Friday, June 16, 2006

ಏರ್‌ಪೋರ್ಟ್‌ನಲ್ಲಿ ಡಿಲೇ ಆದಾಗ ನಾನೇನ್ ಮಾಡ್ತೀನಿ ಅಂದ್ರೆ...

ಇವತ್ತು ಟೆಕ್ಸಾಸ್‌ನಿಂದ ನಮ್ಮನೆಗೆ ಬರಬೇಕಾದ ವೆಂಕಟೇಶ್ ಫೋನ್ ಮಾಡಿ ವಿಮಾನ ತಡವಾಗಿ ಬಿಡ್ತಾ ಇದೆ, ಒಂದು ನಾಲ್ಕು ಘಂಟೇನಾದ್ರೂ ತಡವಾಗುತ್ತೆ, ನಮಗೋಸ್ಕರ ಕಾಯಬೇಡಿ ಎಂದು ಫೋನ್ ಮಾಡಿದ್ರು. ಹೀಗ್ ಮಾಡಿ ಹಾಗ್ ಮಾಡಿ ಎಂದು ಒಂದಿಷ್ಟೊತ್ತು ಮಾತನಾಡಿದ ಮೇಲೆ ನಾನೇನಾದ್ರೂ ಹೀಗೆ ಏರ್‌ಪೋರ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡ್ರೆ ಏನ್ ಮಾಡ್ತೀನಿ ಅಂತ ಯೋಚಿಸ್ದಾಗ ಟರ್ಮಿನಲ್ ಸಿನೆಮಾ ನೆನಪಿಗೆ ಬಂತು. ೨೦೦೪ ರಲ್ಲೇ ಬಿಡುಗಡೆಯಾದ ಈ ಸಿನೆಮಾವನ್ನು ನಾನು ನೋಡಿದ್ದು ೨೦೦೫ ರ ಕೊನೆಯಲ್ಲಿ ಅದೂ ಟಿವಿನಲ್ಲಿ ಬಂದು ಹಳಸಲು ಹೊಡೆದ ಮೇಲೆ. ನನಗೆ ಇಲ್ಲಿನ ಚಿತ್ರ ನಟ ನಟಿಯರಲ್ಲಿ ಕೆಲವೊಂದಿಷ್ಟು ಜನರನ್ನು ಕಂಡ್ರೆ ಆಗೋದೇ ಇಲ್ಲ - ಅದರಲ್ಲಿ ನಂಬರ್ ಒನ್ ಅಂದ್ರೆ ಜನ್ನಿಫರ್ ಲೋಪೆಜ್, ನಂಬರ್ ಟೂ ಅಂದ್ರೆ ಟಾಮ್ ಹ್ಯಾಂಕ್ಸ್. ಆದ್ರೆ ನಾನು ಬಹಳ ವಿರೋಧವನ್ನಿಟ್ಟುಕೊಂಡೂ ಟರ್ಮಿನಲ್ ಸಿನೆಮಾ ನೋಡಿದ ಮೇಲೆ ಟಾಮ್‌ ಹ್ಯಾಂಕ್ಸ್ ಮೇಲೆ ವಿಶೇಷ ಒಲವು ಬಂದು ಬಿಟ್ಟಿದೆ! ಆದ್ದರಿಂದ ನಂಬರ್ ಒನ್ ಹಾಗೂ ನಂಬರ್ ಟೂ ಎರಡನ್ನೂ ಜನ್ನಿಫರ್ ಲೋಪೆಜ್ ಗಳಿಸಿಕೊಂಡಿದ್ದಾಳೆ - ನನ್ನ ವಿರೋಧಕ್ಕೆ ಯಾವ ಕಾರಣ, ರೀತಿ-ನೀತಿ ಎಂದೇನೂ ಇಲ್ಲ, ಆದ್ರೆ ಏಕೋ ಏನೋ ನನಗೆ ಕೆಲವರ ಸೊಡ್ಡನ್ನ ನೋಡಿದ್ರೆ ಸುತಾರಾಂ ಆಗೋದಿಲ್ಲ - ಅದಕ್ಕೆ ಅವರ ಬಗ್ಗೆ ತಿಳಿಯದಿರುವ ನನ್ನ ಮೌಢ್ಯವೂ ಸ್ವಲ್ಪ ಮಟ್ಟಿಗೆ ಕಾರಣವೆನ್ನಬಹುದು.


ನಾನು ಸಿನಿಮಾ ನೋಡೋದೇ ಕಡಿಮೆ, ನೋಡಿದ್ರೂ ಮೊದ್ಲಿಂದ ಕೊನೇವರೆಗೆ ಕೂತು ನೋಡೋದು ಇನ್ನೂ ಕಡಿಮೆ - ಇವುಗಳಿಗೆ ಹೊರತು ಎಂಬಂತೆ ಇಲ್ಲಿ ಬಂದ ಕನ್ನಡ ಸಿನಿಮಾಗಳನ್ನು ಎಷ್ಟೇ ಕೆಟ್ಟವಾಗಿದ್ದರೂ ಅಷ್ಟೇ ಅಸ್ಥೆಯಿಂದ ನೋಡುತ್ತೇನೆ, ಅಥವಾ ಇನ್ಯಾರಾದರೂ ಶಿಫಾರಸ್ಸು ಮಾಡಿದ್ದರೆ ಏನಾದರೂ ಇದ್ದೀತೋ ಎಂದು ಕಾದು ನೋಡುತ್ತೇನೆ. ಇಷ್ಟೆಲ್ಲ ಹೇಳಿದ ಮೇಲೆ ನಾನು ಒಂದು ಸಿನಿಮಾದ ಬಗ್ಗೆ ಬರೆದೆನೆಂದು ಅದನ್ನು ವಿಮರ್ಶೆ ಎಂದು ಯಾರೂ ಕರೆಯದಿದ್ದರೆ ಸಾಕು!

ಟರ್ಮಿನಲ್ ಸಿನೆಮಾದಲ್ಲಿ ಅಂಥಾದ್ದೇನೂ ಇಲ್ಲ - ವಿಕ್ಟರ್ ಅನ್ನೋ ಒಬ್ಬ ಕ್ರಕೋಝಿಯಾ ದೇಶದ ಪ್ರವಾಸಿ ಜೆ.ಎಫ್.ಕೆ. ಏರ್‌ಪೋರ್ಟಿನಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಾನೆ - ಒಂದು ಕಡೆ ಮಿಲಿಟರಿ ಸಂಘರ್ಷಗಳಿಂದ ಅರಾಜಕತೆ ಬೆಳೆದು ಅವನ ಪಾಸ್‌ಪೋರ್ಟ್ ವೀಸಾಕ್ಕೆ ಯಾವುದೇ ಬೆಲೆ ಉಳಿಯೋದಿಲ್ಲ ಆದ್ದರಿಂದ ಅವನ ಇಮಿಗ್ರೇಷನ್ ಸ್ಟೇಟಸ್ ತೀರ್ಮಾನವಾಗೋವರೆಗೆ ಅವನು ಏರ್‌ಪೋರ್ಟಿನಲ್ಲೇ ಕಳೆಯುತ್ತಾನೆ. ಆಗಿನ ಬೆಳವಣಿಗೆ ಅವನು ತನ್ನದೇ ಒಂದು ಪ್ರಪಂಚವನ್ನು ಅಲ್ಲಿ ನಿರ್ಮಿಸಿಕೊಳ್ಳುವುದು ಮುಂತಾದವುಗಳು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ರಂಜಿಸುತ್ತವೆ. ಒಂದೇ ವಾರದಲ್ಲಿ ಅದು ಹೇಗೆ ಇಂಗ್ಲೀಷ್ ಕಲಿತು ಬಿಡುತ್ತಾನೆ ಅನ್ನೋ ತರ್ಕಗಳನ್ನೆಲ್ಲ ಬದಿಗಿಟ್ಟು ನೋಡಿದರೆ 'ಓಕೆ' ಎನ್ನಬಹುದಾದ ಸಿನಿಮಾವನ್ನು ನಿರ್ದೇಶಿಸಿದ ಸ್ಟೀವನ್ ಸ್ಪೀಲ್‌‍ಬರ್ಗ್ ಅಂಥಾದ್ದೆನೂ ಪರಿಣಾಮವನ್ನು ನನ್ನ ಮೇಲೆ ಈ ಸಿನಿಮಾದ ಮೂಲಕ ಬೀರಲಿಲ್ಲ ಆದರೆ ಟಾಮ್ ಹ್ಯಾಂಕ್ಸ್ ನ ನಟನೆ ಮಾತ್ರ ಅದ್ಭುತವಾಗಿ ಬಂದಿದೆ. ಅವನು ವಿಕ್ಟರ್ ನವೋರ್‌ಸ್ಕಿಯ ಪಾತ್ರಕ್ಕೆ ಖಂಡಿತವಾಗಿ ನ್ಯಾಯವನ್ನು ಒದಗಿಸಿದ್ದಾನೆ. ಈ ಸಿನಿಮಾವನ್ನು ನೋಡುವವರೆಗೂ ಟಾಮ್ ಹ್ಯಾಂಕ್ಸ್ ಎಂದರೆ ಅಷ್ಟಕಷ್ಟೇ ಅನ್ನೋನು ಅವನ್ ಫ್ಯಾನ್ ಆಗಿ ಹೋಗಿದ್ದೇನೆ. ಆದರೆ ನಾನು ಮೇಲೆ ಬಿದ್ದೇನೂ ಟಾಮ್ ಹ್ಯಾಂಕ್ಸ್‌ನ ಬೇರೆ ಸಿನಿಮಾಗಳನ್ನೇನೂ ನೋಡಿಲ್ಲ, ನೋಡೋದೂ ಇಲ್ಲ - ಯಾವತ್ತಾದರೂ ಅವನ ಸಿನಿಮಾಗಳು ಬಂದಾಗ ಪುರುಸೊತ್ತಿದ್ದರೆ ನೋಡಿದರಾಯಿತು ಎಂದು ಸುಮ್ಮನಿದ್ದೇನೆ.


ನಾನು ಒಮ್ಮೆ ಫ್ರ್ಯಾಂಕ್‌ಫರ್ಟ್ ಏರ್‌ಪೋರ್ಟಿನಲ್ಲಿ ಪೈಲಟ್‌ಗಳು ಮುಷ್ಕರ ಮಾಡಿದ್ದರಿಂದ ಅರ್ಧ ದಿನ ಸಿಕ್ಕಿ ಹಾಕಿಕೊಂಡಿದ್ದೆ. ಆಗ ಅಲ್ಲಿ ಏರ್‌ಪೋರ್ಟಿನಲ್ಲಿ ಓದಲು ಬರೆಯಲು ಬೇಕಾದಷ್ಟು ವಸ್ತುಗಳಿದ್ದರೂ ನಾನು ಒಂದು ಕಡೆ ಕುಳಿತು ಅಲ್ಲಿ ಟರ್ಮಿನಲ್‌ನಲ್ಲಿ ಬಂದು ಹೋಗುವ ಪ್ರಯಾಣಿಕರನ್ನೆಲ್ಲ ಗಮನಿಸುತ್ತಿದ್ದೆ. ಎಷ್ಟೋ ತರಾವರಿ ಮುಖಗಳ ದರ್ಶನವಾಗಬೇಕೆಂದರೆ ಒಂದು ಅಂತಾರಾಷ್ಟ್ರೀಯ ಏರ್‌ಪ್ರೋರ್ಟಿಗಿಂತಲೂ ಮತ್ತ್ನಿನ್ಯಾವ ಪ್ರಶಸ್ತ ಸ್ಥಳ ಬೇಕು? ಬರೀ ಅಲ್ಲಿ ಹೋಗಿ ಬರುವವರ ಮುಖಗಳನ್ನು ಓದುತ್ತಾ ಹೋದರೆ ಒಂದೆರಡು ಘಂಟೆಗಳಲ್ಲಿ ಎಂತಹವನೂ ಮನಶಾಸ್ತ್ರಜ್ಞನಾಗಬಹುದು! ಕೆಲವು ಮುಖಗಳಲ್ಲಿ ತೀಕ್ಷ್ಣವಾದ ನೋವಿನ ಗೆರೆಗಳು, ಇನ್ನು ಕೆಲವು ಮುಖಗಳಲ್ಲಿ ಅನಿಶ್ಚಯತೆ. ಕೆಲವು ಜನರಲ್ಲಿ ಸಂಭ್ರಮ, ಇನ್ನು ಕೆಲವರಲ್ಲಿ ಕೊರಗು ಮುಂತಾಗಿ ಎಷ್ಟೋ ವಿಧವಿಧವಾದ ಜನರನ್ನು ಅಲ್ಲಿ ಗುರುತಿಸುತ್ತಿದ್ದೆ - ಅವರನ್ನೆಲ್ಲ ನೇರವಾಗಿ ನೋಡದಂತೆ ಕಪ್ಪು ಗಾಜಿನ ಕನ್ನಡಕ ಸಹಾಯ ಮಾಡಿತ್ತು. ಕೈಯಲ್ಲಿ ಓದುವುದಕ್ಕೆ ಯಾವುದಾದರೂ ವೃತ್ತಪತ್ರಿಕೆಯೋ ಮತ್ತೊಂದೋ ಇದ್ದೇ ಇರುತ್ತೆ ಆದರೆ ಒಂದು ಏರ್‌ಪೋರ್ಟಿನಲ್ಲಿ ಬಂದು ಹೋಗುವ ನಾನಾ ದೇಶದ ಜನರು ಒಂದೇ ಕಡೆ ನೋಡಲು ಸಿಗುವುದು ಅಪರೂಪ. ಅಲ್ಲಲ್ಲಿ ನಡೆದಾಡುವ ಜನರನ್ನು ಗುರುತಿಸಿಕೊಂಡು ಇವರು ಯಾವ-ಯಾವ ದೇಶದವರಿದ್ದಿರಬಹುದು, ಮಂಗನಿಂದ ಮಾನವನಾಗಿ ಬೆಳೆದ/ಬೆಳೆಯುತ್ತಿರುವ ನಮ್ಮ ಪರಂಪರೆಯಲ್ಲಿ ಇವರ ತಳಿ ಎಲ್ಲಿ ಇದ್ದಿರಬಹುದು, ಕೆಲವರ ಮುಖ ಲಕ್ಷಣಗಳು ಹೀಗೇಕೆ, ಅವರ ಮೈ ಬಣ್ಣವನ್ನು ನೋಡಿ ಭೂಮಿಯ ಸಮಭಾಜಕ ವೃತ್ತದಿಂದ ಅವರು ಅಥವಾ ಅವರ ಪೋಷಕರು ಹುಟ್ಟಿದ ದೇಶ ಎಷ್ಟು ದೂರವಿದ್ದಿರಬಹುದು ಮುಂತಾದವುಗಳನ್ನು ಕೂಲಂಕಷವಾಗಿ ಹಿಡಿದು ಯೋಚಿಸುವುದರಲ್ಲೇ ಸಾಕಾಗಿ ಹೋಗುತ್ತದೆ. ಕಪ್ಪು, ಬಿಳಿ, ಕಂದು, ಹಳದಿ, ಕೆಂಪು ಮುಂತಾದ ಚರ್ಮದ ಬಣ್ಣದವರ ಮಿಶ್ರ ಸಂತಾನಗಳಂತೂ ಇನ್ನೂ ಕುತೂಹಲವನ್ನು ಹುಟ್ಟುಸುತ್ತವೆ.

ನನಗೆ ಕನೆಕ್ಷನ್ ಫ್ಲೈಟ್ ತಪ್ಪಿ ಹೋಗದೇ ಇದ್ದು ನನ್ನ ಫ್ಲೈಟ್ ತಡವಾದರೆ ಒಂದಿಷ್ಟು ಹೊತ್ತು ಏರ್‌ಪೋರ್ಟ್‌ನಲ್ಲಿ ಕಳೆಯುವುದಕ್ಕೆ ಯಾವ ಬೇಸರವೂ ಇಲ್ಲ. ದಿನ ಬೆಳಗಾದರೆ ಕಂಪ್ಯೂಟರ್ ಪರದೆ ಅಥವಾ ಪುಸ್ತಕ/ಪೇಪರ್‌‌ಗಳಲ್ಲಿ ತಲೆ ಹುದುಗಿಸಿಕೊಳ್ಳುವ ನನಗೆ ಅದು ಜನರೊಡನೆ ಬೆರೆಯಲು, ಜನರ ಬಗ್ಗೆ ತಿಳಿದುಕೊಳ್ಳಲು ಮತ್ತೊಂದು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದಲೇ ಡಿಲೇ ಅನ್ನೋದು ನನ್ನ ದೃಷ್ಟಿಯಿಂದ ಕೆಟ್ಟದಂತೂ ಅಲ್ಲ!

Thursday, June 15, 2006

ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಲೋಕ ಕಲ್ಯಾಣ

ರೀಟೈಲ್ ವ್ಯವಹಾರ ಮಾಡೋದು ಅಂದರೆ ಹೋಲ್‌ಸೇಲ್‌ನಲ್ಲಿ ವಸ್ತುಗಳನ್ನು ಕೊಂಡು ಸ್ವಲ್ಪ ಮಾರ್ಜಿನ್‌ನಲ್ಲಿ ವಸ್ತುಗಳಿಗೆ ಬೆಲೆ ಹೆಚ್ಚಿಸಿ ಬಂದ ಆ ಹೆಚ್ಚಳದಲ್ಲಿ ಖರ್ಚುಗಳನ್ನು ಕಳೆದು ಲಾಭಾಂಶ ಪಡೆಯುವುದು ಎಂದುಕೊಂಡಿದ್ದವನಿಗೆ ನಮ್ಮೂರುಗಳಲ್ಲಿ ವ್ಯವಹಾರ ಮಾಡುವವರು ಈ ಮಾರ್ಜಿನ್‌ಗಿಂತಲೂ ಹೆಚ್ಚು ಹಣವನ್ನು ಮೋಸಮಾಡಿಯೇ ಪಡೆಯುತ್ತಾರೆಂಬುದು ನನಗೆ ಗೊತ್ತಿತ್ತಾದರೂ ಅದನ್ನು ಎದುರಿಸಿ ಪ್ರಶ್ನೆಗಳನ್ನು ಕೇಳುವ ಧೈರ್ಯ ಬಂದಿದ್ದು ಇತ್ತೀಚೆಗೆ ಎಂದೇ ಹೇಳಬೇಕು. ಆದರೆ ಇಂತಹ ವರ್ತಕರಲ್ಲಿ ಮೋಸ ಮಾಡುವ ಪ್ರವೃತ್ತಿ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಮೋಸ ಮಾಡುವುದು ಅವರ ವಹಿವಾಟಿನ ಒಂದು ದೊಡ್ಡ ಅಂಗವಾಗಿಬಿಟ್ಟು, ಅದಕ್ಕೆ ಅಡ್ಡ ಬಂದವರನ್ನು ಬಾಯಿಗೆ ಬಂದಂತೆ ಬಯ್ಯುವುದು ಕೆಲವು ಕಡೆಗಳಲ್ಲಿ ಕೈ ಮುಂದು ಮಾಡುವವರೆಗೂ ಹೋಗುತ್ತದೆ. ವ್ಯವಹಾರದಲ್ಲಿ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದಾದರೂ ಈ ಕೆಳಗಿನವು ಹೆಚ್ಚು ಪ್ರಸ್ತುತವೆನಿಸುತ್ತವೆ:

೧) ಬೆಂಗಳೂರಿನ ಸಂಜಯ ನಗರದಲ್ಲಿ ಮಾರ್ವಾಡಿ ಅಂಗಡಿಯೊಂದಕ್ಕೆ ಅದೇನೇನೋ ಕಾಸ್ಮೆಟಿಕ್ಸ್ ಹಾಗೂ ಬಹುಪಯೋಗಿ ಪದಾರ್ಥಗಳನ್ನು ಖರೀದಿಸುವುದಕ್ಕೆ ನಾವು ನಮ್ಮ ಮನೆಯಿಂದ ಮೂರ್ನಾಲ್ಕು ಜನರು ಹೋಗಿದ್ದೆವು. ಅಂಗಡಿಯವನು ನಮ್ಮ ಮನೆಯವರಿಗೆಲ್ಲ ಪರಿಚಯದವನಂತೆ, ಬೆಂಗಳೂರಿನಲ್ಲಿ ಅದೆಷ್ಟೋ ವರ್ಷಗಳಿಂದ ಅಂಗಡಿಯನ್ನು ಹಾಕಿ ಮನೆ-ಮಠ ಕಟ್ಟಿಸಿಕೊಂಡಿದ್ದರೂ ಆತ 'ಕನ್ನಾಡ್' ಮಾತನಾಡುವುದು ಅಷ್ಟಕಷ್ಟೇ ಎನ್ನುವುದು ಕೇಳಿ ನನಗೆ ಸ್ವಲ್ಪ ಬೇಸರವಾಗಿತ್ತು, ಆದರೂ ಸುಮ್ಮನಿದ್ದೆ. ಕೆಲವೊಂದು ವಸ್ತುಗಳ ಮೇಲೆ 'ಲೋಕಲ್ ಟ್ಯಾಕ್ಸೂ ಸೇರಿದೆ' ಎಂದು ನಮೂದಿಸಿರುತ್ತಾರಾದ್ದರಿಂದ (ಆಗಿನ್ನೂ ವ್ಯಾಟ್ ಇದ್ದಿರಲಿಲ್ಲ), ಕೆಲವೊಂದು ವಸ್ತುಗಳ ಬೆಲೆ ಅವುಗಳ ಮೇಲೆ ಮುದ್ರಿತವಾದದ್ದನ್ನು ಕೊಡುವಂತೆಯೂ, ಇನ್ನು ಕೆಲವು ವಸ್ತುಗಳ ಮೇಲೆ ನಮ್ಮ ಮನೆಯವರು ಚೌಕಾಶಿಯನ್ನು ಮಾಡಿ ಕೊನೆಗೆ ಬಿಲ್ ಕೊಡುವ ಹೊತ್ತಿಗೆ ನಾನು 'ರಶೀದಿ' ಕೊಡಿ ಎಂದೆ. ಅಂಗಡಿಯವನು ಶಿಸ್ತಾಗಿ ಒಂದು ಹಳದಿ ಬಣ್ಣದ ಸಣ್ಣ ನೋಟ್ ಪುಸ್ತಕವೊಂದರಲ್ಲಿ ಒಂದು ಹಾಳೆಯಲ್ಲಿ ಕೊಂಡ ವಸ್ತುಗಳ ಹೆಸರನ್ನು ಅವನ ಬ್ರಹ್ಮ ಲಿಪಿಯಲ್ಲಿ ಗೀಚಿ ಅದರ ಮುಂದೆ ಇಂತಿಷ್ಟು ಹಣ ನಮೂದಿಸಿ ಪುಟ್ಟ ಕ್ಯಾಲ್ಕ್ಯುಲೇಟರ್ ಸಹಾಯದಿಂದ ಅದನ್ನು ಟೋಟಲ್ ಮಾಡಿ ನನಗೆ ಕೊಡಲು ಮುಂದೆ ಬಂದ, ನಾನು ಅಲ್ಲಿಯವರೆಗೂ ಸುಮ್ಮನಿದ್ದವನು 'ಇದು ರಶೀದಿಯಲ್ಲ, ನನಗೆ ನಿಜವಾದ ರಶೀದಿ ಬೇಕು' ಎಂದಿದ್ದಕ್ಕೆ ಅಂಗಡಿಯವನು ನನ್ನಿಂದ ಈ ಮಾತನ್ನು ನಿರೀಕ್ಷಿಸಿಲ್ಲವಾದ್ದರಿಂದ ಹಾಗೂ ಅವನ ದಿನನಿತ್ಯದ 'ವ್ಯವಹಾರ'ಕ್ಕೆ ಇದು ಭಿನ್ನವಾದ್ದರಿಂದ 'ರಶೀದಿ ಕೊಡುತ್ತೇನೆ, ಅದರ ಮೇಲೆ ಟ್ಯಾಕ್ಸ್ ಕೊಡಬೇಕಾಗುತ್ತದೆ' ಎಂದ. ನಾನು 'ಆಗಲಿ' ಎಂದಿದ್ದಕ್ಕೆ ನಮ್ಮ ಮನೆಯವರು ಟ್ಯಾಕ್ಸಿನ ವಿಷಯ ಬಂದಾಗ ಇನ್ಯಾರು ಹೆಚ್ಚಿಗೆ ಹಣಕೊಡುವವರು ಎಂದು ನನ್ನನ್ನು ಪ್ರಶ್ನಿಸಿದರೂ ನಾನು 'ಪರವಾಗಿಲ್ಲ ಬಿಡಿ' ಎಂದಿದ್ದರಿಂದ ಅಂಗಡಿಯವನು ಸ್ವಲ್ಪ ನಾನ್ನ ಮೇಲೆ ಸಿಟ್ಟನ್ನು ಮಾಡಿಕೊಂಡು ಒಳಗಡೆಯಿಂದ ರಶೀದಿಯ ಪುಸ್ತಕವನ್ನು ಬರೆಸಿ, ಟ್ಯಾಕ್ಸೂ ಸೇರಿ ನಿಜವಾದ ರಶೀದಿ ಕೊಟ್ಟನು. ನಾನು 'ಈಗಾಗಲೇ ಕೆಲವೊಂದು ವಸ್ತುಗಳ ಮೇಲೆ ಲೋಕಲ್ ಟ್ಯಾಕ್ಸು ಸೇರಿಸಿರೋದರಿಂದ ಆ ಐಟಮ್ಮುಗಳಿಗೆ ಮತ್ತೆ ಹೆಚ್ಚಿನ ಟ್ಯಾಕ್ಸು ಕೊಡಬೇಕಾಗಿಲ್ಲ, ಲೆಕ್ಕ ತಪ್ಪಾಗಿದೆ' ಎಂದಿದ್ದಕ್ಕೆ ಅಂಗಡಿಯವನಿಗೂ ನಮ್ಮ ಮನೆಯವರಿಗೂ ನನ್ನ ಮೇಲೆ ನಿಜವಾಗಿ ಸಿಟ್ಟುಬಂದಿದ್ದು ಅವರ ಮುಖಗಳಲ್ಲಿ ಕಾಣುತ್ತಿತ್ತು. ಅವನು ಒಟ್ಟು ಮೊತ್ತ ಹಾಕಿದ ರಶೀದಿಯಲ್ಲಿ ಕೊನೆಗೆ ಹೆಚ್ಚಿಗೆ ಸೇರಿಸಿದ ಟ್ಯಾಕ್ಸನ್ನು ಅವನ ಕಾರ್ಬನ್ ಕಾಪಿಯಲ್ಲೂ ಮೂಡುವಂತೆ ಕಳೆದು ಕೊನೆಗೆ ಹಣವನ್ನು ಕೊಟ್ಟಾಗ ಅಂಗಡಿಯವನಿಗೆ ಸುಸ್ತಾಗಿ ಹೋಗಿತ್ತು. ನಮ್ಮ ಮನೆಯವರಿಗೆ ಇಷ್ಟು ಹೊತ್ತು ಅಂಗಡಿಯಲ್ಲಿ ಸಾಮಾನುಗಳನ್ನು ನೋಡುವಾಗ ತಡವಾಗದಿದ್ದುದು ಈಗ ರಶೀದಿ ಹಾಕುವಾಗ ಆದ ವಿಳಂಬದಿಂದ ನಾನು ಅವರ ಸಮಯವನ್ನು ತಿಂದೆನೆಂದು ಆಡಿಕೊಂಡರು, ಅಲ್ಲದೇ 'ಈ ಅಂಗಡಿಯವನು ನಮಗೆ ವರ್ಷಗಳಿಂದಲೂ ಗೊತ್ತು, ಅವನು ಯಾವಾಗಲೂ ನಮಗೆ ಕಡಿಮೆ ಬೆಲೆಗೇ ಕೊಡೋದು, ಹಾಗೆ ಅಂಥವರನ್ನು ಎದುರು ಹಾಕಿಕೊಳ್ಳಬಾರದು' ಎಂದು ನನಗೆ ಉಪದೇಶವನ್ನೂ ಮಾಡಿದರು. ನಾನು 'ಹೌದಾ' ಎಂದು ಸುಮ್ಮನಾದೆ. (ಇಷ್ಟೂ ಮಾಡಿ ಅವನ ಬಳಿ ಸಿ.ಎಸ್.ಟಿ., ಕೆ.ಎಸ್.ಟಿ. ಮುದ್ರಿತವಾಗಿರೋ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂದು ಎರಡು ರಶೀದಿ ಪುಸ್ತಕಗಳಿದ್ದರೆ ಅದಕ್ಕೆ ನಾನು ತಾನೇ ಏನು ಮಾಡಲು ಸಾಧ್ಯ?)

೨) ನನ್ನ ಅಣ್ಣನ ಲಾರಿಯಲ್ಲಿ ಒಂದು ದಿನ ಸಾಮಾನುಗಳನ್ನು ಸಾಗಿಸಿ ಬರಲು ಹೋಗಿದ್ದೆ. ಡ್ರೈವರ್ ಬದಲಿಗೆ ಅಣ್ಣನೇ ಲಾರಿ ಚಲಾಯಿಸುತ್ತಿದ್ದ, ಯಾರದ್ದೋ ಒಂದಿಷ್ಟು ಸಾಮಾನುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಾಡಿಗೆಗೆ ಹೊಡೆಯಬೇಕಾದಂತಹ ಸಣ್ಣ ವ್ಯವಹಾರವದು. ಸಾಮಾನುಗಳನ್ನು ಲೋಡ್ ಮಾಡಿಕೊಂಡು ತೆಗೆದುಕೊಂಡು ಹೋಗಿ ಅಲ್ಲಿ ಇಳಿಸಿ ಬಂದಿದ್ದಕ್ಕೆ ಗುತ್ತಿಗೆ ಆಧಾರದ ಮೇಲೆ ಇಷ್ಟು ಎಂದು ಮೊದಲೇ ಮಾತನಾಡಿಕೊಂಡಿದಷ್ಟು ಹಣವನ್ನು ತೆಗೆದುಕೊಂಡು ಬಂದರೆ ಆಯಿತು, ಅತ್ಯಂತ ಸರಳವಾದ ಈ ವ್ಯವಹಾರದಲ್ಲಿ ಎಲ್ಲವೂ ಕ್ಯಾಶ್ ಮೂಲಕವೇ ನಡೆಯೋದಾದ್ದರಿಂದ ಯಾವ ರಶೀದಿಯಂತೂ ಸಿಗೋದಿಲ್ಲ, ಇನ್ನು ಯಾರಾದರೂ ಟ್ಯಾಕ್ಸ್ ಕಟ್ಟುವ ಮಾತು ಹಾಗಿರಲಿ! ಆ ಕಡೆಯವರು ಸಾಮಾನುಗಳನ್ನು ಇಳಿಸಿಕೊಂಡು ಹಣವನ್ನು ಎಣಿಸಿಕೊಡುವಾಗ ಅವರ ಕಣ್ತಪ್ಪಿನಿಂದಲೋ, ಅಥವಾ ತಪ್ಪು ಲೆಕ್ಕದಿಂದಲೋ ನೂರು ರೂಪಾಯಿಗಳನ್ನು ನನ್ನ ಅಣ್ಣನಿಗೆ ಹೆಚ್ಚು ಕೊಟ್ಟುಬಿಟ್ಟರು. ಅವರು ಹಣವನ್ನು ಎಣಿಸುತ್ತಿರುವಾಗ ನಾನೂ ಎಣಿಸಿಕೊಂಡಿದ್ದೆನಾದ್ದರಿಂದ ಹೆಚ್ಚಿದ್ದದ್ದು ನನಗೂ ಗಮನಕ್ಕೆ ಬಂತು ಆದರೆ ನಿಖರವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ, ಅಲ್ಲದೇ ದುಡ್ಡು ತೆಗೆದುಕೊಳ್ಳುತ್ತಿರುವವನು ನಾನಲ್ಲ ಎಂದು ಸುಮ್ಮನಿದ್ದೆ. ನನ್ನ ಅಣ್ಣನಿಗೆ ದುಡ್ಡಿನ ವ್ಯವಹಾರ ಮಾಡುವಾಗ ಮಾತನಾಡಬೇಡವೆಂದು ಸಾವಿರ ಬಾರಿ ಹೇಳಿದರೂ ಅವನು ಲೋಕಾಭಿರಾಮವಾಗಿ ಒಂದಲ್ಲ ಒಂದು ಹರಟೆಯನ್ನು ಕೊಚ್ಚುತ್ತಲೇ ಹಣವನ್ನು ಕೊಟ್ಟು ತೆಗೆದುಕೊಳ್ಳುತ್ತಾನಾದ್ದರಿಂದ ಅವನ ಲೆಕ್ಕದಲ್ಲಿ ಬೇಕಾದಷ್ಟು ತಪ್ಪುಗಳನ್ನು ನಾನು ಎಷ್ಟೋ ಸಲ ಎದುರೆದುರೇ ತೋರಿಸಿದ್ದೇನೆ, ಅದರೂ ಅವನ ಬುದ್ಧಿ ಬದಲಾಗೋದಿಲ್ಲ - ಅಲ್ಲದೇ ಅವನು ಹಾಗೆ ಕಳೆದುಕೊಳ್ಳುವ ಹಣಕ್ಕೂ, ಕೆಲವೊಮ್ಮೆ ಹೆಚ್ಚಾಗಿ ಸಿಗುವ ಹಣಕ್ಕೂ ಎಲ್ಲೋ ಒಂದು ಸಮೀಕರಣವಿದ್ದಿರಲೇ ಬೇಕು ಎಂದು ನನಗೂ ಅನ್ನಿಸಿಬಿಟ್ಟಿದೆ! ನನ್ನ ಅಣ್ಣ ಹಣವನ್ನು ಎಣಿಸಿದಂತೆ ಮಾಡಿ ತನ್ನ ಅಂಗಿ ಜೇಬಿನಲ್ಲಿ ಸೇರಿಸಿಕೊಂಡು ತನ್ನ ಹರಟೆಯ ಮಧ್ಯೆಯೇ 'ಬರ್ತೇವೆ' ಹೇಳಿ ನಾವಿಬ್ಬರೂ ಲಾರಿಯ ಕಡೆಗೆ ನಡೆದೆವು. ಲಾರಿಯ ಒಳಗೆ ಕೂರುತ್ತಿದ್ದಂತೆ 'ಅವರು ನಿನಗೆ ಒಂದು ನೋಟನ್ನು ಹೆಚ್ಚಿಗೆ ಕೊಟ್ಟಿದ್ದಾರೆ ಅಂತ ಕಾಣ್ಸುತ್ತೆ, ಎಣಿಸಿ ನೋಡು, ಇದ್ದರೆ ಕೊಟ್ಟು ಬಿಡು ಪಾಪ' ಎಂದೆ, ನನ್ನ ಅಣ್ಣ ಎಣಿಸಿದ, ನಿಜವಾಗಿಯೂ ನೂರು ರೂಪಾಯಿ ಅವರು ಕೊಡಬೇಕಾದುದಕ್ಕಿಂತಲೂ ಹೆಚ್ಚಿತ್ತು - ಆದರೆ ನನ್ನ ಅಣ್ಣ 'ಹೋಗೋ, ನಾವೇನಾದ್ರೂ ಹೆಚ್ಚಿಗೆ ಕೊಟ್ರೆ ಅವರೇನಾದ್ರೂ ವಾಪಾಸ್ ಕೊಡ್ತಾರೆ ಅಂತ ತಿಳಕಂಡಿದೀಯಾ, ಸತ್ಯವಂತ್ರ ಕಾಲ ಹೋಯ್ತು!' ಅಂದು ಬಿಡಬೇಕೆ! ನಾನು 'ಹಾಗಲ್ಲ, ಪ್ರಾಮಾಣಿಕವಾಗಿರಬೇಕಾದ್ದು ನಿನ್ನ ಧರ್ಮ, ಅವರು ಏನಾದ್ರೂ ಮಾಡಿಕೊಳ್ಳಲಿ' ಎಂದರೂ ಕೇಳದೆ ಅಣ್ಣ ಗಾಡಿಯನ್ನು ಚಲಾಯಿಸಿ ಮರು ಮಾತನಾಡದೇ ಹಿಂತಿರುಗಿ ಬಂದೇ ಬಿಟ್ಟ.

***

ಅಮೇರಿಕಕ್ಕೆ ಬಂದ ಹೊಸತರಲ್ಲಿ ನಾನು ಒಂದು ಡಾಲರ್ ಬದಲಿಗೆ ಸೂಪರ್ ಮಾರ್ಕೆಟ್‌ನಲ್ಲಿ ನೂರು ಡಾಲರನ್ನು ತಪ್ಪಿಕೊಟ್ಟಿದ್ದನ್ನು ನೆನಪಿಸಿ ಪದೇ-ಪದೇ ಕೇಳಿದಾಗಲು ಕೌಂಟರ್ ಕ್ಲರ್ಕ್ ಇಲ್ಲ ಎಂದು ಸಾಧಿಸಿಕೊಂಡಿದ್ದರಿಂದ ನಾನು ಹಣವನ್ನು ಕಳೆದುಕೊಂಡಿದ್ದೆ, ಆಗೆಲ್ಲ ಕಷ್ಟಮರ್ ಸರ್ವೀಸ್ ಡಿಪಾರ್ಟ್‌ಮೆಂಟ್ ಇದೆಯೆನ್ನುವುದೂ ನನಗೆ ಗೊತ್ತಿರಲಿಲ್ಲವಾದ್ದರಿಂದ ಸುಮ್ಮನೇ ಪೆಚ್ಚು ಮೋರೆ ಹಾಕಿಕೊಂಡು ಹೊರಬಂದದ್ದು ನನಗೆ ಬೇಸರ ತರಿಸಿದ್ದರೂ ನನ್ನ ಜೊತೆಯವರಿಗೆ ಹಲವು ದಿನಗಳ ಮಟ್ಟಿಗಾದರೂ ಖುಷಿಯ ವಿಷಯವಾಗಿತ್ತು.

ನನ್ನದೊಂದು ನಂಬಿಕೆ ಇದೆ - ನಮ್ಮೂರಿನ ರಿಟೈಲ್ ವರ್ತಕರು ನ್ಯಾಯವಂತರಾದರೆ ಸರ್ಕಾರದ ಬೊಕ್ಕಸ ತೆರಿಗೆಯ ಹಣದಿಂದ ತುಂಬಿ ತುಳುಕುತ್ತದೆ, ಅದರಿಂದ ಲೋಕ ಕಲ್ಯಾಣವಾಗುತ್ತದೆ ಎಂದು - ಇದು ನನ್ನ ಭ್ರಮೆ ಇದ್ದಿರಲೂ ಬಹುದು.

Wednesday, June 14, 2006

ಕಡಿಮೆ ಜನರು ಬಳಸುವ ಹೆಚ್ಚಿನ ಸಂಪನ್ಮೂಲಗಳು

ಆಫೀಸಿನಲ್ಲಿ ನಾನು ಕೂರುವಲ್ಲಿಂದ ಸುಮಾರು ಹತ್ತು ಅಡಿ ದೂರದಲ್ಲಿ ಮೈಕಲ್ ಕುಳಿತುಕೊಳ್ಳುತ್ತಾನೆ, ಆತ ಪ್ರತಿದಿನವೂ ಆಫೀಸಿಗೆ ಬಂದ ಕೂಡಲೇ ತನ್ನ ಮೇಜಿನ ಮೇಲಿರುವ ಎರಡು ಟ್ಯೂಬ್‌ಲೈಟುಗಳನ್ನು ಹೊತ್ತಿಸುತ್ತಾನೆ, ಹಾಗೆಯೇ ಪ್ರತಿದಿನವೂ ಮನೆಗೆ ತೆರಳುವಾಗ ಅವುಗಳನ್ನು ಆರಿಸಿ ಹೋಗುತ್ತಾನೆ. ನನ್ನ ಮೇಜಿನ ಮೇಲೂ ಈ ರೀತಿಯದ್ದೇ ಆದ ಎರಡು ಟ್ಯೂಬ್‌ಲೈಟ್‌ಗಳಿದ್ದರೂ ನನಗೆ ಅವುಗಳನ್ನು ಹೊತ್ತಿಸಬೇಕು ಎನ್ನುವ ಅವಶ್ಯಕತೆ ಅಥವಾ ಅಗತ್ಯ ಬಂದಿಲ್ಲವೆನ್ನುವುದಕ್ಕಿಂತಲೂ ಹಾಗೆ ಹೊತ್ತಿಸುವ ಮನಸ್ಸಿಲ್ಲವೆಂದೇ ಹೇಳಬೇಕು. ನನ್ನ ಪ್ರಕಾರ ಸೀಲಿಂಗ್‌ನಲ್ಲಿ ತೊಡಗಿಸಿರುವ ಅನೇಕ ಲೈಟುಗಳ ಬೆಳಕೇ ಬೇಕಾದಷ್ಟಿರುವಾಗ ಇನ್ನೂ ಹೆಚ್ಚಿನ ಬೆಳಕೇಕೆ ಎಂದು ನಾನು ಅಲ್ಲಿ ಇರುವ ಬೇಕಾದಷ್ಟು ಬೆಳಕಿಗೆ ಹೊಂದಿಕೊಂಡಿದ್ದೇನೆ. ಇದೇ ರೀತಿ ನಾವಿರುವ ವಠಾರದಲ್ಲಿ ಹೆಚ್ಚೂ-ಕಡಿಮೆ ಎಲ್ಲ ಮನೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ದೀಪಗಳು ಉರಿಯುತ್ತಿರುವಂತೆ ಕಂಡು ಬಂದರೂ ಕೆಲವೊಂದು ಮನೆಗಳಲ್ಲಿ ಎಷ್ಟೋ ಸಾರಿ ದೀಪಗಳನ್ನು ದಿನಗಟ್ಟಲೇ ಆರಿಸದೇ ಇರುವುದನ್ನೂ ನೋಡಿದ್ದೇನೆ.

ನನ್ನ ಹಾಗೆ ಹೆಚ್ಚಿನ ಭಾರತೀಯರು ನಂಬಿಕೊಂಡಿರುವ ಹಾಗೂ ಆಚರಿಸುವ ಹಾಗೆ ನಾವು ಎಷ್ಟು ಬೇಕೋ ಅಷ್ಟು ಸಂಪನ್ಮೂಲವನ್ನು ಮಾತ್ರ ಬಳಸುವುದನ್ನು ರೂಢಿಸಿಕೊಂಡಿದ್ದೇವೆ, ಆದರೆ ಈ ದೇಶದ ನನ್ನ ಸಹೋದ್ಯೋಗಿಗಳಲ್ಲಿ ಕೆಲವರಿಗೆ ತಾವು ರೀಮುಗಟ್ಟಲೇ ಪೇಪರನ್ನು ತೆಗೆದು ಕಸದ ಬುಟ್ಟಿಗೆ ಸುರಿಯುವಾಗ, 'ನಮ್ಮದಲ್ಲದ' ಸಂಪನ್ಮೂಲಗಳನ್ನು ಧಾರಾಳವಾಗಿ ಬಳಸುವಾಗ 'ಅಯ್ಯೋ' ಅನ್ನಿಸುವುದೇ ಇಲ್ಲ. ಎಲ್ಲರೂ ಹೀಗಿರುತ್ತಾರೆ ಎಂದು ಜನರಲೈಸ್ ಮಾಡುವುದು ತಪ್ಪಾಗುತ್ತದೆ, ಆದರೆ ಇಲ್ಲಿಯವರಿಗೆ 'ಬಡತನದಲ್ಲಿ ಬದುಕುವುದು' ಹೇಗೆ ಅನ್ನೋದು ನಮಗೆ ಗೊತ್ತಿದ್ದಷ್ಟು ಚೆನ್ನಾಗಿ ಗೊತ್ತಿಲ್ಲ ಎಂದು ಹೇಳಿದರೆ ತಪ್ಪೇನೂ ಆಗಲಾರದು.

ನಾವು ಹಾಸ್ಟೆಲಿನಲ್ಲಿದ್ದುಕೊಂಡು ಓದುತ್ತಿರುವಾಗ ನಮ್ಮಲ್ಲಿ ಎರಡು ಬಣಗಳಾಗುತ್ತಿದ್ದವು - ಒಂದು ಬಣದವರು ನಾವು ಬಾಡಿಗೆ ಕಟ್ಟುವುದಿಲ್ಲವೇ ಎಷ್ಟು ಲೈಟ್ ಉರಿಸಿದರೆ ನಮಗೇನಂತೆ ಎಂದೂ, ಮತ್ತೊಂದು ಬಣದವರು ನಾವು ಬಾಡಿಗೆ ಕಟ್ಟಿದ ಮಾತ್ರಕ್ಕೆ ಅನಗತ್ಯವಾಗಿ ಏಕೆ ಲೈಟ್ ಉರಿಸಬೇಕು ಎಂದೂ ವಾದವಾಗುತ್ತಿತ್ತು. ನಾನು ಮೇಲಿನ ವಾದದಲ್ಲಿ ಎರಡನೇ ಬಣಕ್ಕೆ ಸೇರಿಕೊಳ್ಳುತ್ತಿದ್ದೆ. ಒಂದು ಯೂನಿಟ್ ಕರೆಂಟು ಉಳಿಸಿದರೆ ಎರಡು ಯೂನಿಟ್ ಕರೆಂಟನ್ನು ಉತ್ಪಾದಿಸಿದ ಹಾಗೆ, ಒಂದು ಯೂನಿಟ್ ಕರೆಂಟು ಉತ್ಪಾದಿಸಲು ಸರ್ಕಾರಕ್ಕೆ ಎಷ್ಟೊಂದು ಹಣ ಖರ್ಚಾಗುತ್ತದೆ, ಇತ್ಯಾದಿ ಇತ್ಯಾದಿಯಾಗಿ ನಮ್ಮ ವಾದಗಳು ಹಬ್ಬಿಕೊಳ್ಳುತ್ತಿದ್ದವು. ಯಾವ ವಾದ ಹೇಗೆ ಹಬ್ಬಿದರೂ ನಾವು ಒಂದು ಕೋಣೆಯಲ್ಲಿದ್ದರೆ ಆ ಕೋಣೆಗೆ ಒಂದು ದೀಪಕ್ಕಿಂತ (ಬಲ್ಬ್) ಹೆಚ್ಚಿಗೆ ಇರುತ್ತಿರಲಿಲ್ಲ. ಅದೇ ಇಲ್ಲಿಗೆ ಬಂದ ಮೇಲೆ ಆಫೀಸಿನ ಕಟ್ಟಡಗಳಲ್ಲಿ ಕೋಣೆಯ ಗಾತ್ರದ ಮೇಲೆ ಲೈಟುಗಳ ಸಂಖ್ಯೆಯನ್ನು ನಿಗದಿ ಮಾಡುವುದಕ್ಕಿಂತಲೂ ಇಂತಿಷ್ಟು ದೂರದಲ್ಲಿ ಇಷ್ಟಿಟ್ಟು ಲೈಟುಗಳು ಇರಬೇಕು ಎನ್ನುವ ತರ್ಕದ ಮೇಲೆ ನಮ್ಮ ತಲೆಯ ಮೇಲೆ ಅದೆಷ್ಟೋ ಲೈಟುಗಳು ದಿನದ ಇಪ್ಪತ್ತನಾಲ್ಕು ಘಂಟೆಯೂ ಉರಿಯುತ್ತಿರುತ್ತವೆ. ಆಫೀಸಿನ ಮುಖ್ಯ ಸ್ಥಳಗಳಲ್ಲಿ ಹೇಗೋ ಹಾಗೆಯೇ ರೆಸ್ಟ್‌ರೂಮುಗಳಲ್ಲೂ ಸಹ ಸದಾ ಜಗಮಗಿಸುವ ಹಾಗೆ ಒಂದಿಪ್ಪತ್ತು ಟ್ಯೂಬ್‌ಲೈಟ್‌ಗಳಾದರೂ ಉರಿಯುತ್ತಿರುತ್ತವೆ.

ನಮ್ಮ ದೇಶದಲ್ಲಿ ಪದೇ-ಪದೇ ಕರೆಂಟು ಹೋಗುವುದೂ, ವೋಲ್ಟೇಜ್ ಏರಿಳಿತದಿಂದಾಗಿ ಪರಿಕರಗಳು ಸುಟ್ಟು ಹೋಗುವುದೂ, 'ಹೆಣ್ಣು ಹುಟ್ಟಿದೋರ ಮನೆ ದೀಪದ ಹಾಗೆ' ಒಂದು ರೂಮಿಗೆ ಒಂದೇ ಎಂಬಂತೆ ನಲವತ್ತೋ ಅರವತ್ತೋ ವ್ಯಾಟಿನ ಬಲ್ಬುಗಳು ಮಿಣಿಮಿಣಿ ಉರಿಯುವುದೆಲ್ಲವೂ ನಮ್ಮಲ್ಲಿ ಸರ್ವ ಸಾಮಾನ್ಯವಾಗಿದ್ದರೂ ಇಲ್ಲಿಯವರಿಗೆ ಎಷ್ಟೇ ವಿವರಿಸಿ ಹೇಳಿದರೂ ಅರ್ಥವಾಗುವುದಿಲ್ಲ. ಇವತ್ತಿಗೂ ಕೂಡ ಎಷ್ಟೋ ಜನರು ಇನ್ನೂ ಸೀಮೆ ಎಣ್ಣೆ ದೀಪದ ಬುಡದಲ್ಲೇ ರಾತ್ರಿಗಳನ್ನು ಕಳೆಯೋದೂ ಇದೆ. ಇವೆಲ್ಲವನ್ನೂ ನೆನಪಿಸಿ ನಮ್ಮ ದೇಶ ಬಡದೇಶ ಎಂದು ಹೀಯಾಳಿಸುವುದು ನನ್ನ ಇಂಗಿತವಲ್ಲ, ಬದಲಿಗೆ ಈ ಶ್ರೀಮಂತ ದೇಶದಲ್ಲಿರೋ ಸುಮಾರು ಮುನ್ನೂರು ಮಿಲಿಯನ್ ಜನರು ಪ್ರಪಂಚದಲ್ಲಿ ಬಳಸಬಹುದಾದ ಕಾಲುಭಾಗದಷ್ಟು ವಿದ್ಯುತ್ ಹಾಗೂ ಇತರ ಸಂಪನ್ಮೂಲಗಳನ್ನು ಬಳಸುವುದನ್ನು ನೋಡಿದರೆ ಶಾಕ್ ಆಗುತ್ತದೆ. ನನ್ನ ರಷಿಯನ್ ಸಹೋದ್ಯೋಗಿ ಬೋರಿಸ್ ತನಗೆ ಬರುವ ಹೆಚ್ಚೂಕಡಿಮೆ ಎಲ್ಲಾ ಇ-ಮೇಲ್‌ಗಳನ್ನೂ ಪ್ರಿಂಟ್ ಹಾಕಿ ತನ್ನ ಡೆಸ್ಕ್ ಮೇಲೆ ರಾಶಿ ಏರಿಸಿಕೊಂಡು ಅವುಗಳನ್ನು ಒಂದೊಂದಾಗೇ ಓದಿ ರಿಸೈಕಲ್ಡ್ ಬಿನ್‌ಗೆ ಬಿಸಾಡುವುದನ್ನು ನೋಡಿದಾಗಲೆಲ್ಲ ಅವನು ಪ್ರತಿನಿತ್ಯ ಅದೆಷ್ಟೋ ಗಿಡಮರಗಳನ್ನು ಕೊಲ್ಲುತ್ತಾನೆ ಎಂದು ನನಗೆ ಅನ್ನಿಸುವುದರಲ್ಲಿ ತಪ್ಪು ಕಾಣಿಸುವುದಿಲ್ಲ.

ಪ್ರಪಂಚದ ಕೇವಲ ಐದು ಪರ್‌ಸೆಂಟಿನಷ್ಟು ಇರುವ ಅಮೇರಿಕನ್ನರಲ್ಲಿ ನಾನೂ ಒಬ್ಬನಾಗಿ ಹೋಗಿದ್ದೇನೆ:
ಜನರಿಗೊಂದೊಂದು ಕಾರು; ಅಗತ್ಯವೋ ಇಲ್ಲವೋ ತಿಂದು ಚೆಲ್ಲುವಷ್ಟು ಆಹಾರ ಪದಾರ್ಥಗಳು; ಬೇಕಾಬಿಟ್ಟಿ ಚೆಲ್ಲುವ ನೀರು, ಸದಾ ಉರಿಸುವ ವಿದ್ಯುತ್ (ಹೀಟರ್ ಅಥವಾ ಏರ್‌ಕಂಡೀಷನರ್, ವಾಟರ್ ಹೀಟರ್, ಇತ್ಯಾದಿಗಳು ಎಂದೂ ಕೆಲಸ ನಿಲ್ಲಿಸಿದ್ದಿಲ್ಲ); ಬಾಯಿ ಒರೆಸೋದರಿಂದ ಹಿಡಿದು ಮತ್ತೇನೆಲ್ಲ ಒರಿಸುವುದರವರೆಗೆ ಉಪಯೋಗಿಸುವ, ಬೇಕಾದಷ್ಟು ಬರೆದು, ಮುದ್ರಿಸಿ, ಹರಿದು ಬಿಸಾಡುವ ಪೇಪರುಗಳು. ಪ್ರೆಟ್ರೋಲ್ ಬೆಲೆ ಐದು ಡಾಲರ್ ಆಗಬಹುದಾದಂತಹ ಜಿಯೋ ಪೊಲಿಟಿಕಲ್ ವಿಷಯಗಳನ್ನು ಅರಿತು ಸ್ಪಂದಿಸದಿರುವ ಸಾಕಷ್ಟು ಜನರು ಹಣದ ಕೊರತೆಯಿಂದ ಬಡತನವನ್ನು ಕಂಡವರೇ ವಿನಾ ಸಂಪನ್ಮೂಲಗಳ ಕೊರತೆಯಿಂದಲ್ಲ. ಹನಿಹನಿಗೂಡಿದರೆ ಹಳ್ಳವೆಂದು ಗೊತ್ತಿದ್ದರೂ ಸೂಕ್ಷತೆಗಳನ್ನೆಲ್ಲ ಕೊಡವಿಕೊಂಡು (ಹಾಗೆ ಮಾಡುವುದು ಸುಲಭವಾದ್ದರಿಂದ) ಎಲ್ಲರಲ್ಲಿ ಒಂದಾಗಿ ಬದುಕುತ್ತೇನೆ.

ನಾನು ಪ್ರತೀದಿನ ರೆಕಾರ್ಡ್ ಮಾಡಿ ವಾರಕ್ಕೆರಡು ಬಾರಿ ನೋಡುವ ಬಿಬಿಸಿ ವರ್ಲ್ಡ್ ಸರ್ವೀಸ್ ಸುದ್ದಿಗಳಲ್ಲಿ ಆಫ್ರಿಕಾದಲ್ಲಿ ಸಾವಿರಾರು ಮಕ್ಕಳು ಹಸಿವಿನಿಂದ, ಬಾಯಾರಿಕೆಯಿಂದ ಸಾಯುವುದನ್ನು ನೋಡಿ ನೋಡಿಯೂ ಮೊದಲೆಲ್ಲ ಆಗುತ್ತಿದ್ದ ಸ್ಪಂದನಗಳು ಆಗುವುದೇ ಇಲ್ಲ - ಹಾಗೆ ಮೊದಲಿನ ಸ್ಪಂದನಗಳಿಂದ ಆಗಿದ್ದಾದರೂ ಏನು ಎಂಬ ಧ್ವನಿ ಹತ್ತಿರದಲ್ಲೇ ಎಲ್ಲೋ ಕೇಳಿಬಂದಾಗುತ್ತದೆ.

Tuesday, June 13, 2006

ಒಂದು ಸುಳ್ಳು ಸೃಷ್ಟಿಸಿದ ಹದಿನೈದು ತಿಂಗಳ ಒದ್ದಾಟ!

ನಮ್ಮ ಕಂಪನಿಯಲ್ಲಿ ೨೦೦೦ ದಿಂದ ಇತ್ತೀಚೆಗೆ ಪ್ರಮೋಷನ್‌ಗಳನ್ನು 'ಕೊಡು'ವುದನ್ನು ಕಡಿಮೆ ಮಾಡಿಬಿಟ್ಟರು - ಅದಕ್ಕೆ ಬೇಕಾದಷ್ಟು ಕಾರಣಗಳನ್ನು ಗುರುತಿಸಿಕೊಂಡು ಸಮಾಧಾನ ಹೇಳಿಕೊಳ್ಳಬಹುದಾದರೂ ಕೊನೆಯಲ್ಲಿ ಫಲಿತಾಂಶ 'ಪ್ರಮೋಷನ್' ಸಿಗದೇ ಹೋಗಿದ್ದಕ್ಕೆ ೨೦೦೧ ರ ನಂತರ ಮಾಹಿತಿ ತಂತ್ರಜ್ಞಾನದ ಕೆಲಸಗಳನ್ನು ಭಾರತಕ್ಕೆ ಕಳಿಸುವುದು, ದೊಡ್ಡ ಕಂಪನಿಯ ಐ.ಟಿ. ಬಜೆಟ್ ಚಿಕ್ಕದಾದದ್ದು ಹಾಗೂ ಪ್ರಮೋಷನ್ ಸಿಗುವುದಕ್ಕೆ ಇರುವ ತೀವ್ರ ಪೈಪೋಟಿ ಮುಂತಾದವುಗಳನ್ನು ಹೆಸರಿಸಬಹುದು. ಒಂದೇ ನಾನಿದ್ದ ಇಲಾಖೆಯಲ್ಲಿ ನನ್ನನ್ನು ಗುರುತಿಸಿ ಅವರು ಮೇಲಕ್ಕೆ ತರಬೇಕು, ಇಲ್ಲಾ ನಾನೇ ಪ್ರಮೋಷನ್ ಆಗಬಹುದಾದ ಒಂದು ಯಾವುದಾದರೂ ಅವಕಾಶವನ್ನು ನನ್ನ ಸದುದ್ದೇಶಕ್ಕೆ ಬಳಸಿಕೊಂಡು ಬೇರೆಡೆಯೆಲ್ಲಾದರೂ ಕೆಲಸಗಿಟ್ಟಿಸಿಕೊಳ್ಳಬೇಕು - ಇವೆರಡೂ ಹೇಳುವುದಕ್ಕೆ ಮಾತ್ರ ಸುಲಭವೇ ವಿನಾ ಮಾಡಿ ತೋರಿಸುವುದು ಅಷ್ಟೇ ಕಷ್ಟ.

ಇಲ್ಲಿನ ಕೆಲವು ಕಂಪನಿಗಳಲ್ಲಿ ಮಾಡಿದ ಹಾಗೆ ನಮ್ಮ ಕಂಪನಿಯಲ್ಲೂ ವರ್ಷಕ್ಕೆ ಎರಡು ಬಾರಿ ಪರ್‌ಫಾರ್‌ಮೆನ್ಸ್ ಇವ್ಯಾಲ್ಯುಯೇಷನ್ ನಡೆಯುತ್ತದೆಯಾದ್ದರಿಂದ ವರ್ಷದ ಎರಡು ಅವಧಿಗಳಲ್ಲೂ ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಹೆಸರನ್ನು ತೆಗೆದುಕೊಂಡು ಸಂಪನ್ನನಾದರೂ ವರ್ಷದ ಕೊನೆಯಲ್ಲಿ ಪ್ರಮೋಷನ್‌ಗೆ ಅಭ್ಯರ್ಥಿಗಳನ್ನು ಗೊತ್ತು ಮಾಡುವ 'ರೇಟಿಂಗ್ ಮತ್ತು ರ್‍ಯಾಂಕಿಂಗ್'ನಲ್ಲಿ ಆಗುವ ಕಥೆಯೇ ಬೇರೆ. ಚೆನ್ನಾಗಿ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಬೋನಸ್ಸೂ, ಇಂಕ್ರಿಮೆಂಟೂ ಸಿಗುತ್ತದಾದರೂ ಅವ್ಯಾವುದೂ ಪ್ರಮೋಷನ್ನಿನ ಹಾಗಲ್ಲ. ಒಮ್ಮೆ ಪ್ರಮೋಷನ್ ಬಂದಿತೆಂದರೆ ಅದರಿಂದಾಗುವ ಅನುಕೂಲಗಳೇ ಬೇರೆ, ಅದು ಮುಂದೆ ಹೋಗಲು ಸಹಾಯಮಾಡುವುದೂ ಅಲ್ಲದೇ ಹೆಚ್ಚು-ಹೆಚ್ಚು ಜವಾಬ್ದಾರಿಯುತ ಕೆಲಸಗಳನ್ನು ಮಾಡಿ, ಒಳ್ಳೆಯ ಕೆಲಸಗಳನ್ನು ಮಾಡಿ ಇನ್ನಷ್ಟು ಹೆಸರನ್ನು ಗಳಿಸಬಹುದು. ಆದರೆ ಈ ವರ್ಷಕ್ಕೆರಡು ಬಾರಿ ಆಗುವ ಇವ್ಯಾಲ್ಯುಯೇಷನ್‌ಗಳ ಉದ್ದೇಶವೇ ಬೇರೆ - You are as good as your last assignment ಅನ್ನೋ ಹಾಗೆ ಪ್ರತೀ ಆರು ತಿಂಗಳಿಗೊಮ್ಮೆ ನನ್ನ ಮೇಲೆ ಉಳಿದವರೆಲ್ಲರು ಇಟ್ಟಿರುವ ನಂಬಿಕೆಗಳನ್ನು ಪುನರ್‌ವಿಮರ್ಶೆಗೊಳಪಡಿಸಲಾಗುತ್ತದೆ. ಮುಂದೆ ಬರುವ ಅಡೆತಡೆಗಳನ್ನೆಲ್ಲ ಯಶಸ್ವಿಯಾಗಿ ಜಯಿಸಿದರೆ ಮಾತ್ರ ಪ್ರಮೋಷನ್ನೋ ಮತ್ತೊಂದೋ ಸಿಕ್ಕು ಮುಂದೆ ಹೋಗಬಹುದು.

೧೯೯೭ ರಲ್ಲೇ ನನ್ನ ಯೂಕ್ರೇನಿಯನ್ ಸಹೋದ್ಯೋಗಿ ಆಂಟೋನೀನಾ ಹೇಳಿದ್ದಳು 'ಅಮೇರಿಕದಲ್ಲಿ ನಿನ್ನ ಯೋಗಕ್ಷೇಮವನ್ನು ನೀನೇ ನೋಡಿಕೋಬೇಕು, ಇಲ್ಲಿ ಯಾರೂ ನಿನ್ನ ಆರೈಕೆ ಮಾಡೋದಿಲ್ಲ' ಎಂದು, ಆಗ ನಾವಿಬ್ಬರೂ ಕನ್ಸಲ್‌ಟೆಂಟ್‌ಗಳಾಗಿ ಕೆಲಸಮಾಡುತ್ತಿದ್ದೆವಾದ್ದರಿಂದ ನನ್ನ ಕ್ಲೈಂಟಿನ ಆಫೀಸಿನ ರಾಜಕೀಯ ನಮ್ಮನ್ನು ಅಷ್ಟೊಂದು ಬಾಧಿಸುತ್ತಿರಲಿಲ್ಲವಾದರೂ ಪದೇ-ಪದೇ ಇತರ ಸಹೋದ್ಯೋಗಿಗಳು ರೆಡ್‌ಟೇಪಿಸಂ, ಅಫೀಸಿನ ರಾಜಕೀಯದ ಬಗ್ಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದ ಹಲವಾರು ಸಂದರ್ಭಗಳಲ್ಲಿ ನಾನು ಕನ್ಸಲ್‌ಟೆಂಟ್ ಆಗೇ ಮುಂದುವರೆದರೆ ಎಷ್ಟೋ ಚೆನ್ನ ಎಂದು ಅನ್ನಿಸಿದ್ದೂ ಇದೆ. ಆದರೆ ಕನ್ಸಲ್‌ಟೆಂಟ್ ಆದರೆ ಅನುಕೂಲಗಳು ಇದ್ದಹಾಗೆ ಅನಾನುಕೂಲಗಳೂ ಇಲ್ಲದೇನಿಲ್ಲ, ಅದರ ಮೇಲೆ ಮುಂದೆಲ್ಲಾದರೂ ಬರೆಯುತ್ತೇನೆ.

ಈ ದಿನ ಮೈಸೂರಿನಲ್ಲಿ ಕುಳಿತು ನಮ್ಮ ಕಂಪನಿಗೆ ಕೆಲಸ ಮಾಡುತ್ತಿರುವ ತರುಣ ಮಿತ್ರನೊಬ್ಬ ತನಗೆ ಇತ್ತೀಚಿನ ಫರ್‌ಫಾರ್ಮೆನ್ಸ್ ಇವ್ಯಾಲ್ಯುಯೇಷನ್‌ನಲ್ಲಿ ಕಡಿಮೆ ರೇಟಿಂಗ್‌ನ್ನು ಕೊಟ್ಟಿದ್ದಾರೆ ಎಂದು ತನ್ನ ಕಷ್ಟವನ್ನು ನನ್ನಲ್ಲಿ ಚಾಟ್ ಮೂಲಕ ತೋಡಿಕೊಂಡ. ತನ್ನನ್ನು ಒಂದು ವ್ಯವಸ್ಥಿತ ಜಾಲದಲ್ಲಿ ಸಿಕ್ಕಿಸಿ ಈ ರೀತಿ ಮಾಡಲಾಗಿದೆಯೆಂದು ಬೇಸರ ಪಟ್ಟುಕೊಂಡಿದ್ದ, ನಾನು ವಿವರವನ್ನು ಕೇಳಲಾಗಿ, ಅವನ ಕೆಲಸದ ಬಗ್ಗೆ ಅವನ ಹಳೆಯ ಬಾಸನ್ನು ಸ್ವಲ್ಪವೂ ಸಂಪರ್ಕಿಸದೆ ಎಲ್ಲ ನಿರ್ಧಾರವನ್ನೂ ಈ ಹೊಸ ಬಾಸೇ ಮಾಡಿರೋದರಿಂದ ಹೀಗಾಯಿತು, ನನ್ನ ಹೊಸ ಬಾಸಿಗೆ ನನ್ನ 'ನಡವಳಿಕೆ' ಬಗ್ಗೆ ಅಷ್ಟೊಂದು ಚೆನ್ನಾಗಿ ಗೊತ್ತಿಲ್ಲದ್ದರಿಂದ ಹೀಗೆ ರೇಟಿಂಗ್ ಅನ್ನು ಕೊಟ್ಟಿದ್ದಾರೆ ಎಂದ. ಕಳೆದ ವರ್ಷದ ನಮ್ಮ ಕಂಪನಿಯ ಎಕ್ಸೆಕ್ಯುಟಿವ್ ಒಬ್ಬರು ತಮ್ಮ ಅಣಿಮುತ್ತುಗಳನ್ನು ಸುರಿಸುವಾಗ ಹೇಳಿದ "If you are mad at someone else, it is generally because YOU haven't done something." ಎನ್ನುವ ಹೇಳಿಕೆಯನ್ನು ಅವನಿಗೆ ಹೇಳಿ ನಿನ್ನ ಮೊದಲಿನ ಮ್ಯಾನೇಜರನ್ನು ಕ್ಯಾಂಟ್ಯಾಕ್ಟ್ ಮಾಡಿ, ಅವರಿಗೆ ಈ ಹೊಸ ಮ್ಯಾನೇಜರ್ ಬಗ್ಗೆ ಈ ಮೊದಲೇ ಹೇಳಿದ್ದರೆ ಒಳ್ಳೆಯದಿತ್ತು, ಅಥವಾ ಈ ಹೊಸ ಮ್ಯಾನೇಜರ್‌ಗೆ ನಿನ್ನ ಹಳೆಯ ಕೆಲಸಗಳ ವಿವರಗಳನ್ನು ನೀನೇ ಕೊಡಬಹುದಿತ್ತು ಎಂದೆ. ಅದನ್ನು ಕೇಳಿ ಅವನು ಆ ಕಡೆ ಏನು ಮಾಡಿದನೋ ಗೊತ್ತಿಲ್ಲ, ಸ್ವಲ್ಪ ಹೊತ್ತಿನಲ್ಲೆ 'ನನ್ನನ್ನು ಮತ್ತೊಮ್ಮೆ ಇವ್ಯಾಲ್ಯುಯೇಟ್ ಮಾಡುತ್ತಾರಂತೆ!' ಎಂದು ಹೇಳಿದ, ನಾನು 'ಒಳ್ಳೆಯದಾಗಲಿ' ಎಂದು ಚಾಟ್ ಸಂಬಂಧವನ್ನು ಕತ್ತರಿಸಿಕೊಂಡೆ.

***

೨೦೦೫ ರ ಜನವರಿಯಲ್ಲಿ ನನಗೂ ಒಂದು ಪ್ರೊಮೋಷನ್ ಅವಕಾಶ ಬಂದಿತ್ತು, ನಾನು ಅಂದು ಪಡೆಯಬಹುದಾದ ಕೆಲಸಕ್ಕೆ ಹನ್ನೊಂದು ಜನರನ್ನು ಇಂಟರ್‌ವ್ಯೂವ್ ಮಾಡಿದ್ದರು. ಅದೇ ಕಂಪನಿಯಲ್ಲಿ ಬೇರೆ ಗ್ರೂಪಿನ ಕೆಲಸವಾದ್ದರಿಂದ ತುಂಬಾ ರಿಗರಸ್ ಆಗಿ ಇಂಟರ್‌ವ್ಯೂ ಸಹ ಮಾಡಿದ್ದರು. ಡಿಸೆಂಬರ್ ೨೯, ೨೦೦೪ ರಂದು ನಡೆದ ೯೦ ನಿಮಿಷಗಳ ಇಂಟರ್‌ವ್ಯೂವ್ ನಲ್ಲಿ ನಾನು ಚೆನ್ನಾಗಿಯೇ ಮಾತನಾಡಿದ್ದೆ ಎಂದುಕೊಂಡು ಸ್ವಲ್ಪ ಆಸೆಗಳನ್ನೂ ಎತ್ತರಕ್ಕೆ ಏರಿಸಿಟ್ಟುಕೊಂಡಿದ್ದೆ. ಸಂದರ್ಶನ ನಡೆದ ದಿನ ಹಾಗೂ ಸಂದರ್ಶನ ನಡೆದ ಒಂದು ವಾರದ ತರುವಾಯ 'ಪುಸ್ತಕದಲ್ಲಿ ಬರೆದಂತೆ' ನ್ಯಾಯವಾಗಿ ಫಾಲೋ ಅಪ್ ಮಾಡಿದ್ದೆನಾದರೂ 'ನಿನ್ನನ್ನು ಆಯ್ಕೆ ಮಾಡಿಲ್ಲ' ಎಂದು ಎಲ್ಲಿಯೂ ಕೇಳಿ ಬರದಿದ್ದುದರಿಂದ ಆ ಹೊಸ ಕೆಲಸ ಇನ್ನೇನು ಸಿಕ್ಕೇ ಬಿಟ್ಟಿತು ಎಂದು ಕನಸನ್ನೂ ಕಾಣತೊಡಗಿದೆ, ಆದರೆ ಆದದ್ದೇ ಬೇರೆ.

ನಮ್ಮ ಆಫೀಸಿನಲ್ಲಿ ಪ್ರತಿಯೊಂದು ಆಂತರಿಕ ಕೆಲಸಗಳ ಬದಲಾವಣೆಯ ಸಂದರ್ಭದಲ್ಲಿ ಹಯರಿಂಗ್ ಮ್ಯಾನೇಜರ್ ಕರೆಂಟ್ ಮ್ಯಾನೇಜರ್ ಅವರ ಅನುಮತಿಯನ್ನು ಪಡೆದೇ ಮುಂದೆ ಸಾಗಬೇಕು ಎಂಬ ನಿಯಮವಿದೆ, ಹಾಗೂ ಸಿಗಬೇಕಾದ ಕೆಲಸ ಪ್ರಮೋಷನ್ ಅವಕಾಶವಾದರೆ ಹೇಳುವಂತಹ ಮಹಾನ್ ಕಾರಣಗಳನ್ನು ಸರಿಯಾಗಿ ಡಾಕ್ಯುಮೆಂಟ್ ಮಾಡದೇ ನಿರಾಕರಿಸಬಾರದು ಎಂಬ ನಿಯಮವೂ ಇದೆ. ನಾನು ಇದ್ದ ಪರಿಸ್ಥಿತಿಯಲ್ಲಿ ನನ್ನ 'ಬಿಡುಗಡೆ'ಗೆ ಯಾವ ತೊಂದರೆಯೂ ಇದ್ದಿರಲಿಲ್ಲವಾದ್ದರಿಂದ ಕರೆಂಟ್ ಮ್ಯಾನೇಜರ್‌ಗೆ ನಾನೇನೂ ಹೊಸ ಕೆಲಸ ಸಿಗಬಹುದಾದ ಬಗ್ಗೆ ಹೇಳಲಿಲ್ಲ. ಡಿಸೆಂಬರ್ ೨೯ ರಿಂದ ಕಾದದ್ದಕ್ಕೆ ಪ್ರತಿಫಲವೆಂಬುವಂತೆ ಜನವರಿ ೧೯ ನೇ ತಾರೀಖು ನನಗೆ ಹೊಸ ಕೆಲಸದ ಹಯರಿಂಗ್ ಡೈರೆಕ್ಟರ್‌ರಿಂದ ಒಂದು ಇ-ಮೇಲ್ ಬಂದಿತು. ಅದರ ಪ್ರಕಾರ ಹೊಸ ಕೆಲಸಕ್ಕೆ ನನ್ನ ಆಯ್ಕೆಯಾಗಿರಲಿಲ್ಲ. ನಾನು ತುಂಬಾ ನಿರಾಶೆಯಿಂದ 'ನನ್ನನ್ನು ಆಯ್ಕೆ ಮಾಡದಿರುವುದಕ್ಕೆ ಏನು ಕಾರಣ, ದಯವಿಟ್ಟು ಫೀಡ್‌ಬ್ಯಾಕ್ ಕೊಡಿ' ಎಂದು ಇ-ಮೇಲ್‌ಗೆ ಉತ್ತರ ಬರೆದಿದ್ದಕ್ಕೆ ಅದೇ ದಿನ ಸಂಜೆ ಆರೂ ಮೂವತ್ತರ ಮೇಲೆ ಆ ಡೈರೆಕ್ಟರ್ ಕಾಲ್ ಮಾಡಿದ್ದರಿಂದ ಮರುದಿನ ವಾಯ್ಸ್ ಮೆಸ್ಸೇಜನ್ನು ಕೇಳಿ ಇನ್ನಷ್ಟು ಕುಗ್ಗಿ ಹೋದೆ, ಆ ವಾಯ್ಸ್ ಮೆಸ್ಸೇಜಿನ ಪ್ರಕಾರ ಈ ಡೈರೆಕ್ಟರ್ 'ನಿನ್ನ ಇಂಟರ್‌ವ್ಯೂವ್ ಚೆನ್ನಾಗಿ ಆಗಿತ್ತು, ನಿನ್ನ ಬಿಡುಗಡೆಯ ಬಗ್ಗೆ ನನ್ನ ಕರೆಂಟ್ ಬಾಸಿನ ಬಳಿ ಕೇಳಿದ್ದಕ್ಕೆ ಆಕೆ ಇನ್ನಾರು ತಿಂಗಳು ಬಿಡುಗಡೆ ಆಗುವುದಿಲ್ಲವೆಂದು ಹೇಳಿಬಿಟ್ಟಳು, ನಮಗೆ ಇನ್ನಾರು ತಿಂಗಳು ತಡೆಯಲು ಸಾಧ್ಯವಿರದಿದ್ದುದರಿಂದ ನಿನ್ನ ನಂತರದ ಒಬ್ಬ ಕ್ಯಾಂಡಿಡೇಟನ್ನು ತೆಗೆದುಕೊಂಡಿದ್ದೇವೆ' ಎಂದಿತ್ತು. ನನಗೆ ನಿರಾಶೆ, ಕೋಪ, ಸಂಕಟವೆಲ್ಲ ಒಟ್ಟೊಟ್ಟಿಗೆ ಆಗ ತೊಡಗಿದವು, ಆ ಕೂಡಲೇ ನನಗೆ ಸಿಕ್ಕ ಮಹತ್ವಪೂರ್ಣ ಅವಕಾಶವೊಂದನ್ನು ನಿರಾಕರಿಸಿದ ನನ್ನ ಬಾಸನ್ನು ಫೋನ್ ಮಾಡಿ ಮನಪೂರ್ವಕವಾಗಿ ಬೈದುಬಿಡಲೇ ಎನ್ನಿಸಿದರೂ ವಿವೇಕ ಹಾಗೆ ಮಾಡಗೊಡಲಿಲ್ಲ.

ಆ ವಾರ ಪೂರ್ತಿ, ಅದರ ಮುಂದಿನ ಒಂದೆರಡು ವಾರ ಏನೇನು ಮಾಡಬಹುದು ಎಂದೆಲ್ಲ ಯೋಚಿಸತೊಡಗಿದೆ. ನಮ್ಮ ಕಂಪನಿಯ ಹ್ಯೂಮನ್ ರಿಸೋರ್ಸ್‌ನ ಒಂದೆರಡು ಜನರನ್ನೂ, ಕಂಪನಿಯ ಒಳಗೆ ಹಾಗೂ ಹೊರಗೆ ಇರುವ ಸ್ನೇಹಿತರನ್ನೂ ಕೇಳಿ ನನ್ನ ಆಪ್ಷನ್‌ಗಳು ಏನೇನು ಎಂದು ಲೆಕ್ಕ ಹಾಕತೊಡಗಿದೆ. ಕೊನೆಯಲ್ಲಿ ಅಧಿಕೃತವಾಗಿ ಕಂಪ್ಲೇಂಟ್ ಕೊಟ್ಟು ವಿಚಾರಿಸುವ ಮೊದಲೆ ನನ್ನ ಬಾಸನ್ನೊಮ್ಮೆ ಈ ನಿರಾಕರಣೆಯ ಕಾರಣವೇನೆಂದು ಕೇಳೋಣವೆಂದು ತೀರ್ಮಾನಿಸಿ ಒಂದು ಮಧ್ಯಾಹ್ನ ವೈಯುಕ್ತಿಕ ವಿಷಯ ಮಾತನಾಡಬೇಕೆಂದು ಒಂದು ಅಪಾಯಿಂಟ್‌ಮೆಂಟನ್ನೂ ಪಡೆದುಕೊಂಡೆ. ಆದರೆ ನನಗೆ ತುಂಬಾ ಆಶ್ಚರ್ಯ ಕಾದಿತ್ತು, ನನ್ನ ಬಾಸಿಗೆ ಕೇಳಿದೆ - 'ನನ್ನನ್ನೇಕೆ ಬಿಡುಗಡೆ ಮಾಡಲಿಲ್ಲ, ಅದು ಇದ್ದ ಕೆಲಸಗಳಲ್ಲೇ ಅತ್ಯಂತ ಒಳ್ಳೆಯ ಕೆಲಸವಾಗಿತ್ತು' ಎಂದು. ಅದಕ್ಕುತ್ತರವಾಗಿ ಆಕೆ 'ನಾನು ಹಾಗೆ ಹೇಳಿಯೇ ಇಲ್ಲ, ಹಾಗೆ ಹೇಳುವುದೂ ಇಲ್ಲ, ನಿನಗೆ ಒಳ್ಳೆಯದಾಗುತ್ತದೆ ಎಂದರೆ ನಾನೇಕೆ ಅಡ್ಡಿ ಪಡಿಸಲಿ' ಎಂದು ಸುಳ್ಳು ಹೇಳಿಬಿಟ್ಟಳು. ನಾನು ಆಕೆಯ ಎದುರಿನಲ್ಲೇ 'ನೀನು ಹೇಳುತ್ತಿರುವುದು ಸುಳ್ಳು, ಬೇಕಾದರೆ ಈ ಮೆಸ್ಸೇಜನ್ನು ಕೇಳು' ಎಂದು ಆ ಡೈರೆಕ್ಟರ್ ನನಗೆ ಬಿಟ್ಟ ವಾಯ್ಸ್ ಮೆಸ್ಸೇಜನ್ನು ಆಕೆಗೆ ಸ್ಪೀಕರ್ ಫೋನಿನಲ್ಲಿ ಕೇಳಿಸಿದೆ. ಆಕೆಗೆ ಗೊತ್ತಿರಲಿಲ್ಲ ನಾನು ಹೀಗೆ ಹಿಡಿದುಕೊಳ್ಳುತ್ತೇನೆಂದು - ಆಕೆಯ ಕಪ್ಪು ಮುಖ ಇನ್ನಷ್ಟು ಕಪ್ಪಾಯಿತು, ಧ್ವನಿ ಭಾರವಾಯಿತು, ಒಸಡುಗಳು ಕೆಳಕ್ಕೆ ಬಿದ್ದು ಹೋದವು. ನನಗೂ ಹೀಗೆ ಮಾಡಿದೆನಲ್ಲಾ, ಮಾಡಬೇಕಾಯಿತಲ್ಲ ಎಂದು ಬಹಳ ಬೇಸರವಾಗಿ ಹೋಯಿತು. ನಮ್ಮ ನಡುವೆ ಬೇಕಾದಷ್ಟು ಸೈಲೆನ್ಸ್ ಸೃಷ್ಟಿಯಾಗಿ ನಮ್ಮಿಬ್ಬರನ್ನೂ ಅಣಗಿಸತೊಡಗಿತೇ ವಿನಾ ಆಕೆ ಹೀಗೆ ಮಾಡಿದ್ದಕ್ಕೆ ಕ್ಷಮೆ ಕೇಳಲೂ ಇಲ್ಲ, I will make it up to you ಎನ್ನಲೂ ಇಲ್ಲ. ನಾನು ಅಲ್ಲಿ ಇನ್ನೂ ಹೆಚ್ಚು ಹೊತ್ತು ಇದ್ದರೆ ಅನಾಹುತವೇನಾದರೂ ಆಗಬಹುದೇನೋ ಎಂದು ಎದ್ದು ನನ್ನ ಕ್ಯೂಬಿಗೆ ಬಂದೆ.

ಇದಾದ ತರುವಾಯ ನನಗಾದ ಅನ್ಯಾಯಕ್ಕೆ ಪ್ರತೀಕಾರವಾಗಿ ನಾನು ಏನು ಬೇಕಾದರೂ ಮಾಡಬಹುದಿತ್ತು, ಆದರೆ ನನಗೆ ಸಿಗಬಹುದಾದ ಅವಕಾಶ ಈಗಾಗಲೇ ಹೋಗಿಬಿಟ್ಟಿದ್ದರಿಂದ ರಿಯಾಕ್ಷನರಿಯಾಗಿ ಏನು ಮಾಡಿದರೂ ಅದರಿಂದ ಪ್ರಯೋಜನವೇನು ಎಂಬ ಯೋಚನೆಯಿಂದ ನಾನು ಆಕೆಯ ಮೇಲೆ ಯಾವ ಕೇಸನ್ನೂ ಹಾಕಲಿಲ್ಲ. ಆದಷ್ಟು ಬೇಗ ಈ ಟೀಮಿನಿಂದ, ಈ ಬಾಸಿನಿಂದ ಕಳಚಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಿದ್ದಾಗ ನಮ್ಮ ಕಂಪನಿಯಲ್ಲೇ ಹಲವಾರು ಬೆಳವಣಿಗೆಯ ಅವಕಾಶಗಳಲ್ಲಿ ನನಗೆ ಮೋಸ ಮಾಡಿದ ಬಾಸ್ ಭಾಗವಹಿಸುವಂತೆ ಅವಕಾಶ ಮಾಡಿಕೊಟ್ಟಳು. ಅಲ್ಲದೇ ಕಂಪನಿಯ ಒಳಗೇ ಬೇಕಾದಷ್ಟು ಕೆಲಸಗಳು ಇರುತ್ತಿದ್ದವಾದ್ದರಿಂದ ಜನವರಿಯಿಂದ ಜೂನ್ ವರೆಗೆ ಬೇರೆ ಕೆಲಸವನ್ನು ನೋಡೋಣವೆಂದು ಅದರ ಮೇಲೆ ಕೇಂದ್ರೀಕರಿಸಿದೆ.

ಆದರೆ ನಾನು ಅದೆಷ್ಟು ಕೆಲಸಗಳಿಗೆ ಅರ್ಜಿ ಗುಜರಾಯಿಸಿದರೂ ಇಂಟರ್‌ವ್ಯೂವ್ ಅವಕಾಶಗಳು ಬರುವುದು ಕಡಿಮೆಯಾಗತೊಡಗಿತು, ಒಂದೆರಡು ಇಂಟರ್‌ವ್ಯೂವ್ ಬಂದರೂ ಕೆಲಸ ಸಿಗಲಿಲ್ಲ. ಅಂತೂ ಇಂತೂ ಹೀಗೇ ಕೆಲಸ ಹುಡುಕುತ್ತಾ ಹುಡುಕುತ್ತಾ ೨೦೦೫ ಕಳೆದುಹೋಯಿತು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಬೇಸರದಿಂದ ಆಗಾಗ್ಗೆ ಸೇವ್ ಮಾಡಿ, ನನಗೆ ನಾನೇ ಫಾರ್‌ವರ್ಡ್ ಮಾಡಿಕೊಳ್ಳುತ್ತಿದ್ದ ಆ ವಾಯ್ಸ್ ಮೆಸ್ಸೇಜನ್ನು ಕೇಳುತ್ತಿದ್ದೆನಾದರೂ ಅದು ನನ್ನ ಕೊರಗನ್ನು ಹೆಚ್ಚಿಸುತ್ತಿತ್ತೇ ವಿನಾ ಯಾವ ಕೆಲಸವನ್ನು ಪಡೆಯಲು ಸಹಾಯ ಮಾಡಲಿಲ್ಲ. ಹಲವರ ಬಳಿ ಹೀಗಾಯಿತು ಎಂದು ಹೇಳಿಕೊಂಡರೆ ಪರಿಸ್ಥಿತಿಗೆ ತಕ್ಕಂತೆ ಅವರೂ ಪ್ರತಿಕ್ರಿಯೆ ತೋರಿಸಿದರಷ್ಟೆ.

ಕೊನೆಗೆ ೨೦೦೬ ರ ಮಾರ್ಚ್‌ನಲ್ಲಿ ನನಗೆ ಇಷ್ಟವಾದ ಕೆಲಸವೊಂದಕೆ ಅರ್ಜಿ ಗುಜರಾಯಿಸಿದೆ, ಆ ಕೆಲಸ ಎಲ್ಲ ರೀತಿಯಿಂದಲೂ ನನಗೇ ಹೇಳಿ ಮಾಡಿಸಿದ ಹಾಗಿದ್ದುದರಿಂದ ನಾನು ಯಾವ ರೀತಿಯ ಚಾನ್ಸನ್ನೂ ತೆಗೆದುಕೊಳ್ಳಲಿಲ್ಲ. ಆ ಕೆಲಸಕ್ಕೆ ಅರ್ಜಿ ಗುಜರಾಯಿಸುವ ಮುನ್ನ ನನ್ನ ಕರೆಂಟ್ ಬಾಸಿನಿಂದ 'ನಾನು ಬಿಡುಗಡೆಯಾಗಬಹುದು' ಎಂದು ಬರೆಸಿಕೊಂಡಿದ್ದೆ, ಹ್ಯೂಮನ್ ರಿಸೋರ್ಸ್‌ನವನೊಬ್ಬನಿಗೆ ಆ ಇ-ಮೇಲನ್ನು ಫಾರ್‌ವರ್ಡ್ ಮಾಡಿ ಹಿಂದಿನ ಅನುಭವವನ್ನು ಹೇಳಿಕೊಂಡು ಸಮಯ ಬಂದರೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದೆ, ಹೊಸ ಕೆಲಸದ ಇಂಟರ್‌ವ್ಯೂವ್‌ಗೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡು, 'ಪುಸ್ತಕದಲ್ಲಿ ಬರೆದಂತೆ', ಎಲ್ಲ ಸ್ಟೆಪ್‌ಗಳನ್ನೂ ನಿರ್ವಹಿಸಿದ್ದರಿಂದ ಕೊನೆಗೆ ನನಗೆ ಬೇಕಾದ ಕೆಲಸ ಸಿಕ್ಕೇ ಬಿಟ್ಟಿತು! ಮುಂದೆ ಅವರು ಆಫರ್ ಕಳಿಸಿದಾಗ ಈ ಬಾಸ್ ನನ್ನನ್ನು 'ಖುಷಿ'ಯಿಂದಲೇ ಬಿಡುಗಡೆಮಾಡಿದಳು. ಹಾಗೂ ನಾನು ಆಕೆಯ ವಿರುದ್ಧ ಯಾವ ಸೇಡನ್ನೂ ತೀರಿಸಿಕೊಳ್ಳದಿದ್ದುದು ಖಚಿತವಾದ ಮೇಲೆ ನನ್ನ ಅತ್ಯಂತ ಕ್ಲೋಸ್ ಫ್ರೆಂಡೂ ಆಗಿ ಹೋದಳು. ಆದರೆ ಈ ವರೆಗೆ ಎಲ್ಲೂ ಆ ಹಳೆಯ ಘಟನೆಯನ್ನು ಅಪ್ಪಿತಪ್ಪಿಯೂ ನೆನಸುವುದಿಲ್ಲ, ಅವಳು ಮಾಡಿದ ತಪ್ಪಿಗೆ ಕ್ಷಮೆ ಕೇಳಲೂ ಇಲ್ಲ.

ಈ ನನ್ನ ಅನುಭವದಿಂದ ಕೆಲಸ ತೆಗೆದುಕೊಳ್ಳುವುದು ಹೇಗೆ ಎಂದು ಒಂದು ಪುಸ್ತಕವನ್ನು ಬರೆಯಬಲ್ಲೆ, ನನಗೆ ಅನ್ಯಾಯವಾಗಿದ್ದಕ್ಕೆ ನಾನು ಫಾರ್ಮಲ್ ಆಗಿ ಕಂಪ್ಲೇಂಟ್ ಕೊಡದಿರುವುದನ್ನು ಸಾಧಿಸಿಕೊಳ್ಳಬಲ್ಲೆ, ಆದರೆ ಆಕೆ ಹೇಳಿದ ಒಂದೇ ಒಂದು ಸುಳ್ಳಿನಿಂದ ಚೇತರಿಸಿಕೊಳ್ಳಲು ಜನವರಿ ೨೦೦೫ ರಿಂದ ಏಪ್ರಿಲ್ ೨೦೦೬ ರವರೆಗೆ ಹಿಡಿಯಿತು ಎನ್ನುವ ವಿಷಯವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದಾಗೆಲ್ಲ ಹೊಟ್ಟೆ ಕಿವುಚಿದಂತಾಗುತ್ತದೆ.

ಈಗ ನಮ್ಮ ಎಕ್ಸೆಕ್ಯುಟಿವ್ ಹೇಳಿದ "If you are mad at someone else, it is generally because YOU haven't done something" ಸಾಲನ್ನು ಪದೇ-ಪದೇ ನೆನೆಸಿಕೊಂಡು ಒಂದು ಸನ್ನಿವೇಶದ ಔಟ್‌ಕಮ್ ನನ್ನ ನಿರೀಕ್ಷೆಗೆ ತಕ್ಕಂತೆ ಆಗಬೇಕೆಂದುಕೊಂಡು ನನ್ನ ಕೈಯಿಂದ ಏನೇನೆಲ್ಲ ಆಗುತ್ತದೋ ಅದನ್ನೆಲ್ಲ ಮಾಡುತ್ತೇನೆ, ಕೆಲವೊಮ್ಮೆ ಅತಿ ಅಥವಾ ಮೈಕ್ರೋ ಮ್ಯಾನೇಜ್‌ಮೆಂಟ್ ಎನ್ನಿಸಿದರೂ ಫಲಿತಾಂಶ ನಾನು ಅಂದುಕೊಂಡಿದ್ದಕಿಂತ ಭಿನ್ನವಾದರೆ ನನಗೆ ಇನ್ನೊಬ್ಬರ ಮೇಲೆ ಸಿಟ್ಟುಬರುವುದಕ್ಕಿಂತ ಮೊದಲು 'ನಾನೇನು ಮಾಡಬಹುದಿತ್ತು' ಎಂದು ಮತ್ತೊಮ್ಮೆ ಯೋಚಿಸುತ್ತೇನೆ.

Monday, June 12, 2006

ನಮ್ಮ ಮನೆಯಲ್ಲಿ "ಸಾರ್ಥ" ಮರಿ ಹಾಕಿದೆ!

ನಿನ್ನೆ ಮುಂಜಾನೆ ಅಲ್ಲಲ್ಲಿ ಬಿದ್ದು ಒದ್ದಾಡುತ್ತಿದ್ದ ಪುಸ್ತಕಗಳನ್ನೆಲ್ಲ ಒಪ್ಪವಾಗಿ ಇಡುವ ಮನಸ್ಸಾಗಿ ಎಲ್ಲವನ್ನೂ ಜೋಡಿಸಿ ಇಡುತ್ತಿರುವಾಗ ಪುಸ್ತಕಗಳ ಮಧ್ಯೆ "ಸಾರ್ಥ"ವೂ ಸಿಕ್ಕಿತು. ಅದರ ಒಂದು ಪುಟವನ್ನು ಓದಿ ಅದರ ಕಥೆಯನ್ನೆಲ್ಲ ನೆನಪಿಗೆ ತಂದುಕೊಂಡು ಕಪಾಟಿನಲ್ಲಿ ತೆಗೆದಿಟ್ಟೆ. ಇನ್ನೂ ಉಳಿದ ಪುಸ್ತಕಗಳನ್ನೆಲ್ಲ ಜೋಡಿಸುತ್ತಿದ್ದಾಗ ಮತ್ತೆ "ಸಾರ್ಥ" ಸಿಕ್ಕಿತು. ನನಗೆ ಒಮ್ಮೆಗೆ ಇತ್ತೀಚೆಗೆ ಬ್ಲಾಗುಗಳಲ್ಲಿ ಓದಿದ ಭೂತಚೇಷ್ಟೆಯ ನೆನಪಾದರೂ ಕಥೆಯಲ್ಲಿಯ ನಾಗಭಟ್ಟನಿಗಾಗಲೀ, ಭೌದ್ಧ ಭಿಕ್ಷುಗಳಿಗಾಗಲೀ ಧ್ಯಾನದಿಂದ ಅದೇನೇ ಶಕ್ತಿಗಳು ಸಿದ್ಧಿಸಿದ್ದರೂ ಈಗಷ್ಟೇ ತೆಗೆದಿರಿಸಿದ ಪುಸ್ತಕವನ್ನು ಮತ್ತೆ ರಾಶಿಗೆ ತಂದು ಸೇರಿಸಲಾದೀತೇ ಎಂದು ಒಮ್ಮೆ ಅನ್ನಿಸಿದರೂ ನಾನು ನಿದ್ದೆ ಜಾಸ್ತಿ ಮಾಡಿಯೋ ಅಥವಾ ಕಡಿಮೆ ಮಾಡಿದಾಗಲೆಲ್ಲ ಹೀಗೆಲ್ಲ ಆಗುವುದು ಸಹಜವಾದ್ದರಿಂದ ಕಣ್ಣನ್ನು ಒಮ್ಮೆ ನೀವಿಕೊಂಡು ನೋಡಿದೆ - ಏನಾಶ್ಚರ್ಯ ಅದು "ಸಾರ್ಥ"ವೇ!

ಈ ಪುಸ್ತಕವನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡೇ ಮೊದಲು ಇರಿಸಿದ್ದ ಪುಸ್ತಕದ ಬಳಿ ಸಾಗಿದೆ, ನಿಜವಾಗಿಯೂ ನನ್ನ ಕಣ್ಣನ್ನೇ ನಂಬಲಾಗುತ್ತಿಲ್ಲ, ಎರಡು ಪ್ರತಿಗಳಿವೆ! ನನಗೆ ನೆನಪಿದ್ದ ಹಾಗೆ ಬೆಂಗಳೂರಿನಲ್ಲಿ ಕೊಂಡದ್ದು ಒಂದೇ ಪ್ರತಿ, ಅದರಲ್ಲಿ ನನ್ನ ಹೆಸರೂ ಸಹ ಇದೆ, ಆದರೆ ಈ ಪ್ರತಿ ಎಲ್ಲಿಂದ ಬಂತು ಎಂದು ತಿರುತಿರುಗಿಸಿ ನೋಡಿದರೂ ಹೊಳೆಯಲಿಲ್ಲ. ನಾನು ಅವರಿವರಿಗೆ ಕೊಟ್ಟು ಕಳೆದುಕೊಂಡ ಪುಸ್ತಕಗಳ ಸಂಖ್ಯೆಯೇ ಹೆಚ್ಚಾಗಿ ಅವರಿವರಿಂದ ಪಡೆದುಕೊಂಡು ಹಿಂದಕ್ಕೆ ಕೊಡದ ಪುಸ್ತಕಗಳ ಸಂಖ್ಯೆ ಗೌಣವಾಗುವುದರಿಂದ ಮತ್ತಷ್ಟು ಆಶ್ಚರ್ಯವಾಯಿತು. ಬೇರೆ ಯಾರದ್ದಾದರೂ ಎರವಲು ಪಡೆದಿದ್ದೇನೋ ಎಂದು ಎಷ್ಟು ತಲೆತುರಿಸಿಕೊಂಡರೂ ಗೊತ್ತಾಗಲಿಲ್ಲ, ಸರಿ ನನ್ನ ಹೆಂಡತಿಯನ್ನಾದರೂ ಕೇಳೋಣವೆಂದುಕೊಂಡರೆ ಅವಳೂ ಸಹ ಇರಲಿಲ್ಲವಾದ್ದರಿಂದ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವವರೆಗೆ ಸಾಕುಬೇಕಾಗಿ ಹೋಯಿತು. ಸ್ವಲ್ಪ ಹೊತ್ತಿನಲ್ಲಿ ಬಂದ ನನ್ನ ಹೆಂಡತಿಯನ್ನು ಕೇಳಿದರೆ 'ನನಗೆ ಗೊತ್ತಿಲ್ಲ' ಎನ್ನುವ ಉತ್ತರ ಬಂದಿತಾದರೂ ಸ್ವಲ್ಪ ಹೊತ್ತು ಯೋಚಿಸಿ 'ಅದು, ಬೆಂಗಳೂರಿನಲ್ಲಿ ನಾನು ಕೊಂಡುಕೊಂಡ ಪುಸ್ತಕ' ಎಂದಳು. ನಾನೆಂದೆ 'ಇಲ್ಲ, ಆ ದಿನ ಹಣ ಕೊಟ್ಟು ತಂದವನು ನಾನು, ನೀನಲ್ಲ'...ಹೀಗೆ ಹಲವಾರು ಬಾರಿ ನಾನು-ನೀನು, ನಾನಲ್ಲ-ನೀನಲ್ಲ ನಡೆದ ಮೇಲೆ ಕೊನೆಗೆ ನಾವಿಬ್ಬರೂ ಒಂದೊಂದು ಪ್ರತಿಯನ್ನು ಪ್ರತ್ಯೇಕವಾಗಿ ಕೊಂಡದ್ದು ಗೊತ್ತಾಯಿತು.

'ಒಂದೇ ಪುಸ್ತಕದ ಎರಡು ಪ್ರತಿಗಳಿಂದೇನು ಪ್ರಯೋಜನ, ಯಾರಿಗಾದರೂ ಕೊಟ್ಟು ಬಿಡಲೇ' ಎಂದೆ, 'ಏನು ಬೇಕಾದರೂ ಮಾಡಿ' ಎಂಬ ಉತ್ತರ ಬಂದಿತಾದ್ದರಿಂದ "ಸಾರ್ಥ"ವನ್ನು ಓದಿ ಮುಗಿಸುವ ತವಕದಲ್ಲಿರುವ ಯಾರಿಗಾದರೂ ಕೊಡೋಣವೆಂದು ಯೋಚನೆ ಮಾಡಿದ್ದೇನೆ. ಒಮ್ಮೆ ಅವರು ಓದಿದ ಮೇಲೆ ಮತ್ತೆ ಇನ್ಯಾರಿಗಾದರೂ ಹಾಗೇ ಕೊಟ್ಟು ಒಬ್ಬರಿಂದ ಒಬ್ಬರಿಗೆ ಕೈ ದಾಟಿದರೆ ಇನ್ನೂ ಒಳ್ಳೆಯದು.

ನಿಮಗೆ ಭಾರತಕ್ಕೆ ಹೋಗಲು ಇನ್ನೂ ಕಾಲಾವಕಾಶ ಇದೆಯೆಂದಾದರೆ, ಅಥವಾ "ಸಾರ್ಥ"ದ ಪ್ರತಿ ಹುಡುಕಿದರೂ ಸಿಕ್ಕಿಲ್ಲವೆಂದಾದರೆ ನನಗೆ ಬರೆಯಿರಿ, ಅಂಚೆಯ ಮೂಲಕ ಕಳಿಸುತ್ತೇನೆ.

Sunday, June 11, 2006

ಒಂದು ನೊಣದ ಕಥೆ

ನನ್ನ ಸ್ನೇಹಿತರೊಬ್ಬರು ಎರಡು ತಿಂಗಳ ಹಿಂದೆ ಮಾತನಾಡುತ್ತಿದ್ದಾಗ ಸಾಕ್ಷ್ಯಚಿತ್ರ, ಕಿರುಚಿತ್ರಗಳನ್ನು ಮಾಡುವುದನ್ನು ಕುರಿತು ಹೇಳುವಾಗ 'ಒಂದು ಚಿಕ್ಕ ಘಟನೆಯನ್ನೂ ಒಂದೈದು ನಿಮಿಷಗಳ ಕಿರುಚಿತ್ರವನ್ನಾಗಿ ರೂಪಿಸಬಹುದು, ಈಗ ಉದಾಹರಣೆಗೆ ಇಲ್ಲಿ ಯಾರದ್ದೋ ಮನೆಯಲ್ಲಿ ಜೇಡವೊಂದು ಬಂದಿದೆಯೆಂದುಕೊಳ್ಳಿ, ಅದಕ್ಕೆ ಯಾವುದೇ ತೊಂದರೆ ಕೊಡದೇ ಜೀವಂತವಾಗಿ ಮನೆಯ ಮಾಲೀಕ ಅದನ್ನು ಹೊರಹಾಕುವುದಕ್ಕೆ ಪ್ರಯತ್ನ ಪಡುವುದನ್ನೂ, ಜೇಡ ಮತ್ತು ಮಾಲೀಕ ಇಬ್ಬರಲ್ಲೂ ಇರುವ ಪರಸ್ಪರ ಹೆದರಿಕೆಗಳನ್ನೂ, ಈ ಘಟನೆಯ ಅಂತ್ಯವನ್ನು ನಾನಾ ರೀತಿಯಲ್ಲಿ ಸೆರೆಹಿಡಿದು ಅಂತ್ಯಗೊಳಿಸೋದರಿಂದ ಹಿಡಿದು ನೆಳಲು-ಬೆಳಕು, ಮಾಲೀಕನ ಮುಖದ ಮೇಲೆ ತೋರಿಸಲಾಗುವ ಆಂತರಿಕ ಸಂವಾದ, ಜೇಡಕ್ಕೆ ಹಾನಿಯಾಗಬಾರದೆಂಬ ಆತನ ಕಳಕಳಿ ಮುಂತಾದವುಗಳನ್ನೆಲ್ಲ ಸೇರಿಸಿ ಸೊಗಸಾಗಿ ಒಂದು ಚಿತ್ರವನ್ನು ಮಾಡಬಹುದು...' ಎಂದು ವಿವರಿಸಿದರು. ಹೀಗೇ ಮುಂದೆ ಡಿಸ್ಕವರಿಯಲ್ಲಿ ಬರುವ ಕಿರುಚಿತ್ರಗಳು, ಕಿರುಚಿತ್ರಗಳನ್ನು ಮಾಡುವಾಗ ಬೇಕಾಗುವ ಕುರಿತು ಸ್ವಲ್ಪ ಚರ್ಚೆಯನ್ನು ಮುಂದುವರೆಸಿದ್ದೆವು.

ಕಳೆದ ವಾರ ಹೊಸದಾಗಿ ಬಣ್ಣ ಹಚ್ಚಿದ್ದ ಕೋಣೆಯಲ್ಲಿ ತಾಜಾ ಹವೆ ಬರಲೆಂದು ಸ್ವಲ್ಪ ಕಾಲ ಕಿಟಕಿ-ಬಾಗಿಲುಗಳನ್ನು ತೆರೆದಿಟ್ಟಿದ್ದೆ. ಆಗ ಅದೆಲ್ಲಿಂದ ಬಂದು ಸೇರಿಕೊಂಡಿತೋ ಎನ್ನುವಂತೆ ಒಂದು ನೊಣ - ಮೀಡಿಯಮ್ ಸೈಜಿನದು - ಬಂದು ನಮ್ಮ ಮನೆಯನ್ನು ಸೇರಿಕೊಂಡಿಬಿಟ್ಟಿತು. ಅಡಿಗೆಮನೆ, ಬಚ್ಚಲುಮನೆ ಎಲ್ಲೆಂದರಲ್ಲಿ ಸರ್ವವ್ಯಾಪಿಯಾಗಿ ಕಂಡುಬಂದ ಈ ನೊಣವನ್ನು ನಾನು ಪೂರ್ಣ ಫ್ಯಾಮಿಲಿ ಸಮೇತವೇನಾದರೂ ಬಂದಿದೆಯೇನೋ ಎಂದು ಒಮ್ಮೆ ಸಂಶಯಪಟ್ಟೆನಾದರೂ ಸ್ವಲ್ಪ ಹತ್ತಿರದಲ್ಲಿ ಫಾಲೋ ಮಾಡಿ ನೋಡಿದಾಗ ಅದು ಒಂದೇ ನೊಣವೆಂದು ಗೊತ್ತಾಯಿತು. ಕಳೆದ ಶನಿವಾರ-ಭಾನುವಾರ ಈ ನೊಣ ಬಂದು ಹೊಕ್ಕ ಮೇಲೆ ಅದನ್ನು (ಜೀವಂತವಾಗಿ) ತೊಲಗಿಸಲು ನಾನಾ ಪ್ರಯತ್ನಗಳನ್ನು ಮಾಡಿದೆ - ಮನೆಯನ್ನು ಕತ್ತಲು ಮಾಡಿ ನೆರಳು ಬೆಳಕಿನ ಆಟ ತೋರಿಸಿದೆ, ಒಂದು ನ್ಯೂಸ್ ಪೇಪರನ್ನು ತೆಗೆದುಕೊಂಡು ಗಾಳಿ ಹಾಕಿ ಅದರ ಫ್ಲೈಟ್ ಪಾತನ್ನು ಬದಲಾಯಿಸಿ ತಲೆತಿರುಗಿಸಲು ನೋಡಿದೆ, ಊಹೂ ಯಾವುದಕ್ಕೂ ಜಗ್ಗಲಿಲ್ಲ. ಕಪ್ಪು ಬಣ್ಣದ ಈ ನೊಣ ಎಲ್ಲಿ ಬೇಕಂದರಲ್ಲಿ ಹಾರಾಡುತ್ತಾ ಕೆಲವೊಮ್ಮೆ ಗೋಡೆಯ ಬಣ್ಣದ ಹಿನ್ನೆಲೆಯಲ್ಲಿ, ಫರ್ನೀಚರ್‌ನ ಹಿಂದೆ ಮುಂದೆ ತನ್ನನ್ನು ಮರೆಸಿಕೊಂಡು ನನಗೆ ಮೋಡಿ ಹಾಕಿತ್ತು. ಅದನ್ನು ಕೊಂದು ಬಿಸಾಕುವುದಾದರೆ ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ, ಆದರೂ ಅದರ ಜೀವ ತೆಗೆಯುವ ಉಸಾಬರಿ ನನಗೇಕೆ ಎಂದು ಸುಮ್ಮನೇ ಬಿಟ್ಟೆ. 'ಅಹಿಂಸೆ ಆಚರಣೆ, ಓತಿಕ್ಯಾತಕ್ಕೆ ಕಲ್ಲು ಸಂತರ್ಪಣೆ' ಅನ್ನೋ ಹಾಗೆ ನನ್ನ ರಕ್ತ ಹೀರುವ ಸೊಳ್ಳೆಗಳಿಗೆ ಮಾತ್ರ ನಾನು ಒಂದೇ ಏಟಿಗೆ ಮೋಕ್ಷ ಕಾಣಿಸುವುದು, ಅದಿಲ್ಲವಾದರೆ ನನ್ನಂಥ ಅಹಿಂಸಾ ಪ್ರೇಮಿ ಮತ್ತೊಬ್ಬನಿಲ್ಲ!

ಈ ನೊಣ ಅಥವಾ ಸೊಳ್ಳೆಗಳು ಹಾರಾಡುವಾಗ ಅವುಗಳ ರೆಕ್ಕೆಗಳ ಬಡಿತದಿಂದಾಗಿ 'ಗುಯ್' ಶಬ್ದ ಸೃಷ್ಟಿಯಾಗುತ್ತೆ, ಆದರೆ ನನ್ನಂಥ ಟ್ಯೂಬ್‌ಲೈಟಿಗೆ ಈ ಶಬ್ದ ಅವುಗಳು ಬರೀ ನನ್ನ ಕಿವಿಯ ಹತ್ತಿರ ಬಂದಾಗ ಮಾತ್ರ ಮಾಡುತ್ತವೇನೋ ಎಂದು ಅನ್ನಿಸಿಬಿಟ್ಟಿತ್ತು. ಈ ಸೊಳ್ಳೆ-ನೊಣಗಳ ಸಹವಾಸ ನನಗೆ ಮೊದಲಿನಿಂದಲೂ ಇದ್ದದ್ದೇ, ಅಡಿಕೆ ತೋಟಗಳಿಗೆ ಹೋದವರಿಗೆ ಗೊತ್ತು, ತೋಟದೊಳಗೆ ಕಾಲಿಡುತ್ತಿದ್ದಂತೇ ನೂರಾರು ಸಾವಿರಾರು ಸೊಳ್ಳೆಗಳ ಕಾಟ ಶುರುವಾಗೋದು, ಒಮ್ಮೊಮ್ಮೆ ಕಾಲಿನ ಮೇಲೆ ಅಪ್ಪಳಿಸಿದ ಹೊಡೆತಕ್ಕೆ ಒಂದೇ ಬಾರಿಗೆ ಹತ್ತಾರು ಸೊಳ್ಳೆಗಳನ್ನು ಉರುಳಿಸಿಹಾಕಿದ್ದೂ ಇದೆ. ನಾನು ಅಹಿಂಸಾಪ್ರಿಯನಾದರೂ ನನ್ನ ರಕ್ತವನ್ನು ಇನ್ಯಾರಾದರೂ ಹೀರುತ್ತಾರೆಂಬ ವಿಷಯಕ್ಕೆ ಬಂದಾಗ ನನ್ನ ತತ್ವಗಳು ನನಗೆ ಅನ್ವಯಿಸುತ್ತಲೇ ಇರುತ್ತಿರಲಿಲ್ಲ! ಮಾನಸಗಂಗೋತ್ರಿಯಲ್ಲಿ ನಮ್ಮ ಹೊಸ ಪಿ.ಜಿ. ಹಾಸ್ಟೆಲ್ ಮತ್ತು ಜೆಸಿಇ ಕಾಲೇಜಿನ ಮಧ್ಯೆ ಇದ್ದ 'ಡೌನ್ಸ್'ಗೆ ಕಾಫಿ ಕುಡಿಯುವುದಕ್ಕೆಂದು ಹೋಗುವಾಗ ಮಧ್ಯೆ ಒಂದು ತೆಂಗಿನ ತೋಪು ಬರುತ್ತಿತ್ತು, ಅದರಲ್ಲಿ ಒಂದು ಸೀಜನ್‌ನಲ್ಲಿ ಕಪ್ಪು-ಕೆಂದು ಬಣ್ಣದ ಹುಳುಗಳು ನೆಲದಲ್ಲಿ ಹರಿದಾಡುತ್ತಿದ್ದವು. ಕಿರುಬೆರಳು ಅಥವಾ ತೋರುಬೆರಳಿನ ಗಾತ್ರದಲ್ಲಿ ಇರುತ್ತಿದ್ದ ಈ ಹುಳಗಳು ನಿಧಾನವಾಗಿ ನೆಲದ ಮೇಲೆ ಹರಿದಾಡುತ್ತಿದ್ದವು. ಕಾಫಿಗೆಂದು ಅಲೆದಾಡುತ್ತಿದ್ದ ನಮ್ಮ ಚಪ್ಪಲಿಗೆ ಎಷ್ಟೋ ಬಾರಿ ಸಿಕ್ಕಿ ಚಪ್ಪಟೆಯಾಗುತ್ತಿದ್ದವು, ಆದರೆ ನಾನು ಉಮೇಶ ಹಾಗೂ ಸುಂದರೇಶರಿಗೆ ಒಂದೇ ಒಂದು ಹುಳವನ್ನೂ ತುಳಿಯದೇ ಬರುವಂತೆ ತಾಕೀತು ಮಾಡುತ್ತಿದ್ದೆ. ನಮ್ಮ ಗುಂಪಿಗೆ ಹೊಸದಾಗಿ ಯಾರಾದರೂ ಸೇರಿಕೊಂಡರೆ ಉಮೇಶ ಅವರಿಗೆಲ್ಲರಿಗೂ ಎಚ್ಚರಿಕೆ ಕೊಡುತ್ತಿದ್ದ 'ಈ ಹುಳುಗಳನ್ನ ಮಾತ್ರ ತುಳುದು ಇವನ ಮೂಡನ್ನ ಅಪ್‌ಸೆಟ್ ಮಾತ್ರ ಮಾಡ್‌ಬೇಡ್ರ್‍ಓ...' ಎನ್ನುತ್ತಿದ್ದ. ನನ್ನ ವಾದ 'ಈ ಪ್ರಪಂಚದಲ್ಲಿ ನಮಗೆಷ್ಟು ಬದುಕುವ ಹಕ್ಕು ಇದೆಯೋ ಅವುಗಳಿಗೂ ಅಷ್ಟೇ ಇದೆ...' ಎನ್ನುವ ಸಾಲಿನಿಂದ ಶುರುವಾಗುತ್ತಿತ್ತು, ಏನೇ ಆದರೂ ತೆಂಗಿನ ತೋಪಿನಲ್ಲಿ ಆ ಹುಳುಗಳನ್ನು ತುಳಿದು ಕೊಲ್ಲಬಾರದು ಎನ್ನುವ ಅಗೋಚರ ಒಡಂಬಡಿಕೆಗೆ ನನ್ನ ಮೈಮನಗಳು ಸಹಿ ಹಾಕಿಬಿಟ್ಟಿದ್ದವು. ಈ ಅಹಿಂಸಾ ವಾದದ ಮೂಲ ಎಲ್ಲಿ ಎಂದು ಹುಡುಕುತ್ತಾ ಹೋದಂತೆಲ್ಲ ನಾನು ನನ್ನ ಬಾಲ್ಯದಲ್ಲಾದ - ಅವರಿವರು ಹೇಳಿ ಇನ್ನೂ ನೆನಪಿನಲ್ಲುಳಿದ - ಅನುಭವ ಮೂಲದಲ್ಲಿ ಕಂಡುಬರುತ್ತದೆ. ಆನವಟ್ಟಿಯಲ್ಲಿ ಶನಿವಾರ ಸಂತೆಯ ದಿನ ಒಂದೇ ನನ್ನ ಅಕ್ಕಂದಿರ ಜೊತೆಗೋ ಅಥವಾ ನನ್ನ ಅಣ್ಣನ ಜೊತೆಗೋ ನಾನೂ ಸಂತೆಗೆ ಹೋಗುವ ರೂಢಿಯನ್ನಿಟ್ಟುಕೊಂಡಿದ್ದೆ. ಆಗೆಲ್ಲ ನಾನು ಒಂದನೇ ಕ್ಲಾಸು ಮುಟ್ಟುವಷ್ಟು ದೊಡ್ಡ ಹುಡುಗನಾದರೂ ನನ್ನನ್ನು ಕಂಡಕಂಡವರೆಲ್ಲ ಎತ್ತಿಕೊಂಡು ಹೋಗುತ್ತಿದ್ದರಂತೆ. ಶನಿವಾರ ಸಂತೆಯದಿನ ಹೋದವನಿಗೆ ಅಲ್ಲಿದ್ದ ಟೈಲರ್ ಒಬ್ಬರಲ್ಲಿ ಪುಟ್ಟಯ್ಯ ಎಂಬುವವನು ನನ್ನನ್ನು ಒಂದು ದಿನ ಮಾಂಸದ ಅಂಗಡಿಗೆ ಕರೆದುಕೊಂಡು ಹೋಗಿದ್ದನಂತೆ. ಆಗ ಆನವಟ್ಟಿಯ ಸಂತೆಯ ದಿನ ಮಾಂಸ ಮಾರುವ ಅಂಗಡಿಯಲ್ಲಿ ಮೂರು ಚಿಕ್ಕ-ಚಿಕ್ಕ ಅಂಗಡಿಗಳಿದ್ದವು, ಅದರ ಮಾಲೀಕರಾಗಿ ಒಂದರಲ್ಲಿ ನಾಗೇಂದ್ರಪ್ಪ, ಮತ್ತೊಂದರಲ್ಲಿ ಜಲೀಲ ಹಾಗೂ ಕೊನೆಯದರಲ್ಲಿ ಹಸೇನಿ ಇದ್ದರು. ನಾನು ಮೊಟ್ಟ ಮೊದಲು ಕುರಿ ಮಾಂಸವನ್ನು ಅಲ್ಲಿ ಕಬ್ಬಿಣದ ಕೊಕ್ಕೆಗೆ ನೇತುಹಾಕಿ ಈ ಅಂಗಡಿಯಲ್ಲಿ ಕೆಲಸ ಮಾಡುವವರು ತಮ್ಮ ಹರಿತವಾದ ಕತ್ತಿಗಳಿಂದ (ಸತ್ತ) ಕುರಿಯ ಮಾಂಸವನ್ನು ಕತ್ತರಿಸಿ ತೂಕ ಮಾಡುವುದನ್ನು ನೋಡಿ ಕಣ್ಣಿನಲ್ಲಿ ಒಂದೇ ಸಮನೆ ನೀರನ್ನು ತಂದುಕೊಂಡು 'ಕೊಯ್ ಬೇಡ್ರೀ ರೀ, ಕೊಯ್ ಬೇಡ್ರಿ...' ಎಂದು ಬೇಡಿಕೊಂಡಿದ್ದನ್ನು ನೋಡಿ ಎಲ್ಲರೂ ಜೋರಾಗಿ ನಕ್ಕಿದ್ದರಂತೆ. ಮೊದಲು ಹೀಗೆ ನನ್ನ ಆರ್ತನಾದದ ಅನುಭವಕ್ಕೆ ಬಂದ ಪುಟ್ಟಯ್ಯ ಕೊನೆಕೊನೆಗೆ ಮಜಾ ತೆಗೆದುಕೊಳ್ಳಲು ನನ್ನನ್ನು ಅಲ್ಲಿಗೆ ಎತ್ತಿಕೊಂಡುಹೋಗುತ್ತಿದ್ದನಂತೆ, ಪ್ರತೀ ಸಾರಿಯೂ ನಾನು 'ಕೊಯ್ ಬೇಡ್ರಿ...' ಎಂದುಕೊಂಡು ಅಳುತ್ತಿದ್ದೆನಂತೆ. ಅದೇ ಸಂತೇ ಮೈದಾನದ ಹೊರವಲಯದಲ್ಲಿ ಹಂದಿಗೊಲ್ಲರು ಜೀವಂತವಾಗಿ ಒಂದು ಹಂದಿಯನ್ನು ಹಿಡಿದು, ಕೊಂದು ಅದನ್ನು ಬೆಂಕಿಯಲ್ಲಿ ಸುಟ್ಟಿದ್ದನ್ನೂ ನನ್ನ ಕಣ್ಣುಗಳಿಂದಲೇ ನೋಡಿದ್ದೇನೆ - ಹೀಗೆ ಅಲ್ಲಲ್ಲಿ ಮಾರಿಹಬ್ಬ, ಹಿರೇರ ಹಬ್ಬ ಮುಂತಾದ ದಿನಗಳಲ್ಲಿ ನೋಡಿದ ಅನೇಕ 'ಪ್ರಾಣಿಬಲಿ' ಅನುಭವಗಳೇ ನನ್ನ ಅಹಿಂಸಾವಾದಕ್ಕೆ ಮೂಲವಾಗಿದ್ದರೂ, ನನ್ನ ರಕ್ತವನ್ನು ಹೀರುವ ಯಾವ ಸೊಳ್ಳೆ, ತಿಗಣೆ, ಜಿಗಣೆಗಳಿಗೆ ನಾನು ಯಾವ ರಿಯಾಯಿತಿಯನ್ನೂ ತೋರೋದಿಲ್ಲ!

***

ಈ ದಿನ ಏನೇ ಆದರೂ ನಮ್ಮ ಮನೆಯಲ್ಲಿ ಏಳುದಿನ ಏಳುರಾತ್ರಿಗಳನ್ನು ಅತಿಥಿಯಾಗಿ ಕಳೆದ ಈ ನೊಣವನ್ನು ಜೀವಂತವಾಗಿ ಪಣತೊಟ್ಟು ಅದು ಹೋದಲೆಲ್ಲ ಹೋಗಿ ಒಂದೆರಡು ಟವೆಲುಗಳಿಂದ ಅದರ ಫ್ಲೈಟ್ ಪಾತನ್ನು ಬದಲಾಯಿಸಿ, ಮಿಕ್ಕೆಲ್ಲ ಕಿಟಕಿಗಳನ್ನು ಮುಚ್ಚಿ ಒಂದೇ ಒಂದು ಕಿಟಕಿಯನ್ನು ತೆರೆದು ಆ ಕಿಟಕಿಯ ಕಡೆಗೆ ಈ ನೊಣ ಹಾರಲಿ ಎಂದು ಗುರಿಯನ್ನಿಟ್ಟುಕೊಂಡು ಅದರ ಬೆನ್ನುಹತ್ತಿದೆ. ಮೊದಮೊದಲು 'ಇಲ್ಲಿಂದ ಹೋಗುವುದಕ್ಕೆ ಮನಸ್ಸಿಲ್ಲ' ಎಂದು ಗುಯ್ ರಾಗ ಮಾಡಿಕೊಂಡು ಮತ್ತೆ-ಮತ್ತೆ ಒಳಗೆ ಬರುತ್ತಾ ನನ್ನ ಸಂಯಮವನ್ನು ಪರೀಕ್ಷೆ ಮಾಡುವಂತೆ ಕಂಡುಬಂದರೂ ಕೊನೆಗೆ ಬ್ರಹ್ಮ ಅದರ ಆಯಸ್ಸನ್ನು ಇನ್ನೂ ಹೆಚ್ಚು ಬರೆದಿದ್ದ ಒಂದೇ ಕಾರಣಕ್ಕೆ ತನಗಿಷ್ಟವಿಲ್ಲದಿದ್ದರೂ ತೆರೆದ ಕಿಟಕಿಯಿಂದ ಹೊರಗಿನ ಪ್ರಪಂಚಕ್ಕೆ ಅದು ಹಾರಿಹೋಯಿತು. 'ಅಬ್ಬಾ ಹೋಯಿತಲ್ಲ' ಎಂದು ಉಸಿರು ಬಿಟ್ಟು ಕಿಟಕಿಯನ್ನು ಮುಚ್ಚಿ ಪರದೆಯನ್ನು ಎಳೆಯುವಾಗ ಯಾವ ಜನ್ಮದ ಋಣಾನುಬಂಧವಿದ್ದಿರಬಹುದು ಈ ನೊಣಕ್ಕೂ ನನಗೂ ಎಂಬ ಪ್ರಶ್ನೆಯೂ ಏಳುತ್ತಾ ೧೯೯೯ರಲ್ಲಿ ನನ್ನ ಸಹೋದ್ಯೋಗಿಯಾದ ಪಕ್ಕಾ ಕ್ಯಾಥೋಲಿಕ್ ಮನುಷ್ಯ ಪಿಲಿಪಿನೋ ಅಲೆಕ್ಸ್ ಪಿಂಗಾಯ್ ಅನ್ನು ನೆನಪಿಗೆ ತಂದಿತು. ಧರ್ಮ, ಆತ್ಮಗಳ ಬಗ್ಗೆ ಅಲೆಕ್ಸ್‌ಗೂ ನನಗೂ ಘಂಟೆಗಟ್ಟಲೆ ವಿಚಾರ ವಿನಿಮಯ ನಡೆದಿದ್ದರೂ ದಿನದ ಕೊನೆಯಲ್ಲಿ ಆತ ತನ್ನ ಕ್ಯಾಥೋಲಿಸಿಟಿಗೆ ಭದ್ರವಾಗಿ ಅಂಟಿಕೊಂಡುಬಿಡುತ್ತಿದ್ದುದೂ, ಇವನಿಗೆ ಮನವರಿಕೆ ಮಾಡಿಕೊಡಲೆಂದೇ ಈ ಸಂದರ್ಭದಲ್ಲಿ ಹುಟ್ಟಿದ ನನ್ನ ಒಂದು ಥಿಯರಿಯೂ ನೆನಪಿಗೆ ಬಂತು.

ನನ್ನ ಮನಸ್ಸಿನಲ್ಲಿ ಈ ಸಿದ್ಧಾಂತ ಹೇಗೆ ಬಂದಿತೆಂದು ಇನ್ನೂ ಹುಡುಕುತ್ತಿದ್ದೇನೆ ಆದರೂ ಅದನ್ನು ಎಲ್ಲಾದರೂ ಒಂದು ಕಡೆ ಬರೆದಿಟ್ಟರೆ ಒಳ್ಳೆಯದು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ - ಈ ನೊಣದ ಸಹವಾಸ ಅದಕ್ಕೆ ಸಹಾಯ ಮಾಡಿತು. ನನ್ನ ಪ್ರಕಾರ ಪ್ರಪಂಚದಲ್ಲಿ ಇರುವ ಆತ್ಮಗಳು ಕೆಲವೇ ಕೆಲವು (ಫೈನೈಟ್), ಅಂತೆಯೇ ಪ್ರಪಂಚದಲ್ಲಿರೋ ಮೂಲವಸ್ತುಗಳೂ (ಎಲಿಮೆಂಟ್ಸ್) ಫೈನೈಟ್. ಅಂದರೆ ಟ್ರಿಲಿಯನ್‌ಗಟ್ಟಲೆ ಇರೋ ಜೀವಸಂಕುಲದಲ್ಲಿ ಕೇವಲ ಆರು ಬಿಲಿಯನ್ ಮಾತ್ರ ಮನುಷ್ಯರಿರೋದು, ಇನ್ನುಳಿದವೆಲ್ಲ ಏಕಕೋಶ ಭಿತ್ತಿಗಳಿಂದ ಹಿಡಿದು ಥರಾವರಿ ಜೀವಜಂತುಗಳು. ಕಶೇರುಕ-ಅಕಶೇರುಕ, ಪ್ರಾಣಿ-ಸಸ್ಯ, ಬದುಕಿಯೂ ಸತ್ತ, ಸತ್ತೂ ಬದುಕಿದ ಜೀವಿಗಳನ್ನೆಲ್ಲ ಒಂದು ಪಟ್ಟಿ ಮಾಡಿದರೆ, ಪ್ರತಿಯೊಂದು ಜೀವವಿದ್ದಲ್ಲಿ ಒಂದೊಂದು ಆತ್ಮವಿದೆಯೆನ್ನುವುದಾದರೆ, ನನಗೊಂದು ಆತ್ಮವಿದ್ದ ಹಾಗೆ ಈ ನೊಣಕ್ಕೂ ಇರಬೇಕು ಹಾಗೇ ಪ್ರತಿಯೊಂದು ಪ್ರಾಣಿ, ಪಕ್ಷಿ, ಸಸ್ಯಗಳಿಗೂ ಇರಬೇಕು. ಒಂದು ಜೀವಿ ಸತ್ತನಂತರ ಆತ್ಮ ಲಿಬರೇಟ್ ಆಗಿ ಅದೇ ತಾನೇ ಮತ್ತೆಲ್ಲೋ ಹುಟ್ಟುವ ಮತ್ತೊಂದು ಜೀವವನ್ನು ಸೇರಿಕೊಂಡುಬಿಡುತ್ತದೆ. ಎಲ್ಲಾ ಜೀವಿಗಳಲ್ಲಿ ಆತ್ಮ ಅವುಗಳ ಜೀವಿತವನ್ನಾಧರಿಸಿ ಒಂದು ಸೆಕೆಂಡಿನಿಂದ ಸಾವಿರಾರು ವರ್ಷಗಳವರೆಗೂ ಇರಬಹುದು, ಈ ಆತ್ಮದ ಒಂದೊಂದು ಲೈಫ್‌ಸೈಕಲ್‌ನಲ್ಲಿ ಅದಕ್ಕೆ ಅದರದೇ ಆದ ಸಂಸ್ಕಾರಗಳಿಂದ ಆರಂಭವಾಗಿ ಆ ಸಂಸ್ಕಾರಗಳು ಪ್ರತಿಬದುಕಿನಲ್ಲಿ ಬದಲಾವಣೆಗೊಂಡು ಹೀಗೆ ಬದಲಾವಣೆಗೊಂಡ ಸಂಸ್ಕಾರಗಳನ್ನೊಳಗೊಂಡ ಆತ್ಮ ಮತ್ತೆಲ್ಲೋ ಹುಟ್ಟುವ ಜೀವಿಯೊಳಗೆ ಸೇರಿಕೊಂಡುಬಿಡುವುದು. ಆದರೆ ಈ ಒಟ್ಟು ಆತ್ಮಗಳ ಮೊತ್ತ ಹಾಗೂ ಈ ಆತ್ಮಗಳು ಯಾವತ್ತೂ ಬಂದು ಸೇರಿಕೊಳ್ಳುವ ಜೀವಿಗಳಲ್ಲಡಗಿದ ಜೀವಕೋಶಗಳ ಮೂಲವಸ್ತುಗಳ ಮೊತ್ತ ಯಾವಾಗಲೂ ಒಂದೇ. ಅಂದರೆ ಈ ಪ್ರಪಂಚ (ಅಥವಾ ವಿಶ್ವ)ದಲ್ಲಿ ೫೦೦ ಜೀವಿಗಳಿದ್ದರೆ, ಆ ಜೀವಿಗಳಿಗೆ ಐನೂರು ಆತ್ಮಗಳಿರಬೇಕು, ಹೀಗೆ ಆತ್ಮ ಸೇರಿಕೊಂಡ ಆ ಜೀವಿಯ ಭೌತಿಕ ಶರೀರದ ಮೂಲವಸ್ತು (ಕೆಮಿಕಲ್ಸ್ ರೂಪದಲ್ಲಿರುವ)ಗಳ ಒಟ್ಟು ಮೊತ್ತ ಒಂದೇ. ಮಾನವ ಜನ್ಮ ದೊಡ್ಡದು ಎಂದು ನನಗನ್ನಿಸುವುದಿಲ್ಲ, ಜೀವಿಗಳ ದೇಹಗಳ ನಡುವೆ ವಿನಿಮಯವಾಗುವ ಈ ಆತ್ಮಗಳ ವಿಲೇವಾರಿಯ ಹಿಂದಿನ ಆಲ್ಗೋರಿದಮ್ ನನಗೆ ಗೊತ್ತಿಲ್ಲ! ನನ್ನ ಪ್ರಕಾರ ಆತ್ಮಕ್ಕೆ 'ಅಪ್‌ವರ್ಡ್' ಮೊಬಿಲಿಟಿ ಎನ್ನುವುದೇನೂ ಇಲ್ಲ, ಅದು ಹಾರಿಝಾಂಟಲಿ ಎಲ್ಲಿಬೇಕಾದಲ್ಲಿ ಸ್ವೇಚ್ಛೆಯಿಂದ ತಿರುಗಾಡಬಲ್ಲದು. ಇದಕ್ಕೆ ಪುಷ್ಠಿಕೊಡುವ ಮತ್ತೂ ಒಂದು ಅಂಶವೆಂದರೆ ಮಾನವ ಇನ್ನೂ ಎಕ್ಸ್‌ಪ್ಲೋರ್ ಮಾಡಿರದ ಅವಕಾಶಗಳು (ಸ್ಪೇಸ್, ಸಾಗರದ ಆಳ ಅನಂತಗಳು ಇತ್ಯಾದಿ) - ಯಾರಿಗೆ ಗೊತ್ತು ಮಾನವನೇ ಮಿಗಿಲೆಂದು? ಒಂದು ಜೇನುಗೂಡಿನ ರಹಸ್ಯವನ್ನು ಅರಿತುಕೊಂಡರೆ ಅದರ ಮುಂದೆ ನಮ್ಮ ಶ್ರಮ ಏನೇನೂ ಅನ್ನಿಸುವುದಿಲ್ಲ - ಉದಾಹರಣೆಗೆ ಗೆದ್ದಲು ಹುಳುಗಳು ಸುವ್ಯವಸ್ಥಿತವಾಗಿ ಕಟ್ಟುವ ಹುತ್ತದಷ್ಟು ದೊಡ್ಡದಾದ ಕಟ್ಟಡವನ್ನು ನಾವೇನಾದರೂ ಕಟ್ಟಬೇಕೆಂದರೆ ಅದು ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಇಪತ್ತೈದು ಪಟ್ಟು ಎತ್ತರವಾಗಿರುತ್ತದೆಯಂತೆ! ಈ ನನ್ನ ಥಿಯರಿಯಲ್ಲಿ ದೇವರನ್ನು ಎಲ್ಲಿ ಬೇಕಾದರೂ ತರಬಹುದು, ಬಿಡಬಹುದು! ಆದರೆ ನನ್ನಷ್ಟೇ ಪ್ರಬುದ್ಧನಾದ ಅಲೆಕ್ಸ್ ಪಿಂಗಾಯ್‌ಗೆ ನನ್ನ ವಾದ ಅಷ್ಟೊಂದು ರುಚಿಸುತ್ತಿರಲಿಲ್ಲ, ಎದ್ದೂ-ಬಿದ್ದು ಕ್ರಿಶ್ಚಿಯಾನಿಟಿಗೆ ತಗಲಿಕೊಂಡ ಅವನ ದಪ್ಪ ಚರ್ಮವೂ ಕಾರಣವಿದ್ದಿರಬಹುದು.

ನಮ್ಮ ಮನೆಯನ್ನು ಸೇರಿ ಒಂದು ವಾರ ಯಾವುದೇ ಬಾಡಿಗೆಯನ್ನೂ ಕೊಡದೆ ಒಂದು ಹಾಯಾಗಿ ಓಡಾಡಿಕೊಂಡಿದ್ದ ಈ ನೊಣದ ಆತ್ಮಕ್ಕೂ ನನ್ನ ಆತ್ಮಕ್ಕೂ ಯಾವ ಜನ್ಮದ ನಂಟೋ ಯಾರಿಗೆ ಗೊತ್ತು? ಅದರ ಜೀವವನ್ನು ನೋಯಿಸಬಾರದೆನ್ನುವ ನನ್ನ 'ಜಾಣತನ'ದ ಪ್ರತಿಕ್ರಿಯೆ ಆ ನೊಣಕ್ಕೆ ತನ್ನ ಜೀವಸಂಚಕಾರಕ್ಕೆ ಬಂದಂತೆ ಕಂಡಿರಲೂಬಹುದು. ಈ ನೊಣದಿಂದ ನನಗೇನೂ ತೊಂದರೆಯಾಗದಿರುವಂತೆ ನಾನು ಜಾಗೃತನಾಗಿದ್ದಂತೆ ಅದೂ ನನ್ನಿಂದ ಬದುಕುಳಿಯಲು ಒದ್ಡಾಡಿಹೋಗಿರಬಹುದು, ಕೊನೆಗೆ ಬೇರೇನು ಇಲ್ಲವೆಂದರೂ ಈ ನೊಣ ಸುಖವಾಗಿ ನಮ್ಮ ಮನೆಯನ್ನು ತೊರೆದದ್ದು ನನಗೆ ಸಮಾಧಾನ ನೀಡಿತು, ಆದರೆ ಕರೆಯದೇ ಬಂದು ಒಂದು ವಾರ ಠಿಕಾಣಿ ಹೂಡಿದ ನೊಣದ ಮನಸ್ಸಿನಲ್ಲಿ, ಆತ್ಮದ ಹಿಂದೆ ಯಾವ ಹುನ್ನಾರವಿತ್ತೋ ಯಾರು ಬಲ್ಲರು?

Saturday, June 10, 2006

ಮಾರ್ಗದ ಮಧ್ಯದಲ್ಲಿ breakdown ಆದ ಪ್ರಸಂಗ

ನಿನ್ನೆ ಆಫೀಸಿನಿಂದ ಮನೆಗೆ ಬರುತ್ತಿರುವಾಗ ಈ ವಾರ ಶುರು ಮಾಡಿದ ಹೊಸ ಕೆಲಸದ ವಿಷಯಗಳು, ಹಳೆಯದ್ದನ್ನು ಬೇಕಾದಷ್ಟು ಓದಬೇಕಾಗಿ ಬಿದ್ದುಕೊಂಡಿರೋ ಬ್ಯಾಕ್‌ಲಾಗ್, ಹನೂರು ಘಟನೆಯನ್ನು ಏಕಾದರೂ ಪ್ರಜಾವಾಣಿಯಲ್ಲಿ ಓದಿದೆನೋ, ಅದಕ್ಕೆ ಪ್ರತಿಕ್ರಿಯೆಯನ್ನು ಏಕಾದರೂ ತೋರಿದೆನೋ ಅನ್ನುವ ಪದೇ-ಪದೇ ರಿಯರ್‌ವ್ಯೂವ್ ಮಿರರ್ ನಲ್ಲಿ ಇಣುಕುವ ಪ್ರಶ್ನೆಹಾಕುವ ಮುಖಗಳು, ಸದ್ಯ ವಾರಾಂತ್ಯ ಬಂತಲ್ಲ ಅನ್ನೋ ಸಮಾಧಾನ ಇವೆಲ್ಲವೂ ನನ್ನ ಮನಸ್ಸಿನಲ್ಲಿ ಸುತ್ತಾಡುತ್ತಿದ್ದವು. (ಸದ್ಯ, ಈ ರಿಯರ್ ವ್ಯೂ ಮಿರರ್ ಅನ್ನು ಚಿಕ್ಕದಾಗಿ ಮಾಡಿಟ್ಟಿದ್ದಾರೆ, ಒಂದು ವೇಳೆ ಅದೇನಾದರೂ ಇನ್ನೂ ದೊಡ್ಡದಿದ್ದರೆ ಎಂದು ಹೆದರಿಕೆಯಾಗುತ್ತದೆ, ಆದರೂ get off the rear view mirror ಎನ್ನುವುದು ಎಲ್ಲರಿಗಿಂತಲೂ ಹೆಚ್ಚು ನನಗೆ ಅನ್ವಯವಾಗುತ್ತದೆ.)

ನಾನು ಒಂದು ವಾರಕ್ಕೆ ಒಂದೇ ಬದಲಾವಣೆಯನ್ನು ಮಾಡಿಕೊಂಡಿದ್ದರೆ ಚೆನ್ನಾಗಿತ್ತು, ಆದರೆ ಈ ವಾರ ಹೊಸ ಕೆಲಸದ ಜೊತೆಗೆ ಒಂದು ನನಗೆ ಹೊಸದಾದ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನೂ ಕೂಡ ಚಲಾಯಿಸತೊಡಗಿದ್ದು ವಾರ ಪೂರ್ತಿ ಎಲ್ಲೂ ತೊಂದರೆ ಕೊಡದಿದ್ದರೂ ನಿನ್ನೆ ಸಂಜೆ ಸರಿಯಾಗಿ ಕೈಕೊಟ್ಟಿತು. ನಿನ್ನೆ ಆಫೀಸಿನಿಂದ ದಾರಿಯಲ್ಲಿ ಸಿಗುವ ಡ್ರೈ ಕ್ಲೀನರ್ ಹತ್ತಿರ ಹೋಗಿ ಬಟ್ಟೆಯನ್ನು ಹಿಂದಕ್ಕೆ ತರೋಣವೆಂದು ಯೋಚಿಸಿದ್ದು ನನ್ನನ್ನು ಕಷ್ಟಕ್ಕೀಡು ಮಾಡಿತು. ಈ ಹಳೆಯ ಕಾರಿನಲ್ಲಿ ಸ್ವಲ್ಪ ಸ್ಟಾರ್ಟಿಂಗ್ ಟ್ರಬಲ್ ಇದ್ದಿದ್ದು ನನ್ನ ಅರಿವಿಗೆ ಬಂದಿದ್ದರೂ ಶೋ ಸ್ಟಾಪರ್ ಎನ್ನಿಸಿರಲಿಲ್ಲ. ಬೆಳಿಗ್ಗೆ ಮನೆಯಿಂದ ಹೊರಟಾಗ ಚೆನ್ನಾಗಿದ್ದ ಕಾರು, ಸಂಜೆ ಆಫೀಸಿನಿಂದ ಸುಲಭವಾಗೇ ಸ್ಟಾರ್ಟ್ ಆಗುತ್ತಿದ್ದ ಕಾರು ಶುಕ್ರವಾರ ಸಂಜೆ ಡ್ರೈ ಕ್ಲೀನರ್ ಅಂಗಡಿಯ ಮುಂದೆಯೇ ಏನಾದರೂ ಸ್ಟಾರ್ಟ್ ಆಗಲೊಲ್ಲದು. ಈಗಾಗುತ್ತೆ, ಇನ್ನೊಂದು ಘಳಿಗೆಯಲ್ಲಾಗುತ್ತೆ ಎಂದು ಪದೇ-ಪದೇ ಪ್ರಯತ್ನಿಸಿದ ನನ್ನ ಪ್ರಯತ್ನಗಳೆಲ್ಲ ವ್ಯರ್ಥವಾದವು. ಬಹಳ ಬೇಸರದಿಂದ ಸ್ಟಿಯರಿಂಗ್ ವೀಲನ್ನು ಹಿಡಿದು ಸ್ವಲ್ಪ ತಿರುಗಿಸಿದೆನೆಂದು ಅದೂ ಕೂಡ ಲಾಕ್ ಆಯಿತು, ಇನ್ನೇನೂ ಮಾಡೋದಕ್ಕೆ ವಿಧಿ ಕಾಣದೇ ಟ್ರಿಪಲ್ ಎ.ಗೆ ಫೋನ್ ಮಾಡಿದರೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ನನ್ನನ್ನು ಐದು ನಿಮಿಷಗಳಿಗಿಂತ ಹೆಚ್ಚು ಸಮಯ ಹೋಲ್ಡ್‌ನಲ್ಲಿ ಇಟ್ಟ ಆ ಕಡೆಯ ಕಸ್ಟಮರ್ ಸರ್ವೀಸ್ ರೆಪ್ ಮೇಲೂ ಒಮ್ಮೆ ಸಿಟ್ಟು ಬಂತು. ನನ್ನ ಹಣೇಬರಕ್ಕೆ ನಾನೇ ಜವಾಬ್ದಾರ ಎಂದುಕೊಂಡು ಟ್ರಿಪಲ್ ಎ. ಕಾಲನ್ನು ಡಿಸ್‌ಕನೆಕ್ಟ್ ಮಾಡಿ ಅದೇನಾಗಿದೆಯೋ ನೋಡಿಯೇ ಬಿಡುತ್ತೇನೆ ಎಂದು ತೋಳನ್ನು ಮೇಲೇರಿಸಿದೆ.

ಇದು ನಿಸ್ಸಾನ್ ಮ್ಯಾಕ್ಸಿಮಾ ಕಾರು, ೧೯೯೫ ರ ಮಾಡೆಲ್, ೧೭೨,೦೦೦ ಸಾವಿರಕ್ಕೂ ಹೆಚ್ಚು ಮೈಲು ಓಡಿದ್ದರೂ ಟೆಸ್ಟ್ ಡ್ರೈವಿನಲ್ಲಿ ನನಗೆ ಎಲ್ಲಾ ಥರದ ಭರವಸೆ ಕೊಟ್ಟಿದ್ದರಿಂದ ಹಿಂದೂ-ಮುಂದೆ ನೋಡದೆ ತೆಗೆದುಕೊಂಡೆ (ಈ ಕಾರನ್ನು ನನಗೆ ಮಾರಿದವರು ಮತ್ತೊಬ್ಬ ಕನ್ನಡಿಗರು, ಅವರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ). ಹೀಗೆ ಅಪರೂಪಕ್ಕೊಮ್ಮೆ ಇಂಜಿನ್ ಸ್ಟಾರ್ಟ್ ಆಗಲು ಕಷ್ಟಕೊಡುತ್ತಿದ್ದುದನ್ನು ಅವರು ಮೊದಲೇ ತಿಳಿಸಿದ್ದರಿಂದ ಇದರಲ್ಲಿ ಅವರದ್ದೇನೂ ತಪ್ಪಿಲ್ಲ. ಕಳೆದ ಶನಿವಾರ ರಾತ್ರಿ ಕಾರನ್ನು ತೆಗೆದುಕೊಂಡು, ಸೋಮವಾರ ಸಂಜೆ ಅಫಿಷಿಯಲ್ ಆಗಿ ನನ್ನ ಹೆಸರಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವವರೆಗೆ ಆ ಕಾರನ್ನು ಓಡಿಸುವುದು ಅಷ್ಟೊಂದು ಸರಿ ಎನಿಸಲಿಲ್ಲ - ಇನ್ಸೂರೆನ್ಸ್ ಕಂಪನಿಯವರು ಓಡಿಸಬಹುದು ಎಂದಿದ್ದರೂ, ಆ ಕಾರನ್ನು ಓಡಿಸಿ ಏನಾದರೂ ಹೆಚ್ಚೂ ಕಡಿಮೆ ಆದರೆ ಆ ಕಷ್ಟ ಯಾರಿಗೆ ಬೇಕು ಎಂದು ಸುಮ್ಮನೇ ಇದ್ದೆ. ಸರಿ, ಸೋಮವಾರ ಸಂಜೆ ಈ ಕಾರನ್ನು ನನ್ನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದೆನಾದರೂ ಸಂಜೆ ಐದೂವರೆಗೆಲ್ಲ ತನ್ನ ಅಂಗಡಿಯನ್ನು ಕ್ಲೋಸ್ ಮಾಡುವ ನನಗೆ ಗೊತ್ತಿರುವ ಮೆಕ್ಯಾನಿಕ್ ಹ್ಯಾರಿಯನ್ನು ನೋಡಲು ಶನಿವಾರದವರೆಗೆ ಕಾಯಬೇಕಾಗುತ್ತದೆಯೆಲ್ಲಾ, ಅಲ್ಲಿಯವರೆಗೆ ಈ ಕಾರು ಹೇಗೋ ಏನೋ ಎಂದು ಅಳುಕಾಯಿತು. ಆದರೂ ನಿನ್ನೆ ಸಂಜೆ ಆಫೀಸಿನಿಂದಲೇ ಹ್ಯಾರಿಗೆ ಶನಿವಾರ ಬೆಳಿಗ್ಗೆ ಎಂಟು ಘಂಟೆಗೆಲ್ಲಾ ಬಂದು ಬಿಡುತ್ತೇನೆ, ಕಾರನ್ನು ಸರಿ ಮಾಡಿಕೊಡು ಎಂದು ನೆನಪಿಸಿದ್ದೆ. ನನಗೆ ಆಪೀಸಿನಿಂದ ಮನೆಗೆ ೩೩ ಮೈಲು ಉದ್ದದ ಪ್ರಯಾಣವಿದೆ, ನನ್ನ ಸ್ನೇಹಿತ ಗಾರ್‌ಫೀಲ್ಡ್ 'ಹುಷಾರಾಗಿರು' ಎಂದೂ ಸಹ ಹೇಳಿದ್ದ. ಆದರೆ ದೇವರ ದಯದಿಂದ ಶುಕ್ರವಾರ ಸಂಜೆಯವರೆಗೂ ಯಾವ ತೊಂದರೆಯೂ ಆಗಲಿಲ್ಲ.

ಈ ಟ್ರಿಪಲ್ ಎ. ಅವರು ಸಹಾಯ ಮಾಡಿದರೆಷ್ಟು ಬಿಟ್ಟರೆಷ್ಟು ಎಂದು ಬೈದುಕೊಂಡು ವಿಷಯಗಳನ್ನು ನನ್ನ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ರಾತ್ರಿ ಒಂಭತ್ತು ಘಂಟೆಯಾಗಿ ಹೋಗಿತ್ತು. ನಾನೇನೂ ಯಾವ ಮೆಕ್ಯಾನಿಕ್ಕೂ ಅಲ್ಲ, ಆದರೆ ಒಂದು ಕೈ ನೋಡೋಣವೆಂದುಕೊಂಡು ಸ್ಟಿಯರಿಂಗ್ ವ್ಹೀಲ್ ಲಾಕ್ ಆಗಿದ್ದನ್ನು ಪದೇ-ಪದೇ ತಿರುಗಿಸಿ ನೋಡಿದೆ, ಅದು ಅಲುಗಾಡಲೂ ಇಲ್ಲ. ಕೊನೆಗೆ ಅದೇನು ಹೊಳೆಯಿತೋ ಏನೋ, ಕೀಯನ್ನು ಇಗ್ನಿಷನ್ನಲ್ಲಿಟ್ಟು, ಇಂಜಿನ್ ಕ್ರ್ಯಾಂಕ್ ಮಾಡದೇ ಸ್ಟಿಯರಿಂಗ್ ವ್ಹೀಲನ್ನು ತಿರುಗಿಸಿದಾಗ ಅದು ಮೊದಲಿನ ಸ್ಥಿತಿಗೆ ಬಂದಿದ್ದರಿಂದ ಸ್ವಲ್ಪ ಸಮಾಧಾನವಾಯಿತು. ಆದರೆ ಕಾರು ಶುರುವಾಗದಿರುವ ಮುಖ್ಯ ಸಮಸ್ಯೆ ಇನ್ನೂ ಹಾಗೇ ಉಳಿಯಿತು - ಕೀ ಇಗ್ನಿಷನ್ನಲ್ಲಿರುವಂತೆಯೇ ಅಲ್ಲಿಯವರೆಗೂ ಲಾಕ್ ಆಗಿದ್ದ ಗಿಯರ್ ಸ್ಟಿಕ್ಕನ್ನು ಆಕಡೆ-ಈಕಡೆ ಅಲುಗಾಡಿಸಿ ನ್ಯೂಟ್ರಲ್‌ಗೆ ತಂದೆ, ಕೊನೆಗೆ ಡ್ರೈವರ್ ಬಾಗಿಲನ್ನು ಓಪನ್ನಿಟ್ಟು ನಮ್ಮ ಊರುಗಳಲ್ಲಿ ಅಟೋರಿಕ್ಷಾಗಳನ್ನು ಡ್ರೈವರುಗಳು ತಳ್ಳಿಕೊಂಡು ನಡೆಯುವ ಹಾಗೆ ಪಾರ್ಕಿಂಗ್ ಲಾಟಿನಲ್ಲೇ ಕಾರನ್ನು ಒಂದು ಅಡಿ ಹಿಂದೇ-ಮುಂದೇ ಓಡಿಸಿದೆ, ನನ್ನ ಪ್ರಕಾರ ಆ ಚಾಲನೆಯಿಂದ ಕೊನೇಪಕ್ಷ ಲಾಕ್ ಆದ ಬ್ರೇಕ್ ಪೆಡಲ್ ಆದರೂ ಸರಿಯಾದೀತು, ಮುಂದೆ ಗಿಯರ್ ಸ್ಟಿಕ್ ಅನ್ನು ಪಾರ್ಕಿಂಗ್‌ಗೆ ಹಾಕಿ ಇಂಜಿನ್ ಶುರುಮಾಡಿದರೆ ಆದೀತು ಎನ್ನುವ ಹುಂಬ ನಂಬಿಕೆ ಬಲವಾಗತೊಡಗಿತು. ಅದೇ ಡ್ರೈ ಕ್ಲೀನರ್ ಅಂಗಡಿಗೆ ಬಂದು ಹೋಗುತ್ತಿದ್ದ ಗಿರಾಕಿಗಳು ನನ್ನನ್ನು ನೋಡಿ ತಮ್ಮ ಮುಖದಲ್ಲಿ ಪ್ರಶ್ನೆ-ಆಶ್ಚರ್ಯಗಳ ಗೆರೆಯನ್ನು ವ್ಯಕ್ತ ಪಡಿಸುತ್ತಿದ್ದರೂ ಅವರನ್ನು ಸಹಾಯಕ್ಕೆ ಕೇಳುವ ಗೋಜಿಗೆ ನಾನು ಹೋಗಲಿಲ್ಲ, ಅವರು ಏನಾಗಿದೆ ಎಂದು ಕೇಳಲಿಲ್ಲ.

ಏನಾಶ್ಚರ್ಯ, ಹಾಗೆ ನಾನು ಕಾರನ್ನು ಪಾರ್ಕಿಂಗ್ ಗಿಯರ್‌ಗೆ ತಂದು ಇಂಜಿನ್ ಶುರುಮಾಡಿದ ಮೊದಲ ಯತ್ನದಲ್ಲೇ ಇಂಜಿನ್ ಆನ್ ಆಗಿ ಈಗಾದರೂ ಮನೆಗೆ ಹೋಗುತ್ತೇನಲ್ಲಾ ಎಂದು ಬಹಳ ಖುಷಿಯಾಯಿತು. ಸದ್ಯ, ಆ ತ್ರಿಪಲ್ ಎ. ನವರು ಬರುತ್ತಾರೆ ಎಂದು ಕಾದಿದ್ದರೆ ಇನ್ನೊಂದು ಘಂಟೆಯಾದರೂ ಅಲ್ಲೇ ಒದ್ದಾಡಬೇಕಿತ್ತು ಎಂದು ಅವರನ್ನು ಮಧ್ಯದಲ್ಲಿಯೇ ತುಂಡುಮಾಡಿದ ನನ್ನ ನಿರ್ಧಾರಕ್ಕೆ ಒಳಗೊಳಗೆ ಮೆಚ್ಚುಗೆಯೂ, ನಾನು ಹಾಗೆ ಮಾಡಿದ್ದು ಮೂರ್ಖತನವೂ ಎನ್ನಿಸಿತು. ಮನೆಗೆ ಬರುವಾಗೆಲ್ಲ ಸುಮಾರು ಹತ್ತು ಘಂಟೆಯ ಹತ್ತಿರವಾಗಿತ್ತು, ನನ್ನ ಮಗಳು ಅದ್ಯಾವಗಲೋ ನಿದ್ರೆಗೆ ಶರಣುಹೋಗಿದ್ದಳು. ಡ್ರೈ ಕ್ಲೀನರ್‌ನಿಂದ ತಂದ ಬಟ್ಟೆಗಳನ್ನು ಇಡಬೇಕಾದ ಸ್ಥಳದಲ್ಲಿಟ್ಟು, ಕೈ ಕಾಲು ಮುಖ ತೊಳೆದುಕೊಂಡು, ಡಿ.ವಿ.ಆರ್.ನಲ್ಲಿ ರೇಕಾರ್ಡ್ ಆಗಿದ್ದ ನೈಟ್ಲೀ ಬ್ಯುಸಿನೆಸ್ ರಿಪೋರ್ಟನ್ನು ನೋಡುತ್ತಾ ಊಟ ಮಾಡಿ ನೀರುಕುಡಿಯುವಷ್ಟರಲ್ಲಿ ವಾರದ ನಿದ್ದೆಯಲ್ಲಾ ಒಮ್ಮೆಲೇ ಕಣ್ಣಿಗೆ ಹತ್ತಿಕೊಂಡಂತೆ ಕಣ್ಣು ರೆಪ್ಪೆಗಳು ತಮ್ಮ ಮೇಲೆ ಇಟ್ಟಿಗೆಯನ್ನು ಹೊತ್ತಿವೆಯೇನೋ ಎನ್ನುವಂತೆ ಭಾರವಾದವು. ಮೇಲೆ ಹೋಗಿ ಹಾಸಿಗೆಯ ಮೇಲೆ ಮಲಗಲೂ ಸೋಮಾರಿಯಾದವನನ್ನು ನನ್ನ ಹೆಂಡತಿ ಸುಮ್ಮನೇ ಹಾಗೇ ಬಿಟ್ಟಿದ್ದರಿಂದ ಸೋಫಾದಲ್ಲಿಯೇ ಕಣ್ಣುಮುಚ್ಚಿ ಕಣ್ಣು ತೆರೆಯುವಂತಹ ಸುಖ ನಿದ್ರೆಯನ್ನು ಮುಗಿಸಿ ನೋಡುವುದರೊಳಗೆ ಹಿಂದಿನ ದಿನವೇ ಬ್ಯಾಟರಿ ಬದಲಾಯಿಸಿದ ರಘುವಿನ ಗಡಿಯಾರ ಹಾಗೂ ಕಾಮ್‌ಕ್ಯಾಸ್ಟಿನ ಡಿವಿಆರ್ ಎರಡರಲ್ಲೂ ರಾತ್ರಿ ಒಂದು ಘಂಟೆಯ ಹೊತ್ತಾಗಿಹೋಗಿತ್ತು! ಮತ್ತೆ ಎದ್ದು ಸ್ವಲ್ಪ ನೀರು ಕುಡಿದು ಮೇಲೆ ಹೋಗಿ ಈ ಬಾರಿ ಸರಿಯಾಗಿ ಮಲಗಿದವನಿಗೆ ಮತ್ತೆ ಎಚ್ಚರವಾದದ್ದು ಬೆಳಿಗ್ಗೆ ಐದೂವರೆಯ ನಂತರವೇ.

***

ಕಾಕತಾಳೀಯವೋ ಎಂಬಂತೆ ನಾನು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾರಾಗಿದ್ದೇನೆ, ಕೆಲವೊಮ್ಮೆ ಊಹಿಗೆ ನಿಲುಕದ ಮೂಲಗಳಿಂದ ಸಹಾಯವೂ ದೊರೆಯುತ್ತದೆ. ನಿನ್ನೆಯ ಘಟನೆ ದೊಡ್ಡ ವಿಷಯವೇನಲ್ಲ, ಆದರೂ ಒಂದು ವ್ವವಸ್ಥಿತವಾದ ಕಾರು ದಿನನಿತ್ಯದಲ್ಲಿ ಎಷ್ಟು ಮುಖ್ಯ ಎನ್ನುವ ಪಾಠವನ್ನು ಈ ರೀತಿ ಕಲಿತುಕೊಂಡಿದ್ದೇನೆ.

ಈ ಬೆಳಿಗ್ಗೆ ಎದ್ದು ಓದುವ ಬ್ಯಾಕ್‌ಲಾಗನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದೇನೆ, ಎಲ್ಲಕ್ಕಿಂತ ಮುಖ್ಯವಾಗಿ ಯಾರನ್ನು ಬಿಟ್ಟರೂ ಹ್ಯಾರಿಯನ್ನು ನೋಡದೇ ಇರಬಾರದು ಎಂದು ಇನ್ನು ಕೆಲವೇ ನಿಮಿಷಗಳಲ್ಲಿ ಅವನ ಮುಂದೆ ಹಾಜರಾಗುವ ಸಿದ್ಧತೆಯನ್ನು ನಡೆಸತೊಡಗುತ್ತೇನೆ.

Thursday, June 08, 2006

ಚಾಟ್ ವಿಂಡೋನಲ್ಲಿ ಜೀವಂತವಾಗಿರಬಯಸುವ ಸಂಬಂಧಗಳು

ಇತ್ತೀಚೆಗಂತೂ ವೈಯುಕ್ತಿಕವಾಗಿಯೂ ಹಾಗೂ ಅಫೀಸಿನ ಕೆಲಸಕ್ಕೆ ಸಂಬಂಧಿಸಿದಂತೆಯೂ ಮಾಡುವ ಮಾತುಕತೆಯ ಮುಖ್ಯ ಅಂಗವಾಗಿ ಇನ್ಸ್ಟಂಟಂಟ್ ಮೆಸ್ಸೇಜುಗಳು ಹೆಚ್ಚಾಗಿವೆಯೇನೋ ಎನ್ನಿಸಿ ಬೇರೆ ಎಲ್ಲ ಕಮ್ಮ್ಯೂನಿಕೇಷನ್ ಡಿವೈಸ್‌ಗಳಿಗಿಂತ ಅದೇ ಮುಖ್ಯವಾಗಿ ಕಂಡುಬರುತ್ತಿದೆ. ಈ ಚಿಕ್ಕ ಚಿಕ್ಕ ಮೆಸ್ಸೇಜ್ ವಿಂಡೋಗಳಲ್ಲಿ ತೆರೆದುಕೊಳ್ಳುವ ಸಂಬಂಧಗಳು, ಅವುಗಳು ಬೆಳೆಯುವ ಬಗೆ, ಅವುಗಳನ್ನು ನಿಭಾಯಿಸುವ ಜಾಣತನ ಇವುಗಳೆಲ್ಲವೂ ನನ್ನೊಬ್ಬನ ಸವಾಲುಗಳು ಮಾತ್ರವಲ್ಲ, ಹೆಚ್ಚೂಕಡಿಮೆ ಎಲ್ಲರದ್ದೂ ಆಗಿದ್ದರಿಂದ ಈ ಕುರಿತು ಬರೆಯೋಣವೆಂದುಕೊಂಡೆ.

ಉಳಿದ ಆಫೀಸುಗಳಲ್ಲೂ ಹೀಗೆ ಇರಬಹುದು, ನಮ್ಮ ಆಫೀಸಿನಲ್ಲಂತೂ ಈ ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕವೇ ಜನರ ನಡುವೆ ವಿಚಾರ ವಿನಿಮಯಗಳು ಹೆಚ್ಚು ಆಗೋದು. ಮುಂಜಾನೆ ಒಮ್ಮೆ ಲಾಗಿನ್ ಆದರೆ ಆಯಿತು, ಮೇಲಿಂದ ಮೇಲೆ ಬಂದು ಹೋಗುವ ಈ ಮೆಸ್ಸೆಜುಗಳಿಗೆ ಬಿಡುವೆಂಬುದಿಲ್ಲ. ಇಂತಹ ಮೆಸ್ಸೇಜುಗಳನ್ನು ಹೊತ್ತುಕೊಂಡ ಪುಟ್ಟ ಪುಟ್ಟ ವಿಂಡೋಗಳಿಗೂ ತರಾವರಿ ಆಯುಷ್ಯವಿದೆ. ಕೆಲವೊಂದು ಹೀಗೆ ಇಣುಕಿ ಹಾಗೆ ಮಾಯವಾದರೆ ಮತ್ತೆ ಕೆಲವು ದಿನಪೂರ್ತಿ ಪರದೆಯ ಮೇಲೆ ಇರುತ್ತವೆ. ದಿನದ ಕೊನೆಯಲ್ಲಿ ಕಂಪ್ಯೂಟರ್‌ನ್ನು ನಿಲ್ಲಿಸಬೇಕಾದ ಸಂದರ್ಭ ಬಂದರೂ ಜೀವಂತವಾಗಿರಬೇಕಾದ ಸಂದೇಶಗಳಿಗೋಸ್ಕರ ಕೆಲವನ್ನು ಮತ್ತ್ಯಾವಾಗಲೋ ಬಳಸುವ ಆಲೋಚನೆಯಿಂದ ಉಳಿಸಿಕೊಂಡಿದ್ದೇನೆ. ಒಂದಂತೂ ನಿಜ - ನಮ್ಮ ನಡುವಿನ ಜನರು, ಅವರ ಭಾವನೆಗಳು ಎಷ್ಟು ಭಿನ್ನವೋ, ಈ ಮೆಸ್ಸೇಜುಗಳೂ ಅಷ್ಟೇ ಭಿನ್ನ. ಪ್ರತಿ ಕ್ಷಣದಲ್ಲಿ ತರಾವರಿ ಅವತಾರಗಳನ್ನು ಬದಲಾಯಿಸಿಕೊಳ್ಳುವ ಈ ಸಂದೇಶಗಳು ಆ ಕಡೆಯಿಂದ ಎಷ್ಟೋ ದೂರ (ಅಥವಾ ಹತ್ತಿರ)ದಿಂದ ಮಾತುಕಥೆಯಲ್ಲಿ ತೊಡಗಿದ ವ್ಯಕ್ತಿಯನ್ನು ಹತ್ತಿರ ತರದಿದ್ದರೂ, ಎಲ್ಲವೂ ಒಂದೇ ಪರದೆಯ ಮೇಲೆ ಹುಟ್ಟಿ ಮಾಯವಾಗುವ ಪ್ರಕ್ರಿಯೆಯಲ್ಲಂತೂ ಸಮಾನತೆಯಿದೆ.

ಮಾನವೀಯ ಸಂಬಂಧಗಳನ್ನು ಮೇಂಟೇನ್ ಮಾಡಿದ ಹಾಗೆ ಈ ಚಿಕ್ಕ ಚಿಕ್ಕ ವಿಂಡೋಗಳಲ್ಲಿ ಹುಟ್ಟಿ ಮಾಯವಾಗುವ ಸಂದೇಶಗಳನ್ನೂ ಮೇಂಟೇನ್ ಮಾಡಬೇಕಾಗುತ್ತದೆ. ನಾನು ಚಾಟ್ ಮಾಡುವುದು ಅನಿವಾರ್ಯವಾದ ಮೇಲಂತೂ, ಎಲ್ಲೋ ವರ್ಚುವಲ್ ಪ್ರಪಂಚದಲ್ಲಿ ಯಾರೋ ಮಾತನಾಡುತ್ತಿದ್ದಾರೆ ಎಂಬ ಭಾವನೆಯಿಂದ ಯಾವುದನ್ನೂ ನೆಗ್ಲೆಕ್ಟ್ ಮಾಡಲಾಗುವುದಿಲ್ಲ. ವೈಯುಕ್ತಿಕ ವಿಷಯಗಳನ್ನು, ಅದಕ್ಕೆ ಸಂಬಂಧಿಸಿದ ಸಂದೇಶಗಳನ್ನು ಹೇಗಾದರೂ ನಿಭಾಯಿಸಿಕೊಂಡರೂ ಪರವಾಗಿಲ್ಲ, ಆದರೆ ಅಫೀಸಿನ ವಿಷಯದಲ್ಲಿ ಮಾತ್ರ ಹೀಗಾಗದೆ ಎಷ್ಟೋ ಕಂಪನಿಗಳಲ್ಲಿ ಚಾಟ್ ಮಾಡುವುದಕ್ಕೆ ಹಲವಾರು ಗ್ರೌಂಡ್ ರೂಲ್ಸುಗಳನ್ನು ಬರೆದೂ ಇಟ್ಟಿದ್ದಾರಾದ್ದರಿಂದ ನಾವು ಬರೆಯುವ, ಪ್ರತಿಕ್ರಿಯಿಸುವ ರೀತಿಯ ಮೇಲೆ ಒಂದು ಕಣ್ಣಿಡಬೇಕಾಗುತ್ತದೆ. ಒಂದು ಕಾಲದಲ್ಲಿ ಚಾಟ್ ಅನ್ನುವುದು ನನಗೆ ದೂರದ ಸ್ನೇಹಿತರನ್ನು ಅಪರೂಪಕ್ಕೆ ಮಾತನಾಡಿಸುವ ಸಾಧನವಾಗಿ ಕಂಡುಬಂದಿತ್ತು, ಆದರೆ ಈ ದಿನಗಳಲ್ಲಿ ಅದರ ವ್ಯಾಖ್ಯೆ ಸಂಪೂರ್ಣ ಬದಲಾಗಿ ನನ್ನಿಂದ ಕೆಲವೇ ಅಡಿಗಳ ದೂರದಲ್ಲಿ ಕುಳಿತವರಿಂದಲೂ ಹಿಡಿದು, ಗ್ಲೋಬಲ್ ಮಟ್ಟದಲ್ಲಿ ಕೆಲಸ ಮಾಡುವ ನಮ್ಮ ಕಂಪನಿಯ ವಿಷಯಗಳಿಗಾಗಿ ಸಾವಿರಾರು ಮೈಲುಗಳ ದೂರವಿರುವವರನ್ನೂ ಚಾಟ್ ಮೂಲಕವೇ ಸಂಪರ್ಕಿಸಬೇಕಾಗಿ ಬಂದಿದೆ.

ಈ ಚಾಟ್‌ಗೆ ಸಂಬಂಧಿಸಿದಂತೆ ನಾನು ಬರೆಯುವ ಸಂದೇಶಗಳಲ್ಲಿ ನನ್ನ ಪ್ರೊಫೆಷನಲಿಸಮ್, ಕಮ್ಮ್ಯೂನಿಕೇಷನ್ ಸ್ಕಿಲ್ಸ್, ನಯ-ನಾಜೂಕುತನ, ಫಾರ್ಮಾಲಿಟಿ ಇವುಗಳನ್ನೆಲ್ಲ ಯಾರಾದರೂ ಗಮನಿಸಿ ಅದಕ್ಕೆಲ್ಲ ಅಷ್ಟೊಂದು ಮಹತ್ವವನ್ನು ಕೊಡುತ್ತಾರೆ ಎಂದು ಐದು ವರ್ಷಗಳ ಹಿಂದೆ ನಾನು ಎಣಿಸಿರಲಿಲ್ಲ. ಆದರೆ ಇಂದು ನಾನು ಚಾಟ್ ಮಾಡುತ್ತಿರುವ ವ್ಯಕ್ತಿಯ ಸಂವೇದನೆಗಳಿಗೆ ತಕ್ಕಂತೆ, ಅವರ ಲೆವೆಲ್‌ಗೆ ತಕ್ಕಂತೆ, ಅವರ ಬ್ಯಾಕ್‌ಗ್ರೌಂಡಿಗೆ ತಕ್ಕಂತೆ ಹಾಗೂ ಅವರು ಇರುವ ಊರು/ದೇಶ/ಟೈಮ್ ಝೋನ್‌ಗಳಿಗೆ ತಕ್ಕಂತೆ ಬರೆಯುವಲ್ಲಿ ಬದಲಾಯಿಸಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ನಮ್ಮ ಆಫೀಸಿನಲ್ಲಿ ಕೆಲವರು ಏನೋ ಸಹಾಯ ಮಾಡಿದರೆಂದು 'ಥ್ಯಾಂಕ್ಯೂ' ಎಂದು ಬರೆದರೆ 'ದಯವಿಟ್ಟು ಹಾಗೆ ಬರೆಯಬೇಡ, ವೇಸ್ಟ್ ಆಫ್ ಟೈಮ್' ಎಂದು ಹೇಳಿದವರೂ ಇದ್ದಾರೆ, ಇನ್ನು ಕೆಲವರು ನಾನು ಒಂದು ಚಿಕ್ಕ ಥ್ಯಾಂಕ್ಯೂವನ್ನೂ ಬರೆಯಲ್ಲಿಲ್ಲವೆಂದು ನನ್ನನ್ನು ಸತಾಯಿಸಲು, ಅಥವಾ ನನಗೆ ಶಿಷ್ಟಾಚಾರದ ಪಾಠವೊಂದನ್ನು ಕಲಿಸಲು ಅವರೇ 'ಯೂ ಆರ್ ವೆಲ್‌ಕಮ್!' ಎಂದು ಬರೆದುಕೊಂಡಿದ್ದೂ ಇದೆ! ಹೆಚ್ಚಿನ ಪಕ್ಷ, ಯುವ ಜನರು ಶಿಷ್ಟಾಚಾರಕ್ಕೆ ಅಷ್ಟೊಂದು ಗಮನ ಕೊಡದಿದ್ದಂತೆ ಕಂಡುಬಂದರೆ ಅದೇ ಸ್ವಲ್ಪ ವಯಸ್ಸಾದವರಿಗೆ 'ಮಾನ ಮರ್ಯಾದೆ'ಯ ವಿಷಯ ಬಹಳ ಮುಖ್ಯವಾಗುತ್ತದೆ. ನಮ್ಮ ಆಫೀಸಿನಲ್ಲಿ ಕೆಲವರು 'ಗುಡ್ ಮಾರ್ನಿಂಗ್' ಎಂದು ಸಂದೇಶವನ್ನು ಆರಂಭಿಸಿದರೆ ಇನ್ನು ಕೆಲವರು ಬರೀ 'ಜಿ.ಎಮ್.' ಎಂದು ಬರೆಯುತ್ತಾರೆ, ಇಂಥವರುಗಳಿಗೆ ಅವರ ಮನಸ್ಥಿತಿಗೆ ತಕ್ಕಂತೆ ನೀವು ಸ್ಪಂದಿಸದೇ ಹೋದರೆ ದೊಡ್ಡ ಅನಾಹುತವೇನೂ ಆಗದಿದ್ದರೂ ಸ್ವಲ್ಪ ಇರಿಸುಮುರಿಸಾಗುವುದಂತೂ ಗ್ಯಾರಂಟಿ.

ಆದರೆ ಇಂತಹ ಇರಿಸು-ಮುರಿಸುಗಳನ್ನು ಹಗುರಗೊಳಿಸಲೆಂದೇ ಹುಟ್ಟಿದವುಗಳು ಎಂದು ಕರೆಯಬಹುದಾದ ಸ್ಮೈಲೀ ಪ್ಯಾರಂಥೀಸೀಸುಗಳನ್ನು ಕಂಡರೆ ನನಗೆ ಬಹಳ ಇಷ್ಟ, ಅವುಗಳಿಗೆ ಎಂತಹ ಕೆಟ್ಟ ಸನ್ನಿವೇಶವನ್ನೂ ತಿಳಿಮಾಡುವ ತಾಕತ್ತಿದೆ - ಮೆಸ್ಸೇಜಿನಲ್ಲಿ ಏನನ್ನು ಬೇಕಾದರೂ ಬರೆದು ಕೊನೆಗೆ :-) ಎಂದು ಸೇರಿಸಿದರೆ, ಆ ಕಡೆಯಿಂದ ಓದುವ ವ್ಯಕ್ತಿಗೆ ಏನು ಸುಳಿವು ಸಿಗುತ್ತದೆಯೋ ಯಾರಿಗೆ ಗೊತ್ತು, ಒಂದು ಥರಾ ಮಾದಕ ವಸ್ತುಗಳನ್ನು ಸೇವಿಸಿದಾಗ ಅಥವಾ ಮದ್ಯಪಾನ ಮಾಡಿದಾಗ ಆಗುವ ಅನುಭವದ ಹಾಗೆ ನೋವಿದ್ದದ್ದೂ ಹೆಚ್ಚು ನೋವಾಗಿಯೂ ನಲಿವಿದ್ದದ್ದು ಹೆಚ್ಚಿನ ನಗೆಯನ್ನೂ ಉಕ್ಕಿಸುತ್ತದೆ. ಬೇರೇನು ಆಗದಿದ್ದರೂ ಟೇಕ್ ಇಟ್ ಈಸಿ ಎಂದು ಘಂಟಾಘೋಷವಾಗಿ ಈ ಪ್ಯಾರಂಥೀಸೀಸುಗಳು ಅದೆಷ್ಟೋ ವರ್ಷಗಳಿಂದ ಸಾರುತ್ತಲೇ ಇವೆ, ಯಾರು ಯಾರು ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೋ ಬಿಡುತ್ತಾರೋ ನನ್ನಂತೂ ಬಹಳಷ್ಟು ಬಾರಿ ಸಂಕಷ್ಟದಿಂದ ಈ ಸ್ಮೈಲೀ ಮುಖಗಳು ಪಾರು ಮಾಡಿವೆ. ಈ ಚಾಟ್ ವಿಂಡೋಗಳಿಂದ ನನ್ನ ಓದುವಿಕೆಯ ಪರಿಧಿ, ಪದಗಳ ವ್ಯಾಪ್ತಿ ವಿಸ್ತಾರವಾಗಿದೆ, ಯಾರು ಎಷ್ಟೇ ಕೆಟ್ಟ ಸ್ಪೆಲ್ಲಿಂಗನ್ನು ಉಪಯೋಗಿಸಿಬರೆದರೂ, ಯಾರು ಎಷ್ಟೇ ಚಿಕ್ಕ ಅಥವಾ ಚೊಕ್ಕದಾಗಿ ಬರೆದರೂ ಹಾಗೆ ಬರೆದದ್ದನ್ನು ಆಕಡೆಯಿರುವ ವ್ಯಕ್ತಿ ಅರ್ಥ ಮಾಡಿಕೊಂಡೇ ತೀರುತ್ತಾನೆ ಅನ್ನೋದು ಎಲ್ಲೂ ಬರೆಯದ ಸತ್ಯವೆಂದು ಎಲ್ಲರೂ ನಂಬಿಕೊಂಡಿರುವುದರಿಂದ ಆ ವಿಂಡೋಗಳಲ್ಲಿ ಬಂದಂತಹ ಸಂದೇಶಗಳನ್ನೇ ಹೇಗಾದರೂ ಮಾಡಿ ಅರ್ಥಮಾಡಿಕೊಳ್ಳುವ ಸಂಕಷ್ಟಕ್ಕೆ ಬೀಳುತ್ತೇನೇ ವಿನಾ 'ಅರ್ಥವಾಗಲಿಲ್ಲ, ಮತ್ತೊಮ್ಮೆ ಹೇಳಿ' ಎಂದಿದ್ದು ಕಡಿಮೆ.

ಹೀಗೆ ಈ ಚಾಟ್ ವಿಂಡೋಗಳು ತಮ್ಮಲ್ಲಿನ ವಿಸೃತವಾದ ವರ್ಚುವಲ್ ಪ್ರಪಂಚದಲ್ಲೇ ಹಲವಾರು ರೀತಿಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ನನಗೆ ಬೇಕಾದಷ್ಟು ಜನ ಅಪ್ತರನ್ನು ಹತ್ತಿರ ತಂದುಕೊಟ್ಟಿವೆ. ಕೆಲವೊಂದು ಹೀಗೆ ಹುಟ್ಟಿ ಹಾಗೆ ಸಾಯುತ್ತವೆ, ಇನ್ನು ಕೆಲವು ಎಂದಿಗೂ ಜೀವಂತವಾಗಿರುತ್ತವೆ. ಆ ಕಡೆಯಿರುವ ವ್ಯಕ್ತಿ ಹೇಗೇ ಇರಲಿ ಅವರು ಬಳಸುವ ಸಾಧನಗಳಲ್ಲಿ ಹೆಚ್ಚು ವ್ಯತ್ಯಾಸವಿರದಿದ್ದುದರಿಂದ ಒಂದು ಕಡೆ ಸಮಾನತೆಯ ವಕ್ತಾರನಂತೆ ಕಾಣಿಸಿಕೊಳ್ಳುವ ಈ ಚಾಟ್ ವಿಂಡೋಗಳು ಮೇಲು ನೋಟಕ್ಕೆ ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ಹೇಳಿಬಿಡಬಹುದಾದ ವೇದಿಕೆಯನ್ನು ಸೃಷ್ಟಿಸಿದಂತೆ ಕಂಡುಬಂದರೂ ಎಷ್ಟೇ ಮಾಡಿದರೂ ಪದಗಳ ಬಳಕೆಯಲ್ಲೇ ಸೆಣೆಸಬೇಕಾದ ಮಿತಿಯಲ್ಲಿ ಒಂದು ಅವ್ಯಕ್ತವಾದ ಚೌಕಟ್ಟನ್ನು ಹಾಕಿಕೊಂಡುಬಿಡುತ್ತವೆ. ಈ ಚಾಟ್ ಮೆಸ್ಸೇಜುಗಳಲ್ಲಿ ಬಂದು ಹೋಗಬಹುದಾದ ಹಲವಾರು ಸಂದೇಶಗಳೇನೇ ಇದ್ದರೂ ಯಾರಾದರೊಬ್ಬರನ್ನು ಮೊಟ್ಟ ಮೊದಲಬಾರಿಗೆ ಭೇಟಿಯಾಗುವ ಅಥವಾ ಕೊನೆಯಬಾರಿಗೆ ನೋಡಿ ಬೀಳ್ಕೊಡುವ ಸಂವೇದನೆಗಳಲ್ಲಿ ಕೆಟ್ಟದಾಗಿ ಸೋತುಬಿಡುತ್ತವೆ.

ಪ್ರತಿ ದಿನವೂ ಒಂದಲ್ಲ ಒಂದು ಚಾಟ್ ಮೆಸ್ಸೇಜು ಬಂದು ವಿಂಡೋ ಟಾಸ್ಕ್‌ಬಾರ್‌ನಲ್ಲಿ ಬ್ಲಿಂಕ್ ಆಗುತ್ತಲೇ ಇರುವುದು ಈ ವಿಂಡೋನಲ್ಲೇ ಹುಟ್ಟಿ ಆ ಕ್ಷಣದಲ್ಲೇ ಸಾಯಬಹುದಾದ ಸಂಬಂಧದ ಪಲ್ಸ್‌ನ ಹಾಗೆ ಕಂಡುಬರುತ್ತದೆ, ಆದರೆ ಆಗಾಗೆ ಸತ್ತು ಮತ್ತೆ ಹುಟ್ಟುವ ಅವೇ ಸಂಬಂಧಗಳು ನಿಜವಾಗಿಯೂ ಜೀವಂತವಾಗಿರಬೇಕೆಂದು ಶ್ರಮಿಸುವ ನನ್ನಂತಹವರಿಗೆ ಕ್ಷಣ-ಕ್ಷಣಕ್ಕೂ ಬದಲಾಗುವ ಒಂದು ದೊಡ್ಡ ಸವಾಲನ್ನು ಒಡ್ಡುತ್ತವೆ - ಈ ಸವಾಲಿನಲ್ಲಿ ಭಾಗವಹಿಸುವುದು ಹಾಗೂ ಜಯಿಸುವುದು ದಿನನಿತ್ಯದ ಇತರ ಕೆಲಸಗಳಂತೆ ಮಾಮೂಲಿಯಾಗಿಬಿಟ್ಟಿವೆ!

Wednesday, June 07, 2006

ಗಡಿಯಾರ ರಹಿತ ದಿನಗಳ ಮುನ್ನೋಟ

ನಮ್ಮನೇಲಿರೋ ಗಡಿಯಾರಗಳಿಗೆಲ್ಲಾ ಏನೋ ಖಾಯಿಲೆ ಬಂದ ಹಾಗೆ ಒಂದರ ಮೇಲೊಂದು ನಿಲ್ಲುವುದನ್ನು ನೋಡಿದ ನನಗೆ ಖಾಯಿಲೆ ಬಂದಿರುವುದು ಗಡಿಯಾರಗಳಿಗೋ ಅಥವಾ ನನಗೋ ಎಂದು ಎಷ್ಟೋ ಬಾರಿ ಸಂಶಯವಾಗಿದೆ. ಆದರೂ ಕೈ ಗಡಿಯಾರ, ಗೋಡೆ ಗಡಿಯಾರ ಎಂದೆಲ್ಲ ಗುಡಿಸಿ ಲೆಕ್ಕ ಹಾಕಿದರೆ ಒಟ್ಟು ಒಂಭತ್ತು ಗಡಿಯಾರಗಳಿರುವ ನಮ್ಮನೆಯಲ್ಲಿ ಈ ಕ್ಷಣದಲ್ಲಿ ನೋಡಿದರೆ ಯಾವೊಂದೂ ಸರಿಯಾಗಿ ನಡೆಯುತ್ತಿಲ್ಲ, ಹೆಚ್ಚಿನವು ಬ್ಯಾಟರಿ ಕಡಿಮೆಯಾಗಿ ನಿಂತುಹೋಗಿದ್ದರೆ ಇನ್ನು ಕೆಲವು ಕಾವು ಕೊಡುತ್ತಾ ನಿದ್ದೆ ಮಾಡುತ್ತಿರುವ ಕೋಳಿಯ ಹಾಗೆ ಈಗೋ ಆಗೋ ನಿಂತು ಬಿಡುವ ಸೂಚನೆಗಳನ್ನು ಕೊಡುತ್ತಿವೆ.

ನನ್ನ ಬಳಿ ಇರುವವು ನಾಲ್ಕು ಕೈ ಗಡಿಯಾರಗಳು, ಅವುಗಳಲ್ಲಿ ಒಂದೊದಕ್ಕೆ ಒಂದು ಕಥೆಯನ್ನು ಹೇಳಬಲ್ಲೆನಾದರೂ ನಾನು ಮದುವೆಯಾದಾಗ ಕೊಂಡ ಟೈಮೆಕ್ಸ್ ಗಡಿಯಾರದ ಬಗ್ಗೆ ಹೇಳದಿದ್ದರೆ ನನಗಂತೂ ಸಮಾಧಾನವೇ ಆಗೋದಿಲ್ಲ. ೧೮ ಕ್ಯಾರೆಟಿನ ಬಂಗಾರದಿಂದ ಮಾಡಿದ ಈ ಗಡಿಯಾರಕ್ಕೆ ಹನ್ನೊಂದು ಸಾವಿರದ ನಾನ್ನೂರು ರೂಪಾಯಿಗಳನ್ನು ಕೊಟ್ಟು, ಅದಕ್ಕೆ ಹಾಕಿದ್ದ ಚರ್ಮದ ಸ್ಟ್ರ್ಯ್ರ್‍ಆಪನ್ನು ತೆಗೆದು ಬಂಗಾರದ್ದೇ ಯಾಕೆ ಹಾಕಿಸಬಾರದು ಎಂದು ಯಾರೋ ಹೇಳಿದರೆಂದು ಅದಕ್ಕಿನ್ನಷ್ಟು ದುಡ್ಡು ಸುರಿದದ್ದಾಯ್ತು, ಆದರೆ ತೆಗೆದುಕೊಂಡು ಐದು ವರ್ಷದ ಮೇಲಾದರೂ ಐವತ್ತು ದಿನಗಳ ಮಟ್ಟಿಗೂ ಈ ಗಡಿಯಾರವನ್ನು ಕಟ್ಟಿಕೊಳ್ಳಲೇ ಇಲ್ಲ. ಅದನ್ನು ಖರೀದಿಸಿ ಇಲ್ಲಿಗೆ ಬಂದ ಮೇಲೆ ಬ್ಯಾಟರಿ ಕಡಿಮೆಯಾಗಿ ನಿಂತು ಹೋಯಿತು, ಮುಂದೆ ಯಾವಾಗಲಾದರೂ ಬ್ಯಾಟರಿ ಹಾಕಿಸೋಣವೆಂದು ದಿನಗಳನ್ನು ತಳ್ಳೀ-ತಳ್ಳಿ ಯಾವತ್ತೋ ಒಂದು ದಿನ ಬ್ಯಾಟರಿಯನ್ನು ಹಾಕಿಸಿದರೂ ಸ್ವಲ್ಪ ದಿನ ಕಟ್ಟುವುದರಲ್ಲಿಯೇ ಇದ್ದಕ್ಕಿದ್ದ ಹಾಗೆ ಅದರ ನಿಮಿಷದ ಮುಳ್ಳು ಮುರಿದು ಡೊಂಕಾಗಿ ವಾಚಿನಲ್ಲಿಯೇ ಬಿದ್ದು ಹೋಗುವುದೇ? ನನಗಂತೂ ಆ ರೀತಿ ಹೇಗೆ/ಏಕಾಯಿತು ಎಂಬುದು ಇನ್ನೂ ಅರ್ಥವಾಗಿಲ್ಲ. ಸಫ್ಪೈರ್ ಕ್ರಿಸ್ಟಲ್‌ನಿಂದ ಮಾಡಿದ ಗಾಜಿಗಾಗಲಿ, ಲೋಹದ ಸುತ್ತಲಿನ ಕವಚಕ್ಕಾಗಲೀ ಎಲ್ಲೂ ಒಂದು ಗೆರೆ ಸಹ ಬೀಳದೇ ಅದರ ಒಳಗಿನ ಮುಳ್ಳು ಹೇಗೆ ಮುರಿಯಿತು ಎನ್ನುವುದು ಇನ್ನೂ ಸೋಜಿಗದ ವಿಷಯವೇ. ಇಂಡಿಯಾಕ್ಕೆ ತೆಗೆದುಕೊಂಡು ಹೋಗಿ ತೋರಿಸಿದರಾಯಿತು ಎಂದು ಕೊಂಡಿದ್ದರಿಂದ ಅದು ಎಲ್ಲೋ ಒಂದು ಮೂಲೆಯಲ್ಲಿ ಬಿದ್ದು ಧೂಳು ತಿನ್ನುತ್ತಿದೆ - ಅಪರೂಪಕ್ಕೊಮ್ಮೆ ನನ್ನ ದರ್ಶನವಾದಾಗಲೆಲ್ಲ 'ಏನು, ಊರಿಗೆ ಹೋಗೋಲ್ವಾ?' ಎಂದು ಪ್ರಶ್ನೆ ಹಾಕಿದವರ ಥರ ಕಂಡುಬರುತ್ತದೆ.

ಇನ್ನುಳಿದ ಮೂರು ಗಡಿಯಾರಗಳು ಅಷ್ಟಕಷ್ಟೇ - ಅವೂ ಕೂಡ ಬ್ಯಾಟರಿ ಸೊರಗಿ ತಮ್ಮ ಕೆಲಸವನ್ನು ಮಾಡುವುದಿಲ್ಲ ಎಂದು ಶಪಥ ತೊಟ್ಟುಕೊಂಡು ಬಹಳ ದಿನಗಳಾದವು. ವಾರಾಂತ್ಯದಲ್ಲಿ ಮಾಡೋಣವೆಂದು ಬಹಳ ದಿನಗಳಿಂದ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡು ಅಲೆದೆ, ಊಹೂ, ಎಲ್ಲೂ ನನ್ನ ಕಣ್ಣಿಗೆ ಬ್ಯಾಟರಿ ಬದಲಾಯಿಸುವ ಒಂದು ಅಂಗಡಿಯೂ ಕಾಣಲಿಲ್ಲ, ಮೊನ್ನೆ ಶನಿವಾರ ಐದಾರು ಅಂಗಡಿಗಳ ಬಾಗಿಲನ್ನು ಹೊಕ್ಕು ಕೇಳಿ ನೋಡಿದೆ, ಯಾರೂ ಬ್ಯಾಟರಿ ಬದಲಾಯಿಸುತ್ತೇವೆ ಎಂದು ಒಪ್ಪಿಕೊಳ್ಳಲಿಲ್ಲ. ಇನ್ನು ನನಗೆ ಗೊತ್ತಿರುವ ಒಂದು ಮಾಲ್‌ನ ಒಂದು ಅಂಗಡಿಯಲ್ಲಿ ಬದಲಾಯಿಸುತ್ತಾರೆ ಅಲ್ಲಿಗೆ ಹೋಗಿ ಬರಲು ಕನಿಷ್ಠ ಪಕ್ಷ ಒಂದು ಘಂಟೆಯಾದರೂ ಬೇಕು, ಅಲ್ಲದೇ ಇಪ್ಪತ್ತೈದು ಡಾಲರಿನ ಆಸು-ಪಾಸಿರುವ ಗಡಿಯಾರಕ್ಕೆ ಏಳು ಡಾಲರನ್ನು ಕೊಟ್ಟು ಬ್ಯಾಟರಿ ಬದಲಾಯಿಸಲು ಮನಸ್ಸು ಒಮ್ಮೆ ಹಿಂದೆ ಮುಂದೆ ನೋಡುತ್ತದೆ. ಈ ಕಡೆ ಅವುಗಳನ್ನು ಎಸೆದು ಹೊಸತನ್ನು ಕೊಳ್ಳುವುದೂ ಇಲ್ಲ, ಅವುಗಳಿಗೆ ಮತ್ತೆ ಚಲನೆಯನ್ನು ಮೂಡಿಸಲು ಬ್ಯಾಟರಿಯನ್ನು ಹಾಕಿಸಲೂ ಆಗುತ್ತಿಲ್ಲ, ಇಂಥಾ ತುಂಬಾ ಸಣ್ಣ ವಿಷಯವೂ 'ಕೈಯಲ್ಲಿ ಗಡಿಯಾರವಿಲ್ಲದವನ' ಹಣೆಬರಹವನ್ನು ಜಗಜ್ಜಾಹೀರು ಮಾಡಿಬಿಡುತ್ತೇವೆ ಎಂದು ಹಠ ತೊಟ್ಟವರಂತೆ ಕಾಡುತ್ತಿವೆ. ಬರೀ ನನ್ನ ಕೈ ಗಡಿಯಾರಗಳ ಕಥೆಯೇ ಹೀಗೆ ಎಂದು ಕೊಂಡರೆ ನನ್ನ ಹೆಂಡತಿಯ ಗಡಿಯಾರಗಳೇನು ಬೇರೆಯಲ್ಲ, ಅವುಗಳದೂ ಇದೇ ಕಥೆ, ನನ್ನ ಕಣ್ಣಿಗೆ ಕಾಣುವಂತೆ ಅವಳ ಮೂರು ಗಡಿಯಾರಗಳು ಮೋಕ್ಷದ ದಾರಿಯನ್ನು ಕಾಯುತ್ತಾ ಬಿದ್ದುಕೊಂಡಿರುವುದು ನನಗೆ ಚೆನ್ನಾಗಿ ಗೊತ್ತು.

ಏಳು ಕೈಗಡಿಯಾರಗಳ ಕಥೆ ಹೀಗಾದರೆ ಇನ್ನು ಗೋಡೆ ಗಡಿಯಾರಗಳಿಗೇನು ಸಬೂಬು ಹೇಳುತ್ತೇನೆ ಎಂದು ಕುತೂಹಲವಿದ್ದಿರಬಹುದು. ಅವುಗಳ ಕಥೆಯೂ ಅಷ್ಟೇ, ಬ್ಯಾಟರಿ ಹೀನತೆ. ಆದರೆ ಅದರ ಹಿಂದೆ ಒಂದು ಸಣ್ಣ ಕಥೆಯಿದೆ. ಕೆಲವು ತಿಂಗಳ ಹಿಂದೆ ನಾನು ರಜಾ ಹಾಕಿ ಮನೆಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆ ಚೈನಾ ಟೌನಿಗೆ ಹೋಗಿ ಬಂದರೆ ಹೇಗೆ ಎಂದುಕೊಂಡು ಹೋಗಿ ಬಂದಿದ್ದೆ. ಅಲ್ಲಿ ಅತಿಕಡಿಮೆ ಬೆಲೆಗೆ ಸಿಗುವ ಅನೇಕ ಪದಾರ್ಥಗಳನ್ನು ಖರೀದಿ ಮಾಡಿಕೊಂಡು ನ್ಯೂ ಯಾರ್ಕಿನ ಡೌನ್ ಟೌನ್‌ಗೆ ಕೆಲವೇ ಮೈಲಿಗಳ ದೂರದಲ್ಲಿ ನಾಲ್ಕು ಡಾಲರ್ ಕೊಟ್ಟು ಮನಪೂರ್ತಿ ಅದೇನೇನೋ ಚೈನೀಸ್ ಊಟವನ್ನು ಮಾಡಿಕೊಂಡು ಕಂಡ ಕಂಡ ಅಂಗಡಿಗಳಿಗೆ 'ನಾಳೆ ಬಂದು ಕದ್ದುಕೊಂಡು ಹೋಗುವವರ ಹಾಗೆ' ಭೇಟಿಕೊಟ್ಟು ಏನೇನೆಲ್ಲ ಕೊಳ್ಳುತ್ತಿರುವಾಗ ಒಂದು ಡಾಲರ್‌ಗೆ ಹದಿನಾರು ಬ್ಯಾಟರಿ ಇರುವ ಒಂದು ಪ್ಯಾಕೇಟ್ ನನ್ನನ್ನು ಆಕರ್ಷಿಸಿತು. ಹೊರಗಡೆ ಅಂಗಡಿಯಲ್ಲಿ ಏನಿಲ್ಲವೆಂದರೂ ಅದಕ್ಕೆ ಹತ್ತು ಡಾಲರ್‌ಗಳಾದರೂ ಇರುವಾಗ ಒಂದೇ ಒಂದು ಡಾಲರ್‌ಗೆ ಹದಿನಾರು ಬ್ಯಾಟರಿ ಸೆಲ್‌ಗಳೇ! ನಂಬುವುದಕ್ಕೆ ಕಷ್ಟವಾದರೂ ತಂದೆ, ಕೊನೆಗೆ ಬೇರೆ ಯಾವುದಕ್ಕೆ ಹಾಕಲು ಆಗದಿದ್ದರೂ ಮನೆಯಲ್ಲಿದ್ದ ನಾಲ್ಕು ರಿಮೋಟ್ ಕಂಟ್ರ್‍ಓಲ್‌ಗಳಿಗಾದರೂ ಹಾಕಲು ಬರುತ್ತದೆಯೆಂದು ಅಂದುಕೊಂಡಿದ್ದವನಿಗೆ ಆಶ್ಚರ್ಯಕಾದಿತ್ತು. ಆದಿನ ಮೂರನೇ ರಘು ಕೊಟ್ಟ ಗೋಡೆ ಗಡಿಯಾರಕ್ಕೆ ಬ್ಯಾಟರಿ ಬದಲಾಯಿಸಿದ್ದೆ, ಅಂದಿನಿಂದ ಇಂದಿನವರೆಗೆ, ಇನ್ನು ಒಂದು ತಿಂಗಳೂ ಆಗಿಲ್ಲ ಆಗಲೇ ಎರಡು ಬಾರಿ ಬ್ಯಾಟರಿಗಳನ್ನು ಬದಲಾಯಿಸಿದ್ದೇನೆ! ಗಡಿಯಾರದಲ್ಲಿ ಏನೂ ಸಮಸ್ಯೆ ಇಲ್ಲ, ಇರೋದು ಏನಿದ್ದರೂ ಡಾಲರ್‌ಗೆ ಹದಿನಾರರಂತೆ ತಂದ ಬ್ಯಾಟರಿಯಲ್ಲಿಯೇ. ಈ ಕನಿಷ್ಟ ಬ್ಯಾಟರಿಗಳು ನನಗೆ ಎಷ್ಟು ತೊಂದರೆ ಕೊಟ್ಟಿವೆಯೆಂದರೆ ನಾನು ಯಾವಾಗಲೂ ರಘುವಿನ ಗಡಿಯಾರವನ್ನು ನೋಡಿ ಸಮಯ ಹೇಳುವವನು ಈಗ ಅದನ್ನು ನೋಡುವುದೇ ಇಲ್ಲ, ಅದರ ಬದಲಿಗೆ ಕಾಮ್‌ಕ್ಯಾಸ್ಟಿನ ಡಿವಿಆರ್ ಅನ್ನು ನೋಡುತ್ತೇನೆ. ಅಂದರೆ ತಲೆ ಎತ್ತಿ ಗಡಿಯಾರ ನೋಡುವ ಅಭ್ಯಾಸವನ್ನು ಬದಲಾಯಿಸಲು ಹಾಗೂ ತಲೆ ತಗ್ಗಿಸಿ ಸಮಯವನ್ನು ನೋಡುವ ಅಭ್ಯಾಸವನ್ನು ಹುಟ್ಟಿ ಹಾಕಿದ್ದಕ್ಕೆ ನಾನು ಈ ಚೈನಾ ಟೌನ್‌ನ ಬ್ಯಾಟರಿಗಳನ್ನು ಪ್ರಶಂಸಿಸುತ್ತೇನೆ, ಏಕೆಂದರೆ ಇಂತಹ ಕಳಪೆ ಗುಣಮಟ್ಟದ ಬ್ಯಾಟರಿಗಳನ್ನು ತಂದಿದ್ದಕ್ಕೆ ಬಯ್ಯಲು ಬೇರೆ ಯಾರೂ ಸಿಗದಿದ್ದುದರಿಂದ!

***

ನಾನು ಒಂದು ಕಾಲದಲ್ಲಿ ಸಮಯಕ್ಕೇ ಹುಟ್ಟಿದವರ ಹಾಗೆ ಆಡುತ್ತಿದ್ದೆ, ಎಲ್ಲಿಗೆ ಹೋಗುವುದಾದರೂ ಡಾಟ್ ಮೇಲೆ ಸರಿಯಾಗಿ ಹೋಗದಿದ್ದರೆ ಸಂಕಟವಾಗುತ್ತಿತ್ತು. ಆಗೆಲ್ಲ ನನ್ನ ಕೈಯಲ್ಲಿ ಮೂವತ್ತೈದು ರೂಪಾಯಿಗಳ ಎಲ್ಕೆಕ್ಟ್ರಾನಿಕ್ ಗಡಿಯಾರಗಳು ಇದ್ದುದೇ ಹೆಚ್ಚು. ಒಂದು ದಿನ ಸೊರಬದಿಂದ ಸಾಗರಕ್ಕೆ ಮಧ್ಯಾಹ್ನ ಹನ್ನೆರಡೂವರೆಗೆ ಹೊರಡೋ ಮಲ್ಲಿಕಾರ್ಜುನ ಬಸ್ಸಿನಲ್ಲಿ ೨೯ ಕಿ.ಮೀ.ಗಳ ದೂರವನ್ನು ೫೧ ನಿಮಿಷಗಳಲ್ಲಿ ತಂದು ಮುಟ್ಟಿಸಿದ್ದಕ್ಕಾಗಿ ಬಸ್ಸಿನ ಕಂಡಕ್ಟರ್ ಶಿವಪ್ರಸಾದ ಹಾಗೂ ಟಿಕೇಟ್ ಏಜೆಂಟ್ ಸಿದ್ದಪ್ಪನ ಹತ್ತಿರ ಜಗಳವಾಡಿದ್ದೆ. '೨೯ ಕಿಲೋ ಮೀಟರ್‌ಗೆ ಐವತ್ತೊಂದು ನಿಮಿಷ ತಗೊಂತೀರಲ್‌ರೀ, ಈ ಬಸ್ಸಿನ ಬದಲಿಗೆ ಓಡಿಕೊಂಡು ಬರಬಹುದಿತ್ತು!' ಎಂದು ಸಿಟ್ಟು ಮಾಡಿಕೊಂಡ ಮುಖವನ್ನು ತೊಟ್ಟುಕೊಂಡಿದ್ದೆ. ಅದೇ ಇಲ್ಲಿ ಈ ಊರಿನಲ್ಲಿ ಕೆಲವೊಮ್ಮೆ ನಾನು ಹತ್ತುವ ಸಿಟಿ ಬಸ್ಸುಗಳು, ಮೀನು ಮಾರೋರ ಸೈಕಲ್ಲಿನ ಹಾಗೆ ಅಲ್ಲಿ ನಿಂತು ಇಲ್ಲಿ ನಿಂತು ನಮ್ಮ ಮನೆಯ ಬಸ್ ಸ್ಟಾಪ್‌ನಿಂದ ಕೇವಲ ನಾಲ್ಕೇ ಮೈಲು ದೂರವಿರುವ ರೈಲು ನಿಲ್ದಾಣಕ್ಕೆ ಹೋಗಲು ಕೆಲವೊಮ್ಮೆ ಇಪ್ಪತ್ತೈದು ನಿಮಿಷಗಳ ಮೇಲೆ ತೆಗೆದುಕೊಂಡರೂ ನಾನು ಜಪ್ಪಯ್ಯ ಎನ್ನುವುದಿಲ್ಲ, ಒಂದು ಬಿಸಿಯುಸಿರನ್ನೂ ಬಿಡುವುದಿಲ್ಲ, ಬದಲಿಗೆ ಪ್ರಪಂಚದ ಯಾವುದೋ ಭಾರವೊಂದು ನನ್ನ ತಲೆಯನ್ನು ಸುತ್ತಿಕೊಂಡವನ ಹಾಗೆ ಮುಖ ಮಾಡಿಕೊಂಡು ಏನನ್ನೋ ಓದಿಕೊಳ್ಳುವ ಹಾಗೆ ಕುಳಿತಲ್ಲೇ ಚಡಪಡಿಸುತ್ತಿರುತ್ತೇನೆ.

ನನ್ನ ಡಾಟ್ ಮೇಲೆ ಹೋಗುವ ಅಭ್ಯಾಸ ಇಲ್ಲಿಗೆ ಬಂದ ಮೇಲೂ ಕೆಲವು ವರ್ಷ ಮುಂದುವರೆದಿತ್ತು, ಯಾವುದಾದರೂ ಡಾಕ್ಟರ್ ಆಫೀಸಿಗೆ ಹೋದರೆ, ಅಥವಾ ಕಾರನ್ನು ಸರ್ವೀಸ್ ಮಾಡಿಸುವುದಕ್ಕೋಸ್ಕರ ತೆಗೆದುಕೊಂಡು ಹೋದರೆ ಅಲ್ಲೂ ಸಮಯಕ್ಕೆ ಸರಿಯಾಗಿ ಹೋಗಬೇಕು ಎಂದು ಛಲ ತೊಟ್ಟುಕೊಂಡಿರುತ್ತಿದ್ದೆ. ಆದರೆ ಡಾಕ್ಟರ್ ಆಫೀಸಿನಲ್ಲಿ ದೊಡ್ಡ ರೂಮಿನಿಂದ ಚಿಕ್ಕ ರೂಮೂ, ಚಿಕ್ಕ ರೂಮಿನಿಂದ ಮತ್ತೊಂದು ರೂಮೂ ಎಂದು ಅಲ್ಲಲ್ಲಿ ಕೂರಿಸಿ ಕಾಯಿಸುತ್ತಿದ್ದುದ್ದನ್ನು ನೋಡಿ ಹಾಗೂ ಮೆಕ್ಯಾನಿಕ್‌ಗಳು ಡಾಟ್ ಮೇಲೆ ಬಂದವನಿಗೆ ಯಾವುದೇ ವಿಶೇಷ ಮಣೆಯನ್ನು ಹಾಕದಿರುವುದನ್ನು ಕಂಡು ಕೊನೆಗೆ ನಾನೂ ಅಮೇರಿಕನ್ ಆಗಿ ಹೋದೆ! ಅಂದಿನಿಂದ ನಾನು ಡಾಟ್ ಮೇಲೆ ಹೋಗಲಿ ಬಿಡಲಿ ನನಗಂತೂ ಕಸಿವಿಸಿ ಆಗಿದ್ದಿಲ್ಲ, ಎಲ್ಲಾದರೂ ಯಾರಾದರೂ ಏಕೆ ತಡವೆಂದು ಕೇಳಿದರೆ ಹುಡುಕೋದಕ್ಕೆ ನೆಪಗಳೇನು ಸಾವಿರಾರು ಸಿಗುತ್ತವಾದ್ದರಿಂದ ನನ್ನ ಡಾಟ್ ಸಂಸ್ಕೃತಿ ಹೋಗುವುದಿರಲಿ ಇತ್ತೀಚೆಗೆ ಗಡಿಯಾರ ರಹಿತನಾಗಿ ಬದುಕುವ ಧೈರ್ಯವೂ ಸಿದ್ಧಿಸಿಬಿಟ್ಟಿದೆ!

***

ಸಮಯ ಪರಿಪಾಲನೆ ಅನ್ನೋದು ಒಂದು ರೀತಿಯ ರೋಗವಿದ್ದ ಹಾಗೆ, ಆ ರೋಗಕ್ಕೆ ಗುರಿಯಾದವರನ್ನು ಸಮಾಧಾನ ಮಾಡುವುದು ಬಹಳ ಕಷ್ಟ. ಆನ್ ಟೈಮ್ ಮೆಂಟಾಲಿಟಿ ಹೋಗಿ ವೆನ್‌ಎವರ್ ಟೈಮ್ ಮೆಂಟಾಲಿಟಿ ಬಂದರೆ ಅದರಂತ ಸ್ವರ್ಗ ಸುಖ ಇನ್ನೊಂದಿಲ್ಲ - ಈ ಪ್ರಪಂಚದಲ್ಲಿ ಎಷ್ಟೋ ಜನ ಕೇರ್ ಮಾಡದ ಸಮಯಕ್ಕೆ ನಾನಾದರೂ ಏಕೆ ತಲೆ ಕೆಡಿಸಿಕೊಳ್ಳಬೇಕು? ಎಷ್ಟೊಂದು ವರ್ಷ ಡಾಟ್ ಮೇಲೆ ಬದುಕಿದ್ದೇನೆ ಎಂದು ಯಾರೂ ಏನು ಸನ್ಮಾನವನ್ನು ಮಾಡೋದಿಲ್ಲವಲ್ಲ.

ಸಮಯ ಪರಿಪಾಲನೆಯನ್ನು ಮಾಡಲು ಹೆಣಗಬೇಕಾದವನು ನಾನೊಬ್ಬನೇ, ಆದರೆ ನನ್ನ ವ್ರತವನ್ನು ಹಾಳು ಮಾಡಲು ಹಲವಾರು ತಂತ್ರ, ಪ್ರತಿ ತಂತ್ರಗಳು ಯಾವಾಗಲೂ ಕಾರ್ಯರೂಪಿಯಾಗಿರೋದರಿಂದ ಹೆಚ್ಚಿನ ಪಾಲು ಸೋಲು ನನ್ನದೇ ಆಗುತ್ತಿತ್ತು, ನನ್ನ ಎದುರಾಳಿಗಳ ಜೊತೆಯಲ್ಲಿ ರಾಜಿ ಮಾಡಿಕೊಂಡಿದ್ದರಿಂದ ಮೇಲ್ನೋಟಕ್ಕೆ ಬದುಕೇನೋ ಸುಗಮವೆನಿಸಿದಂತೆ ಕಂಡುಬಂದರೂ ರಾಜಿ ಮಾಡಿಕೊಂಡ ಫಲದ ಪರಿಣಾಮವಾಗಿ ಸಮಸ್ಯೆ ಇನ್ನೂ ಸಮಸ್ಯೆಯಾಗೇ ಉಳಿದಿದೆ!

Tuesday, June 06, 2006

ಮಾಡುವ ಕೆಲಸವೂ ಹೋಗಿ ಇಮಿಗ್ರೇಷನ್ ಸ್ಟೇಟಸ್ಸೂ ಹೋದರೆ?

ದಿನ ನನ್ನ ಸಹೋದ್ಯೋಗಿ ಮಿತ್ರರಿಬ್ಬರ ಜೊತೆ ಚಾಟ್ ಮಾಡುತ್ತಿದ್ದಾಗ ಇದೇ ಸೋಮವಾರ ಬಂದ, ಪ್ರಸ್ತುತ ಹಣಕಾಸಿನ ಸನ್ನಿವೇಶ ಹಾಗೂ ಕಾಸ್ಟ್ ಕಟ್ಟಿಂಗ್‌ಗಳನ್ನು ಮುಖ್ಯವಾಗಿ ಕಾರಣವಾಗಿ ನೀಡಿ ಮುಂಬರುವ ಲೇ ಆಫ್ ಅನ್ನು ಕುರಿತ ಮೇಲಿನವರೊಬ್ಬರ ಇ-ಮೇಲ್ ಬಗ್ಗೆ ಚರ್ಚಿಸುತ್ತಿದ್ದೆ. ಅವರಿಬ್ಬರೂ ಚಾಟ್ ವಿಂಡೋನಲ್ಲಿ ತಮ್ಮ ಭಾವನೆಗಳನ್ನೇನೂ ಹೇಳಿಕೊಳ್ಳದಿದ್ದರೂ ಇನ್ನೂ ಗ್ರೀನ್‌ಕಾರ್ಡ್‌ನ ಪ್ರೋಸೆಸ್ಸಿಂಗ್ ಗೊಂದಲದಲ್ಲಿ ಸಿಕ್ಕು ಪ್ರತಿವರ್ಷವೂ h1B ವೀಸಾವನ್ನು ಅವಧಿ ವಿಸ್ತರಿಸಿಕೊಳ್ಳುತ್ತಿರುವ ಅವರ ಕಷ್ಟಗಳು ಸ್ಪಷ್ಟವಾಗಿ ಗೋಚರಿಸತೊಡಗಿತು. ಅವರಿಗೆ ಬೇಕಾಗಿಯೋ ಬೇಡವಾಗಿಯೋ ಇಲ್ಲಿರಲೇ ಬೇಕಾದ ಸಂದರ್ಭವನ್ನು ನೆನೆದು, ಒಂದುವೇಳೆ ಈ ಲೇ ಆಫ್‌ನಲ್ಲಿ ಅವರೇದೇನಾದರೂ ಕೆಲಸ ಹೋದರೆ ಮುಂದೆ ಏನು ಮಾಡುತ್ತಾರೋ ಎಂದೆನಿಸಿ ಸ್ವಲ್ಪ ಬೇಸರವೂ ಆಯಿತು.


೨೦೦೧ ರಲ್ಲಿ ಅಮೇರಿಕಕ್ಕೆ ಭಯೋತ್ಪಾದಕರು ಧಾಳಿ ಮಾಡುವ ಮುನ್ನ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ೯೦ ರ ದಶಕದ ಮಧ್ಯದ ತರುವಾಯ ಅನೇಕಾನೇಕರು ನನ್ನ ಹಾಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾಗೆ ಒಂದಲ್ಲ ಒಂದು ವೀಸಾದಲ್ಲಿ (ಹೆಚ್ಚಿನವರು h1B ವೀಸಾದಲ್ಲಿ) ಇಲ್ಲಿಗೆ ಬಂದಿದ್ದೆವು. ಹೀಗೆ ಬಂದವರಲ್ಲಿ ಕೆಲವರು ೨೦೦೦ ಇಸವಿಯ ಹೊತ್ತಿಗೆ ಶುರುವಾದ ಡೌನ್ ಟೈಮ್‌ನ್ನು ನೆಪಮಾಡಿಕೊಂಡು ಭಾರತಕ್ಕೆ ಹೊರಟುಹೋದರು, ಇನ್ನು ಕೆಲವರು ಒಂದಲ್ಲ ಒಂದರಲ್ಲಿ ಕೆಲಸ ಮುಂದುವರೆಸಿಕೊಂಡು (ನನ್ನ ಹಾಗೆ) ಇಲ್ಲೇ ಉಳಿದುಕೊಂಡರು, ಮತ್ತೆ ನನಗೆ ಗೊತ್ತಿರುವಂತೆ ಸ್ವಲ್ಪ ಜನ ಆರು ವರ್ಷಗಳ h1B ವೀಸಾದ ಅವಧಿಯ ನಂತರ ಹಿಂತಿರುಗಿದವರೂ ಇದ್ದಾರೆ. ೨೦೦೧ ರ ಹೊತ್ತಿಗೆ ಅಥವಾ ಅದಕ್ಕಿಂತ ಮೊದಲು ಗ್ರೀನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚೂ ಕಡಿಮೆ ಎಲ್ಲರಿಗೂ ಒಂದೆರಡು ವರ್ಷಗಳಲ್ಲಿ ಗ್ರೀನ್‌ಕಾರ್ಡ್ ಬಂದಿರಬಹುದು ಎಂಬುದು ನನ್ನ ಊಹೆ, ೨೦೦೨, ೨೦೦೩ ರ ನಂತರವೇ ಗ್ರೀನ್‌ಕಾರ್ಡ್ ಪ್ರಾಸೆಸ್ಸಿಂಗ್‌ನಲ್ಲಿ ಹಿಂದೆಂದಿಗೂ ಆಗದ ವಿಳಂಬವೂ, ಬ್ಯಾಕ್‌ಗ್ರೌಂಡ್ ಚೆಕ್ಕೂ ಅದೂ-ಇದೂ ಎಂದು ವಿಪರೀತ ಸಮಯ ತೆಗೆದುಕೊಳ್ಳುವುದೂ ನಡೆದು ಕೆಲವರು ಲೇಬರ್ ಪ್ರಾಸೆಸ್ಸಿಂಗ್‌ನಿಂದಲೇ ಇನ್ನೂ ಹೊರಬಂದಿಲ್ಲ, ಇನ್ನು ಕೆಲವರು ಎರಡನೇ ಅಥವಾ ಮೂರನೇ ಹಂತದಲ್ಲೂ ಸಾಕಷ್ಟು ವಿಳಂಬವನ್ನು ಅನುಭವಿಸಿದ್ದಾರೆ. ಈ ವಿಳಂಬದ ಚಕ್ರದಲ್ಲಿ ಸಿಕ್ಕಿಕೊಂಡು ಒಮ್ಮೆ ತಮ್ಮ h1B ವೀಸಾದ ಆರು ವರ್ಷಗಳನ್ನು ಮುಗಿಸಿಕೊಂಡರೆ ಅದರಷ್ಟು ನೋವಿನ ಕೆಲಸ ಮತ್ತೊಂದಿಲ್ಲ. ಒಂದು ಕಡೆ ಕಂಪನಿಗಳು ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಕಡಿಮೆ ಖರ್ಚು ಮಾಡಲು ಹೆಣಗುತ್ತಿರುವಾಗ ಹೀಗೆ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳಬಯಸುವ ಪ್ರತಿಯೊಬ್ಬನ ಮೇಲೂ ಕಡಿಮೆ ಎಂದರೆ ಒಂದು ಸಾವಿರ ಡಾಲರನ್ನಾದರೂ ಖರ್ಚು ಮಾಡಬೇಕು, ಹೀಗೆ ಎಷ್ಟು ಬಾರಿ ಮಾಡಬಹುದು, ಒಮ್ಮೆ, ಎರಡು ಬಾರಿ ಅಥವಾ ಮೂರು ಬಾರಿ. ಕೊನೆಗೆ ಒಂದು ದಿನ ಇವನಿಗೆ ವೀಸಾ ಅವಧಿಯನ್ನು ವಿಸ್ತರಿಸುವ ಬದಲು ಇವನ ಬದಲಿಗೆ ಬೇರೆ ಯಾರನ್ನಾದರೂ ಕೆಲಸಕ್ಕೆ ತೆಗೆದುಕೊಂಡರೆ ಹೇಗೆ ಎಂದು ಅನ್ನಿಸದೇ ಇರದು.

ಟೆಕ್ನಾಲಜಿಯೇ ಮುಖ್ಯ ವ್ಯವಹಾರವಾಗಿ ಮಾಡಿಕೊಂಡಿರದ ಕಂಪನಿಗಳು, ಅವುಗಳಲ್ಲಿನ IT ಡಿವಿಜನ್ನುಗಳು ತಮ್ಮಲ್ಲಿನ ಕೆಲಸಗಾರರನ್ನು ಕಳೆದುಕೊಂಡು ಸಣ್ಣವಾಗುತ್ತಿರುವುದಕ್ಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಜೆಟ್ ಒಂದೇ ಕಾರಣವಲ್ಲ, ಅದರ ಜೊತೆಯಲ್ಲಿ (ಅದಕ್ಕೆ ಪೂರಕವಾಗೇ ಇರುವ) ಔಟ್‌ಸೋರ್ಸಿಂಗ್ ಅಥವಾ ಆಫ್‍ಶೋರಿಂಗ್ ಕೂಡಾ ಅಷ್ಟೇ ಮುಖ್ಯವಾದ ಕಾರಣವಾಗುತ್ತದೆ. ಎಲ್ಲೋ ಓದಿದ/ಕೇಳಿದ ಹಾಗೆ ಭಾರತದ ಒಬ್ಬ IT ಉದ್ಯೋಗಿಯ ಮೇಲೆ ಒಂದು ಘಂಟೆಗೆ ೧೨ ಡಾಲರ್ ಅಂತೆ ಖರ್ಚು ಮಾಡುವುದಕ್ಕೆ ಈಗಾಗಲೇ ಹೊಂದಿಕೊಂಡಿರುವ ಕಂಪನಿಗಳು ಹಣವನ್ನು ಉಳಿಸುವ ಪ್ರಕ್ರಿಯೆಯಲ್ಲಿ ಭಾರತದಂತಹ ದೇಶಗಳೆಡೆಗೆ ಮುಖ ಮಾಡಿ ಈಗಾಗಲೇ ನಿಂತುಬಿಟ್ಟಿವೆ. ಭಾರತದಲ್ಲಿ ಕೆಲಸ ಮಾಡುತ್ತಿರುವವರಿಗೇನೋ ಇದು ಒಳ್ಳೆಯ ಕಾಲವಾಗಿರಬಹುದು, ಆದರೆ ಆಗಿಂದಾಗ್ಗೆ 'ಇಲ್ಲಿ ಜನರನ್ನು ಕಡಿಮೆ ಮಾಡಿ ಅಲ್ಲಿ ಜನರನ್ನು ಹೆಚ್ಚು ಮಾಡುತ್ತೇವೆ' ಎನ್ನುವ ಮಾತನ್ನು ಕೇಳಿದಂತೆಲ್ಲ ನಮಗೂ ಈ ದೇಶದಲ್ಲಿ ಹುಟ್ಟಿ ಬೆಳೆದವರಿಗಾಗುವಂತೆಯೇ 'ಅಯ್ಯೋ' ಎನಿಸುತ್ತದೆ. ಸಿಟಿಜನ್‌ಶಿಪ್, ಗ್ರೀನ್‌ಕಾರ್ಡ್ ಇದ್ದವರು ಹೇಗಾದರೂ ಅದೂ-ಇದೂ ಕೆಲಸ ಮಾಡಿ ಬದುಕಿಕೊಳ್ಳುತ್ತೇವೆ ಎಂದುಕೊಂಡರೂ ಯಾವುದೇ ಇಮಿಗ್ರೇಷನ್ ಸ್ಟೇಟಸ್ ಇರಲಿ, ಕೈಲಿದ್ದ ಕೆಲಸ ದಿಢೀರ್ ಮಾಯವಾಗುತ್ತದೆಯೆಂದಾದರೆ ಅದರಿಂದಾಗುವ ಪರಿಣಾಮ ಮಾತ್ರ ಎಲ್ಲರ ಮೇಲೂ ಒಂದೇ. ಒಂದು ಕೆಲಸವನ್ನು ಬಿಟ್ಟು ಅಥವಾ ಬದಲಾಯಿಸಿ ಮತ್ತೊಂದು ಕೆಲಸವನ್ನು ಸಂಪಾದಿಸುವುದು ಮಹಾ ಸ್ಟ್ರೆಸ್ಸಿನ ವಿಷಯಗಳಲ್ಲೊಂದು, ಅದರಲ್ಲೂ ಕೈಲಿದ್ದ ಕೆಲಸ ಹೋಗಿ ಮತ್ತೊಂದನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕೆಂದರೆ ಅದು ಇನ್ನೂ ಕಷ್ಟ. ಮೊದಲಿದ್ದ ಹಾಗೆ ಈಗ ದಿನಕ್ಕೊಂದು ಕೆಲಸ ಸಿಗುವುದಿಲ್ಲ, ಒಂದು ಅಂದಾಜಿನಲ್ಲಿ ಹೇಳುವುದಾದರೆ ಒಳ್ಳೆಯ ನೆಟ್‌ವರ್ಕ್ ಇದ್ದೂ, ಕಂಡಕಂಡಲ್ಲಿ ಅರ್ಜಿ ಗುಜರಾಯಿಸಿ, ಹಗಲಿಡೀ ಫುಲ್‌ಟೈಮ್ ಎಫರ್ಟ್ ಹಾಕಿದರೂ ಒಂದು ತಿಂಗಳ ಒಳಗೆ ಮತ್ತೊಂದು ಕೆಲಸ ಸಿಗುವುದು ಕಷ್ಟವೇ.

ಹೀಗೆ ವೀಸಾ-ಗ್ರೀನ್‍ಕಾರ್ಡ್ ವಿಷ ವರ್ತುಲದಲ್ಲಿ ಸಿಕ್ಕಿಕೊಂಡು ಬಳಲುತ್ತಿರುವ ಅನೇಕರಿಗೆ ಶಾಲೆಗೆ ಹೋಗುವ ಮಕ್ಕಳಿದ್ದಾರೆ, ಮಾರ್ಟ್‌ಗೇಜೂ ಮತ್ತೊಂದು ಅಂತ ಮೈ ತುಂಬಾ ಸಾಲವಿದೆ, ಇಷ್ಟು ವರ್ಷ ಇಲ್ಲಿ ದುಡಿದು ಸಾಕಷ್ಟು ಹಣ ಉಳಿಸಿದ್ದರು ಅವೆಲ್ಲವೂ ಕೈಗೆ ಬೇಕೆಂದಾಗ ಸಿಗದಿರುವ ಹಾಗೆ ಅಲ್ಲಲ್ಲಿ ತೊಡಗಿಕೊಂಡಿವೆ. ಒಂದು ವೇಳೆ h1B ಯ ಎಕ್ಸ್‌ಟೆನ್ಷನ್‌ನಲ್ಲಿ ಇರುವ ಯಾರಿಗಾದರೂ ಈಗಿರುವ ಕೆಲಸ ಕೈ ತಪ್ಪಿದರೆ ಅವರಿಗೆ ಅದೇ ಕಂಪನಿಯಲ್ಲೇ ಎಲ್ಲಾದರೂ ಮತ್ತೊಂದು ಕೆಲಸ ಸಿಗಬೇಕು (ಅದೂ ಒಂದು ತಿಂಗಳ ಒಳಗೆ), ಇಲ್ಲಾ ಆದಷ್ಟು ಬೇಗ ಗಂಟು-ಮೂಟೆ ಕಟ್ಟಬೇಕು. ಮುಂಬರುವ ಪರಿಸ್ಥಿತಿಗಳಿಗೆ ನಾವೆಷ್ಟೇ ತಯಾರಾಗಿದ್ದರೂ ನಾವಾಗೇ ಆರಂಭಿಸದೇ ಹುಟ್ಟಿಕೊಂಡ ಬದಲಾವಣೆಗಳಿಗೆ ಸ್ಪಂದಿಸುವುದು ಬಲು ಕಷ್ಟದ ಕೆಲಸ. ನನಗೇ ಯಾರಾದರೂ ದಿಢೀರನೆ ಇನ್ನೊಂದು ತಿಂಗಳಲ್ಲಿ ಅಮೇರಿಕವನ್ನು ಬಿಟ್ಟು ಹೋಗು ಎಂದರೆ ಹೇಗಿರಬಹುದು ಎಂದು ಊಹಿಸಿಕೊಳ್ಳಬಲ್ಲೆನಾದರೂ, ನಿಜಸ್ಥಿತಿಯ ಅರಿವು ನನಗೆ ಪೂರ್ಣವಾಗಿ ಆಗಲಾರದು.

***

ಒಬ್ಬ ಕೆಲಸಗಾರನಾಗಿ ಹೆಚ್ಚು ಸಮಯವನ್ನು ಇಲ್ಲಿಯೇ ಕಳೆದದ್ದರಿಂದ ನನಗೆ ನಮ್ಮ ದೇಶದಲ್ಲಿ ಕೆಲಸವನ್ನು ಕಳೆದುಕೊಳ್ಳುವುದು, ಹಾಗೆ ಕಳೆದುಕೊಂಡು ಮತ್ತೊಂದನ್ನು ಹುಡುಕಿಕೊಳ್ಳುವಾಗಿನ ಮನಸ್ಥಿತಿ ಹೇಗಿರಬಹುದು ಎಂದು ಗೊತ್ತಿಲ್ಲ (ಸಮಸ್ಯೆಗಳ ವ್ಯಾಪ್ತಿ ಎಲ್ಲಿದ್ದರೂ ಒಂದೇ ಎನ್ನುವುದು ಚೆನ್ನಾಗಿ ಗೊತ್ತು). ಆದರೆ ಇಲ್ಲಿ ಕೆಲಸ ಕಳೆದುಕೊಂಡವರು ಗಾಯದ ಮೇಲೆ ಉಪ್ಪು ಸುರಿದಂತೆ ತಮ್ಮ-ತಮ್ಮ ಇಮಿಗ್ರೇಷನ್ ಸ್ಟೇಟಸ್ಸನ್ನೂ ಕಳೆದುಕೊಂಡು ಲಗುಬಗೆಯಿಂದ ದೇಶವನ್ನು ತೊರೆದಿರುವುದನ್ನು ನೋಡಿ ಬಲ್ಲೆ. ಹೆಚ್ಚಿನವರು ಈ ವೀಸಾದ ಗೊಂದಲ ಮುಗಿಯುವವರೆಗೆ ಮನೆಯನ್ನು ಕೊಂಡುಕೊಳ್ಳುವ ಗೋಜಿಗೆ ಹೋಗೋದಿಲ್ಲ, ಹಾಗೆ ಕೊಂಡುಕೊಂಡರೂ ಆದಷ್ಟು ಬೇಗ ಮಾರುವ ಪೀಕಲಾಟಕ್ಕೆ ಸಿಕ್ಕಿಕೊಳ್ಳುತ್ತಾರೆ, ಅಲ್ಲದೇ ಇರುವ ಕೆಲವೇ ಕೆಲವು ದಿನಗಳಲ್ಲಿ ತಮ್ಮ ಕಾರನ್ನು ಮಾರಬೇಕಾಗಿ ಬರುತ್ತದೆ, ಮನೆಯಲ್ಲಿನ ಸಾಮಾನುಗಳೂ ಅವರಿವರ ಪಾಲಾಗುತ್ತದೆ. ಇಲ್ಲೇನೋ ಕೆಲಸ ಹೋಯಿತು ಇನ್ನು ಅಲ್ಲಾದರೂ ಒಳ್ಳೆಯ ಕೆಲಸವೇನಾದರೂ ಸಿಕ್ಕರೆ ಸಿಗಲಿ ಎಂದು ಇಲ್ಲಿ ಇದ್ದಷ್ಟು ದಿನಗಳಲ್ಲೇ ಪ್ರಯತ್ನ ಸಾಗಿರುತ್ತದೆ.

ಒಂದು ಕಾಲದಲ್ಲಿ ವರ್ಷಕ್ಕೆ ಅರವತ್ತೈದು ಸಾವಿರದಷ್ಟು ಮಾತ್ರ H1B ವೀಸಾಗಳನ್ನು ನೀಡುತ್ತಿದ್ದವರು ಕೆಲವು ವರ್ಷಗಳ ವರೆಗೆ ಅದನ್ನು ಲಕ್ಷದ ಮೇಲೆ ಹೆಚ್ಚಿಸಿದ್ದರು, ಮುಂದೆ ೨೦೦೧ರ ನಂತರ ಅದು ಮತ್ತೆ ಅರವತ್ತೈದು ಸಾವಿರಕ್ಕೆ ಬಂದು ನಿಂತಿತು. ಹೀಗೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಬಂದವರಲ್ಲಿ ನೂರಕ್ಕೆ ನಲವತ್ತೈದು ಜನರಾದರೂ ಭಾರತೀಯರೇ. ಹೀಗೆ ಬಂದವರಲ್ಲಿ ಇನ್ನೂ ಬೇಕಾದಷ್ಟು ಜನ ತಮ್ಮ ಆರು ವರ್ಷಗಳನ್ನು ಮುಗಿಸಿಕೊಂಡು ವರ್ಷಕ್ಕೊಮ್ಮೆ ವೀಸಾದ ಅವಧಿ ವಿಸ್ತರಣೆಯನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಒಮ್ಮೆ ವೀಸಾದ ಅವಧಿ ಮುಗಿದ ಮೇಲೆ ತಮ್ಮ-ತಮ್ಮ್ ಬಾಸ್ ಮೂಲಕ ಅವರು ಎಕ್ಸ್ಟೆಂಷನ್ನಿಗೆ ಅರ್ಜಿ ಗುಜರಾಯಿಸಬೇಕು, ಮುಂದೆ ವೀಸಾ ಬಂದ ನಂತರ ಪಾಸ್‌ಪೋರ್ಟ್ ಸ್ಟ್ಯಾಂಪಿಂಗ್ ಮಾಡಿಸಬೇಕು, ಹಾಗೆ ಮಾಡಲು ಮದ್ರಾಸಿನ ಕನ್ಸಲೇಟಿನಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು, ಹೀಗೆಲ್ಲಾ ಮಾಡಿ ಮುಗಿಸುತ್ತಿರುವಾಗಲ್ಲೇ ಮತ್ತೆ ವೀಸಾದ ಅವಧಿ ಮುಗಿಯುತ್ತದೆ - ಒಂದು ರೀತಿಯ ಚಿತ್ರಹಿಂಸೆಯ ಚಕ್ರದ ಆರಂಭವಾಗುತ್ತದೆ. ಇನ್ನು ಭಾರತಕ್ಕೆ ಹೋದರೆ ತಾನೆ ತೊಂದರೆ ಎಂದು ನಾಲ್ಕು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿರುವ ವ್ಯಕ್ತಿಗಳನ್ನೂ ನಾನು ಬಲ್ಲೆ.

ಹೀಗೆ ಹಸಿರು ಕಾರ್ಡಿನ ಬೆನ್ನ ಹತ್ತಿ ಹಪಾಪಿಗಳಾದವರು ಸಂಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ, ಅನಿಶ್ಚಿತತೆಯಿಂದ ಬದುಕುವ ಕಷ್ಟವನ್ನು ಅನುಭವಿಸಿದವರೇ ಬಲ್ಲರು!

Monday, June 05, 2006

ಎರಡು ಸೈಟಿನ ಗೋಳು

ಬೆಂಗಳೂರಿನಲ್ಲಿ ಕಷ್ಟಾ ಪಟ್ಟು ತೆಗೆದುಕೊಂಡ ಸೈಟನ್ನು ನಾನು ಇನ್ನೂ ರಿಜಿಸ್ಟ್ರೇಷನ್ ಮಾಡ್ಸಿಲ್ಲ, ಅಲ್ಲಿಗೆ ರಜೆಗೆ ಹೋದಾಗ ಮಾಡಿಸೋಣ ಎಂದುಕೊಂಡು ಇಷ್ಟು ದಿನ ತಳ್ಳಿದ್ದಾಯ್ತು, ಆದ್ರೆ ಇತ್ತಿಚಿಗಂತೂ ನಮ್ಮನೆಯವರು 'ರಿಜಿಸ್ಟ್ರೇಷನ್ ಮಾಡಿಸ್ದೇ ಹಾಗೇ ಬಿಟ್ರೆ ಆ ಸೈಟು ಹೋದ ಹಾಗೆಯೇ!' ಎಂದು ಹೆದರಿಸತೊಡಗಿದ ಮೇಲೆ ದಿಗಿಲು ಇನ್ನೂ ಹೆಚ್ಚಾಗಿದೆ. ಒಂದೇ ಯಾರಿಗಾದ್ರೂ ಪವರ್ ಆಫ್ ಆಟಾರ್ನಿ ಕೊಟ್ಟು ಅವರ ಹೆಸರಿಗೆ ಮಾಡಿಸಿ ಆಮೇಲೆ ನನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು, ಇಲ್ಲಾ ಅಲ್ಲಿಗೆ ಹೋದಮೇಲೆ ನೋಡೋಣವೆಂದು ಸುಮ್ಮನಿರಬೇಕು, ಅಲ್ಲಿಯವರೆಗೆ ಮತ್ತು ಅದರ ನಂತರ ರಿಸ್ಕ್‌ಗಳು ಎಷ್ಟು ದೊಡ್ಡದಾದರೂ ಬರಬಹುದು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೈಟುಗಳಿಗೆ ಸಂಬಂಧಿಸಿದಂತೆ ನಡೆದ ಇನ್ನೂ ಎರಡು ಘಟನೆಗಳನ್ನು ಹೇಳಿಬಿಟ್ಟರ್‍ಏನೇ ನನಗೊಂದು ಸಮಾಧಾನ. ಮೊದಲನೆಯದಾಗಿ ನನ್ನ ಸಂಬಂಧಿಕರೊಬ್ಬರು ೧೯೮೫ ರಲ್ಲಿ ಅವರ ಕೋ ಆಪರೇಟಿವ್ ಸೊಸೈಟಿ ಮೂಲಕ ಅವರ ಆಫೀಸಿನಲ್ಲಿ ತುಂಬಾ ಜನ ಸೇರಿ ಹಲವಾರು ಸೈಟುಗಳನ್ನು ಖರೀದಿಸಿದ್ದರು. ಖರೀದಿಸಿ, ರಿಜಿಸ್ಟರೇಷನ್ ಆಗಿದ್ದರೂ ಸ್ವಲ್ಪ ದಿನಗಳಲ್ಲಿ ಆಗ ಊರಿನ ಹೊರವಲಯದಲ್ಲಿದ್ದ ಆ ಸೈಟುಗಳಲ್ಲಿ ಒಂದು ಜಾತಿಯ ಜನರು ಬಂದು ಗುಡಿಸಲನ್ನೆಬ್ಬಿಸಿದರು. ಆಗಲೇ ಕಾನೂನಿನೆ ವಿರುದ್ಧವಾಗಿ ಆಕ್ರಮಿಸಿಕೊಂಡಿದ್ದ ಸೈಟುಗಳನ್ನು ತೆರವುಗೊಳಿಸಲು ಸೊಸೈಟಿ ಹಾಗೂ ಅದರ ನೌಕರರು ಕಾನೂನಿನ ಮೊರೆಗೆ ಹೋಗಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ. ಆದರೆ ಕಳೆದ ತಿಂಗಳು, ಅಂದರೆ ಸುಮಾರು ೧೫ ವರ್ಷಗಳ ನಂತರ 'ನ್ಯಾಯ' ತೀರ್ಮಾನವಾಗಿ ಕೋರ್ಟು ಆಕ್ರಮವಾಗಿ ಜಾಗಕ್ಕೆ ನುಗ್ಗಿ ಗುಡಿಸಲು ಕಟ್ಟಿಕೊಂಡವರ ಪರವಾಗಿ ತೀರ್ಪು ನೀಡಿದೆಯಂತೆ. ಇದರಿಂದಾಗಿ ತುಂಬಾ ನೋವಿನಲ್ಲಿದ್ದ ನನ್ನ ಸಂಬಂಧಿಕರು ಇಷ್ಟು ವರ್ಷ ಕಾದಿದ್ದಕ್ಕೆ ಅಸಲೂ ಇಲ್ಲ, ಬಡ್ಡಿಯೂ ಇಲ್ಲ, ನಮ್ಮ ಹಣವೂ ಹೋಯಿತು ಹಾಗೂ ಸುಮ್ಮನೇ ಕಾಲಹರಣವಾಯಿತು ಎಂದು ನನ್ನಲ್ಲಿ ಗೋಳುತೋಡಿಕೊಂಡರು.

ಎರಡನೆಯದಾಗಿ, ನನ್ನ ಸ್ನೇಹಿತರೊಬ್ಬರು, ಸುಮಾರು ೨೫ ವರ್ಷದ ಹಿಂದೆಯೇ ಅಮೇರಿಕೆಗೆ ಬಂದು ಇಲ್ಲಿಯೇ ನೆಲೆಸಿದವರು, ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ೬೦ ಬೈ ೪೦ ವಿಸ್ತೀರ್ಣದ ಒಂದು ಸೈಟನ್ನು ತೆಗೆದುಕೊಂಡಿದ್ದರಂತೆ. ಈಗ ನಿವೃತ್ತರಾಗಿರುವ ಅವರು ಮೊನ್ನೆ-ಮೊನ್ನೆ ಅದನ್ನು ಮಾರಿ ಬಂದ ಹಣದಿಂದ ಏನೇನನ್ನೋ ಮಾಡಬಹುದು ಎಂದು ಯೋಜನೆ ಹಾಕಿಕೊಂಡಿದ್ದವರಿಗೆ ಆಶ್ಚರ್ಯಕಾದಿತ್ತು. ಅವರು ಅಮೇರಿಕೆಯಲ್ಲಿರುವಾಗಲೇ ಅವರ ಹೆಸರಿನಲ್ಲಿ ರಿಜಿಸ್ಟರಾಗಿ, ಖಾತ್ರೆ ಪತ್ರಗಳಿದ್ದ ಸೈಟನ್ನು ಈಗಾಗಲೇ ಯಾರೋ ಬೇರೆಯವರಿಗೆ ಮಾರಿಬಿಟ್ಟಿದ್ದಾರಂತೆ! ಇವರು ಎಲ್ಲದರಲ್ಲೂ ನೇರವಾಗಿ, ನ್ಯಾಯವಾಗಿರುವ ತಮ್ಮ ದಾಖಲೆಗಳನ್ನು ತೋರಿಸಿ ಎಷ್ಟೇ ಹಣವನ್ನು ಖರ್ಚು ಮಾಡಿದರೂ, ಇವರ ವಿರುದ್ಧವಾಗಿ ಕೆಲಸಮಾಡುವ ಶಕ್ತಿಗಳು ನ್ಯಾಯಾಧೀಶರಿಗೆ ಲಂಚವನ್ನು ಕೊಟ್ಟು ಆದಷ್ಟು ದಿನ ಒಂದಲ್ಲ ಒಂದು ಕಾರಣದಿಂದ ಕೇಸನ್ನು ಮುಂದೆ ಹಾಕಿಸುತ್ತಲೇ ಇದ್ದಾರಂತೆ. ಇವತ್ತು ಮೂವತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಆ ಸೈಟನ್ನು ಹೇಗಾದರೂ ಮಾಡಿ ಪಡೆದುಕೊಂಡೇ ತೀರುವ ಸಂಚನ್ನು ಹೂಡಿದ್ದಾರಂತೆ.

ಇವರ ಮಾತನ್ನು ಕೇಳಿ ಪಿಚ್ಚೆನಿಸಿದಾಗ ನನ್ನ ಸ್ನೇಹಿತರು ತಮ್ಮ ಮಾತನ್ನು ಮುಂದುವರೆಸುತ್ತಾ 'ಇವರೆಲ್ಲಾ ಏನನ್ನು ಕಾಯುತ್ತಿದ್ದಾರೆ, ಗೊತ್ತೇ?' ಎಂದರು. ನಾನು ಸುಮ್ಮನಿದ್ದೆ. ಮತ್ತೆ ಅವರೇ 'ಹೀಗೇ ಕೇಸನ್ನು ಮುಂದುವರೆಸುತ್ತಾ ಇದ್ದರೆ, ಒಂದಲ್ಲ ಒಂದು ದಿನ ನಾನು ಗೊಟಕ್ ಅನ್ನುತ್ತೇನೆ, ಆಗ ನನ್ನ ಹೆಂಡತಿ ಮಕ್ಕಳು ಈ ಸೈಟಿನ ವಿಚಾರಕ್ಕೆ ಹೋಗುವುದಿಲ್ಲ, ಹಾಗಾದರೂ ಸಿಗಲಿ ಎಂದುಕೊಂಡಿದ್ದಾರೆ' ಎಂದರು. ಹಾಗೇ ಮುಂದುವರೆಸಿ 'ಅದೇ ಕೋರ್ಟಿನ ಆವರಣದಲ್ಲೇ, ಎಲ್ಲಾ ನ್ಯಾಯಾಧೀಶರ ಎದುರೇ ಕ್ಲರ್ಕುಗಳು ಲಂಚವನ್ನು ಕೇಳಿ ಪಡೆದು, ಅಲ್ಲೇ ಟೇಬಲ್ಲಿನ ಮೇಲಿರುವ ಗಲ್ಲಾ ಪೆಟ್ಟಿಗೆಯಲ್ಲಿ ಸಾಮಾನ್ಯ ವ್ಯವಹಾರವೇನೋ ಎನ್ನುವಂತೆ ದುಡ್ಡನ್ನು ಪಡೆದು ಜೋಡಿಸಿಡುವುದನ್ನು ನೋಡಿದರೆ, ಅಲ್ಲಿಯ ಯಾವುದೇ ನ್ಯಾಯಾನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯನ್ನೇ ಕಳೆದುಕೊಂಡುಬಿಟ್ಟಿದ್ದೇನೆ' ಎಂದರು. 'ಸರಿ, ಈಗೇನು ಮಾಡುತ್ತೀರಿ?' ಎಂದುದಕ್ಕೆ 'ಮತ್ತೇನಿಲ್ಲ, ಆಕ್ರಮವಾಗಿ ಈ ಸೈಟನ್ನು ಕಬಳಿಸಿಕೊಂಡಿರುವವನ ಹತ್ತಿರವೇ ಒಂದು ಡೀಲ್ ಕುದುರಿಸಿ, ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಆದಷ್ಟು ಬೇಗ ಹಿಂತಿರುಗಿ ಪಡೆಯುವುದೇ ಜಾಣತನ ಅನ್ನಿಸುತ್ತೆ' ಎಂದರು.

***

ಕಾಸ್ಮೋಪಾಲಿಟನ್ ವಾತಾವರಣದ ಬೆಂಗಳೂರಿನಲ್ಲಿ ನಾನು ಸೈಟು ತೆಗೆದುಕೊಳ್ಳುವಾಗಿನ ಸ್ಪರ್ಧೆಯಲ್ಲಿ ಕನ್ನಡಿಗರಿಗಿಂತ ಉಳಿದವರೇ ಹೆಚ್ಚು ಕಂಡುಬರುತ್ತಾರೆ. ನಿವೇಶನಗಳ ಅಭಾವದಲ್ಲಿ ಕೇಳಿದ ಹಣಕ್ಕೆ ತಕ್ಕಂತೆ ಒಂದೇ ಬಿಡಿಎ ಸೈಟೋ ಅಥವಾ ಖಾಸಗೀ ಸಹಕಾರ ಸಂಘಗಳ ಮೂಲಕವೋ ತೆಗೆದುಕೊಂಡರೂ ಹೆಚ್ಚು ಬೆಲೆಯನ್ನು ತೆರದೇ ಬೇರೆ ದಾರಿಯೇ ಇಲ್ಲ. ನನ್ನ ಅಮೇರಿಕನ್ ಡಾಲರ್‌ಗೇನೆ ಈ ಸ್ಥಿತಿ ಇದ್ದರೆ ಇನ್ನು ಅಲ್ಲಿಯೇ ದುಡಿದು, ಹಣ ಉಳಿಸಿ ಅದರಿಂದ ಇವೇ ಸೈಟುಗಳನ್ನು ಖರೀದಿಸುವವರ ಗತಿಯೇನು ಎಂದು ಹೆದರಿಕೆಯಾಗುತ್ತದೆ. ನಿವೇಶನವನ್ನು ತೆಗೆದುಕೊಳ್ಳುವುದು ಬರೀ ಅರ್ಧ ಕೆಲಸ, ಇನ್ನು ಅಲ್ಲಿ ಮನೆಯನ್ನು ಕಟ್ಟಿ ಇರಲು ವ್ಯವಸ್ಥೆ ಮಾಡಿಕೊಳ್ಳುವುದು ಎಂದರೆ ಸಾಕುಬೇಕಾಗಿ ಹೋಗುತ್ತದೆ. ಅಂತದ್ದರಲ್ಲಿ ಇದ್ದಬದ್ದ ದುಡ್ಡನ್ನೆಲ್ಲ ಸುರಿದು ನಿವೇಶನ ತೆಗೆದುಕೊಂಡವರು ಮೋಸ ಹೋಗದೇ ಇರಲು ಬಹಳ ಪರದಾಡಬೇಕಾಗುತ್ತದೆ. ಈ ಪರದಾಟ ನನ್ನಂತಹವರಿಗೆ ಅರ್ಥವಾಗೋದಿಲ್ಲ, ಜೀವನ ಪರ್ಯಂತ ದುಡಿದು, ಬಂದ ಪೆನ್ಷನ್ ಹಣದಲ್ಲಿ ಕೊಂಡ ಸೈಟನ್ನೋ ಅಥವಾ ಮಗಳ ಮದುವೆಯ ಖರ್ಚಿಗೆಂದು ಇಟ್ಟ ಸೈಟನ್ನು ಯಾರೋ ಅನ್ಯಾಯವಾಗಿ ಆಕ್ರಮಿಸಿಕೊಂಡಿದ್ದು ಗೊತ್ತಾದರೂ ಒಂದೇ ನ್ಯಾಯ ದೊರೆಯುವುದಿಲ್ಲ, ಹಾಗೆ ದೊರೆತರೂ ಸುಮಾರು ಹತ್ತು ವರ್ಷಗಳ ಮೇಲೆ ಆಗುತ್ತದೆ ಎನ್ನುವುದನ್ನು ನೆನೆಸಿಕೊಂಡಾಗೆಲ್ಲ ಮೈನಡುಗುತ್ತದೆ.

ಜೀವನದಲ್ಲಿ ನೆಟ್ಟಗೆ ಬದುಕಬೇಕು ಎನ್ನುವುದೇ ದೊಡ್ಡ ಹೋರಾಟ, ಅದರ ಜೊತೆಯಲ್ಲಿ ದುರ್ಮಾರ್ಗಿಗಳ ಹಾವಳಿಯಿಂದ ತಪ್ಪಿಸಿಕೊಂಡು ನಿಶ್ಚಿಂತವಾಗಿರೋದಕ್ಕೆ ಸಾಧ್ಯವೇ ಇಲ್ಲ ಎನ್ನಿಸಿಬಿಟ್ಟಿದೆ. ಅದೆಷ್ಟೋ ಸಾವಿರ ವರ್ಷಗಳ ಪರಂಪರೆ ಇರುವ ನಮ್ಮಲ್ಲಿ ಇಷ್ಟೊಂದು ವರ್ಷಗಳಲ್ಲಿ ಜನರ ಮನಸ್ಥಿತಿ ವಿಕಾಸಗೊಂಡರೂ 'ಕೆಟ್ಟದಾಗಿ ಬದುಕುವ' ವಿಧಿ ವಿಧಾನಗಳಲ್ಲಿ ಹೆಚ್ಚು ಪ್ರಗತಿಯಾಗಿದೆಯೇ ವಿನಾ ಅವುಗಳನ್ನು ಎದುರಿಸಿ ಗೆಲ್ಲುವ ವ್ಯವಸ್ಥೆಯಲ್ಲಲ್ಲ. ಬೆಂಗಳೂರಿನ ನ್ಯಾಯಾಧೀಶರ ಮುಂದೆ ಅನ್ಯಾಯವಾಗಿ ಸೈಟನ್ನು ಆಕ್ರಮಿಸಿಕೊಂಡಿದ್ದಾರೆಂದು ಸಾವಿರ ಕೇಸುಗಳು ಸಾಲು ಕಟ್ಟಿ ಇರಲಿ, ಕೊನೇ ಪಕ್ಷ ದಿನಕ್ಕೆ ಎರಡು ಇಂತಹ ಕೇಸುಗಳಿಗೆ ಮುಕ್ತಿ ಸಿಕ್ಕು 'ನಿಜವಾದ' ನ್ಯಾಯ ಸಿಕ್ಕುವಂತಾಗಿದ್ದರೆ ಎಷ್ಟೋ ಚೆನ್ನಾಗಿತ್ತು.

***

ನಿಮ್ಮ ಯಾವುದೇ ನಿವೇಶನವನ್ನು ಆಕ್ರಮಿಸಿಕೊಳ್ಳುವುದು ಬಹಳ ಸುಲಭ, ಒಂದೇ ಅಲ್ಲಿ ಹಾಡು ಹಗಲೇ ಕಲ್ಲೊಂದನ್ನು ಪ್ರತಿಷ್ಟಾಪಿಸಿ ಪೂಜೆ ಮಾಡಿಸಿಬಿಡಬೇಕು, ಅಥವಾ ಸರ್ಕಾರದ ಪೋಷಣೆಯಲ್ಲಿರುವ ಯಾವುದೋ ಒಂದು ಗುಂಪಿನವರು ಬಂದು ರಾತ್ರೋ ರಾತ್ರಿ ವಕ್ಕರಿಸಿಬಿಡಬೇಕು, ಅಷ್ಟೇ. ಆದರೆ ಕೇವಲ ನಿಮಿಷಗಳಲ್ಲಿ ಆಗುವ ಈ ಆಕ್ರಮಣದ ಪ್ರಕ್ರಿಯೆಯನ್ನು ಎದುರಿಸಿ ನೀವು ವರ್ಷಗಟ್ಟಲೇ ಏಗಿದರೂ ಕೊನೆಗೆ ಜಯಸಿಗುವುದೇನೂ ಗ್ಯಾರಂಟಿಯಲ್ಲ, ಅಲ್ಲದೇ ಈ ತೀರ್ಪಿನ ಕೊನೆಯವರೆಗೂ ಫಲಾನುಭವಿಸುವ ಹಕ್ಕು ಆಕ್ರಮವಾಗಿ ಸೇರಿಕೊಂಡವರದ್ದೇ.

Sunday, June 04, 2006

ನನಗ್ಗೊತ್ತು "ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎಂದು...

ಇಂದು (ಜೂನ್ ೪, ೨೦೦೬ - ಭಾನುವಾರ) ಮುಂಜಾನೆ ಸಾಪ್ತಾಹಿಕ ಪುರವಣಿಯನ್ನು ತಿರುವಿಹಾಕುತ್ತಿದ್ದಾಗ ಎಸ್. ದಿವಾಕರ್ ಬರೆದಿರೋ "ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎನ್ನುವ ಲೇಖನ ಶೀರ್ಷಿಕೆಯಲ್ಲೇ ಆಕರ್ಷಿಸಿ ಮುಂದೆ ಓದುವಂತೆ ಮಾಡಿತು, ಈ ಲೇಖನವನ್ನು ನಾನು ಓದದಿದ್ದರೇನೇ ಎಷ್ಟೋ ಚೆನ್ನಾಗಿತ್ತು ಎಂದುಕೊಂಡೆ. ಲೇಖನವನ್ನು ಓದಿದ ಮೇಲೆ ಭಯಂಕರ ಉರಿ ಹತ್ತಿದ್ದರಿಂದ ಈ ಪ್ರತಿ ಲೇಖನವನ್ನು ಬರೆಯಬೇಕಾಯ್ತು, ಇದು ದಿವಾಕರ್ ಹಾಗೂ ಕೃಷ್ಣಮೂರ್ತಿ ಹನೂರು ಅವರುಗಳಿಗೆ ತಲುಪುತ್ತದೆಯೋ ಇಲ್ಲವೋ ಅವರುಗಳಂತೆ ನಾನು ಅಡ್ಡಗೋಡೆಯ ಮೇಲೆ ದೀಪವಿಡದೇ, ಇಬ್ಬರನ್ನೂ ಮಹಾನೀಚರೆಂದು ಬಹಿರಂಗವಾಗಿ ಉಗಿಯುವ ಸಾಹಸಕ್ಕೆ ಇಳಿದಿದ್ದೇನೆ, ಇದರ ಪರಿಣಾಮಗಳು ಏನಾದರೂ ಆಗಲಿ ಅದನ್ನೊಂದು ಕೈ ನೋಡಿಕೊಂಡೇ ಬಿಡುತ್ತೇನೆ.

***

ದಿವಾಕರ್ ಅವರ ಲೇಖನದಲ್ಲಿ ಬರೆದಿರುವಂತೆ ಡಾ. ಕೃಷ್ಣಮೂರ್ತಿ ಹನೂರು ಯಾವ ಸಂದರ್ಭದಲ್ಲಿ (ಕಾಂಟೆಕ್ಸ್ಟ್) "ಪುತಿನ ಹೇಳಲಿಕ್ಕೇನೂ ಇಲ್ಲದಿದ್ದರೂ ಏನೇನೋ ಇದೆಯೆಂದು ಭಾಸವಾಗುವಂತೆ ಸಂಕೃತಭೂಯಿಷ್ಠವಾದ ಭಾಷೆಯನ್ನು ರೂಢಿಸಿಕೊಂಡವರು. ನಿಜಕ್ಕೂ ಓದಲರ್ಹವಾದ ಒಂದೇ ಒಂದು ಸಾಲನ್ನೂ ಅವರು ಬರೆದಿಲ್ಲ" ಎಂದು ಹೇಳಿದರೋ ಸ್ಪಷ್ಟವಾಗಿರದಿದ್ದರೂ ಪುತಿನರವರ ಜನ್ಮಶತಾಬ್ಧಿಯ ಸಂದರ್ಭದಲ್ಲಿ ವಿಚಾರಗೋಷ್ಠಿಯಲ್ಲಿ ಸುಮಾರು ಮೂವತ್ತು ನಿಮಿಷಗಳ ಕಾಲ ಮಾತನಾಡಿದರು ಎಂದು ಬರೆದಿದ್ದಾರೆ. ಕಳೆದ ವರ್ಷ ಎಂದು ಬರೆದದ್ದರಿಂದ ೨೦೦೫ ರಲ್ಲಿ ಆಗಿರಬಹುದಾದ ಘಟನೆ ಎಂದುಕೊಂಡರೂ ಸುಮಾರು ಆರೇಳು ತಿಂಗಳುಗಳ ನಂತರ ಈ ಪ್ರತಿಕ್ರಿಯೆಯನ್ನು ದಿವಾಕರ್ ಹೀಗೇಕೆ ಬರೆದಿದ್ದಾರೆ ಎಂದು ತಲೆಕೆಡಿಸಿಕೊಂಡಷ್ಟೂ ಉತ್ತರ ಗೋಜಲಾಗತೊಡಗಿತು. ಅದೂ ಅಲ್ಲದೇ ಒಂದು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದಾಗ ಪುತಿನರವರ ಬಗ್ಗೆಯೇ ವಿಚಾರಗಳನ್ನು ಉಳಿದವರೆಲ್ಲರೂ ಮಂಡಿಸಿ ಮಾತನಾಡುತ್ತಿದ್ದಾಗ ಬೇರೆಯವರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ದಿವಾಕರ್ ಬರೆದಿಲ್ಲ, ಅಲ್ಲದೇ ಅಧ್ಯಕ್ಷರಾಗಿ ಕೃಷ್ಣಮೂರ್ತಿಯವರಿಗೆ ಅದೇ ಸಭೆಯಲ್ಲಿಯೇ ಏನನ್ನಾದರೂ ಇವರು ಹೇಳಿದರೇ, ಏಕಿಲ್ಲ? ಅಲ್ಲದೇ ಹೀಗೆ ಹಳತಾದ ಘಟನೆಗಳನ್ನು ಇಂದು ಇವರು ನೆನೆಸಿಕೊಳ್ಳುವ ಔಚಿತ್ಯವೇನು?

ಅದೇ ಸಭೆಯಲ್ಲಿ ನಾನೇನಾದರೂ ಅಧ್ಯಕ್ಷ ಅಥವಾ ಸಭಿಕನಾಗಿದ್ದರೆ ಕೃಷ್ಣಮೂರ್ತಿಯವರನ್ನು ಮಾತನಾಡಿಸುತ್ತಿದ್ದೆ - ಅವರ ಮನದ ಇಂಗಿತವನ್ನು ಅರಿಯಲು ಪ್ರಯತ್ನಪಡುತ್ತಿದ್ದೆ. ಸಾರ್‌ಕ್ಯಾಷ್ಟಿಕ್ ಆಗಿ ಹೇಳಿದ್ದಾರೇನೂ ಎಂದು ಕೊಂಚ ಯೋಚಿಸುತ್ತಿದ್ದೆ. ಒಳಮನಸ್ಸು ಅಲ್ಲೆ ವೇದಿಕೆಯಿಂದ ಅವರನ್ನು ಹಿಡಿದೆಳೆದು ಕೊರಳಪಟ್ಟಿ ಹಿಡಿದು ಎರಡು ಬಾರಿಸೋಣವೆಂದು ಹೇಳುತ್ತಿದ್ದರೂ ಅದಕ್ಕೆ ಸಮಾಧಾನ ಹೇಳಿಕೊಂಡು ಮಾತಿಗೆ ತೊಡಗಿಸುತ್ತಿದ್ದೆ. ಹಾಗೇನೂ ಆಗಲಿಲ್ಲವಲ್ಲಾ, ಅಂದರೆ ಆ ಸಭೆಯಲ್ಲಿದ್ದವರೆಲ್ಲ ಬಾಯಿಗೆ ಕಡುಬು ತುಂಬಿಕೊಂಡಿದ್ದರೇ? ದಿವಾಕರ್ ಅವರು ಹಿಂದಿನದನ್ನು ಸ್ಮರಿಸುತ್ತಾ 'ಇಪ್ಪತ್ತೈದು ವರ್ಷಗಳ ಹಿಂದೆ ಹೀಗೆಲ್ಲೂ ಆಗುತ್ತಿರಲಿಲ್ಲ" ಎಂದು ಪದೇ-ಪದೇ ಲೇಖನದುದ್ದಕ್ಕೂ ಬರೆದಿದ್ದಾರೆ - ಅದು ನಿಜ, ಇಪ್ಪತ್ತೈದು ವರ್ಷಗಳ ಹಿಂದೆ ಇಂತಹ ಸೂಕ್ಷ್ಮ ವಿಷಯಕ್ಕೆ ಸ್ಪಂದಿಸಲು ವರ್ಷದ ಮೇಲೆ ಹಿಡಿಯುತ್ತಿರಲಿಲ್ಲ ಎನ್ನುವುದನ್ನೂ ಅವರು ಮರೆತಂತಿದೆ. ಇದು ಬರೀ 'ಬೂಸಾ ಬಸವಲಿಂಗಪ್ಪನ ಕಥೆ'ಯಲ್ಲ, ಕನ್ನಡ ಸಾಹಿತ್ಯವನ್ನು ಬೋಧಿಸುವ ಒಬ್ಬ ಪಿ.ಎಚ್‌ಡಿ ಮಾಡಿರೋ ಒಬ್ಬರು ಒಂದು ವಿಶ್ವವಿದ್ಯಾನಿಲಯದ ಬಹಿರಂಗ ವೇದಿಕೆಯಲ್ಲಿ ಈ ಮಾತನ್ನು ಹೇಳಿದ್ದು, ಅದನ್ನು ಕನ್ನಡದ ಸಾಹಿತ್ಯವನ್ನು ಅಭ್ಯಸಿಸುವ ಯಾವೊಬ್ಬ ವಿದ್ಯಾರ್ಥಿಯಾಗಲೀ, ಕನ್ನಡವನ್ನು ಅಲ್ಪಸ್ವಲ್ಪ ಓದಿಕೊಂಡಿರೋ ಒಬ್ಬ ಸಾಮಾನ್ಯನಾಗಲೀ, ವೇದಿಕೆಯ ಮೇಲೆ ಕುಳಿತ ಇತರ ಗಣ್ಯರಾಗಲೀ ಅಥವಾ ಅಧ್ಯಕ್ಷರಾಗಲೀ ಈ ಮಾತಿನ ಹಿಂದಿನ ಔಚಿತ್ಯವನ್ನು ಪ್ರಶ್ನಿಸಬಹುದಿತ್ತು, ಕೊನೆಗೆ ಏನಿಲ್ಲವೆಂದರೂ ತಮ್ಮ ಅಧ್ಯಕ್ಷ ಭಾಷಣದಲ್ಲಿ ಪುತಿನರವರ ಬಗೆಗೆ ಹೇಳಿದ್ದನ್ನೆಲ್ಲಾ ಸಮರೈಸ್ ಮಾಡುತ್ತಾ ಕೃಷ್ಣಮೂರ್ತಿಯವರನ್ನು ಕೆಣಕಬಹುದಿತ್ತು, ಹಾಗೇನೂ ಆಗಲಿಲ್ಲ, ಆದರೆ ಹಲವಾರು ತಿಂಗಳುಗಳ ಮೇಲೆ ಯಾರದ್ದೋ ಕಣ್ಣೀರು ಒರೆಸುವ ಹಾಗೆ, ಕನ್ನಡಸಾಹಿತ್ಯವನ್ನು ಕೊಂಡುಕೊಂಡೋರ ಹಾಗೆ ದೊಡ್ಡದಾಗಿ ಲೇಖನವನ್ನು ಬರೆದಿದ್ದಾರೆ ಅದಕ್ಕೇ ಅವರನ್ನು ಮಹಾನೀಚ ಎಂದು ಕರೆದದ್ದು.

ಇನ್ನು ಕೃಷ್ಣಮೂರ್ತಿಯವರಿಗೆ ಈ ಮಾತು ಅನ್ವಯವಾಗುತ್ತದೆ - ಅವರು ನಿಜಕ್ಕೂ 'ಪುತಿನ ಅವರು ಓದಲರ್ಹವಾದ ಒಂದೇ ಒಂದು ಸಾಲನ್ನೂ ಬರೆದಿಲ್ಲ' ಎಂದರೆ ಖಂಡಿತ ತಪ್ಪುತಿಳಿದುಕೊಂಡಿದ್ದಾರೆ, ಆ ಮಾತು ನಿಜವಲ್ಲ. ಪುತಿನ ಅವರು ಬರೆದದ್ದು ಬೇಕಾದಷ್ಟಿದೆ, ದಶಕಗಳ ಕಾಲ ಸಾಹಿತ್ಯ ಕೃಷಿಯನ್ನು ಮಾಡಿದವರು ಪುತಿನ. ವಿದೇಶದ ಮ್ಯೂಸಿಕಲ್‌ಗಳಿಂದ ಪ್ರೇರೇಪಿತರಾಗಿ ಕನ್ನಡದಲ್ಲಿ ಅವತರಣಿಕೆಗಳನ್ನು ಬರೆದವರು ಪುತಿನ. ತೀನಂಶ್ರೀ ಯವರ ಗರಡಿಯಲ್ಲಿ ಪಳಗಿ ಮೈಸೂರಿನ ಮಹಾ ಸಾಹಿತಿಗಳ ಯಾದಿಯಲ್ಲಿ ನಿಲ್ಲುವವರು ಪುತಿನ. ಅವರ ಹಲವಾರು ಪದ್ಯಗಳು, ನಾಟಕಗಳು ಇವತ್ತಿಗೂ ಜನಜನಿತ. ಇಂಥವರು 'ಒಂದೇ ಒಂದು ಓದಲರ್ಹವಾದ ಸಾಲನ್ನೂ ಬರೆದಿಲ್ಲವೇ?'. ನನಗೆ ಇದರಿಂದ ಕೃಷ್ಣಮೂರ್ತಿಯವರಲ್ಲಿಯೇ ನಂಬಿಕೆ ಕಡಿಮೆ ಆಯಿತೇ ವಿನಾ ಪುತಿನರವರ ಮೇಲಿರುವ ಗೌರವ ಇನ್ನೂ ಇಮ್ಮಡಿಗೊಂಡಿತು. ಕೃಷ್ಣಮೂರ್ತಿಯವರು 'ಓದಲರ್ಹ' ಎಂದು ಯಾವುದನ್ನು ಕರೆಯುತ್ತಾರೆ? ಅವರ ಪಿಎಚ್‌ಡಿ ಥೀಸೀಸ್ ಏನಾದರೂ ಸಿಕ್ಕಿದ್ದರೆ ನೋಡಬಹುದಿತ್ತು, ಅಥವಾ ಅದನ್ನೆಲ್ಲಾದರೂ 'ಸಂಪಾದನೆ' ಮಾಡಿದ್ದಾರೆಯೇ ಎನ್ನುವ ಅನುಮಾನವೂ ಬರದೇ ಇಲ್ಲ. ನಾನು ಅಲ್ಪಸ್ವಲ್ಪ ಕನ್ನಡ ಸಾಹಿತ್ಯವನ್ನು ಓದಿಕೊಂಡವನು, ನನಗೇ ಇಷ್ಟೊಂದು ಉರಿಸಿದ ಅವರನ್ನು ಉಳಿದವರು ಅದು ಹೇಗೆ ಸುಮ್ಮನೇ ಬಿಟ್ಟರು ಎಂದು ಆಶ್ಚರ್ಯವಾಗುತ್ತದೆ. ಇನ್ನು ಮುಂದೆಂದಾದರೂ ಹೀಗೆ ಅಯೋಗ್ಯ ಹೇಳಿಕೆಗಳನ್ನು ಹೇಳದಿದ್ದರೆ ಅವರಿಗೇ ಒಳ್ಳೆಯದು. ದಿವಾಕರ್ ಹೇಳಿದ್ದೆಲ್ಲವೂ ನಿಜವಾದರೆ ಕೃಷ್ಣಮೂರ್ತಿಯಂತಹ ಮಹಾನೀಚ ಕನ್ನಡ ಅಧ್ಯಾಪಕರನ್ನು ನಾನೆಲ್ಲೂ ನೋಡಿಲ್ಲ.

***

"ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎನ್ನುವ ಪ್ರಶ್ನೆಗೆ ನನ್ನಲ್ಲಿ ಉತ್ತರವಿದೆ: ಇಪ್ಪತ್ತೈದು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ, ಕನ್ನಡಕ್ಕೆ ಈಗೆಲ್ಲ ಇರುವವರು ನನ್ನಂತಹ ಕೈಲಾಗದವರು, ದಿವಾಕರ್ ಅಂತಹ ಬಸವನಹುಳುವಿನ ತರಹ ಕೊರಗಿ ಪ್ರತಿಕ್ರಿಯೆ ನೀಡುವ ಅಧಕ್ಷರು, ಕೃಷ್ಣಮೂರ್ತಿಯವರಂತಹ ನಾಲಿಗೆಯ ಮೇಲೆ ಹತೋಟಿಯಿರದ, ಬಾಯಿಗೆ ಬಂದಿದ್ದನ್ನು ಆಡುವ ಮೇಷ್ಟ್ರುಗಳು. 'ಕೈಲಾಗದವನು ಮೈ ಪರಚಿಕೊಂಡನಂತೆ' ಎಂದು ನನ್ನಂಥವರು ಈ ಪ್ರತಿ ಲೇಖನವನ್ನು ಬರೆದು ಕೈ ತೊಳೆದುಕೊಳ್ಳುತ್ತಾರೆ, ದಿವಾಕರ್ ಅಂಥವರು ಹಲವಾರು ತಿಂಗಳುಗಳ ನಂತರವಾದರೂ ಒಂದು ಕೆಟ್ಟ ಲೇಖನದಲ್ಲಿ ಸ್ಪಂದಿಸುತ್ತಾರೆ, ಕೃಷ್ಣಮೂರ್ತಿಯಂಥವರಿಗೆ ಸೂಕ್ಷ ಸಂವೇದನೆಗಳು ಅರ್ಥವೇ ಆಗೋದಿಲ್ಲ, ಆ ಸಭೆಯಲ್ಲಿದ್ದ ಸಭಿಕರು ಒಂದು ಕ್ಷಣದ ಮಟ್ಟಿಗೆ ನರಸತ್ತವರಾಗಿ ಬಿಡುತ್ತಾರೆ. ನಮ್ಮ ಸಾಹಿತ್ಯ ಲೋಕಕ್ಕೆ ಏನಾಗಿದೆ ಎಂದರೆ ಇಂಥ ನರಸತ್ತವರ ಕೊಡುಗೆ ಹೆಚ್ಚಾಗಿದೆ, ಸತ್ವವಿರುವವರು ಸಮಸ್ಯೆಗಳಿಂದ ದೂರವೇ ಉಳಿದಿದ್ದಾರೆ, ಸತ್ವವಿರದವರು ತುಂಬದ ಕೊಡದ ಹಾಗೆ ಬಡಬಡಿಸುತ್ತಾರೆ. ಇಪ್ಪತ್ತೈದೇನೂ ಇನ್ನೂರೈವತ್ತು ವರ್ಷಗಳು ಹೋದರೂ ಇದರಿಂದ ಪರಿಸ್ಥಿತಿಯ ಬದಲಾವಣೆ ಆಗೋದಿಲ್ಲ. ಅಷ್ಟೂ ಮಾಡಿ ದಿವಾಕರ್ ಅಂತಹವರಿಗೆ "ಏನಾಗಿದೆ" ಎನ್ನುವ ಪ್ರಶ್ನೆಯನ್ನು ಕೇಳುವ ಹಕ್ಕೂ ಇಲ್ಲ, ಏಕೆಂದರೆ ಅವರ ವ್ಯಾಖ್ಯೆಯಲ್ಲಿ ಎಲ್ಲವೂ ಇಪ್ಪತ್ತೈದು ವರ್ಷಗಳ ಹಿಂದಿನ ಸಂದರ್ಭಗಳಿಗೆ ಸ್ಪಂದಿಸಬೇಕಾಗುತ್ತದೆ.

ದಿವಾಕರ್ ಅವರ ಲೇಖನಕ್ಕೆ 'ವಾಚಕರ ವಾಣಿ'ಯಲ್ಲಿ ಯಾರಾದರೂ ಸ್ಪಂದಿಸುತ್ತಾರೆಯೋ ಎಂದು ದಿನವೂ ಕಾದು ನೋಡುತ್ತೇನೆ. ಇಲ್ಲವೆಂದರೆ ಸಾಮಾನ್ಯ ಜನರೂ ತಮ್ಮ-ತಮ್ಮ ಗಂಟಲನ್ನು ವ್ಯಸ್ತ ಜೀವನಕ್ಕೆ ಧಾರೆ ಎರೆದುಕೊಟ್ಟುಬಿಟ್ಟಿದ್ದಾರೆಂದುಕೊಂಡು ದೊಡ್ಡ ನಿಟ್ಟುಸಿರೊಂದನ್ನು ಬಿಡುತ್ತೇನೆ.

Saturday, June 03, 2006

ಕರುಣಾನಿಧಿಯ ಕಣ್ಣನ್ನು ಕಂಡವರು ಯಾರು?


ಕಂಪ್ಯೂಟರ್ ಶುರುಮಾಡಿದೊಡನೆ ಕನ್ನಡಪ್ರಭದ ಮುಖಪುಟದಲ್ಲಿ "೨ ರೂ. ಗೆ ಕೆಜಿ ಅಕ್ಕಿ ಯೋಜನೆ ಉದ್ಭಾಟಿಸಿದ ಕರುಣಾನಿಧಿ" ಬರಹ ದುತ್ತನೆ ಎದುರಾಗಿ ನಮ್ಮ ರಾಮಕೃಷ್ಣ ಹೆಗಡೆಯವರ ಆಡಳಿತ ಕನಸನ್ನು ನೆನಪಿಗೆ ತಂದಿತು. ನಮ್ಮ ಕರ್ನಾಟಕ ರಾಜ್ಯ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗಡೆಯವರದು ಅಗ್ರಮಾನ್ಯ ಹೆಸರು. ನಾನು ಶಾಲಾದಿನಗಳಿಂದಲೂ ಅವರ ದೊಡ್ಡ ಫ್ಯಾನ್. ವಿದ್ಯಾಭ್ಯಾಸ, ಅನುಭವ, ಅರ್ಹತೆ ಹಾಗೂ ಧುರೀಣರಾಗಿ ಅವರನ್ನು ಮೀರಿಸುವ ಮತ್ತೊಬ್ಬ ರಾಜಕಾರಣಿ ನಮ್ಮ ರಾಜ್ಯದಲ್ಲಿ ಮತ್ತೊಬ್ಬರು ಇರಲಾರರು. ಹೆಗಡೆಯವರನ್ನು ನೆನಪಿಗೆ ತಂದುಕೊಂಡಾಗ ಅವರ ಕ್ಷಿಪ್ರ ಹಾಸ್ಯ, ಅತ್ಯುತ್ತಮ ಇಂಗ್ಲೀಷ್ ಮಾತು, ಬರಹಗಳ ಜೊತೆಗೆ ಮಂಡಲ ಪಂಚಾಯತಿಯನ್ನು ರಾಜ್ಯದ ಮೂಲೆಮೂಲೆಯಲ್ಲಿ ಹುಟ್ಟು ಹಾಕಿಸಿ ಬೆಳೆಸಿ 'ಹಳ್ಳಿಗಳ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ' ಎನ್ನುವ ಗಾಂಧೀಜಿಯವರ ಕನಸನ್ನು ನನಸು ಮಾಡಿದ ಮೊಟ್ಟ ಮೊದಲ ಆಡಳಿತಗಾರನಾಗಿ ಅವರು ನನಗೆ ಕಂಡುಬರುತ್ತಾರೆ. ಅವರ ಕಾಲದಲ್ಲಿಯೇ(ಯೂ) ಹಸಿರು-ಕೇಸರಿ ಕಾರ್ಡುಗಳ ಜೊತೆಗೆ ಬಡಬಗ್ಗರಿಗೆ ಎರಡು ರೂಪಾಯಿಗೆ ಒಂದು ಕೆಜಿ ಅಕ್ಕಿ ಹಾಗೂ ವಿದ್ಯಾರ್ಥಿಗಳಿಗೆ ಪುಕ್ಕಟೆ ಪುಸ್ತಕ ವಿತರಣೆ ಮುಂತಾದ ಮಹಾಯೋಜನೆಗಳು ಅನುಷ್ಟಾನಕ್ಕೆ ಬಂದದ್ದು.

***

ತಮಿಳುನಾಡಿನ ರಾಜಕೀಯದಲ್ಲಿ ನನ್ನ ತಲೆಮಾರಿನವರಿಗೆ ರಾಜಕಾರಣಿಗಳಾಗಿ ಪರಿಚಯವಿರೋರಲ್ಲಿ ಇಬ್ಬರು ಬಹು ಮುಖ್ಯವಾದವರು: ಒಬ್ಬರು ಕರುಣಾನಿಧಿ, ಇನ್ನೊಬ್ಬರು ಜಯಲಲಿತಾ. ೧೯೮೯ರಿಂದ, ಇತ್ತೀಚೆಗೆ ೨೦೦೧ರಲ್ಲಿ ಪನ್ನೀರ್ ಸೆಲ್ವಮ್ ಅವರ ಐದು ತಿಂಗಳ ಆಡಳಿತವನ್ನು ಬಿಟ್ಟರೆ, ಇಲ್ಲಿಯವರೆಗೂ ಒಂದೇ ಕರುಣಾನಿಧಿ ಅಥವಾ ಜಯಲಲಿತಾ ಮುಖ್ಯಮಂತ್ರಿಗಳಾಗಿ ಆಡಳಿತವನ್ನು ಹಂಚಿಕೊಂಡು ಬರುತ್ತಲೇ ಇದ್ದಾರೆ. ಸುಮಾರು ಈ ಎರಡು ದಶಕಗಳಲ್ಲಿ ಐದಾರು ಬಾರಿ ಸರ್ಕಾರಗಳು ಬದಲಾಗಿದ್ದರೂ ಒಮ್ಮೆ ಸೋತ ಕರುಣಾನಿಧಿ ಅಥವಾ ಜಯಲಲಿತಾ ಹಾಗೂ ಅವರ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಜಯಗಳಿಸಿಯೇ ತೀರುತ್ತವೆ. ಹೀಗೆ ನಾನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಕರುಣಾನಿಧಿಗೂ ೮೪ ವರ್ಷವಾಯಿತು ಎಂದು ಗೊತ್ತಾದ ಮೇಲಂತೂ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಾನು ಶಾಲೆಗೆ ಹೋಗುತ್ತಿದ್ದಾಗ ಐವತ್ತು ಅರವತ್ತರ ಹರೆಯದಲ್ಲೇ ಅಷ್ಟೊಂದು 'ಉರಿದ' ಕರುಣಾನಿಧಿಯ ದೀಪದ ಬುಡ್ಡಿ ಇನ್ನೂ ಸೊರಗಿಲ್ಲವೆಂದರೆ? ಕರುಣಾನಿಧಿಯನ್ನು ಯಾರು ಏನಾದರೂ ಅಂದುಕೊಳ್ಳಲಿ ಅವರ ತಮಿಳು ಭಕ್ತಿ ಅಪಾರವಾದುದು, ಒಂದುಕಡೆ ಜಯಲಲಿತಾ ಇಂಗ್ಲೀಷ್‌ನಲ್ಲಿ ನಿರರ್ಗಳವಾಗಿ ಮಾತನಾಡಿ ದಿಲ್ಲಿಯಲ್ಲಿದ್ದವರಿಗೆ ಮಂಕು ಕವಿದರೆ ಮತ್ತೊಂದು ಕಡೆ ಕರುಣಾನಿಧಿ ತಮಿಳಿನಲ್ಲೇ ಎಲ್ಲವನ್ನೂ ನಡೆಸಿಕೊಂಡು ಬಂದಿದ್ದಾರೆ. ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಈ 'ಮಹಾ' ಮುತ್ಸದ್ಧಿಗಳಿಬ್ಬರೂ ಮೊದಲೇ ಯಾವುದೋ ಅವ್ಯಕ್ತ ಸಂಚಿನಲ್ಲಿ ಪಾಲುದಾರರಾದಂತೆ ದೆಹಲಿಯ ಭೂಪರಿಗೆ ಮಂಕುಬೂದಿ ಎರಚಿ ತಮ್ಮ ನಾಡಿನ ಹಿತಗಳನ್ನು ಸಾಧಿಸಿಕೊಳ್ಳಬಲ್ಲರು. ಅದು ಹೊಸ ರೈಲು ಯೋಜನೆ ಇರಲಿ, ನೆರೆ ಸಂತ್ರಸ್ಥರಿಗೆ ಪರಿಹಾರವಿರಲಿ, ನೀರಿನ ವಿಷಯವಾಗಲಿ, ಮತ್ತೊಂದಾಗಲಿ ತಮಿಳು ನಾಡಿನ ಜನರನ್ನು ಕರುಣಾನಿಧಿ ಹಾಗೂ ಅವರ ಪಕ್ಷಗಳು ಬಿಟ್ಟುಕೊಡುವುದಿಲ್ಲ, ಜನರ ಹಿತಕ್ಕೋಸ್ಕರ ಕೆಲಸ ಮಾಡುವ ಅವರ ಪರಂಪರೆಯೇ ಅವರನ್ನು ಸದಾ ಗೆಲ್ಲಿಸುವುದು, ಯಾರ ವಿರುದ್ಧ ಯಾವುದೇ ಮೊಕದ್ದಮೆಗಳಿರಲಿ, ಜಯಲಲಿತಾ ಹಾಗೂ ಕರುಣಾನಿಧಿ ತಮ್ಮನ್ನು ಶರಣಾಗತರನ್ನಾಗಿಸಿಕೊಳ್ಳೋದಿಲ್ಲ, ಅವರಿಗೋಸ್ಕರವೇ ಸುದ್ದಿಗಳನ್ನು ತಿದ್ದಿ ಬಿತ್ತರಿಸುವ ಟೆಲಿವಿಜನ್ ನೆಟ್‌ವರ್ಕ್‌ಗಳಿವೆ, ಪೇಟೆಯಲ್ಲಿ 'ಥೂ' ಎಂದರೂ ಹಳ್ಳಿಗಳಲ್ಲಿ ಆರಾಧಿಸುವವ ಜನರಿದ್ದಾರೆ, ವಿತರಿಸಲು ಬೇಕಾದಷ್ಟು ಅಕ್ಕಿ ಇದೆ, ಹಂಚಲು ಭೂಮಿ ಇದೆ, ಇಬ್ಬರೂ ಹೊಟ್ಟೆ ತುಂಬಿದವರು, ಹಾಗೂ ಎಲ್ಲಕ್ಕೂ ಮಿಗಿಲಾಗಿ ಇವರ ಭಿನ್ನಾಭಿಪ್ರಾಯಗಳನ್ನು ಹೆಣೆದು ಜೋಡಿಸುವ ತಮಿಳು ಪರಂಪರೆ ಇದೆ - ಯಶಸ್ವಿಯಾಗಲು ಇನ್ನೇನು ಬೇಕು?

***

೨೦೦೧ ರಲ್ಲಿ ಕರುಣಾಧಿಯನ್ನು ಜೂನ್ ೩೦ ರ ಬೆಳಗಿನ ಜಾವ ಅವರ ಮನೆಯಲ್ಲಿ ಪೋಲೀಸರು ಹೊಡೆದು ಬಡಿದು ಬಂಧಿಸಿದ ಘಟನೆ ಯಾರಿಗೆ ತಾನೆ ಗೊತಿಲ್ಲ? ಇದಕ್ಕೆ ಕೆಲವು ವರ್ಷಗಳ ಹಿಂದೆ ಜಯಲಲಿತಾರನ್ನು ಬಂಧಿಸಿ ಜೈಲು ಸೇರಿಸಿದ್ದ ಅಪ್ಪ ಮಗನ ಮೇಲೆ ಸೇಡು ತೀರಿಸಿಕೊಳ್ಳುವ ಜಯಲಲಿತಾರ ಪ್ಲಾನು ಅದಾಗಿತ್ತು, ಅದಕ್ಕೆ ೧೨ ಕೋಟಿ ರುಪಾಯಿಗಳ ಫ್ಲೈ ಓವರ್ ಸ್ಕ್ಯಾಮ್ ಎನ್ನುವುದು ಬರೀ ನೆಪಮಾತ್ರ. ಈ ಸಂದರ್ಭದಲ್ಲಿ ರಿಡಿಫ್‌ನಲ್ಲಿ ಘಟನೆಗಳ ಗ್ರಾಫಿಕ್ ವರದಿಯನ್ನು ನಾನು ನೋಡಿದ್ದೆ, ಆ ಸಂದರ್ಭದಲ್ಲಿ ತೆಗೆದ ಹಲವಾರು ಚಿತ್ರಗಳಲ್ಲಿ ಯಾವುದೋ ಒಂದರಲ್ಲಿ ಕರುಣಾನಿಧಿಯ ಕಪ್ಪು ಕನ್ನಡಕ ಜಾರಿ ಹೋಗಿ ಅವರ ಯಾವತ್ತೂ ಕಾಣದ ಕಣ್ಣುಗಳ ದರ್ಶನ ಎಲ್ಲರಿಗೂ ಆಗಿತ್ತು. ಈ ಚಿತ್ರವನ್ನು ಎಷ್ಟು ಹುಡುಕಿದರೂ ಇಂದು ಸಿಗದೇ ಹೋಗಿ ಆ ಘಟನೆಯನ್ನು ನೆನಪಿಗೆ ತರುವ ಕೆಲವು ಚಿತ್ರಗಳನ್ನು ಇಲ್ಲಿ ತೋರಿಸಿದ್ದೇನೆ.

ನಮ್ಮಲ್ಲಿಯ ಮಕ್ಕಳು 'ಅಮ್ಮಾ ಸದಾ ಅವರೇಕೆ ಕಪ್ಪು ಕನ್ನಡಕವನ್ನು ಹಾಕಿಕೊಂಡಿರುತ್ತಾರೆ?' ಎಂದು ಪ್ರಶ್ನಿಸುತ್ತಾರೋ ಇಲ್ಲವೋ ಕರುಣಾನಿಧಿಯ ಕಪ್ಪು ಕನ್ನಡಕದ ಹಿಂದಿನ ರಹಸ್ಯ ಹೆಚ್ಚು ಜನರಿಗೆ ಗೊತ್ತಿಲ್ಲ, ನಾನು ಮದ್ರಾಸಿನಲ್ಲಿ ಕೆಲಸಮಾಡುತ್ತಿರುವಾಗ ನನ್ನ ಸ್ಥಳೀಯ ಸಹೋದ್ಯೋಗಿಗಳಿಗೆ ಕೇಳಿದಾಗ ಯಾರೊಬ್ಬರೂ ಸಮಾಧಾನಕರವಾಗಿ ಉತ್ತರಿಸಿಲ್ಲ - ಕರುಣಾನಿಧಿಯ ಒಂದು ಕಣ್ಣು ಕುರಿಗಣ್ಣು, ಒಂದು ಕಣ್ಣು ಕಾಣೋದೇ ಇಲ್ಲ ಮುಂತಾದ ದಂತ ಕಥೆಗಳನ್ನು ಕೇಳಿ ಸುಮ್ಮನಿರಬೇಕಾಗಿತ್ತು. ಏನನ್ನು ಕೇಳಿದರೂ ಅವರದೇ ಆದ ರೀತಿಯಲ್ಲಿ ಉತ್ತರ ಕೊಡುವ ತಮಿಳರಿಂದ ತಿಳಿದುಕೊಂಡ ವಿಷಯವನ್ನು ಪರಾಮರ್ಶಿಸದೇ ನಂಬುವುದೇ ಬಲು ಕಷ್ಟ, ನನ್ನ ಜೊತೆಯಲ್ಲಿ ಇಂಜಿನಿಯರಿಂಗ್ ಮುಂತಾದ ಪದವಿಗಳನ್ನು ಓದಿಕೊಂಡವರೂ ಮಣಿರತ್ನಮ್ಮೇ 'ಪ್ರಪಂಚ'ದಲ್ಲಿನ ಬೆಸ್ಟ್ ಡೈರೆಕ್ಟರ್, ಎ.ಆರ್. ರೆಹಮಾನೇ 'ಪ್ರಪಂಚ'ದ ಬೆಸ್ಟ್ ಮ್ಯೂಸಿಕ್ ಕಂಪೋಸರ್, ಮೌಂಟ್ ರೋಡಿನ ಹತ್ತು-ಹನ್ನೊಂದು ಮಹಡಿಗಳ ಎಲ್.ಐ.ಸಿ. ಕಟ್ಟಡವೇ 'ಪ್ರಪಂಚ'ದಲ್ಲಿ ದೊಡ್ಡ ಕಟ್ಟಡ ಎಂದು ರಾಜಾರೋಷವಾಗಿ ಇತರರ ನಂಬಿಕೆಗಳನ್ನೆಲ್ಲ ಒಂದೇ ಸಮನೆ ಬುಡಮೇಲು ಮಾಡುವಂತೆ ಪುಂಕಾನುಪುಂಕವಾಗಿ ಹೊರಬರುತ್ತಿದ್ದ ಇತರ ಇನ್ನಿತರ ಅವರ ಪ್ರಪಂಚದ ದೊಡ್ಡಸ್ತಿಕೆಗಳನ್ನೆಲ್ಲ ಕೇಳಿ ಸಹಿಸಿಕೊಳ್ಳಬೇಕೆಂದರೆ ಅಪಾರ ತಾಳ್ಮೆ ಇರಲೇಬೇಕು. ಆದ್ದರಿಂದಲೇ ಮೋಕ್ಷವನ್ನು ಪಡೆಯಲು ತಪಸ್ಸು ಮಾಡುವುದಕ್ಕಾಗಿ ಹಿಮಾಲಯಕ್ಕೆ ಹೋಗುವುದರ ಬದಲಾಗಿ ಮದ್ರಾಸಿಗೆ ಹೋಗಿ ಎಂದು ನನ್ನ ಸ್ನೇಹಿತರಿಗೆ ನಾನು ತಮಾಷೆ ಮಾಡೋದು.

***

ಯಾವ ಪತ್ರಿಕೆಗಳವರ ಕಿಡು ನುಡಿಗೂ ಕರುಣಾನಿಧಿಯ ಕನ್ನಡಕದ ಹಿಂದಿನ ಮರ್ಮವನ್ನು ಅರಿಯಲಾಗಲಿಲ್ಲ, ಎಂತಹ ಅದ್ಭುತವಾದ ಬೆಳಕಿಗೂ ಅವರ ಕಪ್ಪು ಕನ್ನಡಕವನ್ನೆದುರಿಸುವ ಸಾಹಸ ಒದಗಿ ಬಂದಿಲ್ಲ, ಜಯಲಲಿತಾ ಕರುಣಾನಿಧಿಯನ್ನು ಜೈಲಿಗೆ ಹಾಕಿ ಉಸ್ಸಂತ ಉಸಿರು ಬಿಟ್ಟಿದ್ದೂ ಹೆಚ್ಚು ಕಾಲ ನಿಲ್ಲಲಿಲ್ಲ. ಈ ಕರುಣಾನಿಧಿ ಮತ್ತೆ-ಮತ್ತೆ ಅಧಿಕಾರಕ್ಕೆ ಬರುತ್ತಲೇ ಇರುತ್ತಾರೆ, ಅವರ ಬಳಿಕ ಅವರ ಮಗನಿಗೆ ಮುಂದೆ ಬರುವ ಎಲ್ಲ ಅವಕಾಶಗಳೂ ಇವೆ. ೮೫ ವರ್ಷದ ಹತ್ತಿರ-ಹತ್ತಿರ ಇದ್ದು ಇನ್ನೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಕರುಣಾನಿಧಿ ಭಾರತದ ರಾಜಕಾರಣಿಗಳ ಯಾದಿಯಲ್ಲಿ ಬಹಳ ದೊಡ್ಡ ಮನುಷ್ಯರಾಗಿ ಉಳಿಯುತ್ತಾರೆ, ಅವರ ಶಿಸ್ತು, ಹಿಂದೆ ಬಿದ್ದು ಮುಂದೆ ಬರಬಹುದಾದ ಕೆಚ್ಚು ಹಾಗೂ ತಮಿಳುನಾಡಿನ ಬಡವರ ಮೇಲಿನ ಅಪಾರ ಕಳಕಳಿ ಇವೆಲ್ಲದರ ಹತ್ತನೇ ಒಂದು ಭಾಗದಷ್ಟು ಕರ್ನಾಟಕದ ರಾಜಕಾರಣಿಗಳಲ್ಲಿದ್ದರೆ ಅದರ ಕಥೆಯೇ ಬೇರೆಯಿರುತ್ತಿತ್ತು.

Friday, June 02, 2006

ಬನಾರಸ್ಸಿನ ಬದುಕು - ಭಾಗ ೨

ಹೀಗೇ ಬನಾರಸ್ಸಿನ ಬಗ್ಗೆ ಯೋಚಿಸಿ ಎರಡನೇ ಭಾಗವನ್ನು ಬರೆದರೆ ಹೇಗೆ ಯೋಚಿಸುತ್ತಿದ್ದಾಗ ಕಾಕತಾಳೀಯವಾಗಿ ನಿನ್ನೆ ರಾಮಚಂದ್ರ ಸಿಂಗ್‌ನಿಂದ ಒಂದು ಇ-ಮೇಲ್ ಬಂದಿತು. 'ನಾನು ರಾಮ್ ಸಿಂಗ್, ಪ್ರೊಫೆಸ್ಸರ್ ವೈ.ಸಿಂಗ್ ಕೆಳಗೆ ಕೆಲಸ ಮಾಡುತ್ತಿದ್ದವ, ನಿನ್ನ ಸೀನಿಯರ್ ಆಗಿದ್ದೆ, ಯಾರೋ ನಿನ್ನ ಇ-ಮೇಲ್ ಐಡಿಯನ್ನು ಕೊಟ್ಟರು, ನೀನೇನಾ ಆ ಮನುಷ್ಯ, ನನ್ನ ಪರಿಚಯವಿದ್ದರೆ ಉತ್ತರಿಸು' ಎಂದು ಚಿಕ್ಕದಾಗಿ ಒಂದು ಇ-ಮೇಲ್ ಬರೆದಿದ್ದ (ಕೆಳಗೆ ಸಿಗ್ನೇಚರ್ ಆಗ್ರಾದ ಆನಂದ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸ್ಸರ್ ಎಂಬ ಟೈಟಲ್ ಅನ್ನು ಹೊತ್ತುಕೊಂಡಿತ್ತು). ಪಾಪ, ರಾಮ್ ಸಿಂಗ್ ಹೋಗೀ-ಹೋಗಿ ಪ್ರೊಫೆಸರ್ ವೈ.ಸಿಂಗ್ ಕೆಲಗಡೆ ಸಿಕ್ಕಿಹಾಕಿಕೊಂಡು ಥಿಯರಿಟಿಕಲ್ ಫಿಸಿಕ್ಸ್‌ನಲ್ಲಿ ಪಿ.ಎಚ್.ಡಿ. ಮುಗಿಸುವಾಗ ಸುಮಾರು ಎಂಟು ವರ್ಷಕ್ಕೂ ಮೇಲೆ ಹಿಡಿದಿತ್ತು. ರಾಮ್ ಸಿಂಗ್ ತಂದೆ ಬನಾರಸ್ಸಿನ ಎಕನಾಮಿಕ್ಸ್ ವಿಭಾಗದಲ್ಲಿ ದೊಡ್ಡ ಪ್ರೊಫೆಸರ್ ಆಗಿದ್ದವರು, ರಾಮ್ ಸಿಂಗ್ ಹುಟ್ಟಿ ಬೆಳೆದದ್ದೆಲ್ಲ ಬಿ.ಎಚ್.ಯು. ವಾತಾವರಣದಲ್ಲಿಯೇ.

ನಾನು ಬನಾರಸ್ಸನ್ನು ಸೇರಿಕೊಂಡಿದ್ದು ಜ್ಯೂನಿಯರ ರಿಸರ್ಚ್ ಫೆಲ್ಲೋ ಆಗಿ, ಆದರೆ ಅಲ್ಲಿ ಸೇರಿಕೊಳ್ಳುವುದಕ್ಕಿಂತ ಮೊದಲು ರಾಮ್ ಸಿಂಗ್‌ನ ಯಾವುದೇ ಪರಿಚಯವಿರಲಿಲ್ಲ. ನಾನು ಡಿಪಾರ್ಟ್‌ಮೆಂಟಿನ ಮೊದಲ ದಿನವೇ ಪ್ರೊಫೆಸ್ಸರ್ರನ್ನು ಭೇಟಿ ಮಾಡಿ, ಅವರ ಮೂಲಕವೇ ಎಲ್ಲರಿಗೂ ಪರಿಚಿತನಾದದ್ದರಿಂದ ರಾಮ್ ಸಿಂಗ್ ನನಗೆ ಗೊತ್ತಾಗಿದ್ದು ಅಲ್ಲಿಗೆ ನಾನು ಸೇರಿಕೊಂಡ ಮೇಲೆಯೆ. ನನ್ನ ಬಳಿ ರಾಮ್ ಸಿಂಗ್ ಎಷ್ಟೋ ಸಾರಿ ತನ್ನ ಕಷ್ಟಗಳನ್ನು ತೋಡಿಕೊಂಡಿದ್ದ - ಅದು ಹೇಗೆ ಅವನು ಈ ವೈ. ಸಿಂಗ್ ರ ಚಕ್ರದಲ್ಲಿ ಸಿಕ್ಕಿ ಬಿದ್ದನೋ ಏನೋ ನಾನು ಹೋಗಿ ಸೇರುವಾಗ ಅವನು ವೈ. ಸಿಂಗರ ಜೊತೆ ನಾಲ್ಕು ವರ್ಷದ ಮೇಲೆ ಕೆಲಸ ಮಾಡಿದ್ದರೂ ಅವನ ಬಳಿ ಅಂತಾರಾಷ್ಟ್ರ್‍ಈಯ ಮಟ್ಟದಲ್ಲಿ ಪ್ರಕಟವಾದಂತೆ ಇದ್ದದ್ದು ಕೇವಲ ಎರಡೇ ಎರಡು ಪೇಪರುಗಳು. ಅವನ ಕಣ್ಣ ಮುಂದೆಯೇ ಎಷ್ಟೋ ಜನ ಎಮ್.ಎಸ್ಸಿ., ಮುಗಿಸಿ ಪಿ.ಎಚ್.ಡಿಯ ಥೀಸೀಸ್ ಅನ್ನು ಪ್ರೆಸೆಂಟ್ ಮಾಡಿದಾಗ ಬಹಳ ನೊಂದುಕೊಂಡೇ ಅವೆಲ್ಲವನ್ನೂ ಸಹಿಸಿಕೊಂಡು ಒಂದು ರೀತಿಯ ರೆಬೆಲ್ ಥರಾ ಆಗಿ ಹೋಗಿದ್ದ. ತನಗೆ ಪಿ.ಎಚ್.ಡಿ ಬರುವ ಮುನ್ನ ಬೇರೆ ಯಾರಿಗೂ ವೈ. ಸಿಂಗ್ ಅಡಿಯಲ್ಲಿ ಕೆಲಸ ಸಿಗಬಾರದು, ತನ್ನನ್ನು 'ಈ' ಸ್ಥಿತಿಗೆ ತಂದ ವೈ. ಸಿಂಗ್‌ಗೆ ಒಂದು ಕೈ ತೋರಿಸಿಯೇ ಬಿಡುತ್ತೇನೆ ಎಂದು ಅವನ ರಜಪೂತ ರಕ್ತ ಕುದಿಯುತ್ತಿತ್ತು. ಹೀಗೆ ಉತ್ತರ ಭಾರತದ ಎಲ್ಲೆಲ್ಲಿಂದಲೋ ಅದೆಷ್ಟೋ ಜನರು ಬಂದು ವೈ. ಸಿಂಗ್ ಅಡಿಗೆ ಸೇರಿಕೊಂಡಿದ್ದರೂ ಅವರೆಲ್ಲರನ್ನೂ ರಾಮ್ ಸಿಂಗ್ ಒಂದಲ್ಲ ಒಂದು ರೀತಿಯಲ್ಲಿ ತೊರೆಯುವಂತೆ ಮಾಡಿದ್ದ. ಈ ವಿಷಯ್ ವೈ. ಸಿಂಗ್‌ಗೂ ಗೊತ್ತಿತ್ತೆಂದು ಕಾಣುತ್ತದೆ, ಆದ್ದರಿಂದಲೇ ರಾಮ್ ಸಿಂಗ್ ಮತ್ತು ವೈ ಸಿಂಗ್ ರ ಸಂಬಂಧ ಅಷ್ಟಕಷ್ಟೇ ಇತ್ತು - ಈ ಪಿ.ಎಚ್.ಡಿ. ಮಾಡುವ ವಿಷಯದಲ್ಲಿ ಬೇರೆ ಏನನ್ನು ಹಾಳು ಮಾಡಿಕೊಂಡರು ಪ್ರೊಫೆಸರ್ ಜೊತೆಗಿರುವ ಸಂಬಂಧವನ್ನು ಹಾಳು ಮಾಡಿಕೊಂಡರೆ ಕಥೆ ಮುಗಿದಂತೆಯೇ ಎಂದು ಹೇಳಬೇಕು ಏಕೆಂದರೆ ಡಿಪಾರ್ಟ್‌ಮೆಂಟಿನ ತುಂಬಾ 'ಹೀಗಾಯಿತೇ, ಛೇ!' ಎಂದು ಬೇಕಾದಷ್ಟು ಸಹಾನುಭೂತಿಯನ್ನು ಅನುಭವಿಸಿಕೊಂಡು ಕಾಲ ತಳ್ಳಬೇಕೇ ವಿನಾ ಅದರಿಂದ ಮತ್ತೇನೂ ಆಗುವುದಿಲ್ಲ, ಪ್ರೊಫೆಸರುಗಳು ಎಷ್ಟಿದ್ದರೂ ಅವರವರನ್ನು ಬಿಟ್ಟುಕೊಡುವುದಿಲ್ಲ, ವಿದ್ಯಾರ್ಥಿಗಳಲ್ಲಿ ಎಲ್ಲರಿಗೂ ಅವರವರದೇ ಪೀಕಲಾಟವಿರುವುದರಿಂದ ಅವರು ತಮ್ಮ ಪಾಡಿಗೆ ಒಂದೇ ಸುಮ್ಮನಿರುತ್ತಾರೆ, ಅಥವಾ ಯಾವುದಕ್ಕೂ ಬೇಡವಾದ ಪುಕ್ಕಟೆ ಸಲಹೆಗಳನ್ನು ಎಸೆಯುತ್ತಿರುತ್ತಾರೆ - ಅವರಿಗೇನು ಅದರಿಂದ ನಷ್ಟವೇನೂ ಇರೋದಿಲ್ಲವಲ್ಲ.

ಹೀಗೆ ವೈ. ಸಿಂಗ್ ರ ಅಡಿಯಲ್ಲಿ 'ದಕ್ಷಿಣ್ ಕಾ ಬಂದಾ' ಎಂದು ನಾನು ಸೇರಿಕೊಂಡಿದ್ದೆ - ನನ್ನಲ್ಲಿ ಬೇಕಾದಷ್ಟು ಕನಸುಗಳೂ ಆದರ್ಶಗಳೂ ಅದೇ ತಾನೇ ರೂಪ ತಳೆಯುತ್ತಿದ್ದುದರಿಂದ ಒಂದು ರೀತಿ 'ಗಂಭೀರ ಹಾಗೂ ರಚನಾತ್ಮಕ ಉದ್ದೇಶದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವನು ಸಾಕಷ್ಟು ಬೇಸರವನ್ನೂ ಸಹಿಸಿಕೊಳ್ಳಬೇಕು' ಎಂದು ಎಲ್ಲದಕ್ಕೂ ತಯಾರಾಗಿಯೇ ಇದ್ದೆ. ಆರೇನು ಎಂಟು ವರ್ಷಬೇಕಾದರೂ ಆಗಲಿ, ಪಿ.ಎಚ್.ಡಿ. ಮಾಡಿ ಮುಗಿಸುತ್ತೇನೆ ಎಂದುಕೊಂಡವನಿಗೆ ಆಸರೆಯಾದವರು ಮೂರು ಜನ - ನನ್ನದೇ ಡಿಪಾರ್ಟ್‌ಮೆಂಟಿನ ರಾಮ್ ಸಿಂಗ್, ಪ್ರೊಫೆಸ್ಸರ್ ಶ್ರೀ ವಾಸ್ತವರ ಕೆಳಗೆ ಹೈಡ್ರೋಜನ್ ಎನರ್ಜಿಯ ಬಗ್ಗೆ ಕೆಲಸ ಮಾಡುತ್ತಿದ್ದ ಶೇಷ ಸಾಯಿ ರಾಮನ್ ಹಾಗೂ ಪ್ರೊ. ಡಿ.ಎನ್. ತ್ರಿಪಾಟಿಯವರ ಕೆಳಗೆ ಕೆಲಸ ಮಾಡುತ್ತಿದ್ದ ಪೆರುಮಾಳ್. ರಾಮನ್ ಹಾಗೂ ಪೆರುಮಾಳ್ ಇಬ್ಬರೂ ತಮಿಳರು, ಇವತ್ತಿಗೂ ಸಹ ನನ್ನ ಅತ್ಯಂತ ಆತ್ಮೀಯ ಸ್ನೇಹಿತರು, ರಾಮ್ ಸಿಂಗ್ ನನ್ನ ದೊಡ್ಡ ಅಣ್ಣನ ಹಾಗೆ. ನಮ್ಮ ಗ್ರೂಪ್‌ನಲ್ಲಿ ಕಂಪ್ಯೂಟರ್ ಸಿಮಿಲೇಶನ್ ಮಾಡುತ್ತಿದ್ದುದರಿಂದ ಬನಾರಸ್ ವಿಶ್ವವಿಧ್ಯಾನಿಲಯದಲ್ಲೇ ಒಳ್ಳೆಯ ಕಂಪ್ಯೂಟರುಗಳು ನಮ್ಮಲ್ಲಿ ಇದ್ದವು. ಎಚ್.ಪಿ. ಮ್ಯಾಗ್ನಮ್ ಮಲ್ಟಿ ರಿಸ್ಕ್ ಎನ್ನುವ ಒಂದು ಮಿಡ್ ರೇಂಜ್ ಕಂಪ್ಯೂಟರ್ರೂ ಹಾಗೂ ಎರಡು ಪಿ.ಸಿ. ಯೂ ಇದ್ದವೂ. ೧೯೯೪-೧೯೯೫ ರಲ್ಲಿ ಇದೇ ದೊಡ್ಡ ವಿಷಯವಾಗಿತ್ತು. ಅಲ್ಲಿನ ದೊಡ್ಡ ಕಂಪ್ಯೂಟರ್ ಗೆ ಒಂದು ಕನ್ಸೋಲ್ ರೂಮ್ ಇತ್ತು, ಹಾಗೂ ಅರ್ಧ ದಿನದ ಮಟ್ಟಿಗೆ ಪವರ್ ಸಪ್ಲೈ ಮಾಡುವಷ್ಟು ದೊಡ್ಡ ಯು.ಪಿ.ಎಸ್. ಕೂಡಾ ಇತ್ತು. ಬನಾರಸ್ಸಿನಲ್ಲಿ ಬೇಸಿಗೆಯಲ್ಲಿ ಹೊರಗೆ ೪೫ ಡಿಗ್ರಿ ಬೇಸಿಗೆ ಬಿಸಿಲಿರುತ್ತಿದ್ದರೆ ನಾವು ಏರ್ ಕಂಡೀಷನ್ ರೂಮಿನಲ್ಲಿ ತಣ್ಣಗೆ ಕೂತಿರುತ್ತಿದ್ದೆವು ಹಾಗೂ ಎಲ್ಲ ಕಡೆ ಕರೆಂಟ್ ಹೋದರೂ ನಮ್ಮಲ್ಲಿ ಆ ರೀತಿಯ ತೊಂದರೆ ಎಂದೂ ಇದ್ದಿದ್ದಿಲ್ಲ.

ರಾಮ್ ಸಿಂಗ್ ಯುನಿಕ್ಸ್‌ನಲ್ಲಿ ಗುರು, ಆಪರೇಟಿಂಗ್ ಸಿಸ್ಟಂ‌ನಿಂದ ಹಿಡಿದು ಅದರಲ್ಲಿ ಲೋಡ್ ಮಾಡಲಾಗಿದ್ದ ಫೋರ್ಟಾನ್, ಹಾಗೂ ಸಿ. ಯಲ್ಲೂ ಆತನಿಗೆ ಅಗಾಧವಾದ ಪರಿಣಿತಿ ಇತ್ತು. ಅವನ ಜೊತೆಯಲ್ಲಿ ಪಿ.ಸಿ.ಯನ್ನೂ ಅದರಲ್ಲೂ ಆಗಿನ ಡಾಸ್ ಆಪರೇಟಿಂಗ್ ಸಿಸ್ಟಂ ಅನ್ನು ಒಳಗೂ-ಹೊರಗೂ ತಿಳಿದುಕೊಂಡ ನಾನು ಒಂದು ರೀತಿಯಲ್ಲಿ ಭಲೇಜೋಡಿಯಾಗಿದ್ದೆವು. ಕ್ಯಾಂಪಸ್ಸಿನಲ್ಲಿ, ನಮ್ಮ ವಿಭಾಗದಲ್ಲಿ ಯಾರದ್ದೇ ಕಂಪ್ಯೂಟರ್ ತೊಂದರೆಗಳಿದ್ದರೂ ರಾಮ್ ಸಿಂಗ್‌ಗೆ ಕರೆ ಬರುತ್ತಿತ್ತು, ಅವನ ಜೊತೆಯಲ್ಲಿ ನಾನೂ ಹೋಗುತ್ತಿದ್ದೆ, ಆಗಿನ್ನೂ ವಿಂಡೋಸ್ ೩.೧ ಮಟ್ಟದಲ್ಲಿ ಇದ್ದು ಒಂದು ಅಪ್ಲಿಕೇಷನ್ ಅಂತೆ ನಡೆಯುತ್ತಿದ್ದರೂ ಡಾಸ್ ೫.೦, ೬.೦ ಹಾಗೂ ಆಗಿನ ಕಾಲದ ಹಾರ್ಡ್‌ವೇರುಗಳಿಗೂ ಅಷ್ಟೊಂದು ಆಗದಿದ್ದುದರಿಂದ ಒಬ್ಬರಲ್ಲ ಒಬ್ಬರಿಗೆ ತೊಂದರೆ ಆಗುತ್ತಿದ್ದುದೂ ಅವುಗಳಲ್ಲಿ ಕೆಲವನ್ನು ನಿಖರವಾಗಿ, ಉಳಿದವುಗಳನ್ನು ಪದೇ-ಪದೇ ಪ್ರಯತ್ನಿಸಿ ಒಂದಲ್ಲ ಒಂದು ರೀತಿಯಲ್ಲಿ ಸರಿ ಮಾಡೇ ತೀರುತ್ತಿದ್ದೆನಾದ್ದರಿಮ್ದ ಎಲ್ಲರೂ ನನ್ನನ್ನು ದೊಡ್ಡ ಮನುಷ್ಯನೆಂದು ಗೌರವಿಸುತ್ತಿದ್ದರು - ಕಂಪ್ಯೂಟರ್‌ಗಳು ಕೆಟ್ಟು ಹೋಗುವುದನ್ನು ತಪ್ಪು ಎಂದವರ್‍ಯಾರು? ನನ್ನನ್ನು ರಾಮ್ ಸಿಂಗ್ ಉಳಿದವರಿಗೆ ಪರಿಚಯಿಸುತ್ತಿದ್ದುದು ಇನ್ನೂ ಚೆನ್ನಾಗಿ ನೆನಪಿದೆ, ಯಾವುದೇ ಲಾಸ್ಟ್ ನೇಮ್ ನನ್ನ ಹೆಸರಿನಲ್ಲಿಲ್ಲವಾದ್ದರಿಂದ ನನ್ನ ಹೆಸರನ್ನು ಕೇಳಿದವರು 'ಆಗೇ ಕ್ಯಾ ಹೈ' ಎನ್ನುತ್ತಿದ್ದರು, ರಾಮ್ ಸಿಂಗ್ 'ಆಗೇ ಕುಛ್ ನಹೀನಾ ಹೈ, ಏ ದಕ್ಷೀಣ್‌‍ಸೆ ಆಯಾ ಹೈ' ಎನ್ನುತ್ತಿದ್ದ ಅವರೆಲ್ಲರೂ ಮುಖದಲ್ಲಿ ಬರೆಯಲಾಗದ ಅದ್ಯಾವುದೋ ಭಾವನೆಯನ್ನು ಪ್ರಕಟಿಸಿ ಸುಮ್ಮನಾಗುತ್ತಿದ್ದರು.

ರಾಮ್ ಸಿಂಗ್‌ಗೆ ಅಮೇರಿಕೆಗೆ ಬರಬೇಕೆನ್ನುವ ಆಸೆ ಬಹಳಷ್ಟಿತ್ತು, ತನ್ನ ಪಿ.ಎಚ್.ಡಿ. ಬೇಗ ಬೇಗನೆ ಆಗಲಿ, ಮುಂದೆ ಎಲ್ಲಾದರೂ ಕೆಲಸ ಹುಡುಕಿಕೊಂಡು ಹೇಗಾದರೂ ಇರುತ್ತೇನೆ ಎನ್ನುವಂತಾಗಿದ್ದ. ರಾಮ್ ಸಿಂಗ್‌ಗೆ ಪಿ.ಎಚ್‌ಡಿ. ಇನ್ನೂ ಮುಗಿಯುವುದಕ್ಕಿಂತ ಮುಂಚೆಯೇ ಮದುವೆಯೂ ಆಗಿತ್ತು, ನಾನು ಪರಿಚಯವಾಗುವ ಹೊತ್ತಿಗೆ ಆಯುಷ್ ಎನ್ನುವ ಒಬ್ಬ ಮಗನೂ ಇದ್ದ. ನಮ್ಮ ಲ್ಯಾಬ್‌ನಲ್ಲಿರುವ ಎರಡು ಪಿ.ಸಿ.ಗಳಲ್ಲೊಂದರಲ್ಲಿ ಯಾರೋ ಗುಪ್ತ ಎಂಬುವವರು ಸಿ ಯಲ್ಲಿ ಬರೆದ ಹಾರೋಸ್ ಎನ್ನುವ ಅಪ್ಲಿಕೇಶನ್ ಇತ್ತು, ಅದರಲ್ಲಿ ನಮ್ಮ ಹುಟ್ಟಿದ ತಾರೀಖು, ಜನ್ಮ ಸ್ಥಳ, ಮುಂತಾದ ವಿವರಗಳನ್ನು ಕೊಟ್ಟರೆ ಕುಂಡಲಿ ಬರುತ್ತಿತ್ತು. ನಾನೇನು ದೊಡ್ಡ ಅಸ್ಟ್ರಾಲಜರ್ ಅಲ್ಲದಿದ್ದರೂ ಅಗಾಗ್ಗೆ ಬಿಡುವಿನಲ್ಲಿ ಓದಿ ಯಾರು ಉಚ್ಛ, ಯಾರು ನೀಚ, ಯಾವ ಗ್ರಹ ಎಲ್ಲಿದ್ದರೆ ಒಳ್ಳೆಯದು ಮುಂತಾದವುಗಳನ್ನು ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದೆ. ಇದೇ ಸಾಫ್ಟ್‌ವೇರ್‌ನಲ್ಲಿ ನನ್ನ ಜನ್ಮ ವಿವರಗಳನ್ನು ಹಾಕಿ ನೋಡಿದರೆ ನಾನು ಕೆಟ್ಟ ಶನಿ ದೆಸೆಯ ಮಧ್ಯೆದಲ್ಲಿರುವಂತೆಯೂ, ಹತ್ತೊಂಬತ್ತು ವರ್ಷಗಳ ದೀರ್ಘವಾದ ಮಹಾದೆಸೆ, ಅಂತರದೆಸೆ, ಪ್ರತ್ಯಾಂತರ ದೆಸೆಗಳ ವಿವರಗಳೆಲ್ಲವನ್ನು ಇಟ್ಟುಕೊಂಡು ನನ್ನ ತಿಳುವಳಿಕೆಯಲ್ಲೇ ನೋಡಲಾಗಿ 'ಟನಲಿನ ಕೊನೆಯಲ್ಲಿ ಬೆಳಕು ಇದ್ದುದು ಸ್ಪಷ್ಟವಾದರೂ ಟನಲ್ ತುಂಬಾ ಉದ್ದವಿದ್ದಂತೆ' ಕಂಡುಬಂದಿತು! ಹಿಂದೆ ಕಳೆದು ಹೋದ ಶನಿದೆಸೆಯ ಅಂಶಗಳನ್ನು ರೆಟ್ರ್‍ಓಸ್ಪೆಕ್ಟಿವ್ ಆಗಿ ನೋಡಿದಾಗ ಎಲ್ಲವೂ ನಿಜವೆಂದೂ ಅನ್ನಿಸಿತು. ನನ್ನ ಈ ಕುತೂಹಲವನ್ನು ನೋಡಿ ರಾಮ್ ಸಿಂಗ್ ತನ್ನ ಕುಂಡಲಿಯನ್ನೂ ಅನಲೈಜ್ ಮಾಡಬೇಕಾಗಿ ಕೇಳಿಕೊಂಡಿದ್ದರಿಂದ ಅವನ ಕುಂಡಲಿಯನ್ನು ನೋಡಿದೆನಾದರೂ ಅವನ 'ನಾನು ಫಾರಿನ್‌ಗೆ ಹೋಗ್ತೀನಾ' ಎನ್ನುವ ಅವನ ಖಚಿತವಾದ ಉತ್ತರಬೇಡುವ ಪ್ರಶ್ನೆಗೆ ನಾನು ಯಾವತ್ತೂ ಖಚಿತವಾದ ಉತ್ತರವನ್ನು ಕೊಡುವುದು ಸಾಧ್ಯವಾಗಲೇ ಇಲ್ಲ - ಅದೂ ಅಲ್ಲದೇ ಜಾತಕಗಳನ್ನು ನೋಡಿ ನಿಖರವಾದ ಉತ್ತರಗಳನ್ನು ಕೊಡುವುದು ನನಗೆ ಗೊತ್ತೂ ಇರಲಿಲ್ಲ.

ಆದರೆ ಅದೇ ಸಾಫ್ಟ್‌ವೇರ್ 'ನಿಮಗೆ ಶನಿ ದೆಸೆ ಇದೆ, ನೀಲವನ್ನು ಧರಿಸಿ' ಎಂದು ಸಲಹೆ ಕೊಟ್ಟ ಹಾಗೆ ನಾನು ಏಕೆ ಒಂದು ಕೈ ನೋಡಬಾರದು ಎಂದುಕೊಂಡು ರ್‍ಆಮ್ ಸಿಂಗ್ ಜೊತೆಯಲ್ಲಿ ಒಮ್ಮೆ ಗೊದೋಲಿಯಾದ ಚಿನ್ನ-ರತ್ನಗಳ ವರ್ತಕರ ಬಳಿ ಹೋದೆ. ಅಲ್ಲಿ ನೀಲದ ಬಗ್ಗೆ ವಿಚಾರಿಸಲಾಗಿ ೫೦೦ ರೂಪಾಯಿಗಳಿಂದ ೫೦೦೦ ರೂಪಾಯಿಗಳವರೆಗಿನ ಎಲ್ಲ ಹರಳುಗಳನ್ನೂ ಅಂಗಡಿಯವರು ತೋರಿಸಿದರು, ನಾನು ಅವುಗಳಲ್ಲೇ ಒಂದು ರತ್ತಿಗೂ (ಕ್ಯಾರೆಟ್) ಸ್ವಲ್ಪ ಕಡಿಮೆ ತೂಕವಿರುವ ನೀರಿನ ಬಣ್ಣವಿರುವ ಕೊಲಂಬೋ ನೀಲವನ್ನು ೬೫೦ ರೂಪಾಯಿಗೆ ಖರೀದಿಸಿ ಅದನ್ನು ಬೆಳ್ಳಿಯಲ್ಲಿ ಉಂಗುರವನ್ನಾಗಿ ಕಟ್ಟಿಸಿದೆ. ನಮ್ಮಲ್ಲಿ ಒಂದು ಮಾತನ್ನು ಹೇಳುತ್ತಾರೆ, ನೀಲ ತುಂಬಾ ಪ್ರಭಾವಶಾಲಿಯಾದ ರತ್ನ, ಅದರ ಜೊತೆ ಹುಡುಗಾಟವಾಡಬಾರದೆಂದು - 'ಒಲಿದರೆ ನೀಲ, ಮುನಿದರೆ ಮೂಲ' ಎನ್ನುತ್ತಾರೆ. ನಾನು ಬೇರೆಯವರು ನೀಲವನ್ನು ಮೊದಲು ತಮ್ಮ ಜೇಬಿನಲ್ಲೋ, ರಾತ್ರಿ ಮಲಗಿದಾಗ ತಲೆ ದಿಂಬಿನ ಕೆಳಗೆ ಇಟ್ಟುಕೊಂಡೋ ಒಂದಿಷ್ಟು ದಿನ 'ಟ್ರೈ' ಮಾಡಿ ನಂತರ ಧರಿಸುತ್ತಾರೆ. ಆದರೆ ಇವೆಲ್ಲವೂ ಗೊತ್ತಿದ್ದೂ ಗೊತ್ತಿದ್ದೂ ನಾನು 'ಏನು ಬೇಕಾದ್ದಾಗಲಿ' ಎಂದು ನೀಲದ ಉಂಗುರವನ್ನು ಧರಿಸಿಕೊಂಡು ಓಡಾಡತೊಡಗಿದೆ. ಆ ಉಂಗುರವನ್ನು ಧರಿಸಿದಂದಿನಿಂದ ನಾನು ನಿಂತ ಜಾಗದಲ್ಲಿ ನಿಂತಿಲ್ಲ, ಕೆಲವೇ ತಿಂಗಳುಗಳಲ್ಲಿ ಲಗುಬಗೆಯಿಂದ ಬನಾರಸ್ಸನ್ನು ಬಿಟ್ಟು, ಎಲ್ಲೆಲ್ಲೋ ಹೋಗಿ, ನನಗೆ ಈ ಉಂಗುರವನ್ನು ಧರಿಸಲು ಸಹಾಯ ಮಾಡಿದ ರಾಮ್ ಸಿಂಗ್ ಬರದೇ ಇದ್ದರೂ ನಾನಂತೂ ಅಮೇರಿಕೆಗೆ ಬಂದೇ ಬಿಟ್ಟೆ! ಈ ಉಂಗುರದಿಂದ ಒಳ್ಳೆಯದಾಯಿತೋ ಕೆಟ್ಟದಾಯಿತೋ ಯಾರು ಬಲ್ಲರು, ಬನಾರಸ್ಸಿನಲ್ಲಿ ಕೈಯಲ್ಲಿ ಬೆಳ್ಳಿಯ ಉಂಗುರವನ್ನು ಧರಿಸುತ್ತಿದ್ದುದರಿಂದ ಉತ್ತರಭಾರತದವರ ಸಂಪ್ರದಾಯದಲ್ಲಿ ನಾನೂ ಒಂದಾಗಲು ಖಂಡಿತವಾಗಿ ಸಹಾಯವಾಗಿತ್ತು (ಅಲ್ಲಿ ಹೆಚ್ಚಿನ ಜನರು ಒಂದಲ್ಲ ಒಂದು ರತ್ನವನ್ನು ಕೈಯಲ್ಲಿ ಧರಿಸುತ್ತಾರೆ ಎನ್ನೋ ಅರ್ಥದಲ್ಲಿ).

***

ಇವತ್ತಿಗೂ ನನ್ನ ದೊಡ್ಡ ಅಣ್ಣನಿಗೆ ಫೋನ್ ಮಾಡಿ ಕೇಳಿದರೆ, ನಾನು ಅಮೇರಿಕೆಗೆ ಬಂದದ್ದು ಈ ಉಂಗುರದ ದೆಸೆಯಿಂದಲೇ ಎಂದು ಅವನು ಹೇಳುತ್ತಾನೆ! ಬನಾರಸ್ಸಿನ ಪ್ರಭಾವ ನನ್ನ ಮೇಲೆ ಎಷ್ಟಿದೆಯೆಂದರೆ ಇಂದಿಗೂ ಸಹ ನಾನು ನನ್ನ ಕೈಯಲ್ಲಿ ಬೆಳ್ಳಿಯಲ್ಲಿ ಮಾಡಿಸಿದ ಉಂಗುರವೊಂದರಲ್ಲಿ ನೀಲವನ್ನು ಧರಿಸುತ್ತೇನೆ, ಆ ಹಳೇ ಉಂಗುರ ನನ್ನ ಹತ್ತಿರವೇ ಇನ್ನೂ ಇದ್ದರೂ ಅದರ ಬದಲಿಗೆ ಬೇರೆಯ ಹರಳನ್ನು ಹಾಕಿಕೊಂಡಿದ್ದೇನೆ.

ನನಗೆ ಒಳ್ಳೆಯದೇನಾದರೂ ಆಗಿದ್ದರೆ ಅದು ನೀಲದ ಮಹಿಮೆ ಇರಬಹುದು, ಅಥವಾ ಅದೆಷ್ಟೋ ಸಾರಿ ಬನಾರಸ್ಸಿನ ಗಂಗೆಯಲ್ಲಿ ಮಿಂದು ಪಾಪಗಳನ್ನು ಕಳೆದುಕೊಂಡಿದ್ದಕ್ಕಿರಬಹುದು!

Thursday, June 01, 2006

ಅಂತರಂಗದ ಹಾಡು

ಸುಮಾರು ಆರು ವರ್ಷಗಳ ಹಿಂದೆ ನನ್ನ ಸ್ನೇಹಿತ ವಾಸು ಮತ್ತು ಅವನ ತಂದೆ-ತಾಯಿಯರನ್ನು ನೋಡೋಣವೆಂದು ತಾಳಗುಪ್ಪಕ್ಕೆ ಹೋದಾಗ ವಾಸುವಿನ ತಾಯಿ ಗೌರಮ್ಮನವರು ಒಂದು ಹೊಸ ಹಸೆಯನ್ನು ಬರೆಯುತ್ತಿದ್ದರು (ವಾಸುವಿನ ಬಗ್ಗೆ ಇನ್ನೂ ಹೆಚ್ಚು ಜ್ಞಾನಪೀಠ ಲೇಖನದಲ್ಲಿ ಬರೆದಿದ್ದೇನೆ). ನಾನೂ ನನ್ನ ಎರಡನೇ ಅಣ್ಣನೂ ಅವರ ಮನೆ, ಮನೆ ಸುತ್ತಲಿನ ತೋಟ, ಹಾಗೂ ಅವರ ಜೊತೆಯಲ್ಲಿ ಕೆಲವೊಂದು ಫೋಟೋಗಳನ್ನು ತೆಗೆದುಕೊಂಡು ಬಂದಿದ್ದೆವು, ಅವರು ಬಿಡಿಸುತ್ತಿದ್ದ ಹಸೆಯನ್ನು ನೋಡಿ (ಹಸೆ ಎಂದರೆ ಮಲೆನಾಡಿನಲ್ಲಿ ಕೆಲವು ಜಾತಿಯ ಜನರಲ್ಲಿ ಹೆಂಗಸರು ಮದುವೆ ಮೊದಲಾದ ವಿಶೇಷ ಕಾರ್ಯಗಳಿಗೆ ಬಿಡಿಸುವ ಚಿತ್ತಾರ, ವಿವರಗಳಿಗೆ ಇಲ್ಲಿ, ಇಲ್ಲಿ ನೋಡಿ) ನನಗೇನನ್ನಿಸಿತೋ ಏನೋ, ಅದೇ ದಿನ ಈ ಕೆಳಗಿನ ಕವನವನ್ನು ಬರೆದಿದ್ದೆ, ಈ ದಿನ ಎಲ್ಲ ಹಳೆಯ ಫೈಲುಗಳನ್ನು ಎತ್ತಿ ಝಾಡಿಸುತ್ತಿರುವಾಗ 'ನಾನಿನ್ನೂ ಬದುಕಿದ್ದೇನೆ!' ಎಂದು ಕಣ್ಣಿಗೆ ಬಿತ್ತು. ಇವತ್ತಿನ ಬದಲಾದ ಪ್ರಬುದ್ಧತೆ, ಸ್ಥಿತಿ-ಗತಿಗಳಲ್ಲಿ 'ಹುಟ್ಟು, ಪ್ರೀತಿ ಮತ್ತು ಬದುಕನ್ನು' ಓದಿದಾಗ ಇದರ ಹಿನ್ನೆಲೆ ಏನಿರಬಹುದು ಎಂದು ಬೇರೆ ಯಾರದ್ದೋ ಕವನವನ್ನು ಓದುವಂತೆ ಹಲವಾರು ಬಾರಿ ಓದಿಕೊಂಡರೂ ಇಲ್ಲಿನ ಮೂರು ಪ್ಯಾರಾಗಳು ಹೆಚ್ಚು ಗುಟ್ಟೇನನ್ನೂ ಬಿಡಲಿಲ್ಲ. ಅಲ್ಲದೇ ಕೊನೆಯ ಎರಡು ಸಾಲುಗಳಲ್ಲಿ ಬರೆದಂತೆ '...ನಿರಂತರ ನಡೆವ ಬಹಿರಂಗಕೆ ಬಾರದ ಅಂತರಂಗದ ಹಾಡೇ?' ಎನ್ನುವ ಸಾಲುಗಳು 'ಅಂತರಂಗ'ಕ್ಕೆ ಹೊಂದಿಕೊಳ್ಳಬಹುದು ಎಂದೂ ಈ ಪದ್ಯವನ್ನು ಇಲ್ಲಿ ತೋರಿಸಿದ್ದೇನೆ. ಎಲ್ಲಾದರೂ ಧೂಳು ತಿನ್ನುತ್ತಾ ಬೀಳುವ ಬದಲಿಗೆ ಹೀಗೆ ಒಂದು ಸ್ಥಳದಲ್ಲಿ ಇದ್ದರೆ ಒಳ್ಳೆಯದು ಎಂದು ಕೂಡಾ ಅನ್ನಿಸಿದ್ದರಿಂದ ಇನ್ನು ಮುಂದೆ ಹಲವು ಹೊಸ ಹಾಗೂ ಹಳೆಯ ಕವನಗಳನ್ನು ಅಲ್ಲಲ್ಲಿ ತೋರಿಸೋಣವೆಂದುಕೊಂಡಿದ್ದೇನೆ.

ತಮ್ಮ ತೋಟದಲ್ಲಿ ನಾನಾ ವಿಧವಾದ ಹೂವುಗಳನ್ನು ಬೆಳೆದೂ ನನಗೆ ಗೊತ್ತಿರುವಂತೆ ಬೇರೆ ಯಾರಿಗೂ ಒಂದು ಹೂವನ್ನು ಮುಟ್ಟಲು ಕೊಡದಿದ್ದ ಗೌರಮ್ಮನವರ ಬುದ್ಧಿ ತಿಳಿದೂ-ತಿಳಿದೂ ಆದಿನ ನಾನು 'ಒಂದು ಹೂವನ್ನು ಕೊಯ್ದುಕೊಳ್ಳಲೇ?' ಎಂದು ನಗುತ್ತಾ ಕೇಳಿದ್ದೆ, ಅವರು 'ಆಯ್ತು' ಎಂದಿದ್ದನ್ನೇ ಕಾಯುತ್ತಾ ಯಾವುದೋ ವ್ರತ ಭಂಗ ಮಾಡುವ ಹರ್ಷದಿಂದ ಹತ್ತಿರದಲ್ಲೇ ಸುಂದರವಾಗಿ ಅರಳಿದ್ದ ಡೇಲಿಯಾ ಹೂವೊಂದನ್ನು ಕೊಯ್ದುಕೊಂಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಅವರು 'ಮತ್ತೆ ಬಂದಾಗ ಬಾ' ಎಂದಿದ್ದರೂ ಅವರನ್ನು ನೋಡದೇ ಅದೆಷ್ಟೋ ವರ್ಷಗಳಾಗಿ ಹೋಗಿಬಿಟ್ಟವು. ವಾಸುವಿನ ತಾಯಿ ಗೌರಮ್ಮನವರಲ್ಲಿ ನನ್ನದು ಯಾವಾಗಲೂ ಸಲಿಗೆಯೇ, ಹಿಂದೆ ಯಾವತ್ತೋ 'ನೀವು ಕೋಳಿಸಾರನ್ನು ಮಾಡುವಾಗ ಮಸಾಲೆಯನ್ನು ಬೇರೆಯಾಗಿ ರುಬ್ಬಿ ಸಾರು ಮಾಡುವುದಕ್ಕಿಂತ ಕೋಳಿಗೇ ಮಸಾಲೆಯನ್ನು ತಿನ್ನಿಸಿ ಅಂತಹ ಕೋಳಿಯನ್ನು ಬೇಯಿಸಿದರೆ ಹೇಗೆ?' ಎಂದು ತಮಾಷೆಗೆ ಕೇಳಿ ಬಯ್ಯಿಸಿಕೊಂಡಿದ್ದನ್ನು ನೆನೆಸಿಕೊಂಡರೆ ಇವತ್ತಿಗೂ ಜೋರಾಗಿ ನಗುಬರುತ್ತದೆ.

***

ಹುಟ್ಟು, ಪ್ರೀತಿ ಮತ್ತು ಬದುಕು
(ಜುಲೈ ೨೦೦೦)

ಮೈ ಮನಗಳ ತೃಷೆ ತೀರಿಸೋ ಮಿಲನ
ಮಹೋತ್ಸವದಂದು ಹುಟ್ಟಿ ಬಂದಿಹ ಧೀರ;
ಸುತ್ತೆಲ್ಲ ಕಬಳಿಸಿ ವಕ್ಕರಿಸಿಕೊಂಡಿರುವೆದೆಯಲಿ
ತನ್ನನ್ನೇ ತಾನು ತಿಳಿಯದ ಶೂರ.
ಹಿಂಗಿದ ಬಾಯಾರಿಕೆ, ಮನಸ್ಸಿನ ಚಡಪಡಿಕೆ
ಯಾರಿಂದಲೂ ತಿದ್ದಲಾಗದೀ ಹುಟ್ಟು;
ಸೂತ್ರವೂ ಗೋತ್ರವೂ ಬರಿದೆ ಬಯಲಾದರೂ
ಯಾರಿಗೂ ಬಿಡಿಸಲಾಗದೀ ಗುಟ್ಟು.

ದಕ್ಕಿದ್ದು ಸಿಕ್ಕದಿರುವ, ಸಿಕ್ಕಿದ್ದು ಸೊಗಸಾಗಿರದ
ಉನ್ಮತ್ತತೆಯೇ ಮೈವೆತ್ತ ಪ್ರಬುದ್ಧತೆ;
ಅರಿಕೆ ಅರಿವುಗಳಲ್ಲಿ ಬೆರಕೆ ತಿರುವುಗಳಿಲ್ಲಿ
ತನ್ನನೇ ಮರೆಯಿಸುವ ಉತ್ಕಂಠತೆ.
ತನು-ಮನಗಳ ನಿಲ್ಲಿಸಿಕೊಳ್ಳದ, ನೇರವನ್ನು
ತಿರುವಿಕೊಂಡ, ನಭವೇ ತನ್ನದಾಗುವ ಆಸೆ;
ಕುದಿಯುತಿದೆ ಧಮನಿಗಳಲಿ ಸರ್ವಾಕಾಂಕ್ಷೆಯ ಛಲ
ಬಿಸಿಯಿಲ್ಲದೆ ಬಿರುಕುಬಿಟ್ಟಿಹ ಮೂಸೆ.

ಅರಿಯುವ ಉರಿಯಲ್ಲಿ, ಒಟ್ಟಿಗಿದ್ದರೂ ಬೇರೆ
ಬಯಸುವ ದೇಹ-ಮನಗಳ ಮೂಲ ಕಾಣುವಾಸೆ;
ನೆನಪುಗಳಿರಲಿ, ನವಿರಾಗಿ ಏಳುತಿಹ ನಲುಮೆಗಳಲಿ
ತ್ರಿಕೋನ, ವೃತ್ತಾದಿಗಳಾಕೃತಿಯ ಬರೆವ ಹಸೆ.
ಹಸಿಯಿದೆ, ಹಸಿವೆಯಿದೆ, ಹಿಂಗದ ದಾಹವಿದ್ದರೂ
ಎದುರಾಗುವ ಅಡ್ಡಿ ಬರೀ ಜಿಗಿವ ಮೋಟುಗೋಡೆ;
ಕತ್ತಲೆಕೋಟೆ ಕೋಮಲತೆಗಳ ನಡುವೆ ನಿರಂತರ
ನಡೆವ ಬಹಿರಂಗಕೆ ಬಾರದ ಅಂತರಂಗದ ಹಾಡೇ?