Friday, June 30, 2006

ಸ್ಯಾಮ್ ಹಾಲ್‌ಗೆ ವಿದಾಯ

ದಿನ ಮುಂಜಾನೆ ೯೬.೩ WQXR ಸ್ಟೇಷನ್‌ನ ಅಲಾರಾಂಗೆ ಕಿವಿಕೊಟ್ಟು ಏಳುತ್ತಿದ್ದಾಗ ಅನೌನ್ಸರ್ ಜೆಫ್ ಸ್ಪುರ್ಜೆನ್ ೨೦೦೬ ರ ಅರ್ಧ ವರ್ಷ ಕಳೆದು ಹೋಗಿದ್ದನ್ನು ಹೇಳುವುದರ ಜೊತೆಗೆ ದಶಕಗಳಿಂದ ರೇಡಿಯೋದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಮಾಡಿ ಕಳೆದ ಹದಿಮೂರು ವರ್ಷಗಳಿಂದ ನ್ಯೂ ಯಾರ್ಕ್ ಟೈಮ್ಸ್ ಸುದ್ದಿಗಳನ್ನು ಅವರದೇ ಆದ ರೇಡಿಯೋದಲ್ಲಿ ಪ್ರತಿದಿನವು ಓದುತ್ತಿದ್ದ ಸ್ಯಾಮ್ ಹಾಲ್ ಸಹ ಇವತ್ತು ನಿವೃತ್ತನಾಗುತ್ತಾನೆ ಎಂದು ಹೇಳಿದ್ದನ್ನು ಕೇಳಿದ ಮೇಲೆ ಇನ್ನು ಮುಂದೆ ಸ್ಯಾಮ್ ಅನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬಲವಾಗಿ ಅನ್ನಿಸತೊಡಗಿತು. ಅಲ್ಲದೆ ನಮ್ಮ ಆಫೀಸ್‌ನಲ್ಲೂ ಇದೇ ದಿನ ಬೇಕಾದಷ್ಟು ಜನರು ನನಗೆ ಗೊತ್ತಿರೋ ಹಾಗೆ ನಿವೃತ್ತಿಯನ್ನು ಪಡೆಯುತ್ತಿರುವುದೂ ನೆನಪಿಗೆ ಬಂತು. ಈ ದಿನ ಏನಾದರಾಗಲಿ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಫೋನ್ ಮಾಡಿ ವಿದಾಯವನ್ನು ಹೇಳಬೇಕು ಎಂದುಕೊಳ್ಳುತ್ತಲೇ ನಿವೃತ್ತರಾಗುತ್ತಿರುವವರ ಹೆಸರುಗಳನ್ನು ನೆನಪಿಗೆ ತಂದುಕೊಳ್ಳುತ್ತಾ ಹೋದೆ.


ಸ್ಯಾಮ್ ಹಾಲ್, ಆರು ಅಡಿ ಐದು ಅಂಗುಲದ ಎತ್ತರದ ನಿಲುವಿನ ಮನುಷ್ಯ, ಕಳೆದ ಐದು ದಶಕಳಿಂದ ಒಂದಲ್ಲ ಒಂದು ರೇಡಿಯೋ ಸ್ಟೇಷನ್‌ನಲ್ಲಿ ಕೆಲಸ ಮಾಡಿ, ಕಳೆದ ಹದಿಮೂರು ವರ್ಷಗಳಿಂದ ಸಾವಿರಾರು ಜನರಿಗೆ ಸುದ್ದಿ, ಹವಾಮಾನ ಮುಂತಾದ ವರದಿಗಳನ್ನು ಪ್ರತಿದಿನವೂ ನೀಡುತ್ತಾ ನ್ಯೂ ಯಾರ್ಕ್ ಸುತ್ತಮುತ್ತಲಿನಲ್ಲಿ ಒಬ್ಬ ದೊಡ್ಡ ರೇಡಿಯೋ ಸೆಲೆಬ್ರಿಟಿ. ಸ್ಯಾಮ್ ತನ್ನ ನಿಧಾನವಾದ ಧ್ವನಿಯಲ್ಲಿ ಒಂದೊಂದೇ ಸುದ್ದಿಯ ತುಣುಕುಗಳನ್ನು ಹೆಕ್ಕಿ ತನ್ನದೇ ಆದ ಗಾಂಭೀರ್ಯತೆಯಲ್ಲಿ ಅದನ್ನು ಓದುವುದು ನನಗಂತೂ ಇಷ್ಟವಾಗುತ್ತಿತ್ತು. ಕೆಲವು ವರ್ಷಗಳಿಂದ ನಾನು ಪ್ರತಿದಿನವೂ ಸ್ಯಾಮ್ ಧ್ವನಿಯನ್ನು ಕೇಳಿಯೇ ಏಳೋದು. ಅದೇ ದಿನದ ನ್ಯೂ ಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸುದ್ದಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂಕ್ಷಿಪ್ತವಾಗಿ ಹಾಗು ಸೂಕ್ಷ್ಮವಾಗಿ ಶೋತೃಗಳಿಗೆ ಹಂಚುವ ಸಾಮರ್ಥ್ಯ ಒಂದು ಅಸಾಧಾರಣ ಪ್ರತಿಭೆ - ನಾನೂ ಸುದ್ದಿಗಳನ್ನು ಓದಬಲ್ಲೆ, ಅದರಲ್ಲೇನಿದೆ ಮಹಾ ಎಂದುಕೊಂಡರೆ ಅದರಲ್ಲಿ ಆಶ್ಚರ್ಯ ಕಾದಿರುತ್ತದೆ. ಮೊದಲೆಲ್ಲ ಆದರೆ ಧಾರವಾಡ ಆಕಾಶವಾಣಿಯ ತರಂಗಾಂತರಗಳ ಸ್ಪೂರ್ತಿಗೆ ಹಾಸಿಗೆ ಬಿಡುತ್ತಿದ್ದವನಿಗೆ ಇಲ್ಲಿ ಬಂದ ಮೇಲೆ ಸ್ಯಾಮ್ ಹಾಲ್ ಅಂಥವರು ನನ್ನ ರೇಡಿಯೋ ಸಮಯವನ್ನು ತುಂಬಿಕೊಳ್ಳಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಅಲ್ಲಾದರೆ ಪ್ರತಿದಿನವೂ ಮುಂಜಾನೆ ಐದೂ ಐವತ್ತೈದಕ್ಕೆ ಮೋಹನ ರಾಗದಲ್ಲಿ ಆರಂಭವಾಗುವ ಕೊಳಲಿನ ಧ್ವನಿ, ಆರು ಘಂಟೆಗೆಲ್ಲ ಇಂಗ್ಲೀಷ್ ಸುದ್ದಿ, ಮುಂದೆ ಸಂಸ್ಕೃತ ವಾರ್ತೆ, ಭಕ್ತಿಗೀತೆ, ಸುಗಮ ಸಂಗೀತ, ಚಿಂತನ, ಇತ್ಯಾದಿಗಳ ನಂತರ ಏಳೂ ಹದಿನೈದಕ್ಕೆ ಪ್ರದೇಶ ಸಮಾಚಾರ, ಏಳೂ ಮೂವತ್ತೈದಕ್ಕೆ ಕನ್ನಡವಾರ್ತೆಗಳು ಇತ್ಯಾದಿಯಾಗಿ ಹೇಗಾದರೂ ಎಂಟು ಘಂಟೆ ಹೊಡೆದು ಹೋಗುತ್ತಿತ್ತು. ಇಲ್ಲಿ ಅದರ ಬದಲಿಗೆ ಸ್ಯಾಮ್ ಹಾಲ್ ಸುದ್ದಿ ಸಿಗುತ್ತಿತ್ತು, ಜೆಫ್ ಸ್ಪುರ್ಜೆನ್ ಅಥವಾ ಆನ್ನಿ ಬರ್ಗನ್ ಇವರಲ್ಲೊಬ್ಬರ ಮಧುರವಾಣಿಯಲ್ಲಿ ವಿವರಗಳ ಜೊತೆ ಬಿತ್ತರವಾಗುವ ಶಾಸ್ತ್ರೀಯ ಸಂಗೀತ ಜೊತೆಯಾಗಿದೆ.

ಇಂದಿನ ಜೂನ್ ಮೂವತ್ತು ಹಲವರು ನಿವೃತ್ತರಾಗುವ ವರ್ಷವಾಗಿದೆ. ಈ ವರ್ಷವೂ ಸೇರಿ ಮುಂದೆ ಬರುವ ವರ್ಷಗಳು ಒಂದು (ಬೇಬಿ ಬೂಮರ್) ಸಂತತಿಯನ್ನು ನಿವೃತ್ತರನ್ನಾಗಿ ಮಾಡಲಿವೆ. ನಮ್ಮ ಆಫೀಸ್‌ನಲ್ಲಿ ಕಡಿಮೆ ಎಂದರೆ ಇಪ್ಪತ್ತೈದು ವರ್ಷಗಳಿಂದ ಹಿಡಿದು ಮೂವತ್ತೈದು ವರ್ಷಗಳವರೆಗೂ ಕಂಪನಿಯಲ್ಲಿ ಕೆಲಸ ಮಾಡಿ ತಮ್ಮ ಅಗಾಧವಾದ ಅನುಭವಗಳನ್ನು ತಮ್ಮ ಜೊತೆಯಲ್ಲಿ ಕೊಂಡೊಯ್ಯುತ್ತಿರುವ ಕೆಲವರನ್ನು ನೋಡಿದರೆ ಇವರು ಇನ್ನಷ್ಟು ವರ್ಷ ಇಲ್ಲಿಯೇ ದುಡಿಯಬಾರದಿತ್ತೇ ಎನ್ನಿಸಿತು. ನಾವು ಇತ್ತೀಚೆಗೆ ಸೇರಿಕೊಂಡವರಿಗಂತೂ ನನ್ನ ಆಪ್ತವಲಯದಲ್ಲಿ ಎಷ್ಟೋ ಜನ ದಾರಿದೀಪಗಳಾಗಿದ್ದರು, ನನಗೆ ಏನೇನೋ ವಿಷಯಗಳನ್ನು ತಿಳಿಸಿ ಹೇಳಿದ್ದರು, ಇನ್ನು ಇವರೆಲ್ಲರೂ ಇರದೆ ಎದುರಿಗಿರುವ ದಾರಿಯಲ್ಲಿ ಸ್ವಲ್ಪ ಕತ್ತಲು ಹೆಚ್ಚೇ ಎಂದೆನಿಸಿತು.

ಇಲ್ಲಿ ನಿವೃತ್ತರಾಗುವವರ ಪಟ್ಟಿಯನ್ನು ನೆನೆದುಕೊಂಡು ಅಲ್ಲಿಲ್ಲಿ ಹುಡುಕುತ್ತಿರುವಾಗ ನ್ಯಾಯಮೂರ್ತಿ ವೆಂಕಟಾಚಲ ಅವರೂ ಕೂಡ ನಿವೃತ್ತರಾದರು ಎಂದು ಓದಿದೆ. ಲೋಕಾಯುಕ್ತರಾಗಿ ಬಹಳಷ್ಟು ಹುಳುಕನ್ನು ಹೊರಗಡೆ ತೋರಿಸಿಕೊಟ್ಟ ಇವರು ಕೊನೆಯಲ್ಲಿ ಹೇಳಿದ ಮಾತುಗಳಲ್ಲಿ ಒಂದು ಅಂಶ ಬಹಳ ಮಾರ್ಮಿಕವಾಗಿತ್ತು, "ನನ್ನ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು (ಎಸ್. ಎಂ. ಕೃಷ್ಣ, ಧರಂ ಸಿಂಗ್ ಮತ್ತು ಕುಮಾರ ಸ್ವಾಮಿ) ನೋಡಿದ್ದೇನೆ. ಆದರೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಆಸಕ್ತಿ ಯಾರಲ್ಲೂ ಕಾಣಿಸಿಲ್ಲ." ಎಂಬುದರಲ್ಲೇ ಅವರ ಅನುಭವದ ಸಾರವಿದೆ. ಯಾರೇ ಮುಖ್ಯಮಂತ್ರಿಗಳಾಗಲಿ, ಮೇಲಿನವರಿಗೆ ಬೇಕಾದ ಧೈರ್ಯ, ದಿಟ್ಟತನವಿದ್ದರೆ ಎಂತಹ ಭ್ರಷ್ಟಾಚಾರಕ್ಕಾದರೂ ಕಡಿವಾಣ ಹಾಕಬಹುದು, ಆದರೆ ಅದು ಮೇಲಿನವರಿಗೇ ನಗಣ್ಯವಾದಾಗ ಕೆಳಗಿನವರಿಗೆ ಏನೇ ಮಾಡಿದರೂ ಅವರಿಗೆ ತಪ್ಪಿಸಿಕೊಳ್ಳುವ ಉಪಾಯಗಳು ಹಲವಾರು ಇರೋದರಿಂದ ಲೋಕಾಯುಕ್ತರ ಕೈಯಲ್ಲಿ ಹೆಚ್ಚೇನನ್ನು ಸಾಧಿಸಲು ಸಾಧ್ಯವಾಗದೇ ಹೋಗಬಹುದು. ವೆಂಕಟಾಚಲ ಅವರ ಅವಧಿಯನ್ನು ವಿಸ್ತರಿಸಲು ಅಥವಾ ಅವರಿಗೆ ಹೆಚ್ಚಿನ ಅಧಿಕಾರವನ್ನು ಕೊಡುವುದರ ಬಗ್ಗೆ ಚರ್ಚೆ ನಡೆದಿದ್ದರೂ ಇನ್ನೂ ಯಾವುದೂ ತೀರ್ಮಾನಗೊಂಡಿಲ್ಲವಾದ್ದರಿಂದ ವೆಂಕಟಾಚಲ ಅವರಿಗೆ ಕನ್ನಡಿಗರು ವಿದಾಯ ಹೇಳಲೇಬೇಕಾಗಿ ಬಂದಿದೆ. ಸುದ್ದಿಗಳಲ್ಲಿ ಇವರನ್ನೂ ನಾನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತೇನೆ.

ನಮ್ಮ ತಲೆಮಾರುಗಳಲ್ಲಿ ಆರೇಳು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದರೆ ಅದು ದೊಡ್ಡ ವಿಷಯವಾಗುತ್ತದೆ. ಅದೇ ನಮ್ಮ ಹಿಂದಿನ ತಲೆಮಾರುಗಳಲ್ಲಿ ಒಂದು ಬಗೆಯ ಲಾಯಲ್ಟಿ ಇತ್ತು, ನಾನು ಕಂಡ ಹಾಗೆ ಹೆಚ್ಚಿನವರು ನಿವೃತ್ತರಾದವರು ಒಂದೇ ಕಡೆ/ಕಂಪನಿಯಲ್ಲಿ ಕೆಲಸ ಮಾಡಿದವರು. ನಾನು ಮೊದಮೊದಲು ಎರಡು ವರ್ಷಕ್ಕೊಮ್ಮೆ ಕೆಲಸ ಬದಲಾಯಿಸುವುದನ್ನು ಇಂಥವರಿಗೆ ವಿವರಿಸುವಾಗ ಅವರ ಮುಖದಲ್ಲಿ ಆಶ್ಚರ್ಯ ಹಾಗೂ ದುಃಖವನ್ನು ಗುರುತಿಸುತ್ತಿದ್ದೆ. ಆದರೆ ಐದಾರು ವರ್ಷ ಕೆಲಸ ಮಾಡಿದ ನನ್ನಂತಹವರೇ ಈ ಕಂಪನಿಯಲ್ಲಿ ಬಹಳಷ್ಟು ಸೀನಿಯರ್ ಆಗಿ ಕಂಡಿದ್ದೂ ಇದೆ. ನನ್ನ ಪ್ರಕಾರ ಒಂದು ಕಂಪನಿಯಲ್ಲಿ ಐದು ವರ್ಷಗಳಿಗಿಂತ ಹೆಚ್ಚಿದ್ದರೆ ನಿಧಾನವಾಗಿ ಕಂಪನಿಯ ಸಂಸ್ಕೃತಿಯೇ ನಮ್ಮ ಸಂಸ್ಕೃತಿಯ ಒಂದು ಅಂಗವಾಗಿ ಹೋಗುತ್ತದೆ. ಕೊನೆಯಲ್ಲಿ ಹತ್ತು-ಇಪ್ಪತ್ತು-ಮುವತ್ತು ವರ್ಷಗಳನ್ನು ಕಳೆದ ಮೇಲೆ ಹೆಚ್ಚೂ ಕಡಿಮೆ ಒಂದಲ್ಲ ಒಂದು ಅನುಭವದಲ್ಲಿ ನಮ್ಮೆಲ್ಲ ತಿಳುವಳಿಕೆಯನ್ನೂ ಕಂಪನಿಯ ವ್ಯವಹಾರ ತುಂಬಿಕೊಂಡುಬಿಡುತ್ತದೆ. ಆದ್ದರಿಂದಲೇ ನಮ್ಮ ತಲೆಮಾರಿನಲ್ಲಿ ಯಾರಿಗಾದರೂ ತಾವು ಮಾಡುತ್ತಿದ್ದ ಕೆಲಸ ಇಷ್ಟವಿಲ್ಲವೆಂದಾದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳುವಂತೆ ಹೇಳುತ್ತೇನೆ, ಅದನ್ನು ಬಿಟ್ಟು, ಒಂದೈದು ವರ್ಷಗಳಾದ ಮೇಲೆ ನೋಡೋಣ ಎಂದರೆ, ಅಲ್ಲಿಗೆ ಕಥೆ ಮುಗಿದಂತೆಯೇ.

ಸೋಮವಾರದಿಂದ ಮುಂಜಾನೆ ಸ್ಯಾಮ್ ಹಾಲ್ ಧ್ವನಿ ಕೇಳೋದಿಲ್ಲ, ಅವನ ಬದಲಿಗೆ ಮತ್ಯಾರೋ ಬರುತ್ತಾರೆ, ನಿಧಾನವಾಗಿ ಅವರ ಧ್ವನಿಗೆ ಹೊಂದಿಕೊಳ್ಳುತ್ತೇನೆ. ಆದರೂ, ೨೦೦೪ರಲ್ಲಿ ಹತ್ತುವರ್ಷಗಳ ನಂತರ ಮಾರ್ಕೆಟ್ ಪ್ಲೇಸ್‌ ಆವೃತ್ತಿಯಿಂದ ನಿವೃತ್ತನಾದ ಡೇವಿಡ್ ಬ್ರಾಂಕಾಚಿಯೋ ಧ್ವನಿ, ಸ್ಪುಟತೆ, ಕಾರ್ಯಕ್ರಮ ವೈವಿಧ್ಯತೆ, ಪ್ರಶ್ನೆಗಳನ್ನು ಕೇಳುವ-ಉತ್ತರಿಸುವ ಹುರುಪು ಇವುಗಳನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನಿಸುತ್ತಿರುವುದರಿಂದ, ಸ್ಯಾಮ್ ಹಾಲ್ ಬಿಟ್ಟು ಹೋದ ಜಾಗೆಯನ್ನು ನನ್ನ ಮನಸ್ಸಿನಲ್ಲಿ ಯಾರೂ ತುಂಬಲಾರರು ಎಂದೇ ಹೇಳಬೇಕು. ಜೂನ್ ಇಪ್ಪತ್ತೊಂದರಂದು ಹೆಚ್ಚು ಹೊತ್ತು ಹಗಲಿರುವ ದಿನವೆಂದು ನೆನಪಿಗೆ ತಂದುಕೊಟ್ಟ ಕೆಲವೇ ದಿನಗಳಲ್ಲಿ ಹೆಚ್ಚು ಜನರು ನಿವೃತ್ತರಾಗುವುದೇಕೆ ಎನ್ನುವುದು ಇನ್ನೂ ನಿಗೂಢವಾಗುತ್ತಾ ಹೋಗುತ್ತದೆ.

Thursday, June 29, 2006

ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ದ್ವಂದ್ವ

ಇರಾಕ್, ಅಫಘಾನಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಬುಷ್ ಅಡ್ಮಿನಿಷ್ಟ್ರೇಷನ್ ಹಿಂಸೆಯ ಬಳಕೆ ಮಾಡಿದ್ದನ್ನು ಹಲವಾರು ಮಾಧ್ಯಮಗಳಲ್ಲಿ ಚರ್ಚಿಸಲಾಗುತ್ತಿದೆ. ಹಿಂಸೆಯನ್ನು ಚೆನ್ನಾಗಿ ಬಲ್ಲವರ ಪ್ರಕಾರ ಹೀಗೆ ಹಿಡಿದ ಯುದ್ಧ ಖೈದಿಗಳನ್ನೋ, ಭಯೋತ್ಪಾದಕರನ್ನೋ ಅತಿಯಾಗಿ ಹಿಂಸಿಸಿ ಪಡೆದ ಮಾಹಿತಿಗಳು ನಿಖರವಾಗೇನೂ ಇರೋದಿಲ್ಲ, ಅತಿಯಾದ ಹಿಂಸೆಯನ್ನು ತಪ್ಪಿಸಿಕೊಳ್ಳಲು ಕೆಲವೊಮ್ಮೆ ಶಿಕ್ಷೆ ಅನುಭವಿಸುತ್ತಿರುವವರು ಸುಳ್ಳು ಮಾಹಿತಿಗಳನ್ನು ಒದಗಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದನ್ನೂ ಹಲವಾರು ಉದಾಹರಣೆಗಳ ಮೂಲಕ ತೋರಿಸಿದ್ದನ್ನು ಅಲ್ಲಲ್ಲಿ ಇತ್ತೀಚೆಗೆ ಓದಿದೆ, ರೇಡಿಯೋದಲ್ಲಿ ಕೇಳಿದೆ. 'ಶತ್ರು' ನಾಶಕ್ಕೆ ತಮ್ಮ ಜೀವದ ಹಂಗನ್ನು ತೊರೆದು ಸೆಣೆಸುವ ಭಯೋತ್ಪಾದಕರನ್ನು ಜೀವಂತ ಹಿಡಿದರೂ ಅವರಿಂದ ನಿಖರವಾದ ಮಾಹಿತಿಯನ್ನು ಹೊರಪಡಿಸುವುದಾದರೂ ಹೇಗೆ? ಹಿಂಸೆಯನ್ನು ನೀಡದೇ ಹೋದರೆ ಇನ್ನು ಯಾವ ಪೆಟ್ಟಿಗೆ ಬಗ್ಗುತ್ತಾರೆ ಎಂದೆಲ್ಲಾ ಯೋಚಿಸುತ್ತಾ ಹೋದಾಗ ಅವರ ಮನ ಒಲಿಸದೇ, ಅವರ ಜೊತೆಯಲ್ಲಿ ಹೊಂದಿಕೊಳ್ಳದೇ ಹೋದರೆ ಯಾವ ಪ್ರಯೋಜನವೂ ಇಲ್ಲ ಎಂಬ ಮಾತುಗಳು ಗಟ್ಟಿಯಾಗಿ ಕೇಳಿಬಂದವು.

ಕೆಲವರಿಗೆ ಸಾವು ಪವಿತ್ರವಾದದ್ದು, ಅತಿ ಹೆಚ್ಚಿನದು, ಅದು ಅವರ ಮೋಕ್ಷ ಸಾಧನೆಯೂ ಹೌದು, ಅವರಿಗೆ ಬೇಕಾಗಿಯೋ ಬೇಡವಾಗಿಯೋ ಭಯೋತ್ಪಾದಕರಾಗಲೀ ಅಥವಾ ಒಂದು ದೇಶದ ಸೈನಿಕರಾಗಲಿ ಯುದ್ಧದಲ್ಲಿ ತೊಡಗಿದಾಗ ತಮ್ಮ ನಿತ್ಯ ಜೀವನದಲ್ಲಿ ಒಂದಲ್ಲ ಒಂದು ರೀತಿಯಿಂದ ಸಾವನ್ನು ಎದುರಿಸಿಯೇ ಇರುತ್ತಾರೆ. ಒಬ್ಬ ಸೈನಿಕನಿಗೆ ಸಿಗಬಹುದಾದ ಗೌರವ ಅದೇ ಗಡಿಯೊಳಗೆ ನುಸುಳಿ ಬರುವ ಭಯೋತ್ಪಾದಕನಿಗೆ ದೊರೆಯುವುದಿಲ್ಲ. ಯಾರೋ ತಲೆಸವರಿದ ಕಾರಣಕ್ಕೆ ಒಬ್ಬ ಭಯೋತ್ಪಾದಕ ಹುಟ್ಟಿಕೊಂಡಿದ್ದರೆ, ಒಬ್ಬ ಸೈನಿಕನಾಗಿ ಸೇರಿದವನಿಗೆ ಹೆಚ್ಚಿನ ಧೇಯೋದ್ಯೇಶಗಳಿರಬಹುದು. ಈ ರೀತಿಯ ಚೌಕಟ್ಟಿನಲ್ಲಿ ಒಂದು ವ್ಯವಸ್ಥಿತ ನಿಲುವಿನ ಸೈನಿಕರಿಗೂ, ಬೇಕಾಬಿಟ್ಟಿಯಾಗಿರೋ ಭಯೋತ್ಪಾದಕರಿಗೂ ಚಕಮುಖಿ ನಡೆದಾಗ ಅಲ್ಲಿ ಆಗಬಹುದಾದ ಸಾವುನೋವಿನ ಪರಿಣಾಮ ಊಹಿಸಿಕೊಳ್ಳಲೂ ಭಯಾನಕವಾಗಿರುತ್ತದೆ. ಒಬ್ಬ ಸೈನಿಕನ ನಿಲುವಿನಲ್ಲಿ ಯೋಚಿಸಿದಾಗ ತನ್ನ ಕಡೆಯವರಲ್ಲಿ, ಅಥವಾ ತನ್ನ ಗುಂಪಿನವರಲ್ಲಿ ಯಾರಾದಾರೂ ತೀರಿಕೊಂಡರೆ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಒಬ್ಬ ಸೈನಿಕ ತನ್ನ ಮಾಮಾಲೀ ಕಕ್ಷೆಗಿಂತ ಹೊರಗೆ ನಿಂತು ವೈರಿಗಳ ಮೇಲೆ ಆಕ್ರಮಣ ಮಾಡಿದ್ದು ಬಹಿರಂಗವಾಗಿದೆ. ಅದೇ ರೀತಿ ಭಯೋತ್ಪಾದಕರಿಗೂ ಚಕಮುಖಿಯಲ್ಲಿ ತಮ್ಮವರನ್ನು ಕಳೆದುಕೊಂಡು ಅದಕ್ಕೆ ತಕ್ಕನಾದ ಶಾಸ್ತಿ ಮಾಡೇ ಮಾಡುತ್ತೇವೆಂದು ಪಣತೊಟ್ಟ ಪ್ರಕರಣಗಳೂ, ಅವುಗಳಿಂದಾದ ಪರಿಣಾಮಗಳನ್ನೂ ಬೇಕಾದಷ್ಟು ಕಡೆ ತೋರಿಸಲಾಗಿದೆ. ಇದನ್ನು ಬರೆಯುತ್ತಿರುವ ಉದ್ದೇಶ ಇಷ್ಟೇ - ಒಂದು ಕ್ಲಾಸ್ ರೂಮ್ ಸನ್ನಿವೇಶದಲ್ಲಿ ಬಿಡಿಸಿ ಹೇಳಬಹುದಾದ ಹಿಂಸೆಯ ವ್ಯಾಪ್ತಿ ಸೆರೆಸಿಕ್ಕ ಗಾಯಾಳುಗಳನ್ನು ನೋಡಿಕೊಳ್ಳುವುದಕ್ಕೆ ಸೀಮಿತವೆಂದೆನಿಸಿದರೆ ನಿಜವಾದ ಯುದ್ಧ ಭೂಮಿಯಲ್ಲಿ ನಡೆಯುವ ಆಚರಣೆಗಳೇ ಬೇರೆ, ಅಲ್ಲಿ ಎಲ್ಲವನ್ನೂ ಸಮಯವೇ ನಿರ್ಧರಿಸಬಲ್ಲದು.

'ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು' ಎಂದು ದಪ್ಪ ಚರ್ಮದವರಿಗೆ ಅವರ ಮಟ್ಟದ ಟ್ರೀಟ್‌ಮೆಂಟ್ ಕೊಡಬೇಕೆನ್ನುವುದು ಹಲವರ ಅಭಿಮತ, ಆದರೆ ಅದಕ್ಕೆ ವ್ಯತಿರಿಕ್ತವಾಗಿ 'ಹಿಂಸೆಯಿಂದ ಏನನ್ನೂ ಗೆಲ್ಲೋದಕ್ಕೆ ಸಾಧ್ಯವಿಲ್ಲ' ಎನ್ನುವ ಅನುಭವಿಗಳ ಮಾತೂ ಕೇಳಿಬರುತ್ತದೆ. ಅಮೇರಿಕದ ಸೈನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸೆರೆಸಿಕ್ಕ ಭಯೋತ್ಪಾದಕರಲ್ಲಿ ಕೆಲವರಂತೂ ನಿಜವಾದ ಹಾರ್ಡ್‌ಕೋರ್ ಉಗ್ರಗಾಮಿಗಳು, ಅಂತಹವರೊಡನೆ ಒಪ್ಪಂದ ಮಾಡಿಕೊಳ್ಳಲಾಗುವುದೇ? ಒಂದು ವೇಳೆ ಒಪ್ಪಂದ ಮಾಡಿಕೊಂಡರೂ ಅವರನ್ನು ನಂಬುವುದಾದರೂ ಹೇಗೆ? ಸೆರೆಸಿಕ್ಕ ಉಗ್ರಗಾಮಿಗಳಿಂದ ಆದಷ್ಟು ಬೇಗ 'ಒಳ್ಳೆಯ' ಮಾಹಿತಿಯನ್ನು ಪಡೆದುಕೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸುವುದು, ಕೆಟ್ಟ ಭೀಜದ ಮೂಲವನ್ನು ಕಂಡುಹಿಡಿದು ಹೊಸಕಿ ಹಾಕುವುದು ಮುಂತಾದ ಮಹಾನ್ ಯೋಚನೆಗಳಿರುತ್ತವೆ, ಇವುಗಳಿಗೆಲ್ಲ 'ಹಿಂಸೆ'ಯಿಂದ ಪಡೆಯಬಹುದಾದ ಉತ್ತರಗಳಲ್ಲದಿದ್ದರೆ ಇನ್ನೇನು ತಾನೇ ಉತ್ತರವಾಗಬಲ್ಲದು?

ನಾನು ಹಿಂಸೆಯನ್ನು ಖಂಡಿತವಾಗಿ ಒಪ್ಪುವವನಲ್ಲವಾದರೂ 'ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು' ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟವನು. ಒಂದು ಯುದ್ಧದ ಸನ್ನಿವೇಶದಲ್ಲಿ ಎಲ್ಲವೂ ಸರಿಸಮವಾಗುವಂತೆ ಕೆಲವೂಮೆ ಅತಿ ಅನ್ನಿಸುವಷ್ಟು, ಹಲವಾರು ಬಾರಿ ಹೇಸಿಗೆಯಾಗುವಷ್ಟು ಹಿಂಸೆ ನೀಡಿ - ಅಭುಗ್ರೈಬ್ ಜೈಲು, ಮತ್ತಿತರ ಹಿಂಸೆಗೆ ಸಂಬಂಧಿಸಿದ ಕಥೆಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಿದ ಬುಷ್ ಅಡ್ಮಿನಿಷ್ಟ್ರೇಷನ್‌ನವರು ಇನ್ನೇನು ತಾನೆ ಮಾಡಲಾಗುತ್ತಿತ್ತು? ಈ ಹಿಂಸೆಯ ತಳ ಹುಡುಕುತ್ತಾ ಹೋದಂತೆಲ್ಲಾ ಬುಡವಿರದ ಬಾವಿಯಾಗೋದಂತೂ ನಿಜ.

Tuesday, June 27, 2006

ಸ್ವಲ್ಪ ತಡವಾಗಿಯಾದರೂ ಬಂದ ಬುದ್ಧಿ

ನನಗೆ ಮೊದಲೆಲ್ಲ ಮಕ್ಕಳು ಅಂದ್ರೆ ಅಷ್ಟಕಷ್ಟೇ - ಒಂಥರಾ ಸೆಮಿ-ಅವಿಭಕ್ತ ಕುಟುಂಬವಾದ ನಮ್ಮನೆಯಲ್ಲಿ ಮಕ್ಕಳಿಗೇನೂ ಕಡಿಮೆ ಇರಲಿಲ್ಲ, ಯಾವಾಗ ನೋಡಿದ್ರೂ ತೊಟ್ಟಿಲಲ್ಲಿ ಒಬ್ಬರಲ್ಲ ಒಬ್ರು ಮಲಗೋ ಪರಿಸ್ಥಿತಿ ಇತ್ತು, ಆದರೆ ಈ ಮಕ್ಕಳು ಮಾಡೋ ಗದ್ದಲವನ್ನು ಕಂಡರೆ ನನಗೆ ಸುತಾರಾಂ ಆಗುತ್ತಿರಲಿಲ್ಲ. ಎಷ್ಟೋ ಸಾರಿ ಅವರನ್ನು ದುರುಗುಟ್ಟಿ ನೋಡಿ ಹೆದರಿಸಿದ್ದಿದೆ, 'ಥೂ, ಯಾವಾಗ್ ನೋಡಿದ್ರೂ ಅಳ್ತಾನೆ ಇರುತ್ತೆ' ಎಂದು ಬೈದಿದ್ದಿದೆ, ಕೆಲವೊಮ್ಮೆ ಕೈ ಮಾಡಿದ್ದೂ ಇದೆ. ನನ್ನ ಅಣ್ಣನ ಮಗ ನನ್ನ ಪ್ಯಾಂಟಿನ ಮೇಲೆ ಅಚಾನಕ್ಕಾಗಿ ಒಂದೂ-ಎರಡೂ ಮಾಡಿದನೆಂದು ನನ್ನ ಸಹನೆಯ ಪೆಟ್ಟಿಗೆಯ ಮುಚ್ಚುಳ ಹಾರಿ ಹೋಗಿ ಎಲ್ಲರ ಎದುರಿಗೇ ಅವನ ಬೆನ್ನಿಗೆ ರಪ್ಪನೆ ಬಾರಿಸುವಷ್ಟು ಸಿಟ್ಟು ಬಂದಿದ್ದು ಇವತ್ತಿಗೂ ನನ್ನ ಕಣ್ಣ ಮುಂದಿದೆ - ನಾನು ಕೈ ಮುಂದು ಮಾಡೋ ಪ್ರವೃತ್ತಿಯವನು ಅಲ್ಲದಿದ್ದರೂ ಅದೇನೋ ಕೆಲವೊಂದು ಸಾರಿ ಕೈ-ಕಾಲುಗಳು ಬಹಳ ಚುರುಕಾಗಿಬಿಡುತ್ತವೆ, ಒಂಥರಾ ತೋಟಕ್ಕೆ ಹೊಕ್ಕವರು ಪಟಪಟನೆ ಬಾರಿಸಿ ಸೊಳ್ಳೆಗಳನ್ನು ಹೊಡೆಯೋ ಹಾಗೆ ಆ ಸಮಯದಲ್ಲಿ ಬೇರೆ ಯಾವುದೇ ಪ್ರಪಂಚ ಜ್ಞಾನವೂ ಕೆಲಸ ಮಾಡುವುದಿಲ್ಲ ಎಂದರೇನೆ ಸರಿ.

ನನ್ನ ಅಕ್ಕ-ತಂಗಿಯರು 'ಈ ಥರಾ ಎಲ್ಲ ಮಕ್ಳಿಗೂ ಬಯ್ಯೋನು, ಮುಂದೆ ನಿನ್ ಮಕ್ಳನ್ನು ಹೇಗೆ ನೋಡಿಕೋತೀಯೋ, ನಾವೂ ನೋಡ್ತೀವಿ!' ಎಂದು ಯಾವತ್ತೂ ತೆರೆದೇ ಇರೋ ಈ ಒಂದು ಸಾಲನ್ನು ಅವಾಗಾವಾಗ ಹೇಳ್ತಾನೇ ಇರೋರು. ನಾನು ಮಕ್ಕಳ ಮೇಲೆ ಯಾವತ್ತಾದರೂ ಕೈ ಮಾಡಿದ್ದಿದ್ರೆ ಅದನ್ನು ದೊಡ್ಡ ಅಂಧಕಾರ ಅಂತಲೇ ಒಪ್ಪಿಕೊಂಡು ಬಿಡ್ತೀನಿ, ಮೊನ್ನೆ ರೇಡಿಯೋದಲ್ಲಿ ಯಾವುದೋ ಒಂದು ಸಂದರ್ಶನದ ತುಣುಕನ್ನು ನಾನು ಕೇಳುತ್ತಿದ್ದಾಗ ತನ್ನ ೧೮ ತಿಂಗಳ ವಯಸ್ಸಿನ ಅಕ್ಕನ ಮಗನ ಮೇಲೆ ಆ ಹುಡುಗನ ಅಪ್ಪ ಕೈ ಮಾಡುತ್ತಾನೆ ಅನ್ನೋದನ್ನು ಒಬ್ಬ ಮನೋವೈದ್ಯರು ಚರ್ಚಿಸಿ ಪ್ರಶ್ನೆ ಕೇಳಿದಾಕೆಗೆ ಸಮಾಧಾನ ಹೇಳುತ್ತಿದ್ದರು. ಮಕ್ಕಳು, ಅವರು ಯಾವ ವಯಸ್ಸಿನವರಾದರೂ ಇರಲಿ, ಅವರು ಆ ವಯಸ್ಸಿಗೆ ತಕ್ಕಂತೆ ವರ್ತಿಸಬೇಕೇ ವಿನಾ ದೊಡ್ಡವರ ನಿರೀಕ್ಷೆಗೆ ತಕ್ಕಂತೆ ಇದ್ದರೆ ಅವರಲ್ಲಿ ಏನೋ ತಪ್ಪಿದೆಯೆಂತಲೇ ಅರ್ಥವಂತೆ. ಮಕ್ಕಳಿಗೆ ಹೊಡೆಯೋದರಿಂದಾಗಲಿ, ಗದರಿಸೋದರಿಂದಾಗಲೀ ಯಾವುದೇ ಪ್ರಯೋಜನವಿಲ್ಲ, ಅವರಿಗೆ ತಿಳಿಸಬೇಕಾದ ರೀತಿಯಲ್ಲಿ ತಿಳಿಸಿದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ, ಮಿಕ್ಕೆಲ್ಲ ರೀತಿಯೂ ಒಂದು ಥರದ ಹೆದರಿಕೆಯ ಪರಿಭಾಷೆಯನ್ನು ಹುಟ್ಟಿಸಿ ಮಕ್ಕಳು 'ವಿಕಾರ'ರಾಗುತ್ತಾರೆ ಅನ್ನೋದು ಅದರ ಸಾರವಾಗಿತ್ತು. ಅಲ್ಲದೇ ಈ ಹಿಂದೆಯೇ ಎಲ್ಲೋ ಒಂದು ಕಡೆ ನಮ್ಮ ಕಡೆ 'ಗುಮ್ಮನ ಹೆದರಿಕೆ'ಯನ್ನೊಡ್ಡಿ ಮಕ್ಕಳನ್ನು ಅವರಿಗಿಷ್ಟವಿರದ ಕೆಲಸದಲ್ಲಿ ತೊಡಗಿಸೋದು ತಪ್ಪು ಎಂಬುದಾಗಿ ಕೇಳಿದ್ದೆ. ನಾನು ಇವತ್ತಿಗೂ ನೋಡೋ ಹಾಗೆ ನಮ್ಮೂರುಗಳಲ್ಲಿ 'ಗುಮ್ಮ ಬರ್ತಾನೆ' , ಅಥವಾ 'ಪೋಲೀಸ್ ಬಂದು ಹಿಡಕೊಂಡ್ ಹೋಗ್ತಾನೆ' ಎಂದು ತಾಯಂದಿರು ಗದರಿಸಿದ ಕೂಡಲೇ ಮಕ್ಕಳು ಸೆರಗಿನಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ಕಾಣಬಹುದು.

ಅಮೇರಿಕನ್ ಮಕ್ಕಳಿಗೆ 'ಹಾಯ್' ಎಂದರೆ ಅವು ಅದಕ್ಕೆ ಅಷ್ಟೇ ಸಹಜವಾಗಿ 'ಹಾಯ್' ಎನ್ನುವುದನ್ನೂ, ಅಮೇರಿಕನ್ ಇಂಡಿಯನ್ ಮಕ್ಕಳಿಗೆ 'ಹಾಯ್' ಎಂದರೆ ತಮ್ಮ ತಂದೆ-ತಾಯಿಯರನ್ನು ಹುಡುಕಿಕೊಂಡು ಗಾಭರಿ ಪ್ರಕಟಿಸುವುದನ್ನು ನಾನು ಬೇಕಾದಷ್ಟು ಸಾರಿ ನೋಡಿದ್ದೇನೆ. ಮಕ್ಕಳೇಕೆ, ದೊಡ್ಡವರಿಗೂ ಸಹ ಬೇರೆಯವರೊಡನೆ ಮನಬಿಚ್ಚಿ ನಿರರ್ಗಳವಾಗಿ ಮಾತನಾಡುವುದು (ಕೊನೇಪಕ್ಷ) ನನ್ನ ತಲೆಮಾರಿನವರಿಗೆ ಬರಲೇ ಇಲ್ಲ ಎಂದು ಹೇಳಬಹುದೇನೋ? ನಾನು ಭಾಗವಹಿಸುವ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಇವತ್ತೂ-ನಿನ್ನೆ ಕಂಪನಿ ಅಥವಾ ಪ್ರಾಜೆಕ್ಟ್ ಸೇರಿದ ಅಮೇರಿಕನ್ನರು ಲಂಗೂ-ಲಗಾಮಿಲ್ಲದೆ ಜೋರಾಗಿ ಮಾತನಾಡಿ ಭಾಗವಹಿಸುವುದು ಕಂಡುಬಂದರೆ, ನಮ್ಮ ಆತ್ಮವಿಶ್ವಾಸಕ್ಕೆ ಅದ್ಯಾವುದೋ ಅವ್ಯಕ್ತ ಕಡಿವಾಣ ಬಿದ್ದುಬಿಟ್ಟು, 'ಐ ಥಿಂಕ್' ಎಂದು ಆರಂಭವಾಗುವ ಹಲವಾರು ವಾಕ್ಯಗಳು ಎಷ್ಟೋ ಬಾರಿ ಕೊನೆಯಾಗದೇ 'ಮಂಬಲ್' ಆಗಿಬಿಡುವುದನ್ನು ನಾನು ಅಲ್ಲಲ್ಲಿ ನೋಡಿದ್ದೇನೆ. ನಮ್ಮ ಇಂಗ್ಲೀಷ್ ಚೆನ್ನಾಗಿಲ್ಲ, ನಮಗೆ ಇಂಗ್ಲೀಷ್ ಬರೋದಿಲ್ಲ ಅನ್ನೋದು ಕಾರಣವಲ್ಲ - ನಮ್ಮ ಎದುರಿನವರು ಅದೇ ವಿಷಯದ ಮೇಲೆ ಅಥಾರಿಟಿಯಿಂದ ಮಾತನಾಡಿದಾಗ ನಮಗೆ ಒಳಗೊಳಗೇ 'ಹೌದೌದು' ಎನ್ನಿಸತ್ತೆದೆಯೇ ವಿನಾ ನಾವೂ ಹಾಗೆ ಮಾತನಾಡಬಹುದಿತ್ತಲ್ಲ, ಏಕೆ ಮಾತನಾಡಲಿಲ್ಲ - ಎನ್ನುವ ಪ್ರಶ್ನೆಗಳಿಗೆ ಉತ್ತರಗಳು ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ. ನಾನು ಅತಿಯಾಗಿ ಜೆನರಲೈಜೇಷನ್ ಮಾಡಿ ಹೇಳುತ್ತಿರಬಹುದು ಅಥವಾ ಇದು ನನ್ನ ಅನುಭವ ಅಥವಾ ಮಿತಿಯಾಗಿರಬಹುದು - ಆದರೂ ಸ್ವಲ್ಪವಾದರೂ ಈ ಮೇಲಿನ ಅಬ್ಸರ್‌ವೇಷನ್‌ನಲ್ಲಿ ಸತ್ಯವಿಲ್ಲದಿದ್ದರೆ please keep me honest.

ಅಲ್ಲಿ ದೊಡ್ಡ ಕುಟುಂಬವೊಂದರಲ್ಲಿ ಸಕ್ರಿಯ ಸದಸ್ಯನಾದವನು ಇಲ್ಲಿ ಒಬ್ಬಂಟಿ ಕುಟುಂಬವಾಗಿ ಎಷ್ಟೋ ಸಾರಿ ಕೊಳೆದಿದ್ದಿದೆ, ಹತ್ತಿರವಿರುವ ಕನ್ನಡ ಕೂಟಗಳ ಕಾರ್ಯಕ್ರಮಗಳಲ್ಲಿ ಇನ್ನಾದರೂ ನನ್ನನ್ನು ಚೆನ್ನಾಗಿ ತೊಡಗಿಸಿಕೊಳ್ಳಬೇಕು, ಅದು ಮಾಡಬೇಕು, ಇದು ಮಾಡಬೇಕು ಎಂದು ಹೇಳಿಕೊಂಡು ಹಾರಾಡಿದ್ದೇನೆಯೇ ವಿನಾ ಒಂದೂ ಕಾರ್ಯರೂಪಕ್ಕೆ ಬಂದಿಲ್ಲ. ಇಲ್ಲಿ ಬಂದು ನನಗೂ ಒಂದು ಮಗು ಎಂದು ಆದಾಗ ಭಾರತದಿಂದ ಯಾರಾದರೂ ಸಹಾಯಕ್ಕೆ ಬರದೇ ಹೋದರೆ ವಿಷಯವನ್ನು ನಾವೇ ಕೈಗೆತ್ತಿಕೊಳ್ಳುವುದಾಗಿ ನಿಶ್ಚಯಿಸಿ ಅಥವಾ ಅನಿವಾರ್ಯತೆಯಿಂದ ಒಂದಿಷ್ಟು ಮಕ್ಕಳ ಬಗ್ಗೆ, ಪೋಷಣೆ ಬಗ್ಗೆ ಇಲ್ಲಿಯವರ ಹಾಗೆ ಒಂದಿಷ್ಟು ಪುಸ್ತಕಗಳನ್ನು ಮುತುವರ್ಜಿಯಿಂದ ಓದಿದ್ದಕ್ಕೆ ಬೇಕಾದಷ್ಟು ವಿಷಯಗಳು ಗೊತ್ತಾದವು. ಈ ರೇಡಿಯೋ ಹಾಗೂ ಟಿವಿಯಲ್ಲಿ ಬರುವ ಹಲವಾರು ಕಾರ್ಯಕ್ರಮಗಳ ದೆಸೆಯಿಂದ, ಪೋಷಕರು, ಮಕ್ಕಳ ಮನೋವೈದ್ಯರು ಬರೆದ ಪುಸ್ತಕಗಳ ವಿಸ್ತರಿಸಿದ ಬೆಳಕಿನಿಂದ ನನ್ನ ಸಹನೆಯ ಕಟ್ಟೆಯಂತೂ ವಿಸ್ತಾರಗೊಂಡಿದೆ, ನನಗೆ ಯಾವ ಹೊತ್ತಿನಲ್ಲಿ ಬೇಕಾದರೂ ಈಗ ಮಕ್ಕಳು ಅತ್ತರೆ ಮೊದಲಿನಷ್ಟು ಬೇಸರವೆನ್ನಿಸುವುದಿಲ್ಲ, ಸಿಟ್ಟಂತೂ ಬರುವುದಿಲ್ಲ.

ಆದರೆ, ನನ್ನ ಈ ಹೊಸ ಮುಖ ಮೊದಲಿದ್ದ ವಿಶ್ವಾಮಿತ್ರ ಗೋತ್ರದವನ ಮುಖಕ್ಕಿಂತ ಬಹಳಷ್ಟು ಭಿನ್ನವಾಗಿರುವುದೂ, 'ನಮ್ಮ ಮಕ್ಕಳನ್ನು ಕಂಡರೆ ಹಾರಾಡುತ್ತಿದ್ದವನು, ಈಗ ತನ್ನ ಮಕ್ಕಳನ್ನು ಚಕಾರವೆತ್ತದವನು' ಎಂದು ಆಡಿಕೊಳ್ಳಬಹುದಾದ ನನ್ನ ಬಂಧು ಬಳಗದವರಿಗೆ ಹೇಗೆ ಕಂಡೀತು ಎಂದು ಸೋಜಿಗವಾಗುತ್ತದೆ. ನನ್ನ ವಿಸ್ತರಿಸಿದ ಅನುಭವ ಅಥವಾ ತಿಳುವಳಿಕೆ ಅವರಿಗೆ 'ತನಗೊಂದು, ಪರರಿಗೊಂದು' ಮುಖವಾಗಿ ಕಂಡರೆ ತಪ್ಪೇನೂ ಇಲ್ಲ ಅಲ್ಲವೇ? 'ಹೆತ್ತವರಿಗೆ ಹೆಗ್ಗಣವೂ ಮುದ್ದು' ಎಂದು ಆಲೋಚಿಸಿಕೊಂಡರೆ ಈ ಪರರಿಗೊಂದು ನೀತಿಯನ್ನು ಹಿಪೋಕ್ರಸಿ ಎಂದು ಒಪ್ಪಿಕೊಳ್ಳಲಾದೀತೇ? ಅಥವಾ 'ಮಕ್ಕಳಿಗೆ ಗದರಿಸಬೇಡವೋ' ಎಂದು ನನ್ನ ಅಣ್ಣಂದಿರಿಗೆ ತಿಳಿಸಿ ಹೇಳಿದರೆ 'ನೋಡಪ್ಪಾ, ಇವತ್ತು ಮಕ್ಕಳನ್ನು ಕಂಡೊರ ಹಾಗೆ ನಮಗೇ ಬುದ್ಧಿ ಹೇಳೋದಕ್ಕೆ ಬಂದಿದಾನೆ!' ಎಂದು ಅಪಹಾಸ್ಯಕ್ಕೆ ಗುರಿಯಾಗುತ್ತೇನೆಯೇ? ಇತ್ಯಾದಿ ಪ್ರಶ್ನೆಗಳು ಮನದಲ್ಲಿ ಮಂಡಿಗೆ ತಿನ್ನುವ ಈ ಅರಿಷ್ಟ ಅಭಿಶಾಪಕ್ಕೆ ಇನ್ನೂ ಒತ್ತುಕೊಡತೊಡಗುತ್ತದೆ.

ಇವತ್ತಿಗೂ ಪರಿಚಯವಿರದವರ ಜೊತೆಯಲ್ಲಿ ಮಾತನಾಡುವಾಗ ಪದಗಳು ಅಷ್ಟು ಸುಲಭವಾಗಿ ಹೊರ ಬರೋದಿಲ್ಲ, ಇನ್ನು ಯಾರೋ ಗೊತ್ತಿರದ ಹೆಣ್ಣು ಮಕ್ಕಳಿಗೆ ಒಂದೇ ಯತ್ನದಲ್ಲಿ ವಾಯ್ಸು ಮೆಸ್ಸೇಜನ್ನು ಬಿಡುವಾಗ ವಿಷಯಗಳು ಕಲಸುಮೇಲೋಗರವಾಗೇ ಆಗುತ್ತವೆ. ಪೋಲೀಸ್ ಮಾಮಾನ ಕಂಡರೆ ಅವ್ಯಕ್ತ ಹೆದರಿಕೆ ಇದ್ದೇ ಇದೆ, ಯಾವತ್ತೋ ಸಿಗಬಹುದಾದ ಇನ್ನೂರು-ಮುನ್ನೂರು ಡಾಲರಿನ ದಂಡಕ್ಕೆ ನಾನೇಕೆ ಅಷ್ಟಾಗಿ ಹೆದರುತ್ತೇನೆಯೋ ಯಾರಿಗೆ ಗೊತ್ತು. ಪರಸ್ಥಳದಲ್ಲಿ, ಅಥವಾ ಯಾವತ್ತಾದರೂ ಲೇಟ್ ನೈಟ್‌ನಲ್ಲಿ ತುಂಬಾ ಭಯ ಹುಟ್ಟಿಸುವ ಸಿನಿಮಾವನ್ನೇನಾದರೂ ಒಬ್ಬನೇ ನೋಡುತ್ತಿದ್ದರೆ ಗುಮ್ಮನ ವಿಚಾರಗಳು ಸುತ್ತಿಕೊಳ್ಳತೊಡಗುತ್ತವೆ. 'ಗುಮ್ಮನ ಕರೆಯದಿರೇ, ಅಮ್ಮಾ ನೀನು' ಎಂದು ಯಾರೋ ಎಷ್ಟೋ ವರ್ಷಗಳ ಹಿಂದೆಯೇ ಹಾಡಿದ್ದರೂ ನಮ್ಮ ತಾಯಂದಿರು ಊಟ ಮಾಡದ ಮಕ್ಕಳನ್ನು ಹಿಡಿದುಕೊಂಡು ಹೋಗಲು ಇನ್ನೂ ಗುಮ್ಮನ ಮೊರೆ ಹೋಗುತ್ತಲೇ ಇದ್ದಾರೆ, ಗುಮ್ಮ ಬರುತ್ತದೆಯೋ ಇಲ್ಲವೋ ನಾವು ಎಷ್ಟೆ ಬೆಳೆದರೂ ತಾಯಿಯ ಸೀರೆ ನೆರಿಗೆಗಳನ್ನು ಹುಡುಕಿಕೊಂಡು ಹೋಗುವ ಪರಿಪಾಟ ಒಂದಲ್ಲ ಒಂದು ರೀತಿಯಿಂದ ಹೊರಕ್ಕೆ ಬಂದೇ ಬರುತ್ತದೆ.

Sunday, June 25, 2006

ಚಾಮುಂಡೇಶ್ವರಿನೇ ಇರ್ಲಿ ಅನ್ನೋನು ನಾನು

ದಸರಾ ಮೆರವಣಿಗೆಯನ್ನು ಎಲ್ಲಾ ಧರ್ಮದವರೂ ವೀಕ್ಷಿಸೋದರಿಂದ ಚಾಮುಂಡೇಶ್ವರಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಬಾರದು, ದಸರಾ ಮೆರವಣಿಗೆಯ ಪರಂಪರೆಯಲ್ಲಿಲ್ಲದ ಈ ವಿಧಿ ಪರಂಪರೆ ಹಾಗೂ ಸಂವಿಧಾನಕ್ಕೆರಡೂ ವಿರುದ್ಧವಾಗಿದೆ ಎಂದು ಅಲ್ಲಲ್ಲಿ ವರದಿಯಾಗಿರೋದನ್ನ ಓದಿದ ಮೇಲೆ ನನಗನ್ನಿಸಿದ್ದು ಇಷ್ಟು - ಎಲ್ಲರೂ ಅವರವರ ಅಭಿಪ್ರಾಯಕ್ಕೆ ಬಾಧ್ಯರು ಹಾಗೇ ನನ್ನದೂ ಒಂದು.

ನಮ್ಮೂರಲ್ಲಿ ಇವತ್ತಿಗೂ ಬನ್ನಿ ಮರದಲ್ಲಿ ಆಯುಧಗಳ ಬದಲಿಗೆ ತೆಂಗಿನ ಕಾಯಿಗಳನ್ನು ಕಟ್ಟಿ ಅದನ್ನು ಬಂದೂಕಿನಿಂದ ಹೊಡೆದುರುಳಿಸೋದೂ, ನಂತರ ಬನ್ನಿಯನ್ನು ಬಂಗಾರದಂತೆ ಹಂಚಿಕೊಳ್ಳೋದೂ ಇದೆ. ಇದು ಬರೀ ಪರಂಪರೆಯ ವಿಷಯ ಮಾತ್ರವೇ ಅಥವಾ ಇದಕ್ಕೆ ಇನ್ನೇನಾದರೂ ಅರ್ಥವಿದೆಯೇ ಎಂದು ಯೋಚಿಸಿದಾಗ ಗ್ರಾಮದ ಮಟ್ಟದಲ್ಲಿ ಇಡೀ ಗ್ರಾಮವನ್ನು ಒಂದಾಗಿ ಮಾಡುವಂತ ಶಕ್ತಿ ಇಂತಹ ಆಚರಣೆಗೆ ಇದೆ. ಅಲ್ಲದೇ ನಮ್ಮೂರಲ್ಲಿ ಯಾರಿಗೆ ಬನ್ನಿ ಕೊಟ್ರೂ ಅವರು ತಮ್ಮ ಶಕ್ತ್ಯಾನುಸಾರ ಒಂದಿಷ್ಟು ಚಿಲ್ಲರೆಯನ್ನು ಮಕ್ಕಳಿಗೆ ಕೊಡ್ತಾರೆ, ಇಲ್ಲಾ ಅಂದ್ರೆ ಒಂದೆರಡು ಒಳ್ಳೇ ಮಾತನ್ನಾದ್ರೂ ಆಡ್ತಾರೆ. ವಿಜಯದಶಮಿ ಆದ ಇಪ್ಪತ್ತು ದಿನಕ್ಕೆ ಬೂರೇ ಹಬ್ಬದ ಆಚರಣೆಯೊಂದಿಗೆ ಶುರುವಾಗಿ ದೀಪಾವಳಿ ಅಮಾವಾಸ್ಯೆಯ ದಿನ ಮುಗಿಯೋದು ದಸರಾ ಹಬ್ಬ ಮತ್ತು ದಸರಾ ರಜೆ. ಆಗೆಲ್ಲ ಇಂತಹವುಗಳನ್ನು ಆಚರಿಸೋದರಲ್ಲಿ ಬಹಳಷ್ಟು ಉತ್ಸಾಹವಿತ್ತು, ನನ್ನ ಪ್ರಕಾರ ನಮ್ಮ ಊರುಗಳಲ್ಲಿ ಇವತ್ತಿಗೂ ಹಾಗೇ ಇದೆ.

ನಮ್ಮ ನಾಡಿನ ವಿಮರ್ಶಕರಿಗೂ, ದೊಡ್ಡ-ದೊಡ್ಡ ಮೇಷ್ಟ್ರುಗಳಿಗೂ ಏನಾಗಿದೆಯೋ ಯಾರಿಗೆ ಗೊತ್ತು? ದಸರಾ ಉತ್ಸವವನ್ನು 'ಸಾಮ್ರಾಜ್ಯಶಾಹಿ ಆಚರಣೆಯ ಪಳಿಯುಳಿಕೆ' ಎಂದು ಕರೀತಾರಲ್ಲ ಅಂತ ಖೇದವಾಗ್ತಿದೆ. ನಾನು ಉದ್ದೇಶಪೂರ್ವಕವಾಗೇ ಇಲ್ಲಿ ಯಾರ ಹೆಸರುಗಳನ್ನೂ ಬರೀತಿಲ್ಲ - ಏಕೆಂದ್ರೆ, ಮೊದಲನೇದಾಗಿ ಅವರ ಹೆಸರುಗಳನ್ನು ಇಲ್ಲಿ ಬರೆಯೋದರಿಂದ ನನಗಂತೂ ಯಾವ ಪ್ರಯೋಜನವೂ ಇಲ್ಲ (ಅವರ ಶಿಷ್ಯರುಗಳು ನನ್ನ ಬೆನ್ನ ಹಿಂದೆ ಬೀಳದಿದ್ರೆ ಸಾಕು ಅನ್ನೋ ಅರ್ಥದಲ್ಲಿ), ಅಲ್ಲದೇ ಈ ದೊಡ್ಡ ಮನುಷ್ಯರು ಅವರ ಹೇಳಿಕೆಗಳನ್ನೆಲ್ಲ ಈಗಾಗ್ಲೇ ಸಾರ್ವಜನಿಕವಾಗಿ ಹೇಳಿದೋರಿಂದ ಆಗೋದು ಆಗಿ ಹೋಗಿದೆ.

ನಮ್ಮ ಯಾವ ಹಬ್ಬಗಳು ಪುರಾಣವನ್ನು ಆಧರಿಸೋದಿಲ್ಲ? ಹಾಗಂತ ಎಲ್ಲ ಹಬ್ಬ-ಹರಿದಿನಗಳನ್ನೂ ಕ್ಯಾಲೆಂಡರಿನಿಂದ ಎತ್ತಿ ಹಾಕಲಾಗುವುದೇ? ನಮ್ಮ ವೈವಿಧ್ಯಮಯ ದೇಶದಲ್ಲಿ ಮೈನಾರಿಟಿಗಳಿಗೂ ಒಂದು ಧ್ವನಿ ಅಂತ ಇದೆ, ಅವರನ್ನು ರೆಪ್ರೆಸೆಂಟ್ ಮಾಡೋದಕ್ಕೆ ಕಾನೂನು ಪ್ರಕಾರ ಒಂದಾದ್ರೂ ಅವರ ಹಬ್ಬವನ್ನ ಸೇರಿಸಲಾಗಿದೆ. ನಮ್ಮೂರಲ್ಲಿ ನಡೆಯೋ ಉರುಸ್ ಕಾರ್ಯಕ್ರಮವಾಗ್ಲೀ, ದಸರಾ-ಬನ್ನಿ ಮೆರವಣಿಗೆನಾಗ್ಲೀ ಬರೀ ಯಾವ್ದೋ ಒಂದು ಧರ್ಮದವರ ಕಾರ್ಯಕ್ರಮ ಅಂತ ಅನ್ನಿಸೋದೇ ಇಲ್ಲ. ಎಷ್ಟೋ ವರ್ಷಗಳಿಂದ ಹೀಗೇನೇ ನಡೀತಾ ಇದೆ. ಅದೂ ಯಾಕೆ, ನಮ್ಮಲ್ಲಿ ಮಳೆ ಸರಿಯಾಗೇನಾದ್ರೂ ಬರದೇ ಹೋದ್ರೆ ಮಾಮೂಲಿ ಸಂತೆ ನಡೆಯೋ ಸ್ಥಳದಿಂದ ಸ್ಥಳಾಂತರ ಮಾಡಿ ದುರ್ಗಮ್ಮನ ಗುಡಿ ಹತ್ರ ಸಂತೆ ನಡೆಸೋದಿಲ್ವೇ - ಎಲ್ಲರಿಗೂ ಒಳಿತಾಗ್ಲೀ ಅನ್ನೋ ಹಿಂದಿಂದ್ಲೂ ಬಂದ ಆಚರಣೆಯೇ ವಿನಾ ದುರ್ಗಮ್ಮನ ಕೇರಿ ಹತ್ರ ಸಂತೆ ನಡೆದ್ರೆ ಬರೀ ಹಿಂದೂಗಳು ಮಾತ್ರ ಹೋಗ್ಬೇಕು ಅಂತೇನೂ ಇಲ್ಲ. ಈ ಆಚರಣೆಗಳಲ್ಲಿ ವಿಧಿಗಳಲ್ಲಿ ತಪ್ಪಿದೆಯೋ ಇಲ್ವೋ ಯಾರಿಗ್ ಗೊತ್ತು? ಕೆಲವೊಂದು ನನ್ನ ತರ್ಕಕ್ಕೂ ಮೀರಿ ಹೋಗತ್ತೆ, ಇವತ್ತಿಗೂ ಸಹ ನಾನು ಬನ್ನಿಯನ್ನು ವಿನಿಮಯ ಮಾಡಿಕೊಂಡ್ರೆ, ಬೇವು-ಬೆಲ್ಲ ತಿಂದ್ರೆ, ನರಕಚತುರ್ದಶಿ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿಕೊಂಡ್ರೆ ಅದನ್ನೆಲ್ಲ ಪ್ರಶ್ನಿಸಿಕೊಳ್ತಾ ಕೂರೋದಿಲ್ಲ - ಹಾಗೆ ನಾನು ಮಾಡೋದನ್ನೆಲ್ಲ ಪ್ರಶ್ನಿಸಿಕೊಳ್ತಾ ಕೂತ್ರೆ ಆ ಪಟ್ಟಿ ಬಹಳ ದೊಡ್ದಾಗುತ್ತೆ, ಅದರಲ್ಲಿ ಬನ್ನಿ ಹಬ್ಬ ಕೊನೆಯಲ್ಲಿ ಬರುತ್ತೆ.

ನನ್ನನ್ನ ಕೇಳಿದ್ರೆ - ಮೊದಲಿದ್ದ ಹಾಗೆ ಚಾಮುಂಡೇಶ್ವರಿಯ ಪ್ರತಿಮೆಯನ್ನು ಈಗ ಇದ್ದ ಹಾಗೆ ಮೆರವಣಿಗೆಯಲ್ಲಿ ತಗೊಂಡ್ ಹೋಗೋದೇ ಒಳ್ಳೇದು. ಎಲ್ಲ ಧರ್ಮದವರೂ ವೀಕ್ಷಿಸುತ್ತಾರೆ ಅನ್ನೋ ಸರ್ವ ಧರ್ಮ ಹಿತವನ್ನು ದಸರೆಯಲ್ಲಿ ಕಾಪಾಡಿಕೊಂಡು ಬರಬೇಕು ಅಂದ್ರೆ, ಮೊದಲು ಚಾಮುಂಡೇಶ್ವರಿ ಪ್ರತಿಮೆ/ಫೋಟೋ ಮರೆಯಾಗಿ ಹೋಗುತ್ತೆ, ಆಮೇಲೆ ಆನೆಗಳು ಹೋಗುತ್ವೆ, ಆಮೇಲೆ ಮೆರವಣಿಗೆಯ ಸಡಗರ ಹೋಗುತ್ತೆ, ಹೀಗೇ ಮರೆಯಾಗಿ ಹೋಗೋದರೆಲ್ಲ ಪಟ್ಟಿ ದೊಡ್ಡದಾಗಿ ಬೆಳೆದೂ ಬೆಳೆದೂ ಕೊನೆಗೆ ಮಹಿಷಾಸುರನ ಹೆಸರಿನ ಮೇಲೆ ಹುಟ್ಟಿರೋ ಮೈಸೂರಿನ ಹೆಸರನ್ನೂ ಬದಲಾಯಿಸಬೇಕಾಗುತ್ತೆ, ನಮ್ಮ ಎಲ್ಲ ಆಚರಣೆಗಳನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತೆ.

ನಮ್ಮಲ್ಲಿ ಕುಡಿಯೋ ನೀರು, ಅಕ್ಷರಾಭ್ಯಾಸ ಮುಂತಾದ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗೇ ಇರೋದ್ರಿಂದ ದೊಡ್ಡ ಮನುಷ್ಯರು ದಯವಿಟ್ಟು ತಮ್ಮ ದೊಡ್ಡ ಮನಸ್ಸನ್ನು ನಿಜವಾದ ರಾಷ್ಟ್ರದ ಏಳೆಗೆಗೆ ಬಳಸ್ಲಿ, ಈ ಸಮಸ್ಯೆಗಳೆಲ್ಲ ನಿವಾರಣೆ ಆದ ಮೇಲೆ ಪುರುಸೊತ್ತು ಇದ್ರೆ ಆಮೇಲೆ ದಸರಾ ವಿಷ್ಯ ಮಾತಾಡೋಣ.

Saturday, June 24, 2006

ನಮ್ಮೋರೂ ಫುಟ್‌ಬಾಲ್ ಆಡಿದ್ದಿದ್ರೆ...

ನಮ್ಮೋರೂ ಫುಟ್‌ಬಾಲ್ ಆಡಿದ್ದಿದ್ದ್ರೆ ಎಷ್ಟೋ ಚೆನ್ನಾಗಿತ್ತು ಅಂತ ಇವತ್ತು ಅರ್ಜೆಂಟೀನಾ-ಮೆಕ್ಸಿಕೋ, ಜರ್ಮನಿ-ಸ್ವೀಡನ್ ಮ್ಯಾಚ್ ನೋಡಿದ್ ಮೇಲೆ ಬಲವಾಗಿ ಅನ್ಸೋಕೆ ಶುರುವಾಯ್ತು. ಕೆಲವು ತಿಂಗ್ಳ ಹಿಂದೆ ನನ್ನ ಸಹೋದ್ಯೋಗಿ ಒಬ್ರಿಗೆ ನಾವ್ ವಿಂಟರ್ ಓಲಂಪಿಕ್ಸ್‌ನಲ್ಲಿ ಏಕೆ ಭಾಗವಹಿಸೋದಿಲ್ಲ ಅಂತ ಹತ್ತಾರು ಕಾರಣಗಳನ್ನು ನೀಡಿದ್ದೆ, ಆದ್ರೆ ಇವತ್ತು ನಮ್ಮೋರು ಈ ವಿಶ್ವಕಪ್ ಫುಟ್‌ಬಾಲ್ ಲೀಗ್‌ನಲ್ಲಿ ಏಕೆ ಆಡ್ತಾ ಇಲ್ಲಾ ಅಂತ ಎಷ್ಟೊತ್ತು ಯೋಚ್ನೆ ಮಾಡಿದ್ರೂ ಅಪ್ಪಂತ ಕಾರ್ಣಾ ಏನೂ ಸಿಗ್ಲಿಲ್ಲ. ನಮ್ಮೋರಿಗೆಲ್ಲ ಕ್ರಿಕೇಟ್ ಅನ್ನೋದು ಒಂಥರಾ ಮಲೇರಿಯಾದ್ ಜ್ವರದ್ ಹಾಗೆ ಆಗಾಗ್ಗೆ ಬಿಟ್ಟ್ ಬರುತ್ತೆ, ಹೋಗುತ್ತೆ, ಎಂಥಾ ಬಿಸಿಲಲ್ಲೂ ಬೆನ್ ಹುರಿಯಲ್ಲಿ ಛಳಿ ಹುಟ್ಸುತ್ತೆ, ಆದ್ರೆ ವಿಶ್ವದ ತುಂಬೆಲ್ಲಾ ಬೇಕಾದಷ್ಟು ಜನ ಆಡಿ ಮಜಾ ಮಾಡೋ ಫುಟ್‌ಬಾಲ್ ಮಾತ್ರ ಆಡಲ್ಲ, ಆಡಿದ್ರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಯಾಕ್ ಬರಲ್ವೋ ಯಾರಿಗ್ ಗೊತ್ತು?

ಕಲ್ಕತ್ತಾದ ಮೋಹನ್ ಬಗಾನ್, ರೇಲ್ವೇ ಟೀಮು, ಇನ್ನೊಂದಿಷ್ಟು ಟೀಮ್‌ಗಳು ಫುಟ್‌ಬಾಲ್ ಹೆಸರ್ನಲ್ಲಿ ಆಗಾಗ್ಗೆ ಸುದ್ದಿ ಮಾಡ್ತಾನೇ ಇರ್ತಾವೆ, ನಮ್ಮ ಮೇಜರ್ ಲೀಗ್ ಫುಟ್‌ಬಾಲ್ ಅಂದ್ರೆ ಇವೇ ಒಂದಿಷ್ಟು ತಂಡಗಳು ಆಡೋ ಆಟ, ಅದು ಬಿಟ್ರೆ ನನ್ನ್ ನೆನಪಿಗಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್‌ಬಾಲ್ ಆಡಿದ್ದಂತೂ ಬರಲ್ಲ. ಹಾಕಿ ತಗೊಂಡ್ರೆ ಅದು ನಮ್ಮ ರಾಷ್ಟ್ರೀಯ ಆಟ, ಕೊನೇಪಕ್ಷಾ ಆ ಧ್ಯಾನ್‌ಚಂದ್ ಕಾಲ್ದಲ್ಲಾದ್ರೂ ನಾವು ಚೆನ್ನಾಗಿ ಆಡ್ತಿದ್ವಿ, ಧ್ಯಾನ್‌ಚಂದ್ ನಂತಾ ಮಾಂತ್ರಿಕರನ್ನು ವಿಶ್ವವೇ ಬೆರಗಾಗಿ ನೋಡ್ತಿತ್ತು, ನನಗೆ ನೆನಪಿರೋ ಹಾಗೆ ನಮ್ಮೋರು ಅಮೇರಿಕದ ಟೀಮನ್ನೂ ಯಾವ್ದೋ ಓಲಂಪಿಕ್ಸ್‌ನಲ್ಲಿ ಸೋಲ್ಸಿದ್ರು. ಹಂಗ್ ನೋಡಿದ್ರೆ, ರೀತಿ-ರಿವಾಜು, ವಿಧಿ-ವಿಧಾನಗಳಲ್ಲಿ ಹಾಕಿಗೆ ಹತ್ತಿರವಾಗಿ ಫುಟ್‌ಬಾಲ್ ಬರುತ್ತ್ಯೇ ವಿನಾ ಕ್ರಿಕೇಟ್ ಅಲ್ಲ, ಆದ್ರೂ ನಮ್ಮ್ ಹುಡುಗ್ರಿಗೆಲ್ಲ ಕ್ರಿಕೇಟ್ಟೇ ದೊಡ್ದು. ಇನ್ ಮುಂದಾದ್ರೂ ಫುಟ್‌ಬಾಲ್ ಮೇಲೆ ಗಮನ ಹರಿಸಿದ್ರೆ ಅಷ್ಟೇ ಸಾಕು. ಟ್ರಿನಿಡಾಡ್ ಟೊಬೇಗೋ ಅಂತ ಸಣ್ಣ ರಾಷ್ಟ್ರಗಳ ಪ್ರತಿನಿಧಿತ್ವ ಇದೆ, ಅಂತಾದ್ದರಲ್ಲಿ ಭಾರತದೋರೇ ಇಲ್ಲಾ ಅಂದ್ರೆ ಹೇಗೆ?

ನನ್ನ ಮೆಚ್ಚಿನ ಟೀಮಂತೂ ಬ್ರೆಜಿಲ್‌ನೋರಪ್ಪಾ, ಈ ದೇಶ ಆರ್ಥಿಕ ದೃಷ್ಟಿಯಿಂದ ಹೆಂಗಾದ್ರೂ ಇರ್ಲಿ, ಅವರಾಡೋ ವಾಲಿಬಾಲ್, ಫುಟ್‌ಬಾಲ್ ಆಟಾನ ನೋಡೋಕೆ ಎರಡು ಕಣ್ಣೂ ಸಾಲ್ದೂ. ದಕ್ಷಿಣ ಅಮೇರಿಕದಲ್ಲಿರೋ ಬೇಜಾನ್ ದೇಶಗಳು ಯಾವತ್ತಿಂದ್ಲೂ ಫುಟ್‌ಬಾಲ್ ಆಡ್ತಾವೆ, 'ಕೋಪ ಅಮೇರೀಕಾ' ಅಂತ್ಲೋ, ಇನ್ನ್ಯಾವ್ದೋ ಸ್ಪರ್ಧೇನಲ್ಲೋ ಆಗಾಗ್ಗೆ ಟಿವಿನಲ್ಲಿ ಬಿತ್ತರವಾಗೋ ಪಂದ್ಯಗಳ್ನ ನಾನೂ ನೋಡ್ತೀನಿ. ಒಂದ್ ರೀತೀಲಿ ನಾನು ಈ ಬ್ರೆಜಿಲ್‌ನೋರ್ನ ಎಷ್ಟು ಹಚ್ಚಿಕೊಂಡಿದೀನಿ ಅಂದ್ರೆ ನಾಳೆ ಯಾವತ್ತಾದ್ರು ನಮ್ಮೋರು ಆಡಿದ್ರೂ ನನಗೆ ಈ ಬ್ರೆಜಿಲ್ ಮೇಲೆ ವಿಶ್ವಾಸವೆಂದೂ ಕಡಿಮೆ ಆಗೋದಿಲ್ಲ - ಒಂಥರಾ ಫ್ಯಾನ್ ಫಾರ್ ಲೈಫ್ ಅನ್ನೋ ಹಾಗೆ. ನನಗೆ ಬೇರೆ ದೇಶದ್ ಆಟಗಾರ್ರ ಬಗ್ಗೆ ಪ್ರೀತಿ ಹುಟ್ಟೋದು ಇವತ್ತು ನಿನ್ನೇ ಮಾತಲ್ಲ - ಕ್ರಿಕೇಟ್‌ನಲ್ಲಿ ಇವತ್ತಿಗೂ ಬ್ರಯಾನ್ ಲಾರಾ ಆಟ ಅಂದ್ರೆ ನನಗೆ ಪಂಚಪ್ರಾಣ, ನನ್ನ ಮನಸ್‌ನಲ್ಲಿ ಗವಾಸ್ಕರ್, ತೆಂಡೂಲ್ಕರ್, ಡ್ರಾವಿಡ್ ಮೇಲೆ ಇರೋ ಪ್ರೀತಿ (ಅಥವಾ ಭಕ್ತಿ)ಗಿಂತ ಲಾರಾ ಅಂದ್ರೇನೇ ನನಗೆ ಹೆಚ್ಚು ಇಷ್ಟ, ಹಂಗಂತ ನಮ್ಮೋರು ಅಂದ್ರೆ ಕಡಿಮೆ ಅಂತಲ್ಲ, ಆದ್ರೂ ಈ ಲಾರಾನ ಮೇಲೆ ನನಗ್ಯಾಕೋ ಮೊದ್ಲಿಂದ್ಲೂ ಬಹಳ ವಿಶ್ವಾಸ, ಅವನ ಆಟ ನೋಡೋಕೇ ನನ್ನಲ್ಲಿ ಯಾವತ್ತಿದ್ರೂ ಟೈಮಿರುತ್ತೆ.

ಏನೋಪ್ಪ, ನಮ್ ದೇಶ್‌ದಲ್ಲಿ ದಿನವಿಡೀ ಕ್ರಿಕೇಟ್ ನೋಡೋದನ್ನ ಸ್ವಲ್ಪ ಕಡಿಮೆ ಮಾಡಿ ಈ ತೊಂಭತ್ತು ನಿಮಿಷದಲ್ಲಿ ಮುಗಿಯೋ ಆಟಾನ ಸ್ವಲ್ಪ ಅಸ್ಥೆಯಿಂದ ಕಲ್ತಿದ್ರೆ ಎಷ್ಟೋ ಚೆನ್ನಾಗಿತ್ತು. ನಮ್ಮಲ್ಲಿ ಎಷ್ಟೋ ಜನ ಪ್ರತಿಭಾನ್ವಿತರಿದ್ದಾರೆ, ಅವರಿಗೆಲ್ಲ ಒಂದು ಸರಿಯಾದ ಕೋಚ್ ಸಿಕ್ಕು ಅವರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ರೆ ಎಷ್ಟೋ ಚೆನ್ನಾಗಿತ್ತು. ಈಗ್ಲೂ ಏನ್ ತಡಾ ಆಗಿಲ್ಲ, ಇದು ಹೋದ್ರೆ ಹೋಗ್ಲಿ ಮುಂದಿನ ವಿಶ್ವಕಪ್ ಹೊತ್ತಿಗಾದ್ರೂ ನಮ್ಮವ್ರು ಅರ್ಹತೆ ಮಟ್ಟಕ್ಕಾದ್ರೂ ಬಂದ್ರೂ ಪರವಾಗಿಲ್ಲ, ಲೀಗಿನ ಎಲ್ಲಾ ಮ್ಯಾಚ್‌ಗಳನ್ನು ಸೋತ್ರೂ ಅಡ್ಡಿ ಇಲ್ಲ, ಇವತ್ತಲ್ಲ ನಾಳೆ ಈ ವಿಶ್ವಕಪ್ಪನ್ನ ಗೆದ್ದೇ ಗೆಲ್ತಾರೆ ಅನ್ನೋ ಆಶಾಭಾವನೆಯಿಂದಾದ್ರೂ ಆಟ ನೋಡ್ತೀನಿ.

ಅಬ್ಬಾ, ಇವತ್ತು ಆಟಾ ನೋಡ್ತಾ-ನೋಡ್ತಾ ಅದೇನ್ ಚೆನ್ನಾಗ್ ಆಡ್ತಾರಪ್ಪಾ ಅನ್ನಿಸ್ತು. ಕೊನೇ ಕ್ಷಣದಲ್ಲಿ ಮಾಡೋ ನಿರ್ಧಾರದ ಮೇಲೆ ಒಬ್ಬರಿಂದ ಇನ್ನೊಬ್ರಿಗೆ ಪಾಸ್ ಕೊಟ್ಟು, ಚೆಂಡನ್ನ ಒಳ್ಳೇ ಮಂತ್ರಿಸಿಟ್ಟ ಹಾಗೆ ಗೋಲಿನ ಕಟಕಟೆ ಒಳಗೆ ತಳ್ಳೋದು ಅಂದ್ರೇನು ಹುಡುಗಾಟಾನಾ? ಈ ಆಟಗಾರ್ರು ಓಡಿದ್ ದೂರಾನೆಲ್ಲ ಆಳತೆ ಮಾಡಿ ಉದ್ದುಕೆ ಸೇರ್ಸಿದ್ದ್ರೆ ಒಂದ್ ಸಲ ಭೂಮಿ ಸುತ್ತಿ ಬರಬಹುದೇನೋ ಅನ್ಸುತ್ತೆ - ಆ ಪಾಟಿ ಓಡಾಟ. ಅಲ್ದೇ ಅದೇನು ಜನಗಳು, ಕೆಲವಂದ್ ಸರ್ತಿ ಸ್ಟೇಡಿಯಮ್ ಭರ್ತಿ - ಈಗಿನ್ನು ತಂಡಗಳು ಕ್ವಾರ್ಟಲ್ ಫೈನಲ್ ಹಂತಕ್ಕೆ ಬರ್ತಾ ಇವೆ, ಇನ್ನು ಮುಂದೆ ಬಹಳ ಮಜಾ ಇರುತ್ತೆ. ಕೊನೆಗೆ ಕಪ್ಪನ್ನ ಯಾರಾದ್ರೂ ಗೆಲ್‌ಲಿ, ಸಡನ್ ಡೆತ್‌ನಲ್ಲಿ ಗೆಲ್ದೇ ಇದ್ರೆ ಸಾಕು, ಹಿಂದೆ ಒಂದ್ಸಲ ಹೀಗೇ ಆಗೀ ಯಾರೋ ಗೆದ್ದಾಗ ಒಂಥರಾ ಉಪ್ಪಿರದ ಸಾರಿನಲ್ಲಿ ಊಟ ಮಾಡಿದ ಹಾಗಿತ್ತು.

ನಮ್ಮೋರೇನಾದ್ರೂ ಈ ಆಟಾನ ಆಡ್ತಾರೆ ಅಂದ್ರೆ ನನ್ನ್ ಹೃದಯದಲ್ಲಿ ಅರ್ಧದಷ್ಟು ಜಾಗ ಬಿಟ್‌ಕೊಡ್ತೀನಿ, ಕ್ರಿಕೇಟ್‌ನಲ್ಲಿರೋ ಹಾಗೆ ಪೇಪರ್ ಹುಲಿಗಳಾಗ್ದೇ ಒಂದಿಷ್ಟು ನಿಜವಾದ ಆಟಾನಾ ಆಡ್ಲಿ ಅಂತ ಯಾವತ್ತೂ ಕಾಯ್ತೀನಿ!

Friday, June 23, 2006

ಸೈಕಲ್ ರಿಕ್ಷಾದ ಜೊತೆಯಲ್ಲಿ ಬರುವ ಬಳುವಳಿ

ಉತ್ತರ ಭಾರತವನ್ನು ಸುತ್ತಿಬಂದವರಿಗೆ ಚೆನ್ನಾಗಿ ಗೊತ್ತಿರೋ ಹಾಗೆ ಸೈಕಲ್ ರಿಕ್ಷಾಗಳು ಬೇಕಾದಷ್ಟು ಶಹರಗಳ ಜೀವನಾಡಿ. ಕೆಲವೊಂದು ಶಹರಗಳ ಮುಂದುವರೆದ ಪ್ರಾಂತ್ಯಗಳಲ್ಲಿ ಇವುಗಳಿಗೆ ನಿಷೇಧವಿದ್ದರೂ ಉಳಿದೆಡೆಗಳಲ್ಲಿ ಬಡವರ ಇಂಧನ ರಹಿತ, ಪರಿಸರ ಪ್ರೇಮಿ ವಾಹನವೆಂದರೆ ಇದೇ ಇರಬೇಕು. ನನಗಾದಂತೆ ಎಷ್ಟೋ ಜನರಿಗೆ ಆಶ್ಚರ್ಯವಾಗುವುದಾದರೆ ನಮ್ಮ ಕರ್ನಾಟಕದಲ್ಲೂ ಸೈಕಲ್‌ರಿಕ್ಷಾಗಳಿವೆ, ಆದರೆ ಉತ್ತರಭಾರತದವುಗಳಿಗಿಂತ ನಮ್ಮಲ್ಲಿರುವ ಇವುಗಳ ಪರಂಪರೆ ಬೇರೆ.

ಬನಾರಸ್‌ನಲ್ಲಿ ಆಗಾಗ್ಗೆ ಸೈಕಲ್ ರಿಕ್ಷಾ ಏರುತ್ತಿದ್ದೆನಾದರೂ ಅವುಗಳ ಪರಿಸರ ಪ್ರೇಮಿ ನಿಲುವುಗಳಿಗಿಂತಲೂ ಅವುಗಳನ್ನು ತಮ್ಮ ಜೀವವನ್ನೇ ಭಾರಹಾಕಿ ಜೀಕಿ-ಜೀಕಿ ಕಷ್ಟಪಟ್ಟು ತುಳಿಯುವವರ ಕಷ್ಟವನ್ನು ನೋಡಲಾಗದೇ ಎಷ್ಟೋ ಸಾರಿ ನಡೆದೋ ಅಥವಾ ಮತ್ಯಾವುದೋ ರೀತಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಿದ್ದಿದೆ. ಬನಾರಸ್‌ನಲ್ಲಿ ಸೈಕಲ್‌ರಿಕ್ಷಾದವರದ್ದು ಒಂದು ರೀತಿಯ ಜೀತವೆಂದೇ ಹೇಳಬೇಕು - ದಿನವೊಂದಕ್ಕೆ ಆಗ ಹದಿನಾರು-ಇಪ್ಪತ್ತು ರೂಪಾಯಿ ಕೊಟ್ಟು ಬಾಡಿಗೆಗೆ ರಿಕ್ಷಾ ಪಡೆದು ಅದರಲ್ಲಿ ಸುಮಾರು ನಲವತ್ತು ಐವತ್ತು ರೂಪಾಯಿಗಳನ್ನು ದುಡಿದು ಅಸಲು ಕಳೆದು, ಅದು ತಂದ ಮೈ ನೋವನ್ನು ಪರಿಹರಿಸಿಕೊಳ್ಳಲು ಮದ್ಯದ ಶರಣಾಗಿ ಹೋಗಿ ಉಳಿಯುವುದು ಬಹಳ ಕಡಿಮೆ, ಅಂತದ್ದರಲ್ಲಿ ಅವರನ್ನು ನಂಬಿಕೊಂಡು ಬದುಕುವುದಿರಲಿ ಅವರು ಬದುಕುವುದೇ ಹೆಚ್ಚು - ಆದ್ದರಿಂದಲೇ ತಲತಲಾಂತರದಿಂದ ರಿಕ್ಷಾ ತುಳಿಯುವವರ ಸ್ಥಿತಿ-ಗತಿಯಲ್ಲಿ ಅಂತಾದ್ದೇನೂ ಬದಲಾವಣೆಗಳಾಗಿದ್ದನ್ನು ನಾನು ನೋಡಿಲ್ಲ. ಉತ್ತರದ ಕೆಟ್ಟ ಛಳಿ ಅಥವಾ ಘೋರ ಬಿಸಿಲಿನಲ್ಲೂ ಮೈಮೇಲೆ ಕಡಿಮೆ ಬಟ್ಟೆಯಿಂದ ಉಸಿರುಬಿಡುತ್ತಾ ಜೀಕಿ-ಜೀಕಿ ಸೈಕಲ್ ತುಳಿಯುವುದು ಸುಲಭದ ಮಾತೇನೂ ಅಲ್ಲ. ಆದರೆ ಆ ರಿಕ್ಷಾದಲ್ಲೂ ಗುಂಪಾಗಿ ಕುಳಿತುಕೊಂಡವರ ದೇಹ ಪ್ರಕೃತಿಗೂ, ಜೀವ ಸೆಲೆಗೂ ಅದನ್ನು ಬಿಸಿಲು-ಛಳಿಯಲ್ಲಿ ನೂಕುವ ರಿಕ್ಷಾವಾಲಾಗಳ ಬದುಕಿಗೂ ಬಹಳಷ್ಟು ವ್ಯತ್ಯಾಸ ಕಾಣಿಸುತ್ತದೆ.

ನಾನು ಒಮ್ಮೆ ಬನಾರಸ್‌ನಿಂದ ಕರ್ನಾಟಕಕ್ಕೆ ಬರುವಾಗ ರೈಲನ್ನು ಗುಲ್ಬರ್ಗದ ವಾಡಿಯಲ್ಲೇ ಇಳಿದು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಮೂಲಕ ರಾಯಚೂರಿಗೆ ಬಂದು ಅಲ್ಲಿಂದ ಶಿವಮೊಗ್ಗಕ್ಕೆ ಬಂದಿದ್ದೆ. ಕರ್ನಾಟಕವೆಂದರೆ ಬರೀ ಬೆಂಗಳೂರು-ಶಿವಮೊಗ್ಗವೆಂದು ಆಗ ನಂಬಿಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು. ನಾನು ರಾಯಚೂರಿನಲ್ಲೂ ಈ ಸೈಕಲ್‌ರಿಕ್ಷಾಗಳನ್ನು ನೋಡಿ ಒಮ್ಮೆ ತತ್ತರಿಸಿದ್ದೆ - ಅಂದರೆ ನಾನು ಕಂಡ ಬನಾರಸ್‌ನ ಬಡತನ, ಹಿಂದುಳಿದ ಪರಂಪರೆಯನ್ನು ನೋಡಲು ಶಿವಮೊಗ್ಗದಿಂದ ಬಹಳಷ್ಟು ದೂರವೇನೂ ಹೋಗಬೇಕಾಗಿರಲಿಲ್ಲ. ಇವತ್ತಿಗೂ ಸಹ ನಮ್ಮ ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ - ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಉತ್ತರ ಭಾರತದ ಹಲವಾರು ಜಿಲ್ಲೆಗಳು ಪ್ರಗತಿಯಿಂದ ಇನ್ನೂ ಬಹಳಷ್ಟು ದೂರದಲ್ಲಿರೋದು ಸತ್ಯ. ನನ್ನ ಸ್ನೇಹಿತರೊಬ್ಬರು ವಿವರಿಸಿದ ಹಾಗೆ ಅಲ್ಲಲ್ಲಿ ಆಗಾಗ ಏಳೋ 'ಕರ್ನಾಟಕ ವಿಭಜನೆ'ಯ ಕೂಗಿನ ಹಿಂದೆ ಉತ್ತರ ಕರ್ನಾಟಕದ ಈ ಸಾಮಾಜಿಕ ಹಿನ್ನೆಡೆಯೂ ಸಹ ಒಂದು. ಈ ಹಿಂದುಳಿದ ಜಿಲ್ಲೆಗಳ ಪ್ರಜಾನಾಯಕರ ಧ್ವನಿ ಇಂದಿಗು ವಿಧಾನ ಸಭೆ-ಪರಿಷತ್ತುಗಳಲ್ಲಿ ಕ್ಷೀಣವೆಂದೇ ಹೇಳಬೇಕು, ಸಂಖ್ಯೆಯ ಬಲದಿಂದ ಸಮಾನ ರೆಪ್ರೆಸೆಂಟೇಷನ್ ಸಿಕ್ಕಿದರೂ ಉತ್ತರದ ನಾಯಕರು ತಮ್ಮ ಧ್ವನಿಯನ್ನು ದಾಖಲಿಸಲು ಅದೇಕೆ ಹಿಂದು-ಮುಂದು ನೋಡುತ್ತಾರೋ ಯಾರು ಬಲ್ಲರು?

ನನಗೆ ಆಶ್ಚರ್ಯವಾಗುವಂತೆ ನ್ಯೂ ಯಾರ್ಕ್ ನಗರದಲ್ಲೂ ಸೈಕಲ್ ರಿಕ್ಷಾಗಳಿವೆ - ಆದರೆ ಇಲ್ಲಿನ ರಿಕ್ಷಾವಾಲಾಗಳು ನಮ್ಮವರ ಹಾಗೆ ತಮ್ಮ ಮೇಲೆ ನಡೆದ ದಬ್ಬಾಳಿಕೆ, ದೌರ್ಜನ್ಯಗಳ ಪ್ರತೀಕಾರವಾಗಿ ತಮ್ಮನ್ನು ಪ್ರತಿನಿಧಿಸಿಕೊಳ್ಳದೇ ಬದಲಿಗೆ 'ಎಂತಹ ಟ್ರಾಫಿಕ್ ಕಂಜೆಷನ್‌ನಲ್ಲೂ ಮುಂದೆ ಹೋಗುತ್ತೇವೆ', ಅಥವಾ 'ಪರಿಸರ ಪ್ರೇಮಿ ನಡೆ' ಎಂದು ತಮ್ಮನ್ನು ತೋರಿಸಿಕೊಳ್ಳುವುದನ್ನು ನೋಡಿದ್ದೇನೆ. ನಮ್ಮಲ್ಲಿ ಜೀವನ ಪರ್ಯಂತ (ಅಥವಾ ಸಾಯುವವರೆಗೆ) ಕೆಲವರು ರಿಕ್ಷಾವನ್ನು ಓಡಿಸಿದರೆ ಇಲ್ಲಿನವರಲ್ಲಿ ಕೆಲವು ಕಾಲ ಮಾತ್ರ ಓಡಿಸುವ ಹೆಚ್ಚಿನವರು ಯುವಕರೆಂದೇ ಹೇಳಬೇಕು. ಹೀಗೆ ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸೈಕಲ್‌ರಿಕ್ಷಾವಾಲಾಗಳು ವಿಧವಿಧವಾದ ಪ್ರತೀಕವನ್ನು ಹೊತ್ತವರಂತೆ ಕಂಡುಬರುತ್ತಾರೆ, ಆದರೆ ಅವರ ಮುಖದಲ್ಲಿ ತೋರೋ ಬಳಲಿಕೆ, ಆಯಾಸಗಳಲ್ಲಿ ಯಾವ ವ್ಯತ್ಯಾಸವೂ ಕಾಣಿಸೋದಿಲ್ಲ.


ಉಳಿದ ವಾಹನಗಳ ಹಾಗೆ ಸೈಕಲ್‌ರಿಕ್ಷಾಗಳು ಸರ್ವಾಂತರ್ಯಾಮಿಳಲ್ಲ, ಆದರೆ ಅವುಗಳು ಇದ್ದಲ್ಲಿ ಒಂದು ಪರಂಪರೆಯನ್ನು ಜೀವಂತವಾಗಿಡುತ್ತವೆ, ಸೈಕಲ್‌ರಿಕ್ಷಾಗಳ ಜೊತೆಯಲ್ಲಿ ಒಂದು ಭಾಗ್ಯಹೀನ ಬದುಕೂ ಸಹ ಜೊತೆಯಲ್ಲೇ ಬಳುವಳಿಯಾಗಿ ಬರುತ್ತದೆ - ಅವುಗಳು ಉಳಿಸುವ ಇಂಧನದ ಮಾತು ಹಾಗಿರಲಿ, ಹೊಟ್ಟೆ ಬೆನ್ನಿಗಂಟಿದ ಗೂರಲು ವ್ಯಕ್ತಿಯೊಬ್ಬ ತನ್ನ ಕಸುವು ಮೀರಿ ತುಳಿಯುವ ಕ್ರಿಯೆ ಎಂಥವರ ಹೊಟ್ಟೆ ಚಳಕ್ ಎನ್ನಿಸುವುದಕ್ಕೂ ಸಾಕು. ಈ ಸಂಕಷ್ಟದಿಂದ ಹೊರಗಿರುವುದಕ್ಕೋಸ್ಕರವೇ ನನ್ನ ಹಾಗೆ ಎಷ್ಟೋ ಜನ ಅವುಗಳನ್ನು ಸವಾರಿ ಮಾಡುವುದಿಲ್ಲ, ಒಂದುವೇಳೆ ಹಾಗೇನಾದರೂ ಮಾಡಿದರೂ ಆ ಪ್ರಯಾಣ ಹೆಚ್ಚು ಕಾಲ ನೆನಪಿನಲ್ಲುಳಿಯುವುದಂತೂ ನಿಜ.

Thursday, June 22, 2006

ದೇವೇಗೌಡರು ಪ್ರಸನ್ನರಾಗಿದ್ದಾರೆ!

ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯ ಆಯ್ಕೆಯ ನಂತರ ಎಷ್ಟೇ ಗೋಪ್ಯವಾಗಿಟ್ಟರೂ ಸಂಪುಟ ವಿಸ್ತರಣೆಯೆಂಬ ತಡವಾಗಿ ಅನುಸರಿಸುವ ಮತ್ತೊಂದು ಪ್ರಕ್ರಿಯೆ ನಡೆಯುತ್ತದೆ. ಮುಖ್ಯಮಂತ್ರಿಗಳು ಆಯ್ಕೆಯಾದ ಮೇಲೆ ಕೆಲವು ತಿಂಗಳುಗಳವರೆಗೆ ಮಂತ್ರಿಗಿರಿ 'ನನಗೆ ಬೇಕು, ನನಗೆ ಬೇಕು' ಎಂಬ ಹಾಹಾಕಾರ ಹುಟ್ಟಿ ಅದಕ್ಕೆ ಬೇಕಾದ ಎಲ್ಲ ರೀತಿಯ ಲಾಬಿಗಳು ನಡೆಯುತ್ತವೆ. ಆದ್ದರಿಂದಲೇ ನಮ್ಮ ಎಷ್ಟೋ ಸರಕಾರಗಳಲ್ಲಿ ಸಂಪುಟ ರಚನೆ, ಅಥವಾ ಪುನರ್ರಚನೆ ಆಗುತ್ತಲೇ ಇದ್ದು ಅದೆಂದೂ ಮುಕ್ತಾಯವನ್ನು ತಲುಪೋದೇ ಇಲ್ಲ. ಇನ್ನೂ ಪೂರ್ತಿಯಾಗಿ ಸಂಪುಟವನ್ನು ರಚಿಸಿಲ್ಲ ಅನ್ನೋದು ನಮಗೂ ಒಂದು ಅವಕಾಶ ಸಿಗಬಹುದು ಎಂದು ಕೆಲವರನ್ನು ತುದಿಗಾಲಿನಲ್ಲಿರುವಂತೆ ಮಾಡಿದರೆ ಇನ್ನು ಕೆಲವರನ್ನು ಅಸಮಧಾನ ಹತ್ತಿಕ್ಕಿಕೊಳ್ಳುವಂತೆ ಪ್ರಚೋದಿಸುತ್ತದೆ. ಹೀಗೆ ಆಗಾಗ್ಗೆ ಅವರಿವರ ಕಣ್ಣೊರೆಸುವ ತಂತ್ರವೆಂಬಂತೆ ನಡೆಯುವ ಸಂಪುಟ ವಿಸ್ತರಣೆಗಳು ಅದೆಂದೂ ಪೂರ್ಣವಾಗೋದೂ ಇಲ್ಲ, ಆದರೂ ಎಲ್ಲರ ಅಸಮಧಾನವನ್ನು ತೀರಿಸುವುದಂತೂ ಇನ್ನೂ ಹೆಚ್ಚಿನ ಮಾತು. ಯಾರಿಗೆ ಇಷ್ಟವಿರಲಿ, ಬಿಡಲಿ ನಮ್ಮ ಸಂಪುಟ ವಿಸ್ತರಣೆಗಳು ಇಂದಿಗೂ ನಡೆಯೋದು ಮುಖ್ಯವಾಗಿ ಜಾತಿ ಆಧಾರಿತ ವ್ಯವಸ್ಥೆಯಲ್ಲೇ - ಗೌಡರಿಗೆ, ಲಿಂಗಾಯತರಿಗೆ, ಪರಿಶಿಷ್ಟರಿಗೆ, ಬ್ರಾಹ್ಮಣರಿಗೆ ಮುಂತಾದವರಿಗೆಲ್ಲ ಇಂತಿಷ್ಟು ಎಂದು ಸೀಟುಗಳನ್ನು ಹಂಚಿಕೊಡುವುದು ಸುಲಭದ ಕೆಲಸವೇನಲ್ಲ, ಹೇಗೇ ಮಾಡಿದರೂ ಕೊನೆಗೆ ಪ್ರತಿ ಜಿಲ್ಲೆಗೊಂದು ಮಂತ್ರಿ ಸಿಗದ ಪರಿಸ್ಥಿತಿಯೂ ಹುಟ್ಟಿ ಜನರ ಅಸಮಧಾನವನ್ನು ತಮ್ಮ ಸದುಪಯೋಗಕ್ಕೆ ಬಳಸಿಕೊಳ್ಳುವವರಿಗೆ ಬೇಕಾದಷ್ಟು ಅವಕಾಶಗಳು ದೊರೆಯುತ್ತವೆ.

ನಾನು ದೇವೇಗೌಡರ ಬಗ್ಗೆ ಯೋಚಿಸಿದಷ್ಟೂ ಅವರು ಇನ್ನೂ ಸಂಕೀರ್ಣ ಮನಸ್ಥಿತಿಯವರಾಗಿ ಕಂಡು ಬರುತ್ತಾರೆ - ಹಲವು ನಾಟಕಗಳ ಸೂತ್ರಧಾರರಾಗಿ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ 'ಯಶಸ್ವಿ' ರಾಜಕಾರಣಿಯೆಂಬ ಪಟ್ಟಕ್ಕೂ ಪಾತ್ರರಾಗುತ್ತಾರೆ. ಪ್ರಸಕ್ತ ಸನ್ನಿವೇಶದಲ್ಲಿ ಅವರ ರಾಜಕೀಯ ನಿಲುವುಗಳು, ಆಶೋತ್ತರಗಳು ಏನೇ ಇರಲಿ ತಮ್ಮ ಇಬ್ಬರು ಮಕ್ಕಳನ್ನು ವಿಧಾನ ಸೌಧದಲ್ಲಿ ಕೂರಿಸಿ ಮಂತ್ರಿಗಳನ್ನಾಗಿ ಮಾಡಿದ ಹೆಮ್ಮೆ ಅವರದು. ಒಬ್ಬ ಮಗ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ರಾಜ್ಯವನ್ನು ತುಂಬಿಕೊಂಡಿದ್ದರೆ, ಇನ್ನೊಬ್ಬ ಮಗ ಇಂಧನ ಹಾಗೋ ಲೋಕೋಪಯೋಗಿ ಮಂತ್ರಿಯಾಗಿ ರಾಜ್ಯವನ್ನು ಪೂರ್ತಿಯಾಗಿ ಆವರಿಸಿಕೊಂಡಿದ್ದಾರೆ. ದೇವೇಗೌಡರನ್ನು ಹತ್ತಿರದಿಂದ ಬಲ್ಲವರು ನಂಬಿಕೊಂಡಂತೆ ಹಾಗೂ ಹಲವು ಲೋಕೋಪಯೋಗಿ ಇಲಾಖೆಯ ಮಂತ್ರಿಗಳನ್ನು ನಾನು ಬಲ್ಲವನಾಗಿ ಒಂದು ಮಾತನ್ನು ಖಂಡಿತವಾಗಿ ಹೇಳಬಹುದು - ಯಾರಿಗೆ ಲೋಕೋಪಯೋಗಿ ಖಾತೆ ಸಿಗುತ್ತದೆಯೋ ಅವರಿಗೆ ಇನ್ನು ನೂರು ತಲೆಮಾರುಗಳ ಕಾಲ ಕುಳಿತು ತಿನ್ನುವಷ್ಟು ಆಸ್ತಿಯನ್ನು ಮಾಡುವ ಅವಕಾಶ ಸಿಗುತ್ತದೆ, ದೇವೇಗೌಡರೂ ಹಿಂದೆ ತಾವು ಲೋಕೋಪಯೋಗಿ ಮಂತ್ರಿಗಳಾಗಿದ್ದಾಗ ಬೇಕಾದಷ್ಟು 'ಉರಿ'ದವರೇ - ಹೀಗೆ ರೇವಣ್ಣನವರಿಗೆ ಲೋಕೋಪಯೋಗಿ ಮಂತ್ರಿಯಾಗುವ ಅವಕಾಶ ಸಿಕ್ಕಿದ್ದು, ಅದರ ಜೊತೆಯಲ್ಲಿ 'ಇಂಧನ'ವನ್ನೂ ಸೇರಿಸಿದ್ದೂ ಎಲ್ಲವೂ ಒಂದು ಅಚ್ಚುಕಟ್ಟಾದ ಪೂರ್ವಯೋಜಿತ ಸೂತ್ರದಂತೆ ಕಂಡುಬರುತ್ತದೆ, ಆ ಸೂತ್ರದ ಕೇಂದ್ರದಲ್ಲಿ ದೇವೇಗೌಡರು ತಮ್ಮ ಎಂದಿನ ಭಾರವಾದ ಮುಖದಲ್ಲಿ ನಿಶ್ಚಿಂತರಾಗಿ ಉಸಿರುಬಿಡುತ್ತಿರುವುದೂ ಕಂಡು ಬಂದಂತಾಗುತ್ತದೆ - ಇನ್ನೇನು ಬೇಕು ದೇವೇಗೌಡರಿಗೆ ಪ್ರಸನ್ನರಾಗಲು? ತಮ್ಮ ದೂರದೃಷ್ಟಿಯಿಂದ ಜಾತಿ ವ್ಯವಸ್ಥೆಯನ್ನಂತೂ ನಿರ್ಮೂಲನ ಮಾಡಲಾಗಲಿಲ್ಲ, ಕೊನೆಗೆ ತಮ್ಮ ಮಕ್ಕಳಾದರೂ ಒಳ್ಳೊಳ್ಳೆಯ ಸ್ಥಾನದಲ್ಲಿದ್ದಾರಲ್ಲ, ಅಷ್ಟೇ ಸಾಕು!

ಬಿಜೆಪಿಯ ಹಸಿವು ಇನ್ನೂ ಹಿಂಗಿಲ್ಲ, ಈಗಷ್ಟೇ ಅವರಿಗೆಲ್ಲ ಊಟದ ಸಮಯವಾಗಿದೆ. ಕುಮಾರಸ್ವಾಮಿಯ ಸರ್ಕಾರದಲ್ಲಿ ತನ್ನ ಅಣ್ಣನಷ್ಟೇ ಅಲ್ಲ, ತಮ್ಮ ಖಾಸಾಸ್ನೇಹಿತರೂ ಇದ್ದಾರೆ - ಸಾರ್ವಜನಿಕವಾಗಿ ಕಾಲುಮುಟ್ಟಿ ನಮಸ್ಕರಿಸುವ 'ವಿನಯವಂತ'ರೂ ಇದ್ದಾರೆ. ಪರವಾಗಿಲ್ಲ, ಕುಮಾರಸ್ವಾಮಿ ಬೇರೇನನ್ನು ಮಾಡದಿದ್ದರೂ ತಮ್ಮ ಇಷ್ಟು ಚಿಕ್ಕವಯಸ್ಸಿನ್ನಲ್ಲಿ ಜೊತೆಯವರು ಪೂಜಿಸುವಷ್ಟು ಗೌರವವನ್ನು ಸಂಪಾದಿಸಿಕೊಂಡಿದ್ದಾರೆ. ಆದರೆ, ಸಂಪುಟ ವಿಸ್ತರಣೇ ಇನ್ನೂ 'ಪೂರ್ಣ'ವಾಗದಿದ್ದುದು ಕೆಲವರ ಮನಸ್ಸಿನಲ್ಲಿ ಮೂಗಿನ ತುದಿಗೆ ತುಪ್ಪ ಸವರಿದಂತಾಗಿಯೇ ಇನ್ನೂ ಇದೆ, ಮತ್ತೆ ಕೆಲವು ತಿಂಗಳುಗಳಲ್ಲಿ ವಿಸ್ತರಣೆಯ ಇನ್ನೊಂದ ಅಂಕದ ತೆರೆಬೀಳುತ್ತದೆ, ಹೀಗೆ ಹಲವು ಹಂತಗಳ ವಿಸ್ತರಣೆ ಮುಗಿದು ಏನೇ ಆದರೂ ತಮಗೆ ಖುರ್ಚಿ ಸಿಗುವುದಿಲ್ಲ ಎಂದು ಗೊತ್ತಾದ ಕೆಲವರು 'ರೋಸಿ'ಹೋಗುತ್ತಾರೆ, ಹೀಗೆ ರೆಬೆಲ್ ಆದವರು ಏನನ್ನಾದರೂ ಮಾಡಿ ಸರ್ಕಾರವನ್ನು ಉರುಳಿಸಿ - ಚುನಾವಣೆ ನಡೆಸಿ ಜನತೆಯ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಅಂತಹವರನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸಮಾಧಾನ ಪಡಿಸುವ ಯತ್ನ ನಡೆದರೂ ರೆಬೆಲ್‌ಗಳು ಏನಾದರೊಂದು ಒಳಸಂಚನ್ನು ರೂಪಿಸಿಯೇ ತೀರುತ್ತಾರೆ.

ಆದರೆ ಬೇರೆಲ್ಲ ಸಮಯದಲ್ಲಿ ಹೀಗೆ ತಿರುಗಿಬಿದ್ದವರು ಬರೀ ಮುಖ್ಯಮಂತ್ರಿಗಳನ್ನು ಮಾತ್ರ ಎದುರಿಸಬೇಕಿತ್ತು, ಇವತ್ತಿನ ಪರಿಸ್ಥಿತಿಯಲ್ಲಿ ಅವರು ದೇವೇಗೌಡರನ್ನು ಮೊದಲು ಎದುರಿಸಬೇಕು, ಅದರಲ್ಲೂ 'ಪ್ರಸನ್ನ'ರಾದ ದೇವೇಗೌಡರು 'ಚಿಂತಿತ' ಮನಸ್ಸಿನ ದೇವೇಗೌಡರಿಗಿಂತ ಬಹಳ ಡೇಂಜರ್ ಮನುಷ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ - ತನ್ನ ಮರಿಗಳನ್ನು ಕಾಯುವ ಸಿಂಹಿಣಿಯ ಛಲವಿದೆ ಅವರಲ್ಲಿ, ಹುಷಾರ್!

Wednesday, June 21, 2006

ವ್ಯಕ್ತಿ ಹಾಗೂ ವ್ಯವಸ್ಥೆ

ಒಬ್ಬ ವ್ಯಕ್ತಿ ಒಂದು ಸಂಸ್ಥೆಯ ರೀತಿ ಕೆಲಸ ಮಾಡೋದು, ಒಬ್ಬ ವ್ಯಕ್ತಿ ತನ್ನ ವೈಯುಕ್ತಿಕ ಧೋರಣೆಗಳನ್ನು ಬದಿಗಿಟ್ಟು ಉನ್ನತವಾದ ಗುರಿಯನ್ನಿಟ್ಟು ಶ್ರಮಿಸೋದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ, ಉದಾಹರಣೆಗೆ ಒಂದು ದೇಶದ ಪ್ರಧಾನ ಮಂತ್ರಿ ಅಥವಾ ಅಧ್ಯಕ್ಷ ಸ್ಥಾನದಲ್ಲಿರೋ ಯಾರಿಗೇ ಆದರೂ ಅವರನ್ನು ಪೋಷಿಸೋ ಒಂದು ಸಮೂಹ ಇರುತ್ತೆ, ಅವರಿಗೆ ಹೀಗಲ್ಲ ಹಾಗೆ ಅನ್ನೋ ಒಂದು ವ್ಯವಸ್ಥೆ ಇರುತ್ತೆ - ಯಾವಾಗ ಈ ವ್ಯವಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೋ ಆಗ ಆ ವ್ಯಕ್ತಿ ವೈಯುಕ್ತಿಕವಾಗಿ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ದೇಶ ಅಥವಾ ಸಂಸ್ಥೆಯ ಮಟ್ಟದಲ್ಲಿ ಯಶಸ್ಸನ್ನುಗಳಿಸಲು ಸಾಧ್ಯವಾಗುತ್ತೆ. ದೊಡ್ಡ ಕಂಪನಿಗಳ ಅಧಿಕಾರಿಗಳು, ಎಲ್ಲಾ ದೇಶದ ಹಿರಿಯ ನಾಯಕರುಗಳು ಮುಂತಾದವರಿಗೆ ಅನ್ವಯಿಸೋ ಈ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಯೋಚಿಸಿದಾಗ, ಅದೇ ಸಮಯಕ್ಕೆ ಕರ್ನಾಟಕದ ಲೋಕಾಯುಕ್ತರ ಬಗ್ಗೆ ಓದಿದ್ದರಿಂದಲೋ ಏನೋ, ಲಂಚದ ಹಗರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದವರಿಗೂ ಒಂದು ಸುವ್ಯವಸ್ಥಿತ ಜಾಲವಿರುತ್ತೆ ಅನ್ನೋದು ಗಮನಕ್ಕೆ ಬಂತು.

ಲೋಕಾಯುಕ್ತರು ಅದೆಷ್ಟೋ ಜನರನ್ನು ಹಿಡಿದು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರು ಎಂದು ಆಗಾಗ್ಗೆ ಓದುತ್ತಲೇ ಇರುತ್ತೇನೆ. ಹೀಗೆ ದುತ್ತನೆ 'ಪೋಲೀಸ್ ಕಾನ್‌ಸ್ಟೇಬಲ್ ಒಬ್ಬನ ಬಳಿ ಕೋಟ್ಯಾಂತರ ರೂಪಾಯಿ ಇದ್ದ' ಸುದ್ದಿಗಳು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿ ಎಲ್ಲರ ಗಮನ ಸೆಳೆಯುತ್ತದೆ. ಹಲವಾರು ವರ್ಷಗಳಿಂದ ಲಂಚದ ಪ್ರಕ್ರಿಯೆಯಲ್ಲಿ ಕೊಬ್ಬಿರೋ ಲೋಕಾಯುಕ್ತರ ಬಲಿಗಳು 'ಅಬ್ಬಾ, ಇಷ್ಟೊಂದು ಆಸ್ತಿ ಮಾಡಿದ್ದಾರೆಯೇ!' ಎಂದು ಒಮ್ಮೆ ಆಶ್ಚರ್ಯ ಮೂಡಿಸಿ ಜನರ ಮನಸ್ಸಿನಿಂದ ನಿರ್ಗಮಿಸಿಬಿಡುತ್ತವೆ. ಹೀಗೆ ಲೋಕಾಯುಕ್ತರ ಬಲೆಗೆ ಬಿದ್ದವರಿಗೆ ಮುಂದೇನು ಆಯಿತು, ಎಷ್ಟು ಜನರಿಗೆ ಯಾವ ರೀತಿ ಶಿಕ್ಷೆ ಸಿಕ್ಕಿತು ಎನ್ನುವುದನ್ನು ನಾನು ಫಾಲೋ ಮಾಡುವುದಿಲ್ಲವೋ ಅಥವಾ ಅದರ ಬಗ್ಗೆ ಯಾರೂ ಬರೆಯುವುದಿಲ್ಲವೋ ಅಥವಾ ಅವರಿಗೆ ಏನೂ ಆಗುವುದಿಲ್ಲವೋ ನನಗೆ ಗೊತ್ತಿಲ್ಲ. 'ಲೋಕಾಯುಕ್ತರು ಹೀಗೆ ಹಿಡಿಯೋದರಿಂದ ಏನಾಯ್ತು?' ಎನ್ನುವ ಪ್ರಶ್ನೆಯನ್ನು ಕೇಳುವುದು ನನ್ನ ಇಂಗಿತವಲ್ಲ, ಅದರ ಬದಲಿಗೆ ಲಂಚದ ಬಲೆಯಲ್ಲಿ ಸಿಕ್ಕಿ ಬಿದ್ದ ಪ್ರತಿಯೊಬ್ಬ ಅಧಿಕಾರಿಗೂ ಒಂದು ಜಾಲ (ನೆಟ್‌ವರ್ಕ್) ಇದ್ದಿರುತ್ತಲ್ಲ, ಅದರ ಮೂಲವನ್ನು ಯಾರೂ ಏಕೆ ಶೋಧಿಸೋದಿಲ್ಲ? ಬೆಂಗಳೂರಿನಲ್ಲಾಗಲೀ ಮತ್ತೆಲ್ಲಾದರೂ ಆಗಲಿ ಲಂಚದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಪ್ರತಿಯೊಬ್ಬರೂ ಒಪ್ಪಿಕೊಳ್ಳೋದು ಎರಡು ವಿಷಯಗಳನ್ನು ೧) ಅವರು ಪಡೆದ ಲಂಚ 'ಉಳಿದ ಕಡೆ' ವಿಲೇವಾರಿಯಾಗುತ್ತಿದ್ದು ಅವರು ತಮ್ಮ ಪಾಲಿನ ಹಣವನ್ನು ಮಾತ್ರ ತಾವಿಟ್ಟುಕೊಳ್ಳುತ್ತಿದ್ದರು, ೨) ಬೆಂಗಳೂರಿನಲ್ಲಿ ಒಬ್ಬ ಸಬ್-ರಿಜಿಸ್ಟ್ರ್‍ಆರ್‍ ಆಗಲೋ ಅಥವಾ ಆರ್‍‌ಟಿಓ ಆಗಲೋ ಅದಕ್ಕೆ 'ಬೇಕಾದ' ಹಣವನ್ನು ಯಾರಿಗೋ ಕೊಟ್ಟಿದ್ದರಿಂದಲೇ ಆ ಕೆಲಸ ಅವರಿಗೆ ಸಿಕ್ಕೋದು - ಹೀಗೆ ಇಂತಹ ಕೆಲಸ ಸಿಗಬೇಕಾದರೆ ಕೊಟ್ಟ ಲಂಚ ಅವರ ಉದ್ದಿಮೆಯ ಬಂಡವಾಳವಾಗುತ್ತದೆ, ಹೀಗೆ ತೊಡಗಿಸಿದ ಬಂಡವಾಳಕ್ಕೆ ಪ್ರತಿಯಾಗಿ ಬಂದ ಲಂಚವನ್ನು 'ಮಾಮೂಲಿ'ಯಾಗಿ ಸ್ವೀಕರಿಸುತ್ತಿದ್ದರು.

ಕೆಲವು ವರ್ಷಗಳ ಹಿಂದೆ ಡಾ.ಸುದರ್ಶನ್ (ಲೋಕಾಯುಕ್ತರ ಜೊತೆಯಲ್ಲಿ ಕೆಲಸ ಮಾಡುವವರು) ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುತ್ತಿದ್ದಾಗ ಒಬ್ಬ ಎಮ್‌ಎಲ್‌ಎ ಉದಾಹರಣೆಯನ್ನು ಕೊಟ್ಟಿದ್ದರು - ಆತ ಸಾರ್ವಜನಿಕವಾಗಿಯೇ ಲೋಕಾಯುಕ್ತರನ್ನು ಪ್ರಶ್ನಿಸಿದ್ದರಂತೆ - ಒಂದು ಪ್ರದೇಶದಿಂದ ಜನರ ಪ್ರತಿನಿಧಿಯಾಗಿ ಆಯ್ಕೆಯಾಗಿ ಬರಲು ಚುನಾವಣೆ ಮತ್ತಿತರ ಖರ್ಚುಗಳಾಗಿ ಹದಿನೈದು ಲಕ್ಷದವರೆಗೆ ಹಣವನ್ನು ಖರ್ಚುಮಾಡುತ್ತೇವೆ, ಹೀಗೆ ಆಯ್ಕೆಯಾಗಿ ಬಂದನಂತರ ಸರ್ಕಾರ ಕೊಡೋ ಜುಜುಬಿ ಹಣದಲ್ಲಿ ಬದುಕಲು ಅಸಾಧ್ಯ, ಅಲ್ಲದೇ ನಾವು ತೊಡಗಿಸಿದ ಬಂಡವಾಳಕ್ಕೆ ಪ್ರತಿಯಾಗಿ ಲಂಚವನ್ನು ಪಡೆದರೆ ತಪ್ಪೇನು? ಎಂಬುದಾಗಿ. ನನ್ನ ಸ್ನೇಹಿತ ರಾಧಾಕೃಷ್ಣ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗಿನ ಕಾಲದಲ್ಲಿ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಂದರ್ಶನಕ್ಕೆ ಹೋದಾಗ ಅಲ್ಲಿನ ಅಧಿಕಾರಿಗಳು ಎಲ್ಲರ ಎದುರೇ ಲಕ್ಷಗಟ್ಟಲೇ ಹಣವನ್ನು ಲಂಚದ ರೂಪದಲ್ಲಿ ಕೇಳುತ್ತಿದ್ದರಂತೆ - ಸಾಗರದಲ್ಲಿ ರೈತಕುಟುಂಬದಲ್ಲಿ ಬಂದ ರಾಧಾಕೃಷ್ಣ ಹತ್ತು ಲಕ್ಷವನ್ನು ಹೊಂದಿಸಿಕೊಡಬೇಕೆಂದರೆ ಸಾಕಷ್ಟು ಕಷ್ಟವಿದೆ, ಒಂದು ವೇಳೆ ಹಾಗೆ ಹೊಂದಿಸಿಕೊಟ್ಟರೂ ಮುಂದೆ ಲಂಚವನ್ನು ಪಡೆಯದೇ ಬರುವ ಸಂಬಳದಲ್ಲಿ ಅವನ 'ಬಂಡವಾಳ' ಗೀಟುವುದಾದರೂ ಹೇಗೆ ಎನ್ನಿಸಿತ್ತು. ರಾಧಾಕೃಷ್ಣನಿಗೆ ಆ ಲಂಚವನ್ನು ಕೊಡಲಾಗದಿದ್ದುದರಿಂದ ಕೆಲಸವೇ ಸಿಗಲಿಲ್ಲ, ಆದರೆ ಆತನೇ ಹೇಳಿದ ಹಾಗೆ ಶಾಸಕರು, ಮಂತ್ರಿಗಳು ಎಲ್ಲರೂ ಈ ಹಣದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶಾಮೀಲಾದವರೇ. ಹೀಗೆ ಒಂದು ಲಂಚದ ಪ್ರಕರಣದ ಹಿಂದೆ ಒಂದು ದೊಡ್ಡ ವ್ಯವಸ್ಥೆಯೇ ಇದೆ, ಒಬ್ಬ ವ್ಯಕ್ತಿ ಪಡೆದ ಲಂಚ ಮೇಲಿನವರಲ್ಲಿ ಅವರವರ 'ಯೋಗ್ಯತೆ'ಗನುಸಾರವಾಗಿ ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ - ಹೀಗೇ ಇರಬೇಕೆಂದು ಎಲ್ಲಿಯೂ ಬರೆದಿಡದಿದ್ದರೂ ದಶಕಗಳಿಂದ ಹಣ ಹಂಚಿಹೋಗುವ ಪ್ರಕ್ರಿಯೆಗಳನ್ನೊಳಗೊಂಡ ಸಾಂಸ್ಥಿಕ ನೆಲೆಗಟ್ಟನ್ನು ಅಲುಗಾಡಿಸಿದಾಗಲೇ ಲಂಚದ ಪ್ರಕರಣಗಳಿಗೆ ಒಂದು ರೂಪಬರಬಹುದೇನೋ, ಅದು ಬಿಟ್ಟರೆ ಒಬ್ಬೊಬ್ಬನನ್ನು ಹಿಡಿದು ದಂಡಿಸಿದರೆ ಕೋಟ್ಯಾಂತರ ಜನರ ಮಧ್ಯೆ ಅದರ ಪರಿಣಾಮ ಎಷ್ಟು ಎನ್ನುವುದರ ಬಗ್ಗೆ ಯೋಚಿಸಬೇಕಾಗುತ್ತದೆ.

ಆದರೆ... ಲಂಚದ ಹಗರಣಗಳ ಹಿಂದೆ ಕೂಲಂಕಷವಾಗಿ ಶೋಧನೆಮಾಡಿದಾಗ ಸರ್ಕಾರಗಳು ಉರುಳಬಹುದು, ಆಳುವ ಪಕ್ಷದವರನ್ನು ವಿರೋಧಪಕ್ಷದವರು ಆಡಿಸಬಹುದು, ಆದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಶಾಮೀಲಾಗಿರೋದರಿಂದ ಎರಡು ಪ್ರಶ್ನೆಗಳೇಳುತ್ತವೆ: ೧) ಹೀಗೆ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವವರನ್ನು ಹಿಡಿದು ದಂಡಿಸಿಲು ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇದೆಯೇ? ೨) ಹೀಗೆ ಪ್ರತಿ ಲಂಚದ ಬುಡಕ್ಕೆ ಕೈ ಹಾಕಿ ನೋಡಿದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ (ಹೆಚ್ಚೂ-ಕಡಿಮೆ) ಎಲ್ಲರೂ ಇದ್ದಂತಹ ಸಾರ್ವತ್ರಿಕ ರೋಗಕ್ಕೆ ರೋಗಿಗಳಿಗೆ ಕಟಕಟೆ ಹತ್ತಿಸುವವರು ಯಾರು?

***

ಹಿಂದೊಮ್ಮೆ ಪ್ರೀತಿಶ್ ನಂದಿ ತಮ್ಮ ಅಂಕಣದಲ್ಲಿ ಬರೆದಿದ್ದರು - ಈ ಲಂಚದ ಪ್ರಕ್ರಿಯೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಭಾಗಿಗಳೇ, ನಿಮ್ಮ ಬಚ್ಚಲು ಮನೆಯಲ್ಲಿ ನೀವು ಒಂದು ಸಣ್ಣ ಬಕೇಟ್‌ನಲ್ಲಿ ಸೊಳ್ಳೆಗಳನ್ನು ಬೆಳೆಸುತ್ತಿರಬಹುದು ಅಥವಾ ನಿಮ್ಮ ಮನೆಯ ಹತ್ತಿರವಿರುವ ಕೆರೆಯಲ್ಲಿ ಸೊಳ್ಳೆಗಳ ಕೃಷಿ ಮಾಡುತ್ತಿರಬಹುದು, ಇವೆಲ್ಲದರ ಪರಿಣಾಮ ಒಂದೇ.

ನನ್ನ ಪ್ರಕಾರ ಎಲ್ಲಿಯವರೆಗೆ ಲೋಕಾಯುಕ್ತರು ತಮ್ಮ ಬಲೆಗೆ ಬಿದ್ದ ಪ್ರತಿಯೊಂದು ವ್ಯಕ್ತಿಯ ಹಿಂದಿರುವ ಸಾಂಸ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವುದಿಲ್ಲವೋ, ಪ್ರತಿಯೊಂದು ಕೇಸಿನ ರೂಟ್‌ಕಾಸನ್ನು ಕಂಡುಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಕೋಟ್ಯಾಂತರ ಜನರು ಕೋಟ್ಯಾಂತರ ರೂಪಾಯಿಯನ್ನು ತಿಂದು ತೇಗುತ್ತಿರುವಾಗ ಲೋಕಾಯುಕ್ತರು ಒಬ್ಬೊಬ್ಬರನ್ನು ಜೈಲಿಗೆ ಕಳಿಸುವ ಪ್ರಕ್ರಿಯೆ ಕೆರೆಯ ನೀರಿನ ಒಂದು ಹನಿಯಾಗುತ್ತದೆ. ಇಲ್ಲಿ ಹನಿಹನಿಗೂಡಿ ಹಳ್ಳವಾಗುವುದು ಯಾರೊಬ್ಬರ ಜೀವಿತಾವಧಿಯಲ್ಲೂ ಸಾಧ್ಯವಾಗದು.

Tuesday, June 20, 2006

ಅದೆಲ್ಲೋ ಹುಟ್ಟಿದ ಆಂತರಿಕ ಹೋರಾಟ ಹಾಗೂ ಸ್ವರ್ಧೆ

ಯಾವುದೇ ಕೆಲಸವಿರಲಿ, ಚಟುವಟಿಕೆ ಇರಲಿ ಅದರಲ್ಲೆಲ್ಲ ನನಗೆ ಬಿಲ್ಟ್-ಇನ್ ಆಗಿ ಕಾಣೋದು ಸ್ಪರ್ಧಾ ಮನೋಭಾವವೇ ಎಂದು ಹೇಳಿದರೆ ತಪ್ಪೇನೂ ಇಲ್ಲ. ಮಾಡಿದ್ದನ್ನು ಸರಿಯಾಗಿ ಮಾಡಬೇಕು ಅನ್ನೋದಿರಲಿ ಅದನ್ನು ಸಮಯಕ್ಕೆ ತಕ್ಕಂತೆ ನಿರ್ವಹಿಸಬೇಕು ಅನ್ನೋದು ಕೂಡಾ ಸ್ಪರ್ಧೆಯಾಗೇ ಕಂಡು ಬಂದು ಹೆದರಿಕೆಯನ್ನು ಮೂಡಿಸುತ್ತದೆ. ಯಾವುದೇ ಸ್ಪರ್ಧೆಯಲ್ಲಿ ಕನಿಷ್ಟ ಇಬ್ಬರಾದರೂ ಇರಬೇಕಾದ್ದರಿಂದ ನನ್ನೊಳಗೆ ನಡೆಯುವ ವ್ಯಾಪಾರದಲ್ಲಿ ಆ 'ಮತ್ತೊಬ್ಬರು' ಯಾರು ಎಂದೂ ಗೊಂದಲವಾಗುತ್ತದೆ.

ಅದು ಒಂದು ಸರಳವಾದ ಪೂಲ್ ಟೇಬಲ್ಲಿನ ವ್ಯವಸ್ಥೆ ಇರಬಹುದು, ನಾನು ಮತ್ತೊಬ್ಬರ ಜೊತೆ ಆಡುತ್ತಿರಬಹುದು ಅಥವಾ ನಾನೇ ಎರಡೂ ಕಡೆಯ ಆಟವನ್ನು ಆಡುತ್ತಿರಬಹುದು - ಇಂತಹ ಒಂದು ಸರಳ ಸನ್ನಿವೇಶದಲ್ಲೂ ಎಷ್ಟೇ ನಿಧಾನವಾಗಿ ಆರಂಭವಾದ ಆಟದಲ್ಲೂ ಆಟ ಕೊನೆಯನ್ನು ತಲುಪುತ್ತಿದ್ದ ಹಾಗೆ ಒಬ್ಬನೇ ಆಡುತ್ತಿರುವ ಇಬ್ಬರ ಆಟದಲ್ಲಿ ಒಂದು ರೀತಿಯ ಸ್ಪರ್ಧೆ ಏರ್ಪಟ್ಟು ಕೊನೆಗೆ ಆ ಸ್ಪರ್ಧೆ ಹುಟ್ಟಿಸಿದ ಏರಿಳಿತಗಳಿಂದ ಹೊರಗಿರುವುದು ಕಷ್ಟವಾಗೇ ಕಂಡು ಬಂದಿದೆ. ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಆಡಿ ಮ್ಮನ್ನಣೆ ಪಡೆದ ನನ್ನ ಸಹಪಾಠಿ ಸುರೇಶ ಸಲಹೆ ನೀಡಿದ ಹಾಗೆ ನಾನು ಒಬ್ಬನೆ ಎಷ್ಟೋ ಸಲ ಚದುರಂಗವನ್ನು ಆಡಿಕೊಂಡಿದ್ದಿದೆ - ಬಿಳಿ, ಕಪ್ಪು ಕಾಯಿಗಳಲ್ಲಿ ಯಾವುದರಿಂದ, ಎಲ್ಲೇ ಆರಂಭಿಸಿದರೂ, ಸುರೇಶ ಹೇಳಿಕೊಟ್ಟ ಅದ್ಯಾವುದೋ ಸಿಸಿಲಿಯನ್, ಕ್ವೀನ್ಸ್ ತರ್ಕಗಳನ್ನು ಇಂಡಿಪೆಂಡಾಂಟಾಗಿ ಬಳಸಿಕೊಂಡರೂ ಮೊದಮೊದಲು ಸಹಜವಾಗಿ ರೂಪಗೊಳ್ಳುತ್ತಿದ್ದ ಆಟ, ಮಧ್ಯದ ಹಂತ ತಲುಪಿದಾಗ ಒಂದು ರೀತಿಯ ಸ್ಪರ್ಧೆಯಾಗಿ ಬದಲಾಗುತ್ತಿತ್ತು - ಇದನ್ನು ಆಂತರಿಕ ಸ್ಪರ್ಧೆಯೆಂದೇ ಹೇಳಬೇಕು. ಇಬ್ಬರ ಮಧ್ಯೆ ಹುಟ್ಟಬಹುದಾದ ಸಹಜ ಸ್ಪರ್ಧಾ ಮನೋಭಾವ ಅಷ್ಟೇ ತೀವ್ರವಾಗಿ ಒಬ್ಬನಲ್ಲೇ ಏರ್ಪಟ್ಟಿರೋದು ನನಗೆ ವಿಶೇಷವಾಗಿ ಕಂಡುಬಂದಿದೆ. ಈ ರೀತಿ ಹುಟ್ಟಬಹುದಾದ ಅತಿಯಾದ ಸ್ಪರ್ಧೆಯೇ ನನ್ನನ್ನು ಎಷ್ಟೋ ಬಾರಿ ಅಲ್ಲಲ್ಲಿ ಭಾಗವಹಿಸದಂತೆಯೂ ಮಾಡಿದೆ. ಎಷ್ಟೋ ಸಾರಿ ಇಲ್ಲಿ ಬ್ರಯಂಟ್ ಪಾರ್ಕಿನಲ್ಲಿ ಮಧ್ಯಾಹ್ನದ ಬಿಡುವಿನಲ್ಲಿ ತುಂಬಾ ಜನ ಚೆಸ್ ಆಡುವುದನ್ನು ನೋಡಿದ್ದೇನೆ, ಬೇರೆಯವರು ಆಡುವುದನ್ನು ಮೌನವಾಗಿ ನೋಡಿಬಂದಿದ್ದೇನೆಯೇ ವಿನಾ ಎಲ್ಲೂ ಯಾರ ಜೊತೆಗೂ ಆಡಿಲ್ಲ - ಆಡುವುದು ಸುಲಭ, ಅದು ಹುಟ್ಟಿಸಬಹುದಾದ ಸ್ಪರ್ಧೆ, ಅದರ ಪರಿಣಾಮಗಳು ವಿಪರೀತವಾದ್ದರಿಂದ 'ನಯವಾಗಿ' ನಿರಾಕರಿಸಿದ್ದೇನೆ ಎಂದು ಹೇಳಿಕೊಂಡರೂ, ಇಲ್ಲಿ ಎಲ್ಲವೂ ಲೈಟನಿಂಗ್ ಆಟವಾಗಿ - 'ಹಾಗೆ ಆಡಿದರೆ ನಿನ್ನ ಆಟ ಹಾಳಾಗುತ್ತದೆ' - ಎಂದು ಸುರೇಶ ನೀಡಿದ ಎಚ್ಚರಿಕೆಯ ಮಾತುಗಳು ನೆನಪಾಗುವುದೂ ನನ್ನನ್ನೂ ಇಂತಹ ಆಟಗಳಿಂದ ದೂರವಿರಿಸಿದೆ ಎಂದರೆ ತಪ್ಪಾಗಲಾರದು.

ಈ ಸ್ಪರ್ಧೆಯ ಒರಿಜಿನ್ ಎಲ್ಲಿದೆಯೋ ಯಾರಿಗೆ ಗೊತ್ತು, ಆದರೂ ನಮ್ಮ ಶಾಲೆಗಳಲ್ಲಿ, ನಮ್ಮ ವಠಾರಗಳಲ್ಲಿ ಕೆಲವೊಮ್ಮೆ ವಿಪರೀತ ಎನ್ನುವಂತೆ ಕಾಣುವ ತುಲನೆ ಇವೆಲ್ಲದರ ಮೂಲದಲ್ಲಿ ಕಂಡುಬರುತ್ತೆ. 'ನೋಡು, ಅವನು ಎಷ್ಟು ಚೆನ್ನಾಗಿ ಆಡ್ತಾನೆ', 'ಅವರ ಮಗ ಶಾಲೆಗೇ ಫಸ್ಟಂತೆ', 'ಇದ್ದರೆ ಅವನ ಹಾಗಿರಬೇಕು...' ಮುಂತಾದ ಹೇಳಿಕೆಗಳು ಒಂದು ತುಲನೆಯ ವಾತಾವರಣವನ್ನು ಸೃಷ್ಟಿಸಿ, ಒಂದು ಕಡೆಯಲ್ಲಿ 'ಬಹಳ' ಚೆನ್ನಾಗಿರೋದನ್ನೂ ಹಾಗೂ ಮತ್ತೊಂದು ಕಡೆಯಲ್ಲಿ 'ಸಾಧಾರಣ'ವಾಗಿರೋದನ್ನೂ ಒಂದೇ ತಕ್ಕಡಿಯಲ್ಲಿ ತೂಕ ಮಾಡುವ ವ್ಯವಸ್ಥೆಯನ್ನು ಹುಟ್ಟಿಹಾಕುತ್ತವೆ. ಈ ತುಲನೆಯ ಶಾಪದಿಂದ ಹೊರಬರುವುದಕ್ಕೆ ಇರೋದು ಒಂದೇ ದಾರಿ - ಆ 'ಬಹಳ' ಚೆನ್ನಾಗಿರೋದನ್ನು 'ಸಾಧಾರಣ'ವಾಗಿರೋದು ಮೀರಬೇಕು, ಅದಿಲ್ಲವೆಂದಾದರೆ ಈ 'ಸಾಧಾರಣ'ವಾದದ್ದು 'ಏನೂ ಪ್ರಯೋಜನವಿಲ್ಲ', 'ಎಲ್ಲಾ ದಂಡ', 'ಇದ್ದರೆ ಹಾಗಿರಬೇಕಪ್ಪ!' ಎಂಬೆಲ್ಲ ಹೇಳಿಕೆಗಳನ್ನು ಪರಾಕುಗಳಾಗಿ ಸ್ವೀಕರಿಸಬೇಕಾಗಿಬರುತ್ತದೆ. ಆದರೆ ಇವೆಲ್ಲವೂ ಸೃಷ್ಟಿಸಿದ ಸ್ಪರ್ಧಾ ಮನೋಭಾವ ಒಂದು ರೀತಿಯ ಉತ್ತೇಜನವನ್ನು ಬೆಳೆಸದೇ ಈ ವ್ಯವಸ್ಥೆಯ ಬಗ್ಗೆ ರೋಸಿ ಹೋಗುವಂತೆ ಮಾಡಿ 'ಸಾಧಾರಣ'ವಾದದ್ದೂ 'ಇನ್ನೂ ಕಡಿಮೆ' ಫಲಿತಾಂಶವನ್ನು ಪಡೆಯುವಂತೆ ಮಾಡುತ್ತದೆ.

ನಮ್ಮಲ್ಲಿ ಎಷ್ಟು ಜನ ತಂದೆ-ತಾಯಿಯರಿಗೆ ತಮ್ಮ ಮಕ್ಕಳು ತರಗತಿಯಲ್ಲಿ (ಯಾವಾಗಲೂ) ಮೊದಲನೆಯವರಾಗಿರೋದಿಲ್ಲ, ಏಕೆ ಎಂಬ ಪರಿಜ್ಞಾನವಿದೆ? ತಮ್ಮ ಮಕ್ಕಳ ಸಾಮರ್ಥ್ಯ, ಅವರ ಪ್ರತಿಭೆಗಳನ್ನು ಚೆನ್ನಾಗಿ ತಿಳಿದ ಪೋಷಕರಿಂದ ಮಕ್ಕಳು ತಮಗೆ 'ಬೇಕಾದ್ದನ್ನು' ಓದಿ ಅನುಸರಿಸಿ ಮುಂದೆ ಬಂದರೆ ಅದರಿಂದ ಎಷ್ಟೋ ಅನುಕೂಲವಾಗುತ್ತದೆಯೇ ವಿನಾ ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ನಿರೀಕ್ಷೆ ಇದೆಯಲ್ಲ ಅದಂತೂ ನನ್ನ ದೃಷ್ಟಿಯಲ್ಲಿ ಭಯಂಕರವಾದ ಸ್ಪರ್ಧೆಯನ್ನು ಹುಟ್ಟಿಹಾಕುತ್ತದೆ - ಈಗೆಲ್ಲ ಹೇಗೋ ಗೊತ್ತಿಲ್ಲ, ನಾನು ಓದುವ ಹೊತ್ತಿಗಂತೂ 'ಇಂಜಿನಿಯರ್ ಅಥವಾ ಡಾಕ್ಟರ್ ಆಗದಿದ್ದರೆ ಏನು ಪ್ರಯೋಜನ?' ಎನ್ನುವ ಮಾತುಗಳನ್ನು ಧಾರಾಳವಾಗಿ ಕೇಳುತ್ತಿದ್ದೆ, 'ಪ್ರತಿಭೆಗೆ ತಕ್ಕ ಫಲ'ವನ್ನು ಅನುಭೋಗಿಸೋದಂತು ಖಂಡಿತವಾಗಿ ಇರಲಿಲ್ಲ. ಈಗ ಬದಲಾಗಿರಬಹುದು ಎಂದುಕೊಂಡಿದ್ದೇನೆ.

ಪ್ರಪಂಚದಲ್ಲಿರೋರೆಲ್ಲ ಐ.ಎ.ಎಸ್. ಆಫೀಸರುಗಳೇ ಆದರೆ ಅವರ ಚಪ್ಪಲಿಯನ್ನು ಹೊಲಿಯುವವರು ಯಾರು? ಬರೀ ಐ.ಎ.ಎಸ್. ಆಫೀಸರುಗಳೇ ಇರೋ ಊರಿನಲ್ಲಿ ಕಣ್ಣೀರೇ ಇರೋದಿಲ್ವೇ? ಮುಂತಾದ ಪ್ರಶ್ನೆಗಳನ್ನು ಕೇಳಿಕೊಂಡಾಗ ಅವರವರ ಪ್ರತಿಭೆ ಅವರವರಿಗೆ ವಿಶೇಷವಾದದ್ದು, ಅದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಗುರುತಿಸಿಕೊಂಡು ಅದನ್ನು ಬದುಕಿನ ಒಂದು ಅಂಗವನ್ನಾಗಿ ಮಾಡಿಕೊಂಡರೆ ಅಂಥದ್ದರಲ್ಲಿ ಹೆಚ್ಚು ಸ್ವಾರಸ್ಯವಿರುತ್ತೆ, ಮಾಡೋ ಕೆಲಸಗಳಲ್ಲಿ ಒಂದು ಅಸ್ಥೆ ಇರುತ್ತೆ ಅಥವಾ ಕೊನೇ ಪಕ್ಷ ಮುಂದೆ ಅದರಲ್ಲೊಂದು ಸ್ಪರ್ಧೆ ಹುಟ್ಟಿದರೂ ಅದು ವಿಶೇಷವಾಗಿರುತ್ತೆ ಅಂದುಕೊಂಡಿದ್ದೇನೆ.

Saturday, June 17, 2006

ಅನಿವಾರ್ಯವಾದ ಸಂಬಂಧಗಳು

ತಂದೆ-ಮಗನ, ತಾಯಿ-ಮಗಳ ಸಂಬಂಧ ಅಪರೂಪವಾದದ್ದಂತೆ. ಎಷ್ಟೋ ತಲೆಮಾರುಗಳು ತಮ್ಮ ತಮ್ಮ ರಹಸ್ಯಗಳನ್ನು ಈ ರೀತಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ರವಾನಿಸುತ್ತವಂತೆ. ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ 'ಹೀಗಲ್ಲ ಹಾಗೆ ಮಾಡು' ಅನ್ನೋ ಸರಳವಾದ ಮಾರ್ಗದರ್ಶನವಿರಬಹುದು, ಅಥವಾ ಕುತೂಹಲ ಹುಟ್ಟುವ ವಯಸ್ಸಿನಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರಕೊಡುವುದರ ಮೂಲಕ ಅನುಭವಗಳ ರವಾನೆಯಾಗಬಹುದು ಅಥವಾ ಬದುಕಿನಲ್ಲಿ ಆಗಾಗ್ಗೆ ಎದುರುಗೊಳ್ಳುವ ಸವಾಲುಗಳನ್ನೆದುರಿಸಲು ಕೊಡುವ ಧೈರ್ಯವಿರಬಹುದು - ತಲತಲಾಂತರಗಳಿಂದ ಈ ಪ್ರಕ್ರಿಯೆ ನಡೆದು ಬಂದಿದೆ, ಅದು ಹೀಗೇ ಮುಂದುವರೆಯುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವೂ ಹೌದು.

ಕಳೆದ ವರ್ಷ ಸ್ಥಳೀಯ ಪತ್ರಿಕೆಯೊಂದರಲ್ಲಿ ಓದಿದ್ದೆ - ಯಾವೊದೋ ಒಂದು ಕಮ್ಮ್ಯೂನಿಟಿಯಲ್ಲಿ ಪ್ರಾಯಕ್ಕೆ ಬಂದ ಹುಡುಗರು ದಾಂಧಲೆ ಎಬ್ಬಿಸಿ ಮಾಡುತ್ತಿದ್ದ ಅನಾಚಾರಗಳ ಬಗ್ಗೆ ಅಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಕ್ರೈಮ್ ರೇಟಿನ ಬಗ್ಗೆ ಬರೆದಿದ್ದ ವರದಿಯೊಂದರಲ್ಲಿ ಯುವಕರಲ್ಲಿ ಹೆಚ್ಚಿದ ಅನ್‌ರೆಸ್ಟ್ ಗೆ ಕಾರಣವಾಗಿ ಅಲ್ಲಿನ ಕುಟುಂಬಗಳು ಏಕ ಪೋಷಕ ಕುಟುಂಬಗಳಾಗಿರುವುದನ್ನೂ ಹಾಗೂ ಎಷ್ಟೋ ಜನ ಹುಡುಗರು ತಂದೆಯಿಲ್ಲದೆ ಬೆಳೆದವರೆಂದೂ ಬರೆದಿದ್ದರು. ಅದೇ ಲೇಖನದಲ್ಲಿ ಮದವೇರಿದ ತರುಣ ಆನೆಗಳನ್ನು ನಿಯಂತ್ರಿಸಲು ಪಳಗಿದ ದೊಡ್ಡ ಆನೆಗಳನ್ನು ತಂದು ಯುವ ಆನೆಗಳನ್ನು ಹತೋಟಿಯಲ್ಲಿ ತಂದ ಹಿಂದಿನ ಉದಾಹರಣೆಯೊಂದನ್ನೂ ನೀಡಿದ್ದರು, ಅದೇ ರೀತಿ ಈ ಹದಗೆಟ್ಟ ಕಮ್ಮ್ಯೂನಿಟಿಯಲ್ಲಿ ಯಾವುದಾದರೊಂದು ರೀತಿಯಲ್ಲಿ ರೋಲ್ ಮಾಡೆಲ್‌ಗಳನ್ನು ತಂದು ತಂದೆಯ ಸ್ಥಾನದಲ್ಲಿ ನಿಲ್ಲಿಸಿ ದಾರಿ ತಪ್ಪಿದ ಯುವಕರಿಗೆ ಮಾರ್ಗದರ್ಶನವನ್ನು ನೀಡಿದರೆ... ಎಂದೂ ಬರೆದಿದ್ದಂತೆ ನೆನಪು. ಈ ನ್ಯೂ ಯಾರ್ಕ್ ನಗರದ ಸುತ್ತ ಮುತ್ತಲೂ ಇರುವ ಹಲವಾರು ಕಮ್ಮ್ಯೂನಿಟಿಗಳಲ್ಲಿ ಏಕ ಪೋಷಕ ಕುಟುಂಬಗಳು ಹಲವಾರು ಇದ್ದು ಬೆಳವಣಿಗೆಯ ವಯಸ್ಸಿನಲ್ಲಿ ಮಕ್ಕಳಿಗೆ ತಂದೆ-ತಾಯಿ ಇಬ್ಬರಿಂದಲೂ ಸಿಗಬೇಕಾದ ಮಾರ್ಗದರ್ಶನ ಸಿಗದೇ ಹೋದರೆ 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎನ್ನುವಂತೆ ಮುಂದೆ ದಾರಿ ತಪ್ಪಿದ, ತಪ್ಪಬಹುದಾದ ಯುವಕ-ಯುವತಿಯರನ್ನು ಒಳ್ಳೆಯ ದಾರಿಗೆ ತರುವುದು ಕಷ್ಟ ಸಾಧ್ಯ.

ಹದಿನೆಂಟು ವರ್ಷಗಳಾದ ಮೇಲೆ ಕಳಚಿಕೊಳ್ಳಬಹುದಾದ (ಅಥವಾ ನಾವು ಕಳಚಿಕೊಂಡೆವು ಎಂದುಕೊಂಡ) ತಂದೆ-ತಾಯಿ, ಸಹೋದರ-ಸಹೋದರಿಯರ ಸಂಬಂಧಗಳು ಜೀವನ ಪರ್ಯಂತ ನಾವು ಬದುಕುವ ರೀತಿಯನ್ನು, ನಾವು ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತಿಸುತ್ತೇವೆನ್ನುವುದನ್ನು ನಿರ್ಧರಿಸಿಬಿಡುತ್ತವೆ. ಅವಿಭಕ್ತ ಕುಟುಂಬದಲ್ಲಿ ಇದ್ದವರಿಗಂತೂ ಈ ಸಂಬಂಧಗಳ ಪರಿಣಾಮ ಇನ್ನೂ ಹೆಚ್ಚು. ನಾನು ಯಾವತ್ತಿದ್ದರೂ ನನ್ನ ಸಹೋದರ-ಸಹೋದರಿಯರ ಜೊತೆ ಒಡನಾಡಿ ಬೆಳೆದ ದಿನಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ - ದೇವರೇ, ಇನ್ನು ನೂರು ಜನ್ಮವಿದ್ದರೂ ನನ್ನನ್ನು ತುಂಬಿದ ಕುಟುಂಬದಲ್ಲಿಯೇ ಹುಟ್ಟಿಸು ಎನ್ನುವ ಪ್ರಾರ್ಥನೆ ನನ್ನದು. ನನ್ನ ಎಷ್ಟೋ ಜನ ಯುವ ಸ್ನೇಹಿತರು ತಮ್ಮ ತಂದೆ-ತಾಯಿಯರಿಗೆ ಒಬ್ಬರೇ ಮಕ್ಕಳು - ನಾನು ಅಂತರ್ಮುಖಿಯಾಗಿ ಈಗೇನೋ ದಿನಗಟ್ಟಲೇ ನಾಲ್ಕು ಗೋಡೆಗಳ ಮಧ್ಯೆಯಲ್ಲಿ ಇರಬಲ್ಲವನಾದರೂ ಅಕ್ಕ-ತಂಗಿ-ಅಣ್ಣ-ತಮ್ಮಂದಿರಿಲ್ಲದ ಬಾಲ್ಯವನ್ನು ಊಹಿಸಿಕೊಳ್ಳುವುದೂ ನನ್ನಿಂದ ಅಸಾಧ್ಯ. ಇಂತಹ ಹಲವಾರು ದೃಷ್ಟಿಕೋನದಿಂದಲೇ ನಾನು ನಮ್ಮ ದೇಶವನ್ನು ಮಹಾನ್ ಎನ್ನೋದು - ಚೀನಾದಲ್ಲಿ 'ಒಂದು ಮನೆಗೆ ಒಂದೇ ಮಗು' ಎಂದು ಕಾನೂನನ್ನು ಹೇರಿ ಸಂಬಂಧಗಳ ಕುಡಿಗಳನ್ನೇ ಚಿವುಟಿ ಹಾಕುತ್ತಾರಲ್ಲ ಅಂತಹ ಸತ್ತೆಯಲ್ಲಿ ಬದುಕುವುದಾದರೂ ಹೇಗೆ, ಏಕೆ?

ನಾವೇ ಆಯ್ದುಕೊಂಡ ಸ್ನೇಹಿತರೂ ಹೀಗೆ ಬಂದು ಹಾಗೆ ಹೋಗುತ್ತಾರೆ, ಆದರೆ ಕೊನೇವರೆಗೂ ಉಳಿಯೋದೇನಿದ್ರೂ ಈ ಸಂಬಂಧಗಳು ಮಾತ್ರ, 'ನನ್ನ ಅಣ್ಣ', 'ನನ್ನ ತಂಗಿ' ಎಂದು ನಾವು ಮಾತುಗಳನ್ನು ಆರಂಭಿಸುತ್ತೇವಲ್ಲ ಅದರಲ್ಲೊಂದು ಸ್ವಂತಿಕೆ ಇದೆ - ಅದು ಬರೀ ಇಬ್ಬರು ಭೌತಿಕ ವ್ಯಕ್ತಿಗಳ ನಡುವಿನ ಪ್ರಸಕ್ತ ಕೊಂಡಿಯಷ್ಟೇ ಅಲ್ಲ - ಯಾರಿಗೆ ಇಷ್ಟವಿದ್ದರೂ ಇಲ್ಲದಿದ್ದರೂ ಕೊನೇವರೆಗೂ ಬದಲಾಗದೇ ಉಳಿಯುವ ಜೀವಂತ ವ್ಯವಸ್ಥೆ ಅದರಲ್ಲಿದೆ. ಅದು ನಮ್ಮ ನಡುವಿನ ವರ್ತಮಾನದ ಲೆಕ್ಕಕ್ಕೆ ಯಾವ ಬೆಲೆಯನ್ನು ಕೊಡದೇ ಒಮ್ಮೆ ಹುಟ್ಟಿದ ಸಂಬಂಧವಾಗಿ ಎಂದೆಂದೂ ಹಾಗೇ ಗಟ್ಟಿಯಾಗಿಯೇ ಇರುತ್ತದೆ. ನಾನು ನನ್ನ ಅಣ್ಣನೋ ತಂಗಿಯೋ ನನಗೇನೋ ಸಹಾಯ ಮಾಡಿದರೆಂದು ನನ್ನ ಈ ಪ್ರಬುದ್ಧತೆಗೆ ತಕ್ಷಣ ಗೋಚರಿಸುವ 'ಓ ತುಂಬಾ ಥ್ಯಾಂಕ್ಸ್ ಕಣೋ/ಕಣೇ' ಎಂದು ಅಪರೂಪಕ್ಕೆ ಹೇಳಿದ್ದಕ್ಕೆ ಹೆಚ್ಚೂಕಡಿಮೆ 'ಅದರಲ್ಲಿ ಥ್ಯಾಂಕ್ಸ್ ಹೇಳೋದೆನಿದೆ?' ಅನ್ನೋ ಪ್ರತಿಕ್ರಿಯೆ ಬಂದಿದೆ. ನಾನು ಒಮ್ಮೆ ಕಕ್ಕಾಬಿಕ್ಕಿಯಾದಂತೆ ಕಂಡು ಬಂದರೂ 'ಇವರು ನನ್ನ ಒಡಹುಟ್ಟಿದವರು' ಅನ್ನೋ ಮಾತು ಎಲ್ಲವನ್ನೂ ತೇಲಿಸಿಬಿಡುತ್ತದೆ. ಎಂದಾದರೂ ನಾನು ನನ್ನ ಒಡಹುಟ್ಟಿದವರಿಗೆ 'ಥ್ಯಾಂಕ್ಸ್' ಹೇಳಿದೆನೆಂದರೆ ಮದುವೆ ಮನೆಯ ಊಟದ ಪಂಕ್ತಿಯಲ್ಲಿ ಕುಳಿತಾಗ ಬಡಿಸಿದವರೆಲ್ಲರಿಗೋ ಅಥವಾ ದೇವಸ್ಥಾನದಲ್ಲಿ ತೀರ್ಥ ಕೊಟ್ಟ ಅರ್ಚಕರಿಗೋ ಥ್ಯಾಂಕ್ಸ್ ಹೇಳಿದಷ್ಟೇ ಅಪಹಾಸ್ಯವಾಗುತ್ತದೆ, ನಮ್ಮ-ನಮ್ಮ ಹಿರಿಮೆ-ಗರಿಮೆಗಳೇನೇ ಇರಲಿ ಕೊನೇಪಕ್ಷ ಎಲ್ಲೆಲ್ಲಿ 'ಥ್ಯಾಂಕ್ಸ್' ಹೇಳಬಾರದು ಅನ್ನೋದನ್ನು ಮೊದಲು ಕಲಿತರೆ ಒಳ್ಳೆಯದು, ಒಮ್ಮೆ ಅದು ಗಟ್ಟಿಯಾಗಿ ಡೀ ಫಾಲ್ಟ್ ಆಗಿ ನಮ್ಮ ತುಮುಲಗಳಿಗೆ ಸ್ಪಂದಿಸುವವರು 'ಥ್ಯಾಂಕ್ಸ್'ನ್ನು ನಿರೀಕ್ಷಿಸೋದಿಲ್ಲ ಎಂದು ಕನ್‌ಫರ್ಮ್ ಆದ ಮೇಲೆ ಎಲ್ಲೆಲ್ಲಿ ಹೇಗೆ ಹೇಗೆ 'ಥ್ಯಾಂಕ್ಸ್' ಹೇಳಬೇಕೆಂದು ಕಲಿತರೆ ಒಳ್ಳೆಯದು ಅನ್ನೋದು ನನ್ನ ಅನಿಸಿಕೆ.

***

ಯಾವುದೋ ಮಾರ್ಕೆಟಿಂಗ್ ಕ್ಲಾಸಿನಲ್ಲಿ ಕಲಿತ ಹಾಗೆ ದೊಡ್ಡ-ದೊಡ್ಡ ಕುಟುಂಬಗಳು ಇರುವ ಮನೆಗಳು, ವಠಾರಗಳು, ಗಲ್ಲಿಗಳು, ನೆರೆಹೊರೆಗಳು ಕೆಳ ಅಥವಾ ಕೆಳ-ಮಧ್ಯಮ ವರ್ಗದ ಕುಟುಂಬಗಳನ್ನು ಪ್ರತಿಬಿಂಬಿಸುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ನಾವು ಆಧುನಿಕರಾದಂತೆ ಸಂಬಂಧಗಳನ್ನು ಕಡಿಮೆ ಮಾಡಿಕೊಳ್ಳುತ್ತೇವೆಯೇ - ಅದು ಹೌದಾದರೆ ಹೀಗೇಕೆ ಎನ್ನುವ ಪ್ರಶ್ನೆಗಳು ಮನದಲ್ಲಿ ನೀರಿನಲ್ಲಿ ಎಸೆದ ಕಲ್ಲು ಹುಟ್ಟಿಸುವ ಅಲೆಗಳ ಹಾಗೆ ಒಂದರ ಹಿಂದೊಂದು ಬರುತ್ತಲೇ ಇದ್ದರೂ ಅದೇ ಸಮಯಕ್ಕೆ ನಾನು ಈ ಹಿಂದೆ ಮಾಡಿಕೊಂಡ 'ದೇವರೇ, ಇನ್ನು ನೂರು ಜನ್ಮವಿದ್ದರೂ ನನ್ನನ್ನು ತುಂಬಿದ ಕುಟುಂಬದಲ್ಲಿಯೇ ಹುಟ್ಟಿಸು' ಎನ್ನೋ ಪ್ರಾರ್ಥನೆ 'ಹಾಗಾದರೆ, ನೀನು ಕೆಳ ಅಥವಾ ಮಧ್ಯಮ ವರ್ಗದಲ್ಲಿ ಹುಟ್ಟುತ್ತೀಯೆ' ಅನ್ನೋ ಕಂಡೀಷನ್ನನ್ನು ನೆನಪಿಗೆ ತಂದರೂ ನನ್ನ ಪ್ರಾರ್ಥನೆಯಲ್ಲಿ ಬದಲಾವಣೆಯೇನಾಗೋದಿಲ್ಲ - ಬಡತನವಿದ್ದರೆ ಅದು ನನ್ನ ಬವಣೆ, ತುಂಬಿದ ಕುಟುಂಬವಿದ್ದರೆ ನನ್ನಾತ್ಮಕ್ಕೆ ಮನ್ನಣೆ!

Friday, June 16, 2006

ಏರ್‌ಪೋರ್ಟ್‌ನಲ್ಲಿ ಡಿಲೇ ಆದಾಗ ನಾನೇನ್ ಮಾಡ್ತೀನಿ ಅಂದ್ರೆ...

ಇವತ್ತು ಟೆಕ್ಸಾಸ್‌ನಿಂದ ನಮ್ಮನೆಗೆ ಬರಬೇಕಾದ ವೆಂಕಟೇಶ್ ಫೋನ್ ಮಾಡಿ ವಿಮಾನ ತಡವಾಗಿ ಬಿಡ್ತಾ ಇದೆ, ಒಂದು ನಾಲ್ಕು ಘಂಟೇನಾದ್ರೂ ತಡವಾಗುತ್ತೆ, ನಮಗೋಸ್ಕರ ಕಾಯಬೇಡಿ ಎಂದು ಫೋನ್ ಮಾಡಿದ್ರು. ಹೀಗ್ ಮಾಡಿ ಹಾಗ್ ಮಾಡಿ ಎಂದು ಒಂದಿಷ್ಟೊತ್ತು ಮಾತನಾಡಿದ ಮೇಲೆ ನಾನೇನಾದ್ರೂ ಹೀಗೆ ಏರ್‌ಪೋರ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡ್ರೆ ಏನ್ ಮಾಡ್ತೀನಿ ಅಂತ ಯೋಚಿಸ್ದಾಗ ಟರ್ಮಿನಲ್ ಸಿನೆಮಾ ನೆನಪಿಗೆ ಬಂತು. ೨೦೦೪ ರಲ್ಲೇ ಬಿಡುಗಡೆಯಾದ ಈ ಸಿನೆಮಾವನ್ನು ನಾನು ನೋಡಿದ್ದು ೨೦೦೫ ರ ಕೊನೆಯಲ್ಲಿ ಅದೂ ಟಿವಿನಲ್ಲಿ ಬಂದು ಹಳಸಲು ಹೊಡೆದ ಮೇಲೆ. ನನಗೆ ಇಲ್ಲಿನ ಚಿತ್ರ ನಟ ನಟಿಯರಲ್ಲಿ ಕೆಲವೊಂದಿಷ್ಟು ಜನರನ್ನು ಕಂಡ್ರೆ ಆಗೋದೇ ಇಲ್ಲ - ಅದರಲ್ಲಿ ನಂಬರ್ ಒನ್ ಅಂದ್ರೆ ಜನ್ನಿಫರ್ ಲೋಪೆಜ್, ನಂಬರ್ ಟೂ ಅಂದ್ರೆ ಟಾಮ್ ಹ್ಯಾಂಕ್ಸ್. ಆದ್ರೆ ನಾನು ಬಹಳ ವಿರೋಧವನ್ನಿಟ್ಟುಕೊಂಡೂ ಟರ್ಮಿನಲ್ ಸಿನೆಮಾ ನೋಡಿದ ಮೇಲೆ ಟಾಮ್‌ ಹ್ಯಾಂಕ್ಸ್ ಮೇಲೆ ವಿಶೇಷ ಒಲವು ಬಂದು ಬಿಟ್ಟಿದೆ! ಆದ್ದರಿಂದ ನಂಬರ್ ಒನ್ ಹಾಗೂ ನಂಬರ್ ಟೂ ಎರಡನ್ನೂ ಜನ್ನಿಫರ್ ಲೋಪೆಜ್ ಗಳಿಸಿಕೊಂಡಿದ್ದಾಳೆ - ನನ್ನ ವಿರೋಧಕ್ಕೆ ಯಾವ ಕಾರಣ, ರೀತಿ-ನೀತಿ ಎಂದೇನೂ ಇಲ್ಲ, ಆದ್ರೆ ಏಕೋ ಏನೋ ನನಗೆ ಕೆಲವರ ಸೊಡ್ಡನ್ನ ನೋಡಿದ್ರೆ ಸುತಾರಾಂ ಆಗೋದಿಲ್ಲ - ಅದಕ್ಕೆ ಅವರ ಬಗ್ಗೆ ತಿಳಿಯದಿರುವ ನನ್ನ ಮೌಢ್ಯವೂ ಸ್ವಲ್ಪ ಮಟ್ಟಿಗೆ ಕಾರಣವೆನ್ನಬಹುದು.


ನಾನು ಸಿನಿಮಾ ನೋಡೋದೇ ಕಡಿಮೆ, ನೋಡಿದ್ರೂ ಮೊದ್ಲಿಂದ ಕೊನೇವರೆಗೆ ಕೂತು ನೋಡೋದು ಇನ್ನೂ ಕಡಿಮೆ - ಇವುಗಳಿಗೆ ಹೊರತು ಎಂಬಂತೆ ಇಲ್ಲಿ ಬಂದ ಕನ್ನಡ ಸಿನಿಮಾಗಳನ್ನು ಎಷ್ಟೇ ಕೆಟ್ಟವಾಗಿದ್ದರೂ ಅಷ್ಟೇ ಅಸ್ಥೆಯಿಂದ ನೋಡುತ್ತೇನೆ, ಅಥವಾ ಇನ್ಯಾರಾದರೂ ಶಿಫಾರಸ್ಸು ಮಾಡಿದ್ದರೆ ಏನಾದರೂ ಇದ್ದೀತೋ ಎಂದು ಕಾದು ನೋಡುತ್ತೇನೆ. ಇಷ್ಟೆಲ್ಲ ಹೇಳಿದ ಮೇಲೆ ನಾನು ಒಂದು ಸಿನಿಮಾದ ಬಗ್ಗೆ ಬರೆದೆನೆಂದು ಅದನ್ನು ವಿಮರ್ಶೆ ಎಂದು ಯಾರೂ ಕರೆಯದಿದ್ದರೆ ಸಾಕು!

ಟರ್ಮಿನಲ್ ಸಿನೆಮಾದಲ್ಲಿ ಅಂಥಾದ್ದೇನೂ ಇಲ್ಲ - ವಿಕ್ಟರ್ ಅನ್ನೋ ಒಬ್ಬ ಕ್ರಕೋಝಿಯಾ ದೇಶದ ಪ್ರವಾಸಿ ಜೆ.ಎಫ್.ಕೆ. ಏರ್‌ಪೋರ್ಟಿನಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಾನೆ - ಒಂದು ಕಡೆ ಮಿಲಿಟರಿ ಸಂಘರ್ಷಗಳಿಂದ ಅರಾಜಕತೆ ಬೆಳೆದು ಅವನ ಪಾಸ್‌ಪೋರ್ಟ್ ವೀಸಾಕ್ಕೆ ಯಾವುದೇ ಬೆಲೆ ಉಳಿಯೋದಿಲ್ಲ ಆದ್ದರಿಂದ ಅವನ ಇಮಿಗ್ರೇಷನ್ ಸ್ಟೇಟಸ್ ತೀರ್ಮಾನವಾಗೋವರೆಗೆ ಅವನು ಏರ್‌ಪೋರ್ಟಿನಲ್ಲೇ ಕಳೆಯುತ್ತಾನೆ. ಆಗಿನ ಬೆಳವಣಿಗೆ ಅವನು ತನ್ನದೇ ಒಂದು ಪ್ರಪಂಚವನ್ನು ಅಲ್ಲಿ ನಿರ್ಮಿಸಿಕೊಳ್ಳುವುದು ಮುಂತಾದವುಗಳು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ರಂಜಿಸುತ್ತವೆ. ಒಂದೇ ವಾರದಲ್ಲಿ ಅದು ಹೇಗೆ ಇಂಗ್ಲೀಷ್ ಕಲಿತು ಬಿಡುತ್ತಾನೆ ಅನ್ನೋ ತರ್ಕಗಳನ್ನೆಲ್ಲ ಬದಿಗಿಟ್ಟು ನೋಡಿದರೆ 'ಓಕೆ' ಎನ್ನಬಹುದಾದ ಸಿನಿಮಾವನ್ನು ನಿರ್ದೇಶಿಸಿದ ಸ್ಟೀವನ್ ಸ್ಪೀಲ್‌‍ಬರ್ಗ್ ಅಂಥಾದ್ದೆನೂ ಪರಿಣಾಮವನ್ನು ನನ್ನ ಮೇಲೆ ಈ ಸಿನಿಮಾದ ಮೂಲಕ ಬೀರಲಿಲ್ಲ ಆದರೆ ಟಾಮ್ ಹ್ಯಾಂಕ್ಸ್ ನ ನಟನೆ ಮಾತ್ರ ಅದ್ಭುತವಾಗಿ ಬಂದಿದೆ. ಅವನು ವಿಕ್ಟರ್ ನವೋರ್‌ಸ್ಕಿಯ ಪಾತ್ರಕ್ಕೆ ಖಂಡಿತವಾಗಿ ನ್ಯಾಯವನ್ನು ಒದಗಿಸಿದ್ದಾನೆ. ಈ ಸಿನಿಮಾವನ್ನು ನೋಡುವವರೆಗೂ ಟಾಮ್ ಹ್ಯಾಂಕ್ಸ್ ಎಂದರೆ ಅಷ್ಟಕಷ್ಟೇ ಅನ್ನೋನು ಅವನ್ ಫ್ಯಾನ್ ಆಗಿ ಹೋಗಿದ್ದೇನೆ. ಆದರೆ ನಾನು ಮೇಲೆ ಬಿದ್ದೇನೂ ಟಾಮ್ ಹ್ಯಾಂಕ್ಸ್‌ನ ಬೇರೆ ಸಿನಿಮಾಗಳನ್ನೇನೂ ನೋಡಿಲ್ಲ, ನೋಡೋದೂ ಇಲ್ಲ - ಯಾವತ್ತಾದರೂ ಅವನ ಸಿನಿಮಾಗಳು ಬಂದಾಗ ಪುರುಸೊತ್ತಿದ್ದರೆ ನೋಡಿದರಾಯಿತು ಎಂದು ಸುಮ್ಮನಿದ್ದೇನೆ.


ನಾನು ಒಮ್ಮೆ ಫ್ರ್ಯಾಂಕ್‌ಫರ್ಟ್ ಏರ್‌ಪೋರ್ಟಿನಲ್ಲಿ ಪೈಲಟ್‌ಗಳು ಮುಷ್ಕರ ಮಾಡಿದ್ದರಿಂದ ಅರ್ಧ ದಿನ ಸಿಕ್ಕಿ ಹಾಕಿಕೊಂಡಿದ್ದೆ. ಆಗ ಅಲ್ಲಿ ಏರ್‌ಪೋರ್ಟಿನಲ್ಲಿ ಓದಲು ಬರೆಯಲು ಬೇಕಾದಷ್ಟು ವಸ್ತುಗಳಿದ್ದರೂ ನಾನು ಒಂದು ಕಡೆ ಕುಳಿತು ಅಲ್ಲಿ ಟರ್ಮಿನಲ್‌ನಲ್ಲಿ ಬಂದು ಹೋಗುವ ಪ್ರಯಾಣಿಕರನ್ನೆಲ್ಲ ಗಮನಿಸುತ್ತಿದ್ದೆ. ಎಷ್ಟೋ ತರಾವರಿ ಮುಖಗಳ ದರ್ಶನವಾಗಬೇಕೆಂದರೆ ಒಂದು ಅಂತಾರಾಷ್ಟ್ರೀಯ ಏರ್‌ಪ್ರೋರ್ಟಿಗಿಂತಲೂ ಮತ್ತ್ನಿನ್ಯಾವ ಪ್ರಶಸ್ತ ಸ್ಥಳ ಬೇಕು? ಬರೀ ಅಲ್ಲಿ ಹೋಗಿ ಬರುವವರ ಮುಖಗಳನ್ನು ಓದುತ್ತಾ ಹೋದರೆ ಒಂದೆರಡು ಘಂಟೆಗಳಲ್ಲಿ ಎಂತಹವನೂ ಮನಶಾಸ್ತ್ರಜ್ಞನಾಗಬಹುದು! ಕೆಲವು ಮುಖಗಳಲ್ಲಿ ತೀಕ್ಷ್ಣವಾದ ನೋವಿನ ಗೆರೆಗಳು, ಇನ್ನು ಕೆಲವು ಮುಖಗಳಲ್ಲಿ ಅನಿಶ್ಚಯತೆ. ಕೆಲವು ಜನರಲ್ಲಿ ಸಂಭ್ರಮ, ಇನ್ನು ಕೆಲವರಲ್ಲಿ ಕೊರಗು ಮುಂತಾಗಿ ಎಷ್ಟೋ ವಿಧವಿಧವಾದ ಜನರನ್ನು ಅಲ್ಲಿ ಗುರುತಿಸುತ್ತಿದ್ದೆ - ಅವರನ್ನೆಲ್ಲ ನೇರವಾಗಿ ನೋಡದಂತೆ ಕಪ್ಪು ಗಾಜಿನ ಕನ್ನಡಕ ಸಹಾಯ ಮಾಡಿತ್ತು. ಕೈಯಲ್ಲಿ ಓದುವುದಕ್ಕೆ ಯಾವುದಾದರೂ ವೃತ್ತಪತ್ರಿಕೆಯೋ ಮತ್ತೊಂದೋ ಇದ್ದೇ ಇರುತ್ತೆ ಆದರೆ ಒಂದು ಏರ್‌ಪೋರ್ಟಿನಲ್ಲಿ ಬಂದು ಹೋಗುವ ನಾನಾ ದೇಶದ ಜನರು ಒಂದೇ ಕಡೆ ನೋಡಲು ಸಿಗುವುದು ಅಪರೂಪ. ಅಲ್ಲಲ್ಲಿ ನಡೆದಾಡುವ ಜನರನ್ನು ಗುರುತಿಸಿಕೊಂಡು ಇವರು ಯಾವ-ಯಾವ ದೇಶದವರಿದ್ದಿರಬಹುದು, ಮಂಗನಿಂದ ಮಾನವನಾಗಿ ಬೆಳೆದ/ಬೆಳೆಯುತ್ತಿರುವ ನಮ್ಮ ಪರಂಪರೆಯಲ್ಲಿ ಇವರ ತಳಿ ಎಲ್ಲಿ ಇದ್ದಿರಬಹುದು, ಕೆಲವರ ಮುಖ ಲಕ್ಷಣಗಳು ಹೀಗೇಕೆ, ಅವರ ಮೈ ಬಣ್ಣವನ್ನು ನೋಡಿ ಭೂಮಿಯ ಸಮಭಾಜಕ ವೃತ್ತದಿಂದ ಅವರು ಅಥವಾ ಅವರ ಪೋಷಕರು ಹುಟ್ಟಿದ ದೇಶ ಎಷ್ಟು ದೂರವಿದ್ದಿರಬಹುದು ಮುಂತಾದವುಗಳನ್ನು ಕೂಲಂಕಷವಾಗಿ ಹಿಡಿದು ಯೋಚಿಸುವುದರಲ್ಲೇ ಸಾಕಾಗಿ ಹೋಗುತ್ತದೆ. ಕಪ್ಪು, ಬಿಳಿ, ಕಂದು, ಹಳದಿ, ಕೆಂಪು ಮುಂತಾದ ಚರ್ಮದ ಬಣ್ಣದವರ ಮಿಶ್ರ ಸಂತಾನಗಳಂತೂ ಇನ್ನೂ ಕುತೂಹಲವನ್ನು ಹುಟ್ಟುಸುತ್ತವೆ.

ನನಗೆ ಕನೆಕ್ಷನ್ ಫ್ಲೈಟ್ ತಪ್ಪಿ ಹೋಗದೇ ಇದ್ದು ನನ್ನ ಫ್ಲೈಟ್ ತಡವಾದರೆ ಒಂದಿಷ್ಟು ಹೊತ್ತು ಏರ್‌ಪೋರ್ಟ್‌ನಲ್ಲಿ ಕಳೆಯುವುದಕ್ಕೆ ಯಾವ ಬೇಸರವೂ ಇಲ್ಲ. ದಿನ ಬೆಳಗಾದರೆ ಕಂಪ್ಯೂಟರ್ ಪರದೆ ಅಥವಾ ಪುಸ್ತಕ/ಪೇಪರ್‌‌ಗಳಲ್ಲಿ ತಲೆ ಹುದುಗಿಸಿಕೊಳ್ಳುವ ನನಗೆ ಅದು ಜನರೊಡನೆ ಬೆರೆಯಲು, ಜನರ ಬಗ್ಗೆ ತಿಳಿದುಕೊಳ್ಳಲು ಮತ್ತೊಂದು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದಲೇ ಡಿಲೇ ಅನ್ನೋದು ನನ್ನ ದೃಷ್ಟಿಯಿಂದ ಕೆಟ್ಟದಂತೂ ಅಲ್ಲ!

Thursday, June 15, 2006

ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಲೋಕ ಕಲ್ಯಾಣ

ರೀಟೈಲ್ ವ್ಯವಹಾರ ಮಾಡೋದು ಅಂದರೆ ಹೋಲ್‌ಸೇಲ್‌ನಲ್ಲಿ ವಸ್ತುಗಳನ್ನು ಕೊಂಡು ಸ್ವಲ್ಪ ಮಾರ್ಜಿನ್‌ನಲ್ಲಿ ವಸ್ತುಗಳಿಗೆ ಬೆಲೆ ಹೆಚ್ಚಿಸಿ ಬಂದ ಆ ಹೆಚ್ಚಳದಲ್ಲಿ ಖರ್ಚುಗಳನ್ನು ಕಳೆದು ಲಾಭಾಂಶ ಪಡೆಯುವುದು ಎಂದುಕೊಂಡಿದ್ದವನಿಗೆ ನಮ್ಮೂರುಗಳಲ್ಲಿ ವ್ಯವಹಾರ ಮಾಡುವವರು ಈ ಮಾರ್ಜಿನ್‌ಗಿಂತಲೂ ಹೆಚ್ಚು ಹಣವನ್ನು ಮೋಸಮಾಡಿಯೇ ಪಡೆಯುತ್ತಾರೆಂಬುದು ನನಗೆ ಗೊತ್ತಿತ್ತಾದರೂ ಅದನ್ನು ಎದುರಿಸಿ ಪ್ರಶ್ನೆಗಳನ್ನು ಕೇಳುವ ಧೈರ್ಯ ಬಂದಿದ್ದು ಇತ್ತೀಚೆಗೆ ಎಂದೇ ಹೇಳಬೇಕು. ಆದರೆ ಇಂತಹ ವರ್ತಕರಲ್ಲಿ ಮೋಸ ಮಾಡುವ ಪ್ರವೃತ್ತಿ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಮೋಸ ಮಾಡುವುದು ಅವರ ವಹಿವಾಟಿನ ಒಂದು ದೊಡ್ಡ ಅಂಗವಾಗಿಬಿಟ್ಟು, ಅದಕ್ಕೆ ಅಡ್ಡ ಬಂದವರನ್ನು ಬಾಯಿಗೆ ಬಂದಂತೆ ಬಯ್ಯುವುದು ಕೆಲವು ಕಡೆಗಳಲ್ಲಿ ಕೈ ಮುಂದು ಮಾಡುವವರೆಗೂ ಹೋಗುತ್ತದೆ. ವ್ಯವಹಾರದಲ್ಲಿ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದಾದರೂ ಈ ಕೆಳಗಿನವು ಹೆಚ್ಚು ಪ್ರಸ್ತುತವೆನಿಸುತ್ತವೆ:

೧) ಬೆಂಗಳೂರಿನ ಸಂಜಯ ನಗರದಲ್ಲಿ ಮಾರ್ವಾಡಿ ಅಂಗಡಿಯೊಂದಕ್ಕೆ ಅದೇನೇನೋ ಕಾಸ್ಮೆಟಿಕ್ಸ್ ಹಾಗೂ ಬಹುಪಯೋಗಿ ಪದಾರ್ಥಗಳನ್ನು ಖರೀದಿಸುವುದಕ್ಕೆ ನಾವು ನಮ್ಮ ಮನೆಯಿಂದ ಮೂರ್ನಾಲ್ಕು ಜನರು ಹೋಗಿದ್ದೆವು. ಅಂಗಡಿಯವನು ನಮ್ಮ ಮನೆಯವರಿಗೆಲ್ಲ ಪರಿಚಯದವನಂತೆ, ಬೆಂಗಳೂರಿನಲ್ಲಿ ಅದೆಷ್ಟೋ ವರ್ಷಗಳಿಂದ ಅಂಗಡಿಯನ್ನು ಹಾಕಿ ಮನೆ-ಮಠ ಕಟ್ಟಿಸಿಕೊಂಡಿದ್ದರೂ ಆತ 'ಕನ್ನಾಡ್' ಮಾತನಾಡುವುದು ಅಷ್ಟಕಷ್ಟೇ ಎನ್ನುವುದು ಕೇಳಿ ನನಗೆ ಸ್ವಲ್ಪ ಬೇಸರವಾಗಿತ್ತು, ಆದರೂ ಸುಮ್ಮನಿದ್ದೆ. ಕೆಲವೊಂದು ವಸ್ತುಗಳ ಮೇಲೆ 'ಲೋಕಲ್ ಟ್ಯಾಕ್ಸೂ ಸೇರಿದೆ' ಎಂದು ನಮೂದಿಸಿರುತ್ತಾರಾದ್ದರಿಂದ (ಆಗಿನ್ನೂ ವ್ಯಾಟ್ ಇದ್ದಿರಲಿಲ್ಲ), ಕೆಲವೊಂದು ವಸ್ತುಗಳ ಬೆಲೆ ಅವುಗಳ ಮೇಲೆ ಮುದ್ರಿತವಾದದ್ದನ್ನು ಕೊಡುವಂತೆಯೂ, ಇನ್ನು ಕೆಲವು ವಸ್ತುಗಳ ಮೇಲೆ ನಮ್ಮ ಮನೆಯವರು ಚೌಕಾಶಿಯನ್ನು ಮಾಡಿ ಕೊನೆಗೆ ಬಿಲ್ ಕೊಡುವ ಹೊತ್ತಿಗೆ ನಾನು 'ರಶೀದಿ' ಕೊಡಿ ಎಂದೆ. ಅಂಗಡಿಯವನು ಶಿಸ್ತಾಗಿ ಒಂದು ಹಳದಿ ಬಣ್ಣದ ಸಣ್ಣ ನೋಟ್ ಪುಸ್ತಕವೊಂದರಲ್ಲಿ ಒಂದು ಹಾಳೆಯಲ್ಲಿ ಕೊಂಡ ವಸ್ತುಗಳ ಹೆಸರನ್ನು ಅವನ ಬ್ರಹ್ಮ ಲಿಪಿಯಲ್ಲಿ ಗೀಚಿ ಅದರ ಮುಂದೆ ಇಂತಿಷ್ಟು ಹಣ ನಮೂದಿಸಿ ಪುಟ್ಟ ಕ್ಯಾಲ್ಕ್ಯುಲೇಟರ್ ಸಹಾಯದಿಂದ ಅದನ್ನು ಟೋಟಲ್ ಮಾಡಿ ನನಗೆ ಕೊಡಲು ಮುಂದೆ ಬಂದ, ನಾನು ಅಲ್ಲಿಯವರೆಗೂ ಸುಮ್ಮನಿದ್ದವನು 'ಇದು ರಶೀದಿಯಲ್ಲ, ನನಗೆ ನಿಜವಾದ ರಶೀದಿ ಬೇಕು' ಎಂದಿದ್ದಕ್ಕೆ ಅಂಗಡಿಯವನು ನನ್ನಿಂದ ಈ ಮಾತನ್ನು ನಿರೀಕ್ಷಿಸಿಲ್ಲವಾದ್ದರಿಂದ ಹಾಗೂ ಅವನ ದಿನನಿತ್ಯದ 'ವ್ಯವಹಾರ'ಕ್ಕೆ ಇದು ಭಿನ್ನವಾದ್ದರಿಂದ 'ರಶೀದಿ ಕೊಡುತ್ತೇನೆ, ಅದರ ಮೇಲೆ ಟ್ಯಾಕ್ಸ್ ಕೊಡಬೇಕಾಗುತ್ತದೆ' ಎಂದ. ನಾನು 'ಆಗಲಿ' ಎಂದಿದ್ದಕ್ಕೆ ನಮ್ಮ ಮನೆಯವರು ಟ್ಯಾಕ್ಸಿನ ವಿಷಯ ಬಂದಾಗ ಇನ್ಯಾರು ಹೆಚ್ಚಿಗೆ ಹಣಕೊಡುವವರು ಎಂದು ನನ್ನನ್ನು ಪ್ರಶ್ನಿಸಿದರೂ ನಾನು 'ಪರವಾಗಿಲ್ಲ ಬಿಡಿ' ಎಂದಿದ್ದರಿಂದ ಅಂಗಡಿಯವನು ಸ್ವಲ್ಪ ನಾನ್ನ ಮೇಲೆ ಸಿಟ್ಟನ್ನು ಮಾಡಿಕೊಂಡು ಒಳಗಡೆಯಿಂದ ರಶೀದಿಯ ಪುಸ್ತಕವನ್ನು ಬರೆಸಿ, ಟ್ಯಾಕ್ಸೂ ಸೇರಿ ನಿಜವಾದ ರಶೀದಿ ಕೊಟ್ಟನು. ನಾನು 'ಈಗಾಗಲೇ ಕೆಲವೊಂದು ವಸ್ತುಗಳ ಮೇಲೆ ಲೋಕಲ್ ಟ್ಯಾಕ್ಸು ಸೇರಿಸಿರೋದರಿಂದ ಆ ಐಟಮ್ಮುಗಳಿಗೆ ಮತ್ತೆ ಹೆಚ್ಚಿನ ಟ್ಯಾಕ್ಸು ಕೊಡಬೇಕಾಗಿಲ್ಲ, ಲೆಕ್ಕ ತಪ್ಪಾಗಿದೆ' ಎಂದಿದ್ದಕ್ಕೆ ಅಂಗಡಿಯವನಿಗೂ ನಮ್ಮ ಮನೆಯವರಿಗೂ ನನ್ನ ಮೇಲೆ ನಿಜವಾಗಿ ಸಿಟ್ಟುಬಂದಿದ್ದು ಅವರ ಮುಖಗಳಲ್ಲಿ ಕಾಣುತ್ತಿತ್ತು. ಅವನು ಒಟ್ಟು ಮೊತ್ತ ಹಾಕಿದ ರಶೀದಿಯಲ್ಲಿ ಕೊನೆಗೆ ಹೆಚ್ಚಿಗೆ ಸೇರಿಸಿದ ಟ್ಯಾಕ್ಸನ್ನು ಅವನ ಕಾರ್ಬನ್ ಕಾಪಿಯಲ್ಲೂ ಮೂಡುವಂತೆ ಕಳೆದು ಕೊನೆಗೆ ಹಣವನ್ನು ಕೊಟ್ಟಾಗ ಅಂಗಡಿಯವನಿಗೆ ಸುಸ್ತಾಗಿ ಹೋಗಿತ್ತು. ನಮ್ಮ ಮನೆಯವರಿಗೆ ಇಷ್ಟು ಹೊತ್ತು ಅಂಗಡಿಯಲ್ಲಿ ಸಾಮಾನುಗಳನ್ನು ನೋಡುವಾಗ ತಡವಾಗದಿದ್ದುದು ಈಗ ರಶೀದಿ ಹಾಕುವಾಗ ಆದ ವಿಳಂಬದಿಂದ ನಾನು ಅವರ ಸಮಯವನ್ನು ತಿಂದೆನೆಂದು ಆಡಿಕೊಂಡರು, ಅಲ್ಲದೇ 'ಈ ಅಂಗಡಿಯವನು ನಮಗೆ ವರ್ಷಗಳಿಂದಲೂ ಗೊತ್ತು, ಅವನು ಯಾವಾಗಲೂ ನಮಗೆ ಕಡಿಮೆ ಬೆಲೆಗೇ ಕೊಡೋದು, ಹಾಗೆ ಅಂಥವರನ್ನು ಎದುರು ಹಾಕಿಕೊಳ್ಳಬಾರದು' ಎಂದು ನನಗೆ ಉಪದೇಶವನ್ನೂ ಮಾಡಿದರು. ನಾನು 'ಹೌದಾ' ಎಂದು ಸುಮ್ಮನಾದೆ. (ಇಷ್ಟೂ ಮಾಡಿ ಅವನ ಬಳಿ ಸಿ.ಎಸ್.ಟಿ., ಕೆ.ಎಸ್.ಟಿ. ಮುದ್ರಿತವಾಗಿರೋ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂದು ಎರಡು ರಶೀದಿ ಪುಸ್ತಕಗಳಿದ್ದರೆ ಅದಕ್ಕೆ ನಾನು ತಾನೇ ಏನು ಮಾಡಲು ಸಾಧ್ಯ?)

೨) ನನ್ನ ಅಣ್ಣನ ಲಾರಿಯಲ್ಲಿ ಒಂದು ದಿನ ಸಾಮಾನುಗಳನ್ನು ಸಾಗಿಸಿ ಬರಲು ಹೋಗಿದ್ದೆ. ಡ್ರೈವರ್ ಬದಲಿಗೆ ಅಣ್ಣನೇ ಲಾರಿ ಚಲಾಯಿಸುತ್ತಿದ್ದ, ಯಾರದ್ದೋ ಒಂದಿಷ್ಟು ಸಾಮಾನುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಾಡಿಗೆಗೆ ಹೊಡೆಯಬೇಕಾದಂತಹ ಸಣ್ಣ ವ್ಯವಹಾರವದು. ಸಾಮಾನುಗಳನ್ನು ಲೋಡ್ ಮಾಡಿಕೊಂಡು ತೆಗೆದುಕೊಂಡು ಹೋಗಿ ಅಲ್ಲಿ ಇಳಿಸಿ ಬಂದಿದ್ದಕ್ಕೆ ಗುತ್ತಿಗೆ ಆಧಾರದ ಮೇಲೆ ಇಷ್ಟು ಎಂದು ಮೊದಲೇ ಮಾತನಾಡಿಕೊಂಡಿದಷ್ಟು ಹಣವನ್ನು ತೆಗೆದುಕೊಂಡು ಬಂದರೆ ಆಯಿತು, ಅತ್ಯಂತ ಸರಳವಾದ ಈ ವ್ಯವಹಾರದಲ್ಲಿ ಎಲ್ಲವೂ ಕ್ಯಾಶ್ ಮೂಲಕವೇ ನಡೆಯೋದಾದ್ದರಿಂದ ಯಾವ ರಶೀದಿಯಂತೂ ಸಿಗೋದಿಲ್ಲ, ಇನ್ನು ಯಾರಾದರೂ ಟ್ಯಾಕ್ಸ್ ಕಟ್ಟುವ ಮಾತು ಹಾಗಿರಲಿ! ಆ ಕಡೆಯವರು ಸಾಮಾನುಗಳನ್ನು ಇಳಿಸಿಕೊಂಡು ಹಣವನ್ನು ಎಣಿಸಿಕೊಡುವಾಗ ಅವರ ಕಣ್ತಪ್ಪಿನಿಂದಲೋ, ಅಥವಾ ತಪ್ಪು ಲೆಕ್ಕದಿಂದಲೋ ನೂರು ರೂಪಾಯಿಗಳನ್ನು ನನ್ನ ಅಣ್ಣನಿಗೆ ಹೆಚ್ಚು ಕೊಟ್ಟುಬಿಟ್ಟರು. ಅವರು ಹಣವನ್ನು ಎಣಿಸುತ್ತಿರುವಾಗ ನಾನೂ ಎಣಿಸಿಕೊಂಡಿದ್ದೆನಾದ್ದರಿಂದ ಹೆಚ್ಚಿದ್ದದ್ದು ನನಗೂ ಗಮನಕ್ಕೆ ಬಂತು ಆದರೆ ನಿಖರವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ, ಅಲ್ಲದೇ ದುಡ್ಡು ತೆಗೆದುಕೊಳ್ಳುತ್ತಿರುವವನು ನಾನಲ್ಲ ಎಂದು ಸುಮ್ಮನಿದ್ದೆ. ನನ್ನ ಅಣ್ಣನಿಗೆ ದುಡ್ಡಿನ ವ್ಯವಹಾರ ಮಾಡುವಾಗ ಮಾತನಾಡಬೇಡವೆಂದು ಸಾವಿರ ಬಾರಿ ಹೇಳಿದರೂ ಅವನು ಲೋಕಾಭಿರಾಮವಾಗಿ ಒಂದಲ್ಲ ಒಂದು ಹರಟೆಯನ್ನು ಕೊಚ್ಚುತ್ತಲೇ ಹಣವನ್ನು ಕೊಟ್ಟು ತೆಗೆದುಕೊಳ್ಳುತ್ತಾನಾದ್ದರಿಂದ ಅವನ ಲೆಕ್ಕದಲ್ಲಿ ಬೇಕಾದಷ್ಟು ತಪ್ಪುಗಳನ್ನು ನಾನು ಎಷ್ಟೋ ಸಲ ಎದುರೆದುರೇ ತೋರಿಸಿದ್ದೇನೆ, ಅದರೂ ಅವನ ಬುದ್ಧಿ ಬದಲಾಗೋದಿಲ್ಲ - ಅಲ್ಲದೇ ಅವನು ಹಾಗೆ ಕಳೆದುಕೊಳ್ಳುವ ಹಣಕ್ಕೂ, ಕೆಲವೊಮ್ಮೆ ಹೆಚ್ಚಾಗಿ ಸಿಗುವ ಹಣಕ್ಕೂ ಎಲ್ಲೋ ಒಂದು ಸಮೀಕರಣವಿದ್ದಿರಲೇ ಬೇಕು ಎಂದು ನನಗೂ ಅನ್ನಿಸಿಬಿಟ್ಟಿದೆ! ನನ್ನ ಅಣ್ಣ ಹಣವನ್ನು ಎಣಿಸಿದಂತೆ ಮಾಡಿ ತನ್ನ ಅಂಗಿ ಜೇಬಿನಲ್ಲಿ ಸೇರಿಸಿಕೊಂಡು ತನ್ನ ಹರಟೆಯ ಮಧ್ಯೆಯೇ 'ಬರ್ತೇವೆ' ಹೇಳಿ ನಾವಿಬ್ಬರೂ ಲಾರಿಯ ಕಡೆಗೆ ನಡೆದೆವು. ಲಾರಿಯ ಒಳಗೆ ಕೂರುತ್ತಿದ್ದಂತೆ 'ಅವರು ನಿನಗೆ ಒಂದು ನೋಟನ್ನು ಹೆಚ್ಚಿಗೆ ಕೊಟ್ಟಿದ್ದಾರೆ ಅಂತ ಕಾಣ್ಸುತ್ತೆ, ಎಣಿಸಿ ನೋಡು, ಇದ್ದರೆ ಕೊಟ್ಟು ಬಿಡು ಪಾಪ' ಎಂದೆ, ನನ್ನ ಅಣ್ಣ ಎಣಿಸಿದ, ನಿಜವಾಗಿಯೂ ನೂರು ರೂಪಾಯಿ ಅವರು ಕೊಡಬೇಕಾದುದಕ್ಕಿಂತಲೂ ಹೆಚ್ಚಿತ್ತು - ಆದರೆ ನನ್ನ ಅಣ್ಣ 'ಹೋಗೋ, ನಾವೇನಾದ್ರೂ ಹೆಚ್ಚಿಗೆ ಕೊಟ್ರೆ ಅವರೇನಾದ್ರೂ ವಾಪಾಸ್ ಕೊಡ್ತಾರೆ ಅಂತ ತಿಳಕಂಡಿದೀಯಾ, ಸತ್ಯವಂತ್ರ ಕಾಲ ಹೋಯ್ತು!' ಅಂದು ಬಿಡಬೇಕೆ! ನಾನು 'ಹಾಗಲ್ಲ, ಪ್ರಾಮಾಣಿಕವಾಗಿರಬೇಕಾದ್ದು ನಿನ್ನ ಧರ್ಮ, ಅವರು ಏನಾದ್ರೂ ಮಾಡಿಕೊಳ್ಳಲಿ' ಎಂದರೂ ಕೇಳದೆ ಅಣ್ಣ ಗಾಡಿಯನ್ನು ಚಲಾಯಿಸಿ ಮರು ಮಾತನಾಡದೇ ಹಿಂತಿರುಗಿ ಬಂದೇ ಬಿಟ್ಟ.

***

ಅಮೇರಿಕಕ್ಕೆ ಬಂದ ಹೊಸತರಲ್ಲಿ ನಾನು ಒಂದು ಡಾಲರ್ ಬದಲಿಗೆ ಸೂಪರ್ ಮಾರ್ಕೆಟ್‌ನಲ್ಲಿ ನೂರು ಡಾಲರನ್ನು ತಪ್ಪಿಕೊಟ್ಟಿದ್ದನ್ನು ನೆನಪಿಸಿ ಪದೇ-ಪದೇ ಕೇಳಿದಾಗಲು ಕೌಂಟರ್ ಕ್ಲರ್ಕ್ ಇಲ್ಲ ಎಂದು ಸಾಧಿಸಿಕೊಂಡಿದ್ದರಿಂದ ನಾನು ಹಣವನ್ನು ಕಳೆದುಕೊಂಡಿದ್ದೆ, ಆಗೆಲ್ಲ ಕಷ್ಟಮರ್ ಸರ್ವೀಸ್ ಡಿಪಾರ್ಟ್‌ಮೆಂಟ್ ಇದೆಯೆನ್ನುವುದೂ ನನಗೆ ಗೊತ್ತಿರಲಿಲ್ಲವಾದ್ದರಿಂದ ಸುಮ್ಮನೇ ಪೆಚ್ಚು ಮೋರೆ ಹಾಕಿಕೊಂಡು ಹೊರಬಂದದ್ದು ನನಗೆ ಬೇಸರ ತರಿಸಿದ್ದರೂ ನನ್ನ ಜೊತೆಯವರಿಗೆ ಹಲವು ದಿನಗಳ ಮಟ್ಟಿಗಾದರೂ ಖುಷಿಯ ವಿಷಯವಾಗಿತ್ತು.

ನನ್ನದೊಂದು ನಂಬಿಕೆ ಇದೆ - ನಮ್ಮೂರಿನ ರಿಟೈಲ್ ವರ್ತಕರು ನ್ಯಾಯವಂತರಾದರೆ ಸರ್ಕಾರದ ಬೊಕ್ಕಸ ತೆರಿಗೆಯ ಹಣದಿಂದ ತುಂಬಿ ತುಳುಕುತ್ತದೆ, ಅದರಿಂದ ಲೋಕ ಕಲ್ಯಾಣವಾಗುತ್ತದೆ ಎಂದು - ಇದು ನನ್ನ ಭ್ರಮೆ ಇದ್ದಿರಲೂ ಬಹುದು.

Wednesday, June 14, 2006

ಕಡಿಮೆ ಜನರು ಬಳಸುವ ಹೆಚ್ಚಿನ ಸಂಪನ್ಮೂಲಗಳು

ಆಫೀಸಿನಲ್ಲಿ ನಾನು ಕೂರುವಲ್ಲಿಂದ ಸುಮಾರು ಹತ್ತು ಅಡಿ ದೂರದಲ್ಲಿ ಮೈಕಲ್ ಕುಳಿತುಕೊಳ್ಳುತ್ತಾನೆ, ಆತ ಪ್ರತಿದಿನವೂ ಆಫೀಸಿಗೆ ಬಂದ ಕೂಡಲೇ ತನ್ನ ಮೇಜಿನ ಮೇಲಿರುವ ಎರಡು ಟ್ಯೂಬ್‌ಲೈಟುಗಳನ್ನು ಹೊತ್ತಿಸುತ್ತಾನೆ, ಹಾಗೆಯೇ ಪ್ರತಿದಿನವೂ ಮನೆಗೆ ತೆರಳುವಾಗ ಅವುಗಳನ್ನು ಆರಿಸಿ ಹೋಗುತ್ತಾನೆ. ನನ್ನ ಮೇಜಿನ ಮೇಲೂ ಈ ರೀತಿಯದ್ದೇ ಆದ ಎರಡು ಟ್ಯೂಬ್‌ಲೈಟ್‌ಗಳಿದ್ದರೂ ನನಗೆ ಅವುಗಳನ್ನು ಹೊತ್ತಿಸಬೇಕು ಎನ್ನುವ ಅವಶ್ಯಕತೆ ಅಥವಾ ಅಗತ್ಯ ಬಂದಿಲ್ಲವೆನ್ನುವುದಕ್ಕಿಂತಲೂ ಹಾಗೆ ಹೊತ್ತಿಸುವ ಮನಸ್ಸಿಲ್ಲವೆಂದೇ ಹೇಳಬೇಕು. ನನ್ನ ಪ್ರಕಾರ ಸೀಲಿಂಗ್‌ನಲ್ಲಿ ತೊಡಗಿಸಿರುವ ಅನೇಕ ಲೈಟುಗಳ ಬೆಳಕೇ ಬೇಕಾದಷ್ಟಿರುವಾಗ ಇನ್ನೂ ಹೆಚ್ಚಿನ ಬೆಳಕೇಕೆ ಎಂದು ನಾನು ಅಲ್ಲಿ ಇರುವ ಬೇಕಾದಷ್ಟು ಬೆಳಕಿಗೆ ಹೊಂದಿಕೊಂಡಿದ್ದೇನೆ. ಇದೇ ರೀತಿ ನಾವಿರುವ ವಠಾರದಲ್ಲಿ ಹೆಚ್ಚೂ-ಕಡಿಮೆ ಎಲ್ಲ ಮನೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ದೀಪಗಳು ಉರಿಯುತ್ತಿರುವಂತೆ ಕಂಡು ಬಂದರೂ ಕೆಲವೊಂದು ಮನೆಗಳಲ್ಲಿ ಎಷ್ಟೋ ಸಾರಿ ದೀಪಗಳನ್ನು ದಿನಗಟ್ಟಲೇ ಆರಿಸದೇ ಇರುವುದನ್ನೂ ನೋಡಿದ್ದೇನೆ.

ನನ್ನ ಹಾಗೆ ಹೆಚ್ಚಿನ ಭಾರತೀಯರು ನಂಬಿಕೊಂಡಿರುವ ಹಾಗೂ ಆಚರಿಸುವ ಹಾಗೆ ನಾವು ಎಷ್ಟು ಬೇಕೋ ಅಷ್ಟು ಸಂಪನ್ಮೂಲವನ್ನು ಮಾತ್ರ ಬಳಸುವುದನ್ನು ರೂಢಿಸಿಕೊಂಡಿದ್ದೇವೆ, ಆದರೆ ಈ ದೇಶದ ನನ್ನ ಸಹೋದ್ಯೋಗಿಗಳಲ್ಲಿ ಕೆಲವರಿಗೆ ತಾವು ರೀಮುಗಟ್ಟಲೇ ಪೇಪರನ್ನು ತೆಗೆದು ಕಸದ ಬುಟ್ಟಿಗೆ ಸುರಿಯುವಾಗ, 'ನಮ್ಮದಲ್ಲದ' ಸಂಪನ್ಮೂಲಗಳನ್ನು ಧಾರಾಳವಾಗಿ ಬಳಸುವಾಗ 'ಅಯ್ಯೋ' ಅನ್ನಿಸುವುದೇ ಇಲ್ಲ. ಎಲ್ಲರೂ ಹೀಗಿರುತ್ತಾರೆ ಎಂದು ಜನರಲೈಸ್ ಮಾಡುವುದು ತಪ್ಪಾಗುತ್ತದೆ, ಆದರೆ ಇಲ್ಲಿಯವರಿಗೆ 'ಬಡತನದಲ್ಲಿ ಬದುಕುವುದು' ಹೇಗೆ ಅನ್ನೋದು ನಮಗೆ ಗೊತ್ತಿದ್ದಷ್ಟು ಚೆನ್ನಾಗಿ ಗೊತ್ತಿಲ್ಲ ಎಂದು ಹೇಳಿದರೆ ತಪ್ಪೇನೂ ಆಗಲಾರದು.

ನಾವು ಹಾಸ್ಟೆಲಿನಲ್ಲಿದ್ದುಕೊಂಡು ಓದುತ್ತಿರುವಾಗ ನಮ್ಮಲ್ಲಿ ಎರಡು ಬಣಗಳಾಗುತ್ತಿದ್ದವು - ಒಂದು ಬಣದವರು ನಾವು ಬಾಡಿಗೆ ಕಟ್ಟುವುದಿಲ್ಲವೇ ಎಷ್ಟು ಲೈಟ್ ಉರಿಸಿದರೆ ನಮಗೇನಂತೆ ಎಂದೂ, ಮತ್ತೊಂದು ಬಣದವರು ನಾವು ಬಾಡಿಗೆ ಕಟ್ಟಿದ ಮಾತ್ರಕ್ಕೆ ಅನಗತ್ಯವಾಗಿ ಏಕೆ ಲೈಟ್ ಉರಿಸಬೇಕು ಎಂದೂ ವಾದವಾಗುತ್ತಿತ್ತು. ನಾನು ಮೇಲಿನ ವಾದದಲ್ಲಿ ಎರಡನೇ ಬಣಕ್ಕೆ ಸೇರಿಕೊಳ್ಳುತ್ತಿದ್ದೆ. ಒಂದು ಯೂನಿಟ್ ಕರೆಂಟು ಉಳಿಸಿದರೆ ಎರಡು ಯೂನಿಟ್ ಕರೆಂಟನ್ನು ಉತ್ಪಾದಿಸಿದ ಹಾಗೆ, ಒಂದು ಯೂನಿಟ್ ಕರೆಂಟು ಉತ್ಪಾದಿಸಲು ಸರ್ಕಾರಕ್ಕೆ ಎಷ್ಟೊಂದು ಹಣ ಖರ್ಚಾಗುತ್ತದೆ, ಇತ್ಯಾದಿ ಇತ್ಯಾದಿಯಾಗಿ ನಮ್ಮ ವಾದಗಳು ಹಬ್ಬಿಕೊಳ್ಳುತ್ತಿದ್ದವು. ಯಾವ ವಾದ ಹೇಗೆ ಹಬ್ಬಿದರೂ ನಾವು ಒಂದು ಕೋಣೆಯಲ್ಲಿದ್ದರೆ ಆ ಕೋಣೆಗೆ ಒಂದು ದೀಪಕ್ಕಿಂತ (ಬಲ್ಬ್) ಹೆಚ್ಚಿಗೆ ಇರುತ್ತಿರಲಿಲ್ಲ. ಅದೇ ಇಲ್ಲಿಗೆ ಬಂದ ಮೇಲೆ ಆಫೀಸಿನ ಕಟ್ಟಡಗಳಲ್ಲಿ ಕೋಣೆಯ ಗಾತ್ರದ ಮೇಲೆ ಲೈಟುಗಳ ಸಂಖ್ಯೆಯನ್ನು ನಿಗದಿ ಮಾಡುವುದಕ್ಕಿಂತಲೂ ಇಂತಿಷ್ಟು ದೂರದಲ್ಲಿ ಇಷ್ಟಿಟ್ಟು ಲೈಟುಗಳು ಇರಬೇಕು ಎನ್ನುವ ತರ್ಕದ ಮೇಲೆ ನಮ್ಮ ತಲೆಯ ಮೇಲೆ ಅದೆಷ್ಟೋ ಲೈಟುಗಳು ದಿನದ ಇಪ್ಪತ್ತನಾಲ್ಕು ಘಂಟೆಯೂ ಉರಿಯುತ್ತಿರುತ್ತವೆ. ಆಫೀಸಿನ ಮುಖ್ಯ ಸ್ಥಳಗಳಲ್ಲಿ ಹೇಗೋ ಹಾಗೆಯೇ ರೆಸ್ಟ್‌ರೂಮುಗಳಲ್ಲೂ ಸಹ ಸದಾ ಜಗಮಗಿಸುವ ಹಾಗೆ ಒಂದಿಪ್ಪತ್ತು ಟ್ಯೂಬ್‌ಲೈಟ್‌ಗಳಾದರೂ ಉರಿಯುತ್ತಿರುತ್ತವೆ.

ನಮ್ಮ ದೇಶದಲ್ಲಿ ಪದೇ-ಪದೇ ಕರೆಂಟು ಹೋಗುವುದೂ, ವೋಲ್ಟೇಜ್ ಏರಿಳಿತದಿಂದಾಗಿ ಪರಿಕರಗಳು ಸುಟ್ಟು ಹೋಗುವುದೂ, 'ಹೆಣ್ಣು ಹುಟ್ಟಿದೋರ ಮನೆ ದೀಪದ ಹಾಗೆ' ಒಂದು ರೂಮಿಗೆ ಒಂದೇ ಎಂಬಂತೆ ನಲವತ್ತೋ ಅರವತ್ತೋ ವ್ಯಾಟಿನ ಬಲ್ಬುಗಳು ಮಿಣಿಮಿಣಿ ಉರಿಯುವುದೆಲ್ಲವೂ ನಮ್ಮಲ್ಲಿ ಸರ್ವ ಸಾಮಾನ್ಯವಾಗಿದ್ದರೂ ಇಲ್ಲಿಯವರಿಗೆ ಎಷ್ಟೇ ವಿವರಿಸಿ ಹೇಳಿದರೂ ಅರ್ಥವಾಗುವುದಿಲ್ಲ. ಇವತ್ತಿಗೂ ಕೂಡ ಎಷ್ಟೋ ಜನರು ಇನ್ನೂ ಸೀಮೆ ಎಣ್ಣೆ ದೀಪದ ಬುಡದಲ್ಲೇ ರಾತ್ರಿಗಳನ್ನು ಕಳೆಯೋದೂ ಇದೆ. ಇವೆಲ್ಲವನ್ನೂ ನೆನಪಿಸಿ ನಮ್ಮ ದೇಶ ಬಡದೇಶ ಎಂದು ಹೀಯಾಳಿಸುವುದು ನನ್ನ ಇಂಗಿತವಲ್ಲ, ಬದಲಿಗೆ ಈ ಶ್ರೀಮಂತ ದೇಶದಲ್ಲಿರೋ ಸುಮಾರು ಮುನ್ನೂರು ಮಿಲಿಯನ್ ಜನರು ಪ್ರಪಂಚದಲ್ಲಿ ಬಳಸಬಹುದಾದ ಕಾಲುಭಾಗದಷ್ಟು ವಿದ್ಯುತ್ ಹಾಗೂ ಇತರ ಸಂಪನ್ಮೂಲಗಳನ್ನು ಬಳಸುವುದನ್ನು ನೋಡಿದರೆ ಶಾಕ್ ಆಗುತ್ತದೆ. ನನ್ನ ರಷಿಯನ್ ಸಹೋದ್ಯೋಗಿ ಬೋರಿಸ್ ತನಗೆ ಬರುವ ಹೆಚ್ಚೂಕಡಿಮೆ ಎಲ್ಲಾ ಇ-ಮೇಲ್‌ಗಳನ್ನೂ ಪ್ರಿಂಟ್ ಹಾಕಿ ತನ್ನ ಡೆಸ್ಕ್ ಮೇಲೆ ರಾಶಿ ಏರಿಸಿಕೊಂಡು ಅವುಗಳನ್ನು ಒಂದೊಂದಾಗೇ ಓದಿ ರಿಸೈಕಲ್ಡ್ ಬಿನ್‌ಗೆ ಬಿಸಾಡುವುದನ್ನು ನೋಡಿದಾಗಲೆಲ್ಲ ಅವನು ಪ್ರತಿನಿತ್ಯ ಅದೆಷ್ಟೋ ಗಿಡಮರಗಳನ್ನು ಕೊಲ್ಲುತ್ತಾನೆ ಎಂದು ನನಗೆ ಅನ್ನಿಸುವುದರಲ್ಲಿ ತಪ್ಪು ಕಾಣಿಸುವುದಿಲ್ಲ.

ಪ್ರಪಂಚದ ಕೇವಲ ಐದು ಪರ್‌ಸೆಂಟಿನಷ್ಟು ಇರುವ ಅಮೇರಿಕನ್ನರಲ್ಲಿ ನಾನೂ ಒಬ್ಬನಾಗಿ ಹೋಗಿದ್ದೇನೆ:
ಜನರಿಗೊಂದೊಂದು ಕಾರು; ಅಗತ್ಯವೋ ಇಲ್ಲವೋ ತಿಂದು ಚೆಲ್ಲುವಷ್ಟು ಆಹಾರ ಪದಾರ್ಥಗಳು; ಬೇಕಾಬಿಟ್ಟಿ ಚೆಲ್ಲುವ ನೀರು, ಸದಾ ಉರಿಸುವ ವಿದ್ಯುತ್ (ಹೀಟರ್ ಅಥವಾ ಏರ್‌ಕಂಡೀಷನರ್, ವಾಟರ್ ಹೀಟರ್, ಇತ್ಯಾದಿಗಳು ಎಂದೂ ಕೆಲಸ ನಿಲ್ಲಿಸಿದ್ದಿಲ್ಲ); ಬಾಯಿ ಒರೆಸೋದರಿಂದ ಹಿಡಿದು ಮತ್ತೇನೆಲ್ಲ ಒರಿಸುವುದರವರೆಗೆ ಉಪಯೋಗಿಸುವ, ಬೇಕಾದಷ್ಟು ಬರೆದು, ಮುದ್ರಿಸಿ, ಹರಿದು ಬಿಸಾಡುವ ಪೇಪರುಗಳು. ಪ್ರೆಟ್ರೋಲ್ ಬೆಲೆ ಐದು ಡಾಲರ್ ಆಗಬಹುದಾದಂತಹ ಜಿಯೋ ಪೊಲಿಟಿಕಲ್ ವಿಷಯಗಳನ್ನು ಅರಿತು ಸ್ಪಂದಿಸದಿರುವ ಸಾಕಷ್ಟು ಜನರು ಹಣದ ಕೊರತೆಯಿಂದ ಬಡತನವನ್ನು ಕಂಡವರೇ ವಿನಾ ಸಂಪನ್ಮೂಲಗಳ ಕೊರತೆಯಿಂದಲ್ಲ. ಹನಿಹನಿಗೂಡಿದರೆ ಹಳ್ಳವೆಂದು ಗೊತ್ತಿದ್ದರೂ ಸೂಕ್ಷತೆಗಳನ್ನೆಲ್ಲ ಕೊಡವಿಕೊಂಡು (ಹಾಗೆ ಮಾಡುವುದು ಸುಲಭವಾದ್ದರಿಂದ) ಎಲ್ಲರಲ್ಲಿ ಒಂದಾಗಿ ಬದುಕುತ್ತೇನೆ.

ನಾನು ಪ್ರತೀದಿನ ರೆಕಾರ್ಡ್ ಮಾಡಿ ವಾರಕ್ಕೆರಡು ಬಾರಿ ನೋಡುವ ಬಿಬಿಸಿ ವರ್ಲ್ಡ್ ಸರ್ವೀಸ್ ಸುದ್ದಿಗಳಲ್ಲಿ ಆಫ್ರಿಕಾದಲ್ಲಿ ಸಾವಿರಾರು ಮಕ್ಕಳು ಹಸಿವಿನಿಂದ, ಬಾಯಾರಿಕೆಯಿಂದ ಸಾಯುವುದನ್ನು ನೋಡಿ ನೋಡಿಯೂ ಮೊದಲೆಲ್ಲ ಆಗುತ್ತಿದ್ದ ಸ್ಪಂದನಗಳು ಆಗುವುದೇ ಇಲ್ಲ - ಹಾಗೆ ಮೊದಲಿನ ಸ್ಪಂದನಗಳಿಂದ ಆಗಿದ್ದಾದರೂ ಏನು ಎಂಬ ಧ್ವನಿ ಹತ್ತಿರದಲ್ಲೇ ಎಲ್ಲೋ ಕೇಳಿಬಂದಾಗುತ್ತದೆ.

Tuesday, June 13, 2006

ಒಂದು ಸುಳ್ಳು ಸೃಷ್ಟಿಸಿದ ಹದಿನೈದು ತಿಂಗಳ ಒದ್ದಾಟ!

ನಮ್ಮ ಕಂಪನಿಯಲ್ಲಿ ೨೦೦೦ ದಿಂದ ಇತ್ತೀಚೆಗೆ ಪ್ರಮೋಷನ್‌ಗಳನ್ನು 'ಕೊಡು'ವುದನ್ನು ಕಡಿಮೆ ಮಾಡಿಬಿಟ್ಟರು - ಅದಕ್ಕೆ ಬೇಕಾದಷ್ಟು ಕಾರಣಗಳನ್ನು ಗುರುತಿಸಿಕೊಂಡು ಸಮಾಧಾನ ಹೇಳಿಕೊಳ್ಳಬಹುದಾದರೂ ಕೊನೆಯಲ್ಲಿ ಫಲಿತಾಂಶ 'ಪ್ರಮೋಷನ್' ಸಿಗದೇ ಹೋಗಿದ್ದಕ್ಕೆ ೨೦೦೧ ರ ನಂತರ ಮಾಹಿತಿ ತಂತ್ರಜ್ಞಾನದ ಕೆಲಸಗಳನ್ನು ಭಾರತಕ್ಕೆ ಕಳಿಸುವುದು, ದೊಡ್ಡ ಕಂಪನಿಯ ಐ.ಟಿ. ಬಜೆಟ್ ಚಿಕ್ಕದಾದದ್ದು ಹಾಗೂ ಪ್ರಮೋಷನ್ ಸಿಗುವುದಕ್ಕೆ ಇರುವ ತೀವ್ರ ಪೈಪೋಟಿ ಮುಂತಾದವುಗಳನ್ನು ಹೆಸರಿಸಬಹುದು. ಒಂದೇ ನಾನಿದ್ದ ಇಲಾಖೆಯಲ್ಲಿ ನನ್ನನ್ನು ಗುರುತಿಸಿ ಅವರು ಮೇಲಕ್ಕೆ ತರಬೇಕು, ಇಲ್ಲಾ ನಾನೇ ಪ್ರಮೋಷನ್ ಆಗಬಹುದಾದ ಒಂದು ಯಾವುದಾದರೂ ಅವಕಾಶವನ್ನು ನನ್ನ ಸದುದ್ದೇಶಕ್ಕೆ ಬಳಸಿಕೊಂಡು ಬೇರೆಡೆಯೆಲ್ಲಾದರೂ ಕೆಲಸಗಿಟ್ಟಿಸಿಕೊಳ್ಳಬೇಕು - ಇವೆರಡೂ ಹೇಳುವುದಕ್ಕೆ ಮಾತ್ರ ಸುಲಭವೇ ವಿನಾ ಮಾಡಿ ತೋರಿಸುವುದು ಅಷ್ಟೇ ಕಷ್ಟ.

ಇಲ್ಲಿನ ಕೆಲವು ಕಂಪನಿಗಳಲ್ಲಿ ಮಾಡಿದ ಹಾಗೆ ನಮ್ಮ ಕಂಪನಿಯಲ್ಲೂ ವರ್ಷಕ್ಕೆ ಎರಡು ಬಾರಿ ಪರ್‌ಫಾರ್‌ಮೆನ್ಸ್ ಇವ್ಯಾಲ್ಯುಯೇಷನ್ ನಡೆಯುತ್ತದೆಯಾದ್ದರಿಂದ ವರ್ಷದ ಎರಡು ಅವಧಿಗಳಲ್ಲೂ ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಹೆಸರನ್ನು ತೆಗೆದುಕೊಂಡು ಸಂಪನ್ನನಾದರೂ ವರ್ಷದ ಕೊನೆಯಲ್ಲಿ ಪ್ರಮೋಷನ್‌ಗೆ ಅಭ್ಯರ್ಥಿಗಳನ್ನು ಗೊತ್ತು ಮಾಡುವ 'ರೇಟಿಂಗ್ ಮತ್ತು ರ್‍ಯಾಂಕಿಂಗ್'ನಲ್ಲಿ ಆಗುವ ಕಥೆಯೇ ಬೇರೆ. ಚೆನ್ನಾಗಿ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಬೋನಸ್ಸೂ, ಇಂಕ್ರಿಮೆಂಟೂ ಸಿಗುತ್ತದಾದರೂ ಅವ್ಯಾವುದೂ ಪ್ರಮೋಷನ್ನಿನ ಹಾಗಲ್ಲ. ಒಮ್ಮೆ ಪ್ರಮೋಷನ್ ಬಂದಿತೆಂದರೆ ಅದರಿಂದಾಗುವ ಅನುಕೂಲಗಳೇ ಬೇರೆ, ಅದು ಮುಂದೆ ಹೋಗಲು ಸಹಾಯಮಾಡುವುದೂ ಅಲ್ಲದೇ ಹೆಚ್ಚು-ಹೆಚ್ಚು ಜವಾಬ್ದಾರಿಯುತ ಕೆಲಸಗಳನ್ನು ಮಾಡಿ, ಒಳ್ಳೆಯ ಕೆಲಸಗಳನ್ನು ಮಾಡಿ ಇನ್ನಷ್ಟು ಹೆಸರನ್ನು ಗಳಿಸಬಹುದು. ಆದರೆ ಈ ವರ್ಷಕ್ಕೆರಡು ಬಾರಿ ಆಗುವ ಇವ್ಯಾಲ್ಯುಯೇಷನ್‌ಗಳ ಉದ್ದೇಶವೇ ಬೇರೆ - You are as good as your last assignment ಅನ್ನೋ ಹಾಗೆ ಪ್ರತೀ ಆರು ತಿಂಗಳಿಗೊಮ್ಮೆ ನನ್ನ ಮೇಲೆ ಉಳಿದವರೆಲ್ಲರು ಇಟ್ಟಿರುವ ನಂಬಿಕೆಗಳನ್ನು ಪುನರ್‌ವಿಮರ್ಶೆಗೊಳಪಡಿಸಲಾಗುತ್ತದೆ. ಮುಂದೆ ಬರುವ ಅಡೆತಡೆಗಳನ್ನೆಲ್ಲ ಯಶಸ್ವಿಯಾಗಿ ಜಯಿಸಿದರೆ ಮಾತ್ರ ಪ್ರಮೋಷನ್ನೋ ಮತ್ತೊಂದೋ ಸಿಕ್ಕು ಮುಂದೆ ಹೋಗಬಹುದು.

೧೯೯೭ ರಲ್ಲೇ ನನ್ನ ಯೂಕ್ರೇನಿಯನ್ ಸಹೋದ್ಯೋಗಿ ಆಂಟೋನೀನಾ ಹೇಳಿದ್ದಳು 'ಅಮೇರಿಕದಲ್ಲಿ ನಿನ್ನ ಯೋಗಕ್ಷೇಮವನ್ನು ನೀನೇ ನೋಡಿಕೋಬೇಕು, ಇಲ್ಲಿ ಯಾರೂ ನಿನ್ನ ಆರೈಕೆ ಮಾಡೋದಿಲ್ಲ' ಎಂದು, ಆಗ ನಾವಿಬ್ಬರೂ ಕನ್ಸಲ್‌ಟೆಂಟ್‌ಗಳಾಗಿ ಕೆಲಸಮಾಡುತ್ತಿದ್ದೆವಾದ್ದರಿಂದ ನನ್ನ ಕ್ಲೈಂಟಿನ ಆಫೀಸಿನ ರಾಜಕೀಯ ನಮ್ಮನ್ನು ಅಷ್ಟೊಂದು ಬಾಧಿಸುತ್ತಿರಲಿಲ್ಲವಾದರೂ ಪದೇ-ಪದೇ ಇತರ ಸಹೋದ್ಯೋಗಿಗಳು ರೆಡ್‌ಟೇಪಿಸಂ, ಅಫೀಸಿನ ರಾಜಕೀಯದ ಬಗ್ಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದ ಹಲವಾರು ಸಂದರ್ಭಗಳಲ್ಲಿ ನಾನು ಕನ್ಸಲ್‌ಟೆಂಟ್ ಆಗೇ ಮುಂದುವರೆದರೆ ಎಷ್ಟೋ ಚೆನ್ನ ಎಂದು ಅನ್ನಿಸಿದ್ದೂ ಇದೆ. ಆದರೆ ಕನ್ಸಲ್‌ಟೆಂಟ್ ಆದರೆ ಅನುಕೂಲಗಳು ಇದ್ದಹಾಗೆ ಅನಾನುಕೂಲಗಳೂ ಇಲ್ಲದೇನಿಲ್ಲ, ಅದರ ಮೇಲೆ ಮುಂದೆಲ್ಲಾದರೂ ಬರೆಯುತ್ತೇನೆ.

ಈ ದಿನ ಮೈಸೂರಿನಲ್ಲಿ ಕುಳಿತು ನಮ್ಮ ಕಂಪನಿಗೆ ಕೆಲಸ ಮಾಡುತ್ತಿರುವ ತರುಣ ಮಿತ್ರನೊಬ್ಬ ತನಗೆ ಇತ್ತೀಚಿನ ಫರ್‌ಫಾರ್ಮೆನ್ಸ್ ಇವ್ಯಾಲ್ಯುಯೇಷನ್‌ನಲ್ಲಿ ಕಡಿಮೆ ರೇಟಿಂಗ್‌ನ್ನು ಕೊಟ್ಟಿದ್ದಾರೆ ಎಂದು ತನ್ನ ಕಷ್ಟವನ್ನು ನನ್ನಲ್ಲಿ ಚಾಟ್ ಮೂಲಕ ತೋಡಿಕೊಂಡ. ತನ್ನನ್ನು ಒಂದು ವ್ಯವಸ್ಥಿತ ಜಾಲದಲ್ಲಿ ಸಿಕ್ಕಿಸಿ ಈ ರೀತಿ ಮಾಡಲಾಗಿದೆಯೆಂದು ಬೇಸರ ಪಟ್ಟುಕೊಂಡಿದ್ದ, ನಾನು ವಿವರವನ್ನು ಕೇಳಲಾಗಿ, ಅವನ ಕೆಲಸದ ಬಗ್ಗೆ ಅವನ ಹಳೆಯ ಬಾಸನ್ನು ಸ್ವಲ್ಪವೂ ಸಂಪರ್ಕಿಸದೆ ಎಲ್ಲ ನಿರ್ಧಾರವನ್ನೂ ಈ ಹೊಸ ಬಾಸೇ ಮಾಡಿರೋದರಿಂದ ಹೀಗಾಯಿತು, ನನ್ನ ಹೊಸ ಬಾಸಿಗೆ ನನ್ನ 'ನಡವಳಿಕೆ' ಬಗ್ಗೆ ಅಷ್ಟೊಂದು ಚೆನ್ನಾಗಿ ಗೊತ್ತಿಲ್ಲದ್ದರಿಂದ ಹೀಗೆ ರೇಟಿಂಗ್ ಅನ್ನು ಕೊಟ್ಟಿದ್ದಾರೆ ಎಂದ. ಕಳೆದ ವರ್ಷದ ನಮ್ಮ ಕಂಪನಿಯ ಎಕ್ಸೆಕ್ಯುಟಿವ್ ಒಬ್ಬರು ತಮ್ಮ ಅಣಿಮುತ್ತುಗಳನ್ನು ಸುರಿಸುವಾಗ ಹೇಳಿದ "If you are mad at someone else, it is generally because YOU haven't done something." ಎನ್ನುವ ಹೇಳಿಕೆಯನ್ನು ಅವನಿಗೆ ಹೇಳಿ ನಿನ್ನ ಮೊದಲಿನ ಮ್ಯಾನೇಜರನ್ನು ಕ್ಯಾಂಟ್ಯಾಕ್ಟ್ ಮಾಡಿ, ಅವರಿಗೆ ಈ ಹೊಸ ಮ್ಯಾನೇಜರ್ ಬಗ್ಗೆ ಈ ಮೊದಲೇ ಹೇಳಿದ್ದರೆ ಒಳ್ಳೆಯದಿತ್ತು, ಅಥವಾ ಈ ಹೊಸ ಮ್ಯಾನೇಜರ್‌ಗೆ ನಿನ್ನ ಹಳೆಯ ಕೆಲಸಗಳ ವಿವರಗಳನ್ನು ನೀನೇ ಕೊಡಬಹುದಿತ್ತು ಎಂದೆ. ಅದನ್ನು ಕೇಳಿ ಅವನು ಆ ಕಡೆ ಏನು ಮಾಡಿದನೋ ಗೊತ್ತಿಲ್ಲ, ಸ್ವಲ್ಪ ಹೊತ್ತಿನಲ್ಲೆ 'ನನ್ನನ್ನು ಮತ್ತೊಮ್ಮೆ ಇವ್ಯಾಲ್ಯುಯೇಟ್ ಮಾಡುತ್ತಾರಂತೆ!' ಎಂದು ಹೇಳಿದ, ನಾನು 'ಒಳ್ಳೆಯದಾಗಲಿ' ಎಂದು ಚಾಟ್ ಸಂಬಂಧವನ್ನು ಕತ್ತರಿಸಿಕೊಂಡೆ.

***

೨೦೦೫ ರ ಜನವರಿಯಲ್ಲಿ ನನಗೂ ಒಂದು ಪ್ರೊಮೋಷನ್ ಅವಕಾಶ ಬಂದಿತ್ತು, ನಾನು ಅಂದು ಪಡೆಯಬಹುದಾದ ಕೆಲಸಕ್ಕೆ ಹನ್ನೊಂದು ಜನರನ್ನು ಇಂಟರ್‌ವ್ಯೂವ್ ಮಾಡಿದ್ದರು. ಅದೇ ಕಂಪನಿಯಲ್ಲಿ ಬೇರೆ ಗ್ರೂಪಿನ ಕೆಲಸವಾದ್ದರಿಂದ ತುಂಬಾ ರಿಗರಸ್ ಆಗಿ ಇಂಟರ್‌ವ್ಯೂ ಸಹ ಮಾಡಿದ್ದರು. ಡಿಸೆಂಬರ್ ೨೯, ೨೦೦೪ ರಂದು ನಡೆದ ೯೦ ನಿಮಿಷಗಳ ಇಂಟರ್‌ವ್ಯೂವ್ ನಲ್ಲಿ ನಾನು ಚೆನ್ನಾಗಿಯೇ ಮಾತನಾಡಿದ್ದೆ ಎಂದುಕೊಂಡು ಸ್ವಲ್ಪ ಆಸೆಗಳನ್ನೂ ಎತ್ತರಕ್ಕೆ ಏರಿಸಿಟ್ಟುಕೊಂಡಿದ್ದೆ. ಸಂದರ್ಶನ ನಡೆದ ದಿನ ಹಾಗೂ ಸಂದರ್ಶನ ನಡೆದ ಒಂದು ವಾರದ ತರುವಾಯ 'ಪುಸ್ತಕದಲ್ಲಿ ಬರೆದಂತೆ' ನ್ಯಾಯವಾಗಿ ಫಾಲೋ ಅಪ್ ಮಾಡಿದ್ದೆನಾದರೂ 'ನಿನ್ನನ್ನು ಆಯ್ಕೆ ಮಾಡಿಲ್ಲ' ಎಂದು ಎಲ್ಲಿಯೂ ಕೇಳಿ ಬರದಿದ್ದುದರಿಂದ ಆ ಹೊಸ ಕೆಲಸ ಇನ್ನೇನು ಸಿಕ್ಕೇ ಬಿಟ್ಟಿತು ಎಂದು ಕನಸನ್ನೂ ಕಾಣತೊಡಗಿದೆ, ಆದರೆ ಆದದ್ದೇ ಬೇರೆ.

ನಮ್ಮ ಆಫೀಸಿನಲ್ಲಿ ಪ್ರತಿಯೊಂದು ಆಂತರಿಕ ಕೆಲಸಗಳ ಬದಲಾವಣೆಯ ಸಂದರ್ಭದಲ್ಲಿ ಹಯರಿಂಗ್ ಮ್ಯಾನೇಜರ್ ಕರೆಂಟ್ ಮ್ಯಾನೇಜರ್ ಅವರ ಅನುಮತಿಯನ್ನು ಪಡೆದೇ ಮುಂದೆ ಸಾಗಬೇಕು ಎಂಬ ನಿಯಮವಿದೆ, ಹಾಗೂ ಸಿಗಬೇಕಾದ ಕೆಲಸ ಪ್ರಮೋಷನ್ ಅವಕಾಶವಾದರೆ ಹೇಳುವಂತಹ ಮಹಾನ್ ಕಾರಣಗಳನ್ನು ಸರಿಯಾಗಿ ಡಾಕ್ಯುಮೆಂಟ್ ಮಾಡದೇ ನಿರಾಕರಿಸಬಾರದು ಎಂಬ ನಿಯಮವೂ ಇದೆ. ನಾನು ಇದ್ದ ಪರಿಸ್ಥಿತಿಯಲ್ಲಿ ನನ್ನ 'ಬಿಡುಗಡೆ'ಗೆ ಯಾವ ತೊಂದರೆಯೂ ಇದ್ದಿರಲಿಲ್ಲವಾದ್ದರಿಂದ ಕರೆಂಟ್ ಮ್ಯಾನೇಜರ್‌ಗೆ ನಾನೇನೂ ಹೊಸ ಕೆಲಸ ಸಿಗಬಹುದಾದ ಬಗ್ಗೆ ಹೇಳಲಿಲ್ಲ. ಡಿಸೆಂಬರ್ ೨೯ ರಿಂದ ಕಾದದ್ದಕ್ಕೆ ಪ್ರತಿಫಲವೆಂಬುವಂತೆ ಜನವರಿ ೧೯ ನೇ ತಾರೀಖು ನನಗೆ ಹೊಸ ಕೆಲಸದ ಹಯರಿಂಗ್ ಡೈರೆಕ್ಟರ್‌ರಿಂದ ಒಂದು ಇ-ಮೇಲ್ ಬಂದಿತು. ಅದರ ಪ್ರಕಾರ ಹೊಸ ಕೆಲಸಕ್ಕೆ ನನ್ನ ಆಯ್ಕೆಯಾಗಿರಲಿಲ್ಲ. ನಾನು ತುಂಬಾ ನಿರಾಶೆಯಿಂದ 'ನನ್ನನ್ನು ಆಯ್ಕೆ ಮಾಡದಿರುವುದಕ್ಕೆ ಏನು ಕಾರಣ, ದಯವಿಟ್ಟು ಫೀಡ್‌ಬ್ಯಾಕ್ ಕೊಡಿ' ಎಂದು ಇ-ಮೇಲ್‌ಗೆ ಉತ್ತರ ಬರೆದಿದ್ದಕ್ಕೆ ಅದೇ ದಿನ ಸಂಜೆ ಆರೂ ಮೂವತ್ತರ ಮೇಲೆ ಆ ಡೈರೆಕ್ಟರ್ ಕಾಲ್ ಮಾಡಿದ್ದರಿಂದ ಮರುದಿನ ವಾಯ್ಸ್ ಮೆಸ್ಸೇಜನ್ನು ಕೇಳಿ ಇನ್ನಷ್ಟು ಕುಗ್ಗಿ ಹೋದೆ, ಆ ವಾಯ್ಸ್ ಮೆಸ್ಸೇಜಿನ ಪ್ರಕಾರ ಈ ಡೈರೆಕ್ಟರ್ 'ನಿನ್ನ ಇಂಟರ್‌ವ್ಯೂವ್ ಚೆನ್ನಾಗಿ ಆಗಿತ್ತು, ನಿನ್ನ ಬಿಡುಗಡೆಯ ಬಗ್ಗೆ ನನ್ನ ಕರೆಂಟ್ ಬಾಸಿನ ಬಳಿ ಕೇಳಿದ್ದಕ್ಕೆ ಆಕೆ ಇನ್ನಾರು ತಿಂಗಳು ಬಿಡುಗಡೆ ಆಗುವುದಿಲ್ಲವೆಂದು ಹೇಳಿಬಿಟ್ಟಳು, ನಮಗೆ ಇನ್ನಾರು ತಿಂಗಳು ತಡೆಯಲು ಸಾಧ್ಯವಿರದಿದ್ದುದರಿಂದ ನಿನ್ನ ನಂತರದ ಒಬ್ಬ ಕ್ಯಾಂಡಿಡೇಟನ್ನು ತೆಗೆದುಕೊಂಡಿದ್ದೇವೆ' ಎಂದಿತ್ತು. ನನಗೆ ನಿರಾಶೆ, ಕೋಪ, ಸಂಕಟವೆಲ್ಲ ಒಟ್ಟೊಟ್ಟಿಗೆ ಆಗ ತೊಡಗಿದವು, ಆ ಕೂಡಲೇ ನನಗೆ ಸಿಕ್ಕ ಮಹತ್ವಪೂರ್ಣ ಅವಕಾಶವೊಂದನ್ನು ನಿರಾಕರಿಸಿದ ನನ್ನ ಬಾಸನ್ನು ಫೋನ್ ಮಾಡಿ ಮನಪೂರ್ವಕವಾಗಿ ಬೈದುಬಿಡಲೇ ಎನ್ನಿಸಿದರೂ ವಿವೇಕ ಹಾಗೆ ಮಾಡಗೊಡಲಿಲ್ಲ.

ಆ ವಾರ ಪೂರ್ತಿ, ಅದರ ಮುಂದಿನ ಒಂದೆರಡು ವಾರ ಏನೇನು ಮಾಡಬಹುದು ಎಂದೆಲ್ಲ ಯೋಚಿಸತೊಡಗಿದೆ. ನಮ್ಮ ಕಂಪನಿಯ ಹ್ಯೂಮನ್ ರಿಸೋರ್ಸ್‌ನ ಒಂದೆರಡು ಜನರನ್ನೂ, ಕಂಪನಿಯ ಒಳಗೆ ಹಾಗೂ ಹೊರಗೆ ಇರುವ ಸ್ನೇಹಿತರನ್ನೂ ಕೇಳಿ ನನ್ನ ಆಪ್ಷನ್‌ಗಳು ಏನೇನು ಎಂದು ಲೆಕ್ಕ ಹಾಕತೊಡಗಿದೆ. ಕೊನೆಯಲ್ಲಿ ಅಧಿಕೃತವಾಗಿ ಕಂಪ್ಲೇಂಟ್ ಕೊಟ್ಟು ವಿಚಾರಿಸುವ ಮೊದಲೆ ನನ್ನ ಬಾಸನ್ನೊಮ್ಮೆ ಈ ನಿರಾಕರಣೆಯ ಕಾರಣವೇನೆಂದು ಕೇಳೋಣವೆಂದು ತೀರ್ಮಾನಿಸಿ ಒಂದು ಮಧ್ಯಾಹ್ನ ವೈಯುಕ್ತಿಕ ವಿಷಯ ಮಾತನಾಡಬೇಕೆಂದು ಒಂದು ಅಪಾಯಿಂಟ್‌ಮೆಂಟನ್ನೂ ಪಡೆದುಕೊಂಡೆ. ಆದರೆ ನನಗೆ ತುಂಬಾ ಆಶ್ಚರ್ಯ ಕಾದಿತ್ತು, ನನ್ನ ಬಾಸಿಗೆ ಕೇಳಿದೆ - 'ನನ್ನನ್ನೇಕೆ ಬಿಡುಗಡೆ ಮಾಡಲಿಲ್ಲ, ಅದು ಇದ್ದ ಕೆಲಸಗಳಲ್ಲೇ ಅತ್ಯಂತ ಒಳ್ಳೆಯ ಕೆಲಸವಾಗಿತ್ತು' ಎಂದು. ಅದಕ್ಕುತ್ತರವಾಗಿ ಆಕೆ 'ನಾನು ಹಾಗೆ ಹೇಳಿಯೇ ಇಲ್ಲ, ಹಾಗೆ ಹೇಳುವುದೂ ಇಲ್ಲ, ನಿನಗೆ ಒಳ್ಳೆಯದಾಗುತ್ತದೆ ಎಂದರೆ ನಾನೇಕೆ ಅಡ್ಡಿ ಪಡಿಸಲಿ' ಎಂದು ಸುಳ್ಳು ಹೇಳಿಬಿಟ್ಟಳು. ನಾನು ಆಕೆಯ ಎದುರಿನಲ್ಲೇ 'ನೀನು ಹೇಳುತ್ತಿರುವುದು ಸುಳ್ಳು, ಬೇಕಾದರೆ ಈ ಮೆಸ್ಸೇಜನ್ನು ಕೇಳು' ಎಂದು ಆ ಡೈರೆಕ್ಟರ್ ನನಗೆ ಬಿಟ್ಟ ವಾಯ್ಸ್ ಮೆಸ್ಸೇಜನ್ನು ಆಕೆಗೆ ಸ್ಪೀಕರ್ ಫೋನಿನಲ್ಲಿ ಕೇಳಿಸಿದೆ. ಆಕೆಗೆ ಗೊತ್ತಿರಲಿಲ್ಲ ನಾನು ಹೀಗೆ ಹಿಡಿದುಕೊಳ್ಳುತ್ತೇನೆಂದು - ಆಕೆಯ ಕಪ್ಪು ಮುಖ ಇನ್ನಷ್ಟು ಕಪ್ಪಾಯಿತು, ಧ್ವನಿ ಭಾರವಾಯಿತು, ಒಸಡುಗಳು ಕೆಳಕ್ಕೆ ಬಿದ್ದು ಹೋದವು. ನನಗೂ ಹೀಗೆ ಮಾಡಿದೆನಲ್ಲಾ, ಮಾಡಬೇಕಾಯಿತಲ್ಲ ಎಂದು ಬಹಳ ಬೇಸರವಾಗಿ ಹೋಯಿತು. ನಮ್ಮ ನಡುವೆ ಬೇಕಾದಷ್ಟು ಸೈಲೆನ್ಸ್ ಸೃಷ್ಟಿಯಾಗಿ ನಮ್ಮಿಬ್ಬರನ್ನೂ ಅಣಗಿಸತೊಡಗಿತೇ ವಿನಾ ಆಕೆ ಹೀಗೆ ಮಾಡಿದ್ದಕ್ಕೆ ಕ್ಷಮೆ ಕೇಳಲೂ ಇಲ್ಲ, I will make it up to you ಎನ್ನಲೂ ಇಲ್ಲ. ನಾನು ಅಲ್ಲಿ ಇನ್ನೂ ಹೆಚ್ಚು ಹೊತ್ತು ಇದ್ದರೆ ಅನಾಹುತವೇನಾದರೂ ಆಗಬಹುದೇನೋ ಎಂದು ಎದ್ದು ನನ್ನ ಕ್ಯೂಬಿಗೆ ಬಂದೆ.

ಇದಾದ ತರುವಾಯ ನನಗಾದ ಅನ್ಯಾಯಕ್ಕೆ ಪ್ರತೀಕಾರವಾಗಿ ನಾನು ಏನು ಬೇಕಾದರೂ ಮಾಡಬಹುದಿತ್ತು, ಆದರೆ ನನಗೆ ಸಿಗಬಹುದಾದ ಅವಕಾಶ ಈಗಾಗಲೇ ಹೋಗಿಬಿಟ್ಟಿದ್ದರಿಂದ ರಿಯಾಕ್ಷನರಿಯಾಗಿ ಏನು ಮಾಡಿದರೂ ಅದರಿಂದ ಪ್ರಯೋಜನವೇನು ಎಂಬ ಯೋಚನೆಯಿಂದ ನಾನು ಆಕೆಯ ಮೇಲೆ ಯಾವ ಕೇಸನ್ನೂ ಹಾಕಲಿಲ್ಲ. ಆದಷ್ಟು ಬೇಗ ಈ ಟೀಮಿನಿಂದ, ಈ ಬಾಸಿನಿಂದ ಕಳಚಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಿದ್ದಾಗ ನಮ್ಮ ಕಂಪನಿಯಲ್ಲೇ ಹಲವಾರು ಬೆಳವಣಿಗೆಯ ಅವಕಾಶಗಳಲ್ಲಿ ನನಗೆ ಮೋಸ ಮಾಡಿದ ಬಾಸ್ ಭಾಗವಹಿಸುವಂತೆ ಅವಕಾಶ ಮಾಡಿಕೊಟ್ಟಳು. ಅಲ್ಲದೇ ಕಂಪನಿಯ ಒಳಗೇ ಬೇಕಾದಷ್ಟು ಕೆಲಸಗಳು ಇರುತ್ತಿದ್ದವಾದ್ದರಿಂದ ಜನವರಿಯಿಂದ ಜೂನ್ ವರೆಗೆ ಬೇರೆ ಕೆಲಸವನ್ನು ನೋಡೋಣವೆಂದು ಅದರ ಮೇಲೆ ಕೇಂದ್ರೀಕರಿಸಿದೆ.

ಆದರೆ ನಾನು ಅದೆಷ್ಟು ಕೆಲಸಗಳಿಗೆ ಅರ್ಜಿ ಗುಜರಾಯಿಸಿದರೂ ಇಂಟರ್‌ವ್ಯೂವ್ ಅವಕಾಶಗಳು ಬರುವುದು ಕಡಿಮೆಯಾಗತೊಡಗಿತು, ಒಂದೆರಡು ಇಂಟರ್‌ವ್ಯೂವ್ ಬಂದರೂ ಕೆಲಸ ಸಿಗಲಿಲ್ಲ. ಅಂತೂ ಇಂತೂ ಹೀಗೇ ಕೆಲಸ ಹುಡುಕುತ್ತಾ ಹುಡುಕುತ್ತಾ ೨೦೦೫ ಕಳೆದುಹೋಯಿತು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಬೇಸರದಿಂದ ಆಗಾಗ್ಗೆ ಸೇವ್ ಮಾಡಿ, ನನಗೆ ನಾನೇ ಫಾರ್‌ವರ್ಡ್ ಮಾಡಿಕೊಳ್ಳುತ್ತಿದ್ದ ಆ ವಾಯ್ಸ್ ಮೆಸ್ಸೇಜನ್ನು ಕೇಳುತ್ತಿದ್ದೆನಾದರೂ ಅದು ನನ್ನ ಕೊರಗನ್ನು ಹೆಚ್ಚಿಸುತ್ತಿತ್ತೇ ವಿನಾ ಯಾವ ಕೆಲಸವನ್ನು ಪಡೆಯಲು ಸಹಾಯ ಮಾಡಲಿಲ್ಲ. ಹಲವರ ಬಳಿ ಹೀಗಾಯಿತು ಎಂದು ಹೇಳಿಕೊಂಡರೆ ಪರಿಸ್ಥಿತಿಗೆ ತಕ್ಕಂತೆ ಅವರೂ ಪ್ರತಿಕ್ರಿಯೆ ತೋರಿಸಿದರಷ್ಟೆ.

ಕೊನೆಗೆ ೨೦೦೬ ರ ಮಾರ್ಚ್‌ನಲ್ಲಿ ನನಗೆ ಇಷ್ಟವಾದ ಕೆಲಸವೊಂದಕೆ ಅರ್ಜಿ ಗುಜರಾಯಿಸಿದೆ, ಆ ಕೆಲಸ ಎಲ್ಲ ರೀತಿಯಿಂದಲೂ ನನಗೇ ಹೇಳಿ ಮಾಡಿಸಿದ ಹಾಗಿದ್ದುದರಿಂದ ನಾನು ಯಾವ ರೀತಿಯ ಚಾನ್ಸನ್ನೂ ತೆಗೆದುಕೊಳ್ಳಲಿಲ್ಲ. ಆ ಕೆಲಸಕ್ಕೆ ಅರ್ಜಿ ಗುಜರಾಯಿಸುವ ಮುನ್ನ ನನ್ನ ಕರೆಂಟ್ ಬಾಸಿನಿಂದ 'ನಾನು ಬಿಡುಗಡೆಯಾಗಬಹುದು' ಎಂದು ಬರೆಸಿಕೊಂಡಿದ್ದೆ, ಹ್ಯೂಮನ್ ರಿಸೋರ್ಸ್‌ನವನೊಬ್ಬನಿಗೆ ಆ ಇ-ಮೇಲನ್ನು ಫಾರ್‌ವರ್ಡ್ ಮಾಡಿ ಹಿಂದಿನ ಅನುಭವವನ್ನು ಹೇಳಿಕೊಂಡು ಸಮಯ ಬಂದರೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದೆ, ಹೊಸ ಕೆಲಸದ ಇಂಟರ್‌ವ್ಯೂವ್‌ಗೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡು, 'ಪುಸ್ತಕದಲ್ಲಿ ಬರೆದಂತೆ', ಎಲ್ಲ ಸ್ಟೆಪ್‌ಗಳನ್ನೂ ನಿರ್ವಹಿಸಿದ್ದರಿಂದ ಕೊನೆಗೆ ನನಗೆ ಬೇಕಾದ ಕೆಲಸ ಸಿಕ್ಕೇ ಬಿಟ್ಟಿತು! ಮುಂದೆ ಅವರು ಆಫರ್ ಕಳಿಸಿದಾಗ ಈ ಬಾಸ್ ನನ್ನನ್ನು 'ಖುಷಿ'ಯಿಂದಲೇ ಬಿಡುಗಡೆಮಾಡಿದಳು. ಹಾಗೂ ನಾನು ಆಕೆಯ ವಿರುದ್ಧ ಯಾವ ಸೇಡನ್ನೂ ತೀರಿಸಿಕೊಳ್ಳದಿದ್ದುದು ಖಚಿತವಾದ ಮೇಲೆ ನನ್ನ ಅತ್ಯಂತ ಕ್ಲೋಸ್ ಫ್ರೆಂಡೂ ಆಗಿ ಹೋದಳು. ಆದರೆ ಈ ವರೆಗೆ ಎಲ್ಲೂ ಆ ಹಳೆಯ ಘಟನೆಯನ್ನು ಅಪ್ಪಿತಪ್ಪಿಯೂ ನೆನಸುವುದಿಲ್ಲ, ಅವಳು ಮಾಡಿದ ತಪ್ಪಿಗೆ ಕ್ಷಮೆ ಕೇಳಲೂ ಇಲ್ಲ.

ಈ ನನ್ನ ಅನುಭವದಿಂದ ಕೆಲಸ ತೆಗೆದುಕೊಳ್ಳುವುದು ಹೇಗೆ ಎಂದು ಒಂದು ಪುಸ್ತಕವನ್ನು ಬರೆಯಬಲ್ಲೆ, ನನಗೆ ಅನ್ಯಾಯವಾಗಿದ್ದಕ್ಕೆ ನಾನು ಫಾರ್ಮಲ್ ಆಗಿ ಕಂಪ್ಲೇಂಟ್ ಕೊಡದಿರುವುದನ್ನು ಸಾಧಿಸಿಕೊಳ್ಳಬಲ್ಲೆ, ಆದರೆ ಆಕೆ ಹೇಳಿದ ಒಂದೇ ಒಂದು ಸುಳ್ಳಿನಿಂದ ಚೇತರಿಸಿಕೊಳ್ಳಲು ಜನವರಿ ೨೦೦೫ ರಿಂದ ಏಪ್ರಿಲ್ ೨೦೦೬ ರವರೆಗೆ ಹಿಡಿಯಿತು ಎನ್ನುವ ವಿಷಯವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದಾಗೆಲ್ಲ ಹೊಟ್ಟೆ ಕಿವುಚಿದಂತಾಗುತ್ತದೆ.

ಈಗ ನಮ್ಮ ಎಕ್ಸೆಕ್ಯುಟಿವ್ ಹೇಳಿದ "If you are mad at someone else, it is generally because YOU haven't done something" ಸಾಲನ್ನು ಪದೇ-ಪದೇ ನೆನೆಸಿಕೊಂಡು ಒಂದು ಸನ್ನಿವೇಶದ ಔಟ್‌ಕಮ್ ನನ್ನ ನಿರೀಕ್ಷೆಗೆ ತಕ್ಕಂತೆ ಆಗಬೇಕೆಂದುಕೊಂಡು ನನ್ನ ಕೈಯಿಂದ ಏನೇನೆಲ್ಲ ಆಗುತ್ತದೋ ಅದನ್ನೆಲ್ಲ ಮಾಡುತ್ತೇನೆ, ಕೆಲವೊಮ್ಮೆ ಅತಿ ಅಥವಾ ಮೈಕ್ರೋ ಮ್ಯಾನೇಜ್‌ಮೆಂಟ್ ಎನ್ನಿಸಿದರೂ ಫಲಿತಾಂಶ ನಾನು ಅಂದುಕೊಂಡಿದ್ದಕಿಂತ ಭಿನ್ನವಾದರೆ ನನಗೆ ಇನ್ನೊಬ್ಬರ ಮೇಲೆ ಸಿಟ್ಟುಬರುವುದಕ್ಕಿಂತ ಮೊದಲು 'ನಾನೇನು ಮಾಡಬಹುದಿತ್ತು' ಎಂದು ಮತ್ತೊಮ್ಮೆ ಯೋಚಿಸುತ್ತೇನೆ.

Monday, June 12, 2006

ನಮ್ಮ ಮನೆಯಲ್ಲಿ "ಸಾರ್ಥ" ಮರಿ ಹಾಕಿದೆ!

ನಿನ್ನೆ ಮುಂಜಾನೆ ಅಲ್ಲಲ್ಲಿ ಬಿದ್ದು ಒದ್ದಾಡುತ್ತಿದ್ದ ಪುಸ್ತಕಗಳನ್ನೆಲ್ಲ ಒಪ್ಪವಾಗಿ ಇಡುವ ಮನಸ್ಸಾಗಿ ಎಲ್ಲವನ್ನೂ ಜೋಡಿಸಿ ಇಡುತ್ತಿರುವಾಗ ಪುಸ್ತಕಗಳ ಮಧ್ಯೆ "ಸಾರ್ಥ"ವೂ ಸಿಕ್ಕಿತು. ಅದರ ಒಂದು ಪುಟವನ್ನು ಓದಿ ಅದರ ಕಥೆಯನ್ನೆಲ್ಲ ನೆನಪಿಗೆ ತಂದುಕೊಂಡು ಕಪಾಟಿನಲ್ಲಿ ತೆಗೆದಿಟ್ಟೆ. ಇನ್ನೂ ಉಳಿದ ಪುಸ್ತಕಗಳನ್ನೆಲ್ಲ ಜೋಡಿಸುತ್ತಿದ್ದಾಗ ಮತ್ತೆ "ಸಾರ್ಥ" ಸಿಕ್ಕಿತು. ನನಗೆ ಒಮ್ಮೆಗೆ ಇತ್ತೀಚೆಗೆ ಬ್ಲಾಗುಗಳಲ್ಲಿ ಓದಿದ ಭೂತಚೇಷ್ಟೆಯ ನೆನಪಾದರೂ ಕಥೆಯಲ್ಲಿಯ ನಾಗಭಟ್ಟನಿಗಾಗಲೀ, ಭೌದ್ಧ ಭಿಕ್ಷುಗಳಿಗಾಗಲೀ ಧ್ಯಾನದಿಂದ ಅದೇನೇ ಶಕ್ತಿಗಳು ಸಿದ್ಧಿಸಿದ್ದರೂ ಈಗಷ್ಟೇ ತೆಗೆದಿರಿಸಿದ ಪುಸ್ತಕವನ್ನು ಮತ್ತೆ ರಾಶಿಗೆ ತಂದು ಸೇರಿಸಲಾದೀತೇ ಎಂದು ಒಮ್ಮೆ ಅನ್ನಿಸಿದರೂ ನಾನು ನಿದ್ದೆ ಜಾಸ್ತಿ ಮಾಡಿಯೋ ಅಥವಾ ಕಡಿಮೆ ಮಾಡಿದಾಗಲೆಲ್ಲ ಹೀಗೆಲ್ಲ ಆಗುವುದು ಸಹಜವಾದ್ದರಿಂದ ಕಣ್ಣನ್ನು ಒಮ್ಮೆ ನೀವಿಕೊಂಡು ನೋಡಿದೆ - ಏನಾಶ್ಚರ್ಯ ಅದು "ಸಾರ್ಥ"ವೇ!

ಈ ಪುಸ್ತಕವನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡೇ ಮೊದಲು ಇರಿಸಿದ್ದ ಪುಸ್ತಕದ ಬಳಿ ಸಾಗಿದೆ, ನಿಜವಾಗಿಯೂ ನನ್ನ ಕಣ್ಣನ್ನೇ ನಂಬಲಾಗುತ್ತಿಲ್ಲ, ಎರಡು ಪ್ರತಿಗಳಿವೆ! ನನಗೆ ನೆನಪಿದ್ದ ಹಾಗೆ ಬೆಂಗಳೂರಿನಲ್ಲಿ ಕೊಂಡದ್ದು ಒಂದೇ ಪ್ರತಿ, ಅದರಲ್ಲಿ ನನ್ನ ಹೆಸರೂ ಸಹ ಇದೆ, ಆದರೆ ಈ ಪ್ರತಿ ಎಲ್ಲಿಂದ ಬಂತು ಎಂದು ತಿರುತಿರುಗಿಸಿ ನೋಡಿದರೂ ಹೊಳೆಯಲಿಲ್ಲ. ನಾನು ಅವರಿವರಿಗೆ ಕೊಟ್ಟು ಕಳೆದುಕೊಂಡ ಪುಸ್ತಕಗಳ ಸಂಖ್ಯೆಯೇ ಹೆಚ್ಚಾಗಿ ಅವರಿವರಿಂದ ಪಡೆದುಕೊಂಡು ಹಿಂದಕ್ಕೆ ಕೊಡದ ಪುಸ್ತಕಗಳ ಸಂಖ್ಯೆ ಗೌಣವಾಗುವುದರಿಂದ ಮತ್ತಷ್ಟು ಆಶ್ಚರ್ಯವಾಯಿತು. ಬೇರೆ ಯಾರದ್ದಾದರೂ ಎರವಲು ಪಡೆದಿದ್ದೇನೋ ಎಂದು ಎಷ್ಟು ತಲೆತುರಿಸಿಕೊಂಡರೂ ಗೊತ್ತಾಗಲಿಲ್ಲ, ಸರಿ ನನ್ನ ಹೆಂಡತಿಯನ್ನಾದರೂ ಕೇಳೋಣವೆಂದುಕೊಂಡರೆ ಅವಳೂ ಸಹ ಇರಲಿಲ್ಲವಾದ್ದರಿಂದ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವವರೆಗೆ ಸಾಕುಬೇಕಾಗಿ ಹೋಯಿತು. ಸ್ವಲ್ಪ ಹೊತ್ತಿನಲ್ಲಿ ಬಂದ ನನ್ನ ಹೆಂಡತಿಯನ್ನು ಕೇಳಿದರೆ 'ನನಗೆ ಗೊತ್ತಿಲ್ಲ' ಎನ್ನುವ ಉತ್ತರ ಬಂದಿತಾದರೂ ಸ್ವಲ್ಪ ಹೊತ್ತು ಯೋಚಿಸಿ 'ಅದು, ಬೆಂಗಳೂರಿನಲ್ಲಿ ನಾನು ಕೊಂಡುಕೊಂಡ ಪುಸ್ತಕ' ಎಂದಳು. ನಾನೆಂದೆ 'ಇಲ್ಲ, ಆ ದಿನ ಹಣ ಕೊಟ್ಟು ತಂದವನು ನಾನು, ನೀನಲ್ಲ'...ಹೀಗೆ ಹಲವಾರು ಬಾರಿ ನಾನು-ನೀನು, ನಾನಲ್ಲ-ನೀನಲ್ಲ ನಡೆದ ಮೇಲೆ ಕೊನೆಗೆ ನಾವಿಬ್ಬರೂ ಒಂದೊಂದು ಪ್ರತಿಯನ್ನು ಪ್ರತ್ಯೇಕವಾಗಿ ಕೊಂಡದ್ದು ಗೊತ್ತಾಯಿತು.

'ಒಂದೇ ಪುಸ್ತಕದ ಎರಡು ಪ್ರತಿಗಳಿಂದೇನು ಪ್ರಯೋಜನ, ಯಾರಿಗಾದರೂ ಕೊಟ್ಟು ಬಿಡಲೇ' ಎಂದೆ, 'ಏನು ಬೇಕಾದರೂ ಮಾಡಿ' ಎಂಬ ಉತ್ತರ ಬಂದಿತಾದ್ದರಿಂದ "ಸಾರ್ಥ"ವನ್ನು ಓದಿ ಮುಗಿಸುವ ತವಕದಲ್ಲಿರುವ ಯಾರಿಗಾದರೂ ಕೊಡೋಣವೆಂದು ಯೋಚನೆ ಮಾಡಿದ್ದೇನೆ. ಒಮ್ಮೆ ಅವರು ಓದಿದ ಮೇಲೆ ಮತ್ತೆ ಇನ್ಯಾರಿಗಾದರೂ ಹಾಗೇ ಕೊಟ್ಟು ಒಬ್ಬರಿಂದ ಒಬ್ಬರಿಗೆ ಕೈ ದಾಟಿದರೆ ಇನ್ನೂ ಒಳ್ಳೆಯದು.

ನಿಮಗೆ ಭಾರತಕ್ಕೆ ಹೋಗಲು ಇನ್ನೂ ಕಾಲಾವಕಾಶ ಇದೆಯೆಂದಾದರೆ, ಅಥವಾ "ಸಾರ್ಥ"ದ ಪ್ರತಿ ಹುಡುಕಿದರೂ ಸಿಕ್ಕಿಲ್ಲವೆಂದಾದರೆ ನನಗೆ ಬರೆಯಿರಿ, ಅಂಚೆಯ ಮೂಲಕ ಕಳಿಸುತ್ತೇನೆ.