Tuesday, March 29, 2011

ದದ್ದಾ, who made god?

ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ!

ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ
ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...

ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...

***

ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ.

ನಮ್ಮ ಮನೆಯಲ್ಲಿರೋ ಈ 5&2 client ಗಳ ಪ್ರಶ್ನೆಗಳಿಗೆ ಉತ್ತರ ಈ ಗಣನಾಥನೇ ಕೊಡಬೇಕು - 5&2 ಅಂದ್ರೆ ನನ್ನ ಐದು ಮತ್ತು ಎರಡು ವರ್ಷದ ಮಕ್ಕಳು ಅಂತ ಅರ್ಥ. ಅವರು ಕೇಳಿದಂತಾ ಪ್ರಶ್ನೆಗಳನ್ನು ನಾನು ಚಿಕ್ಕವನಾಗಿದ್ದಾಗಲೇನಾದರೂ ಕೇಳಿದ್ರೆ, ಆ ರಾವಣ ಗಣಪತಿ ತಲೆ ಮೇಲೆ ಗೋಕರ್ಣದಲ್ಲಿ ಕೊಟ್ಟನಲ್ಲ ಹಂಗೆ ನನಗೆ ಪ್ರತೀ ದಿನಾನೂ ಬೀಳೋದು ಅಂತ ಕಾಣ್ಸುತ್ತೆ... ನಾನು ಪ್ರಶ್ನೆಗಳನ್ನಂತೂ ಕೇಳೋವಾಗ ಕೇಳ್ಲಿಲ್ಲ, ಇನ್ನು ಅವುಗಳಿಗೆ ಉತ್ತರ ಎಲ್ಲಿಂದ ತರಲಿ ಹೇಳಿ.

ಈ ಮೆಲೆ ತೋರಿಸಿದ ಗಣನಾಥನ ಹಾಡಿನ ಕೆಲವು ಸಾಲುಗಳನ್ನೇ ನೋಡಿ, ಎಷ್ಟೊಂದು ಪ್ರಶ್ನೆಗಳನ್ನ ಹುಟ್ಟಿ ಹಾಕ್ಸುತ್ವೆ ಅಂತ, ನೀವು ಕೊಡೋ ಪ್ರತಿ ಒಂದು ಉತ್ತರಕ್ಕೂ ಒಂದೊಂದು sub-ಕಥೆ ಇರುತ್ತೆ, ಹಾಗೆ ನೀವು ಉತ್ತರ ಕೊಟ್ಟಂತೆಲ್ಲ, ಒಂದೊಂದು ಉತ್ತರಕ್ಕೆ ಐದೈದು WHY ಗಳು ಬಂದು ಸೇರಿಕೊಳ್ಳುತ್ವೆ, ಉದಾಹರಣೆ ಬೇಕಾ, ತೊಗೊಳ್ಳಿ:

ಪಲ್ಲವಿಯಲ್ಲಿ
- who is 'ga na nA tha'?
- why we have to worship him first ? (so you may use sub-story of kartikeya-ganesha race story, beware of more questions)
- why ganesha has so many names?
- what his friends call him?

You think these are easy questions? Be careful... and remember that classic joke about Johny?

Kid asks mom, "Mom, where am I from?"
Mom blinks her eyes and begin to answer the question starting from creation, birth, etc
Kid interrupts her, '...but Johny says he is from New Jersey..., where am I from?'

ನಮ್ಮ ಹಾಡುಗಳು ಒಂಥರಾ ಯಕ್ಷಗಾನ ಕಾರ್ಯಕ್ರಮ ಇದ್ದ ಹಾಗೆ, ಒಂದು ಪ್ಯಾರಾದಲ್ಲಿ ವರ್ತಮಾನ ಕಾಲದಲ್ಲಿರೋದು, ಮತ್ತೊಂದು ಪ್ಯಾರಾದಲ್ಲಿ ತ್ರೇತಾಯುಗಕ್ಕೆ ಹೋದ ಹಾಗೆ, ತ್ರೇತಾ ಯುಗದಿಂದ ದ್ವಾಪರ ಯುಗಕ್ಕೆ ಒಂದೆ ಕ್ಷಣದಲ್ಲಿ ಹಾರಿದ ಹಾಗೆ. ಅಥವಾ ಅತಳ, ಭೂತಳ, ಪಾತಾಳ, ಅಂತರಿಕ್ಷ, ಸ್ವರ್ಗ, ನರಕ, ಮತ್ಸ್ಯಲೋಕ, ಮೊದಲಾದವುಗಳನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿದ ಹಾಗೆ... do you think I am joking? ನಿಮ್ಮ ಮಕ್ಕಳಿಗೆ ಬಭ್ರುವಾಹನ ಚಿತ್ರದ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು..." ಹಾಡನ್ನು youtube ನಲ್ಲಿ ತೋರಿಸಿ ನೋಡಿ, ನಿಮಗೆ ಗೊತ್ತಾಗುತ್ತೆ ನನ್ನ ಕಷ್ಟ ಏನು ಅಂತ. (why did I watch or why they saw this song with me - that is a different and long story.... a topic in itself for some other day).

ಇನ್ನೂ ಪಲ್ಲವಿಯಲ್ಲೇ ಇದ್ದೇನೆ...
ಫಸ್ಟ್ ಪ್ಯಾರಾ:
-who is 'da r ma roya'?
- why that guy worship ganesha?
- what was he doing?
- how old was he?
- what is jaya? isn't that amma's friend's name? also your chikkamma has the same name?
- how does ganesh know who does pooja?
- why he helps?
- and then what happened? 'ಆ ಮೆಲೆ ಏನು?' (screaming because i don't answer the questions immediately).

ಸೆಕೆಂಡ್ ಪ್ಯಾರಾ:
-who is ravnaa?
-why he didn't do pooja? (his dad scold him?)
-why he died?
-who killed him? why?
-'rana' means what?

ಇನ್ನು ಪುರಂದರ-ಗಿರಂದರ ಅಂದ್ರೆ ಕಥೇನೇ ಮುಗೀತು, ಅದಕ್ಕೆ ಎರಡೇ ಪ್ಯಾರಾಕ್ಕೆ ಹಾಡು ಮೊಟಕು ಮಾಡಿದ್ದು.

***

ಹೀಗೆ ಪ್ರಶ್ನೆಗಳ ಯಾದಿ, ಅವುಗಳಿಗೆ ಉತ್ತರ, ಅವರದ್ದೇ ಆದ ತರ್ಕ, ಕಲ್ಪನೆ, ಕಲ್ಪನೆಯಿಂದ ಬೆಳೆಯೋ ಉತ್ತರ - ಇವೆಲ್ಲ ನಮ್ಮ ಮನೆಯಲ್ಲಿ ಬೆಳೀತಾನೇ ಇವೆ. ನಮ್ಮಮ್ಮನ್ನ "ನೀನು ಅಷ್ಟೊಂದು ಮಕ್ಳನ್ನ ಹೆಂಗ್ ಸಾಕ್ದೇ?" ಅಂತ ಕೇಳಿದ್ರೆ, ನಕ್ಕೊಂಡು "...ಈಗ ನಿಮ್ಮ ಸರದಿ, ಅನುಭವಿಸಿ!" ಅನ್ನೋ ಉತ್ರ ಕೊಡೋದೇ?

ನನಗೆ ಮೊಟ್ಟ ಮೊದಲನೇ ಬಾರಿಗೆ ಗಣೇಶನ ಕಥೆ Rated R ಅನ್ನಿಸಿದ್ದು... Youtube ನಲ್ಲಿರೋ ಗಣೇಶನ ಕಥೆ ಈಗ ಯಾಕಾದ್ರೂ ತೋರಿಸಿದ್ನೋ ಅನ್ನೋ ಹಾಗಿದೆ ನನ್ನ ಪರಿಸ್ಥಿತಿ.

Again the same series of "Why's"...

ಅದೂ ನಮ್ಮ ಗಣೇಶನ ಕಥೆಯಲ್ಲೇ ಎಷ್ಟೊಂದು ವರೈಟಿಗಳು. ಯಾಕೆ ಆನೆಯ ತಲೆಯನ್ನು ಇಟ್ರು ಅನ್ನೋದಕ್ಕೆ ಎಷ್ಟೊಂದು ಥರನ ಉತ್ತರಗಳು? ಗಜಾಸುರನೆಂಬ ರಾಕ್ಷಸನ ತಲೆಯೋ ಅಥವಾ ಉತ್ತರಕ್ಕೆ ತಲೆ ಹಾಕಿ ಮಲಗಿದ ಪ್ರಾಣಿಯ ಕತೆಯೋ? why that rAkShasa had elephant's head in the first place? (ಇವೆಲ್ಲ ನನ್ನ ಪ್ರಶ್ನೆಗಳು: isn't that head big for a small boy? who did the transplantation? ಅಷ್ಟೆಲ್ಲಾ ಮಂತ್ರಶಕ್ತಿ ಇರೋ ಶಿವನಿಗೆ ಹುಡುಗನ ಕಡಿದಿರೋ ತಲೆ ಹುಡುಕೋದಕ್ಕೆ ಆಗಲಿಲ್ಲವೇ? ಯಾಕೆ ಅಷ್ಟೊಂದು ಸಿಟ್ಟು? ತ್ರಿಶೂಲ ಹಿಡಿದಿರೋ ಶಿವನಿಗೆ ಆ ಬಾಲಕನ ಹತ್ತಿರ ನೆಗೋಶಿಯೇಟ್ ಮಾಡೋಕಾಗಲಿಲ್ವ?)

ನಿನ್ನೆ ರುದ್ರಾಭಿಷೇಕದ ಹೊತ್ತಿಗೆ ಬ್ರಿಜ್‌ವಾಟರ್ ದೇವಸ್ಥಾನದ ಅರ್ಚಕರು ತ್ರಿಶೂಲವನ್ನು ತೊಳೆದು ಶಿವನ ಬದಿಯಲ್ಲಿಟ್ಟಾಗ ನನ್ನ ಮಗಳು ಕೇಳಿಯೇ ಬಿಟ್ಟಳು: is this the same that shiva cut the boy's head?

ನಮ್ಮದೆಲ್ಲಾ ಸಂಕೀರ್ಣದೊಳಗಿನ ಸಂಕೀರ್ಣ ಅಂತ ಅನ್ನಿಸೋಲ್ವಾ? ಐದು ವರ್ಷದ ಮಕ್ಕಳಿಗೆ "ಏ, ನಿನಗೊತ್ತಾಗಲ್ಲ ಸುಮ್ಮನಿರು!" ಎಂದು ಗದ್ದರಿಸೋದನ್ನು ಬಿಟ್ಟು ನಿಧಾನವಾಗಿ ಇವನ್ನೆಲ್ಲ ತಿಳಿ ಹೇಳೋ ಉಪಾಯಗಳ ಜೊತೆಗೆ ಗಣೇಶನ ಬಗ್ಗೆ ಒಂದು comprehensive ಕಥೆ, ಅಥವಾ ಪುರಾಣವಾದರೂ ನಮ್ಮಲ್ಲಿದೆಯಾ? ಅದಕ್ಕೆ ಅದನ್ನ ಕಥೆ-ಪುರಾಣ ಅಂತ ಕರೆಯೋದಿರಬೇಕು. ಒಂಥರಾ ಇಂಡಿಯನ್ ಮಿಥಾಲಜಿ ಅಂದ್ರೆ ಇವತ್ತಿನ ವಿಕ್ಕಿಪೀಡಿಯಾ ಇದ್ದ ಹಾಗೆ, ಯಾರು ಹೇಗೆ ಬೇಕೋ ಹಾಗೆ ಎಡಿಟ್ ಮಾಡ್ಕೊಂಡು ಹೋದ್ರೆ ಆಯ್ತು, ಆದ್ರೆ, edit history ಅಥವಾ chronology ಮಾತ್ರಾ ಕೇಳ್ಬೇಡಿ.

her question - 'why ganesha's mommy want him to wait at the door? she could have locked the door herself'.

ಈ ಮಕ್ಕಳಿಗೆ ಕೃಷ್ಣ ಹೇಗೆ ಬೆಣ್ಣೆ ಕದೀತಿದ್ದ ಅಂತ ಕಥೆ ಹೇಳಿದ್ರೆ, "ಅಯ್ಯೋ ಯಾಕೆ? ಫ್ರಿಜ್ಜ್ ತೆಗೆದಿದ್ರೆ ಸಿಕ್ಕಿರೋದು" ಅಂತ ನಮಗೇ ಪ್ರಶ್ನೆ ಕೇಳ್ತಾರಲ್ಲ, ಅಲ್ಲಿಗೇ ನಿಲ್ಲದೇ, "Why they didn't have a ladder?" ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳೋ audience ಇರೋವಾಗ, ನಮ್ಮ ಕಥೆಗಳು ಇನ್ನಷ್ಟು ಸರಳವಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಲ್ವಾ? ("why he eats just ಬೆನ್ನೆ? no bread! ವೂ, that is gross!") and more questions (why that ಬೆನ್ನೆ white, ours yellow)? and more questions... why ಬಲ್ ರಾಮಾ not blue, only krishna? (you want to try that?)


***

ಇವೆಲ್ಲ ಇರಲಿ, ಹೊಂಕಣ ಸುತ್ತಿ ಮೈಲಾರಕ್ಕೆ ಬಂದಾ ಅನ್ನೋ ಹಾಗೆ, ನನ್ನ ಹೆಡ್ಡಿಂಗ್‍ಗೆ ಬರ್ತೀನಿ:

ಮೊನ್ನೆ ಬೆಳಿಗೆ ಆಫೀಸಿಗೆ ಬರೋ ತರಾತುರಿಯಲ್ಲೇ ದೇವರಿಗೆ ದೀಪ ಹಚ್ಚಿ, ತಲೆಯಲ್ಲಿ ಬರೋ ನೂರಾ ಒಂದು ಆಲೋಚನೆಗಳ ಮಧ್ಯೆಯೇ ಪೂಜೆ ಮಾಡಿದ ಹಾಗೆ ಮಾಡಿ ಬರುತ್ತಿರುವಾಗ, ಆಗಷ್ಟೇ ಎದ್ದು ಕಣ್ಣು ಒರೆಸುತ್ತಿದ್ದ ನನ್ನ ಐದು ವರ್ಷದ ಮಗಳು ಕೇಳಿದಳು, "ದದ್ದಾ, who made god?" (and that is the first question, no idea, what was in her mind).

ಆಗ ಸಧ್ಯಕ್ಕೆ ನನಗೆ ಏನೂ ತಿಳಿಯದೇ ಒಂದು ಕ್ಷಣ ಕಣ್ಣು ಪಿಳಿಪಿಳಿ ಬಿಟ್ಟೆನಾದರೂ "god made god" ಎಂದು ಉತ್ತರ ಹೇಳಿದೆ, ಉಳಿದದ್ದನ್ನ ಸಾಯಂಕಾಲ ಹೇಳ್ತೀನಿ ಎಂದು ಬೀಸೋ ದೊಣ್ಣೆಯಿಂದ ಬಚಾವ್ ಆದೆ... ಆದರೂ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಇನ್ನೂ ಯೋಚಿಸ್ತಾನೇ ಇದ್ದೀನಿ. ಪ್ರಶ್ನೆಗೆ ಉತ್ತರ ಹೇಳಲೋ, ಅಥವಾ ಇನ್ನೊಂದಿಷ್ಟು ಪ್ರಶ್ನೆಯನ್ನೇ ಕೇಳಿ ಸಮಾಧಾನ ಮಾಡಿ ಉತ್ತರವನ್ನು ಅವರ ಕಲ್ಪನೆಗೆ ಬಿಡಲೋ? who do you think made god? why do you want to know? who asked you that question?

ನಮಗೆ ಇಲ್ಲಿ ಯಾರು ಬೇಕು ಅಂದ್ರೆ, "ಅತಿಥಿ ತುಮ್ ಕಬ್ ಜಾವೋಗೇ?" ಸಿನಿಮಾದ ಪರೇಶ್ ರಾವಲ್ ಅಂತ ಸಂಬಂಧಿಕರು! ಅಥವಾ ಮಕ್ಕಳ ಎಲ್ಲಾ ಚಿಕ್ಕ-ಪುಟ್ಟ ಪ್ರಶ್ನೆಗಳಿಗೂ ಸಮಾಧಾನ ಚಿತ್ತದಿಂದ ಸಾವಧಾನವಾಗಿ ಉತ್ತರಿಸುವ ತಿಳುವಳಿಕೆ ಹಾಗೂ ಮನಸ್ಥಿತಿ ಇರುವವರು. ಅವರ ಪ್ರಶ್ನೆಗಳಿಗೆ ಉತ್ತರಕೊಡುವುದರ ಬದಲಿಗೆ ಕೆಲವೊಮ್ಮೆ ನಾವು ನಮ್ಮ ಆಫೀಸಿನ ಸಂಕಷ್ಟಗಳನ್ನೆಲ್ಲ ಮಕ್ಕಳ ಎದುರಿಗೆ ಅವರನ್ನು ಬೈಯ್ಯೋದರ ಮೂಲಕ ಪ್ರದರ್ಶಿಸುತ್ತೇವೇನೋ ಎಂದು ಹೆದರಿಕೆ ಆಗೋದೂ ಇದೆ.

ಅದಕ್ಕೆ, ದದ್ದಾ, who made god? ಅನ್ನೋ ಶೀರ್ಷಿಕೆಯನ್ನು "...ಅರ್ಥಾಥ್ ಪ್ರಶ್ನೆಗಳಿಗೆ ಉತ್ತರ ಹೇಳೋ ಅಜ್ಜ-ಅಜ್ಜಿ ಬೇಕಾಗಿದ್ದಾರೆ", ಎಂದು ಬದಲಾಯಿಸಿದರೆ ಹೇಗೆ ಎಂಬ ಯೋಚನೆ ಕೂಡಾ ಬಂತು...

***
"ದೇವ್ರುನ್ನ ಯಾರಾದ್ರೂ ಮಾಡ್ಲಿ, ಬಿಡ್ಲಿ - ಸುಮ್ನೇ ಕೆಲ್ಸ ನೋಡ್ರೋ - ಹೋಗ್ರೋ" ಅಂತ ಗದರಿಸೋದು ನಮ್ಮ ಕಾಲಕ್ಕೆ ಆಯ್ತು, ಅಲ್ಲೇ ಇರ್ಲಿ ಅದು.

ನನಗ್ಗೊತ್ತು, ದೊಡ್ಡ ದೊಡ್ಡ ಮಕ್ಕಳಿದ್ದವರೆಲ್ಲ ಈ ಬರಹವನ್ನು ನೋಡಿ ನಗತಾರೆ ಅಂತ, ದೊಡ್ಡವರಿಗೆ ದೊಡ್ಡ ಕಷ್ಟಾ, ಆನೆ ಭಾರ ಆನೆಗೆ, ಇರುವ ಭಾರ ಇರುವೆಗೆ ಅಂಥಾರಲ್ಲ ಹಾಗೆ!

ದೇವ್ರೆ, ಇವತ್ತಿನ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ದಯವಿಟ್ಟು ಬಹಿರಂಗ ಮಾಡಪ್ಪಾ ಅನ್ನೋದು "ಅಂತರಂಗ" ಈ ಹೊತ್ತಿನ ಆರ್ತ ಮೊರೆ ಅಷ್ಟೇ!

Wednesday, March 16, 2011

Facebook ಅನ್ನು ಎದುರಿಸಿ...

ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್ ಅಂತ ಓಪನ್ನ್ ಮಾಡಿಕೊಂಡು ಅದರಲ್ಲಿ ಸುಮಾರು ನಾಲ್ಕು ವರ್ಷದಿಂದ ಒಂದಿಷ್ಟು ಗೀಚಿದ್ದು ಈಗ ಇತಿಹಾಸ... ಇ-ಮೇಲ್, ಬ್ಲಾಗು, ಕಮ್ಮ್ಯೂನಿಟಿ ಕೆಲಸ ಮೊದಲಾದ ಎಲ್ಲವಕ್ಕೂ ಆಶ್ರಯಕೊಟ್ಟು ಅವುಗಳನ್ನು ನೀರೆರೆದು ಪೋಷಿಸುವ ಅನೇಕ ಗೊಂದಲಗಳ ನಡುವೆ ಈ ಫೇಸ್‌ಬುಕ್ಕ್ ಮತ್ತು ಟ್ವಿಟ್ಟರ್ ಅಕೌಂಟುಗಳು ಸೊರಗುತ್ತಲೇ ಬಂದವು.

ಅದರಲ್ಲೂ ಇತ್ತೀಚೆಗೆ ತೆಗೆದು ನೋಡಿದಾಗ ಸುಮಾರು ೪೯ ಜನ ಫ್ರೆಂಡ್ ಲಿಸ್ಟಿನಲ್ಲಿ ಕಾಯ್ದು ಕುಳಿತಿದ್ದೂ ಕಂಡುಬಂತು, ಇವರ ಜೊತೆಯಲ್ಲಿ ಇದ್ದವರಲ್ಲಿ ನನ್ನ ಹೊಸ ಬಾಸ್ ಕೂಡ ಒಬ್ಬರು! ಈ ವರ್ಚುವಲ್ಲ್ ಪ್ರಪಂಚದ ಸಂಬಂಧಗಳೂ ಸಹ ನಮ್ಮ ಉಳಿವಿಗೆ ಅಗತ್ಯವಾಗಿರೋವಾಗ, ಅದರಲ್ಲಿನ ಪ್ರತಿಯೊಂದು ಎಳೆಗಳೂ ಕೂಡ ಪೋಷಣೆಯನ್ನು ಬೇಡುತ್ತಿರುವಾಗ ನಾನೊಬ್ಬನೇ ಕಣ್ಣು ಮುಚ್ಚಿ ಕುಳಿತುಕೊಂಡರೆ ಅದು ನನ್ನ ನಷ್ಟವಲ್ಲದೇ ಇನ್ನೇನು? ಹೀಗೆ, ಯೋಚಿಸಿಕೊಂಡಾಗೆಲ್ಲ ಫೇಸ್‌ಬುಕ್ ನಂತಹ ದೈತ್ಯ ಸಾಮಾಜಿಕ ಯೋಧನೊಬ್ಬನನ್ನು ಎಷ್ಟು ದಿನವಾದರೂ ಅಲಕ್ಷಿಸಲಾದೀತು?

Facebook - ಅನ್ನೋ ಪದದಲ್ಲಿ Face ಅಂದ್ರೆ ಮುಖವೋ ಅಥವಾ Face it! ಅನ್ನೋ ಹಾಗೆ ಎದುರಿಸೋದೋ? book ಅಂದ್ರೆ ನಮಗೆ ಗೊತ್ತಿರೋ ಪುಸ್ತಕ, ಹೊತ್ತಿಗೆಗಳೋ ಅಥವಾ book it! ಅನ್ನೋ ಹಾಗೆ ಕಾದಿರಿಸೋದೋ? Face ಮತ್ತು book ಎರಡೂ ಸೇರಿ ಆಗಿರೋ ಹೊಸ ಪದವೋ ಅಥವಾ ಕ್ರಾಂತಿಯೋ? ಇದಕ್ಕೆ ಪ್ರಪಂಚಾದಾದ್ಯಂತ 500 ಕ್ಕೂ ಹೆಚ್ಚು ಮಿಲಿಯನ್ನ್ ಬಳಕೆದಾರರಿದ್ದಾರಂತೆ, ಪ್ರತಿಯೊಬ್ಬ ಬಳಕೆದಾರನ ಹೆಸರಿನಲ್ಲಿ ಸುಮಾರು $2 ರಂತೆ ವರ್ಷಕ್ಕೆ ಒಂದು ಬಿಲಿಯನ್ನ್‌ಗಿಂತ ಹೆಚ್ಚು ರೆವಿನ್ಯೂ ಇದೆಯಂತೆ, ಕೆಲವರ $38 ರಿಂದ ಹಿಡಿದು ಮೈಕ್ರೋಸಾಫ್ಟಿನ $200 ಪ್ರತಿ ಬಳಕೆದಾರರಿಂದ ಹುಟ್ಟೋ ರೆವಿನ್ಯೂವರೆಗಿನ ಲೆಕ್ಕಗಳಲ್ಲಿ ಸುಮಾರು 50 ಬಿಲಿಯನ್ನ್ ವ್ಯಾಲ್ಯೂವೇಷನ್ನಿನ ಅಂದಾಜು ಮಾಡಿದ್ದಾರಂತೆ! ಗೂಗಲ್ಲ್ ಅಂಥಾ ಕಂಪನಿಗಳಲ್ಲಿ ಒಬ್ಬೊಬ್ಬ ಬಳಕೆದಾರನ ಮೇಲೆ ಸುಮಾರು $14 ರಂತೆ ಆದಾಯ ಹುಟ್ಟಿಸುತ್ತಾರಾದರೂ, Facebook ಅಂಥ ಕಂಪನಿಗಳು ತಮ್ಮ ಇರುವನ್ನು ಬಲಪಡಿಸಿಕೊಳ್ಳಲು ಅನೇಕಾನೇಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರಂತೆ, ಇರುವ ಬಳಕೆದಾರರ ಬೇಸ್ ಅನ್ನು ಕ್ಯಾಪಿಟಲೈಸ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರಂತೆ...ಹೀಗೆ ಅನೇಕಾನೇಕ ವಿಶೇಷಗಳು Facebook ಅನ್ನು ಸುತ್ತಿಕೊಳ್ಳತೊಡಗಿದ್ದು ಗೊತ್ತಾಯಿತು.

ಅಂತರಂಗದಲ್ಲಿ ಉದ್ದುದ್ದವಾಗಿ ಬರೆದ ಹಾಗೆ ಅಲ್ಲಿ ನನಗೆ ಬರೆಯೋಕಾಗೋದಿಲ್ಲ, ಬರೆದರೂ ಚಿಕ್ಕ ಫೋನುಗಳಲ್ಲಿ ಫಾಲ್ಲೋ ಮಾಡುವವರಿಗೆ ಕಷ್ಟವಾಗುತ್ತೆ. ಆದರೂ ಸಹ, ಅಂತರಂಗ ಮತ್ತು ನನ್ನ Facebook ಅಕೌಂಟುಗಳನ್ನು ಎರಡೂ ಒಟ್ಟು ಸೇರಿಸಿ, ಇಷ್ಟು ದಿನ ಹಿಡಿದುಕೊಂಡಿದ್ದ ಸುಮಾರು ನಲವತ್ತು ಜನ ಕನ್ನಡಿಗರನ್ನು ಬರಮಾಡಿಕೊಂಡರಾಯಿತು, ಕನ್ನಡಿಗರಷ್ಟೇ ಏಕೆ ಉಳಿದವರೂ ನೋಡಲಿ - ಎಲ್ಲರೂ ಬರಲಿ, ನನ್ನ ಈಗಿನ ಬಾಸ್ ಒಬ್ಬರನ್ನು ಬಿಟ್ಟು! (ಇಲ್ಲಿ ಕನ್ನಡದಲ್ಲಿ ಬರೆಯೋಕೆ ಈತನಿಗೆ ಸಮಯವಿದೆ ಅಂಥ ಮತ್ತೊಂದಿಷ್ಟು ಕೆಲಸ ಹುಟ್ಟಿಕೊಂಡರೆ ಕಷ್ಟ, ಹಾಗಾಗಿ).

ಈ ಅಂತರ್ಜಾಲ ಯುಗದ ಸಂಬಂಧಗಳು ಬಹಳ ಸಡಿಲವಾದದ್ದು - ಉದಾಹರಣೆಗೆ ಈ ಫೇಸ್‌ಬುಕ್ಕಿನ ಮಿಲಿಯನ್ನುಗಟ್ಟಲೆ ಬಳಕೆದಾರರಿಗೆ ಮತ್ತೊಂದೇನಾದರೂ ಆಕರ್ಷಕವಾಗಿ ಕಂಡುಬಂದರೆ ಅವರೆಲ್ಲರೂ ಅಲ್ಲಿಗೆ ಒಂದೇ ನೆಗೆತದಲ್ಲಿ ಹೋಗದಂತೆ ತಡೆಯುವುದು ಕಷ್ಟ. ಹಗಲೂ ರಾತ್ರಿ ಈ ಸರ್ವರುಗಳಿಗೆ ಜನ ಮುಗಿ ಬಿದ್ದ ಹಾಗೆ, ಪ್ರಸಿದ್ಧಿ ಅಥವಾ ಪ್ರಾಬಲ್ಯದ ಉತ್ತುಂಗದಲ್ಲಿರುವುದು ಬಹಳ ಕಷ್ಟದ ಕೆಲಸ - ಸುತ್ತಲಿನ ಆಗುಹೋಗುಗಳಿಗೆ ತತ್ಕಾಲದಲ್ಲಿ ಸ್ಪಂದಿಸಿ ನಿರಂತರವಾಗಿ ಬದಲಾಗುವುದರ ಜೊತೆಗೆ ಸದಾಕಾಲ ತಮ್ಮನ್ನು ತಾವು ರಿಫೈನ್ ಮಾಡಿಕೊಳ್ಳುವ ಕರ್ಮಠತನ ಬೇಕಾಗುತ್ತದೆ. ಬರೀ ಬಳಕೆದಾರರ ಸಂಬಂಧಗಳನ್ನಷ್ಟೇ ಅಲ್ಲ, ಹಣತೊಡಗಿಸಿದವರನ್ನು ಎದುರಿಸಬೇಕಾಗುತ್ತದೆ, ಪೈಪೋಟಿ ಒಡ್ಡುವವರನ್ನು ಹಿಂದಿಕ್ಕಬೇಕಾಗುತ್ತದೆ...ಹೀಗೆ ಅನೇಕಾನೇಕ ಸವಾಲುಗಳು ಯಾವಾಗಲೂ ಇದ್ದೇ ಇರುತ್ತವೆ. ಈ ಸವಾಲುಗಳು ಹೊಸತೇನಲ್ಲ - ಆನೆಗೆ ಆನೆಯ ಭಾರ, ಇರುವೆಗೆ ಇರುವೆಯ ಭಾರ ಅಷ್ಟೇ.

ಈ ಮೂಲಕ ಅಂತರಂಗದ ಓದುಗರಿಗೂ ಫೇಸ್‌ಬುಕ್ಕ್‌ನಲ್ಲಿ ಲಿಂಕ್ ಒದಗಿಸುತ್ತಿದ್ದೇನೆ. ನಮ್ಮ ಸಂವಹನ, ಸಂಘಟನೆ ಹಾಗೂ ಸಂಘರ್ಷಗಳು ನಿರಂತರವಾಗಿರಲಿ. ನಮ್ಮ ಜಗಳಗಳಲ್ಲೂ ಸೊಗಸಿರಲಿ, ಭಾಷೆಯಲ್ಲಿ ಶುದ್ಧಿ ಇರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಸದಾ ಊರ್ಧ್ವಮುಖಿಯಾಗಿರಲಿ!

Monday, March 14, 2011

ಬಹಳ ದಿನಗಳ ಗೆಳೆಯ...







ಚುಕ್ಕು, ಚುಕ್ಕು, ಚುಕ್ಕು... ಸದ್ದು ಮಾಡುತ್ತಾ ಡೋವರ್‌ನಿಂದ ಹೊಬೋಕನ್ನ್ ಕಡೆಗೆ ಗಾಳಿಯನ್ನು ಎರಡು ಬಣವಾಗಿ ಇಬ್ಬಾಗಿಸಿಕೊಂಡು ಹಳಿಗಳ ಮೇಲೆ ಹುಳುವಾಗಿ ಹರಿದುಕೊಂಡು ಹೋಗುತ್ತಿದ್ದ ನಮ್ಮೂರಿನ ಲೋಕಲ್ ಟ್ರೇನು, ಬಹಳ ದಿನಗಳ ನಂತರ ಗೆಳೆಯನ ಮನೆಗೆ ಹೋಗುವ ಸಂಭ್ರಮವನ್ನು ನನ್ನ ಪಾಲಿಗೆ ತಂದುಕೊಟ್ಟಿತ್ತು. ಶುಕ್ರವಾರ (ಮಾರ್ಚ್ ೧೧) ಬೆಳ್ಳಂಬೆಳಿಗ್ಗೆಯೇ ಇಲ್ಲಿನ ರೇಡಿಯೋ ಸ್ಟೇಷನ್ನುಗಳು ಅರಚಿಕೊಂಡ ಪ್ರಕಾರ ಜಪಾನ್‌ನಲ್ಲಿ ದೊಡ್ಡದೊಂದು ಭೂಕಂಪ ಸಂಭವಿಸಿ ಅನೇಕ ಹಾನಿಗಳ ಬಗ್ಗೆ, ಸಾವು ನೋವುಗಳ ಬಗ್ಗೆ ಮನದಲ್ಲಿ ಒಂದು ಥ್ರೆಡ್ ಕೊರೆಯ ತೊಡಗಿದರೆ, ಕೈಯಲ್ಲಿ ಅಪರೂಪಕ್ಕೆ ಹಿಡಿದುಕೊಂಡ ಡಿ.ಆರ್. ನಾಗರಾಜ್‌ ಅವರ "ಸಂಸ್ಕೃತಿ ಕಥನ" ಭಾರವಾಗ ತೊಡಗಿತ್ತು, ತೊಡೆಯ ಮೇಲೆ ಮಲಗಿ ಸುಮ್ಮನಿದ್ದ ಲ್ಯಾಪ್‌ಟಾಪ್‌ ತನ್ನ ಮಡಿಲಲ್ಲಿನ ಬಿಸಿ ಬ್ಯಾಟರಿಯಿಂದ ಸುಟ್ಟು ತನ್ನ ಇರುವನ್ನು ಬ್ಯಾಗಿನೊಳಗಿಂದಲೇ ಸ್ಪಷ್ಟ ಪಡಿಸಿತ್ತು.

ಬಹಳ ದಿನಗಳ ಗೆಳೆಯನೆಂದರೆ, ನಮ್ಮೂರಿನಿಂದ ಕೇವಲ ಐವತ್ತು ಮೈಲು ದೂರದಲ್ಲಿರುವ ನ್ಯೂ ಯಾರ್ಕ್ ನಗರ! ನಮ್ಮ ಟ್ರೇನು ನೆವರ್ಕ್, ಜರ್ಸಿ ಸಿಟಿ, ಹೊಬೋಕನ್ನ್ ಮೊದಲಾದ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶಗಳನ್ನು ತಲುಪಿದಂತೆಲ್ಲ ಹಳಿಗಳು, ಗಾಲಿಗಳು ಆಗಾಗ್ಗೆ ತಿಕ್ಕಿಕೊಳ್ಳುತ್ತಿದ್ದ ಶಬ್ದ ಹಾಗೂ ಕಿಟಕಿಯಿಂದ ಹೊರಗೆ ಕಾಣುವ ಚಿತ್ರಣಗಳು ಇಪ್ಪತ್ತು ವರ್ಷದ ಹಿಂದಿನ ಯಶವಂತಪುರ ಮತ್ತು ಮೆಜೆಸ್ಟಿಕ್ ನಡುವಿನ ರೈಲು ಪ್ರಯಾಣದ ಅನುಭವವನ್ನು ಮನದಲ್ಲಿ ತಾಳೆ ಹಾಕಿ ಕೊಳ್ಳುತ್ತಿದ್ದವು.

ನಾಗರಾಜ್ ೧೯೯೬ ರ ನಿನಾಸಂನಲ್ಲಿ ಮಾಡಿದ ಭಾಷಣದ ಆವೃತ್ತಿಯ ನವ್ಯ ಸಾಹಿತ್ಯ ಸಂಸ್ಕೃತಿಯ ನಾಲ್ಕು ದೌರ್ಬಲ್ಯಗಳ ವಾಕ್ಯಗಳು ನನ್ನನ್ನು ಪದೇ-ಪದೇ ಓದುವಂತೆ ಮಾಡಿ ಚಿಂತನೆಗೆ ತೊಡಗಿಸಿದವು. ನಾನು ಬಹಳವಾಗಿ ಹಚ್ಚಿಕೊಂಡ ಅಡಿಗ, ಅನಂತಮೂರ್ತಿ, ಲಂಕೇಶ, ಕಂಬಾರ, ತೇಜಸ್ವಿ, ಮೊದಲಾದವರು ಶಂಬಾ ಜೋಷಿ, ಬೇಂದ್ರೆ, ಪುತಿನ, ತೀನಂಶ್ರೀ ಮೊದಲಾದವರಿಂದ ಹೇಗೆ ಭಿನ್ನರು - ಇವರ ವಿದ್ವತ್ತಿನಿಂದ ಕನ್ನಡ ಸಂಸ್ಕೃತಿಯನ್ನು ಅಖಂಡವಾಗಿ ಪುನರ್ ನಿರ್ಮಾಣ ಮಾಡಬಲ್ಲ ಒಬ್ಬ ಚಿಂತಕನೂ ನಮ್ಮಲ್ಲಿ ಮೂಡಿಬರಲಿಲ್ಲ - ಎಂಬ ವಾಕ್ಯಗಳು ಕಾಫಿ ಹೀರದ ಶುಕ್ರವಾರದ ಮುಂಜಾನೆಯ ಬಹಳ ದಿನಗಳ ನಂತರ ಕನ್ನಡವನ್ನು ಓದುತ್ತಿದ್ದ ಮನಸ್ಸಿಗೆ ಭಾರವಾಗಿ ಕಂಡುಬಂದವು. ಡಿ.ಆರ್.ಎನ್., ಎನ್ನುವ ಕನ್ನಡದ ಪ್ರವಾದಿ ಯಾರು? ನಮ್ಮಿಂದ ಅವರು ಚಿಕ್ಕ ವಯಸ್ಸಿನಲೇ ದೂರವಾದದ್ದು ಹೇಗೆ? ಯಾವಾಗಲಾದರೂ ಸಮಯ ಸಿಕ್ಕಾಗ ಅವರ ಸ್ನೇಹಿತ ಮತ್ತು ಪುಸ್ತಕದ ಸಂಪಾದಕರಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಬೇಕು, ೧೯೯೭ ರಲ್ಲಿ ನಾಗರಾಜ್ ಅವರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದ್ದ ಆಡಿಯೋ-ವೀಡಿಯೋ ಗಳಿದ್ದರೆ ಹುಡುಕಬೇಕು...ಹೀಗೆ ಅನೇಕ ಅನೇಕ ಗೊಂದಲಗಳು ತಲೆಯಲ್ಲಿ ಸುತ್ತಿಕೊಳ್ಳತೊಡಗಿದವು. ಜೊತೆಗೆ ನಾಗರಾಜ್ ಅವರ ಪುಸ್ತಕಗಳಲ್ಲಿ ಹೆಸರಿಸುವ, ಉದಾಹರಿಸುವ ಅನೇಕಾನೇಕ ಪುಸ್ತಕಗಳನ್ನೂ-ಪರಾಮರ್ಶೆಗಳನ್ನೂ ಖುದ್ದಾಗಿ ಪರಿಶೀಲಿಸಬೇಕು ಎಂಬೆಲ್ಲ ಮಲ್ಟಿ-ಜನ್ಮಗಳ ಟ್ಯಾಸ್ಕ್ ಲಿಸ್ಟುಗಳು ಹುಟ್ಟತೊಡಗಿದವು. ಜೊತೆಯಲ್ಲಿ ಒಂದು ಜನಾಂಗ, ಸಂಸ್ಕೃತಿ, ಭಾಷೆಯನ್ನು ಸ್ಥೂಲವಾಗಿ ಅರಿಯದೇ ಹುಟ್ಟಿನಿಂದ ಅದರ ಒಡನಾಟದಲ್ಲಿ ತೊಡಗದೇ ಹೊರಗಿನವರಾಗಿ ಸಂಸ್ಕೃತಿಯೊಂದನ್ನು ಅವಲೋಕಿಸುವುದರಲ್ಲಿನ ಮಿತಿಗಳು ಪರಕೀಯತೆಯನ್ನು ಹೆಚ್ಚು ದೊಡ್ಡದನ್ನಾಗಿ ಮಾಡಿ ತೋರಿಸತೊಡಗಿದ್ದು, ಒಂದು ರೀತಿ ಮ್ಯಾಪ್‌ಕ್ವೆಸ್ಟಿನಲ್ಲಿ ಚಿಕ್ಕದಾಗಿ ಕಾಣಸಿಗುವ ನ್ಯೂ ಯಾರ್ಕ್ ನಗರದ ಬಿಲ್ಡಿಂಗುಗಳು ನಮ್ಮ ಕಣ್ಣೆದುರೇ ಅವುಗಳ ಬೃಹತ್ ನೆಲೆಯನ್ನು ತೆರೆದುಕೊಂಡ ಹಾಗೆ ಬೆನ್ನ ಹುರಿಯಲ್ಲಿ ಮಿಂಚಿನ ಸಂಚಕಾರವಾಯಿತು. ನಾಗರಾಜ್ ಅವರ ಕಥನಗಳನ್ನು ಓದುತ್ತಿದ್ದ ಹಾಗೆ "ಪತ್ರಿಕೆ" ಹಾಗೂ ಅದರ ವಿಶೇಷಣಗಳ ನೆನಪುಗಳಾಗಿ - ಪುಂಡಲೀಕ ಶೇಟ್, ರವೀಂದ್ರ ರೇಶ್ಮೆ, ಕಟ್ಟೆ ಪುರಾಣ, ಬಂ, ಗುಂ, ಟೀಕೆ-ಟಿಪ್ಪಣಿ - ಮೊದಲಾದವುಗಳೆಲ್ಲ ಜಾತ್ರೆಯ ತೇರನ್ನು ಎಳೆಯಲು ತಯಾರಾಗಿ ನಿಂತ ಯುವಕರಂತೆ ಹಗ್ಗವನ್ನು ಹಿಡಿದುಕೊಂದು ಮನದಲ್ಲಿ ಪುಟಿದು ನಿಂತವು. ೧೯೯೭ರಲ್ಲಿ ಮೊದಲು ಇಂಟರ್ನೆಟ್ಟಿನಲ್ಲಿ "ಸಂಜೆವಾಣಿ"ಯನ್ನು ಓದಿದ ಪುಳಕಗಳಾಗಿ, ಅಂದೇ ಕನ್ನಡದ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿ ಅನಿವಾಸಿ ಕನ್ನಡಿಗರಿಗೆಲ್ಲ ಹೊಸ ಹುರುಪನ್ನು ನೀಡಿದ್ದ ಮಣಿಯವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವಲ್ಲಿ, ನಾಗರಾಜ್‌ರ ಅನುಭವಗಳು ಸಹಾಯಕಾರಿಯಾದವು.

ಕನ್ನಡದ ಹಿಂದಿನ ವಿದ್ವಾಂಸರ ಸಾಹಿತ್ಯ, ದಾರ್ಶನಿಕತೆ, ನವ್ಯರ ಕಲಸು ಮೇಲೋಗರ, ನವ್ಯೋತ್ತರ ಪ್ರಯೋಗಳು, ಬಂಡಾಯ-ದಲಿತರ ಧ್ವನಿಗಳು, ಜಾತಿ-ರಾಜಕೀಯದಲ್ಲಿ ಹೊರಬಂದ ಕೂಗುಗಳು, ದೊಡ್ಡ ದೊಡ್ಡ ಸಂಭ್ರಮಗಳನ್ನು ಸಣ್ಣ ಕಥೆಗಳಲ್ಲೇ ನೇಯ್ದ ಅಥವಾ ಕಟ್ಟು ಹಾಕಿದ ಬಂಧನಗಳ ರೂಪಗಳು, ಇನ್ನೂ ಹಳೆಯ ನಾಟಕಗಳಿಗೆ ಜೋತು ಬಿದ್ದು ಹೊಳಪನ್ನು ಕಾಣದ ರಂಗದ ಪರದೆಗಳು, ಸಿನಿಮಾ ಎಂಬ ಭ್ರಮಾಲೋಕಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಇತರ ಕಲಾ ಪ್ರಕಾರಗಳು - ಹೀಗೆ ಅನೇಕಾನೇಕ ಯೋಚನೆಗಳ ಅಲೆಗಳನ್ನು ನಾಗರಾಜ್‌ ಅವರ ಪುಸ್ತಕ ಕೇವಲ ಇಪ್ಪತ್ತು-ಮೂವತ್ತು ನಿಮಿಷಗಳಲ್ಲಿ ಏಳಿಸಿ ಚಲಿಸುತ್ತಿರುವ ಟ್ರೈನಿನಲ್ಲಿ ಚಲನೆಯಿಲ್ಲದ ದೇಹದೊಳಗೆ ಅನೇಕ ರೋಚಕತೆಗಳನ್ನು ಹುಟ್ಟುವಲ್ಲಿ ಯಶಸ್ವಿಯಾಗಿತ್ತು. ಪಂಡಿತರಲ್ಲದವರಿಂದ ಎಂತಹ ಸಾಹಿತ್ಯ ಬರುತ್ತದೆ, ಮಾರಿ ಜಾತ್ರೆಯನ್ನು ಕಾಣದ, ಕೋಣನ ಬಲಿಯನ್ನೆ ನೋಡದ, ಗಡಿ-ಮಾರಿಗಳನ್ನು ಅರ್ಥ ಮಾಡಿಕೊಳ್ಳದ ಸಂತತಿ ಈ ಸಮುದಾಯಕ್ಕೆ ಎಂತಹ ರೂಪವನ್ನು ಕೊಟ್ಟೀತು? ಚಂದ್ರಗುತ್ತಿಯಲ್ಲಿನ ಬೆತ್ತಲೆ ಪೂಜೆಯ ಸುತ್ತಣ ನಡೆದ ಸಾಮಾಜಿಕ ಚಳುವಳಿ, ಅದೆಷ್ಟೋ ದೂರದಲ್ಲಿಂದ "ಉಧೋ ಉಧೋ" ಹಾಡಿಕೊಂಡು ಹೊರಟು ಹೋಗುತ್ತಿದ್ದ ಎತ್ತಿನ ಗಾಡಿಗಳು, ಬೆತ್ತಲನ್ನು ಮುಚ್ಚಲು ಬಳಕೆಗೆ ಯಥೇಚ್ಛವಾಗಿ ಸಿಗುತ್ತಿದ್ದ ಬೇವಿನ ಸೊಪ್ಪು, ನಾಗರಿಕರಷ್ಟೇ ಗುರುತಿಸುವ ಅನಾಗರಿಕ ವರ್ತನೆ - ಇತ್ಯಾದಿಗಳೆಲ್ಲ ನರ್ತಿಸತೊಡಗಿದವು. ಯಾರೋ ಮನದೊಳಗೆ ಮಲಗಿದ್ದ ಬುಗುರಿಗೆ ಹುರಿಯನ್ನು ಸುತ್ತಿ ಎಂತಿ ಅಂತರ ಪಿಚ್ಚನ್ನು ಹಾಕಿದಂತೆ ಗಾಳಿಯಲ್ಲಿ ಸುತ್ತಿ ಬಂದು ಅಂಗೈನ ಮಧ್ಯೆಯಲ್ಲಿನ ನನ್ನ ಆಟಿಕೆ ಸುತ್ತಿ-ಸುತ್ತಿ ಗಿರುಕಿ ಹೊಡೆಯಲಾರಂಭಿಸುವ ಹೊತ್ತಿಗೆ ನ್ಯೂ ಯಾರ್ಕ್ ನಗರ ದುತ್ತನೆ ಎದುರಾಗಿತ್ತು.

***

ಅದೇ ನ್ಯೂ ಯಾರ್ಕ್ ನಗರ?! ಅಲ್ಲ, ಬದಲಾಗಿರುವ ಚಿತ್ರ, ಇಲ್ಲ, ಅವೇ ಬಿಲ್ಡಿಂಗುಗಳು, ಅಲ್ಲ, ಹೊಸ ವಿನ್ಯಾಸಗಳು, ಅಲ್ಲ, ಅದೇ ನಿರಂತರತೆ.... ಹೀಗೆ ಅನೇಕ ಅಲ್ಲ-ಇಲ್ಲಗಳ ನಂತರ ನಾನಿದ್ದೇನೆ ಇಲ್ಲಿಯೇ - ಶತಶತಮಾನಗಳಿಂದ ಎನ್ನುವ ಅಖಂಡತೆ ಅನುಭವಕ್ಕೆ ಬಂತು. ಅದರ ಸೌಂದರ್ಯ, ವಿಸ್ತಾರ, ಅಬ್ಬರದ ಮುಂದೆ ನಮ್ಮ ಅನುಭವಗಳು ಎಷ್ಟು ಕನಿಷ್ಠವಾದವುಗಳು ಎಂದೂ ಅನಿಸಿತು, ಒಂದು ರೀತಿ ನೊಣ ದೊಡ್ಡದೊಂದು ಆನೆಯ ದೇಹದ ಮೇಲೆ ಕಾಣುವ ಧೂಳಿನ ಹಾಗೆ. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಅದೇ ಗಾಂಭೀರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್! ಉಳಿದ ಕಟ್ಟಡಗಳು ಹಾಗೂ ಕಲರವಗಳ ನಡುವೆ ನೋಡಿದರೆ ಅದು ಅಷ್ಟೊಂದು ದೊಡ್ಡದೇ ಎಂದು ಒಮ್ಮೆ ಅನುಮಾನವಾದರೂ ಕೆಲವೊಮ್ಮೆ ದೊಡ್ಡದನ್ನು ದೂರದಿಂದ ನೋಡಿಯೇ ತಿಳಿಯಬೇಕು ಎನ್ನಿಸಿದ್ದು ನಿಜ.

ಬಿಸಿನೆಸ್ಸು ಮೀಟಿಂಗ್‌ಗೆ ಹೊಗಿ ಅಲ್ಲಿ ಕಾಫಿ ಹೀರುತ್ತಿದ್ದ ಹಾಗೆ ಸರ್ವಾಂತರ್ಯಾಮಿ ಸಿಎನ್‌ಬಿಸಿ ವರದಿಗಳೆಲ್ಲ ನನ್ನ ಸಹೋದ್ಯೋಗಿಗಳಲ್ಲೂ ಪಸರಿಸಿ ನೈಸರ್ಗಿಕ ಪ್ರಕೋಪದ ಪರಿಣಾಮದ ಚರ್ಚೆಗಳು ಜಪಾನ್‌ನಿಂದ ದೂರದ ಹವಾಯಿಯಲ್ಲಿ ಸುನಾಮಿ ಅಲೆಗಳೆದ್ದು ತೊಂದರೆಯಾದ ಬಗ್ಗೆ ವಿಸ್ತಾರಗೊಂಡಿದ್ದವು. ಎಲ್ಲೇ ಏನಾದರೂ ತಮ್ಮ ಬಾಟಮ್‌ಲೈನಿನ ಬಗ್ಗೆ ಆಲೋಚಿಸುವ ಅಮೇರಿಕನ್ನ್ ಮನಸ್ಸಿನ ಮಿತಿ ಎಂದುಕೊಂಡರೆ ತಪ್ಪಾದೀತು. ಇಂದಿನ ಗ್ಲೋಬಲ್ ವ್ಯವಸ್ಥೆಯಲ್ಲಿ ದೊಡ್ಡ-ದೊಡ್ಡ ಆಟಗಾರರಿಗೆ ನೆಗಡಿ-ಜ್ವರ ಬಂದರೇ ಕಷ್ಟವಾಗುವಾಗ ಇನ್ನು ಭೂಕಂಪ, ಸುನಾಮಿಗಳು ಬರೀ ನೀರಿನ ಅಲೆಗಳಾಗಿ ಮಾತ್ರ ತಟ್ಟದೇ ಗಾಳಿ ಹಾಗೂ ಉಳಿದ ಮಾಧ್ಯಮಗಳಲ್ಲೂ ಸಂವಹಿಸಬಲ್ಲ ಶಕ್ತಿ ಅಥವಾ ದೌರ್ಬಲ್ಯವನ್ನು ಕುರಿತು ಚಿಂತಿಸುವಂತಾಯಿತು.

ಒಟ್ಟಿನಲ್ಲಿ, ಈ ವಿಶ್ವದ ದೊಡ್ಡಣ್ಣ ನ್ಯೂ ಯಾರ್ಕ್ ನಗರದ ಒಂದು ದಿನದ ಸಹವಾಸದಿಂದಾಗಿ, ನಾಗರಾಜ್ ಅಂಥವರ ಮಹಾನ್ ಚೇತನಗಳ ಬರಹದ ದೆಸೆಯಿಂದ "ಅಂತರಂಗ"ದ ಅನಿವಾಸಿ ಮನಸ್ಸು ಒಂದು ಕ್ಷಣದ ಮಟ್ಟಿಗಾದರೂ ದಿನನಿತ್ಯದ ಜಂಜಾಟಗಳಿಂದ ದೂರಗೊಂಡು ಕನ್ನಡ-ನಮ್ಮತನ-ನಾಡಿನ ಬಗ್ಗೆ ಯೋಚಿಸುವಂತೆ ಮಾಡಿದ್ದು ದೊಡ್ಡದೆ. ಈ ಅಗಾಧತೆಗಳ ನಡುವೆ ನಮ್ಮ ನಮ್ಮ ದೊಡ್ಡದನ್ನು ಚಿಕ್ಕದಾಗಿ ಪರಿವರ್ತಿಸಬಲ್ಲ ಇಂತಹ ಮಹಾನ್ ಅವಕಾಶಗಳು ಆಗಾಗ್ಗೆ ಬರುತ್ತಿರಲಿ.

Thursday, February 10, 2011

ಎಂ.ಪಿ. ಪ್ರಕಾಶ್... ಶ್ರದ್ಧಾಂಜಲಿ




ನಿನ್ನೆ (ಬುಧವಾರ, ಪೆಬ್ರುವರಿ ೯) ನಿಧನರಾದ ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಾವು ಶಾಲಾ ಮಕ್ಕಳಾಗಿದ್ದಾಗ ಸಾಮಾಜಿಕ ಚಳುವಳಿಗಳ ಹೆಸರಿನೊಂದಿಗೆ ಪ್ರಕಾಶ್ ಹೆಸರನ್ನು ಕೇಳುತ್ತಿದ್ದ ನಮಗೆ ಅವರು ಒಬ್ಬ ಹೋರಾಟಗಾರ, ರಾಜಕಾರಣಿ ಹಾಗೂ ಒಬ್ಬ ಬರಹಗಾರರಾಗಿಯೂ ಗೊತ್ತು. ಮಾರ್ಕ್ಸ್, ಲೋಹಿಯಾ, ಜೆಪಿ ಮೊದಲಾದ ಸಾಮಾಜಿಕ ಧ್ವನಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಆರ್.ವಿ. ದೇಶಪಾಂಡೆ, ಪಿ.ಜಿ.ಆರ್. ಸಿಂಧಿಯಾ, ಎಸ್. ಬಂಗಾರಪ್ಪ ಮೊದಲಾದವರೊಂದಿಗೆ ಕರ್ನಾಟಕದ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಂತವರಾಗಿದ್ದರು.

ಶಾಲಾ ದಿನಗಳಲ್ಲಿ ಅವರ ನಾಟಕಗಳನ್ನು ಓದಿ ನನಗೆ ಒಬ್ಬ ಬರಹಗಾರರಾಗಿಯೂ ಪರಿಚಯವಿದ್ದ ಪ್ರಕಾಶ್ ಅವರು, ೨೦೦೬ ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ನಾಲ್ಕನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ ಅತಿಥಿಗಳಲ್ಲೊಬ್ಬರಾಗಿದ್ದಾಗ ಮಾತನಾಡಲು ಸಿಕ್ಕಿದ್ದರು. ಸಮ್ಮೇಳನದ ಸಮಯದಲ್ಲಿ ಬಹಳ ಚಿಂತನಶೀಲ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಕಾಶ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನನ್ನ "ಕೋಮಲ ಗಾಂಧಾರ"ವನ್ನು ಅವರ ಅಮೃತಹಸ್ತದಿಂದ ಬಿಡುಗಡೆಗೊಳಿಸಿದ್ದು ನನ್ನ ಪುಣ್ಯ. ಒಬ್ಬ ನಾಟಕಕಾರರಾಗಿ ದೂರದ ಅಮೇರಿಕದಲ್ಲಿ ಈ ಕನ್ನಡ ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವಂತಾಗಿದ್ದು ಕಾಕತಾಳೀಯವಾಗಿದ್ದರೂ ಅದು ನನ್ನ ಅದೃಷ್ಟಗಳಲ್ಲೊಂದು.

ಆಗಿನ ಕಾಲದಲ್ಲೇ ಬಾಂಬೆಯಿಂದ ಲಾ ಡಿಗ್ರಿ ಪಡೆದು ಮೈನ್‌ಸ್ಟ್ರೀಮ್ ರಾಜಕಾರಣಕ್ಕೆ ತಮ್ಮನ್ನು ತೊಡಗಿಸಿಕೊಂಡ ಎಂ.ಪಿ. ಪ್ರಕಾಶ್ ಒಬ್ಬ ಉತ್ತಮ ವಾಗ್ಮಿ, ಚಿಂತನಶೀಲ ಬರಹಗಾರ ಹಾಗೂ ಸಂವೇದನಾಶೀಲ ವ್ಯಕ್ತಿ. ಮೊದಲಿನಿಂದಲೂ ತಮ್ಮನ್ನು ತಾವು ಜನತಾಪಕ್ಷ (ಅಥವಾ ಕಾಂಗ್ರೆಸ್ಸಿಗೆ ವಿರುದ್ಧವಾದ ಬಣಗಳಲ್ಲಿ) ಅಥವಾ ಇತರ ಜನತಾ ಚಳುವಳಿಗಳಲ್ಲಿ ತೊಡಗಿಸಿಕೊಂಡ ಕಾರಣವೋ ಏನೋ ಕರ್ನಾಟಕದ ಜನತೆ ಅವರ ಸೇವೆಯನ್ನು ಇನ್ನಷ್ಟು ಪಡೆಯಲಾಗದಿದ್ದುದು. ಪ್ರಕಾಶ್ ಅಂತಹ ರಾಜಕಾರಣಿಗಳು ವಿರಳ, ಅವರ ಕಾಲಾನಂತರವೂ ಸದಾ ಜೀವಂತವಿರುವ ಅವರ ಸಾಮಾಜಿಕ ಅಭ್ಯುದಯದ ಕಳಕಳಿಗಳು ನಾಡನ್ನು ಎಂದಿಗೂ ಪ್ರಗತಿಪಥದತ್ತಲೇ ಕೊಂಡೊಯ್ಯುತ್ತವೆ ಎಂಬುದು ನಿಜ.

Saturday, February 05, 2011

ಸೋಶಿಯಲ್ಲ್ ಮೀಡಿಯಾ - ಸಾಮಾಜಿಕ ಕ್ರಾಂತಿ

ಓದೋಕೆ ಬರೆಯೋಕೆ ಬೇಕಾದಷ್ಟು ಅವಕಾಶಗಳು ಇದ್ದಂತೆ ಹಾಗೆ ಮಾಡದೇ ಇರೋದಕ್ಕೂ ಸಾಕಷ್ಟು ನೆಪಗಳೂ ಉದ್ಭವವಾಗುತ್ತಾ ಇತ್ತೀಚೆಗೆ ಓದಿ-ಬರೆಯೋ ರೂಢಿಯೇ ತಪ್ಪಿ ಹೋದಂತಾಗಿರೋದು ವಿಶೇಷ. ಮೊದಲೆಲ್ಲ ದೊಡ್ಡ ಸ್ಕ್ರೀನುಗಳಲ್ಲಿ ದೊಡ್ಡದಾಗಿ ಉದ್ದುದ್ದವಾಗಿ ಓದುತ್ತಿದ್ದವರಿಗೆ ಈಗ ಚಿಕ್ಕ ಸ್ಕ್ರೀನುಗಳಲ್ಲಿನ ಸಣ್ಣ-ಪುಟ್ಟ ಓದುಗಳಲ್ಲೋ ಅಥವಾ ಯಾವುದೋ ಲಿಂಕ್‌ನ ಬೆನ್ನು ಬಿದ್ದು ಅದರ ಹಿಂದಿನ ತಲಾಷೆಯಲ್ಲೋ ದಿನ ಕಳೆದು ಹೋಗಿಬಿಡುತ್ತದೆ. ಸೀರಿಯಸ್ಸಾಗಿ ಒಂದು ಪುಸ್ತಕವನ್ನು ಬಿಟ್ಟು ಬಿಡದಂತೆ ಕವರಿನಿಂದ ಕವರಿನವರೆಗೆ ಓದದೇ ಎಷ್ಟೋ ವರ್ಷಗಳೇ ಆಗಿ ಹೋಗಿವೆ. ಓದುವ ಚಾಳಿ ಹಾಗಿರಲಿ ಇನ್ನು ಬರೆಯೋದರ ಹವ್ಯಾಸವಂತೂ ಬಿಟ್ಟೇ ಹೋಗಿದೆ, ನೋಟ್ ಪುಸ್ತಕದಲ್ಲಿ ಒಂದಿಷ್ಟು ಬರೆದುಕೊಳ್ಳುವುದು ರೂಢಿ, ಅದೂ ಕೂಡಾ ಇಂದಿನ ಐಪ್ಯಾಡ್ (ipad) ದಿನಗಳಲ್ಲಿ ಸ್ಕ್ರಿಬಲ್ಲ್ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ.

ಇಂದಿನ ಫೇಸ್‌ಬುಕ್ ಸಂವೇದನೆಯ ದಿನಗಳಲ್ಲಿ ಎಲ್ಲವೂ ಹಗುರ ಮಯವಾಗಿ ಬಿಡುತ್ತಿದೆಯೇನೋ ಎಂದು ಬೆನ್ನ ಹುರಿಯಲ್ಲಿ ಹೆದರಿಕೆ ಮೂಡುವ ಹೊತ್ತಿಗೇ ಈಜಿಪ್ಟ್‌ನಲ್ಲಿ ಹೊತ್ತಿ ಉರಿಯುತ್ತಿರುವ ರಾಷ್ಟ್ರೀಯ ಕಲಹದ ಸಂವಹನದ ಬೆನ್ನುಲೆಬಾಗಿ ಸೋಶಿಯಲ್ಲ್ ಮೀಡಿಯಾ ಎದ್ದು ಕಾಣಿಸಿ ಹೊಸ ಯುಗದಲ್ಲಿ ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿದೆ. ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿ ಸಣ್ಣಪುಟ್ಟದಾಗೇ ಶುರುವಾಗುವ ಅಲೆಗಳು ಕೊನೆಗೆ ಪ್ರಬಲ ಸುನಾಮಿಯಾದ ಉದಾಹರಣೆಗಳು ಬೇಕಾದಷ್ಟಿವೆ. ನಾನೂ ಇವೆಲ್ಲವುಗಳಲ್ಲಿ ಒಂದೊಂದು ಅಕೌಂಟ್ ಎಂದು ತೆರೆದುಕೊಂಡಿದ್ದು ಮಾತ್ರ, ಅಂದು ನೆಟ್ಟ ಗಿಡ ಇಂದಿಗೂ ಒಣಗುತ್ತಲೇ ಇದೆಯೇ ಹೊರತೂ ಎಂದು ಅದಕ್ಕೆ ನೀರುಣಿಸಿ ಬೆಳೆಸುವಷ್ಟು ವ್ಯವಧಾನವಂತೂ ನನಗೆ ಮೈಗೂಡಿದ್ದಿಲ್ಲ. ಆದರೆ ಈ ಸೋಷಿಯಲ್ಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಹೋದರೆ ಔಟ್‌ಡೇಟೆಡ್ ಆಗಿ ಹೋಗುವ ಹೆದರಿಕೆಯೂ ದೂರವಿಲ್ಲ.

ನಮ್ಮ ದೇಶದ ಸ್ವಾತಂತ್ರ್ಯದ ಚಳುವಳಿಯ ದಿನಗಳಲ್ಲಿ ವೈಯಕ್ತಿಕವಾಗಿ ಅನೇಕ ಮುಖಂಡರು ಲಕ್ಷಾಂತರ ಜನರನ್ನು ದೇಶದ ಉದ್ದಗಲಕ್ಕೂ ಒಟ್ಟುಗೂಡಿಸುತ್ತಿದ್ದರು, ಹಾಗೆ ಒಟ್ಟು ಗೂಡಿದ ಜನರೆಲ್ಲರೂ ತಮ್ಮದೇ ಆದ "ಸೋಶಿಯಲ್ಲ್ ಮೀಡಿಯ"ದ ಒಂದು ನೆಟ್‌ವರ್ಕ್ ಒಂದನ್ನು ಸೃಷ್ಟಿಸಿಕೊಂಡಿರಬೇಕು, ಇಲ್ಲವೆಂದಾದರೆ ಇಂತಲ್ಲಿ ಈ ದಿನ ಈ ಚಳುವಳಿ ನಡೆಯುತ್ತದೆ, ಅದಕ್ಕೆ ಸಿದ್ಧರಾಗುವಂತೆ ಸಂದೇಶಗಳು ಹೇಗೆ ಪಸರಿಸುತ್ತಿದ್ದವೋ? ಆಗ ಲಭ್ಯವಿದ್ದ ವೃತ್ತಪತ್ರಿಕೆಗಳು ಹಾಗೂ ಪ್ರಿಂಟ್ ಮಾಧ್ಯಮಗಳು ಸರ್ಕಾರ ವಿರುದ್ಧ ಪ್ರಕಟಿಸಲು ಹೆದರುತ್ತಿದ್ದ ಕಾಲದಲ್ಲಿ ಜನರು ತಮಗೆ ಅನುಕೂಲವಾಗುವ ರೀತಿಯಲ್ಲಿ ಕೈ ಬರಹದಿಂದಲೋ ಅಥವಾ ಸಣ್ಣ-ಪುಟ್ಟ ಗುಪ್ತ ಮೀಟಿಂಗ್‌ಗಳ ಸಹಾಯದಿಂದ ಸಂದೇಶಗಳನ್ನು ಬಿತ್ತರಿಸುತ್ತಿದ್ದರೆಂದು ಕಾಣುತ್ತದೆ. ಈಗಿನ ೨೦೧೧ ರಲ್ಲಿ ಈಜಿಪ್ಟ್‌ನಲ್ಲಾಗುವ ಜನಾಂದೋಲನವನ್ನು ಒಂದು ಸಣ್ಣ ಕ್ರಾಂತಿಯೆಂದು ಕರೆದರೆ ಈಗಿನ ಇಂಟರ್‌ನೆಟ್‌ನ ಸಹಾಯದಿಂದ ಸುಲಭವಾಗಿ ಹರಡುವ ಸಂದೇಶಗಳನ್ನು ಅರವತ್ತು ವರ್ಷದ ಹಿಂದೆ ಭಾರತದಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ಹೋಲಿಸಿದರೆ ಬಹಳ ಸರಳವೆಂದೆನಿಸುವುದಿಲ್ಲವೇನು?

ಈಗಿನ ಜನಾಂದೋಲನ ತಾಜಾ ಸುದ್ದಿ ಹಾಗೂ ಮಾಹಿತಿಗೆ ಇಂಬು ಕೊಡುತ್ತದೆ, ಇಂದು ಆಗುವ ಸುದ್ದಿಗಳನ್ನು ನಾಳೆ ಪ್ರಕಟಿಸುವ ಸುದ್ದಿ ಪತ್ರಿಕೆಗಳು ಕಾಲವಾಗುವ ಪರಿಸ್ಥಿತಿ ಬೆಳೆದಿದೆ. ದೈನಿಕ ಸುದ್ದಿ ಪತ್ರಿಕೆಗಳು ದೈನಿಕ ಮ್ಯಾಗಜೀನುಗಳಾಗಿ ಪರಿವರ್ತನೆಗೊಳ್ಳುತ್ತಿರುವ ಹೊತ್ತಿಗೆ ಅವುಗಳ ಜರ್ನಲಿಸ್ಟುಗಳು ಪೂರ್ವದಿಂದ ಪಶ್ಚಿಮದೆಡೆಗೆ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಸಹ ಸುದ್ದಿಗೆ ಕಾತರರಾಗಿರುವ ಪ್ರಪಂಚದಾದ್ಯಂತ ಹರಡಿಕೊಂಡ ಇನ್‌ಫರ್ಮೇಷನ್ನ್ ಸ್ಯಾವೀ ಜನರಿಗೆ ತಾಜಾ ಸುದ್ದಿಯನ್ನು ಉಣಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲಲ್ಲಿ ಇನ್‌ವೆಷ್ಟಿಗೇಟಿವ್ ಜರ್ನಲಿಸಮ್ ಎಂಬ ಹೆಸರಿನಲ್ಲಿ ಹಲವಾರು ಸ್ಕ್ಯಾಂಡಲ್ಲುಗಳು ಹೊರಬಂದು ಕ್ಲಾಸ್ಸಿಕ್ ಪತ್ರಿಕೋದ್ಯಮವನ್ನು ಇನ್ನೂ ಜೀವಂತವಿರಿಸಿವೆ. ಇಂಟರ್ನೆಟ್ ಕಳೆದ ಎರಡು ದಶಕಗಳಲ್ಲಿ ಸುದ್ದಿ ಮಾಧ್ಯಮದ ಬೆನ್ನೆಲುಬಾಗಿ ಬೆಳೆದು ಎಲ್ಲವೂ ಅದರ ಸುತ್ತಲೂ ಸುತ್ತ ತೊಡಗಿವೆ ಎಂದರೆ ಅತಿಶಯೋಕ್ತಿಯೇನಲ್ಲ.

ಸೋಷಿಯಲ್ಲ್ ನೆಟ್‌ವರ್ಕಿಂಗ್‌ ವ್ಯವಸ್ಥೆಗಳು ಬೆಳೆಯುವುದರ ಹಿಂದೆ ಯುವ ಜನಾಂಗದ ಸಂಘ ಜೀವನದ ಅಗತ್ಯ ಬಹಳ ಮುಖ್ಯವಾಗಿದೆ, ದಿನದ ಉದ್ದಕ್ಕೂ ಒಂದೆರೆಡು ಸಣ್ಣಪುಟ್ಟ ವಾಕ್ಯಗಳಲ್ಲಿ ಆಗು-ಹೋಗುಗಳನ್ನು ಬಿತ್ತರಿಸುವುದರ ಜೊತೆಗೆ ತಮ್ಮಲ್ಲಿನ ಯಾವುದೇ ಬದಲಾವಣೆಗಳನ್ನೂ ಒಂದೇ ಮಾಧ್ಯಮದಡಿಯಲ್ಲಿ ಎಲ್ಲರೊಡನೆ ಹಂಚಿಕೊಳ್ಳುವ ಅಗತ್ಯಕ್ಕೆ ಒಂದು ಹೊಸಮುಖವನ್ನು ಕಂಡುಕೊಳ್ಳಲಾಗಿದೆ. ಈ ಸೋಷಿಯಲ್ಲ್ ನೆಟ್‌ವರ್ಕ್‌ಗಳಲ್ಲಿ ಮುಖ್ಯವಾಗಿ ಒಬ್ಬ ವ್ಯಕ್ತಿಯ ಬದುಕಿನ ಆಗು-ಹೋಗುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡಲು ಬೆಳಕಿನ ವೇಗದ ಹೊಸ ಮುಖವನ್ನು ಸೃಷ್ಟಿಸಲಾಗಿದೆ.

ಪರಿವರ್ತನೆ ಬಹಳ ಅಗತ್ಯ - ಒಂದು ಶತಮಾನದ ಹಿಂದೆ ಎನ್ನುವುದಕ್ಕಿಂತ ಕಳೆದ ವರ್ಷ ಇದ್ದುದು ಇಂದು ಚಾಲ್ತಿಯಲ್ಲಿ ಇರಲಾರದು. ಇಂದಿನ ವ್ಯವಸ್ಥೆ ಎಷ್ಟು ಬೇಗ ಬೆಳೆದುಕೊಳ್ಳುವುದೋ ಅಷ್ಟೇ ಬೇಗ ಅವಸಾನವನ್ನೂ ಹೊಂದಬಹುದು. ಪ್ರಪಂಚದಾದ್ಯಂತ ಮಿಲಿಯನ್ನುಗಟ್ಟಲೆ ಜನರು ಒಂದಲ್ಲ ಒಂದು ಅಗತ್ಯದ ಅಂಗಳದಲ್ಲಿ ಸ್ಪಂದಿಸುತ್ತಾರೆ ಎನ್ನುವುದು ಬಹಳ ಮುಖ್ಯ, ಆ ಸಂವೇದನೆ ಆಯಾ ಕಾಲದಲ್ಲಿ ಲಭ್ಯವಾಗುವ ತಂತ್ರಜ್ಞಾನವನ್ನು ಅವಲಂಭಿಸಿ ಅದರ ರೂಪವನ್ನು ತಾಳುವುದು ಸಹಜವಾಗುತ್ತದೆ, ಒಂದು ರೀತಿ ನೀರು ತಾನು ಇರುವ ಜಾಡಿಯ ಆಕಾರವನ್ನು ಪಡೆಯುವ ಹಾಗೆ. ಆದರೆ ಈ ಪರಿವರ್ತನೆ, ವಿಷಯಾವಲಂಭನೆ ಮತ್ತು ವೇಗ - ಸಾಧನೆಗಳಿಗೆ ಪರ್ಯಾಯವಾಗಬಾರದಿತ್ತು, ಇಂದು ನೆಟ್ಟ ಗಿಡ ನಾಳೆ ಫಲಕೊಡುವ ನಿರೀಕ್ಷೆ ಯುವ ಜನರಲ್ಲಿ ಬರಬಾರದಾಗಿತ್ತು. ಒಂದು ವಿಷಯವನ್ನು ಕುರಿತು ಗಹನವಾಗಿ ಆಲೋಚಿಸುವಲ್ಲಿ ಅಥವಾ ಒಂದು ಸಾಧನೆಯ ಹಿಂದೆ ಇಂದಿನ ತಂತ್ರಜ್ಞಾನಗಳು ಪೂರಕವಾಗಿ ಕೆಲಸಮಾಡಬೇಕೇ ವಿನಾ ಅವುಗಳು ಒಬ್ಬ ವ್ಯಕ್ತಿಯನ್ನು ವೇಗ ಹಾಗೂ ಬೇಗ ಎಂಬ ಒತ್ತಡಕ್ಕೆ ಮಣಿಸಬಾರದು. "ಕಾಯದೇ ಕೆನೆ ಕಟ್ಟದು" ಎಂಬ ಗಾದೆ ಮಾತಿನಂತೆ ಕೆಲವೊಂದಕ್ಕೆ ಸಮಯಕೊಡಬೇಕಾಗುತ್ತದೆ, ಅದರ ಬದಲಿಗೆ ಮೈಕ್ರೋವೇವ್ ಅಥವಾ ಅದಕ್ಕಿಂತಲೂ ಪ್ರಬಲವಾದ ಹೈ ಸ್ಪೀಡ್ ಅವನ್‌ಗಳಲ್ಲಿ (high speed oven) ಅರ್ಧ ನಿಮಿಷದಲ್ಲಿ ಹಾಲನ್ನು ಕೆನೆ ಕಟ್ಟಿಸಬಹುದಾದ ವಿಧಾನವನ್ನು ಇಂದಿನ ಜನತೆ ಹುಡುಕಿಕೊಂಡರೆ ಅದನ್ನು ತಪ್ಪು ಎನ್ನಲಾಗದು, ಆದರೆ ಹಾಲಿಗೆ ಒದಗಿ ಬಂದ ಹೈ ಸ್ಪೀಡ್ ಅವಕಾಶಗಳು ಎಲ್ಲ ಸಂದರ್ಭಗಳಲ್ಲೂ ನಿಜವಲ್ಲ ಎಂಬುದು ಈ ಲೇಖನದ ಕಳಕಳಿ ಅಷ್ಟೇ.

ಇಂದಿನ ಮಲ್ಟಿ ಟ್ಯಾಸ್ಕಿಂಗ್ ಜನಾಂಗಕ್ಕೆ ಅವರು ಒಂದೇ ಸಮಯದಲ್ಲಿ ಹಲವಾರು ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡು ಕಾರ್ಯ ಪ್ರವೃತ್ತರಾಗುವುದೋ ಅಥವಾ ಅವರ ಕರ್ಮಠತನವೋ ಅವರಿಗೆ ವರವಾಗಿರಲಿ, ಅದರ ಬದಲಿಗೆ ಅಲ್ಲೂ ಇಲ್ಲ, ಇಲ್ಲಿಯೂ ಸಲ್ಲ ಎನ್ನುವಂತೆ ಹಲವು ದೋಣಿಗಳಲ್ಲಿ ಒಟ್ಟೊಟ್ಟಿಗೇ ಪಯಣಿಸುವ ಪ್ರವಾಸಿಯಾಗದಿದ್ದರೆ ಸಾಕು.

Thursday, December 30, 2010

...ಎರಡು ಕಾಲಿಗೂ ಪೆಟ್ಟು ಬಿದ್ದ ಯೋಧ ಮತ್ತೆ ಯುದ್ಧಕ್ಕೆ ತಯಾರಿ ನಡೆಸಿದನಂತೆ

ಭೀಕರ ತಂಡಿ ಹವಾ...ಎಲ್ಲೆಡೆ ಮೋಡ ಮುಸುಕಿದ ವಾತಾವರಣ, ಮುಂಬರುವ ದೊಡ್ಡ ಬಿರುಗಾಳಿಗೆ ಮೊದಲು ಎಲ್ಲ ಕಡೆಗೆ ನಿಶ್ಶಬ್ಧ. ಆಗೊಮ್ಮೆ ಈಗೊಮ್ಮೆ ಸುಳಿದಾಡೋ ವಾಹನಗಳು, ರಸ್ತೆಗಳ ಮೇಲೆಲ್ಲಾ ಬೂದಿ ಹರಡಿದ ಹಾಗೆ ತೆಳುವಾಗಿ ಧೂಳಿನ ಹಾಗೆ ಹರಡಿದ ಮಂಜಿನ ತುಂತುರು ಹಾಗೂ ಪುರಸಭೆಯ ವಾಹನಗಳು ಹರಡಿದ ಪುಡಿ ಉಪ್ಪು. ಮರಗಿಡಗಳೆಲ್ಲ ತಮ್ಮ ಎಲೆಗಳನ್ನೆಲ್ಲ ಉದುರಿಸಿ ಗಾಳಿ ಬೀಸುತ್ತದೆಯೋ ಇಲ್ಲವೋ ಎನ್ನುವುದಕ್ಕೆ ಸಾಕ್ಷಿ ಹೇಳಲೂ ಮನಸ್ಸಿಲ್ಲದವರ ಹಾಗೆ ನಿಂತುಕೊಂಡಿದ್ದವು. ವರ್ಷದ ಮೇಲೆ ವರ್ಷ ಕಳೆದಿದೆ, ಎರಡು ವರ್ಷಗಳ ಹಿಂದೆ ಎಲ್ಲ ಒಳ್ಳೆಯದಾದೀತು ಎಂಬು ಆಶಾವಾದವನ್ನು ಹೊತ್ತುಕೊಂಡ ನೆಲ-ಮುಗಿಲು ಹಾಗೂ ಇವೆರೆಡರ ನಡುವಿನವೆಲ್ಲವೂ, ಚಪ್ಪೆ ಮುಖ ಹಾಕಿಕೊಂಡಿದ್ದಂತಿತ್ತು. ಈ ಛಳಿ, ಗಾಳಿಯ ಸಹವಾಸವೇ ಬೇಡ ಎಂದು ಸೂರ್ಯನೂ ಆಕಾಶದಲ್ಲಿ ಬೇಗ ಬೇಗ ಕರಗಿಹೋಗುವಂತೆ ದೌಡಾಯಿಸುತ್ತಿದ್ದ. ಸೂರ್ಯನ ಲಗುಬಗೆಯ ಪಯಣವನ್ನು ಗ್ರಹಿಸಿದ ಮೋಡಗಳು ಅವನನ್ನು ತಮ್ಮ ಮಡಿಲಿನಲ್ಲಿ ಹುದುಗಿಸಿಕೊಂಡು ಸಂತೈಸುತ್ತಿದ್ದವು.

ಎಲ್ಲ ಕಡೆಗೆ ಯುದ್ಧದ ವಾತಾವರಣವೇನಿರಲಿಲ್ಲ, ಶತ್ರುಗಳು ಸುತ್ತುವರೆದಿರಲಿಲ್ಲ, ಯುದ್ಧಕ್ಕೆ ಅಣಿಗೊಂಡು ಶಿಬಿರ ಹೂಡಿದವರಲ್ಲಿ ಯಾವುದೇ ಹೊಸ ಲವಲವಿಕೆಯೇನೂ ಮೇಲ್ನೋಟಕ್ಕೆ ಇದ್ದಂತೆ ಕಾಣಿಸಲಿಲ್ಲ. ಹೊರಗೆ ತೋರುವ ಯುದ್ಧದ ಬದಲಿಗೆ ಎಲ್ಲರ ಮನದೊಳಗೆ ಮಹಾಯುದ್ಧ ಘಟಿಸುತ್ತಿರುವಂತೆ ಮೌನ ನೆಲೆದಿತ್ತು. ತೋಪು-ಗುಂಡುಗಳೆಲ್ಲ ಎಂದಿನಿಂದಲೋ ತಯಾರಾಗಿ ಕುಳಿತು ಈಗ ತೂಕಡಿಸತೊಡಗಿದವರಂತೆ ಕಂಡು ಬಂದವು. ಕಹಳೆ-ಕೊಂಬುಗಳು ಧೂಳು ತಿನ್ನುತ್ತಿದ್ದವು.

ಇವೆಲ್ಲದರ ನಡುವೆ ಒಬ್ಬನೇ ಒಬ್ಬ ಯೋಧ ಯುದ್ಧಕ್ಕೆ ಸನ್ನದ್ಧನಾಗಿ ಕುಳಿತಿದ್ದಾನೆ, ಆದರೆ ಅವನ ಎರಡು ಕಾಲುಗಳಲ್ಲೂ ಈ ಹಿಂದೆ ನಡೆದ ಹೋರಾಟದ ದೆಸೆಯಿಂದ ಗಾಯಗಳಾಗಿ ಅಪಾರ ನೋವಿದೆ, ಅಲ್ಲಲ್ಲಿ ಈ ಹಿಂದೆ ಜಿನುಗಿ ಒಣಗಿದ ರಕ್ತದ ಕಲೆಯಿದೆ. ಈ ಮೇಲ್ಮೈಯಲ್ಲಿ ಸಣ್ಣವೆಂದು ಕಂಡು ಬಂದ ಗಾಯಗಳ ಆಳ ದೊಡ್ಡದಿದೆ, ಆಳ ಹೆಚ್ಚಿದ್ದಷ್ಟೂ ಅದರ ನೋವೂ ಹೆಚ್ಚು ಎಂಬುದು ಯೋಧನ ಮನದ ಸೂಕ್ತಿಯಾಗಿ ಹೋಗಿದೆ. ಅವನ ಭುಜವೇರಿದ ಬಾಣ-ಬಿರುಸುಗಳು ಕೆಳಗಿಳಿದಿವೆ, ದೂರದ ಮದ್ದು-ಗುಂಡುಗಳ ಗೋಜಿಗೆ ಹೋಗುವ ಯಾವ ಹುಮ್ಮಸ್ಸೂ ಕಾಣದು. ಈ ಛಳಿಗಾಲವೊಂದನ್ನು ಕಳೆದರೆ ಸಾಕು ಎನ್ನುವಷ್ಟರ ಮಟ್ಟಿಗೆ ನೈಜತೆ ಈ ಯೋಧನ ಮನದಲ್ಲಿ ಮನೆ ಮಾಡಿ ಅದು ಆಗಾಗ್ಗೆ ಸಣ್ಣ ಆಶಾವಾದದ ಕಿರಣವನ್ನು ಸೂಸಿ ಮತ್ತೆ ಕಮರಿಕೊಳ್ಳುತ್ತದೆ.

ಈ ಯುದ್ಧಗಳಲ್ಲಿ ಯಾರು ಶತ್ರು, ಯಾರು ಮಿತ್ರರು ಎಂಬುದು ಹಿಂದಿಗಿಂತ ಹೆಚ್ಚು ಗೊಂದಲವಾಗಿದ್ದರೂ, ಯೋಧನ ಮನದಲ್ಲಿ ಎಂದಿನಂತೆ ಯುದ್ಧಕ್ಕೆ ತಯಾರಿ ನಡೆಸಬೇಕು, ಯುದ್ಧವನ್ನು ಗೆಲ್ಲಬೇಕು ಎಂಬುದೇ ಬೀಜಮಂತ್ರವಾಗಿದೆ. ಅದಕ್ಕೆ ತಕ್ಕಂತೆ ಯೋಧ ಕುಂಟು-ಕುಂಟುತ್ತಲೇ ತನ್ನ ಕೈಯಾಡಿಸುತ್ತ ಕೈಗೆ ಸಿಕ್ಕ ಆಯುಧಗಳನ್ನೆಲ್ಲ ಒಮ್ಮೊಮ್ಮೆ ಪರೀಕ್ಷಿಸಿ ನೋಡುತ್ತಾನೆ. ಮುಂದೆ ನಡೆಯುವ ಘಟನಾವಳಿಗಳ ಅಸ್ಥಿರತೆ ಆತನನ್ನು ಅಶಕ್ತನನ್ನಾಗಿಸೋದಿಲ್ಲ, ನೋಯುವ ಕಾಲುಗಳೆರಡು ಅಲ್ಲಲ್ಲಿ ಅವನನ್ನು ನಿಂತು-ನಿಂತು ನಡೆಯುವಂತೆ ಮಾಡಿದ್ದರೂ ಪಯಣ ಸಾಗಿದೆ, ಸಾಗುತ್ತಿದೆ.

***

೨೦೦೮ ರ ಸೆಪ್ಟೆಂಬರ್ ಇಂದ ೨೦೧೦ ರ ಕೊನೆಯವರೆಗೆ ಬಹಳಷ್ಟು ನಡೆದು ಹೋಗಿದೆ. ಕೆಲವರು ಡಿಪ್ರೆಷ್ಷನ್ನ್ ಎಂದು ಕರೆಯುವಷ್ಟು ದೊಡ್ಡ ಮಟ್ಟಿನ ರಿಸೆಷ್ಷನ್ನ್ ಹುಟ್ಟಿ ಮರೆಯಾಗಿದೆ. ಮಾರ್ಕೆಟ್ಟಿನ ಮುಖ್ಯ ಇಂಡೆಕ್ಸ್‌ಗಳು ತಮ್ಮ ಹಳೆಯ ಲೆವೆಲ್‌ಗೆ ರಿಕವರ್ ಆಗಿವೆ. ಬ್ಲೂಮ್‌ಬರ್ಗ್, ಸಿಎನ್‌ಬಿಸಿ ಮೊದಲಾದ ಸ್ಟೇಷನ್ನುಗಳಲ್ಲಿ ಅರಚುವ ಧ್ವನಿಗಳಿಗೆಲ್ಲ ಶಕ್ತಿ ಬಂದಿದ್ದು, ಈ ವರ್ಷ ಎಲ್ಲ ಕಡೆಗೆ ಡಬಲ್ ಡಿಜಿಟ್ ಉನ್ನತಿ ಕಂಡಿದೆ ಎಂದು ಇನ್ನೂ ಜೋರಾಗಿ ಕಿರುಚಿಕೊಳ್ಳತೊಡಗಿವೆ. ಹಳೆಯದನೆಲ್ಲ ಎಲ್ಲರು ಮರೆತು, ಕ್ಯಾಲೆಂಡರ್ ಪುಟವನ್ನು ಬದಲಾಯಿಸಿ ಜನವರಿಯನ್ನು ನೋಡುತ್ತಿದ್ದಂತೆ ಎಲ್ಲರೂ ಮಹಾ ಬದಲಾವಣೆ ಆದೀತು ಎಂದು ಮುಗಿಲನ್ನು ನೋಡತೊಡಗಿದಂತೆ ಕಾಣಿಸುತ್ತಿದೆ.

ಈ ಕರಡೀ ತತ್ವದ (bear market) ಆಳ ಇಷ್ಟೇ - ಸಮಾಜದ ಎರಡು ಮುಖ್ಯ ಅಂಶಗಳಾದ ಉದ್ಯೋಗ (job) ಮತ್ತು ವಸತಿ (housing) ಇವೆರಡೂ ಈ ಎರಡು ವರ್ಷಗಳಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಉತ್ತರ ಅಮೇರಿಕದಲ್ಲಿ ನಿರುದ್ಯೋಗ 10% ಅಷ್ಟು ಇದ್ದರೆ, ೨೦೦೭ ರಿಂದ ಇಲ್ಲಿಯವರೆಗೆ ವಸತಿ ಮಾರುಕಟ್ಟೆ ಕುಸಿದು ಟ್ರಿಲಿಯನ್ನುಗಟ್ಟಲೆ ಡಾಲರ್ ಮಾಯವಾಗಿದೆ. ಹೀಗೆ ಎರಡು ಮುಖ್ಯ ಇಂಡಿಕೇಟರುಗಳು ಸಂಕಷ್ಟದಲ್ಲಿ ಸಿಕ್ಕಿಕೊಂಡಿರುವಾಗ ಒಂದಿಷ್ಟು ಆರ್ಥಿಕ ತಜ್ಞರು ಮತ್ತೊಂದು ರಿಸೆಷ್ಷನ್ ಅಥವಾ ದೊಡ್ಡ ಡಿಪ್ರೆಷ್ಷನ್ನೇ ಬರಬಹುದು ಎಚ್ಚರಿಕೆ ನೀಡಿದ್ದಾರೆ. ಆದರೆ ಮೈನ್ ಸ್ಟ್ರೀಮ್ ಸ್ಟಾಕ್ ಮಾರ್ಕೆಟ್‌ನಲ್ಲಿ ಮಾತ್ರ ಎಲ್ಲರು ಊರ್ಧ್ವಮುಖಿಗಳಾಗಿ ಘೂಳೀ ತತ್ವವನ್ನು (bull market) ನಂಬಿಕೊಂಡು ೨೦೧೧ರಲ್ಲಿ ಮಾರ್ಕೆಟ್ಟ್ ಇನ್ನೂ ಮೇಲೆ ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.


ಉದ್ಯೋಗ ರಹಿತ ಗುಣಮುಖಿಯಾಗಿ ಆರ್ಥಿಕ ವ್ಯವಸ್ಥೆ ಬಲಗೊಂಡರೂ ಕುಸಿದ ಮನೆಯ ಬೆಲೆ ಹಾಗೂ ಕೆಲಸವಿಲ್ಲದ ಜನ ಇವೆರಡೂ ಮುಖ್ಯ ಚರ್ಚೆಯ ವಿಷಯವಾಗಿ ೨೦೧೧ ರಲ್ಲಿ ಉಳಿಯುವುದು ಖಂಡಿತ. ಈಗಾಗಲೇ ಉಳಿತಾಯ ಹಾಗೂ ಕಡಿಮೆ ಖರ್ಚಿಗೆ ತೊಡಗಿಕೊಂಡ ಅಮೇರಿಕದ ಬಿಸಿನೆಸ್ಸು ಮತ್ತು ಕುಟುಂಬಗಳು ಮುಂಬರುವ ವರ್ಷದಲ್ಲಿ ಹೇಗೆ ಬದಲಾಯಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ. ಫೋರ್‌ಕ್ಲೋಜರ್ ಅಂಕಿ ಅಂಶ ಗಣನೀಯವಾಗಿ ಏರುತ್ತಲೇ ಇರುವಾಗ ಮನೆ ಖರೀದಿ ಮಾಡಲು ಬಡ್ಡಿ ದರ ಇಳಿದಿದ್ದರೂ ಸಹ ಮಾರ್ಕೆಟ್ಟಿನಲ್ಲಿ ಮಾರಾಟಕ್ಕೆ ಇರುವ ಮನೆಗಳ ಪಟ್ಟಿ ದೊಡ್ಡದೇ ಇದೆ. ಮುಂದಿನ ವರ್ಷ ನಿರುದ್ಯೋಗ ಪ್ರಮಾಣ ಇಳಿಯದೇ ಹೋಗಿ, ಮನೆಗಳ ಬೆಲೆ ಇನ್ನೂ ಕುಸಿಯುತ್ತ ಹೋದಂತೆಲ್ಲ ಸ್ಟಾಕ್ ಮಾರ್ಕೆಟ್ಟ್ ಮೇಲೆ ಹೋದರೂ ಸಹ ಇವೆರಡೇ ಅಂಶಗಳು ಮತ್ತೊಂದು ರಿಸೆಷ್ಷನ್ನ್ ಅನ್ನು ತರುವಷ್ಟು ಪ್ರಬಲವಾಗಿವೆ.

***
’ಅಂತರಂಗ’ದ ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಹೊಸ ವರ್ಷ ಎಲ್ಲರಿಗೂ ಶುಭವನ್ನು ತರಲಿ...

Friday, November 26, 2010

ಅಪರೂಪದ ಅತಿಥಿಯ ಆಗಮನ...

ನಿನ್ನೆ ಈ ವರ್ಷದ ಮೊಟ್ಟ ಮೊದಲ ಮಂಜಿನ ದರ್ಶನ, ವಾತಾವರಣ ತಂಪಾಗುತ್ತಾ ಸುಮಾರು ಮುವತ್ತು ಡಿಗ್ರಿ ತಲುಪುತ್ತಿದ್ದಂತೆಲ್ಲಾ ಯಾರೂ ಆಹ್ವಾನಿಸದ ಅತಿಥಿಯ ಹಾಗೆ ಈ ಮಂಜಿನ ಕಣಗಳು ಗುರುತ್ವಾಕರ್ಷಣ ಶಕ್ತಿಯ ಮಾಂತ್ರಿಕತೆಗೆ ಒಳಗಾದವರಂತೆ ನಿಧಾನವಾಗಿ ಬೀಳಲಾರಂಭಿಸುತ್ತವೆ. ಥರಥರನ ಸೈಜು ಶೇಪುಗಳಲ್ಲಿ ಅವತರಿಸಿಕೊಳ್ಳುವ ಇವು ನೆಲವನ್ನು ಮುತ್ತಿಕ್ಕುತ್ತ ಹಾಗೇ ನೀರಾಗಿ ಕರಗಿ ಹೋಗುತ್ತವೆ. ಇವುಗಳ ಸಹವಾಸದಿಂದ ಕೊಂಚ ಬಿಸಿಯಾದ ನೆಲವೂ ತೇವವಾಗಿ ಕೊನೆಗೆ ಶೀತಲ ಶಕ್ತಿಗೆ ಮಾರು ಹೋಗಿ ಈ ಮಂಜಿನ ಕಣಗಳನ್ನು ಶೇಖರಿಸಿಕೊಳ್ಳುವ ಹೊತ್ತಿಗೆಲ್ಲ ಎಲ್ಲ ಕಡೆಗೆ ಬಿಳಿಯ ಬಣ್ಣದ ಓಕುಳಿಯಾಗಿರುತ್ತದೆ. ನವೆಂಬರ್ ಕೊನೆಯ ಸೂರ್ಯನ ಕಿರಣಗಳೂ ಕೂಡ ಇಮ್ಮಡಿಯಾಗಿ ಪ್ರಜ್ವಲಿಸತೊಡಗುತ್ತವೆ.

ಭೂಗೋಳವನ್ನು ಕಲ್ಪಿಸಿಕೊಂಡು ಸಮಭಾಜಕವೃತ್ತದಿಂದ ಉತ್ತರಕ್ಕೆ ಎಷ್ಟೋ ದೂರವಿರುವ ಅಕ್ಷಾಂಶ-ರೇಖಾಂಶಗಳಲ್ಲಿ ನೆಲೆಸುವ ಉತ್ತರ ಅಮೇರಿಕ ಖಂಡದ ಉತ್ತರ ಭಾಗಕ್ಕೆ ಶೀತಲ ಮಾರುತ ಹೊಸತೇನಲ್ಲ, ಹಾಗೇ ಇಲ್ಲಿ ತಲತಲಾಂತರದಿಂದ ನೆಲೆಸಿರುವ ಜನರೂ ಸಹ ಬೆಟ್ಟದ ಮೇಲೆ ಮನೆಯ ಮಾಡಿ ಮೃಗಗಳಿಗೆ ಅಂಜದವರಂತೆ ಅವರ ವರ್ಷದ ಆರು ತಿಂಗಳುಗಳಲ್ಲಿ ಛಳಿ-ಹಿಮ-ಮಂಜಿಗೆ ಒಗ್ಗಿಹೋಗಿರುವಂತೆ ಪ್ರಕೃತಿ ಅವರನ್ನು ಹದಮಾಡಿದೆ. ಇಂತಹ ಪ್ರದೇಶಗಳಲ್ಲೇ ಯಾರೂ ಸಹ ತಲತಲಾಂತರದಿಂದ ವಾಸ ಮಾಡಿದ್ದೇ ನಿಜವಾದರೆ ಮುಂಬರುವ ಪೀಳಿಗೆಗಳಿಗೆ ಇಲ್ಲಿನ ವಾತಾವಾರಣ ಹಾಗೂ ಋತು ಚಕ್ರದ ಬದಲಾವಣೆ ಇವೆಲ್ಲ ಸಹಜವಾಗುತ್ತವೆ, ಹೊಂದಾಣಿಕೆ ತಾನೇ ತಾನಾಗಿ ಹುಟ್ಟಿಬರುತ್ತದೆ. ಆದರೆ ನಮ್ಮಂಥ ಮೊದಲ ಒಂದೆರಡು ತಲೆಮಾರುಗಳಿಗೆ ಮಾತ್ರ ಈ ಬದಲಾವಣೆಯನ್ನು ಅನುಭವಿಸಲೇ ಬೇಕಾದ ಅನಿವಾರ್ಯತೆ.

ನಮ್ಮ ದಕ್ಷಿಣ ಭಾರತದಲ್ಲಿ ನಾವು ಹುಟ್ಟಿದಾಗಿನಿಂದ ಕೇಳಿಬರದಿದ್ದ ವಿಟಮಿನ್ ಡಿ ಕೊರತೆ ಮೊದಲಾದವುಗಳು ಇಲ್ಲಿ ಸಾಮಾನ್ಯವಾಗುತ್ತವೆ. ಜೀವನ ಶೈಲಿಯಿಂದಲೋ, ಕೆಲಸದ ನೆಪದಿಂದಲೋ ಬೇಸಿಗೆಯ ಸೂರ್ಯನನ್ನು ಆಗಾಗ ದರ್ಶನ ಮಾಡದಿದ್ದರೆ, ಛಳಿಗಾಲದಲ್ಲಿ ನಿಧಾನವಾಗಿ ಒಂದೊಂದೇ ಎಲುಬು-ಕೀಲುಗಳು ಕಿರುಗುಟ್ಟತೊಡಗಬಹುದು, ಅಥವಾ ಮಂಡಿ-ಮೊಳಕೈ ಮೊದಲಾದವುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು, ಹೀಗೇ ದಿಢೀರನೇ ’ನಮಗೆಲ್ಲ ವಯಸ್ಸಾಯಿತು!’ ಎನ್ನುವಂತೆ ಕೈ-ಕಾಲುಗಳು ಅಲುಗಾಡಿಸಲೂ ಕಷ್ಟವೆನಿಸೀತು. ಇವೆಲ್ಲ ಇಲ್ಲಿ ಸಹಜ, ಅದಕ್ಕೆ ತಕ್ಕ ಪರಿಹಾರವನ್ನೂ ನಾವು ಹಲವಾರು ರೀತಿಯಲ್ಲಿ ಕಂಡುಕೊಳ್ಳುತ್ತೇವೆ - ಹಾಲಿನಲ್ಲಿ, ಸೀರಿಯಲ್ಲುಗಳಲ್ಲಿ, ಮೊದಲಾದ ದಿನನಿತ್ಯದ ತಿಂಡಿ-ತಿನಿಸುಗಳಲ್ಲಿ ವಿಟಮಿನ್ ಡಿ ಸ್ವಲ್ಪ ಪ್ರಮಾಣದಲ್ಲಾದರೂ ಇದ್ದು ಅದನ್ನು ಜೀರ್ಣಿಸಿ ರಕ್ತಗತ ಮಾಡಿಕೊಳ್ಳಬಲ್ಲಂತಹವರಿಗೆ ಕೊರತೆ ನೀಗುವಂತೆ ವ್ಯವಸ್ಥೆ ಇದೆ, ಆದರೆ ಇನ್ನು ಕೆಲವರಿಗೆ ಇದು ಕಡಿಮೆಯಾಗಿ ಹೊರಗಿನಿಂದ ಮಾತ್ರೆ ಮೊದಲಾದ ರೂಪದಲ್ಲಿ ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ, ಕೆಲವೊಮ್ಮೆ ಜೀವನ ಪರ್ಯಂತ ಇದು ಅಗತ್ಯವಾಗುತ್ತದೆ.

***

ನಾವು ಅಲ್ಲಿನ ’ಅನಿವಾಸಿ’ಗಳು, ಇಲ್ಲಿ ’ನಿವಾಸಿ’ಗಳಾಗುತ್ತೇವೆ, ಕ್ರಮೇಣ ಇದೇ ನಮ್ಮ ಮನೆಯಾಗುತ್ತದೆ. ಅಲ್ಲಿನ ನೆನಪು ಮಾಸುತ್ತಾ ಬಂದ ಹಾಗೆಲ್ಲಾ ಒಂದು ಕಡೆ ಅದು ನಾಸ್ಟಾಲ್ಜಿಯಾದ ವರ್ಗಕ್ಕೆ ಸೇರಿಕೊಂಡು, ಮತ್ತೊಂದು ಕಡೆ ದಿನೇ-ದಿನೇ ಬದಲಾಗುವ ಅಲ್ಲಿನ ಪರಿಸರ ಇಲ್ಲಿ ಸಿಗುವ ಪ್ರತಿಯೊಂದು ಅನುಕೂಲ-ಸೌಲಭ್ಯವನ್ನೂ ಒಳಗೊಂಡು ಅಲ್ಲಿ-ಇಲ್ಲಿನ ವ್ಯತ್ಯಾಸಗಳು ಕಡಿಮೆ ಆಗುತ್ತಾ ಹೋಗುತ್ತವೆ. ಹಳೆಯ ಹುರುಪು ಕಡಿಮೆ ಆಗುತ್ತದೆ, ಸ್ನೇಹಿತರು ದೂರವಾಗಿ ಅದೆಷ್ಟೋ ಕಾಲವಾಗಿದೆ, ಸಂಬಂಧಿಗಳೂ ಸ್ನೇಹಿತರ ಹಾದಿ ಹಿಡಿದು ಹೋಗಿದ್ದಾರೆ - ನಾವು ಒಂದು ರೀತಿ ಈ ಮಂಜಿನ ಹನಿಗಳ ಹಾಗೆ ನಿಧಾನವಾಗಿ ಇಲ್ಲಿನ ನೆಲವನ್ನು ಸೇರಿ ಇಲ್ಲಿಯವರಾಗೇ ಹೋಗಿದ್ದೇವೆ.

ಮೊದಲೆಲ್ಲಾ ಕಾಲಿಂಗ್ ಕಾರ್ಡುಗಳನ್ನು ತೆಗೆದುಕೊಂಡು ಘಂಟೆಗಟ್ಟಲೆ ಭಾರತದವರೊಂದಿಗೆ ಘಂಟೆಗಟ್ಟಲೆ ಮಾತನಾಡುವ ವ್ಯವಧಾನವಿತ್ತು. ಒಂದು ತಿಂಗಳಿಗೆ ಸುಮಾರು ಐನೂರು-ಆರು ನೂರು ಡಾಲರುಗಳ ಇಂಟರ್‌ನ್ಯಾಷನಲ್ಲ್ ಕರೆಗೋಸ್ಕರ ಫೋನ್ ಬಿಲ್ಲ್ ಕಟ್ಟಿದ ದಿನಗಳಿದ್ದವು. ಇಂದು ದಿನದ ಇಪ್ಪತ್ತನ್ನಾಲ್ಕು ಘಂಟೆಯೂ ಮುಕ್ತವಾಗಿ ಸಿಗುವ ಇಂಟರ್‌ನ್ಯಾಷನಲ್ಲ್ ಫೋನ್ ಲೈನಿನಲ್ಲಿ ವಾರಕ್ಕೆ ಒಂದು ಘಂಟೆಯೂ ಮಾತನಾಡದೇ ಇರುವ ದಿನಗಳೂ ಇವೆ. ಮಾತನಾಡಲು ಬೇಕಾದ ಸಮಯ ಅನ್ನೋದಲ್ಲ, ಮಾತನಾಡಲು ಬೇಕಾದ ಉಳಿದ ಕಂಪೋನೆಂಟುಗಳು ದಿನೇ-ದಿನೇ ಕಡಿಮೆಯಾಗುತ್ತಿರುವುದು ನನ್ನ ಅನುಭವ. ಮೊದಲು ಫೋನ್ ಅನ್ನೋದು ಬಹಳ ಮುಖ್ಯವಾದ ಕಮ್ಮ್ಯುನಿಕೇಷನ್ನ್ ಸಾಮಗ್ರಿಯಾಗಿತ್ತು, ಈಗ ಅದರ ಬದಲಿಗೆ ಇ-ಮೇಲ್, ಟೆಕ್ಸ್ಟ್ ಮೆಸ್ಸೇಜುಗಳು ಬಂದಿವೆ, ಅವುಗಳಲ್ಲೇ ಹೆಚ್ಚು ಕೆಲಸ-ಕಾರ್ಯಗಳು ನಡೆದು ಹೋಗುತ್ತವೆ. ಎಲ್ಲರೊಡನೆ ಮಾತನಾಡಬೇಕಾದ ನಮ್ಮ ಧ್ವನಿ ನಾಟಕದ ಪಾತ್ರಧಾರಿಗಳು ಸ್ವಗತದಲ್ಲಿ ಹೇಳಿಕೊಳ್ಳುವಂತೆ ವಾಕ್ಯಗಳನ್ನು ಕಲ್ಪಿಸಿಕೊಳ್ಳುತ್ತವೆ - ಬಳಕೆ ಕುಗ್ಗಿದಂತೆ ಪದಗಳು ಕಡಿಮೆಯಾಗಿ, ಕೊನೆಕೊನೆಗೆ ಒಂದು ಕಾಲದಲ್ಲಿ ನಾವು ದಿನನಿತ್ಯ ಬಳಸಿದ ವಿಷಯ-ವಸ್ತುಗಳು ಇಂದು ಅನಾಥವಾಗಿ ಹೋಗುವಂತೆ ಅನಿಸುತ್ತದೆ.

***

ಹೀಗೆ ಇಂದು ನಿಧಾನವಾಗಿ ಬೀಳುವ ಮಂಜಿನ ಕಣಗಳು ಮುಂದೆ ದೊಡ್ಡವಾಗುತ್ತವೆ. ಮೊದಲೆಲ್ಲಾ ಸೌಮ್ಯವಾದ ನೆಲ ಇವುಗಳನ್ನು ಆಲಂಗಿಸಿ ಕರಗಿಸಿಕೊಂಡಂತೆ ಇನ್ನು ಮೇಲಾಗೋದಿಲ್ಲ, ಇನ್ನು ಮೇಲೇನಿದ್ದರೂ ಛಳಿಯಲ್ಲಿ ಕಠಿಣಗೊಂಡ ನೆಲದ ಮೇಲೆ ಇವುಗಳು ನಿಧಾನವಾಗಿ ಹರಡಿ ನೀರಿನ ಹಲವಾರು ರೂಪಗಳನ್ನು ತಾಳಿ ತಮ್ಮ ಬದುಕನ್ನು ನಡೆಸಿಕೊಂಡು ಹೋಗಬೇಕಷ್ಟೇ. ಪ್ರತೀವರ್ಷವೂ ಇವುಗಳ ದೆಸೆಯಿಂದ ಕ್ಷುಬ್ರವಾದ ಮರಗಿಡಗಳ ಮನಸ್ಸೂ ಸಹ ಈ ಮಂಜಿನ ಹನಿಗಳಿಗೆ ಯಾವುದೇ ವಿಶೇಷ ಆತಿಥ್ಯವನ್ನೇನೂ ತೋರೋದಿಲ್ಲ, ಬದಲಿಗೆ ಬೋಳಾದ ಅವುಗಳೂ ಸಹ ನಿಮ್ಮ ಸಹವಾಸವೇನಿದ್ದರೂ ನೆಲದೊಂದಿಗೆ ಎಂದು ಸುಮ್ಮನಾಗಿವೆ. ಆಗಾಗ್ಗೆ ಬೀಸುವ ಗಾಳಿ ಇವುಗಳನ್ನು ಒಂದಿಷ್ಟು ಮಟ್ಟಿಗೆ ಕದಲಿಸಿದಂತೆ ಕಂಡರೂ ಇವುಗಳ ಕೋಲ್ಡ್ ಮನಸ್ಥಿತಿಗೆ ವಾಯುವೂ ರೋಸಿ ಹೋಗಿದ್ದಾನೆ. ಹೀಗೆ ಈ ಮಂಜಿನ ಹನಿಗಳು ಮೇಲ್ಮೈಯಲ್ಲಿ ಎಲ್ಲವನ್ನೂ ಆವರಿಸಿದಂತೆ ಕಂಡು ಬಂದರೂ ಇವುಗಳ ಕೆಳಗೆ ಎಲ್ಲವೂ ಹಾಗೇ ಇವೆ, ಜೊತೆಗೆ ಒಂದು ಮೂರ್ನಾಲ್ಕು ತಿಂಗಳುಗಳ ನಂತರದ ಬಿಡುಗಡೆಗೆ ಕಾಯುತ್ತಲೂ ಇವೆ.

Saturday, November 13, 2010

…Insane Passion Everyday!

£ÀªÀÄÆäj£À gɸïÖ gÀƪÀiï MAzÀgÀ°è PÀ£Àßr ¥ÀPÀÌzÀ°è ºÁQzÀÝ ¥ÀvÀAd° ¸ÀÆQÛ...

Insane Passion Everyday

Sunday, September 05, 2010

ಅಕ್ಕ ಸಮ್ಮೇಳನ ಮತ್ತು ಊಟ-ತಿಂಡಿಯ ವ್ಯವಸ್ಥೆ

ದೂರದಿಂದ ಬಂದ ನನ್ನ ಸ್ನೇಹಿತರು ಶುಕ್ರವಾರದಿಂದ ಶನಿವಾರದವರೆಗೆ ಹಲವಾರು ಸೂಚನೆಗಳನ್ನು ನನಗೆ ವೈಯಕ್ತಿಕವಾಗಿ ನೀಡುತ್ತಲೇ ಬಂದಿದ್ದಾರೆ, ಕೆಳಗಿನವುಗಳು ಮುಖ್ಯ ಅಂಶಗಳು ಮಾತ್ರ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ಫುಡ್ ಕಮಿಟಿಯವರು ತಮ್ಮ ವ್ಯವಸ್ಥೆಯನ್ನು ನಿರಂತರವಾಗಿ ಸುಧಾರಿಸುತ್ತಲೇ ಬಂದು ಶನಿವಾರ ಮಧ್ಯಾಹ್ನದ ಊಟದ ಕ್ವಾಲಿಟಿ ಚೆನ್ನಾಗಿತ್ತು. ಜೊತೆಗೆ ಶನಿವಾರದ ಸಂಜೆಯ ಹೊತ್ತಿಗೆಲ್ಲಾ ಊಟದ ಲೈನು ಹೆಚ್ಚು ಉದ್ದವಾದಂತೆ ಎನ್ನಿಸಲೇ ಇಲ್ಲ; ಊಟವನ್ನು ಸಾವಿರಾರು ಜನರಿಗೆ ಹಂಚುವ ವ್ಯವಸ್ಥೆ, ಅದರಲ್ಲಿನ ಬಾಟಲ್‌ನೆಕ್ಕ್‌ಗಳನ್ನು ತೆಗೆದು ಎಲ್ಲವೂ ಸಸೂತ್ರವಾಗಿ ನಡೆದುಕೊಂಡು ಹೋಗುವಂತೆ ಮಾಡಿದ ಆಹಾರ ಸಮಿತಿಯವರಿಗೆ "ಅಂತರಂಗ"ದ ಅಭಿನಂದನೆಗಳು.

* ಎರಡು ವರ್ಷಕ್ಕೊಮ್ಮೆ ’ಅಕ್ಕ’ ಸಮ್ಮೇಳನ ನಡೆಯುವುದು ನಿಜವಾದರೆ ಸ್ಥಳ ಬದಲಾದರೂ ಈ ಹಿಂದಿನ ಅನುಭವಗಳಿಂದ ನಾವುಗಳು ಪಾಠವನ್ನೇಕೆ ಕಲಿಯೋದಿಲ್ಲ? ಕಾರ್ಯಕ್ರಮ ಹಾಗೂ ಸಮ್ಮೇಳನ ಸಮಿತಿಗಳು ಬದಲಾದರೂ ’ಅಕ್ಕ’ದ ಪದಾಧಿಕಾರಿಗಳು ಈ ಬಗ್ಗೆ ಒಂದು ’ಅನುಭವ ಬ್ಯಾಂಕ್’ ಏಕೆ ಸ್ಥಾಪಿಸಿ ಅವೇ ತಪ್ಪುಗಳು ಮತ್ತೆ ಮರುಕಳಿಸದಂತೆ ಏಕೆ ಮಾಡಬಾರದು?
* ಗುಜರಾತಿ ಸಂಸ್ಥೆಗಳಲ್ಲಿ ಹತ್ತು ಸಾವಿರದಷ್ಟು ಜನರಿಗೆ ಊಟ-ಉಪಹಾರವನ್ನು ಯಾವುದೇ ಲೋಪವಾಗದಂತೆ ಆಯೋಜಿಸುವುದು ನಿಜವಾದರೆ, ನಾಲ್ಕು ಸಾವಿರ ಕನ್ನಡಿಗರಿಗೆ ಉಣಬಡಿಸುವುದೇಕೆ ಕಷ್ಟ.
* ದಕ್ಷಿಣ ಭಾರತದ ತಿಂಡಿ-ತಿನಿಸುಗಳನ್ನು ದಯವಿಟ್ಟು ನಮ್ಮವರಿಂದಲೇ ಮಾಡಿಸಿ - "ಚಟ್ಣಿ ಸ್ವಲ್ಪವೂ ಚೆನ್ನಾಗಿರಲಿಲ್ಲ!"
* ಯಾರಾದರೂ ಒಂದು ವಡೆ ಅಥವಾ ಇತರ ತಿನಿಸನ್ನು ಹೆಚ್ಚು ಕೇಳಿದರೆ ದಯವಿಟ್ಟು ನಿರಾಕರಿಸದೇ ಕೊಡಿ.
* ಸಮ್ಮೇಳನಕ್ಕೆ ಬರುವವರಿಗೆ ಕಾರ್ಯಕ್ರಮಗಳು ಎಷ್ಟು ಮುಖ್ಯವೋ ಅದೇ ರೀತಿ ಊಟ-ಉಪಚಾರ ಹಾಗೂ ತಮ್ಮ ಬಂಧು-ಬಳಗ-ಸ್ನೇಹಿತರನ್ನು ಭೇಟಿ ಮಾಡುವುದು ಅಷ್ಟೇ ಮುಖ್ಯ, ಆದರೆ ಊಟ ಮಾಡಿದವರು ಅಲ್ಲೇ ಮೀಟಿಂಗ್ ಮಾಡಿ ಉಳಿದವರಿಗೆ ಟೇಬಲ್ ಸಿಗದ ಹಾಗೆ ಮಾಡದಂತೆ ಉಪಾಯವಾಗಿ ತಡೆ ಹಿಡಿಯಿರಿ.
* ನಮ್ಮವರು ಕಾಫಿ, ಊಟ-ತಿಂಡಿಗೆ ಸಮಯಕ್ಕಿಂತ ಮೊದಲು ಸರತಿ ಸಾಲಿನಲ್ಲಿ ನಿಲ್ಲದಂತೆ ತಡೆ ಹಿಡಿಯಿರಿ, ಒಮ್ಮೆ ಸಾಲಿನಲ್ಲಿ ನಿಂತವರನ್ನು ಐದು ನಿಮಿಷಗಳಿಗಿಂತ ಹೆಚ್ಚು ಕಾಯಿಸಬೇಡಿ.

*** ಇನ್ನೂ ಉಳಿದ ಅಬ್ಸರ್‌ವೇಷನ್ನುಗಳನ್ನು ಇಲ್ಲಿ ಮುಂದೆ ಸೇರಿಸಲಾಗುವುದು.

ಶನಿವಾರದ ಕಾರ್ಯಕ್ರಮಗಳು

೪ನೇ ತಾರೀಕು ಶನಿವಾರ ಮುಂಜಾನೆ ರಾರಿಟನ್ ಸೆಂಟರ್‌ ಕಡೆಗೆ ಬರುತ್ತಿದ್ದವರೆಲ್ಲರಿಗೆ ಒಂದು ರೀತಿಯ ಲಗುಬಗೆ, ಗಡಿಬಿಡಿ ಗೋಚರಕ್ಕೆ ಬರುತ್ತಿತ್ತು. ಒಂದು ಕಡೆ ಮೆರವಣಿಗೆಯನ್ನು ನೋಡಬೇಕು ಎನ್ನುವ ಕುತೂಹಲವಾದರೆ, ಮತ್ತೊಂದೆಡೆಗೆ ಇರುವ ಆರು ಸ್ಟೇಜುಗಳಲ್ಲಿ ಯಾವ ಕಾರ್ಯಕ್ರಮವನ್ನು ನೋಡುವುದು, ಯಾವ ಕಾರ್ಯಕ್ರಮವನ್ನು ಬಿಡುವುದು ಎಂಬ ಗೊಂದಲ.

ಬೆಳಿಗ್ಗೆ ಸುಮಾರು ಎಂಟು ಘಂಟೆಯ ಹೊತ್ತಿಗೆ ಆರಂಭವಾದ ಮೆರವಣಿಗೆಯಲ್ಲಿ ಸುಮಾರು ಇಪ್ಪತ್ತೈದು ತಂಡಗಳು ಭಾಗವಹಿಸಿದ್ದು ಸ್ಥಳೀಯ ಹಾಗೂ ದೂರದಿಂದ ಬಂದ ಕನ್ನಡಿಗರ ಸ್ಪೂರ್ತಿ ಹಾಗೂ ಬೆಂಬಲದ ಪ್ರತಿಬಿಂಬದಂತೆ ಎಲ್ಲರ ಮುಖದಲ್ಲೂ ಹರ್ಷ ತುಂಬಿ ತುಳುಕುತ್ತಿತ್ತು. ಇನ್ನೂ ಎರಡು ವಾರ ಬೇಸಿಗೆ ಇದ್ದರೂ ಬೆಳಿಗ್ಗಿನ ತಿಳಿಗಾಳಿಯ ವಾತಾವರಣದಲ್ಲಿ ಕಣ್ಣು ಕುಕ್ಕುವಂತೆ ಸೂರ್ಯರಶ್ಮಿಗಳು ಹಾಗೂ ನಿನ್ನೆ ಅಲ್ಪ ಸ್ವಲ್ಪ ಮಳೆ ಬಂದು ಎಲ್ಲವೂ ತಿಳಿಯಾದಂತೆ ಕಂಡು ಬರುತ್ತಿದ್ದುದು ಆಹ್ಲಾದಕರವಾಗಿತ್ತು. ಮುಖ್ಯ ಅತಿಥಿಗಳಾದ ಮನು ಬಳಿಗಾರ್, ಜಯರಾಮ್ ರಾಜೇ ಅರಸ್, ಮುಖ್ಯಮಂತ್ರಿ ಚಂದ್ರು, ಕೃಷ್ಣೇ ಗೌಡ ಮೊದಲಾದವರು ನೋಡನೋಡುತ್ತಿದ್ದಂತೆ ಒಂದಲ್ಲ ಎರಡಲ್ಲ ಸುಮಾರು ಮುವತ್ತೆರಡು ತಂಡಗಳು ಭಾಗವಹಿಸಿದ್ದ ದಸರಾ ಮೆರವಣಿಗೆಯ ದ್ಯೋತಕದಂತೆ ಅಕ್ಕ ಮೆರವಣಿಗೆ ನಡೆದುಬಂತು.

ಸಮ್ಮೇಳನದ ಮುಖ್ಯವೇದಿಕೆ, ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸಾಕಷ್ಟು ಜನರು ನೆರಿದಿದ್ದಂತೆ, ಅಮೇರಿಕದಿಂದ ಹಾಗೂ ಬೆಂಗಳೂರಿನಿಂದ ಏಕಕಾಲಕ್ಕೆ ಏರ್ಪಟ್ಟ "ಯಾವ ಮೋಹನ ಮುರಳಿ ಕರೆಯಿತೋ" ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು. ಕರ್ನಾಟಕದಿಂದ ಮುಖ್ಯಮಂತ್ರಿ ಯಡಿಯೂರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಜಿ.ಎಸ್. ಶಿವರುದ್ರಪ್ಪ ಹಾಗೂ ಶಿವಮೊಗ್ಗ ಸುಬ್ಬಣ್ಣನವರು ನೆರೆದಿದ್ದ ಕಾರ್ಯಕ್ರಮ ಸ್ಥಳೀಯ ಕಲಾವಿದೆಯೊಬ್ಬರ ನಿರೂಪಣೆಯಲ್ಲಿ ಚೆನ್ನಾಗಿ ಮೂಡಿಬಂತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಲೈವ್ ಸಂದೇಶದ ಜೊತೆಗೆ ಶಿವಮೊಗ್ಗ ಸುಬ್ಬಣ್ಣ, ಜಿ.ಎಸ್. ಶಿವರುದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದ ಗಣ್ಯರು ಕೆಲವು ಮಾತುಗಳನ್ನಾಡಿದರು.

ನಂತರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಈ ಕೆಲವು ವರ್ಷಗಳಲ್ಲಿ ನಮ್ಮನಗಲಿದ ಕನ್ನಡಿಗರಲ್ಲಿ ಮುಖ್ಯರಾದವರನ್ನು ಸ್ಮರಿಸಲಾಯಿತು. ಇನ್ನೊಂದು ವಿಶೇಷ ಸಂದರ್ಭದಲ್ಲಿ ದಿವಂಗತ ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಅವರನ್ನು ನೆನೆದು ಸಭೆಯಲ್ಲಿ ಉಪಸ್ಥಿತರಿದ್ದ ಅವರ ಶ್ರೀಮತಿಯವರನ್ನು ಕರೆದು ಮುಖ್ಯವೇದಿಕೆಯಲ್ಲಿ ಗೌರವಿಸಲಾಯಿತು. ನಾವು ರಾಜು ಅನಂತಸ್ವಾಮಿ ಮತ್ತು ಅವರ ತಂದೆ ಹಾಗೂ ಸಿ. ಅಶ್ವಥ್ ಅವರನ್ನು ಕಳೆದುಕೊಂಡಿದ್ದರೂ ಅವರು ನಿರ್ಮಿಸಿದ ಸುಗಮ ಸಂಗೀತದ ಗುಂಗು ಕನ್ನಡಿಗರಿಗೆ ಎಂದೂ ಮಾಸದು ಎಂದು ಸಭೆಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಸಂಚಾಲಕ ಪ್ರಸನ್ನಕುಮಾರ್ ಅವರ ಈ ಪ್ರಯತ್ನ ಸಮಯಸ್ಪರ್ಶಿಯಾಗಿತ್ತು.

ಮನು ಬಳಿಗಾರ್, ಜಯರಾಮ್ ರಾಜ್ ಅರಸ್, ಎಚ್. ಎಸ್. ವೆಂಕಟೇಶ ಮೂರ್ತಿ, ಬಿ. ಆರ್. ಲಕ್ಷ್ಮಣರಾವ್, ಜೋಗಿ, ವನಿತಾ ವಾಸು - ಇವರ ಸಮ್ಮುಖದಲ್ಲಿ ಸ್ಮರಣ ಸಂಚಿಕೆಗಳ ಬಿಡುಗಡೆ: ಸಿಂಚನ (ಮುಖ್ಯ ಸ್ಮರಣ ಸಂಚಿಕೆ), ರಂಜಿನಿ (ಕಾರ್ಯಕ್ರಮ ಸೂಚಿ), ಗುಬ್ಬಿಗೂಡು (ಮಕ್ಕಳ ಸಂಚಿಕೆ), ಕನ್ನಡ ಪ್ರಜ್ಞೆ (ಪ್ರಬಂಧ ಸಂಕಲನ) ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಕನ್ನಡ ಪ್ರಜ್ಞೆ ಪ್ರಬಂಧ ಸಂಕಲನಕ್ಕೆ ಸಹಾಯ ಮಾಡಿದ ದಿವಂಗತ ಹರಿಹರೇಶ್ವರ ಮತ್ತು ನಾಗಲಕ್ಷ್ಮಿಯವರ ಸ್ಮರಣೆ.

***

ಮಧ್ಯಾಹ್ನ ರಾಯಚೂರ್ ಶೇಷಗಿರಿದಾಸ್ ಅವರಿಂದ ರಾಣಿ ಚೆನ್ನಮ್ಮ ಕಲಾಮಂದಿರದಲ್ಲಿ ಸುಶ್ರಾವ್ಯವಾದ ಭಕ್ತಿಗೀತೆಗಳು ಹೊರಬಂದವು. "ಪವಮಾನ"ದಿಂದ ಆರಂಭವಾದ ಶುಶ್ರಾವ್ಯವಾದ ಗಾಯನ ಸುಮಾರು ಮುವತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ಭಕ್ತಿಗಂಗೆಯಲ್ಲಿ ಓಲಾಡಿಸಿತು, ಸ್ವಲ್ಪ ಸಮಯದ ನಂತರ ವಿದ್ಯಾಭೂಷಣರ ಕರ್ನಾಟಕ ಭಕ್ತಿ ಸಂಗೀತ ಸಾಕಷ್ಟು ಜನರನ್ನು ಮಂತ್ರ ಮುಗ್ದರನ್ನಾಗಿಸಿತ್ತು.

***

ಹೊಯ್ಸಳ ಕನ್ನಡ ಸಂಘ, ಡೆಲವೇರ್‌ನವರಿಂದ ನೃತ್ಯ ರೂಪಕದ ಸಂಚಲನ
ಕನ್ನಡದ ಇತ್ತೀಚಿನ ಚಲನ ಚಿತ್ರಗಳನ್ನು ಆಯ್ದುಕೊಂಡು ಕಾರ್ಯಕ್ರಮ ಆಯೋಜಕರು ತಮ್ಮ ಕಾರ್ಯಕ್ರಮವನ್ನು ಕೇವಲ ಹದಿನೈದು ನಿಮಿಷಗಳಿಗೆ ಮೊಟಕುಗೊಳಿಸಿದರೂ ಬೇಸರಗೊಳ್ಳದೇ ಚಿಕ್ಕದಾಗಿ ಹಾಗಿ ಚೊಕ್ಕದಾಗಿ ನೃತ್ಯರೂಪಕವನ್ನು ನೇರವೇರಿಸಿ ಪ್ರೇಕ್ಷಕರಿಂದ ಪ್ರಶಂಸೆಗೊಳಪಟ್ಟ ಕೀರ್ತಿ ಹೊಯ್ಸಳ ಕನ್ನಡ ಸಂಘ - ಡೆಲವೇರ್‌ನ ಕಲಾವಿದರಿಗೆ ಸೇರುತ್ತದೆ

ರಾಣಿ ಚೆನ್ನಮ್ಮ ಕಲಾಮಂದಿರದಲ್ಲಿ ಮಧ್ಯಾಹ್ನ ಇದ್ದಕ್ಕಿದ್ದಂತೆ ಪ್ರಖ್ಯಾತ ಕನ್ನಡ ಚಲನಚಿತ್ರಗಳ ಟ್ಯೂನ್ ಕೇಳಿ ಬರಲು ಮೀಟ್ ಎಂಡ್ ಗ್ರೀಟ್ ಏರಿಯಾದಲ್ಲಿ ಇದ್ದವರೆಲ್ಲರೂ ಚೆನ್ನಮ್ಮ ಸ್ಟೇಜ್‌ನತ್ತ ದೌಡಾಯಿಸಿದಾಗ ಸ್ಟೇಜ್‌ ಮೇಲೆ ತಮ್ಮ ಕನ್ನಡ ಕೂಟದ ಮಕ್ಕಳು ಹಾಗೂ ದೊಡ್ಡವರಿಂದ ಒಂದು ಸುಂದರವಾದ ನೃತ್ಯ ರೂಪಕವನ್ನು ಚಂದ್ರಶೇಖರ ಆರಾಧ್ಯ ಹಾಗೂ ಅವರ ತಂಡದ ಕಲಾವಿದರಿಗೆ ಸಲ್ಲುತ್ತದೆ. ವಿಭಿನ್ನ ವರ್ಣರಂಜಿತ ಉಡುಗೆ ತೊಡುಗೆ ಹಾಗೂ ಹಲವು ನೃತ್ಯ ಮತ್ತು ಅಣಕುಗಳನ್ನೊಳಗೊಳಂಡ ಡ್ಯಾನ್ಸ್ ಕಾರ್ಯಕ್ರಮ ಚಿಕ್ಕದಾಗಿ ಹಾಗೂ ಮನಮೋಹಕವಾಗಿ ಮೂಡಿಬಂತು.

***
ರಮೇಶ್ ಕದ್ರಿ - ಸ್ಯಾಕ್ಸೋಫೋನ್
ರಮೇಶ್ ಕದ್ರಿ ಅವರು ತಮ್ಮ ಸಹ ಕಲಾವಿದರೊಂದಿಗೆ ಸೊಗಸಾದ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಅವರ ಸ್ಯಾಕ್ಸೋಫೋನಿನ ಅಲೆಗಳು ಗುಬ್ಬಿ ವೀರಣ್ಣ ರಂಗಮಂದಿರದ ತುಂಬೆಲ್ಲಾ ಅನುರಣಿಸಿ ಹಲವಾರು ನೂರಾರು ಶೋತೃಗಳನ್ನು ತಲ್ಲೀನರಾಗಿಸಿತ್ತು.

ಕೃಷ್ಣ ವೈಜಯಂತಿ - ಪ್ರಭಾತ್ ಕಲಾವಿದರು
ಬ್ರಾಡ್‌ವೇ ಶೈಲಿಯಲ್ಲಿ ಕೃಷ್ಣನ ಜನ್ಮದಿಂದ ಹಿಡಿದು ಕುರುಕ್ಷೇತ್ರ ಯುದ್ಧದವರೆಗಿನ ಸುಂದರವಾದ ನೃತ್ಯ ರೂಪಕದ ಮೂಲಕ ಸುಮಾರು ಎಂಭತ್ತು ನಿಮಿಷಗಳ ಕಾಲ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟು ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರರಾದ ಕೀರ್ತಿ ಪ್ರಭಾತ್ ಕಲಾವಿದರಿಗೆ ಸಲ್ಲಬೇಕು. ನಮಗೆಲ್ಲ ಗೊತ್ತಿರುವ ಹಾಗೆ ಅಕ್ಕ ಸಮ್ಮೇಳನದಲ್ಲಿ ಮೊಟ್ಟ ಮೊದಲನೇ ಭಾರಿಗೆ ಈ ರೀತಿಯ ಕಾರ್ಯಕ್ರಮವೊಂದನ್ನು ಪ್ರಭಾತ್ ಕಲಾವಿದರು ನೆರವೇರಿಸಿಕೊಟ್ಟಿದ್ದಾರೆ. ಬಾಲಕೃಷ್ಣನ ವೇಷದಲ್ಲಿ ಮೊಟ್ಟ ಮೊದಲು ಅಭಿನಯಿಸಿದ ಬಾಲ ಕಲಾವಿದೆಯಿಂದ ಹಿಡಿದು, ಕೃಷ್ಣ, ಅರ್ಜುನ, ಕಂಸ, ಯಶೋಧೆ, ಸಖಿಯರು ಮೊದಲಾದವರ ಪಾತ್ರಗಳಲ್ಲಿ ಅನೇಕ ನೃತ್ಯ-ಸಂಗೀತ ರೂಪಕಗಳ ಸಂಗಮವನ್ನು ಶ್ರೋತೃಗಳು ಚಪ್ಪಾಳೆಯ ಮೂಲಕ ಆಹ್ಲಾದಿಸಿದರು. ಹಿನ್ನೆಲೆ ಸಂಗೀತ, ವಸ್ತ್ರ ವಿನ್ಯಾಸ ಹಾಗೂ ಹಿನ್ನೆಲೆ ಸೀನರಿಗಳ ಚಿತ್ರಗಳು ಅದ್ಭುತವಾಗಿದ್ದವು.

ಕರುನಾಡ ಕೊಡುಗೆ: ಬೃಂದಾವನದ ಕಲಾವಿದರು ಆಹ್ವಾನಿತ ಕನ್ನಡ ಕೂಟಗಳ ಸಹ ಕಲಾವಿದರೊಂದಿಗೆ ಕೈ ಜೋಡಿಸಿ ಯಮುನಾ ಶ್ರೀನಿಧಿಯವರ ನಿರ್ದೇಶನದಲ್ಲಿ ಕನ್ನಡದ ರಂಜನೀಯ ಚಿತ್ರಗೀತೆಗಳು ಮತ್ತು ಚಿತ್ರಗಳ ಸಹಾಯದಿಂದ "ಕರುನಾಡ ಕೊಡುಗೆ" ಕಾರ್ಯಕ್ರಮವನ್ನು ಸುಂದರವಾಗಿ ನೆರವೇರಿಸಿ ಪ್ರೇಕ್ಷಕರ ಚಪ್ಪಾಳೆಗಳಿಗೆ ಪಾತ್ರರಾದರು. ಹಲವಾರು ಕನ್ನಡ ಕೂಟಗಳ ಕಲಾವಿದರನ್ನು ಒಳಗೊಂಡು ಆಯ್ದ ಚಿತ್ರ ಸಂಗೀತದ ಹಿನ್ನೆಲೆಯಲ್ಲಿ ನೃತ್ಯವನ್ನು ಸಂಯೋಜಿಸಿ ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಗೆದ್ದ ಕೀರ್ತಿ ಯಮುನಾರವರಿಗೆ ಹಾಗೂ ಭಾಗವಹಿಸಿದ ಕಲಾವಿದರೆಲ್ಲರಿಗೆ ಸೇರುತ್ತದೆ.

ಪುಸ್ತಕ ಬಿಡುಗಡೆ: ಸ್ಮರಣ ಸಂಚಿಕೆ, ಮನು ಬಳಿಗಾರ್ - ಕೆಲವು ಕಥೆಗಳು; ದೊಡ್ಡ ರಂಗೇಗೌಡರ ಸಂಕಲನವೊಂದನ್ನು ಬಿಡುಗಡೆ ಮಾಡಲಾಯಿತು.

ಕನ್ನಡವೇ ಶ್ರೇಷ್ಠ: ಶ್ರೀನಿವಾಸ ಕಪ್ಪಣ್ಣ ಮತ್ತು ಸುನಿತಾ ಅನಂತಸ್ವಾಮಿ ಅವರು ಕರ್ನಾಟಕದ ಶ್ರೇಷ್ಠ ಗಾಯಕ-ಗಾಯಕಿಯರನ್ನು ಒಳಗೊಂಡು ಹಲವಾರು ಜಾನಪದ ಗೀತೆ, ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ಕುಣಿಸಿ ನಲಿಸುವಲ್ಲಿ ಸಫಲರಾದರು. ಮಧ್ಯರಾತ್ರಿಯ ನಂತರವೂ ಮುಂದುವರೆದ ಈ ಕಾರ್ಯಕ್ರಮವನ್ನು ನೋಡಲು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸುಮಾರು ತೊಂಭತ್ತು ನಿಮಿಷಗಳ ಕಾಲ ನಡೆದ ಈ ಕಾರ್ಯಕ್ರಮ ರಂಜನೀಯವಾಗಿತ್ತು.


ಶನಿವಾರದ ಕಾರ್ಯಕ್ರಮದ ಚಿತ್ರಗಳನ್ನು ಇಲ್ಲಿ ನೋಡಿ:
http://picasaweb.google.com/hrskumar/Saturday?authkey=Gv1sRgCJvwgrn5lZvj1wE#

ಶುಕ್ರವಾರದ ಚಿತ್ರಗಳು

ಶುಕ್ರವಾರ, ಸೆಪ್ಟೆಂಬರ್ ೩ ರಂದು ಆನೆ ಅಂಬಾರಿ ದೇವಿಯ ಮೂರ್ತಿಯನ್ನು ಹೊತ್ತು ತರುವುದರೊಂದಿಗೆ ಆರಂಭವಾಗಿ, ಹಲವಾರು ಗಣ್ಯರ ಸಮ್ಮುಖದಲ್ಲಿ ಗಣೇಶ ಪೂಜೆಯೊಂದಿಗೆ ಸಮ್ಮೇಳನದ ಕಾರ್ಯಕ್ರಮಗಳು ಉದ್ಘಾಟನೆಗೊಂಡವು.

ಶುಕ್ರವಾರ ದಿನವಿಡೀ ಬಿಸಿನೆಸ್ಸ್ ಫೋರಮ್ಮ್, ಮಹಿಳೆಯ ಫೋರಮ್ಮ್, ಆರ್ಟ್ ಆಫ್ ಲಿವಿಂಗ್ ಮೊದಲಾದ ಕಾರ್ಯಕ್ರಮಗಳು ಪ್ಯಾರಲಲ್ಲ್ ವೇದಿಕೆಗಳಲ್ಲಿ ಆಯೋಜಿತಗೊಂಡು ಸಾಕಷ್ಟು ಜನರನ್ನು ತಮ್ಮೆಡೆ ಸೆಳೆದುಕೊಂಡಿದ್ದವು.

ವೇದ ಘೋಷದೊಂದಿಗೆ ಆರಂಭವಾದ ಸ್ವಾಗತ ಕಾರ್ಯಕ್ರಮಗಳು, ದಸರಾ ಮೆರವಣಿಗೆ, ದೀಪ ಬೆಳಗುವಿಕೆ, ರಾಷ್ಟ್ರಗೀತೆ, ಹಾಗೂ ಅನೇಕ ಗಣ್ಯರಿಂದ ಪ್ರಾಸ್ತಾವಿಕ ಸ್ವಾಗತ ಭಾಷಣಗಳನ್ನೊಳಗೊಂಡಿದ್ದವು.

ರಾತ್ರಿ ಒಂಭತ್ತುವರೆಗೆ ನಡೆದ ಶ್ರೀ ಬಾಲ ಮುರಳಿಕೃಷ್ಣ ಅವರ ಸಂಗೀತ ಕಾರ್ಯಕ್ರಮಕ್ಕೆ ಗುಬ್ಬಿ ವೀರಣ್ಣ ರಂಗಮಂಟಪ ಕಿಕ್ಕಿರಿದು ತುಂಬಿತ್ತು.

ಶುಕ್ರವಾರದ ಚಿತ್ರಗಳಿಗೆ ಇಲ್ಲಿ ನೋಡಿ.
http://picasaweb.google.com/hrskumar/Friday?authkey=Gv1sRgCJb8urGmoLmsHQ#

Friday, September 03, 2010

೬ನೇ ವಿಶ್ವ ಕನ್ನಡ ಸಮ್ಮೇಳನ - ಬಿಸಿನೆಸ್ಸ್ ಫಾರಮ್





















ರಾಯಲ್ ಆಲ್ಬರ್ಟ್ಸ್ ಪ್ಯಾಲೇಸಿನಲ್ಲಿ ಬಿಸಿನೆಸ್ಸ್ ಫೋರಮ್ ಕಲರವ ಶುಕ್ರವಾರ, ಸೆಪ್ಟೆಂಬರ್ ೩ ರಂದು ಅದ್ದೂರಿಯಾಗಿ ಆರಂಭಗೊಂಡಿತು. ಸುಮಾರು ಇನ್ನೂರಕ್ಕೂ ಹೆಚ್ಚು ನೆರೆದ ಕರ್ನಾಟಕ ಹಾಗೂ ಸ್ಥಳೀಯ ಬಿಸಿನೆಸ್ಸ್ ದುರೀಣರನ್ನೆಲ್ಲ ಒಂದೇ ಸ್ಥಳದಲ್ಲಿ ಪೂರ್ಣ ದಿನದ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.


ಹೇಮಾ ಕಾಂತರಾಜು ಅವರ ನಿರೂಪಣೆಯಲ್ಲಿ ಕಾರ್ಯಕ್ರಮಗಳ ಆರಂಭ: ೯:೩೦
ಮುಖ್ಯ ಅತಿಥಿಗಳು ಹಾಗೂ ಗಣ್ಯರ ಆಹ್ವಾನ: ೯:೩೫
ಶ್ರೀ ರಮೇಶ್ ಮಂಜೇಗೌಡ ಅವರ ಸ್ವಾಗತ ಭಾಷಣ: ೯:೩೮
ಜ್ಯೋತಿ ಬೆಳಗುವುದರೊಂದಿಗೆ ಫೋರಮ್ಮಿನ ಚಟುವಟಿಕೆಗಳ ಉದ್ಘಾಟನೆ ೯:೪೦

ಮುಖ್ಯ ಅತಿಥಿಗಳ ಭಾಷಣಗಳು ಈಗ ಮುಗಿದು, ಕೆಳಗಿನ ಐದು ಸೆಶ್ಶನ್ನುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ:

Session 1: Growth and Emerging Cross-border oppourtunities in the "New Nomal"
Moderator: Dr. A.M. Gundane

Session 2: Building a Business: Keys to Entrepreneurship in the New World
Moderator: Varchasvi Shankar

Session 3: Riding the Domestic Growth: India
Moderator: Raj Patil

Session 4: Investment & Retirement Strategies
Moderator: Ralph DSouza



Session 5: Success stories - "If I can do it, You can do it"
Jerry Rao and B.V. Jagadish

Wednesday, August 18, 2010

ಎಂಥಾ ಪ್ರಖರವಾದ ಸೂರ್ಯನೂ ಒಂದು ದಿನ ಸತ್ತು ಹೋಗುತ್ತಾನಂತೆ...

ಇದೇ ನಮ್ಮ ತಪ್ಪು ಎನಿಸಿದ್ದು - ಬಿರು ಬೇಸಿಗೆಯ ನಡುವೆ ಮುಂಬರುವ ಛಳಿಗಾಲದ ಬಗ್ಗೆ ಮನದಲ್ಲಿ ಚಿಂತೆಯ ಬುಗ್ಗೆಗಳು ಏಳುತ್ತಿದ್ದಾಗ. ಮನೆಯ ಹೊರಗಿರುವ ಟಪಾಲು ಡಬ್ಬದಲ್ಲಿ ಕೈಯಾಡಿಸಿ ಅದರ ಅಂತಃಸತ್ವವನ್ನು ಎತ್ತಿ ಹಿಡಿದುಕೊಂಡು ಬರುತ್ತಿದ್ದಾಗ ಗಾಳಿಯ ಪದರಗಳಲ್ಲಿ ನಿಧಾನವಾಗಿ ತೇಲುತ್ತಾ ನನ್ನ ಮುಂದೆ ಬಿದ್ದಿದ್ದು ಒಂದು ಹಳದಿ ಎಲೆ. ಓಹ್, ಇನ್ನೂ ಕೆಲವೇ ದಿನಗಳಲ್ಲಿ ಹಣ್ಣಾಗಿ (ಕೆಂಪಾಗಿ) ಮಾಗಿ ಉದುರ ಬೇಕಾಗಿದ್ದ ಎಲೆಗಳಿಗೇಕೆ ಬದುಕಿನ ನಡುವಿನ ಹಳದಿಯಲ್ಲೇನು ವಿಯೋಗ ಎಂದು ಯೋಚಿಸಲಾರಂಭಿಸಿ, ಮುಂದಿನ ಕೆಲವು ಕ್ಷಣಗಳಲ್ಲಿ ನನ್ನ ಮನಸ್ಸು - ಇಂಥಾ ಬಿರು ಬೇಸಿಗೆಯ ನಡುವೆಯೂ ಮುಂಬರುವ ಛಳಿಗಾಲದ ಬಗ್ಗೆ ಯೋಚಿಸೋದೇ? ಛೇ, ಎನಿಸದೆ ಇರಲಿಲ್ಲ.

ನಾನು ಮೂರು ತಿಂಗಳ ಕೆಟ್ಟ ಛಳಿಗಾಲದ ನಡುವೆ ಎಷ್ಟೋ ಸಾರಿ ಬೇಸಿಗೆಯ ನೆನಪು ಮಾಡಿಕೊಂಡಿದ್ದೇನೆ, ಆದರೆ ಕೊರೆಯುವ ಛಳಿಯಲ್ಲಿ ನಿಂತು ಹಂಬಲಿಸುವ ಬೇಸಿಗೆಯ ನಿರೀಕ್ಷೆಗೂ, ಬಿಸಿಲಿನಲ್ಲಿ ಬಾಡುತ್ತಲೇ ದೂರ ತಳ್ಳುವ ಛಳಿಯ ಅರಿವಿಗೂ ವ್ಯತ್ಯಾಸವಿದೆ ಎನ್ನುವುದು ಈ ಹೊತ್ತಿನ ತತ್ವ. ಹಿತವಾದ ಅನುಭವಗಳು ಅಥವಾ ಅಹಿತವಾದ ನೆನಪುಗಳು ಇವುಗಳ ಸಂಗ್ರಹಣೆಗಾರ ಮಿದುಳಿನಲ್ಲಿ ಏನಾದರೂ ಭಿನ್ನವಾದ ಸಂಸ್ಕರಣೆ ಇದೆಯೇನು? ನಾವು ಆಶಾವಾದ, ಸುಖ, ಸಂತೋಷ, ನಗು, ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಪೇರಿಸಿಕೊಳ್ಳುತ್ತೇವೋ ಅಥವಾ ನಿರಾಶೆ, ದುಃಖ, ಅಳು ಮೊದಲಾದವುಗಳನ್ನು ಒಂದು ಕಡೆ ಒಟ್ಟುಗೂಡಿ ಮುನ್ನಡೆಯುತ್ತೇವೋ ಯಾರು ಬಲ್ಲರು?

ಇದು ಇಂದು-ನಿನ್ನೆಯ ಸತ್ಯವಷ್ಟೇ ಅಲ್ಲ, ನನ್ನ ಯಾವತ್ತಿನ ಅನುಭವವೂ ಹೌದು; ಈ ಕ್ಷಣದಲ್ಲಿನ ನಮ್ಮ ಅಗತ್ಯಗಳು ಎಂದಿಗೂ ಮಲತಾಯಿ ದೋರಣೆಗಳಿಗೆ ಒಳಪಟ್ಟು ಮನಸ್ಸು ಯಾವಾಗಲೂ ಮುಂಬರುವ ಕಾಲಮಾನದ ಬಗ್ಗೆ ಹೆಚ್ಚು ಸ್ಪಂದಿಸುತ್ತದೆ. ನಾವು ಆಧುನಿಕ ಬದುಕಿನ ಏನೇನೋ ಗೊಂದಲಗಳಲ್ಲಿ ಮುಂಬರುವ ದಿನಗಳ ಬಗ್ಗೆ ವಿಸ್ತಾರವಾದ ಯೋಜನೆಗಳನ್ನು ರೂಪಿಸುವ ಸಂಕೀರ್ಣದಲ್ಲಿ ತೊಡಗಿಕೊಂಡು ಪ್ರಸ್ತುತ ಸ್ಥಿತಿಯನ್ನು ಭೂತ(ಕಾಲ)ರಾಯನಿಗೆ ಬಲಿಕೊಡುತ್ತಾ ಹೋಗುತ್ತೇವೆ. ’ಇಂದು’ ಎನ್ನುವ ಹಲವಾರು ಉಗಿಬಂಡಿಯ ಡಬ್ಬಿಗಳು ಅನತಿ ದೂರದವರೆಗೆ ಹಾಸಿದ ಕಂಬಿಗಳ ಮೇಲೆ ಓಡುತ್ತಾ ನಿನ್ನೆಗಳಾಗಿ ಹಿಂದೆ ಸರಿಯುತ್ತಾ ಹೋದಂತೆ ಮಾತ್ರ, ಮುಂದೆ ಅಥವಾ ’ನಾಳೆ’ ಎನ್ನುವ ಅವಕಾಶ ಬರುತ್ತದೆ. ಅಗಮ್ಯವಾದ ನಾಳೆಗಳಲ್ಲಿ ಸಣ್ಣ ಪ್ರಮಾಣದ ’ಇಂದು’ ನಗಣ್ಯವಾಗುತ್ತದೆ.

ಎಂಥಾ ಪ್ರಖರವಾದ ಸೂರ್ಯನೂ ಸಹ ಒಂದಲ್ಲ ಒಂದು ದಿನ ಸತ್ತು ಹೋಗುತ್ತಾನಂತೆ. ಸಂಜೆ ಇನ್ನೂ ಹೊಳಪು ಕಳೆದುಕೊಳ್ಳದ ಅಲ್ಲಲ್ಲಿ ನಕ್ಷತ್ರಗಳನ್ನು ಚದುರಿಕೊಂಡು ಮುಸ್ಸಂಜೆಯಲ್ಲಿ ಮನೆಯ ಮುಂದಿನ ಅಂಗಳದಲ್ಲಿ ನೀರೆರಚಿ ಚಿತ್ರ ಬರೆದಂತೆ ಹರವಿಕೊಂಡಿದ್ದ ಆಕಾಶವನ್ನು ನೋಡಿದಾಗ ದೂರದ ಸಂಬಂಧಿಯೊಬ್ಬರು ದಿಢೀರನೆ ಪ್ರತ್ಯಕ್ಷವಾದ ಅನುಭವ ಬಂತು. ನಮ್ಮ ವ್ಯಸ್ತ ಬದುಕಿನಲ್ಲಿ ನಾವು ನೋಡೋದೇನಿದ್ದರೂ ನಮ್ಮ ಸುತ್ತಮುತ್ತಲು ಹರವಿದ ಸಣ್ಣಪುಟ್ಟ ಪರದೆಗಳು - ಕಿರುತೆರೆಗಳು, ಅನತಿ ದೂರದಲ್ಲಿ ಅಮಿತವಾಗಿ ಹರಡಿದ ಆ ವಿಶಾಲ ಪರದೆಯನ್ನು ನೋಡಿ ಅದೆಷ್ಟು ದಿನವಾಗಿತ್ತೋ ಎನ್ನುವ ಸೋಜಿಗದ ಜೊತೆಗೆ ಈ ನಕ್ಷತ್ರಗಳೂ ಒಂದಲ್ಲ ಒಂದು ಆ ಹಳದಿ ಎಲೆಯಂತೆ ಉದುರುತ್ತಾವೇನೂ ಎನ್ನಿಸದೆಯೂ ಇರಲಿಲ್ಲ. ನಿಶ್ಶಬ್ದದ ನಡುವೆ ಎದ್ದು ಬರುವ ಸಂಗೀತದ ಅಲೆಯಂತೆ ಸೂರ್ಯ-ಮೋಡಗಳಿಲ್ಲದ ನೀಲಾಕಾಶದಲ್ಲಿ ಅಲ್ಲಲ್ಲಿ ಮಿಂಚುವ ನಕ್ಷತ್ರಗಳು ತಮ್ಮದೇ ರಾಗದಲ್ಲಿ ತೊಡಗಿಕೊಂಡಿದ್ದವು. ನಮ್ಮನ್ನು ಸುತ್ತಿಕೊಂಡಿರುವ ಗೋಲಾಕಾರದ ಎಲ್ಲ ಅವಕಾಶಗಳಲ್ಲಿ ಆ ನಕ್ಷತ್ರಗಳು ನನ್ನಿಂದ ಎಷ್ಟು ದೂರವಿರಬಹುದು ಎಂಬ ಸರಳರೇಖೆಯ ಪ್ರಶ್ನೆಯನ್ನು ಹಾಕುವಷ್ಟು ಮನಸ್ಸು ಕ್ಷುಲ್ಲಕವಾಗಲಿಲ್ಲ, ಬದಲಿಗೆ ಸುತ್ತಲಿನಲ್ಲಿ ಎಲ್ಲವೂ ಸುತ್ತಿಕೊಂಡಿರುವಾಗ ನೇರದ ನೆರವೇಕೆ ಎಂದು ಜಗಳಕಾಯದೇ ಸುಮ್ಮನಾದ ಹಠವಾದಿಯಂತಾಯಿತು.

ಮುಂಬರುವ ನಾಳೆಗಳ ಪ್ರಶಂಸೆಗೋಸ್ಕರ ನಾವು ಇಂದನ್ನು ಬಲಿಕೊಡುತ್ತಾ ಇದ್ದೇವೇನೋ ಎಂದು ಯೋಚಿಸಿಕೊಳ್ಳುವಷ್ಟರಲ್ಲಿ ಮನಸ್ಸು ಒಂದು ಕಡೆ ಅರ್ಧ ದಾರಿ ಸವೆಸಿ ಮುಂದೆ ಎಲ್ಲಿ ಹೋಗಬೇಕು ಅಥವಾ ಹೋಗಬಾರದು ಎಂದು ಗೊಂದಲಕ್ಕೆ ಬಿದ್ದ ಪ್ರವಾಸಿಯಾದಂತಾಯಿತು. ಚಿಕ್ಕ-ಚಿಕ್ಕ ತೆರೆಗಳ ಮರೆಯಲ್ಲಿ, ಸಣ್ಣ-ಪುಟ್ಟವುಗಳಿಗೆ ಸ್ಪಂದಿಸಿ ಸೊರಗುವ ನಾವು ದೊಡ್ಡದರುಗಳ ಬಗ್ಗೆ ಆಲೋಚಿಸುವುದಾದರೂ ಎಂದು? ಈ ಇವತ್ತಿನ ದಿನದಲ್ಲಿ ಬದುಕುತ್ತ, ಈ ಘಳಿಗೆಯ ಮಹತ್ವವನ್ನು ಮೆರೆಯುವ ಒಂದು ಸಂಸ್ಕೃತಿಯ ದಾರಿಯಲ್ಲಿ, ನಿನ್ನೆ-ಇಂದು-ನಾಳೆಗಳ ಚೀಲಗಳ ಹೆಗಲಿಗ್ಯಾವಾಗಲೂ ಏರಿಸಿಕೊಂಡು ಬದುಕು ನೂಕಿದಂತೆ ಓಡುತ್ತಿರುವಾಗ ಉಬ್ಬಸ ಬರದೇ, ಆಯಾಸವಾಗದೇ ಇನ್ನೇನಾದೀತು?

Tuesday, July 27, 2010

ಶಿಕಾರಿಪುರ ಹರಿಹರೇಶ್ವರ

ಶಿಕಾರಿಪುರ ಹರಿಹರೇಶ್ವರ...ಈ ಹೆಸರನ್ನು ನೆನದಾಗಲೆಲ್ಲ ಎಷ್ಟೊಂದು ಆತ್ಮೀಯ ನೆನಪುಗಳು ನಮ್ಮ ಸುತ್ತ ಸುಳಿದಾಡುತ್ತವೆ, ಧ್ವನಿ ಗದ್ಗದಿತವಾಗುತ್ತದೆ, ಭಾವನೆಗಳ ಕೋಡಿ ಕಿತ್ತೇಳುತ್ತದೆ. ಹಿಂದಿನ ಅನೇಕಾನೇಕ ಒಡನಾಟಗಳ ಸಾಂಗತ್ಯದಲ್ಲಿ ಬೆಳೆದುಬಂದ ಸಂಬಂಧವನ್ನಾಗಲೀ ಮಧುರ ನೆನಪುಗಳನ್ನಾಗಲೀ ಬುಡಸಹಿತ ಕಿತ್ತೊಗೆಯುವ ಶಕ್ತಿ ಸಾವು ಎನ್ನುವ ಎರಡಕ್ಷರದ ಪದಕ್ಕಂತೂ ಖಂಡಿತ ಇಲ್ಲ ಎನ್ನುವ ಧೋರಣೆ ನನ್ನ "ಅಂತರಂಗ"ದ್ದು ಇತ್ತೀಚಿನ ದಿನಗಳಲ್ಲಿ.

ಹಿಂದೆ ಡಿ.ಆರ್. ನಾಗರಾಜ್ ತೀರಿಕೊಂಡಾಗ ’ಬಣ್ಣದ ವೇಷ ಅಟ್ಟವನೇರಿ...’ ಎಂಬ ಕವನವನ್ನು ಕಂಬಾರರು ಬರೆದಿದ್ದರು, ಸದಾ ಅವಿರತ ದುಡಿದ ಹರಿಹರೇಶ್ವರ ಅವರಿಗೂ ಅನ್ವಯಿಸುವ 'ಈಗಲಾದರೂ ವಿಶ್ರಾಂತಿ ತಗೋ ಮಿತ್ರಾ...' ಎನ್ನುವ ಆ ಕವನದ ಸಾಲುಗಳು ಥಟ್ಟನೆ ನೆನಪಿಗೆ ಬಂದವು.

ನಮ್ಮ ಅನಿವಾಸಿ ಕನ್ನಡಿಗರ ಪಾಲಿಗೆ ಹರಿಹರೇಶ್ವರ ಅವರು ಯಾವತ್ತೂ ಸಂಪರ್ಕಿಸಬಹುದಾದ ಪರಾಮರ್ಶಕರಾಗಿದ್ದರು. ಕೆಲವು ವರ್ಷಗಳ ಹಿಂದೆ ’ಉಗಾದಿ-ಯುಗಾದಿ’ ಎನ್ನುವ ಪದಬಳಕೆಯ ವ್ಯಾಪ್ತಿ ವ್ಯುತ್ಪತ್ತಿಯಿಂದ ಹಿಡಿದು, ಇತ್ತೀಚಿನ ’ಸಿಂಚನ’ ಎಂದರೆ ಏನು ಎನ್ನುವ ನನ್ನ ಪ್ರಶ್ನೆಗೆ ತತ್‌ಕ್ಷಣ ಯಾವುದೇ ಪುಸ್ತಕದ ಸಹಾಯವಿಲ್ಲದೇ, ತಮ್ಮ ನೆನಪಿನ ಶಕ್ತಿಯಿಂದಲೇ ಈ ಕೆಳಗಿನ ವಾಕ್ಯಗಳನ್ನು ಇ-ಮೇಲ್ ಮೂಲಕ ಕಳುಹಿಸಿದ್ದರು.

"...ಸಿಂಚನ ಪದವನ್ನು ಪ್ರೋಕ್ಷಣ, ಚಿಮುಕಿಸುವುದು, ಸಿಂಪಿಸುವುದು-- ಮೆಲ್ಲಗೆ ಚೆಲ್ಲುವುದು -ಎಂಬ ಅರ್ಥದಲ್ಲಿ ಸಂಸ್ಕೃತ ಕವಿಗಳು (ಉದಾಹರಣೆಗೆ, ಮಾಘ ಕವಿ ಕಿರಾತಾರ್ಜುನೀಯ ೮:೩೪, ೮:೪೦ ರಲ್ಲಿ; ಕಾಳಿದಾಸ ಮೇಘದೂತ ೧:೨೬ ದಲ್ಲಿ ) ಬಹಳ ಹಿಂದೆಯೇ ಬಳಸಿದ್ದಾರೆ.

"ಸಿಂಪಡಿಸು" ಎಂದರೆ ಸಿಂಚನವೇ. ಅದರ ಇನ್ನೊಂದು ರೂಪ "ಸಿಂಬಡಿಸು" ಅದಕ್ಕೆ ಈ ಸ್ವಾರಸ್ಯಕರ ಉದಾಹರಣೆ ನೋಡಿ:
"ಗಂಡ ಹೆಂಡರ ಮಾತು ಒಂದೆ ಹಾಸಿಗೆ ಮ್ಯಾಲ; ಗಂಧ ಸಿಂಬಡಿಸಿ ನಗತಾಳ ನನ ತಮ್ಮ, ಗಂಗಿ ನಿನಗೆಲ್ಲಿ ದೊರೆತಾಳ!"" (ಗರತಿಯ ಹಾಡು ೫೧)
ಸಿಂಪಿಣಿ, ಸಿಂಪಣಿ, ಸಿಂಪಣಿಗೆ, ಸಿಂಪಣಿಯಾಡು, ಸಿಂಪಣಿಗೆಗೊಡು, ಸಿಂಪಿಸು- ಸಿಂಪಡಿಸು- ಇತ್ಯಾದಿ ವಿವಿಧ ರೂಪಗಳು ಕನ್ನಡ ಕಾವ್ಯಗ್ರಂಥಗಳಲ್ಲಿ ಹಲವೆಡೆ ಬರುತ್ತವೆ. ಇವೆಲ್ಲಕ್ಕೂ ಸಿಂಚನ- ವೇ ಮೂಲ ಧಾತು ಮತ್ತು ಅರ್ಥ. "

ನಾನು ಕುತೂಹಲಿತನಾಗಿ ಇಷ್ಟೊಂದು ವಿವರವಾಗಿ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದ್ದಕ್ಕೆ, ಕಿರಾತಾರ್ಜುನೀಯ, ಮೇಘದೂತಗಳನ್ನು ಬೇಕಾದಷ್ಟು ಸಾರಿ ಓದಿ, ಇವೆಲ್ಲವೂ ನೆನಪಿನಲ್ಲಿ ಚೆನ್ನಾಗಿವೆ ಎಂದಿದ್ದರು.

ಹೀಗೆ ಯಾವೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಅದರಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ತಮ್ಮ ಕೈಲಾದದ್ದಕ್ಕಿಂತಲೂ ಹೆಚ್ಚಿನದನ್ನು ಮಾಡುವುದು ಅವರ ಶೈಲಿ ಎನ್ನುವುದಕ್ಕಿಂತ, ಹಾಗಿರುವುದನ್ನೇ that's him - ಎನ್ನಬಹುದು.
ನಾವು ಅನಿವಾಸಿ ಕನ್ನಡಿಗರು, ನಮ್ಮ ಪದಭಂಡಾರ, ನಮ್ಮ ಹಳವಂಡಗಳು ದಿನೇದಿನೇ ಒಣಗಿ ಹೋಗೋ ನೀರು ತುಂಬಿದ ಹೊಂಡವಾಗಿರುವ ಹೊತ್ತಿನಲ್ಲಿ ನಮ್ಮ ಸಂಕಷ್ಟಗಳಿಗೆ ದೂರದಿಂದ ಹರಿಹರೇಶ್ವರ ತಮ್ಮ ಎಂದೂ ಬತ್ತದ ಸಪೋರ್ಟನ್ನು ಕೊಟ್ಟವರು. ಹರಿ ಅವರು ತಮ್ಮ ಸಮಯವನ್ನು ಹೇಗೆ ವ್ಯಯಿಸುತ್ತಾರೆ, ಎಷ್ಟೊಂದು ಪ್ರಾಜೆಕ್ಟುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಲ್ಲ ಎಂದು ನಾನು ಆಶ್ಚರ್ಯ ಪಡುವ ಹೊತ್ತಿಗೇ ಅವರು ತೊಡಗುವ ಇನ್ನೊಂದು ಪ್ರಾಜೆಕ್ಟಿಗೂ ಒಬ್ಬ ತಂದೆ ತನ್ನ ಮಕ್ಕಳ ನಡುವೆ ಸಮಪ್ರೀತಿಯನ್ನು ಹಂಚಿಕೊಂಡಂತೆ ಹಂಚಿಕೊಳ್ಳುವವರು....ಹೀಗೆ ಏನೇನೆಲ್ಲ ಬರೆದರೂ ಅದು ಇತಿಹಾಸವಾಗುತ್ತದೆ, ಹರಿ ಅವರ ಜೀವನಶೈಲಿಯ ಒಂದು ಸಣ್ಣ ತುಣುಕಿನ ಕಿರುಪರಿಚಯವಾಗುತ್ತದೆ.

ಹರಿ ಅವರ ಆದರ್ಶ, ಅವರ ಅಗಾಧ ಕನ್ನಡ ಪ್ರೇಮ ಅದಕ್ಕೆ ಹೊಂದುವ ಸೇವಾ ಮನೋಭಾವ, ಕರ್ಮಠತನ, ಕನ್ನಡಿಗನ ಅನುಭೂತಿಯಲ್ಲಿ ಪೂರ್ವ-ಪಶ್ಚಿಮಗಳ ಪರಿಕಲ್ಪನೆ ಹಾಗೂ ಅನುಭವ, ಅವರು ಹೊರತಂದ ಹಲವಾರು ಹೊತ್ತಿಗೆಗಳು, ಗ್ರಂಥ ಸಂಗ್ರಹ, ಎಲ್ಲಕ್ಕಿಂತ ಮಿಗಿಲಾಗಿ ಹಿರಿಯ-ಕಿರಿಯರೆಲ್ಲರಿಗೂ ದೊರಕುವ ’ಸ್ನೇಹ’ - ಇವೆಲ್ಲವನ್ನು ಕಳೆದುಕೊಂಡು ನಾವು ಕನ್ನಡಿಗರು ಬಡವರಾಗಿದ್ದೇವೆ. ನಮ್ಮ ಇ-ಮೇಲ್ ಇನ್‌ಬಾಕ್ಸ್‌ಗೆ ಇನ್ನು ಮುಂದೆ "ಸ್ನೇಹದಲ್ಲಿ ನಿಮ್ಮ,..." ಎಂದು ಸಹಿ ಇರುವ ಅವರ ಸಂದೇಶಗಳು ಬರದೇ ಸೊರಗುತ್ತದೆ.

೨೦೦೦ದಲ್ಲಿ ನಡೆದ "ಅಕ್ಕ" ಸಮ್ಮೇಳನಕ್ಕೆ ಸಾಕಷ್ಟು ದುಡಿದದ್ದರಿಂದ ಹಿಡಿದು, ಹತ್ತು ವರ್ಷಗಳ ನಂತರ ನಡೆಯುವ ಮುಂಬರುವ ಸಮ್ಮೇಳನದಲ್ಲೂ ಹರಿಯವರ ಸಹಾಯ ಹಸ್ತವಿದೆ. ತಮ್ಮ ಹೆಸರನ್ನು ಹಲವಾರು ತಂಡದ ಪರವಾಗಿ ನಮೂದಿಸಲಿ ಬಿಡಲಿ, ತಾವು ತೊಡಗಿಕೊಂಡ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿರಿಮೆ ಹಾಗೂ ಇತಿಹಾಸ ಅವರದು. ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ನಾವು ಎಂದಿಗಿಂತಲೂ ಹೆಚ್ಚು ನಮ್ಮನ್ನು ನಾವು ತೊಡಗಿಸಿಕೊಂಡು ಮುಂಬರುವ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟು ಸಮ್ಮೇಳನವನ್ನು ಎಲ್ಲಾ ರೀತಿಯಿಂದಲೂ ಯಶಸ್ಸುಗೊಳಿಸುವುದೇ ನಾವು ಅವರಿಗೆ ಕೊಡುವ ಗೌರವ. ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಮ್ಮನ್ನು ನಾವು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಂದ ನಾವು ಕಲಿಯಬಹುದಾದ ನಡವಳಿಕೆ.

(ಚಿತ್ರಕೃಪೆ: ದಟ್ಸ್‌ಕನ್ನಡ.ಕಾಮ್)

Thursday, June 17, 2010

ಗೋಲ್ಡ್ ಫಿಶ್ - 2010

 

ನಮ್ಮ ಮನೆಯಲ್ಲಿ ಒಂದು ಚಿಕ್ಕ ಅಕ್ವೇರಿಯಂ, ಅದರಲ್ಲಿ ೨೦೦೩ ರಿಂದ ನೆಲೆ ನಿಂತಿದ್ದ ಒರ್ಯಾಂಡಾ (oranda) ಜಾತಿಯ ಗೋಲ್ಡ್ ಫಿಶ್ ಮೊನ್ನೆ ಸತ್ತು ಹೋಯಿತು.  ಒಂದು ಸಾಕು ಪ್ರಾಣಿಯ ಕುರಿತು, ಅದರ ನೆಲೆಗೆ ಹೊಂದಿಕೊಂಡ ನಮ್ಮ ನಡವಳಿಕೆಗಳ ಕುರಿತು ಈ ಲೇಖನ.

 

Gold fish 2010

***

ಮಕ್ಕಳಿದ್ದವರ ಮನೆಯಲ್ಲಿ ಈ ಪ್ರಶ್ನೆ ಬಂದೇ ಬರುತ್ತೆ - ನಮ್ಮ ಮನೆಯಲ್ಲೂ ಬೇರೆ ಬೇರೆ ಸಾಕು ಪ್ರಾಣಿಗಳೇಕಿಲ್ಲ? ಎಂಬುದಾಗಿ.  ಈ ನಿಟ್ಟಿನಲ್ಲಿ ಹೆಚ್ಚಿನವರು ಒಂದು ಬೆಕ್ಕನ್ನೋ ಅಥವಾ ನಾಯಿಯನ್ನೋ ಸಾಕುವುದು ಸಾಮಾನ್ಯ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮೊಲವನ್ನೋ, ಗಿಣಿಯನ್ನೋ ಇಟ್ಟುಕೊಂಡಾರು.  ಕೆಲವರು ಎಲ್ಲರನ್ನು ಮೀರಿ exotic ಪ್ರಾಣಿಗಳಾದ ಚೇಳು, ಹಾವು ಮೊದಲಾದ ಸರೀಸೃಪಗಳನ್ನು ಪೋಷಿಸಿಯಾರು.  ಆದರೆ ಇವೆಲ್ಲಕ್ಕಿಂತ ಸುಲಭವಾದ ವಿಧಾನವೊಂದಿದೆ, ಅದು ಮನೆಯಲ್ಲೇ ಅವರವರ ಸಾಮರ್ಥ್ಯ ಅನುಕೂಲಗಳಿಗೆ ತಕ್ಕಂಥ ಫಿಶ್ ಟ್ಯಾಂಕ್ ಒಂದನ್ನು ಇಟ್ಟು ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು.

ನಮ್ಮ ಮನೆಯಲ್ಲಿ ಸುಮಾರು ೨೦೦೧ ರಿಂದ ಹೀಗೇ ನೋಡಿಕೊಂಡು ಬಂದ ಐದು ಗ್ಯಾಲನ್ ನೀರು ಹಿಡಿಯುವ ಮೀನಿನ ಒಂದು ಚಿಕ್ಕ ಟ್ಯಾಂಕ್ ಇದೆ, ಅದರಲ್ಲಿ ಗೋಲ್ಡ್ ಫಿಶ್‌ಗಳನ್ನು ಬಿಟ್ಟು ಮತ್ತೇನನ್ನೂ ನಾವು ಸಾಕಿ ನಮಗೆ ಗೊತ್ತಿಲ್ಲ.  ನಮ್ಮ ಪ್ರಯೋಗದ ಮೊದ ಮೊದಲು ಅನೇಕ ಮೀನುಗಳು ಸಾಯುತ್ತಿದ್ದವು: ಪಿ.ಎಚ್. ಅಮೋನಿಯಾ, ಕ್ಲೋರೀನ್, ನೈಟ್ರೇಟ್, ನೈಟ್ರೈಟ್ ಮೊದಲಾದ ಕೆಮಿಕಲ್ ವಸ್ತುಗಳಲ್ಲಿ ಯಾವುದೇ ಏರುಪೇರಾದರೂ ಮೀನುಗಳು ಗೊಟಕ್.  ಹೀಗೆ ಜೋಡಿಸಿಟ್ಟ ಫಿಶ್ ಟ್ಯಾಂಕ್‌ಗೆ ನಾವು ಹೊಂದಿಕೊಳ್ಳಲು ನಮಗೆ ಸುಮಾರು ಒಂದು ವರ್ಷವೇ ಬೇಕಾಯಿತು, ಜೊತೆಗೆ ಅನೇಕ ಮೀನುಗಳನ್ನು ನಮ್ಮ ಪ್ರಯೋಗಗಳಿಗೆ ಬಲಿಕೊಟ್ಟದ್ದೂ ಆಯಿತು.  ಹೀಗೆ ನಡೆದು ಬಂದ ಫಿಶ್ ಮ್ಯಾನೇಜ್‌ಮೆಂಟ್ ಅನುಭವದ ಕೊನೆಗೆ ಬಂದು ಮುಟ್ಟಿದಾಗ ಉಳಿದವು ಎರಡು ಗೋಲ್ಡ್ ಫಿಶ್‌ಗಳು - ಅದರಲ್ಲಿ ಒಂದು ಬಿಳಿ ಬಣ್ಣದ್ದು, ಮತ್ತೊಂದು ಕಿತ್ತಳೆ ಬಣ್ಣದ್ದು.  ಎರಡೂ ಕೂಡ ಚೆನ್ನಾಗಿ ರೆಕ್ಕೆಗಳನ್ನು ಉದ್ದುದ್ದವಾಗಿ ಬೆಳೆಸಿಕೊಂಡು ಟ್ಯಾಂಕ್‌ನ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಈಜಾಡುವುದನ್ನು ನೋಡುವುದೇ ಎಂಥವರಿಗೂ ಮುದಕೊಡುತ್ತಿತ್ತು.

ನಮ್ಮ ಚಲನವಲನಗಳು, ವೆಕೇಷನ್ನುಗಳು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಬದಲಾವಣೆ ಮಾಡುವುದು ಇವೆಲ್ಲ ನಮ್ಮ ಮನೆಯ ಫಿಶ್ ಟ್ಯಾಂಕ್‌ನ ನಿವಾಸಿಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿತ್ತು.  ನಾವು ಮೂರು ವಾರ ಭಾರತಕ್ಕೆ ವೆಕೇಷನ್ನ್ ಹೊರಟರೆ ನಮ್ಮ ಬದಲಿಗೆ ಬೇರೆ ಯಾರಾದರೂ ನಮ್ಮ ಮನೆಗೆ ಬಂದು ಈ ಮೀನುಗಳಿಗೆ ಊಟ ಹಾಕುವ ವ್ಯವಸ್ಥೆಯನ್ನು ಮಾಡಿ ಹೋಗುತ್ತಿದ್ದೆವು, ಅಥವಾ ಈ ಮೀನಿನ ಟ್ಯಾಂಕ್ ಅನ್ನೇ ಅವರ ಮನೆಯಲ್ಲಿಟ್ಟು ನಾವು ಬರುವ ತನಕ ಜೋಪಾನವಾಗಿ ಕಾಯ್ದುಕೊಂಡಿರುವಂತೆ ಮಾಡಿದ್ದೂ ಇದೆ.  ಒಟ್ಟಿನಲ್ಲಿ ಒಂದು ಕಡೆ ಸರಿಯಾಗಿ ನೆಲೆ ನಿಂತ ಇಕೋ ಸಿಸ್ಟಂ ಅನ್ನು ಮತ್ತೊಂದು ಕಡೆ ಪ್ರತಿಷ್ಠಾಪಿಸುವುದು ಅಷ್ಟು ಸುಲಭದ ಮಾತಂತೂ ಅಲ್ಲ.  ಈ ನಿಟ್ಟಿನಲ್ಲಿ ನನ್ನ ಸಹೋದ್ಯೋಗಿಗಳಿಗೆ ಹಾಗೂ ಸ್ನೇಹಿತರಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಿದೆ.

ನಮ್ಮ ಮನೆಯಲ್ಲಿ ಇದ್ದ ಎರಡು ಮೀನುಗಳನ್ನು ಅವುಗಳ ಟ್ಯಾಂಕ್ ಹಾಗೂ ಪರಿಕರಗಳ ಸಮೇತ ವರ್ಜೀನಿಯಾದಿಂದ ನ್ಯೂ ಜೆರ್ಸಿಗೆ ೨೫೦ ಮೈಲು ದೂರ ತಂದು ನಮ್ಮ ಮನೆಯ ಸಾಮಾನುಗಳ ಜೊತೆಗೆ ಅವುಗಳನ್ನು ಜೋಡಿಸುವಾಗ ಆದ ಕಷ್ಟ ಅಷ್ಟಿಷ್ಟಲ್ಲ.  ಹೀಗೆ ಮಾಡಿ ಅನೇಕ ತಿಂಗಳುಗಳ ತರುವಾಯ ಬಿಳಿಯ ಮೀನು ಯಾವುದೋ ಖಾಯಿಲೆಗೆ ಬಲಿಯಾಗಿ ಸತ್ತು ಹೋದ ಮೇಲೆ ಉಳಿದದ್ದು ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಒಂದೇ.  ಎರಡು ಮೂರು ಮನೆಗಳನ್ನು ತಿರುಗಿ ಬಂದ ಮೇಲೆ ಅದು ಟ್ಯಾಂಕ್‌ನಲ್ಲಿ ತಾನೊಂದೇ ಪ್ರಾಬಲ್ಯವನ್ನು ಮೆರೆಯುತ್ತಾ ತಂದಾಗ ಎರಡು ಅಂಗುಲ ಉದ್ದ ಇದ್ದದ್ದು ದಿನೇ ದಿನೇ ಬೆಳೆದು ಸುಮಾರು ಆರು ಅಂಗುಲ ಉದ್ದಕ್ಕೂ ಹೆಚ್ಚು ದೊಡ್ಡದಾಯಿತು.  ಕಳೆದ ವರ್ಷ ಡಿಸೆಂಬರ್ ಸಮಯದಲ್ಲಿ ಸ್ನೇಹಿತ ಗಾರ್‌ಫೀಲ್ಡ್ ಮನೆಯಲ್ಲಿ ನಾವು ವೇಕೇಷನ್ನಿಗೆ ಹೋದಾಗ ಮೊಕ್ಕಾಂ ಹೂಡಿ ಜನವರಿಯಿಂದ ಮೇ ವರೆಗೂ ಚೆನ್ನಾಗಿಯೇ ಇತ್ತು.

ಮೇ ತಿಂಗಳ ಮೊದಲ ವಾರದಲ್ಲಿ ಅದರ ಲವಲವಿಕೆ ಕುಂಠಿತಗೊಂಡಿತು, ಅದು ಆಹಾರ ಸೇವಿಸುವುದನ್ನು ಸಂಪೂರ್ಣ ಬಿಟ್ಟು ಟ್ಯಾಂಕಿನ ಬುಡದಲ್ಲಿ ಎಲ್ಲೆಂದರಲ್ಲಿ ಅಡ್ಡಾ-ದಿಡ್ಡಿ ಬಿದ್ದುಕೊಂಡಿರುತ್ತಿತ್ತು.  ಅದು ಇನ್ನೇನು ಸರಿ ಹೋದೀತು ಎಂದುಕೊಂಡವನಿಗೆ ಮುಪ್ಪಿನಿಂದ ಅದು ದಿನೇದಿನೇ ಕುಗ್ಗತೊಡಗಿದ್ದು ಗಮನಕ್ಕೆ ಬಂದು ಈ ಮೀನಿನ ಬದುಕಿಗೆ ಯಾವ ರೀತಿಯ ಅಂತ್ಯವನ್ನು ಹಾಡಬೇಕು ಎಂದು ಗೊತ್ತಾಗದೆ ಒಂದೆರೆಡು ಬಾರಿ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಎಲ್ಲವನ್ನು ಸ್ವಚ್ಛಗೊಳಿಸಿಟ್ಟು ಹಾಗಾದರೂ ಮೀನಿನ ಲವಲವಿಕೆ ಮರುಕಳಿಸಲಿ ಎಂದುಕೊಂಡರೆ ಹಾಗಾಗಲಿಲ್ಲ.

ನನ್ನ ಸ್ನೇಹಿತರು ಹಾಗೂ ಹಿರಿಯರು ಮಾರ್ಗದರ್ಶನ ಮಾಡಿದ ಹಿನ್ನೆಲೆಯಲ್ಲಿ ಅದನ್ನು ದೊಡ್ಡ ಟ್ಯಾಂಕಿನಿಂದ ಸಣ್ಣದೊಂದು ಗಾಜಿನ ಜಾಡಿಗೆ ಬದಲಾಯಿಸಿ ಅದರ ಬದಲಿಗೆ ಬೇರೆ ಹೊಸ ಮೀನುಗಳನ್ನು ತಂದು ಹಾಕುವುದೆಂದು ಯೋಚಿಸಿ ಹಾಗೆ ಮಾಡಲನುವಾದೆ.  ಅಂಗಡಿಗೆ ಹೋಗಿ ಉತ್ಸಾಹದಿಂದ ಪುಟಿಯುತ್ತಿದ್ದ ಅವೇ ಒರ್ಯಾಂಡಾ (oranda) ಜಾತಿಯ ಥರಾವರಿ ಬಣ್ಣಗಳ ನಾಲ್ಕು ಮೀನುಗಳನ್ನು ತಂದೆ.  ಒಂದು ಕಡೆ ಹೊಸ ಮೀನುಗಳನ್ನು ಅವುಗಳನ್ನು ತಂದ ಪ್ಲಾಸ್ಟಿಕ್ ಕವರ್ ಸಮೇತ ಟ್ಯಾಂಕಿನ ನೀರಿನ ತಾಪಮಾನಕ್ಕೆ ಹೊಂದುಕೊಳ್ಳಲು ಬಿಟ್ಟು, ಮತ್ತೊಂದು ಸಣ್ಣ ಗಾಜಿನ ಜಾಡಿಯನ್ನು ಅನುಗೊಳಿಸಿದೆ.  ಅದರಲ್ಲಿ ಹಳೆಯ ಮೀನನ್ನು ಹುಷಾರಾಗಿ ಇಟ್ಟೆ, ನಾನು ತೆಗೆದು ಹಾಕುವಾಗ ಒಂದಿಷ್ಟು ಕೊಸರಾಡಿದ ಮೀನು, ಹೊಸ ಜಾಡಿಯ ತಳದಲ್ಲಿ ನಿಧಾನವಾಗಿ ಉಸಿರಾಡುತ್ತಾ ಬಿದ್ದುಕೊಂಡಿದ್ದು ನೋಡಿ ಕರುಳು ಕಿವುಚಿದಂತಾಯಿತು.  ಅದನ್ನು ಅಲ್ಲಿಗೆ ಬಿಟ್ಟು ಹೊಸ ಮೀನುಗಳನ್ನು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಾಗ ಅವುಗಳಿಗೆ ಒಂದು ಕಡೆ ಸಂಭ್ರಮವೂ ಮತ್ತೊಂದು ಕಡೆ ಹೆದರಿಕೆಯೂ ಸೇರಿಕೊಂಡು ಟ್ಯಾಂಕಿನ ಮೂಲೆ ಮೂಲೆಗಳಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು.  ಸ್ವಲ್ಪ ಹೊತ್ತಿನ ತರುವಾಯ ಅವುಗಳು ತಮ್ಮ ಹೊಸ ವಾತಾವರಣಕ್ಕೆ ಹೊಂದಿಕೊಂಡ ಎಲ್ಲ ಸೂಚನೆಗಳೂ ಕಂಡು ಬಂದು, ಈ ಟ್ಯಾಂಕಿನಲ್ಲಿ ವರ್ಷಾನುಗಟ್ಟಲೆ ಮನೆ ಮಾಡಿದ್ದ ನೆಲೆ ನಿಂತಿದ್ದ ಆ ಮಹಾಶಯನ ಗುರುತು ಪರಿಚಯವೂ ವಾಸನೆಯೂ ಅವುಗಳಿಗೆ ಒಂದಿಷ್ಟು ಇರದಿದ್ದ ಮುಗ್ಧತೆಯಲ್ಲಿ ಜೀವಿಸತೊಡಗಿದವು.

ಇತ್ತ ಸಣ್ಣ ಗಾಜಿನ ಜಾಡಿಯಲ್ಲಿನ ಹಳೆಯ ಮೀನಿನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗದೇ ಅದೇ ದಿನ ರಾತ್ರಿ ಎಷ್ಟೋ ಹೊತ್ತಿಗೆ ಅದರ ಪ್ರಾಣಪಕ್ಷಿ ಹಾರಿ ಹೋಗಿದ್ದು ನಮಗೆಲ್ಲ ನಿಚ್ಛಳವಾಯಿತು.  ನಮಗೆಲ್ಲ ಇಷ್ಟೊಂದು ವರ್ಷ ಫ್ಯಾಮಿಲಿ ಮೆಂಬರಿನಂತಿದ್ದ ಮೀನಿನ ಅಂತ್ಯಕ್ರಿಯೆಗೋಸ್ಕರ ನಾನು ಶವೆಲ್ಲೊಂದನ್ನು ತೆಗೆದುಕೊಂಡು ರಾತ್ರಿ ನಮ್ಮ ಹಿತ್ತಲಿಗೆ ಹೋಗಿ ಸಣ್ಣ ತಗ್ಗನ್ನು ತೆಗೆದು ಅಲ್ಲಲ್ಲಿ ಮಿಡತೆಗಳು ಅಳುತ್ತವೆಯೇನೋ ಎನ್ನುವ ಕಿರುಗುಟ್ಟುವಿಕೆಯ ಹಿನ್ನೆಲೆಯ ನಡುವಿನ ಮೌನದ ಸಹಾಯದಿಂದ ಯಾವೊಂದು ಮಾತನಾಡದೆ ಎರಡು ಮುಷ್ಠಿ ಮಣ್ಣನ್ನು ಕೈಯಿಂದ ಹಾಕಿ ಉಳಿದದ್ದನ್ನು ಶವೆಲ್ಲಿನಿಂದಲೇ ಮುಚ್ಚಿ ಸಂಸ್ಕಾರ ಮಾಡಿದೆ.

ಮರುದಿನ ಇಂಚರ (ನಮ್ಮ ನಾಲ್ಕು ವರ್ಷದ ಮಗಳು) ಅನೇಕ ಬಾರಿ ಹಳೇ ಮೀನು ಎಲ್ಲಿ ಹೋಯಿತು? ಅದು ಏಕೆ ಸತ್ತಿತು? ಸತ್ತಾಗ ಏನಾಗುತ್ತದೆ? ಯಾಕೆ ಹಿತ್ತಲಿನಲ್ಲಿ ಮಣ್ಣು ಮಾಡಿದೆ? ನನ್ನನ್ನೇಕೆ ಕರೆಯಲಿಲ್ಲ? ಎಂದು ಕೇಳಿದ ಅನೇಕಾನೇಕ ಪ್ರಶ್ನೆಗಳಿಗೆ ನನ್ನ ಶಕ್ತಿ ಮೀರಿ ಸರಳವಾಗಿ ಉತ್ತರಿಸಿದ್ದಾಯಿತು.  ನಾವು ಹಳೇ ಮೀನಿಗೆ ಯಾವುದೇ ಹೆಸರನ್ನಿಟ್ಟಿರಲಿಲ್ಲ - Elmo’s world ನಲ್ಲಿ ಬರುವ Dorothyಯ ದೆಸೆಯಿಂದ ಇಂಚರ ಅದನ್ನು ನಮ್ಮ ಮನೆಯ ಡೊರೋತಿ ಅಂದುಕೊಂಡಿದ್ದನ್ನು ಬಿಟ್ಟರೆ, ಅದೇ ಛಾಳಿಯನ್ನು ಮುಂದುವರೆಸಿ ನಾವು ಈ ಹೊಸ ಮೀನುಗಳಿಗೂ ಹೆಸರನ್ನೂ ಇಟ್ಟಿಲ್ಲ.

ಪ್ರತಿ ದಿನ ಆಫೀಸಿನಿಂದ ಬಂದಾಗ ಶೂ ತೆಗೆದು ಅದರ ಸ್ಥಳದಲ್ಲಿಟ್ಟು ನಂತರ ಮಾಡುವ ಕೆಲಸವೇ ಈ ಮೀನಿನ ಟ್ಯಾಂಕಿನ ಲೈಟ್ ಹಾಕಿ ಅವುಗಳಿಗೆ ಪ್ಲ್ಹೇಕ್ ಫುಡ್ಡನ್ನು ಹಾಕುವುದು, ಈ ಹೊಸ ಮೀನುಗಳ ಸಹಾಯದಿಂದ ವರ್ಷಾನುಗಟ್ಟಲೆ ನಡೆದ ಬಂದ ಕಾಯಕ ಇಂದಿಗೂ ಹಾಗೇ ಮುಂದುವರೆದಿದೆ.

***

ಸಾವು-ನೋವಿನ ವಿಚಾರಕ್ಕೆ ಬಂದಾಗ ಅಮೇರಿಕದ ನಮ್ಮ ಅನುಭವ ವ್ಯಾಪ್ತಿ ಕಡಿಮೆಯೇ.  ಬೇರೆ ಯಾರೂ ರಕ್ತ ಸಂಬಂಧಿಗಳಿಲ್ಲದ ಈ ದೇಶದಲ್ಲಿ ಸಾವು ಎನ್ನುವ ಮಹತ್ವಪೂರ್ಣವಾದ ಬದುಕಿನ ಮಜಲಿನ ಅನುಭವ ನಮಗೆ ಭಾರತದಲ್ಲಿ ಇದ್ಧಾಗ ಆಗುವಂತೆ ಇಲ್ಲಿ ಆಗುವುದಿಲ್ಲ.  ನಮ್ಮ ನೆಂಟರು-ಇಷ್ಟರು-ಬಂಧು-ಬಳಗ ಇವರೆಲ್ಲರ ಮದುವೆ ಮುಂಜಿಗಳಿಗೆ, ಕಷ್ಟ-ನಷ್ಟಗಳಿಗೆ ನಾವು ಎಂದಿನ ಸಂವೇದನೆಯನ್ನು ತೋರೋದಿಲ್ಲ.  ಸಾವನ್ನು ಬೇಕು ಎಂದು ಆರಿಸಿಕೊಳ್ಳದಿದ್ದರೂ ಹುಟ್ಟು ತರುವಷ್ಟೇ ಮುಖ್ಯವಾದ ಬದಲಾವಣೆಯನ್ನು ಸಾವೂ ತರಬಲ್ಲದು.  ಈ ನಿಟ್ಟಿನಲ್ಲಿ ಸಾಕು ಪ್ರಾಣಿ ಮೀನಿನ ಸಾವು ಅದರ ಜೊತೆಗಿದ್ದ ನಮ್ಮ ವರ್ಷಾನುಗಟ್ಟಲೆಯ ಬಂಧನವನ್ನು ಕಳಚಿ ಹಾಕುವುದರ ಮೂಲಕ ದೂರದಲ್ಲಿರುವ ನಮಗೆ ಹತ್ತಿರದ ಬಂಧುವನ್ನು ಕಳೆದುಕೊಂಡ ನೆನಪನ್ನು ಎತ್ತಿ ಹಿಡಿಯಿತು.  ಸಾವಿರದ ಮನೆಯಿಂದ ಸಾಸಿವೆ ತರುವ ಪ್ರಯತ್ನವನ್ನು ಇನ್ನೂ ಯಾರಾದರೂ ಮಾಡುತ್ತಿದ್ದರೆ ಆ ದೃಷ್ಟಿಯಲ್ಲಿ ನಾವು ಹೊರಗುಳಿದಿರುವುದು ಸ್ಪಷ್ಟವಾಯಿತು.  ನಮ್ಮಂಥ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಸಣ್ಣ ಅಗಲಿಕೆ ಬದುಕು ಒಡ್ಡುವ ಅನೇಕ ಬದಲಾವಣೆಗಳ ನೆನಪು ಮಾಡುವಲ್ಲಿ ಯಶಸ್ವಿಯಾಯಿತು.  ಜೊತೆಯಲ್ಲಿ ನಮ್ಮ ಸಂಬಂಧಿಗಳ, ಬಂಧು-ಮಿತ್ರರ, ಒಡಹುಟ್ಟಿದವರ ನೋವು-ನಲಿವುಗಳಿಗೆ ಸಕಾಲಕ್ಕೆ ಆಗಿಬರದ ನಾವು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿ ಬಿಟ್ಟೆವೇನೋ ಎನ್ನಿಸಿಬಿಟ್ಟಿತು.