Sunday, July 19, 2009

3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!

ಇದೇನಪ್ಪಾ, ಇತ್ತೀಚೆಗಷ್ಟೇ ಟೆಕ್ನಾಲಜಿ ಜ್ವರದಲ್ಲಿ ಬೆಂದು ಬಳಲಾಡುತ್ತಿರುವ ನಮ್ಮಂಥವರಿಗೆ ’ಅಂತರಂಗ’ದಲ್ಲಿ ನಿವೃತ್ತಿಯ ಬಗ್ಗೆ ಕಿವಿಮಾತೇ ಎಂದು ಹುಬ್ಬೇರಿಸಬೇಡಿ, ಮುಂದೆ ಓದಿ ನೋಡಿ. ಇತ್ತೀಚೆಗೆ ಒಂದಿಷ್ಟು ಕಮ್ಮ್ಯೂನಿಟಿ ಸೇವೆಯ ಹೆಸರಿನಲ್ಲಿ ನನಗೆ ಸೀನಿಯರ್ ಸಿಟಿಜನ್‌ಗಳ ಸೇವೆ ಮಾಡೋ ಭಾಗ್ಯ ಒದಗಿತ್ತು, ಈ ಸಂದರ್ಭದಲ್ಲಿ ಕಮ್ಯೂನಿಟಿ ಸೇವೆ ಮಾಡುತ್ತಲೇ ನಾನು ಮುಂದೆ ನಿವೃತ್ತನಾಗಿ ಇದೇ ಅವಸ್ಥೆಗೆ ಬಂದರೆ ಹೇಗಿರಬಹುದು ಎಂದು ಯೋಚಿಸಿ ಸ್ವಲ್ಪ ರಿಸರ್ಚ್ ಮಾಡಿ ನೋಡಲಾಗಿ ಹಲವಾರು ಅಂಶಗಳು ಹೊರಬಂದವು, ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಈ ಎಕಾನಮಿಯಲ್ಲಿ ನಿವೃತ್ತರಾಗೋ ಮಾತೇ ಬರೋದಿಲ್ಲ, ಆ ಮಾತು ಬಿಡಿ. ಮುಂದೆಯಾದರೂ ಸುಧಾರಿಸೀತು, ಇಲ್ಲವೆಂದಾದರೆ ನಮ್ಮಂಥವರ ಕಷ್ಟ ಯಾರಿಗೂ ಬೇಡ. ಎಷ್ಟೋ ಜನ ರಿಟೈರ್‌ಮೆಂಟ್ ಬದುಕಿಗೆ ಪ್ಲಾನ್ ಮಾಡೋದೇ ಇಲ್ಲ. ರಿಟೈರ್‌ಮೆಂಟ್ ಬದುಕಿನಲ್ಲಿ ಹಣ, ಹೊಣೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಆರೋಗ್ಯದ ಜೊತೆಗೆ ಇಷ್ಟೆಲ್ಲ ದಿನಗಳಲ್ಲಿ ವ್ಯಸ್ತರಾಗಿ ಕೆಲಸ ಮಾಡಿ ಕರ್ಮಜೀವನವನ್ನು ತೇಯ್ದ ನಮಗೆ ಮುಂದೆ ಕಾಲ ಕಳೆಯೋದಕ್ಕೆ ಏನು ಬೇಕು ಏನು ಬೇಡ ಅನ್ನೋದರ ತೀರ್ಮಾನವೂ ಬಹಳ ಮುಖ್ಯ.

ಸರಿ, ಈಗ ಮುತ್ತಿನಂತಹ ಮೂರು ಪ್ರಶ್ನೆಗಳಿಗೆ ಬರೋಣ:
೧. ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಹಾಗೂ ನಿಮಗೆ ಬೇಕಾದ ಹಣದ ಮೊತ್ತವೆಷ್ಟು?
೨. ರಿಟೈರ್ ಆದ ನಂತರ ಹೇಗೆ ಸಮಯವನ್ನು ವ್ಯಯಿಸುತ್ತೀರಿ, ಯಾವ ಯಾವ ಹವ್ಯಾಸಗಳನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸಿಕೊಳ್ಳುತ್ತೀರಿ?
೩. ನಿಮ್ಮ ಕಾಲಾನಂತರ ಯಾರು ಯಾರಿಗೆ ಏನನ್ನು ಬಿಟ್ಟು ಹೋಗುತ್ತೀರಿ?


ಈ ಮೂರು ಪ್ರಶ್ನೆಗಳನ್ನು ವಿಸ್ತರಿಸುವುದಕ್ಕೆ ಮೊದಲು "ILI ಪಾಷಾಣ"ಕ್ಕೆ ಬರೋಣ, ಏನು ಇಲಿ ಪಾಷಾಣ ಇದು ಎಂದು ಬೆರಗಾದಿರೋ, ಸುಲಭವಾಗಿ ನೆನಪಿಗೆ ಬರುವಂತೆ ಸುಮ್ಮನೆ ಒಂದು ಉಪಮೆಯ ಸೃಷ್ಟಿ ಅಷ್ಟೇ:
I: investment risk
L: longevity risk
I: inflation risk


ಈ ಮೇಲೆ ಹೇಳಿದ ಮೂರು ರಿಸ್ಕ್‌ಗಳೇ ಪಾಷಾಣವಿದ್ದ ಹಾಗೆ. ಪ್ರತಿಯೊಬ್ಬರೂ ತಾವು ನಿವೃತ್ತರಾಗಲು ತಯಾರಾಗುತ್ತ ಇದ್ದ ಹಾಗೆ, ಇಪ್ಪತ್ತರ ಹರೆಯದಿಂದ ಎಪ್ಪತ್ತರವರೆಗೆ ಈ ಮೂರು ರಿಸ್ಕ್‌ಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಲೇ ಇರಬೇಕಾಗುತ್ತದೆ. Investment risk ನಲ್ಲಿ ನೀವು ಹೂಡಿದ ಹಣ ನೀವು ರಿಟೈರ್ ಆಗುವ ಹೊತ್ತಿಗೆ ಯಾವುದೋ ಒಂದು ರಿಸೆಷ್ಷನ್ನೋ ಇಲ್ಲಾ ಡಿಪ್ರೆಷ್ಷನ್ನ್ ಚಕ್ರದಲ್ಲಿ ಸಿಕ್ಕು ನರಳುತ್ತಿರಬಹುದು. Longevity risk ಅಂದರೆ ನೀವು ಎಂಭತ್ತು ವರ್ಷ ಬದುಕುತ್ತೀರಿ ಎಂದು ಅದಕ್ಕೆ ತಕ್ಕಂತೆ ಹಣ ಹೂಡಿ ಕೂಡಿ ಹಾಕಿ ಮುಂದೆ ಇಳಿ ವಯಸ್ಸಿನಲ್ಲಿ ನೀವು ತೊಂಭತ್ತು ಆದರೂ ಗೊಟಕ್ ಎನ್ನದೇ ಇರಬಹುದು. Inflation risk ನಲ್ಲಿ ಈಗ ಎರಡು ರುಪಾಯಿ ಅಥವಾ ಡಾಲರ್‌ಗೆ ಸಿಗಬಹುದಾದ ಪದಾರ್ಥ ಮುಂದೆ ಇಪ್ಪತ್ತು ರುಪಾಯಿ ಅಥವಾ ಡಾಲರ್ ಗಿಂತಲೂ ದುಬಾರಿಯಾಗುವುದು.

ಮೊದಲನೆಯ ಪ್ರಶ್ನೆ: ಹೂಡಿಕೆಯ ಹಣಕ್ಕೆ ಅಂಟಿಕೊಂಡ ತೊಂದರೆಗಳು ಯಾವು ಯಾವು? ಇಂಟರ್‌ನೆಟ್ ನಲ್ಲಿ ಹುಡುಕಿದರೆ ಬೇಕಾದಷ್ಟು ರಿಟೈರ್‌ಮೆಂಟ್ ಕ್ಯಾಲ್ಕುಲೇಟರುಗಳು ಸಿಗುತ್ತವೆ, ನಿಮ್ಮ ಈಗಿನ ಆದಾಯ ಹಾಗೂ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ಜೀವನಕ್ಕೆ ಎಷ್ಟು ಬೇಕು ಎಂದು ಅಂದಾಜು ಹಾಕುವುದಕ್ಕೆ. ಅಲ್ಲದೇ, ನಿವೃತ್ತ ಜೀವನದ ಪ್ರತಿವರ್ಷದ ಖರ್ಚಿಗೆ ಎಷ್ಟು ಬೇಕಾಗುತ್ತದೆ ಎನ್ನುವುದರ ಜೊತೆಗೆ ಇಂತಿಷ್ಟು ಹಣದಲ್ಲಿ ಕೇವಲ 4 ಅಥವಾ 5% ಹಣವನ್ನು ಮಾತ್ರ ತೆಗೆಯುವಂತೆ ಬೇಕಾಗುವ ಇಡುಗಂಟನ್ನು ರೂಪಿಸುವ ತಯಾರಿ ಹಾಗು 5% ನ ಮಿತಿಯಲ್ಲಿರುವಂತೆ ಒಂದು ಮೂಲಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಎರಡನೆಯ ಪ್ರಶ್ನೆ: ಸರಿ, ಕಷ್ಟದ ಜೀವನವನ್ನು ಸವೆಸಿ ನಿವೃತ್ತರೇನೋ ಆದಿರಿ, ಮುಂದೆ ಏನು? ದಿನಾ ಕೆಲಸ ಕೆಲಸ ಎಂದು ಗೋಗರೆದು ಹತ್ತಿರ ಬಂದ ಹವ್ಯಾಸಗಳು, ಅವಕಾಶಗಳು ಹಾಗೂ ಕನಸುಗಳನ್ನೆಲ್ಲ ದೂರ ತಳ್ಳಿಕೊಂಡು ಮೂರು ನಾಲ್ಕು ದಶಗಳನ್ನು ದೂರ ತಳ್ಳಿದ ನಂತರ ಒಂದು ದಿನ ದಿಢೀರ್ ಎಂದು ಹಳೆಯ ಹವ್ಯಾಸಗಳಿಗೆ ಅಂಟಿಕೊಳ್ಳುತ್ತೇನೆ ಎನ್ನುವುದು ಹುಡುಗಾಟಿಕೆಯೇ ಸರಿ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ, ದೇಹಸ್ಥಿತಿ ನೆಟ್ಟಗಿರಬೇಕು. ಓದುವುದಕ್ಕೆ, ಬರೆಯುವುದಕ್ಕೆ, ತಿರುಗಾಡುವುದಕ್ಕೆ, ಆಡುವುದಕ್ಕೆ ಸಮಯ ಒಂದಿದ್ದರೆ ಸಾಲದು - ಹಣ ಬೇಕು ಹಾಗೂ ದೇಹದಲ್ಲಿ ಬಲಬೇಕು ಜೊತೆಗೆ ಎಲ್ಲವೂ ಸುಸ್ಥಿತಿಯಲ್ಲಿರಬೇಕು. ಸುಮ್ಮನೆ ಒಂದು ನಿಮಿಷ ಕಣ್ಣು ಮುಚ್ಚಿ ನೀವು ನಿವೃತ್ತರಾದ ಹಾಗೆ ಊಹಿಸಿಕೊಳ್ಳಿ: ಮನೆ ಇದೆ, ಸಾಲವೆಲ್ಲ ತೀರಿದೆ, ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಸುಂದರವಾದ ಬೇಸಿಗೆಯ ದಿನ, ಊಟ ತಿಂಡಿ ಮನೆ ಕೆಲಸ ಎಲ್ಲವೂ ಆಗಿ ನಿಮ್ಮ ಬಳಿ ಐದರಿಂದ ಎಂಟು ಘಂಟೆ ಖಾಲಿ/ಫ್ರೀ ಇದೆ - ಏನು ಮಾಡುತ್ತೀರಿ? ನಿಮ್ಮ ಸ್ನೇಹಿತರು ಯಾರು, ನಿಮ್ಮ ಹವ್ಯಾಸಗಳೇನು, ನಿಮಗೇನು ಇಷ್ಟ, ನಿಮಗೇನು ಕಷ್ಟ, ನಿಮಗೇನು ಬೇಕು, ಎಲ್ಲಿ ಹೋಗುತ್ತೀರಿ, ಹೇಗೆ ಹೋಗುತ್ತೀರಿ, ಇತ್ಯಾದಿ. ಹೆದರಿಕೆಯಾಯಿತೇ? ಅಥವಾ ಸಂತೋಷವಾಯಿತೇ? ಈ ಒಂದು ನಿಮಿಷದ ನಿವೃತ್ತ ಬದುಕಿನ ಪಯಣದ ಬಗ್ಗೆ ಏನೆನ್ನೆಸಿತು?

ಮೂರನೆಯ ಪ್ರಶ್ನೆ: ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದೋರು ಈ ಕಾಲದವರಂತೂ ಖಂಡಿತ ಅಲ್ಲ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎನ್ನೋದೂ ಪೂರ್ತಿ ನಿಜವಲ್ಲ - ಎಂದು ವಾದ ಮಾಡೋ ಸಮಯವಿದಲ್ಲ. ನೀವು ಇಷ್ಟು ವರ್ಷ ಇದ್ದು ಅದೇನೇನೋ ಮಾಡಿ ಹೋಗುವಾಗ ನಿಮ್ಮನ್ನು ಆಧರಿಸಿಕೊಂಡವರಿಗೆ ಸ್ವಲ್ಪವನ್ನೂ ಬಿಟ್ಟು ಹೋಗೋದಿಲ್ಲವೇನು? ಮುಂದೆ ನಿಮ್ಮ ರಿಟೈರ್ ಮೆಂಟ್ ಅಕೌಂಟಿನಲ್ಲಿ ಪ್ರತಿವರ್ಷ 4 ರಿಂದ 5 % ಹಣವನ್ನು ತೆಗೆದು ಜೀವನ ನಡೆಸುತ್ತೀರಲ್ಲ, ನಿಮ್ಮ ನಂತರ ಅದರ ಬಂಡವಾಳ ಅಥವಾ ಮೂಲಧನ ಯಾರಿಗೆ ಸಿಗಬೇಕು? ಅದರಲ್ಲಿ ಟ್ಯಾಕ್ಸ್‌ನ ಪಾಲು ಎಷ್ಟು? ಯಾವ ಯಾವ ಬೆನಿಫಿಷಿಯರಿಗೆ ಎಷ್ಟು ಹಣ/ವರಮಾನ/ಆಸ್ತಿ ಇತ್ಯಾದಿಗಳನ್ನು ಯಾವ ರೂಪದಲ್ಲಿ ಬಿಟ್ಟು ಹೋಗುತ್ತೀರಿ ಎನ್ನುವುದಕ್ಕೂ ಬಹಳ ಯೋಚಿಸಬೇಕಾಗುತ್ತದೆ, ಒಳ್ಳೆಯ ಪ್ಲಾನ್ ಅಥವಾ ಸಿದ್ಧತೆ ಬೇಕಾಗುತ್ತದೆ.

***

ಈಗೆನ್ನನ್ನಿಸಿತು? ಮೊದಲು ಯಾವುದಾದರು ಕಮ್ಯೂನಿಟಿ ಸೆಂಟರಿನಲ್ಲಿ ಸೀನಿಯರ್ ಸಿಟಿಜನ್ ಸೇವೆಗೆ ವಾಲೆಂಟಿಯರ್ ಆಗಿ. ನಿಮ್ಮ ನಿವೃತ್ತ ಜೀವನದ ಮುಂಬರುವ ದಿನಗಳನ್ನು ನೀವೇ ತ್ರೀ ಡೀ ಕಲರ್ ಚಿತ್ರಗಳಲ್ಲಿ ನೋಡಿ. ಅವರ ಸ್ಥಾನದಲ್ಲಿ ನಿಮ್ಮನ್ನು ಗುರುತಿಸಿಕೊಂಡು ಈಗಿನ ಕಾದಾಟ/ಬಡಿದಾಟಗಳನ್ನು ಕಡಿಮೆ ಮಾಡಿ ILI ಪಾಷಾಣದ ಬಗ್ಗೆ ಕೊರಗಿ.

ನಾನು ಯಾವಾಗಲೂ ಬರೆಯೋ ಹಾಗೆ ಅಥವಾ ಹೇಳೋ ಹಾಗೆ ಬದುಕು ಬಹಳ ದೊಡ್ಡದು - ಮೈ ತುಂಬ ಸುಕ್ಕುಗಳನ್ನು ಕಟ್ಟಿಕೊಂಡು ಹುಟ್ಟಿ ಬಂದ ನಾವು ಸುಕ್ಕು ಸುಕ್ಕಾಗೇ ಸಾಯೋದು, ಪ್ರಾಣಿ ಸಂಕುಲದಲ್ಲಿ ಮಾನವರು ಈಗ ತಾನೆ ಹುಟ್ಟಿದ ಅಸಹಾಯಕ ಮಕ್ಕಳಿಂದ ಹಿಡಿದು ಅಸಹಾಯಕ ವೃದ್ದಾಪ್ಯದ ಅವಸ್ಥೆಯವರೆಗೆ ಅನುಭವಿಸೋದು ಬಹಳಷ್ಟಿದೆ. ಮಿದುಳು ಘಂಟೆಗೆ ನೂರು ಮೈಲಿ ವೇಗದಲ್ಲಿ ಓಡಿದರೂ ಮೈ ಬಗ್ಗೋದಿಲ್ಲ. ಮುವತ್ತರ ನಂತರ ಒಂದೊಂದೇ ಕೀಲುಗಳೂ ಕಿರುಗುಟ್ಟುವುದು ಸಾಮಾನ್ಯ. ಅಟೋಮೊಬೈಲನ್ನು ಆಗಾಗ್ಗೆ ಸರ್ವಿಸ್ ಮಾಡಿಸೋ ಹಾಗೆ ನಮ್ಮ ದೇಹಕ್ಕೂ ನಿರಂತರ ಸರ್ವಿಸ್/ಸೇವೆ ಅಗತ್ಯ. ಮಕ್ಕಳಿಂದ ಮುದುಕರ ಅವಸ್ಥೆಯಲ್ಲಿ ಅಗತ್ಯಗಳು ಬೇರೆ ಬೇರೆ. ಧೀರ್ಘ ಆಯುಷ್ಯ ಅನ್ನೋದು ದೊಡ್ಡದು, ಆದರೆ ಅಲ್ಲಿಯವರೆಗೆ ಹೋಗಿ ಸಸ್ಟೈನ್ ಆಗೋದು ಇನ್ನೂ ದೊಡ್ಡದು.

Saturday, July 04, 2009

ಯೋಗ-ಮೆಡಿಟೇಷನ್ನುಗಳು ನಮಗಲ್ಲ ಸಾರ್

ನೀವು ಭಾರತದಲ್ಲೇ ಇರಲಿ ಅಥವಾ ವಿದೇಶದಲ್ಲೇ ಇರಲಿ, ಯೋಗ-ಮೆಡಿಟೇಶನ್ನುಗಳ ಬಗ್ಗೆ ಬೇಕಾದಷ್ಟು ಕೇಳಿ-ನೋಡಿಯೂ ಆಯಾ ವಿಧಿ ವಿಧಾನಗಳನ್ನು ಇವತ್ತಲ್ಲ ನಾಳೆ ನೋಡಿಕೊಂಡರೆ ಆಯಿತು, ಸಮಯ ಸಿಕ್ಕಾಗ ಕಲಿತುಕೊಂಡರೆ ಆಯಿತು ಎಂದು ನಿಮ್ಮಷ್ಟಕ್ಕೆ ನೀವೇ ಶಪಥ ಮಾಡಿಕೊಂಡಿದ್ದರೆ ನೀವು ನಮ್ಮ ಗುಂಪಿಗೆ ಸೇರಿಕೊಳ್ಳುತ್ತೀರಿ. ಶಾಲಾ ಕಾಲೇಜಿಗೆ ಹೋಗೋವಾಗ ಯಾರಿಗಿದೆ ಟೈಮು? ಮುಂದೆ ಮದುವೆ-ಮುಂಜಿ ಆದ ಮೇಲೆ ನೋಡೋಣ ಎಂದು ಮುಂದು ದೂಡಿದಿರೋ ನಮ್ಮವರ ಸರ್ಕಲ್ಲಿಗೆ ಇನ್ನೂ ಹತ್ತಿರವಾಗುತ್ತೀರಿ. ಕೈ ತುಂಬಾ ಸಂಬಳ ಬರುವ ಕೆಲಸ, ಮನೆಗೆ ಬಂದ ಕೂಡಲೆ ನೆಮ್ಮದಿಯ ಜೊತೆಗೆ ಅದು-ಇದು ಮಾಡುವ ಹೋಮ್ ವರ್ಕು ಇವೆಲ್ಲವೂ ಸೇರಿ ಮುಂದೆ ರಿಟೈರ್ ಆದ ಮೇಲೆ ನೋಡೋಣವೆಂದು ಮುಂದೆ ದೂಡುತ್ತಲೇ ಬಂದಿದ್ದೀರೋ ನೀವು ನಮ್ಮವರೆ ಆಗಿಬಿಟ್ಟಿರಿ!

ನಮ್ಮ ಆಫೀಸಿನಲ್ಲಿ ಕೆಲವು ’ಯೋಗಾಭ್ಯಾಸ ಮಾಡುವುದು’ ಎನ್ನುವುದನ್ನು ತಮ್ಮ ಹವ್ಯಾಸಗಳಲ್ಲಿ ಸೇರಿಸಿಕೊಂಡಿದ್ದಾರೆ ಹಾಗೂ ದಶಕಗಳ ಯೋಗಾಭ್ಯಾಸದ ಫಲವನ್ನು ಮೈಗೂಡಿಸಿಕೊಂಡು ಎಲ್ಲರ ಎದುರು ಖುಷಿಯಾಗಿ ಹಂಚಿಕೊಳ್ಳುತ್ತಾರೆ. ಇಂಗ್ಲೀಷ್ ಲೇಖಕರ ಪುಸ್ತಕಗಲ್ಲಿ ’ಓಂ’ ಸೇರಿಕೊಂಡಿದ್ದು ಕಾಣುತ್ತೆ, Hannah Montanna ಸ್ಕ್ರಿಪ್ಟ್‌ನಲ್ಲೂ ಕೂಡ ’ಓಂ’ ಬಳಕೆ ಕಂಡು ಬರುತ್ತೆ ಆದರೆ ನಾನು ಮಾತ್ರ ಇವುಗಳೆಲ್ಲದರಿಂದ ದೂರವೇ ಇದ್ದ ಹಾಗೆ ಕಂಡುಬರುತ್ತೇನೆ. ಮೆಡಿಟೇಷನ್ನೂ ಮತ್ತೊಂದೂ ಎನ್ನುವ ಅಭ್ಯಾಸ ಅಥವಾ ಆಚರಣೆ ವ್ಯಸ್ತ ಜೀವನದ ಭಾಗವಾಗಿ ಹೋಗುವುದಾದರೂ ಹೇಗೆ? ದಿನದುದ್ದಕ್ಕೂ ಬಿಡುವಿಲ್ಲದಿರುವ ಮಿಲ್ಲಿನಲ್ಲಿ ತಿರುಗುವ ಚಕ್ರಗಳ ಹಾಗಿನ ಜೀವನ ಶೈಲಿಯಲ್ಲಿ ’ಒಮ್ಮೆ ನಿಂತು ನೋಡಿ’ ಎಂದು ಹೇಳುವುದಾರೂ ಹೇಗೆ?

ಸಮುದ್ರ-ಸಾಗರದ ತಳವನ್ನು ಶೋಧಿಸುವವರು ನಭದಲ್ಲಿ ಆಕಾಶ ನೌಕೆಗಳನ್ನು ಉಪಗ್ರಹಗಳನ್ನು ಬಳಸುತ್ತಾರಂತೆ, ನಮ್ಮದರ ಬುಡನೋಡಿಕೊಳ್ಳಲು ರ್ಯಾಡಿಕಲ್ಲಾಗಿ ಅದರ ವಿರುದ್ಧ ತುದಿಯನ್ನು ಮುಟ್ಟಿಯಾದರೂ ಕಂಡುಕೊಳ್ಳಬೇಕು ಎಂದುಕೊಂಡರೆ ಆ ತುದಿಯೂ ಇಲ್ಲ ಈ ತುದಿಯೂ ಇಲ್ಲ ಎನ್ನುವ ತ್ರಿಶಂಕುವಿನ ಸ್ಥಿತಿ-ಗತಿಯಲ್ಲಿ ಯಾವುದನ್ನು ಯಾವ ದಿಕ್ಕಿನಲ್ಲಿ ಎಲ್ಲಿ ಹುಡುಕಿಕೊಳ್ಳೋದು ನೀವೇ ಹೇಳಿ.

ಪ್ರತಿಯೊ೦ದಕ್ಕೂ ಒಂದು ಮೊದಲಿದೆ, ಆ ಮೊದಲನ್ನು ಹುಡುಕಬೇಕು. ಪ್ರತಿಯೊಂದಕ್ಕೂ ಒಂದು ಗತಿಯಿದೆ ಅದನ್ನು ಅನುಸರಿಸಬೇಕು. ಹಾಗೇ ಪ್ರತಿಯೊಂದರ ಆಳ-ವಿಸ್ತಾರವನ್ನೂ ಕಂಡುಕೊಳ್ಳಬೇಕು ಎನ್ನುವುದು ಈ ಹೊತ್ತಿನ ತತ್ವ. ಯೋಗ-ಧ್ಯಾನ ಮೊದಲಾದವೂ ನಮಗೆ ಪರಂಪರಾನುಗತ, ಅದನ್ನು ಹಿಂದೆ ಕಲಿಯುತ್ತಿರುವಾಗಲೀ ಮತ್ತು ಮರೆತು ಹೋಗುತ್ತಿರುವಾಗಲೀ ಎಲ್ಲೂ ಅದರ ಮೂಲವನ್ನು ಶೋಧಿಸಿದ್ದಂತೂ ಇಲ್ಲ. ಈಗ ಎಲ್ಲ ಆಗಿ ಮಿಂಚಿ ಹೋದ ಮೇಲೆ, Lotus = ಪದ್ಮ, Position = ಆಸನ, ಎಂದು ’ಪದ್ಮಾಸನ’ವನ್ನು ಕಲಿಯೋದೆ? ಇಲ್ಲಿಯವರು ಕೆರೆಯನ್ನಾಗಲೀ, ಕೆರೆಯಲ್ಲಿನ ಕಮಲವನ್ನಾಗಲೀ, ನೀರಿನಡಿಯಲ್ಲಿ ಒಂದಕ್ಕೊಂದು ಹೆಣಿಕೆ ಹಾಕಿಕೊಂಡ ಬೇರು-ಕಾಂಡಗಳನ್ನಾಗಲೀ ನೋಡದೇ ಹೋದರೂ ಪದ್ಮಾಸನವನ್ನೂ ಕಲಿತರು, ಅದನ್ನು ರೂಢಿಸಿ-ಸಾಧಿಸಿಕೊಂಡು ಎಲ್ಲರಿಗೂ ಸಾರುವಂತಾದರು. ಕೆರೆಯ ನೀರಿನಲ್ಲಿನ ಕಮಲದ ಹಾಗೆ ನೀರಿನಲ್ಲಿದ್ದೂ ನೀರನ್ನು ರೆಸಿಸ್ಟ್ ಮಾಡುವ ದೃಷ್ಟಿಕೋನದ ಸ್ಥಿತಪ್ರಜ್ಞತೆಯನ್ನು ಮನಗಂಡರು. ನಾವು ಶತಮಾನಗಳಿಂದ ’ಕೆರೆಯ ನೀರನು ಕೆರೆಗೆ ಚೆಲ್ಲುತ್ತ’ ಬಂದರೂ ಬಹಳಷ್ಟು ಜನ ’ಏಕೆ ಹಾಗೆ?’ ಎಂದು ಪ್ರಶ್ನಿಸಿಕೊಂಡು ಉದ್ಧಾರವಾದದ್ದು ಕಡಿಮೆ ಎನ್ನುವುದು ನನ್ನ ಅಂಬೋಣ.

ನಮ್ಮ ಸಂಸ್ಕೃತಿ ದೊಡ್ಡದು, ನಮ್ಮ ಭಾಷೆ ದೊಡ್ಡದು ಎನ್ನುವವರಿಗೆ ಅದನ್ನು ಉಳಿಸಲಿಕ್ಕೆ ಏಕೆ ಹೆಣಗುತ್ತಿದ್ದೀರಿ? ಎಂದು ಪ್ರಶ್ನೆ ಹಾಕಿ ಉತ್ತರವನ್ನು ಕಾಯ್ದು ನೋಡಿ. ಭಾಷೆ, ಸಂಸ್ಕೃತಿ, ಧರ್ಮವನ್ನು ಪೋಷಿಸಬೇಕೆ ಅಥವಾ ಅದು ಗಟ್ಟಿಯಿದ್ದರೆ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ, ಉಳಿಯುತ್ತದೆ ಎನ್ನುವುದು ಈ ಹೊತ್ತಿನ ಜಿಜ್ಞಾಸೆ. ತಮ್ಮ ಧರ್ಮ ದೊಡ್ಡದು ಎಂದು ಕೋಟ್ಯಾಂತರ ರೂಪಾಯಿಗಳ ವ್ಯವಹಾರವನ್ನು ನಡೆಸುವ ಲೋಕಿಗರು ತಮ್ಮ ಧರ್ಮವನ್ನು ನಿಜವಾಗಿಯೂ ಹರಡುತ್ತಿದ್ದಾರೆಯೇ? ಅದಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ತಮ್ಮ ಧರ್ಮ ವಿಸ್ತಾರವಾದುದು ಎಂದು ಅದನ್ನು ಪರಿಗಣಿಸುವ ಹೊತ್ತಿಗೇ ಅದನ್ನು ಕಡೆಗಣಿಸುವ ವಿಚಾರವಂತರು ತಮ್ಮತನವನ್ನು ಉಳಿಸಿಕೊಳ್ಳುತ್ತಿದ್ದಾರೆಯೇ? ಈ ಉಳಿಸಿಕೊಳ್ಳುವ, ಬಳಸಿಕೊಳ್ಳುವ, ಹರಡುವ, ಹಾರಿಸಿಕೊಂಡು ಹೋಗುವ ಪರಿಪಾಟಿಕೆ ಇವತ್ತು ನಿನ್ನೆಯದಲ್ಲ ಆದರೆ ಕೆಲವು ಬೆಳೆದಂತೆ ಕಾಣಿಸುತ್ತದೆ, ಇನ್ನು ಕೆಲವು ವಿನಾಶದ ಹಾದಿ ಹಿಡಿದಂತೆ ತೋರುತ್ತದೆ. ನೂರು-ಸಾವಿರ-ಹತ್ತು ಸಾವಿರ ವರ್ಷಗಳಲ್ಲಿ ಹುಟ್ಟಿ-ಬೆಳೆದು-ಬಂದು ಹೋಗುವ ಈ ಪರಿಕಲ್ಪನೆ, ವ್ಯತಿರಿಕ್ತತೆಗಳನ್ನು ನಾವು ಹುಲುಮಾನವರು ಗಮನಿಸಬೇಕೋ, ನಮ್ಮದು-ನಮ್ಮತನವನ್ನು ತೋರಬೇಕೋ ಅಥವಾ ನಿರ್ವಿಣ್ಣರಾಗಿ ಸುಮ್ಮನಿರಬೇಕೋ?

Procrastination, ಸದಾ ಮುಂದೂಡಿಕೊಂಡು ಇವತ್ತಲ್ಲ ನಾಳೆ ಎನ್ನುವ ಧೋರಣೆಯನ್ನು ಯೋಗ-ಧ್ಯಾನಗಳಿಗೂ ಅನ್ವಯಿಸಿಕೊಂಡು ಬಂದಿರುವ ನಮ್ಮ ಗುಂಪಿಗೆ ಇತ್ತೀಚೆಗಷ್ಟೇ ಸೇರಿದ ನಮ್ಮಂಥ ಎಷ್ಟೋ ಜನರ ಕಿವಿ ಮಾತು - ಇವತ್ತು ಇಲ್ಲಿ ಆಗದಿದ್ದುದು ಮುಂದೆ ಆದೀತು ಎನ್ನುವ ಸತ್ಯವಂತೂ ಅಲ್ಲ. ಕೈ ಕಾಲು ಗಟ್ಟಿ ಇರುವ ಈ ಸಮಯದಲ್ಲಿ ಅನುಸರಿಸಿ, ಅಭ್ಯಾಸ ಮಾಡಿಕೊಳ್ಳದ ಕ್ರಿಯೆ ಅಥವಾ ಕರ್ಮ ಮುಂದೆ ಇಳಿ ವಯಸ್ಸಿನಲ್ಲಿ ಸಾಧಿಸಿಕೊಳ್ಳಲು ಸಾಧ್ಯ ಎನ್ನುವುದಕ್ಕೆ ಏನು ಆಧಾರ? ಈಗ ಮಾಡಿ ಮುಂದೆ ಅದರ ಫಲವ ನೋಡಿ! ಮುಂದಿನ ಜನ್ಮದ ಬಂಧನದಲ್ಲಿರಲಿ ಇಲ್ಲದಿರಲಿ ಈಗ (Now) ಎನ್ನುವುದು ನಿಮಗೆ ಸೇರಿದ್ದು, ಮುಂದೆ (Later) ಎನ್ನುವುದು ನಿಮ್ಮ ಹತೋಟಿಯಲ್ಲಿರುವುದೋ ಇಲ್ಲವೋ ಯಾರು ತಾನೆ ಬಲ್ಲರು?

Monday, June 15, 2009

ಮ್ಯಾನೆಜ್‌ಮೆಂಟ್ ಕೆಲ್ಸಾ, ಬೇಡಾ ಸ್ವಾಮಿ...

ಮ್ಯಾನೇಜ್‌ಮೆಂಟ್ ಕೆಲ್ಸಕ್ಕಿಂತ ಅಸ್ಸೋಸಿಯೇಟ್ ಕೆಲ್ಸಾನೇ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಿದ್ದು ಇತ್ತೀಚೆಗೆ. ನಮಗೆ ಸಿಗೋ ಸವಲತ್ತುಗಳಲ್ಲೊಂದಾಗಿ ಪ್ಲೆಕ್ಸ್ ಟೈಮ್ - ಬೆಳಿಗ್ಗೆ ಇಂಥಾ ಟೈಮಿಗೆ ನಿಗದಿಯಾಗಿ ಬರಬೇಕು ಅಂತೇನೂ ಇಲ್ಲ ಹಾಗೇ ಸಂಜೆ ಎಷ್ಟು ಹೊತ್ತಿನವರೆಗೆ ಬೇಕಾದ್ರೂ ಕೆಲ್ಸ ಇರುತ್ತೆ. ಜೊತೆಗೆ ನಮ್ಮ ಟೈಮ್‌ಶೀಟ್‌ಗಳು ಹಗಲು ಹೊತ್ತಿನಲ್ಲೇ ಸುಳ್ಳು ಹೇಳೋ ಹಾಗೆ ವಾರಕ್ಕೆ ಕೇವಲ ನಲವತ್ತು ಘಂಟೆಗಳ ಕೆಲಸವನ್ನು ದಾಖಲೆ ಮಾಡಿಕೊಂಡು ಒಟ್ಟು ಸಂಬಳವನ್ನು ತೆಗೆದುಕೊಂಡರೂ ಅದಕ್ಕಿಂತ ಹೆಚ್ಚು ಮಾಡಿದ ಕೆಲಸಕ್ಕೆ ಯಾವ ಸಂಭಾವನೆ ಸಿಗದೇ ಹೋದರೂ ಸರಿ ಅದು ರಿಜಿಸ್ಟರಿನಲ್ಲಿ ದಾಖಲೂ ಆಗದ ಪರಿಸ್ಥಿತಿ. ನಾವು ವಾರಕ್ಕೆ ಮಾಡುವ ಐವತ್ತೋ, ಐವತ್ತೈದೋ ಘಂಟೆಗಳಿಂದ ನಮ್ಮ ನಮ್ಮ ಸಂಬಳವನ್ನು ಭಾಗಿಸಿ ನೋಡಿದರೆ ನಮ್ಮ ಘಂಟೆಯ ’ಕೂಲಿ’ ಕಡಿಮೆ. ಇನ್ನು ವರ್ಷದ ಕೊನೆಯಲ್ಲಿ ಸಿಗೋ ಬೋನಸ್ಸು ಅದು ಯಾವ್ಯಾವುದೋ ಈಕ್ವೇಷನ್ನುಗಳಿಂದ ಹೊರಬರುವ ಮೊತ್ತದ ಪರಿಣಾಮ ನಮ್ಮ ಸಂಬಳದ ಒಂದು ಭಾಗವೇ ಅದು ಆದರೆ ಕೊಡುವ ರೀತಿ ಬೇರೆ ಎನ್ನುವ ತರ್ಕ.

ಎಂಬಿಎ, ಎಂ.ಎಸ್ ಮುಂತಾದ ಡಿಗ್ರಿಗಳಿಂದ ಅಲಂಕೃತಗೊಂಡ ನಮ್ಮ ರೆಸ್ಯೂಮೆಗಳಿಗೆ ಈ ಮಾರ್ಕೆಟ್ ಪ್ಲೇಸ್‌‍ನಲ್ಲಿ ಕಡಿಮೆ ಬೇಡಿಕೆ, ಅದೇ ಒಂದು ಸ್ಕಿಲ್ಲ್‌ನಲ್ಲಿ ಸ್ಪೆಷಲೈಜ್ಡ್ ಇರೋ ಅಂತ ಒಬ್ಬ ಅಸೋಸಿಯೇಟ್ ಕೆಲ್ಸಕ್ಕೆ ಹೆಚ್ಚಿನ ಡಿಮ್ಯಾಂಡ್. ಅವರ ಘಂಟೆಯ ಸಂಬಳ ಜೊತೆಗೆ ಹೆಚ್ಚು ಕೆಲಸ ಮಾಡಿದ್ದಕ್ಕೆ ಸಿಗೋ ಓವರ್ ಟೈಮ್ ಹಾಗೂ ಜಾಬ್ ಸೆಕ್ಯುರಿಟಿ ಇವನ್ನೆಲ್ಲ ಲೆಕ್ಕ ಹಾಕಿಕೊಂಡರೆ ಅವರದ್ದೇ ಕೆಲ್ಸ ನಾವೂ ಮಾಡಿಕೊಂಡಿರಬಾರದೇಕೆ, ಅನ್ನಿಸೋದಿಲ್ಲವೇ?

’ಲಂಚ್ ಬ್ರೇಕ್ ಆರೋಗ್ಯಕ್ಕೆ ಒಳ್ಳೆಯದು’ ಎಂದು ಬರೆದುಕೊಂಡಿರೋ ಎಷ್ಟೋ ಆರ್ಟಿಕಲ್ಲುಗಳನ್ನು ನನ್ನಂಥವರು ಓದಿಯೂ ಶೇಕಡಾ ತೊಂಭತ್ತು ಸಮಯ ನನ್ನ ಮಧ್ಯಾಹ್ನದ ಊಟವನ್ನು ಕಾಲ್ ಹಾಗೂ ಮೀಟಿಂಗ್‌ಗಳ ನಡುವೆ ಐದರಿಂದ ಹತ್ತು ನಿಮಿಷದಲ್ಲಿ ಲಗುಬಗೆಯಿಂದ ತುಂಬಿಸಿಕೊಂಡು ಊಟ ಮಾಡಿದ ಹಾಗೆ ಮಾಡೋದು ದಿನನಿತ್ಯದ ಕಾಯಕಗಳಲ್ಲೊಂದು. ಬೆಳಿಗ್ಗೆ ಸೂರ್ಯನಿಗೆ ಪೈಪೋಟಿಮಾಡೋ ಹಾಗೆ ರಸ್ತೆಯಲ್ಲಿ ಸಿಗೋ ಸ್ಲೋ ಡ್ರೈವರುಗಳನ್ನೆಲ್ಲ ಬೈದುಕೊಂಡು, ಅದರ ನಡುವೆ ತಿಂಡಿ ತಿಂದ ಹಾಗೆ ಮಾಡಿ ಕಾಫಿ ಕುಡಿದ ಹಾಗೆ ಮಾಡಿ ಆದಷ್ಟು ಬೇಗ ಆಫೀಸಿಗೆ ಬಂದರೂ ಅದ್ಯಾವುದೋ ಅವ್ಯಕ್ತ ಬಂಧನದ ಪ್ರಯುಕ್ತ ಎಲ್ಲರೂ ಹೋದ ಮೇಲೆ ಹೋಗುವ ಹಾಗೆ ಆಫೀಸಿನಲ್ಲೇ ಕೊಳೆಯುವ ಯಾತನೆ. ಸಮ್ಮರ್ರ್ ಬರುತ್ತಿದ್ದ ಹಾಗೆ ಎಲ್ಲರೂ ವೆಕೇಷನ್ನುಗಳನ್ನು ಅದಾಗಲೇ ಪ್ಲಾನ್ ಮಾಡಿಕೊಂಡು ಅಲ್ಲಲ್ಲಿ ವಾರ-ದಿನಗಳನ್ನು ಆಫ್ ಮಾಡಿಕೊಂಡು ಸಂತೋಷಪಡುತ್ತಿದ್ದರೆ ನಾವು ಆಫ್ ಇದ್ದ ದಿನಗಳಲ್ಲೂ ಅಲ್ಲಲ್ಲಿ ನಮಗೆ ಅಂಟಿಕೊಂಡ ರೋಗಗಳ ಹಾಗಿನ ಕಾಲ್ (ಕಾನ್ಪರೆನ್ಸ್ ಕಾಲ್) ಗಳು. ಒಬ್ಬ ಪೈನಾನ್ಸಿಯಲ್ ಆಡ್ವೈಸರ್‌ನಿಂದ ಹಿಡಿದು, ಡಾಕ್ಟರ್, ಡೆಂಟಿಸ್ಟ್ ಮೊದಲಾದವರನ್ನು ಕಂಡೋ ಮಾತನಾಡಿಸಲಾಗದ ಬಂಧನ. ಪೋಸ್ಟ್ ಆಫೀಸ್, ಡ್ರಾಮಾ, ರಿಕ್ರಿಯೇಷೇನ್ ಮೊದಲಾದವುಗಳಿಗೆ ಹೋಗದ ಹಾಗೆ ಕಟ್ಟು ಹಾಕುವ ಕೆಲಸದ ಸಂಬಂಧದ ಅವ್ಯಕ್ತ ಸಂಕೋಲೆ. ಮತ್ತೆ ಸಂಜೆಯ ಹೊತ್ತಿಗೆ ಮುಖ ಒಣಗಿಸಿಕೊಂಡು ಬಂದು ಮನೆಯಲ್ಲಿ ಊಟ ಮಾಡಿದ ಹಾಗೆ ಮಾಡಿ ದಿನದ ಒಂದೋ ಎರಡೋ ಬದುಕಿನ ಸ್ವರಗಳಿಗೆ ಒಂದಿಷ್ಟು ಗಾಳಿ ಊದಿ ನಿದ್ರೆಗೆ ಶರಣು ಹೋಗುವ ಕರ್ಮ ಜೀವನ.

ಈ ಸೆಲ್ಫ್ ಸೆಟ್ ಗೋಲ್‌ಗಳಿಗೆ ಒಂದಿಷ್ಟು ಕಡಿವಾಣ ಹಾಕಬೇಕು. ಮ್ಯಾನೇಜ್‌ಮೆಂಟ್ ಕೆಲ್ಸದಲ್ಲಿದ್ದರೂ ಅಸೋಸಿಯೇಟ್ ಬದುಕಿದ ಹಾಗೆ ಬದುಕಬೇಕು. ದಿನದ ಘಂಟೆಗಳನ್ನು ನಿಗದಿಯಂತೆ ಪ್ಲಾನ್ ಮಾಡಿಕೊಂಡು ನಾವು ಸೇರಿಕೊಳ್ಳಲಾಗದ ಮೀಟಿಂಗ್‌ಗಳಿಗೆ ’ಕ್ಷಮಿಸಿ’ ಎನ್ನಬೇಕು. ನಾವು ಪ್ರತೀವಾರಕ್ಕೆ ಹತ್ತು ಹತ್ತು ಘಂಟೆ ಕೆಲಸ ಮಾಡಿಯೂ ನಮಗಿಂತ ಕಡಿಮೆ ಕೆಲಸ ಮಾಡುವ ನಮ್ಮ ಓರಗೆಯವರ ಸಂಬಳ/ಆದಾಯಕ್ಕೆ ನಮ್ಮನ್ನು ಹೊಂದಿಸಿಕೊಂಡು ಆಫೀಸಿನಲ್ಲಿ ಎಂಟು-ಒಂಭತ್ತು ಘಂಟೆಗಳಿಗಿಂತ ಹೆಚ್ಚು ಕೆಲಸವನ್ನು ಮಾಡದೇ ಉಳಿದದ್ದನ್ನು ಪರ್ಸನಲ್ ವಿಷಯಗಳಿಗೆ ವಿನಿಯೋಗಿಸಬೇಕು. ಕಾಯಿದೆ/ಕಾನೂನು ಎಂದು ಮಾತನಾಡುವ ನಮ್ಮ ಮೇಲಾಧಿಕಾರಿಗಳಿಗೆ ಅವರ ರೀತಿಯಲ್ಲೇ ಮಾತನಾಡುತ್ತಾ ಅವರ ಕಾನೂನು ಕಟ್ಟಳೆಗಳಲ್ಲೇ ಅವರನ್ನು ನಿಯಂತ್ರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಲಂಚ್ ಟೈಮ್‌ಗೆ ಡೆಸ್ಕ್ ಬಿಟ್ಟು ಎದ್ದು ಎಲ್ಲಾದರೂ ದೂರ ಹೋಗಿಬಿಡಬೇಕು. ಇ-ಮೇಲ್, ವಾಯ್ಸ್ ಮೇಲ್ ಹಾಗೂ ಇನ್ಸ್ಟಂಟ್ ಮೆಸ್ಸೇಜುಗಳನ್ನು ಸಂಬಾಳಿಸಬೇಕು. ಇನ್ ಬಾಕ್ಸ್ ನಲ್ಲಿರುವ ಮೆಸ್ಸೇಜುಗಳನ್ನೆಲ್ಲ ಓದಿಯೇ ತೀರುತ್ತೇನೆ, ಫೋನ್ ನಲ್ಲಿ ಬ್ಲಿಂಕ್ ಆಗುವ ಲೈಟ್ ಬೆನ್ನನ್ನು ಹತ್ತಿ ಎಲ್ಲ ವಾಯ್ಸ್ ಮೇಲ್ ಗಳಿಗೂ ಉತ್ತರವನ್ನು ತತ್ ತಕ್ಷಣ ಕೊಡುತ್ತೇನೆ ಎನ್ನುವ ರೂಢಿಯನ್ನು ಬಿಟ್ಟು ಬಿಡಬೇಕು. ಪ್ರಪಂಚದ ಎಲ್ಲ ಸಮಸ್ಯೆಗಳನ್ನು ನಾವು ನಾವೇ ಪರಿಹರಿಸಿಕೊಂಡು ನಮ್ಮ ಬಾಸ್‌ಗಳ ಕೆಲಸವನ್ನು ಸುಲಭ ಮಾಡುವ ಬದಲು ಅವಾಗಾವಾಗ ಒಂದಿಷ್ಟು ಸಮಸ್ಯೆಗಳನ್ನು ಅವರ ಅವಗಾಹನೆಗೆ ಬಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಂಜೆ ಇಷ್ಟು ಹೊತ್ತಿಗೆ ಹೊರಟು ತೀರುತ್ತೇನೆ ಎನ್ನುವ ಸಂಕಲ್ಪವನ್ನು ಮಾಡಿಕೊಂಡು ಆಗ ಮನೆಗೆ ಬಂದು ಆಫೀಸನ್ನು ಆಫೀಸಿನಲ್ಲೇ ಬಿಟ್ಟು ’ಮನುಷ್ಯ’ನಾಗಬೇಕು. ಎಲ್ಲವೂ ಇಂದಿನ ಕೆಲಸವೇ ಎನ್ನುವ ಧಾರಾಳತನವನ್ನು ಮೈವೆತ್ತಬೇಕು.

ನನ್ನ ಸಹೋದ್ಯೋಗಿಯೊಬ್ಬಳು ಹಲವು ವರ್ಷಗಳ ಹಿಂದೆ ನಿವೃತ್ತಳಾಗುವಾಗ ಒಂದು ಮಾತನ್ನು ಹೇಳಿದ್ದಳು, ’ಈ ಕಂಪನಿ ನೀನು ಹುಟ್ಟುವುದಕ್ಕಿಂದ ಮೊದಲೂ ಇತ್ತು, ನೀನು ಸತ್ತ ಮೇಲೆಯೂ ಇರುತ್ತೆ. ನಿನ್ನ ಸಮಯದ ಹೆಚ್ಚು ಪಾಲನ್ನು ನಿನ್ನ ಕುಟುಂಬದವರ ಜೊತೆ ಕಳೆಯೋದಕ್ಕೆ ಪ್ರಯತ್ನಿಸು’. ನಾವು ಮುಂದೂಡುವ ನಮ್ಮ ವೆಕೇಷನ್ನುಗಳಾಗಲೀ, ನಾವು ದಿನನಿತ್ಯ ತಿನ್ನುವ ಹಾಗೆ ಮಾಡಿ ತಿಂದ ತಿಂಡಿ-ಊಟಗಳಾಗಲಿ, ನಾವು ಕಳೆದುಕೊಳ್ಳುವ ಅನೇಕ ಸಾಮಾಜಿಕ ಚಟುವಟಿಕೆಗಳಾಗಲೀ, ಅದೆಲ್ಲೋ ಬಿದ್ದು ತುಕ್ಕು ಹಿಡಿಯುತ್ತಿರುವ ನಮ್ಮ ಹವ್ಯಾಸಗಳಾಗಲೀ ಯಾವುದೂ ಲಾಂಗ್ ಟರ್ಮ್‌ನಲ್ಲಿ ಖಂಡಿತ ಒಳ್ಳೆಯದನ್ನು ಮಾಡಲಾರವು. ನಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ನಾವು ದಿನ ನಿತ್ಯ ಮಾಡುವ ಆಫೀಸಿನ ಕೆಲಸದಷ್ಟೇ ಉಳಿದವುಗಳಿಗೂ ಪ್ರಾಮುಖ್ಯತೆಯನ್ನು ಕೊಡಬೇಕು ಎಂದುಕೊಂಡು ಎಲ್ಲವನ್ನು ಮೊದಲೇ ಯೋಚಿಸಿ ಒಂದು ’ಪ್ಲಾನ್’ ಅನ್ನು ತಯಾರಿಸಿದ್ದೇ ಆದರೆ ಅದರಿಂದ ಬಹಳಷ್ಟು ಅನುಕೂಲಗಳಿವೆ. ನಮ್ಮ ಬಾಸ್‌ನ ಸೀಕ್ರೆಟ್ ಒಂದಿದೆ, ವರ್ಷದ ಹೆಚ್ಚಿನ ವೇಕೇಷನ್ನುಗಳನ್ನು ಎಲ್ಲರಿಗಿಂತ ಮೊದಲೇ ಅಲ್ಲಲ್ಲಿ ನಿಗದಿ ಪಡಿಸಿ ಆಯಾ ದಿನಗಳನ್ನು ನಿಯೋಜಿತವಾಗಿ ಆಫ್ ತೆಗೆದುಕೊಳ್ಳುವುದು - ಹೀಗೆ ಮಾಡುವುದರಿಂದ ಅನೇಕ ಅನುಕೂಲಗಳನ್ನು ನಾನು ಅವರ ಮೂಲಕ ಈಗಾಗಲೇ ಕಂಡುಕೊಂಡಿದ್ದೇನೆ.

ಸರಿ, ಇಷ್ಟೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಇನ್ನೂ ಏಕೆ ನಾನು ಈ ಪ್ಲಾನ್ ಅನ್ನು ಕಾರ್ಯಗತಗೊಳಿಸಿಕೊಂಡಿಲ್ಲ ಅನ್ನೋ ಪ್ರಶ್ನೆ ಸಹಜ. ನಮ್ಮ ಬದುಕೇ ಬೇರೆ ಅಲ್ಲವೇ, ಈ ವರ್ಷದ ಕೊನೆಯಲ್ಲಿ ಬರೋ ಇಂಡಿಯಾ ಟ್ರಿಪ್ಪಿಗೆ ನಮ್ಮ ವೆಕೇಷನ್ನ್ ದಿನಗಳನ್ನು ಕೂಡಿ ಹಾಕಿ ಒಟ್ಟಿಗೆ ಮೂರು ಅಥವಾ ನಾಲ್ಕು ವಾರಗಳನ್ನು ತೆಗೆದುಕೊಳ್ಳೋ ಅಗತ್ಯವಿರೋದರಿಂದ ವರ್ಷವಿಡೀ ವೆಕೇಷನ್ನುಗಳು ಸಂಭವಿಸೋದೇ ಇಲ್ಲ! ಇನ್ನು ಎಷ್ಟೋ ಕಷ್ಟ ಪಟ್ಟು, ಎದ್ದೂ-ಬಿದ್ದು ಹೋಗಿ ಬರೋ ಇಂಡಿಯಾ ಟ್ರಿಪ್ಪ್ ಅನ್ನು ವೆಕೇಷನ್ನು ಎಂದು ಕರೆಯಬೇಕೇ ಬೇಡವೇ ಅನ್ನೋದು ಒಳ್ಳೆಯ ಪ್ರಶ್ನೆಯಾಗೇ ಉಳಿಯುತ್ತದೆ. ಈ ದ್ವಂದ್ವಗಳಿಗೆಲ್ಲ ಒಂದೇ ಉತ್ತರ, ಒಂದೇ ದಾರಿ - ಮ್ಯಾನೇಜ್‌ಮೆಂಟ್ ಕೆಲಸದಲ್ಲಿ ಅಸೋಸಿಯೇಟ್ ತನವನ್ನು ಗುರುತಿಸಿಕೊಂಡು ನಮ್ಮಷ್ಟಕ್ಕೆ ನಮ್ಮದೊಂದು ಟೈಮ್‌ಟೇಬಲ್, ಅಜೆಂಡಾವನ್ನು ಪ್ರಸ್ತುತಪಡಿಸಿಕೊಂಡು ನಿಯಮಿತವಾಗಿ ಹೀಗೇ ಹೀಗೇ ಎಂದು ಬದುಕುವ ಗುರಿ.

Saturday, June 06, 2009

ಒಂದು ನೆಗಡಿಯ ಕಥೆ

You have to experience bad health to appreciate the good health - ಅಂತ ಅನ್ಸಿದ್ದು ಇತ್ತೀಚೆಗೆ. ಏನಿಲ್ಲ, ವರ್ಷದ ಏಳೆಂಟು ತಿಂಗಳು ಕೆಟ್ಟ ಛಳಿಯಲ್ಲಿ ನೊಂದು ಸ್ಪ್ರಿಂಗ್ ಬರಲಿ ಎಂದು ಪ್ರಾರ್ಥಿಸಿದ್ದೇ ಬಂತು, ಹಾಗೆ ಬಂದ ಸ್ಪ್ರಿಂಗ್ ತನ್ನ ಜೊತೆಗೆ ಅಲರ್ಜಿಗಳ ಹಿಂಡನ್ನೂ ತಂತು.

ನನಗೆ ಬರೋ ದೊಡ್ಡ ರೋಗವೆಂದರೆ ನೆಗಡಿ ಒಂದೇ. ನೆಗಡಿಯಂಥಾ ರೋಗವಿಲ್ಲ, ಬುಗುಡಿಯಂಥಾ ಒಡವೆ ಇಲ್ಲ ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ. ನನಗಾಗೋ ನೆಗಡಿಯ ಅನುಭವದ ಹತ್ತಿರದ ಉಪಮೆ ಎಂದರೆ ಹನಿ ನೀರಾವರಿ - ಎರಡೂ ಮೂಗಿನ ಹೊರಳೆಗಳಿಂದಲೂ ಸದಾ ಕಾಲ ಹನಿಗಳು ತೊಟ್ಟಿಕ್ಕೋದೇ ಬಂತು. ಆ ಶೀತದ ಭರಾಟೆ ಎಷ್ಟು ಎಂದರೆ ಯಾವ ಕ್ಲೀನೆಕ್ಸು ಟಿಶ್ಶ್ಯುಗಳೂ ಕಟ್ಟಿ ಹಾಕದ ಹಾಗೆ ನೀರಿನ ಅಬ್ಬರ ಮುಂದುವರೆಯುತ್ತಲೇ ಇರುತ್ತದೆ, ಈ ಲಿಂಗಮಕ್ಕಿಯ ಫ್ಲಡ್‌ಗೇಟ್‌ಗಳನ್ನು ತೆರೆದಾಗ ನೀರು ಒಂದೇ ಸಮನೆ ಹೊರಹೋಗುತ್ತಲ್ಲ ಹಾಗೆ (ಸದ್ಯ ಅಷ್ಟೊಂದು ಪ್ರಮಾಣ ನೀರು ಬರೋಲ್ಲವಲ್ಲ, ಅಷ್ಟೇ ಸಾಕು). ನಾನೋ ಹಳೆ ಕಾಲದವನು, ಈ ಟಿಶ್ಶು ಪೇಪರುಗಳಿಂದಾಗೋ ಕರ್ಮವಲ್ಲವೆಂದುಕೊಂಡು ಆಫೀಸಿಗೆ ಒಂದೆರಡು ಹ್ಯಾಂಡ್ ಟವಲ್ಲುಗಳನ್ನೇ ಹಿಡಿದುಕೊಂಡು ಬಂದವನು (ಹ್ಯಾಂಡ್ ಕರ್ಚೀಪ್‌ಗಳು ನಮ್ಮ ಮನೆಯಲ್ಲಿ ಹುಡುಕಿದರೂ ಸಿಗದ ಹಾಗಿನ ವಸ್ತುಗಳಾಗಿವೆ, ಅದು ಬೇರೆ ವಿಷಯ). ನಾನು ಕೆಮ್ಮಿ, ಸೀನಿ, ಕ್ಯಾಕರಿಸುವ ಕಷ್ಟವನ್ನು ನೋಡಿ ಆಫೀಸಿನಲ್ಲಿ ಅಕ್ಕಪಕ್ಕದವರಿಗೆ ಮನವರಿಕೆಯಾದ ಮೇಲೆ ಅವರಾದರೂ ನನ್ನ ಟವೆಲ್ ಪ್ರಯೋಗವನ್ನು ನೋಡಿ ಏನು ತಾನೇ ಅಂದುಕೊಂಡಾರು? ಹಾಗಂದುಕೊಂಡರೂ ಅದು ಅವರ ಕಷ್ಟ ನನಗೇನಾಗಬೇಕು ಅದರಿಂದ?

So, I have two options: ಆಪ್ಷನ್ ಒಂದು, ಡೀಲ್ ವಿಥ್ ದ ನೆಗಡಿ - ಒಂದು ವಾರ, ಏಳು ದಿನ, ಅದರ ಟೈಮ್ ತೆಗೊಳ್ಳುತ್ತೆ ಆಮೇಲೆ ಸರಿ ಆಗುತ್ತೆ. ಆಪ್ಷನ್ ಎರಡು ಅಲೋಪಥಿಕ್ ಮೆಡಿಕೇಶನ್ನ್‌ಗಳಿಗೆ ಶರಣು ಹೋಗೋದು - ಬೇಕಾದಷ್ಟಿವೆ, ನಿಮ್ಮ ಮೂಗನ್ನು ಮುಂಗಾರು ಮಳೆಯ ಅಂಗಳದಿಂದ ಅಗ್ಗಿಷ್ಟಿಕೆಯ ಸುಡುಬೆಂಕಿಯಷ್ಟು ಪ್ರಭಲವಾಗಿ ಉರಿಯುವ ಹಾಗೆ ರಾತ್ರೋ ರಾತ್ರಿ ಬದಲಾಯಿಸಬಲ್ಲ ಘಟಾನುಘಟಿ ಮೆಡಿಕೇಶನ್ನುಗಳಿವೆ, ಒಂದಿಷ್ಟು ಭಾರತೀಯ ಮೇಡ್, ಮತ್ತೊಂದಿಷ್ಟು ಅಮೇರಿಕನ್. ಆದರೆ ಆಪ್ಷನ್ನ್ ಎರಡರಲ್ಲಿ ಬೇಕಾದಷ್ಟು ಸೈಡ್ ಎಫೆಕ್ಟ್‌ಗಳಿವೆ. ಈ ಒಂದು ಹಾಗೂ ಎರಡು ಆಪ್ಷನ್ನುಗಳಲ್ಲಿ ಅವುಗಳದ್ದೇ ವೇರಿಯೇಷನ್ನುಗಳನ್ನೂ ಮಾಡಬಹುದು - ಒಂಥರಾ ಮಿಕ್ಸ್ಡ್ ರಿಯಾಕ್ಷನ್ನ್ ಥರ ಅದರ ಎಫೆಕ್ಟೂ ಇರುತ್ತೆ!

ನೆಗಡಿ ಬಂದರೆ ಜೊತೆಗೆ ಅದರ ಸಂಸಾರವೇ ಬರುತ್ತದೆ: ಮೊದಲು ಹನಿ ನೀರಾವರಿಯಿಂದ ಶುರುವಾದ ನೀರು ಮುಂದು ಮೂಗಿನಲ್ಲಿ ಗೊಣ್ಣೆ ಬದಲಾಗಿ, ಅದು ಮುಂದ ಬಿಳಿ-ಹಳದಿ ಬಣ್ಣದ ಹಿಕ್ಕೆಯಾಗಿ ಒಂದು ವಾರದಲ್ಲಿ ಪರಿವರ್ತಿತಗೊಳ್ಳುವ ಹಂತ. ಈ ಮಧ್ಯೆ ಒಂದಿಷ್ಟು ದಿನ ಗಂಟಲಿನಲ್ಲಿ ಸಿಕ್ಕು ಬಾಯಿಯಿಂದ ಬಂದರೆ ಕಫ, ಮೂಗಿನಲ್ಲೇ ಶೀಟಿ ಬಿಸಾಡಿದರೆ ಗೊಣ್ಣೆ ಎನ್ನುವ ಬಹು ರೂಪದ ಸಂಭ್ರಮ. ಮುಂದೆ ಸರಳ ಕೆಮ್ಮು, ಒಣ ಕೆಮ್ಮು ಮೊದಲಾದ ಗಂಟಲಲ್ಲಿ ’ಕಿಚ್-ಕಿಚ್’ ಹಂತ. ಈ ಕೆಮ್ಮು ದಿನದ ಬೇರೆ ಬೇರೆ ಹೊತ್ತಿನಲ್ಲಿ ಬೇರೆ ಬೇರೆ ಲೆವೆಲ್ ಮುಟ್ಟುವುದು. ಇವೆಲ್ಲವೂ ಇರುವಂತೆಯೇ ನೀವು ಮಾತನಾಡಿದ್ದು ಒಂದು, ಇನ್ನೊಬ್ಬರಿಗೆ ಕೇಳುವುದು ಇನ್ನೊಂದು ಎನ್ನುವ ಹಾಸ್ಯ - ನೀವು ’ನಾನು’ ಎಂದರೆ, ಅದು ಕೇಳಿದವರಿಗೆ ’ಮಾನು’ ಆಗುವುದು. ಈ ಮೂಗಿನ ಮ್ಯಾನೇಜ್‌ಮೆಂಟ್ ಬಹಳ ದೊಡ್ಡದೇ, ನಿಮಗೆ ಗೊತ್ತಿಲ್ಲ ಅದರ ಸಹವಾಸ. ಎಂಥೆಂಥ ಅತಿರಥ ಮಹಾರಥರೂ ತಮ್ಮ ತಮ್ಮ ಮೂಗಿಗೆ ಕೈ ಹಾಕಿಕೊಳ್ಳುವುದನ್ನು ನೀವು ನೋಡಿಲ್ಲ? ಈ nose pick ಎನ್ನುವುದು ಆಪಲ್ ಪಿಕ್, ಸ್ಟ್ರಾ ಬೆರಿ ಪಿಕ್ ಎನ್ನುವ ಹಾಗೆ ಸೀಜನಲ್ ಅಂತೂ ಅಲ್ಲ ಜೊತೆಗೆ ಮೂಗು ಪಿಕ್ ಮಾಡಿದಾಗಿನ ಔಟ್‌ಪುಟ್ ಆಯಾ ಮೂಗಿನ ಓನರುಗಳಿಂದ ಹಿಡಿದು ಬೇರೆ ಯಾರಿಗೂ ಬೇಡವಾದ ಪ್ರಾಡಕ್ಟು. ಅದನ್ನು ಒಂದು ಕಡೆ ಟ್ರ್ಯಾಷ್ ಅನ್ನುವಷ್ಟು ದೊಡ್ಡದೂ ಅಲ್ಲದೇ ಮತ್ತೊಂದು ಕಡೆ ಲಿಟ್ಟರ್ ಎಂದು ದೂಷಿಸಲೂ ಬಾರದ್ದನ್ನು ಎಲ್ಲಿ ಬೇಕಾದಲ್ಲಿ ಬಿಸಾಡಲೂ ಬಹುದು. ನಮ್ಮ ಮನೆಯ ಮಕ್ಕಳೂ ಸೇರಿ ಇನ್ನು ಕೆಲವರು ಅದನ್ನು ತಿಂದು ರೀ ಸೈಕಲ್ ಮಾಡುವುದೂ ಕಣ್ಣಿಗೆ ಬಿದ್ದಿದೆ.

ಅವರವರ ಕರ್ಮಕ್ಕನ್ನುಸಾರವಾಗಿ ಯಾರ್ಯಾರೋ ಏನೇನೋ ರೋಗರುಜಿನಗಳಿಗೆ ತುತ್ತಾಗುವುದಿದೆ. ಎಲ್ಲರಿಗೂ ಅವರವರ ರೋಗವೇ ದೊಡ್ಡದು ಹಾಗೇ ಅದರದ್ದೇ ಸಂಭ್ರಮ ಅನ್ನೋ ಹಾಗೆ ನನಗೆ ಈ ಹೊತ್ತಿನಲ್ಲಿ ಈ ನೆಗಡಿಯ ವಿಚಾರ. ಅದನ್ನು ಫ್ಲೂ ಮತ್ತೊಂದು ಇನ್ನೊಂದು ಎಂದು ಯಾರು ಏನು ಬೇಕಾದರೂ ಕರೆದುಕೊಂಡರೂ ನನಗಂತೂ ಅದು ಪ್ರತಿವರ್ಷದ ಸ್ಪ್ರಿಂಗ್ ತರುವ ಬಳುವಳಿ. ಛಳಿಯಲ್ಲಂತೂ ಒಳಗೆ ಸೇರಿಕೊಂಡಿದ್ದೇ ಬಂತು ಇನ್ನು ಬೇಸಿಗೆಯಲ್ಲಾದರೂ ಹೊರಗೆ ತಿರುಗಾಡಬೇಕು, ಬದಲಿಗೆ ಮನೆಯಲ್ಲೇ ಏರ್ ಪ್ಯೂರಿಪೈಯರ್ರ್ ಇಟ್ಟುಕೊಂಡು ಒಳ್ಳೆಯ ಗಾಳಿಯನ್ನು ಮಾತ್ರ ಉಸಿರಾಡಿ ಬಿಟ್ಟರೇನು ಬಂತು ಎನ್ನುವುದು ಈ ಹೊತ್ತಿನ ತತ್ವ.

Wednesday, May 06, 2009

ಬೆಂಗಳೂರ್ ಹೋಯ್ತು ಬಫೆಲೋ ಬಂತು - ಡುಂ! ಡುಂ!

’ಲೋ, ಒಳ್ಳೇ ನಾಯ್ಕನನ್ನೇ ಆರ್ಸಿಕೊಂಡಿದ್ದೀರಿ ಕಣ್ರೋ!’ ಎಂದಿದ್ದು ಇನ್ಯಾರು ಅಲ್ಲ - ನಮ್ ಸುಬ್ಬ.
ಸುಮ್ನೇ ಕುಶಾಲಕ್ಕೆ ’ಹೆಂಗಿದ್ಯೋ?’ ಅಂತ ಫೋನ್ ಕಾಲ್ ಮಾಡಿದ್ರೆ ತಗಳಾಪ್ಪಾ ಪೂರ್ತಿ ರಾಮಾಯ್ಣನೇ ಶುರು ಹಚ್ಚಿಕೊಂಬಿಟ್ನಲ್ಲಾ!

ಮತ್ತೆ ಮುಂದುವರೆಸುತ್ತಾ, ’...ಬೆಂಗ್ಳೂರಿಗೂ ಬಫೆಲೋಗೂ ಎಲ್ಲಿಯ ಹೋಲಿಕೆ ಹೊಂದಾಣಿಕೆ, ಏನೋ ಕರಿಯರ ನಾಯ್ಕ ಅಂತ ಸುಮ್ನೇ ಇದ್ದಿದ್ದಕ್ಕೆ ಸಪೋರ್ಟ್ ಮಾಡಿದ್ದಕ್ಕೆ ತಂದ್ನಲ್ಲಪ್ಪಾ ಕಾಣಿ. ಒಂದಿಷ್ಟ್ ಜನ ಅವ್ನನ್ನ ಮುಸ್ಲಿಮ್ ಅಂತಾರೆ, ಒಂದಿಷ್ಟ್ ಜನ ಅವನನ್ನ ಬಿಳಿಯ ಅಂತಾರೆ, ಒಂದಿಷ್ಟು ಜನ ಅವನೇ ದೇವ್ರು ಅಂತ ಕೊಂಡಾಡ್ತಾರೆ, ಒಳ್ಳೇ ಬ್ರೂಸ್ ಆಲ್‌ಮೈಟ್ ಕಥೆ ಆಯ್ತು ನೋಡು!’ ಎಂದು ಸುಮ್ಮನಾದ.

’ಯಾರೋ ಮುಸ್ಲೀಮ್, ಅವನೋ ಚರ್ಚಿಗೆ ಹೋಗೋ ಒಳ್ಳೇ ಕ್ರಿಶ್ಚಿಯನ್ನ್ ಅಲ್ವೇ?’ ಎನ್ನೋ ಪ್ರಶ್ನೆಯನ್ನ ತಾಳಲಾರದೆ ತಾಳಿಕೊಂಡು,
’ಲೋ, ಹುಸೇನ್ ಅಂತ ಮಿಡ್ಲ್ ನೇಮ್ ಇಟ್ಟುಕೊಂಡು ಮಿಡ್ಲ್ ಈಸ್ಟ್ ನಲ್ಲಿ ಪಾಪ್ಯುಲ್ಲರ್ ಅಗೀರೊ ಬರಾಕ್ ಅಂದ್ರೆ ಏನ್ ಅಂತ ತಿಳುಕೊಂಡಿದೀಯಾ? ಬರಾಕ್‍ಗೆ ಬಹು ಪರಾಕ್! ಹಹ್ಹಹ್ಹ...’ ಎಂದು ದೊಡ್ಡದಾಗಿ ನಗಾಡಿದ.

’ಹ್ಞೂ, ಅದಿರ್ಲಿ, ಬೆಂಗ್ಳೂರಿನವರು ಏನಂತಾರೆ?’

’ಬೆಂಗ್ಳೂರಿಗೂ ಬಫೆಲ್ಲೋಗೂ ಏನು ತಾಳೆ ಗುರುವೇ? ವರ್ಷದ ಆರು ತಿಂಗಳು ಆರು ಅಡಿ ಸ್ನೋನಲ್ಲಿ ಮುಚ್ಚಿರೋ ನಗರಕ್ಕೂ ಸೌತ್ ಇಂಡಿಯನ್ ಸ್ವರ್ಗಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಈ ನನ್ ಮಕ್ಳು ನಮ್ಮಲ್ಲಿನ ರಸವನ್ನೆಲ್ಲ ಹೀರಿಕೊಂಡು ಈಗ ಸಿಪ್ಪೆ ಬಿಸಾಡಿದ ಹಾಗಾಯ್ತು. ನನ್ ಕೇಳಿದ್ರೆ ಔಟ್‌ಸೋರ್ಸಿಂಗ್ ವಿರುದ್ಧ ತಿರುಗಿ ಬಿದ್ದಿರೋ ಅಮೇರಿಕನ್ಸ್ ನೀತಿ ವಿರೋಧಿಸಿ ದೊಡ್ಡ ರ್ಯಾಲಿ ಆಗಬೇಕು. ಏನ್ ಆದ್ರೆ ಏನಂತೆ, ಇವೆಲ್ಲ ಕ್ವಾಣನ ಮುಂದೆ ಕಿನ್ನರಿ ಬಾರಿಸಿದಂಗೇ ಸೈ’.

’ಅಂದ ಹಾಗೆ, ನ್ಯೂ ಯಾರ್ಕ್ ರಾಜ್ಯದ ಬಫೆಲ್ಲೋಗೂ ಕಾಡು ಎಮ್ಮೆಗೂ ವ್ಯತ್ಯಾಸವಿದೆ ಗೊತ್ತಲ್ವಾ? ನಮ್ ನ್ಯೂಸ್ ಪೇಪರ್ರ್‌ಗಳು ಎಮ್ಮೆ-ಕ್ವಾಣ ಅಂತ ಬರೆಯೋಕ್ ಮುನ್ನ ಸ್ವಲ್ಪ ಯೋಚಿಸ್ಲಿ ಅಂತ ಹೇಳ್ದೆ ಅಷ್ಟೇ...’

’ಏನಾದ್ರೂ ಹಾಳಾಗ್ ಹೋಗ್ಲಿ ಬಿಡು, ಈಗಿನ ಕಾಲ್ದಲ್ಲಿ ನ್ಯೂಸ್ ಪೇಪರ್ ಓದೋರ್ ಯಾರು? ಎಲ್ಲರೂ ದಿವಾಳಿ ಆಗ್ಲಿ, ಅಡ್ವರ್‌ಟೈಸ್ ರೆವಿನ್ಯೂ ನಂಬಿಕೊಂಡಿರೋ ನ್ಯೂ ಯಾರ್ಕ್ ಟೈಮ್ಸ್ ಬಂಡವಾಳವೇ ಅಲುಗಾಡ್ತಾ ಇರುವಾಗ ಇನ್ನು ರೀಜನಲ್ಲ್ ನ್ಯೂಸ್ ಪ್ರಿಂಟ್‌ಗಳ ಕಥೆ ದೇವ್ರೆ ಕಾಪಾಡ್‌ಬೇಕು.’

’ಮತ್ತೇನಾದ್ರೂ ಇದೆಯಾ? I got to go' ಎಂದೆ.

’ಏನೂ ಇಲ್ಲ, ಬೆಂಗ್ಳೂರ್ ಹೋಯ್ತು, ಬಫೆಲ್ಲೋ ಬಂತು, ಡುಂ, ಡುಂ!’ ಎಂದ, ಕಾಲ್ ಕತ್ತರಿಸಿದೆ.

Thursday, April 30, 2009

ವರ್ಚುವಲ್ಲ್ ಪ್ರಪಂಚದ ಲೀಲೆ

ನನಗೆ ಅವಾಗಾವಾಗ ’ನೀವು ಆರ್ಕುಟ್‌ನಲ್ಲಿದ್ದೀರಾ?’, ’ಟ್ವಿಟ್ಟರ್ರ್ ನಲ್ಲಿದ್ದೀರಾ?’ ಮುಂತಾಗಿ ಪ್ರಶ್ನೆಗಳು ಬರ್ತಾನೇ ಇರ್ತವೆ. ನಾನು ಅಂತಹ ಪ್ರಶ್ನೆಗಳಿಗೆ ’ಟು ಡು ವಾಟ್?’ ಅನ್ನೋ ಮತ್ತೊಂದು ಪ್ರಶ್ನೆ ಎಸೆದು ಉತ್ರ ಕೊಡ್ತೀನಿ. ನನಗೆ ಸಿಗೋ ಎಲ್ಲ ಉತ್ತರ ಅಥವಾ ಸಮಜಾಯಿಷಿಗಳೂ ಇವೆಲ್ಲಾ ಸೋಷಿಯಲ್ಲ್ ನೆಟ್‌ವರ್ಕಿಂಗ್ ಸೈಟ್‌ಗಳು, ಅಲ್ಲಿಗೆ ಬಂದೂ ಹೋಗಿ ಮಾಡೋದ್ರಿಂದ ನಿಮ್ಮ ನಿಮ್ಮ ನೆಟ್‌ವರ್ಕ್ ಅಭಿವೃದ್ಧಿ ಆಗುತ್ತೆ ಅನ್ನೋ ರೀತಿ ಇರುತ್ವೆ. ನಾನಂತೀನಿ, ’ನಮ್ಮ ಸುತ್ ಮುತ್ಲು ಇರೋರ ಜೊತೆ ಬೆರೆತುಕೊಂಡಿರೋದೇ ದೊಡ್ಡ ಸವಾಲಾಗಿದೆ ಇನ್ನು ಈ ವರ್ಚುವಲ್ ಪ್ರಪಂಚದವರ ಜೊತೆ ಏಗೋದು ಯಾರೂ ಅಂತ?’

ನೀವೇ ಯೋಚ್ನೆ ಮಾಡಿ, ಎಷ್ಟೊಂದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಿವೆ ಅಂತಾ - ಆರ್ಕುಟ್ಟು, ಫೇಸ್‌ಬುಕ್, ಮೈಸ್ಪೇಸ್, ಟ್ವಿಟ್ಟರ್ ಮುಂತಾಗಿ. ಇವುಗಳಿಗೆಲ್ಲ ಒಂದೊಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡಿರಬೇಕು, ಅವಕ್ಕೆಲ್ಲ ಒಂದೊಂದು ಯೂಸರ್ ಐಡಿ ಪಾಸ್‌ವರ್ಡ್. ಜೊತೆಗೆ ಅಲ್ಲಿ ಬಂದು ಹೋಗೋರ ಜೊತೆಯಲ್ಲ ಸಂಭಾಷಣೆ ಮಾಡುತ್ತಾ ಇರೋದಕ್ಕೆ ಟೈಮಾದ್ರೂ ಯಾರ ಹತ್ರ ಇದೆ ಅನ್ಸೋಲ್ವ? ನಾನು ತಮಾಷೆಯಾಗಿ ಹೇಳೋದೇನು ಅಂದ್ರೆ, ಒಂದಲ್ಲ ಒಂದು ದಿನ ಈ ಸೈಟುಗಳೆಲ್ಲ ಗೂಗಲ್ಲೋ, ಮೈಕ್ರೋಸಾಫ್ಟ್‌ನವರೋ ಮರ್ಜ್ ಮಾಡೋ ಕಾಲ ಬರುತ್ತೆ, ಆಗ ನಾನು ಒಂದೇ ಒಂದು ಅಕೌಂಟ್ ಓಪನ್ ಮಾಡಿಕೊಂಡಿರ್ತೀನಿ ಅಂತ.

ಇನ್ನೂ ಮುವತ್ತರ ಹರೆಯದಲ್ಲಿದ್ದುಕೊಂಡೇ ನಾನು ಇಷ್ಟೊಂದು ಔಟ್‌ಡೇಟೆಡ್ ಆಗಿ ಹೋದ್ತಾ ಅನ್ನೋ ಹೆದರಿಕೆ ಒಂದು ಕಡೆ. ಛೇ, ಪ್ರಪಂಚದ ಆರು ಬಿಲಿಯನ್ ಜನರಲ್ಲಿ ಕನಿಷ್ಠ ಮೂರು ಬಿಲಿಯನ್ನ್ ಜನರಾದ್ರೂ ಇನ್ನೂ ಫೋನಿನ ಡಯಲ್ ಟೋನ್ ಕೇಳದೇ ಇರೋ ಪರಿಸ್ಥಿತಿ ಇರೋವಂತ ಸಮಯದಲ್ಲಿ ನನ್ನಂಥವರು ಔಟ್‌ಡೇಟೆಡ್ ಅಗೋದಾದ್ರೂ ಹೇಗೆ ಅನ್ನೋ ಸಮಾಧಾನ ಜೊತೆಗೆ. ಇ-ಮೇಲ್, ಫೋನ್ ಹಾಗೂ ಮುಖತಃ ಭೇಟಿ ಮಾಡುವ ಸಂದರ್ಭಗಳಲ್ಲಿ ನಾವು ನಮ್ಮನ್ನು ಚೆನ್ನಾಗಿ ತೊಡಗಿಸಿಕೊಂಡ್ರೆ ಸಾಕು ಸಂಬಂಧಗಳು ಬೆಳೆಯೋದಕ್ಕೆ, ಇವಿಷ್ಟರ ಜೊತೆಗೆ ಅಲ್ಲಿ-ಇಲ್ಲಿ ವೆಬ್ ಸೈಟ್‌ಗಳಲ್ಲಿ ಹೋಗಿ ’ಇಂದು ನಾನು ಇಂಥಾ ತಿಂಡಿ ತಿಂದೆ’, ’ಅವನು ಅಲ್ಲಿ ಅಷ್ಟೊಂದು ರನ್ ಹೊಡೆದ’ ಅಂತೆಲ್ಲ ’ವಾಲ್’ ಮೇಲೆ ಬರೆದುಕೊಳ್ಳೋದ್ರಿಂದ ಏನ್ ಪ್ರಯೋಜನ ಅಂತ ನನಗಿನ್ನೂ ಕನ್ವಿನ್ಸ್ ಆಗಿಲ್ಲ ನೋಡಿ.

ನಾನು ಹಳೇ ಕಾಲದವನು ಆಗೋ ಕಾಲ ಹತ್ರ ಬರ್ತಾ ಇದೆ, ಅಂತ ನೀವೆಲ್ಲ ನಗಬಹುದು. ನನ್ನ ಪ್ರಕಾರ, ಕೈಯಲ್ಲಿರೋ ಐದು ಸಾವಿರ ಡಾಲರ್ ವಾಚಾಗ್ಲಿ ಅಥ್ವಾ ಬೆಂಗಳೂರಿನಲ್ಲಿ ಐವತ್ತು ರೂಪಾಯಿಗೆ ಸಿಗೋ ವಾಚಾಗ್ಲಿ ಮುಖ್ಯವಲ್ಲ್ - ಸಮಯವನ್ನ ಚೆನ್ನಾಗಿ ಬಳಸೋರು, ಅವರ ಕೈಯಲ್ಲಿ ಯಾವ ವಾಚ್ ಇದ್ರೂ ಇಲ್ದೇ ಇದ್ರೂ, ಸಮಯದ ಉಪಯೋಗವನ್ನು ಚೆನ್ನಾಗಿ ಮಾಡಿಕೊಳ್ತಾರೆ. ಅದೂ ಅಲ್ದೇ, ಈ ಸಂಬಂಧಗಳು ಅನ್ನೋದೆಲ್ಲ, ತೋಟದಲ್ಲಿ ಒಂದು ಗಿಡ ನೆಟ್ಟ ಹಾಗೆ, ಅವುಗಳನ್ನು ಚೆನ್ನಾಗಿ ಬೆಳೆಸಿ, ಪೋಷಿಸದೇ ಹೋದ್ರೇ ಸತ್ತೇ ಹೋಗ್ತಾವೆ. ಹಾಗಿರಬೇಕಾದ್ರೆ, ನನ್ನ ಸುತ್ತು ಮುತ್ಲೂ ಇರೋ ಸಂಬಂಧಗಳನ್ನು ನಾನು ಆತುಕೊಳ್ಳಲೋ ಅಥ್ವಾ ಜೊತೆಗೆ ಒಂದಿಷ್ಟು ವರ್ಚುವಲ್ಲ್ ಪ್ರಪಂಚದ ಲಿಂಕುಗಳನ್ನೂ ಪೋಣಿಸಿಕೊಳ್ಳಲೋ? ಅನ್ನೋ ಸಂಧಿಗ್ಧ ಬೇರೆ.

ಇಂಟರ್‌ನೆಟ್ ಈಗ ತಾನೆ ಕಣ್ಣು ತೆರೀತಾ ಇದೆ, ಕೇವಲ ಒಂದೂವರೆ ದಶಕದಷ್ಟು ಹಳೆಯದಾದ ಈ ತಂತ್ರಜ್ಞಾನಕ್ಕೆ ಇನ್ನೂ ದೊಡ್ಡ ಭವಿಷ್ಯವಿದೆ. ಈ ಇಂಟರ್‌ನೆಂಟ್ ಸೈಟ್‌ಗಳು ನಮ್ಮೂರಿನ ಪಬ್ಲಿಕ್ ಲೈಬ್ರರಿಗಳಾಗೋ ಮುನ್ನ ಬಹಳಷ್ಟು ಬೆಳವಣಿಗೆ ಖಂಡಿತ ಇದೆ. ನಾವೆಲ್ಲ ಮುದುಕರಾಗೋಷ್ಟೋತ್ತಿಗೆ ಇನ್ನೂ ಏನೇನು ಬದಲಾವಣೆಗಳು ಬಂದು ಹೋಗ್ತಾವೋ ಕಾಣೆ. ನಮ್ಮ ಸುತ್ತು ಮುತ್ಲೂ ಇರೋ ಖಾಲಿ ಜಾಗಗಳ್ಳಲ್ಲಿ - ಅಂದ್ರೆ ಅದು ರೆಫ್ರಿಜರೇಟರ್ರಿನ ಸೈಡ್ ಆಗಿರಬಹುದು, ಆಥವಾ ಅಟ್ಟದ ಮೇಲಿನಿಂದ ಇಳಿಯುವಾಗ ಸಿಗೋ ಗೋಡೆ ಮೇಲಿನ ಖಾಲಿ ಜಾಗವಾಗಬಹುದು, ಅಥವಾ ಕಾರಿನ ವಿಂಡ್‌ಶೀಲ್ಡ್ ಇನ್ನು ಮುಂತಾದ ಫ್ಲಾಟ್ ಜಾಗಗಳು ಫ್ಲಾಟ್‌ಸ್ಕ್ರೀನ್ ಆಗಿ ಮಾರ್ಪಾಡಾಗೋ ಕಾಲ ದೂರವಿಲ್ಲ. ವರ್ಚುವಲ್ಲ್ ಆಗಲಿ ರಿಯಲ್ ಆಗಲಿ ಈ ಪ್ರಪಂಚ ಇಷ್ಟೇ, ಯಾವಾಗ್ಲೂ ಬೆಳಿತಾನೇ ಇರುತ್ತೆ. ಇವುಗಳಿಗೆಲ್ಲ ಸ್ಪಂದಿಸೋದಕ್ಕೆ, ಇವುಗಳ ಜೊತೆ ಏಗೋದಕ್ಕೆ ಸಮಯ ಮಾತ್ರ ಸಿಗೋದಿಲ್ಲ ಅಷ್ಟೇ.

Monday, April 13, 2009

ನಿಂತ ಮೇಲೆ ಹಾಸ್ಯ!

ಹತ್ತನೇ ಕ್ಲಾಸ್ ವರೆಗೆ ಕನ್ನಡ ಮೀಡಿಯಮ್‌ನಲ್ಲಿ ಓದಿರೋ ನನ್ನಂಥವರಿಗೆ Stand-up comedy ಅನ್ನೋದನ್ನ ಕನ್ನಡಕ್ಕೆ ಭಾಷಾಂತರ ಮಾಡಿ ಅಂದ್ರೆ, ಅದನ್ನ ’ನಿಂತ-ಮೇಲೆ ಹಾಸ್ಯ!’ ಅಂತ ಮಾಡಿಬಿಡ್ತೀನೇನೋ ಅನ್ನೋದು ನನ್ನ ಹೆದರಿಕೆ. ಉದಯ ಟಿವಿಯಲ್ಲಿ ಬರ್ತಾ ಇದ್ದ ನಗೆ ಸಖತ್ ಸವಾಲನ್ನು ನೋಡಿದಾಗಲೆಲ್ಲ ನಮ್ಮ ಜನರಿಗೆ ಹಾಸ್ಯದ ಚುರುಕು ಇತ್ತೀಚೆಗೆ ಬಹಳ ತಾಗಿದೆ ಅನ್ನಿಸ್ತಾ ಇತ್ತು, ಆದ್ರೆ ಜೊತೆಯಲ್ಲಿ ಇನ್ನೂ ಅವರಿವರು ಬಾವಿಗಳಲ್ಲಿ ಬೀಳಿಸ್ಕೊಂಡಿರೋ ವಾಚ್‌ಗಳಿಗೆ ಕೀಲಿ ಕೊಡೋದರಲ್ಲೇ ನಮ್ಮ ಜೋಕ್ ಮಾರರು ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟ ಹಾಗೆ ಕಾಣಿಸ್ತಾನೂ ಇತ್ತು.

ಕಾಮಿಡಿ-ಹಾಸ್ಯ-ತಮಾಷೆ-ನಗೆ ಅಂತ ಹುಡುಕ್ತಾ ಹೋದ್ರೆ ಎಷ್ಟು ಜನ ತಮ್ಮ ಒರಿಜಿನಲ್ ಕಂಟೆಂಟ್ ಅನ್ನ ತಮ್ಮ ಒರಿಜಿನಲ್ ಶೈಲಿಯಲ್ಲಿ ಪ್ರದರ್ಶನ ನೀಡಿ ಪ್ರಖ್ಯಾತರಾಗಿದ್ದಾರೆ, ಅದರಲ್ಲಿ ಕನ್ನಡಿಗರ ಪಾಲು ಎಷ್ಟು ಅಂತ ಅನ್ನೋದು ದೊಡ್ಡ ಸವಾಲೇ ಸರಿ. ನನ್ನ ಮಟ್ಟಿಗೆ ಅಮೇರಿಕದ ಜಾರ್ಜ್ ಕಾರ್ಲಿನ್ ಕಾಮಿಡಿ ಬಹಳ ಹೆಚ್ಚಿನ ಮಟ್ಟದ್ದು ಅನ್ನಿಸ್ತು. ನನ್ನ ಸಹೋದ್ಯೋಗಿಯೊಬ್ಬನನ್ನ ನಿನಗ್ಯಾವ ಕಾಮಿಕ್ಕುಗಳು ಇಷ್ಟ ಅಂತ ಪ್ರಶ್ನೆ ಕೇಳಿದ್ರೆ ಜೆರ್ರಿ ಸೈನ್‌ಫೆಲ್ಡ್ ಅಂದ. ಯಾಕೆ ಅಂದ್ರೆ, ಸೈನ್‌ಫೆಲ್ಡ್ ಜನರ ಬದುಕಿನ ಸೂಕ್ಷ್ಮಗಳನ್ನು ಹಾಸ್ಯವಾಗಿ ಜನರ ಜೊತೆಗೆ ಅಶ್ಲೀಲತೆಯ ಸೋಗಿಲ್ಲದೆ ಹಂಚಿಕೊಂಡವರಲ್ಲಿ ನಿಸ್ಸೀಮ ಎಂದು ತನ್ನ ನಿಲುವನ್ನ ನನ್ನ ಸಹೋದ್ಯೋಗಿ ಹಂಚಿಕೊಂಡ. ನನಗೆ ಆಗ್ಲೇ ಅನ್ಸಿದ್ದು, ಕಾಮಿಡಿ ಅಂದ್ರೆ, ಹೊಲಸು ಭಾಷೆಯ ಬಳಕೆ ಅಥವಾ ದುರ್ಬಳಕೆ ಇರ್ಲೇ ಬೇಕು ಅಂತೇನು ಇಲ್ಲ ಅಂತ.

***

ಯಾರಾದ್ರೂ ಹೊಸದಾಗಿ ಪರಿಚಯವಾದವರು ನನ್ನನ್ನ ಕೇಳೋ ಹಾಗೆ, ’...ಎಲ್ಲಾ ಸೆಟ್ಲ್ ಆಗಿರಬೇಕು ನೀವು ಹಾಗಾದ್ರೆ...’ ಇಲ್ಲಿ ಬಂದು ಇಷ್ಟು ವರ್ಷ ಅದ್ರೂ ಎಲ್ಲೂ ನಾವು ನೆಲೆ ನಿಂತೇ ಇಲ್ಲಾ - ಇನ್ನು ನಿಲ್ಲದ ಮೇಲೆ ಎಲ್ಲಿ ಹಾಸ್ಯ ಅಂತ ಅನ್ನೋ ಪ್ರಶ್ನೆ ಸಹಜವಾಗಿ ಬರುತ್ತೆ. ಅದಕ್ಕೆ ವಿರುದ್ಧವಾಗಿ ಕವಿವಾಣಿ ಬೇರೆ ಅದೇಶ ಕೊಟ್ಟಿದೆ - ’...ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು...’ಎಂದು...ಹೀಗೆ ತಿರುಗಾಡ್ತಾ ಇರೋ ಜೀವನಕ್ಕೇನೇ ಹೆಚ್ಚು ಹೆಚ್ಚು ಐಡಿಯಾಗಳು ಬರೋದು (ಹಾಸ್ಯದ ರೂಪದಲ್ಲಿ) ಅಂತ ಕಾಣ್ಸುತ್ತೆ, ಉದಾಹರಣೆಗೆ ಏರ್‌ಪೋರ್ಟಿನಲ್ಲಿ TSA (Transportation Security Administration) ಅವರನ್ನು Thousands Standing Around! ಅಲ್ಲಿ ಲೈನಿನಲ್ಲಿ ನಿಂತಿರುವ ಜನಸಮೂಹ ಕಿಚಾಯಿಸಬಹುದು.

***

ಹಾಸ್ಯದ ಮೇಲೆ ಮತ್ತೆ ತಮಾಷೆಯಾಗಿ ಬರೀತಾನೇ ಇರ್ತೀನಿ, ಕೊನೇಪಕ್ಷ ’ಅಂತರಂಗ’ ಅಂದ್ರೆ ಅಳುಮುಂಜಿ ಐಡಿಯಾಗಳ ಆಗರ ಮುಖ ಮುದುಡಿಕೊಳ್ಳುವವರನ್ನ ಸಂತೈಸೋಕಾದ್ರೂ. ಇನ್ನು ಕೆಲವರಿಗೆ ಬ್ಲಾಗ್‌ ನಿಂದ ಜೀವನ ದರ್ಶನ ಸಿಗಬೇಕು ಅಂತ ಸಂಕಲ್ಪ ಇದ್ರೆ ಅವರು ತಮ್ಮ ಬಿಸಿನೆಸ್ಸನ್ನ ಬೇರೆ ಎಲ್ಲಾದ್ರೂ ತೊಗೊಂಡು ಹೋಗ್ಲಿ, ಏನಂತೀರಿ?

Sunday, April 05, 2009

ಸಗಣಿಯೊಳಗಿನ ಹುಳಗಳೂ ಬಾವಿ ಕಪ್ಪೆಗಳೂ...



























ಮಾರ್ಚ್ ೨೯ ರ ವಿ.ಕ.ದಲ್ಲಿ ’ಜನಗಳ ಮನ’ದಲ್ಲಿ ರವಿ ರೆಡ್ಡಿ ಹಾಗೂ ಜಗದೀಶ್ ರಾವ್ ಕಲ್ಮನೆಯವರ ಬಗ್ಗೆ ಓದಿ ಹೀಗನಿಸಿದ್ದು ನಿಜ.

ಹ್ಞೂ, ’ಇಂಥವರ ಬಗ್ಗೆ ಎರಡು ಸಾಲು ಬರೆದರೂ ಜಾಗ ವೇಷ್ಟು’ ಎಂದಿದ್ದಾರಲ್ಲವೇ? ಜೊತೆಗೆ, ’...ಬೆಂಗಳೂರು ಸುಧಾರಣೆಯಾಗಬೇಕಿದೆ.’ ಎನ್ನುವ ಕುಹಕ ಅಲ್ಲ, ನಿಜ ಸ್ಥಿತಿ ಬೇರೆ ಕೇಡಿಗೆ.

***

’ನಾವು ಭಾರತೀಯರೂ, ಒಹೋಯ್!’ ಎಂದು ಮೊನ್ನೆ ಮೊನ್ನೆ ತಾನೆ ಅಶ್ವಥ್ ಕೂಗಿ ಹೋಗಿದ್ದರಲ್ಲವೇ? ಸಗಣಿಯೊಳಗಿನ ಹುಳುಗಳಿಗೆ ಅದೇ ಪ್ರಪಂಚ, ಒಂದು ವೇಳೆ ಅವುಗಳನ್ನೇನಾದರೂ ಯಾರಾದರೂ ಎತ್ತಿ ಹೊರಗೆ ಬಿಟ್ಟರೂ ಮತ್ತೆ ಸಗಣಿಯೊಳಗೆ ಸಿಗುವ ಸುಖಕ್ಕೆ ಜೋತು ಬೀಳುವ ಜಾತಿ. ಹಾಗೇ ಬಾವಿ ಕಪ್ಪೆಗಳೂ ಕೂಡ, ತಮ್ಮದೇ ಪ್ರಪಂಚದಲ್ಲಿ ತಾವೇ ದೊಡ್ಡವರು ಎಂದುಕೊಂಡ ಹಾಗೆ.

ಇವೇ ಅತಿರಥ-ಮಹಾರಥರು ಅಮೇರಿಕದ ಸಮ್ಮೇಳನಗಳಿಗೆ ಬಂದಾಗ ಬಾಲ ಮುದುರಿಕೊಂಡು ತಮಗೆ ತೋಚಿದ್ದನ್ನ ಬರೀತಾರೇ ವಿನಾ ಯಾರೊಬ್ಬರ ಹೆಸರಿಗೂ ಮಸಿ ಬಳಿಯುವ ಕಾಯಕಕ್ಕಂತೂ ಕೈಗೂಡಿದ್ದನ್ನ ನಾನು ನೋಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಅಮೇರಿಕದಲ್ಲಿ ಇನ್ನೂ ಮುಗಿಯದೇ ಇದ್ದ ’ಬಾಲ್ಟಿಮೋರ್ ಸಮ್ಮೇಳನ’ವನ್ನು ಈಗಾಗಲೇ ಮುಗಿದು ಹೋಯಿತು ಎಂದು ವರದಿಯನ್ನು ಹೊರಗೆ ಹಾಕಿದ್ದಕ್ಕೂ ಒಂದು ಅಪಾಲಜಿ ಇವುಗಳ ಮುಸುಡಿಯಿಂದ ಹೊರಡಲ್ಲ. ಇದ್ದ ಬದ್ದ ಸುದ್ದಿಗೆ ಒಂದಿಷ್ಟು ಕಣ್ಣೊರೆಸುವ ಚಾಕಚಕ್ಯತೆಯನ್ನು ಮುಟ್ಟಿಸಿ ಸುಳ್ಳಿನ ಮೇಲೆ ನೂರೆಂಟು ಸುಳ್ಳನ್ನು ಹೇಳೋ ಪದ್ಧತಿಯೂ ಇನ್ನೂ ನಿಂತ ಹಾಗಿಲ್ಲ.

***

’ಮೌಲ್ಯ’ವೆಂದರೇನು ಎಂದು ತಿಳಿದು ಅದನ್ನು ಪಚನ ಮಾಡಿಕೊಳ್ಳಲು ಇನ್ನೂ ಒಂದೈದು ಸಾವಿರ ವರ್ಷಗಳಾಗಬೇಕು ನಮಗೆ. ಇನ್ನು ಮೌಲ್ಯವನ್ನು ಆಧರಿಸಿದ ರಾಜಕಾರಣವೆಂದರೇನದು? ನಾವೆಲ್ಲ ಕುರಿಗಳು ಎಂದು ಕವಿಗಳು ಆಡಿ ಅಣಗಿಸಲಿಲ್ಲವೇ? ಅಂಥ ಕುರಿಗಳ ಮಂದೆಗೆ ಅಮೇರಿಕದೊಂದಿಷ್ಟು ಜನ ಪಾಪ ಏನೋ ಸಹಾಯವಾಗಲಿ ಎಂದು ಮನೆ-ಮಠ ಬಿಟ್ಟು, ಇರುವ ರಜಾ ವಜಾ ಮಾಡಿಕೊಂಡು, ಕೈಯಲ್ಲಿನ ಕಾಸು ಕರಗುವ ವರೆಗೂ ಪ್ರಯತ್ನ ಮಾಡುವ ಗೋಜಿಗಾದರೂ ಹೋಗುತ್ತಾರಲ್ಲ ಅದೇ ಮುಖ್ಯ.

ಐವತ್ತು ವರ್ಷಗಳಿಂದ ಚಲಾವಣೆಯಲ್ಲಿದ್ದ ಸಂವಿಧಾನ ಬದ್ಧ ’ಬಾವುಟ ಹಾರಿಸುವ ಕಾಯಿದೆ’ಯನ್ನು ಮುರಿದು ನಮ್ಮ ದೇಶದ ಬಾವುಟವನ್ನು ನಾವು ನಮ್ಮ ಮನೆ ಮುಂದೆ ಹಾರಿಸಿದರೆ ತಪ್ಪೇ? ಎಂದು ಸಾಧಿಸಿಕೊಂಡಿದ್ದು ನಮ್ಮಂಥ ಒಬ್ಬ ಅನಿವಾಸಿಯೇ.
ಅಮೇರಿಕದಲ್ಲಿ ಓದಿಕೊಂಡು, ಸದನದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಮುಂದೆ ಒಬ್ಬ ಪ್ರತಿಭಾವಂತ ಮುಖ್ಯಮಂತ್ರಿ ಎಂದು ಎಸ್. ಎಮ್. ಕೃಷ್ಣ ಹೆಸರು ತೆಗೆದುಕೊಳ್ಳಲಿಲ್ಲವೇ?

***

ಇಂಥವರ ಬಗ್ಗೆ ಬರೀ ಬೇಡ್ರಿ, ನಿಮ್ಮ ಮೂರುಕಾಸ್ ಪತ್ರಿಕೆಯಲ್ಲಿ, ಯಾರ್ ಕೇರ್ ಮಾಡ್ತಾರೆ? ಹಾಗೆ ಬರೆಯದೇ ಉಳಿದ ಜಾಗೆಯಲ್ಲಿ ಅವೇ-ಅವೇ ಪ್ರಭೃತಿಗಳ ದರ್ಶನ ಮಾಡಿಸಿಕೊಂಡು ಸುಖವಾಗಿರಿ. ಲಂಚ, ಭ್ರಷ್ಟಾಚಾರ ಅನ್ನೋದು ಹಾಡು ಹಗಲಿನ ದಂದೆಯಾಗಿದ್ದರೂ ಅದನ್ನು ಇದ್ದ ಹಾಗೆ ಬರೆದು ವರ್ಷಕ್ಕೊಬ್ಬ ಪುಂಡು ರಾಜಕಾರಣಿಯನ್ನಾದರೂ ಜೈಲಿಗೆ ಸೇರಿಸಿದ್ದೇ ನಿಜವಾಗಿದ್ದರೆ ಪತ್ರಿಕೆ ಪಾವನವಾಗುತ್ತಿತ್ತು, ಹಾಗಾಗೋದಿಲ್ಲ ಎಂದ ಮೇಲೆ ತಿಪ್ಪೇ ಸಾರಿಸಿಕೊಂಡೇ ಬಿದ್ದಿರಿ.

ಹೆಂಡ-ಸೀರೆ ಹಂಚಿ ಮತ ತೆಗೆದುಕೊಳ್ಳೋ ನಿಮ್ಮ ದೊರೆಗಳ ಪಾದ ನೆಕ್ಕೊಂಡು ಬಿದ್ದಿರಿ, ಇವತ್ತಲ್ಲ ನಾಳೆ ನಿಮಗೂ ಬೆಳಕಿನ ದರ್ಶನವಾದೀತು. ಬಡವರನ್ನ ದೋಚಿ ಸುಲಿಗೆ ಮಾಡಿ ಜಾತಿ ರಾಜಕಾರಣ ಮಾಡೋರು ನಿಮಗೆಲ್ಲ ಆದರ್ಶವಾಗಲಿ.

ದೇಶ ಬಿಟ್ಟು ಭಾಷೆ ಬಿಟ್ಟು, ಎಲ್ಲರಿಗಿಂತ ಹೆಚ್ಚು ಕೊರಗಿಕೊಂಡು, ಮನಸಲ್ಲಿ ಅಪ್ಪಟ ಮಾನವನಾಗಿ ಬೆಳೆಯೋ ಆಲೋಚನೆಗಳಿಗೆ ದಿನೇದಿನೇ ನೀರು ಕುಡಿಸುತ್ತಾ ಒಂದು ಕಡೆ ಬೇಡವೆಂದರೂ ದೂರ ಹೋಗುವ ಭಾರತೀಯತೆಯನ್ನು ಮತ್ತೊಂದು ಕಡೆ ಗಟ್ಟಿಯಾಗಿ ಅಪ್ಪಿಕೊಂಡೇ ನಾವು ನಿಟ್ಟುಸಿರು ಬಿಡ್ತೀವಿ, ಅವು ನಿಮಗೆಲ್ಲ ಖಂಡಿತ (ಈ ಜನುಮದಲ್ಲಿ) ಅರ್ಥ ಆಗಲ್ಲ ಬಿಡಿ.

Sunday, March 22, 2009

ಸ್ಪ್ರಿಂಗ್ ಬಂತು ಸ್ಪ್ರಿಂಗು

ಮೊನ್ನೆ ಇಲ್ಲೆಲ್ಲಾ ಸ್ಪ್ರಿಂಗ್ ಆರಂಭವಾದ ದಿನ. ಇವತ್ತಾದರೂ ಪರಿಸ್ಥಿತಿ ಹೇಗಿದೆ ನೋಡೋಣ ಎಂದು ಪ್ಯಾಟಿಯೋದಿಂದ ಹೊರಗೆ ನೋಡಿದರೆ ಅಂತಾ ಏನೂ ವಿಶೇಷ ಕಾಣಿಸ್ಲಿಲ್ಲ. ಮರ-ಗಿಡಗಳೆಲ್ಲ ಅವೇ ಗ್ರೇ ಸ್ಕೇಲ್ ಪೇಂಟಿಂಗ್‌ನಲ್ಲಿ ನಿಂತ ಹಾಗೆ ಒಂದಿನಿತೂ ಅಲುಗಾಡದೆ ನಿಂತಿದ್ದವು. ಡೆಕ್ ಮೇಲೆ ಅಮ್ಮ ಚಪಾತಿ ಮಣೆಯ ಮೇಲೆ ಹಿಟ್ಟು ಸವರಿಕೊಳ್ಳೋ ಹಾಗೆ ಒಂದು ಪದರು ಸ್ನೋ ಬಿದ್ದಿತ್ತು. ಹೊರಗಡೆ ಇರೋ ಥರ್ಮಾ ಮೀಟರ್‌ನ ಮುಳ್ಳು ಕೆಟ್ಟು ಹೋಗಿರುವ ಗಡಿಯಾರದಲ್ಲಿ ಮುಳ್ಳುಗಳು ನಿರ್ಜೀವವಾಗಿ ಬಿದ್ದ ಹಾಗೆ ಮುವತ್ತು ಡಿಗ್ರಿಯ (ಫ್ಯಾರನ್‌ಹೈಟ್) ಬಲಮಗ್ಗುಲಿಗೆ ಸತ್ತು ಬಿದ್ದ ಹಾಗಿತ್ತು.

ಈ ಸ್ಪ್ರಿಂಗ್ ನದೇ ವಿಶೇಷ, ಇಲ್ಲಿ ಅದೆಷ್ಟು ವರ್ಷ ಇದ್ದರೂ ನಮಗಿನ್ನೂ ಚರ್ಮದಿಂದ ಕೆಳಗೆ ಇಳಿಯೋದೇ ಇಲ್ಲ. ಸ್ಪ್ರಿಂಗ್‌ಗೆ ಕನ್ನಡದಲ್ಲಿ ಏನಂತಾರೆ ಎಂದು ಡಿಕ್ಷನರಿಯನ್ನು ನೋಡಿದರೆ ಅಲ್ಲೂ ನಿರಾಶೆ ಕಾದಿತ್ತು. ಇವರೋ ವರ್ಷವನ್ನು ಸಮನಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ಪ್ರಿಂಗು, ಸಮ್ಮರ್ರು, ಫಾಲ್ ಹಾಗೂ ವಿಂಟರ್ ಎಂದು ಕರೆದರು. ಆದರೆ ನಮ್ಮ ಚೈತ್ರ, ವೈಶಾಖ ಮಾಸಗಳಾಗಲೀ ವಸಂತ ಋತುವಾಗಲಿ ವರ್ಷವನ್ನು ನೋಡುವ ರೀತಿಯೇ ಬೇರೆ. ಅಲ್ಲದೆ ನಮ್ಮ ಕಡೆಗೆಲ್ಲ ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ಎಂದು ಮಾತನಾಡಿಕೊಂಡಿದ್ದನ್ನು ಕೇಳಿದ್ದೆನೆಯೇ ವಿನಾ ಈ ಸ್ಪ್ರಿಂಗ್ ಬಗ್ಗೆ ಕೇಳಿಲ್ಲ. ಇದನ್ನು ಸುಗ್ಗಿ ಅನ್ನೋಣವೇ, ಸಂಕ್ರಮಣ ಅನ್ನೋಣವೇ, ಯುಗಾದಿ ಅನ್ನೋಣವೇ, ಅಥವಾ ಬಾಯ್ತುಂಬ ಸ್ಪ್ರಿಂಗ್ ಎಂದು ಸುಮ್ಮನಿದ್ದು ಬಿಡೋಣವೆ.

ಇಲ್ಲಿ ಮಂಜಿನ ಹನಿಗಳದೊಂದು ಮತ್ತೊಂದು ವಿಶೇಷ, ಹಗುರವಾಗಿ ನೆಲದ ಮೇಲೆಲ್ಲಾ ಹರಡಿ ಹೂ-ಎಲೆಗಳನ್ನು ಸ್ಪರ್ಶಿಸಿ ಅವುಗಳನ್ನು ತೇವವಾಗಿಡುವುದರ ಬದಲು ಇಳಿಯುವ ಉಷ್ಣತೆಯ ದೋಸ್ತಿಗೆ ಕಟ್ಟುಬಿದ್ದು ಅವೂ ಘನೀಭವಿಸತೊಡಗಿವೆ. ಡಿಸೆಂಬರ್ ಇಪ್ಪತ್ತೊಂದರಿಂದಲೇ ಮೆಜಾರಿಟಿಗೆ ಬಂದ ಸೂರ್ಯನ ಕಿರಣಗಳು ಈಗಾಗಲೇ ತಮ್ಮ ಮಧ್ಯ ವಯಸ್ಸನ್ನು ತಲುಪಿ ಮುದುಕರಂತೆ ಕಂಡು ಬರುತ್ತಿವೆ, ಇನ್ನೇನು ಜೂನ್ ಇಪ್ಪತ್ತೊಂದು ಬರುವಷ್ಟರೊಳಗೆ ಸತ್ತೇ ಹೋದಾವೇನೋ ಎನ್ನೋ ಹಾಗೆ.

ಛಳಿಯಲ್ಲಿ ಇದ್ದು ಬಂದವರಿಗೆ ಬೇಸಿಗೆಯ ಆಸೆ, ಬೇಸಿಗೆಯಲ್ಲಿ ಒಂದೇ ಒಂದಿಷ್ಟು ಬಿಸಿಲಲ್ಲಿ ಬಸವಳಿದು ಹೋದರೂ ತಂಪಾಗಿರಬಾರದೇ ಎನ್ನುವ ತವಕ. ಏನೇ ಅಂದರೂ ಶೇಕ್ಸ್‌ಪಿಯರ್ ಅಂಥವರು - shall I compare thee to a summers day! ಎಂದು ಏಕೆ ಬರೆದರು ಎಂದು ಅನುಭವಿಸಲು ಅಂತಹ ವಾತಾವರಣದಲ್ಲೇ ಇರಬೇಕು ಎನ್ನುವುದು ನನ್ನ ಅಭಿಮತ. ಮಳೆಯಲ್ಲಿ ನೆಂದವರ ಬವಣೆಯನ್ನು ಅರಿಯಲು ಓದುಗರು ಮಳೆಯಲ್ಲಿ ನೆನೆದು ನೋಡಬೇಕಾಗೇನೂ ಇಲ್ಲ, ಆದರೆ ವರ್ಷದ ಎಂಟು ತಿಂಗಳು ಶೀತ ವಾತಾವರಣವನ್ನು ಅನುಭವಿಸಿ ಇರುವ ಒಂದೋ ಎರಡೋ ತಿಂಗಳ ಬೇಸಿಗೆಯ ಸುಖದಲ್ಲಿ ಚಿಗುರುವ ಕವಿಯ ಕಲ್ಪನೆಗಳು ನಮ್ಮ ದಕ್ಷಿಣ ಭಾರತದ ಸುಡು ಬಿಸಿಲಿನಲ್ಲಿ ಹುಟ್ಟಿ ಬೆಳೆದು ಓದಿದವರಿಗೇನು ಗೊತ್ತು?

ನಮಗಿಲ್ಲಿ ಕ್ಯಾಲೆಂಡರಿನಲ್ಲಿ ಹೇಳಿ ಕೊಟ್ಟಂತೆ ಸ್ಪ್ರಿಂಗ್ ಬರುತ್ತದೆ. ಅವಾಗಾವಾಗ ಅಮ್ಮ ನೆನಪಿಸುತ್ತಲೇ ಇರುತ್ತಾಳೆ, ಈ ತಿಂಗಳು ಇಪ್ಪತ್ತೇಳಕ್ಕೆ ಯುಗಾದಿ ಹಬ್ಬ ಇದೆ, ನೀವೂ ಮಾಡಿ ಎಂದು. ನಮಗಿಲ್ಲಿ ಎಳ್ಳೂ-ಬೆಲ್ಲ ಬರಲಿಲ್ಲ, ಮುಂದೆ ಬೇವೂ-ಬೆಲ್ಲವೂ ಇರೋದಿಲ್ಲ. ಇಲ್ಲಿ ನಮಗೆ ಹೊಂಗೆ ಹೂವ ತೊಂಗಲು ಕಣ್ಣಿಗೆ ಕಾಣೋದಿಲ್ಲ, ಯಾವುದೋ ಭಾಷೆಯಲ್ಲಿ ಅದೇನೆಂದೋ ಕರೆಯುವ ಒಂದಿಷ್ಟು ಮರಗಿಡಗಳು ದಾರಿ ಉದ್ದಕ್ಕೂ ಕಾಣ ಸಿಗುತ್ತವೆ, ತಮ್ಮ ಸುತ್ತ ಮುತ್ತಲೂ ಬಣ್ಣದೋಕುಳಿಯನ್ನು ಹರಡಿಕೊಳ್ಳುತ್ತವೆ. ಮಾವಿನೆಲೆಗಳಾಗಲೀ, ಚಿಗುರುಗಳಾಗಲೀ ನೋಡದೇ ಎಷ್ಟೋ ವರ್ಷಗಳೇ ಕಳೆದವೇನೋ, ಅವುಗಳ ಬದಲಿಗೆ ನಮ್ಮ ಮನೆಯ ಬಾಗಿಲಿಗೆ ಯಾವತ್ತೂ ಹಸಿರನ್ನು ತರುವ ಪ್ಲಾಸ್ಟಿಕ್ ಎಲೆಗಳನ್ನು ಪೋಣಿಸಿದ ಸರವೊಂದನ್ನು ನೇತು ಹಾಕಿದ್ದಾಗಿದೆ. ಸಂವತ್ಸರಗಳು ಕೆಲವೇ ಕೆಲವು ನೆನಪಿವೆ. ಆರು ಋತುಗಳನ್ನು ನೆನಪಿಸಿಕೊಳ್ಳಲು ಕನಿಷ್ಠ ಆರು ನಿಮಿಷವಾದರೂ ಬೇಕು, ಚೈತ್ರ-ವೈಶಾಖರನ್ನು ಎಡಬಿಡದೆ ಕಲಿತದ್ದರಿಂದಾಗಿ ಇನ್ನೂ ಸ್ಮೃತಿಪಠಲದಲ್ಲೇ ಇವೆ. ಅಶ್ವಿನಿ-ಭರಣಿ-ಕೃತ್ತಿಕಾ-ರೋಹಿಣಿಯರು ಒಮ್ಮೊಮ್ಮೆ ಪೂರ್ಣ ನೆನಪಿಗೆ ಬರುತ್ತಾರೆ, ಮತ್ತೆ ಇಲ್ಲ. ಯಾವ ಮಳೆ ನಕ್ಷತ್ರ ಯಾವ ತಿಂಗಳಲ್ಲಿ ಎನ್ನುವುದು ನೆನಪಿಗೆ ಗುಡ್ ಬೈ ಹೇಳಿ ಬಹಳ ವರ್ಷಗಳೇ ಆಗಿವೆ. ಯಾವ ಹುಣ್ಣಿಮೆಗೆ ಏನೇನು ವಿಶೇಷ ಎನ್ನುವುದು ಈಗ ಇತಿಹಾಸವಷ್ಟೇ.

ನಮಗಲ್ಲಾದರೆ ಯುಗಾದಿ ಒಂದು ಸಮೂಹದಾಚರಣೆಯಾಗುತ್ತಿತ್ತು. ಒಂದೆರಡು ಬೇವು-ಮಾವಿನ ಮರಗಳನ್ನು ಹತ್ತಿಳಿದು ಎಲೆಗಳನ್ನು ಕಿತ್ತು ತರುತ್ತಿದ್ದೆವು. ಅದೇ ದಿನ ಸಂಜೆಯೋ ಮರುದಿನವೋ ಕಂಡೂ ಕಾಣದ ಚಂದ್ರನ ಗೆರೆಯನ್ನು ತವಕದಿಂದ ಹುಡುಕುತ್ತಿದ್ದೆವು. ನಾವು ತಿಂದು ಹಂಚುವ ಬೇವು-ಬೆಲ್ಲದ ಪ್ರತೀಕ ಬಹಳ ದೊಡ್ಡದಿತ್ತು. ಇಲ್ಲಿ ಸ್ಪ್ರಿಂಗ್ ಬಂದರೆ it's just another day, ಅದೇ ರೀತಿ ಉಳಿದ ದಿನಗಳೂ ಬಂದು ಹೋಗುತ್ತವೆ. ಹಾಗೆ ಬಂದು ಹೋಗುವ ಕಾಲ(ಮಾನ)ಕ್ಕೆ ನಾವು ಒಂದಿಷ್ಟು ಪ್ರತಿರೋಧ ಒಡ್ಡಿದಂತೆ ಮಾಡುತ್ತೇವಾದರೂ ಅಂತಹ ಪ್ರತಿರೋಧದ ಧ್ವನಿಯೂ ನಮ್ಮಲ್ಲೇ ಹುಟ್ಟಿ ಅಲ್ಲೇ ಮುದುರಿಕೊಳ್ಳುವುದು ಈ ಸ್ಪ್ರಿಂಗ್ ಬಂದು ಹೋದಷ್ಟೇ ಸಹಜವಾಗಿ ಹೋಗುತ್ತದೆ.

Friday, March 20, 2009

ನಮ್ಮೂರ ರಸ್ತೆ ಹಾಗೂ ಜನರ ಮನಸ್ಥಿತಿ

"Roads are horrible in India...don't know why people don't realize that and do something about it..." ಎನ್ನೋ ಕಾಮೆಂಟ್ ಅನ್ನು ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಹೇಳೋದನ್ನ ಕೇಳಿದ್ದೇನೆ. ನಮ್ಮ ಭಾರತದ ರಸ್ತೆಗಳೇ ಹಾಗೆ...which ever the road you take it is always a treacherous journey! ಶ್ರೀಮಂತ ದೇಶದ ಜನರಿಗೆ ತೃತೀಯ ಜಗತ್ತಿನ ಅರಿವಾಗುವುದು ಕಷ್ಟ ಸಾಧ್ಯವೂ ಹೌದು. ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಂಚ, ವಂಚನೆ, ಭ್ರಷ್ಟಾಚಾರ, ಹಿಂಸೆ, ಅನಕ್ಷರತೆ ಮೊದಲಾದವುಗಳನ್ನು ಬೇಕಾದಷ್ಟು ರೀತಿಯಲ್ಲಿ ಪ್ರಶ್ನಿಸಿಕೊಳ್ಳಬಹುದು.

ಒಂದು ದೇಶದ ಉನ್ನತಿ ಆ ದೇಶದಲ್ಲಿ ದೊರೆಯುವ ಸಂಪನ್ಮೂಲ ಹಾಗೂ ಆ ದೇಶದ ಜನರ ಅರಿವಿನ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆ ಮಾಡಬಹುದು ಅನ್ನೋ ತಂತ್ರಜ್ಞಾನಕ್ಕೂ ಸಹ ಸರಿಯಾದ ಸಲಕರಣೆ ಪರಿಕರಗಳು ಇದ್ದರೆ ಮಾತ್ರ ಆ ತಂತ್ರಜ್ಞಾನವನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಂದು ದೇಶದ ಹವಾಮಾನ ಕೂಡ ಅಲ್ಲಿನ ರಸ್ತೆಗಳ ವಿನ್ಯಾಸ, ಅಗಲ ಹಾಗೂ ಕ್ವಾಲಿಟಿಗಳನ್ನು ನಿರ್ಧರಿಸಬಲ್ಲದು ಎನ್ನುವ ವಿಷಯ ಇತ್ತೀಚೆಗಷ್ಟೇ ಮನಸಿಗೆ ಬಂದಿದ್ದು. ಭೂ ವಿಸ್ತಾರದಲ್ಲಿ ಹೆಚ್ಚಾಗಿಯೂ ಜನ ಸಂಖ್ಯೆಯಲ್ಲಿ ಕಡಿಮೆಯೂ ಇರುವ ದೇಶಗಳ ಸವಾಲಿಗೂ ಅಧಿಕ ಜನಸಂಖ್ಯೆಯ ಸಣ್ಣ ದೇಶಗಳ ಸವಾಲಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ನಾವಿರುವ ರಾಜ್ಯವನ್ನೇ ತೆಗೆದುಕೊಳ್ಳೋಣ, ನ್ಯೂ ಜೆರ್ಸಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಛಳಿಗಾಲದಲ್ಲಿ ಒಮ್ಮೊಮ್ಮೆ ಒಂದು ಅಡಿಗಿಂತಲೂ ಹೆಚ್ಚು ಸ್ನೋ ಬೀಳುವುದೂ, ವರ್ಷದಲ್ಲಿ ಕೊನೇ ಪಕ್ಷ ನಾಲ್ಕು ತಿಂಗಳಾದರೂ ಭಯಂಕರ ಛಳಿಯ ವಾತಾವರಣ ಇರೋದು ನಿಜ. ಸ್ನೋ ಬಿದ್ದಾಗ ಅಥವಾ ಛಳಿಯಲ್ಲಿ ಹೆಪ್ಪುಗಟ್ಟಿದ ಹಿಮವನ್ನು ರಸ್ತೆಯ ಬದಿಗೊತ್ತಿ ವಾಹನಾಳಿಗೆ ದಾರಿ ಮಾಡಿಕೊಡಲು ರಾಜ್ಯ/ಪಟ್ಟಣಗಳ ಬೊಕ್ಕಸದಿಂದ ವರ್ಷಕ್ಕಿಷ್ಟು ಎಂದು ಹಣ ತೆಗೆದಿಡಲಾಗುತ್ತದೆ. ದೊಡ್ಡ ಹೈವೆಗಳಲ್ಲಿ ರಸ್ತೆಯ ಪಕ್ಕಕ್ಕೆ ಒಂದು ಲೇನ್ ಅಗಲಕ್ಕಿಂತಲೂ ಹೆಚ್ಚು ಅಗಲವಾದ ಶೋಲ್ಡರುಗಳಿರುತ್ತವೆ. ಇನ್ನು ಅಷ್ಟು ಅಗಲವಲ್ಲದ ಶೋಲ್ಡರ್ ಇರುವ ಎರಡು ಲೇನ್ ರಸ್ತೆಗಳು ವಿಂಟರ್‌ನಲ್ಲಿ ಒಂದು ಲೇನ್ ರಸ್ತೆಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಜನರ ಹಾಗೂ ಅವರ ಅಟೋಮೊಬೈಲುಗಳ ಸಂಬಂಧ ಅಧಿಕ. ಇಲ್ಲಿ ತಲಾ ಒಂದೊಂದು ಕಾರು ಎನ್ನುವುದು ನಿತ್ಯೋಪಯೋಗಿ ವಸ್ತುವೇ ಹೊರತು ಲಕ್ಷುರಿಯಂತೂ ಅಲ್ಲ. ಪ್ರತಿಯೊಬ್ಬರೂ ಸಣ್ಣ ಪುಟ್ಟ ದೂರಗಳಿಂದ ಹಿಡಿದು ನೂರಾರು ಮೈಲುಗಳ ಪ್ರಯಾಣಕ್ಕೂ ತಮ್ಮ ಕಾರುಗಳನ್ನೇ ನಂಬಿರುವ ಪರಿಸ್ಥಿತಿ. ಹೀಗಿರುವಾಗ ಕೆಟ್ಟ ರಸ್ತೆಗಳು ಹೇಗೆ ತಾನೇ ಹುಟ್ಟ ಬಲ್ಲವು. ಒಂದು ವೇಳೆ ಒಳ್ಳೆಯ ರಸ್ತೆ ಕೆಟ್ಟ ರಸ್ತೆಯಾಗಿ ಪರಿವರ್ತನೆಗೊಂಡರೂ (ಹೊಂಡ, ಗುಂಡಿ, ಬಿರುಕು, ಗಲೀಜು ಮುಂತಾದವುಗಳಿಂದ) ಇಲ್ಲಿನ ಜನರು ಸ್ಥಳೀಯ ಆಡಳಿತವನ್ನು ಕೇಳುವ ವ್ಯವಸ್ಥೆ ಇದೆ, ಅದಕ್ಕಿಂತ ಮೊದಲು ಹಾಗಿರುವ ರಸ್ತೆಗಳನ್ನು ತುರಂತ ರಿಪೇರಿ ಮಾಡುವ ವ್ಯವಸ್ಥೆ ಇದೆ, ಅಲ್ಲದೆ ಪ್ರತಿಯೊಂದು ರಸ್ತೆಯನ್ನು ಮೇಂಟೈನ್ ಮಾಡುವ ಪದ್ಧತಿ ಅಥವಾ ವ್ಯವಸ್ಥೆ ಇದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ತಮ್ಮ ನೆರೆಹೊರೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವಲ್ಲಿ ಶ್ರಮಿಸುತ್ತವೆ.

ಭಾರತದಲ್ಲಿ ಹೈವೇಗಳಿಂದ ಹಿಡಿದು ಸ್ಥಳೀಯ ರಸ್ತೆಗಳಲ್ಲಿ ಲೇನ್‌ಗಳು ಹೊಸತು. ರಸ್ತೆಯ ಮೇಲೆ ಬಿಳಿಯ ಪಟ್ಟೆಗಳನ್ನು ಉದ್ದಾನುದ್ದ ಎಳೆದು ಅವನ್ನು ಮೇಂಟೇನ್ ಮಾಡುವುದಕ್ಕೆ ತೊಡಗಿಸಬೇಕಾದ ಹಣ, ಹಾಗೆ ಮಾಡುವುದರ ಹಿಂದಿನ ಟೆಕ್ನಾಲಜಿ, ಜನರ ತಿಳುವಳಿಕೆ ಮೊದಲಾದವುಗಳು ಇನ್ನೂ ಹೊಸತು. ಎಲ್ಲದಕ್ಕಿಂತ ಮುಖ್ಯವಾಗಿ ಜನರಿಗೆ ಅರಿವು ಅಥವಾ ತಿಳುವಳಿಕೆ ಇಲ್ಲದಿರುವುದು ಗೊತ್ತಾಗುತ್ತದೆ. ನಾನು ನೋಡಿದ ಕನ್ನಡ ಸಿನಿಮಾಗಳಲ್ಲಿ ತೋರಿಸುವ ಈ ರಸ್ತೆಗಳಲ್ಲಿ ಜನರು ಕಾರು/ಜೀಪು ಓಡಿಸಿಕೊಂಡು ಹೋಗುವುದನ್ನು ನೋಡಿದರೆ ಅಲ್ಲಿ ಯಾರೂ ತೆಪ್ಪಗೆ ತಮ್ಮ ಲೇನ್ ನಲ್ಲಿ ಹೋಗೋದಿಲ್ಲ. ಜನನಿಬಿಡ ರಸ್ತೆಗಳಿಂದ ಹಿಡಿದು ಖಾಲೀ ರಸ್ತೆಗಳವರೆಗೆ ಎರೆಡೆರೆಡು ಲೇನ್‌ಗಳ ನಡುವೆ ಕಾರು ಓಡಿಸಿಕೊಂಡು ಹೋಗುವುದು ಒಂದು ರೀತಿಯ ಶೋಕಿ ಅಥವಾ ಅಜ್ಞಾನ. ಜೊತೆಗೆ ಪಾರ್ಕಿಂಗ್ ಮಾಡುವಲ್ಲಿಯೂ ಸಹ ಎರೆಡೆರಡು ಕಾರು ಪಾರ್ಕ್ ಮಾಡಬಹುದಾದ ಸ್ಥಳಗಳಲ್ಲಿ ಒಂದು ಕಾರನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಿ ಹೋಗುವುದಾಗಲೀ, ಟ್ರಾಫಿಕ್ ನಿಯಮ ಹಾಗೂ ಉಲ್ಲಂಘಿಸುವುದನ್ನೆಲ್ಲ ಆದರ್ಶವಾಗಿ ತೋರಿಸುವ ವ್ಯವಸ್ಥೆ ಇದೆ. ತಪ್ಪು ಮಾಡೋದು ಸಹಜ ಎಂದು ಒಪ್ಪೋ ಮನಸ್ಸಿಗೆ ಅದಕ್ಕೆ ತಕ್ಕ ಶಿಕ್ಷೆಯೂ ಸಹಜ ಎಂದು ಏಕೆ ಹೊಳೆಯೋದಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ವಿದ್ಯಾಭ್ಯಾಸ ಹಾಗೂ ಅರಿವು ಹೆಚ್ಚಿದಂತೆ ಜನರ ನಡವಳಿಕೆಗಳಲ್ಲಿ ಬದಲಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ.

ಸಂಪನ್ಮೂಲಗಳು ಇರಲಿ ಇಲ್ಲದಿರಲಿ, ಇದ್ದುದ್ದನ್ನು ಚೆನ್ನಾಗಿ ನೋಡಿಕೊಂಡು ಹೋಗುವ ಮನಸ್ಥಿತಿ ಮುಖ್ಯ. ಬಡದೇಶಗಳಲ್ಲಿ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಅದನ್ನು ಉಳಿಸಿಕೊಂಡು ಹೋಗಲು ಕಷ್ಟವಾಗಬಹುದು, ಆದರೆ ಎಲ್ಲಿಯವರೆಗೂ ಜನರು ಹಾಗೂ ಜನರ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಕೇವಲ ಸಂಪನ್ಮೂಲಗಳೊಂದೇ ಏನೂ ಮಾಡಲಾರವು. ಸಾವಿರಾರು ವರ್ಷಗಳಲ್ಲಿ ಬದಲಾಗದ ಜನರ ಅರಿವು ಇನ್ನು ನೂರಿನ್ನೂರು ವರ್ಷಗಳಲ್ಲಿ ಬದಲಾದೀತು ಎನ್ನುವುದಕ್ಕೇನು ಆಧಾರ ಅಥವಾ ಗ್ಯಾರಂಟಿ?

Thursday, March 19, 2009

ಮೂರುಗಾಲಿ ಆಟಿಕೆ

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!

ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.

ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.

ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.

Tuesday, March 17, 2009

ಅವೇ ಆಲೋಚನೆಗಳು...

ಆಲೋಚನೆಗಳೇ ಹಾಗೆ ನಿಲ್ಲೋದೇ ಇಲ್ಲ, ಅವುಗಳ ಒರತೆ ಬತ್ತೋದಂತೂ ಖಂಡಿತ ಇಲ್ಲ. ನೀವು ಜನನಿಬಿಡ ಮರಳುಗಾಡಿನಲ್ಲೇ ಇರಲಿ ಅಥವಾ ಯಾವ ಕಾಡಿನ ಯಾವ ಮೂಲೆಯಲ್ಲಿದ್ದರೂ ಆಲೋಚನೆಗಳ ಸರಣಿ ನಿರಂತರವಾಗಿ ನಡೆಯುತ್ತಲೇ ಇರುತ್ತೆ. ನಾನು ಇತ್ತೀಚೆಗೆ ಖರೀದಿ ಮಾಡಿದ ಉಗುರಿನಷ್ಟು ದೊಡ್ಡ ಸೆಮಿಕಂಡಕ್ಟರ್ ಸ್ಟೋರೇಜ್ ಡಿವೈಸಿನಲ್ಲಿ ಹದಿನಾರು ಗಿಗಾಬೈಟುಗಳಷ್ಟು ಮಾಹಿತಿಯನ್ನು ಸ್ಟೋರ್ ಮಾಡಬಹುದು ಎನ್ನುವುದು ನನ್ನಂತಹವನ ಕಣ್ಣಿಗೆ ದೊಡ್ಡ ಅಚೀವ್‌ಮೆಂಟ್ ಆಗಿ ಕಾಣಬಹುದು. ಹಾಗೆ ಕಂಡ ಮರುಘಳಿಗೆಯಲ್ಲಿಯೇ ಈ ಸೃಷ್ಟಿಯ ಸ್ಟೋರೇಜಿನ ಮುಂದೆ ಇವೆಲ್ಲಾ ಯಾವ ಲೆಕ್ಕ ಎನ್ನಿಸಲೂ ಬಹುದು. ನಮ್ಮ ಮಿದುಳು ಸಂಸ್ಕರಿಸಿ, ಪೋಷಿಸುವ ಅದೆಷ್ಟೋ ಆಡಿಯೋ ವಿಡಿಯೋ, ಡೇಟಾ ಮತ್ತಿತರ ಅಂಶಗಳನ್ನೆಲ್ಲ ಪೋಣಿಸಿ ಗಿಗಾಬೈಟುಗಳಲ್ಲಿ ಎಣಿಸಿದ್ದೇ ಆದರೆ ಇಂದಿನ ಟೆರಾಬೈಟ್ ಮಾನದಂಡವೂ ಅದರ ಮುಂದೆ ಸೆಪ್ಪೆ ಅನಿಸೋದಿಲ್ಲವೇ? ಈ ಸೃಷ್ಟಿಯ ಅದ್ಯಾವ ತಂತ್ರಜ್ಞಾನ ಅದು ಹೇಗೆ ನರಮಂಡಲದ ವ್ಯೂಹವಾಗಿ ಬೆಳೆದುಬಂದಿದ್ದಿರಬಹುದು ಎಂದು ಸೋಜಿಗೊಂಡಿದ್ದೇನೆ.

ಇಂತಹ ಸೋಜಿಗಗಳಿಂದ ದಿಢೀರ್ ಮತ್ತೊಂದು ಆಲೋಚನೆ: ನಮ್ಮಲ್ಲಿ ನಿಕ್ ನೇಮ್ ಗಳನ್ನು ಬಳಸುವ ಬಗ್ಗೆ. ಭಾರತದಲ್ಲಿ ’ಕೃಷ್ಣಮೂರ್ತಿ’ ಎನ್ನುವ ಅಫಿಷಿಯಲ್ ನೇಮ್ ಮನೆಯಲ್ಲಿ ’ಕಿಟ್ಟಿ’ ಆಗಿ ರೂಪಗೊಳ್ಳಬಹುದು, ಅದೇ ಅಮೇರಿಕದಲ್ಲಿ ’ವಿಲಿಯಮ್’ ಎನ್ನುವ ಅಫಿಷಿಯಲ್ ನೇಮ್ ’ಬಿಲ್’ ಉಪಯೋಗಕ್ಕೊಳಗಾಗಬಹುದು. ಇದರಲ್ಲಿ ಒಂದು ವ್ಯತ್ಯಾಸವಂತೂ ಇದೆ - ನಮ್ಮ ನಿಕ್ ನೇಮ್‌ಗಳು ಖಾಸಗಿ ಆದರೆ ಇಲ್ಲಿಯವರ ನಿಕ್ ನೇಮ್‌ಗಳು ಎಲ್ಲರ ಬಳಕೆಗೂ ಸಿಗುತ್ತವೆ, ಅದು ಎಷ್ಟರ ಮಟ್ಟಿಗೆ ಪ್ರಭಾವಿ ಎಂದರೆ ಪ್ರೆಸಿಡೆಂಟುಗಳಿಂದ ಹಿಡಿದು ಸಾಮಾನ್ಯ ’ಜೋ’ ವರೆಗೂ ಅವರ ನಿಕ್‌ನೇಮ್ ಗಳೇ ಮುಖ್ಯನಾಮ. ಅಫಿಷಿಯಲ್ ನೇಮ್ ಏನಿದ್ದರೂ ಪುಸ್ತಕಕ್ಕೆ ಮಾತ್ರ.

ಈ ಆಲೋಚನೆಯಿಂದ ಹೊರಬರುವ ಹೊತ್ತಿಗೆ, ಭಾರತಕ್ಕೆ ಒಂದು ಫೋನು ಮಾಡಬಾರದೇಕೆ ಎನ್ನಿಸಿ, ತಕ್ಷಣ ಸೆಲ್ ಫೋನಿನಲ್ಲಿ ಕುಕ್ಕ ತೊಡಗಿದೆ. ೮೦೦ ನಂಬರ್ ಅನ್ನು ಹೊಡೆದು ಇನ್ನೊಂದೆರೆಡು ಕ್ಷಣಗಳಲ್ಲಿ ಎಲೆಕ್ಟ್ರಾನಿಕ್ ಚೆಲುವೆಯ (ಧ್ವನಿ) ಕೃಪೆಯಿಂದ ನನ್ನ ಅಣ್ಣನ ಮೊಬೈಲ್ ನಂಬರನ್ನು ಒತ್ತತೊಡಗಿದೆ. ಎರಡು ರಿಂಗುಗಳ ನಂತರ ಆತ ಫೋನ್ ಎತ್ತಿಕೊಂಡ, ಉಭಯ ಕುಶಲೋಪರಿಯ ಜೊತೆಗೆ ಎಲ್ಲಿದ್ದೀಯಾ? ಆಫೀಸಿಗೆ ಹೊರಟಿದ್ದೀಯಾ? ಏನು ತಿಂಡಿ? ಎಂದು ಕೇಳುವ ಅವನ ಪ್ರಶ್ನೆಗಳಿಗೆ ಡ್ರೈವ್ ಮಾಡುತ್ತಿದ್ದೇನೆ, ಇನ್ನೇನು ಆಫೀಸು ಹತ್ತಿರ ಬಂತು. ’ತಿಂಡಿ ಮಾಮೂಲಿ - ಅದೇ ಬ್ರೆಡ್ಡು, ಬಾಳೆಹಣ್ಣು, ಜ್ಯೂಸ್, ಕಾಫಿ’, ಎಂದೆ. ನಾನು ಹೀಗೆ ಹೇಳಿದಾಗಲೆಲ್ಲ ಆ ಕಡೆಯಿಂದ ಮಾಮೂಲಿ ಮೌನ. ಮತ್ತೆ ನಾನೇ ಅದೂ-ಇದೂ ಕೇಳಿದಂತೆ ಸಂಭಾಷಣೆ ವಿಷಯನ್ನು ಆಧರಿಸಿ ಎರಡು ನಿಮಿಷದಿಂದ ಹಿಡಿದು ಇಪ್ಪತ್ತು ನಿಮಿಷದ ವರೆಗೂ ನಡೆಯುತ್ತೆ.

ನಾನೆಂದೆ, ’ಹೌದು, ನೀನು ಇತ್ತೀಚೆಗೆ ಅಡುಗೆ ಮಾಡಿದ್ದು ಯಾವತ್ತು?’
ಅವನೆಂದ, ’ನಾನು ಆಡುಗೆ ಮಾಡಿ ಅದ್ಯಾವ ಕಾಲವೋ ಆಗಿದೆ.’
’ನೀನು, ಮನೆಯನ್ನು ಸ್ವಚ್ಛ ಮಾಡಲು ಸಹಾಯ ಮಾಡ್ತೀಯೋ, ಇಲ್ವೋ?’
’ಖಂಡಿತ, ಇಲ್ಲ - ನಾನು ಶಾಲೆಗೆ ಹೋಗಿ ಬರೋ ಹೊತ್ತಿಗೆ ಸಾಕಾಗಿರುತ್ತೆ, ಮತ್ತೇನೂ ಮಾಡೋದಿಲ್ಲ’

ಹೀಗೆ ನಾನು ಹುಡುಕಿ-ಹುಡುಕಿ ಕೇಳಿದ ಪ್ರಶ್ನೆಗಳು ನಾನು ಇಲ್ಲಿ ಆಗಾಗ್ಗೆ (ನಿತ್ಯ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ) ಮಾಡೋ ಕೆಲಸಗಳನ್ನು ಕುರಿತವಾಗಿದ್ದವು (ಉದಾಹರಣೆಗೆ ಬಟ್ಟೆ ಒಗೆದು ಒಣಗಿಸಿ ಮಡಚಿಡುವುದು). ಆದರೆ ಅವನು ಮನೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಒಂದೇ ನಮ್ಮ ಅತ್ತಿಗೆಯ ಹೆಸರನ್ನೋ ಅಥವಾ ಆಳುಗಳು ಮಾಡುವ ಕೆಲಸವೆಂದೋ ಹೇಳುತ್ತಿದ್ದ.

ಅವನಿಗೆ ’ಬೈ’ ಹೇಳಿ ಫೋನ್ ಇಟ್ಟ ಹೊತ್ತಿಗೆಲ್ಲ ಕುಡಿಯುತ್ತಿದ್ದ ಸುಡುಸುಡು ಕಾಫಿ ಇತ್ತೀಚೆಗಷ್ಟೇ ಎಲೆಕ್ಷನ್ನು ಗೆದ್ದು ಅಸೆಂಬ್ಲಿ ಸೇರಿದ ರೆಪ್ರೆಸೆಂಟಿವ್‌ನ ಥರ ನರಮಂಡಲದ ಮೇಲೆ ತನ್ನ ಪ್ರಭಾವವನ್ನು ಬೀರುತ್ತ ಕೆಲಸವನ್ನು ಆರಂಭಿಸಿತ್ತು. ಥೂ, ಈ ಅಮೇರಿಕದಲ್ಲಿ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಿಕೊಂಡು ಜೀವಿಸೋದರಲ್ಲೇ ಕಾಲ ಕಳೆದು ಹೋಗುತ್ತೆ. ಎಷ್ಟು ದುಡ್ಡಾಗಲಿ ಏನು ಕೆಲಸವಾಗಲಿ ಇದ್ದರೆ ಏನು ಬಂತು - ದಿನಾ ನಮ್ಮ ದುಗುಡ ಇದ್ದದ್ದೇ. ಬನೀನ್ ಎಲ್ಲಿದೆ? ಪ್ಯಾಂಟಿಗೆ ಮ್ಯಾಚ್ ಆಗುವ ಕಾಲುಚೀಲ ಸಿಗುತ್ತಿಲ್ಲ (ಬೆಳಗ್ಗೆ ಅದೂ ಚಿಮುಚಿಮು ಬೆಳಕಿನಲ್ಲಿ)! ಕಾಫಿ ಮಾಡಿಕೋ ಬೇಕು, ತಿಂಡಿಗೆ ಅವೇ ಬ್ರೆಡ್ಡು ಸ್ಲೈಸುಗಳು, ಅವೇ ಜ್ಯೂಸಿನ ಬಾಟಲುಗಳು. ವಾರಾಂತ್ಯದಲ್ಲಿ ಅಪರೂಪಕ್ಕೆ ಬ್ರೇಕ್‌ಫಾಸ್ಟ್‌ಗೆಂದು ತಿನ್ನುವ ದೋಸೆ-ಇಡ್ಲಿಗಳು ಹೆಚ್ಚಾಗಿ ಮಧ್ಯಾಹ್ನ ಲಂಚ್ ಸೇರದ ಅಥವಾ ರುಚಿಸದ ಅನುಭವ. ಮಿಸ್ಟರ್ ಕಾಫಿಯಿಂದ ಇಳಿದ ಲಾರ್ಜ್ ಕಾಫಿಯ ಗುಲಾಮಗಿರಿಯನ್ನು ಒಪ್ಪಿಕೊಂಡ ನರಮಂಡಲ ಚಿಕ್ಕ ಲೋಟಾದಲ್ಲಿ ಕುಡಿಯುವ ಕಾಫಿಯನ್ನು ’ಚಿಕ್ಕ ಸೈಜ್’ ಎಂದು ಪರಿಗಣಿಸುವ ಅನುಭೂತಿ. ಕಾಫಿಯ ಸ್ಟಿಮ್ಯುಲೇಶನ್ನಿಂದ ಹುಟ್ಟಿ ಕಾಫಿಯ ವಿರುದ್ಧವೇ ತಿರುಗುವ ಆಲೋಚನೆಗಳ ಪಾಪಪ್ರಜ್ಞೆ!

ಇಷ್ಟು ಹೊತ್ತಿಗೆ ಆಫೀಸಿನ ವಾತಾವರಣ ಹತ್ತಿರ ಬರುತ್ತಿದ್ದ ಹಾಗೆ - Oh! there is a 8 am meeting today! ಎನ್ನುವ ಅಮೇರಿಕನ್ ಉದ್ಗಾರ ನನ್ನಲ್ಲಿಯ ಕನ್ನಡತನವನ್ನು ಇನ್ನು ಹತ್ತು ಘಂಟೆಗಳ ಮಟ್ಟಿಗೆ ಅದುಮಿಕೊಳ್ಳುವ ಹಾಗೆ ಸೆಡ್ಡು ಹೊಡೆಯುವ ಅಟ್ಟಹಾಸದ ಆಲೋಚನೆ. ಆಫೀಸ್ ಬಂದೇ ಬಿಡ್ತು, ಇಲ್ಲ ನಾನೇ ಅದರ ಹತ್ತಿರ ಹೋಗ್ತಾ ಇದ್ದೇನೆ. ದೂರದ ಇಂಡಿಯಾಕ್ಕೆ ಕಾಲ್ ಮಾಡಿ ಸಂಭಾಷಣೆಯಿಂದ ಸೋತ ಸೆಲ್ ಫೋನ್ ಪಕ್ಕದಲ್ಲಿ ಬಿದ್ದುಕೊಂಡಿದೆ, ಅದರ ಗಂಟಲನ್ನೂ ಹಿಚುಕಿ (ವೈಬ್ರೇಷನ್ನ್ ಮೋಡ್‌ಗೆ ಹಾಕಿ) ಕೋಟಿನ ಜೇಬಿನಲ್ಲಿ ತುರುಕಿ ಲಂಚ್ ಪ್ಯಾಕ್ (ಅದೇ ಅನ್ನ, ಸಾರು, ಮೊಸರು, ಕೆಲವೊಮ್ಮೆ ಪಲ್ಯ) ಅನ್ನು ಕೈಯಲ್ಲಿ ಹಿಡಿದುಕೊಂಡು ಲಗುಬಗೆಯಿಂದ (ಇನ್ನೇನು ಆಫೀಸು ಎಲ್ಲಿಯಾದರೂ ಓಡಿ ಹೋದೀತೋ ಎನ್ನುವಂತೆ) ಹೆಜ್ಜೆ ಹಾಕತೊಡಗುತ್ತೇನೆ.

ಆಲೋಚನೆಗಳು ಇನ್ನೂ ಮುಂದುವರೆಯುತ್ತಲೇ ಇವೆ...

Sunday, March 08, 2009

ಹೊಸವರ್ಷ ಹೊಸತನ್ನು ತರಲಿ!

ಎಲ್ಲಾ ಇಂಡೆಕ್ಸುಗಳೂ ಮಾರ್ಕೆಟ್ ಇಂಡಿಕೇಟರುಗಳು ಇಳಿಮುಖ ಹಿಡಿಯುತ್ತಿದ್ದಂತೆ ದಿನಕ್ಕೊಮ್ಮೆ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ನಮ್ಮ ನಮ್ಮ ಪೊಸಿಷನ್ನುಗಳನ್ನು ಪ್ರಶ್ನಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯವಾಗಲಾರದು. ಸೆಕ್ಯುರಿಟೀಸ್‌ಗಳ ಮೇಜರ್ ಇಂಡಿಕೇಟರುಗಳು ಅಮೇರಿಕದಲ್ಲಿ ಹನ್ನೆರಡು ಹದಿಮೂರು ವರ್ಷದ ಕೆಳಗಿನ ಮಟ್ಟಕ್ಕೆ ಕುಸಿದಿರುವಾಗ ಈ ಹನ್ನೆರಡು ವರ್ಷಗಳಿಂದ ನಾವಿಲ್ಲಿ ದುಡಿದು ಉಳಿಸಿ ಬೆಳೆಸಿದ್ದು ಎಲ್ಲವೂ ಮರೀಚಿಕೆಯಂತಾಗಿ ಹೋಗಿದೆ ಅನ್ನೋದು ನನ್ನ ತಲೆಮಾರಿನವರ ತಳಮಳ. ಹೆಚ್ಚಿನ ಎಕ್ಸ್‌ಪರ್ಟ್‌ಗಳು ಹೇಳೋ ಹಾಗೆ ನಿಮ್ಮ ಎಮರ್ಜನ್ಸಿ ಫಂಡ್ ಅನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಪೊಸಿಷನ್ ಹೀಗೇ ಇರಲಿ, ಇವತ್ತಲ್ಲ ಮುಂದೆ ಮಾರ್ಕೆಟ್ ಮೇಲೆ ಬಂದೇ ಬರುತ್ತದೆ ಎನ್ನುವುದೆಲ್ಲ ಸುಳ್ಳಿನ ಪ್ರಣಾಳಿಕೆಗಳಾಗಿ ಕಂಡುಬರುತ್ತಿವೆ.

ಇಲ್ಲಿ ನಮಗೆ ನಾವೇ ದಿಕ್ಕು ದೆಸೆಗಳಾಗಿ ಬದುಕುತ್ತಿರುವ ಅನಿವಾಸಿಗಳಿಗೆ ಈ ಏರಿಳಿತದಿಂದ ದೊಡ್ಡ ಹೊಡೆತ ಬಿದ್ದೇ ಬೀಳುತ್ತದೆ. ನಾವು ಇರುವ ರೆಸಿಡೆನ್ಸ್ ಅನ್ನು ಹೊರತುಪಡಿಸಿ ಇರುವುದೆಲ್ಲವೂ ನಮ್ಮ ನೆಟ್‌ವರ್ತ್‌ನಲ್ಲಿ ಸೇರಿಕೊಳ್ಳುವ ಅಸ್ಸೆಟ್ ಎಂದು ಪರಿಗಣಿಸಿಕೊಂಡರೆ ಎಲ್ಲ ಕಡೆಯೂ ಹೊಡೆತವೆ. ರಿಟೈರ್‌ಮೆಂಟ್ ಉಳಿತಾಯದಿಂದ ಹಿಡಿದು ಇನ್ವೆಸ್ಟ್‌ಮೆಂಟಿನವರೆಗೆ ನಮ್ಮದು ಎನ್ನುವ ಎಲ್ಲವೂ ಕುಸಿದು ಹೋದ ಹಾಗಿನ ಅನುಭವ ಒಂದು ರೀತಿ ಸಮುದ್ರದ ತೆರೆಗಳು ನಮ್ಮ ಕಾಲಿನ ಕೆಳಗಿನ ಮರಳನ್ನು ಸಡಿಲಗೊಳಿಸುತ್ತಾ ಕ್ರಮೇಣ ನೀರಿನಲ್ಲಿ ಹೂತುಹೋಗುವ ಹಾಗೆ.

***

ಈ ಇಳಿತ ಎಲ್ಲರಿಗೂ ಆಗುತ್ತಿರುವುದೇ ಆದ್ದರಿಂದ ಅದರ ಬಗ್ಗೆ ಹಾಡಿದ್ದೇ ಹಾಡಿದಲ್ಲಿ ಏನೂ ಪ್ರಯೋಜನವಂತೂ ಇಲ್ಲ. ಇನ್ನು ಮುಂದೆ ಹೇಗೆ ಎಂದು ಏನಾದರೂ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟರೂ ಅವುಗಳು ಹೆದರಿಸುವುದು ಸಾಮಾನ್ಯ. ಇನ್ನು ಈ ಮಾರ್ಚ್ ತಿಂಗಳು ಕಳೆಯುತ್ತಿದ್ದ ಹಾಗೆ ಏಪ್ರಿಲ್ ಮೊದಲ ದಿನಗಳಲ್ಲಿ ಪ್ರಥಮ ಕ್ವಾರ್ಟರ್ ನಂಬರುಗಳು ಎಲ್ಲ ಕಡೆಯಿಂದ ಬರತೊಡಗಿ ಮತ್ತೆ ಮಾರುಕಟ್ಟೆ ಕುಸಿಯುವಂತೆ ಆದರೂ ಆಗಬಹುದು, ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮ ಕ್ವಾರ್ಟರ್ ನಂತರ ಕಂಪನಿಗಳು ಕಡಿಮೆ ಮಾಡುವ ಎಕ್ಸ್‌ಪೆನ್ಸ್ ನಿಂದಾಗಿ ಜನರ ಕೆಲಸ ಹೋಗುವ ಸಾಧ್ಯತೆಯೂ ಹೆಚ್ಚು. ನಮ್ಮ ಟೀಮುಗಳಲ್ಲಂತೂ ವರ್ಷದೆಲ್ಲದ ಲೆಕ್ಕವನ್ನು ಇನ್ನೊಂದೆರಡು ವಾರಗಳಲ್ಲಿ ಮುಗಿಸಿ ಕೊನೆಗೆ ಅದರಲ್ಲಿ ಮೇಲಿನವರ ಆದೇಶದಂತೆ ಕಡಿತಗೊಳಿಸುತ್ತಾ ಬರುವುದು ಪದ್ಧತಿ, ಅದಕ್ಕೆ ಈ ವರ್ಷ ಭಿನ್ನವೇನೂ ಆಗೋದಿಲ್ಲ.

ಈ ಕೆಟ್ಟ ನ್ಯೂಸ್/ವಿಚಾರಗಳ ಸಂಘವೇ ಬೇಡ ಎಂದು ರೆಡಿಯೋ/ಇಂಟರ್ನೆಟ್ ಮೊದಲಾದವನ್ನು ಮುಚ್ಚಿ ಇಟ್ಟರೂ ಒಂದಲ್ಲ ಒಂದು ರೀತಿಯಿಂದ ಕೆಟ್ಟ ವಿಚಾರಗಳು ಮಿದುಳನ್ನು ಹೊಕ್ಕೇ ತೀರುತ್ತವೆ ಎಂದು ಪ್ರತಿಜ್ಞೆ ಮಾಡಿದವರ ಹಾಗೆ ಮುತ್ತಿಕೊಳ್ಳುತ್ತವೆ. ಈಗಾಗಲೇ ಇರುವ ಸ್ಟ್ರೆಸ್ ಕಡಿಮೆ ಎನ್ನುವ ಹಾಗೆ ಇನ್ನೂ ಏನೇನೋ ಕೆಟ್ಟ ಆಲೋಚನೆಗಳನ್ನು ವಿಜೃಂಬಿಸಿ ಬರೆಯುವವರ ವರದಿಗಳೂ ಸಿಗತೊಡಗುತ್ತವೆ. ಹೇಗಾದರೂ ಮಾಡಿ ಕೆಟ್ಟ ವಿಚಾರಗಳು ಯಾವುವೂ ನಮ್ಮನ್ನು ಹಿಂಸಿಸದಿರುವಂತೆ ಮಾಡುವುದು ಅಸಾಧ್ಯವೆನಿಸತೊಡಗುತ್ತದೆ. ಅವೇ ಹಳಸಲು ಅಂಕಿ-ಅಂಶಗಳು, ಅವೇ ವಿಚಾರಗಳು, ಎಲ್ಲ ಕಡೆ ಕೋಲಾಹಲ -- ಇಷ್ಟೇ.

ಕೊರೆಯುವ ಕೆಟ್ಟ ಛಳಿಯ ಮಾರನೇ ದಿನ ಬೆಚ್ಚಗಿನ ಬಿಸಿಲಿನ ಹಾಗೆ ಹೊಸ ವರ್ಷದ ದಿನಗಳಾದರೂ ಶುಭವನ್ನು ತರಲಿ, ಮುಂದಿನ ಯುಗಾದಿ ಹೊಸ ಸಂವತ್ಸರಗಳು ಹೊಸತನ್ನು ಹಾರೈಸಲಿ!

Tuesday, February 17, 2009

ನಾನು ಮತ್ತು ನನ್ನ ದೇವರುಗಳು - ಭಾಗ ೧

ಶಾಲಾ ಕಾಲೇಜು ದಿನಗಳಲ್ಲಿ ದೇವರನ್ನು ಕುರಿತು ಅದೆಷ್ಟೋ ವಾದ-ವಿವಾದಗಳನ್ನು ನಡೆಸಿಕೊಂಡು ಬಂದು, ’ದೇವಸ್ಥಾನಕ್ಕೆ ಏಕೆ ಹೋಗಬೇಕು?’, ’ದೇವರೆಲ್ಲಿದ್ದಾನೆ?’ ಎನ್ನುವ ಅರ್ಥ ಕೊಡುವ ಇನ್ನೂ ಹಲವಾರು ಪ್ರಶ್ನೆಗಳಿಗೆ ನಮ್ಮದೇ ಆದ ಉತ್ತರಗಳನ್ನು ಕಂಡುಕೊಂಡು ನಾವು ಸಮಾಧಾನ ಪಟ್ಟಿದ್ದಿದೆ. ಕೊನೆಗೆ ದೇವರ ಪೂಜೆಯನ್ನು ಮಾಡದೇ, ಹಬ್ಬ-ಹರಿದಿನಗಳಿಗೆ ಮನೆಯಲ್ಲಿ ಅಬ್ಸೆಂಟ್ ಆಗುತ್ತಾ ಬಂದು ಒಂದು ರೀತಿಯ ರೆಬೆಲ್ ಜೀವನವನ್ನು ಸಾಗಿಸಿದ ನನ್ನಂತಹವರು ಈಗ ಮೇಲೇರಿದ ಏಣಿ ಗೋಡೆಗೆ ಹೆಚ್ಚು ಒರಗುವಂತಾಗುವ ಹಾಗೆ ದಿನವೂ ದೇವರ ನಾಮ ಸ್ಮರಣೆಯಿಲ್ಲದೇ ದಿನವನ್ನು ಆರಂಭಿಸೋದು ಕಡಿಮೆ. ದೇವರು ಎನ್ನುವ ಕಾನ್ಸೆಪ್ಟಿಗೂ ಮೂರ್ತಿ ಪೂಜೆ (ವಿಗ್ರಹಾರಾಧನೆ) ಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ದೇವರು ಎನ್ನುವ ಪ್ರತಿಮೆ ಒಬ್ಬ ವ್ಯಕ್ತಿ (ಪರಿವಾರ) ಕ್ಕೆ ಸೀಮಿತಗೊಳ್ಳಬಹುದು, ಅಥವಾ ಅದು ನಿಸರ್ಗದ ಮತ್ತೊಂದು ವಸ್ತು/ಜೀವಿಗೆ ನಾವು ನಮ್ಮ ಮನದಲ್ಲಿ ಕೊಡಬಹುದಾದ ಉನ್ನತ ಪರಿಭಾಷೆ ಇರಬಹುದು. ದೇವರು ಎನ್ನುವುದು ಇಂದಿಗೆ ಪ್ರಸ್ತುತವಾದ ಅಂಶವಿರಬಹುದು ಅಥವಾ ಸಾವಿರಾರು ವರ್ಷಗಳ ಹಿಂದಿನ ಯಾವುದೋ ಒಂದು ಉಲ್ಲೇಖಕ್ಕೆ ಸಂಬಂಧಪಟ್ಟಿರಬಹುದು. ಹೀಗೆ ದೇವರು ಎನ್ನುವ ಎಂದೂ ಮುಗಿಯದ ವಿಚಾರಗಳ ಖಜಾನೆಯನ್ನು ಶೋಧಿಸಿದಂತೆಲ್ಲ ಅವರವರ ಪರಿಮಿತಿಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಒಂದಲ್ಲ ಒಂದು ರೂಪ/ಆಕೃತಿ ಅದರಿಂದ ಹೊರ ಹೊಮ್ಮುತ್ತಲೇ ಇರುತ್ತೆ ಎನ್ನುವುದು ನನ್ನ ಅಂಬೋಣ.

ಉದಾಹರಣೆಗೆ, ನಮ್ಮ ಇಂದಿನ ಅನಿವಾಸಿ ಬದುಕಿನ ಒಂದು ದಿನವನ್ನು ಅವಲೋಕಿಸಿಕೊಳ್ಳೋಣ: ಇಲ್ಲಿ ನಾವು ಬೇಡವೆಂದರೂ ಘಂಟೆಗಳ ನಿನಾದ ನಮ್ಮ ಕಿವಿಗೆ ಬೀಳುವ ಗಲ್ಲಿಗಳ ದೇವಸ್ಥಾನಗಳ ಗೊಂದಲವಿಲ್ಲ. ’ಲಾ ಇಲಾಹ ಇಲ್ಲಲ್ಲ...’ ಎನ್ನುವ ಮುಂಜಾನೆ ಐದೂವರೆಗೆ ಮಸೀದಿಯಿಂದ ಕೂಗುವ ಮುಲ್ಲಾನ ಸ್ವರವಿಲ್ಲ. ಮೊದಲು ವೇಣುವಾದನದಲ್ಲಿ (ಮೋಹನರಾಗ) ಆರಂಭಗೊಂಡು ಶಹನಾಯಿವಾದನದ ಮೂಲಕ ನಮ್ಮನ್ನು ಎದ್ದೇಳಿಸುವ ಬಾನುಲಿಗಳಿಲ್ಲ (ರೆಡಿಯೋ ಸ್ಟೇಷನ್‌). ಅಪರಿಮಿತವಾಗಿ ನಮ್ಮ ಇಂದ್ರಿಯಗಳಿಗೆ ದೊರೆಯುವ ಒಂದಲ್ಲ ಒಂದು ರೀತಿಯ ದೇವರ ಉಲ್ಲೇಖಗಳಿಲ್ಲ. ಹೀಗೆಲ್ಲ ಇದ್ದಾಗ್ಯೂ ನಾನು ಕಂಡ ಅನೇಕಾನೇಕ ಅನಿವಾಸಿಗಳ ಮನೆಗಳ ಮೂಲೆಗಳಲ್ಲಿ ಕಾರಿನ ಮೂಲೆಗಳಲ್ಲಿ ದೇವರಿಗೆ ಸ್ಥಾನವಿದೆ, ಜೊತೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಈ ದೇವರುಗಳ ದರ್ಶನ ಮಾಡುವ ರೂಢಿಯಿದೆ. ಭಾರತದಲ್ಲಿ ಎಲ್ಲವೂ ಇದ್ದು ಅಲ್ಲಿ ನಮಗಿಲ್ಲದ ದೇವರುಗಳ ಜೊತೆ/ಸಾಂಗತ್ಯಕ್ಕೆ ಇಲ್ಲಿ ಹೆಚ್ಚಿನ ಅಗತ್ಯ ಕಂಡುಬರುತ್ತೆ.

ಜನವರಿ-ಫೆಬ್ರುವರಿ ದಿನಗಳಲ್ಲಿ ನಾನು ಆಫೀಸಿಗೆ ಹೋಗೋ ಹೊತ್ತಿಗೆಲ್ಲಾ ಸೂರ್ಯೋದಯದ ಸಮಯ. ದಿನಕ್ಕೊಂದು ಬಗೆಬಗೆಯ ಚಿತ್ತಾರವನ್ನು ಆಕಾಶದಲ್ಲಿ ಸೃಷ್ಟಿಸಿರೋ ಆ ಮೋಡಿಗೆ ಮಾರುಹೋಗದೇ ಇರಲು ಯಾರಿಗಾದರೂ ಹೇಗೆ ಸಾಧ್ಯ? ಅದೇ ಸಮಯಕ್ಕೆ ನಾನು ’ಓ ದಿನಕರ ಶುಭಕರ ಧರೆಗೆ ಬಾ ಎಂದು ಹಾಡುತ್ತೇನೆ’, ಅಥವಾ ’ಓ ಮಿತ್ರಾಯ ನಮಃ’ ಎನ್ನುತ್ತೇನೆ, ಅಥವಾ ತೈತ್ರೇಯ ಉಪನಿಷತ್ತೋ ಅಥವಾ ಮತ್ತಿನ್ನೆಲ್ಲೋ ಉಲ್ಲೇಖಗೊಂಡ ’ನಿನ್ನ ಹೊನ್ನ ಕಿರಣಗಳಿಂದ ನಮ್ಮನ್ನು ಪಾವನಗೊಳಿಸು’ ಎಂದು ಬೇಡಿಕೊಳ್ಳುತ್ತೇನೆ. ನಾನು ಹೀಗೆ ಮಾಡದಿದ್ದರೂ (ಅಥವಾ ಸೂರ್ಯನನ್ನು ನೋಡದೇ ಇದ್ದರೂ) ಸೂರ್ಯನ ದಿನಚರಿಯಲ್ಲಿ ಏನೂ ಬದಲಾಗೋದಿಲ್ಲ. ಹಾಗೆಂದಾಕ್ಷಣ ಎರಡು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುತ್ತವೆ: ೧) ನಿಯಮಿತವಾಗಿ ನಡೆಯುವ ಪ್ರಕೃತಿಯ ಕ್ರಿಯೆಗೆ ನಾನು ಪ್ರತಿಕ್ರಿಯಿಸಿದರೆಷ್ಟು ಬಿಟ್ಟರೆಷ್ಟು? ೨) ಈ ಪ್ರಕೃತಿಯ ಬದಲಾವಣೆಯ ಉಲ್ಲೇಖಕ್ಕೂ ದೇವರಿಗೂ ಏನು ಸಂಬಂಧ?

ಬಹಳ ಸುಲಭವಾಗಿ ದೇವರನ್ನು ಹೀಗೆ ಪರಿಕಲ್ಪಿಸಿಕೊಳ್ಳಬಹುದು: ನಮ್ಮ ಪ್ರಕೃತಿಯೇ ದೇವರು. ಅದರಲ್ಲಿ ಸೂರ್ಯ-ಚಂದ್ರರಿದ್ದಾರೆ, ನದಿ-ಸಾಗರಗಳಿವೆ, ಹಾವು-ಮುಂಗುಸಿ-ಹಂದಿ-ಕಪ್ಪೆ ಇತ್ಯಾದಿಗಳಿದ್ದಾವೆ, ಪಕ್ಷಿಗಳಿವೆ, ಎಲ್ಲವೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸರಪಳಿ ಇದೆ. ಯಾವ ವಿಜ್ಞಾನಿಯೂ ಬರೆದಿಡದ ತತ್ವದ ಪ್ರಕಾರ ನಡೆಯುವ ಅದೆಷ್ಟೋ ಅನನ್ಯವಾದ ಚಕ್ರಗಳಿವೆ, ಕೋಟ್ಯಾನುಕೋಟಿ ಜೀವರಾಶಿ ಇದೆ, ಇನ್ನೂ ಏನೇನೋ ಇದೆ. ನನಗೆ ಮುಂಜಾನೆ ಸೂರ್ಯ ದೇವರಾಗಿ ಕಂಡು ಬಂದರೆ ಒಬ್ಬ ರೈತನಿಗೆ ಅವನ ಬೆಳೆಯನ್ನು ಕಾಡುವ ಇಲಿಗಳಿಂದ ರಕ್ಷಣೆಕೊಡುವ ಹಾವು ದೇವರಾಗಿ ಕಂಡುಬರಬಹುದು, ಇನ್ನೊಬ್ಬರಿಗೆ ಅನ್ನವನ್ನು ಕೊಡುವ ಭೂತಾಯಿ ದೇವರಾಗಬಹುದು. ನೀರೆ ಒಂದು ದೊಡ್ಡ ಸಿದ್ಧಾಂತವಾಗಬಹುದು. ಗಾಳಿ, ಮಳೆ, ಬೆಂಕಿ ಮಣ್ಣು, ಮತ್ತೊಂದು ಎಲ್ಲವೂ ಅವರವರ ದೇವರಾಗಬಹುದು. ಈ ಸೃಷ್ಟಿಯ ಅಗಾಧತೆ ಹಾಗೂ ಅದರಲ್ಲಿನ ಶಕ್ತಿ ಎಲ್ಲಗಿಂತ ಮಿಗಿಲಾಗಿರಬಹುದು - ಸಣ್ಣದಾಗಿ ದೇವರ ಮುಂದೆ ಉರಿಯುವ ನಂದಾದೀಪದ ಬೆಂಕಿಗೂ ಇತ್ತೀಚೆಗಷ್ಟೇ ಆಷ್ಟ್ರೇಲಿಯದಲ್ಲಿ ಸಾವಿರಾರು ಮೈಲನ್ನು ಕಬಳಿಸಿದ ಕಾಡ್ಗಿಚ್ಚಿಗೂ ನಂಟಿದೆ. ಈ ಭೂಮಿಯನ್ನು ಸುಮಾರು ಎಂಭತ್ತು ಭಾಗ ಆವರಿಸಿಕೊಂಡ ನೀರಿನ ಅವತಾರಗಳಿಗೆ ಅಪರಿಮಿತ ಶಕ್ತಿ ಇದೆ.

ಈ ಮೇಲೆ ಉಲ್ಲೇಖಿಸಿದ ದೇವರಿನ ಪರಿಕಲ್ಪನೆಗೆ ಜಾತಿಗಳಿಲ್ಲ, ಪ್ರವಾದಿಗಳಿಲ್ಲ, ಮತಗಳಿಲ್ಲ ಹಾಗೇ ಇವು ಎಲ್ಲವೂ ಎಲ್ಲ ಕಡೆಯೂ ಇವೆ. ಅದೇ ಸರ್ವಾಂತರ್ಯಾಮಿ. ಅದೇ ಸರ್ವಶಕ್ತ. ಅದೇ ಭಗವಂತ.

***
’ಓ ಶ್ರೀ ಗಣೇಶಾಯ ನಮಃ’ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡುತ್ತೇವೆ. ಅಪರೂಪಕ್ಕೊಮ್ಮೆ ದೇವಸ್ಥಾನದಲ್ಲಿ ಕಾಲು ನೋಯಿಸಿಕೊಂಡು ವಿಷ್ಣು ಸಹಸ್ರನಾಮ ಓದಿ ಬರುತ್ತೇವೆ. ಧರ್ಮಸ್ಥಳದಲ್ಲಿ ಕೊಟ್ಟ ಶಿವಸಹಸ್ರ ನಾಮಾರ್ಚನೆಯ ಪುಸ್ತಕದಲ್ಲಿ ಕೊನೆಯ ಪಕ್ಷ ಒಂದು ನೂರು ನಾಮವನ್ನಾದರೂ ಬಾಯಿ ಪಾಠ ಮಾಡಿಕೊಂಡಿದ್ದೇವೆ. ಹಬ್ಬ-ಹರಿದಿನಗಳಿಗೆ ನಮ್ಮದೇ ಒಂದು ವರ್ಶನ್ನನ್ನು ಅನ್ನು ಸೃಷ್ಟಿಸಿಕೊಂಡಿದ್ದೇವೆ. ದಿನವನ್ನು ಆರಂಭಿಸುವ ಮೊದಲು ದೇವರ ಮುಂದೆ ದೀಪ ಹಚ್ಚುತ್ತೇವೆ, ಅಪರೂಪಕ್ಕೊಮ್ಮೆ ಸ್ಮೋಕ್ ಡಿಟೆಕ್ಟರುಗಳಿಗೆ ಹೆದರಿಕೊಂಡೇ ಊದುಬತ್ತಿಯನ್ನು ಉರಿಸುತ್ತೇವೆ. ಹಬ್ಬ ಹರಿದಿನಗಳೇನಾರೂ ವಾರಾಂತ್ಯಕ್ಕೆ ಒದಗಿ ಬಂದರೆ ದೇವಸ್ಥಾನಗಳ ಕಡೆಗೆ ಮುಖ ತಿರುಗಿಸುತ್ತೇವೆ.

ಈ ದೇವಸ್ಥಾನ ಎನ್ನುವುದು ನಮ್ಮ ಸಮುದಾಯ. ಭಾರತದಲ್ಲಿ ವಿಷ್ಣು ದೇವರ ಮುಂದೆ ಹಾಗೂ ಆಜೂ-ಬಾಜಿನಲ್ಲಿ ಹೆಚ್ಚು ದೇವರುಗಳನ್ನು ನಾವು ಸೃಷ್ಟಿಸಿಕೊಳ್ಳೋದಿಲ್ಲ, ಆದರೆ ನಮ್ಮ ಅನಿವಾಸಿ ಬದುಕಿನಲ್ಲಿ ನಾವು ಎಡೆತಾಕುವ ದೇವಸ್ಥಾನಗಳ ಹೆಸರುಗಳು ಏನೇ ಇದ್ದರೂ ಅದರಲ್ಲಿ ಎಲ್ಲವೂ ಇವೆ. ಗಣೇಶ (ಅದರಲ್ಲೂ ಹಲವಾರು ವಿಧ, ಭಂಗಿ, ಗಾತ್ರ - ಒಂದೇ ದೇವಸ್ಥಾನದ ಹಲವು ಕಡೆ), ಶಿವ, ಅಂಬಿಕೆ, ಸತ್ಯನಾರಾಯಣ ಸ್ವಾಮಿ (ಪರಿವಾರ), ರಾಮ (ಪರಿವಾರ), ಭೂಮಿ, ದುರ್ಗೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ (ಪರಿವಾರ), ಶ್ರೀಕೃಷ್ಣ (ಪರಿವಾರ), ಆಂಜನೇಯ, ನವಗ್ರಹಗಳು, ಇತ್ಯಾದಿ - ಜೊತೆಗೆ ಮುಖ್ಯ ದೇವತೆ (ದೇವಸ್ಥಾನದ ಹೆಸರಿಗೆ ತಕ್ಕಂತೆ). ದೊಡ್ಡ ಬಾಲಾಜಿಯು ವಿಗ್ರಹದ ಕೆಳಗೆ ಸಣ್ಣದೊಂದಿದೆ, ಅದಕ್ಕೂ ಚಿಕ್ಕದಾಗಿ ಮತ್ತೊಂದು ಗಣೇಶ ಮೂರ್ತಿ ಇದೆ. ಪ್ರದಕ್ಷಿಣೆ ಹಾಕುವಾಗ ಅಲ್ಲಲ್ಲಿ ಬೇಕಾದಷ್ಟು ಸಣ್ಣ-ಪುಟ್ಟ ಗಣೇಶ-ಶಿವರು ಕಂಡುಬರುತ್ತಾರೆ.

ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಅನಿವಾಸಿಗಳು ಸೃಷ್ಟಿಸಿಕೊಂಡ ದೇವಸ್ಥಾನಗಳು ದೇವಸ್ಥಾನಗಳೇ ಅಲ್ಲ ಎನ್ನಬಹುದು. ಇಲ್ಲಿನ ಮಳೆ-ಛಳಿ-ವ್ಯವಸ್ಥೆಗೆ ತಕ್ಕಂತೆ ಬನಿಯನ್-ಕಾಲುಚೀಲ ಧರಿಸಿ ಪೂಜೆ ನಡೆಸಿಕೊಡುವ ಅರ್ಚಕರಿದ್ದಾರೆ. ಆ ಮೂಲ ವಿನೀತ ಭಾವನೆಯಿಂದ ದೇವರಿಗೆ ನಮ್ಮ ಪ್ರಾರ್ಥನೆಯನ್ನು ಅರ್ಪಿಸಿಕೊಳ್ಳುವ (ನಮ್ಮಲ್ಲಿ) ಮನೋಭಾವನೆಯಲ್ಲಿ ಬಹಳಷ್ಟು ಬದಲಾವಣೆ ಇದೆ/ಆಗಿದೆ. ಬೇಸಿಗೆ ಸಮಯದಲ್ಲಿ ಹೊರಗಡೆ ಜೀನ್ಸ್ ಚೆಡ್ಡಿ(ಬರ್ಮುಡಾ) ವನ್ನು ಧರಿಸಿಕೊಂಡು ಓಡಾಡುವ ನಮಗೆ ದೇವಸ್ಥಾನಗಳಲ್ಲಿ ’ಶಿಸ್ತಾಗಿ ಬನ್ನಿ’ ಎನ್ನುವ ವಿನಂತಿ/ಆದೇಶವಿದೆ. ಶೂಗಳನ್ನು ಯಾವಾಗಲೂ ರ್ಯಾಕ್‌ನಲ್ಲೇ ಇಡಿ ಎಂದು ಅದ್ಯಾವುದೇ ಭಾಷೆಯಲ್ಲಿ ಅದೆಷ್ಟೇ ಬೋರ್ಡುಗಳನ್ನು ಬರೆಸಿಹಾಕಿದ್ದರೂ ಅದನ್ನೆಲ್ಲ ಧಿಕ್ಕರಿಸಿ ಬಾಗಿಲ ಬಳಿಯೇ ಚಪ್ಪಲಿ/ಶೂ ರಾಶಿ ಪೇರಿಸುವ ’ಅದು ನಮಗಲ್ಲ’ ಎಂದು ಕೊಡಗಿಕೊಳ್ಳುವ ಮನೋಭಾವನೆ ಇದೆ (ಇದೇ ಒಂದು ಅಂಶ ಸಾಕು ನಾವು, ಭಾರತೀಯರು ರೂಲ್ಸ್, ರೆಗ್ಯುಲೇಶನ್ನ್ ಹಾಗೂ ಕಾನೂನನ್ನು ಹೇಗೆ ಪರಿಪಾಲಿಸುತ್ತೇವೆ ಎಂದು ಸಾಧಿಸಲು).

ಹೀಗೆ ನಮ್ಮ ಮನೆ, ಮನ, ಕಾರುಗಳಲ್ಲಿರುವುದು ದೇವರೋ ಅಥವಾ ಈ ದೇವಸ್ಥಾನವೆಂದು ಹೆಸರಿಟ್ಟುಕೊಂಡ ಸಮುದಾಯಗಳಲ್ಲಿರುವುದು ದೇವರೋ ಅಥವಾ ನಮ್ಮ ಊರು/ಪರಂಪರೆಯಲ್ಲಿರುವುದು ದೇವರೋ ಎನ್ನುವ ಪ್ರಶ್ನೆ ಬಹುಷಃ ಎಲ್ಲರಿಗೂ ಬಂದಿರಬಹುದು. ಇಷ್ಟೆಲ್ಲಾ ದೇವರಿನ ಪರಿಕಲ್ಪನೆ ಸಾಲದು ಎಂದು ನಮ್ಮ ನಮ್ಮ ಕಲ್ಪನೆಯ ಮಠಗಳನ್ನು ಹುಟ್ಟು ಹಾಕಿಕೊಂಡಿದ್ದೇವೆ. ಸಂಕಟಕ್ಕೆ ತಿರುಪತಿಯ ವೆಂಕಟರಮಣನಿದ್ದಾನೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯಿದೆ (ಒಂದು ಆಬ್ಜೆಕ್ಟ್ ಪರಿಕಲ್ಪನೆ ಗಮನಿಸಿ), ಮಂತ್ರಾಲಯವಿದೆ, ಹೊರನಾಡಿದೆ, ಶೃಂಗೇರಿಯಿದೆ. ನಮ್ಮ ಊರಿನ ಕೈಟಭೇಶ್ವರನಿದ್ದಾನೆ, ಸರ್ಕಲ್ಲಿನ ಚೌಡಮ್ಮಳಿದ್ದಾಳೆ, ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ಇದ್ದಾನೆ, ಸುಬ್ರಹ್ಮಣ್ಯ ಸ್ವಾಮಿಯ ಸಾನಿಧ್ಯವಿದೆ. ನಮ್ಮ ಹಿಂದೂ ಪರಿಕಲ್ಪನೆಯೇ ಎಷ್ಟು ವಿಸ್ತಾರವಾದುದೆಂದು ನಾನು ಸೋಜಿಗಗೊಂಡಿದ್ದೇನೆ - ಅವರವರ ಅನುಕೂಲಕ್ಕೆ ತಕ್ಕಂತೆ ಯಾರು/ಏನನ್ನು ಬೇಕಾದರೂ ಮೆಚ್ಚಿ/ಹಚ್ಚಿಕೊಳ್ಳುವ ಸ್ವಾತಂತ್ರ್ಯವಿದೆ.


***

ಸೃಷ್ಟಿ, ಪ್ರಕೃತಿ ಹಾಗೂ ಮೂರ್ತಿ ಪೂಜೆಯ ಆಧಾರದಲ್ಲಿ ಈ ಎಲ್ಲ ಉಲ್ಲೇಖಗಳನ್ನು ಮಂಡಿಸಿದಂತೆ ಒಂದು ಅಂಶ ಪ್ರಸ್ತುತವಾಗುತ್ತದೆ - ಅದೇ ನಮ್ಮ ಸಮುದಾಯ. ಭಾರತದಲ್ಲಿ ನಾವು ಬೆಳೆದುಬಂದಂತೆ ಒಂದು (ಮೆಜಾರಿಟಿ) ವ್ಯವಸ್ಥೆಯ ಅಂಗವಾಗಿದ್ದೆವು, ಆ ವ್ಯವಸ್ಥೆ ಇಲ್ಲಿ ಇರದಿದ್ದ ಮಾತ್ರಕ್ಕೆ ಅದನ್ನು ನಾವು-ನಾವೇ ಹುಟ್ಟುಹಾಕಿಕೊಂಡಿರೋದು (ಪ್ರಯತ್ನ). ಸಂಘಜೀವ ಪ್ರತಿಯೊಬ್ಬರಿಗೂ ಬೇಕಾದ ಹಾಗೇ ಒಂದಲ್ಲ ಒಂದು ಗೋಡೆಗೆ ನಾವು ಒರಗಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಮನ-ಕಾರು-ಮನೆಗಳಲ್ಲಿನ ದೇವರುಗಳನ್ನು ಒಂದು ಸ್ವಲ್ಪ ದಿನಗಳ ಮಟ್ಟಿಗೆ ತೆಗೆದುಹಾಕಿ ನೋಡಿದಾಗ (ಸಾಧ್ಯವಿದ್ದರೆ) ಅಲ್ಲಿ ಒಂದು ನಿರ್ವಾತ (ವ್ಯಾಕ್ಯೂಮ್) ಹುಟ್ಟತ್ತದೆ, ಈ ನಿರ್ವಾತದ ವಿಶೇಷವೆಂದರೆ ಅದನ್ನು ಮತ್ತೊಂದರಿಂದ ತುಂಬಲೇ ಬೇಕಾಗುತ್ತದೆ. ಒಂದು ರೀತಿಯ ಪೆಂಡುಲಮ್ ಗುಂಡು ಇದ್ದ ಹಾಗೆ, ನೀವು ಒಂದು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋದಂತೆಲ್ಲ ಅದು ಅಷ್ಟೇ ವಿರುದ್ಧ ದಿಕ್ಕಿಗೆ ಚಲಿಸುವ ಸಹಜತೆ ಇರುವ ಹಾಗೆ.

ಪ್ರತಿಯೊಬ್ಬರಿಗೂ ಅವರವರ ಬೇಡಿಕೆಗಳಿವೆ ಹಾಗೂ ಅಗತ್ಯಗಳಿವೆ, ಅದಕ್ಕೆ ತಕ್ಕಂತೆ ಅವರವರ ಮನಸ್ಸಿನಲ್ಲಿ ಎಲ್ಲೋ ಮೂಲೆಯಲ್ಲಿ ದೇವರ ಪರಿಕಲ್ಪನೆ ಇದೆ. ದೇವರು ಇಲ್ಲ ಎನ್ನುವ ವಾದವೂ, ದೇವರ ಮೇಲಿನ ಸೇಡೂ, ವಿರೋಧಾಲೋಚನೆಗಳು ಎಲ್ಲವೂ ಆ ದೇವರ ಕೃಪೆಯೇ ಎಂದುಕೊಂಡರೆ ಎಲ್ಲವೂ ದೇವರ ಮಯ. ದೇವರು ಎನ್ನುವ ಭಾವನೆ ಅಥವಾ ಆ ಭಾವನೆ ಇಲ್ಲದಿರುವ ಭಾವನೆಯೇ ದಿವ್ಯವಾದುದು, ಅಷ್ಟೇ!

Monday, February 16, 2009

ಈಗಿನ ಹುಡ್ರು ಕಥೆ

ಪಾಪ, ಈಗಿನ ಹುಡ್ರು ತಮ್ ತಮ್ ಒಳಗೆ ಹಿಂಗೂ ಮಾತಾಡ್‌ಕೊಂತರೆ ನೋಡಿ, ಕರ್ರಗಿದ್ದೋರನ್ನ ಕರಿಯಾ ಅನ್ನೋದರಲ್ಲಿ ಅಫೆನ್ಸ್ ಏನಿದೆ? ದಿನಕ್ಕೆ ಐವತ್ತು ಸೆಂಟ್ಸ್ ಕೊಟ್ಟು ವಾರಕ್ಕೊಂದು ಸರ್ತಿ ಉದಯಾ ಟಿವಿ ನೋಡೋ ಭಾಗ್ಯದ ದೆಸೆಯಿಂದ ಈ ಹಾಡು ಕಿವಿಗೆ ಬಿದ್ದು ಹೀಗೆ ಬರೀಬೇಕಾಯ್ತು ನೋಡಿ.

ಕರಿಯಾ ಐ ಲವ್ ಯೂ
ಕರುನಾಡ ಮೇಲ್ ಆಣೆ
ಬೆಳ್ಳಿ ಐ ಲವ್ ಯೂ
ಬಿಳಿ ಮೋಡದಾ ಮೇಲ್ ಆಣೆ

ಭಾಳಾ ಹಿಂದಕೆ ಏನಿಲ್ಲ ಪ್ರೇಮಿಗಳೆಲ್ಲ ಇನ್ನೂ ಏನೇನನ್ನೋ ಇಟ್ಟು ಆಣೆ ಮಾಡಿಕೊಂತಿದ್ರು ಇಂದಿನ್ ಕಾಲ್ದಲ್ಲಿ ಅವೆಲ್ಲಾ ಶಾನೆ ಬದ್ಲಾಗಿರಂಗಿದೆ ಬಿಡಿ, ಏನ್ ಮಾಡಣ. ಇವತ್ತಿನ್ ಹುಡ್ರೆಲ್ಲಾ ಟೈಪ್‌ರೈಟರ್ ಕುಟ್ಟಿ ನೋಡಿಲ್ಲ, ರೆಕಾರ್ಡ್ ಪ್ಲೇಯುರ್ ತಟ್ಟೇನೆಲ್ಲ ಕಂಡೇ ಇಲ್ಲ. ನಮ್ ಕಾಲ್ದ ರೆಕಾರ್ಡ್ ತಟ್ಟೆಗಳ ಮೇಲ್ ಧೂಳೂ ಪಾಳೂ ಕುಂತಿದ್ದೇ ಆದ್ರೆ ಬರೀ ಹೇಳಿದ್ದೇ ಹೇಳ್ತಿತ್ತು, ಅದೇ ಈಗಿನ ಕಾಲ್ದ ತಟ್ಟೆಗಳೋ ಕೆಲ್ಸಾ ಮಾಡೋದೇ ನಿಲ್ಲಿಸ್ತವೆ. ಹೇಳಿದ್ದೇ ಹೇಳೋದ್ ಬೆಷ್ಟೋ ಅಥ್ವಾ ಕೆಲ್ಸಾ ನಿಲ್ಸೋದ್ ಬೆಷ್ಟೋ ನಿಮ್ ನಿಮ್ಗೇ ಬಿಟ್ಟಿದ್ದು. ಕೆಲವಂದ್ ಸರ್ತಿ ಹೇಳಿದ್ದೇ ಹೇಳೋ ಕಿಸ್‌ಬಾಯ್ ದಾಸ್ರೇ ಸರಿ, ಸುಮ್ಕಿರ್ ಮಂಗ್ಯಾನ್ ಮಕ್ಳೀಗ್ ಹೋಲ್ಸಿ ನೋಡಿದ್ರೆ ಅನ್ಸಲ್ಲಾ?

ನಿನಗೊಂದು ಪ್ರೇಮದ ಪತ್ರಾ
ಬರೆಯೋದು ನನಗಾಸೆ
ನಾನೆ ಇರುವೇ ಹತ್ರ
ಬಿಡು ಆಸೆ ಓ ಕೂಸೇ


ಆಯ್ತಲ್ಲಾ ಕಥೇ, ಪ್ರೇಮದ ಪತ್ರಾ ಇರ್ಲಿ, ಪತ್ರದ ಗೋಜಿಗೇ ಹೋಗಂಗಿಲ್ಲ ಈಗಿನ ಹುಡ್ರೂ ಅಂತೀನಿ. ಎಲ್ಲೋ ಇ-ಮೇಲೂ ಪಾಮೇಲೂ ಅಂತ ಕುಟ್ಟಿಗಂಡು ಬದುಕ್ಯಂಡಿದ್ದ್ ಬಡ್ಡಿ ಹೈಕ್ಳು ಈಗೀಗ ಎಸ್‌ಎಮ್ಮೆಸ್ ದಾರಿ ಹಿಡಕಂಡು ಒಂಥರಾ ಕಾಡುಕುದ್ರೆ ದಾರಿ ಹಿಡಿದವೆ ಇವರ ಕಮ್ಮ್ಯೂನಿಕೇಷನ್ನು. ಜೊತೆಗೆ ಸೆಂಟ್ರಲೈಜ್ಡ್ ಪೋಸ್ಟ್ ಆಫೀಸ್ ಕಥೆ ಏನ್ ಹೇಳಾಣ, ಅವರ ಪತ್ರಗಳ ಎಣಿಕೆ ಕಡಿಮೆ ಆದಂತೆ ಅವರ ಕಮ್ಮೀ ಆದ ಆದಾಯ ನೋಡಿ ಇಂದಿನ ಪೋಸ್ಟ್ ಮಾಸ್ಟರ್ ಜನರಲ್ಲುಗಳಿಗೆ ರಾತ್ರಿ ನಿದ್ದೇನೇ ಬರಂಗಿಲ್ಲಂತೆ ನಿಜವೇ? ಇವತ್ತಿನ ಮೊಬೈಲ್ ಫೋನ್ ಜಮಾನಾದಾಗೆ ಜನಗಳು ಲೆಟ್ರು ಬರೆಯೋದಿರ್ಲಿ ಮಾತೇ ಆಡೇ ಬರೀ ಫಿಂಗರ್ರುಗಳ ಮಸಲ್ಲುಗಳನ್ನು ಬೆಳೆಸ್ತಾ ಇದಾರಂತೆ ಹಿಂಗೇ ನಡೆದ್ರೆ ಇನ್ನು ಮುಂದಿನ ಪೀಳಿಗೆಗಳಿಗೆ ಒಂದೊಂದು ಬೆರಳು ಹೆಚ್ಚು ಹುಟ್ಟುತ್ತೋ ಏನೋ - ವಿಕಾಸವಾದದ ದೊರೆಗಳ್ನೇ ಕೇಳ್ಬೇಕು. ಬ್ಲ್ಯಾಕ್‌ಬೆರಿ ಅಂತಂದು ಜೀವನದುದ್ದಕ್ಕೂ ಯಾವ್ದೇ ಬೆರ್ರಿನ್ನೂ ಚೆರ್ರಿನ್ನೂ ನೋಡ್ದೇ ಇರೋರಿಗೆ ಕಮ್ಮ್ಯೂನಿಕೇಷನ್ನ್ ಫಿವರ್ರ್ ಹುಟ್ಟಿಸಿರೋರನ್ನ ಜೈಲಿಗೆ ಹಾಕ್ಬೇಕು, ಮತ್ತೇನು. ಇಷ್ಟೆಲ್ಲಾ ಮಾಧ್ಯಮಾ, ಕಮ್ಮ್ಯೂನಿಕೇಷನ್ನೂ ಅಂತಾ ಇದ್ರೂ ಜನಗಳ ನಡ್ವೆ ಸಂಬಂಧಗಳ ಅಪಸ್ವರ ಹೆಚ್ತಾನೇ ಇರೋದು ಇನ್ಯಾವ ವಾದದ ಮಾತೂ ಅಂತೀನಿ.

ಇವತ್ತಿನ ಕಾಯಂಗಿಲ್ಲ, ಕೆನೆ ಕಟ್ಟಂಗಿಲ್ಲ. ನೋಡಿಕ್ಯಂತಿರಿ ಇವತ್ತಲ್ಲ ನಾಳೆ ಒಂದು ನಿಮಿಷದೊಳಗೆ ಹಾಲು ಕೆನೆಕಟ್ಟೋ ಯಂತ್ರ ಕಂಡ್ ಹಿಡಿತಾರೋ ಇಲ್ಲಾ ಅಂತ. ಮೊಸರಿಗೆ ಇಡೋವಾಗ ಹಾಲನ್ನು ಬಿಸಿ ಮಾಡಿ ಆಮೇಲೆ ತಣ್ಣಗೆ ಮಾಡಿ ಅದರ ಮೇಲೆ ಹೆಪ್ಪು ಯಾಕ್ ಹಾಕಬೇಕು, ಯಾರ್ ಮಾಡಿದ್ರಪ್ಪಾ ಆ ನೀತೀನ.