Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

2 comments:

ಸಾಗರದಾಚೆಯ ಇಂಚರ said...

ಕೊಳಕು ರಾಜಕೀಯದ ಬಗೆಗೆ ಮಾತನಾಡಲೂ ಇತ್ತೀಚಿಗೆ ಮನಸ್ಸು ಬರುತ್ತಿಲ್ಲ,
ನಮ್ಮ ಧುರೀಣರಿಗೆ ಬುದ್ಧಿ ಬರುವುದು ಯಾವಾಗಲೋ

Satish said...

ಸಾ.ಇ. ಅವರೇ,
ಕೊಳಕು ರಾಜಕೀಯ ನಮ್ಮದೇ ಒಂದು ಪ್ರತಿಬಿಂಬ, ನಮ್ಮ ಧುರೀಣರು ನಮ್ಮವರೇ.