Thursday, April 13, 2006

About Raj


ರಾಜ್ ಬಗ್ಗೆ ಬರೀದೇ ಇದ್ರೆ ಹ್ಯಾಗೆ!?

ನಿನ್ನೆ ರಾಜ್‌ಕುಮಾರ್ ತೀರಿಕೊಂಡ್ರೂ ಅಂಥ ಗೊತ್ತಾದ ತಕ್ಷಣ ನನಗೆ ಗೊತ್ತಿರೋ ಕನ್ನಡ ಅಂತರ್ಜಾಲ ತಾಣಗಳೆಲ್ಲ busy ಆಗಿ ಹೋದವು. (ಈ busy ಅನ್ನೋ ಪದಕ್ಕೊಂದು ಕನ್ನಡ ಪದ suggest ಮಾಡ್ತೀರಾ? ನನಗೆ ಗೊತ್ತಿರೋ ಹಾಗೆ - ಕಾರ್ಯ ನಿರತ, ಅತಿಯಾದ ಕೆಲಸ, ಮಿತಿ ಮೀರಿದ ಕೆಲಸ, ವಿಪರೀತ ಚಟುವಟಿಕೆ, ಇತ್ಯಾದಿಗಳನ್ನು ಬಳಸಿದಾಗ ಸಮಾಧಾನವೇ ಆಗೋದಿಲ್ಲ, ಒಂಥರಾ ಬಹಳ ನೀರಡಿಸಿ ದಾಹವಾದಾಗ ನೀರಿನ ಬದಲು ಕೋಕ್ ಕುಡಿದಂತೆ ದಾಹ ಭಂಗವಾಗುತ್ತಿದೆ!). ಸರಿ, ನಾನೂ ರಾಜ್‌ಕುಮಾರ್ ಅವರ ಬಗ್ಗೆ ಬರೆಯಲೇ ಬೇಕು ಎಂದು ಸಂಕಲ್ಪ ತೊಟ್ಟಿದ್ದೇನೆ, ಆದರೆ ಉಳಿದವರು ಬರೆದವರಿಗಿಂತ ಭಿನ್ನವಾಗಿ ಬರೆದರೆ ಮಾತ್ರ ನೀವು ಈ ಬರಹವನ್ನು ಮೆಚ್ಚೋದು ಅಂತ ಚೆನ್ನಾಗಿ ಗೊತ್ತು, ಈಗಾಗ್ಲೇ ನಿಮಗೆ ಗೊತ್ತಿರೋ ವಿಷ್ಯಾನ ಮತ್ತೊಮ್ಮೆ ಹೇಳಿ ಏನು ಪ್ರಯೋಜನ, ನೀವೇ ಹೇಳಿ.

ನಾನು ರಾಜ್‌ಕುಮಾರರ ಕಟ್ಟಾ ಅಭಿಮಾನಿ, ಒಬ್ಬ ನಟನಾಗಿ ಅವರನ್ನು ನಾನು ಬಹಳ ಎತ್ತರದಲ್ಲಿಡುತ್ತೇನೆ, ಒಂದೇ ಮಾತಿನಲ್ಲಿ ಹೇಳೋದಾದರೆ ಅವರು ಕನ್ನಡ ಚಿತ್ರರಂಗ ಕಂಡ ಅತ್ಯುನ್ನತ ನಟ. ನಮ್ಮೂರಿನ ಟೂರಿಂಗ್ ಟಾಕೀಸ್‌ಗಳಲ್ಲಿ ಪ್ರತೀ ಸಿನಿಮಾಕ್ಕೆ ಒಂದೊಂದು ರೂಪಾಯಿಕೊಟ್ಟು, ೧೯೮೦ ರಿಂದ ೧೯೯೦ ರವಗೆ ಎಲ್ಲ ಸಿನಿಮಾಗಳನ್ನೂ ನೋಡಿದ್ದೇನೆ, ನಂತರ ಬಂದ ಸಿನಿಮಾಗಳನ್ನೂ ತಪ್ಪಿಸಿಲ್ಲ.

ನಾನೂ ನಮ್ಮ ಅಣ್ಣ ಇಬ್ಬರೂ ರಾಜ್‌ಕುಮಾರ್ ಅಭಿಮಾನಿಗಳು, ಆದರೆ ನಮ್ಮ ತಾಯಿಗೆ 'ಅವನನ್ನು ಕಂಡರೆ ಅಷ್ಟಕಷ್ಟೇ'! ಎಷ್ಟೋ ಸಾರಿ ರೇಡಿಯೋದಲ್ಲಿ ರಾಜ್‌ಕುಮಾರ್ ಹಾಡು ಕೇಳಿದಾಕ್ಷಣ 'ಇವನೊಬ್ಬ ದೊಡ್ಡದಾಗಿ ಬಾಯಿಬಿಟ್ಟ, ನೋಡು' ಅಂತ ಬೇಕಾದಷ್ಟು ಸಲ ರಾಜ್‌ಕುಮಾರ್‌ನ್ನು ಹೀಯಾಳಿಸಿದ್ದಿದೆ. ನಮ್ಮ ತಾಯಿಗೆ ಸುಮಾರು ಈಗ ಎಪ್ಪತ್ತರ ಹತ್ತಿರ ವಯಸ್ಸು, ಆಗಿನ ಕಾಲದಲ್ಲಿ ಪಿ.ಬಿ. ಶ್ರೀನಿವಾಸ್‌ರವರ ಕಂಠಕ್ಕೆ ಮಾರು ಹೋದ ಅನೇಕರಿಗೆ ರಾಜ್‌ಕುಮಾರ್ ಸಂಗೀತ ರುಚಿಸಿರಲಿಕ್ಕಿಲ್ಲ. ಎಮ್ಮೇ ಹಾಡಿನಿಂದ ಮುಂದೆ ಬಂದ ರಾಜ್ ಸಂಗೀತದಲ್ಲಿ ಮಹಾನ್ ಸಾಧನೆಯನ್ನೇ ಮಾಡಿದರು, ನೀವು ಎಂಭತ್ತರ ದಶಕದ ಅವರ ಹಾಡುಗಳನ್ನು ಅವರ ನಂತರದ ಹಾಡುಗಳಿಗೆ ಹೋಲಿಸಿದರೆ ನಿಮಗೇ ಗೊತ್ತಾಗುತ್ತದೆ ಅವರ ಕಂಠ ಸಿರಿಯಲ್ಲಿನ ಬದಲಾವಣೆ. ನಮ್ಮ ಅಮ್ಮನ ನಿಲುವು ಇಂದಿಗೂ ಬಹಳಷ್ಟು ಬದಲಾದಂತೇನಿಲ್ಲ, ಆದರೂ ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಇಂದಿಗೂ ಅವರ ಮೆಚ್ಚಿನ ಚಿತ್ರಗಳು. ಸಿನಿಮಾ ನಿರ್ದೇಶಕ-ನಿರ್ಮಾಪಕರ ಮಾತಿನಂತೆ ೫೫-೬೦ ವರ್ಷದ ರಾಜ್ 'ಹಾವಿನ ಹೆಡೆ' ಚಿತ್ರದಲ್ಲಿ ೧೮ ವರ್ಷದ ಸುಲಕ್ಷಣಳ ಜೊತೆ My name is Raj, what is your name please? ಎಂದು ಹಾಡಿದರೆ ನನ್ನ ಅಮ್ಮನಂಥವರಿಗೆ ಹೇಗೆ ತಾನೆ ರುಚಿಸೀತು ನೀವೇ ಹೇಳಿ. (ಇನ್ನು ರಾಜ್ ಅವರ ಕುಣಿತಕ್ಕೂ ಬೇರೆ ಬೇರೆ ಕಾಮೆಂಟ್‌ಗಳನ್ನು ಹೇಳಬಹುದು, ಅನಂತ್ ನಾಗ್ ಹಾಡಿನಲ್ಲಿ ಅವರು ಒಂದು ಕಡೆಯಿಂದ ಮತ್ತೊಂದು ಕಡೆ ಓಡೋದೇ ನೃತ್ಯವಾದರೆ, ರಾಜ್ ಹಾಡುಗಳಲ್ಲಿ ಕುಣಿದ ಹಾಗೆ ಮಾಡುತ್ತಾರೆ ಅಂತ).

ರಾಜ್ ಇಮೇಜ್‌ಗೆ ಸಿಕ್ಕಿ ಹಾಕ್ಕೊಂಡಿದ್ದು ಇತ್ತೀಚೆಗೆ ಅಂಥಾ ಕಾಣ್ಸುತ್ತೆ - ಮೊದಲೆಲ್ಲ ಖಳನಾಯಕನ ಕೈಯಲ್ಲಿ ಒದೆ ತಿನ್ನೋರು, ಆದ್ರೆ ಇತ್ತೀಚೆಗೆ ಯಾರೋ ಅವರನ್ನು (ಸಿನಿಮಾದಲ್ಲಿ) ತುಳಿದರು ಅನ್ನೋದು ದೊಡ್ಡ ವಿಷಯವಾಗಿತ್ತು. ನಾನು ೧೯೭೯ ರಲ್ಲಿ ಬೆಂಗಳೂರಿನ ಉಮಾ ಟಾಕೀಸಿನಲ್ಲಿ 'ನಾನೊಬ್ಬ ಕಳ್ಳ' ಚಿತ್ತ್ರವನ್ನು ನೋಡಿದ್ದೆ, ಅಲ್ಲಿನ ಅವರ ಕಳ್ಳನ ಇಮೇಜ್ ಅವರಿಗೆ ತುಂಬಾ ಕಷ್ಟ ಕೊಟ್ಟಿತ್ತು, ಆದರೂ ಆ ಪಾತ್ರಕ್ಕೆ ಸಮರ್ಥನೆ ನೀಡಿದಂತವರು ರಾಜ್‌. ಆದರೂ ರಾಜ್‌ನ್ನು ಬರೀ (ಅಥವಾ ಹೆಚ್ಚಾಗಿ) ನಾಯಕನ ಪಾತ್ರದಲ್ಲಿ ನಿರೀಕ್ಷಿಸಿದ್ದು ಅವರ ಅಭಿಮಾನಿ ದೇವರುಗಳ ತಪ್ಪು - ಒಬ್ಬ ನಟ ಅರವತ್ತು ವಸಂತಗಳನ್ನು ದಾಟಿದ ಮೇಲೂ ಪೋಷಕನ ಪಾತ್ರಗಳಲ್ಲಿ ಬರುವುದನ್ನು ನಾವು ಏಕೆ ಒಪ್ಪುವುದಿಲ್ಲ - ಪೋಷಕನ ಪಾತ್ರವೆಂದರೆ ಪೋಷಕ-centric ಪಾತ್ರವಲ್ಲ, ನಿಜವಾದ ಅರ್ಥದಲ್ಲಿ ತೆರೆಯ ಮೇಲೆ ಅಲ್ಪಕಾಲ ಬಂದು ಹೋಗುವಂತದ್ದು. ಅವರು ತಮ್ಮ ಕಂಠವನ್ನು ಇತರರಿಗೆ ಬಳುವಳಿಯಾಗಿ ಕೊಟ್ಟಿಲ್ಲ, ಹಿನ್ನೆಲೆ ಹಾಡುಗಳಲ್ಲಿ ಅಗೋಚರವಾಗಿ ಹಾಡಿದ್ದನ್ನು ಬಿಟ್ಟರೆ.

ನನಗೆ ಅತ್ಯಂತ ಇಷ್ಟವಾದ ಸನ್ನಿವೇಶಗಳಲ್ಲಿ ಇದೂ ಒಂದು:
ಯಾವುದೋ ಚಿತ್ರದಲ್ಲಿ (ಹೆಸರು ಮರೆತು ಹೋಗಿದೆ), ವಜ್ರಮುನಿ ಮಗುವನ್ನೊಂದನ್ನು ಅಪಹರಿಸಿರುತ್ತಾನೆ...
ರಾಜ್ ಕೇಳುತ್ತಾರೆ 'ಏನೋ ಮಾಡ್ದೇ ಮಗೂನಾ'
ವಜ್ರಮುನಿ 'ಕೊಂದು ಬಿಟ್ಟೆ!'
ರಾಜ್ 'ಆ... ಕೊಂ...ದು...ಬಿಟ್ಟೇ...' ಎಂದು ಹಲ್ಲು ಕಚ್ಚಿ ಹೇಳೋ ದೃಶ್ಯ ತುಂಬಾ ಮಾರ್ಮಿಕವಾಗಿ ಬಂದಿದೆ, ಎಂದೆಂದೂ ನೆನಪಿನಲ್ಲಿರುವಂತದ್ದು.

ರಾಜ್‌ಗೆ ಮುಖ್ಯವಾಗಿ ಅಸ್ಥೆ ಇತ್ತು, ಅವರ ಶಿಸ್ತು, ಅವರು ದೇಹವನ್ನು ಕಾಪಾಡಿಕೊಂಡ ಬಗೆ, ಮನಸ್ಸನ್ನು ನೋಡಿಕೊಂಡ ರೀತಿ ಅವರನ್ನೆಂದೂ ಕೈ ಬಿಡಲಿಲ್ಲ, ಅವರು ತೊಟ್ಟ ಪಾತ್ರಗಳಲ್ಲಿ ಅವರನ್ನು ವಿಶೇಷವಾಗಿ ನಿಲ್ಲಿಸುತ್ತಿದ್ದವು.

ರಾಜ್ ಒಂದು ಸಂಸ್ಥೆಯಂತೆ - ಅವರ ಉನ್ನತಿಯಲ್ಲಿ ಅವರ ಕುಟುಂಬದವರೂ, ಉದಯಶಂಕರ್‌ರಂಥಹ ಪ್ರತಿಭಾನ್ವಿತ ಬರಹಗಾರರೂ, ಆಗಿನ ಕಾಲದ ಕಥೆಗಳೂ, ಪಿ.ಬಿ.ಶ್ರೀನಿವಾಸರ ಕಂಠವೂ, ಕನ್ನಡಿಗರ ಒಲವೂ ಸಮಭಾಗಿಗಳು. ನಾನು ಈ ವರೆಗೆ ಇಬ್ಬರು ನಟರು ತೀರಿಕೊಂಡಾಗ ಕಣ್ಣೀರು ಹಾಕಿದ್ದೇನೆ, ಶಂಕರ್ ನಾಗ್ ಸತ್ತಾಗ ನನಗೆ ಅಪಾರ ದುಃಖವಾಗಿತ್ತು, ಇಂದೂ ಹಾಗೇ ಆಗಿದೆ.

ಕೊನೇ ಮಾತು - ನಮ್ಮ ಕನ್ನಡದಲ್ಲಿ ಅತ್ಯಂತ ಪ್ರೀತಿ ಪಾತ್ರರನ್ನೂ, ದೇವರನ್ನೂ, ದೊಡ್ಡ ಮನುಷ್ಯರನ್ನೂ ಏಕ ವಚನದಲ್ಲಿ ಕರೆಯುವ ಪರಿಪಾಠವಿದೆ, ನಾನು ರಾಜ್‌ಕುಮಾರ್ ನ್ನು ಏಕವಚನದಲ್ಲಿ ಕರೆದಿರೋದು ದಾರ್ಷ್ಟ್ಯ ಅಲ್ಲ, ಅವರ ಬಗ್ಗೆ ಇರೋ ಪ್ರೀತಿ ಅಷ್ಟೇ!

Monday, April 10, 2006

ಮೋಸ ಮಾಡೋದೇ ಬದುಕು ಅನ್ನೋದಾದ್ರೆ...

ಆಲ್ಟನ್ ಬ್ರೌನ್‌ನ ಗುಡ್ ಈಟ್ಸ್ (Food Network, Alton Brown, Good Eats) ಕಾರ್ಯಕ್ರಮದಲ್ಲಿ ಪೆಪ್ಪರ್ (ಕರಿ ಮೆಣಸು, ಕಾಳು ಮೆಣಸು)ನ ವಿಷಯ ಬಂದಾಗೆಲ್ಲ ಭಾರತದ ಪ್ರಸ್ತಾಪ ಸಹಜವಾಗಿ ಆಗುತ್ತದೆ. ಈ ಹಿಂದೆ ಯಾವುದೋ ಒಂದು ಎಪಿಸೋಡ್‌ನಲ್ಲಿ ಆಲ್ಟನ್ ಬ್ರೌನ್ ಈ ಕಾಳು ಮೆಣಸಿನ ಮಹಿಮೆಯನ್ನು ಕೊಂಡಾಡುತ್ತಾ ಭಾರತವನ್ನು ಸ್ಮರಿಸುವುದರೊಂದಿಗೆ ಕಾಳು ಮೆಣಸಿನ ನಡುವೆ ಪಪ್ಪಾಯಿ ಹಣ್ಣಿನ ಬೀಜವನ್ನು ಒಣಗಿಸಿ ಮಿಶ್ರಣ ಮಾಡಿ ಮಾರುತ್ತಾರೆಂತಲೂ, ಜಾಗರೂಕತೆಯಿಂದ ಖರೀದಿಸಿರೆಂತಲೂ ಆತ ವೀಕ್ಷಕರಿಗೆ ತಿಳಿಸಿ ಹೇಳಿದ್ದ. ಕಲಬೆರಕೆಯ ಬಗ್ಗೆ ನನಗೇನೂ ಹೊಸತಾಗಿ ತಿಳಿಯಬೇಕಾಗಿರಲಿಲ್ಲ ಆದರೆ ಭಾರತದ ಪದಾರ್ಥಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವ ರೀತಿಯಲ್ಲಿ ಪರೀಕ್ಷೆಗೆ ಒಳಪಡುತ್ತವೆ, ಭಾರತದಲ್ಲಿ ಬೆಳೆದ, ತಯಾರಿಸಿದ ವಸ್ತುಗಳ ಬಗ್ಗೆ ಉಳಿದವರಿಗೆ ಏನೇನು ಗೊತ್ತು, ಯಾವ್ಯಾವ ಮಾಹಿತಿ ಎಂದು ತಿಳಿಯಲು ಗುಡ್ ಈಟ್ಸ್ ಕಾರ್ಯಕ್ರಮ ಒಂದು ಉದಾಹರಣೆಯಷ್ಟೇ. ಫುಡ್ ನೆಟ್‌ವರ್ಕ್ಸ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಗುಡ್ ಈಟ್ಸ್ ನನಗೆ ಅಚ್ಚು ಮೆಚ್ಚು, ಅದರಲ್ಲಿ ಆಹಾರವನ್ನು ವಿಶ್ಲೇಷಿಸುವ ಬಗೆ, ನವಿರಾಗಿ ಹಾಸ್ಯವನ್ನೂ ಸೇರಿಸಿ ಕಾರ್ಯಕ್ರಮವನ್ನು ನಿರೂಪಿಸುವ ಬಗೆ ತುಂಬಾ ವಿಶೇಷವಾಗಿರುತ್ತೆ. ಆಲ್ಟನ್ ಬ್ರೌನ್, ಯಾವುದೊಂದು ಆಹಾರ ಪದಾರ್ಥವನ್ನಾದರೂ ತೆಗೆದುಕೊಂಡು ಅದರ ಮೂಲವನ್ನು ಜಾಡಿಸಿಬಿಡಬಲ್ಲ, ಅದರ ಸೂತ್ರಗಳನ್ನು ಕಂಡು ಹಿಡಿಯಬಲ್ಲ.

ಇಂದಿನ ವಿಷಯ ಕಲಬೆರಕೆಗೆ ಬರುತ್ತೇನೆ: ಇದರಲ್ಲಿ ತೊಡಗಿರುವ ವ್ಯಾಪಾರಿಗಳೂ, ವರ್ತಕರು, ಮಧ್ಯವರ್ತಿಗಳು ಅಂದುಕೊಳ್ಳುವುದೇನೆಂದರೆ ಅವರು ಮಾಡಿದ್ದು (ಮೋಸ) ಗ್ರಾಹಕರಿಗೆ ಗೊತ್ತಾಗುವುದಿಲ್ಲವೆಂತಲೂ, ಗೊತ್ತಾದರೂ ಗ್ರಾಹಕರು ಏನನ್ನೂ ಮಾಡುವುದಿಲ್ಲವೆಂತಲೂ, ಹಾಗೇನಾದರೂ ಮಾಡಿದರೆ ಅವರಿಗೆ ಅವರದೇ ಅಭಯ ಹಸ್ತ ಇದ್ದು ಅವರನ್ನು 'ರಕ್ಷಿಸು'ತ್ತದೆ ಎಂಬುದಾಗಿ. ವರ್ತಕರು ಮಾಡಿರುವ ಮೋಸ ಗ್ರಾಹಕರಿಗೆ ಗೊತ್ತಾಗೇ ಆಗುತ್ತದೆ, ಆದರೆ ನಮ್ಮಲ್ಲಿನ ವ್ಯವಸ್ಥೆಯಲ್ಲಿ ಅವರ ವಿರುದ್ಧ ತಿರುಗಿ ಬೀಳದಂತೆ ತಡೆಯುವ, ತಿರುಗಿ ಬಿದ್ದರೂ ಅದರಿಂದ ವರ್ತಕರಿಗೆ ಯಾವ ನಷ್ಟವೂ ಆಗದಂತೆ ಕಾಯುವ ವ್ಯವಸ್ಥೆಯೂ ಇದೆ. ಸರಿ, ಜನ ಸಾಮಾನ್ಯರು ದಿನ ನಿತ್ಯ ಬಳಸುವ ವಸ್ತುಗಳಿಗೆ ವರ್ತಕರು ಕೇಳಿದಷ್ಟು ಹಣವನ್ನು ಕೊಟ್ಟು ತಂದಾಗಲೂ ಮೊದಲೇ ಗುಣಮಟ್ಟ ಕಳಪೆಯದಾಗಿರುವುದೂ ಅಲ್ಲದೇ ಇನ್ನು ತಂದ ವಸ್ತುವಿನಲ್ಲಿ ಕಲಬೆರೆಕೆಯ ರೂಪದಲ್ಲೂ ಮೋಸವೂ ಆದರೆ ಗ್ರಾಹಕರ ಗತಿ ಏನು?

ಶಿವಮೊಗ್ಗದ ಮಾರ್ಕೆಟ್‌ನಲ್ಲಿ ಕೆಲವು ವರ್ಷಗಳ ಹಿಂದೆ ಸೇಬು ಹಣ್ಣನ್ನು ಖರೀದಿಸಲು ನಾನು ನನ್ನ ಅಕ್ಕನ ಜೊತೆ ಹೋಗಿದ್ದೆ. ಎಂದಿನಂತೆ ಒಂದೆರಡು ಕಡೆ ನೋಡಿ, ಆಮೇಲೆ ಚೌಕಾಸಿ ಮಾಡಿ, ಇದ್ದುದರಲ್ಲಿಯೇ ಒಳ್ಳೆಯ ಹಣ್ಣುಗಳನ್ನು ಕೊಡಲು ಹೇಳಿದೆವು, ಆದರೆ ಅಂಗಡಿಯವನು ಐದು ಹಣ್ಣುಗಳ ಜೊತೆ ಆರನೆಯ ಹಣ್ಣನ್ನು ಸ್ವಲ್ಪ ಹೆಚ್ಚು ಮಾಗಿರುವುದೋ ಅಥವಾ ಹೊಡೆತ ಬಿದ್ದಿರುವುದನ್ನೋ ಕೊಟ್ಟು ಸಾಗ ಹಾಕಲು ನೋಡಿದ. ಆದರೆ, ನಾನು ಅವನ ಎದುರಿನಲ್ಲೇ ಪ್ಯಾಕೇಟ್ ತೆರೆದು, ಅಷ್ಟೊಂದು ಚೆನ್ನಾಗಿಲ್ಲದ ಹಣ್ಣನ್ನು ವಾಪಾಸು ಕೊಟ್ಟು, ಮತ್ತೆ ಅದರ ಬದಲಿಗೆ ಒಳ್ಳೆಯ ಹಣ್ಣನ್ನು ಪಡೆದರೂ ಮನೆಗೆ ಬಂದು ಪ್ಯಾಕೇಟ್ ತೆರೆದು ನೋಡಿದಾಗ ಅದರಲ್ಲಿ ಒಂದು ಹಣ್ಣು ಸುಮಾರಿನದೇ ಇತ್ತು. ಅಂಗಡಿಯವನು ನಮ್ಮನ್ನು ಬೇಸ್ತು ಬೀಳಿಸಿ ಒಂದು ಸುಮಾರಾದ ಹಣ್ಣನ್ನು ದಾಟಿಸಿದ್ದಕ್ಕೆ ಖುಷಿ ಪಡಬಹುದು, ತನಗೆ ತಾನು ಶಭಾಸ್‌ಗಿರಿ ಕೊಟ್ಟುಕೊಳ್ಳಬಹುದು, ಆದರೆ ಮೋಸ ಹೋದವರು ನಾವು ಎನ್ನುವುದು ಸಾಬೀತಾಗಿ ಹೋಗಿತ್ತು. ನಮ್ಮ ಬಳಿ ಹಲವಾರು ಪರ್ಯಾಯಗಳಿದ್ದವು: ಆ ಹಣ್ಣುಗಳನ್ನು ನಾವು ಹಾಗೆಯೇ ಮರುದಿನ ವಾಪಾಸ್ಸು ಕೊಟ್ಟು ಬರಬಹುದಿತ್ತು, ಅಥವಾ ಅವನ ಬಗ್ಗೆ ಅಲ್ಲಿ ಯಾರಿಗಾದರೂ ದೂರು ಸಲ್ಲಿಸಬಹುದಿತ್ತು, ಅಥವಾ ನಮ್ಮ ಕಡೆಯಿಂದ ನಾಲ್ಕು ಜನ ಹೋಗಿ ದಬಾಯಿಸಬಹುದಿತ್ತು. ಆದರೆ ನಿಮಗೆಲ್ಲ ಗೊತ್ತಿರುವಂತೆ, ಆ ರೀತಿ ಏನೂ ಆಗಲಿಲ್ಲ. ಅಂಗಡಿಯವನು ಒಂದು ಸುಮಾರಾದ ಹಣ್ಣನ್ನು ಒಳ್ಳೆಯ ಹಣ್ಣಿನ ಬೆಲೆಗೆ ಮಾರಿ ಲಾಭ ಗಳಿಸಿದ, ನಾವು ನಮ್ಮ ದೇಶದಲ್ಲೇ ಬೇಸ್ತು ಬಿದ್ದುದಕ್ಕೆ ಕೈ-ಕೈ ಹಿಸುಕಿಕೊಂಡೆವು. ಇದು ಬರೀ ಸೇಬು ಹಣ್ಣಿನ ಕಥೆಯಲ್ಲ, ಈ ರೀತಿ ಪ್ರತಿಯೊಂದರಲ್ಲೂ ಆಗುತ್ತದೆ: ಬಂಗಾರದ ವ್ಯವಹಾರವಿರಬಹುದು, ತರಕಾರಿ ವ್ಯವಹಾರವಿರಬಹುದು, ಮನೆ ಕಟ್ಟಿಸುವ ವಿಷಯವಿರಬಹುದು, ಮದುವೆ ಮಾತಾಗಿರಬಹುದು, ಎಲ್ಲದರಲ್ಲೂ ನಿಮ್ಮ ತರ್ಕವನ್ನು ಪ್ರಶ್ನಿಸುವ, ನಿಮ್ಮ ಬುದ್ಧಿಮತ್ತೆಯನ್ನು ಅಳೆಯುವ ಅಥವಾ ನಿಮ್ಮ ಶಕ್ತಿ ಪ್ರದರ್ಶನದ ಅವಕಾಶಗಳು ಸಿಕ್ಕೇ ಸಿಗುತ್ತವೆ, ಎದುರಾಗೇ ತೀರುತ್ತವೆ.

ಡಿಸ್ಕವರಿ ಚಾನಲ್‌ನಲ್ಲಿ ತೋರಿಸೋ ಜರೆಮಿ ಪಿವನ್‌ನ ಭಾರತದ ಪ್ರವಾಸ ಕಥನವಿರಬಹುದು (Jeremy Piven, Joureny of a Lifetime, Disovery Channel) ಅಥವಾ ಆಲ್ಟನ್ ಬ್ರೌನ್‌ನ ಸಂಶೋಧನೆಯ ತಿರುಳಿರಬಹುದು, ಇವರೆಲ್ಲರ ಕಣ್ಣಿನಲ್ಲಿ ಕಳಪೆಯನ್ನು ನೋಡಿದಾಗ, ನಮ್ಮ ಎದೆ ಧಸಕ್ ಎನ್ನುತ್ತದೆ. ಆದೇ ನಾವೇ ಇಂತಹ ವರ್ತಕರ ವಂಚನೆಗಳಿಗೆ ಏಮಾರಿದಾಗ ಅಷ್ಟು ನೋವೆನಿಸುವುದಿಲ್ಲ, ಅದು 'ನಾರ್ಮಲ್' ಬದುಕಿನ ಒಂದು ಅಂಗವಾಗಿ ಹೋಗುತ್ತದೆ!

ನನ್ನ ಪ್ರಕಾರ ಮೋಸಕ್ಕೆ ಒಂದೇ ಮದ್ದು, ತಕ್ಕ ಶಾಸ್ತಿ, ಅಥವಾ ಶಿಕ್ಷೆ. ನನ್ನ ಕಣ್ಣಿಗೆ ಕಾಣುವುದು ಈ ಎರಡೇ ಆಪ್ಷನ್‌ಗಳು:
೧) ಮೋಸ ಮಾಡುವ ವರ್ತಕರನ್ನು ಗ್ರಾಹಕರ ನ್ಯಾಯಾಲಯಕ್ಕೆ ಎಳೆದೊಯ್ಯುವುದು, ವ್ಯಾಪಾರೀ ನಿಯಮದ ಪ್ರತಿಯೊಂದು ಉಲ್ಲಂಘನೆಗೂ ಇಂತಿಷ್ಟು (ಹೆಚ್ಚಿನ) ದಂಡ ವಿಧಿಸಿ, ಮೂರು ಬಾರಿ ಅದೇ ನಡತೆ ಪುನರಾವರ್ತನೆಯಾದೊಡನೆ, ಅಪೀಲು ರಹಿತವಾಗಿ ಅವರವರ ಲೈಸನ್ಸ್ ಕ್ಯಾನ್ಸಲ್ ಮಾಡುವುದು. (ಈ ನ್ಯಾಯಾಲಯದಲ್ಲಿ ಒಂದು ವಾರದ ಒಳಗಡೆ ಯಾವುದೇ ಕೇಸನ್ನು ತೀರ್ಮಾನಿಸುವಂತಾಗಬೇಕು).

ಇದು ಬೇಡವೆಂದರೆ
೨) ದಂಡಂ ದಶಗುಣಂ - ಅನ್ಯಾಯಕೊಳಪಟ್ಟ ವ್ಯಕ್ತಿ (ಶಕ್ತಿಶಾಲಿಯಾಗಿದ್ದಲ್ಲಿ ಅಥವಾ ಇತರರ ನೆರವು ಪಡೆದು) ವರ್ತಕನ ಮೇಲೆ ತಿರುಗಿ ಬಿದ್ದು, ಅವನ ಅಂಗಡಿಗೇ ಬೆಂಕಿ ಇಟ್ಟರೆ ಅದನ್ನು ಕಾನೂನು ಪ್ರಕಾರ ಮನ್ನಿಸುವುದು! ಕಲಬೆರಕೆಯ ಹೆಸರಿನಲ್ಲಿ ಸಮಾಜಕ್ಕೆ, ಮುದ್ದು ಮಕ್ಕಳ ಆರೋಗ್ಯಕ್ಕೆ, ಪರಿಸರಕ್ಕೆ, ಎಲ್ಲರಿಗೂ ಹೊರೆಯಾಗುವಂತಿರುವ ಶತಮಾನಗಳ ದೌರ್ಜನ್ಯವನ್ನು ಗ್ರಾಹಕ ಎಷ್ಟೂ ಅಂತ ಸಹಿಸಿಕೊಳ್ಳೋದು ನೀವೇ ಹೇಳಿ.

***

ನನಗೆ ಗೊತ್ತು, ನಾನು ಆಪ್ಷನ್ ೧ ರಲ್ಲಿ ನಂಬಿಕೆಯುಳ್ಳವನು ಎಂದು, ಆದರೂ ಮೋಸ ಮಾಡುವವರ ಪ್ರವೃತ್ತಿಯನ್ನು ನೋಡಿ ಹೀಗೆ ಹೇಳಬೇಕಾಯಿತು. ನಿಮಗೆಂದಾದರೂ ಈ ರೀತಿ ಮೋಸ ಆಗಿದ್ದಿದೆಯೇ? ಅಥವಾ ನಿಮ್ಮಲ್ಲಿ ಬೇರೆ ಯಾವುದಾದರೂ ಆಪ್ಷನ್‌ಗಳಿವೆಯೇ?

Sunday, April 09, 2006

Indians' quality conept

ಭಾರತೀಯರ ಕ್ವಾಲಿಟಿ ಕಾನ್ಸೆಪ್ಟ್

ಇವತ್ತು ಭಾರತೀಯ ಅಂಗಡಿಗಳಿಗೆ ಹೋಗಿದ್ದೆ, ಅದೇ ಪ್ರತೀವಾರಕ್ಕೊಮ್ಮೆ ತರಕಾರಿ ಹಾಗೂ ಇತರ ಸಾಮಾನುಗಳನ್ನು ತರೋಕೆ ಹೋದ ಹಾಗೆ. ಅಲ್ಲಿ ವಿಡಿಯೋ ಅಂಗಡಿಯೊಂದರ ಮುಂದೆ ದೊಡ್ಡದಾಗಿ ನಿಲ್ಲಿಸಿದ ಪೋಸ್ಟರ್ ಒಂದು ಕಂಡಿತು, ಅದು ಸೈಫ್ ಆಲಿ ಖಾನ್, ಅಕ್ಷಯ್ ಕುಮಾರ್, ಸುಸ್ಮಿತಾ ಸೇನ್ ಮುಂತಾದವರು ಅಮೇರಿಕದಲ್ಲಿ ಈ ತಿಂಗಳಿನಲ್ಲಿ ನಡೆಸಿಕೊಡುವ ಕಾರ್ಯಕ್ರಮದ ಬಗ್ಗೆ. ಈ ಪೋಸ್ಟರ್ ಸುಮಾರು ಆರು ಅಡಿ ಎತ್ತರ, ಮೂರ್‍ನಾಲ್ಕು ಅಡಿ ಅಗಲವಿದ್ದಿರಬಹುದು. ನಾನು ಸ್ವಲ್ಪ ಹೊತ್ತು ಅಲ್ಲೇ ಕಾರು ನಿಲ್ಲಿಸಿದ್ದೆನಾದ್ದರಿಂದ ಈ ಪೋಸ್ಟರನ್ನು ಗಮನವಿಟ್ಟು ನೋಡಲು ಅನುಕೂಲವಾಯಿತು.

ಈ ಪೋಸ್ಟರ್ ಭಾರತದಲ್ಲೇ ಮುದ್ರಣವಾದದ್ದು ಎನ್ನುವುದಕ್ಕೆ ಯಾವ ಸಂಶಯವೂ ಬರಲಿಲ್ಲ, ನೋಡಿದ ಕೂಡಲೇ ತಟ್ಟನೆ ಹೇಳಿಬಿಡಬಹುದಾಗಿತ್ತು - ಆ ಪೋಸ್ಟರ್‌ನ ಮೇಲೆ ಮುದ್ರಿಸಿರುವ ವಿಷಯಗಳಿಂದಲ್ಲ, ಅದರ ವಿಷಯವನ್ನು ಹೇಗೆ ಮುದ್ರಿಸಿದ್ದಾರೆ ಎಂಬುದಾಗಿ. ಹಲವಾರು ತಪ್ಪುಗಳಿದ್ದವು: ಇಲ್ಲಿ ಪ್ರದರ್ಶನ ನಡೆಯುವ ಊರಿನ ಹೆಸರು, ಫೋನ್ ನಂಬರ್ ಫಾರ್ಮ್ಯಾಟ್, ಕಾಮ (ಅರ್ಧ ವಿರಾಮ), ಪೂರ್ಣ ವಿರಾಮಗಳ ಅನಗತ್ಯ ಬಳಕೆ, ಸ್ಪೇಸಿಂಗ್‌ನಲ್ಲಿ ಕನ್‌ಸಿಸ್ಟೆನ್ಸಿ ಇಲ್ಲದಿರುವುದು, ಫಾಂಟ್‌ಗಳ ಬಳಕೆ ಸಮವಿಲ್ಲದಿದ್ದುದು, ಇತ್ಯಾದಿ, ಇತ್ಯಾದಿ. ಒಟ್ಟಿನಲ್ಲಿ ಪೋಸ್ಟರ್‌ನ ಗುಣಮಟ್ಟ ನೂರರಲ್ಲಿ ಕೇವಲ ಇಪ್ಪತ್ತೇ ಎನ್ನುವಷ್ಟರ ಮಟ್ಟಿಗೆ ಇತ್ತು.

ನಾನು ಭಾರತೀಯರ ಉತ್ಕೃಷ್ಟತೆಯ ಪರಿಕಲ್ಪನೆಯ (quality conept) ಬಗ್ಗೆ ಬಹಳಷ್ಟು ಗಹನವಾಗಿ ಆಲೋಚಿಸಿದ್ದೇನೆ. ನಮ್ಮಲ್ಲಿ ಉತ್ತಮ ವಸ್ತುವಿನ ಪರಿಕಲ್ಪನೆಯೇ ಇಲ್ಲ, ಅಥವಾ ಕಡಿಮೆ ಎನ್ನಬಹುದೇನೋ. ಯಾವುದಾದರೂ ವಸ್ತುವೊಂದನ್ನು ಖರೀದಿಸಿದರೆ ಅದರ workmanship ನೋಡುತ್ತೇವೋ ಇಲ್ಲವೋ? ಹಾಗೇ ಪ್ರತಿಯೊಂದು ವಸ್ತುವೂ ಒಂದೇ ಫ್ಯಾಕ್ಟರಿಯನ್ನು ಬಿಡುವಾಗ, ಅಥವಾ ಅಂಗಡಿಯನ್ನು ತೊರೆಯುವಾಗ ಒಂದಲ್ಲ ಒಂದು ರೀತಿಯ inspectionಗೆ ಒಳಪಡಲೇಬೇಕಲ್ಲವೇ? ಈ quality check ಒಂದೇ ಗ್ರಾಹಕ ನಿರ್ಧಾರಿತವಾಗಬಹುದು ಅಥವಾ ಆಯಾ ಅಂಗಡಿ/ಫ್ಯಾಕ್ಟರಿಯೇ ಒಂದು ಮೊದಲೇ ನಿರ್ಧರಿಸಿದ ಸ್ಟ್ಯಾಂಡರ್ಡ್‌ನ್ನು ಇಟ್ಟು ಅವುಗಳ ಉತ್ಪನ್ನವನ್ನು ಪರೀಕ್ಷಿಸಬಹುದು. ಹೀಗಿದ್ದಾಗ್ಯೂ ನಮ್ಮಲ್ಲಿಯ ಉತ್ಪನ್ನಗಳು ಕಳಪೇಯೇಕೆ ಎಂಬುದನ್ನು ಆಲೋಚಿಸಿಕೊಳ್ಳಿ, ನಿಮಗೇ ಗೊತ್ತಾಗುತ್ತದೆ.

ಈಗ ಪೋಸ್ಟರ್ ವಿಚಾರಕ್ಕೆ ಬರೋಣ: ಈ ಕಾರ್ಯಕ್ರಮ ಅಮೇರಿಕದಲ್ಲಿ ನಡೆಯುತ್ತಿರೋದು, ಆದರೆ ಪೋಸ್ಟರ್ ಮುದ್ರಿತವಾದದ್ದು ಭಾರತದಲ್ಲಿ, ಹೆಸರು ಮತ್ತಿತರ ಸ್ಥಳೀಯ ದೋಷಗಳನ್ನು ಮರೆತುಬಿಡೋಣ. ಆದರೆ ಈ ಪೋಸ್ಟರ್‌ನ್ನು ಮಾಸ್ ಪ್ರೊಡಕ್ಷನ್ ಮಾಡುವ ಮೊದಲು ಯಾರಾದರೊಬ್ಬರು ಪರೀಕ್ಷಿಸಿರಬೇಕಲ್ಲ, ಅದರಲ್ಲಿ ತಪ್ಪಿರಬಹುದೇ? ಅಥವಾ ಆ ರೀತಿಯ ಪರೀಕ್ಷೆಗೆ ಒಳಪಡದೇ ಹಾಗೇ ಹೊರಬಂದಿರಬಹುದು! ಕನ್ನಡದ ಪೋಸ್ಟರ್‌ಗಳು, ಬ್ಯಾನರ್‌ಗಳು ಬೆಂಗಳೂರಿನಲ್ಲಿ ಮುದ್ರಣಗೊಂಡಾಗ ದೋಷಗಳು ಇದ್ದೇ ಇರುತ್ತವೆ. ಇದು ಬರೀ ಪೋಸ್ಟರ್‌ಗಷ್ಟೇ ನಿಲ್ಲದು, ಕ್ಯಾಸೆಟ್ಟಿನ ಕವರ್‌ಗಳೂ, ಸಿನಿಮಾ ಟೈಟಲ್‌ಗಳೂ, ಎಲ್ಲವೂ ಈ ದೋಷಕ್ಕೆ ಒಳಪಡುವವೇ ('ಭಾವ ಸಂಗಮ' ಅನ್ನೋ ಆಸೆಯಿಂದ ಕ್ಯಾಸೆಟ್ಟನ್ನು ಕೊಂಡರೆ ಅದರ ಟೈಟಲ್ 'ಬಾವ ಸಂಗಮ'ವೆಂದು ಮುದ್ರಿತವಾದದ್ದನ್ನು ನೋಡಿ ರಸಭಂಗವಾದಂತೆ). ಇವೆಲ್ಲಕ್ಕೂ ಕನ್ನಡೇತರ ಕೆಲಸಗಾರರು ಮಾಡಿರುವ ತಪ್ಪು ಎಂದು ಒಂದೇ ಮಾತಿನಲ್ಲಿ ತಳ್ಳಿಹಾಕುವುದನ್ನು ನಾನು ಎಷ್ಟೋ ಬಾರಿ ಕೇಳಿದ್ದೇನೆ. ಆದರೆ ಮೇಲೆ ಹೇಳಿದ ಇಂಗ್ಲೀಷ್‌ನಲ್ಲಿ ಮುದ್ರಿತವಾದ ಪೋಸ್ಟರ್‌ಗಳಲ್ಲಿ ಹಾಗಾದರೆ ತಪ್ಪುಗಳು ಹೇಗೆ ನುಸುಳಿದವೆಂದು ನೀವು ಯೋಚಿಸುತ್ತಿರಬಹುದು - ಅದಕ್ಕೂ ಕಾರಣವಿದೆ, ಅದನ್ನು ಮುದ್ರಿಸಿದವರು, ತಯಾರಿಸಿದವರಿಗಷ್ಟು ಓದು ಬರಹ ಬಾರದು ಎಂದು. ನನ್ನ ಪ್ರಕಾರ ಅಲ್ಲೇ ಇರೋದು ಸಮಸ್ಯೆ: ಈ ಪೋಸ್ಟರ್ ಮುದ್ರಿಸೋ ವಿಷಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಈ ಪೋಸ್ಟರ್‌ನ ಲೈಪ್ ಸೈಕಲ್‌ನಲ್ಲಿ ಕೆಲಸ ಮಾಡುವವರಿಗೆಲ್ಲ ಸರಿಯಾದ ಶಿಕ್ಷಣವಾಗಲೀ, ತರಬೇತಿಯಾಗಲೀ ದೊರಕಿರುವುದಿಲ್ಲ. ಇವತ್ತಿಗೂ ನಮ್ಮೂರಿನ ಕಾರ್ಪೆಂಟರುಗಳು ಕಿವಿ ಮೇಲೆ ಪೆನ್ಸಿಲ್ ಇಟ್ಟುಕೊಂಡು ಓಡಾಡುತ್ತಾರೆಯೇ ವಿನಾ ಕಾರ್ಪೆಂಟರಿ ಬಗ್ಗೆಯಾಗಲೀ, ಮರಮುಟ್ಟುಗಳ ಬಗ್ಗೆಯಾಗಲೀ ಒಂದು ದಿನವೂ ಕಲಿಯುವ ಪ್ರಯತ್ನ ಮಾಡುವುದಿಲ್ಲ, ಮಾಡರು. ಬಡತನದ ಶಾಪಕ್ಕೋ, ಅಥವಾ ಸಮಾಜದ ವಿಕೋಪಕ್ಕೋ ಸಿಕ್ಕು ಬ್ಲೂ ಕಾಲರ್ ಕೆಲಸದಲ್ಲಿ ಸೇರಿಕೊಳ್ಳುವುದು ಅಪರಾಧವಲ್ಲ, ಆದರೆ ಹಲವಾರು ವರ್ಷಗಳು ಆಯಾ ಫೀಲ್ಡ್‌ನಲ್ಲಿ ಕೆಲಸ ಮಾಡಿಯೂ ಆ ಕೆಲಸದ ಬಗ್ಗೆ ತಿಳಿದುಕೊಳ್ಳುವ, ತಿಳಿಸಿ ಹೇಳುವ, ಹೆಚ್ಚು ಹೆಚ್ಚು ಕಲಿತು ಮುಂದೆ ಹೋಗುವ, ಇರುವ ಪ್ರಾಸೆಸ್ಸುಗಳನ್ನು ಅಭಿವೃದ್ಧಿ ಪಡಿಸುವ, ಹೊಸತಾಗಿ ಏನಾದರೊಂದನ್ನು ಕಂಡು ಹಿಡಿಯುವ, ಹೊಸತರ ಬಗ್ಗೆ ಆಲೋಚಿಸುವ ಯಾವ ಒಂದು ವ್ಯವಸ್ಥೆಯೂ ಇಲ್ಲದಿರುವುದು ಹೆದರಿಕೆ ಹುಟ್ಟಿಸುತ್ತದೆ. ಜಾತಿಯ ಆಧಾರದ ಮೇಲೋ, ಅಪ್ಪ ಮಾಡಿದ ಕೆಲಸವೆಂದೋ, ಟೈಮಿಗೆ ಸರಿಯಾಗಿ ಸಿಕ್ಕಿತೆಂದೋ ಯಾವುದೋ ಒಂದು ಕೆಲಸಕ್ಕೆ ಸೇರುವುದು ಸಹಜ. ಆದರೆ ಅದರಲ್ಲೆ ಮುಂದುವರಿಯುತ್ತೇವೆಂದು ನಿರ್ಧರಿಸಿ, 'ಪ್ರೊಫೆಷನಲ್ಸ್' ಆಗುತ್ತೇವೆಂದಾದ ತಕ್ಷಣ ಒಂದು ಹೆಜ್ಜೆ ಹಿಂದೆ ಸರಿದು ಯಾರೂ ಯಾಕೆ ಯೋಚಿಸುವುದಿಲ್ಲ - ಆ ರೀತಿ ಯೋಚನೆ ಮಾಡುವಂತೆ ಮಾಡುವ ಪರಿಸರವೂ ಯಾಕೆ ಹುಟ್ಟುವುದಿಲ್ಲವೋ?

When was the last time you complained in a restaurant about the quality of the food served or cleanliness?

ನೋಡಿದಿರಾ ಎಲ್ಲಿಂದ ಎಲ್ಲಿಗೆ ವಿಷಯ ಬಂತು? ಈ ಕ್ವಾಲಿಟಿಯ ಬಗ್ಗೆ ಬರೆದರೆ ಒಂದು ದೊಡ್ಡ ಹೊತ್ತಿಗೆಯನ್ನೇ ಬರೆಯಬಹುದು. ಈ ವಿಷಯವನ್ನು ಈಗ ಇಲ್ಲಿಗೇ ಬಿಡುತ್ತೇನೆ ಆದರೆ ಘಂಟಾಘೋಷವಾಗಿ ಈ final comment ಮಾಡಿದ ನಂತರ: ಭಾರತೀಯರಿಗೆ ವಸ್ತುಗಳ ಉತ್ಕೃಷ್ಟತೆಯ ಪರಿಕಲ್ಪನೆ ಕಡಿಮೆ - ಈ ಮಾತು ಎಲ್ಲ ಸ್ತರಗಳಲ್ಲೂ ಅನ್ವಯಿಸುತ್ತದೆ: ಕಾರಣಗಳನ್ನು ಹಲವಾರು ಕೊಟ್ಟರೂ, ಒಂದು ಉತ್ತಮ ಪ್ರಾಸೆಸ್ ಕಣ್ಣಿಗೆ ಬಿದ್ದು ಮನಸ್ಸಿಗೆ ಬಂದ ಮೇಲೂ ಅದನ್ನು ನಾವು ಅಳವಡಿಸಿಕೊಳ್ಳುವುದಿಲ್ಲವೆಂದರೆ ನಮ್ಮ ಮೇಲೆ ನಮಗೇ ನಾಚಿಕೆ ಆಗಬೇಕು.

(ವಿ.ಸೂ: ಈ ಕ್ವಾಲಿಟಿಯ ಕಾಮೆಂಟ್ ಭಾರತದಲ್ಲಿ ತಯಾರಾಗುವ, ಮಾರ್ಪಾಡಾಗುವ ಸಾಫ್ಟ್‌ವೇರ್‌ಗೂ ಅನ್ವಯಿಸುತ್ತೆ!)

Saturday, April 08, 2006

ಸುಂದರೇಶ ಅನ್ನೋ ಜೀನಿಯಸ್




ಸುಂದರೇಶನ ಬಗ್ಗೆ ಬರೆಯದೇ ಇದ್ರೆ ನನ್ನ ಬ್ಲಾಗೇ ಅಪೂರ್ಣ ಅನ್ನಿಸುತ್ತೆ. ಈ ಪುಣ್ಯಾತ್ಮನ ಪರಿಚಯ ನನ್ನ ಮಟ್ಟಿಗೆ ಕೇವಲ ಎರಡು-ಮೂರು ವರ್ಷವಿದ್ದಿರಬಹುದು, ಆದರೆ ಆತನ ಪರಿಣಾಮ ನನ್ನ ಮೇಲೆ ಅಪಾರ, ಅದಕ್ಕೆ ನಾನು ಅವನಿಗೆ ಚಿರಋಣಿ.

ಸುಂದರೇಶ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಶಿವಮೊಗ್ಗದ ಕೋಟೆ ಬೀದಿಯಲ್ಲಿ ಇವತ್ತಿಗೂ ಅವರ ಮನೆ ಇದೆ, ಅವನು ಕೂಡಾ ಅಲ್ಲೇ ಇದ್ದಾನೆ ಅನ್ನೋದು ನನ್ನ ಊಹೆ. ಸುಂದರೇಶ B.Sc.,ಯನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಮುಗಿಸಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಮ್ಯಾಥ್‌ಮ್ಯಾಟಿಕ್ಸ್‌ನಲ್ಲಿ M.Sc., ಮುಗಿಸಿದವನು. ಈತನಿಗೆ ಗಣಿತದಲ್ಲಿ ಬಂದ ಅಂಕಗಳು ನೂರಕ್ಕೆ ನೂರು, ಹೌದು, ಪಕ್ಕಾ ನೂರು, ಉಳಿದಂತೆ ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಲ್ಲೂ ಯುನಿವರ್ಸಿಟಿಗೇ ಹೆಚ್ಚಿನ ಸ್ಕೋರು.

ಅವನಿಗೆ ಅವನ ಮೇಲೆ ಗಣಿತದ ಮೇಷ್ಟ್ರು ತೋರಿದ ಪ್ರೀತಿ ಅತಿಯಾಯಿತೇನೋ ಎನ್ನುವಂತೆ, ಮೈಸೂರು, ಕುವೆಂಪು ವಿ.ವಿ.ಗಳಲ್ಲಿ ಸಿಕ್ಕಿದ ಎಲ್ಲ ಕೋರ್ಸುಗಳ ಸೀಟನ್ನು ಬಿಟ್ಟು, ಆತ M.Sc.,ಯಲ್ಲಿ ಗಣಿತವನ್ನೇ ಆರಿಸಿಕೊಂಡ! ಅಲ್ಲದೇ ಅದರಲ್ಲೂ ಬಹಳ ಹೆಚ್ಚಿನ ಅಂಕಗಳನ್ನು ಗಳಿಸಿ ಮೇಲೆಯೇ ಬಂದ...ಆದರೆ ಅವನು ಮೇಲೆ ಬಂದ ಬಗೆ ಬಹಳ ವಿಶೇಷವಾದದ್ದು...

ಸುಂದರೇಶನು B.Sc.,ಯಲ್ಲಿ ರ್‍ಯಾಂಕ್ ಬಂದಿದ್ದರ ಸಲುವಾಗಿ ತುಂಬ ಬೇಕಾದ ಫಾರ್ಮ್‌ಗಳನ್ನು ತುಂಬಿ ಘಟಿಕೋತ್ಸವಕ್ಕೆ ಕೊಡುವಾಗ ನಾನು ಅವನ ಜೊತೆಯಲ್ಲೇ ಇದ್ದೆ. ಎಲ್ಲೆಲ್ಲಿ ಮೆಡಲ್‌ಗಳು ಸಿಗುತ್ತವೆಯೋ ಅವೆಲ್ಲವೂ ಇವನನ್ನೇ ಹುಡುಕಿಕೊಂಡು ಬಂದಿದ್ದವು, ಆದರೆ ಇವ ಆ ಎಲ್ಲ ಮೆಡಲ್‍ಗಳ ಬದಲಿಗೆ ದುಡ್ಡೇ ಸಿಗಲಿ ಎಂದು ಹಣವನ್ನು ಆರಿಸಿಕೊಂಡ. ಬಂದ ಹಣದಲ್ಲಿ ಲೋಡುಗಟ್ಟಲೆ ಗಣಿತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಿ ತನ್ನ ಹಾಸ್ಟೆಲಿನ ರೂಮನ್ನು ತುಂಬಿಸಿಕೊಂಡ.

ಮೈಸೂರಿನಲ್ಲಿ ಓದಿರುವವರಿಗೆಲ್ಲ ಗೊತ್ತಿರುವಂತೆ, ಅಲ್ಲಿನ ಜಾತಿ ರಾಜಕೀಯವೂ, ಕೆಲವು ವಿದ್ಯಾರ್ಥಿಗಳ ಕೀಳು ಅಭಿರುಚಿಯೂ ಸುಂದರೇಶನಿಗೆ ಇಷ್ಟವಾಗಲಿಲ್ಲವೆಂದು ಕಾಣುತ್ತದೆ, ಜೊತೆಯಲ್ಲಿ ಅವನಿಗೆ ಪಾಠ ಹೇಳಿಕೊಡುವ ಕೆಲವು ಮೇಷ್ಟ್ರೂ ಸಹ. ಅವ ತರಗತಿಗೆ ಹೋದರೆ ಹೋದ ಬಿಟ್ಟರೆ ಬಿಟ್ಟ ಎನ್ನುವಂತೆ ಆದ! ನೋಟ್ಸು ಬರೆದುಕೊಂಡರೆ ಬಂತು, ಇಲ್ಲವೆಂದರೆ ಇಲ್ಲ. ಅಲ್ಲದೇ ಆತ ಹಾಸ್ಟೆಲಿನಲ್ಲಿ ತುಂಬಿಸಿಕೊಂಡ ಪುಸ್ತಕಗಳೆಲ್ಲ ಒಂದೊಂದಾಗಿ ಖಾಲಿಯೂ ಆಗ ತೊಡಗಿದವು, ಇವನು ಯಾವುದಕ್ಕೂ ತಲೆಕೆಡಿಸಿಕೊಂಡ ಜಾಯಮಾನದವನಲ್ಲ.

ನನ್ನ ಹಾಗೂ ಸುಂದರೇಶನ ಸಂಬಂಧ M.Sc.,ಯ ಎರಡನೇ ವರ್ಷದಲ್ಲಿ ಗಟ್ಟಿಯಾಗತೊಡಗಿತ್ತು. ನಾನೂ-ಉಮೇಶನೂ ಫಿಸಿಕ್ಸ್‍ನವರು, ನಮ್ಮ ಜೊತೆಯಲ್ಲಿ ಸುಂದರೇಶ ಇರ ತೊಡಗಿದ (ಸುಂದರೇಶ-ಉಮೇಶ ರೂಮ್ ಮೇಟ್‌ಗಳು, ಆದರೆ ನಾವೆಲ್ಲರೂ ಒಟ್ಟಿಗೇ ಓದಿಕೊಳ್ಳುತ್ತಿದ್ದೆವು).

ನನಗಿನ್ನೂ ಚೆನ್ನಾಗಿ ನೆನಪಿದೆ - ಯಾವುದೇ ನೋಟ್ಸ್ ಸಹಾಯವಿಲ್ಲದೇ, M.Sc.,ಯ ಅಬ್ಸ್ಟ್ರ್ಯಾಕ್ಟ್ ಗಣಿತವನ್ನು ಸುಂದರೇಶ ನೀರು ಕುಡಿದಂತೆ ಜೀರ್ಣಿಸಿಕೊಂಡಿದ್ದ. ಪರೀಕ್ಷೆಯ ಸಮಯದಲ್ಲಿ ಆತ ಒಂದೊಂದೇ ಪುಸ್ತಕವನ್ನು ತೆಗೆದುಕೊಂಡು, ನಾಲ್ಕೈದು ಘಂಟೆಗಳಲ್ಲಿ ಓದಿ ಮುಗಿಸಿ - 'ಆಯ್ತು ಕಣೋ!' ಎಂದಾಗ, ನನಗೂ ಉಮೇಶನಿಗೂ ದಿಗಿಲೋ-ದಿಗಿಲು! ಕೆಜಿಗಟ್ಟಲೆ ರಫ್ ಪೇಪರನ್ನು ತಂದು, ಅದರಲ್ಲಿ ಕೆಲವೇ ಸಾಲುಗಳು, ಇಲ್ಲಾ ಪದಗಳನ್ನು ಗೀಚಿ-ಗೀಚಿ ಎಸೆಯೋ ಅವನ ಶೈಲಿ ಇನ್ನೂ ಕಣ್ಣ ಮುಂದಿದೆ. ಅವ ಹೀಗೇ ಪ್ರತಿಯೊಂದು ಪುಸ್ತಕವನ್ನು ಮುಗಿಸುತ್ತಾ ಬಂದ, ಪ್ರತಿಯೊಂದು ಪರೀಕ್ಷೆಯ ನಂತರವೂ 'ಈ ಪೇಪರ್‌ನಲ್ಲಿ ೯೮ ಬರುತ್ತೆ, ಇದರಲ್ಲಿ ನೂರು, ಇದರಲ್ಲಿ ೯೯ ಬರುತ್ತೆ' ಅಂತಿದ್ದ, ಹಾಗೇ ಆಗೋದು! ಅಂತಾ ಸುಂದರೇಶನಿಗೆ ಜೀನಿಯಸ್ ಅನ್ನದೇ ಇನ್ನೇನು ಅನ್ನೋದು? ಬರೀ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆದನೆಂದಲ್ಲ, ಆತ ಉಸಿರಾಡೋದೇ ಗಣಿತವನ್ನು ಅನ್ನೋಹಾಗಿದ್ದ. ಒಂಥರಾ ನಮ್ಮ ನಡುವಿನ ರಾಮಾನುಜನ್ ಎಂದರೂ ತಪ್ಪಿಲ್ಲ. ಅವನನ್ನು ಎಲ್ಲೆಲ್ಲಿಂದಲೋ ಗಣಿತದ ಮೇಷ್ಟ್ರುಗಳು ತಮ್ಮ ಸಮಸ್ಯೆಗಳ ನಿವಾರಣೆಗೆ ಸಂಪರ್ಕಿಸೋರು!

***

ಸರಿ, ಶಿವಮೊಗ್ಗದಲ್ಲಿ ನಾವೆಲ್ಲ ಪಾರ್ಟ್‌ಟೈಮ್ ಲೆಕ್ಚರರ್ ಆಗಿದ್ವಿ, ಅದರಲ್ಲಿ ಸುಂದರೇಶನೂ ಇದ್ದ, ಆದರೆ ಅವನು ಅಲ್ಲಿಯ ವಿದ್ಯಾರ್ಥಿಗಳಿಗೆ ಮೀರಿದ ಗುರುವಾಗಿದ್ದ. ಕೊನೆಗೂ ಅವ ನನ್ನ ಮಾತನ್ನ ಕೇಳಲೇ ಇಲ್ಲ, ಅಲ್ಲಿಯ ಕಾಲೇಜಿನಲ್ಲಿ ಪಾಠ ಮಾಡಿಕೊಂಡು, ಮನೇ ಪಾಠ ಹೇಳಿಕೊಂಡು ಜೀವನ ಸಾಗಿಸುತ್ತಿದ್ದವನನ್ನು ನಾನು ೧೯೯೮ರಲ್ಲಿ ಭಾರತಕ್ಕೆ ಹೋದಾಗ ಭೇಟಿಯಾಗಿ ಉಗಿದು ಬಂದಿದ್ದೆ!

'ಅಲ್ವೋ, ಒಂದು ಜಾವನೋ, C++ ಕಲಿತು ನೀನು ಯಾಕೆ ನನ್ನ ಥರ ಅಮೇರಿಕಕ್ಕೆ ಬರಬಾರದು? ಸುಮ್ನೇ ಕೆಲಸಕ್ಕೆ ಅಂತ ಇಲ್ಲಿಗೆ ಬಾ, ಆಮೇಲೆ ಸ್ವಲ್ಪ ಕಾಸ್ ಮಾಡಿಕೊಂಡು, MIT ನೋ ಮತ್ತೂಂದೋ ಸೇರ್‌ಕೋವಂತೆ, ಮ್ಯಾಥ್‌ಮ್ಯಾಟಿಕ್ಸ್‌ನಲ್ಲೇ ರಿಸರ್ಚ್ ಮಾಡಿ ಮುಂದೆ ಹೋಗಬಹುದು' ಅನ್ನೋದು ನನ್ನ ಆಗಿನ ಕಾಲದ ಉಪದೇಶ.

'ಇಲ್ಲಿ ಟ್ಯೂಷನ್ ಮಾಡ್ಕೊಂಡು ಬರೋ ದುಡ್‌ನ್ನು ಕಲೆಕ್ಟ್ ಮಾಡಿಕೊಂಡು ಇದ್ರೆ ಸಾಕೋ, ಆದ್ರೂ ನೋಡ್ತೀನಿ, ಎಲ್ಲಾದ್ರೂ ಸೇರ್‌ಕೋತೀನಿ..' ಅಂದವನು ಶಿವಮೊಗ್ಗ ಬಿಡಲೇ ಇಲ್ಲ, ಯಾವತ್ತೋ ಅವನೇ ಹೇಳಿದ್ದ 'ಟ್ಯೂಷನ್ ಮಾಡೀ, ಮಾಡೀ ಬೇಕಾದಷ್ಟು ಕಾಸು ಮಾಡಿದೀನಿ ಕಣೋ!' ಅಂತ, ಅದನ್ನ ಬಿಟ್ರೆ, ಇವತ್ತಿಗೂ ಸುಂದರೇಶ ಶಿವಮೊಗ್ಗ ಬಿಡಲೇ ಇಲ್ಲ ಅಂತ ಕಾಣುತ್ತೆ.

ಹಾಗಾದ್ರೆ ಕಾಸು ಮಾಡೋದೇ ಜೀವನದ ಪರಮಗುರಿಯೇ? ಯಾವ ಮಿಲಿಯನರ್ರೂ ಯಾಕೆ ಮುಂದೆ ಬರೋದಿಲ್ಲ ಇಂಥವರನ್ನು ಕುರಿತು 'ನಿನ್ನ ಹಣಕಾಸಿನ ವಿಷಯವನ್ನು ನಾನು ನೋಡಿಕೊಳ್ತೇನೆ, ಮರ್ಯಾದೆಯಿಂದ ಗಣಿತದಲ್ಲಿ ಅದೇನು ಕಡೀತೀಯೋ ಕಡಿ' ಎಂದು ಹೇಳಲು!

ಈ ಶಿವಮೊಗ್ಗದ DVS, ಸಹ್ಯಾದ್ರಿ ಕಾಲೇಜುಗಳಲ್ಲಿ ಇವನ ದೊಡ್ಡತನವನ್ನ ಗುರುತಿಸೋರು ಯಾರು? ಅವನು ದೊಡ್ಡ ವಜ್ರದ ಥರಾ, ಅದನ್ನ ಹೊಳೆಯೋ ಹಾಗೆ ಮಾಡೋರು ಯಾರು?

***

ನೀವು Good Will Hunting ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ, ಸುಂದರೇಶ ನನ್ನ ಕಣ್ಣಿಗೆ Matt Damonನ ಪಾತ್ರದ ಥರಾನೆ ಕಾಣ್ತಾನೆ. ಸುಂದರೇಶನಿಗೆ ಶಿವಮೊಗ್ಗದಲ್ಲೇ ಟ್ಯೂಷನ್ ಮಾಡಿಕೊಂಡು ಬಿದ್ದಿರಬೇಕೆನ್ನುವುದು passion ಆಗದೇ ಇರಲಿ ಅನ್ನೋದು ನನ್ನ ಬಯಕೆ. ಇವತ್ತಲ್ಲ ನಾಳೆ ಅವನು ಮ್ಯಾಥ್‌ಮ್ಯಾಟಿಕ್ಸ್‌ನಲ್ಲಿ ಏನನ್ನಾದರೂ ಮಹತ್ತರವಾದದ್ದನ್ನು ಸಾಧಿಸಲಿ ಅನ್ನೋದು ನನ್ನ ಹಾರೈಕೆ.

Friday, April 07, 2006

America - Moral Responsibility

ಅಮೇರಿಕೆಯಲ್ಲಿ ನೈತಿಕ ಜವಾಬ್ದಾರಿಯ ಮಾತು ಕೇಳಿ ಬರದು...

ನಾನು USAಗೆ ಬರುವ ಮೊದಲು ಇಲ್ಲಿಯ ಮುಖ್ಯವಾಹಿನಿಯಲ್ಲಿ ನಾನು ಒಬ್ಬನಾಗಿ ಬದುಕುವುದಿಲ್ಲ ಎನ್ನುವುದು ಗೊತ್ತಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲವೇನೋ ಎಂದು ಬಹಳಷ್ಟು ಸಾರಿ ಅನ್ನಿಸಿದೆ. ಮುಖ್ಯವಾಹಿನಿ ಎಂದರೆ ಇಲ್ಲಿಯ ಸಮಾಜದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಎಂಬರ್ಥದಲ್ಲಿ. ಹೊರದೇಶಕ್ಕೆ ಹೀಗೆ ಕೆಲಸಗಾರರಾಗಿಯೋ ಅಥವಾ ವಲಸಿಗರಾಗಿಯೋ ಬರಲು ಹವಣಿಸುತ್ತಿರುವ ಯುವಕ/ಯುವತಿಯರು ಓದಲೇ ಬೇಕಾದ ಪುಸ್ತಕಗಳು, ನೋಡಲೇ ಬೇಕಾದ ಸಿನಿಮಾ ಅಥವಾ ಡಾಕ್ಯುಮೆಂಟರಿಗಳು ನಿಮಗೆ ಗೊತ್ತಿದ್ದರೆ ತಿಳಿಸಿ.

ಇಲ್ಲಿಯ citizen ಆಗದೇ ಇಲ್ಲಿ ಮತ ಚಲಾಯಿಸುವಂತಿಲ್ಲ (ಸಿಟಿಜನ್ ಆಗುವ ಹಾಗೂ ಬಿಡುವ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ), ಮತ ಚಲಾಯಿಸದವನಿಗೆ ಸಂವಿಧಾನದಲ್ಲಿ ಬರೆಯದಿರುವ ಹಕ್ಕಿನ ಮಿತಿಗಳು ದುತ್ತನೆ ಎದುರಾಗಿ ಪದೇ-ಪದೇ ಹಿಂಸಿಸತೊಡಗುತ್ತವೆ. ಅಲ್ಲದೇ ಹಲವಾರು ವರ್ಷಗಳು ಇಲ್ಲಿ ಬದುಕಿ ಹಲವು ವಿಭ್ರಮೆಗಳಿಗೊಳಗಾಗಿದ್ದೂ ಇದೆ, ಅಂತಹ ಮಹಾನ್ ವಿಭ್ರಮೆಗಳಲ್ಲಿ ಅಮೇರಿಕದವರು ಇರಾಕ್ ಮೇಲೆ ಧಾಳಿ ಮಾಡಿ ಅದನ್ನು ಸಾಧಿಸಿಕೊಳ್ಳುವ ವಿಷಯವೂ ಒಂದು - ಆದರೆ ಅದರ ವಿರುದ್ಧವಾಗಿ (ಯಾಕೆಂದರೆ ಅದು ನನ್ನ ರೀತಿಯಿಂದ ತಪ್ಪು ಎನ್ನುವ ಕಾರಣದಿಂದ) ನಾನು ಈವರೆಗೆ ಒಬ್ಬ ನಾಗರಿಕನಾಗಿ ಮಾಡಿದ್ದೇನೂ ಇಲ್ಲ, ಅಲ್ಲಲ್ಲಿ ಗೆಳೆಯರ ನಡುವೆ ಆ ಬಗ್ಗೆ ಮಾತನಾಡಿದ್ದನ್ನು ಬಿಟ್ಟರೆ. ಸರಿ, ನಾನು ಇಲ್ಲಿಯ ಮುಖ್ಯವಾಹಿನಿಯಲ್ಲಿ ಒಬ್ಬನಾಗಿ ಬೆರೆತಿದ್ದರೆ ಅದರಿಂದ ಏನು ವ್ಯತ್ಯಾಸವಾಗುತ್ತಿತ್ತು ಎಂದು ನೀವು ಕೇಳಬಹುದು - ಬಹಳಷ್ಟು ವ್ಯತ್ಯಾಸವಾಗುತ್ತಿತ್ತು: ಇಲ್ಲಿಯ ಲೋಕಲ್ ರೆಪ್ರೆಸೆಂಟೇಟಿವ್ಸ್‌ಗೆ ಬರೆಯಬಹುದಿತ್ತು, ಇರಾಕ್ ಯುದ್ಧದ ಸಂಬಂಧ ಮತ ಚಲಾವಣೆ ನಡೆದಾಗಲೆಲ್ಲ ಅಲ್ಲಿ ಅದರ ವಿರುದ್ಧವಾಗಿ ಧ್ವನಿಗೂಡಿಸಬಹುದಿತ್ತು, ಮುಖ್ಯವಾಗಿ ಒಬ್ಬ ಪ್ರಜೆಯಾಗಿ ಯುದ್ಧವನ್ನು ತಪ್ಪಿಸಲು, ಮುಂದೆ ಅದರಿಂದ ಆಗುವು ವಿಹಿತ ಪರಿಣಾಮಗಳ ವಿರುದ್ಧ ನಿಲ್ಲಬಹುದಿತ್ತು.

ಸರಿ, ಹಾಗಾದರೆ ಇವೆಲ್ಲವನ್ನೂ ನಾನು ಮಾಡದೇ ಇರುವುದಕ್ಕೆ ಕಾರಣಗಳನ್ನು ಕೊಟ್ಟು, escape ಆಗಿ ಹೋಗಲು ನೋಡುತ್ತಿದ್ದೇನೆಂದು ನೀವು ಅಂದುಕೊಳ್ಳಬಹುದು. ಹಾಗೂ ಅಲ್ಲ...

ಇರಾಕ್‌ನಲ್ಲಿ ಸಿಡಿಸಿದ ಪ್ರತಿಯೊಂದು ಬಾಂಬಿನ ಮೇಲೂ ಅಮೇರಿಕದಲ್ಲಿ ತೆರಿಗೆ ಕೊಡುವವರ ಪಾಲಿದೆ, ಆ ಪಾಲಿನಲ್ಲಿ ಬೇಕಾಗಿಯೋ, ಬೇಡವಾಗಿಯೋ ನಾನೂ ಒಬ್ಬನಾಗಿ ಸೇರಿಕೊಂಡಿದ್ದೇನೆ - ಇದು ಇಂದಿನ ತಳಮಳದ ಸಾರ!

***

ಇರಾಕ್ ಯುದ್ಧ ನಡೆದುಹೋಯಿತು, ಆಗಬಾರದ್ದು ಆಯಿತು, ಅದರಿಂದ ನನಗೇನು? ಅಷ್ಟು ಬೇಡವಾಗಿದ್ದರೆ ಇಲ್ಲಿಂದ ಗಂಟು-ಮೂಟೆಗಳನ್ನು ಕಟ್ಟಿ ಹೊರಡಬೇಕಪ್ಪ - ಎಂದಿರೋ, ಅಲ್ಲೇ ಬಂದಿರೋದು ಕಷ್ಟ, ಯಾಕೆಂದ್ರೆ ಅದು ಹೇಳಿದಷ್ಟು ಸುಲಭವಾದ ಮಾತಲ್ಲ.

ನಾವು ಕೆಟ್ಟದ್ದು ಆಗುವುದನ್ನು ನೋಡಿಕೊಂಡು ಅದರ ಬಗ್ಗೆ ಏನನ್ನೂ ಮಾಡದೇ ಹೋಗೋದು ಇದೇ ನೋಡಿ, ಅದಕ್ಕೂ ಆ ಮೂಲ ಕ್ರಿಯೆಗೂ ಏನು ವ್ಯತ್ಯಾಸ ನೀವೇ ಹೇಳಿ? ಹಾಗಂತ ನಮ್ಮ ದೇಶದಲ್ಲಿ (ಅಂದ್ರೆ ಭಾರತದಲ್ಲಿ), ಘಳಿಗೆಗೊಂದು, ಘಂಟೆಗೊಂದು ಯುದ್ಧಗಳಾಗುತ್ತಿರುವಾಗ ಅಲ್ಲಿ ಹೇಗೆ ಕಣ್ಣು ಮುಚ್ಚಿಕೊಳ್ಳುವುದು ಸಾಧ್ಯ? ಏನೇ ಹೇಳಿ ನಮ್ಮ ದೇಶವೇ ದೊಡ್ಡದು, ಅಲ್ಲಿಯ ಮುಂದಾಳುಗಳಿಗಳಿಗೆ ತಾವು ತೆಗೆದುಕೊಂಡ ನಿರ್ಧಾರಗಳಿಗೆ ತಾವು ನೈತಿಕವಾಗಿ ಹೊಣೆಗಾರರು ಎನ್ನುವುದನ್ನು ಅವರು ಮರೆಯದಂತೆ ಮಾಡುವ ಸಮಾಜವಿದೆ, ಆದರೆ ಇಲ್ಲಿ ಹಾಗಲ್ಲ, ತಾವು ಮಾಡಿದ್ದೇ ಸರಿ ಎಂದು ತಿಪ್ಪೇ ಸಾರಿಸುವವರ ಮೀಸೆ ತಿಕ್ಕುವವರಿದ್ದಾರೆ!

ಇಲ್ಲಿ, ದೊಡ್ಡ ಕಾರ್ಪೋರೇಷನ್ ಮಟ್ಟದ್ದಲ್ಲಿ, ವಾಷಿಂಗ್ಟನ್‌ನಲ್ಲಿ ಲಾಬಿ ಮಾಡುವವರ ಮಟ್ಟದಲ್ಲಿ ಲಂಚ ಇದೆ, ಆದರೆ ನನ್ನ ಮಟ್ಟಿಗೆ ದಿನ ನಿತ್ಯದ ಕೆಲಸ-ಕಾರ್ಯಗಳಲ್ಲಿ ಯಾವುದೇ ಲಂಚವನ್ನೂ ನಾನು ಕೊಡಬೇಕಾಗಿಲ್ಲ ಅನ್ನೋದು ದೊಡ್ಡ ಸಮಾಧಾನದ ವಿಷಯ. ಹಾಗಂತ ಇಲ್ಲೇ ನೆಲೆ ಊರೋದಕ್ಕೆ ನಾನು ಪೀಠಿಕೆ ಹಾಕುತ್ತಿಲ್ಲ, ಇಲ್ಲಿ ನೆಲೆ ಊರಿರುವವರು ಕೊಡುವ ಕಾರಣಗಳಲ್ಲಿ ಇದೂ ಒಂದು ಎಂದು ಹೇಳುತ್ತಿದ್ದೇನೆ ಅಷ್ಟೇ.

***

ಸರಿ, ಸದರಿ ಸರ್ಕಾರದ ಪಾಲಿಸಿಗಳು ಎಡವಟ್ಟಾಗಿದ್ದಕ್ಕೂ, ನಾನು ಕೊಡುವ ಟ್ಯಾಕ್ಸಿನ ಹಣಕ್ಕೂ ಇರಾಕ್ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲವೆಂದೂ, ನಾನು ಇಲ್ಲಿಯ ಕೆಲಸಗಾರರಲ್ಲಿ ಒಬ್ಬ - ಏಣಿಯ ಮೇಲೆ ನಿಂತು ಕೆಲಸಮಾಡುವಾಗ ಏಣಿಯನ್ನು ಒದೆಯಬಾರದೆಂಬ ಸಾಮಾನ್ಯ ಜ್ಞಾನವನ್ನಿಟ್ಟುಕೊಂಡು ನಿರ್ಲಿಪ್ತ ಬದುಕನ್ನು ಬದುಕಿ ಬಿಡುತ್ತೇನೆ - ದಯವಿಟ್ಟು, ನೀವು ನಿರ್ಲಿಪ್ತತೆಗೆ ಅರ್ಥಹೀನತೆ ಎಂದು ಅರ್ಥೈಸಿಕೊಳ್ಳದೇ ಬರೀ ಯಾವುದಕ್ಕೂ ಅಂಟಿಕೊಳ್ಳದವನೆಂದುಕೊಂಡರೆ ನನ್ನ ಶ್ರಮ ಸಾರ್ಥಕವಾದೀತು.

***

ಮೇಲೆ ಹೋಗಬೇಕೆನ್ನಿಸಿದಾಗ ಏಣಿ ಆಸರೆಯಾಯಿತು
ಏಣಿ ಮೇಲೆ ಏರಿದಂತೆ ಗೋಡೆಗೆ ಒರಗುವಂತಾಯಿತು

ಮೇಲೆ-ಮೇಲೆ ಹೋದಂತೆಲ್ಲ ತಗ್ಗು-ದಿಣ್ಣೆಗಳು ಕಂಡವು
ಒರಗಿದ ನುಣ್ಣನೆ ಗೋಡೆಯ ಪದರಗಳೂ ಬಿರುಸಾದವು

ಹತ್ತೋದೇನೋ ಹತ್ತಿದ್ದೇನೆ ಇಳಿದರೆ ಬಲು ನಷ್ಟ
ಮುಂದೆ ಹೋಗದೇ ಹತ್ತಿದ್ದಲ್ಲೇ ಇರುವುದು ಕಷ್ಟ

ಚಂದ್ರಲೋಕಕ್ಕೆ ಹೋದೋರೂ ಭೂಮೀನ ತಲೆ ಎತ್ತೇ ನೋಡ್ತಾರೆ
ನಾನು ಎತ್ತ ನೋಡಿದ್ರೂ ನನ್ನ ಭೂಮಿ ನನ್ನ ಕಣ್ಣ ಮರೆ

ಹೀಗೇ ನಾನು ಸುಮ್ನೇ ಇದ್ರೇ ಅಂಥ ಯೋಚ್ನೇ ಮಾಡ್ತೀನಿ
ಯೋಚ್ನೆ ಮಾಡ್ತಾ-ಮಾಡ್ತಾ ಸುಮ್ನೇ ದಿನಗಳ್ನ ಕಳೀತೀನಿ

ಮೇಲೆಕ್ಕೇನೂ ಮಿತಿಯಂತೂ ಇಲ್ಲ, ಕೆಳಗಡೇ ಇದ್ರೇನೇ ಚೆಂದ
ಸರಳತೆ, ಶುದ್ಧತೆ, ಸಾರ್ಥಕತೆ ಇರೋ ಬದುಕೇ ಬಲು ಅಂದ.

Wednesday, April 05, 2006

ಎಚ್. ಎಲ್. ಎಸ್. ರಾವ್ ಎಂಬ ಮೇಷ್ಟ್ರು

ನಾನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹುಟ್ಟಿದವನಲ್ಲ, ಆದರೆ ಅಲ್ಲಿ ಓದುವುದಕ್ಕೋಸ್ಕರ ಹೋಗಿ ನನ್ನ ಜೀವಿತಾವಧಿಯ ಐದು ವರ್ಷಗಳನ್ನು ಕಳೆದವನು. ಹಾಗಾಗಿ ನಾನು ಇಂದು ಏನೇ ಮಾಡಿದರೂ ಅದರಲ್ಲಿ ಸಾಗರದ ಪ್ರಭಾವ ಇರುತ್ತೆ, ನನ್ನ ಬರಹಗಳಲ್ಲೂ ಸಹ!

ಸಾಗರ ಅನ್ನೋ ಪಟ್ಟಣ ಹಲವಾರು ರೀತಿಯಿಂದ ಪ್ರಸಿದ್ಧವಾದದ್ದು: ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಬಹಳಷ್ಟು ಜನ ಈ ಮಾರ್ಗದಿಂದಲೇ ಹೋಗೋದು. ಸಾಗರದಲ್ಲಿ ಶ್ರೀಗಂಧದ ಸಂಕೀರ್ಣವಿದೆ, ಮಲೆನಾಡಿನ ಅಡಿಕೆ ಮಂಡಿಗಳಿವೆ, ಬೆಂಗಳೂರು-ಹೊನ್ನಾವರ ರಸ್ತೆಯ ಆಜುಬಾಜಿನಲ್ಲಿ ನಾವು ಇನ್ನೂ ಬದುಕಿದ್ದೇವೆ ಎಂದು ತೋರಿಸಿಕೊಡುವಂತೆ ಕಾಡಿದೆ, ಎಲ್ಲಕ್ಕೂ ಮುಖ್ಯವಾಗಿ ಒಳ್ಳೆಯ ಪರಿಸರವಿದೆ, ಸಹೃದಯರಿದ್ದಾರೆ. ಸಾಗರದಲ್ಲಿ ಏನೇನಿಲ್ಲ, ಏನಿದ್ದರೆ ಚೆನ್ನಾಗಿತ್ತು ಅನ್ನೋದು ಇನ್ನೊಂದು ದಿನದ ಮಾತಾಗಲಿ.

ನಾನು ಎಲ್. ಬಿ. ಕಾಲೇಜಿಗೆ ಮೊದಲು ಹೆಜ್ಜೆ ಇಟ್ಟಾಗ ಹೊಸ ಪ್ಯಾಂಟಿನ ಜೊತೆಯಲ್ಲಿ ಕೀಳರಿಮೆಯನ್ನೂ ಉಡುಪಾಗಿ ತೊಟ್ಟುಕೊಂಡಿದ್ದೆ. ನಮ್ಮ ಊರಿನ ಹೈ ಸ್ಕೂಲಿನಲ್ಲಿ ನಾನೇ ರಾಜ, ಆದರೆ ಸಾಗರದ ಅಗಾಧತೆ ನನ್ನನ್ನು ಸಂಪೂರ್ಣವಾಗಿ ತನ್ನಲ್ಲಿ ಕರಗಿಸಿಕೊಂಡಿತ್ತು. ನಿಜ ಹೇಳಬೇಕು ಎಂದರೆ ನನಗೆ ಪೂರ್ತಿಯಾಗಿ ಒಂದು ಸಾಲನ್ನೂ ಇಂಗ್ಲೀಷ್‌ನಲ್ಲಿ ಮಾತನಾಡಲು ಬರುತ್ತಿರಲಿಲ್ಲ. ಇನ್ನು ಬರೆದರೋ ಗುಬ್ಬಿ ಮರಿಯನ್ನು ಇಂಕಿನ ಬಾಟಲಿಯಲ್ಲಿ ಅದ್ದಿ ತೆಗೆದು ಬಿಳಿಯ ಕಾಗದದ ಮೇಲೆ ಬಿಟ್ಟರೆ ಬರುವ ಚಿತ್ತಾರದಂತಿತ್ತು. ನಾನು ಓದಿದ್ದ ಹೈ ಸ್ಕೂಲಿನಲ್ಲಿ ಕೊ-ಎಜುಕೇಷನ್ ಇರಲಿಲ್ಲವಾದ್ದರಿಂದ, ಹುಡುಗಿಯರು ಇದ್ದ ಕ್ಲಾಸಿನಲ್ಲಿ ಬಹಳ ಹಿಂಸೆಯಾಗುತ್ತಿತ್ತು.

ನನ್ನ ಮೊದಲ ಕ್ಲಾಸು ಲಂಬೋದರ ಅವರ ಆಲ್‌ಜೀಬ್ರಾ, ಅವರು 'A to the power B, B to the power C' ಎಂದಾಗ ನನಗೆ ಒಂದು ತುಣುಕೂ ಅರ್ಥವಾಗಿರಲಿಲ್ಲ. ನಾಗರಾಜ ಹೆಗಡೆ ಅವರು ಫಿಸಿಕ್ಸ್‌ನ ತರಗತಿಯಲ್ಲಿ, ರೂಮ್ ನಂಬರ್ ನಾಲ್ಕರಲ್ಲಿ ಮಧ್ಯಾಹ್ನ ೪ ರಿಂದ ೫ ರವರೆಗಿನ ಒಂದು ತರಗತಿಯಲ್ಲಿ Errors and Significant numbers ಬಗ್ಗೆ ಪಾಠ ಮಾಡಿದ್ದರು. ನನಗೆ ತರಗತಿ ಮುಗಿದು ನನ್ನ ರೂಮಿಗೆ ಹೋಗಿ ಡಿಕ್ಷನರಿ ನೋಡುವವರೆಗೆ Error ಎಂದರೇನೆಂದು ಗೊತ್ತಿರಲಿಲ್ಲ! ಇನ್ನು ಬಾಟನಿಯ ವಿಷಯವನ್ನು ಕೇಳಲೇ ಬೇಡಿ, ಪಾಠ ಮಾಡುವ ವೆಂಕಟಕೃಷ್ಣಯ್ಯನವರದ್ದು ಯಾವ ತಪ್ಪೂ ಇರಲಿಲ್ಲ - ನಾನು pteriodophyta, thallophyta ಎಂಬುದನ್ನೆಲ್ಲ ನನಗೆ ಹೇಗೆ ಬಂತೋ ಹಾಗೆ ಬರೆದುಕೊಳ್ಳುತ್ತಿದ್ದೆ!

ಹೀಗಿರುವಾಗ, ಮುಂದಿನ ಡೆಸ್ಕಿನಲ್ಲಿ ಕೂರುತ್ತಿದ್ದೆನೆಂತಲೋ ಏನೋ, ಉಳಿದೆಲ್ಲ ಬುದ್ಧಿವಂತ ಹುಡುಗ/ಹುಡುಗಿಯರ ಜೊತೆಯಲ್ಲಿ ಶ್ರೀ ಎಚ್. ಎಲ್. ಎಸ್. ರಾವ್ ಅವರ ಮನೆಗೆ ಬರುವಂತೆ ಬುಲಾವು ಬಂತು. ಅವರ ಮನೆಯೋ ಇದ್ದುದರಲ್ಲೇ ಚಿಕ್ಕದಾಗಿ ಚೊಕ್ಕದಾಗಿ ಕಟ್ಟಿದ ಮನೆ, ಮನೆಯ ದಾರಿಂದ್ರ್ಯ ಪಟ್ಟಿಗೆ ಚೊಕ್ಕದಾಗಿ ಬೀಟೆ ಹಾಗೂ ಗಂಧದ ತುಂಡಿನಲ್ಲಿ ಮಾಡಿದಂತಹ ಕೆತ್ತನೆ, ಗೋಡೆಗಳ ಮೇಲೆ ಅಲ್ಲಲ್ಲಿ ನೇತಾಡುತ್ತಿದ್ದ ತರಾವರಿ ಚಿತ್ತಾರಗಳು ನಾವು ಮುಂದೆ ಮಾಡಬಹುದಾದ ಪ್ರಾಜೆಕ್ಟ್‌ಗಳ ಚರ್ಚೆಗೆ ಸೂಕ್ತ ನೆಲೆಗಟ್ಟನ್ನು ಕೊಡುವಲ್ಲಿ ತಮ್ಮ ಪ್ರಯತ್ನಮಾಡುತ್ತಿದ್ದವು. ನಾವು ಸುಮಾರು ಹತ್ತು-ಹನ್ನೆರಡು ಜನರಿದ್ದಿರಬಹುದು. 'ಆ ಪ್ರಾಜೆಕ್ಟ್ ಮಾಡ್ರೋ, ಈ ಪ್ರಾಜೆಕ್ಟ್ ಮಾಡ್ರೋ!' ಅನ್ನೋ ಹುಮ್ಮಸ್ಸು ಮೇಸ್ಟ್ರುದ್ದು - ನನ್ನ ಜೊತೆಯಲ್ಲಿದ್ದವರೆಲ್ಲ ಡೀಸೆಲ್ ಇಂಜಿನ್ ಬಗ್ಗೆಯೋ, ಮತ್ತೊಂದರ ಬಗ್ಗೆಯೋ ಪ್ರಾಜೆಕ್ಟ್ ಮಾಡುತ್ತೇವೆಂತಲೂ, ಮತ್ತಿನ್ನೇನೋ ಮಾತನಾಡಿಕೊಳ್ಳುತ್ತಿದ್ದರು. ಈ ಮಧ್ಯೆ, ನಮ್ಮೆಲ್ಲರದ್ದು SSLC marks ಎಷ್ಟೆಷ್ಟು ಎನ್ನುವ ಪ್ರಶ್ನೆ ಬಂತು, ಯಾರೋ ಒಂದು ಪೇಪರ್ ಪೆನ್ನೂ ತಗೊಂಡು ಬರೆಯೋದಕ್ಕೂ ಮೊದಲು ಮಾಡಿದರು. ನೀವೆಣಿಸಿದಂತೆ, ಅದರಲ್ಲಿ ನನ್ನದೇ ಕೊನೇ ಹೆಸರು! first class ಗೆ ಎಷ್ಟು ಬೇಕೋ ಅದರ ಹತ್ತತ್ರ ಅಂಕಗಳಿಸಿ, ಅವರೆಲ್ಲರ ಮಧ್ಯೆ (ಶೇ. ೯೦ ರ ಮೇಲೆ ತೆಗೆದವರೂ, ರಾಜ್ಯ ರ್‍ಯಾಂಕ್‌ನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡವರೂ ಆ ಗುಂಪಿನಲ್ಲಿದ್ದರು) ನಾನು ಹೂವಿನ ಜೊತೆ ನಾರಿನ ಹಾಗೆ ಇದ್ದೆ - ಅಲ್ಲ, ನಾರು ಎಂದರೂ ತಪ್ಪಾದೀತು (ಕೀಳರಿಮೆ ಬಗ್ಗೆ ಈ ಮೊದಲೇ ಹೇಳಿದ್ದೇನೆ: ಹಾಸಿ, ಹೊದೆಯುವಷ್ಟು ಇವತ್ತಿಗೂ ಇದೆ!).

ಉಳಿದ ಬುದ್ಧಿವಂತ ಹುಡುಗ/ಹುಡುಗಿಯರು ಅದ್ಯಾವ ಪ್ರಾಜೆಕ್ಟ್ ಮಾಡಿ ಅದೆಲ್ಲಿ ಸಬ್‌ಮಿಟ್ ಮಾಡಿ ಏನನ್ನು ಸಾಧಿಸಿದರೋ ನನಗ್ಗೊತ್ತಿಲ್ಲ, ಆದರೆ ಅದ್ಯಾವುದರಲ್ಲೂ ನಾನಂತೂ ಇರಲಿಲ್ಲ!

ಮುಂದೆ ನಾನು ಬಿ.ಎಸ್ಸಿ. ಸೇರಿಕೊಂಡ ಮೇಲೆ ಕಬ್ಬಿಣದ ಕಡಲೆಯಂತಿದ್ದ HLS Rao ಆತ್ಮೀಯರಾದರು. ಅವರೇ ಬುಲಾವು ಮಾಡಿದರೆಂದು ಮತ್ತೊಮ್ಮೆ ಅವರ ಮನೆಗೆ ಕೆಲವೊಂದು ಜನರು ಹೋದೆವು. ಆ ದಿನ ಮೇಷ್ಟ್ರು ನಮಗೆಲ್ಲ ಕಂಪ್ಯೂಟರ್ ಬಗ್ಗೆ ತಿಳಿಸಿದ್ರು, ಅವರ ಮನೆಯಲ್ಲಿ Sinclair Spectrum ZX (CPU cum monitor) ಇತ್ತು, ಅದರಲ್ಲಿ ಅವರು GW Basic ನಲ್ಲಿ ಏನೇನೋ ಪ್ರೋಗ್ರಾಮ್ಮಿಂಗ್ ಮಾಡಿದ್ರು ಅಂತ್ಲೂ ಗೊತ್ತಾಯ್ತು. ಹೀಗೇ HLS Rao ಹಾಗೂ ನನ್ನ ನಡುವಿನ ಗುರು ಶಿಷ್ಯರ ಸಂಬಂಧ ಮುಂದೆ ನಾನು B.Sc. ಓದುವ ದಿನಗಳಲ್ಲಿ ಇನ್ನೂ ಪಕ್ಕಾ ಆಯಿತು. ಯಾವುದೋ ಬೇಸಿಗೆ ರಜೆಯೊಂದರಲ್ಲಿ ನಾವು ೬೦೦ ರೂಪಾಯಿ ಕೊಟ್ಟು, Programming in BASIC ತರಗತಿಗೆ ಸೇರಿಕೊಂಡೆವು. ಅಂದು ಮಾಡಿದ್ದ ಆ ಕೋರ್ಸೇ ನನಗೆ ಕಂಪ್ಯೂಟರ್ ಭಾಷೆಯ ಮೊದಲ ಅಧ್ಯಾಯ. ಆದ್ದರಿಂದಲೇ ನಾನು HLS Rao ಅವರನ್ನ ವಿಶೇಷವಾಗಿ ನೆನೆಸಿಕೊಳ್ತೀನಿ - ಅವರೇ ನನ್ನನ್ನು ಕಂಪ್ಯೂಟರ್ ಪ್ರೊಗ್ರಾಮ್ಮಿಂಗ್‌ಗೆ ಪರಿಚಯಿಸಿದ್ದು. ಅವರು ಅಂದು ಸಾಗರದಲ್ಲಿ ಅದರ ಭದ್ರ ಬುನಾದಿ ಹಾಕ್ದೇ ಇದ್ರೆ, ನಾನು ಅದನ್ನು pursue ಮಾಡ್ತಿರಲಿಲ್ಲ, ಇಂದು Information Technologyಯಲ್ಲಿ ಕೆಲಸವನ್ನೂ ಮಾಡ್ತಿರಲಿಲ್ಲ ಅನ್ಸುತ್ತೆ. ಅಷ್ಟೂ ಅಲ್ದೇ ಅವರು ಗಣಿತದ ಮೇಷ್ಟ್ರು, ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋ ಅವರ ದಾಹ ಯಾವತ್ತೂ ಹಿಂಗದ್ದು. ಹಂಗೂ-ಹಿಂಗೂ ಮಾಡಿ, ಅವರು ಕಂಪ್ಯೂಟರ್ ಬಗ್ಗೆ ಕಲಿತದ್ದು ಬಹಳ, ಅದರ ಜೊತೆಯಲ್ಲಿ ನನ್ನಂಥ ಮೂರ್ಖರಿಗೂ ಸ್ಪೂರ್ತಿ ನೀಡಿದ್ದು ನಾನೆಂದೂ ಮರೆಯದ ವಿಷಯ.

***

ನಮ್ ಮೇಷ್ಟ್ರು ಮೊದಮೊದಲು ತಮ್ಮ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದಕ್ಕೆ ಅವರ mutually independent ಆಗಿ ಬೇರೆ ಬೇರೆ planeನಲ್ಲಿ ಓಡಾಡೋ ಅವರ ಕಣ್ಣುಗುಡ್ಡೆಗಳೂ ಕಾರಣವಿರಬಹುದು! ಆದರೆ ಒಂದು ಸಾರಿ ನೀವು ಅವರನ್ನ ಅರ್ಥ ಮಾಡಿಕೊಂಡರೆ ಸಾಕು ಮುಂದೆ ಎಲ್ಲವೂ ಸುಲಭ. ನನ್ನಂತೆಯೇ ನಮ್ ಮೇಷ್ಟ್ರೂ ಸಹ ಮೊದ್ಲು ಇಂಗ್ಲೀಷ್‌ನಲ್ಲಿ ಕಷ್ಟ ಪಟ್ಟಿದ್ದರಂತೆ ಅವರೇ ಹೇಳಿದ ಹಾಗೆ ಒಂದ್ ಸಾರಿ ಯಾವ್ದೋ ದೊಡ್ಡ ಮನುಷ್ಯರನ್ನ ಇಂಗ್ಲೀಷ್‌ನಲ್ಲೇ introduce ಮಾಡ್ತೀನಿ ಅಂತ ಹೋಗಿ, 'I pay my sincere homage to so and so...' ಅಂಥ ಹೇಳಿ ತಮ್ಮನ್ನೇ ತಾವು ಪೇಚಿನಲ್ಲಿ ಸಿಕ್ಕಿಸಿಕೊಂಡಿದ್ದರಂತೆ. ನನಗೆ ಇಲ್ಲೀವರೆಗೂ ಅರ್ಥವಾಗ್ದೇ ಇರೋ ವಿಷಯಗಳಲ್ಲಿ, ಒಬ್ಬ ಗಣಿತದ ಮೇಷ್ಟ್ರಾಗಿ ತಾವು ಎಷ್ಟು ಸಿಗರೇಟ್ ಸೇದಿದ್ದೇವೆ ಅನ್ನೋ ಲೆಕ್ಕಾನೇ ಅವರಿಗೆ ಇಲ್ದೇ ಇರೋದು! ಈ ಬಗ್ಗೆ ಕೇಳ್ದಾಗ್ಲೆಲ್ಲ 'ಅದನ್ನ ಯಾಕೆ/ಯಾರು ಲೆಕ್ಕ ಇಟ್ಟಕೊಳ್ತಾರೋ?' ಅಂತ ಪ್ರಶ್ನೆಗೆ-ಪ್ರಶ್ನೆಯೊಂದನ್ನು ಉತ್ತರವಾಗಿ ಕೇಳಿ ಹಾರಿಸಿ ಬಿಡ್ತಾ ಇದ್ರು!

L B Collegeನಲ್ಲಿ, ಈಗ ಲೈಬ್ರರಿ ಇದೇ ನೋಡಿ, ಅದರ ಮೇಲನೇ ಮಹಡಿಯಲ್ಲಿ ಮೊದಲು ಕಂಪ್ಯೂಟರ್ ತರಗತಿಗಳನ್ನು ಶುರುಮಾಡಿದ್ರು. ಆಗ ಇದ್ದವು ಎರಡೇ ಕಂಪ್ಯೂಟರ್‍ಸ್, ಒಂದಕ್ಕೆ ಹಾರ್ಡ್ ಡಿಸ್ಕ್ ಇತ್ತು, ಮತ್ತೊಂದಕ್ಕೆ ಅದೂ ಇರಲಿಲ್ಲ, ಫ್ಲಾಪಿ ಹಾಕಬೇಕಿತ್ತು, MS DOS verison 5.0ಇದ್ದ ಹಾಗೆ ನೆನಪು. ಸ್ವಾರಸ್ಯದ ಸಂಗತಿಯೆಂದರೆ ಒಂದು ದಿನ ನಮ್ಮ ಮೇಷ್ಟ್ರು ಎಲ್ಲೆಲ್ಲಿಂದಲೋ ಬಂದ ವೈರಸ್‌ಗೆ ಹೆದರಿ CPU, Monitor, Keyboard ಎಲ್ಲದರ ಸಮೇತ ಡಬ್ಬಕ್ಕೆ ಹಾಕಿಕೊಂಡು ರಾತ್ರೋ ರಾತ್ರಿ ಬೆಂಗಳೂರಿನ ಬಸ್ಸು ಹತ್ತಿ ವೈರಸ್ 'ರಿಪೇರಿ' ಮಾಡಿಸಿಕೊಂಡು ಬಂದಿದ್ದರು!

ಮತ್ತೊಂದು ಪೇಚಿನ ಪ್ರಸಂಗ ಎಂದರೆ, ಒಂದು ದಿನ ಮೇಷ್ಟ್ರು ಒಂದು ರೂಮಿನಲ್ಲಿ ಕುಳಿತು ಕಾಲೇಜಿನ ಪೇ ರೋಲ್ ಶೀಟ್‌ಗಳನ್ನು ಡಾಟ್ ಮೆಟ್ರಿಕ್ಸ್ ಪ್ರಿಂಟರ್‌ನಲ್ಲಿ ತದೇಕ ಚಿತ್ತದಿಂದ ಪ್ರಿಂಟ್ ಹಾಕುತ್ತಿದ್ದರು, ಅದೇ ಸಮಯದಲ್ಲಿ ನಾನೂ-ಶ್ರೀಪಾದನೂ ಮತ್ತೊಂದು ಕಂಪ್ಯೂಟರ್‌ನಲ್ಲಿ ನಮ್ಮ BASIC ಪ್ರಾಜೆಕ್ಟ್‌ನ್ನು ತಿದ್ದುತ್ತಿದ್ದೆವು, ನಾನು ಅದ್ಯಾವ ರೀತಿಯಲ್ಲಿ CTRL P ಒತ್ತಿದೆನೋ ಗೊತ್ತಿಲ್ಲ, ಪೇ ರೋಲ್ ಪೇಪರ್‌ಗಳ ಮಧ್ಯೆ ನಮ್ಮ ಪ್ರಾಜೆಕ್ಟ್ ಪ್ರಿಂಟ್ ಆಗಿ ನಮ್ಮಿಬ್ಬರನ್ನೂ ಮೇಷ್ಟ್ರು ಹೊರಗೆ ಹಾಕಿದ್ದರು! ನಾವು ಅದನ್ನ ನೆನೆಸಿಕೊಂಡು ನಕ್ಕಿದ್ದೇ ನಕ್ಕಿದ್ದು, ಆದರೆ ಅವರ ಪರಿಪಾಟಲೆ ಹೇಳತೀರದಾಗಿತ್ತು!

***

ಮೊನ್ನೆ ನನ್ನ ಅಣ್ಣನ ಮಗಳು ಕಾಲ್ ಮಾಡಿದ್ಲು, 'ಫಸ್ಟ್ ಪಿ.ಯು.ಸಿ. ಪರೀಕ್ಷೆ ಎಲ್ಲಾ ಆಗಿದೆ, ಮುಂದಿನವಾರದಿಂದ್ಲೇ ಟ್ಯೂಷನ್‌ಗೆ ಹೋಗೋಣ ಅಂತಿದೀನಿ...ಮ್ಯಾಥ್‌ಮ್ಯಾಟಿಕ್ಸ್‌ಗೆ HLS Rao ಅಂತ ಒಬ್ರು retired ಮೇಷ್ಟ್ರು ಇದ್ದಾರೆ, ಅವರು ನಿಮಗ್ ಗೊತ್ತಾ? ಎಲ್ರೂ ಹೇಳ್ತಾರೆ ಅವರ ಪಾಠ ಅರ್ಥ ಮಾಡ್‌ಕೊಳ್ಳೋದು ಬಹಳ ಕಷ್ಟ ಅಂತ...'

ನಾನೆಂದೆ 'ಗೊತ್ತೂ, ಗೊತ್ತೂ...' ನನ್ನ ಮಾತನ್ನ ಮಧ್ಯದಲ್ಲಿಯೇ ತುಂಡು ಮಾಡಿ ಹೇಳಿದಳು...'ನೋಡ್ತೀನಿ, ಸಾಧ್ಯ ಆದ್ರೆ ಅಲ್ಲೇ ಹೋಗ್ತೀನಿ, ಆದ್ರೆ ಒಂದು ಸಮಸ್ಯೆ ಇದೆ, ಅವರು first PUC ನಲ್ಲಿ ಕಡಿಮೆ marks ತಗೊಂಡೋರಿಗೆ ಟ್ಯೂಷನ್ ಹೇಳೋಲ್ಲವಂತೆ, ಕೇಳ್ ನೋಡ್ತೀನಿ...' ಅಂದ್ಲು.

ನಾನು 'ಸರಿ' ಅಂದವನು, ಮನಸ್ಸಲ್ಲೇ 'ಏನ್ ಸಾರ್, ನನ್ನಂಥ ವಿದ್ಯಾರ್ಥಿಗಳಿಗೆ ಪಾಠ ಹೇಳೋಲ್ಲವಂತೆ, ಹೌದಾ?' ಎಂದು HLS Rao ಮೇಲೆ ಮೊದಲ ಬಾರಿಗೆ ಗದರಿಕೊಂಡೆ!

ನಕ್ಸಲರೆಂಬೋ ವಾದ!

ನಾವು ೮೦ ಹಾಗು ೯೦ ರ ದಶಕದಲ್ಲಿ ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದೆವು: ದಕ್ಷಿಣ ಭಾರತದಲ್ಲಿ ಕರ್ನಾಟಕವೆಂದರೆ ಯಾವುದೇ ಭಯೋತ್ಪಾದಕರಿಲ್ಲದ ಸ್ಥಳ, ನಾವು ಸ್ನೇಹ ಪ್ರಿಯರು, ಪ್ರಪಂಚದ ಯಾವುದೇ ಭಾಗದಲ್ಲಿ ರಕ್ತಕ್ರಾಂತಿಯಾದರು ನಮ್ಮ ಕರ್ನಾಟಕದಲ್ಲಿ ಮಾತ್ರ ಹಾಗಾಗದೆಂದು. ಹೀಗೆ ಹೇಳುತ್ತಿದ್ದುದಕ್ಕೆ ಕಾರಣಗಳೂ ಇದ್ದವು, ನಮ್ಮ ನೆರೆಯ ರಾಜ್ಯಗಳಲ್ಲಿ ನಕ್ಸಲೀಯರು, ಎಲ್‌ಟಿಟಿಇ, ಪಿಡಬ್ಲುಜಿ, ಶಿವಸೇನೆ ಮುಂತಾದವರಿಂದ ಆಗಾಗ್ಗ ರಕ್ತ ಚೆಲ್ಲುತ್ತಿತ್ತು - ನಾಡಿನ, ನುಡಿಯ ಹಿತ-ಅಹಿತಗಳು ಅವುಗಳ ಮೇಲೆ ನಿರ್ಧರಿತಗೊಳ್ಳುತ್ತಿದ್ದವು.

ಆದರೆ, ನಮ್ಮ ಕರ್ನಾಟಕಕ್ಕೆ ಇತ್ತೀಚೆಗೆ ಎಂಥಾ ಸ್ಥಿತಿ ಬಂದಿದೆ ನೋಡಿ - ಆಗುಂಬೆ, ಚಿಕ್ಕ ಮಗಳೂರು, ಮಂಗಳೂರು, ಉಡುಪಿ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಇತ್ಯಾದಿ ಪ್ರದೇಶಗಳಲ್ಲಿ ಇತ್ತೀಚೆಗೆ ನಕ್ಸಲರ ಹಾವಳಿ ಅತಿಯಾಗಿದೆ - ಹೌದು, ಹಾವಳಿ ಎಂಬ ಪದವನ್ನು ನಮ್ಮ ಮಾಧ್ಯಮಗಳೂ ಬಳಸುತ್ತಿವೆ.

೧೯೯೧ರ ರಾಜೀವ್ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸರಹದ್ದಿನಲ್ಲಿ ಅಡಗಿ ಕುಳಿತಿದ್ದ ಶಿವರಸನ್ ಮತ್ತು ಅವನ ಸಹಚರರನ್ನು ಕರ್ನಾಟಕದ ಪೋಲೀಸರು ಗುಂಡಿಟ್ಟು ಕೊಂದಿದ್ದು, ಈ ರಕ್ತಕ್ರಾಂತಿಗೆ ನಾಂದಿಯಾಯಿತು ಎನ್ನಬಹುದೇ? ಅಥವಾ ಅದಕ್ಕೂ ಮುನ್ನ ನಡೆದ ಇಂತಹ ಯಾವುದಾದರೂ ಘಟಣೆಗಳನ್ನು ನೆನಪಿಗೆ ತಂದುಕೊಳ್ಳಿ.

ನಾನು ನಕ್ಸಲರ ಬಗ್ಗೆ, ಮಾವೋ ವಾದ, ಮಾರ್ಕ್ಸ್ ವಾದದ ಬಗ್ಗೆ ಸಾಕಷ್ಟು ಓದಿದ್ದೇನೆ. ಅವರ ಮೂಲ ತತ್ವಗಳಿಗೂ, ಅದರ ಇಂದಿನ ಅಳವಡಿಕೆಗೂ ಸಾಕಷ್ಟು ವ್ಯಾತ್ಯಾಸವಿದೆಯೆಂದೆನಿಸುತ್ತೆ. ಪ್ರಜಾಪ್ರಭುತ್ವದಲ್ಲಿ ದೊಡ್ಡ ಹೆಸರನ್ನು ಗಳಿಸಿದ ಭಾರತಕ್ಕೆ ಈ ಮಾವೋ-ಮಾರ್ಕ್ಸ್ ವಾದಗಳು ಹೇಗೆ ಬಂದು ಸುತ್ತಿಕೊಂಡವೋ, ಈ ವಾದದ ಹೆಸರಿನಲ್ಲಿ ಇಂದಿಗೂ ಸಿ.ಪಿಐ. ಪಕ್ಷದ ಅಭ್ಯರ್ಥಿಗಳು ಗೆದ್ದು ಬರುತ್ತಲೇ ಇದ್ದಾರೆ, ಅವರ ಪ್ರಣಾಳಿಕೆಗಳೂ ಅವರಂತೆಯೇ ಇನ್ನೂ ಚಲಾವಣೆಯಲ್ಲಿವೆ. ಉದಾಹರಣೆ ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳನ್ನು ತೆಗೆದುಕೊಂಡರೆ ಅವರ ಪ್ರಭಾವ ಅತಿ ಹೆಚ್ಚು, ಆದರೆ ಈ ರಾಜ್ಯಗಳ ಬೆಳವಣಿಗೆ ಅಷ್ಟಕಷ್ಟೇ. ಎಲ್ಲೆಲ್ಲೋ ಓದಿದ ನಮ್ಮ ಯುವಕರು ಈ ವಾದಗಳನ್ನು ಬೆಂಬಲಿಸಿ ಪೋಲೀಸರ ಗುಂಡಿಗೆ ಬಲಿಯಾದರೆಂದು ಕೇಳಿದಾಗ ಖೇದವಾಗುತ್ತದೆ, ತಮ್ಮ ಯುವ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯರ ರೋಧನ ಮುಗಿಲು ಮುಟ್ಟುತ್ತೆ, ನಕ್ಸಲರು ಎಂಬ ಹಣೆ ಪಟ್ಟಿ ಹೊತ್ತುಕೊಂಡ ಮಾತ್ರಕ್ಕೆ ಈ ಯುವಕರ ಹೆಣಗಳು ಮುನಿಸಿಪಾಲಿಟಿಯವರ ಸೊತ್ತಾಗುತ್ತದೆ.

ಯಾರು ಇವರಿಗೆಲ್ಲ ಹಣ (ಜೊತೆಯಲ್ಲಿ ಆಸೆ, ಆಮಿಷಗಳನ್ನೂ) ಸರಬರಾಜು ಮಾಡುವವರು? ಒಂದು ಒಳ್ಳೆಯ ಕಾರ್ಯವನ್ನು ಮಾಡಬೇಕೆಂದರೇ ಸಾಕಷ್ಟು ವಿಘ್ನಗಳು ತಲೆದೋರುವಾಗ ಇವರು ಇಷ್ಟೊಂದು ಯಶಸ್ವಿ ಅಥವಾ ವ್ಯವಸ್ಥಿತವಾದ ಕಾರ್ಯಾಚರಣೆಯನ್ನು ಅದು ಹೇಗೆ ನಡೆಸಿಕೊಂಡು ಬರುತ್ತಾರೆ? ಈ ಯುವಕ-ಯುವತಿಯರ ಅಂತಿಮ ಗುರಿ ಏನು, ಇವರ ಪ್ರಣಾಲಿಕೆಗಳೇನು? ಆಳುವವರ ವಿರುದ್ಧದ ಹೊಡೆದಾಟದಲ್ಲಿ ಬರೀ ಶಸ್ತ್ರಾಸ್ತ್ರಗಳಿಗೆ ಶರಣು ಹೋಗುವುದೇ ಇವರ ನಿಲುವೇ? ಇವರಿಂದ ಸಮಾಜದಲ್ಲಿನ ದುರ್ಬೀಜಗಳನೆಲ್ಲ ಹೊಸಕಿ ಹಾಕುವುದು ಸಾಧ್ಯವೇ? ಇವರಲ್ಲಿ ಸಿಟ್ಟಿದೆಯೇ? ಇವರು ಬಡವರ ಪರವೋ, ವಿರುದ್ಧವೋ? ಶಸ್ತ್ರಾಸ್ತ್ರಗಳನ್ನು ಬಳಸಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುನ್ನ ಉಳಿದ ದಾರಿಗಳನ್ನು ಇವರು ಅವಲೋಕಿಸಿದ್ದಾರೆಯೇ? ಇಷ್ಟೆಲ್ಲ ಆದ ಮೇಲೆ ಅದರಿಂದೇನಾಯಿತು? ಮನೆ ಗೆದ್ದು ಮಾರಿ ಗೆಲ್ಲು ಎಂಬ ಹಿರಿಯರ ಹೇಳಿಕೆಯನ್ನು ಮೀರಿ, ತಮ್ಮನ್ನು ಬೆಳೆಸಿ, ಪೋಷಿಸಿದವರನ್ನು ತೊರೆದು, ನಾಡಿಗೆ ನೇರವಾಗಿ ಯಾವುದೇ ರೀತಿಯಲ್ಲಿ ಉಪಯೋಗವಾಗದ ಕೆಲಸ ಕಾರ್ಯಗಳಲ್ಲಿ ಇವರು ತೊಡಗಿರುವುದನ್ನು ಇವರು ಹೇಗೆ ಸಾಧಿಸಿಕೊಳ್ಳುತ್ತಾರೋ ಎಂಬ ಕುತೂಹಲವಿದೆ.

ನಮ್ಮ ರಾಜ್ಯ ಸರ್ಕಾರ ಈ ಕುರಿತು ಹಲವಾರು ರೀತಿಯ ವರದಿಗಳನ್ನು ತಯಾರಿಸಲು ಕಮಿಷನ್‌ಗಳನ್ನು ನಿರ್ಮಿಸಿತು, ಅವುಗಳಿಂದ ಬೆಳಕಿಗೆ ಬಂದ ವಸ್ತುಗಳು ನಿಮಗೇನಾದರೂ ದೊರಕಿದ್ದರೆ ಕಳಿಸಿಕೊಡಿ. ನಕ್ಸಲರ ಬೆಳವಣಿಗೆ, ಕರ್ನಾಟಕದ ಮಟ್ಟಿಗೆ ಇನ್ನು ಮುಂದೆ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಯುವ ಜನತೆ ಹಾಗೂ ಅಮಾಯಕರು ಇದರ ಬಲೆಯಲ್ಲಿ ಬಿದ್ದು ಹಾಳಾಗಾದಿದ್ದರೆ ಸಾಕು.

ಒಂದು ವೇಳೆ ನಾನು ಯಾವುದಾದರೊಂದು ತತ್ವಕ್ಕೆ ಕಟ್ಟು ಬಿದ್ದವನಾದ ಮಾತ್ರಕ್ಕೆ, ಹಿಂದೆ ಮುಂದೆ ನೋಡದೆ ನನ್ನನ್ನು ಮುನಿಸಿಪಾಲಿಟಿ ನಾಯಿಯ ಹಾಗೆ ಹೊಡೆದುರುಳಿಸುವ ಅಧಿಕಾರ ಪೋಲೀಸಿನವರಿಗೆ ಸಿಗುತ್ತದೆಯೆಂದು ಗೊತ್ತಾದ ತಕ್ಷಣ ನನ್ನ ತತ್ವ ಹಾಗೂ ಹೆಜ್ಜೆಗಳನ್ನು ಪುನರಾವಲೋಕನ ಮಾಡಿಕೊಳ್ಳುತ್ತಿದ್ದೆ, ಈ ಯುವಕ-ಯುವತಿಯರಿಗೆ ಆ ಅವಕಾಶ ಬರಲಿ.

Tuesday, April 04, 2006

ನೋವಿಲ್ಲದೇ ನಲಿವಿಲ್ಲ!

No pain, no gain, ಇದನ್ನು ಕನ್ನಡದಲ್ಲಿ ನೋವಿಲ್ಲದೇ ನಲಿವಿಲ್ಲ ಎಂದು ಕೆಟ್ಟದಾಗಿ ಭಾಷಾಂತರ ಮಾಡಬಹುದೋ ಏನೋ? ಆದರೆ ಅದರ ಒಳಗಡಗಿರುವ ಸತ್ಯವಂತೂ ಅಷ್ಟೇ ಖಾರವಾದದ್ದು!

ನಾನು Big Brothers Big Sisters ಗ್ರೂಪ್‌ನಲ್ಲಿ ಸೇರಿಕೊಂಡಿದ್ದೇನೆ, ನನ್ನ ಪಾಲಿಗೆ ಒಬ್ಬ ಒಂಭತ್ತನೇ ತರಗತಿ ಹುಡುಗ ಮೆಂಟಿಯಾಗಿ ಸಿಕ್ಕಿದ್ದಾನೆ. ಈ ಹುಡುಗ ಹುಟ್ಟಿದ್ದು ಜಮೈಕದಲ್ಲಿ, ಇಲ್ಲಿಗೆ ತನ್ನ ತಂದೆ-ತಾಯಿಯರೊಂದಿಗೆ ಚಿಕ್ಕ ವಯಸ್ಸಿನಲ್ಲಿ ಬಂದು ಈಗ ಅಮೇರಿಕನ್ ಆಗಿದ್ದಾನೆ.

ಈ ಹುಡುಗನ ವಿಶೇಷವೆಂದರೆ - ಈತ ಒಬ್ಬನೇ ಇದ್ದಾಗ ಸಜ್ಜನ - ತನ್ನ ಗೆಳೆಯರ ಜೊತೆಗೂಡಿದನೆಂದರೆ ಕಿಲಾಡಿ, ಕಿತಾಪತಿಗಿಳಿಯುತ್ತಾನೆ! (mostly ಅದು ಎಲ್ಲರಿಗೂ ಅನ್ವಯಿಸುತ್ತೋ ಏನೋ).

ಒಬ್ಬ 'ದೊಡ್ಡ ಅಣ್ಣ"ನಾಗಿ ನಾನು ಇವನ ಜೊತೆ ಎರಡು ವಾರಕ್ಕೊಮ್ಮೆ ಭೇಟಿಯಾಗುತ್ತೇನೆ, ಇವನ ಜೊತೆಯಲ್ಲಿ ಇನ್ನಿತರ ಹುಡುಗ-ಹುಡುಗಿಯರೂ ಬರುತ್ತಾರೆ. ಒಟ್ಟಿನಲ್ಲಿ ನಾವೆಲ್ಲ ಸೇರಿ ಒಂದು ಸಣ್ಣ ಸಮುದಾಯವಾಗುತ್ತೇವೆ. ನಮ್ಮ ನಡುವೆ ಒಳ್ಳೆಯ ಸಂಬಂಧವಿದೆ, ಸ್ನೇಹವಿದೆ.

ನ್ಯೂ ಯಾರ್ಕ್ ಸಿಟಿಯ ಸುತ್ತಲಿನಲ್ಲಿ ಇಂತಹ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತೆ: ಸ್ಥಳೀಯ ಅಂಕೆ-ಸಂಖ್ಯೆಗಳಿಗೆ ತಕ್ಕಂತೆ ಇಲ್ಲಿಯ ಮಕ್ಕಳಲ್ಲಿ ಕರಿಯರು ಹಾಗೂ ಹಿಸ್ಪ್ಯಾನಿಕ್ ಮಕ್ಕಳು ಹೆಚ್ಚು.

ಮೊನ್ನೆ ಕೆರಿಯರ್ ಸಂಬಂಧಿ ಮಾತುಕತೆಗಳಿಗಿಳಿದಾಗ, ನಮಗೆ (ದೊಡ್ಡವರಿಗೆ) ಆಶ್ಚರ್ಯವಾಗುವಂತೆ, ಈ ಮಕ್ಕಳಲ್ಲಿ ಹೆಚ್ಚಿನವರು ಒಂದೇ ತಾವು ರ್‍ಯಾಪ್ ಆರ್ಟಿಸ್ಟ್ ಆಗುತ್ತೇವೆಂದೋ, ಇಲ್ಲಾ NBA, NHL ನಲ್ಲಿ ಆಟವಾಡುವಾಡುವ ಪ್ರೊ ಗಳಾಗುತ್ತೇವೆಂದೋ ಕನಸು ಕಾಣುತ್ತಿದ್ದರು. ನಿಜವಾಗಿಯೂ ಹೇಳೋದಾದರೆ ಇದ್ದುದರಲ್ಲಿ ಕಷ್ಟವಾದ ಕೆರಿಯರ್ ಎಂದರೆ ವೃತ್ತಿಪರ ಆಟಗಾರರಾಗುವುದು ಅಥವಾ ದೊಡ್ಡ ಸೆಲೆಬ್ರಿಟಿಯಾಗುವುದು. ದುಃಖದ ವಿಷಯವೆಂದರೆ ಈ ಮಕ್ಕಳಿಗೆ ಬದುಕು ಎಂದರೆ ಏನು ಎಂದು ಹೈ ಸ್ಕೂಲಿಗೆ ಬಂದರೂ ಗೊತ್ತಾಗದಿರುವುದು. ನೀವು ಪ್ರತಿಯೊಬ್ಬ ಸ್ಟಾರ್‌ನ ಚರಿತ್ರೆಯನ್ನು ನೋಡಿ, ಅವರು ಎಷ್ಟು ಕಷ್ಟ ಪಟ್ಟು ಮುಂದೆ ಬಂದಿರುತ್ತಾರೆ ಎಂದು ನಿಮಗೇ ಅರಿವಾಗುತ್ತದೆ. ಈ ಬಗ್ಗೆ ನಾನೂ ಮತ್ತು ಇತರರು ತಿಳಿ ಹೇಳಲು ನೋಡಿದೆವು, ನಮ್ಮ ಉಪದೇಶ ಕೆಸುವಿನ ಎಲೆಯ ಮೇಲೆ ಬಿದ್ದ ನೀರಾಯಿತು.

ಇದೇ ಮಾತುಕಥೆಯಲ್ಲಿ ಇತರರ ಅಭಿಪ್ರಾಯದಂತೆ ಈ ರ್‍ಯಾಪ್ ಮ್ಯೂಸಿಕ್‌ನ ಹಿಂದೆ, ದೊಡ್ಡ ಡ್ರಗ್ ಸ್ಟೋರಿಗಳೇ ಇರುತ್ತವೆ, ಈ ಸೆಲೆಬ್ರಿಟಿಗಳು ತಾವು ರ್‍ಓಲ್‌ಮಾಡಲ್ ಆಗಿ ತಮ್ಮನ್ನು ತಾವು ತೋರಿಸಿಕೊಂಡಂತೆಲ್ಲ ತಮ್ಮ ನಿಜ ಜೀವನವನ್ನು, ಅವರ ಯಶಸ್ಸಿನ ಗುಟ್ಟನ್ನು ಹಂಚಿಕೊಳ್ಳದೇ ಈ ಮುಗ್ಧ ಫ್ಯಾನ್‌ಗಳಿಗೆ ಅನ್ಯಾಯವಾಗುತ್ತಿದೆ ಎಂಬುದಾಗಿ, ಈ ಮಕ್ಕಳ ದಿನಚರಿಯಲ್ಲಿ ಎಲ್ಲೂ ಕಷ್ಟ ಪಟ್ಟು ಮುಂದೆ ಬರುವ ಬಗ್ಗೆ ಒತ್ತು ಕೊಡುವುದಿಲ್ಲ ಎಂಬುದಾಗಿ, ಹಾಗೂ ಈ ಮಕ್ಕಳಿಗೆ ಕಷ್ಟವೇನೆಂದೇ ಗೊತ್ತಿಲ್ಲ, ಇತ್ಯಾದಿ, ಇತ್ಯಾದಿ ಮಾತುಗಳು ಕೇಳಿಬಂದವು.

ಅದು ನಿಜವೋ ಸುಳ್ಳೋ ಗೊತ್ತಿಲ್ಲ, ಒಟ್ಟಿನಲ್ಲಿ, ಈ ಮುಗ್ಧ ಮಕ್ಕಳು they are in for a surprise for sure! ಈ ಮಾತನ್ನು ಅವರ ಸ್ವಾತಂತ್ರ್ಯವನ್ನು ಕರುಬಿ ಹೇಳುತ್ತಿಲ್ಲ, ಅವಿರತವಾಗಿ ಯಶಸ್ಸನ್ನು ಅನುಸರಿಸದೇ ಅನವರತ ಹಗಲುಗನಸನ್ನು ಕಾಣುವ ಅವರ ಸ್ವಾತಂತ್ರ್ಯವನ್ನು ಕುರಿತು ಹೇಳಬೇಕಾಗಿ ಬಂತು.

ಅಥವಾ ನಾನು ಎಷ್ಟೊಂದು ಕಷ್ಟ ಪಟ್ಟಿದ್ದೇನೆ (really?) ಇವರು ಕನಸು ಕಂಡಷ್ಟೇ ಸುಲಭವಾಗಿ ಇವರ ಭವಿಷ್ಯವೂ ಆಗಿ ಹೋದರೆ ಎಂಬ ಹೊಟ್ಟೆ ಉರಿ ಇದ್ದರೂ ಇರಬಹುದು.

Monday, April 03, 2006

Remember Richard Cory?

ರಿಚರ್ಡ್ ಕೋರಿ - ನೆನಪಿದೆಯೇ?

ನಿನ್ನೆ ಸಂಜೆ ನಮ್ಮ ಕ್ಲಬ್ ಹೌಸ್‌ನಲ್ಲಿ ಹೋಗಿ ಪೂಲ್ ಟೇಬಲ್ ಖಾಲಿ ಇದ್ದದ್ದರಿಂದ ನನ್ನಷ್ಟಕ್ಕೆ ನಾನೇ ಆಡಿಕೊಳ್ಳುತ್ತಿದ್ದೆ - ನನ್ನ ಅದೃಷ್ಟಕ್ಕೋ ಒಮ್ಮೆ ಸಾಲಿಡ್ ಗೆದ್ದರೆ ಮತ್ತೊಮ್ಮೆ ಸ್ಟ್ರೈಪ್ಸ್ ಗೆಲ್ಲುತ್ತಿತ್ತು.

ಹೀಗೇ ಒಂದರ್ಧ ಘಂಟೆ ಕಳೆಯುವಷ್ಟರಲ್ಲಿ ದಿಢೀರನೆ ಬಾಗಿಲು ತೆಗೆದುಕೊಂಡು ನಾಲ್ಕು ಜನ ದೇಸಿ ಜನ ನುಗ್ಗಿದರು, ದಂಪತಿಗಳೋ, ಬಾಯ್‌ಪ್ರೇಂಡ್-ಗರ್ಲ್‌ಪ್ರೆಂಡೋ ಯಾರಿಗೆ ಗೊತ್ತು - ಇಬ್ಬರು ಹುಡುಗರು, ಇಬ್ಬರು ಹುಡುಗಿಯರು. ನನಗೆ ಆಶ್ಚರ್ಯವಾಗುವಂತೆ ತಮ್ಮನ್ನ ತಾವೇ ಪರಿಚಯಿಸಿಕೊಂಡು ಹಸ್ತ ಲಾಘವ ನೀಡಿ ನನ್ನನ್ನು ನಾನಿದ್ದ ರೀತಿಯಲ್ಲೇ ಸ್ವೀಕರಿಸಿದರು - ಯಾಕೆ ಈ ಮಾತು ಹೇಳಬೇಕಾಯಿತೆಂದರೆ: ನಾನು ಹೊರಗೆ ವಾತಾವರಣ ಚೆನ್ನಾಗಿದ್ದುದರಿಂದ ಮೊಟ್ಟಮೊದಲ ಬಾರಿಗೆ ಭಾರತದಿಂದ ತಂದ ಚಪ್ಪಲಿಗಳನ್ನು ಧರಿಸಿ, ಇದ್ದ ಒಂದು ಹಳೆಯ ಜೀನ್ಸ್ ಪ್ಯಾಂಟನಿಳೊಗೆ ಅಂಗಿಯೊಂದನ್ನು ತುರುಕಿಕೊಂಡು ಬಂದಿದ್ದೆ, ಶೇವ್ ಮಾಡಿ ಅದ್ಯಾವ ಕಾಲವಾಗಿತ್ತೋ, ದಿನವಿಡೀ ಬಿಸಿಲಿನಲ್ಲಿ ಕಾರು ಓಡಿಸಿ, ತಿರುಗಾಡಿ, ಮುಖವೂ ಬಾಡಿ ಹೋಗಿತ್ತು - ಯಾರನ್ನಾದರೂ ಹೊಸತಾಗಿ ಪರಿಚಯ ಮಾಡಿಕೊಳ್ಳಲು ಲಾಯಕ್ಕಲ್ಲದ ಸ್ಥಿತಿಯಲ್ಲಿದ್ದೆ.

ಸರಿ, ನಾನು ನನ್ನಷ್ಟಕ್ಕೆ ಆಡಿಕೊಳ್ಳುತ್ತಿದ್ದೆ - ನನಗೇ ಆಶ್ಚರ್ಯವಾಗುವಂತೆ ನಾನು ಆಟವಾಡುವ ಗತಿಯಲ್ಲಿ ಯಾವ ಬದಲಾವಣೆಗಳೂ ಆಗಲಿಲ್ಲ.

ಈ ಮಧ್ಯೆ ಈ ಯುವ ಜೋಡಿಗಳು, ಅದರಲ್ಲಿ ಹುಡುಗರು ಕೇಳಿದ, ಮುಖ್ಯವಾಗಿ ನನ್ನನ್ನು ಕುರಿತ ಪ್ರಶ್ನೆಗಳು ನನ್ನನ್ನು ಚಕಿತಗೊಳಿಸಿದವು:
ಅವರು ನನ್ನನ್ನು ಕುರಿತು ಪ್ರಶ್ನೆಗಳ ಸುರಿಮಳೆಯನ್ನೇ ಆರಂಭಿಸಿದರು - ಈ ವಟಾರದಲ್ಲಿ ಎಷ್ಟು ವರ್ಷದಿಂದ ಇದ್ದೀಯೆ, ಎಲ್ಲಿ ಕೆಲಸ ಮಾಡುತ್ತೀಯೆ, ಏನು ಕೆಲಸ ಮಾಡುತ್ತೀಯೆ, ಯಾವ ಕಂಪನಿ, ನ್ಯೂ ಯಾರ್ಕ್ ಸಿಟಿಗೆ ಹೇಗೆ ಹೋಗಿ ಬರುತ್ತಿ, ಇತ್ಯಾದಿ, ಇತ್ಯಾದಿ.

ಇವೆಲ್ಲಕ್ಕೂ ತಾಳ್ಮೆಯಿಂದ ಉತ್ತರ ಕೊಟ್ಟೆನಾದರೂ ಇವರ ಶಿಷ್ಟಾಚಾರವನ್ನು ನೋಡಿ ಒಮ್ಮೆ ದಿಗಿಲಾಯಿತು - ನಾನೆಂದುಕೊಂಡಂತೆ ಯಾರೊಬ್ಬರ ಮೊದಲನೇ ಭೇಟಿಯಲ್ಲಿ ಅವರ ಜೀವಮಾನವನ್ನು ಕಲಕುವುದು ನಾಗರಿಕರ ಲಕ್ಷಣವಲ್ಲ. ನನ್ನ ಜೊತೆಯಲ್ಲಿದ್ದವರಿಗೆ ನಾನು ಈ ಮಾತನ್ನು ಅವಶ್ಯವಾಗಿ ಹೇಳುತ್ತೇನೆ, ಇನ್ನೊಬ್ಬರ ಉಸಾಬರಿ, ಅದರಲ್ಲೂ ಅದರ ಸಂಪೂರ್ಣ ವಿವರಣೆ ಪಡೆಯುವುದರ ಅಗತ್ಯ ಏನು? ಇನ್ನು ಕೆಲವರಂತೂ ಅಳತೆಗೋಲನ್ನು ಸದಾ ತಮ್ಮೊಟ್ಟಿಗೆ ಇಟ್ಟುಕೊಂಡಿರುತ್ತಾರೆ - ಉದಾಹರಣೆಗೆ ಅಮೇರಿಕದಲ್ಲಿ ನೀವು ಎಷ್ಟು ವರ್ಷದಿಂದ ಇದ್ದೀರಿ? ಎನ್ನುವ ಪ್ರಶ್ನೆಯ ಉತ್ತರ ಅವರ ಸ್ಥಾನಮಾನವನ್ನು ಬದಲಿಸಬಲ್ಲದು, ಅವರು ನಿಮ್ಮನ್ನು ನೋಡುವ ದೃಷ್ಟಿಕೋನದ ವ್ಯಾಖ್ಯೆಯನ್ನು ಸೃಷ್ಟಿಸಬಲ್ಲದು, ಅವರು ನಿಮ್ಮೊಡನೆ ಮುಂದೆ ಬೆರೆಯುವ ಬಗೆಯನ್ನು ನಿರ್ಧರಿಸಿಬಿಡಬಲ್ಲದು.

ನಾವು ಇನ್ನೊಬ್ಬರನ್ನು ನೋಡಿ ಕಲಿಯುವುದೋ, ಇನ್ನೊಬ್ಬರಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳುವುದರಲ್ಲಿ ತಪ್ಪೇನೂ ಇರಲಾರದು, ಆದರೆ ಅದು ಕೀಳು ಮಟ್ಟದ ಶಿಷ್ಟಾಚಾರವನ್ನು ಪ್ರತಿಬಿಂಬಿಸುತ್ತದಾದರೆ, ಅದು ಅನವಶ್ಯಕ ಅಸೂಯೆಯನ್ನು ಹುಟ್ಟಿಸಬಲ್ಲದಾದರೆ ಅದಕ್ಕೊಂದು ಕಡಿವಾಣಹಾಕುವುದು ಒಳ್ಳೆಯದೇ.

ನಿಮಗೆಲ್ಲ ಗೊತ್ತಿರೋ ಹಾಗೆ ಅಮೇರಿಕದಲ್ಲಿ ಯಾರಿಗಾದರೂ ಹೇಳಿ, "ಅವನು ಮಿಲಿಯನ್ ಡಾಲರ್ ಹಣವನ್ನು ಲಾಟರಿಯಲ್ಲಿ ಗೆದ್ದನೆಂದು' ನಿಮಗೆ ತಟ್ಟನೆ 'Good for him ಎನ್ನುವ ಉತ್ತರ ಸಿಗುತ್ತದೆ!

ಅದೇ ರಿಚರ್ಡ್ ಕೋರಿ ನೆನಪಿಗೆ ಬರುತ್ತಾನೆ:

Whenever Richard Cory went down town,
We people on the pavement looked at him:
He was a gentleman from sole to crown,
Clean favored, and imperially slim.
And he was always quietly arrayed,
And he was always human when he talked;
But still he fluttered pulses when he said,
"Good-morning," and he glittered when he walked.

And he was rich - yes, richer than a king -
And admirably schooled in every grace;
In fine we thought that he was everything
To make us wish that we were in his place.

So on we worked, and waited for the light,
And went without the meat, and cursed the bread;
And Richard Cory, one calm summer night,
Went home and put a bullet through his head.

ಈ ಸಾಲುಗಳನ್ನು ಇಲ್ಲಿ ಏಕೆ ತೋರಿಸಿದೆನೋ ಗೊತ್ತಿಲ್ಲ! Anyway, ನಾವು ಇನ್ನೊಬ್ಬರನ್ನು ಅಳೆಯುವ ಪರಿಪಾಠದಲ್ಲಿ ತೊಡಗಿದ್ದೇವೆ ಎಂದಾಕ್ಷಣ, ನಾವು ಮಾತುಕತೆಯ ಶಿಷ್ಟಾಚಾರವನ್ನು ಮೀರಿ ಇನ್ನೊಬ್ಬರೊಡನೆ ನಡೆದುಕೊಳ್ಳುತ್ತೇವೆಂದಾಕ್ಷಣ ಅದು ನಮ್ಮನ್ನು ಯಾವ ರೀತಿಯಲ್ಲೂ ಉತ್ತಮರನ್ನಾಗಿ ಮಾಡದು ಅಲ್ಲವೇ? ಶ್ರೀಮಂತರನ್ನು ನೋಡಿ ಬಡವ ಕರುಬಬಹುದು, ಮರುಗಬಹುದು, ಆ ಹೊಟ್ಟೆ ಉರಿಯಿಂದ ಈ ಬಡವೇನಾದರೂ (ತನ್ನ ಉದ್ಧಾರಕ್ಕೆ) ಮಾಡಿ ಈ ಶ್ರ್‍ಈಮಂತನನ್ನು ಮೀರಿಸಿದರೆ ಒಂದು ರೀತಿಯ ಸ್ಪರ್ಧೆಯಲ್ಲಿ ಏರ್ಪಟ್ಟು ಅದರಲ್ಲಿ ಜಯಗಳಿಸಿದ ಲಾಭ ಬಡವನಿಗೆ - ಆ ರೀತಿಯಲ್ಲಿ ನಾನು ಅಸೂಯೆಯನ್ನು ಬೆಂಬಲಿಸುತ್ತೇನೆ.

ಅಲ್ಲದೇ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುವಂತೆ, ಅವರವರ ಸಮಸ್ಯೆ ಅವರವರಿಗೆ - ಇಂದು ಬಿಲ್ ಗೇಟ್ಸ್‌ನ ಆಸ್ತಿ ಅಂತಸ್ತನ್ನು ಪ್ರಪಂಚದ ಬಡವರಿಗೆ ಹಂಚಿದರೆ ಅದರಿಂದ ಅವರ ಉದ್ಧಾರವಾಗುತ್ತದೆಯೇ? ಇಂದು ನಾವು ಇರುವ ಸ್ಥಿತಿಗತಿಗೆ ಹೆಚ್ಚಿನ ರೀತಿಯಲ್ಲಿ ನಾವೇ ಹೊಣೆ. ಇತರರಿಗೆ ನಮ್ಮನ್ನು ನಾವು ಹೋಲಿಸುವ ಪರಿಪಾಠ ಆರೋಗ್ಯಕರವಾಗಿಲ್ಲದಿದ್ದರೆ ಅದರ ನಷ್ಟ ನಮಗೇ.

Saturday, April 01, 2006

ಎಲ್ಲಿ ಹೋದರೀ ಸ್ನೇಹಿತರು?

ಸ್ನೇಹಿತ ಅನ್ನೋ ಪದವೇ ಸ್ವಾರಸ್ಯಕರವಾದದ್ದು, ಅದರಲ್ಲಿ ಹಿತವೂ ಇದೆ, ಸ್ನೇಹವೂ ಇದೆ!

ಈ ಪದಗಳನ್ನು ಮನಸ್ಸಲ್ಲಿ ತಂದುಕೊಳ್ಳಿ - ಹಿತೈಷಿ, ವಿಶ್ವಾಸಿ, ಬಂಧು, ಬಳಗ, ನೆಂಟ, ಸಂಬಂಧಿ, ಇತ್ಯಾದಿ... ಇವುಗಳಲ್ಲೆಲ್ಲ 'ಸ್ನೇಹಿತ'ನಿರಲೇಬೇಕು ಎಂದೇನಿಲ್ಲ, ಆದರೆ ಸ್ನೇಹಿತನಲ್ಲಿ ಇವೆಲ್ಲವೂ ಇವೆ.

ನನ್ನಂಥ ವಲಸಿಗನಿಗೆ ಬಂದಿರಬಹುದಾದ ಹಲವಾರು ಸಮಸ್ಯೆಗಳಲ್ಲಿ ಸ್ನೇಹಿತರ ಬರವೂ ಒಂದು. ನೀವು ಕೇಳಬಹುದು - ಇಷ್ಟೊಂದು ದೊಡ್ಡ ದೇಶದಲ್ಲಿ ಸ್ನೇಹಿತರಿಗೇನು ಬರವೇ? ಎಂದು. ಹೌದು - ನನಗರಿವಿಲ್ಲದಂತೆ ಬಹಳಷ್ಟನ್ನು ಕಳೆದುಕೊಂಡಿದ್ದೇನೆ ಅದರಲ್ಲಿ ನನ್ನ ಭಾರತೀಯ ಸ್ನೇಹಿತರನ್ನೂ ಕೂಡ.

ಈ ದೇಶಕ್ಕೆ ಬಂದ ಮೊದಲಿನಲ್ಲಿ ನನ್ನ ಸ್ನೇಹಿತರುಳಿಗೆ ಪುಟಗಟ್ಟಲೆ ಪತ್ರ ಬರೆಯುತ್ತಿದ್ದೆ. ಅವರು ಬರೆದ ಪತ್ರಗಳನ್ನು ಓದುವಲ್ಲಿ ಆಗುತ್ತಿದ್ದ ಸಂತೋಷ, ಸಂಭ್ರಮ ಇಂದು ಕಣ್ಣು ಮಿಟುಕಿಸುವುದರೊಳಗೆ ಎತ್ತೆತ್ತಲಿಂದಲೂ ಬಂದು ಬೀಳಬಹುದಾದ ಇ-ಮೇಲ್‌ಗಳನ್ನು ಓದುವುದರಿಂದ ಆಗುವುದಿಲ್ಲ. ಅಂತೆಯೇ, ಪತ್ರ ಬರೆಯುವುದೂ ಯಾವತ್ತಿಗೋ ನಿಂತು ಹೋಗಿದೆ - ಇವತ್ತಿಗೂ ಸಹ ಮನೆಯವರಿಗೆ ಚೆಕ್ಕೋ ಮತ್ತೊಂದೋ ಕಳಿಸುವಾಗ ಬರೆದರೂ ಬರಹ ಅರ್ಧ ಪುಟ ತುಂಬುವುದಿಲ್ಲ, ದೂರವಾಣಿಯಲ್ಲಿ ಮಾತನಾಡಿ ನಮ್ಮ-ನಮ್ಮ ಸಂಬಂಧಗಳನ್ನು ಅವಿಷ್ಕರಿಸುವ ಪರಿಪಾಟಲೆಗೆ ಈ ಪತ್ರದ ಸಾಲುಗಳು ಬರೀ ನೆಪಮಾತ್ರ ಎಂದರೆ ಅತಿಯಾಗುತ್ತದೆಯೇ?

ಹಾಗಂತ, ಇದರಲ್ಲಿ ನನ್ನ ತಪ್ಪೂ ಇದೆ: ಮುಂಚೆ ಪ್ರತಿ ವರ್ಷವೂ ತಪ್ಪದೇ ರಾಖಿಯನ್ನು ಕಳಿಸುತ್ತಿದ್ದ ನನ್ನ ಅಕ್ಕ-ತಂಗಿಯರಿಗೆ ನಾನು ಕಳಿಸಬೇಡಿರೆಂದು ಹೇಳಿದ್ದೇನೆ. ಅವರು ದಿನಕ್ಕೆ ಮೂವತ್ತೈದು ರೂಪಾಯಿ ದುಡಿದು, ಅದರಲ್ಲಿ ಹದಿನೈದು ರೂಪಾಯಿ ಸ್ಟ್ಯಾಂಪು ಅಂಟಿಸಿ, ಇನ್ನು ಅಮೇರಿಕೆಗೆ ಕಳಿಸಬೇಕಾಗಿರುವುದರಿಂದ ಊರಿನಲ್ಲಿ ಸಿಗುವುದರಲ್ಲಿಯೇ ಇದ್ದ ಒಳ್ಳೆಯ ರಾಖಿಯನ್ನು ಪತ್ರದಲ್ಲಿ ಕಳಿಸುವುದಕ್ಕೆ ಅವರ ಒಂದು ದಿನದ ಕಮಾಯಿಯೇ ಬೇಕೆನ್ನಿ. ಸರಿ, ಅವರು ಕಳಿಸಿದ ಮಾತ್ರಕ್ಕೆ ನಾನು ಅದನ್ನು ಕೊನೇಪಕ್ಷ ಒಂದು ಪೂರ್ಣ ದಿನವಾದರೂ ರಾಖಿಯನ್ನು ಧರಿಸಿದರೆ ಅದರ ಸಾರ್ಥಕವಾಗುತ್ತೆ, ಇಲ್ಲಿ ಹಾಗೆ ಮಾಡಲಾಗುವುದಿಲ್ಲವಲ್ಲಾ! ನೀವೆಲ್ಲಿಯಾದರೂ ರಾಖಿಯನ್ನು (ರಕ್ಷಾ ಬಂಧನದ ಒಂದೆಳೆ ದಾರವಲ್ಲ, ಪೂರ್ಣ ಪ್ರಮಾಣದ ರಾಖಿಯನ್ನು) ಧರಿಸಿರುವವರನ್ನು ನೀವು ನೋಡಿದ್ದೀರಾ?

ಇನ್ನು ಸ್ನೇಹಿತರ ವಿಷಯಕ್ಕೆ ಬರೋದಾದರೆ, ಸ್ನೇಹಿತರು ಯಾವಾಗಲೂ ವಿಶೇಷವಂತೆ, ಏಕೆಂದರೆ ಅವರನ್ನು ನಾವೇ ಆರಿಸಿಕೊಳ್ಳುತ್ತೇವಾದ್ದರಿಂದ. ಅಲ್ಲದೇ, ಸ್ನೇಹಿತರೆಲ್ಲರೂ ಸಮಾನ ಮನಸ್ಥಿತಿಯವರಿರಬೇಕೆಂದೇನೂ ಇಲ್ಲ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಸಹೋದ್ಯೋಗಿಗಳು ಸ್ನೇಹಿತರಾಗೋದಿಲ್ಲ! ಇವೆಲ್ಲವನ್ನೂ ಗಮನಿಸಿದರೆ, ಇಲ್ಲಿ ನನ್ನ ಸುತ್ತಮುತ್ತಲೂ ನನ್ನಂಥ ಅವಕಾಶವಾದಿಗಳೇ ಇರೋದು, ಯಾರಿಗೆ 'ಹಾಯ್' ಎಂದರೂ ಬರೀ ಶುಷ್ಕ ನಗೆ ಮಾತ್ರ ಸಿಗುತ್ತೆ ಇಲ್ಲಿ. ಒಬ್ಬೊರನೊಬ್ಬರು ಆಡಿಕೊಂಡು, ತಳ್ಳಿಕೊಂಡು, ಹೊಡೆದಾಡಿಕೊಂಡು ಯಾವ ಕಾಲವಾಯಿತೋ ಏನೋ? ನಾನು ಸ್ನೇಹಿತನೆಂದ ಮಾತ್ರಕ್ಕೆ, ಬರೀ ಗಂಡಸರು ಗಂಡಸರ ಸ್ನೇಹವನ್ನು ಮಾತ್ರ ಹೇಳುತ್ತಿಲ್ಲ. ನಾನು ಭಾರತದಲ್ಲಿದ್ದಾಗ ಹುಡುಗರ ಪರಿಚಯವಿದ್ದ ಹಾಗೆ ಹುಡುಗಿಯರ ಪರಿಚಯವೂ ಇತ್ತು, ಅದಂತೂ ಇಲ್ಲಿ ಆಗಿ ಹೋಗದ ವಿಷಯ ಬಿಡಿ.

ನೀವು ಅಮೇರಿಕೆಗೆ ಬರುವವರಿರಬಹುದು, ಅಥವಾ ಬಂದು ಹಲವಾರು ತಿಂಗಳು ವರ್ಷಗಳನ್ನು ಕಳೆದಿರಬಹುದು. ಇಲ್ಲಿನ ಅಗಾಧವಾದ ಅದಮ್ಯತೆಯಲ್ಲಿ ಸ್ನೇಹಿತರ ಕೊರತೆಯೂ ಒಂದು, ನಿಮ್ಮ ಸ್ನೇಹಿತರ ಬಗ್ಗೆ ಒಂದು ಕ್ಷಣ ಆಲೋಚಿಸಿ, ಅವರ ಸಂಖ್ಯೆ ಐದಕ್ಕಿಂತ ಹೆಚ್ಚಿದ್ದರೆ 'ಭಲೇ' ಎಂದು ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳಿ, ಇಲ್ಲವೆಂದಾದರೆ ನೀವು ನನ್ನಂಥವರಾದ್ದರಿಂದ ನನ್ನ ಸ್ನೇಹಿತರಾಗಿ!

Tuesday, March 21, 2006

ವಲಸಿಗನ ಗೋಳು!

ಹಲವು ಸಮಾಜ ಶಾಸ್ತ್ರಜ್ಞರು ವಾದ ಮಾಡೋ ಹಾಗೆ ವಲಸೆ ಬಂದವರಿಗೆ ಸುಮಾರು ೨೫ ವರ್ಷಗಳು ಬೇಕಾಗುತ್ತಂತೆ ತಮ್ಮನ್ನ ತಾವು establish ಮಾಡಿಕೊಳ್ಳೋಕೆ!

ನಮ್ ಆಫೀಸ್‌ನಲ್ಲಿ ಕೆಲಸ ಮಾಡೋ ಭಾರತೀಯ ಸಂಜಾತೆಯೊಬ್ಬಳನ್ನು ಕೇಳಿದೆ - 'ನಿಮ್ಮ ಮಗ ಇಲ್ಲೇ ಶಾಲೆಗೆ ಹೋಗ್ತಾನಂತೆ, ಹೌದಾ?'
ಅವಳೆಂದಳು 'ಹೌದು, ಇಲ್ಲೇ ಸ್ಕೂಲಿಗೆ ಸೇರ್‍ಸಿದ್ವಿ, ಮುಂದೆ ಅವನು ದೊಡ್ಡವನಾದ ಮೇಲೆ, ನಾವು ಇಂಡಿಯಾಕ್ ಹೋಗಿ ರಿಟೈರ್ ಆಗ್ ಬೇಕು ಅಂತ ಇದೀವಿ'.

ನಿಮ್ಮ ವಿಷ್ಯ ನನಗ್ಗೊತ್ತಿಲ್ಲ, ನಾನು ಭಾರತದಲ್ಲಿ ಹುಟ್ಟಿ ಅಲ್ಲಿ ೨೫ ವರ್ಷ ಇದ್ದು ಬೆಳೆದೋನು, ಇನ್ನು ಸಮಾಜಶಾಸ್ರಜ್ಞರ ಮಾತು ನನ್ನ ಮಟ್ಟಿಗೆ ನಿಜವಾಗಿ ಇಲ್ಲಿ ನೆಲೆ ಊರೋದಕ್ಕೆ ನನಗೆ ೨೫ ವರ್ಷ ಬೇಕಾಯ್ತು ಅಂದುಕೊಳ್ಳಿ, ಅಲ್ಲಿಗೆ ನನಗೆ ೫೦ ವರ್ಷ ಆಗಿರುತ್ತೆ. ಈ ಹತ್ತು ವರ್ಷಗಳಲ್ಲೇ ನನಗೆ ಭಾರತೀಯರ ಬೆಳವಣಿಗೆಗೆ ಸ್ಪಂದಿಸಲು ಶಕ್ತಿ ಕುಂದುತ್ತಾ ಇದೆ, ಇನ್ನೂ ಹದಿನೈದು ವರ್ಷಗಳಲ್ಲಿ ಇನ್ನೇನು ಬೆಳವಣಿಗೆಯಾಗುತ್ತೋ, ನನ್ನಲ್ಲಿ ಯಾವುದೇ ಶಕ್ತಿ ಉಳಿದಿರುತ್ತೇ ಅನ್ನೋದಕ್ಕೆ ಏನು ಗ್ಯಾರಂಟಿ? ನನ್ನ ಸಹೋದ್ಯೋಗಿ ವಾಪಾಸ್ಸು ಭಾರತಕ್ಕೆ ಹೋಗ್ತಾಳೋ ಬಿಡ್ತಾಳೋ, ಇವೆಲ್ಲವನ್ನೂ ಯೋಚಿಸಿದರೆ ನಾವು ಹಿಂದಕ್ಕೆ ಹೋಗುವ ಮಾತು ದಿನೇ ದಿನೇ ದೂರವಾದಂತೆನಿಸೋಲ್ಲವೇ?

ಇಲ್ಲಿ ಮತ್ತೊಂದು ಸಮಸ್ಯೆ ಇದೆ - ನಾನು ವಲಸಿಗನಾಗಿ ಬಂದವನೇ? ನಾನು ಇಲ್ಲಿಗೆ H1B ಕೂಲಿಯಾಗಿ ಬಂದವನು, ಅಂದರೆ non-immigrant ವೀಸಾದಲ್ಲಿ, ಮುಂದೆ ವಲಸಿಗನಾದವನು - ಸದ್ಯಕ್ಕೆ ಹಸಿರು ಕಾರ್ಡಿನ ಫಲಾನುಭವಿ - ಹಸಿರಿನಿಂದ citizenship ಗೆ ಬದಲಾಯಿಸಬೇಕೋ ಬಿಡಬೇಕೋ ಅದು ಮತ್ತೊಂದು ಮಹಾ ಸಮಸ್ಯೆ, ಮುಂದೆ ನೋಡೋಣ - ನಮ್ಮೂರಲ್ಲಿ ಬಡವರಿಗೆ ಮಾತ್ರ ಹಸಿರು ಕಾರ್ಡನ್ನು ಕೊಡ್ತಾರೆ, ಅಂದ್ರೆ ನಾನು ಇಲ್ಲಿಗೆ ಬಂದು "ಬಡವ" (ಅಥವಾ ಬಢವ) ನಾದವನು ಅನ್ನಲ್ಲಿಕ್ಕೂ ಅಡ್ಡಿ ಇಲ್ಲ. ಈ ಸಮಾಜಶಾಸ್ತ್ರಜ್ಞರ ತತ್ವ ನನಗೆ ಒಪ್ಪುತ್ತೋ ಅನ್ನೋ ಜಿಜ್ಞಾಸೆ (ಅಲ್ಲ ಬರೀ ಆಸೆ) ಹುಟ್ಟುತ್ತೆ. ಏನೇ ಹೇಳೀ ಮೆಕ್ಸಿಕೋ ಬಾರ್ಡರನ್ನು ದಾಟಿ ಬಂದಂಥವರೋ, ಅಥವಾ ಈ ಹಿಂದೆ ಯೂರೋಪಿನಿಂದ ಸಾಮಾಜಿಕ, ನೈತಿಕ, ಧಾರ್ಮಿಕ ಹಾಗೂ ರಾಜಕೀಯ ದಾಹಗಳನ್ನು ಹೊತ್ತು ತಂದ ವಲಸಿಗರಿಗಿಂತಲೂ ನನ್ನಂತವರು ಭಿನ್ನ.

ಆನಂದ ಭಕ್ಷಿ ರಚಿಸಿದ, ನಾಮ್ ಚಿತ್ರದ 'ಚಿಟ್ಟೀ ಆಯಿ ಹೈ' ಹಾಡನ್ನು ಕೇಳಿದಾಗಲೆಲ್ಲ - 'ಪರದೇಶಕ್ಕೆ ಹೋಗುವವರೇ, ಹಿಂತಿರುಗಿ ಬಾರದವರೇ...' ಎನ್ನುವ ಪದ ಪಂಕ್ತಿಗಳು ನನಗೆ ಅನ್ವಯಿಸಲಾರವು ಅನ್ನುವ ಮಾತು ನಾನಿಲ್ಲಿ ಕಳೆದಷ್ಟು ದಿನಗಳೂ ಹಳೆಯದಾಗುತ್ತಾ ಹೋಗುತ್ತವೆ. ಬುದ್ಧಿವಂತರು ಬಳಸಿದ ಹಾದಿಯೆಂದರೆ ಇಲ್ಲಿ ಬಂದು ಹಾಯಾಗಿ ಇರುವುದು ಎಂತಲೋ ಅಥವಾ ಆದಷ್ಟು ಬೇಗ ಗಂಟೂ-ಮೂಟೆ ಕಟ್ಟುವುದು ಎಂತಲೋ? (ಅಲ್ಲದೇ ವಲಸಿಗರೆಲ್ಲ ಬುದ್ಧಿವಂತರೇನಲ್ಲ, ಅಲ್ವೇ?). ಸರಿ, ಇದಕ್ಕೆಲ್ಲ ಉತ್ತರ ಸಿಕ್ಕೀತೇನೋ ಎಂದು Robert Frost ನ ಮೊರೆ ಹೋದೆ, ಅವನೂ ಕೊನೆಗೆ ಕೈಯಲ್ಲಿ ಕವಲೊಂದನ್ನು ಕೊಟ್ಟು ಹೋದ:

"I shall be telling this with a sigh
Somewhere ages and ages hence:
Two roads diverged in a wood, and I—
I took the one less traveled by,
And that has made all the difference."

Robert Frost ನನ್ನು ಇಷ್ಟು ಕೆಟ್ಟದಾಗಿ ಬಳಸಿಕೊಂಡಿ(ದಿ)ದ್ದಕ್ಕೋ, ಅರ್ಥೈಸಿಕೊಂಡಿದ್ದಕ್ಕೋ ನನ್ನನ್ನು ಬೈಯುವ ಹಕ್ಕನ್ನು ಇಂಗ್ಲೀಷ್ ಮೇಸ್ಟ್ರಿಗೆ ಬಿಡುತ್ತೇನೆ. ಈ ಪದ್ಯದ ಹಲವಾರು ರೀತಿಯ ವಿಮರ್ಶೆಗಳೆಲ್ಲ ಒಂದು ಕಾಲದಲ್ಲಿ ನಾಲಿಗೆಯ ತುದಿಯಲ್ಲಿತ್ತು, ಇಂದು ಎದೆಯ ತಿದಿಯನ್ನೊತ್ತಿದರೂ ಪದ್ಯದ ಎರಡು ಸಾಲುಗಳೂ ಸರಿಯಾಗಿ ನೆನಪಿನಲ್ಲಿರದುದ್ದಕೆ ನಾನು ಯಾರನ್ನೂ ದೂಷಿಸೋದಿಲ್ಲ, ಅದು ಸಹಜವಾದದ್ದು ಎಂದು ನಿರ್ಲಿಪ್ತನಾಗುತ್ತೇನೆ!

ಇತ್ತೀಚಿನ ಭ್ರಮ ನಿರಸನಗಳಲ್ಲಿ ಅಮೇರಿಕೆಗೆ ಬಂದು ಕೈಯಲ್ಲಿ ಕಾಸು ನಿಲ್ಲದೇ ಹೋಗೋದೂ ಸಹ ಒಂದು. ಎಷ್ಟೇ ದುಡಿದ್ರೂ ಅದೂ ಹಂಗೂ-ಹಿಂಗೂ ಖರ್ಚಾಗೇ ಹೋಗುತ್ತೇ ವಿನಾ ವರ್ಷದ ಕೊನೇಲಿ ನನ್ನದು ಎಂದು ಉಳಿಯೋದು ಬಹಳ ಕಡಿಮೆ - ಈ ಪೇ ಚೆಕ್ ನಿಂದ ಪೇ ಚೆಕ್‌ಗೆ ಬದುಕೋರ್ ಹಣೇ ಬರಹ ಇನ್ನೇನಾಗುತ್ತೆ ಮತ್ತೆ? - ಅದೇ ನಮ್ಮ ಸತ್ಯಬಾಬು ಮಾಡಿದ್ದೇ ಸರಿ ಅನ್ಸುತ್ತೆ: ೧೯೯೬ರಲ್ಲಿ ನಾವೆಲ್ಲ ಅಮೇರಿಗೆ ಹೋಗೋದೂ ಅಂದ್ರೆ ಹಿಮಾಲಯದ ತಪ್ಪಲಿನಲ್ಲಿ ೨೫ ವರ್ಷ ತಪಸ್ಸು ಮಾಡಿದ ಋಷಿಗೆ ದೇವರು ಪ್ರತ್ಯಕ್ಷನಾಗಿ ಮೋಕ್ಷ ಕೊಟ್ಟಾಗ ಎಷ್ಟು ಸಂತೋಷವಾಗ್ತಿತ್ತೋ, ಅಷ್ಟು ಸಂತೋಷವಾಗಿತ್ತು. ನಾವೆಲ್ಲ ನಮ್-ನಮ್ ಬೇಳೆ ಕಾಳು ಬೆಯ್ಯೋ ಸ್ಥಿತಿಗೆ ಬಂದಕೂಡ್ಲೇ ದೇಶ ಬಿಟ್ಟು, ಕಂಬಿ ಕಿತ್ತೆವು. ಆದರೆ ಸತ್ಯಬಾಬು ಮಾತ್ರ ಬೆಂಗಳೂರಿನಲ್ಲೇ ತನ್ನ ಅಪ್ಪ-ಅಮ್ಮನನ್ನು ಬಿಟ್ಟು ಬರೋದು ಬೇಡ ಎಂದು ಅಲ್ಲೇ ವಿಪ್ರೋ ಸೇರಿಕೊಂಡು ಇರೋ ನಿರ್ಧಾರ ಮಾಡಿದ. ನಾವೆಲ್ಲ ಒಳಗೊಳಗೇ ಬೆರಗಾಗಿದ್ದೆವು. ಇಂದು ಅವನು ಎಲ್ಲಿದ್ದಾನೋ ಯಾರಿಗೆ ಗೊತ್ತು? ಅವನು ಬಿಸಿನೆಸ್ ಟ್ರಿಪ್ಪೂ ಅದೂ-ಇದೂ ಅಂತ ಕಂಡ ಕಂಡ ದೇಶಾನೆಲ್ಲ ಕಂಪನಿ ದುಡ್ಡಲ್ಲಿ ತಿರುಗಿದ್ದಾನೆ ಅಂತ ಕೇಳಿದೆ. ೧೯೯೬ರಿಂದ ಅವನು ಇಲ್ಲೀವರೆಗೆ ವಿಪ್ರೋನಲ್ಲೇ ಇದ್ರೆ, ಅವನ ಸ್ಟಾಕ್ ಆಪ್ಷನ್ನೂ, ಅವನ ಸಾಮಾಜಿಕ ಸ್ಥಿತಿಗತಿಯೂ, ಅವನ ವೃತ್ತಿಯೂ, ಅವನ ಸ್ಟೇಟಸ್ಸೂ ಇವೆಲ್ಲ ಹೇಗಿರಬಹುದು ಹತ್ತು ವರ್ಷಗಳ ನಂತರ? ಅದೇ ನನ್ ಸ್ಥಿತಿ ಬಗ್ಗೆ ನಿಮಗೆಲ್ಲ ಗೊತ್ತಿರೋದೇ, ಇಲ್ಲಾ ಅಂದ್ರೆ ಅಕ್ಕನ ಮಗಳ ಮದುವೆ ಒಂದು ಲಕ್ಷ ರೂಪಾಯಿ ಕೊಡೋಕೆ ಹಿಂದೆ-ಮುಂದೆ ನೋಡ್ತಿದ್ನೇ?

ನನ್ ಸ್ನೇಹಿತ ಶಂಕ್ರ ನನ್ನನ್ನ ಉದ್ದೇಶಿಸಿ ಯಾವತ್ತೋ ಒಂದು ಮಾತು ಹೇಳಿದ್ದ - ನೀನು ಬುದ್ಧಿವಂತರಲ್ಲಿ ದಡ್ಡ, ದಡ್ಡರಲ್ಲಿ ಬುದ್ಧಿವಂತ - ಎಂದು. ಈ ಮಾತು ಇವತ್ತಿಗೂ ಬಹಳ ಬದಲಾಯಿಸಿಲ್ಲ, ನನ್ನ ನಿಲುವಿನಲ್ಲಿ. ಅದಕ್ಕಿನ್ನೊಂದು ಕರೋಲ್ಲರಿ ಸೇರಿಸೋದಾದ್ರೆ, ನನ್ನ ವಲಸಿಗ ಬದುಕು (ಒಂಥರಾ ಬಂಡ್ ಬಾಳ್ವೆ) 'ಶ್ರೀಮಂತರೊಳಗೆ ಬಡವ, ಬಡವರೊಳಗೆ ಶ್ರೀಮಂತ'ವಾದದ್ದು. ನಾನು ದುಡಿದ ಹಣಕ್ಕೆ ಅಲ್ಪಾ-ಸೊಲ್ಪಾ ಶ್ರೀಮಂತಿಕೆ ಏನಾದ್ರೂ ಬರುತ್ತೇ ಅನ್ನೋದಾದ್ರೆ ನನ್ ಡಾಲರ್‌ನ್ನ ರುಪಾಯಿಗೆ ಬದಲಾಯಿಸಿದಾಗಲೇ!

ಅಂದ್ರೆ ಭಾರತದಿಂದ ನಾನು ದೂರ ಹೋದಷ್ಟೂ, ನನ್ನ ಶ್ರೀಮಂತಿಕೆ ನನ್ನೊಳಗಿನ ಮರೀಚಿಕೆಯಾಗುತ್ತೋ, ಅಥವಾ ನಾನು ಇಲ್ಲಿ ಸೆಟ್ಲ್ ಅಂತ ಆದಾಗ (ಈ ಸೋಸಿಯಲಿಸ್ಟ್‌ಗಳ ಮನೆ ಹಾಳಾಗ), ನನಗೆ ೫೦ ವರ್ಷ ಆಗಿರತ್ತೋ? ಅನಿಕೇತನವಾದ ಮನಸ್ಸಿದೆ, ನಿಕೇತನವಾಗುವುದಕ್ಕೆ ನೆರೆ-ಹೊರೆಯಿಲ್ಲ ಎನ್ನುವುದು ಇತ್ತೀಚಿಗಿನ ಕೊರಗಿನೊಳಗೊಂದು!

ವಯಸ್ಸಾದಂಗೆ ಕನ್ನಡ ಮಾಯವಾಗುತ್ತಾ?

ಹುಟ್ಟಿದಾಗಿಂದ ಸಾಯೋವರೆಗೆ ಕನ್ನಡ ನಾಡಲ್ಲೇ ಇರ್‍ತಾರ್ ನೋಡಿ ಅವರ ಹತ್ರ ನನ್ನದೊಂದು ಪ್ರಶ್ನೆ ಇದೆ - ಏನೂ ಅಂದ್ರೆ, ನಮಗೆ ವಯಸ್ಸಾದಂತೆಲ್ಲಾ ನಮ್ಮ ಮಾತೃ ಭಾಷೆಯಲ್ಲಿರೋ ಪದಗಳ ಸಂಖ್ಯೆ ಹೆಚ್ಚಾಗುತ್ತೋ, ಅಷ್ಟೇ ಇರುತ್ತೋ ಅಥವಾ ಕುಗ್ಗತ್ತೋ ಅಂತ. ಮನೆ ಬಿಟ್ಟು ಮಾರು ಬಿಟ್ಟು ವಿದ್ಯಾಭ್ಯಾಸಕ್ಕೋ, ನೌಕರಿಯ ಸಲುವಾಗೋ ನಾನಂತೂ ಊರು ಬಿಟ್ಟು, ದೇಶ ಬಿಟ್ಟು ಬಂದದ್ದಾಯ್ತು - ನಮ್ ದೇಶದ majorityಲ್ಲಿ ಒಬ್ಬನಾಗಿ ಬಿದ್ದಿದ್ರೂ ಕೀಳರಿಮೆ ಕೊರೀತಲೇ ಇತ್ತು, ಆದೇ ದೇಶ ಬಿಟ್ಟಮೇಲಂತೂ ಕೀಳರಿಮೆಯೇ ಬದುಕಾಗಿ ಹೋಗಿದೆ. ಆಫೀಸ್ ಬಿಟ್ರೆ ಮನೆ ಮುಟ್ಟೋವರೆಗೆ ಯಾವ್ದೂ ಪರಿಚಯದ ಮುಖವೂ ಸಿಗೋಲ್ಲ, ಮಾತೂ ಕೇಳೋಲ್ಲ. ನಾನಾಯ್ತು, ನನ್ನ ಪಾಡಾಯ್ತು ಅಂತ ಇದ್ದು ಎಷ್ಟು ಬೆಳೆಯೋಕಾಗುತ್ತೆ?

ಇವೆಲ್ಲ ಕಡಿಮೆ ಅನ್ನೋ ಹಾಗೆ ಇತ್ತೀಚೆಗೆ ಇನ್ನೊಂದು ರೋಗ ಶುರುವಾಗಿದೆ - ಕನ್ನಡ ಪದಗಳು ನಿಧಾನವಾಗಿ ಮರೆತು ಹೋಗ್ತಾ ಇರೋದು. ಮುಂಚೆಲ್ಲಾ ಆಗಿದ್ರೆ interaction ಅನ್ನೋ ಪದಕ್ಕೆ ತಟ್ಟಂತ ಕನ್ನಡ ಪದ ಹೊಳೀತಿತ್ತು, ಈಗ ತಿಣುಕಿದ್ರೂ ಸಿಗೋಲ್ಲ. ಕನ್ನಡ ಕಸ್ತೂರಿನೋ ಮತ್ತೊಂದೋ ಸೈಟ್‌ಗೆ ಹೋದ್ರೂ ಸಮಾಧಾನ ಆಗೋಲ್ಲ. ಈ internet ಅನ್ನೋದು ದೊಡ್ಡ ಸಾಗರವೇ ಇರಬಹುದು, ಆದ್ರೆ ಅದರಲ್ಲಿರೋ ಉಪ್ಪು ನೀರನ್ನ ಎಷ್ಟೂ ಅಂತ ಗಾಳಸ್ತೀರೋ ನೀವೇ ಹೇಳಿ?

ದೇಶ ಬಿಟ್ಟು ಭಾಷೆ ಬಿಟ್ಟು ಎಷ್ಟೋ ವರುಷಾ ಆದ್ರೂ ಪುಸ್ತಕ ಬರೆಯೋರಿದ್ದಾರೆ - ಕಾಂಜೀಪೀಂಜಿ ಬರಹಗಾರರ ಬಗ್ಗೆ ಹೇಳ್ತಾ ಇಲ್ಲಾ ನಾನು - ದೊಡ್ಡ ಮನುಷ್ಯರ ಬಗ್ಗೆ ಹೇಳ್ತಾ ಇರೋದು, ಅವರಿಗೆಲ್ಲಾ ಪದಗಳ ಸಮಸ್ಯೆ ಬರುತ್ತೋ ಇಲ್ವೋ ನನ್ನಂಥ ಸಾಮಾನ್ಯನ ಕಥೆ ಆರಕ್ಕೂ ಏರಲ್ಲ ಮೂರಕ್ಕೂ ಇಳಿಯಲ್ಲ ಅಂತಾರಲ್ಲ ಹಾಗೆ. ಈ mediocre ಆಗಿ ಬದುಕೋದು ಬಹಳ ಕಷ್ಟ ಸ್ವಾಮಿ, ಅದೂ ತಾನು mediocre ಅಂಥ ಗೊತ್ತಾದಮೇಲೂ ಇನ್ನೂ ಕಷ್ಟ!

ಹಂಗಂತ ನನ್ನ ಕನ್ನಡ ಪದಗಳಿಗೇನೂ ಕೊರತೆ ಇಲ್ಲ - ಆಫೀಸ್ ಅನ್ನೋ ಪದದ ಬದಲಿಗೆ ಕಛೇರಿ ಅನ್ನಬಹುದು, afternoon ಅನ್ನೋ ಬದಲಿಗೆ ಮಧ್ಯಾಹ್ನ ಎನ್ನಬಹುದು. ಹೀಗೆಲ್ಲ ಮಾತಾಡೋದ್ರಿಂದ ನನ್ನ ಕನ್ನಡ ನನ್ನನ್ನ ಹಳ್ಳಿಯವನನ್ನಾಗಿ ಎಲ್ಲಿ ಮಾಡಿಬಿಡುತ್ತೋ ಅನ್ನೋ ಹೆದರಿಕೆ ಬೇರೆ - ಒಂಥರಾ ಈ ಧಾರವಾಡದ್ ಮಂದಿ ಮಂಗಳೂರ್‌ನೋರ್ ಜೋಡಿ ತಮ್ಮ ಶೈಲಿನಲ್ಲಿ ಮಾತಾಡಕ್ ಹೆದರ್‌ತಾರ್ ನೋಡ್ರಿ ಹಂಗೆ. ಇಲ್ಲಾ ಅಂದ್ರೆ ನಾನು ಪ್ರತೀಸಾರಿ ironing table ಅನ್ನು ಇಸ್ತ್ರಿ ಮೇಜು ಅಂಥ ಕರೆದಾಗಲೂ, socks ಅನ್ನು ಕಾಲ್‌ಚೀಲ ಎಂದು ಹೇಳಿದಾಗಲೂ ನಮ್ ಮನೆಗೆ ಬಂದಿರೋ visitors ನನ್ನನ್ನ ದುರ್‌ಗುಟ್‌ಗೊಂಡು ಯಾಕೆ ನೋಡ್ತಿದ್ರು? ಈ ಬಗ್ಗೆ ನನ್ನ ಹೆಂಡತೀನೋ, ಮೊದಲಿಗೆ ನಕ್ಕೂ-ನಕ್ಕೂ ತಾನೇ ಈಗ ಕಾಲ್‌ಚೀಲ ಅನ್ನುವಂಗೆ ಆಗಿದ್ದಾಳೆ!

ನನ್ನ ಕನ್ನಡ ಪದಗಳು ನನ್ನಿಂದ ಈ ರೀತಿ evoparate ಆಗ್ದೇ ಹೋಗಿದ್ರೆ ಈ ಮೇಲಿನ ಪ್ರತೀ ಪ್ಯಾರಾದಲ್ಲೂ ಒಂದಲ್ಲ ಒಂದು ಇಂಗ್ಲೀಷ್ ಪದಗಳನ್ನ ಬಳಸ್ತಿದ್ನೇ? ಅಕಸ್ಮಾತ್ ಬಳಸದೇ ತಿಣುಕಿ-ಇಣುಕಿ ಬರೆದಿದ್ರೂ ಈ ಬರಹ ನಿಮ್ಮನ್ನ ಇಲ್ಲಿವರೆಗೂ ಓದಿಸ್‌ಕೊಂಡು ಹೋಗ್ತಿತ್ತೇ? ಆಫೀಸ್ ಎನ್ನುವಲ್ಲಿ ಕಛೇರಿ ಎಂದೋ, ಇಂಟರ್‌ನೆಟ್ ಎನ್ನುವಲ್ಲಿ ಅಂತರ್ಜಾಲ ಎಂದೋ, ಇವಾಪರೇಟ್ ಅನ್ನೋ ಬದಲಿಗೆ ಆವಿ ಎಂಥಲೋ ಬರೆದಿದ್ರೆ ಚೆನ್ನಾಗಿರೋದಾ? ಅಥವಾ ಆಗ ಕನ್ನಡದ ನಡುವೆ ಸಂಸ್ಕೃತ ಪದಗಳನ್ನ ಸೇರಿಸ್ತಿದ್ವಿ, ಅದರ ಬದಲಿಗೆ ಈಗ ಇಂಗ್ಲೀಷ್ ಸೇರುಸ್ತೀವಿ, ಅದರಲ್ಲೇನು ವ್ಯತ್ಯಾಸವಿಲ್ಲ ಅಂತೀರೋ?

ಏನೇ ಹೇಳಿ, ನನ್ನ ಕೇಳಿದ್ರೆ ನಾವು ಬೆಳೆದಂಗೆ (ಯಾವ ದಿಕ್ಕಿನಲ್ಲಿ, ಹೇಗೆ ಅನ್ನೋದು ಇನ್ನೊಂದು ದಿನದ ಮಾತಾಗಲಿ) ನಮ್ಮ-ನಮ್ಮ ಭಾಷೇನೂ ಬೆಳೀಬೇಕು. ಆದರೆ ನಮ್ಮ ಭಾಷೇ ಅಂದ್ರೆ ಯಾವ್ದು ಅನ್ನೋದು ಒಳ್ಳೇ ಪ್ರಶ್ನೆ! ನಮಗೆ ಗೊತ್ತಿರೋ ಎಲ್ಲ ಭಾಷೆಗಳನ್ನು ಕಲಸು-ಮೇಲೋಗರ ಮಾಡಿ ಏನೋ ಒಂದು ಮಾತಾಡ್‌ಬಹುದು ಬರೀ ಬಹುದು. ಆದ್ರೆ ಅದನ್ನ ಓದೋರೂ ಅದೇ ಮಟ್ಟದಲ್ಲಿ ಇರಬೇಕಾಗುತ್ತೋ ಏನೋ? ಸರಿ ನಾನು ಬೆಳೆಯೋದರ (ಅಥವಾ ಕುಗ್ಗೋದರ) ಜೊತೆಗೆ ನನ್ನ ಬರಹವನ್ನು ಓದುವವರನ್ನು ಏಕೆ ಸಂಕುಚಿತರನ್ನಾಗಿ ಮಾಡಬೇಕು? (ಸದ್ಯ, ಈ ಮೇಲಿನ ವಾಕ್ಯಗಳಲ್ಲಾದರೂ ಕನ್ನಡ ಪದಗಳೇ ಇವೆಯಲ್ಲ!)

ಒಂದು ವಿಷ್ಯಾ ಅಂತೂ ಗ್ಯಾರಂಟಿ, ಇಂಗ್ಲೀಷ್ ಮಾತಾಡೋ ದೇಶದಲ್ಲಿ ಕೆಲಸ ಮಾಡಿದಾಕ್ಷಣ ನಮ್ ಇಂಗ್ಲೀಷೂ improve ಆಗುತ್ತೆ ಅನ್ನೋದು ಬರೀ ಭ್ರಮೆ!

Monday, March 20, 2006

ಮಾವನ ಮಿತಿ

ಬೇರೆ ಎಲ್ಲರಿಗೂ ಈ ರೀತಿ ಸಮಸ್ಯೆ ಬಂದಿರುತ್ತೆ, ಅದರಿಂದಲಾದರೂ ಏನಾದ್ರೂ ಉಪಾಯ ಹೊಳೆದ್ರೂ ಹೊಳೀಬಹುದು. ಸಮಸ್ಯೆ ಇಷ್ಟೇ, ನನ್ನ ಅಕ್ಕನ ಮಗಳೊಬ್ಬಳ ಮದುವೆ ನಿಶ್ಚಯವಾಗಿದೆ, ಹುಡುಗ ಒಂದೂವರೆ ಲಕ್ಷ ರೂಪಾಯಿ ವರದಕ್ಷಣೆ ಕೇಳ್ತಾ ಇದ್ದಾನಂತೆ, ಮತ್ತೆ ಮದುವೆ ಮಾಡಿಕೊಡೋ ಖರ್ಚೂ ಇರುತ್ತಲ್ವಾ? ವರದಕ್ಷಣೆ ವಿಷ್ಯನಾ ಪೋಲೀಸರಿಗೆ ರಿಪೋರ್ಟ್ ಮಾಡಿ, ಒಂದಲ್ಲ ಒಂದು ರಾದ್ಧಾಂತ ಎಬ್ಬಿಸಿ ಈ ಮದುವೆ ನಿಲ್ಸೋದು ಸುಲಭ - ಹುಡುಗನ ಮಾವನೇ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಅಂತೆ - ಆ ವಿಷ್ಯಾನ ಅವನಿಗೇ ಬಿಡೋಣ! ಹುಡುಗಿಗೆ ತಂದೆ ಇಲ್ಲ, ಅಣ್ಣ ಒಬ್ಬ ಗುಮಾಸ್ತನಾಗಿದ್ದಾನೆ, ಇರೋ ಮನೆ ಮತ್ತೆ ಸುತ್ತಲಿನ ಮನೆಗಳಿಂದ ಬಾಡಿಗೆ ರೂಪದಲ್ಲಿ ಒಂದಿಷ್ಟು ಆದಾಯ ಬರುತ್ತೆ ಅನ್ನೋದು ಬಿಟ್ರೆ ಯಾವುದೇ ಆಸ್ತಿ ಇಲ್ಲ, ಇನ್ನು ತಾಯಿ ಅಂದ್ರೆ ನನ್ನ ಅಕ್ಕ - ಮನೆ ಕೆಲ್ಸಾ ಮಾಡಿಕೊಂಡಿರ್ತಾಳೆ.

ಹುಡುಗಿಗೆ ನಾವು ಮೂರು ಜನ ಮಾವಂದಿರು, ಒಬ್ಬ ನನಗೂ ಇದಕ್ಕೂ ಸಂಬಂಧ ಇಲ್ಲ ಅಂತ ಕೈ ತೊಳಕೊಂಡು ಕೂತಿದ್ದಾನಂತೆ - ಇನ್ನೆರಡು ವಾರದಲ್ಲಿ ಅವನ ಹೊಸ ಮನೆ ಒಕ್ಕಲು, ಅದರಲ್ಲೂ ಅವನ ಮಗನಿಗೆ ಆಗಾಗ್ಗೆ ಹುಷಾರು ಇರೋಲ್ಲ, ಅವನೂ ಹೇಳಿ-ಕೇಳಿ ಮಿಡ್ಲು ಸ್ಕೂಲು ಮೇಷ್ಟ್ರು, ಅವನನ್ನ ಅವನಷ್ಟಕ್ಕೇ ಬಿಟ್ರೆ ಒಳ್ಳೇದು, ಅಲ್ವೇ? ಇನ್ನೊಬ್ಬ, ನನ್ನ ಹಿರಿಯಣ್ಣ, ಒಂದು ಸಣ್ಣ ಅಂಗಡಿ ಇಟ್ಟುಕೊಂಡು, ಶಾಲೆ-ಕಾಲೇಜಿಗೆ ಹೋಗೋ ಮೂರು ಮಕ್ಕಳ್ಳಿದ್ದೂ ಈ ಮದುವೆ ತನ್ನ ಮಗಳದ್ದೇ ಅನ್ನುವಷ್ಟರ ಮಟ್ಟಿಗೆ ತಲೆಕೆಡಿಸಿಕೊಂಡು ಕೂತಿದ್ದಾನೆ. ಮೂರನೆಯವ ನಾನು, ಹೇಳಿ-ಕೇಳಿ ಪರದೇಸಿ!

ನಮ್ ದೊಡ್ಡ ಅಣ್ಣ - ಅದೇ ಅಂಗಡಿ ಇಟ್ಟುಕೊಂಡಿದ್ದಾನಲ್ಲ ಅವನು, ಈ ಎರಡು ವಾರದಲ್ಲಿ ಪದೇ-ಪದೇ ಫೋನ್ ಮಾಡ್ತಾನೇ ಇದ್ದ, ನನಗೆ ಏನಾದ್ರೂ ಮಾಡಿ ಹಣ ಹೊಂದಿಸಿಕೊಡು ಎನ್ನೋದು ಅದರದೆಲ್ಲದರ ಸಾರ. ನಾನು ಒಂದು ಲಕ್ಷ ರೂಪಾಯಿ ಕೊಟ್ರೂ ಅದರ ಡಾಲರ್ ಸಮ ಸುಮಾರು ಎರಡೂ ಕಾಲು ಸಾವಿರ ಆಗುತ್ತೆ. ನಮ್ಮ ಅಣ್ಣ ಹೇಳೋದೇನೂ ಅಂದ್ರೆ ಸಾಲದ ರೂಪದಲ್ಲಾದ್ರೂ ನಾನು ಈ ಮದುವೆಗೆ ದುಡ್ಡುಕೊಡಬೇಕಂತೆ. ಅದು ಆಗದೇ ಹೋದರೆ ಅವರ ಮನೆಯನ್ನು ನಾನೇ ಆಡವಿಟ್ಟುಕೊಳ್ಳಬೇಕಂತೆ, ಇತ್ಯಾದಿ, ಇತ್ಯಾದಿ.

ನನ್ನ ಮುಂದೆ ಇರೋ ಆಪ್ಷನ್‌ಗಳು ಇಷ್ಟು:
೧) ನೇರವಾಗಿ ಒಂದು ಲಕ್ಷಾನೋ, ಒಂದೂವರೆ ಲಕ್ಷಾನೋ ದಾನದ ರೂಪದಲ್ಲಿ ಬಿಸಾಕೋದು
ಇದು ಸಾಧ್ಯವಿಲ್ಲದ ಮಾತು, ಅಷ್ಟೊಂದು ದುಡ್ಡು ಕೊಡೋಕೆ ನನ್ನಲ್ಲಿ ಹಣವಿದ್ದರೂ ನನ್ನ ಹೆಂಡತಿ ಹೇಳಿದಂತೆ, ಅದನ್ನ ದುಡಿಯೋದಕ್ಕೆ, ಉಳಿಸೋದಕ್ಕೆ ನನಗೆ ಎಷ್ಟು ಸಮಯ ಬೇಕು ಅನ್ನೋದು ನನಗೆ ಗೊತ್ತಿರೋದೇ. ಈ ಮದುವೆಗೆ ಈ ಬಾರಿ ಹಣ ಕೊಟ್ಟರೆ ಅದು ಅಲ್ಲಿಗೇ ನಿಲ್ಲಲ್ಲ, ಇನ್ನುಳಿದ ಅಕ್ಕಂದಿರ, ಅಣ್ಣಂದಿರ ಮಕ್ಕಳಿಗೂ ಇದೇ ರೀತಿ ಹಣ ಕೊಡಬೇಕಾದ ಜವಾಬ್ದಾರಿ ನನ್ನ ಮೇಲೆ ಬಿದ್ದು ಬಿಡುತ್ತೆ.

೨) ಅಕ್ಕನ ಮನೆಯನ್ನು ಅಡವಿಟ್ಟುಕೊಂಡು ಸಾಲದ ರೂಪದಲ್ಲಿ ಹಣ ಕೊಡೋದು
ಸಾಲದ ರೂಪದಲ್ಲಿ ಹಣವನ್ನು ಕೊಡಬಹುದು, ಆದರೆ ಇವರೆಲ್ಲರ ಹಿಂದಿನ ಸಾಲ ತೀರಿಸುವ ಪರಂಪರೆಯನ್ನು, ಇವರ ನಡವಳಿಕೆಗಳನ್ನು ಕೂಲಕಂಷವಾಗಿ ಗಮಸಿದರೆ ಸಾಲ ಎಂದಿಗೂ ತೀರೋ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾದಾಗ ನಾನು ಒಂದೇ ಅವರ ಮನೆಯನ್ನು ನನ್ನ ಲೆಕ್ಕಕ್ಕೆ ಚುಕ್ತಾ ಮಾಡಿಕೊಂಡೋ, ಅಥವಾ ಸಾಲವನ್ನು ಮರೆತು ಬಿಡುವ ಧರ್ಮ ಸಂಕಟಕ್ಕೆ ಬಿದ್ದು ಬಿಡುತ್ತೇನೆ.

೩) ಹಣವನ್ನು ಸಾಲದ ರೂಪದಲ್ಲಿ ಕೊಡುವಂತೆ ಬ್ಯಾಂಕಿಗೆ ತಾಕೀತು ಮಾಡುವುದು, ಸಾಧ್ಯವಾದರೆ ಜಾಮೀನು ಅಥವಾ ಗ್ಯಾರಂಟಿಕೊಡುವುದು
ಇದೂ ಕೂಡಾ ಆಗದ ಮಾತು, ಈ ಹಿಂದೆ ಹೀಗೆ ಮಾಡಿ ಕೈ ಸುಟ್ಟುಕೊಂಡಿದ್ದಿದೆ. ಸಾಲವೇನೋ ಸಿಗುತ್ತೆ, ಆದರೆ ಜಾಮೀನು ರೂಪದಲ್ಲಿ ನಾನು ಸಿಕ್ಕಿ ಹಾಕಿಕೊಂಡು ಕೊನೆಗೆ ಅಸಲಿನ ಜೊತೆಗೆ ಬ್ಯಾಂಕಿನ ಬಡ್ಡಿಯೂ ನನ್ನ ತಲೆಗೇ ಬಂದು ಬೀಳುತ್ತೆ. ಇದರೆ ಬದಲಿಗೆ ಆಪ್ಷನ್ ೧, ಅಥವಾ ೨ ಒಳ್ಳೆಯದು.

೪) ಈ ಮೇಲಿನವು ಆಗದೇ ಹೋದರೆ ನನ್ನ ಅಣ್ಣ ತನ್ನ ಅಂಗಡಿಯನ್ನು ಆಧಾರವಾಗಿಟ್ಟುಕೊಂಡು ಸಾಲ ತೆಗೆಯುತ್ತಾನಂತೆ - ಅದಕ್ಕೆ ಬ್ಯಾಂಕ್ ಮ್ಯಾನೇಜರ್‌ಗೆ ನಾನು ಶಿಫಾರಸ್ಸು ಮಾಡಬೇಕಂತೆ
ವೈಯುಕ್ತಿಕವಾಗಿ ನನ್ನ ಅಣ್ಣನ ಮೇಲೆ ಕರುಣೆ ಇದೆ, ಆತನಿಗೆ ಪ್ರತಿ ತಿಂಗಳೂ ನಿಗದಿಯಾದ ಯಾವುದೇ ಆದಾಯವಿಲ್ಲ, ಇವತ್ತು ದುಡೀಬೇಕು, ನಾಳೆ ತಿನ್ನಬೇಕು. ಅಂತಾದ್ದರಲ್ಲಿ, ಅವನ ಅಂಗಡಿಯನ್ನು ಇಟ್ಟು ಸಾಲ ತೆಗೆದನೆಂದರೆ, ಅದು ಅವನು ತೀರಿಸೋ ಸಾಧ್ಯತೆ ಕಡಿಮೆಯೇ. ಕೊನೆಗೆ ಅದು ನನ್ನ ತಲೆಗೇ ಬಂದು ಗಂಟು ಬೀಳುತ್ತೆ.

೫) ದುಡ್ಡು ಕೊಡೋಕೇ ಆಗಲ್ಲ ಅನ್ನೋ ನಿರ್ಲಿಪ್ತತೆಯನ್ನು ಪ್ರದರ್ಶಿಸಿ - ಸುಮ್ಮನಿರುವುದು
ಇದೂ ಕೂಡಾ ಆಗದ ಮಾತು. ನನ್ನ ಸಂವೇದನೆಗಳು ನನ್ನನ್ನು ಈ ಸ್ಥಿತಿಗೆ ಒಯ್ಯಲಾರವು.

೬) ಮನೆಯನ್ನು ಅಡವಿಟ್ಟುಕೊಂಡು ಬ್ಯಾಂಕಿನವರಿಗೆ ಸಾಲವನ್ನು ನನ್ನ ಅಕ್ಕನ ಹೆಸರಿಗೆ ಕೊಡುವಂತೆ ಹೇಳಿ, ನಾನು ಮತ್ತು ನನ್ನ ಅಣ್ಣ ಅದರಿಂದ ಹೊರಗಿರುವುದು
ಸದ್ಯಕ್ಕೆ ಇದು ಉಳಿದ ಉಪಾಯ. ಇದರಿಂದ ನಾನು ಮತ್ತು ನನ್ನ ಅಣ್ಣನೂ ಸಾಲದಿಂದ ಮುಕ್ತರಾದರೂ, ನನ್ನ ಅಕ್ಕನ ಮನೆ ಇವತ್ತಲ್ಲ ನಾಳೆ ಬ್ಯಾಂಕಿನವರಿಗೆ ಸೇರಿಯೇ ಸೇರುತ್ತೆ ಅನ್ನೋ ಸತ್ಯದ ದರ್ಶನವಾಗುತ್ತೆ. ಇವರಿಗೆ ಬರೋ ಚಿಲ್ಲರೇ ಆದಾಯದಿಂದ ಬ್ಯಾಂಕಿನವರ ಬಡ್ಡಿ-ಚಕ್ರಬಡ್ಡಿಯನ್ನು ತೀರಿಸಿ ಮನೆಯನ್ನು ಬಿಡಿಸಿಕೊಳ್ಳುವುದು ಕಷ್ಟ ಸಾಧ್ಯ. ಇನ್ನು ನನ್ನ ಸೋದರಳಿಯನೋ ಯಾವ ಜವಾಬ್ದಾರಿಯೂ ಇಲ್ಲದೇ ನಿಶ್ಚಿಂತನಾಗಿದ್ದಾನೆ. ನಾಳೆ ನನ್ನ ಅಕ್ಕ ಸತ್ತ ಮೇಲೆ, ಅವನು ಊರು ಬಿಟ್ಟು ಬೇರೆಲ್ಲಿಯೋ ಹೋಗುತ್ತಾನೆಯೇ ವಿನಾ ಸಾಲ ತೀರಿಸಿ ಮನೆಯನ್ನು ಬಿಡಿಸಿ, ಮನೆಗೆ ತಕ್ಕ ಮಗನಾಗಿ ಬದುಕುವ ಸಂಭವನೀಯತೆ ತುಂಬಾ ಕಡಿಮೆ. ಒಂದುವೇಳೆ, ನನ್ನ ಅಕ್ಕನ ಮಗ ಎಲ್ಲೂ ಯಾರನ್ನೂ ರಿಜಿಸ್ಟರ್ಡ್ ಮದುವೆ ಮಾಡಿಕೊಳ್ಲದೇ ಇದ್ದ ಪಕ್ಷದಲ್ಲಿ, ಅವನಿಗೆ ಒಂದು ಹುಡುಗಿ ನೋಡಿ ಮದುವೆ ಮಾಡಿ, ಇಷ್ಟೇ ಪ್ರಮಾಣದ ಹಣವನ್ನು ವರದಕ್ಷಿಣೆ ರೂಪದಲ್ಲಿ ಕೇಳು ಎಂದು ನಮ್ಮ ಅಣ್ಣನಿಗೆ ಹೇಳಿದ್ದೇನೆ. ಈಗ ನನ್ನ ಅಕ್ಕನ ಮಗಳನ್ನು ಮದುವೆ ಆಗ್ತಿರೋ ಹುಡುಗ ಡ್ರೈವರ್ ಅಂತೆ, ಅವನಿಗೆ ಒಂದೂವರೆ ಲಕ್ಷ ರೂಪಾಯಿ ವರದಕ್ಷಿಣೆಯಾದರೂ, ಗುಮಾಸ್ತರಿಗೂ ಅಷ್ಟೇ ಇರಬೇಕಲ್ಲವೇ? ವರದಕ್ಷಿಣೆಯನ್ನು ಕೆಟ್ಟದ್ದು ಎಂದವರ್ಯಾರು?

ಹೇಳಿ, ನೀವೆಂದಾದರೂ ಇಂಥ ಧರ್ಮ ಸಂಕಟದಲ್ಲಿ ಸಿಕ್ಕಿದ್ದೀರೇ? ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ?

Friday, March 17, 2006

ಎತ್ತಣ ಮಾಮರ ಎತ್ತಣ ಕೋಗಿಲೆ?

ನಾನು ಹೀಗೆ ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತೇನೆಂದು ಯಾವ ಡೆಸ್ಟಿನಿ ಎಲ್ಲಿ ಬರೆದಿತ್ತೋ ಯಾರಿಗೆ ಗೊತ್ತು? ಇಂದು ಹಿಂತಿರುಗಿ ನೋಡಿದರೆ ನಾನು ಬೆಳೆದು ಬಂದ ಬಗೆಯಲ್ಲಿ ಒಂದಲ್ಲ ಒಂದು ರೀತಿಯ ಸುಳಿವು ಸಿಗುತ್ತೆ. ಇಲ್ಲವೆಂದಾದರೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಟೈಪಿಂಗ್ ಕ್ಲಾಸಿಗೆ ಸೇರಿಕೊಂಡು ಜ್ಯೂನಿಯರ್ ಪರೀಕ್ಷೆಗಳನ್ನು ಮುಗಿಸುತ್ತಿದ್ದೆನೇ? ಅಥವಾ ಆಪ್ಟೆಕ್‌ನಲ್ಲಿ ಆಗಿನ ಕಾಲದಲ್ಲಿ ನನ್ನ ಸಹೋದ್ಯೋಗಿಗಳೂ ಮೂಗಿನ ಮೇಲೆ ಬೆರಳಿಡುವಷ್ಟು ಹಣವನ್ನು ಪ್ರತಿ ತಿಂಗಳೂ ಕೊಟ್ಟು ಕೋರ್ಸುಗಳನ್ನು ಮುಗಿಸುತ್ತಿದ್ದೆನೇ?

ಇವೆಲ್ಲವೂ ಕಟ್ಟಿ ಹಾಕಿದ ಬಾಂದವ್ಯವೆಂಬಂತೆ ಬನಾರಸ್ಸಿನಲ್ಲಿ ಭಾರತೀಯ ಸರ್ಕಾರದ ಪ್ರಾಜೆಕ್ಟ್‌ನಲ್ಲಿ ಜ್ಯೂನಿಯರ್ ರಿಸರ್ಚ್ ಫೆಲ್ಲೋ ಆಗಿ ಸೇರಿಕೊಂಡಾಗ ನನಗಾದ ಸಂತೋಷ ಅಪರಿಮಿತ. ಬರೀ ಬೆಂಗಳೂರು, ಮೈಸೂರು, ಶಿವಮೊಗ್ಗಗಳಂತಹ ನಗರಗಳನ್ನು ನೋಡಿದ್ದ ನನಲ್ಲಿ ಕಾಶಿಯಂಥ ಮಹಾ ಪಟ್ಟಣ ಹಲವು ರೀತಿಯ ಸೋಜಿಗಳನ್ನು ಮೂಡಿಸಿತ್ತು. ಕಾಶಿಯಲ್ಲಿನ ನನ್ನ ಬದುಕಿನ ಬಗ್ಗೆ ಬರೆದರೆ ಅದೊಂದು ಮಹಾ ಪುರಾಣವೇ ಆದೀತೇನೋ, ಆದರೂ ಇವತ್ತಿಗೂ ನನ್ನ ಹುಟ್ಟೂರಾದ ಆನವಟ್ಟಿಯನ್ನು ಬಿಟ್ಟರೆ ಕಾಶಿ ಅಥವಾ ಬನಾರಸ್ ಎಂದಿಗೂ ನನಗೆ ಅಪ್ಯಾಯಮಾನ. ಅಲ್ಲಿನ ಬದುಕನ್ನು ನೆನೆದಾಗಲೆಲ್ಲ ಹಲವಾರು ರೀತಿಯ ಸಂತಸಗಳು ನನ್ನ ಮನಸಲ್ಲಿ ಹರಿದಾಡುತ್ತವೆ.

ಬನಾರಸ್ಸಿನಲ್ಲಿ ನನ್ನ ಸುಪರ್ದಿಯಲ್ಲಿ ಮೂರು ಕಂಪ್ಯೂಟರ್‌ಗಳಿದ್ದವು: ಒಂದು, ಇಂಟೆಲ್ ೨೮೬ ಪ್ರೋಸೆಸ್ಸರ್, ಹಾರ್ಡ್ ಡಿಸ್ಕ್ ರಹಿತ, ಐದೂ ಕಾಲು ಇಂಚು ಪ್ಲಾಪಿಯನ್ನು ಮಾತ್ರ ಓದುವಂಥದ್ದು, ಎರಡನೆಯದ್ದು, ಇಂಟೆಲ್ ೪೮೬ ಪ್ರೊಸೆಸ್ಸರ್, ೫೦ ಎಮ್.ಬಿ. ಹಾರ್ಡ್ ಡಿಸ್ಕ್ ಇದ್ದು, ಐದೂ ಕಾಲು ಇಂಚು ಪ್ಲಾಪಿಯನ್ನು ಓದಬಲ್ಲದ್ದು, ಮತ್ತು ಮೂರನೆಯದು HP Magnum Multi RISC Unix ಸಿಸ್ಟಮ್. ಇವೆಲ್ಲದರಲ್ಲಿ ನನಗೆ ೨೮೬ ಕಂಪ್ಯೂಟರ್ ತುಂಬಾ ಮೆಚ್ಚುಗೆಯಾದದ್ದು ಅದರಲ್ಲಿ (ಇದ್ದುದರಲ್ಲಿಯೇ) ಒಳ್ಳೆಯ ಸ್ಪೀಕರ್ ಸಿಸ್ಟಮ್ ಇತ್ತು, ನಮ್ಮ ಪ್ರೊಫ಼ೆಸರ್ ಇಲ್ಲದ ಹಲವಾರು ನಿಶಾಚರ ಘಳಿಗೆಗಳನ್ನು ನಾನು ಇದರ ಮುಂದೆ ಕಳೆದದ್ದು ಇದೆ - ಪ್ರಾಜೆಕ್ಟ್ ಕೆಲಸಕ್ಕು, ಹಾಗೂ ಪ್ಯಾಕ್‌ಮ್ಯಾನ್ ಆಟವಾಡುವುದಕ್ಕೂ, ಇದರಲ್ಲೇ ನಾನು ಅತಿ ಹೆಚ್ಚು ಸ್ಕೋರ್ ಮಾಡಿದ್ದು (ಸ್ಥಳೀಯ ದಾಖಲೆಗಳನ್ನು ಮೀರಿಸಿ!). ಈ ಕಂಪ್ಯೂಟರ್‌ನ ಒಂದು ವಿಶೇಷವೆಂದರೆ ಅದು ಭಯಂಕರ ನಿಧಾನ! ಅದು ನಿಧಾನವಾದರೇನಂತೆ, ಬನಾರಸ್ಸಿನ ಬದುಕಿಗೆ ಅದು ಸರಿಯಾಗೇ ಹೊಂದಿಕೊಂಡಿತ್ತು - ಉದಾಹರಣೆಗೆ ನಾವು ಯಾವುದಾದರೊಂದು ಗ್ರಾಫ್‌ನ್ನು ಪ್ರಿಂಟ್ ಮಾಡಬೇಕಾಗಿದ್ದರೆ, ಈ ಕಂಪ್ಯೂಟರ್‌ಗೆ ಡೇಟಾ ಕೊಟ್ಟು ಸುಮಾರು ೧೫-೧೬ ಸಾರಿ ಎಂಟರ್ ಬಟನ್ ಅನ್ನು ಒತ್ತಿ ಹೋಗಿ ಟೀ ಕುಡಿದು ಸಮೋಸಾ ತಿಂದು ಬರುವುದರೊಳಗೆ ಗ್ರಾಫ್ ರೆಡಿ!

ನಮ್ಮ ೪೮೬ ಕಂಪ್ಯೂಟರ್‌ನಲ್ಲಿ ಇರುವ ಕೈ (Chi) ರೈಟರ್ ಎನ್ನೋ ವರ್ಡ್ ಪ್ರಾಸೆಸ್ಸರ್ ಬಳಸಿ, ಬನಾರಸ್ಸಿನಲ್ಲಿ ದೊರೆವ ಸಂಪನ್ಮೂಲಗಳ ಸಹಾಯದಿಂದ ನಾವು ನಮ್ಮ ರಿಸರ್ಚ್ ಪೇಪರ್‌ಗಳನ್ನು ತಯಾರಿಸಿ ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸುವುದೆಂದರೆ ಅದೊಂದು ಮಹತ್ಸಾಧನೆಯೇ ಸರಿ. ನಾನು ಓದಿದ್ದು ಭೌತಶಾಸ್ತ್ರ, ಮಾಡುತ್ತಿದ್ದ ಸಂಶೋಧನೆ ಪಾಲಿಮರ್ ಮೇಲೆ, ಬಳಸುತ್ತಿದ್ದ ತಂತ್ರಜ್ಞಾನ ಕಂಪ್ಯೂಟರ್ ಸಿಮಿಲೇಷನ್ - ಎತ್ತಣ ಮಾಮರ, ಎತ್ತಣ ಕೋಗಿಲೆ. ಮಾಂಟೇಕಾರ್‍ಲೋ ಸಿಮಿಲೇಷನ್ ಮೆಥಡ್‌ನಲ್ಲಿ ನಾನು ನ್ಯೂ ಯಾರ್ಕ್ ಯೂನಿವರ್ಸಿಟಿಯವರನ್ನು ಮೀರಿಸಿ ರ್‍ಯಾಂಡಮ್ ನಂಬರ್ ಜೆನರೇಟರ್‌ನ್ನು ಬರೆಯುತ್ತೇನೆಂದು ಅವಿರತ ಪ್ರಯತ್ನಿಸಿದ್ದು ವಿಫಲವಾಯಿತು - ಕೊನೆಯಲ್ಲಿ ನ್ಯೂ ಯಾರ್ಕ್‌ನವರ ಮೆಥಡ್ ನಮ್ಮ ಥಿಯರಿಗಿಂತ ತುಂಬಾ ಉನ್ನತ ಮಟ್ಟದಲ್ಲಿತ್ತು. ಆದರೆ ನಾವು ಪ್ರಯತ್ನ ಮಾಡಿದ್ದೆವು ಅನ್ನೋದು ಎಲ್ಲಕ್ಕಿಂತ ಸಂತೋಷದ ವಿಷಯ.

ಆದರೆ, ಇಂದು ನ್ಯೂ ಯಾರ್ಕ್ ಯೂನಿವರ್ಸಿಟಿಯಿಂದ ಕೆಲವೇ ಮೈಲುಗಳ ದೂರದಲ್ಲಿ ಕುಳಿತು, ಇದ್ದವುಗಳಲ್ಲಿ ಒಳ್ಳೆಯ ಕಂಪ್ಯೂಟರ್ ಸಿಸ್ಟಮ್ (Pentium 4, dual CPU 3.00 MHZ each, 1GB RAM, 80 GB Hard drive, XP Professional) ಇರುವ ನಾನು ೧೧ ವರ್ಷಗಳ ನಂತರ ಬನಾರಸ್ಸಿನ ೨೮೬ ಕಂಪ್ಯೂಟರಿಗಿಂತಲೂ ನಿಧಾನವಾಗಿದ್ದೇನೆಂದೆನಿಸುತ್ತೆ. ವಿಷಾದವೆಂದರೆ ಹೆಚ್ಚು-ಹೆಚ್ಚು ಬ್ಯಾಂಡ್‍ವಿಡ್ತ್ ಆಗಲಿ, ವೇಗವಾಗಲಿ ನನಲ್ಲಿ ಯಾವುದೇ ದಕ್ಷತೆಯನ್ನು ಹೆಚ್ಚಿಸಿಲ್ಲ. ಈ ಎಲ್ಲ ಬದಲಾವಣೆಗಳಿಗೆ ನನ್ನ ವೈಯುಕ್ತಿಕ ನಿಲುವುಗಳು, ಮುಖ್ಯವಾಗಿ ನನ್ನ ಬೆಳೆಯುತ್ತಿರುವ ಪ್ರಬುದ್ಧತೆ, ಬದಲಾದ ಗುರಿ-ಧೋರಣೆಗಳು ಮಹತ್ವವಾದ ಪರಿಣಾಮವನ್ನು ಬೀರಿವೆ.

ಆದ್ದರಿಂದಲೇ ಇತ್ತೀಚೆಗೆ ಏನಾದರೂ ಮಾಡಬೇಕಾದ ಮನಸ್ಸು, ಒಂದು ಚಿಕ್ಕ ಕೆಲಸವಾದರೂ ಅದನ್ನು ಶ್ರದ್ಧೆಯಿಂದ ಮಾಡಿ ಮುಗಿಸುವ ಶಿಸ್ತು ಎಲ್ಲವುಗಳಿಗಿಂತ ಹೆಚ್ಚಿನವಾಗಿ ಕಂಡು ಬರುತ್ತಿವೆ. ಎಲ್ಲರೂ ಪುಸ್ತಕ ಬರೆಯ ಬೇಕೆನ್ನುವವರೇ, ಆದರೆ ಕೆಲವೇ ಕೆಲವು ಜನ ಅದನ್ನು ಮೊದಲಿನಿಂದ ಕೊನೆಯವರೆಗೆ ನಿಭಾಯಿಸಿಕೊಂಡು ಹೋಗಬಲ್ಲರು. Moore ಅನ್ನೋ ಪುಣ್ಯಾತ್ಮನೇನೋ ಕಂಪ್ಯೂಟರ್, ಟೆಕ್ನಾಲಜಿ ಬಗ್ಗೆ ಏನೋ ಹೇಳಿಬಿಟ್ಟ, ಇವೆಲ್ಲದರ ಎದುರು ಸದಾ ಕುಗ್ಗುವ ಮನಸ್ಸಿನ ಸ್ಥಿತಿಯನ್ನು ವಿವರಿಸುವವರ್‍ಯಾರು? Moore's law ಗೆ ಯಾರಾದರೂ ಕರೋಲ್ಲರಿ ಬರೆಯುತ್ತಾರೇನೋ ನೋಡೋಣ!

Thursday, March 16, 2006

ನಮ್ಮ ಕನ್ನಡ

ಕನ್ನಡಿಗರ ಭಾಷಾ ವ್ಯಾಮೋಹ, ಅದರ ಪರಿಣಾಮಗಳನ್ನು ಕುರಿತು ಈಗಾಗಲೇ ಬಹಳಷ್ಟು ಪ್ರಕಟವಾಗಿದೆ. ದುರಭಿಮಾನವಂತೂ ನಮ್ಮಲ್ಲಿ ಮೂಡುವ ಮಾತೇ ಇಲ್ಲ, ಅದರೂ ಕೆಲವೊಮ್ಮೆ ಕನ್ನಡಿಗರಲ್ಲಿ ದುರಭಿಮಾನ ಮೂಡಿದ್ದರೆ ಎಂದು ಕುತೂಹಲ ಹುಟ್ಟುತ್ತದೆ. ನಮ್ಮ ಮಾತಿನ ಮಧ್ಯೆ ಸಾಕಷ್ಟು ಕನ್ನಡ ಬಳಸಬೇಕು - ಇದರಿಂದ ಏನಾಗುತ್ತೋ ಬಿಡುತ್ತೋ, ಕ್ರಮೇಣ ಒಂದು ಸಹಜ ವಾತಾವರಣ ಬೆಳೆಯುತ್ತೆ, ಸಹಜತೆ ಇದ್ದಲ್ಲಿ ಸೌಹಾರ್ಧತೆ ಇರುತ್ತೆ. ಕನ್ನಡವನ್ನು ಉಳಿಸಿ-ಬೆಳೆಸಿ ಅನ್ನೋ ಮಾತನ್ನು ನಿಮಗೆ ಹೇಳೋಕೆ ನಾನ್ಯಾರು? ಅದು ನಿಮ್ಮ-ನಿಮ್ಮ ಆಯ್ಕೆ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ನಾನು ಇಂಗ್ಲೀಷಿನಲ್ಲಿ ಮಾತನಾಡ್ತಾ ಇರುವಾಗ ನಿಮಗೆ ಅರ್ಥವಾಗದ ಕಷ್ಟದ ಪದಗಳನ್ನು ಬಳಸಿದ ಮಾತ್ರಕ್ಕೆ ನಾನು ದಿಢೀರನೆ ದೊಡ್ಡ ಮನುಷ್ಯನಾಗುತ್ತೇನೆ, ಅದೇ ಕನ್ನಡದ ಕಷ್ಟದ ಪದಗಳನ್ನು ಬಳಸಿದ ಮಾತ್ರಕ್ಕೆ ಹಳ್ಳಿಯವನಾಗೋ, ಕೀಳಾಗೋ ಅದು ಹೇಗೆ ಪರಿವರ್ತನೆಗೊಳ್ಳುತ್ತೇನೋ ನನಗಂತೂ ತಿಳಿಯದು. ಇಲ್ಲವೆಂದಾದರೆ ನಾನು ಮದ್ರಾಸಿನಲ್ಲಿ ಕೆಲಸ ಮಾಡುವಾಗ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ "ಕನ್ನಡಿಗ"ರಿಗೆ - ಅಂತಃಕರಣ, ಅಶ್ಲೀಲ, ಲೀಲಾಜಾಲ ಮುಂತಾದ ಕನ್ನಡ ಪದಗಳನ್ನು ಬಳಸುವ ನಾನು ಕಾಡು ಮನುಷ್ಯನಾಗಿ ಕಂಡಿರಲಿಕ್ಕೆ ಹೇಗೆ ಸಾಧ್ಯ?


ತಮ್ಮ ನಾಡು, ನುಡಿಯ ಬೆಲೆ ಅರಿಯದವರು, ಅದನ್ನು ಗೌರವಿಸಿದವರು ಎಲ್ಲೇ ಹೋದರೂ ಪ್ರಾಯೋಗಿಕವಾಗಿ ಬದುಕಿ ತಮ್ಮ-ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುತ್ತಾರೆಯೇ ವಿನಾ ಬೇರೇನನ್ನು ತಾನೇ ಮಾಡಿಯಾರು?


ನನಗಂತೂ ಕನ್ನಡ ದಿನ ನಿತ್ಯದ ಅಗತ್ಯ, ನನಗೆ ಅದರ ಬಗ್ಗೆ ಅಭಿಮಾನವಿಲ್ಲ, ಏಕೆಂದರೆ ಅದು ನನ್ನಿಂದ ಬೇರ್ಪಡದಷ್ಟರ ಮಟ್ಟಿಗೆ ನನ್ನೊಳಗೊಂದಾಗಿದೆ, ಇಂಥವರು ನಮ್ಮ ತಾಯಿ ಎಂದು ಹೇಗೆ ಹೇಳುತ್ತೇವೆಯೋ ಹಾಗೆ.