Tuesday, January 29, 2008

ಬಂಡವಾಳಶಾಹಿ ಜಗತ್ತಿನ ಎರಡು ಮಹಾಮಂತ್ರಗಳು

ಬದಲಾವಣೆಯೇ ಜಗದ ನಿಯಮ - ಅನ್ನೋದು ನಿಜವಾದರೆ ಬದಲಾವಣೆಯ ಆಗು ಹೋಗುಗಳನ್ನು ಮ್ಯಾನೇಜು ಮಾಡುವುದೂ ಅಷ್ಟೇ ನಿಜ ಅಥವಾ ಅಗತ್ಯ. ನಾವು ಎಷ್ಟರ ಮಟ್ಟಿಗೆ ಬದಲಾವಣೆಗಳನ್ನು ನಿರ್ವಹಿಸಿಕೊಂಡು ಹೋಗುತ್ತೇವೆ ಅನ್ನೋದು ನಮ್ಮಲ್ಲಿ ಜನರು ಹುಡುಕಿಕೊಂಡು ಬರುವ ಸ್ವಭಾವ ಅಥವಾ ಗುಣವಾಗಬಹುದು. ಈ ಬದಲಾವಣೆಯ ಅಗತ್ಯಗಳಿಗೆ ನಮ್ಮ ಸ್ಪಂದನ ಇಂದಿನ ದಿನಗಳಲ್ಲಂತೂ ಇನ್ನೂ ಮುಖ್ಯ, ಬದಲಾವಣೆ ಎನ್ನೋದು ಯಾವ ರೂಪದಲ್ಲಿ ಹೇಗೆ ಬೇಕಾದರೂ ಪ್ರತ್ಯಕ್ಷವಾಗಿ ನಮ್ಮ ನೆಲೆಗಟ್ಟನ್ನು ಅಲುಗಾಡಿಸುವ ನಿರೀಕ್ಷೆಯಂತೂ ಇರೋದು ನಿಜ.

ಈ ಬದಲಾವಣೆಗಳು ಯಾವುದೋ ಒಂದು ನಮಗೆ ಗೊತ್ತಿರುವ ರಸ್ತೆಯಲ್ಲಿ ಹೋಗುತ್ತಿರುವ ನಮ್ಮ ಕಂಫೋರ್ಟ್ ಝೋನ್ ಅನ್ನು ಪ್ರಶ್ನಿಸುವ ಡೀ-ಟೂರ್ ಇದ್ದ ಹಾಗೆ, ಅವುಗಳು ಒಡ್ಡುವ ಆ ಮಟ್ಟಿನ ಅನಿರೀಕ್ಷಿತ ತಿರುವುಗಳನ್ನು ಸಾವಧಾನ ಚಿತ್ತದಲ್ಲಿ ಸ್ವೀಕರಿಸಿ ಮುನ್ನಡೆಯದೇ ಇದ್ದರೆ ಅಪಾಯವಂತೂ ಖಂಡಿತ. ಅದೇ ಬದಲಾವಣೆಗಳಿಗೆ ಕಿವಿಗೊಡದೇ ಇದ್ದ ರಸ್ತೆಯಲ್ಲೇ ಮುನ್ನಡೆದರೆ ಯಾವುದಾದರೂ ಗುಂಡಿ ಸೇರುವ ಅಪಾಯ ಬೇರೆ. ಹೀಗಾಗಿ ಬದಲಾವಣೆಗಳು ನಮ್ಮನ್ನು ಹೇಳಿಕೇಳಿ ಬರದೇ ಇದ್ದರೂ ಅವುಗಳನ್ನು ನಿರೀಕ್ಷಿಸಿಕೊಂಡೇ ಸಾಧ್ಯವಾದಷ್ಟರ ಮಟ್ಟಿಗೆ ತಯಾರಾಗಿರುವುದು ಈಗಿನ ಕಾಲದ ಅಗತ್ಯಗಳಲ್ಲೊಂದು. ಇಂದಿದ್ದ ಬಾಸ್ ನಾಳೆ ಇರದಿರಬಹುದು, ನಮ್ಮ ನೆಚ್ಚಿನ ಕೆಲಸ ಕಾರ್ಯಗಳು ಬೇರೆಯವರ ಕೈಗೆ ದಿಢೀರ್ ಹೋಗಿ ನಮಗೆ ಹೊಸ ಕೆಲಸಗಳು ಬರಬಹುದು, ಇಂದು ಮುಂಜಾನೆ ಇದ್ದ ಕೆಲಸವೇ ಸಂಜೆಗೆ ಇರದಿರಬಹುದು. ೨೦೦೦ ದಿಂದ ೨೦೦೩ ರವರೆಗೆ ಅನೇಕ ಕಂಪನಿಗಳು (ವಿಶೇಷವಾಗಿ ಡಾಟ್‌ಕಾಮ್) ಮುಚ್ಚಿ ಹೋದ ಹಿನ್ನೆಲೆಯಲ್ಲಿ ಅಥವಾ ಅವರ ವರ್ಕ್ ಫೋರ್ಸ್ ಅನ್ನು ಕಡಿಮೆ ಮಾಡುವ ಹುನ್ನಾರದಲ್ಲಿ ಅನೇಕ ಜನ ಕೆಲಸವನ್ನು ಕಳೆದುಕೊಂಡದ್ದು ಬೇಕಾದಷ್ಟು ಉದಾಹರಣೆಗಳಿವೆ. ಈಗಲೂ ಸಹ ಅಲ್ಲಲ್ಲಿ ಸಾವಿರಾರು ಜನರನ್ನು ಕೆಲಸವಿಲ್ಲದೇ ಮನೆಗೆ ಕಳಿಸುವುದನ್ನು ನಾವು ಕಾರ್ಪೋರೇಟ್ ರಿಪೋರ್ಟುಗಳಲ್ಲಿ ಓದಬಹುದು. ಹೀಗೆ ಒಂದು ಕಂಪನಿಯಲ್ಲಿನ ನಮ್ಮ ಅಸ್ತಿತ್ವವನ್ನು ದಿಢೀರ್ ಕಳೆದುಕೊಂಡು ಮತ್ತೊಂದು ಕಂಪನಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಬದಲಾವಣೆ ಒಬ್ಬನ ವೃತ್ತಿ ಜೀವನದಲ್ಲಿ ಬೇಕೆ? ಕೆಲಸ ಬದಲಾವಣೆ ಅನ್ನೋದು ಹೆಚ್ಚು ಸ್ಟ್ರೆಸ್ ಹುಟ್ಟಿಸುವ ಲೈಫ್ ಇವೆಂಟುಗಳಲ್ಲಿ ಒಂದು. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ, ಎರಡು ವಾರಗಳ ಹಿಂದೆ ಇದ್ದಕ್ಕಿದ್ದ ಹಾಗೆ ಕಂಪನಿಯಲ್ಲಿ ಅನೇಕ ಬದಲಾವಣೆಗಳು ನಾನಿಲ್ಲದ ವೇಳೆಯಲ್ಲಿ ಸಂಭವಿಸಿ ರಾತ್ರೋ ರಾತ್ರಿ ನನಗೆ ಹೊಸ ಬಾಸೂ, ಹೊಸ ಕೆಲಸವೂ ಬಂದಿದ್ದು ಇಂದಿಗೂ ನಿಜವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ ಕ್ಷಿಪ್ರವಾಗಿ ನಡೆದು ಹೋಗಿದೆ. ಹಳೆಯದನ್ನು ನೆನೆಸಿಕೊಂಡು ಕೊರಗುವ ಮನಸ್ಸಿದ್ದರೂ ಹೊಸದಕ್ಕೆ ಹೊಂದಿಕೊಂಡು ಹೋಗದೇ ಬೇರೆ ನಿರ್ವಾಹವೇ ಇಲ್ಲ. ಬದಲಾವಣೆ ಎನ್ನೋದು ಯಾವತ್ತಿದ್ದರೂ ಗೆಲ್ಲುತ್ತೆ, ಅದಕ್ಕೆ ಸ್ಪಂದಿಸಿ ಹೊಂದಿಕೊಂಡು ಹೋಗುವುದು ಎನ್ನುವುದು ರೂಲ್ ಅದು ಯಾವತ್ತೂ ಎಕ್ಸೆಪ್ಷನ್ನ್ ಅಲ್ಲ.

***

ಇಂದಿನದು ಇಂದಿಗೆ ನಾಳೆಯದು ನಾಳೆಗೆ ಎನ್ನುವ ಬಂಡವಾಳಶಾಹಿ ವ್ಯವಸ್ಥೆಯ ಮಹಾಮಂತ್ರಕ್ಕೆ ಎಂಥವರೂ ಮನಸೋಲಲೇ ಬೇಕು. ಇಲ್ಲಿ ಕ್ವಾರ್ಟರಿನಿಂದ ಕ್ವಾರ್ಟರಿಗೆ ತಿಂಗಳಿನಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ನಮ್ಮನ್ನು ನಾವು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ. ನಿನ್ನೆ ಉತ್ತಮವಾದದ್ದು ಇಂದಿಗೆ ನಿಜವಾಗ ಬೇಕೆಂದೇನೂ ಇಲ್ಲ, ಇಂದು ನಡೆದದ್ದು ನಾಳೆಗೆ ನಡೆಯುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಎಲ್ಲವೂ ಆಯಾ ವರ್ಷಕ್ಕೆ ಅನುಗುಣವಾದವುಗಳು, ಪ್ರತಿ ಮೂರು/ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಆಯಾ ಕಂಪನಿಗಳ ಪರ್‌ಫಾರ್ಮೆನ್ಸ್ ಅನ್ನು ಲೆಕ್ಕ ಹಾಕುವ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ತಿಂಗಳಿನಿಂದ ತಿಂಗಳಿಗೆ ಚೇತರಿಸಿಕೊಳ್ಳುವ ವ್ಯವಸ್ಥೆ ಇರುವುದರ ಜೊತೆಗೆ ಹಳೆಯದನ್ನು ಆದಷ್ಟು ಬೇಗನೆ ಹಿಂದಕ್ಕೆ ತಳ್ಳಿ ಮುನ್ನುಗ್ಗುವ ಆತುರವೂ ಕಂಡುಬರುತ್ತದೆ. ಹಲವಾರು ವರ್ಷಗಳ ಕಾಲ ಒಂದೇ ಸಮನೆ ಒಂದು ’ಕ್ಯಾರೆಕ್ಟರ್’ ಅನ್ನು ಹುಟ್ಟಿಸಿ ಬೆಳೆಸುಕೊಳ್ಳುವುದಕ್ಕಿಂತಲೂ ಆಯಾ ಮಟ್ಟಿನ ಬೆಳವಣಿಗೆಗೆ ಹೆಚ್ಚು ಆಸ್ಪದ ನೀಡಿದಂತನಿಸುತ್ತದೆ. ಈ ಕೆಳಗಿನ ನ್ಯಾಸ್‍ಡಾಕ್ ಬೆಳವಣಿಗೆಯನ್ನು ನೋಡಿ.

ಜನವರಿ ೩, ೨೦೦೦ ರಂದು 4,186 ಕ್ಕೆ ತೆರೆದುಕೊಂಡ NASDAQ ಮಾರ್ಕೆಟ್ಟಿನ ಇಂಡೆಕ್ಸ್ ಅದೇ ವರ್ಷದ ಮಾರ್ಚ್ ೬ ರಂದು 5,048 ಹೋಗಿದ್ದನ್ನು ಬಿಟ್ಟರೆ ಅಲ್ಲಿಂದ ಕ್ರಮೇಣ ಹಂತ ಹಂತವಾಗಿ ಕೆಳಮುಖವಾಗಿ ಹರಿದ ಮಾರ್ಕೆಟ್ಟಿನ ಗ್ರಾಫು ಬುಡ ಬಂದು ಸೇರಿದ್ದು ಸೆಪ್ಟೆಂಬರ್ ೩೦, ೨೦೦೨ ರಂದೇ - ಅಂದು 1,139 ಕ್ಕೆ ಕ್ಲೋಸ್ ಆದ ಮಾರ್ಕೆಟ್ಟಿನ ಕೆಲ ದಾಖಲೆ ಎಂದೇ ಹೇಳಬೇಕು. ಸುಮಾರು ನಾಲ್ಕು ಸಾವಿರ ಪಾಯಿಂಟುಗಳಷ್ಟು ಕುಸಿತ ಕೇವಲ ಎರಡೂವರೆ ವರ್ಷಗಳಲ್ಲಿ. ಲಕ್ಷಾಂತರ ಜನ ತಮ್ಮ ಟೆಕ್ನಾಲಜಿ ಇನ್ವೆಷ್ಟುಮೆಂಟುಗಳಲ್ಲಿ ಹಣ ಕಳೆದುಕೊಂಡರು, ಬುದ್ಧಿವಂತರು ಆದಷ್ಟು ಬೇಗ ಟೆಕ್ನಾಲಜಿ ಸೆಕ್ಟರುಗಳಿಂದ ಜಾಗ ಖಾಲಿ ಮಾಡಿ ರಿಯಲ್ ಎಸ್ಟೇಟೋ ಮತ್ತಿನ್ನೆಲ್ಲೋ ತೊಡಗಿಸಿ ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಂಡರು, ಇನ್ನುಳಿದವರು Yahoo, Oracle, Microsoft, Cisco ಮೊದಲಾದ ಕಂಪನಿಗಳಲ್ಲಿ ತಮ್ಮ ಹಣ ದಿನೇ ದಿನೇ ಕುಸಿಯೋದನ್ನು ನೋಡಿಕೊಂಡೇ ಸುಮ್ಮನಿದ್ದರು. ಇವೆಲ್ಲವನ್ನೂ ಮಾರ್ಕೆಟ್ ಪಂಡಿತರು ಬೇಕಾದ ರೀತಿಯಲ್ಲಿ ಅವಲೋಕಿಸಿ ಬೇಕಾದಷ್ಟನ್ನು ಪಬ್ಲಿಷ್ ಮಾಡಿರಬಹುದು, ಆದರೆ ಜನವರಿ ೨೦೦೩ ರಿಂದ ನಂತರದ ಕಥೆಯೇ ಬೇರೆ.

ಜನವರಿ ೬, ೨೦೦೩ ರಂದು 1,390 ಗೆ ತೆರೆದುಕೊಂಡ NASDAQ ಅದೇ ವರ್ಷ ಡಿಸೆಂಬರ್ ಅಂತ್ಯದ ಹೊತ್ತಿಗೆ 2,000 ದ ಗಡಿ ದಾಟಿತ್ತು. ಫೈನಾನ್ಸ್ ಪಂಡಿತರು, ಟಿವಿಯಲ್ಲಿನ ಮಾತನಾಡುವ ತಲೆಗಳು, ಮತ್ತಿತರ ಮಹಾಮಹಿಮರೆಲ್ಲರೂ ಮಾರ್ಕೆಟ್ಟನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಆ ವರ್ಷದ ಮಟ್ಟಿಗೆ NASDAQ ನಲ್ಲಿ 30% ಗಿಂತಲೂ ಹೆಚ್ಚು ಉತ್ತಮ ರಿಟರ್ನ್ಸ್‌ಗಳನ್ನು ಕಂಡುಕೊಂಡಿದ್ದು ನಿಜವಾದರೂ ಅದರ ಹಿಂದಿನ ಎರಡೂವರೆ ವರ್ಷಗಳಲ್ಲಿ ಹಣ ಕಳೆದುಕೊಂಡ ಬಗ್ಗೆ ಏನೂ ಸೆನ್ಸಿಟಿವಿಟಿಯೇ ಇಲ್ಲವೇ ಎಂದು ಅನ್ನಿಸಿದ್ದೂ ನಿಜ.

***

ಹೀಗೆ ಬಂಡವಾಳಶಾಹಿ ಜಗತ್ತಿನ ಬದುಕಿನಲ್ಲಿ ಇನ್ನೂ ಅನೇಕ ಸೂತ್ರಗಳಿವೆ, ಅವುಗಳನ್ನೆಲ್ಲ ಹೆಕ್ಕಿ ಹೇಳುತ್ತಾ ಹೋದರೆ ದೊಡ್ಡ ಕಥೆಯಾದೀತು. ಈ ಮಹಾಮಂತ್ರಗಳ ಪಟ್ಟಿ ಇಲ್ಲಿಗೆ ನಿಲ್ಲೋದಿಲ್ಲ, ಇನ್ನೂ ಬೇಕಾದಷ್ಟಿವೆ, ಅವುಗಳನ್ನು ಪುರುಸೊತ್ತು ಮಾಡಿಕೊಂಡು ಬೆಳೆಸಿಕೊಂಡು ಹೋಗಬೇಕಷ್ಟೆ, ಅಥವಾ ಅದರ ಬದಲಿಗೆ ಒಂದು ಪುಸ್ತಕ ಬರೆದರೂ ಆದೀತು!

ಇನ್ನು ಮುಂದೆ ಎಂದಾದರೂ ಒಮ್ಮೆ ಬಂಡವಾಳಶಾಹಿ ಜಗತ್ತಿನ ತಪ್ಪು-ಒಪ್ಪುಗಳ ಬಗ್ಗೆಯೂ, ತಪ್ಪನ್ನು ಕಂಡು ಹಿಡಿದವರಿಗೆ ಕೊಡುವ ಇನಾಮಿನಿಂದ ಹಿಡಿದು, ಕಂಪನಿಗಳು ಸರ್ಕಾರಕ್ಕೆ, ಸರ್ಕಾರದ ವಿವಿಧ ಎಂಟಿಟಿಗಳಿಗೆ ಸೆಟಲ್‌ಮೆಂಟ್ ದೃಷ್ಟಿಯಲ್ಲಿ ಹಂಚುವ ಹಣದ ಬಗ್ಗೆ ಬರೆಯುತ್ತೇನೆ.

Saturday, January 26, 2008

ಸುಂಕ ವ್ಯವಸ್ಥೆಯ ಸುಖ ದುಃಖಗಳು

ರಸ್ತೆಗಳೆಂಬ ಮಟ್ಟಗಾರರ ಬಗ್ಗೆ ಬರೆಯೋ ಹೊತ್ತಿಗೆ ಉಳಿದ ಮಟ್ಟಗಾರರ ಬಗ್ಗೆ ಯೋಚಿಸಿದಂತೆಲ್ಲಾ ಟ್ಯಾಕ್ಸ್ ಸೀಜನ್ನಿನಲ್ಲಿ ಟ್ಯಾಕ್ಸ್ ಬಗ್ಗೆ ಯೋಚಿಸಿ ಬರೆಯದೇ ಹೋದರೆ ಹೇಗೆ ಎಂದು ಅನ್ನಿಸಿದ್ದಂತೂ ನಿಜ. ಈ ಟ್ಯಾಕ್ಸ್, ತೆರಿಗೆ, ಕರ, ಸುಂಕ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಕಾನ್ಸೆಪ್ಟ್ ಮಹಾ ಮಟ್ಟಗಾರರಲ್ಲೊಂದು, ಸರ್ಕಾರ ಟ್ಯಾಕ್ಸ್ ಅನ್ನು ಹೇಗೆ ವ್ಯಾಖ್ಯಾನಿಸಿಕೊಂಡರೂ, ಜನರು ಅದನ್ನು ತಮ್ಮ ತಮ್ಮ ಮಟ್ಟಿಗೆ ಅದನ್ನು ಹೇಗೇ ಅನ್ವಯಿಸಿಕೊಂಡರೂ ಟ್ಯಾಕ್ಸ್ ಅನ್ನುವುದು ಯಾರನ್ನೂ ಬಿಟ್ಟಂತಿಲ್ಲ.

ಮೊನ್ನೆ ಹೀಗೇ ಅಫಘಾನಿಸ್ತಾನದವರ ಬಗ್ಗೆ ನನ್ನ ಸಹೋದ್ಯೋಗಿಯೊಡನೆ ಮಾತು ಬಂತು. ಅಭಿವೃದ್ಧಿ ಹೊಂದಿದ ದೇಶದ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೋಶಿಯಲ್ ಸೆಕ್ಯೂರಿಟಿ ನಂಬರ್ ಎನ್ನುವ ಒಂಭತ್ತು ಸಂಖ್ಯೆಗಳಿಂದ ಅಳೆದು ಪ್ರತಿಯೊಬ್ಬರಿಂದ ಲೆಕ್ಕಕ್ಕೆ ತಕ್ಕಂತೆ ಟ್ಯಾಕ್ಸ್ ಕೀಳುವುದು ಇರಲಿ ಕೊನೆಗೆ ವರ್ಷಕ್ಕೊಮ್ಮೆ ಅಮೇರಿಕದ ನಾಗರಿಕರು ತಮ್ಮ ವಾರ್ಷಿಕ ಆದಾಯ ಇಂತಿಷ್ಟಕ್ಕಿಂತ ಹೆಚ್ಚಿದ್ದರೆ ಅವರ ಟ್ಯಾಕ್ಸ್ ಅನ್ನು ಫೈಲ್ ಮಾಡಬೇಕಾದ ಅಗತ್ಯವನ್ನು ಮನಗಾಣುವುದು ಸುಲಭವಾಗಿತ್ತು. ನನ್ನ ಪ್ರಕಾರ (ಯಾವುದೇ ದಾಖಲೆಯ ಬೆಂಬಲವಿಲ್ಲದೆ) ತೃತೀಯ ಜಗತ್ತಿನಲ್ಲಿ ಎಷ್ಟೋ ಜನರಿಂದ ಅಪರೋಕ್ಷವಾಗಿ ವಸೂಲಿ ಮಾಡುವ ಸೇಲ್ಸ್ ಟ್ಯಾಕ್ಸ್ ಅನ್ನು ಬಿಟ್ಟರೆ ವರ್ಷಕ್ಕೊಮ್ಮೆ ಎಲ್ಲರೂ ತಮ್ಮ ತಮ್ಮ ಆದಾಯಕ್ಕನುಗುಣವಾಗಿ ಟ್ಯಾಕ್ಸ್ ಅನ್ನು ಕಟ್ಟುವುದಾಗಲೀ ಅದನ್ನು ಫೈಲ್ ಮಾಡುವುದಾಗಲೀ ಸಾಧ್ಯತೆಗಳೇ ಇಲ್ಲ. ಸೇಲ್ಸ್ ಟ್ಯಾಕ್ಸ್ ಜೊತೆಗೆ ಯಾರು ಯಾರು ನಿಜವಾದ ಪೇ ಚೆಕ್ (ಸ್ಟಬ್) ಗಳನ್ನು ತೆಗೆದುಕೊಳ್ಳುತ್ತಾರೋ ಅವರಿಂದ ಸರ್ಕಾರದವರು, ಸಂಬಂಧಿತ ಇಲಾಖೆಯವರು ಟ್ಯಾಕ್ಸ್ ಅನ್ನು ವಜಾ ಮಾಡಿಕೊಳ್ಳುವ ಸಾಧ್ಯತೆಗಳಿರಬಹುದು, ಅದನ್ನು ಬಿಟ್ಟರೆ ರೈತರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಸಣ್ಣ (ಗೃಹ) ಕೈಗಾರಿಕೆಗಳನ್ನು ನಡೆಸಿಕೊಂಡಿರುವವರು ಇತ್ಯಾದಿಗಳಿಂದ ಇಂತಿಷ್ಟೇ ಆದಾಯ ಹಾಗೂ ಅದಕ್ಕೆ ತಕ್ಕ ಟ್ಯಾಕ್ಸ್ ಎಂದು ವಸೂಲಿ ಮಾಡಿದ್ದನ್ನು ನಾನು ನೋಡಿಲ್ಲ, ಇತ್ತೀಚೆಗೇನಾದರೂ ಭಾರತದಲ್ಲಿ ಟ್ಯಾಕ್ಸ್ ಬದಲಾವಣೆಗಳಾಗಿದ್ದರೆ ಅದು ನನ್ನ ಮೌಢ್ಯವಷ್ಟೆ. ಇತ್ತೀಚೆಗಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಕ್ಕಿರುವ ಅಫಘಾನಿಸ್ತಾನದಲ್ಲಿ ಯಾವ ಮಟ್ಟದ ಟ್ಯಾಕ್ಸ್ ವ್ಯವಸ್ಥೆ ಇದೆ, ಅಲ್ಲಿನ ಪ್ರತಿಯೊಬ್ಬ ನಾಗರಿಕರು ಹೇಗೆ ಟ್ಯಾಕ್ಸ್‌ಗೆ ಒಳಪಟ್ಟಿದ್ದಾರೆ ಎನ್ನುವುದು ನನಗೆ ನಿಖರವಾಗಿ ಗೊತ್ತಿಲ್ಲದಿದ್ದರೂ, ಬಡತನದಲ್ಲಿ ಬಾಂಗ್ಲಾ ದೇಶಕ್ಕೆ ಪೈಪೋಟಿ ಕೊಡುತ್ತಿರುವ ಅಲ್ಲಿನ ಜನರ ಉತ್ಪಾದನೆಯೇ ಕಡಿಮೆ ಇದ್ದು ಇನ್ನು ಪಾಪ ಅವರಾದರೂ ಯಾವ ಟ್ಯಾಕ್ಸ್ ಅನ್ನು ಕೊಟ್ಟಾರು. ಹಾಗೆಯೇ ಅಮೇರಿಕದಲ್ಲಿನ ಪ್ರತಿ ರಾಜ್ಯದ ಪ್ರತಿಯೊಬ್ಬರೂ ನಿಖರವಾಗಿ ಟ್ಯಾಕ್ಸ್ ಕೊಡುತ್ತಾರೆ ಎಂದೇನೂ ಅಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸೋಶಿಯಲ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಷನ್ನ್ ನವರು ಒಂಭತ್ತು ಸಂಖ್ಯೆಗಳನ್ನೇನೋ ಒದಗಿಸಿಕೊಟ್ಟಿರಬಹುದು, ಆದರೆ ಅಮೇರಿಕದ ಉದ್ದಗಲಕ್ಕೂ ಪ್ರತಿಯೊಬ್ಬರಿಗೂ ಕನಿಷ್ಠ ಟ್ಯಾಕ್ಸ್ ಕೊಡುವ ಆದಾಯವಿದ್ದು, ಅವರು ಲೆಕ್ಕಕ್ಕೆ ತಕ್ಕಂತೆ ಕೊಡುತ್ತಾರೆ ಎನ್ನುವ ಜನರಲೈಜೇಷನ್ನನ್ನು ಮಾಡಲಾಗದು.

ಈ ಹಿನ್ನೆಲೆಯಲ್ಲಿಯೇ ಯೋಚಿಸಿ ಮತ್ತೊಂದು ಹೆಜ್ಜೆ ಮುಂದೆ ಹೋದಾಗ ಅಮೇರಿಕದವರಿಗೆ ಪ್ರಪಂಚದ ಉಳಿದ ದೇಶಗಳಲ್ಲಿನ ಅನುಕೂಲ, ಅನಾನುಕೂಲಗಳನ್ನು ಯೋಚಿಸಿಕೊಳ್ಳಲು ಕಷ್ಟವಾಗಬಹುದು ಎಂಬುದು ನನ್ನ ಅನಿಸಿಕೆ. ಭಾರತದಲ್ಲಿನ ಭ್ರಷ್ಟಾಚಾರವನ್ನಾಗಲೀ, ರಷ್ಯಾದಲ್ಲಿನ ಮಾಫಿಯಾವನ್ನಾಗಲೀ, ಎಷ್ಟೋ ದೇಶಗಳಲ್ಲಿನ ಅರಾಜಕತೆ, ಡಿಕ್ಟೇಟರ್‌ಶಿಪ್ಪುಗಳನ್ನಾಗಲೀ, ಅಲ್ಲಲ್ಲಿ ನಡೆಯುವ ಜನರ ದುರ್ಮರಣದ ಸಂಖ್ಯೆಯನ್ನಾಗಲೀ, ಅಥವಾ ಉಳಿದ ಮತ-ಧರ್ಮ-ಸಂಪ್ರದಾಯಗಳ ಹಿನ್ನೆಲೆಯನ್ನಾಗಲೀ ಅರ್ಥ ಮಾಡಿಕೊಳ್ಳಲು ದೊಡ್ಡ ಮನಸ್ಸೇ ಬೇಕು. ಇರಾಕ್‌ನಲ್ಲಿ ಸದ್ದಾಮನ ಸರ್ಕಾರವನ್ನು ಬೀಳಿಸಿದ್ದೇವೆ, ಅಲ್ಲಿನ ಜನರು ಸುಖವಾಗಿ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇಕೆ ಇರಬಾರದು? ಎಂದು ಕೇಳುವ ಪ್ರಶ್ನೆಗಳು ಬಾಲಿಶವೇ ಹೌದು. ಪ್ರಪಂಚದ ಎಲ್ಲರೂ ತಮ್ಮ ತಮ್ಮ ಲೆಕ್ಕದ ಟ್ಯಾಕ್ಸ್ ಅನ್ನು ನಿಖರವಾಗಿ ಕೊಟ್ಟು ಅವರವರ ಸರ್ಕಾರದ ಹುಂಡಿಯನ್ನೇಕೆ ಬೆಳೆಸಬಾರದು ಎನ್ನುವಷ್ಟೇ ಹುಂಬ ಪ್ರಶ್ನೆಯಾದೀತು. ಒಂದು ವ್ಯವಸ್ಥೆ - ಅದು ಟ್ಯಾಕ್ಸ್ ಕೊಟ್ಟು ಅದನ್ನು ಪರಿಶೀಲಿಸಿಕೊಳ್ಳುವ ಕ್ರಮವಾಗಿರಬಹುದು, ಲಂಚ ತೆಗೆದುಕೊಂಡವರನ್ನು ಗುರುತಿಸಿ ಥಳಿಸುವ ನಿಯಮವಾಗಿರಬಹುದು, ಕ್ರಿಮಿನಲ್ಲ್‌ಗಳನ್ನು ಹುಡುಕಿ ಶಿಕ್ಷಿಸುವ ಪರಿಯಾಗಿರಬಹುದು - ಅದು ಬೆಳೆದು ನಿಲ್ಲಲು ಆಯಾ ಸಮಾಜದ ಬೆಂಬಲವಂತೂ ಖಂಡಿತ ಬೇಕೇ ಬೇಕು, ಜೊತೆಗೆ ಹೆಚ್ಚಿನವರು ನಿಯಮಗಳನ್ನು ಪಾಲಿಸುವವರಾಗಿದ್ದಾಗ ಮಾತ್ರ ಹಾಗೆ ಮಾಡದವರನ್ನು ಹುಡುಕಿ ತೆಗೆಯುವುದು ಸುಲಭವಾದೀತು. ಆದರೆ ಸಮಾಜದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭ್ರಷ್ಟಾಚಾರದ ಸುಳಿಗೆ ಸಿಲುಕುವವರು ಹೆಚ್ಚಿದ್ದಾಗ, ತಮ್ಮ ಹಕ್ಕು-ಕರ್ತವ್ಯಗಳ ಬಗ್ಗೆ ತಿಳುವಳಿಕೆಯೇ ಇಲ್ಲದವರಿದ್ದಾಗ ಹಾಗೂ ಅಂತಹವರನ್ನು ಶೋಷಿಸುವ ವ್ಯವಸ್ಥೆ ಇದ್ದಾಗ ಯಾವೊಂದು ಸಮಾಜ ತಾನೇ ಆರೋಗ್ಯಕರವಾಗಿರಬಲ್ಲದು?

ಭಾರತದಲ್ಲಿ ಮಾರಾಟ ಮಾಡುವ ಬೆಂಕಿ ಪೊಟ್ಟಣದಿಂದ ಹಿಡಿದು ಉಳಿದ ವಸ್ತುಗಳಿಗೂ ಮಾರಾಟ ತೆರಿಗೆಯನ್ನು ಸೇರಿಸಿಯೇ ಮಾರಾಟ ಮಾಡುವ ವ್ಯವಸ್ಥೆಯನ್ನು ನೀವು ನೋಡಿರಬಹುದು. ಅಂಗಡಿಯಲ್ಲಿ ಕೊಂಡ ದಿನಸಿಯ ಚೀಟಿಯ ಕೊನೆಗೆ ನಾನಂತೂ ಟ್ಯಾಕ್ಸ್ ಕೊಟ್ಟಿದ್ದಿಲ್ಲ, ಇತ್ತೀಚೆಗೆ ಬಂದ ವ್ಯಾಟ್ (VAT) ಪದ್ಧತಿಯ ಪ್ರಕಾರ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ/ಸುಂಕವನ್ನು ತೆಗೆದುಕೊಳ್ಳುತ್ತಿರಬಹುದಾದರೂ ಹೆಚ್ಚಿನ ವಸ್ತುಗಳು ನನಗೆ ಗೊತ್ತಿದ್ದ ಹಾಗೆ ’inclusive of all taxes' ಎಂದು ಹಣೆ ಪಟ್ಟಿಯನ್ನು ಹಚ್ಚಿಕೊಂಡದ್ದು ನನ್ನ ನೆನಪು. ಅಮೇರಿಕದ ರೆಸ್ಟೋರೆಂಟುಗಳಲ್ಲಿ ಕೆಲಸ ಮಾಡುವ ವೇಟರ್ (ಸರ್ವರ್)ಗಳಾಗಲೀ, ಇಲ್ಲಿನ ಟ್ಯಾಕ್ಸಿ ಚಾಲಕರಾಗಲೀ ತಾವು ಪಡೆಯುವ ಟಿಪ್ಸ್ ಅನ್ನೆಲ್ಲ ನಿಖರವಾಗಿ ಲೆಕ್ಕ ಹಿಡಿದು ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎಂದು ನಾನೇನೂ ನಂಬುವುದಿಲ್ಲ. ಹಾಗೇ ಭಾರದಲ್ಲಿನ ರಿಕ್ಷಾ ಡ್ರೈವರುಗಳೂ ಜನರಿಂದ ಪಡೆಯುವ ಮೀಟರ್ ಹಣದ ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎನ್ನುವುದು ನಂಬಲು ಕಷ್ಟವಾದ ವಿಷಯವೇ. ಹಾಗಿದ್ದ ಮೇಲೆ ಈ ರೀತಿಯ ಕೆಲಸಗಾರರಿಂದ ಹಿಡಿದು ಮಹಾ ಉದ್ಯಮಿಗಳಿಗೆಲ್ಲ ಅನ್ವಯವಾಗುವಂತೆ ವ್ಯಾಟ್ ಒಂದನ್ನು ಜಾರಿಗೆ ತಂದು ಬಿಡಿ ಎನ್ನುವುದು ನಿಜವಾಗಿ ಕಷ್ಟದ ಮಾತೇ. ಒಂದು ವಸ್ತು ಹಂತಹಂತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ ಕೈಯಿಂದ ಕೈಗೆ ಸಾಗುವ ವ್ಯವಸ್ಥೆಯೇ ಬೇರೆ ಅಲ್ಲಿ ಹೊಂದುವ ಟ್ಯಾಕ್ಸ್ ಪರಿಭಾಷೆಯನ್ನು ಸಾಮಾನ್ಯ ಜನರಿಗೂ ಬಳಸಿ ಅಲ್ಲಿ ಗೆಲ್ಲುವ ಮಾತಾದರೂ ಎಲ್ಲಿ ಬರುತ್ತದೆ.

ಅಮೇರಿಕದಲ್ಲಿ ತಲೆಯಿಂದ ತಲೆಗೆ ಬರುವ ಆಸ್ತಿಗಳಿಗೂ ಅನ್ವಯವಾಗುವಂತೆ ಟ್ಯಾಕ್ಸ್ ಬಳಸುವ ವ್ಯವಸ್ಥೆ ಇದೆ, ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮಂತಹವರಿಗೆ ಕಷ್ಟವಾಗಬಹುದು. ಒಂದು ತಲೆಯಿಂದ ಮತ್ತೊಂದು ತಲೆಗೆ ವ್ಯವಸ್ಥಿತವಾಗಿ ಹಂಚಿಹೋಗುವ ಆಸ್ತಿಗೆ ಮತ್ತೇಕೆ ಅವರು ಟ್ಯಾಕ್ಸ್ ಕೊಡಬೇಕು ಎನ್ನುವುದು ನನಗಂತೂ ಕಠಿಣವಾದ ಪ್ರಶ್ನೆಯೇ. ನಾವು ಬ್ಯಾಂಕಿನಲ್ಲಿಟ್ಟ ಹಣಕ್ಕೆ ವರ್ಷಕ್ಕೆ ಹತ್ತೇ ಹತ್ತು ಡಾಲರ್ ಬಡ್ಡಿ ಬಂದರೂ ಅದನ್ನು ನಮ್ಮ ಆದಾಯವೆಂದು ಪರಿಗಣಿಸಿ ಅದಕ್ಕೂ ತಕ್ಕದಾದ ಟ್ಯಾಕ್ಸ್ ವಸೂಲಿ ಮಾಡುವ ವ್ಯವಸ್ಥೆ ನನಗಂತೂ ಮೊದಲಿನಿಂದಲೂ ಇಷ್ಟವಾಗದ ವಿಚಾರವೇ. ಇಷ್ಟವೋ ಕಷ್ಟವೋ ಅದನ್ನು ನಿಖರವಾಗಿ ತೋರಿಸಿ ಅಷ್ಟರಮಟ್ಟಿಗೆ ಟ್ಯಾಕ್ ಕೊಟ್ಟು ಇರುವುದು ಕಷ್ಟವಾಗೇನೂ ಇಲ್ಲ. ಆದರೆ ನಮ್ಮಂತಹವರು ಈ ದೇಶದಿಂದ ಹೊರಕ್ಕೆ ಗಿಫ್ಟ್ ಆಗಿಯೋ ಮತ್ತೊಂದಕ್ಕೋ ಕಳಿಸುವ ಹಣವಿದೆಯೆಲ್ಲ ಅದನ್ನು ನಾವು ಯಾವುದೇ ರೀತಿಯಿಂದಲೂ ತೋರಿಸಲು ಸಾಧ್ಯವಾಗಿಲ್ಲ. ನೀವು ಇಷ್ಟೊಂದು ಹಣವನ್ನು ದುಡಿದಿದ್ದೀರಿ ಎನ್ನುವುದರ ಹಿಂದೆ ಎಷ್ಟೊಂದು ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಳೆದುಕೊಂಡಿದ್ದೀರಿ ಎನ್ನುವುದು ನಿಜ, ಅದರ ಜೊತೆಗೆ ನೀವು ನಿಮಗೆ ಬೇಕಾದವರಿಗೆ ಕೊಡಬಹುದಾದ ಗಿಫ್ಟ್ ಭಾರತದಿಂದ ಹೊರಗಿದ್ದರೆ ಇಲ್ಲಿನ ಸರ್ಕಾರದವರಿಗೆ ಅದು ಲೆಕ್ಕಕ್ಕೆ ಸಿಗದ ಕಾರಣ ಅದನ್ನು ವೆಚ್ಚವಾಗಿ ಬಳಕೆಯಾಗಿ ನೋಡುತಾರೆಯೇ ವಿನಾ ಅದಕ್ಕೆ ತೆರಿಗೆ ವಿನಾಯಿತಿಯನ್ನು ಕೊಡಲು ಕಷ್ಟವಾದೀತು. ಒಟ್ಟಿನಲ್ಲಿ ಪೇ ಚೆಕ್ಕ್‌ನಿಂದ ಪೇ ಚೆಕ್ಕ್‌ಗೆ ಹೋಗುವ ವ್ಯವಸ್ಥೆಯಲ್ಲಿ ಉಳಿಸುವುದೇನಿದ್ದರೂ ಟ್ಯಾಕ್ಸ್ ಅನ್ನು ಕೊಟ್ಟಬಳಿಕವೇ ಎನ್ನುವುದು ನಿಜ, ನಿಮಗೆ ಬೇಕೋ ಬೇಡವೋ ಅಗತ್ಯವಾದ ಟ್ಯಾಕ್ಸ್ ಅನ್ನು ಮೊದಲೇ ಹಿಡಿದುಕೊಂಡಿರುವುದರಿಂದ ವರ್ಷದ ಕೊನೆಗೆ ನಾವು ನಾವು ಫೈಲ್ ಮಾಡಿ ಸರ್ಕಾರದಿಂದ ಹಣವೇನಾದರೂ ಹಿಂತಿರುಗಿ ಬರುತ್ತದೆಯೇನೋ ಎಂದು ಬಕಪಕ್ಷಿಯ ಹಾಗೆ ಕಾದುಕೊಂಡಿರುವುದು ತಪ್ಪೋದಂತೂ ಇಲ್ಲ.

Sunday, January 20, 2008

ಅಂತರಂಗ - ಮುನ್ನೂರು



’ಅಂತರಂಗ’ ಒಂದರಲ್ಲೇ ಮುನ್ನೂರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾಯಿತು, ಇನ್ನಾದರೂ ನನ್ನ ಹುಚ್ಚು ಆಲೋಚನೆಗಳಿಗೆ ಒಂದಿಷ್ಟು ಕಡಿವಾಣ ಬೀಳುತ್ತದೆಯೇನೋ ಎಂಬ ಆಶಯದಲ್ಲಿ ಈ ಹಿಂದೆಯೇ ಯೋಚಿಸಿಟ್ಟಂತೆ ಹೊಸವರ್ಷ ಆರಂಭವಾದಂದಿನಿಂದ ಕಾರಿನಲ್ಲಿ ರೆಡಿಯೋವನ್ನು ನಿಲ್ಲಿಸಿದ್ದಾಯಿತು. ಆದರೂ ಬರೆಯೋಕೇನು ಬೇಕಾದಷ್ಟು ವಿಷಯಗಳು ಇದ್ದೇ ಇವೆ, ಅದರ ಜೊತೆಗೆ ಕಾಕತಾಳೀಯ ಎಂಬಂತೆ ಜನವರಿ ೧೩ ರಂದು ಭೂಮಿಕಾದ ವೇದಿಕೆಯಲ್ಲಿ ಕನ್ನಡ ಬ್ಲಾಗ್‌ಗಳ ಬಗ್ಗೆ ಮಾತನಾಡಿದಂದಿನಿಂದ ದಟ್ಸ್‌ಕನ್ನಡ ಕೃಪೆಯಿಂದ ಬ್ಲಾಗಿಗೆ ಎಲ್ಲೆಲ್ಲಿಂದಲೋ ಓದುಗರು ಬಂದು ಹೋಗುತ್ತಿರುವುದನ್ನು ನೋಡೀ ನೋಡೀ ಏನಾದರೂ ಬರೆಯುವ ಹಂಬಲದ ಹಿಂದೆ ಬರೆಯುವ ವಿಷಯಗಳ ಬಗ್ಗೆ ಒಮ್ಮೆ ಯೋಚಿಸಿಕೊಳ್ಳುವಂತಾಗಿರೋದೂ ನಿಜವೇ ಹೌದು.

ನನ್ನ ಸ್ನೇಹಿತ ಹರೀಶ್ ಹೇಳೋ ಹಾಗೆ ಕ್ರಿಯಾಶೀಲತೆ ಬಹಳ ಮುಖ್ಯ, ಪ್ರತಿಯೊಬ್ಬರೂ ಅವರ ಜೀವನದ ಉತ್ತುಂಗದಲ್ಲಿ ಏನೇನೆಲ್ಲವನ್ನು ಮಾಡಬೇಕು ಎಂದು ಆಲೋಚಿಸಿಕೊಂಡರೂ ಅಂದುಕೊಂಡಿದ್ದನ್ನು ಮಾಡಿ ತೋರಿಸುವುದು ಇದೆ ನೋಡಿ ಅದು ಕಷ್ಟದ ಕೆಲಸ. ಜೀವನದ ಒಂದು ಘಟ್ಟದಲ್ಲಿ ಎಲ್ಲರೂ ಪುಸ್ತಕವೊಂದನ್ನು ಬರೆಯಬೇಕು ಎಂದುಕೊಳ್ಳೋದು ಸಹಜವಿರಬಹುದು, ಆದರೆ ಒಂದು ಪುಸ್ತಕವನ್ನು ಬರೆಯುವುದಕ್ಕೆ ಹಂದರವನ್ನು ಆಲೋಚಿಸಿಕೊಂಡು ಅದನ್ನು ಒಂದು ರೂಪಕ್ಕೆ ತಂದು ತಿದ್ದಿ ತೀಡಿ ಪ್ರಕಟಿಸಿ ಜನರಿಗೆ ತಲುಪಿಸುವುದು ಒಂದು ದೊಡ್ಡ ಕಾಯಕವೇ ಸರಿ. ಅಂತಹ ತಪಸ್ಸಿಗೆ ಬಹಳಷ್ಟು ವ್ಯವಧಾನ ಬೇಕು, ಸಾಕಷ್ಟು ಬೇಸರವನ್ನು ಸಹಿಸಿಕೊಂಡು ಮೈ ಬಗ್ಗಿಸಿ ದುಡ್ಡಿಯುವ ಕೆಚ್ಚಿರಬೇಕು. ಆ ನಿಟ್ಟಿನಲ್ಲಿ ಹೇಳೋದಾದರೆ ಒಂದು ಕಾಲದಲ್ಲಿ ಯಾವುದಾದರೊಂದು ಸಣ್ಣ ಲೇಖನವನ್ನು ಬರೆಯಲು ಭೌತಿಕವಾಗಿ ಕೊಸರಾಡುತ್ತಿದ್ದ ನನಗೆ ಇಂದು ಇಷ್ಟೊಂದು ಬ್ಲಾಗ್‌ ಪರಿಧಿಯಲ್ಲಿ ಬರೆದು ಪ್ರಕಟಿಸಿದ ಮೇಲೆ ಕುಳಿತು ಬರೆಯುವುದು ಇನ್ನೂ ಸವಾಲಾಗೇನೂ ಉಳಿದಿಲ್ಲ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಆದರೆ, ಆ ಹೆಮ್ಮೆಯ ಹಿಂದೆ ಬೇಕಾದಷ್ಟು ಕ್ಷೋಭೆಗಳಿವೆ: ಮೊದಲೆಲ್ಲ ಗಹನವಾದದ್ದನ್ನೇನೋ ಬರೆಯುವಾಗ ಮೊದಲು ಪೇಪರಿನಲ್ಲಿ ಬರೆದುಕೊಂಡು ನಂತರ ಕಂಪ್ಯೂಟರಿನಲ್ಲಿ ಅಕ್ಷರ ಜೋಡಿಸಿಕೊಳ್ಳುತ್ತಿದ್ದವನಿಗೆ ಇಂದು ಏಕ್‌ದಂ ಕಂಪ್ಯೂಟರ್ ಮೇಲೇ ಬರೆಯುವುದಕ್ಕೆ ರೂಢಿಸಿಕೊಂಡಿರುವುದರ ಹಿಂದೆ ಕೀ ಬೋರ್ಡಿನ ವೇಗಕ್ಕೆ ಮನಸ್ಸು ಹೊಂದಿಕೊಂಡಿರುವುದನ್ನು ಗಮನಿಸಿ ಸಂಕಟವಾಗುತ್ತದೆ. ಬ್ಲಾಗ್ ಕೊಡುವ ಸ್ವಾತಂತ್ರ್ಯ ಡೆಸ್‌ಟಾಕ್ ಪಬಿಷಿಂಗ್ - ಅದೇ ಅದರ ಮಿತಿ ಕೂಡ, ಬರಹವನ್ನು ಯಾರಾದರೂ ತಿದ್ದಿ ಹೀಗಲ್ಲ ಹಾಗೆ ಎಂದು ಹೇಳುವುದನ್ನು ಮೀರಿ ಬೆಳೆದ ನನ್ನಂಥ ಬ್ಲಾಗ್ ಬರಹಗಾರರಿಗೆ ನಮ್ಮ ಮಿತಿಯನ್ನು ಕಂಡುಕೊಳ್ಳುವುದೂ ಅದನ್ನು ತಿದ್ದಿಕೊಂಡು ಬೆಳೆಯುವುದೂ ದೊಡ್ಡ ಸವಾಲು. ಜೊತೆಗೆ ಬ್ಲಾಗ್ ಒದಗಿಸುವ ಬ್ಲಾಗ್ ಪರಿಧಿಯಲ್ಲಿ ವಸ್ತು-ವಿಷಯಕ್ಕೆ ಆಧ್ಯತೆ ಕೊಡುವುದಕ್ಕಿಂತಲೂ ಅವರವರ ಅಭಿಪ್ರಾಯ ದೊಡ್ಡದಾಗುತ್ತದೆ, ನಮ್ಮ ಅನಿಸಿಕೆಗಳು ನಮ್ಮ ಇಂದಿನ ಪ್ರಬುದ್ಧತೆಯೇ ನಮ್ಮ ಮಿತಿಯಾಗದೆ ನಮ್ಮನ್ನು ಇದ್ದಲ್ಲೇ ನಿಲ್ಲಿಸದಿದ್ದರೆ ಸಾಕು.

ಪ್ರತಿಯೊಬ್ಬ ಬ್ಲಾಗಿಗನೂ ತಮ್ಮ ಬೆಳವಣಿಗೆಗೆ ತಾವು ಓದುವ ಇತರ ಬ್ಲಾಗುಗಳ ಜೊತೆಗೆ ಇತರ ಮಾಧ್ಯಮಗಳನ್ನು ಅನುಸರಿಸಿಕೊಂಡಿದ್ದರೆ ಪುಣ್ಯ. ಬ್ಲಾಗ್ ಒಂದು ಅಭಿವ್ಯಕ್ತಿ ಮಾಧ್ಯಮ, ಆದರೆ ಅದೇ ಕೊರತೆಯಾಗಬಾರದು. ಮುಂದಿನ ಬರಹಗಳಲ್ಲಾದರೂ ತಕ್ಕ ಮಟ್ಟಿನ ರೆಫೆರೆನ್ಸ್‌ಗಳನ್ನು ಒದಗಿಸಿಯೋ, ಅಂಕಿ-ಅಂಶಗಳನ್ನು ಬಳಸಿಯೋ, ಶಬ್ದ-ಚಿತ್ರ ಮುಂತಾದವುಗಳ ಮೂಲಕವೋ ಬೇರೆ ಬೇರೆ ನಿಲುವುಗಳನ್ನು ತೋರಿಸುವ ಪ್ರಯತ್ನವನ್ನು ಮಾಡಬಾರದೇಕೆ ಎಂದು ಅನ್ನಿಸಿದ್ದಿರ ಹಿನ್ನೆಲೆಯಲ್ಲಿ ಮನಸ್ಸಿನಲ್ಲಿ ಬರುವ ಚಿಂತನೆ/ಆಲೋಚನೆಯೊಂದಕ್ಕೆ ಭಿನ್ನವಾಗಿ ನೋಡುವ ದೃಷ್ಟಿಕೋನ ಬಂದರೆ ಒಳ್ಳೆಯದೇ. ಸರಿ-ತಪ್ಪು ಎನ್ನುವುದಕ್ಕಿಂತ ಒಂದು ವಿಷಯಕ್ಕಿರುವ ಹಲವಾರು ಮಜಲುಗಳನ್ನು ಶೋಧಿಸುವ ವ್ಯವಧಾನ ಸಿಕ್ಕರೆ ಅದು ನನ್ನ ದೊಡ್ಡಸ್ತಿಕೆಯಾಗಲಿ. ರಾಬರ್ಟ್ ಕಿಯೋಸಾಕಿ (Robert Kiyosaki) ರಿಚ್‌ಡ್ಯಾಡ್ ಪೂವರ್ ಡ್ಯಾಡ್‌ನಲ್ಲಿ ಹೇಳೋ ಹಾಗೆ ಬ್ಲಾಗ್ ಆಗಲಿ ಪುಸ್ತಕವಾಗಲೀ ಯಾವುದೇ ಮಾಧ್ಯಮಕ್ಕಾದರೂ ಬೆಸ್ಟ್ "ಸೆಲ್ಲರ್" ನಿಲುವು ಮುಖ್ಯವಾದುದು, ಬ್ಲಾಗ್ ಬರೆಯುವವನು ತಾನು ಎಷ್ಟು ಬೇಡವೆಂದರೂ ಬ್ಲಾಗ್ ಓದುವವರ ಬಗ್ಗೆ ಯೋಚಿಸಿಯೇ ಯೋಚಿಸುತ್ತಾನೆ, ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರೂ ಬ್ಲಾಗ್ ಓದುಗರ ಆಶಯಕ್ಕೆ ಒತ್ತಾಸೆಯಾಗಬೇಕು. ಹೀಗೆ ಹೇಳೋದಕ್ಕೆ ಎರಡು ಕಾರಣಗಳಿವೆ: ಮೊದಲನೆಯದಾಗಿ ಇಂದು ಎಷ್ಟೋ ಜನ ಬ್ಲಾಗ್ ಓದುವುದಕ್ಕೆ ಮಾತ್ರ ಸೀಮಿತವಾದರೆ ಎನ್ನುವ ಹೆದರಿಕೆ, ಎರಡನೆಯದಾಗಿ ಮುಂದಿನ ವರ್ಷಗಳಲ್ಲಿ ಬ್ಲಾಗ್ ಒಂದು ಸಾಹಿತ್ಯ ಪ್ರಕಾರವಾಗಿ ನಿಲ್ಲುವ ಭಯ. ಆದ್ದರಿಂದಲೇ ’ಬಾಯಿಗೆ ಬಂದಂತೆ ಬರೆಯುವ’ ಬ್ಲಾಗಿಗರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇಂಗ್ಲೀಷ್ ಬ್ಲಾಗುಗಳೋ ಹಲವಾರು ರೀತಿಯಲ್ಲಿ ಇವಾಲ್ವ್ ಆದವುಗಳು, ಆದರೆ ಮಿತಿಯಲ್ಲಿರುವ ಕನ್ನಡದ ಬ್ಲಾಗ್‌ಗಳಿಗೆ ಸೂಕ್ಷ್ಮವಾದ ಜವಾಬ್ದಾರಿ ಇದೆ ಎನ್ನುವುದು ನನ್ನ ಆಶಯ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು

***

ಕ್ಯಾಪಿಟಲಿಷ್ಟಿಕ್ ವ್ಯವಸ್ಥೆಯಲ್ಲಿ ದಿನವೂ ನೀರು ಕುಡಿಯುವ ನಮಗೆ ಬರುವ ಚಿಂತನಶೀಲ ವಿಷಯಗಳ ಹರಿವು ಒಂದೇ ಮಟ್ಟದ್ದೇ ಎಂದು ಹೇಳಬಹುದು. ನಾವು ಇಲ್ಲಿನ ಕಾರ್ಪೋರೇಟ್ ಏಣಿಯ ಮೆಟ್ಟಿಲುಗಳಲ್ಲಿ ನಿಂತು ಅಮೇರಿಕದ ಬದುಕನ್ನು ಹತ್ತಿರದಿಂದ ನೋಡುತ್ತಿದ್ದೇವೆ ಎಂದುಕೊಂಡರೆ ಅದು ನಮ್ಮ ಭ್ರಮೆ. ನಮ್ಮ ಮ್ಯಾನೇಜುಮೆಂಟ್ ಕೆಲಸಗಳಲ್ಲಿ ಜನಸಾಮಾನ್ಯರ ಪರಿಚಯ ಪ್ರಭಾವ ಕಡಿಮೆಯೇ, ನಮ್ಮ ಪ್ರಭಾವಳಿಯ ತ್ರಿಜ್ಯ ಯಾವತ್ತೂ ಒಂದೇ ಮಟ್ಟದ್ದೇ, ಅಪರೂಪಕ್ಕೊಮ್ಮೆ ದೊಡ್ಡ ಮನುಷ್ಯರ ಮಾತಿನಿಂದ ಪ್ರಭಾವಿತಗೊಂಡ ನಮ್ಮ ನಿಲುವಿನ ಚೇತನಶೀಲತೆಯನ್ನು ಒರೆಹಚ್ಚಲು ಸಿಗುವ ಸಾಣೇಕಲ್ಲುಗಳೂ ನುಣುಪಾದವುಗಳೇ. ತಾಯ್ನಾಡನ್ನು ಬಿಟ್ಟು ಬಂದ ನಮ್ಮ ನಂಬಿಕೆ, ವಿಶ್ವಾಸ, ನೆನಪುಗಳು ನಿಧಾನವಾಗಿ ನಾಷ್ಟಾಲ್ಜಿಯಾದ ವ್ಯಾಖ್ಯಾನವನ್ನು ಹೋಲುತ್ತವೆಯೇನೋ ಎನ್ನುವ ಭಯದ ಜೊತೆಗೆ ವೇಗದಲ್ಲಿ ಬೆಳೆಯುತ್ತಿರುವ ನಮ್ಮೂರು-ದೇಶದಿಂದ ಭಿನ್ನವಾಗಿ ಬೆಳೆಯುತ್ತಿರುವ ನಮ್ಮ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಬೇಕಾದಷ್ಟು ಸಾರಿ ಪ್ರಶ್ನಿಸಿಕೊಳ್ಳುವ ಅಖಾಡದಲ್ಲಿ ಸೆಣೆಸುವುದು ದಿನನಿತ್ಯದ ಮಾತುಕಥೆಗಳಲ್ಲೊಂದು. ಎಲ್ಲಕ್ಕಿಂತ ಮುಖ್ಯವಾಗಿ ’ಇಲ್ಲಿಯೇ ಇದ್ದು ಇಲ್ಲಿಯವರಾಗುವ ಪ್ರಯತ್ನವನ್ನು ಇನ್ನು ಮುಂದೂ ಮಾಡುತ್ತಲೇ ಇರುತ್ತೀರೋ?’ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದಿರಲಿ, ಇನ್ನೂ ಪ್ರಶ್ನೆಯ ವಿಸ್ತಾರವನ್ನೇ ಅರ್ಥ ಮಾಡಿಕೊಳ್ಳದಿರುವ ಅಸಹಾಯಕತೆ ನಮ್ಮದು.

ಓಹ್, ಬರೆಯೋಕೇನು ಬೇಕಾದಷ್ಟಿದೆ - ನಿಲ್ಲಿಸೋ ಮಾತೇ ಇಲ್ಲ!

***

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದುತ್ತಿರುವವರೆಲ್ಲರಿಗೂ ನನ್ನ ನಮನಗಳು. ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!

Thursday, January 17, 2008

ಕನ್ನಡ ಬ್ಲಾಗ್ ಮಂಡಲ - ಭಾಷಣದ ಅವತರಣಿಕೆ

ಬಹಳ ಜನರ ಬೇಡಿಕೆ ಮೇರೆಗೆ ದಟ್ಸ್‌ಕನ್ನಡ ವರದಿಯಲ್ಲಿ ಪ್ರಕಟವಾದಂತೆ ಭಾಷಣದ ಆಡಿಯೋ ಹಾಗೂ ಬ್ಲಾಗ್ ಲಿಸ್ಟ್ ಅನ್ನು ಇಲ್ಲಿ ಕೊಡಲಾಗಿದೆ:

ಸತೀಶ್ ಕುಮಾರ್ ಕಂಡಂತೆ ಕನ್ನಡ ಬ್ಲಾಗ್‌ಮಂಡಲ


ಜನವರಿ ೧೩ ರಂದು ಭೂಮಿಕಾದಲ್ಲಿ ನಡೆದ ಭಾಷಣದ ಅವತರಣಿಕೆಗೆ ಇಲ್ಲಿ ಕ್ಲಿಕ್ ಮಾಡಿ (~40 MB, WAV file)

ಜೊತೆಗೆ ಈ ಕೆಳಗಿನ ಫೈಲ್‌ನಲ್ಲಿ 50 ಬ್ಲಾಗ್‌ಗಳ ಪಟ್ಟಿಯನ್ನೂ ಇಲ್ಲಿ ಕೊಡಲಾಗಿದೆ.

***
ಮೊದಲು ಪ್ರಕಟಿಸಿದ್ದ ೩೯ ಬ್ಲಾಗ್‌ಗಳ ಪಟ್ಟಿಯನ್ನು ಬದಲಾಯಿಸಿ ೫೦ ಬ್ಲಾಗ್‌ಗಳಿರುವ ಈ ಹೊಸಪಟ್ಟಿಯನ್ನು ಫೆಬ್ರುವರಿ ೩ ರಂದು ಸೇರಿಸಿದ್ದೇನೆ.

Wednesday, January 16, 2008

ರಸ್ತೆಗಳೆಂಬ ಮಟ್ಟಗಾರರು

ಬಡವರೂ-ಬಲ್ಲಿದರೂ ಎಲ್ಲರೂ ಪ್ರಯಾಣ ಮಾಡೋ ದಾರಿ, ಮೆಟ್ಟಿ ಮುನ್ನಡೆಯುವ ನೆಲದ ಮೇಲಿನ ಡಾಂಬರಿನ ಹೊದಿಕೆ, ಅಥವಾ ನಾವುಗಳು ನಮ್ಮ ನಮ್ಮ ವಾಹನದ ಮೇಲೆ ಸವರಿಕೊಂಡು ಹೋಗುವ ಅಂಕುಡೊಂಕಾಗಿದ್ದೂ ಹಿಡಿದ ಗುರಿಯನ್ನು ತಲುಪಿಸುತ್ತೇವೆ ಎಂಬ ವಾಗ್ದಾನವನ್ನು ಎಂದೂ ನೀಡಿಕೊಂಡಿರುವ ಸಂಗಾತಿಗಳ ಮೇಲೆ ಇಂದು ಹೊಸದಾಗಿ ಯೋಚಿಸುವಂತಾಯ್ತು. ಪಂಚಭೂತಗಳಾಗಲೀ, ಸಾವಾಗಲೀ ಪ್ರತಿಯೊಂದು ಸಮುದಾಯಕ್ಕೆ ಒಂದು ಸಮಮಟ್ಟವನ್ನು ಕಾಯ್ದುಕೊಂಡು ಬಂದಿದ್ದರೆ ನಾವು ದಿನವೂ ಬಳಸುವ ರಸ್ತೆಗಳು ಮಹಾ ದೊಡ್ಡ ಮಟ್ಟಗಾರರು (ಲೆವೆಲರ್ಸ್) ಎಂದು ಈ ದಿನ ವಿಶೇಷವಾಗಿ ಅನ್ನಿಸಿದ್ದಂತೂ ನಿಜ.

ಸಂಜೆ ಸುಮಾರು ಆರು ಘಂಟೆಯ ಹೊತ್ತಿಗೆಲ್ಲಾ ಮಹಾ ಕತ್ತಲೆ ಆವರಿಸಿಕೊಂಡು ಎಲ್ಲಾ ಕಡೆ ಸೂರ್ಯನನ್ನು ಅಡಗಿಸಿ ಅಟ್ಟಹಾಸವನ್ನು ತೋರಿಸುತ್ತಿತ್ತು. ಅದರ ಜೊತೆಗೆ ಛಳಿ-ಗಾಳಿಯೂ ಸೇರಿಕೊಂಡು ನಾಳೆ ಸೂರ್ಯ ಹುಟ್ಟುತ್ತಾನೋ ಇಲ್ಲವೋ ಎಂದು ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಸೊನ್ನೆಗಿಂತ ಕೆಳಗಿನ ಛಳಿಯಿಂದ ಒಂದು ಒಣ ವಾತಾವರಣ ಸೃಷ್ಟಿಯಾಗಿತ್ತು. ನಾನು ಅದೆಷ್ಟೋ ಕಾರುಗಳ ಹಿಂದೆ, ಒಂದೇ ಒಂದು ಲೇನ್ ಇರುವ ಯಾವುದೋ ಗ್ರಾಮೀಣ ರಸ್ತೆಯೊಂದರಲ್ಲಿ ತೆವಳುತ್ತಿದ್ದವನು ಯಾವುದೋ ತಿರುವೊಂದರಲ್ಲಿ ದೂರದವರೆಗೆ ದೃಷ್ಟಿ ಹಾಯಿಸಿದ್ದಕ್ಕೆ ಸುಮಾರು ದೂರದವರೆಗೆ ಮುಂದಿರುವ ಕಾರಿನ ಟೇಲ್‌ಲೈಟುಗಳು ಕಂಡುಬಂದವು. ಇಷ್ಟು ಹೊತ್ತಿಗೆ ಅಲ್ಲಲ್ಲಿ ಪೋಲೀಸರು ಇದ್ದು ಅತಿವೇಗದಲ್ಲಿ ಹೋಗುವವರನ್ನು ಗುರುತಿಸಿ ದಂಡವಿಧಿಸುವುದು ಈ ರಸ್ತೆಗಳಲ್ಲಿ ಮಾಮಾಲಿಯಂತೂ ಅಲ್ಲ, ಆದರೂ ಮುಂದಿನ ಕಾರುಗಳೆಲ್ಲ ರಸ್ತೆಯ ಸ್ಪೀಡ್‌ಲಿಮಿಟ್‌ಗಿಂತಲೂ ಕಡಿಮೆ ವೇಗದಲ್ಲೇ ಚಲಿಸುತ್ತಿದ್ದವು ಅಥವಾ ತೆವಳುತ್ತಿದ್ದವು ಎಂದೇ ಹೇಳಬೇಕು. ಕಾರಿನ ಸ್ಟೇರಿಂಗ್ ವ್ಹೀಲ್‌ನ ಹಿಂದಿರ ಬಹುದಾದ ಹಲವಾರು ಮನಸ್ಥಿತಿಗಳು ಕಣ್ಣ ಮುಂದೆ ಸುಳಿದು ಹೋದವು: ದೂರದ ಡೇ ಕೇರ್ ಸೆಂಟರುಗಳಲ್ಲಿ ಕಾದುಕೊಂಡಿರುವ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬಹುದಾದ ತಂದೆ-ತಾಯಿಯರಿದ್ದರಬಹುದು, ವಾರದ ಮತ್ತೊಂದು ದಿನದ ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿರುವವರಿರಬಹುದು, ದೂರದ ಬಾರು-ರೆಸ್ಟೋರೆಂಟಿನಲ್ಲಿ ಕಾದುಕೊಂಡಿರುವ ಪ್ರೇಮಿಯನ್ನು ಭೇಟಿ ಮಾಡುವ ತವಕದವರಿದ್ದಿರಬಹುದು, ಇಂದಿನ ಹಾಗೇ ನಾಳೆ ಎಂದು ಲೆಕ್ಕ ಹಾಕಿಕೊಂಡು ಅಗತ್ಯ ವಸ್ತುಗಳ ಶಾಪ್ಪಿಂಗ್‌ಗೆ ಹೋಗುತ್ತಿರುವ ವೃದ್ಧರಿರಬಹುದು, ಹೀಗೆ ಅನೇಕಾನೇಕ ಮುಖಗಳು ಮನಸ್ಥಿತಿಗಳು ಕಣ್ಣ ಮುಂದೆ ಹಾದು ಹೋದವು. ಇವೆಲ್ಲಕ್ಕೂ ಇಂಬುಕೊಡುವ ಹಾಗೆ ಘಂಟೆಗೆ ನಲವತ್ತೈದು ಮೈಲು ವೇಗದ ಮಿತಿಯಲ್ಲಿನ ರಸ್ತೆಯಲ್ಲಿ ಇಪ್ಪತ್ತೈದಕ್ಕಿಂತಲೂ ಕಡಿಮೆ ವೇಗದಲ್ಲಿ ತೆವಳುತ್ತಿರುವ ನನ್ನ ಹಿಂದುಮುಂದಿನ ವಾಹನಗಳ ಸಾಲು ಅದ್ಯಾವುದೋ ಯುದ್ಧಭೂಮಿಯಲ್ಲಿ ಸಾವರಿಸಿಕೊಂಡು ಹೋಗುತ್ತಿರುವ ಕಾನ್‌ವಾಯ್‌ಯಂತೆ ಕಂಡುಬಂತು. ಈ ಆಮೆ ವೇಗಕ್ಕೆಲ್ಲಾ ಕಾರಣ ಒಬ್ಬನೇ, ಅದೇ ಮುಂದಿನ ವ್ಯಕ್ತಿ, ಎಲ್ಲರಿಗಿಂತ ಮೊದಲು ಈ ಸಾಲಿನಲ್ಲಿ ತೆವಳಿಕೊಂಡು ಹೋಗುತ್ತಿರುವವನು/ಳು. ಛೇ, ಇಂಥ ಒಬ್ಬ ನಿಧಾನವಾದ ಡ್ರೈವರಿನಿಂದ ಎಷ್ಟೊಂದು ಜನರು ಹೀಗೆ ತೆವಳಬೇಕಾಯಿತಲ್ಲ ಎಂದು ಒಮ್ಮೆಲೇ ಕೋಪ ಬಂತು, ಆ ಕೋಪದ ಬೆನ್ನ ಹಿಂದೆ, ಆ ಮುಂದಿನ ವ್ಯಕ್ತಿಯೇ ನಮ್ಮ ನಾಯಕ (ಲೀಡರ್), ಅವನ/ಳ ವೇಗವೇ ನಮಗೆಲ್ಲರಿಗೂ ಮಾದರಿ, ನಾವು ಹಿಡಿದ ದಾರಿ ಒಂದೇ ಒಂದು ಲೇನ್ ಇರುವ ವ್ಯವಸ್ಥೆ ಆದ್ದರಿಂದ ಇನ್ನು ಮುಂದೆ ಅದೆಷ್ಟೋ ದೂರದವರೆಗೆ ಈ ನಿಧಾನವಾದ ವ್ಯಕ್ತಿಯನ್ನು ಅನುಸರಿಸಿಕೊಂಡಿರಬೇಕಲ್ಲ, ಆ ವ್ಯಕ್ತಿ ಯಾರೂ ಏನೂ ಎನ್ನುವುದು ಗೊತ್ತಿರದಿದ್ದರೂ ಆ ಲೀಡರ್‌ಶಿಪ್‌ನಿಂದ ಎಷ್ಟೊಂದು ಜನರಿಗೆ ಅದೇನೇನೋ ಪರಿಣಾಮ ಬೀರುತ್ತಲ್ಲಾ ಎನ್ನಿಸಿ ಸದಾ ವೇಗಕ್ಕೆ ಹೊಂದಿಕೊಂಡ ನನ್ನ ವಸಡುಗಳು ಯೋಚನೆಯ ಭಾರಕ್ಕೆ ಕುಸಿದು ಹೋದವು.

ಒಬ್ಬ ನಾಯಕನಿಗೆ ವೇಗವೆನ್ನುವುದು ಇರಲೇ ಬೇಕೆಂದೇನೂ ಇಲ್ಲ. ಪ್ರಪಂಚದ ಅದೆಷ್ಟೋ ದೇಶದ ನಾಯಕರುಗಳು ಸ್ಲೋ, ಅನೇಕ ಕಂಪನಿಯ ಲೀಡರುಗಳು ಟೈಪ್-ಬಿ ವ್ಯಕ್ತಿತ್ವದವರೇ ಸರಿ. ವೇಗವಾಗಿ ಹೋಗುವ ರಸ್ತೆಗಳಿದ್ದೂ ಅನುಕೂಲಗಳಿದ್ದೂ ಎಲ್ಲರಿಗಿಂತ ಮುಂದಿನ ವ್ಯಕ್ತಿ ನಿಧಾನವಾಗಿ ಹೋಗುತ್ತಿರುವ ಕಾರಣಕ್ಕೆ ಎಷ್ಟೊಂದು ಜನರ ಮೇಲೆ ಅದೇನೇನು ಪರಿಣಾಮಗಳು ಬೀರುತ್ತವೆ ಎಂದು ಒಮ್ಮೆ ಯೋಚಿಸಿಕೊಂಡೆ. ಯಾವುದು ಸಾಮಾನ್ಯ ಸಂಜೆಯಾಗಿ ಪರಿವರ್ತನೆಗೊಂಡು ಎಲ್ಲವೂ ಸುಗಮವಾಗಿ ನಡೆಯಬೇಕಿತ್ತೋ ಅಲ್ಲಿ ನಿಮಿಷ-ನಿಮಿಷಗಳನ್ನು ಆಧರಿಸಿಕೊಂಡಿರುವ ಎಷ್ಟೋ ಜನರಿಗೆ ವಿಳಂಬವಾಗಿ ಹೋಗಬಹುದು. ಒಮ್ಮೆ ವಿಳಂಬಗೊಂಡವರು ಗಲಿಬಿಲಿಯಿಂದ ಹೆಚ್ಚಿನ ವೇಗದಲ್ಲಿ ಓಡಿಸಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಅಪಾರವಾದ ಸಮಯವಿದೆ ಎನ್ನುವ ಮಹಾಕಾಲದ ಮುಂದೆಯೂ ನಾವು ದಿನ, ಘಂಟೆ, ನಿಮಿಷ, ಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ನಾವೇ ಸೃಷ್ಟಿಸಿಕೊಂಡಿರುವ ಗಡಿಯಾರವನ್ನಾಧರಿಸಿದ ವ್ಯವಸ್ಥೆಯಲ್ಲಿ ಅದೇನೇನು ಅವಾಂತರಗಳಾಗಬೇಡ. ಈಗಿನ ನಾಯಕ ಅಥವಾ ಮುಂದಾಳು ಬದಲಾಗುವವರೆಗೆ ಹಿಂದಿನವರು ಸಂಯಮದಿಂದ ಕಾಯಬೇಕೇ ಅಥವಾ ಈ ಮುಂದಾಳು ಬದಲಾಗಿ ಮತ್ತೊಬ್ಬ ಬಂದು ನಮ್ಮೆಲ್ಲರ ವೇಗದ ಗತಿಯ ನಿಧಾನವಾದ ಬದಲಾವಣೆಯ ಬಗ್ಗೆ ಚಿಂತಿಸಬೇಕೇ ಅಥವಾ ನಾವೇ ಮತ್ಯಾವುದೋ ಹೊಸ ರಸ್ತೆಯೊಂದನ್ನು ಹಿಡಿದು ನಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಳ್ಳಬೇಕೆ? ಒಂದು ವೇಳೆ ಹಾಗೆ ಮಾಡಿದರೂ ಈ ರಸ್ತೆಗಳೆಂಬ ಮಟ್ಟಗಾರರೂ ಎಲ್ಲಿಯೂ ಎಲ್ಲಕಡೆಯೂ ಇರಬಹುದಲ್ಲವೇ? ಈ ಮುಂದಾಳುವನ್ನು ತೊರೆದು ಹೋದ ಮಟ್ಟಿಗೆ ಮತ್ತೊಬ್ಬ ಮುಂದಾಳು ಸಿಗುವವ ಹೇಗಿರುತ್ತಾನೋ ಏನೋ? ರಾಬರ್ಟ್ ಪ್ರಾಸ್ಟ್‌ನ ಕಾಲದ ಕಡಿಮೆ ಜನರು ಸಂಚರಿಸಿದ ಮಾರ್ಗಗಳು ಇನ್ನೂ ಇವೆಯೇ ಎಂದು ಬೇಕಾದಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.

ರಸ್ತೆ ಎನ್ನುವುದು ಕೇವಲ ನಡೆದಾಡುವ ಹಾದಿ, ಹೆಚ್ಚು ಜನರು ಬಳಸುವ ವ್ಯವಸ್ಥೆ ಎಂದು ದೊಡ್ಡ ವ್ಯಾಖ್ಯಾನವನ್ನೇನೋ ಮಾಡಬಹುದು ಆದರೆ ಪ್ರತಿಯೊಬ್ಬರನ್ನೂ ಒಂದೇ ಮಟ್ಟಕ್ಕೆ ಎಳೆದು ತರುವ ಈ ಅವತರಣಿಕೆಯನ್ನು ಒಂದು ತತ್ವವನ್ನಾಗಿ ಅಥವಾ ಸಾಧನವನ್ನಾಗಿ ನೋಡಿದ್ದು ನಾನು ಇದೇ ಮೊದಲು. ಭೂಮಿಯ ಮೇಲಿನ ರಸ್ತೆಗಳು ಹಾಗೆಯೇ ಹೆಚ್ಚು ಜನರು ಬಳಸುವಲ್ಲಿ ಸಹಾಯವಾಗುವಂತೆ ಕಡಿಮೆ ಜನರು, ಮುತ್ಸದ್ದಿಗಳು, ಚಿಂತಕರು ಮೊದಲೇ ಯೋಚಿಸಿ ರೂಪಿಸಿರುವ ವ್ಯವಸ್ಥೆ. ನನ್ನ ಭೌತಿಕ ಅಸ್ತಿತ್ವದ ಮೊದಲೂ ನಂತರವೂ ನಾವು ಇರುತ್ತೇವೆ ಎಂಬ ಹಣೆಪಟ್ಟಿಯನ್ನು ಬರೆಸಿಕೊಂಡೇ ಹುಟ್ಟಿವೆ ಈ ಮಟ್ಟಗಾರರು. ಭೂಮಿಯ ಮೇಲಿನ ರಸ್ತೆಗಳನ್ನು ಒಮ್ಮೆ ತೋಡಿಕೊಂಡರೆ ಮತ್ತೆ ಮತ್ತೆ ಅದೇ ವ್ಯವಸ್ಥೆಗೆ ಬರುವಂತೆ ಮಾಡುವ ಕಟ್ಟಿ ಹಾಕುವ ನೆರೆಹೊರೆಗಳಿವೆ, ಅದೇ ನೀರಿನ ಮೇಲಾಗಲೀ ಗಾಳಿಯಲ್ಲಾಗಲೀ ತೇಲುವವರಿಗೆ ಈ ಜಿಜ್ಞಾಸೆಗಳಿರಲಿಕ್ಕಿಲ್ಲ. ಈ ಮಟ್ಟಗಾರ ರಸ್ತೆಗಳು ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ ಎಂದು ಬೀಗುವುದನ್ನು ನೀವು ಗಮನಿಸಿರಬಹುದು, ಭೋಗೋಳದಲ್ಲಿ ಅಪರಿಮಿತವಾಗಿ ಗಾಳಿ-ನೀರಿದ್ದರೂ ನಾವು ಹೆಚ್ಚು ಹೆಚ್ಚು ಆಧರಿಸಿಕೊಂಡಿರುವುದು ನೆಲವನ್ನೇ. ಅದ್ಯಾವುದೋ ಸೈನ್ಸ್‌ಫಿಕ್ಷನ್ನ್ ಸಿನಿಮಾಗಳಲ್ಲಿ ತೋರಿಸೋ ಹಾಗೆ ನಾವೂ ಏಕೆ ಸ್ವತಂತ್ರರಾಗಿ ಕಡಿಮೆ ಖರ್ಚಿನಲ್ಲಿ ಅಂತರಿಕ್ಷದಲ್ಲಿ ತೇಲಬಾರದು? ನಮ್ಮ ಗುರಿಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ನಮ್ಮ ನಮ್ಮ ದೂರಕ್ಕೆ ತಂತ್ರಕ್ಕೆ ಆಲೋಚನೆಗಳಿಗೆ ನಾವು ನಾವೇ ಏಕೆ ನಾಯಕರಾಗಬಾರದು? ಯಾರೊಬ್ಬರ ಹಿಂದೂ ಇಲ್ಲದೇ, ಯಾರ ಮುಂದೆ ತೆವಳಿಕೊಂಡು ಹೋಗಬಹುದಾದ ಹಂಗೂ ಇಲ್ಲದೇ ಪ್ರತಿಯೊಂದು ಸಾರಿ ತೇಲುವಾಗಲೂ ನಮ್ಮ ದಾರಿಯನ್ನು ನಾವೇ ಏಕೆ ಕೊರೆದುಕೊಳ್ಳುವ ಮುಂದಾಳುಗಳಾಗಬಾರದು? ಕಡಿಮೆ ಭೂಮಿಯಲ್ಲಿ ಹೆಚ್ಚು ಹೆಚ್ಚು ಜನರು ಕೊರೆದು ಅದೆಲ್ಲಿಂದ ಅದೆಲ್ಲಿಗೋ ಹೋಗುವ ನಿರ್ಣಾಯಕ ರಸ್ತೆಗಳನ್ನು ನಿರ್ಮಿಸಿದಂತೆಲ್ಲಾ ಇವುಗಳು ಹಠ ಮಾಡುವ ಮಕ್ಕಳಿಗೆ ಒಂದೇ ಒಂದು ಆಪ್ಷನ್ನನ್ನು ಕೊಡುವ ಪೋಷಕರ ಹಾಗೆ ಯಾವತ್ತೋ ಅದೇ ಹಾಡನ್ನು ಹಾಡಿಕೊಂಡಿರುವ ಮಟ್ಟಗಾರರಾಗುವುದೇಕೆ? ಯಾವನೋ ಒಬ್ಬ ತನ್ನ ಗೌಜು-ಗದ್ದಲಗಳ ನಡುವೆ ನಿಧಾನವಾಗಿ ತೆವಳಿಕೊಂಡು ಹೋಗುತ್ತಿರುವುದನ್ನು ನಾವು ಉಳಿದವರು ಅವನ ಮುಂದಾಳುತನವನ್ನಾಗಲೀ, ನಾಯಕತ್ವವನ್ನಾಗಲೀ ಅದೇಕೆ ಒಪ್ಪಿಕೊಳ್ಳಬೇಕು? ಒಮ್ಮೆ ಸರತಿ ಸಾಲಿನಲ್ಲಿ ಸಿಕ್ಕಿಕೊಂಡಾಕ್ಷಣ ಅದರಿಂದ ಮುಕ್ತಿಯೆಂಬುದೇ ಇಲ್ಲವೇನು?

Sunday, January 13, 2008

ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ

ಸದಾ ಗಿಜಿಗುಡುತ್ತಿರೋ ರಸ್ತೇ ಮೇಲೆ ಒಂದಲ್ಲ ಒಂದು ವಾಹನ ಹೋಗ್ತಲೇ ಇರುತ್ತೆ, ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುವಾಗ ಕಾರಿನ ವಿಂಡ್‌ಶೀಲ್ಡ್ ಮೂಲಕ ಮುಂದೆ ಹೋಗೋ ವಾಹನವನ್ನ ಹಿಂಬಾಲಿಸಿಕೊಂಡು ಹೋಗೋದು ಸುಲಭ ಅನ್ಸುತ್ತೆ. ರಸ್ತೆಯ ಪಕ್ಕದಲ್ಲಿ ಎಷ್ಟೊಂದು ವಾಹನಗಳು ನಮ್ಮ ಜೊತೆ ಸಹ ಪ್ರಯಾಣದಲ್ಲಿ ತೊಡಗಿ ಒಂದು ಕಮ್ಮ್ಯೂನಿಟಿ ಅಥವಾ ಒಂದು ಸಮೂಹ ಇದು ಅನ್ನೋ ಭಾವನೆಗಳ ಹಿಂದೇನೇ ನಾವೆಲ್ಲಿ ಹೋಗ್ತೀವೋ ಅವರೆಲ್ಲೋ ಅನ್ನೋ ಭಿನ್ನತೆ ಕೂಡಾ ಮನದಲ್ಲಿ ಹುಟ್ಟಿ ಬರುತ್ತೆ. ಘಂಟೆಗಟ್ಟಲೆ ಪ್ರಯಾಣ ಮಾಡ್ತಿರುವಾಗ ಒಂದಲ್ಲ ಒಂದು ರೀತಿಯ ಆಲೋಚನೆಗಳು ಮನದಲ್ಲಿ ಹುಟ್ತಾನೇ ಇರುತ್ವೆ, ಆ ಆಲೋಚನೆಗಳು ನಮ್ಮನ್ನು ಅವುಗಳ ಲೋಕಕ್ಕೆ ಸಂಪೂರ್ಣವಾಗಿ ಕರೆದೊಯ್ಯದಂತೆ ವಾಸ್ತವ ಆಗಾಗ್ಗೆ ಹಿಡಿದು ಎಳೆಯುತ್ತಲೇ ಇರುತ್ತೆ.

ಹೀಗೆ ಪ್ರಯಾಣದ ಹಳೆಯ ಹೊಸ ಮುಖಗಳು ಮನಸ್ಸಿಗೆ ಬಂದದ್ದು ಈ ಒಂದು ವಾರದಲ್ಲಿ ಅದೆಷ್ಟೋ ದೂರವನ್ನು ಕ್ರಮಿಸಿ ರಸ್ತೆಯ ಮೇಲೆ ನಮ್ಮದೇ ಆದ ಒಂದು ಪ್ರಪಂಚವನ್ನು ತೆರೆದಿಟ್ಟುಕೊಂಡಾಗಲೇ. ನನ್ನ ಪ್ರಕಾರ ಪ್ರಯಾಣ ಅನ್ನೋದು ಒಂದು ರೀತಿ ಧ್ಯಾನ ಇದ್ದ ಹಾಗೆ, ರಸ್ತೆಯ ಮೇಲೆ ಡ್ರೈವ್ ಮಾಡ್ತಿರೋ ವ್ಯಕ್ತಿ ಭೌತಿಕವಾಗಿ ಅದೆಷ್ಟು ಕೆಲಸಗಳಲ್ಲಿ ತೊಡಗಿದ್ರೂ ಮನಸ್ಸು ಒಂದು ರೀತಿ ಹರಳು ಕಟ್ಟುತಾ ಇರುತ್ತೆ ಅನ್ನೋದು ನನ್ನ ಭಾವನೆ. ಆದ್ರಿಂದ್ಲೇ ಪ್ರಯಾಣ ಅನ್ನೋದು ನಮ್ಮೊಳಗಿರೋ ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸೋದಕ್ಕೆ ನಾವು ಕಲ್ಪಿಸಿಕೊಡೋ ಒಂದು ಅವಕಾಶ ಅನ್ನೋದು ನನ್ನ ವಾದ. ನಾವು ಕ್ರಮಿಸೋ ದೂರ, ನಾವೇ ವಾಹನವನ್ನು ಚಲಾಯಿಸುತ್ತಿದ್ದೇವೋ ಇಲ್ಲವೋ ಎನ್ನೋದು, ನಮ್ಮ ಜೊತೆ ಯಾರು ಯಾರು ಇದ್ದಾರೆ ಇರೋಲ್ಲ ಮುಂತಾದವುಗಳು ನಮ್ಮನ್ನು ಒಂದು ಹೊಸ ವ್ಯಕ್ತಿಯನ್ನಾಗಿ ಮಾಡಿಬಿಡಬಲ್ಲವು ಅನ್ನೋದು ನನ್ನ ನಂಬಿಕೆ. ಬೇರೆ ಯಾರೋ ಗಾಡಿ ಚಲಾಯಿಸಿ ಅದರಲ್ಲಿ ಕೂತಿರೋ ನೀವು ಕಣ್ಣು ಮುಚ್ಚಿಕೊಂಡು ಹಾಗೇ ನಿದ್ರೆಯ ಮೋಡಿಗೆ ಜಾರಿ ಹೋಗಿ ಲೋಕವನ್ನು ಆ ಮಟ್ಟಿಗೆ ಸೊಗಸಿಲ್ಲಾ ಅಂತ ನಾನು ಹೇಳ್ತಾ ಇಲ್ಲ, ನಾವೇ ನಮ್ಮ ಗತಿಯನ್ನು ಬೇಕಾದ ಹಾಗೆ ಬದಲಾಯಿಸಿಕೊಂಡು ಎಲ್ಲೆಲ್ಲಿಗೆ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಧರಿಸಿಕೊಂಡು ಹೋಗೋದ್ರಲ್ಲಿ ಬೇಕಾದಷ್ಟು ಸವಾಲುಗಳಿವೆ ಆ ಸವಾಲುಗಳ ನಡುವೆಯೂ ನಮ್ಮತನವನ್ನು ಕುರಿತು ಯೋಚಿಸೋದಕ್ಕೆ ಬೇಕಾದಷ್ಟು ಆಸ್ಪದ ಸಿಕ್ಕು ಪ್ರತಿಯೊಂದು ಪ್ರಯಾಣದ ನಂತರ ನಾನಂತೂ ಒಂದು ಹೊಸದೊಂದು ಲೋಕದಲ್ಲಿ ಮುಳುಗೆದ್ದ ಹಾಗಿರ್ತೀನಿ ಅನ್ನೋದು ನಿಜ.

ಧ್ಯಾನದ ಹಲವಾರು ವಿಧಾನಗಳಲ್ಲಿ ನಿಮ್ಮ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳೋದಕ್ಕೆ ಸಹಾಯ ಮಾಡುವ ಪ್ರಯಾಣವೂ ಒಂದು. ಸೆಲ್ಫ್ ಆಕ್ಚುವಲೈಜೇಷನ್ನಿಗೆ ಬೇಕಾದಷ್ಟು ಒತ್ತುಕೊಟ್ಟು ಎಷ್ಟೋ ಪುಸ್ತಕಗಳನ್ನು ಹೊರತಂದಿದ್ದಾರೆ. ಆದರೆ ಒಂದು ಪ್ರಯಾಣದ ನಡುವೆಯೂ ನಮಗೆ ನಮ್ಮ ಬಗ್ಗೆ ತಿಳಿದುಕೊಳ್ಳೋದಕ್ಕೆ ಸಹಾಯವಾಗುತ್ತಾ ಅನ್ನೋದು ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ. ಉದಾಹರಣೆಗೆ, ನಿಮ್ಮ ಎದಿರು ಮುಕ್ತವಾಗಿ ತೆರೆದ ರಸ್ತೆಯ ಲೇನ್‌ಗಳು ಅದೇನೇ ಇದ್ದರೂ ನೀವು ಯಾವುದೋ ಒಂದು ಗತಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತಿರುವ ವಾಹನದಿಂದ ಇಂತಿಷ್ಟೇ ದೂರದಲ್ಲಿದ್ದುಕೊಂಡು ಸುರಕ್ಷಿತವಾಗಿ ಗಾಡಿಯನ್ನು ಚಲಾಯಿಸಿಕೊಂಡಿರುತ್ತೀರಿ ನೋಡಿ ಆ ಸಂದರ್ಭದಲ್ಲಿ ಬೇಕಾದಷ್ಟು ನಿರ್ಣಯಗಳನ್ನು ಪುನರ್‌ವಿಮರ್ಶಿಸಿಕೊಳ್ಳುವ ನಿಮ್ಮ ಮನಸ್ಸು ಸುಲಭವಾದ ಮಾರ್ಗವನ್ನೇ ಹುಡುಕಿಕೊಂಡಿರುತ್ತದೆ. ನಿಮ್ಮ ಜೊತೆ ಸ್ಪರ್ಧೆಯಲ್ಲಿ ತೊಡಗುವ ಅಕ್ಕ ಪಕ್ಕದ ಡ್ರೈವರುಗಳು ನಿಮ್ಮ ತಾಳ್ಮೆಯನ್ನು ಕೆದಕಬಹುದು, ನಿಮ್ಮನ್ನೇ ಹಿಂಬಾಲಿಸಿಕೊಂಡೇ ಸಾಕಷ್ಟು ದೂರವನ್ನು ಕ್ರಮಿಸುವ ಇತರ ಡ್ರೈವರುಗಳು ನಿಮ್ಮಲ್ಲಿ ಸಂಶಯವನ್ನು ಹುಟ್ಟಿಸಬಹುದು. ನೀವು ಪದೇಪದೇ ಲೇನ್ ಬದಲಾಯಿಸಿಕೊಂಡು ವ್ಯಸ್ತರಾಗಿ ಹೋಗುತ್ತೀರೋ ಅಥವಾ ದೂರಕ್ಕೆ ಹೋಗೋದು ಇದ್ದೇ ಇದೆ ಎಂದು ಸಮಾಧಾನ ಚಿತ್ತರಾಗಿರುತ್ತೀರೋ ಎನ್ನುವುದೂ ನಿಮಗೇ ಬಿಟ್ಟಿದ್ದು. ಹೀಗೆ ಹಲವಾರು ತೆರೆದ ಆಪ್ಷನ್ನುಗಳ ನಡುವೆ ಅವರವರು ತಮ್ಮದೇ ಆದ ದಾರಿ ಗತಿ ರೀತಿಯನ್ನು ಆಧರಿಸಿ ಅದನ್ನು ಪಾಲಿಸುತ್ತಾರೆ ಅನ್ನೋದರಲ್ಲೇ ಬದುಕಿನ ಒಂದು ಮುಖವಿದೆ. ಆ ಮುಖದ ದರ್ಶನವನ್ನೇ ನಾನು ಸೆಲ್ಫ್ ಆಕ್ಚವಲೈಜೇಷನ್ನಿಗೆ ಹೋಲಿಸಿ ಹೇಳಿದ್ದು.

ಪ್ರಯಾಣ ಒಳ್ಳೆಯದು, ನಿಂತಲ್ಲೇ ನಿಂತ ಹಾಗಿರುವುದಕ್ಕಿಂತ ಯಾವಾಗಲೂ ಓಡುತ್ತಿರುವುದು ಆ ಮಟ್ಟಿಗೆ ಮನಸ್ಸಿಗೆ ಮುದ ನೀಡುತ್ತದೆ, ಬೇಕಾದಷ್ಟು ಹೊಸತನ್ನು ತೋರಿಸುತ್ತದೆ. ಅನೇಕ ಸವಾಲುಗಳನ್ನು ಎದುರಿಸಿಕೊಂಡು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತದೆ. ಪ್ರಯಾಣ ಗೋಳದ ಮೇಲಿನ ಸುತ್ತಿನಿಂದ ಹಿಡಿದು ನಾವು ದಿನ ನಿತ್ಯ ಅಲ್ಲಿಂದಿಲ್ಲಿಗೆ ಹೋಗಿ ಬರುವ ಸಣ್ಣ ಕಾಯಕವಿರಬಹುದು, ಆದರೆ ಅದರ ಆಳ ದೊಡ್ಡದು. ಅಲ್ಲಿಂದಿಲ್ಲಿಗೆ ಹೋಗಬೇಕು ಎನ್ನೋ ಉದ್ದೇಶಪೂರ್ವಕ ಪ್ರಯಾಣವಿದ್ದಿರಬಹುದು, ಸಮಯವಿದೆ ಹೀಗೇ ಸುತ್ತಿ ಬರೋಣ ಎನ್ನುವ ಅಭಿಯಾನವಿರಬಹುದು - ನಾವು ಬೆಳೆಸುವ ಹಾದಿ ಚಿಕ್ಕದೋ ದೊಡ್ಡದೋ ನಮ್ಮ ಪ್ರಯಾಣದಲ್ಲಿ ಯಾರು ಯಾರು ಸಿಗುತ್ತಾರೋ ಬಿಡುತ್ತಾರೋ, ಪ್ರತಿಯೊಬ್ಬರೂ ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ, ಎಲ್ಲರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಲೇ ಇರಲಿ!

***

ಕಳೆದೆರಡು ವಾರಗಳಲ್ಲಿ ನಾರ್ಥ್ ಕ್ಯಾರೋಲೈನಾದಿಂದ ನ್ಯೂ ಜೆರ್ಸಿಗೆ ಡ್ರೈವ್ ಮಾಡಿಕೊಂಡು ಹೋಗಿ ಬಂದಾಗ ಪ್ರಯಾಣದ ಬಗ್ಗೆ ಆಲೋಚಿಸಿಕೊಂಡು ಬರೆದ ಲೇಖನ.

Sunday, January 06, 2008

ಪರಿಸ್ಥಿತಿಯ ಕೈ ಗೊಂಬೆ

ಅಸಹಾಯಕತೆ ಅನ್ನೋದು ದೊಡ್ಡದು, ಆದರೆ ನಮ್ ನಮ್ ಕೈಯಲ್ಲಿ ಆಗೋಲ್ಲ ಅಂತ ಕೈ ಚೆಲ್ಲಿ ಕುಳಿತುಕೊಳ್ಳೋದು ದೊಡ್ಡದಲ್ಲ, ಆಯಾ ಪರಿಸ್ಥಿತಿಗೆ ತಕ್ಕಂತೆ ನಾವು ಏನು ಮಾಡಬಲ್ಲೆವು ಸುಮ್ಮನಿರೋದನ್ನು ಬಿಟ್ಟು ಅನ್ನೋದು ಮುಖ್ಯ. ಕೆಲವೊಮ್ಮೆ ವಿಷಯವನ್ನ ನಮ್ಮ ಕೈಗೆತ್ತಿಕೊಳ್ಳಬೇಕಾಗುತ್ತೆ, ಇನ್ನು ಕೆಲವು ಸಲ ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಸುಮ್ಮನಿರುವುದೇ ಒಳಿತು ಅನ್ನಿಸಬಹುದು ಅನುಭವಗಳ ಹಿನ್ನೆಲೆ ಇದ್ದೋರಿಗೆ. ಹೀಗೆ ಹಳೆಯ ಕನ್ನಡ ಚಿತ್ರಗಳ ಡಿವಿಡಿಯೊಂದನ್ನು ನೋಡ್ತಾ ಇರುವಾಗ ಬಹಳ ದಿನಗಳಿಂದ ಯೋಚನೆಗೆ ಸಿಕ್ಕದ ನಮ್ಮೂರುಗಳಲ್ಲಿ ಜನ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಾರೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು.

***

ಹೊಡೆದಾಟ ಬಡಿದಾಟದಲ್ಲಿ ಬೇರೆ ಯಾರೂ ಬೇಡಪ್ಪ, ನನ್ನ ದೊಡ್ಡ ಅಣ್ಣನೇ ಸಾಕು. ನಾಲ್ಕು ಹೊಡೆತ ಕೊಟ್ಟೂ ಬರಬಲ್ಲ, ಹಾಗೇ ತಿಂದುಕೊಂಡು ಬಂದಿದ್ದೂ ಇದೆ. ಒಂದು ದಿನ ಯಾವುದೋ ಕೆಲಸ ಕಾರ್ಯ ಮಾಡಿಸಿಕೊಳ್ಳಲೆಂದು ನಮ್ಮೂರಿನ ಮಂಡಲ ಪಂಚಾಯಿತಿ ಪ್ರಧಾನರನ್ನು ಹುಡುಕಿಕೊಂಡು ನಮ್ಮಣ್ಣ ಬಸ್‌ಸ್ಟ್ಯಾಂಡ್ ಹಿಂಬಾಗವಿರೋ ಜರಮಲೆಯವರ ಸಾ ಮಿಲ್‌ ಆಫೀಸಿಗೆ ಹೋಗಿದ್ದನಂತೆ. ಅಲ್ಲಿ ಶ್ರೀಮಂತರುಗಳ ದಂಡು ದೊಡ್ಡದಾಗಿ ಜಮಾಯಿಸಿತ್ತಂತೆ. ನಮ್ಮಣ್ಣ ಏನೋ ಕಾರಣಕ್ಕೆಂದು ಹೋದವನು ಮಾತಿಗೆ ಮಾತು ಬೆಳೆದು ಅಲ್ಲಿ ದೊಡ್ಡ ಮನುಷ್ಯರುಗಳ ನಡುವೆ ಉಪಸ್ಥಿತರಿದ್ದ ಮಂಡಲ ಪ್ರಧಾನರ ಬಾಯಿಂದ ಸೂಳೇಮಗನೇ ಎಂದು ಬೈಯಿಸಿಕೊಂಡನಂತೆ. ಹಾಗೆ ಅವರು ಬೈದದ್ದೇ ತಡ ಇವನಿಗೆ ಇಲ್ಲಸಲ್ಲದ ಸಿಟ್ಟು ಬಂದು ಅಷ್ಟು ಜನರಿರುವಂತೆಯೇ ಪ್ರಧಾನರನ್ನು ಹಿಡಿದೆಳೆದು ಹಿಗ್ಗಾಮುಗ್ಗಾ ಹೊಡೆದು ಹೊಟ್ಟೆಯೊಳಗಿನ ಕರುಳೂ ಕಿತ್ತುಬರುವಂತೆ ಪಂಚ್ ಮಾಡಿ ಬಂದಿದ್ದ. ಮುಂದಾಗುವ ಕಷ್ಟನಷ್ಟಗಳನ್ನರಿತವನು ಅಲ್ಲೇ ಹತ್ತಿರವಿದ್ದ ಪೋಲೀಸ್ ಸ್ಟೇಷನ್ನಿಗೆ ಓಡಿಬಂದು ಸಬ್‌ಇನ್ಸ್ಪೆಕ್ಟರ್ ಹತ್ತಿರ ಇರುವ ವಿಷಯವೆಲ್ಲವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದ.

ಅಷ್ಟೊಂದು ಜನರ ಮುಂದೆ ಮಂಡಲ ಪ್ರಧಾನರನ್ನು ಆಸ್ಪತ್ರೆಗೆ ಸೇರಿಸುವಷ್ಟರ ಮಟ್ಟಿಗೆ ಹೊಡೆದರು ಅವರು ಬಿಟ್ಟಾರೇನು? ನಮ್ಮಣ್ಣನ ಮೇಲೆ 302, 302A ಮುಂತಾದ ಸೆಕ್ಷನ್ನುಗಳನ್ನು ಹೇರಿ, ಜೀವ ತೆಗೆಯಲು ಬಂದಿದ್ದನೆಂದು ಪುರಾವೆಗಳನ್ನೊದಗಿಸಿ ಸಾಬೀತು ಮಾಡಿದ್ದೂ ಆಯಿತು. ನಮ್ಮಣ್ಣ ಜೈಲಿನಿಂದ ಹೊರಬರುವಾಗ ಮತ್ತಿನ್ಯಾರದ್ದೋ ಕೈ ಕಾಲು ಹಿಡಿದು ಜಾಮೀನು ಪಡೆಯುವಂತಾಯ್ತು. ಇವೆಲ್ಲ ಆಗಿನ ಮಟ್ಟಿಗೆ ನಡೆದ ಕಷ್ಟಗಳಾದರೆ ಒಂದೆರಡು ದಿನಗಳಲ್ಲಿಯೇ ನಮ್ಮನೆಯ ಮುಂಬಾಗಿಲ ಬೀಗ-ಚಿಲಕವನ್ನು ಕಿತ್ತು ಎಸೆಯುವುದರಿಂದ ಹಿಡಿದು ಅನೇಕಾನೇಕ ಕಿರುಕುಳಗಳನ್ನು ಕೊಟ್ಟಿದ್ದೂ ಅಲ್ಲದೆ, ಇಂದಿಗೂ ಆ ಶ್ರೀಮಂತರ ತಂಡ ನಮ್ಮ ಮನೆಯವರನ್ನು ಕಂಡರೆ ಒಂದು ರೀತಿಯ ಅಸಡ್ಡೆಯನ್ನು ಪ್ರದರ್ಶಿಸುತ್ತದೆ ಎಂದರೂ ತಪ್ಪಲ್ಲ. ಇಷ್ಟೂ ಸಾಲದು ಎಂಬಂತೆ ವಾರ-ತಿಂಗಳುಗಟ್ಟಲೆ ಸೊರಬದ ಕೋರ್ಟಿಗೆ ಅಲೆದದ್ದೂ ಆಯಿತು, ಒಂದು ಬಗೆಯ ಒಪ್ಪಂದವನ್ನೂ ಮಾಡಿಕೊಂಡಿದ್ದಾಯಿತು.

ನಾನು ಈ ಸಂಬಂಧವಾಗಿ ಈ ಘಟನೆ ನಮ್ಮ ನಡುವೆ ಮಾತಿಗೆ ಬಂದಾಗಲೆಲ್ಲ ನಮ್ಮಣ್ಣನನ್ನು ಮನಸೋ ಇಚ್ಛೆ ಬೈದಿದ್ದೇನೆ. ರಿಟೈರ್ ಆಗಿರುವ ಅಮ್ಮನಿಗೆ ಕಿರುಕುಳ ಕೊಡೋದಕ್ಕೆ ನೀನು ನಿನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತೇನು? ಇಂದು ಅವರು ನಲ್ಲಿಯ ಪೈಪ್ ಅನ್ನು ಒಡೆದು ಹೋಗುತ್ತಾರೆ, ನಾಳೆ ಮತ್ತೊಂದನ್ನು ಮಾಡುತ್ತಾರೆ ಅವುಗಳಿಂದ ನೀನು ನಮ್ಮೆಲ್ಲರನ್ನು ರಕ್ಷಿಸುವ ತಾಕತ್ತಿದೆಯೇನು? ಅವರು ದುಡ್ಡಿದ್ದೋರು, ಅವರು ಹೇಳಿದಂತೆ ನಡೆಯೋ ಪೋಲೀಸು-ಕೋರ್ಟುಗಳ ಮುಂದೆ ಕೆಲಸವಿಲ್ಲದೇ ತಿರುಗೋ ನಿನ್ನ ದರ್ಪ ನಡೆಯೋದು ಅಷ್ಟರಲ್ಲೇ ಇದೆ! ಮುಂತಾಗಿ ಬೇಕಾದಷ್ಟು ಬೈದಿದ್ದೇನೆ, ಕೊರೆದಿದ್ದೇನೆ. ಇವೆಲ್ಲಕ್ಕೂ ನಮ್ಮಣ್ಣ ಹಿಂದೆ ’ಅವರು ಏನಂದರೂ ಅನ್ನಿಸಿಕೊಂಡು ಬರೋಕಾಗುತ್ತೇನು?’ ಎಂದು ಅದೇನೇನೋ ಹೇಳುತ್ತಿದ್ದವನು ಇಂದು ಮೌನ ಅವನ ಉತ್ತರವಾಗುತ್ತದೆ. ನಾನು ಬೇಕಾದರೆ ನಾಲ್ಕು ಹೊಡೆತ ತಿಂದುಕೊಂಡೋ ಬೈಯಿಸಿಕೊಂಡೋ ಮನೆಗೆ ಅತ್ತುಕೊಂಡು ಬರುತ್ತೇನೆಯೇ ವಿನಾ ಇವತ್ತಿಗೂ ಯಾವನಿಗೋ ಹೊಡೆದು ಆಸ್ಪತ್ರೆ ಸೇರಿಸಿ ಅವರು ನನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜಾಮೀನು ಪಡೆಯೋ ಸ್ಥಿತಿ ಬರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

***

೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.

ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್‌ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.

***

ಇಂತಹ ಸಂದರ್ಭಗಳು ನಮ್ಮೂರಲ್ಲಿ ಹೊಸದೇನೂ ಅಲ್ಲ. ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು ಎಂದ ಹಾಗೆ ಕೆಲವರಿಗೆ ಏಟು ಬೀಳದೇ ಬಗ್ಗಲಾರರು. ರಾಜ್‌ ಪಾತ್ರದಲ್ಲಿ ಯಾರೇ ಇದ್ದರೂ ಏನು ಮಾಡಬಹುದಿತ್ತು? ತನ್ನ ತಂಗಿಯ ಮದುವೆ ನಿಂತು ಹೋಗುತ್ತಿರುವಾಗ ತಾನು ಕಾನೂನನ್ನು ಕೈಗೆ ತೆಗೆದುಕೊಂಡದ್ದು ಸರಿಯೇ, ತಪ್ಪೇ? ತೂಗುದೀಪ ಶ್ರೀನಿವಾಸರನ್ನು ಹೊಡೆಯದೇ ರಾಜ್ ಆತನ ಬಗ್ಗೆ ಕಂಪ್ಲೇಂಟನ್ನು ಬರೆದುಕೊಡಬಹುದಿತ್ತು, ಬೇರೆ ಯಾರಾದರೊಬ್ಬರ ಬಳಿ ಮದುವೆಯ ಮಹೂರ್ತ ಮೀರಿ ಹೋಗುವುದರೊಳಗೆ ಸಾಲ ಮಾಡಿ ಮುಂದೆ ಯೋಚಿಸಬಹುದಿತ್ತು, ಇತ್ಯಾದಿ ದಾರಿಗಳಿದ್ದರೂ ರಾಜ್ ಮಾಡಿದ್ದೇ ಸರಿ ಎನಿಸೋದಿಲ್ಲವೆ? ತನಗೆ ನ್ಯಾಯವಾಗಿ ಬರಬೇಕಾದ ಹಣವನ್ನು ಇನ್ನೊಬ್ಬರು ’ನೀನು ಕೊಟ್ಟೇ ಇಲ್ಲ’ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೇ ನಕ್ಕು ಬರುವುದಕ್ಕೆ ಉಪ್ಪು ಹುಳಿ ಖಾರ ತಿಂದ ಯಾರಿಗಾದರೂ ಸಾಧ್ಯವಿದೆಯೇನು?

Wednesday, January 02, 2008

ಹಾಡಿನ ಸವಾಲ್

ನಿನ್ನೆ ಏನನ್ನೋ ಹುಡುಕಿಕೊಂಡು ಕೂತಿರಬೇಕಾದ್ರೆ ಒಂದಿಷ್ಟು ಹಳೇ ಕನ್ನಡ ಚಲನಚಿತ್ರಗಳ ಉಗ್ರಾಣ ನನ್ನ ಕಂಪ್ಯೂಟರಿನಲ್ಲಿದ್ದದ್ದು ಕಣ್ಣಿಗೆ ಬಿತ್ತು. ಹಳೇ ಹಾಡುಗಳೂ ಅಂತಂದ್ರೆ ೯೦ ರ ದಶಕದಿಂದ ಈಚೆಯವು, ಅದಕ್ಕಿಂತ ಹಿಂದೆ ಹೋದ್ರೆ ಅದು ಪುರಾತನ ಆಗ್ಬಿಡುತ್ತೆ ಅಂತ್ಲೇ ಹೇಳ್ಬೇಕು.

’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು...’ ಅಂತ ನಾನೇನಾದ್ರೂ ಕಾರ್‌ನಲ್ಲಿ ಕೂತಾಗ ಗೊಣಗಿಕೊಂಡೇ ಅಂತಂದ್ರೆ ಪಕ್ಕದವರಿಗೆ ನನ್ನ ವಯಸ್ಸೆಲ್ಲಿ ಗೊತ್ತಾಗಿಬಿಡುತ್ತೋ ಅನ್ನೋ ಹೆದರಿಕೇ ಬೇರೆ ಕೇಡಿಗೆ.

ನನ್ನ ಉಗ್ರಾಣದಲ್ಲಿದ್ದ ಒಂದಿಷ್ಟು ಹಾಡುಗಳನ್ನ ಕೇಳ್ತಾ ಕೇಳ್ತಾ ಸಂತೋಷದ ಛಾಯೆ ಇರ್ಲಿ ಅದರ ನೆರಳೂ ಹತ್ತಿರ ಸುಳಿಯದಂತೆ ನಿರಾಶೆಯ ಮೋಡಗಳು ಆವರಸಿಕೊಳ್ಳತೊಡಗಿದವು. ನಾನು ಹುಟ್ಟಿದಾಗಿನಿಂದ ಕನ್ನಡಿಗನೇ ಹೌದು, ಆದರೆ ಇತ್ತೀಚಿನ ಸಾಹಿತ್ಯವೋ ಅಥವಾ ಅದನ್ನ ಹೇಳೋ ಅರೆಬರೆ ಕನ್ನಡಿಗರೋ ಅಸ್ಪುಟ ಕನ್ನಡವೋ ಅಥವಾ ಹಾಡಿನ ಪದಗಳನ್ನು ಮುಚ್ಚಿ ಮರೆಮಾಡುವಂತೆ ಕಿವಿಗಡಿಚಿಕ್ಕುವ ಮ್ಯೂಸಿಕ್ಕೂ - ಪದಗಳೇ ಸರಿಯಾಗಿ ಅರ್ಥವಾಗುತ್ತಿಲ್ಲ. ರಾಗ-ತಾಳವಂತೂ ನನಗೆ ಸಿಕ್ಕೋದೇ ಇಲ್ಲ ಬಿಡಿ, ಆದರೆ ಹಾಡಿನ ಸಾಹಿತ್ಯವೂ ನನಂಥ ಕೇಳುಗನಿಗೆ ಹೊಳೆಯದೇ ಹೋದರೆ ಹೇಗೆ?

ಎ.ಕೆ. ೪೭ ಸಿನಿಮಾದ ಈ ಹಾಡನ್ನು ನೀವೇ ಕೇಳಿ ನೋಡಿ ಅಥವಾ ಓದಿ ನೋಡಿ, ’ಪ್ರೇಮಪತ್ರ ರವಾನಿಸಬೇಡ’ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಪ್ರಾಸಗಳನ್ನು ಜೋಡಿಸೋದಕ್ಕೆ ಹೋಗಿ ನಮ್ಮ ಕವಿಗಳು ಈ ರೀತಿ ಹಾಡನ್ನು ಕಟ್ಟೋದಲ್ದೇ ಅದನ್ನ ಯಾರು ಯಾರೋ ಗಂಟಲಲ್ಲಿ ಹೇಳಿಸಿ ಅದಕ್ಕಿನ್ನೊಂದು ಅರ್ಥ ಬರೋ ಹಾಗ್ ಮಾಡ್ತಾರಲ್ಲಪ್ಪಾ ಅನ್ನಿಸ್ತು.

’ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು’


ಆ ನಗುವನ್ನು ಬಿಸಾಕೋದು ಅಂದ್ರೆ ಏನು, ಅದೇನು ಕಾಫಿ ಕುಡಿದು ಬಿಸಾಡೋ ಕಪ್ಪೇ? ಅಥವಾ ನಾಯಿಗಳಿಗೊಂದು ಬಿಸ್ಕಿಟ್ ಎಸೀತಾರಲ್ಲ ಹಾಗಾ? ಇಸ್ಪೀಟ್ ಎಲೇನ ಬಿಸಾಕೋದ್ ಕೇಳಿದ್ದೀನಿ...ಟ್ರಾಷ್ ಎತ್ತಿ ಬಿಸಾಕೋದು ಅಂದ್ರೆ ಗೊತ್ತು, ಆದರೆ ನಗುವನ್ನ ಚೆಲ್ಲಿ ಗೊತ್ತು, ಬಿಸಾಕಿ ಗೊತ್ತೇ ಇಲ್ಲ.

ಈ ಬಿಸಾಕೋದರ ಬಗ್ಗೆ ಇನ್ನೂ ಕೇಳಿದ್ದೀವಿ - ’ಭಯಾನ್ ಬಿಸಾಕೋದು...’, ’ದಿಗಿಲ್ ದಬ್ಬಾಕೋದು’, ಇನ್ನೂ ಏನೇನನ್ನೋ ನಾವು ಕ್ರಿಯಾ ಪದಗಳಿಗೆ ಅಳವಡಿಸೋದೇ ಸಾಹಿತ್ಯ ಕೃಷಿ! ಎಷ್ಟೋ ದಶಕದಿಂದ ಹಾಡಿಕೊಂಡ್ ಬಂದಿರೋ ಎಸ್.ಪಿ. ಅಂಥೋರೇನೋ ಸ್ವಲ್ಪ ತಮ್ಮ್ ತಮ್ಮ್ ಉಚ್ಛಾರಣೆಯಲ್ಲಿ ಸುಧಾರಿಸಿಕೊಂಡ್ರೋ ಏನೋ (ಇಷ್ಟೊಂದ್ ದಿನ ಕನ್ನಡ ನೀರ್ ಕುಡ್ದು ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಹೆಂಗೆ?), ಉಳಿದೋರ್ ಕಥೆ ಏನ್ ಹೇಳೋಣ?

ಅಪ್ತಮಿತ್ರದ ’ಇದು ಹಕ್ಕೀ ಅಲ್ಲ’ ಹಾಡಿನಲ್ಲಿ ’ಬಾಲಾ ಇದ್ರೂನೂ ಕೋತೀ ಅಲ್ಲಾ’ ಅನ್ನೋ ಸಾಲು ಇವತ್ತಿಗೂ ನನಗೆ ನೈಜವಾಗಿ ಕೇಳೋದೇ ಇಲ್ಲ - ಎಲ್ಲಾ ಉತ್ತರ ಭಾರತದವರ ದಯೆ.

ನಮ್ಮೂರಿನ ಸಿಲ್ವರ್ರು, ಗೋಲ್ಡೂ, ಪ್ಲಾಟಿನಮ್ಮ್ ಸ್ಟಾರ್‌ಗಳಿಗೆ ನಮ್ಮೋರ್ ಧ್ವನಿ, ಉಚ್ಛಾರಣೆ ಹಿನ್ನೆಲೇನಲ್ಲಿ ಇದ್ರೆ ಹೆಂಗೆ ಸ್ವಾಮೀ? ಸ್ವಲ್ಪ ಫ್ಯಾಷನ್ನೂ, ಗಿಮಿಕ್ಕೂ ಇದ್ರೇನೇ ಮಜಾ - ಅವ್ರುಗಳ ಮುಖಾಮುಸುಡಿ ಹೆಂಗಾದ್ರೂ ಇರ್ಲಿ ಹಿನ್ನೆಲೆ ಗಾಯನಕ್ಕೆ ಮಾತ್ರ ಒಂದು ದೊಡ್ಡ ಧ್ವನಿ ಬೇಕು. ಬೇರೇ ಏನೂ ಇಲ್ಲಾ ಅಂತದ್ರೂ ಧ್ವನಿ ಸುರುಳೀ ಅನ್ನೋ ಹೆಸರ್ನಲ್ಲಿ ಸೀ.ಡಿ.ಗಳನ್ನ ಮಾರೋಕಾಗುತ್ತಲ್ಲಾ ಅಷ್ಟೇ ಸಾಕು.

ಪರವಾಗಿಲ್ಲ, ಬೆಂಗ್ಳೂರ್‌ನಲ್ಲಿ ಕೂತುಗೊಂಡು ಬ್ರೂಕ್ಲಿನ್ನಲ್ಲಿ ಹುಟ್ಟಿ ಬೆಳೆದೋರ್ ಥರ ರ್ಯಾಪ್ ಮ್ಯೂಸಿಕ್ಕನ್ನ ಹಾಡ್ತಾರ್ ಸಾರ್ ನಮ್ಮೋರು. ಹಾಡ್ರೋದ್ರು ಜೊತೆಗೆ ಅದನ್ನ ಕನ್ನಡದ ಹಾಡ್ನಲ್ಲೂ ಸೇರ್ಸಿ ಒಂದ್ ಥರಾ ಹೊಸ ರಿಧಮ್ಮನ್ನೇ ಜನ್ರ ಮನಸ್ನಲ್ಲಿ ತುಂಬ್ತಾರೆ. ರ್ಯಾಪ್‌ಗೇನಾಬೇಕು ಸುಮ್ನೇ ಉದ್ದಕ್ಕೆ ಬರೆದಿದ್ದನ್ನ ಫಾಸ್ಟ್ ಆಗಿ ಓದ್ಕೊಂಡ್ ಹೋದ್ರೇ ಸಾಲ್ದೇನು? ಎಲ್ಲೋ ಒಂದು ಧ್ವನಿ ಯಾವ್ದೋ ರಾಗ್ದಲ್ಲಿ ಹುಟ್ಟಿ ಬರ್ತಾ ಇರುತ್ತೆ, ಅದರ ಮಧ್ಯೆ ಕೀರ್ಲು ಧ್ವನೀನೂ ಸೇರುಸ್ತಾರೆ, ಸುಮ್ನೇ ತಮಟೇ-ಡ್ರಮ್ಮು-ನಗಾರಿಗಳನ್ನ ಬಡೀತಾರೆ - ಇಷ್ಟೆಲ್ಲಾ ಯಾಕ್ ಮಾಡ್ತಾರೇ ಅಂತಂದ್ರೆ ಚಿತ್ರಕಥೆ ಬರೆಯೋರು ’ನಾಯಕನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು, ಸುತ್ತಲಿನಲ್ಲಿ ಕೋಲಾಹಲ ಮುತ್ತಿಕೊಂಡಿತ್ತು’ ಅಂತ ಬರೆದಿರ್ತಾರೋ ಏನೋ ಅನ್ನೋ ಅನುಮಾನ ನನ್ದು. ಹ್ಞೂ, ಅದೆಲ್ಲ ನನ್ ಲಿಮಿಟೇಷನ್ನ್ ಆಗಿದ್ರೆ ಎಷ್ಟೋ ಸೊಗಸಾಗಿರ್ತಿತ್ತು, ಆದರೆ ಚಿತ್ರವನ್ನ ನಿರ್ದೇಶನ ಮಾಡೋರ್ ಲಿಮಿಟ್ಟಾಗುತ್ತೇ ನೋಡಿ ಅದೇ ದೊಡ್ಡ ಕೊರಗು.

***

Really, this works - ಸುಮ್ನೇ ಪ್ರಾಸದ ಮೇಲೆ ಪ್ರಾಸ ಕಟ್ಟಿಕೊಂಡು ಹೋಗಿ, ಕನ್ನಡಿಗರಲ್ದೇ ಬೇರೆ ಯಾರುನ್ನೋ ಕರ್ದೋ ಇಲ್ಲಾ ಅವರ ಮನೇ ಬಾಗಿಲಿಗೆ ನೀವೇ ಹೋಗಿಯೋ ಹಾಡ್ಸಿ, ಅವರು ಹಾಡಿದ್ದನ್ನ ರೆಕಾರ್ಡ್ ಮಾಡಿಕೊಂಡು ಬಂದು ನಮ್ಮೋರಿಗೆ ಕೇಳ್ಸಿ, ಎಲ್ಲೆಲ್ಲಿ ಪದಗಳನ್ನ ಕಾಂಪ್ರೋಮೈಸ್ ಮಾಡ್ಕೊಂಡಿರ್ತೀರೋ ಅಲ್ಲೆಲ್ಲ ನಿಮ್ಮವರಿಗೆ ದೊಡ್ಡದಾಗಿ ಮ್ಯೂಸಿಕ್ ಬಾರ್ಸೋದಕ್ಕೆ ಹೇಳಿ, ಆ ಧ್ವನಿ ಸುರುಳಿ ಸೇಲ್ಸ್ ರೆಕಾರ್ಡ್ ಮುಟ್ಟುತ್ತೆ. ಬೀದರಿನಿಂದ ತಲಕಾಡಿನವರೆಗೆ ನಮ್ಮ ಕನ್ನಡದಲ್ಲಿ ಬೇಕಾದಷ್ಟು ಆಡುಭಾಷೆಗಳಿವೆ, ಅದರ ಜೊತೆಗೆ ಪದಗಳ ಸಂಪತ್ತೂ ಸಿಗುತ್ತೆ. ನಾವು ಸಾಗರ-ಶಿವಮೊಗ್ಗದಿಂದ ಮೈಸೂರಿಗೆ ಹೋದವರಿಗೆ ಅಲ್ಲಿಯವರು, ’ನಮ್ಮಪ್ಪ ಹಾರ್ಮ್‌ಕಾರ’ ಅಂತ ಹೇಳ್ದಾಗ ನಾವು ಡಿಕ್ಷನರಿ ತೆಕ್ಕೊಂಡು ನೋಡೋ, ಅವರಿವರನ್ನು ಕೇಳಿ ತಿಳಿದುಕೊಳ್ಳೋ ಹೊತ್ತಿಗೆ ಅದು ’ಆರಂಭಕಾರ’ ಎಂದು ಗೊತ್ತಾಗಿದ್ದು. ಹೀಗೇ, ’ಎಕ್ಕೂಟ್ಟೋಹೋಗೋದು’, ’ಅದೇನ್...ಕೆಟ್ಟೋಯ್ತೇ’, ಮುಂತಾದ ಪ್ರಯೋಗಗಳನ್ನೂ ಆಡುಭಾಷೆಯ ಒಂದು ವಿಧಾನ ಎಂತ್ಲೇ ನಾವು ಅರ್ಥ ಮಾಡ್ಕೊಂಡಿದ್ವಿ. ಹಾಗೇ, ನಾವು ಮಾತ್ ಮಾತಿಗೆ ’ಎಂಥಾ’ ಅನ್ನೋದನ್ನ ಅವ್ರೂ ಆಡ್ಕೋತಿದ್ರೂ ಅನ್ನಿ. ನಮ್ಮಲ್ಲಿನ್ನ ಡಯಲೆಕ್ಟುಗಳಿಗೆ ಅವುಗಳದ್ದೇ ಒಂದು ರೀತಿ ನೀತಿ ವಿಧಿ ವಿಧಾನ ಅಂತಿವೆ, ಅದು ಖಂಡಿತ ತಪ್ಪಲ್ಲ. ಹೀಗಿನ ಡಯಲೆಕ್ಟುಗಳಲ್ಲಿನ ಪದಗಳನ್ನ ನಾನು ಹಾಡಿಗೆ ತರ್ತೀನಿ ಅನ್ನೋದು ದೊಡ್ಡ ಸಾಹಸವೇ ಸರಿ.

ಏನೂ ಬೇಡಾ ಸಾರ್, ನಮ್ಮಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇದೆ, ಅದರ ಸಹಾಯದಿಂದ ಒಂದಿಷ್ಟು ಲಘು-ಗುರುಗಳನ್ನೆಲ್ಲ ಲೆಕ್ಕಾ ಹಾಕಿ ನಾವೂ ನಾಳೆಯಿಂದ ಬರೆದದ್ದೆನ್ನೆಲ್ಲ ಭಾಮಿನೀ, ವಾರ್ಧಕ ಷಟ್ಪದಿಗೆ ಬದಲಾಯಿಸಿಕೊಂಡ್ರೆ ಹೇಗಿರುತ್ತೆ? ಆ ಕುಮಾರವ್ಯಾಸ ಬರೆದದ್ದಲ್ಲ ಷಟ್ಪದಿಲೇ ಇರ್ತಿತ್ತಂತೆ, ನಾವು ಬರೆದದ್ದನ್ನು ಷಟ್ಪದಿಗೆ ಕನ್ವರ್ಟ್ ಮಾಡ್ಕೊಳ್ಳೋದಪ್ಪ - ಎಲ್ಲೆಲ್ಲಿ ಬ್ರೇಕ್ ಬೇಕೋ ಅಲ್ಲಲ್ಲಿ ಕೊಯ್‌ಕೊಂಡ್ರೆ ಆಯ್ತು! ಅದೂ ಬ್ಯಾಡ, ಪದಗಳ ಕಥೆ ಹಾಗಿರ್ಲಿ, ನಮಿಗೆ ಮಾಧುರ್ಯ-ಇಂಪು-ಕಂಪೂ ಅಂತಂದ್ರೆ ಭಾಳಾ ಆಸೆ ಅಲ್ವ? ಅದಕ್ಕೆ ಕಂಬಾರರ ’ಮರೆತೇನಂದರ ಮರೆಯಲಿ ಹೆಂಗಾs’ ಅನ್ನೋದನ್ನ ತಗೊಂಡು ಕುಮಾರ್ ಸಾನು ಹತ್ರ ಹಾಡ್ಸದಪಾ, ಭಾಳಾ ಚೆನ್ನಾಗಿರುತ್ತೆ. ಇನ್ನೂ ಚೆಂದಾ ಅಂತಂದ್ರೆ ಬೇಂದ್ರೆ ಅವರ ’ನಾಕು-ತಂತಿ’ ತಗೊಂಡ್ ಹೋಗಿ ಸೋನೂ ನಿಗಮ್‌ಗೆ ಕೊಟ್ರೆ ಆಯ್ತು.

***

ನಿಮಗ್ಯಾಕೆ? ನೀವ್ ಸಿನಿಮಾ ನೋಡಲ್ಲ, ಹಾಡಿನ ಸಿ.ಡಿ. ಕೊಳ್ಳೋಲ್ಲ, ಹಿಂಗೆ ಚೀಪ್ ಆಗಿ ಕ್ರಿಟಿಸಿಸಮ್ ಬರೆಯೋಕ್ ನಿಮಗ್ಯಾರ್ ಅಧಿಕಾರ ಕೊಟ್ರೂ? ನಮಗೂ ಭಾಷಾ ಸ್ವಾತಂತ್ರ್ಯಾ ಅನ್ನೋದ್ ಇದೆ, ನಮಿಗೆ ಹೆಂಗ್ ಬೇಕೋ ಹಂಗ್ ಬರಕಂತೀವ್, ಯಾವನ್ ಹತ್ರಾ ಬೇಕಾದ್ರೂ ಹೇಳಿಸಿಕ್ಯಂತೀವ್. ಅದನ್ನ ಕೇಳೋಕ್ ನೀವ್ ಯಾರು? ಯಾವ್ದೋ ದೇಶ್ದಲ್ಲ್ ಕುತಗಂಡು ಕನ್ನಡದ ಬಗ್ಗೇ ನೀವೇನ್ರಿ ಹೇಳೋದು? ಹಂಗಂತ ನಿಮ್ ಕನ್ನಡಾ ಚೆನ್ನಾಗಿದೆಯೇನು? ನೀವು ಬರೆದಿದ್ದೆಲ್ಲಾ ಭಯಂಕರವಾಗಿದೆಯೇನು? ಅಷ್ಟು ತಾಕತ್ತ್ ಇದ್ರೆ ನೀವೇ ಒಂದು ಸಿನಿಮಾ ಮಾಡಿ ತೋರ್ಸಿ. ಅದೂ ಬ್ಯಾಡಪ್ಪಾ - ಈ ಹಾಡಿನ್ ಚಿತ್ರೀಕರಣಕ್ಕೆ ನಲವತ್ತು ಲಕ್ಷಾ ಸುರಿದಿದ್ದೀವಿ, ಅದನ್ನ ನಿಮ್ ಕೈಗೆ ಕೊಡ್ತೀವಿ, ನಲವತ್ತ್ ಲಕ್ಷಾ ತೊಡಗಿಸಿ ನಲವತ್ತು ಹುಟ್ಟಿಸಿಕೊಡೀ ಧಂ ಇದ್ರೆ.

ಥೂ, ಎಲ್ಲೋ ಕುತಗಂಡು ಉದಯಾ ಟಿವಿ ನೋಡ್ಕಂಡು ಅದನ್ನೇ ಬದುಕು ಅಂತ ಕೊರಗೋ ನಿಮ್ಮನ್ನ್ ಕಂಡು ಏನ್ ಹೇಳಣ?!

Monday, December 31, 2007

Byteಗಳು bite ಮಾಡುವ ಮೊದಲು...

ವರ್ಷದ ಕೊನೆಯಲ್ಲಿ ಇ-ಮೇಲ್‌ ಮೆಸ್ಸೇಜು, ಫೈಲು, ಫೋಲ್ಡರುಗಳನ್ನ ಆರ್ಗನೈಜ್ ಮಾಡಿಬಿಡೋಣವೆಂದುಕೊಂಡು ಉತ್ಸಾಹದಿಂದ ಬೇಕಾದಷ್ಟು ವಿಂಡೋಸ್‌ಗಳನ್ನು ತೆರೆದಿಟ್ಟುಕೊಂಡೋನಿಗೆ ಕಳೆದ ಆರು ತಿಂಗಳಲ್ಲಿ ಆಕೈವ್ ಫೈಲು 1.7 GB ಅಷ್ಟು ಬೆಳೆದಿರೋದು ನೋಡಿ ಆಶ್ಚರ್ಯವಾಯಿತು. ಮೊದಲೆಲ್ಲ ಕೆಲವೇ ಕೆಲವು ಕಿಲೋ ಬೈಟುಗಳಷ್ಟು ದೊಡ್ಡದಿರುತ್ತಿದ್ದ ಮೆಸ್ಸೇಜುಗಳು ಆಪರೇಟಿಂಗ್ ಸಿಸ್ಟಮ್ ಬದಲಾದ ಹಾಗೆ ಟೂಲ್ಸ್‌ಗಳು ಅಭಿವೃದ್ಧಿಗೊಂಡ ಹಾಗೆ ತಾವೂ ಬೇಕಾದಷ್ಟು ಬೆಳೆದಿರೋದು ನಿಜ. ಕೇವಲ ಹತ್ತು ವರ್ಷಗಳಲ್ಲಿ ಇಷ್ಟೊಂದು ದೊಡ್ಡದಾಗಿ ಬೆಳೆಯೋ ಮೆಸ್ಸೇಜುಗಳಾಗಲೀ, ಅಪ್ಲಿಕೇಷನ್ನುಗಳಾಗಲೀ ಇನ್ನೊಂದು ಇಪ್ಪತೈದು ವರ್ಷಗಳಲ್ಲಿ ಏನೇನು ಬೆಳೆಯುತ್ತವೋ ಎಂದು ಯೋಚಿಸಿಕೊಂಡಂತೆಲ್ಲ ಸೈನ್ಸ್ ಫಿಕ್ಷನ್ ಮೂವಿಯೊಂದು ತಲೆಯಲ್ಲಿ ಅನ್‌ವೈಂಡ್ ಆಗತೊಡಗಿತು, ಮೊಬೈಲು ಡಿವೈಸುಗಳಲ್ಲಿ ಟೆರ್ರಾಬೈಟುಗಳ ಸಾಗಣೆಯ ವ್ಯವಸ್ಥೆ ಬರುವ ಕಾಲ ದೂರವೇನೂ ಇಲ್ಲ!

ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಇ-ಮೇಲ್ ಅನ್ನು ದಿನನಿತ್ಯವೂ ಬಳಸೀ ಬಳಸೀ ನನಗೆ ಬೇಕಾದ ಮೆಸ್ಸೇಜುಗಳನ್ನೆಲ್ಲ (ಅಂದರೆ ಎಲ್ಲ ಇ-ಮೇಲುಗಳನ್ನೂ) ಒಂದಲ್ಲ ಒಂದು ಫಾರ್ಮ್/ಡಿವೈಸಿನಲ್ಲಿಡಲು ಪ್ರಯತ್ನಿಸಿ ನಾನಂತೂ ಸೋತು ಹೋಗುತ್ತಿದ್ದೇನೆ ಎನ್ನಿಸಿತು. ಪ್ರತಿ ಆರು ತಿಂಗಳಿಗೊಮ್ಮೆ ಫೈಲು, ಮೆಸ್ಸೇಜುಗಳನ್ನೆಲ್ಲ ಆರ್ಕೈವ್ ಮಾಡಿಡುವುದು ಜಾಣ ಪದ್ದತಿಯಾಗಿತ್ತು, ಈಗ ಅದು ಉಲ್ಬಣವಾಗದ ರೋಗವಾಗಿದೆ. ಅಷ್ಟೂ ಮಾಡಿ ೧೯೯೭ ರಿಂದ ಉಳಿಸಿಕೊಂಡ ಮೆಸ್ಸೇಜುಗಳನ್ನು ಒಮ್ಮೆಯೂ ನೋಡಿರದಿದ್ದರೂ ಇಟ್ಟುಕೊಂಡಿರಬೇಕೇಕೆ ಎನ್ನುವುದು ಒಂದು ಬಣದ ವಾದ, ಇವತ್ತಲ್ಲ ನಾಳೆ ಬೇಕಾದೀತು ಇರಲಿ ಎನ್ನುವುದು ಮತ್ತೊಂದು ಬಣದ ಆಚರಣೆ.

ನನಗೆ ಕಂಡದ್ದೆಲ್ಲವನ್ನು ಉಳಿಸುವ ಖಾಯಿಲೆ ಆರಂಭವಾದದ್ದು ೨೦೦೦ ದ ಇಸ್ವಿಯ ಹೊತ್ತಿಗೆ Y2K ಜ್ವರ ಬಂದು ಅಮೇರಿಕನ್ ಕಂಪನಿಗಳು ನಲುಗುವ ಸಮಯದಲ್ಲೇ ಎಂದರೆ ತಪ್ಪಾಗಲಾರದು. ಅದು ಹೀಗೇ ಒಂದು ಮಾಮೂಲಿ ಡಿಸೆಂಬರ್ ೩೧ ರ ದಿನವಾಗಿರಲಿ, ಆಗಬಹುದು ಎನ್ನುವುದು ಆಗ ಒಂದು ಉತ್ಸಾಹಬರಿತ ನಿರೀಕ್ಷೆ ಆಗಿತ್ತು ಎಂದರೆ ತಪ್ಪಲ್ಲ. ನ್ಯೂ ಝೀಲ್ಯಾಂಡಿನಿಂದ ಹಿಡಿದು ಯೂರೋಪಿನವರೆಗೆ ಎಲ್ಲ ದೇಶದವರೂ ಹೊಸ ವರ್ಷವನ್ನು ಆಚರಿಸಿಕೊಂಡು ಬಂದರೂ ಅಮೇರಿಕದ ಈಸ್ಟ್ ಕೋಸ್ಟ್‌ನಲ್ಲಿ ರಾತ್ರಿ ಹನ್ನೆರಡು ಬಜಾಯಿಸುವವರೆಗೆ ತದನಂತರದ ಕೆಲವು ಘಂಟೆಗಳವರೆಗೆ ಇಲ್ಲಿನ ಕಾರ್ಪೋರೇಟ್ ವ್ಯವಸ್ಥೆ ನಿದ್ರೆ ಮಾಡಿದ್ದೇ ಇಲ್ಲ. ಕಂಪನಿಯ ಮೇಲ್ ರೂಮಿನಿಂದ ಹಿಡಿದು ಸಿಇಓ ವರೆಗೆ ಎಲ್ಲರೂ ಹೊಸ ವರ್ಷದ ನಿರೀಕ್ಷೆಯಲ್ಲಿದ್ದವರೇ, ಆದರೆ ಆ ನಿರೀಕ್ಷೆಯ ಕಣ್ಣುಗಳಲ್ಲಿ ಕುತೂಹಲದ ಜೊತೆಗೆ ಚಿಂತೆಯೂ ಮನೆಮಾಡಿತ್ತು ಎಂದರೆ ತಪ್ಪಲ್ಲ. ಪಾಪ, ಹಗಲೂ-ರಾತ್ರಿ ದುಡಿದ ಪ್ರಾಜೆಕ್ಟ್ ಟೀಮುಗಳು ಹೆಚ್ಚಿನ ವ್ಯವಸ್ಥೆಯನ್ನು ಸುಗಮವಾಗಿಸುವಲ್ಲಿ ಪಟ್ಟ ಕಷ್ಟ ಬಹಳಷ್ಟು ಕೆಲಸ ಮಾಡಿತ್ತು. ಮನುಕುಲ ಕಂಪ್ಯೂಟರ್ ಸಿಸ್ಟಮ್ ಮೇಲೆ ಅವಲಂಭಿತವಾದ ಒಂದು ದೊಡ್ಡ ಸಂಬಂಧಕ್ಕೆ ಹಾಗೂ ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಸವಾಲಾಗಿದ್ದ ಆ ರಾತ್ರಿಯೂ ಬಂದಿತು, ಮತ್ತೆ ಅದು ಹೋಗಿ ಈಗ ಏಳು ವರ್ಷಗಳು ಮುಗಿಯುತ್ತಾ ಬಂತು.

ಒಂದು ಕಾಲದಲ್ಲಿ ಸರಳವಾಗಿದ್ದ ಡಾಸ್ ವ್ಯವಸ್ಥೆ ಈಗಿಲ್ಲ, ಈಗೇನಿದ್ದರೂ ಪ್ರಭಲವಾದ ವಿಸ್ತಾದಂತಹ ಕಾರ್ಯಾಚರಣ ವ್ಯವಸ್ಥೆ. ದೊಡ್ಡ ಮನುಷ್ಯರ ಸಹವಾಸದಲ್ಲೆಲ್ಲ ದೊಡ್ಡವು ಎನ್ನುವ ಹಾಗೆ ಒಂದೇ ರೀತಿಯ ಫೈಲ್‌ (ಸ್ಪ್ರೆಡ್‌ಶೀಟ್) ಅನ್ನು ಮೈಕ್ರೋಸಾಫ್ಟಿನ ಎರಡು ಎಕ್ಸೆಲ್ ವರ್ಷನ್‌ಗಳಲ್ಲಿ ಸೇವ್ (ಉಳಿಸಿ) ಮಾಡಿದರೆ ಅದರ ಸೈಜ್‌ನಲ್ಲಿ ಹೆಚ್ಚಿನ ವ್ಯತ್ಯಾಸ. ನನ್ನ ಬಳಿ ಇರೋ ಆಫೀಸ್ ೨೦೦೩ ರ ಫೈಲುಗಳಿಗೂ ಅವೇ ಆಫೀಸ್ ೨೦೦೭ ರಲ್ಲಿ ಉಳಿಸಿದ ಫೈಲುಗಳಿಗೂ ಕನ್ಸಿಡರೆಬಲ್ ವ್ಯತ್ಯಾಸವಿದೆ ಫೈಲ್ ಸೈಜ್‌ನಲ್ಲಿ ಎಂದರೆ ನಂಬಲಾಗದು. ದಿನೇ ದಿನೇ ಟೆಕ್ನಾಲಜಿ ಹೆಚ್ಚಿದಂತೆ ನನ್ನ ಕೆಲಸದ ಅಗತ್ಯಗಳಲ್ಲಿ ಬರೀ ಇ-ಮೇಲ್ ಓದುವುದು, ಬರೆಯುವುದನ್ನು ಬಿಟ್ಟರೆ ಉಳಿದ ಅಪ್ಲಿಕೇಶನ್ನು ಗಳನ್ನು ಹೆಚ್ಚು ಕಲಿಯುವುದಾಗಲೀ ಬಳಸುವುದಾಗಲೀ ನಿಂತೇ ಹೋಗಿರುವಾಗ ಫೈಲ್ ಹಾಗೂ ಇ-ಮೇಲ್ ಮ್ಯಾನೇಜ್‌ಮೆಂಟೇ ಬದುಕಾಗಿ ಹೋಗಿದೆ. ಆಶ್ಚರ್ಯವೆನ್ನುವಂತೆ ಒಂದು ಕಾಲದಲ್ಲಿ ಚೆನ್ನಾಗೇ ಓಡುತ್ತಿದ್ದ ಹಳೆಯ ಕಂಪ್ಯೂಟರ್ ಈಗ ಯಾವುದೋ ತಗಡು ಡಬ್ಬವಾಗಿ ಕಂಡುಬರುತ್ತಿರೋದು.

ಹಾರ್ಡ್ ಡಿಸ್ಕೇ ಇಲ್ಲದ ಕಂಪ್ಯೂಟರುಗಳಿಂದ ಹಿಡಿದು ಐವತ್ತು MB ಹಾರ್ಡ್‌ಡಿಸ್ಕ್ ಇರುವ ಪರ್ಸನಲ್ ಕಂಪ್ಯೂಟರ್ ಅನ್ನು ಬಳಸಿದವರಿಗೆ ಇಂದಿನ ಟೆರ್ರಾಬೈಟುಗಳನ್ನು ನೋಡಿ ಏನನಿಸುತ್ತೋ ಏನೋ. ಹಾಗಾದರೆ ನಮ್ಮ ಬದುಕಿನಲ್ಲಿ ಅಷ್ಟೊಂದು ಬದಲಾವಣೆಗಳಾಗಿವೆಯೇ? ಉದಾಹರಣೆಗೆ ಒಂದು ಕಾಲದಲ್ಲಿ ಒಂದು ಮೆಗಾಪಿಕ್ಸೆಲ್ ಕ್ಯಾಮರಾಗಳನ್ನು ಬಳಸಿ ಚಿತ್ರ ತೆಗೆಯುತ್ತಿದ್ದ ಫೋಟೋಗ್ರಾಫರುಗಳು ಇಂದಿನ ಹತ್ತು ಮೆಗಾಪಿಕ್ಸೆಲ್ ಕ್ಯಾಮಾರಾದಲ್ಲಿ ಅಂತಹದನ್ನೇನು ಅಚೀವ್ ಮಾಡುತ್ತಿದ್ದಾರೆ ಎನ್ನುವುದು ನನ್ನಲ್ಲಿನ ಗೊಂದಲ. ನಾನು ಚಿತ್ರವನ್ನು ಪ್ರಿಂಟ್ ಮಾಡಿದರೂ 8X10 ಸೈಜ್ ಬಿಟ್ಟು ಬೇರೆ ಸೈಜ್ ನಲ್ಲಿ ಪ್ರಿಂಟ್ ಹಾಕಿಸಿಲ್ಲ, ಅಂದ ಹಾಗೆ ಮೊದಲೆಲ್ಲ ಫಿಲ್ಮ್ ರೀಲುಗಳನ್ನು ಸಂಸ್ಕರಿಸುತ್ತಿದ್ದ ನಮಗೆ ಎಷ್ಟು ಮೆಗಾಪಿಕ್ಸೆಲ್ಲುಗಳು ಸಿಗುತ್ತಿದ್ದವು, ಇಂದಿನ ಡಿಜಿಟಲ್ ಯುಗದ ಚಿತ್ರಗಳು ಯಾವ ರೀತಿ ಭಿನ್ನ? ನನ್ನ ಸಹೋದ್ಯೋಗಿ ತನ್ನ ಆಫೀಸಿನಲ್ಲಿ ತನಗೆ ಬೇಕಾದ ಹಲವಾರು ಚಿತ್ರಗಳನ್ನು ಪ್ರಿಂಟ್‌ಹಾಕಿಸಿ ಇಟ್ಟುಕೊಂಡಿದ್ದಾನೆ, ಆತನ ಪ್ರಕಾರ ಸಾವಿರಾರು ಚಿತ್ರಗಳನ್ನು ತೆಗೆದರೆ ಒಂದಿಷ್ಟು ಚಿತ್ರಗಳು ಚೆನ್ನಾಗಿ ಬರುತ್ತವೆ, ಹಾಗಿದ್ದ ಮೇಲೆ ಇಂದಿನ ಡಿಜಿಟಲ್ ಯುಗದ ಕ್ಯಾಮೆರಾಗಳು ಟ್ರೈಯಲ್-ಎಂಡ್-ಎರರ್ ಮೆಥೆಡ್ಡುಗಳನ್ನು ಪುರಸ್ಕರಿಸುತ್ತವೆಯೆಂದು ಅರ್ಥವೇ? ಒಂದು ಕಾಲದಲ್ಲಿ ಬ್ಲಾಕ್ ಅಂಡ್ ವೈಟ್ ಚಿತ್ರಗಳಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತಿದ್ದವರು, ಇಂದು ಅನೇಕ ಮೆಗಾಬೈಟುಗಳಲ್ಲಿ ನಮ್ಮನ್ನು ಅವಿಷ್ಕರಿಸಿಕೊಳ್ಳುತ್ತಿದ್ದೇವಷ್ಟೇ. ಆದರೆ, ಇತ್ತೀಚೆಗೆ ಬಳಕೆಗೆ ಬಂದಿರುವ HD ವಿಡಿಯೋ ಕಾರ್ಯಕ್ರಮಗಳನ್ನು ನೋಡಿದವರಿಗೆ ಗೊತ್ತು, ಸೆಕೆಂಡಿಗೆ 13.5 ರಿಂದ 19.8 (ಕಡಿಮೆ ಎಂದರೆ 13.5) ಮೆಗಾಬೈಟುಗಳನ್ನು ಹೊತ್ತು ತರುವ ಕಮ್ಮೂನಿಕೇಷನ್ ಮಾಧ್ಯಮ, ಅಲ್ಲಿನ ಚಿತ್ರ, ಸೌಂಡಿನ ಕ್ಲಾರಿಟಿಗೆ ಎಂಥವರ ಮನಸೋತು ಹೋಗೋದು ಖಂಡಿತ. ಸ್ಟ್ಯಾಂಡರ್ಡ್ ಡೆಫಿನಿಷನ್ನ್‌ನಲ್ಲಿ (ಸೆಕೆಂಡಿಗೆ 1.2 ಇಂದ 3.8 ಮೆಗಾಬೈಟುಗಳನ್ನು ಭಿತ್ತರಿಸುವ ಕಾರ್ಯಕ್ರಮಗಳು) ನೋಡುವ ಕಾರ್ಯಕ್ರಮಗಳು ಸೆಪ್ಪೆ ಎನಿಸೋದು ನಿಜ. ಎಲ್ಲ ಕಾರ್ಯಕ್ರಮಗಳೂ ಹೈ ಡಿಫನಿಷನ್ನಲ್ಲಿರೋದೇನೂ ಬೇಕಾಗಿಲ್ಲ, ಆದರೆ ಕೆಲವೊಂದು ಡಿಸ್ಕವರಿ ಕಾರ್ಯಕ್ರಮಗಳು, ಆಟೋಟಗಳನ್ನು ಹೈ ಡೆಫನಿಷನ್ನಿನ್ನಲ್ಲಿ ನೋಡಿದಾಗ ಅದರ ಅನುಭವವೇ ಬೇರೆ.

ತಂತ್ರಜ್ಞಾನ ಬದಲಾಗುತ್ತದೆ, ಆದರೆ ನಾವು? ನಾವು ಬದಲಾಗದಿದ್ದರೆ ಉಳಿಗಾಲವಿಲ್ಲ ಎನ್ನುವಂತಾಗಿದೆ, ವೈಯಕ್ತಿಕವಾಗಲ್ಲದಿದ್ದರೂ ಆಫೀಸಿನ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ, ಇಲ್ಲವೆಂದರೆ ಬದಲಾವಣೆಗಳನ್ನು ಎದುರಿಸಿ ಸೋತ ಹಣೆಪಟ್ಟಿ ನಮ್ಮನ್ನು ಅಂಟಿಕೊಂಡು ಬಿಡುತ್ತದೆ.

ಈಗಾಗಲೇ ನ್ಯೂ ಝೀಲ್ಯಾಂಡಿನವರು ಹೊಸವರ್ಷವನ್ನು ಆಚರಿಸಿ ನಾಳೆ ಇರುವುದನ್ನು ಸಾಭೀತುಪಡಿಸಿದ್ದಾರಾದ್ದರಿಂದ ನನಗೆ ನಾಳೆಯ ಬಗ್ಗೆ ಚಿಂತೆ ಇಲ್ಲವೇ ಇಲ್ಲ. ಬೇಡವೆಂದರೂ ಬರುವ ನಾಳೆಗಳು ಎಂದು ಭವಿಷ್ಯವನ್ನು ಸೂಚಿಸುವ ವಿಚಾರ ನಿಜ - ಈ ಕೆಳಗಿನ ನೈಜ ಘಟನೆಯನ್ನು ನೋಡಿ:
ನನ್ನ ಸಹೋದ್ಯೋಗಿ ಮೈಕಲ್ ತನ್ನ ಐದು ವರ್ಷದ ಮಗಳನ್ನು ನಿದ್ರೆ ಮಾಡಿಸುವಾಗ, ’ಹನಿ, ನೀನು ಕಣ್ಣು ಮುಚ್ಚಿ ಮಲಗಿಕೋ, ಕಣ್ಣು ಬಿಟ್ಟು ನೋಡುವಾಗ ನಾಳೆಯಾಗುತ್ತದೆ’ ಎಂದನಂತೆ. ಮಗಳು ಮರುದಿನ ಎದ್ದು ತಂದೆಯನ್ನು ಕೇಳಿದಳಂತೆ, ’ಡ್ಯಾಡೀ, is it tomorrow now?'
ಮೈಕಲ್, ’No, it is not tomorrow, it is Today!'
ಮಗಳು, ’then you lied to me! you said when I wake up it will be tomorrow, where is it?!'

***

Happy New Year everyone!
(I think I have given up...)

December 07, 2006 ರ ಬರಹ, ಸೂರ್ಯ-ಚಂದ್ರರ ನೆರಳಿನಲಿ ಇಂದ ಆಯ್ದುಕೊಂಡಿದ್ದು...

'ನಾನು ಜನವರಿ ಒಂದನ್ನು ಹೊಸ ವರ್ಷವನ್ನಾಗಿ ಆಚರಿಸೋದಿಲ್ಲ, ನನಗೇನಿದ್ದರೂ ಯುಗಾದಿಯೇ ಹೊಸವರ್ಷ' ಎಂದು ಮೂರು ವರ್ಷಗಳ ಹಿಂದೆ ಯಾವುದೋ ಪ್ರಶ್ನೆಗೆ ಉತ್ತರವಾಗಿ ಹೇಳಿದ ನನ್ನನ್ನು ಭೂಮಿಗೆ ತಂದವನು ಕೃಪೇಶ - 'ನಿನ್ನ ಬರ್ತ್ ಡೇ, ಆಫೀಸ್‌ನಲ್ಲಿನ ಆಗುಹೋಗುಗಳು ಮತ್ತೆಲ್ಲವೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿರುವಾಗ ಈ ಹೊಸವರ್ಷವೊಂದನ್ನು ಮಾತ್ರ ಉಪೇಕ್ಷಿಸುತ್ತೀಯೇಕೆ?'. ಅಂದಿನಿಂದ ಜನವರಿ ಒಂದರಂದು ನಾನು ಕುಡಿದು-ಕುಣಿದು ಕುಪ್ಪಳಿಸುವುದಿಲ್ಲವಾದರೂ 'ಹೊಸ' ವರ್ಷವನ್ನು ಕಣ್ಣು ಬಿಟ್ಟು ನೋಡುವುದನ್ನು ಕಲಿತಿದ್ದೇನೆ, ಬ್ರಹ್ಮಾಂಡದಲ್ಲಿ ಅನೇಕ ಬದಲಾವಣೆಗಳನ್ನು ತರುವ ನಮ್ಮ ಸಂಭ್ರಮದ ಯುಗಾದಿಯನ್ನು ಅದ್ಯಾವ ಕಾರಣಗಳಿಂದಲು ಡಿಸೆಂಬರ್ ೩೧ ಹಾಗೂ ಜನವರಿ ೧ ರ ನಡುವಿನ ವ್ಯತ್ಯಾಸಕ್ಕೆ ನಾನು ತುಲನೆ ಮಾಡಲಾಗದಿದ್ದರೂ 'ಗುಂಪಿನಲ್ಲಿ ಗೋವಿಂದ' ಎನ್ನುವಂತೆ ಹೆಚ್ಚು ಜನರು ಆಚರಿಸುವ ನಡವಳಿಕೆಯನ್ನು ಅನುಮೋದಿಸುವ ಬೃಹತ್ ಮನಸ್ಸನ್ನು ಹೊಂದಿಸಿಕೊಂಡಿದ್ದೇನೆ. ನಮ್ಮದೇ ಸರಿ ಎನ್ನುವುದು ಒಂದು ಹಂತ, ಸರಿಯನ್ನು ಹೆಚ್ಚು ಜನರು ಒಪ್ಪಿಕೊಳ್ಳುವ ಬದಲಾವಣೆಯನ್ನು ಹುಟ್ಟು ಹಾಕುವ ಪ್ರವಾದಿಯಾಗುವುದು ಮತ್ತೊಂದು ಹಂತ. ಪಾಡ್ಯಬಿದಿಗೆಗಳಿಗೆ ಜನರನ್ನು ಹೊಂದಿಸುವುದಾಗಲೀ, ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ತಿಂಗಳ ಮಧ್ಯೆ (೨೦ ನೇ ತಾರೀಖಿನ ಆಜುಬಾಜು) ಹೊಸ ಮಾಸವನ್ನು ಸೃಷ್ಟಿಸುವುದಾಗಲೀ, ಚೈತ್ರವನ್ನು-ವಸಂತವನ್ನು ಬದಲಾವಣೆಯ ಏಜೆಂಟರನ್ನಾಗಿ ಜಗತ್ತಿಗೆ ಸಾರುವುದು ನನ್ನ ಕರ್ಮವಂತೂ ಅಲ್ಲ, ಈ ಜನ್ಮದಲ್ಲಿ ಆ ಶಕ್ತಿಯೂ ನನಗಿಲ್ಲ ಎಂದು ಜಾರಿಕೊಂಡು ಹಾಡುಹಗಲೇ ಗುಂಪನ್ನು ಅನುಮೋದಿಸುವ ಪ್ರವೃತ್ತಿ ಸ್ವಭಾವವಾಗಿ ಪರಿವರ್ತನೆಯಾಗಿ ಹೋಗಿದೆ.

Saturday, December 29, 2007

ಕ್ರಿಸ್‌ಮಸ್ ಲೈಟೂ ಕ್ಲೀನ್ ಶೇವನ್ ಡ್ಯಾಡೂ...

೨೦೦೧ ನೇ ಸೆಪ್ಟೆಂಬರ್ ಹೊತ್ತಿಗೆ ನಾವಿನ್ನೂ ವಾಷಿಂಗ್ಟನ್ ಡಿಸಿ ಪ್ರಾಂತ್ಯದ ಹತ್ತಿರವೇ ಇದ್ದೆವು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಿಂದ ಡಿಸಿಯ ಜಾರ್ಜ್‌ಟೌನ್ ಯೂನಿವರ್ಸಿಟಿಗೆ ರೆಫೆರೆನ್ಸ್ ಪುಸ್ತಕಗಳಿಗೆಂದು ಹೋಗುತ್ತಿದ್ದ ನಮಗೆ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮುಸ್ಲಿಮ್ ಯುವಕ ಯಾವಾಗಲೂ ಕಣ್ಣಿಗೆ ಬೀಳುತ್ತಿದ್ದ. ಈತ ನಮಗೆ ಬೇಕಾದಷ್ಟು ಸಲ ನಾವು ಡಿಸಿ ಗೆ ಹೋಗುವ ಟ್ರೈನ್‌ನಲ್ಲಿ ಸಿಕ್ಕಿದ್ದೂ ಇದೆ. ಅಮೇರಿಕಾದ ಮೇಲೆ ಸೆಪ್ಟೆಂಬರ್ ೧೧ರ ಭಯೋತ್ಪಾದಕರ ಧಾಳಿ ನಡೆದ ಕೆಲವು ದಿನಗಳಲ್ಲಿ ಅಲ್ಲಲ್ಲಿ ಹೇಟ್‌ಕ್ರೈಮ್‌ಗಳ ಬಗ್ಗೆ ವರದಿಗಳು ಬರುತ್ತಿದ್ದು, ಸ್ಥಳೀಯರ ಹಾಗೆ ಎಷ್ಟೋ ಜನ ಭಾರತ ಅಥವಾ ಇತರೆ ದೇಶದ ಮೂಲದಿಂದ ಬಂದವರು ತಮ್ಮ ತಮ್ಮ ಕಾರು ಮನೆಯ ಮುಂದೆ ಅಮೇರಿಕನ್ ಧ್ವಜವನ್ನು ಹಾಕಿಕೊಳ್ಳುತ್ತಿದ್ದುದೂ ಕಂಡು ಬರುತ್ತಿದ್ದವು. ಸ್ಥಳೀಯರು ಸಾಲಿಡ್ಯಾರಿಟಿಗೆಂದು ಅಮೇರಿಕ ಧ್ವಜಗಳನ್ನು ತಮ್ಮ ಕಾರಿಗೆ ತಗುಲಿಸಿಕೊಂಡಿದ್ದರೆ ವಲಸೆ ಬಂದವರು ಹಲವಾರು ಕಾರಣಗಳಿಗೆ ಆ ರೀತಿ ತೋರಿಸಿಕೊಳ್ಳುತ್ತಿದ್ದುದು ಎದ್ದು ಕಾಣುತ್ತಿತ್ತು. ಯಾರೇ ತಮ್ಮ ತಮ್ಮ ಸ್ವರೂಪಗಳಲ್ಲಿ ಅದೇನೇ ಬದಲಾವಣೆಗಳನ್ನು ಮಾಡಿಕೊಂಡರೂ ಈ ಲೈಬ್ರರಿಯಲ್ಲಿ ಕೆಲಸ ಮಾಡುವ ಯುವಕ - ಆರು ಅಡಿಗಿಂತಲೂ ಎತ್ತರದ ನಿಲುವು, ಉದ್ದನೆಯ ಗಡ್ದದಾರಿ, ಯಾವಾಗಲೂ ಬಿಳಿ ನಿಲುವಂಗಿ (ಕುರ್ತಾ) ಧರಿಸಿರುವ, ಅವನದ್ದೇ ಆದ ಆಳವಾದ ಶುಭ್ರ ಕಣ್ಣುಗಳಲ್ಲಿ ಅದಮ್ಯ ಶಾಂತಿಯನ್ನು ಅಡಗಿಸಿಕೊಂಡು - ತಾನಾಯಿತು ತನ್ನ ಕೆಲಸವಾಯಿತು ಎಂದು ಬಾಹ್ಯ ನೋಟಕ್ಕೆ ನಿರ್ಲಿಪ್ತವಾಗಿದ್ದುದು ನನಗಂತೂ ಬಹಳ ಆಶ್ಚರ್ಯವನ್ನುಂಟುಮಾಡಿತ್ತು. ಆಗಷ್ಟೇ ಮಾಧ್ಯಮಗಳಲ್ಲಿ ತೋರಿಸುತ್ತಿದ್ದ ಬಿನ್ ಲಾಡೆನ್ ಚಿತ್ರಗಳಿಗೂ ಈ ಯುವಕನ ಗುರುತಿಗೂ ಬಹಳಷ್ಟು ಸಾಮ್ಯತೆಗಳಿದ್ದವು. ಅಪರೂಪಕ್ಕೆ ಟ್ರೈನ್‌ನಲ್ಲಿ ಸಿಕ್ಕುವ ಈತನನ್ನು ಸುತ್ತಲಿನ ಜನರು ಕಣ್ಣಿಟ್ಟು ನೋಡುವುದನ್ನು ನೋಡಿ ನನಗೇ ಮುಜುಗರವಾಗುತ್ತಿತ್ತು. ತನ್ನ ಸುತ್ತ ಮುತ್ತಲು ಅದೆಷ್ಟೇ ಕೋಲಾಹಲ ನಡೆದುಕೊಂಡಿದ್ದರೂ ಈತ ತನ್ನತನವನ್ನು ಬಿಡದೇ ಸಹಜವಾಗಿದ್ದುದು ನನಗೆ ಇಂದಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ ಜೊತೆಗೆ ಆತನ ಮೇಲಿನ ಅಭಿಮಾನವೂ ಹೆಚ್ಚುತ್ತದೆ.

***

ನಾವು ಜರ್ಸಿ ಸಿಟಿಯಿಂದ ಪ್ಲಾಂಡರ್ಸ್‌ಗೆ ಬಂದ ವರ್ಷ ಇದು. ನಾವಿರುವ ಮನೆಯ ಮೂಲ ಓನರ್ ಕ್ರಿಸ್‌ಮಸ್ ಸಮಯದಲ್ಲಿ ಬಹಳ ಚೆನ್ನಾಗಿ ಮನೆಯ ಹೊರಗೆ ಮತ್ತು ಒಳಗೆ ಲೈಟ್ ಹಾಕಿ ಅಲಂಕಾರ ಮಾಡಿರುತ್ತಿದ್ದರಂತೆ. ನಮಗೆ ಗೊತ್ತಿರುವ ಎಷ್ಟೋ ಜನ ಸ್ಥಳೀಯರು - ’ನೀವು ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡುವುದಿಲ್ಲವೇ?’, ’ಹಿಂದಿನವರು ಚೆನ್ನಾಗಿ ಲೈಟ್ ಅಲಂಕಾರ ಮಾಡಿರುತ್ತಿದ್ದರು!’ ಎನ್ನುವ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಜೊತೆಗೆ ಥ್ಯಾಂಕ್ಸ್‌ಗಿವಿಂಗ್ ಗಿಂತಲೂ ಮುಂಚೆಯೇ ಬರುವ ದೀಪಾವಳಿ ಸಂದರ್ಭದಲ್ಲಿ ನಾವು ಹೊರಗಡೆ ಹೊತ್ತಿಸಿದ ಲೈಟ್, ದೀಪಗಳನ್ನು ಪ್ರಶ್ನಿಸಿಯೂ ಇದ್ದಾರೆ. ನಮ್ಮ ನಂಬಿಕೆ ಸಂಪ್ರದಾಯಗಳ ಪ್ರಕಾರ ನಾವು ನಮ್ಮ ನಮ್ಮ ಹಬ್ಬ ಹರಿದಿನಗಳಿಗೆ ಬೇಕಾದ ಅಲಂಕಾರ ಮಾಡುವುದು ನಮಗೆ ಸೇರಿದ್ದು, ಜೊತೆಗೆ ನಮ್ಮ ನೆರೆಹೊರೆಯ ಆಚಾರ-ವಿಚಾರಗಳಿಗೆ ತಕ್ಕಂತೆ ಸ್ಪಂದಿಸಬೇಕಾದದ್ದೂ ನಮ್ಮ ಕರ್ತವ್ಯಗಳಲ್ಲೊಂದು ಎಂದು ನಂಬಿ ಥ್ಯಾಂಕ್ಸ್‌ಗಿವಿಂಗ್‌ನಿಂದ ಇಂದಿನವರೆಗೂ ಹೊರಗಡೆ ದೀಪಾಲಂಕಾರವನ್ನು ಮಾಡಿ ಅದನ್ನು ಉರಿಸಿಕೊಂಡೇ ಬಂದಿದ್ದೇವೆ. ಹಿಂದಿನ ಮನೆಯ ಮಾಲಿಕನಿಗೆ ಹೋಲಿಸಿದರೆ ನಮ್ಮ ಅಲಂಕಾರವೇನೂ ಇರಲಾರದು, ನಾವು ಕ್ರಿಸ್‌ಮಸ್ ಟ್ರೀ ಅನ್ನೂ ಇಟ್ಟಿಲ್ಲ ಆದರೆ ನಮ್ಮ ಕೈಲಾದಂತೆ ಸುತ್ತಲಿನವರಲ್ಲಿ ಒಂದಾಗಿ ಇರುವ ಪ್ರಯತ್ನವಷ್ಟೇ.

***

ನಮ್ಮ ಆಫೀಸಿನಲ್ಲಾಗಲೀ ಅಥವಾ ಹೊರಗಡೆ ಮತ್ತಿನ್ನೆಲ್ಲಾದರೂ ಸರದಾರ್‌ಜೀ ಗಳನ್ನು ನೋಡಿದಾಗ ಅವರ ಮೇಲೆ ಪ್ರಶಂಸೆಯೂ ಹಾಗೂ ಹಲವಾರು ಪ್ರಶ್ನೆಗಳು ಮನದಲ್ಲೇಳುತ್ತವೆ. ನಿಜವಾಗಿಯೂ ಪಗಡಿ ಧಾರಣೆ ಮಾಡಿರುವ ಮೀಸೆ-ಗಡ್ಡ-ತಲೆ ಕೂದಲನ್ನು ಹುಟ್ಟಿದಂದಿನಿಂದ ಬೋಳಿಸದಿರುವ ಇವರನ್ನು ತಮ್ಮ ಸಂಪ್ರದಾಯ ಹಾಗೂ ತಮ್ಮ ನೆರೆಹೊರೆ ಇವುಗಳ ನಡುವೆ ತೂಗಿ ನೋಡಿದಾಗ ದೈಹಿಕವಾಗಿ ಕೂದಲನ್ನು ಬೆಳೆಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಧರಿಸಿಕೊಂಡಿರುವುದು ಹುಟ್ಟಿದಂದಿನಿಂದ ಬಂದ ಅಭ್ಯಾಸವಾದರೂ ನಾವಿರುವ ನೆರೆಹೊರೆಯಲ್ಲಿ ’ಕ್ಲೀನ್‌ಶೇವನ್‍’ ಜನರಿಗೆ ಸಿಗುವ ಪ್ರಾಶಸ್ತ್ಯಗಳನ್ನು ನೋಡಿದಾಗ ಹಲವಾರು ರೀತಿಯಲ್ಲಿ ತರ್ಕಿಸಬಹುದು. ವಾಷಿಂಗ್ಟನ್ ಡಿಸಿಯ ಲೈಬ್ರರಿ ನೌಕರನಾಗಲೀ, ಅನ್‌ಶೇವನ್ ಸರ್ದಾರ್‌ಜೀಗಳಾಗಲೀ ನಿಜವಾಗಿಯೂ ತಮ್ಮ ಪರಂಪರೆಯನ್ನು ಪ್ರತಿಕ್ಷಣವೂ ಹೊತ್ತುಕೊಂಡೇ ತಿರುಗುತ್ತಾರೆ ಅನ್ನಿಸೋದಿಲ್ಲವೇ?

ನಾವು ಕಂಡ ನಮ್ಮ ದಕ್ಷಿಣ ಭಾರತದ ಆಚರಣೆ/ವಿಧಿಗಳ ಪ್ರಕಾರ ನಮ್ಮಲ್ಲಿನ ಗಂಡಸರು ಮುಖದ ಮೇಲೆ ಮೀಸೆಯೊಂದನ್ನು ಇಟ್ಟುಕೊಳ್ಳುವುದು ಸಹಜ. ಮೀಸೆಯ ಹೊರತಾಗಿ ಗಡ್ಡವೇನಾದರೂ ಇದ್ದರೆ ಅದು ರೋಗಿಗಳ, ವೈರಾಗಿಗಳ, ಸೋಮಾರಿಗಳ ಹಾಗೂ ಬುದ್ಧಿಜೀವಿಗಳ ಸೂಚಕವಾಗಿತ್ತಷ್ಟೇ. ನಮ್ಮಲ್ಲಿನ ಯುವಕರನ್ನು ಅವರು ಎಂದಾದರೂ ಮೀಸೆಯನ್ನು ಬೋಳಿಸಿಕೊಂಡರೆ ಉತ್ತರ ಭಾರತದ ಅಥವಾ ಹಿಂದಿ ಸಿನಿಮಾಗಳ ಹೀರೋಗಳಿಗೆ ಹೋಲಿಸಿ ಜನರು ಛೇಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈಗಲೂ ಸಹ ಅಮೇರಿಕದಲ್ಲಿಯೂ ದಕ್ಷಿಣ ಭಾರತ ಮೂಲದ ಯುವಕರು ಮೀಸೆಯನ್ನು ಇಟ್ಟುಕೊಂಡಿರುವುದು ನಮ್ಮ ಕಣ್ಣಿಗೆ ಬೀಳುತ್ತದೆ, ಅದರ ಮತ್ಯಾವುದೇ ವೇರಿಯೇಷನ್ನುಗಳೂ ಸಹ ಉಳಿದ ಕಡೆಗಳಿಂದ ಅವರವರು ಪಡೆದ ಇನ್‌ಫ್ಲುಯೆನ್ಸ್‌ಗಳ ಮೇಲೆ ಅವಲಂಭಿತವಾರುತ್ತದೆ. ಭಿನ್ನ ಪ್ರಪಂಚ ಹಾಗೂ ಸಂಸ್ಕೃತಿಯ ಸಂಗಮದಲ್ಲಿ ಬೆಳೆಯುವ ನಮ್ಮ ಮುಂದಿನ ತಲೆಮಾರಿಗೆ ಅನ್ನಿಸಬಹುದು - ನಮ್ಮ ತಂದೆಯೂ ಇಲ್ಲಿಯವರ ಹಾಗೆ ಕ್ಲೀನ್ ಶೇವನ್ ಯಾಕಿರಬಾರದೆಂದು. ಬಾಹ್ಯವಾಗೇಳುವ ಅಂತಹ ಪ್ರಶ್ನೆಗಳಿಗೆ ನಮ್ಮ ಮುಖದ ಮೀಸೆ ಏಕಿದೆ ಎಂದು ಹಲವಾರು ರೀತಿಯ ವಿವರವನ್ನು ಕೊಡಬಹುದಾದರೂ ಮನದೊಳಗಿನ ವ್ಯಾಪಾರವನ್ನು ನಾವು ಯಾವತ್ತಿಗೂ ನಿಯಂತ್ರಿಸಲಾಗೋದೇ ಇಲ್ಲ.

***

ನಾನೂ ಒಂದು ಕ್ರಿಸ್‌ಮಸ್ ಟ್ರೀ ಅನ್ನು ಇಡಬಲ್ಲೆ, ಅದನ್ನು ವಿಧವಿಧವಾಗಿ ಅಲಂಕಾರ ಮಾಡಬಲ್ಲೆ, ಅದನ್ನು ದುಡ್ಡಿನಿಂದಲೇ ಮುಚ್ಚಬಲ್ಲೆ, ಅದರ ಕೆಳಗೆ ಗಿಫ್ಟ್‌ಗಳನ್ನು ಥರಥರವಾಗಿ ಪೇಪರ್‌ಗಳಿಂದ ರ್ಯಾಪ್ ಮಾಡಿ ಅದನ್ನು ಸ್ಯಾಂಟಾಕ್ಲಾಸ್ ಹೆಸರಿನಲ್ಲಿ ಮಕ್ಕಳಿಗೆ ಹಂಚಬಲ್ಲೆ. ಆದರಿಂದ ನಮ್ಮ ಮನೆಯ ಕ್ರಿಸ್‌ಮಸ್ ಟ್ರೀಗೂ ಡಿಪಾರ್ಟ್‌ಮೆಂಟ್ ಸ್ಟೋರ್ ಕ್ರಿಸ್‌ಮಸ್ ಟ್ರೀಗೂ ಏನು ವ್ಯತ್ಯಾಸ ಉಳಿಯಿತು? ನಮ್ಮ ಮನೆಯಲ್ಲಿ ಅಲಂಕೃತಗೊಂಡ ಟ್ರೀ ನೋಡಲು ಚೆನ್ನಾಗಿರಬಹುದು, ಆದರೆ ಅದರಲ್ಲಿ ಯಾವುದೇ ಪರಂಪರೆಯಿಲ್ಲ, ಸಂಪ್ರದಾಯವಿಲ್ಲ, ಹಿನ್ನೆಲೆಯಿಲ್ಲ. ಶಾಲೆಯಲ್ಲಿ ನಮ್ಮ ಮಕ್ಕಳನ್ನು ಅವರ ಸಹಪಾಠಿಗಳು ಕೇಳಿಯಾರು ಎಂಬ ಒಂದೇ ಕಾರಣಕ್ಕೆ, ನಾವು ನಮ್ಮ ನೆರೆಹೊರೆಯವರಲ್ಲಿ ಮಿಳಿತವಾಗಿ ಬದುಕಬೇಕು ಎಂಬುದಕ್ಕೆ ನಾವು ಇನ್ನೂ ಏನೇನನ್ನು ತ್ಯಾಗ ಮಾಡಬೇಕು, ಎಷ್ಟರ ಮಟ್ಟಿಗೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಅಮೇರಿಕದಲ್ಲೇ ಬೇಕಾದಷ್ಟು ಕಡೆ ಇರುವ ಭಾರತೀಯ ಮೂಲದ ಜನರು ಬೇಕಾದಷ್ಟು ಉತ್ತರಗಳನ್ನು ಕಂಡುಕೊಳ್ಳಬಹುದು. ನ್ಯೂ ಜೆರ್ಸಿ, ನ್ಯೂ ಯಾರ್ಕ್ ಅಂತ ಪ್ರದೇಶಗಳಲ್ಲಿ ಹೆಚ್ಚು ಜನರಿರುವ ದೇಸೀ ಸ್ಥಳಗಳಲ್ಲಿ ನಮ್ಮ ಆಚರಣೆಗಳಿಗೆ ಸಂವೇದನೆಗಳಿಗೆ ಆದ್ಯತೆ ಪ್ರಾಧಾನ್ಯತೆ ಸಿಕ್ಕರೆ ಅದೇ ಅಮೇರಿಕದ ಉಳಿದೆಡೆ ಹೆಚ್ಚು ಭಾರತೀಯರಿಲ್ಲದ ಕಡೆ ಅಂತಹ ಪ್ಲೆಕ್ಸಿಬಿಲಿಟಿ ಇರದೇ ಇರಬಹುದು. ನಾವೆಲ್ಲಿ ಹೋದರೂ ಅಲ್ಲಿಯವರಾಗಿರುವುದು ಒಂದು ರೀತಿಯ ಸೂಕ್ಷ್ಮ, ನಾವು ಭಿನ್ನರಾಗಿದ್ದುಕೊಂಡೇ ನಮ್ಮ ತನವನ್ನು ಬೆಳೆಸಿ ಪೋಷಿಸಿಕೊಂಡು ಹೋಗುವುದು ಮತ್ತೊಂದು ರೀತಿಯ ಅಗತ್ಯ.

ನಮ್ಮತನವೆನ್ನುವುದನ್ನು ನಾವು ಬಿಡುವುದೋ ಹಿಡಿದುಕೊಳ್ಳುವುದೋ ಎನ್ನುವುದು ಕೆಲವರಿಗೆ ಅನಿವಾರ್ಯತೆಯ ಪ್ರಶ್ನೆ, ಇನ್ನು ಕೆಲವರಿಗೆ ಅದು ಬದಲಾವಣೆಗಳ ಅಗತ್ಯ - ಬೇರೆಲ್ಲಿ ಹೇಗಾದರೂ ಇರಲಿ ನಮ್ಮ ಮನೆಯಲ್ಲಿನ ಅನ್-ಕ್ಲೀನ್‌ಶೇವನ್ ಡ್ಯಾಡ್ ಬದಲಾಗದಿದ್ದರೆ ಸಾಕು!

Thursday, December 27, 2007

ಮರೆಯಾದಳು ಭುಟ್ಟೋ

(photo source unknown)

ನಾಡಿನ ಕತ್ತಲೆ ಎಳೆಗಳು ಕಳೆದೇ ಹೋದವು
ಇನ್ನೇನು ಸುಂದರ ದಿನಗಳು ಬಂದೆ ಬಂದವು
ಸೂರ್ಯನು ಮುಳುಗಿ ಮರುದಿನ ಹುಟ್ಟೋ
ಮೊದಲೇ ಮರೆಯಾದಳು ಭುಟ್ಟೋ.

ಕಂಬಳಿ ಹುಳುವಿನ ಹಾಗೆ ಎಂಟು ವರ್ಷ
ಕೊರೆದು ತಿಂದ ಮನದಾಳದ ಬುತ್ತಿಯ ಹರ್ಷ
ಅರವತ್ತೊಂಭತ್ತು ದಿನದ ಬಣ್ಣದ ಹಾಯಿ
ಚಿಟ್ಟೆಯನ್ನ ಕೊಂದೇ ಬಿಟ್ಟರಲ್ಲ ತಾಯಿ.

ಅಪ್ಪ ತಮ್ಮಂದಿರ ಒಡಗೂಡಿ ಕಟ್ಟಿದ ಸೇನೆಗೆ
ಶೋಷಿತ ಜನರ ಸರ್ಕಾರವನು ಎತ್ತಿ ಬಾನಿಗೆ
ಸೇನಾಡಳಿತದ ವಿರೋಧವನೇ ಎದುರಿಸಿ
ಕೊನೆಗೆ ಎಲ್ಲರನ್ನೂ ಬಲಿಗೊಟ್ಟ ಕಸಿವಿಸಿ.

ಎರಡೆರಡು ಬಾರಿ ಅಧಿಕಾರ ಕಿತ್ತುಕೊಂಡೂ
ಕಾರಾಗೃಹ ವಾಸದ ನೋವ ನುಂಗಿಕೊಂಡೂ
ಸಗಣಿಯೊಳಗಿನ ಹುಳುಗಳ ಮೇಲುತ್ತುವ ತಾಯೆ
ಮತ್ತಾರಿಗೂ ಬರದು ನೀನೆಸೆಯುವ ಮಾಯೆ.

ನಿನ್ನ ಕನಸುಗಳ ನುಂಗಿ ನೀರು ಕುಡಿದ ನಾಡನ್ನು ಬಿಟ್ಟು
ಮುಂದಿನ ಜನುಮದಲ್ಲಾದರೂ ನಮ್ಮ ನಾಡಲ್ಲಿ ಹುಟ್ಟು.
***
October 18, 2007 ರಂದು ಪ್ರಕಟಿಸಿದ ಈ ಲೇಖನವನ್ನೂ ಓದಿ: ಭುಟ್ಟೋ ಬಂದಳು ಶಾಂತಿ ತಂದಳು!
...ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.

Wednesday, December 26, 2007

...ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ

ನಾನು ಒಣದ್ರಾಕ್ಷಿ ಡಬ್ಬದ ಮುಚ್ಚಳ ತೆಗೆಯೋದಕ್ಕೂ ಅದರ ಒಳಗಿನಿಂದ ಮುಂದುವರೆಯುತ್ತಿದ್ದ ಸಂಭಾಷಣೆಯ ಈ ತುಣುಕು ಕೇಳೋದಕ್ಕೂ ಸರಿಯಾದ ಸಮಯ ಬಂದಿತ್ತು, ’...ಬನ್ನಿ ಬನ್ನಿ, ಯಾವಾಗ್ ನೋಡುದ್ರೂ ಅನಿವಾಸಿಗಳ ಥರ ಬರೀ ನಿಮ್ಮದೇ ರಾಗದ ಗುಂಗಿನಲ್ಲಿ ಇರ್ತೀರಿ, ವಾಸ್ತವಕ್ಕೆ ಬನ್ನಿ ಕಾರ್ಯಕ್ರಮ ಆರಂಭ ಮಾಡೋಣ’.

ಎಲಾ ಇವನಾ, ಅನಿವಾಸಿಗಳ ಬಗ್ಗೆ ಇಷ್ಟು ಅಥಾರಿಟಿಯಿಂದ ಮಾತಾಡೋರ್ ಯಾರಪ್ಪಾ ಎಂದು ಬೆಳಕಿಗೆ ಡಬ್ಬವನು ಬಗ್ಗಿಸಿ ನೋಡಿದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೆಚ್ಚು ಮೋರೆಯ ದರ್ಶನ ಕೊಟ್ಟು ಕೊನೆಗೆ ದಿಢೀರನೆ ಗುಂಪಿನಲ್ಲಿ ಕರಗಿ ಹೋಗಿದ್ದ ಒಣದ್ರಾಕ್ಷಿದ್ವಯರು ಕಂಡು ಬಂದರು. ಸುಮಾರು ಇಪ್ಪತ್ತು ಉಳಿದ ದ್ರಾಕ್ಷಿಗಳನ್ನು ಒಂದೆಡೆ ಆಯೋಜಿಸಿ ಅದೇನೋ ’ಕಾರ್ಯಕ್ರಮ’ವನ್ನು ಆರಂಭಿಸುವ ಗುಂಗಿನಲ್ಲಿದ್ದವರು ಆ ಮಟ್ಟಿಗೆ ವ್ಯಸ್ತರಾಗಿ ಕಂಡುಬಂದುದು ನನಗೆ ಸ್ವಲ್ಪ ಖುಷಿ ತಂದಿತು. ಏನಿಲ್ಲವೆಂದರೂ ಈ ಹಿಂದಿನ ಅಳುಮೋರೆಗೆ ಉತ್ತರ ಕೊಡಬೇಕಾಗಿಲ್ಲವಲ್ಲ ಎಂದು ನನ್ನೊಳು ನಾನೇ ಹೇಳಿಕೊಂಡಿರುವಾಗ ನಾನು ಡಬ್ಬದ ಮುಚ್ಚಳ ತೆಗೆದ ಫಲವಾಗಿ ದಿಢೀರನೆ ಹೆಚ್ಚಿದ ಬೆಳಕನ್ನು ಕಂಡು ತಮ್ಮ ಕಾರ್ಯಕ್ರಮಕ್ಕೆ ಅದ್ಯಾರಪ್ಪಾ ಭಂಗ ತಂದವರು ಎಂದು ಹುಬ್ಬೇರಿಸುತ್ತಲೇ ನನ್ನತ್ತ ನೋಡಿದ ದ್ರಾಕ್ಷೀದ್ವಯರು, ’ಓಹ್, ಏನ್ಸಾರ್ ಬಾಳಾ ಅಪರೂಪ ಆಗಿದ್ದೀರಾ ಇತ್ತೀಚಿಗೆ!?’ ಎಂದು ಒಕ್ಕೊರಲಿನಿಂದಲೇ ತಮ್ಮ ಆಶ್ಚರ್ಯವನ್ನು ಸೂಚಿಸುತ್ತಲೇ ಪ್ರಶ್ನೆಯೊಂದನ್ನು ಎಸೆದವು.

ನಾನಿದ್ದೋನು, ’ಹೌದಲ್ವಾ, ಹೇಗಿದ್ದೀರಾ ಮತ್ತೆ? ಏನ್ಸಮಾಚಾರಾ, ಏನೋ ಗಡಿಬಿಡಿ ನಡೀತಾ ಇರೋ ಹಾಗಿದೆ?’ ಎಂದೆ.

ಆ ದ್ರಾಕ್ಷಿಗಳಲ್ಲಿ ಬಲಗಡೆ ಇದ್ದುದು ಉತ್ತರ ಕೊಡುವ ಹವಣಿಕೆ ಮಾಡುತ್ತಾ, ’ಹೀಗಿದೀವ್ ನೋಡಿ, ಸದ್ಯ ಕಳೆದ ಸರ್ತಿ ಡಬ್ಬ ಖಾಲಿ ಆದ ಹಾಗೆ ಈ ಸರ್ತಿ ಆಗ್ಲಿಲ್ಲವಲ್ಲಾ, ಒಂದಿಷ್ಟು ಜನ ಉಳಿದಿರೋದೇ ಹೆಚ್ಚು’ ಎಂದು ಸಿನಿಕತನದ ಹಾರಿಕೆ ಉತ್ತರಕೊಡುವ ಹೊತ್ತಿಗೆ ಅದರ ಜೊತೆಗಾರ, ’ಊರ್ ತುಂಬಾ ಎಷ್ಟ್ ಜನಾ ಬೇಕಾದ್ರೂ ಇರ್ಲಿ ನೋಡ್ರಿ ಕೊನೆಗೆ ನಮ್ ಕಾರ್ಯಕ್ರಮ ಅಂತಂದ್ರೆ ಇಷ್ಟೇ ಜನಾ ಬರೋದು!’ ಎಂದು ಅಸಮಧಾನವನ್ನು ವ್ಯಕ್ತಪಡಿಸಿತು.

ನಾನು, ’ಅದೇನೋ ಅನಿವಾಸಿಗಳ ಬಗ್ಗೆ ಹೇಳ್ತಾ ಇದ್ರಲ್ಲ, ಅವರುಗಳ ಬಗ್ಗೆ ನಿಮಗೇನ್ ಗೊತ್ತಿರೋದು?’ ಎಂದೆ ಕೆದಕಿ ನೋಡಿದ್ದಕ್ಕೆ,

ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಏನ್ ಹೇಳೋದೂ ಬಿಡೋದು ಗೊತ್ತಾಗದೇ ಒಂದು ಕ್ಷಣ ಅಮೇರಿಕಕ್ಕೆ ಬಂದ ಪ್ರವಾಸಿಯ ಹಾಗೆ ಗರ ಬಡೆದು ನಿಂತುಕೊಂಡವು, ಸ್ವಲ್ಪ ಸುಧಾರಿಸಿಕೊಂಡು ಬಲಗಡೆ ಇದ್ದ ದ್ರಾಕ್ಷಿ ಹೇಳಿತು, ’ನಮಗೇನ್ ಗೊತ್ತೂ ಸಾರ್, ನಾವ್ ನಮಗೆ ಕಂಡದ್ದು ಹೇಳಿದ್ವಿ ಅಷ್ಟೇ, ಅನಿವಾಸಿಗಳು ಯಾವಾಗ್ ನೋಡುದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ, ಒಂದ್ ರೀತಿ ಗಮ್ಮನ್ ಗುಸಕಗಳ ಥರಾ ಯಾವಾಗ್ ನೋಡುದ್ರೂ ಅವರದ್ದೇ ಅವರಿಗೆ ಅತಿಯಾಗಿ ಹೋಗಿರುತ್ತೇ, ತಮ್ಮದೇ ದೊಡ್ಡದು ಅನ್ನೋ ಥರಾ ಆಡೋ ಅಂತಾ ಸ್ವಾರ್ಥಿಗಳನ್ನು ನಾನು ಯಾವತ್ತೂ ನೋಡೇ ಇಲ್ಲ, ಅದಕ್ಕೇ ಹಂಗದ್ದದ್ದು!’ ಎಂದು ದೊಡ್ಡ ವಾಗ್ದಾಳಿಯೊಂದನ್ನು ಮಾಡಿ ಸುಮ್ಮನಾಯಿತು.

ಆ ದ್ರಾಕ್ಷಿ ಹೀಗೆಂದ ಕೂಡಲೇ ನಾನೇನ್ ಹೇಳೋದು ಅಂತ ತಲೆ ತುರಿಸಿಕೊಂಡ್ರೆ ಏನೂ ಹೋಳೀಲಿಲ್ಲ, ಮ್ಯಾನೇಜ್‌ಮೆಂಟ್ ಎಂಪ್ಲಾಯಿ ಹೇಳೋ ಹಾಗೆ, ’ಅದು ನಿಮ್ಮ ನಿಮ್ಮ ಅನಿಸಿಕೆ ಅಭಿಪ್ರಾಯ ಅದಕ್ಕೆ ನೀವೇ ಬಾಧ್ಯಸ್ಥರು...ಅದು ಸುಳ್ಳೋ ನಿಜಾನೋ ಅಂತ ಮಾತಾಡ್ತಾ ಹೋದ್ರೇ ದೊಡ್ಡ ವಾದಾನೇ ನಡೆದು ಹೋಗುತ್ತೆ, ಅದರ ಬದಲಿಗೆ ಅದನ್ನ ಅಲ್ಲಿಗೆ ಬಿಡೋದೇ ವಾಸಿ’ ಎಂದು ಹೇಳಿ ಕೈ ತೊಳೆದುಕೊಳ್ಳಲು ನೋಡಿದೆ.

ಆಗ ಎಡಗಡೆ ಇದ್ದ ದ್ರಾಕ್ಷಿ, ’ಅಲ್ರಿ, ಹೀಗೆ ಒಂದು ಸಮೂಹದ ಮೇಲೆ ನಾವ್ ಏನಾದ್ರೂ ಹೇಳ್ಲಿ ಅದನ್ನ ಅವರವರ ಅಭಿಪ್ರಾಯ ಅಂತ ಹೇಳಿಬಿಟ್ಟು ಸುಮ್ನೇ ಕೈ ತೊಳಕೊಳಕ್ಕೆ ನೋಡ್ತೀರಲ್ಲಾ, ನಿಮಗೆ ಕೆಚ್ಚು ಅಭಿಮಾನಾ ಅನ್ನೋದ್ ಸ್ವಲ್ಪಾನೂ ಇಲ್ವೇ ಮತ್ತೆ? ಏನು ಅದನ್ನೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯ ಏಣಿಯ ಮೆಟ್ಟಿಲುಗಳಿಗೆ ಆಪೋಷನ ಕೊಟ್ಟೋರಂಗೆ ಆಡ್ತೀರಲ್ಲಾ, ನಿಮ್ಮಂತೋರುನ್ನಾ ನಮ್ಮೂರ್ನಲ್ಲಿ ಏನಂತಾ ಕರೀತಾರೆ ಗೊತ್ತಾ?...’ ಎಂದು ಸುಮ್ಮನಾಯಿತು.

ನಾನು, ’ಏನಂತ ಕರೀತಾರೆ?’ ಎಂದರೆ,

’ಬ್ಯಾಡಾ ಬಿಡಿ, ನಾನ್ಯಾಕೆ ಹೇಳಿ ನನ್ನ ಬಾಯನ್ನ ಹೊಲ್ಸು ಮಾಡ್ಕೊಳ್ಳೀ?’ ಎನ್ನುವ ಉತ್ತರ ದೊರೆಯಿತು, ಮತ್ತೆ ಮುಂದುವರೆಸುತ್ತಾ, ’ನಾವ್ ಹೆಂಗಾರೂ ಇರ್ಲಿ ನಮ್ಮನ್ನ ಯಾವಾನಾದ್ರೂ ಸ್ವಾರ್ಥಿ ನನಮಕ್ಳು ಅಂತ ಹೇಳಿದ್ದಿದ್ರೆ ಅವರನ್ನ ಒಂದ್ ಕೈ ನೋಡಿಕಂತಿದ್ವಿ, ಏನೋ?’ ಎಂದು ಪಕ್ಕದವನ ಪಕ್ಕೆಗೆ ತಿವಿಯಿತು.

ನಾನು, ’ಥೂ, ಇದೇನಪ್ಪಾ ಗ್ರಹಚಾರ’ ಎಂದು ಮನಸ್ಸಿನಲ್ಲೇ ಶಪಿಸಿಕೊಂಡೆ, ಶಾವಿಗೆ ಪಾಯಸ ಮಾಡೋದಕ್ಕೆ ಒಣದ್ರಾಕ್ಷಿ ಹಾಕೋಣ ಅಂತ ಮುಚ್ಚಳ ತೆಗೆದೋನಿಗೆ ಈ ಇಬ್ಬರ ಜೊತೆ ವಾದಾ ಮಾಡಿ ಮೈ ಮನಸ್ಸು ಕೆದರಿಕೊಳ್ಳೋ ಕಷ್ಟಾ ಯಾವನಿಗೆ ಬೇಕಿತ್ತು?

ನಾನು ಸುಮ್ಮನಿದ್ದುದನ್ನು ನೋಡಿ ಎಡಗಡೆ ಇದ್ದ ದ್ರಾಕ್ಷಿ ಬಲಗಡೆಯವನ ಕುರಿತು, ’ಏ ಬಿಡೋ, ಈ ಅನಿವಾಸಿಗಳನ್ನ ಯಾರು ಉದ್ದಾರ ಮಾಡಿದಾರೆ. ನಮ್ಮ ಕೆಲಸ ನೋಡೋಣ ನಡಿ, ಜನಗಳು ಕಾಯ್ತಾ ಇದಾರೆ ಕಾರ್ಯಕ್ರಮಾನಾದ್ರೂ ಶುರು ಮಾಡೋಣ’ ಎಂದು ಹೇಳುತ್ತ ಇನ್ನೇನು ಅಲ್ಲಿ ಮೂಲೆಯಲ್ಲಿ ಸೇರಿದ್ದ ಉಳಿದ ದ್ರಾಕ್ಷಿಗಳ ಕಡೆಗೆ ತಿರುಗಬೇಕು ಎನ್ನುವಾಗ ನಾನೆಂದೆ,

’ಅಲ್ರೋ, ಅನಿವಾಸಿಗಳನ್ನ ಕಂಡ್ರೆ ನಿಮಗ್ಯಾಕೆ ಅಷ್ಟೊಂದು ಹೊಟ್ಟೇಕಿಚ್ಚು? ಎಲ್ಲೋ ಒಂದು ದೃಷ್ಟಿಕೋನದಿಂದ ಅವರುಗಳನ್ನು ನೋಡಿರಬಹುದಾದ ನೀವು ಪ್ರಪಂಚವನ್ನೇ ತಿಳಿದುಕೊಂಡಿರೋ ತಿಕ್ಕಲುಗಳ ಥರಾ ಆಡೋದ್ ಯಾಕೆ? ಊರು-ಮನೇ-ದೇಶ ಬಿಟ್ಟು ಬಂದು ತಮ್ಮ್ ತಮ್ಮ ಕಷ್ಟದಲ್ಲಿ ಸಿಕ್ಕಿ ಒದ್ದಾಡ್ತಿರೋರನ್ನ ಪೂರ್ತಿ ಅರ್ಥ ಮಾಡಿಕೊಳ್ಳದೇ ಬರೀ ಅವರನ್ನ ದೊಡ್ಡ ಸ್ವಾರ್ಥಿಗಳು ಅಂತೀರಲ್ಲಾ ಇದು ಯಾವ ನ್ಯಾಯ?’ ಎಂದು ಮೂರ್ನಾಲ್ಕು ಪ್ರಶ್ನೆಗಳನ್ನ ಒಂದೇ ಉಸಿರಲ್ಲಿ ಕೇಳಿ ದಂಗುಬಡಿಸಿದೆ.

ಎಡಗಡೆ ದ್ರಾಕ್ಷಿಗೆ ನನ್ನ ಮಾತೇ ಕೇಳಿ ಸಿಟ್ಟೇ ಬಂದಿತು ಅಂತ ಕಾಣ್ಸುತ್ತೆ, ’ ಅವರವರ ತೆವಲಿಗೆ ಬಂದವರು ಅವರವರ ಕಷ್ಟಗಳನ್ನ ಅನುಭವಿಸಲೇ ಬೇಕಾದ್ ನ್ಯಾಯಾ ತಾನೆ? ಯಾವಾಗ್ ನೋಡಿದ್ರೂ ಸೆಲ್ಫ್ ಸೆಂಟರ್ಡ್ ಜನ ಅಂತ ಹೇಳ್ದೇ ಇನ್ನೇನ್ ಹೇಳೋಕ್ ಆಗುತ್ತೇ? ಒಂದ್ ದಿನಾನಾದ್ರೂ ಹೊರಗಿನ ಪ್ರಪಂಚದ ಬಗ್ಗೆ ಯೋಚ್ನೇ ಮಾಡಿ ಗೊತ್ತೇನ್ರೀ ಅವರಿಗೆ? ತಾವ್ ಆಡಿದ್ದೇ ಆಟ ತಾವ್ ಮಾಡಿದ್ದೇ ಮಾಟಾ ಅನ್ನೋ ಗುಂಗ್ನಲ್ಲಿ ತಮ್ಮಲ್ಲಿರೋ ಡಾಲರ್ರೂ-ಪೌಂಡೂ-ಯೂರೋಗಳನ್ನ ಝಳಪಿಸ್ತಾನೇ ನಮ್ಮಲ್ಲಿರೋ ರುಪಾಯಿ ಎಣಿಸೋ ಜನಗಳನ್ನ ಕೊಂದು ಬಿಟ್ಟಿರೋದು. ಕಷ್ಟಾ ಇರ್ಲಿ, ಸುಖಾ ಇರ್ಲಿ ಕಂಡಿದ್ದನ್ನೆಲ್ಲ ರೊಕ್ಕದಿಂದ ಕೊಳ್ತೀವಿ ಅನ್ನೋ ಮಾತು ಎಲ್ಲೀವರೆಗೆ ನಡೆಯುತ್ತೇ ನೀವೇ ಹೇಳಿ’ ಎಂದು ನನಗೇ ತಿರುಮಂತ್ರ ಹಾಕಲು ನೋಡಿತು.

ನಾನು, ’ಓಹ್, ಪ್ರತಿಯೊಂದೂ ದುಡ್ಡಿನ ಸುತ್ಲೂ ತಿರುಗುತ್ತೇ, ಅಲ್ವೇನು?’ ಅಂದು ಸುಮ್ಮನಾದೆ.

’ನೋಡಿ ನೋಡಿ, ನಮಗೇನೋ ಅರ್ಥ ಆಗದ ಹೀಗೆ ದೊಡ್ಡದೊಂದು ವಾಕ್ಯವನ್ನ ಮಧ್ಯೆ ಸೇರಿಸಿ ಏನೂ ಎಕ್ಸ್‌ಪ್ರೆಶ್ಶನ್ನೇ ಇಲ್ದಿರೋ ಮುಖವನ್ನ ಮಾಡೋ ಕಲೆ ಅನಿವಾಸಿಗಳಿಗಲ್ದೇ ಇನ್ಯಾರಿಗೆ ಬರುತ್ತೇ?’ ಎಂದು ಬಲಗಡೆ ದ್ರಾಕ್ಷಿ ಸೊಪ್ಪು ಹಾಕಿತು.

’ದುಡ್ದಿನ ವಿಷ್ಯಾ ಎತ್ತಿದೋನು ನಾನಂತೂ ಅಲ್ಲಾ!’ ಎಂದು ಒಂದು ಕ್ಷಣ ತಡೆದು, ’ನಿಮ್ಮಗಳಲ್ಲೇ ಅಡಗಿರೋ ಭಿನ್ನತೆ, ಭಿನ್ನಾಭಿಪ್ರಾಯದ ಮಸೂರದಲ್ಲಿ ಎಲ್ರುನ್ನೂ ನೋಡೋ ಹಾಗೆ ಅನಿವಾಸಿಗಳನ್ನೂ ನೋಡಿ, ಅದರಲ್ಲಿ ಕಾಣೋದೇನಿದ್ರೂ ನಿಮಗೆ ಹಳದಿಯೇ, ಕಾಮಾಲೆ ರೋಗ ನನಗಂತೂ ಬಂದಿಲ್ಲ’ ಎಂದು ಮತ್ತೆ ಸುಮ್ಮನಾದೆ.

ಎಡಗಡೆ ಇದ್ದ ದ್ರಾಕ್ಷಿಗೆ ಈಗಂತೂ ಸಿಟ್ಟೇ ಬಂದಿತು ಅಂತಾ ಕಾಣ್ಸುತ್ತೆ, ’ಬಾರಿ ಶಾಣ್ಯಾ ಇದೀರ್ ನೋಡ್ರಿ, ಅದೆಷ್ಟು ಬೇಗ ನಮ್ಮ ಆರ್ಗ್ಯುಮೆಂಟೇ ತೆಗೆದು ನಮ್ಮ ಮೇಲೇ ಗೂಬೇ ಕೂರಿಸಿ ತಮ್ಮನ್ನ ತಾವೇ ಸರಿ ಅಂತ ಸಾಧಿಸಿಕೊಳ್ಳೋ ನಿಮ್ಮಂತೋರಿಗೆಲ್ಲಾ ಒಂದ್ ಗತಿ ಕಾಣ್ಸದೇ ಇದ್ರೆ ನೋಡಿ ಮತ್ತೆ?’ ಎಂದು ಕತ್ತಿ ಮಸೆಯಿತು.

’ಓಹ್, ಏನು...ಅನಿವಾಸಿಗಳ ನಡೆನುಡಿಯ ಬಗ್ಗೆ ಪುಸ್ತಕಾ ಬರೀತೀರೇನು?’ ಎಂದು ಜೋರಾಗಿ ನಗುವ ಧ್ವನಿಯನ್ನು ಮಾಡಿ ಕೈಯಲ್ಲಿನ ಚಮಚೆಯಿಂದ ಪಕ್ಕೆಗೆ ತಿವಿದೆ, ’ಬರೀರಿ, ಬರೀರಿ - ನಿಮ್ಮಗಳ ಸಾಹಿತ್ಯವೇ ದೊಡ್ದು, ನೀವ್ ಬರ್ದಿರೋದೇ ರಾಮಾಯಣ!’

ಆ ಎರಡೂ ದ್ರಾಕ್ಷಿಗಳು ಒಕ್ಕೊರಲಿನಿಂದ, ’ದಯವಿಟ್ಟು ಈಗ ನಮ್ಮನ್ನ ಸುಮ್ನೇ ಬಿಟ್ ಬಿಡಿ ಸಾರ್, ಕಾರ್ಯಕ್ರಮ ಶುರುವಾಗೋ ಹೊತ್ತಾಯ್ತು’ ಎಂದು ಆರ್ತರಾಗಿ ಬೇಡಿಕೊಂಡವು.

ನಾನಿದ್ದೋನು, ’ಇನ್ನೊಬ್ರ ಬದುಕಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಅದೇನೋ ಕಾರ್ಯಕ್ರಮ ಅಂತ ಸಾಯ್ತಿರೋ ನಿಮಗೆ ಸಮಯದ ಪ್ರಜ್ಞೇ ಬೇರೆ ಕೇಡಿಗೆ’ ಎನ್ನುತ್ತಾ ಇವತ್ತು ಪಾಯಸಕ್ಕೆ ದ್ರಾಕ್ಷಿ ಹಾಕದಿದ್ರೇನೇ ಲೇಸು ಎಂದು ದ್ರಾಕ್ಷೀ ಡಬ್ಬದ ಮುಚ್ಚಳವನ್ನು ಹಾಕಿದರೂ, ದ್ರಾಕ್ಷಿ ಸ್ನೇಹಿತರು ಹೇಳಿದ ’ಅನಿವಾಸಿಗಳು ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ’ ಎನ್ನುವ ವಾಕ್ಯಗಳು ನನ್ನ ಮನದಲ್ಲಿ ಅನುರಣಿಸತೊಡಗಿದವು.

Sunday, December 23, 2007

ಅದು ಅವರವರ ಕರ್ಮ

’ಅದು ಅವರವರ ಕರ್ಮ’ ಅನ್ನೋ ಮಾತನ್ನ ಅವರೂ ಇವರೂ ಬಳಸಿದ್ದನ್ನ ಕೇಳಿ ಅಭ್ಯಾಸವಿದ್ದ ನನಗೆ ಇತ್ತೀಚೆಗೆ ರಿಪೀಟ್ ಆಗುವಷ್ಟರ ಮಟ್ಟಿಗೆ ಈ ವಾಕ್ಯವನ್ನು ನಾನೇ ಬಳಸುತ್ತಿದ್ದೇನೆ ಎಂಬುದು ನಂಬಲಾಗದ ಮಾತೇ ಸರಿ. ಯಾವುದೇ ಕೆಟ್ಟ ಸುದ್ದಿ ಇರಲಿ ಒಳ್ಳೆಯ ಸುದ್ದಿ ಇರಲಿ, ಅವೆಲ್ಲಕ್ಕೂ ’ಅದನ್ನು ಅವರು ಪಡೆದುಕೊಂಡು ಬಂದಿದ್ದಾರೆ’ ಎನ್ನುವ ಅರ್ಥದಲ್ಲಿ ಬಳಸುವಂತೆ ’ಕರ್ಮ’ವೆಂಬ ಪದವನ್ನು ನಾನು ಉಪಯೋಗಿಸಿದ್ದು ನೋಡಿ ನನಗೇ ನಗು ಹಾಗೂ ಆಶ್ಚರ್ಯವೂ ಆಯಿತು.

ಭಾರತ ದೇಶದಲ್ಲಿ ಬೆಳೆದು ಬಂದ ಹಿನ್ನೆಲೆಯವರಿಗೆ ತಮ್ಮ ಫಿಲಾಸಫಿಯಲ್ಲಿ ಸಿಕ್ಕುವ ಉಪಮೆ, ರೂಪಕ, ಉಪಮಾನ, ತತ್ವ, ಆದರ್ಶಗಳ ಪಟ್ಟಿಯನ್ನು ಮಾಡುತ್ತಲೇ ಹೋದರೆ ಎಂಥ ಪುಸ್ತಕವೂ ಸಾಕಾಗದು. ನಮ್ಮ ತತ್ವಗಳೇ ಬೇರೆ, ನಮ್ಮ ಆದರ್ಶಗಳೇ ಬೇರೆ. ಭಾರತವೆನ್ನುವುದು ಹೀಗೇ ಇದೆ ಎಂದು ಒಂದೆರಡು ಹೋಲಿಕೆ, ಉದಾಹರಣೆಗಳನ್ನು ಕೊಟ್ಟು ಮುಗಿಸಲಾರದ ಮಾತು. ನಮ್ಮ ದೇಶ ಒಂದು ಅಗಾಧವಾದ ಸಾಗರ ಅಥವ ಸಮುದ್ರ, ಅದರ ಅಲೆಗಳನ್ನು ನೋಡಿ ಸಾಗರವನ್ನು ಅಳೆಯಲಾಗುವುದೇ? ವಿಶೇಷವೆಂದರೆ, ಒಂದು ಬಹುರಾಷ್ಟ್ರೀಯ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಆಫ್ರಿಕಾದಿಂದ ಹಿಡಿದು ಚೀನಾದವರೆಗೆ, ಇಸ್ರೇಲ್‌ನಿಂದ ಹಿಡಿದು ಚಿಲಿಯವರೆಗಿನ ಜನರನ್ನು ಕಂಡು ಮಾತನಾಡಿಸಿ, ಅವರೊಡನೆ ವ್ಯವಹರಿಸಿ ಒಡನಾಡುವ ಸಂದರ್ಭಗಳು ಬಂದಾಗಲೆಲ್ಲ ನಮಗೆಲ್ಲ ನಮ್ಮ ಬೆನ್ನ ಮೇಲೆ ಮೂಟೆಗಳು ಇರುವ ಹಾಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಂಸ್ಕೃತಿಯ ಹಿನ್ನೆಲೆ ಇದೆ, ಜೊತೆಗೆ ಅದು ನಮಗಿಂತಲೂ ಬೇರೆಯದೇ ಆಗಿದೆ ಎನ್ನುವುದು ಗಮನಕ್ಕೆ ಬರುವ ಅಂಶ. ಉದಾಹರಣೆಗೆ, ಭಾರತದ ಹಿನ್ನೆಲೆಯಿಂದ ಬಂದವರಿಗೆ ಒಂದು ಕಡೆ ಶ್ರೀ ರಾಮಚಂದ್ರ ಮರ್ಯಾದಾಪುರುಷೋತ್ತಮನೆಂಬ ಆದರ್ಶವೂ ಮತ್ತೊಂದು ಕಡೆ ವಿಭಿನ್ನ ನೆಲೆಯ ಶ್ರೀಕೃಷ್ಣನೂ ಇಬ್ಬರೂ ಒಂದೇ ವ್ಯಕ್ತಿಯ ಆದರ್ಶಗಳಾಗಿ ಕಂಡುಬರುವುದು ಸಾಮಾನ್ಯವಾಗಿ ಕಾಣಬಹುದು. ಅದೇ ಅಂಶವನ್ನು ನೈಜೀರೀಯಾದವರಿಗೋ, ರಷ್ಯನ್ನರಿಗೋ ವಿವರಿಸಿ ಹೇಳುವಾಗ ’ಹೌದಲ್ಲಾ!’ ಎನ್ನುವ ಲೈಟ್‌ಬಲ್ಬ್ ಎಷ್ಟೋ ಜನರ ಮನಸ್ಸಿನ್ನಲ್ಲಿ ಹೊತ್ತಿಕೊಳ್ಳಬಹುದು. ’...ಇತರರ ಸಂಸ್ಕೃತಿಯನ್ನು ಪ್ರೀತಿಸು’ ಎಂದು ಎಷ್ಟೋ ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಿದ ಗಾಂಧಿ ಮುಂಬರುವ ಗ್ಲೋಬಲೈಜೇಷನ್ನಿನ್ನ ಬಗ್ಗೆ ಆಲೋಚಿಸಿದ್ದರೇ ಅಥವಾ ನಮ್ಮೊಳಗೇ ಇರುವ ಅಪಾರ ಸಂಸ್ಕೃತಿಗಳ ಬಗ್ಗೆ ಬೆಳಕು ಚೆಲ್ಲಿದ್ದರೇ?

ನಿಮ್ಮ ಕುಟುಂಬದಲ್ಲಿ ಯಾರಾದರೂ ಪೊಲೀಸ್ ಇಲಾಖೆಯಲ್ಲೋ, ವೈದ್ಯಕೀಯ ವೃತ್ತಿಯಲ್ಲೋ ಕೆಲಸ ಮಾಡುತ್ತಿದ್ದರೆ ದಿನಕ್ಕೊಂದು ಬಗೆಯ ಮನಕರಗುವ ವರದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾರೋ ಸತ್ತರು, ಯಾರೋ ಧಾರುಣವಾಗಿ ಅಪಘಾತದಲ್ಲಿ ಅನುಭವಿಸಿದರು, ಇಂಥವರು ತಮ್ಮ ಮಕ್ಕಳಿಂದ ನರಳುತ್ತಿದ್ದಾರೆ, ಅಂಥವರು ತಮ್ಮ ಪೋಷಕರಿಂದ ಕಂಗಾಲಾಗಿ ಹೋಗಿದ್ದಾರೆ ಇತ್ಯಾದಿ ಇತ್ಯಾದಿ - ಈ ಮನಕಲಕುವ ಸಂಗತಿಗಳು ನಿಲ್ಲುವುದೇ ಇಲ್ಲ. ಮೇಲಿಂದ ಮೇಲೆ ಒಂದಲ್ಲ ಒಂದು ಘಟನೆಯನ್ನು ನೋಡುತ್ತ ನೋಡುತ್ತಲೇ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವವರ ಮನಸ್ಸು ರೋಸಿ ಹೋಗಿ, ’ಅದು ಅವರವರ ಕರ್ಮ’ ಎಂಬ ಜನರಲೈಸ್ಡ್ ಹೇಳಿಕೆಗಳು ಹೊರಬರುವುದೂ ಸಾಮಾನ್ಯವಾಗಿ ಹೋಗಿರಬಹುದು. ನಮ್ಮಲ್ಲಿ ಹೇಳೋ ಹಾಗೆ ’ದಿನಾ ಸಾಯೋರಿಗೆ ಅಳೋರು ಯಾರು?’. ಮೊನ್ನೆ ಇಲ್ಲಿ ಯಾವುದೋ ಒಂದು ಆಸ್ಪತ್ರೆಯ ಬಗ್ಗೆ ಓದುತ್ತಿದ್ದೆ ದಿನಕ್ಕೆ ಹದಿನಾರರಿಂದ-ಇಪ್ಪತ್ತು ಮಕ್ಕಳಿಗೆ ಹೆರಿಗೆ ಮಾಡಿಸುವ ಫೆಲಿಲಿಟಿ ಅದಂತೆ, ಅಲ್ಲಿ ಕೆಲಸ ಮಾಡುವ ನರ್ಸ್ ಅಥವಾ ಆಯಾಗಳ ಬದುಕನ್ನು ಊಹಿಸಿಕೊಂಡು ನೋಡಿ - ಮುಂಜಾನೆಯಿಂದ ಸಂಜೆ ಡ್ಯೂಟಿ ಮುಗಿಯುವವರೆಗೆ ಮಕ್ಕಳನ್ನು ಹೆರುವವರಿಗೆ ಸಹಾಯ ಮಾಡುವುದೇ ಕಾಯಕ - ಅವರ ಮನಸ್ಸಿನ ಚರ್ಮ ಅದೆಷ್ಟು ದಪ್ಪವಿರಬೇಡ!

***

’ಏನಮ್ಮಾ, ಒಂದಿಷ್ಟು ಹಾಲೂ ಮೊಸರನ್ನು ಚೆನ್ನಾಗಿ ತಗೋ, ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ...’ ಅನ್ನೋದು ನಾನು ನನ್ನಮ್ಮನಿಗೆ ವಾರಕ್ಕೊಮ್ಮೆ ಹೇಳೋ ಮಾತು. ಎಷ್ಟು ಹೇಳಿದ್ರೂ ನಮ್ಮಮ್ಮ ದಿನಕ್ಕೆ ಅರ್ಧ ಲೀಟರ್ ಹಾಲಿಗಿಂತ ಹೆಚ್ಚು ತೆಗೆದುಕೊಳ್ಳೋದೇ ಇಲ್ಲ, ಅದೂ ಸ್ಥಳೀಯ ಗೌಳಿಗರು ಕೊಡೋ ನೀರು ಹಾಲು (ಸಹಜವಾಗಿ ಫ್ಯಾಟ್ ಫ್ರೀ). ಅಯ್ಯೋ ನಾವಿಲ್ಲಿ ಎಷ್ಟೊಂದು ಐಶಾರಾಮದಲ್ಲಿ ಇದ್ದೇವೆ, ಅವರು ಅಲ್ಲಿ ಬಡವರಾಗಿ ಬದುಕುತ್ತಾರಲ್ಲ ಅನ್ನೋ ಒಂದು ನೋವು ನನ್ನ ಮನದಲ್ಲಿ ಯಾವತ್ತೂ ಇದ್ದೇ ಇರುತ್ತೆ. ನನ್ನನ್ನು ಹತ್ತಿರದಿಂದ ಬಲ್ಲವರು ಆ ನೋವನ್ನು ’ನೀವೇನೂ ನಿಮ್ಮ ಕುಟುಂಬಕ್ಕೆ ಮಾಡಿಲ್ಲ’ ಅನ್ನೋದು ನಿಮ್ಮ ಗಿಲ್ಟಿ ಮನೋಭಾವನೆ ಎಂದು ಸುಲಭವಾಗಿ ಹೇಳಿ ಬಿಡುತ್ತಾರಾದರೂ ನಾನು ಅಷ್ಟೊಂದು ಸುಲಭವಾಗಿ ಆ ಪಂಥದ ವಾದವನ್ನು ಒಪ್ಪಿಕೊಂಡಿಲ್ಲ. ದುಡ್ಡು ಕಳಿಸಿದರೂ ಎಷ್ಟೊಂದು ಹೇಳಿದರೂ ನನ್ನ ಅಮ್ಮ ಹಳ್ಳಿಯಲ್ಲಿನ ಬದುಕಿಗೆ ಒಗ್ಗಿ ಹೋಗಿದ್ದಾಳೆ, ಆಕೆಗೆ ಅದನ್ನು ಬಿಟ್ಟು ಬೇರೇನೇ ಇದ್ದರೂ ಅದು ಅಸಹಜ ಹಾಗೂ ಅಸಾಮಾನ್ಯ ಎನಿಸುವಾಗ ನಾನು ಏನೇ ಮಾಡಿದರೂ ಅದು ಹೊರಗೇ ಉಳಿದು ಹೋಗುತ್ತದೆ, ಹೋಗುತ್ತಿದೆ. ಆಫೀಸಿನಲ್ಲಿ ಬರೀ ಲೋಟಸ್ ನೋಟ್ಸ್‌ನಿಂದ ಔಟ್‌ಲುಕ್‌ಗೆ ಇ-ಮೇಲ್ ಬದಲಾಯಿಸಿದರೆನ್ನುವ ಬದಲಾವಣೆಯನ್ನು ಸ್ವೀಕರಿಸುವಾಗಲೇ ನನಗೆ ರೋಸಿ ಹೋಗುವಷ್ಟರ ಮಟ್ಟಿಗೆ ಉರಿದುಕೂಳ್ಳುವಾಗ ಇನ್ನು ಹಳ್ಳಿಯಲ್ಲೇ ತನ್ನ ಬದುಕನ್ನು ಸವೆಸಿದವಳನ್ನು ತೆಗೆದು ಪಟ್ಟಣದ ಬಂಗಲೆಯಲ್ಲಿ ಬಿಟ್ಟೆನಾದರೆ ಇಳಿ ವಯಸ್ಸಿನ ಆಕೆಯ ಮನಸ್ಸಿನ ಮೇಲೆ ಏನೇನು ಪರಿಣಾಮಗಳಾಗಲಿಕ್ಕಿಲ್ಲ? ಆ ಒಂದು ಸೆನ್ಸಿಟಿವಿಟಿಯಿಂದಲೇ ಆಕೆ ತನಗೆ ಬೇಕಾದ ಹಾಗೆ ಬದುಕಲಿ ಎಂದು ಸುಮ್ಮನಿದ್ದೇನೆ. ಅಲ್ಲಿ ಹೋಗಿ ಆಕೆಯ ಜೊತೆಯಲ್ಲಿ ಜೀವಿಸುವುದು ನನಗಾಗದ ವಿಚಾರ, ಆಕೆ ಇಲ್ಲಿಗೆ ಬಂದೋ ಅಥವಾ ನಾನಿರುವಲ್ಲಿಗೆ ಬಂದು ಬದುಕುವುದು ಆಗದ ಮಾತು. ಅದೇ ಅವರವರ ಕರ್ಮ, ಅದು ಅವರವರು ಪಡೆದುಕೊಂಡು ಬಂದುದು.

ನಿಮ್ಮ ಸುತ್ತ ಮುತ್ತಲೂ ’ಪರಾಕ್’ ಹೇಳುವ ಏನೇನೇ ವ್ಯವಸ್ಥೆಗಳಿದ್ದರೂ ಕೊನೆಗೆ ನಿಮ್ಮನ್ನು ಸರಳತೆಯಲ್ಲದೇ ಮತ್ತೆನೇ ಆವರಿಸಿಕೊಂಡರೂ ನಿಮ್ಮ ಬದುಕು ಅಷ್ಟೇ ಸಂಕೀರ್ಣವಾಗಿ ಹೋಗುತ್ತದೆ. ಒಂದು ಕಾಲದಲ್ಲಿ ಹಳ್ಳಿಯ ಬದುಕು ಹಾಗಿದ್ದವು, ಬಹಳ ಸರಳವಾಗಿ ಒಮ್ಮುಖವಾಗಿ ಹೋಗುತ್ತಿದ್ದವು. ದಿನಕ್ಕೆ ಹತ್ತು ಬಾರಿ ಗಡಿಯಾರ ನೋಡದೆಯೂ, ಆಧುನಿಕ ಬದುಕು ಸೃಷ್ಟಿಸಿದ ಹಣಕಾಸು ಎಂಬ ಗೊಂದಲವಿರದೆಯೂ ಬದುಕು ನಡೆಯುತ್ತಲೇ ಇತ್ತು. ಹಾಗಂತ ಕಷ್ಟ-ನಷ್ಟಗಳು ಇರಲಿಲ್ಲವೆಂದೇನಲ್ಲ: ಮೇಷ್ಟ್ರಾಗಿ ಇಬ್ಬರೂ-ಮೂರು ಹೆಣ್ಣು ಮಕ್ಕಳ ಮದುವೆ ಮಾಡಿದವರಿಗೆ ಗೊತ್ತು, ಮಕ್ಕಳನ್ನು ಕಾಲೇಜಿನವರೆಗೆ ಜನರಲ್ ಮೆರಿಟ್‌ನಲ್ಲಿ ಓದಿಸಿದವರಿಗೆ ಗೊತ್ತು, ಜೀವನ ಪರ್ಯಂತ ಒಂದು ದಮಡಿ ಸಾಲವೆನ್ನದೇ ಇದ್ದಷ್ಟು ಚಾಚಿಕೊಂಡಿದ್ದವರಿಗೆ ಗೊತ್ತು ಕಷ್ಟಗಳು ಏನೆಂಬುದು. ನಮ್ಮ ಕಾಲದ ಜೀವನ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತಿವೆ ಎನ್ನುವುದಕ್ಕೆ ಮೊನ್ನೆ ರೆಡಿಯೋದಲ್ಲಿ ಕೇಳಿದ ಒಂದೆರಡು ಅವತರಣಿಕೆಗಳು ಸಾಕ್ಷಿಯಾಗಿದ್ದವು: ನಾವು ಹಿಂದಿಗಿಂತಲೂ ಅಧಿಕ ಮಾನಸಿಕ ಒತ್ತಡದಲ್ಲಿ ಬದುಕನ್ನು ಸವೆಸುತ್ತೇವೆ, ನಮ್ಮ ವಯೋಮಾನದಲ್ಲಿ ತಡವಾಗಿ ಮದುವೆಯಾಗಿ ಮಕ್ಕಳಾಗುತ್ತಿವೆ, ಹಿಂದಿಗಿಂತಲೂ ಹೆಚ್ಚು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ಅಗತ್ಯ ನಮಗಿದೆ. ಹಳೆಯದೆಲ್ಲ ಒಳ್ಳೆಯದು ಎನ್ನುವ ಮಾತಿನ ಹಿಂದೆ ಬರೀ ಇನ್‌ಫ್ಲೇಷನ್ನ್ ಸಂಬಂಧದ ಸುಖ ನೆನಪುಗಳನ್ನು ಮೆಲುಕು ಹಾಕುತ್ತಿದ್ದವನಿಗೆ ಬರೀ ಹಣದುಬ್ಬರವೊಂದೇ ಅಲ್ಲ, ಕೆಸರಿನಲ್ಲಿ ನಮ್ಮನಡರಿಕೊಂಡ ಬಳ್ಳಿಯ ಹಾಗಿನ ಅನೇಕ ಬೆಳವಣಿಗೆಗಳೂ ಕಾರಣ ಎನ್ನುವುದು ಹೊಳೆಯಿತು. ಇಪ್ಪತ್ತು ವರ್ಷದ ಹಿಂದೆ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತರುತ್ತಿದ್ದವನು ಈಗ ಒಂದು ಕೆಜಿ ಅಕ್ಕಿಗೆ ಮೂವತ್ತು ರುಪಾಯಿ ಕೊಡಬೇಕಾಗಿ ಬಂದುದು ದೊಡ್ಡ ವಿಷಯ, ಆದರೆ ಆಗಿನ ವ್ಯವಸ್ಥೆ ಅಲ್ಲಿ ಒಬ್ಬ ಮನೆಯ ಯಜಮಾನ/ನಿಯ ಮನದಲ್ಲಿ ಆಗುತ್ತಿದ್ದ ಮಾನಸಿಕ ಕ್ಷೋಭೆಗಳಿಗೂ ಈಗಿನ ಕುಟುಂಬದ ಆರೋಗ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ಅಭ್ಯಸಿಸಿದ ಇಂಥ ವಿಷಯಗಳನ್ನು ಈ ಬ್ಲಾಗ್ ಪರಿಧಿಯಲ್ಲಿ ಹೇಳುವುದಕ್ಕಾಗಲೀ ಕೇಳುವುದಕ್ಕಾಗಲೀ ಸರಿಯಾದ ವೇದಿಕೆ ಅಲ್ಲವೆಂಬುದರ ಅರಿವು ನನಗಿದೆ, ನನ್ನ ಸೋಲುತ್ತಿರುವ ಭಾಷೆಯಲ್ಲೇ ’ಅವರವರು ಪಡೆದುಕೊಂಡು ಬಂದದ್ದರ’ ಬಗ್ಗೆ, ನಮ್ಮ ಕರ್ಮದ ಬಗ್ಗೆ ಹೇಳುವ ಪ್ರಯತ್ನವನ್ನು ಮಾಡಿದ್ದೇನಷ್ಟೇ.

ಇದನ್ನು ಓದುವುದೂ ಬಿಡುವುದೂ ನಿಮಗೆ ಬಿಟ್ಟಿದ್ದು!

Tuesday, December 18, 2007

ನೀರಿನ ಮತ್ತೊಂದು ಹೆಸರು

ಎಲ್ಲರ ಮಹಾತಾಯಿ ನೀರಿನ ಹಲವಾರು ರೂಪಗಳು ನಮಗೆಲ್ಲಾ ಪರಿಚಿತವೇ, ವಿಶ್ವದ ತುಂಬೆಲ್ಲಾ ತುಂಬಿಕೊಂಡು ಅನೇಕಾನೇಕ ರೂಪಗಳಲ್ಲಿ ಜೀವಕುಲದ ಬೆಳವಣಿಗೆಯ ಮಾಧ್ಯಮವಾಗಿರುವ ಅಪಾರ ಜಲರಾಶಿ ಹಾಗೂ ಅದರ ವಿಶ್ವಸ್ವರೂಪವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಘನ ಗಾಳಿ ಹಾಗೂ ದ್ರಾವಕ ರೂಪ (ಸ್ಥಿತಿ) ದಲ್ಲಿ ಮಾತ್ರ ಇರಬಹುದಾದ ಒಂದು ವಸ್ತು, ರುಚಿ ಇಲ್ಲದ್ದು, ಬಣ್ಣವಿಲ್ಲದ್ದು ಎಂದೇನೇ ಓದಿಕೊಂಡು ಬಂದು ನಮ್ಮ ಗಂಟು ಮೂಟೆಗಳ (Bags) ಸಮೇತ ಅಮೇರಿಕಕ್ಕೆ ಬಂದರೂ ಇಲ್ಲಿಗೆ ಬಂದ ಮೇಲೆ ಇವೇ ಇಷ್ಟು ಸ್ಥಿತಿಗಳಲ್ಲಿ ಇನ್ನೂ ಹಲವಾರು ರೀತಿಯ ನೀರಿನ ದರ್ಶನವಾಗಿದ್ದು ಮಹದಾಶ್ಚರ್ಯಗಳಲ್ಲೊಂದು.

ಭಾರತದಲ್ಲೂ ಹಿಮಾಲಯವಿದೆ, ಕಾಶ್ಮೀರವಿದೆ - ಆದರೆ ನಾವು ಕಂಡ ಹಿಮವೇನಿದ್ದರೂ ಚಿತ್ರ ಅಥವಾ ಟಿವಿ ಪರದೆಯ ನೋಟಕ್ಕೆ ಮಾತ್ರ ಸೀಮಿತವಾಗಿತ್ತು. ಇಲ್ಲಿಗೆ ಬಂದ ಮೇಲೇನೇ ಅದು "ಸ್ನೋ" ಎನ್ನುವ ಬೃಹತ್ ಆಕಾರವನ್ನು ತಳೆದು ವರ್ಷದ ಆರು ತಿಂಗಳ ಛಳಿಯ ವಾತಾವರಣದ ಅನುಭವಗಳ ಅವಿಭಾಜ್ಯ ಅಂಗವಾಗಿ ಹೋಯಿತು. ಸ್ನೋ, ಸ್ಲೀಟ್, ಫ್ರೀಜಿಂಗ್ ರೈನ್, ಬ್ಲ್ಯಾಕ್ ಐಸ್, ಪೌಡರಿ ಸ್ನೋ, ಸ್ಟಿಕ್ಕಿಂಗ್ ಸ್ನೋ, ಸ್ನೋ ಫ್ಲೇಕ್ಸ್, ಹೇಯಿಲ್ (Hail), ಗ್ರಾಪೆಲ್ (Graupel), ರೈಮ್ (Rime), ಸ್ಲಷ್ (Slush) ಇನ್ನೂ ಹಲವಾರು ರೀತಿ/ರೂಪಗಳಲ್ಲಿ ಕಂಗೊಳಿಸುವ ಈ ತಾಯಿಯ ವಿಶ್ವರೂಪವನ್ನು ವರ್ಣಿಸುವುದೇ ಅಸದಳ, ಅದು ನನ್ನ ಭಾಷೆಗೆ ಮೀರಿದ ಮಾತು.

***

ಮನೆಯ ಬದಿಯಲ್ಲಿನ ಕರಿಯ ಡ್ರೈವ್ ವೇ ಮುಖದ ಮೇಲೆ ನಿಸರ್ಗ ಅಗಾಧವಾದ ಸ್ನೋ ಪ್ಲೇಕ್ಸ್‌ಗಳನ್ನು ಒಂದರ ಹಿಂದೆ ಒಂದರಂತೆ ಸುರಿಸುತ್ತಲೇ ಇತ್ತು, ಈ ಮಹಾಲೀಲೆಯ ಮುಂದೆ ನಾನು ಹೋಮ್‌ಡಿಪೋದಲ್ಲಿ ಖರೀದಿಸಿ ಹರಡುತ್ತಿರುವ ಸಣ್ಣ ಸಣ್ಣ ಬಿಳಿಯ ಉಪ್ಪಿನ ಹರಳಿನ ಗುಂಡುಗಳು ಹೊಳೆಯಲ್ಲಿ ಹುಣಿಸೇಹಣ್ಣು ಕಲಿಸಿದ ಆಗಿ ಹೋಗಿಹೋಗಿತ್ತು. ಶಾಲೆಯಲ್ಲಿ ಓದಿದ ಹಾಗೆ ನೀರಿಗೆ ಉಪ್ಪು ಸೇರಿಸಿದಾಗ ಅದು ಕುದಿಯುವ ತಾಪಮಾನವನ್ನು ಹೆಚ್ಚಿಸುತ್ತದೆ, ಘನೀಭವಿಸುವ ತಾಪಮಾನವನ್ನು ಕುಗ್ಗಿಸುತ್ತದೆ ಎಂಬುದನ್ನು ಇಲ್ಲಿ ಅಕ್ಷರಷಃ ನಂಬಿಕೊಂಡು ನಿಧಾನವಾಗಿ ಉಪ್ಪಿನ ಹರಳುಗಳನ್ನು ಹರಡುತ್ತಲೇ ಹೋದೆ (elevation of boiling point, depression of freezing point), ಈ ನಿಯಮಗಳನ್ನು ನಾನು ನೆನಪಿನಲ್ಲಿಟ್ಟುಕೊಂಡಿದ್ದೆನೇನ್ನುವ ಒಂದು ಸರಳ ಅಭಿಮಾನವನ್ನೂ ಪ್ರಶಂಸಿಸದ ನಿರ್ದಯಿ ಮುಗಿಲು ನಮ್ಮ ಮನೆಯ ಮುಂದೆ ಸ್ನೋ ಸುರಿಸುತ್ತಲೇ ಹೋಯಿತು. ಇದೀಗ ಬಿದ್ದ ಸ್ನೋವನ್ನು ತೆಗೆಯುವಲ್ಲಿ ಕೆಲವೇ ಘಂಟೆಗಳ ವಿಳಂಬಕ್ಕೆ ಮನಸೋತ ನಾನು, ಕೊನೆಗೆ ಅದನ್ನು ತೆಗೆಯಲು ಒದ್ದಾಡೀ ಒದ್ದಾಡೀ ಅದನ್ನು ಹಾಗೆ ಬಿಟ್ಟು ಕರಿಯ ಡ್ರೈವ್ ವೇ ಮೇಲೆ ಬಿಳಿಯ ಕಾಂಕ್ರೀಟಿನ ಹಾಗೆ ಬಿದ್ದುಕೊಂಡು ಕಲ್ಲಿಗಿಂತಲೂ ಗಟ್ಟಿಯಾದ ಐಸ್ ಅನ್ನು ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡಿ ಅನುಭವಿಸುವ ಆಸಕ್ತಿಯಿಂದ ಚೂಪಾದ ಉಕ್ಕಿನ ಶೆವೆಲ್ ತೆಗೆದುಕೊಂಡು ಕೆದಕುತ್ತಲೇ ಹೋದರೆ ಜಪ್ಪಯ್ಯಾ-ಜುಪ್ಪಯ್ಯಾ ಎಂದರೂ ಒಂದಿಂಚೂ ಕದಲಲಿಲ್ಲ!

ಅದು ಅಲ್ಲಿಯೇ ಬಿದ್ದು ಸಾಯಲಿ ಎಂದುಕೊಂಡು ಎಷ್ಟು ಸಾಧ್ಯವೋ ಅಷ್ಟನ್ನು ಮನೆಯ ಮುಂದೆ ಹಾಗೂ ಬದಿಗೆ ಸ್ವಚ್ಛ ಮಾಡಿಕೊಂಡು ಅದರ ಮೇಲೆ ಕಾರನ್ನು ಓಡಿಸಿಕೊಂಡು ಇವತ್ತಿಗೂ ಇರುವ ನನ್ನನ್ನು ನನ್ನ ನೆರೆಹೊರೆಯವರು ಮಹಾ ಸೋಂಬೇರಿ ಎಂದು ಈಗಾಗಲೇ ಹಣೆಪಟ್ಟಿ ಕಟ್ಟಿಕೊಂಡಿರಬಹುದು, ಅವರು ಏನೆಂದುಕೊಳ್ಳುತ್ತಾರೆ ಎಂದು ನಾನಾದರೂ ಏಕೆ ಯೋಚಿಸಲಿ? ಹಾಗೆ ಯೋಚಿಸಿದ ಮಾತ್ರಕ್ಕೆ ಅವರೇನಾದರೂ ಬಂದು ಸ್ವಚ್ಛ ಮಾಡಿಕೊಡುತ್ತಾರೇನು? ಅಕ್ಕಪಕ್ಕದವರ ಮನೆಯ ಮುಂದಿನ ಲಾನ್ ಅನ್ನು ನೋಡಿದರೆ ಅಲ್ಲಿ ಈಗಷ್ಟೇ ಸಗಣಿ ಸಾರಿಸಿಟ್ಟ ಹಾಗೆ ನುಣುಪಾಗಿ ಐಸ್‌ನಿಂದ ಮಾಡಿದ ಜಗುಲಿ ಕಂಡುಬರುತ್ತಿತ್ತು. ಕೊನೇಪಕ್ಷ ಈ ಜಗುಲಿಯ ರೂಪದಲ್ಲಾದರೂ ಎಲ್ಲರ ಮನೆಯ ಮುಂದೆ ಎಷ್ಟೊಂದು ಸಾಮ್ಯತೆ ಇದೆಯಲ್ಲಾ ಎನ್ನುವ ಸಮಾಧಾನವೂ ಮನದಲ್ಲಿ ಮನೆ ಮಾಡಿಕೊಂಡಿತು.

ಕಾರನ್ನು ತೆಗೆದುಕೊಂಡು ಆಫೀಸಿಗೆ ಹೋಗುವ ಮಾರ್ಗದಲ್ಲಿ ಈಗಾಗಲೇ ಎಲೆಗಳನ್ನು ಕಳೆದುಕೊಂಡು ಬೋಳಾದ ಮರಗಳ ನಡುವೆ ಸೂರ್ಯನ ಕಿರಣಗಳು ಹೊರಗೆ ಬರಲೋ ಬೇಡವೋ ಎನ್ನುವ ಮುಜುಗರದಿಂದಲೋ ಎನ್ನುವಂತೆ ಸಾವಕಾಶವಾಗಿ ಹರಡುತ್ತಿದ್ದವು. ಹಸಿರಿನ ಹಿನ್ನೆಲೆಯಲ್ಲಿ ಕಂಗೊಳಿಸಬೇಕಾದ ಬಿಳಿಯ ಬೆಳಕು ಎತ್ತ ನೋಡಿದರತ್ತ ಬಿದ್ದ ಬಿಳಿಯ ಸ್ನೋ, ಐಸ್ ಮೇಲೆ ಬಿದ್ದು ಪ್ರತಿಫಲನವಾಗುತ್ತಲೇ ನಾನು ಇದ್ದಲ್ಲೇ ದ್ವಿಗುಣ, ತ್ರಿಗುಣನಾಗುತ್ತೇನೆ ಎಂದು ಒಮ್ಮೆ ಹೆಮ್ಮೆಯಿಂದ ಬೀಗುವಂತೆ ಕಂಡುಬಂದರೂ, ಕಾರಿನ ಡಯಲಿನಲ್ಲಿ ತೋರಿಸುತ್ತಿದ್ದ 23 ಡ್ರಿಗ್ರಿ ಫ್ಯಾರನ್‌ಹೈಟ್ ಉಷ್ಣತೆ - ನಿಮ್ಮ ಆಟವೇನೂ ನಡೆಯೋದಿಲ್ಲ - ಎಂದು ಸೂರ್ಯ ಕಿರಣಗಳ ಬಿಮ್ಮನ್ನು ಕುಸಿಯುವಂತೆ ಮಾಡಿತ್ತು. ಮರಗಳ ಮೇಲೆ ತಲೆಯೆತ್ತಿ ನೋಡುತ್ತೇನೆ, ಪ್ಲಾಟಿನಮ್‌ನಲ್ಲಿ ಮಾಡಿದ ಜುಮುಕಿ ತೊಟ್ಟ ಮದುವಣಗಿತ್ತಿಯಂತೆ ಮರಗಳ ತುದಿಗಳು ತಮ್ಮ ಮೇಲೆ ಹರಳುಕಟ್ಟಿದ ಐಸ್ ಕ್ರಿಸ್ಟಲ್ಲುಗಳನ್ನು ಹೊತ್ತುಕೊಂಡು ಬಿಸಿಲಿಗೆ ಕಂಗೊಳಿಸುತ್ತಿವೆ. ಇನ್ನೂ ಕೆಲವು ಬೃಹದಾದ ಮರದ ತುದಿ ಅದ್ಯಾವುದೋ ದೊಡ್ಡ ಹೊಟೇಲೋ ಕ್ಯಾಸಿನೋಗಳಲ್ಲಿರುವ (ಚಾ)ಶಾಂಡಲೀಯರ್‌ಗಳನ್ನು ನೆನಪಿಸುತ್ತಿದ್ದವು. ಹೊರಗಡೆ ಛಳಿ ಇದ್ದು ಈ ಮರಗಳು ಸುರುಟಿ ಹೋಗುವುದಂತೂ ನಿಜ, ಜೊತೆಗೆ ತಮ್ಮ ಮೇಲಿನ ಐಸ್‌ನ ಭಾರವನ್ನೂ ಹೊತ್ತುಕೊಂಡಿರಬೇಕಲ್ಲ ಎಂದು ಮೊದಲ ಬಾರಿಗೆ ಮರಗಳ ಬಗ್ಗೆ ಅನುಕಂಪ ಮೂಡಿತು, ಜೊತೆಗೆ ಅವರವರ ಕರ್ಮ ಅವರಿಗೆ ಎಂಬ ವೇದಾಂತದ ಅಲೋಚನೆಯೂ ಹೊರಗೆ ಬಂತು.

***

ಪುಷ್ಪಕ ವಿಮಾನ ಸಿನಿಮಾದಲ್ಲಿ ಖಳನೊಬ್ಬ ಐಸ್‌ನಲ್ಲಿ ಮಾಡಿದ ಚೂರಿಯಿಂದ ಇರಿದು ಕೊಲ್ಲಲು ಪ್ರಯತ್ನಿಸುವ ದೃಶ್ಯ ನೆನಪಿಗೆ ಬಂತು. ಆ ಸಿನಿಮಾವನ್ನು ಭಾರತದಲ್ಲಿ ನೋಡಿದವರಿಗೆ ಮಂಜು ಕಟ್ಟಿದ ನೀರು ಉಕ್ಕಿನಷ್ಟು ಗಟ್ಟಿ ಇರಬಲ್ಲದೇ ಎಂಬ ಸಂಶಯ ಮೂಡಿರಲೂಬಹುದು. ಆದರೆ ಅತಿ ಕಡಿಮೆ ತಾಪಮಾನದಲ್ಲಿ ಹರಳುಗಟ್ಟಿದ ಮಂಜೂ ಸಹ ಉಕ್ಕಿನಷ್ಟೇ ಕಠಿಣವಾದದ್ದು ಎಂದು ನೋಡಿ ಅನುಭವಿಸಿದವರಿಗೇ ಗೊತ್ತು. ವೆದರ್ ಚಾನೆಲ್ಲ್ ಅನ್ನು ತಿರುಗಿಸಿ ನೋಡಿದರೆ ಅಲ್ಲಿ ಒಮಾಹಾ, ನೆಬ್ರಾಸ್ಕಾದಲ್ಲಿ 1 ಡಿಗ್ರಿ ಫ್ಯಾರನ್‌ಹೈಟ್ ತಾಪಮಾನವನ್ನು ತೋರಿಸುತ್ತಿದ್ದರು, ಅದರ ಮುಂದೆ ನಮ್ಮೂರಿನ 26 ಡಿಗ್ರಿ ಫ್ಯಾರನ್‌ಹೈಟ್ ಭಿಕ್ಷುಕರ ಮುಂದೆ ಲಕ್ಷಾಧೀಶ್ವರನ ಹಾಗೆ ಕಾಣಿಸುತ್ತಿತ್ತು.

ಈ ನೀರು ಎನ್ನುವುದಾಗಲೀ, ಅದರ ಅಸಾಧಾರಣ ರೂಪಗಳಾಗಲೀ, ಅದರ ವಿಭಿನ್ನ ಸ್ಥಿತಿಗಳಾಗಲೀ ನನ್ನ ಮನಸ್ಸಿನಲ್ಲಿ ಯಾವತ್ತೂ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡೇ ಇರುತ್ತೆ. ನನ್ನ ಪ್ರಕಾರ ಹೊರಗಿನ ತಾಪಮಾನದ ಹಿನ್ನೆಲೆಯಲ್ಲಿ ನೀರು ಹರಳುಗಟ್ಟುವ ರೀತಿಯನ್ನು ಹಲವಾರು ವರ್ಷಗಳಿಂದ ಅನುಭವಿಸಿ ಬಲ್ಲವರು ಪ್ರಕೃತಿಯ ವಿಶೇಷವಾದ ವ್ಯವಸ್ಥೆಯೊಂದನ್ನು ಹತ್ತಿರದಿಂದ ಬಲ್ಲವರು, ನೀರನ್ನಾಗಲೀ ಅದರ ವಿಭಿನ್ನ ನೆಲೆಗಳನ್ನಾಗಲೀ ಜಯಿಸಿದವರಿಗೆ ಸೋಲೆನ್ನುವುದು ಖಂಡಿತ ಇಲ್ಲ!

ನಾವು ಓದಿದ ಓಡರ್‌ಲೆಸ್ ಕಲರ್‌ಲೆಸ್ ಟೇಸ್ಟ್‌ಲೆಸ್ ಎನ್ನುವ ಒಂದು ಮೂಲಭೂತ ಅಂಶ, ನನ್ನ ಕಣ್ಣ ಮುಂದೆಯೇ ಹಲವಾರು ವಿಸ್ತೃತ ಸ್ವರೂಪವನ್ನು ಧರಿಸಿದ್ದನ್ನು ನೋಡಿದ್ದೇನೆ. ಬಣ್ಣವಿಲ್ಲದ ನೀರು, ಘನೀಭವಿಸಿ ಬಿಳಿಯಾಗಿ ಎಲ್ಲ ಬಣ್ಣವನ್ನೂ ತನ್ನಲ್ಲಡಗಿಸಿಕೊಂಡಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೇನೆ. ಬಿಳಿಯ ಮೋಡಗಳು ಮಳೆಯನ್ನು ತಾರವು, ಕರಿಯ ಮೋಡಗಳು ಬಿಳಿಯ ಮೋಡಗಳಿಗಿಂತ ದೊಡ್ಡ ದೊಡ್ಡ ಕಣಗಳನ್ನು ಹೊಂದಿರುತ್ತವೆ, ಅವೇ ಮೋಡಗಳಿಗೂ ಬಣ್ಣವನ್ನು ಬದಲಾಯಿಸುತ್ತವೆ ಎಂದು ಓದಿಕೊಂಡು ವಿಜೃಂಭಿಸಿದ್ದೇನೆ. ನೀರಿಗೆ ಹಲವಾರು ರೂಪವಿದೆ, ಭೋಗೋಳದ ಪ್ರತಿಶತ ಎಂಭತ್ತು ಭಾಗವನ್ನು ನೀರು ಅಥವಾ ನೀರಿನ ರೂಪ ಆವರಿಸಿದೆ ಎಂದೆಲ್ಲಾ ಡಿಸ್ಕವರಿ ಚಾನೆಲ್ಲುಗಳಲ್ಲಿ ನೋಡಿದಾಗ ಹುಬ್ಬೇರಿಸಿದ್ದೇನೆ. ನಮ್ಮ ನಿಮ್ಮಲ್ಲೂ ನೀರಡಗಿದೆ, ಈ ನೀರು ನಿಜವಾಗಿಯೂ ಸರ್ವಾಂತರ್ಯಾಮಿ, ಎಲ್ಲರಿಗೂ ಜೀವಜಲವಾದ ನೀರೇ ದೇವರು! (ಬೇಸಿಗೆಯಲ್ಲಿ ಈ ಮಾತು ಬದಲಾಗಿ ಗಾಳಿ, ಮಣ್ಣು, ಅಗ್ನಿ ಮೊದಲಾದ ಪಂಚಭೂತಗಳಿಗೆ ಆದ್ಯತೆಕೊಟ್ಟರಾಯಿತು, ಈಗ ಛಳಿಗಾಲ, ಅದು ನೀರಿನ ಕಾಲ!)

Sunday, December 16, 2007

ಎಲ್ಲವೂ ಆನ್‌ಲೈನ್ ಮಯ...

ಎಲ್ಲವೂ ಆನ್‌ಲೈನ್ ಅನ್ನೋ ಕಾಲದಲ್ಲಿ ನಮ್ಮ ಭಾರತೀಯ ಬ್ಯಾಂಕಿಂಗ್ ಅಗತ್ಯಗಳಿಗೆ ಇವತ್ತಿಗೂ ಫೋನ್ ಮಾಡಿಯೋ ಅಥವಾ ಪತ್ರ ಬರೆದೋ ಮುಟ್ಟುವ ಅಗತ್ಯವಿರುವ ಹೊತ್ತಿಗೆ ಎಷ್ಟೋ ಭಾರತೀಯ ಸಂಸ್ಥೆಗಳೂ ಇತ್ತೀಚೆಗೆ ಕಂಪ್ಯೂಟರ್ ಲಾಗ್‌ಇನ್ ವ್ಯವಸ್ಥೆಯನ್ನು ಕೊಡುತ್ತಿವೆ ಎಂದು ನನಗೆ ತಿಳಿದದ್ದು ಇತ್ತೀಚೆಗೆ ಮಾತ್ರ. ವಿಶ್ವದ ಮಹಾಬ್ಯಾಂಕ್ ಸಿಟಿಬ್ಯಾಂಕ್‌ನಿಂದ ಹಿಡಿದು ನನ್ನ ಪೇವರೈಟ್ ಬ್ಯಾಂಕಾದ ಮೈಸೂರು ಬ್ಯಾಂಕಿನವರೆಗೆ ಈ ದಿನಗಳಲ್ಲಿ ಹೆಚ್ಚೂ ಕಡಿಮೆ ಎಲ್ಲ ಟ್ರಾನ್ಸಾಕ್ಷನುಗಳನ್ನು ಕಂಪ್ಯೂಟರ್ ನೆಟ್‌ವರ್ಕ್ ಮೂಲಕ ಎಲ್ಲಿದ್ದರೂ ಎಲ್ಲಿಂದಲಾದರೂ ಮಾಡಬಹುದು ಎನ್ನುವುದು ನಿಜವಾಗಲೂ ಥ್ರಿಲ್ಲಿಂಗ್ ಅನುಭವವಲ್ಲದೇ ಮತ್ತಿನ್ನೇನು?


ದೊಡ್ಡ ದೊಡ್ಡ ಬ್ಯಾಂಕ್‌ಗಳಲ್ಲಿ ಈ ವ್ಯವಸ್ಥೆ ಯಾವಾಗಿನಿಂದಲೋ ಇದೆ, ಆದರೇ ಕರ್ನಾಟಕದ ರಿಮೋಟ್ ಎನ್ನುವ ಹಳ್ಳಿ, ಹೋಬಳಿಗಳಲ್ಲಿ ಎಟಿಎಮ್ ಕಾರ್ಡ್ ವ್ಯವಸ್ಥೆ ಬಂದಿದ್ದು ಇತ್ತೀಚೆಗೆ ಮಾತ್ರ. ಒಂದು ಊರಿಗೆ ಎಟಿಎಮ್ ವ್ಯವಸ್ಥೆ ಬಂದು ಅಲ್ಲಿನ ಜನರ ಜೇಬು ಪಾಕೇಟುಗಳಲ್ಲಿ ವೀಸಾ/ಮಾಸ್ಟರ್‌ಕಾರ್ಡ್ ಲೋಗೋಗಳು ಸ್ಥಳೀಯ ಬಿಸಿಲಿಗೆ ಮಿಂಚತೊಡಗಿದ್ದರ ಬಗ್ಗೆ ಉದಾರೀಕರಣ, ವ್ಯವಹಾರ, ಜಾಗತೀಕರಣ, ಬಂಡವಾಳಶಾಹಿ ವ್ಯವಸ್ಥೆ, ಅಭಿವೃದ್ಧಿ, ಕಂಪ್ಯೂಟರ್ ನೆಟ್‌ವರ್ಕ್ ಮುಂತಾದ ಯಾವುದೇ ನೆಲೆಗಟ್ಟಿನಲ್ಲೂ ಸಾಕಷ್ಟು ಚಿಂತನೆ ನಡೆಸಬಹುದು. ಒಂದು ಕಾಲದಲ್ಲಿ ಬ್ಯಾಂಕಿಗೆ ಹಣ ಸಂದಾಯ ಮಾಡಿ ನಮ್ಮ ಹಣವನ್ನೇ ನಾವು ತೆಗೆಯುವಾಗಲೂ ಅದ್ಯಾವುದೋ ಅವ್ಯಕ್ತ ಮುಜುಗರಕ್ಕೆ ಒಳಪಡಬೇಕಾಗಿದ್ದ ನಮ್ಮಲ್ಲಿ ಇಂದಿನ ಅನುಕೂಲಗಳು ಅದೆಂತಹ ಟ್ರಾನ್ಸ್‌ಪರೆನ್ಸಿಯನ್ನು ಹುಟ್ಟುಹಾಕಿವೆಯೆಂದರೆ, ನಮ್ಮ ಹಣವನ್ನು ನಾವೇ ಎಲ್ಲಿಂದ ಬೇಕಾದರೂ ಹೇಗೆ ಬೇಕಾದರೂ ಬಳಸಬಹುದು ಎನ್ನುವುದು ಇವತ್ತಿಗೆ ಹಳ್ಳಿಗಳಲ್ಲೂ ನಿಜ.

ಕೇವಲ ಹತ್ತು ಹದಿನೈದು ವರ್ಷಗಳ ಹಿಂದೆ, ಉತ್ತರ ಭಾರತದ ಕೆಲವು ಕಡೆ, ದಕ್ಷಿಣ ಭಾರತದ ಉದ್ದಗಲಕ್ಕೂ ಬ್ಯಾಂಕಿನ ಪರೀಕ್ಷೆಗಳನ್ನು (BSRB) ತೆಗೆದುಕೊಂಡು ಬ್ಯಾಂಕಿನಲ್ಲಿ ಕ್ಲರ್ಕ್ ಕಮ್ ಕ್ಯಾಷಿಯರ್ ಅಥವಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಗೊಳ್ಳುವುದು ಮಹಾನ್ ವಿಷಯವಾಗಿತ್ತು. ನಮ್ಮ ದೇಶದ ಘನತೆಯಾದ ಲಕ್ಷಾಂತರ ಪದವಿಧರರಲ್ಲಿ ಕೇವಲ ಹತ್ತು ಅಥವಾ ಅದಕ್ಕಿಂತ ಕಡಿಮೆ ಪ್ರತಿಶತ ಜನರು ಪರೀಕ್ಷೆಗೆ ತಕ್ಕ ತಯಾರಿಯನ್ನು ನಡೆಸಿಕೊಂಡು ಅದೇ ಮೊಟ್ಟ ಮೊದಲ ಬಾರಿಗೆ ಎಂಬಂತೆ ರೀಸನಿಂಗ್, ಇಂಗ್ಲೀಷ್, ಮ್ಯಾಥ್‌ಮ್ಯಾಟಿಕ್ಸ್ ಮುಂತಾದವುಗಳಲ್ಲಿ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಸಕಾಲದಲ್ಲಿ ಎದುರಿಸಿ, ಮುಂದೆ ಸಂದರ್ಶನದ ಮಜಲನ್ನು ದಾಟಿ ಸಾಯುವವರೆಗೆ ಊಟ ಹಾಕುವ "ಬ್ಯಾಂಕ್" ಎನ್ನುವ ವ್ಯವಸ್ಥೆಯನ್ನು ಸೇರುವುದು ಬಹಳ ದೊಡ್ಡ ವಿಷಯವಾಗಿತ್ತು. ಹೀಗಿರುತ್ತಿದ್ದ ಈ ಬ್ಯಾಂಕ್ ಪರೀಕ್ಷೆಗಳು ಮೊಟ್ಟ ಮೊದಲ ಬಾರಿಗೆ ಯಾವಾಗ ಶುರುವಾದವೋ ಗೊತ್ತಿಲ್ಲ, ತೊಂಭತ್ತರ ದಶಕದಲ್ಲಂತೂ ಈ ಹುದ್ದೆಗಳಿಗೆ ಅತೀವ ಬೇಡಿಕೆ ಇತ್ತು ಎನ್ನುವ ಹಾಗೆ ಕೋಟ್ಯಾಂತರ ಜನರು ಪರೀಕ್ಷೆಯನ್ನು ಎದುರಿಸುತ್ತಿದ್ದರು, ಅದರಲ್ಲಿ ತೇರ್ಗಡೆಯಾಗಿ ಮುಂದೆ ಹೋದ ಎಷ್ಟೋ ಜನರ (ನನ್ನ ಸಹಪಾಠಿಗಳಲ್ಲಿ) ಮನೆಗಳಲ್ಲಿ ಇಂದಿಗೂ ಬ್ಯಾಂಕ್ ನೌಕರನಾಗಿರುವುದು ಬಹಳ ಹೆಮ್ಮೆಯ ವಿಷಯವೂ ಹೌದು. ಮಧ್ಯಮ ವರ್ಗವನ್ನು ಸಾಯುವವರೆಗೆ ನೆನಪಿನಲ್ಲಿಡುವಂತೆ ಮಾಡುವ, ಇನ್ನೊಬ್ಬರ ಲೆಕ್ಕಪತ್ರವನ್ನು ಬರೆದು ಜೋಪಾನ ಮಾಡಿಡುವ, ಪ್ರತಿ ಮೂರು ವರ್ಷಗಳಿಗೊಮ್ಮೆ ಊರು ಬಿಟ್ಟು ಊರು ಸೇರುವಂತೆ ಮಾಡುವ ಈ ಕಾಯಕವನ್ನು ನಾನು ದ್ವೇಷಿಸುತ್ತಿದ್ದೆ ಎಂದೇ ಹೇಳಬೇಕು. ’ನನ್ನ ಲೆಕ್ಕಗಳನ್ನು ನಾವೇ ಬರೆದಿಡೋಲ್ಲ, ಇನ್ನು ಮಂದಿಯ ಲೆಕ್ಕವನ್ನು ನಾನೇಕೆ ಬರೆದಿಡಲಿ?’ ಎನ್ನುವುದು ನನ್ನ ಚೀಪ್ ಜೋಕ್‌ಗಳಲ್ಲಿ ಒಂದು, ಅದನ್ನು ನಾನು ನನ್ನ ಬ್ಯಾಂಕ್ ಮಿತ್ರರೊಂದಿಗೆ ಹೇಳಿಕೊಂಡು ನಕ್ಕಿದ್ದಿದೆ.

ನಾನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗೆ ಯಾರೋ ಕೊಟ್ಟ ಚೆಕ್ ತೆಗೆದುಕೊಂಡು ನಮ್ಮೂರಿನ ಕರ್ನಾಟಕ ಬ್ಯಾಂಕ್ ಒಳ ಹೊಕ್ಕಾಗ ನನ್ನ ಮನದಲ್ಲಿ ತುಂಬಿಕೊಂಡ ಬೇಕಾದಷ್ಟು ಅವ್ಯಕ್ತ ಭಯಗಳು ಇವತ್ತಿಗೂ ಇಲ್ಲಿನ ಬ್ಯಾಂಕ್‌ಗಳನ್ನು ಹೊಕ್ಕಾಗ ಸತಾಯಿಸುತ್ತವೆಯೇನೋ ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ನಾನು ಚೆಕ್ ತೆಗೆದುಕೊಂಡು ಹೋಗಿ ಯಾರಲ್ಲಿ ಕೊಡುವುದು ಹೇಗೆ ಕೊಡುವುದು ಎಂದು ಮನಸ್ಸಿನಲ್ಲಿ ಸಂಘರ್ಷವನ್ನು ನಡೆಸಿಕೊಂಡು ಬ್ಯಾಂಕ್ ಒಳಹೊಕ್ಕರೆ ನಾನು ಅಲ್ಲಿನ ಕಟಕಟೆಯಷ್ಟು ಎತ್ತರವೂ ಇದ್ದಿರಲಿಲ್ಲ. ಅಲ್ಲೆಲ್ಲಾ ನನ್ನ ತಲೆ ಮಟ್ಟಕ್ಕಿಂತಲೂ ಎತ್ತರವಾದ ವಿಶಾಲವಾದ ಮೇಜುಗಳು (ಸಾಮಾನ್ಯವಾಗಿ L ಆಕಾರದಲ್ಲಿರುವವಗಳು), ಅದರ ಕೊನೆಗೆ ಒಂದು ಸಣ್ಣ ಡಿಪ್, ಅದರ ಪಕ್ಕದಲ್ಲಿ ಕ್ಯಾಷಿಯರ್ ಕುಳಿತುಕೊಳ್ಳುವ ಕಬ್ಬಿಣದ ಕಟಕಟೆ. ಹೋಗಿ ಕ್ಯಾಷಿಯರ್ ಪಕ್ಕದವರಿಗೆ ಚೆಕ್ ಕೊಟ್ಟರೆ ಕಟಕಟೆಯಲ್ಲಿರುವವರಿಗೆ ಕೊಡಿ ಎಂದರು, ಅಲ್ಲಿ ಕೊಟ್ಟರೆ ಇಲ್ಲಿ ಸಹಿ ಮಾಡಿ ಎನ್ನುವ ಆದೇಶ, ಅದರ ಬೆನ್ನಿಗೆ ಸಣ್ಣ ಕಂಡಿಯಲ್ಲಿ ತೂರಿಕೊಂಡು ಬರುವ ನಡುವೆ ತೂತವಿದ್ದ ಒಂದು ಕಾಯಿನ್ ಮಾದರಿಯ ’ಟೋಕನ್’. ಅದರ ಮೇಲೆ ಮುದ್ರಿತವಾದ ನಂಬರ್ ಅನ್ನು ಕರೆಯುವವರೆಗೆ ಕುಳಿತು ಕಾಯಿ ಎನ್ನುವ ’ನಮಗೇನ್ ಆಗಬೇಕು’ ಎನ್ನುವ ಧೋರಣೆ! ಅಂತೂ ಇಂತೂ ನಮಗೆ ಸಿಗಬೇಕಾದ ದುಡ್ಡು ಕೈಗೆ ಬಂದಾಗ ಅದೇನೋ ಅಗಾಧವಾದ ಖುಷಿ! ಚಡ್ಡಿ ಜೇಬಿನಲ್ಲಿ ಕುಳಿತ ಕ್ಯಾಷಿಯರ್ ಕೊಟ್ಟ ಗರಿಗರಿ ನೋಟನ್ನು ದಾರಿ ಉದ್ದಕ್ಕೂ ಭದ್ರವಾಗಿ ಮುಟ್ಟಿ ನೋಡಿಕೊಳ್ಳುವುದರ ಜೊತೆಗೆ ’ಅಲ್ಲಾ, ನಮ್ಮ ದುಡ್ಡನ್ನು ಬ್ಯಾಂಕ್‌ನಲ್ಲಿ ನಾವೇಕೆ ಇಡಬೇಕು, ಇಷ್ಟೆಲ್ಲಾ ಪರಿಪಾಟಲೆ ಯಾಕೆ?’ ಎನ್ನುವ ಪ್ರಶ್ನೆಗಳು ಬೇರೆ. ಮನೆಯಲ್ಲಿ ಹೋಗಿ ಕೇಳಿದರೆ ಸಂಬಳ ನೇರವಾಗಿ ಬ್ಯಾಂಕ್‌ಗೇ ಹೋಗೋದರಿಂದ ನಾವು ಅಲ್ಲಿಗೆ ಹೋಗಿಯೇ ಹಣವನ್ನು ತೆಗೆದುಕೊಳ್ಳಬೇಕು, ಇಲ್ಲವಾದರೆ ಇಲ್ಲ ಎನ್ನುವ ಧೋರಣೆಯ ’ನಮ್ಮೂರಿನ ಆರ್ಥಿಕ ವ್ಯವಸ್ಥೆಯ ಮೊದಲ ಪಾಠ.

ಸಂಬಳ ನೇರವಾಗಿ ಹೋಗಿ ಬ್ಯಾಂಕ್ ಸೇರುತ್ತದೆ ಎನ್ನುವುದರಲ್ಲಿ ಇವತ್ತಿಗೂ ಬಹಳಷ್ಟೇನೂ ಬದಲಾಗಿಲ್ಲ - ಅಲ್ಲವೇ? ಅಂದಿನ ದಿನಗಳಲ್ಲಿ ನಾವೆಲ್ಲ ’ಸಂಬಳ’ವನ್ನು ಪಡೆಯುವುದನ್ನು ದೊಡ್ಡದಾಗಿ ಪರಿಗಣಿಸಿ ಇಂದು (ಇಂದಿಗೂ) ಸಂಬಳದಾರರಾಗಿಯೇ ಉಳಿದು ಬಿಟ್ಟೆವು. ಮೊದಲತೇದಿ ಚಿತ್ರದ ’ಒಂದರಿಂದ ಇಪ್ಪತ್ತರವರೆಗೆ ಉಂಡಾಟ’ ಹಾಡನ್ನು ಕೇಳಿದ ನಮ್ಮೂರಿನ ವೈಶ್ಯ ಯುವಕರು ತಮ್ಮ ಕುಟುಂಬದ ವ್ಯವಹಾರವನ್ನು ಅನುಸರಿಸಿಕೊಂಡು ಮುಂದೆ ಹೋದರೆ ಸಂಬಳದಾರರ ಮಕ್ಕಳಾದ ನಾವು ಸಂಬಳಕ್ಕೆ ದುಡಿಯುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡೆವು.

***

ಎಲೆಕ್ಟ್ರಾನಿಕ್ ಯುಗದ ವಿಶೇಷತೆ ಏನೆಂದರೆ ಹಣಕಾಸಿನ ವ್ಯವಹಾರವೆಲ್ಲ ದಾಖಲೆಗಳಲ್ಲೇ ನಡೆದು ಹೋಗುವುದು. ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಒಂದು ಪ್ಲಾಸ್ಟಿಕ್ ಕಾರ್ಡ್ ಉಜ್ಜುವುದರ ಮೂಲಕ ಮಾಡುವಂತೆ ಆಗಿರುವುದು ಒಂದು ವರದಾನವೇ ಸರಿ, ಮೊದಲೆಲ್ಲ ಆನವಟ್ಟಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೋಗುವವರು ತಮ್ಮ ಹಣವನ್ನು ದಾರಿಯಲ್ಲಿ ಕಳೆದುಕೊಂಡು ಪಜೀತಿಗೆ ಸಿಕ್ಕ ಉದಾಹರಣೆಗಳು ಈಗ ಸಿಗಲಾರವು. ಹೀಗೇ ನಿಧಾನಕ್ಕೆ ಈ ವ್ಯವಸ್ಥೆ ಬೆಳೆದೂ ಬೆಳೆದೂ ಜನರು ಹಾರ್ಡ್ ಕರೆನ್ಸಿಯನ್ನು ತಮ್ಮ ಕಬ್ಬಿಣದ ಬೀರುಗಳಲ್ಲಿ ಕೂಡಿಹಾಕುವ ಕಾಲ ಕಡಿಮೆಯಾಗಿ ಅದನ್ನು ಅಲ್ಲಲ್ಲಿ ತೊಡಗಿಸುವ ಕಾಲ ಬರಲಿ, ಜೊತೆಗೆ ಕಪ್ಪುಹಣದ ವ್ಯವಸ್ಥೆ ಕುಸಿಯಲಿ ಎಂದು ವಾದವನ್ನು ಮಾಡುತ್ತಾ, ಅದರ ಬೆನ್ನಿಗೇ ಲಂಚವೆನ್ನುವ ಶಾಪ ನಮ್ಮ ವ್ಯವಸ್ಥೆಯಿಂದ ದೂರಾಗುವಂತಿದ್ದರೆ ಎನ್ನುವುದು ನಿಜವಾಗಿಯೂ ಆಶಾದಾಯಕವಾದ ಆಲೋಚನೆ ಅಲ್ಲದೇ ಮತ್ತಿನ್ನೇನು?

ಆನ್‌ಲೈನ್ ವ್ಯವಸ್ಥೆಯ ಹಿನ್ನೆಲೆಯಲ್ಲಿನ ಒಂದೇ ಒಂದು ಬೇಸರ ಸಂಗತಿಯೆಂದರೆ - ಈ ಕಳೆದ ಹತ್ತು ವರ್ಷಗಳಿಂದ ನನಗೆ ಹಲವಾರು ರೀತಿಯ ಸಹಾಯ ಮಾಡಿದ ನಮ್ಮೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಿಬ್ಬಂದಿ ವರ್ಗದವರ ಜೊತೆ ಸಂಪರ್ಕ ಕಡಿದು ಹೋಗಿದ್ದು. ನಾನು ಒಂದು ಫೋನ್ ಕಾಲ್ ಮಾಡಿ ಹೇಳಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ನಾನು ಹೇಳಿದವರಿಗೆ ತಲುಪಿಸುತ್ತಿದ್ದ ಅವರ ಸರ್ವೀಸ್ ಅನ್ನು ಅಮೇರಿಕದ ಬ್ಯಾಂಕ್‌ಗಳೂ ಕೊಡಲಾರವು ಎಂದು ನಾನು ಬೇಕಾದಷ್ಟು ಹೊಗಳಿದ್ದೇನೆ. ಪ್ರತಿವರ್ಷದ ಹಬ್ಬಕ್ಕೋ ಅಥವಾ ಮತ್ತಿತರ ಕಾರಣಗಳಿಗೋ - ಅಲ್ಲಿಂದ ಗ್ರೀಟಿಂಗ್ ಕಾರ್ಡ್‌ಗಳನ್ನು ಕಳಿಸಿದ, ಸ್ಟೇಟ್‌ಮೆಂಟ್‍ಗಳ ಜೊತೆಗೆ ಕ್ಯಾಲೆಂಡರನ್ನು ಕಳಿಸಿದ ಎಷ್ಟೋ ಘಟನೆಗಳು ನಮ್ಮೂರಿನ ಬ್ಯಾಂಕ್ ಅನ್ನು ಎತ್ತಿ ಹಿಡಿಯುತ್ತವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾದ ಮ್ಯಾನೇಜರುಗಳು ನಾನು ಅವರ ಮುಖ ನೋಡಿ ಮಾತನಾಡಿಸದಿದ್ದರೂ ನಮ್ಮೂರಿನ ಕೆಲವೇ ಕೆಲವು ಎನ್‌ಆರ್‌ಐ ಅಕೌಂಟು ಹೋಲ್ಡರುಗಳಲ್ಲಿ ಒಬ್ಬನು ಎಂಬ ಅಭಿಮಾನವನ್ನು ತಲತಲಾಂತರದಿಂದ ಇಟ್ಟುಕೊಳ್ಳುತ್ತಲೇ ಬಂದಿದ್ದಾರೆ, ನಾನು ಹೋದಾಗಲೆಲ್ಲ ಆತ್ಮೀಯವಾಗಿ ಮಾಡಿಸಿ ತಮ್ಮ ಕೈಲಾದ ಸಹಾಯವನ್ನೂ ಮಾಡಿದ್ದಾರೆ.

ಈ ಆನ್‌ಲೈನ್ ಪ್ರಪಂಚದಲ್ಲಿ ಅಂತಹ ಸೇವೆಗಳನ್ನು ಎಲ್ಲಿಂದ ಹುಡುಕಿ ತರಲಿ?