಾಗೋದು ಸಹಜ, ಅದನ್ನು ತಿದ್ದಿಕೊಂಡು ಮುಂದೆ ನಡೆಯೋದು ಮುಖ್ಯ. ಅಮೇರಿಕದವರು ತಾವು ಮಾಡಿದ ತಪ್ಪಿಗೆ ದಂಡ ತೆರುವುದು ಇದ್ದೇ ಇದೆ, ಇರಾಕ್ ಸಂಪೂರ್ಣ ನಿಯಂತ್ರಣಕ್ಕೆ ಬಂದ ಮೇಲೆ ವಿಶ್ವ ನ್ಯಾಯಾಂಗ ಈ ಕರ್ಮಕಾಂಡವನ್ನು ಸೃಷ್ಟಿಸಿದವರ ಹಿಂದೆ ಬೀಳಬೇಕು, ಅಂತಹವರನ್ನು ಕಟಕಟೆಗೆ ಹತ್ತಿಸಬೇಕು. ಆದರೆ ಈಗ ಮುಖ್ಯವಾಗಿ ಆಗಬೇಕಾಗಿರೋದು ಒಂದು ನಾಗರಿಕತೆಯನ್ನು ಉಳಿಸುವ ಬೆಳೆಸುವ ಪ್ರಾಮಾಣಿಕ ಪ್ರಯತ್ನ, ಅದಿಲ್ಲವೆಂದಾರೆ ಒಂದು ತಪ್ಪಿನ ಹಿಂದೆ ಮತ್ತೊಂದು ತಪ್ಪಾಗುವ ದಿನಗಳು ದೂರವೇನೂ ಇಲ್ಲ, ಹಾಗಾಗದಿರಲಿ.