Wednesday, May 30, 2007

ಹೊರ(ಗಿನವನ)ನೋಟ

ಅಮೇರಿಕದ ಮಾದ್ಯಮಗಳಲ್ಲಿ ಹೊರ ದೇಶಗಳಲ್ಲಿನ ಜನರ ವಾರ್ಷಿಕ ಆದಾಯ ಇಷ್ಟಿದೆ ಎಂದು ಡಾಲರುಗಳಲ್ಲಿ ಹೇಳುವುದು ಸಾಮಾನ್ಯ. ಉದಾಹರಣೆಗೆ ಒಬ್ಬ ಸಾಮಾನ್ಯ ಭಾರತೀಯನೊಬ್ಬ ದಿನಕ್ಕೆ ನಲವತ್ತರಿಂದ ಐವತ್ತು ರೂಪಾಯಿಗಳನ್ನು ದುಡಿದರೆ ಆತನ ಆ ದಿನದ ಆದಾಯ ಒಂದು ಡಾಲರ್‌ಗೆ ಸಮ, ವರ್ಷಕ್ಕೆ ಅದು ಸುಮಾರು ಮುನ್ನೂರೈವತ್ತು ಡಾಲರ್ ಆಗಬಲ್ಲದು. ಇದೇ ರೀತಿ ಹೊರ ದೇಶಗಳಲ್ಲಿಯೂ ಸಹ ಇಲ್ಲಿನ ಬೆಲೆ, ಯೂನಿಟ್‌ಗಳು ಅಲ್ಲಿ ಮಹಾನ್ ಆಗಿ ಕಾಣಬಹುದು. ಉದಾಹರಣೆಗೆ ಪ್ರಿನ್ಸೆಸ್ ಡೈಯಾನ ಕಾರ್ ಆಕ್ಸಿಡೆಂಟ್‌ಗೆ ಸಿಕ್ಕು ಕ್ರಿಟಿಕಲ್ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿಕೊಂಡಿದ್ದಾಗ, ಆಕೆಯಿದ್ದ ಕಾರು ಘಂಟೆಗೆ ನೂರಾಹದಿನೈದು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎಂದು ವರದಿಯಾದಾಗ ಭಾರತದಂತಹ ದೇಶದಲ್ಲಿ ಅದು ಮಹಾನ್ ವೇಗವಾಗಿ ಕಾಣಿಸಿದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಸಹಜವಾದ ಸ್ಫೀಡ್‌ ಲಿಮಿಟ್ ಆಗಿರಬಹುದು. ಸಾಮಾನ್ಯವಾಗಿ ವಿದೇಶಗಳ ವರದಿಗಳನ್ನು ಓದಿ/ಕೇಳಿದಾಗ ಈ ರೀತಿಯ ತಿಳುವಳಿಕೆ ಇಲ್ಲದಿದ್ದರೆ ನಮಗೆ ದೊರಕಬಹುದಾದ ವಿಷಯ ವಸ್ತುಗಳನ್ನು ನಾವು ಹೇಗೆ ಬಳಸುತ್ತೇವೆ ಎನ್ನುವಲ್ಲಿ ಬಹಳಷ್ಟು ವ್ಯತ್ಯಾಸಗಳಾಗುತ್ತವೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟ - ಇಲ್ಲಿ ದೊರೆಯಬಹುದಾದ ಒಂದು ಲೀಟರ್ ಪೆಟ್ರೋಲ್ ಬೆಲೆ, ಒಂದು ಲೀಟರ್ ಬಾಟಲ್ ನೀರಿಗಿಂತಲೂ ಕಡಿಮೆ ಇರಬಹುದು. ಆದರೆ ಕೆಲವು ವಸ್ತುಗಳು ಉಳಿದ ದೇಶಗಳಿಗಿಂತ ಹೆಚ್ಚು ತುಟ್ಟಿಯಿರಬಹುದು. ಉದಾಹರಣೆಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಪ್ರಾಸೆಸ್ಸುಗಳು (ಮ್ಯಾನುಫ್ಯಾಕ್ಚರಿಂಗ್, ಮಾರ್ಕೆಟಿಂಗ್, ಲೀಗಲ್, ಡಿಸ್ಟ್ರಿಬ್ಯೂಷನ್, ಇತ್ಯಾದಿ) ಜ್ವರ, ಕೆಮ್ಮು ಮುಂತಾದ ಸಾಧಾರಣ ಅನಾರೋಗ್ಯಗಳಿಗೆ ಉಪಯೋಗಿಸಲ್ಪಡುವ ಮದ್ದು ಬಹಳ ದುಬಾರಿ ಎನಿಸಬಹುದು. ಭಾರತದಲ್ಲಿ ಬಹಳಷ್ಟು ಜನರು ಬಳಸಬಹುದಾದ ಸಂತಾನ ನಿರೋಧಕ ಮಾತ್ರೆಗಳು ರೂಪಾಯಿಗೆ ಒಂದು ಪ್ಯಾಕೆಟ್ ಸಿಗಬಹುದು, ಆದರೆ ಅಮೇರಿಕದಂತಹ ದೇಶಗಳಲ್ಲಿ ಇಪ್ಪತ್ತು ಮಾತ್ರೆಗಳಿಗೆ ಹದಿನೈದು ಡಾಲರ್‌ಗಳಾಗಬಹುದು. ಇಂತಹ ಮಾತ್ರೆಗಳನ್ನು ತಯಾರಿಸಿ, ಹಂಚುವ ಪ್ರಕ್ರಿಯೆಗಲ್ಲಿ ಸರ್ಕಾರದ ಕೈವಾಡ ಇದೆಯೇ ಇಲ್ಲವೇ ಎನ್ನುವುದೂ ಬೆಲೆಗಳಲ್ಲಿ ವ್ಯತ್ಯಾಸವನ್ನುಂಟುಮಾಡಬಲ್ಲದು.

ನಿನ್ನೆ ಎರಡೂವರೆ ಎಮ್‌ಎಲ್ ಬಾಟಲಿ ಐ ಡ್ರಾಪ್ಸ್‌ಗೆ ಇನ್ಷೂರೆನ್ಸ್ ಇದ್ದೂ ನಲವತ್ತೆರಡು ಡಾಲರ್ ಕೊಡಬೇಕಾಗಿ ಬಂದಾಗಲೇ ನಾನು ಬೆಲೆಗಳ ಬಗ್ಗೆ ಯೋಚನೆ ಮಾಡತೊಡಗಿದ್ದು! ಇನ್ಷೂರೆನ್ಸ್ ಇಲ್ಲದವರು ಒಂದೊಂದ್ ಮಿಲಿಲೀಟರ್‌ಗೆ ಇಪ್ಪತ್ತೈದು ಡಾಲರ್ ಕೊಡಬೇಕಾಗಿ ಬರಬಹುದಾದ ಒಂದು (after all) ಸೀಸನಲ್ ಅಲರ್ಜಿ ಡ್ರಾಪ್ಸ್‌ಗೆ ಅಷ್ಟೊಂದು ಹಣವೇ? ಈ ವ್ಯವಸ್ಥೆಯಲ್ಲಿ ಏನೋ ಕೊರತೆ ಇದೆ, ಅಥವಾ ನನಗೆ ಗೊತ್ತಿರದ ಯಾವುದೋ ಸೂತ್ರವನ್ನಾಧರಿಸಿ ಅತಿಯಾಗಿ ಬೆಳೆದುಹೋಗಿದೆ. ನನ್ನ ಅಕ್ಕಪಕ್ಕದವರಲ್ಲಿ ವಿಚಾರಿಸಲಾಗಿ 'ಇಷ್ಟೊಂದು ದುಬಾರಿಯೇ!' ಎಂದು ಅವರು ಮೂಗಿನ ಮೇಲೆ ಬೆರಳೇರಿಸದಿರುವುದನ್ನು ನೋಡಿ ಇನ್ನೂ ಆಶ್ಚರ್ಯವಾಗತೊಡಗಿತು.

ಒಂದೇ ಒಂದು ಡಾಲರ್, ಅದರ ಬೆಲೆ, ಮೌಲ್ಯ ಅದರ ಹಿಂದಿನ ಮೆಹನತ್ತು - ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಅಮೇರಿಕದಲ್ಲಿ ಘಂಟೆಗೆ ಕೇವಲ ಎರಡು ಡಾಲರ್ ದುಡಿಯುವವರಿಂದ ಹಿಡಿದು ಸಾವಿರಾರು ಡಾಲರುಗಳನ್ನು ಕಮಾಯಿಸುವವರಿದ್ದಾರೆ, ಅವರೆಲ್ಲರಿಗೂ ಅವವರವರದ್ದೇ ಆದ ಫಿಲಾಸಫಿ ಇರುತ್ತದೆ, ಆಯ-ವ್ಯಯಗಳಿರುತ್ತವೆ. ಇಂಥವರನ್ನೆಲ್ಲ ಕಟ್ಟಿ ಹಾಕಲು ಹಗ್ಗದ ಹಾಗೆ ಒಂದೇ ಪ್ರಾಸೆಸ್ಸು ಇರಲು ಸಾಧ್ಯವಿಲ್ಲ, ಬೇರೆ ಬೇರೆ ರೀತಿನೀತಿಗಳು ಇದ್ದೇ ಇರುತ್ತವೆ ಎನ್ನುವುದು ಬಹಳ ದೊಡ್ಡ ಮಾತು. ನಾವೇನಾದರೂ ಆರ್ಥಿಕ ಸರಪಳಿಯ ಕೆಳಗಡೆ ಇದ್ದುದೇ ಹೌದಾದರೆ ಸಮಾಜಶಾಸ್ತ್ರದ ಬುನಾದಿಯಾದ 'ಎಲ್ಲರೂ ಒಂದೇ' ಎನ್ನುವ ತತ್ವ ಬಹಳಷ್ಟು ಕಡೆ ಹೊಂದದು ಎನ್ನುವಷ್ಟರ ಮಟ್ಟಿಗೆ ಕೆಟ್ಟದಾಗಿ ಗೋಚರಿಸತೊಡಗುತ್ತದೆ. ಅದೇ ಆರ್ಥಿಕವಾಗಿ ಅನುಕೂಲವಾಗಿದ್ದವರಿಗೆ ಅವೇ ತತ್ವಗಳು ಮತ್ತಿನ್ನೊಂದು ಕೋನದಲ್ಲಿ ಕಾಣತೊಡಗುತ್ತವೆ. ಒಂದು ಅಗತ್ಯವಸ್ತುವಿನ ಬೆಲೆ - ಅದು ಹಾಲಾಗಿದ್ದರಬಹುದು, ನೀರಾಗಿದ್ದರಬಹುದು, ಅಥವಾ ಪೆಟ್ರೋಲ್ ಆಗಿರಬಹುದು - ಸಮಾಜದ ವಿವಿಧಸ್ತರಗಳಲ್ಲಿ ಬಳಸುವಾಗ ಅದರಲ್ಯಾವ ಬದಲಾವಣೆಯೂ ಕಾಣದು - ಹಾಗಿದ್ದಾಗ ಘಂಟೆಗೆ ಎರಡು ಡಾಲರ್ ದುಡಿಯುವರಿಗೆ ಅನ್ಯಾಯವಾದಂತಾಗುವುದಿಲ್ಲವೇ? ಸಾಮಾನ್ಯ ಸಂಪನ್ಮೂಲಗಳನ್ನು ಆಧರಿಸುವುದಕ್ಕೇ ದಿನನಿತ್ಯದ ದುಡಿಮೆ ಸಾಕಾಗುವ ಸ್ಥಿತಿಯಲ್ಲಿ ದಿನತಳ್ಳುವುದೇ ಬದುಕಾಗಿ ಹೋಗುತ್ತದೆ.

ಅಗತ್ಯವಸ್ತು - ಎನ್ನುವುದು ಇಲ್ಲಿ ಮುಖ್ಯವಾದ ಪದ; ಅದಕ್ಕೆ ಡಾಲರ್/ರೂಪಾಯಿಯ ಇತಿ-ಮಿತಿ ಇರೋದಿಲ್ಲ...ಅದು ಬೇಕು, ಅಷ್ಟೇ. ಅರ್ಥಶಾಸ್ತ್ರದ ತತ್ವಗಳೆಲ್ಲ ಇಂತಹ ಅಗತ್ಯವಸ್ತುಗಳಿಗೇನೆ ಹೆಚ್ಚು ಅನ್ವಯಿಸೋದು. ಪೆಟ್ರೋಲ್ ಬೆಲೆ ಹೆಚ್ಚು ಮಾಡಿ ನೋಡಿ, ಉಳಿದೆಲ್ಲವುಗಳ ಬೆಲೆ ಅದರ ಹಿಂಬಾಲಕರಾಗುತ್ತವೆ. ಐಶಾರಾಮಿ ವಿಷಯ-ವಸ್ತುಗಳು ಸಾಮಾನ್ಯರಿಂದ ದೂರವೇ ಉಳಿದುಬಿಡುತ್ತವೆ. ಕೊನೇಪಕ್ಷ ಅಗತ್ಯವಸ್ತುಗಳು, ಔಷಧ/ಮಾತ್ರೆ ಮುಂತಾದ ವಿಷಯಗಳಿಗೆ ಬಂದಾಗ ಎಷ್ಟೋ ಜನ ಹಣವಿಲ್ಲದವರು, ಇನ್ಷೂರೆನ್ಸ್ ಇರದವರು ಬಹಳಷ್ಟು ಬವಣೆಯನ್ನು ಅನುಭವಿಸುವುದನ್ನು ನೋಡಿದ್ದೇನೆ. ಕ್ಯಾಪಿಟಲಿಷ್ಟಿಕ್ ಪ್ರಪಂಚದಲ್ಲಿ ಆ ಬವಣೆಗಳು ಅರಣ್ಯರೋಧನವಾಗುತ್ತವೆಯೇ ಹೊರತು ಶ್ರೀಮಂತ ರಾಜಕಾರಣಿಗಳು ಮಾಡುವ ಪಾಲಿಸಿಗಳಾಗಲಿ, ಉಳ್ಳವರ ಪ್ರಪಂಚದಲ್ಲಿ ಅಂತಹವುಗಳಿಗೆ ಯಾವ ಸ್ಥಾನವಿರುವುದಿಲ್ಲ. ಕೈಲಾಗದವರನ್ನು ಸಲಹುವ ವಿಷಯಕ್ಕೆ ಬಂದಾಗ ಶ್ರೀಮಂತ ದೇಶಗಳಿಗಿಂತ ಬಡದೇಶಗಳಲ್ಲೇ ಹೆಚ್ಚು-ಹೆಚ್ಚು ಒಲವಿರುವುದು ಒಂದು ಸ್ವಾರಸ್ಯಕರವಾದ ವಿಷಯವಷ್ಟೇ.

ಒಂದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಅರಿತುಕೊಳ್ಳದೇ ಅದರ ಮೇಲೆ ಕಾಮೆಂಟ್ ಮಾಡುವುದು ದೂರ ದೇಶದವರ ಗಳಿಕೆಗಳನ್ನು ಅಮೇರಿಕದ ಕರೆನ್ಸಿಯಲ್ಲಿ ಅಳೆದಷ್ಟೇ ಅಭಾಸಗೊಳ್ಳಬಹುದಾದ ಅನುಭವವಾಗಬಹುದು. ಯಾವ ವ್ಯವಸ್ಥೆಯನ್ನೇ ತೆಗೆದುಕೊಂಡರೂ ಇದ್ದವರ-ಇಲ್ಲದವರ ನಡುವಿನ ಕಂದರ ದಿನಕಳೆದಂತೆ ಹೆಚ್ಚುತ್ತಿರುವುದು ಮತ್ತೊಂದು ದಿನದ ಮಾತು!

Wednesday, May 23, 2007

ವಿವಾಹದ ಒಳನೋಟ

ಕಳೆದ ವರ್ಷದ ಕೊನೆಯಲ್ಲಿ ತನ್ನ ಬಾಯ್‌ಫ್ರೆಂಡ್ ಪ್ರೊಪೋಸ್ ಮಾಡಿ ಎಂಗೇಜ್ ಆದಂದಿನಿಂದ ಬರುವ ಆಗಷ್ಟ್‌ನಲ್ಲಿ ಮದುವೆಯಾಗಲಿರುವ ನನ್ನ ಸಹೋದ್ಯೋಗಿ ಕ್ಯಾರೋಲೈನ್ (Caroline) ಇವತ್ತಿನವರೆಗೂ ವಿಶೇಷವಾಗಿ ತನ್ನ ವಿವಾಹ ಸಂಬಂಧಿ ಪ್ಲಾನ್‌ಗಳನ್ನು ಮಾಡುತ್ತಲೇ ಬಂದಿದ್ದಾಳೆ, ಆಕೆಯ ದಿನೇ-ದಿನೇ ಬೆಳೆದು ದಪ್ಪವಾಗುತ್ತಿರುವ ಮದುವೆಯ ಬೈಂಡರ್‌ನಲ್ಲಿ ಪ್ರತಿಯೊಂದು ಡೀಟೈಲ್‌ಗಳನ್ನು ಒಳಗೊಂಡಿರುವುದೂ ಅಲ್ಲದೆ ಮದುವೆಗೆ ಸಂಬಂಧಿಸಿದ ಎಲ್ಲ ಕೆಲಸಗಾರರು, ಎಲ್ಲ ವಿವರಗಳು, ಸ್ಥಳ, ಸಮಯ, ಮದುವೆಯಲ್ಲಿ ಭಾಗವಹಿಸಬೇಕಾದ ಫೋಟೋಗ್ರಾಫರುಗಳು ಮುಂತಾದ ಸಾವಿರಾರು ವಿವರಗಳನ್ನು ಯಾವ ತೊಂದರೆಯಿಲ್ಲದೇ ಕಂಡುಹಿಡಿಯಬಹುದು ಹಾಗೂ ಗುರುತಿಸಬಹುದು. ತನ್ನ ವಿವಾಹಕ್ಕೆ ಸಂಬಂಧಿಸಿದಂತೆ ಆಕೆ ತೋರುವ ಮುತುವರ್ಜಿಯನ್ನು ನೋಡಿ ಎಷ್ಟೋ ಜನ ಬೆರಗಾಗುವುದನ್ನು ನಾನು ನೋಡಿದ್ದೇನೆ.

ಕೆಲವು ದಿನಗಳ ಹಿಂದೆ ಶ್ರೀನಿ ತನ್ನ ರೂಮ್‌ಮೇಟ್ ಮೂಲತಃ ಒರಿಸ್ಸಾದವನಾದ ಬ್ರಜ್‌ನನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದ - ಮಾತಿನ ಮಧ್ಯೆ ಸಹಜವಾಗಿ 'ಈ ವರ್ಷದ ಕೊನೆಯಲ್ಲಿ ಬ್ರಜ್ ಭಾರತಕ್ಕೆ ಹೋಗುತ್ತಿದ್ದಾನೆ, ಅಲ್ಲಿ ಅವನ ಪೋಷಕರು ಒಂದು ಹುಡುಗಿಯನ್ನು ಹುಡುಕಿಟ್ಟಿರುತ್ತಾರೆ, ಎರಡು ವಾರದ ರಜೆಯಲ್ಲಿ ಅವನ ಮದುವೆಯಾಗಿ ಹೋಗುತ್ತದೆ...' ಎಂದು ಒಂದೇ ಉಸಿರಿನಲ್ಲಿ ಬ್ರಜ್‌ನ ಭಾರತದ ವೆಕೇಷನ್, ಎಂಗೇಜ್‌ಮೆಂಟ್, ಮದುವೆ, ಮುಂತಾದ ವಿವರಗಳನ್ನು ಕೇವಲ ಇಪ್ಪತ್ತೇ ನಿಮಿಷಗಳಲ್ಲಿ ಮುಗಿದೇ ಹೋಗುವ ಅಮೇರಿಕನ್ ಸಿಟ್‌ಕಾಮ್ ಹಾಗೆ ಹೇಳಿ ಮುಗಿಸಿಬಿಟ್ಟ. ಅದೇ ಕ್ಯಾರೋಲೈನ್ ತನ್ನ ಮದುವೆಯ ಬಗ್ಗೆ ಹೇಳ ತೊಡಗಿದರೆ ಹಳೆಯ ರಾಜ್‌ಕಪೂರ್ ಸಿನಿಮಾಗಳ ಹಾಗೆ ಮೂರು ಘಂಟೆಗಳಾದರೂ ಮುಗಿಯೋದಿಲ್ಲ!

ಯಾವ ಪದ್ಧತಿ, ವಿವರ, ಪರಿಸರ ಹೆಚ್ಚು-ಕಡಿಮೆ, ತಪ್ಪು-ಸರಿ ಮುಂತಾದ ಜಡ್ಜ್‌ಮೆಂಟುಗಳನ್ನು ನಾನು ಕೆದಕಲು ಹೋಗೋದಿಲ್ಲ. ಎರಡು ಮನಸ್ಥಿತಿ ಅಥವಾ ಸಂಸ್ಕೃತಿಗಳ ಸೂಕ್ಷ್ಮ ಅವಲೋಕನವನ್ನು ಮಾಡುವುದು ನನ್ನ ಉದ್ದೇಶ. ಅಮೇರಿಕನ್ನರು ವರ್ಷಗಟ್ಟಲೇ ಪ್ಲಾನ್ ಮಾಡಿ ಆಗುವ ಮದುವೆಗಳು ಅಷ್ಟೇ ಬೇಗನೇ ಕಾಲನ ಪರೀಕ್ಷೆಯಲ್ಲಿ ಉದುರಿಹೋಗುತ್ತವೆ, ಅದೇ ಭಾರತೀಯ ಮದುವೆಗಳು ಎಂದಿಗೂ ಗಟ್ಟಿಯಾಗೇ ಉಳಿಯುತ್ತವೆ ಎನ್ನುವವರಿಗೆ, you're right! ಎನ್ನುತ್ತೇನೆ.

ಬ್ರಜ್ ನಮ್ಮಲ್ಲಿ ಹಲವರನ್ನು ಪ್ರತಿನಿಧಿಸುವ ಕೇವಲ ಉದಾಹರಣೆಯಷ್ಟೇ, ನಾವು ಎಷ್ಟೋ ಜನ ಈ ನಿಟ್ಟಿನಲ್ಲಿ ಹಾದು ಬಂದಿದ್ದೇವೆ: ಜಾತಿ-ಜಾತಕಗಳು, ಪೋಷಕರ ಅಹವಾಲುಗಳು, ಆಸ್ತಿ-ಅಂತಸ್ತು-ಹಣ ಇವುಗಳು ನಮ್ಮ ನಡುವಿನ ಸಂಬಂಧಗಳನ್ನು ಪೋಣಿಸುವ ದಾರಗಳಾಗಿವೆ, ಕೆಲವು ವಾರ-ತಿಂಗಳುಗಳಲ್ಲಿ ಹುಡುಗ-ಹುಡುಗಿಯರನ್ನು ನೋಡಿ ಕೇವಲ ಹತ್ತು ನಿಮಿಷ ಮಾತನಾಡಿ ಆದ ಮದುವೆಗಳಿವೆ, ಮದುವೆಯನ್ನುವುದು ಈ ಹಿಂದೆಯೇ ಆದ ಒಂದು ಒಡಂಬಡಿಕೆ ಎನ್ನುವ ತತ್ವವಿದೆ, ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಸುತ್ತಲಿನ ಸಮಾಜಕ್ಕೆ ನಾವು ಒಂದು ರೀತಿಯಲ್ಲಿ ಹೆದರಿಕೊಳ್ಳುವುದಿದೆ - 'ಅವರೇನ್ ಅಂದ್‌ಕೊಳ್ಳೋದಿಲ್ಲ...', 'ನಮ್ಮ ಮನೆತನದ ಪ್ರಶ್ನೆ...', 'ನಮ್ಮ ಜಾತಿ ಗೌರವದ ವಿಚಾರ...' ಮುಂತಾದ ಮಾತುಗಳು ಶತಶತಶತಮಾನಗಳಿಂದ ಕೇಳಿಬರುತ್ತಲೇ ಇವೆ.

ಕ್ಯಾರೋಲೈನ್ ಬೆಳೆದು ಬಂದ ಪರಿಸರ ಬಹಳಷ್ಟು ಭಿನ್ನ - ವರ್ಷಗಳ ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ಎನ್ನುವ ಸಂಬಂಧ, ನಿಶ್ಚಿತಾರ್ತದ ಮೊದಲೇ ಒಂದೇ ಮನೆಯಲ್ಲಿ ವಾಸ ಮಾಡುವ ಮೂಲಕ ಹರಳುಗಟ್ಟತೊಡಗುತ್ತದೆ. ಕೆಲವು ತಿಂಗಳು-ವರ್ಷಗಳ ನಂತರ ಆಗುವ ಫಾರ್ಮಲ್ ಎಂಗೇಜ್‌ಮೆಂಟ್ ಎನ್ನುವುದು ಮುಂಬರುವ ಮದುವೆಯನ್ನು ಸೂಚಿಸುತ್ತದೆ. ಎಲ್ಲಿ-ಹೇಗೆ ಎನ್ನುವ ವಿವರಗಳನ್ನೊಳಗೊಂಡ ಪ್ಲಾನ್ ಸಿದ್ಧಗೊಂಡು ಮದುವೆ ನಡೆದು ಹೋಗುತ್ತದೆ. ಮತ್ತೊಂದು ವಿಶೇಷವಾದ ಅಂಶವೆಂದರೆ ನಿಸರ್ಗ ಸಹಜವಾದ 'ಮಕ್ಕಳಾಗುವುದಕ್ಕೆ ಮದುವೆಯಾಗಬೇಕಾಗೇನೂ ಇಲ್ಲ' ಎನ್ನುವ ಅಂಶವೂ ಅಲ್ಲಲ್ಲಿ ಕಂಡುಬರುತ್ತದೆ. ಜಾತಿಯ ಬದಲು ಧರ್ಮ, ಜಾತಕಗಳ ಬದಲು ಚರ್ಮದ ಬಣ್ಣ ಅಥವಾ ಭಾಷೆ ಮುಖ್ಯವಾಗುವುದು ಸಾಮಾನ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡು ಜೀವಗಳ ಅಥವಾ ವ್ಯಕ್ತಿಗಳ ನಡುವಿನ ಕಾಮನಾಲಿಟಿಗೆ ಹೆಚ್ಚು ಪ್ರಾಶಸ್ತ್ಯ.

***

ಇನ್ನು ಕೆಲವೇ ತಿಂಗಳುಗಳಲ್ಲಿ ಕ್ಯಾರೋಲೈನ್ ಮದುವೆಯಾಗುವುದರ ಮೂಲಕ ಒಂದು ಸೋಶಿಯಲ್ ಇನ್‌ಸ್ಟಿಟ್ಯೂಟ್ ಆದ ಗಂಡ-ಹೆಂಡತಿ ಸಂಬಂಧಕ್ಕೆ ಬಡ್ತಿ ಪಡೆಯುತ್ತಾಳೆ, ಆಕೆಯ ಲಾಸ್ಟ್ ನೇಮ್ ಬದಲಾಗುತ್ತದೆ ಎನ್ನುವುದನ್ನು ಬಿಟ್ಟರೆ ಮೇಲ್ಮಟ್ಟಕ್ಕೆ ಹೆಚ್ಚು ವ್ಯತ್ಯಾಸವೇನೂ ಕಂಡುಬರೋದಿಲ್ಲ. ಬ್ರಜ್ ಮದುವೆಯಾದರೂ ಅರ್ಜೆಂಟಿಗೆ ವೀಸಾ ಸಿಗದ ಕಾರಣಕ್ಕೆ ಆತ ತನ್ನ ಹೆಂಡತಿಯನ್ನು ಅಮೇರಿಕಕ್ಕೆ ಕರೆದುಕೊಂಡು ಬರದಿರುವ ಸಾಧ್ಯತೆ ಹೆಚ್ಚು, ಡಿಸೆಂಬರ್‌ನಲ್ಲಿ ಮದುವೆಯಾಗುವ ಬ್ರಜ್‌ಗೆ ತನ್ನ ವೆಕೇಷನ್ ದಿನಗಳು ಆರಂಭವಾಗಿ ಅವು ಮುಗಿಯಲು ಇನ್ನು ೨೦ ದಿನಗಳು ಇರುವಲ್ಲಿವರೆಗೂ ತಾನು ಮದುವೆಯಾಗುವ ಹುಡುಗಿ ಯಾರು ಎಂದು ಇನ್ನೂ ಗೊತ್ತೇ ಇರುವುದಿಲ್ಲ. ಬದುಕಿನಲ್ಲಿ ಬಹು ಮುಖ್ಯವಾದ ಮದುವೆಯೆನ್ನುವ ಹಂತಕ್ಕೆ ವೀಸಾದ ಆಧಾರದ ಮೇಲೆ ದುಡಿಯುವ ಬ್ರಜ್‌ಗೆ ಕೇವಲ ಮೂರು ವಾರಗಳ ರಜೆಯಷ್ಟೇ ಸಾಕು, ಅಥವಾ ಅಷ್ಟೇ ದೊರೆಯುವವು. ಇಲ್ಲಿ ನನ್ನ ಸಹೋದ್ಯೋಗಿ ಕ್ಯಾರೋಲೈನ್ ತನ್ನ ಮದುವೆಗೆ ಸುಮಾರು ಹನ್ನೊಂದು ತಿಂಗಳ ಪ್ಲಾನ್ ರಚಿಸುತ್ತಲೇ ಬಂದಿದ್ದಾಳೆ, ಪ್ರತಿದಿನವೂ ಆಫೀಸಿನಿಂದ ಒಂದಲ್ಲ ಒಂದು ಕಾಲ್‌ಗಳನ್ನು ಮಾಡುತ್ತಲೇ ಇದ್ದಾಳೆ - ಪ್ಲೋರಲ್ ಅರೇಂಜ್‌ಮೆಂಟಿನಿಂದ ಹಿಡಿದು ಮದುವೆಗೆ ಬಳಸುವ ಸಂಗೀತದ ಬಗ್ಗೆ ಬೇಡವೆಂದರೂ ನಮ್ಮ ಕಿವಿಯ ಮೇಲೆ ಬೀಳುವ ಆಕೆಯ ಫೋನ್ ಸಂಭಾಷಣೆ, ಆಕೆಯ attention to detail ಅನ್ನು ನೋಡಿ wow! ಎನ್ನುವಂತೆ ಮಾಡುತ್ತದೆ. ಬ್ರಜ್ ಇಲ್ಲಿನ ಆಫೀಸಿನ ಸಮಯದಲ್ಲಿ ತನ್ನ ವಿವಾಹದ ವಿಷಯವಿರಲಿ ತನ್ನ ಪೋಷಕರ ಜೊತೆ ಮಾತನಾಡಿದ್ದನ್ನೂ ನಾನು ಕೇಳಿಲ್ಲ, ಆತ ತನ್ನ ಏನೇ ಮಾತುಕತೆಗಳಿದ್ದರೂ ಅವುಗಳನ್ನು ವಾರಾಂತ್ಯದ ಕಾಲಿಂಗ್‌ಕಾರ್ಡ್ ನಿಮಿಷಗಳಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಲೇ ಇದ್ದಾನೆ.

ಬ್ರಜ್ ಮದುವೆಯ ವಿವರಣೆ ಒಂದು ಸಾಲು ಅಥವಾ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿಬಿಡಬಹುದಾದ ಚುಟುಕವಾಗುತ್ತದೆ, ಕ್ಯಾರೋಲೈನ್ ಮದುವೆಯ ವಿವರ ಹೇಳಿದಷ್ಟೂ ಇನ್ನೂ ಮುಂದುವರೆಯುತ್ತಲೇ ಇರುತ್ತದೆ!

Saturday, May 19, 2007

ಜರ್ಸೀ ಸಿಟಿಗೆ ವಿದಾಯ!

ಹತ್ತಿರ ಹತ್ತಿರ ಕಾಲು ಮಿಲಿಯನ್ ಜನಸಂಖ್ಯೆ ಇದ್ದುಕೊಂಡು ಹೆಜ್ಜೆ ಹೆಜ್ಜೆಗೆ ದೇಸೀ ಬದುಕನ್ನು ನೆನಪಿಗೆ ತಂದುಕೊಡುವ, ಬಿಳಿಯರು ಮೈನಾರಿಟಿ ಆಗಿರುವ ಹಾಗೂ ನ್ಯೂ ಯಾರ್ಕ್ ನಗರದಿಂದ ಕೇವಲ ಮೂರ್ನಾಲ್ಕು ಮೈಲು ದೂರವಿದ್ದುಕೊಂಡು ಹಡ್ಸನ್ ನದಿಯ ಪಶ್ಚಿಮ ದಂಡೆಯ ಬದಿಯಲ್ಲಿ ಯಾವಾಗಲೂ ಎಚ್ಚೆತ್ತುಕೊಂಡೇ ಇರುವ ಜೂಲು ನಾಯಿಯಂತೆ ಬಿದ್ದುಕೊಂಡಿರುವ ಜರ್ಸೀ ಸಿಟಿ ಎಂಬ ಪ್ರಪಂಚದೊಳಗಿನ ಪ್ರಪಂಚಕ್ಕೆ ನಾಲ್ಕು ವರ್ಷಗಳ ಹಿಂದೆ ಮೂವ್ ಆಗುವಾಗ ಈ ನಗರದಲ್ಲಿ ಬದುಕನ್ನು ಹೇಗೆ ತಳ್ಳುವುದು ಎಂದು ಹಲವಾರು ರೀತಿಯ ಯೋಚನೆಗಳು ಬಂದಿದ್ದು ಸಹಜ. ಇಂತಹ ಊರನ್ನು ಕಳೆದ ವಾರ ಬೀಳ್ಕೊಡುವಾಗ ಕಣ್ಣಾಲಿಗಳು ತುಂಬಿ ಬರದಿದ್ದರೂ ಇಲ್ಲಿ ಕಳೆದ ದಿನಗಳನ್ನು ಮುಂಬರುವ ವರ್ಷಗಳಲ್ಲಿ ಬಹಳಷ್ಟು ನೆನೆಸಿಕೊಳ್ಳುವುದಂತೂ ನಿಜ.

ಅಮೇರಿಕದಲ್ಲಿ ಎಲ್ಲರೂ ಒಂದಲ್ಲ ಒಂದು ಪ್ರದೇಶದಿಂದ ಮೂವ್ ಆಗುವುದು ಸಾಮಾನ್ಯವೆಂಬಂತೆ ಹಲವಾರು ಕಾರಣಗಳಿಂದಾಗಿ ನಾವೂ ಜರ್ಸೀ ಸಿಟಿಯನ್ನು ಬಿಟ್ಟು ನ್ಯೂ ಯಾರ್ಕ್ ನಗರದಿಂದ ಸುಮಾರು ಐವತ್ತು ಮೈಲು ಪಶ್ಚಿಮಕ್ಕಿರುವ ಪ್ಲಾಂಡರ್ಸ್ (Flanders) ಎನ್ನುವ ಪಟ್ಟಣಕ್ಕೆ ಬಂದು ಠಿಕಾಣಿ ಹೂಡಿದ್ದಾಯಿತು. ಕಳೆದ ಎರಡು ಮೂರು ತಿಂಗಳಿನಲ್ಲಿ ಹೊಸ ಮನೆಯನ್ನು ಹುಡುಕುವುದು ಅಲ್ಲಿಂದಿಲ್ಲಿಗೆ ಅಲೆಯುವುದು ಇವೆಲ್ಲ ನಡೆದೇ ಇತ್ತು, ಹೊಸ ಮನೆಯನ್ನು ಬಂದು ಸೇರಿದ ಮಟ್ಟಿಗೆ ಇಲ್ಲಿನ ತಲೆನೋವುಗಳು ವಾಸಿಯಾಗುವಂತಹವುಗಳಲ್ಲಿ, ಬದಲಿಗೆ ಇನ್ನೂ ಉಲ್ಬಣಗೊಂಡು ಮತ್ತಷ್ಟು ಚಿಂತೆ ಹುಟ್ಟಿಸುವ ಸನ್ನಿವೇಶಗಳೇ ಹೆಚ್ಚು. ಹೀಗೆಲ್ಲ ಒಂದಲ್ಲ ಒಂದು ಬದಲಾವಣೆಗಳ ನಡುವೆಯೂ ಆಫೀಸಿನ ಕೆಲಸಗಳನ್ನು ಯಾವ ತೊಂದರೆಗಳೂ ಇಲ್ಲದಂತೆ ನಿರ್ವಹಿಸಿಕೊಂಡು ಹೋಗುವುದು ಒಂದು ದೊಡ್ಡ ಸವಾಲೇ ಸರಿ.

ಆದರೂ ನಾನು ಜರ್ಸೀ ಸಿಟಿಯಲ್ಲಿ ಕಲಿತದ್ದು ಬಹಳಷ್ಟಿದೆ: ಮೊದಲೆಲ್ಲಾ ದಿನವೂ ಟ್ರೈನ್ ಹತ್ತಿ ನ್ಯೂ ಯಾರ್ಕ್ ನಗರಕ್ಕೆ ಕೆಲಸಕ್ಕೆ ಹೋಗುತ್ತಿರುವಾಗ ಅಷ್ಟಿಷ್ಟು ಓದಿದ್ದನ್ನು ನೆನೆಸಿಕೊಂಡರೆ, ಅಲ್ಲಿನ ಕಾಸ್ಮೋಪಾಲಿಟನ್ ಬದುಕಿನಲ್ಲಿ ಎಲ್ಲರೊಡನೆ ಹೊಂದಿಕೊಂಡಿದ್ದನ್ನು ಗುರುತಿಸಿದರೆ, ಎಂತಹ ನುರಿತ ಪಾರ್ಕಿಂಗ್ ತಜ್ಞನನ್ನೂ ಬೆರಗುಗೊಳಿಸುವ ಕಾರ್ ಪಾರ್ಕಿಂಗ್ ಸವಾಲುಗಳನ್ನು ಸ್ವೀಕರಿಸಿ ಜಯಿಸಿದ್ದನ್ನು ಆಲೋಚಿಸಿಕೊಂಡರೆ - ಜರ್ಸೀ ಸಿಟಿ ನಾನು ಕಳೆದುಕೊಂಡ ಬೆಂಗಳೂರು ನಗರದ ವಾತಾವರಣಕ್ಕಿಂತ ಭಿನ್ನವೇನಾಗಿರಲಿಲ್ಲ. ಪ್ರತೀ ಸಾರಿ ಮಳೆ ಬಿದ್ದಾಗಲೂ ಸಮುದ್ರ ಮಟ್ಟದ ಜರ್ಸೀ ಸಿಟಿ ತನ್ನ ಸುತ್ತ ಕೊಡಪಾನದ ನೀರನ್ನು ಸುರಿದುಕೊಂಡು ರಚ್ಚೆ ಹಿಡಿದು ಅಳುವ ಮಗುವನ್ನು ನೆನಪಿಸಿಬಿಡುತ್ತದೆ, ಎಲ್ಲಿ ನೋಡಿದರಲ್ಲಿ ನೀರು ನೀರೇ ತುಂಬಿಕೊಂಡು ಪಕ್ಕದ ನೆವಾರ್ಕ್ ಬೇ ಅಥವಾ ಇನ್ನೂ ಹತ್ತಿರದ ಅಟ್ಲಾಂಟಿಕ್ ಮಹಾಸಾಗರಕ್ಕೆ ತಾನೇನು ದೂರವಿಲ್ಲ ಎಂದು ಪದೇಪದೇ ಅಲ್ಲಿನ ನಿವಾಸಿಗಳನ್ನು ತಿವಿಯುತ್ತಲೇ ಇರುತ್ತದೆ.

ಯಾವುದೇ ನಗರವೊಂದು ಕೆಟ್ಟ ಅನುಭವವನ್ನು ತನ್ನ ಮಡಿಲಿನಲ್ಲಿ ಹುದುಗಿಸಿಕೊಂಡಿರಲು ಅಲ್ಲಿನ ನಿವಾಸಿಗಳಿಗಿಂತ ಆ ನಗರಕ್ಕೆ ಪ್ರತಿದಿನದ ಮಟ್ಟಿಗೆ ಭೇಟಿ ಕೊಡುವ ಹಾಗೂ ಹಾದು ಹೋಗುವ ಜನರೂ ಹೆಚ್ಚಿನ ಮಟ್ಟಿನ ಕಾರಣವೆನ್ನುವುದು ನನ್ನ ಅನಿಸಿಕೆ. ಜರ್ಸೀ ಸಿಟಿಗೆ ಜನರನ್ನು ಎಲ್ಲೆಲ್ಲಿಂದಲೋ ಪ್ರವಾಸಿಗರಾಗಿ ಬರುವಂತೆ ಮಾಡುವ ಆಕರ್ಷಣೆಗಳಲ್ಲಿ ಕೆಲವೇ ಮೈಲುಗಳ ದೂರದಲ್ಲಿರುವ ಲಿಬರ್ಟಿ ದೇವಿಯ ಪ್ರತಿಮೆ (Statue of Liberty), ಹಿಂದೆ ವಲಸಿಗರು ಹಾದು ಹೋಗುತ್ತಿದ್ದ ಎಲ್ಲಿಸ್ ಐಲ್ಯಾಂಡ್ (Ellis Island), ಹಾಗೂ ಮಕ್ಕಳಿಗೆ ಆಕರ್ಷಣೆಯನ್ನು ತೋರಿಸುವ ಲಿಬರ್ಟಿ ಸೈನ್ಸ್ ಸೆಂಟರ್ (Liberty Science Center) ಮುಖ್ಯವಾದವುಗಳು. ಜರ್ಸೀ ಸಿಟಿಯ ಪಕ್ಕದಲ್ಲಿರುವ ಜರ್ಸೀ ರಾಜ್ಯದಲ್ಲೇ ದೊಡ್ಡ ನಗರವಾದ ನೆವಾರ್ಕ್ (Newark) ಹಾಗೂ ಅದರ ಲಿಬರ್ಟಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ - ಪ್ರತೀ ಎರಡು-ಮೂರು ನಿಮಿಷಗಳಿಗೊಮ್ಮೆ ಬಂದು ಹೋಗುವ ವಿಮಾನಗಳಿಗೇನು ಕಡಿಮೆಯಿಲ್ಲ. ಜರ್ಸೀ ಸಿಟಿಯ ಮತ್ತೊಂದು ಮುಖವಾಗಿ ನ್ಯೂ ಯಾರ್ಕ್ ನಗರಕ್ಕೆ ಸಂಪರ್ಕವನ್ನೊದಗಿಸುವ ಹಾಲಂಡ್ ಟನಲ್ (Holland Tunnel) - ಹೊರಗಿನಿಂದ ಬಂದವರೆಲ್ಲ ನ್ಯೂ ಯಾರ್ಕ್ ನಗರಕ್ಕೆ ಹೋಗಲು ಬಳಸುವ ಮುಖ್ಯ ಮಹಾದ್ವಾರ - ಆದರೆ ಜರ್ಸೀ ಸಿಟಿಯಲ್ಲಿ ಇದ್ದು ಜೀವನ ನಡೆಸುವವರಿಗೆ ಯಾವತ್ತೂ ಟ್ರಾಫಿಕ್ ಜಾಮ್‌ನ ಕಿರುಕುಳ ಇದ್ದೇ ಇದೆ ಎನ್ನುವುದು ಜೀವನದ ಅವಿಭಾಜ್ಯ ಅಂಗವಷ್ಟೇ.

ಜರ್ಸೀ ಸಿಟಿಯನ್ನು ಬಳಸುವ, ಅದರ ಮುಖಾಂತರ ಹಾದು ಹೋಗುವ ರಸ್ತೆಗಳಿಗೆನೂ ಕಡಿಮೆಯಿಲ್ಲ - ನನ್ನ ಫೇವರೈಟ್ ರೂಟ್ 1 & 9, ಟರ್ನ್ ಪೈಕ್, ರೂಟ್ 280, ರೂಟ್ 7, ಕೆನಡಿ ಬುಲವರ್ಡ್, ಮುಂತಾದವುಗಳು ಟ್ರಾಫಿಕ್ ಅನ್ನು ಹತೋಟಿಯಲ್ಲಿಡಲು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇವೆ. ಹ್ಯಾಕೆನ್‌ಸ್ಯಾಕ್ ನದಿಯ ಮೇಲೆ ನಿರ್ಮಿತವಾಗಿರೋ ಪುಲಾಸ್ಕಿ ಹೈವೇಯ ಸೊಬಗು ನೋಡಲು ಬಲು ಚೆನ್ನ - ಸುಮಾರು ನಾಲ್ಕು ಮೈಲು ಉದ್ದಕ್ಕಿರುವ ಸೇತುವೆಗೆ ಒಂದು ಪೈಸೆಯ ಟೋಲ್ ಅನ್ನೋ ಕೋಡೋದು ಬೇಡ - ಉಚಿತ ರಸ್ತೆಯೆಂದರೆ ನಂಬಲಿಕ್ಕೆ ಸಾಧ್ಯವೇ ಇಲ್ಲ!

ಎಲ್ಲಕ್ಕಿಂತ ಮುಖ್ಯವಾಗಿ ನಾನು ಜರ್ಸೀ ಸಿಟಿಯಲ್ಲಿಲ್ಲದ್ದರಿಂದ ಕಳೆದುಕೊಳ್ಳುತ್ತಿರುವುದೆಂದರೆ ಪ್ರತಿ ದಿನದ ಸೂರ್ಯಾಸ್ತ - ನಮ್ಮ ಮನೆಯಿಂದ ನಡೆದುಕೊಂಡು ಹತ್ತಿರದ ನೆವಾರ್ಕ್ ಬೇ ದಂಡೆಯಲ್ಲಿ ನಿಂತುಕೊಂಡರೆ ದಿನಕ್ಕೊಂದು ಚಿತ್ರ ಬರೆದುಕೊಡು ರಮಣೀಯವಾಗಿ ಕಾಣುತ್ತಿದ್ದ ಸೂರ್ಯಾಸ್ತವನ್ನು ನಾನು ಯಾವತ್ತಿಗೂ ಮಿಸ್ ಮಾಡಿಕೊಳ್ಳುತ್ತೇನೆ - ನಾನು ಅಲ್ಲಿ ನೋಡಿದಷ್ಟು ಸೂರ್ಯಾಸ್ತವನ್ನು ಮತ್ತಿನ್ನೆಲ್ಲೂ ನೋಡೇ ಇಲ್ಲ ಎಂದರೂ ಸರಿ. ಮೂಲತಃ ಪೂರ್ವದವನು ಪಶ್ಚಿಮಕ್ಕೆ ತೆರಳಿ ಅಲ್ಲಿನ ಪೂರ್ವ ತೀರದಲ್ಲಿ ವಾಸ ಮಾಡಿಕೊಂಡಿದ್ದುಕೊಂಡು ಅಲ್ಲಿನ ಪಶ್ಚಿಮದಲ್ಲಿ ಮುಳುಗುತ್ತಿದ್ದ ಸೂರ್ಯನನ್ನು ನೋಡುವ ಭಾಗ್ಯವನ್ನು ತಾನು ಇದ್ದಲ್ಲಿಂದ ಇನ್ನಷ್ಟು ಪಶ್ಚಿಮಕ್ಕೆ ತೆರಳಿ ಕಳೆದುಕೊಳ್ಳಬೇಕಾದದ್ದು ವಿಪರ್ಯಾಸವಲ್ಲದೇ ಮತ್ತಿನ್ನೇನು?!

ಜಂಗಮಕ್ಕಳಿವಿಲ್ಲವೆನ್ನುವಂತೆ ಮೂವ್ ಮಾಡುತ್ತಿರುವುದೇ ಇಲ್ಲಿನ ಬದುಕು, ಒಂದಲ್ಲ ಒಂದು ದಿನ ಇಲ್ಲಿಂದ ಇನ್ನೆಲ್ಲಿಗೋ ತೆರಳಿ ಮತ್ತೆ ಅಲ್ಲಿಂದ ಮತ್ತಿನ್ನೆಲ್ಲಿಗೋ ಹೋಗುವುದು ಇದ್ದೇ ಇದೆ. ಈಗ ಪ್ಲಾಂಡರ್ಸ್‌ನಲ್ಲಿ ನೀರು ಕುಡಿಯುವ ಋಣವಿದೆ, ಅದನ್ನು ಪ್ರತಿ ಹನಿ ಮುಗಿಯುವ ವರೆಗೆ ಚುಕ್ತಾ ಮಾಡಿ ಮತ್ತಿನ್ನೆಲ್ಲಿಗೆ ತೆರಳುವುದೋ ನೋಡೋಣ.

ನನ್ನ ಅಮೇರಿಕನ್ ಬದುಕಿನಲ್ಲಿ ನಾಲ್ಕು ವರ್ಷಗಳನ್ನು ನಿರಾಂತಕವಾಗಿ ಕಳೆಯುವಂತೆ ಮಾಡಿದ ಜರ್ಸೀ ಸಿಟಿಗೆ ನಮನ ಹಾಗೂ ಹೃತ್ಪೂರ್ವಕ ವಿದಾಯ!

Monday, May 14, 2007

ಗಾಳಿಪಟ

ಒಂದು ಕಡೆ ನಮ್ಮ ಬೇರುಗಳಿಗೆ ಗಟ್ಟಿಯಾಗಿ ಹಿಡಿದುಕೊಂಡು ಉಳಿಯುವ ನಿಲುವೂ, ಮತ್ತೊಂದು ಕಡೆ ಸ್ವಚ್ಛಂದವಾಗಿ ವಿಶಾಲ ನಭದಲ್ಲಿ ಹಾರಾಡ ಬಯಸುವ ಮುಕ್ತ ಮನಸ್ಸೂ ಇವುಗಳನ್ನೆಲ್ಲ ಅವಲೋಕಿಸಿಕೊಂಡಾಗ ನನ್ನ ಕಲ್ಪನೆಗೆ ಹತ್ತಿರವಾಗಿ ಬಂದ ವಸ್ತುವೆಂದರೆ ಗಾಳಿಪಟವೊಂದೇ.

***

ಕಳೆದ ವಾರಾಂತ್ಯದಲ್ಲಿ ಹಳೆಯ ಪುಸ್ತಕಗಳನ್ನೆಲ್ಲ ಎಸೆಯುವುದಕ್ಕೊಂದು ಅವಕಾಶ ಸಿಕ್ಕಿತ್ತು. ಈ ಪುಸ್ತಕಗಳು ನಾನು ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಸಂಬಂಧಪಟ್ಟ ಟೆಕ್ನಿಕಲ್ ಪುಸ್ತಕಗಳು. ಇವುಗಳಲ್ಲಿ ಹೆಚ್ಚಿನವುಗಳನ್ನು ನಾನು ಭಾರತದಿಂದ ಮೊಟ್ಟ ಮೊದಲಬಾರಿಗೆ ಬರುವಾಗ ತಂದು ನಂತರ ಕಳೆದ ದಶಕದಲ್ಲಿ ನಾನು ಹೋದಲ್ಲೆಲ್ಲಾ ತೆಗೆದುಕೊಂಡು ಹೋಗಿ ಜತನದಿಂದ ಕಾಪಾಡಿಕೊಂಡವುಗಳು. ಕಳೆದೊಂದು ವರ್ಷದಿಂದ ನನ್ನ ಕಾರ್ಯಕ್ಷೇತ್ರ ಟೆಕ್ನಿಕಲ್ ಹಂತದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟಿನ ಕಡೆಗೆ ಹೋದಂದಿನಿಂದ ಈ ಪುಸ್ತಕಗಳನ್ನು ಮುಟ್ಟಿ ನೋಡುವ ಅವಕಾಶವೂ ಸಹ ಬಂದಿದ್ದಿಲ್ಲ. ಭಾರತದಲ್ಲಿ ಆಗಿದ್ದರೆ ಅವುಗಳನ್ನು ಯಾವುದಾದರೂ ಹಳೆಯ ಟ್ರಂಕೋ, ಪುಸ್ತಕದ ರ್ಯಾಕ್‌ಗೋ ಸೇರಿಸಿ ಧೂಳು ತಿನ್ನಿಸುತ್ತಿದ್ದೆನೇನೋ ಆದರೆ ಇಲ್ಲಿ ಪುಸ್ತಕಗಳು ಕೇವಲ ವಸ್ತುಗಳಾಗಿ ತೋರುವ ಮನಸ್ಥಿತಿ ಅದ್ಯಾವಾಗಲೋ ನನ್ನಲ್ಲಿ ನಿರ್ಮಿತವಾದ್ದರಿಂದ ಒಂದು ಕಾಲದಲ್ಲಿ ಅನ್ನಕ್ಕೆ ದಾರಿಯಾದ ಪುಸ್ತಕಗಳು ಇಂದು ಸರಳ ವಸ್ತುಗಳಾಗಿ ತಿಪ್ಪೆ ಸೇರಬೇಕಾಗಿ ಬಂದುದು ಪುಸ್ತಕಗಳ ಬದಲಾದ ಸ್ಕೋಪ್‌ಗಿಂತಲೂ ನನ್ನ ಮನಸ್ಸಿಗೆ ಹಿಡಿದ ಕನ್ನಡಿಯಾಗಿತ್ತು.

ಇಲ್ಲ, ನಾನು ಬೇರೆಯ ಮನಸ್ಥಿತಿ ಉಳ್ಳವನು ಎಂದು ಸಾಧಿಸಿಕೊಳ್ಳಲು ಈ ಉದಾಹರಣೆಯನ್ನು ಕೊಡಬೇಕಾಗಿ ಬಂತು - ಇದೇ ಹತ್ತು ವರ್ಷದ ಹಿಂದೆ ರಾಮ ಮೂರ್ತಿ, ರವಿ ಹಾಗೂ ನಾನು ಒಂದು ಅಪಾರ್ಟ್‌ಮೆಂಟಿನಲ್ಲಿ ಎತ್ತರದಲ್ಲಿದ್ದ ಏನೋ ಒಂದನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾಗ ಆಗ ನಮ್ಮ ಜೊತೆ ಇನ್ನೂ ಯಾವುದೇ ಖುರ್ಚಿ, ಮೇಜು ಇಲ್ಲದ ದಿನಗಳಲ್ಲಿ ದಪ್ಪನಾಗಿರುವ ಟೆಲಿಫೋನ್ ಎಲ್ಲೋ ಪೇಜ್ ಪುಸ್ತಕಗಳನ್ನು ಒಂದರ ಮೇಲೊಂದಾಗಿಟ್ಟುಕೊಂಡು ಅದರ ಮೇಲೆ ನಿಂತು ಎತ್ತರವನ್ನು ಮುಟ್ಟುವ ದಿನಗಳಲ್ಲಿ ರಾಮ ಮೂರ್ತಿ ಹಾಗೂ ರವಿ ಪುಸ್ತಕಗಳ ಮೇಲೆ ನಿಲ್ಲಲು ಸಾರಾಸಗಟಾಗಿ ನಿರಾಕರಿಸಿದರೆ ನಾನು ಅವುಗಳ ಮೇಲೆ ನಿಂತು ಎತ್ತರವನ್ನು ಮುಟ್ಟುವ ಮನಸ್ಥಿತಿಯನ್ನು ಆಗಲೇ ಉಳ್ಳವನಾಗಿದ್ದೆ.

ಇಲ್ಲ, ಅದೇ ಇಪ್ಪತ್ತು ವರ್ಷಗಳ ಹಿಂದೆ ನನ್ನ ಕಾಲು ಯಾರಿಗಾದರೂ ತಾಗಿದರೆ, ನಾನು ಯಾವುದೇ ಪುಸ್ತಕ-ಪೇಪರ್‌ಗಳನ್ನು ಗೊತ್ತಿಲ್ಲದೇ ತುಳಿದರೆ - ನಮ್ ಕಡೆಯಲ್ಲಿ ಹೇಳೋ ಹಾಗೆ "ಷಣ್ ಮಾಡು"ವ (ಕೈ ಬೆರಳುಗಳನ್ನು ಕಣ್ಣಿಗಳಿಗೆ ಒತ್ತಿಕೊಂಡು ನಮಸ್ಕರಿಸುವ ಅಥವಾ ಕ್ಷಮೆ ಕೇಳುವ ಕ್ರಮ?) ಕ್ರಿಯೆಗೆ ಒಗ್ಗಿಕೊಂಡು ಹೋಗಿದ್ದೆನಲ್ಲ! ಪುಸ್ತಕ-ಪೇಪರ್ ಇವುಗಳು ಸರಸ್ವತಿಯ ಸಮಾನ, ಇವುಗಳನ್ನು ಯಾವತ್ತಿದ್ದರೂ ಗೌರವಿಸಬೇಕು ಎಂಬುದು ಅಂದು ರಕ್ತವಾಹಿನಿಯಲ್ಲಿದ್ದಿತಲ್ಲಾ.

ಹಾಗಾದರೆ ಪುಸ್ತಕಗಳನ್ನು ಕೇವಲ ಜಡವಸ್ತುಗಳನ್ನಾಗಿ ನೋಡುವ, ಅವುಗಳನ್ನು ಉಪಯೋಗಿಸಿ ತಿಪ್ಪೆಗೆ ಎಸೆಯುವ ಇಂದಿನ ನನ್ನ ಕ್ರಮ ಮನಸ್ಥಿತಿಯೇ, ಬದಲಾವಣೆಯೇ, ಆಧುನಿಕತೆಯೇ ಅಥವಾ ಹೊಳೆಯ ದಾಟಿದ ಮೇಲೆ ಅಂಬಿಗನ ಮರೆಯುವ ಮರೆವೇ? ಅಥವಾ ಹಳೆಯದಕ್ಕೆ ಅಂಟಿಕೊಂಡ ಯಾವುದೋ ಶಕ್ತಿಯ ಮತ್ತೊಂದು ಮುಖವೇ? ಹಾಗಾದರೆ ಇದೇ ತತ್ವ ಸಾಗರ-ಮೈಸೂರು-ಬನಾರಸ್ಸುಗಳಿಂದ ತಂದು ಆನವಟ್ಟಿಯಲ್ಲಿ ಮನೆಯ ತುಂಬಾ ತುಂಬಿಟ್ಟ ಅಸಂಖ್ಯ ಪುಸ್ತಕಗಳಿಗೇಕೆ ಅನ್ವಯವಾಗೋದಿಲ್ಲ? ಯಾವತ್ತಾದರೂ ಆನವಟ್ಟಿಗೆ ಹೋದಾಗ ಆತ್ಮೀಯವಾಗಿ ಅವುಗಳನ್ನು ಮೈದಡವಿ ಹಳೆಯ ನೆನಪುಗಳ ಸುರುಳಿಯೊಳಗೆ ಹೊಕ್ಕಿದ್ದಿದೆಯೇ ಹೊರತೂ ಎಂದೂ ಉಪಯೋಗಕ್ಕೆ ಬಾರದ, ಈಗಾಗಲೇ ಗೆದ್ದಲಿಗೆ ಆಹಾರವಾಗುತ್ತಿರುವ, ಧೂಳು ತಿನ್ನುತ್ತಿರುವ ಅವುಗಳನ್ನೆಲ್ಲ ಎಸೆದು ಮನೆಯನ್ನು ಶುಭ್ರವಾಗೇಕಿಡುವುದಿಲ್ಲ? ಅಲ್ಲಿಯ ಮನೆಗೊಂದು ನೀತಿ, ಇಲ್ಲಿಯ ಮನೆಗೊಂದು ನೀತಿಯೇ? ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಬೇಕಾದರೆ ಘಂಟೆಗಟ್ಟಲೆ ಮಾತನಾಡುವ, ಪುಕ್ಕಟೆ ಉಪದೇಶಕೊಡುವ ನನಗೆ ಅಮೇರಿಕದ ಮನೆಗೊಂದು ನೀತಿ, ಆನವಟ್ಟಿಯ ಮನೆಗೊಂದು ನೀತಿಯೇಕೆ?

***

ಪುಸ್ತಕಗಳು, ನಮ್ಮನ್ನು ಎತ್ತಿಕಟ್ಟುವ ಒತ್ತಿ ವ್ಯಾಖ್ಯಾನಿಸುವ ವಸ್ತುಗಳು, ನಮ್ಮನ್ನು ಪೂರೈಸುವ ಸರಕುಗಳು, ಅಥವಾ ನಮ್ಮ ಒಡನಾಡಿಗಳು - ಇವುಗಳಲ್ಲೆಲ್ಲವನ್ನು ಕೇವಲ ವಸ್ತುಗಳಾಗಿ, ಸಂಗಾತಿಗಳಾಗಿ (companion), ಸಹಪ್ರಯಾಣಿಕರಾಗಿ ನೋಡುವುದು ಒಂದು ನಿಲುವು. ಅದರ ಬದಲಿಗೆ ಇಂದಿದ್ದವು ಇಂದಿಗೆ ಮುಂಬರುವ ನಾಳೆಗಳು ಭಿನ್ನ ಅಥವಾ ಮಟೀರಿಯಲಿಸ್ಟಿಕ್ ಆದ ಪ್ರಪಂಚದಲ್ಲಿ ಮಟೀರಿಯಲಿಸ್ಟಿಕ್ ನಿಲುವುಗಳನ್ನು ಹೊತ್ತು ಸಾಗುವುದು ಮತ್ತೊಂದು ನಿಲುವು.

Monday, May 07, 2007

ಮುಂದಾಳತ್ವ

ಸುಮ್ನೇ ಹೀಗೇ ಡ್ರೈವ್ ಮಾಡ್ತಾ ಇರೋವಾಗ ಲೀಡರ್‌ಶಿಪ್ ಬಗ್ಗೆ ಯೋಚ್ನೆ ಮಾಡ್ತಾ ಇದ್ದಾಗ ಅನ್ನಿಸಿದ್ದರ ಜೊತೆಗೆ ಸ್ಥಳೀಯ ಕೆಲಸಗಾರನ ಕಾಮೆಂಟನ್ನು ಇಲ್ಲಿ ಸೇರಿಸಿ ಅವುಗಳ ಮೇಲೆ ಇನ್ನಷ್ಟು ಬೆಳಕನ್ನು ಚೆಲ್ಲಿದರೆ ಹೇಗೆ ಎನ್ನಿಸಿತು.

* ದಾರಿಯಲ್ಲಿ ಹೋಗೋ ಹಲವಾರು ವಾಹನಗಳು ತಮ್ಮ ಮುಂದಿನ ಹಾದಿಯನ್ನು ಬೆಳಗಿಕೊಂಡು, ಇಕ್ಕೆಲಗಳಿಗೆ ಅಲ್ಪಸ್ವಲ್ಪ ಬೆಳಕನ್ನು ಪಸರಿಸಿಕೊಂಡು ಮುಂದೆ ಹೋಗುತ್ತವೆ, ಪ್ರತಿಯೊಂದು ವಾಹನದ ಬೆಳಕು ತಮ್ಮ ಮೇಲೆ ಬಿದ್ದರೂ ಆ ಸಮಯಕ್ಕಷ್ಟೆ ಬೆಳಕಿನಲ್ಲಿ ಗೋಚರಿಸುವ ಪರಿಸರ ಮತ್ತೆ ಕತ್ತಲೆಯ ಮೊರೆಯನ್ನು ಹೋಗುವುದು ಸಹಜ. ಸುತ್ತಲನ್ನು ಬೆಳಗುವುದಕ್ಕೆ ಸೂರ್ಯನಂತೆ ಪ್ರಜ್ವಲಿಸಬೇಕಾದೀತು, ಇಲ್ಲವೆಂದರೆ ಕತ್ತಲೆಂಬುದು ಎಷ್ಟೋ ಜೀವಜಂತುಗಳಿಗೆ ಡಿಫಾಲ್ಟ್ ಆದ ಸ್ಟೇಟಸ್ಸು.

* You have to show the leadership of going through the thick and thin!

***

ಲೀಡರ್‌ಶಿಪ್ ಅಥವಾ ಮುಂದಾಳತ್ವ, ಮುಂದಾಳುತನ, ನಾಯಕತ್ವವನ್ನು ನಾನು ಅಮೇರಿಕನ್ ಕಾನ್‌ಟೆಕ್ಸ್ಟ್‌ನಲ್ಲಿ ಮುಂದಾಳತ್ವವನ್ನು ತೋರುವುದು (demonstration) ಅಥವಾ ರುಜುವಾತು ಮಾಡುವುದು, ಅಥವಾ ಪ್ರಸ್ತುತಪಡಿಸುವುದು ಎಂದೇ ಅರ್ಥಮಾಡಿಕೊಳ್ಳೋದು. ಇದರ ಹಿನ್ನೆಲೆ ಮ್ಯಾನೇಜ್‌ಮೆಂಟಿನ ಹೆಸರಿನಲ್ಲಿ ಈ ವರೆಗೆ ತೆಗೆದುಕೊಂಡ ತರಬೇತಿ ಕಾರಣವಿದ್ದಿರಬಹುದು ಅಥವಾ ದಿನನಿತ್ಯದ ಆಫೀಸ್ ಬದುಕಿನಲ್ಲಿ ಕಂಡುಕೊಳ್ಳುವ ಮುಂದಾಳುಗಳ ಗುಣವಿಶೇಷವಿರಬಹುದು.

ಬದುಕಿನಲ್ಲಿ (ವೈಯುಕ್ತಿಕ ಅಥವಾ ವೃತ್ತಿಪರ) ಬರೋ ಸಂಕಷ್ಟಗಳಿಗೆ ನಮ್ಮನ್ನು ನಾವು ಹೇಗೆ ಎಡಮಾಡಿಕೊಳ್ಳುತ್ತೇವೆ, ಅವುಗಳನ್ನು ಹೇಗೆ ಎದುರಿಸುತ್ತೇವೆ, ಜಯಿಸುತ್ತೇವೆ ಹಾಗೂ ಅವುಗಳಿಂದ ಏನೇನನ್ನು ಕಲಿತು ನಮ್ಮನ್ನು ನಾವು ಸುಧಾರಿಸಿಕೊಳ್ಳುತ್ತೇವೆ ಎನ್ನುವುದು ಮುಂದಾಳತ್ವದ ಒಂದು ಮುಖವಾದರೆ, ಅದರ ಮತ್ತೊಂದು ಮುಖ ಸುತ್ತಲಿನ ಜೊತೆಗೆ (ಇದ್ದಿರುವ ವ್ಯತ್ಯಾಸಗಳ ನಡುವೆಯೂ) ಹೇಗೆ ಸಂಬಂಧಗಳನ್ನು ಕಲ್ಪಿಸಿಕೊಳ್ಳಬಹುದು, ತೊಡಗಿಕೊಂಡ ಕೆಲಸದಲ್ಲಿ ಎಷ್ಟರ ಮಟ್ಟಿಗೆ ಪರಿಣಿತಿಯನ್ನು ಪಡೆದು ಬರುವ ಅಡೆತಡೆಗಳನ್ನು ಎದುರಿಸುವಲ್ಲಿ ತನ್ನನ್ನು ತಾನು ಹೇಗೆ ನಿಲ್ಲಿಸಿಕೊಳ್ಳಬಹುದು ಎನ್ನುವುದು ಮತ್ತೊಂದು ಮುಖವಾಗಿರಬಹುದು. ಈ ಎರಡು ಮುಖಗಳನ್ನು ಇಲ್ಲಿ ಪ್ರಸ್ತುತ ಪಡಿಸಿದೆನೆಂದ ಮಾತ್ರಕ್ಕೆ ಮುಂದಾಳುತನಕ್ಕೆ ನಾಣ್ಯದ ಹಾಗೆ ಕೇವಲ ಎರಡೇ ಮುಖಗಳಿವೆಯೆಂದೇನಲ್ಲ, ಅದರ ಆಯಾಮ ಇವೆರಡನ್ನು ಮೀರಿ ಗುರಿ ಮುಟ್ಟುವ ಕಡೆಗೆ ಬೇಕಾದಷ್ಟು ರೀತಿಯಲ್ಲಿ ಕಂಡುಬರಬಹುದು.

ಆದರೆ...ಒಮ್ಮೆ ತೋರಿದ ಮುಂದಾಳತ್ವ/ಲೀಡರ್‌ಶಿಪ್ ದಾರಿಯಲ್ಲಿ ಬಂದು ಹೋಗೋ ವಾಹನದ ಹೆಡ್‌ಲೈಟಿನ ಬೆಳಕಿನ ಹಾಗೇ ಎಂದು ಬಹಳಷ್ಟು ಸಾರಿ ಅನ್ನಿಸಿದ್ದು ಹೌದು - you are as good as yesterday and tomorrow offers a whole new set of challenges - ಅನ್ನೋದು ದೊಡ್ಡ ಮಾತೇನೂ ಅಲ್ಲ. ಪ್ರತಿಯೊಂದು ಕೆಲಸ, ಕಾರ್ಯ, ಅವಕಾಶಗಳಲ್ಲೂ ವ್ಯಕ್ತಿಯೊಬ್ಬನ ಮುಂದಾಳತ್ವವನ್ನು ಅಳೆಯಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯ ಮುಂದಾಳತ್ವ ಎನ್ನೋದು ಆ ವ್ಯಕ್ತಿ ತಾನೆದುರಿಸುವ ಪ್ರತಿಯೊಂದು ಸವಾಲುಗಳನ್ನು ಹೇಗೆ ಎದುರಿಸಿ ಅದರಿಂದ ಬರುವ ಪ್ರತಿಫಲವನ್ನು ಅವಲಂಭಿಸೋದಾದರೆ - ಮುಂದಾಳತ್ವ ಎನ್ನುವುದು ಇಂತಹ ಪ್ರತಿಫಲಗಳ ಒಟ್ಟು ಮೊತ್ತವೆನ್ನೋಣವೇ?

***

ಲೀಡರ್‌ಶಿಪ್ ಅನ್ನೋದು ಗಂಭೀರವಾದ ವಿಷಯವೋ ಅಥವಾ ಅದನ್ನು ಹಗುರವಾಗಿ ಪರಿಗಣಿಸಿ ಬದುಕಿನ ಒಂದು ಭಾಗವಾಗಿ ತೆಗೆದುಕೊಳ್ಳುವುದೋ ಎಂಬ ನಿರ್ಧಾರವನ್ನು ನಿಮಗೇ ಬಿಟ್ಟುಬಿಡುತ್ತೇನೆ.

Friday, May 04, 2007

ಪ್ರೀತಿ-ಪ್ರೇಮ

'ಇಂಥಾ ಅಗಾಧವಾದ ಸಬ್ಜೆಕ್ಟನ್ನ ಒಂದು ಜುಜುಬಿ ಬ್ಲಾಗ್ ಪೋಸ್ಟ್ ನಲ್ಲಿ ಹಿಡಿದು ಹಾಕಲಿಕ್ಕೆ ನೋಡ್ತಿದ್ದೀಯೇನಯ್ಯಾ ಅದೂ ಇಂಥಾ ಪ್ರಿಸ್ಟೀನ್ ಘಳಿಗೆಯಲ್ಲಿ?' ಎಂದು ಯಾರೋ ಅವಾಜ್ ಹಾಕಿದ ಹಾಗಾಯಿತು ಎಂದು ನನ್ನ ಭುಜಗಳ ಎರಡೂ ಬದಿಗೆ ನೋಡಿದ್ರೆ ಯಾರೂ ಕಾಣಿಸ್ಲಿಲ್ಲ, ಧ್ವನಿಗಳನ್ನು ಕೇಳೋದು ಕಿವಿಗಳಾದರೆ ಕಣ್ಣು ತಾನೇ ಏನು ಮಾಡೀತು ಎಂದು ಸುಮ್ಮನಾದೆ.

Why am I writing (about it) now? who in the world knows?

ಮನಃಪಟಲವೆಂಬೋ ರಜತ ಪರದೆಯ ಮೇಲೆ ಜುರ್ರನೆ ಜಾರುವ ಸನ್ನಿವೇಶಗಳು ನನ್ನನ್ನು ಬಹಳ ಹಿಂದೆ ಕರೆದುಕೊಂಡು ಹೋಗತೊಡಗಿದವು, ಹಿಪ್ನಟೈಸ್ ಮಾಡುವವನ ಧ್ವನಿಯಲ್ಲಿನ ಹಿಡಿತದಂತೆ ನನ್ನನ್ನು ಅದ್ಯಾವುದೋ ಹಳೆಯ ನೆನಪುಗಳು ಕಟ್ಟಿಹಾಕಿಕೊಂಡಿದ್ದವು - ಸುಮ್ಮನೇ ಅವುಗಳ ಬೆನ್ನು ಹತ್ತಿ ಹೋದೆ - ಟಿಕೇಟ್ ಏನೂ ತೆಗೆದುಕೊಳ್ಳಬೇಕಾಗಿಲ್ಲವಲ್ಲ ಎಲ್ಲಿಗೆ ಹೋಗಬೇಕೆಂದ್ರೂ!

ಹೈ ಸ್ಕೂಲಿನ ದಿನಗಳಲ್ಲಿ ಮೇಷ್ಟ್ರುಗಳು, ಮನೆಯವರಿಗೆ ಹೆದರಿ ತಮ್ಮೆಲ್ಲ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವ ಹುಡುಗ-ಹುಡುಗಿಯರಿಗೆ ಕಾಲೇಜು ಅತ್ಯಂತ ಸೊಗಸಾದ ತಾಣವಾಗಿ ಕಾಣಲು ಬೇಕಾದಷ್ಟು ಕಾರಣಗಳಿವೆ, ಅವುಗಳಲ್ಲಿ 'ನಾನು ಕಾಲೇಜಿಗೆ ಹೋಗುತ್ತಿದ್ದೇನೆ' ಎನ್ನುವ ಭಾವನೆ/ಆಲೋಚನೆ ಒಂದು ರೀತಿಯ ಸ್ವಾತಂತ್ರ್ಯವನ್ನು ತಂದುಕೊಡೋದು ಅಲ್ಲದೇ ಮುಖದ ಮೇಲೆ ಮೀಸೆ ಚಿಗುರೋ ಎಷ್ಟೋ ಹುಡುಗರಿಗೆ ಅನೇಕ ಲವಲವಿಕೆಗಳನ್ನೂ ನವಿರಾದ ಆಸೆಗಳನ್ನೂ ಸೃಷ್ಟಿಸುತ್ತದೆ.

ಆಗಿನ ದಿನಗಳಲ್ಲಿನ ಚರ್ಚಾಸ್ಪರ್ಧೆಗಳಲ್ಲಿ 'ಭಾರತಕ್ಕೆ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಒಳ್ಳೆಯದು' ಎನ್ನುವ ವಿಷಯವನ್ನು ಕುರಿತು ವಿದ್ಯಾರ್ಥಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿಸುವ ಬದಲು 'ಒಬ್ಬರನ್ನೊಬ್ಬರು ಪ್ರೇಮಿಸುವವರಲ್ಲಿ ಓಪನ್ ಕಮ್ಮ್ಯೂನಿಕೇಷನ್ ಇರುವುದು ಒಳ್ಳೆಯದು' ಎಂದು ವಿಷಯಗಳನ್ನು ಏಕೆ ಸೃಷ್ಟಿಸೋದಿಲ್ಲ ಅನ್ನೋ ಪ್ರಶ್ನೆ ಬಂದು ನನ್ನ ಮುಖದಲ್ಲಿ ಒಂದು ಸಣ್ಣ ನಗೆಯನ್ನು ಹುಟ್ಟಿಹಾಕಿ ಹಾಗೇ ಮರೆಯಾಯಿತು.

ನಮ್ಮೂರಿನ ಹುಡುಗರ ಪ್ರೇಮ ಸಂದೇಶಗಳು ಕಿಕ್ಕಿರಿದ ಬಸ್ಸಿನಲ್ಲಿ ಹಿಂದಿನಿಂದ ಬಂದ ಕಂಡಕ್ಟರಿನ ಕೀರಲಾದ 'ಇಲ್ಲ್ಯಾರ್ರೀ ಟಿಕೇಟು...' ಎಂದು ಬಸ್ಸಿನ ಹಿಂದುಗಡೆಯಿಂದ ಜನರ ತಲೆಗಳ ನಡುವೆ ಬಂದ ಪ್ರಶ್ನೆಯ ಧ್ವನಿಯಂತೆ ಬರುವಾಗಲೇ ಸಾಕಷ್ಟು ತಿಕ್ಕಾಟ ಮಾಡಿಕೊಂಡು ಟಾರ್ಗೆಟೆಡ್ ಆಡಿಯನ್ಸ್ ತಲುಪೋ ಹೊತ್ತಿಗೆ ಅನೇಕ ಇನ್‌ಫ್ಲುಯೆನ್ಸ್‌ಗಳಿಗೊಳಗಾರಿತ್ತದೆ. ನಮ್ಮೂರಿನ ಸಂವಹನ ಮಾಧ್ಯಮಗಳು ಕಿಕ್ಕಿರಿದು ತುಂಬಿ ತುಳುಕಾಡುತ್ತಿರುವಾಗ ಅಲ್ಲಲ್ಲಿ ಹೊಸ-ಹೊಸ ಅವಿಷ್ಕಾರಗಳು ಕಂಡುಬಂದರೂ ಅವೆಲ್ಲವೂ ಬಹಳ ಸೀಮಿತವಾಗಿ ಹೋಗಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗತೊಡಗುತ್ತದೆ.

ಹುಟ್ಟಿದಾರಭ್ಯ ಏನನ್ನೂ ಎಲ್ಲವನ್ನೂ ಬಾಯಿಬಿಟ್ಟು ಹೇಳಿ ಅಭ್ಯಾಸವಿದ್ದರೆ ತಾನೇ? ಕೃತಜ್ಞತೆ, ಧನ್ಯವಾದ, ಅಭಿನಂದನೆಗಳನ್ನು ವಿಶೇಷವಾಗಿ ಅಭಿವ್ಯಕ್ತಗೊಳಿಸಿ ಗೊತ್ತಿದ್ದರೆ ತಾನೇ?

ನನ್ನ ಸ್ನೇಹಿತ ಸದು, ಶೈಲಜಾ ಅನ್ನೋ ಹುಡುಗಿಯನ್ನ ಬಹಳ-ಬಹಳ-ಬಹಳ ಪ್ರೀತಿಸುತ್ತಿದ್ದ ಸಂದರ್ಭ - ಅದೂ ಇನ್ನೂ ಸೆಕೆಂಡ್ ಪಿಯುಸಿ ಹಂತದಲ್ಲಿರುವಾಗ - 'ಹೋಗಿ ನೇರವಾಗಿ ಹೇಳೋ...' ಅನ್ನೋ ನನ್ನ ಮಾತುಗಳು ಅವನಲ್ಲಿ ಯಾವ ಪರಿಣಾಮವನ್ನೂ ಬೀರ್ತಿರಲಿಲ್ಲ...ಬರೀ ಮನಸ್ಸಿನಲ್ಲಿ ಮಂಡಿಗೆ ತಿನ್ನೋನು, ನನ್ನಂತಹ ಕೆಲವರಿಗೆ ಮಾತ್ರ ಅವನ ಆಲೋಚನೆಗಳನ್ನ ಹಂಚಿಕೊಳ್ಳೋನು. ಓದೋದು-ಗೀದೋದು ಎಲ್ಲಾ ಸೆಕೆಂಡರಿಯಾಗಿ ಹೋಗಿತ್ತು ಆಗ. ಬೆಳಿಗ್ಗೆಯಿಂದ ಸಂಜೇವರೆಗೆ ಒಂದೇ ರಾಗ - ಅವಳು ನಾಳೆ ಎಲ್ಲಿರ್ತಾಳೆ? ಹೇಗಿರ್ತಾಳೆ? ಅವಳಿಗೆ ಹೆಂಗೆ ಹೇಳೋದು, ಹಿಂಗೆ ಹೇಳೋದು... ಇತ್ಯಾದಿ. ನಮಗೆಲ್ಲಾ ಚಿಟ್ಟ್ ಹಿಡಿದು ಹೋಗಿತ್ತಪ್ಪಾ ಅವನ ಪ್ರೇಮಾವೇಶವನ್ನು ನೋಡಿ. ಸದು ಹೋಗಿ ಶೈಲಜಾನನ್ನು ಮಾತನಾಡಿಸೋ ನನ್ನ ಪ್ರಯತ್ನಗಳು ಯಾವತ್ತು ಸಫಲವಾಗಲೇ ಇಲ್ಲ - ಅವನ ಅಗಾಧವಾದ ಪ್ರೀತಿ ಹಲವು ಕವನಗಳಾಗಿ, ಕಥೆಗಳಾಗಿ ಹುಟ್ಟಿ ಹೊರಬಂದವೇ ಹೊರತು ಅದರಿಂದ ಮತ್ತಿನ್ನೇನೂ ಆಗಲಿಲ್ಲ. ಇವತ್ತಿನ ನಿಲುವಿನಲ್ಲಿ ಸದುವಿನ ಭಾವನೆಗಳು ಅಂದಿನ ದಿನಗಳಿಗೆ ಮಾತ್ರ ಅದೆಷ್ಟು ಗಟ್ಟಿಯಾಗಿದ್ದವು ಅನ್ನಿಸಿದರೂ ಅವುಗಳು ಅಷ್ಟೇ ಬಾಲಿಶವಾದವು ಎಂದು ಜೊತೆಗೆ ಅನ್ನಿಸಿದ್ದು ಹೌದು.

ನನ್ನನ್ನ ಕೇಳಿದ್ರೆ - ಈ ಅವೇ ಲವ್ ಸ್ಟೋರಿಯನ್ನು ಚೂರುಪಾರು ಬದಲಾಯಿಸಿ ಹಲಸಿನ ಮರದ ಬದಲು ಅಕೇಷಿಯಾ ಮರಗಳನ್ನು ಸುತ್ತುವ ಪ್ರೇಮಕಥೆಗಳು ಹಾಗೂ ಅವುಗಳನ್ನು ಆಧಾರಿಸಿ ತಯಾರಿಸುವ ಚಿತ್ರಗಳನ್ನು ಸಾರಾಸಗಟಾಗಿ ಬ್ಯಾನ್ ಮಾಡಿ ಬಿಡಬೇಕು. ಒಂದು ವರ್ಷಕ್ಕೆ ಹತ್‌ಹತ್ರ ಸಾವಿರ ಸಿನಿಮಾಗಳನ್ನು ಹುಟ್ಟು ಹಾಕೋ ನಮ್ಮ ಪರಂಪರೆಯ ಮೊತ್ತ ಕೇವಲ ಇನ್‌ಎಫಿಷಿಯಂಟ್ ಆಗಿ ಕಮ್ಮ್ಯೂನಿಕೇಟ್ ಮಾಡುವ ಮರ ಸುತ್ತಿ, ಹಾಡಿ, ಹರಟಿ, ಅತ್ತು, ನಗುವ ಪ್ರೇಮಿಗಳ ಕಥೆಗಳಷ್ಟೇ ಆಗಿಬಿಡಬಾರದು ನೋಡಿ, ಅದಕ್ಕೆ. ಪ್ರೇಮಿಗಳಿಂದ ಪ್ರೇಮಕಥೆಗಳೋ, ಕಥೆಗಳಿಂದ ಪ್ರೇಮಿಗಳೋ ಅನ್ನೋದಕ್ಕಿಂತಲೂ ಕಥೆಗಳಿಂದಲೇ ಇನ್ನಷ್ಟು ಕಥೆಗಳು ಎಂದ್ರೇನೆ ಸೊಗಸು, ಯಾಕಂದ್ರೆ ಒರಿಜಿನಾಲಿಟಿ, ಸೃಜನಶೀಲತೆ ಅನ್ನೋದು ಕೆಲವರಿಗೆ ಮಾತ್ರ, ಇನ್ನೊಬ್ಬರ ಸ್ಪೂರ್ತಿಯನ್ನಾಧರಿಸಿ ಹುಟ್ಟು ಹಲವಾರು ಸ್ಯೂಡೋ ಸ್ಫೂರ್ತಿಗಳಿಗೆ ಮಾತ್ರ ಯಾವುದೇ ಮಿತಿ ಅನ್ನೋದೇನೂ ಇಲ್ಲ.

'ಥೂ ನಿನ್ನ, ಯಾವನಯ್ಯಾ ನೀನು, ನಮ್ಮೂರಿನ ಹುಡುಗ/ಹುಡುಗಿಯರಿಗೆ ಕನಸು ಕಾಣೋ ಹಕ್ಕೂ ಇಲ್ಲಾ ಅಂತ ಹೇಳ್ತಾ ಇದ್ದೀಯಲ್ಲ, ಕನಸ್ಸು ಕಾಣೋದಕ್ಕೂ ದುಡ್ಡ್ ಕೊಡಬೇಕಾ?' ಎಂದು ಇನ್ನೆಲ್ಲಿಂದಲೋ ಮತ್ತೊಂದು ಧ್ವನಿ ಕೇಳಿ ಬಂತು. ಕನಸುಗಳನ್ನ 'ಕಾಣಲಿ' ಯಾರು ಬೇಡಾ ಅಂದೋರು - ಮನಸ್ಸಿನಲ್ಲಿರೋದನ್ನ ನೆಟ್ಟಗೆ ಹೇಳಿಕೊಳ್ಳಿ, ಹಂಚಿಕೊಳ್ಳಿ ಅಂತಾ ತಾನೇ ನಾನ್ ಹೇಳ್ತಾ ಇರೋದು ಎಂದು ಯಾರನ್ನೋ ಸಮಾಧಾನ ಮಾಡಲು ನೋಡಿದೆ, ಆ ಧ್ವನಿ ನನ್ನೊಳಗೇ ಹೇಗೆ ಬಂತೋ ಹಾಗೇ ಕರಗಿ ಹೋಯ್ತು.

ಈ ಹುಡುಗ/ಹುಡುಗಿಯರದ್ದೂ ಒಂದ್ ರೀತಿ ಸರೀನೇ...ಓದೋದಕ್ಕೆ ಬೇಕಾದಷ್ಟು ಇರುತ್ತೆ, ಕಿತ್ತು ತಿನ್ನೋ ಕಾಂಪಿಟೇಷನ್ನು ಎಲ್ಲಿ ಹೋದ್ರೂ, ಅದರ ಮೇಲೆ ಆಸ್ತಿ, ಅಂತಸ್ತು, ಜಾತಿ, ಭಾಷೆ ಅಂತ ನೂರಾರು ಸಂಕೋಲೆಗಳು, ಅವುಗಳನ್ನೆಲ್ಲ ಜಯಿಸಿ, ಮೀರಿಸಿ ಹೋಗೋದಕ್ಕೆ ಆ ಎಳೆ ಮನಸ್ಸುಗಳಲ್ಲಿ ಚೈತನ್ಯವಾದ್ರೂ ಎಲ್ಲಿರುತ್ತೆ? ಈ ವಯಸ್ಸಿಗೆ ಸಹಜವಾದ ಭಾವನೆಗಳು ಬರೋವಾಗ ಈ ಸಂಕೋಲೆಗಳನ್ನು ಕೇಳಿ ಬರೋದಿಲ್ಲವಲ್ಲ? ಹೀಗೆ ಬಂದವುಗಳು ಕಾಲನ ಪರೀಕ್ಷೆಯಲ್ಲಿ ಗಟ್ಟಿಯಾದವುಗಳು ಉಳಿದುಕೊಂಡು ಜೊಳ್ಳಾದವು ತೇಲಾಡಿಕೊಂಡು ಹೋಗುದು ಸಹಜವೇ ಅಲ್ವೇ?

***

ನನಗೆ ಇವತ್ತಿಗೂ ಅನ್ಸುತ್ತೆ - ಸದು ಶೈಲಜಾ ಹತ್ರ ನೇರವಾಗಿ ಮಾತನಾಡಿ ಬಿಡಬೇಕಿತ್ತು, ತನ್ನೆಲ್ಲವನ್ನೂ ಮನಸ್ಸಿನಲ್ಲೇ ಇಟ್‌ಕೊಂಡು ಕೊರಗಬಾರ್ದಿತ್ತು, ಅವನ ಪ್ರೇಮ ಅಲ್ಲಿಗೇ ನಿಲ್ಲಬಾರ್ದಿತ್ತು ಅಂತ.

Tuesday, May 01, 2007

ಅವರ್‌ಗ್ಲಾಸ್ ಮತ್ತು ಇತರ ಪಾರ್ಶಿಯಲ್ ಅನಾಲಜಿಗಳು!

ನ್ಯೂ ಯಾರ್ಕ್ ನಗರಕ್ಕೆ ಕೂಗಳತೆಯಲ್ಲಿರೋ ಜರ್ಸೀ ಸಿಟಿಗೆ ಭಾರತದಿಂದ ಬರೋ ಹೊಸ ಐಟಿ ಕೆಲಸಗಾರರ ಸಂಖ್ಯೆ ಬಹಳ ಹೆಚ್ಚು, ಇಂಡಿಯಾ ಮಾರ್ಕೆಟ್‌ಗೆ ಹೋದಾಗ ಅಥವಾ ಟ್ರೈನ್ ಸ್ಟೇಷನ್ನುಗಳಲ್ಲಿ, ಅಥವಾ ದಾರಿಯಲ್ಲಿ ಬಸ್ಸಿಗೆ ಕಾಯುತ್ತಿರುವವರಾಗಿಯೋ ಹೀಗೆ ಹಲವಾರು ಅವತಾರಗಳಲ್ಲಿ ಕಾಣಸಿಗುವ ಯುವಕ/ಯುವತಿಯರನ್ನು ನೀವು ಬೇಡಾ ಅಂದ್ರೂ ಗಮನಿಸಲೇ ಬೇಕಾಗುತ್ತೆ. ನಮ್ಮ ಮನೆ ಹತ್ತಿರವಿರುವ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಒಂದಕ್ಕೆ ಬೆಂಗಳೂರಿನಿಂದ ನಮಗೆ ಪರಿಚಯವಿರುವ ಕನ್ನಡಿಗರೊಬ್ಬರು ಬಂದಿದ್ದಾರೆ, ಅವರ ಜೊತೆಯಲ್ಲಿ ಇನ್ನು ಮೂರು ಜನ ಸೇರಿಕೊಂಡು (ಒಬ್ಬರು ಒರಿಸ್ಸಾದವರು, ಇನ್ನಿಬ್ಬರು ತಮಿಳ್ನಾಡಿನವರು) ಒಂದು ಅಪಾರ್ಟ್‌ಮೆಂಟಿನಲ್ಲಿ ರೂಮ್ ಮೇಟ್‍ಗಳಾಗಿಕೊಂಡು ದಿನೇ-ದಿನೇ ಅಮೇರಿಕನ್ ಬದುಕಿಗೆ ಹೊಂದಿಕೊಂಡು ಬದುಕು ನಡೆಸುತ್ತಿದ್ದಾರೆ. ಇವರ ಸ್ಥಿತಿಗತಿಯಲ್ಲೇನೂ ವಿಶೇಷವಿಲ್ಲ, ಹೆಚ್ಚೂಕಡಿಮೆ ಎಲ್ಲರೂ ಹೀಗೇ ಇಲ್ಲಿ ಬದುಕನ್ನು ಆರಂಭಿಸೋದು, ನಾನೂ ಒಂದು ಕಾಲದಲ್ಲಿ ಹೀಗೇ ಇದ್ದೆ!

'ನಾನು ಇಲ್ಲಿಗೆ ಬಂದಾಗ ಹೇಗಿದ್ದೆ?' ಎನ್ನುವ ಪ್ರಶ್ನೆಗೆ ಹಳೆಯ ನೆನಪುಗಳನ್ನು ಹುಡುಕಿಕೊಂಡು ಹೋಗಿ ಉತ್ತರವನ್ನು ಕಂಡುಕೊಳ್ಳಬಹುದಾದರೂ ಈ ಹೊಸಬರ ಒಡನಾಟದಲ್ಲಿ ಅವರ ನಡೆನುಡಿ-ಆಚಾರವಿಚಾರಗಳನ್ನು ಕೂಲಕಂಷವಾಗಿ ನೋಡೋದರ ಮೂಲಕ ನನ್ನನ್ನು ನಾನು ಹುಡುಕಿಕೊಳ್ಳಲು ಪ್ರಯತ್ನಪಟ್ಟಿದ್ದೇನೆ, ಅದರ ಪರಿಣಾಮವಾಗಿಯೇ ಇಲ್ಲಿನ ಕೆಲವು ಪಾರ್ಶಿಯಲ್ ಅನಾಲಜಿಗಳು!

ಅವರ್‌ಗ್ಲಾಸ್ ಅಥವಾ ಸ್ಯಾಂಡ್‌ಕ್ಲಾಕ್ - ತನ್ನಲ್ಲಿದ್ದ ಮರಳನ್ನು ಗುರುತ್ವಾಕರ್ಷಣೆ ಬಲಕ್ಕೆ ಒಪ್ಪಿಸಿ ಸುರಿಸಿಕೊಂಡು ಕಾಲವನ್ನು ತನ್ನೊಳಗೆ ಕಟ್ಟಿಕೊಂಡಂತೆ ಮುಖ ಮಾಡಿಕೊಳ್ಳುವ ಹಳೆಕಾಲದ ಗಡಿಯಾರ; ಗುರುತ್ವಾಕರ್ಷಣಾ ಬಲ 9.8 meters per seconds square ಎಂದು ಭಾರತದಲ್ಲಿ ಸಾವಿರ ಸಾರಿ ಓದಿದ್ದರೂ ಇಲ್ಲಿಗೆ ಬಂದು ಕೆಲವೇ ದಿನಗಳಲ್ಲಿ feet per seconds square (ಅದೂ 32.17) ಎಂದು ಬದಲಾಗುವ ವಿಸ್ಮಯ. ಸೋರುತ್ತಿರುವ ಮರಳ ಕಣಗಳು ಅಲ್ಲೂ ಇಲ್ಲ, ಇಲ್ಲೂ ಇಲ್ಲ - ಯಾವುದೇ ತೂಕವಿಲ್ಲದಿದ್ದರೂ ಮೀಟರುಗಳ ಲೆಕ್ಕಕ್ಕೆ ಸಿಗದೇ ಇಲ್ಲಿನ ಅಡಿ-ಮೈಲುಗಳಲ್ಲಿ ಕರಗಿ ಹೋಗುವ ಸಂಭ್ರಮ! ಕೆಲವರ ಅಮೇರಿಕದ ಜೀವಮಾನವನ್ನು ಒಂದೇ ಅವರ್‌ಗ್ಲಾಸ್ ಪ್ರತಿಬಿಂಭಿಸಿದರೆ ಇನ್ನು ಕೆಲವರಿಗೆ ಅದು ಆಗಾಗ್ಗೆ ಖಾಲಿ ಆಗಿ, ಉಲ್ಟಾ ಹೊಡೆದು ಮತ್ತೆ ಅದೇ ಮರಳನ್ನು ಸುರಿಸಿಕೊಳ್ಳುವ ಚಕ್ರದಲ್ಲಿ ಸಿಕ್ಕಿ ಹೋಗುತ್ತದೆ!

ಕಾಂಪೋನೆಂಟ್ vs. ಕಂಪೋನೆಂಟ್ - ಇಷ್ಟು ವರ್ಷ ಕಲಿತು ಬಳಸಿದ ಭಾಷೆ, ಪದಗಳು, ಅವುಗಳ ಬಳಕೆ ಹಾಗೂ ಉಚ್ಛಾರಗಳು ಬದಲಾಗುವ ರೀತಿ ಇನ್ನೊಂದು ರೀತಿಯ ವಿಸ್ಮಯವನ್ನು ತನ್ನೊಳಗೆ ಕಲ್ಪಿಸಿಕೊಳ್ಳುತ್ತದೆ. ನಮ್ಮ ಎನ್ವಿರಾನ್‌ಮೆಂಟುಗಳು ಎನ್ವೈರ್ನ್‌ಮೆಂಟಾಗಿ, ಸ್ಟೇಟಸ್ಸ್ ಇದ್ದದ್ದು ಸ್ಟ್ಯಾಟಸ್ ಆಗಿ, ಡೆವೆಲಪರ್ ಇದ್ದೋನು ಡಿವ್ವೆಲಪರ್ ಆಗಿ, ನಮ್ಮನ್ನು ನೆಲದ ಮೇಲೆ ಎತ್ತಿ ನಿಲ್ಲಿಸಿ ನಡೆಸುವ ಕಾಂಪೋನೆಂಟುಗಳು ಕಂಪೋನೆಂಟುಗಳಾಗಿ ಬದಲಾಗುವ ಪದೇಪದೇ ಕಂಡುಬರುವ ಲೌಕಿಕ ಆಶ್ಚರ್ಯಗಳಲ್ಲೊಂದು!

ಉಷ್ಣತೆ - ಹವಾಮಾನ ಅಂದ್ರೆ ನಮ್ಮಲ್ಲಿ ಗಮನಿಸೋ ಉಷ್ಣತೆ ಇಲ್ಲಿ ಬಂದ ಮೇಲೆ ಶೀತ ಹವೆಯನ್ನು ಹೆಚ್ಚು ಗಮನಿಸೋ ಹಾಗೆ ಮಾಡೋದು ಮತ್ತೊಂದು ಅಶ್ಚರ್ಯಗಳಲ್ಲೊಂದು. All of a sudden, ಒಂದರಿಂದ ನೂರರವರೆಗಿನ ಫ್ಯಾರೆನ್‌ಹೈಟ್ ಸ್ಕೇಲ್ ಅಪ್ಯಾಯಮಾನವಾಗುತ್ತದೆ - thanks to the inbuilt calculator - ಫಸ್ಟ್ ಪಿಯುಸಿಯಲ್ಲಿ ಒದ್ದಾಡಿ ನೆನಪಿನಲ್ಲಿಟ್ಟುಕೊಂಡಿದ್ದ C = (F - 32) * (5/9) ಅನ್ನೋ ಸೂತ್ರ ಅಮೇರಿಕನ್‌ಮಯವಾಗಿ C = (F - 32)/2 ಆಗಿ ಕನ್ವರ್ಟ್ ಆಗೋದಷ್ಟೇ ಅಲ್ಲ, ನಿದ್ದೆಯಿಂದ ಎದ್ದೇಳಿಸಿ ಕೇಳಿದರೂ ಯಾವುದೇ ಟೆಂಪರೇಚರ್ ಅನ್ನು ಸೆಲ್ಸಿಯಸ್ ಇಂದ ಫ್ಯಾರನ್‌ಹೈಟ್‌ಗೆ ವೈಸಾ ವರ್ಸಾ ಕನ್ವರ್ಟ್ ಮಾಡುವ ಕಲೆ ಅಂಗೈನ ನೆಲ್ಲೀಕಾಯಿ ಆಗಿ ಹೋಗುತ್ತದೆ!

ಉದ್ದ ಕೂದಲ ಸೂತ್ರ - ಹೆಣ್ಣು ಮಕ್ಕಳಿಗೆ ಅನ್ವಯವಾಗದ ವಿಚಾರವಿದು - may be further down the road, but not right away - ಇಲ್ಲಿಗೆ ಬಂದ ಯುವಕರ ತಲೆ ಮೇಲೆ ಹುಲ್ಲುಕುತ್ರೆಯ ಹಾಗೆ ಬೆಳೆದ ಕೂದಲನ್ನು ನೋಡಿ ಅವರು ಅಮೇರಿಕದಲ್ಲಿ ಎಷ್ಟು ವರ್ಷದಿಂದ್ದಿರಬಹುದು ಎಂದು ಹೇಳಬಹುದಾದ ಒಂದು ಕಲೆ! ಬಂದ ಹೊಸದರಲ್ಲಿ ಸಂಬಳದ ಹೆಚ್ಚು ಭಾಗ ಅಪಾರ್ಟ್‌ಮೆಂಟ್ ರೆಂಟು, ಫೋನ್ ಕಾರ್ಡು ಅಥವಾ ಕಾರಿಗೆ ವ್ಯಯವಾಗುತ್ತಿರುವ ಕಾಲದಲ್ಲಿ, ನಮ್ಮ ತಲೆಯಲ್ಲಿ ಮೂರು ವಾರ, ನಾಲ್ಕು ವಾರಗಳಿಗೊಮ್ಮೆ ಬೆಳೆದುನಿಲ್ಲುವ ಕೂದಲನ್ನು ಕತ್ತರಿಸಿಕೊಳ್ಳಲು 12 ರಿಂದ 15 ಡಾಲರ್ರು ಪ್ಲಸ್ ಹದಿನೈದು ಪರ್ಸೆಂಟ್ ಟಿಪ್ಸು ಇದೆಲ್ಲ ಕೊಡೋದು ಯಾರು ಹಾಗೂ ಯಾಕೆ? ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಲ್ಲೋದು (thanks to the compost inside the head, the hair grows in any and every season - that too so much so for me/us!) ವರ್ಷಕ್ಕೆ ಹನ್ನೆರಡು ಸಾರಿ ಕಟ್ಟಿಂಗ್ ಮಾಡಿಸೋ ಬದಲಿಗೆ ಹನ್ನೊಂದ್ ಸಾರಿ ಮಾಡ್ಸಿದರೆ ಹತ್‌ಹತ್ರ ಇಪ್ಪತ್ತು ಡಾಲರ್ ಉಳಿಯೋಲ್ವೆ - ಇನ್ನು ಟಿಪ್ಸ್ ಕೊಡೋರ್ ಯಾರು? (ಲೋಕಲ್ ರೆಡಿಯೋ ಸ್ಟೇಷನ್ನುಗಳು ಭಾರತೀಯರು worst ಟಿಪ್ಸ್ ಕೊಡುತ್ತಾರೆ ಎಂದು ಈಗಾಗಲೇ ಸಾಧಿಸಿ ಜಗಜ್ಜಾಹೀರು ಮಾಡಿರೋವಾಗ).

ಮೂಗಿನಲ್ಲಿ ಬೆರಳಾಡಿಸಿಕೊಂಡು ಅನುಭವಿಸುವ ಸುಖ - ಹಲವಾರು ನ್ಯಾಷನಾಲಿಟಿಯ ಹಿನ್ನೆಲೆಯ ಜನರನ್ನು ಗಮನಿಸಿ ನಾನು ತೀರ್ಮಾನಿಸಿಕೊಂಡ ಅನಾಲಜಿ ಇದು - ನನ್ನಂತಹ ಭಾರತೀಯರು ತಮ್ಮ ಮೂಗನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ! ಎಲ್ಲಿ ಬೇಕಂದರಲ್ಲಿ nose pick ಮಾಡಿದ್ದೇನೆ, ಮಾಡುತ್ತಿದ್ದೇನೆ, ಮಾಡುತ್ತಲೇ ಇರುತ್ತೇನೆ (present continuous tense ಅನ್ನೋದು ಇರೋದಕ್ಕೂ ಒಂದ್ ಬೆಲೆ ಕೊಡೋದ್ ಬೇಡ್ವೇ?) ಇಷ್ಟಿಷ್ಟು ದಪ್ಪವಾಗಿರೋ ಭಾರತೀಯರ ಮೂಗುಗಳಿಗೆ ಐತಿಹಾಸಿಕವಾಗಿ ಇನ್ನೇನ್ ಕಾರಣವಿದ್ದಿರಬಹುದು? ಹೆಚ್ಚು ಬಳಸಿದ ಸ್ನಾಯುಗಳು ಬಲವಾಗಿ ಬೆಳೆಯುತ್ತವೆ ಅಂತ ಜೀವಶಾಸ್ತ್ರದಲ್ಲಿ ಓದಿದ್ದು ನೆನಪಿಗೆ ಬರೋದಿಲ್ಲಾ?

ಬೆಳ್ಳಗಿರೋದೆಲ್ಲ ಮಲ್ಲಿಗೆ ಎನ್ನುವ ಭ್ರಮೆ - 'ಈ ಕರಿಯರನ್ನು ಕಂಡ್ರೆ ಆಗೋದಿಲ್ಲಪ್ಪಾ ನನಗೆ' ಅನ್ನೋದು ಓಪನ್ಲಿ ಹೇಳಿ ಕೈ ಕೊಡಗಿಕೊಳ್ಳುವ ಒಂದು ಸಾಧಾರಣ ಸಾಲು - ಅಮೇರಿಕನ್ನರು ಅಂದ್ರೆ ಬಿಳಿಯರು ಮಾತ್ರ ಅನ್ನೋ ಭ್ರಮೆ - no one says European Americans, it is usually substituted by White! ಅನ್ನೋದು ಸುಬ್ಬನ ಉವಾಚ -("ನಿನ್ನನ್ನ ಏಷಿಯನ್ ಅಮೇರಿಕನ್ ಅಂತಲೂ, ಡಾಮಿನಿಕ್‌ನ್ನ ಆಫ್ರಿಕನ್ ಅಮೇರಿಕನ್ ಅಂತಲೂ ಕರೆಯೋರು, ಈ ಯೂರೋಪಿಂದ ಬಂದ ಜನಗಳ್ನ, ಅದರಲ್ಲೂ ಬಿಳಿಯರನ್ನ ಯುರೋಪಿಯನ್ ಅಮೇರಿಕನ್ ಅಂಥಾ ಯಾಕೆ ಕರೆಯಲ್ಲಾ, ಬರೀ ವೈಟ್ಸ್ ಅಂಥ ಯಾಕ್ ಅಂತಾರೆ!") - ಸುಪ್ರಿಮಸಿ, ಸುಪಿರಿಯಾರಿಟಿ ಅನ್ನೋದು ನಮ್ಮ ಮನಸ್ನಲ್ಲಿದೆಯೋ ಅಥ್ವಾ ಎಲ್ಲಿದೆಯೋ ಯಾರಿಗೆ ಗೊತ್ತು?

***

ನೀವು ಹೇಗಿದ್ದಿರಿ ಇಲ್ಲಿಗೆ ಬಂದಾಗ ಎಂದು ಕಂಡು ಹಿಡಿಯುವುದು ಬಹಳ ಸುಲಭ - ಹೊಸದಾಗಿ ಅಮೇರಿಕಕ್ಕೆ ಬಂದವರೊಡನೆ ಒಡನಾಡಿ ನೋಡಿ, ಅವರೇ ಹಿಡಿಯುತ್ತಾರೆ ನಿಮ್ಮ ಹಳೆಯ ಮನಸ್ಸಿಗೆ ಕನ್ನಡಿ!

Saturday, April 28, 2007

ಅಂತರಂಗ - ಇನ್ನೂರು!




ಕಳೆದ ವರ್ಷ ಜುಲೈ ೨೧ ರಂದು ನೂರನೇ ಬರಹ ಬರೆದ ಮೇಲೆ ಇದು ಹೀಗೇ ಮುಂದುವರೆಯುತ್ತೆ, ಇನ್ನೂರನ್ನು ಮುಟ್ಟುತ್ತೆ ಎನ್ನುವ ವಿಶ್ವಾಸ ಸ್ವಲ್ಪ ಮಟ್ಟಿಗೆ ಇದ್ದಿತಾದರೂ ಬಲವಾಗೇನೂ ಇರಲಿಲ್ಲ, ಇನ್ನೊಂದು ನೂರು ಬರಹಗಳಿಗೆ ವಿಷಯಗಳನ್ನ ಎಲ್ಲಿಂದ ತರೋದು? ಯಾವ ವಿಷಯವನ್ನು ಕೊಲ್ಲೋದು? ಯಾರನ್ನು ಮಟ್ಟಾ ಹಾಕೋದು? ಎಂದೆಲ್ಲಾ ಪ್ರಶ್ನೆಗಳು ತಾವೇತಾವಾಗಿ ಬಂದು ಹೋಗಿದ್ದಂತೂ ನಿಜ.

ರಾಜಕೀಯ ವಿದ್ಯಮಾನಗಳನ್ನು 'ಕಾಲಚಕ್ರ'ದಲ್ಲಿ ಬದಿಗಿಟ್ಟು, ಪ್ರಸ್ತುತ ವಿದ್ಯಮಾನಗಳಿಗೆ ಅಲ್ಲಲ್ಲಿ ಪ್ರತಿಕ್ರಿಯೆ ತೋರಿಸಿದ್ದನ್ನು ಬಿಟ್ಟರೆ ಇತ್ತೀಚಿನ ಲೇಖನಗಳಿಗೆ ಸ್ಪೂರ್ತಿ ದೊರೆತದ್ದು ಡಿಸೆಂಬರ್‌ನ ಭಾರತದ ಪ್ರಯಾಣದಿಂದಲೇ ಎಂದೇ ಹೇಳಬೇಕು. ಮೂರೂ ಮುಕ್ಕಾಲು ವರ್ಷಗಳ ನಂತರ ಭಾರತವನ್ನು ಹಲವಾರು ದೃಷ್ಟಿಕೋನಗಳಿಂದ ನೋಡಿ ಬೇಕಾಗಿಯೋ ಬೇಡವಾಗಿಯೋ ಹುಟ್ಟಿಬರುವ ಅದಮ್ಯ ಅನಿಸಿಕೆಗಳನ್ನು ಹಂಚಿಕೊಂಡಿದ್ದು ನಿಜವಾಗಿಯೂ ಹಲವಾರು ರೀತಿಯಲ್ಲಿ ನನ್ನನ್ನು ಬೆಳೆಸಿದೆ, ಚಿಂತಿಸುವಂತೆ ಮಾಡಿದೆ.

"ನೂರು ಬರಹ ದೊಡ್ಡ ವಿಷಯವೇನಲ್ಲ, ಆದರೂ ನನ್ನ ಮಟ್ಟಿಗೆ ಹೇಳೋದಾದರೆ ಒಂದು ಕಡೆ ಕನ್ನಡ ಟೈಪ್ ಮಾಡುವ ಅಥವಾ ಬರೆಯುವ ವ್ಯವಧಾನವಿರದೇ ಇರುವುದೂ ಮತ್ತೊಂದು ಕಡೆ ನನ್ನ ಪ್ರಚಂಡ ಮೈಗಳ್ಳತನವೂ ಇವುಗಳ ನಡುವೆ ನಾನು ಏನನ್ನಾದರೂ ಬರೆದಿದ್ದೇನೆಂದು ಹೇಳಿಕೊಳ್ಳೋದೇ ಒಂದು ಸಂಭ್ರಮ", ಅಂದು ಬರೆದ ವಿಷಯ ಇಂದಿಗೂ ಪ್ರಸ್ತುತ, ಹಾಗೂ ನನ್ನ ಮಟ್ಟಿಗೆ ಸಂತೋಷದ ವಿಷಯವೂ ಹೌದು.

ಜೊತೆಗೆ ಅಂದು ಬರೆದ ಸಾಲು - "ಇದುವರೆಗೆ ಬರೆದದ್ದನ್ನೆಲ್ಲ ನಾನು ಬರಿ ವಾರ್ಮ್‌ಅಪ್ ಎಂದುಕೊಳ್ಳೋದರಿಂದ ನಿಜವಾದ ಪಯಣ ಇದೀಗ ಆರಂಭವಾಗಿದೆ...ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!" ಇಂದಿಗೂ ಪ್ರಸ್ತುತ - ಬರೆಯುವ ಹವ್ಯಾಸ ನನ್ನಲ್ಲಿ ಈಗಾಗಲೇ ಮೂಡಿಬಿಟ್ಟಿದೆ, ಇನ್ನು ಅದನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಬೇಕು, ಬರೆಯುವ ಪ್ರಕ್ರಿಯೆ ಓದುವುದನ್ನು ಬಿಟ್ಟು ಬಹಳ ದೂರವಿರಲಾರದಾದ್ದರಿಂದ ನನ್ನ ಓದುವಿಕೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂಬುದು ಮಹದಾಸೆ.

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದಿದವರಿಗೆಲ್ಲರಿಗೂ ನನ್ನ ನಮನಗಳು.

'ಅಂತರಂಗ' ಇನ್ನೂರನೇ ಲೇಖನವನ್ನು ಮುಟ್ಟುವ ಹೊತ್ತಿಗೆ ಮತ್ತೊಂದು ಮುಖ್ಯವಾದ ಸಂಗತಿಯನ್ನು ಅಲಕ್ಷ್ಯ ಮಾಡುವಂತಿಲ್ಲ - ಈ ಬ್ಲಾಗಿಗೆ ಹತ್ತು ಸಾವಿರ ವೀಕ್ಷಕರು (ನನ್ನದೇ ಹಿಟ್‌ಗಳನ್ನು ಹೊರತುಪಡಿಸಿ) ಬಂದು ಹೋದದ್ದೂ ನನ್ನ ಮಟ್ಟಿಗೆ ಸಂತೋಷದ ವಿಷಯವೇ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಸರಾಸರಿ ದಿನಕ್ಕೆ ಇಪ್ಪತ್ತು ವಿಸಿಟರ್‌ಗಳು ಬಂದು ತಲೆಗೆ ಎರಡೂವರೆ ನಿಮಿಷಗಳಂತೆ ಬ್ಲಾಗ್‌ ಅನ್ನು ನೋಡಿ, ಕಾಮೆಂಟ್ ಬಿಡುವುದರ ಮೂಲಕ, ಇಮೇಲ್ ಬರೆಯುವುದರ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಈ ರೀತಿಯ ಕನ್ನಡ ಬ್ಲಾಗಿಗೆ ದೊಡ್ಡ ವಿಷಯವೇ. 'ಅಂತರಂಗ'ದಲ್ಲಿ ಬರಹಗಳು ಉದ್ದವಾದವುಗಳು, ಒಂದು ಸ್ಕ್ರೀನ್‌ನಿಂದ ಮತ್ತೊಂದು ಸ್ಕ್ರೀನಿಗೆ ಸ್ಕ್ರೋಲ್ ಮಾಡಿಕೊಂಡು ಓದಬೇಕಾದವುಗಳು, ಹೆಚ್ಚಿನವು ಅಳುಮುಂಜಿ ಛಾಯೆಯವು, ಇನ್ನು ಕೆಲವು ವಿಚಿತ್ರ ಸಂವಾದ-ವಿಷಯಗಳನ್ನು ಹೊತ್ತುಕೊಂಡವುಗಳು. ಯಾವುದೇ ಲಾಜಿಕ್ಕಿಗೆ ನಿಲುಕದೇ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಟರ್ನ್‌ಪೈಕ್‌ನಲ್ಲಿ ಲೇನ್ ಬದಲಾಯಿಸಿದ ಹಾಗೆ ವೀವ್ ಮಾಡಿಕೊಂಡು ಹೋಗುವಂತಹ ಬರಹಗಳು. ಕೆಲವೊಂದು ಬರಹಗಳು ಲೈಟ್ ಆಗಿದ್ದರೂ ಇನ್ನು ಕೆಲವು ಗಂಭೀರವಾದವುಗಳೆಂದು ಎಷ್ಟೋ ಜನ ಫೋನ್‌ನಲ್ಲಿ ಹೇಳಿದರೂ ಸುಲಭವಾಗಿ ಕಾಮೆಂಟ್ ಬಿಡಲಾರದವುಗಳು.

Thanks to Google - 'ಕಾಲಚಕ್ರ'ವನ್ನು 'ಅಂತರಂಗ'ದ ಒಂದು ಭಾಗವನ್ನಾಗಿ ಮಾಡಿದ್ದಕ್ಕೆ! ಇನ್ನು 'ದಾರಿ-ದೀಪ' ನಾನೆಣಿಸಿದ ವೇಗದಲ್ಲಿ ಬೆಳೆಯದೇ ಇರೋದಕ್ಕೆ - ನನ್ನ ಸೋಮಾರಿತನಕ್ಕೆ ಧನ್ಯವಾದಗಳನ್ನು ಹೇಳಬೇಕು. ಉಳಿದವರೆಲ್ಲರ ಹಾಗೆ ನನ್ನ ಅನಿಸಿಕೆಗಳನ್ನು ಬರೀ ಬ್ಲಾಗ್ ಪ್ರಪಂಚಕ್ಕೆ ಮಾತ್ರ ಸೀಮಿತವಾಗಿರಿಸದೇ ಮುಂದೆ ಆನ್‌ಲೈನ್ ಹಾಗೂ ಪ್ರಿಂಟ್ ಮಾಧ್ಯಮಗಳಲ್ಲೂ ಬರೆಯಬೇಕು ಎನ್ನುವುದು ಮುಂದಿನ ದಿನಗಳ ಸವಾಲು. ನನ್ನ ಬರಹಗಳು ಹೀಗೇ ಮುಂದುವರೆಯುವುದು ಖಂಡಿತವಾದರೂ ಮನದಲ್ಲಿ ವಿಹರಿಸುವ ಎಲ್ಲ ವಿಷಯಗಳನ್ನು ದಾಖಲಿಸಿ ಹೀಗೇ ಮುಂದುವರೆಸಿಕೊಂಡು ಹೋಗುವ ಛಲ, ಹಂಬಲ ಹೀಗೇ ಉಳಿಯಲಿ ಹಾಗೂ ಮುಂದುವರೆಯಲಿ ಎಂಬುದಷ್ಟೇ ನನ್ನ ಬೇಡಿಕೆ.

ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!

Thursday, April 26, 2007

ತತ್ವಗಳು (ಥೂ ಹಾಳಾದೋವು...!)

ಡಿಸೆಂಬರ್ ತಿಂಗಳ ಒಂದು ದಿನ...ನಾನಿರೋದು ಆನವಟ್ಟಿಯಲ್ಲಾದ್ದರಿಂದ ವಿಂಟರ್ ಕೋಟಿನ ಅಗತ್ಯವಿಲ್ಲದೆ ಒಂದು ಸೊಗಸಾದ ಮುಂಜಾನೆಯ ವಾಕ್‌ನಲ್ಲಿ ಸಮಯವನ್ನು ಯಾವುದೇ ಸಂಕೋಲೆಗಳಿಲ್ಲದೇ ನನ್ನಷ್ಟಕ್ಕೆ ನಾನೇ ಕಳೆಯುವ ಒಂದು ಸಂಚು ಮನದಲ್ಲಿ ಮೂಡಿದ್ದೇ ತಡ ತಕ್ಷಣ ಡಾಕರ್ ಜೀನ್ಸು ಹಾಗೂ ಒಂದು ಟಿ ಶರ್ಟ್ ಏರಿಸಿ, ಸ್ಕೀಕರ್ ತೊಟ್ಟು ಮನೆಯಿಂದ ಹೊರಟೆ - ದಿನನಿತ್ಯದ ರೂಢಿಯಂತೆ ಶರ್ಟ್ ಅನ್ನು ಟಕ್ ಇನ್ ಮಾಡಬೇಕೋ ಬೇಡವೋ ಎನ್ನುವ ಹಂತದಲ್ಲಿ ಒಂದು ಕ್ಷಣದ ವಿಳಂಬವನ್ನು ಹೊರತು ಪಡಿಸಿದರೆ ಮತ್ತೆಲ್ಲ ಸಹಜವಾಗಿತ್ತು ಎನ್ನಬಹುದು, ಹತ್ತು-ಇಪ್ಪತ್ತು ವರ್ಷಗಳ ಹಿನ್ನೆಲೆಯಲ್ಲಿ ನೋಡಿದಾಗ ಬಹಳಷ್ಟು ಬದಲಾಗಿರಬಹುದು, ಆದರೆ ಮುಂಜಾನೆಯ ತಾಳದ ಮಟ್ಟು ಮಾತ್ರ ಇವತ್ತಿಗೂ ಬೇರೆಯೇನಾಗಿರಲಿಲ್ಲ.

ಅವೇ ಧೂಳು ತುಂಬಿದ ರಸ್ತೆಗಳು, ಊರಿನ ಉದಾಸೀನತೆಯ ಪ್ರತೀಕವೆಂಬಂತೆ ಹೊರಗೆ ಬರಲೋ ಬೇಡವೋ ಎಂದು ಮೋಡಗಳ ಮರೆಯಲ್ಲಿ ಆಗಾಗ್ಗೆ ಇಣುಕಿ ನೋಡುತ್ತಿದ್ದ ಸೂರ್ಯ...ಅಮೇರಿಕೆಯಲ್ಲಿ ದಿನಬೆಳಗಾದರೆ ಪ್ರಖರವಾಗಿ ಹಾಗೂ ವೇಗವಾಗಿ ಕೆಲಸಕ್ಕೆ ಬಂದು ಹಾಜರಾಗುವ ಸೂರ್ಯನಿಗೆ ಆನವಟ್ಟಿಯಲ್ಲಿ ಎದ್ದೇಳುವಾಗ ಮೈಗಳ್ಳತನವೇಕೆ ಎಂದು ಒಮ್ಮೆ ಅನ್ನಿಸಿದ್ದು ನಿಜ.

ಸರಿ, ಹೊರಡೋದೆಲ್ಲಿಗೆ? ಎನ್ನುವ ಪ್ರಶ್ನೆ ಎಷ್ಟು ಮುಂದೆ ಹಾಕುತ್ತಾ ಹೋದೆನೋ ಅಷ್ಟು ಮನದಲ್ಲಿ ದಟ್ಟವಾಗುತ್ತಾ ಬೆಳೆಯುತ್ತಾ ಹೋಗಿ ಉತ್ತರಿಸದೇ ಇದ್ದರೆ ತಲೆ ನೂರು ಹೋಳಾದೀತು ಎನ್ನುವ ಬೇತಾಳನ ರೂಪ ತಾಳಿಕೊಂಡಿತು, ಅದಕ್ಕುತ್ತರವೆನ್ನುವಂತೆ ಕಾಲುಗಳು ನಾನೋದಿದ ಹೈ ಸ್ಕೂಲಿನ ಕಡೆಗೆ ಚಲಿಸತೊಡಗಿದವು.

ಅದೇ ಊರು, ಕೆಲವರ ಮನೆ ಮುಂದೆ ಹೆಂಗಳೆಯರು ಬೇಗನೆದ್ದು ಬಾಗಿಲು ಸಾರಿಸಿ ರಂಗೋಲಿ ಇಡುವ ಪದ್ಧತಿಯನ್ನು ಇನ್ನೂ ಉಳಿಸಿಕೊಂಡಿದೆ, ಕೆಲವರ ಮನೆಯಲ್ಲಿ ಚೂರು-ಪಾರು ಸದ್ದುಗದ್ದಲ, ಇನ್ನು ಕೆಲವರ ಮನೆಯಲ್ಲಿ ನಿದ್ರಾ ದೇವತೆಯ ಮಡಿಲಿನಲ್ಲಿ ಸಿಹಿಕನಸಿನಲ್ಲಿ ತೇಲುತ್ತಿರುವವರು ಒಂದಿಷ್ಟು ಜನರಿದ್ದಿರಬಹುದು, ಆದರೆ ಮುಂಜಾನೆಯ ಔಟ್‌ಲುಕ್‌ನಲ್ಲಿ ನಮ್ಮೂರಂತೂ ಬದಲಾವಣೆಯಾಗಿಲ್ಲ ಎಂದುಕೊಳ್ಳುತ್ತಿರುವಾಗ ದೂರದಲ್ಲಿ ಯಾರದೋ ಒಬ್ಬರ ಮೊಬೈಲ್‌ಫೋನ್ ಧ್ವನಿ ನನ್ನ ಇಂದ್ರಿಯಗಳನ್ನು ಒಡನೆ ಜಾಗರೂಕಗೊಳಿಸುವಂತಾಯಿತು. ನಮ್ಮೂರಿನಲ್ಲಿಯೂ ಮೊಬೈಲ್ ಫೋನ್, ಎಟಿಎಮ್‌ಗಳು ಕೆಲಸ ಮಾಡುತ್ತವೆಯೇ ಎನ್ನುವ ಪ್ರಶ್ನೆಗೆ very good! ಎನ್ನುವ ಉತ್ತರ ಒಂದು ರೀತಿಯ ಖುಷಿಯನ್ನು ಬೆನ್ನುಹುರಿಯಿಂದ ಮೇಲೆ ಕಳಿಸತೊಡಗಿತು, ಅಥವಾ ಆ ಕಂಪನ ಆಗಷ್ಟೇ ಬೀಸಿದ ತಂಗಾಳಿಯ ಕೊಡುಗೆಯಾಗಿದ್ದಿರಲೂಬಹುದು.

ರಸ್ತೆಯ ಬದಿಯಲ್ಲಿ ನೋಡಿದೆ, ನಾನು ಶಾಲೆಗೆ ಹೋಗುತ್ತಿದ್ದಾಗ ಇದ್ದ ಮನೆಗಳು ಇನ್ನೂ ಹಾಗೇ ಇವೆ, ಕೆಲವೊಂದಿಷ್ಟಕ್ಕೆ ಸುಣ್ಣಬಣ್ಣ ತಾಗಿದ್ದಿರಬಹುದು, ಅವರವರ ಮನೆಯಲ್ಲಿ ನಡೆದ ಮದುವೆಯೋ ಮುಂಜಿಯ ಪ್ರತೀಕವಾಗಿ ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲವೂ ಬೆಳಗ್ಗೆ ಎದ್ದು ಮುಖ ತೊಳೆಯದೇ ಇಡೀ ದಿನ ಜೊಲ್ಲಡರಿದ ಮುಸುಡಿಯಲ್ಲಿ ಇದ್ದ ರೋಗಿಷ್ಟರಂತೆ ಬಿದ್ದುಕೊಂಡಿದ್ದವು - absolutely no maintenance - ಛೇ ಎಂದು ನನ್ನಷ್ಟಕ್ಕೆ ನಾನು ಗಟ್ಟಿಯಾಗಿ ಹೇಳಿಕೊಂಡೆ.

ಸುಲಭ, ಬಹಳ ಸುಲಭ - ಇಲ್ಲೆಲ್ಲಾದರೂ ಒಂದಿಷ್ಟು ಜಮೀನು-ತೋಟವನ್ನು ತೆಗೆದುಕೊಳ್ಳೋದು, ಅದರ ಸಾಗುವಳಿ, ಕೃಷಿಯಲ್ಲಿ ಬದುಕನ್ನು ಸವೆಸೋದು, ಬಂದ ಲಾಭಾಂಶದಲ್ಲಿ ಹಾಗೂ ಇದ್ದಿರೋ ಇಡುಗಂಟಿನಲ್ಲಿ ಜೀವನವನ್ನು ತಳ್ಳೋದು ಎಂದು ಸರಳವಾಗಿ ಒಂದೇ ಸಾಲಿನಲ್ಲಿ ಬದುಕಿನ ಕಥೆಯನ್ನು ಬರೆಯಬಲ್ಲ ನನಗೆ ಆ ಸುಂದರವಾದ ಮುಂಜಾನೆಯ ನಡಿಗೆ, ನಮ್ಮೂರಿನ ನಿರ್ಜೀವ ರಸ್ತೆಗಳ ಪಕ್ಕದಲ್ಲಿ ತೊಪ್ಪೆಗಳಂತೆ ಬಿದ್ದುಕೊಂಡಿರುವ ಮನೆಗಳು, ಅವುಗಳಲ್ಲಿ ಜೀವಂತವಾಗಿಯೋ ಅಥವಾ ನಿದ್ರೆಯಲ್ಲಿಯೋ (what difference does it make?) ತಮ್ಮದೇ ಲೋಕದಲ್ಲಿ ಪವಡಿಸಿದ ಜನರು, ಒಂದು ಕಾಲದಲ್ಲಿ ಕಾಡು, ಜೀವನಾಡಿ, ಸಹಜವಾಗಿ ಬೆಳೆದ ಶ್ರೀ ಗಂಧದ ಮರಗಳನ್ನು ರಾತ್ರೋ ರಾತ್ರಿ ಸಾಗಿಸಿ ಕಾಸುಮಾಡಿಕೊಂಡ ತಾಯ್ ಗಂಡರು, ಅನಾವಶ್ಯಕವಾಗಿ ಹಾರ್ನ್ ಬಾರಿಸಿಕೊಂಡು ಹೊಂಡ ತುಂಬಿದ ರಸ್ತೆಗಳಲ್ಲಿ ವೇಗವಾಗಿ (ಅದೂ ಘಂಟೆಗೆ ನಲವತ್ತು ಐವತ್ತು ಕಿಲೋ ಮೀಟರ್) ಧೂಳೆಬ್ಬಿಸಿ ಕುಲುಕುತ್ತಾ ಸಾಗುವ ತಗಡು ಬಸ್ಸುಗಳು, ಇನ್ನೂ ಏನೇನೋ ಇಲ್ಲಿ ಬರೆಯಲಾಗದವೆಲ್ಲ ನೆನಪಿಗೆ ಬಂದಿದ್ದೇ ತಡ ಕ್ಯಾಕ್ ಥೂ ಎಂದು ಕ್ಯಾಕರಿಸಿ ನಾನು ರಸ್ತೆಯ ಬದಿಗೆ ಉಗಿಯುವಂತಾಯಿತು.

Of course, ನಾನು ವೇಗವಾಗೇ ನಡೆಯೋದು ಎಲ್ಲಿ ಹೊರಟರೂ, ಆದರೆ ಇವತ್ತೇಕೆ ಆ ವೇಗ ಎಂದು ಪ್ರಶ್ನೆ ಹುಟ್ಟಿದ್ದೇ ತಡ ಕಾಲುಗಳು ನಿಧಾನವಾಗಿ ಹೋದವು, ತಲೆ ಇನ್ನೂ ಅದರ ವೇಗದಲ್ಲೇ ಬಂದ ಆಹಾರವನ್ನೆಲ್ಲ ಜೀರ್ಣಿಸಿಕೊಳ್ಳತೊಡಗಿತ್ತು.

ನಾನು ಹುಟ್ಟಿದ ಊರು ಯಾರಿಗೂ ಬೇಡ - ನನ್ನ ಹೆತ್ತವರು ಇನ್ನಷ್ಟು ದಿನ ಅಲ್ಲಿ ಇರೋದಿಲ್ಲ, ನನ್ನ ಒಡಹುಟ್ಟಿದವರು ಈಗಾಗಲೇ ಎಲ್ಲೆಲ್ಲೋ ತಮ್ಮನ್ನು ಕಳೆದುಕೊಂಡಿದ್ದಿರಬಹುದು, ನನಗೆ ಬೇಕಾದವರಿಗೆ ನಮ್ಮೂರಿನಲ್ಲಿ ನೆಲೆಸಬಹುದಾದ ಯಾವ ಅಸ್ಥೆಯೂ ಇಲ್ಲ, ಬರೀ ನನಗೊಬ್ಬನಿಗೇ ಆ ಮೋಹ, ಅದೆಲ್ಲಿಂದ ಹುಟ್ಟಿಕೊಳ್ಳುತ್ತೋ ಆ ರಾಗ ಯಾರಿಗೆ ಗೊತ್ತು?

ದೂರದಲ್ಲೆಲ್ಲೋ ಒಂದು ಕರಿನಾಯಿ ಬೊಗಳಿಕೊಂಡು ಓಡಿ ಬರತೊಡಗುತ್ತೆ, ಅದು ನನ್ನನ್ನು ಸಮೀಪಿಸುತ್ತಿರುವಂತೆ ಕಾಣಿಸುತ್ತೆ, ಬೀದಿನಾಯಿಯ ರಂಪಕ್ಕೆ ಹೆದರಿ ಓಡಿಹೋದರೆ ಏನಾಗಬಹುದೆಂಬ ಕಲ್ಪನೆ ನನಗಿರೋದರಿಂದ ನನ್ನ ಮನದ ಉಲ್ಬಣಗಳನ್ನು ಇದ್ದರೂ ಇರದಿದ್ದ ಹಾಗೆ ಮುಚ್ಚಿ ನನ್ನ ನಡಿಗೆಯನ್ನು ಹಾಗೆ ಮುಂದುವರಿಸುತ್ತೇನೆ, ನಾನು ಅರೆಕ್ಷಣದಲ್ಲಿ ಒಂದೇ ಕಾಲಿಗೆ ಬುದ್ಧಿಹೇಳಬಹುದು ಅಥವಾ ನಾಯಿಯನ್ನು ಝಾಡಿಸಿ ಒದೆಯಬಹುದು ಎನ್ನುವ ತತ್ವವನ್ನು ದೂರದಲ್ಲಿ ಹೊಂಚಿಹಾಕುತ್ತೇನೆ. 'ಇವನೂ ನಮ್ಮವರೊಳಗಿನವ...' ಎಂದು ನಾಯಿ ಹತ್ತಿರ ಬಂದಂತೆ ಮಾಡಿ ಹಾಗೇ ದೂರ ಹೋಗತೊಡಗುತ್ತದೆ, ನಾನು ಅದ್ಯಾವುದೋ ಕಾರಣಕ್ಕೆ ಎದೆಯ ಮೇಲೆ ಕೈ ಇಟ್ಟರೆ ಒಳಗಿಂದ ಕುಟ್, ಕುಟ್ ಶಬ್ದ ಕೇಳಿ ಆಶ್ಚರ್ಯವಾಗುತ್ತದೆ, ಅದರ ಹಿಂದೆ ತುಟಿಗಳನ್ನು ಬೇರ್ಪಡಿಸಲಾಗದ ಒಂದು ನಗೆ ಹುಟ್ಟಿ ಹಾಗೇ ಮಾಯವಾಗುತ್ತದೆ.

ಒಂದೆರಡು ಕಿಲೋಮೀಟರುಗಳನ್ನು ನಡೆದು ಹಿಂದಕ್ಕೆ ಬರುವಾಗ ಒಂದು ಮಾತ್ರ ಪಕ್ಕವಾಗುತ್ತದೆ - ಇಲ್ಲಿ ಮನೆಯನ್ನು ಕಟ್ಟಲಾರೆ, ನಾನಿರಲಾರೆ - ನಮ್ಮವರಿಲ್ಲದಿದ್ದ ಮೇಲೆ ನಾನೊಬ್ಬನೇಕೆ ಇಲ್ಲಿರಲಿ? ಯಾವ ರಾಗದ ಮೋಡಿಗೋ ಸಿಲುಕಿ ಪಡುವಾರಳ್ಳಿ ಪಾಂಡವರು ಸಿನಿಮಾದ 'ಜನ್ಮ ನೀಡಿದ ಈ ಮಣ್ಣನು ನಾ ಹೇಗೆ ತಾನೆ ತೊರೆಯಲಿ' ಹಾಡು ಕೇವಲ ಶಿಳ್ಳೆಯ (whistle) ರೂಪದಲ್ಲಿ ಮಾತ್ರ ಹೊರಗೆ ಬಂದು ಸ್ವಲ್ಪ ಹಿಂದಷ್ಟೇ ಬೇರ್ಪಡದೇ ನಕ್ಕ ತುಟಿಗಳ ಮಧ್ಯದ ಸಣ್ಣ ರಂಧ್ರದಿಂದ ಬಿಸಿಯ ಹವೆಯಾಗಿ ಹೊರಗೆ ಸೇರಿಹೋಗುತ್ತದೆ, ಅದರ ಹಿಂದಿನ ಧ್ವನಿ ನನ್ನೊಳಗೇ ಉಳಿದುಹೋಗುತ್ತದೆ.

ಮನೆ ಬಾಗಿಲನ್ನು ಹೊಕ್ಕುತ್ತಿದ್ದಂತೆ 'ಏನೋ ಎಲ್ಲಿ ಹೋಗಿದ್ಯೋ?' ಎನ್ನುವ ನಮ್ಮ ಮನೆಯವರಿಗೆ ಯಾವುದೇ ಉತ್ತರ ಕೊಡಲು ಅಸಹಾಯಕನಾಗಿ ಹೋಗುತ್ತೇನೆ, ಹೌದು, ಈ ಬಾರಿ ಇಲ್ಲಿಯವರೆಗೆ ನಾನು ಎಲ್ಲಿ ಹೋಗಿದ್ದೆ ಎನ್ನುವುದನ್ನು ಹೇಗೆ ಹೇಳಲಿ? (ಅಮೇರಿಕೆಯಲ್ಲಿನ ಟ್ರೆಡ್‌ಮಿಲ್ಲೇ ಎಷ್ಟೋ ವಾಸಿ, ಎಷ್ಟು ಮೈಲಿ ನಡೆದರೂ ನಾನೆಲ್ಲಿಗೂ ಹೋಗೋದಿಲ್ಲ, ಹಾಗೆ ಯಾರು ಪ್ರಶ್ನೆಯನ್ನೂ ಕೇಳೋದಿಲ್ಲ!)

***
'ಈ ಹಾಳಾದ್ ಬೆಂಗಳೂರಿನಲ್ಲಿ ಬದುಕೋಕ್ ಆಗೋದಿಲ್ಲಪಾ, ಎಷ್ಟು ದುಡ್ಡಿದ್ದರೂ ಸಾಕಾಗೋದಿಲ್ಲ ಈ ಊರ್ನಲ್ಲಿ' ಎಂದು ನಾನೊಬ್ಬನೇ ಅಲ್ಲ, ಬೇಕಾದಷ್ಟು ಜನ ಹೇಳ್ತಾರೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ನನ್ನ ಇಮಿಗ್ರೇಷನ್ ಲಾಯರ್ರು, ಪೈನಾನ್ಷಿಯಲ್ ಅಡ್ವೈಸರ್ರು ಇಬ್ರೂ 'ಇನ್ನೇನು ೨೦೦೭ ಬಂತಲ್ಲಾ, ಅಮೇರಿಕದ ಸಿಟಿಜನ್ ಆಗಿಬಿಡು!' ಅಂತ ಸಲೀಸಾಗಿ ಹೇಳ್ತಾ ಇರ್ತಾರೆ...ಈಗಾಗ್ಲೇ ಅಮೇರಿಕದಲ್ಲಿ ಪರಕೀಯನಾಗಿದ್ದೀನಿ, ಇನ್ನು ನನ್ನ ಪೂರ್ಣ ಐಡೆಂಟಿಟಿಯನ್ನು ಕಳೆದುಕೊಂಡು "ನಮ್ಮ" ದೇಶದಲ್ಲಿ ಪರದೇಶಿಯಾಗಿ ಹೋಗಲೇ? ಎಂದು ಮನಸ್ಸು ಮಮ್ಮಲಮರುಗತೊಡಗುತ್ತೆ. ಎಷ್ಟೋ ಜನ ಇಲ್ಲಿ ಬಂದು ದಶಕಗಟ್ಟಲೆ ಇದ್ದೋರು ಖುಷಿಯಾಗಿ ವಾಪ್ಸು ಹೋಗಿ ನೆಲೆಸ್ತಾ ಇಲ್ಲವೇ? ಅನ್ನೋ ಪ್ರಶ್ನೆ ಬೆನ್ನ ಹಿಂದೆ ಬರುತ್ತೆ, ಅವರೆಲ್ಲ ಎಲ್ಲಿಂದ ಎಲ್ಲಿಗ್ ಹೋಗ್ತಾರೋ? ಆದ್ರೆ ನಾನೆಲ್ಲಿಗೆ ಹೋಗ್ಲಿ?

***

ಎಲ್ಲೂ ನೆಲೆ ನಿಲ್ಲಬಾರ್ದು ಅಂತ ಅಂದ್‌ಕೊಂಡು ಬದುಕೋಕ್ ಆಗೋದಿಲ್ಲ, ಹಾಗೇ ದಿನ ಬಿಟ್ಟು ದಿನ ಬರೋ ಕಮಿಟ್‌ಮೆಂಟ್‌ಗಳೆಲ್ಲ ಒಂದು ರೀತಿ ಕಂಪದ ಭೂಮಿಯಲ್ಲಿ ನಾವ್ ಮಾಡೋ ಒದ್ದಾಟವಷ್ಟೇ, ಏನ್ ಹಾರಾಡಿದ್ರೂ ಹುದುಗಿಕೊಳ್ಳೋ ಆಳ ಕಡಿಮೆ ಏನ್ ಆಗೋದಿಲ್ಲ. ನಾಳಿನ ನಾಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿ ಎಂದು ಇಂದಿನ ಇಂದನ್ನು ಕಡೆಗಣಿಸಿಯೋ ಅಥವಾ ಹೆಚ್ಚು ಬೆಲೆಕೊಡದೆಯೋ ಬದುಕೋದೊಂದು ತತ್ವ, ಇಂದಿನ ಇಂದೇ ದೊಡ್ದು, ನಾಳಿನ ನಾಳೆಗಳನ್ನು ನೋಡ್‌ಕೊಳ್ಳೋಣ ಎನ್ನೋದು ಇನ್ನೊಂದು ತತ್ವಾ. ದಿನದ ಎಂಟು-ಹತ್ತು ಘಂಟೆ ಮ್ಯಾನೇಜ್‌ಮೆಂಟಿನ ಪ್ರಾಸೆಸ್ಸುಗಳು, ಮಾಡೋ ಪ್ರಾಜೆಕ್ಟುಗಳು, ದಿನಚರಿ-ಸ್ಕೆಡ್ಯೂಲರ್‌ಗಳು ಒಂದು ರೀತಿ ಜೀವಾ ತಿಂತಾವೆ; ಮನೆಗೆ ಬಂದು ಕನ್ನಡದ ತಿಳಿಸಾರು-ಅನ್ನ-ಹುಳಿ-ಮೊಸರು-ಉಪ್ಪಿನಕಾಯಿ-ಹಪ್ಪಳದ ಬದುಕು (ಜೊತೆಯಲ್ಲಿ ಬ್ರೆಡ್ಡೂ, ಕಾರ್ನ್‌ಪ್ಲೇಕ್ಸೂ ಸೇರಿ) ಮತ್ತೊಂದು ರೀತಿ ಜೀವ(ನ)ವನ್ನ ಪೋಷಿಸ್ತಾವೆ. 'ಎಲ್ಲೂ ನಿಲ್ ಬೇಡ, ಮನೆ ಕಟ್ ಬೇಡ, ಅನಿಕೇತನವಾಗಿರೂ...' ಅನ್ನೋದ್ ಒಂದು ತತ್ವ; ಸೊಗಸಾಗ್ ಬದುಕ್‌ಬೇಕು, ಎಲ್ಲ ಐಶಾರಾಮ ಇರಬೇಕು (ಕಂಡಿದ್ದೆಲ್ಲ ಬೇಕು ಕುಂಡೇ ಭಟ್ಟನಿಗೆ ಅಂತಾರಲ್ಲ ಹಾಗೆ), ಚೆನ್ನಾಗ್ ದುಡ್ ಮಾಡ್‌ಬೇಕು ಅನ್ನೋದ್ ಮತ್ತೊಂದ್ ತತ್ವಾ. ಆನವಟ್ಟಿಯ ಮುಂಜಾನೆಯಲ್ಲಿ ದಿಢೀರನೆ ಬಂದು ಎದೆಬಡಿತವನ್ನು ಹೆಚ್ಚಿಸೋ ಕಪ್ಪು ನಾಯಿಗಳು ಎಲ್ಲಿ ಹೋದರಲ್ಲಿ ಒಂದಲ್ಲ ಒಂದ್ ಅವತಾರವನ್ನು ತಾಳಿಕೊಂಡು ಬಂದೇ ಬರ್ತಾವೆ, ಅಂತೋವ್ ಬಂದ್ರೂ ಧೃತಿಗೆಡದೆ ಏನೂ ಆಗದೇ ಇರೋಹಂಗೆ ಸಹಜತೆಗೆ ಸನ್ನಿಹಿತವಾಗಿ ಬದುಕು ಸಾಗ್ಸೋದೇ ಒಂದು ದೊಡ್ಡ ಸವಾಲು.

ಅಮೇರಿಕ ಬೇಡ, ಆನ್ವಟ್ಟಿ ಬೇಡ, ಯಾವೂರೂ ಬೇಡಾ ಅನ್ನೋ ಸ್ಥಿತಿಗೆ ನಾನ್ ಬರಬೇಕು ಅಂದ್ರೆ ಇನ್ನೊಂದು ಮಿಲಿಯನ್ (ಹತ್ತು ಲಕ್ಷ) ಜನ್ಮ ಎತ್ತಿ ಬರಬೇಕು ಅಂತ ಈಗಾಗ್ಲೇ ಖಾತ್ರಿ ಆಗಿ ಹೋಗಿರೋದ್ರಿಂದ್ಲೇ ಧ್ಯಾನಾ-ಪಾನಕ್ಕೆಲ್ಲ ಗುಡ್‌ಬೈ ಹೇಳಿ ಬಾಳಾ ವರ್ಷಗಳಾಗಿ ಹೋಯ್ತು! (ಕಣ್ ಮುಚ್‌ಗಂಡ್ ಕೂತ್ರೂ ಒಂದರ ಮೇಲೊಂದಾಗಿ ಬರೋ ಯೋಚ್ನೆಗಳನ್ನ ಓಡ್ಸೋದಕ್ಕೆ ಏನೂ ಮಾಡ್ದೇ ಸುಮ್ನೇ ಕೂತಿರೋದು ಅಂದ್ರೆ?!)

***

I think, life has to move on, whether or not, one knows where it is heading, or what difference does it make?

Saturday, April 21, 2007

...May be onboard!

ಹೀಗೇ ಶುಕ್ರವಾರ ಸಂಜೆ ಬೇಗ ಕೆಲಸ ಮುಗಿಯಿತೆಂದು ಏನೋ ಕಡಿದು ಹಾಕುವುದು ಬಿದ್ದಿದೆಯೆಂದುಕೊಂಡು ಬಂದರೆ ಮನೆಯಲ್ಲಿ ಸುಬ್ಬ ಬೋರಲಾಗಿ ಬಿದ್ದುಕೊಂಡಿದ್ದ, ಗೊರಕೆ ಹೊಡೆಯುತ್ತಿದ್ದಾನೇನೋ ಎನ್ನುವ ಸಂಶಯ ಬಂದಿತಾದರೂ ನಾನು ಬಾಗಿಲು ತೆಗೆದ ಸದ್ದಿನಿಂದ ಅವನು ಏದ್ದೇಳುವ ಗಡಿಬಿಡಿಯನ್ನು ತೋರಿದ್ದರಿಂದಾಗಿ ಅವನ ಅವಸ್ಥೆಯನ್ನು ನೋಡಿ ನಗು ಹುಟ್ಟಿತು, ನಿದ್ರೆಯಿಂದ ಎದ್ದೇಳುವಾಗಲೂ ಅದೆಂಥ ಗಡಿಬಿಡಿ ಎಂದು ಸೋಜಿಗವಾಯಿತು. ಅವನ ಪ್ರಶ್ನಾರ್ಥಕ ಮುಖವನ್ನು ನೋಡಿ ನಾನೇ ಮಾತಿಗೆ ತೊಡಗಿದೆ...

'ಗುಡ್ ಇವನಿಂಗ್. ಏನೋ ಸಕತ್ತಾಗಿ ಮಲಗಿದ ಹಾಗಿತ್ತು!'

'ಏನಿಲ್ಲಪ್ಪಾ, ಸುಮ್ನೇ ಹೀಗೇ ಮಲಗಿದೆ ನೋಡು, ಅದೆಲ್ಲಿಂದ ನಿದ್ದೆ ಬಂತೋ ಯಾರಿಗೆ ಗೊತ್ತು?' ಎಂದು ಆಕಳಿಸಿಕೊಂಡು ನನಗೆ ಒಂದೂ ತಿಳಿಯದ ಹಾಗೆ ಮತ್ತಿನ್ನೇನೋ ಅಂದ.

'ಬೇಗ ಮುಖ ತೊಳಿಯೋ, ಹೀಗೇ ಎಲ್ಲಾದ್ರೂ ಹೋಗಿ ಬರೋಣ' ಎಂದು ಬಲವಂತ ಮಾಡಿದ್ದಕ್ಕೆ ಹಾಸಿಗೆಯಿಂದೆದ್ದು ಬೆಡ್‌ಶೀಟ್ ಮಡಚುವ ಲಕ್ಷಣವನ್ನು ತೋರತೊಡಗಿದ...ನಾನೂ ಬಟ್ಟೆ ಬದಲಾಯಿಸಿ ಮುಖ ತೊಳೆಯಲು ನಡೆದೆ.

ಒಂದಿಷ್ಟು ಕಾಫಿ ಕುಡಿಸಿ ಹೊರೆಡಿಸಿದ್ದನಾದರೂ ಸುಬ್ಬ ಇನ್ನೂ ನಿದ್ರೆಯ ಗುಂಗಿನಲ್ಲೇ ಇದ್ದ ಹಾಗಿತ್ತು, ತಾನೇ ತಾನಾಗಿ ಯಾವುದೇ ಮಾತನ್ನು ಆಡಬಾರದು ಎಮ್ಬ ಪ್ರತಿಜ್ಞೆಯನ್ನು ಮಾಡಿದ ಹಾಗಿತ್ತು, ನಾನೂ ಸ್ವಲ್ಪ ಹೊತ್ತು ಸುಮ್ಮನೆ ಇದ್ದೆನಾದರೂ ಅಲ್ಲಲ್ಲಿ ಮಾತನಾಡಿಸಿದ್ದಕ್ಕೆ ಒಂದೆರಡು ಪದಗಳಲ್ಲೇ ಉತ್ತರ ಕೊಡಲು ಶುರುಮಾಡಿದ್ದನ್ನು ನೋಡಿ ಸದ್ಯ ಎಂದು ಕೊಂಡೆ. ಸಂಜೆ ಕತ್ತಲು ಚುಮುಚುಮ ಬೀಳುತ್ತಿತ್ತು. ಏಪ್ರಿಲ್ ತಿಂಗಳಾದರೂ ಹವೆ ಅಷ್ಟೊಂದು ಬೆಚ್ಚಗೇನೂ ಇರಲಿಲ್ಲ, ಗಾಳಿ ಬೀಸಿದಾಗ ಸ್ವಲ್ಪ ಚಳಿ ಆಗುತ್ತಿತ್ತು ಎನ್ನುವುದನ್ನು ಬಿಟ್ಟರೆ ಒಂದು ಸ್ವೆಟರ್ ಹಾಕಿಕೊಂಡು ಓಡಾಡಬಹುದಾದ ವಾತವಾರಣವಿತ್ತು.

ನಾನು ಯಾವುದೋ ಗುಂಗಿನಲ್ಲಿ ಕಾರನ್ನು ಓಡಿಸುತ್ತಿದ್ದೆ, ಸುಬ್ಬ ಎದುರಿನ ಕಾರನ್ನು ತೋರಿಸಿ 'ಕೆಲವು ಕಾರುಗಳ ಹಿಂದಿನ ಗಾಜಿಗೆ Baby On Board ಅಂತ ಬೋರ್ಡ್ ಹಾಕಿಕೊಂಡಿರುತ್ತಾರಲ್ಲ, ಏನದರ ಮರ್ಮ!?' ಎಂದು ಈಗಷ್ಟೇ ತಪ್ಪಸ್ಸನ್ನು ಮುಗಿಸಿ ಮೇಲೆದ್ದ ಋಷಿಯ ಧ್ವನಿಯಲ್ಲಿ ಪ್ರಶ್ನೆ ಕೇಳಿದ, ನನ್ನ ಉತ್ತರಕ್ಕೆ ಕಾಯದೇ ಹಾಗೇ ಮುಂದುವರೆಸಿ, 'ಅಂದ್ರೆ ಅದನ್ನ ಓದಿ ಹಿಂದಿನ ಡ್ರೈವರುಗಳು are they expected do anything different?' ಎಂದ.

'ಹಾಗೇನಿಲ್ಲ, ಅವರು ಸುಮ್ನೆ ನಮ್ಮ ಕಾರಿನಲ್ಲಿ ಮಗುವಿದೆ ಎಂದು ಸೈನ್ ಹಾಕಿಕೊಂಡು ಹಿಂದೆ ಯಾರಾದ್ರೂ ರ್ಯಾಷ್ ಆಗಿ ಡ್ರೈವ್ ಮಾಡೋರು ಇದ್ರೆ ಅವರಿಗೆ ಒಂದ್ ರೀತಿ ಮುನ್ಸೂಚನೆ ಕೊಡೋ ಹಾಗೆ...' ಎನ್ನುವಾಗ ಮಧ್ಯೆ ತಡೆದು 'ಸದ್ಯ, ಆ ರೀತಿ ಬೋರ್ಡ್ ಹಾಕ್ಕೊಂಡ್ರೆ ಅವರಿಗೇನು ಸ್ಪೆಷಲ್ ಪ್ರಿವಿಲೇಜ್ ಬರಲ್ವಲ್ಲಾ ಅಷ್ಟು ಸಾಕು, ಅದಿರ್ಲಿ ಕಾರಿನಲ್ಲಿ ಮಗುವಿದ್ರೆ ನಿಧಾನವಾಗಿ ಹೋಗಬೇಕು ಅಂತಾ ರೂಲ್ಸ್ ಏನಾದ್ರೂ ಇದೆಯಾ?'

'ಇಲ್ಲಪ್ಪಾ ಮಗು ಇಟ್‌ಕೊಂಡೂ ಸರಿಯಾದ ಸ್ಪೀಡ್‌ನಲ್ಲೇ ಹೋಗ್‌ಬಹುದು'.

'ಈ ವಮ್ಮಾ ಡ್ರೈವ್ ಮಾಡೋದ್ ನೋಡಿದ್ರೆ Baby On Board ಅನ್ನೋದರ ಬದಲಿಗೆ May Be On Board ಅಂತ ಬೋರ್ಡ್ ಹಾಕ್ಕೊಂಡ್ರೆ ಎಷ್ಟೋ ಚೆನ್ನಾಗಿರುತ್ತೆ ನೋಡು, ಅದ್ ಸರಿ, ನೀನ್ಯಾಕೆ ಇಂಥಾ ವಾಹನಗಳ ಹಿಂಬದಿಯನ್ನ ಮೂಸಿಕೊಂಡು ಹೋಗೋದು ಅಂತ ಗೊತ್ತಾಗ್ಲಿಲ್ಲ' ಎಂದು ನಕ್ಕ ಮುಸುಡಿ ಮಾಡಿಕೊಂಡ.

'ಏನೋ ನೀನು ಪ್ರಶ್ನೆ ಕೇಳ್ತಿದ್ದಿ ಅಂತ ಆ ವಾಹನದ ಹಿಂದೆ ಹೊರಟೆನಪ್ಪಾ...ಅಮೇರಿಕದ ನೀರು ಕುಡಿದು ಇನ್ನೂ ತಿಂಗಳೂ ಆಗ್ಲಿಲ್ಲ, ಆಗ್ಲೇ ರೆಸ್ಟ್‌ಲೆಸ್ ಆಗ್ತಿದಿಯಲ್ಲಾ, ಬೆಂಗ್ಳೂರ್ ಪಂಗ್ಳೂರ್‌ನ್ಯಾಗೆ ಮುಚ್‌ಕೊಂಡು ರಸ್ತೆ ಮೇಲೆ ಘಂಟೆಗೆ ಐದು ಮೈಲಿ ವೇಗದಲ್ಲಿ ಓಡುಸ್ತೀಯಲ್ಲಾ ಅದಕ್ಕೇನ್ ಹೇಳ್ಬೇಕು?' ಎಂದು ಲೇನ್ ಬದಲಾಯಿಸಿದೆ.

'ನಮ್ಮೂರ್‌ಗಳಲ್ಲೆಲ್ಲೂ ಇಷ್ಟಿಷ್ಟೇ ಸ್ಪೀಡ್ ಹೊಡೀರಿ ಅಂತ ಕಾನೂನ್ ಏನೂ ಇರಲ್ಲಾ, ನಾವು ಕಂಡೀಷನ್ನ್ ಹೆಂಗಿರುತ್ತೋ ಅದಕ್ಕೆ ತಕ್ಕಂತೆ ಸ್ವಾಭಾವಿಕವಾಗಿ ಸ್ಪೀಡ್ ಹೊಡೀತೀವಿ...ಇಷ್ಟು ಸ್ಫೀಡ್‌ನಲ್ಲಿ ಹೊಡೆಯೋ ಅಂತ ನಮಿಗ್ಯಾವನೂ ಹೇಳೋದಿಲ್ಲ, ಇಲ್ಲಿ ಥರಾ. ನಮ್ ರಸ್ತೆ ನಮ್ಮೂರು ಹೆಂಗ್ ಬೇಕಾದಂಗೆ ಹೊಡಕಂತೀವಿ!'

'ಅಲ್ಲೆಲ್ಲಿ ಸ್ಪೀಡ್ ಹೊಡಿತಿ ಬಿಡು, ಆ ಕಾರುಗಳು, ಆ ರಸ್ತೆಗಳು, ಅಲ್ಲಿ ಜನಾ ಎಲ್ಲಾ ಒಂದೇ ಥರಾ ಇರ್ತಾರ್ ನೋಡು, ಅವರಿಗೆ ಅಲ್ಲಿಂದಲ್ಲಿಗೆ ಸಕತ್ತಾಗಿ ಮ್ಯಾಚ್ ಆಗುತ್ತೆ, ಅವರೊಳಗೆ ನೀನೂ ಒಬ್ಬ!' ಸ್ವಲ್ಪ ಸಿಟ್ಟು ಬರಲಿ ಎಂದು ಬೇಕಂತೆಯೇ ಕಿಚಾಯಿಸಿದೆ.

'ಗುರುವೇ, ಅಮೇರಿಕನ್ ನೀರು ಕುಡಿದಾಕ್ಷಣ ನೀನು ಬದಲಾಗಿ ಹೋದೆ ಎಂದು ನಿನಗೆ ಸರ್ಟಿಫಿಕೇಟ್ ಕೊಟ್ಟೋರ್ ಯಾರು?' ಎಂದು ನಾಟಕೀಯ ಶೈಲಿಯಲ್ಲಿ ಜಗ್ಗೇಶ್ ಪೋಸ್ ಕೊಟ್ಟು ಕೇಳಿದ, ನಾನು ಸುಮ್ಮನೇ ಇದ್ದು, ಟ್ರಾಫಿಕ್ ಮೇಲೆ ಗಮನ ಕೊಡೋನ ಹಾಗೆ ಮುಖ ಮಾಡಿಕೊಂಡಿದ್ದರೂ ಮುಂದುವರೆಸಿ 'ಜರ್ಸೀ ಸಿಟಿಯ ಇಂಡಿಯಾ ಬಜಾರ್‌ಗೆ ಕರಕೊಂಡ್ ಹೋಗು ತೋರುಸ್ತೀನಿ ಅಮೇರಿಕನ್ ನೀರು ಕುಡಿದ ಪ್ರಜ್ಞಾವಂತರು ಮಾಡೋ ಕೆಲ್ಸಾನಾ!' ಎಂದು ಓಪನ್ ಸವಾಲನ್ನು ಎಸೆದುಬಿಡೋದೆ...ನನಗಂತೂ ಸುಮ್ಮನಿದ್ದರೆ ಒಪ್ಪಿಕೊಂಡಂತೆ ಆರ್ಗ್ಯೂ ಮಾಡಿದ್ರೆ ಬೆಂಕಿಗೆ ತುಪ್ಪಾ ಸುರಿದಂತೆ ಎನ್ನಿಸಿ ಏನು ಮಾಡುವುದಕ್ಕೂ ತೋಚಲಿಲ್ಲ, ಒಂದು ಕ್ಷಣ.

ಸ್ವಲ್ಪ ತಡವರಿಸಿ ಹೇಳಿದೆ, 'May be onboard..., ಅನ್ನೋ ಕಾಮೆಂಟ್ ಹೊಡೆದೋನು ನೀನು, ಡ್ರೈವಿಂಗ್ ಅನ್ನೋದು ಪ್ರಿವಿಲೇಜೇ ಹೊರತೂ ಅದು ನಿನ್ನ ಹಕ್ಕಲ್ಲ. ನಿನಗ್ಯಾವ ಎಮರ್ಜೆನ್ಸಿ, ಅರ್ಜೆಂಟ್ ಕೆಲ್ಸಾ ಇಲ್ಲದ ಮೇಲೂ ಇನ್ನುಳಿದ ಡ್ರೈವರ್‌ಗಳು ಸ್ಪೀಡ್ ಆಗಿ ಹೋಗ್ಬೇಕು ಅಂತ ಡಿಮ್ಯಾಂಡ್ ಮಾಡೋ ನೀನು, ಇಷ್ಟೊಂದು ಸ್ಪೀಡ್ ಆಗಿ ಎಲ್ಲೆಲ್ಲೋ ಹೋಗಿ ಮಾಡಿ ಸಾಧಿಸಿದ್ದೇನು ಅಂತ ಸ್ವಲ್ಪ ತಿಳಿಸಿ ಹೇಳ್ತೀಯೇನು?' ಎಂದು ದೊಡ್ಡ ಸವಾಲನ್ನೇ ಎಸೆದೆ.

ಒಂದೆರಡು ಕ್ಷಣ ವಿಳಂಬದಲ್ಲಿ ಅವನಿಂದ ಉತ್ತರ ಬಂದಿದ್ದರ ಭಾವವನ್ನು ಊಹಿಸಿ, ದೊಡ್ಡ ವಾದದ ರಾದ್ಧಾಂತವೇನೋ ಆಗೋದಿಲ್ಲ ಎಂಬ ಸಮಾಧಾನ ನನ್ನದಾಯಿತು, 'ಪದೇ-ಪದೇ ನನ್ನ ಸ್ಪೀಡಿಗೂ ಇಲ್ಲೀ ಸ್ಪೀಡಿಗೂ ಕಂಪೇರ್ ಮಾಡಬೇಡ...ಈ ದೇಶ ಹುಟ್ಟಿ-ಬೆಳೆಯೋದೇ ಎಲ್ಲ ವೇಗಮಯವಾಗಿ, ಅಂಥಾದ್ದರಲ್ಲಿ ಒಂದಿಷ್ಟ್ ಜನ ತೆವಳಿಕೊಂಡೇ ರಸ್ತೆ ಸವೆಸ್ತಾರೆ ಎಂದ್ರೆ, ಅದು ಒಂದ್ ರೀತಿ ದೊಡ್ಡ ಡೇಂಜರ್ರೇ - ಈಗ ಮಕ್ಳು ಇಟ್‌ಗೊಂಡೋರು ನಿಧಾನವಾಗಿ ಡ್ರೈವ್ ಮಾಡಿದಾಕ್ಷಣ ಉಳಿದೋರೂ ಅದನ್ನೇ ಅನುಸರಿಸಬೇಕು ಅನ್ನೋದು ಎಲ್ಲೀ ನಿಯಮಾನಪ್ಪಾ?'

'ಸುಬ್ಬೂ, ನಿನಗೊತ್ತಾಗಲ್ಲ ಸುಮ್ನಿರು - ಇನ್ನೂ ಒಂದಿಷ್ಟು ವರ್ಷ ಅಮೇರಿಕವನ್ನ ಕಣ್ ತುಂಬಾ ನೋಡು, ಒಂದಿನ ಇದೇ ಟಾಪಿಕ್ಕನ್ನಿಟ್ಟುಕೊಂಡು ವಾದ ಮಾಡೋಣಂತೆ...' ಎಂದು ನನ್ನ ಗಾಡಿಯ ವೇಗವನ್ನು ಹೆಚ್ಚಿಸಿದೆ, ಸುಬ್ಬುಗೆ ನಾನು ಹೇಳಿದ್ದು ಇಷ್ಟವಾಗಲಿಲ್ಲವೆಂದು ಕಾಣಿಸಿತು, ಆತ ರೆಡಿಯೋ ಡಯಲ್ ಕಡೆಗೆ ಕೈ ಹಚ್ಚಿದ.

Thursday, April 19, 2007

ಹೂಡಿಕೆ-ಕೂಡಿಕೆ

ನೀವು ಶರವೇಗದ ಸರದಾರರಾಗಿದ್ದರೆ ನನ್ನ ಆಮೆಯ ವೇಗವನ್ನು ದಯವಿಟ್ಟು ಕ್ಷಮಿಸಿ, ನನ್ನ ಅನಿಸಿಕೆಗಳಿಗೆ ನಾನು ಹೇಗೆ ಬಾಧ್ಯಸ್ಥನೋ ಹಾಗೇ ಅನ್ನ ಅನುಭವಗಳಿಗೂ ಕೂಡಾ. ಈ ನಿಟ್ಟಿನಲ್ಲಿ ಹೂಡಿಕೆ ಕುರಿತ ನನ್ನ ಅನುಭವಗಳ ಬಗ್ಗೆ ಬಹಳ ದಿನಗಳಿಂದ ಬರೆಯಬೇಕು ಎನ್ನಿಸಿದ್ದರೂ ಹೀಗೆ ಈ ಹಿಂದೆ ಬರೆಯಲಾಗಿರಲಿಲ್ಲ.

ನಾವೆಲ್ಲ ಭಾರತದಲ್ಲಿ ಮೊಟ್ಟ ಮೊದಲನೇ ಭಾರಿಗೆ ಯಾವುದೋ ಮಾಧ್ಯಮದ ಮುಖಾಂತರ ಸೌದಿ ಅರೇಬಿಯಾದಲ್ಲಿನ "ಒಳ್ಳೆ"ಯ ಮುಸ್ಲಿಮರು ಬ್ಯಾಂಕಿನಲ್ಲಿ ತಾವು ಇರಿಸಿದ ಅಥವಾ ತೊಡಗಿಸಿದ ಹಣಕ್ಕೆ ಬಡ್ಡಿಯನ್ನೂ ತೆಗೆದುಕೊಳ್ಳುವುದಿಲ್ಲವಂತೆ ಎಂದು ಓದಿದಾಗ, 'ಅವರೇನ್ ಬಿಡು, ಒಳ್ಳೇ ಕರಡಿ ಇದ್ದ ಹಾಗೆ...' ಎಂದು ತಮಾಷೆ ಮಾಡಿಕೊಂಡಿದ್ದೆವು (ಬಹಳ ಶ್ರೀಮಂತರನ್ನು ನಮ್ಮೂರಿನಲ್ಲಿ 'ಅವರೇನ್ ಬಿಡಪಾ ಕರಡಿ ಇದ್ದಂಗೆ, ..ಕ್ಕೂ ಕೂದ್ಲಿಗೂ ವ್ಯತ್ಯಾಸ ಗೊತ್ತಾಗಲ್ಲ!' ಎಂದು ಹೇಳುವುದು ನಾಣ್ಣುಡಿ). ನಮಗೆಲ್ಲಾ ಅಲ್ಲಿ ದುಡಿದ ಹಣದಲ್ಲಿ ಮಿಕ್ಕುವುದಿರಲಿ ಸಾಲ ಮಾಡದಿದ್ದರೆ ಆ ತಿಂಗಳೇ ದೊಡ್ಡದು ಎನ್ನುವ ಪರಿಸ್ಥಿತಿ ಇದ್ದಾಗ, ನನ್ನ ಕೈಯಲ್ಲಿ ಹಣವೆನ್ನುವುದೇನಾದರೂ ಉಳಿದಿದ್ದರೆ/ಓಡಾಡಿದ್ದರೆ ಅದು ಇಲ್ಲಿಗೆ ಬಂದ ಮೇಲೇ ಎಂದು ಹೇಳಬೇಕು. ಆದರೆ ಇಲ್ಲಿನ ಇಂಟರೆಷ್ಟ್ ರೇಟ್ ನೋಡಿ ನಾನು ತಲೆ ತಿರುಗಿ ಬೀಳದಿದ್ದುದೇ ಹೆಚ್ಚು, ನಾನು ಬಂದ ಹೊಸತರಲ್ಲಿ "ಚೆಕ್ಕಿಂಗ್" ಅಕೌಂಟ್ ಎನ್ನುವುದು ಹೊಸದಾದರೂ, ಬ್ಯಾಂಕಿನಲ್ಲಿ ಹೇಗೇ ಹಣ ತೊಡಗಿಸಲಿ, ಅಲ್ಲಿ ಎರಡು-ಹೆಚ್ಚೆಂದರೆ-ಮೂರು ಪರ್ಸೆಂಟ್ ಬಡ್ಡಿ ತೆಗೆದುಕೊಂಡರೆ ಅದು ಬಹಳವಾಗುತ್ತಿತ್ತು. ಆಗೆಲ್ಲ ಭಾರತದಲ್ಲಿ ಹನ್ನೊಂದು-ಹನ್ನೆರಡರವರೆಗೆ ಇಂಟರೆಷ್ಟು ರೇಟು ಇದ್ದಿದ್ದು ನಮಗೆಲ್ಲಾ ಇನ್ನೂ ಭಾರತದಲ್ಲೇ ಹಣವನ್ನು ತೊಡಗಿಸುವ ಹುಚ್ಚನ್ನೂ ಹೆಚ್ಚಿಸಿತ್ತು. ಆದರೆ ಭಾರತಕ್ಕೆ ಇಲ್ಲಿಂದ ಒಮ್ಮೆ ಕಳಿಸಿದ ಹಣ ಈವರೆಗೆ ಯಾವ ರೂಪದಲ್ಲಿ ಹಿಂದಕ್ಕೆ ಬಂದಿದ್ದು ನನಗೆ ನೆನಪಿಲ್ಲ!

ಇಲ್ಲಿ ಕೊಡುವ ಒಂದೆರಡು ಪರ್ಸೆಂಟ್ ಬಡ್ಡಿಯನ್ನೂ ಬೇಡವೆನ್ನಲು ನಾವೇನು ಆಗರ್ಭ ಶ್ರೀಮಂತರೇ, ಸೌದಿ ದೊರೆಗಳೇ...ಎಷ್ಟು ಸಿಕ್ಕರೆ ಅಷ್ಟು ಎಂದು ಸುಮ್ಮನೆ ತೆಗೆದುಕೊಳ್ಳುತ್ತಿದ್ದೆವು. ಒಂದು ಕಡೆ ಆಲನ್ ಗ್ರೀನ್‌ಸ್ಪ್ಯಾನ್ ಇನ್‌ಫ್ಲೇಶನ್ ಅನ್ನು ಕಟ್ಟಿ ಹಾಕಿದಂತೆ ತೋರಿದರೂ ಸುಮಾರು ಮೂರು-ಮೂರುವರೆ ಪರ್ಸೆಂಟಿನಷ್ಟು ಇದ್ದ ಇನ್‌ಫ್ಲೇಷನ್ ರೇಟನ್ನು ಬೀಟ್ ಮಾಡಲು ಬ್ಯಾಂಕಿನ ಚೆಕ್ಕಿಂಗ್, ಸೇವಿಂಗ್ಸ್, ಮನಿ ಮಾರ್ಕೆಟ್‌ನಂತಹ ಹೆಚ್ಚು ಕನ್ಸರ್‌ವೆಟಿವ್ ಮಾಧ್ಯಮಗಳನ್ನು ಬಿಟ್ಟು ಸೆಕ್ಯೂರಿಟೀಸ್, ಮ್ಯೂಚುವಲ್ ಫಂಡ್, ಮುಂತಾದ ಹೆಚ್ಚು ರಿಸ್ಕ್ ಇದ್ದಿರಬಹುದಾದ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನು ತೊಡಗಿಸದೆ ಬೇರೆ ವಿಧಿ ಇದ್ದ ಹಾಗೆ ಕಾಣಿಸಿರಲಿಲ್ಲ. (ಆಗಿನ ದಿನಗಳಲ್ಲಿ ರಿಯಲ್ ಎಸ್ಟೇಟ್‌ಗೆ ಕೈ ಹಾಕಬೇಕು ಎನ್ನುವ ಬುದ್ಧಿಯಾಗಲೀ, ತಿಳುವಳಿಕೆಯಾಗಲಿ ಹತ್ತಿರವೂ ಸುಳಿದಿದ್ದಿಲ್ಲ, ಆ ಮಾತು ಬೇರೆ).

ಒಂದು ಕಡೆ ಒಂದಿಷ್ಟು ಹಣವನ್ನು ಕೂಡಿಸಿಕೊಳ್ಳೋಣ, ಭಾರತಕ್ಕೆ ಕಳುಹಿಸಿ, ಕಾರು-ಪಾರು ಮುಂತಾದವುಗಳನ್ನು ತೆಗೆದುಕೊಂಡು, ಕೊಡುವವರಿಗೆಲ್ಲ ಕೊಟ್ಟು ಉಳಿದಿದ್ದನ್ನು ಇನ್‌ವೆಷ್ಟ್ ಮಾಡೋಣವೆನ್ನುವಷ್ಟರಲ್ಲಿ ತೊಂಭತ್ತೇಳನೇ ಇಸವಿಯಿಂದ ಮೇಲೆ ಹತ್ತಿದ ಮಾರುಕಟ್ಟೆ ಎರಡು ಸಾವಿರದ ಒಂದನ್ನು ದಾಟಲು ಮೊದಲು ಮಾಡಿತ್ತು. ಊರು ಕೊಳ್ಳೇ ಹೋದ ಮೇಲೆ ದೊಡ್ಡೀ ಬಾಗಿಲು ಹಾಕಿದರು ಎನ್ನುವಂತೆ ಎಲ್ಲರೂ ಸಾಕಷ್ಟು ಕಾಸು ಮಾಡಿಕೊಂಡೋ ಕೆಲವರು ಕಳೆದುಕೊಂಡೋ ಒದ್ದಾಡುತ್ತಿರುವ ಹೊತ್ತಿನಲ್ಲಿ ನಾನು ಸ್ಟಾಕ್ ಮಾರ್ಕೆಟ್‌ಗೆ ಏನೂ ಗೊತ್ತಿಲ್ಲದೇ ಪ್ರವೇಶ ಪಡೆದಿದ್ದೆ.

ಐಟಿ ಕಾರ್ಯಕ್ಷೇತ್ರದಲ್ಲಿ ಇದ್ದ ಪರಿಣಾಮವೋ, ಅಥವಾ ತಿಳುವಳಿಕೆಯ ಮಿತಿಯೋ ಎಲ್ಲವೂ ಸೇರಿ ನಾನು ಕಷ್ಟಪಟ್ಟು ದುಡಿದ ಹಣವನ್ನು ತೊಡಗಿಸಿದ ಮೊದಲ ಕಂಪನಿಗಳೆಂದರೆ ಅವೇ ಆರಕಲ್, ಮೈಕ್ರೋಸಾಫ್ಟ್, ಎಕ್ಸೋಡಸ್, ಬ್ರೋಕೇಡ್, ಸತ್ಯಂ, ಇನ್‌ಫೋಸಿಸ್, ಇಂಟೆಲ್, ಇತ್ಯಾದಿಗಳು... ಹೆಚ್ಚೂ ಕಡಿಮೆ ನೂರಕ್ಕೆ ತೊಂಭತ್ತು ಭಾಗ ಟೆಕ್ನಾಲಜಿ ಕಂಪನಿಗಳೇ. ಬಿವಿ ಜಗದೀಶರ ಮುಖ ನೋಡಿ ಎಕ್ಸೋಡಸ್ ಕೊಂಡುಕೊಂಡೆ, ಕುಮಾರ ಮಳವಳ್ಳಿಯವರ ಬಗ್ಗೆ ತಿಳಿದು ಬ್ರೋಕೇಡ್ ವಶವಾದೆ, ಇನ್‌ಫೋಸಿಸ್ ಆಗಿನ ಗೂಗಲ್ ಬೆಳವಣಿಗೆಯನ್ನು ಪಡೆದಿತ್ತು. ಯಾಹೂ ಹೆಚ್ಚಿನ ಬೆಲೆ ಎಂದರೆ - 275 ಪರ್ ಶೇರ್ ಆಗಿತ್ತು, ಸಿಫಿ ಒಂದೇ ದಿನದಲ್ಲಿ 45 ಡಾಲರ್ ಮೇಲೇರಿತ್ತು. ಇಂತಹ ಉತ್ತುಂಗದ ಸ್ಥಿತಿಯಲ್ಲಿ ನಾನು ನನ್ನ ಮೊದಲ ಹತ್ತು ಸಾವಿರವನ್ನು ತೊಡಗಿಸಿದ್ದೆ. ನಾನು ಸ್ಟಾಕ್ ಮಾರ್ಕೆಟ್ ಹೊಕ್ಕಿದ್ದೇ ತಡ ಒಂದೆರೆಡು ವಾರ ದಿನಕ್ಕೆ ನೂರು-ನೂರೈವತ್ತು ಡಾಲರ್ ಅಂತೆ ಲಾಭ (ಪುಸ್ತಕದಲ್ಲಿ) ಏರುತ್ತಿದ್ದ ಹಾಗೆ ನೆನಪು - ಒಂದು ತಿಂಗಳಾದ ಮೇಲೆ ನಾನು ಎಕ್ಸ್‌ಪರ್ಟ್‌ನಂತೆ ಆಗಿ ಹೋಗಿದ್ದೆ, ದಿನವೂ ಏರುವ ಮಾರುಕಟ್ಟೆ ಯಾವತ್ತು ಬೀಳುತ್ತದೆ ಎಂದು ಹೇಳುವವರಾರು?

ಹೀಗಿರುವ ಮಾರುಕಟ್ಟೆ ನಿಧಾನವಾಗಿ ಕುಸಿಯಲಾರಂಭಿಸಿತು, ನನ್ನ ಕಣ್ಣುಗಳ ಮುಂದೆಯೇ ಎಲ್ಲವೂ ತರಗೆಲೆಗಳಂತೆ ಉದುರಿದವು, ಕೆಲವು ನೆಲಕಚ್ಚಿದವು, ಹೆಚ್ಚಿನವು (ಡಾಟ್ ಕಾಮ್‌ಗಳು) ದಿವಾಳಿ ಎದ್ದವು, ನಾನು ಕಣ್ಣು ಬಿಡುವಷ್ಟರಲ್ಲಿ ನನಗಾದ ನಷ್ಟ ಸುಮಾರು ಎಂಟು ಸಾವಿರ ಡಾಲರ್‌ಗಳು, ಅಂದರೆ ಎಂಭತ್ತು ಪರ್ಸೆಂಟ್ ಹಣ ನಷ್ಟ! ಆದರೆ ನಮ್ಮ ಅಫೀಸ್‌ನಲ್ಲಿ ನನ್ನದೇ ಬೆಷ್ಟ್ ಸ್ಟೋರಿ, ಹಾಗೂ ಸ್ಟೆಟಿಸ್ಟಿಕ್ಸ್. ನನ್ನ ಟೀಮಿನಲ್ಲಿ ಇದ್ದ ಬೇಕಾದಷ್ಟು ಜನ ತೆಲುಗ-ತಮಿಳರು ಡಬ್ಬಲ್ಲ್, ಟ್ರಿಪಲ್ ಡಿಜಿಟ್ (ಹಣವನ್ನು ಕಳೆದುಕೊಂಡಿದ್ದರು - ಒಬ್ಬ ಸುಮಾರು ೧೨೦,೦೦೦ ಕಳೆದುಕೊಂಡಿದ್ದು ಇನ್ನೂ ಚೆನ್ನಾಗಿ ನೆನಪಿದೆ), ನನ್ನ ಹಾಗೆ ಬಡವಾ ನೀನ್ ಮಡಗಿದ ಹಾಗಿರು ಎಂದು ಕೆಲಸ ಮಾಡಿಕೊಂಡಿದ್ದ ಐಟಿ ನಿಪುಣರು ಸ್ಟಾಕ್ ಮಾರ್‌ಕೆಟ್ ನಲ್ಲಿ, ಮಾರ್ಜಿನ್ ಅಕೌಂಟುಗಳಲ್ಲಿ ಬಹಳಷ್ಟನ್ನು ಕಳೆದುಕೊಂಡು ಅನುಭವಿಸುತ್ತಿದ್ದುದು ಈಗ ಹೊಸದಾಗಿ ಕಾಣುತ್ತದೆ, ಆಗ ಹಾಗಿರಲಿಲ್ಲ.

***

ಇಲ್ಲಿನ ಎಮ್.ಎಸ್., ಎಮ್.ಬಿ.ಎ.,ಗಳಲ್ಲಿ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಕೋರ್ಸನ್ನು ತೆಗೆದುಕೊಂಡಾಕ್ಷಣ ನಾನೂ ದೊಡ್ಡ ಸ್ಟಾಕ್ ಮಾರ್ಕೆಟ್ ಪಂಡಿತನಾಗುತ್ತೇನೆ ಎಂದು ಅಂದುಕೊಂಡಿದ್ದು ನನ್ನ ಮೊದಲ ಹುಂಬತನ. ಜೊತೆಯಲ್ಲಿ ನನಗೆ ಗೊತ್ತಿರುವ ಕಂಪನಿಗಳು - ಜನಪ್ರಿಯವಾದವು, ಐಟಿಗೆ ಸಂಬಂಧಿಸಿದವು, ಮುಂತಾದವುಗಳಲ್ಲಿ ತೊಡಗಿಸಬೇಕು, Unknown is unknown - ಎಂದು ಬಿಟ್ಟಿದ್ದು ಮತ್ತೊಂದು ಪೆದ್ದು ಬುದ್ಧಿಗೆ ಸಾಕ್ಷಿ.

ಶಿಸ್ತಿನ ಹೂಡಿಕೆಗಳಲ್ಲಿ ಕೆಲವರು, ಕೆಲವು ಪಂಗಡದವರು ಸಮಾಜ ಉನ್ನತಿಯನ್ನು, ಏಳಿಗೆಯನ್ನು ಬಯಸುವ ಕಂಪನಿಗಳಲ್ಲಿ ಮಾತ್ರ ಹಣವನ್ನು ತೊಡಗಿಸುತ್ತಾರೆ...(ಉದಾಹರಣೆಗೆ "ಸಜ್ಜನರು" ಸಿಗರೇಟ್, ಮಧ್ಯ ತಯಾರಿಸುವ ಕಂಪನಿಗಳಲ್ಲಿ ಹಣ ಹೂಡರು, ಅಥವಾ ಯಹೂದಿಗಳು, ಮುಸಲ್ಮಾನರು ಹಂದಿ ಮಾಂಸವನ್ನು ಸಂಸ್ಕರಿಸುವ ಕಂಪನಿಗಳ ಮೇಲೆ ಹಣತೊಡಗಿಸದಿರಬಹುದು, ಇತ್ಯಾದಿ)...ಕೆಲವರು ನಾಗರಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮ್ಯೂನೀ (municipalilty fund ಗಳಿಗೆ ಶಾರ್ಟ್ ಎಂಡ್ ಸ್ವೀಟ್ ಆಗಿ muni) ಗಳಲ್ಲಿ ತೊಡಗಿಸಬಹುದು. ಹೀಗೆ ಅವರವರ ಪಟ್ಟಿ ಅವರಿಗಿರುವಂತೆ ನನ್ನ ಪಟ್ಟಿ ನನಗಿತ್ತು. ನನ್ನ ಹಣವನ್ನು ನಾನೇ ಮ್ಯಾನೆಜ್ ಮಾಡುತ್ತೇನೆ, ಫೈನಾನ್ಸಿಯಲ್ ಅಡ್ವೈಸರುಗಳಿಗೆಕೆ ಕಮಿಷನ್ ಕೊಡಬೇಕು? ಎನ್ನುವುದು ಕೆಲವರ ತರ್ಕ...ಆದರೆ ನಾನು ಇವತ್ತಿಗೂ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನೇನಾದರೂ ಮಾಡಿದ್ದಿದ್ದರೆ ಅದು ನನ್ನ ಫೈನಾನ್ಸಿಯಲ್ ಅಡ್ವೈಸರ್ ಮುಖಾಂತರವೇ ವಿನಾ ನಾನು ಕಳೆದುಕೊಂಡಿದ್ದೇ ಹೆಚ್ಚು.

ಸುಮಾರು ೨೦೦೨-೨೦೦೩ ರ ಹೊತ್ತಿನಲ್ಲಿ ಒಬ್ಬ ಫೈನಾನ್ಸಿಯಲ್ ಅಡ್ವೈಸರ್ ಅನ್ನು ಕಂಡು ನನ್ನ ಖಾತೆಯನ್ನು ತೆರೆದೆ, ಅವನು ನನ್ನ ಟೆಕ್ನಾಲಜಿ ಕಂಪನಿಗಳ ಸ್ಟಾಕ್ ಅನ್ನೆಲ್ಲ ಒಂದೇ ಏಟಿಗೆ ಮಾರಿ ನನ್ನ ನಷ್ಟದ ಕಂದಕವನ್ನು ಇನ್ನಷ್ಟು ಹೆಚ್ಚಿಸಿದ! ಜೊತೆಗೆ ನನಗೆ ಆಶ್ಚರ್ಯವಾಗುವಂತೆ ಆತ ಮೊಟ್ಟ ಮೊದಲು ಕೊಂಡ ಸ್ಟಾಕ್ ಒಂದು ದೊಡ್ಡ ಸಿಗರೇಟ್ ತಯಾರಿಸುವ ಕಂಪನಿಯದು!! ಒಂದೆರಡು ತಿಂಗಳುಗಳಲ್ಲಿ ಸಿಗರೇಟ್, ಪೆಟ್ರೋಲಿಯಮ್, ಕ್ಯಾಸಿನೋ ಕಂಪನಿಗಳ ಸ್ಟಾಕ್ ತೆಗೆದುಕೊಂಡಿದ್ದರಿಂದ ಎಲ್ಲೂ ನಷ್ಟವಾಗಲಿಲ್ಲ, ಜೊತೆಯಲ್ಲಿ ಸಾಕಷ್ಟು ಲಾಭವೂ ಬರತೊಡಗಿತು. ಜೊತೆಗೆ buy-low; observe; sell-high and keep the profit ಎನ್ನುವ ಮಹಾಮಂತ್ರವನ್ನೂ ಆತ ಕಲಿಸಿಕೊಟ್ಟ!

ಅದೇ ಕೊನೆ, ಕಳೆದ ನಾಲ್ಕೈದು ವರ್ಷಗಳಲ್ಲಿ (ಅಲ್ಲೊಂದು ಇಲ್ಲೊಂದು ಅಪವಾದವನ್ನು ಬಿಟ್ಟು) ಟೆಕ್ನಾಲಜಿ ಕಂಪನಿಗಳ ಮುಖ ನೋಡಿಲ್ಲ. ಸಿಗರೇಟ್, ಆಯಿಲ್, ಕ್ಯಾಸಿನೋ, ಬ್ಯಾಂಕ್‌ಗಳ ಸ್ಟಾಕ್‌ಗಳು ನನ್ನನ್ನೆಂದೂ ಕೈ ಬಿಟ್ಟಿಲ್ಲ!

ಈ ಪ್ರಶ್ನೆಗಳು ನನ್ನ ಮನದಲ್ಲಿ ಬಹಳ ಭಾರಿ ಮೂಡಿ ಬಂದಿವೆ ಆದರೆ ಉತ್ತರ ಇನ್ನೂ ಸಿಕ್ಕಿಲ್ಲ - ಸಿಗರೇಟ್ ಕಂಪನಿಗಳ ಸ್ಟಾಕ್ ಅನ್ನು ನಾನು ತೆಗೆದುಕೊಂಡರೆ ಅವರ ಪ್ರಾಡಕ್ಟ್‌ಗಳನ್ನು ನಾನು ಎಂಡಾರ್ಸ್ ಮಾಡಿದ ಹಾಗಾಗುತ್ತದೆಯೇ? ನಾಗರಿಕ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ನನ್ನ ಹಣವನ್ನು ಜನೋಪಯೋಗಿ ಕಂಪನಿಗಳಲ್ಲಿ ತೊಡಗಿಸಿ ಸಮಾಜದ ಏಳಿಗೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿಯುವುದು, ಸಹಕರಿಸುವುದು ನಿಯಮವೇ? ಬರೀ ಒಂದಿಷ್ಟು ಸರ್ವರ್ರುಗಳನ್ನು ಒಂದು ವೇರ್‌ಹೌಸಿನಲ್ಲಿ ಕೂಡಿಕಾಕಿಕೊಂಡ ಇಂಟರ್ನೆಟ್ ಬೇಸ್ಡ್ ಕಂಪನಿ ಹೆಚ್ಚೋ, ಜನರಿಗೆ ಬೇಕಾಗುವ ಅತಿ ಅಗತ್ಯಗಳನ್ನು ಪೂರೈಸುವ "ಒಳ್ಳೆಯ" ಕಂಪನಿಗಳು ಹೆಚ್ಚೋ?

Tuesday, April 17, 2007

ನಮಗೊಬ್ಬ ಆಲ್ ಶಾರ್ಪ್ಟನ್ ಬೇಕೇ?

ನ್ಯೂ ಯಾರ್ಕ್ ನಗರದ ಸುತ್ತಮುತ್ತಲಿನಲ್ಲಿ ಆಲ್ ಶಾರ್ಪ್ಟನ್‌ನ ಕಾರ್ಯಭಾರ ಯಾವತ್ತೂ ಇದ್ದೇ ಇರುತ್ತೆ. ಶಾನ್ ಬೆಲ್‌ನನ್ನು ಪೋಲೀಸರು ಗುಂಡಿಟ್ಟು ಕೊಂದ ಕಥೆಯಾಗಿರಲಿ, ಆಬ್ನರ್ ಲೂಯೀಮಾನನ್ನು ಪೋಲೀಸರು ಹಿಂಸೆಗೊಳಪಡಿಸಿದ್ದಿರಲಿ, ಡಾನ್ ಐಮಸ್ ರೇಷಿಯಲ್ ಪದಗಳನ್ನು ಬಳಸಿದನೆಂದೋ, ಡ್ಯೂಕ್ ಯೂನಿವರ್ಸಿಟಿಯ ಆಟಗಾರರು ಡ್ಯಾನ್ಸರ್ ಒಬ್ಬಳ ಮೇಲೆ ಅತ್ಯಾಚಾರಮಾಡಿದರೆಂದೋ ಇನ್ನೂ ಹಲವಾರು ಕಾರಣಗಳಿಂದಾಗಿ ಈತನ ಪಡೆ ಸಂಬಂಧಿಸಿದವರನ್ನು ತತಕ್ಷಣ ಸುತ್ತುವರೆದು ಒಂದು ರೀತಿಯ "ಸತ್ಯಾಗ್ರಹ" ನಡೆಸುತ್ತದೆ. ಈ ಕಾರ್ಯಾಚರಣೆಗಳಲ್ಲಿ ಸಾಮಾನ್ಯವಾದ ಒಂದು ಅಂಶವೆಂದರೆ ಫಲಾನುಭವಿ ಆಫ್ರಿಕನ್ ಅಮೇರಿಕನ್ ಆಗಿರುತ್ತಾನೆ/ಳೆ, ಮತ್ತೊಂದು ತುದಿಯಲ್ಲಿ ವ್ಯವಸ್ಥೆ, ವ್ಯಕ್ತಿ ಅಥವಾ ಆಡಳಿತದ ತಡೆಗೋಡೆ, ಅಥವಾ ಇನ್ನು ಜೀವ/ನಿರ್ಜೀವ ವಸ್ತು/ವ್ಯಕ್ತಿ ಏನು ಬೇಕಾದರೂ ಇರಬಹುದು.

***

ಶಾರ್ಪ್ಟನ್ ನಡೆಸೋ ಕಾರ್ಯಾಚರಣೆಗಳಲ್ಲಿ ಜಯವೇ ಹೆಚ್ಚು - ಈತನ ಹೆಸರು ಕೇಳಿದರೆ ಎಷ್ಟೋ ಜನ ನಡುಗುವ ಸ್ಥಿತಿ ಇದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂದೋ, ಇನ್ನ್ಯಾವುದೇ ರೀತಿಯಲ್ಲಿ ಯಾರು ಎಷ್ಟೇ ಹೊಡೆದುಕೊಂಡರೂ ಈತನ ತಂತ್ರ ಧೃತಿಗೆಡುವುದಿಲ್ಲ. ಕಳೆದ ಹತ್ತು ವರ್ಷಗಳಿಂದಲೂ ನಾನು ನೋಡಿದಂತೆಯೇ ಈತ ಒಂದಲ್ಲಾ ಒಂದು ರೀತಿಯಲ್ಲಿ ಮಾಧ್ಯಮದಲ್ಲಿರುತ್ತಾನೆ, ಜೊತೆಗೆ ಎಷ್ಟೋ ಜನರ ಆರಾಧ್ಯದೈವ ಎಂದು ಹೆಸರು ಮಾಡಿರುವುದೂ ಅಲ್ಲದೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪ್ರಸಿಡೆಂಟಿಯಲ್ ಕ್ಯಾಂಡಿಡೇಟ್ ಆಗಿ ನಂತರ ಹೆಚ್ಚಿನ ಪಕ್ಷ ಡೆಮಾಕ್ರಟಿಕ್ ಮುಖಂಡರಿಗೆ ತನ್ನ ಎಂಡಾರ್ಸ್‌ಮೆಂಟ್ ಮಾಡಿದ್ದಿದೆ.

ಕಾಂಡೋಲೀಸಾ ರೈಸ್, ಕಾಲಿನ್ ಪವೆಲ್ ಇವರೆಲ್ಲರಿಗಿಂತ ಡೊಮೆಸ್ಟಿಕ್ ವಿಚಾರಗಳಲ್ಲಿ ಶಾರ್ಪ್ಟನ್ ಯಾವಾಗಲೂ ಮುಂದು. ಜೆಸ್ಸಿ ಜಾಕ್ಸನ್ ಮತ್ತು ಆಲ್ ಶಾರ್ಪ್ಟನ್ ಇವರಿಬ್ಬರು ಸೇರಿಕೊಂಡರೆಂದರೆ ಅಲ್ಲಿ ಒಂದು ಷಡ್‌ಯಂತ್ರ ರಚನೆಯಾಗಿರಲೇ ಬೇಕು, ಇಂಥ ಸಂದರ್ಭಗಳಲ್ಲಿ ಗೆಲ್ಲಬೇಕೆಂದರೆ ನಿಜವಾಗಿಯೂ ದೊಡ್ಡ ಗುಂಡಿಗೆಯೇ ಬೇಕು.

***

ನಿಧಾನವಾಗಿ ಮೈನ್‌ಸ್ಟ್ರೀಮ್ ಅಮೇರಿಕನ್ ಪರಿಸರವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿರುವ ಆಫ್ರಿಕನ್ ಅಮೇರಿಕನ್ (ಕಪ್ಪು) ಸಂಸ್ಕೃತಿಯನ್ನು ಗಮನಿಸುತ್ತಿದ್ದೇನೆ. ಅಮೇರಿಕನ್ ಜನಸಂಖ್ಯೆಯಲ್ಲಿ ಸುಮಾರು ನೂರಕ್ಕೆ ಹನ್ನೆರೆಡರಷ್ಟು ಇರುವ ಕಪ್ಪು ಜನ, ಹೆಚ್ಚೂ ಕಡಿಮೆ ಅಷ್ಟೇ ಇರಬಹುದಾದ ಹಿಸ್ಪ್ಯಾನಿಕ್ ಜನರು ಮುಖ್ಯವಾಹಿನಿಯಲ್ಲಿರುವ (ಸುಮಾರು ನೂರಕ್ಕೆ ಎಪ್ಪತ್ತು) ಬಿಳಿಯರನ್ನು ಹೆದರಿಸುತ್ತಾರೇನೋ ಅನ್ನಿಸದೇ ಇರದು. ಹಿಸ್ಪ್ಯಾನಿಕ್ ಜನರು ಭಾಷೆಯ (ಸ್ಪ್ಯಾನಿಶ್) ಮುಖಾಂತರ ತಮ್ಮ ಐಡೆಂಟಿಟಿಯನ್ನು ಸ್ಥಾಪಿಸಿಕೊಳ್ಳುತ್ತಲಿದ್ದರೆ, ಕಪ್ಪು ಜನ ತಮ್ಮದೇ ಆದ ಸಂಗೀತ, ಆಟೋಟಗಳಿಂದ ಸಮಾಜದಲ್ಲಿ ಎದ್ದು ನಿಂತಿರುವುದು ವಿಶೇಷವಾದದ್ದು. ದೇಶದಾದ್ಯಂತ ಹನ್ನೆರಡು ಪರ್ಸೆಂಟಿನಷ್ಟಿರುವ ಕಪ್ಪು-ಹಿಸ್ಪ್ಯಾನಿಕ್ ಜನರ ಡೆನ್ಸಿಟಿ ಪೂರ್ವ-ಪಶ್ಚಿಮ ತೀರಗಳ ಪ್ರದೇಶಗಳಲ್ಲಿ ಬಹಳ ಹೆಚ್ಚು (ಸುಮಾರು ೩೦%), ಹಾಗಾಗಿಯೇ ನ್ಯೂ ಯಾರ್ಕ್, ಜರ್ಸಿ ಸಿಟಿಯಂತಹ ಪ್ರದೇಶಗಳಲ್ಲಿ ದಾರಿಯಲ್ಲಿ ಎಡವಿ ಬಿದ್ದರೂ ಹಿಸ್ಪ್ಯಾನಿಕ್-ಕಪ್ಪು ಜನರ ಮೇಲೆ ನೀವು ಬೀಳೋದು!

***

ಕಳೆದ ಐದು-ಹತ್ತು ವರ್ಷಗಳಿಂದ ಭಾರತಕ್ಕೆ ಬೇಕಾದಷ್ಟು ಅಮೇರಿಕನ್ ಕೆಲಸಗಳು ಔಟ್‌ಸೋರ್ಸ್ ಆದದ್ದರಿಂದಲೋ, ಇನ್ನೂ ಹಲವಾರು ಕಾರಣಗಳಿಂದಲೋ ಭಾರತ, ಭಾರತಿಯರನ್ನು ಎಲ್ಲರೂ ಗುರುತಿಸುವ ಪರಿಸ್ಥಿತಿ ಬಂದಿದೆ. ಹತ್ತು ವರ್ಷದ ಹಿಂದೆ ಡೆನ್ವರ್ ಪೇಟೆಯಲ್ಲಿ ಭಾರತವೆಂದರೆ ಎಲ್ಲಿದೆ? ಎಂದು ರಸ್ತೆ ವ್ಯಾಪಾರಿಯೊಬ್ಬ ಕೇಳಿ ನಮ್ಮೆಲ್ಲರನ್ನು ದಂಗುಬಡಿಸಿದ್ದ, ಬಹುಷಃ ಈಗ ಆ ಪರಿಸ್ಥಿತಿ ಇರಲಾರದು.

ನಮ್ಮ ಪೂರ್ವ ಪ್ರದೇಶಗಳ ಗ್ಯಾಸ್ ಸ್ಟೇಷನ್, ಸೆವೆನ್-ಇಲೆವೆನ್ ಮುಂತಾದ ಸ್ಥಳಗಳಲ್ಲಿ ಭಾರತೀಯರು ಕೆಲಸ ಮಾಡುವುದು ಸರ್ವೇ ಸಾಮಾನ್ಯ. ಇಂತಹವುಗಳ ಜೊತೆಗೆ ತೊಂಭತ್ತರ ದಶಕದಿಂದ ಟೆಕ್ನಾಲಜಿ ಕೆಲಸಗಾರರೂ, ಹಾಗೂ ಅದಕ್ಕೂ ಹಿಂದೆ ವಲಸೆ ಬಂದ ವಿಜ್ಞಾನಿ/ವೈದ್ಯರೂ ಬೇಕಾದಷ್ಟು ಜನ. ಇಲ್ಲಿನ ಕೆಲಸಗಳು ಹೊರದೇಶಕ್ಕೆ ಎಲ್ಲಿಯೇ ಹೋಗಿರಲಿ, ಅವು ಭಾರತಕ್ಕೆ ಹೋಗಿವೆ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಒಂದು ರೀತಿಯ ನಂಬಿಕೆ ಹಾಗೂ ಭಯ ಎರಡೂ ಉಂಟಾಗಿವೆ, ಇವೆಲ್ಲವೂ ಭಾರತಿಯರನ್ನು ಜನಮನದಲ್ಲಿ ಸರ್ವಕಾಲಿಕವನ್ನಾಗಿ ಮಾಡಿವೆ. ಇವುಗಳ ಒಂದು ಪರಿಣಾಮವೋ ಎನ್ನುವಂತೆ ಸ್ಥಳೀಯ ರೆಡಿಯೋ-ಟಿವಿ ಕಾರ್ಯಕ್ರಮಗಳಲ್ಲಿ ಭಾರತೀಯರನ್ನು ಬೇಕಾದಷ್ಟು ಆಡಿಕೊಂಡು, ನಮ್ಮ ಆಕ್ಸೆಂಟುಗಳನ್ನು ಅಣುಗಿಸಿಕೊಂಡು, ನಮ್ಮ ನಡವಳಿಕೆಗಳನ್ನು ಹೀಯಾಳಿಸಿ ಬೇಕಾದಷ್ಟು ಕಾರ್ಯಕ್ರಮಗಳು ಬೇಕಾದಷ್ಟು ಪ್ರಸಾರವಾಗುತ್ತವೆ. ಹೋಟೆಲು, ಟ್ಯಾಕ್ಸಿಕ್ಯಾಬುಗಳು, ಗ್ಯಾಸ್‌ಸ್ಟೇಷನ್-ಕನ್ವೀನಿಯನ್ಸ್ ಸ್ಟೋರುಗಳಲ್ಲಿ ಕೆಲಸ ಮಾಡುವ ಕೆಲಸಗಾರರು ಬೇಕಾದಷ್ಟು ಅಮಾಯಕ ಭಾರತೀಯರು ಇಲ್ಲಿನ ಬಂದೂಕಿನ ಅಟ್ಟಹಾಸಕ್ಕೆ ಗುರಿಯಾಗುತ್ತಾರೆ - ಹೆಚ್ಚಿನ ಪಕ್ಷ ಅವು ಕಪ್ಪು ಜನರ ಹಿಂಸಾಪ್ರವೃತ್ತಿಗೆ ಬಲಿಯಾಗಿರುವ ಉದಾಹರಣೆಯೇ ಹೆಚ್ಚು.

ಹೀಗಿರುವಲ್ಲಿ ನಮ್ಮ ನಡುವೆ ಯಾರೊಬ್ಬರೂ ಚಕಾರವನ್ನೆತ್ತುವುದಿರಲಿ, ಒಂದು "ಸತ್ಯಾಗ್ರಹ"-ಧರಣಿಯನ್ನಾದರೂ ಏಕೆ ಮಾಡೋದಿಲ್ಲ ಎಂದು ನಾನು ಬೇಕಾದಷ್ಟು ಸಾರಿ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ಗುಂಡಿಗೆ ಬಲಿಯಾದ ವ್ಯಕ್ತಿ ಕಪ್ಪು ಆಗಿದ್ದರೆ ಮರುದಿನವೇ ಆಲ್ ಶಾರ್ಪ್ಟನ್ ಅಲ್ಲಿ ಹಾಜರ್, ಬೇರೆ ಏನಿಲ್ಲವೆಂದರೂ ಅವನ ಅಜೆಂಡಾ ಅಲ್ಲಿ ಹಾಜರಿರುತ್ತದೆ, ಅದೇ ಅಮಾಯಕ ಭಾರತೀಯ ಸತ್ತರೆ ವಿದ್ಯುದಾಲಿಂಗನಕೆ ಸಿಕ್ಕಿ ಸತ್ತ ಕಾಗೆಯ ಪರಿಸ್ಥಿತಿ, ಏಕೆ?

***

ಶಾರ್ಪ್ಟನ್ ಮಾಡೋದೆಲ್ಲ ಸರಿಯೇ? ಆತನ ಅಜೆಂಡಾ ಏನು, ಗುರಿ, ಉದ್ದೇಶಗಳೇನು? ಇವೆಲ್ಲದರ ಬಗ್ಗೆ ಬೇಕಾದಷ್ಟು ಕೇಳಿ/ಓದಿ/ನೋಡಿದ್ದೇನೆ - ಇದೆಲ್ಲದರ ಬಳಿಕ ನಮಗೊಬ್ಬ ಶಾರ್ಪ್ಟನ್ ಇದ್ದಿದ್ದರೆ ನಮ್ಮನ್ನು ಉಳಿದವರು ನಡೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಬೇಕಾದಷ್ಟು ಬದಲಾವಣೆಗಳಾಗುತ್ತಿದ್ದವೇನೋ ಅಥವಾ ಅದರಿಂದ ಶಾರ್ಟ್‌ಟರ್ಮ್‌ನಲ್ಲಿ ಒಳ್ಳೆಯದಾಗುತ್ತಿತ್ತೇನೋ ಎನ್ನುವ ಆಸೆ ನನ್ನದು; ಜೊತೆಯಲ್ಲಿ ಇಷ್ಟು ವರ್ಷಗಳಿಲ್ಲಿದ್ದರೂ ಇನ್ನೂ ಇಲ್ಲಿನ ಜನರ ಮನದಾಳವನ್ನು ತಿಳಿದುಕೊಳ್ಳಲ್ಲು, ಇಲ್ಲಿನ ಕಾರ್ಯತಂತ್ರವನ್ನು ಅರಿತುಕೊಳ್ಳುವ ಹೆಣಗಾಟವೂ ಇಲ್ಲದೇನಿಲ್ಲ.

ಈಗ ಹೇಳಿ ಅಮೇರಿಕದಲ್ಲಿ ನಮಗೊಬ್ಬ ಶಾರ್ಪ್ಟನ್ ಬೇಕೇ?

Wednesday, April 11, 2007

ದಗಲ್ ಬಾಜಿಗಳು...

ಇದು ಅಪರೂಪಕ್ಕೊಮ್ಮೆ ಆಗೋ ಘಟನೆ ಅಲ್ಲ, ಅಥವಾ ಬೆಂಗಳೂರಿಗೆ ಬರೀ ಸೀಮಿತವಾದ ವಸ್ತುವೂ ಅಲ್ಲ...ಇದೇ ರೀತಿಯ ಘಟನೆಗಳನ್ನು ನಾನು ಬಾಂಬೆ, ಮದ್ರಾಸುಗಳಲ್ಲಿಯೂ ನನ್ನ ಕಣ್ಣಾರೆಯೇ ನೋಡಿದ್ದೇನೆ. ನಮ್ಮ ಅಭಿವೃದ್ಧಿ, ಬೆಳವಣಿಗೆ ನಮ್ಮನ್ನು ಈ ರೀತಿಯ ಕುತಂತ್ರಗಳಿಗೆ ಈಡು ಮಾಡಿಬಿಟ್ಟಿವೆಯೇನೋ ಅನ್ನುವಷ್ಟರ ಮಟ್ಟಿಗೆ ಆಲೋಚಿಸುವಂತಾಗಿದೆ.

ನಿಲ್ದಾಣದ್ಲಲಿ ದಗಲ್ ಬಾಜಿಗಳು...
ಮೆಜೆಸ್ಟಿಕ್ ಸುತ್ತಮುತ್ತ ಸಾಕಷ್ಟು ಬೀದಿ ವ್ಯಾಪಾರಿಗಳನ್ನು ನೀವೂ ನೋಡಿರುತ್ತೀರಿ. ಆದರೆ, ಕೆಲವು ವ್ಯಾಪಾರಿಗಳ್ದಿದಾರೆ. `ರೇಟೆಸ್ಟು?' ಅಂತ ಕೇಳಿದರೆ ಸಾಕು: ರೇಟೂ ಹೇಳುತ್ತಾರೆ; ಕೊಳ್ಳದ್ದಿದರೆ ಏಟೂ ಕೊಡುತ್ತಾರೆ. ಇವರೊಂದಿಗೆ ಪೊಲೀಸರೂ ಸೇರಿಸುತ್ತಾರೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ, `ರೇಟು ಕೇಳಿ ಏಟು ತಿಂದ' ಪ್ರಕರಣ ...

ನಾವಿರೋ ಜರ್ಸಿ ಸಿಟಿಯಲ್ಲಿ ಸರ್ವೇ ಸಾಮಾನ್ಯವಾಗಿ ನೋಡಲು ಸಿಗುವಂತಹ ಘಟನೆಯೊಂದು ನೆನಪಾಯಿತು - ಸಾಮಾನ್ಯವಾಗಿ ಹಿಸ್ಪ್ಯಾನಿಕ್ ಅಥವಾ ಕಪ್ಪು ಹುಡುಗ/ಹುಡುಗಿಯರು, ರಸ್ತೆ ಮೇಲೆ ಬೇರೆಯವರು ತಮಗೆ ಅಥವಾ ತಮ್ಮ ಕಾರಿಗೆ ಜಾಗ ಬಿಡಲಿಲ್ಲ ಎನ್ನೋ ಕಾರಣಕ್ಕೆ ಮೈಮೇಲೆ ಬಿದ್ದು ಜಗಳ ಮಾಡುವ ಅಥವಾ ಯದ್ವಾತದ್ವಾ ಬೈದು ತಮ್ಮ ಕ್ರೋಧವನ್ನು ಕಾರುವ ಪರಿಸ್ಥಿತಿ ನಮ್ಮಲ್ಲಿ ಯಾವಾಗಲು ಸರ್ವೇ ಸಾಮಾನ್ಯ. ಇಂತಹ ಘಟನೆಗಳಿಗೆ ಯಾರೂ ಗಮನ ಕೊಡೋ ಹಾಗೆ ಕಾಣೋದಿಲ್ಲ, ಸಾಮಾನ್ಯ ನ್ಯಾಯ ಅನ್ನೋದು ಇಲ್ಲಿ ಪ್ರಶ್ನೆಗೂ ನಿಲುಕದಷ್ಟು ದೂರದಲ್ಲಿರುತ್ತೆ, ಇನ್ನು ಉತ್ತರದ ಕಥೆ ಹಾಗಿರಲಿ. ಎಲ್ಲರೂ ಜಾಣಕುರುಡು-ಕಿವುಡುಗಳನ್ನು ಪ್ರದರ್ಶಿಸುವ ಸೋಗಿಗೆ ಮೊರೆ ಹೋಗುತ್ತಾರೆ.

ಈ ಮೇಲಿನ ಘಟನೆ ಬೆಂಗಳೂರಿನಲ್ಲಿ ನನ್ನ ಮುಂದೆ ನಡೆದಿದ್ದರೆ ನಾನೇನು ಮಾಡುತ್ತಿದ್ದೆ, ಪ್ರತಿಭಟನೆಯ ಹಂತ ಎಲ್ಲಿಯವರೆಗೆ ಹೋಗುತ್ತಿತ್ತು? ಇಂತಹದ್ದನ್ನು ನೋಡಿಯೂ ನೋಡದಿರುವಂತಹ ನಗರದ ಮನಸ್ಥಿತಿ ಸರಿಯೋ, ಇದರಲ್ಲಿ ಸಾಮಾಜಿಕ ನ್ಯಾಯವನ್ನು ಆಗ್ರಹಿಸುವ ಮನೋಸ್ಥಿತಿ ದುರ್ಬಲವಾದದ್ದೇ? ದಿನೇ-ದಿನೇ ಮೋಸಮಾಡುವ ಮಾರ್ಗಗಳನ್ನು ಅವಿಷ್ಕರಿಸುವ ವ್ಯಾಪಾರಿಗಳನ್ನು, ಕಾನೂನು ರಕ್ಷಕರನ್ನು ಹದ್ದುಬಸ್ತಿನಲ್ಲಿಡುವವರಾರು? ಇತ್ಯಾದಿ ಪ್ರಶ್ನೆಗಳು ಎಷ್ಟು ಬೇಗ ಮನದಲ್ಲಿ ಮೂಡುತ್ತವೆಯೋ ಅಷ್ಟೇ ಬೇಗ ಮರೆಯಾಗುತ್ತವೆ.

ಇವೆಲ್ಲ ಕಲಿಯುಗದ ಕೊಡುಗೆ - ಎಂದುಕೊಂಡು ಮತ್ತೊಂದು ಯುಗ ಬರುವವರೆಗೆ ಕಾಯುವುದು ಒಂದು ಆಲ್ಟರ್‌ನೇಟಿವ್!

ಒಂದು ನಾಗರಿಕ ಪಡೆಯನ್ನು ಕಟ್ಟಿ ಕಾನೂನನ್ನು ಕೈಗೆತ್ತಿಕೊಳ್ಳದೇ ಇಂತಹ ಕುತಂತ್ರಗಳಿಗೆ ಉತ್ತರವನ್ನು ಹೇಳುವ ಅವಕಾಶವೊಂದಿದ್ದರೆ...ಎಷ್ಟೋ ಸಾರಿ ಹಲುಬಿ ಸುಮ್ಮನಾಗಿರುವುದನ್ನು ಬಿಟ್ಟರೆ, ಅಥವಾ ಈ ರೀತಿ ಬರೆಯೋದನ್ನು ಬಿಟ್ಟರೆ ನನ್ನ ಕೈಯಲ್ಲಿ ಬೇರೇನನ್ನು ಮಾಡಲು ಸಾಧ್ಯವಿಲ್ಲದ ಅಸಹಾಯಕತೆ ಅಷ್ಟೆ.

Sunday, April 08, 2007

ಆ ಹಿರಣ್ಯಕಶ್ಯಪೂ ಅಂತ ಮುಟ್ಠಾಳ್ ನನ್‌ಮಗ ಮತ್ತೊಬ್ಬ್‌ನಿಲ್ಲ!

ನಾನೂ ಸುಬ್ಬನೂ ಕಾಫಿ ಕುಡಿಯುತ್ತಾ ಸಂಜೆ ಆರು ಘಂಟೆ ಚಾನೆಲ್ ಸೆವೆನ್ ನ್ಯೂಸ್ ನೋಡಿಕೊಂಡು ಅದೆಲ್ಲೋ ಬೆಂಕಿ ಹೊತ್ತಿಕೊಂಡು ಉರೀತಾ ಇರೋ ದೃಶ್ಯಗಳನ್ನು ನೋಡ್ತಾ ನೊಣ ಹೋಗೋ ಹಾಗೆ ಬಿಟ್ಟ ಬಾಯನ್ನು ಹಾಗೇ ಬಿಟ್ಟು, ಜೊತೆಯಲ್ಲಿ ಕಣ್ಣು ಮಿಟುಕಿಸದೆ ನೋಡ್ತಾ ಕೂತಿದ್ವಿ. ಆ ನ್ಯೂಸ್ ಸ್ಟೋರಿ ಇನ್ನೂ ಮುಗಿದಿರ್ಲಿಲ್ಲ ಅಷ್ಟ್ರೊಳಗೆ ಫೋನ್ ಘಂಟೆ ಬಜಾಯಿಸಿದ್ದನ್ನು ನೋಡಿ ಕಿರಿಕಿರಿಯಾದ ಮುಖ ಮಾಡಿಕೊಂಡು ಹೋಗಿ ಫೋನ್ ಎತ್ತಿ ನೋಡಿದ್ರೆ ವಾಷಿಂಗ್ಟನ್ ಡಿಸಿಯಿಂದ ಶ್ರೀಕಾಂತ್ ಫೋನ್ ಮಾಡಿದ್ದ.

'ಓ ಏನಯ್ಯಾ ಸಮಾಚಾರ...' ಎಂದು ನಾನು ಮುಖ್ಯಮಂತ್ರಿ ಚಂದ್ರೂ ಥರ ರಾಗ ಹಾಕಿಕೇಳಿದ್ದಕ್ಕೆ, ಆ ಕಡೆಯಿಂದ 'ನನ್ನ ಮಗನ ಬರ್ಥಡೇ ಕಣಯ್ಯಾ...' ಎಂದ, ನಾನು ಒಂದು ಕ್ಷಣವೂ ತಡ ಮಾಡದೇ 'ಹ್ಯಾಪ್ಪೀ ಬರ್ಥಡೇ!' ಎನ್ನೋದೇ ತಡ,

'ನಾಟ್ ಸೋ ಫ್ಯಾಸ್ಟ್...ಸ್ವಲ್ಪ ತಡುಕೋ... ಮುಂದಿನ ತಿಂಗಳು ಐದನೇ ತಾರೀಖು ಅವನ ಮೊದಲ ಹುಟ್ಟಿದ ಹಬ್ಬ, ನೀನು ತಪ್ಪಿಸ್ದೇ ಬರಲೇ ಬೇಕು ನೋಡು, ಅದಕ್ಕೆ ಒಂದು ತಿಂಗಳು ಮೊದಲೇ ಹೇಳ್ತಾ ಇದ್ದೀನಿ, ಆಮೇಲೆ ಎತ್ತ್ ಕರ ಹಾಕ್ತು, ಕೊಟಗ್ಯಾಗೆ ಕಟ್ದೆ ಅನ್ನಬೇಡ ಮತ್ತೆ!' ಎಂದು ಆದೇಶ ಕೊಟ್ಟುಬಿಡಬೇಕೆ.

ಸರಿ ಇನ್ನೇನು ಅವನು ಫೋನು ಇಟ್ಟೇ ಬಿಡ್ತಾನೆ ಅಂತ ಅಂದುಕೊಂಡಿದ್ದು ನನ್ನ ತಪ್ಪಾಗಿತ್ತು, ಅವನು ಬರ್ತೀಯೋ ಇಲ್ಲವೋ ಅಂತ ಹಟಹಿಡಿದು ಕೂತುಬಿಟ್ಟ, ನಾನು ಬೇರೆ ಯಾವ್ದೂ ದಿಕ್ಕು ಕಾಣದೇ, 'ಯಾವ್ದೂ ಎಮರ್ಜನ್ಸಿ ಇಲ್ದೇ ಇದ್ರೇ ಬರ್ತೀನಿ ನೋಡಪ್ಪಾ!' ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಸ್ವಲ್ಪ ತಣ್ಣಗಾದೆ, 'ಸರಿ ಇಡ್ತೀನಿ ಮತ್ತೆ...' ಎಂದವನನ್ನು 'ಅಲ್ವೋ ನೀನು ಏಪ್ರಿಲ್ ನಲ್ಲಿ ಮದುವೆಯಾದದ್ದಲ್ವಾ, ಮತ್ತೇ ಮೇ ಗೆ ನಿನ್ನ ಮಗನಿಗೆ ಅದೆಂಗೆ ಒಂದು ವರ್ಷ ಆಯ್ತು... ಎಲ್ಲೋ ಅಮೇರಿಕನ್ ಲೆಕ್ಕಾ ಹಚ್ಚೀದಿ ಏನು?' ಎಂದು ನಕ್ಕೆ. ಅವನು 'ಗುರುವೇ, ಅದು ಎರಡು ವರ್ಷದ ಹಿಂದಿನ ಏಪ್ರಿಲ್ಲು, ನಿನ್ನೆ ಮೊನ್ನೆ ಆದಂಗಿದೆ ಮದುವೆ!' ಎಂದು ಗಹಗಹಿಸಿದ...'ಸರಿ ಮತ್ತೆ...' ಎಂದವನನ್ನು ಕಳಿಸಿಕೊಟ್ಟೆ.

ಇನ್ನೂ ಟಿವಿ ಮುಖ ನೋಡ್ತಾ ಇದ್ದ ಸುಬ್ಬ ಆಗಲೇ ಕಾಫಿ ಹೀರಿ ಲೋಟಾ ಬದಿಗಿಟ್ಟಾಗಿತ್ತು, ನನ್ನ ಕಾಫಿ ಲೋಟ ಅದರ ಬಿಸಿಹಬೆಯನ್ನು ಕಳೆದುಕೊಂಡು ಮಾರ್ಕೆಟ್‌ನಲ್ಲಿ ಒಂದೇ ದಿನದಲ್ಲಿ ಅರ್ಧದಷ್ಟು ಸ್ಟಾಕ್ ಬೆಲೆಯನ್ನು ಕಳೆದುಕೊಂಡ ಸನ್‌ಮೈಕ್ರೋಸಿಸ್ಟಂ ಸ್ಟಾಕ್‌ನಂತಾಗಿಹೋಗಿತ್ತು.

'ಕೊನೆಗೆ...ಬೆಂಕಿ ಕಥೆ ಏನಾಯ್ತು? ಎಷ್ಟು ಜನ ಸತ್ರೋ?' ಎಂದೆ...ಸುಬ್ಬನ ಕಡೆಯಿಂದ ಉತ್ತರ ಬರೋದು ಒಂದು ನ್ಯಾನೋ ಸೆಕೆಂಡು ತಡವಾದಂತೆನಿಸಿತು.

'ಆ ಹಿರಣ್ಯಕಶ್ಯಪೂನಂತ ಮುಟ್ಠಾಳ್ ನನ್‌ಮಗ ಇನ್ನೊಬ್ಬನಿಲ್ಲ!' ಎಂದು ಅದೆಲ್ಲಿಂದ್ಲೋ ಒಂದು ನಾಟಕದ ಡೈಲಾಗೇನೋ ಅನ್ನುವಷ್ಟು ಮಟ್ಟಿಗೆ ಕಾಮ್ ಆಗಿ ಹೇಳಿಬಿಟ್ಟ. ನಾನು ಬೆಂಕಿಗೂ-ಹಿರಣ್ಯಕಶ್ಯಪೂಗೂ ಏನು ಸಂಬಂಧ ಅನ್ನೋ ರೀತಿ ಅವನ ಕಡೆ ನೋಡಿದ್ದಕ್ಕೆ...ನನ್ನ ಕನ್‌ಫ್ಯೂಷನ್ನಿಗೆ ಒಂದು ದಮಡಿ ಬೆಲೇನೂ ಕೊಡದೇ ಅವನು ಮತ್ತೆ ಮುಂದುವರೆಸಿದ...

'ಅದಕ್ಕೇ ತಲೆ ಇಲ್ದಿದ್ದ್ ನನ್‌ಮಕ್ಳು ಅನ್ನೋದ್ ನೋಡು, ಅಷ್ಟೊಂದು ವರ್ಷ ಕಷ್ಟಾಪಟ್ಟು ತಪಸ್ಸು ಮಾಡಿ, ದೇವ್ರು ಎದ್ರಿಗೆ ಬಂದ್ರೆ, ನನಿಗೆ ಹಂಗ್ ಸಾವ್ ಬರಬಾರ್ದು, ಹಿಂಗ್ ಸಾವ್ ಬರಬಾರ್ದು ಅಂತ ಕೇಳಿದ್ನೇ ವಿನಾ, ನಾನೊಂದು ನೂರೋ, ಸಾವ್ರಾನೋ ವರ್ಷಾ ನೆಟ್ಟಗೆ ಬದುಕಿರೋ ಹಂಗ್ ಮಾಡು ಶಿವನೇ ಅಂದಿದ್ರೆ ಅವರಪ್ಪನ್ ಮನೆ ಗಂಟ್ ಹೋಗ್ತಿತ್ತಾ?'

ಇದರಲ್ಲಿ ಯಾವುದೋ ಒಂದು ಪುಡುಗೋಸಿ ಲಾಜಿಕ್ಕಿದೆ, ಆದ್ರೂ ಚಾನೆಲ್ ಸೆವೆನ್ ನ್ಯೂಸಿಗೂ, ಬೆಂಕಿ ಅವತಾರಕ್ಕೂ, ಹಿರಣ್ಯಕಶ್ಯಪೂಗೂ ಎಲ್ಲೆಲ್ಲಿಂದ ಸಂಬಂಧ ಬಂತೋ ಎಂದು ತಲೆಕೆಡಿಸಿಕೊಂಡ ನನ್ನ ಪಜೀತಿ ಸಮಾಜಶಾಸ್ತ್ರದ ಹುಡುಗ ಅಬ್‌ಸ್ಟ್ರ್ಯಾಕ್ಟ್ ಕ್ವಾಂಟಮ್ ಮೆಕ್ಯಾನಿಕ್ಸ್ ತರಗತಿಯನ್ನು ಹೊಕ್ಕಿ ಮೊದಲ ಬೆಂಚಿನಲ್ಲಿ ಕೂತಹಾಗಿತ್ತು.

ಸದ್ಯ, ಸುಬ್ಬನೇ ಸ್ವಲ್ಪ ವಿವರಿಸಿದ, ನಾನು ಇಮಿಗ್ರೇಷನ್ ಆಫೀಸರ್‌ನಿಂದ ತಪ್ಪಿಸಿಕೊಂಡಂತೆ ನಿರುಮ್ಮಳವಾದೆ...'ಅದೇ ನಿಮ್ ಶ್ರೀಕಾಂತ್ ಫೋನ್ ಮಾಡಿದ್ನಲ್ಲಾ, ಅದರ ಸಲವಾಗಿ ಯೋಚ್ನೇ ಮಾಡೋ ಹಂಗಾತ್ ನೋಡು...ಹಿರಣ್ಯಕಶ್ಯಪೂ ರಾತ್ರಿ ಅಲ್ಲ, ಹಗಲ್ ಅಲ್ಲ, ಒಳಗಲ್ಲ, ಹೊರಗಲ್ಲ, ಮೃಗಗಳಿಂದಲ್ಲ, ನರರಿಂದಲ್ಲ...ಮುಂತಾಗಿ ಎಕ್ಸ್‌ಕ್ಯೂಷನ್ ಹಾಕ್ಕೊಂಡ್ ಹೋಗೋ ಬದಲಿಗೆ ದೇವ್ರೇ ನನ್ ಮಗನ ನೂರಾ ಒಂದನೇ ಹುಟ್ಟು ಹಬ್ಬವನ್ನು ನಾನೂ ಇದೇ ದೇಹದಲ್ಲಿದ್ದುಕೊಂಡು ಸೆಲೆಬ್ರೇಟ್ ಮಾಡೋ ಹಾಗೆ ಮಾಡಪ್ಪಾ...' ಎಂದು ಬೇಡಿಕೊಂಡಿದ್ರೆ...ವಿಷ್ಣೂಗೆ ಮತ್ತೊಂದ್ ಅವತಾರ ಎತ್ತೋ ಪಜೀತೀನೂ ತಪ್ತಿತ್ತು, ಮಾಸ್ಟರ್ ಲೋಹಿತ್‌ನ ಪೀಚಲು ಮಾತಿಗೆ ಸಿಟ್ಟಾಗಿ ರಾಜ್‌ಕುಮಾರ್ ಕಂಭಕ್ಕೆ ಹೊಡೆದಿದ್ದಕ್ಕೆ ಬಿದ್ದಿರೋ ನಮ್ ಬೆಂಗ್ಳೂರಿನ ಗಂಗಾರಾಮ್ ಕಟ್ಟಡಾನೂ ಉಳಿಯೋದು, ಏನಂತಿ?!'

'ಗುರುವೇ, ಇದು ಕಲಿಗಾಲ...ಆಗಿನ್ ಕಾಲದ್ದು ಕಥೇನೇ ಬೇರೆ ಇತ್ತು, ದೇವ್ರು ವರ ಕೇಳೋ ಮುಂಚೆ ಈ ರಾಕ್ಷಸರ ಬುದ್ದೀನೆಲ್ಲ ಕಡ್ಡೀ ಹಾಕಿ ಕೆದಡಿ ಬಿಡ್ತಿದ್ದರಂತೆ, ಅಂತಾದ್ದರಲ್ಲಿ ಹಿರಣ್ಯಕಶ್ಯಪೂ ಅಷ್ಟೊಂದ್ ಎಕ್ಸ್‌ಕ್ಲೂಷನ್ ಕಂಡೀಷನ್ನಾದ್ರೂ ಹೇಳ್ದಾ, ಅವನ ಜಾಗ್ದಲ್ಲಿ ನೀನೇನಾದ್ರೂ ಇದ್ರೆ, ಒಂದು ಮಸಾಲೆ..., ಎರಡು ಕಾಲೀ... ಎಂದು ಕೃಷ್ಣಭಟ್ಟರ ಹೋಟ್ಲಿನ ಮಾಣಿಯ ಹಾಗೆ ಆರ್ಡರ್ ಕೊಡ್ತಿದ್ದೆ ನೋಡು' ಎಂದು ನಕ್ಕೆ.

'ಸುಮ್ನೇ ಮಾತಿಗ್ ಅಂದೆ, ಈ ನರಸಿಂಹಾವತಾರದ ಪಾಸಿಬಿಲಿಟಿಯನ್ನು ಯಾವನಾದ್ರೂ ಬಯೋಟೆಕ್ನಾಲಜಿ ಸೈಂಟಿಸ್ಟಿಗೆ ಬಿಡೋಣ...ಅದಿರ್ಲಿ ಮುಂದಿನ್ ತಿಂಗ್ಳು ಶ್ರೀಕಾಂತನ ಮನೆಗ್ ಹೋಗ್ತೀಯೇನು?' ಎಂದ.

'ನೋಡೋಣ, ಇನ್ನೂ ಒಂದ್ ತಿಂಗಳಿದೆಯಲ್ಲಾ...' ಎಂದು ಅದೇನೋ ನೆನಪಾದವನ ಹಾಗೆ ನಟಿಸಿ 'ಹಿರಣ್ಯಕಶ್ಯಪೂ ತಪಸ್ಸು ಮಾಡಿ ವರಕೇಳೋ ಹೊತ್ತಿಗೆ ಅವನಿಗೆ ಮಕ್ಳಿದ್ದವೇನು?' ಎಂದು ಕಣ್ಣು ಮಿಟುಕಿಸಿದೆ.

'ಗೊತ್ತಿಲ್ಲಪ್ಪಾ, ಆಗಿನ್ ಕಾಲದ ತಪಸ್ಸುಗಳೆಲ್ಲ ಹತ್ತು-ನೂರು ವರ್ಷಗಳ ತನಕಾನು ಇರ್ತಿದ್ದವಂತೆ, ಇನ್ನು ಮಕ್ಳು ಮಾಡೋಕೆ ಪುರುಸೊತ್ತೆಲಿರುತ್ತೆ? ಅಕಸ್ಮಾತ್, ಪ್ರಹ್ಲಾದ ಇರಲಿಲ್ಲ ಅಂದುಕೋ, ನಾನ್ ಹೇಳ್‌ಕೊಟ್ಟಂಗೆ ವರವನ್ನು ಕೇಳಿದ್ರೆ ಒಂದಿಷ್ಟು ವರ್ಷ ಆಯಸ್ಸು ಗಟ್ಟಿ ಇರೋದ್ರ ಜೊತೆಗೆ ಒಂದು ಗಂಡ್ ಮಗೂನು ಹುಟ್ಟಿರೋದಾ...' ಎಂದು ಬರೋಬ್ಬರಿ ವ್ಯಾಪಾರವಾದ ಹೊಟೇಲಿನ ಕೃಷ್ಣಭಟ್ಟರ ನಗೆ ನಕ್ಕ.

'ನನಗೇನೋ ಅನುಮಾನ, ನೀನೂ ಅದ್ ಯಾವ್ದೋ ಜನ್ಮದಲ್ಲಿ ಹಿರಣ್ಯಕಶ್ಯಪೂ ಆಗಿದ್ದಿಯೋ ಏನೋ...' ಎಂದು ತಿವಿದೆ, ವಾತಾವರಣ ತಿಳಿಯಾಯಿತು!

Thursday, April 05, 2007

ಮರೆಯಾದ ಮಲೆನಾಡಿನ ಐಸಿರಿ


ತನ್ನ ಪರಿಸರದ ಮೇಲೆ ಅಪಾರವಾದ ಕಾಳಜಿ, ಸುತ್ತಲನ್ನು ಸೂಕ್ಷ್ಮವಾಗಿ ನೋಡೋ ಮನಸ್ಥಿತಿ, ಘಂಟೆಗಟ್ಟಲೆ ಒಂದು ವಸ್ತುವನ್ನು ಅಧ್ಯಯನ ಮಾಡುತ್ತಿದ್ದ ಪಕ್ಷಿ ಬ್ರಹ್ಮ, ಕರ್ವಾಲೋವಿನ ಸೃಷ್ಟಿಕರ್ತ, ಅವರ ಪೀಳಿಗೆಯ ಬರಹಗಾರರಿಗೆ, ಚಿಂತಕರಿಗೆ ಸವಾಲಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಮನಗಂಡಿದ್ದ ಶೋಧಕ - ಹೀಗೆ ಹಲವಾರು ವಿಶೇಷಣಗಳಿಂದ ತೇಜಸ್ವಿಯವರನ್ನು ಗುರುತಿಸಬಹುದು.

'ಅವರು ಮುಸುಡಿಗೆ ಮಸಿ ಬಳೀದೆ ಫೇರ್ ಅಂಡ್ ಲವ್ಲಿ ಹಚ್ಚೋಕಾಗುತ್ಯೇ?' ಎಂದು ಒಂದೇ ಸಾಲಿನಲ್ಲಿ ಕಿರಣ್ ಮೋರೆ ಪ್ರಸಂಗಕ್ಕೆ ಉತ್ತರಕೊಟ್ಟು ಬುದ್ಧಿಜೀವಿಗಳ ಸೋಗಿನ ಉತ್ತರಕ್ಕೆ ಜೋತು ಬೀಳದೇ ತಮ್ಮ ಮನಸ್ಸಲ್ಲಿದ್ದುದನ್ನು ನೇರವಾಗಿ ಹಂಚಿಕೊಂಡವರು.

ಸೆಲೆಬ್ರಿಟಿಯ ಮಕ್ಕಳಾಗಿ ಹುಟ್ಟಿ ಬೆಳೆದವರಿಗೆ ಅವರದ್ದೇ ಆದ ಒಂದು ಸವಾಲಿರುತ್ತದೆ - ತಮ್ಮ ಪೋಷಕರಿಗಿಂತ ತಾವು ಎಷ್ಟು, ಹೇಗೆ, ಎಲ್ಲಿ ಭಿನ್ನರು ಅಥವಾ ಪೋಷಕರ ನಡೆನುಡಿಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬಹುದು ಅಥವಾ ತಮ್ಮದೇ ಆದ ಒಂದು ಐಡೆಂಟಿಟಿಯನ್ನು ಹೇಗೆ ಸೃಷ್ಟಿಸಿಕೊಳ್ಳಬಹುದು - ತಾವು ಏನು ಮಾಡಿದರೆ ತಮ್ಮ ತಂದೆ-ತಾಯಿಯರ ಸಾರ್ವಜನಿಕ ಬದುಕಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಮುಂತಾಗಿ ಹಲವಾರು ಆಲೋಚನೆಗಳು ನಿರಂತರವಾಗಿ ಅವರನ್ನು ಸುತ್ತುತ್ತಲೇ ಇರುತ್ತವೆ. ಒಬ್ಬ ರಾಷ್ಟ್ರಕವಿಯ ಮಗನಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಮಗನಾಗಿ, ಒಬ್ಬ ಪ್ರಸಿದ್ಧ ಕವಿ ಕಾದಂಬರಿಕಾರನ ಮಗನಾಗಿ ತಮ್ಮನ್ನು ತಾವು ಗುರುತಿಸಿಕೊಂಡಾಗೆಲ್ಲ ಹೊಸತೇನಿದೆ ಎಂದು ಹಲವಾರು ಬಾರಿ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹೀಗಿದ್ದಾಗ್ಯೂ ತಮ್ಮದೇ ವಿಶೇಷತೆಗಳಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಬೇಕಾದವರಾಗಿದ್ದ ತೇಜಸ್ವಿಯವರನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದೇ ಹೇಳಬೇಕು.

***

ಈ ಎಲ್ಲ ನಿಟ್ಟಿನಲ್ಲಿ ತೇಜಸ್ವಿ (ಪೂಚಂತೇ) ನಮ್ಮ ನಡುವಿನ ಒಬ್ಬ ಮಹಾನ್ ಚೇತನವಾಗಿದ್ದರು. ಕ್ರಾಂತಿರಂಗ-ಸಮಾಜವಾದ ಮುಂತಾಗಿ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ೭೦-೮೦ ರ ದಶಕದಲ್ಲಿ ಸ್ವಲ್ಪ ತಿಣುಕಿದಂತೆ ತೋರಿದ್ದರೂ, ಒಬ್ಬ ಬರಹಗಾರನಾಗಿ, ಕೃಷಿಕ-ಆರಂಭಕಾರನಾಗಿ, ಹಾಗೂ ಕನ್ನಡದಲ್ಲಿ ಪಕ್ಷಿಗಳ ಬಗ್ಗೆ ಬರೆದ ಅವರ ಅನೇಕ ಲೇಖನಗಳು, ಅವರು ಸೃಷ್ಟಿಸಿದ ಹಲವಾರು ಪಾತ್ರ-ಚಿತ್ರಣಗಳು ಅವರದ್ದೇ ಆದ ವಿಶೇಷವಾದ ಸ್ಥಾನವನ್ನು ಯಾವತ್ತು ನಮ್ಮ ಮನದಲ್ಲಿ ನಿಲ್ಲಿಸಿದೆ.


ಡಿಸ್ಕವರಿ ಚಾನೆಲ್‌ನಲ್ಲಿ ಹಾರೋ ಓತಿಕ್ಯಾತಗಳನ್ನು ನೋಡಿದಾಗಲೆಲ್ಲ ತೇಜಸ್ವಿಯರ ನೆನಪು ಬರೋದು ಖಂಡಿತ. ಅವರ ಕನ್ನಡದ ಕರ್ವಾಲೋ, ಅದರಲ್ಲಿನ ಚಿಂತನೆಗಳು ಯಾವ ಅಂತಾರಾಷ್ಟ್ರೀಯ ಡಾಕ್ಯುಮೆಂಟರಿಗಿಂತ ಕಡಿಮೆಯೇನಿರಲಿಲ್ಲ. ಮೂಡಿಗೆರೆಯಂತಹ ಊರಿನಲ್ಲಿದ್ದುಕೊಂಡು ಬಹುಮುಖಿ ಚಿಂತನಗಳನ್ನು ನಡೆಸುತ್ತಿದ್ದ ಚೇತನಕ್ಕೆ 'ಅಂತರಂಗ'ದ ನಮನ!